Author Archives: admin

ಭಾರತದ ಕುಲ ತಿಲಕರ ಪರಾಮರ್ಶೆ : ಭಾಗ 1


– ಶ್ರೀಧರ್ ಪ್ರಭು


 

“In spite of the verdict of the Jury, I maintain that I am innocent. There are higher powers that rule the destiny of men and nations and it may be the will of providence that the cause which I represent may prosper more by my suffering than my remaining free.”

(“ಜೂರಿಗಳ ತೀರ್ಮಾನವೇನೆ ಇರಲಿ, ನನ್ನ ಪ್ರಕಾರ ನಾನೊಬ್ಬ ನಿರಪರಾಧಿ. ಮಾನವರ ಮತ್ತು ದೇಶಗಳ ಭವಿಷ್ಯವನ್ನು ತೀರ್ಮಾನಿಸುವದು ಮಹಾನ್ ಶಕ್ತಿಗಳು. ನಾನು ನಂಬಿದ ಅದರ್ಶಗಳನ್ನು ಸಿದ್ದಿಸಲು, ನಾನು ಮುಕ್ತವಾಗಿ ಬದುಕುವುದಕ್ಕಿಂತ ಸಂಘರ್ಷ ಪಟ್ಟು ಬಂಧನದಲ್ಲಿರರುವುದರಿಂದಲೇ ಹೆಚ್ಚು ಸೂಕ್ತವೆಂದು ಆ ವಿಧಿಯೇ ತೀರ್ಮಾನಿಸಿರಬೇಕು.” )

ಬಾಂಬೆ ಹೈ ಕೋರ್ಟ್‌ನ ಹೃದಯ ಭಾಗದಲ್ಲಿರುವ ನ್ಯಾಯಂಗಣ ಕೊಠಡಿಯ ೪೬ ರ ಹೊರ ಪಾರ್ಶ್ವದಲ್ಲಿರುವ ಒಂದು ಆಕರ್ಷಕ ಫಲಕದ ಮೇಲೆ ಈ ವಾಕ್ಯಗಳನ್ನು ಕೆತ್ತಲಾಗಿದೆ. ಒಂದು ನ್ಯಾಯಾಲಯದಲ್ಲಿ ಒಬ್ಬ ಆರೋಪಿ ನೀಡಿದ ಹೇಳಿಕೆಗಳನ್ನು lokmanya-tilakಅದೇ ನ್ಯಾಯಾಲಯದ ಆವರಣದಲ್ಲಿ ಕೆತ್ತಿದ ಉದಾಹರಣೆ ಪ್ರಾಯಶಃ ಇಡೀ ವಿಶ್ವದಲ್ಲೇ ಇರಲಿಕ್ಕಿಲ್ಲ.

ಈ ವಾಕ್ಯಗಳನ್ನು ಹೇಳಿದ ರಾಷ್ಟ್ರೀಯ ಅಸಂತುಷ್ಟಿಯ ಜನಕ (Father of the Indian unrest), ಭಾರತದ ರಾಷ್ಟ್ರೀಯ ಚಳುವಳಿಯ ಪಿತಾಮಹ, ಸ್ವರಾಜ್ಯವೇ ತನ್ನ ಜನ್ಮ ಸಿದ್ಧ ಹಕ್ಕೆಂದು ಸಾರಿದ ಲೋಕಮಾನ್ಯ ಬಾಳ ಗಂಗಾಧರ ತಿಲಕರು ಸರ್ವತ್ರ ಮನ್ನಣೆ ಮತ್ತು ಗೌರವಕ್ಕೆ ಪಾತ್ರರಾದವರು. ಅವರು ಪ್ರಾರಂಭಿಸಿದ ಸಾರ್ವಜನಿಕ ಗಣೇಶೋತ್ಸವ ಇಂದು ಭಾರತಾದ್ಯಂತ ಆಚರಿಸಲಾಗುತ್ತಿದೆ.

ಬಹುಷಃ ಕಾಂಗ್ರೆಸ್, ಕಮ್ಯುನಿಸ್ಟರು ಮತ್ತು ಬಹು ಮುಖ್ಯವಾಗಿ ಸಂಘ ಪರಿವಾರದವರು ಮನ:ಪೂರ್ವಕವಾಗಿ ಮತ್ತು ಸಮಾನವಾಗಿ ಗೌರವಿಸುವ ಕೆಲವೇ ರಾಷ್ಟ್ರೀಯ ನಾಯಕರಲ್ಲಿ ತಿಲಕರೊಬ್ಬರು. ಕಾಂಗ್ರೆಸ್ ಮತ್ತು ಸಂಘ ಪರಿವಾರ ಅವರನ್ನು ಒಬ್ಬ ಅಪ್ಪಟ ರಾಷ್ಟ್ರವಾದಿಯಾಗಿ ಗೌರವಿಸಿದರೆ, ಕ್ರಾಂತಿಕಾರಿ ಮಾರ್ಗವನ್ನು ಬೆಂಬಲಿಸಿ, ೧೯೧೭ ರ ಸೊವಿಯಟ್ ಕ್ರಾಂತಿಯನ್ನು ಮತ್ತು ಅದರ ರೂವಾರಿ ಲೆನಿನ್ ರನ್ನು ಹಾರ್ದಿಕವಾಗಿ ಹಾಡಿ ಹೊಗಳಿದ ತಿಲಕರ ಬಗ್ಗೆ ಕಮ್ಯುನಿಸ್ಟರಿಗೆ ಅತೀವ ಅಭಿಮಾನವಿದೆ. ಸ್ವತಹ ಲೆನಿನ್ ಒಂದು ಕಡೆ ತಿಲಕರ ಬಗ್ಗೆ ‘ಅತ್ಯಂತ ಸುಸ್ಥಿರ ಮತ್ತು ಪುರೋಗಾಮಿ ನಾಯಕ…” (“…the most consistent and forward-looking leader”) ಎಂದಿದ್ದಾರೆ. ತಿಲಕರ ಮೇಲೆ ದೇಶದ್ರೋಹದ ಮೊಕದ್ದಮೆ ನಡೆದಾಗ ತಿಲಕರ ಪರ ವಕಾಲತ್ತು ನಡೆಸಿದ್ದು ಸ್ವತಹ ಮೊಹಮ್ಮದ್ ಅಲಿ ಜಿನ್ನಾ. ಜಿನ್ನಾ ಮತ್ತು ತಿಲಕರ ಸ್ನೇಹ ಮತ್ತು ಸಾಂಗತ್ಯ (comradeship) ಬಗ್ಗೆ ಪ್ರಸಿದ್ದ ಲೇಖಕ ಎ. ಜಿ. ನೂರಾನಿ “Tilak and Jinna – Comrades in Freedom Struggle” ಎಂಬ ಬಹು ಚರ್ಚಿತ ಪುಸ್ತಕವನ್ನೇ ಬರೆದಿದ್ದಾರೆ. ಮುಸ್ಲಿಂ ಸಮುದಾಯವೂ ತಿಲಕರನ್ನು ತೀಕ್ಷ್ಣವಾಗಿ ವಿರೋಧಿಸಿದ ನಿದರ್ಶನಗಳಿಲ್ಲ. ಹೀಗೆ ಸಾರ್ವತ್ರಿಕ ಮನ್ನಣೆಯಿರುವ ತಿಲಕರನ್ನು ವಿಮರ್ಶೆಗೊಳಪಡಿಸುವುದು ಹಿಂದೆಯೂ ಮತ್ತು ಇಂದಿಗೂ ಸಾಕಷ್ಟು ‘ರಾಷ್ಟ್ರೀಯ ಅಸಂತುಷ್ಟಿ’ ಗೆ ಕಾರಣವಾಗುವುದರಲ್ಲಿ ಸಂಶಯವೇ ಇಲ್ಲ.

ಪ್ರಾಯಶಃ ತಿಲಕರನ್ನು ಮೊಟ್ಟ ಮೊದಲ ಬಾರಿ ವಿಮರ್ಶೆ ಮಾಡಿದ್ದು ಮಹಾತ್ಮಾ ಫುಲೆ. ತಮ್ಮ ಕೇಸರಿ ಪತ್ರಿಕೆ ಪ್ರಾರಂಭಿಸಲು Jyotirao Phuleನಿಧಿ ಸಂಗ್ರಹ ಮಾಡಲೋಸುಗ ಸಾರ್ವಜನಿಕ ಸಭೆಗಳನ್ನು ಆಯೋಜಿಸಿದಾಗ ಮೊಟ್ಟ ಮೊದಲ ಬಾರಿಗೆ ಫುಲೆ ತಿಲಕರ ಐತಿಹಾಸಿಕ ಆಕರಗಳನ್ನು ಸಾರ್ವಜನಿಕವಾಗಿ ಪ್ರಶ್ನಿಸಿದರು.

ಹಂಟರ್ ಆಯೋಗದ ಮುಂದೆ ಫುಲೆ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಬಗ್ಗೆ ಮನವಿ ಸಲ್ಲಿಸಿದರು. ಇದು ತಿಲಕರೂ ಸೇರಿದಂತೆ ಅನೇಕ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಯಿತು.

ತಿಲಕರು “ಮರಾಠ” ಎಂಬ ತಮ್ಮ ಇಂಗ್ಲಿಷ್ ಪತ್ರಿಕೆಯಲ್ಲಿ ಸರಣಿ ಲೇಖನಗಳನ್ನು ಮತ್ತು ಸಂಪಾದಕೀಯಗಳನ್ನು ಬರೆದು ಶೂದ್ರ ಮತ್ತು ದಲಿತ ವಿದ್ಯಾರ್ಥಿಗಳು ಅಧುನಿಕ ಶಿಕ್ಷಣ ಪಡೆಯುವುದನ್ನು ಉಗ್ರವಾಗಿ ವಿರೋಧಿಸಿ ಲೇಖನ ಬರೆದರು. ಇದರ ಸಾರಾಂಶವೆಂದರೆ: ಕುಂಬಾರ, ಕುಣಬಿ, ಚಮ್ಮಾರ ಇತ್ಯಾದಿ ಜನಾಂಗಗಳ ತಮ್ಮ ವೃತ್ತಿಗಳನ್ನೇ ಮುಂದುವರೆಸಿಕೊಂಡು ಹೋಗಬೇಕು. ಶೂದ್ರರ ಮಕ್ಕಳು ಅಧುನಿಕ ಶಿಕ್ಷಣ ಪಡೆದರೆ ಅವರು ತಮ್ಮ ತಂದೆ ತಾಯಿಯರನ್ನೇ ತುಚ್ಚವಾಗಿ ಕಂಡು ಅಧುನಿಕತೆಯನ್ನೇ ಆರಾಧಿಸ ತೊಡಗುತ್ತಾರೆ. ಇತಿಹಾಸ, ಗಣಿತ, ಭೂಗೋಳ ಇತ್ಯಾದಿ ವಿಷಯಗಳನ್ನು ಓದಿದರೆ ಈ ಕೆಳಜಾತಿಯ ಜನಕ್ಕೆ ಪ್ರಯೋಜನವಾದರೂ ಏನು? ಇನ್ನು ಇಂಥವರ ಮಕ್ಕಳೆಲ್ಲ ಓದಿ ವಿದ್ಯಾವಂತರಾದರೆ ಹೊಲಗಳಲ್ಲಿ ದುಡಿಯುವವರು ಯಾರು? ತೆರಿಗೆದಾರರ ಸಾವಿರಗಟ್ಟಲೆ ಹಣವನ್ನು ಈ ರೀತಿ ಅಪಾತ್ರರ ಮೇಲೆ ಖರ್ಚು ಮಾಡಲು ಸರಕಾರಕ್ಕೆ ನಾಚಿಗೆಯಾಗಬೇಕು ತಮ್ಮ ತಮ್ಮ ಕುಲ ಕಸುಬಿನಲ್ಲೇ ಶೂದ್ರ ಮತ್ತು ದಲಿತರ ಅವರ ಮುಕ್ತಿ ಇರುವುದು.

ಹಾಗೆಯೇ, ತಿಲಕರು ಇಂತಹುದೇ ಕಾರಣಗಳಿಗಾಗಿ ಮಹಿಳೆಯರು ವಿದ್ಯಾವಂತರಾಗುವುದನ್ನು ಕೂಡ ವಿರೋಧಿಸಿದರು. ಮಹಿಳೆ ಅಧುನಿಕ ಶಿಕ್ಷಣ ಪಡೆದರೆ ತನ್ನ ತಂದೆ ತಾಯಿ ಮತ್ತು ಗಂಡಂದಿರಿಗೆ ವಿಧೇಯಳಾಗಿರಲು ಸಾಧ್ಯವೇ ಎಂದು ಪ್ರಶ್ನಿಸಿದರು.

ದಲಿತ ಶೂದ್ರರ ಮಕ್ಕಳು ಸವರ್ಣೀಯ ಮಕ್ಕಳ ಜೊತೆ ಓದುವುದನ್ನೂ ಕೂಡ ತಿಲಕರು ಉಗ್ರವಾಗಿ ಟೀಕಿಸಿದರು. ಸ್ವತಃ ದಲಿತ ಶೂದ್ರರೇ ತಮ್ಮ ಮಕ್ಕಳನ್ನು ಸವರ್ಣೀಯರ ಜತೆ ವ್ಯಾಸಂಗ ಮಾಡಲು ಕಳುಹಿಸುತ್ತಿಲ್ಲ ಅಂಥದ್ದರಲ್ಲಿ ಕೆಲವು ಮೂರ್ಖ ಬ್ರಿಟಿಷ್ ಅಧಿಕಾರಿಗಳು ನಮ್ಮವರೇ ಆದ ಕೆಲ ನಿಷ್ಪ್ರಯೋಜಕ ಸಮಾಜ ಸುಧಾರಕರ ಮಾತು ಕಟ್ಟಿಕೊಂಡು ಈ ತರಹದ ‘ಅಪ್ರಯೋಜಕ ಮತ್ತು ಕಾರ್ಯಸಾಧುವಲ್ಲದ’ ಕ್ರಮಗಳನ್ನು ಜಾರಿ ಮಾಡುತ್ತಿದ್ದಾರೆ ಎಂದು ಬ್ರಿಟಿಷರ ಮೇಲಧಿಕಾರಿಗಳಿಗೆ ದೂರು ಸಹ ಸಲ್ಲಿಸಿದರು. ಬ್ರಿಟೀಷರ ವಿರುದ್ಧ ಹೋರಾಟ ಮಾಡುತ್ತಲೇ ಫುಲೆ ಮತ್ತವರ ಸಂಗಡಿಗರ ಮೇಲೆ ಚಾಡಿ ಚುಚ್ಚಲು ತಿಲಕರಿಗೆ ಯಾವ ದೇಶಪ್ರೇಮವೂ ಅಡ್ಡಿ ಬರಲಿಲ್ಲ.

ತಿಲಕರು ಇಷ್ಟೆಲ್ಲಾ ದ್ವೇಷ ಸಾಧಿಸಿದರೂ ಮಹಾತ್ಮಾ ಫುಲೆ ತಿಲಕರನ್ನು ಹೇಗೆ ನಡೆಸಿಕೊಂಡರು ಎಂಬುದು ಬಹು ಮುಖ್ಯ.

೧೮೮೨ ರಲ್ಲಿ, ಶಿವಾಜಿ ಮಹಾರಾಜರ ವಂಶದವರಿಗೆ ಬ್ರಿಟಿಷ್ ಸರಕಾರ ಅನ್ಯಾಯವೆಸಗಿದೆ ಎಂದು (ತಿಲಕರು ಶಾಹು ಮಹಾರಾಜರಿಗೆ ಅಪಮಾನ ಮಾಡಿದಷ್ಟೇನೂ ಬ್ರಿಟಿಷರು ಮಾಡಿರಲಿಕ್ಕಿಲ್ಲ), ತಿಲಕರು ಮತ್ತು ಅಗರ್ಕರ್ ಎಂಬ ಇನ್ನೊಬ್ಬ ಮುಖಂಡರ ಜೊತೆ ಸೇರಿಕೊಂಡು ಒಂದು ಚಳುವಳಿ ಸಂಘಟಿಸಿದರು. ಇದರಿಂದ ಕಾನೂನು ಭಂಗವಾಯಿತೆಂಬ ಆರೋಪ ಹೊರಿಸಿ ಬ್ರಿಟಿಷರು ಇವರಿಬ್ಬರನ್ನೂ ಮುಂಬೈನಲ್ಲಿನ ಡೊಂಗ್ರಿಯಲ್ಲಿ ಬಂಧಿಸಿದರು. ಆಗ ನ್ಯಾಯಾಲಯದಲ್ಲಿ ೧೦೦೦೦ ರೂಪಾಯಿಗಳ ಜಾಮೀನು ಕೊಡಬೇಕೆಂಬ ಶರತ್ತನ್ನು ವಿಧಿಸಲಾಯಿತು. ಅಷ್ಟು ಆಗುವಾಗ ತಿಲಕರ ಹಿಂದೆ ಓಡಾಡಿಕೊಂಡಿದ್ದ ಸುಧಾರಕರೆಲ್ಲ ದಿಕ್ಕಾ ಪಾಲಾಗಿ ಓಡಿದ್ದರು. ಮಹಾತ್ಮಾ ಫುಲೆ ತಾವೇ ಸ್ವಯಂ ಪ್ರೇರಣೆಯಿಂದ ಸತ್ಯಶೋಧಕ ಸಮಾಜದ ವತಿಯಿಂದ ಹಳ್ಳಿ ಹಳ್ಳಿಗೆ ತಿರುಗಿ ವಂತಿಗೆ ಸಂಗ್ರಹ ಮಾಡಿ ತಿಲಕ ಮತ್ತು ಅವರ ಸಂಗಡಿಗರನ್ನು ಬೇಲ್ ಹಣ ಕೊಟ್ಟು ಬಿಡಿಸಿದರು.ನಂತರ ನಡೆದ ತಿಲಕರ ಮೇಲೆ ಹೂಡಲಾದ ಮೊಕದ್ದಮೆಯಲ್ಲಿ ತಿಲಕರಿಗೆ ಮೂರು ತಿಂಗಳ ಕಾರಾವಾಸ ಶಿಕ್ಷೆಯಾಯಿತು. ತಿಲಕರ ಬಿಡುಗಡೆಗೆ ಒತ್ತಾಯಿಸಿ ನಂತರದಲ್ಲಿ ತಿಲಕರ ಬಂಧನವನ್ನು ಖಂಡಿಸಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸಿದ ಮಹಾತ್ಮಾ ಫುಲೆ ಒಂದು ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿದರು. ಈ ಕಾರ್ಯಕ್ರಮದಿಂದಾಗಿಯೇ ಮುಂಬೈ ಪ್ರಾಂತ್ಯದಲ್ಲೆಲ್ಲ ತಿಲಕರು ಪ್ರಸಿದ್ದಿಗೆ ಬಂದರು.

ಇದಾದ ನಂತರ, ತಿಲಕರು ಫುಲೆ ಮಹಾತ್ಮರಿಗೆ ‘ನಿಮ್ಮ ಈ ಮಹದುಪಕಾರ ಹೇಗೆ ತೀರಿಸಲಿ’ ಎಂದು ಕೇಳಿದಾಗ bal-gangadhar-tilakಮಹಾತ್ಮರು ಒಂದೇ ಒಂದು ಮಾತು ಹೇಳಿದರು ” ತಿಲಕ್, ನೀವು ಒಬ್ಬ ಮಹಾನ್ ನಾಯಕನಾಗಿ ಬೆಳೆದು ನಿಲ್ಲುವ ಸರ್ವ ಸಾಧ್ಯತೆಗಳನ್ನೂ ನಾನು ನೋಡಬಲ್ಲೆ. ನಿಮ್ಮಲ್ಲಿ ಒಂದೇ ಒಂದು ದೋಷವಿದೆ; ಕೇವಲ ಬ್ರಾಹ್ಮಣರನ್ನು ಸಂಘಟಿಸುವುದನ್ನು ಬಿಟ್ಟುಬಿಡಿ. ಸಮಾಜದ ಎಲ್ಲ ವರ್ಗಗಳಿಗೂ ನೇತೃತ್ವ ಕೊಡಿ. ಇಷ್ಟೇ ನಿಮ್ಮಲ್ಲಿ ನಾನು ಕೇಳಿಕೊಳ್ಳುವುದು”.

ದುರ್ದೈವವೆಂದರೆ, ಹೀಗೆ ತಮ್ಮನ್ನು ಸಲುಹಿದ ಮಹಾತ್ಮಾ ಫುಲೆ ಹುತಾತ್ಮರಾದಾಗ ತಮ್ಮ ದೈನಿಕದಲ್ಲಿ ಮಹಾತ್ಮರ ನಿಧನದ ಕುರಿತು ಒಂದೇ ಒಂದು ಚಿಕ್ಕ ಸಾಲನ್ನು ಸುದ್ದಿಯ ರೂಪದಲ್ಲಿ ಕೂಡ ಕೂಡ ಬರೆಯಲಿಲ್ಲ! ಇನ್ನು ತಿಲಕರ ಸಂಗಡಿಗ ಅಗರ್ಕರ್ ಕೂಡ ಈ ವಿಷಯದಲ್ಲಿ ಹಿಂದೆ ಬೀಳಲಿಲ್ಲ. ತಮ್ಮ ಪತ್ರಿಕೆ “ಸುಧಾರಕ” (!?) ದಲ್ಲಿ ಮಹಾತ್ಮರ ನಿಧನದ ಬಗ್ಗೆ ಒಂದು ಅಕ್ಷರವನ್ನೂ ಬರೆಯಲಿಲ್ಲ. ಇದೇ ತಿಲಕರು ಮಹಾತ್ಮರಿಗೆ ಸಲ್ಲಿಸಿದ ಕಾಣಿಕೆ!

ಇನ್ನು ತಿಲಕರು ಶಾಹು ಮಹಾರಾಜ್ ಮತ್ತು ಬಾಬಾ ಸಾಹೇಬರನ್ನು ನಡೆಸಿಕೊಂಡ ರೀತಿ ಇನ್ನೂ ಆಸಕ್ತಿಕರವಾಗಿದೆ.

(ಮುಂದುವರೆಯುತ್ತದೆ…)

ಜೀವೋ ಜೀವಸ್ಯ ಜೀವನಂ – ಮಾಂಸಾಹಾರದ ಮೀಮಾಂಸೆ


– ಶ್ರೀಧರ್ ಪ್ರಭು


 

ಸಸ್ಯವನ್ನು ಕೊಲ್ಲುವುದೂ ಮಹಾಪಾಪ

ಬರೋಬ್ಬರಿ ಒಂದು ಶತಮಾನದ ಹಿಂದಿನ ಘಟನೆ. ೧೯೧೫ ರಲ್ಲಿ ಬ್ರಿಟಿಷ್ ಇಂಡಿಯಾದ ಭಾಗವಾಗಿದ್ದ (ಇಂದು ಬಾಂಗ್ಲಾದೇಶದಲ್ಲಿರುವ) ಬಿಕ್ರಮಪುರದಲ್ಲೆಲ್ಲ ಬಹು ದೊಡ್ಡ ಸಂಭ್ರಮ ಆವರಿಸಿತ್ತು. ಬಿಕ್ರಮಪುರದಲ್ಲಿ ಹುಟ್ಟಿದ ಒಬ್ಬ ಹುಡುಗ ವಿಶ್ವಮಾನ್ಯ ವಿಜ್ಞಾನಿಯಾಗಿ ಬೆಳೆದು ಈ ಊರಿನ ಒಂದು ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ. ಈ ವಿಜ್ಞಾನಿ ಬಿಕ್ರಮಪುರದ ಜನತೆಯನ್ನು ಉದ್ದೇಶಿಸಿ ಹೇಳಿದ ಮಾತುಗಳಿವು:

“ನನ್ನ ಬಾಲ್ಯದಲ್ಲಿ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳುಹಿಸುವುದೇ ಒಂದು ಪ್ರತಿಷ್ಠೆಯ ಪ್ರತೀಕವಾಗಿತ್ತು. ಅಲ್ಲಿ ರಾಜ ಮಹಾರಾಜರ ಇಲ್ಲವೇ ಪ್ರತಿಷ್ಟಿತ ಮನೆತನದ ಮಕ್ಕಳು ಮಾತ್ರ ಓದಲು ಸಾಧ್ಯವಿತ್ತು. ನನ್ನ ತಂದೆಗೆ ಇಂಗ್ಲಿಷ್ ಶಾಲೆಗೆ ಹಾಕಲು ಸಾಧ್ಯವಿತ್ತಾದರೂ ನನ್ನನ್ನು ಸಾಮಾನ್ಯ ಜನರ ಮಕ್ಕಳು ಓದುತ್ತಿದ್ದ ಮಾತೃಭಾಷೆಯ ಶಾಲೆಗೇ ಕಳುಹಿಸಿದರು. ಅಲ್ಲಿ ನನ್ನ ಎಡಗಡೆ ಒಬ್ಬ ಮುಸಲ್ಮಾನ ಜವಾನನ ಮಗ ಕುಳಿತುಕೊಳ್ಳುತ್ತಿದ್ದರೆ ಬಲಗಡೆ ಒಬ್ಬ ಮೀನುಗಾರನ ಮಗ ಕುಳಿತುಕೊಳ್ಳುತ್ತಿದ್ದ. ಈ ನೆಲದ ಗುಣವನ್ನು ಹೀರಿ ಬೆಳೆದ ಮಕ್ಕಳೊಂದಿಗೆ ನಾನು ಬೆರೆತು ಅವರು ಹೇಳುತ್ತಿದ್ದ ಪಶು, ಪಕ್ಷಿಗಳ, ಮೀನು-ಏಡಿಗಳ ಕಥೆಗಳನ್ನು ನಾನು ಇನ್ನಿಲ್ಲದ ಕುತೂಹಲದಿಂದ ಆಲಿಸುತ್ತಿದ್ದೆ. ಹೀಗಾಗಿಯೇ ನನ್ನಲ್ಲಿ ಪ್ರಕೃತಿಯ ಕುರಿತು ಅತೀವ ಆಸಕ್ತಿ ಬೆಳೆಯಿತು. ನನ್ನ ತಾಯಿ ಒಬ್ಬ ಸಂಪ್ರದಾಯಸ್ಥ ಹಿನ್ನೆಲೆಯಿಂದ ಬಂದವರಾಗಿದ್ದರೂ, ಶಾಲೆಯಿಂದ ಆಟವಾಡಿ ನನ್ನೊಂದಿಗೆ ಬಂದ ನನ್ನೆಲ್ಲ ಸ್ನೇಹಿತರಿಗೆ ತುಂಬು ಪ್ರೀತಿಯಿಂದ ಕೈತುತ್ತು ನೀಡುತ್ತಿದ್ದರು. ಅಸ್ಪೃಶ್ಯತೆ ಎಂಬುದು ಅವರಿಗೆ ಇರಲೇ ಇಲ್ಲ. ಇನ್ನೊಂದು ಜೀವವನ್ನು ಅಥವಾ ವ್ಯಕ್ತಿಯನ್ನು “ಕೀಳು” ಅಥವಾ ಅಸ್ಪೃಶ್ಯ ಎಂದು ಪರಿಗಣಿಸುವುದು ನನ್ನ ಕಲ್ಪನೆಗೆ ಕೂಡ ಎಟುಕುತ್ತಿರಲಿಲ್ಲ.”

ಈ ಮಹಾನ್ ವ್ಯಕ್ತಿ ಇನ್ಯಾರೂ ಅಲ್ಲ “ಸಸ್ಯಗಳಿಗೆ ಜೀವವಿದೆ” ಎಂದು Jagadish_Chandra_Boseತೋರಿಸಿಕೊಟ್ಟ ಮಹಾನ್ ವಿಜ್ಞಾನಿ ಸರ್ ಜಗದೀಶ್ ಚಂದ್ರ ಬೋಸ್.

ಸಸ್ಯಗಳಿಗೆ ಜೀವವಿದೆ ಎಂಬ ಕಾಣ್ಕೆ ಅನೇಕ ಮಹಾನ್ ವೈಜ್ಞಾನಿಕ ಸಂಶೋಧನೆಗಳಿಗೆ ದಾರಿಯಾಯಿತು. ಹಾಗೆಯೇ ಈ ಸಂಶೋಧನೆ ಸಾಮಾಜಿಕ ಪರಿಸರದ ಮೇಲೂ ಅಗಾಧ ಪರಿಣಾಮ ಬೀರಿದೆ. ಸಸ್ಯ ಜನ್ಯ ಆಹಾರದಿಂದ ಯಾವುದೇ ಹಿಂಸೆಯಾಗದು ಎಂಬ ಸಾವಿರಾರು ವರ್ಷಗಳ ಗೊಡ್ಡು ವಾದಕ್ಕೆ ಈ ಸಂಶೋಧನೆ ಕೊಡಲಿ ಪೆಟ್ಟು ಕೊಟ್ಟಿತು. ಹಿಂಸೆಯಾಗುತ್ತದೆ ಎಂಬ ಕಾರಣದಿಂದ ಒಂದು ಪ್ರಾಣಿಯನ್ನು ಕೊಲ್ಲಬಾರದಾದರೆ, ಒಂದು ಸಸ್ಯವನ್ನು ಏಕೆ ನೋಯಿಸಬೇಕು – ಎಂಬುದಕ್ಕೆ ಯಾರಲ್ಲೂ ಉತ್ತರ ಹುಟ್ಟಲಿಲ್ಲ, ಈ ಸಂಶೋಧನೆಯ ನಂತರ.

ತಮ್ಮದೇ ವೈಜ್ಞಾನಿಕ ಸಂಶೋಧನೆಗೆ ಪುರಸ್ಕಾರ ಸ್ವೀಕರಿಸಲು ತಮ್ಮದೇ ಪ್ರತ್ಯೇಕ ರೈಲು ಚೊಂಬಿನ ನೀರು ಮಾತ್ರ ಕುಡಿದು ಬರುವ ವಿಜ್ಞಾನಿಗಳು ಇಂದಿಗೂ ಇದ್ದಾರಾದರೂ ಆ ಕಾಲದಲ್ಲಿ ಅವರೇ ತುಂಬಿದ್ದರು. ಅಂಥವರ ಕಾಲದಲ್ಲಿ ಅಂತ ವಿಷಮತೆಯ ಮಧ್ಯೆ ಒಬ್ಬ ನೈಜ ವೈಜ್ಞಾನಿಕನಾಗಿ ಬದುಕಿದ ಮಹಾನುಭಾವ ಬೋಸ್.

ನಮ್ಮ ಸಮಾಜದಲ್ಲಿ ಪ್ರಾಣಿಜನ್ಯ ಆಹಾರಕ್ಕೆ ಒಂದು ಬಗೆಯ ವಿಚಿತ್ರವಾದ “ದೋಷ” ಅಂಟಿಕೊಂಡಿದೆ. ಪ್ರಾಣಿಜನ್ಯ ಆಹಾರವನ್ನು ತುಚ್ಚೀಕರಣ ಮಾಡುವ ಪರಿಪಾಠ ಬೆಳೆದು ಬಂದು ಪ್ರಾಣಿಜನ್ಯ ಆಹಾರದಿಂದ ತಮೋ ಗುಣ ಬರುತ್ತದೆ ಇತ್ಯಾದಿ ರೂಪದ, ರೂಪಾಂತರದ ವಾದಗಳು ಇಂದಿಗೂ ಪ್ರಚಲಿತವಿವೆ.

ಶ್ರದ್ಧೆಯಿಂದ ಶ್ರೀ ಕೃಷ್ಣನ ದರ್ಶನ ಮಾಡಲು ಎಲ್ಲ ಜಾತಿಗಳ ಭಕ್ತಾದಿಗಳು ವಿಶ್ವದ ಎಲ್ಲೆಡೆಯಿಂದ ಸಂಪಾದಿಸಿ ಭಕ್ತಿಯಿಂದ ಹರಿಸಿದ ಹಣವನ್ನು ಪಡೆಯಲು ಎಂದಿಗೂ ಸಂಕೋಚ ಪಡದ (ಕೇವಲ ಅನ್ನದಲ್ಲಿ ಮಾತ್ರ ಪಂಕ್ತಿ ಭೇದ ಮಾಡುವ) ವಿಶ್ವ ಹಿಂದೂಗಳೆಲ್ಲರ ನೇತಾರರಾದ ಪೇಜಾವರ ಶ್ರೀಗಳು ಮೇ ೨೦೧೨ ರಲ್ಲಿ ಮಾಂಸಾಹಾರ ಸೇವಿಸುವ ಜನರೊಂದಿಗೆ ಸಹಭೋಜನ ಮಾಡಿದರೆ ತಾಮಸೀ ಗುಣಗಳು ಬರುತ್ತವೆಂದು ಅಪ್ಪಣೆ ಕೊಡಿಸಿದ್ದರು. ದಲಿತ ಕೇರಿಗಳಿಗೆ ಹೋಗಿ ಬಂದ ಮೇಲೆ ಪ್ರಾಣಿಜನ್ಯವಾದ ಪಂಚಗವ್ಯ ಪ್ರೋಕ್ಷಣೆ ಎಷ್ಟು ’ಶಾಸ್ತ್ರ ಸಮ್ಮತ’ ವೆಂದೂ ಅವರೇ ಹೇಳಬೇಕು. ಆ ವಿಷಯ ಹಾಗಿರಲಿ.

ವೈದಿಕಶಾಹಿಗಳ ಅನ್ನಕೋಶ ಮತ್ತು ಭಾವಕೋಶಗಳಲ್ಲಿ ಇನ್ನಿಲ್ಲದಂತೆ ಬೇರುಬಿಟ್ಟು ಕೊಂಡಿದ್ದ ಆದರೆ ಅಂದೊಮ್ಮೆ ಇಂದೊಮ್ಮೆ ಮೇಲಕ್ಕೆ ಬರುತ್ತಿದ್ದ ಈ ರೀತಿಯ ಧರ್ಮ ಸೂಕ್ಷ್ಮಗಳು ಇಂದು ರಾಜಕೀಯವನ್ನು ಢಾಳಾಗಿ ಪ್ರವೇಶಿಸಿ ಜನರ ಜೀವನ ಕೋಶವನ್ನೇ ಮುಕ್ಕಿ ಬಿಟ್ಟಿವೆ. ಧರ್ಮದ ದೃಷ್ಟಿಯಿಂದ ಯಾವುದು ಅಸಮ್ಮತವಾದದ್ದೋ ಅದು ಕಾನೂನಿನ ದೃಷ್ಟಿಯಲ್ಲಿಯೂ ಅಪರಾಧ ಎನ್ನುವ ಪರಸರದಲ್ಲಿ ನಾವಿದ್ದೇವೆ.

‘ಜೀವೋ ಜೀವಸ್ಯ ಜೀವನಂ’

ಒಂದು ಜೀವವೇ ಇನ್ನೊಂದು ಜೀವಕ್ಕೆ ಜೀವನ. ಸಂಸ್ಕೃತದ ಈ ಮಾತು ಬಹು ಅರ್ಥಗರ್ಭಿತ. ಜೀವವಿಲ್ಲದ spinach-fieldಅಥವಾ ಜೀವಜನ್ಯವಾದದ್ದೇ ಇನ್ನೊಂದು ಜೀವಕ್ಕೆ ಜೀವನ ನೀಡಬಲ್ಲದು. ಹಿಂದೂ ಧರ್ಮದ ಸುಮಾರು ತೊಂಬತ್ತು ಪ್ರತಿಶತ ಜನ ಇಂದು ಮಾಂಸಾಹಾರ ಸೇವಿಸುತ್ತಾರೆ. ಪೇಜಾವರ ಶ್ರೀಗಳ ಮಠಗಳಲ್ಲಿ ಬ್ರಾಹ್ಮಣರ ಪಂಕ್ತಿಯಲ್ಲಿ ಕುಳಿತು ಊಟ ಮಾಡಲು ಶಾಸ್ತ್ರೋಕ್ತವಾಗಿ ಹಕ್ಕಿರುವ ಸಾರಸ್ವತ ಮತ್ತು ಗೌಡ ಸಾರಸ್ವತ ಬ್ರಾಹ್ಮಣರು ಶಾಸ್ತ್ರಗಳನ್ನು ಆಧರಿಸಿಯೇ ಮೀನು ತಿನ್ನುತ್ತಾರೆ. ಅಂದ ಹಾಗೆ ಮಹಾರಾಷ್ಟ್ರ ಸರಕಾರ ಬಾಂಬೆ ಹೈಕೋರ್ಟ್ ಗೆ ಅಫಿಡವಿಟ್ ನೀಡಿ ಹೇಳಿದಂತೆ ಮೀನನ್ನು ಕೊಲ್ಲುವುದಿಲ್ಲವಲ್ಲ; ಹಾಗಾಗಿ ಅದು ಕಾನೂನಿನ ಪ್ರಕಾರ ಮಾಂಸಾಹಾರ ಅಲ್ಲ. ಮಾಂಸಾಹಾರಿಗಳ ಓಟಿನಿಂದ ತಮ್ಮಲ್ಲಿ ತಮೋ ಗುಣ ಬರುವುದೆಂದು ‘ನಮೋ’ ರವರು ಹೇಳಿ ಮಾಂಸಾಹಾರ ಸೇವಿಸುವ ಯಾರೂ ಕೂಡ ತಮಗೆ ಓಟು ಕೊಡಬಾರದೆಂದು ಫಾರ್ಮಾನು ಹೊರಡಿಸಿಬಿಟ್ಟರೆ ಏನಾಗುವುದೋ, ಅವರ ಗುರುಗಳೇ ಹೇಳಬೇಕು.

ಇಂದು ನಡೆಯುತ್ತಿರುವ ಮಾಂಸಾಹಾರ ನಿಷೇಧ ಪ್ರಹಸನ ಕೇವಲ ಜನರ ಆಹಾರದ ಹಕ್ಕಿನ ಮೇಲಿನ ದಬ್ಬಾಳಿಕೆ ಅಲ್ಲ. milking-cowಇದರ ಬೇರು ಇನ್ನೂ ಅಳದಲ್ಲಿದೆ. ತಮ್ಮ ಅಸಹಿಷ್ಣುತೆಯ ಅಜೆಂಡಾವನ್ನೇ ಧರ್ಮವೆಂದು ಮೊದಲು ಘೋಷಿಸುವುದು, ನಂತರದಲ್ಲಿ ಆ “ಧರ್ಮ” ಕ್ಕೆ ಕಾನೂನಿನ ಕವಚ ತೊಡಿಸುವ ಹುನ್ನಾರವಿದೆ. ಮನುಷ್ಯನ ಪ್ರತಿ ನಡೆ ನುಡಿಯನ್ನು ಧರ್ಮ ಬೆರೆಸಿ ನಿಯಂತ್ರಿಸುವ ಇವರ ಅಲಿಖಿಕ ‘ಸಂವಿಧಾನ’ ಕ್ಕೆ ಅತೀ ದೊಡ್ಡ ಕೊಡಲಿ ಪೆಟ್ಟು ಕೊಟ್ಟ ಲಿಖಿತ ಸಂವಿಧಾನವನ್ನು ಸೋಲಿಸಲು ಇವರ ಕಾರ್ಖಾನೆ ಗಳಲ್ಲಿ ಒಂದಲ್ಲ ಒಂದು ಸಂಚು ತಯಾರಿ ಯಾಗುತ್ತಲೇ ಇರುತ್ತದೆ. ಒಮ್ಮೆ ಪಟೇಲರನ್ನು ಬಳಸಿ ಸಾಮಾಜಿಕ ಸ್ವಾಸ್ಥ್ಯ ಕೆಡಿಸಿದರೆ ಮತ್ತೊಮ್ಮೆ ಜೈನರನ್ನು ಬಳಸಿ ಆಹಾರದಲ್ಲಿ ಧರ್ಮ ಬೆರೆಸಿ ನೋಡುತ್ತಾರೆ.

ಗಣವೇಶದ ಬೆಲ್ಟ್ ಮತ್ತು ಬೂಟು ತಯಾರಿ ಮಾಡುವ ಚರ್ಮ ಉದ್ಯಮ

ಇನ್ನು ಇವರದ್ದೇ ದೃಷ್ಟಿಯಲ್ಲಿ ನೋಡಿದರೆ ಜೈನರ ಪ್ರಕಾರ ಮಾಂಸಾಹಾರ ಕೇವಲ ಹಬ್ಬಗಳಲ್ಲಿ ಮಾತ್ರವಲ್ಲ ಎಲ್ಲ ದಿನವೂ ನಿಷಿದ್ಧವೇ. ಜೈನ ಧರ್ಮವನ್ನು ಅತಿಯಾಗಿ ಪ್ರೀತಿಸುವ ಜನ ಅದೇಕೆ ಮಾಂಸಾಹಾರವನ್ನು ಸಂಪೂರ್ಣ ನಿಷೇಧಿಸಬಾರದು? ಸೂರ್ಯಾಸ್ಥದ ನಂತರ ಊಟವೇ ಮಾಡಬಾರದು ಎಂದು ಕಾನೂನು ಏಕೆ ತರಬಾರದು? ಇನ್ನು ಪ್ರಾಣಿಜನ್ಯವಾದ ಹಾಲು, ಜೇನು, ಮೊಸರು, ಮಜ್ಜಿಗೆ, ಪಂಚಾಮೃತ, ರೇಷ್ಮೆ ಇತ್ಯಾದಿ ಎಲ್ಲವನ್ನೂ ನಿಷೇಧಿಸಬಾರದು? ಇಷ್ಟೆಲ್ಲಾ ಮಾತನಾಡುವ ಈ ಜನರು ಇಂದು ಯಂತ್ರಗಳ ಮೂಲಕ ದಿನನಿತ್ಯ ಹಸುಗಳ ಕೆಚ್ಚಲಿನಿಂದ ತನ್ನ ಕರುವಿಗೆ ಸೇರಬೇಕಾದ ಹಾಲನ್ನು ಬಲಪ್ರಯೋಗದಿಂದ ತೆಗೆದು ಹಸುವಿಗೆ ಹಿಂಸಿಸಿ ಬೃಹತ್ ಪ್ರಮಾಣದಲ್ಲಿ ವಂಚಿಸಿ ಮಾನವರು ಕುಡಿಯುವುದರಿಂದ ಹಾಲನ್ನೂ ಮತ್ತು ಹಾಲಿನ ಎಲ್ಲ ಉತ್ಪನ್ನಗಳನ್ನೂ ನಿಷೇಧಿಸಬೇಕು. ಹಾಗೆಯೇ ಪ್ರಾಣಿ ಹಿಂಸೆಯಿರುವ ರೇಷ್ಮೆ ಉದ್ಯಮ, ಔಷಧಿ ಉದ್ಯಮ, ಕುಕ್ಕುಟ ಉದ್ಯಮ, ಮೀನುಗಾರಿಕೆ, ಪ್ರಾಣಿಗಳನ್ನು ಬಳಸಿ ನಡೆಸುವ ಕೃಷಿ, ಸಂಚಾರ, ಸಾಮಾನು-ಸರಂಜಾಮು ಸಾಗಾಣಿಕೆ, chicken-curryಚರ್ಮ ಉದ್ಯಮ, ಮುಖ್ಯವಾಗಿ ಗಣವೇಶದ ಬೆಲ್ಟ್ ಮತ್ತು ಬೂಟು ತಯಾರಿ ಮಾಡುವ ಚರ್ಮ ಉದ್ಯಮ ಇತ್ಯಾದಿಗಳ ಮೇಲೂ ನಿಷೇಧ ಹೇರಬೇಕು. ಇದೆಲ್ಲ ಬಿಟ್ಟು ಬರೀ ಒಂದೆರಡು ದಿನ ಮಾಂಸ ತಿನ್ನಬಾರದು ಅಂದರೆ ಹೇಗೆ?

ನಮ್ಮ ದೇಶದ ಸಂವಿಧಾನದಲ್ಲಿರುವ ಬದುಕಿನ ಸ್ವಾತಂತ್ರ್ಯ ಆಹಾರದ ಸ್ವಾತಂತ್ರ್ಯವನ್ನೂ ಒಳಗೊಂಡಿದೆ. ಕಾನೂನಿನ ಪ್ರಕಾರ, ಯಾರು ಏನು ತಿಂದು ಬದುಕಬೇಕು ಎಂಬುದನ್ನು ತೀರ್ಮಾನಿಸಲು ಮತ್ತೊಬ್ಬರಿಗೆ ತೀರ್ಮಾನಿಸಲು ಹಕ್ಕಿಲ್ಲ. ಸಸ್ಯಾಹಾರಿಗಳಿಗೆ ನೋವಾಗುವುದೆಂದು ಬಹುಜನರು ಮಾಂಸಾಹಾರ ತ್ಯಾಗ ಮಾಡಬೇಕಿದ್ದರೆ, ಸಸ್ಯಾಹಾರಿಗಳು ಮಾಂಸಾಹಾರಿಗಳ ಮೇಲೆ ಪ್ರೀತಿ ತೋರಿಸಿ ಒಂದೇ ಒಂದು ದಿನ ಮಾಂಸಾಹಾರ ತಿನ್ನಲು ಸಾಧ್ಯವೇ? ಇನ್ನು ಇವರ ಆಹಾರ ಭಯೋತ್ಪಾದನೆಯನ್ನು ಯಾವ ಜೈನರೂ, ಇತರೇ ಸಸ್ಯಾಹಾರಿಗಳೂ ಇದನ್ನು ಒಪ್ಪುವುದಿಲ್ಲ. ಇದು ಕೆಲವರನ್ನು ಹಲವರ ಮೇಲೆ ಎತ್ತಿ ಕಟ್ಟಿ ಪಡುವ ವಿಘ್ನ ಸಂತೋಷ; ಜನರನ್ನು ಆಹಾರದ ಹೆಸರಿನಲ್ಲೂ ಒಡೆದು ಆಳುವ ಹುನ್ನಾರ.

‘ಮ್ಲೇಚ್ಚ’ ರಿಂದ ಐದು ಬಿಲಿಯನ್ ಡಾಲರ್ – ಮೇಕ್ ಇನ್ ಇಂಡಿಯಾ

ಇಂದು ಕೋಟಿಗಟ್ಟಲೆ ಮನುಷ್ಯ ಜೀವಿಗಳನ್ನು ಬಳಸಿ , ಜೀತಮಾಡಿಸಿ ದಿನವೂ ಅವರ ರಕ್ತ ಕುಡಿದರೆ ಪರವಾಗಿಲ್ಲ baadoota-nonveg-meals-served-to-thousandsಆದರೆ ಕೋಳಿ ಕುರಿ ಮಾತ್ರ ತಿನ್ನಬಾರದು. ಹಾಗೆಯೇ ಮುಂಬೈ ಕಾಮಾಟಿಪುರದ ಹೆಣ್ಣುಮಕ್ಕಳ ‘ಮಾಂಸದ’ ಧಂದೆ (ಅಲ್ಲಿ ಧರ್ಮ ಜಾತಿ ಏನೂ ಇಲ್ಲ) ಅವ್ಯಾಹತವಾಗಿ ಸಾಗಬಹುದು; ಅದರಿಂದ ಸ್ತ್ರೀಯನ್ನು ಮಾತೆಯೆಂದು ಪೂಜಿಸುವ ಯಾವ ಧರ್ಮೀಯರಿಗೂ ನೋವಾಗುವುದಿಲ್ಲ. ಆದರೆ ಪ್ರಾಣಿಗಳ ಮಾಂಸದ ಮೇಲೆ ಮಾತ್ರ ನಿಷೇಧ. ಗೋವನ್ನು ಮಾತೆಯೆಂದು ಪೂಜಿಸುವ ನಮ್ಮ ದೇಶದಿಂದ ಗೋಮಾಂಸವನ್ನು “ಮ್ಲೇಚ್ಚ” ದೇಶಗಳಿಗೆ ರಫ್ತು ಮಾಡಿ ಪ್ರತಿ ವರ್ಷ ಐದು ಬಿಲಿಯನ್ ಡಾಲರ್ ಸಂಪಾದಿಸಬಹುದು; ಆದರೆ ಧರ್ಮವನ್ನು ರಕ್ಷಿಸಲು ನಮ್ಮ ಜನ ಐದು ದಿನ ತಮ್ಮ ದುಡ್ಡು ಕೊಟ್ಟು ತಮ್ಮ ಮನೆಗಳಲ್ಲಿ ಮಾಂಸ ತಿಂದು ಜೀವಿಸುವಂತಿಲ್ಲ.

ಇದನ್ನೇ ಬಹುಶಃ “ನಂಬಲಾಗದ (Incredible) ಇಂಡಿಯಾ” ಎನ್ನುವುದು!

ಸಿರಿಯಾ : ಬದುಕಬೇಕು ಮತ್ತು ಬದುಕಲು ಬಿಡಬೇಕು


– ಡಾ.ಎಸ್.ಬಿ. ಜೋಗುರ


ಸಿರಿಯಾ ಹೊತ್ತಿ ಉರಿಯುತ್ತಿದೆ. ಐಸಿಸ್ ಉಗ್ರರು ಮತ್ತು ಕುದ್ರಿಸ್‌ಗಳ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಸಿರಿಯಾ ಬದುಕು ನರಕಸದೃಶವಾಗುತ್ತಿದೆ. ಸೇಡು ಮತ್ತು ಕ್ರೌರ್ಯ ಎನ್ನುವುದು ಕೇವಲ ಜನಜೀವನದ ಮೇಲೆ ಮಾತ್ರ ಬಯಲಾಗದೇ ಅಲ್ಲಿರುವ ಐತಿಹಾಸಿಕ ಸ್ಮಾರಕಗಳ ಮೇಲೂ ಬಯಲಾಗಿದೆ. ಅಲ್ಲಿರುವ ಅನೇಕ ಸ್ಮಾರಕಗಳನ್ನು ಪುಡಿ ಪುಡಿ ಮಾಡಲಾಗಿದೆ. ಅಲ್ಲಿಯ ಜನರಂತೂ ಎಲ್ಲಾದರೂ ಬೇರೆಡೆ ಬದುಕನಡೆ ಜೀವವೇ ಎಂದು ಸುತ್ತಮುತ್ತಲಿನ ಇತರೆ ಪ್ರದೇಶಗಳಿಗೆ ತೆರಳಿ ಹೊಸ ಜೀವನ ರೂಪಿಸಿಕೊಳ್ಳುವ ಭರಾಟೆಯಲ್ಲಿ ತಮ್ಮ ನೆಲೆಯನ್ನು ತೊರೆದು ಗ್ರೀಕ್ ನಡುಗಡ್ಡೆಗಳಿಗೆ ಸಮುದ್ರ ಮಾರ್ಗವಾಗಿ ತೆರಳುತ್ತಿದ್ದಾರೆ. ಹೀಗೆ ತೆರಳುವ ತವಕದಲ್ಲಿ ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸುತ್ತಿವೆ. migrant-child-dead-beach-turkeyಹೇಗಾದರೂ ಮಾಡಿ ಆ ಸಂಘರ್ಷಮಯ ಪರಿಸರದಿಂದ ದೂರ ತೆರಳಿ ನೆಮ್ಮದಿಯ ನಿಟ್ಟುಸಿರು ಬಿಡಬೇಕೆಂದರೂ ಸಾಧ್ಯವಾಗುತ್ತಿಲ್ಲ. ಹೀಗೆ ಅಪಾರ ಪ್ರಮಾಣದಲ್ಲಿ ನಿರಾಶ್ರಿತರಾಗಿ ಹರಿದು ಬರುವದನ್ನು ನೆರೆಯ ರಾಷ್ಟ್ರಗಳು ಖುಷಿಯಿಂದ ಬರಮಾಡಿಕೊಳ್ಳುವ ಸ್ಥಿತಿಯಲ್ಲಿಲ್ಲ. ಹೀಗೆ ತಂಡತಂಡವಾಗಿ ತಮ್ಮ ನೆಲೆಗಳನ್ನು ನಿರಾಶ್ರಿತರಾಗಿ ನುಗ್ಗುವ ಕ್ರಮದ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿಲ್ಲ. ಅನೇಕ ಬಗೆಯ ರೋಗರುಜಿನಗಳಿಗೆ ಈ ಬಗೆಯ ನಿರಾಶ್ರಿತರ ವಲಸೆ ಕಾರಣವಾಗಲಿದೆ ಎನ್ನುವದು ನೆರಯ ರಾಷ್ಟ್ರಗಳ ಅಭಿಮತ. ಈಚೆಗೆ ಗ್ರೀಕ್ ನಡುಗಡ್ಡೆ ಕೋಸ್ ನ್ನು ತಲುಪುವ ಬರಾಟೆಯಲ್ಲಿ ಸುಮಾರು 12 ಜನ ನಿರಾಶ್ರಿತರು ನೀರಲ್ಲಿ ಮುಳುಗಿ ಅಸುನೀಗಿರುವದಿದೆ. ಅದರಲ್ಲಿ 3 ವರ್ಷದ ಒಬ್ಬ ಬಾಲಕ ಮತ್ತು 5 ವರ್ಷದ ಇನ್ನೊಬ್ಬ ಬಾಲಕ ಇಬ್ಬರೂ ಸಹೋದರರು ಅಸುನೀಗಿದ್ದು ಮನಕಲಕುವಂತಿದೆ. ಬಾಲ್ಯದ ಖುಷಿಯ ಪರಿಚಯವೂ ಆಗದೇ ಅಸು ನೀಗಿದ ಆ ಮಕ್ಕಳು ಯಾವ ತಪ್ಪಿಗಾಗಿ ಈ ಬಗೆಯ ಸ್ಥಿತಿಯನ್ನು ಅನುಭವಿಸಬೇಕಾಯಿತು..? ಈ ಬಗೆಯ ಸನ್ನಿವೇಶಗಳನ್ನು ಮುಂದಿಟ್ಟುಕೊಂಡೇ ಬರ್ಟಂಡ್ ರಸಲ್ ರಂಥಾ ಚಿಂತಕರು ದೇವರ ಅಸ್ಥಿತ್ವದ ಬಗ್ಗೆ ಸಂಶಯ ಪಡುವದಿತ್ತು. ಯಾವ ತಪ್ಪನ್ನೂ ಮಾಡದ ಈ ಮಕ್ಕಳಿಗೇಕೆ ಶಿಕ್ಷೆ ಎಂದು ರಸಲ್ ಮತ್ತೆ ಮತ್ತೆ ಕೇಳುವದಿತ್ತು.ಆತನ ನಾಸ್ತಿಕತೆಗೆ ಈ ಬಗೆಯ ಘಟನೆಗಳು ಇನ್ನಷ್ಟು ಪುಷ್ಟಿ ಕೊಟ್ಟಂತಿತ್ತು. ಹೇಗಾದರೂ ಮಾಡಿ ಬೇರೆ ಎಲ್ಲಾದರೂ ತೆರಳಿ ಬದುಕಿ siriya-migrantsಉಳಿಯಬೇಕೆಂದು ಬಯಸಿ ದಡದಲ್ಲಿ ಸಿಕ್ಕ ದೋಣಿಗಳನ್ನು ಹತ್ತಿ ಪ್ರಯಾಣ ಬೆಳೆಸಿದ ಇವರು ಮೂಲತ: ಉತ್ತರ ಸಿರಿಯಾದ ಪಟ್ಟಣ ಕೊಬಾನಿಯ ನಿವಾಸಿಗಳು. ಅಲ್ಲಿಯ ಪರಿಸ್ಥಿತಿ ಈ ಮಕ್ಕಳನ್ನು ಅಲ್ಲಿಂದ ಕಾಲು ಕೀಳುವಂತೆ ಮಾಡಿತ್ತು. ದುರಂತವೆಂದರೆ ಹೊಸ ಬದುಕನ್ನು ಕಟ್ಟಿಕೊಳ್ಳುವ ಹಂಬಲದಲ್ಲಿ ಊರು ತೊರೆದ ಈ ಬಾಲಕರು ತಲುಪಬೇಕೆಂದುಕೊಂಡ ನೆಲೆಯನ್ನು ತಲುಪಲಾಗದೇ ಗ್ರೀಕ್ ನಡುಗಡ್ಡೆ ಕೊಸ್ ನ್ನು ತಲುಪಲಾಗದೇ ನೀರಲ್ಲಿ ಮುಳುಗಿ ಅಸುನೀಗಿರುವದಿದೆ.

ಸಿರಿಯಾದಲ್ಲಿ ಆವೃತವಾಗಿರುವ ಯುದ್ಧದ ವಾತಾವರಣ ಯಾರನ್ನೂ ನೆಮ್ಮದಿಯಿಂದ ಬದುಕಲು ಬಿಡುವ ಸ್ಥಿತಿಯಲ್ಲಿಲ್ಲ. ಐಶಿಷ ಉಗ್ರರು ಇಡೀ ಸಿರಿಯಾ ಮೇಲೆ ತಮ್ಮ ಪ್ರಭುತ್ವವನ್ನು ಸ್ಥಾಪಿಸುವದು ಮಾತ್ರವಲ್ಲದೇ ಅಲ್ಲಿಯ ಬದುಕನ್ನೇ ರೌರವ ನರಕ ಮಾಡಹೊರಟಿದ್ದಾರೆ. ಅದರ ಭೀಕರತೆಯನ್ನು ಸಹಿಸಲಾಗದೇ ತಮ್ಮ ನೆಲೆಯನ್ನು ಬಿಟ್ಟು ನಿರಾಶ್ರಿತರಾಗಿ ಬೇರೆಡೆ ತೆರಳುತ್ತಿದ್ದಾರೆ. ದಿನಾಲು ಈ ನಡುಗಡ್ಡೆಗಳಿಗೆ ನಿರಾಶ್ರಿತರಾಗಿ ಬರುವವರ ಪ್ರಮಾಣ ಸಾವಿರ ಸಾವಿರ ಮಟ್ಟದಲ್ಲಿದೆ. ಲೆಸ್ಬೊಸ್ ಎನ್ನುವ ಪ್ರಾಂತದಲ್ಲಿಯೇ ಸುಮಾರು 15 ಸಾವಿರಕ್ಕಿಂತಲೂ ಹೆಚ್ಚಿನ ಪ್ರಮಾಣದ ನಿರಾಶ್ರಿತರಿದ್ದಾರೆ. ಮೆಸಿಡೋನಿಯಾ, ಸರ್ಬಿಯಾ, ಹಂಗೇರಿಯಾ, ಜರ್ಮನಿ ಮುಂತಾದ ಕಡೆಗಳಲ್ಲಿಯೂ ಇದೇ ರೀತಿಯ ನಿರಾಶ್ರಿತರ ತಲೆನೋವು ಆರಂಭವಾಗಿದೆ. ಗ್ರೀಸ್ ನಡುಗಡ್ಡೆಗಳ ಮೇಲೆ ಅಸಂಖ್ಯಾತ ಪ್ರಮಾಣದ ನಿರಾಶ್ರಿತರು ವಲಸೆ ಬರುತ್ತಿದ್ದಾರೆ. ಹೀಗೆ ನಿರಾಶ್ರಿತರಾಗಿ ಬರುವವರಿಗೆ ವಸತಿ ಸೌಲಭ್ಯಗಳನ್ನು ಒದಗಿಸುವುದು ಕೂಡಾ ಸಾಧ್ಯವಾಗುತ್ತಿಲ್ಲ ಹೀಗಾಗಿ ನಿರಾಶ್ರಿತರ ಜನಜಂಗುಳಿ ಅನಾರೋಗ್ಯಕರ ಪರಿಸರದ ನಿರ್ಮಾಣಕ್ಕೆ ಕಾರಣವಾಗುತ್ತಿದೆ. ಜೊತೆಗೆ ಮೆಡಿಟರೇನಿಯನ್ ಮೂಲಕ ಯುರೋಪಗೆ ತೆರಳುವಾಗ ಸುಮಾರು 2500 ರಷ್ಟು ನಿರಾಶ್ರಿತರು ಅಸುನೀಗಿರುವದಿದೆ ಎಂದು ಗಾರ್ಡಿಯನ್ ಎಂಬ ಪತ್ರಿಕೆ ವರದಿ ಮಾಡಿರುವದಿದೆ. siriya-tragedyಕಾಸ್ ಮತ್ತು ಲೆಸ್ಬಾಸ್ ನಡುಗಡ್ದೆಯಲ್ಲಿ ಬಂದಿಳಿಯುವ ನಿರಾಶ್ರಿತರಾಗಿ ಅನೇಕ ಬಗೆಯ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಅಲ್ಲಿಯ ಸರಕಾರಗಳು ಯತ್ನಿಸುತ್ತಿವೆಯಾದರೂ ಸಂಪೂರ್ಣವಾಗಿ ಅವರಿಗೆ ಅವಶ್ಯಕತೆಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ.

ಸಿರಿಯಾದಂಥಾ ನೆಲೆಗಳು ಮನುಷ್ಯರಾದವರು ವಾಸಿಸಲು ಯೋಗ್ಯವಲ್ಲ ಎನ್ನುವ ಸ್ಥಿತಿಯನ್ನು ತಲುಪಿದಂತಾಗಿದೆ. ಇಲ್ಲಿಯ ಜನರಿಗೆ ಎಲ್ಲಾದರೂ ನೆರೆಯ ಪ್ರದೇಶಗಳಲ್ಲಿ ಬದುಕಿ ಉಳಿಯುವದೇ ಒಂದು ಜೀವನದ ಮಹತ್ತರವಾದ ಗುರಿಯಂತಾಗಿದೆ. ಆ ಬದಿಯ ದಡ ತಲುಪುವ ಬಗ್ಗೆ ಯಾವ ಭರವಸೆಗಳೂ ಇಲ್ಲದಿರುವಾಗಲೂ ರಿಶ್ಕ್ ತೆಗೆದುಕೊಂಡು ತೆರಳುತ್ತಿದ್ದಾರೆ. ಹಾಗೆ ತೆರಳುವಾಗ ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸುತ್ತಿವೆ. ಪ್ರಥಮ ಮತ್ತು ದ್ವಿತೀಯ ಜಾಗತಿಕ ಮಹಾಯುದ್ಧಗಳ ಸಂದರ್ಭದಲ್ಲಿ ಜರ್ಮನಿಯಿಂದ ನಿರಾಶ್ರಿತರಾಗಿ ವಲಸೆ ಹೋಗುವವರಿಗೆ ವಿಶ್ವದ ಬೇರೆ ಬೇರೆ ರಾಷ್ಟ್ರಗಳು ಬರ ಮಾಡಿಕೊಂಡವು. ಆಗಿನ ಸಂದರ್ಭವನ್ನು ಈಗ ನೆನೆಪಿಸಿ ಜರ್ಮನಿ ಮತ್ತು ಇತರ ಯುರೋಪಿನ ನೆಲೆಗಳಿಗೆ ನೀವು ಹಾಗೆ ಸಿರಿಯಾದಿಂದ ನಿರಾಶ್ರಿತರಾಗಿ ಬರುವವರನ್ನು ಯಾಕೆ ಸ್ವಾಗತಿಸಬಾರದು ಎಂದು ಕೇಳುವ ಪರಿಸ್ಥಿತಿಯೂ ಈಗ ಉಳಿದಿಲ್ಲ. ವಲಸೆ ಬರುವವರ ಧರ್ಮ, ಭಾಷೆ, ಜನಾಂಗಗಳು ಈಗ ತೀರಾ ಮುಖ್ಯವಾಗತೊಡಗಿವೆ. ಮುಂಚಿನಂತೆ ಮಾನವೀಯ ನೆಲೆಯಲ್ಲಿ ನಿರಾಶ್ರಿತರನ್ನು ಬರಮಾಡಿಕೊಳ್ಳುವಷ್ಟು ಸದ್ಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರ ಅಷ್ಟೊಂದು ಸಲೀಸಾಗು ಉಳಿದಿಲ್ಲ. ಧರ್ಮ ಎನ್ನುವುದು ಈಗ ಕೇವಲ ಆಚರಣೆ ಮತ್ತು ಅನುಸರಣೆಯ ಮಾರ್ಗವಾಗಿ ಮಾತ್ರ ಉಳಿಯದೇ ಆ ಮಿತಿಯನ್ನು ಮೀರುವ ಮೂಲಕ ಸಂದಿಗ್ದವಾದ ಸ್ಥಿತಿಯನ್ನು ಅವು ತಲುಪುತ್ತಿವೆ. ಇಂದು ಧರ್ಮಗಳು ಮಾನವೀಯ ಪ್ರೀತಿ ಮತ್ತು ದಯೆಯನ್ನು ಹಂಚುವ ಬದಲಾಗಿ ದ್ವೇಷ ಮತ್ತು ಭಯವನ್ನು ಸೃಷ್ಟಿಸುವ ಸಂಗತಿಗಳಾಗಿ ಕೆಲಸ ಮಾಡುತ್ತಿವೆ. ಮನುಷ್ಯ ಎಷ್ಟೇ ಉನ್ನತವಾದ ಮಾರ್ಗವಾಗಿ ಮಾತ್ರ ಉಳಿಸಾಧನೆಯನ್ನು ಮಾಡಿದ ಮೇಲೂ ನೆಮ್ಮದಿಯಿಂದ ಬದುಕುವ ಮತ್ತು ಬದುಕಲು ಬಿಡುವ ಗುಣವನ್ನು ಮಾತ್ರ ಕಲಿಯಲಿಲ್ಲ.

ಅತಿಯಾದ ಮೊಬೈಲ್ ಬಳಕೆ ನಮ್ಮ ಗ್ರಹಿಕೆಗಳನ್ನು ಕೊಲ್ಲುತ್ತದೆ..


– ಡಾ.ಎಸ್.ಬಿ. ಜೋಗುರ


ಬಾಲ್ಯದಲ್ಲಿ ನಮ್ಮ ಇಡೀ ಊರಲ್ಲಿ ಹತ್ತು ದೂರವಾಣಿ ಸಂಪರ್ಕಗಳಿರುವ ಮನೆಗಳಿದ್ದರೆ ಹೆಚ್ಚಿತ್ತು. ನಮ್ಮೂರು ಬಿಜಾಪುರ ಜಿಲ್ಲೆಯ ತಾಲೂಕು ಕೇಂದ್ರವಾಗಿದ್ದರೂ ಪರಿಸ್ಥಿತಿ ಹಾಗಿತ್ತು. ಯಾವುದಾದರೂ ಅರ್ಜಂಟ್ ಸುದ್ಧಿಗಳನ್ನು ತಲುಪಿಸಬೇಕಿದ್ದರೆ ಒಂದೋ ಟೆಲಿಗ್ರಾಮ್ ಕಳುಹಿಸಬೇಕು, ಇಲ್ಲವೇ ನಮ್ಮ ಒಣಿಯಲ್ಲಿರುವ ಯಾರದೋ ಒಂದು ಶ್ರೀಮಂತ ಕುಟುಂಬದ ದೂರವಾಣಿ ಸಂಖ್ಯೆಯನ್ನು ಅವಲಂಬಿಸಬೇಕಿತ್ತು. ಆ ಶ್ರೀಮಂತ ಕುಟುಂಬ ಹತ್ತಾರು ಕಾರಣಗಳಿಗಾಗಿ ಓಣಿಯವರಿಗೆ ಬೇಡವಾಗಿದ್ದರೂ ಅವರ ಮನೆಯಲ್ಲಿ ದೂರವಾಣಿ ಇದೆ ಎನ್ನುವ ಕಾರಣಕ್ಕೆ ಆತ ಬೇಕಿರುತ್ತಿದ್ದ. ಯಾವುದೋ ಒಂದು ಕರೆ ಬಂದರೆ ಅವರು ನಮ್ಮ ಮನೆಗಳಿಗೆ ಹೇಳಿ ಕಳುಹಿಸುತ್ತಿದ್ದರು. ನಮ್ಮ ಮನೆಯವರು ಅಲ್ಲಿ ಹೋಗಿ ಮತ್ತೆ ಬರುವ ರಿಂಗಣಕ್ಕಾಗಿ ಕಾದು ಕುಳಿತುಕೊಳ್ಳಬೇಕಿತ್ತು. ಅದಾಗಲೇ ಫೋನ್‌ನಲ್ಲಿ ಮಾತಾಡಲು ಬಂದವರು ಅರ್ಧ ಹೈರಾಣಾಗಿ ಹೋಗಿರುತ್ತಿದ್ದರು. ಆಗ ಫೋನ್ ಮಾಡುವದೆಂದರೆ ಏನಾದರೂ ಆಪತ್ತಿನ ವಿಷಯಗಳನ್ನು ತಿಳಿಸಲೆಂದೇ ಹಾಗೆ ಕರೆ ಮಾಡಲಾಗುತ್ತಿತ್ತು. ಕೊನೆಗೂ ನಡುಗುವ ಕೈಯಲ್ಲಿಯೇ ಫೋನನ್ನು ಎತ್ತಿ ಮಾತನಾಡಿ ಆ ಮನೆಯವರಿಗೆ ‘ನಿಮಗೆ ತೊಂದರೆ ಕೊಟ್ಟಿವಿ’ ಎನ್ನುತ್ತಲೇ ನಡೆಯುವದಿತ್ತು. ಕಾಲ ಬದಲಾಗುತ್ತಾ ಬಂತು ಮನೆಗೊಂದು ದೂರವಾಣಿ ಸಂಪರ್ಕ ಬಂತು, ಕಿಸೆಗೊಂದು ಮೊಬೈಲ್ ಬಂತು. ಒಂದೇ ಮೊಬೈಲ್ ಲ್ಲಿ ಎರಡೆರಡು, ಮೂರ್ಮೂರು ಸಿಮ್ ಹಾಕಿ ವ್ಯವಹರಿಸುವ ಮೊಬೈಲ್ ಗಳು ಬಂದವು. ನೀವು ತೀರಾ ಖಾಸಗಿಯಾಗಿರುವ ಕೆಲಸದಲ್ಲಿರುವಾಗಲೂ.. ಸ್ಥಳದಲ್ಲಿರುವಾಗಲೂ.. ಮಲಗಿ ನಿದ್ರಿಸುವಾಗಲೂ ಮೊಬೈಲ್ ರಿಂಗಣಿಸುವುದು ತಪ್ಪುವದಿಲ್ಲ. ಯಾವುದಾದರೂ ಕಾರ್ಯಕ್ರಮಗಳಲ್ಲಿ ಮೊಬೈಲ್ ರಿಂಗಣಿಸಿದರೆ ಸಾಕು ಆ ಇಡೀ ಸಭೆಯಲ್ಲಿರುವವರೆಲ್ಲಾ ಅವನೆಡೆಗೆ ಹೊರಳಿ ಮನಸಿನಲ್ಲಿಯೇ ‘ಸೈಲೆಂಟ್ ಇಡಬಾರದೇನೋ ಅಜ್ಞಾನಿ’ ಎಂದು ಬೈಯುವಂತೆ ಮುಖ ಸಿಂಡರಿಸಿ ನೋಡುತ್ತಾರೆ. ನನ್ನ ಬಳಿ ಮೊಬೈಲ್ ಇದೆ ಎನ್ನುವುದು ಈಗ ಅದು ನನ್ನ ಪಾಲಿಗೆ ಮಾತ್ರ ಕಿರಿಕಿರಿಯಾಗಿರದೇ ನನ್ನ ಸುತ್ತಮುತ್ತಲೂ ಇರುವವರಿಗೂ ಕಿರಕಿರಿಯಾಗಿರುತ್ತದೆ ಎನ್ನುವದಂತೂ ಸತ್ಯ.

ಈ ಮೊಬೈಲ್ ಎನ್ನುವ ಪುಟ್ಟ ಉಪಕರಣದೊಳಗೆ ಕಳೆದುಹೋಗುವವರಿಗೆ ಈಗಂತೂ ಲೆಕ್ಕವಿಲ್ಲ. ಜೊತೆಗಿರುವವರನ್ನೂ ಗಮನಿಸದೇ ಸದಾ ಮೊಬೈಲ್ ಸ್ಕ್ರೀನ್ ಮೇಲೆ ಕಣ್ಣಾಡಿಸುವ, ಕೈಯಾಡಿಸುವವರಿಗೆ ಒಂದು ಆತಂಕದ ಸುದ್ಧಿಯಂತೂ ಹೊರಬಂದಿದೆ. mobile-phones-touchscreensಹೀಗೆ ಯಾರು ಹೆಚ್ಚಿನ ಪ್ರಮಾಣದಲ್ಲಿ ಮತ್ತೆ ಮತ್ತೆ ಮೊಬೈಲ್ ಬಳಸುವ, ಇಂಟರನೆಟ್ ಮೂಲಕ ಫೇಸ್‌ಬುಕ್, ವಾಟ್ಸ್ಯಾಪ್, ಟ್ವಿಟರ್ ಎಂದು ವ್ಯವಹರಿಸುವವರು ಹೆಚ್ಚಾಗಿ ತಮ್ಮ ಕಾಗ್ನಿಟಿವ್ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎಂದು ಸಂಶೋಧನೆಯೊಂದು ಪ್ರಕಟಿಸಿದೆ. ಕಾಗ್ನಿಟಿವ್ ಅಂದರೆ ಅರಿವು ಮತ್ತು ಗ್ರಹಿಕೆಯ ಸಾಮರ್ಥ್ಯದಲ್ಲಿ ಕುಂಠಿತತೆ ಆರಂಭವಾಗುತ್ತದೆ ಎನ್ನಲಾಗುತ್ತದೆ. ಸುಮಾರು ವಾರಕ್ಕೆ 22 ಘಂಟೆಗಳಿಂತಲೂ ಹೆಚ್ಚು ಕಾಲ ಡಿಜಿಟಲ್ ಜಗತ್ತಿನಲ್ಲಿ ವ್ಯವಹರಿಸುವ 18 ರಿಂದ 65 ವರ್ಷ ವಯೋಮಿತಿಯಲ್ಲಿರುವ, ಸುಮಾರು 210 ಜನರನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದ್ದು ಅವರು ತಮ್ಮ ಸಂವೇದನೆ ಮತ್ತು ಗ್ರಹಿಕೆಗಳು ದುರ್ಬಲಗೊಂಡಿರುವ ಬಗ್ಗೆ ಹೇಳಿರುವ ಬಗ್ಗೆ ತಿಳಿದುಬಂದಿದೆ. ಅನೇಕ ಬಾರಿ ಅತಿಯಾಗಿ ಮೊಬೈಲ್ ಮತ್ತು ಇಂಟರನೆಟ್ ಬಳಸುವವರು ಸದಾ ತಮ್ಮದೇ ಲೋಕದಲ್ಲಿ ಮುಳುಗಿ ತಮ್ಮ ಸುತ್ತಮುತ್ತಲೂ ಏನು ನಡೆದಿದೆ ಎನ್ನುವ ಬಗ್ಗೆಯೂ ಅವರು ಮರೆತು ವ್ಯವಹರಿಸುವಂತಿರುತ್ತದೆ. ಜೊತೆಗಿರುವವರನ್ನು ಅಲ್ಲಿಯೇ ಬಿಟ್ಟು ಮಾತಡ್ತಾ ಹಾಗೇ ಮುಂದೆ ಹೋದವದರೂ ಇದ್ದಾರೆ. ಹಾಗೆ ಮಾತಾಡ್ತಾ ಹೋಗಿ ತಾನು ಬಂದು ತಲುಪಿದ ಸ್ಥಳದ ಬಗ್ಗೆ ಗೊಂದಲವಾಗಿ ಮತ್ತೆ ಹಿಂತಿರುಗಿದ ಉದಾಹರಣೆಗಳೂ ಇವೆ. ಕಿವಿಗೆ ಬ್ಲೂ‌ಟೂಥ್ ಉಪಕರಣ ಧರಿಸಿ ಮಾತನಾಡುತ್ತಾ ಹೋಗುವವರನ್ನು ಕಂಡು ನಾನೇ ಖುದ್ದಾಗಿ ಹೆದರಿರುವದಿದೆ.

ಇತ್ತೀಚಿನ ದಿನಗಳಲ್ಲಿ ಮಾರುಕಟೆಯಲ್ಲಿ ಎಲ್ಲೆಂದರಲ್ಲಿ ರಾರಾಜಿಸುವ 3ಜಿ ಮತ್ತು 4 ಜಿ ನೆಟ್‍ವರ್ಕ್ ಮತ್ತು ಅದು ಹೊರಸೂಸಬಹುದಾದ ಫ್ರೀಕ್ವೆನ್ಸಿಯ ವೇಗವನ್ನು ಗಮನಿಸಿದರೆ ಖಂಡಿತ ಅದು ನಮ್ಮ ಮೆದುಳಿನ ಸೂಕ್ಷ್ಮ ಭಾಗಗಳ ಮೇಲೆ ಪ್ರಭಾವ ಬೀರುವದರಲ್ಲಿ ಎರಡು ಮಾತಿಲ್ಲ. ಇದನ್ನು ಹೇಳಲು ಸಂಶೋಧನೆಯ ಅಗತ್ಯವಿಲ್ಲ. ನಮ್ಮ ಸುತ್ತಮುತ್ತಲೂ ಅದರಲ್ಲೂ ನಗರ ಪ್ರದೇಶಗಳಿಲ್ಲಿ ರೋಬೊಟ್ ಥರಾ ಬದುಕುತ್ತಿರುವ ಜನಜೀವನವನ್ನು ನೋಡಿದಾಗ ಈ ಮೊಬೈಲ್ ಮತ್ತು ಇಂಟರನೆಟ್ ಜಗತ್ತು ನಮ್ಮನ್ನು ಭಾವಶೂನ್ಯರನಾಗಿ, ಸಂವೇದನಾರಹಿತ ಜೀವಿಗಳನ್ನಾಗಿ ರೂಪಿಸುತ್ತಿದೆ ಎನ್ನುವದರಲ್ಲಿ ಎರಡು ಮಾತಿಲ್ಲ. ಯಾವುದೇ ತಂತ್ರಜ್ಞಾನವಿರಲಿ ಅದರ ಬಳಕೆಯ ಪ್ರಮಾಣ ಮತ್ತು ಔಚಿತ್ಯತೆಯ ಮೇಲೆ ಅದರ ಗುಣಾವಗುಣಗಳು ನಿಂತಿರುತ್ತವೆ. ಊಟ ಮಾಡುವಾಗ, ಮಲಗುವಾಗ, ಟೀ ಕುಡಿಯುವಾಗ, ಕೆಲಸ ಮಾಡುವಾಗ ಎಲ್ಲ ಸಂದರ್ಭಗಳಲ್ಲಿ ಯತಾರ್ಥವಾಗಿ ಮೊಬೈಲ್ ಸ್ಕ್ರೀನ್ ಮೇಲೆ ಹರಿದಾಡುವ ಬೆರಳುಗಳು ಕೂಡಾ ಸಂವೇದನಾಶೀಲತೆಯನ್ನು ಕಳೆದುಕೊಂಡಂತೆ ತೋರುತ್ತವೆ.ಈಗಾಗಲೇ ಈ ಮೊಬೈಲ್ ಮತ್ತು ಇಂಟರನೆಟ್ ಸಹವಾಸಕ್ಕೆ ಬರದೇ ಇದ್ದರೂ ಅದಾಗಲೇ ಮರೆಗುಳಿಗಳ ಪಟ್ಟಿಯಲ್ಲಿದ್ದರೆ ಅಂಥವರ ಮೇಲಂತೂ ಹೀಗೆ ಯರ್ರಾ ಬಿರ್ರಿಯಾಗಿ ಮೊಬೈಲ್ ಮತ್ತು ಇಂಟರನೆಟ್ ಬಳಕೆಯ ಪ್ರಮಾಣ ತೀವ್ರವಾದ ಅಡ್ಡ ಪರಿಣಾಮಗಳನ್ನು ಬೀರುವದಂತೂ ಗ್ಯಾರಂಟಿ. ಕೆಲವು ಮುಂದುವರೆದ ರಾಷ್ಟ್ರಗಳು ಅದಾಗಲೇ ಶಾಲಾ ವಿದ್ಯಾರ್ಥಿಗಳ ಮೊಬೈಲ್‍ನ್ನು ಬಹುತೇಕವಾಗಿ ನಿಷೇಧಿಸಿದ ಪರಿಣಾಮವಾಗಿ ಆ ಶಾಲೆಗಳು ಉತ್ತಮ ಫಲಿತಾಂಶವನ್ನು ಸಾಧಿಸಿರುವ ಉದಾಹರಣೆಗಳೂ ಇವೆ. ಹದಿಹರೆಯದ ವಯಸು, ಹುಚ್ಚ ಖೋಡಿ ಮನಸುಗಳ ಕೈಯಲ್ಲಿರುವ ಮೊಬೈಲು ಖಂಡಿತವಾಗಿಯೂ ಚಂಚಲತೆಗೆ ಕಾರಣವಾಗುತ್ತದೆ. ಇನ್ನು ಈ ಮೊಬೈಲ್ ಬಿಟ್ಟು ಬದುಕಲು mobile-phonesಸಾಧ್ಯವೇ ಇಲ್ಲ ಎನ್ನುವ ಸ್ಥಿತಿಯನ್ನು ನಿರ್ಮಿಸಿದ ಆಧುನಿಕ ತಂತ್ರಜ್ಞಾನ ಬದಲಾವಣೆ ಮತ್ತು ಸುಧಾರಣೆಯ ಜತೆಜತೆಗೆ ಅಡ್ಡ ಪರಿಣಾಮಗಳನ್ನು ತಂದಿರುವದಿದೆ. ಮೊಬೈಲ್ ಮತ್ತು ಇಂಟರನೆಟ್ ನ ಅತಿಯಾದ ಬಳಕೆ ವಾಹನ ಚಾಲಕರ ಮೇಲೆ ಇನ್ನಷ್ಟು ಅಡ್ಡ ಪರಿಣಾಮಗಳನ್ನು ಬೀರುತ್ತವೆ. ರಸ್ತೆಯಲ್ಲಿ ವಾಹನ ಚಾಲನೆಯಲ್ಲಿ ನಡೆಯುವ ಅಪಘಾತಗಳು ಮತ್ತು ಸಾವು ನೋವುಗಳಲ್ಲಿ ಈ ಬಗೆಯ ಮೊಬೈಲ್ ಮಾತುಕತೆಯೂ ಮುಖ್ಯ ಕಾರಣವಾಗಿರುತ್ತದೆ. ಅತಿಯಾದ ಮೊಬೈಲ್ ಮತ್ತು ಇಂಟರನೆಟ್ ಗೀಳು ಒಳಗೊಳಗೆ ವ್ಯಕ್ತಿಯನ್ನು ಕಾಗ್ನಿಟಿವ್ ಸಾಮಥ್ರ್ಯದಿಂದ ದೂರಸರಿಸುತ್ತದೆ. ಈ ಕುರಿತು ಡಾ ಹ್ಯಾಡಲಿಂಗಟನ್ ಎನ್ನುವವರು ನಾವು ದೈನಂದಿನ ಜೀವನದಲ್ಲಿ ಹೆಚ್ಚೆಚ್ಚು ತಾಂತ್ರಿಕತೆಯನ್ನು ಬಳಸುವದಿದೆ ಆದರೆ ಹಾಗೆ ಮಿತಿ ಮೀರಿ ಬಳಸುವಾಗಲೂ ಅದರ ಅಡ್ಡ ಪರಿಣಾಮಗಳು ನಮ್ಮ ಮೇಲೆ ಎಷ್ಟರ ಮಟ್ಟಿಗೆ ಆಗುವದಿದೆ ಎನ್ನುವ ಬಗ್ಗೆ ಗಂಭೀರವಾಗಿ ಯೋಚಿಸುವದಿಲ್ಲ ಎನ್ನುತ್ತಾರೆ. ಯೋಚಿಸಲು ಆರಂಭಿಸುವ ವೇಳೆಗಾಗಲೇ ತುಂಬಾ ದೂರ ಸಾಗಿ ಬಂದಾಗಿರುತ್ತದೆ. ವಿಶ್ವವಿದ್ಯಾಲಯವೊಂದು ಮಾಡಲಾದ ಅಧ್ಯಯನ ಮತ್ತು ಸಂಶೋಧನೆಯ ಪ್ರಕಾರ ಅತಿಯಾದ ಮೊಬೈಲ್ ಮತ್ತು ಇಂಟರನೆಟ್ ಬಳಕೆ ನಮ್ಮಲ್ಲಿರುವ ಸಂವೇದನೆಗಳನ್ನು ಮತ್ತು ಗ್ರಹಿಕಾ ಸಾಮಥ್ರ್ಯವನ್ನು ಕೊಲ್ಲುತ್ತದೆ ಎಂದಿರುವದಿದೆ. ಮೂಲಭೂತವಾಗಿ ಮೊಬೈಲ್ ಮತ್ತು ಇಂಟರನೆಟ್ ಬಳಕೆ ಎನ್ನುವುದೇ ಒಂದು ಸಮಸ್ಯೆಯಲ್ಲ… ಅವುಗಳ ಅತಿಯಾದ ಬಳಕೆ ಮತ್ತು ಅವುಗಳ ಬಗೆಗಿನ ಗೀಳು ಮಾತ್ರ ಅಪಾಯಕಾರಿ. ಎಲ್ಲ ವೇಳೆಯಲ್ಲಿಯೂ ಮೊಬೈಲ್ ಮತ್ತು ಇಂಟರನೆಟ್ ಜೊತೆಗೆ ವ್ಯವಹರಿಸುವದರಿಂದ ನೀವೂ ಕೂಡಾ ಕ್ರಮೇಣವಾಗಿ ಒಂದು ಉಪಕರಣವಾಗಿಯೇ ಮಾರ್ಪಾಡು ಹೊಂದುವ ಅಪಾಯಗಳಂತೂ ಖಂಡಿತ ಇವೆ. ಅತಿಯಾದರೆ ಎಲ್ಲವೂ ವಿಷ ಎನ್ನುವ ಸಾಮಾನ್ಯ ತಿಳುವಳಿಕೆಯಂತೂ ಎಲ್ಲರಿಗೂ ಇದ್ದೇ ಇದೆ. ಅದೇ ನಮ್ಮ ಮಾನವ ಜನಾಂಗವನ್ನು ಕಾಯಬೇಕಿದೆ.

ರಾಜ್ಯದ ಬೆನ್ನ ಮೇಲೆ ಬರೆ ಎಳೆದ ಮಳೆರಾಯ..!


– ಡಾ.ಎಸ್.ಬಿ. ಜೋಗುರ


ನಮ್ಮ ರೈತರಲ್ಲಿ ಕೊನೆಗೂ ಮುಗಿಲು ನೋಡುವ ಭರವಸೆ ಹೊರಟುಹೋಯಿತು. ಮೋಡ ಗರಿಗರಿಯಾಗಿ ಕರಿಗಟ್ಟುವದನ್ನು ನೋಡನೋಡುತ್ತಲೇ ಮಳೆಗಾಲ ಮುಗಿದು ಹೋದಂತಾಯಿತು. ಎಲ್ಲೆಲ್ಲೂ ಬೇಸಿಗೆ ಮಳೆಗಾಲವನ್ನು ಅತಿಕ್ರಮಿಸಿರುವ ಅನುಭವವಾಗುತ್ತಿದೆ. ಆರಂಭದಲ್ಲಿ ಮೋಡ ಹೆಪ್ಪುಗಟ್ಟುವ ವಾತಾವರಣವಾದರೂ ಇತ್ತು ಈಗೀಗ ಎಲ್ಲವೂ ತೊಳೆದು ಶುಭ್ರವಾದಂತಿದೆ. ಮಳೆ ಬರುವ ಭರವಸೆಯೇ ಮಂಗ ಮಾಯವಾಗಿದೆ. ಮಳೆಗಾಲದ ಅನುಭವವನ್ನು ತಂದು ಕೊಡದ ರೀತಿಯಲ್ಲಿ ಈ ಬಾರಿಯ ಮಳೆಗಾಲ ಮೆಲ್ಲಗೆ ಸರಿಯುತ್ತಿದೆ. ಮುಂಗಾರಿನ ಪೀಕು ಕೈಗೆ ಬರುವ ಯಾವ ಲಕ್ಷಣಗಳೂ ತೋರುತ್ತಿಲ್ಲ. ಅದಾಗಲೇ ಉತ್ತರ ಕರ್ನಾಟಕದ ಜನ ಈ ಬರದ ಬವಣೆಗೆ ಹೆದರಿ ಗುಳೆ ಹೋಗುತ್ತಿದ್ದಾರೆ. ದುಡಿಯಲಾಗದ ಮತ್ತು ತೀರಾ ವಯಸ್ಸಾದವರನ್ನು rural-karnataka-2ಊರಲ್ಲಿಯೇ ಬಿಟ್ಟು ಕೂಸು, ಕುನ್ನಿಗಳನ್ನು ಕಟ್ಟಿಕೊಂಡು ಊರು ತೊರೆಯುತ್ತಿದ್ದಾರೆ. ಜಾನುವಾರಗಳನ್ನು ಕೇಳುವವರಿಲ್ಲದೇ ಬಂದ ದುಡ್ಡಿಗೆ ಮಾರಿ ನಡೆದಿದ್ದಾರೆ. ಸಾಲ ಮಾಡಿ ತಂದು ಭೂಮಿಯ ಬಾಯಿಗೆ ಸುರಿದ ಬೀಜವೂ ಮರಳಿ ದಕ್ಕದ ಸ್ಥಿತಿಯಲ್ಲಿ ರೈತರಿದ್ದಾರೆ.

ರಾಜ್ಯದ ದಕ್ಷಿಣ ಭಾಗಕ್ಕಿಂತಲೂ ಕಡಿಮೆ ಪ್ರಮಾಣದ ಮಳೆ ಉತ್ತರ ಕರ್ನಾಟಕದಲ್ಲಾಗಿದೆ. ಈಗಾಗಲೇ ರಾಜ್ಯದ 126 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿಯಾಗಿದೆ. ಮಿಕ್ಕ ಐವತ್ತು ತಾಲೂಕುಗಳ ಸ್ಥಿತಿಯೂ ಅಷ್ಟೇನು ಸುಖಕರವಿಲ್ಲ. ಆಹಾರಧಾನ್ಯಗಳ ಬೆಲೆ ದಿನೇ ದಿನೇ ಗಗನಕ್ಕೆ ಏರುತ್ತಿದೆ. ತೀರಾ ಅವಶ್ಯಕ ತರಕಾರಿಯಾಗಿರುವ ಈರುಳ್ಳಿಯ ದರವಂತೂ ನೂರರ ಆಸು ಪಾಸು ಹರಿದಾಡುತ್ತಿದೆ. ಅದರ ಬದಲಾಗಿ ಈರುಳ್ಳಿಯ ಪೇಸ್ಟ್ ಬಳಸಿ ಎಂದು ಸಲಹೆ ಕೊಡುವವರ ಪ್ರಮಾಣವೂ ಹೆಚ್ಚುತ್ತಿದೆ. ಹಿಂದೊಮ್ಮೆ ಹೀಗೆಯೇ ಈರುಳ್ಳಿಯ ದರ ಗಗನಕ್ಕೆ ತಲುಪಿದಾಗ ಆಗ ಕೇಂದ್ರ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್.ಶೇಷನ್ ಅವರು ಈರುಳ್ಳಿಯ ಬದಲಾಗಿ ಸೇಬು ಹಣ್ಣನ್ನು ಸೇವಿಸಲು ಕರೆನೀಡಿರುವದಿತ್ತು. ಆಗ ಸೇಬು ಹಣ್ಣಿನ ದರ ಈರುಳ್ಳಿಗಿಂತಲೂ ಕಡಿಮೆಯಿತ್ತು. rural-indiaನೀರಿಗಿಂತಲೂ ಬೀಯರ್ ದರ ಕಡಿಮೆ ಇದೆ ಎಂದಾಗ ಅದನ್ನು ನೀರಿಗೆ ಪರ್ಯಾಯವಾಗಿ ಕುಡಿದು ಇರಲು ಸಾಧ್ಯವಿದೆಯೇ..? ಈರುಳ್ಳಿಯ ಸ್ಥಾನವನ್ನು ಅದು ಮಾತ್ರ ತುಂಬಬಲ್ಲದೇ ಹೊರತು ಅದೇ ಜಾತಿಗೆ ಸೇರುವ ಬಳ್ಳೊಳ್ಳಿಯಿಂದಲೂ ಅದು ಸಾಧ್ಯವಿಲ್ಲ. ಕೇವಲ ಈರುಳ್ಳಿ ಮಾತ್ರವಲ್ಲ, ಇನ್ನೊಂದು ತಿಂಗಳಲ್ಲಿ ಬಹುತೇಕವಾಗಿ ಎಲ್ಲ ಆಹಾರ ಪದಾರ್ಥಗಳ ಬೆಲೆ ನಿಲುಕದ ಎತ್ತರ ತಲುಪುವದಂತೂ ಗ್ಯಾರಂಟಿ. ಇಲ್ಲಿ ಯಾವುದೇ ಕೃಷಿ ಪದಾರ್ಥಗಳ ದರ ಎಷ್ಟೇ ಹೆಚ್ಚಳವಾದರೂ ಅದರ ಲಾಭ ರೈತನನ್ನು ತಲುಪುವದಂತೂ ಸಾಧ್ಯವಿಲ್ಲ. ಕೊನೆಗೂ ಮಧ್ಯವರ್ತಿಗಳು ಮತ್ತು ಸಗಟು ಮಾರಾಟದಾರರೇ ಉದ್ದಾರವಾಗುವವರು.

ಮಳೆಯ ಪ್ರಮಾಣ ಈ ಬಾರಿ ತೀರಾ ಕಡಿಮೆಯಾಗಿದೆ. ಕರಾವಳಿ ತೀರದ ಜಿಲ್ಲೆಗಳಲ್ಲಿಯೂ ಈ ಬಾರಿ ಬರಗಾಲದ ಛಾಯೆ ತೋರುತ್ತಿದೆ. ಅಲ್ಲಿಯೂ ಕೆಲ ತಾಲೂಕುಗಳಲ್ಲಿ ಈಗಾಗಲೇ ಮಳೆಯ ಪ್ರಮಾಣ ವರ್ಷಕ್ಕಿಂತಲೂ ಕಡಿಮೆಯಾಗಿದೆ. ಉತ್ತರ ಕರ್ನಾಟಕದಲ್ಲಂತೂ ಬಹುತೇಕ ಕಡೆಗಳಲ್ಲಿ ಅದರಲ್ಲೂ ಕೃಷಿಯನ್ನೇ ಪ್ರಧಾನವಾಗಿಸಿಕೊಂಡ ತಾಲೂಕುಗಳು ಅದಾಗಲೇ ಬರದ ಬವಣೆಗೆ ಸಿಲುಕಿವೆ. ಮಳೆಗಾಲದಲ್ಲಿಯೂ ಕುಡಿಯುವ ನೀರಿಗಾಗಿ ಹಾಹಾಕಾರ ಆರಂಭವಾಗಿದೆ. ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರಿನ ಪೂರೈಕೆ ಶುರುವಾಗಿ ತಿಂಗಳೇ ಕಳೆಯಲು ಬಂತು. ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟ, ಕಲಬುರಗಿ, ಯಾದಗಿರ, ಗದಗ, ಬಳ್ಳಾರಿ, ಕೊಪ್ಪಳ, ಬೆಳಗಾವಿ, ಹಾವೇರಿ, ಧಾರವಾಡ, ರಾಯಚೂರ ಮುಂತಾದವುಗಳು ಅದಾಗಲೇ ಬರದ ಬವಣೆಗೆ ಸಿಲುಕಿರುವದಿದೆ. byahatti-nargund-kalasa-banduriಇನ್ನೊಂದೆಡೆ ಮಹದಾಯಿ ನದಿ ನೀರಿನ ವಿಷಯವಾಗಿ ಹೋರಾಟವೂ ನಡೆದಿದೆ. ಇಡೀ ಉತ್ತರ ಕರ್ನಾಟಕ ಒಂದೆಡೆ ಬರಗಾಲ ಇನ್ನೊಂದೆಡೆ ಕಳಸಾ ಬಂಡೂರಿ ನದಿ ಜೋಡಣೆಯ ವಿಷಯವಾಗಿ ಪ್ರತಿನಿತ್ಯ ಬಂದ್ ಮತ್ತು ಹರತಾಳದ ಸ್ಥಿತಿಯನ್ನು ಅನುಭವಿಸುತ್ತಿದೆ. ರಾಜ್ಯದಿಂದ ಮುಖ್ಯಮಂತ್ರಿಗಳು ಕೇಂದ್ರಕ್ಕೆ ನಿಯೋಗವನ್ನು ಕೊಂಡೊಯ್ದಿದ್ದರೂ ಪ್ರಧಾನಿಯವರೊಂದಿಗಿನ ಮಾತುಕತೆಗಳು ಅಷ್ಟೊಂದು ಫಲಪ್ರದವಾದಂತಿಲ್ಲ ಪರಿಣಾಮವಾಗಿ ಹೋರಾಟದ ಕಾವು ಇನ್ನಷ್ಟು ತೀವ್ರವಾಗಿದೆ.

ಒಂದೆಡೆ ಬರದ ಬಿಸಿ, ಇನ್ನೊಂದೆಡೆ ನದಿ ನೀರಿನ ಹೋರಾಟದ ತೀವ್ರತೆ ಇವೆರಡರ ನಡುವೆ ಉತ್ತರ ಕರ್ನಾಟಕ ಕೊತಕೊತ ಕುದಿಯುವಂಥ ಸ್ಥಿತಿಯಲ್ಲಿದೆ.ಈ ಬಗೆಯ ವಾತಾವರಣದ ನಡುವೆ ನಮ್ಮ ರಾಜಕಾರಣಿಗಳು ತಮ್ಮ ತಮ್ಮ ಸಣ್ಣ ಪುಟ್ಟ ರಾಜಕೀಯ ಹಿತಾಸಕ್ತಿಯನ್ನು ಬದಿಗಿಟ್ಟು, ಪಕ್ಷಭೇದವನ್ನು ಮರೆತು ಸಮೈಕ್ಯರಾಗಿ ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡುವ ಅಗತ್ಯವಿದೆ. ನೆರೆಯ ಗೋವಾ ಸರಕಾರ ಮಹದಾಯಿ ನದಿ ನೀರಿನ ವಿಷಯವಾಗಿ ತನ್ನ ಅದೇ ಹಳೆಯ ರಾಗವನ್ನೇ ಹಾಡುತ್ತಿದೆ. ಎಲ್ಲ ರೀತಿಯಿಂದಲೂ ಸದ್ಯದ ಆಡಳಿತರೂಢ ಸರಕಾರಕ್ಕೆ ಈ ಬಾರಿಯ ಬರಗಾಲ ಮತ್ತು ಈ ನದಿ ನೀರಿನ ಹೋರಾಟಗಳೆರಡೂ ನುಂಗಲಾರದ ತುತ್ತಾಗಿವೆ. ಬರಗಾಲ ನಿರ್ವಹಣೆ ಮತ್ತು ಈಗಾಗಲೇ ತೀವ್ರವಾಗಿ ನಡೆಯುತ್ತಿರುವ ಮಹದಾಯಿ ನದಿ ನೀರಿನ ಹೋರಾಟವನ್ನು ಅತ್ಯಂತ ಸೂಕ್ಷ್ಮವಾಗಿ ನಿರ್ವಹಿಸುವವಲ್ಲಿಯೇ ಆಡಳಿತರೂಢ ಸರಕಾರದ ಯಶಸ್ಸು ಅಡಗಿದೆ.

ರಾಜ್ಯದಲ್ಲಿಯ ಬರಗಾಲದ ಸ್ಥಿತಿಯನ್ನು ಈಗಾಗಲೇ ಮುಖ್ಯಮಂತ್ರಿಗಳು ಪ್ರಧಾನಿ ಮೋದಿಯವರಿಗೆ ವಿವರಿಸಿದ್ದಾರೆ. ಸುಮಾರು 10 ಸಾವಿರ ಕೋಟಿ ರೂಪಾಯಿಯ ಅಂದಾಜು ನಷ್ಟದ ಮೊತ್ತವನ್ನು ನೀಡಿರುವದಿದೆ. ಕೇಂದ್ರ ಸರಕಾರ ಕೇಳಿದಷ್ಟು ಪರಿಹಾರವಂತೂ ನೀಡಲು ಸಾಧ್ಯವಿಲ್ಲ. ಕೇಂದ್ರದ ಬರ ಅಧ್ಯಯನ ತಂಡಗಳ ಸಮೀಕ್ಷೆಯ ಮೇಲೆ ಕೊಡಮಾಡುವ ಮೊತ್ತದ ಪ್ರಮಾಣ ನಿಂತಿದೆ. ಈಗಾಗಲೇ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದೆ. ಪರಿಣಾಮವಾಗಿ ಕೆಲೆವೆಡೆ ವಿಧ್ಯುತ್ ಉತ್ಪಾದನೆಗೂ ತೊಂದರೆಯಾಗಲಿದೆ ಅದನ್ನು ಗಮನದಲ್ಲಿರಿಸಿಕೊಂಡೇ ಈಗಾಗಲೇ ಲೋಡ್ ಶೆಡ್ಡಿಂಗ್ ಆರಂಭವಾಗಿದೆ. kalasa-banduriಸುಮಾರು 60 ಪ್ರತಿಶತದಷ್ಟು ಸಣ್ಣ ಪ್ರಮಾಣದ ನೀರಿನ ಮೂಲಗಳು ಬತ್ತತೊಡಗಿವೆ. ಪರಿಣಾಮವಾಗಿ ಕುಡಿಯುವ ನೀರಿಗಾಗಿಯೂ ಹಾಹಾಕಾರ ಆರಂಭವಾಗುವ ದಿನಗಳು ದೂರಿಲ್ಲ. ಬಿತ್ತನೆ ಮಾಡಿರುವ ಒಟ್ಟು ಪ್ರದೇಶದಲ್ಲಿ ಅರ್ಧದಷ್ಟು ಅದಾಗಲೇ ಬಿಲ್ಕುಲ್ ಏನೂ ಬೆಳೆ ಬರುವದಿಲ್ಲ ಎನ್ನುವ ಸ್ಥಿತಿ ತಲುಪಿ ಆಗಿದೆ. ಇನ್ನೊಂದರ್ಧ ಜೀವ ಹಿಡಿದು ಹನಿ ಹನಿ ನೀರಿಗಾಗಿಯೂ ಪರಿತಪಿಸಿ ಒಣಗಿ ಹೋಗುವ ಸ್ಥಿತಿಯಲ್ಲಿದೆ. ಒಣ ಬೇಸಾಯವನ್ನು ಅವಲಂಬಿಸಿ, ಮಳೆಯನ್ನೇ ನೆಚ್ಚಿಕೊಂಡಿರುವ ರೈತರಂತೂ ಕಂಗಾಲಾಗಿದ್ದಾರೆ. ಈಗಾಗಲೇ ಸರಣಿ ರೂಪದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳಿಗೆ ಈ ಬರಗಾಲ ಇನ್ನಷ್ಟು ಚಾಲನೆ ಕೊಡದಿರಲಿ. ಅವರ ಬದುಕಿನಲ್ಲಿ ಭರವಸೆ ಮೂಡುವಂಥಾ ಹತ್ತಾರು ಕಾರ್ಯಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕಿದೆ. ಒಟ್ಟಂದವನ್ನು ಮಸಿ ನುಂಗಿತು ಎನ್ನುವ ಮಾತಿನಂತೆ ಸರಕಾರದ ಇಲ್ಲಿಯವರೆಗಿನ ಸಾಧನೆಗಳನ್ನು ಈ ಬರಗಾಲ ಮಸಿಯಾಗಿ ಮರೆಸಿಬಿಡುವಂತಾಗಬಾರದು ಎನ್ನುವದಾದರೆ ಈಗಿನಿಂದಲೇ ಸರಕಾರ ಜಾಗೃತವಾಗಿ ಬರ ಪರಿಹಾರ ಕಾಮಗಾರಿಯ ಕಾರ್ಯಕ್ರಮಗಳನ್ನು ಆದಷ್ಟು ಬೇಗನೇ ಚಾಲನೆಗೊಳಿಸಬೇಕು. ಇದೊಂದು ಆಹ್ವಾನವಾಗಿ ಸ್ವೀಕರಿಸಿ ಸರಕಾರ ಮತ್ತು ಜನತೆ ಕೈಗೂಡಿಸಿ ಬರಗಾಲದ ಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಬೇಕು.

ಅಗಷ್ಟ ತಿಂಗಳು ಕಳೆಯಲು ಬಂದರೂ ಯಾವ ಜಿಲ್ಲೆಗಳಲ್ಲೂ ಸಾಕಷ್ಟು ಮಳೆಯಾಗಿಲ್ಲ. ರಾಜ್ಯದ ಯಾವ ನದಿಗಳೂ ಪೂರ್ಣ ಪ್ರಮಾಣದಲ್ಲಿ ತುಂಬಿಲ್ಲ. droughtಕೃಷಿ ಕಾರ್ಯಗಳು ದೂರ, ಕುಡಿಯಲು ನೀರು ಸಿಕ್ಕರೂ ಸಾಕು ಎನ್ನುವಂತಹ ಸ್ಥಿತಿ ಬರ ಪೀಡಿತ ತಾಲೂಕುಗಳಲ್ಲಿದೆ. ನೀರಿಗಾಗಿ ದಿನವಿಡೀ ಟ್ಯಾಂಕರ್‌ಗಳಿಗಾಗಿ ಕಾದು ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿದೆ. ನಿಸರ್ಗ ಮುನಿಸಿಕೊಂಡರೆ ಎಷ್ಟೆಲ್ಲಾ ವೈಪರೀತ್ಯಗಳು ಮತ್ತು ಮಾರಕ ಪರಿಣಾಮಗಳು ಸಾಧ್ಯ ಎನ್ನುವುದನ್ನು ಅನೇಕ ಬಾರಿ ಹೀಗೆ ಮತ್ತೆ ಮತ್ತೆ ಅನಾವೃಷ್ಟಿಯ ಮೂಲಕ ತೋರಿಸಿಕೊಟ್ಟರೂ ನಾವು ಪಾಠ ಕಲಿತಿಲ್ಲ. ಬರಗಾಲದ ವಿಷಯವಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ವ್ಯವಸ್ಥಿತವಾಗಿ ನಿರ್ವಹಿಸಲ್ಪಟ್ಟರೆ ಅರ್ಧ ಸಮಸ್ಯೆಗಳನ್ನು ನಿಯಂತ್ರಿಸಿದಂತೆ. ಆ ದಿಸೆಯಲ್ಲಿ ಸರಕಾರ ಮತ್ತು ನಾವೆಲ್ಲರೂ ಸನ್ನದ್ಧರಾಗಬೇಕಿದೆ.