Monthly Archives: March 2016

ಜಾತ್ರೆಯ  ಆಮಂತ್ರಣ ಪತ್ರಿಕೆಯಲ್ಲಿ  ಮುಸ್ಲಿಮ್  ಡಿಸಿಯ  ಹೆಸರು ವಿವಾದ ಹಾಗೂ ಕರಾವಳಿಯ  ಕೋಮು ಸಾಮರಸ್ಯದ  ಇತಿಹಾಸ


-ಇರ್ಷಾದ್ ಉಪ್ಪಿನಂಗಡಿ


ದಕ್ಷಿಣ ಕನ್ನಡ  ಜಿಲ್ಲೆಯ ಪುತ್ತೂರಿನ ಮಹಾಲಿಂಗೇಶ್ವರ  ದೇವಸ್ಥಾನದ ಜಾತ್ರಾಮಹೋತ್ಸವದ ಆಮಂತ್ರಣ  ಪತ್ರಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ  ಇಬ್ರಾಹಿಂ ಅವರ  ಹೆಸರನ್ನು  ಉಲ್ಲೇಖಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. “ಜಿಲ್ಲಾಧಿಕಾರಿ  ಎ.ಬಿ ಇಬ್ರಾಹಿಂ ಮುಸ್ಲಿಮ್  ಸಮುದಾಯದವರಾಗಿದ್ದು ಅವರ ಹೆಸರನ್ನುsri-mahalingeshwara-temple_1409380877 ಆಮಂತ್ರಣ ಪತ್ರಿಕೆಯಲ್ಲಿ  ಮುದ್ರಿಸಿರುವುದು ಹಿಂದೂಗಳ ಭಾವನೆ ಧಕ್ಕೆ ಉಂಟಾಗುತ್ತದೆ ಮಾತ್ರವಲ್ಲ ಇದು 1997ರ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 7 ವಿಧಿಯ ಉಲ್ಲಂಘನೆ” ಎಂಬುವುದು ಸಂಘಪರಿವಾರದ ಸಂಘಟನೆಗಳ ವಾದ. ಇದರ ಮುಂದುವರಿದ ಭಾಗವಾಗಿ ಮಾಜಿ ಬಿಜೆಪಿ ಶಾಸಕಿ ಹಾಗೂ ಹಾಲಿ ಪುತ್ತೂರು ವಿಧಾನಸಭಾ ಕ್ಷೇತ್ರದ  ಕಾಂಗ್ರೆಸ್ ಶಾಸಕಿ ಶಕುಂತಲಾ ಶೆಟ್ಟಿಯವರು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ “ಮುಸ್ಲಿಮ್” ಜಿಲ್ಲಾಧಿಕಾರಿಯ  ಹೆಸರನ್ನು  ಆಮಂತ್ರಣ  ಪತ್ರಿಕೆಯಿಂದ ಕೈಬಿಟ್ಟು ಮರುಮುದ್ರಣ ಮಾಡಲು ಸೂಚಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಸಂಘಪರಿವಾರ ದೇವಸ್ಥಾನದ ಮುಂಭಾಗದ ಜಾತ್ರೆ ನಡೆಯುವ ಸ್ಥಳದಲ್ಲಿ ಹಿಂದೂಗಳ ಹೊರತಾಗಿ ಇತರ ಧರ್ಮೀಯರಿಗೆ ಅಂಗಡಿ ತೆರೆಯಲು ಅವಕಾಶ ನೀಡುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಈ ಬೆಳವಣಿಗೆ ನಿಜಕ್ಕೂ ಆತಂಕಕಾರಿ. ಜಿಲ್ಲೆಯ ದಂಡಾಧಿಕಾರಿಯಾಗಿರುವರು ಜಿಲ್ಲಾಧಿಕಾರಿಗಳು. ಅವರು ಅಲಂಕರಿಸಿರೋ ಹುದ್ದೆ  ಧರ್ಮಾತೀತವಾದುದು. ಜಿಲ್ಲಾಧಿಕಾರಿಯನ್ನೇ ಧರ್ಮದ ಆಧಾರದಲ್ಲಿ ಪರಿಗಣಿಸುವುದಾದರೆ ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿತಿ ಎಲ್ಲಿಗೆ ಬಂದು ತಲುಪುತ್ತಿದೆ ಎಂಬುವುದು ಸ್ಪಷ್ಟಗೊಳ್ಳುತ್ತಿದೆ. ಇಂದು  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೆರೆಯುತ್ತಿರುವ ಸಂಘಪರಿವಾರದ ಕೋಮುವಾದ ಹಾಗೂ ಅದಕ್ಕೆ ಪರ್ಯಾಯವಾಗಿ ಬೆಳೆಯುತ್ತಿರೋ ಮುಸ್ಲಿಮ್ ibrahim-iasಕೋಮುವಾದ ಜಿಲ್ಲೆಯ ಜನರನ್ನು ಸಂಪೂರ್ಣವಾಗಿ ಧರ್ಮದ ಆಧಾರದಲ್ಲಿ  ಬೇರ್ಪಡಿಸುವ ಕಾರ್ಯದಲ್ಲಿ ನಿರತವಾಗಿವೆ. ದಕ್ಷಿಣ  ಕನ್ನಡ ಜಿಲ್ಲೆ ಒಂದು  ಕಾಲದಲ್ಲಿ ಧಾರ್ಮಿಕ ಸೌಹಾರ್ದತೆಗೆ  ಹೆಸರಾದ ಜಿಲ್ಲೆಯಾಗಿತ್ತು. ಇಂದು  ಜಾತ್ರೆಯ  ಆಮಂತ್ರಣ ಪತ್ರಿಕೆಯಲ್ಲಿ ಮುಸ್ಲಿಮ್ ಜಿಲ್ಲಾಧಿಕಾರಿಯ ಹೆಸರು ಉಲ್ಲೇಖವಾಗಿರುವುದಕ್ಕೆ ವಿವಾದ ಎಬ್ಬಿಸುವ ಕೋಮುವಾದಿಗಳು, ಜಾತ್ರೆಯಲ್ಲಿ ಮುಸ್ಲಿಮರು ಅಂಗಡಿ  ತೆರೆಯಬಾರದು ಎಂದು ಫರ್ಮಾನು  ಹೊರಡಿಸುವ ಸಂಘಪರಿವಾರಿಗಳು ಜಿಲ್ಲೆಯ  ಸಾಮರಸ್ಯ  ಇತಿಹಾಸದತ್ತ  ಒಮ್ಮೆ ಕಣ್ಣು ಹಾಯಿಸಬೇಕು. ದಕ್ಷಿಣ ಕನ್ನಡ  ಜಿಲ್ಲೆಯ ಮೂಲ  ಪೂಜಾ ಪದ್ಧತಿ ಭೂತಾರಾಧನೆ ಮತ್ತು ನಾಗಾರಾಧನೆ. ಈ ನಾಡಿಗೆ ವೈದಿಕ ಹಿಂದೂ ಧರ್ಮ ಕಾಲಿಟ್ಟ ತರುವಾಯ ಇಸ್ಲಾಮ್  ಧರ್ಮ ಅರಬ್  ವರ್ತಕರ ಮೂಲಕ ಇಲ್ಲಿಗೆ ಕಾಲಿಟ್ಟಿತು. ನಂತರ ಪೋರ್ಚುಗೀಸ್ ಪ್ರವಾಸಿ ವಾಸ್ಕೋಡಗಾಮನ ಆಗಮನದೊಂದಿಗೆ ಕ್ರೈಸ್ತ ಧರ್ಮ ಕೂಡಾ ತುಳುನಾಡನ್ನ ಪ್ರವೇಶಿಸಿತು. ಈ ನಾಡಿನ ಮೂಲಧರ್ಮಕ್ಕೆ  ಭಿನ್ನವಾದ ಎರಡೂ ಮತಗಳನ್ನ ಇಲ್ಲಿಯ ಮೂಲನಿವಾಸಿಗಳು ಸ್ವಾಗತಿಸಿ ಅವರನ್ನು ತಮ್ಮದಾಗಿಸಿಕೊಂಡರು. ಅದೇ  ರೀತಿ ಇಲ್ಲಿ ನೆಲೆವೂರಿದ ಅರಬ್ ಮುಸ್ಲಿಮರೂ, ಪೂರ್ಚ್ ಗೀಸ್ ಕ್ರೈಸ್ತರೂ ತಮ್ಮ ಧರ್ಮ, ಸಂಸ್ಕೃತಿಯನ್ನು ಕಟ್ಟಿ ಬೆಳೆಸುವುದರೊಂದಿಗೆ ಈ  ನಾಡಿನ ಜನ , ಸಂಸ್ಕೃತಿಯೊಂದಿಗೆ  ಬೆರೆತು ತುಳುವರಾದರು ಎಂಬುವುದನ್ನು ಇತಿಹಾಸ ತಿಳಿಸಿಕೊಡುತ್ತದೆ. ತುಳುನಾಡಿದ ಭೂತಕೋಲದ  ಪಾಡ್ದನಗಳಲ್ಲಿ ಮುಸ್ಲಿಮರು ಪ್ರಮುಖಪಾತ್ರಗಳಲ್ಲಿ ಮಿಂಚುತ್ತಾರೆ. ಜುಮಾದಿ ದೈವ ಪಾಡ್ದನ, ಸಿರಿ ಪಾಡ್ದನ ಹಾಗೂ ಅತ್ತಾವರ ದೈವಗಳ ಪಾಡ್ದನಗಳಲ್ಲಿ ಮುಸ್ಲಿಮ್ ಪಾತ್ರದಾರಿಗಳು ಕಂಡುಬರುತ್ತಾರೆ. ಮುಸ್ಲಿಮ್ ಮಂತ್ರವಾದಿ ಅಲಿಭೂತ, ಸಮುದ್ರ ಬೀಭತ್ಸದಿಂದ ರಕ್ಷಣೆ ಕೊಡುತ್ತಿದ್ದ ಬಬ್ಬರ್ಯ ಯಾನೆ ಬಪ್ಪ  ಬ್ಯಾರಿಯನ್ನ ತುಳುವರು  ದೈವೀ  ಪುರುಷರನ್ನಾಗಿ  ಆರಾಧನೆ ಮಾಡುವ ಸಂಸ್ಕೃತಿ  ಈ ತುಳುನಾಡಿದ್ದು.  ಉಡುಪಿ  ಮಠಗಳ ಪರ್ಯಾಯ ಉತ್ಸವಗಳಲ್ಲಿ ಮುಸ್ಲಿಮ್ ಕುಟುಂಬವೊಂದು ರಥ ಅಲಂಕರಿಸುವುದು, ಪ್ರಭಾವಳಿ ರಚಿಸುವುದು, ದುರುಸು ಬಾಣಗಳನ್ನು ಬಿಡುವುದೇ ಮೊದಲಾದ ಶತಮಾನಗಳಿಂದ ನಡೆದುಕೊಂಡ ಬಂದ ಸಂಪ್ರದಾಯಗಳು ಇಲ್ಲಿಯ ಧಾರ್ಮಿಕ ಸಾಮರಸ್ಯಕ್ಕೆ ಉದಾಹರಣೆಗಳಾಗಿವೆ.

ಜಿಲ್ಲೆಯನ್ನು ಕೆಳದಿರಾಜ ವೆಂಕಟಪ್ಪ ನಾಯಕ  ಆಳುತ್ತಿದ್ದಾಗ ಭುವನಗಿರಿ ದುರ್ಗವೆನ್ನುವಲ್ಲಿ ಮುಸ್ಲಿಮರಿಗೆ ಮಸೀದಿ ಕಟ್ಟಿಸಿಕೊಟ್ಟ. ಆತನ ಮೊಮ್ಮಗ  ವೀರಭದ್ರನಾಯಕ  ತಾವರೆಕೆರೆಯ ಮಸೀದಿಗೆ  ಎಡಹಳ್ಳಿ ಗ್ರಾಮವನ್ನು ದತ್ತು ನೀಡಿದನಂತೆ. ಕೆಳದಿರಾಣಿ ಚೆನ್ನಮ್ಮಾಜಿ ದಕ್ಷಿಣ ಕನ್ನಡ  ಜಿಲ್ಲೆಯ ಕಿನ್ನಿಕಂಬಳ ಹಾಗೂ  ಗಂಜಿ ಮಠವೆನ್ನುವಲ್ಲಿ  ಮುಸ್ಲಿಮ್ ಸೂಫಿ ಸಂತರಿಗೆ 101  ಎಕರೆ ಜಮೀನು ದಾನ  ನೀಡಿದ ಉಲ್ಲೇಖಗಳು ಇತಿಹಾಸದ ಪುಟ ತಿರುಗಿಸಿದಾಗ  ತಿಳಿದುಬರುತ್ತದೆ. ದಕ್ಷಿಣ ಕನ್ನಡ  ಜಿಲ್ಲೆ ಮೈಸೂರು ಅರಸರಾದ  ಹೈದರಾಲಿ ಹಾಗೂ ಟಿಪ್ಪು ಸುಲ್ತಾನದ ಆಡಳಿತದಲ್ಲಿದ್ದ  ಸಂದರ್ಭದಲ್ಲಿ ಹಿಂದೂ ಧರ್ಮೀಯರ ಆರಾಧನಾ ಕೇಂದ್ರಗಳಿಗೆ ಭೂಮಿ ಹಾಗೂ ಆರ್ಥಿಕ ಸಹಕಾರವನ್ನು ನೀಡಿರುವ ಅನೇಕ  ಉದಾಹರಣೆಗಳಿವೆ. ಟಿಪ್ಪು ಮಂಗಳೂರಿನ ಶರವು ಮಹಾಗಣಪತಿ ದೇವಸ್ಥಾನಕ್ಕೆ ಮೂಡುಶೆಡ್ಡೆ ಗ್ರಾಮವನ್ನು ದತ್ತುವಾಗಿ ನೀಡಿ, ಅಲ್ಲಿಯ ಪೂಜಾ ವಿಧಿಗಳಿಗೆ ದಿನಕ್ಕೆ ನಾಲ್ಕು ರೂಪಾಯಿಯಂತೆ  ತಸ್ತಿಕ್  ನೀಡಿದ್ದ. ಗುರುಪುರದ ಲಿಂಗಾಯಿತ  ಮಠ , ಮಂಜೇಶ್ವರದ ಮದನಂತೇಶ್ವರ ದೇವಾಲಯ  ಹಾಗೂ ಬಂಟ್ವಾಳ ತಾಲೂಕಿನ ಶಂಬೂರು  ಎಂಬಲ್ಲಿ ಹಿಂದೂ ದೇವಾಲಯಗಳಿಗೆ ಭೂಮಿ ಹಾಗೂ  ಆರ್ಥಿಕ ಸಹಾಯ ನೀಡಿರುವ  ಅನೇಕ ಉಲ್ಲೇಖಗಳು ದಕ್ಷಿಣ ಕನ್ನಡ  ಜಿಲ್ಲಾಡಳಿತ ಪ್ರಕಟಿಸಿದ ಜಿಲ್ಲೆಯ  ಇತಿಹಾಸದ ಕುರಿತಾಗಿ ಬೆಳಕು  ಚೆಲ್ಲುವ  ಪುಸ್ತಕವೊಂದರಲ್ಲಿ ವಹಾಬ್ ದೊಡ್ಡಮನೆ  ಬರೆದಿರುವ  ಲೇಖನದಲ್ಲಿ ಇಂಥಹಾ ಸಾಮರಸ್ಯದ  ಅನೇಕ ಉಲ್ಲೇಖಗಳಿವೆ. ಬಹುಷಃ ಈ ಎಲ್ಲಾ  ವಿಚಾರಗಳು ಧರ್ಮದ  ಹೆಸರಲ್ಲಿ ಮನಸ್ಸನ್ನು  ಒಡೆಯೋ ಕೆಲಸದಲ್ಲಿ   ನಿರತರಾಗಿರುವ ಧರ್ಮರಕ್ಷಕರಿಗೆ  ತಿಳಿದಿರಲಿಕ್ಕಿಲ್ಲ. ಒಂದು ವೇಳೆ  ತಿಳಿದಿದ್ದರೂ ಇಂಥಹಾ  ಸಾಮರಸ್ಯವನ್ನು ಅವರು ಬಯಸೋದಿಲ್ಲ  ಎಂಬುವುದು  ಜಿಲ್ಲೆಯಯಲ್ಲಿ  ಪದೇ  ಪದೇ ನಡೆಯುತ್ತಿರುವ ಘಟನೆಗಳಿಂದ ಸಾಬೀತಾಗುತ್ತಾ   ಬಂದಿರುವ  ಸತ್ಯ.

ಇಂದಿಗೂ  ದಕ್ಷಿಣ  ಕನ್ನಡ  ಜಿಲ್ಲೆಯಲ್ಲಿ ಕೂಡುಬಾಳುವಿಕೆ ಹಾಗೂ  ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾಗಿರುವ ಅನೇಕ ಧಾರ್ಮಿಕ ಕೇಂದ್ರಗಳು  ನಮ್ಮ ಮುಂದಿವೆ. ಮಂಗಳೂರಿನ ಬೈಲು ಪೇಟೆಯೆಂಬಲ್ಲಿ  ಸೂಫಿ  ಸಂತರ ದರ್ಗಾವೊಂದಿದೆ. ಅದರ  ಹೆಸರು ಶೈಖ್ ಸೈಯದ್ ಮೆಹಮೂದ್  ಜಲಾಲುದ್ದೀನ್ ಮತ್ತು ಅಶೈಖ್  ಸೈಯದ್ ಹಯಾತ್ ವಲಿವುಲ್ಲಾಹಿ ದರ್ಗಾ. ಈ  ದರ್ಗಾದಲ್ಲಿರುವ ಸಂತ ಮೂಲತಃ  ಬಾಗ್ದಾದ್ ನಿಂದ ಬಂದು ಇಲ್ಲಿ ನೆಲೆನಿಂತವರು. ಸ್ಥಳೀಯರೊಂದಿಗೆ ಪ್ರೀತಿ ವಿಶ್ವಾಸದಿಂದ ಬೆರೆತು  ಅವರ ಮನಗೆದ್ದರು.20160121_130438 ಈ ಸೂಫಿ ಸಂತ ಕೊನೆಉಸಿರೆಳೆದ ನಂತರ ಬೈಲು ಪೇಟೆಯಲ್ಲೇ ಅವರನ್ನು ಸಮಾಧಿ ಮಾಡಲಾಯಿತು.  ನಂತರ ಗ್ರಾಮಸ್ಥರ ಪಾಲಿಗೆ ಪುಣ್ಯಪುರುಷರ ಈ ಸಮಾಧಿ ಪವಿತ್ರ ಸ್ಥಳವಾಗಿ ಮಾರ್ಪಟ್ಟಿತು. ಇಂದಿಗೂ ಈ ದರ್ಗಾಕ್ಕೆ ಮುಸ್ಲಿಮರಿಗಿಂತ ಅಧಿಕ ಸಂಖ್ಯೆಯಲ್ಲಿ ಹಿಂದೂಗಳೇ ಭೇಟಿನೀಡುತ್ತಾರೆ. ಈ ಗ್ರಾಮ  ಹಿಂದೂ ಕೃಷಿಕರು ತಾವು ಬೆಳೆದ ಮೊದಲ  ಬೆಳೆಯನ್ನು ಸಂತರ ದರ್ಗಾಕ್ಕೆ ತಂದು ಭಕ್ತಿಯಿಂದ ಅರ್ಪಿಸುತ್ತಾರೆ. ದರ್ಗಾದಲ್ಲಿ ಪೂಜೆ ಸಲ್ಲಿಸಿ ನಂತ್ರ  ತಾವು  ಬೆಳೆದ ಬೆಳೆಯನ್ನ ಮಾರಾಟ ಮಾಡುತ್ತಾರೆ. ಇಂದಿಗೂ ಈ ಪದ್ದತಿ ಇಲ್ಲಿ ಚಾಲ್ತಿಯಲ್ಲಿದೆ. ಈ ಗ್ರಾಮದ ಹಿಂದೂಗಳು ಇಲ್ಲಿರುವ ಸೂಫಿ ಸಂತರನ್ನು  “ಶೇಖರ್ ಪಂಡಿತೆರ್” ಎಂದು ಕರೆಯುತ್ತಾರೆ. “ಶೇಖರ್  ಪಂಡಿತೆರ್” ಕುರಿತಾಗಿ ಗ್ರಾಮದ  ಹಿಂದೂಗಳ ಮನಸ್ಸಿನಲ್ಲಿ   ಗೌರವ, ಭಕ್ತಿ.  ಪ್ರತಿ ವಾರ ದರ್ಗಾಕ್ಕೆ ಬೆಲ್ಲ, ಅಕ್ಕಿ ಕೊಡುವ ಪದ್ದತಿಯನ್ನು ಸ್ಥಳೀಯ ಹಿಂದೂಗಳು ಪಾಲಿಸಿಕೊಂಡು ಬರುತ್ತಿದ್ದಾರೆ. ಇನ್ನು  ಮೂರು  ವರ್ಷಕ್ಕೊಮ್ಮೆ ನಡೆಯುವ ಊರೂಸ್ ಸಮಾರಂಭವನ್ನೂ ಇಲ್ಲಿ ಹಿಂದೂ ಮುಸ್ಲಿಮರು ಜೊತೆಗೂಡಿ ಆಚರಿಸುತ್ತಾರೆ.  “ ಮಂಗಳೂರಿನಲ್ಲಿ  ಏನೇ ಗಲಾಟೆ  ಆದ್ರೂ  ನಮಗಿಲ್ಲಿ  ಯಾವ ಭಯವೂ ಇಲ್ಲ . ಈ ದರ್ಗಾದ ಬಳಿ ಇರೋದು ಕೇವಲ ಎರಡು ಮುಸ್ಲಿಮರ ಮನೆ .ಆದ್ರೂ ಸ್ಥಳೀಯ ಬಹುಸಂಖ್ಯಾತ ಹಿಂದೂಗಳಿಂದ ನಮಗ್ಯಾವ  ಭಯವೂ ಇಲ್ಲ. ನಾವೆಲ್ಲರೂ  ಜೊತೆಗಿದ್ದೇವೆ, ಅದಕ್ಕೆ ಶೇಖ್  ಸೈಯದ್ ಮೆಹಮೂದ್ ಜಲಾಲುದ್ದೀನ್ ಸಂತರ ದರ್ಗಾ  ಕಾರಣ” ಎನ್ನುತ್ತಾರೆ ಸ್ಥಳೀಯ ನಿವಾಸಿ  ಅಬ್ದುಲ್ ಖಾದರ್ . ಇಲ್ಲಿಗೆ  ಭೇಟಿ  ನೀಡಿದಾಗ ಗ್ರಾಮಸ್ಥರ ಮೂಲಕ ಮತ್ತೊಂದು  ಸೌಹಾರ್ದದ ಕಥೆ  ಕೇಳಲ್ಪಟ್ಟೆ. ಬೈಲು ಪೇಟೆಯ ಜುಮ್ಮಾ ಮಸೀದಿಯಲ್ಲಿ  ಧರ್ಮ ಗುರುವೊಬ್ಬರಿದ್ದರು. ದಿನಂಪ್ರತಿ ಐದು  ಹೊತ್ತಿನ ಅಜಾನ್ (ನಮಾಜಿಗೆ ಕರೆಯುವ )  ಕರೆಯನ್ನು ಇವರೇ  ನೀಡುತ್ತಿದ್ದರು. ಮಸೀದಿಯ ಅಲ್ಪ ಸನಿಹದಲ್ಲೇ ಜುಮಾದಿ ದೈವದ ಭಂಡಾರದ  ಮನೆಯಿದೆ. ಪ್ರತಿನಿತ್ಯ ಮಸೀದಿಯಯಲ್ಲಿ ಕೊಡುತ್ತಿರುವ  ಆಜಾನ್  ಕರೆ  ಪಕ್ಕದ  ಜುಮಾದಿ ದೈವದ   ಬಂಡಾರದ  ಮನೆಯ ಪೂಜಾರಿಗೂ  ಕೇಳುತಿತ್ತು. ಆದರೆ, ರಂಜಾನ್ ತಿಂಗಳ ಒಂದು ದಿನ ಮಸೀದಿಯ ಧರ್ಮಗುರು ಕೂಗುತ್ತಿದ್ದ ಆಜಾನ್ ಕರೆ ಎಂದಿನಂತಿರಲಿಲ್ಲ. ಅವರ ಧ್ವನಿ ತುಂಬಾನೇ ಕ್ಷೀಣವಾಗಿತ್ತು. ಇದರಿಂದ  ವಿಚಲಿತರಾದ ಜುಮಾದಿ ದೈವದ ಭಂಡಾರ ಮನೆಯ ಪುಜಾರಿ ಮಸೀದಿಗೆ ಹೋಗಿ ಧರ್ಮಗುರುವನ್ನು ವಿಚಾರಿಸಿದಾಗ, ಧರ್ಮಗುರು ರಂಜಾನ್ ಉಪವಾಸದಲ್ಲಿದ್ದು  ವೃತ ತೊರೆಯಲು ಅವರ ಬಳಿ  ಆಹಾರವಿಲ್ಲ ಎಂಬ ಸಂಗತಿ ತಿಳಿದುಬರುತ್ತದೆ. ಕೂಡಲೇ ಭಂಡಾರದ ಮನೆಗೆ ಬಂದ ಪೂಜಾರಿ ಜುಮಾದಿ ದೈವದ ಚಿನ್ನದ ನಾಲಗೆಯನ್ನು ಕೊಯ್ದು ಧರ್ಮಗುರುವಿಗೆ ನೀಡಿ ಅದನ್ನು ಸ್ಥಳೀಯ ದೋಂದಜ ಗುತ್ತಿನ ಮನೆಗೆ ಮಾರಿ ಉಪವಾಸ ತೊರೆಯಲು ಬೇಕಾದ ಆಹಾರ ಪದಾರ್ಥಗಳನ್ನು ತಂದುಕೊಳ್ಳುವಂತೆ ಸೂಚಿಸಿದರು. ನಂತರ ಊರ ಜನರಿಗೆ ಜುಮಾದಿ ದೈವದ ಚಿನ್ನದ  ನಾಲಗೆ ಕಾಣೆಯಾಗಿರುವ  ಸುದ್ದಿ ತಿಳಿಯಿತು.ಈ ಕುರಿತಾಗಿ ಭಂಡಾರದ ಮನೆಯ ಪೂಜಾರಿಯ  ಬಳಿ ಗ್ರಾಮಸ್ಥರು ವಿಚಾರಿಸಿದಾಗಲೂ ಪೂಜಾರಿಗೆ ಏನೂ  ತಿಳಿದಿರಲಿಲ್ಲ. ಕೆಲ ಹೊತ್ತಿನಲ್ಲೇ ಜುಮಾದಿ ದೈವ ಪೂಜಾರಿಗೆ ದರ್ಶನದಲ್ಲಿ  ಬಂದು ತಾನೇ ಮಸೀದಿಯ ಧರ್ಮಗುರುಗಳಿಗೆ ಚಿನ್ನದ ನಾಲಗೆಯನ್ನ  ನೀಡಿದ್ದೇನೆಂದು ತಿಳಿಸಿತು. ಅಂದು ಧರ್ಮಗುರುಗಳಿಗೆ ಚಿನ್ನದ ನಾಲಗೆಯನ್ನು ಕೊಯ್ದು ಕೊಟ್ಟಿದ್ದು ಪೂಜಾರಿಯಲ್ಲ  ಬದಲಾಗಿ ಪುಜಾರಿಯ ರೂಪವನ್ನು ತಾಳಿದ ಜುಮಾದಿ ದೈವ ಎಂಬುವುದು  ಇಲ್ಲಿನ ಎರಡೂ  ಸಮುದಾಯದ  ಗ್ರಾಮಸ್ಥರ ನಂಬಿಕೆ. ಇಂಥಹಾ ಹತ್ತಾರು ಧರ್ಮಮೀರಿದ ಮನುಷ್ಯ ಪ್ರೀತಿಯ ಕಥೆಗಳು ಇಲ್ಲಿ ಸಾಮಾನ್ಯ.

ಧಾರ್ಮಿಕ ಕೂಡುಬಾಳುವಿಕೆಗೆ ಸಾಕ್ಷಿಯಾಗಿರುವ ಮತ್ತೊಂದು ಕ್ಷೇತ್ರ ದಕ್ಷಿಣ  ಕನ್ನಡ ಜಿಲ್ಲೆಯ ಪಕ್ಕದ ಜಿಲ್ಲೆ ಕಾಸರಗೋಡಿನ ಉದ್ಯಾವರ ಅಸಯ್ಯದ್  ಶಹೀದ್  ದರ್ಗಾ ಹಾಗೂ ಮಾಡಾ ಅರಸು  ದೈವಗಳ ದೈವಸ್ಥಾನ. ಇತ್ತೀಚೆಗೆ ಅತ್ಯಂತ ಕೋಮುಸೂಕ್ಷ್ಮ ಪ್ರದೇಶವಾಗಿ  ಮಾರ್ಪಡುತ್ತಿರುವ ಈ ಗ್ರಾಮದಲ್ಲಿ ಹಿಂದೂ-ಮುಸ್ಲಿಮ್ ಭಾಂಧವ್ಯವನ್ನು  ಕಟ್ಟಿಬೆಳೆಸಿದ  ಕ್ಷೇತ್ರವಿದು. ಇಲ್ಲೊಂದು ಅಪರೂಪದ ಹಾಗೂ ವಿಶಿಷ್ಟ ಸಂಪ್ರದಾಯವಿದೆ. ವರ್ಷಂಪ್ರತಿ ಎಪ್ರಿಲ್ ತಿಂಗಳಲ್ಲಿ ಬಿಸು ಹಬ್ಬದ ಬಳಿಕ ಅಂದರೆ, ಎಪ್ರಿಲ್ 14 ಕ್ಕೆ ಮಾಡ ಅರಸು ದೈವಗಳ ಜಾತ್ರಾಮಹೋತ್ಸವ ನಡೆಯುತ್ತದೆ. ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಮರು ಅಂಗಡಿ ಅಥವಾ ಸಂತೆ ಇಡಬಾರದು ಎಂದು ಸಂಘಪರಿವಾರಿಗಳು ಫರ್ಮಾನು ಹೊರಡಿಸಿದ್ದಾರೋ ಅದಕ್ಕೆ ವಿರುದ್ಧ ಎಂಬುವಂತೆ  ಮಾಡಾ ಅರಸು ದೈವಗಳ  ಜಾತ್ರೆ ಆರಂಭಕ್ಕೂ ಮುನ್ನ  ಗ್ರಾಮದ  ಮುಸ್ಲಿಮರು ಅರಸು ದೈವಗಳ  ದೈವಸ್ಥಾನದ  ಆವರಣಕ್ಕೆ ಬಂದು ಸಂತೆ ಇಡುವ ಪದ್ದತಿ ಇಂದಿಗೂ ಇದೆ. ಊರ ಮುಸ್ಲಿಮ್  ಕುಟುಂಬ ವೀಳ್ಯದೆಳೆ ತೆಂಗಿನಕಾಯಿ  ಜೊತೆಗೆ ಬಂದು ಅರಸು ದೈವಗಳ  ಆರ್ಶೀರ್ವಾದ ಪಡೆದುಕೊಂಡು ಮೊದಲು ದೈವಸ್ಥಾನದ ಆವರಣದಲ್ಲಿ ಸಂತೆ  ನಡೆಸುತ್ತಾರೆ. ನಂತರ ಇತರರಿಗೂ ಸಂತೆ ನಡೆಸಲು  ಅವಕಾಶ ನೀಡಲಾಗುತ್ತದೆ.

ನಂತರ  ಗ್ರಾಮದ  ಮುಸ್ಲಿಮರನ್ನು ಅರಸು ದೈವಗಳ  ಜಾತ್ರೆಗೆ  ಆಹ್ವಾನಿಸಲು ದೈವಸ್ಥಾನದ  ಪ್ರಮುಖರು ಉದ್ಯಾವರ ಮಸೀದಿಗೆ ತೆರಳುತ್ತಾರೆ. ದರ್ಗಾದ ಮುಂದೆ  ಮಸೀದಿಯ ಜಮಾತ್ ಮುಖಂಡರಿಗೆ  ಜಾತ್ರೆಗೆ  ಆಹ್ವಾನ  ನೀಡುತ್ತಾರೆ. ಈ ಸಂಪ್ರದಾಯ ಹುಟ್ಟಲು ಒಂದು ಕಾರಣವಿದೆ. ಶತಮಾನಗಳ  ಹಿಂದೆ  ಈ ಗ್ರಾಮಕ್ಕೆ  ಬಂದ ಅರಸು ಸಹೋದರರಿಗೆ  ಉದ್ಯಾವರ ದರ್ಗಾದ  ಪುಣ್ಯ ಪುರುಷ  ಇದೇ  ಊರಲ್ಲಿ ನೆಲೆನಿಲ್ಲುವಂತೆ ವಿನಂತಿ ಮಾಡ್ತಾರೆ. ಅದರಂತೆ ಅರಸು  ಸಹೋದರರು ಈ ಗ್ರಾಮದಲ್ಲಿ ನೆಲೆನಿಲ್ತಾರೆ. ಗ್ರಾಮದ ಮುಸ್ಲಿಮ್ ಪುಣ್ಯ ಪುರುಷ  ಹಾಗೂ  ಅರಸು  ಸಹೋದರರ  ನಡುವೆ ಉತ್ತಮ ಭಾಂದವ್ಯವಿತ್ತು. ಈ ಪ್ರಕಾರ ಮುಸ್ಲಿಮ್ ಸಂತ  ಹಾಗೂ  ಅರಸು ಸಹೋದರರ ನಡುವೆ ಒಂದು ಒಪ್ಪಂದವಾಗುತ್ತದೆ. ಈ  ಪ್ರಕಾರ ಪ್ರತಿ ವರ್ಷ ನಡೆಯೋ ಉತ್ಸವಕ್ಕೆ  ಗ್ರಾಮದ ಮುಸ್ಲಿಮರು ಆಹ್ವಾನದ ಮೇರೆಗೆ ಬಂದು ಪಾಲ್ಗೊಳ್ಳಬೇಕು ಹಾಗೂ  ಊರೂಸ್ ಕಾರ್ಯಕ್ರಮಕ್ಕೆ ನಾಡಿನ ಹಿಂದೂಗಳು  ಭಾಗವಹಿಸಬೇಕೆಂದು. ಇದರಂತೆ  ಈ  ಸಂಪ್ರದಾಯ ಇಂದಿಗೂ ಆಚರಿಸಲ್ಪಡುತ್ತಾ  ಬಂದಿದೆ ಎನ್ನುತ್ತಾರೆ ಗ್ರಾಮದ ಹಿರಿಯರು.

ವರ್ಷಂಪ್ರತಿ ಮಾಡ ಅರಸು ದೈವಗಳ 5 ದಿನಗಳ  ಜಾತ್ರೆ ಹಾಗೂ  ಎರಡು  ದಿನಗಳ  ಬಂಡಿ ಉತ್ಸವ ಕಾರ್ಯಕ್ರಮ ನಡೆಯುತ್ತದೆ. ಜಾತ್ರೆಗೆ  ಗ್ರಾಮದ 20160211_165540 ಮುಸ್ಲಿಮರು ಬರುತ್ತಾರೆ. ದೈವಸ್ಥಾನದ  ಅಂಗಳದಲ್ಲಿರೋ ಸಿಂಹಾಸನ  ಕಟ್ಟೆಯಲ್ಲಿ  ಬ್ರಾಹ್ಮಣರಿಗೆ ಹಾಗೂ ಮುಸ್ಲಿಮರಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶವಿದೆ. ಜಾತ್ರೆಯಲ್ಲಿ ಪಾಲ್ಗೊಳ್ಳುವ  ಮುಸ್ಲಿಮರನ್ನು ಬಹಳ ಗೌರವದಿಂದ ನೋಡಿಕೊಳ್ಳಲಾಗುತ್ತಿದೆ. ಇನ್ನು 5 ವರ್ಷಕ್ಕೊಮ್ಮೆ ನಡೆಯೋ ದರ್ಗಾದ ಉರೂಸ್ ಗೂ ಇಲ್ಲಿಯ  ಗ್ರಾಮದ ಹಿಂದೂಗಳು ಹೊರೆಕಾಣಿಕೆಯನ್ನ ನೀಡ್ತಾರೆ. ಉರೂಸ್ ಗೆ  ಆಗಮಿಸಿದ ಎಲ್ಲಾ ಹಿಂದೂಗಳಿಗೆ ಊಟೋಪಚಾರ ಗೌರವಗಳನ್ನ ನೀಡಲಾಗುತ್ತೆ. ಮಾಡಾ ಅರಸು ದೈವಗಳ ದೈವಸ್ಥಾನ ನಿರ್ಮಾಣಕ್ಕೆ ಇಲ್ಲಿಯ ಮುಸ್ಲಿಮ್ ಜಮಾತ್ ವತಿಯಿಂದ 15,000  ಧನ ಸಹಾಯ  ನೀಡಲಾಗಿದೆ. ಈ ರೀತಿಯ ಧಾರ್ಮಿಕ ಸೌಹಾರ್ದತೆಯ ಕುರಿತಾಗಿ ಗ್ರಾಮದ ಎರಡೂ ಸಮುದಾಯಗಳ ಹಿರಿಯರಿಗೆ ಉತ್ತಮ ಅಭಿಪ್ರಾಯವಿದೆ. “ಈ ಗ್ರಾಮದಲ್ಲಿರೋ ಅರಸು ದೈವ ಹಾಗೂ ದರ್ಗಾದ ಶೇಖರು ಊರಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದಾರೆ. ಇಂಥಹಾ ಸೌಹಾರ್ದತೆ ಉಳಿಯಬೇಕು ಬೆಳಿಯಬೇಕು. ಇದುವರೆಗೂ ನಾವೆಲ್ಲಾ ಈ ಸೌಹಾರ್ದ ಪರಂಪರೆಯನ್ನು ಉಳಿಸಿಕೊಂಡು  ಬಂದಿದ್ದೇವೆ, ಇದನ್ನು ಮುಂದುವರಿಸುವ  ಜಾವಾಬ್ದಾರಿ ಇಂದಿನ ಯುವ ಸಮೂಹದ್ದು”  ಎನ್ನುತ್ತಾರೆ ಅರಸು ದೈವದ ಮುಂಡತ್ತಾಯ  ದೇವರ  ಪಾತ್ರದಾರಿ ಮಂಜು ಬೆಲ್ಚಡ. “ನಾವು ಈ ರೀತಿಯ ಮತ ಸೌಹಾರ್ದತೆಯನ್ನು ಬಯಸ್ತೇವೆ. ಇದು ಹೀಗೆ ಮುಂದುವರಿಯಲಿ ಎಂದು ದೇವರಲ್ಲಿ  ಪ್ರಾರ್ಥನೆ ಮಾಡ್ತೇನೆ. ನಮ್ಮ ಮಕ್ಕಳನ್ನು ಅರಸು ದೈವಗಳ ಜಾತ್ರಾಮಹೋತ್ಸವಕ್ಕೆ ಕಲಿಸಿಕೊಡುತ್ತೇನೆ” ಎನ್ನುತ್ತಾರೆ ಗ್ರಾಮಸ್ಥ ಯು.ಕೆ ಮುಹಮ್ಮದ್.  ಉದ್ಯಾವರ-ಮಾಡ ಅರಸು ದೈವಗಳ ಸ್ಥಾನ ಹಾಗೂ ಅಸೈಯದ್ ಶೇಖ್ ದರ್ಗಾಗಳು ಈ ಗ್ರಾಮದಲ್ಲಿ ಮತಸೌಹಾರ್ದತೆ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿವೆ.

ದಕ್ಷಿಣ ಕನ್ನಡ  ಜಿಲ್ಲೆಯ ಅಜಿಲಮೊಗೆರು  ಗ್ರಾಮದಲ್ಲಿರು  ಮುಸ್ಲಿಮ್ ಸಂತನ ಉರೂಸ್ ಕಾರ್ಯಕ್ರಮಕ್ಕೆ ಸ್ಥಳೀಯ  ಹಿಂದೂಗಳು ತುಪ್ಪ ಕೊಡುವುದು  ಹಾಗೂ ಆ ಗ್ರಾಮದ ದೇವಸ್ಥಾನದ  ಜಾತ್ರಾಮಹೋತ್ಸವಕ್ಕೆ ಮುಸ್ಲಿಮರು ಎಣ್ಣೆ ಕೊಡುವ  ಸಂಪ್ರದಾಯ ಆಚರಣೆಯಲ್ಲಿತ್ತು. ಉರೂಸ್ ಕಾರ್ಯಕ್ರಮಕ್ಕೆ ಊರ  ಹಿಂದೂಗಳೂ ಜಾತ್ರಾ ಮಹೋತ್ಸವಕ್ಕೆ ಗ್ರಾಮದ ಮುಸ್ಲಿಮರೂ ಹೋಗಿಬರುತ್ತಾ ಪರಸ್ಪರ ಸಹಕಾರ ನೀಡುತ್ತಾ ಸಾರಮಸ್ಯ ಸಾರುವ ಪದ್ದತಿ  ಇಂದಿಗೂ ಗ್ರಾಮದಲ್ಲಿ  ಕಾಣಸಿಗುತ್ತದೆ. ಇವತ್ತು ಮುಸ್ಲಿಮ್ ಜಿಲ್ಲಾಧಿಕಾರಿಯ  ಹೆಸರಿನಲ್ಲಿ ವಿವಾದಕ್ಕೆ ಕಾರಣವಾಗಿರುವ ಪುತ್ತೂರು ಮಹಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಅಧಿಕ  ಸಂಖ್ಯೆಯ  ಮುಸ್ಲಿಮರು ಭಾಗವಹಿಸುತ್ತಿದ್ದರು. ಜಾತ್ರೆಗದ್ದೆಯಲ್ಲಿ ವ್ಯಾಪಾರ ಮಾಡುವವರೂ ಬಹುತೇಕ  ಮುಸ್ಲಿಮರೇ ಆಗಿದ್ದರು. ಜಾತ್ರೆಗೆ ಅಗತ್ಯವಿರುವ ಬಾಳೆಕಾಯಿ, ತೆಂಗಿನಕಾಯಿಯನ್ನು ಮುಸ್ಲಿಮ್ ವರ್ತಕರು ನೀಡುತ್ತಿದ್ದರು. ಇನ್ನು ಜಾತ್ರಾಮಹೋತ್ಸವದಲ್ಲಿ ಸುಡು ಮದ್ದು ಪ್ರದರ್ಶನ ಮಾಡುತ್ತಿದ್ದವನು ಬದಿಯಡ್ಕ ಮೂಲದ ಮುಸ್ಲಿಮ್ ಸುಡುಮದ್ದು  ವ್ಯಾಪಾರಿ. ಆದರೆ ಬಾಬರೀ  ಮಸೀದಿ  ಧ್ವಂಸ ಘಟನೆಯ ನಂತರ ಜಾತ್ರೆಗೆ ಬರುವ ಮುಸ್ಲಿಮರ ಸಂಖ್ಯೆ ಕಡಿಮೆಯಾಯಿತು. ಕೋಮುವಾದಿ  ಸಂಘಟನೆಗಳು ಅನ್ಯಧರ್ಮಿಯರು ಜಾತ್ರೆಗೆ ಬರದಂತೆ ಹಾಗೂ  ಜಾತ್ರೆಯಲ್ಲಿ ಮುಸ್ಲಿಮರು  ವ್ಯಾಪಾರ ನಡೆಸದಂತೆ ಫರ್ಮಾನು ಹೊರಡಿಸಿದರು. ಇವೆಲ್ಲದರ ನಡುವೆಯೂ ಇಂದಿಗೂ ದಕ್ಷಿಣ ಕನ್ನಡ ಹಾಗೂ ಕರಾವಳಿ ಜಿಲ್ಲೆಗಳ ದೇವಸ್ಥಾನಗಳ ವಾರ್ಷಿಕ ಮೇಳಗಳಲ್ಲಿ, ಭೂತಕೋಲ ಆಚರಣೆಗಳಲ್ಲಿ, ಕಾರ್ಕಳದ ಆತ್ತೂರ್ ಚರ್ಚ್ ಉತ್ಸವಗಳಲ್ಲಿ, ಸೈದಾನ್ ಬೀಬಿ ದರ್ಗಾ, ಉಳ್ಳಾಲ ಸೈಯದ್ ಮದನಿ ದರ್ಗಾಗಳ ಉರೂಸ್ ಗಳಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತರು ಕೂಡಿ ಆಚರಣೆ ಮಾಡೋ ಇಂಥಹಾ ಸಾಕಷ್ಟು ಉದಾಹರಣೆಗಳು  ಜಿಲ್ಲೆಯಲ್ಲಿ ಕಾಣಸಿಗುತ್ತದೆ. ಆದ್ರೆ  ಇಂದು ಎರಡೂ ಧರ್ಮಗಳ ಕೋಮುವಾದಿಗಳು ಮೂಲಭೂತವಾದಿಗಳು ಇಂಥಹಾ ಕೂಡುಬಾಳುವಿಕೆಯ ಸಂಸ್ಕೃತಿಗೆ ಕೊಳ್ಳಿ ಇಡುತ್ತಿದ್ದಾರೆ. ಈ ಮೂಲಕ  ಕರಾವಳಿಯಲ್ಲಿ  ಹಿಂದೂ ಮುಸ್ಲಿಮ್  ಸಮುದಾಯಗಳ ನಡುವೆ ಸೃಷ್ಟಿಯಾಗಿರುವ ಕಂದಕವನ್ನು ಇನ್ನಷ್ಟು ವಿಸ್ತರಿಸೋ  ದುರುದ್ದೇಶ ಇವರದ್ದು. ಜಿಲ್ಲೆಯ  ಜಿಲ್ಲಾಧಿಕಾರಿ ಮುಸ್ಲಿಮ್ ಸಮುದಾಯದವರೆಂಬ ಕಾರಣಕ್ಕಾಗಿ  ಜಾತ್ರೆಯ  ಆಮಂತ್ರಣ  ಪತ್ರದಿಂದ ಹೆಸರು ಕಿತ್ತುಹಾಕುವಂತೆ ಒತ್ತಾಯಿಸುವುದು, ಜಾತ್ರೆಗದ್ದೆಯಲ್ಲಿ ಮುಸ್ಲಿಮರು ಅಂಗಡಿ  ತೆರೆಯದಂತೆ ಫರ್ಮಾನು ಹೊರಡಿಸುತ್ತಿರುವುದು ಇದರ ಮುಂದುವರಿದ ಭಾಗವಷ್ಟೇ. ಕರಾವಳಿಯ ಸಾರಮಸ್ಯ ಬಯಸೋ ಜನಸಮುದಾಯ ಎಚ್ಚೆತ್ತುಕೊಂಡು ಮನಸ್ಸುಗಳನ್ನು ವಿಭಜಿಸೋ  ಸನಾತನವಾದಿಗಳ ಇಂಥಹಾ ಪ್ರಯತ್ನಗಳನ್ನು ಸೋಲಿಸಬೇಕಿದೆ.

ಮುಸ್ಲಿಮ್ ಸಮುದಾಯ ಹಾಗೂ ಉಮ್ಮರ್ ಖಾಲಿದ್ ಮತ್ತು ಶೆಹ್ಲಾ ರಶೀದ್ ರಂಥ ಪ್ರಗತಿಪರ ನಾಯಕತ್ವ


-ಇರ್ಷಾದ್ ಉಪ್ಪಿನಂಗಡಿ


“ನನ್ನ ಹೆಸರು ಉಮ್ಮರ್ ಖಾಲಿದ್. ಆದರೆ ನಾನು ಭಯೋತ್ಪಾದಕನಲ್ಲ. ಒಂದು ವಿಷಯವನ್ನು ನಾನಿಲ್ಲಿ ಹೇಳಲೇ ಬೇಕು. ನಾನು ಕಳೆದ ಆರು ವರ್ಷಗಳಿಂದ ಈ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿ ರಾಜಕಾರಣವನ್ನು ಮಾಡುತ್ತಾ ಬಂದಿದ್ದೇನೆ. ನಾನು ಇಲ್ಲಿಯವರೆಗೂ ನನ್ನನ್ನು ನಾನು ಮುಸ್ಲಿಮನೆಂದು ಅಂದುಕೊಂಡಿಲ್ಲ. ಈ ಸಮಾಜದಲ್ಲಿ ಮುಸ್ಲಿಮರು ಮಾತ್ರ ದಮನಕ್ಕೊಳಗಾಗಿಲ್ಲ. ದಲಿತರು, ಆದಿವಾಸಿಗಳು ಈ ಸಮಾಜದ ಶೋಷಿತರಾಗಿದ್ದಾರೆ. ಇವರೆಲ್ಲರ ಪರವಾಗಿ ಹೋರಾಟ ಮಾಡಿದ್ದೇನೆ. ಆದಿವಾಸಿಗಳು, ಶೋಷಿತರ ಪರವಾಗಿ ಮಾತನಾಡಿದಷ್ಟೇ ಶೋಷಿತ ಮುಸ್ಲಿಮರ ಪರವಾಗಿ ಮಾತನಾಡಿದ್ದೇನೆ ”. ಸದ್ಯ ದೇಶದ್ರೋಹದ ಆರೋಪ ಹೊತ್ತು ಜೈಲು ಸೇರಿರುವ ಜೆ.ಎನ್.ಯು ವಿದ್ಯಾರ್ಥಿ ಮುಖಂಡ ಉಮ್ಮರ್ ಖಾಲಿದ್ ತನ್ನ ಶರಣಾಗತಿಗಿಂತ ಮೊದಲು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆಡಿದ ಮಾತುಗಳಿವು. ಸಂಘಪರಿವಾರದ ಕೋಮುವಾದ ಹಾಗೂ ಅದಕ್ಕೆ ಪ್ರತಿಯಾಗಿ ಮುಸ್ಲಿಮ್ ಸಮಾಜದಲ್ಲಿ ಧಾರ್ಮಿಕ ಮೂಲಭೂತವಾದ ಆಳವಾಗಿ ಇಂದು ಬೇರೂರುತ್ತಿವೆ. ಒಂದು ಕಡೆಯಲ್ಲಿ ಬಹುಸಂಖ್ಯಾತ ಕೋಮುವಾದ ಮುಸ್ಲಿಮರಲ್ಲಿ ಅಭದ್ರತೆಯ ಭಾವವನ್ನು ಉಂಟುಮಾಡುತ್ತಿದ್ದರೆ ಇನ್ನೊಂದೆಡೆ ಇದಕ್ಕೆ ಪರ್ಯಾಯವಾಗಿ ಬೆಳೆಯುತ್ತಿರುವ ಮುಸ್ಲಿಮ್ ಕೋಮುವಾದ ಸಮುದಾಯವನ್ನು ಮತ್ತಷ್ಟು ಅಭದ್ರತೆಗೆ ತಳ್ಳುತ್ತಿದೆ. ಪ್ರಸಕ್ತ ಈ ಸನ್ನಿವೇಶದಲ್ಲಿ ಮುಸ್ಲಿಮ್ ಸಮಾಜವನ್ನು ಪ್ರತಿನಿಧಿಸುವ ಉದಾರವಾದಿ ಮುಸ್ಲಿಮ್ ನಾಯಕರ ಅಗತ್ಯತೆಯ ಚರ್ಚೆಯನ್ನ ಹುಟ್ಟುಹಾಕಿದೆ. ಬಹುಷಃ ಜೆ.ಎನ್.ಯು ಕ್ರಾಂತಿ ಕನ್ನಯ್ಯನಂತಹಾ ದಮನಿತ ಸಮುದಾಯಗಳ ಪರ ಧ್ವನಿ ಎತ್ತುವ ಮನೋಭಾವದ ಯುವನಾಯಕನನ್ನು ದೇಶಕ್ಕೆ ಪರಿಚಯಿಸುವುದರ ಜೊತೆಗೆ ಉಮ್ಮರ್ ಖಾಲಿದ್ ಹಾಗೂ ಶೆಹ್ಲಾ ರಶೀದ್ ನಂತಹಾ ಪ್ರಗತಿಪರ ಯುವ ಮುಸ್ಲಿಮ್ ವಿದ್ಯಾರ್ಥಿ ನಾಯಕತ್ವವನ್ನೂ ಪರಿಚಯಿಸಿದೆ.

ಉಮ್ಮರ್ ಖಾಲಿದ್ ಜೆ.ಎನ್.ಯು ಡೆಮೋಕ್ರಟಿಕ್ ಸ್ಟುಡೆಂಟ್ ಯೂನಿಯನ್ (DSU) ಎಂಬ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ಮುಖಂಡ.Ummar_Khalid ಉಮ್ಮರ್ ಖಾಲಿದ್ ಕಳೆದ 6 ವರ್ಷಗಳಿಂದ ಜೆ.ಎನ್.ಯು ಕ್ಯಾಂಪಸ್ ನಲ್ಲಿ ಎಡ ಪ್ರಗತಿಪರ ಚಳುವಳಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡವರು. ಸಂಪ್ರದಾಯ ಕುಟುಂಬದಲ್ಲಿ ಹುಟ್ಟಿ ಬೆಳೆದ ಉಮ್ಮರ್ ಖಾಲಿದ್ ತಂದೆ ಜಮಾತೇ- ಇಸ್ಲಾಮೀ-ಹಿಂದ್ ಮುಸ್ಲಿಮ್ ಮೂಲಭೂತವಾದಿ ಸಂಘಟನೆಯ ಶೂರಾ ಕಮಿಟಿ ಸದಸ್ಯ. ಆದರೆ ತಂದೆಯ ಇಸ್ಲಾಮಿ ಮೂಲಭೂತವಾದಿ ಚಿಂತನೆಗೆ ವಿರುದ್ಧವಾಗಿ ಉದಾರವಾದಿ ಹಾಗೂ ಪ್ರಗತಿಪರ ಚಿಂತನೆಯನ್ನು ಮೈಗೂಡಿಸಿಕೊಂಡು ಬೆಳೆದವರು ಉಮ್ಮರ್ ಖಾಲಿದ್. “ಉಮ್ಮರ್ ಎಡಪಂಥೀಯ ಹಾಗೂ ಪ್ರಗತಿಪರ ವಿಚಾರಧಾರೆಗಳಿಂದ ಪ್ರಭಾವಿತವಾಗಿದ್ದ. ಮುಸ್ಲಿಮ್ ಸಮಾಜದಲ್ಲಿ ಬೇರೂರಿರುವ ಮೂಲಭೂತವಾದ, ಧಾರ್ಮಿಕ ಕಟ್ಟರ್ ವಾದ ಹಾಗೂ ಮಹಿಳಾ ಶೋಷಣೆಯನ್ನು ಖಂಡಿಸುತ್ತಿದ್ದ. ಇವುಗಳನ್ನೆಲ್ಲಾ ಪ್ರಶ್ನಿಸುವ ಮನೋಭಾವ ಆತನದ್ದಾಗಿತ್ತು. ಈ ಕಾರಣಕ್ಕಾಗಿ ನಮ್ಮ ನಡುವೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು” ಎನ್ನುತ್ತಾರೆ ಉಮ್ಮರ್ ಖಾಲಿದ್ ತಂದೆ ಸೈಯದ್ ಖಾಲಿದ್ ರಸೂಲ್ ಇಲ್ಯಾಸ್. ಇಲ್ಲಿ ನಾವು ಗಮನಿಸಬೇಕಾದ ಅಂಶವೇನೆಂದರೆ, ಉಮ್ಮರ್ ಖಾಲಿದ್ ಇಸ್ಲಾಮ್ ಧಾರ್ಮಿಕ ಕಟ್ಟರ್ ವಾದದ ವಿರೋಧಿಸುತ್ತಾ ಶೋಷಿತ ಮುಸ್ಲಿಮರ ಪರವಾಗಿ ಧ್ವನಿ ಎತ್ತುತ್ತಿದ್ದರು. ಜೊತೆಗೆ ಜಾತಿವಾದ, ಮಹಿಳಾ ಶೋಷಣೆ, ಆದಿವಾಸಿ ಹಾಗೂ ದಲಿತರ ಮೇಲಾಗುತ್ತಿರುವ ದಬ್ಬಾಳಿಕೆ ದೌರ್ಜನ್ಯದ ವಿರುದ್ದದ ಹೋರಾಟದಲ್ಲೂ ಉಮ್ಮರ್ ಮುಂಚೂಣಿಯಲ್ಲಿದ್ದರು.

ಇತ್ತೀಚೆಗೆ ಪ್ರಭಾವಿ ಮುಸ್ಲಿಮ್ ಧಾರ್ಮಿಕ ಮುಖಂಡರೊಬ್ಬರು ತಮ್ಮ ಭಾಷಣದಲ್ಲಿ ಮಹಿಳೆಯರ ಶಕ್ತಿ ಸಾಮರ್ಥ್ಯದ ಕುರಿತಾಗಿ ಕೇವಲವಾಗಿ ಮಾತನಾಡಿದ್ದರು. ಮಹಿಳೆ ಸ್ವತಂತ್ರವಾಗಿ ಹೋರಾಡಲು ಅಶಕ್ತಳು ಎಂದಿದ್ದರು. ಮುಸ್ಲಿಮ್ ಸಮಾಜದಲ್ಲಿ ಇಂದಿಗೂ ಮಹಿಳೆಯರನ್ನು ಈ ದೃಷ್ಟಿಕೋನದಲ್ಲಿ ನೋಡುವ ಧಾರ್ಮಿಕ ಪಂಡಿತರೇ ಅಧಿಕ. ಪರಿಣಾಮ ಸಮಾಜದ ಮುಖ್ಯವಾಹಿನಿಯಲ್ಲಿ ಮುಸ್ಲಿಮ್ ಮಹಿಳೆಯರ ಪಾಲ್ಗೊಳ್ಳುವಿಕೆ ತೀರಾ ನಗಣ್ಯ. ಈ ಸಂಧರ್ಭದಲ್ಲಿ ನಮ್ಮ ಕಣ್ಣ ಮುಂದೆ ಬರುವ ದಿಟ್ಟ ಯುವ ನಾಯಕಿ ಶ್ರೀನಗರ ಮೂಲದ ಶೆಹ್ಲಾ ರಶೀದ್. ಜೆ.ಎನ್.ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ನಯ್ಯ ದೇಶದ್ರೋಹದ ಆರೋಪದಲ್ಲಿ ಜೈಲು ಸೇರಿದಾಗ ಅದನ್ನು ವಿರೋಧಿಸಿ ನಡೆದ ಬೃಹತ್ ಹೋರಾಟಕ್ಕೆ ನಾಯಕತ್ವವನ್ನು ನೀಡಿದವರು ಶೆಹ್ಲಾ ರಶೀದ್. ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷೆಯಾಗಿರುವ ಶೆಹ್ಲಾ ರಶೀದ್ ಎಡ-ಪ್ರಗತಿಪರ ಚಳುವಳಿಯಲ್ಲಿ ಮುಂಚೂಣಿಯಲ್ಲಿರುವ ವಿದ್ಯಾರ್ಥಿ ಮುಂದಾಳು. ಮಧ್ಯಮ ವರ್ಗದ ಕಾಶ್ಮೀರಿ ಕುಟುಂಬದಲ್ಲಿ ಹುಟ್ಟಿ ಬೆಳೆದು ಜೆ.ಎನ್.ಯುನ AISA ಎಡ ವಿದ್ಯಾರ್ಥಿ ಚಳುವಳಿಯಲ್ಲಿ ತನ್ನನ್ನು ಗುರುತಿಸಿಕೊಂಡು ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿ ನಾಯಕಿ. ಜೆ.ಎನ್.ಯು ಹೋರಾಟದ ಸಂದರ್ಭದಲ್ಲಿ ಕ್ಯಾಂಪಸ್ ನ ಮೂರು ಸಾವಿರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಈಕೆ ಮಾಡಿದ ಭಾಷಣ ಹಾಗೂ ಆ ಹೋರಾಟಕ್ಕೆ ನೀಡಿದ ನಾಯಕತ್ವ ನಿಜಕ್ಕೂ ಶೆಹ್ಲಾ ರಶೀದ್ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ. ಪ್ರಗತಿಪರ ಚಿಂತನೆಗಳೊಂದಿಗೆ ತನ್ನ ಸಮುದಾಯದೊಳಗಿನ ಮೂಲಭೂತವಾದ, ಮುಸ್ಲಿಮ್ ಮಹಿಳೆಯರ ತವಕ – ತಲ್ಲಣಗಳನ್ನು ಪ್ರಶ್ನಿಸುವುದರ ಜೊತೆಗೆ ತನ್ನ ಸಮುದಾಯದ ಶೋಷಿತ ಜನರ ಪರವಾಗಿ ದನಿಯಾಗುತ್ತಿರುವ ಈಕೆಯ ನಾಯಕತ್ವ ಮುಸ್ಲಿಮ್ ಮಹಿಳೆಯರಿಗೆ ಮಾದರಿ.

ಬಹುಷಃ ಉಮ್ಮರ್ ಖಾಲಿದ್ ಹಾಗೂ ಶೆಹ್ಲಾ ರಶೀದ್ ರಂತಹಾ ಯುವ ನಾಯಕರ ಕುರಿತಾಗಿ ಮುಸ್ಲಿಮ್ ಯುವ ಸಮೂಹದಲ್ಲಿ ಹೊಸShehla_Rashid ಚರ್ಚೆ ಹುಟ್ಟಬೇಕಿತ್ತು. ವಿಪರ್ಯಾಸವೆಂದರೆ ಮುಸ್ಲಿಮ್ ಯುವ ಸಮೂಹಕ್ಕೆ ಇಂಥಹ ಪ್ರಗತಿಪರ ಧೋರಣೆಯ ಮುಖಂಡರು ಹೀರೋ ಆಗಿ ಗುರುತಿಸಲ್ಪಡುವುದಿಲ್ಲ. ಬದಲಾಗಿ ಧಾರ್ಮಿಕ ಮೂಲಭೂತವಾದಿ, ಕೋಮುವಾದಿ ರಾಜಕಾರಣವನ್ನು ಪ್ರತಿನಿಧಿಸುವ ಉವೈಸಿ ಸಹೋದರರಂತಹ ನಾಯಕರು ಮುಸ್ಲಿಮ್ ಸಮಾಜದ ಬಹುತೇಕ ಯುವ ಮನಸ್ಸುಗಳ ಪಾಲಿಗೆ ಹೀರೋ ಆಗಿ ನೆಲೆ ನಿಲ್ಲುತ್ತಿದ್ದಾರೆ. ಉಮ್ಮರ್ ಖಾಲಿದ್ ಹಾಗೂ ಶೈಲಾ ರಶೀದ್ ಶೋಷಿತ ಮುಸ್ಲಿಮರ ಪರವಾಗಿ ಧ್ವನಿ ಎತ್ತಿದರೂ ಮುಸ್ಲಿಮ್ ಸಮಾಜದ ಮೂಲಭೂತವಾದಿಗಳು ಇವರ ನಾಯಕತ್ವವನ್ನು ಒಪ್ಪಲು ತಯಾರಿಲ್ಲ. ಕಾರಣ, ಇವರ ಪ್ರಗತಿಪರ ಧೋರಣೆ. ಸಂಘಪರಿವಾರದ ಕೋಮುವಾದದ ಜೊತೆಗೆ ಮುಸ್ಲಿಮ್ ಸಮಾಜದ ಮೂಲಭೂತವಾದವನ್ನು ಪ್ರಶ್ನಿಸುತ್ತಿರುವ ಇವರುಗಳ ನಡೆಯೇ ಈ ಬಿನ್ನಾಭಿಪ್ರಾಯಕ್ಕೆ ಕಾರಣ. “ಉಮ್ಮರ್ ಖಾಲಿದ್ ಚಿಂತನೆಯ ಕುರಿತಾಗಿ ಧಾರ್ಮಿಕ ಬಿನ್ನಾಭಿಪ್ರಾಯಗಳಿವೆ. ಅವರ ಸಾಮಾಜಿಕ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಆದರೆ ಮುಸ್ಲಿಮ್ ಮೂಲಭೂತವಾದ, ಕೋಮುವಾದದ ಕುರಿತಾದ ಅವರ ನಿಲುವಿನಲ್ಲಿ ನಮಗೆ ಸಹಮತ ಕಂಡುಬಂದಲ್ಲಿ ಮಾತ್ರ ಅಂಥವರ ನಾಯಕತ್ವವನ್ನು ನಾವು ಒಪ್ಪುತ್ತೇವೆ” ಎನ್ನುತ್ತಾರೆ ಜಮಾತೇ- ಇಸ್ಲಾಮೀ-ಹಿಂದ್ ಸಂಘಟನೆಯ ಯುವ ಮುಖಂಡ ಶಬ್ಬೀರ್ ಅಹಮ್ಮದ್.

ಭಾರತದಲ್ಲಿ ಸಂಘಪರಿವಾರದ ಕೋಮುವಾದದಿಂದ ಅಭದ್ರತೆಯಲ್ಲಿ ಬದುಕುತ್ತಿರುವ ಶೋಷಿತ ಮುಸ್ಲಿಮ್ ವರ್ಗದ ಪ್ರತಿನಿಧಿಗಳಾಗಿ ಮುಸ್ಲಿಮ್ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳು ಹಾಗೂ ಅದರ ನಾಯಕರು ಹೊರಹೊಮ್ಮುತ್ತಿದ್ದಾರೆ. ಸಮುದಾಯದ ರಕ್ಷಣೆ ಹಾಗೂ ಸಬಲೀಕರಣದ ಪರವಾಗಿ ಧ್ವನಿ ಎತ್ತುತ್ತಿರುವ ಮೂಲಭೂತವಾದಿ ಸಂಘಟನೆಗಳು ಸಮುದಾಯದ ಯುವ ಮನಸ್ಸುಗಳಲ್ಲಿ ಧಾರ್ಮಿಕ ಕಟ್ಟರ್ ವಾದವನ್ನು ಬಿತ್ತುತ್ತಿವೆ. ಪರಿಣಾಮ ಶೋಷಿತ ಮುಸ್ಲಿಮರ, ಬಡವರ, ದಮನಿತರ, ಶೋಷಿತರ, ಮಹಿಳೆ, ಆದಿವಾಸಿ ಹಾಗೂ ದಲಿತರ ಪರವಾಗಿ ಆಡುವ ಉದಾರವಾದಿ ಮುಸ್ಲಿಮ್ ನಾಯಕರ ಮಾತುಗಳಿಗಿಂತ ಸಂಘಪರಿವಾರದ ಪರಿಭಾಷೆಯಲ್ಲಿ ಮಾತನಾಡುವ ಕೋಮುವಾದಿ ಮುಸ್ಲಿಮ್ ನಾಯಕರ ಮಾತುಗಳು ಮುಸ್ಲಿಮ್ ಯುವಮನಸ್ಸುಗಳಿಗೆ ಹತ್ತಿರವಾಗುತ್ತಿವೆ.

“ಎಡಪಂಥೀಯ ಚಿಂತನೆ ಹಾಗೂ ಎಡ ಹೋರಾಟಗಾರರ ಕುರಿತಾಗಿ ಮುಸ್ಲಿಮ್ ಸಮುದಾಯದ ನಡುವೆ ಪೂರ್ವಾಗ್ರಹಗಳನ್ನು ಮೂಲಭೂತವಾದಿಗಳು ವ್ಯವಸ್ಥಿತವಾಗಿ ಸೃಷ್ಟಿ ಮಾಡುತ್ತಿದ್ದಾರೆ. ಈ ಕಾರಣಗಳಿಂದಾಗಿ ಬಡತನ, ಸಮಾನತೆ, ಸ್ತ್ರೀ ಸ್ವಾತಂತ್ಯ್ರ, ಕೋಮುವಾದ , ಮೂಲಭೂತವಾದದ ಕುರಿತಾಗಿ ಮಾತನಾಡುವ ಮುಸ್ಲಿಮ್ ಪ್ರಗತಿಪರ ಹೋರಾಟಗಾರರನ್ನು ಸ್ವೀಕರಿಸಲು ಮುಸ್ಲಿಮ್ ಸಮಾಜ ಹಿಂದೇಟು ಹಾಕುತ್ತಿದ್ದಾರೆ. ಈ ಬೆಳವಣಿಗೆಗಳ ಪರಿಣಾಮವೇ ಎಡ ಚಿಂತನೆಯ ಧ್ವನಿಯಾಗಿರುವ ಉಮ್ಮರ್ ಖಾಲಿದ್ ಹಾಗೂ ಶೆಹ್ಲಾ ರಶೀದ್ ನಂತಹಾ ಯುವ ವಿದ್ಯಾರ್ಥಿ ಮುಖಂಡರು ಮುಸ್ಲಿಮ್ ಯುವಕರ ಪಾಲಿಗೆ ಹೀರೋಗಳಾಗುವುದಿಲ್ಲ. ಇವರ ಹೋರಾಟ ಹಾಗೂ ನಾಯಕತ್ವದ ಕುರಿತಾಗಿ ಮುಸ್ಲಿಮ್ ಸಮಾಜದಲ್ಲಿ ಚರ್ಚೆ ಆಗೋದಿಲ್ಲ. ಬದಲಾಗಿ ಉವೈಸಿ ಸಹೋದರರಂತಹಾ ಕೋಮುವಾದಿ ನಾಯಕತ್ವ ಮುಸ್ಲಿಮ್ ಯುವ ಮನಸ್ಸುಗಳಲ್ಲಿ ಹೀರೋ ಸ್ಥಾನ ಪಡೆದುಕೊಳ್ಳುತ್ತಿರುವುದು ವಿಪರ್ಯಾಸ ಹಾಗೂ ಆತಂಕಕಾರಿ” ಎನ್ನುತ್ತಾರೆ ಡಿ.ವೈ.ಎಫ್.ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ.

ಭಾರತೀಯ ಮುಸ್ಲಿಮರು ಸಂಘಪರಿವಾರದ ಕೋಮುವಾದಿಗಳನ್ನು ಕೋಮುವಾದದ ಪರಿಭಾಷೆಯಲ್ಲೇ ಮುಖಾಮುಖಿಯಾಗಲು ಹೊರಟಿದ್ದಾರೆ.Owaisi ಆದರೆ ಭಾರತದಲ್ಲಿ ಬಹುಸಂಖ್ಯಾತ ಕೋಮುವಾದವನ್ನು ಎದುರಿಸುವ ಬಗೆ ಇದಲ್ಲ. ಬದಲಾಗಿ ಇಲ್ಲಿಯ ಶೋಷಿತ ವರ್ಗಗಳು ಜೊತೆಗೂಡಿ ಚಳುವಳಿ ಕಟ್ಟಬೇಕಾದ ಅಗತ್ಯವಿದೆ. ಈ ಸಂಧರ್ಭದಲ್ಲಿ ಚಳುವಳಿಯ ನಾಯಕತ್ವ ಮುಸ್ಲಿಮ್ ಕೋಮುವಾದಿಗಳ ಪಾಲಾದರೆ ಕೋಮುವಾದದ ವಿರುದ್ದದ ಹೋರಾಟ ಅರ್ಥ ಕಳೆದುಕೊಳ್ಳುತ್ತದೆ. ಒಂದು ವರ್ಗದ ಕೋಮುವಾದದ ವಿರುದ್ಧದ ಹೋರಾಟ ಮತ್ತೊಂದು ಕೋಮುವಾದಿಗಳ ಹುಟ್ಟಿಗೆ ಕಾರಣವಾಗಬಾರದು. ಇಂದು ಮುಸ್ಲಿಮ್ ಸಮುದಾಯದ ಬೆಳವಣಿಗೆಯನ್ನು ಗಮನಿಸುತ್ತಿದ್ದರೆ ಮೂಲಭೂತವಾದ, ಧಾರ್ಮಿಕ ಕಟ್ಟರ್ ವಾದ ಸಮುದಾಯದ ಯುವ ಸಮೂಹದದೊಳಗೆ ಹೇಗೆ ಬೆರೂರುತ್ತಿದೆ ಎಂಬುವುದು ಸ್ಪಷ್ಟಗೊಳ್ಳುತ್ತದೆ. ಇದು ಆತಂಕಕಾರಿ ವಿಚಾರವೂ ಹೌದು. ಶೋಷಿತ ಮುಸ್ಲಿಮರ ಪರ ನಡೆಸುತ್ತಿರುವ ಮುಸ್ಲಿಮ್ ಸಮುದಾಯದ ಹೋರಾಟಕ್ಕೆ ಸಮುದಾಯದ ಉದಾರವಾದಿಗಳ ಹಾಗೂ ಪ್ರಗತಿಪರರ ನಾಯಕತ್ವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಮುದಾಯದೊಳಗಿನಿಂದ ಉದಾರವಾದಿ, ಪ್ರಗತಿಪರ ನೆಲೆಯಲ್ಲಿ ಚಿಂತಿಸುವ ನೂರಾರು ಯುವ ಮುಂದಾಳುಗಳು ಬೆಳೆದು ಬರಬೇಕಿದೆ. ದೇಶದಲ್ಲಿ ಕ್ರಾಂತಿಯ ತಂಗಾಳಿ ಎಬ್ಬಿಸಿದ ಉಮ್ಮರ್ ಖಾಲಿದ್ ಹಾಗೂ ಶೆಹ್ಲಾ ರಶೀದ್ ನಂತಹಾ ವಿದ್ಯಾರ್ಥಿ ಮುಖಂಡರು ಮುಸ್ಲಿಮ್ ಯುವ ಸಮೂಹಕ್ಕೂ ಸ್ಪೂರ್ತಿಯಾಗಲಿ. ಯುವ ನಾಯಕರನ್ನು ಈ ನಾಡಿಗೆ ನೀಡಿದ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯಕ್ಕೆ ಧನ್ಯವಾದಗಳು.

ಆ ಒಂದು ಭಾಷಣ ಕನ್ಹಯ್ಯನನ್ನು ಹೀರೋ ಆಗಿಸಿದ್ದು ಹೇಗೆ?

– ದಿನೇಶ್ ಕುಮಾರ್ ಎಸ್.ಸಿ

ಕ್ರಿಕೆಟ್ನಲ್ಲಿ ಬೌಲರ್ನ ತಲೆ ಮೇಲೆ ಸಿಕ್ಸರ್ ಹೊಡೆಯುವುದೆಂದರೆ ದಾಂಡಿಗರಿಗೆ ಎಲ್ಲಿಲ್ಲದ ಹೆಮ್ಮೆ. ಬೌಲ್ ಮಾಡಿ ತಿರುಗಿ ನೋಡುವಷ್ಟKanhaiya-3 ರಲ್ಲಿ ಚೆಂಡು ತಲೆಯ ಮೇಲೆ ಬೌಂಡರಿ ಗೆರೆಯಾಚೆ ದಾಟುತ್ತಿದ್ದರೆ ಬೌಲರ್ನ ಗತಿ ಏನಾಗಬೇಡ? ಕನ್ಹಯ್ಯ ಮಾರ್ಚ್ 3ರ ಭಾಷಣದಲ್ಲಿ ಮಾಡಿದ್ದು ಅದನ್ನೇ. ಅವನಿಗೆ ಎದುರಾಳಿಗಳ ಚೆಂಡನ್ನು ಅವರ ತಲೆಯ ಮೇಲೇ ಸಿಕ್ಸರ್ಗೆ ಅಟ್ಟುವುದು ಹೇಗೆಂಬುದು ಗೊತ್ತಿತ್ತು. ಹೊಡೆದೂ ಬಿಟ್ಟ. ಇಡೀ ಜಗತ್ತು ಬೆರಗಾಗಿ ಈ ಹೊಸ ಹೀರೋನನ್ನು ನೋಡುತ್ತಿದೆ; ಬಹುಭಾರದ ನಿರೀಕ್ಷೆಗಳೊಂದಿಗೆ, ತುಸು ಅಚ್ಚರಿಯೊಂದಿಗೆ, ಒಂದಿಷ್ಟು ಭೀತಿಯೊಂದಿಗೆ.

 
ದೂರದೃಷ್ಟಿ, ಸೈದ್ಧಾಂತಿಕ ಖಚಿತತೆ, ಆಶಾವಾದ, ಆವೇಶ, ವ್ಯಂಗ್ಯ, ತುಂಟತನ, ಲೇವಡಿ, ನೇರವಂತಿಕೆ, ಭಾವುಕತೆ ಎಲ್ಲವೂ ಇದ್ದ ಕನ್ಹಯ್ಯನ ಆ ಐತಿಹಾಸಿಕ ಭಾಷಣ ಇಷ್ಟೊಂದು ಜನಪ್ರಿಯವಾಗಿದ್ದಾದರೂ ಹೇಗೆ? ನಿನ್ನೆಮೊನ್ನೆಯವರೆಗೂ `ದೇಶದ್ರೋಹಿ’ ಎಂದೇ ಕರೆಯುತ್ತಿದ್ದ ಜನರೂ ಕೂಡ, ಈ ಹುಡುಗನಲ್ಲಿ ಏನೋ ಇದೆ ಎಂದು ಹೇಳುತ್ತಿರುವುದಾದರೂ ಹೇಗೆ ಸಾಧ್ಯವಾಯಿತು?

 
ಈ ಪ್ರಶ್ನೆಗೆ ಉತ್ತರವನ್ನು ಕನ್ಹಯ್ಯನೇ ಕೊಟ್ಟುಬಿಟ್ಟಿದ್ದಾನೆ. ನಾವು ಯೂನಿವರ್ಸಿಟಿಗಳಲ್ಲಿ ಕುಳಿತುಕೊಂಡವರು ಮಾತನಾಡುವ ಭಾಷೆ ಈ ದೇಶದ ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಅವರಿಗೆ ಅರ್ಥವಾಗುವ ಭಾಷೆಯಲ್ಲಿ ನಾವು ಮಾತನಾಡುವುದಿಲ್ಲ ಎಂದು ತನ್ನ ಭಾಷಣದಲ್ಲೇ ಆತ್ಮವಿಮರ್ಶೆಯ ಮಾತುಗಳನ್ನು ಆಡಿದ ಕನ್ಹಯ್ಯ. ಅಷ್ಟು ಮಾತ್ರವಲ್ಲ ತನ್ನ ಐವತ್ತು ನಿಮಿಷಗಳ ಭಾಷಣದಲ್ಲಿ ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆಯನ್ನೇ ಮಾತನಾಡಿದ. ತನ್ನ ಸುತ್ತಮುತ್ತ ಕುಳಿತವರು, ಭಾಷಣ ಕೇಳುತ್ತಿರುವವರು ಜೆಎನ್ಯುನ ಪ್ರಜ್ಞಾವಂತ ವಿದ್ಯಾಥರ್ಿಗಳು ಎಂಬುದು ಗೊತ್ತಿದ್ದರೂ ಕನ್ಹಯ್ಯಗೆ ಈ ಭಾಷಣ ಭಾರತದ ಮೂಲೆಮೂಲೆಗಳನ್ನು ತಲುಪಲಿದೆ ಎಂಬುದು ಗೊತ್ತಿತ್ತು. ಹೀಗಾಗಿ ಪ್ರಜ್ಞಾಪೂರ್ವಕವಾಗಿ ಆತ ಜನರ ಭಾಷೆಯನ್ನೇ ಮಾತನಾಡಿದ.

 
ಕನ್ಹಯ್ಯ ಹೇಳಿಕೇಳಿ ಹಳ್ಳಿ ಹುಡುಗ, ಅವನಿಗೆ ತನ್ನ ಹಳ್ಳಿ ಐಡೆಂಟಿಟಿಯೇ ಹೆಚ್ಚು ಅಪ್ಯಾಯಮಾನ. ಅವನು ಬಳಸಿದ ಭಾಷೆಯೂ ದೇಸೀ ಸೊಗಡಿನ ಬಿಹಾರಿ ಶೈಲಿಯ ಹಿಂದಿ. ಜತೆಗೆ ಒಂದಷ್ಟು ಉರ್ದು ಶಬ್ದಗಳು ಢಾಳಾಗಿ ಕಾಣಿಸಿಕೊಂಡವು. ಒಮ್ಮೊಮ್ಮೆ ಅವನು ಕವಿಯಂತೆ ಮಾತನಾಡುತ್ತಾನೆ, ಆಮೇಲೆ ಬಿಹಾರದ ಯಾವುದೋ ಹಳ್ಳಿಯ ಕಟ್ಟೆ ಮೇಲೆ ಕುಳಿತು ಮಾತನಾಡುವ ಅಪ್ಪಟ ದೇಸೀ ಶೈಲಿಗೆ ಬದಲಾಗಿಬಿಡುತ್ತಾನೆ. ಅವನಿಗೆ ಚೆನ್ನಾಗಿ ಗೊತ್ತು, ಜನರ ಭಾಷೆ ಮಾತನಾಡಿದರಷ್ಟೇ ಜನರಿಗೆ ಅರ್ಥವಾಗೋದು. ಅವನು ಅದನ್ನೇ ಮಾಡಿದ, ಜನರನ್ನು ತಲುಪಿಯೂಬಿಟ್ಟ.

 
ನಮಗೆ ಬೇಕಿರೋದು ದೇಶದಿಂದ ಸ್ವಾತಂತ್ರ್ಯವಲ್ಲ, ದೇಶದೊಳಗೆ ಸ್ವಾತಂತ್ರ್ಯ ಎಂದು ಕನ್ಹಯ್ಯ ಬಹಳ ಸ್ಪಷ್ಟವಾಗಿ ಹೇಳುತ್ತ ಜನಸಾಮಾನ್ಯರು ಏನನ್ನು ಅರ್ಥ ಮಾಡಿಕೊಳ್ಳಬೇಕಿತ್ತೋ ಅದನ್ನು ಅರ್ಥಮಾಡಿಸಿಬಿಟ್ಟ. ಅಲ್ರೀ, ಇವನೇನು ಆಜಾದಿ ಆಜಾದಿ ಅಂತಾನೆ, ಆಜಾದಿ 1947ರಲ್ಲೇ ಬಂತಲ್ಲ ಎಂದು ಅಮಾಯಕವಾಗಿ ಮಾತನಾಡುತ್ತಿದ್ದ ಜನರಿಗೂ ಈಗ ಅರ್ಥವಾಗತೊಡಗಿದೆ, ಕನ್ಹಯ್ಯ ಕೇಳುತ್ತಿರುವ ಆಜಾದಿ ಬೇರೆಯದ್ದು ಎಂದು. ಜೈಲಿಗೆ ಹೋದಾಗ ಪೊಲೀಸರು, ಜೈಲು ಸಿಬ್ಬಂದಿ, ಇತ್ಯಾದಿ ಜನರಿಂದ ಪದೇ ಪದೇ ಇದೇ ಪ್ರಶ್ನೆಯನ್ನು ಎದುರಿಸಿದ್ದ ಕನ್ಹಯ್ಯನಿಗೆ ಇದಕ್ಕಿಂತ ಪರಿಣಾಮಕಾರಿಯಾದ ಉತ್ತರ ನೀಡಲು ಇನ್ನು ಹೇಗೆ ಸಾಧ್ಯವಿತ್ತು?

 
ಕನ್ಹಯ್ಯ ಆಗ ತಾನೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ. ಜಾಮೀನು ಕೊಟ್ಟ ನ್ಯಾಯಾಲಯ ಸಹಜವಾಗಿಯೇ ಒಂದಷ್ಟು ಷರತ್ತುಗಳನ್ನು ವಿಧಿಸಿರುತ್ತದೆ. ಅದನ್ನು ಮೀರಿದರೆ ನ್ಯಾಯಾಂಗ ನಿಂದನೆಯನ್ನು ಎದುರಿಸಬೇಕಾಗುತ್ತದೆ. ಕನ್ಹಯ್ಯ ತನ್ನ ಕುರಿತಾದ ಕೇಸಿನ ಕುರಿತು ಏನನ್ನೂ ಮಾತನಾಡುವಂತಿಲ್ಲ. ನಿಜ, ಕನ್ಹಯ್ಯ ಕಾನೂನು ಉಲ್ಲಂಘನೆ ಮಾಡಲಿಲ್ಲ, ಕೇಸಿನ ಬಗ್ಗೆ ಏನನ್ನೂ ಮಾತನಾಡಲಿಲ್ಲ. ಆದರೆ ಏನೂ ಮಾತನಾಡದೇKanhaiya-2 ಎಲ್ಲವನ್ನೂ ಮಾತನಾಡಿಬಿಟ್ಟಿದ್ದ. ನನ್ನ ಜನ ಜಾಣರು, ಸಂಜ್ಞೆಗಳಲ್ಲೇ ಎಲ್ಲವನ್ನು ಅರ್ಥ ಮಾಡಿಕೊಳ್ಳಬಲ್ಲರು ಎಂದು ಹೇಳುತ್ತ ಏನನ್ನು ಹೇಳಬೇಕೋ ಅದನ್ನು ಹೇಳಿಬಿಟ್ಟ. ಕನ್ಹಯ್ಯ ನ್ಯಾಯಾಂಗ ನಿಂದನೆಯಾಗುವಂಥದ್ದೇನಾದರೂ ಮಾತನಾಡಿದನಾ ಎಂದು ಟೀವಿ ಚಾನಲ್ಲುಗಳು ಕೆಕರುಪೆಕರಾಗಿ ಚರ್ಚೆ ನಡೆಸಿದರೂ ಅವುಗಳಿಗೆ ಸಿಗಬೇಕಾಗಿದ್ದೇನೂ ಸಿಗುತ್ತಿಲ್ಲ.

 
ಬಿಡುಗಡೆಯಾಗಿ ಬಂದ ಮಾರನೇ ದಿನವೇ ಈ ದೇಶದ ಘಟಾನುಘಟಿ ಪತ್ರಕರ್ತರ ಸಂದರ್ಶನವನ್ನು ಕನ್ಹಯ್ಯ ಎದುರಿಸಬೇಕಾಯಿತು. ರಾಜದೀಪ್ ಸರ್ದೇಸಾಯಿ, ಬರ್ಖಾ ದತ್, ರವೀಶ್ ಕುಮಾರ್… ಎಲ್ಲರೂ ಒಂದೊಂದು ಚಾನಲ್ನ ಮುಖ್ಯಸ್ಥರು. ಐದು ಅಡಿ ಉದ್ದದ ಕನ್ಹಯ್ಯ ಮುದುಡಿ ಕುಳಿತಿದ್ದ. `ಅಲ್ಲೋ ಮಾರಾಯ, ಅಲ್ಲಿ ಜೆಎನ್ಯುನಲ್ಲಿ ಭಾಷಣ ಮಾಡುವಾಗ ಹಾಗೆ ಅಬ್ಬರಿಸುತ್ತಿದ್ದೆ, ಇಲ್ಲೇಕೆ ಹೀಗೆ ತಣ್ಣಗೆ ಉತ್ತರಿಸುತ್ತಿದ್ದೀ?’ ಎಂದ ರಾಜದೀಪ್ಗೆ ಅಷ್ಟೇ ತಣ್ಣಗೆ ಕನ್ಹಯ್ಯ ಹೇಳಿದ್ದೇನು ಗೊತ್ತೇ? “ನೋಡಿ ಸರ್, ಅಲ್ಲಿ ಸಾಕಷ್ಟು ಜನರು ಇದ್ರು, ಎಲ್ಲರಿಗೂ ಕೇಳಬೇಕು, ಎಲ್ಲರನ್ನ ತಲುಪಬೇಕು, ಇಲ್ಲಿ ನಾವಿಬ್ರೇ ಕೂತಿದ್ದೇವೆ. ಟೆಕ್ನಾಲಜಿ ಇದೆ. ಗಟ್ಟಿಯಾಗಿ ಮಾತಾಡೋ ಅಗತ್ಯ ಏನಿದೆ?” ಒಂದು ಕ್ಷಣ ರಾಜದೀಪ್ ಕೂಡ ಕನ್ಹಯ್ಯನ ಮಾತಿಗೆ ಬೆರಗಾದರು. ಈ ಸಂದರ್ಶನವನ್ನು ನೋಡಿರಬಹುದಾದ ಅರ್ನಾಬ್ ಗೋಸ್ವಾಮಿ ಒಮ್ಮೆ ಬೆವೆತಿರಬೇಕು, ತನ್ನದೇ ಸ್ಟುಡಿಯೋದಲ್ಲಿ ಕುಳಿತು ತಾನೇ ಕಿರುಚಾಡುವುದೆಲ್ಲ ಅವನಿಗೆ ನೆನಪಾಗಿರಬಹುದು.

 
ಕನ್ಹಯ್ಯ ಜೈಲಿನಿಂದ ಬಂದ ಮೇಲೆ ಏನು ಮಾಡಬಹುದು ಎಂಬ ಸಹಜ ಕುತೂಹಲ ಎಲ್ಲರಲ್ಲಿತ್ತು. ದೇಶದ್ರೋಹದ ಆರೋಪದಲ್ಲಿ ಜೈಲು ಸೇರುವುದೇನು ಸಾಮಾನ್ಯ ವಿಷಯವೇ? ಅದೂ ಕೂಡ ಅವನ ಸೈದ್ಧಾಂತಿಕ ವಿರೋಧಿಗಳು ದೇಶದ್ರೋಹಿ ದೇಶದ್ರೋಹಿ ಎಂದು ಸಾರಿಸಾರಿ, ಕಿರುಚಿ ಕಿರುಚಿ ಹೇಳಿ ಸಾಮಾನ್ಯ ಜನರೂ ಅದನ್ನು ನಂಬುವಂತಾಗಿದ್ದಾಗ, ಕೋರ್ಟ್ ಆವರಣದಲ್ಲೇ ದೇಶಭಕ್ತ ವಕೀಲರಿಂದ ಹಲ್ಲೆಗೊಳಗಾದ ವ್ಯಕ್ತಿ ಜಾಮೀನು ಪಡೆದು ಬಂದ ನಂತರ ಏನು ಮಾತನಾಡಬಹುದು ಎಂಬ ಕುತೂಹಲ ಇಲ್ಲದೇ ಇರುತ್ತದೆಯೇ? ಜೈಲುವಾಸದ ನಂತರ ಆತ ಅಧೀರನಾಗಿರಬಹುದೇ ಎಂಬ ಅನುಮಾನಗಳೂ ಹಲವರಿಗಿತ್ತು. ಅವನ ಮಾತುಗಳನ್ನು ಕೇಳಲು ಅವನ ವಿರೋಧಿಗಳೂ ಕಾತುರರಾಗಿದ್ದರು.
ಕನ್ಹಯ್ಯ ಬಂದ, ಸಾವಿರ ಸಾವಿರ ವಿದ್ಯಾರ್ಥಿಗಳ ನಡುವೆ ನಿಂತು ತನ್ನ ಟ್ರೇಡ್ಮಾರ್ಕ್ ‘ಆಜಾದಿ’ಯ ಘೋಷಣೆಗಳನ್ನು ಕೂಗಿದ, ಆಮೇಲೆ ಮಾತು. ಅವನ ಧೈರ್ಯ ಉಡುಗುವುದಿರಲಿ, ಮೊದಲು ಇದ್ದದ್ದು ದುಪ್ಪಟ್ಟಾಗಿತ್ತು. ಹೊಸ ಕನ್ಹಯ್ಯ ಇನ್ನಷ್ಟು ಆಶಾವಾದಿಯಾಗಿದ್ದ, ಇನ್ನಷ್ಟು ಪಳಗಿಹೋಗಿದ್ದ, ಇನ್ನಷ್ಟು ಆತ್ಮವಿಶ್ವಾಸಿಯಾಗಿದ್ದ. ಎದುರಾಳಿಗಳ ಎದೆ ನಡುಗಲು ಇನ್ನೇನು ಬೇಕಿತ್ತು?

 
ಕನ್ಹಯ್ಯ ಮೇಲಿನ `ರಾಜದ್ರೋಹದ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಅಲ್ಲಿ ಆತ ಇನ್ನೂ ನಿರ್ದೋಷಿ ಎಂದು ತೀರ್ಮಾನವಾಗಿಲ್ಲ. ಆದರೆ ಕನ್ಹಯ್ಯ ಮೇಲೆ ಹೊರಿಸಲಾದ ಆರೋಪ ನ್ಯಾಯಾಲಯದ ಕಟಕಟೆಗಳನ್ನು ದಾಟಿ ಸದ್ದುಮಾಡಿತ್ತು. ಒಂದೊಮ್ಮೆ ನ್ಯಾಯಾಲಯದ ಕಟಕಟೆಯಲ್ಲಿ ನಿರ್ದೋಶಿ ಎಂದು ಸಾಬೀತಾದರೂ ಆತ ಅಷ್ಟು ಸುಲಭವಾಗಿ ಈ ಭಾರವನ್ನು ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ. ಕನ್ಹಯ್ಯ ತನ್ನ ಭಾಷಣದ ಮೂಲಕ ಜನರ ನ್ಯಾಯಾಲಯಕ್ಕೆ ನುಗ್ಗಿಬಿಟ್ಟ. ತನ್ನ ಮೇಲಿನ ಆರೋಪಗಳೆಲ್ಲ ಹೇಗೆ ಹಸಿಹಸಿ ಸುಳ್ಳುಗಳು ಮತ್ತು ರಾಜಕೀಯ ಪ್ರೇರಿತವಾದವುಗಳು ಎಂಬುದನ್ನು ಹಳ್ಳಿಹುಡುಗನ ಸಹಜ ವಿನಯದಿಂದಲೇ ನಿರೂಪಿಸಿಬಿಟ್ಟ.

 
ನೀನು ನಿನ್ನ ಭಾಷಣದಲ್ಲಿ ಅತಿ ಎನಿಸುವಷ್ಟು ಪರ್ಸನಲ್ ಅಟ್ಯಾಕ್ ಮಾಡಿದೆ ಎಂದು ರಾಜದೀಪ್ ಸರ್ದೇಸಾಯಿ ಕನ್ಹಯ್ಯನನ್ನು ಟೀಕಿಸಿದರು. ಕನ್ಹಯ್ಯ ಮುಗುಳು ನಗುತ್ತ ಆ ಟೀಕೆಯನ್ನು ಸ್ವೀಕರಿಸಿದ. ಕನ್ಹಯ್ಯ ರಾಜಕೀಯ ಪಕ್ಷದ ವಿದ್ಯಾರ್ಥಿ ಸಂಘಟನೆಯ ಮುಖಂಡ. ರಾಜಕಾರಣ ಆತನಿಗೆ ಚೆನ್ನಾಗಿ ಗೊತ್ತು. ಏಟಿಗೆ ಎದಿರೇಟು ಎನ್ನುವುದು ರಾಜಕಾರಣದ ಪ್ರಾಥಮಿಕ ಪಾಠ. ದಾಳಿಗೆ ಪ್ರತಿದಾಳಿ ಇರಲೇಬೇಕು. ಹೀಗಾಗಿ ಆಗೊಮ್ಮೆ ಈಗೊಮ್ಮೆ ನರೇಂದ್ರ ಮೋದಿ, ಸ್ಮೃತಿ ಇರಾನಿಯವರನ್ನು ತನ್ನ ಭಾಷಣದಲ್ಲಿ ಗೇಲಿ ಮಾಡಿದ. ಕೆಲವೊಮ್ಮೆ ವಯೋಸಹಜ ತುಂಟತನದಿಂದ ಛೇಡಿಸಿದ.

 

ಕನ್ಹಯ್ಯ ಕಮ್ಯುನಿಸ್ಟ್ ಪಕ್ಷದ ವಿದ್ಯಾರ್ಥಿ ಮುಖಂಡ. ಅದಕ್ಕಾಗಿ ಅವನಿಗೆ ಹೆಮ್ಮೆಯೂ ಇದೆ. ಆದರೆ ಅವನು ಮಾತನಾಡುತ್ತಿರುವುದು ಸಂಪೂರ್ಣ ಕಮ್ಯುನಿಸ್ಟ್ ಪಕ್ಷಗಳ ನುಡಿಗಟ್ಟುಗಳಲ್ಲ. ಅದಕ್ಕೆ ಕಾರಣವೂ ಇದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ವರ್ಗ ಸಂಘರ್ಷವೊಂದನ್ನು ನಂಬಿಕೊಂಡಿದ್ದ ಕಮ್ಯುನಿಸ್ಟರು ಈ ಭಾರತದ ಜಾತಿಯ ಕರಾಳತೆಗಳ ಕಡೆ ಕೊಡಬೇಕಾದಷ್ಟು ಗಮನವನ್ನು ಕೊಡಲಿಲ್ಲ. ಆದರೆ ಕನ್ಹಯ್ಯ ದೊಡ್ಡ ಧ್ವನಿಯಲ್ಲಿ `ಜಾತಿವಾದದಿಂದ ಆಜಾದಿ’ ಎನ್ನುತ್ತಿದ್ದಾನೆ, `ರೋಹಿತ್ ವೇಮುಲಾ ನನ್ನ ಆದರ್ಶ’ ಎನ್ನುತ್ತಿದ್ದಾನೆ. ಕನ್ಹಯ್ಯನಿಗೆ ತತ್ತ್ವ ಸಿದ್ಧಾಂತದಲ್ಲಿ ಗಟ್ಟಿಯಾಗಿರುವ ಕಮ್ಯುನಿಸ್ಟರು ಜನರನ್ನು ತಲುಪವಲ್ಲಿ ಸೋಲುತ್ತಿದ್ದಾರೆ ಎಂಬ ವಾಸ್ತವ ಅವನಿಗೆ ಗೊತ್ತಿದೆ. ತನ್ನದೇ ಪಕ್ಷದ ಇತಿಮಿತಿಗಳೂ ಅವನಿಗೆ ಗೊತ್ತು. ಹೀಗಾಗಿ ಆತ ತನ್ನ ಪಕ್ಷದ ಚೌಕಟ್ಟನ್ನೂ ಮೀರಿ ಯೋಚಿಸುತ್ತಾನೆ, ಮಾತನಾಡುತ್ತಾನೆ. ಜೈಲಿನಲ್ಲಿ ತನಗೆ ನೀಡಿದ ನೀಲಿ ಮತ್ತು ಕೆಂಪು ಬಣ್ಣದ ಬೌಲ್ಗಳನ್ನು ರೂಪಕವಾಗಿ ಬಳಸಿ ಆತ ಕಮ್ಯುನಿಸ್ಟರು-ಅಂಬೇಡ್ಕರ್ವಾದಿಗಳೂ ಒಂದಾಗಬೇಕು ಎನ್ನುತ್ತಾನೆ. ಎಂಥ ಸುಂದರ ಕನಸು?

 

ನೀವು ನನ್ನ ಎದುರಾಳಿಗಳು (ವಿರೋಧಪಕ್ಷ), ಆದರೆ ನೀವು ನನ್ನ ಶತ್ರುಗಳಲ್ಲ ಎಂದು ಕನ್ಹಯ್ಯ ಹೇಳುವಾಗ ಎದುರಾಳಿಗಳಿಗೂ ನಡುಕ ಹುಟ್ಟುವುದು ಸಹಜ. ಯಾಕೆಂದರೆ ಈ ಬಗೆಯ ಭಾಷೆ ನೇರವಾಗಿ ಜನರ ಎದೆಯನ್ನು ಮುಟ್ಟುತ್ತದೆ. ತನ್ನ ಎದುರಾಳಿಗಳದು ಹೊಡಿ, ಬಡಿ, ಕೊಲ್ಲು ಎನ್ನುವ ಭಾಷೆ ಅನ್ನುವುದು ಕನ್ಹಯ್ಯಗೆ ಗೊತ್ತು. ಆದರೆ ಇದಕ್ಕೆ ಪ್ರತಿಯಾಗಿ ಭಿನ್ನಧ್ವನಿಗಳನ್ನೂ ಗೌರವಿಸುತ್ತೇವೆ ಎಂದು ಹೇಳುವ ಮೂಲಕ ಪ್ರಜಾಪ್ರಭುತ್ವದ ನೈಜ ವ್ಯಾಖ್ಯಾನ ತನಗೆ ಗೊತ್ತಿದೆ ಎಂಬ ಸಂದೇಶವನ್ನು ರವಾನೆ ಮಾಡುತ್ತಾನೆ.

 

`ಅಲ್ಲಿ, ಪಾಟಿಯಾಲ ಕೋರ್ಟ್ ಆವರಣದಲ್ಲಿ ನಿನ್ನನ್ನು ಅವರು ಹೊಡೆದರು, ಒದ್ದರು. ಆ ಕೇಸೂ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿದೆ, ನೀನು ಯಾಕೆ ಆ ವಿಷಯ ನಿನ್ನ ಭಾಷಣದಲ್ಲಿ ಪ್ರಸ್ತಾಪ ಮಾಡಲಿಲ್ಲ ಎಂದು ರಾಜದೀಪ್ ಕೇಳಿದಾಗ ಕನ್ಹಯ್ಯ ಕೊಟ್ಟ ಉತ್ತರ ಆತನ ಸ್ಥಿತಪ್ರಜ್ಞತೆಗೆ, ವಿವೇಕಕ್ಕೆ ಹಿಡಿದ ಕನ್ನಡಿ. ನಾನು, ನನ್ನಂಥ ಕೋಟ್ಯಂತರ ಯುವಕರ ಭವಿಷ್ಯದ ಬಗ್ಗೆ ಮಾತನಾಡಬೇಕಿತ್ತು. ಅದೇ ನನ್ನ ಆದ್ಯತೆಯಾಗಿತ್ತು. ನನ್ನ ಮೇಲೆ ದಾಳಿಯಾಗಿದ್ದು ನಿಜ. ನನ್ನ ವೈಯಕ್ತಿಕ ನೋವಿಗಿಂದ ಸಮೂಹ ಅನುಭವಿಸುತ್ತಿರುವ ನೋವಿನ ಚರ್ಚೆಯೇ ಮುಖ್ಯ. ಅದಕ್ಕಾಗಿಯೇ ನಾನು ಆ ವಿಷಯವನ್ನು ಪ್ರಜ್ಞಾಪೂರ್ವಕವಾಗಿ ಪ್ರಸ್ತಾಪಿಸಲಿಲ್ಲ ಎಂದ ಕನ್ಹಯ್ಯ!

 

ಕನ್ಹಯ್ಯ ಮಾಡಿದ್ದು ಮತ್ತೇನನ್ನೂ ಅಲ್ಲ, ಆತ ಕಳೆದ ಎರಡು ವರ್ಷಗಳಿಂದ ಈ ದೇಶದ ಬಹುಸಂಖ್ಯಾತ ಜನರ ಎದೆಯಲ್ಲಿ ಅದುಮಿ ಇಟ್ಟುಕೊಂಡಿದ್ದ ಮಾತುಗಳನ್ನೇ ಹೊರಗೆ ಹಾಕಿದ. ಎಲ್ಲೆಲ್ಲೋ ಚದುರಿ ಹೋಗಿದ್ದ ಪ್ರತಿರೋಧದ ಧ್ವನಿಗಳನ್ನು ಸರಿಯಾಗಿ ಗ್ರಹಿಸಿ ಅವುಗಳನ್ನೇ ಜನರ ಮುಂದೆ ಇಟ್ಟ. ಅರೆ, ಇದೆಲ್ಲ ನಾವು ಹೇಳಬೇಕಿದ್ದ ಮಾತುಗಳಲ್ಲವೇ ಎಂದು ಎಲ್ಲರೂ ತಮ್ಮೊಳಗೆ ಒಮ್ಮೆ ಹೋಗಿ ಮುಟ್ಟಿ ನೋಡಿಕೊಂಡು ಬರುವಂತೆ ಮಾಡಿಬಿಟ್ಟ. ಮೋದಿ ಮೇನಿಯಾದಲ್ಲಿ ಮಂಕಾಗಿ ಹೋಗಿದ್ದ ಸಮಸ್ತ ವಿರೋಧಪಕ್ಷಗಳೂ ಮಾಡಲು ಸಾಧ್ಯವಾಗದ್ದನ್ನು ಕನ್ಹಯ್ಯ ಮಾಡಿತೋರಿಸಿದ.

 

ವಿದ್ಯಾರ್ಥಿಗಳು, ದಲಿತರು, ಆದಿವಾಸಿಗಳು, ಸೈನಿಕರು, ರೈತರು, ಹಿಂದುಳಿದವರು, ಅಲ್ಪಸಂಖ್ಯಾತರು, ಕಾರ್ಮಿಕರು, ಮಹಿಳೆಯರು ಎಲ್ಲರೂ ಅವನ ಭಾಷಣದಲ್ಲಿ ಬಂದರು. ಎಲ್ಲರ ಧ್ವನಿಯಾಗಿಯೂ ಕನ್ಹಯ್ಯ ಗುಡುಗಿದ. ಕೆಲವೇ ದಿನಗಳ ಹಿಂದೆ `ದೇಶದ್ರೋಹಿ’ ಎಂದು ಜರೆಯಲಾಗಿದ್ದ ಹುಡುಗ ತನ್ನ ಮೇಲಿನ ಆರೋKanhaiya-1ಪಗಳನ್ನು ಹುಸಿ ಎಂದು ಸಾರುತ್ತಲೇ ನಿಜವಾದ ದೇಶದ್ರೋಹಿಗಳನ್ನು ಇಂಚಿಂಚಾಗಿ ಬೆತ್ತಲುಗೊಳಿಸಿಬಿಟ್ಟ.

ಕನ್ಹಯ್ಯನ ಮೇಲಿನ ನಿರೀಕ್ಷೆಗಳು ವಿಪರೀತವಿದೆ, ಆ ಭಾರವನ್ನು ಐದು ಅಡಿ ಉದ್ದದ ಈ ಹುಡುಗ ತಡೆದುಕೊಳ್ಳುತ್ತಾನೋ ಇಲ್ಲವೋ ಎಂಬುದನ್ನು ಕಾಲವೇ ಹೇಳಬೇಕು. ಆದರೆ ಅದೊಂದು ಭಾಷಣ ಇಂಡಿಯಾದ ರಾಜಕಾರಣದಲ್ಲಿ ಹೊಸ ತಿರುವನ್ನಂತೂ ನೀಡಿದೆ, ಅದನ್ನು ಅವನ ಎದುರಾಳಿಗಳೂ ಅಲ್ಲಗೆಳೆಯಲಾರರು.

ಮಹಿಳಾ ದಿನ: ಆಚರಿಸಲು ಒಂದಿಷ್ಟು ನೈತಿಕತೆ ಬೇಡವೆ?

– ಪ್ರದೀಪ್ ಇ.

ನಾಳೆ ವಿಶ್ವ ಮಹಿಳಾ ದಿನ. ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಕ್ರಮ ಮಾಡುತ್ತೆ. ಮುಖ್ಯಮಂತ್ರಿ ಸೇರಿದಂತೆ ಹಲವರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾತನಾಡುತ್ತಾರೆ. ಅವರೆಲ್ಲರ ಮಾತುಗಳಿಗೆ ಮೊದಲು ಹೇಳಬೇಕಾದ್ದು — For god sake, hold your tongue. ಇಲ್ಲಿ ಸ್ವಲ್ಪ ಕೇಳಿ.

ಈ ಸರಕಾರಕ್ಕೆ ಮಹಿಳಾ ದಿನಾಚರಣೆ ಕಾರ್ಯಕ್ರಮ ಮಾಡುವ ನೈತಿಕ ಹಕ್ಕಿಲ್ಲ. ಇದು ಲೇಖನದ ಆರಂಭದಲ್ಲಿಯೇ ತೀರ್ಪು ಕೊಟ್ಟಂತೆ ಅನ್ನಿಸಬಹುದು. ಆದರೆ, ಇನ್ನು ಮುಂದೆ ಮಂಡಿಸಲಾಗುವ ಅಂಶಗಳಿಂದ ಈ ಲೇಖನ ಓದುತ್ತಿರುವ ಕೆಲವರಿಗಾದರೂ ಆ ಅಭಿಪ್ರಾಯದ ಬಗ್ಗೆ ಸಹಮತ ಮೂಡಬಹುದು.

ನಿಮಗೆ ಕೆಲವರಿಗೆ ಗೊತ್ತಿರಬಹುದು. ರಾಜ್ಯದ ಕೆಲವೆಡೆ ಹಲವು ವೈದ್ಯರು ಸಾವಿರಾರು ಅನಗತ್ಯ ಹಿಸ್ಟೆರೆಕ್ಟೊಮಿ (hysterectomy-ಗರ್ಭಕೋಶ ತೆಗೆಯುವ ಸರ್ಜರಿ) ಗಳನ್ನು ಮಾಡಿದ್ದಾರೆ. 2014 ರ ಅಂತ್ಯದ ಹೊತ್ತಿಗೆ ಚಿಕ್ಕಮಗPhoto Captionಳೂರ ಜಿಲ್ಲೆ ಬೀರೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರು ಅನಗತ್ಯವಾದ ಸರ್ಜರಿಗಳನ್ನು ಮಾಡಿ, ನೂರಾರು ಮಹಿಳೆಯರಿಂದ ದುಡ್ಡು ವಸೂಲಿ ಮಾಡಿದ್ದ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಸುದ್ದಿ ಬಂತು.

ವೈದ್ಯ ವೃತ್ತಿಯಲ್ಲಿರುವವರು ಕೆಲ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಅದರಂತೆ, ಹಿಸ್ಟೆರೆಕ್ಟೊಮಿ ಸರ್ಜರಿಯನ್ನು ತೀರಾ ಅನಿವಾರ್ಯವಾದ ಪ್ರಸಂಗಗಳ ಹೊರತಾಗಿ ಮಾಡಬಾರದು. ಅದರಲ್ಲೂ 35 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಹೆಂಗಸರಿಗೆ ಆ ಸರ್ಜರಿಯನ್ನು ಮಾಡುವಾಗ, ಸಾಧ್ಯವಿರುವ ಎಲ್ಲಾ ಪರ್ಯಾಯ ಮಾರ್ಗಗಳನ್ನು ಮೊದಲು ಪರಿಶೀಲಿಸಬೇಕು. ಆ ಸರ್ಜರಿಯನ್ನು ಮಾಡದೇ ಹೋದರೆ ಅವರ ಆರೋಗ್ಯಕ್ಕೆ ತೊಂದರೆ ಆಗಬಹುದು ಎನ್ನುವ ಪರಿಸ್ಥಿತಿ ಇದ್ದಾಗ ಮಾತ್ರ ಮುಂದುವರಿಯಬಹುದು. ಈ ನೀತಿಗೆ ಕಾರಣಗಳಿವೆ. ಗರ್ಭಕೋಶ ತೆಗೆದರೆ ಸ್ತ್ರೀ ದೇಹದ ಹಲವು ಋಣಾತ್ಮಕ ಪ್ರತಿಕ್ರಿಯೆಗಳು ಆಗುತ್ತವೆ. ಆದರೆ, ಗೊತ್ತಿರಲಿ, ಆ ಬೀರೂರಿನ ವೈದ್ಯ ಮೂರು ವರ್ಷದ ಅವಧಿಯಲ್ಲಿ 1,428 ಮಹಿಳೆಯರ ಗರ್ಭಕೋಶ ತೆಗೆದಿದ್ದ. ಆತ ವರ್ಷಪೂರ್ತಿ ರಜಾ ದಿನಗಳಲ್ಲೂ ಕೆಲಸ ಮಾಡಿದ್ದಾರೆ ಎಂದು ಭಾವಿಸಿದರೂ, ದಿನಕ್ಕೆ ಒಂದಕ್ಕಿಂತ ಹೆಚ್ಚು ಸರ್ಜರಿ ಮಾಡಿದ್ದಾರೆ. ಆಘಾತಕಾರಿ ಸಂಗತಿ ಎಂದರೆ, ಹಾಗೆ ಪರೀಕ್ಷೆಗೆ ಒಳಪಟ್ಟವರಲ್ಲಿ ಶೇಕಡ 40 ಕ್ಕೂ ಹೆಚ್ಚು ಮಂದಿ 35 ವರ್ಷಕ್ಕಿಂತ ಚಿಕ್ಕ ಹರೆಯದವರು.

ಈ ಎಲ್ಲಾ ಮಾಹಿತಿಗಳು ಸರಕಾರದ ಆರೋಗ್ಯ ಇಲಾಖೆ ಆದೇಶದ ಮೇಲೆ ತನಿಖೆ ನಡೆಸಿದ ಸಮಿತಿ ಕಲೆಹಾಕಿದ್ದು. ಮಾಧ್ಯಮದಲ್ಲಿ ಸುದ್ದಿ ಬಂದ ನಂತರ ಆರೋಗ್ಯ ಮಂತ್ರಿ ಯು.ಟಿ.ಖಾದರ್ ಸಮಿತಿ ನೇಮಿಸಿದರು. ಅದರಲ್ಲಿ ಇಬ್ಬರು ವೈದ್ಯರು ಮತ್ತೊಬ್ಬರು ವಕೀಲರು. ಆ ವಕೀಲರು ರಾಜ್ಯ ಮಹಿಳಾ ಆಯೋಗದ ಸದಸ್ಯರೂ ಹೌದು. ಆ ಮೂರೂ ಮಂದಿ, ಬೀರೂರಿನ ಆಸ್ಪತ್ರೆಗೆ ಹೋಗಿ ಮೂರು ವರ್ಷಗಳ ಕಾಲ ಆ ವೈದ್ಯ ಹ್ಯಾಂಡಲ್ ಮಾಡಿದ ಎಲ್ಲಾ ಕೇಸ್ ಶೀಟ್ ಗಳನ್ನು ತಡಕಾಡಿ ಮಾಹಿತಿ ಕಲೆ ಹಾಕಿದರು. ಸರ್ಜರಿಗಳಿಗೆ ಸಹಾಯ ಮಾಡಿದ ಸಿಬ್ಬಂದಿ ಹಾಗೂ ಸರ್ಜರಿಗೆ ಒಳಗಾದ ಹಲವಾರು ಮಹಿಳೆಯರನ್ನು ಸಂದರ್ಶಿಸಿ ವರದಿ ನೀಡಿದ್ದಾರೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಒಂದು ಹಳ್ಳಿಯಲ್ಲಿಯೇ ಅದೆಷ್ಟೋ ಮಹಿಳೆಯರು ಈ ವೈದ್ಯ ಮಹಾಶಯನ ಬಳಿ ಬಂದು ಗರ್ಭಕೋಶ ತೆಗೆಸಿಕೊಂಡಿದ್ದಾರೆ. ತನಿಖಾ ವರದಿ ಪ್ರಕಾರ, ಈ ಮಹಿಳೆಯರು ಸಾಕಷ್ಟು ಹಣ ನೀಡಿ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಕೆಲವರು 30,000 ರೂಗಳ ವರೆಗೆ ಲಂಚ ನೀಡಿದ್ದಾರೆ. ಒಟ್ಟು ಎಂಟು ಜಿಲ್ಲೆಯ ಮಹಿಳೆಯರು ಇಲ್ಲಿ ಬಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಕೆಲವರಿಗೆ ಮಹಿಳೆಯರು ಇಂತಹ ಸರ್ಜರಿಗೆ ಏಕೆ ಒಳಗಾಗುತ್ತಾರೆ ಎಂದು ತಿಳಿದರೆ ಆಶ್ಚರ್ಯ ಆಗಬಹುದು. ಚಿತ್ರದುರ್ಗ, ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿರುವ ಗೊಲ್ಲರ ಸಮುದಾಯದಲ್ಲಿ ಕೆಲ ಸಂಪ್ರಾದಯಗಳಿವೆ. ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ಊರ ಹೊರಗೆ ಕಟ್ಟಲಾಗಿರುವ, ಯಾವು ಮೂಲಭೂತ ವ್ಯವಸ್ಥೆಯೂ ಇಲ್ಲದ ಮನೆಯಲ್ಲಿ ಕಾಳ ಕಳೆಯಬೇಕು. ಶುಚಿತ್ವ ಇಲ್ಲದ ಕಾರಣಕ್ಕೋ ಅಥವಾ ಮತ್ತಾವ ಕಾರಣಕ್ಕೋ ಅವರಿಗೆ ವಿಪರೀತ ರಕ್ತಸ್ರಾವ ಆಗಿ, ವೈದ್ಯರ ಬಳಿ ಹೋಗುತ್ತಾರೆ. ಇದನ್ನೇ ವ್ಯಾಪಾರದ ಮೂಲವನ್ನಾKhaderಗಿ ಕಂಡ ವೈದ್ಯರು – ಇದಕ್ಕೆಲ್ಲಾ ಒಂದೇ ಪರಿಹಾರ ಹಿಸ್ಟೆರೆಕ್ಟೊಮಿ ಎನ್ನುತ್ತಾರೆ. ಗರ್ಭಕೋಶ ತೆಗೆದರೆ, ನಿಮಗೆ ಈ ಸಮಸ್ಯೆ ಇರುವುದಿಲ್ಲ, ಹಾಗೂ ನಿಮ್ಮ ಹಳ್ಳಿಯ ಸಂಪ್ರದಾಯದಂತೆ, ಮುಟ್ಟಿನ ಸಂದರ್ಭದಲ್ಲಿ ಊರ ಹೊರಗೆ ಇರಬೇಕಾದ ಪರಿಸ್ಥಿತಿನೂ ಇಲ್ಲ – ಎಂದು ಸಲಹೆ ನೀಡುತ್ತಾರೆ.

ಊರಿನ ಕಟ್ಟಳೆಗಳಿಂದ ಎಷ್ಟೇ ಬೇಸತ್ತಿದ್ದರೂ, ಅದರ ವಿರುದ್ಧ ದನಿ ಎತ್ತಲಾಗದ ಮಹಿಳೆಯರಿಗೆ ಇದು ಸುಲಭ ಮಾರ್ಗದಂತೆ ಕಾಣುತ್ತದೆ. ಅದಕ್ಕೆ ಸಾಲ ಮಾಡಿ ಹಣ ಹೊಂದಿಸ ವೈದ್ಯರಿಗೆ ನೀಡಿ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಇದಲ್ಲದೆ, ಬೇರೆ ಬೇರೆ ಸಮುದಾಯದ ಹಲವಾರು ಹೆಂಗಸರು ಈ ವೈದ್ಯರ ಸಂಪರ್ಕಕ್ಕೆ ಬಂದು ಈ ಸರ್ಜರಿ ಮಾಡಿಸಿಕೊಂಸಿದ್ದಾರೆ. ಬೇರೆ ಚಿಕಿತ್ಸೆಯಿಂದ ಹಲವರ ಅನಾರೋಗ್ಯ ಗುಣಪಡಿಸಲು ಸಾಧ್ಯವಿದ್ದರೂ, ಇದೇ ಸರ್ಜರಿ ಮಾಡಿ ದುಡ್ಡು ಪಡೆದಿದ್ದಾರೆ. ಇದೆಲ್ಲವನ್ನೂ ತಜ್ಞರ ವರದಿ ವಿವರವಾಗಿ ನಮೂದಿಸಿ ಸರಕಾರಕ್ಕೆ ವರದಿ ಕೊಟ್ಟು ಒಂದು ವರ್ಷವಾಗಿದೆ. ಈ ಪ್ರಾಥಮಿಕ ಮಾಹಿತಿ ಇಟ್ಟುಕೊಂಡು ಇಡೀ ಪ್ರಕರಣಗಳ ಬಗ್ಗೆ ಒಂದು ಸಿ.ಐ.ಡಿ ತನಿಖೆ ಮಾಡಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಚಾರ್ಜ್ ಶೀಟ್ ಹಾಕಿಸಿ, ಶಿಕ್ಷೆ ಸಿಗುವಂತಾಗಬೇಕು ಎಂದು ವರದಿ ಹೇಳುತ್ತದೆ.

ಆದರೆ…

ಇದುವರೆಗೆ, ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಶಿಕ್ಷೆಯ (??) ಹೆಸರಿನಲ್ಲಿ ಪ್ರಸ್ತುತ ವೈದನನ್ನು ಬೀರೂರಿನಿಂದ ಜಿಲ್ಲಾ ಕೇಂದ್ರವಾದ ದಾವಣಗೆರೆಗೆ ವರ್ಗಾವಣೆ ಮಾಡಿದ್ದಾರೆ. ಸಿಐಡಿ ತನಿಖೆ ಬಗ್ಗೆ ಇದುವರೆಗೆ ತೀರ್ಮಾನ ಇಲ್ಲ. ನೆನಪಿರಲಿ, ವರದಿ ಮಂಡಿಸಿದ್ದು ಕಳೆದ ವರ್ಷ ಮಾರ್ಚ್ ನಲ್ಲಿ. ಇದುವರೆಗೆ ಏನೂ ಆಗಿಲ್ಲ. ಇಂತಹದೇ ಅನಗತ್ಯ ಹಿಸ್ಟೆರೆಕ್ಟೊಮಿ ಸರ್ಜರಿ ಮಾಡಿದ ಆರೋಪಗಳು ಗುಲ್ಬರ್ಗಾ ಸೇರಿದಂತೆ, ಹಲವು ಭಾಗಗಳಲ್ಲಿ ಕೇಳಿ ಬಂದಿವೆ. ಅಲ್ಲಿಯೂ ತನಿಖೆ ನಡೆಯುತ್ತಿದೆ. ಆದರೆ, ತಪ್ಪಿತಸ್ಥರಿಗೆ ಶಾಸ್ತಿ ಆಗುತ್ತದೆಂದು ಹೇಳಲಾಗದು.

ಈಗ ಹೇಳಿ, ಮಹಿಳೆಯರ ದೇಹದ ಮೇಲೆ ಚಿಕಿತ್ಸೆಯ ಹೆಸರಿನಲ್ಲಿ ದುಡ್ಡು ಮಾಡಿದವರ ಮೇಲೆ ಸೂಕ್ತ ತನಿಖೆ ನಡೆಸಿ ಶಿಕ್ಷೆ ಕೊಡಿಸಲಾಗದ ಸರಕಾರಕ್ಕೆ ಮಹಿಳಾ ದಿನ ಆಚರಿಸುವ ನೈತಿಕತೆ ಇದೆಯೆ?