Author Archives: editor

ಕಡಿಮೆ ಮಕ್ಕಳ ಶಾಲೆಗಳು: ಕೇವಲ ಭಾವನಾತ್ಮಕವಾಗಿ ನೋಡೋದು ಬೇಡ

– ಪ್ರಸಾದ್ ರಕ್ಷಿದಿ

ಈಗ ಶಾಲೆಗಳು ಪ್ರಾರಂಭವಾಗುವ ಸಮಯ. ಎಂದಿನಂತೆ ಸರಕಾರಿ ಶಾಲೆಗಳ ದುಸ್ಥಿತಿ, ಖಾಸಗಿ ಶಾಲೆಗಳ ಸುಲಿಗೆ, ತಾರತschool-3ಮ್ಯ ನೀತಿ, ಆರ್.ಟಿ.ಇ. ಗೆ ಸ್ಪಂದಿಸದಿರುವುದು. ಹಳ್ಳಿ ಮಕ್ಕಳ ಸಮಸ್ಯೆಗಳು ಎಲ್ಲವೂ ಚರ್ಚೆಗೆ ಬರುತ್ತವೆ. ಒಂದಿಷ್ಟು ಪ್ರತಿಭಟನೆ, ಭಾಷಣಗಳು, ಅಧಿಕಾರಸ್ಥರ ಹೇಳಿಕೆ ವಾದ-ವಿವಾದ, ವ್ಯಂಗ್ಯ ,ತಮಾಷೆಗಳೆಲ್ಲ ಮುಗಿದು ಯಥಾಸ್ಥಿತಿ ಮುಂದುವರಿಯುತ್ತದೆ. ಸರ್ಕಾರಿ ಶಾಲೆಗಳಲ್ಲಿ ಓದುವವರ ಸಂಖ್ಯೆ ಮತ್ತು ಹೊಸದಾಗಿ ದಾಖಲಾಗುವವರ ಸಂಖ್ಯೆ ಎರಡೂ ಇಳಿಯುತ್ತಿದೆ.

 

ಈಗಲೂ ಎಲ್ಲ ಕೊರತೆಗಳ ನಡುವೆಯೂ ಹಲವು ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿ ಕೆಲಸ ಮಾಡುತ್ತಿವೆ. ಕೆಳಮಧ್ಯಮ ಮತ್ತು ಬಡಜನರ ಮಕ್ಕಳೇ ಹೆಚ್ಚಾಗಿರುವ ಶಾಲೆಗಳ ಫಲಿತಾಂಶ ಮತ್ತು ಇತರ ಚಟುವಟಿಕೆಗಳೂ ಉತ್ತಮವಾಗಿವೆ. ಇದಕ್ಕೆ ಅಲ್ಲಿರುವ ಶಿಕ್ಷಕರು ಮತ್ತು ಪ್ರದೇಶದ- ಊರಿನ ಆಸಕ್ತ ಜನರೂ ಕಾರಣರಿರುತ್ತಾರೆ. ಆದರೆ ಈ ರೀತಿಯ ಶಾಲೆಗಳ ಸಂಖ್ಯೆಯೂ ಇಳಿಮುಖವಾಗುತ್ತಿದೆ.

 

ಇದಕ್ಕೆ ಹಲವಾರು ಕಾರಣಗಳನ್ನು ಹೇಳುತ್ತ ಹೋಗಬಹುದು. ಇಂದು ಇಡೀ ಭಾರತದ ಸಾಮಾಜಿಕ –ಸಾಂಸ್ಕೃತಿಕ, ಕೃಷಿ , ಉದ್ಯಮ ಎಲ್ಲವೂ ಖಾಸಗೀಕರಣಕ್ಕೊಳಗಾಗಬೇಕಾದ ಒತ್ತಡದಲ್ಲಿರುವಾಗ, ಶಿಕ್ಷಣ ಕ್ಷೇತ್ರ ಮಾತ್ರ ಇದಕ್ಕೆ ಹೊರತಾಗುವುದು ಹೇಗೆ. ಇಡೀ ಭಾರತವೇ ಕೆಲವೇ ಜನರ ಖಾಸಗಿ ಆಸ್ತಿಯಾಗುವತ್ತ ಸಾಗುತ್ತಿರುವಾಗ. ಶಿಕ್ಷಣ ಕ್ಷೇತ್ರವನ್ನು ಅದಕ್ಕೆ ಹೊರತಾಗಿ ಉಳಿಸಿಕೊಳ್ಳುವದಕ್ಕೆ ಬೇಕಾದ ಇಚ್ಛಾಶಕ್ತಿನ್ನಾಗಲೀ, ಜನಬಲವನ್ನಾಗಲೀ ನಾವು ಹೊಂದಿದ್ದೇವೆಯೆ?

 

ಅಧಿಕಾರವನ್ನು ಗಳಿಸಿದ ಹೊಸರಲ್ಲಿ ನಮ್ಮೂರಿಗೆ ಬಂದಿದ್ದ ರಾಜ್ಯ ಶಿಕ್ಷಣ ಸಚಿವರು, ನಮ್ಮೂರ ಶಾಲೆಯನ್ನು ನೋಡಿ ಸಂತೋಷ ಪಟ್ಟರು. ಹಾಗೇ ಖಾಸಗಿಯಾಗಿ ಮಾತನಾಡುತ್ತ. “ಎಲ್ಲ ಶಾಲೆಗಳನ್ನು ಉತ್ತಮ ಪಡಿಸಲು ಆರುಸಾವಿರ ಕೋಟಿ ರೂಗಳ ಅವಶ್ಯಕತೆಯಿದೆ, ನಮ್ಮಲ್ಲಿ ಅಷ್ಟು ಹಣವಿಲ್ಲ. ಅದಕ್ಕಾಗಿ, ಕಾರ್ಪೋರೇಟ್ ವಲಯದ ಸಹಾಯ ಕೇಳಲಿದ್ದೇನೆ” ಎಂದರು. ಅವರ ಉದ್ದೇಶವೇನೋ ಒಳ್ಳೆಯದೇ, ಆದರೆ ಇದೊಂದು ರೀತಿ ದೇಶವನ್ನೇ ಇನ್ನೊಬ್ಬನಿಗೆ ನೀಡಿ ಹತ್ತುಎಕರೆ ನೆಲವನ್ನು ಬೇಡಿದಂತಲ್ಲವೇ?

 

ಆಗಲೇ ಅವರು ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಮುಚ್ಚಿ ಆ ಮಕ್ಕಳಿಗೆ ವಾಹನದ ವ್ಯವಸ್ಥೆ ಮಾಡಿ ಒಂದು ಕೇಂದ್ರದಲ್ಲಿ ಶಾಲೆ ನಡೆಸುವ ಯೋಜನೆಯನ್ನು ಹೇಳಿದರು. ವಾಸ್ತವದಲ್ಲಿ ಇದು ಅವರ ಯೋಜನೆಯೇನಲ್ಲ. ಹಿಂದಿನ ಸರಕಾರವೂ ಈ ಮಾತನ್ನು ಹೇಳಿತ್ತು. ಮತ್ತು ಬುದ್ದಿಜೀವಿಗಳ ವಲಯದಿಂದ ವಿರೋಧವೂ ವ್ಯಕ್ತವಾಗಿತ್ತು.

 

ಆದರೆ ನಮ್ಮಲ್ಲಿ ಅನೇಕರು, ಗ್ರಾಮೀಣ ಪ್ರದೇಶಗಳ ವಾಸ್ತವವನ್ನು ಅರಿಯದೆ ಬೇರೆ ಬೇರೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಖಾಸಗಿ ಶಾಲೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಈ ರೀತಿಮಾಡಲಾಗುತ್ತಿದೆ. ಇದು ಕನ್ನschool-1ಡ ವಿರೋಧಿ ಮತ್ತು ಜನವಿರೋಧಿ ನೀತಿ ಎನ್ನುತ್ತಿದ್ದಾರೆ. ಇಂದು ಬರಗೂರು ರಾಮಚಂದ್ರಪ್ಪ ಮೊದಲಾದವರೂ ಸರ್ಕಾರಿ ಶಾಲೆ ಮುಚ್ಚಲು ತಮ್ಮ ವಿರೋಧವಿದೆ ಎನ್ನುತ್ತಿದ್ದಾರೆ. ಇದೆಲ್ಲದರ ನಡುವೆ ಹಲವು ಶಾಲೆಗಳು ಮಕ್ಕಳಿಲ್ಲದೆ ಖಾಲಿ ಬಿದ್ದಿವೆ.

 

ಅನೇಕ ಬಾರಿ ಒಳ್ಳೆಯ ಉದ್ದೇಶದಿಂದ ಮಾಡಿದ ಕೆಲಸಗಳಿಂದ ಒಳ್ಳೆಯದೇ ಆಗುತ್ತದೆಯೆಂಬ ಖಾತರಿಯೇನೂ ಇಲ್ಲ. ಇದಕ್ಕೆ ಆರ್. ಟಿ.ಇ.ಕಾನೂನು ಒಂದು ಉದಾಹರಣೆ. ಅದನ್ನು ಬಳಸಿಕೊಂಡೇ ಹಲವಾರು ಗ್ರಾಮೀಣ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳ ಮಕ್ಕಳನ್ನು ತಮ್ಮತ್ತ ಸೆಳೆದುಕೊಂಡರು. ಅಲ್ಲಿ ಸೇರಿದ ನಂತರವಷ್ಟೇ ಪೋಷಕರಿಗೆ ಅಲ್ಲಿನ ಬೇನಾಮಿ ಸುಲಿಗೆ ತಿಳಿಯಿತು. ಅದಲ್ಲದೆ, ಅಲ್ಲಿ ಈ ಬಡ ಮಕ್ಕಳು ತಾರತಮ್ಯ ಮತ್ತು ಅವಮಾನಕ್ಕೊಳಗಾಗುತ್ತಿದ್ದರೂ ಸಹ ತಮ್ಮ ಮಕ್ಕಳು ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದಾರೆಂಬ ಹುಸಿ ಹೆಮ್ಮೆಯಲ್ಲಿ ಕುಳಿತರು. ಅತಿ ಪ್ರತಿಷ್ಟಿತ ಶಾಲೆಗಳು ಆರ್.ಟಿ.ಇ.ಕಾನೂನಿಗೆ ಯಾವ ಕಿಮ್ಮತ್ತನ್ನೂ ಕೊಡದೆ ಕುಳಿತಿವೆ. ಅವರನ್ನು ಮಾತನಾಡಿಸುವ, ಕೇಳುವ ಧೈರ್ಯ ಯಾವ ಸರ್ಕಾರಕ್ಕೂ ಇಲ್ಲ. ಯಾಕೆಂದರೆ ಈ ಶಾಲೆಗಳ ಮಾಲೀಕರು, ಸರ್ಕಾರದಲ್ಲೂ ಪಾಲುದಾರರು.(ಆರ್.ಟಿ.ಇ.ಕಾನೂನಿನಿಂದಲೇ ನಗರಗಳಲ್ಲೂ ಅನೇಕ ಸರ್ಕಾರಿ ಶಾಲೆಗಳು ಕಲಿಯುವವರಿಲ್ಲದೆ ಹೇಗೆ ಬರಿದಾಗಿವೆಯೆಂಬುದನ್ನು ಗೆಳೆಯರೊಬ್ಬರು ಇತ್ತೀಚೆಗೆ ಫೇಸ್ ಬುಕ್ ನಲ್ಲಿ ವಿವರಿಸಿದ್ದರು)

 

ಇನ್ನೀಗ ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಮುಚ್ಚಿ ಒಂದೇ ಕೇಂದ್ರದಲ್ಲಿ ಶಾಲೆ ನಡೆಸುವ ಬಗ್ಗೆ. ಇದನ್ನು ನಾವು ಯಾವುದೇ ಪೂರ್ವಗ್ರಹವಿಲ್ಲದೆ ಯೋಚಿಸಿದರೆ ಒಳಿತು. ಹಿಂದೆಯೂ ಇದನ್ನು ಬುದ್ದಿಜೀವಿಗಳು ವಿರೋಧಿಸಿದ್ದರು ಇಂದೂ ವಿರೋಧಿಸುತ್ತಿದ್ದಾರೆ. ಆದರೆ ನಮ್ಮ ದೇಶದಂತಹ ಭೌಗೋಳಿಕವಾಗಿ ಸಾಮಾಜಿಕವಾ ಅಪಾರ ಭಿನ್ನತೆ, ವಿವಿಧತೆಗಳನ್ನು ಹೊಂದಿರು ನಾಡಿನಲ್ಲಿ ಅದು ಉದ್ಯೋಗ ಖಾತ್ರಿಯಿರಲಿ, ಅನ್ನಭ್ಯಾಗ್ಯವಾಗಿರಲಿ. ಅಥವಾ ಯಾವುದೇ ಸರ್ಕಾರದ ನೀತಿ ನಿಯಮಗಳಿರಲಿ ಪ್ರತಿಯೊಂದು ಪ್ರದೇಶಕ್ಕೂ ಅಲ್ಲಿನ ಅವಶ್ಯಕ್ಕೆ ತಕ್ಕಂತೆ ರೂಪಿಸುವುದು ಅಗತ್ಯ, ಹಾಗೆಯೇ ಅದನ್ನು ವಿರೋಧಿಸುವಾಗಲು ಸಾರಾಸಗಟಾಗಿ ವಿರೋಧಿಸದೆ. ತೊಂದರೆಯಾಗುವಲ್ಲಿ ಮಾತ್ರ ವಿರೋಧಿಸಬೇಕು. ಇಲ್ಲವಾದಲ್ಲಿ ನಮ್ಮ ಉದ್ದೇಶಕ್ಕೆ ವಿರುದ್ಧವಾದ ಫಲ ದೊರೆಯುತ್ತದೆ.

 

ಇದಕ್ಕೊಂದು ಉದಾಹರಣೆಯೆಂದರೆ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಇದು ಸುಮಾರು ಮೂವತ್ತು ವರ್ಷಗಳ ಹಿಂದೆ ಏಕೋಪಾದ್ಯಾಯ ಶಾಲೆಯಾಗಿ ಪ್ರಾರಂಭವಾಗಿ, ಇದೀಗ ಕೆಲವು ವರ್ಷಗಳಿಂದ, ನಮ್ಮತಾಲ್ಲೂಕಿನಲ್ಲಿ ಎರಡನೇ ಅತಿಹೆಚ್ಚು ಮಕ್ಕಳು ಕಲಿಯುತ್ತಿರುವ ಶಾಲೆಯಾಗಿದೆ. (ಕಳೆದ ಐದು ವರ್ಷಗಳಲ್ಲಿ ಇಲ್ಲಿಯೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸುತ್ತಲಿನ ಹಳ್ಳಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿದೆ). ಇದು ಪಂಚಾಯತ್ ಕೇಂದ್ರದಲ್ಲಿದ್ದು ಸುತ್ತ ಏಳುಗ್ರಾಮಗಳಲ್ಲಿ ಶಾಲೆಗಳಿವೆ, ಅವುಗಳಲ್ಲಿ ಮೂರು ಹಿರಿಯ ಪ್ರಾಥಮಿಕ ಶಾಲೆಗಳಾಗಿವೆ. ಅಲ್ಲಿ ಕಲಿಯುತ್ತಿರುವವರ ಸಂಖ್ಯೆ ಕ್ರಮವಾಗಿ ಏಳು, ಹನ್ನೊಂದು, ಇಪ್ಪತ್ಮೂರು, ಒಂಭತ್ತು, ಹದಿನೈದು, ನಲುವತ್ತೆರಡು, ಮತ್ತೊಂದರಲ್ಲಿ ಕೇವಲ ಮೂರು ಮಕ್ಕಳಿದ್ದಾರೆ. ಸರ್ಕಾರಿ ಕಾನೂನಿನಂತೆ ಈಗ ಏಕೋಪಾಧ್ಯಾಯ ಶಾಲೆ ಇರುವಂತಿಲ್ಲ. ಹಾಗಾಗಿ ಈ ಎಲ್ಲ ಶಾಲೆಗಳಲ್ಲೂ ಇಬ್ಬರು ಶಿಕ್ಷಕರು ಇರಲೇಬೇಕು (ಅದರೆ ಎಲ್ಲೂ ಇಲ್ಲ). ಕೇಂದ್ರ ಶಾಲೆಯಾದ ನಮ್ಮೂರ ಶಾಲೆಯಲ್ಲಿ ಸುಮಾರು ಇನ್ನೂರು ಮಕ್ಕಳಿದ್ದು ಆರು ಜನ ಶಿಕ್ಷಕರಿದ್ದಾರೆ. ಇವರಲ್ಲಿ ಒಬ್ಬರನ್ನೋ ಇಬ್ಬರನ್ನೋ ಪ್ರತಿದಿನ ಹತ್ತಿರದ ಶಾಲೆಗಳಿಗೆ ಡೆಪ್ಟೇಷನ್ ಮೇಲೆ ಕಳುಹಿಸುತ್ತಲೋ ಇನ್ನೊಬ್ಬರು ಶಾಲಾ ಸಂಬಂಧಿತ ಕೆಲಸ, ಮೀಟಿಂಗುಗಳಿಗೋ ಹೋಗುತ್ತಿರುತ್ತಾರೆ. (ಇದಲ್ಲದೆ ಅನೇಕ ಸರ್ಕಾರಿ ಕೆಲಸಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುವುದು ನಡೆದೇ ಇದೆ) ಹೀಗಾಗಿ ಇತ್ತ ಆ ಶಾಲೆಗಳಲ್ಲೂ ಪಾಠವಿಲ್ಲ. ಕೇಂದ್ರ ಶಾಲೆಯಲ್ಲೂ ಪಾಠವಿಲ್ಲದ ಸ್ಥಿತಿಯಿದೆ.

 

ಹತ್ತಿರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದೆರಡು ತರಗತಿಗಳಿಗೆ ಮಕ್ಕಳೇ ಇಲ್ಲ. ಹೊಸ ಯೋಜನೆಯಂತೆ ಇವುಗಳಲ್ಲಿ ಐದು ಶಾಲೆಗಳು ಮುಚ್ಚಿಹೋಗುತ್ತವೆ. ಆದರೆ ಅಲ್ಲಿಂದ ಹೆಚ್ಚುವರಿಯಾಗಿ ಆರುಜನ ಶಿಕ್ಷಕರು ದೊರೆಯುತ್ತಾರೆ. ಆ ಹಳ್ಳಿಗಳಲ್ಲಿ ಈಗ ಹಲವು ಶಾಲಾಕೊಠಡಿಗಳು ಖಾಲಿಬಿದ್ದಿವೆ. ಮತ್ತು ಇನ್ನೂಹೆಚ್ಚುವರಿ ಕೊಠಡಿಗಳನ್ನು ಕಟ್ಟಿ ‘ಬಿಲ್’ ವಿದ್ಯೆಯನ್ನು ಪ್ರದರ್ಶಿಸುತ್ತಿದ್ದಾರೆ. (ಈ ಎಲ್ಲ ಹಳ್ಳಿಗಳಿಗೂ ಈಗ ಖಾಸಗಿ ಶಾಲೆಯ ವಾಹನಗಳು ಬರುತ್ತಿವೆ. ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಿದ್ದಾರೆ) ಅಲ್ಲಿಯೇಶಾಲೆಯನ್ನು ಉಳಿಸಿಕೊಳ್ಳುವುದರಿಂದ ಯಾವುದೇ ಅನುಕೂಲವಿಲ್ಲ. ಇದನ್ನು ಭಾವನಾತ್ಮಕವಾಗಿ ನೋಡುವುದರಿಂದ ಖಂಡಿತ ಕನ್ನಡ ಶಾಲೆಗಾಗಲೀ. ಭಾಷೆಗಾಗಲೀ ಯಾವುದೇ ಪ್ರಯೋಜನವಿಲ್ಲ. ಒಂದುವೇಳೆ ಹತ್ತಿschool-4ದರಲ್ಲೆಲ್ಲೂ ಶಾಲೆಯೇ ಇಲ್ಲದಿದ್ದರೆ. ಮಕ್ಕಳ ಸಂಖ್ಯೆ ಕಡಿಮೆ ಇದ್ದರೂ ಆ ಶಾಲೆಯನ್ನು ಉಳಿಸಿಕೊಳ್ಳಬೇಕು.

 

ನಮ್ಮೂರು ಮಲೆನಾಡಿನ ಹಳ್ಳಿ . ಇಲ್ಲಿಗೆ ಅನ್ವಯಿಸಿದ್ದೇ ಇನ್ನೊಂದೆಡೆಗೆ ಅನ್ವಯಿಸಬೇಕಾಗಿಲ್ಲ. ಆದ್ದರಿಂದ ಇದನ್ನು ಭಾವನಾತ್ಮಕವಾಗಿ ಭಾಷಾ ಸಮಸ್ಯೆಯಾಗಿ ನೋಡದೆ. ಆಡಳಿತಾತ್ಮಕವಾಗಿ ಹೆಚ್ಚು ಪರಿಣಾಮಕಾರಿಯಾಗಿ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿ ನೋಡಬೇಕು. ಇಲ್ಲವಾದಲ್ಲಿ ನಾವು ಬಯಸಲಿ ಬಿಡಲಿ ಸರಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂಲೇ ಮುಚ್ಚುವ ಪ್ರಸಂಗ ಬರುತ್ತದೆ.

ಆ ಒಂದು ಭಾಷಣ ಕನ್ಹಯ್ಯನನ್ನು ಹೀರೋ ಆಗಿಸಿದ್ದು ಹೇಗೆ?

– ದಿನೇಶ್ ಕುಮಾರ್ ಎಸ್.ಸಿ

ಕ್ರಿಕೆಟ್ನಲ್ಲಿ ಬೌಲರ್ನ ತಲೆ ಮೇಲೆ ಸಿಕ್ಸರ್ ಹೊಡೆಯುವುದೆಂದರೆ ದಾಂಡಿಗರಿಗೆ ಎಲ್ಲಿಲ್ಲದ ಹೆಮ್ಮೆ. ಬೌಲ್ ಮಾಡಿ ತಿರುಗಿ ನೋಡುವಷ್ಟKanhaiya-3 ರಲ್ಲಿ ಚೆಂಡು ತಲೆಯ ಮೇಲೆ ಬೌಂಡರಿ ಗೆರೆಯಾಚೆ ದಾಟುತ್ತಿದ್ದರೆ ಬೌಲರ್ನ ಗತಿ ಏನಾಗಬೇಡ? ಕನ್ಹಯ್ಯ ಮಾರ್ಚ್ 3ರ ಭಾಷಣದಲ್ಲಿ ಮಾಡಿದ್ದು ಅದನ್ನೇ. ಅವನಿಗೆ ಎದುರಾಳಿಗಳ ಚೆಂಡನ್ನು ಅವರ ತಲೆಯ ಮೇಲೇ ಸಿಕ್ಸರ್ಗೆ ಅಟ್ಟುವುದು ಹೇಗೆಂಬುದು ಗೊತ್ತಿತ್ತು. ಹೊಡೆದೂ ಬಿಟ್ಟ. ಇಡೀ ಜಗತ್ತು ಬೆರಗಾಗಿ ಈ ಹೊಸ ಹೀರೋನನ್ನು ನೋಡುತ್ತಿದೆ; ಬಹುಭಾರದ ನಿರೀಕ್ಷೆಗಳೊಂದಿಗೆ, ತುಸು ಅಚ್ಚರಿಯೊಂದಿಗೆ, ಒಂದಿಷ್ಟು ಭೀತಿಯೊಂದಿಗೆ.

 
ದೂರದೃಷ್ಟಿ, ಸೈದ್ಧಾಂತಿಕ ಖಚಿತತೆ, ಆಶಾವಾದ, ಆವೇಶ, ವ್ಯಂಗ್ಯ, ತುಂಟತನ, ಲೇವಡಿ, ನೇರವಂತಿಕೆ, ಭಾವುಕತೆ ಎಲ್ಲವೂ ಇದ್ದ ಕನ್ಹಯ್ಯನ ಆ ಐತಿಹಾಸಿಕ ಭಾಷಣ ಇಷ್ಟೊಂದು ಜನಪ್ರಿಯವಾಗಿದ್ದಾದರೂ ಹೇಗೆ? ನಿನ್ನೆಮೊನ್ನೆಯವರೆಗೂ `ದೇಶದ್ರೋಹಿ’ ಎಂದೇ ಕರೆಯುತ್ತಿದ್ದ ಜನರೂ ಕೂಡ, ಈ ಹುಡುಗನಲ್ಲಿ ಏನೋ ಇದೆ ಎಂದು ಹೇಳುತ್ತಿರುವುದಾದರೂ ಹೇಗೆ ಸಾಧ್ಯವಾಯಿತು?

 
ಈ ಪ್ರಶ್ನೆಗೆ ಉತ್ತರವನ್ನು ಕನ್ಹಯ್ಯನೇ ಕೊಟ್ಟುಬಿಟ್ಟಿದ್ದಾನೆ. ನಾವು ಯೂನಿವರ್ಸಿಟಿಗಳಲ್ಲಿ ಕುಳಿತುಕೊಂಡವರು ಮಾತನಾಡುವ ಭಾಷೆ ಈ ದೇಶದ ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಅವರಿಗೆ ಅರ್ಥವಾಗುವ ಭಾಷೆಯಲ್ಲಿ ನಾವು ಮಾತನಾಡುವುದಿಲ್ಲ ಎಂದು ತನ್ನ ಭಾಷಣದಲ್ಲೇ ಆತ್ಮವಿಮರ್ಶೆಯ ಮಾತುಗಳನ್ನು ಆಡಿದ ಕನ್ಹಯ್ಯ. ಅಷ್ಟು ಮಾತ್ರವಲ್ಲ ತನ್ನ ಐವತ್ತು ನಿಮಿಷಗಳ ಭಾಷಣದಲ್ಲಿ ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆಯನ್ನೇ ಮಾತನಾಡಿದ. ತನ್ನ ಸುತ್ತಮುತ್ತ ಕುಳಿತವರು, ಭಾಷಣ ಕೇಳುತ್ತಿರುವವರು ಜೆಎನ್ಯುನ ಪ್ರಜ್ಞಾವಂತ ವಿದ್ಯಾಥರ್ಿಗಳು ಎಂಬುದು ಗೊತ್ತಿದ್ದರೂ ಕನ್ಹಯ್ಯಗೆ ಈ ಭಾಷಣ ಭಾರತದ ಮೂಲೆಮೂಲೆಗಳನ್ನು ತಲುಪಲಿದೆ ಎಂಬುದು ಗೊತ್ತಿತ್ತು. ಹೀಗಾಗಿ ಪ್ರಜ್ಞಾಪೂರ್ವಕವಾಗಿ ಆತ ಜನರ ಭಾಷೆಯನ್ನೇ ಮಾತನಾಡಿದ.

 
ಕನ್ಹಯ್ಯ ಹೇಳಿಕೇಳಿ ಹಳ್ಳಿ ಹುಡುಗ, ಅವನಿಗೆ ತನ್ನ ಹಳ್ಳಿ ಐಡೆಂಟಿಟಿಯೇ ಹೆಚ್ಚು ಅಪ್ಯಾಯಮಾನ. ಅವನು ಬಳಸಿದ ಭಾಷೆಯೂ ದೇಸೀ ಸೊಗಡಿನ ಬಿಹಾರಿ ಶೈಲಿಯ ಹಿಂದಿ. ಜತೆಗೆ ಒಂದಷ್ಟು ಉರ್ದು ಶಬ್ದಗಳು ಢಾಳಾಗಿ ಕಾಣಿಸಿಕೊಂಡವು. ಒಮ್ಮೊಮ್ಮೆ ಅವನು ಕವಿಯಂತೆ ಮಾತನಾಡುತ್ತಾನೆ, ಆಮೇಲೆ ಬಿಹಾರದ ಯಾವುದೋ ಹಳ್ಳಿಯ ಕಟ್ಟೆ ಮೇಲೆ ಕುಳಿತು ಮಾತನಾಡುವ ಅಪ್ಪಟ ದೇಸೀ ಶೈಲಿಗೆ ಬದಲಾಗಿಬಿಡುತ್ತಾನೆ. ಅವನಿಗೆ ಚೆನ್ನಾಗಿ ಗೊತ್ತು, ಜನರ ಭಾಷೆ ಮಾತನಾಡಿದರಷ್ಟೇ ಜನರಿಗೆ ಅರ್ಥವಾಗೋದು. ಅವನು ಅದನ್ನೇ ಮಾಡಿದ, ಜನರನ್ನು ತಲುಪಿಯೂಬಿಟ್ಟ.

 
ನಮಗೆ ಬೇಕಿರೋದು ದೇಶದಿಂದ ಸ್ವಾತಂತ್ರ್ಯವಲ್ಲ, ದೇಶದೊಳಗೆ ಸ್ವಾತಂತ್ರ್ಯ ಎಂದು ಕನ್ಹಯ್ಯ ಬಹಳ ಸ್ಪಷ್ಟವಾಗಿ ಹೇಳುತ್ತ ಜನಸಾಮಾನ್ಯರು ಏನನ್ನು ಅರ್ಥ ಮಾಡಿಕೊಳ್ಳಬೇಕಿತ್ತೋ ಅದನ್ನು ಅರ್ಥಮಾಡಿಸಿಬಿಟ್ಟ. ಅಲ್ರೀ, ಇವನೇನು ಆಜಾದಿ ಆಜಾದಿ ಅಂತಾನೆ, ಆಜಾದಿ 1947ರಲ್ಲೇ ಬಂತಲ್ಲ ಎಂದು ಅಮಾಯಕವಾಗಿ ಮಾತನಾಡುತ್ತಿದ್ದ ಜನರಿಗೂ ಈಗ ಅರ್ಥವಾಗತೊಡಗಿದೆ, ಕನ್ಹಯ್ಯ ಕೇಳುತ್ತಿರುವ ಆಜಾದಿ ಬೇರೆಯದ್ದು ಎಂದು. ಜೈಲಿಗೆ ಹೋದಾಗ ಪೊಲೀಸರು, ಜೈಲು ಸಿಬ್ಬಂದಿ, ಇತ್ಯಾದಿ ಜನರಿಂದ ಪದೇ ಪದೇ ಇದೇ ಪ್ರಶ್ನೆಯನ್ನು ಎದುರಿಸಿದ್ದ ಕನ್ಹಯ್ಯನಿಗೆ ಇದಕ್ಕಿಂತ ಪರಿಣಾಮಕಾರಿಯಾದ ಉತ್ತರ ನೀಡಲು ಇನ್ನು ಹೇಗೆ ಸಾಧ್ಯವಿತ್ತು?

 
ಕನ್ಹಯ್ಯ ಆಗ ತಾನೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ. ಜಾಮೀನು ಕೊಟ್ಟ ನ್ಯಾಯಾಲಯ ಸಹಜವಾಗಿಯೇ ಒಂದಷ್ಟು ಷರತ್ತುಗಳನ್ನು ವಿಧಿಸಿರುತ್ತದೆ. ಅದನ್ನು ಮೀರಿದರೆ ನ್ಯಾಯಾಂಗ ನಿಂದನೆಯನ್ನು ಎದುರಿಸಬೇಕಾಗುತ್ತದೆ. ಕನ್ಹಯ್ಯ ತನ್ನ ಕುರಿತಾದ ಕೇಸಿನ ಕುರಿತು ಏನನ್ನೂ ಮಾತನಾಡುವಂತಿಲ್ಲ. ನಿಜ, ಕನ್ಹಯ್ಯ ಕಾನೂನು ಉಲ್ಲಂಘನೆ ಮಾಡಲಿಲ್ಲ, ಕೇಸಿನ ಬಗ್ಗೆ ಏನನ್ನೂ ಮಾತನಾಡಲಿಲ್ಲ. ಆದರೆ ಏನೂ ಮಾತನಾಡದೇKanhaiya-2 ಎಲ್ಲವನ್ನೂ ಮಾತನಾಡಿಬಿಟ್ಟಿದ್ದ. ನನ್ನ ಜನ ಜಾಣರು, ಸಂಜ್ಞೆಗಳಲ್ಲೇ ಎಲ್ಲವನ್ನು ಅರ್ಥ ಮಾಡಿಕೊಳ್ಳಬಲ್ಲರು ಎಂದು ಹೇಳುತ್ತ ಏನನ್ನು ಹೇಳಬೇಕೋ ಅದನ್ನು ಹೇಳಿಬಿಟ್ಟ. ಕನ್ಹಯ್ಯ ನ್ಯಾಯಾಂಗ ನಿಂದನೆಯಾಗುವಂಥದ್ದೇನಾದರೂ ಮಾತನಾಡಿದನಾ ಎಂದು ಟೀವಿ ಚಾನಲ್ಲುಗಳು ಕೆಕರುಪೆಕರಾಗಿ ಚರ್ಚೆ ನಡೆಸಿದರೂ ಅವುಗಳಿಗೆ ಸಿಗಬೇಕಾಗಿದ್ದೇನೂ ಸಿಗುತ್ತಿಲ್ಲ.

 
ಬಿಡುಗಡೆಯಾಗಿ ಬಂದ ಮಾರನೇ ದಿನವೇ ಈ ದೇಶದ ಘಟಾನುಘಟಿ ಪತ್ರಕರ್ತರ ಸಂದರ್ಶನವನ್ನು ಕನ್ಹಯ್ಯ ಎದುರಿಸಬೇಕಾಯಿತು. ರಾಜದೀಪ್ ಸರ್ದೇಸಾಯಿ, ಬರ್ಖಾ ದತ್, ರವೀಶ್ ಕುಮಾರ್… ಎಲ್ಲರೂ ಒಂದೊಂದು ಚಾನಲ್ನ ಮುಖ್ಯಸ್ಥರು. ಐದು ಅಡಿ ಉದ್ದದ ಕನ್ಹಯ್ಯ ಮುದುಡಿ ಕುಳಿತಿದ್ದ. `ಅಲ್ಲೋ ಮಾರಾಯ, ಅಲ್ಲಿ ಜೆಎನ್ಯುನಲ್ಲಿ ಭಾಷಣ ಮಾಡುವಾಗ ಹಾಗೆ ಅಬ್ಬರಿಸುತ್ತಿದ್ದೆ, ಇಲ್ಲೇಕೆ ಹೀಗೆ ತಣ್ಣಗೆ ಉತ್ತರಿಸುತ್ತಿದ್ದೀ?’ ಎಂದ ರಾಜದೀಪ್ಗೆ ಅಷ್ಟೇ ತಣ್ಣಗೆ ಕನ್ಹಯ್ಯ ಹೇಳಿದ್ದೇನು ಗೊತ್ತೇ? “ನೋಡಿ ಸರ್, ಅಲ್ಲಿ ಸಾಕಷ್ಟು ಜನರು ಇದ್ರು, ಎಲ್ಲರಿಗೂ ಕೇಳಬೇಕು, ಎಲ್ಲರನ್ನ ತಲುಪಬೇಕು, ಇಲ್ಲಿ ನಾವಿಬ್ರೇ ಕೂತಿದ್ದೇವೆ. ಟೆಕ್ನಾಲಜಿ ಇದೆ. ಗಟ್ಟಿಯಾಗಿ ಮಾತಾಡೋ ಅಗತ್ಯ ಏನಿದೆ?” ಒಂದು ಕ್ಷಣ ರಾಜದೀಪ್ ಕೂಡ ಕನ್ಹಯ್ಯನ ಮಾತಿಗೆ ಬೆರಗಾದರು. ಈ ಸಂದರ್ಶನವನ್ನು ನೋಡಿರಬಹುದಾದ ಅರ್ನಾಬ್ ಗೋಸ್ವಾಮಿ ಒಮ್ಮೆ ಬೆವೆತಿರಬೇಕು, ತನ್ನದೇ ಸ್ಟುಡಿಯೋದಲ್ಲಿ ಕುಳಿತು ತಾನೇ ಕಿರುಚಾಡುವುದೆಲ್ಲ ಅವನಿಗೆ ನೆನಪಾಗಿರಬಹುದು.

 
ಕನ್ಹಯ್ಯ ಜೈಲಿನಿಂದ ಬಂದ ಮೇಲೆ ಏನು ಮಾಡಬಹುದು ಎಂಬ ಸಹಜ ಕುತೂಹಲ ಎಲ್ಲರಲ್ಲಿತ್ತು. ದೇಶದ್ರೋಹದ ಆರೋಪದಲ್ಲಿ ಜೈಲು ಸೇರುವುದೇನು ಸಾಮಾನ್ಯ ವಿಷಯವೇ? ಅದೂ ಕೂಡ ಅವನ ಸೈದ್ಧಾಂತಿಕ ವಿರೋಧಿಗಳು ದೇಶದ್ರೋಹಿ ದೇಶದ್ರೋಹಿ ಎಂದು ಸಾರಿಸಾರಿ, ಕಿರುಚಿ ಕಿರುಚಿ ಹೇಳಿ ಸಾಮಾನ್ಯ ಜನರೂ ಅದನ್ನು ನಂಬುವಂತಾಗಿದ್ದಾಗ, ಕೋರ್ಟ್ ಆವರಣದಲ್ಲೇ ದೇಶಭಕ್ತ ವಕೀಲರಿಂದ ಹಲ್ಲೆಗೊಳಗಾದ ವ್ಯಕ್ತಿ ಜಾಮೀನು ಪಡೆದು ಬಂದ ನಂತರ ಏನು ಮಾತನಾಡಬಹುದು ಎಂಬ ಕುತೂಹಲ ಇಲ್ಲದೇ ಇರುತ್ತದೆಯೇ? ಜೈಲುವಾಸದ ನಂತರ ಆತ ಅಧೀರನಾಗಿರಬಹುದೇ ಎಂಬ ಅನುಮಾನಗಳೂ ಹಲವರಿಗಿತ್ತು. ಅವನ ಮಾತುಗಳನ್ನು ಕೇಳಲು ಅವನ ವಿರೋಧಿಗಳೂ ಕಾತುರರಾಗಿದ್ದರು.
ಕನ್ಹಯ್ಯ ಬಂದ, ಸಾವಿರ ಸಾವಿರ ವಿದ್ಯಾರ್ಥಿಗಳ ನಡುವೆ ನಿಂತು ತನ್ನ ಟ್ರೇಡ್ಮಾರ್ಕ್ ‘ಆಜಾದಿ’ಯ ಘೋಷಣೆಗಳನ್ನು ಕೂಗಿದ, ಆಮೇಲೆ ಮಾತು. ಅವನ ಧೈರ್ಯ ಉಡುಗುವುದಿರಲಿ, ಮೊದಲು ಇದ್ದದ್ದು ದುಪ್ಪಟ್ಟಾಗಿತ್ತು. ಹೊಸ ಕನ್ಹಯ್ಯ ಇನ್ನಷ್ಟು ಆಶಾವಾದಿಯಾಗಿದ್ದ, ಇನ್ನಷ್ಟು ಪಳಗಿಹೋಗಿದ್ದ, ಇನ್ನಷ್ಟು ಆತ್ಮವಿಶ್ವಾಸಿಯಾಗಿದ್ದ. ಎದುರಾಳಿಗಳ ಎದೆ ನಡುಗಲು ಇನ್ನೇನು ಬೇಕಿತ್ತು?

 
ಕನ್ಹಯ್ಯ ಮೇಲಿನ `ರಾಜದ್ರೋಹದ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಅಲ್ಲಿ ಆತ ಇನ್ನೂ ನಿರ್ದೋಷಿ ಎಂದು ತೀರ್ಮಾನವಾಗಿಲ್ಲ. ಆದರೆ ಕನ್ಹಯ್ಯ ಮೇಲೆ ಹೊರಿಸಲಾದ ಆರೋಪ ನ್ಯಾಯಾಲಯದ ಕಟಕಟೆಗಳನ್ನು ದಾಟಿ ಸದ್ದುಮಾಡಿತ್ತು. ಒಂದೊಮ್ಮೆ ನ್ಯಾಯಾಲಯದ ಕಟಕಟೆಯಲ್ಲಿ ನಿರ್ದೋಶಿ ಎಂದು ಸಾಬೀತಾದರೂ ಆತ ಅಷ್ಟು ಸುಲಭವಾಗಿ ಈ ಭಾರವನ್ನು ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ. ಕನ್ಹಯ್ಯ ತನ್ನ ಭಾಷಣದ ಮೂಲಕ ಜನರ ನ್ಯಾಯಾಲಯಕ್ಕೆ ನುಗ್ಗಿಬಿಟ್ಟ. ತನ್ನ ಮೇಲಿನ ಆರೋಪಗಳೆಲ್ಲ ಹೇಗೆ ಹಸಿಹಸಿ ಸುಳ್ಳುಗಳು ಮತ್ತು ರಾಜಕೀಯ ಪ್ರೇರಿತವಾದವುಗಳು ಎಂಬುದನ್ನು ಹಳ್ಳಿಹುಡುಗನ ಸಹಜ ವಿನಯದಿಂದಲೇ ನಿರೂಪಿಸಿಬಿಟ್ಟ.

 
ನೀನು ನಿನ್ನ ಭಾಷಣದಲ್ಲಿ ಅತಿ ಎನಿಸುವಷ್ಟು ಪರ್ಸನಲ್ ಅಟ್ಯಾಕ್ ಮಾಡಿದೆ ಎಂದು ರಾಜದೀಪ್ ಸರ್ದೇಸಾಯಿ ಕನ್ಹಯ್ಯನನ್ನು ಟೀಕಿಸಿದರು. ಕನ್ಹಯ್ಯ ಮುಗುಳು ನಗುತ್ತ ಆ ಟೀಕೆಯನ್ನು ಸ್ವೀಕರಿಸಿದ. ಕನ್ಹಯ್ಯ ರಾಜಕೀಯ ಪಕ್ಷದ ವಿದ್ಯಾರ್ಥಿ ಸಂಘಟನೆಯ ಮುಖಂಡ. ರಾಜಕಾರಣ ಆತನಿಗೆ ಚೆನ್ನಾಗಿ ಗೊತ್ತು. ಏಟಿಗೆ ಎದಿರೇಟು ಎನ್ನುವುದು ರಾಜಕಾರಣದ ಪ್ರಾಥಮಿಕ ಪಾಠ. ದಾಳಿಗೆ ಪ್ರತಿದಾಳಿ ಇರಲೇಬೇಕು. ಹೀಗಾಗಿ ಆಗೊಮ್ಮೆ ಈಗೊಮ್ಮೆ ನರೇಂದ್ರ ಮೋದಿ, ಸ್ಮೃತಿ ಇರಾನಿಯವರನ್ನು ತನ್ನ ಭಾಷಣದಲ್ಲಿ ಗೇಲಿ ಮಾಡಿದ. ಕೆಲವೊಮ್ಮೆ ವಯೋಸಹಜ ತುಂಟತನದಿಂದ ಛೇಡಿಸಿದ.

 

ಕನ್ಹಯ್ಯ ಕಮ್ಯುನಿಸ್ಟ್ ಪಕ್ಷದ ವಿದ್ಯಾರ್ಥಿ ಮುಖಂಡ. ಅದಕ್ಕಾಗಿ ಅವನಿಗೆ ಹೆಮ್ಮೆಯೂ ಇದೆ. ಆದರೆ ಅವನು ಮಾತನಾಡುತ್ತಿರುವುದು ಸಂಪೂರ್ಣ ಕಮ್ಯುನಿಸ್ಟ್ ಪಕ್ಷಗಳ ನುಡಿಗಟ್ಟುಗಳಲ್ಲ. ಅದಕ್ಕೆ ಕಾರಣವೂ ಇದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ವರ್ಗ ಸಂಘರ್ಷವೊಂದನ್ನು ನಂಬಿಕೊಂಡಿದ್ದ ಕಮ್ಯುನಿಸ್ಟರು ಈ ಭಾರತದ ಜಾತಿಯ ಕರಾಳತೆಗಳ ಕಡೆ ಕೊಡಬೇಕಾದಷ್ಟು ಗಮನವನ್ನು ಕೊಡಲಿಲ್ಲ. ಆದರೆ ಕನ್ಹಯ್ಯ ದೊಡ್ಡ ಧ್ವನಿಯಲ್ಲಿ `ಜಾತಿವಾದದಿಂದ ಆಜಾದಿ’ ಎನ್ನುತ್ತಿದ್ದಾನೆ, `ರೋಹಿತ್ ವೇಮುಲಾ ನನ್ನ ಆದರ್ಶ’ ಎನ್ನುತ್ತಿದ್ದಾನೆ. ಕನ್ಹಯ್ಯನಿಗೆ ತತ್ತ್ವ ಸಿದ್ಧಾಂತದಲ್ಲಿ ಗಟ್ಟಿಯಾಗಿರುವ ಕಮ್ಯುನಿಸ್ಟರು ಜನರನ್ನು ತಲುಪವಲ್ಲಿ ಸೋಲುತ್ತಿದ್ದಾರೆ ಎಂಬ ವಾಸ್ತವ ಅವನಿಗೆ ಗೊತ್ತಿದೆ. ತನ್ನದೇ ಪಕ್ಷದ ಇತಿಮಿತಿಗಳೂ ಅವನಿಗೆ ಗೊತ್ತು. ಹೀಗಾಗಿ ಆತ ತನ್ನ ಪಕ್ಷದ ಚೌಕಟ್ಟನ್ನೂ ಮೀರಿ ಯೋಚಿಸುತ್ತಾನೆ, ಮಾತನಾಡುತ್ತಾನೆ. ಜೈಲಿನಲ್ಲಿ ತನಗೆ ನೀಡಿದ ನೀಲಿ ಮತ್ತು ಕೆಂಪು ಬಣ್ಣದ ಬೌಲ್ಗಳನ್ನು ರೂಪಕವಾಗಿ ಬಳಸಿ ಆತ ಕಮ್ಯುನಿಸ್ಟರು-ಅಂಬೇಡ್ಕರ್ವಾದಿಗಳೂ ಒಂದಾಗಬೇಕು ಎನ್ನುತ್ತಾನೆ. ಎಂಥ ಸುಂದರ ಕನಸು?

 

ನೀವು ನನ್ನ ಎದುರಾಳಿಗಳು (ವಿರೋಧಪಕ್ಷ), ಆದರೆ ನೀವು ನನ್ನ ಶತ್ರುಗಳಲ್ಲ ಎಂದು ಕನ್ಹಯ್ಯ ಹೇಳುವಾಗ ಎದುರಾಳಿಗಳಿಗೂ ನಡುಕ ಹುಟ್ಟುವುದು ಸಹಜ. ಯಾಕೆಂದರೆ ಈ ಬಗೆಯ ಭಾಷೆ ನೇರವಾಗಿ ಜನರ ಎದೆಯನ್ನು ಮುಟ್ಟುತ್ತದೆ. ತನ್ನ ಎದುರಾಳಿಗಳದು ಹೊಡಿ, ಬಡಿ, ಕೊಲ್ಲು ಎನ್ನುವ ಭಾಷೆ ಅನ್ನುವುದು ಕನ್ಹಯ್ಯಗೆ ಗೊತ್ತು. ಆದರೆ ಇದಕ್ಕೆ ಪ್ರತಿಯಾಗಿ ಭಿನ್ನಧ್ವನಿಗಳನ್ನೂ ಗೌರವಿಸುತ್ತೇವೆ ಎಂದು ಹೇಳುವ ಮೂಲಕ ಪ್ರಜಾಪ್ರಭುತ್ವದ ನೈಜ ವ್ಯಾಖ್ಯಾನ ತನಗೆ ಗೊತ್ತಿದೆ ಎಂಬ ಸಂದೇಶವನ್ನು ರವಾನೆ ಮಾಡುತ್ತಾನೆ.

 

`ಅಲ್ಲಿ, ಪಾಟಿಯಾಲ ಕೋರ್ಟ್ ಆವರಣದಲ್ಲಿ ನಿನ್ನನ್ನು ಅವರು ಹೊಡೆದರು, ಒದ್ದರು. ಆ ಕೇಸೂ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿದೆ, ನೀನು ಯಾಕೆ ಆ ವಿಷಯ ನಿನ್ನ ಭಾಷಣದಲ್ಲಿ ಪ್ರಸ್ತಾಪ ಮಾಡಲಿಲ್ಲ ಎಂದು ರಾಜದೀಪ್ ಕೇಳಿದಾಗ ಕನ್ಹಯ್ಯ ಕೊಟ್ಟ ಉತ್ತರ ಆತನ ಸ್ಥಿತಪ್ರಜ್ಞತೆಗೆ, ವಿವೇಕಕ್ಕೆ ಹಿಡಿದ ಕನ್ನಡಿ. ನಾನು, ನನ್ನಂಥ ಕೋಟ್ಯಂತರ ಯುವಕರ ಭವಿಷ್ಯದ ಬಗ್ಗೆ ಮಾತನಾಡಬೇಕಿತ್ತು. ಅದೇ ನನ್ನ ಆದ್ಯತೆಯಾಗಿತ್ತು. ನನ್ನ ಮೇಲೆ ದಾಳಿಯಾಗಿದ್ದು ನಿಜ. ನನ್ನ ವೈಯಕ್ತಿಕ ನೋವಿಗಿಂದ ಸಮೂಹ ಅನುಭವಿಸುತ್ತಿರುವ ನೋವಿನ ಚರ್ಚೆಯೇ ಮುಖ್ಯ. ಅದಕ್ಕಾಗಿಯೇ ನಾನು ಆ ವಿಷಯವನ್ನು ಪ್ರಜ್ಞಾಪೂರ್ವಕವಾಗಿ ಪ್ರಸ್ತಾಪಿಸಲಿಲ್ಲ ಎಂದ ಕನ್ಹಯ್ಯ!

 

ಕನ್ಹಯ್ಯ ಮಾಡಿದ್ದು ಮತ್ತೇನನ್ನೂ ಅಲ್ಲ, ಆತ ಕಳೆದ ಎರಡು ವರ್ಷಗಳಿಂದ ಈ ದೇಶದ ಬಹುಸಂಖ್ಯಾತ ಜನರ ಎದೆಯಲ್ಲಿ ಅದುಮಿ ಇಟ್ಟುಕೊಂಡಿದ್ದ ಮಾತುಗಳನ್ನೇ ಹೊರಗೆ ಹಾಕಿದ. ಎಲ್ಲೆಲ್ಲೋ ಚದುರಿ ಹೋಗಿದ್ದ ಪ್ರತಿರೋಧದ ಧ್ವನಿಗಳನ್ನು ಸರಿಯಾಗಿ ಗ್ರಹಿಸಿ ಅವುಗಳನ್ನೇ ಜನರ ಮುಂದೆ ಇಟ್ಟ. ಅರೆ, ಇದೆಲ್ಲ ನಾವು ಹೇಳಬೇಕಿದ್ದ ಮಾತುಗಳಲ್ಲವೇ ಎಂದು ಎಲ್ಲರೂ ತಮ್ಮೊಳಗೆ ಒಮ್ಮೆ ಹೋಗಿ ಮುಟ್ಟಿ ನೋಡಿಕೊಂಡು ಬರುವಂತೆ ಮಾಡಿಬಿಟ್ಟ. ಮೋದಿ ಮೇನಿಯಾದಲ್ಲಿ ಮಂಕಾಗಿ ಹೋಗಿದ್ದ ಸಮಸ್ತ ವಿರೋಧಪಕ್ಷಗಳೂ ಮಾಡಲು ಸಾಧ್ಯವಾಗದ್ದನ್ನು ಕನ್ಹಯ್ಯ ಮಾಡಿತೋರಿಸಿದ.

 

ವಿದ್ಯಾರ್ಥಿಗಳು, ದಲಿತರು, ಆದಿವಾಸಿಗಳು, ಸೈನಿಕರು, ರೈತರು, ಹಿಂದುಳಿದವರು, ಅಲ್ಪಸಂಖ್ಯಾತರು, ಕಾರ್ಮಿಕರು, ಮಹಿಳೆಯರು ಎಲ್ಲರೂ ಅವನ ಭಾಷಣದಲ್ಲಿ ಬಂದರು. ಎಲ್ಲರ ಧ್ವನಿಯಾಗಿಯೂ ಕನ್ಹಯ್ಯ ಗುಡುಗಿದ. ಕೆಲವೇ ದಿನಗಳ ಹಿಂದೆ `ದೇಶದ್ರೋಹಿ’ ಎಂದು ಜರೆಯಲಾಗಿದ್ದ ಹುಡುಗ ತನ್ನ ಮೇಲಿನ ಆರೋKanhaiya-1ಪಗಳನ್ನು ಹುಸಿ ಎಂದು ಸಾರುತ್ತಲೇ ನಿಜವಾದ ದೇಶದ್ರೋಹಿಗಳನ್ನು ಇಂಚಿಂಚಾಗಿ ಬೆತ್ತಲುಗೊಳಿಸಿಬಿಟ್ಟ.

ಕನ್ಹಯ್ಯನ ಮೇಲಿನ ನಿರೀಕ್ಷೆಗಳು ವಿಪರೀತವಿದೆ, ಆ ಭಾರವನ್ನು ಐದು ಅಡಿ ಉದ್ದದ ಈ ಹುಡುಗ ತಡೆದುಕೊಳ್ಳುತ್ತಾನೋ ಇಲ್ಲವೋ ಎಂಬುದನ್ನು ಕಾಲವೇ ಹೇಳಬೇಕು. ಆದರೆ ಅದೊಂದು ಭಾಷಣ ಇಂಡಿಯಾದ ರಾಜಕಾರಣದಲ್ಲಿ ಹೊಸ ತಿರುವನ್ನಂತೂ ನೀಡಿದೆ, ಅದನ್ನು ಅವನ ಎದುರಾಳಿಗಳೂ ಅಲ್ಲಗೆಳೆಯಲಾರರು.

ಮಹಿಳಾ ದಿನ: ಆಚರಿಸಲು ಒಂದಿಷ್ಟು ನೈತಿಕತೆ ಬೇಡವೆ?

– ಪ್ರದೀಪ್ ಇ.

ನಾಳೆ ವಿಶ್ವ ಮಹಿಳಾ ದಿನ. ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಕ್ರಮ ಮಾಡುತ್ತೆ. ಮುಖ್ಯಮಂತ್ರಿ ಸೇರಿದಂತೆ ಹಲವರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾತನಾಡುತ್ತಾರೆ. ಅವರೆಲ್ಲರ ಮಾತುಗಳಿಗೆ ಮೊದಲು ಹೇಳಬೇಕಾದ್ದು — For god sake, hold your tongue. ಇಲ್ಲಿ ಸ್ವಲ್ಪ ಕೇಳಿ.

ಈ ಸರಕಾರಕ್ಕೆ ಮಹಿಳಾ ದಿನಾಚರಣೆ ಕಾರ್ಯಕ್ರಮ ಮಾಡುವ ನೈತಿಕ ಹಕ್ಕಿಲ್ಲ. ಇದು ಲೇಖನದ ಆರಂಭದಲ್ಲಿಯೇ ತೀರ್ಪು ಕೊಟ್ಟಂತೆ ಅನ್ನಿಸಬಹುದು. ಆದರೆ, ಇನ್ನು ಮುಂದೆ ಮಂಡಿಸಲಾಗುವ ಅಂಶಗಳಿಂದ ಈ ಲೇಖನ ಓದುತ್ತಿರುವ ಕೆಲವರಿಗಾದರೂ ಆ ಅಭಿಪ್ರಾಯದ ಬಗ್ಗೆ ಸಹಮತ ಮೂಡಬಹುದು.

ನಿಮಗೆ ಕೆಲವರಿಗೆ ಗೊತ್ತಿರಬಹುದು. ರಾಜ್ಯದ ಕೆಲವೆಡೆ ಹಲವು ವೈದ್ಯರು ಸಾವಿರಾರು ಅನಗತ್ಯ ಹಿಸ್ಟೆರೆಕ್ಟೊಮಿ (hysterectomy-ಗರ್ಭಕೋಶ ತೆಗೆಯುವ ಸರ್ಜರಿ) ಗಳನ್ನು ಮಾಡಿದ್ದಾರೆ. 2014 ರ ಅಂತ್ಯದ ಹೊತ್ತಿಗೆ ಚಿಕ್ಕಮಗPhoto Captionಳೂರ ಜಿಲ್ಲೆ ಬೀರೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರು ಅನಗತ್ಯವಾದ ಸರ್ಜರಿಗಳನ್ನು ಮಾಡಿ, ನೂರಾರು ಮಹಿಳೆಯರಿಂದ ದುಡ್ಡು ವಸೂಲಿ ಮಾಡಿದ್ದ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಸುದ್ದಿ ಬಂತು.

ವೈದ್ಯ ವೃತ್ತಿಯಲ್ಲಿರುವವರು ಕೆಲ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಅದರಂತೆ, ಹಿಸ್ಟೆರೆಕ್ಟೊಮಿ ಸರ್ಜರಿಯನ್ನು ತೀರಾ ಅನಿವಾರ್ಯವಾದ ಪ್ರಸಂಗಗಳ ಹೊರತಾಗಿ ಮಾಡಬಾರದು. ಅದರಲ್ಲೂ 35 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಹೆಂಗಸರಿಗೆ ಆ ಸರ್ಜರಿಯನ್ನು ಮಾಡುವಾಗ, ಸಾಧ್ಯವಿರುವ ಎಲ್ಲಾ ಪರ್ಯಾಯ ಮಾರ್ಗಗಳನ್ನು ಮೊದಲು ಪರಿಶೀಲಿಸಬೇಕು. ಆ ಸರ್ಜರಿಯನ್ನು ಮಾಡದೇ ಹೋದರೆ ಅವರ ಆರೋಗ್ಯಕ್ಕೆ ತೊಂದರೆ ಆಗಬಹುದು ಎನ್ನುವ ಪರಿಸ್ಥಿತಿ ಇದ್ದಾಗ ಮಾತ್ರ ಮುಂದುವರಿಯಬಹುದು. ಈ ನೀತಿಗೆ ಕಾರಣಗಳಿವೆ. ಗರ್ಭಕೋಶ ತೆಗೆದರೆ ಸ್ತ್ರೀ ದೇಹದ ಹಲವು ಋಣಾತ್ಮಕ ಪ್ರತಿಕ್ರಿಯೆಗಳು ಆಗುತ್ತವೆ. ಆದರೆ, ಗೊತ್ತಿರಲಿ, ಆ ಬೀರೂರಿನ ವೈದ್ಯ ಮೂರು ವರ್ಷದ ಅವಧಿಯಲ್ಲಿ 1,428 ಮಹಿಳೆಯರ ಗರ್ಭಕೋಶ ತೆಗೆದಿದ್ದ. ಆತ ವರ್ಷಪೂರ್ತಿ ರಜಾ ದಿನಗಳಲ್ಲೂ ಕೆಲಸ ಮಾಡಿದ್ದಾರೆ ಎಂದು ಭಾವಿಸಿದರೂ, ದಿನಕ್ಕೆ ಒಂದಕ್ಕಿಂತ ಹೆಚ್ಚು ಸರ್ಜರಿ ಮಾಡಿದ್ದಾರೆ. ಆಘಾತಕಾರಿ ಸಂಗತಿ ಎಂದರೆ, ಹಾಗೆ ಪರೀಕ್ಷೆಗೆ ಒಳಪಟ್ಟವರಲ್ಲಿ ಶೇಕಡ 40 ಕ್ಕೂ ಹೆಚ್ಚು ಮಂದಿ 35 ವರ್ಷಕ್ಕಿಂತ ಚಿಕ್ಕ ಹರೆಯದವರು.

ಈ ಎಲ್ಲಾ ಮಾಹಿತಿಗಳು ಸರಕಾರದ ಆರೋಗ್ಯ ಇಲಾಖೆ ಆದೇಶದ ಮೇಲೆ ತನಿಖೆ ನಡೆಸಿದ ಸಮಿತಿ ಕಲೆಹಾಕಿದ್ದು. ಮಾಧ್ಯಮದಲ್ಲಿ ಸುದ್ದಿ ಬಂದ ನಂತರ ಆರೋಗ್ಯ ಮಂತ್ರಿ ಯು.ಟಿ.ಖಾದರ್ ಸಮಿತಿ ನೇಮಿಸಿದರು. ಅದರಲ್ಲಿ ಇಬ್ಬರು ವೈದ್ಯರು ಮತ್ತೊಬ್ಬರು ವಕೀಲರು. ಆ ವಕೀಲರು ರಾಜ್ಯ ಮಹಿಳಾ ಆಯೋಗದ ಸದಸ್ಯರೂ ಹೌದು. ಆ ಮೂರೂ ಮಂದಿ, ಬೀರೂರಿನ ಆಸ್ಪತ್ರೆಗೆ ಹೋಗಿ ಮೂರು ವರ್ಷಗಳ ಕಾಲ ಆ ವೈದ್ಯ ಹ್ಯಾಂಡಲ್ ಮಾಡಿದ ಎಲ್ಲಾ ಕೇಸ್ ಶೀಟ್ ಗಳನ್ನು ತಡಕಾಡಿ ಮಾಹಿತಿ ಕಲೆ ಹಾಕಿದರು. ಸರ್ಜರಿಗಳಿಗೆ ಸಹಾಯ ಮಾಡಿದ ಸಿಬ್ಬಂದಿ ಹಾಗೂ ಸರ್ಜರಿಗೆ ಒಳಗಾದ ಹಲವಾರು ಮಹಿಳೆಯರನ್ನು ಸಂದರ್ಶಿಸಿ ವರದಿ ನೀಡಿದ್ದಾರೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಒಂದು ಹಳ್ಳಿಯಲ್ಲಿಯೇ ಅದೆಷ್ಟೋ ಮಹಿಳೆಯರು ಈ ವೈದ್ಯ ಮಹಾಶಯನ ಬಳಿ ಬಂದು ಗರ್ಭಕೋಶ ತೆಗೆಸಿಕೊಂಡಿದ್ದಾರೆ. ತನಿಖಾ ವರದಿ ಪ್ರಕಾರ, ಈ ಮಹಿಳೆಯರು ಸಾಕಷ್ಟು ಹಣ ನೀಡಿ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಕೆಲವರು 30,000 ರೂಗಳ ವರೆಗೆ ಲಂಚ ನೀಡಿದ್ದಾರೆ. ಒಟ್ಟು ಎಂಟು ಜಿಲ್ಲೆಯ ಮಹಿಳೆಯರು ಇಲ್ಲಿ ಬಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಕೆಲವರಿಗೆ ಮಹಿಳೆಯರು ಇಂತಹ ಸರ್ಜರಿಗೆ ಏಕೆ ಒಳಗಾಗುತ್ತಾರೆ ಎಂದು ತಿಳಿದರೆ ಆಶ್ಚರ್ಯ ಆಗಬಹುದು. ಚಿತ್ರದುರ್ಗ, ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿರುವ ಗೊಲ್ಲರ ಸಮುದಾಯದಲ್ಲಿ ಕೆಲ ಸಂಪ್ರಾದಯಗಳಿವೆ. ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ಊರ ಹೊರಗೆ ಕಟ್ಟಲಾಗಿರುವ, ಯಾವು ಮೂಲಭೂತ ವ್ಯವಸ್ಥೆಯೂ ಇಲ್ಲದ ಮನೆಯಲ್ಲಿ ಕಾಳ ಕಳೆಯಬೇಕು. ಶುಚಿತ್ವ ಇಲ್ಲದ ಕಾರಣಕ್ಕೋ ಅಥವಾ ಮತ್ತಾವ ಕಾರಣಕ್ಕೋ ಅವರಿಗೆ ವಿಪರೀತ ರಕ್ತಸ್ರಾವ ಆಗಿ, ವೈದ್ಯರ ಬಳಿ ಹೋಗುತ್ತಾರೆ. ಇದನ್ನೇ ವ್ಯಾಪಾರದ ಮೂಲವನ್ನಾKhaderಗಿ ಕಂಡ ವೈದ್ಯರು – ಇದಕ್ಕೆಲ್ಲಾ ಒಂದೇ ಪರಿಹಾರ ಹಿಸ್ಟೆರೆಕ್ಟೊಮಿ ಎನ್ನುತ್ತಾರೆ. ಗರ್ಭಕೋಶ ತೆಗೆದರೆ, ನಿಮಗೆ ಈ ಸಮಸ್ಯೆ ಇರುವುದಿಲ್ಲ, ಹಾಗೂ ನಿಮ್ಮ ಹಳ್ಳಿಯ ಸಂಪ್ರದಾಯದಂತೆ, ಮುಟ್ಟಿನ ಸಂದರ್ಭದಲ್ಲಿ ಊರ ಹೊರಗೆ ಇರಬೇಕಾದ ಪರಿಸ್ಥಿತಿನೂ ಇಲ್ಲ – ಎಂದು ಸಲಹೆ ನೀಡುತ್ತಾರೆ.

ಊರಿನ ಕಟ್ಟಳೆಗಳಿಂದ ಎಷ್ಟೇ ಬೇಸತ್ತಿದ್ದರೂ, ಅದರ ವಿರುದ್ಧ ದನಿ ಎತ್ತಲಾಗದ ಮಹಿಳೆಯರಿಗೆ ಇದು ಸುಲಭ ಮಾರ್ಗದಂತೆ ಕಾಣುತ್ತದೆ. ಅದಕ್ಕೆ ಸಾಲ ಮಾಡಿ ಹಣ ಹೊಂದಿಸ ವೈದ್ಯರಿಗೆ ನೀಡಿ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಇದಲ್ಲದೆ, ಬೇರೆ ಬೇರೆ ಸಮುದಾಯದ ಹಲವಾರು ಹೆಂಗಸರು ಈ ವೈದ್ಯರ ಸಂಪರ್ಕಕ್ಕೆ ಬಂದು ಈ ಸರ್ಜರಿ ಮಾಡಿಸಿಕೊಂಸಿದ್ದಾರೆ. ಬೇರೆ ಚಿಕಿತ್ಸೆಯಿಂದ ಹಲವರ ಅನಾರೋಗ್ಯ ಗುಣಪಡಿಸಲು ಸಾಧ್ಯವಿದ್ದರೂ, ಇದೇ ಸರ್ಜರಿ ಮಾಡಿ ದುಡ್ಡು ಪಡೆದಿದ್ದಾರೆ. ಇದೆಲ್ಲವನ್ನೂ ತಜ್ಞರ ವರದಿ ವಿವರವಾಗಿ ನಮೂದಿಸಿ ಸರಕಾರಕ್ಕೆ ವರದಿ ಕೊಟ್ಟು ಒಂದು ವರ್ಷವಾಗಿದೆ. ಈ ಪ್ರಾಥಮಿಕ ಮಾಹಿತಿ ಇಟ್ಟುಕೊಂಡು ಇಡೀ ಪ್ರಕರಣಗಳ ಬಗ್ಗೆ ಒಂದು ಸಿ.ಐ.ಡಿ ತನಿಖೆ ಮಾಡಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಚಾರ್ಜ್ ಶೀಟ್ ಹಾಕಿಸಿ, ಶಿಕ್ಷೆ ಸಿಗುವಂತಾಗಬೇಕು ಎಂದು ವರದಿ ಹೇಳುತ್ತದೆ.

ಆದರೆ…

ಇದುವರೆಗೆ, ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಶಿಕ್ಷೆಯ (??) ಹೆಸರಿನಲ್ಲಿ ಪ್ರಸ್ತುತ ವೈದನನ್ನು ಬೀರೂರಿನಿಂದ ಜಿಲ್ಲಾ ಕೇಂದ್ರವಾದ ದಾವಣಗೆರೆಗೆ ವರ್ಗಾವಣೆ ಮಾಡಿದ್ದಾರೆ. ಸಿಐಡಿ ತನಿಖೆ ಬಗ್ಗೆ ಇದುವರೆಗೆ ತೀರ್ಮಾನ ಇಲ್ಲ. ನೆನಪಿರಲಿ, ವರದಿ ಮಂಡಿಸಿದ್ದು ಕಳೆದ ವರ್ಷ ಮಾರ್ಚ್ ನಲ್ಲಿ. ಇದುವರೆಗೆ ಏನೂ ಆಗಿಲ್ಲ. ಇಂತಹದೇ ಅನಗತ್ಯ ಹಿಸ್ಟೆರೆಕ್ಟೊಮಿ ಸರ್ಜರಿ ಮಾಡಿದ ಆರೋಪಗಳು ಗುಲ್ಬರ್ಗಾ ಸೇರಿದಂತೆ, ಹಲವು ಭಾಗಗಳಲ್ಲಿ ಕೇಳಿ ಬಂದಿವೆ. ಅಲ್ಲಿಯೂ ತನಿಖೆ ನಡೆಯುತ್ತಿದೆ. ಆದರೆ, ತಪ್ಪಿತಸ್ಥರಿಗೆ ಶಾಸ್ತಿ ಆಗುತ್ತದೆಂದು ಹೇಳಲಾಗದು.

ಈಗ ಹೇಳಿ, ಮಹಿಳೆಯರ ದೇಹದ ಮೇಲೆ ಚಿಕಿತ್ಸೆಯ ಹೆಸರಿನಲ್ಲಿ ದುಡ್ಡು ಮಾಡಿದವರ ಮೇಲೆ ಸೂಕ್ತ ತನಿಖೆ ನಡೆಸಿ ಶಿಕ್ಷೆ ಕೊಡಿಸಲಾಗದ ಸರಕಾರಕ್ಕೆ ಮಹಿಳಾ ದಿನ ಆಚರಿಸುವ ನೈತಿಕತೆ ಇದೆಯೆ?

ಕಟ್ಟಿದ ಗಡಿಯಾರ ಮತ್ತು ಕಳಚಿದ ಮುಖವಾಡ!


-ಸಂತೋಷ್


ಅವು ಅಹಿಂದ ಕಾರ್ಯಕ್ರಮದ ದಿನಗಳು. ರಾಜ್ಯದ ಹಲವೆಡೆ ಅಹಿಂದ ಸಮಾವೇಶಗಳು ನಡೆದವು. ಆಗಿನ್ನೂ ಕಾಂಗ್ರೆಸ್ ಸೇರದ ಸಿದ್ದರಾಮಯ್ಯನವರಿಗೆ ಬೆಂಬಲವಾಗಿ ಕೆಲ ಕಾಂಗ್ರೆಸ್ ಶಾಸಕರು ಜನರನ್ನು ಒಟ್ಟು ಮಾಡಿ ಸಭೆಗಳಿಗೆ ಕಳುಹಿಸುತ್ತಿದ್ದರು. ಕೆಲವರು ಬಸ್ ವ್ಯವಸ್ಥೆ ಮಾಡಿದ್ದರು. ಹಲವೆಡೆ ಕೆ.ಎಸ್.ಆರ್.ಟಿ.ಸಿಗೆ ಬೃಹತ್ ಮೊತ್ತದ ದುಡ್ಡು ಕಟ್ಟಿ ಬಸ್ ಗಳನ್ನು ಬಾಡಿಗೆಗೆ ತಂದವರು ಸತೀಶ್ ಜಾರಕಿಹೊಳಿ ಬಳಗSiddu-2. ಆಗ ಜಾರಕಿಹೊಳಿ ಸಿದ್ದರಾಮಯ್ಯ ಜೊತೆ ಗುರುತಿಸಿಕೊಂಡು ದಳ ತೊರೆದಿದ್ದರು. ರಾಜ್ಯದ ನಾನಾ ಕಡೆ ಸಮಾವೇಶಗಳು ಯಶಸ್ವಿಯಾಗಿ ನಡೆಯಲು ನೂರಾರು ಜನರ ಶ್ರಮವಿತ್ತು. ಅವರಲ್ಲಿ ಅನೇಕರಿಗೆ ಸಿದ್ದರಾಮಯ್ಯ ಮುಂದೆ ಮುಖ್ಯಮಂತ್ರಿಯಾಗುತ್ತಾರೆ ಎಂಬ ಯೋಚನೆ ಇದ್ದಿರಬಹುದು, ಆದರೆ ಅವರು ಅಧಿಕಾರಕ್ಕೆ ಬಂದರೆ, ನಾವೊಂದಿಷ್ಟು ಲಾಭ ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರ ಇದ್ದದ್ದಂತೂ ಕೆಲವೇ ಕೆಲವರಿಗೆ.

ಕಾಲ ಉರುಳಿತು. ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದರು. ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆ ಜಿದ್ದಾಜಿದ್ದಿನ ಕಣ. ಸಿದ್ದರಾಮಯ್ಯನವರಿಗೆ ಬಹುಶಃ ಇನ್ನೂ ನೆನಪಿರಬಹುದು, ನಾಡಿನ ಮೂಲೆ ಮೂಲೆಯಿಂದ ಅವರ ಬಗ್ಗೆ ಒಲವು, ಅಭಿಮಾನ ಇಟ್ಟುಕೊಂಡಿದ್ದ ನೂರಾರು ಮಂದಿ ತಮ್ಮ ಕೈಲಾದಷ್ಟು ಹಣವನ್ನು ಸ್ನೇಹಿತರ ಮೂಲಕ ಅವರ ಗೆಲುವಿಗೆ ಕಳುಹಿಸಿದರು. ಒಂದು ಸಾವಿರದಿಂದ ಐದು ಸಾವಿರ ರೂಗಳ ವರೆಗೆ ಕೊಟ್ಟವರ ಸಂಖ್ಯೆ ದೊಡ್ಡದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ಹೊತ್ತಿಗೆ ಅವರಲ್ಲಿ ಕೆಲವರು ಅಸುನೀಗಿರಬಹುದು. ಅವರಲ್ಲಿ ಬಹುಪಾಲು ಮಂದಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದರಿಂದ ವೈಯಕ್ತಿಕವಾಗಿ ಯಾವ ಲಾಭವೂ ಬೇಕಿರಲಿಲ್ಲ. ಅವರಲ್ಲಿ ಬಹುತೇಕರು ಕುರುಬರೇ ಇರಬಹುದು, ಆದರೆ ಜಾತಿ ಒಂದೇ ಕಾರಣಕ್ಕೆ ಅಭಿಮಾನ ಇರಲಿಲ್ಲ. (ಜಾತಿ ಮಾತ್ರ ಕಾರಣಕ್ಕೆ ಅಭಿಮಾನ ಪಡುವುದಾಗಿದ್ದರೆ, ಕೆ.ಎಸ್. ಈಶ್ವರಪ್ಪ ಉಪಮುಖ್ಯಮಂತ್ರಿಯಾದಾಗ ಆ ಸಮುದಾಯ ಸಂಭ್ರಮಿಸಬೇಕಿತ್ತು. ಅಥವಾ ಮತ್ತೊಬ್ಬ ನಾಯಕ ಸಿಕ್ಕ ಎಂದು ಖುಷಿಪಡ ಬಹುದಿತ್ತು. ಹಾಗೇನೂ ಕಾಣಲಿಲ್ಲ). ಸಿದ್ದರಾಮಯ್ಯನವರನ್ನು ಜಾತಿ ಹೊರತಾಗಿ ಇಷ್ಟ ಪಡುವ ಒಂದು ದೊಡ್ಡ ವರ್ಗವಿತ್ತು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಮೊದಲ ದಿನಗಳಲ್ಲಿ ಅವರು ಬೆಂಗಳೂರ ಹೊರಗೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾಗ ಅಕ್ಕ ಪಕ್ಕದಲ್ಲಿ ಎಚ್.ಎಂ.ರೇವಣ್ಣ ನಂತಹವರು ಕಾಣುತ್ತಿದ್ದರು. ಸಭೆಯಲ್ಲಿ ಹಾಜರಿದ್ದ ಜನ, ರೇವಣ್ಣನೂ ಅವರದೇ ಜಾತಿಯವರಲ್ಲವೇ, ಅದಕ್ಕೆ ಯಾವಾಗಲೂ ಜೊತೆಯಲ್ಲೇ ಇರ್ತಾರೆ ಎಂದು ಮಾತನಾಡಿಕೊಂಡರು. ಆದರೆ, ಅದೇ ಊರುಗಳಿಗೆ ಕೆಲ ತಿಂಗಳುಗಳ ನಂತರ ಸಿಎಂ ಭೇಟಿ ಕೊಟ್ಟಾಗ, ರೇವಣ್ಣ ಇರುತ್ತಿರಲಿಲ್ಲ. ಆ ಸ್ಥಾನದಲ್ಲಿ ಕಾಣುತ್ತಿದ್ದ ಮುಖ ಭೈರತಿ ಬಸವರಾಜು. ಅವರು ವಿದಾನಸಭೆ ಸದಸ್ಯ. ಅವರ ಸೋದರ ಸಂಬಂಧಿ ಭೈರತಿ ಸುರೇಶ್ ವಿಧಾನ ಪರಿಷತ್ ಸದಸ್ಯ. ಕಾಂಗ್ರೆಸ್ ನ ಕೆಲ ಸದಸ್ಯರು ಪಕ್ಷದ ನಿರ್ದೇಶನದ ವಿರುದ್ಧ ಮತ ನೀಡಿ, ಅರ್ಥಾತ್ ಹಣಕ್ಕೆ ತಮ್ಮ ಮತ ಮಾರಿಕೊಂಡು, ಆತನನ್ನು ಗೆಲ್ಲಿಸಿದ್ದರು. ಹೆಬ್ಬಾಳ್ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು ಭೈರತಿ ಸುರೇಶ್ ರನ್ನು. ರೇವಣ್ಣ ಬಹಳ ಕಾಲ ಜನರ ಮಧ್ಯೆ ಇದ್ದು ರಾಜಕಾರಣ ಮಾಡಿಕೊಂಡು ಬಂದವರು. ಆದರೆ ಭೈರತಿಯವರ ವ್ಯವಹಾರ ರಿಯಲ್ ಎಸ್ಟೇಟ್. ಹಣವಂತರು ಅಧಿಕಾರಕ್ಕೆ ಹಾತೊರೆದು ರಾಜಕಾರಣಕ್ಕೆ ಬಂದರೆ ಆಗುವ ಅನಾಹುತಗಳು ಅನೇಕ.

ಹೀಗೆ ಹೊಸ ಮುಖಗಳ ಪ್ರವೇಶದ ಪರಿಣಾಮವೇ ಕೈಗೆ ದುಬಾರಿ ಬೆಲೆಯ ವಾಚ್ ಬಂತು. ಕಣ್ಣು ತಂಪಾಗಿಸಲು ಲಕ್ಷಗಟ್ಟಲೆ ಬೆಲೆ ಬಾಳುವ ಗ್ಲಾಸ್ ಬೇಕಾಯ್ತು. (ಪಾಪ ಇವರ ಅಹಿಂದ ಸಮಾವೇಶಗಳಿಗೆ ದುಡ್ಡು ಹೊಂದಿಸಿಕೊಟ್ಟು ಸಾಮಾಜಿಕ ನ್ಯಾಯದ ಹರಿಕಾರ ಮುಖ್ಯಮಂತ್ರಿಯಾಗಲಿ ಎಂದು ಆಶಿಸಿದ್ದ ಸತೀಶ್ ಜಾರಕಿಹೊಳಿ, ಬುದ್ಧ ಹಾಗೂ ಅಂಬೇಡ್ಕರ್ ಭಾವಚಿತ್ರಗಳನ್ನು ಇಟ್ಟುಕೊಂಡು ಸಾಮಾಜಿಕ ಜಾಗೃತಿ ಪ್ರಯತ್ನಿಸುತ್ತಿದ್ದಾರೆ. ಸ್ಮಶಾನದಲ್ಲಿ ಮಲಗುವ ಮೂಲಕ ಮೂಢನಂಬಿಕೆಗಳನ್ನು ತೊಡೆದು ಹಾಕಲು ತಮ್ಮ ಮಿತಿಯೊಳಗೇ ಪ್ರಯತ್ನಿಸುತ್ತಿದ್ದಾರೆ.) ಕೆಲ ಕಾಲದ ವರೆಗೆ ಇದೆಲ್ಲವೂ ಕೇವಲ ಗಾಳಿಸುದ್ದಿಯಾಗಿಯೇ ಇದ್ದವು. ಆದರೆ, ಜನ ಅಸಹ್ಯ ಪಡುವ ಹಂತಕ್ಕೆ ಹೋಗಲು ಕಾರಣ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಗಳಿಗೆ ಉತ್ತರಿಸಿದ ರೀತಿ, ಮತ್ತು ಹಾಗೆ ಉತ್ತರಿಸುವಾಗ ಹಿಂದೆ ನಿಂತು ಗಹಗಹಿಸಿದರಲ್ಲ ಅವರು ಇಡೀ ಪ್ರಕರಣದಲ್ಲಿ ಮುಖ್ಯಮಂತ್ರಿಯನ್ನು ಖಳನಾಯಕನನ್ನಾಗಿಸಿದರು.

“ನನಗೆ ಈ ವಾಚ್ ಐದು ಲಕ್ಷ ರೂಪಾಯಿ ಕೊಡಿಸಿರಪ್ಪಾ ಸಾಕು…ಈ ಕನ್ನಡಕಕ್ಕೆ 50,000 ರೂ ಕೊಡಿಸಿ ಸಾಕು” – ಅದನ್ನು ಭಾರೀ ಚಾಲಾಕಿನ ಉತ್ತರ ಅಂದುಕೊಂಡಿರಾ ಸಿದ್ದರಾಮಯ್ಯ? ನಿಮ್ಮ ಹಿಂದೆ ನಿಂತವರು ನಿರ್ಲಜ್ಜರಾಗಿ ನಕ್ಕಿರಬಹುದು, ಆದರೆ ಜನರು ನಿಮ್ಮ ಉತ್ತರದ ಧಾಟಿಯನ್ನು ಅದೇ ರೀತಿ ಸ್ವೀಕರಿಸಲಿಲ್ಲ. “ಇವನಿಗ್ಯಾಕೆ ಬೇಕಿತ್ತು ಇಂತಹ ಶೋಕಿ? ಅದೂ 60-70 ಲಕ್ಷ ರೂಪಾಯಿದ್ದಂತೆ..ವಾಚ್..ವಜ್ರದ ಹರಳು ಇದ್ದಾವಂತೆ” – ಇದು ಸಾಮಾನ್ಯ ಜನರು ಇಡೀ ಪ್ರಕರಣವನ್ನು ನೋಡುವ ಬಗೆ. ಜನರ ಭಾವನೆ ಹೇಗಿರಬಹುದು ಎಂದು ಒಂದಿಷ್ಟೂ ಊಹಿಸದೆ, ನೀವು ಹಾಗೆ ಪ್ರತಿಕ್ರಿಯೆ ಕೊಟ್ಟಿರಲ್ಲ, ಅಷ್ಟು ಸಾಕು ನೀವು ಜನ ಸಾಮಾನ್ಯರನ್ನು ಭೇಟಿಯಾಗಿ, ಅವರೊಂದಿಗೆ ಮಾತನಾಡಿ ಎಷ್ಟೋ ದಿನಗಳಾದವು ಎಂದು ತಿಳಿಯುತ್ತದೆ.

ನೀವು ಹೇಳಿದಂತೆ, ಆ ಗಡಿಯಾರದ ಬೆಲೆ ಐದು ಲಕ್ಷ ರೂಪಾಯಿಗಳೇ ಇರಲಿ. ಆದರೆ, ಜನರು ತಮ್ಮ ಮುಖ್ಯಮಂತ್ರಿ ಸರಳವಾಗಿರಬೇಕೆಂದು ಬಯಸುತ್ತಾರೆ. ತ್ರಿಪುರ ಮುಖ್ಯಮಂತ್ರಿ ಬಗ್ಗೆ ನಮ್ಮ ಜನರಿಗೆ ಗೊತ್ತಿರುವುದು ಅವರ ಸರಳತೆ. ಮೊನ್ನೆ ಮೊನ್ನೆ ತೀರಿಕೊಂಡ ಎ.ಬಿ.ಬರ್ಧನ್ ಜೀವನ ಪೂರ್ತಿ ಸಂಪಾದಿಸಿದ್ದು ಒಂದು ಟ್ರಂಕ್ ಮತ್ತು ಹಾಸಿಗೆ. ಅಂತಹ ಸರಳತೆಯನ್ನು ಜನತೆ ಎಲ್ಲರಿಂದ ನಿರೀಕ್ಷಿಸುವುದಿಲ್ಲ. ನಾಳೆ ದಿನ ಯಾರಾದರೂ ಮೀಡಿಯಾ ಮುಂದೆ ನಿಂತು ಆರ್.ವಿ.ದೇಶಪಾಂಡೆ ಕೈಯಲ್ಲಿರುವ ಉಂಗುರದ ಬೆಲೆ ಒಂದು ಕೋಟಿ ಎಂದರೂ, ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅಥವಾ ಡಿ.ಕೆ.ಶಿವಕುಮಾರ್ ಹತ್ರ ಕೋಟಿ ಬೆಲೆ ಬಾಳುವ ಕಾರು ಇದೆ ಎಂದರೆ, ಯಾರೂ ಮನಸ್ಸಿಗೆ ಬೇಸರ ಮಾಡಿಕೊಳ್ಳಲ್ಲ. ಆದರೆ, ನೀವೀಗ ಎಂತಹ ಮಟ್ಟಕ್ಕೆ ಇಳಿದು ಬಿಟ್ಟೀದಿರೆಂದರೆ, ಯಾವುದೇ ಪತ್ರಿಕೆ ನಿಮ್ಮ ಒಂದು ಜೊತೆ ಶೂ ಬೆಲೆ ಒಂದೂವರೆ ಲಕ್ಷ ರೂಪಾಯಿ ಎಂದರೆ ನಂಬಿ ಬಿಡುತ್ತಾರೆ. “ಓಹ್..ಇರಬಹುದು. ಅಂತಹವು ಮೂರ್ನಾಲ್ಕು ಜೊತೆ ಇರಬಹುದು. ಒಂದೇ ಇಟ್ಟುಕೊಂಡರೆ, ಅದನ್ನೇ ದಿನಾSiddu-1ಲೂ ಹಾಕೋಕೆ ಆಗುತ್ತಾ” ಎಂದು ತೀರ್ಮಾನಕ್ಕೆ ಬರುತ್ತಿದ್ದಾರೆ.

ಅಷ್ಟೇ ಅಲ್ಲ, ಕುಮಾರಸ್ವಾಮಿ ಇದು ಕದ್ದ ವಾಚ್ ಎಂದು ಆರೋಪಿಸಿದಾಗ, ಜನರು “ಹೌದು..ಇರಲೂ ಬಹುದು” ಎಂದು ಸಂಶಯಿಸುತ್ತಿದ್ದಾರೆ. ಏಕೆಂದರೆ, ಅವರು ವಾಚ್ ಬಗ್ಗೆ ಕೊಟ್ಟ ಸಮಜಾಯಿಷಿ ಜನ ಸಾಮಾನ್ಯರಲ್ಲಿ ಸಮಾಧಾನ ತಂದಿಲ್ಲ. ಒಂದಿಷ್ಟು ತಿಂಗಳುಗಳ ಹಿಂದೆ, ಮೈಸೂರು ಬಳಿ ಪೊಲೀಸರೇ ಭಾಗಿಯಾಗಿದ್ದ ಕಳ್ಳತನವನ್ನು ಜನರು ಮರೆತಿಲ್ಲ. ಭಾಗಿಯಾಗಿದ್ದ ಸಣ್ಣ ಪುಟ್ಟ ಅಧಿಕಾರಿಗಳು ಶಿಕ್ಷೆ ಅನುಭವಿಸುತ್ತಿದ್ದಾರೆ, ಆದರೆ ಹಿರಿಯ ಅಧಿಕಾರಿ ಆರಾಮಾಗಿದ್ದಾರೆ. ಕ್ಷುಲ್ಲಕ ಘಟನೆಯಂತೆ ಆರಂಭವಾದ ಪ್ರಕರಣ ದಿನೇ ದಿನೇ ವಿಸ್ತಾರವಾಗುತ್ತಿದೆ. ಇದಕ್ಕೆಲ್ಲಾ ಕಾರಣ, ಸ್ವತಃ ಮುಖ್ಯಮಂತ್ರಿ ಹಾಗೂ ಅವರ ಸುತ್ತಲಿನವರು. ಮಕ್ಕಳು ದುಶ್ಚಟ ಕಲಿತರೆ ಸಹವಾಸ ದೋಷ ಎನ್ನಬಹುದು ಆದರೆ, ವ್ಯಕ್ತಿ ಭ್ರಷ್ಟನಾಗಲು, ಶೋಕಿಲಾಲನಾಗಲು ಸಹವಾಸ ಕಾರಣ ಅಲ್ಲ, ವಾಂಛೆ ಹಾಗೂ ದುರಾಸೆಗಳು ಕಾರಣ.

ಮುಖ್ಯಮಂತ್ರಿಯ ವಾಚ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ, ಸಿದ್ದರಾಮಯ್ಯನನ್ನು ಇದುವರೆಗೆ ಬೆಂಬಲಿಸಿಕೊಂಡು ಬಂದವರ ದನಿ ಬಂದ್ ಆದಂತಿದೆ. ತಮಗೂ, ಈ ಘಟನೆಗೂ ಸಂಬಂಧವೇ ಇಲ್ಲವೆಂಬಂತೆ ಮೌನವಾಗಿದ್ದಾರೆ. ಹಾಗಂತ, ಅವರಾರಿಗೂ ಈ ಪ್ರಕರಣ ಕಾರಣ ಸಿದ್ದರಾಮಯ್ಯನವರ ಬಗ್ಗೆ ಸಿಟ್ಟು, ಬೇಸರ ಬಂದಿಲ್ಲ ಎಂದಲ್ಲ. ಕೆಲವರು ತಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ವ್ಯಕ್ತ ಪಡಿಸುವ ಗೋಜಿಗೆ ಹೋಗದಿರಬಹುದು, ಅಥವಾ ಕೆಲ ಆತ್ಮೀಯರು ಖಾಸಗಿಯಾಗಿ ಮುಖ್ಯಮಂತ್ರಿಯೊಂದಿಗೆ ತಮ್ಮ ಸಿಟ್ಟು ವ್ಯಕ್ತಪಡಿಸಿರಬಹುದು. ಆದರೆ, ಅಷ್ಟು ಸಾಲದು. ಮುಂದೊಂದು ದಿನ, ಪಾಪಪ್ರಜ್ಞೆ ಕಾಡದೇ ಇರಲು ಈಗ ಮಾತನಾಡಬೇಕು. ಸಮಾಜದಲ್ಲಿ ಒಳ್ಳೆಯವರ ಸಂಖ್ಯೆ ಹೆಚ್ಚಿದೆ. ಅವರು ಹೆಚ್ಚೆಚ್ಚು ಮಾತನಾಡಬೇಕು.

ರೋಹಿತ್ ಸಾವು: ಸಾಲು ಸಾಲು ಅಪರಾಧಿಗಳು!

-ಶಿವರಾಂ

ಪ್ರತಿಯೊಬ್ಬರೂ ಹುಟ್ಟೂ ಆಕಸ್ಮಿಕ. ಆದರೆ ‘ತನ್ನ ಹುಟ್ಟು ಮಾರಣಾಂತಿಕ ಅವಘಡ’ ಎಂದು ಬರೆದಿಟ್ಟು ನೇಣು ಹಾಕಿಕೊಂಡ ರೋಹಿತ್ ವೇಮುಲ ಮಾತ್ರ ಭಾರತದ ಪ್ರಜ್ಞೆಯನ್ನು ಬಹುವಾಗಿ ಬಹಳ ಕಾಲ ಕಾಡುತ್ತಾನೆ. ಜಾತಿಯ ಅಹಂ ಮತ್ತು ಅಸ್ಪೃಶ್ಯತೆಯನ್ನು ಪೋಷಿಸುವ ರಾಜಕಾರಣ ರೋಹಿತ್ ನನ್ನು ನೇಣಿಗೆ ಏರಿಸಿ, ತಮ್ಮದೇನೂ ತಪ್ಪೇ ಇಲ್ಲದಂತೆ ಬೀಗುತ್ತಿವೆ. ದೇಶದ ಕಾನೂನಿನಲ್ಲಿ ಮರಣ ದಂಡನೆಯಂತಹ ಘೋರ ಶಿಕ್ಷೆ ಇರಬಾರದು ಎಂದು ಪ್ರತಿಭಟಿಸಿದ್ದ ವೇಮುಲ ಈಗ ತಾನೇrohit-2 ನೇಣಿನ ಕುಣಿಕೆಗೆ ತಲೆ ಒಡ್ಡಿದ. ತನ್ನ ಸುತ್ತಲ ವ್ಯವಸ್ಥೆಯ ತಪ್ಪಿಗೆ, ತನಗೆ ತಾನೇ ಶಿಕ್ಷೆ ವಿಧಿಸಿಕೊಂಡ.
ಕಳೆದ ಡಿಸೆಂಬರ್ 16 ರಂದು ವಿಶ್ವವಿದ್ಯಾನಿಲಯ ರೋಹಿತ್ ಸೇರಿದಂತೆ ಐವರನ್ನು ಹಾಸ್ಟೆಲ್ನಿಂದ ಉಚ್ಚಾಟನೆ ಮಾಡಿತು. ಪ್ರತಿಭಾನ್ವಿತ ವಿದ್ಯಾರ್ಥಿಯಾದ ರೋಹಿತ್ ಮತ್ತು ಗೆಳೆಯರು ವಿದ್ಯಾರ್ಥಿ ವೇತನ ಪಡೆದು ಸಂಶೋಧನೆಗೆಂದು ವಿ.ವಿಗೆ ಬಂದವರು. ಅವರಿಗೆ ಬೇರೆ ಆದಾಯದ ಮೂಲಗಳಿರುವುದಿಲ್ಲ. ಅಂತಹವರಿಗೆ ಇರಲು ಜಾಗ ಕೊಡದೆ, ಹೊರಗೆ ನೂಕುವುದು ಘೋರ. ಅವರ ಮೇಲಿರುವ ಆರೋಪ (ಸುಳ್ಳು) ಗಳ ಕಾರಣಕ್ಕೆ ಪೊಲೀಸರು ಬಂಧಿಸಿದ್ದರೂ, ಆತನಿಗೆ ಅನ್ನ, ಆಶ್ರಯಕ್ಕೆ ತೊಂದರೆ ಮಾಡುತ್ತಿರಲಿಲ್ಲ. ಆದರೆ ಶಿಕ್ಷಣ ಪಡೆಯಲು ಸೇರಿಕೊಂಡಿದ್ದ ಸಂಸ್ಥೆಯೇ ಅವರನ್ನು ಹೊರಹಾಕಿತು. ನಿರ್ಧಾರವನ್ನು ಪ್ರತಿಭಟಿಸಿ ಉಪವಾಸ ಕುಂತರೂ, ಕುಲಪತಿಗೆ ಕರುಣೆ ಬಾರಲಿಲ್ಲ.
ವಿಶ್ವವಿದ್ಯಾನಿಲಯ ಈ ವಿದ್ಯಾರ್ಥಿಗಳ ಪ್ರವೇಶ ನಿರ್ಬಂಧಿಸಿದ್ದು – ಸಾಮಾಜಿಕವಾಗಿ ಇತರರೊಂದಿಗೆ ಬೆರೆಯಬಹುದಾದ ಎಲ್ಲಾ ಪ್ರದೇಶಗಳಿಗೆ. (ಹಾಸನ ಜಿಲ್ಲೆಯ ಸಿಗರನಹಳ್ಳಿ ಗ್ರಾಮದಲ್ಲಿ ದಲಿತರಿಗೆ ವಿಧಿಸಲಾಗಿರುವ ಸಾrohit-1ಮಾಜಿಕ ಬಹಿಷ್ಕಾರಕ್ಕೂ, ಈ ವಿ.ವಿ. ನಿರ್ಧಾರಕ್ಕೂ ಏನಾದರೂ ವ್ಯತ್ಯಾಸ ಇದೆಯೆ?) ಇತರರೊಂದಿಗೆ ಮಾತನಾಡಲು ಕನಿಷ್ಟ ಅವಕಾಶಗಳಿರುವ ತರಗತಿ ಹಾಗೂ ಲೈಬ್ರರಿಗೆ ಮಾತ್ರ ಪ್ರವೇಶ ಅವಕಾಶ ಇತ್ತು. ಮೇಲಾಗಿ, ವಿದ್ಯಾರ್ಥಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಇಂತಹ ನಿರ್ಧಾರಕ್ಕೆ ಇದ್ದ ಮೂಲ ಕಾರಣವಾದರೂ ಏನು – ತಮ್ಮನ್ನು ಗೂಂಡಾಗಳು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದ ಎಬಿವಿಪಿ ಹುಡುಗರ ಮೇಲೆ ಹಲ್ಲೆ ಮಾಡಿದರು ಎಂಬ ಆರೋಪ. ವಿಚಿತ್ರ ಎಂದರೆ, ಅಂತಹದೊಂದು ‘ಹಲ್ಲೆ’ ಗೆ ಒಳಗಾದ ವಿದ್ಯಾರ್ಥಿಯ ಮೇಲೆ ಯಾವುದೇ ಗಾಯದ ಕುರುಹುಗಳಿಲ್ಲ ಎಂದು ಪರೀಕ್ಷಿಸಿದ ವೈದ್ಯರು ವರದಿ ನೀಡಿದ್ದರು. ಅದೇ ವರದಿ ಆಧರಿಸಿ ವಿ.ವಿ ನೇಮಿಸಿದ್ದ ಮೊದಲ ಸಮಿತಿ ತನ್ನ ನಿರ್ಧಾರ ತಿಳಿಸಿತ್ತು.

 
ಆದರೆ, ತನಗೆ ಒಪ್ಪಿತವಾಗದ ವರದಿಯನ್ನು ವಿ.ವಿ ತಿರಸ್ಕರಿಸಿ ಮತ್ತೊಂದು ವ್ಯತಿರಿಕ್ತ ವರದಿಗೆಂದೇ ಇನ್ನೊಮ್ಮೆ ಇನ್ನೊಂದು ಸಮಿತಿ ನೇಮಿಸಿ ತನಿಖೆಗೆ ಆದೇಶಿಸಿತು. ಕುಲಪತಿ ಅಪ್ಪಾರಾವ್ ಹೇಳುತ್ತಾರೆ, ಮೊದಲಿನದ್ದು ಮಧ್ಯಂತರ ವರದಿಯಂತೆ, ಎರಡನೆಯದು ಅಂತಿಮ ಅಂತೆ. ಮೊದಲನೆಯ ವರದಿ ಮಧ್ಯಂತರ ಆಗಿದ್ದರೆ, ಆರೋಪ ಹೊತ್ತಿರುವ ಹುಡುಗರ ಮೇಲೆ ಯಾವುದೇ ಶಿಕ್ಷೆಯ ಕ್ರಮಗಳು ಬೇಡ ಎಂದೇಕೆ ಶಿಫಾರಸ್ಸು ಮಾಡುತ್ತಿದ್ದರು? ಹೀಗೆ ದಿಕ್ಕುತಪ್ಪಿಸುವ ಹೇಳಿಕೆಗಳನ್ನು ನೀಡಿ, ತಮ್ಮ ತಪ್ಪುಗಳನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ ಕುಲಪತಿ. ಸನ್ನಿವೇಶ ಎಷ್ಟು ಕ್ರೂರವಾಗಿದೆ ಎಂದರೆ, ಈಗಲೂ ಕುಲಪತಿ ಹುಡುಗರ ಜೊತೆ ಮಾತುಕತೆಗೆ ಮುಂದಾಗಿಲ್ಲ, ಮೃತನ ಕುಟುಂಬದವರ ಜೊತೆ ಸಾಂತ್ವನದ ಮಾತುಗಳನ್ನಾಡಿಲ್ಲ. ಹುಡುಗರ ಉಪವಾಸ, ಪ್ರತಿಭಟನೆಗಳಿಗೆ ಬೆಲೆ ಇಲ್ಲವೆ?

 
ಭಾರತದ ಪ್ರತಿಷ್ಟಿತ ವೈದ್ಯಕೀಯ ಸಂಸ್ಥೆಯಲ್ಲಿ ದಲಿತ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ನಂತರ ಸುಖದೇವ್ ತೋರಟ್ ಅಧ್ಯಯನ ನಡೆಸಿ (2007ರಲ್ಲಿ) ವರದಿ ಸಲ್ಲಿಸಿದ್ದರು. ಅವರ ಶಿಫಾರಸ್ಸಿನ ಪ್ರಮುಖ ಅಂಶಗಳು, ಶಿಕ್ಷಣ ಸಂಸ್ಥೆಗಳಲ್ಲಿ ಅಸ್ಪೃಶ್ಯತೆ, ಶೋಷಣೆ ತಡೆಯಲು ಸೂಕ್ತ ಕಾನೂನಿನ ಅಗತ್ಯ ಇದೆ, ಸದ್ಯ ಚಾಲ್ತಿಯಲ್ಲಿರುವ ಎಸ್ಸಿ-ಎrohit-3ಸ್ಟಿ ಕಾಯ್ದೆ ಈ ವಿಚಾರದಲ್ಲಿ ಪರಿಣಾಮಕಾರಿಯಾಗಿಲ್ಲ ಎನ್ನುವುದು ಅವರ ಅನಿಸಿಕೆ. ಹಾಗೇ ಶಿಕ್ಷಣ ಸಂಸ್ಥೆಯ ಎಲ್ಲಾ ಆಯಕಟ್ಟಿನ ಸ್ಥಾನಗಳಲ್ಲಿ ನಿಮ್ನ ವರ್ಗದ ಪ್ರತಿನಿಧಿಗಳಿಗೆ ಸೂಕ್ತ ಅವಕಾಶ ಬೇಕು. ಜೊತೆಗೆ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಒಳಗೊಳ್ಳುವಂತೆ ಸಿವಿಕ್ ಎಜುಕೇಶನ್ ನೀಡುವುದು ಅಗತ್ಯ. ಜಾತಿ, ವರ್ಣ, ಲಿಂಗ, ವರ್ಗ ಆಧಾರಿತ ತಾರತಮ್ಯಗಳ ಬಗ್ಗೆ ಸೂಕ್ತ ತಿಳವಳಿಕೆ ನೀಡುವುದರಿಂದ ವಿದ್ಯಾರ್ಥಿ ಸಮೂಹ ಸಮಾನತೆಯನ್ನು ಬಯಸುತ್ತಾ ಎಲ್ಲರನ್ನೂ ಒಂದೇ ರೀತಿ ನೋಡವ ಮನೋಭಾವ ಬೆಳೆಸಲು ಈ ಕ್ರಮ ಅಗತ್ಯವಾಗಿತ್ತು.

 

ಆದರೆ, ಈ ಯಾವ ಶಿಫಾರಸ್ಸುಗಳ ಬಗೆಯೂ ಸರಕಾರಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿಲ್ಲ. ಆ ಕಾರಣ ಅಂಬೇಡ್ಕರ್ ಅಥವಾ ಪೆರಿಯಾರ್ ಹೆಸರಿಟ್ಟುಕೊಂಡು ಚಟುವಟಿಕೆ ನಡೆಸುವವರನ್ನೆಲ್ಲಾ ದೇಶದ್ರೋಹಿಗಳೆಂದು ಕೆಲವರು ದೂರುತ್ತಾರೆ, ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಈ ಹುಡುಗರ ಮೇಲೆ ಕ್ರಮ ಜರುಗಿಸಲೆಂದು ಪದೇ ಪದೇ ಪತ್ರ ಬರೆದೂ, ತನ್ನದೇನೂ ಪಾತ್ರವಿಲ್ಲ ಎನ್ನುತ್ತಾರೆ. ಆದರೆ ರೋಹಿತ್ ಮಾತ್ರ ಯಾರನ್ನೂ ದೂಷಿಸಬೇಡಿ ಎಂದು ಸಾವಿಗೆ ಶರಣಾಗಿದ್ದಾನೆ. ಅವನ ಸಾವಿಗೆ ಯಾರನ್ನೇ ಆಗಲಿ ದೂಷಿಸಿ, ಇಂದಿನ ಕಾನೂನಿನಡಿ ‘ಆತ್ಮಹತ್ಯೆಗೆ ಪ್ರಚೋದನೆ’ ಎಂದು ತೀರ್ಪು ಪಡೆಯುವುದು ದೀರ್ಘದ ಪ್ರಕ್ರಿಯೆ ಇರಬಹದುದು. ಆದರೆ ಒಂದಂತೂ ಸತ್ಯ, ಆತನನ್ನು ಸಾವಿಗೆ ದೂಡಿದ್ದು, ಈ ದೇಶ, ವ್ಯವಸ್ಥೆ, ಶಿಕ್ಷಣ, ಮಧ್ಯಮ ವರ್ಗದ ಮೀಸಲಾತಿ-ವಿರೋಧಿ, ದಲಿತ-ವಿರೋಧಿ ಆಲೋಚನೆ ಹಾಗೂ ಎಲ್ಲಡೆ ಹೇರಳವಾಗಿ ಹಬ್ಬುತ್ತಿರುವ ‘ಮೇಲ್ವರ್ಗ ಕೇಂದ್ರಿತ ರಾಜಕಾರಣ’.