ಏಸುಕ್ರಿಸ್ತ ಮಹಾತ್ಮೆ ಮತ್ತು ಕರಾವಳಿ ಯಕ್ಷಗಾನ ವಿರಚಿತ ಕೋಮುವಾದ

Naveen Soorinje


ನವೀನ್ ಸೂರಿಂಜೆ


 

ಮಂಗಳೂರಿನಲ್ಲಿ ನಡೆಯಲಿರುವ ಏಸುಕ್ರಿಸ್ತ ಮಹಾತ್ಮೆ ಎಂಬ ಯಕ್ಷಗಾನ ತಾಳಮದ್ದಳೆಗೆ ಹಿಂದುತ್ವವಾದಿಗಳಿಂದ ವಿರೋಧpic 3 ವ್ಯಕ್ತವಾಗುತ್ತಿದೆ. ಯಕ್ಷಗಾನ ಎಂಬ ವೈದಿಕರ ಕ್ಷೇತ್ರಕ್ಕೆ ಏಸು ಕ್ರಿಸ್ತ ಮಹಾತ್ಮೆ ಬಂದಿರೋದು ಮತಾಂತರದ ಉದ್ದೇಶದಿಂದ ಎಂಬ ಆರೋಪ ಹಿಂದುತ್ವವಾದಿಗಳದ್ದು. ಯಕ್ಷಗಾನ ಎಂಬುದು ಕೇವಲ ಕಲೆ, ಸಂಸ್ಕೃತಿಯಲ್ಲ. ಇದರ ಹಿಂದೆ ವೈಧಿಕ ಧರ್ಮದ ಪ್ರಸಾರದ ತಂತ್ರವಿತ್ತು. ವೈದಿಕರು ಮತಾಂತರಕ್ಕಾಗಿಯೇ ಯಕ್ಷಗಾನವನ್ನು ಬಳಸಿ ತನ್ನ ಕಾರ್ಯ ಪೂರ್ಣಗೊಳಿಸಿದ ಬಳಿಕ ಈಗ ಅದನ್ನೇ ಕೋಮುವಾದಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಕರಾವಳಿಯ ಜನರ ತಲೆಯೊಳಗೆ ಈ ಪರಿಯ ಕೋಮುವಾದವನ್ನು ತುಂಬಿಸಿದವರು ಯಾರು ಎಂದು ಅಧ್ಯಯನ ಮಾಡಿದಾಗ ಅದರ ಮೊದಲ ಆರೋಪಿಯಾಗಿ ಕಾಣುವುದೇ ಈ ಯಕ್ಷಗಾನ. ಕರಾವಳಿಯ ಗಂಡುಕಲೆ, ಸಾಂಸ್ಕೃತಿಕ ಹಿರಿಮೆ ಎಂದು ಹೇಳುವ ಯಕ್ಷಗಾನ ಶೂದ್ರ ಪರಂಪರೆಯನ್ನು ನಿಧಾನವಾಗಿ ಕೊಲ್ಲುತ್ತಲೇ ಬಂತು.

ಯಕ್ಷಗಾನ ಎಂಬುದು ಪ್ರಾರಂಭವಾಗಿದ್ದು ಮಹಾಭಾರತ, ರಾಮಾಯಣ, ಕೃಷ್ಣ, ವಿಷ್ಣು, ದೇವಿಯ ಪ್ರಚಾರಕ್ಕೆ. ಯಕ್ಷಗಾನವನ್ನು ಆಟ, ಬಯಲಾಟ ಎಂದು ಕರೆಯುತ್ತಾರೆ. 1614ರಲ್ಲಿ ತಂಜಾವರದ ಅರಸು ರಘುನಾಥ ನಾಯಕನು ಬರೆದ ರುಕ್ಮಿಣಿ ಕೃಷ್ಣ ವಿವಾಹ ಎಂಬ ಯಕ್ಷಗಾನ ಪ್ರಬಂಧವೇ ಮೊದಲ ಕೃತಿ ಎನ್ನಲಾಗುತ್ತದೆ. ಇದರ ಬಗ್ಗೆ ತಕರಾರು ಚರ್ಚೆಗಳೂ ಇವೆ. ‘‘ಪುರಂದರದಾಸರು ಅನಸೂಯ ಕಥೆ ಎಂಬ ಯಕ್ಷಗಾನ ಪ್ರಬಂಧವನ್ನು ರಚಿಸಿದ್ದರೆಂದು ಹೇಳಲಾಗುತ್ತಿದೆ. ಅವರ ಮಗ ಮಧ್ವಪತಿದಾಸರು ಆಭಿಮನ್ಯು ಕಾಳಗ, ಇಂದ್ರಜಿತು ಕಾಳಗ, ಉದ್ದಾಳೀಕನ ಕಥೆ, ಐರಾವತ, ಕಂಸವಧೆ ಎಂಬ ಯಕ್ಷಗಾನ ಪ್ರಬಂಧಗಳನ್ನು ರಚಿಸಿದ್ದನೆಂಬ ಊಹೆಗಳೂ ಇವೆ’’ ಎಂದು ಸಂಶೋಧಕಿ ಡಾ ಸುನೀತಾ ಶೆಟ್ಟಿಯವರು ತಮ್ಮ ಬರಹದಲ್ಲಿ ಹೇಳುತ್ತಾರೆ. ಹೀಗೆ ಪುರಾಣದ ಕತೆಯ ಮೇಲೆ ಪ್ರಾರಂಭವಾದ ಯಕ್ಷಗಾನವು ಪುರಾಣಗಳನ್ನು ಜನರ ತಲೆಗೆ ತುಂಬುವಲ್ಲಿ ಯಶಸ್ವಿಯಾಗುತ್ತದೆ.

ಕರಾವಳಿ ಭಾಗದಲ್ಲಿ ವೈದಿಕ ಧರ್ಮ ಹರಡುವುದು ಸುಲಭ ಸಾಧ್ಯವಾಗಿರಲಿಲ್ಲ. ನಮ್ಮ ಹಿರಿಯರನ್ನೇ ದೈವಗಳು ಎಂದುಕೊಳ್ಳುವ ಭೂತಾರಾಧನೆ ಗಟ್ಟಿಯಾಗಿದ್ದ ದಿನಗಳವು. ಕೃಷ್ಣ, ರಾಮ, ದೇವಿ ಕರಾವಳಿಗರ ದೇವರಾಗಿರಲಿಲ್ಲ. ಮದ್ವಾಚಾರ್ಯರು ಸ್ಥಾಪಿಸಿದ ಮಠಗಳು, ದೇವಸ್ಥಾನಗಳಿಗೆ ಮಾರ್ಕೆಟಿಂಗ್ ಮಾಡಬೇಕಾದರೆ ಈ ಯಕ್ಷಗಾನ ಪ್ರಸಂಗಗಳನ್ನು ಬರೆಯುವುದು ಅನಿವಾರ್ಯವಾಯ್ತು. ಸೇವೆಯಾಟ, ಹರಕೆಯಾಟ, ಬಯಲಾಟ ಎಂಬ ವಿಧದ ಯಕ್ಷಗಾನದ ಮೂಲಕ ಈ ಪುರಾಣಗಳನ್ನು ಜನರ ಮನೆಮನಗಳಿಗೆ ತಲುಪಿಸಲಾಯ್ತು.

ಆಗಿನ ಪ್ರಭುತ್ವ ಮತ್ತು ವೈದಿಕರು ಅಂದು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದರು. ಆಚಾರ್ಯ ವಿದ್ಯಾರಣ್ಯರು ಕುಲಗುರುವಾಗಿ ಹರಿಹರ ಮತ್ತು ಬುಕ್ಕರಾಯರ ವಿಜಯನಗರ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದರು. ಆಗ ವಿದ್ಯಾರಣ್ಯರು ಶೃಂಗೇರಿ ಮಠದ ೧೨ನೇ ಗುರುಗಳಾಗಿದ್ದರು. ವಿದ್ಯಾರಣ್ಯರ ಕಾಲದಲ್ಲೇ ಭಾಗವತಿಕೆಯ ಸಾಹಿತ್ಯವನ್ನು ರಚಿಸಲಾಯ್ತು ಎಂದು ಸಂಶೋಧಕರನೇಕರು ಕಂಡುಕೊಂಡಿದ್ದಾರೆ.

ಇದಾದ ನಂತರ ಕರ್ನಾಟಕದಲ್ಲಿ ಕೆಳದಿಯ ಅರಸರು ಮತ್ತು ಮೈಸೂರು ಅರಸರು ಯಕ್ಷಗಾನ ಕಲೆಯನ್ನು ಪೋಷಿಸಿದರು. ಕೆಳದಿ ಸಂಸ್ಥಾನದ ಅರಸರುpic 1 ಈಗಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಅವಿಭಜಿತ ದಕ್ಷಿಣ ಕನ್ನಡ, ದಾರವಾಡ, ಚಿತ್ರದುರ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರಭುತ್ವವನ್ನು ಸಾಧಿಸಿದ್ದರು. ಹಾಗಿದ್ದರೆ ದಾರವಾಡ, ಚಿತ್ರದುರ್ಗ, ಉತ್ತರ ಕರ್ನಾಟಕದ ಭಾಗಗಳಲ್ಲಿ ಯಕ್ಷಗಾನ ಯಾಕೆ ವೈದಿಕ ಧರ್ಮವನ್ನು ಹರಡಲಿಲ್ಲ ಎಂಬ ಪ್ರಶ್ನೆ ಉದ್ಬವವಾಗುತ್ತದೆ. 1336 ರಿಂದ 1646 ರವರೆಗೆ ವಿಜಯನಗರ ಸಾಮ್ರಾಜ್ಯವೂ 1500 ನೇ ಇಸವಿಯಿಂದ ಕೆಳದಿ ಸಂಸ್ಥಾನದ ಪ್ರಭುತ್ವ ಪ್ರಾರಂಭವಾದರೆ, ಅದಕ್ಕಿಂತಲೂ ಮೊದಲೇ ಅಂದರೆ 1317 ರಿಂದ ಮದ್ವಾಚಾರ್ಯರು ವೈದಿಕ ಧರ್ಮದ ಪ್ರಚಾರವನ್ನು ಕರಾವಳಿಯನ್ನು ಗುರಿಯಿಟ್ಟು ಮಾಡಲಾರಂಭಿಸಿದ್ದರು. ಮದ್ವಾಚಾರ್ಯ, ವಿದ್ಯಾರಣ್ಯರ ಪ್ರಭಾವವು ಆ ನಂತರ ಕರಾವಳಿಯನ್ನು ಆಳಿದ ಅರಸರ ಮೇಲೆ ಗಾಢವಾಗಿ ಬೀರಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. 1308 ರಲ್ಲಿ ಮದ್ವಾಚಾರ್ಯರು ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸುವುದರ ಜೊತೆಗೆ ಮಲೆಕುಡಿಯರ ನಾಗಾರಾಧನೆಯ ಸ್ಥಳವಾದ ಸುಬ್ರಹ್ಮಣ್ಯಕ್ಕೂ ಪೀಠಾಧಿಪತಿಯನ್ನು ನೇಮಿಸಿದ್ರು. ಈ ಮಠಗಳು ಅಂದಿನ ಅರಸರ ಸಂಪೂರ್ಣ ಸಹಕಾರದಲ್ಲಿ ವೈದಿಕ ಧರ್ಮವನ್ನು ಹರಡಲು ಪ್ರಾರಂಭಿಸಿದರು. ಅದಕ್ಕೆ ಅವರು ಪ್ರಮುಖವಾಗಿ ಆಯ್ಕೆ ಮಾಡಿಕೊಂಡಿದ್ದು ಯಕ್ಷಗಾನವನ್ನು.

ಉತ್ತರ ಕರ್ನಾಟಕದ ದೊಡ್ಡಾಟ, ಕೇರಳದ ಕಥಕ್ಕಳಿ, ಕೃಷ್ಣ ನಾಟ್ಯಂ, ರಾಮನಾಟ್ಯಂ ನಂತೆ ಯಕ್ಷಗಾನವನ್ನು ವೈದಿಕರು ಕೇವಲ ಕಲೆಯನ್ನಾಗಿ ಉಳಿಸಲಿಲ್ಲ. ಅದಕ್ಕೊಂದು ಧಾರ್ಮಿಕ ರೂಪ ನೀಡಲಾಯ್ತು. ಯಕ್ಷಗಾನವನ್ನು ಆಡುವ ಮೊದಲು ಅದಕ್ಕೊಂದು ಚೌಕಿ ಪೂಜೆಯನ್ನು ನಡೆಸಲಾಯ್ತು. ಅಂದರೆ ಒಂದು ಯಕ್ಷಗಾನ ಮೇಳ ತನ್ನದೇ ಆದ ದೇವರನ್ನು ಪ್ರತಿನಿಧಿಸುತ್ತದೆ. ಯಕ್ಷಗಾನದ ಪ್ರಾರಂಭದಲ್ಲಿ ಗಣಪತಿಯನ್ನು ಭಜಿಸಲಾಗುತ್ತದೆ. ನಂತರ ಪುರಾಣದ ಕತೆಯನ್ನು ನಾಟ್ಯ ಮತ್ತು ವಾಚ್ಯದ ಮೂಲಕ ಪ್ರಸ್ತುತಪಡಿಸಲಾಗುತ್ತದೆ. ಜನರಿಗೆ ಅರ್ಥವಾಗುವ ಕರಾವಳಿ ಕನ್ನಡದಲ್ಲಿ ನಡೆಯುವ ಯಕ್ಷಗಾನದ ಪುರಾಣವು ಅನಕ್ಷರಸ್ಥರಿಗೂ ಅರ್ಥವಾಗುವಂತಿರುತ್ತದೆ. ಕೋಡ್ದಬ್ಬು, ತನ್ನಿಮಾನಿಗ, ಪಂಜುರ್ಲಿಯಂತಹ ದೈವಗಳನ್ನಷ್ಠೆ ನಂಬುತ್ತಿದ್ದ ಕರಾವಳಿಯ ಶೂದ್ರರು ನಿಧಾನಕ್ಕೆ ರಾಮ ಕೃಷ್ಣರನ್ನು ದೇವರೆಂದುಕೊಳ್ಳಲು ಪ್ರಾರಂಬಿಸಿದ್ರು. ಅಯೋದ್ಯೆಯ ಬಾಬರಿ ಮಸೀದಿ, ರಾಮಜನ್ಮ ಭೂಮಿ ವಿವಾದ ಸಂಧರ್ಭದಲ್ಲೇ ದೂರದರ್ಶನದಲ್ಲಿ ರಾಮಾಯಣ ದಾರವಾಹಿಯ ಮೂಲಕ ರಾಮ ಹೇಗೆ ಇಡೀ ದೇಶಕ್ಕೆ ದೇವರಾದನೋ ಹಾಗೇ. ಆದರೆ ಎಷ್ಟೇ ಕಸರತ್ತು ಮಾಡಿದರೂ ಕರಾವಳಿಯ ಶೂದ್ರರು, ದಲಿತರು ದೈವ/ಭೂತಗಳನ್ನು ಬಿಡುವುದಿಲ್ಲ ಎಂದು ಗೊತ್ತಾದಾಗ ಕೊಡ್ದಬ್ಬು, ಪಂಜುರ್ಲಿ ಮುಂತಾದ ದೈವಗಳು ಶಿವನ ಗಣಗಳು ಎಂದು ಸಾರುವ ಯಕ್ಷಗಾನ ಪ್ರಸಂಗ ಬರೆದರು! ಆ ಮೂಲಕ ಭೂತಾರಾಧನೆಯ ದೈವಸಾನಗಳಿಗೆ ವೈದಿಕರ ಪ್ರವೇಶವಾಯ್ತು.

ಈ ರೀತಿ ಮೂರ್ನಾಲ್ಕು ವಿಧವಾಗಿ ಯಕ್ಷಗಾನ ಕರಾವಳಿಯಲ್ಲಿ ಖ್ಯಾತಿ ಪಡೆಯಲಾರಂಭಿಸಿತು. ಉಳ್ಳವರು ಹರಕೆಯಾಟ ಮಾಡಿದ್ರೆ, ಬಡವರು ಬಯಲಾಟ ನೋಡಿದ್ರು. ಯಕ್ಷಗಾನ ನೋಡುವುದು ಮತ್ತು ಕೇಳುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬುದನ್ನೂ ತೇಲಿಬಿಡಲಾರಂಬಿಸಿದರು. ಈ ಕಾರಣಕ್ಕಾಗಿ ಇದೀಗ ದಕ್ಷಿಣ ಕನ್ನಡದ ದೇವಸ್ಥಾನವೊಂದರಲ್ಲಿ ಆರು ಯಕ್ಷಗಾನ ತಂಡಗಳು ಕಾರ್ಯನಿರ್ವಹಿಸುತ್ತಿದೆ. ಯಾರಾದರೂ ಇವತ್ತು ಯಕ್ಷಗಾನವನ್ನು ಬುಕ್ ಮಾಡಿದರೆ ಅವರ ಸರದಿ ಬರುವುದು ಎರಡು ವರ್ಷದ ನಂತರ ! ಅಂದರೆ ಅಷ್ಟೊಂದು ಪ್ರಮಾಣದಲ್ಲಿ ಈ ದೇವಸ್ಥಾನವೊಂದರ ಯಕ್ಷಗಾನ ಕರಾವಳಿಯಲ್ಲಿ ಕಾರ್ಯತತ್ಪರವಾಗಿದೆ. ಹರಕೆಯ ಆಟ ಆಡಿಸಬೇಕೆಂದಿದ್ದರೆ ಈ ದೇವಸ್ಥಾನಗಳ ಯಕ್ಷಗಾನ ಮೇಳವನ್ನೇ ಆಶ್ರಯಿಸಬೇಕಾಗುತ್ತದೆ. ದೇವಸ್ಥಾನಗಳ ಮೇಳಗಳ ಜೊತೆ ದೇವಸ್ಥಾನದಿಂದಲೇ ದೇವರು ಬರುವ ಪ್ರಕ್ರೀಯೆ ಇದೆ. ಅಂದರೆ ಸರ್ವಾಭರಣ ಭೂಷಿತರಾಗಿರುವ ದೇವರ ಮೂರ್ತಿಯನ್ನು ಪುರೋಹಿತರು ಯಕ್ಷಗಾನ ನಡೆಯುವ ಸ್ಥಳಕ್ಕೆ ತೆಗೆದುಕೊಂಡು ಬಂದು ಮಹಾಪೂಜೆ ಮಾಡುತ್ತಾರೆ. ಹರಕೆಯಾಟ ಮಾಡಿದಾಗ ಬರುವ ದೇವರು ಬ್ರಾಹ್ಮಣೇತರರ ಮನೆಯೊಳಗೆ ಈಗಲೂ ಬರುವುದಿಲ್ಲ. ಉದಾಹರಣೆಗೆ ಬಂಟ ಬಿಲ್ಲವ ಜಾತಿಯವನೊಬ್ಬ ದೇವಸ್ಥಾನದ ಮೇಳವನ್ನು ಸಾವಿರಾರು ರೂಪಾಯಿ ಕೊಟ್ಟು ಬುಕ್ ಮಾಡಿ, ಲಕ್ಷಾಂತರ ರೂಪಾಯಿ ವ್ಯಹಿಸಿ ಅದ್ದೂರಿ ಯಕ್ಷಗಾನ ಮಾಡಿದರೂ ದೇವರನ್ನಿಡಲು ಬ್ರಾಹ್ಮಣರ ಮನೆ ಹುಡುಕಬೇಕು ಅಥವಾ ಊರ ದೇವಸ್ಥಾನವನ್ನು ಆಶ್ರಯಿಸಬೇಕು. ಈ ರೀತಿ ಯಕ್ಷಗಾನ ಈಗಲೂ ಮಡಿಮೈಲಿಗೆಯನ್ನು ಸಂಪ್ರದಾಯಬದ್ದವಾಗಿ ನಡೆಸುತ್ತಿದೆ.

ಕೆಲ ವರ್ಷಗಳ ಹಿಂದೆ ಯಕ್ಷಗಾನದಲ್ಲಿ ಜಾತಿಪದ್ದತಿ ವಿವಾದಗಳನ್ನು ಹುಟ್ಟು ಹಾಕಿತ್ತು.‌ ಮಂದಾರ್ತಿ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯಲ್ಲಿ ಕಲಾವಿದ ಐರೋಡಿpic 2 ಗೋವಿಂದಪ್ಪಗೆ ಪಾತ್ರ ನಿರಾಕರಿಸಲಾಯ್ತು. ಒಂದು ಕಾಲದಲ್ಲಿ ದೇವಸ್ಥಾನಗಳಿಗೆ ಅಸ್ಪೃಶ್ಯರೇ ಆಗಿದ್ದ ಬಿಲ್ಲವ ಸಮುದಾಯಕ್ಕೆ ಸೇರಿದ ಐರೋಡಿ ಗೋವಿಂದಪ್ಪ ಯಕ್ಷಗಾನದ ಗೆಜ್ಜೆ ಕಟ್ಟಿದರೆ ದುರ್ಗಾಪರಮೇಶ್ವರಿ ಮುನಿಸಿಕೊಳ್ಳುತ್ತಾರೆ ಎಂಬುದು ವಾದವಾಗಿತ್ತು. ಕೊನೆಗೆ ಭಾರೀ ಪ್ರತಿಭಟನೆಯ ನಂತರ ಐರೋಡಿ ಗೋವಿಂದಪ್ಪ ಯಕ್ಷಗಾನದ ಗೆಜ್ಜೆ ಕಟ್ಟಿದ್ರು. ದೇವಸ್ಥಾನದ ಅಧೀನದಲ್ಲಿರುವ ಮೇಳಗಳ ಉಸ್ತುವಾರಿ ಅಥವಾ ಮಾಲೀಕರು ಹೆಚ್ಚಾಗಿ ಬಂಟರೇ ಆಗಿರುತ್ತಾರೆ. ಒಂದು ಕಾಲದ ಗುತ್ತಿನ ಅರಸರಾಗಿದ್ದ ಬಂಟರು ಪುರೋಹಿತಶಾಹಿಗಳ ಸೂಚನೆಗಳನ್ನು ಚಾಚೂತಪ್ಪದೆ ಜಾರಿಗೆ ತರುತ್ತಾರೆ. ಭರತನಾಟ್ಯ ಸೇರಿದಂತೆ ಹಲವು ಪ್ರಕಾರಗಳು ಬ್ರಾಹ್ಮಣರ ಹಿಡಿತದಲ್ಲಿದ್ದರೂ ಕ್ರಮೇಣ ಅವು ಸಾಮಾಜಿಕ ಆಶಯಗಳನ್ನು ಮೈಗೂಡಿಸಿಕೊಂಡವು. ಭರತನಾಟ್ಯವನ್ನು ಎಲ್ಲಾ ಸಮುದಾಯದವರೂ ಪ್ರಸ್ತುತಪಡಿಸಬಹುದು ಮತ್ತು ಧಾರ್ಮಿಕವಲ್ಲದ ಸಂಗೀತಕ್ಕೂ ಅಳವಡಿಸಿಕೊಳ್ಳಬಹುದು ಎಂಬಲ್ಲಿಯವರೆಗೆ ಬದಲಾವಣೆ ಕಂಡಿತು. ಆದರೆ ಯಕ್ಷಗಾನ ಮಾತ್ರ ಇನ್ನೂ ಕೂಡಾ ಸಾಮಾಜಿಕ ಬದಲಾವಣೆಗೆ ತೆರೆದುಕೊಳ್ಳಲೇ ಇಲ್ಲ. ಪೆರ್ಡೂರು ಮೊದಲಾದ ಮೇಳಗಳು ಲೌಕಿಕ ಥೀಮ್ ಇರತಕ್ಕಂತಹ ಪ್ರಸಂಗಗಳನ್ನು ಪ್ರಸ್ತುತ ಪಡಿಸಿದವು. ಧಾರ್ಮಿಕವಲ್ಲದ ಕಥಾ ಪ್ರಸಂಗವನ್ನು ಇಟ್ಟುಕೊಂಡು ಯಕ್ಷಗಾನ ಆಡಿದರು. ಆದರೆ ಅವ್ಯಾವುದೂ ಹೆಚ್ಚಿನ ಕಾಲ ಬಾಳಿಕೆ ಬರಲಿಲ್ಲ. ಅದಕ್ಕೆ ಕಾರಣವಾಗಿರುವುದು ಯಕ್ಷಗಾನಕ್ಕೆ ಬ್ರಾಹ್ಮಣರು ಹಾಕಿರುವ ಭದ್ರ ಬುನಾಧಿ. ಯಕ್ಷಗಾನವನ್ನು ಪ್ರಗತಿಪರವಾಗಿ ಬದಲಾವಣೆ ಮಾಡಲು ಸಾಧ್ಯವೇ ಆಗದ ರೀತಿಯಲ್ಲಿ ದೇವಸ್ಥಾನ, ದೇವರು, ಧರ್ಮ, ಹರಕೆ, ಪೂಜೆಗೆ ವ್ಯವಸ್ಥಿತವಾಗಿ ಲಿಂಕ್ ಮಾಡಲಾಗಿದೆ.

ಇವತ್ತಿಗೂ ಯಕ್ಷಗಾನದ ದೇವಿ ಮಹಾತ್ಮೆ ಪ್ರಸಂಗದಲ್ಲಿ ದೇವಿ ಪಾತ್ರವನ್ನು ಬ್ರಾಹ್ಮಣರೇ ಮಾಡಬೇಕು ಎಂಬ ಅಲಿಖಿತ ನಿಯಮವಿದೆ. ಯಕ್ಷಗಾನ ಕೇವಲ ಕಲೆಯಾಗಿದ್ದರೆ ಅದಕ್ಕೆ ದೈವತ್ವವನ್ನು ನೀಡುವ, ಮಡಿ ಮೈಲಿಗೆಯನ್ನು ಹೇರುವ ಅಗತ್ಯ ಇರಲಿಲ್ಲ. ದೇವಿ ಪಾತ್ರ ಮಾಡುವವನು ಮಡಿಯಲ್ಲಿ ಇರಬೇಕು, ವೃತಗಳನ್ನು ಅನುಸರಿಸಬೇಕು ಎಂಬ ನಿಯಮವನ್ನು ಜಾರಿಗೆ ತಂದು ಅದನ್ನು ಬ್ರಾಹ್ಮಣರಿಗೆ ಮಾತ್ರ ಸೀಮಿತಗೊಳಿಸಲಾಯ್ತು. ಪಾತ್ರಗಳನ್ನು ಕೆಳವರ್ಗಗಳಿಗೆ ನೀಡಿದರೂ, ಅಲ್ಲಿ ಪಾತ್ರವನ್ನು ಶ್ರೇಣಿಕೃತವಾಗಿ ವಿಂಘಡಿಸಲಾಗುತ್ತದೆ. ಈಗೀಗ ಕೆಳವರ್ಗಗಳು ಯಕ್ಷಗಾನದಲ್ಲಿ ಹೆಸರು ಮಾಡಿದರೂ ಯಕ್ಷಗಾನದ ಮೂಲ ವೈದಿಕರ ಆಶಯವನ್ನು ಬದಲು ಮಾಡಲು ಸಾಧ್ಯವಾಗಿಲ್ಲ‌.

ತೆಂಕುತಿಟ್ಟು, ಬಡಗುತಿಟ್ಟು ಎಂದು ಇಪ್ಪತ್ತಕ್ಕೂ ಹೆಚ್ಚು ಮೇಳಗಳು ಕರಾವಳಿಯಲ್ಲಿ ವೈದಿಕ ಧರ್ಮ ಹರಡುವಲ್ಲಿ ಕಾರ್ಯತತ್ಪರವಾಗಿದೆ. ಬೀದಿ ಬೀದಿಯಲ್ಲಿ, ಮನೆ ಮನೆಗಳಲ್ಲಿ ಯಕ್ಷಗಾನ ನಡೆಯಲಾರಂಭಿಸಿತು. ನಡೆಯುತ್ತಿದೆ. ಇತ್ತಿಚೆಗೆ ತುಳು ಯಕ್ಷಗಾನಗಳು ಪ್ರಾರಂಭವಾದಾಗ ಶೋಷಣೆ ಮುಕ್ತ ಸಮಾಜಕ್ಕಾಗಿ ಹೋರಾಡಿ ದೈವಗಳಾದ ಕೋಟಿ ಚೆನ್ನಯ್ಯ, ಕೊಡ್ದಬ್ಬು, ತನ್ನಿಮಾನಿ ಮತ್ತಿತರ ಶೂದ್ರ ದೈವಗಳ ಕತೆಗಳು ಯಕ್ಷಗಾನ ಪ್ರಸಂಗವಾದುದು ಹೊಸ ನಿರೀಕ್ಷೆ ಮೂಡಿಸಿತ್ತು. ಆದರೆ ಈ ಪ್ರಸಂಗಗಳೂ ವೈದಿಕರ ಯೋಜನೆಯಂತೆಯೇ ನಡೆದವು. ವೈದಿಕರ ದೇವರಿಲ್ಲದ ಯಕ್ಷಗಾನವನ್ನು ಒಪ್ಪಿಕೊಳ್ಳಲಾಗದ ಸ್ಥಿತಿಗೆ ಕರಾವಳಿಗರು ತಲುಪಿ ಆಗಿತ್ತು.

ಈಗ ಏಸುಕ್ರಿಸ್ತ ಮಹಾತ್ಮೆ ಎಂಬ ಯಕ್ಷಗಾನ ಪ್ರಸಂಗ ವಿವಾದ ಎಬ್ಬಿಸಿದೆ. 40 ವರ್ಷಗಳ ಹಿಂದೆ ಕೇಶವ ಮುಳಿಯರು ಬರೆದ ಯಕ್ಷಗಾನ ಪ್ರಸಂಗವನ್ನು ಪರಿಷ್ಕರಿಸಿ ತಾಳಮದ್ದಲೆಯಾಗಿ ಪ್ರಸ್ತುತಪಡಿಸಲಿದ್ದಾರೆ. ಯಕ್ಷಗಾನ ಎಂಬುದು ಈಗ ಕೇವಲ ಧಾರ್ಮಿಕ ಕಲೆಯಾಗಿಲ್ಲ. ಯಕ್ಷಗಾನ ಎಂಬುದು ಸಾಂಸ್ಕೃತಿಕ ಕಲೆಯಾಗಿ ಹಲವು ಲಾಭಗಳನ್ನು ತನ್ನದಾಗಿಸಿಕೊಂಡಿದೆ. ಸರಕಾರದಿಂದಲೂ ಅಧಿಕೃತವಾಗಿ ಕರಾವಳಿಯ ಸಾಂಸ್ಕೃತಿಕ ಕಲೆಯಾಗಿ ಗುರುತಿಸಿಕೊಂಡಿದೆ. ಸರಕಾರದ ಅಧೀನದಲ್ಲಿ ಯಕ್ಷಗಾನ ಅಕಾಡೆಮಿಯನ್ನು ಸ್ಥಾಪಿಸಿ, ಕೋಟ್ಯಾಂತರ ರೂಪಾಯಿ ಅನುದಾನವನ್ನೂ ನೀಡುತ್ತಿದೆ. ಆದುದರಿಂದ ಏಸುಕ್ರಿಸ್ತ ಮಹಾತ್ಮೆ ಎಂಬ ಯಕ್ಷಗಾನಕ್ಕೆ ಹಿಂದುತ್ವವಾದಿಗಳು ತಡೆಯೊಡ್ಡುವುದು ಸಮಂಜಸವಲ್ಲ.

ಯಕ್ಷಗಾನದಲ್ಲಿ ಹಿಂದೂಗಳ ಕೆಳವರ್ಗಗಳ ದೈವಗಳ ಕತೆಯನ್ನು ಅಳವಡಿಸಿಕೊಂಡಾಗಲೇ ಜನ ಅಂತ ಯಕ್ಷಗಾನವನ್ನು ಒಪ್ಪದ ಸ್ಥಿತಿಯನ್ನು ವೈದಿಕಶಾಹಿಗಳು ನಿರ್ಮಾಣ ಮಾಡಿದ್ದಾರೆ. ಕೋಟಿಚೆನ್ನಯ್ಯ ಬಿಲ್ಲವರ ಆರಾಧ್ಯ ದೈವ. ಆದರೆ ದೇವಿ ಮಹಾತ್ಮೆಗೆ ಸಿಗುವ ಪ್ರಾಮುಖ್ಯತೆಯಲ್ಲಿ ಒಂದಂಶವೂ ಕೋಟಿಚೆನ್ನಯ ಪ್ರಸಂಗಕ್ಕೆ ಬಿಲ್ಲವರೇ ನೀಡುವುದಿಲ್ಲ . ಇನ್ನು ಏಸುಕ್ರಿಸ್ತ ಮಹಾತ್ಮೆಯ ವೀಕ್ಷಕರು ಯಾರು ? ಹಿಂದೂ ದೇವಿ, ದೇವರು ಇಲ್ಲದ ಯಕ್ಷಗಾನವನ್ನು ಕರಾವಳಿ ಜನ ಕಲ್ಪಿಸಲೂ ಸಾಧ್ಯವಿಲ್ಲದ ಸ್ಥಿತಿಗೆ ಕೊಂಡೊಯ್ಯುವಲ್ಲಿ ವೈದಿಕ ಧರ್ಮ ಪ್ರಸಾರಕರು ಯಶಸ್ವಿಯಾಗಿದ್ದಾರೆ. ಯಕ್ಷಗಾನದ ಭಾಗವಾಗಿಯೇ ಕರಾವಳಿಯಲ್ಲಿ ಕೋಮುವಾದವೂ ಬಲಿಷ್ಠವಾಗಿದೆ. ಅದೇ ಯಕ್ಷಗಾನ ಹುಟ್ಟುಹಾಕಿದ ಕೋಮುವಾದ ಇದೀಗ ಏಸುಕ್ರಿಸ್ತ ಯಕ್ಷಗಾನಕ್ಕೆ ತಡೆಯೊಡ್ಡಲು ಯತ್ನಿಸುತ್ತಿದೆ.

ನಡೆದರಷ್ಟೇ ಮೂಡುವುದು ಹೊಸ ದಾರಿ, ನುಡಿದರಷ್ಟೇ ಕೇಳುವುದು ಹೊಸ ಹಾಡು

ಬಿ.ಶ್ರೀಪಾದ ಭಟ್

ಎಲ್ಲವೂ ಆಗಿ ಹೋಗಿದೆ, ಮತ್ತು ಎಲ್ಲವೂ ಉಳಿದಿದೆ

ಆದರೆ ನಾವು ಮುನ್ನುಗ್ಗುವದೇ ನಮ್ಮ ಕಾರ್ಯಭಾರ

ರಸ್ತೆಗಳನ್ನು ನಿರ್ಮಿಸುತ್ತಾ ಸಾಗುವುದು

ಸಮುದ್ರವನ್ನು ಸೀಳಿಕೊಂಡ ರಸ್ತೆಗಳು

ಪಯಣಿಗನೆ, ನಿನ್ನ ಹೆಜ್ಜೆ ಗುರುತುಗಳೇ ರಸ್ತೆ

ಮತ್ತೇನಿಲ್ಲ

ಪಯಣಿಗನೇ ಅಲ್ಲಿ ರಸ್ತೆಯೇ ಇಲ್ಲ

ನಡೆದರಷ್ಟೇ ಮೂಡುವುದು ಹೊಸ ದಾರಿ

ನಮ್ಮ ನಡೆಯೇ ರಸ್ತೆ

  • ಅಂಟೋನಿಯೋ ಮಕಾಡೋ

ನಮ್ಮ ವರ್ತಮಾನದ ಪರಿಸ್ಥಿತಿ ಎಷ್ಟು ಕ್ರೌರ್ಯದಿಂದ ತುಂಬಿಕೊಂಡಿದೆಯೆಂದರೆ ಪ್ರಸ್ತುತ ಸಂದರ್ಭದಲ್ಲಿ ಇಲ್ಲಿನ ಸಮಾಜ, ಸಂಸ್ಕೃತಿ ಕಂಡರಿಯದಷ್ಟು ಸಂಕೀರ್ಣವಾಗಿದೆ, ಜಟಿಲವಾಗಿದೆ, ವಿಕೃತಗೊಂಡಿದೆ. ಮುಂದಿನ ಹೆಜ್ಜೆ ಇಲ್ಲವೇನೋ ಎನ್ನುವ ಆತಂಕ ಕಾಡುತ್ತಿದೆ. ಇಲ್ಲಿ ಪರಸ್ಪರ ಮಾತುಕತೆ, ಸೌಹಾರ್ದ ಬದುಕು ಸಾಧ್ಯವಿಲ್ಲ ಎನ್ನುವ ವಿಷಮ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇಂತಹ ಪ್ರಕ್ಷುಬ್ಧತೆಯ ಸಂದರ್ಭದಲ್ಲಿ ಸಂಘ ಪರಿವಾರ ಕೇಂದ್ರದಲ್ಲಿ ಮೋದಿ ನಾಯಕತ್ವದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆರೆಸ್ಸಸ್ನ ಹಿಡನ್ ಅಜೆಂಡಾಗಳೆಲ್ಲಾ ಇಂದು ಓಪನ್ ಅಜೆಂಡಗಳಾಗಿ ಕ್ರಮೇಣ ಆಡಳಿತದ ಎಲ್ಲಾ ಹಂತಗಳಲ್ಲಿ samavesha-4ವ್ಯಾಪಿಸಿಕೊಳ್ಳುತ್ತಿದೆ. ಸಂಘ ಪರಿವಾರದ ದ್ವೇಷದ ಮತೀಯವಾದದ ರಾಜಕಾರಣಕ್ಕೆ ಮೊದಲ ಬಲಿ ಮುಸ್ಲಿಂ ಸಮುದಾಯ. ಸಂಘಿಗಳ ಬಹುಸಂಖ್ಯಾತವಾದದ ಫ್ಯಾಸಿಸಂನ ಫಲವಾಗಿ ಇಂದು ದಲಿತರು, ಆದಿವಾಸಿಗಳು ಮತ್ತು ಮುಸ್ಲಿಂ ಸಮುದಾಯದ ಮೇಲೆ ಸದಾ ಹಿಂಸಾತ್ಮಕ ಹಲ್ಲೆ, ದೌರ್ಜನ್ಯ, ಕೊಲೆಗಳು ನಿರಂತರವಾಗಿ ನಡೆಯುತ್ತಿವೆ. ಕಳೆದ ಮೂರು ವರ್ಷಗಳಲ್ಲಿ ಪುರಾವೆಯಾಗಿ ನೂರಾರು ಉದಾಹರಣೆಗಳನ್ನು ಕೊಡಬಹುದು.

 
ಪ್ರತಿಯೊಂದು ಧರ್ಮದ ಜನರು ಬಹುಬೇಗ ಪರಸ್ಪರ ವಿಶ್ವಾಸ, ಸಹನೆ, ಸಂಯಮ, ವಿವೇಚನೆಗಳನ್ನು ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಹಿಂದುತ್ವದ ಅಸಹನೆಗೆ, ಹಿಂಸೆಗೆ, ಪಶು ಪ್ರವೃತ್ತಿಗೆ ಮೊದಲ ಬಲಿಯಾಗುತ್ತಿರುವುದು ದಲಿತ-ಮುಸ್ಲಿಂ ಸಮುದಾಯ. ಆದರೆ ಸಂವಿಧಾನ ಸಮರ್ಪಣೆಯ ಸಂದರ್ಭದಲ್ಲಿಯೇ ಅಂಬೇಡ್ಕರ್ ಅವರು ಒಬ್ಬ ವ್ಯಕ್ತಿ, ಒಂದು ವೋಟು, ಒಂದು ಮೌಲ್ಯ ಎಂದು ತುಂಬಾ ಮಾರ್ಮಿಕವಾಗಿ ಹೇಳಿದ್ದರು. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿಗೆ ಒಂದು ಮತ ಚಲಾಯಿಸುವ ಹಕ್ಕಿರುತ್ತದೆ, ಅದು ಮೌಲ್ಯಯುತವಾಗಿರುತ್ತದೆ ಎಂದು ಅಂಬೇಡ್ಕರ್ ಹೇಳಿದ್ದ ಮಾತುಗಳು ಇಂದಿಗೂ ಪ್ರಸ್ತುತ ಮತ್ತು ತುಂಬಾ ವಾಸ್ತವ. ಏಕೆಂದರೆ ದಲಿತರ, ತಳ ಸಮುದಾಯಗಳ ಸಹಕಾರವಿಲ್ಲದೆ ಇಂದು ಯಾವುದೇ ರಾಜಕೀಯ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲ. ದಲಿತ ಸಮುದಾಯಕ್ಕೆ ಉಳಿದುಕೊಂಡಿರುವ ವೋಟಿನ ಮೌಲ್ಯವು ಅವರ ಪರವಾಗಿ ಕಟ್ಟ ಕಡೆಯ ಗುರಾಣಿಯಂತೆ ಬಳಕೆಯಾಗುತ್ತಿದೆ.

 

ಆದರೆ ಮುಸ್ಲಿಂ ಸಮುದಾಯಕ್ಕೆ ಈ ಅದೃಷ್ಟವಿಲ್ಲ. ಮುಸ್ಲಿಂರ ಮತಗಳ ಅವಶ್ಯಕತೆಯೇ ಇಲ್ಲದೆ ಬಿಜೆಪಿ ಸರ್ಕಾರವು 2014ರ ಕೇಂದ್ರ ಚುನಾವಣೆಯಲ್ಲಿ ಸರಳ ಬಹುಮತ ಗಳಿಸಿತು ಮತ್ತು ಮುಸ್ಲಿಂ ಮತಗಳ ಬೆಂಬಲವಿಲ್ಲದೆಯೇ 2017ರ ಉ.ಪ್ರ. ಚುನಾವಣೆಯಲ್ಲಿ ದೈತ್ಯ ಬಹುಮತ ಪಡೆಯಿತು. ಸಂಘ ಪರಿವಾರದ 72 ಸಂಸದರಲ್ಲಿ ಒಬ್ಬ ಮುಸ್ಲಿಂ ಸಂಸದನಿಲ್ಲ (ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೇ ಇಳಿಸಿರಲಿಲ್ಲ), ಉ.ಪ್ರ. ವಿಧಾನಸಭೆಯ 315 ಬಿಜೆಪಿ ಶಾಸಕರರಲ್ಲಿ ಒಬ್ಬ ಮುಸ್ಲಿಂ ಶಾಸಕನಿಲ್ಲ (ಒಬ್ಬ ಮುಸ್ಲಿಂ ಅಭ್ಯಥರ್ಿಗೂ ಟಿಕೆಟ್ ಕೊಟ್ಟಿರಲಿಲ್ಲ). ಇಂದು ಪ್ರಜಾಪ್ರಭುತ್ವದ ಜೀವಂತಿಕೆಯನ್ನು, ಸಂಸದೀಯ ಪ್ರಜಾಪ್ರಭುತ್ವವನ್ನು ಚುನಾವಣ ಫಲಿತಾಂಶದ ಆಧಾರದಲ್ಲಿ ಆ ಮೂಲಕ ಸಂಸದರ, ಶಾಸಕರ ಸಂಖ್ಯಾಬಲದ ಆಧಾರದ ಮೇಲೆ, ಬಹುಮತದ ಮೇಲೆ ನಿರ್ಧರಿಸಲಾಗುತ್ತಿದೆ. ದಶಕಗಳ ಕಾಲ ಕಾಂಗ್ರೆಸ್ ನ ಕೇವಲ ವೋಟ್ ಬ್ಯಾಂಕ್ ರಾಜಕಾರಣದ ಫಲವಾಗಿಯೇ ಗೆಟ್ಟೋಗಳಲ್ಲಿ ನರಳಬೇಕಾದ ಸ್ಥಿತಿಯಲ್ಲಿರುವ ಮುಸ್ಲಿಂ ಸಮುದಾಯವು ಆಗ ಕನಿಷ್ಠ ತನ್ನ ಆಸ್ತಿತ್ವವನ್ನು ಉಳಿಕೊಂಡಿತ್ತು. ಇಂದು ಸಂಘ ಪರಿವಾರದ ಹಿಂಸಾತ್ಮಕ ಹಿಂದುತ್ವದ ಹೆಸರಿನ ಆಕ್ರಮಣದಲ್ಲಿ ಆ ಓಲೈಕೆಯ ರಾಜಕಾರಣವೂ ಮುಗಿದ ಅಧ್ಯಾಯವಾಗಿದೆ ಮತ್ತು ಮುಸ್ಲಿಂರ ಆಸ್ತಿತ್ವವೇ ಇಂದು ಪ್ರಶ್ನಾರ್ಹವಾಗುತ್ತಿದೆ.

samavesha-1

2006ರ ಸಾಚಾರ್ ಕಮಿಟಿಯ ಅಧ್ಯಯನದ ಅನುಸಾರ 6-14 ವಯಸ್ಸಿನ ಶೇಕಡಾ 25% ಮುಸ್ಲಿಂ ಮಕ್ಕಳು ಶಾಲೆಗೆ ದಾಖಲು ಆಗುತ್ತಿಲ್ಲ ಅಥವಾ ಮಧ್ಯದಲ್ಲಿಯೇ ಶಾಲೆ ತೊರೆಯುತ್ತಿದ್ದಾರೆ. ಪದವಿ ಕಾಲೇಜುಗಳಲ್ಲಿ 30 ವಿದ್ಯಾರ್ಥಿಗಳ ಪೈಕಿ ಒಬ್ಬ ಮಾತ್ರ ಮುಸ್ಲಿಂ ಇರುತ್ತಾನೆ ಮತ್ತು ಸ್ನಾತಕೋತ್ತರ ಪದವಿಯಲ್ಲಿ 50 ವಿದ್ಯಾಥರ್ಿಗಳ ಪೈಕಿ ಒಬ್ಬ ಮುಸ್ಲಿಂ ಇರುತ್ತಾನೆ. ಇತರೇ ಅಲ್ಪಸಂಖ್ಯಾತರಿಗೆ ನೀಡುವ ಸಾಲದಲಿ ಕಾಲು ಭಾಗಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಮುಸ್ಲಿಂ ಸಮುದಾಯಕ್ಕೆ ದೊರಕುತ್ತಿದೆ. ಐಎಸ್ ಶ್ರೇಣಿಯಲ್ಲಿ ಶೇಕಡಾ 3, ಐಪಿಎಸ್ ಶ್ರೇಣಿಯಲ್ಲಿ ಶೇಕಡಾ 4, ಐಎಫ್ಎಸ್ ಶ್ರೇಣಿಯಲ್ಲಿ ಶೇಕಡಾ 1.8 ಪ್ರಮಾಣದಲ್ಲಿ ಮುಸ್ಲಿಂರಿದ್ದಾರೆ. ಭಾರತೀಯ ರೇಲ್ವೆಯಲ್ಲಿ 4.5, ಪೋಲೀಸ ಕಾನಸ್ಟೇಬಲ್ಗಳಲ್ಲಿ ಶೇಕಡಾ 6, ಆರೋಗ್ಯ ವಲಯದಲ್ಲಿ ಶೇಕಡಾ 4 ಪ್ರಮಾಣದಲ್ಲಿದ್ದಾರೆ. ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದು ಮುಗಿಯದ ವ್ಯಥೆ.

 
ಒಂದು ದೇಶವು ತನ್ನ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳುತ್ತದೆ ಎನ್ನುವುದರ ಮೇಲೆ ಆ ದೇಶವನ್ನು ಅರಿತುಕೊಳ್ಳಬಹುದು ಎಂದು ವಿವರಿಸಿದ ಗಾಂಧಿಯವರ ಆಶಯವನ್ನು ಸಂಪೂರ್ಣ ಧ್ವಂಸಗೊಳಿಸಿರುವ ಸಂಘ ಪರಿವಾರ ಮತ್ತು ಇಲ್ಲಿನ ಹಿಂದುತ್ವದ ರಾಜಕಾರಣದ ಫಲವಾಗಿ ಭಾರತದ ಅಲ್ಪಸಂಖ್ಯಾತರಾದ ಮುಸ್ಲಿಂ ಸಮುದಾಯವು ಇಂದು ಅನುಮಾನಿತರು ಮತ್ತು ಅವಮಾನಿತರಾಗಿ ಬದುಕುತ್ತಿದ್ದಾರೆ. ಈ ಆರೆಸ್ಸಸ್ನ ಸಾಂಸ್ಕೃತಿಕ ಹೆಜಮಿನಿಯ ಹಿಂಸಾತ್ಮಕ ರಾಜಕಾರಣದಲ್ಲಿ ಮತ್ತು ಬಹುಸಂಖ್ಯಾತವಾದದ ಬೆಂಬಲಿತ ನಾಗರಿಕರ ಅಸಹನೆ ಮತ್ತು ಕ್ರೌರ್ಯದಲ್ಲಿ ಮುಸ್ಲಿಂ ಸಮುದಾಯ ಸಂಪೂರ್ಣವಾಗಿ ನಲುಗಿ ಹೋಗಿದೆ. ಘನತೆಯನ್ನೆ ಕಳೆದುಕೊಂಡು ಅನುಮಾನಿತರು ಮತ್ತು ಅವಮಾನಿತರಾಗಿ ಜೀವಿಸಬೇಕಾದಂತಹ ದುರಂತ ಪರಿಸ್ಥಿತಿಯಲ್ಲಿ ಇಂದು ಮುಸ್ಲಿಂ ಸಮುದಾಯ ಬದುಕುತ್ತಿದೆ.samavesha-2

 
ಈ ಪ್ರಭುತ್ವ-ವ್ಯವಸ್ಥೆಯ ಹಿಂಸಾತ್ಮಕ ದೌರ್ಜನ್ಯ ಮತ್ತು ಕ್ರೌರ್ಯಕ್ಕೆ ನಾವು ಹೇಗೆ ಪ್ರತಿಕ್ರಯಿಸಬೇಕು? ಹೇಗೆ ಮುಖಾಮುಖಿಯಾಗಬೇಕು? ಮೌನವಾಗಿ ಈ ವಿಷಬೆಂಕಿಯಲ್ಲಿ ಉರಿದು ಬೂದಿಯಾಗುವುದರ ಮೂಲಕವೇ? ಅಥವಾ ಕೇವಲ ಘೋಷಣೆ, ಆತ್ಮಸಾಕ್ಷಿಯಿಲ್ಲದ ಸೆಮಿನಾರಿನ ಬೌದ್ಧಿಕ ಕಸರತ್ತಿನ ಭಾಷಣಗಳ, ಸೈದ್ಧಾಂತಿಕ ತಿಕ್ಕಾಟಗಳ ಸ್ವರತಿಯಲ್ಲಿ ಕಳೆದುಹೋಗುವುದರ ಮೂಲಕವೇ? ಆದರೆ ಈ ಮಾದರಿಗಳು ನಮ್ಮನ್ನು ನಾವು ನಿಂತ ಸ್ಥಳದಲ್ಲಿಯೇ ಬಂದಿಸುತ್ತವೆ, ಸಿದ್ಧ ಮಾದರಿಗಳಿಗೆ ಸಾಂಸ್ಥೀಕರಣಗೊಳಿಸಿ ನಮ್ಮನ್ನು ಸುತ್ತಿದಲ್ಲೇ ಹೂತು ಹಾಕುತ್ತವೆ. ನಮ್ಮನ್ನು ಎಲ್ಲಿಯೂ ಮುಟ್ಟಿಸದ ಈ ಸವಕಲು ಮಾದರಿಗಳನ್ನು ಬಿಟ್ಟು ಇನ್ನೂ ಹಲವಾರು ದಾರಿಗಳಿರಬಹುದೇ ಎನ್ನುವ ಪ್ರಶ್ನೆ ಹಾಕಿಕೊಳ್ಳುತ್ತಾ ನಮಗೆ ನಾವೇ ಆತ್ಮಾವಲೋಕನ ಮಾಡಿಕೊಳ್ಳುತ್ತಾ ಸಾಗಿದಾಗ ಕಡೆಗೂ ಸ್ವತಃ ಮುಸ್ಲಿಂ ಸಮುದಾಯವು ತನಗೆ ತಾನೇ ಈ ಕತ್ತಲ ದಾರಿಯಿಂದ ಬಿಡುಗಡೆ ಕಂಡುಕೊಳ್ಳಬೇಕು ಎನ್ನುವ ಅಸೀಮ ನಂಬಿಕೆ ಮಾತ್ರ ಇಂದು ಹುಲ್ಲುಕಡ್ಡಿಯ ಆಸರೆಯಾಗಿ ಉಳಿದುಕೊಂಡಿದ್ದು ವಿಪರ್ಯಾಸ. ಅಂತರಂಗದ ಮೂಲಭೂತವಾದ ಮತ್ತು ಬಹಿರಂಗ ಮತೀಯವಾದದ ಹಿಂಸೆಯಿಂದ ಮುಕ್ತಿ ಹೊಂದಲು ಒಂದು ಕ್ರಾಂತಿಯನ್ನು ನಿರೀಕ್ಷಿಸುವುದರ ಬದಲಾಗಿ, ನಾಯಕನ ಬರುವಿಕೆಗೆ ಕಾಯುವುದರ ಬದಲಾಗಿ ನಮಗೆ ನಾವೇ ಮೊದಲ ನಡಿಗೆಯನ್ನು ಆರಂಬಿಸಬೇಕು ಎನ್ನುವ ಅನಿವಾರ್ಯ ಪರಿಸ್ಥಿತಿಯಲ್ಲಿದೆ ಭಾರತದ ಮುಸ್ಲಿಂ ಸಮುದಾಯ.

 

samavesha-3
ಈ ತಾರ್ಕಿಕ ಜಿಜ್ಞಾಸೆಯ ಫಲವೇನೋ ಎಂಬಂತೆ ಸಿಪಿ(ಐ)ಎಂ ಪಕ್ಷದ ಅಂಗಪಕ್ಷವಾದ ಡಿವೈಎಸ್ಎಫ್(ಡಿಫಿ) ಸಂಘಟನೆ ತನ್ನ ಅನೇಕ ದ್ವಂದಗಳ, ತಾಕಲಾಟಗಳ ಮಂಥನದ ನಂತರ, ತನ್ನ ಮಡಿವಂತಿಕೆಯನ್ನು ಕಳಚಿಕೊಳ್ಳುತ್ತಿದೆಯನೋ ಎಂದು ಭರವಸೆ ಮೂಡಿಸುವಂತೆ ಮುಸ್ಲಿಂ ಯುವ ಸಮಾವೇಶವನ್ನು ಹಮ್ಮಿಕೊಳ್ಳಲು ನಿರ್ಧರಿಸಿತು. ಕಮ್ಯುನಿಷ್ಟ್ ಪಕ್ಷವು ಧರ್ಮದ ಹೆಸರಿನಲ್ಲಿ ಸಮಾವೇಶ ನಡೆಸುವುದೇ ಒಂದು ಹಾಸ್ಯಾಸ್ಪದವಲ್ಲವೇ ಎನ್ನುವ ಪ್ರಶ್ನೆಗಳ ಬಾಣಗಳು ಎಲ್ಲಾ ದಿಕ್ಕುಗಳಿಂದಲೂ ಬಂದು ತೀಕ್ಷಣವಾಗಿ ಎದೆಗೆ ಬೀಳತೊಡಗಿದಾಗ ಡಿಫಿ ಸಂಘಟನೆ ಮುಸ್ಲಿಂ ಯುವ ಸಮಾವೇಶ ವು ಧಾರ್ಮಿಕ ಸಮ್ಮೇಳನ ಅಲ್ಲ ಅದು ಅನುಮಾನಿತರ ಮತ್ತು ಅವಮಾನಿತರ ದುಖ ದುಮ್ಮಾನಗಳ ಅಭಿವ್ಯಕ್ತಿಗೆ ಒಂದು ವೇದಿಕೆ ಮಾತ್ರ ಎಂದು ಸ್ಪಷ್ಟೀಕರಣವನ್ನು ನೀಡಿತು.

 

ಇಂದು ಅತಂತ್ರರಾಗಿರುವ ಮುಸ್ಲಿಂ ಸಮುದಾಯ ಮುರುಟಿಹೋದ ತನ್ನ ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಲು ತಮಗೆ ತಾವೇ ನಡೆಸುತ್ತಿರುವ ಒಂದು ಹುಡುಕಾಟ ಮತ್ತು ಈ ಹುಡುಕಾಟಕ್ಕೆ ಒಂದು ತೋಳಿನ ಆಸರೆಯಾಗಿ ಈ ಮುಸ್ಲಿಂ ಯುವ ಸಮಾವೇಶ ಎಂದು ಡಿಫಿ ಸಂಘಟನೆ ವಿವರಿಸಿತು. ಆದರೆ ತಮ್ಮ ಆಸ್ತಿತ್ವಕ್ಕೆ ಸಂಚಕಾರ ಬಂದಂತಿದೆ ಎಂಬಂತೆ ವತರ್ಿಸಿದ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳು ಕಮ್ಯುನಿಷ್ಟ್ ಪಕ್ಷದ ಈ ಹೊಸದಾದ, ರಿಸ್ಕ್ ಎನ್ನಬಹುದಾದ ಆದರೆ ಅಷ್ಟೇ ಬಿಕ್ಕಟ್ಟಾದ ಪ್ರಯೋಗವನ್ನು ಹಿಗ್ಗಾಮುಗ್ಗ ಟೀಕಿಸಲಾರಂಬಿಸಿದ್ದು ಸಹಜವೇ ಆಗಿತ್ತು, ಏಕೆಂದರೆ ಧಾರ್ಮಿಕ ಮೂಲಭೂತವಾದಿಗಳಿಗೆ ತನ್ನ ಧರ್ಮದ ಪ್ರತಿಯೊಬ್ಬನೂ ತನ್ನ ಆಸ್ತಿ ಎನ್ನುವ ಯಜಮಾನಿಕೆ ಇರುತ್ತದೆ. ಇದನ್ನು ಕಳೆದುಕೊಳ್ಳಲು ಧಾರ್ಮಿಕ ಮೂಲಭೂತವಾದಿಗಳು ಬಯಸಲಾರರು. ಆದರೆ ಈ ಬಾರಿಯ ಯುವ ಮುಸ್ಲಿಂ ಸಮಾವೇಶದ ಕುರಿತಾದ ಇವರ ತಕರಾರು ಮತ್ತು ಟೀಕೆಗಳು ಸ್ವತಃ ದುರ್ಬಲಗೊಂಡಿದ್ದು ಮಾತ್ರ ವಿಶೇಷ.

 
ಆದರೆ ಈ ವೈರುಧ್ಯಗಳಿಗೆ ಸ್ವತಃ ಕಮ್ಯುನಿಷ್ಟ್ ಪಕ್ಷವೂ ಹೊಣೆ ಹೊರಬೇಕಾಗುತ್ತದೆ ಎನ್ನುವುದನ್ನು ಯಾವ ಪ್ರಜ್ಞಾವಂತನೂ ಅಲ್ಲಗೆಳೆಯಲಾರ. ದಶಕಗಳ ಕಾಲ ಜಾತಿ, ಧರ್ಮ ಆಧಾರಿತ ಚರ್ಚೆಯನ್ನು, ಸಂಘಟನೆಯನ್ನು ನಿರಂತರವಾಗಿ ಅಲ್ಲಗೆಳೆಯುತ್ತ, ತಿರಸ್ಕರಿಸುತ್ತ ಬಂದ ಕಮ್ಯನಿಷ್ಟ್ ಪಕ್ಷಗಳು ಜಾತಿ ಪದ್ಧತಿಯ ಸಂಕೀರ್ಣತೆಯನ್ನು ಕರಾರುವಕ್ಕಾಗಿ ಅರಿಯದಿರುವುದು ಅವರ ಸಂಘಟನೆಗೆ ದೊಡ್ಡ ಮಿತಿಯಾಗಿದ್ದು ಕಟು ವಾಸ್ತವ. ಇಂಡಿಯಾದ ಸಂದರ್ಭದಲ್ಲಿ ಅಸಮಾನತೆ ಎಂದರೆ ಅದು ಕೇವಲ ವರ್ಗ ಸಮಸ್ಯೆ ಮಾತ್ರವಲ್ಲ ಅದು ಜಾತಿ ಪದ್ಧತಿಯ ಕರಾಳ ಆಚರಣೆಯೂ ಸಹ ಎಂದು ಎಡ ಪಕ್ಷಗಳಿಗೆ ಆರಿವಾಗಲು 21ನೇ ಶತಮಾನದ ಅಂಬೇಡ್ಕರ್ವಾದದ ತೀಕ್ಷ್ಣ ವಿಮರ್ಶೆಗಳು ಕಾರಣವಾಗಬೇಕಾಯಿತು. ಜಾತಿ ಆಧಾರಿತ ಪ್ರತ್ಯೇಕತೆ ಮತ್ತು ತಾರತಮ್ಯಕ್ಕೆ ಕಳೆದ ದಶಕಗಳಲ್ಲಿ ತಾನು ತೋರಿದ ನಿರ್ಲಕ್ಷ್ಯಕ್ಕೆ ಪ್ರಾಯಶ್ಚಿತವೇನೋ ಎಂಬಂತೆ ಒಂದು ಆತ್ಮಾವಲೋಕನದ ಉದಾರಹಣೆಯಂತಿತ್ತು ಈ ಡಿವೈಎಫ್ಐ ಸಂಘಟಿಸಿದ್ದ ಮುಸ್ಲಿಂ ಯುವ ಸಮಾವೇಶ.

 

pic-logo
ಕನವರಿಕೆ, ವ್ಯಸನಗಳನ್ನು ಹಿಂದಕ್ಕೆ ದೂಡಿ ಹೊಸ ದಾರಿಯ ಹುಡುಕಾಟಕ್ಕಾಗಿ ನಡೆಸಿದ ಈ ಆತ್ಮಾವಲೋಕನದ ಯುವ ಮುಸ್ಲಿಂ ಸಮಾವೇಶ ಎರಡು ದಿನಗಳ ಚರ್ಚೆ, ಸಂವಾದ, ಭಾಷಣಗಳ ಮೂಲಕ ಉತ್ತರ ಕಂಡುಕೊಂಡಿತೇ ಎನ್ನುವ ಪ್ರಶ್ನೆಗೆ ಪ್ರತ್ಯುತ್ತರವೂ ಸಹ ಕ್ಲೀಷೆಯಾಗಿರುತ್ತದೆ. ಏಕೆಂದರೆ ಯಾವುದೂ ಇಲ್ಲಿ ಸುಲಭವಲ್ಲ. ಆದರೆ ಉದಾತ್ತವಾದ ಮತ್ತು ಮಾನವೀಯ ಆಶಯಗಳನ್ನೊಳಗೊಂಡಿದ್ದ ಈ ಯುವ ಮುಸ್ಲಿಂ ಸಮಾವೇಶ ಎರಡು ದಿನದ ಕ್ರಮವಿಧಿಯನ್ನು ರೂಪಿಸುವಲ್ಲಿ ಕೊಂಚ ಜಡತ್ವವನ್ನು ಒಳಗೊಂಡಿತೇನೋ ಅನಿಸುತ್ತಿತ್ತು. ಅಲ್ಲಿ ಮುಸ್ಲಿಂ ಸಮುದಾಯದ ದು:ಖ ದುಮ್ಮಾನಗಳ ಅಭಿವ್ಯಕ್ತಿಗಿಂತಲೂ ವಿಚಾರ ಮಂಡನೆಗೆ ಹೆಚ್ಚಿನ ಒತ್ತು ನೀಡಿದಂತಿತ್ತು. ಆದರೆ ಈ ಮಿತಿಯನ್ನು ಮೀರಿ ಕೆಲವು ವಿಚಾರಪ್ರಚೋದಕ ಮತ್ತು ಆತ್ಮವಿಮರ್ಶೆಯ ಚರ್ಚೆಗಳು ನಡೆದಿದ್ದು ಮುದಗೊಳಿಸುವಂತಿತ್ತು. ಅದರಲ್ಲೂ ಇಸ್ಲಾಂ ಧರ್ಮ, ಕಟ್ಟಳೆಗಳು, ಸಾಂಸ್ಕೃತಿಕ ಅಸ್ಮಿತೆ, ಸಾಹಿತ್ಯ ಮತ್ತು ಅದರ ಎಲ್ಲಾ ಸಾಧಕಬಾಧಕ  ಗಳ ಕುರಿತಾಗಿ ಎರಡು ಗೋಷ್ಠಿಗಳಲ್ಲಿ ನಡೆದ ದೀರ್ಘ ಚರ್ಚೆ ಇಡೀ ಸಮ್ಮೇಳನದ ಹೈಲೈಟ್. ಇದು ಯುವ ಮುಸ್ಲಿಂ ಸಮುದಾಯಕ್ಕೆ ನಿಜಕ್ಕೂ ಒಂದು ಉತ್ತಮ ಪಾಠದಂತಿತ್ತು. ಆದರೆ ಇಡೀ ಎರಡು ದಿನಗಳ ಸಮಾವೇಶದಲ್ಲಿ ವೇದಿಕೆ ಮೇಲೆ, ಚರ್ಚೆಗಳಲ್ಲಿ ಮಹಿಳೆಯ ಅನುಪಸ್ತಿತಿ ಬಹುವಾಗಿ ಕಾಡುತ್ತಿತ್ತು ಮತ್ತು ಇಂದು ದೇಶಾದ್ಯಾಂತ ಅತಿಯಾಗಿ ಚರ್ಚಿತವಾಗುತ್ತಿರುವ ಮತ್ತು ಶೋಷಣೆಗೊಳಗಾಗಿರುವ ಮುಸ್ಲಿಂ ಮಹಿಳೆಯ ದುಖ ದುಮ್ಮಾನಗಳ ಅಭಿವ್ಯಕ್ತಿಗೆ ಅವಶ್ಯಕವಾದ ಮಹಿಳಾ ದನಿಯ ಕೊರತೆ ಒಂದು ಮಿತಿಯಾಗಿದ್ದಂತೂ ನಿಜ.

 
ರಾಗದ್ವೇಷಗಳಿಂದ ಕಲುಷಿತಗೊಳ್ಳದೆ ಮುಂದೆ ಹೇಗೆ ಮತ್ತು ಮುಂದೆ ಯಾರಿಗಾಗಿ ಎನ್ನುವ ಅನಿವಾರ್ಯ ಪ್ರಶ್ನೆಗಳನ್ನು ಕೇಳಿಕೊಳ್ಳುವಲ್ಲಿ ಸಧ್ಯಕ್ಕೆ ತಾತ್ಕಾಲಿಕವಾಗಿ ಈ ಯುವ ಮುಸ್ಲಿಂ ಸಮಾವೇಶ ಯಶಸ್ವಿಯಾಗಿದೆ. ಈ ಪ್ರಶ್ನೆಗಳನ್ನು ತನ್ನ ಮುಂದಿನ ಕ್ರಿಯೆಗಳ ಭಾಗವಾಗಿಸಿಕೊಂಡು ಉತ್ತರಕ್ಕೆ ತಡಕಾಡತೊಡಗಿದಾಗ ಮಾತ್ರ ಅದರ ಸಾರ್ಥಕತೆ ಗೋಚರವಾಗಲಾರಂಬಿಸುತ್ತದೆ. ಜನಪ್ರಿಯ ರಾಜಕೀಯ, ಧಾರ್ಮಿಕ ಸಿದ್ಧಾಂತಗಳಿಗೆ ಬಲಿಯಾಗದಂತೆ ತನ್ನ ಮುಸ್ಲಿಂ ಯುವಕರನ್ನು ಹೇಗೆ ರೂಪಿಸುತ್ತದೆ ಎನ್ನುವುದರ ಮೇಲೆ ಈ ಯುವ ಮುಸ್ಲಿಂ ಸಮಾವೇಶದ ಅರ್ಥಪೂರ್ಣತೆ ಅಡಗಿದೆ. ಸಾಮುದಾಯಿಕ ಫಲಶ್ರುತಿಗಳನ್ನು ನೀಡಬಲ್ಲಂತಹ ಕ್ರಿಯೆಗಳನ್ನು ಮುಂದಿನ ದಿನಗಳಲ್ಲಿ ಹೇಗೆ ಕಟ್ಟುತ್ತದೆ ಎನ್ನುವುದು ಕುತೂಹಲಕಾರಿಯಾಗಿದೆ.

 

ಜೈಲು ತುಂಬುತ್ತಿರುವ ಅನುಮಾನಾಸ್ಪದ ಮುಸ್ಲೀಮರು ಮತ್ತು ಅವಮಾನಿತ ಸಮುದಾಯದ ಪ್ರಜ್ಞಾವಂತ ಯುವ ಜನತೆಯ ಸಮಾವೇಶ

Naveen Soorinje


ನವೀನ್ ಸೂರಿಂಜೆ


 

ಮಂಗಳೂರಿನಲ್ಲಿ ಮೇ 14 ಮತ್ತು 15 ರಂದು ಅನುಮಾನಿತರು ಮತ್ತುpic-logo ಅವಮಾನಿತರ ಸಮುದಾಯದ ಯುವ ಸಮಾವೇಶ ನಡೆಯುತ್ತಿದೆ. ಇದು ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ನಾನು ಸಂಘಪರಿವಾರದ  ನೈತಿಕ ಪೊಲೀಸ್ ಗಿರಿ ವಿರುದ್ಧ ಸುದ್ದಿ ಮಾಡಿದ್ದ ಕಾರಣಕ್ಕಾಗಿ ಬಿಜೆಪಿ ಸರಕಾರದ ಅವಧಿಯಲ್ಲಿ ನಾಲ್ಕುವರೆ ತಿಂಗಳು ಜೈಲಿನಲ್ಲಿ ಇರಬೇಕಾದ ಸಂಧರ್ಭದಲ್ಲಿ ನೂರಾರು ಅನುಮಾನಿತ ಮತ್ತು ಅವಮಾನಿತರ ಜೊತೆ ಸಮಯ ಕಳೆಯುವ ಅವಕಾಶ ದೊರಕಿತ್ತು. ಮಂಗಳೂರು ಜೈಲಿನಲ್ಲಿ ಎರಡು ವಿಭಾಗಗಳಿವೆ. ಎ ವಿಭಾಗ ಮತ್ತು ಬಿ ವಿಭಾಗ. ಮುಸ್ಲಿಂ ವಿಚಾರಣಾಧೀನ ಕೈದಿಗಳನ್ನು ಎ ವಿಭಾಗದಲ್ಲೂ, ಹಿಂದೂ ವಿಚಾರಣಾಧೀನ ಕೈದಿಗಳನ್ನು ಬಿ ವಿಭಾಗದಲ್ಲೂ ಹಾಕುತ್ತಾರೆ. ನನ್ನ ಹೆಸರು ಹಿಂದೂ ಹೆಸರಾಗಿದ್ದರೂ ಜೈಲು ಅಧಿಕಾರಿಗಳು ಮತ್ತು ಪೊಲೀಸರು ಸಮಾಲೋಚನೆ ನಡೆಸಿ, ಭದ್ರತೆಯ ದೃಷ್ಟಿಯಿಂದ ಮುಸ್ಲಿಂ ಕೈದಿಗಳಿರುವ ಎ ವಿಭಾಗದಲ್ಲಿ ನನ್ನನ್ನು ಇಡಲಾಗಿತ್ತು. ಬೇರೆ ಬೇರೆ ಕಾರಣಕ್ಕಾಗಿ ಕೈದಿಗಳಾಗಿದ್ದ ನಾಲ್ಕು ನೂರಕ್ಕೂ ಅಧಿಕ ಕೈದಿಗಳ ಜೊತೆ ಈ ಸಂಧರ್ಭದಲ್ಲಿ ಚರ್ಚೆ ನಡೆಸಿದ್ದೆ. ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಕಾರಣಗಳಿಗೆ ಜೈಲು ಸೇರುವ ಒಂದೊಂದು ಮುಸ್ಲೀಮನ ಕತೆಯೂ ಧಂಗು ಬಡಿಸುವಂತಿದೆ.

ಅವರು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ರೆಹಮಾನ್. 85 ವರ್ಷದ ಈ ಅಜ್ಜ ಉರೂಸ್ ಗಳಿಗೆ ತೆರಳಿ ಅಲ್ಲಿ ಹಾಡು ಹಾಡಿ ಸಂಪಾದನೆ ಮಾಡುವ ಹವ್ಯಾಸ ಇಟ್ಟುಕೊಂಡವರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಹಲವಾರು ಬಾರಿ ಓಡಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಕಾಸರಗೋಡು, ಮಡಿಕೇರಿಗಳಲ್ಲಿ ಉರೂಸು ಬಹಳಾನೇ ನಡೆಯುತ್ತಿರುವುದರಿಂದ ಈ ಪ್ರದೇಶಗಳು ರೆಹಮಾನ್ ಗೆ ಅಚ್ಚುಮೆಚ್ಚು ಮಾತ್ರವಲ್ಲ ಸಲೀಸು ಕೂಡಾ. ಅಂದೂ ಕೂಡಾ ಕಾಸರಗೋಡಿನಲ್ಲಿ ನಡೆಯುತ್ತಿದ್ದ ಉರೂಸಿಗಾಗಿ ರೆಹಮಾನ್ ರತ್ನಗಿರಿಯಿಂದ ಬಂದಿದ್ದರು. 85 ವರ್ಷ ಪ್ರಾಯದ ಅವರಿಗೆ ವಯೋ ಸಹಜ ಖಾಯಿಲೆಗಳೂ ಇದ್ದಿದ್ದರಿಂದ ಯಾರದ್ದೋ ಸಲಹೆಯ ಮೇರೆಗೆ ಯನಪೊಯ ಆಸ್ಪತ್ರೆಯ ಉಚಿತ ಚಿಕಿತ್ಸೆಯ ”ಆಫರ್ ” ಲಾಭ ಪಡೆದುಕೊಳ್ಳಲು ಮಂಗಳೂರಿಗೆ ಬಂದಿದ್ದರು. ಮಂಗಳೂರು ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಇಳಿದ ರೆಹಮಾನ್ ಹಳೆ ಬಂದರಿನ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ವಾಪಸ್ ಬರುತ್ತಿದ್ದರು. ಅಷ್ಟರಲ್ಲಿ ಮುಬ್ಬು ಕತ್ತಲೆಯಾಗಿತ್ತು. ಹಳೆ ಬಂದರಿನ ಪೊಲೀಸ್ ಠಾಣೆಯ ಎದುರು ನಡೆದುಕೊಂಡು ಬರುತ್ತಿದ್ದಾಗ ಪೊಲೀಸನೊಬ್ಬ ರೆಹಮಾನ್ ರನ್ನು ಠಾಣೆಯ ಕಂಪೌಂಡ್ ಒಳಗೆ ಕರೆದ. ಕರೆದಿರುವುದು ಪೊಲೀಸ್ ಮತ್ತು ಅದು ಪೊಲೀಸ್ ಠಾಣೆ ಎಂದು ಅರಿವಾದ ರೆಹಮಾನ್ ಕಾಳೆದುಕೊಳ್ಳುತ್ತಾ ಪೊಲೀಸ್ ಠಾಣೆ ಹೊಕ್ಕಿದರು. ಪೊಲೀಸ್ ಸಿಬ್ಬಂದಿ “ನಿನ್ನ ಹೆಸರೇನು ?” ಎಂದು ಪ್ರಶ್ನಿಸಿದ. “ರೆಹಮಾನ್” ಎಂದು ಹಿಂದಿಯಲ್ಲಿ ಮರಳಿ ಉತ್ತರ ಬಂದಿತ್ತು. “ತುಮ್ ಕಂಹಾ ಸೇ ಆಯೀ ಹೋ  ?” ಮರಳಿ ಪ್ರಶ್ನೆ ಪೊಲೀಸನಿಂದ. “ಮಹಾರಾಷ್ಟ್ರಕೆ ರತ್ನಗಿರಿ ಸೆ” ಎಂದರು ರೆಹಮಾನ್. ಅಷ್ಟೆ. ನಂತರ ಈ 85 ವರ್ಷದ ಅಜ್ಜ ರೆಹಮಾನ್ ರನ್ನು ಥೇಟ್ ಭಯೋತ್ಪಾದಕರನ್ನು ವಿಚಾರಣೆಗೊಳಪಡಿಸುವ ರೀತಿಯಲ್ಲಿ ವಿಚಾರಣೆ ನಡೆಸಲಾಯಿತು.

ರೆಹಮಾನ್ ಗೆ ಪೊಲೀಸರ ಪ್ರಶ್ನೆಗಳು ಸರಳವಾಗಿದ್ದವು. “ಮಹಾರಾಷ್ಟ್ರದ ಮುಸ್ಲೀಮನಿಗೆ ಮಂಗಳೂರಿನಲ್ಲಿ ಏನು ಕೆಲಸ ? ಮಹಾರಾಷ್ಟ್ರದಲ್ಲಿpic- rehman ಮಸೀದಿ ಇಲ್ಲವೇ ? ಅಲ್ಲಿ ಉರೂಸು ನಡೆಯುವುದಿಲ್ಲವೇ? ನೀನು ರತ್ನಗಿರಿಯ ಮಸೀದಿ ಎದುರುಗಡೆ ನಿಂತು ಹಾಡಿದರೆ ಅಲ್ಲಿನ ಮುಸ್ಲೀಮರಿಗೆ ಕಿವಿ ಕೇಳುವುದಿಲ್ಲವೇ ? ನಿನಗೆ ಭಟ್ಕಳದಲ್ಲಿ ಯಾರ್ಯಾರು ಗೊತ್ತು ?” ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದರು. ಎಲ್ಲದಕ್ಕೂ ರೆಹಮಾನ್ ಉತ್ತರ ನೀಡಿದ್ದಾರೆ. ಮಧ್ಯೆ ಮಧ್ಯೆ ಅತ್ತಿದ್ದಾರೆ. ಇಷ್ಟಾದರೂ ಪೊಲೀಸರಿಗೆ ಅನುಮಾನಗಳು ಮುಗಿದಿಲ್ಲ. ರೆಹಮಾನ್ ಮೊಬೈಲನ್ನು ವಶಪಡಿಸಿಕೊಂಡ ಪೊಲೀಸರು ಮೊಬೈಲ್ ಸಿಮ್ ಕಾರ್ಡ್ ಅನ್ನು ಸಂಪೂರ್ಣ ಪರಿಶೀಲಿಸಿದರು. ರೆಹಮಾನ್ ವಿಳಾಸದ ದಾಖಲೆಗಳನ್ನು ಸಂಪೂರ್ಣ ದೃಡೀಕರಿಸಿದರು. 85 ವರ್ಷದ ಮುದುಕನೊಬ್ಬನನ್ನು ಈ ರೀತಿ ವಿಚಾರಣೆಗೆ ಒಳಪಡಿಸುವುದು ಅಮಾನವೀಯ ಎಂದೆಣಿಸಿದ್ದರೂ ಖಾಕಿ ತೊಟ್ಟುಕೊಂಡ ನಂತರ ಅವರಿಗಿದೆಲ್ಲಾ ಅನ್ವಯಿಸೋದಿಲ್ಲ ಎಂದುಕೊಳ್ಳೋಣಾ. ತನಿಖೆ ಎಲ್ಲಾ ಮುಗಿದ ನಂತರ ಬಿಟ್ಟು ಬಿಡುತ್ತಾರೆ ಎಂದು ರೆಹಮಾನ್ ಅಂದುಕೊಂಡಿದ್ದರಂತೆ. ಪೊಲೀಸ್ ಇನ್ಸ್ ಸ್ಪೆಕ್ಟರ್ ಬಂದ ನಂತರ ಬಿಡುಗಡೆ ಮಾಡಲಾಗುವುದು ಎಂದು ರೆಹಮಾನ್ ಗೆ ಪೊಲೀಸ್ ಸಿಬ್ಬಂದಿಯೊಬ್ಬ ಹೇಳಿದ್ದ. ಗಂಟೆ ರಾತ್ರಿ 11 ಆದರೂ ಪೊಲೀಸ್ ಇನ್ ಸ್ಪೆಕ್ಟರ್ ಠಾಣೆಗೆ ಬರಲೇ ಇಲ್ಲ. ಅಷ್ಟರಲ್ಲಿ ಬಂದ ಸಿಬ್ಬಂದಿಯೊಬ್ಬ ರೆಹಮಾನ್ ರನ್ನು ಲಾಕಪ್ಪಿನಲ್ಲಿ ಕೂರಲು ಹೇಳಿದ. ಸ್ನಾನವೂ ಇಲ್ಲ. ನಮಾಜೂ ಇಲ್ಲ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಅಲ್ಲಿದ್ದ ಅಷ್ಟೂ ಪೊಲೀಸ್ ಸಿಬ್ಬಂದಿಗಳ ಅಪ್ಪನ ಪ್ರಾಯದವರಾಗಿದ್ದ ರೆಹಮಾನ್ ರನ್ನು ಅಂಗಿ, ಪ್ಯಾಂಟು ಕಳಚಿ ಒಳ ಉಡುಪನ್ನು ಮಾತ್ರ ಧರಿಸಿ ಮಲಗುವಂತೆ ಹೇಳಲಾಗಿತ್ತು. ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ದಿನ ! ನಾಲ್ಕನೇ ದಿನ ರೆಹಮಾನ್ ಮೇಲೆ “ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ” ಎಂಬ ಆರೋಪ ಹೊರಿಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿದರು. ನ್ಯಾಯಾಧೀಶರು ರೆಹಮನ್ ಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ನೀಡಿದರು. ರೆಹಮಾನ್ ರನ್ನು ಮಂಗಳೂರು ಸಬ್ ಜೈಲಿಗೆ ಹಾಕಲಾಯಿತು.

ಪೊಲೀಸರು ರೆಹಮಾನ್ ಮೇಲೆ ಕರ್ನಾಟಕ ಪೊಲೀಸ್ ಆ್ಯಕ್ಟ್ 96 ಪ್ರಕಾರ “ಅನುಮಾನಾಸ್ಪದ ವ್ಯಕ್ತಿ” ಎಂದು ಕೇಸು ದಾಖಲಿಸಿದ್ದರು. ಈ ರೀತಿ ಬಂಧನಕ್ಕೊಳಗಾದ ವ್ಯಕ್ತಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಆತನ ಪರವಾಗಿ ವಾದಿಸಲು ವಕೀಲರಿದ್ದರೆ ಅಥವಾ ಜಾಮೀನು ನೀಡಲು ವ್ಯಕ್ತಿಗಳು ಸಿದ್ದರಿದ್ದರೆ ತಕ್ಷಣ ಜಾಮೀನು ದೊರೆಯುತ್ತದೆ. ಅಥವಾ ದಂಡ ಕಟ್ಟಿಯೂ ಬಿಡುಗಡೆ ಹೊಂದಬಹುದು. ಆದರೆ ಇವೆರಡೂ ರೆಹಮಾನ್ ಬಳಿ ತಕ್ಷಣಕ್ಕೆ ಲಭ್ಯ ಇರಲಿಲ್ಲ. ಜೈಲಿನಲ್ಲಿ ಕರಾವಳಿಯ ಊಟ ಸೇರದೆ, ಮತ್ತೊಂದೆಡೆ ವಯೋ ಸಹಜ ಕಾಯಿಲೆಗಳಿಂದ ನಿತ್ಯ ನರಳಾಡುತ್ತಿದ್ದ ರೆಹಮಾನ್ ಕತೆಯನ್ನು ನನ್ನನ್ನು ನಿತ್ಯ ಭೇಟಿಯಾಗುತ್ತಿದ್ದ ಡಿವೈಎಫ್ ಐ ಅಂದಿನ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳಗೆ ಹೇಳಿದಾಗ, ಆತ ತಕ್ಷಣ ಕಾರ್ಯಪ್ರವೃತ್ತನಾಗಿ ರೆಹಮಾನ್ ಬಿಡುಗಡೆಗೆ ಪಯತ್ನ ನಡೆಸಿ ಯಶಸ್ವಿಯಾದ್ರು. 2013 ಫೆಬ್ರವರಿ 23 ರಂದು ಅಮಾಯಕ ರೆಹಮಾನ್ ಮಂಗಳೂರು ಜೈಲಿನಿಂದ ಬಿಡುಗಡೆಯಾದ್ರು.

ಇದಾಗಿ ಕೆಲವು ದಿನ ಕಳೆದಿರಬಹುದು. ಒಂದು ದಿನ ಬೆಳಿಗ್ಗೆದ್ದು ನೋಡುವಾಗ ಚಿಕ್ಕ ಹುಡುಗನೊಬ್ಬ ಜೈಲಿನಲ್ಲಿ ಬಟ್ಟೆ ಒಗೆಯುತ್ತಿದ್ದಾನೆ. ಇದ್ಯಾರ ಬಟ್ಟೆ ಎಂದು ಕೇಳಿದ್ರೆ, ಅವರದ್ದು ಎಂದು ಮಾಡೂರ್ ಯೂಸೂಫ್ ಮತ್ತು ರಶೀದ್ ಮಲಬಾರಿ ಕಡೆ ಕೈ ತೋರಿಸಿದ್ದ. ನಾನಿದ್ದ ಬ್ಲಾಕ್ ನಲ್ಲೇ ಭೂಗತ ಪಾತಕಿ ಎಂಬ ಆರೋಪ ಹೊತ್ತಿದ್ದ ಮಾಡೂರ್ ಯೂಸೂಫ್ ಮತ್ತು ರಶೀದ್ ಮಲಬಾರಿ ಇದ್ದರು. ನನ್ನನ್ನು ಬಹಳವಾಗಿ ಗೌರವಿಸುತ್ತಿದ್ದ ಮಾಡೂರ್ ಯೂಸೂಫ್ ಮತ್ತು ರಶೀದ್ ಮಲಬಾರಿಯ ಕೆಲಸದಿಂದ ಈ ಹುಡುಗನನ್ನು ಬೇರ್ಪಡಿಸುವುದು ನನಗೆ ಕಷ್ಟವಾಗಲಿಲ್ಲ. ಈ ಚಿಕ್ಕ ಹುಡುಗ ಇಬ್ರಾಹಿಂ ಜೈಲಿಗೆ ಯಾಕೆ ಬಂದಿದ್ದಾನೆ ಎಂಬುದು ಆತನಿಗೇ ಗೊತ್ತಿಲ್ಲ.

ಆತನ ಹೆಸರು ಇಬ್ರಾಹಿಂ. ನೋಡಲು ಹತ್ತು ವರ್ಷದವನಂತೆ ಕಾಣುವpic-mangalore jail ಆತನ ವಯಸ್ಸು 15.  ಬೆಳ್ತಂಗಡಿ ನಿವಾಸಿಯಾದ ಇಬ್ರಾಹಿಂನ ತಂದೆ ಖಾಯಿಲೆ ಬಿದ್ದು ಕಳೆದ ಎರಡು ವರ್ಷದಿಂದ ಹಾಸಿಗೆ ಪಾಲಾಗಿದ್ದಾರೆ. ತಾಯಿ ಮನೆಗೆಲಸ ಮಾಡಿ ಮಕ್ಕಳನ್ನು ಸಾಕುತ್ತಿದ್ದಾರೆ. ಇಬ್ರಾಹಿಂಗೊಬ್ಬಳು ಸಣ್ಣ ತಂಗಿ ಇದ್ದಾಳೆ. ತಂಗಿ ಮತ್ತು ತಂದೆಯ ಜೊತೆಗೆ ನನ್ನನ್ನೂ ತಾಯಿ ಸಾಕಬೇಕು ಎಂಬುದು ಕಷ್ಟಕರ ಸಂಗತಿ ಎಂದು ತಿಳಿದುಕೊಂಡ ಇಬ್ರಾಹಿಂ ಶಾಲೆ ಬಿಟ್ಟು ಮಂಗಳೂರಿನ ಮೂಡುಶೆಡ್ಡೆ ಬಳಿ ಇರುವ ಟೈಲ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ. ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದ. ಅಂದೂ ಶನಿವಾರ ಸಂಜೆ ಮನೆಗೆ ಬಂದು ರವಿವಾರ ರಾತ್ರಿ ಮನೆಯಿಂದ ವಾಪಸ್ಸು ಹೊರಟಿದ್ದ. ರಾತ್ರಿ 11 ಗಂಟೆಯಾಗಿದೆ. ನಾಳೆ ಬೆಳಿಗ್ಗೆ ಬೇಗನೆ ಫ್ಯಾಕ್ಟರಿಯಲ್ಲಿರಬೇಕಾದ್ದರಿಂದ ತಡ ರಾತ್ರಿ ಬರುವ ಸರಕಾರಿ ಬಸ್ಸೋ, ಟ್ಯಾಂಕರೋ ಹತ್ತಿ ಮಂಗಳೂರು ತಲುಪಬೇಕು ಎಂಬ ನಿರೀಕ್ಷೆಯಲ್ಲಿದ್ದ ಇಬ್ರಾಹಿಂ. ಅಷ್ಟರಲ್ಲಿ ಒರ್ವ ಪೊಲೀಸ್ ಬಂದು ಇಬ್ರಾಹಿಂ ನಲ್ಲಿ ಮಾತನಾಡಿದ್ದಾನೆ. ಹೆಸರು, ವಿಳಾಸ, ಬಸ್ ನಿಲ್ದಾಣದಲ್ಲಿ ನಿಂತಿರೋದಕ್ಕೆ ಕಾರಣ ಕೇಳಿದ್ದಾನೆ. ಎಲ್ಲದಕ್ಕೂ ಇಬ್ರಾಹಿಂ ಉತ್ತರಿಸಿದ್ದರೂ ಇಬ್ರಾಹಿಂನನ್ನು ಪೊಲೀಸ್ ಪೇದೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆದೊಯ್ದ.

ಬೆಳ್ತಂಗಡಿ ಠಾಣೆಯಲ್ಲಿ ರಾತ್ರಿ ಪೂರ್ತಿ ತೀವ್ರ ವಿಚಾರಣೆಗೆ ಒಳಪಡಿಸಲಾಯಿತು. ತನ್ನ ಮನೆಯ ಎಲ್ಲಾ ಪರಿಸ್ಥಿತಿಯನ್ನು ಪೊಲೀಸರಿಗೆ ತಿಳಿಸಿದರೂ, ನಾಳೆ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆಯ ಬಗ್ಗೆ ಹೇಳಿಕೊಂಡರೂ ಇಬ್ರಾಹಿಂ ನನ್ನು ಪೊಲೀಸರು ಬಿಡುಗಡೆ ಮಾಡಲಿಲ್ಲ. ಅಂಗಿ ಕಳಚಿ ಲಾಕಪ್ಪಿನಲ್ಲಿ ಕೂರುವಂತೆ ಹೇಳಲಾಯಿತು. ರಾತ್ರಿ ಒಬ್ಬೊಬ್ಬರಾಗಿ ಬರೋ ಪೊಲೀಸ್ ಪೇದೆಗಳು ಪ್ರತ್ಯೇಕವಾಗಿ ಹೊಡೆದು ವಿಚಾರಣೆ ಮಾಡುತ್ತಿದ್ದರು. ರಾತ್ರಿ ಮೂರು ಗಂಟೆಯ ನಂತರ ಪೊಲೀಸರು ಇಬ್ರಾಹಿಂಗೆ ಮಲಗಲು ಹೇಳಿದ್ರು.  ಸೊಳ್ಳೆ ಕಚ್ಚಿಸಿಕೊಂಡು ಬೆಳಗ್ಗಿನವರೆಗೆ ನಿದ್ದೆ ಮಾಡದೆ ಕುಳಿತುಕೊಂಡೇ ಇದ್ದ ಇಬ್ರಾಹಿಂನನ್ನು ಮದ್ಯಾಹ್ನದ ವೇಳೆಗೆ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ಇಬ್ರಾಹಿಂ ಮೇಲೆ ಕರ್ನಾಟಕ ಪೊಲೀಸ್ ಆ್ಯಕ್ಟ್ 96 ಪ್ರಕಾರ “ಅನುಮಾನಾಸ್ಪದ” ಕೇಸು ದಾಖಲಿಸಿದ್ದರು. ನ್ಯಾಯಾಧೀಶರು ಕನಿಷ್ಠ ಈತನ ಮುಖ ನೋಡಿ ವಯಸ್ಸನ್ನೂ ಕೇಳದೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. 18 ವರ್ಷ ತುಂಬದ ಮಕ್ಕಳನ್ನು ಹಿಂದೆ ರಿಮಾಂಡ್ ಹೋಂ ಎಂದು ಕರೆಯಲ್ಪಡುತ್ತಿದ್ದ “ಮಕ್ಕಳ ಪರಿವೀಕ್ಷಣಾಲಯ”ದಲ್ಲಿ ಇರಿಸಿಕೊಳ್ಳಬೇಕು ಎಂಬ ಕನಿಷ್ಠ ಜ್ಞಾನವೂ ನ್ಯಾಯಾಧೀಶರಿಗೆ ಇರಲಿಲ್ಲವೇ ಎಂಬುದು ಆಶ್ಚರ್ಯಕರ ವಿಷಯ.

ಅಂತೂ ಪೊಲೀಸರಿಗೆ 15 ರ ಹುಡುಗ, ಮುಸ್ಲಿಂ ಎಂಬ ಕಾರಣಕ್ಕೆ ಅನುಮಾನಾಸ್ಪದವಾಗಿ ಕಂಡು ಜೈಲು ಸೇರಿದ. ಪೊಲೀಸರಿಗೆ ಕ್ಲೀಯರ್ ಮಾಡಿಕೊಳ್ಳಲಾಗದ ಅನುಮಾನ ಈ ಹುಡುಗನಲ್ಲಿ ಏನು ಬಂತೋ ಗೊತ್ತಿಲ್ಲ. ನಾಲ್ಕೋ, ಐದೋ ಮರ್ಡರ್ ಮಾಡಿದ ವೃತ್ತಿಪರ ರೌಡಿಯೊಬ್ಬ ಸಾರ್ವಜನಿಕ ಸ್ಥಳದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಪೊಲೀಸರಿಗೆ ಡೌಟ್ ಬಂದು ವಿಚಾರಣೆ ನಡೆಸಿದಾಗಲೂ ಆತ ಬಾಯ್ಬಿಡದ ರೌಡಿಯಾಗಿದ್ದರೆ, “ಕೆಪಿ ಆ್ಯಕ್ಟ್ 96 ಪ್ರಕಾರ ಅನುಮಾನಾಸ್ಪದ ಕೇಸು” ದಾಖಲಿಸಿ ಜೈಲಿಗಟ್ಟುವುದು ಸರಿಯಾದ ಕ್ರಮ. ಈ ಬಾಲಕನ ಮೇಲೆ ಈ ಮೊದಲು ಯಾವ ಪ್ರಕರಣಗಳೂ ಇಲ್ಲ. ಈತನಿಗೆ ಪೊಲೀಸ್ ಠಾಣೆ, ಜೈಲು ಎಲ್ಲವೂ ಹೊಸತು. ವಕೀಲ ಯಾರು, ಜಡ್ಜ್ ಯಾರು ಎಂದೂ ತಿಳಿಯದೆ ಕರಿ ಕೋಟು ಹಾಕಿದ್ದವರನ್ನೆಲ್ಲಾ ಜಡ್ಜುಗಳು ಎಂದು ತಿಳಿದಿದ್ದ. ಅಂತದ್ದರಲ್ಲಿ ಈ ಹುಡುಗನ ಮೇಲೆ ಅನುಮಾನಗಳೇನಾದರೂ ಬಂದಿದ್ದರೆ ಆತನ ತಂದೆ ತಾಯಿಯನ್ನು ಕರೆಸಿ ವಿಚಾರಣೆ ಮಾಡಬಹುದಿತ್ತು. ಹುಡುಗನನ್ನು ಆತನ ಮನೆಗೆ ಕರೆದೊಯ್ದು ವಿಚಾರಣೆಯನ್ನು ಮಾಡಬಹುದಿತ್ತು. ಇಷ್ಟಕ್ಕೂ ತೃಪ್ತಿಯಾಗದಿದ್ದರೆ ಆತ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ವಿಚಾರಣೆ ನಡೆಸಿ ಪೊಲೀಸರ ಅನುಮಾನಗಳನ್ನು ಕ್ಲೀಯರ್ ಮಾಡಿಕೊಳ್ಳಬಹುದಿತ್ತು. ಎಂತೆಂಥ ಭಯೋತ್ಪಾಧಕರನ್ನು ಲಾಠಿಯಿಂದ ಬಾಯಿ ಬಿಡಿಸುವ ಪೊಲೀಸರಿಗೆ ಯಕಶ್ಚಿತ್ ಹುಡುಗನೊಬ್ಬನಿಗೆ ರಾತ್ರಿ ಪೂರ್ತಿ ಹೊಡೆದರೂ ಬಾಯಿ ಬಿಡಿಸಲಾಗಲಿಲ್ಲ ಮತ್ತು ತಮ್ಮ ಅನುಮಾನಗಳನ್ನು ಕ್ಲೀಯರ್ ಮಾಡಿಕೊಳ್ಳಲಾಗಿಲ್ಲ ಎಂದರೆ ಅರ್ಥ ಏನು ? ಮತ್ತೆ ಡಿವೈಎಫ್ ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳಗೆ ಇಬ್ರಾಹಿಂ ಬಗ್ಗೆ ಮಾಹಿತಿ ನೀಡಿ, ನ್ಯಾಯಾಲಯದಲ್ಲಿ ದಂಡ ಕಟ್ಟಿ ಜೈಲಿನಿಂದ ಬಿಡುಗಡೆಯಾಗುವಂತೆ ಮಾಡಲಾಯ್ಮಾತು.  ನಂತರ ಇವರೆಡೂ ಪ್ರಕರಣಗಳನ್ನು ಇಟ್ಟುಕೊಂಡು ಅನುಮಾನಸ್ಪದ ಪ್ರಕರಣದ ಅಡಿಯಲ್ಲಿ ಅಮಾಯಕ ಮುಸ್ಲೀಮರನ್ನು ಬಂಧನ ಮಾಡುವ ಪೊಲೀಸರ ಬಗ್ಗೆ ಡಿವೈಎಫ್ ಐ ಪ್ರತಿಭಟನೆ ನಡೆಸಿತು. ಪೊಲೀಸ್ ಆಯುಕ್ತರ ಬಳಿ ನಿಯೋಗ ಕೊಂಡೊಯ್ದು ಎಚ್ಚರಿಕೆಯನ್ನು ನೀಡಿದ ಬಳಿಕ ಸ್ವಲ್ಪ ಸಮಯ ಕೆಪಿ ಅ್ಯಕ್ಟ್ 96 ಅಡಿಯಲ್ಲಿ ಅಮಾಯಕ ಮುಸ್ಲೀಮರು ಮಂಗಳೂರು ಜೈಲು ಸೇರುವುದು ಕಡಿಮೆಯಾಗಿತ್ತು.

ಭಯೋತ್ಪಾಧಕರಿಗೆ ಹವಾಲ ಹಣ ಹಂಚಿಕೆ ಮಾಡುತ್ತಿದ್ದಾಳೆ ಎಂದು ಮಹಿಳೆ ಮತ್ತು ಪುಟ್ಟ ಮಗುವನ್ನು ಪೊಲೀಸರು ಬಂಧಿಸಿದ್ದರು. ಕೇವಲ ಹಣಕಾಸಿನ ಅಪರಾಧವನ್ನು ಮುಸ್ಲಿಂ ಹೆಸರಿನ ಮಹಿಳೆ ಎಂಬ ಕಾರಣಕ್ಕಾಗಿ ಭಯೋತ್ಪಾಧನೆಯನ್ನು ತಳಕು ಹಾಕಲಾಗಿತ್ತು. ಆಕೆ ಭಯೋತ್ಪಾಧಕಿ ಅಲ್ಲ ಎಂದು ಮಂಗಳೂರಿನಂತಹ ಪ್ರದೇಶದಲ್ಲಿ ಸಾರುವಷ್ಟರ ಹೊತ್ತಿಗೆ ಡಿವೈಎಫ್ ಐ ಹೈರಾಣಾಗಿತ್ತು. ಇಂತಹ ನೂರಾರು ಪ್ರಕರಣಗಳು ನಮ್ಮ ಕಣ್ಣ ಮುಂದಿದೆ. ನೂರಾರು ಅಮಾಯಕ ಕೈದಿಗಳು ಜೈಲು ಸೇರಿದ್ದಾರೆ, ಇನ್ನೂ ಸೇರಲಿದ್ದಾರೆ.

ಪ್ರಶ್ನೆಯಿರುವುದು ಮಂಗಳೂರು ಪೊಲೀಸರು ಯಾಕೆ ಮುಸ್ಲೀಮರ ವಿಷಯದಲ್ಲಿ ಪೂರ್ವಾಗ್ರಹ ಪೀಡಿತರಾಗಿದ್ದಾರೆ ಎಂಬುದರ ಬಗ್ಗೆ. ಯಾವ ಪ್ರಕರಣಗಳೂ ದಾಖಲಾಗದ ವೃದ್ದ ಮುಸ್ಲೀಮರನ್ನೋ, ಮುಸ್ಲೀಮ್ ಬಾಲಕರನ್ನೋ ಯಾಕೆ ಎತ್ತಾಕಿಕೊಂಡು ಬರುತ್ತಾರೆ ? ಮುಸ್ಲೀಮರನ್ನು ಕಂಡಾಗ ಪೊಲೀಸರಿಗೆ ಯಾಕೆ ಅನುಮಾನಗಳು ಬರುತ್ತದೆ ಎಂಬ ಹಿನ್ನಲೆಯನ್ನು ಇಟ್ಟುಕೊಂಡು, ಅಧ್ಯಯನ ನಡೆಸಿ, ಕೆಪಿ ಆ್ಯಕ್ಟ್ 96 ಬಳಕೆಯ ನಿಯಮಗಳನ್ನು ತಿದ್ದುಪಡಿ ಮಾಡಲು ಸರಕಾರವನ್ನು ಆಗ್ರಹಿಸಬೇಕಾಗಿದೆ. ದೇಶ ಕಟ್ಟಿದ ಮುಸ್ಲಿಂ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಜೈಲು ಸೇರುತ್ತಿದ್ದಾರೆ. ಈ ಪರಿಸ್ಥಿತಿಗೆ ಕಾರಣಗಳೇನು ಎಂಬುದರ ಬಗ್ಗೆ ಅನುಮಾನಿತ ಮತ್ತು ಅವಮಾನಿತ ಸಮುದಾಯಗಳ ವಿದ್ಯಾವಂತ, ಪ್ರಜ್ಞಾವಂತ ಪ್ರತಿನಿಧಿಗಳು ಮುಸ್ಲಿಂ ಯುವ ಸಮಾವೇಶದಲ್ಲಿ ಭಾಗಿಯಾಗಿ ಚರ್ಚಿಸಲಿದ್ದಾರೆ ಎಂಬ ನಿರೀಕ್ಷೆ ಎಲ್ಲರದ್ದೂ.

ಮುಸ್ಲೀಮ್ ಯುವ ಸಮಾವೇಶ ಇಂದಿನ ತುರ್ತು ಅಗತ್ಯ

Naveen Soorinje


ನವೀನ್ ಸೂರಿಂಜೆ


 

ಕೋಮುವಾದದಿಂದ ಜರ್ಜರಿತವಾಗಿರುವ ಮಂಗಳೂರಿನಲ್ಲಿ ಡಿವೈಎಫ್ ಐ ಎಡ ಯುವ ಸಂಘಟನೆ ಮುಸ್ಲಿಂ ಯುವ ಸಮಾವೇಶdyfi-1 ಹಮ್ಮಿಕೊಂಡಿದೆ. ಈ ಸಮಾವೇಶದ ಬಗ್ಗೆ ಹಿರಿಯ ಚಿಂತಕರು ಪತ್ರಕರ್ತರು ಸೇರಿದಂತೆ ಹಲವರು ಪ್ರತಿಯಿಸಿದ್ದಾರೆ. ”ಕಮ್ಯೂನಿಷ್ಟರು ಮುಸ್ಲಿಂ ಸಮಾವೇಶ ಮಾಡುವುದು ಕುತೂಹಲಕರ. ಆದರೆ ಮುಂದೆ ಹಿಂದೂ ಸಮಾವೇಶ, ಕ್ರಿಶ್ಚಿಯನ್ ಸಮಾವೇಶಗಳನ್ನೂ ಮಾಡುವರೇ ಎನ್ನುವುದು ಪ್ರಶ್ನೆ. ಹಾಗೆ ಮಾಡುವುದಿದ್ದರೆ, ಅದರ ಬದಲು ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ವಿರಾಟ್ ಸಮಾವೇಶ ಮಾಡುವುದು ಒಳ್ಳೆಯದಲ್ಲವೇ ?” ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.

ಪ್ರಗತಿಪರ ಚಿಂತನೆಗಳು ಮತ್ತು ಗುಂಪುಗಳು ತಳ, ಹಿಂದುಳಿದ ಮತ್ತು ಶೋಷಿತ ವರ್ಗಗಳನ್ನು ಸಂಘಟಿಸುವುದು ಆಯಾ ಸಮುದಾಯಗಳ ಸಬಲೀಕರಣ ಮತ್ತು ಅವರನ್ನು ಶೋಷಕ ಶಕ್ತಿಗಳ ಪಿತೂರಿಯಿಂದ ರಕ್ಷಿಸುವ ದಿಕ್ಕಿನಲ್ಲಿ ಮೊದಲ ಹೆಜ್ಜೆಯಾಗಿರುತ್ತದೆ. ಇಲ್ಲಿ ಶೋಷಿತ ಸಮುದಾಯಗಳ ಸಂಘಟನೆಗೆ ಎರಡು ಬಗೆಯ ಆಯಾಮಗಳಿವೆ. ಮೊದಲನೆಯದ್ದು ಅಂತಹ ವರ್ಗಗಳನ್ನು ಅವರು ಜೀವಿಸುತ್ತಿರುವ ಪ್ರತಿಕೂಲ ವಾತವರಣದಲ್ಲಿ ಯಜಮಾನ್ಯ ಮತ್ತು ಶೋಷಕ ಶಕ್ತಿಗಳ ದಾಳಿಯಿಂದ ರಕ್ಷಿಸುವುದು. ಎರಡನೆಯದ್ದು ಆಯಾ ಸಮುದಾಯದೊಳಗೇ ಇರತಕ್ಕಂತಹ ಅನಾಚಾರಗಳನ್ನು, ಅಸಮತೆಗಳನ್ನು ತೊಡೆದು ಹಾಕುವಂತಹ ಸುಧಾರಣಾವಾದಿ ಚಳುವಳಿಯನ್ನು ಮುನ್ನಡೆಸುವುದು.

ನಮ್ಮ ದೇಶ ಬಹುಸಂಖ್ಯಾತ ಪ್ರಭಾವಿ ಸಮಾಜೋ ರಾಜಕೀಯ ಚೌಕಟ್ಟನ್ನು ಹೊಂದಿದೆ. ಇಲ್ಲಿನ ಸಾರ್ವಜನಿಕ ಬದುಕಿನಲ್ಲಿ ಕೂಡಾ ಬಹುಸಂಖ್ಯಾಕ ಹಿಂದೂ ಕಟ್ಟಳೆಗಳು,RSS ಪರಂಪರೆಗಳು ಸಹಜವೆಂಬತೆ ಆಚರಿಸಲ್ಪಡುತ್ತವೆ. ರಾಜ್ಯದ ಪ್ರಾಯೋಜಕತ್ವದಲ್ಲೇ ಹಿಂದೂ ಹಬ್ಬ-ಮೇಳಗಳು ಇಲ್ಲಿಯ ನೆಲದ ಪರಂಪರೆ ಎಂಬ ನೆಪದಲ್ಲಿ ನಡೆಯುತ್ತವೆ. ಇವೆಲ್ಲದರ ಜೊತೆಗೆ ದೇಶದಲ್ಲಿ ಪ್ರತಿಗಾಮಿ ಹಿಂದೂ ಸಾಂಸ್ಕೃತಿಕ ಯಾಜಮಾನ್ಯವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ; ಜೀವನದ ಪ್ರತೀ ಕ್ಷೇತ್ರವನ್ನೂ ವ್ಯಾಪಿಸುತ್ತಿದೆ. ಸಾರ್ವಜನಿಕ ಬದುಕನ್ನು ಪೂರ್ತಿಯಾಗಿ ಹಿಂದೂವನ್ನಾಗಿಸುವ ಪ್ರಯತ್ನದಲ್ಲಿ ಅದು ನಿರತವಾಗಿದೆ. ಆಹಾರದಂತಹ ತೀರಾ ಖಾಸಾಗಿ ವಿಷಯದಲ್ಲೂ ತನ್ನ ನಿಯಂತ್ರಣವನ್ನು ಸಾಧಿಸಲು ಹೊರಟಿದೆ.

ಇಂತಹ ಬಹುಸಂಖ್ಯಾತ ನಿಷ್ಠ ವಾತಾವರಣದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಅಸ್ತಿತ್ವಕ್ಕೆ ಹಲವು ಆತಂಕಗಳು ಎದುರಾಗುತ್ತವೆ. ಭಾರತದ ಪ್ರಧಾನ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲೀಮರು ಅಂತಹ ಹತ್ತು ಹಲವು ಆತಂಕಗಳನ್ನು ತಮ್ಮ ದಿನನಿತ್ಯದ ಬದುಕಿನಲ್ಲಿ ಎದುರಿಸುತ್ತಿದ್ದಾರೆ. ಸದ್ಯದ ಹಿಂದುತ್ವವಾದಿ ಶಕ್ತಿಗಳ ಆಡಳಿತದಲ್ಲಿ ಅವರ ಅಸ್ತಿತ್ವವೇ ಪ್ರಶ್ನೆಯಲ್ಲಿದೆ. ಮುಸ್ಲೀಮ್ ಕ್ರೈಸ್ತ ಮೊದಲಾದ ಅಲ್ಪಸಂಖ್ಯಾತ ಸಮುದಾಯಗಳ ಧಾರ್ಮಿಕ ಹಕ್ಕನ್ನು ಕಸಿದುಕೊಳ್ಳುವ, ಮೊಟುಕುಗೊಳಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ.

ಇಂತಹ ವಿಷಮ ಸನ್ನಿವೇಶದಲ್ಲಿ ಮುಸ್ಲೀಮ್ ಸಮುದಾಯವನ್ನು ಸಂಘಟಿಸುವುದು ಅವರನ್ನು ಹಿಂದುತ್ವವಾದಿ ಶಕ್ತಿಗಳ ದಾಳಿಯಿಂದ ಕಾಪಾಡುವ ಹಾಗೂ ಅವರ ಸಂವಿಧಾನಬದ್ಧ ಹಕ್ಕುಗಳನ್ನು ಪ್ರತಿಷ್ಠಾಪಿಸುವ ದೃಷ್ಟಿಯಿಂದ ಅತ್ಯಗತ್ಯ. ಸಂಘಟನೆಯು ಶೋಷಿತ ಸಮುದಾಯಗಳಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ಅಂತಹ ಸಂಘಟನಾತ್ಮಕ ಹೋರಾಟಗಳು ಪ್ರತಿಕೂಲ ಪರಿಸರದಲ್ಲೂ ಘನತೆಯಿಂದ ಬದುಕುವ ಹಕ್ಕನ್ನು ಅವರಿಗೆ ದಕ್ಕಿಸಿಕೊಡುತ್ತವೆ.

ಇಲ್ಲಿ ಇನ್ನೊಂದು ವಿಚಾರ ಬಹಳ ಮುಖ್ಯ. ಮುಸ್ಲೀಮರ ಪರವಾದ ಹೋರಾಟ ಮತ್ತು ಮುಸ್ಲೀಮರನ್ನು ಒಳಗೊಳ್ಳುವುದು ಎಂದರೆ ಮುಸ್ಲಿಂ ಮೂಲಭೂತವಾದಿmuslims460 ಮತ್ತು ಕೋಮುವಾದಿ ಸಂಘಟನೆಗಳನ್ನು ತಮ್ಮ ಹೋರಾಟದ ಸಹಭಾಗಿಯನ್ನಾಗಿಸುವುದಲ್ಲ. ಅಂತಹ ತಪ್ಪನ್ನು ನಮ್ಮ ಹಲವು ಪ್ರಗತಿಪರ ಸಂಘಟನೆಗಳು ಮಾಡುತ್ತಿವೆ. ಮೂಲಭೂತವಾದೀ ಸಂಘಟನೆಗಳ ಸಾಹಚರ್ಯ ಆಯಾ ಸಮುದಾಯದೊಳಗೇ ಸುಧಾರಣೆಗಳನ್ನು ತರುವ ಪ್ರಯತ್ನಗಳಿಗೆ ಸಮಸ್ಯೆಯನ್ನು ತಂದೊಡ್ಡುತ್ತವೆ. ಹಿಂದೂಗಳೆಂದರೆ ಭಜರಂಗದಳ, ವಿ.ಎಚ್.ಪಿ, ಆರ್.ಎಸ್.ಎಸ್ ಹೇಗೆ ಅಲ್ಲವೋ, ಮುಸ್ಲೀಮರೆಂದರೆ ಮುಸ್ಲಿಂ ಕೋಮುವಾದಿ ಸಂಘಟನೆಗಳಲ್ಲ ಎಂಬುದು ಇನ್ನೂ ಕೂಡಾ ಕೆಲ ಎಡ ಚಿಂತಕರಿಗೆ ಮನದಟ್ಟಾಗಿಲ್ಲ. ಒಂದೆಡೆ ಹಿಂದೂ ಕೋಮುವಾದದ ಭೀಕರತೆ, ಮತ್ತೊಂದೆಡೆ ಅದಕ್ಕೆ ಪರ್ಯಾಯವಾಗಿ ಬೆಳೆಯುತ್ತಿರುವ ಮುಸ್ಲಿಂ ಕೋಮುವಾದ ತಂದೊಡ್ಡಿರುವ ಆತಂಕಗಳು; ಇವೆರಡರ ಮಧ್ಯೆ ಹಿಂದೂ ಕೋಮುವಾದದ ಅತಿರೇಕವನ್ನು ಮುಸ್ಲಿಂ ಮೂಲಭೂತವಾದಿ-ಕೋಮುವಾದಿಗಳ ವೇದಿಕೆಯಲ್ಲಿ ನಿಂತು ಖಂಡಿಸಿ ಮಾತನಾಡುವ ಎಡಚಿಂತಕರು. ಇಂತಹ ವಿಪರ್ಯಾಸಗಳ ಮಧ್ಯೆ ಮಂಗಳೂರಿನಲ್ಲಿ ಡಿವೈಎಫ್ಐ ”ಮುಸ್ಲಿಂ ಯುವ ಸಮಾವೇಶ” ಹಮ್ಮಿಕೊಂಡಿರುವಂತದ್ದು ಸರಿಯಾದ ನಡೆಯೇ ಆಗಿದೆ.

ಹಿಂದೂ ಸಂಘಟನೆಗಳ ಕೋಮುವಾದದ ಅತಿರೇಕಗಳನ್ನು ಮುಸ್ಲಿಂ ಯುವ ಜನರ ಮುಂದಿಟ್ಟು ಮುಸ್ಲಿಂ ಮತಾಂಧ ಸಂಘಟನೆಗಳನ್ನು ಬೆಳೆಸಲಾಗುತ್ತಿದೆ. ಈ ಮತಾಂಧ ಸಂಘಟನೆಗಳಲ್ಲಿ ಇರುವ ಕೆಲ ಯುವಕರ ಕುಕೃತ್ಯದಿಂದಾಗಿ ಇಡೀ ಮುಸ್ಲಿಂ ಸಮುದಾಯವನ್ನು ಅನುಮಾನದಿಂದ ನೋಡಲಾಗುತ್ತಿದೆ. ಈ ಅನುಮಾನದ ಭಾಗವಾಗಿಯೇ ಪೊಲೀಸ್ ದೌರ್ಜನ್ಯಗಳು, ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳು ನಡೆಯುತ್ತಿದೆ. ಈ ರೀತಿ ಮುಸ್ಲಿಮರ ಹಕ್ಕುಗಳ ಮೇಲೆ ದಾಳಿಯಾದ ಸಂದರ್ಭದಲ್ಲಿ ಮುಸ್ಲಿಂ ಯುವ ಸಮುದಾಯದ ಹೋರಾಟದ ದಾರಿ ಯಾವುದಿರಬೇಕು ಎಂದು ಚಿಂತಿಸುವ ನಿಟ್ಟಿನಲ್ಲಿ ಮುಸ್ಲಿಂ ಸಮಾವೇಶಗಳ ಅಗತ್ಯ ಇದೆ.

ಮುಸ್ಲಿಂ ಸಮಾವೇಶ ಮಾತ್ರವಲ್ಲದೆ ಹಿಂದೂ ಸಮಾವೇಶವನ್ನು ಎಡಪಂಥೀಯರು ಆಯೋಜಿಸುತ್ತಾರೆಯೇ ಎಂದು ಹಿರಿಯ ಪತ್ರಕರ್ತ ಬಿ ಎಂ ಹನೀಫ್ ಪ್ರಶ್ನಿಸುತ್ತಾರೆ. narayana-guruಹಿಂದೂ ಎಂಬುದು ಶೋಷಿತರನ್ನು, ದಲಿತರನ್ನು ಪ್ರತಿನಿಧಿಸುವುದಿಲ್ಲ. ಹಿಂದೂ ಸಾಮಾಜಿಕ ಸಂರಚನೆಯಲ್ಲಿ, ಚಲನೆಯಲ್ಲಿ ಹಿಂದುಳಿದ ವರ್ಗಗಳು ಬಳಕೆಯಾಗುತ್ತಿರುವುದು ಕೇವಲ ಮೇಲ್ವರ್ಗದ ಯಜಮಾನಿಕೆಯನ್ನು ಪ್ರತಿಷ್ಠಾಪಿಸುವ ಪಿತೂರಿಯಲ್ಲಿ ಕಾಲಾಳುಗಳಾಗಿಯಷ್ಟೇ. ಕರಾವಳಿಯ ಸಂದರ್ಭದಲ್ಲಿ ಹೇಳುವುದಾದಲ್ಲಿ ಪುರೋಹಿತಶಾಹಿ ವ್ಯವಸ್ಥೆಯ ಕಪಿಮುಷ್ಟಿಯಿಂದ ತಳವರ್ಗಗಳನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಜೀವಪರ ಪ್ರಗತಿಪರ ಸಮುದಾಯಗಳು ದಲಿತರು, ಬಿಲ್ಲವರು, ಮೊಗವೀರರು, ಕುಲಾಲರು, ಕೊರಗರು, ಆದಿವಾಸಿಗಳ ಪ್ರತ್ಯೇಕ ಪ್ರತ್ಯೇಕ ಸಮಾವೇಶಗಳನ್ನು ಮಾಡಬೇಕಿದೆ. ನಾರಾಯಣ ಗುರು, ಕೋಡ್ದಬ್ಬು, ತನ್ನಿಮಾನಿಗ, ಸಿರಿಯನ್ನು ಮುಂದಿಟ್ಟುಕೊಂಡು ಹಿಂದುಳಿದ ವರ್ಗಗಳ ಸ್ಥಾನಮಾನ, ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಿದೆ. ಹಿಂದುಳಿದ ಸಮುದಾಯಗಳ ಯುವಕರು ಹೇಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಅಸಮಾನತೆಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಅವರಿಗೆ ತಿಳಿ ಹೇಳಬೇಕಾಗಿದೆ. ಕರಾವಳಿಯಲ್ಲಿ ಮುಸ್ಲಿಮ್ ಸಮುದಾಯವನ್ನು ಸಂಘಟಿಸಲು ಹೊರಟ ಎಡಪಂಥೀಯರು, ಅವಿಭಜಿತ ಜಿಲ್ಲೆಯಲ್ಲಿ ಅದರಷ್ಟೇ ಅನಿವಾರ್ಯತೆ ಇರುವ, ಹಿಂದುಳಿದ ಜಾತಿಗಳನ್ನು ಸಂಘಟಿಸುವ ಕಾರ್ಯಕ್ಕೆ ಮುಂದಾಗುತ್ತಾರೆಯೇ ಎಂಬುವುದು ಸದ್ಯದ ಪ್ರಶ್ನೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್.ಎಸ್.ಎಸ್ ಮತ್ತು ಹಿಂದುತ್ವಕ್ಕೆ ನಾರಾಯಣ ಗುರುಗಳ ಸುಧಾರಣಾವಾದಿ ಚಳುವಳಿಗಿಂತ ಬೇರೆ ಉತ್ತರವೇ ಬೇಕಿಲ್ಲ. ನಾರಾಯಣ ಗುರುಗಳ ಐಡಿಯಾಲಜಿಯ ಆಧಾರದಲ್ಲಿ ಬಿಲ್ಲವರು ಮತ್ತು ಇತರೆ ಹಿಂದುಳಿದ ಸಮುದಾಯಗಳನ್ನು ಸಂಘಟಿಸಿದಲ್ಲಿ ಕರಾವಳಿಯ ಕೋಮುವಾದಿ ವಾತಾವರಣದಲ್ಲೂ ಹಲವು ಪೂರಕ ಬೆಳವಣಿಗೆಗಳು ಕಂಡುಬರುತ್ತವೆ. ಯಾಕೆಂದರೆ ಆರ್.ಎಸ್.ಎಸ್.ನ ಹಿಂದುತ್ವವಾದಿ ವ್ಯವಸ್ಥೆಯ ಅನುಷ್ಠಾನಕ್ಕೆ ಕಾಲಾಳುಗಳಾಗಿ ಬಳಕೆಯಾಗುತ್ತಿರುವುದು ಇದೇ ಬಿಲ್ಲವರು ಮತ್ತು ಇತರ ಹಿಂದುಳಿದ ಜಾತಿಗಳಿಗೆ ಸೇರಿದ ಬಡ ಯುವಕರು. ಅವರನ್ನು ಸಂಘಟಿಸುವ, ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ಕಾರ್ಯವನ್ನು ಎಡಪಕ್ಷಗಳು ಮಾಡಬೇಕಾಗಿದೆ. ಮತ್ತೊಂದೆಡೆ ಆರ್.ಎಸ್.ಎಸ್ ಗೆ ಆರ್.ಎಸ್.ಎಸ್ ಮಾದರಿಯಲ್ಲೇ ಪ್ರತಿಕ್ರೀಯೆ ನೀಡುತ್ತಿರುವ ಮುಸ್ಲಿಂ ಮತಾಂಧ ಸಂಘಟನೆಗಳಿಗೆ ಅನಕ್ಷರಸ್ಥ ಬಡ ಮುಸ್ಲೀಮರು ಕಾಲಾಳುಗಳಾಗುವುದನ್ನು ತಪ್ಪಿಸಿದಲ್ಲಿ ಮುಸ್ಲಿಂ ಯುವಕರು ಜೈಲು ಸೇರುವುದನ್ನೂ, ಸಾಯುವುದನ್ನೂ ತಪ್ಪಿಸಬಹುದಾಗಿದೆ. ಆರ್.ಎಸ್.ಎಸ್ ಕೋಮುವಾದಕ್ಕೆ ಇಸ್ಲಾಂ ಕೋಮುವಾದದ ಮೂಲಕ ಉತ್ತರ ಕೊಡದೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಕ್ರೀಯೆ ನೀಡುವ ನಿಟ್ಟಿನಲ್ಲಿ ಮುಸ್ಲಿಂ ಯುವ ಸಮಾವೇಶಗಳನ್ನು ಆಯೋಜಿಸಲು ಎಡ ಯುವ ಸಂಘಟನೆಗಳು ನಿರ್ಧರಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.

 

 

ಕಲ್ಯಾಣ ಕರ್ನಾಟಕದಲ್ಲೊಂದು ಜ್ಞಾನ ದಾಸೋಹ

-ಶ್ರೀಧರ ಪ್ರಭು

ಈಗಿನ ದಿನಮಾನದಲ್ಲಿ ಒಂದೊಳ್ಳೆ ಮೌಲಿಕ ಕಾರ್ಯಕ್ರಮ ಸಂಘಟಿಸುವುದಕ್ಕಿಂತ ಹೆಚ್ಚು ಕಷ್ಟದ ಕೆಲಸ ಇನ್ನೊಂದಿಲ್ಲ. ನೂರು ಜನ ಬರಬಹುದು ಎಂದುಕೊಂಡ ಕಡೆ ಇಪ್ಪತ್ತು ಜನ ಬಂದಿರುತ್ತಾರೆ. ಸರಕಾರದ ಕಾರ್ಯಕ್ರಮವಾಗಿದ್ದರಂತೂ ಹೆಚ್ಚಿನ ಜನ ಬರುವುದು ಪ್ರಯಾಣ ಭತ್ಯೆಗಾಗಿ. ಒಂದು ಬಾರಿ ಹೆಸರು ನೋಂದಾಯಿಸಿ ಹೋದವರು ಗೋಷ್ಠಿಗಳ ಕಡೆಗೆ ತಲೆಯಿಟ್ಟೂ ಮಲಗುವುದಿಲ್ಲ. ಇನ್ನು ಈ ಗೋಷ್ಠಿಗಳು ಬಿಸಿಲು ನಾಡಿನಲ್ಲಿದ್ದರಂತೂ ಯಾವ ನರಪಿಳ್ಳೆಯೂ ಇತ್ತ ಸುಳಿಯುವುದಿಲ್ಲ.

ಇದೆಲ್ಲ ನನಗೆನಿಸಿದ್ದು ಮೊನ್ನೆ ಕಲಬುರ್ಗಿ ಜಿಲ್ಲೆಯ ಜೇವರ್ಗಿಯ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ೮ ಮತ್ತು ೯ ನೇ ತಾರೀಕು ಬಾಬಾ ಸಾಹೇಬರ ವಿಚಾರಗಳ ಕುರಿತು ಎರಡು ದಿನಗಳ ವಿಚಾರ ಗೋಷ್ಠಿಗೆ ನನ್ನನ್ನು ಆಹ್ವಾನಿಸಿದಾಗ.

ಹೆಚ್ಚೆಂದರೆ ಹತ್ತಿಪ್ಪತ್ತು ಜನ ಕಾಟಾಚಾರಕ್ಕೆಂದು ಸೇರಿರುತ್ತಾರೆ. ಆದರೂ ಅವರ ಉತ್ಸಾಹಕ್ಕೆ ಭಂಗ ಬರಬಾರದು ಎಂದುಕೊಂಡು ಸ್ವಲ್ಪ ಮಟ್ಟಿನ ಅನಾರೋಗ್ಯವನ್ನೂ ಕಡೆಗಣಿಸಿ ರಣ ಬಿಸಿಲಿನ ಹೆದರಿಕೆಯನ್ನೂ ಮೆಟ್ಟಿನಿಂತು ಜೇವರ್ಗಿಗೆ ಬಂದಿಳಿದಿದ್ದೆ.

ಜೇವರ್ಗಿಯ ಯುವ ಪ್ರಾಧ್ಯಾಪಕರಾದ ಡಾ. ಕರಿಗುಳೇಶ್ವರ ಮತ್ತು ಅಲ್ಲಿನ ಗ್ರಂಥಾಲಯದ ವಿಜ್ಞಾನದ ಮುಖ್ಯಸ್ಥರಾದ ವಿನೋದ್ ಕುಮಾರ್ ಮತ್ತಿತರರ ಯುವಜನರ ತಂಡ ಜೇವರ್ಗಿಯಲ್ಲಿ ವಿಚಾರ ಸಂಕಿರಣವನ್ನು ನಿಜವಾಗಲೂ ರಾಷ್ಟ್ರ ಮಟ್ಟಕ್ಕೇರಿಸಿದ್ದರು. ಪ್ರತಿನಿಧಿಗಳ ಪ್ರಯಾಣ ವ್ಯವಸ್ಥೆ, ಊಟ, ಉಪಚಾರ, ವಸತಿsridhar prabhuಯಿಂದ ಮೊದಲ್ಗೊಂಡು ವಿಷಯ ಮಂಡನೆಯವರೆಗೆ ಯಾವ ವಿಚಾರದಲ್ಲಿ ಪರಿಗಣಿಸಿದರೂ ಇದನ್ನೊಂದು ರಾಷ್ಟ್ರ ಮಟ್ಟದ ವಿಚಾರ ಸಂಕಿರಣವೆಂದು ಖಚಿತವಾಗಿ ಹೇಳಬಹುದಿತ್ತು.

ಎರಡು ದಿನ ಮುಂಚಿತವಾಗಿ ಸ್ವಯಂ ಚಾಲಿತ ಎಸ್ ಎಂ ಎಸ್ ಅಲರ್ಟ್ ವ್ಯವಸ್ಥೆ ಮಾಡಲಾಗಿ ಎಲ್ಲರಿಗೂ ಏಕ ಕಾಲಕ್ಕೆ ಸಂಕಿರಣದ ವೇಳಾಪಟ್ಟಿ ಲಭ್ಯವಿತ್ತು. ಹಾಗೆಯೆ, ಒಂದು ವೆಬ್ಸೈಟಿಗೆ ಸಹ ಚಾಲನೆ ನೀಡಿ ಆನ್ಲೈನ್ ನೋಂದಣಿ ವ್ಯವಸ್ಥೆ ಮಾಡಲಾಗಿತ್ತು. ಪ್ರಿಂಟರ್, ಪ್ರೊಜೆಕ್ಟರ್ ಮತ್ತು ಧ್ವನಿಮುದ್ರಕ ವ್ಯವಸ್ಥೆ ಜೊತೆಗೆ ವಾತಾನುಕೂಲ ಪಂಖೆಗಳು ನಮ್ಮ ಸ್ವಾಗತಕ್ಕೆ ಕಾದಿದ್ದವು. ಪ್ರಮುಖವಾಗಿ, ಯಾವ ಗೋಷ್ಠಿಯೂ ಸಮಯವನ್ನು ಮೀರಲಿಲ್ಲ. ಎಲ್ಲಾ ಗೋಷ್ಠಿಗಳಲ್ಲಿ ಹೆಚ್ಚಿನ ವಿದ್ಯಾರ್ಥಿನಿಯರು ಪಾಲ್ಗೊಂಡು ಪ್ರಬಂಧ ಮಂಡಿಸಿದರು.

ಪ್ರಬಂಧಮಂಡನೆಯಿಂದ ಮೊದಲ್ಗೊಂಡು ಇಡೀ ವಿಚಾರಗೋಷ್ಠಿಯನ್ನು ಆಂಗ್ಲಭಾಷೆಯಲ್ಲೇ ನಡೆಸಿಕೊಡಲಾಗಿತ್ತು. ನನ್ನಂಥವರು ಕೆಲವರು ಕನ್ನಡದಲ್ಲಿ ಮಾತಾಡಿದ್ದು ಬಿಟ್ಟರೆ ಹೈದರಾಬಾದ್ ಕರ್ನಾಟಕ ಹಳ್ಳಿಗಾಡಿನಿಂದ ಬಂದ ಬಹುತೇಕ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸುಲಲಿತ ಇಂಗ್ಲಿಷ್ ಭಾಷೆಯಲ್ಲೇ ಪ್ರಬಂಧ ಮಂಡಿಸಿದರು. ನಾನಿಲ್ಲಿ ಹೇಳಿದ್ದು ಕೇವಲ ೩೦-೪೦% ವಿಚಾರಗಳನ್ನು ಮಾತ್ರ. ಹೆಚ್ಚಿನದನ್ನೂ ನಾನೇ ಕಣ್ಣಾರೆ ನೋಡಿದ್ದೆನಾದರೂ ನಂಬಿಸಿಕೊಳ್ಳಲು ನನಗೇ ಸಾಧ್ಯವಾಗುತ್ತಿಲ್ಲ! ಹೆಚ್ಚು ಹೇಳಲು ಹೋದರೆ ನೀವು ಉತ್ಪ್ರೇಕ್ಷೆಯೆಂದುಕೊಂಡು ಬಿಡುವ ಸಂಭವವಿದೆ!

ಜೇವರ್ಗಿಯ ಜನಸಂಖ್ಯೆ ಹೆಚ್ಚೆಂದರೆ ಇಪ್ಪತ್ತೈದು ಸಾವಿರವಿರಬಹುದು. ಇಲ್ಲಿನ ಈ ಸರಕಾರಿ ಕಾಲೇಜಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಈ ಕಾಲೇಜಿನ ಅತ್ಯುನ್ನತ ಗುಣಮಟ್ಟದಿಂದಾಗಿ ಇಲ್ಲಿ ಯಾವುದೇ ಖಾಸಗಿ ಕಾಲೇಜು ಸಹ ನಡೆಯುತ್ತಿಲ್ಲ. ಯಾರೂ ಖಾಸಗಿ ಕಾಲೇಜುಗಳತ್ತ ಮೂಸಿಯೂ ನೋಡುತ್ತಿಲ್ಲ. ಅತ್ಯಂತ ಕಡಿಮೆ ಮಾನವ ಮತ್ತು ಆರ್ಥಿಕ ಸಂಪನ್ಮೂಲಗಳನ್ನಿಟ್ಟುಕೊಂಡು ಕಾಲೇಜು ನಡೆಸುತ್ತಿರುವ ಪ್ರಾಚಾರ್ಯರು ಸಿಬ್ಬಂದಿಗೆ ಎಲ್ಲ ರೀತಿಯ ಸ್ವಾತಂತ್ರ್ಯವನ್ನೂ ಕೊಟ್ಟಿದ್ದಾರೆ. ಸಿಬ್ಬಂದಿಯಲ್ಲಿ ಈರ್ಷೆ ಮತ್ತು ಕೀಳು ಭಾವನೆಗಳಿಲ್ಲ. ಎಲ್ಲರೂ ಒಂದು ತಂಡವಾಗಿ ಕೆಲಸಮಾಡುತ್ತಿದ್ದಾರೆ. ಬಾಬಾ ಸಾಹೇಬರ ಕಾರ್ಯಕ್ರಮಗಳಲ್ಲಿ ಎಲ್ಲಾ ಜಾತಿ ಮತ್ತು ಧರ್ಮಗಳವರು ಆಸಕ್ತಿಯಿಂದ ಪಾಲ್ಗೊಂಡು ದುಡಿಯುತ್ತಿದ್ದಾರೆ

ಹೈದರಾಬಾದ್ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಅಮಿಯನ್ ಆದಿತ್ಯ ಬಿಸ್ವಾಸ್ ಸಾಕಷ್ಟು ಆರ್ಥಿಕ ಸಹಕಾರ ನೀಡಿದ್ದಾರೆ ಮತ್ತು ಸ್ಥಳೀಯ ಮುಖಂಡರು ಊಟದ ವ್ಯವಸ್ಥೆಯನ್ನೂ ಕಲ್ಪಿಸಿಕೊಟ್ಟಿದ್ದಾರೆ. ಇವೆಲ್ಲವಕ್ಕೂ ಹೆಚ್ಚಾಗಿ ಅಲ್ಲಿನ ವಿದ್ಯಾರ್ಥಿಗಳು ಹಗಲಿರುಳೂ ದುಡಿದು ವಿಚಾರ ಸಂಕಿರಣಕ್ಕೆ ಅದ್ಭುತ ಯಶಸ್ಸು ದೊರಕಿಸಿದ್ದಾರೆ.

ಇದೆಲ್ಲವನ್ನೂ ನೋಡಿದರೆ ಕಲ್ಯಾಣ ಕರ್ನಾಟದ ಕನಸು ಇಲ್ಲಿಂದಲೇ ನಿಜವಾಗುವಂತೆ ಭಾಸವಾಗುತ್ತದೆ!

ಅಂದ ಹಾಗೆ ನಿಮಗೊಂದು ವಿಶೇಷ ಗೊತ್ತಿರಲಿ. ಕಲಬುರಗಿ ಮತ್ತು ಜೇವರ್ಗಿಯ ದಾರಿಯಲ್ಲಿರುವ ಕಿರಣಗಿ ಎಂಬ ಪುಟ್ಟ ಗ್ರಾಮದ ಬಗ್ಗೆ ೧೯೬೨ ರಲ್ಲಿ ನಮ್ಮ ದೇಶದ ಮೇಲೆ ಚೀನಾ ಅಕ್ರಮಣವಾದಾಗ ನಿಜಲಿಂಗಪ್ಪನವರ ಸರಕಾರದಲ್ಲಿದ್ದ ಯುವ ಸಚಿವ ವೀರೇಂದ್ರ ಪಾಟೀಲರು ಈ ಗ್ರಾಮಕ್ಕೆ ಭೇಟಿಯಿತ್ತು ದೇಶಕ್ಕೆ ಸಹಾಯ ಮಾಡುವಂತೆ ಗ್ರಾಮಸ್ಥರನ್ನು ಕೋರಿದಾಗ, ಈ ಗ್ರಾಮದ ಪ್ರತಿಯೊಬ್ಬರೂ ತಮ್ಮ ಬಳಿಯಲ್ಲಿದ್ದ ಚಿನ್ನವೆಲ್ಲವನ್ನೂ ದೇಶಕ್ಕೆ ಧಾರೆಯೆರೆದು ಕೊಟ್ಟಿದ್ದರು!! ಹೀಗೆ ಈ ಒಂದೇ ಗ್ರಾಮದಿಂದ ನೂರು ತೊಲ ಬಂಗಾರವನ್ನು ದೇಶಕ್ಕಾಗಿ ನೀಡಿದ ಕೀರ್ತಿಗಾಗಿ ಕಿರಣಗಿಯನ್ನು ಅಂದಿನಿಂದ ಹೊನ್ನ ಕಿರಣಗಿ ಎಂದು ಕರೆಯಲಾಗುತ್ತದೆ!

ಅಣ್ಣ ಬಸವಣ್ಣನ ಅನುಭವ ಮಂಟಪದ ಖನಿ, ಬಂದೇನವಾಜರ ಕಾರುಣ್ಯದ ಬೀಡು, ವಿಜ್ಞಾನೇಶ್ವರನ ಜ್ಞಾನಸ್ಥಾನ, ಅಮೋಘವರ್ಷರ ವೈಭವದ ನಾಡು ಇನ್ನೆಷ್ಟು ಅದ್ಭುತಗಳನ್ನು ತನ್ನ ಗರ್ಭದಲ್ಲಿಟ್ಟು ಸಲಹುತ್ತಿದೆಯೋ ಬಲ್ಲವರ್ಯಾರು!!