Category Archives: ಇತರೆ

ವಿಭಾಗಿಸಿಲ್ಲದ ಲೇಖನಗಳು

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-18)


– ಡಾ.ಎನ್.ಜಗದೀಶ್ ಕೊಪ್ಪ


ನರಭಕ್ಷಕ ಹುಲಿಗಳ ಬೇಟೆಯಿಂದಾಗಿ ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಪ್ರಖ್ಯಾತಿ ಹೊಂದಿದ ಜಿಮ್ ಕಾರ್ಬೆಟ್ ಮಾನಸಿಕವಾಗಿ ಪ್ರಾಣಿ ಮತ್ತು ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ. ತನ್ನ ಕಣ್ಣ ಮುಂದೆ ಅರಣ್ಯ ನಶಿಸಿ ಹೋಗುತ್ತಿರುವುದು ಮತ್ತು ಕಾಡಿನ ಪ್ರಾಣಿಗಳು ಶಿಕಾರಿಗಾರರ ತೆವಲಿಗೆ ಬಲಿಯಾಗುತ್ತಿರುವುದರ ಬಗ್ಗೆ ವೈಯಕ್ತಿಕವಾಗಿ ನೊಂದುಕೊಂಡಿದ್ದ. ಈ ಕಾರಣಕ್ಕಾಗಿ ನರಭಕ್ಷಕ ಪ್ರಾಣಿಗಳನ್ನು ಹೊರತುಪಡಿಸಿ ಉಳಿದ ಯಾವುದೇ ಪ್ರಾಣಿಗಳನ್ನು ಬೇಟೆಯಾಡುವುದನ್ನು ಅವನು ನಿಲ್ಲಿಸಿದ್ದ.

ಜಿಮ್ ಕಾರ್ಬೆಟ್ ಬದುಕಿನಲ್ಲಿ, ಹಾಗೂ ಅವನ ಶಿಕಾರಿಯ ಅನುಭವದಲ್ಲಿ ಅತಿ ದೊಡ್ಡ ಸವಾಲು ಎದುರಾದದ್ದು, ರುದ್ರ ಪ್ರಯಾಗದ ನರಭಕ್ಷಕ ಚಿರತೆಯನ್ನು ಕೊಲ್ಲುವ ಸಂದರ್ಭದಲ್ಲಿ ಮಾತ್ರ. ಉತ್ತರ ಭಾರತದ ಹಿಮಾಲಯದ ತಪ್ಪಲಿನಲ್ಲಿ ಸುಮಾರು 800 ಚದುರ ಕಿ. ಮಿ. ಪ್ರದೇಶದ ವ್ಯಾಪ್ತಿಯಲ್ಲಿ ನಿರಂತರ ಎಂಟು ವರ್ಷಗಳ ಕಾಲ ನರಮನುಷ್ಯರನ್ನು ಬೇಟೆಯಾಡುತ್ತಾ, ಸರ್ಕಾರವನ್ನು, ಸ್ಥಳೀಯ ಜನತೆಯನ್ನು ಆತಂಕದ ಮಡುವಿಗೆ ನೂಕಿದ್ದ ಈ ಚಿರತೆಯನ್ನು ಕೊಲ್ಲಲು ಜಿಮ್ ಕಾರ್ಬೆಟ್ ನಡೆಸಿದ ಸಾಹಸ, ಪಟ್ಟ ಪಾಡು ಒಂದು ಮಹಾ ಕಾವ್ಯದಂತೆ ರೋಮಾಂಚಕಾರಿಯಾದ ಕಥನ. ಈ ನರಭಕ್ಷಕನ ಬೇಟೆಗಾಗಿ ಅಂದಿನ ದಿನಗಳಲ್ಲಿ ಇಡೀ ಜಗತ್ತು ಎದುರು ನೋಡುತ್ತಿತ್ತು ಏಕೆಂದರೆ, ಪ್ರತಿದಿನ 50 ರಿಂದ 100 ಕಿ.ಮಿ. ದೂರ ಸಂಚರಿಸುತ್ತಾ ಇದ್ದ ಈ ಚಿರತೆಯ ಪ್ರತಿ ನರಬೇಟೆಯೂ ಜಗತ್ತಿನ ಎಲ್ಲಾ ಪ್ರಮುಖ ದಿನಪತ್ರಿಕೆಗಳಲ್ಲಿ ಸುದ್ಧಿಯಾಗಿತ್ತು. ಇಂಗ್ಲೆಂಡಿನ ಪಾರ್ಲಿಮೆಂಟ್‌‌‍ನಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ವಿಚಾರದ ಬದಲಿಗೆ, ಈ ನರಭಕ್ಷಕ ಚಿರತೆಯ ಬಗ್ಗೆ ತೀವ್ರತರವಾದ ಚರ್ಚೆಗಳು ನಡೆಯುತ್ತಿದ್ದವು.

ಕಾಡಿನ ಅಪಾಯಕಾರಿ ಪ್ರಾಣಿಗಳಲ್ಲಿ ಒಂದಾದ ಚಿರತೆ ಸಾಮಾನ್ಯವಾಗಿ ಬೇಟೆಯಾಡಿ ಪ್ರಾಣಿಗಳನ್ನು ಕೊಲ್ಲುವ ಸಾಧ್ಯತೆ ಬಹುತೇಕ ಕಡಿಮೆ. ಸಿಂಹ ಅಥವಾ ಹುಲಿ ಬೇಟೆಯಾಡಿ ತಿಂದು ಮುಗಿಸಿದ ಪ್ರಾಣಿಗಳ ಅವಶೇಷ ಅಥವಾ ವಯಸ್ಸಾಗಿ ಸತ್ತು ಹೋದ ಪ್ರಾಣಿಗಳ ಕಳೇಬರಗಳನ್ನು ತಿನ್ನುವುದು ಚಿರತೆಗಳ ಪವೃತ್ತಿ. ಆದರೆ, ರುದ್ರಪ್ರಯಾಗದ ಈ ನರಭಕ್ಷಕ ಚಿರತೆ ಆಕಸ್ಮಾತ್ತಾಗಿ ನರಭಕ್ಷಕ ಪ್ರಾಣಿಯಾಗಿ ಪರಿವರ್ತನೆ ಹೊಂದಿತ್ತು. ಇದಕ್ಕೆ ಸ್ಥಳೀಯ ಜನರ ಸಾಂಸ್ಕೃತಿಕ ಆಚರಣೆಗಳು ಕೂಡ ಪರೋಕ್ಷವಾಗಿ ಕಾರಣವಾಗಿದ್ದವು. ರುದ್ರಪ್ರಯಾಗ ಹಿಮಾಲಯದ ಪವಿತ್ರ ಕ್ಷೇತ್ರಗಳ ನಡುವಿನ ಸಂಗಮ ಕ್ಷೇತ್ರಗಳಲ್ಲಿ ಒಂದು. ಹಿಮಾಲಯದ ತಪ್ಪಲಲ್ಲಿ ಹುಟ್ಟಿ ಉತ್ತರದಿಂದ ದಕ್ಷಿಣ ದಿಕ್ಕಿಗೆ ಹರಿಯುವ ಮಂದಾಕಿನಿ ಹಾಗೂ ಅಲಕನಂದಾ ನದಿಗಳು ರುದ್ರಪ್ರಯಾಗದಲ್ಲಿ ಒಂದುಗೂಡಿ, ಮುಂದೆ ಗಂಗಾನದಿಯಾಗಿ ಹರಿದು, ಮುಂದೆ ಹೃಷಿಕೇಶ ಹರಿದ್ವಾರ, ವಾರಣಾಸಿ ಮುಂತಾದ ಪವಿತ್ರ ಕ್ಷೇತ್ರಗಳ ತಟದಲ್ಲಿ ಹರಿದು ಕೊಲ್ಕತ್ತಾ ಬಳಿ ಹೂಗ್ಲಿ ನದಿಯಾಗಿ ಹೆಸರು ಬದಲಿಸಿಕೊಂಡು ಬಂಗಾಳ ಕೊಲ್ಲಿ ಸೇರುತ್ತದೆ.

ಭಾರತದ ಹಿಂದೂ ಸಮುದಾಯದ ಪಾಲಿಗೆ ಗಂಗಾ ನದಿ ಪುಣ್ಯನದಿ. ಇದು ಇಲ್ಲಿ ಜನಗಳ ಧಾರ್ಮಿಕ ಮನೋಭೂಮಿಯಲ್ಲಿ ಒಂದು ಅಚ್ಚಳಿಯದ ಹೆಸರು. ಹಿಂದು ಭಕ್ತರ ಪಾಲಿಗೆ ಚಾರ್‌ಧಾಮ್ ಎಂದು ಕರೆಸಿಕೊಳ್ಳುವ ಹೃಷಿಕೇಶ, ಹರಿದ್ವಾರ, ಬದರಿನಾಥ್ ಹಾಗೂ ಕೇದಾರನಾಥ ಇವುಗಳನ್ನು ಸಂದರ್ಶಿಸುವುದು ಅವರ ಜೀವಮಾನದ ಕನಸು ಮತ್ತು ಹೆಬ್ಬಯಕೆ. ಹಾಗಾಗಿ ಈ ಸ್ಥಳಗಳು ವರ್ಷಪೂರ್ತಿ ದೇಶದ ವಿವಿಧೆಡೆಗಳಿಂದ ಬರುವ ಭಕ್ತರಿಂದ ತುಂಬಿ ತುಳುಕುತ್ತವೆ. ಹೃಷಿಕೇಶದಿಂದ ಹೊರಟ ಭಕ್ತರು ರುದ್ರಪ್ರಯಾಗದ ಬಳಿ ಕೇದಾರನಾಥ ಮತ್ತು ಬದರಿನಾಥ ಕ್ಷೇತ್ರಗಳಿಗೆ ಬೇರೆ ಬೇರೆ ದಾರಿ ಹಿಡಿದು ಸಾಗಬೇಕು. ಆ ಕಾಲದಲ್ಲಿ ಬಹುತೇಕ ಪ್ರಯಾಣವನ್ನು ಕಾಲು ನಡಿಗೆಯಲ್ಲೇ ಕ್ರಮಿಸಬೇಕಿತ್ತು ಇಂತಹ ಸಂದರ್ಭದಲ್ಲಿ ವಯಸ್ಸಾದ ಭಕ್ತರು ನಡುದಾರಿಯಲ್ಲಿ ಅಸುನೀಗಿದರೆ, ಅವರುಗಳ ಶವವನ್ನು ನದಿಯ ಕೊರಕಲು ಪ್ರದೇಶಕ್ಕೆ ನೂಕಿ ಮುಂದುವರಿಯುವುದು ಅನಿವಾರ್ಯವಾಗಿತ್ತು. ಜೊತೆಗೆ ಹಿಮಾಲಯದ ತಪ್ಪಲಿನ ಬಹುತೇಕ ಹಳ್ಳಿಗಳು ಪರ್ವತದ ಮೇಲಿದ್ದ ಕಾರಣ ಅಲ್ಲಿ ಜನರೂ ಸಹ ಸತ್ತವರ ಬಾಯಿಗೆ ಒಂದಿಷ್ಟು ಬೆಂಕಿಯ ಕೆಂಡವನ್ನು ಹಾಕಿ ಪರ್ವತದ ಮೇಲಿಂದ ಶವವನ್ನು ಹಳ್ಳಕ್ಕೆ ತಳ್ಳುವ ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದರು. ಇಂತಹ ಒಂದು ಸಂದರ್ಭದಲ್ಲಿ ಸತ್ತ ಪ್ರಾಣಿಗಳ ಆಹಾರವನ್ನು ಅರಸುತ್ತಿದ್ದ ಚಿರತೆ ಮನುಷ್ಯರ ಶವಗಳನ್ನು ತಿನ್ನುವುದರ ಮೂಲಕ ನರಭಕ್ಷಕ ಪ್ರಾಣಿಯಾಗಿ ಅಲ್ಲಿನ ಜನರನ್ನು ಕಾಡತೊಡಗಿತ್ತು.

ಜಿಮ್ ಕಾರ್ಬೆಟ್ ನೈನಿತಾಲ್‌ನಲ್ಲಿ ಇರುವಾಗಲೇ ರುದ್ರಪ್ರಯಾಗದ ನರಭಕ್ಷಕ ಚಿರತೆಯು ಮನುಷ್ಯರನ್ನು ಬೇಟೆಯಾಡುತ್ತಿರುವುದನ್ನು ಪತ್ರಿಕೆಯಲ್ಲಿ ಓದಿ ತಿಳಿದಿದ್ದ, ಬ್ರಿಟಿಷ್ ಸರ್ಕಾರ ಕೂಡ ಇದನ್ನು ಕೊಂದು ಹಾಕಲು ಹವ್ಯಾಸಿ ಬೇಟೆಗಾರರಿಗೆ ಆಹ್ವಾನ ನೀಡಿ 10 ಸಾವಿರ ರೂಪಾಯಿ ಬಹುಮಾನ ಘೋಷಿಸಿತ್ತು, ಜೊತೆಗೆ ಆ ಪ್ರದೇಶದ ಜನರಿಗೆ ಮುಕ್ತವಾಗಿ ಬಂದೂಕಿನ ಪರವಾನಗಿ ನೀಡಿತ್ತು. ಹಿಮಾಲಯದ ಪರ್ವತದ ಪ್ರದೇಶಗಳಿಂದ ಬಂದ ಸೈನಿಕರಿಗೆ ರಜೆಯ ಮೇಲೆ ಊರಿಗೆ ತೆರಳುವಾಗ ಬಂದೂಕವನ್ನು ತೆಗೆದುಕೊಂಡು ಹೋಗಲು ಅನುಮತಿಯನ್ನು ಸಹ ನೀಡಿತು ನರಭಕ್ಷಕ ಚಿರತೆಯನ್ನು ಕೊಲ್ಲಲು ಸರ್ಕಾರ ಇಷ್ಟೇಲ್ಲಾ ವ್ಯವಸ್ಥೆ ಮಾಡಿರುವಾಗ ನಾನು ಮಾಡುವುದಾದರೂ ಏನು? ಎಂಬುದು ಕಾರ್ಬೆಟ್‌ನ ನಿಲುವಾಗಿತ್ತು. ಕಾರ್ಬೆಟ್‌ಗೆ ಈ ನರಭಕ್ಷಕಕನ ಬಗ್ಗೆ ಪ್ರಥಮಬಾರಿಗೆ ಸುದ್ಧಿ ತಿಳಿದಾಗ ಅವನು ನೈನಿತಾಲ್ ಸಿನಿಮಾ ಮಂದಿರದಲ್ಲಿ ಇಂಗ್ಲಿಷ್ ಸಿನಿಮಾವೊಂದನ್ನು ನೋಡುತ್ತಾ ಕುಳಿತಿದ್ದ. ಆರು ವರ್ಷಗಳ ನಂತರವೂ ಯಾರ ಕೈಗೂ ಸಿಗದೆ, ಸೆರೆ ಹಿಡಿಯಬಹುದಾದ ಎಲ್ಲಾ ವಿಧವಾದ ಉಪಾಯಗಳಿಗೂ ಜಗ್ಗದೆ ಚಿರತೆ ತನ್ನ ದಾಳಿಯನ್ನು ಮುಂದುವರಿಸಿತ್ತು. ಎರಡು ಬಾರಿ ಅದೃಷ್ಟವಶಾತ್ ಸಾವಿನ ಕುಣಿಕೆಯಿಂದ ಅದು ಪಾರಾಗಿತ್ತು.

ಒಮ್ಮೆ ರುದ್ರಪ್ರಯಾಗದ ಸಮೀಪದ ಹಳ್ಳಿಯ ಬಯಲಿನಲ್ಲಿ ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿದ ಚಿರತೆ ಅವನನ್ನು ಕೊಂದು ಸಮೀಪದ ಹಳ್ಳವೊಂದಕ್ಕೆ ಕೊಂಡೊಯ್ದು ತಿನ್ನುತ್ತಿರುವಾಗ ಇದನ್ನು ಕಂಡ ಕೆಲವು ಗ್ರಾಮಸ್ಥರು ದೊಣ್ಣೆ, ಮಚ್ಚು, ಕೊಡಲಿಗಳಿಂದ, ನರಭಕ್ಷಕನನ್ನು ಬೆನ್ನಟ್ಟಿದ್ದರು. ಅದು ಭಯದಿಂದ ಮನುಷ್ಯನ ಶವದೊಂದಿಗೆ ಓಡಿ ಹೋಗಿ ಸಮೀಪದ ಗುಹೆಯನ್ನು ಹೊಕ್ಕಿತು. ಕೂಡಲೇ ಗ್ರಾಮಸ್ಥರು ಗುಹೆಯ ಬಾಗಿಲಿಗೆ ಮುಳ್ಳು ಕಂಟಿ, ಮರದಬೊಡ್ಡೆ ಹಾಗೂ ಕಲ್ಲುಗಳನ್ನು ಅಡ್ಡ ಇಟ್ಟು ಚಿರತೆ ಹೊರಬಾರದಂತೆ ಭದ್ರಪಡಿಸಿದರು. ಸತತ ಐದು ದಿನಗಳ ಕಾಲ ಗುಹೆಯ ಬಾಗಿಲಲ್ಲಿ ಅವರೆಲ್ಲಾ ಕಾದು ಕುಳಿತರೂ ಸಹ ಗುಹೆಯ ಒಳಗಿನಿಂದ ಯಾವ ಪ್ರತಿಕ್ರಿಯೆ ಬರಲಿಲ್ಲ. ಇದರಿಂದ ಸಂಶಯಗೊಂಡ ಒಬ್ಬಾತ ಗುಹೆಬಾಗಿಲಿಗೆ ಅಡ್ಡಲಾಗಿರಿಸಿದ್ದ ಮುಳ್ಳು ಮತ್ತು ಕಲ್ಲುಗಳನ್ನು ತೆಗೆಯುತಿದ್ದಂತೆ ಬಿಲ್ಲಿನಿಂದ ಬಿಟ್ಟ ಬಾಣದಂತೆ ಕ್ಷಣಾರ್ಧದಲ್ಲಿ ಹೊರಕ್ಕೆ ನೆಗೆದ ನರಭಕ್ಷಕ ಚಿರತೆ ಜನರ ನಡುವೆ ಓಡಿ ಹೋಗಿ ಕಾಡು ಹೊಕ್ಕಿತು. ಅನಿರೀಕ್ಷಿತವಾಗಿ ಜರುಗಿದ ಈ ಘಟನೆಯಿಂದ ಭಯ ಭೀತರಾದ ಅಷ್ಟೂ ಜನ ಗುಂಡಿನ ಶಬ್ಧಕ್ಕೆ ಬೆದರಿ ಮರದಿಂದ ಹಾರುವ ಹಕ್ಕಿಗಳಂತೆ ಚಲ್ಲಾಪಿಲ್ಲಿಯಾಗಿದ್ದರು.

ಇನ್ನೊಮ್ಮೆ ಇಬ್ಬರು ಬ್ರಿಟಿಷ್ ಅಧಿಕಾರಿಗಳ ಗುಂಡಿನ ದಾಳಿಯಿಂದ ಇದೇ ನರಭಕ್ಷಕ ಚಿರತೆ ಕ್ಷಣ ಮಾತ್ರದಲ್ಲಿ ಪಾರಾಗಿತ್ತು. ರುದ್ರಪ್ರಯಾಗ ಪಟ್ಟಣದಿಂದ ಕೇದಾರನಾಥಕ್ಕೆ ಹೋಗುವ ದಾರಿಯಲ್ಲಿ 24 ಕಿ.ಮಿ. ದೂರದಲ್ಲಿ ಕರ್ಣಪ್ರಯಾಗ ಎಂಬ ಜನವಸತಿ ಪ್ರದೇಶವಿದ್ದು ಈ ಎರಡು ಊರುಗಳ ನಡುವೆ ಅಲಕಾನಂದಾ ನದಿ ರಭಸದಿಂದ ಹರಿಯುತ್ತದೆ. ಪ್ರಯಾಣಿಕರು ನದಿ ದಾಟಲು ಅಡ್ಡಲಾಗಿ ತೂಗು ಸೇತುವೆಯೊಂದನ್ನು ಕಟ್ಟಲಾಗಿದೆ. ನರಭಕ್ಷಕ ರುದ್ರಪ್ರಯಾಗಕ್ಕೆ ಬರಬೇಕಾದರೆ, ಈ ಸೇತುವೆ ದಾಟಿ ಬರಬೇಕಿತ್ತು. ಏಕೆಂದರೆ, ಅತ್ಯಂತ ವೇಗವಾಗಿ ರಭಸದಲ್ಲಿ ಹರಿಯುವ ಅಲಕನಂದಾ ನದಿಯನ್ನು ಅದು ಈಜುವುದು ಸಾಧ್ಯವಿರಲಿಲ್ಲ. ಹಾಗಾಗಿ ಇಬ್ಬರೂ ಅಧಿಕಾರಿಗಳು ಸೇತುವೆಯ ಎರಡು ಬದಿಯಿದ್ದ ಗೋಪುರಗಳ ಮೇಲೆ ನಿರಂತರ 60 ದಿನಗಳ ರಾತ್ರಿ ಕಾವಲು ಕುಳಿತರು. ಕಡೆಗೂ ಅವರ ನಿರೀಕ್ಷೆ ಹುಸಿಯಾಗಲಿಲ್ಲ. ಒಂದು ದಿನ ತಡರಾತ್ರಿಯ ಬೆಳಗಿನ ಜಾವ ಎರಡು ಗಂಟೆಯ ಸಮಯದಲ್ಲಿ ಸೇತುವೆ ಮೇಲೆ ನರಭಕ್ಷಕ ನಡೆದು ಬಂತು. ಸೇತುವೆಯ ಮಧ್ಯದವರೆಗೆ ಬರುವುದನ್ನೇ ಕಾಯುತ್ತಿದ್ದ ಅವರಲ್ಲಿ, ರುದ್ರಪ್ರಯಾಗದ ದಿಕ್ಕಿನ ಗೋಪುರದಲ್ಲಿ ಕುಳಿತಿದ್ದ ಅಧಿಕಾರಿ ತಡಮಾಡದೇ, ನರಭಕ್ಷಕನತ್ತ ಗುರಿಯಿಟ್ಟು ಗುಂಡುಹಾರಿಸಿದ. ಬಂದೂಕಿನಿಂದ ಸಿಡಿದ ಗುಂಡು ಚಿರತೆಗೆ ಬಡಿಯುವ ಬದಲು, ಅದರ ಮುಂಗಾಲಿನ ಸಮೀಪ ಸೇತುವೆಗೆ ಬಿಗಿಯಲಾಗಿದ್ದ ಮರದ ಹಲಗೆಗೆ ತಾಗಿತು. ಆದರೂ ಕೂಡ ಗುಂಡಿನಿಂದ ಸಿಡಿದ ಚೂರೊಂದು ಅದರ ಕಾಲನ್ನು  ಘಾಸಿಗೊಳಿಸಿತ್ತು. ಗುಂಡಿನ  ಶಬ್ಧಕ್ಕೆ ಬೆದರಿದ ಚಿರತೆ ತಾನು ಬಂದ ದಾರಿಯತ್ತ ಹಿಂತಿರುಗಿ ಶರವೇಗದಿಂದ ಓಡುತ್ತಿರುವಾಗ, ಅತ್ತ ಕರ್ಣಪ್ರಯಾಗದ ದಿಕ್ಕಿನ ಗೋಪುರದಲ್ಲಿದ್ದ ಅಧಿಕಾರಿ ತನ್ನ ಪಿಸ್ತೂಲಿಂದ ಆರು ಗುಂಡುಗಳನ್ನು ಹಾರಿಸಿದ ಆದರೆ, ಎಲ್ಲವೂ ಗುರಿತಪ್ಪಿ ನರಭಕ್ಷಕ ಸಾವಿನ ಬಾಯಿಂದ ಪಾರಾಗಿತ್ತು. ನಂತರ ಗೋಪುರದಿಂದ ಕೆಳಗಿಳಿದು ಬಂದ ಇಬ್ಬರೂ ಸ್ಥಳವನ್ನು ಅವಲೋಕಿಸಿ. ಗುಂಡಿನ ದಾಳಿಯಿಂದ ಚಿರತೆ ಗಂಭೀರವಾಗಿ ಗಾಯಗೊಂಡು ಸತ್ತಿರಬಹುದೆಂದು ನದಿಯ ಇಕ್ಕೆಲಗಳಲ್ಲಿ ಬೆಳಕರಿದ ಮೇಲ ಎಲ್ಲೆಡೆ ಜಾಲಾಡಿದರು. ಆದರೆ, ಚಿರತೆಯ ಯಾವ ಸುಳಿವು ಸಿಗಲಿಲ್ಲ. ಈ ಘಟನೆ ಸಂಭವಿಸಿದ ಐದು ತಿಂಗಳವರೆಗೆ ಎಲ್ಲಿಯೂ ನರಭಕ್ಷಕನ ದಾಳಿ ನಡೆಯಲಿಲ್ಲವಾದ್ದರಿಂದ ಎಲ್ಲರೂ ಅದು ಗುಂಡೇಟಿನಿಂದ ಅಸುನೀಗಿದೆ ಎಂದು ಭಾವಿಸಿ ನಿಟ್ಟುಸಿರು ಬಿಟ್ಟಿದ್ದರು, ಆದರೆ, ಐದು ತಿಂಗಳ ತರುವಾಯ ನರಬಲಿಯ ಬೇಟೆಯೊಂದಿಗೆ ನರಭಕ್ಷಕ ಚಿರತೆ ತಾನು ಇನ್ನೂ ಸತ್ತಿಲ್ಲವೆಂದು ಅಪಾಯದ ಸೂಚನೆಯನ್ನು ರುದ್ರಪ್ರಯಾಗದ ಪ್ರಾಂತ್ಯದ ಜನತೆಗೆ ರವಾನಿಸಿ, ಮತ್ತೆ ಎಲ್ಲರನ್ನು ಆತಂಕದ ಮಡುವಿಗೆ ನೂಕಿತು.

ಒಂದು ಸಂಜೆ ನೈನಿತಾಲ್‌ನ ಕ್ಲಬ್‌ನಲ್ಲಿ ಗೆಳೆಯರೊಂದಿಗೆ ವಿಸ್ಕಿ ಕುಡಿಯುತ್ತಾ ಕುಳಿತ್ತಿದ್ದ ಕಾರ್ಬೆಟ್, ನರಭಕ್ಷಕ ಚಿರತೆಯ ಬಗ್ಗೆ ಎಲ್ಲರೂ ಮಾತನಾಡುವುದನ್ನು ಸುಮ್ಮನೇ ಕೇಳಿಸಿಕೊಳ್ಳುತ್ತಾ ಕುಳಿತ್ತಿದ್ದ. ಶಿಕಾರಿ ಹವ್ಯಾಸವಿದ್ದ ಹಲವಾರು ಯೂರೋಪಿಯನ್ನರು ಅಲ್ಲಿದ್ದರು. ಸರ್ಕಾರ ನರಭಕ್ಷಕ ಬೇಟೆಗೆ ಸರ್ಕಾರ ಆಹ್ವಾನವಿತ್ತಿದ್ದರೂ ಯಾರೊಬ್ಬರೂ ಹೋಗಲು ಅಂಜುತ್ತಿದ್ದರು. ಚಿರತೆಯನ್ನು ಕೊಲ್ಲಲು ಸರ್ಕಾರ ಅಂತಿಮವಾಗಿ ಅದು ಬೇಟೆಯಾಡುತ್ತಿದ್ದ ಪ್ರಾಣಿಗಳು ಅಥವಾ ಮನುಷ್ಯರ ಶವಕ್ಕೆ ಸೈನೈಡ್ ಮತ್ತು ಇತರೆ ವಿಷಗಳನ್ನು ಹಾಕಿ ಕೊಲ್ಲಲು ಪ್ರಯತ್ನಿದರೂ ಇದರಿಂದ ಯಾವ ಪ್ರಯೋಜನವಾಗಲಿಲ್ಲ. ಈ ಎಲ್ಲಾ ಘಟನೆಗಳ ನಡುವೆ ಈ ನರಭಕ್ಷಕ ಚಿರತೆಗೆ ದೈವಿಶಕ್ತಿ ಇದೆ ಎಂಬ ಪುಕಾರು ಎಲ್ಲೆಡೆ ಹಬ್ಬಿದ ಪರಿಣಾಮ ಜನರಲ್ಲಿ ಭೀತಿ ಮತ್ತಷ್ಟು ಹೆಚ್ಚಾಯಿತು. ಅಂದು ರಾತ್ರಿ ಕಾರ್ಬೆಟ್ ಕ್ಲಬ್‌ನಿಂದ ಮನೆಗೆ ಬರುವುದರೊಳಗೆ ಘರ್ವಾಲ್ ಪ್ರಾಂತ್ಯದ ಜಿಲ್ಲಾಧಿಕಾರಿ ಇಬ್ಸೋಟನ್‌ನಿಂದ ಕಾಗದದ ಲಕೋಟೆಯೊಂದು ಬಂದಿತ್ತು. ಸರ್ಕಾರದ ಪರವಾಗಿ ಇಬ್ಸೋಟನ್ ನರಭಕ್ಷ ಚಿರತೆಯನ್ನು ಬೇಟೆಯಾಡಲು ಜಿಮ್ ಕಾರ್ಬೆಟ್‌ನನ್ನು ವಿನಂತಿಸಿಕೊಂಡಿದ್ದ. ಈ ಪತ್ರ ಕಾರ್ಬೆಟ್‌ನನ್ನು ಇಕ್ಕಟ್ಟಿಗೆ ಸಿಲುಕಿಸಿತು.

                                                (ಮುಂದುವರಿಯುವುದು)

 

ಇರಾನ್ ಅಣ್ವಸ್ತ್ರ ಕಾರ್ಯಕ್ರಮ ವಿಶ್ವಕ್ಕೆ ಮಾರಕವೇ?

– ಆನಂದ ಪ್ರಸಾದ್

ಇರಾನ್ ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸದಂತೆ ಅದರ ಮೇಲೆ ನಿರ್ಬಂಧ ಹೇರಲು ಅಮೆರಿಕ, ಇಸ್ರೇಲ್, ಬ್ರಿಟನ್, ರಷ್ಯಾ ಮೊದಲಾದ ದೇಶಗಳು ಹವಣಿಸುತ್ತಿವೆ. ಇದರಿಂದಾಗಿ ಇರಾನಿನಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ದೇಶಗಳು ತೊಂದರೆಗೊಳಗಾಗಿದ್ದು ತೈಲ ಬೆಲೆ ಹೆಚ್ಚಳ ಆಗುವ ಆತಂಕವೂ ಇದೆ. ವಾಸ್ತವವಾಗಿ ಇಂಥ ನಿರ್ಬಂಧ ಹಾಕುವ ನೈತಿಕ ಅಧಿಕಾರ ಈ ದೇಶಗಳಿಗೆ ಇದೆಯೇ ಎಂದರೆ ಇಲ್ಲ ಎಂದೇ ಕಂಡು ಬರುತ್ತದೆ. ಈ ಎಲ್ಲ ದೇಶಗಳೂ ಅಣ್ವಸ್ತ್ರಗಳನ್ನು ಹೊಂದಿದ್ದು ಇತರ ದೇಶಗಳು ಅಣ್ವಸ್ತ್ರ ಹೊಂದಬಾರದು ಎಂದು ಹೇಳುವುದು ಪಾಳೆಗಾರಿಕೆ ನೀತಿಯಾಗುತ್ತದೆಯೇ ಹೊರತು ಸಮಂಜಸ ಎಂದು ಕಂಡು ಬರುವುದಿಲ್ಲ.

ಜಗತ್ತು ಇರಾನಿನ ಅಣ್ವಸ್ತ್ರ ಕಾರ್ಯಕ್ರಮದ ಬಗ್ಗೆ ಆತಂಕ ಪಡಬೇಕಾದ ಅಗತ್ಯ ಇದೆಯೇ ಎಂದರೆ ಅಂಥ ಆತಂಕಕ್ಕೆ ಕಾರಣವಿಲ್ಲ ಎಂಬುದು ಚಿಂತನೆ ನಡೆಸಿದರೆ ಸ್ಪಷ್ಟವಾಗಿ ಕಂಡುಬರುತ್ತದೆ. ಇದಕ್ಕೆ ಕಾರಣ ಇಂದು ಅಣ್ವಸ್ತ್ರ ಅಭಿವೃದ್ಧಿಪಡಿಸಿದ ಯಾವ ದೇಶವೂ ಅದನ್ನು ಯುದ್ಧದಲ್ಲಿ ಬಳಸಲಾರದ ಸನ್ನಿವೇಶ ವಿಶ್ವದಲ್ಲಿ ಸೃಷ್ಟಿಯಾಗಿದೆ. ಯಾವುದಾದರೂ ಒಂದು ದೇಶದ ಬಳಿ ಮಾತ್ರ ಅಣ್ವಸ್ತ್ರ ತಂತ್ರಜ್ಞಾನ ಇದ್ದಿದ್ದರೆ ಖಂಡಿತ ಅದರ ಬಳಕೆ ಯುದ್ಧದಲ್ಲಿ ಆಗಿಯೇ ಆಗುತ್ತಿತ್ತು. ಆದರೆ ಇಂದು ಹಲವು ದೇಶಗಳ ಬಳಿ ಅಣ್ವಸ್ತ್ರ ತಂತ್ರಜ್ಞಾನ ಇರುವ ಕಾರಣ ಯಾವ ದೇಶವೂ ಅಣ್ವಸ್ತ್ರಗಳನ್ನು ಯುದ್ಧದಲ್ಲಿ ಬಳಸುವ ಸಾಹಸ ಮಾಡಲಾರದು. ಹಾಗೆ ಮಾಡಿದರೆ ಅದು ಆತ್ಮಹತ್ಯೆಗೆ ಸಮಾನ ಎಂಬುದು ಎಲ್ಲ ದೇಶಗಳ ಅರಿವಿಗೂ ಬಂದಿದೆ. ಹೀಗಾಗಿಯೇ ಎರಡನೇ ಮಹಾಯುದ್ಧದ ನಂತರ ಯುದ್ಧಗಳು ನಡೆದಿದ್ದರೂ ಅಣ್ವಸ್ತ್ರಗಳ ಬಳಕೆ ಯುದ್ಧದಲ್ಲಿ ಆಗಿಲ್ಲ.

ಪ್ರಪಂಚದಲ್ಲಿ ಇರುವ 249 ದೇಶಗಳ ಪೈಕಿ 5 ದೇಶಗಳು ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿರುವ ದೇಶಗಳಾಗಿವೆ. ಅವುಗಳು ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್, ಚೀನಾ. ಮೂರು ದೇಶಗಳು ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿಲ್ಲ, ಅವು ಭಾರತ, ಪಾಕಿಸ್ತಾನ, ಹಾಗೂ ಉತ್ತರ ಕೊರಿಯಾ ದೇಶಗಳು. ಇಸ್ರೇಲ್ ಅಣ್ವಸ್ತ್ರಗಳನ್ನು ಹೊಂದಿದ ದೇಶವಾದರೂ ತಾನು ಅಣ್ವಸ್ತ್ರ ಹೊಂದಿರುವ ದೇಶ ಎಂದು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಹೀಗೆ ಪ್ರಪಂಚದ ಒಟ್ಟು 249 ದೇಶಗಳಲ್ಲಿ ಕೇವಲ 9 ದೇಶಗಳು ಮಾತ್ರ ಅಣ್ವಸ್ತ್ರ ಹೊಂದಿವೆ. ಬೆಲ್ಗಿಯಂ, ಜರ್ಮನಿ, ಇಟಲಿ, ನೆದರ್ ಲ್ಯಾಂಡ್, ಟರ್ಕಿ ದೇಶಗಳು ನ್ಯಾಟೋ ಒಕ್ಕೂಟದ ಅಣ್ವಸ್ತ್ರ ಹಂಚುವಿಕೆಯ ಅನುಸಾರ ಅಮೆರಿಕಾದ ಅಣ್ವಸ್ತ್ರಗಳನ್ನು ಹಂಚಿಕೊಂಡಿವೆ. ಮೊದಲಿದ್ದ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಬೆಲಾರೂಸ್, ಉಕ್ರೈನ್, ಕಜ್ಹಕಿಸ್ತಾನ್ ದೇಶಗಳು ತಮ್ಮಲ್ಲಿದ್ದ ಅಣ್ವಸ್ತ್ರಗಳನ್ನು ರಷ್ಯಾಕ್ಕೆ ಒಪ್ಪಿಸಿವೆ ಹಾಗೂ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿವೆ. ದಕ್ಷಿಣ ಆಫ್ರಿಕಾ ದೇಶವು ಒಮ್ಮೆ ಅಣ್ವಸ್ತ್ರಗಳನ್ನು ಉತ್ಪಾದಿಸಿ ಜೋಡಿಸಿತ್ತಾದರೂ ನಂತರ ಅದನ್ನು ಕಳಚಿ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿದೆ. ರಕ್ಷಣೆಗೆ ಅಣ್ವಸ್ತ್ರಗಳು ಬೇಕೇ ಬೇಕು ನಿಜವಲ್ಲ ಎಂಬುದು ಇದರಿಂದ ತಿಳಿಯುತ್ತದೆ. ಅಣ್ವಸ್ತ್ರ ಇಲ್ಲದ ದೇಶಗಳನ್ನು ಅಣ್ವಸ್ತ್ರ ಇರುವ ದೇಶಗಳು ಆಕ್ರಮಣ ಮಾಡಿ ದಕ್ಕಿಸಿಕೊಳ್ಳುವುದಾಗಿದ್ದರೆ 249 ದೇಶಗಳ ಪೈಕಿ ಕೆಲವು ದೇಶಗಳ ಮೇಲಾದರೂ ಆಕ್ರಮಿಸಿ ವಶಪಡಿಸಿಕೊಳ್ಳಬೇಕಾಗಿತ್ತು. ಆದರೆ ಅಂಥ ಪ್ರಯತ್ನವನ್ನು ಮಾಡಲಾರದ ಸಮತೋಲನದ ಸ್ಥಿತಿ ಇಂದು ವಿಶ್ವದಲ್ಲಿ ರೂಪುಗೊಂಡಿದೆ. ಹೀಗೆ ಅಣ್ವಸ್ತ್ರ ಇಲ್ಲದೆಯೂ ಹಲವು ದೇಶಗಳು ಭದ್ರತೆ ಪಡೆದಿವೆ.

ಇರಾನಿನ ವಿಷಯಕ್ಕೆ ಬರುವುದಾದರೆ ಇರಾನ್ ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸಿದರೂ ಅದಕ್ಕೆ ಯಾರೂ ಅಂಜಬೇಕಾದ ಅಗತ್ಯ ಇಲ್ಲ. ಅಣ್ವಸ್ತ್ರಗಳನ್ನು ಇರಾನ್ ಬಳಸಿ ಇಸ್ರೇಲ್‌ಅನ್ನು ನಾಶ ಮಾಡಬಹುದೆಂಬುದು ಇಸ್ರೇಲ್ ಹಾಗೂ ಅದರ ಗಾಡ್ ಫಾದರ್ ಅಮೆರಿಕಾದ ಭೀತಿ. ಆದರೆ ಅಂಥ ಪರಿಸ್ಥಿತಿ ಉಂಟಾಗುವ ಪ್ರಮೇಯ ಇಲ್ಲ. ಇಸ್ರೇಲ್ ಬಳಿಯೂ ಹಾಗೂ ಅದರ ಗಾಡ್ ಫಾದರ್ ಅಮೆರಿಕಾದ ಬಳಿ ಯಥೇಚ್ಛ ಅಣ್ವಸ್ತ್ರ ಇರುವಾಗ ಇರಾನ್ ಅದರ ಮೇಲೆ ಅಣ್ವಸ್ತ್ರ ಬಳಸಿದರೆ ಅದೂ ತನ್ನ ಮೇಲೆ ಅಣ್ವಸ್ತ್ರ ಬಳಸುತ್ತದೆ ಎಂದು ತಿಳಿಯಲಾರದ ಮೂರ್ಖ ದೇಶ ಇರಾನ್ ಎಂದು ತಿಳಿಯಲು ಕಾರಣಗಳಿಲ್ಲ. ಹೀಗಾಗಿ ಇರಾನ್ ಅಣ್ವಸ್ತ್ರ ಅಭಿವೃದ್ಧಿಪಡಿಸಿದರೆ ಅದರಿಂದ ದೊಡ್ಡ ಅನಾಹುತ ಆದೀತು ಎಂಬುದಕ್ಕೆ ಕಾರಣಗಳಿಲ್ಲ. ಇದಕ್ಕಾಗಿ ಎಲ್ಲ ದೇಶಗಳ ಮೇಲೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳದ ಮೂಲಕ ಪರಿಣಾಮ ಬೀರುವ ಅರ್ಥಿಕ ದಿಗ್ಬಂಧನ ಹೇರುವ ಅಗತ್ಯ ಇಲ್ಲ. ಇನ್ನು ಇರಾನಿನಿಂದ ಅಣ್ವಸ್ತ್ರಗಳು ಉಗ್ರಗಾಮಿಗಳ ಕೈಗೆ ಸಿಕ್ಕಿ ತೊಂದರೆಯಾಗಬಹುದು ಎಂಬ ಭೀತಿಗೆ ಕಾರಣವಿಲ್ಲ. ಒಂದು ವೇಳೆ ಉಗ್ರಗಾಮಿಗಳಿಗೆ ಸಿಕ್ಕಿ ಅವರು ಅದನ್ನು ಪ್ರಯೋಗಿಸಿದರೂ ಅದನ್ನು ಉಗ್ರಗಾಮಿಗಳಿಗೆ ನೀಡಿದ ದೇಶದ ಮೇಲೆ ಅಣ್ವಸ್ತ್ರ ಧಾಳಿಯ ಭೀತಿ ಇದ್ದೇ ಇರುವುದರಿಂದ ಅಂಥ ಪ್ರಮಾದ ಮಾಡಲು ಇರಾನಿನಂಥ ದೇಶ ಮುಂದಾಗುವ ಸಂಭವ ಇದೆ ಎನಿಸುವುದಿಲ್ಲ.

ಇಂಥ ಭೀತಿ ಪಾಕಿಸ್ತಾನದ ವಿಷಯದಲ್ಲೂ ಇತ್ತು, ಆದರೆ ಅದು ನಿಜವಾಗಿಲ್ಲ. ಹೀಗಾಗಿ ಇರಾನಿನ ಅಣ್ವಸ್ತ್ರ ಅಭಿವೃದ್ಧಿ ಪಡಿಸುವ ಕಾರ್ಯಕ್ರಮಗಳಿಗೆ ಯಾರೂ ಹೆದರಬೇಕಾದ ಅಗತ್ಯ ಇಲ್ಲ. ಇರಾನಿಗೆ ಅಣ್ವಸ್ತ್ರಗಳ ಅವಶ್ಯಕತೆ ಇದೆಯೇ ಎಂದರೆ ಇಲ್ಲ ಎಂಬುದು ನಿಜವಾದರೂ ಬುದ್ಧಿಗೇಡಿಯಾಗಿ ಅದು ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸಿದರೆ ಅದಕ್ಕೆ ಹೆಚ್ಚಿನ ಹಾಹಾಕಾರ ಮಾಡಬೇಕಾದ ಅಗತ್ಯ ಇಲ್ಲ. ಅಣ್ವಸ್ತ್ರವನ್ನು ಅದು ಅಭಿವೃದ್ಧಿಪಡಿಸಿದರೂ ಅದನ್ನು ಬಳಸಲು ಸಾಧ್ಯವಿಲ್ಲ, ಹಾಗೆ ಬಳಸಬೇಕಾದರೆ ಅದು ತನ್ನನ್ನು ತಾನೆ ಸರ್ವನಾಶಕ್ಕೆ ಒಡ್ಡಿಕೊಳ್ಳುವ ಮೂರ್ಖ ದೇಶವಾಗಿರಬೇಕು. ಸರ್ವನಾಶಕ್ಕೆ ಇಂದು ಯಾವ ದೇಶವೂ ಸಿದ್ಧವಾದ ಮನಸ್ಥಿತಿಯನ್ನು ಹೊಂದಿಲ್ಲದ ಕಾರಣ ಇರಾನಿನ ಅಣ್ವಸ್ತ್ರ ಕಾರ್ಯಕ್ರಮಗಳಿಂದ ಪ್ರಪಂಚದಲ್ಲಿ ದೊಡ್ಡ ವ್ಯತ್ಯಾಸವೇನೂ ಆಗಲಾರದು. ಇಂದು ಎಷ್ಟೇ ದೊಡ್ಡ ಮಿಲಿಟರಿ ಬಲ ಹೊಂದಿರುವ ದೇಶವಾದರೂ ಸಣ್ಣ ದೇಶಗಳ ಮೇಲೆ ಆಕ್ರಮಣ ಮಾಡಿ ಅದನ್ನು ವಶಪಡಿಸಿಕೊಳ್ಳುವ ವಸಾಹತುಶಾಹೀ ಕಾಲ ಮುಗಿದು ಮಾನವ ಜನಾಂಗ ಮುಂದಿನ ಘಟ್ಟಕ್ಕೆ ಮುಟ್ಟಿದೆ. ಹೀಗಾಗಿಯೇ ಇಂದು ಸಣ್ಣ ಸಣ್ಣ ದೇಶಗಳನ್ನು ಅಪಾರ ಮಿಲಿಟರಿ ಬಲದ ದೇಶಗಳು ಆಕ್ರಮಿಸುವ ಪರಿಪಾಟ ಕಂಡುಬರುತ್ತಿಲ್ಲ.

ಇನ್ನು ಮುಂಬರುವ ದಿನಗಳಲ್ಲಿ ಪರಸ್ಪರ ಸಹಕಾರ, ತಿಳಿವು, ಒಪ್ಪಂದ, ವೈಜ್ಞಾನಿಕ ಮುನ್ನಡೆ ಹಾಗೂ ಸಂಶೋಧನೆಗಳಿಂದ ಪ್ರಪಂಚದ ದೇಶಗಳು ಅಭಿವೃದ್ಧಿಯೆಡೆಗೆ ಹಾಗೂ ಶಾಂತಿ ಸಹಕಾರಗಳೆಡೆಗೆ ಮುನ್ನಡೆಯುವ ದಿನಗಳು ಬರುವ ಸಂಭವ ಇದೆ. ಇದು ಮಾನವ ವಿಕಾಸದ ಮುಂದಿನ ಘಟ್ಟ. ಅದನ್ನು ತಲುಪಲು ಎಲ್ಲ ದೇಶಗಳಲ್ಲೂ ಅರಿವು ಹಾಗೂ ಚಿಂತನೆ ಮೂಡಬೇಕಾದ ಅಗತ್ಯ ಇದೆ. ಅಂಥ ಚಿಂತನೆಯನ್ನು ರೂಪಿಸಲು ಪ್ರಪಂಚದ ಎಲ್ಲ ದೇಶಗಳ ಚಿಂತಕರು, ವಿಜ್ಞಾನಿಗಳು, ಮೇಧಾವಿಗಳು ಪ್ರಯತ್ನಿಸಬೇಕಾದ ಅಗತ್ಯ ಇದೆ.

ಪಿತೃ ಪ್ರಾಧಾನ್ಯತೆಯ ಪುರುಷಾರ್ಥ!


-ಡಾ.ಎಸ್.ಬಿ. ಜೋಗುರ


 

ಪಿತೃಪ್ರಾಧಾನ್ಯತೆ ಎನ್ನುವದು ಸರ್ವತ್ರವಾಗಿ ಎಲ್ಲಾ ಕಡೆಗಳಲ್ಲಿ ಅಲ್ಲದಿದ್ದರೂ ವಿಶ್ವದ ಬಹುತೇಕ ಕಡೆಗಳಲ್ಲಿ ಅಸ್ಥಿತ್ವದಲ್ಲಿರುವ ಸಾಮಾಜಿಕ ರಚನೆಯ ಒಂದು ಸಾಮಾನ್ಯ ಭಾಗವಾಗಿದ್ದು, ಇಲ್ಲಿ ತಂದೆಯ ಪ್ರಭಾವವೇ ಪ್ರಧಾನವಾಗಿದ್ದು, ಪುರುಷರು ಮಹಿಳೆಯರ ಮೇಲೆ ತಮ್ಮ ಅಧಿಪತ್ಯವನ್ನು ಚಲಾಯಿಸುವ ವ್ಯವಸ್ಥೆಯಿದು. ಇದಕ್ಕೆ ವ್ಯತಿರಿಕ್ತವಾಗಿ ಮಹಿಳೆಯರೇ ಪ್ರಧಾನವಾಗಿರುವ ಮಾತೃಪ್ರಧಾನ ವ್ಯವಸ್ಥೆ ತೀರಾ ಅಪರೂಪ ಎನ್ನುವ ಹಾಗೆ ಅಲ್ಲಲ್ಲಿ ಉಳಿದುಕೊಂಡಿರುವದಿದೆ. ಈ ಪಿತೃಪ್ರಾಧಾನ್ಯತೆ ಎನ್ನುವದು ಒಂದು ಲಿಂಗ ಇನ್ನೊಂದು ಲಿಂಗಕ್ಕಿಂತಾ [ಗಂಡು ಹೆಣ್ಣಿಗಿಂತ] ಸ್ವಾಭಾವಿಕವಾಗಿಯೇ ಶ್ರೇಷ್ಟ ಎನ್ನುವದನ್ನು [ವೈಜ್ಞಾನಿಕವಾಗಿ ಅಲ್ಲದಿದ್ದರೂ] ತಲೆತಲಾಂತರದಿಂದಲೂ ಪ್ರತಿಪಾದಿಸಿಕೊಂಡೇ ಬಂದಿದೆ. ಅತ್ಯಂತ ಸರಳ ಶ್ರಮವಿಭಜನೆ ಇರುವ ಸಮಾಜಗಳಿಂದ ಹಿಡಿದು ಸದ್ಯದ ಸಂಕೀರ್ಣ ಸಮಾಜಗಳವರೆಗೆ ನಾವು ಅದೇ ಮನೋಭಾವವನ್ನು ಕಾಣಬಹುದು. ಈ ಪುರುಷಪ್ರಾಧಾನ್ಯತೆಯ ವ್ಯವಸ್ಥೆಯಿಂದ ರೂಪಿತವಾದ ಲಿಂಗವಾದದಲ್ಲಿ ಸುಮಾರು ಅರ್ಧದಷ್ಟು ಜನಸಂಖ್ಯೆಯ ಸಾಮರ್ಥ್ಯ ಮತ್ತು ಪ್ರತಿಭೆ ಸರಿಯಾಗಿ ಬಳಕೆಯಾಗುವದಿಲ್ಲ. ಮರ್ಲಿನ್ ಫ್ರೆಂಚ್ [1985] ಎನ್ನುವ ಚಿಂತಕರು ಹೇಳುವಂತೆ. “ಈ ಪುರುಷ ಪ್ರಧಾನ ವ್ಯವಸ್ಥೆ ಪುರುಷನನ್ನು ಸದಾ ಮಹಿಳೆಯ ಮೇಲೆ ನಿಯಂತ್ರಣ ಹೇರುವಂತೆ ಒತ್ತಾಯ ತರುತ್ತದೆ. ಇದು ಕೆಲ ಬಾರಿ ಪುರುಷರಲ್ಲಿ ಉದ್ವೇಗ ಉಲ್ಬಣವಾಗಲು, ಅಪಘಾತಗಳು ಜರುಗಲು, ಹೃದಯಾಘಾತ ಸಂಭವಿಸಲೂ ಕಾರಣವಾಗುತ್ತದೆ,’ ಎಂದಿರುವರು. ಮಾನವನ ಭಾವನೆ, ವಿಚಾರಗಳು, ಕ್ರಿಯೆಗಳು ಆ ಸಮಾಜದ ಸಂಸ್ಕೃತಿಯ ಮೂಲಕ ನಿರ್ಧಾರವಾಗುವಂತಿದ್ದಾಗ ಅವರು ಮುಕ್ತವಾಗಿ ಮಾನವೀಯ ಗುಣಗಳನ್ನು ಹೊರಹಾಕಲಾರರು. ಅದರಲ್ಲೂ ವಿಶೇಷವಾಗಿ ಪುರುಷ ಪ್ರಧಾನ ಸಮಾಜದಲ್ಲಿಯ ಪುರುಷರ ಪಾತ್ರ ಪ್ರಜ್ಞೆಯೇ ಅವರನ್ನು ರೋಗಗ್ರಸ್ಥರನ್ನಾಗಿಸಲು ಸಾಕು. ಮರ್ಯಾದಾ ಹತ್ಯೆಯ ಸಂದರ್ಭದಲ್ಲಿ ಆ ಯುವತಿಯ ಸಹೋದರ..ಚಿಕ್ಕಪ್ಪ..ದೊಡ್ದಪ್ಪ..ಅಪ್ಪ ಎನ್ನುವಂಥಾ ಪುರುಷಮಣಿಗಳೇ ಹೆಚ್ಚಾಗಿ ದೌರ್ಜನ್ಯಗಳನ್ನು ಎಸಗಿರುವ ಉದಾಹರಣೆಗಳಿವೆ.

ಸ್ತ್ರೀ ಸಮಾನತೆ, ಲಿಂಗ ಸಮಾನತೆ, ಮಹಿಳಾ ವಿಮೋಚನೆ ಎನ್ನಬಹುದಾದ ಮಾತುಗಳು ಬಹುತೇಕವಾಗಿ ಪ್ರಬಂಧ ಇಲ್ಲವೇ ಭಾಷಣದ ವಿಷಯವಾಗಿರುವದು ವಾಸ್ತವ. ಮಹಿಳಾ ವೇದಿಕೆಯಲ್ಲಿ ಮಹಾದೇವಿಯಕ್ಕನ ವಚನ ಬಳಸಿ, ವಿಮೋಚನೆಯ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡಿದ ಪುರುಷರು ಮನೆಗೆ ಮರಳಿದ್ದೇ ಮತ್ತೆ ತಮ್ಮ ಅಧಿಪತ್ಯ ಚಲಾವಣೆಯನ್ನು ಶುರು ಹಚ್ಚಿಕೊಳ್ಳುತ್ತಾರೆ. ಅತ್ಯಂತ ಲಿಬರಲ್ ಸೊಸೈಟಿಗಳೆಂದು ಕರೆಯಿಸಿಕೊಳ್ಳುವ ನೆಲೆಗಳಲ್ಲಿಯೂ ಮಹಿಳೆ ತನ್ನ ಜನನ ನಿಯಂತ್ರಣ ವಿಧಾನಗಳ ಮೇಲೆ ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಲಾಗಿಲ್ಲ. ಪ್ರತಿಯೊಂದು ಸಮಾಜದಲ್ಲಿಯ ಪುರುಷಗಣ ಮಹಿಳೆಯ ಸ್ವಾತಂತ್ರ್ಯವನ್ನು ಪರೋಕ್ಷವಾಗಿ ಅದುಮಿ ಹಿಡಿಯುವುದೇ ಪೌರುಷದ ಸಂಕೇತವೆಂದು ಭಾವಿಸಿರುವುದಿದೆ. ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಪುರುಷೋತ್ತಮರ ಬದುಕಿನ ಬಹುಭಾಗ ಮಹಿಳೆಯ ಮೇಲಿನ ಹಿಡಿತವನ್ನು ಬಿಗಿಗೊಳಿಸುವ ಕಸರತ್ತಿನಲ್ಲಿಯೇ ಕಳೆದುಹೋಗುತ್ತದೆ.

ನನಗಾಗ 8-10 ವರ್ಷ ಇದ್ದಿರಬಹುದು. ಕೇರಿಯೊಳಗಿನ ಪೋರನೊಂದಿಗೆ ಕುಸ್ತಿ ಹಿಡಿಯಲು ನಮ್ಮ ತಂದೆ ನನ್ನನ್ನು ಹುರಿದುಂಬಿಸುತ್ತಿದ್ದರು. ನಾನು ಒಂದೊಮ್ಮೆ ಸೋತು ಜೊಲು ಮುಖ ಹಾಕಿದರೆ, “ಲೇ..ಹುಡಿಗೇರು ಅತ್ತಂಗ ಅಳ್ತಿಯಲ್ಲಲೇ..” ಅನ್ನವರು. ಪುರುಷನೊಬ್ಬ ಅಳುವದನ್ನು ಪುರುಷ ಬಿಡಿ, ಮಹಿಳೆಯರೂ ಸಹಿಸುವದಿಲ್ಲ. ಹಾಗಾಗಿಯೇ “ನಗುವ ಹೆಂಗಸು ಹಾಗೂ ಅಳುವ ಗಂಡಸು” ಇಬ್ಬರೂ ತಾತ್ಸಾರದ ಪ್ರತೀಕವೇ. ಅಡುಗೆ ತಯಾರಿಸುವವರೇ ಕೊನೆಯಲ್ಲಿ ಊಟ ಮಾಡುವ ಪರಿಪಾಠ ಇಂದಿಗೂ ನಮ್ಮ ನಿಮ್ಮ ಮನೆಯಲ್ಲಿದೆ. ಹಾಗಿರುವ ಪರಿಪಾಠವನ್ನೇ ಒಂದು ಸುಸಂಸ್ಕೃತ ಮನೆತನದ ಪರಂಪರೆ ಎನ್ನುವಂತೆ ಅದನ್ನು ಕಾಪಾಡಿಕೊಂಡು ಬಂದದ್ದು, ಉಳಿದದ್ದು ಮಾತ್ರ ವಿಚಿತ್ರ ಹಾಗೂ ವಿಷಾದವೆನಿಸುತ್ತದೆ.

ಇಂದು ನಮ್ಮೆಲ್ಲರ ಮನೆಗಳಲ್ಲಿಯ ಮನಸುಗಳನ್ನು ದೂರದರ್ಶನದಲ್ಲಿಯ ಮಸಾಲಾ ಧಾರವಾಹಿಗಳು ಮತ್ತು ರಿಯಾಲಿಟಿ ಶೋಗಳು ಆಳುತ್ತವೆ. ಕಾರ್ಯಕ್ರಮದ ಮಧ್ಯೆ ಅದೊಂದು ಜಾಹಿರಾತು. ಆ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವ ಮಾಡೆಲ್ ಅಂತರರಾಷ್ಟ್ರೀಯ ಮಟ್ಟದ ನಟ. ಆತ ಜಾಹಿರಾತಿನಲ್ಲಿ ಒಬ್ಬ ಯುವಕನಿಗೆ ನೀನು ಸುಂದರವಾಗಿ ಕಾಣಬೇಕೆ..? ಹುಡುಗಿಯರ ಕ್ರೀಂ ಅನ್ನು ಬಳಸಬೇಡ, ಪುರುಷರ ಕ್ರೀಂ ಬಳಸು. ಎಂದು ಹೇಳುವಲ್ಲಿಯೂ ಒಂದು ಪ್ರಜ್ಞಾತೀತವಾದ ಲಿಂಗತರತಮ ನೀತಿ ಅಡಗಿದೆ ಎನಿಸುವದಿಲ್ಲವೇ?

ನನ್ನೊಂದಿಗೆ ಬೆಳೆದ ನನ್ನ ಸಹೋದರಿಯರಿಗೆ ಅಮ್ಮ ತಾಕೀತು ಮಾಡುತ್ತಿದ್ದುದೇ ಹೆಚ್ಚಾಗಿತ್ತು. ಅವರು ಜೋರಾಗಿ ನಕ್ಕರೆ, ಬಾಗಿಲಲ್ಲಿ ನಿಂತರೆ, ಎಲ್ಲೋ ಕುಳಿತರೆ, ಗೆಳತಿಯರೊಂದಿಗೆ ಹರಟಿದರೆ ಅವ್ವ ಹೇಳಿಯೇ ಬಿಡುತ್ತಿದ್ದಳು. “ಅದೇನು ಹಲ್ಲು ಕಿಸಿಯುತ್ತೀರಿ.. ಹುಡುಗರಂಗೆ” ಎಂದು. ಹುಡುಗಿಯಾದವಳು ದೊಡ್ದವಳಾಗುತ್ತಿದ್ದಂತೆ, ಹೆತ್ತವಳೇ “ನೀನೊಂದು ಹೆಣ್ಣು ಎನ್ನುವದನ್ನು ಮರೀಬೇಡ” ಎಂದು ವಾರ್ನಿಂಗ್ ಮಾಡುವದಿದೆಯಲ್ಲಾ.. ಅದು ಕೂಡಾ ಪುರುಷ ಪ್ರಧಾನ ಸಮಾಜದ ಹಿತಾಸಕ್ತಿಯ ಬಗೆಗಿನ ಕಾಳಜಿಯೇ ಆಗಿದೆ. ಆ ಕಾಳಜಿ ಹಾಗೆ ಹೆಣ್ಣಿನಲ್ಲಿಯೂ ಮೂಡುವಂತೆ ಮಾಡಿದ ಹುನ್ನಾರ ಯಾರದು?

ಕೂಡುವಲ್ಲಿ, ನಿಲ್ಲುವಲ್ಲಿ, ಮಲಗುವಲ್ಲಿ, ತಿನ್ನುವಲ್ಲಿಯೂ ಹೆಣ್ತನವಿರಬೇಕು ಅದೇ ಸರಿ ಎನ್ನುವಂತೆಯೇ ಹುಡುಗರಿಗೆ ಪುರುಷ ಪ್ರಧಾನ ಸಮಾಜದ ಸ್ಥಾಪಿತ ನಿಯಮಗಳಂತಿರಬೇಕು ಎಂದು ಒತ್ತಾಯಿಸುವದೂ ಇದೆ. ಆ ಮೂಲಕ ಲಿಂಗತರತಮ ನೀತಿಯನ್ನು ಕಾಪಾಡಿಕೊಳ್ಳುವ ಹಿಕಮತ್ತೂ ಅಡಗಿದೆ. ನಾನಾಗ ಡಿಗ್ರಿಯಲ್ಲಿ ಓದುತ್ತಿದ್ದೆ. ಅಮಿತಾಬ್‌ನ ‘ದಿವಾರ್’ ಸಿನೇಮಾ ಹಾವಳಿಯಲ್ಲಿ ನನ್ನ ಹೇರ್ ಸ್ಟೈಲೇ ಬದಲಾಯಿತು. ನನ್ನ ಅಪ್ಪ ನನಗೆ ವಾರ್ನಿಂಗ್ ಮಾಡಿಯೇ ಬಿಟ್ಟರು. “ಅದೇನಲೇ ನಡುವೆ ಬೈತಲು ತಗದೀದಿ ಹೆಂಗಸರಂಗೆ, ನೆಟ್ಟಗ ಬಾಚಕೋ ಇಲ್ಲಾ ತಲಿನೇ ಬೋಳಸತೀನಿ,” ಅಂದಿದ್ದು ಈಗಲೂ ನೆನಪಿದೆ. ಇತ್ತೀಚಿಗೆ ನನ್ನ ಸ್ನೇಹಿತನೊಬ್ಬ ನಾನು ತೊಟ್ಟ ಒಂದು ಬಣ್ಣದ ಡಿಸೈನರ್ ಶರ್ಟ್ ಒಂದನ್ನು ನೋಡಿ, “ಇದ್ಯಾಕ ತಗೊಂಡಿಯೋ… ಹುಡ್ಗೀರ ಥರಾ” ಎಂದದ್ದನ್ನು ಕೇಳಿ ಮನದಲ್ಲೇ ನಕ್ಕಿದ್ದೆ. ಅಂದರೆ ನಮ್ಮ ಸಮಾಜದಲ್ಲಿ ಸಾಮಾಜಿಕ ಅಂತರಕ್ರಿಯೆಯ ಸಂದರ್ಭದಲ್ಲಿಯೂ ನಾವು ಗಂಡು, ಗಂಡಿನ ಸ್ಥಾಪಿತ ಮಾರ್ಗದಲ್ಲಿಯೇ ನಡೆಯಬೇಕೆಂದೂ, ಹೆಣ್ಣು ಆಕೆಗೆಂದೇ ನಿಗದಿಪಡಿಸಿದ ರೀತಿನೀತಿಗಳಿಗೆ ತಕ್ಕ ಹಾಗೆ ಇರಬೇಕು ಎನ್ನುವದು, ಹಾಗಿರುವದು ಮಾತ್ರ ಸಮಾಜ ಸ್ವೀಕೃತವಾದ ವರ್ತನೆ. ಜೈವಿಕ ಭೇದಗಳನ್ನು ಅನುಲಕ್ಷಿಸಿ “ನೀನು ಗಂಡು ಗಂಡಿನಂತಿರು, ನೀನು ಹೆಣ್ಣು ಹೆಣ್ಣಿನಂತಿರು” ಎನ್ನುವ ಮೂಲಕ ಲಿಂಗತರತಮ ನೀತಿಯಲ್ಲಿ ಒಂದು ಬಗೆಯ ಯಥಾಸ್ಥಿತಿಯನ್ನು ಕಾಪಾಡಿಕೊಂಡು ಹೋಗುವಲ್ಲಿಯೂ ನಾವು ಹಿಂದೆ ಬಿದ್ದಿಲ್ಲ.

ಶಾರೀರಿಕವಾಗಿ ಗಂಡು ಗಂಡಿನಂತಿರುವದು, ಹೆಣ್ಣು ಹೆಣ್ಣಿನಂತಿರುವಲ್ಲಿ ಯಾವ ತಕರಾರುಗಳೂ ಬೇಡ. ಆದರೆ ಸಾಂಸ್ಕೃತಿಕ ಕಟ್ಟಳೆಗಳ ಹಿನ್ನೆಲೆಯಲ್ಲಿ ಗಂಡಿನ ವರ್ತನಾ ಮಾದರಿಗಳೆಂದು ಸಾವಿರಾರು ವರ್ಷಗಳಿಂದ ಅನೂಚಾನವಾಗಿ ಸಾಗಿಸಿಕೊಂಡು ಬಂದಿರುವದು, ಬರುತ್ತಿರುವದರ ಬಗ್ಗೆ ಆಕ್ಷೇಪಗಳು ಇರಬೇಕಾದದ್ದೇ. ಅಷ್ಟು ಮಾತ್ರವಲ್ಲದೇ ಗಂಡಿನ ವರ್ತನಾ ಮಾದರಿಗಳ ವೈಪರೀತ್ಯದಲ್ಲಿ ಎಲ್ಲ ಬಗೆಯ ರಿಯಾಯತಿಗಳಿವೆ. ಸರಿಯೋ ತಪ್ಪೋ.. ಒಟ್ಟಿನಲ್ಲಿ ‘ನಾನು ಗಂಡಸು’ ಇಲ್ಲವೇ ‘ಅವನು ಗಂಡಸು’ ಎಂದು ಪ್ರತಿಪಾದಿಸುವ ರೀತಿ ಮಾತ್ರ ಲಿಂಗತರತಮ ನೀತಿಯ ಪರವಾಗಿ ಮತನಾಡಿದಂತಿರುತ್ತದೆ. ಅದು ಸರಿಯಾದ ಕ್ರಮ ಎಂದರೆ ‘ಅವಳು ಹೆಂಗಸು’ ಎನ್ನುವ ರಿಯಾಯತಿಗಳು ಅಲ್ಲಿ ಏಕಿಲ್ಲ? ಎನ್ನುವ ಪ್ರಶ್ನೆ.. ಗಂಡು ಅಪವರ್ತಿಯಾದಾಗಲೂ ‘ಅವನು ಗಂಡಸು’ ಅನ್ನುವ ರಿಯಾಯಿತಿ ಕೊಟ್ಟವರಾರು? ಈ ಪ್ರಶ್ನೆಗೆ ಮತ್ತೆ ಅದೇ ಪುರುಷ ಪ್ರಾಧಾನ್ಯತೆಯದೇ ಉತ್ತರ.

ಪುರುಷ ಪ್ರಾಧಾನ್ಯತೆ ಎನ್ನುವದು ತನ್ನ ಹುಳುಕುಗಳನ್ನು ಮರ್ಯಾದೆಯ ಜೊತೆಗೆ ಥಳುಕು ಹಾಕಿಕೊಳ್ಳದೇ ಕೇವಲ ಹೆಣ್ಣಿಗೆ ಮಾತ್ರ ಶೀಲ..ಚಾರಿತ್ರ್ಯ, ನಡತೆ ಎನ್ನುವ ಭವ್ಯ ಮರ್ಯಾದಿತ ವರ್ತನೆಗಳನ್ನು ಮಹಿಳೆಗೆ ಗುತ್ತಿಗೆ ಕೊಟ್ಟಂತೆ ವರ್ತಿಸುವ ನಡುವೆ ಹತ್ಯೆ ಮಾಡಿದರೂ ಅದು ಮರ್ಯಾದೆಯ ಕಾರಣಕ್ಕಾಗಿ ಸಹ್ಯ ಎನ್ನುವ ರೇಡಿಮೇಡ್ ಮನೋಭೂಮಿಕೆಯೊಂದು ಎಲ್ಲ ಕಾಲಕ್ಕೂ ಇದೆ. ಹೆಣ್ಣಿನ ಈ ಕೆಳಗಿನ ವರ್ತನೆಗಳನ್ನು ಸಹಿಸದಿರುವ ಗಂಡು ತನ್ನ ಇದೇ ವರ್ತನೆಗಳನ್ನು ಮಾಮೂಲು ಎನ್ನುವಂತೆ ಸ್ವೀಕರಿಸುವದನ್ನು ನೋಡಿದಾಗ ಪುರುಷ ಪ್ರಾಧಾನ್ಯತೆಯ ಪೌರುಷ ಮನದಟ್ಟಾಗದೇ ಇರದು. ಇಂಥಾ ಪುರುಷ ಪ್ರಧಾನ ಸಮಾಜ ಈ ಕೆಳಗಿನ ಕಾರಣಗಳಿಗಾಗಿ ಕಳೆದುಕೊಂಡ ಮರ್ಯಾದೆಗಾಗಿ ಹೆಣ್ಣನ್ನು ಹತ್ಯೆ ಮಾಡಿ ಕೃತಾರ್ಥರಾಗುವ ಕ್ರಮ ಅತ್ಯಂತ ಹೇಯವಾದುದು.

  • ಆಕೆ ವಿವಾಹ ಪೂರ್ವ ಸಂಬಂಧದಲ್ಲಿ ಸಿಲುಕಿದ್ದರೆ
  • ವಿವಾಹಪೂರ್ವ ಸಂಬಂಧದಿಂದ ತಾಯಿಯಾಗಿದ್ದರೆ
  • ವಿಶ್ವಾಸದ್ರೋಹ
  • ಅನೈತಿಕ ಸಂಬಂಧ
  • ಹೇಳದೇ ತಂದೆಯ ಇಲ್ಲವೇ ಗಂಡನ ಮನೆ ಬಿಟ್ಟು ಪರಾರಿಯಾಗಿದ್ದರೆ
  • ಊರಲ್ಲಿ ಊಹಾಪೋಹಗಳಿಗೆ ಕಾರಣವಾಗಿದ್ದರೆ
  • ಹಗರಣಗಳಲ್ಲಿ ಸಿಲುಕಿದ್ದರೆ
  • ಬಲತ್ಕಾರಕ್ಕೆ ಒಳಗಾದರೆ

ಹೀಗೆ ಇಂಥಾ ಅನೇಕ ಕಾರ್ಯಗಳಿಗೆ ಸ್ವತ: ಪುರುಷನೇ ಕಾರಣಕರ್ತನಾಗಿದ್ದರೂ ತಾನು ಅತ್ಯಂತ ಅಮಾಯಕನೆನ್ನುವ ಹಾಗೆ ಹೆಣ್ಣನ್ನು ಬಲಿಪಶು ಮಾಡುವ ಹುನ್ನಾರ ಪಿತೃಪ್ರಧಾನ ಸಮಾಜಗಳಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿದೆ.

(ಚಿತ್ರಕೃಪೆ: ವಿಕಿಪೀಡಿಯ)

ಬಲಿಷ್ಠ ರಾಷ್ಟ್ರಗಳ ಸೇನಾ ಶಕ್ತಿಯ ಸನ್ನಿ

ಆನಂದ ಪ್ರಸಾದ್

ಪ್ರಪಂಚದಲ್ಲಿ ದೇಶದೇಶಗಳ ನಡುವೆ ಅಪನಂಬಿಕೆ ಹಾಗೂ ಆಕ್ರಮಣದ ಭೀತಿಯಿಂದಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಪಾರವಾದ ಹಣ ಮಿಲಿಟರಿಗಾಗಿ ವೆಚ್ಚವಾಗುತ್ತಿದೆ. 2010 ರಲ್ಲಿ ವಿಶ್ವದಾದ್ಯಂತ ಮಿಲಿಟರಿಗಾಗಿ ವ್ಯಯಿಸಿದ ಹಣದ ಒಟ್ಟು ಮೊತ್ತ 81 ಲಕ್ಷ ಕೋಟಿ ರೂಪಾಯಿಗಳು ಎಂದು ಅಂತರ್ಜಾಲ ಮಾಹಿತಿಯಿಂದ ತಿಳಿದುಬರುತ್ತದೆ. ಇದರಲ್ಲಿ ಸಿಂಹಪಾಲು ಅಂದರೆ 43% ಹಣ ಅಮೆರಿಕಾದ ಮಿಲಿಟರಿ ವೆಚ್ಚವಾದರೆ ನಂತರದ ಸ್ಥಾನದಲ್ಲಿ ಚೀನಾ (7.3%), ಬ್ರಿಟನ್ (3.7%), ಫ್ರಾನ್ಸ್ (3.6%), ರಷ್ಯಾ (3.6%) ಬರುತ್ತವೆ. ಒಂದು ನಾಗರೀಕ, ಮಾನವೀಯ ಹಾಗೂ ವಿವೇಕಯುತ ಸ್ಥಿತಿಯನ್ನು ನಮ್ಮ ಮಾನವ ಜನಾಂಗ ಇನ್ನೂ ತಲುಪಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಶ್ರೀಮಂತ ದೇಶಗಳೇ ತಮ್ಮ ರಕ್ಷಣೆಗಾಗಿ ಹೆಚ್ಚು ವೆಚ್ಚಮಾಡಬೇಕಾಗಿ ಬಂದಿರುವುದು ಅವರ ಶ್ರೀಮಂತಿಕೆಯನ್ನು ರಕ್ಷಿಸಿಕೊಳ್ಳಲಿಕ್ಕೆ ಆಗಿರಬಹುದು. ಮಿಲಿಟರಿಗಾಗಿ ಈ ರೀತಿ ಅಪಾರ ವ್ಯಯ ಮಾಡುವ ಬದಲು ಇದೇ ಹಣವನ್ನು ವಿಶ್ವದ ಎಲ್ಲೆಡೆ ವಿಕಾಸಕ್ಕೆ ಬಳಸಿದ್ದರೆ ಈ ಅಪನಂಬಿಕೆ ಕಡಿಮೆಯಾಗಿ ಎಲ್ಲರೂ ಸಮಾನ ಅಭಿವೃದ್ಧಿಯನ್ನು ಹೊಂದಲು ಸಾಧ್ಯವಿದೆ. ಇದಕ್ಕಾಗಿ ಅಂತರರಾಷ್ಟ್ರೀಯ ಒಪ್ಪಂದಗಳನ್ನು ಮಾಡಿಕೊಂಡು ಮಿಲಿಟರಿ ವೆಚ್ಚವನ್ನು ತಗ್ಗಿಸಿ ಅದೇ ಹಣವನ್ನು ಮಾನವ ಜನಾಂಗದ ವಿಕಾಸಕ್ಕೆ ಬಳಸಲು ಮುಂದಾಗುವ ವಿಶ್ವ ನಾಯಕತ್ವದ ಅಗತ್ಯವಿದೆ.

ಪ್ರಪಂಚದ ಎಲ್ಲ ದೇಶಗಳೂ ಈಗ ಇರುವ ಭೌಗೋಳಿಕ ಗಡಿಯ ಸ್ಥಿತಿಯನ್ನು ಒಪ್ಪಿಕೊಂಡು ಇದೇ ಸ್ಥಿತಿಯನ್ನು ಕಾಯ್ದುಕೊಳ್ಳಲು ಹಾಗೂ ಯಾವುದೇ ಒಂದು ದೇಶ ಇನ್ನೊಂದು ದೇಶದ ಮೇಲೆ ಆಕ್ರಮಣ ಮಾಡಲು ಸಾಧ್ಯವಾಗದಂತೆ ಅಂತರರಾಷ್ಟ್ರ್ರೀಯ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿದೆ. ಹೀಗೆ ಮಾಡುವುದರಿಂದ ಯಾವುದೇ ದೇಶ ಅದು ಸಣ್ಣದಿರಲಿ ದೊಡ್ಡದಿರಲಿ, ಶ್ರೀಮಂತ ಅಥವಾ ಬಡ ದೇಶವಿರಲಿ ಮಿಲಿಟರಿಗಾಗಿ ಅಪಾರ ವೆಚ್ಚ ಮಾಡದೆ ಅದೇ ಹಣವನ್ನು ತನ್ನ ನಾಗರೀಕರ ಅಭಿವೃದ್ಧಿಗೆ ಬಳಸಿಕೊಳ್ಳಲು ಸಾಧ್ಯವಾಗಬಹುದು. ಯಾವುದೇ ಒಂದು ದೇಶ ಒಪ್ಪಂದವನ್ನು ಉಲ್ಲಂಘಿಸಿ ಇನ್ನೊಂದು ದೇಶದ ಮೇಲೆ ಆಕ್ರಮಣ ಮಾಡಿದ್ದೇ ಆದಲ್ಲಿ ಆ ದೇಶವನ್ನು ಎಲ್ಲ ದೇಶಗಳೂ ಸೇರಿ ಸೋಲಿಸಿ ಇನ್ನೆಂದೂ ಆ ರೀತಿ ಆಕ್ರಮಣ ಮಾಡದಂತೆ ಮಾಡಲು ಸಾಧ್ಯವಿದೆ.

ಇದಕ್ಕಾಗಿ ಎಲ್ಲ ದೇಶಗಳ ಸೈನಿಕರನ್ನು ಒಳಗೊಂಡ ಒಂದು ಅಂತರರಾಷ್ಟ್ರೀಯ ಸೈನ್ಯದ ಸ್ಥಾಪನೆ ಮಾಡಬೇಕು ಹಾಗೂ ಇದರ ವೆಚ್ಚವನ್ನು ಎಲ್ಲ ದೇಶಗಳು ನಿಗದಿಪಡಿಸಿದ ರೀತಿಯಲ್ಲಿ ಪಾವತಿಸುವ ವ್ಯವಸ್ಥೆ ಮಾಡಬಹುದು. ಈ ವೆಚ್ಚ ಈಗ ಪ್ರತೀ ದೇಶವೂ ತನ್ನ ರಕ್ಷಣೆಗಾಗಿ ವ್ಯಯಿಸುತ್ತಿರುವ ವೆಚ್ಚದ 5% ಕ್ಕಿಂತ ಹೆಚ್ಚು ಬರಲಾರದು. ರಕ್ಷಣಾ ಸಾಮಗ್ರಿಗಳಾದ ಆಯುಧಗಳು, ಬಂದೂಕುಗಳು, ಟ್ಯಾಂಕ್, ಫಿರಂಗಿ, ಯುದ್ಧ ವಿಮಾನ, ಯುದ್ಧ ಹಡಗು, ಖಂಡಾಂತರ ಕ್ಷಿಪಣಿಗಳು, ಜಲಾಂತರ್ಗಾಮಿ ಇತ್ಯಾದಿಗಳ ಅಭಿವೃದ್ಧಿಯನ್ನು ಎಲ್ಲ ದೇಶಗಳೂ ಸ್ಥಗಿತಗೊಳಿಸಬೇಕು ಮತ್ತು ಇಂಥ ಉತ್ಪಾದನೆ ಅಂತರರಾಷ್ಟ್ರೀಯ ಸೈನ್ಯ ಮಾತ್ರ ಮಾಡುವಂತೆ ಒಪ್ಪಂದ ಮಾಡಿಕೊಳ್ಳಬೇಕು. ಇದರಿಂದ ಎಲ್ಲ ದೇಶಗಳೂ ರಕ್ಷಣಾ ಸಾಧನಗಳಿಗಾಗಿ ಅಪಾರ ಹಣ ವ್ಯಯಿಸುವುದನ್ನು ತಡೆದು ಆ ಹಣವನ್ನು ತನ್ನ ನಾಗರೀಕರ ಉನ್ನತಿಗೆ ಬಳಸಲು ಸಾಧ್ಯವಾಗುತ್ತದೆ. ಇಂಥ ಒಂದು ವ್ಯವಸ್ಥೆ ಅಸಾಧ್ಯ ಎಂದು ಅನಿಸಬಹುದು. ಆದರೆ ಇಂಥ ಚಿಂತನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದರೆ ಮುಂದೊಂದು ದಿನ ಇಂಥ ವ್ಯವಸ್ಥೆ ಸಾಕಾರವಾಗಲು ಸಾಧ್ಯವಿದೆ.

ನಮ್ಮ ದೇಶವನ್ನೇ ತೆಗೆದುಕೊಂಡರೆ ಬ್ರಿಟಿಷರು ಭಾರತಕ್ಕೆ ಬರುವ ಮೊದಲು ನಮ್ಮ ದೇಶದಲ್ಲಿ ನೂರಾರು ರಾಜರುಗಳು ಮತ್ತು ಪಾಳೇಯಗಾರರು ಆಗಾಗ ಯುದ್ಧ ಮಾಡುತ್ತಾ ಪ್ರತಿಯೊಬ್ಬ ರಾಜನೂ, ಪ್ರತಿಯೊಂದು ರಾಜ್ಯವೂ ತನ್ನದೇ ಆದ ಸೈನ್ಯ ಹಾಗೂ ಶಸ್ತ್ರಗಳನ್ನು ಹೊಂದಬೇಕಾಗಿತ್ತು. ಆಗ ಭಾರತದ ಎಲ್ಲ ರಾಜರುಗಳು ಒಂದೇ ಸೈನ್ಯ ಮತ್ತು ಒಂದೇ ಸರ್ಕಾರದಡಿ ಬರುವುದನ್ನು ಊಹಿಸಲೂ ಸಾಧ್ಯವಿರಲಿಲ್ಲ ಅಲ್ಲವೇ? ಆದರೆ ಇಂದು ಪ್ರಜಾಪ್ರಭುತ್ವ ಮತ್ತು ಸಂವಿಧಾನ ರೂಪಿಸುವ ಮೂಲಕ ಎಲ್ಲಾ ರಾಜರುಗಳು ಒಂದೇ ಕೇಂದ್ರೀಯ ಆಡಳಿತದಲ್ಲಿ ಬರಲು ಸಾಧ್ಯವಾಗಿ ಪ್ರತಿ ರಾಜ್ಯವೂ ಸೈನ್ಯ ಹೊಂದಿರಬೇಕಾದ ಅಗತ್ಯ ಸಂಪೂರ್ಣವಾಗಿ ಬದಲಾಗಿಲ್ಲವೇ? ಸಂವಿಧಾನವೆಂಬ ಒಂದು ಒಪ್ಪಂದದಡಿ ಬಂದ ಕಾರಣ ಎಲ್ಲಾ ರಾಜ್ಯಗಳೂ ಇನ್ನೊಂದು ರಾಜ್ಯದ ಆಕ್ರಮಣದ ಭೀತಿಯಿಲ್ಲದೆ ಶಾಂತಿಯಿಂದ ಇರಲು ಸಾಧ್ಯವಾಗಿದೆ. ಇದು ಕೆಲವು ಶತಮಾನಗಳ ಹಿಂದೆ ಸಾಧ್ಯವೇ ಇರಲಿಲ್ಲ. ಇದೇ ರೀತಿ ಅಂತರರಾಷ್ಟ್ರೀಯ ಪ್ರಯತ್ನಗಳಿಂದ ಅನ್ಯ ದೇಶಗಳ ಮೇಲೆ ಆಕ್ರಮಣ ನಿಷೇಧ ಒಪ್ಪಂದ ರೂಪಿಸಿ ಜಗತ್ತಿನ ಮಿಲಿಟರಿ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಿದೆ. ಮಾನವನು ನಾಗರಿಕತೆಯ ಮುಂದಿನ ಹಂತವನ್ನು ಏರಿದಾಗ ಇಂಥ ಸ್ಥಿತಿ ರೂಪುಗೊಳ್ಳಲು ಸಾಧ್ಯ.

ಒಂದು ಕುಟುಂಬವು ಇನ್ನೊಂದು ಕುಟುಂಬದ ಜಮೀನಿನ ಮೇಲೆ ಆಕ್ರಮಣ ಮಾಡಲು ಸಾಧ್ಯವಾಗದಂತೆ ನಮ್ಮಲ್ಲಿ ಕಾನೂನುಗಳು ಇದ್ದು ಯಾರೂ ಇನ್ನೊಬ್ಬರ ಜಮೀನಿನ ಮೇಲೆ ಆಕ್ರಮಣ ಮಾಡಿ ವಶಪಡಿಸಿಕೊಳ್ಳಲಾಗದ ವ್ಯವಸ್ಥೆ ನಮ್ಮಲ್ಲಿ ಇದೆ. ಇದರ ಉಲ್ಲಂಘನೆ ಆಗದಂತೆ ನ್ಯಾಯಾಲಯಗಳು, ಪೋಲೀಸು ವ್ಯವಸ್ಥೆ ಇರುವ ಕಾರಣ ನಾವು ಪ್ರತಿಯೊಂದು ಕುಟುಂಬವೂ ಬೇರೊಬ್ಬರ ಆಕ್ರಮಣಕ್ಕೆ ಒಳಗಾಗದೆ ಬದುಕಲು ಸಾಧ್ಯವಾಗಿದೆ. ಇದರಿಂದ ನಾವು ಪ್ರತಿಯೊಂದು ಕುಟುಂಬವೂ ರಕ್ಷಣೆಗಾಗಿ ಆಯುಧಗಳನ್ನು ಹೊಂದಬೇಕಾಗಿಲ್ಲದ ಮತ್ತು ಅದಕ್ಕಾಗಿ ವೆಚ್ಚ ಮಾಡಬೇಕಾಗಿಲ್ಲದ ಭದ್ರತೆಯನ್ನು ಪಡೆದಿದ್ದೇವೆ. ಇದು ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರಿಗೂ ಅನ್ವಯವಾಗುತ್ತದೆ. ಇದೇ ವ್ಯವಸ್ಥೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲೂ ತರಲು ಸಾಧ್ಯವಿದೆ. ಅದಕ್ಕಾಗಿ ಮಾನವ ಜನಾಂಗ ಇನ್ನಷ್ಟು ನಾಗರೀಕತೆಯಲ್ಲಿ ಬೆಳೆಯಬೇಕಾದ ಅಗತ್ಯವಿದೆ.

ಅಂತರರಾಷ್ಟ್ರೀಯ ಶಸ್ತ್ರ ಮಾರಾಟ ಮಾಡಿ ಬಹಳಷ್ಟು ಆದಾಯ ಮಾಡಿಕೊಳ್ಳುವ ಕೆಲವು ಶ್ರೀಮಂತ ದೇಶಗಳಿಗೆ ಇಂಥ ಯೋಚನೆಗಳು ಹಿಡಿಸಲಾರವು. ಅವುಗಳೇ ಇಂಥ ಆಲೋಚನೆಗಳಿಗೆ ಅಡ್ಡಿಯಾಗಬಹುದು. ಉದಾಹರಣೆಗೆ ಅಮೆರಿಕಾವು 2010 ರಲ್ಲಿ 8.5 ಲಕ್ಷ ಕೋಟಿ ರೂಪಾಯಿಗಳಷ್ಟು ಮೊತ್ತದ ಶಸ್ತ್ರಗಳನ್ನು (ಒಟ್ಟು ವಿಶ್ವ ಶಸ್ತ್ರ ವಹಿವಾಟಿನ 39%) ಬೇರೆ ದೇಶಗಳಿಗೆ ಮಾರಾಟ ಮಾಡಿ ಹಣಗಳಿಸಿದೆ. ಸುಮಾರು ಇದರ ಅರ್ಧದಷ್ಟು ಮೊತ್ತದ ಶಸ್ತ್ರಗಳನ್ನು ರಷ್ಯಾವು ಬೇರೆ ದೇಶಗಳಿಗೆ ಮಾರಾಟ ಮಾಡಿಗಳಿಸುತ್ತದೆ. ಶಸ್ತ್ರಾಸ್ತ್ರಗಳ ಮಾರಾಟ ಮಾಡಿ ಹಣಗಳಿಸುವ ದೇಶಗಳು ನಾಗರೀಕತೆಯ ವಿಕಾಸಕ್ಕೆ ದೊಡ್ಡ ಅಡ್ಡಿಯಾಗಿರುವಂತೆ ಕಾಣುತ್ತದೆ. ಶಸ್ತ್ರಾಸ್ತ್ರ ಮಾರಾಟದ ಮೇಲೆ ದೇಶದ ಅರ್ಥ ವ್ಯವಸ್ಥೆ ಅವಲಂಬಿತವಾಗದಂತೆ ಅಮೆರಿಕಾವು ಕ್ರಮಗಳನ್ನು ಕೈಗೊಂಡು ವಿಶ್ವದ ನಾಗರೀಕತೆಯ ವಿಕಾಸಕ್ಕೆ ಮುಂದೆ ಬರಬೇಕಾದ ಅಗತ್ಯ ಇದೆ. ಬಹುಶ: ಮಾನವ ನಾಗರೀಕತೆಯ ವಿಕಾಸಕ್ಕೆ ಅಮೆರಿಕಾವೇ ಬಹಳ ದೊಡ್ಡ ಅಡ್ಡಿಯಾಗಿರುವಂತೆ ಕಾಣುತ್ತದೆ.

ವಿಜ್ಞಾನದ ಬೆಳವಣಿಗೆ ಮತ್ತು ಸಂಶೋಧನೆಗಳು ಮುಂದಿನ ದಿನಗಳಲ್ಲಿ ಮಾನವ ನಾಗರೀಕತೆಯ ವಿಕಾಸಕ್ಕೆ ಮಹತ್ವದ ಕೊಡುಗೆನೀಡಲು ಸಾಧ್ಯವಿದೆ. ಹೇಗೆಂದರೆ ಈಗ ವಿಶ್ವದ ವ್ಯವಸ್ಥೆ ನಿಂತಿರುವುದು ಪೆಟ್ರೋಲಿಯಂ ತೈಲದ ಮೇಲೆ. ಪೆಟ್ರೋಲಿಯಂ ತೈಲ ಮುಗಿದ ನಂತರ ಪರ್ಯಾಯ ಇಂಧನ ಅಭಿವೃದ್ಧಿ ಆದಾಗ ಪ್ರತಿ ದೇಶವೂ ತನ್ನದೇ ಆದ ಇಂಧನವನ್ನು ಉತ್ಪಾದಿಸಲು ಸಾಧ್ಯವಾದಾಗ ವಿಶ್ವದ ದೇಶಗಳ ನಡುವೆ ಇರುವ ಪೆಟ್ರೋಲಿಯಂ ತೈಲಕ್ಕಾಗಿ ಮೇಲಾಟ ನಿಲ್ಲಬಹುದು. ಪೆಟ್ರೋಲಿಯಂ ತೈಲಕ್ಕಿಂಥ ಅಗ್ಗವಾಗಿ ಬೇರೆ ಇಂಧನ ಉತ್ಪಾದಿಸುವ ತಂತ್ರಜ್ಞಾನವನ್ನು ವಿಜ್ಞಾನ ರೂಪಿಸಿದರೆ ಮತ್ತು ಇದು ಎಲ್ಲಾ ರಾಷ್ಟ್ರಗಳಿಗೂ ಉತ್ಪಾದಿಸಲು ಸಾಧ್ಯವಾಗುವಂತೆ ಅದಾಗ (ಉದಾ: ಸೌರ ವಿದ್ಯುತ್, ನೀರಿನಿಂದ ಇಂಧನ ಕೋಶಗಳು ಕೆಲಸ ಮಾಡುವಂಥ ತಂತ್ರಜ್ಞಾನ ಇತ್ಯಾದಿ) ದೇಶ ದೇಶಗಳ ನಡುವೆ ಇರುವ ಅಪನಂಬಿಕೆ ಕಡಿಮೆಯಾಗಿ ಮತ್ತು ಎಲ್ಲಾ ದೇಶಗಳೂ ಶಕ್ತಿ ಸಮೃದ್ಧತೆಯನ್ನು ಸಾಧಿಸಿ ಹೊಸ ವಿಶ್ವ ವ್ಯವಸ್ಥೆ ಬರಲು ಸಾಧ್ಯ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂಥ ಚಿಂತನೆ ನಡೆಯಬೇಕಾದ ಅಗತ್ಯ ಇದೆ.

 

ಸಂವಿಧಾನ ಶಿಲ್ಪಿಗೆ 121 ವರ್ಷವಾದರೂ ದಲಿತರಿಗೆ ಭೂಮಿ ದೊರೆತಿಲ್ಲ

-ನವೀನ್ ಸೂರಿಂಜೆ

“ಈ ದೇಶದಲ್ಲಿ ಬೇಕಾದಷ್ಟು ಮಹಾತ್ಮರು ಹುಟ್ಟಿದ್ದಾರೆ. ಹುಟ್ಟುತ್ತಾರೆ. ಆದರೆ ದಲಿತರು ದಲಿತರಾಗಿಯೇ ಸಾಯುತ್ತಾರೆ,” ಎಂದು ಅಂಬೇಡ್ಕರ್ ಹೇಳಿದ್ದರು. ಈ ಮಾತು ಸ್ವತಃ ಅಂಬೇಡ್ಕರ್‌ಗೂ ಅನ್ವಯಿಸುವಂತಹ ಸ್ಥಿತಿ ಈಗಲೂ ಭಾರತದಲ್ಲಿದೆ. ಅಂಬೇಡ್ಕರ್ ಎಂಬ ಮಹಾತ್ಮ ಹುಟ್ಟಿ 121 ವರ್ಷವಾದರೂ ದಲಿತರು ದಲಿತರಾಗಿಯೇ ಸಾಯುತ್ತಿದ್ದಾರೆ.

“ಸ್ವಾತಂತ್ರ್ಯದ ಒತ್ತಡದಲ್ಲಿ ಬ್ರಿಟಿಷರು ತಕ್ಷಣವೇ ಭಾರತವನ್ನು ಬಿಟ್ಟು ಹೋದರೆ ಆ ಸಮಾಜದಲ್ಲಿ ನನ್ನ ಜನಕ್ಕೆ ಭೂಮಿ ಮಾತ್ರ ಅಲ್ಲ ನೀರೂ ಸಿಗುವುದಿಲ್ಲ,” ಎಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ “ವಾಟ್ ಕಾಂಗ್ರೆಸ್ ಆ್ಯಂಡ್ ಗಾಂಧಿ ಹ್ಯಾವ್ ಡನ್ ಟು ದ ಅನ್‍ಟಚೆಬಲ್ಸ್” ಎಂಬ ಪುಸ್ತಕದಲ್ಲಿ ಉಲೇಖಿಸಿದ್ದ ಮಾತು ಅವರ 121 ನೇ ಜನ್ಮದಿನಾಚರಣೆ ಸಂದರ್ಭದಲ್ಲೂ ಅವರದ್ದೇ ಸಂವಿಧಾನವನ್ನು ಒಪ್ಪಿಕೊಂಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇನ್ನೂ ನಿಜವಾಗಿಯೇ ಉಳಿದಿದೆ. ದೇಶದಾದ್ಯಂತ ದಲಿತರು ಈಗಲೂ ಭೂರಹಿತರಾಗಿಯೇ ಇದ್ದರೂ ಲಜ್ಜೆಗೆಟ್ಟ ಸರ್ಕಾರಗಳು ಯಾವುದೇ ರೀತಿಯಲ್ಲೂ ತಪ್ಪಿತಸ್ಥರಲ್ಲದಂತೆ ಅಂಬೇಡ್ಕರ್ ದಿನಾಚರಣೆಯನ್ನು ದೊಡ್ಡದ್ದಾಗಿ ಆಚರಿಸಿದೆ.

ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಎಪ್ರಿಲ್ 14 ರಂದು ಅಂಬೇಡ್ಕರ್ ಫೋಟೋ ಇಟ್ಟು ಅಂಬೇಡ್ಕರ್ ಭಜನೆ(!) ಮಾಡಿದ್ದಾರೆ. ಕೆಲವೊಂದು ಕಡೆ ನಾಸ್ತಿಕ ಅಂಬೇಡ್ಕರ್ ಫೋಟೋದ ಹಣೆಗೆ ತಿಲಕವಿಟ್ಟು, ಆರತಿ ಎತ್ತಿ ಪೂಜೆ ಸಲ್ಲಿಸಿದರು. ಅಕ್ಷರಶಃ ರಾಜ್ಯದ ಎಲ್ಲಾ ಕಡೆ ಅಂಬೇಡ್ಕರ್‌ಗೆ ಅವಮಾನ ಮಾಡಲಾಗಿತ್ತು. ಆದರೆ ಗಮನ ಸೆಳೆದಿದ್ದು ಬಂಟ್ವಾಳ ತಾಲೂಕು ಪಂಚಾಯತ್‍ನಲ್ಲಿ ನಡೆದ ಸರ್ಕಾರದ ಅಂಬೇಡ್ಕರ್ ದಿನಾಚರಣೆಯಲ್ಲಿ ದಲಿತರೇ ಅಂಬೇಡ್ಕರ್ ಜಯಂತಿಗೆ ತಡೆ ಒಡ್ಡಿ, ಅಂಬೇಡ್ಕರ್ ಭಾವ ಚಿತ್ರದ ಹಣೆಗೆ ಹಚ್ಚಲಾಗಿದ್ದ ತಿಲಕ ಒರೆಸಿ ಫೋಟೋವನ್ನು ವಶಪಡಿಸಿಕೊಳ್ಳುವ ಮೂಲಕ ಅಂಬೇಡ್ಕರ್‌ಗೆ ಸಣ್ಣದೊಂದು ನಮನ ಸಲ್ಲಿಸಿದ್ದು. ವಶಪಡಿಸಿಕೊಂಡ ಫೋಟೋವನ್ನು ರಸ್ತೆಯ ಮಧ್ಯೆ ಇಟ್ಟು ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಿಜವಾಗಿಯೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಎಂಬ ದಲಿತನ ಹುಟ್ಟು ಹಬ್ಬವನ್ನು ದಲಿತರು ಕ್ರಾಂತಿಯುತವಾಗಿ ಆಚರಿಸಿದರು. ದಲಿತರ ಈ ಕೋಪ ವೇದಿಕೆಯಲ್ಲಿದ್ದ ಶಾಸಕರ ಸಹಿತ ಜನಪ್ರತಿನಿಧಿಗಳ ಅಸಹನೆಗೆ ಈಡಾಯಿತು. ಇಷ್ಟಕ್ಕೂ ದಲಿತರಿಗೆ ಕೋಪ ಬಂದಿದ್ದಾದರೂ ಏತಕ್ಕೆ ಎಂದು ಒಂದು ಕ್ಷಣವೂ ಅವರೂ ಯೋಚಿಸಿಲ್ಲ.

ದಲಿತರಿಗೆ ಕೋಪ ಬಂದಿದ್ದಾದರೂ ಏತಕ್ಕೆ?

ಕರ್ನಾಟಕ ಭೂ ಮಂಜೂರಾತಿ ಅಧಿನಿಯಮ 1969 ರಂತೆ ಕೃಷಿ ಭೂಮಿ ರಹಿತ ದಲಿತರಿಗೆ ಐದು ಎಕರೆ ಕೃಷಿ ಭೂಮಿ ನೀಡಬೇಕು. ಆದರೆ ರಾಜ್ಯದಲ್ಲಿ ಈ ಭೂಮಿಯ ಸೌಲಭ್ಯವನ್ನು ಪಡೆಯಬೇಕಾದರೆ ಕುಟುಂಬದ ವಾರ್ಷಿಕ ಆದಾಯ 8000 ರೂಪಾಯಿ ಒಳಗಿರಬೇಕಿದೆ. ಈ ವಾರ್ಷಿಕ ಆದಾಯವನ್ನು ಕನಿಷ್ಠ 25,000 ರೂಗಳಿಗೆ ಏರಿಕೆ ಮಾಡಬೇಕು ಎಂದು ಕಳೆದ ಹಲವಾರು ವರ್ಷಗಳಿಂದ ದಲಿತ ಸಂಘಟನೆಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದು ದಲಿತರ ಅಸಮಾಧಾನಕ್ಕೆ ಕಾರಣವಾಗಿದೆ. ವ್ಯಕ್ತಿಯೊಬ್ಬ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದರೂ ವಾರ್ಷಿಕ ಆದಾಯ ಎಂಟು ಸಾವಿರ ದಾಟುತ್ತದೆ. ತಿಂಗಳಿಗೆ 667 ರೂಪಾಯಿ ಸಂಪಾದನೆ ಮಾಡೋ ಕುಟುಂಬವೊಂದು ಬದುಕಲು ಸಾಧ್ಯವಾ ಎಂಬ ಕನಿಷ್ಠ ಜ್ಞಾನವೂ ಸರ್ಕಾರಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ದಲಿತ ಕುಟುಂಬಕ್ಕೆ ಭೂಮಿ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಈ ವಾರ್ಷಿಕ ಆದಾಯ ಮಿತಿಯನ್ನು ಕನಿಷ್ಠ 25 ಸಾವಿರ ರೂಪಾಯಿಗಳಿಗಾದರೂ ಏರಿಸಿ ಎಂಬುದು ದಲಿತರ ಅಳಲು. ಅದನ್ನು ಖುದ್ದು ಸದಾನಂದ ಗೌಡರಿಗೇ ಬೇಡಿಕೆ ಸಲ್ಲಿಸಿದ್ದರು. ಆದರೆ ಗೌಡರು ಮಾಡಲಾಗಲ್ಲ ಎಂದು ಕಡತವನ್ನು ಮೂಲೆಗೆಸೆದಿದ್ದರು. ನಂತರ ಬಂಟ್ವಾಳ ಶಾಸಕರಿಗೆ ಈ ಬಗ್ಗೆ ದಲಿತರು ಮನವಿ ಮಾಡಿದ್ದರು.

ಬಂಟ್ವಾಳ ಶಾಸಕ ಬಿ. ರಮಾನಾಥ ರೈಯವರು ಇತ್ತೀಚೆಗೆ ವಿಧಾನಸಭೆಯ ಅಧಿವೇಶನದಲ್ಲಿ ದಲಿತರು ಭೂಮಿ ಪಡೆಯಲು ಈ ವಾರ್ಷಿಕ ಆದಾಯ ಮಿತಿಯನ್ನು ಏರಿಕೆ ಮಾಡಬೇಕು ಎಂದು ಕೇಳಿದ್ದರು. ಸಮಾಜದಲ್ಲಿ ಪ್ರತಿಯೊಬ್ಬ ಭೂಮಿರಹಿತ ದಲಿತ ಕುಟುಂಬಗಳಿಗೂ ಕೃಷಿ ಭೂಮಿ ದೊರೆತರೆ ದಲಿತರು ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದುವರಿಯಲಿದ್ದಾರೆ ಎಂದು ಅವರು ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆದಿದ್ದರು. ಆದರೆ ಸದನದಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಮಾತ್ರ ಅದು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳುವ ಮೂಲಕ ದಲಿತರ ಬೇಡಿಕೆಯನ್ನು ತಳ್ಳಿಹಾಕಿದ್ದಾರೆ. ಇದು ದಲಿತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಂವಿಧಾನಶಿಲ್ಪಿ ಡಾ. ಅಂಬೇಡ್ಕರ್‌ರವರ 121ನೇ ಜನ್ಮ ದಿನವನ್ನು ಬಂಟ್ವಾಳ ತಾಲೂಕು ಪಂಚಾಯತ್ ಕಚೇರಿಯಲ್ಲಿ ಆಚರಿಸಲು ತಡೆಯೊಡ್ಡಿದ ದಲಿತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಾತ್ರವಲ್ಲದೆ ಅಂಬೇಡ್ಕರ್‌ರವರ ಭಾವಚಿತ್ರವನ್ನು ಪಂಚಾಯತ್ ಕಚೇರಿ ವೇದಿಕೆಯಿಂದ ಹೊರತಂದು ರಸ್ತೆಯಲ್ಲಿಟ್ಟು ಜನ್ಮದಿನವನ್ನು ಆಚರಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. “ದಲಿತರಿಗೆ ಕೃಷಿ ಭೂಮಿ ದೊರೆತರೆ ದಲಿತರು ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಮೇಲೇರಲು ಮೆಟ್ಟಿಲು ಸಿಕ್ಕಂತಾಗುತ್ತದೆ” ಎಂಬುದು ಅಂಬೇಡ್ಕರ್ ಆಶಯವಾಗಿತ್ತು. ಆದರೆ ಅಂಬೇಡ್ಕರ್ ಆಶಯಕ್ಕೇ ವಿರುದ್ಧವಾಗಿರುವ ಮಂದಿ ಅಂಬೇಡ್ಕರ್ ಜಯಂತಿ ಆಚರಿಸುತ್ತಾರೆ ಎಂದರೂ ದಲಿತರಿಗೆ ಸಿಟ್ಟು ಬಂದಿಲ್ಲವೆಂದರೆ, ಇಲ್ಲಿ ಏನಾಗಿದೆ?.

ಕೋಪ ಬರದೇ ಇರುತ್ತಾ?

1931 ಆಗಸ್ಟ್ 16 ರಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಮಹಾತ್ಮಾ ಗಾಂಧಿಯನ್ನು ಭೇಟಿ ಮಾಡುತ್ತಾರೆ. “ಗಾಂಧೀಜಿ.. ನೀವು ನನಗೆ ಮಾತೃಭೂಮಿ ಇದೆ ಅನ್ನುತ್ತೀರಿ. ನಾನು ಇದನ್ನು ಮಾತೃಭೂಮಿ ಎಂದು ಹೇಗೆ ಒಪ್ಪಿಕೊಳ್ಳಲಿ. ಯಾವ ನೆಲದಲ್ಲಿ ದನಗಳಿಗೆ, ಹಂದಿಗಳಿಗೆ, ಕೋಳಿಗಳಿಗೆ ಸಿಗುವಷ್ಟು ಭೂಮಿ ನನ್ನ ಜನಗಳಿಗೆ ಸಿಗುವುದಿಲ್ಲವೋ ಅಂತಹ ನೆಲವನ್ನು ನನ್ನದೆಂದು ಹೇಗೆ ಕರೆದುಕೊಳ್ಳಲಿ. ಸ್ವಾಭಿಮಾನ ಹೊಂದಿರುವ ಯಾವನೇ ಅಸ್ಪ್ರಶ್ಯ ಈ ದೇಶ ನನ್ನದೆಂದು ಹೇಳಲು ಸಾಧ್ಯವಿಲ್ಲ” ಎನ್ನುತ್ತಾರೆ. ಅಂಬೇಡ್ಕರ್‌ರವರು ಈ ಮಾತಿಗೆ ಇನ್ನೂ ಸಾವು ಬಂದಿಲ್ಲ.

ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿ ಗೋಶಾಲೆ ಮಾಡುತ್ತೇನೆ ಅಂದಾಗ ಆ ಸ್ವಾಮಿ ಕೇಳದೇನೇ ಸರ್ಕಾರ ನೂರಾರು ಎಕರೆ ಸರ್ಕಾರಿ ಭೂಮಿಯನ್ನು ಸ್ವಾಮಿ ಹೆಸರಿಗೆ ಬರೆಸಿಕೊಡಲು ಮುಂದಾಗುತ್ತದೆ. ಈ ಬಾರಿಯ ಬಜೆಟ್‌ನಲ್ಲಿ ಜಮೀನ್ದಾರಿ ಗುತ್ತಿನ ಮನೆತನದ ಮಂದಿ ಕೋಣಗಳನ್ನು ಓಡಿಸೋ ಕಂಬಳ ಕ್ರೀಡೆಗೆ ಅನಾಮತ್ತು ಕೋಟ್ಯಾಂತರ ರೂಪಾಯಿಗಳನ್ನು ಮೀಸಲಿಡಲಾಗುತ್ತದೆ. ಪಿಲಿಕುಳದಲ್ಲಿ ಖಾಸಗಿ ಭೂಮಿಯನ್ನು ಅಧಿಸೂಚನೆಗೊಳಿಸಿ ಕಂಬಳಕ್ಕಾಗಿ ಗದ್ದೆ ನಿರ್ಮಾಣ ಮಾಡಲಾಗಿದೆ. ಮುಜರಾಯಿ ದೇವಸ್ಥಾನದಲ್ಲಿ ಕೋಳಿ ಅಂಕದ ಕೋಳಿ ಕಟ್ಟಲೆಂದೇ ಸರ್ಕಾರಿ ಸ್ಥಳವನ್ನು ಬಳಕೆ ಮಾಡಲಾಗುತ್ತದೆ. ಆದರೆ ದಲಿತರಿಗೆ ಮಾತ್ರ ಹಂಚಲು ಭೂಮಿಯಿಲ್ಲ. ಹೆಚ್ಚೆಚ್ಚು ಅಂದರೆ ಐದು ಸೆಂಟ್ಸ್‌ಗಳ ಕಾಲನಿಯನ್ನು ಸರ್ಕಾರ ದಯಪಾಲಿಸಬಹುದು. ಗೋಶಾಲೆಗೆ, ಕಂಬಳ ಗದ್ದೆಗೆ ಭೂಮಿ ನೀಡಲು  ಕೃಷಿ ಭೂಮಿಯನ್ನು ಬಳಕೆ ಮಾಡಲಾಗುತ್ತದೆ. ದಲಿತರಿಗೆ ಕೃಷಿ ಭೂಮಿ ನೀಡಬೇಕಾದರೆ ವಾರ್ಷಿಕ ಆದಾಯ ಎಂಟು ಸಾವಿರಕ್ಕಿಂತ ಕಡಿಮೆ ಇರಬೇಕು. ಅಂದರೆ ಸ್ಪಷ್ಟವಾಗಿ “ದಲಿತರಿಗೆ ಕೃಷಿ ಭೂಮಿ ನೀಡುವುದಿಲ್ಲ” ಎಂದರ್ಥ.

ತಪ್ಪಿತಸ್ಥರಿಗೆ ಶಿಕ್ಷೆ ಏನು?

ಯಾವಾನೋ ಒಬ್ಬ ಮುಸಲ್ಮಾನ ರಾಜ, ಬಾಬರನೋ ಇನ್ನಾರೋ ಮಾಡಿದ ತಪ್ಪಿಗೆ ದೇಶದ ಮುಸ್ಲಿಮರಿಗೆ ಇಂದಿಗೂ ಶಿಕ್ಷೆ ಕೊಡುವ ಕ್ರಿಯೆಗೆ ವ್ಯವಸ್ಥಿತಿ ಕಾರ್ಯತಂತ್ರಗಳು ನಡೆಯುತ್ತದೆ. ಯಾರೋ ನಾಲ್ಕು ಮಂದಿ ಭಯೋತ್ಪಾದಕರು ಮುಸ್ಲೀಮರಾಗಿದ್ದರು ಎಂಬ ಕಾರಣಕ್ಕಾಗಿ ಇಡೀ ಮುಸ್ಲಿಂ ಸಮುದಾಯವನ್ನೇ ಅದಕ್ಕೆ ಹೊಣೆ ಮಾಡಲಾಗುತ್ತದೆ. ಯಾವಾನೋ ಒಬ್ಬ ಮುಸಲ್ಮಾನ ಯಾವುದೋ ಕಾಲದಲ್ಲಿ ದೇವಸ್ಥಾನವನ್ನು ಮಸೀದಿಯಾಗಿಸಿದ ಎಂದು ಈಗಲೂ ಮುಸ್ಲಿಮರ ರಕ್ತಪಾತ ಮಾಡಲಾಗುತ್ತದೆ. ಅದರೆ ಈ ದೇಶದ 60 ಕೋಟಿ ಶೂದ್ರ ಸಮುದಾಯಕ್ಕೆ ಶತಶತಮಾನಗಳಿಗೆ ಅಕ್ಷರ ವಂಚಿಸಿದ, ಮೂವತ್ತು ಕೋಟಿ ದಲಿತ ಸಮುದಾಯಕ್ಕೆ ಭೂಮಿ ಮತ್ತು ಅಕ್ಷರ ಎರಡನ್ನೂ ವಂಚಿಸಿದ ಒಂದು ಧಾರ್ಮಿಕ ವ್ಯವಸ್ಥೆಯನ್ನು ಪ್ರತಿಪಾದಿಸೋ ಜನರಿಗೆ ಯಾವ ಶಿಕ್ಷೆ ಕೊಡಲು ಸಾಧ್ಯವಿದೆ? ಅವರಿಗೆ ಶಿಕ್ಷೆ ಕೊಡಬೇಕು ಎಂಬುದು ಕಾಳಜಿಯೂ ಅಲ್ಲ. ಉದ್ದೇಶವೂ ಅಲ್ಲ. ಆದರೆ ಈ ದೇಶದಲ್ಲಿ ಒಂದು ಆತ್ಮಾವಲೋಕನ ಆಗಬೇಕಿದೆ. ತಮ್ಮ ತಪ್ಪುಗಳನ್ನು ಒಪ್ಪಿಕೊಂಡು, ಪ್ರಾಯಶ್ಚಿತ್ತ ಪಟ್ಟುಕೊಂಡು ತಿದ್ದುವಂತಹ ಪ್ರಾಮಾಣಿಕ ಪ್ರಯತ್ನ ಆಗಬೇಕಿದೆ. ಭೂರಹಿತರಿಗೆ ಭೂಮಿ ನೀಡುವ, ಶಿಕ್ಷಣರಹಿತರಿಗೆ ಶಿಕ್ಷಣ ನೀಡುವ ಬಗ್ಗೆ ವ್ಯವಸ್ಥೆಗಳು ಸಕ್ರಿಯಗೊಳ್ಳಬೇಕಿದೆ. ಶೇಕಾಡ 96 ರಷ್ಟು ಪರಿಶಿಷ್ಟ ಜಾತಿಯವರಿಗೆ ಈ ರಾಜ್ಯದಲ್ಲಿ ಕೃಷಿ ಭೂಮಿ ಇಲ್ಲ. ದಲಿತರಿಗೆ ಕೃಷಿ ಭೂಮಿ ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಯಲ್ಲಿ ಸೇರಿಸುವ ಕೆಲಸ ಮಾಡಬೇಕಿದೆ.

ಭೂಮಿಯಿಂದ ಯಾಕೆ ವಂಚಿಸಲಾಯಿತು? ವಂಚಿಸಲಾಗುತ್ತಿದೆ?

ಶತಶತಮಾನಗಳಿಂದಲೂ ದಲಿತರನ್ನು ಭೂಮಿಯಿಂದ ವಂಚಿಸಲಾಗುತ್ತಿದೆ. ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದು ಇಷ್ಟು ಕಾಲ ಕಳೆದರೂ ಇನ್ನೂ ದಲಿತರಿಗೆ ಭೂಮಿ ದೊರೆತಿಲ್ಲ. ಉಳುವವನೇ ಭೂಮಿ ಒಡೆಯ ಎಂಬ ಕಾನೂನು ಜಾರಿ ಬಂದಿದ್ದರಿಂದ ಕೆಲವೊಂದು ಜನಾಂಗದ ಶೂದ್ರರು ಭೂಮಿ ಪಡೆದುಕೊಂಡರು. ಆ ಕಾಯ್ದೆಯಿಂದ ಭೂಮಿ ಪಡೆದುಕೊಂಡ ದಲಿತರೆಷ್ಟು ಎಂದು ಕೇಳಿದರೇ, ದಲಿತರು ಕನಿಷ್ಠ ಉಳುವವರೂ ಆಗಿರಲಿಲ್ಲ. ಭೂಮಿ ದೊರೆಯುವ ಸಾಧ್ಯತೆಯೇ ಇರಲಿಲ್ಲ. ಈ ದೇಶದ ಮೂಲ ನಿವಾಸಿಗಳಾದ ದಲಿತರನ್ನು ಭೂಮಿಯಿಂದ ವಂಚಿಸುವುದರ ಹಿಂದೆ ಅಸ್ಪ್ರಶ್ಯತೆಯನ್ನು ಜಾರಿಯಲ್ಲಿಡುವ ಗುಪ್ತ ಅಜೆಂಡಾವಿದೆ. ಒಂದಂತೂ ಸ್ಪಷ್ಟ. ಅಸ್ಪ್ರಶ್ಯತೆ ಮತ್ತು ಜಾತೀಯತೆ ಎನ್ನುವುದು ಬ್ರಾಹ್ಮಣಿಕೆಯ ಜೀವಾಳ. ಅದಿಲ್ಲದೆ ಬ್ರಾಹ್ಮಣ/ವೈದಿಕ ಧರ್ಮ ಬದುಕುವುದಿಲ್ಲ. 30 ಕೋಟಿ ಇರುವ ದಲಿತ ಸಮುದಾಯವನ್ನು ಅಕ್ಷರದಿಂದ ಮತ್ತು ಭೂಮಿಯಿಂದ ವಂಚಿಸಿದಂತಹ ಪಾಪವನ್ನು ವೈದಿಕ ಆಚಾರ-ವಿಚಾರಗಳು ಮಾಡಿವೆ. ಆ ಮೂಲಕ ಅಸ್ಪ್ರಶ್ಯತೆಯನ್ನು ಜಾರಿಯಲ್ಲಿಡಲಾಗುತ್ತದೆ. ಈ ದೇಶದಲ್ಲಿ ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ, ಸಂಸ್ಕೃತಿ ಹೆಸರಿನಲ್ಲಿ , ಪರಂಪರೆ ಹೆಸರಿನಲ್ಲಿ ಅಸ್ಪ್ರಶ್ಯರ ಮೇಲೆ ನಿರಂತರ ದೌರ್ಜನ್ಯಗಳು, ದಬ್ಬಾಳಿಕೆಗಳು, ಆತ್ಯಾಚಾರಗಳನ್ನು ನಡೆಸಲಾಗಿದೆ. ಅದಕ್ಕೆ ಅಂಬೇಡ್ಕರ್ ಹೇಳುತ್ತಾರೆ. “ಅಕ್ಷರ ಮತ್ತು ಭೂಮಿಯನ್ನು ನನ್ನ ಜನಗಳಿಂದ ವಂಚಿಸಿದ ಧರ್ಮವು ಈ ನೆಲವನ್ನು ಅಸ್ಪ್ರಶ್ಯನೊಬ್ಬ ತನ್ನದೆಂದು ಹೇಳಿಕೊಳ್ಳಲು ಸಾದ್ಯವಿಲ್ಲದಂತೆ ಮಾಡಿದೆ. ಒಂದು ವೇಳೆ ನನಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ನನ್ನ ಕಾರ್ಯಚಟುವಟಿಕೆಯಿಂದ ಈ ದೇಶಕ್ಕೆ ತೊಂದರೆಯಾದರೆ ಅದಕ್ಕೆ ನೀವು ಕಾರಣರಾಗುತ್ತೀರಿ. ನಾನಲ್ಲ. ಒಂದು ವೇಳೆ ನನ್ನ ಕಾರ್ಯಚಟುವಟಿಕೆಯಿಂದ ಈ ದೇಶಕ್ಕೆ ಒಳ್ಳೆಯದಾದರೆ, ಅದು ನನ್ನ ಅಂತಃಸಾಕ್ಷಿಯಿಂದಲೇ ಹೊರತು ಬೇರೇನೂ ಅಲ್ಲ. ನಿಮ್ಮ ನೆಲದ ಮೇಲಿರುವ ಅಥವಾ ಧರ್ಮದ ಮೇಲಿರುವ ಪ್ರೀತಿಯಿಂದ ಅಲ್ಲ” ಎಂದು ಸ್ಪಷ್ಟವಾಗಿ ಹೇಳುತ್ತಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರಿ ಅಂಬೇಡ್ಕರ್ ಜಯಂತಿಗೆ ಬಂಟ್ವಾಳದಲ್ಲಿ ದಲಿತರು ತಡೆಯೊಡ್ಡಿದ್ದೇ ನಿಜವಾದ ಅಂಬೇಡ್ಕರ್ ಜಯಂತಿ ಎಂದು ಕಂಡಿದೆ. ವೇದಿಕೆಯಲ್ಲಿ ಸರ್ವಾಲಂಕೃತಗೊಂಡಿದ್ದ ಅಂಬೇಡ್ಕರ್ ಫೋಟೋವನ್ನು ರಸ್ತೆಗೆ ತಂದು ಅಂಬೇಡ್ಕರ್ ದಿನಾಚರಣೆ ಮಾಡಿದ್ದು ಅರ್ಥಪೂರ್ಣವಾಗಿಯೇ ಕಾಣುತ್ತದೆ. ಎಲ್ಲಾ ದಲಿತರಿಗೆ ಅವರ ಹಕ್ಕಿನ ಕೃಷಿಭೂಮಿ ದೊರೆತಾಗ ಮಾತ್ರ ಅಂಬೇಡ್ಕರ್ ಜಯಂತಿಗೊಂದು ಅರ್ಥ ಬರುತ್ತದೆ. ಅತ್ತ ಕಡೆ ಧರ್ಮದಲ್ಲೂ ಇಲ್ಲ. ಇತ್ತ ಕಡೆ ಬದುಕಲು ಕನಿಷ್ಠ ಭೂಮಿಯೂ ಇಲ್ಲ ಎಂಬ ಪಾಡು ದಲಿತರದ್ದು. ಹಿಂದೂ ಧರ್ಮ ಎಂದರೆ ಅಲ್ಲಿ ದಲಿತರು ಎಂಜಲು ತಿನ್ನುತ್ತಿರಬೇಕು. ಅಂಬೇಡ್ಕರ್ ಮಾಡಿದಂತೆ ಬೌದ್ಧ ಧರ್ಮಕ್ಕೆ ಹೋದರೆ ಅಲ್ಲಿದ್ದವರು ಈಗ ನವ ಬೌದ್ಧರಾಗಿದ್ದಾರೆ. ಕ್ರಿಶ್ಚಿಯನ್ ಧರ್ಮಕ್ಕೆ ಹೋದರೆ ಅಲ್ಲಿ ದಲಿತರು ದಲಿತ ಕ್ರಿಶ್ಚಿಯನ್ನರಾಗುತ್ತಾರೆ! ದಲಿತರು ಯಾವುದನ್ನು ತನ್ನದೆಂದು ಅಪ್ಪಿಕೊಳ್ಳಲಿ? ಕ್ರಿಶ್ಚಿಯಾನಿಟಿಯಲ್ಲಿ ಜಾತಿ ಇಲ್ಲ. ಆದರೆ ದಲಿತ ಕ್ರಿಶ್ಚಿಯನ್ ಎಲ್ಲಿಂದ ಆಯಿತು? ಕ್ರಿಶ್ಚಿಯನ್ನರಲ್ಲಿ ದಲಿತ ಕ್ರಿಶ್ಚಿಯನ್ನರು ಇರುವುದೇ ಆದರೆ ಬ್ರಾಹ್ಮಣ ಕ್ರಿಶ್ಚಿಯನ್ ಎಂಬ ಮತ್ತೊಂದು ಜಾತಿಯೂ ಇರಬೇಕಲ್ಲವೇ? ಅದೆಲ್ಲಾ ಸಾಯಲಿ, ಧರ್ಮಗಳ ಪರಂಪರೆಯೇ ಅಂತದ್ದು, ನಮ್ಮದೇ ಹಕ್ಕಿನ ಕೃಷಿಭೂಮಿ ಕೊಡಿ, ಎಂದಷ್ಟೇ ದಲಿತರು ಕೇಳುತ್ತಿದ್ದಾರೆ.