ಬಡ್ತಿ ಮೀಸಲಾತಿಯಿಂದ ಒಬಿಸಿಗಳಿಗೆ ಅನ್ಯಾಯವಾಗಿದೆಯೇ?


-ಶ್ರೀಧರ ಪ್ರಭು


 

ಮೊದಲೇ ವಿಚಾರವೆಂದರೆ, ಒಬಿಸಿಗಳೆಂದರೆ ಯಾರು ಎಂಬುದೇ ಅನೇಕರಿಗೆ, ಅದರಲ್ಲೂ ಒಬಿಸಿಗಳಿಗೆ ಗೊತ್ತಿಲ್ಲ. ಒಬಿಸಿ ಪಟ್ಟಿಯಲ್ಲಿ ಲಿಂಗಾಯತರು, ಒಕ್ಕಲಿಗರು, ಕುರುಬರು, ಕೋಲಿ ಸಮಾಜ, ಧಾರ್ಮಿಕ ಅಲ್ಪಸಂಖ್ಯಾತರು, ತಿಗಳರು, ನೇಕಾರರು, ಉಪ್ಪಾರರು, ದೇವಾಂಗರು, ಕುಂಬಾರರು, ಪತ್ತಾರರು, ವಿಶ್ವಕರ್ಮ ಹಾಗೂ ಇನ್ನಿತರ ನೂರಾರು ಜಾತಿಗಳು ಸೇರಿವೆ. ಇವರೆಲ್ಲರ ಜನಸಂಖ್ಯೆ ಒಟ್ಟು ಜನಸಂಖ್ಯೆಯ ಸುಮಾರು ೫೫% ರಷ್ಟಿದೆ.

ಇಂದು ಪರಿಶಿಷ್ಟರಿಗೆ ಬಡ್ತಿ ಮೀಸಲಾತಿ ಕಲ್ಪಿಸಿದ್ದನ್ನು ಬಹುಸಂಖ್ಯಾತ ಒಬಿಸಿಗಳಿಗಾದ ಅನ್ಯಾಯವೆಂಬಂತೆ ಬಿಂಬಿಸಲಾಗುತ್ತಿದೆ. ೧೮% ಬಡ್ತಿ ಮೀಸಲಾತಿ ಪಡೆದ ಪರಿಶಿಷ್ಟರು ೮೨ ಜನ ಅಲ್ಪಸಂಖ್ಯಾತ ಮತ್ತು ಒಬಿಸಿಗಳ ವಿರುದ್ಧವಾಗಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ. ಈಗ ಬಂದಿರುವ ತೀರ್ಪಿನಿಂದಾಗಿ ಈ ಅನ್ಯಾಯ ಸರಿಪಡಿಸಿದಂತಾಗಿದೆ ಎಂದು ಅನೇಕರು ಪ್ರಚಾರಮಾಡುತ್ತಿದ್ದಾರೆ.

ನಿಜವಾಗಿ ನೋಡಿದರೆ, ಒಬಿಸಿಗಳಿಗೆ ಅನ್ಯಾಯವಾಗಿದ್ದು ನಿಜ. ಆದರೆ, ಈ ಅನ್ಯಾಯಕ್ಕೆ ಪರಿಶಿಷ್ಟರು ಕಾರಣವಲ್ಲ. ನ್ಯಾಯಾಲಯದ ತೀರ್ಪಿನ ಅಂಶಗಳನ್ನು, ಅದರಲ್ಲೂ ಇಂದ್ರ ಸಹನಿ ತೀರ್ಪಿನ ಅಂಶಗಳನ್ನು ಸರಿಪಡಿಸದೇ ೧೯೯೨ ರಿಂದಲೂ ಈ ದೇಶವನ್ನಾಳಿದ ಸರ್ಕಾರಗಳು ಒಬಿಸಿಗಳಿಗೆ ಮೋಸ ಮಾಡಿವೆ.

೧೬ ನವೆಂಬರ್ ೧೯೯೨ ರಲ್ಲಿ ಬಂದ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಇಂದ್ರಾ ಸಹನಿ ತೀರ್ಪಿನಲ್ಲಿ ಮಂಡಲ್ ವರದಿ ಜಾರಿಗೊಳಿಸಿದ್ದನ್ನು ಎತ್ತಿಹಿಡಿಯಲಾಯಿತಾದರೂ, ಪರಿಶಿಷ್ಟರಿಗೆ ಯಾವುದೇ ಕಾರಣಕ್ಕೂ ಬಡ್ತಿಯಲ್ಲಿ ಮೀಸಲಾತಿ ಕೊಡಬಾರದು ಎಂದು ತೀರ್ಮಾನಿಸಲಾಯಿತು. ಹಾಗೆಯೇ, ಈ ತೀರ್ಪಿನಲ್ಲಿ ಹಿಂದುಳಿದ ವರ್ಗಗಳಿಗೆ (ಒಬಿಸಿಗಳಿಗೆ) ಕೆನೆಪದರನ್ನು ಅನ್ವಯಿಸಬೇಕು ಮತ್ತು ಬಡ್ತಿಯಲ್ಲಿ ಮೀಸಲಾತಿ ಕೊಡಲೇಬಾರದು ಎಂದೂ ತೀರ್ಮಾನಿಸಲಾಯಿತು. ದುರದೃಷ್ಟವಶಾತ್ ಇಂದ್ರಾ ಸಾಹ್ನಿ ತೀರ್ಪನ್ನು ಒಬಿಸಿಗಳು ಸರಿಯಾಗ ಅರ್ಥೈಸಲೇಯಿಲ್ಲ. ಈ ಜಾಗೃತಿ ಮೂಡದಿರುವ ಕಾರಣದಿಂದ ಅಳುವ ಮನುವಾದಿ ಸರ್ಕಾರಗಳಿಗೆ ಹಾಲುಕುಡಿದಷ್ಟು ಸಂತೋಷವಾಯಿತು.

ಈ ತೀರ್ಪಿನಲ್ಲಾದ ಅನ್ಯಾಯವನ್ನು ಪರಿಶಿಷ್ಟರ ಮಟ್ಟಿಗೆ ಸರಿಪಡಿಸಲು ೨೦೧೧ ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ೧೬ (೪) (ಎ) ಪರಿಚ್ಛೇದವನ್ನು ಸೇರಿಸಲಾಯಿತು. ಈ ಪರಿಚ್ಛೇದದ ಪ್ರಕಾರ, ಪರಿಶಿಷ್ಟರಿಗೆ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸಲು ಅನುವುಮಾಡಿಕೊಡಲಾಯಿತು. ಆದರೆ, ಹಿಂದುಳಿದ ವರ್ಗಗಳಿಗಾದ ಅನ್ಯಾಯವನ್ನು ಸರಿಪಡಿಸಲಲಿಲ್ಲ. ಕೆನೆಪದರು ನಿಯಮ ಹಾಗೆಯೇ ಉಳಿಯಿತು. ಬಡ್ತಿಯಲ್ಲಿ ಮೀಸಲಾತಿ ಸಹ ಸಿಗಲಿಲ್ಲ. ಈ ಹಂತದಲ್ಲಿ ಎಲ್ಲಾ ಪಕ್ಷಗಳು ಒಬಿಸಿಗಳಿಗೆ ನ್ಯಾಯ ಒದಗಿಸಬೇಕಿತ್ತು. ದುರದೃಷ್ಟವಶಾತ್ ಹೀಗಾಗಲಿಲ್ಲ. ಇನ್ನು ಒಬಿಸಿಗಳಂತೂ ತಮ್ಮದೇ ಪರವಾಗಿದ್ದ ಮಂಡಲ್ ವರದಿಯ ವಿರುದ್ಧ ಬಸ್ಸುಗಳಿಗೆ ಕಲ್ಲು ತೂರುವುದರಲ್ಲಿ, ಮಸೀದಿ ಬೀಳಿಸುವುದರಲ್ಲಿ ಖುಷಿ ಕಂಡುಕೊಂಡಿದ್ದರು. ಈ ಕಲ್ಲುಗಳು ತಮ್ಮ ಭವಿಷ್ಯದ ಸೌಧಕ್ಕೆ ಬೀಳುತ್ತಿವೆ ಎಂದು ಒಬಿಸಿಗಳು ಅಂದಿಗೂ, ಬಹಳಷ್ಟು ಮಟ್ಟಿಗೆ ಇಂದಿಗೂ ಗ್ರಹಿಸಲಾಗಿಲ್ಲ.

ಪರಿಶಿಷ್ಟರು ಎಚ್ಚೆತ್ತುಕೊಂಡ ಕಾರಣದಿಂದ, ಸಂವಿಧಾನಕ್ಕೆ ಮೇಲ್ಕಂಡ ತಿದ್ದುಪಡಿ ತಂದಿದ್ದು ಮಾತ್ರವಲ್ಲ, ರಾಜ್ಯ ಮಟ್ಟದಲ್ಲಿ, ೨೦೦೨ ರಲ್ಲಿ ಬಡ್ತಿ ಮೀಸಲಾತಿ ಕಲ್ಪಿಸುವ ಕಾಯಿದೆಗಳನ್ನೂ ಆಯಾ ರಾಜ್ಯಗಳಲ್ಲಿ ಜಾರಿಮಾಡಲಾಯಿತು. ಈಗ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಆಯಾ ರಾಜ್ಯಗಳ ಕಾಯಿದೆಗಳನ್ನು ಅಸಿಂಧುವೆಂದು ಘೋಷಿಸಿದೆ. ಆದರೆ, ಕಾಯಿದೆಯಲ್ಲಿನ ಲೋಪದೋಷಗಳನ್ನು ಪರಿಹರಿಸಿದರೆ, ಹಾಗೆಯೇ. ಪ್ರಮುಖವಾಗಿ ಹಿಂದೆ ರಾಜ್ಯಸಭೆಯಲ್ಲಿ ಪಾಸಾಗಿ ಈಗ ಲೋಕಸಭೆಯಲ್ಲಿ ನೆನೆಗುದಿಗೆ ಬಿದ್ದಿರುವ ೧೧೭ ನೇ ತಿದ್ದುಪಡಿ ವಿಧೇಯಕವನ್ನು ಪಾಸುಮಾಡಿಸಿದರೆ ಪರಿಶಿಷ್ಟರ ಸಮಸ್ಯೆ ಪರಿಹಾರವಾಗುತ್ತದೆ. ಆದರೆ, ಒಬಿಸಿಗಳ ಸಮಸ್ಯೆ ಹಾಗೆಯೇ ಉಳಿಯುತ್ತದೆ.

ಒಬಿಸಿಗಳಿಗೆ ಎರಡು ರೀತಿಗಳಲ್ಲಿ ಅನ್ಯಾಯವಾಗಿದೆ. ಮೊದಲೇ ಅನ್ಯಾಯವೆಂದರೆ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವಿಕೆಯನ್ನು ಮಾತ್ರ ಪರಿಗಣಿಸದೇ ಆರ್ಥಿಕ ಮಾನದಂಡಗಳನ್ನು ಮುಂದೆ ಮಾಡಿ ಕೆನೆಪದರನ್ನು ತಂದದ್ದು. ಎರಡನೇ ಅನ್ಯಾಯ, ಪ್ರಾತಿನಿಧ್ಯವನ್ನು ಬಡ್ತಿಗೆ ವಿಸ್ತರಿಸದೇ ಮೊಟಕುಗೊಳಿಸಿದ್ದು. ಇವೆರಡೂ ಅಂಶಗಳು ಈಗಲೂ ಜಾರಿಯಲ್ಲಿರುವುದಕ್ಕೆ ಕಾರಣವೆಂದರೆ ಮನುವಾದಿ ಸರ್ಕಾರಗಳು ಇಂದ್ರ ಸಹನಿ ತೀರ್ಪನ್ನು ಸರಿಪಡಿಸದೇ ಹೋಗಿದ್ದು. ಒಬಿಸಿಗಳನ್ನು ಸೇರಿಸಿ ಪಡೆಕಟ್ಟಿ ರಾಜಕೀಯಕ್ಕೆ ಬಳಸಿಕೊಂಡ ಸಂಘ ಪರಿವಾರ ಇಂದು ಒಬಿಸಿ ಗಳಿಗಾದ ಈ ಅನ್ಯಾಯವನ್ನು ಏಕೆ ಸರಿಪಡಿಸಬಾರದು? ಕಾಂಗ್ರೆಸ್ ಸರ್ಕಾರ ಒಬಿಸಿಗಳಿಗೆ ಮೋಸ ಮಾಡಿದೆ ಎಂದು ಬೊಬ್ಬೆ ಹೊಡೆಯುವ ಬಿಜೆಪಿ ಒಬಿಸಿಗಳಿಗೆ ಏನು ಮಾಡಿದೆ? ಮಂಡಲ್ ವರದಿಯನ್ನು ವಿರೋಧಿಸಿದ ಬಿಜೆಪಿ ಒಬಿಸಿಗಳ ಮೊದಲ ಶತ್ರು. ಮಂಡಲ್ ವರದಿ ಜಾರಿ ಮಾಡಿದ ನರಸಿಂಹ ರಾವ್ ಸರ್ಕಾರ ಸಹ ಇಂದ್ರಾ ಸಹನಿ ತೀರ್ಪಿನ ಲೋಪದೋಷಗಳನ್ನು ಸರಿಪಡಿಸಲಿಲ್ಲ. ಹೋಗಲಿ, ವಾಜಪೇಯಿ ಸರ್ಕಾರ ಏನು ಮಾಡಿದೆ? ಇಂದಿನ ಮೋದಿ ಸರ್ಕಾರ ಏಕೆ ಸುಮ್ಮನಿದೆ?

ಈಗ ಒಬಿಸಿಗಳು ಏನು ಮಾಡಬೇಕು?

ಮೊದಲನೇದ್ದಾಗಿ, ಪರಿಶಿಷ್ಟರಿಗೆ ಬಡ್ತಿಯಲ್ಲಿ ಸಿಗುತ್ತಿರುವ ಮೀಸಲಾತಿಯ ಪ್ರಮಾಣ ೧೮% ಮಾತ್ರ. ಒಬಿಸಿಗಳ ಜನಸಂಖ್ಯಾ ಅನುಪಾತದಲ್ಲಿ ಉಳಿದ ಹುದ್ದೆಗಳಿಗೆ ತಮಗೂ ಪ್ರಾತಿನಿಧ್ಯ ಸಿಗಬೇಕೆಂದು ಒಬಿಸಿಗಳು ಆಗ್ರಹಿಸಬೇಕಿದೆ. ಇದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವ ಅಗತ್ಯವಿದೆ. ೧೧೭ ನೇ ವಿಧೇಯಕದ ಮಾದರಿಯಲ್ಲೇ ಒಬಿಸಿಗಳಿಗೂ ಪ್ರಾತಿನಿಧ್ಯ ಕಲ್ಪಿಸುವ ವಿಧೇಯಕವನ್ನು ಜಾರಿ ಮಾಡಲು ಒಬಿಸಿಗಳು ಒತ್ತಾಯಿಸಬೇಕಿದೆ. ಇದರಲ್ಲಿ ರಾಜ್ಯಸರ್ಕಾರದ್ದೇನೂ ಪಾತ್ರವಿಲ್ಲ. ಇದು ಕೇಂದ್ರ ಸರ್ಕಾರದ ಜವಾಬ್ದಾರಿ. ಹೀಗಾಗಿ, ಇಂದ್ರಾ ಸಹನಿ ತೀರ್ಪಿನಲ್ಲಾದ ಅನ್ಯಾಯವನ್ನು ಈಗಲಾದರೂ ಸರಿಪಡಿಸಬೇಕಾದರೆ, ಒಬಿಸಿಗಳು ಸಂವಿಧಾನ ತಿದ್ದುಪಡಿ ಮಾಡಿ ತಮಗೂ ಬಡ್ತಿ ಮೀಸಲಾತಿಯನ್ನು ಕಲ್ಪಿಸಬೇಕೆಂದು ಒತ್ತಾಯಿಸಬೇಕಿದೆ. ಹೀಗೆ ಮಾಡಿದರೆ, ಸಹಜವಾಗಿ ಪರಿಶಿಷ್ಟರ ಬೆಂಬಲವೂ ಒಬಿಸಿಗಳಿಗೆ ದೊರೆಯುತ್ತದೆ. ನಿಜವಾಗಿ ನೋಡಿದರೆ, ಮೇಲ್ದರ್ಜೆಯ ಹುದ್ದೆಗಳಲ್ಲಿ ಒಬಿಸಿಗಳ ಪ್ರಾತಿನಿಧ್ಯ ಅವರ ಜನಸಂಖ್ಯಾ ಪ್ರಮಾಣದಷ್ಟಿಲ್ಲ. ಅದನ್ನು ಆಗ್ರಹಿಸುವುದು ಬಿಟ್ಟು ಸಾಮಾನ್ಯ ವರ್ಗದವರೊಂದಿಗೆ ಸೇರಿಕೊಂಡರೆ, ಒಬಿಸಿಗಳಿಗೆ ಏನೂ ಪ್ರಯೋಜನವಿಲ್ಲ. ಬಹುಜನರ ಒಗ್ಗಟ್ಟು ಮುರಿದುಹೋದರೆ ಎಲ್ಲರ ಪ್ರತಿನಿಧ್ಯವೂ ಒಟ್ಟಿಗೇ ಕೊನೆಗೊಳ್ಳುತ್ತದೆ.

ಈಗ ಬಂದಿರುವ ಬಿ ಕೆ ಪವಿತ್ರ ಪ್ರಕರಣದಲ್ಲಿ ಪರಿಶಿಷ್ಟರು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂಬುದಕ್ಕೆ ಯಾವುದೇ ಪ್ರಮಾಣವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಹಾಗೆಯೇ, ಪ್ರಾತಿನಿಧ್ಯ ಕಲ್ಪಿಸುವುದರಿಂದ ಕಾರ್ಯದಕ್ಷತೆಗೆ ಹಾನಿ ಎನ್ನಲಾಗಿದೆ. ಪ್ರಾತಿನಿಧ್ಯ ಕಲ್ಪಿಸಿದರೆ ಕಾರ್ಯದಕ್ಷತೆಯೇ ಪ್ರಧಾನ ಎಂಬ ಸಂವಿಧಾನದ ೩೩೫ ನೇ ಪರಿಚ್ಛೇದಕ್ಕೆ ಅಪಚಾರವಾಗುತ್ತದೆ ಎನ್ನಲಾಗಿದೆ.

ಈ ಅಂಶವನ್ನು ಸರಿಪಡಿಸಲೆಂದೇ, ೧೧೭ ನೇ ತಿದ್ದುಪಡಿ ವಿಧೇಯಕವನ್ನು ಜಾರಿಗೊಳಿಸಬೇಕಿದೆ. ಈ ವಿಧೇಯಕದಲ್ಲಿ, ಸಂವಿಧಾನದ ಪಟ್ಟಿಯಲ್ಲಿ ಸೇರಿರುವ ಜಾತಿಗಳನ್ನು ಹಿಂದುಳಿದ ಜಾತಿಗಳೆಂದು ಪರಿಗಣಿಸಲೇಬೇಕು ಮತ್ತು ಇದರಿಂದ ೩೩೫ ನೇ ಪರಿಚ್ಛೇದಕ್ಕೆ ಏನೂ ಹಾನಿಯಿಲ್ಲ ಎಂದು ಹೇಳಲಾಗಿದೆ. ಇದೇ ರೀತಿಯ ಕಾನೂನನ್ನು ಒಬಿಸಿಗಳಿಗೂ ಜಾರಿಮಾಡದಿದ್ದರೆ, ಮುಂದಿನ ದಿನಗಳಲ್ಲಿ ಒಬಿಸಿಗಳಿಗೆ ಯಾವುದೇ ಮೀಸಲಾತಿ ಸಿಗದೇ ಹೋಗಬಹುದು.

ಆದ ಕಾರಣ, ಒಬಿಸಿಗಳು ಪರಿಶಿಷ್ಟರ ೧೮% ಪ್ರಾತಿನಿಧ್ಯವನ್ನು ಬೆಂಬಲಿಸಬೇಕು; ಹಾಗೆಯೇ, ತಮಗೂ ತಮ್ಮ ಜನಸಂಖ್ಯೆಯಷ್ಟು ಪ್ರಾತಿನಿಧ್ಯ ಸಿಗಲಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು.

ಪರಿಶಿಷ್ಟರ ಜನಸಂಖ್ಯೆ ಖಂಡಿತವಾಗಲೂ ೧೮% ಗಿಂತ ಜಾಸ್ತಿಯಿದೆ. ಹಾಗಿದ್ದರೂ, ಪರಿಶಿಷ್ಟರು ೧೮% ಪ್ರಾತಿನಿಧ್ಯಕ್ಕಾಗಿ ಮಾತ್ರ ಹೋರಾಡುತ್ತಿದ್ದಾರೆ. ಇಷ್ಟು ಹಕ್ಕು ಅವರಿಗೆ ಸಂವಿಧಾನಬದ್ಧವಾಗಿಯೇ ಸಿಕ್ಕಿದೆ. ಆದರೆ. ಒಬಿಸಿಗಳಿಗೆ ತಮ್ಮ ಜನಸಂಖ್ಯೆಯಷ್ಟು ಹೋಗಲಿ.. ಏನೊಂದು ಪ್ರತಿನಿಧ್ಯವೂ ಸಿಕ್ಕಿಲ್ಲ. ಇದನ್ನು ಒಬಿಸಿಗಳು ಮನಗಂಡೇಯಿಲ್ಲ.

ಒಬಿಸಿಗಳ ಈ ಹೋರಾಟಕ್ಕೆ ಖಂಡಿತವಾಗಲೂ ಪರಿಶಿಷ್ಠರ ಬೆಂಬಲ ದೊರಕುತ್ತದೆ. ಒಂದು ವೇಳೆ ಒಬಿಸಿಗಳು ಪರಿಶಿಷ್ಟರ ೧೮% ಪ್ರಾತಿನಿಧ್ಯವನ್ನು ವಿರೋಧಿಸಿದರೆ, ಏನೂ ಸಾಧಿಸಿದಂತಾಗುವುದಿಲ್ಲ. ಕೊನೆಗೆ ಒಬಿಸಿ ಗಳಿಗೂ ಸೇರಿದಂತೆ ಯಾರಿಗೂ ಪ್ರಾತಿನಿಧ್ಯ ಸಿಗುವುದಿಲ್ಲ. ಆದ್ದರಿಂದ ಒಬಿಸಿ ಗಳು ೧೮% ಪ್ರಾತಿನಿಧ್ಯ ವಿರೋಧಿ ಹೋರಾಟವನ್ನು ಕೈಬಿಟ್ಟು, ತಮ್ಮ ಜನಸಂಖ್ಯಾ ಪ್ರಮಾಣದಷ್ಟು ಪ್ರಾತಿನಿಧ್ಯಕ್ಕಾಗಿ, ಪರಿಶಿಷ್ಟರೊಡನೆ ಕೈಜೋಡಿಸಿ ಐಕ್ಯ ಹೋರಾಟ ಕಟ್ಟಬೇಕಿದೆ.

ದೇಶದ ೮೫% ರಷ್ಟು ಬಹುಜನರ ಭವಿಷ್ಯ ೮೫% ರಷ್ಟು ಬಹುಜನರ ಒಗ್ಗಟ್ಟಿನಲ್ಲಿದೆ. ಈ ಒಗ್ಗಟ್ಟನ್ನು ಮುರಿದರೆ, ೮೫% ಜನರು ಒಟ್ಟಿಗೇ ಮುಳುಗುತ್ತಾರೆ. ಒಗ್ಗಟ್ಟಿದ್ದರೆ ಎಲ್ಲರೂ ಒಟ್ಟಿಗೇ ದಡಸೇರುತ್ತಾರೆ.

ಬಹುಜನರ ಐಕ್ಯತೆ ಚಿರಾಯುವಾಗಲಿ!

“ನಾವು ಇದುವರೆಗೆ 29 ಚುನಾವಣೆ ಗೆದ್ದಿದ್ದೇವೆ”

ಆಕ್ಟಿವಿಸಂ ಮತ್ತು ಚುನಾವಣಾ ರಾಜಕಾರಣ

-ಪ್ರಸಾದ್ ರಕ್ಷಿದಿ

ಚುನಾವಣೆಗಳಲ್ಲಿ ಆಕ್ಟಿವಿಸ್ಟರುಗಳ ಸೋಲಿನ ಬಗ್ಗೆ ಎಲ್ಲ ಪತ್ರಿಕೆಗಳಲ್ಲೂ ನಿರಾಶೆ ಹಾಗು ಮತದಾರರ ಸಿನಿಕತನದ ಬಗ್ಗೆ ಲೇಖನಗಳು ಹೇಳಿಕೆಗಳು ಬರುತ್ತಿವೆ. ‘ಚುನಾವಣಾ ರಾಜಕೀಯವೇ ಬೇರೆ’ ಎಂಬ ಮಾತನ್ನು ಉದಾಹರಿಸಿ, ಆ raxidiಧೋರಣೆಯೇ ತಪ್ಪು ಅವಕಾಶವಾದಿಗಳದ್ದು ಎಂಬ ಟೀಕೆಯೂ ನಡೆಯುತ್ತಿದೆ. ಇದೆಲ್ಲದರ ಹಿಂದೆ ಆಕ್ಟಿವಿಸ್ಟರು ಜನರಿಗಾಗಿ ಕೆಲಸ ಮಾಡುತ್ತಾರೆ. ಆದ್ದರಿಂದ ಜನ ಅರಿತು ಅವರಿಗೆ ಮತನೀಡಬೇಕೆಂಬ ಆಗ್ರಹವಿದೆ.

 
ಆದರೆ ಈ ರೀತಿ ಬರೆಯುವ ಹೆಚ್ಚಿನ ಬರಹಗಾರರರು ಅಕಡೆಮಿಕ್ ವಲಯದವರು. ಮತ್ತು ಇವರು ಹೆಚ್ಚೆಂದರೆ ಭಾಷಣದ ಮೂಲಕ ಮತಯಾಚನೆ ಮಾಡುವವವರು. ಅದಕ್ಕಿಂತ ಮುಂದೆಹೋಗಿ ಮತದಾರನ ನೇರ ಸಂಪರ್ಕಕ್ಕೆ ಬರುವುದೇ ಕಡಿಮೆ. ಬಂದರೂ ನಗರ ಪ್ರದೇಶಗಳಲ್ಲಿ ಬಂದಾರೇ ಹೊರತು ಹಳ್ಳಿಗಳತ್ತ ಅವರು ಮುಖಮಾಡಿದ್ದು ಇಲ್ಲ. ಹಾಗಾಗಿ ಇವರು ಒಂದು ರೀತಿಯ ದೂರ ವಿಶ್ಲೇಷಕರು. ಈಗ ಇರೋಮ್ ಶರ್ಮಿಲಾ ವಿಚಾರದಲ್ಲೂ ಇಂಥದ್ದೇ ಲೇಖನಗಳು ಹಲವು ಬಂದಿವೆ. (ಮಣಿಪುರ ಪರಿಸ್ಥಿತಿ ನನಗೆ ಗೊತ್ತಿಲ್ಲ ಆದರೆ ಪತ್ರಿಕೆ ನೋಡಿ ಬರೆಯುವವರಿಗಿಂತ ಅಲ್ಲಿನವರ ಅಭಿಪ್ರಾಯ ಮುಖ್ಯ)

 
ನಮ್ಮಲ್ಲಿ ಸಾಮಾನ್ಯವಾದ ನಿಲುವಿದೆ. ಅದು ಆಕ್ಟಿವಿಸಂ ಎಂದರೆ “ಸರ್ಕಾರದ ವಿರುದ್ಧ” ಎಂದು. ಇದು ಒಂದು ರೀತಿ ‘ಖಾಯಂ ವಿರೋಧ ಪಕ್ಷದಲ್ಲಿರು’ ಎಂದ ಹಾಗೆ. ಆದರೆ ಆಕ್ಟಿವಿಸಂ ಹಾಗೆಯೇ ಇರಬೇಕಾಗಿಲ್ಲ ಮತ್ತು ಇರಬಾರದು ಕೂಡಾ. ಈ ವಿಚಾರಕ್ಕೆ ಮುಂದೆ ಬರುತ್ತೇನೆ.
ನಾವೊಂದಷ್ಟು ಜನ (ಆಗ ಬೆರಳೆಣಿಕೆಯಷ್ಟು) ಗೆಳೆಯರು 1976-77 ಒಂದು ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕರ್ತರಾಗಿ ಕೆಲಸ ಪ್ರಾರಂಭಿಸಿದೆವು. ನಾವು ಕೆಲಸ ಆರಂಭಿಸಿದ್ದು ಜೆ.ಪಿ.ಯವರ ಸಂಪೂರ್ಣ ಕ್ರಾಂತಿಯ ಕರೆಯನ್ನು ನಂಬಿ. ಆಗ ನಮ್ಮಲ್ಲಿ ಓಟಿನ ಹಕ್ಕೂ ಬಂದಿರಲಿಲ್ಲ. ನಮ್ಮ ಗುಂಪು ನಮ್ಮ ಸುತ್ತಲಿನ ಗ್ರಾಮಗಳ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದವು. ಅದು ರೈತ-ಕಾರ್ಮಿಕ-ದಲಿತ ಹೋರಾಟಗಳು, ಇನ್ನಿತರ ಜಮೀನು- ಕುಟುಂಬ ವಿವಾದಗಳು, ಊರಜಗಳ ಹೊಡೆದಾಟಗಳು, ಗಣಪತಿ,ಚೌಡಿ ಉತ್ಸವ, ಉರುಸ್ ಎಲ್ಲದರಲ್ಲೂ ನಮ್ಮ ಬಳಗವರಿರುತ್ತಿದ್ದರು. ಹಾಗೇ ನಾಟಕ, ಕಲೆ. ಯಕ್ಷಗಾನ, ಕ್ರೀಡೆ. ಸಾಕ್ಷರತಾ ಆಂದೋಲನ, ಊರಿನ, ಶಾಲೆ ಆಸ್ಪತ್ರೆಗಾಗಿ ಪ್ರಯತ್ನಗಳು, ಕುಡಿಯುವ ನೀರಿಗಾಗಿ ಹೋರಾಟ, ವಸತಿ ಯೋಜನೆಗಳು, ಜನರ ದಿನ ನಿತ್ಯದ ಸಮಸ್ಯೆಗಳು, ಎಲ್ಲದರಲ್ಲೂ ನಾವಿದ್ದೆವು. ಆದರೆ ನಮ್ಮ ಹೋರಾಟ ಕೆಲವುಬಾರಿ ಸರ್ಕಾರದ ವಿರುದ್ಧವೂ ಕೆಲವು ಬಾರಿ ಸರ್ಕಾರದ್ದೇ ಯೋಜನೆಗಳ ಅನುಷ್ಟಾನಕ್ಕಾಗಿಯೂ ಇರುತ್ತಿತ್ತು. (ಉದಾ: ಅರಣ್ಯೀಕರಣದ ವಿಷಯಬಂದಾಗ ರೈತ ಚಳುವಳಿಯಲ್ಲಿದ್ದ ನಾವು ರೈತ ಸಂಘದ ನಿಲುವಿಗೆ ವಿರುದ್ಧವಾಗಿ ಅರಣ್ಯ ಇಲಾಖೆಗೆ ನಮ್ಮೂರಿನಲ್ಲಿ ನೂರಾರು ಎಕರೆ ಅರಣ್ಯೀಕರಣಕ್ಕೆ ಬೆಂಬಲವಾಗಿ ನಿಂತಿದ್ದೆವು, ನಮ್ಮ ಪಂಚಾಯತಿ ವ್ಯಾಪ್ತಿಯಲ್ಲೇ ಏಳುನೂರು ಎಕರೆಗೂ ಹೆಚ್ಚು ಈ ರೀತಿಯ ಅರಣ್ಯವಿದೆ)

 
ನಮ್ಮ ಬಳಗ 77ರಲ್ಲೇ ಚುನಾವಣಾ ರಾಜಕೀಯಕ್ಕೆ ಇಳಿದಿತ್ತು. ಇಂದಿರಾಗಾಂಧಿ ವಿರುಧ್ಧ. ಆದರೆ ಪ್ರಥಮ ಗೆಲುವನ್ನು ಕಂಡದ್ದು ಸುಮಾರು ಆರು ವರ್ಷಗಳನಂತರ ಪಂಚಾಯತ್ ಚುನಾವಣೆಯಲ್ಲಿ. ಅಲ್ಲಿಂದೀಚೆ ಇಂದಿನವರೆಗೆ ನಾವು ಪಂಚಾಯತಿಯಿಂದ ಪಾರ್ಲಿಮೆಂಟಿನವರೆಗೆ ಅಂದರೆ ಎಲ್ಲ ಮಂಡಲ, ತಾಲ್ಲೂಕು, ಜಿಲ್ಲೆ, ಎ.ಪಿ.ಎಂ.ಸಿಗಳೂ ಸೇರಿ 37 ಚುನಾವಣೆಗಳನ್ನು ಎದುರಿಸಿದ್ದೇವೆ. ಇಂದಿನವರೆಗೆ 29 ಚುನಾವಣೆಗಳನ್ನು ಗೆದ್ದಿದ್ದೇವೆ! ಅಂದರೆ ಸಣ್ಣ ಚುನಾವಣೆಗಳಲ್ಲಿ ನಮ್ಮ ಅಭ್ಯರ್ಥಿಗಳೇ ನೇರವಾಗಿ ಗೆದ್ದಿದ್ದಾರೆ. ವಿಧಾನ ಸಭೆ, ಅಥವಾ ಲೋಕ ಸಭಾ ಚುನಾವಣೆಯಲ್ಲಿ ಸೋತಾಗಲೂ ನಮ್ಮೂರಿನಲ್ಲಿ ಮುನ್ನಡೆ ಉಳಿಸಿಕೊಂಡಿದ್ದೇವೆ. ಆದರೆ ಇದರಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ, ನಮ್ಮ ಬಳಗದ ಸದಸ್ಯರಲ್ಲಿ ಆಕ್ಟಿವಿಸಂನ ಮುಂಚೂಣಿಯಲ್ಲಿದ್ದವರು ಯಾರೂ ಯಾವುದೇ ಚುನಾವಣೆ ಎದುರಿಸಲೇ ಇಲ್ಲ. ನಾವು ನಮ್ಮ ಗೆಳೆಯರಲ್ಲೇ ಆದಷ್ಟು ಉತ್ತಮರನ್ನು ಅಭ್ಯರ್ಥಿಯನ್ನಾಗಿಸುತ್ತಿದ್ದೆವು. (ಅವರಲ್ಲೂ ಕೆಲವರು ಗೆದ್ದನಂತರ ಏನೇನೋ ಮಾಡಿದ ಉದಾಹರಣೆ ಇದೆ!) ಇದರಿಂದ ಮತಯಾಚನೆಯೂ ಸುಲಭವಾಗುತ್ತಿತ್ತು. “ಇವರನ್ನು ಗೆಲ್ಲಿಸಿ ಕೊಡಿ ಇವರಲ್ಲಿ ನಾವು ಕೆಲಸಮಾಡಿಸಿಕೊಡುತ್ತೇವೆ ಒಂದುವೇಳೆ ಇವರು ಮಾಡಲೇ ಇಲ್ಲ ಅಂದ್ಕೊಳಿ ನಾವು ನಿಮ್ ಜೊತೆ ಇದ್ದೇ ಇರ್ತೀವಲ್ಲ” ಎನ್ನುತ್ತಿದ್ದೆವು. ಜನ ನಮ್ಮನ್ನು ಬಿಟ್ಟುಕೊಡಲಿಲ್ಲ. ನಮ್ಮ ಗ್ರಾಮಪಂಚಾಯತಿ ನಿರಂತರ ಇಪ್ಪತೈದು ವರ್ಷಗಳ ಕಾಲ ನಮ್ಮ ಬಳಗದ ಕೈಯಲ್ಲಿತ್ತು. ಈಗ ಎರಡು ಚುನಾವಣೆಗಳಲ್ಲಿ ನಾವು (ಹಿರಿಯರು)ನೇರವಾಗಿ ಸ್ಥಳೀಯ ಚುನಾವಣೆಯಲ್ಲಿ ಭಾಗವಹಿಸುವುದನ್ನು ನಿಲ್ಲಿಸಿದ್ದೇವೆ.

 
ಇಷ್ಟು ವರ್ಷಗಳಲ್ಲಿ ನಾವು ಗಮನಿಸಿದ ಸಂಗತಿಯೆಂದರೆ, ಚುನಾವಣೆಗೆ ನಿಲ್ಲುವ ಇತರರು ಮಾಡುವ ಭ್ರಷ್ಟಾಚಾರವನ್ನು (ತೀರಾ ತೊಂದರೆ ಮಾಡುವಂತವರನ್ನು ಬಿಟ್ಟು) ಮನ್ನಿಸುತ್ತಾರೆ ಆದರೆ ಒಬ್ಬ ಆಕ್ಟಿವಿಸ್ಟ್ ಭ್ರಷ್ಟನಾಗುವುದನ್ನು ಒಪ್ಪುವುದಿಲ್ಲ. ಇನ್ನೊಂದು ವಿಷಯವೆಂದರೆ ಸ್ಥಳೀಯ ಚುನಾವಣೆಗಳಲ್ಲಿ ಒಂದು ಸ್ಥಾನಕ್ಕೆ ನಿಂತಿರುವ ಅಭ್ಯರ್ಥಿಯ ಜಾತಿಪ್ರಶ್ನೆ ಬಂದಾಗ, ನಿಂತಿರುವ ಎಲ್ಲರೂ ಒಳ್ಳೆಯವರೇ ಅದರೆ, ಜನ ಹೆಚ್ಚಾಗಿ ಅವರವರ ಜಾತಿಯವನಿಗೆ ಮತನೀಡುತ್ತಾರೆ. ಒಂದು ವೇಳೆ ಎಲ್ಲರೂ ಕೆಟ್ಟವರಾದರೂ ಹಾಗೇ ಮಾಡುತ್ತಾರೆ. ಆದರೆ ಒಬ್ಬ ಯೋಗ್ಯನಿದ್ದು ಉಳಿದವರು ಅಯೋಗ್ಯರಾದರೆ ಜಾತಿಯನ್ನು ಮೀರಿಯೇ ಯೋಗ್ಯನಿಗೆ ಮತದಾನ ಮಾಡುತ್ತಾರೆ.

ಹಾಗೆಯೇ ಹಣ ಹಂಚುವುದರಿಂದ ಆಗುವ ಪರಿಣಾಮವೂ ಅಷ್ಟೆ ಹಣ ಪಡೆದವರಲ್ಲಿ ಹೆಚ್ಚಿನವರು ಅವರಿಗೆ ಬೇಕಾದವರಿಗೇ ಮತ ನೀಡುತ್ತಾರೆ. ಕೆಲವೇ ಕೆಲವರು ಮಾತ್ರ ಹಣಕ್ಕೆ ಮತ ನೀಡುತ್ತಾರೆ. ಆದೆ ನೆಕ್ ಟು ನೆಕ್ ಅನ್ನುವ ಸ್ಪರ್ಧೆಯಿದ್ದಲ್ಲಿ ಇದು ಫಲಿತಾಂಶವನ್ನು ಉಲ್ಟಾ ಮಾಡಬಲ್ಲುದು. ಸೋಲುವ ಭಯವೇ ಅಭ್ಯರ್ಥಿಯನ್ನು ಹಣ ಹಂಚುವ ಯೋಚನೆಗೆ ತಳ್ಳುತ್ತದೆ. ಕಳೆದ ಪಂಚಾಯತ ಚುನಾವಣೆಯಲ್ಲಿ ನಮ್ಮ ಬಳಗದ ಸದಸ್ಯರೊಬ್ಬರು ನಾನು ಯಾವಕಾರಣಕ್ಕೂ ಹಣ ಹಂಚುವುದಿಲ್ಲ ಎಂದು ಹೇಳಿಯೇ ಕೆಲವರು ಯುವಕರನ್ನು ಕರೆದುಕೊಂಡು ಮನೆಮನೆಗೆ ತಿರುಗಿ ಮತಯಾಚನೆ ಮಾಡಿದರು. ಅವರು ಗೆದ್ದರು. ಅವರುಗಳಿಸಿದ ಒಟ್ಟು ಮತಗಳು ಅವರೆದುರಿಗಿದ್ದ ಉಳಿದ ಎಲ್ಲಾ ಅಭ್ಯರ್ಥಿಗಳ ಮತಗಳ ಮೊತ್ತವನ್ನು ಮೀರಿತ್ತು! ಆದರೆ ಇತ್ತೀಚಿನ ಪಂಚಾಯತ ಚುನಾವಣೆಗಳಲ್ಲಿ ಒಂದೇ ಕ್ಷೇತ್ರದಲ್ಲಿ ಬೇರೆಬೇರೆ ಮೀಸಲಾತಿಯ ಒಂದಕ್ಕಿಂತ ಹೆಚ್ಚು ಸ್ಥಾನಗಳಿದ್ದಾಗ ಜನ ಎಲ್ಲಾ ಮತಗಳನ್ನು ಅವರವರ ಜಾತಿಯವರಿಗೇ ಹಾಕುತ್ತಾರೆ. ಅಂತಹ ಅವಕಾಶ ಇಲ್ಲದಲ್ಲಿ ಮಾತ್ರ ಇನ್ನಿತರ ಆದ್ಯತೆಯ ಮೇಲೆ ಚಲಾಯಿಸ ತೊಡಗಿದ್ದಾರೆ.

ಆದರೆ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಇದು ಅನ್ವಯಿಸುವುದಿಲ್ಲ. ಆದರೆ ಚುನಾವಣೆಗಳಲ್ಲಿ ಯಾವುದೇ ಒಂದು ಅಲೆ ಇದ್ದಾಗ ಸ್ಥಳೀಯ ಆಕ್ಟಿವಿಸಂ ಕೆಲಸ ಮಾಡುವುದಿಲ್ಲ. ಜನ ಅಲೆಯಲ್ಲಿ ಕೊಚ್ಚಿಹೋಗುವುದೇ ಹೆಚ್ಚು. ಹಣವಿದ್ದರೆ ಏನು ಬೇಕಾದರೂ ಮಾಡಬಹುದು, ಏನ್ನನ್ನಾದರೂ ಗಳಿಸಬಹುದು ಎನ್ನುವ ಈ ಸಂದರ್ಭದಲ್ಲಿಯೂ, ಸ್ಥಳೀಯ ಚುನಾವಣೆಗಳನ್ನುಯಾವುದೇ ಹಣ ಆಮಿಷಗಳ ನೆರವಿಲ್ಲದೆ ಗೆಲ್ಲಲು, ನಿಜವಾದ ಆಕ್ಟಿವಿಸ್ಟ್ ಗುಂಪುಗಳಿಗೆ, ತುಂಬ ಅವಕಾಶ ಇದೆ. ಅಲ್ಲದೆ ಅವರು ಅದಕ್ಕೆ ಬೇಕಾದ ಸ್ಥಳೀಯ ರಾಜಕಾರಣದ ಚಾಕಚಕ್ಯತೆಯನ್ನು ಕೂಡಾ ಗಳಿಸಿಕೊಂಡಿರುತ್ತಾರೆ.
ಯಾವುದಾದರೂ ಭಾವನಾತ್ಮಕ ವಿಷಯಗಳಿದ್ದರೆ, ಅದರ ಮೇಲೆ ಸವಾರಿ ಮಾಡುವುದು, ಇನ್ನೂ ಹೆಚ್ಚು ತತ್ಕಾಲದ ಲಾಭವನ್ನು ತಂದುಕೊಡುತ್ತದೆ ಎನ್ನುವುದನ್ನು ಇಂದು ಎಲ್ಲ ಪಕ್ಷಗಳೂ ಕಂಡುಕೊಂಡಿವೆ. ಹಾಗಾದಾಗ ಚುನಾವಣೆಗಳಲ್ಲಿ ಬೇರೆಲ್ಲ ನಿಜ ಸಮಸ್ಯೆಗಳು ಪಕ್ಕಕ್ಕೆ ಸರಿದು ಹೋಗುತ್ತವೆ. “ಜಲ್ಲಿ ಕಟ್ಟು” ವಿಚಾರದಲ್ಲಿ ತಮಿಳಿನಾಡಿನಲ್ಲಿ ಎಲ್ಲರೂ ಪಕ್ಷಬೇಧ ಮರೆತು ಹೋರಾಡಲು ಕಾರಣ “ಜಲ್ಲಿಕಟ್ಟು” ಬೇಕು ಎನ್ನುವುದಕ್ಕಿಂತ, ಹೆಚ್ಚಾಗಿ ನಾವು ದೂರ ನಿಂತರೆ ವಿರೋಧಿಗಳು ಅದರ ರಾಜಕೀಯ ಲಾಭ ಪಡೆಯುತ್ತಾರೆ ಎನ್ನುವುದೇ ಆಗಿದೆ.

ಇನ್ನೂ ಒಂದು ಕಾರಣವಿದೆ ನಮ್ಮ ಆಕ್ಟಿವಿಸಂ ಕೆಲವೇ ಅಥವಾ ಒಂದರೆಡು ವಿಷಯಗಳಿಗೆ ಸೀಮಿತವಾಗಿದ್ದರೆ ಅದು ಚುನಾವಣೆಯಲ್ಲಿ ನಮಗೆ ಯಾವುದೇ ಪ್ರತಿಫಲವನ್ನು ನೀಡಲಾರದು. ಉದಾ: ನಮ್ಮ ತಾಲ್ಲೂಕಿನಲ್ಲಿ ಪ್ರಮುಖ ವಿಷಯವಾದ ಪರಿಸರನಾಶದ ಬಗ್ಗೆ ನಿರಂತರವಾಗಿ ಹೋರಾಡುವ ಯಾವ ವ್ಯಕ್ತಿಯೂ ಇಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಯಾಕೆಂದರೆ ಈ ಸಮಸ್ಯೆ ನಿಜವಾದದ್ದೇ ಆದರೂ ಜನರ ಬದುಕಿನಲ್ಲಿ ಬೇರೆ ಬೇರೆ ರೀತಿ ತಳುಕುಹಾಕಿಕೊಂಡಿದೆ. ಆದ್ದರಿಂದ ಒಬ್ಬ ಪರಿಸರ ಹೋರಾಟಗಾರ ಇಲ್ಲಿ ಏಕಕಾಲಕ್ಕೆ ಕೆಲವರ ಮೆಚ್ಚಿನ ವ್ಯಕ್ತಿಯೂ. ಇನ್ನುಕೆಲವರ ವಿರೋಧಿಯೂ ಹಲವರಿಗೆ ಅನುಪಯುಕ್ತನೂ, ಮತ್ತೂ ಕೆಲವರಿಗೆ ಅನುಮಾನಾಸ್ಪದನೂ ಆಗಿರುತ್ತಾನೆ. ಇದು ಸುಮಾimagesರಾಗಿ ಭ್ರಷ್ಟಾಚಾರ ವಿರೋಧಿ ಹೋರಾಟಗಾರರಿಗೂ ಅನ್ವಯಿಸುತ್ತದೆ. ಹಿಂದೆ ರೈತಸಂಘ ಚುನಾವಣೆಗಳಲ್ಲಿ ಹೆಚ್ಚು ಯಶಸ್ಸು ಗಳಿಸಲಾಗದಿರಲು ಇದೂ ಒಂದು ಕಾರಣ.

ಹಾಗಾಗಿ ಅಕ್ಟಿವಿಸಂ ನಮೂಲಕ ಚುನಾವಣೆಯನ್ನೆದುರಿಸುವ ಉದ್ದೇಶವಿದ್ದರೆ, ಜನರ ನಿತ್ಯದ ಹಲವು ಸಮಸ್ಯೆಗಳನ್ನೊಳಗೊಂಡ ಬಹುಮುಖಿ ಕಾರ್ಯಕ್ರಮಗಳ, ಕಾರ್ಯಕರ್ತರ ಪಡೆ ಅಗತ್ಯವಾಗುತ್ತದೆ. ರಾಜಕೀಯ ಪಕ್ಷಗಳಿಗೆ ಈ ಸಮಸ್ಯೆ ಇಲ್ಲ. ಮತದಾರ ಯಾವಾಗಲೂ ಯಾವುದಾದರೊಂದು ಪಕ್ಷವನ್ನು ಆರಿಸುವ ಅನಿವಾರ್ಯ ಪರಿಸ್ಥಿತಿಯಲ್ಲಿ ಇರುತ್ತಾನೆ. ಆದರೆ ಆಕ್ಟಿವಿಸಂ ಮೂಲಕ ರಾಜಕೀಯ ಅಧಿಕಾರ ಪಡೆಯಬಯಸುವವರು ಎಲ್ಲವನ್ನೂ ಶೂನ್ಯದಿಂದ ಪ್ರಾರಂಬಿಸಬೇಕಾದ್ದರಿಂದ, ಅದಕ್ಕೆ ಬೇಕಾಗುವ ದೊಡ್ಡ ಪಡೆಯನ್ನು ಕಟ್ಟುವುದು ಕಷ್ಟದ ಕೆಲಸ.
ನಮ್ಮ ತಾಲ್ಲೂಕಿನಲ್ಲಿ ಒಬ್ಬರು ಹಿರಿಯ ಗಾಂಧಿವಾದಿಯಿದ್ದರು. ಅವರು ಕಂದಾಯ ಇಲಾಖೆಯಲ್ಲಿ ದುಡಿದು ನಿವೃತ್ತರಾದವರು. ನಂತರ ಸಕಲೇಶಪುರ ಮತ್ತು ಆಲೂರು ವಿಧಾನಸಭಾಕ್ಷೇತ್ರದ ಎರಡೂ ತಾಲ್ಲೂಕುಗಳಲ್ಲಿ ತಾಲ್ಲೂಕು ಕಛೇರಿಯ ಮುಂದೆ ನಿಂತು ಅಲ್ಲಿಗೆ ಬರುವ ಬಡವರ, ಮತ್ತು ರೈತರ ಕೆಲಸಗಳನ್ನು ಲಂಚವಿಲ್ಲದೆ ಮಾಡಿಸಿಕೊಡುತ್ತಿದ್ದರು. ಮಧ್ಯಾಹ್ನ ಯಾರಾದರೊಬ್ಬರು ಅವರಿಗೆ ಊಟ ಹಾಕಿಸುತ್ತಿದ್ದರು, ಸಂಜೆಯ ವೇಳೆಗೆ ಇನ್ನೊಬ್ಬರಿಂದ ಬಸ್ ಚಾರ್ಜು ಮಾತ್ರ ಕೇಳಿಪಡೆದು ಊರಿಗೆ ಮರಳುವುದು ಅವರ ಪದ್ಧತಿ. ಇದು ಅನೇಕ ವರ್ಷಗಳ ಕಾಲ ನಡೆಯಿತು. ತಾಲ್ಲೂಕು ಕಚೇರಿಯ ದಲ್ಲಾಳಿಗಳಿಂದ ಒಂದೆರಡು ಬಾರಿ ಅವರ ಮೇಲೆ ಹಲ್ಲೆಯೂ ನಡೆಯಿತು.

ಅವರು ಅನೇಕ ಬಾರಿ ವಿಧಾನಸಭೆಗೆ ಸ್ಪರ್ಧಿಸಿದರು. ಪ್ರತಿ ಚುನಾವಣೆಯಲ್ಲಿ, ಮತದಾರನ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಕರಪತ್ರವೊಂದು ಮುದ್ರಿಸಿಕೊಂಡು ಮನೆಮನೆಗೆ ಹೋಗಿ ಮತಯಾಚನೆ ಮಾಡುತ್ತಿದ್ದರು. ಮೊದಲಬಾರಿ ಅವರು ಸ್ಪರ್ಧಿಸಿದ್ದಾಗ ಒಂದರೆಡು ಸಾವಿರ ಮತ ಗಳಿಸಿದ್ದರು. ಅವರ ಕೊನೆಯ ಚುನಾವಣೆಯಲ್ಲಿ ಅವರು ಗಳಿಸಿದ ಮತ ನೂರಕ್ಕೂ ಕಡಿಮೆ. ಹಾಗೆಂದು ಈಗಲೂ ಅವರನ್ನು ಕೊಂಡಾಡುವ, ಅಂತವರು ಗೆಲ್ಲಬೇಕೆಂದು ಹೇಳುವವವರ ಸಂಖ್ಯೆ ಬಹಳ ದೊಡ್ಡದೇ. ಆದರೆ ಚುನಾವಣೆ ಬಂದಾಗ ತಾವು ಅವರಿಗೆ ನೀಡುವ ಮತ ಮತ್ತೊಬ್ಬನ ಗೆಲುವಿಗೆ ಕಾರಣವಾದೀತೆಂಬ, ಜನರ ಲೆಕ್ಕಾಚಾರವೇ ಅಂತವರಿಗೆ ಮುಳುವಾಗುತ್ತದೆ.

 

ಇಂದು ನೂರಾರು ಸಂಘ ಸಂಸ್ಥೆಗಳಿವೆ. ಹೋರಾಟದ ಗುಂಪುಗಳಿವೆ. ನಾನಾರೀತಿಯ ಹೋರಾಟಗಳೂ ಇವೆ. ನಾನಾ ತರದ ಜನ ಅದರಲ್ಲಿ ತೊಡಗಿಕೊಂಡಿರುತ್ತಾರೆ. ಎಲ್ಲ ಹೋರಾಟಗಳೂ ಒಂದೇ ಬಗೆಯವಾಗಿರುವುದಿಲ್ಲ. ಒಂದು ಹೋರಾಟಕ್ಕೆ ಸ್ಥಳೀಯವಾಗಿ ಒಂದು ಅಭಿಪ್ರಾಯವಿದ್ದರೆ ಹೊರಗೆ ಇನ್ನೊಂದು ಅಭಿಪ್ರಾಯವಿರುತ್ತದೆ. ನಿಜವಾದ ಹೋರಾಟಗಾರರು, ಸ್ವಹಿತಾಸಕ್ತಿಯಿಂದ ಬಂದವರು, ರಾಜಕೀಯ ಲಾಭಕ್ಕಾಗಿ ಬಂದವರು. ದೂರದಲ್ಲಿ ಕುಳಿತು ಹೋರಾಟ ರೂಪಿಸುವವರು, ಇತ್ಯಾದಿಗಳೂ ಇರುತ್ತಾರೆ.

ರೈತರ ಪರ ಹೋರಾಟದಲ್ಲಿ ಸಂತ್ರಸ್ತನಾಗಿ ಭಾಗಿಯಾಗಿರುವಾತ ಹಳ್ಳಿಯಲ್ಲಿ ಮೀಟರ್ ಬಡ್ಡಿ ಸಂಗ್ರಾಹಕನೂ ಆಗಿರುತ್ತಾನೆ! ಇದು ಪತ್ರಿಕೆಗಳಲ್ಲಿ ಬರೆಯುವ ಸೆಮಿನಾರುಗಳಲ್ಲಿ ಮಾತನಾಡುವವರಿಗೆ ತಿಳಿದೇ ಇರುವುದಿಲ್ಲ. ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲಿ ಜನರಿಗೆ ಈ ಹೋರಾಟಗಾರರಿಗಿಂತ ಕಷ್ಟಕ್ಕೆ ಆಗುವ ಅಥವಾ ಕಾಸು ಕೊಡುವ ರಾಜಕಾರಣಿಯೇ ಯೋಗ್ಯನಾಗಿ ಕಾಣುತ್ತಾನೆ. ಸಿದ್ಧಾಂತಗಳು ತಲೆಕೆಳಗಾಗುತ್ತವೆ. ಹೋರಾಟಗಾರರು ಗೆಲ್ಲಲಿಲ್ಲ ಎಂದು ವಿಷಾದಿಸುವಾಗ ಅವರ ಗೆಲುವಿಗೆ ಸಾಧ್ಯತೆಯೇ ಇರಲಿಲ್ಲ ಎಂಬುದನ್ನು ಮರೆಯುತ್ತಾರೆ. ಇರೋಮ್ ಶರ್ಮಿಳಾರನ್ನು ಗೆಲ್ಲಿಸಲು ಬೇಕಾದ ಕಾರ್ಯಕ್ರಮವಾಗಲೀ.. ಕಾರ್ಯಪಡೆಯಾಗಲೀ ಇತ್ತೇ?

ಅಚ್ಚೇದಿನ್: ಎಚ್ಚರ, ನಿಮ್ಮ ಖಾತೆಗಳೇ ಕ್ಯಾಶಲೆಸ್!

ಅಚ್ಚೇದಿನಗಳ ಕನಸು ಕಂಡು ನೋಟು ರದ್ದತಿ ಬೆಂಬಲಿಸಿದವರಲ್ಲಿ ವಿಷಾದದ ಮೌನ

– ಪ್ರದೀಪ್ ಮಾಲ್ಗುಡಿ

ಬ್ಯಾಂಕ್ಗಳಲ್ಲಿನ ಹಣಕಾಸು ವಹಿವಾಟು ಇದ್ದಕ್ಕಿದ್ದಂತೆ ದೊಡ್ಡ ಸುದ್ದಿಯಾಗಿದೆ. ನಮ್ಮ ದುಡ್ಡನ್ನು ಖಾತೆಗೆ ಜಮಾ ಮಾಡಲು, ಹಣ ಹಿಂತೆಗೆದುಕೊಳ್ಳಲು ಕೂಡ ದುಬಾರಿ ಮೊತ್ತವನ್ನು ಗ್ರಾಹಕರು ಪಾವತಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇನ್ನು ಕನಿಷ್ಠ ಮೊತ್ತವನ್ನು ಖಾತೆಯಲ್ಲಿ ಇಡಲಾಗದ ಗ್ರಾಹಕರ ಮೇಲೆ ಕೂಡ ಎಸ್ಬಿಐ ಕೆಂಗಣ್ಣು ಬೀರಿದೆ.

 

patna-atmಹಣಕಾಸಿನ ವಹಿವಾಟಿಗೆ ದೊಡ್ಡ ಮೊತ್ತದ ಶುಲ್ಕವನ್ನು ವಿಧಿಸೋಕೆ ಬ್ಯಾಂಕ್ಗಳು ಮುಂದಾಗಿವೆ. ಇದಕ್ಕೆ ಮುನ್ನುಡಿ ಬರೆದದ್ದು ಎಚ್ಡಿಎಫ್ಸಿ. ಅನಂತರ ಎಸ್ಬಿಐ ಕೂಡ ಅನೇಕ ಹಂತಗಳಲ್ಲಿ ಶುಲ್ಕ ವಿಧಿಸೋಕೆ ಮುಂದಾಗಿದೆ. ಕೆಲವೇ ದಿನಗಳಲ್ಲಿ ಇದೇ ದಾರಿಯನ್ನು ದೇಶದ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ಗಳು ಕೂಡ ಹಿಡಿಯಬಹುದು.
ಎಸ್ಬಿಐ ಇತ್ತೀಚೆಗೆ ಮಾಡಿರುವ ಹೊಸ ನಿಯಮಗಳು ಗ್ರಾಹಕರು ಇನ್ನು ಮುಂದೆ ಬ್ಯಾಂಕ್ ಸುತ್ತ ಕೂಡ ಸುಳಿಯದೇ ಇರುವಂತೆ ಎಚ್ಚರಿಕೆ ನೀಡಿವೆ. ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇರಲೇಬೇಕು, ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ರೆ ಭಾರಿ ದಂಡ ವಿಧಿಸುವುದು, ಉಳಿತಾಯ ಖಾತೆಯಲ್ಲಿ ದುಡ್ಡಿಲ್ಲದಿದ್ರೂ ಭಾರಿ ದಂಡ, ಪಿನ್ ನಂಬರ್ ಚೇಂಚ್, ಬ್ಯಾಲೆನ್ಸ್ ಚೆಕ್ ಮಾಡಿದ್ರೂ ಶುಲ್ಕ ತೆರಬೇಕು. ಮೆಟ್ರೋ ಸಿಟಿಯ ಗ್ರಾಹಕರ ಖಾತೆಯಲ್ಲಿ 5000 ರೂಪಾಯಿ, ನಗರ ಪ್ರದೇಶದ ಗ್ರಾಹಕರ ಖಾತೆಯಲ್ಲಿ 3000 ರೂಪಾಯಿ, ಉಪನಗರ ಪ್ರದೇಶದ ಗ್ರಾಹಕರ ಖಾತೆಯಲ್ಲಿ 2000 ರೂಪಾಯಿ, ಗ್ರಾಮೀಣ ಪ್ರದೇಶದ ಗ್ರಾಹಕರ ಖಾತೆಯಲ್ಲಿ 1000 ರೂಪಾಯಿ ಇರಲೇಬೇಕು. ಇಲ್ಲದಿದ್ದಲ್ಲಿ ದಂಡ ಕಟ್ಟಿ ಅಂತ ಎಸ್ಬಿಐ ಹೇಳಿದೆ. ಏಪ್ರಿಲ್ 1ರಿಂದಲೇ ಎಸ್ಬಿಐನಿಂದ ಈ ಹೊಸ ನಿಮಯ ಜಾರಿಯಾಗುತ್ತೆ.

 
ಗ್ರಾಹಕರ ಖಾತೆಗಳನ್ನೇ ಕ್ಯಾಶ್ಲೆಸ್ ಮಾಡೋ ಇನ್ನೊಂದು ನಿಯಮವನ್ನು ಕೂಡ ಎಸ್ಬಿಐ ರೂಪಿಸಿದೆ. ಅದರ ಪ್ರಕಾರ, ಮೆಟ್ರೋ ಸಿಟಿ ಗ್ರಾಹಕರ ಖಾತೆಯಲ್ಲಿ ಶೇ.50ಕ್ಕಿಂತ ಕಡಿಮೆ ಇದ್ರೆ 50 ರೂ., ಶೇ. 50ರಿಂದ 70ರಷ್ಟು ಕಡಿಮೆಯಾದ್ರೆ 75 ರೂ., ಶೇ. 75ಕ್ಕಿಂತ ಕಡಿಮೆಯಾದ್ರೆ 100 ರೂ. ದಂಡ ವಿಧಿಸಲಾಗುತ್ತೆ. ಇನ್ನು ಗ್ರಾಮೀಣ ಗ್ರಾಹಕರ ಖಾತೆಯಲ್ಲಿ ಶೇ. 50ಕ್ಕಿಂತ ಕಡಿಮೆಯಾದ್ರೆ 20 ರೂಪಾಯಿ, ಶೇ. 50ರಿಂದ 75ರಷ್ಟು ಕಡಿಮೆಯಾದ್ರೆ 30 ರೂ., ಶೇ. 75ರ ಮೇಲೆ ಕಡಿಮೆಯಾದ್ರೆ 50 ರೂ. ದಂಡ ಕಟ್ಟಬೇಕಾಗುತ್ತದೆ. ಇದಲ್ಲದೇ ದಂಡದ ಜೊತೆಗೆ ಸೇವಾ ತೆರಿಗೆ ಕೂಡ ಕಟ್ಟಬೇಕಾಗುತ್ತದೆ.
ಮೊದಲು ಹಣಕಾಸು ವಹಿವಾಟಿನ ಮೇಲೆ ಶೇ. 0.50ರಷ್ಟು ದರ ವಿಧಿಸೋದಾಗಿ ಹೇಳಲಾಗಿತ್ತು. ಕಡೆಗೆ ಪ್ರತಿ ತಿಂಗಳಲ್ಲಿ 4 ವಹಿವಾಟಿನ ನಂತರ ಪ್ರತಿ ವಹಿವಾಟಿಗೆ 150 ರೂ. ಶುಲ್ಕ ಪಾವತಿಸಬೇಕು ಎಂದು ಎಚ್ಡಿಎಫ್ಸಿ ಹೇಳಿದೆ. ಐಸಿಐಸಿಐ ಕೂಡ ಇದೇ ರೀತಿಯಲ್ಲಿ ಶೇ. 0.58 ಶುಲ್ಕವನ್ನು ವಿಧಿಸ್ತಿದೆ. ಕೆಲವು ವೇಳೆ ವಹಿವಾಟಿಗೆ ಉಚಿತ ಆಫರ್ ಕೂಡ ನೀಡುತ್ತಿದೆ.

 

demonetisationಇನ್ನು ಕೇಂದ್ರ ಸರ್ಕಾರದ ಕ್ಯಾಶ್ಲೆಸ್ ಎಕಾನಮಿ ಕರೆಗೆ ಓಗೊಟ್ಟಿರೋದಾಗಿ ಹೇಳಿದ್ದ ಕೆಲವು ಬ್ಯಾಂಕ್ಗಳು ಉಚಿತ ವಹಿವಾಟು ನೀಡೋದಾಗಿ ಘೋಷಿಸಿದ್ದವು. ಆದರೆ, ಎಚ್ಡಿಎಫ್ಸಿ, ಎಸ್ಬಿಐ ಬ್ಯಾಂಕ್ಗಳು ಮಾತ್ರ ಕ್ಯಾಶ್ಲೆಸ್ ಕರೆಯನ್ನು ಬಡ, ಕೂಲಿ, ಕಾರ್ಮಿಕ ವರ್ಗದವರ ಖಾತೆಯನ್ನೇ ಕ್ಯಾಶ್ಲೆಸ್ ಮಾಡೋ ಹುನ್ನಾರ ನಡೆಸಿವೆ.

 
ಎಚ್ಡಿಎಫ್ಸಿ ಪ್ರತಿ ವಹಿವಾಟಿಗೆ 150 ಶುಲ್ಕ ವಿಧಿಸುತ್ತೆ. ಕೆಲವು ಬ್ಯಾಂಕ್ಗಳು 50, ಇನ್ನು ಕೆಲವು 1000ಕ್ಕೆ 5 ರೂ. ಶುಲ್ಕ ವಸೂಲಿ ಮಾಡ್ತಿವೆ. ಒಂದೊಂದು ಬ್ಯಾಂಕ್ಗಳು ಒಂದೇ ವಹಿವಾಟಿಗೆ ತಮ್ಮ ಮನಸಿಗೆ ತೋರಿದಷ್ಟು ಶುಲ್ಕವನ್ನು ವಿಧಿಸೋದು ಯಾವ ಸೀಮೆಯ ನ್ಯಾಯ? ಹೀಗೆ ಮನಸೋ ಇಚ್ಚೆ ಗ್ರಾಹರಕರನ್ನು ಬ್ಯಾಂಕ್ಗಳು ಲೂಟಿ ಮಾಡ್ತಿವೆ. ಆದರೆ, ಆರ್ಬಿಐ ಮಾತ್ರ ಏನೊಂದನ್ನೂ ನೋಡದೆ, ಕೇಳದೆ ಸುಮ್ಮನೆ ಕುಳಿತಿದೆ.

 
ಆಕ್ಸಿಸ್ ಬ್ಯಾಂಕ್ ಬೇರೆ ಶಾಖೆಯ ಖಾತೆಗಳ ವಹಿವಾಟಿಗೆ ಶುಲ್ಕ ವಿಧಿಸುತ್ತೆ. ದೇಶದಲ್ಲಿ ಡಿಜಿಟಲ್ ಕ್ರಾಂತಿಗೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ. ಆದರೆ, ಬ್ಯಾಂಕ್ಗಳು ಮಾತ್ರ ಡಿಜಿಟಲ್ ನೆಟ್ವರ್ಕ್ ಇದ್ದರೂ, ಕಳ್ಳದಾರಿಯಲ್ಲಿ ಗ್ರಾಹಕರಿಂದ ಹಣ ಸುಲಿಯುತ್ತಿವೆ.

 
ಇವೆಲ್ಲಕ್ಕಿಂತ ಇನ್ನೊಂದು ಪ್ರಮುಖ ಸಂಗತಿ ಎಂದರೆ, ಪಾರದರ್ಶಕ ವಹಿವಾಟಿಗಾಗಿ ಎಲ್ಲೆಡೆ ಬಿಲ್ ನೀಡುವುದನ್ನು ಕಡ್ಡಾಯಗೊಳಿಸಿ ಕಾನೂನನ್ನೂ ರೂಪಿಸಲಾಗಿದೆ. ಆದರೆ, ದೇಶದ ಹಣಕಾಸಿನ ವಹಿವಾಟು ನಡೆಸುವ ಬ್ಯಾಂಕ್ಗಳೇ ಇದುವರೆಗೆ ಬಿಲ್ ನೀಡಿ, ಹಣ ಪಡೆಯುವ ಕ್ರಮವನ್ನು ಪಾಲಿಸಿಲ್ಲ. ಎಸ್ಬಿಐ ರೂಪಿಸಿರುವ ಹೊಸ ನಿಮಯಗಳು ಜಾರಿಯಾದರೆ, ನಿಮ್ಮ ಖಾತೆಯನ್ನು ರಾಜಾರೋಷವಾಗಿ ದೋಚುವ ಕೆಲಸ ಇನ್ನಷ್ಟು ಜೋರಾಗಿಯೇ ನಡೆಯುತ್ತೆ. ಶೇಕಡಾವಾರು ಆಧಾರದಲ್ಲಿ ಶುಲ್ಕ, ಹೆಚ್ಚುವರಿ ವಹಿವಾಟಿಗೆ ಶುಲ್ಕ, ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ ವಿಧಿಸಿದರೆ, ಬಡವರ, ಮಧ್ಯಮವರ್ಗದವರ, ಕೂಲಿ ಕಾರ್ಮಿಕರ, ವಿದ್ಯಾರ್ಥಿಗಳ ದುಡ್ಡಿಗೆ ಕತ್ತರಿ ಬೀಳೋದಂತೂ ನಿಶ್ಚಿತವಾದಂತಾಗಿದೆ.

 
ಗ್ರಾಹಕರಿಗೆ ನಿಮ್ಮ ಖಾತೆಯಿಂದ ಹಣವನ್ನು ಹಿಂತೆಗೆದುಕೊಳ್ಳಲಾಗಿದೆ ಎಂಬ ಕನಿಷ್ಠ ವಿಷಯವನ್ನೂ ತಿಳಿಸದೇ ಬ್ಯಾಂಕ್ಗಳು ಗ್ರಾಹಕರನ್ನು ಸುಲಿಯುತ್ತಿವೆ. ಈ ಸುಲಿಗೆಯ ಯಾಗಕ್ಕೆ ಮುಂಬರುವ ಮೂರ್ಖರ ದಿನಕ್ಕಾಗಿ ಮುಹೂರ್ತವನ್ನು ಕೂಡ ನಿಗದಿಗೊಳಿಸಲಾಗಿದೆ. ಇಷ್ಟೆಲ್ಲ ಆದರೂ ಆರ್ಬಿಐ ಮೌನವಾಗಿದೆ. ಈ ಮೂಲಕ ಅದರ ಅಸ್ತಿತ್ವದ ಮೇಲೆ ಅನುಮಾನ ಕೂಡ ಮೂಡಿದೆ. ಏನಾದರೂ ಆಗಲಿ ಅಚ್ಚೇದಿನ್ ಬಂದವೇ ಎಂದು ಮಾತ್ರ ಯಾರೂ ಕೇಳಬಾರದು. ಕೇಳಿದರೆ ಪಾಕಿಸ್ತಾನಕ್ಕೆ ಒನ್ ವೇ ಟಿಕೆಟ್ ಕಳುಹಿಸಲಾಗುತ್ತೆ.

ಚಿತ್ರಕೃಪೆ;  Indian Express, Business Standard

ಒಡೆದ ಚೂರುಗಳನ್ನು ಆಯ್ದು ಕಟ್ಟುವ ಪ್ರಯತ್ನ

(ಇರ್ಷಾದ್  ಉಪ್ಪಿನಂಗಡಿಯವರ ಅನೇಕ ಲೇಖನಗಳು ಮೊದಲು ಪ್ರಕಟಗೊಂಡಿದ್ದು ವರ್ತಮಾನದಲ್ಲಿಯೇ. ಈಗ ಅಹರ್ನಿಶಿ ಪ್ರಕಾಶನ ಈ ಯುವ ಪತ್ರಕರ್ತನ ಬರಹಗಳನ್ನು ಒಟ್ಟು ಮಾಡಿ ಪ್ರಕಟಿಸಿದೆ. ಹಿರಿಯ ಪತ್ರಕರ್ತರು ಹಾಗೂ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮಿನ್ ಮಟ್ಟು ಅವರು ಈ ಲೇಖನಗಳ ಗುಚ್ಚಕ್ಕೆ ಅರ್ಥಪೂರ್ಣ ಮುನ್ನುಡಿಯ ಮಾತುಳನ್ನಾಡಿದ್ದಾರೆ. ಅವರ ಮುನ್ನುಡಿ ಇಲ್ಲಿದೆ.)

 

ಬರೆಯುವುದೇ ಅಪರಾಧವೆಂಬಂತೆ ಬರಹಗಾರರನ್ನು, ನಿಂದಿಸಿ, ಹಂಗಿಸಿ, ಗೇಲಿಮಾಡಿ ಮಾನಸಿಕವಾಗಿ ಕುಗ್ಗಿಹೋಗುವಂತೆ ಮಾಡುವ ಹುನ್ನಾರಗಳ ಈ ದಿನಗಳಲ್ಲಿ ಬರವಣಿಗೆ ಕಷ್ಟದ ಕೆಲಸ. ಅದರಲ್ಲೂ ಒಬ್ಬ ಮುಸ್ಲಿಮ್ ಲೇಖಕ ಬರೆಯುವುದು ಹೆಚ್ಚು ಕಷ್ಟದ ಕೆಲಸ. ಇತ್ತೀಚಿನ ದಿನಗಳಲ್ಲಿ ‘ಕೋಮುವಾದಿಗಳ ಪ್ರಯೋಗ ಶಾಲೆ’ ಎಂಬ ಕುಖ್ಯಾತಿಗೆ ಒಳಗಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಣ್ಣಿನ ಮಕ್ಕಳಾಗಿ ಬರೆಯುವುದು ಇನ್ನೂ ಕಷ್ಟದ ಕೆಲಸ.
ಗೆಳೆಯ ಇರ್ಷಾದ್ ಉಪ್ಪಿನಂಗಡಿಯವರಂತಹ ಲೇಖಕರ ಕಷ್ಟಗಳು ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಇವರೊಬ್ಬ ಟಿವಿ ಮಾಧ್ಯಮದ ಪತ್ರಕರ್ತ. ಮಾತನ್ನೇ ಬಂಡವಾಳ ಮಾSwargadahadi-3ಡಿಕೊಳ್ಳಬೇಕಾದ ಅನಿವಾರ್ಯತೆಯ ಟಿವಿ ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಅಕ್ಷರರೂಪದಲ್ಲಿ ತಮ್ಮ ಅಭಿವ್ಯಕ್ತಿಯನ್ನು ಕಂಡುಕೊಳ್ಳುವುದು ಒಂದು ಸವಾಲು. ಇಷ್ಟು ಮಾತ್ರವಲ್ಲ ಸೃಜನಶೀಲ ಬರವಣಿಗೆಗಳೆಂದು ಹೇಳುವ ಕತೆ-ಕವನ-ಕಾದಂಬರಿಗಳನ್ನು ಬರೆಯುವವರಿಗೆ ಇರುವ ಸೂಕ್ಷ್ಮ ವಿಷಯಗಳನ್ನು ರೂಪಕ-ಪ್ರತಿಮೆಗಳ ಮೂಲಕ ಹೇಳುವ ಸುರಕ್ಷತೆಯ ಕವಚ ಕೂಡಾ ಒಬ್ಬ ಪತ್ರಕರ್ತನಿಗೆ ಇಲ್ಲವೇ ಸೃಜನೇತರ ಲೇಖಕನಿಗೆ ಇರುವುದಿಲ್ಲ. ಈತ ಹೇಳುವುದನ್ನುನೇರವಾಗಿ, ಸ್ಪಷ್ಟವಾಗಿ ಹೇಳಬೇಕಾಗುತ್ತದೆ.

 

ಇರ್ಷಾದ್ ಉಪ್ಪಿನಂಗಡಿಯವರ ಲೇಖನಗಳು ಈ ಕಷ್ಟಗಳ ಸರಮಾಲೆಯ ವಿರುದ್ದದ ಹೋರಾಟದಂತೆ ಕಾಣಿಸುತ್ತದೆ. ಲೇಖನಗಳನ್ನು ಓದುತ್ತಾ ಹೋದಂತೆ ಇರ್ಷಾದ್ ಮೈಗೂಡಿಸಿಕೊಂಡಿರುವ ಸತ್ಯ ಹೇಳಲೇಬೇಕೆಂಬ ಛಲ, ನ್ಯಾಯದ ಪರವಾಗಿ ಇರಬೇಕೆಂಬ ಬದ್ಧತೆ ಮತ್ತು ಸಾಮಾಜಿಕವಾದ ಕಳಕಳಿ ನಮ್ಮನ್ನು ತಟ್ಟುತ್ತದೆ. ಮುಜುಗರ ಸ್ವಭಾವದ, ನೋಡಲು ಚಾಕಲೇಟ್ ಹೀರೋನಂತಿರುವ, ಇನ್ನೂ ಕಿರಿ ವಯಸ್ಸಿನ ಇರ್ಷಾದ್ ಗೆ ಇಂತಹ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವ ಧೈರ್ಯ ಎಲ್ಲಿಂದ ಬಂತು ಎಂಬ ಪ್ರಶ್ನೆ ಈ ಲೇಖನಗಳನ್ನು ಓದುವವರನ್ನು ಕಾಡದೆ ಇರದು.

 

ಮನುಷ್ಯನನ್ನು ಇಂತಹ ಧೈರ್ಯದ ಕೆಲಸ ಮಾಡಿಸುವುದು ಅವನೊಳಗಿರುವ ಆತ್ಮಬಲ. ಅದು ತಾನು ಬಡಿದುಕೊಳ್ಳುವ 56 ಇಂಚಿನ ಎದೆಯಿಂದ ಬರುವುದಿಲ್ಲ. ಅದು ಆತನ ಸತ್ಯಸಂಧತೆ, ಬದ್ದತೆ, ಪ್ರಾಮಾಣಿಕತೆ ಮತ್ತು ತನ್ನವರಿಗಾಗಿ ಮಿಡಿಯುವ ಕಳಕಳಿಗಳಿಂದ ಹರಿದುಬರುವಂತಹದ್ದು. ಇದನ್ನು ಇರ್ಷಾದ್ ನಂತಹ ಲೇಖಕರು ಮತ್ತು ನಿಜವಾದ ಮನುಷ್ಯರು ಸಾಬೀತು ಪಡಿಸುತ್ತಲೇ ಬಂದಿದ್ದಾರೆ..

 

ಈ ಪುಸ್ತಕದಲ್ಲಿ ಹತ್ತು ಲೇಖನಗಳಿದ್ದು ಅದರಲ್ಲಿ ಎಂಆರ್ ಪಿಎಲ್ ನ ಸಂತ್ರಸ್ತರ ಸಮಸ್ಯೆಯ ಲೇಖನವೊಂದನ್ನು ಹೊರತುಪಡಿಸಿ ಉಳಿದೆಲ್ಲವು ಮುಸ್ಲಿಮ್ ಸಮುದಾಯಕ್ಕೆ ಸಂಬಂಧಿಸಿದ್ದಾಗಿದೆ. ಈ ರೀತಿ ಬರೆಯುವವರನ್ನು ಸಹಜವಾಗಿಯೇ ನಾವು ಮುಸ್ಲಿಮ್ ಲೇಖಕರೆಂಬ ಆವರಣದೊಳಗೆ ಸೇರಿಸಿಬಿಡುತ್ತೇವೆ. ಹೆಸರುಗಳ ಉಲ್ಲೇಖ ಇಲ್ಲಿ ಅಪ್ರಸ್ತುತ, ಆದರೆ ಹಿಂದೂ ಸಮುದಾಯದ ಬಗ್ಗೆ ಬರೆಯುವವರನ್ನು ಮಾತ್ರ ಹಿಂದೂ ಲೇಖಕರು ಎಂದು ಯಾರೂ ಬ್ರಾಂಡ್ ಮಾಡುವುದಿಲ್ಲ. ಬರಹಗಾರರು, ಸಾಹಿತಿಗಳು, ಕಲಾವಿದರನ್ನು ಅವರ ಕೃತಿಗಳ ಮೂಲಕ ನೋಡಬೇಕೇ ಹೊರತು ಅವರು ಹುಟ್ಟಿದ ಜಾತಿ- ಧರ್ಮದ ಮೂಲಕ ಅಲ್ಲ ಎನ್ನುವುದನ್ನು ಹೇಳುತ್ತಲೇ ಇಂತಹ ಆತ್ಮವಂಚನೆಗಳನ್ನು ಮಾಡುತ್ತಿರುತ್ತೇವೆ.

 

ಮುಸ್ಲಿಮ್ ಲೇಖಕನೊಬ್ಬ ಹಿಂದೂ ಧರ್ಮದ ಹುಳುಕುಗಳ ಬಗ್ಗೆ ಬರೆದರೆ; ಬೇರೆ ಧರ್ಮಗಳ ಉಸಾಬರಿ ಯಾಕೆ? ನಿಮ್ಮ ಧರ್ಮದ ಬಗ್ಗೆಯೇ ಬರೆಯಿರಿ ಎಂದು ಅಪ್ಪಣೆ ಕೊಡಿಸುವುದೂ ಉಂಟು. ಇದನ್ನು ಹಿಂದೂ ಧರ್ಮದಲ್ಲಿ ಹುಟ್ಟಿರುವ ಲೇಖಕರ ಬಗ್ಗೆ ಮುಸ್ಲಿಮರೂ ಹೇಳುವುದನ್ನು ನಮ್ಮಂತಹವರು ಕೇಳಿದ್ದೇವೆ. ನಾನೊಮ್ಮೆ ಬುರ್ಖಾದ  ಬಗ್ಗೆ ಮಾತನಾಡಿ ವಿವಾದ ಹುಟ್ಟಿಕೊಂಡಾಗ, ನಾನು ಬಹಳ ಮೆಚ್ಚಿಕೊಂಡ ಮುಸ್ಲಿಮ್ ಸಮುದಾಯಕ್ಕೆ ಸೇರಿರುವ ಯುವಪತ್ರಕರ್ತರೊಬ್ಬರು ನಮ್ಮ ಹೆಂಗಸರ ಬಟ್ಟೆಗೆ ಯಾಕೆ ಕೈ ಹಾಕುತ್ತೀರಿ? ಎಂದು ಕೇಳಿದಾಗ ಒಂದು ಕ್ಷಣ ಬೆಚ್ಚಿಬಿದ್ದಿದ್ದೆ. ಭಾರತದ ಸಂದರ್ಭದಲ್ಲಿ ಜಾತಿ ಮತ್ತು ಧರ್ಮಗಳ ವಾಸ್ತವದ ಬಗ್ಗೆ ಕುರುಡಾಗಿ ವ್ಯಕ್ತಿ-ವಿಷಯಗಳನ್ನು ಚರ್ಚಿಸುವುದು ಅಸಾಧ್ಯವೆನಿಸುವಂತಹ ವಾತಾವರಣವನ್ನು ನಾವೇ ನಿರ್ಮಿಸಿಬಿಟ್ಟಿದ್ದೇವೆ.

 

ಪತ್ರಕರ್ತನಾಗಿ, ಲೇಖಕನಾಗಿ ಇರ್ಷಾದ್ ಎದುರಿಸಬೇಕಾಗಿ ಬಂದಿರುವ ಬಹಿರಂಗ ವಿರೋಧ ಮತ್ತು ಆಂತರಿಕ ಒತ್ತಡದ ಅರಿವಾಗಬೇಕಾದರೆ ಅವರು ನೆಲೆಸಿರುವ ದಕ್ಷಿಣ ಕನ್ನಡ ಜಿಲ್ಲೆಯೊಳಗೆ ಕಣ್ಣುಹಾಯಿಸಬೇಕು. ಬಹುಸಂಸ್ಕೃತಿಯ ತೊಟ್ಟಿಲಾಗಿದ್ದ, ಕೋಮುಸೌಹಾರ್ದdineshತೆಯನ್ನೇ ಜೀವನಕ್ರಮವಾಗಿ ಪಾಲಿಸುತ್ತಾ ಬಂದಿದ್ದ ದಕ್ಷಿಣ ಕನ್ನಡ ಜಿಲ್ಲೆ ಕೋಮುಕಾಳಗದ ರಣರಂಗವಾಗಿದೆ. ಹಿಂದಿನ ತಲೆಮಾರು ಕೂಡಿ ಕಟ್ಟಿದ್ದನ್ನು ಇಂದಿನ ತಲೆಮಾರಿನ ಒಂದು ಗುಂಪು ಒಡೆದು ಮುರಿದುಹಾಕಿದ್ದಾರೆ. ಜಗವೆಲ್ಲ ಹೆಮ್ಮೆ ಪಡುತ್ತಿದ್ದ, (ಸ್ವಲ್ಪ ಅಸೂಯೆಯಿಂದಲೂ ನೋಡುತ್ತಿದ್ದ) ದಕ್ಷಿಣ ಕನ್ನಡ ಜಿಲ್ಲೆಯ ಅಂತರಂಗಕ್ಕೆ ಈಗ ಇಣುಕಿನೋಡಿದರೆ ಒಡಕಲು ಬಿಂಬಗಳು ಕಾಣಿಸತೊಡಗಿವೆ. ಈ ರೀತಿ ಒಡೆದು ಹಾಕಿರುವವರನ್ನು ಗುರುತಿಸುವುದಷ್ಟೇ ಅಲ್ಲ, ಒಡೆದ ಚೂರುಗಳನ್ನು ಆಯ್ದು, ಜೋಡಿಸಿ ಮತ್ತೆ ಕಟ್ಟುವ ಪ್ರಯತ್ನ ಇರ್ಷಾದ್ ಅವರ ಲೇಖನಗಳಲ್ಲಿ ಕಾಣಬಹುದು.

 

ಹಿಂದೂ-ಮುಸ್ಲಿಮ್ ಎರಡೂ ಧರ್ಮಗಳಿಗೆ ಸೇರಿದ ಕೋಮುವಾದದ ಪ್ರಯೋಗಶಾಲೆ ಎಂಬ ಕುಖ್ಯಾತಿಗೊಳಗಾಗಿರುವ ದಕ್ಷಿಣಕನ್ನಡ-ಉಡುಪಿ ಜಿಲ್ಲೆಗಳಲ್ಲಿ ಮುಸ್ಲಿಮ್ ಸಮುದಾಯಕ್ಕೆ ಸೇರಿರುವ ಪ್ರಗತಿಪರ ಲೇಖಕರ ಪರಂಪರೆ ಬೆಳೆದುಬಂದಿರುವುದನ್ನು ಈಗ ನೆನಪುಮಾಡಿಕೊಂಡರೆ ಇತಿಹಾಸದ ವ್ಯಂಗ್ಯದಂತೆ ಕಾಣಬಹುದು. ಈ ಲೇಖಕರೆಲ್ಲ ಧರ್ಮ ಸೂಕ್ಷ್ಮಗಳನ್ನು ಬಿಡಿಸಿಹೇಳುತ್ತಲೇ ಒಳಗಿರುವ ಪುರೋಹಿತಶಾಹಿಯ ಆತ್ಮವಂಚನೆ, ಸ್ವಾರ್ಥ ಮತ್ತು ಅಜ್ಞಾನಗಳನ್ನು ಬಯಲುಗೊಳಿಸಿದವರು. ಇದರಿಂದಾಗಿ ನಾನಾ ಬಗೆಯ ಕಷ್ಟನಷ್ಟಗಳನ್ನು ವೈಯಕ್ತಿಕ ಜೀವನದಲ್ಲಿಯೂ ಎದುರಿಸಿದವರು. ಇವರಲ್ಲಿ ಕೆಲವರು ಮೌನವಾಗಿ ಹೋಗಿದ್ದಾರೆ, ಇನ್ನು ಕೆಲವರು ಸಮನ್ವಯತೆಯ ಹರಿಕಾರರಾಗಿದ್ದಾರೆ.
ಈ ಲೇಖಕರ ಮೌನವನ್ನು ಅರ್ಥಮಾಡಿಕೊಳ್ಳಬೇಕಾದರೆ ಆ ಅವಧಿಯಲ್ಲಿ ನಡೆದ ಗದ್ದಲವನ್ನು ಕೂಡಾ ತಿಳಿದುಕೊಳ್ಳಬೇಕಾಗುತ್ತದೆ. ಕಾರಣಗಳೂ ನಮ್ಮ ವರ್ತಮಾನದ ರಾಜಕೀಯ ಬೆಳವಣಿಗೆಗಳಲ್ಲಿದೆ ಎನ್ನುವುದನ್ನು ಕೂಡಾ ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಬಾಬರಿಮಸೀದಿಯ ನಂತರ ಬದಲಾಗಿರುವುದು ದೇಶದ ರಾಜಕೀಯ ಕ್ಷೇತ್ರ ಮಾತ್ರವಲ್ಲ, ಅದರ ಅಡ್ಡಪರಿಣಾಮಗಳಿಂದಾಗಿ ನಮ್ಮ ಸಾಹಿತ್ಯ, ಕಲೆ, ಸಂಗೀತ ಸೇರಿದಂತೆ ಒಟ್ಟು ಸಾಂಸ್ಕೃತಿಕ ಲೋಕ ಕೂಡಾ ಕೋಮುಬಣ್ಣ ಬಳಿದುಕೊಂಡದ್ದನ್ನು ಕಾಣಬಹುದು. ಈ ಬದಲಾವಣೆಗೆ ಕನ್ನಡ ಸಾಹಿತ್ಯ ಕ್ಷೇತ್ರ ಹೊರತಾಗಿರಲಿಲ್ಲ. ತುರ್ತು   ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಮುಸ್ಲಿಮ್ ಸಮುದಾಯದ ಲೇಖಕರ ಬೆನ್ನು ತಟ್ಟಿದವರು, ಅದೇ ಲೇಖಕರು ಕೋಮುವಾದದ ವಿರುದ್ಧ ಬರೆದಾಗ ಧರ್ಮದ ಕನ್ನಡಕ ಹಾಕಿಕೊಂಡು ತೀರ್ಪು ನೀಡಲು ಶುರುಮಾಡಿದರು.

 

ಇದರಿಂದಾಗಿ ಎಂಬತ್ತರ ದಶಕದಲ್ಲಿ ಮುಸ್ಲಿಮ್ ಮೂಲಭೂತವಾದದ ವಿರುದ್ಧ ಗಟ್ಟಿದನಿಯಲ್ಲಿ ಮಾತನಾಡುತ್ತಿದ್ದ ಬರೆಯುತ್ತಿದ್ದ ಮುಸ್ಲಿಮ್ ಸಮುದಾಯದ ಲೇಖಕ-ಲೇಖಕಿಯರ ದನಿ ಕ್ಷೀಣವಾಗುತ್ತಾ ಹೋಯಿತು. ಹಿಂದುಕೋಮುವಾದದ ಅಬ್ಬರ ಮತ್ತು ಅದನ್ನು ಎದುರಿಸಲು ಮುಸ್ಲಿಮ್ ಮೂಲಭೂತವಾದ ಅನಿವಾರ್ಯ ಎಂಬಂತಹ ಸ್ಥಿತಿ ನಿರ್ಮಾಣದ ನಡುವೆ ಸಿಕ್ಕ ಪ್ರಗತಿಪರ ಲೇಖಕರು ಈ ಗೊಂದಲದಲ್ಲಿಯೇ ತುಸು ಅಂಚಿಗೆ ಸರಿದು ನಿಲ್ಲುವಂತಾಯಿತು. ಇಸ್ಲಾಂ ಧರ್ಮದೊಳಗಿನ ಸಂಪ್ರದಾಯವಾದದ ಬಗ್ಗೆ ಪ್ರಗತಿಪರ ಮುಸ್ಲಿಮರು ಎತ್ತಿದ ಪ್ರಶ್ನೆಗಳನ್ನು ಹಿಂದೂ ಮೂಲಭೂತವಾದಿಗಳು ಮುಸ್ಲಿಮರ ವಿರುದ್ದ ಜನಾಭಿಪ್ರಾಯ ರೂಪಿಸಲು ಮತ್ತು ಹಿಂದೂಗಳನ್ನು ಎತ್ತಿಕಟ್ಟುವ ಹುನ್ನಾರಕ್ಕೆ ದುರ್ಬಳಕೆ ಮಾಡುವಂತಹ ಪ್ರಸಂಗಗಳು ಕೂಡಾ ನಡೆಯುತ್ತಿವೆ.

 

ನಾವಿಂದು ಉತ್ತರ ಹುಡುಕಬೇಕಾಗಿರುವುದು ಹಿಂದೆ ಬರೆಯುತ್ತಿದ್ದವರು ಈಗಲೂ ಹಿಂದಿನಂತೆಯೇ ಯಾಕೆ ಬರೆಯುವುದಿಲ್ಲ ಎನ್ನುವ ಪ್ರಶ್ನೆಗೆ ಅಲ್ಲ. ಈ ರೀತಿಯ ದಣಿವು, ವಿಶ್ರಾಂತಿ, ಆರೋಪಿತ ಹೊಂದಾಣಿಕೆಯ ಬಗ್ಗೆಯೂ ಅಲ್ಲ. ಇಂತಹ ಬೆಳವಣಿಗೆ ಕೇವಲ ಮುಸ್ಲಿಮ್ ಸಮುದಾಯದಿಂದ ಬಂದಿರುವ ಲೇಖಕರಿಗೆ ಮಾತ್ರ ಸೀಮಿತವಾಗಿಲ್ಲ, ಎಂಬತ್ತರ ದಶಕದಲ್ಲಿ ಪ್ರಜ್ವಲಿಸಿದ ದಲಿತ, ರೈತ ಮತ್ತು ಭಾಷಾ ಚಳುವಳಿಯನ್ನು ಮುನ್ನಡೆಸಿದ್ದ ಎಲ್ಲ ಗುಂಪುಗಳಲ್ಲಿಯೂ ನಾಯಕತ್ವದ ಇಂತಹ ಬಿಕ್ಕಟ್ಟುಗಳನ್ನು ಕಾಣಬಹುದು. ನಾವಿಂದು ಉತ್ತರ ಹುಡುಕಬೇಕಾಗಿರುವುದು ಮುಸ್ಲಿಮ್ ಸಮುದಾಯಕ್ಕೆ ಸೇರಿದ ಪ್ರಗತಿಪರ ಲೇಖಕರ ಪರಂಪರೆಯ ವಾರಸುದಾರರು ಯಾಕೆ ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟಿಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆಗೆ.
ಪ್ರಗತಿಪರ ಮುಸ್ಲಿಮ್ ಲೇಖಕರ ಪರಂಪರೆಯ ಸರಪಳಿ ಇದ್ದಕ್ಕಿದ್ದ ಹಾಗೆ ಮುರಿದುಬಿತ್ತೇ ಎಂಬ ಆತಂಕದ ಪ್ರಶ್ನೆ ಈಗಲೂ ನಮ್ಮ ಮುಂದಿದ್ದರೂ ಹೊಸ ತಲೆಮಾರಿನ ಅನೇಕ ಮುಸ್ಲಿಮ್ ಯುವಕ-ಯುವತಿಯರು. ಧರ್ಮದ ಬಗೆಗಿನ ಕುರುಡುತನವನ್ನು ಮೀರಿ ಒಂದಿಷ್ಟು ಅಧ್ಯಯನ, ಆತ್ಮಾವಲೋಕನದ ಮೂಲಕ ದಿಟ್ಟತನದಿಂದ ಬರೆಯುತ್ತಿದ್ದಾರೆ, ಹೋರಾಟ ನಡೆಸುತ್ತಿದ್ದಾರೆ. ಇಷರ್ಾದ್ ಉಪ್ಪಿನಂಗಡಿ ಈ ಸಾಲಿನಲ್ಲಿರುವ ಯುವ ಬರಹಗಾರ.

 

ಈ ಸಂಕಲನದಲ್ಲಿರುವ ಲೇಖನಗಳು ಆಯಾ ಸಂದರ್ಭದ ವಿದ್ಯಮಾನಗಳಿಗೆ ಥಟ್ಟನೆ ಪ್ರತಿಕ್ರಿಯೆ ರೂಪದಲ್ಲಿ ಬರೆದಿರುವಂತಹದ್ದು. ಈ ದೃಷ್ಟಿಯಿಂದ ಇದನ್ನು ಪತ್ರಿಕಾ ಲೇಖನಗಳೆಂದು ಹೇಳಬಹುದಾದರೂ ಇರ್ಷಾದ್ ಅಧ್ಯಯನ-ಸಂಶೋಧನೆಯ ಮೂಲಕ ಲೇಖನಗಳನ್ನು ಅವಸರದ ಬರವಣಿಗೆಯ ಆಚೆಗೆ ವಿಸ್ತರಿಸುವ ಪ್ರಯತ್ನ ಮಾಡಿದ್ದಾರೆ. ಇಷರ್ಾದ್ ಭಿನ್ನಾಭಿಪ್ರಾಯವನ್ನು ದಾಖಲಿಸಿ ಓಡಿಹೋಗುವುದಿಲ್ಲ, ತಾನು ಹೇಳುವುದನ್ನು ದಾಖಲೆಗಳ ಸಮೇತ ಮಂಡಿಸುತ್ತಾರೆ. ತಲಾಖ್, ಬುರ್ಖಾ, ಸಹಶಿಕ್ಷಣಕ್ಕೆ ಸಂಬಂಧಿಸಿದಂತೆ ಧರ್ಮಗ್ರಂಥ ಕುರಾನ್ ಏIrshadನು ಹೇಳಿದೆ ಎನ್ನುವುದನ್ನು ಎದುರಾಳಿಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ತಾಳ್ಮೆಯಿಂದ ಮಾಡುತ್ತಾರೆ.

 

ಇರ್ಷಾದ್ ಅವರನ್ನು ಮತ್ತೆಮತ್ತೆ ಕಾಡುವುದು ಧರ್ಮದೊಳಗೆ ಹೆಚ್ಚು ಶೋಷಣೆಗೊಳಗಾಗಿರುವ ಮುಸ್ಲಿಮ್ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಎನ್ನುವುದು ಗಮನ ಸೆಳೆಯುತ್ತದೆ. ಹೀಗಾಗಿಯೇ ಈ ಪುಸ್ತಕದ ಹತ್ತರಲ್ಲಿ ಐದು ಲೇಖನಗಳು ತಲಾಖ್, ಬುರ್ಖಾ, ಹುಡುಗಿಯರ ಪ್ರತಿಭೆಯ ದಮನ ಮೊದಲಾದ ವಿಷಯಗಳ ಬಗ್ಗೆ ಇದೆ. ಹಿಂದೊಮ್ಮೆ ನನ್ನ ಮಾತುಗಳಿಂದಾಗಿ ಹುಟ್ಟಿಕೊಂಡ ವಿವಾದಕ್ಕೆ ಪ್ರತಿಕ್ರಿಯಿಸಿ ಬರೆದಿರುವ ಬುರ್ಖಾದೊಳಗೆ ಆಕೆಯ ಮೌನಕ್ಕೆ ದನಿಯಾದಾಗ ಎನ್ನುವ ಲೇಖನವನ್ನು ಮುಸ್ಲಿಮ್ ಸೋದರಿಯ ಪರಕಾಯ ಪ್ರವೇಶ ಮಾಡಿಬರೆದಿರುವುದು ಮನಮಿಡಿಯುವಂತಿದೆ.
ಇರ್ಷಾದ್ ಅವರು ಬಹುತೇಕ ಬರವಣಿಗೆಗಳಿಗೆ ಆಯ್ದುಕೊಂಡಿರುವುದು ಧರ್ಮ ಎನ್ನುವ ಸೂಕ್ಷ್ಮವಾದ ಮತ್ತು ಬಹುಬೇಗ ಭಾವನೆಗಳನ್ನು ಕೆರಳಿಸಬಲ್ಲ ವಿಷಯವನ್ನು. ಈ ಬಗ್ಗೆ ಬರೆಯುವವರು ಸಹಜವಾಗಿಯೇ ಭಾವುಕರಾಗಿಬಿಡುತ್ತಾರೆ, ತಮಗರಿವಿಲ್ಲದೆಯೇ ಆವೇಶ, ಆಕ್ರೋಶಗಳು ಹೊರಹೊಮ್ಮುತ್ತವೆ. ಆದರೆ ಇರ್ಷಾದ್ ಬರೆದಿರುವ ಲೇಖನಗಳನ್ನು ಓದುವಾಗ ಮನೆ ಹಿರಿಯನೊಬ್ಬನ ಕೈಹಿಡಿದು ಜಗ್ಗುತ್ತಿರುವ ಪುಟ್ಟಬಾಲಕ ಹೀಗ್ಯಾಕೆ ಮಾಡುತ್ತಿದ್ದೀರಿ? ಇದು ತಪ್ಪಲ್ಲವೇ? ಎಂದು ಮುಗ್ಧತೆಯಿಂದ ಕೇಳುತ್ತಿರುವಂತಿದೆ. ಇದು ಪ್ರೀತಿಸುವವರನ್ನು ಉದ್ದೇಶಿಸಿ ಪ್ರೀತಿಯಿಂದ ಬರೆದ ಲೇಖನಗಳು. ಹೀಗೆಯೇ ಎಲ್ಲರೂ ಓದಿಕೊಂಡರೆ ಲೇಖಕರ ಆಶಯ ಸಾರ್ಥಕ.

 

ಗಂಭೀರ ವಿಷಯಗಳಿಗೆ ಒಗ್ಗದ ಟಿವಿ ಮಾಧ್ಯಮದ ವರದಿಗಾರರಾಗಿ ತನ್ನೊಳಗಿನ ಲೇಖಕನನ್ನು ಕಳೆದುಕೊಳ್ಳುತ್ತಾರೋ ಏನೋ ಎನ್ನುವುದಷ್ಟೇ ಇರ್ಷಾದ್ ಬಗ್ಗೆ ಇರುವ ನನ್ನ ಏಕೈಕ ದೂರು. ನಾನು ಮುದ್ರಣ ಮಾಧ್ಯಮದ ಪಕ್ಷಪಾತಿ ಎನ್ನುವದಷ್ಟೇ ಇದಕ್ಕೆ ಕಾರಣ ಅಲ್ಲ, ಇಷರ್ಾದ್ ಅವರ ಗ್ರಹಿಕೆಯ ಸಾಮರ್ಥ್ಯ, ಬರವಣಿಗೆಯ ಶಕ್ತಿಯನ್ನು ನೋಡಿದರೆ ಅವರು ಕನ್ನಡದ ಒಬ್ಬ ಉತ್ತಮ ಪತ್ರಕರ್ತ-ಲೇಖಕರಾಗಬಹುದೆಂಬ ಭರವಸೆ ಮೂಡುತ್ತದೆ. ಇದು ನಿಜವಾಗಲಿ ಎಂದು ಹಾರೈಸುತ್ತೇನೆ.
ಅಲ್ಲೆಲ್ಲೋ ಇರುವ ಉಪ್ಪಿನಂಗಡಿಯ ಇಷರ್ಾದ್ ಅವರನ್ನು ಗುರುತಿಸಿ, ಕಳೆದುಹೋಗಬಹುದಾದ ಲೇಖನಗಳನ್ನು ಸಂಗ್ರಹಿಸಿ ಪ್ರಕಟಿಸುತ್ತಿರುವ ಮತ್ತು ಭಾಷಣಗಳಲ್ಲಿ ಕಳೆದುಹೋಗುತ್ತಿರುವ ನನ್ನ ಮೇಲೆ ಒತ್ತಡ ಹೇರಿ ನಾಲ್ಕು ಸಾಲು ಬರೆಯುವಂತೆ ಮಾಡಿದ ಅಹರ್ನಿಶಿಯ ಕೆ.ಅಕ್ಷತಾ ಅವರಿಗೂ ಥ್ಯಾಂಕ್ಸ್.

– ದಿನೇಶ್ ಅಮೀನ್ ಮಟ್ಟು

ಲೇಖನಗಳ ಸಂಗ್ರಹ: ಸ್ವರ್ಗದ ಹಾದಿಯಲ್ಲಿ…

ಲೇಖಕ:  ಇರ್ಷಾದ್ ಉಪ್ಪಿನಂಗಡಿ

ಪ್ರಕಾಶನ: ಅಹರ್ನಿಶಿ

ಬೆಲೆ: 70/-

ಪ್ರತಿಗಳಿಗಾಗಿ: 94491-74662

 

ಪಿನರಾಯಿ ವಿಜಯನ್ ಮತ್ತು ಸಂಘಪರಿವಾರದ ಬಿಲ್ಲವ ವಿರೋಧಿ ಅಜೆಂಡಾ


-ಎನ್.ಎಸ್


 

ಫೆಬ್ರವರಿ 25 ರಂದು ಪಿನರಾಯಿ ವಿಜಯನ್ ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಐಕ್ಯತಾ ಸಮಾವೇಶದಲ್ಲಿ ಭಾಗವಹಿಸಲು ಬರುತ್ತಿರುವ ಪಿನರಾಯಿ ವಿಜಯನ್ ಗೆPinarayi-Vijayan-cpim ಸಂಘಪರಿವಾರ ವಿರೋಧ ವ್ಯಕ್ತಪಡಿಸಿದೆ. ಪಿನರಾಯಿ ವಿಜಯನ್ ಮಂಗಳೂರಿಗೆ ಆಗಮಿಸಲಿರುವ ದಿನವಾದ ಫೆಬ್ರವರಿ 25 ರಂದು ಸಂಘಪರಿವಾರ ಜಿಲ್ಲಾ ಬಂದ್ ಗೆ ಕರೆ ನೀಡಿದೆ. ಸ್ಪರ್ಧಾತ್ಮಕ ರಾಜಕೀಯದ ಹಿನ್ನಲೆಯಲ್ಲಿ ಇಂತಹ ವಿರೋಧವನ್ನು ಸಹಜ ರಾಜಕೀಯ ನಡೆಯೆಂದು ಪರಿಗಣಿಸಬಹುದಿತ್ತೇನೋ. ಆದರೆ ಸದ್ಯದ ಸಂದರ್ಭದಲ್ಲಿ ಪ್ರಸ್ತುತ ಕಾರ್ಯಕ್ರಮಕ್ಕೆ ಸಂಘಪರಿವಾರ ಜಿದ್ದಿನ ವಿರೋಧವನ್ನು ಒಡ್ಡುವಲ್ಲಿ ಕರಾವಳಿಯ ಬಹುಸಂಖ್ಯಾತ ಹಿಂದುಳಿದ ಸಮುದಾಯ ಬಿಲ್ಲವರನ್ನು ರಾಜಕೀಯ ಕ್ಷೇತ್ರದಲ್ಲಿ ಅಪ್ರಮುಖರನ್ನಾಗಿಸುವ, ದಮನಿಸುವ ಕಾರ್ಯಸೂಚಿ ಅಡಗಿದೆ.

ಹಾಗೆ ನೋಡಿದಲ್ಲಿ ಪಿನರಾಯಿ ವಿಜಯನ್ ಭಾಗವಹಿಸುವ ಫೆಬ್ರವರಿ 25 ರ ಐಕ್ಯತಾ ಸಮಾವೇಶ ಹಿಂದುಳಿದ ವರ್ಗಗಳ, ಅದರಲ್ಲೂ ವಿಶೇಷವಾಗಿ ಬಿಲ್ಲವರ ಸ್ವಾಭಿಮಾನದ ಸಮಾವೇಶವಾಗಿದೆ. ದಕ್ಷಿಣ ಕನ್ನಡದ ಬಿಲ್ಲವರು ಮತ್ತು ಕೆಳವರ್ಗಗಳಿಗೆ ಸ್ವಾಭಿಮಾನದ ಬದುಕು ರೂಪಿಸಿದ ನಾರಾಯಣ ಗುರುಗಳ ಈಳವ ಸಮುದಾಯಕ್ಕೆ ಸೇರಿದ ಪಿನರಾಯಿ ವಿಜಯನ್ ಈ ಸಂದರ್ಭದಲ್ಲಿ ಕರಾವಳಿ ಜೊತೆ ಸಂವಾದ ನಡೆಸುವುದು ಹೆಚ್ಚು ಅರ್ಥಪೂರ್ಣ. ಚಳುವಳಿಗಳ ಹಿನ್ನಲೆಯಿಂದ ರಾಜಕೀಯ ನೆಲೆ ಕಂಡುಕೊಂಡು ಮುಖ್ಯಮಂತ್ರಿ ಗಾದಿಗೇರಿರುವ ಹಿಂದುಳಿದ ಈಳವ ಸಮುದಾಯಕ್ಕೆ ಸೇರಿದ ಪಿನರಾಯಿ ಕರಾವಳಿಯ ಅಧಿಕಾರ ಕೇಂದ್ರದಲ್ಲಿ ನ್ಯಾಯಯುತ ಪ್ರಾತಿನಿಧ್ಯ ಪಡೆಯುವಲ್ಲಿ ಬಹುತೇಕವಾಗಿ ವಿಫಲವಾಗಿರುವ ಬಿಲ್ಲವ ಮೊದಲಾದ ಹಿಂದುಳಿದ ಸಮುದಾಯಗಳ ರಾಜಕೀಯ ಮಹತ್ವಾಕಾಂಕ್ಷೆಗಳಿಗೆ ದನಿಯಾಗಬಲ್ಲರು. ರಾಜಕೀಯ ಆಟ ಮೇಲಾಟ, ಸಂಘರ್ಷ ಮತ್ತು ಕೋಮು ವೈಷಮ್ಯಗಳಲ್ಲಿ ಮಾತ್ರವೇ ಕಾಲಾಳುಗಳಾಗಿ ಬಳಕೆಯಾಗುತ್ತಿರುವ ಬಿಲ್ಲವ ಸಮುದಾಯಕ್ಕೆ ಪಿನರಾಯಿ ಭೇಟಿ ಅದರ ಅಗಾಧ ರಾಜಕೀಯ ಸಾಧ್ಯತೆಗಳ ದೃಷ್ಟಿಯಿಂದ ಬಹಳ ಮಹತ್ವದ್ದಾದದ್ದು. ಇದೇ ಕಾರಣಕ್ಕಾಗಿ ಸಂಘಪರಿವಾರ ಪಿನರಾಯಿ ವಿಜಯನ್ ಗೆ ಪ್ರತಿಭಟನೆಯ ಮೂಲಕ ಸ್ವಾಗತಕೋರಲು ಸಿದ್ಧತೆ ನಡೆಸಿದೆ.

ನಾರಾಯಣ ಗುರುಗಳು ಮುನ್ನಡೆಸಿದ್ದ ಸಮಾಜ ಸುಧಾರಣಾ ಚಳುವಳಿ ಕರಾವಳಿಯ ಸಾಮಾಜಿಕ ಸಂರಚನೆಯಲ್ಲಿ ಹಲವು ಕ್ರಾಂತಿಕಾರಿ ಪಲ್ಲಟಗಳಿಗೆnarayana-guru ಕಾರಣವಾಗಿತ್ತು. ಬಿಲ್ಲವರೂ ಸೇರಿದಂತೆ ಹಿಂದುಳಿದ ವರ್ಗಗಳಿಗೆ ವೈದಿಕರು ಅರ್ಚಕರಾಗಿರುವ ಮೇಲ್ವರ್ಗದ ಆಡಳಿತದ ದೇವಸ್ಥಾನಗಳಿಗೆ ಪ್ರವೇಶ ನಿಷಿದ್ಧವಾಗಿದ್ದ ಸಂಧರ್ಭದಲ್ಲಿ ಬಿಲ್ಲವರ ಸ್ವಾಭಿಮಾನದ ದ್ಯೋತಕವಾಗಿ ನಾರಾಯಣ ಗುರುಗಳು ಕುದ್ರೋಳಿ ಗೋಕರ್ಣನಾಥೇಶ್ವರ ದೇಗುಲ ನಿರ್ಮಿಸಿದ್ದರು. ಸಾಮಾಜಿಕ ಸಬಲೀಕರಣದ ಮುಂದುವರಿದ ಭಾಗವಾಗಿ ಬಿಲ್ಲವರ ಸಂಘಗಳು, ಬಿಲ್ಲವ ಯುವ ವಾಹಿನಿ, ಬಿಲ್ಲವರ ಬ್ಯಾಂಕುಗಳು ಸ್ಥಾಪನೆಯಾದವು. ಬಿಲ್ಲವರ ಸಮಾಜೋ ಸಾಂಸ್ಕೃತಿಕ ಬದುಕಿನಲ್ಲಿ ಮಹತ್ತರವಾದ ಬದಲಾವಣೆ ದಾಖಲಾದದ್ದು ಭೂಸುಧಾರಣಾ ಕಾನೂನು ಬಂದ ತರುವಾಯದಲ್ಲಿ. ಅರಸು ಜಾರಿಗೆ ತಂದ ಕ್ರಾಂತಿಕಾರಿ ಭೂಸುದಾರಣೆ ಕಾಯಿದೆಯು ಬಿಲ್ಲವರಿಗೆ ಭೂಮಿಯ ಒಡೆತನವನ್ನು ನೀಡಿತು. ಇನ್ನೂ ಕೈಗಾರೀಕರಣಕ್ಕೆ ಒಳಗಾಗಿರದ ಸಮಾಜದಲ್ಲಿ ಭೂಒಡೆತನ ಎಂಬುವುದು ಸಮುದಾಯಗಳ ಸಾಮಾಜಿಕ ಆಸ್ಮಿತೆಯ ಬಹಳ ಪ್ರಮುಖ ಅಂಶವಾಗಿರುತ್ತದೆ. ಆದ್ದರಿಂದಲೇ ಭೂಸುಧಾರಣಾ ಕಾನೂನು ಕರಾವಳಿಯ ಸಮಾಜೋ ಸಾಂಸ್ಕೃತಿಕ ಬದುಕಿನಲ್ಲಿ ಬಿಲ್ಲವರು ಬೆಳೆಯಲು ಪೂರಕ ವಾತಾವರಣ ನಿರ್ಮಿಸಿತು. ಇಲ್ಲಿ ಗಮನಿಸಲೇಬೇಕಾದ ಅಂಶವೆಂದರೆ ದೇಶದಾದ್ಯಂತ ಭೂಸುಧಾರಣೆಯು ಇನ್ನೂ ವ್ಯಾಪಕವಾಗಿ ಅನುಷ್ಠಾನವಾಗಿರದ ಸಂದರ್ಭದಲ್ಲಿ ಕರಾವಳಿ ಭಾಗದಲ್ಲಿ ಅದರ ಯಶಸ್ಸಿಗೆ ಶ್ರಮಿಸಿದ್ದು ಇಲ್ಲಿಯ ಕಮ್ಯುನಿಷ್ಟರು. ಬಿಲ್ಲವರಿಗೆ ಭೂಮಿಯನ್ನು ಕೊಡಿಸುವಲ್ಲಿ ಕರಾವಳಿ ಭಾಗದ ಕಮ್ಯುನಿಷ್ಟರ ಪಾತ್ರ ದೊಡ್ಡದು. ಪಕ್ಷದ ಮಟ್ಟದಲ್ಲಿ ಸೈದ್ಧಾಂತಿಕವಾಗಿ ಜಾತಿಯ ಸಮೀಕರಣವನ್ನು ಒಪ್ಪಿರದಿದ್ದರೂ ಅಂದು ಕರಾವಳಿ ಭಾಗದ ಕಮ್ಯುನಿಷ್ಟ್ ಪಕ್ಷಗಳಲ್ಲಿದ್ದ ಹಿಂದುಳಿದ ವರ್ಗಗಳ ನಾಯಕತ್ವ ಅಂತಹ ಸಾಧನೆಗೆ ಕಾರಣವಾಗಿತ್ತು. ಈಗ ಸಾಂಸ್ಕೃತಿಕವಾಗಿ ಕರಾವಳಿಯ ಅವಳಿಯಂತಿರುವ ಕೇರಳದ ಕಮ್ಯುನಿಸ್ಟ್ ಪಕ್ಷಗಳ ನಾಯಕತ್ವ ಬಹುಮಟ್ಟಿಗೆ ಹಿಂದುಳಿದ ವರ್ಗಗಳ ಕೈಯಲ್ಲಿದೆ. ಇಂತಹ ಸನ್ನಿವೇಶದಲ್ಲಿ, ಕೇರಳ ಕಮ್ಯುನಿಷ್ಟ್ ಪಕ್ಷದ ಈಳವ ನಾಯಕತ್ವ ಕರಾವಳಿಯಲ್ಲಿ ಬಿಲ್ಲವರ ರಾಜಕೀಯ ಧ್ರುವೀಕರಣಕ್ಕೆ ಕಾರಣವಾಗಬಹುದೆನ್ನುವ ಆತಂಕದಲ್ಲಿ ಸಂಘಪರಿವಾರ ಪಿನರಾಯಿ ವಿಜಯನ್ ಅವರ ಭೇಟಿಗೆ ಇನ್ನಿಲ್ಲದ ವಿರೋಧವನ್ನು ಒಡ್ಡುತ್ತಿದೆ. ಯಾಕೆಂದರೆ ಅಂತಹ ಸಾಧ್ಯತೆಗಳು ಬಿಲ್ಲವರನ್ನು ದಾಳವನ್ನಾಗಿ ಬಳಸುವ ಸಂಘಪರಿವಾರದ ಕೋಮು ರಾಜಕೀಯಕ್ಕೆ ಪ್ರತಿಯಾಗಿ ನಿಲ್ಲುತ್ತವೆ.

ಸಂಘಪರಿವಾರದ ಕೋಮು ರಾಜಕಾರಣದ ಫಲವಾಗಿ ಇಂದು ಅಸಂಖ್ಯ ಬಿಲ್ಲವರು ಜೈಲುಗಳಲ್ಲಿ ಕೊಳೆಯುವಂತಾಗಿದೆ. ಕೋಮುಗಲಭೆಯಲ್ಲಿ ಸಾವನ್ನಪ್ಪಿದ ಹಿಂದತ್ವವಾದಿಗಳಲ್ಲೂ ಬಹುತೇಕ ಬಿಲ್ಲವರೇ ಆಗಿದ್ದಾರೆ. ಉದಯ ಪೂಜಾರಿ, ಜಗದೀಶ್ ಪೂಜಾರಿ, ಕ್ಯಾಂಡಲ್ ಸಂತು, ಪೊಳಲಿ ಅನಂತು, ಪ್ರಶಾಂತ್ ಪೂಜಾರಿ, ಹರೀಶ್ ಪೂಜಾರಿ, ಪ್ರೇಮ್ ಕೋಟ್ಯಾನ್, ಸುನೀಲ್ ಪೂಜಾರಿ, ಹೇಮಂತ್ ಹೀಗೆ ಬಿಲ್ಲವ ಹೆಸರುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದೀಗ ಅದೇ ಬಿಲ್ಲವ ಸಮುದಾಯಯದ ರಾಜಕೀಯ ಸಾಧ್ಯತೆಗಳಿಗೆ ಪ್ರತಿನಿಧಿಯಂತಿರುವ ಪಿನರಾಯಿ ವಿಜಯನ್ ಎಂಬ ನಾರಾಯಣ ಗುರುಗಳ ಸಾಮಾಜಿಕ ಕಾರ್ಯಕ್ಷೇತ್ರವಾಗಿದ್ದ ಈಳವ ಸಮುದಾಯದ ನಾಯಕನ ಆಗಮನಕ್ಕೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ.

ಪಿನರಾಯಿ ವಿಜಯನ್ ಮಂಗಳೂರು ಭೇಟಿ ಬಿಲ್ಲವರ ಸ್ವಾಭಿಮಾನದ ವಿಷಯವಾಗಿದೆ. ಪಿನರಾಯಿ ಕೇರಳ ಮತ್ತು ತುಳುವನಾಡಿನಲ್ಲಿkoti-chennay ಸಾಮಾಜಿಕ ಸ್ಥಾನಮಾನಕ್ಕಾಗಿ, ಸ್ವಾಭಿಮಾನಕ್ಕಾಗಿ ನಾರಾಯಣ ಗುರುಗಳು ನಡೆಸಿದ್ದ ಅವಿರತ ಹೋರಾಟದ ಫಲಶ್ರುತಿಯ ಪ್ರತೀಕವಾಗಿದ್ದಾರೆ. ಕೇರಳ ರಾಜ್ಯ ಕಮ್ಯೂನಿಷ್ಟ್ ರಾಜ್ಯವಾಗುವುದಕ್ಕೂ, ಸಾಕ್ಷರ ನಾಡಾಗುವುದಕ್ಕೂ ಅದರ ಫಲವಾಗಿ ವಿ ಎಸ್ ಅಚ್ಯುತಾನಂದನ್, ಪಿನರಾಯಿ ವಿಜಯನ್ ರಂತಹ ಹಿಂದುಳಿದ ವರ್ಗದ ನಾಯಕರು ಮುಖ್ಯಮಂತ್ರಿಗಳಾಗುವುದಕ್ಕೂ ಒಂದಕ್ಕೊಂದು ಸಂಬಂಧವಿದೆ. ನಾರಾಯಣ ಗುರುಗಳ ಸಮಾಜ ಸುಧಾರಣಾ ಚಳುವಳಿಯ ಫಲವಾಗಿಯೇ ಕೇರಳದಲ್ಲಿ ಇಂತಹ ಕ್ರಾಂತಿ ಆಗುವುದಕ್ಕೆ ಸಾಧ್ಯವಾಗಿದೆ. ಆದರೆ ಅಂತಹ ಮಹತ್ತರವಾದ ರಾಜಕೀಯ ಸಾಧನೆಗಳು ಕರಾವಳಿಯಲ್ಲಿ ಕಂಡುಬಂದಿಲ್ಲ ಎನ್ನಬಹುದೇನೋ. ಬಂಗಾರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಜನಾರ್ಧನ ಪೂಜಾರಿ ಕೇಂದ್ರದ ಮಂತ್ರಿಯಾಗಿದ್ದು ಬಿಟ್ಟರೆ ಬಿಲ್ಲವರಿಗೆ ರಾಜಕೀಯ ಪ್ರಾತಿನಿಧ್ಯ ದೊರಕಿದ್ದು ಕಡಿಮೆಯೇ. ಸಂಘಪರಿವಾರದ ರಾಜಕೀಯ ಘಟಕವಾದ ಬಿಜೆಪಿಯಲ್ಲಂತೂ ಬಿಲ್ಲವರು ಕಾಲಾಳುಗಳಾಗಿದ್ದಾರೆಯೇ ವಿನಹ ಪೂರ್ಣಾವಧಿ ಮಂತ್ರಿಯಾಗಲೂ ಸಾಧ್ಯವಾಗಲಿಲ್ಲ. ಅಂದಿನಿಂದ ಇಂದಿನವರೆಗೆ ಬಿಲ್ಲವರ ರಾಜಕೀಯ ಪ್ರಾತಿನಿಧ್ಯವನ್ನು ತಡೆದ ಪ್ರತಿಗಾಮಿ ಶಕ್ತಿಗಳೇ ಇಂದು ಬಿಲ್ಲವರ /ಈಳವರ ನಾಯಕನ ಆಗಮನಕ್ಕೆ ತಡೆಯೊಡ್ಡುವ ಪ್ರಯತ್ನ ಮಾಡುತ್ತಿದ್ದಾರೆ.

ಕರಾವಳಿ ಐಕ್ಯತಾ ಸಮಾವೇಶ ಎಂಬುದು ಯಾವುದೇ ನೆಲೆಯಲ್ಲಿ ಹಿಂದೂ ಧರ್ಮ ವಿರೋಧಿ ಸಮಾವೇಶವಲ್ಲ. ಜಾತಿ ಶ್ರೇಣೀಕರಣದ, ಜಾತಿ ದೌರ್ಜನ್ಯದ ಚರ್ಚೆಯನ್ನು ಇನ್ನೂ ಮುನ್ನಲೆಗೆ ತಂದಲ್ಲಿ ಇದು ಹಿಂದುಳಿದ ವರ್ಗಗಳ, ಬಿಲ್ಲವರ, ದಲಿತರ, ಮಹಿಳೆಯರ ಸ್ವಾಭಿಮಾನದ ಸಮಾವೇಶವಾಗಲ್ಲದು. ಇಂತಹ ಅಪರೂಪದ ಸನ್ನಿವೇಶದಲ್ಲಿ ಕೇರಳ ಅಥವಾ ಕರ್ನಾಟಕದಲ್ಲಿ ನಡೆದ ರಾಜಕೀಯ ಹತ್ಯೆಗಳ ಪಟ್ಟಿ ನೀಡುವ ಅಸಹ್ಯಕರ ಪೈಪೋಟಿ ನಮ್ಮ ಆದ್ಯತೆಯಾಗಬಾರದು. ಕರ್ನಾಟಕದಲ್ಲಿ, ಕೇರಳದಲ್ಲಿ ಅಥವಾRSS ದೇಶದ ಯಾವುದೇ ಭಾಗದಲ್ಲಿ ಕೋಮು ವಿಛ್ಛಿದ್ರಕಾರಿ ಶಕ್ತಿಗಳಿಗೆ, ರಾಜಕೀಯ ಸಂಘರ್ಷಗಳಿಗೆ ಹಿಂದುಳಿದ ವರ್ಗಗಳ ಹುಡುಗರು ಬಲಿಯಾಗುವುದನ್ನು ತಡೆಯುವುದು ಹೇಗೆ ಮತ್ತು ರಾಜಕೀಯ ಅಧಿಕಾರದಲ್ಲಿ ಅವರಿಗೆ ನ್ಯಾಯಯುತವಾದ ಪಾಲು ಸಿಗುವುದು ಹೇಗೆ ಎಂಬ ಚರ್ಚೆ ಇಲ್ಲಿ ಮುಖ್ಯವಾಗಬೇಕು. ಇಲ್ಲಿ ಅಂತಹ ಚರ್ಚೆಯ ನಾಯಕತ್ವವನ್ನು ಪಿನರಾಯಿ ವಿಜಯನ್ ರಂತಹ ಹಿಂದುಳಿದ ವರ್ಗಗಳ ನಾಯಕರೇ ವಹಿಸಿಕೊಳ್ಳಬೇಕು. ಈ ಹಿನ್ನಲೆಯಲ್ಲಿ ಪಿನರಾಯಿ ವಿಜಯನ್ ಮಾತುಗಳು ಕಡಲ ತಡಿಯಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಅವರು ಮಂಗಳೂರಿಗೆ ಬರುವ ದಿನದಂದು ಸಂಘಪರಿವಾರ ಕರೆ ಕೊಟ್ಟಿರುವ ಬಂದ್ ಅನ್ನು ಧಿಕ್ಕರಿಸಿ ಬಿಲ್ಲವರೂ ಸೇರಿದಂತೆ ಹಿಂದುಳಿದ ವರ್ಗಗಳು ರಾಜಕೀಯ ಅಧಿಕಾರವನ್ನು ಪಡೆಯುವ ಕಡೆಗೆ ಕಟಿಬದ್ಧರಾಗಬೇಕು. ಈ ಕಾರಣಕ್ಕಾಗಿ ಸಂಘಪರಿವಾರದ ವಿರೋಧಕ್ಕೆ ಕಾರಣವಾಗಿರುವ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಕರಾವಳಿ ಭೇಟಿಯನ್ನು ಬಿಲ್ಲವರು ಪ್ರತಿಷ್ಠೆಯ ವಿಷಯವನ್ನಾಗಿಸಿಕೊಳ್ಳುವುದು ಅವರ ರಾಜಕೀಯ ಏಳಿಗೆಯ ದೃಷ್ಟಿಯಿಂದ ಅತ್ಯಂತ ಮಹತ್ವದಾಗಿದೆ.