Monthly Archives: February 2016

ಕಟ್ಟಿದ ಗಡಿಯಾರ ಮತ್ತು ಕಳಚಿದ ಮುಖವಾಡ!


-ಸಂತೋಷ್


ಅವು ಅಹಿಂದ ಕಾರ್ಯಕ್ರಮದ ದಿನಗಳು. ರಾಜ್ಯದ ಹಲವೆಡೆ ಅಹಿಂದ ಸಮಾವೇಶಗಳು ನಡೆದವು. ಆಗಿನ್ನೂ ಕಾಂಗ್ರೆಸ್ ಸೇರದ ಸಿದ್ದರಾಮಯ್ಯನವರಿಗೆ ಬೆಂಬಲವಾಗಿ ಕೆಲ ಕಾಂಗ್ರೆಸ್ ಶಾಸಕರು ಜನರನ್ನು ಒಟ್ಟು ಮಾಡಿ ಸಭೆಗಳಿಗೆ ಕಳುಹಿಸುತ್ತಿದ್ದರು. ಕೆಲವರು ಬಸ್ ವ್ಯವಸ್ಥೆ ಮಾಡಿದ್ದರು. ಹಲವೆಡೆ ಕೆ.ಎಸ್.ಆರ್.ಟಿ.ಸಿಗೆ ಬೃಹತ್ ಮೊತ್ತದ ದುಡ್ಡು ಕಟ್ಟಿ ಬಸ್ ಗಳನ್ನು ಬಾಡಿಗೆಗೆ ತಂದವರು ಸತೀಶ್ ಜಾರಕಿಹೊಳಿ ಬಳಗSiddu-2. ಆಗ ಜಾರಕಿಹೊಳಿ ಸಿದ್ದರಾಮಯ್ಯ ಜೊತೆ ಗುರುತಿಸಿಕೊಂಡು ದಳ ತೊರೆದಿದ್ದರು. ರಾಜ್ಯದ ನಾನಾ ಕಡೆ ಸಮಾವೇಶಗಳು ಯಶಸ್ವಿಯಾಗಿ ನಡೆಯಲು ನೂರಾರು ಜನರ ಶ್ರಮವಿತ್ತು. ಅವರಲ್ಲಿ ಅನೇಕರಿಗೆ ಸಿದ್ದರಾಮಯ್ಯ ಮುಂದೆ ಮುಖ್ಯಮಂತ್ರಿಯಾಗುತ್ತಾರೆ ಎಂಬ ಯೋಚನೆ ಇದ್ದಿರಬಹುದು, ಆದರೆ ಅವರು ಅಧಿಕಾರಕ್ಕೆ ಬಂದರೆ, ನಾವೊಂದಿಷ್ಟು ಲಾಭ ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರ ಇದ್ದದ್ದಂತೂ ಕೆಲವೇ ಕೆಲವರಿಗೆ.

ಕಾಲ ಉರುಳಿತು. ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದರು. ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆ ಜಿದ್ದಾಜಿದ್ದಿನ ಕಣ. ಸಿದ್ದರಾಮಯ್ಯನವರಿಗೆ ಬಹುಶಃ ಇನ್ನೂ ನೆನಪಿರಬಹುದು, ನಾಡಿನ ಮೂಲೆ ಮೂಲೆಯಿಂದ ಅವರ ಬಗ್ಗೆ ಒಲವು, ಅಭಿಮಾನ ಇಟ್ಟುಕೊಂಡಿದ್ದ ನೂರಾರು ಮಂದಿ ತಮ್ಮ ಕೈಲಾದಷ್ಟು ಹಣವನ್ನು ಸ್ನೇಹಿತರ ಮೂಲಕ ಅವರ ಗೆಲುವಿಗೆ ಕಳುಹಿಸಿದರು. ಒಂದು ಸಾವಿರದಿಂದ ಐದು ಸಾವಿರ ರೂಗಳ ವರೆಗೆ ಕೊಟ್ಟವರ ಸಂಖ್ಯೆ ದೊಡ್ಡದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ಹೊತ್ತಿಗೆ ಅವರಲ್ಲಿ ಕೆಲವರು ಅಸುನೀಗಿರಬಹುದು. ಅವರಲ್ಲಿ ಬಹುಪಾಲು ಮಂದಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದರಿಂದ ವೈಯಕ್ತಿಕವಾಗಿ ಯಾವ ಲಾಭವೂ ಬೇಕಿರಲಿಲ್ಲ. ಅವರಲ್ಲಿ ಬಹುತೇಕರು ಕುರುಬರೇ ಇರಬಹುದು, ಆದರೆ ಜಾತಿ ಒಂದೇ ಕಾರಣಕ್ಕೆ ಅಭಿಮಾನ ಇರಲಿಲ್ಲ. (ಜಾತಿ ಮಾತ್ರ ಕಾರಣಕ್ಕೆ ಅಭಿಮಾನ ಪಡುವುದಾಗಿದ್ದರೆ, ಕೆ.ಎಸ್. ಈಶ್ವರಪ್ಪ ಉಪಮುಖ್ಯಮಂತ್ರಿಯಾದಾಗ ಆ ಸಮುದಾಯ ಸಂಭ್ರಮಿಸಬೇಕಿತ್ತು. ಅಥವಾ ಮತ್ತೊಬ್ಬ ನಾಯಕ ಸಿಕ್ಕ ಎಂದು ಖುಷಿಪಡ ಬಹುದಿತ್ತು. ಹಾಗೇನೂ ಕಾಣಲಿಲ್ಲ). ಸಿದ್ದರಾಮಯ್ಯನವರನ್ನು ಜಾತಿ ಹೊರತಾಗಿ ಇಷ್ಟ ಪಡುವ ಒಂದು ದೊಡ್ಡ ವರ್ಗವಿತ್ತು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಮೊದಲ ದಿನಗಳಲ್ಲಿ ಅವರು ಬೆಂಗಳೂರ ಹೊರಗೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾಗ ಅಕ್ಕ ಪಕ್ಕದಲ್ಲಿ ಎಚ್.ಎಂ.ರೇವಣ್ಣ ನಂತಹವರು ಕಾಣುತ್ತಿದ್ದರು. ಸಭೆಯಲ್ಲಿ ಹಾಜರಿದ್ದ ಜನ, ರೇವಣ್ಣನೂ ಅವರದೇ ಜಾತಿಯವರಲ್ಲವೇ, ಅದಕ್ಕೆ ಯಾವಾಗಲೂ ಜೊತೆಯಲ್ಲೇ ಇರ್ತಾರೆ ಎಂದು ಮಾತನಾಡಿಕೊಂಡರು. ಆದರೆ, ಅದೇ ಊರುಗಳಿಗೆ ಕೆಲ ತಿಂಗಳುಗಳ ನಂತರ ಸಿಎಂ ಭೇಟಿ ಕೊಟ್ಟಾಗ, ರೇವಣ್ಣ ಇರುತ್ತಿರಲಿಲ್ಲ. ಆ ಸ್ಥಾನದಲ್ಲಿ ಕಾಣುತ್ತಿದ್ದ ಮುಖ ಭೈರತಿ ಬಸವರಾಜು. ಅವರು ವಿದಾನಸಭೆ ಸದಸ್ಯ. ಅವರ ಸೋದರ ಸಂಬಂಧಿ ಭೈರತಿ ಸುರೇಶ್ ವಿಧಾನ ಪರಿಷತ್ ಸದಸ್ಯ. ಕಾಂಗ್ರೆಸ್ ನ ಕೆಲ ಸದಸ್ಯರು ಪಕ್ಷದ ನಿರ್ದೇಶನದ ವಿರುದ್ಧ ಮತ ನೀಡಿ, ಅರ್ಥಾತ್ ಹಣಕ್ಕೆ ತಮ್ಮ ಮತ ಮಾರಿಕೊಂಡು, ಆತನನ್ನು ಗೆಲ್ಲಿಸಿದ್ದರು. ಹೆಬ್ಬಾಳ್ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು ಭೈರತಿ ಸುರೇಶ್ ರನ್ನು. ರೇವಣ್ಣ ಬಹಳ ಕಾಲ ಜನರ ಮಧ್ಯೆ ಇದ್ದು ರಾಜಕಾರಣ ಮಾಡಿಕೊಂಡು ಬಂದವರು. ಆದರೆ ಭೈರತಿಯವರ ವ್ಯವಹಾರ ರಿಯಲ್ ಎಸ್ಟೇಟ್. ಹಣವಂತರು ಅಧಿಕಾರಕ್ಕೆ ಹಾತೊರೆದು ರಾಜಕಾರಣಕ್ಕೆ ಬಂದರೆ ಆಗುವ ಅನಾಹುತಗಳು ಅನೇಕ.

ಹೀಗೆ ಹೊಸ ಮುಖಗಳ ಪ್ರವೇಶದ ಪರಿಣಾಮವೇ ಕೈಗೆ ದುಬಾರಿ ಬೆಲೆಯ ವಾಚ್ ಬಂತು. ಕಣ್ಣು ತಂಪಾಗಿಸಲು ಲಕ್ಷಗಟ್ಟಲೆ ಬೆಲೆ ಬಾಳುವ ಗ್ಲಾಸ್ ಬೇಕಾಯ್ತು. (ಪಾಪ ಇವರ ಅಹಿಂದ ಸಮಾವೇಶಗಳಿಗೆ ದುಡ್ಡು ಹೊಂದಿಸಿಕೊಟ್ಟು ಸಾಮಾಜಿಕ ನ್ಯಾಯದ ಹರಿಕಾರ ಮುಖ್ಯಮಂತ್ರಿಯಾಗಲಿ ಎಂದು ಆಶಿಸಿದ್ದ ಸತೀಶ್ ಜಾರಕಿಹೊಳಿ, ಬುದ್ಧ ಹಾಗೂ ಅಂಬೇಡ್ಕರ್ ಭಾವಚಿತ್ರಗಳನ್ನು ಇಟ್ಟುಕೊಂಡು ಸಾಮಾಜಿಕ ಜಾಗೃತಿ ಪ್ರಯತ್ನಿಸುತ್ತಿದ್ದಾರೆ. ಸ್ಮಶಾನದಲ್ಲಿ ಮಲಗುವ ಮೂಲಕ ಮೂಢನಂಬಿಕೆಗಳನ್ನು ತೊಡೆದು ಹಾಕಲು ತಮ್ಮ ಮಿತಿಯೊಳಗೇ ಪ್ರಯತ್ನಿಸುತ್ತಿದ್ದಾರೆ.) ಕೆಲ ಕಾಲದ ವರೆಗೆ ಇದೆಲ್ಲವೂ ಕೇವಲ ಗಾಳಿಸುದ್ದಿಯಾಗಿಯೇ ಇದ್ದವು. ಆದರೆ, ಜನ ಅಸಹ್ಯ ಪಡುವ ಹಂತಕ್ಕೆ ಹೋಗಲು ಕಾರಣ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಗಳಿಗೆ ಉತ್ತರಿಸಿದ ರೀತಿ, ಮತ್ತು ಹಾಗೆ ಉತ್ತರಿಸುವಾಗ ಹಿಂದೆ ನಿಂತು ಗಹಗಹಿಸಿದರಲ್ಲ ಅವರು ಇಡೀ ಪ್ರಕರಣದಲ್ಲಿ ಮುಖ್ಯಮಂತ್ರಿಯನ್ನು ಖಳನಾಯಕನನ್ನಾಗಿಸಿದರು.

“ನನಗೆ ಈ ವಾಚ್ ಐದು ಲಕ್ಷ ರೂಪಾಯಿ ಕೊಡಿಸಿರಪ್ಪಾ ಸಾಕು…ಈ ಕನ್ನಡಕಕ್ಕೆ 50,000 ರೂ ಕೊಡಿಸಿ ಸಾಕು” – ಅದನ್ನು ಭಾರೀ ಚಾಲಾಕಿನ ಉತ್ತರ ಅಂದುಕೊಂಡಿರಾ ಸಿದ್ದರಾಮಯ್ಯ? ನಿಮ್ಮ ಹಿಂದೆ ನಿಂತವರು ನಿರ್ಲಜ್ಜರಾಗಿ ನಕ್ಕಿರಬಹುದು, ಆದರೆ ಜನರು ನಿಮ್ಮ ಉತ್ತರದ ಧಾಟಿಯನ್ನು ಅದೇ ರೀತಿ ಸ್ವೀಕರಿಸಲಿಲ್ಲ. “ಇವನಿಗ್ಯಾಕೆ ಬೇಕಿತ್ತು ಇಂತಹ ಶೋಕಿ? ಅದೂ 60-70 ಲಕ್ಷ ರೂಪಾಯಿದ್ದಂತೆ..ವಾಚ್..ವಜ್ರದ ಹರಳು ಇದ್ದಾವಂತೆ” – ಇದು ಸಾಮಾನ್ಯ ಜನರು ಇಡೀ ಪ್ರಕರಣವನ್ನು ನೋಡುವ ಬಗೆ. ಜನರ ಭಾವನೆ ಹೇಗಿರಬಹುದು ಎಂದು ಒಂದಿಷ್ಟೂ ಊಹಿಸದೆ, ನೀವು ಹಾಗೆ ಪ್ರತಿಕ್ರಿಯೆ ಕೊಟ್ಟಿರಲ್ಲ, ಅಷ್ಟು ಸಾಕು ನೀವು ಜನ ಸಾಮಾನ್ಯರನ್ನು ಭೇಟಿಯಾಗಿ, ಅವರೊಂದಿಗೆ ಮಾತನಾಡಿ ಎಷ್ಟೋ ದಿನಗಳಾದವು ಎಂದು ತಿಳಿಯುತ್ತದೆ.

ನೀವು ಹೇಳಿದಂತೆ, ಆ ಗಡಿಯಾರದ ಬೆಲೆ ಐದು ಲಕ್ಷ ರೂಪಾಯಿಗಳೇ ಇರಲಿ. ಆದರೆ, ಜನರು ತಮ್ಮ ಮುಖ್ಯಮಂತ್ರಿ ಸರಳವಾಗಿರಬೇಕೆಂದು ಬಯಸುತ್ತಾರೆ. ತ್ರಿಪುರ ಮುಖ್ಯಮಂತ್ರಿ ಬಗ್ಗೆ ನಮ್ಮ ಜನರಿಗೆ ಗೊತ್ತಿರುವುದು ಅವರ ಸರಳತೆ. ಮೊನ್ನೆ ಮೊನ್ನೆ ತೀರಿಕೊಂಡ ಎ.ಬಿ.ಬರ್ಧನ್ ಜೀವನ ಪೂರ್ತಿ ಸಂಪಾದಿಸಿದ್ದು ಒಂದು ಟ್ರಂಕ್ ಮತ್ತು ಹಾಸಿಗೆ. ಅಂತಹ ಸರಳತೆಯನ್ನು ಜನತೆ ಎಲ್ಲರಿಂದ ನಿರೀಕ್ಷಿಸುವುದಿಲ್ಲ. ನಾಳೆ ದಿನ ಯಾರಾದರೂ ಮೀಡಿಯಾ ಮುಂದೆ ನಿಂತು ಆರ್.ವಿ.ದೇಶಪಾಂಡೆ ಕೈಯಲ್ಲಿರುವ ಉಂಗುರದ ಬೆಲೆ ಒಂದು ಕೋಟಿ ಎಂದರೂ, ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅಥವಾ ಡಿ.ಕೆ.ಶಿವಕುಮಾರ್ ಹತ್ರ ಕೋಟಿ ಬೆಲೆ ಬಾಳುವ ಕಾರು ಇದೆ ಎಂದರೆ, ಯಾರೂ ಮನಸ್ಸಿಗೆ ಬೇಸರ ಮಾಡಿಕೊಳ್ಳಲ್ಲ. ಆದರೆ, ನೀವೀಗ ಎಂತಹ ಮಟ್ಟಕ್ಕೆ ಇಳಿದು ಬಿಟ್ಟೀದಿರೆಂದರೆ, ಯಾವುದೇ ಪತ್ರಿಕೆ ನಿಮ್ಮ ಒಂದು ಜೊತೆ ಶೂ ಬೆಲೆ ಒಂದೂವರೆ ಲಕ್ಷ ರೂಪಾಯಿ ಎಂದರೆ ನಂಬಿ ಬಿಡುತ್ತಾರೆ. “ಓಹ್..ಇರಬಹುದು. ಅಂತಹವು ಮೂರ್ನಾಲ್ಕು ಜೊತೆ ಇರಬಹುದು. ಒಂದೇ ಇಟ್ಟುಕೊಂಡರೆ, ಅದನ್ನೇ ದಿನಾSiddu-1ಲೂ ಹಾಕೋಕೆ ಆಗುತ್ತಾ” ಎಂದು ತೀರ್ಮಾನಕ್ಕೆ ಬರುತ್ತಿದ್ದಾರೆ.

ಅಷ್ಟೇ ಅಲ್ಲ, ಕುಮಾರಸ್ವಾಮಿ ಇದು ಕದ್ದ ವಾಚ್ ಎಂದು ಆರೋಪಿಸಿದಾಗ, ಜನರು “ಹೌದು..ಇರಲೂ ಬಹುದು” ಎಂದು ಸಂಶಯಿಸುತ್ತಿದ್ದಾರೆ. ಏಕೆಂದರೆ, ಅವರು ವಾಚ್ ಬಗ್ಗೆ ಕೊಟ್ಟ ಸಮಜಾಯಿಷಿ ಜನ ಸಾಮಾನ್ಯರಲ್ಲಿ ಸಮಾಧಾನ ತಂದಿಲ್ಲ. ಒಂದಿಷ್ಟು ತಿಂಗಳುಗಳ ಹಿಂದೆ, ಮೈಸೂರು ಬಳಿ ಪೊಲೀಸರೇ ಭಾಗಿಯಾಗಿದ್ದ ಕಳ್ಳತನವನ್ನು ಜನರು ಮರೆತಿಲ್ಲ. ಭಾಗಿಯಾಗಿದ್ದ ಸಣ್ಣ ಪುಟ್ಟ ಅಧಿಕಾರಿಗಳು ಶಿಕ್ಷೆ ಅನುಭವಿಸುತ್ತಿದ್ದಾರೆ, ಆದರೆ ಹಿರಿಯ ಅಧಿಕಾರಿ ಆರಾಮಾಗಿದ್ದಾರೆ. ಕ್ಷುಲ್ಲಕ ಘಟನೆಯಂತೆ ಆರಂಭವಾದ ಪ್ರಕರಣ ದಿನೇ ದಿನೇ ವಿಸ್ತಾರವಾಗುತ್ತಿದೆ. ಇದಕ್ಕೆಲ್ಲಾ ಕಾರಣ, ಸ್ವತಃ ಮುಖ್ಯಮಂತ್ರಿ ಹಾಗೂ ಅವರ ಸುತ್ತಲಿನವರು. ಮಕ್ಕಳು ದುಶ್ಚಟ ಕಲಿತರೆ ಸಹವಾಸ ದೋಷ ಎನ್ನಬಹುದು ಆದರೆ, ವ್ಯಕ್ತಿ ಭ್ರಷ್ಟನಾಗಲು, ಶೋಕಿಲಾಲನಾಗಲು ಸಹವಾಸ ಕಾರಣ ಅಲ್ಲ, ವಾಂಛೆ ಹಾಗೂ ದುರಾಸೆಗಳು ಕಾರಣ.

ಮುಖ್ಯಮಂತ್ರಿಯ ವಾಚ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ, ಸಿದ್ದರಾಮಯ್ಯನನ್ನು ಇದುವರೆಗೆ ಬೆಂಬಲಿಸಿಕೊಂಡು ಬಂದವರ ದನಿ ಬಂದ್ ಆದಂತಿದೆ. ತಮಗೂ, ಈ ಘಟನೆಗೂ ಸಂಬಂಧವೇ ಇಲ್ಲವೆಂಬಂತೆ ಮೌನವಾಗಿದ್ದಾರೆ. ಹಾಗಂತ, ಅವರಾರಿಗೂ ಈ ಪ್ರಕರಣ ಕಾರಣ ಸಿದ್ದರಾಮಯ್ಯನವರ ಬಗ್ಗೆ ಸಿಟ್ಟು, ಬೇಸರ ಬಂದಿಲ್ಲ ಎಂದಲ್ಲ. ಕೆಲವರು ತಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ವ್ಯಕ್ತ ಪಡಿಸುವ ಗೋಜಿಗೆ ಹೋಗದಿರಬಹುದು, ಅಥವಾ ಕೆಲ ಆತ್ಮೀಯರು ಖಾಸಗಿಯಾಗಿ ಮುಖ್ಯಮಂತ್ರಿಯೊಂದಿಗೆ ತಮ್ಮ ಸಿಟ್ಟು ವ್ಯಕ್ತಪಡಿಸಿರಬಹುದು. ಆದರೆ, ಅಷ್ಟು ಸಾಲದು. ಮುಂದೊಂದು ದಿನ, ಪಾಪಪ್ರಜ್ಞೆ ಕಾಡದೇ ಇರಲು ಈಗ ಮಾತನಾಡಬೇಕು. ಸಮಾಜದಲ್ಲಿ ಒಳ್ಳೆಯವರ ಸಂಖ್ಯೆ ಹೆಚ್ಚಿದೆ. ಅವರು ಹೆಚ್ಚೆಚ್ಚು ಮಾತನಾಡಬೇಕು.

ಕಾಶ್ಮೀರ ಪ್ರತ್ಯೇಕತಾವಾದ, ಪಾಕಿಸ್ತಾನ್ ಜಿಂದಾಬಾದ್ ಮತ್ತು ಸಂವಿಧಾನ

Naveen Soorinje


ನವೀನ್ ಸೂರಿಂಜೆ


 

 

ಒಂದು ವೇಳೆ ಜೆಎನ್ ಯು ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದೇ ಆದಲ್ಲಿ ಅದು ದೇಶದ್ರೋಹ ಆಗುತ್ತದೆಯೇ? ಅಷ್ಟಕ್ಕೂJNU ಪಾಕಿಸ್ತಾನವು ಭಾರತದ ಅಧಿಕೃತ ಶತ್ರು ರಾಷ್ಟ್ರ ಎಂದು ಭಾರತದ ಸಂವಿಧಾನವೇನೂ ದಾಖಲಿಸಿಲ್ಲ. ಅಂತಹ ಕಾನೂನುಗಳೂ ಇಲ್ಲ. ಪಾಕಿಸ್ತಾನದ ಜೊತೆ ನಮ್ಮ ಸಂಬಂಧ ಸಮಸ್ಯಾತ್ಮಕವಾಗಿದೆ ಎಂಬುದೇನೋ ನಿಜ. ಅಂದಮಾತ್ರಕ್ಕೆ ಆ ದೇಶ ಶಾಶ್ವತವಾಗಿ ನಮ್ಮ ಅಹಿತ ನೆರೆಹೊರೆಯಾಗಿಯೇ ಇರುತ್ತದೆ ಎಂದು ಕಲ್ಪಿಸಿಕೊಳ್ಳುವುದು ಕೇವಲ ಭ್ರಾಂತಿಯಾಗುತ್ತದೆ. ಸುಧಾರಣೆಗೆ ಅವಕಾಶಗಳು ಇದ್ದೇ ಇರುತ್ತವೆ. ಪ್ರಧಾನಿ ಮೋದಿಯವರು ಪಾಕ್ ನೇತಾರ ನವಾಜ್ ಶರೀಫರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಹಠಾತ್ತನೆ ಆ ದೇಶಕ್ಕೆ ಭೇಟಿ ನೀಡಿರುವುದು ಅಂತಹ ಸಹಜ ಭವಿಷ್ಯದ ಅಪೇಕ್ಷೆಯಿಂದಲೇ.

ಒಂದುವೇಳೆ ಸಧ್ಯೋಭವಿಷ್ಯದಲ್ಲಿ ಸಂಬಂಧಗಳು ಸುಧಾರಣೆಗೊಂಡು, ಸಹಜತೆ ನೆಲೆಸಿದಲ್ಲಿ ಮತ್ತು ಅಂತಹ ಸಂದರ್ಭದಲ್ಲಿ ಪಾಕ್ ಪರ ಘೋಷಣೆಗಳು ಕೂಗಲ್ಪಟ್ಟರೆ ಅವುಗಳ ಸ್ವೀಕರಣೆ ಹೇಗಿರುತ್ತದೆ? ನಮ್ಮಲ್ಲಿ ಅಮೇರಿಕಾ ಪರ, ಇಸ್ರೇಲ್ ಪರ ಅಥವಾ ಇಂಗ್ಲಂಡ್ ಪರ ಘೋಷಣೆ ಕೂಗಿದ್ದು ಎಂದಾದರೂ ದೇಶದ್ರೋಹವೆಂದು ಪರಿಗಣಿತವಾಗಿದ್ದಿದೆಯೇ? ಬೇರೆ ದೇಶಗಳ ಮಾನವ ಹಕ್ಕುಗಳಿಗೆ ಧಕ್ಕೆಯಾದಾಗ ಭಾರತ ಸೇರಿದಂತೆ ಯಾವುದೇ ರಾಷ್ಟ್ರವು ಸಂತ್ರಸ್ತ ದೇಶದ ಪರ ವಹಿಸುವುದು ವಾಡಿಕೆಯಲ್ಲವೇ? ಭಾರತ ಪಾಕಿಸ್ತಾನ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಾಸೀಂ ಅಕ್ರಮ್ ಅಥವಾ ಶಾಹಿದ್ ಅಫ್ರೀದಿ ಮಿಂಚುತಿದ್ದಾಗ ಅಭಿಮಾನದಿಂದ ಚಪ್ಪಾಳೆ ತಟ್ಟುವುದು, ಘೋಷಣೆ ಕೂಗುವುದು ಅಥವಾ ಕೇಕೆ ಹಾಕುವುದು ದೇಶದ್ರೋಹವಾಗುತ್ತದೆಯೇ? ಕೆಲ ದಿನಗಳ ಹಿಂದೆ ಭಾರತದ ಕ್ರಿಕೆಟಿಗ ವಿರಾಟ್ ಕೋಹ್ಲಿಯ ಪಾಕ್ ಅಭಿಮಾನಿಯೊಬ್ಬ ಅಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ, ಅಭಿಮಾನ ವ್ಯಕ್ತಪಡಿಸಿದ್ದಕ್ಕಾಗಿ ಪೋಲಿಸರಿಂದ ಬಂಧಿಸಲ್ಪಟ್ಟಿದ್ದಾನೆ ಎಂದು ವರದಿಯಾಗಿದೆ. ಇದು ಜೆ.ಎನ್.ಯು ಕ್ಯಾಂಪಸ್ಸಿನಲ್ಲಿ ನಮ್ಮ ಪೋಲೀಸರು ವರ್ತಿಸಿದ ರೀತಿ ಅಥವಾ ನಂತರದಲ್ಲಿ ಇಲ್ಲಿಯ ಬಲಪಂಥೀಯ ಸಂಘಟನೆಗಳು ಮತ್ತು ಅರ್ನಾಬ್ ಗೋಸ್ವಾಮಿ ಥರದ ಹೈಪರ್ ರಾಷ್ಟ್ರೀಯವಾದಿಗಳ ಅತಿರೇಕದ ವರ್ತನೆಗಳಿಗಿಂತ ಭಿನ್ನವಾಗಿದೆಯೇ? ಅಂದರೆ ಒಂದು ಘೋಷಣೆಗೆ ಕುಸಿದು ಬೀಳುವಷ್ಟು ದುರ್ಬಲವಾಗಿವೆಯೇ ಆಧುನಿಕ ರಾಷ್ಟ್ರಗಳು?

ಅಷ್ಟಕ್ಕೂ ಒಂದು ದೇಶದಲ್ಲಿ ಮತ್ತೊಂದು ದೇಶದ ಪರ ಘೋಷಣೆ ಕೂಗುವ ಕನಿಷ್ಠ ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಲ್ಲವೇ? ಯಾವುದೇ ದೇಶದKanhaiya-Kumar-JNU ಆಡಳಿತೆ ನಡೆಯುವುದು ಆ ನೆಲದ ಕಾನೂನಿಗೆ ಅನುಗುಣವಾಗಿಯೇ ಹೊರತು ಅಲ್ಲಿಯ ಯಾವುದೇ ಪುಂಡು ದೇಶಭಕ್ತರ ಅಥವಾ ಮೀಡಿಯಾ ಜಡ್ಜುಗಳ ಖಯಾಲಿಗೆ ಅನುಗುಣವಾಗಿ ಅಲ್ಲ. ಮಾನಹಾನಿ, ರಾಷ್ಟ್ರದ್ರೋಹ ಅಥವಾ ಭಾವನೆಗಳಿಗೆ ಘಾಸಿ ಮೊದಲಾದ ನೆಪಗಳ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಾಂವಿಂಧಾನಿಕ ಉಪಬಂಧಗಳನ್ನು ಮೀರಿ ಮಿತಿಗಳನ್ನು ಹೇರುವ ಪ್ರಯತ್ನಗಳು ನಮ್ಮ ದೇಶದಲ್ಲಿ ನಡೆಯುತ್ತಲೇ ಇವೆ. ಜೆ.ಎನ್.ಯು ಪ್ರಕರಣವೂ ಅಂತಹದ್ದೇ ಪ್ರಯತ್ನದ ಒಂದು ಭಾಗವಾಗಿದೆ. ದೇಶದ ಖ್ಯಾತ ಕಾನೂನು ತಜ್ಞ ಮತ್ತು ಮಾಜಿ ಅಟಾರ್ನಿ ಜನರಲ್ ಶ್ರೀ ಸೋಲಿ ಸೊರಾಬ್ಜಿಯವರು ಜೆ.ಎನ್.ಯು ಕ್ಯಾಂಪಸ್ಸಿನಲ್ಲ ಕೂಗಲ್ಪಟ್ಟ ಘೋಷಣೆಗಳು ಸಮಸ್ಯಾತ್ಮಕವಾಗಿದ್ದರೂ ಅವು ದೇಶದ್ರೋಹದ ಆಪಾದನೆಯ ಪರಿಧಿಯಲ್ಲಿ ಬರುವುದಿಲ್ಲ ಎಂಬುವುದಾಗಿ ಅಭಿಪ್ರಾಯಪಟ್ಟಿದ್ದಾರೆ. ಸುಪ್ರೀಂ ಕೋರ್ಟ್ ಕೇದಾರನಾಥ್ ಪ್ರಕರಣ (1962) ದಲ್ಲಿ ಸೆಕ್ಷನ್ ೧೨೪ ರ ಸಾಂವಿಧಾನಿಕ ಅನ್ವಯಿಕತೆಯನ್ನು ಸ್ಪಷ್ಟಪಡಿಸಿದೆ. ಅಲ್ಲಿಯ ತೀರ್ಪಿನಲ್ಲಿ, ಸರ್ವೋಚ್ಚ ನ್ಯಾಯಲಯವು ಸೆಡೀಶನ್ ವಿಧಿಯ ವ್ಯಾಪ್ತಿಯನ್ನು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆjnu-kanhaiya-kumar-arrest-protest ಮತ್ತು ಹಿಂಸೆಗೆ ಪ್ರಚೋದನೆ ನೀಡಬಲ್ಲ ಮಾತು ಅಥವಾ ಕೃತ್ಯಗಳಿಗೆ ಮಾತ್ರವೇ ಸೀಮಿತಗೊಳಿಸಿ ಆದೇಶ ಹೊರಡಿಸಿದೆ. ಅಂದರೆ, ಸೋರಾಬ್ಜಿಯವರು ಅಭಿಪ್ರಾಯ ಪಡುವಂತೆ, ಕೇವಲ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗುವುದು ನಾವೇ ಒಪ್ಪಿಕೊಂಡಿರತಕ್ಕಂತಹ ಕಾನೂನು ಕಟ್ಟಳೆಗಳ ಪ್ರಕಾರ ರಾಷ್ಟ್ರದ್ರೋಹ ಅಲ್ಲ. ಹೆಚ್ಚೆಂದರೆ ಅದು ಒಂದು ಗುಂಪಿಗೆ ಸಿಟ್ಟು ತರಬಹುದಾದ, ಅಸಮಾಧಾನ ಉಂಟುಮಾಡಬಹುದಾದ ಆದರೆ ಸಹಜವಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಒಂದು ಸ್ವರೂಪ ಅಷ್ಟೇ. ‘ನೋವುಂಟುಮಾಡುತ್ತದೆ’ ಎಂಬುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಯ ನಿರ್ಧಾರಕ್ಕೆ ಒಂದು ಮಾನದಂಡ ಅಗುವುದು ಸ್ಪಷ್ಟವಾಗಿ ಅಪ್ರಜಾಸತ್ತಾತ್ಮಕ. ದಕ್ಷಿಣ ಆಫ್ರಿಕಾದ ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರ ಹೇಳಿಕೆಯೊಂದನ್ನು ಘನವೆತ್ತ ಕಾನೂನು ಚಿಂತಕ ಫಾಲಿ ಎಸ್ ನಾರಿಮನ್ ಹೀಗೆ ಉಲ್ಲೇಖಿಸುತ್ತಾರೆ: “Speech is really free only when it hurts”.

ಪ್ರಜೆಗಳು ತಮ್ಮ ರಾಷ್ಟ್ರದ ವಿರುದ್ಧ ಘೋಷಣೆ ಕೂಗುವಂತಹ ಘಟನೆಗಳು, ಚಳುವಳಿಗಳು ವಿಶ್ವದಾದ್ಯಂತ ನಡೆಯುತ್ತಲೇ ಇವೆ. ಅದನ್ನು ಜಗತ್ತಿನ ನಾಗರಿಕ ರಾಷ್ಟ್ರಗಳು ಬಹಳ ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾ ಬಂದಿವೆ. ಅಂಥ ವರ್ತನೆಗಳನ್ನು ಅಭಿವ್ಯಕ್ತಿ ಸ್ವಾಂತಂತ್ರ್ಯದ ಭಾಗವಾಗಿಯೇ ಅವು ಪರಿಗಣಿಸುತ್ತಿವೆ. ಸ್ಕಾಟ್ಲಂಡ್ ಪ್ರಾಂತ್ಯದಲ್ಲಿ ಅದು ಬ್ರಿಟನ್ ದೇಶದಿಂದ ಪ್ರತ್ಯೇಕವಾಗುವ ದಿಕ್ಕಿನಲ್ಲಿ ಹೋರಾಟಗಳು ನಡೆಯುತ್ತಲೇ ಇವೆ. ಕೆನಾಡದಿಂದ ಕ್ಯೂಬೆಕ್, ಸ್ಪೇಯ್ನ್ ದೇಶದಿಂದ ಬಾಷ್ಕ್ ಪ್ರಾಂತ್ಯ ಬೇರೆಯಾಗಲು ಯತ್ನಿಸುತ್ತಿವೆ. ಇಂತಹ ಸಂದರ್ಭದಲ್ಲಿ ಆ ದೇಶಗಳು ವರ್ತಿಸುತ್ತಿರುವ ರೀತಿ ಭಾರತಕ್ಕೆ ಒಂದು ಮಾದರಿ. ಆ ದೇಶಗಳು ಸೆಡೀಷನ್ ವಿಧಿಯನ್ನು ನಮ್ಮಂತೆ ಸ್ವೇಚ್ಚೆಯಿಂದ ಬಳಸುತ್ತಿವೆಯೇ ಎಂಬುವುದನ್ನು ನಮ್ಮ ಮೀಡಿಯಾದ ಪ್ರಭೃತಿಗಳು,jnu-agitation ಬಲಪಂಥೀಯ ಸಂಘಟನೆಗಳು ನೋಡಬೇಕು. ಸ್ಕಾಟ್ಲೆಂಡ್ ಚಳುವಳಿಯ ಮಾದರಿಯಲ್ಲಿ, ನಮ್ಮ ದೇಶದಲ್ಲಿ ಕಾಶ್ಮೀರ ಪ್ರಾಂತ್ಯವು ಪ್ರತ್ಯೇಕವಾಗಬೇಕೆಂದು ಕೆಲವರು ಪ್ರತಿಪಾದಿಸುತ್ತಿದ್ದಾರೆ. ಅಂತಹ ಸಂಧರ್ಭದಲ್ಲಿ ಸ್ಕಾಟ್ಲಂಡಿನಲ್ಲಿ ಬ್ರಿಟನ್ ವಿರುದ್ಧ ಘೋಷಣೆಗಳು ಮೊಳಗಿದಂತೆ ಇಲ್ಲಿ ಭಾರತ ವಿರೋಧಿ ಕೂಗುಗಳು ಕೇಳಬಹುದು. ಮತ್ತು ಅದು ಪ್ರತ್ಯೇಕತಾ ಚಳುವಳಿಗಳ ಸಹಜ ಪ್ರವೃತ್ತಿಯೇ ಆಗಿರುತ್ತದೆ. ಪ್ರತ್ಯೇಕತೆಯ ಬೇಡಿಕೆಗಳನ್ನು, ಅಲ್ಲಿಯ ಜನರ ಆಶೋತ್ತರಗಳನ್ನು ನಾವು ವಸ್ತುನಿಷ್ಠ ನೆಲೆಯಲ್ಲಿ ನಾವು ಅನುಸಂಧಾನ ಮಾಡಬೇಕೇ ಹೊರತು ರಾಷ್ಟ್ರದ್ರೋಹದ ಪ್ರಕರಣಗಳಂತಹ ಕ್ಷುಲ್ಲಕ ವಿಧಾನಗಳಿಂದ ಅಲ್ಲ. ಅಂತಹ ಪ್ರಾಂತ್ಯದ ಸರ್ವತೋಮುಖ ಅಭಿವೃಧ್ಧಿಗೆ ನಾವು ಮಾಡಿರುವ, ಮಾಡುತ್ತಿರುವ ಅಥವಾ ಮಾಡಬಹುದಾದ ನಮ್ಮ ಪ್ರಯತ್ನಗಳು ಪ್ರತ್ಯೇಕತಾ ಬೇಡಿಕೆಗಳಿಗೆ ಉತ್ತರವಾಗಬೇಕು. ಅವಾಗಲೇ ಸ್ಕಾಟ್ಲಂಡ್ ನಲ್ಲಿ ನಡೆದ ಜನಮತಗಣನೆಯಲ್ಲಿ ಹೇಗೆ ಬಹು ಸಂಖ್ಯೆಯ ಸ್ಕಾಟಿಷ್ ಜನರು ಪ್ರತ್ಯೇಕತೆಯ ವಿರುದ್ಧ ಮತ ಹಾಕಿದರೋ ಅಂತಹ ಬೆಳವಣಿಗೆಗಳು ನಮ್ಮಲ್ಲೂ ನಡೆಯುತ್ತವೆ. ಆದರೆ ಕಾಶ್ಮೀರ ಪ್ರಾಂತ್ಯದ ಅಭಿವೃದ್ಧಿ ಹಾಗೂ ಅಲ್ಲಿಯ ಮಾನವ ಹಕ್ಕುಗಳ ರಕ್ಷಣೆಯ ವಿಚಾರದಲ್ಲಿ ಅಂತಹ ಕಲ್ಪನೆಗಳನ್ನು ಇಟ್ಟುಕೊಳ್ಳಬಹುದೇ?

ಸದ್ಯ, ‘ಜೆಎನ್ ಯು ವಿದ್ಯಾರ್ಥಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ, ಅಫ್ಜಲ್ ಪರ ಘೋಷಣೆ ಕೂಗಿಲ್ಲ’ ಎಂದು ಮಾನವ ಹಕ್ಕು ಕಾರ್ಯಕರ್ತರು, ಪ್ರಗತಿಪರರು ಮತ್ತು ಚಿಂತಕರು ವಾದಿಸುತ್ತಿದ್ದಾರೆ. ಅದಕ್ಕಾಗಿ ಬಂಧಿತ ವಿದ್ಯಾರ್ಥಿ ಸಂಘದ ನಾಯಕ ಕನ್ನಯ್ಯರ ಭಾಷಣವನ್ನು ಮತ್ತೆ ಮತ್ತೆ ಪ್ರಸ್ತುತಪಡಿಸಿ “ನೋಡಿ, ಇದರಲ್ಲಿ ದೇಶವಿರೋಧಿ ಘೋಷಣೆ ಏನಿದೆ? ಪಾಕ್ ಪರ ಘೋಷಣೆ ಇದರಲ್ಲಿ ಇಲ್ಲ. ಅಫ್ಜಲ್ ಗುರು ಬಗ್ಗೆ ಭಾಷಣದಲ್ಲಿ ಉಲ್ಲೇಖವೇ ಇಲ್ಲ” ಎಂಬಂತಹ ಮಾತುಗಳನ್ನು ಆಡುತ್ತಿದ್ದಾರೆ. ಇದು ಬಹಳ ಅಪಾಯಕಾರಿಯಾದ ವಾದ. ಅಂತಹ ಪ್ರತಿಪಾದನೆಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಯನ್ನು ಕುಗ್ಗಿಸುವ ಬಲಪಂಥೀಯರ ಪಿತೂರಿಗೆ ಇಂಬು ಕೊಟ್ಟಂತೆ. ಜೆ.ಎನ್.ಯು ಹೋರಾಟ ಬಲಪಂಥೀಯರನ್ನು ಹಿಮ್ಮೆಟ್ಟುವ ವಿಚಾರದಲ್ಲಿ ತಕ್ಕ ಮಟ್ಟಿಗೆABVP ಯಶಸ್ವಿಯಾಗಬಹುದು. ಆದರೆ ಪ್ರತ್ಯೇಕತೆಯ ಬಗ್ಗೆ ಅಥವಾ ಘೋಷಣೆಯಂತಹ ಕ್ಷುಲ್ಲಕ ವಿಚಾರಗಳಲ್ಲಿ ಬಲಪಂಥೀಯ ಸಂಘಟನೆಗಳು ನಿರ್ಣಯಿಸಿರುವ ಕುತ್ಸಿತ ಸ್ವರೂಪದ ರಾಷ್ಟ್ರೀಯತೆಯ ವ್ಯಾಖ್ಯಾನಗಳಿಗೆ ಮಾನ್ಯತೆ ದೊರತಂತೆ ಕಾಣುತ್ತದೆ. ಇದು ಆತಂಕದ ವಿಚಾರ. ನಾವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅದರ ಪೂರ್ಣ ಸಾಂವಿಧಾನಿಕ ನೆಲೆಯಲ್ಲಿ ಸಾಕ್ಷತ್ಕರಿಸುವ ದಿಶೆಯಲ್ಲಿ ಕಾರ್ಯಶೀಲರಾಗುವುದು ಅವಶ್ಯ. ಅದನ್ನು ಹರಣಮಾಡುವ, ಮಿತಿಗೊಳಿಸುವ ಪ್ರತಿಗಾಮಿಗಳ ಟ್ರ್ಯಾಪ್ ಗೆ ಬೀಳಲೇಬಾರದು. ಯಾವುದೇ ದೇಶದಲ್ಲಿ ಆ ದೇಶದ ಪ್ರಭುತ್ವ ಜೀವ ವಿರೋಧಿಯಾಗಿ ವರ್ತಿಸಿದಾಗ ಅದನ್ನು ಪ್ರಶ್ನಿಸುವ, ಅದರ ವಿರುದ್ಧ ಗಟ್ಟಿ ದ್ವನಿಯಲ್ಲಿ ಮಾತನಾಡುವ ಸ್ವಾತಂತ್ರ್ಯ ಇರಲೇಬೇಕು. ಕಾಶ್ಮೀರ ಸ್ವಾತಂತ್ರ್ಯವಾಗಬೇಕು ಎಂಬಂಥ ಅಹಿಸಾತ್ಮಕ ಘೋಷಣೆಗಳು ಅಥವಾ ಅಂತಹ ವಿಚಾರದ ಕುರಿತಾದ ಕಮ್ಮಟ, ಶಿಬಿರ ಹಾಗೂ ಚರ್ಚಾಕೂಟಗಳು ಕೂಡಾ ಸದ್ಯದ ಕಾನೂನುಗಳ ಪ್ರಕಾರ ದೇಶವಿರೋಧಿ ಆಗೋದಿಲ್ಲ. ಪ್ರಜಾಪ್ರಭುತ್ವದಲ್ಲಿ ಭಿನ್ನ ಮತೀಯರಿಗೆ ನಿರ್ಭೀತ ಅವಕಾಶ ಸಹಜವಾಗಿಯೇ ಇರುತ್ತದೆ. ಮುಕ್ತ ಸಮಾಜಗಳು ಅಹಿಂಸಾತ್ಮಕ ಪ್ರತ್ಯೇಕತಾವಾದಿಗಳನ್ನು ಜೈಲಿಗೆ ಹಾಕುವುದಿಲ್ಲ (Free societies do not jail non-violent secessionists) ಎಂದು ಖ್ಯಾತ ಅರ್ಥ ಶಾಸ್ತ್ರಜ್ಞ ಮತ್ತು ಚಿಂತಕ ಸ್ವಾಮಿನಾಥನ್ ಅಯ್ಯರ್ ಅಭಿಪ್ರಾಯ ಪಡುತ್ತಾರೆ. ಅಂತಹ ಮುಕ್ತ ಸಮಾಜದ ನಿರ್ಮಾಣಕ್ಕೆ ನಾವು ತುಡಿಯಬೇಕು. ಇಲ್ಲವಾದಲ್ಲಿ ಮುಂದೆ ಕಾಶ್ಮೀರದ ಬಗ್ಗೆ ಮಾತಾಡುವ ಪ್ರತಿಯೊಬ್ಬ ಚಿಂತಕನೂ ದೇಶದ್ರೋಹದ ಅಪಾದನೆಯ ಅಡಿಯಲ್ಲಿ, ಪ್ರಭುತ್ವದ ಕೈಯಲ್ಲಿ ಬಂಧಿಯಾಗುವ ಅಪಾಯವಿರುತ್ತದೆ. ಮತ್ತು ಅಂತಹ ಸಂದರ್ಭದಲ್ಲಿ ಇಂದಿನ ನಮ್ಮ ವರ್ತನೆ ವಿರೋಧಾಭಾಸವಾಗಿ ಅಂದು ನಮ್ಮನ್ನು ಭೂತದಂತೆ ಕಾಡುತ್ತದೆ.

 

ಉಮರ್ ಖಾಲಿದ್ ಭಾಷಣದ ಬರಹ ರೂಪ

Naveen Soorinje


-ಅನುವಾದ : ನವೀನ್ ಸೂರಿಂಜೆ


 

 

ಲಾಲ್ ಸಲಾಂ, ಲಾಲ್ ಸಲಾಂ, ವೀರ್ ಸೆಲ್ಯೂಟ್, ರೆಡ್ ಸೆಲ್ಯೂಟ್, ರೆಡ್ ಸೆಲ್ಯೂಟ್ ಟು ಕಾಮ್ರೇಡ್ ಎಂದು ವಿದ್ಯಾರ್ಥಿಗಳ ಭಾರೀ ಉದ್ಘೋಷದ ಜೊತೆ ದೇಶದ್ರೋಹಿ ಆರೋಪ ಹೊತ್ತ ಜೆ ಎನ್ ಯು ವಿದ್ಯಾರ್ಥಿ ಉಮ್ಮರ್ ಖಾಲಿದ್ ಮಾತನಾಡುತ್ತಿದ್ದಾರೆ. ಕೇಳಿ.

ಸ್ನೇಹಿತರೇ,

ನನ್ನ ಹೆಸರು ಉಮರ್ ಖಾಲಿದ್. ಆದರೆ ನಾನು ಭಯೋತ್ಪಾದಕ ಅಲ್ಲ.

ಮೊದಲನೆಯದಾಗಿ ಈ ಹೋರಾಟದಲ್ಲಿ ಭಾಗವಹಿಸಿದ ಮತ್ತು ವಿದ್ಯಾರ್ಥಿಗಳಾದ ನಮಗೆ ಬೆಂಬಲವನ್ನು ನೀಡಿದ ಪ್ರತಿಯೊಬ್ಬ ಜೆಎನ್ ಯು ಪ್ರಾಧ್ಯಾಪಕರಿಗೆ ಧನ್ಯವಾದ ಹೇಳ ಬಯಸುತ್ತೇನೆ. ಈ ಹೋರಾಟ ಕೇವಲ ನಮ್ಮ ನಾಲ್ಕೈದು ಜನರದ್ದಾಗಿರಲಿಲ್ಲ. ಈ ಹೋರಾಟ ನಮ್ಮೆಲ್ಲರ ಹೋರಾಟವಾಗಿದೆ. ಈ ಹೋರಾಟ ಕೇವಲ ಈ ಜೆಎನ್ ಯು ವಿಶ್ವವಿದ್ಯಾನಿಲಯದ ಹೋರಾಟ ಮಾತ್ರವೇ ಇಲ್ಲ, ಇದೊಂದು ದೇಶದ ಎಲ್ಲಾ ವಿಶ್ವವಿದ್ಯಾನಿಲಯಗಳ ಹೋರಾಟವಾಗಿದೆ. ಅಷ್ಟಕ್ಕೇ ಸೀಮಿತವಾಗದೆ ಇದು ಇಡೀಯ ಸಮಾಜದ ಹೋರಾಟವಾಗಿದೆ. ಮುಂದಿನ ಪೀಳಿಗೆಯ ಸಮಾಜ ಹೇಗಿರಬೇಕೆಂಬುದರ ಸೂಚಕ ಈ ಹೋರಾಟ.

ಗೆಳೆಯರೇ

ಈ ಕೆಲ ದಿನಗಳಲ್ಲಿ ನನ್ನ ಬಗ್ಗೆ ನನಗೇ ಗೊತ್ತಿಲ್ಲದ ಹಲವಾರು ವಿಷಯಗಳನ್ನು ತಿಳಿದುಕೊಂಡೆ. ನಾನು ಎರಡು ಬಾರಿ ಪಾಕಿಸ್ತಾನ ಹೋಗಿ ಬಂದಿದ್ದೇನೆ ಎಂದು ನನಗೇ ಇತ್ತಿಚೆಗೆೆ ತಿಳಿಯಿತು. ನನ್ನ ಬಳಿ ಪಾಸ್ ಪೋರ್ಟೇ ಇಲ್ಲ. ಹಾಗಿದ್ದರೂ ನಾನು ಪಾಕಿಸ್ತಾನ ಹೋಗಿ ಬಂದೆ ಎಂಬುದು ನನಗೇ ಆಶ್ಚರ್ಯ ತರುವ ವಿಚಾರ. ನನಗೆ ಆನಂತರ ಮತ್ತೊಂದು ವಿಚಾರವೂ ತಿಳಿಯಿತು. ನಾನು ಮಾಸ್ಟರ್ ಮೈಂಡ್ ಎಂದು. ಜೆಎನ್ ಯು ವಿದ್ಯಾರ್ಥಿಗಳೇ ವಂಡರಫುಲ್ ಮೈಂಡ್ ಇರುವವರು. ಅವರಲ್ಲೇ ನಾನು ಮಾಸ್ಟರ್ ಮೈಂಡ್. ಇದು ತುಂಬಾ ಚೆನ್ನಾಗಿದೆ. ನಾನು ಇಂತಹ ಕಾರ್ಯಕ್ರಮವನ್ನು ದೇಶದ 70 ರಿಂದ 80 ವಿಶ್ವವಿದ್ಯಾನಿಲಯಗಳಲ್ಲಿ ಆಯೋಜಿಸಲು ಪ್ಲ್ಯಾನ್ ಮಾಡಿದ್ದೆನಂತೆ. ನಿಜವಾಗಲೂ ನನ್ನ ಲೀಡರ್ ಶಿಫ್ ಇಷ್ಟೊಂದು ವಿಸ್ತಾರವಾಗಿ ಬೆಳೆದಿದ್ದು ನನಗೇ ಗೊತ್ತಿರಲಿಲ್ಲ. ಈ ಕಾರ್ಯಕ್ರಮ ಆಯೋಜಿಸಲು ನಾವು ನಾಲ್ಕೈದು ತಿಂಗಳು ತಯಾರಿ ಮಾಡಿದ್ದೆವಂತೆ. ಜೆಎನ್ ಯು ನಲ್ಲಿ ಒಂದೊಂದು ಕಾರ್ಯಕ್ರಮ ಸಂಘಟಿಸಲು ಐದು-ಹತ್ತು ತಿಂಗಳು ಪಡೆದುಕೊಂಡರೆ ಜೆಎನ್ ಯು ಕತೆ ಏನಾಗಬಹುದು? ಅದೂ ಇರಲಿ. ನಾನು ಕೆಲ ದಿನಗಳಿಂದ 800 ಕರೆಗಳನ್ನು ಮಾಡಿದ್ದೇನಂತೆ. ಈ ಮಾಧ್ಯಮಗಳಿಗೆ ಯಾವ ನಾಚಿಕೆಯೂ ಇಲ್ಲ. ಸುದ್ದಿ ಪ್ರಸಾರಕ್ಕೆ ಮುನ್ನ ದಾಖಲೆಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ. ಯಾವುದೇ ದಾಖಲೆಯಿಲ್ಲದೆ, ಸತ್ಯಾಂಶವಿಲ್ಲದ ಸುದ್ದಿಗಳನ್ನು ಮಾಡಿದ್ರು. ನನಗೆ ಜೈಶ್ ಎ ಮಹಮ್ಮದ್ ಸಂಘಟನೆಯ ಕೈವಾಡ ಇದೆ ಎಂದು ಹೇಳಿದ್ರು. ಅದಕ್ಕೂ ಯಾವುದೇ ದಾಖಲೆ ಇಲ್ಲ. ನನಗೆ ನಿಜಕ್ಕೂ ಆಗ ನಗು ಬಂದಿತ್ತು. ನಿಜವಾಗಿಯೂ ಆ ಸಂಧರ್ಭದಲ್ಲಿ ಜೈಶ್ ಎ ಮಹಮ್ಮದ್ ಸಂಘಟನೆಯವರು ಪ್ರತಿಭಟನೆ ಮಾಡಬೇಕಿತ್ತು. ನನ್ನಂತವನನ್ನು ಅವರ ಸಂಘಟನೆಯವನು ಎಂದು ಹೇಳಿದ್ದಕ್ಕಾದರೂ ಅವರು ಪ್ರತಿಭಟಿಸಬೇಕಿತ್ತು. ಕೊನೆಗೆ ಕೇಂದ್ರ ಸರಕಾರದ ಗುಪ್ತಚರ ಇಲಾಖೆಯೇ ಸ್ಪಷ್ಟಪಡಿಸಿ, ಜೈಶ್ ಎ ಮಹಮ್ಮದ್ ಸಂಘಟನೆಗೂ ಈ ಹೋರಾಟಕ್ಕೂ ಸಂಬಂಧ ಇಲ್ಲ ಎಂದು ಹೇಳಿದರೂ ಮಾಧ್ಯಮಗಳು ಕ್ಷಮೆ ಕೇಳಲಿಲ್ಲ. ಈ ಮೀಡಿಯಾಗಳು ನಮ್ಮನ್ನು ಮೂರ್ಖರನ್ನಾಗಿಸುತ್ತಿವೆ. ಮೀಡಿಯಾಗಳು ಪೂರ್ವನಿರ್ಧರಿತವಾಗಿ ನಮ್ಮನ್ನು ಮಿಡಿಯಾ ಟ್ರಯಲ್ ಗೆ ಒಳಪಡಿಸಿದ್ವು. ಯಾವ ನಾಚಿಕೆಯೂ ಇಲ್ಲದೆ ವರ್ತಿಸಿದ್ರು.

ಮಾಧ್ಯಮಗಳ ಈ ರೀತಿಯ ವರ್ತನೆ ಇದೇ ಮೊದಲಲ್ಲ. ಅವುಗಳು ಏನು ಮಾಡಿದ್ರೂ ನಡೀತದೆ ಅಂದುಕೊಂಡಿದ್ದಾರೆ. ಮುಸ್ಲೀಮರನ್ನು ಭಯೋತ್ಪಾದಕರನ್ನಾಗಿಯೂ, ಆದಿವಾಸಿಗಳನ್ನು ನಕ್ಸಲರನ್ನಾಗಿಯೂ ಚಿತ್ರಿಸಿ ಅವರಿಗೆ ಅಭ್ಯಾಸವಾಗಿ ಬಿಟ್ಟಿದೆ. ಆದರೆ ಈ ಬಾರಿ ನೀವು ತಪ್ಪು ಜನರಿಗೆ ತಗಳ್ಳಾಕ್ಕೊಂಡಿದ್ದೀರಿ. ನಾವು ಪ್ರತೀ ಚಾನೆಲ್ ಗಳು ನಮ್ಮ ಬಗ್ಗೆ ಮಾಡಿದ ಸುದ್ದಿಗೆ ವಿವರಣೆ ನೀಡುವಂತಹ ಸಂಧರ್ಭ ಸೃಷ್ಠಿ ಮಾಡುತ್ತೇವೆ.

ಈ ಪ್ರಕರಣ ಈ ರೀತಿ ಸುದ್ದಿಯಾದ ನಂತರ ನಂತರ ನನ್ನ ತಂಗಿ, ತಂದೆಗೆ ಬೆದರಿಕೆ ಒಡ್ಡಲಾಯ್ತು. ತಂಗಿಗೆ ಅತ್ಯಾಚಾರದ ಬೆದರಿಕೆ ಒಡ್ಡಲಾಯ್ತು. ಕೊಲೆ ಬೆದರಿಕೆಯನ್ನೂ ನೀಡಲಾಯ್ತು. ಈ ಜನಗಳು ಏನೂ ಮಾಡಲೂ ಹೇಸದವರು. ತಂಗಿಗೆ ಅತ್ಯಾಚಾರದ ಬೆದರಿಕೆ ನೀಡಿದ ಈ ದೇಶಪ್ರೇಮಿಗಳ ಕಂದಮಾಲ್ ಘಟನೆ ಆ ಸಂಧರ್ಭ ನನಗೆ ನೆನಪಿಗೆ ಬಂದಿತ್ತು. ನಿಮಗೂ ನೆನಪಿರಬಹುದು. ಕಂದಮಾಲ್ ನಲ್ಲಿ ಭಜರಂಗದಳದವರು ಕ್ರಿಶ್ಚಿಯನ್ ಸನ್ಯಾಸಿನಿ ಮೇಲೆ ಅತ್ಯಾಚಾರ ಮಾಡಿ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದರು. ಆದುದರಿಂದ ನನಗೆ ತಂಗಿಯ ಬಗ್ಗೆ ಆತಂಕ ಉಂಟಾಗಿತ್ತು. ಇವರು ಅತ್ಯಾಚಾರ ಮಾಡಿಯೂ ಭಾರತ ಮಾತೆಗೆ ಜೈ ಎನ್ನುವವರು. ಇಂತಹ ಮಾತೆ ನಮಗೆ ಬೇಕಾಗಿಲ್ಲ. ಇಂತಹ ಮಾತೆ ನಮ್ಮದಲ್ಲ.

ನನ್ನ ತಂದೆಯನ್ನು ಕೆಲವು ಮಾಧ್ಯಮಗಳು ಮಾತನಾಡಿಸಿದ್ವು. ಅದನ್ನು ಸಂದರ್ಶನ ಅನ್ನೋದಕ್ಕಿಂತ ಮಾಧ್ಯಮಗಳ ವಿಚಾರಣೆ ಅನ್ನಬಹುದು. ನಮ್ಮಲ್ಲಿ ಕೆಲವು ಪತ್ರಕರ್ತರಿದ್ದಾರೆ. ಟೈಮ್ಸ್ ನೌ ನಲ್ಲಿ ಒಬ್ಬ ಪತ್ರಕರ್ತ ಇದ್ದಾರೆ. ಅವರ ಹೆಸರು ಹೇಳಲು ನಾನು ಬಯಸೋದಿಲ್ಲ. ಈ ಪತ್ರಕರ್ತರಿಗೆಲ್ಲಾ ನಮ್ಮ ವಿಚಾರದಲ್ಲಿ ಇಷ್ಟೊಂದು ಕೋಪ ಯಾಕೆ ಎಲ್ಲಿಂದ ಬರುತ್ತದೆ ಎಂಬುದೇ ಗೊತ್ತಾಗ್ತಾ ಇಲ್ಲ. ಆ ರೀತಿಯಲ್ಲಿ ಮಾಧ್ಯಮಗಳ ಕೋರ್ಟ್ ನಡೆಸಿದ್ವು.

ಒಂದು ವಿಷಯವನ್ನು ನಾನಿಲ್ಲಿ ಹೇಳಲೇ ಬೇಕು. ಕಳೆದ ಆರು ವರ್ಷಗಳಿಂದ ಈ ಕ್ಯಾಂಪಸ್ಸಿನಲ್ಲಿ ವಿದ್ಯಾರ್ಥಿ ರಾಜಕಾರಣವನ್ನು ಮಾಡಿಕೊಂಡು ಬಂದಿದ್ದೇನೆ. ನಾನು ಇಲ್ಲಿಯವರೆಗೂ ನನ್ನನ್ನು ನಾನು ಮುಸ್ಲೀಮನೆಂದು ಅಂದುಕೊಂಡಿಲ್ಲ. ಈ ಸಮಾಜದಲ್ಲಿ ಮುಸ್ಲೀಮರು ಮಾತ್ರ ದಮನಕ್ಕೊಳಗಾಗ್ತಿಲ್ಲ. ಆದಿವಾಸಿಗಳು, ದಲಿತರು ಈ ಸಮಾಜದ ಶೋಷಿತರಾಗಿದ್ದಾರೆ. ನಾನು ಇವರೆಲ್ಲರ ಪರವಾಗಿ ಹೋರಾಟ ಮಾಡಿದ್ದೇನೆ. ದಲಿತರು, ಆದಿವಾಸಿಗಳು, ಶೋಷಿತರ ಪರವಾಗಿ ಮಾತನಾಡಿದಷ್ಟೇ ಶೋಷಿತ ಮುಸ್ಲೀಮರ ಪರವಾಗಿ ಮಾತನಾಡಿದ್ದೇನೆ. ಆದರೆ ಕಳೆದ ಹತ್ತು ದಿನಗಳಿಂದ ನಾನು ಮುಸ್ಲೀಂ ಎಂದು ನನಗೆ ಗೊತ್ತಾಯಿತು. ಈ ಮಾಧ್ಯಮಗಳಿಗೆ ನಾಚಿಕೆಯಾಗಬೇಕು.

ನಾನು ಪಾಕಿಸ್ತಾನಿ ಏಂಜೆಂಟ್ ಅಂತ ಹೇಳಿದ್ರು. ಈ ಸಂಧರ್ಭದಲ್ಲಿ ನನಗೆ ಒಂದು ಶಾಹಿರಿ ನೆನಪಾಗ್ತಿದೆ.

ಹಿಂದೂಸ್ತಾನವೂ ನನ್ನದೇ,
ಪಾಕಿಸ್ತಾನವೂ ನನ್ನದೇ….
ಹಿಂದೂಸ್ತಾನ ಪಾಕಿಸ್ತಾನದಲ್ಲಿ ಅಮೇರಿಕಾ ಟೆಂಟ್ ಹಾಕಲು ಬಯಸುತ್ತಿದೆ.
ನೀವೆಲ್ಲರೂ ಆ ಅಮೇರಿಕಾದ ಏಜೆಂಟರು.

ನಮ್ಮ ಸರಕಾರ ಕೂಡಾ ಅಮೇರಿಕಾದ ಏಜೆಂಟರಂತೆ ವರ್ತಿಸುತ್ತಿದೆ. ಮಲ್ಟಿ ನ್ಯಾಶನಲ್ ಕಂಪನಿಗಳಿಗೆ ಜನ ಪೂರೈಸೋ ಕೆಲಸವನ್ನು ಸರಕಾರ ಮಾಡುತ್ತಿದೆ. ಅದಕ್ಕಾಗಿ ಶಿಕ್ಷಣವನ್ನು ಸರಕಾರ ಮಾರಿದೆ. ಅದನ್ನು ಪ್ರಶ್ನಿಸಿದ್ರೆ ನಾವು ದೇಶದ್ರೋಹಿಗಳಾಗ್ತಿವೆ. ಈಗ ನಾವು ನೀವೆಲ್ಲಾ ದೇಶದ್ರೋಹಿಗಳು. ಜನರನ್ನು ಅಗಾಧವಾಗಿ ಪ್ರೀತಿಸುವ ನಾವುಗಳು ದೇಶದ್ರೋಹಿಗಳು. ನಮ್ಮ ಪ್ರೀತಿಗೆ ಗಡಿಗಳು ಇಲ್ಲ. ಈ ದೇಶ ಮಾತ್ರ ಅಲ್ಲ. ಇಡೀನ ಜಗತ್ತಿನ ಜನರನ್ನು ನಾವು ಪ್ರೀತಿಸುತ್ತೇವೆ. ನಾನು ಈ ನ್ಯಾಶನಿಲಿಸಂ ಅನ್ನು ನಂಬೋದಿಲ್ಲ. ಭಾರತದ ನ್ಯಾಶನಲಿಸಂ ಮಾತ್ರವಲ್ಲ. ಅಮೇರಿಕಾ ಸೇರಿದಂತೆ ಯಾವುದೇ ದೇಶದ ನ್ಯಾಶನಲಿಸಂ ಅನ್ನು ನಾನು ಒಪ್ಪೋದಿಲ್ಲ. ಇಡೀ ವಿಶ್ವವೇ ನಮ್ಮದು. ವಿಶ್ವದ ಎಲ್ಲರೂ ನಮ್ಮವರು.

ನಾವು ಈ ಜನರಿಗೆಲ್ಲಾ ಹೆದರಬೇಕಿಲ್ಲ. ಅವರ ಬಳಿ ಬಹುಮತ ಇರಬಹುದು. ಮೀಡಿಯಾಗಳೂ, ಪೊಲೀಸರೂ ಇರಬಹುದು. ಆದರೆ ಅವರು ಹೆದರುಪುಕ್ಕಲರು. ಅವರು ನಮ್ಮ ಜನರಿಗೆ ಹೆದರುತ್ತಾರೆ. ಆವರು ನಮ್ಮ ಹೋರಾಟಗಳಿಗೆ ಹೆದರುತ್ತಾರೆ. ಅದಕ್ಕಾಗಿಯೇ ನೀವು ಜನರ ಪರವಾಗಿ ಯೋಚಿಸಲು ಶುರು ಮಾಡಿದ್ರೆ ನಿಮ್ಮನ್ನು ದೇಶದ್ರೋಹಿ ಎನ್ನುವ ಮೂಲಕ ಹೆದರಿಸಲಾಗ್ತಿದೆ.

ನಮ್ಮ ಜನರಿಗೆ ಹೆದರಿಯೇ ಈ ಜನರು ಹಲವು ವಿಶ್ವವಿದ್ಯಾನಿಲಯಗಳಿಗೆ ತೆರಳಿ ಗಲಭೆ ಎಬ್ಬಿಸಲು ಯಶಸ್ವಿಯಾದ್ರು. ಆದರೆ ಈ ವಿದ್ವವಿದ್ಯಾಲಯಕ್ಕೆ ಮಾತ್ರ ತಪ್ಪಾಗಿ ಬಂದ್ರಿ. ಇಲ್ಲಿ ನಿಮ್ಮ ಆಟ ನಡೆಯಲ್ಲ.

ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ರೋಹಿತ್ ವೆಮೂಲ ಹತ್ಯೆಯಾಯ್ತು. ಬನರಾಸ್ ವಿಶ್ವವಿದ್ಯಾನಿಲಯದಲ್ಲಿ ಸಂದೀಪ್ ಪಾಂಡೆ ಮೇಲೆ ದೌರ್ಜನ್ಯವಾಯಿತು. ಅ ಸಂಧರ್ಭದಲ್ಲಿ ನಡೆದ ಪ್ರತೀ ಹೋರಾಟದಲ್ಲಿ ಜೆ ಎನ್ ಯು ವಿದ್ಯಾರ್ಥಿಗಳು ಹೆಗಲು ಕೊಟ್ಟು ಸಾಥ್ ನೀಡಿದ್ದೇವೆ. ಅದು ನಮ್ಮ ಜವಾಬ್ದಾರಿ ಕೂಡಾ. ನೀವೇನಾದ್ರೂ ಜೆಎನ್ ಯು ವನ್ನು ಮುಗಿಸುತ್ತೇವೆ ಎಂದು ಒಂದಿರೋದಾದ್ರೆ ಒಂದಂತೂ ತಿಳಿದುಕೊಳ್ಳಿ. ಈ ಹಿಂದೆಯೂ ಈ ರೀತಿ ಯೋಚನೆ ಇಟ್ಟುಕೊಂಡು ತುಂಬಾ ಜನ ಇಲ್ಲಿಗೆ ಬಂದಿದ್ದರು. ಅಂತಹ ಹಲವು ಪ್ರಯತ್ನಗಳಾಗಿತ್ತು. ಅದನ್ನು ಅಷ್ಟೇ ನಾಜೂಕಾಗಿ ನಾವು ನಿಭಾಯಿಸಿ ನಾವು ಗೆದ್ದಿದ್ದೇವೆ.

ಬಹುಶಃ ನೀವು ಇಂದಿರಾಗಾಂಧಿಯನ್ನು ಮರೆತಿದ್ದೀರಿ. ತುರ್ತು ಪರಿಸ್ಥಿತಿ ನಂತರ ಅವರು ಜೆ ಎನ್ ಯು ಕಡೆಗೆ ಬಂದಿದ್ದರು. ನಾವು ಅವರನ್ನು ಬರಲು ಬಿಟ್ಟಿರಲಿಲ್ಲ. ನಂತರ ನೀವು ಮನಮೋಹನ ಸಿಂಗ್ ರನ್ನೂ ಮರೆತಿದ್ದೀರಿ. ದೇಶವನ್ನು ಮಾರಾಟ ಮಾಡಲು ಹೊರಟ ಮನಮೋಹನ ಸಿಂಗ್ ಇಲ್ಲಿಗೆ ಬಂದಾಗ ಅವರಿಗೂ ಕಪ್ಪು ಬಾವುಟ ತೋರಿಸಿದ್ವಿ. ನಂತರ ಚಿದಂಬರಂ ಬಂದ್ರು. ಆಗ ಇಲ್ಲಿನ ವಿದ್ಯಾರ್ಥಿಗಳು ಚಿದಂಬರಂ ಅನ್ನು ಸ್ವಾಗತ ಮಾಡ್ತಾರೆ ಅಂದುಕೊಂಡಿದ್ರು. ಆದರೆ ಇಲ್ಲಿನ ವಿದ್ಯಾರ್ಥಿಗಳು ಯಾರ ಜೊತೆ ಇರ್ತೀವಿ ಎಂಬುದನ್ನು ತೋರಿಸಿಕೊಟ್ಟರು. ಇಲ್ಲಿನ ವಿದ್ಯಾರ್ಥಿಗಳು ಯಾವತ್ತೂ ಶೋಷಿತ ಜನರ ಜೊತೆ ಇರ್ತಾರೆ. ಈಗಿನ ಸರಕಾರ ನಾವು ಹೆದರುತ್ತೇವೆಯೋ ಎಂದು ಪರೀಕ್ಷೆ ಮಾಡುತ್ತಿದೆ. ನಾವು ಹೆದರುವುದಿಲ್ಲ. ನಾವು ಸಂಘರ್ಷ ಮಾಡುತ್ತೇವೆ.

ಗೆಳೆಯರೇ,

ನಾವು ಈ ಜನಗಳಿಗೆಲ್ಲಾ ಹೆದರುವ ಅಗತ್ಯವೇ ಇಲ್ಲ. ಈ ಕ್ಯಾಂಪಸ್ಸಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಎಂಬ ವಾನರ ಸೇನೆ ಇದೆ. ಇಲ್ಲೂ ಕೂಡಾ ಹೈದರಾಬಾದ್ ನ ದತ್ತಾತ್ರೆಯ ರೀತಿಯವರು ಇದ್ದಾರೆ. ಆದರೆ ಇಲ್ಲಿ ಮತ್ತೊಬ್ಬ ರೋಹಿತನನ್ನು ನಾವು ನಿಮ್ಮ ಕೈಗೆ ಕೊಡೋದಿಲ್ಲ ಎಂದು ಸ್ಪಷ್ಟಪಡಿಸುತ್ತೇವೆ. ನಾವು ಸಂಘರ್ಷಕ್ಕೆ ಸಿದ್ದರಿದ್ದೇವೆ. ರೋಹಿತನ ಸಾವಿಗೆ ಉತ್ತರ ಕೊಡಲು ಸಿದ್ದರಿದ್ದೇವೆ.

ಅವರಿಗೆ ಜನರ ಬಳಿ ಹೋಗಿ ಸಂಘಟನೆ ಮಾಡಲು ಆಗುವುದಿಲ್ಲ. ಅವರೇನಿದ್ದರೂ ಮಧ್ಯಮಗಳನ್ನು ಬಳಸಿಕೊಂಡು ದೇಶಪ್ರೇಮ ಉಕ್ಕುವಂತೆ ಮಾಡುತ್ತಾರೆ. ಅಷ್ಟೊಂದು ಮಾಧ್ಯಮಗಳನ್ನು ಬಳಸಿಯೂ ಅವರು ಸಾವಿರ ಜನ ಸೇರಿಸಲು ಕಷ್ಟಪಟ್ಟರು. ಆದರೆ ಇಲ್ಲಿ ನಮ್ಮವರು 15 ಸಾವಿರಕ್ಕೂ ಮಿಕ್ಕಿ ಜಮಾವಣೆಗೊಂಡರು. ಆದರೆ ಚೀ ನ್ಯೂಸ್ ಮಾತ್ರ ಸುಳ್ಳೇ ಸುದ್ದಿ ಪ್ರಸಾರ ಮಾಡ್ತು. ನಾಚಿಗೆ ಇಲ್ಲದೆ ಸುಳ್ಳು ಹೇಳ್ತಾರೆ ಈ ಜನಗಳು.

ಜೆ ಎನ್ ಯು ನಲ್ಲಿ ಅವರು ನಡೆಸಿದ ದೌರ್ಜನ್ಯಕಾರಿ ತಂತ್ರಗಾರಿಕೆಯನ್ನು ಬೇರೆಡೆಯಲ್ಲೂ ಯಶಸ್ವಿಯಾಗಿ ಮಾಡಿದ್ದಾರೆ. ಈ ರೀತಿಯ ತಂತ್ರಗಾರಿಕೆ ನಮ್ಮಲ್ಲಿ ನಡೆಯಲ್ಲ. ಇದೇ ರೀತಿಯ ದೌರ್ಜನ್ಯವನ್ನು ಹೋಂಡಾ ಕಾರ್ಮಿಕರ ಮೇಲೆ, ಸೋನಿ ಸೋರಿ ಆದಿವಾಸಿ ಮೇಲೆ ಪ್ರಯೋಗಿಸಿದ್ರು. ಇವೆಲ್ಲವನ್ನೂ ನೋಡಿದ್ರೆ ಇದು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಹೋರಾಟ ಮಾತ್ರವಲ್ಲ. ಈ ಹೋರಾಟವು ಇಡೀ ದೇಶದ ಹೋರಾಟವನ್ನು ಸಂಧಿಸಬೇಕು.

ಧನ್ಯವಾದಗಳು
ಇಂಕ್ವಿಲಾಬ್ ಜಿಂದಾಬಾದ್

ಅಂತಃಕರಣದ ಮಾದರಿಗಳಿಗೆ ಪುಟ್ಟ ವಂದನೆ


– ರೂಪ ಹಾಸನ


ಮುದ್ದು ಮುಖದ ಆ ಹುಡುಗಿಯ ಮುಖದಲ್ಲಿ ನೋವು ಹರಡಿ ನಿಂತಿದ್ದರೂ ಆತ್ಮವಿಶ್ವಾಸವಿತ್ತು. ತನ್ನ ಪ್ರತಿಯೊಂದು ಹೆಜ್ಜೆಯನ್ನೂ ಕಷ್ಟಪಟ್ಟು ಎತ್ತಿಡುತ್ತಿದ್ದಳು. ಪೋಲಿಯೋ ಪೀಡಿತ ಎರಡೂ ಕಾಲಿಗೆ ಭಾರವಾದ ಕ್ಯಾಲಿಪರ್ಸ್ ತೊಟ್ಟು ಊರುಗೋಲಿನ ಸಹಾಯದಿಂದ ಹೆಜ್ಜೆ ಊರಬೇಕಿತ್ತು. ಓದು, ಕೌಶಲ್ಯಗಳಿಕೆ, ಆಮೇಲಿನ ಉದ್ಯೋಗಾನ್ವೇಷಣೆ ಯಾವುದೂ ಸುಲಭವಾಗಿರಲಿಲ್ಲ. ದಿನದಿನದ ಒಳ-ಹೊರಗಿನ ಯುದ್ಧದಲ್ಲಿ ಸೋಲನುಭವಿಸಿದರೂ ಮತ್ತೆ ನಾಳಿನ ಹೆಣಗಾಟಕ್ಕೆ ಸಿದ್ಧತೆ ನಡೆಸಬೇಕಿತ್ತು. ಸಮಾಜದ ಮುಖ್ಯವಾಹಿನಿಯಲ್ಲಿ ಒಂದಾಗಲು ಹೊರಟ ಅವಳ ಅವಿರತ ಪ್ರಯತ್ನದಲ್ಲಿ ಹೆತ್ತವರು, ಬಂಧುಬಳಗ, ಜಾತಿಬಾಂಧವರು, ಸರ್ಕಾರ ಯಾರೂ ಇರಲಿಲ್ಲ. ಆದರೆ ಜೊತೆಗೆ ನಿಂತದ್ದು ಒಂದು ಪೋಲಿಯೋ ಪುನರ್ವಸತಿ ಕೇಂದ್ರ.

ಅಂಗವೈಕಲ್ಯತೆ ಒಂದು ಶಾಪವೆಂದೇ ಭಾವಿಸಿರುವ ನಮ್ಮ ಸಮಾಜದಲ್ಲಿ, ಹೆಚ್ಚಿನ ಬಡ ಪೋಷಕರು ಅಂಗವಿಕಲ ಮಕ್ಕಳನ್ನು ಹೊರೆ ಎಂದೇ ಭಾವಿಸುತ್ತಾರೆ. ಇಂತಹ ಮಕ್ಕಳ ಹೆಸರಿನಲ್ಲಿ ಸರ್ಕಾರದಿಂದ ದೊರಕುವ ವಿಶೇಷ ಅಲ್ಪಭತ್ಯೆಯನ್ನೂ ಮಕ್ಕಳಿಗಾಗಿ ಖರ್ಚು ಮಾಡದೇ ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಳ್ಳುವವರೂ ಹಲವರಿದ್ದಾರೆ. ಬಡ ಅಂಗವಿಕಲ ಮಕ್ಕಳನ್ನು ಕುಟುಂಬದವರೇ ನಿಕೃಷ್ಟವಾಗಿ ಕಂಡು ನಿರ್ಲಕ್ಷಿಸುವುದು ಮಾಮೂಲು. ಅವರಿಗೆ ಅವಶ್ಯಕ ಶಿಕ್ಷಣ ನೀಡಿ, ಸ್ವಾವಲಂಬಿಗಳಾಗಿಸುವ ಪ್ರಯತ್ನಗಳು ನಡೆಯುವುದೂ ಕಡಿಮೆ. ಅಂತಹ ಮಕ್ಕಳಿಗೆ ಆಶಾಕಿರಣವಾದ ಈ ಪೋಲಿಯೋ ಪುನರ್ವಸತಿ ಕೇಂದ್ರ ಕಳೆದ 25 ವರ್ಷಗಳಿಂದ ನೂರಾರು ಮಕ್ಕಳಿಗೆ ಆಸರೆಯಾಗಿದೆ.

6-7 ವರ್ಷದವರಿದ್ದಾಗಲೇ ಅಂಗವಿಕಲ ಮಕ್ಕಳು ಇಲ್ಲಿಗೆ ಸೇರಿದರೆಂದರೆ ಮುಂದೆ ಅವರಿಗೆ ಬೇಕಾಗುವ ವಿಶೇಷ ಶಸ್ತ್ರಚಿಕಿತ್ಸೆ, ಆನಂತರದ ಕೃತಕ ಲಿಂಬ್- ಕ್ಯಾಲಿಪರ್ಸರ್ ಗಳ ಅಳವಡಿಕೆ, govt-school-kidsದಿನನಿತ್ಯದ ಫಿಸಿಯೋಥೆರಪಿ ಚಿಕಿತ್ಸೆ, ಊರುಗೋಲುಗಳೊಂದಿಗೇ ಊಟ-ವಸತಿ-ವಿದ್ಯಾಭ್ಯಾಸ, ಮಕ್ಕಳ ಆಸಕ್ತಿ, ಪ್ರತಿಭೆ, ಸಾಮಥ್ರ್ಯಕ್ಕನುಗುಣವಾಗಿ ವೃತ್ತಿತರಬೇತಿಗಳನ್ನು ಉಚಿತವಾಗಿ ನೀಡಿ ಕೆಲಸದಲ್ಲೂ ತೊಡಗಿಸಿ ಕುಟುಂಬಕ್ಕೆ, ಸಮಾಜಕ್ಕೆ ಹೊರೆಯಾಗದಂತೆ ಸ್ವಾವಲಂಬಿಯಾಗಿಸುವ ಸ್ವಯಂ ಹೊಣೆಗಾರಿಕೆವಹಿಸಿಕೊಂಡಿದೆ ಈ ಕೇಂದ್ರ. ಕನಿಷ್ಠ 12-15 ವರ್ಷಗಳ ನಿರಂತರ ಪಾಲನೆ, ಪ್ರತಿಯೊಂದು ಮಗುವಿನ ಬಗೆಗೆ ವಿಶೇಷ ಗಮನಿಸುವಿಕೆ, ವ್ಯಕ್ತಿತ್ವ ನಿರ್ಮಾಣದ ಜವಾಬ್ದಾರಿ ಖಂಡಿತಾ ಸಾಮಾನ್ಯವಾದ ಕೆಲಸವಂತೂ ಅಲ್ಲ. ಸ್ವತಹ ಅಥೋರೇ ಸ್ಪಿಂಟ್ ಯೂನಿಟ್ ಹೊಂದಿ ಕ್ಯಾಲಿಪರ್ಸರ್ ಗಳನ್ನು ತಾನೇ ತಯಾರಿಸುತ್ತಿರುವುದರೊಂದಿಗೆ, ಮಕ್ಕಳು ಬೆಳೆದಂತೆಲ್ಲಾ ದೇಹದ ಆಕಾರಕ್ಕೆ ತಕ್ಕಂತೆ ಉಪಕರಣವನ್ನು ಮಾರ್ಪಾಟುಗೊಳಿಸಲು ಎಲ್ಲ ಅನುಕೂಲಗಳೂ ಇಲ್ಲಿವೆ.

ಶಿಸ್ತುಬದ್ಧ, ವ್ಯವಸ್ಥಿತ ಅನುಕೂಲತೆಗಳನ್ನು ಹೊಂದಿರುವ ಇಂತಹ ಕೇಂದ್ರ ಇನ್ನೊಂದೆರಡು ವರ್ಷಗಳಲ್ಲಿ ಮುಚ್ಚಿಹೋಗಲಿದೆ! ಏಕೆಂದರೆ ಪೋಲಿಯೋ ಕರ್ನಾಟಕದಿಂದ ನಿರ್ಮೂಲನೆಗೊಂಡಿದೆ. ಕಳೆದ 5-6 ವರ್ಷಗಳಿಂದ ಹೊಸದಾಗಿ ಮಕ್ಕಳು ಇಲ್ಲಿಗೆ ಸೇರ್ಪಡೆಗೊಂಡಿಲ್ಲ. ಇದು ಸಂತಸದ ಸಂಗತಿಯೂ ಹೌದು. ಈ ಕೇಂದ್ರವನ್ನು ಮತ್ತಿನ್ನೊಂದು ಅಸಹಾಯಕ ಮಕ್ಕಳ ಸೇವಾ ಘಟಕವಾಗಿ ಪರಿವರ್ತಿಸುವ ಬಗೆಗೆ ಯೋಜಿಸಲಾಗುತ್ತಿದೆ. ಈಗಿಲ್ಲಿ ಉಳಿದ ಕೆಲವೇ ಕೆಲವು ಮಕ್ಕಳ ಬದುಕು ನೇರ್ಪುಗೊಳಿಸುವ ಶ್ರದ್ಧೆಯಿಂದ, ಅಲ್ಲಿನ ಮೇಲ್ವಿಚಾರಕಿ, ಅವರ ಸ್ವಾವಲಂಬನೆಗಾಗಿ ಕಂಡಕಂಡವರ ಬಳಿ ಅಂಗಲಾಚುವಾಗ, ಗೌರವಧನದ ರೂಪದಲ್ಲಿ ದೊರಕುವ ಅತ್ಯಲ್ಪ ಹಣಕ್ಕಾಗಿ, ತಾಳ್ಮೆಯಿಂದ ಒಂದೊಂದು ಮಗುವಿನ ವ್ಯಕ್ತಿತ್ವ ರೂಪಿಸುವ ಈ ಮಹಿಳೆಗೆ ಆ ಸಂಬಂಧವಿಲ್ಲದ ಮಕ್ಕಳು ಸ್ವಾವಲಂಬಿಗಳಾದರೆ ಏನು ಸಿಕ್ಕುತ್ತದೆ? ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಉದ್ದೇಶಿತ ಗುರಿಯೊಂದರ ಸಾಧನೆಯ ಜೊತೆಗೆ ಇಷ್ಟು ವರ್ಷ ತಾವಿದ್ದ ಹೆಮ್ಮೆ, ಇಲ್ಲಿಗೆ ಬಂದ ಪ್ರತಿಯೊಂದು ಅಂಗವಿಕಲ ಮಗುವೂ ದೃಢ ವ್ಯಕ್ತಿತ್ವವಾಗಿ ಸಮಾಜಕ್ಕೆ ಹಿಂದಿರುಗಿದ ಬಗೆಗೆ ಅಪರಿಮಿತ ಸಂತಸ, ಅಲ್ಲಿನ ಕೆಲಸಗಾರರೆಲ್ಲರಿಗೆ! ಈ ಭಾವಗಳು ಖಂಡಿತಾ ಬೆಲೆ ಕಟ್ಟಲಾಗದಂತಹವು.

ಅಲ್ಲಿನ ಮಕ್ಕಳು, ಆಗು-ಹೋಗುಗಳೊಂದಿಗೆ ಹಲವು ವರ್ಷಗಳ ಒಡನಾಟವಿರುವುದರಿಂದ, ಅಂಗವೈಕಲ್ಯತೆಯ ಕೀಳರಿಮೆಯಿಂದ ಕುಗ್ಗುತ್ತಾ ಈ ಕೇಂದ್ರಕ್ಕೆ ಬಂದು ಸೇರುವ ಮಕ್ಕಳು,Polio ತಮ್ಮ ನೋವು ಮೀರಿ ಗಟ್ಟಿ ವ್ಯಕ್ತಿತ್ವಗಳಾಗಿ ಹೊರಬೀಳುವುದನ್ನು ಹತ್ತಿರದಿಂದ ಕಂಡ ಅನುಭವವಿದೆ. ಆ ಪ್ರಕ್ರಿಯೆ ಎಂಥಹ ಶ್ರಮ, ಶ್ರದ್ಧೆ, ಸಹನೆಯನ್ನು ಬೇಡುವಂತಹುದೆಂಬುದು ಅನುಭವಿಸಿದವರಿಗೇ, ಹತ್ತಿರದವರಿಗೇ ಗೊತ್ತಿರುವಂತದ್ದು. ಇಲ್ಲಿ ಬಂದು ಸ್ವಾವಲಂಬಿಗಳಾಗಿರುವ ಹೆಚ್ಚಿನ ಮಕ್ಕಳು ಮುಸ್ಲಿಂ, ಕ್ರೈಸ್ತ ಹಾಗೂ ಹಿಂದೂ, ಮತ್ತದರ ಎಲ್ಲಾ ಒಳ ಜಾತಿಗೆ ಸೇರಿದವರು. ಇಲ್ಲಿಂದ ಸಂಪೂರ್ಣ ಉಚಿತ ಸಹಾಯ, ಸಹಕಾರ ಪಡೆದು ತಮ್ಮ ನೆಲೆಗಳನ್ನು ಕಂಡು ಕೊಂಡಿರುವ ಎಲ್ಲ ಜಾತಿ, ಮತಗಳ ಯುವಕ-ಯುವತಿಯರು ತಮ್ಮ ಹೊಸ ಸಂಸಾರದೊಂದಿಗೆ ಈ ಕೇಂದ್ರಕ್ಕೆ ಭೇಟಿ ನೀಡಲು ಬರುವಾಗ ಮಕ್ಕಳಿಗಾಗಿ ಸಿಹಿಯೊಂದಿಗೇ ಪ್ರೀತಿಯನ್ನೂ ಹೊತ್ತು ತರುತ್ತಾರೆ. ತಾವು ಇಂದು ಮುಖ್ಯವಾಹಿನಿಯಲ್ಲಿ ತಲೆಎತ್ತಿ ಬದುಕಲು ಆಸರೆಯಾದ ಈ ಕೇಂದ್ರದ ಬಗೆಗೆ ಅಪಾರ ಗೌರವ, ಹೆಮ್ಮೆಯೂ ಜೊತೆಗಿರುತ್ತದೆ! ‘ನೀವು, ನಿಮ್ಮವರನ್ನೆಲ್ಲಾ ಬಿಟ್ಟು ಇಂತಹ ಕೇಂದ್ರವೊಂದರ ಆಶ್ರಯದಲ್ಲಿ ಇಷ್ಟು ವರ್ಷಗಳು ಇದ್ದುದಕ್ಕೆ ಬೇಸರವಿದೆಯೇ?’ ಎಂದು ಪ್ರಶ್ನಿಸಿದರೆ ಆ ಯುವಜನರು ಸಿಡಿದು ಬೀಳುತ್ತಾರೆ. ‘ನಮ್ಮ ಕುಟುಂಬ, ಜಾತಿ, ಸರ್ಕಾರ ಯಾರಿಗೂ ನಾವು ಬೇಡವಾಗಿದ್ದ ಕಾಲದಲ್ಲಿ ಈ ಕೇಂದ್ರ ನಮಗೆ ಆಶ್ರಯ, ವಿದ್ಯೆ, ಕೆಲಸ ನೀಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಿದೆ. ಅಂಗವಿಕಲತೆಗೆ, ನೋವಿಗೆ ಯಾವ ಜಾತಿ, ಮತ? ಮಾನವೀಯತೆಯೇ ನಿಜವಾದ ಧರ್ಮ.’ ಎನ್ನುವಾಗ ಮತಾಂಧತೆ, ಕೋಮುವಾದಗಳಿಗೆ ಉತ್ತರ ಸಿಕ್ಕಿಬಿಡುತ್ತದೆ!

ಮತಾಂತರ, ಕೋಮುಗಲಭೆಗಳನ್ನು ಕಂಡಾಗ ನನ್ನಂತಹ ಸಾಮಾನ್ಯರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳೇಳುತ್ತವೆ. ಇಂದಿನ ಸಾಮಾನ್ಯ ಜನರಿಗೆ ನಿಜವಾಗಿ ಏನು ಬೇಕು? ಅವರಿಗೆ ಯಾವುದು ಅತ್ಯಂತ ಮುಖ್ಯವಾದುದು? ವಿರೂಪಗೊಳ್ಳುತ್ತಿರುವ ಇಂದಿನ ಜಾತಿ, ಧರ್ಮ, ಮತಗಳು ಅವರಿಗೆ ಏನನ್ನು ನೀಡುತ್ತಿವೆ? ಸಹಜ ಹಾಗೂ ಸರಳ ಮನುಷ್ಯ ಧರ್ಮವನ್ನೂ ಮೀರಿದ ಮತ-ಧರ್ಮಗಳು ಎಲ್ಲಿವೆ? ಕೊನೆಯದಾಗಿ, ಇವು ಜನರ ಶಾಂತಿ ಮತ್ತು ನೆಮ್ಮದಿಯ ಬದುಕಿಗೆ ಎಷ್ಟು ಅನಿವಾರ್ಯವಾಗಿವೆ? ಎಂಬ ಪ್ರಶ್ನೆ.

ತೀವ್ರ- ಬಡತನ, ಅಸಹಾಯಕತೆ, ಅಸಮಾನತೆ, ನೋವು, ಅವಮಾನಕ್ಕೊಳಗಾದ ಜೀವಗಳಿಗೆ ಅಂತಃಕರಣದ ಸಣ್ಣ ಸಹಾಯಹಸ್ತವೂ ದೊಡ್ಡದಾಗಿಯೇ ಕಾಣುತ್ತದೆ.polio_2 ಮತ್ತು ಅವುಗಳನ್ನು ಅನುಭವಿಸುತ್ತಿರುವ ಜೀವಗಳಿಗೆ ಮುಖ್ಯವೆನಿಸುವ ಅಂಶಗಳೇ ಬೇರೆ! ‘ಸ್ವಾಭಿಮಾನದ ಬದುಕಿ’ಗೆ ಬೇರೆಲ್ಲಕ್ಕಿಂತಾ ಮೊದಲಿನ ಸ್ಥಾನ! ಇದು ಅತ್ಯಂತ ಸಹಜವೆಂಬುದು ಮನಃಶಾಸ್ತ್ರದ ಕನಿಷ್ಠ ತಿಳುವಳಿಕೆ ಹೊಂದಿರುವ ಎಲ್ಲರಿಗೂ ಗೊತ್ತಿರುವಂತದೆ. ಆದರೆ ನಾವೇಕೆ ಪುಟ್ಟ- ಪುಟ್ಟ ಜೀವಕಾರುಣ್ಯದ ‘ಎಲ್ಲಾ’ ಮಾದರಿಗಳನ್ನೂ ಸಲ್ಲದ ಅನುಮಾನ, ಅಹಂಕಾರಗಳಿಂದ ನೋಡುತ್ತಿದ್ದೇವೆ? ಇದಕ್ಕೆ ಪ್ರತಿಯಾಗಿ, ನಾವು ಸದಾ ಹೇಳುತ್ತ ಬಂದಿರುವ ಸರ್ವ-ಶ್ರೇಷ್ಠವಾದ, ಮಾನ್ಯವಾದ, ಅರ್ಹವಾದ ಮಾದರಿಗಳನ್ನು ನಿರ್ಮಿಸಲು ನಮಗೇಕೆ ಸಾಧ್ಯವಾಗಿಲ್ಲ? ಅಥವಾ ಅವುಗಳೆಲ್ಲಾ ಏಕೆ ಚಿಂತನೆ, ಆದರ್ಶ, ಸಿದ್ಧಾಂತಗಳ ಹಂತದಲ್ಲೇ ನಿಂತುಬಿಡುತ್ತವೆ?

ಜಾತಿ, ಮತ, ಧರ್ಮಗಳು ನಮ್ಮ ಅತ್ಯಂತ ಖಾಸಗಿ, ಹಾಗೂ ಸಾಮಾಜಿಕವಾಗಿ ಅಮುಖ್ಯ ವಿಷಯಗಳಾಗಬೇಕಿತ್ತು. ಆದರೆ ಅವೇ ಇಂದು ನಮ್ಮನ್ನು ಆಳುವ, ಒಡೆಯುವ, ಛಿದ್ರಗೊಳಿಸುವ ಹಂತ ತಲುಪಿ ಬಿಟ್ಟಿವೆ. ಅವುಗಳ ರಾಜಕಾರಣವೇ ಎಲ್ಲಕ್ಕಿಂತ ಮುಖ್ಯವಾಗುತ್ತಿದೆ. ಬಡತನ, ಅಸಮಾನತೆ, ಅಸಹಾಯಕತೆ, ಅಂಗವೈಕಲ್ಯ, ಶೋಷಣೆಗಳಿಂದ ನೋವನುಭವಿಸುವ ಜೀವಿಗಳ ಸಂಕಟ, ಅದಕ್ಕೆ ಬೆಂಬಲವಾಗಿ ನಿಲ್ಲುವ ಅಂತಃಕರಣದ ಮಾದರಿಗಳು ನಮಗಿಂದು ಮುಖ್ಯವಾಗುತ್ತಿಲ್ಲ.

ಹೊರಗೆ ಜಾತಿ, ಮತಗಳ ಹೆಸರಿನಲ್ಲಿ ನಿತ್ಯ ಗಲಭೆಗಳು ನಡೆಯುತ್ತಿದ್ದರೂ, ಅವುಗಳನ್ನು ಮೀರಿ ಅಸಹಾಯಕ ಜೀವದ ನೋವಿಗೆ ಪ್ರೀತಿಯಿಂದ ಸ್ಪಂದಿಸುತ್ತಾ, ಆ ಜೀವ ಒಂದಿಷ್ಟಾದರೂ ನೆಮ್ಮದಿಯಿಂದ ಬದುಕುವ ನೆಲೆಗಳನ್ನು ಸದ್ದಿಲ್ಲದೇ ನಿತ್ಯ ನಿರ್ಮಾಣ ಮಾಡುತ್ತಿದ್ದರೂ, ಸಾಮಾನ್ಯರಂತೆ ಬದುಕುವ, ಬದುಕಲು ಬಿಡುವ, ಬದುಕಲು ಪ್ರೇರೇಪಿಸುವ ಮಾದರಿಗಳನ್ನು ನಾವೇಕೆ ಗೇಲಿಮಾಡಿ ನಗುತ್ತಿದ್ದೇವೆ? ಅಥವ ನಿರ್ಲಕ್ಷಿಸುತ್ತಿದ್ದೇವೆ? ಇಂತಹ ನೂರಾರು ಮಾನವೀಯ ಮಾದರಿಗಳು ಇಂದಿಗೂ ನಮ್ಮ ಮುಂದಿರುವುದು ಹೆಮ್ಮೆಯ ಸಂಗತಿಯೇ. ಆದರೆ ಅವುಗಳಿಗಿಂತ ನಮಗೆ ‘ರೋಚಕತೆ’ ನೀಡುವ ಋಣಾತ್ಮಕ ಸುದ್ದಿಗಳೇ ದೊಡ್ಡವೆನಿಸಿಬಿಡುತ್ತವಲ್ಲಾ? ನಮ್ಮ ಅಭಿರುಚಿಯಲ್ಲಿಯೇ ಈ ದೋಷವಿದೆಯೇ? ಅಥವಾ ನಮ್ಮ ಮಾಧ್ಯಮಗಳು ನಮ್ಮ ಅಭಿರುಚಿಯ ದಿಕ್ಕನ್ನೇ ರೋಚಕತೆಯ ಹೆಸರಿನಲ್ಲಿ ಕೆಡಿಸಿಬಿಟ್ಟಿವೆಯೇ?

ಇಲ್ಲಿ ಪ್ರತಿಯೊಂದು ಜೀವಿಯ ನೋವೂ ಮುಖ್ಯವಾದುದೇ. ಅದಕ್ಕೆ ಬೇಕಿರುವುದು ಒಣ ಅನುಕಂಪ, ತರ್ಕವಲ್ಲ. ಆ ಜೀವದೊಂದಿಗೆ ಒಂದಾಗಿ ಅದನ್ನೆದುರಿಸುವ ಛಲವನ್ನು ಮೂಡಿಸುವ ವಾಸ್ತವದ ಸಾಮಾನ್ಯ ನಡೆ, ಶ್ರಮ, ಕೆಲಸಗಳು ಹಾಗೂ ಆ ದಿಕ್ಕಿನೆಡೆಗಿನ ಸಣ್ಣ ಪ್ರಯತ್ನಗಳೂ ನಮಗಿಂದು ಮುಖ್ಯವಾಗಬೇಕಿದೆ. ಅವುಗಳನ್ನು ಮತ್ತೆ ಮತ್ತೆ ‘ಎತ್ತಿ’ಹಿಡಿಯಬೇಕಿದೆ. ಈ ಹಿನ್ನೆಲೆಯಲ್ಲಿಯೇ ನಮಗಿಂದು, ಸದ್ದಿಲ್ಲದೇ ಸಾಮಾನ್ಯ ಜನರಲ್ಲಿ ಬೆರೆತು ಈ ನೆಲಕ್ಕೆ ಆಪ್ತವಾಗುವಂತಾ ತಮ್ಮ ಸಾಮಾನ್ಯ ನಡೆಗಳಿಂದ ಜಾತಿ, ಮತಗಳನ್ನು ಮೀರಿ ಸಾಮಾಜಿಕ ಹಿತಾಸಕ್ತಿಯಿಂದ, ಜೀವಗಳ ಒಳಿತಿಗೆ ಕೈ ನೀಡುವಂತಾ ಕೆಲಸಗಳಲ್ಲಿ ತೊಡಗಿದ ಮದರ್ ಥೆರೆಸಾ, ಬಾಬಾ ಆಮ್ಟೆ, ಅಣ್ಣಾ ಹಜಾರೆ, ಸಾಲುಮರದ ತಿಮ್ಮಕ್ಕ, ಸುಂದರ್ಲಾಲ್ ಬಹುಗುಣ, ರಾಜೇಂದ್ರ ಸಿಂಗ್, ಪಿ. ಸಾಯಿನಾಥ್……. ರಂತಹ ಧೀಮಂತ ವ್ಯಕ್ತಿಗಳ ಬದುಕು ವಿಶಿಷ್ಟವೂ, ಮಾದರಿಯೂ ಎನಿಸುತ್ತದೆ.

ಬದುಕಿನ ಅಂತಿಮಗುರಿ, ಮಾಹಿತಿ ಎಂಬ ಜ್ಞಾನವೇ ಎಂಬ ಭ್ರಮೆಗೆ ಬಿದ್ದು, ಅಂತಃಕರಣದ ಅರಳುವಿಕೆಯನ್ನು ನಾವಿಂದು ನಿರ್ಲಕ್ಷಿಸುತ್ತಿದ್ದೇವೆ. ಸಾಮಾನ್ಯ ಮನುಷ್ಯನ ಶ್ರಮವನ್ನೂ, ಹೃದಯ ವೈಶಾಲ್ಯತೆಯನ್ನೂ, ಬೆವರಿನ ಫಲವನ್ನೂ ನಾವು ನಿರಂತರ ಅವಮಾನಿಸುತ್ತಲೇ ಬಂದಿದ್ದೇವೆ. ಅದರಿಂದಾಗಿಯೇ ವ್ಯಕ್ತಿ-ವ್ಯಕ್ತಿಗಳ ನಡುವೆ ಇಂದು ಅಗಾಧ ಕಂದಕ ಏರ್ಪಟ್ಟಿದೆ. ಇಂದು ಮಾನವೀಯತೆ, ನಿಷ್ಕಾರಣ ಕಾಳಜಿ, ಶ್ರದ್ಧೆ, ಪ್ರೀತಿಯ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಸಾಮಾನ್ಯ ಜೀವಗಳನ್ನೂ, ಅಂತಹ ಸಣ್ಣ-ಪುಟ್ಟ ಕ್ರಿಯೆಗಳನ್ನು ಗೌರವದಿಂದ ಕಂಡಾಗ ಮಾತ್ರ ಕಂದಕಗಳು ಮುಚ್ಚಿಕೊಳ್ಳಬಹುದಷ್ಟೇ. ಅದು ಎಲ್ಲಕ್ಕಿಂತ ಮುಖ್ಯವಾದುದು. ಹಾಗೂ ಅದೇ ಎಲ್ಲಾ ಜಾತಿ, ಮತಗಳನ್ನೂ ಮೀರಿದ ಜೀವಕಾರುಣ್ಯಕ್ಕೆ ನಾವು ನೀಡುವ ಬೆಲೆಯೂ ಹೌದು.