Category Archives: ಇತರೆ

ವಿಭಾಗಿಸಿಲ್ಲದ ಲೇಖನಗಳು

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -16)


– ಡಾ.ಎನ್.ಜಗದೀಶ್ ಕೊಪ್ಪ


 

ನರಭಕ್ಷಕ ಹುಲಿ ಸತ್ತು ಬಿದ್ದಿದ್ದ ಸ್ಥಳದ ಸುತ್ತ ಆವರಿಸಿಕೊಂಡ ಹಳ್ಳಿಯ ಜನ ಕುಣಿದು ಕುಪ್ಪಳಿಸಿ ಕೇಕೆ ಹಾಕಿ, ಒಬ್ಬರಿಗೊಬ್ಬರು ಅಪ್ಪಿಕೊಂಡು ತಮ್ಮ ಸಂತಸ ಹಂಚಿಕೊಂಡರು. ಕಾರ್ಬೆಟ್ ತನ್ನ ಸೇವಕರಿಗೆ ಹುಲಿಯನ್ನು ಪ್ರವಾಸಿ ಮಂದಿರಕ್ಕೆ ಹೊತ್ತೊಯ್ದು ಚರ್ಮ ಸುಲಿಯುವಂತೆ ಆದೇಶಿದ. ಕೂಡಲೇ ಹಳ್ಳಿಯ ಜನರೆಲ್ಲಾ ತಾವು ಈ ನರಭಕ್ಷಕನನ್ನು ಸುತ್ತ ಮುತ್ತಲಿನ ಹಳ್ಳಿಯಲ್ಲಿ ಮೆರವಣಿಗೆ ಮಾಡಲು ಅವಕಾಶ ನೀಡಬೇಕೆಂದು ಬೇಡಿಕೊಂಡಾಗ ಕಾರ್ಬೆಟ್‍ಗೆ ಬೇಡವೆನ್ನಲು ಮನಸ್ಸಾಗದೆ ಸಮ್ಮತಿಸಿದ.

ಚಂಪಾವತ್ ಹಳ್ಳಿಯ ಜನ ಬಿದಿರಿನ ಬೊಂಬುಗಳಲ್ಲಿ ನಿರ್ಮಿಸಿದ ತಡಿಕೆಯಲ್ಲಿ ನರಭಕ್ಷಕ ಹುಲಿಯ ಶವವನ್ನು ಹೊತ್ತು ತಮಟೆ, ನಗಾರಿಗಳ ಜೊತೆ ಹಳ್ಳಿಗಳಲ್ಲಿ ಮೆರವಣಿಗೆ ಮಾಡಿದರು. ನರಭಕ್ಷಕನಿಗೆ ಬಲಿಯಾದ ವ್ಯಕ್ತಿಗಳ ಮನೆ ಮುಂದೆ ನಿಲ್ಲಿಸಿ, ಕುಟುಂಬದ ಸದಸ್ಯರಿಗೆ ಅದನ್ನು ತೋರಿಸಿ ಮುಂದುವರಿಯುತ್ತಿದ್ದರು. ರಾತ್ರಿ ದೀಪದ ಬೆಳಕಿನಲ್ಲಿ ನರಭಕ್ಷಕ ಹುಲಿಯ ಚರ್ಮವನ್ನು ಸೀಳಿ, ಹೊಟ್ಟೆಯನ್ನು ಬಗೆದಾಗ, ಅದು ಕಡೆಯ ಬಾರಿ ಬಲಿ ತೆಗೆದುಕೊಂಡಿದ್ದ ಯುವತಿಯ ಬಳೆಗಳು ದೊರೆತವು. ಯುವತಿಯ ಕುಟುಂಬದವರು ಅಂತಿಮ ಸಂಸ್ಕಾರಕ್ಕಾಗಿ ಅವುಗಳನ್ನು ಪಡೆದು, ಬೇಟೆಯ ಸಂದರ್ಭದಲ್ಲಿ ದೊರೆತ್ತಿದ್ದ ಆಕೆಯ ತಲೆ ಬುರುಡೆಯ ಜೊತೆ ಶವ ಸಂಸ್ಕಾರದ ವಿಧಿ ವಿಧಾನಗಳನ್ನು ಪೂರೈಸಿದರು.

ಈ ಘಟನೆ ನಡೆದ ಒಂದು ತಿಂಗಳಿನಲ್ಲಿ ಬ್ರಿಟಿಷ್ ಸರ್ಕಾರದ ಪರವಾಗಿ ತಹಸಿಲ್ದಾರ್ ತನ್ನ ಕಚೇರಿ ಸಿಬ್ಬಂದಿಯೊಂದಿಗೆ ನೈನಿತಾಲ್‍ಗೆ ಬಂದು ಪಟ್ಟಣದಲ್ಲಿ ಕಾರ್ಬೆಟ್‍ನನ್ನು ಸಾರ್ವಜನಿಕವಾಗಿ ಸನ್ಮಾನಿಸಿದ. ಕಾರ್ಬೆಟ್ ಸರ್ಕಾರದಿಂದ ಹಣ ತೆಗೆದುಕೊಳ್ಳಲು ಮೊದಲೇ ನಿರಾಕರಿಸಿದ್ದರಿಂದ ಅಂದಿನ ಬ್ರಿಟಿಷ್ ಸರ್ಕಾರದ ಲೆಪ್ಟಿನೆಂಟ್ ಜನರಲ್ ಸರ್ ಜೆ.ಪಿ.ಹೆವಿಟ್ ಕೊಡುಗೆಯಾಗಿ ನೀಡಿದ ಆತ್ಯಾಧುನಿಕ ಹಾಗೂ ಇಂಗ್ಲೆಂಡ್‍ನಲ್ಲಿ ತಯಾರಾದ ಬಂದೂಕವನ್ನು ಕಾರ್ಬೆಟ್‍ಗೆ ಕಾಣಿಕೆಯಾಗಿ ಅರ್ಪಿಸಲಾಯಿತು.

ಈ ನರಭಕ್ಷಕನ ಬೇಟೆಯ ನಂತರ ಜಿಮ್ ಕಾರ್ಬೆಟ್ ತಾನು ಕೆಲಸ ಮಾಡುತ್ತಿದ್ದ ಮೊಕಮೆಘಾಟ್‍ಗೆ ಹೋಗಿ ಮತ್ತೇ ನೈನಿತಾಲ್‍ಗೆ ಹಿಂತಿರುಗಿ ಬರುವುದರೊಳಗೆ, ನೈನಿತಾಲ್ ಮತ್ತು ಅಲ್ಮೋರಾ ಪಟ್ಟಣಗಳ ನಡುವೆ ಇರುವ ಮುಕ್ತೇಶ್ವರ ಎಂಬ ಹಳ್ಳಿಯಲ್ಲಿ ಮತ್ತೊಂದು ನರಭಕ್ಷಕ ಹುಲಿ ಕಾಣಿಸಿಕೊಂಡು ಮೂವರನ್ನು ಬಲಿತೆಗೆದುಕೊಂಡಿತು. ಉತ್ತರ ಭಾರತದ ಹಿಮಾಲಯ ಪ್ರಾಂತ್ಯದಲ್ಲಿ ಹುಲಿ ಮತ್ತು ಚಿರತೆಗಳ ಹಾವಳಿಗೆ ಅಮಾಯಕ ಜೀವಗಳು ಬಲಿಯಾಗುತ್ತಿರುವ ಬಗ್ಗೆ ಬ್ರಿಟನ್ನಿನ ಪಾರ್ಲಿಮೆಂಟ್‍ನಲ್ಲೂ ಕೂಡ ಚರ್ಚೆಯಾಗಿ, ಭಾರತದಲ್ಲಿನ ಸರ್ಕಾರದ ವೈಫಲ್ಯವನ್ನು ಖಂಡಿಸಲಾಯಿತು. ಇದರಿಂದ ಒತ್ತಡಕ್ಕೆ ಸಿಲುಕಿದ ಭಾರತದ ವೈಸ್‍ರಾಯ್, ಮತ್ತು ಬ್ರಿಟಿಷ್ ಸರ್ಕಾರ ನೈನಿತಾಲ್‍ನ ಜಿಲ್ಲಾಧಿಕಾರಿ ಸರ್. ಬರ್ಥ್‍ಹುಡ್ ಮೂಲಕ ಕಾರ್ಬೆಟ್‍ಗೆ ನರಭಕ್ಷಕನನ್ನು ಕೊಲ್ಲಲು ಮನವಿ ಮಾಡಿಕೊಂಡಿತು. ಆದರೆ ನೈನಿತಾಲ್‍ನಲ್ಲಿದ್ದ ತನ್ನ ರಿಯಲ್‍ಎಸ್ಟೇಟ್ ವ್ಯವಹಾರ ಹಾಗೂ ಮೊಕಮೆಘಾಟ್‍ಗೆ ರೈಲ್ವೆ ಇಲಾಖೆಯ ಕೆಲಸದಿಂದಾಗಿ ತಕ್ಷಣ ಬೇಟೆಗೆ ಹೊರಡಲು ಕಾರ್ಬೆಟ್ ನಿರಾಕರಿಸಿದ.

15 ದಿನಗಳ ನಂತರ ಸರ್ಕಾರದ ಮನವಿಗೆ ಸ್ಪಂದಿಸಿ ಕಾರ್ಬೆಟ್ ಮತ್ತೆ ತನ್ನ ಬಂದೂಕಗಳನ್ನು ಹೆಗಲಿಗೇರಿಸಿ, ಸಹಾಯಕರೊಡನೆ ಮುಕ್ತೇಶ್ವರಕ್ಕೆ ಹೊರಟು ನಿಂತ. ಆದರೆ ಕಾರ್ಬೆಟ್ ಮುಕ್ತೇಶ್ವರ ಹಳ್ಳಿಗೆ ಭೇಟಿ ನೀಡುವುದರೊಳಗೆ ನರಭಕ್ಷಕ ಹುಲಿ 24 ಮಂದಿಯನ್ನು ಬಲಿತೆಗೆದುಕೊಂಡಿತ್ತು. ಪ್ರಾರಂಭದಲ್ಲಿ ಕಾಡಿನಲ್ಲಿ ಸೌದೆ ಅರಸುತ್ತಿದ್ದ ಹೆಂಗಸಿನ ಮೇಲೆ ಎರಗಿ ಬಲಿತೆಗೆದು ಕೊಂಡಿದ್ದ ಈ ಹುಲಿ, ತನ್ನ ಎರಡನೇ ಬಲಿಯನ್ನು ಸಹ ಅದೇ ರೀತಿ, ತಾನು ವಿಶ್ರಮಿಸುತ್ತಿದ್ದ ಪೊದೆಯ ಬಳಿ ಅರಿಯದೇ ಬಂದ ಮತ್ತೊಬ್ಬ ಹೆಂಗಸನ್ನು ದಾಳಿ ನಡೆಸಿ ಕೊಂದುಹಾಕಿತ್ತು. ಈ ಎರಡು ದಾಳಿಗಳ ನಂತರ ಮನುಷ್ಯನ ರಕ್ತದ ರುಚಿ ಹುಲಿಯನ್ನು ನರಭಕ್ಷಕನನ್ನಾಗಿ ಪರಿವರ್ತಿಸಿತ್ತು. ಮೊದಲು ತನ್ನ ಬಳಿ ಸುಳಿದವರನ್ನು ಬೇಟೆಯಾಡುತ್ತಿದ್ದ ಈ ಹುಲಿ ನಂತರದ ದಿನಗಳಲ್ಲಿ ಮನುಷ್ಯರನ್ನೇ ಅರಸುತ್ತಾ ಅಲೆಯತೊಡಗಿತು.

ಕಾರ್ಬೆಟ್ ಮುಕ್ತೇಶ್ವರ ಹಳ್ಳಿಗೆ ಬರುವ ಹಿಂದಿನ ದಿನದ ಸಂಜೆ ಎರಡು ಹೋರಿಗಳನ್ನು ಮೇಯಿಸಲು ಹೋಗಿದ್ದ ಪುತ್ಲಿ ಎಂಬ ಬಾಲಕಿಯ ಮೇಲೆ ಎರಗಲು ಪ್ರಯತ್ನಿಸಿ ವಿಫಲವಾಗಿ ಅಂತಿಮವಾಗಿ ಹೋರಿಯೊಂದನ್ನು ಕೊಂದು ಹಾಕಿತ್ತು. ಕಾರ್ಬೆಟ್ ಆ ಬಾಲಕಿಯನ್ನು ಕರೆದುಕೊಂಡು ದಾಳಿ ನಡೆದ ಸ್ಥಳಕ್ಕೆ ಹೋದಾಗ ಬಿಳಿ ಬಣ್ಣದ ಹೋರಿಯ ಶವ ಅಲ್ಲೇ ಇತ್ತು. ನರಭಕ್ಷಕ ಹುಲಿ ಹೋರಿಯ ತೊಡೆಯ ಭಾಗವನ್ನು ಮಾತ್ರ ತಿಂದುಹೋಗಿತ್ತು ಈ ದಿನ ರಾತ್ರಿ ನರಭಕ್ಷಕ ಮತ್ತೇ ಬರುವುದು ಖಚಿತ ಎಂಬ ನಿರ್ಧಾರಕ್ಕೆ ಬಂದ ಕಾರ್ಬೆಟ್ ಮರದ ಮೇಲೆ ಕುಳಿತು ಬೇಟೆಯಾಡಲು ನಿರ್ಧರಿಸಿದ. ಆದರೆ, ಹೋರಿಯ ಶವವಿದ್ದ ಜಾಗದಲ್ಲಿ ಮಚ್ಚಾನು ಕಟ್ಟಿ ಕುಳಿತುಕೊಳ್ಳಲು ಯಾವುದೇ ಮರವಿರಲಿಲ್ಲ. ಕೇವಲ ಎಂಟು ಅಡಿಯಿದ್ದ ಕಾಡು ಹೂಗಳ ಪುಟ್ಟ ಮರವೊಂದಿತ್ತು. ಮಚ್ಚಾನು ಕಟ್ಟುವ ಬದಲು ಅದರಮೇಲೆ ಕುಳಿತಿಕೊಳ್ಳಲು ನಿರ್ಧರಿಸಿ, ಅ ಹಳ್ಳಿಯಲ್ಲಿ ಪರಿಚಿತನಾಗಿದ್ದ ಬದ್ರಿ ಎಂಬಾತನ ನೆರವಿನಿಂದ ಟೊಂಗೆಯ ಮೇಲೆ ಹಸಿರು ಎಲೆಗಳನ್ನು ಹೊದಿಸಿ ಗೂಡನ್ನು ನಿರ್ಮಿಸಿಕೊಂಡ. ವಾಪಸ್ ಮುಕ್ತೇಶ್ವರ ಹಳ್ಳಿಗೆ ಬಂದ ಕಾರ್ಬೆಟ್, ಬೇಟೆಗೆ ಬೇಕಾದ ಜೋಡು ನಳಿಕೆಯ ಬಂದೂಕ, ಚಾಕು, ಟಾರ್ಚ್, ಬೆಂಕಿಪೊಟ್ಟಣ, ಸಿಗರೇಟ್, ಒಂದಿಷ್ಟು ಬ್ರೆಡ್ ಮತ್ತು ಬಿಸ್ಕೇಟ್ ಹಾಗೂ ನೀರಿನೊಂದಿಗೆ ಮರದ ಬಳಿ ಬಂದ ಕಾರ್ಬೆಟ್, ಅತ್ತ ಬಾನಿನಲ್ಲಿ  ಸೂರ್ಯ ಮುಳುಗುತ್ತಿದ್ದಂತೆ ಕತ್ತಲಾಗುವ ಮುನ್ನವೇ ಮರವೇರಿ ಕುಳಿತ.

ಅರಣ್ಯದ ಸುತ್ತೆಲ್ಲಾ ಕತ್ತಲು ಆವರಿಸಕೊಳ್ಳುತ್ತಿದ್ದಂತೆ, ಎಲ್ಲೆಡೆ ಮೌನ ಮನೆ ಮಾಡತೊಡಗಿತು. ಸುಮಾರು ಏಳುಗಂಟೆ ಸಮಯಕ್ಕೆ ಸರಿಯಾಗಿ ಕಾರ್ಬೆಟ್ ಕುಳಿತ್ತಿದ್ದ ಜಾಗದಿಂದ ಸುಮಾರು 200 ಅಡಿ ದೂರದಲ್ಲಿ ಜಿಂಕೆಗಳ ಓಟ, ಮರದ ಮೇಲಿದ್ದ ಮಂಗಗಳ ಕಿರುಚಾಟ ಕೇಳಿಬರತೊಡಗಿತು. ಇದು ನರಭಕ್ಷಕ ಬರುವ ಸೂಚನೆ ಎಂಬುದನ್ನು ಅರಿತ ಕಾರ್ಬೆಟ್ ಬಂದೂಕ ಸಿದ್ಧಪಡಿಸಿಕೊಂಡು ಜಾಗರೂಕನಾದ. ಆಕಾಶದಲ್ಲಿ ದಟ್ಟ ಮೋಡಗಳು ಕವಿದ ಪರಿಣಾಮ ಅವನ ಕಣ್ಣಿಗೆ ನರಭಕ್ಷಕ ಗೋಚರವಾಗುತ್ತಿರಲಿಲ್ಲ. ಓಣಗಿದ ತರಗೆಲೆಗಳ ಮೇಲೆ ಅದು ನಡೆದು ಬರುತ್ತಿರುವ ಸದ್ದನ್ನು ಆಲಿಸತೊಡಗಿದ.

ಕಾರ್ಬೆಟ್ ಕುಳಿತ್ತಿದ್ದ ಜಾಗದ ಸುಳಿವು ಸಿಗದ ಕಾರಣ ನರಭಕ್ಷಕ ನೇರವಾಗಿ ಮರದ ಬಳಿ ಬಂದು ಕಾರ್ಬೆಟ್ ಕುಳಿತ ಜಾಗದಿಂದ ಕೇವಲ ಹತ್ತು ಅಡಿ ದೂರದಲ್ಲಿ ಬಂದು ವಿಶ್ರಮಿಸಿತು. ಅಪರಿಮಿತ ಕತ್ತಲಿನಲ್ಲಿ ಬಿಳಿಯ ಬಣ್ಣದ ಹೋರಿಯ ಕಳೇಬರ ಕೂಡ ಅವನ ಕಣ್ಣಿಗೆ ಕಾಣದಾಗಿತ್ತು. ನರಭಕ್ಷಕ ತಾನು ಕುಳಿತ ಜಾಗದಿಂದ ಎದ್ದು ನಡೆದು ಹೋರಿಯ ಕಳೇಬರದತ್ತ ತೆರಳಿ ಅದನ್ನು ತಿನ್ನಲು ಶುರು ಮಾಡಿತು. ಇಡೀ ಅದರ ಚಲನವನ್ನು ತರಗೆಲೆಗಳ ಮೇಲಿನ ಶಬ್ಧದಿಂದ ಗ್ರಹಿಸಿದ ಕಾರ್ಬೆಟ್ ಇಪ್ಪತ್ತು ಅಡಿ ದೂರದಲ್ಲಿದ್ದ ನರಭಕ್ಷನಿಗೆ ಅಂದಾಜಿನ ಮೇಲೆ ಗುಂಡು ಹಾರಿಸಿದ. ಎರಡು ನಿಮಿಷಗಳ ಕಾಲ ಗುಂಡಿನ ಸದ್ದು ಪ್ರತಿಧ್ವನಿಸಿದ್ದರಿಂದ ಏನೂ ಕಾಣದಾಯಿತು ಹಾಗೂ ಕೇಳದಾಯ್ತು. ಆನಂತರ ನರಭಕ್ಷಕ ಹುಲಿ ಘರ್ಜನೆ ಮತ್ತು ಆರ್ಭಟ ಅವನು ಕುಳಿತ ಮರದ ಸುತ್ತಾ ಮುಂದುವರಿಯಿತು. ಇದರಿಂದ ತಾನು ಗುಂಡು ಗುರಿತಪ್ಪಿದ್ದನ್ನು ಕಾರ್ಬೆಟ್ ಖಾತರಿಪಡಿಸಿಕೊಂಡ. ಅವನು ಕುಳಿತ ಮರಕೂಡ ಚಿಕ್ಕದಾಗಿದ್ದ ಕಾರಣ ಕಾರ್ಬೆಟ್ ಕುಳಿತ್ತಿದ್ದ ಮರದ ಟೊಂಗೆಗಳು ಅವನ ಭಾರಕ್ಕೆ ನೆಲದತ್ತ ಬಾಗತೊಡಗಿದವು. ಒಮ್ಮೆಯಂತು ನರಭಕ್ಷಕ ಮರದ ಕೆಳಕ್ಕೆ ಬಂದು ಅವನ್ನು ಹಿಡಿಯಲು ಪ್ರಯತ್ನಿಸಿತು. ಕೂಡಲೇ ಮತ್ತೊಂದು ಟೊಂಗೆಗೆ ನೆಗೆದ ಅವನು ಅದರ ಮೇಲೆ ಕುಕ್ಕರಗಾಲಿನಲ್ಲಿ ಕುಳಿತ.

ಅತ್ಯಂತ ಒತ್ತಡಕ್ಕೆ ಸಿಲುಕಿದ ಕಾರ್ಬೆಟ್ ಜೇಬಿನಿಂದ ಸಿಗರೇಟು ತೆಗೆದು ಬಾಯಿಗಿಟ್ಟು ಬೆಂಕಿಕಡ್ಡಿ ಗೀಚಿದಾಗ ತಕ್ಷಣ ಹೊತ್ತಿಕೊಂಡ ಬೆಂಕಿಯ ಬೆಳಕಿಗೆ ಹೆದರಿದ ನರಭಕ್ಷಕ ದೂರ ಸರಿಯಿತು. ರಾತ್ರಿ ಹತ್ತು ಗಂಟೆಯವರೆಗೆ ನಿರಂತರ ಐದು ಸಿಗರೇಟು ಸೇದಿದ ನಂತರ ಅವನ ಮನಸ್ಸು ಸ್ವಲ್ಪ ಮಟ್ಟಿಗೆ ತಹಬದಿಗೆ ಬಂದಿತು . ಆದರೆ, ಬೆಳಗಿನ ಜಾವ ಆರು ಗಂಟೆಯವರೆಗೆ ಮರದ ಮೇಲೆ ಜೀವಭಯದಲ್ಲಿ ಒಂದೇ ಸ್ಥಿತಿಯಲ್ಲಿ ಕೂರಬೇಕಾದ ದುಸ್ಥಿತಿ ಕಾರ್ಬೆಟ್‍ಗೆ ಒದಗಿಬಂತು. ಅದೇ ವೇಳೆಗೆ ಸಣ್ಣಗೆ ಶುರವಾದ ಮಳೆ, ನಂತರ ಆಕಾಶವೇ ಹರಿದು ಹೋದಂತೆ ರಾತ್ರಿಯಿಂದ ಬೆಳಗಿನ ಜಾವ ನಾಲ್ಕು ಗಂಟೆಯವರೆಗೆ ಎಡ ಬಿಡದೆ ಜೋರಾಗಿ ಸುರಿಯಿತು. ಕಾರ್ಬೆಟ್‍ನ ಬಲಿಗಾಗಿ ಕಾದು ಕುಳಿತ್ತಿದ್ದ ನರಭಕ್ಷಕ ಕೂಡ ಮಳೆಯ ಆರ್ಭಟಕ್ಕೆ ಹೆದರಿ ರಕ್ಷಣೆಗಾಗಿ ಪೊದೆಗಳ ಮೊರೆ ಹೋಯಿತು.

ಬೆಳಗಿನ ಜಾವ ಆರು ಗಂಟೆ ಸಮಯಕ್ಕೆ ಸಹಾಯಕ ಬದ್ರಿ ಕಾರ್ಬೆಟ್‍ಗೆ ಚಹಾ ತೆಗೆದುಕೊಂಡು ಬಂದಾಗ, ಮಳೆ ಮತ್ತು ಚಳಿ ಹಾಗೂ ಒಂದೇ ಸ್ಥಿತಿಯಲ್ಲಿ ಮರದ ಮೇಲೆ ಕುಳಿತ ಕಾರ್ಬೆಟ್ ಅಕ್ಷರಶಃ ಜೀವಂತ ಶವವಾಗಿ ಹೋಗಿದ್ದ. ಅವನ ಕೈ ಕಾಲುಗಳು ಮರಗಟ್ಟುಕೊಂಡು ಸೆಟೆದು ಬಿಗಿದುಕೊಂಡಿದ್ದವು, ಬದ್ರಿ ಕಾರ್ಬೆಟ್‍ನನ್ನು ಮರದಿಂದ ಜೋಪಾನವಾಗಿ ಕೆಳಕ್ಕೆ ಇಳಿಸಿ ಹೆಗಲ ಮೇಲೆ ಹೊತ್ತುಕೊಂಡು ಪ್ರವಾಸಿ ಮಂದಿರಕ್ಕೆ ತಂದು ಕೈಕಾಲುಗಳಿಗೆ ಎಣ್ಣೆಯಿಂದ ಮಸಾಜು ಮಾಡಿ ಬಿಸಿ ನೀರಿನಿಂದ ಸ್ನಾನ ಮಾಡಿಸಿದ. ಕಾರ್ಬೆಟ್‍ನ ಶಿಕಾರಿ ಅನುಭವದಲ್ಲಿ ಆ ರಾತ್ರಿ ಮರೆಯಲಾಗದ ಕರಾಳ ಅನುಭವವಾಯಿತು.

(ಮುಂದುವರಿಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -15)


– ಡಾ.ಎನ್.ಜಗದೀಶ್ ಕೊಪ್ಪ


 

ಜಿಮ್ ಕಾರ್ಬೆಟ್ ಆದಿನ ಇಡೀ ರಾತ್ರಿ ನರಭಕ್ಷಕ ಹುಲಿಗಾಗಿ ಕಾದಿದ್ದು ಏನೂ ಪ್ರಯೋಜನವಾಗಲಿಲ್ಲ. ನರಭಕ್ಷಕ ತನ್ನ ಅಡಗುತಾಣವನ್ನು ಬದಲಾಯಿಸಿರಬಹುದು ಎಂಬ ಸಂಶಯ ಕಾರ್ಬೆಟ್‍ಗೆ ಕಾಡತೊಡಗಿತು. ಬೆಳಿಗ್ಗೆ ಸ್ನಾನ ಮಾಡಿದ ಅವನು ಏನಾದರೂ ಸುಳಿವು ಸಿಗಬಹುದೇ ಎಂಬ ನಿರೀಕ್ಷೆಯಿಂದ ನರಭಕ್ಷಕ ದಾಳಿ ಮಾಡಿದ್ದ ಮನೆಯೊಂದಕ್ಕೆ ಭೇಟಿ ನೀಡಿದ. ಕೇವಲ ಒಂದು ವಾರದ ಹಿಂದೆ ಮನೆಯ ಹಿತ್ತಲಲ್ಲಿ ಬಟ್ಟೆ ಒಗೆಯುತ್ತಿದ್ದ ಮಹಿಳೆಯೊಬ್ಬಳನ್ನು ನರಭಕ್ಷಕ ಹುಲಿ ಕೊಂಡೊಯ್ದಿತ್ತು. ಮನೆಯ ಸುತ್ತಾ ಅದರ ಹೆಜ್ಜೆ ಗುರುತಿಗಾಗಿ ಕಾರ್ಬೆಟ್ ಹುಡುಕಾಡಿದರೂ ಯಾವುದೇ ಸುಳಿವು ಸಿಗಲಿಲ್ಲ.

ಜಿಮ್ ಕಾರ್ಬೆಟ್‍ಗೆ ಹುಲಿಗಳ ಹೆಜ್ಜೆ ಗುರುತಿನ ಮೇಲೆ ಅವುಗಳ ವಯಸ್ಸನ್ನು ಅಂದಾಜಿಸಬಲ್ಲ ಶಕ್ತಿಯಿತ್ತು. ಅಷ್ಟೇ ಅಲ್ಲ ಸಾಮಾನ್ಯವಾಗಿ ಹುಲಿಗಳು ನಡೆಯುವಾಗ ಅವುಗಳ ಹಿಂದಿನ ಕಾಲುಗಳ ಹೆಜ್ಜೆ ಗುರುತುಗಳು ನೆಲದ ಮೇಲೆ ಮೂಡತ್ತವೆ ಎಂಬುದನ್ನು ಅವನು ಅರಿತ್ತಿದ್ದ. ಹುಲಿಗಳು ಪ್ರಾಣ ಭಯ ಅಥವಾ ಇನ್ನಿತರೆ ಕಾರಣಗಳಿಂದ ವೇಗವಾಗಿ ಓಡುವಾಗ ಮಾತ್ರ ಅವುಗಳ ಮುಂದಿನ ಕಾಲುಗಳ ಬಲವಾದ ಹೆಜ್ಜೆಯ ಗುರುತು ಮೂಡುತ್ತವೆ ಎಂಬುದು ಅವನ ಶಿಕಾರಿ ಅನುಭವದಲ್ಲಿ ಮನದಟ್ಟಾಗಿತ್ತು.

ಪಾಲಿಹಳ್ಳಿಯಲ್ಲಿ ಎರಡು ಹಗಲು, ಎರಡು ರಾತ್ರಿ ಕಳೆದರೂ ನರಭಕ್ಷಕನ ಸುಳಿವು ಸಿಗದ ಕಾರಣ, ಅದು ತನ್ನ ವಾಸ್ತವ್ಯ ಬದಲಾಯಿಸಿದೆ ಎಂಬ ತೀರ್ಮಾನಕ್ಕೆ ಬಂದ ಕಾರ್ಬೆಟ್ ತನ್ನ ಸೇವಕರೊಡನೆ ನೈನಿತಾಲ್‍ಗೆ ಹಿಂತಿರುಗಲು ಸಿದ್ಧನಾದ. ಆ ದಿನಗಳಲ್ಲಿ ನರಭಕ್ಷಕ ಆ ಪ್ರಾಂತ್ಯದಲ್ಲೇ ಸುಳಿದಾಡುತ್ತಿದ್ದರಿಂದ ಹಗಲಿನ ವೇಳೆಯಲ್ಲಿ ದಾರಿಯಲ್ಲಿ ಅತ್ಯಂತ ಎಚ್ಚರಿಕೆಯಿಂದ ನಡೆಯಬೇಕಾಗಿತ್ತು. ಕಾರ್ಬೆಟ್ ಬೆಟ್ಟ ಗುಡ್ಡ ಹತ್ತಿ, ಇಳಿದು. ನೈನಿತಾಲ್‍ಗೆ ಸಾಗುತ್ತಿದ್ದ ವೇಳೆ ಪಾಲಿಹಳ್ಳಿಯಿಂದ 20 ಕಿಲೋ ಮೀಟರ್ ದೂರದ ಚಂಪಾವತ್ ಎಂಬ ಹಳ್ಳಿಯಲ್ಲಿ ನರಭಕ್ಷಕ ಪ್ರತ್ಯಕ್ಷವಾಗಿ ಹಸುವೊಂದನ್ನು ಬಲಿತೆಗೆದುಕೊಂಡ ಸುದ್ದಿ ಕಾರ್ಬೆಟ್ ತಂಡಕ್ಕೆ ತಲುಪಿತು. ವಿಷಯ ತಿಳಿಯುತ್ತಿದ್ದಂತೆ ಕಾರ್ಬೆಟ್ ನೈನಿತಾಲ್ ಮಾರ್ಗವನ್ನು ತೊರೆದು ಚಂಪಾವತ್ ಹಳ್ಳಿಯತ್ತ ಹೊರಟ.

ಆ ಹಳ್ಳಿಯಲ್ಲಿ ಡಾಕ್ ಬಂಗ್ಲೆ ಎಂದು ಆ ಕಾಲದಲ್ಲಿ ಕರೆಯುತ್ತಿದ್ದ ಪ್ರವಾಸಿ ಮಂದಿರವಿದ್ದುದರಿಂದ ಕಾರ್ಬೆಟ್ ಮತ್ತು ಅವನ ಸಂಗಡಿಗರಿಗೆ ವಸತಿ ವ್ಯವಸ್ಥೆಗೆ ಯಾವುದೇ ತೊಂದರೆಯಾಗಲಿಲ್ಲ. ಚಂಪಾವತ್ ಹಳ್ಳಿಯ ಹೊರಭಾಗದಲ್ಲಿದ್ದ ಆ ಪ್ರವಾಸಿ ಮಂದಿರಕ್ಕೆ ಆಗಾಗ್ಗೆ ಸರ್ಕಾರದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಭೇಟಿ ನೀಡುತ್ತಿದ್ದರಿಂದ ಅಲ್ಲಿ ಒಬ್ಬ ಸೇವಕನನ್ನು ಸರ್ಕಾರ ನೇಮಕ ಮಾಡಿತ್ತು ಆತ ಅಲ್ಲಿಗೆ ಬರುವ ಅತಿಥಿಗಳ ಊಟೋಪಚಾರ, ವಸತಿ ವ್ಯವಸ್ಥೆ ಎಲ್ಲವನ್ನು ನೋಡಿಕೊಳ್ಳುತ್ತಿದ್ದ. ಬೆಳಗಿನ ಜಾವ ಪ್ರವಾಸಿ ಮಂದಿರಕ್ಕೆ ಬಂದ ಕಾರ್ಬೆಟ್ ಚಹಾ ಕುಡಿದು, ಸ್ನಾನ ಮುಗಿಸುವಷ್ಟರಲ್ಲಿ ಆ ಪ್ರದೇಶದ ತಹಸಿಲ್ದಾರ್  ಅಲ್ಲಿಗೆ ಬಂದು ಕಾರ್ಬೆಟ್‍ನನ್ನು ಪರಿಚಯಿಸಿಕೊಂಡ. ಇಬ್ಬರೂ ಉಪಹಾರ ಸೇವಿಸುತ್ತಾ ನರಭಕ್ಷಕ ಹುಲಿಯ ಬಗ್ಗೆ ಚರ್ಚೆ ಮಾಡುತ್ತಿರುವಾಗಲೇ ಹಳ್ಳಿಯಿಂದ ಯುವಕನೊಬ್ಬ ಓಡೋಡಿ ಬರುತ್ತಲೇ ಹುಲಿ ಯುವತಿಯೊಬ್ಬಳನ್ನು ಆಹುತಿ ತೆಗೆದುಕೊಂಡು ಕಾಡಿನತ್ತ ಕೊಂಡೊಯ್ದ ಸುದ್ದಿಯನ್ನು ಮುಟ್ಟಿಸಿದ. ತಮ್ಮ ಚರ್ಚೆಯನ್ನು ಅರ್ಧಕ್ಕೆ ನಿಲ್ಲಿಸಿದ ಇಬ್ಬರೂ ಬಂದೂಕಿನೊಂದಿಗೆ ಹಳ್ಳಿಯತ್ತ ತೆರಳಿದರು.

ಕಾರ್ಬೆಟ್ ಮತ್ತು ತಹಸಿಲ್ದಾರ್ ಚಂಪಾವತ್ ಗ್ರಾಮದ ಮಧ್ಯ ಇದ್ದ ದೇವಸ್ಥಾನದ ಬಳಿ ಬರುವುದರೊಳಗೆ ಹಳ್ಳಿ ಜನರೆಲ್ಲಾ ಆತಂಕ ಮತ್ತು ಭಯದೊಂದಿಗೆ ಗುಂಪುಗೂಡಿ ಚರ್ಚಿಸುತ್ತಾ ನಿಂತಿದ್ದರು. ಅವರಿಂದ ವಿವರಗಳನ್ನು ಪಡೆದ ಕಾರ್ಬೆಟ್, ಜನರೊಂದಿಗೆ ನರಭಕ್ಷಕ ಹುಲಿ ದಾಳಿ ನಡೆಸಿದ ಸ್ಥಳದತ್ತ ತೆರಳಿದ. ಇಲ್ಲಿಯೂ ಕೂಡ ನರಭಕ್ಷಕ ಹುಲಿ ಬಯಲಿನಲ್ಲಿ ಹಲವಾರು ಮಹಿಳೆಯರ ಜೊತೆ ಕಟ್ಟಿಗೆ ಸಂಗ್ರಹಿಸುತ್ತಿದ್ದ ಯುವತಿಯೊಬ್ಬಳ ಮೇಲೆ ಎರಗಿ ದಾಳಿ ನಡೆಸಿತ್ತು. ದಾಳಿ ನಡೆದ ಸ್ಥಳದಲ್ಲಿ ರಕ್ತದ ಕೋಡಿ ಹರಿದು ಹೆಪ್ಪುಗಟ್ಟಿದ್ದರಿಂದ, ಹುಲಿ ನೇರವಾಗಿ ಯುವತಿಯ ಕುತ್ತಿಗೆಗೆ ಬಾಯಿ ಹಾಕಿ ಸ್ಥಳದಲ್ಲೇ ಕೊಂದಿದೆ ಎಂದು ಕಾರ್ಬೆಟ್ ಊಹಿಸಿದ.

ಹುಲಿ ಯುವತಿಯನ್ನು ಹೊತ್ತೊಯ್ದ ಜಾಡು ಹಿಡಿದು ಸಾಗಿದಾಗ, ದಾರಿಯುದ್ದಕ್ಕೂ ಯುವತಿಯ ತಲೆ ನೆಲಕ್ಕೆ ತಾಗಿದ ಪರಿಣಾಮ ಆಕೆಯ ತಲೆ ಬುರುಡೆ ಒಡೆದು ಹೋಗಿ, ಅಲ್ಲಲ್ಲಿ ನೆಲದ ಮೇಲೆ, ಗಿಡಗಳ ಮೇಲೆ ರಕ್ತದ ಕಲೆಗಳು ಕಾಣಿಸಿದವು. ನರಭಕ್ಷ ಹುಲಿ ಯುವತಿಯ ಶವವನ್ನು ದಾಳಿ ನಡೆಸಿದ ಸ್ಥಳದಿಂದ ಸುಮಾರು ಒಂದೂವರೆ ಕಿಲೊಮೀಟರ್ ದೂರದ ಕಾಡಿನೊಳಗೆ 300 ಅಡಿಯಷ್ಟು ಆಳವಿದ್ದ ತಗ್ಗಿನ ಪ್ರದೇಶದ ಪೊದೆಗೆ ಕೊಂಡೊಯ್ದಿತ್ತು.

ಜಿಮ್ ಕಾರ್ಬೆಟ್ ತನ್ನೊಂದಿಗೆ ಬಂದಿದ್ದ ಜನರನ್ನು ಅಲ್ಲೇ ತಡೆದು, ತನ್ನ ಮೂವರು ಸೇವಕರ ಜೊತೆ, 300 ಅಡಿ ಆಳದ ಕಣಿವೆಗೆ ಇಳಿಯತೊಡಗಿದ. ದಾಳಿ ಅನಿರೀಕ್ಷಿತವಾಗಿ ನಡೆದಿದ್ದರಿಂದ ಶಿಕಾರಿಗೆ ಅವಶ್ಯವಿದ್ದ ಉಡುಪುಗಳನ್ನಾಗಲಿ, ಬೂಟುಗಳನ್ನಾಗಲಿ ಕಾರ್ಬೆಟ್ ಧರಿಸಿರಲಿಲ್ಲ. ಮಂಡಿಯುದ್ದಕ್ಕೂ ಧರಿಸುತ್ತಿದ್ದ ಕಾಲುಚೀಲ ಮತ್ತು ಕ್ಯಾನವಾಸ್ ಬೂಟುಗಳನ್ನು ಮಾತ್ರ ತೊಟ್ಟಿದ್ದ. ಅವುಗಳಲ್ಲೇ ಅತ್ಯಂತ ಜಾಗರೂಕತೆಯಿಂದ ಹಳ್ಳಕ್ಕೆ ಇಳಿಯತೊಡಗಿದ್ದ.

ಹಳ್ಳದಲ್ಲಿ ಒಂದು ಸರೋವರವಿದ್ದುದರಿಂದ ನರಭಕ್ಷಕ ಯುವತಿಯ ಕಳೇಬರವನ್ನು ಸರೋವರದ ಮಧ್ಯೆ ಮಂಡಿಯುದ್ದದ ನೀರಿನಲ್ಲಿ ಎಳೆದೊಯ್ದು ಆಚೆಗಿನ ಪೊದೆಯಲ್ಲಿ ಬೀಡು ಬಿಟ್ಟಿತ್ತು ಸರೋವರದ ನೀರು ರಕ್ತ ಮತ್ತು ಕೆಸರಿನಿಂದ ರಾಡಿಯಾಗಿತ್ತು, ಕಾರ್ಬೆಟ್ ತನ್ನ ಇಬ್ಬರು ಸೇವಕರನ್ನು ಹತ್ತಿರದಲ್ಲಿ ಇದ್ದ ಕಲ್ಲು ಬಂಡೆಯ ಮೇಲೆ ಕೂರಿಸಿ, ಸರೋವರದ ಬಳಿ ತೆರಳುತ್ತಿದ್ದಂತೆ, ಮನುಷ್ಯ ವಾಸನೆಯನ್ನು ಗ್ರಹಿಸಿದ ನರಭಕ್ಷಕ ಪೊದೆಯಿಂದಲೇ ಘರ್ಜಿಸತೊಡಗಿತು.

ಜಿಮ್ ಕಾರ್ಬೆಟ್ ಕ್ಯಾನ್ವಾಸ್ ಬೂಟುಗಳನ್ನು ಧರಿಸಿದ್ದರಿಂದ ನೀರಿಗೆ ಇಳಿಯಲು ಸಾದ್ಯವಾಗಲಿಲ್ಲ. ಒದ್ದೆಯಾದ ನೆಲದ ಮೇಲೆ ಮೂಡಿದ್ದ ನರಭಕ್ಷಕನ ಹೆಜ್ಜೆಯ ಗುರುತುಗಳನ್ನು ಪರಿಶೀಲಿಸಿ ಇದೊಂದು ವಯಸ್ಸಾದ ಹುಲಿ ಎಂಬ ತೀರ್ಮಾನಕ್ಕೆ ಬಂದ. ಸರೋವರದ ದಕ್ಷಿಣದ ತುದಿಯಲ್ಲಿ ನಿಂತು, ಅತ್ತ, ಇತ್ತ ತಿರುಗಾಡುತ್ತಾ ಆ ಬದಿಯಲ್ಲಿದ್ದ ನರಭಕ್ಷಕನ್ನು ಪ್ರಚೋದಿಸಲು ಪ್ರಯತ್ನಿಸಿದ. ಪೊದೆಯಿಂದ ಹೊರಬಂದು ಮುಖಮುಖಿಯಾದರೆ, ಗುಂಡಿಟ್ಟು ಕೊಲ್ಲಲು ಕಾರ್ಬೆಟ್ ಹವಣಿಸಿದ್ದ. ಆದರೆ, ನಿರಂತರ ನಾಲ್ಕು ಗಂಟೆಗಳು ಕಾರ್ಬೆಟ್ ಪ್ರಯತ್ನ ಪಟ್ಟರೂ, ಪೊದೆಯಿಂದ ನರಭಕ್ಷಕ ಹುಲಿಯ ಘರ್ಜನೆ ಸದ್ದು ಮಾತ್ರ ಹೊರಬರುತ್ತಿತ್ತು.

ಕೊನೆಗೆ ಕಾರ್ಬೆಟ್‍ನ ಧೈರ್ಯಕ್ಕೆ ಹೆದರಿದಂತೆ ಕಂಡ ನರಭಕ್ಷಕ ಯುವತಿಯ ಕಳೇಬರವನ್ನು ಅಲ್ಲೇ ಬಿಟ್ಟು ಕಣಿವೆಯ ಮೇಲ್ಭಾಗಕ್ಕೆ ಚಲಿಸತೊಡಗಿತು. ಅದು ಯಾವ ದಿಕ್ಕಿನತ್ತ ಚಲಿಸುತ್ತಿದೆ ಎಂಬುದು ಗಿಡಗೆಂಟೆಗಳ ಅಲುಗಾಡುವಿಕೆಯಿಂದ ತಿಳಿದು ಬರುತಿತ್ತು. ಅಂತಿಮವಾಗಿ ಕಣಿವೆಯಿಂದ ಮೇಲಕ್ಕೆ ಬಂದ ನರಭಕ್ಷಕ ಸಣ್ಣ ಸಣ್ಣ ಬಂಡೆಗಳು ಮತ್ತು ಕುರಚಲು ಗಿಡ ಮತ್ತು ಹುಲ್ಲುಗಾವಲು ಇದ್ದ ಬಯಲಿನಲ್ಲಿ ಅಡಗಿಕೊಂಡಿತು. ಅದನ್ನು ಅಲ್ಲಿಯೆ ಬಿಟ್ಟು ಸಂಗಡಿಗರೊಂದಿಗೆ ವಾಪಸ್ ಹಳ್ಳಿಗೆ ಬಂದ ಕಾರ್ಬೆಟ್ ಹೊಸ ಯೋಜನೆಯೊಂದನ್ನು ರೂಪಿಸಿದ.

ಸಾಮಾನ್ಯವಾಗಿ ಹುಲಿಗಳು ತಾವು ಬೇಟೆಯಾಡಿದ ಪ್ರಾಣಿಗಳನ್ನು ಒಂದು ಸ್ಥಳದಲ್ಲಿರಿಸಿಕೊಂಡು ಎರಡು ಅಥವಾ ಮೂರು ದಿನ ಆಹಾರವಾಗಿ ಬಳಸುವುದನ್ನು ಅರಿತಿದ್ದ ಜಿಮ್ ಕಾರ್ಬೆಟ್ ನರಭಕ್ಷಕ ಹುಲಿ ಯುವತಿಯ ಕಳೇಬರವನ್ನು ತಿಂದು ಮುಗಿಸದೇ ಬೇರೆ ದಾಳಿಗೆ ಇಳಿಯುವುದಿಲ್ಲ ಎಂದು ಅಂದಾಜಿಸಿದ. ಮಾರನೇ ದಿನ ಹಳ್ಳಿಯ ಜನರ ಜೊತೆಗೂಡಿ ಅದನ್ನು ಬಯಲು ಪ್ರದೇಶದಿಂದ ಮತ್ತೇ ಕಣಿವೆಗೆ ಇಳಿಯುವಂತೆ ಮಾಡುವುದು, ಕಣಿವೆಯ ದಾರಿಯಲ್ಲಿ ಅಡಗಿ ಕುಳಿತು ನರಭಕ್ಷಕ ಹುಲಿಯನ್ನು ಕೊಲ್ಲುವುದು ಎಂಬ ತನ್ನ ಯೋಜನೆಯನ್ನು ತಹಸಿಲ್ದಾರ್ ಮುಂದಿಟ್ಟ, ಕೂಡಲೆ ಒಪ್ಪಿಗೆ ಸೂಚಿಸಿದ ತಹಸಿಲ್ದಾರ್ ಮರುದಿನ, ನಡು ಮಧ್ಯಾಹ್ನದ ಹೊತ್ತಿಗೆ 298 ಗ್ರಾಮಸ್ತರನ್ನು ಹುಲಿ ಬೆದರಿಸುವುದಕ್ಕಾಗಿ ಸಜ್ಜುಗೊಳಿಸಿದ.

ಮಚ್ಚು, ಕೊಡಲಿ, ದೊಣ್ಣೆ ಹಾಗೂ ತಮ್ಮ ತಮ್ಮ ಮನೆಗಳಲ್ಲಿ ಇದ್ದ ನಾಡ ಬಂದೂಕಗಳೊಂದಿಗೆ ಹಾಜರಾದ ಹಳ್ಳಿಯ ಜನರನ್ನು ಕರೆದುಕೊಂಡು ಬಯಲು ಪ್ರದೇಶಕ್ಕೆ ಬಂದ ಕಾರ್ಬೆಟ್, ನರಭಕ್ಷಕ ಅಡಗಿದ್ದ ಬಯಲು ಪ್ರದೇಶದಲ್ಲಿ ಕಣಿವೆಗೆ ತೆರಳಲು ಇದ್ದ ಮಾರ್ಗವನ್ನು ಹೊರತುಪಡಿಸಿ, ಉಳಿದ ಜಾಗದಲ್ಲಿ ಎಲ್ಲರನ್ನು ಇಂಗ್ಲಿಷ್ ಯು ಅಕ್ಷರದ ಆಕಾರದಲ್ಲಿ ನಿಲ್ಲಿಸಿ, ನಾನು ಸೂಚನೆ ನೀಡಿದಾಗ ಜೋರಾಗಿ ಗದ್ದಲವೆಬ್ಬಿಸಿ, ಗಾಳಿಯಲ್ಲಿ ಗುಂಡು ಹಾರಿಸುತ್ತಾ ಕಣಿವೆಯ ದಾರಿಯತ್ತಾ ಬರಬೇಕೆಂದು ಸೂಚಿಸಿದ. ಬಯಲು ಪ್ರದೇಶದ ಕಾಡಿನಂಚಿನಿಂದ ಕಣಿವೆಗೆ ಇಳಿಯುವ ದಾರಿಯಲಿ ತಗ್ಗಿನ ಪ್ರದೇಶದಲ್ಲಿ ಕಾರ್ಬೆಟ್ ಅಡಗಿ ಕುಳಿತ. ಅಲ್ಲದೇ . ತಾನು ಕುಳಿತ ಸ್ಥಳದಿಂದ 100 ಅಡಿ ಎತ್ತರದ ಬಲಭಾಗದಲ್ಲಿ ತಹಸಿಲ್ದಾರ್  ಕೈಗೆ ಪಿಸ್ತೂಲ್ ಕೊಟ್ಟು ಬಂಡೆಯೊಂದರ ಮೇಲೆ ಹುಲಿ ಬರುವ ಬಗ್ಗೆ ಸುಳಿವು ಕೊಡುವ ಉದ್ದೇಶದಿಂದ ಅವನನ್ನು ಕೂರಿಸಿದ.

ಕಾರ್ಬೆಟ್ ಸೂಚನೆ ನೀಡಿದ ಕೂಡಲೆ ಗ್ರಾಮಸ್ಥರು ಕೇಕೆ ಹಾಕುತ್ತಾ, ಚಪ್ಪಾಳೆ ತಟ್ಟುತ್ತಾ, ಗಾಳಿಯಲ್ಲಿ ಗುಂಡು ಹಾರಿಸುತ್ತ ಜೋರಾಗಿ ಗದ್ದಲವೆಬ್ಬೆಸಿ ಬರತೊಡಗಿದರು. ಕಾರ್ಬೆಟ್‍ನ ನಿರೀಕ್ಷೆ ಸುಳ್ಳಾಗಲಿಲ್ಲ. ಬಯಲು ಪ್ರದೇಶದ ಹುಲ್ಲಿನೊಳಗೆ ಅಡಗಿ ಕುಳಿತಿದ್ದ ನರಭಕ್ಷಕ ಜನರ ಸದ್ದಿನ ಭಯದಿಂದ ಕಣಿವೆಗೆ ಇಳಿಯಲು ವೇಗವಾಗಿ ಧಾವಿಸುತ್ತಿತ್ತು. ಎರಡರಿಂದ ಮೂರು ಅಡಿ ಎತ್ತರಕ್ಕೆ ಹುಲ್ಲು ಬೆಳದಿದ್ದರಿಂದ ಕಾರ್ಬೆಟ್ ಕಣ್ಣಿಗೆ ಹುಲಿ ಕಾಣುತ್ತಿರಲಿಲ್ಲ. ಅದರೆ, ಹುಲ್ಲಿನ ಬಾಗುವಿಕೆಯಿಂದ ನರಭಕ್ಷಕ ಯಾವ ದಿಕ್ಕಿನಲಿ, ಬರುತ್ತಿದೆ ಎಂಬುದು ಕಾರ್ಬೆಟ್‍ಗೆ ಗೋಚರವಾಗುತ್ತಿತ್ತು. ತಾನು ಕುಳಿತ ಸ್ಥಳಕ್ಕೆ 50 ಅಡಿ ಹತ್ತಿರಕ್ಕೆ ಬರುತಿದ್ದಂತೆ ಕಾರ್ಬೆಟ್ ಹುಲ್ಲು ಅಲುಗಾಡುವಿಕೆಯನ್ನು ಗುರಿಯಾಗಿರಿಸಿಕೊಂಡು ಎರಡು ಗುಂಡು ಹಾರಿಸಿದ. ಆ ಕ್ಷಣಕ್ಕೆ ಅವುಗಳು ನರಭಕ್ಷಕನಿಗೆ ತಾಗಿದ ಬಗ್ಗೆ ಯಾವ ಸೂಚನೆ ಕಾಣಲಿಲ್ಲ. ಸ್ವಲ್ಪ ಹೊತ್ತು ಎಲ್ಲೆಡೆ ಮೌನ ಆವರಿಸಿತು. ನರಭಕ್ಷಕ ಗದ್ದಲವೆಬ್ಬಿಸುತ್ತಿರುವ ಗ್ರಾಮಸ್ತರ ಮೇಲೆ ಎರಗಲು ವಾಪಸ್ ಬಯಲಿನತ್ತ ತೆರಳುತ್ತಿರಬೇಕು ಎಂದು ಕಾರ್ಬೆಟ್ ಊಹಿಸಿದ್ದ.

ಆದರೆ, ಅದು ಅವನ ಸನಿಹಕ್ಕೆ ಕೇವಲ 30ನ ಅಡಿ ಹತ್ತಿರಕ್ಕೆ ಬಂದು ಒಮ್ಮೆ ಹುಲ್ಲಿನಿಂದ ತಲೆಯನ್ನು ಹೊರಚಾಚಿ ಕಾರ್ಬೆಟ್‍ನನ್ನು ನೋಡಿ ಗರ್ಜಿಸಿತು. ಕಾರ್ಬೆಟ್‍ಗೆ ಅಷ್ಟು ಸಾಕಾಗಿತ್ತು ಅವನು ಸಿಡಿಸಿದ ಮೂರನೇ ಗುಂಡು ನೇರವಾಗಿ ನರಭಕ್ಷನ ಎದೆಯ ಬಲಭಾಗಕ್ಕೆ ತಗುಲಿತು. ಆದರೂ ಕಾರ್ಬೆಟ್‍ಗೆ  ನಂಬಿಕೆ ಬಾರದೆ, ತಹಸಿಲ್ದಾರ್ ಬಳಿ ಓಡಿ ಹೋಗಿ ಅವನ ಬಳಿ ಇದ್ದ ಪಿಸ್ತೂಲ್ ಅನ್ನು ಕಸಿದು ತಂದು ಅದರಿಂದ ನರಭಕ್ಷಕ ಕಾಣಿಸಿಕೊಂಡ ಜಾಗದತ್ತ ಗುಂಡಿನ ಮಳೆಗರೆದ. ಸುಮಾರು ಒಂದು ಗಂಟೆಯವರೆಗೂ ನರಭಕ್ಷಕ ಹುಲಿಯ ನರಳುವಿಕೆಯಾಗಲಿ, ಘರ್ಜನೆಯಾಗಲಿ, ಕೇಳಬರದಿದ್ದರಿಂದ ಅತ್ಯಂತ ಜಾಗರೂಕತೆಯಿಂದ ತನ್ನ ಸಹಚರರ ಜೊತೆ ನಿಧಾನವಾಗಿ ಗುಂಡು ಹಾರಿಸಿದ ಸ್ಥಳಕ್ಕೆ ಬಂದ ಕಾರ್ಬೆಟ್ ನೋಡಿದ ದೃಶ್ಯ, ಸ್ವತಃ ಅವನಿಗೇ ಅಚ್ಚರಿ ಮೂಡಿಸಿತು. ಏಕೆಂದರೆ, ನೇಪಾಳದಲ್ಲಿ 200  ಹಾಗೂ ಭಾರತದಲ್ಲಿ 206 ಮಂದಿಯನ್ನು ಬಲಿತೆಗೆದುಕೊಂಡಿದ್ದ ವಯಸ್ಸಾದ ನರಭಕ್ಷಕ ಹೆಣ್ಣು ಹುಲಿ ಅಲ್ಲಿ ತಣ್ಣಗೆ ನೆಲಕ್ಕೊರಗಿ ಮಲಗಿತ್ತು.

    ( ಮುಂದುವರಿಯುವುದು) 

ಆಧುನಿಕ ಕರ್ನಾಟಕ ಮತ್ತು ಜಾತ್ಯತೀತತೆ

-ಡಾ. ನಟರಾಜ್ ಹುಳಿಯಾರ್

ಕಳೆದ ಐವತ್ತು, ಅರವತ್ತು ವರ್ಷಗಳ ಕರ್ನಾಟಕದ ಚರಿತ್ರೆಯ ಮುಖ್ಯ ಬೆಳವಣಿಗೆಗಳಲ್ಲಿ “ಸೆಕ್ಯುಲರ್ ಇಂಟೆಲೆಕ್ಚುಯಲ್ಸ್” ವಿಕಾಸ ಕೂಡ ಒಂದು. ಈ ಸೆಕ್ಯುಲರ್ ಬುದ್ಧಿಜೀವಿಗಳು ಕರ್ನಾಟಕದಲ್ಲಿ ಹಲವು ಬಗೆಯ ವ್ಯವಸ್ಥೆಯ ವಿರೋಧಿ ಚಳವಳಿಗಳಲ್ಲಿ ಬೆರೆತು ಹೋಗಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಾ ಬಂದಿರುವ ಗಾಂಧೀವಾದಿ ಚಳವಳಿ, ಸಮಾಜವಾದಿ ಚಳವಳಿ, ಮಾರ್ಕ್ಸ್‌ವಾದಿ ಚಳವಳಿ, ವಿಚಾರವಾದಿ ಚಳವಳಿ, ದಲಿತ ಚಳವಳಿ, ರೈತಚಳವಳಿ, ಸ್ತ್ರೀವಾದಿ ಚಳವಳಿ, ಹಿಂದುಳಿದ ವರ್ಗಗಳ ಚಳವಳಿ… ಮುಂತಾಗಿ ಎಲ್ಲ ಮುಖ್ಯ ಚಳವಳಿಗಳಲ್ಲೂ  ಈ ಸೆಕ್ಯುಲರ್ ಬುದ್ಧಿಜೀವಿಗಳು ಭಾಗಿಯಾಗಿದ್ದಾರೆ. ಹಾಗೆಯೇ ನವೋದಯ, ಪ್ರಗತಿಶೀಲ, ನವ್ಯ, ಬರಹಗಾರರ ಒಕ್ಕೂಟ, ದಲಿತ, ಬಂಡಾಯ ಹಾಗೂ ರಂಗಭೂಮಿ ಚಟುವಟಿಕೆಗಳಂಥ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಳವಳಿಗಳ ಜೊತೆಗೂ ಇದ್ದಾರೆ. ಸರ್ಕಾರೇತರ ಸಂಸ್ಥೆಗಳಲ್ಲೂ ಅವರು ಇದ್ದಾರೆ. ಈ ಎಲ್ಲ ಚಳವಳಿಗಳು, ಅವುಗಳ ನಾಯಕರು, ಅದರಲ್ಲಿ ಭಾಗಿಯಾದ ವಿವಿಧ ವೇದಿಕೆಗಳು, ವಿವಿಧ ರಾಜಕೀಯ ಪಕ್ಷಗಳ ಕಾಲಕಾಲದ ಜಾತ್ಯತೀತ ನಿಲುವುಗಳು ಹಾಗೂ ಜಾತ್ಯತೀತ ಬುದ್ಧಿಜೀವಿಗಳು ಈ ಎಲ್ಲರ ಪ್ರಯತ್ನಗಳಿಂದಾಗಿ ಕರ್ನಾಟಕದಲ್ಲಿ ಗಟ್ಟಿಯಾದ ಜಾತ್ಯತೀತ ಚಿಂತನೆ ಹಾಗೂ ಕೋಮುವಾದ ವಿರೋಧಿ ಚಿಂತನೆಗಳು ರೂಪುಗೊಂಡಿವೆ. ಈ ಚಿಂತನೆಗಳನ್ನು ವಿವಿಧ ಹಂತಗಳಲ್ಲಿ ಕರ್ನಾಟಕದ ಸಾಮಾನ್ಯ ಜನ ಕೂಡ ಒಂದು ಮಟ್ಟದಲ್ಲಿ ಪ್ರತಿಧ್ವನಿಸಿದ್ದಾರೆ. ಇವೆಲ್ಲದರ ಹಿನ್ನೆಲೆಗೆ ಕಳೆದ ಹಲವಾರು ದಶಕಗಳಲ್ಲಿ ಕರ್ನಾಟಕದಲ್ಲಿ ಬೆಳೆದ ಜಾತಿವಿನಾಶ ಪರಿಕಲ್ಪನೆಯೂ ಕೆಲಸ ಮಾಡಿದೆ.

ಸ್ವಾತಂತ್ರ್ಯೋತ್ತರ ಕರ್ನಾಟಕದ ಕಲೆ, ಸಂಸ್ಕೃತಿ, ರಾಜಕಾರಣ, ಚಳವಳಿ, ಚಿಂತನೆಗಳನ್ನು ಪ್ರಭಾವಿಸಿದ ಹಾಗೂ ಪ್ರೇರೇಪಿಸಿದ ಪೆರಿಯಾರ್‍‌ವಾದ, ಲೋಹಿಯಾವಾದ ಹಾಗೂ ಅಂಬೇಡ್ಕರ್‍‌ವಾದಗಳ ಮೂಲದಲ್ಲಿ ಹಾಗೂ ವಿವಿಧ ಸಾಹಿತ್ಯ ಚಳವಳಿಗಳ ಮುಖ್ಯ ಕಾಳಜಿಗಳಲ್ಲಿ ಜಾತಿವಿನಾಶ ಹಾಗೂ ಜಾತಿವಿರೋಧಗಳು ಕೂಡ ಇದ್ದವು. ಮಾರ್ಕ್ಸ್‌ವಾದದಿಂದ ಪ್ರಭಾವಿತರಾದ ಚಿಂತಕರು ಜಾತ್ಯತೀತತೆಯನ್ನು ಒಂದು ತತ್ವವಾಗಿ ಒಪ್ಪಿದವರಾಗಿದ್ದರು. ರೈತ ಚಳ‌ವಳಿಯನ್ನು ರೂಪಿಸಿದ ಎಂ.ಡಿ.‍ನಂಜುಂಡಸ್ವಾಮಿಯವರು ಎಪ್ಪತ್ತರ ದಶಕದ ಸಮಾಜವಾದಿ ಯುವಜನ ಸಭಾದ ಕಾಲದಿಂದಲೂ ಜಾತಿವಿನಾಶ ಕುರಿತ ಚಿಂತನೆಯನ್ನು ಬೆಳೆಸಿದವರು. ಮುಂದೆ ರೈತ ಚಳವಳಿಯ ಇನ್ನಿತರ ನಾಯಕರಲ್ಲೂ ಜಾತ್ಯತೀತತೆ ಒಂದು ಮಟ್ಟದಲ್ಲಾದರೂ ಮುಂದುವರಿಯಿತು. ದಲಿತ ಚಳವಳಿಯಲ್ಲಂತೂ ಜಾತಿ ವಿರೋಧ ಬಹಳ ಸ್ಪಷ್ಟವಾಗಿತ್ತು. ಪೆರಿಯಾರ್‌ವಾದ ವೈಚಾರಿಕತೆಯ ಮೂಲಕ ಜಾತಿಯ ವಿರುದ್ಧ ಸಮರ ಸಾರಿತ್ತು. ಲೋಹಿಯಾವಾದ ಜಾತಿ ಅಸಮಾನತೆಯ ವಿರುದ್ಧ ಹೋರಾಟ ಮಾಡುತ್ತಾ ಜಾತಿವಿನಾಶದ ಕಾರ್ಯನೀತಿಯನ್ನು ಅಳವಡಿಸಿಕೊಂಡಿತ್ತು.

ಎಪ್ಪತ್ತರ ದಶಕದ ಅರಸು ಆಡಳಿತದಲ್ಲಿ ಆರಂಭಗೊಂಡ ಹಿಂದುಳಿದ ಹಾಗೂ ದಲಿತ ಜಾತಿಗಳ ಹೊಸ ಸಮೀಕರಣ, ಹಾವನೂರು ವರದಿಯ ನಂತರ ಹಿಂದುಳಿದ ವರ್ಗಗಳಲ್ಲಿ ಕಂಡು ಬಂದ ಹೊಸ ಚಲನೆ, ಬಸವಲಿಂಗಪ್ಪನವರು ಪ್ರಾಚೀನ ಕನ್ನಡ ಸಾಹಿತ್ಯ ಕುರಿತು ಮಾಡಿದ ವಿಮರ್ಶೆಯ ಫಲವಾಗಿ ಹುಟ್ಟಿದ ಬೂಸಾ ಚಳವಳಿ, ಜಯಪ್ರಕಾಶ ನಾರಾಯಣರ ನವನಿರ್ಮಾಣ ಚಳವಳಿ, ಇಂದಿರಾಗಾಂಧಿಯವರು ಹೇರಿದ ಎಮರ್ಜೆನ್ಸಿಯನ್ನು ವಿರೋಧಿಸಿದ ಚಿಂತನೆಗಳು-ಇವೆಲ್ಲದರ ಫಲವಾಗಿ ಕೂಡ ಕರ್ನಾಟಕದಲ್ಲಿ ಜಾತ್ಯತೀತ ಚಿಂತನೆ ರೂಪುಗೊಂಡಿತು. ಈ ದಿಸೆಯಲ್ಲಿ ಎಪ್ಪತ್ತರ ದಶಕದಲ್ಲಿ ವಿಶ್ವವಿದ್ಯಾಲಯಗಳ ಪ್ರಜ್ಞಾವಂತ ವಿದ್ಯಾರ್ಥಿಗಳು ತಮ್ಮ ಹೆಸರುಗಳಲ್ಲಿದ್ದ ಜಾತಿಸೂಚಕ ಗುರುತುಗಳನ್ನು, ಜಾತಿ ಚಿಹ್ನೆಗಳನ್ನು ಕೈ ಬಿಟ್ಟದ್ದು ಕೂಡ ಒಂದು ಚಾರಿತ್ರಿಕ ಬೆಳವಣಿಗೆಯಾಗಿತ್ತು. ದಲಿತ ಸಂಘರ್ಷ ಸಮಿತಿಯನ್ನು ರೂಪಿಸಿದ ಬಿ.ಕೃಷ್ಣಪ್ಪ, ದೇವನೂರ ಮಹಾದೇವ, ಸಿದ್ಧಲಿಂಗಯ್ಯ ಮುಂತಾದವರ ಚಿಂತನೆ ಹಾಗೂ ಹೋರಾಟಗಳು ಕೇವಲ ದಲಿತ ಜಾತಿ, ವರ್ಗಗಳಿಗೆ ಮಾತ್ರ ಸೀಮಿತವಾಗದೆ, ಅವುಗಳ ಆಚೆಗೂ ಜಾತ್ಯತೀತ ಚಿಂತನೆಯನ್ನು ಬಿತ್ತಲು ನೆರವಾದವು. ವಚನ ಚಳವಳಿಯಿಂದ ಪ್ರಭಾವಿತರಾದ ಸೂಕ್ಷ್ಮಜ್ಞರು, ಕುವೆಂಪು, ಕಾರಂತರ ಬರಹಗಳಿಂದ ಪ್ರಭಾವಗೊಂಡ ಸೂಕ್ಷ್ಮವಾದ ತರುಣ ತರುಣಿಯರು, ನಂತರ ನವ್ಯ ದಲಿತ, ಬಂಡಾಯ ಹಾಗೂ ಸಮುದಾಯದಂಥ ರಂಗ ಚಳವಳಿಗಳಿಂದ ರೂಪುಗೊಂಡ ಬರಹಗಾರ, ಬರಹಗಾರ್ತಿಯರು, ಓದುಗರು, ರಂಗಭೂಮಿ ನಟನಟಿಯರು ಜಾತ್ಯತೀತತೆಯನ್ನು ಒಂದು ಮೌಲ್ಯವನ್ನಾಗಿ ಬೆಳೆಸತೊಡಗಿದರು. ಸಂಕ್ರಮಣ, ಶೂದ್ರ, ವಿಮುಕ್ತಿ, ಪಂಚಮ ಥರದ ಕಿರುಪತ್ರಿಕೆಗಳ ಜೊತೆಗೆ ಪ್ರಜಾವಾಣಿ, ಮುಂಗಾರು, ಆಂದೋಲನ, ಲಂಕೇಶ್‌ಪತ್ರಿಕೆ, ಸುದ್ದಿಸಂಗಾತಿ ಪತ್ರಿಕೆಗಳು ಕೂಡ ಜಾತ್ಯತೀತ ನೋಟಕ್ರಮವನ್ನು ಬೆಳೆಸಿದವು.

ಡಾ.ಸಿದ್ಧಲಿಂಗಯ್ಯನವರು ವಿಧಾನ ಪರಿಷತ್ತಿನ ಶಾಸಕರಾಗಿದ್ದಾಗ ಸದನದಲ್ಲಿ ಮಂಡಿಸಿದ ಅಂತರ್ಜಾತೀಯ ವಿವಾಹಿತರಿಗೆ ಮೀಸಲಾತಿಯ ಬೇಡಿಕೆ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ರವಿವರ್ಮಕುಮಾರ್ ಅವರು ಅಂತರ್ಜಾತೀಯ ವಿವಾಹಿತರ ಮೀಸಲಾತಿಗಾಗಿ ಮಾಡಿರುವ ಶಿಫಾರಸುಗಳು ಕೂಡ ಚಾರಿತ್ರಿಕ ಮಹತ್ವವುಳ್ಳವು. ಈ ಸಂದರ್ಭಗಳಲ್ಲಿ ಡಾ.ಸಿದ್ಧಲಿಂಗಯ್ಯ ಹಾಗೂ ರವಿವರ್ಮಕುಮಾರ್ ಇಬ್ಬರೂ ಭಾರತದ ದೇವಾನುದೇವತೆಗಳೇ ಜಾತಿ ಮೀರಿ ಮದುವೆಯಾದ ಉದಾಹರಣೆಗಳನ್ನು ಉಲ್ಲೇಖಿಸಿದ್ದಾರೆ. ಜಾತ್ಯತೀತ ಒಲವಿನ ವಿವಾಹ ವೇದಿಕೆಯಾದ ಮಾನವ ಮಂಟಪ, ಕೆ.ರಾಮದಾಸ್, ಕಡಿದಾಳು ಶಾಮಣ್ಣ, ಎಚ್.ಎಲ್. ಕೇಶವಮೂರ್ತಿ. ಬಂಜಗೆರೆ ಜಯಪ್ರಕಾಶ್, ರವಿವರ್ಮಕುಮಾರ್, ಅನಸೂಯಮ್ಮ ಥರದ ನೂರಾರು ಜಾತ್ಯತೀತ ಚಿಂತಕ, ಚಿಂತಕಿಯರು ಬೆಂಬಲಿಸಿರುವ, ಏರ್ಪಡಿಸಿರುವ ಸರಳ ಜಾತ್ಯತೀತ ವಿವಾಹಗಳು, ಸೈದ್ಧಾಂತಿಕ ಹಿನ್ನೆಲೆಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ವೇದಿಕೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳು  ಜಾತ್ಯತೀತ  ಆಲೋಚನೆಯನ್ನು ಬಿತ್ತಿ, ಬೆಳೆಸುತ್ತಾ ಬಂದಿವೆ.  ಕನ್ನಡದ ಹಲವು ಜನಪ್ರಿಯ ಸಿನಿಮಾಗಳಲ್ಲಿ ಬರುವ ಅಂತರ್ಜಾತೀಯ ಪ್ರೇಮಗಳ ಸನ್ನಿವೇಶಗಳಲ್ಲಿ ಕೂಡ ಜಾತ್ಯತೀತ ಚಿಂತನೆ ಮೇಲ್ಪದರದಲ್ಲಿಯಾದರೂ ಕಾಣಿಸಿಕೊಳ್ಳುತ್ತಾ ಬಂದಿದೆ. ವಿಶ್ವವಿದ್ಯಾಲಯಗಳ ಪಠ್ಯ ಪುಸ್ತಕಗಳ ಮೂಲಕ, ಉದಾರವಾದಿ ಧೋರಣೆಯ ಶಿಕ್ಷಣ ಸಂಸ್ಥೆಗಳ ಮೂಲಕ  ಕೂಡ ಜಾತ್ಯತೀತ ನೋಟ ಪ್ರಸಾರಗೊಂಡಿದೆ. ಆಧುನಿಕ ಕನ್ನಡ ಸಾಹಿತ್ಯದ ಗಂಭೀರ ಕೃತಿಗಳ ಆಳದಲ್ಲಿ ಜಾತ್ಯತೀತ ಧ್ವನಿಗಳಿವೆ. ಸಾಹಿತ್ಯ, ಕಲೆ, ಸಿನಿಮಾ ಹಾಗೂ ಪತ್ರಿಕೋದ್ಯಮಗಳಲ್ಲಿ ತೊಡಗಿರುವ ಅನೇಕ ಗಂಭೀರ ವ್ಯಕ್ತಿಗಳು ಸಾಮಾನ್ಯವಾಗಿ ಜಾತ್ಯತೀತ ತತ್ವಕ್ಕೆ ಬದ್ಧರಾಗಿಯೇ ಉಳಿದಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳ ಕ್ರಿಯಾಶೀಲ ಅಧ್ಯಾಪಕ, ಅಧ್ಯಾಪಕಿಯರು, ಮಾನವ ಹಕ್ಕುಗಳ ಕಾರ್ಯಕರ್ತರು, ಲಾಯರುಗಳು, ವಿವಿಧ ರೀತಿಯ ಸಾಮಾಜಿಕ ನ್ಯಾಯಗಳ ಚಳವಳಿಯಲ್ಲಿ ಭಾಗಿಯಾಗುತ್ತಿರುವವರು ಕೂಡ ಜಾತ್ಯತೀತತೆಯನ್ನು ತಾತ್ವಿಕವಾಗಿ ಒಪ್ಪಿದವರೇ ಆಗಿದ್ದಾರೆ. ಬೌದ್ಧ,  ಶರಣ, ಸೂಫಿ, ಮಂಟೇಸ್ವಾಮಿ, ಮಲೆಮಹದೇಶ್ವರ ಮಾರ್ಗಗಳನ್ನು ಆಧುನಿಕ ಕಾಲದಲ್ಲಿ ಹೊಸದಾಗಿ ವಿವರಿಸುತ್ತಿರುವ ಚಿಂತಕ, ಚಿಂತಕಿಯರು ಭಾರತದ ಧರ್ಮಗಳ ಒಳಗೇ ಇರುವ ಜಾತ್ಯತೀತ ಅಂಶಗಳನ್ನು ಮುನ್ನೆಲೆಗೆ ತರುವ ಯತ್ನ ಮಾಡುತ್ತಿದ್ದಾರೆ.

ಅದೇ ರೀತಿ, ಕಾಮ, ಪ್ರೇಮ, ಆಳವಾದ ರಾಷ್ಟ್ರೀಯತಾ ಭಾವ, ಸಮುದಾಯ ಪ್ರಜ್ಞೆ, ಅಸಲಿ ಆಧ್ಯಾತ್ಮ, ವೈಚಾರಿಕತೆ, ವೈಜ್ಞಾನಿಕ ನೋಟ, ಕರುಣೆ, ಮೇಲುಜಾತಿಯ ಜನರಲ್ಲಿರಬಹುದಾದ ನಿಜವಾದ ಪಾಪಪ್ರಜ್ಞೆ, ಸಂಸ್ಕೃತಿಯ ಸ್ವ-ಪರೀಕ್ಷೆ, ಮುಕ್ತತೆ, ತಾರುಣ್ಯದ ತೀವ್ರಸ್ಥಿತಿ, ಒಳಿತಿನ ಪ್ರಜ್ಞೆ, ಮುಗ್ಧತೆ… ಇವೇ ಮುಂತಾದ ಸ್ಥಿತಿಗಳಲ್ಲೂ ಭಾರತೀಯರು ಜಾತಿ ಮೀರಿ ನಡೆದುಕೊಳ್ಳಲೆತ್ನಿಸಿದ್ದಾರೆ. ಹಾಗೆಯೇ, ಹಿರಿಯರ ಅನಗತ್ಯ ಜಾತೀಯ ಹಾಗೂ ಮತೀಯ  ದುರ್ಮಾರ್ಗದರ್ಶನವಿಲ್ಲದ ಸಂದರ್ಭದಲ್ಲಿ ಮಕ್ಕಳು ಹೆಚ್ಚು ಜಾತ್ಯತೀತವಾಗಿ ವರ್ತಿಸುತ್ತಾ ಬಂದಿದ್ದಾರೆ. ಕರ್ನಾಟಕದ ಚುನಾವಣೆಗಳಲ್ಲಿ ಕೂಡ ಜನ ಆಗಾಗ್ಗೆ  ಜಾತಿ, ಧರ್ಮಗಳನ್ನು ಮೀರಿ ಮತ ಚಲಾಯಿಸಿದ್ದಾರೆ. ನಗರಗಳಲ್ಲಿ ಹಾಗೂ ಬೆಂಗಳೂರಿನ ಕಾರ್ಪೊರೇಟ್ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿರುವ ಅಂತರ್ಜಾತೀಯ ವಿವಾಹಗಳು ಕೂಡ ಆಧುನಿಕ ವಲಯಗಳಲ್ಲಿ ಹಬ್ಬುತ್ತಿರುವ ಒಂದು ಮಟ್ಟದ ಜಾತ್ಯತೀತತೆಯನ್ನು ಸೂಚಿಸುತ್ತವೆ. ಆದರೆ, ಮೀಸಲಾತಿಯ ಪ್ರಶ್ನೆ ಬಂದಾಗ ಈ ಕಾರ್ಪೊರೇಟ್ ವಲಯದ ಜನ ಜಾತ್ಯತೀತವಾಗಿ ಯೋಚಿಸಲಾರರು ಎಂಬುದು ಈ ವಲಯದ ಜಾತ್ಯತೀತತೆಯ ಸೀಮಿತತೆಯನ್ನೂ ಸೂಚಿಸುತ್ತದೆ.

ಭಾರತೀಯ ಸಮಾಜದ  ಎಲ್ಲ  ಜಾತಿಗಳೂ ಭಾಗವಹಿಸುವ ಪ್ರಜಾಪ್ರಭುತ್ವದ ಸ್ವರೂಪದಿಂದಾಗಿ ಸರ್ಕಾರಗಳು ಜಾತ್ಯತೀತವಾಗಿ ವರ್ತಿಸಲೇಬೇಕಾದ ಅನಿವಾರ್ಯತೆಯೂ ಇದೆ. ಭಾರತೀಯ ಸಂವಿಧಾನದ ಬಗೆಬಗೆಯ ನಿರ್ದೆಶನಗಳಿಂದಾಗಿ ಹಾಗೂ ಸರ್ಕಾರಗಳನ್ನು ರೂಪಿಸಿದ ಕೆಲವು ರಾಜಕಾರಣಿಗಳು ಅಧಿಕಾರಿಗಳು ಹಾಗೂ ಸಲಹೆಗಾರರ ಆರೋಗ್ಯಕರ ನೋಟಗಳಿಂದಾಗಿ ಸರ್ಕಾರಿ ನೀತಿಗಳು ಹಾಗೂ ಯೋಜನೆಗಳಲ್ಲೂ ಜಾತ್ಯತೀತ ಚಿಂತನೆ ಕೆಲಸ ಮಾಡಿದೆ. ಉದ್ಯೋಗದಲ್ಲಿ ಮೀಸಲಾತಿ, ಎಲ್ಲ ಜಾತಿಯ ಹುಡುಗರೂ ಇರುವ ಹಿಂದುಳಿದ ವರ್ಗಗಳ ಹಾಸ್ಟೆಲುಗಳು, ಬಿ.ಡಿ.ಎ. ಸೈಟು ಹಂಚಿಕೆ, ವಿವಿಧ ಜಾತಿಗಳಿಗೆ ಸಮಾನ ಅವಕಾಶ ಕಲ್ಪಿಸುವ ಯೋಜನೆಗಳು, ಸರ್ಕಾರಿ ಶಾಲಾಕಾಲೇಜುಗಳಲ್ಲಿ ವಿವಿಧ ಜಾತಿಗಳ ವಿದ್ಯಾರ್ಥಿಗಳಿಗೆ  ಒದಗಿರುವ ವಿದ್ಯಾಭ್ಯಾಸದ ಅವಕಾಶಗಳು… ಇವೇ ಮುಂತಾದ ಸರ್ಕಾರಿ ಕಾರ್ಯಕ್ರಮಗಳಲ್ಲೂ ಜಾತ್ಯತೀತ ಚಿಂತನೆಯ ಎಳೆಗಳಿವೆ. ಕಾಂಗ್ರೆಸ್, ಜೆ.ಡಿ.ಎಸ್, ಬಹುಜನ ಸಮಾಜ ಪಕ್ಷಗಳು ಕೂಡ ತಮ್ಮ ಕೆಲ ಬಗೆಯ ಚಿಂತನೆ, ಕಾರ್ಯನೀತಿ ಹಾಗೂ ಕಾರ್ಯಕ್ರಮಗಳಲ್ಲಿ ಜಾತ್ಯತೀತತೆಯನ್ನು ಬಿಂಬಿಸುತ್ತಾ ಬಂದಿವೆ. ಎಷ್ಟೇ ಮತೀಯವಾದಿ ಧೋರಣೆಯಿದ್ದರೂ, ಬಿಜೆಪಿ ಥರದ ಸರ್ಕಾರಗಳು ಕೂಡ ಜಾತ್ಯತೀತವಾಗಿ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆಯೂ ಇದೆ. ಇವೆಲ್ಲದಕ್ಕೂ ಒಂದು ದೃಷ್ಟಿಯಿಂದ ಭಾರತೀಯ ಸಂವಿಧಾನದ ಜಾತ್ಯತೀತ ತಳಹದಿಯೇ ಕಾರಣವಾಗಿದೆ.

2

ಇಪ್ಪತ್ತನೆಯ ಶತಮಾನದ ಎಂಬತ್ತರ ದಶಕದಿಂದೀಚೆಗೆ ಹೆಡೆಯೆತ್ತಿದ ಕೋಮುವಾದದಿಂದಾಗಿ  ಜಾತ್ಯತೀತ  ಚಿಂತನೆಯ ಸ್ವರೂಪದಲ್ಲಿ ಮುಖ್ಯ ಪಲ್ಲಟವುಂಟಾಯಿತು. ಜಾತೀಯತೆಯ ಭಾಗವಾಗಿದ್ದ ನೀಚತನ, ಸಂಕುಚಿತತೆ, ಇತರ ಜಾತಿಗಳ ದಮನ ಹಾಗೂ ಅನ್ಯರ ಬಗ್ಗೆ ಅಸಹ್ಯ ಸೃಷ್ಟಿಸುವ ವಿಚಾರಗಳು ಕಳೆದ ಮೂರು ದಶಕಗಳಲ್ಲಿ ಬೆಳೆದ ಕೋಮುವಾದದ ಭಾಗವೂ ಆಗತೊಡಗಿದವು. ಜಾತೀಯತೆಯ ಭಾಗವಾಗಿದ್ದ ಫ್ಯಾಸಿಸ್ಟ  ಧೋರಣೆ ಕೋಮುವಾದಕ್ಕೂ ವರ್ಗಾವಣೆಗೊಂಡಿತು. ಅಸ್ಪೃಶ್ಯತೆಗೆ ಒಗ್ಗಿ ಹೋದ ಕಂದಾಚಾರಿ ಹಿಂದೂ ಮನಸ್ಸು ಹೊಸಹೊಸ ಅಸ್ಪೃಶ್ಯತೆಗಳನ್ನು ಸೃಷ್ಟಿಸಲಾರಂಭಿಸಿತು. ಮುಸ್ಲಿಮರು ಹಾಗೂ ಕ್ರಿಶ್ಚ್ಚಿಯನ್ನರ ಬಗೆಗೆ ಅಸ್ಪೃಶ್ಯತೆಯ ಭಾವವನ್ನು ಬೆಳೆಸತೊಡಗಿತು.  ಹಾಗೆಯೇ ಜನರ ಭಕ್ತಿ, ನಂಬಿಕೆಗಳ ದುರುಪಯೋಗ, ಚರಿತ್ರೆ ಹಾಗೂ ಚಾರಿತ್ರಿಕ ಬೆಳವಣಿಗೆಗಳ ವಿಕೃತ ವ್ಯಾಖ್ಯಾನ, ಧರ್ಮದ ದುರ್ಬಳಕೆಯ ಮೂಲಕ ಅಧಿಕಾರ ಹಿಡಿಯುವ ರಾಜಕೀಯ ಪಕ್ಷಗಳ ಕುಟಿಲ ಯೋಜನೆಗಳು, ಪ್ರಬಲ ಜಾತಿಗಳ ಯಜಮಾನೀ ಹಿಡಿತ, ವೈದಿಕ ಹುನ್ನಾರಗಳು ಹಾಗೂ ವ್ಯಾಪಾರಿ ಶಕ್ತಿಗಳು ಕೂಡ ಕೋಮುವಾದವನ್ನು ಬೆಳೆಸಿವೆ, ಬೆಳೆಸುತ್ತಿವೆ. ಈ ದಿಸೆಯಲ್ಲಿ ಕೋಮುವಾದವನ್ನು ಬೆಳೆಸಲೆಂದೇ ಹುಟ್ಟಿರುವ ಆರ್.ಎಸ್.ಎಸ್. ವಿ.ಎಚ್.ಪಿ ಮತ್ತು ಅವುಗಳ ಅಂಗಸಂಸ್ಥೆಗಳು ಹಾಗೂ ಧರ್ಮಗುರುಗಳ  ಕುಮ್ಮಕ್ಕು ನೇರವಾಗಿಯೂ  ಹಿನ್ನೆಲೆಯಲ್ಲಿಯೂ ಕೆಲಸಮಾಡುತ್ತಿದೆ. ಬಹುಸಂಖ್ಯಾತ ಕೋಮುವಾದದಿಂದಾಗಿ ಜಮಾತೆ ಇಸ್ಲಾಮಿ ಥರದ ಅಲ್ಪಸಂಖ್ಯಾತ ಕೋಮುವಾದವೂ ತಲೆಯೆತ್ತಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆಧುನಿಕ ಕರ್ನಾಟಕದಲ್ಲಿ ಕಳೆದ ಮೂರು ದಶಕಗಳಲ್ಲಿ ಜಾತೀಯತೆಯ ಜೊತೆಜೊತೆಗೇ, ಅದಕ್ಕಿಂತ  ಅಪಾಯಕಾರಿಯಾದ ಕೋಮುವಾದವೂ ಪ್ರಬಲವಾಗತೊಡಗಿತು. ಈ ಘಟ್ಟದಲ್ಲಿ, ಈ ಬರಹದ ಮೊದಲ ಭಾಗದಲ್ಲಿ ಉಲ್ಲೇಖಿಸಿದ ಎಲ್ಲ ಜನತಾ ಚಳವಳಿಗಳೂ ಕ್ರಮೇಣ ಕೋಮುವಾದವನ್ನು ವಿರೋಧಿಸುವ ಹಾಗೂ ಜಾತ್ಯತೀತತೆಯನ್ನು ಬೆಂಬಲಿಸುವ ಹೋರಾಟಗಳ ಜೊತೆ ಸೇರಿದ್ದು ಸಹಜವಾಗಿತ್ತು ಮತ್ತು ಅನಿವಾರ್ಯವಾಗಿತ್ತು. ಬಹುಸಂಖ್ಯಾತರ ಕೋಮುವಾದದಿಂದ ಆತಂಕಕ್ಕೊಳಗಾದ ಅಲ್ಪಸಂಖ್ಯಾತ ಬುದ್ಧಿಜೀವಿಗಳ ಜೊತೆಗೆ, ಅಲ್ಪಸಂಖ್ಯಾತರ ಕೆಲವು ವೇದಿಕೆಗಳು ಕೂಡ ಈ ಹೋರಾಟಗಳ ಜೊತೆ ಸೇರಿಕೊಂಡವು. ಅಲ್ಪಸಂಖ್ಯಾತ ವಲಯದ ಬುದ್ಧಿಜೀವಿಗಳು ಬಹುಸಂಖ್ಯಾತ ಹಾಗೂ ಅಲ್ಪಸಂಖ್ಯಾತ ಕೋಮುವಾದಗಳೆರಡನ್ನೂ ವಿರೋಧಿಸುವ  ಕೆಲಸ ಮಾಡಬೇಕಾಯಿತು.

ತೊಂಬತ್ತರ ದಶಕದ ಅಯೋಧ್ಯಾ ರಾಜಕೀಯ ಆರಂಭಿಸಿದ ಹಿಂಸಾಮಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಕರ್ನಾಟಕದ ಜಾತ್ಯತೀತ ಹೋರಾಟಕ್ಕೆ ನಿರ್ದಿಷ್ಟವಾದ  ಕೋಮುವಾದ ವಿರೋಧದ ಸ್ವರೂಪ ಸೇರಿಕೊಂಡಿತು. ಬಗೆಬಗೆಯ ಸಮಾಜಪರ ವೇದಿಕೆಗಳು ಒಂದಾಗಿ ಕೋಮುಸೌಹಾರ್ದ ವೇದಿಕೆಯನ್ನು ರೂಪಿಸಿದವು. ಆರಂಭದಲ್ಲಿ ಈ ವೇದಿಕೆಯನ್ನು ಬದ್ಧ ಎಡಪಂಥೀಯ ನಾಯಕರು ರೂಪಿಸಿದರೂ, ಕ್ರಮೇಣ ಅದರಲ್ಲಿ ಕರ್ನಾಟಕದ ದಲಿತ ಚಳವಳಿಯ ಹಲವು ಬಣಗಳು, ಕರ್ನಾಟಕ ರಾಜ್ಯ ರೈತ ಸಂಘ, ಮಾನವ ಹಕ್ಕುಗಳ ಕಾರ್ಯಕರ್ತರು, ಕಮ್ಯೂನಿಸ್ಟ ಪಕ್ಷಗಳಿಂದ ಹಿಡಿದು ಹಲಬಗೆಯ ಜಾತ್ಯತೀತ ವೇದಿಕೆಗಳು, ಸರ್ಕಾರೇತರ ಸಂಸ್ಥೆಗಳು, ಜಾತ್ಯತೀತ ಪತ್ರಕರ್ತರು, ಬರಹಗಾರ, ಬರಹಗಾರ್ತಿಯರು ಪ್ರಜಾಸತ್ತಾತ್ಮಕ ಸಂಘಟನೆಗಳು ಒಂದುಗೂಡಿದ್ದು ಕರ್ನಾಟಕದ ಚರಿತ್ರೆಯ ಮಹತ್ವದ ಬೆಳವಣಿಗೆಯೊಂದಕ್ಕೆ ಕಾರಣವಾಯಿತು. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಬೆಳೆಸಲು  ಕೋಮುವಾದಿ ಶಕ್ತಿಗಳು ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡ‌ನ್‍ಗಿ‌ರಿಯನ್ನು ನೆಪವಾಗಿಸಿಕೊಂಡ ಆ ಕಾಲಘಟ್ಟದಲ್ಲಿ ಕೋಮುಸೌಹಾರ್ದ ವೇದಿಕೆಯ  ಮೂಲಕ ಜಾತ್ಯತೀತ ಶಕ್ತಿಗಳು ಕರ್ನಾಟಕದ ಕೋಮುವಾದೀಕರಣಕ್ಕೆ ಪ್ರಬಲ ವಿರೋಧವೊಡ್ಡಿದವು. ’ಜನಮತ ಕೋಮುವಾದದ ವಿರುದ್ಧ ಕರ್ನಾಟಕ’ ಸಂಘಟನೆ ಕೂಡ ಕೆಲ ಕಾಲ ಕೋಮುವಾದದ ವಿರುದ್ಧ ಜನಮತವನ್ನು ರೂಪಿಸಿತು. ರಹಮತ್ ತರೀಕೆರೆ, ಎಸ್.ಎಸ್.ಹಿರೇಮಠ, ಜಿ.ರಾಜಶೇಖರ್, ಫಣಿರಾಜ್, ವಸು,  ಶಿವಸುಂದರ್, ಎಸ್.ಚಂದ್ರಶೇಖರ್ ಮೊದಲಾದವರು ಚರಿತ್ರೆ, ಸಾಹಿತ್ಯ, ಸಮಾಜವಿಜ್ಞಾನಗಳಲ್ಲಿ ನಡೆಸಿರುವ ಜವಾಬ್ದಾರಿಯುತ ಸಂಶೋಧನೆಗಳು ಕೋಮುವಾದದ ಪಿತೂರಿಗಳನ್ನು ಬಯಲಿಗೆಳೆಯುತ್ತಾ ಜಾತ್ಯತೀತ ಚಿಂತನೆಯನ್ನು ಬಲಪಡಿಸಿವೆ. ಎಂ.ಡಿ.ನಂಜುಂಡಸ್ವಾಮಿ, ಯು.ಆರ್.ಅನಂತಮೂರ್ತಿ, ಕೆ.ಮರುಳಸಿದ್ಧಪ್ಪ, ರಾಜೇಂದ್ರ ಚೆನ್ನಿ, ಜಿ.ಕೆ.ಗೋವಿಂದರಾವ್, ಲಂಕೇಶ್, ತೇಜಸ್ವಿ, ಡಿ.ಆರ್.ನಾಗರಾಜ್. ಕಿ.ರಂ.ನಾಗರಾಜ್, ಗಿರೀಶ್ ಕಾರ್ನಾಡ, ಚಂದ್ರಶೇಖರ ಪಾಟೀಲ, ಬರಗೂರು ರಾಮಚಂದ್ರಪ್ಪ, ಬಾನು ಮುಷ್ತಾಕ್, ಸಾರಾ ಅಬೂಬಕ್ಕರ್, ಜಿ.ರಾಮಕೃಷ್ಣ, ದೇವನೂರ ಮಹಾದೇವ, ದಿನೇಶ್ಅಮೀನಮಟ್ಟು, ಪಟ್ಟಾಭಿರಾಮ ಸೋಮಯಾಜಿ, ಶೂದ್ರ ಶ್ರೀನಿವಾಸ್, ಇಂದೂಧರ ಹೊನ್ನಾಪುರ, ಬಿ.ಎಂ.ಹನೀಫ್, ಸುಬ್ಬುಹೊಲೆಯಾರ್, ಗೌರಿ ಲಂಕೇಶ್, ಕೆ.ನೀಲಾ, ಅಗ್ನಿ ಶ್ರೀಧರ್, ಟಿ.ಕೆ.ತ್ಯಾಗರಾಜ್, ಅಬ್ದುಲ್ ಬಶೀರ್, ಬಂಜಗೆರೆ ಜಯಪ್ರಕಾಶ್, ಮೊಗಳ್ಳಿ ಗಣೇಶ್, ಬಿ.ಎಂ.ಪುಟ್ಟಯ್ಯ, ದು.ಸರಸ್ವತಿ, ಮಲ್ಲಿಕಾ ಘಂಟಿ ಹಾಗೂ ಇಲ್ಲಿ ಹೆಸರಿಸದ ಇದೇ ರೀತಿಯ ನೂರಾರು ಬರಹಗಾರರು, ಹೋರಾಟಗಾರರು ತಮ್ಮ ಚಿಂತನೆ ಹಾಗೂ ಕ್ರಿಯೆಗಳ ಮೂಲಕ ಕೋಮುವಾದಕ್ಕೆ ವಿರೋಧ ಒಡ್ಡುತ್ತಾ ಬಂದಿದ್ದಾರೆ. ಬಿ.ಶಾಮಸುಂದರ್, ಬಿ.ಕೃಷ್ಣಪ್ಪ, ಕೆ.ರಾಮದಾಸ್, ಕೆ,ಎಸ್.ಪುಟ್ಟಣ್ಣಯ್ಯ, ಕೋಡಿಹಳ್ಳಿ ಚಂದ್ರಶೇಖರ್, ಜಿ.ಎನ್.ನಾಗರಾಜ್, ಸಿದ್ದನಗೌಡ ಪಾಟೀಲ, ಕೆ.ಎಲ್.ಅಶೋಕ್, ಮಾವಳ್ಳಿ  ಶಂಕರ್, ಲಕ್ಮ್ಷೀನಾರಾಯಣ ನಾಗವಾರ, ಡಿ.ಜಿ.ಸಾಗರ್, ವೆಂಕಟಸ್ವಾಮಿ, ಗೋವಿಂದಯ್ಯ ಥರದ ಹೋರಾಟಗಾರರು ಕೋಮುವಾದದ ವಿರುದ್ಧ ಜನಾಭಿಪ್ರಾಯ ರೂಪಿಸುತ್ತಾ ಬಂದಿದ್ದಾರೆ. ಹಿಂದೂ ಕೋಮುವಾದವನ್ನು ವಿರೋಧಿಸುವ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ, ಮುರುಘಾ ಶರಣರು, ಗದುಗಿನ ತೋಂಟದಾರ್‍ಯ ಸ್ವಾಮೀಜಿ, ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿಯವರಂಥ ಕೆಲವು ಉದಾರವಾದಿ ಲಿಂಗಾಯತ ಹಾಗೂ ಶೂದ್ರ ಜಾತಿಗಳ ಧರ್ಮಗುರುಗಳು, ಫಾದರ್ ಚೆಸರಾ ಥರದ ಕ್ರೈಸ್ತ ಪಾದ್ರಿಗಳು ಕೂಡ ಕೋಮುವಾದ ವಿರೋಧಿ ಹೋರಾಟಗಳಲ್ಲಿ ಭಾಗಿಯಾದರು.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ತಳವೂರಿದ ಮೇಲೆ ಬೇರೆ ಬೇರೆ ರೀತಿಯಲ್ಲಿ ಧ್ರುವೀಕರಣಗೊಳ್ಳತೊಡಗಿದ ಜಾತೀಯ ಹಾಗೂ  ಮತೀಯ ಶಕ್ತಿಗಳಿಗೆ ಇವತ್ತಿಗೂ ಹಲಬಗೆಯ ಜಾತ್ಯತೀತ ವೇದಿಕೆಗಳು, ಗಾಂಧೀವಾದಿಗಳು, ಎಡಪಂಥೀಯರು, ಸಮಾಜವಾದಿಗಳು, ಎಡಪಕ್ಷಗಳು ಹಾಗೂ ದಲಿತ ಸಂಘಟನೆಗಳು ವಿರೋಧ ತೋರಿಸುತ್ತಲೇ ಇವೆ. ಈ ವಿರೋಧವು  ಪತ್ರಿಕೆಗಳು, ಪ್ರತಿಭಟನೆ, ಸಾಹಿತ್ಯ, ಬರಹ, ಸಂವಾದ, ವಿಚಾರ ಸಂಕಿರಣ, ಬೋಧನೆ ಹಾಗೂ ಕಾರ್ಯಕ್ರಮಗಳ ಮೂಲಕ  ನಿರಂತರವಾಗಿ ವ್ಯಕ್ತವಾಗುತ್ತಲೇ ಇದೆ.

3

ಕರ್ನಾಟಕದ ಟಿಪಿಕಲ್ ಸೆಕ್ಯುಲರ್ ಪ್ರಜ್ಞೆ  ಏಕಕಾಲಕ್ಕೆ ಜಾತಿವಿರೋಧಿ ಹಾಗೂ ಕೋಮುವಾದ ವಿರೋಧಿ ಎರಡೂ ಆಗಿದೆ. ಆದರೆ ಕರ್ನಾಟಕದಲ್ಲಿ  ಈ ಬಗೆಯ ಸೆಕ್ಯುಲರ್ ಪ್ರಜ್ಞೆ  ಇನ್ನಷ್ಟು ಗಟ್ಟಿಯಾಗಿ ಬೆಳೆಯಲು ಇರುವ ಕೆಲವು  ತೊಡಕುಗಳನ್ನೂ ಸರಿಯಾಗಿ ಗಮನಿಸಬೇಕು. ಸಮಾಜಪರ ಕೆಲಸದಲ್ಲಿ ಭಾಗಿಯಾಗಿರುವ ಅನೇಕ ಸಂಘಟನೆಗಳಿಗೆ ಜಾತ್ಯತೀತತೆಯ ಬಗ್ಗೆ ಸ್ಪಷ್ಟ ನಿಲುವು ಹಾಗೂ ಅರಿವು ಇಲ್ಲದಿರುವುದು ಕೂಡ ಒಂದು ಮುಖ್ಯ ಸಮಸ್ಯೆಯೇ ಆಗಿದೆ. ಉದಾಹರಣೆಗೆ, ಅರಸು ಆಡಳಿತ ಹಾಗೂ ಆನಂತರದ ಕೆಲವು ಘಟ್ಟಗಳಲ್ಲಿ ಹಿಂದುಳಿದ ವರ್ಗಗಳು ಹಾಗೂ ಹಿಂದುಳಿದ ಜಾತಿಗಳ ಮರು ಧೃವೀಕರಣವಾದಾಗ ಅವುಗಳ ನಾಯಕರು ಜಾತಿವಿನಾಶ ಹಾಗೂ ಜಾತ್ಯತೀತತೆಯ ಅಂಶಗಳನ್ನು ಈ ಚಳವಳಿಯ ಜೊತೆಗೆ ಸಮರ್ಥವಾಗಿ ಬೆಸೆಯಲಾರದೆ ಹೋದರು. ಅಲ್ಪಸಂಖ್ಯಾತ, ಹಿಂದುಳಿದ ದಲಿತರನ್ನು ಒಗ್ಗೂಡಿಸಲು ಯತ್ನಿಸಿದ ’ಅಹಿಂದ’ದ ಪರಿಕಲ್ಪನೆ ಕೂಡ ಜಾತ್ಯತೀತ ಕಲ್ಪನೆಯಾಗಿ ವಿಕಾಸಗೊಳ್ಳಲಿಲ್ಲ. ಯಜಮಾನೀ ಜಾತಿಗಳ ಹಿಡಿತದಿಂದ ನರಳಿರುವ ಹಿಂದುಳಿದ ಜಾತಿಗಳು ಒಗ್ಗೂಡಿದ ಘಟ್ಟದಲ್ಲಿ, ಜಾತಿಪದ್ಧತಿಗೆ ಮಾರಣಾಂತಿಕ ಹೊಡೆತ ಕೊಡುವುದರ ಮೂಲಕವೇ ಹಿಂದುಳಿದವರ ನಿಜವಾದ ಬಿಡುಗಡೆ ಸಾಧ್ಯ ಎಂಬ ಮುಖ್ಯ ಸತ್ಯವನ್ನು ಈ ಜಾತಿಗಳ ನಾಯಕರು ಮರೆತರು. ಬದಲಿಗೆ ತಂತಮ್ಮ ಜಾತಿಗಳ ಜನರನ್ನು ಒಗ್ಗೂಡಿಸುವುದರ ಮೂಲಕ ಸಣ್ಣಪುಟ್ಟ ನಾಯಕತ್ವ ಪಡೆಯಲು ಈ  ನಾಯಕರು ಮುಂದಾದರು. ಹಿಂದುಳಿದ ಜಾತಿಗಳ ಕೆಲವು ನಾಯಕರಲ್ಲಿ ಇದ್ದ ಒಂದು ಮಟ್ಟದ ಜಾತ್ಯತೀತ ಪ್ರಜ್ಞೆ ಅವರ ಹಿಂದುಳಿದ ಜಾತಿಗಳ ಅನುಯಾಯಿಗಳಿಗೆ ವರ್ಗಾವಣೆಯಾಗಲಿಲ್ಲ. ದಲಿತ ಸಂಘರ್ಷ ಸಮಿತಿಗಳ ಮೂಲಕ ದಲಿತ ಪ್ರಜ್ಞೆ  ಹಾಗೂ ಜಾತ್ಯತೀತ ಪ್ರಜ್ಞೆಗಳು ದಲಿತ ಸಮುದಾಯಗಳಲ್ಲಿ ಬೆಳೆದಂತೆ, ಹಿಂದುಳಿದ ವರ್ಗಗಳ ಚಳವಳಿಯ ಮೂಲಕ  ಹಿಂದುಳಿದ ಜಾತಿಗಳಲ್ಲಿ ಶೂದ್ರಪ್ರಜ್ಞೆ ಹಾಗೂ ಜಾತ್ಯತೀತ ಪ್ರಜ್ಞೆಗಳು ಬೆಳೆಯಲಿಲ್ಲ. ಹೀಗಾಗಿ, ಹಿಂದುಳಿದ ಜಾತಿಗಳ ಹುಡುಗರು ಭಜರಂಗ ದಳದಂಥ ಕ್ರೂರ ಮತೀಯ ವೇದಿಕೆಗಳ ಸೇವಕ ವರ್ಗವಾಗುವ ಹೀನಾಯಸ್ಥಿತಿ ತಲುಪಿ, ಕೋಮುವಾದಿ ಹಿಂಸೆಯನ್ನು ಬಿತ್ತುವವರ ದಾಳಗಳಾದರು. ಜಾತಿವಿರೋಧದ ಆಶಯವಿರುವ ಬಹುಜನ ಸಮಾಜ ಪಕ್ಷ ಕೂಡ ಬರಬರುತ್ತಾ, ’ಜಾತಿವಿನಾಶಕ್ಕಿಂತ ಜಾತಿಗಳ ಒಗ್ಗೂಡುವಿಕೆಯ ಮೂಲಕವೇ ಬಹುಜನರು ಅಧಿಕಾರ ಹಿಡಿಯಬೇಕು’ ಎಂದು ವಾದಿಸಿದ ಕಾನ್ಶೀರಾಮ್ ಅವರ ಚಿಂತನೆಯಿಂದ  ಹೆಚ್ಚು ಪ್ರಭಾವಿತವಾಯಿತು.

ಸಾಂಸ್ಕೃತಿಕ ಕೇಂದ್ರಗಳಲ್ಲಿರುವ ಅನೇಕ ಉದಾರವಾದಿ ಗುಂಪುಗಳು ಜಾತಿವಿರೋಧ ಹಾಗೂ ಜಾತ್ಯತೀತತೆಯ ಬಗ್ಗೆ ಇನ್ನೂ  ಸ್ಪಷ್ಟವಿದ್ದಂತಿಲ್ಲ. ಅಲ್ಲದೆ, ಸೆಕ್ಯುಲರ್ ಪ್ರಜ್ಞೆಯ ವ್ಯಕ್ತಿಗಳು ಹಾಗೂ ವೇದಿಕೆಗಳ ಜೊತೆಗೆ  ಬುದ್ಧಿಜೀವಿ ವರ್ಗದ ಬಹು ದೊಡ್ಡ ಭಾಗವಾದ ಲಾಯರುಗಳು, ಇಂಜಿನಿಯರ್‌‍ಗಳು, ವಿಜ್ಞಾನಿಗಳು, ಡಾಕ್ಟರುಗಳು ಹೆಚ್ಚಿನ ಸಂಖ್ಯೆಯಲ್ಲಿ  ಸೇರಿದಂತೆ ಕಾಣುತ್ತಿಲ್ಲ. ಸ್ತ್ರೀವಾದಿಗಳು ಜಾತೀಯತೆ ಹಾಗೂ ಕೋಮುವಾದಕ್ಕೆ ವಿರೋಧ ತೋರುತ್ತಾ ಬಂದಿದ್ದರೂ, ಮಹಿಳೆಯರನ್ನು ಉದ್ದೇಶಿಸಿ ಬರೆದಾಗ, ಮಾತಾಡಿದಾಗ ಈ ಸಮಸ್ಯೆಯನ್ನು ಹೆಚ್ಚು ಮುಖ್ಯವಾಗಿ ಪರಿಗಣಿಸಿದಂತಿಲ್ಲ. ಕೋಮುವಾದದಿಂದ ಅಪಾರ ಅಪಾಯಕ್ಕೆ ಒಳಗಾಗುವ ಹಾಗೂ ಕೋಮುವಾದ ಹಬ್ಬಿಸುವ ಕಂದಾಚಾರದಿಂದಾಗಿ ತಮ್ಮ ಅವಕಾಶಗಳನ್ನು ಹಾಗೂ ಚಲನೆಯ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಮಹಿಳೆಯರಿಗೆ ಕೋಮುವಾದದ ಬಗ್ಗೆ ವ್ಯಾಪಕ ಎಚ್ಚರ ಮೂಡಿಸಲು ಸ್ತ್ರೀವಾದಿಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಹೀಗಾಗಿ, ಮಹಿಳೆಯರು ಪುರುಷರು ಬಿತ್ತುವ ಕೋಮು ಪೂರ್ವಗ್ರಹದ ಬಲಿಪಶುಗಳೂ ಆಗಿದ್ದಾರೆ. ತಮಗರಿವಿಲ್ಲದೆಯೇ ಆ ಪೂರ್ವಗ್ರಹವನ್ನು ಹಬ್ಬಿಸುವ ಪ್ರಸಾರಕೇಂದ್ರಗಳೂ ಆಗಿದ್ದಾರೆ. ಈ ಅಪಾಯವನ್ನು ನಮ್ಮ ಸ್ತ್ರೀವಾದಿಗಳು  ದೊಡ್ಡ ಮಟ್ಟದಲ್ಲಿ ಗ್ರಹಿಸಿ ವಿವರಿಸಿದಂತಿಲ್ಲ. ಕೋಮುವಾದ ಕುರಿತಂತೆ ವಿದ್ಯಾರ್ಥಿ ಸಮುದಾಯವನ್ನು ಎಚ್ಚರಿಸುತ್ತಾ, ಜಾತ್ಯತೀತತೆಯನ್ನು ಬೆಳೆಸುವ  ಕೆಲಸ ದಲಿತ ಚಳವಳಿ ಹಾಗೂ ಎಸ್.ಎಫ್.ಐ ಥರದ  ಕೆಲವೇ ಸಂಘಟನೆಗಳು ಹಾಗೂ ಬಿಡಿ ಬಿಡಿ ವ್ಯಕ್ತಿಗಳ ಮಟ್ಟದಲ್ಲಿ  ಮಾತ್ರ ನಡೆಯುತ್ತಾ ಬಂದಿದೆಯೇ ಹೊರತು ಉಳಿದ ವೇದಿಕೆಗಳು ಇತ್ತ  ಹೆಚ್ಚು ಗಮನ ಕೊಟ್ಟಂತಿಲ್ಲ.

ಕರ್ನಾಟಕದ ವಿವಿಧ ಸಮುದಾಯಗಳು ಅನುಸರಿಸುತ್ತಿರುವ ಹಲವು ಧರ್ಮಗಳಲ್ಲಿ ಇರಬಹುದಾದ ಒಂದು ಮಟ್ಟದ ಜಾತ್ಯತೀತ ಲಕ್ಷಣಗಳಿಗೂ ಕೋಮುವಾದದಿಂದಾಗಿ ಹಾಗೂಈ ಧರ್ಮಗಳ ಒಳಗೇ ಇರುವ ಸನಾತನ ಧೋರಣೆಯಿಂದಾಗಿ ಹಿನ್ನಡೆಯಾದಂತಿದೆ. ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಧರ್ಮಗಳಲ್ಲಿ ಮನುಧರ್ಮವನ್ನು ಹಾಗೂ ವೈದಿಕ ಹಿಂದೂ ಧರ್ಮವನ್ನು ಪೋಷಿಸುತ್ತಾ ಬಂದಿರುವ ಸ್ಮಾರ್ತ ಹಾಗೂ ಮಾಧ್ವ ಧರ್ಮಗಳನ್ನು ಬಿಟ್ಟರೆ ಉಳಿದ ಅನೇಕ ಧರ್ಮಗಳ ನೋಟಕ್ರಮಗಳು ಚರಿತ್ರೆಯಲ್ಲಿ ಜಾತಿಪದ್ಧತಿಗೆ ಒಂದಲ್ಲ ಒಂದು ಬಗೆಯ ಭಿನ್ನಮತವನ್ನು ವ್ಯಕ್ತಪಡಿಸುತ್ತಾ ಬಂದಿವೆ. ಲಿಂಗಾಯತ ಧರ್ಮ, ಜೈನಧರ್ಮ, ಸಿಖ್ ಧರ್ಮ, ಬೌದ್ಧ ಧರ್ಮ, ಕ್ರಿಶ್ಚಿಯನ್ ಧರ್ಮ, ಇಸ್ಲಾಂ, ಸೂಫಿ ಮಾರ್ಗ, ಮಂಟೇಸ್ವಾಮಿ, ಮಲೆಮಾದೇಶ್ವರ ಚಿಂತನಾ ಕ್ರಮಗಳು ಜಾತಿಪದ್ಧತಿಗೆ ತಾತ್ವಿಕ ವಿರೋಧ ವ್ಯಕ್ತಪಡಿಸಿವೆ. ಆದರೆ ಈಚಿನ ದಶಕಗಳಲ್ಲಿ  ಜೈನ, ಲಿಂಗಾಯತ, ಸಿಖ್ ಮಾರ್ಗಗಳು ತಮ್ಮ ಧರ್ಮಗಳ ಮೂಲದಲ್ಲಿರುವ ಜಾತ್ಯತೀತ ಸತ್ವವನ್ನೇ ನಾಶಮಾಡಿಕೊಂಡಂತೆ ಕಾಣುತ್ತದೆ. ಈ ಸ್ಥಿತಿಗೆ ಆಯಾ ಧರ್ಮಗಳ ಉದಾರ ಗುಣಗಳನ್ನು ಅವುಗಳ ಒಳಗಿದ್ದೇ ನಾಶ ಮಾಡುತ್ತಿರುವ ಪೂಜಾರಿ, ಪುರೋಹಿತರೂ, ಈ ಧರ್ಮಗಳ ಅಸ್ತಿತ್ವವನ್ನು ಇಲ್ಲವಾಗಿಸಲು ಯತ್ನಿಸುತ್ತಾ ಬಂದಿರುವ ವೈದಿಕರೂ ಕಾರಣರಾಗಿದ್ದಾರೆ. ’ಜಾತಿ ಸಹಜ ಅಲ್ಲ, ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ’ ಎಂಬ ತತ್ವದ ಮೇಲೆ ನಿಂತಿರುವ ಬೌದ್ಧ ಧರ್ಮ ಮಾತ್ರ ದಲಿತ ಚಳವಳಿಯ ಜೊತೆ ಬೆರೆತಿರುವ ಕಾರಣದಿಂದಾಗಿ ಇಂದಿಗೂ ಜಾತ್ಯತೀತ ತತ್ವವನ್ನು ಉಳಿಸಿಕೊಂಡೇ ಬೆಳೆಯುತ್ತಿದೆ.

ದೇಶದ ಎಲ್ಲೆಡೆ ಜಾತ್ಯತೀತ ಆಂದೋಲನದಲ್ಲಿರುವ ಒಂದು ಮುಖ್ಯ ಸಮಸ್ಯೆ ಕರ್ನಾಟಕದ ಜಾತ್ಯತೀತ ಆಂದೋಲನದಲ್ಲೂ ಇದೆ. ಅದೇನೆಂದರೆ, ಈ ಆಂದೋಲನ ಮತೀಯವಾದಿಗಳು ಒಡ್ಡುವ ಸಮಸ್ಯೆಗಳ ಸಂದರ್ಭದಲ್ಲಿ  ಹೆಚ್ಚು ಜಾಗೃತವಾಗುತ್ತದೆ. ಉಳಿದಂತೆ ಅದು ಅಲ್ಪತೃಪ್ತ ಸ್ಥಿತಿಯಲ್ಲಿರತೊಡಗುತ್ತದೆ.  ಸಾಮಾನ್ಯವಾಗಿ ಕೇಡನ್ನು ಸೃಷ್ಟಿಸುವವರಿಗೆ ಇರುವ  ದುರುಳ ಏಕೋದ್ದೇಶ ಹಾಗೂ ಜಿಗುಟುತನ ಒಳಿತಿನ ಪರವಾಗಿರುವವರಿಗೆ ಇರುವುದಿಲ್ಲ. ಯಥಾಸ್ಥಿತಿವಾದಿಗಳಿಂದ, ರಾಜಕೀಯ ಪಕ್ಷಗಳಿಂದ ಹಾಗೂ ಮತೀಯ ಶಕ್ತಿಗಳಿಂದ ಹಣ ಹಾಗೂ ಇನ್ನಿತರ ಬಗೆಯ ಬೆಂಬಲ ಪಡೆವ ಕೋಮುವಾದಿಗಳು ಸದಾ ಒಂದಲ್ಲ ಒಂದು ಸಂಚು ಮಾಡಿ ಸಮಾಜದ ಸಮತೋಲನ ಕೆಡಿಸುತ್ತಲೇ ಇರುತ್ತಾರೆ. ಈ ಸಂಚುಗಳನ್ನು  ಸಮಾಜ ವಿರೋಧಿ ಅಪರಾಧಗಳೆಂದು ಪರಿಗಣಿಸಿ ಮಟ್ಟ ಹಾಕುವುದು ಸರ್ಕಾರಗಳ ಕರ್ತವ್ಯ. ಈ ಕೆಲಸವನ್ನು ಜಾತ್ಯತೀತವಾದಿಗಳೇ ಮಾಡಬೇಕೆಂದು ನಿರೀಕ್ಷಿಸುವುದು ಸರಿಯಲ್ಲ. ಆದರೆ, ಬಲಪಂಥೀಯ ಗುಂಪುಗಳು, ಧಾರ್ಮಿಕ ವೇದಿಕೆಗಳು, ಕೋಮುವಾದಿ ಪೋಲೀಸರು, ಅಧಿಕಾರಿಗಳು, ಮಾಧ್ಯಮಗಳಲ್ಲಿ ನುಸುಳಿಕೊಂಡಿರುವ ಕೋಮುವಾದಿಗಳು ವಿಚ್ಛಿದ್ರಕಾರಿ ಕೋಮು ಶಕ್ತಿಗಳಿಗೆ ಬಲ ತುಂಬುತ್ತಿರುವ ಕ್ರಮಗಳ ಬಗೆಗೆ ಸರ್ಕಾರಗಳನ್ನು ಹಾಗೂ ಜನರನ್ನು ಎಚ್ಚರಿಸುವ ಕೆಲಸವನ್ನಂತೂ ಜಾತ್ಯತೀತ ಶಕ್ತಿಗಳು ನಿರಂತರವಾಗಿ ಮಾಡುತ್ತಿರಬೇಕಾಗುತ್ತದೆ. ಸರ್ಕಾರಗಳೇ ಮತೀಯವಾದಾಗ ಈ ಜವಾಬ್ದಾರಿ ಇನ್ನಷ್ಟು ಹೆಚ್ಚುತ್ತದೆ.

ಹಾಗೆಯೇ, ಜಾತ್ಯತೀತತೆ ಎನ್ನುವುದು ಕೇವಲ ಕೋಮುವಾದ ಹುಟ್ಟು ಹಾಕುವ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವ ಕೆಲಸಕ್ಕೆ ಮಾತ್ರ ಸೀಮಿತವಾಗಬಾರದು. ಬದಲಿಗೆ ಜಾತ್ಯತೀತತೆಯನ್ನು  ಒಂದು ವಿಶಾಲ ನೋಟಕ್ರಮವಾಗಿ ಬೆಳೆಸಿ, ಜಾತ್ಯತೀತ ಮೌಲ್ಯಗಳನ್ನು, ಆಶಯಗಳನ್ನು ಜನರ ಜೀವನಕ್ರಮದ ಭಾಗವಾಗಿ ಬೆಳೆಸಲು ನಿರಂತರವಾಗಿ ಕೆಲಸ ಮಾಡಬೇಕಾಗುತ್ತದೆ. ಜಾತ್ಯತೀತತೆ ಎನ್ನುವುದು ನಾವೂ ನೆಮ್ಮದಿಯಿಂದ ಬದುಕಿ ನಮ್ಮ ಸುತ್ತಲಿನವರನ್ನೂ ನೆಮ್ಮದಿಯಿಂದ ಬದುಕಲು ನೆರವಾಗುವ ಉದಾತ್ತ ಜೀವನಕ್ರಮ ಎಂಬುದನ್ನು ಮತ್ತೆ ಮತ್ತೆ ಮನವರಿಕೆ ಮಾಡಿಕೊಡುತ್ತಿರಬೇಕಾಗುತ್ತದೆ. ಆಧುನಿಕ ಭಾರತದಲ್ಲಿ ಜಾತ್ಯತೀತತೆ ಇಲ್ಲದಿದ್ದರೆ ಸ್ಕೂಲು, ಆಸ್ಪತ್ರೆಗಳಿಂದ ಹಿಡಿದು ಯಾವ ಆಧುನಿಕ ಸಂಸ್ಥೆಗಳೂ ಇರುತ್ತಿರಲಿಲ್ಲ ಹಾಗೂ ಶೋಷಿತ ವರ್ಗಗಳ ಬಿಡುಗಡೆ ಅಸಾಧ್ಯವಾಗುತ್ತಿತ್ತು ಎಂಬ ಸರಳ ಸತ್ಯವನ್ನು ಜನಸಾಮಾನ್ಯರು ಮನಗಾಣಬೇಕಾಗಿದೆ. ಜೊತಗೆ.  ಕೋಮುವಾದದ ವಿಷದ  ಬಗೆಗೆ ಹಾಗೂ ಅದರ ಭೀಕರತೆಯ ಬಗೆಗೆ ಎಲ್ಲ ತಲೆಮಾರಿನ ಜನರನ್ನೂ ಎಚ್ಚರಿಸುತ್ತಿರಬೇಕಾಗುತ್ತದೆ. ನಮ್ಮ ನಿಲುವು, ಬರಹ, ಮಾತು, ಕಾರ್ಯಕ್ರಮ, ರಾಜಕೀಯ ಹಾಗೂ ಸಾಮಾಜಿಕ ಆಯ್ಕೆಗಳು…  ಮುಂತಾಗಿ ಎಲ್ಲ ವಲಯಗಳಲ್ಲೂ ಜಾತಿವಿನಾಶ, ಜಾತಿವಿರೋಧ, ಜಾತ್ಯತೀತತೆ ಹಾಗೂ ಧರ್ಮಾತೀತತೆಗಳು ಬೆಸೆದುಕೊಂಡೇ ಇರಬೇಕಾಗುತ್ತದೆ. ಅದರ ಜೊತೆಗೆ, ಜನಪರವಾದ ಚಳವಳಿಗಳಲ್ಲಿ ಭಾಗಿಯಾಗುವವರು ಜನರ ಕಷ್ಟಗಳನ್ನು ಹಂಚಿಕೊಳ್ಳುವ ಬಗೆಬಗೆಯ ವೇದಿಕೆಗಳಿಗೆ ನೆರವಾಗುತ್ತಾ ಜಾತ್ಯತೀತ ಮನೋಭಾವವನ್ನು ಹಬ್ಬಿಸಬೇಕಾಗುತ್ತದೆ. ಹಾಗೆಯೇ ಶಾಲಾ ಕಾಲೇಜುಗಳಲ್ಲಿ ಮಕ್ಕಳ ಮನಸ್ಸು ಜಾತೀಯತೆ ಹಾಗೂ ಕೋಮುಭಾವನೆಗಳಿಂದ ವಿಕಾರಗೊಳ್ಳದ ಹಾಗೆ ನೋಡಿಕೊಳ್ಳುವ ಕೆಲಸ ಲಕ್ಷಾಂತರ ಶಿಕ್ಷಕ, ಶಿಕ್ಷಕಿಯರ ಮೇಲೂ ಇದೆ. ಅದೇ ವೇಳೆಗೆ ಬಹುಸಂಖ್ಯಾತರ  ಕೋಮುವಾದಕ್ಕೆ ಪ್ರತಿಯಾಗಿ ಹುಟ್ಟುವ ಅಲ್ಪಸಂಖ್ಯಾತರ ಕೋಮುವಾದದ ಅಪಾಯದ ಬಗೆಗೂ ಕೂಡ ಜಾತ್ಯತೀತರು ಎಚ್ಚರವಾಗಿರಬೇಕಾಗುತ್ತದೆ. ಹಿಂದೂ ಕೋಮುವಾದದಿಂದ ಹಿಂದೂಜಾತಿಗಳ ದುರ್ಬಲರಿಗೆ  ಅನ್ಯಾಯವಾದಂತೆ, ಮುಸ್ಲಿಂ ಮೂಲಭೂತವಾದದಿಂದ ಬಡಮುಸ್ಲಿಮರಿಗೂ ಅನ್ಯಾಯವಾಗುತ್ತದೆ. ಲಂಕೇಶ್, ಅಥವಾ ತೇಜಸ್ವಿ ಥರದವರು ತೋರಿಸಿಕೊಟ್ಟಂತೆ ಸೆಕ್ಯುಲರ್ ಆಗಿರುವುದೆಂದರೆ ಎಲ್ಲ ಬಗೆಯ ಕೋಮುವಾದವನ್ನೂ ವಿರೋಧಿಸುವುದು ಎಂಬುದನ್ನು ನಾವು ಮರೆಯಬಾರದು. ಒಂದು ಬಗೆಯ ಕೋಮುವಾದದ ಬಗ್ಗೆ ಯೋಜಿತ ಮೌನದಿಂದಿರುವುದು ಕೂಡ  ತಪ್ಪು ಎಂಬುದನ್ನು ಲೋಹಿಯಾರಂಥ  ಚಿಂತಕರು ನಮಗೆ ಮನವರಿಕೆ ಮಾಡಿಕೊಟ್ಟಿರುವುದನ್ನು ಕಡೆಗಣಿಸಬಾರದು. ಈ ಎಲ್ಲದರ ನಡುವೆಯೂ ಭಾರತದ ಎಲ್ಲ ಜಾತಿ, ಧರ್ಮಗಳ ಅನುಯಾಯಿಗಳನ್ನೂ ಆಯಾ ಧರ್ಮಗಳ ಪುರೋಹಿತಶಾಹಿಗಳ ಹಿಡಿತದಿಂದ ಹೊರತರುವ ದಿಕ್ಕಿನಲ್ಲೂ ಯೋಚಿಸಬೇಕಾಗುತ್ತದೆ. ಹಾಗೆಯೇ, ಕೋಮು ಭಾವನೆಗಳನ್ನು ಬೆಳೆಸುವ ದುರುಳ ವೇದಿಕೆಗಳ ವ್ಯಾಖ್ಯಾನಗಳನ್ನು, ಸುಳ್ಳುಗಳನ್ನು ಹಾಗೂ ತಿರುಚಿದ ಸತ್ಯಗಳನ್ನು ಗಾಳಿಸುದ್ದಿಗಳಾಗಿ ಹಬ್ಬಿಸುವ ಬೇಜವಾಬ್ದಾರಿ ಮಧ್ಯಮ ವರ್ಗದ ವಾಚಾಳಿಗಳ ಪೂರ್ವಗ್ರಹ ಹಾಗೂ ಅಜ್ಞಾನಗಳನ್ನು ತಿದ್ದುವ ಕೆಲಸವನ್ನೂ ಮಾಡುತ್ತಿರಬೇಕಾಗುತ್ತದೆ.

ಸಂವಿಧಾನದ ಮೂಲ ಆಶಯವಾದ ಹಾಗೂ ಭಾರತದ ಉಳಿವಿಗೆ ಅತ್ಯಗತ್ಯವಾದ ಸೆಕ್ಯುಲರಿಸಮ್ಮನ್ನು ಅಪಾರ ಎಚ್ಚರದಿಂದ, ನಿರಂತರವಾಗಿ ಪೊರೆಯದಿದ್ದರೆ ಭಾರತದ ವರ್ತಮಾನ ಹಾಗೂ ಭವಿಷ್ಯಗಳೆರಡೂ ಗಂಡಾಂತರದಲ್ಲಿರುತ್ತವೆ ಎಂಬ ಕಠೋರ ಸತ್ಯವನ್ನು ಎಲ್ಲ ಭಾರತೀಯರಿಗೂ ತಲುಪಿಸುವ ದೊಡ್ಡ ಜವಾಬ್ದಾರಿ ಜಾತ್ಯತೀತರ ಮೇಲೇ ಇದೆ ಎಂಬುದನ್ನು ಮರೆಯಬಾರದು.


ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು.

(ಚಿತ್ರಕೃಪೆ: ವಿಕಿಪೀಡಿಯ)

ಸಾಮುದಾಯಿಕ ಹಾದಿಯಾಗಿ ಸಂಗೀತ

-ಭಾರತೀ ದೇವಿ. ಪಿ

ಸಂಗೀತ ಕುರಿತಾದ ಸಂಕಥನಗಳಲ್ಲಿ ನಾವು ಮತ್ತೆ ಮತ್ತೆ ‘ಸಂಗೀತ ಆತ್ಮದ ಭಾಷೆ, ಅದಕ್ಕೆ ಕಾಲ ದೇಶಗಳ ಹಂಗಿಲ್ಲ, ಅದರ ಭಾಷೆ ವಿಶ್ವಾತ್ಮಕವಾದುದು’ ಎಂಬ ಮಾತುಗಳನ್ನು ಕೇಳುತ್ತಿರುತ್ತೇವೆ. ಹೀಗೆ ದೇಶ ಭಾಷೆಗಳಾಚೆಗೆ ಎಲ್ಲರನ್ನು ತಲುಪುವ ವಿಶೇಷ ಗುಣ ಸಂಗೀತಕ್ಕಿದೆ, ಏಕೆಂದರೆ ಅದು ಭಾಷೆಯನ್ನು ಸಂಕೋಲೆಯಾಗಿ ಮಾಡಿಕೊಂಡಿಲ್ಲ. ಆದರೆ ತಾಂತ್ರಿಕವಾಗಿ ಸುಸಜ್ಜಿತವಾದ, ಶ್ರೇಷ್ಠ ಅಭಿರುಚಿ ತಮ್ಮದೆಂದುಕೊಂಡ ಕೇಳುಗರಿಂದ ತುಂಬಿಕೊಂಡಿರುವ ಸಭಾಂಗಣದಲ್ಲಿ ಕುಳಿತಾಗೆಲ್ಲ ಈಚೆಗೆ ವಿಚಿತ್ರ ಕಸಿವಿಸಿಯಾಗುತ್ತದೆ. ಇಂತಹ ವಿಶ್ವಾತ್ಮಕ ಭಾಷೆಯಾದ ಸಂಗೀತದ ಒಂದು ಪ್ರಭೇದವಾದ ‘ಶಾಸ್ತ್ರೀಯ’ ಎನಿಸಿಕೊಂಡಿರುವ ಸಂಗೀತ ಕೆಲವೇ ನಿರ್ದಿಷ್ಟ ಗುಂಪಿನ ಜನರ ಅಭಿರುಚಿಯ ಸಂಗತಿಯಾಗಷ್ಟೇ ಸೀಮಿತಗೊಳ್ಳುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತದೆ. ಹೀಗೆ ನನ್ನಲ್ಲಿ ಎದ್ದ ಹಲವು ಪ್ರಶ್ನೆ ಮತ್ತು ಆತಂಕಗಳನ್ನು ಅವಲೋಕಿಸುವ ಲೌಡ್ ಥಿಂಕಿಂಗ್‍ನ ರೂಪದಲ್ಲಿ ಇಲ್ಲಿನ ನನ್ನ ಅಭಿಪ್ರಾಯಗಳಿವೆ ಎಂಬುದನ್ನು ಮೊದಲಿಗೆ ಸ್ಪಷ್ಟಪಡಿಸುತ್ತೇನೆ.

ಕಲೆಯ ಹಾದಿ ಆತ್ಮಸಾಕ್ಷಾತ್ಕಾರದ ಹಾದಿ ಎಂದು ಭಾವಿಸಿಕೊಂಡಾಗ ಅದು ವೈಯಕ್ತಿಕ ಸಾಧನೆಯ ಪಥವಾಗುತ್ತದೆ. ತನ್ನ ಸಾಧನೆ, ಅದರ ಮೂಲಕ ಪಡೆಯುವ ಪಕ್ವತೆ, ಸಹೃದಯನೊಂದಿಗೆ ನಡೆಸುವ ಅನುಸಂಧಾನ ಇವು ಒಂದು ವಲಯದೊಳಗೆ ನಡೆಯುವಂಥವು. ಇದರಾಚೆಗೆ ಒಂದು ಸಾಮುದಾಯಿಕ ಆಯಾಮ ಸಂಗೀತ ಸೇರಿದಂತೆ ಲಲಿತಕಲೆಗಳಿಗೆ ಇದೆ. ಇದು ಸಂಸ್ಕಾರ, ರಂಜನೆ, ಭಕ್ತಿ, ಆತ್ಮ ನಿರೀಕ್ಷಣೆಯಾಚೆಗಿನ ಎಲ್ಲರೊಂದಿಗೆ ಒಂದಾಗಿ ತನ್ನನ್ನು ಗುರುತಿಸಿಕೊಳ್ಳುವ ಬಗೆ. ಆದರೆ ಶಾಸ್ತ್ರೀಯ ಸಂಗೀತದ ಇಂದಿನ ಬೆಳವಣಿಗೆಯನ್ನು ಕಂಡಾಗ ಅದು ವೈಯಕ್ತಿಕ ಸಾಧನೆಯ, ಶೋಧನೆಯ ದಾರಿಯಾಗಿ ಕಾಣುತ್ತಿದೆ. ಒಂದೇ ಬಗೆಯ ಶ್ರೋತೃಗಳು, ಸಂಘಟನೆ, ಪ್ರಸ್ತುತಿಯಲ್ಲಿ ಏಕರೂಪತೆ ಕಾಣುತ್ತಿದೆ. ಇವುಗಳು ಬಹುತ್ವದಿಂದ ದೂರವಾಗಿವೆ.

ವೈವಿಧ್ಯ ಮತ್ತು ಬಹುತ್ವ ಪ್ರಜಾಪ್ರಭುತ್ವದ ಸಂದರ್ಭದಲ್ಲಿ ಗಮನಾರ್ಹವಾದ ಮತ್ತು ಮುಖ್ಯವಾದ ಸಂಗತಿಗಳು. ಕೇವಲ ಹಾಡುವ ಬಗೆ, ಕೌಶಲಗಳಲ್ಲಿ ಮಾತ್ರ ವೈವಿಧ್ಯ ವ್ಯಕ್ತವಾದರೆ ಸಾಕೆ? ಕುಮಾರ ಗಂಧರ್ವರು ತತ್ವಪದಗಳೊಂದಿಗೆ ಮಾಡಿಕೊಂಡ ಅನುಸಂಧಾನ, ಹಿಂದೆ ಶಾಸ್ತ್ರೀಯ ಸಂಗೀತದೊಡನೆ ನಾಟ್ಯ ಸಂಗೀತದ ಅಂಶಗಳು ಬೆರೆತು ಪರಸ್ಪರ ಕೊಡುಕೊಳ್ಳುಗಳ ಮೂಲಕ ಶ್ರೀಮಂತಗೊಂಡ ಬಗೆ ಇವುಗಳಿಂದ ಕಲಿಯುವುದು ಸಾಕಷ್ಟಿದೆ. ವೈವಿಧ್ಯ ಮತ್ತು ಒಳಗೊಳ್ಳುವಿಕೆ ಶಾಸ್ತ್ರೀಯ ಸಂಗೀತದ ಕಸುವನ್ನು ಹೆಚ್ಚಿಸುತ್ತದೆ.

ಶಾಸ್ತ್ರೀಯ ಸಂಗೀತದ ಬೇರುಗಳಿರುವುದು ಸಮುದಾಯದಲ್ಲಿ. ಆದರೆ ಇಂದು ಅದು ಬೇರಿನಿಂದ ಸಾಕಷ್ಟು ದೂರ ಕ್ರಮಿಸಿದೆ. ತಂತ್ರಜ್ಞಾನದ ಬೆಂಬಲದೊಂದಿಗೆ ಹೊಸತನಕ್ಕೆ ಒಡ್ಡಿಕೊಂಡಿರುವ ಸಂಗೀತ ಮತ್ತೆ ಬೇರುಗಳೆಡೆಗೆ ಸಾಗದ ಹೊರತು ಶುಷ್ಕವಾಗಿಬಿಡುತ್ತದೆ. ಹಿಂದಿನ ಗಂಗೂಬಾಯಿಯವರಲ್ಲಾಗಲೀ, ಭೀಮಸೇನ ಜೋಶಿಯವರಲ್ಲಾಗಲೀ ಕಾಣುವ ಕಸುವು ಇಂದಿನ ಹಾಡುಗಾರರಲ್ಲಿ ಕಾಣಲಾಗುತ್ತಿಲ್ಲ ಎಂದು ಹೇಳುವಾಗ ನಮ್ಮ ಗಮನ ಸಾಗಬೇಕಾದುದು ಈ ಕಡೆಗೆ. ವಿಶಾಲವಾಗುವ, ಎತ್ತರಕ್ಕೇರುವ ಹುಮ್ಮಸ್ಸಿನಲ್ಲಿ ಆಳಕ್ಕಿಳಿಯುವ, ಬೇರುಗಳನ್ನು ತಡಕುವ ಹಾದಿ ಹಿನ್ನಡೆಯ ಹಾದಿಯಲ್ಲ; ಅದು ಜೀವರಸವನ್ನು ಮತ್ತೆ ಪಡೆಯುವ ಹಾದಿಯಾಗುತ್ತದೆ. ಹೀಗೆ ಮತ್ತೆ ಮತ್ತೆ ಅದು ಭೇಟಿ ನೀಡಬೇಕಾಗಿರುವುದು ಮರಳಿ ಸಮುದಾಯದ ಕಡೆಗೇ.

ಸಂಗೀತ ಹೃದಯದ ಭಾಷೆ ಎನ್ನುವುದು ಅದರ ನಿರೂಪಣೆಗೆ ಸಂಬಂಧಿಸಿದ ಸಂಗತಿ. ಹೃದಯದ ಭಾಷೆಗೆ ವಿಚಾರದ ಹಂಗಿಲ್ಲ ಎನ್ನುವುದೂ ನಿಜ. ಆದರೆ ಹೃದಯ ತಟ್ಟುವುದರಾಚೆಗೆ ನಮ್ಮ ಪ್ರಜ್ಞೆಯನ್ನು ತಟ್ಟಬಲ್ಲ ಗುಣ, ಶಕ್ತಿ ಸಂಗೀತಕ್ಕಿಲ್ಲವೇ? ಆದರೆ ಇಂದು ಸಂಗೀತ ಬಲ್ಲವರಲ್ಲಿ ಬಹುಪಾಲು ಜನ ಅದರ ವೈಚಾರಿಕ ಆಯಾಮದ ಕುರಿತು ಯೋಚಿಸಿದಂತಿಲ್ಲ. ಯಾವುದೇ ಸಾಮಾಜಿಕ ಸಂಗತಿಗಳ ಬಗೆಗೆ ಅವರ ದನಿ ಕೇಳುವುದಿಲ್ಲ. ಇಂದಿನ ರಿಯಾಲಿಟಿ ಶೋಗಳ, ಸಿನೆಮಾಗಳ ಜನಪ್ರಿಯ ಹಾಡುಗಾರರಿಂದ ಹಿಡಿದು ಶಾಸ್ತ್ರೀಯ ಸಂಗೀತಗಾರರವರೆಗೆ ಸಾಮಾಜಿಕ ಸಂಗತಿಗಳಿಗೆ ಸಂಗೀತಗಾರರು ಸ್ಪಂದಿಸಿದ್ದು ಕಡಿಮೆ. ಸಂಗೀತಕ್ಕಿರುವ ಸಾಮಾಜಿಕ ಆಯಾಮ ಸಹೃದಯರ ರಂಜನೆಗಷ್ಟೇ ಸೀಮಿತವೇ? ಅದರಾಚೆಗೆ ಸಮಾಜದೊಂದಿಗೆ ಸಂಗೀತಗಾರರು ಯಾವ ಬಗೆಯಲ್ಲಿ ಸ್ಪಂದಿಸಬಹುದು? ಸಂಗೀತ ಕಲಿಕೆ, ಕೇಳ್ಮೆ ಮತ್ತು ಪ್ರಸ್ತುತಿಯಲ್ಲಿ ಸಂಗೀತದ ಪ್ರಜಾಪ್ರಭುತ್ವೀಕರಣ ನಡೆಸಬಹುದಾದ ಬಗೆ ಯಾವುದು?

ಈ ಪ್ರಶ್ನೆಗಳೊಂದಿಗೆ ಹೊರಟಾಗ ಸಂಗೀತ ದೈವಿಕವಾದದ್ದು, ಅದು ಆತ್ಮದ ಭಾಷೆ ಎಂಬೆಲ್ಲ ಮಾತುಗಳನ್ನು ಮರುಪ್ರಶ್ನೆಗೊಳಪಡಿಸಬೇಕಾಗುತ್ತದೆ. ಸಂಗೀತ ಶ್ರೇಷ್ಠವಾದ ಕಲೆ ನಿಜ, ಅದಕ್ಕೆ ಅದರದೇ ಆದ ಸ್ಥಾನ, ಗೌರವ ಇದೆ. ಆದರೆ ಯಾವುದನ್ನೇ ಆಗಲಿ ಅದು ಉಳಿದವುಗಳಿಗಿಂತ ಶ್ರೇಷ್ಠ ಎನ್ನುವ ಮಾತು ಶ್ರೇಣೀಕರಣವನ್ನು ಪೋಷಿಸುವ ಮಾತಾಗುವಂತೆಯೇ ನಿಧಾನಕ್ಕೆ ಶ್ರೇಷ್ಠವೆನಿಸಿಕೊಂಡದ್ದರ ಬೇರನ್ನು ಶಿಥಿಲಗೊಳಿಸುವ ಬಗೆಯೂ ಆಗುತ್ತದೆ. ನಮ್ಮ ಶಾಸ್ತ್ರೀಯ ಪ್ರಭೇದಗಳು ಶ್ರೇಷ್ಠತೆಯ ಕಲ್ಪನೆ ಮತ್ತು ವ್ಯಸನದಿಂದ ಹೊರಬಂದ ಹೊರತು ಅವುಗಳಿಂದ ಹೊಸದೇನನ್ನೂ ನಿರೀಕ್ಷಿಸುವುದು ಸಾಧ್ಯವಾಗುವುದಿಲ್ಲ.

ಇಂದಿಗೂ ಶಾಸ್ತ್ರೀಯ, ಜನಪದ ಮತ್ತು ಜನಪ್ರಿಯ ಸಂಗೀತ ಇವುಗಳ ನಡುವೆ ಸ್ಪಷ್ಟ ಶ್ರೇಣೀಕರಣ ಮನೆ ಮಾಡಿರುವುದು ಕಾಣುತ್ತದೆ. ಯಾವುದೇ ಸಾಂಸ್ಕೃತಿಕ ಉತ್ಸವ ನಡೆಯಲಿ, ಇವುಗಳಿಗೆ ದೊರೆಯುವ ವೇದಿಕೆಗಳೇ ಬೇರೆ, ಇವುಗಳ ಕೇಳುಗ ವರ್ಗವೇ ಬೇರೆ. ಅವುಗಳ ನಡುವಣ ವೈಶಿಷ್ಟ್ಯವನ್ನು ಮೆಚ್ಚುತ್ತಲೇ ಒಂದು ಪ್ರಶ್ನೆಯನ್ನು ಹಾಕಿಕೊಳ್ಳಬೇಕಾಗಿದೆ. ಈ ಬಗೆಯ ‘ವಾಟರ್ ಟೈಟ್ ಕಂಪಾರ್ಟ್‍ಮೆಂಟ್ಸ್’ ಪರಸ್ಪರ ಪ್ರಭಾವ ಪಡೆಯುವುದರಿಂದ ನಮ್ಮನ್ನು ತಡೆಯುತ್ತದೆಯೇ? ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಜನರಿಗೆ ಬೇಕಾದಂತೆ ಹಾಡುವವರನ್ನು ಜನರನ್ನು ಓಲೈಸುವವರು ಎಂದು ಅಸಡ್ಡೆಯಿಂದ ಕಾಣುವವರಿದ್ದಾರೆ. ಕಟ್ಟುನಿಟ್ಟಾಗಿ ಪಾಠಾಂತರಕ್ಕೆ ಕಟ್ಟುಬಿದ್ದವರಿದ್ದಾರೆ. ಇವು ಸಂಗೀತವನ್ನು ಸದಾ ಒಂದು ಅಲ್ಪಸಂಖ್ಯಾತ ವರ್ಗದ ಚಟುವಟಿಕೆಯಾಗಿ ನಿರ್ದಿಷ್ಟಗೊಳಿಸುತ್ತದೆಯೇ? ಇದರಿಂದ ಸಂಗೀತ ಕ್ಷೇತ್ರ ಪಡೆಯುವುದೇನು ಮತ್ತು ಕಳೆದುಕೊಳ್ಳುವುದೇನು?

ಈ ಬಗ್ಗೆ ಇಂದು ಸಂಗೀತ ಕ್ಷೇತ್ರದಲ್ಲಿ ಮನೆಮಾಡಿರುವುದು ತುಂಬಾ ಸರಳೀಕೃತವಾದ ಗ್ರಹಿಕೆ. ಜನರನ್ನು ಮೆಚ್ಚಿಸಲು ಹೋದಾಗ ಸಂಗೀತ ಜಾಳುಜಾಳಾಗುತ್ತದೆ, ಜನಪ್ರಿಯತೆಗೆ ಮಾರುಹೋದ ಸಂಗೀತಗಾರ ತನ್ನ ಗಟ್ಟಿತನವನ್ನು ಕಳೆದುಕೊಳ್ಳುತ್ತಾನೆ ಎಂಬ ಭಾವನೆ. ಈ ತಿಳುವಳಿಕೆಯನ್ನು ಮರುಪರಿಶೀಲನೆಗೆ ಒಡ್ಡಬೇಕಾಗುತ್ತದೆ. ಶುದ್ಧ ಎಂಬುದು ಯಾವುದು? ಸಂಗೀತ ಹಿಂದೆಂದೋ ಇದ್ದಂತೆ ಇಂದು ಇಲ್ಲ. ಕಾಲಕ್ಕನುಗುಣವಾಗಿ ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ಬದಲಾವಣೆಗಳನ್ನು ಒಳಗು ಮಾಡಿಕೊಂಡಿದೆ. ಅಲ್ಲದೆ, ತಮ್ಮ ತನವನ್ನು ಬಿಟ್ಟುಕೊಡದೆಯೂ ಜನರನ್ನು ಸೆಳೆಯುವ ಅನ್ನುವುದಕ್ಕಿಂತ ಹೆಚ್ಚಾಗಿ ಒಳಗು ಮಾಡಿಕೊಳ್ಳುವ ಬಗೆಯಲ್ಲಿ ಸಂಗೀತದ ಪ್ರಸ್ತುತಿ ಸಾಧ್ಯವಿಲ್ಲವೇ? ಒಂದು ನಿರ್ದಿಷ್ಟ  ವರ್ಗಕ್ಕೆ ಸೀಮಿತವಾಗಿದ್ದಾಗ ಅದು ಬಹಳ ಮುಂದೆ ಹೋಗುವುದು ಕಷ್ಟವಾಗುತ್ತದೆ. ಕಾಲಕ್ಕನುಗುಣವಾಗಿ ಬದಲಾಗುವ ಬಗೆಯಲ್ಲಿ ಸಂಗೀತ ಹೆಚ್ಚು ಜನಮುಖಿಯಾಗಬೇಕು. ಇಂದಿನ ಸಂಗೀತದ ಕುರಿತು ಹಳಹಳಿಕೆಯ ಮಾತಾಡುವಾಗ ಈ ಸಂಗತಿ ನಮ್ಮ ದೃಷ್ಟಿಯಿಂದ ತಪ್ಪಿ ಹೋಗಬಾರದು. ಸಂಗೀತದ ಎಲ್ಲ ಪ್ರಭೇದಗಳ ಪ್ರಜಾಪ್ರಭುತ್ವೀಕರಣ ಸಮಾನತೆಯ ದೃಷ್ಟಿಯಿಂದ ಮಾತ್ರವಲ್ಲ, ಸಂಗೀತದ ಬೆಳವಣಿಗೆಯ ದೃಷ್ಟಿಯಿಂದಲೂ ಮುಖ್ಯವಾಗುತ್ತದೆ.