Category Archives: ರಾಜಕೀಯ

ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

1 ರೂ ದರದಲ್ಲಿ 30 ಕೆ.ಜಿ. ಅಕ್ಕಿಯ ನಿರ್ಧಾರದ ಹಿಂದಿರುವ ಕಟು ವಾಸ್ತವಗಳು

– ಬಿ.ಜಿ.ಗೋಪಾಲಕೃಷ್ಣ

ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ನೀಡುವ ಸರ್ಕಾರದ ನಿರ್ಧಾರದ ಬಗ್ಗೆ ವ್ಯಾಪಕ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಯಾವುದೇ ನಿಯಮ, ಕಾಯ್ದೆ, ಕಾನೊನು ಅಥವಾ ನಿರ್ಧಾರಗಳು ಚರ್ಚೆಗೆ ಬಾರದೆ ಅಂಕಿತವಾಗಿಬಿಟ್ಟರೆ ಅದರ ಸ್ಯಾರಸ್ಯವೇ ಇರುವುದಿಲ್ಲ. ಒಂದು ಚರ್ಚೆ ಪ್ರಾರಂಭವಾಗಿ ಕೊನೆಗೊಳ್ಳುವುದರೊಳಗಾಗಿ ಅನೇಕ ಕಹಿ ವಾಸ್ತವಗಳು ಬೆಳಕಿಗೆ ಬರುತ್ತವೆ.

ನಾವು ಒಂದು ವಿಷಯವನ್ನು ಯಾವ ದೃಷ್ಟಿ ಕೋನದಲ್ಲಿ ನೋಡುತ್ತೇವೆ, ಯಾವ ಪರಿಸರದಲ್ಲಿ ಬೆಳೆಯುತ್ತಿದೇವೆ, ನಮ್ಮಲ್ಲಿರುವ ವಿಚಾರಧಾರೆಗಳು, ಇವು ನಮ್ಮ ಮುಂದಿರುವ ಚರ್ಚೆಯ ವಿಷಯಗಳ ಬಗ್ಗೆ ಒಂದು ನಿರ್ಧಾರಕ್ಕೆ ತಂದು ನಿಲ್ಲಿಸುತ್ತವೆ. ಉದಾಹರಣೆಗೆ 1. ಮದುವೆಯ ಸಂದರ್ಭದಲ್ಲಿ ಮಾಂಗಲ್ಯ ಧಾರಣೆಯ ಸಮಯದಲ್ಲಿ ಅಕ್ಷತೆಕಾಳಿನ ಹೆಸರಿನಲ್ಲಿ ಅಕ್ಕಿಯನ್ನು ಪ್ರೊಕ್ಷಣೆ ಮಾಡುವುದು (ಕೆಲವು ಕಡೆ ನಿಷಿದ್ದ) . 2. ನವ ವಧು ಅಕ್ಕಿಯನ್ನು ಕಾಲಿನಿಂದ ಒದ್ದು ಗಂಡನ ಮನೆ ಪ್ರವೇಶಿಸುವುದು 3. ಹೊಸ ಮನೆ ಪ್ರವೇಶಿಸುವ ಮೊದಲು ಹಾಲು ಉಕ್ಕಿಸುವುದು. ಪ್ರಸಕ್ತ ಸಮಯದಲ್ಲಿ ಊರ್ಜಿತ. ಆದರೆ ಸತಿ ಪದ್ದತಿ ಅಥವಾ ಕೆರೆಗೆಹಾರ ಪದ್ದತಿಯ ಹೆಸರಿನಲ್ಲಿ ಹೆಣ್ಣಿನ ಪ್ರಾಣಹಾನಿ ಪ್ರಸಕ್ತ ಸಂದರ್ಭದಲ್ಲಿ ಅನೂರ್ಜಿತ. ಅಂದರೆ ನಮ್ಮ ದೃಷ್ಟಿ ಕೋನ ಬದಲಾದಂತೆ. ನಮ್ಮ ನಿರ್ಧಾರಗಳೂ ಬದಲಾಗುತ್ತಾ ಸಾಗುತ್ತವೆ.

ಈಗ ನಮ್ಮ ಮುಂದಿರುವ ಚರ್ಚೆಯ ವಿಷಯವೆಂದರೆ ಒಂದು ರೂಪಾಯಿ ದರದಲ್ಲಿ 30 ಕೆ.ಜಿ. ಅಕ್ಕಿ. ಈ ಸರ್ಕಾರದ ಸದ್ಯದ ಕ್ರಮ ಸೋಮಾರಿಗಳ ಸೃಷ್ಟಿಗೆ riceಕಾರಣವಾಗುತ್ತದೆ ಎಂಬ ವಾದವನ್ನು ಮಂಡಿಸುತ್ತಾ ದೇಶದ ಬಗೆಗಿನ ಕಾಳಜಿ ತೊರುತ್ತಿರುವವರಿಗೆ ಕೃತಜ್ಞತೆಗಳು. ನಮ್ಮ ಕರ್ನಾಟಕದಲ್ಲಿ ನಡೆಯುತ್ತಿರುವ ಭೃಹತ್ ಕಟ್ಟಡಗಳ ನಿರ್ಮಾಣ, ರಸ್ತೆ ಕಾಮಗಾರಿಗಳು , ದೂರಸಂಪರ್ಕ ಟವರ್‌ಗಳ ನಿರ್ಮಾಣ ಮಾಡುತ್ತಿರುವವರು ಹೊರರಾಜ್ಯದವರೇ ಹೆಚ್ಚು. ತಮಿಳುನಾಡಿನಲ್ಲಿ ಒಂದು ಕುಟುಂಬಕ್ಕೆ ತಿಂಗಳಿಗೆ 30 ಕೆ.ಜಿ. ಅಕ್ಕಿ ಉಚಿತ, ಕೇರಳ ರಾಜ್ಯದಲ್ಲಿ 14 ಅವಶ್ಯಕ ವಸ್ತುಗಳನ್ನು ಅತೀಕಡಿಮೆ ಬೆಲೆಯಲ್ಲಿ ವಿತರಿಸಲಾಗುತ್ತಿದೆ. ಅವರುಗಳೆಲ್ಲಾ ಸೋಮಾರಿಗಳಾಗಿರುವರೇ?

ಕರ್ನಾಟಕ ರಾಜ್ಯದಲ್ಲಿ ಒಟ್ಟು 1.10 ಕೋಟಿ ಕುಟುಂಬಗಳಲ್ಲಿ ಸುಮಾರು 36 ಲಕ್ಷ ಕುಟುಂಬಗಳಿಗೆ ತಮ್ಮದೇ ಎಂಬ ಒಂದೇ ಒಂದು ಗುಂಟೆ ತುಂಡು ಜಮೀನು ಕೂಡ ಇಲ್ಲ. ಕೂಲಿ-ನಾಲಿ ಮಾಡಿ ಹೂಟ್ಟೆ ಹೊರೆಯ ಬೇಕು. ಇದು ನಮ್ಮ ಭಾರತ ದೇಶದ ಜಮೀನ್‌ದ್ದಾರಿ ಮತ್ತು ಪಾಳೇಗಾರಿ ಪದ್ದತಿಯ ಫಲ ಶೃತಿ. ವರ್ಷ ಪೂರ್ತಿ ಕೂಲಿ ಸಿಗುವುದೇ? ಅವರಿಗೇನು ವಿಶ್ರಾಂತಿ ಬೇಡವೇ? ಮಳೇ ಬಂದರೆ ಕೂಲಿ, ಕೂಲಿ ಮಾಡಿದರೆ ಊಟ. 2 ವರ್ಷಗಳಿಂದ ಮಳೆಯೇ ಕಾಣದ ಕರ್ನಾಟಕದಲ್ಲಿ ಕೂಲಿ ಮಾಡಿ ಬದುಕುವವರ ಬದುಕು ಏನಾಗಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ವರ್ಷಕ್ಕೆ ಕನಿಷ್ಠ 100 ದಿನ ಕೂಲಿ. ಕಾರ್ಮಿಕರಿಗೆ ನಿಗದಿಪಡಿಸಿದ ಕೆಲಸದ ಪರಿಮಾಣಕ್ಕೆ ಅನುಗುಣವಾಗಿ ದಿನಗೂಲಿ ರೂ 155. 18 ವರ್ಷ ಮೀರಿದ 70 ವರ್ಷದ ಒಳಗಿನವರಿಗೆ ಮಾತ್ರ. ಒಂದು ಕುಟುಂಬದಲ್ಲಿ ಸರಾಸರಿ ಒಬ್ಬ ದುಡಿಯುವವನಿದ್ದು ಐದು ತಿನ್ನುವ ಬಾಯಿಗಳಿದ್ದರೆ ಕೂಲಿ ಸಿಕ್ಕ ದಿನ ತಲಾ ಅದಾಯ 31 ರೂ . ಬಿಸಿಯೂಟ ನೌಕರರ ಸಂಬಳ 500-600 ರೂಪಾಯಿ. ಅಂಗನವಾಡಿ ನೌಕರರ ಸಂಬಳ 1300-1400 ರೂಪಾಯಿ. ಇವರುಗಳ ಬದುಕು ಏಷ್ಟು ಅಸಹನೀಯವಿರಬಹುದು!

ಈ ನಡುವೆ ಹೊಸ ಹೊಸ ಸಂಶೋಧನೆಗಳಿಂದ ಆವಿಷ್ಕಾರಗೊಂಡ ಯಂತ್ರೋಪಕರಣಗಳು ಉಳ್ಳವರ ಜೀವನವನ್ನು ಮತ್ತೊಟ್ಟು ಉತ್ತಮ ಪಡಿಸಿ, ಸುಲಬೀಕರಿಸುವುದರೊಂದಿಗೆ ಬಡವರ ಜೀವನ ಕಟ್ಟಿಕೊಡುವುದಿರಲಿ ಬದುಕನ್ನೇ ಮುರಾಬಟ್ಟೆಯನ್ನಾಗಿಸಿವೆಯನ್ನುವುದು ಕಟು ವಾಸ್ತವ.

ಸರ್ವೋಚ್ಛ ನ್ಯಾಯಾಲಯ ಹೇಳಿದಂತೆ ಸರ್ಕಾರಿ ಗೋದಾಮುಗಳಲ್ಲಿ 6.67 ಕೋಟಿ ಟನ್ನುಗಳಷ್ಟು ಕೊಳೆಯುತ್ತಿರುವ ಆಹಾರ ಧಾನ್ಯಗಳು. ಲಂಡನ್ ಮೂಲದ ಸಂಸ್ಥೆಯ ವರದಿಯ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 210 ಲಕ್ಷ ಟನ್ ಗೋಧಿ ಅನಗತ್ಯವಾಗಿ ಹಾಳಾಗುತ್ತಿದೆ. ಶೇ.40 ರಷ್ಟು ಹಣ್ಣು ಮತ್ತು ತರಕಾರಿಗಳು ಜನರನ್ನು ತಲುಪದೆ ಹಾಳಾಗುತ್ತಿವೆ. ಇಷ್ಟಿದ್ದರೂ ನೆನ್ನೆ ಮೊನ್ನೆ ಕರ್ನಾಟಕದಲ್ಲಿ ಹಸಿವಿವಿನಿಂದ ಸತ್ತ ವರದಿ ಓದಿದ್ದೇವೆ. ಇಡೀ ಜಗತ್ತಿನಲ್ಲೇ ಅತ್ಯಂತ ದೊಡ್ಡ ಸಂಖ್ಯೆಯ ಅಪೌಷ್ಠಿಕ ಜನರಿರುವ ದೇಶ ನಮ್ಮದು. ಅಷ್ಟಕ್ಕೂ ಒಂದು ರೂಪಾಯಿ ದರದಲ್ಲಿ 30 ಕೆ.ಜಿ. ಅಕ್ಕಿಯ ನಿರ್ಧಾರ ಶಾಶ್ವತ ಪರಿಹಾರವೇನಲ್ಲವಲ್ಲ.

ಅದು ಸರಿ, ಒಂದು ರೂಪಾಯಿ ದರದಲ್ಲಿ 30 ಕೆ.ಜಿ. ಅಕ್ಕಿ ಸಿಕ್ಕರೆ ಸಾಕೇ? ಸಾಂಬಾರಿಗೆ ಬೇಕಾದ ಎಣ್ಣೆ, ಬೇಳೆ, ತರಕಾರಿ, ತೆಂಗು ಬೇಡವೆ? govt-school-kidsಅವರ ಆರೋಗ್ಯ, ವಿದ್ಯಾಭ್ಯಾಸ, ಮನೆ, ಬಟ್ಟೆ ಮತ್ತು ಇತರೆಗಳಿಗೇ ದುಡಿಯಲೇ ಬೇಕಲ್ಲವೇ? ಅಷ್ಟಕ್ಕೂ ಸರ್ಕಾರದ ಮೇಲೆ ಬೀಳುತ್ತಿರುವ ಹೊರೆಯೆಂದರೆ 24 ರೂಪಾಯಿಗೆ ಖರೀದಿಸಿ 1 ರೂಪಾಯಿ ನಲ್ಲಿ ವಿತರಿಸುವಾಗ 23 ರೂಪಾಯಿ ಹೊರೆ ಯಾಗುತ್ತದೆ ಎಂದರೆ 690 ರೂಪಾಯಿ ಪ್ರತಿ ಕುಟುಂಬಕ್ಕೆ. ಎ.ಪಿ.ಎಲ್ ಕಾರ್ಡ್ ಹೊಂದಿರುವವರಿಗೆ ವಿತರಿಸುತ್ತಿರುವ ಅನಿಲದ ಸಿಲಿಂಡರ್‌ಗೆ ಸರ್ಕಾರ  450 ರೂಗಳ ವರಗೆ ರಿಯಾಯಿತಿ ಕೊಡುತ್ತಿಲ್ಲವೆ?

ಕೆಲವೇ ಕೆಲವು ಉದ್ದಮಿಗಳ ಉದ್ಯಮಕ್ಕೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ನೀಡುತ್ತಿರುವ ಭೂಮಿ, ನೀರು, ವಿದ್ಯುತ್, ರಸ್ತೆ, ತೆರಿಗೆ ರಿಯಾಯಿತಿ, ಸಹಾಯ ದನಗಳು ಲಕ್ಷ ಲಕ್ಷ ಕೋಟಿ ರೂಪಾಯಿ ರೂಪದಲ್ಲಿರುತ್ತವೆ. ಇದು ದೊಡ್ಡವರ (ಕೆಲವೇ ಕೆಲವರ) ವಿಷಯ, ಅಕ್ಕಿ ಸಣ್ಣವರ (ಬಹು ಸಂಖ್ಯಾತರ) ವಿಷಯವಲ್ಲವೇ?

ಕಾರ್ಮಿಕರಿಗೆ ಪೌಷ್ಠಿಕ ಅಹಾರ ದೊರೆತರೆ ಸದೃಢಕಾಯರಾಗಿ ಕೆಲಸದಲ್ಲಿ ಹೆಚ್ಚು ಶ್ರಮ ವಹಿಸಿ ಕೆಲಸ ನಿರ್ವಹಿಸುವ ಸಾಧ್ಯತೆ ಇರಬಹುದಲ್ಲಾ. Working_in_the_rice_paddyಅನ್ಯ ಚಟುವಟಿಕೆಗಳಲ್ಲಿ ತೊಡಗಲು ಸಾಧ್ಯವೆಲ್ಲಿ? ಕಾರ್ಮಿಕರ ಮದ್ಯ (ಸರಾಯಿ), ಬೆಟ್ಟಿಂಗ್ ನೆಡೆಯುತ್ತದೆ ಎಂದು ಇಸ್ಪೀಟ್ ಆಟ, ಕೋಳಿ ಜೂಜು. ನಿಷೇದಿಸಲಾಗಿದೆ. ಇನ್ನೆಲ್ಲಿಯ ಅನ್ಯ ಚಟುವಟಿಕೆ. ಅದೇ ಶ್ರಿಮಂತರ ಮದ್ಯ ನಿಷೇದಿಸಲಾಗಿದೆಯೇ? ಜಗತ್ ಜಾಹೀರಾಗಿ ಬೆಟ್ಟಿಂಗ್ ಮೂಲಕ ಆಟಗಾರರನ್ನು ಮಾರಾಟಮಾಡಿ, ಯುವ ಜನತೆಯನ್ನು ಬೆಟ್ಟಿಂಗ್ ಕರಾಳ ಬಲೆಗೆ ಕೆಡವಿ, ದೇಶವನ್ನೇ ಸೋಮಾರಿಗಳನ್ನಾಗಿಸಿ ವರ್ಷವಿಡೀ ರಾರಾಜಿಸುತ್ತಿರುವ ಕ್ರಿಕೆಟ್ ಏಷ್ಟೇ ಆದರೂ ಬುದ್ದಿವಂತ ಶ್ರಿಮಂತರ ಆಟವಲ್ಲವೇ?

ಒಂದು ರೂಪಾಯಿ ದರದಲ್ಲಿ 30ಕೆ.ಜಿ. ಅಕ್ಕಿ ದೊರೆತರೆ ಕಡಿಮೆ ಕೂಲಿಗೆ ಜನಸಿಗುವುದಿಲ್ಲಾ ಎಂಬುವುದು ಹಲವರ ಅಹವಾಲು. ಕಡಿಮೆ ಕೂಲಿಗೆ ಯಾಕೆ ದುಡಿಯಬೇಕಂದು ಬಯಸುತ್ತೀರಿ? ಹೌದು, ಯಾರು ಯಾರ ಮನೆಯಲ್ಲೇಕೆ ಕೂಲಿಗಳಾಗಿ ದುಡಿಯಬೇಕು? ನಾವೇನಾರೂ ಅದೇ ಕೂಲಿಗೆ ಅವರುಗಳ ಮನೆಯಲ್ಲಿ ಕೂಲಿಮಾಡುವ ಮನಸ್ಥಿತಿಯಲ್ಲಿದ್ದೇವ? ಬಡವರೂ ಸಹ ಸ್ವತಂತ್ರ ಭಾರತದಲ್ಲಿ ಸ್ವಾವಲಂಬಿಗಳಾಗಿ ಸ್ವಾಭಿಮಾನದಿಂದ ಸ್ವತಂತ್ರರಾಗಿ ಬಾಳಲಿಬಿಡಿ.

ಬಡತನವನ್ನು ತೊಲಗಿಸಲು ಸಹಕಾರ ಕೊಡಿ, ಬಡವರನಲ್ಲಾ! ಬಡವರಿಗೆ ಶಿಕ್ಷಣ, ಸಮಾಜಿಕ ನ್ಯಾಯ, ಆರ್ಥಿಕ ಸದೃಢತೆ, ಸಾಂಸ್ಕೃತಿಕ ನ್ಯಾಯ ಅರ್ಥವಾಗದ ಪರಿಭಾಷೆಗಳೇ ಆಗಿವೆ. ಕಡೇ ಪಕ್ಷ ಅವರ ಪರವಾಗಿ ಸರ್ಕಾರದ ನಿರ್ದಾರಗಳು ಬಂದಾಗ ಬೆಂಬಲಿಸಲು ಸಾಧ್ಯವಾಗದಿದ್ದಲ್ಲಿ ಮೌನವನ್ನಾದರೂ ವಹಿಸೋಣ.

ಹೊಸ ಸರಕಾರ ಏಕ ರೂಪ ಶಿಕ್ಷಣ ನೀತಿ ಜಾರಿಗೊಳಿಸುತ್ತದೆಯೇ?

– ಕೋಡಿಬೆಟ್ಟು ರಾಜಲಕ್ಷ್ಮಿ

ಮತ್ತೆ ಶಾಲೆಗಳು ಆರಂಭವಾಗಿವೆ. ಪುಟಾಣಿ ಮಕ್ಕಳು ಎಲ್‌ಕೆಜಿ, ಯುಕೆಜಿ, ಒಂದನೇ ತರಗತಿಗಳಿಗೆ ಸೇರುವ, ಹೊಸ ಪುಸ್ತಕ ಖರೀದಿಸುವ, ಹೊಸ ಶಾಲೆಯಲ್ಲಿ ಕಲಿಯುವ ಗುಂಗಿನಲ್ಲಿ ಮುಳುಗಿದ್ದಾರೆ. ಅತ್ತ ಎಸ್‌ಎಸ್‌ಎಲ್‌ಸಿ, ಪಿಯುಸಿ, ಸಿಇಟಿ ಮತ್ತಿತರ ಫಲಿತಾಂಶಗಳು ಬಂದಿದ್ದು ವಿದ್ಯಾರ್ಥಿಗಳು ತಮ್ಮ ಬದುಕಿನ ಮಹತ್ವದ ತಿರುವಿನಲ್ಲಿ ನಿಂತಿದ್ದಾರೆ. ಕಾಲೇಜುಗಳ ಆಯ್ಕೆ, ಬದುಕಿನ ದಾರಿಯ ಆಯ್ಕೆಗಳಲ್ಲಿ ವ್ಯಸ್ತರಾಗಿದ್ದಾರೆ. ಒಟ್ಟಿನಲ್ಲಿ ಜೂನ್ ಬಂತೆಂದರೆ ಶಿಕ್ಷಣ ಕ್ಷೇತ್ರದಲ್ಲಿಯೇ ತುಂಬ ಚಟುವಟಿಕೆಗಳು ಗೋಚರಿಸುತ್ತದೆ. ಆದರೆ ಈ ಬಾರಿಯ ಜೂನ್ 1 ಕೆಲವು ಪ್ರಮುಖ ವಿಚಾರಗಳನ್ನು ನೆನಪಿಗೆ ತರುತ್ತದೆ. ಅದಕ್ಕೆ ಕಾರಣ ಪ್ರಸ್ತುತ ಭರ್ಜರಿ ಜನ ಬೆಂಬಲದೊಂದಿಗೆ, ನಿರೀಕ್ಷೆಗಳ ಮಹಾಪೂರದೊಂದಿಗೇ ರೂಪುಗೊಂಡಿರುವ ಹೊಸ ಸರಕಾರ.

ಸಾಹಿತ್ಯ ಲೋಕದ ದಿಗ್ಗಜರು ಕಾಂಗ್ರೆಸ್ ಸರಕಾರ ಬರಬೇಕು ಎಂಬ ಆಗ್ರಹವನ್ನು ಒಕ್ಕೊರಲಿನಿಂದ ಪ್ರತಿಪಾದಿಸಿದ್ದ ಹಿನ್ನೆಲೆಯಲ್ಲಿ kannada-schoolಕನ್ನಡ ಭಾಷೆಯ ಬಗ್ಗೆ ಪ್ರೀತಿ ಇರಿಸಿಕೊಂಡ ಸಾಹಿತಿಗಳು ಮತ್ತು ಸಾಹಿತ್ಯ ಪ್ರೇಮಿಗಳು ಏಕರೂಪದ ಶಿಕ್ಷಣ ನೀತಿ ಜಾರಿಗೊಳಿಸುವಂತೆ ಸರಕಾರವನ್ನು ನಿಷ್ಠುರವಾಗಿ ಆಗ್ರಹಿಸುತ್ತಾರೆಯೇ ಎನ್ನುವುದು ಸಹಜವಾಗಿ ಮೂಡಿರುವ ನಿರೀಕ್ಷೆ. ಅಪೇಕ್ಷಿಸಿದ ಸರಕಾರ ಬಂದಾಗ ನುಡಿ ರಕ್ಷಣೆಯ, ಅಥವಾ ನಾಡಿನ ಭವಿಷ್ಯದ ಜನಾಂಗವನ್ನು ರೂಪಿಸುವ ಜವಾಬ್ದಾರಿಯ, ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಆ ಸರಕಾರವನ್ನು ಒತ್ತಾಯಿಸುವುದು ಕೂಡ ಜವಾಬ್ದಾರಿ. ಚುನಾವಣೆಗೆ ಮುನ್ನ ನಡೆದ ಅಭಿಯಾನದ ಪರಿಣಾಮ, ಇದೀಗ ಏಕರೂಪ ಶಿಕ್ಷಣ ನೀತಿಯನ್ನು ಕಡಕ್ ಆಗಿ ಜಾರಿ ಮಾಡಲು ಸಾಹಿತ್ಯವಲಯ ನಿಷ್ಠುರವಾಗಿ ಆಗ್ರಹಿಸುವುದು ಅನಿವಾರ್ಯ. ಹಾಗೆ ನೋಡಿದರೆ ಕನ್ನಡ ನಾಡು ನುಡಿಯ ರಕ್ಷಣೆಯ ಉದ್ದೇಶದಿಂದ ಏಕ ರೂಪದ ಶಿಕ್ಷಣ ಬಹಳ ಹಿಂದೆಯೇ ಜಾರಿಯಾಗಬೇಕಿತ್ತು.

ಕನ್ನಡ ಭಾಷೆಯ ಉಳಿವಿಗಾಗಿ ಖಾಸಗಿ ಮತ್ತು ಆಂಗ್ಲ ಮಾಧ್ಯಮದ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಐದನೆ ತರಗತಿವರೆಗೆ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸುವುದು, ಅಂದರೆ ಅದನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವುದು ಒಂದು ಆಯ್ಕೆ. ಇದಕ್ಕೆ ಸರಕಾರ ಗಟ್ಟಿ ಮನಸ್ಸು ಮಾಡಬೇಕು. ಆಡಳಿತ ಶಾಹಿಯಲ್ಲಿಯೇ ಇರುವ ಶಿಕ್ಷಣದ ಬೃಹತ್ ಲಾಬಿಯನ್ನು ಎದುರು ಹಾಕಿಕೊಳ್ಳಬೇಕು.

ಎರಡನೆಯ ಆಯ್ಕೆ ಎಂದರೆ ಸರಕಾರಿ ಶಾಲೆಗಳಲ್ಲಿಯೂ ಆಂಗ್ಲ ಮಾಧ್ಯಮವನ್ನು ಕಲಿಸುವ ಅಥವಾ ಒಂದನೇ ತರಗತಿಯಿಂದಲೇgovernment_schoolಆಂಗ್ಲ ಭಾಷೆಯನ್ನು ಕಲಿಸುವ ದೃಢ ನಿರ್ಧಾರ ಸರಕಾರ ತೆಗೆದುಕೊಳ್ಳಬೇಕು. ಏಕೆಂದರೆ ಪ್ರಸ್ತುತ ಸರಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶದವರು. ಅದರಲ್ಲಿಯೂ ಹಿಂದುಳಿದವರ, ವಲಸೆ ಕಾರ್ಮಿಕರ, ಸಮಾಜದ ಅಂಚಿನಲ್ಲಿರುವವರ ಮಕ್ಕಳ ಸಂಖ್ಯೆಯೇ ಹೆಚ್ಚು. ನಮ್ಮ ಸರಕಾರಿ ಶಾಲೆಗಳು ಇನ್ನೂ ಇಂಗ್ಲೀಷ್ ಮಾಧ್ಯಮದ ದಾಳಿಗೆ ಒಳಗಾಗಿಲ್ಲ ಎಂದು ಹೇಳಿಕೊಳ್ಳುವುದಾದರೆ ಅದಕ್ಕೆ ಬೆಲೆ ತೆರುತ್ತಿರುವವರು ಖಾಸಗಿ ಶಾಲೆಗೆ ಹೋಗುವ ಸಾಮರ್ಥ್ಯ ಇಲ್ಲದ, ಸಮಾಜದ ಅಂಚಿನಲ್ಲಿರುವ ಪುಟಾಣಿ ಕಂದಮ್ಮಗಳು ಆಂಗ್ಲ ಮಾಧ್ಯಮದ ಸುಪ್ಪತ್ತಿಗೆಯಲ್ಲಿ ಓದಿದ ಬೃಹತ್ ಸಂಖ್ಯೆಯ ವಿದ್ಯಾರ್ಥಿಗಳೊಂದಿಗೆ. ಒಂದಲ್ಲ ಒಂದು ದಿನ ಅವರು ಸ್ಪರ್ಧಿಸಲೇಬೇಕು.

ಪಿಯುಸಿ, ಸಿಇಟಿ ಫಲಿತಾಂಶಗಳನ್ನು ಒಮ್ಮೆ ಗಮನಿಸಿದಲ್ಲಿ, ಅಲ್ಲಿ ಮೇಲ್ವರ್ಗದ, ಅಥವಾ ಆರ್ಥಿಕವಾಗಿ ಸ್ಥಿತಿವಂತ ಕುಟುಂಬದಿಂದ ಬಂದ ಮಕ್ಕಳ ಸಂಖ್ಯೆಯೇ ದೊಡ್ಡದು. ಅಂದರೆ ಸಮಾಜದ ಅಂಚಿನಲ್ಲಿರುವ ಕುಟುಂಬದ ಮಕ್ಕಳು ದಡ್ಡರೇ ? ಖಂಡಿತಾ ಅಲ್ಲ. ಅವರು ಆಂಗ್ಲ ಮಾಧ್ಯಮದ ಪ್ರವಾಹಕ್ಕೆ ಎದುರಾಗಿ ಈಜುವುದಕ್ಕೆ ಪ್ರಯಾಸ ಪಡಬೇಕಾಗುತ್ತದೆ. ಆರಂಭಿಕ ಆತ್ಮವಿಶ್ವಾಸವನ್ನು ಗಳಿಸುವುದರಲ್ಲೇ ಅವರ ಹೆಚ್ಚಿನ ಶಕ್ತಿ ಕುಂದಿಬಿಡುತ್ತದೆ. ಉಳಿದ ಸ್ಪರ್ಧೆಗಳಿಗೆ ಅಣಿಯಾಗುವಷ್ಟರಲ್ಲಿ ದಣಿವಾಗಿಬಿಡುತ್ತದೆ. ಆದ್ದರಿಂದ ಹೀಗೆ ಹಿಂದುಳಿದ ವರ್ಗಗಳ ಮಕ್ಕಳಿಗೂ ಸರಕಾರಿ ಶಾಲೆಗಳಲ್ಲಿ ಆಂಗ್ಲ ಶಿಕ್ಷಣ ಲಭಿಸಬೇಕು, ಅಥವಾ ಸ್ಥಿತಿವಂತರ ಮಕ್ಕಳೂ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿಯೇ ಕಲಿಯಬೇಕು. ಇದು ಸಮಾಜದ ಒಟ್ಟು ಆರೋಗ್ಯದ ಹಿತ ದೃಷ್ಟಿಯಿಂದ ಒಳ್ಳೆದು.

ಹಿಂದೆಲ್ಲ ಅಂದರೆ ನಾವು ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಜಮೀನುದಾರರ ಮಕ್ಕಳೂ, ಅದೇ ಜಮೀನುದಾರನ ಜಮೀನಿನಲ್ಲಿ private-schoolಕೆಲಸ ಮಾಡುತ್ತಿರುವವರ ಮಕ್ಕಳೂ ಒಂದೇ ಶಾಲೆಗೆ ತೆರಳುತ್ತಿದ್ದರು. ಆದರೆ ಇಂದು ಹಾಗಲ್ಲ. ಆರ್ಥಿಕವಾಗಿ ಸಬಲವಾಗಿರುವ ವರ್ಗದ ಮಕ್ಕಳು, ಆರ್ಥಿಕವಾಗಿ ಹಿಂದುಳಿದವ ವರ್ಗದ ಮಕ್ಕಳೊಂದಿಗೆ ಸಮಾನವಾಗಿ ಬೆರೆಯಲಾರರು. ಎರಡೂ ವರ್ಗದ ಮಕ್ಕಳು ಬಹಳ ಹೊತ್ತು ಮಾತುಕತೆ ನಡೆಸಲಾರರು. ಅವರು ಕಲಿಯುವ ಮಗ್ಗಿಯಾಗಲೀ, ಹಾಡುಗಳಾಗಲೀ, ಶಾಲೆಯ ವಾರ್ಷಿಕೋತ್ಸವದ ಶೈಲಿಯಾಗಲೀ ತುಂಬಾ ಬೇರೆ ಬೇರೆಯಾಗಿರುತ್ತದೆ. ಈ ಅಂತರ ಹೆಚ್ಚಾದಷ್ಟೂ ಮುಂದಿನ ದಿನಗಳಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಆಪತ್ತೂ ಹೆಚ್ಚು.

ಪ್ರತಿವರ್ಷ ಜೂನ್‌ನಲ್ಲಿ, ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿಯೇ ಇರಬೇಕು ಎಂಬ ಆಗ್ರಹಗಳೊಂದಿಗೆ ಭಾಷಣಗಳು ಬರಹಗಳು ಮೂಡಿಬರುತ್ತವೆ. ಆದರೆ ವಾಸ್ತವವಾಗಿ ಕನ್ನಡ ಮಾಧ್ಯಮದ ಶಾಲೆಗಳು ಮುಚ್ಚುವ ಹಂತವನ್ನು ತಲುಪಿವೆ. ಕಳೆದ ಎರಡು ವರ್ಷಗಳಲ್ಲಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಾ, ಅವು ಮುಚ್ಚಲಾರಂಭಿಸಿದಾಗ ಚರ್ಚೆಗಳಿಗೆ ಮತ್ತಷ್ಟು ಕಾವು ದೊರೆಯಿತು. ಸರಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ, ಶಿಕ್ಷಕರ ಕೊರತೆಯಿಂದಾಗಿ ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ ಎನ್ನುವುದು ಒಂದು ಕಾರಣವಾದರೂ, ಇತ್ತೀಚಿನ ದಶಕಗಳಲ್ಲಿ ಪಾಲಕರು, govt-school-kidsತಮ್ಮ ಮಕ್ಕಳು ಆಂಗ್ಲ ಮಾಧ್ಯಮದಲ್ಲಿಯೇ ಕಲಿಯಲಿ ಎಂದು ಬಯಸುತ್ತಿರುವುದು ಶಾಲೆ ಮುಚ್ಚುತ್ತಿರುವುದರ ಹಿಂದಿರುವ ಪ್ರಧಾನ ಕಾರಣ. ಜಾಗತೀಕರಣದ ಪ್ರಭಾವದಿಂದ ಚಿಕ್ಕಪುಟ್ಟ ಉದ್ಯೋಗ ಅವಕಾಶಗಳಿಗೂ “ಇಂಗ್ಲಿಷ್ ಬರುತ್ತದೆಯೇ” ಎಂಬ ಪ್ರಶ್ನೆ ಮಾಮೂಲಾಗಿದೆ. ಅಂದ ಮೇಲೆ ಮಕ್ಕಳು ಇಂಗ್ಲಿಷ್ ಕಲಿಯದೇ ಇದ್ದರೆ ಕೆಲಸವೇ ಸಿಗುವುದಿಲ್ಲ ಎಂಬ ಭಯ ಪಾಲಕರಲ್ಲಿ ಮೂಡಿದೆ. ಇಂಗ್ಲಿಷ್ ಶಾಲೆಗಳತ್ತ ಅವರ ವಾಲುವುದಕ್ಕೆ ಇರುವ ಮುಖ್ಯ ಕಾರಣವು ಇದು ಹೌದು.

ಖಾಸಗಿ ಶಾಲೆಗಳು ಮತ್ತು ಸರಕಾರಿ ಶಾಲೆಗಳು ಐದನೇ ತರಗತಿವರೆಗಿನ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ನೀಡಬೇಕು ಎಂದು ಸರಕಾರ ಎಷ್ಟೇ ಹೇಳಿದರೂ ಪ್ರತಿವರ್ಷ ಕನ್ನಡ ಮಾಧ್ಯಮದ ಅನುಮತಿಯೊಂದಿಗೆ ಆರಂಭವಾಗುವ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಪಾಠಗಳು ನಡೆಯುತ್ತವೆ.

ಶಾಲೆಗಳಲ್ಲಿ ಆಂಗ್ಲಭಾಷೆಯನ್ನು ಆರಂಭದಿಂದ ಕಲಿಸುವ ಪ್ರಯತ್ನವನ್ನು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಮಾಡಿದ್ದರು. 90 ರ ದಶಕದಿಂದ ಆಂಗ್ಲ ಮಾಧ್ಯಮದ ಶಾಲೆಗಳಿಗೆ ಸರಕಾರ ಅನುಮತಿ ನೀಡುವುದನ್ನು ನಿಲ್ಲಿಸಿದ್ದರೂ ಕೂಡ ಸುಳ್ಳು ಬೋರ್ಡುಗಳೊಂದಿಗೆ ಶಾಲೆಗಳು ನಡೆಯುತ್ತಲೇ ಇವೆ. ಇತ್ತೀಚೆಗೆ ಸಿಬಿಎಸ್‌ಇ ಎಂಬ ಬೋರ್ಡಿನಡಿಯಲ್ಲಿ “ನಮ್ಮದೇನಿದ್ದರೂ ಕೇಂದ್ರೀಯ ಪಠ್ಯ ಮಾದರಿಗೆ ಸಂಬಂಧಿಸಿದ ಸಂಸ್ಥೆ, ರಾಜ್ಯ ಸರಕಾರದ ನಿಯಮಗಳು ಲಗಾವ್ ಆಗುವುದಿಲ್ಲ” ಎಂಬ ಉಡಾಫೆಯೊಂದಿಗೆ ಐಶಾರಾಮಿ ಶಾಲೆಗಳು ಆರಂಭವಾಗುತ್ತಿವೆ. ನಮ್ಮ ದುಡ್ಡು, ನಮ್ಮ ಮಕ್ಕಳು, ಬೇಕಾದ್ದು ಕಲಿಸುತ್ತೇವೆ ಎಂಬ ಸ್ಥಿತಿವಂತ ಪಾಲಕರ ಉಡಾಫೆಯೂ ಸೇರಿ ಶಾಲೆಯಲ್ಲಿ ಮಕ್ಕಳು ಏನು ಕಲಿಯುತ್ತಾರೆ ಎನ್ನುವುದೇ ಮುಖ್ಯವಾಗುತ್ತಿಲ್ಲ.

ಖಾಸಗಿ- ಸರಕಾರಿ, ಕನ್ನಡ ಮಾಧ್ಯಮ- ಇಂಗ್ಲೀಷು ಮಾಧ್ಯಮ ಎನ್ನುವ ಭೇದದೊಂದಿಗೆ ಇಡೀ ಸಮಾಜ ಇಬ್ಬಾಗವಾಗುತ್ತಿರುವುದು ಸುಳ್ಳಲ್ಲ. ಹಿಂದಿನ ಸರಕಾರದ ಶಿಕ್ಷಣ ಸಚಿವರ ಮಕ್ಕಳೇ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದರೂ, ಏಕ ರೂಪ ಶಿಕ್ಷಣ ನೀತಿ ಜಾರಿ ಎನ್ನುವುದು ಅವರಿಂದ ಸಾಧ್ಯವಾಗಲಿಲ್ಲ. ಅಲ್ಲೊಂದು ಇಲ್ಲೊಂದು ನಡೆದ ಪ್ರಯತ್ನಗಳನ್ನೆಲ್ಲ ಖಾಸಗಿ ವಲಯದ ಲಾಬಿ ಮಣ್ಣು ಮುಕ್ಕಿಸಿವೆ. siddaramaiah-cmಆದರೆ ಲಾಬಿಯನ್ನು ಎದುರು ಹಾಕಿಕೊಂಡು, ದೃಢನಿರ್ಧಾರ ತೆಗೆದುಕೊಳ್ಳುವ ಧೈರ್ಯ ಪ್ರದರ್ಶಿಸುವುದಷ್ಟೇ ಪ್ರಸ್ತುತ ಸರಕಾರದ ಮುಂದಿನ ಸವಾಲು. ಆ ಸವಾಲನ್ನು ಸರಕಾರ ಗೆಲ್ಲಬೇಕಾಗಿದೆ. ತಪ್ಪಿದಲ್ಲಿ ಸರಕಾರವನ್ನು ಎಚ್ಚರಿಸುವ ಜವಾಬ್ದಾರಿ ಸಾಹಿತ್ಯ ವಲಯದ್ದಾಗಿದೆ.

ಮುಂದಿನ ತಲೆಮಾರನ್ನು ಸೃಷ್ಟಿಸುವ ಶಿಕ್ಷಣ ಬದುಕಿನ ಅತ್ಯಮೂಲ್ಯ ಅಂಗ. ಆ ನಿಟ್ಟಿನಲ್ಲಿ ಸರಕಾರವನ್ನು ಎಚ್ಚರದಲ್ಲಿಡುವ, ಅದಕ್ಕಾಗಿ ಮಾಡು ಇಲ್ಲವೆ ಮಡಿ ಎಂಬ ಒಗ್ಗಟ್ಟಿನ ಹೋರಾಟವನ್ನಾದರೂ ಆರಂಭಿಸಲು ಹಿಂದುಮುಂದು ನೋಡುವುದು ಸಲ್ಲ. ಅಲ್ಲಿ ಮತ್ತೆ ಪರಸ್ಪರ ಕಾಲೆಳೆಯುವ ಸಣ್ಣತನಕ್ಕೂ ಎಡೆಯಿರಬಾರದು.

ಘನ ಹುದ್ದೆಗೆ ಘನತೆ ತರಬಲ್ಲ ಛಲಗಾರ ಕಾಗೋಡು

– ಚಿದಂಬರ ಬೈಕಂಪಾಡಿ

ಶಿವಮೊಗ್ಗ ಜಿಲ್ಲೆ ಸಮಾಜವಾದಿ ಸಿದ್ಧಾಂತದ ಸಮೃದ್ಧವಾದ ಮಣ್ಣು. ಈ ಮಣ್ಣಿನ ಕಾಗೋಡು ತಿಮ್ಮಪ್ಪ ಈಗ ವಿಧಾನಸಭೆಯ ೧೯ನೇ ಸಭಾಪತಿ. ಅತ್ಯಂತ ಸಜ್ಜನ ಮತ್ತು ನಿಜಕ್ಕೂ ತೂಕದ ವ್ಯಕ್ತಿತ್ವ. ಬಹುಮುಖ್ಯವಾಗಿ ಕಾಗೋಡು ತಿಮ್ಮಪ್ಪ ಯಾಕೆ ಇಷ್ಟವಾಗುತ್ತಾರೆಂದರೆ ತಾವು ನಂಬಿದ ತತ್ವ, Photo Captionಸಿದ್ಧಾಂತವನ್ನು ಅಧಿಕಾರಕ್ಕಾಗಿ ಮಾರಿಕೊಂಡವರಲ್ಲ, ಅಧಿಕಾರ ಬಂದಾಗ ಗಾಳಿಗೆ ತೂರಿದವರಲ್ಲ. ಅಧಿಕಾರವನ್ನು ತ್ಯಾಗಮಾಡಿದ್ದಾರೆ, ಆದರೆ ಮೌಲ್ಯಗಳನ್ನು ಇಂದಿಗೂ ಕಾಪಾಡಿಕೊಂಡು ಬಂದಿದ್ದಾರೆ. ಅಧಿಕಾರಕ್ಕಾಗಿ ತಮ್ಮ ನೆಲೆ, ಬೆಲೆಯನ್ನು ಕಳೆದುಕೊಂಡವರಲ್ಲ, ಅಧಿಕಾರಕ್ಕಾಗಿ ಒತ್ತೆಯಿಟ್ಟವರೂ ಅಲ್ಲ.

೧೯೩೨ ರ ಸೆಪ್ಟಂಬರ್ ೧೦ ರಂದು ಕಾಗೋಡು ಎಂಬ ಹಳ್ಳಿಯಲ್ಲಿ ಜನಿಸಿದ ತಿಮ್ಮಪ್ಪ ರಾಜಕೀಯದ ಹಳೆಬೇರು. ಮಾತಿನಲ್ಲಿ ಸೋಗಲಾಡಿತನವಿಲ್ಲ, ಕೃತಕತೆಯೂ ಇಲ್ಲ, ನಡೆನುಡಿಯಲ್ಲಿ ದೇಸೀತನವಿದೆ. ಛಲವಾದಿ ಕಾಗೋಡು ತಿಮ್ಮಪ್ಪ ಎನ್ನುವುದರಲ್ಲಿ ಅನುಮಾನಗಳಿಲ್ಲ. ಬಿ.ಕಾಂ, ಬಿ.ಎಲ್ ಪದವಿ ಪಡೆದು ೧೯೬೦ರಲ್ಲಿ ಸಾಗರದಲ್ಲಿ ವಕೀಲಿ ವೃತ್ತಿಗೆ ಇಳಿದವರು. ಸಮಾಜವಾದಿ ಪಕ್ಷದಿಂದ ೧೯೬೨ರಲ್ಲಿ ವಿಧಾನಸಭೆಗೆ ಸ್ಪರ್ಧೆ ಮಾಡಿದರಾದರೂ ಜಯ ಅವರದಾಗಲಿಲ್ಲ. ಮತ್ತೆ ೧೯೬೭ರಲ್ಲಿ ಸ್ಪರ್ಧೆ ಮಾಡಿದರಾದರೂ ಸೋಲಬೇಕಾಯಿತು. ಛಲಬಿಡದ ಈ ತ್ರಿವಿಕ್ರಮ ೧೯೭೨ರಲ್ಲಿ ಮತ್ತೆ ಕಣಕ್ಕಿಳಿದು ಗೆದ್ದು ವಿಧಾನಸಭೆ ಪ್ರವೇಶ ಮಾಡಿದರು. ಸುಮಾರು ಒಂದು ದಶಕ ಕಾಲ ವಿಧಾನಸಭೆ ಪ್ರವೇಶಕ್ಕೆ ತಿಣುಕಾಡಿದ ಕಾಗೋಡು ತಿಮ್ಮಪ್ಪ ಸೋಲಿನಿಂದ ಕಲಿತ ಪಾಠವನ್ನು ನಂತರದ ದಿನಗಳಲ್ಲಿ ಗೆಲ್ಲುವುದಕ್ಕೆ ಬಳಸಿದರು. ಅಂದು ಸೋಲಿಸಿದ್ದ ಜನರೇ ಮತ್ತೆ ಕೈಹಿಡಿದು ಅವರನ್ನು ಮುನ್ನಡೆಸಿದರು.

ದೇವರಾಜ ಅರಸು ಗರಡಿಯಲ್ಲಿ ಭೂಮಸೂದೆ ಶಾಸನ ರೂಪಿಸುವ ಸಮಿತಿಯ ಸದಸ್ಯರಾಗಿ ತಮ್ಮ ಹಳ್ಳಿಗಾಡಿನ ಜನರ ಬದುಕು-ಬವಣೆಯನ್ನು ಆಧಾರವಾಗಿಟ್ಟುಕೊಂಡು ಉಳುವವನೇ ಹೊಲದೊಡೆಯನನ್ನು ಮಾಡಲು ಕಾಗೋಡು ತಿಮ್ಮಪ್ಪ ಅವರ ಅಪಾರ ಬುದ್ಧಿಮತ್ತೆಯೂ ಇತ್ತು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಭೂಮಾಲೀಕರ ದಬ್ಬಾಳಿಕೆಯಿಂದ ಜರ್ಝರಿತವಾಗಿದ್ದ ರೈತರ ಬದುಕಿಗೆ ಆಸರೆಯಾದ ಅರಸು ಅವರ ಕಾರ್ಯತತ್ಪರತೆಯಲ್ಲಿ ಕಾಗೋಡು ಅವರ ಬಳುವಳುಯೂ ಇತ್ತು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಮಾಜವಾದಿ ಕಾಗೋಡು ತಿಮ್ಮಪ್ಪ ೧೯೮೦ರಲ್ಲಿ ಕಾಂಗ್ರೆಸ್ ಪಕ್ಷ ಸೇರಿ ತಮ್ಮ ರಾಜಕೀಯದ ಹೊಸ ಇನ್ನಿಂಗ್ಸ್ ಆರಂಭಿಸಿದರು. ಗುಂಡುರಾಯರ ಸಂಪುಟದಲ್ಲಿ ಆಹಾರ, ಅರಣ್ಯ ಖಾತೆ ನಿಭಾಯಿಸಿದರು. ರಾಜಕೀಯ ಒಂದು ವೃತ್ತಿಯಾಗಿ ಚಿಗುರೊಡೆಯುತ್ತಿದ್ದ ಆ ಕಾಲಘಟ್ಟದಲ್ಲಿ ಗುಂಡುರಾಯರು ಕಾಗೋಡು ಅವರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಅವಕಾಶವಿದ್ದರೂ ಕೈಚೆಲ್ಲಿದರು ಎನ್ನುವ ವ್ಯಾಖ್ಯೆ. ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಮಾಜ ಕಲ್ಯಾಣ ಖಾತೆ ಸಚಿವರಾಗಿ ಸಾಮಾಜಿಕ ನ್ಯಾಯ ಕೊಡುವ ನಿಟ್ಟಿನಲ್ಲಿ ಕಾಗೋಡು ತಿಮ್ಮಪ್ಪ ಅವರ ಪ್ರಾಮಾಣಿಕ ಪ್ರಯತ್ನವನ್ನು ಮರೆಯುವಂತಿಲ್ಲ. ಇಲಾಖೆಯಲ್ಲಿನ ಹೆಗ್ಗಣಗಳ ಮೇಲೆ ಹದ್ದಿನಕಣ್ಣಿಟ್ಟು ಕೆಲಸ ಮಾಡಿದವರು ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು.

ಸಮಾಜವಾದಿಯಾಗಿ ಗೋಪಾಲಗೌಡರು ಮಾಡಿದ ಕೆಲಸ ಇಂದಿನ ತಲೆಮಾರಿನವರಿಗೆ ಮಸುಕು ಮಸುಕಾಗಿ ಅರಿವಾಗಬಹುದು. ಸಮಾಜವಾದಿಯಾಗಿ ಎಸ್.ಬಂಗಾರಪ್ಪ ಬೇರೆ ಬೇರೆ ಆಯಾಮಗಳಲ್ಲಿ ಗುರುತಿಸಿಕೊಂಡು ರಾಜಕೀಯ ಸ್ಥಾನಮಾನ ಗಳಿಸಿದರಾದರೂ ಕಾಗೋಡು ತಿಮ್ಮಪ್ಪ ಮಾತ್ರ ಅಧಿಕಾರದ ಬೆನ್ನು ಹತ್ತಿ ಹೋಗದೆ ಸಮಾಜವಾದಿಗಳ ಮಧ್ಯೆ ಭಿನ್ನವಾಗಿಯೇ ಈಗಲೂ ಗುರುತಿಸಿಕೊಳ್ಳುತ್ತಾರೆ. ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಸಚಿವರಾಗಿ, ಮಂಡಳಿಯ ಅಧ್ಯಕ್ಷರಾಗಿ ಬೇರೆ ಹುದ್ದೆಗಳನ್ನು ನಿಭಾಯಿಸಿದ ಅನುಭವಿ. ಅವರ ಘನತೆ, ನ್ಯಾಯಪಾಲನೆ, ಮಾತಿನಲ್ಲಿರುವ ನಿಖರತೆ ಸಹಜವಾಗಿಯೇ ಸಭಾಪತಿ ಹುದ್ದೆಗೆ ಸೂಕ್ತ ಆಯ್ಕೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.

ಬಾಳಿಗ, ಕಂಠಿ, ಡಿ.ಬಿ.ಚಂದ್ರೇಗೌಡ, ಬಣಕಾರ್, ಎಸ್.ಎಂ.ಕೃಷ್ಣ, ರಮೇಶ್ ಕುಮಾರ್, ಹೀಗೆ ಸಭಾಪತಿ ಸ್ಥಾನಕ್ಕೆ ಘನತೆ ತಂದುಕೊಟ್ಟವರು. ಅವರು ಆ ಸ್ಥಾನದಲ್ಲಿ ಕುಳಿತು ನೀಡಿದ ರೂಲಿಂಗ್‌ಗಳು ಈಗಲೂ ಅವರನ್ನು ಸ್ಮರಿಸುವಂತೆ ಮಾಡಿವೆ. ಈ ಕಾರಣಕ್ಕೆ ಈಗ ಕಾಗೋಡು ತಿಮ್ಮಪ್ಪ ಅವರೂ ಕೂಡಾ ತಮಗಿರುವ ಅಪಾರ ಅನುಭವವನ್ನು ಈ ಹುದ್ದೆಯ ಮೂಲಕ ಅಭಿವ್ಯಕ್ತಿಸಲಿದ್ದಾರೆಂದು ನಿರೀಕ್ಷಿಸಬಹುದು. ಕಾಗೋಡು ಅವರಿಗಿರುವ ಸಾಮಾಜಿಕ ಕಾಳಜಿ, ನ್ಯಾಯಪಾಲನೆಯಲ್ಲಿ ಅವರಿಗಿರುವ ಶ್ರದ್ಧೆ-ನಂಬಿಕೆ ಅವರಿಂದ ಬಹಳಷ್ಟು ನಿರೀಕ್ಷೆ ಮಾಡುವಂತೆ ಮಾಡಿದೆ. ಸದಸ್ಯರ ಹಕ್ಕನ್ನು ಕಾಪಾಡುವುದು ಹೇಗೆಂದು ಸದನದ ಹಿರಿಯ ಸದಸ್ಯರಾದ ಕಾಗೋಡು ಅವರಿಗೆ ಬೇರೆ ಯಾರೂ ಪಾಠ ಮಾಡಬೇಕಾಗಿಲ್ಲ. ಯಾವುದೇ ಸಂದರ್ಭದಲ್ಲೂ ಸ್ಥಾನಕ್ಕೆ ಚ್ಯುತಿ ಬರದಂತೆ ಕಾರ್ಯನಿರ್ವಹಿಸುತ್ತಾರೆನ್ನುವುದಕ್ಕೆ ಅವರು ನಡೆದು ಬಂದಿರುವ ಹಾದಿಯೇ ಸಾಕ್ಷಿ.

‘ತಣ್ಣನೆ ಸಾಮೂಹಿಕ ಬೇಟೆ’ ಹಿಂದಿನ ಕೆಲವು ಕರಾಳ ಸತ್ಯಗಳು

– ಜಿ.ಮಹಂತೇಶ್

ಛತ್ತೀಸ್​ಗಢವಷ್ಟೇ ಅಲ್ಲ, ಭಾರತ ದೇಶವೂ ಅಕ್ಷರಶಃ ಬೆಚ್ಚಿ ಬಿದ್ದಿದೆ. ಮಾವೋವಾದಿಗಳನ್ನ ಹತ್ತಿಕ್ಕಲು M_Id_52179_Salwa_Judumಸೆಲ್ವಾ ಜುಡುಂ ಅನ್ನು ಬಳಸಿಕೊಂಡಿದ್ದ ಛತ್ತೀಸ್​ಗಢ ಪ್ರಭುತ್ವಕ್ಕೆ ಮಾವೋವಾದಿಗಳು ಮರ್ಮಾಘಾತದ ಹೊಡೆತ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮತ್ತು ಅಹಿಂಸೆಯಲ್ಲಿ ನಂಬಿಕೆ ಇರುವವರ್ಯಾರು ಮಾವೋವಾದಿಗಳ ಈ ಕೃತ್ಯವನ್ನ ಬೆಂಬಲಿಸಲಾರರು. ಆದರೆ ಅದೇ ಪ್ರಭುತ್ವ, ಸೆಲ್ವಾ ಜುಡುಂ ಹೆಸರಿನಲ್ಲಿ ಅದೆಷ್ಟೋ ಮಂದಿ ಆದಿವಾಸಿಗಳನ್ನ ಸಾವಿನ ಮನೆಗೆ ಅಟ್ಟಿತ್ತು. ಆದಿವಾಸಿಗಳ ವಿರುದ್ಧ ಆದಿವಾಸಿಗಳನ್ನೇ ಎತ್ತಿಕಟ್ಟಿ ಅವರೊಳಗೇ ಒಬ್ಬ ಗೂಢಚಾರನನ್ನ ನೇಮಿಸಿತ್ತು. ಅದೇ ಗೂಢಚಾರರ ನೆರವಿನಿಂದ ಸದ್ದಿಲ್ಲದೇ ಮಾರಣ ಹೋಮ ನಡೆಸಿತ್ತು.

ಛತ್ತೀಸ್​ಢದಲ್ಲಿ ಮೊನ್ನೆ ನಡೆದ ಮಹೇಂದ್ರ ಕರ್ಮ ಮತ್ತು ಪಿಸಿಸಿ ಅಧ್ಯಕ್ಷ ನಂದಕುಮಾರ್ ಹಾಗೂ ಅವರ ಪುತ್ರನ ಹತ್ಯೆ ಆದಾಗ ಎಲ್ಲರೂ ಮರುಗಿದರು. ಖುದ್ದು ಸೋನಿಯಾ, ರಾಹುಲ್, ಮನಮೋಹನ್​ಸಿಂಗ್ ಭೇಟಿ ಕೊಟ್ಟು ಕಂಬನಿಗರೆದರು. ನಿಷ್ಪಾಪಿ ಆದಿವಾಸಿಗಳ ಮಾರಣ ಹೋಮ ನಡೆದಾಗ ಬಹುತೇಕ ಹೃದಯಗಳು ಅದ್ಯಾಕೋ ಏನೋ ಮರುಗಲಿಲ್ಲ; ಗಲ್ಲದ ಮೇಲೆ ಕಣ್ಣೀರು ಹರಿಯಲಿಲ್ಲ. ಅರಣ್ಯ ಸಂಪತ್ತಿನ ಲೂಟಿಗೆ ತೊಡಕಾಗಿದ್ದ ಆದಿವಾಸಿಗಳು ಅಲ್ಲಿರುವುದು ಯಾರಿಗೂ ಬೇಡವಾಗಿತ್ತು. ವಿಶೇಷವಾಗಿ ಗಣಿ ದೊರೆಗಳು ಮತ್ತು ಅವರ ಬೆನ್ನಿಗೆ ನಿಂತ ಪ್ರಭುತ್ವಕ್ಕೆ ಸುತಾರಾಂ ಬೇಡವಾಗಿತ್ತು.

ಆಗಷ್ಟೇ ರಚನೆಯಾಗಿದ್ದ ಛತ್ತೀಸ್​ಗಢ ರಾಜ್ಯದಲ್ಲಿ ಮಾವೋವಾದ ಚಳವಳಿಯೂ salwajudum398_080211084403ಹೆಡೆ ಎತ್ತತೊಡಗಿತ್ತು. ಇದರ ಹೆಡೆಯನ್ನ ಬಡಿದು ಬಾಯಿಗೆ ಹಾಕಿಕೊಳ್ಳಲು ಅಲ್ಲಿನ ಪ್ರಭುತ್ವವೇ ಭಯೋತ್ಪಾದಕ ಅಭಿಯಾನ ಆರಂಭಿಸಿತ್ತು. ಈ ಅಭಿಯಾನಕ್ಕಿದ್ದ ಹೆಸರು ಸೆಲ್ವಾ ಜುಡಂ ಎಂದು.

ಆದಿವಾಸಿ ಗೊಂಡಿ ಭಾಷೆಯಲ್ಲಿ ಸೆಲ್ವಾ ಜುಡುಂ ಎಂದರೇ, ತಣ್ಣನೆ ಸಾಮೂಹಿಕ ಬೇಟೆ ಎಂದು. ಛತ್ತೀಸ್​ಗಢ್ ರಾಜ್ಯದಲ್ಲಿ ಬಸ್ತಾರ್ ಎಂಬುದೊಂದು ಸಣ್ಣ ಜಿಲ್ಲೆ ಇದೆ. ಈ ಜಿಲ್ಲೆಯಲ್ಲಿ ಹೇರಳವಾದ ಖನಿಜ ಮತ್ತು ಅರಣ್ಯ ಸಂಪತ್ತನ್ನ ಗರ್ಭೀಕರಿಸಿಕೊಂಡಿದೆ. ಇಲ್ಲಿ ಉತ್ಕ್ರಷ್ಟ ದರ್ಜೆಯ ಕಬ್ಬಿಣದ ಅದಿರು, ಸುಣ್ಣದ ಕಲ್ಲು, ಡೋಲೋಮೈಟ್, ಬಾಕ್ಸೈಟ್, ವಜ್ರ ಸೇರಿದಂತೆ ಮತ್ತಿತರೆ ಖನಿಜ ಸಂಪತ್ತಿದೆ. ಹೀಗಾಗಿಯೇ ಅಲ್ಲಿನ ಸರ್ಕಾರ ಖನಿಜ ಸಂಪತ್ತಿನ ಮೇಲೆ ಕಣ್ಣಿಟ್ಟಿದೆ.

ಛತ್ತೀಸ್​ಗಢ ಸರ್ಕಾರ ಇಲ್ಲಿನ ಖನಿಜ ಸಂಪತ್ತನ್ನ ಬಗೆಯಲು mail_today5_070611101748ಹತ್ತಾರು ಖಾಸಗಿ ಗಣಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆ ಒಪ್ಪಂದ ಮೊತ್ತವೇ 60 ಸಾವಿರ ಕೋಟಿಗಿಂತಲೂ ಅಧಿಕ. ಬಸ್ತಾರ್​ ನೆಲದಲ್ಲಿ ಹುದುಗಿರುವ ಖನಿಜ ಸಂಪತ್ತನ್ನ ಬಗೆಯುವುದು ಅಷ್ಟು ಸುಲಭವಾಗಿರಲಿಲ್ಲ. ಆಗಷ್ಟೇ ಹೆಡೆ ಎತ್ತಿದ್ದ ಮಾವೋವಾದಿಗಳು ಖನಿಜ ಸಂಪತ್ತನ್ನ ಬಗೆಯುವುದಕ್ಕೆ ವಿರೋಧಿಸಿ, ಆದಿವಾಸಿಗಳ ಬೆನ್ನಿಗೆ ನಿಂತಿದ್ದರು.

ಹೀಗಾಗಿಯೇ, ಅಲ್ಲಿನ ಸರ್ಕಾರ ಆದಿವಾಸಿ ಸಂಸ್ಕೃತಿಯನ್ನ ಬುಡ ಸಮೇತ ಕೀಳಲಾರಂಭಿಸಿದೆ. ಇದರ ಒಂದು ಭಾಗವಾಗಿಯೇ ಸೆಲ್ವಾ ಜುಡಂ ರೂಪುಗೊಂಡಿರುವುದು. ಆದಿವಾಸಿಗಳ ವಿರೋಧಿಗಳನ್ನ ಕಲೆ ಹಾಕಿ, ತಿಂಗಳಿಗೆ 1,500 ರೂಪಾಯಿಗಳನ್ನ ನೀಡಿದ್ದ ಸರ್ಕಾರ ಅವರನ್ನೇ ವಿಶೇಷ ಪೊಲೀಸ್ ಅಧಿಕಾರಿಗಳನ್ನಾಗಿ ನೇಮಕ ಮಾಡಿತ್ತು. ತರಬೇತಿ ಪಡೆದುಕೊಂಡ ವಿಶೇಷ ಪೊಲೀಸ್ ಅಧಿಕಾರಿಗಳು ಆದಿವಾಸಿಗಳ ನರಮೇಧ ನಡೆಸಿದ್ದರು. ಆದಿವಾಸಿಗಳ ತಲೆ ಕತ್ತರಿಸಿ ಹಳ್ಳಿಗಳ ಪ್ರಮುಖ ಸ್ಥಳಗಳಲ್ಲಿ ನೇತು ಹಾಕಲಾಗಿತ್ತು. ಗರ್ಭಿಣಿಯರ ಹೊಟ್ಟೆ ಸೀಳಿ ಭ್ರೂಣವನ್ನ ಕಿತ್ತೆಸೆಯುತ್ತಿದ್ದರು. ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಹಳ್ಳಿ ಹಳ್ಳಿಗಳನ್ನೇ ಸುಟ್ಟು ಬೂದಿ ಮಾಡಲಾಗುತ್ತಿತ್ತು. ಆದರೆ, ಹೊರ ಜಗತ್ತಿಗೆ ಇದ್ಯಾವುದು ಬೆಳಕಿಗೆ ಬರಲೇ ಇಲ್ಲ.

selva judumಸೆಲ್ವಾ ಜುಡುಂ ವಿರುದ್ಧ ಕಳೆದ 5 ವರ್ಷಗಳ ಕೆಳಗೆ “ಆದಿವಾಸಿ ಕಲಾ ಮಂಚ್” ತಂಡ, ದೇಶಾದ್ಯಂತ ಸೆಲ್ವಾ ಜುಡಂನ ಭೀಕರತೆಯನ್ನ ಹೇಳಿತ್ತು. ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳದಲ್ಲೂ ಇದೇ ತಂಡ ಸತ್ಯಾಂಶಗಳನ್ನ ಹೊರಗೆಡವಿತ್ತು. ಅದೇ ತಂಡ ಕರ್ನಾಟಕಕ್ಕೂ ಭೇಟಿ ನೀಡಿ ಶಿವಮೊಗ್ಗದಲ್ಲೂ ಸೆಲ್ವಾ ಜುಡುಂನ ಹಿಂದಿರುವ ಅದೆಷ್ಟೋ ಕರಾಳ ಕೃತ್ಯಗಳ ಕಠೋರ ಸತ್ಯಗಳನ್ನ ಬಿಚ್ಚಿಟ್ಟಿತ್ತು. ಆಗ ಆ ತಂಡದ ನೇತೃತ್ವ ವಹಿಸಿದ್ದು ರಾಜ್​ಕುಮಾರ್ ಎನ್ನುವ ಪುಟ್ಟ ಪೋರ. ಶಿವಮೊಗ್ಗಕ್ಕೆ ಆತ ಬಂದಾಗ ಆತನಿಗಿನ್ನೂ 14 ವರ್ಷ. 5ನೇ ತರಗತಿಗೆ ಶರಣು ಹೊಡೆದು, ತನ್ನ ತಾಯ್ನೆಲದ ಮೇಲಿನ ದೌರ್ಜನ್ಯವನ್ನ ಕಂಡಿದ್ದ ಆತನ ಕಣ್ಣುಗಳು ಆಕ್ರೋಶಗೊಂಡಿದ್ದವು. ಈತ ಹೋದಲೆಲ್ಲಾ ಹೇಳುತ್ತಿದ್ದಿದ್ದು `ಹಮ್ ಆದಿವಾಸಿ ಹೈ…ಜಂಗಲ್ ಬಿ ಹಮಾರಾ ಹೈ..ಜಂಗಲ್ ಮೆ ಮಿಲ್ನಾಕಾ ಸಂಪತ್ತಿ ಬಿ ಹಮಾರಾ ಹೈ(ನಾವು ಆದಿವಾಸಿಗಳು….ಇಲ್ಲಿನ ಅರಣ್ಯವೂ ನಮ್ಮದೇ…ಅರಣ್ಯದಲ್ಲಿ ದೊರಕುವ ಸಂಪತ್ತೂ ಕೂಡ ನಮ್ಮದೇ). ಈತನ ಹಾವ ಭಾವಗಳನ್ನ ನೋಡಿದವರಿಗೆ ಈತನನ್ನ ಎಲ್ಲರೂ ಗದ್ದರ್‌ಗೆ ಹೋಲಿಸುತ್ತಿದ್ದರು. ಈತನ ರಟ್ಟೆಯಲ್ಲಿ ಅಂಥಾ ಕಸುವು ಇರಲಿಲ್ಲ….ಮೀಸೆಯೂ ಮೂಡಿರಲಿಲ್ಲ. ಆದರೂ ರಾಜ್ಯ ಪ್ರಭುತ್ವದ ವಿರುದ್ಧ ಸೆಟೆದು ನಿಂತಿದ್ದ. ಸೆಟೆದು ನಿಂತುಕೊಂಡೇ ಹೇಳಿದ್ದ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಅನುರಣಿಸುತ್ತಿವೆ.

‘ಮೈ ಇದರ್ ದಮನ್ ಕಿ ಸಚ್ಚಾಯೇ ಬತಾನೆ ಆಯಾ ಹೂಂ. ಆಜ್ ಬಸ್ತಾರ್ ಮೇ ಜನತಾ ಕೆ ಊಪರ್ Saket_gaddarಥಂಢಾಕೆ ನಾಮ್ ಸೆ ಹತ್ಯಾರ್ ಚಲಾ ರಹೇ ಹೈ. ಔರ್ ಯೇ ಕಾರ್ವಾಯೇ ಶಾಂತಿ ಕೆ ಅಭಿಯಾನ್ ಕರ್ಕೆ ಸರ್ಕಾರ್ ಚಿಲ್ಲಾ ರಹೇ ಹೈ. ವೇಷ್ ಬದಲ್ಕರ್ ಶೈತಾನ್ ಆತೇ ಹೈ ಸಾಥ್ ಮೇ ಮಾಯಾ ಕಾ ಜಾಲ್ ಲಾತೇ ಹೈ'( ನಾನಿಲ್ಲಿ ನಮ್ಮನ್ನ ಹತ್ತಿಕ್ಕುತ್ತಿರುವ ಸತ್ಯಾಂಶಗಳನ್ನ ಹೇಳಲು ಬಂದಿರುವೆ. ಇವತ್ತು ಬಸ್ತಾರ್ ಜನರ ಮೇಲೆ ತಣ್ಣಗೆ ಆಯುಧಗಳನ್ನಿಡಿದು ನಮ್ಮನ್ನ ಹೊಡೆದುರುಳಿಸುತ್ತಿವೆ. ಇದನ್ನ ಶಾಂತಿ ಅಭಿಯಾನ ಎಂದು ಸರ್ಕಾರ ಕೂಗುತ್ತಿದೆ. ವೇಷ ಬದಲಿಸಿಕೊಂಡು ಸೈತಾನ ಬರುತ್ತಾನೆ ಮತ್ತು ಮಾಯೆಯ ಜಾಲ ಬೀಸುತ್ತಾನೆ.)

ಹಣೆಗೆ ಕೆಂಪು ಪಟ್ಟಿ, ಸೊಂಟಕ್ಕೆ ಹಸಿರು ಹೊದಿಕೆ ಸುತ್ತಿಕೊಂಡು ಹಾಡುತ್ತ ಹಾಡುತ್ತ…`ಸಾಥಿಯೋ ಚಲೇ ಚಲೋ…ದೂರ್ ನಹೀ…ಮುಕ್ತಾ ಕಾ ಮಕಾನ್…ಮುಕ್ತಿ ಗೀತ್ ಗಾತೆ ಕಹೋ….ಶಹೀದ್ ಹೋಂ…ಸಬ್ ಕೋ ಲಾಲ್ ಸಲಾಂ’ ಎಂದು ಹೇಳುವಾಗಲಂತೂ ಇಡೀ ಸಭಾಂಗಣ ಕೆಂಪಾಗಿತ್ತು.

ಮೊನ್ನೆ ಮೊನ್ನೆ ಮಾವೋವಾದಿಗಳು ಛತ್ತೀಸ್ಗಢದಲ್ಲಿ ನಡೆಸಿದ ಹತ್ಯೆಗಳೂ, ತಣ್ಣನೆಯ ಸಾಮೂಹಿಕ ಬೇಟೆಗೆ ಸಹಜವಾಗಿಯೇ ಪ್ರತಿಕಾರವಾಗಿತ್ತು. ಮಾವೋವಾದಿಗಳ ಪ್ರತಿಕಾರದ ಬಗೆ ಮತ್ತು ಪ್ರಭುತ್ವದ ಕಾರ್ಯಾಚರಣೆ ಎರಡೂ ಮನುಷ್ಯ ವಿರೋಧಿ. ಅಲ್ಲಿನ ಸರ್ಕಾರ ಆದಿವಾಸಿಗಳ ಏಳ್ಗೆಗೆ ಶಾಶ್ವತ ಯೋಜನೆಗಳನ್ನ ರೂಪಿಸಿ, ಅವರೂ ನಮ್ಮವರೇ ಎಂದು ಒಳಗೆ ಬಿಟ್ಟುಕೊಳ್ಳುವ ವಾತಾವರಣ ನಿರ್ಮಾಣ ಆಗಬೇಕು.

ನಿಜಕ್ಕೂ ಇಂಥ ಆಶಯ ಇನ್ನಾದರೂ ಈಡೇರಲಿ.

ಸಿದ್ಧು ಆಡಳಿತಕ್ಕೆ ಯಾರ ಹೋಲಿಕೆ ಯಾಕೆ ?

– ಚಿದಂಬರ ಬೈಕಂಪಾಡಿ

ಸಿದ್ಧರಾಮಯ್ಯ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ರಾಜ್ಯದಲ್ಲಿ ಸಂಚಲನ ಉಂಟಾಗಿರುವುದಂತೂ ನಿಜ. ಮುಖ್ಯವಾಗಿ ಅವರು ಈ ಹುದ್ದೆಯನ್ನು ಏರುವುದೇ ಅನುಮಾನ ಎನ್ನುವಷ್ಟರ ಮಟ್ಟಿಗೆ ರಾಜಕೀಯ ಬೆಳವಣಿಗೆಗಳು ನಡೆದವು, ಆದರೆ ಅವೆಲ್ಲವೂ ಅನಿರೀಕ್ಷಿತವಾದವುಗಳಾಗಿದ್ದವು. ಸಾಮಾಜಿಕ ನ್ಯಾಯದ ಪ್ರತಿಪಾದನೆ ಮಾಡುತ್ತಲೇ ಬಂದ ವ್ಯಕ್ತಿಗೆ ಎದುರಾದ ಈ ಬೆಳವಣಿಗೆ ಅಸಹಜವೇನಲ್ಲ. ನಿರಾಕರಿಸುವ ಮನಸ್ಸುಗಳ ಮುಂದೆ ಹೇಳಿಕೊಳ್ಳುವುದು ವ್ಯರ್ಥ ಎನ್ನುವುದು ಇತಿಹಾಸ ಹೇಳಿಕೊಟ್ಟಿರುವ ಪಾಠವಾಗಿರುವುದರಿಂದ ಅತ್ಯಂತ ಸಹಜವಾಗಿಯೇ ಉದಾರಿಯಾಗಬಹುದೇನೋ ಎನ್ನುವ ಆಶಯದೊಂದಿಗೆ Siddaramaiahಮುಖ್ಯಮಂತ್ರಿ ಹುದ್ದೆಗೆ ಶೋಷಿತ ಸಮುದಾಯ ಧ್ವನಿ ಎತ್ತಿರುವುದು ನಾಳೆಯ ಬಗ್ಗೆ ಭರವಸೆ ಮೂಡಿಸುವಷ್ಟರಮಟ್ಟಿಗೆ ಸಾರ್ಥಕವಾಗಿದೆ.

ಪ್ರಧಾನ ಮಂತ್ರಿ ಹುದ್ದೆ ಕೂಡಾ ಶೋಷಿತ ಸಮುದಾಯಕ್ಕೆ ಎಂದೋ ಸಿಗಬೇಕಿತ್ತು, ಆದರೆ ಅದು ಸಿಕ್ಕಿಲ್ಲ ಎನ್ನುವುದನ್ನು ಹೇಗೆ ತಾನೇ ನಿರಾಕರಿಸಲು ಸಾಧ್ಯ?. ಜಗಜೀವನ್‌ರಾಮ್ ಒಂದಲ್ಲ ಒಂದು ದಿನ ಪ್ರಧಾನಿಯಾಗುತ್ತಾರೆಂದೇ ಶೋಷಿತ ಸಮುದಾಯದ ಜನ ಭಾವಿಸಿದ್ದರು ಹೊರತು ಹಕ್ಕೊತ್ತಾಯ ಮಾಡುವಷ್ಟರಮಟ್ಟಿಗೆ ಸಬಲರಾಗಿರಲಿಲ್ಲ ಎನ್ನುವುದಕ್ಕಿಂತಲೂ ಧ್ವನಿ ಎತ್ತುವ ಸಾಮರ್ಥ್ಯವೇ ಬಹುತೇಕ ಜನರಿಗೆ ಆಗ ಇರಲಿಲ್ಲ ಎನ್ನುವುದೇ ಹೆಚ್ಚು ಸೂಕ್ತ. ಬಿ.ರಾಚಯ್ಯ, ರಂಗನಾಥ್ ಅವರೂ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸುವಷ್ಟು ಸಾಮರ್ಥ್ಯಹೊಂದಿದ್ದರೂ ಅವಕಾಶ ಸಿಗಲಿಲ್ಲ. ಇವೆಲ್ಲವೂ ಇತಿಹಾಸದ ಪುಟ ತಿರುವಿದರೆ ಗೋಚರವಾಗುವ ವಾಸ್ತವ ಸಂಗತಿಗಳು.

ಸಿದ್ಧರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಸುಲಭವಾಗಿ ಆಯ್ಕೆಯಾಗಿಬಿಟ್ಟರು ಎನ್ನುವಂತೆ ಭಾಸವಾಯಿತಾದರೂ ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಹೈಕಮಾಂಡ್ ಇಷ್ಟೊಂದು ತ್ವರಿತವಾಗಿ ನಿರ್ಧಾರ ತೆಗೆದುಕೊಂಡದ್ದೇ ಅಚ್ಚರಿ. ಯಾಕೆಂದರೆ ಈ ಹಿಂದಿನ ಸಂದರ್ಭಗಳನ್ನು ಅವಲೋಕಿಸಿದರೆ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟುಕೊಡುವ ಒಂದು ಸಾಲಿನ ಸರ್ವಾನುಮತದ ನಿರ್ಣಯ ದೆಹಲಿ ತಲುಪಿ, ಅಲ್ಲಿ ಹೈಕಮಾಂಡ್ ಹಿರಿತಲೆಗಳು ಚರ್ಚಿಸಿ ಅಲ್ಲೂ ವಿಭಿನ್ನ ಅಭಿಪ್ರಾಯಗಳು ಮೂಡಿ ಅಲ್ಲಿ ಅಧ್ಯಕ್ಷರಿಗೆ ಅಧಿಕಾರ ಕೊಟ್ಟು ಕೈತೊಳೆದುಕೊಳ್ಳುವುದು. ಅಧ್ಯಕ್ಷರು ತಮ್ಮದೇ ಆದ ಮಾನದಂಡದ ಮೂಲಕ ಆಪ್ತರೊಂದಿಗೆ ಚರ್ಚಿಸಿ ಹೆಸರನ್ನು ಅಂತಿಮಗೊಳಿಸುವುದು ರೂಢಿ. ಇವೆಲ್ಲಕ್ಕೂ ಕನಿಷ್ಠ ಒಂದೆರಡು ದಿನವಾದರೂ ಬೇಕಿತ್ತು. ಆದರೆ ಸಿದ್ಧರಾಮಯ್ಯ ಅವರ ಆಯ್ಕೆ ಕಸರತ್ತು ಕೆಲವೇ ಗಂಟೆಗಳಲ್ಲಿ ಮುಗಿಯುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ, ಹೈಕಮಾಂಡ್ ಮಟ್ಟದಲ್ಲೂ ಬದಲಾವಣೆ ಗಾಳಿಯ ಅನಿವಾರ್ಯತೆಯ ಅರಿವಾಗಿದೆ ಎನ್ನುವಂತಾಯಿತು.

ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಪ್ರಮಾಣವಚನ ಸ್ವೀಕರಿಸುವುದು ಖಚಿತವಾದ ಮೇಲೆ ಅವರ ಅಭಿಮಾನಿಗಳು ಖುಷಿಪಟ್ಟರು ಸಹಜವಾಗಿಯೇ. siddaramaiah-cmಆದರೆ ಅಧಿಕಾರ ಪಡೆಯಲಾಗದ ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ.ಜಿ.ಪರಮೇಶ್ವರ್ ಅವರ ನಡೆಗಳನ್ನು ಪ್ರಶಂಸೆ ಮಾಡಲೇ ಬೇಕು. ಮಹತ್ವದ ಹುದ್ದೆಗೇರುವ ಅವಕಾಶ ಕೈತಪ್ಪಿದಾಗ ಅವರಿಬ್ಬರೂ ಆಂತರಿಕವಾಗಿ ಬಹಳ ನೊಂದುಕೊಂಡಿರುತ್ತಾರೆ ಎನ್ನುವುದರಲ್ಲಿ ಅನುಮಾನಗಳಿಲ್ಲ, ಆದರೆ ಹೈಕಮಾಂಡ್ ಆಯ್ಕೆ ವಿರುದ್ಧ ಧ್ವನಿ ಎತ್ತುವ ಅವಕಾಶವಿದ್ದರೂ ಧ್ವನಿ ಎತ್ತಲಿಲ್ಲ. ಕಂಠೀರವ ಕ್ರೀಡಾಂಗಣದಲ್ಲಿ ಸಿದ್ಧರಾಮಯ್ಯ ಪ್ರಮಾಣವಚನ ಸ್ವೀಕರಿಸುವ ಸಂದರ್ಭಕ್ಕೆ ಇಬ್ಬರೂ ನಾಯಕರು ಸಾಕ್ಷಿಗಳಾಗಿ ಹೊಸ ಸಂದೇಶ ರವಾನಿಸಿದರು, ಇದನ್ನು ಸಿದ್ಧರಾಮಯ್ಯ ಅವರೂ ಅರ್ಥಮಾಡಿಕೊಂಡಿರುತ್ತಾರೆ. ಯಾಕೆಂದರೆ ಇಂಥ ಸಮುದಾಯಗಳಿಗೆ ಧ್ವನಿಯಾಗಬೆಕು ಎನ್ನುವ ಆಶಯವನ್ನು ಅವರು ಪ್ರತಿಪಾದಿಸುತ್ತಲೇ ಬಂದವರಾಗಿರುವುದರಿಂದ.

ಸಿದ್ಧರಾಮಯ್ಯ ತಮ್ಮ ಸಂಪುಟ ರಚನೆ ಮಾಡುವಾಗ, ಖಾತೆಗಳನ್ನು ಹಂಚಿಕೆ ಮಾಡುವಾಗಲೂ ಏಕವ್ಯಕ್ತಿಯಾಗಿ ನಿರ್ಧಾರ ತೆಗೆದುಕೊಳ್ಳುವಂಥ ಮನಸ್ಸು ಮಾಡಿಲ್ಲ. ಹೈಕಮಾಂಡ್ ಹೆಗಲಿಗೆ ಆಯ್ಕೆಯ ಹೊಣೆ ಹೊರಿಸಿ ನಿರಾಳರಾದರು. ಈ ಸರ್ಕಾರದ ನಡೆಯಲ್ಲಿ ಅವರೂ ಭಾಗಿಗಳಾಗುವಂತೆ ಮಾಡಿದರು. ಬಹುತೇಕ ಸಿದ್ಧರಾಮಯ್ಯ ಹೈಕಮಾಂಡ್‌ಗೆ ಶರಣಾಗಿ ಶಸ್ತ್ರತ್ಯಾಗ ಮಾಡಿದಂತೆ ಅನೇಕರಿಗೆ ಕಂಡಿದ್ದರೆ ಅಚ್ಚರಿಪಡುವಂಥದ್ದೇನೂ ಇಲ್ಲ. ಯಾಕೆಂದರೆ ಅವರು ರಾಜಕೀಯದಲ್ಲಿ ಇಷ್ಟು ವರ್ಷಗಳ ಕಾಲ ನಡೆದುಕೊಂಡು ಬಂದ ರೀತಿಯೇ ಹಾಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಸಿದ್ಧರಾಮಯ್ಯ ಕೂಡಾ ತಮ್ಮನ್ನು ಬದಲಿಸಿಕೊಂಡಿದ್ದಾರೆಯೇ ಹೊರತು ಆಂತರಿಕವಾದ ಮನಸ್ಸನ್ನು ಬಿಟ್ಟುಕೊಟ್ಟಿಲ್ಲ ಬಿಟ್ಟುಕೊಡುವ ಮನಸ್ಥಿತಿಯವರೂ ಅಲ್ಲ ಎನ್ನುವುದು ಇಲ್ಲಿ ಮುಖ್ಯ.

ಸಿದ್ಧರಾಮಯ್ಯ ಅವರನ್ನು ದೇವರಾಜ ಅರಸು ಅವರಿಗೆ ಅನೇಕ ಮಂದಿ ಹೋಲಿಕೆ ಮಾಡಿದ್ದರು, ಭಾರೀ ಭರವಸೆಯ ಮಾತುಗಳನ್ನು ಆಡಿದ್ದರು. ಅವುಗಳಲ್ಲಿ ಹೆಚ್ಚಿನವು ಅವರನ್ನು ಮೆಚ್ಚಿಸುವುದಕ್ಕೇ ಹೊರತು ಸಿದ್ಧರಾಮಯ್ಯ ಅವರ ನಿಜವಾದ ಕಾಳಜಿಯನ್ನು ಗುರುತಿಸಿದಂಥವಲ್ಲ. Devaraj Arasಸಿದ್ಧರಾಮಯ್ಯ ಯಾರ ಪಡಿಯಚ್ಚೂ ಆಗುವುದಿಲ್ಲ, ಸಿದ್ಧರಾಮಯ್ಯ ಅವರದ್ದೇ ಆದ ಸ್ವಂತಿಕೆಯನ್ನು ಬೆಳೆಸಿಕೊಂಡೇ ರಾಜಕೀಯದಲ್ಲಿ ಬೆಳೆದು ಬಂದಿರುವುದರಿಂದ ಅವರ ಆಡಳಿತವೂ ಸಿದ್ಧರಾಮಯ್ಯ ಅವರ ಆಡಳಿತವೇ ಆಗಿರುತ್ತದೇ ಹೊರತು ಮತ್ತೊಬ್ಬರದ್ದಲ್ಲ.

ಸಿದ್ಧರಾಮಯ್ಯ ಅವರು ಕಾರ್ಯಕ್ರಮಗಳನ್ನು ಘೋಷಣೆ ಮಾಡಿಕೊಂಡು ಆತ್ಮ ತೃಪ್ತಿಪಡುವ ಜಾಯಮಾನದವರಂತೂ ಖಂಡಿತಾ ಅಲ್ಲ. ಅವರೇ ಚಿಂತಿಸಿ ಜಾರಿಗೆ ತರುವಂಥ ಕಾರ್ಯಕ್ರಮಗಳು ಅವರು ನಿರೀಕ್ಷೆಯಿಟ್ಟುಕೊಂಡ ವ್ಯಕ್ತಿಗೆ ತಲುಪುವಂತೆ ಮಾಡುವ, ಅಧಿಕಾರಿಗಳೇ ತಲುಪಿಸಿ ವರದಿ ಒಪ್ಪಿಸುವಂತೆ ಹೊಣೆಗಾರರನ್ನಾಗಿ ಮಾಡುವಂಥ ಸಾಮರ್ಥ್ಯ, ಜಾಣ್ಮೆ ಸಿದ್ಧರಾಮಯ್ಯ ಅವರಿಗಿದೆ. ಎಲ್ಲಿ ಸೋರಿಕೆಯಾಗುತ್ತದೆ ಎನ್ನುವುದನ್ನು ಗುರುತಿಸುವಷ್ಟು ಸ್ವಂತ ಬುದ್ಧಿಬಲವಿದೆ ಅವರಿಗೆ. ಒಂದು ರೂಪಾಯಿಗೆ ಅಕ್ಕಿ ವಿತರಣೆ, ಸಾಲ ಮನ್ನದಂಥ ಯಾರೂ ಅಷ್ಟು ಬೇಗ ನಿರೀಕ್ಷೆ ಮಾಡದಂಥ ಕಾರ್ಯಕ್ರಮಗಳನ್ನು ಏಕಾಂಗಿಯಾಗಿ ಮಾಡಿದ್ದು ಆತುರವಾಯಿತು ಎನ್ನುವ ಮಾತುಗಳು ಕೇಳಿಬಂದವು. ಆದರೆ ಅವರ ಈ ಘೋಷಣೆಯ ಹಿಂದೆ ಖಚಿತವಾಗಿ ಕೊರತೆಯನ್ನು ತುಂಬಿಸಿಕೊಳ್ಳುವ ಸ್ಪಷ್ಟ ದಾರಿಗಳನ್ನು ಗುರುತಿಸಿಕೊಂಡಿದ್ದಾರೆ. ಅಧಿಕಾರಿಗಳು ಗುರುತಿಸಿರದ ಹೊಸ ಕಾಲು ದಾರಿಗಳನ್ನು ಸಿದ್ಧರಾಮಯ್ಯ ಗುರುತಿಸಿದ್ದಾರೆ. ಬಹಳ ಮುಖ್ಯವಾಗಿ ಅಧಿಕಾರಿಗಳ ಸಭೆ ನಡೆಸಿದ ಸಂದರ್ಭದಲ್ಲಿ ಒಂದು ಸರ್ಕಾರದ ಯಶಸ್ಸಿನಲ್ಲಿ ಅಧಿಕಾರಿಗಳ ಪಾತ್ರ ಎಷ್ಟಿರುತ್ತದೆ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೆ ಈಗ ಅವರ ಮುಂದಿರುವ ಸವಾಲು ಕೂಡಾ ಅದೇ ಆಗಿದೆ. ತಮ್ಮ ಯೋಚನೆ, ಯೋಜನೆಗಳು ಸಾಕಾರಗೊಳ್ಳಲು ಎಂಥ ಅಧಿಕಾರಿಗಳನ್ನು ಸುತ್ತಲೂ ಇಟ್ಟುಕೊಳ್ಳಬೇಕು, ಯೋಜನೆಗಳನ್ನು ಮಾನಿಟರಿಂಗ್ ಮಾಡಲು ಯಾರು ಸಮರ್ಥರು ಎನ್ನುವುದನ್ನು ಗುರುತಿಸಿ ನಿಯೋಜಿಸಿದರೆ ಎಲ್ಲವೂ ಸುಗಮವಾಗುತ್ತದೆ.

ಜಾತಿ ಪ್ರೇಮ, ಅಧಿಕಾರದ ಆಸೆ, ಧನದಾಹ ಈ ಮೂರನ್ನೂ ಸಿದ್ಧರಾಮಯ್ಯ ನಿರಾಕರಿಸುತ್ತಾರೆ. ಅದಷ್ಟೇ ಸಾಲದು, ಅವರ ಸುತ್ತಲೂ ಅಂಥ ಮನಸ್ಥಿತಿಯ ಅಧಿಕಾರಿಗಳೇ ಇರಬೇಕು. ಸಿದ್ಧರಾಮಯ್ಯ ಅವರ ಬಗ್ಗೆ ಜನರಿಗೆ ಅಪಾರ ನಿರೀಕ್ಷೆ ಇರುವುದಕ್ಕೆ ಬಲವಾದ ಕಾರಣಗಳೂ ಕೂಡಾ ಇವೇ ಆಗಿವೆ.

ಸಿದ್ಧರಾಮಯ್ಯ ಅವರ ಸೈದ್ಧಾಂತಿಕ ನಿಲುವುಗಳನ್ನು ಕೆಣಕುವಂಥ ಪ್ರಯತ್ನಗಳು ನಿರಂತರವಾಗಿ ನಡೆಯಲಿವೆ. ಇದಕ್ಕೆ ಉದಾಹರಣೆ ಮಠ, ಮಂದಿರಗಳನ್ನು ಮುಜರಾಯಿ ಇಲಾಖೆಗೆ ತರುವ ಬಗೆಗಿನ ಚಿಂತನೆ. ಇದಕ್ಕೆ ಶತಶತಮಾನಗಳಿಂದ ಬೆಳೆದುಬಂದಿರುವ ಇತಿಹಾಸದ ದೊಡ್ಡ ನಡೆಯಿದೆ. ಸಿಕ್ಸರ್ ಬಾರಿಸಿದರೆ ಗೆಲ್ಲುವುದು ಸಾಧ್ಯವಿಲ್ಲ. ಗೆಲ್ಲಲು ಆರು ರನ್ನು ಅನಿವಾರ್ಯವಾದಾಗ ಒಂದೇ ಚೆಂಡು ಇದ್ದಾಗ ಸಿಕ್ಸರ್ ಬಾರಿಸದೇ ಗೆಲ್ಲುವುದು ಸಾಧ್ಯವಿಲ್ಲ. ಸಿದ್ಧರಾಮಯ್ಯ ಅವರಿಗೆ ಐದು ವರ್ಷಗಳ ಅವಕಾಶವಿದೆ. ಸಾಕಷ್ಟು ಹೋಮ್ ವರ್ಕ್ ಆಗಬೇಕಾಗುತ್ತದೆ, ನಿಧಾನವಾಗಿ ಯೋಚಿಸಿ. ಯಾಕೆಂದರೆ ಇದು ಸರ್ಕಾರದ ಮೊದಲ ಆದ್ಯತೆಯಲ್ಲ. ಅನ್ನ, ನೀರು, ಮನೆ ಎಲ್ಲರಿಗೂ ಸಿಗುವಂತೆ ಮಾಡುವುದು ಮುಖ್ಯ. ಸಾಧ್ಯವಾದರೆ ಈ ರಾಜ್ಯದಲ್ಲಿ ಅದೆಷ್ಟೋ ದೇವಾಲಯಗಳಲ್ಲಿ ದೇವರಿಗೆ ದೀಪ ಹಚ್ಚಲು ಬೇಕಾಗುವಷ್ಟು ಕಾಣಿಕೆ ಉತ್ಪತ್ತಿಯಾಗದ ದೇವಾಲಯಗಳಿವೆ. ಅಂಥ ದೇವಾಲಯಗಳಿಗೆ ದೀಪ ಉರಿಸಲು ಎಣ್ಣೆಗಾದರೂ ಮುಜರಾಯಿ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಿಸಿ. ಅಲ್ಲೂ ದೇವರ ಮೂರ್ತಿಗೆ ಬೆಳಕು ಬೀಳಲಿ. ಆ ಬೆಳಕಿನಲ್ಲಿ ಒಂದಷ್ಟು ಹೊಸ ವಿಚಾರಗಳು ಹೊತ್ತಿ ಉರಿಯಲಿ, ನಾಡಿಗೆ ಬೆಳಕಾಗಲಿ.