Author Archives: editor

ಕಂಬಾರರಿಗೆ ಜ್ಞಾನಪೀಠ

ಕನ್ನಡವೂ ಸೇರಿದಂತೆ ಒಟ್ಟು ಭಾರತೀಯ ಸಮಾಜದ ಬಹು ಸಂಖ್ಯಾತ ಅಂಚಿನ ಸಮುದಾಯ ತನ್ನ ಸೃಜನಶೀಲತೆ, ಪ್ರತಿರೋಧಕ ಶಕ್ತಿ, ಸತ್ವವನ್ನು ಕಳೆದುಕೊಂಡು ದಿಕ್ಕು ಕಾಣದ ಸ್ಥಿತಿಯಲ್ಲಿರುವ ಹೊತ್ತಿದು. ಇಂತಹ ಸಂದರ್ಭದಲ್ಲಿ ನಮ್ಮ ಸಮಾಜದ ಆಂತರಿಕ ಪುರೋಹಿತಶಾಹಿ ಹಾಗೂ ಬಾಹ್ಯ ವಸಾಹತುಶಾಹಿಗೆ ಪ್ರತಿಲೋಮತೆಯನ್ನು ಬಹುಜನರ ಅಂಚಿನ ಸಂಸ್ಖೃತಿಯಲ್ಲಿ ಕಂಡು, ತಂದು ತಮ್ಮ ಬರಹಗಳಲ್ಲಿ ಮುಖ್ಯವಾಗಿ ನೆಲೆಗೊಳಿಸಿದ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿರುವುದು ನಿಜಕ್ಕೂ ಸಂತೋಷದಾಯಕ. ಈ ಪ್ರಶಸ್ತಿ ಅಂಚಿನ ಸಮುದಾಯದಿಂದ ಬಂದ ಮೊದಲ ಕನ್ನಡದ ಮುಖ್ಯ ಲೇಖಕರಾದ ಕುವೆಂಪುವಿನ ನಂತರ ಕಂಬಾರರಿಗೆ ಬಂದಿರುವುದು ಆಕಸ್ಮಿಕವೇನಲ್ಲ. ಈ ಪ್ರಶಸ್ತಿ ಕಂಬಾರರನ್ನು ಕುವೆಂಪುವಿನ ನಂತರ ಆ ಸಮುದಾಯದ ವಾರಸುದಾರರನ್ನಾಗಿಸಿದೆ. ಕುವೆಂಪು ಮತ್ತು ಕಂಬಾರರಿಬ್ಬರೂ ಅಂಚಿನ ಸಂಸ್ಕೃತಿಯ ಚಿಂತಕರೂ ಹೌದು.

ಕುವೆಂಪು ಅವರು ಪ್ರಧಾನ ಕಥನಮಾತೃಕೆ ಮರೆಮಾಚಿದ ಅಂಚಿನ ಸಮುದಾಯದ ಸೃಜನಶೀಲ ಧಾರೆಯನ್ನು ಸತ್ವವನ್ನೂ ಪತ್ತೆ ಹಚ್ಚಿ ಪ್ರಧಾನ ಮಾತೃಕೆಯೊಂದಿಗೆ ಸಾರ್ಥಕ ಸಂಘರ್ಷವನ್ನುಏರ್ಪಡಿಸಿದವರು. ಕಂಬಾರರು ಅಂಚಿನ ಸಮುದಾಯದ ಜೀವಂತ ಕಥನವನ್ನೇ ಆಶ್ರಯಿಸಿ ಪ್ರತಿರೋಧ ಒಡ್ಡಿದವರು. ಕುವೆಂಪು ಬಹುಸಂಖ್ಯಾತ ಸಮುದಾಯದ ಸಿದ್ಧಾಂತಿಯಾದರೆ ಕಂಬಾರರು ವಕ್ತಾರರಾಗಿದ್ದಾರೆ ಎನ್ನಬಹುದು.

ಕಂಬಾರರ ಕಾವ್ಯ ದೇಶೀ ಭಾಷೆ ಮತ್ತು ವಸ್ತುವನ್ನು ಪ್ರಧಾನವಾಗಿ ಆಶ್ರಯಿಸಿದೆ. ಹಾಗೆಂದ ಮಾತ್ರಕ್ಕೆ ಕಂಬಾರರು ದೇಶೀ ಸಂಸ್ಕೃತಿ ಒಳಗಿನ ಲೋಪಗಳನ್ನು ಒಪ್ಪಿದವರಲ್ಲ. ಅವರ ಕಾವ್ಯ ನಮ್ಮ ಸಮಾಜದ ಪಾಳೇಗಾರಿಕೆ ಪುರೋಹಿತಶಾಹಿಯನ್ನು ಪ್ರಬಲವಾಗಿ ವಿರೋಧಿಸಿದೆ. ಅದಕ್ಕೆ ಬದಲಾಗಿ ಬಹುಸಂಖ್ಯಾತ ಕಥಾ ಪ್ರಭುತ್ವವಾಗದಿ ನೆಲೆಯನ್ನು ಎತ್ತಿ ಹಿಡಿದಿದೆ. ಇದಕ್ಕೂ ಮುಖ್ಯವಾಗಿ ಕಂಬಾರರ ಕಾವ್ಯ ಎಂದೂ ಜೀವಪರವಾಗಿದೆ. ಯಾಕೆಂದರೆ ನವ್ಯ ಭರಾಟೆಯ ಹೊತ್ತಿನಲ್ಲೇ ಕಾವ್ಯ ಬರೆಯಲು ಆರಂಭಿಸಿದ ಕಂಬಾರರು ಕಾಮದಂತಹ ವಿಷಯವನ್ನು ಸಮಷ್ಟಿಯ ಸಮಚಿತ್ತದೊಡನೆ ವ್ಯಷ್ಟಿಯ ಮಹತ್ವವನ್ನೂ ಪರಿಗಣಿಸಿ ಸಮ್ಮಿಲನಗೊಳಿಸಿದವರು. ಇಂತಹ ಜೀವಪರತೆಯೇ ಕನ್ನಡ ಸಮಾಜದ ಎಲ್ಲಾ ಕಾಲದ ಜೀವಪರತೆಯೂ ಹೌದು.

– ನಂದೀಶ್ ಹಂಚೆ

ಅಣ್ಣಾ ಹೋರಾಟದ ಅಡ್ಡ ಪರಿಣಾಮಗಳು!!

– ಭೂಮಿ ಬಾನು

ಅಣ್ಣಾ ಹಜಾರೆಯ ಉಪವಾಸ-ಚಳವಳಿ ದುಷ್ಟರಿಣಾಮಗಳು ಇಷ್ಟು ಬೇಗ ಗೋಚರಿಸುತ್ತವೆ ಯಾರೂ ಊಹಿಸಿರಲಿಲ್ಲವೇನೋ? ಗುಜರಾತ್ ನರಮೇಧದಲ್ಲಿ ಮೈತುಂಬಾ ರಕ್ತ ಅಂಟಿಸಿಕೊಂಡ ನರೇಂದ್ರ ಮೋದಿ ಸದ್ಭಾವನೆಗಾಗಿ ಉಪವಾಸ ಕೂತರು. ಮೋದಿಯ ಉಪವಾಸ ವಿರುದ್ಧವಾಗಿ ಶಂಕರ್ ಸಿಂಘ್ ವಾಗೇಲ ತಾನೂ ಊಟ ಮಾಡೋಲ್ಲ ಅಂದರು. ಅಷ್ಟೇ ಅಲ್ಲ, ಇಲ್ಲಿ ಕರ್ನಾಟಕದಲ್ಲಿ ಕಬ್ಬಿಣದ ಅದಿರನ್ನು ಅಗೆದು ಮಾರಾಟ ಮಾಡಲು ಅನುಮತಿ ನೀಡಬೇಕೆಂದು ಶ್ರೀರಾಮುಲು ಸ್ಪಾಂಜ್ ಕಬ್ಬಿಣ ಕಾರ್ಖಾನೆಯವರ ಪರವಾಗಿ ಉಪವಾಸ ಕೂತರು.

ಅಣ್ನಾ ಹಜಾರೆಯ ಉಪವಾಸ ಅಡ್ಡ ಪರಿಣಾಮಗಳೇ ಇವೆಲ್ಲ. ಕೊಲೆ ಆರೋಪಿಗಳು, ಕಳ್ಳ, ಸುಳ್ಳರೆಲ್ಲಾ ಉಪವಾಸ ಕುಂತು ತಮ್ಮ ಬೇಡಿಕೆ ಇಡುವಂತಾದರು. ಹಣ್ಣಿನ ರಸ ಕುಡಿದು ಉಪವಾಸ ಅಂತ್ಯ ಮಾಡುವ ದೃಶ್ಯಗಳು ಇತ್ತೀಚೆಗೆ ಮಾಧ್ಯಮಗಳಲ್ಲಿ ಮಾಮೂಲಿಯಾಗಿಬಿಟ್ಟಿವೆ. ಅಣ್ಣಾ ಹೋರಾಟವನ್ನು ಮೊದಲಿನಿಂದಲೂ ಒಂದು ಶಂಕೆಗಣ್ಣಿನಿಂದಲೇ ನೋಡುತ್ತಾ ಬಂದವರಿಗೆ ಈ ಅಡ್ಡ ಪರಿಣಾಮಗಳು ನಿರೀಕ್ಷಿತ. ತಾತ್ವಿಕ ಸ್ಪಷ್ಟತೆ ಇಲ್ಲದ ಹೋರಾಟಗಳು ಟಿಆರ್ಪಿ ಹಿಂದೆ ಬಿದ್ದಿರುವ ಮಾಧ್ಯಮಗಳ ಕಾರಣ ಅನಿರೀಕ್ಷಿತ ಪ್ರಚಾರ ಗಿಟ್ಟಿಸಿದ ಕಾರಣ ಇಂತಹ ಅವಘಡಗಳು ಸಹಜ. ನೋಡ ನೋಡುತ್ತಲೇ ಕೆಲವೇ ದಿನಗಳ ಅಂತರದಲ್ಲಿ ಉಪವಾಸ ಪರಿಣಾಮಕಾರಿ ಪಿಆರ್ ಟೂಲ್ ಆಗಿ ರೂಪ ಪಡೆಯಿತು.

ಸಮಾಜದಲ್ಲಿ ಸದ್ಭಾವನೆ ಮೂಡಿಸಲು ಕೋಮು ಸೌಹಾರ್ದ ಆಡಳಿತದಿಂದ ಮಾತ್ರ ಎಂದು ತಿಳಿಯಬೇಕಿದ್ದ ಮುಖ್ಯಮಂತ್ರಿಗೆ ಅಣ್ಣಾ ಹಜಾರೆ ಉಪವಾಸ ಮಾಡಿದರೆ ಸಾಕು ಎನ್ನುವ ಪಾಠ ಹೇಳಿಕೊಟ್ಟರು. ಮೋದಿಯನ್ನು ಎದುರಿಸಲು ಜನರ ಮಧ್ಯೆ ಹೋಗಿ ಪಾರ್ಟಿ ಕಟ್ಟಬೇಕು ಎಂಬುದನ್ನು ಮರೆತು ಕಾಂಗ್ರೆಸ್ ನವರೂ ಅದೇ ತಂತ್ರ ಅನುಸರಿಸಿದರು.

ಇವರೆಲ್ಲರ ಹೊರತಾಗಿ ಅಣ್ಣಾ ಹೋರಾಟದ ಸಂಪೂರ್ಣ ಲಾಭ ಪಡೆಯಲು ಹೊರಟವರು ಎಲ್.ಕೆ. ಅಡ್ವಾಣಿ. ಭ್ರಷ್ಟಾಚಾರದ ವಿರುದ್ಧ ರಥಯಾತ್ರೆ ನಡೆಸಲಿದ್ದಾರೆ. ಆ ಮೂಲಕ ಪ್ರಧಾನಿಯಾಗುವ ತಮ್ಮ ಕನಸನ್ನು refresh ಮಾಡಿದ್ದಾರೆ ಎನ್ನುವುದು ಅನೇಕರ ಲೆಕ್ಕಾಚಾರ. ಅಯೋಧ್ಯೆಯಲ್ಲಿ ರಾಮ ಮಂದಿರಕ್ಕಾಗಿ ರಥಯಾತ್ರೆ ಹೊರಟಿದ್ದವರು ಒಂದು ಸಾಮಾಜಿಕ ಪಿಡುಗಿನ ವಿರುದ್ಧ ಯಾತ್ರೆ ಹೊರಡುವ ಮಾತನಾಡಿದ್ದಾರಲ್ಲಾ ಎನ್ನುವುದಷ್ಟೇ ಸಮಾಧಾನದ ಸಂಗತಿ.

ಎಲ್ಲರಿಗೂ ಸಿಗಬೇಕು ಸೂರು, ಮರೆತಿರಾ ಜಸ್ಟಿಸ್ ಪಾಟೀಲರೆ?

– ಭೂಮಿ ಬಾನು

ಲೋಕಾಯುಕ್ತ ಶಿವರಾಜ್ ವಿ.ಪಾಟೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಒಂದರ ನಂತರ ಒಂದು ಎಂಬಂತೆ ಮೂರು ನಿವೇಶನ/ಮನೆಗಳನ್ನು ಬೆಂಗಳೂರಿನಲ್ಲಿ ಅವರು ಗೃಹನಿರ್ಮಾಣ ಸಹಕಾರ ಸಂಘಗಳ ಬೈಲಾ ಉಲ್ಲಂಘಿಸಿ ಪಡೆದಿದ್ದಾರೆ ಎನ್ನುವ ಆರೋಪ ಅವರನ್ನು ಈ ನಿರ್ಧಾರಕ್ಕೆ ಬರುವಂತೆ ಮಾಡಿದೆ.

ಬೆಂಗಳೂರು ಮಿರರ್ ಪತ್ರಿಕೆಗೆ ಈ ಸುದ್ದಿಯನ್ನು ವಿಸ್ತೃತವಾಗಿ ಮೊದಲು ಪ್ರಕಟಿಸಿದ ಕೀರ್ತಿ ಸಲ್ಲಬೇಕು. ಮಾಧ್ಯಮಗಳಲ್ಲಿ ಈ ಬಗ್ಗೆ ಚರ್ಚೆ ಆರಂಭವಾಯಿತು. ಹಾಗೆ ಚರ್ಚೆ ಆರಂಭವಾದ ನಂತರವಷ್ಟೆ ಲೋಕಾಯುಕ್ತರಿಗೆ ಒಂದು ನಿವೇಶನವನ್ನು ಹಿಂತಿರುಗಿಸಬೇಕು ಎಂಬ ಆಲೋಚನೆ ಬಂತು. ಮುಂದುವರಿದು, ರಾಜೀನಾಮೆ ಕೊಟ್ಟರು. ತಮ್ಮ ನಿರ್ಧಾರವನ್ನು ಪ್ರಕಟಿಸುವಾಗ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಹೇಳಬೇಕು ಎಂದುಕೊಂಡದಷ್ಟನ್ನೆ ಹೇಳಿ ಎದ್ದು ಹೋದರು. ತಮ್ಮ ವಿರುದ್ಧದ ದುರುದ್ದೇಶಪೂರಕ ಪ್ರಚಾರದಿಂದ ತುಂಬಾ ನೋವಾಗಿದೆ. ಇಂತಹ ಅಹಿತವಾದ ಸಂದರ್ಭದಲ್ಲಿ ಈ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂದು ಭಾವಿಸಿದ್ದೇನೆ ಎಂದರು. ಅವರು ಈ ಎಲ್ಲಾ ಘಟನಾವಳಿಗಳಿಗೆ ಕಾರಣರಾದವರನನ್ನು ಕೇಳಬಯಸಿದ್ದು, “ಅವರು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಬಯಸುತ್ತಾರೋ ಅಥವಾ ಭ್ರಷ್ಟಾಚಾರದ ವಿರುದ್ಧ ಹೋರಾಡುವವರ ವ್ಯಕ್ತಿತ್ವಕ್ಕೆ ಕಳಂಕ ತರಲು ಯತ್ತಿಸುತ್ತಾರೋ?”

ತಾನು ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ನಿಂತವನು, ಆದರೆ ತನಗೆ ಬೆಂಬಲ ಸಿಗಲಿಲ್ಲ. ಬದಲಿಗೆ ತನ್ನ ವ್ಯಕ್ತಿತ್ವಕ್ಕೆ ಕಳಂಕ ತರುವ ಪ್ರಯತ್ನ ನಡೆಯಿತು ಎನ್ನುವ ಭಾವನೆ ಅವರ ಮಾತಿನಲ್ಲಿದೆ. ಸನ್ಯಾನ್ಯರು ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾಧ್ಯಮಗಳಿಗೆ ನೀಡಿದ ಸಂದರ್ಶನಗಳಲ್ಲಿ ಹೇಳಿದ ಮಾತು ಇಲ್ಲಿ ನೆನಪಾಗುತ್ತಿದೆ. ‘ನಾನು ನನ್ನ ಪ್ರಮಾಣವಚನಕ್ಕೆ ಬದ್ಧನಾಗಿರುತ್ತೇನೆ’ ಎಂದು ಅವರು ಒತ್ತಿ ಹೇಳಿದ್ದರು. ಅವರು ಹಾಗೆ ಹೇಳುವ ಅಗತ್ಯ ಏನೂ ಇರಲಿಲ್ಲ. ಏಕೆಂದರೆ, ಅವರಿಂದ ಆ ಹುದ್ದೆ ನಿರೀಕ್ಷಿಸುವುದೇ ಅದನ್ನು, ಮತ್ತೇನನ್ನೂ ಅಲ್ಲ.

ಒಂದು ಮನೆ ಇದ್ದಾಗ್ಯೂ ಜುಡಿಶಿಯಲ್ ಲೇಔಟ್ ನಲ್ಲಿ ನಿವೇಶನ ಪಡೆದದ್ದು ಈಗ ಚರ್ಚೆಯ ವಿಷಯಗಳಲ್ಲಿ ಒಂದು. ಆ ಸಂದರ್ಭದಲ್ಲಿ ತಾನೂ ಯಾವುದೇ ಅಫಿಡವಿಟ್ಟು ಸಲ್ಲಿಸಿರಲಿಲ್ಲ ಎಂದು ಹೇಳಿದ್ದಾರೆ. ಭಾರತದ ಸಂವಿಧಾನ ಒಪ್ಪಿ ಈ ನೆಲದಲ್ಲಿ ಬದುಕುತ್ತಿರುವ ಎಲ್ಲರಿಗೂ ಕಾನೂನು ಒಂದೆ. ಕಾನೂನು ಗೊತ್ತಿದ್ದು ತಪ್ಪು ಮಾಡಿರಲಿ, ಅಥವಾ ಗೊತ್ತಿಲ್ಲದೆ ಮಾಡಿರಲಿ ಪರಿಣಾಮ ಒಂದೆ. ಪ್ರಸ್ತುತ ಸಂದರ್ಭ ಚರ್ಚೆಯಲ್ಲಿರುವ ವ್ಯಕ್ತಿ ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಧೀಶರಾಗಿದ್ದವರು. ಅವರು ಕಾನೂನು ಗೊತ್ತಿರಲಿಲ್ಲ ಎಂದರೆ ನಂಬಬೇಕೆ? ಸತ್ಯವನ್ನು ಮರೆಮಾಚಿ ನಿವೇಶನ ಪಡೆದದ್ದು ಭಾರತೀಯ ದಂಡ ಸಂಹಿತೆ ಸೆ.200 ರ ಪ್ರಕಾರ ಅಪರಾಧ. ಸನ್ಮಾನ್ಯರ ಪ್ರಕರಣದಲ್ಲಿ ಈ ಅಪರಾಧ ಎರಡು ಬಾರಿ ಆಗಿದೆ. ಒಮ್ಮೆ ಜುಡಿಶಿಯಲ್ ಲೇಔಟ್ ಪ್ರಕರಣದಲ್ಲಿ ಮತ್ತೊಮ್ಮೆ ವಯ್ಯಾಳಿಕಾವಲ್ ನಿವೇಶನ ಕೊಳ್ಳುವಾಗ.

ಈ ನೆಲದ ಎಲ್ಲಾ ಗೃಹನಿರ್ಮಾಣ ಸಹಕಾರ ಸಂಘಗಳಿಗೆ ಒಂದು ಸಾಮಾನ್ಯ ಬೈಲಾ ಇದೆ. ಅದರ ಪ್ರಕಾರ ಈಗಾಗಲೇ ಆ ಸಂಘದ ಕಾರ್ಯವ್ಯಾಪ್ತಿಯಲ್ಲಿ ನಿವೇಶನ/ಮನೆ ಇರುವವರು ಮತ್ತೊಂದು ನಿವೇಶನಕ್ಕೆ ಅರ್ಹರಲ್ಲ. ಎಲ್ಲರಿಗೂ ಸೂರು ದೊರಕುವಂತಾಗಬೇಕು ಎಂಬುದು ಈ ನಿಯಮದ ಮೂಲ ಉದ್ದೇಶ. ಆದರೆ ತನ್ನಿಂದ ಏನೂ ತಪ್ಪಾಗಿಲ್ಲ ಎಂದು ವಾದಿಸುವುದರಲ್ಲಿ ಅರ್ಥವಿಲ್ಲ. ಮೂಲ ಉದ್ದೇಶಕ್ಕೆ ಧಕ್ಕೆಯಾಗಿರುವುದಂತೂ ಸತ್ಯ. ಜುಡಿಶಿಯಲ್ ಲೇಔಟ್ ನಲ್ಲಿ ಬರೋಬ್ಬರಿ 9,400 ಚದರ ಅಡಿಗಳ ನಿವೇಶನ ಇವರಿಗಿದೆ. ಅಷ್ಟು ವಿಸ್ತೀರ್ಣದ ನಿವೇಶನದಲ್ಲಿ 30X40 ರ ಎಂಟು ನಿವೇಶನ ಮಾಡಿ ಎಂಟು ಕುಟುಂಬಕ್ಕೆ ನೀಡಬಹುದಿತ್ತು! ಜೊತೆಗೆ ಆ ಸಂಘದವರು ಸರ್ಕಾರದ ಅನುಮತಿ ಇಲ್ಲದೆ ರೈತರಿಂದ 36 ಎಕರೆ ಜಮೀನು ಖರೀದಿಸಿದ್ದರು. ಇಂತಹ ಅಕ್ರಮಗಳಿಂದ ರೂಪುಗೊಂಡ ಲೇಔಟ್ ನ ಫಲಾನುಭವಿಗಳ ಪಟ್ಟಿಯಲ್ಲಿ ಅನೇಕ ನ್ಯಾಯಾಧೀಶರು ಇರುವುದೇ ದುರಂತ.

ಇಷ್ಟಾದರೂ ನ್ಯಾಯಮೂರ್ತಿ ಪಾಟೀಲರು ‘ಭ್ರಷ್ಟಾಚಾರ ವಿರುದ್ಧ ಹೋರಾಡಲು ಬಂದವನನ್ನು ಹೀಗೆ ಕಳಂಕಿತನನ್ನಾಗಿ ಮಾಡಿದಿರಲ್ಲ’ ಎಂದು ಗೋಗರೆಯುವುದು ವಿಪರ್ಯಾಸ. ಅವರಲ್ಲಿ ತಮ್ಮಿಂದ ತಪ್ಪಾಗಿದೆ ಎಂಬ ಭಾವನೆಯೇ ಇಲ್ಲ. ಭ್ರಷ್ಟಾಚಾರದ ವಿರುದ್ಧ ಪ್ರಬಲ ಕಾನೂನಿಗಾಗಿ ಹೋರಾಡಿದ ಅಣ್ಣಾ ಹಜಾರೆ ಪಾಟೀಲರು ತಮ್ಮ ಸ್ಥಾನದಲ್ಲಿ ಮುಂದುವರಿಯಲು ಅರ್ಹರಲ್ಲ ಎಂಬರ್ಥದ ಹೇಳಿಕೆ ನೀಡಿದ್ದು ಪಾಟೀಲರಿಗೆ ತೀವ್ರ ಮುಜುಗರಕ್ಕೆ ಕಾರಣವಾಗಿರಬಹದು. ನಂತರ ರಾಜೀನಾಮೆಯ ಈ ನಿರ್ಧಾರಕ್ಕೆ ಬಂದಿರಬಹುದು. ಒಂದು ಪಕ್ಷ ರಾಜ್ಯಪಾಲರು ರಾಜೀನಾಮೆ ಒಪ್ಪದೆ ಹಿಂಪಡೆಯಿರಿ ಎಂದು ಸಲಹೆ ನೀಡಿದರೆ ಪರಿಸ್ಥಿತಿ ಬದಲಾಗಬಹುದು. ಆದರೆ ಅಂತಹ ಲಕ್ಷಣಗಳು ಕಾಣುತ್ತಿಲ್ಲ. ಸದ್ಯ ಖಾಲಿಯಾದ ಸ್ಥಾನಕ್ಕಾಗಿ ಸೂಕ್ತ ವ್ಯಕ್ತಿಯನ್ನು ಹುಡುಕಿ ನೇಮಕ ಮಾಡುವ ಹೊಣೆ ರಾಜ್ಯ ಸರ್ಕಾರದ್ದು. ನಿಜಕ್ಕೂ ಇದು ಕಷ್ಟದ ಕೆಲಸ. ಜುಡಿಶಿಯಲ್ ಲೇಔಟ್ ನ ಫಲಾನುಭವಿಗಳಾದ ಒಟ್ಟು ನ್ಯಾಯಾಧೀಶರ ಸಂಖ್ಯೆಯೇ 84! ಕಳಂಕರಹಿತ, ಆರೋಪ ಹಿನ್ನೆಲೆ ಇಲ್ಲದ ನ್ಯಾಯಾಧೀಶರನ್ನು ಹುಡುಕುವುದು ಎಷ್ಟು ಕಷ್ಟದ ಕೆಲಸ ನೋಡಿ!

Deccan Herald - Mining Payments

ವಿವೇಚನಾ ಖೋಟಾದ ಲಾಭವೇಕೆ?

– ಭೂಮಿ ಬಾನು

ಬರವಣಿಗೆ ಬಲ್ಲವನಿಗೆ ಅಹಂ ನೆತ್ತಿಗೇರುವುದು ಸಹಜ. ಪತ್ರಕರ್ತರ ಬಳಗದಲ್ಲಂತೂ ಅಹಂ ಸರ್ವೇ ಸಾಮಾನ್ಯ. ಇತ್ತೀಚೆಗಂತೂ ಟಿವಿ ಪರದೆಯಲ್ಲಿ ಕಾಣಿಸಿಕೊಳ್ಳುವ ಅವಕಾಶ ಇದೆ ಎನ್ನುವ ಕಾರಣಕ್ಕೆ ತೀರಾ ಅಸಹಜ ಎನ್ನವಷ್ಟು ಅಹಂ ಅನೇಕ ಟಿವಿ ಪತ್ರಕರ್ತರ ನೆತ್ತಿಯೇರಿ ಕೂತಿದೆ. ಪರಿಣಾಮವಾಗಿ, ಸುತ್ತಲ ಸಮಾಜದಿಂದ ಅಂತಹವರು ನಿರೀಕ್ಷಿಸುವುದೂ ಹೆಚ್ಚಾಗಿದೆ. ಮಾಧ್ಯಮ ಮಂದಿ ಪದೇ ಪದೇ ಅಲ್ಲಲ್ಲಿ ಟೀಕೆಗೆ, ಮೂದಲಿಕೆಗೆ ಒಳಗಾಗುವುದು ಇದೇ ಕಾರಣಕ್ಕೆ. ತಾವು ಪತ್ರಕರ್ತರು, ಮಾಧ್ಯಮದವರು ಎಂಬ ಕಾರಣಕ್ಕೆ ವಿಶೇಷ ಸವಲತ್ತು ಪಡೆಯುವುದು ಜನ್ಮ ಸಿದ್ಧ ಹಕ್ಕು ಎಂದು ಈ ಸಮುದಾಯ ಭಾವಿಸಿದಂತಿದೆ.

ಇತ್ತೀಚೆಗೆ ಅಲ್ಲಲ್ಲಿ ಕೇಳಿ ಬರುತ್ತಿರುವ ‘ಪತ್ರಕರ್ತರ ಸೈಟು’ ಪುರಾಣ ನನ್ನ ಈ ಅಭಿಪ್ರಾಯಕ್ಕೆ ಮೂಲ ಕಾರಣ. ಬೆಂಗಳೂರಿನ ಕೆಲ ಹಿರಿಯ ಪತ್ರಕರ್ತರು ಅನಾದಿ ಕಾಲದಿಂದಲೂ ಮುಖ್ಯಮಂತ್ರಿಯ ವಿವೇಚನಾ ಖೋಟಾದ ಫಲಾನುಭವಿಗಳಾಗಿ ಬಿಡಿಎ ಸೈಟನ್ನು ಪಡೆದುಕೊಂಡಿದ್ದಾರೆ. ಅದಕ್ಕೆ ಅವರು ಅನುಸರಿಸಿದ ವಿಧಾನ ನಾನಾ ರೀತಿಯದ್ದು. ಅವರಲ್ಲೊಬ್ಬರು ಹೆಂಡತಿಗೆ ಸುಳ್ಳೇ ವಿಚ್ಛೇದನ ಕೊಡುವ ಮಟ್ಟಿಗೆ ಹೋದರು ಎಂದರೆ ಅವರ ಸೈಟು ದಾಹ ಎಷ್ಟಿತ್ತು ಎನ್ನುವುದು ಗೊತ್ತಾಗುತ್ತದೆ.

ಬೆಂಗಳೂರಿನಲ್ಲಿ ಹುಟ್ಟಿಕೊಂಡ ಜಾಡ್ಯ ರಾಜ್ಯದ ಇತರೆ ಜಿಲ್ಲೆಗಳಿಗೂ ಹಬ್ಬುತ್ತಿದೆ. ಅಲ್ಲಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಸ್ಥಳೀಯ ಪತ್ರಕರ್ತ ಸಂಘದವರು ಅಥವಾ ಅವರಲ್ಲೇ ಇರುವ ಪ್ರಭಾವಿ ಪತ್ರಕರ್ತರು ಮಂತ್ರಿಗಳ ಮೇಲೆ ಸೈಟುಗಳಿಗಾಗಿ ಒತ್ತಾಯ ಮಾಡುತ್ತಿರುವುದು ಗುಟ್ಟಿನ ಸಂಗತಿ ಅಲ್ಲ.

ಶಿವಮೊಗ್ಗದಲ್ಲೂ ಇಂತಹದೇ ಪ್ರಕರಣ ಚರ್ಚೆಯಾಗುತ್ತಿದೆ. ಅಲ್ಲಿನ ಪತ್ರಕರ್ತರು ಬಹುಸಂಖ್ಯೆಯಲ್ಲಿ ಒಟ್ಟುಗೂಡಿ ಸೈಟು ಬೇಕೆಂದು ಅರ್ಜಿ ಹಾಕಿದ್ದಾರೆ. ಅರ್ಜಿ ಹಾಕಿದವರ ಪಟ್ಟಿಯಲ್ಲಿ ಪತ್ರಕರ್ತರಲ್ಲದವರು ಇದ್ದಾರೆಂದು ಕೆಲವರು ಚಕಾರ ಎತ್ತಿದ್ದಾರೆ. ಜೊತೆಗೆ ಒಂದು ಬಾರಿ ಸೈಟು ಪಡೆದವರು ಮತ್ತೆ ಅರ್ಜಿ ಹಾಕಿದ್ದಾರೆ ಎಂಬ ಟೀಕೆಯೂ ಇದೆ. ಆದರೆ ಕೆಲವು ವೇದಿಕೆಗಳ ಹೊರತಾಗಿ ಮತ್ತೆಲ್ಲಿಯೂ – ಇಂತಹದೊಂದು ಸೈಟು ಹಂಚಿಕೆ ಪ್ರಕ್ರಿಯೆಯೇ ತಪ್ಪು ಎನ್ನುವ ಅಭಿಪ್ರಾಯ ಕೇಳಿ ಬರುತ್ತಿಲ್ಲ. ಇಂತಹ ವಾಮ ಮಾರ್ಗಗಳಿಂದ ಸೈಟು ಪಡೆಯದವರ ದೊಡ್ಡ ಗುಂಪೇ ಇದೆ. ಮತ್ತು ಆ ಗುಂಪು ಸದಾ ತಮಗೆ ಸಿಗಬೇಕಿದ್ದ ಒಂದು ಅವಕಾಶ ಅಥವಾ ಲಾಭದಿಂದ ವಂಚಿತರಾಗಿದ್ದೇವೆ ಎಂಬ ಭಾವನೆಯಿಂದ ಸದಾ ಬಳಲುತ್ತಿರುತ್ತದೆ. ಜೊತೆಗೆ ಮತ್ತಿತರರಿಂದ ಅವರಿಗಾದ ‘ವಂಚನೆ’ ಕಾರಣ ಸಿಂಪತಿಯನ್ನು ಬಯಸುತ್ತದೆ. ಆದರೆ ತಾವು ಅಂತಹ ಸೈಟಿಗಾಗಿ ಆಸೆ ಪಡುವುದೇ ತಪ್ಪು, ಅಪ್ರಾಮಾಣಿಕತೆ ಎಂದೇಕೆ ಅನಿಸುವುದಿಲ್ಲ?.

ಮುಖ್ಯವಾಹಿನಿಯ ಯಾವ ಪತ್ರಿಕೆಯೂ ಹೀಗೊಂದು ಸಂಪಾದಕೀಯ ಬರೆದಂತಿಲ್ಲ (ಬರೆದಿದ್ದರೆ ಸಂತೋಷ). ಮುಖ್ಯಮಂತ್ರಿಗಿರುವ ವಿವೇಚನಾ ಅಧಿಕಾರದ ಬಗ್ಗೆ ಅಲ್ಲಲ್ಲಿ ಚರ್ಚೆಯಾಗಿದೆ ಯೇ ಹೊರತು, ಪತ್ರಕರ್ತರು ವಿವೇಚನಾ ಕೋಟಾದ ಲಾಭ ಪಡೆಯುವುದು ಚರ್ಚೆಗೆ ಬಂದಿಲ್ಲ.

ಯಾಕೆ ಹೀಗೆ?

ಮಾಧ್ಯಮ ಕ್ಷೇತ್ರಕ್ಕೆ ಸುದೀರ್ಘ ಇತಿಹಾಸವಿದೆ. ಧಾರ್ಮಿಕ ಕಾರಣಗಳಿಗಾಗಿ ಹುಟ್ಟಿಕೊಂಡ ಪತ್ರಿಕೋದ್ಯಮ ಸಹಜವಾಗಿ ಸಾಮಾಜಿಕ ಚಳವಳಿಗಳಲ್ಲಿ ಮುಖ್ಯ ಪಾತ್ರ ವಹಿಸಿತು. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಚಳವಳಿಯ ಭಾಗವಾಗಿಯೇ ಪತ್ರಿಕೆಗಳು ಕೆಲಸ ಮಾಡಿದವು. ಆಗ ಲಾಭದ ಉದ್ದೇಶ ಕಡಿಮೆ ಇತ್ತು. ಸ್ವಾತಂತ್ರ್ಯ ನಂತರ ಬಹು ವಿಸ್ತಾರವಾದ ಕ್ಯಾನ್ವಾಸ್ ಪತ್ರಕರ್ತರ ಎದುರು ತೆರೆದುಕೊಂಡಿತು. ಅದರ ಪರಿಣಾಮ ತನಿಖೆ, ವಿಶ್ಲೇಷಣೆ, ಅಭಿವೃದ್ಧಿ, ಜನಾಭಿಪ್ರಾಯ – ಎಂಬ ವಿವಿಧ ಆಯಾಮಗಳ ಅಡಿಯಲ್ಲಿ ಸುದ್ದಿಯ ಹರವು ವಿಸ್ತಾರಗೊಂಡಿತು. ಅದರಂತೆಯೇ ಮಾಧ್ಯಮ ಯಾವುದೇ ಚಳವಳಿಯ ಭಾಗವಾದಂತೆ ಆಗಾಗ ಕಂಡರೂ ಅದರ ವ್ಯಾಪ್ತಿ ಚಳವಳಿಯ ಘಟನಾವಳಿಗಳನ್ನು ವರದಿ ಮಾಡುವಷ್ಟು ಮಟ್ಟಕ್ಕೆ ಸೀಮಿತಗೊಂಡಿತ್ತು. ಇತ್ತೀಚಿನ ವರ್ಷಗಳಲ್ಲಿ ಪತ್ರಿಕೋದ್ಯಮ strictly ಒಂದು ಉದ್ಯಮ. ಪತ್ರಕರ್ತರದು ಇತರೆ ಎಲ್ಲಾ ಕ್ಷೇತ್ರಗಳ ನೌಕರರಂತೆ ಒಂದು ವೃತ್ತಿ. ಅಲ್ಲಲ್ಲಿ ಕೆಲ ಪತ್ರಕರ್ತರು ಈ ಸೀಮಿತ ಅರ್ಥ ಗಳಾಚೆ ನಿಂತು ಕೆಲಸ ಮಾಡುತ್ತಿದ್ದಾರೆ ಎಂದರೆ ಅವರ ಕರ್ತವ್ಯ – ರೋಗಿಯ ಬಗ್ಗೆ ವಿಶೇಷ ಕಾಳಜಿಯಿಂದ ನಿಗದಿತ ಸಮಯದಾಚೆಗೂ ಕೆಲಸ ಮಾಡುವ ವೈದ್ಯ, ವಿದ್ಯಾರ್ಥಿಗಳ ಒಳಿತಿಗಾಗಿ ವಿಶೇಷ ಆಸಕ್ತಿವಹಿಸಿ ಪಾಠ ಮಾಡುವ ಶಿಕ್ಷಕ ಅಥವಾ ಇನ್ನಾವುದೇ ವೃತ್ತಿಯಲ್ಲಿರುವ ಪ್ರಾಮಾಣಿಕ ವ್ಯಕ್ತಿಯ ಕರ್ತವ್ಯಕ್ಕೆ ಸಮ.

ಇತರೆ ಎಲ್ಲಾ ಕ್ಷೇತ್ರಗಳಲ್ಲಿರುವಂತೆ ಇಲ್ಲಿಯೂ ಭ್ರಷ್ಟರಿದ್ದಾರೆ. ಬಹುಕೋಟಿ ಮೊತ್ತದ ಹಗರಣಗಳಲ್ಲಿ ಭಾಗಿಯಾದವರಿದ್ದಾರೆ. ಅವರ ಹೆಸರು ಅವರ ‘ವ್ಯವಹಾರಗಳ’ ಕಾರಣ ಪ್ರಮುಖ ತನಿಖಾ ವರದಿಗಳಲ್ಲಿ ಪ್ರಕಟಗೊಂಡರೂ ಒಂದಿಷ್ಟೂ ನಾಚಿಕೆ, ಪಾಪಪ್ರಜ್ಞೆ ಇಲ್ಲದೆ ಹಿತಬೋಧನೆ ಮುಂದುವರಿಸಿದ್ದಾರೆ. ಹಾಗಾದರೆ ಪತ್ರಕರ್ತರು ವಿಶೇಷ ಪ್ರತಿಭೆಗಳು, ಆಕಾಶದಿಂದ ಇಳಿದು ಬಂದವರಂತೆ ಪರಿಭಾವಿಸುವುದು ಎಷ್ಟು ಸರಿ? ಇವರಿಗೆ ವಿವೇಚನಾ ಕೋಟಾದ ಲಾಭ ಏಕೆ?

ಕನ್ನಡ ಚಿತ್ರರಂಗದ ‘ಒಳ ಮನಸ್ಸು’ ಅನಾವರಣಗೊಂಡಿದೆ

ಭೂಮಿ-ಭಾನು

ಕನ್ನಡ ಚಿತ್ರರಂಗ ಪುರುಷ ಪ್ರಾಧಾನ್ಯ ಕ್ಷೇತ್ರ ಎನ್ನುವುದನ್ನು ಕನ್ನಡ ನಿರ್ಮಾಪಕರು ನಿರೂಪಿಸಿದ್ದಾರೆ. ವಿಜಯಲಕ್ಷ್ಮಿ ಆರೋಪ ಆಧಾರದ ಮೇಲೆ ನಿರ್ಮಾಪಕರ ಸಂಘ ನಟಿ ನಿಖಿತಾ ಅವರನ್ನು ಮೂರು ವರ್ಷಗಳ ಕಾಲ ಕನ್ನಡದ ಯಾವುದೇ ಚಿತ್ರದಲ್ಲಿ ನಟಿಸಲು ಅವಕಾಶ ನೀಡಬಾರದೆಂದು ನಿರ್ಧಿರಿಸಿದೆ. ದರ್ಶನ್ ಕುಟುಂಬ ಕಲಹಕ್ಕೆ ಆತನಿಗೆ ನಟಿ ನಿಖಿತಾ ಜೊತೆ ‘ಸಖ್ಯ’ (?) ಕಾರಣ ಎಂದು ಕೇಳಿ ಬರುತ್ತಿದ್ದ ಗುಸುಗುಸುಗೆ ಈಗ ನಿರ್ಮಾಪಕ ಸಂಘದ ನಿರ್ಧಾರದಿಂದ ‘ಹುಸಿ ಅಧಿಕೃತತೆ’ ಸಿಕ್ಕಿಬಿಟ್ಟಿದೆ. ಇನ್ನುಮುಂದೆ ಯಾರು ಬೇಕಾದರೂ ನಿಖಿತ ಬಗ್ಗೆ ಕೇವಲವಾಗಿ ಮಾತನಾಡಬಹುದು!

ಕನ್ನಡ ಚಿತ್ರರಂಗ ಎಂತಹ ಮೂಲಭೂತವಾದಿ, ಅಜ್ಷಾನಿ, ದುಷ್ಟ, ಕ್ರೂರ ನಿರ್ಮಾಪಕರ ಕೈಯಲ್ಲಿ ಬಳಲುತ್ತಿದೆ ಎನ್ನವುದಕ್ಕೆ ಇದು ಸಣ್ಣ ಉದಾಹರಣೆ.

ನಿರ್ಮಾಪಕ ಸಂಘದ ಅಧ್ಯಕ್ಷ ಮುನಿರತ್ನ ಟಿವಿ ವಾಹಿನಿ ಚರ್ಚೆಯೊಂದರಲ್ಲಿ ಮಾತನಾಡುತ್ತ ದರ್ಶನ್ ಹೆಂಡತಿ ವಿಜಯಲಕ್ಷ್ಮಿ ಪೊಲೀಸರಿಗೆ ನೀಡಿದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ವಿಚಿತ್ರ ನೋಡಿ, ಅದೇ ದೂರನ್ನು ಮಾನ್ಯ ವಿಜಯಲಕ್ಷ್ಮಿಯವರು ಅದೇ ಸಂಜೆ ಹೊತ್ತಿಗೆ ಹಿಂಪಡೆದರು. ತಾವು ಬಾತ್ ರೂಂನಲ್ಲಿ ಬಿದ್ದದ್ದು ಎಂದು ನ್ಯಾಯಾಧೀಶರ ಮುಂದೆ ಹೇಳಿದರು. ಹಾಗಾದರೆ ವಿಜಯಲಕ್ಷ್ಮಿ ಬಾತ್ ರೂಂನಲ್ಲಿ ಬೀಳುವುದಕ್ಕೂ, ನಿಖಿತ ಕಾರಣವಾ?

ಮುನಿರತ್ನ ಮುಂದುವರೆದು ಮಾತನಾಡುತ್ತ ದರ್ಶನ್ ತುಂಬಾ ಒಳ್ಳೆಯವರು. ಅವರ ಜೊತೆ ಚಿತ್ರ ಮಾಡುವಾಗ ನಮಗೆ ಯಾವುದೇ ಕಿರಿಕಿರಿ ಇರುವುದಿಲ್ಲ ಎಂದು ದರ್ಶನ್ ಗೆ ಪ್ರಶಂಸ ಪತ್ರ ನೀಡಿದರು. ಸಿಗರೇಟಿನಿಂದ ಹೆಂಡತಿಯನ್ನು ಸುಟ್ಟ ನಟ, ಕುಡಿದು ಹೆಂಡತಿಯನ್ನು ಹೊಡೆಯುವ ನಟ (ಪೊಲೀಸ್ ಗೆ ನೀಡಿದ ಹೇಳಿಕೆಯಲ್ಲಿ ದರ್ಶನ್ ಇದನ್ನು ಒಪ್ಪಿಕೊಂಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿವೆ) ಇವರಿಗೆ ಒಳ್ಳೆಯವನು.

ಮತ್ತೊಬ್ಬ ನಿರ್ಮಾಪಕ ಸೂರಪ್ಪ ಬಾಬು ಸಂಘದ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಾ ‘ನಮ್ಮ ಮನೆಯ ಹೆಣ್ಣು ಮಗಳ ಹಿತ ಮುಖ್ಯ’ ಎನ್ನುತ್ತಾರೆ. ಅವರು ‘ನಮ್ಮ ಮಗಳ ಹೆಣ್ಣು ಮಗಳು’ ಎನ್ನುತ್ತಿರುವುದು ವಿಜಯಲಕ್ಷ್ಮಿ ಬಗ್ಗೆ. ಅವರು ಮಾತು ಮುಂದುವರೆಸುತ್ತ ‘ಒಂದು ಒಳ್ಳೆಯ ನಿರ್ಧಾರ ತೆಗೆದುಕೊಂಡಾಗ ಅನೇಕರು ಟೀಕೆ ಮಾಡುವುದು ಸಹಜ. ಕೆಲವು ಬಹಿರಂಗ ಪಡಿಸಲಾಗದ ಕಾರಣಗಳಿಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದರು.

ಇದೇ ಚರ್ಚೆಯಲ್ಲಿ ನಟಿ ಸುಷ್ಮಾ ಒಂದು ಸೂಕ್ತ ಪ್ರಶ್ನೆ ಎತ್ತಿದರು. ನಿಖಿತ ಏನು ದರ್ಶನ್ ನ್ನು ರೇಪ್ ಮಾಡಿಲ್ಲ. ದರ್ಶನ್ ಏನು ಸಣ್ಣ ಹುಡುಗನಲ್ಲ. ಈ ಎಲ್ಲಾ ಘಟನೆಗಳಿಗೆ ಮೂಲ ಕಾರಣ ಆತನೇ. ಆದರೆ ಶಿಕ್ಷೆ ಬೇರೆಯವರಿಗೆ ಕೊಡ್ತೀರಲ್ಲ? ನಿರ್ಮಾಪಕರಿಂದ ಈ ಪ್ರಶ್ನೆಗೆ ಉತ್ತರ ಇಲ್ಲ.

ವಿಜಯಲಕ್ಷ್ಮಿ ಮೊದಲು ಗಂಡ ಹೊಡೆದ, ಸಿಗರೇಟಿನಿಂದ ಸುಟ್ಟ, ಗನ್ ತೋರಿಸಿ ಹೆದರಿಸಿದ ಎಂದೆಲ್ಲಾ ದೂರು ಕೊಟ್ಟರು. ಅವಲ್ಲಿ ಕೆಲವನ್ನು ಮಾಡಿದ್ದಾಗಿ ದರ್ಶನ್ ಒಪ್ಪಿಕೊಂಡದ್ದೂ ಆಗಿದೆ (ವರದಿಗಳ ಪ್ರಕಾರ). ಆದರೆ ಆತನಿಗೆ ಶಿಕ್ಷೆ ಆಗದಂತೆ ತಡೆಯಲು ಅನೇಕರು ಪ್ರಯತ್ನಿಸುತ್ತಿದ್ದಾರೆ. ಅಂಬರೀಷ್ ಸೇರಿದಂತೆ ಅನೇಕರು ಮಾಧ್ಯಮದ ಎದುರು ಮಾತನಾಡುತ್ತಾ ‘ಗಂಡ-ಹೆಂಡತಿ ಮನಸ್ತಾಪ ಎಲ್ಲಾ ಮನೆಗಳಲ್ಲೂ ಕಾಮನ್’ ಎಂದರು. ಹೌದಾ, ಹೀಗೆ ಹೇಳಿಕೆ ನೀಡಿದವರೆಲ್ಲರ ಮನೆಯಲ್ಲೂ ಹೀಗೆ ನಡೆಯುತ್ತಿದೆಯಾ? ಅವರೆಲ್ಲಾ ಹೆಂಡತಿಗೆ ಸಿಗರೇಟಿನಿಂದ ಸುಡುತ್ತಾರಾ? ಕಿವಿ ಹರಿಯುತ್ತಾರ? ಅಥವಾ ಆಗಾಗ ಅವರ ಹೆಂಡತಿಯರು ಬಚ್ಚಲು ಮನೆಯಲ್ಲಿ ಬೀಳುತ್ತಿರುತ್ತಾರ?

ಕನ್ನಡ ಚಿತ್ರರಂಗದ ಒಳ ಮನಸ್ಸು ಈ ಘಟನೆಯಿಂದ ಅನಾವರಣಗೊಳ್ಳುತ್ತಿದೆ.