Category Archives: ಚಿದಂಬರ ಬೈಕಂಪಾಡಿ

ಕಾವೇರಿ ಸೆರಗಿನ ಮರೆಯಲ್ಲಿ ರಾಜಕೀಯ


-ಚಿದಂಬರ ಬೈಕಂಪಾಡಿ


 

ಕಾವೇರಿ ಮತ್ತೆ ಸುದ್ದಿಯಾಗಿದ್ದಾಳೆ. ಕಾವೇರಿ ಕನ್ನಡಿಗರ ಜೀವಸೆಲೆ. ಕಾವೇರಿಯೇ ರಾಜ್ಯದ 40ಕ್ಕೂ ಹೆಚ್ಚು ತಾಲೂಕುಗಳ ಜನ, ಜಾನುವಾರುಗಳಿಗೆ ಆಸರೆ. ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಮೈಸೂರು, ಮಂಡ್ಯ, ಚಾಮರಾಜನಗರದ ಮೂಲಕ ಹಾದು ತಮಿಳುನಾಡು, ಕೇರಳ, ಪಾಂಡಿಚೇರಿಯಿಂದ ಸಮುದ್ರ ಸೇರುವ ಕಾವೇರಿ ಸಾಗುವ ಹಾದಿಯುದ್ದಕ್ಕೂ ಸಮೃದ್ಧವಾದ ಬೆಳೆ, ಅತಿಸುಂದರ ಧರೆ; ಈಕೆ ವಸುಂಧರೆ.

ಕಾವೇರಿಯಿಂದ ತನಗೆ ನೀರು ಹರಿಸಬೇಕೆಂದು ತಮಿಳುನಾಡು ಹಕ್ಕೊತ್ತಾಯ ಮಂಡಿಸುವುದು, ನೀರು ಬಿಡಲು ಸಾಧ್ಯವಿಲ್ಲವೆಂದು ಕರ್ನಾಟಕ ವಾದಿಸುವುದು, ಎರಡೂ ರಾಜ್ಯಗಳು ಸುಪ್ರೀಂಕೋರ್ಟ್ ಬಾಗಿಲು ಬಡಿಯುವುದು, ಪ್ರಧಾನಿಯ ಅಧ್ಯಕ್ಷತೆಯಲ್ಲಿ ನೀರಿನ ವಿವಾದಕ್ಕೆ ಸಭೆ ಸೇರುವುದು, ಅಲ್ಲಿಂದ ಬರುವ ನಿರ್ದೇಶನ, ಆದೇಶಗಳನ್ನು ಪಾಲಿಸುವುದು ಅಥವಾ ಪುನರ್‌ಪರಿಶೀಲಿಸಲು ಮನವಿ ಮಾಡುವುದು; ಇಂಥ ವರಸೆಗಳು ಇನ್ನೂ ಎಷ್ಟು ವರ್ಷಗಳ ಕಾಲ ಈ ನಾಡಿನ ಜನರನ್ನು ಕಾಡಲಿವೆ ಎನ್ನುವುದು ಊಹೆಗೂ ನಿಲುಕದ ಪ್ರಶ್ನೆಗಳು. ಬ್ರಿಟೀಷರ ಕಾಲದಿಂದ ಆರಂಭವಾದ ಕಾವೇರಿ ನೀರಿನ ವಿವಾದ ದೇಶ ಸ್ವಾತಂತ್ರ್ಯ ಗಳಿಸಿ, ಮೈಸೂರು ಕರ್ನಾಟಕವಾದರೂ ಬಗೆ ಹರಿದಿಲ್ಲ ಎನ್ನುವುದು ಶೋಚನೀಯ.

ಕಾವೇರಿ ನದಿ ನೀರಿನ ವಿವಾದ ಈ ನದಿ ಇರುವಷ್ಟು ಕಾಲವೂ ಇದ್ದೇ ಇರುತ್ತದೆ ಎನ್ನುವುದಂತು ಕಟು ಸತ್ಯ. ಈ ನದಿ ನೀರಿನ ಇತಿಹಾಸವನ್ನು ಅವಲೋಕಿಸಿದರೆ ಎರಡು ಪ್ರಮುಖ ಅಂಶಗಳು ಮನದಟ್ಟಾಗುತ್ತವೆ. ತಮಿಳುನಾಡು ಮತ್ತು ಕರ್ನಾಟಕ ಈ ಎರಡೂ ರಾಜ್ಯಗಳ ಜನರಿಗೆ ಈ ವಿವಾದ ಕೊನೆಯಾಗಬೇಕು ಎನ್ನುವ ಹಂಬಲವಿರುವುದು ಮತ್ತು ರಾಜಕೀಯ ಕಾರಣಗಳಿಗಾಗಿ ಈ ವಿವಾದ ಜೀವಂತವಿರಬೇಕು ಎನ್ನುವುದು.

ಜನರು ಈ ವಿವಾದಕ್ಕೆ ತೆರೆ ಬೀಳಬೇಕು ಎನ್ನುವುದಕ್ಕೆ ಬಲವಾದ ಕಾರಣವೆಂದರೆ ಕಾವೇರಿಯನ್ನೇ ನಂಬಿರುವುದು, ಈ ನೀರನ್ನೇ ಆಧರಿಸಿ ಭತ್ತ, ಕಬ್ಬು ಸಹಿತ ಕೃಷಿ ಚಟುವಟಿಕೆ ಮಾಡುತ್ತಿರುವುದು ಅಥವಾ ತುತ್ತು ಅನ್ನ ತಿನ್ನುತ್ತಿರುವುದು ಮತ್ತು ದಾಹ ತೀರಿಸಿಕೊಳ್ಳುತ್ತಿರುವುದು. ಅನ್ನ ಬೇಯಿಸಲು ಒಲೆ ಹೊತ್ತಿಸಿ ಅಕ್ಕಿ ಹೊಂದಿಸಿಕೊಂಡ ಮೇಲೆ ನೀರಿಗಾಗಿ ಬಿಂದಿಗೆ ಹಿಡಿದು ಬಾವಿಗೆ ಹೋಗುವಂಥ ಸ್ಥಿತಿಯಲ್ಲೇ ಮೂರು ತಲೆಮಾರುಗಳನ್ನು ಕಳೆದಿದ್ದಾರೆ ಕಾವೇರಿ ನದಿಪಾತ್ರದ ಜನರು. ಇವರಿಗೆ ಬಹುಬೇಗ ಈ ವಿವಾದ ಕೊನೆಯಾಗಲೇಬೇಕೆಂಬ ತುಡಿತವಿದೆ.

ರಾಜಕಾರಣಿಗಳಿಗೆ ಈ ವಿವಾದ ಬಗೆಹರಿದರೆ ತಮ್ಮ ಭಾಗದ ಜನರು ಈ ನದಿಯೊಂದಿಗೆ ಹೊಂದಿರುವ ಭಾವನಾತ್ಮಕ ಸಂಬಂಧಗಳ ಭಾವನೆಕಳೆದುಕೊಳ್ಳುತ್ತವೆ. ಆಗ ಅದು ಒಂದು ನದಿಯಾಗಿ ಮಾತ್ರ ಅವರ ಮನಸ್ಸಿನಲ್ಲಿ ಉಳಿದುಬಿಡುತ್ತದೆ. ಹೀಗಾದರೆ ಐದುವರ್ಷಕ್ಕೊಮ್ಮೆ ಬರುವ ಚುನಾವಣೆಯಲ್ಲಿ ಭಾಷಣಕ್ಕೆ ವಿಷಯವೂ ಇಲ್ಲ, ಹೋರಾಟಕ್ಕೆ ಕಾರಣವೂ ಇಲ್ಲದಂತಾಗುತ್ತದೆ.

ನಿಜಕ್ಕೂ ನಾಚಿಕೆಗೇಡು ಅನ್ನಿಸುತ್ತದೆ ಈ ವಿವಾದ ಮತ್ತೆ ಮತ್ತೆ ಜನರನ್ನು ಬೀದಿಗಿಳಿಸುತ್ತಿರುವುದಕ್ಕೆ. ನದಿನೀರಿಗಿಳಿದು ಜಲಸತ್ಯಾಗ್ರಹ ಮಾಡುತ್ತಾರೆ. ನೀರು ಹರಿಯುವ ತೂಬಿನ ಕೆಳಗೆ ಮಲಗಿ ರಾತ್ರಿ ಕಳೆಯುತ್ತಾರೆ ಜನ. ಬೆಂಗಳೂರು, ದೆಹಲಿಯಲ್ಲಿ ನದಿ ವಿವಾದ ಬಗೆಹರಿಸಲು ಸಭೆ ನಡೆಸಿದವರು ರಾತ್ರಿ ತಮ್ಮ ತಮ್ಮ ಬಂಗ್ಲೆಗಳಲ್ಲಿ ಹಾಯಾಗಿ ನಿದ್ದೆ ಮಾಡುತ್ತಾರೆ. ಕಾವೇರಿ ರಾತೋರಾತ್ರಿ ಹರಿದುಹೋಗಿರುತ್ತಾಳೆ. ಹಗಲು ಹೊತ್ತು ಜನ ಬೀದಿಗಿಳಿದು ಬಸ್ಸು, ಕಾರು, ಸೈಕಲ್‌ಗಳನ್ನು ತಡೆದು ರಸ್ತೆ ಬಂದ್ ಮಾಡುತ್ತಾರೆ. ಧರಣಿ, ಮೆರವಣಿಗೆ ಮಾಡಿ ಪೊಲೀಸರಿಂದ ಒದೆ ತಿಂದು ಮನೆ ಸೇರುತ್ತಾರೆ. ಇಷ್ಟೇ ಅಲ್ಲವೇ ಕಾವೇರಿ ವಿವಾದದಿಂದ ಹಳ್ಳಿಗಳಲ್ಲಿ ಆಗುತ್ತಿರುವುದು, ಇದಕ್ಕಿಂತ ಬೇರೇನು ಆಗುತ್ತಿದೆ?

ಕಾವೇರಿ ನೀರಿಗಾಗಿ ಹೋರಾಟ ಎನ್ನುವುದು ನಿಮ್ಮ ನಿಮ್ಮ ಮನೆಯಲ್ಲಿ ಮಕ್ಕಳ ಹುಟ್ಟು ಹಬ್ಬ ಆಚರಿಸುವ ವಾರ್ಷಿಕ ಘಟನೆಯಂತೆ. ಈ ನೆಪದಲ್ಲಾದರೂ ಬಂಧು ಬಳಗ ಒಂದು ದಿನ ಸೇರುವಂತೆ ಕಾವೇರಿ ಹೋರಾಟದ ಹೆಸರಲ್ಲಿ ಒಂದಷ್ಟು ಜನ ಬೀದಿಗಿಳಿಯುತ್ತಾರೆ ಅಥವಾ ರಾಜಕಾರಣಿಗಳು ಬೀದಿಗಿಳಿಸುತಾರೆ.

ರಾಜಕಾರಣಿಗಳು ಜನರ ಭಾವನೆಗಳನ್ನು ಕೋರ್ಟ್, ಪ್ರಾಧಿಕಾರದ ಮುಂದೆ ಇಟ್ಟು ವಾದ ಮಂಡಿಸುತ್ತಾರೆ ಹೊರತು ವಾಸ್ತವಿಕೆ ನೆಲೆಗಟ್ಟಿನಲ್ಲಿ ನದಿಯಲ್ಲಿ ಹರಿವು, ಅಣೆಕಟ್ಟೆಗಳಲ್ಲಿ ಸಂಗ್ರಹವಾಗುವ ಪ್ರಮಾಣ, ವಾಸ್ತವ ಬೇಡಿಕೆ ಇಂಥ ಅಂಕಿಅಂಶಗಳನ್ನು ಮುಂದಿಟ್ಟುಕೊಂಡು ವಾದ ಮಂಡಿಸುತ್ತಿಲ್ಲ. ಕೋರ್ಟ್, ಪ್ರಾಧಿಕಾರ ಜನರ ಭಾವನೆಗಳ ಆಧಾರದಲ್ಲಿ ತೀರ್ಮಾನ ಕೊಡಲಾಗುವುದಿಲ್ಲ. ಆಧಾರ, ಪುರಾವೆಗಳನ್ನು ಕಣ್ಣಮುಂದಿಟ್ಟುಕೊಂಡು ಯಾರಿಗೆ ಎಷ್ಟು ನೀರು ಎನ್ನುವುದನ್ನು ತೀರ್ಮಾನಿಸಬೇಕಾಗುತ್ತದೆ. ಯಾವ ರಾಜ್ಯ ತನ್ನ ವಾದಕ್ಕೆ ಪುರಾವೆ ಒದಗಿಸುತ್ತದೋ ಅದರ ಪರವಾಗಿ ಮಧ್ಯಂತರ ತೀರ್ಪು ಹೊರಬೀಳುತ್ತಿದೆಯೇ ಹೊರತು ಅಂತಿಮ ತೀರ್ಮಾನ ಕೊಡಲು ಸಾಧ್ಯವಾಗುತ್ತಿಲ್ಲ.

ಕಾವೇರಿ ನದಿ ವಿವಾದದ ಹಿನ್ನೆಲೆಯಲ್ಲಿ ನಡೆದ ಸರ್ವಪಕ್ಷ ಸಭೆಯ ತೀರ್ಮಾನವನ್ನು ವಿಶ್ಲೇಷಿಸಿದರೆ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ಮನದಟ್ಟಾಗಿಬಿಡುತ್ತದೆ. ಆಡಳಿತಪಕ್ಷ, ಪ್ರತಿಪಕ್ಷಗಳು ಇಲ್ಲೂ ತಮ್ಮ ಅಜೆಂಡಾವನ್ನು ಮುಂದಿಟ್ಟುಕೊಂಡೇ ಕೆಲಸ ಮಾಡಿರುವುದು ಸ್ಪಷ್ಟವಾಗುತ್ತದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕಾವೇರಿ ನೀರಿನ ವಿವಾದ ಜೀವಂತವಾಗಿದೆ ಹೊರತು ಅನ್ಯಕಾರಣಗಳಿಂದಲ್ಲ. ಕಾವೇರಿ ನೀರು ಹರಿಸಿದರೆ ರಾಜೀನಾಮೆ ಕೊಡುತ್ತೇವೆ ಎಂದು ರಾಜಕಾರಣಿಗಳು ಹೇಳುವುದು ಜನರ ಭಾವನೆಗಳನ್ನು ಹಿಡಿಟ್ಟುಕೊಂಡು ಚಲಾವಣೆಯಲ್ಲಿರಲು ಹೊರತು ಆ ರಾಜೀನಾಮೆಯಿಂದ ಕಾವೇರಿ ನೀರು ಹರಿಯುವುದು ನಿಲ್ಲುತ್ತದೆಯೇ?

ಕಾವೇರಿ ನದಿಯ ಪುರಾಣ ಕತೆಯಲ್ಲಿ ಅಗಸ್ತ್ಯ ಮುನಿ ಲೋಪಮುದ್ರೆಯನ್ನು ಮದುವೆಯಾಗುತ್ತಾನೆ. ತನ್ನನ್ನು ಕಾಯಿಸಬಾರದು ಎನ್ನುವ ಆಕೆಯ ಕೋರಿಕೆಗೆ ಮುನಿಯೂ ಸಮ್ಮತಿಸಿರುತ್ತಾನೆ. ಆದರೆ ಮುನಿ ಶಿಷ್ಯರಿಗೆ ಪಾಠಮಾಡುವುದರಲ್ಲಿ ತಲ್ಲೀನನಾಗಿ ಲೋಪಮುದ್ರೆಯನ್ನು ಮರೆತು ತಡವಾಗಿ ಹೋದಾಗ ಆಕೆ ತಾಳ್ಮೆಕಳೆದುಕೊಂಡು ಕಾವೇರಿ ನದಿಯಾಗಿ ಹರಿದುಹೋಗುತ್ತಿರುತ್ತಾಳೆ. ಆಗ ಮುನಿಯಿಂದಲೂ ಆಕೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುವುದಿಲ್ಲ. ಆದ್ದರಿಂದ ಅಗಸ್ತ್ಯ ಮುನಿಗೇ ಕಾಯದ ಕಾವೇರಿ ರಾಜಕಾರಣಿಗಳನ್ನು ಕಾಯುತ್ತಾಳೆಯೇ? ಅವರ ರಾಜೀನಾಮೆಗೆ ಬೆದರುಳುತ್ತಾಳೆಯೇ?

ಕೇವಲ ರಾಜಕೀಯ ಕಾರಣಗಳಿಗಾಗಿ ಕಾವೇರಿ ನದಿ ವಿವಾದವನ್ನು ಬಗೆಹರಿಸದೆ ಜೀವಂತವಾಗಿಡುವ ಮೂಲಕ ಎರಡೂ ರಾಜ್ಯಗಳ ಜನರ ನಡುವೆ ದ್ವೇಷ ಹುಟ್ಟು ಹಾಕುವಂಥ ಕಾಯಕವನ್ನು ಜನರೇ ಅರ್ಥಮಾಡಿಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯಗಳ ನಡುವೆ ಹೊಂದಾಣಿಕೆ ಕೊರತೆಯೂ ಕೂಡಾ ಈ ವಿವಾದ ಬಗೆಹರಿಯದಿರಲು ಕಾರಣವಾಗಿದೆ. ಎರಡೂ ರಾಜ್ಯಗಳು ರಾಜಕೀಯವನ್ನು ಬದಿಗಿಟ್ಟು ವಾಸ್ತವಿಕೆ ನೆಲೆಗಟ್ಟಿನಲ್ಲಿ ಚರ್ಚಿಸಿ ವಿವಾದಕ್ಕೆ ತೆರೆ ಎಳೆಯಬೇಕೇ ಹೊರತು ಕೋರ್ಟು, ಪ್ರಾಧಿಕಾರ ಎನ್ನುವ ಪ್ರಕ್ರಿಯೆಗಳು ಈ ವಿವಾದವನ್ನು ಇತ್ಯರ್ಥಪಡಿಸುವುದಿಲ್ಲ.

ಯಡಿಯೂರಪ್ಪ, ಇತಿಹಾಸ ಅವಲೋಕಿಸಿದರೆ ಭವಿಷ್ಯ ನಿರ್ಧರಿಸಬಹುದು


-ಚಿದಂಬರ ಬೈಕಂಪಾಡಿ


ರಾಜಕೀಯದಲ್ಲಿ ಅಧಿಕಾರ ಕಳೆದುಕೊಂಡರೆ ನೀರಿನಿಂದ ಹೊರ ತೆಗೆದ ಮೀನಿನಂಥ ಪರಿಸ್ಥಿತಿ. ಚಡಪಡಿಕೆ, ಹತಾಶೆ, ಸಿಟ್ಟು, ಸೆಡವು ಹೀಗೆ ಏನೇನೋ. ಅಧಿಕಾರಕ್ಕಿರುವ ಗುಣವೇ ಅಂಥದ್ದು, ಒಂಥರಾ ಅಮಲಿನಂತೆ. ಬಿಜೆಪಿಯಲ್ಲಿ ಮಾಜಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರದ್ದೂ ಸ್ಥಿತಿ ಇದಕ್ಕಿಂತೇನೂ ಭಿನ್ನವಲ್ಲ. ಹಾಗೆಂದು ಅದನ್ನು ಆಕ್ಷೇಪಿಸುವ ಧ್ವನಿಯೂ ಇದಲ್ಲ. ಅವರವರ ನೋವು, ಹತಾಶೆಗಳನ್ನು ಮತ್ತೊಬ್ಬರು ಕೇವಲವಾಗಿ ಕಾಣುವುದು ಸಹಜವಾದರೂ ಇಲ್ಲಿ ಆ ಉದ್ದೇಶವಲ್ಲ.

ಯಡಿಯೂರಪ್ಪ ಪಕ್ಷ ಬಿಟ್ಟು ಹೋಗಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನುವುದು ಮಾಧ್ಯಮಗಳ ಕಾಮೆಂಟರಿ. ಇಂಥ ಕಾಮೆಂಟರಿಗಳಿಗೆ ಕಾರಣವಾಗುವವರು ಅವರ ಬೆಂಬಲಿಗರು ಮತ್ತು ಅದನ್ನು ಆಂತರಿಕವಾಗಿ ಅನುಭವಿಸುತ್ತಿರುತ್ತಾರೆ ಎನ್ನುವುದೂ ಸುಳ್ಳಲ್ಲ. ಆದರೆ ಯಡಿಯೂರಪ್ಪ ನೇರ ನುಡಿಯುವವರಾದರೂ ಪಕ್ಷ ತೊರೆಯುವ ಬಗ್ಗೆ ನೇರವಾಗಿ ಎಲ್ಲೂ ಹೇಳುವುದಿಲ್ಲ, ಆದರೆ ಪಕ್ಷ ತೊರೆಯುವ ಸುಳಿವುಗಳನ್ನು ಕೊಡುತ್ತಾರೆ. ಅದು ಅವರ ರಾಜಕೀಯ ಬುದ್ಧಿವಂತಿಕೆ.

ಬಿಜೆಪಿ ಸುಸಜ್ಜಿತವಾದ ಕಚೇರಿ ಹೊಂದಿದ್ದರೂ ಯಡಿಯೂರಪ್ಪ ತಮ್ಮದೇ ಆದ ಸಾರ್ವಜನಿಕ ಸಂಪರ್ಕ ಕಚೇರಿ ತೆರೆದಿದ್ದಾರೆ. ಅದು ಅವರ ವೈಯಕ್ತಿಕ ಸಾರ್ವಜನಿಕ ಸಂಪರ್ಕಕ್ಕೆ ಎನ್ನುವ ಸಮಜಾಯಿಷಿಯನ್ನೂ ಕೊಟ್ಟಿದ್ದಾರೆ. ಈಗಲೂ ಆ ಕಚೇರಿ ಮೂಲಕವೇ ತಮ್ಮ ರಾಜಕೀಯ ನಡೆಗಳನ್ನು ನಿರ್ಧರಿಸುತ್ತಿದ್ದಾರೆ. ನಿತ್ಯವೂ ಈ ಕಚೇರಿಯ ಮೇಲೆ ಮಾಧ್ಯಮಗಳ ಕಣ್ಣು. ಅಲ್ಲಿಗೆ ಯಾರು ಬರುತ್ತಾರೆ, ಯಾರು ಹೋಗುತ್ತಾರೆ, ಯಾವ ಸಭೆ ನಡೆಯುತ್ತದೆ, ಯಾರನ್ನು ಯಡಿಯೂರಪ್ಪ ಭೇಟಿ ಮಾಡುತ್ತಾರೆ ಇತ್ಯಾದಿ ಚಟುವಟಿಕೆಗಳನ್ನು ಮಾಧ್ಯಮಗಳು ಮತ್ತು ಅವರ ವಿರೋಧಿಗಳು ಕಣ್ಣಲ್ಲಿಕಣ್ಣಿಟ್ಟು ನೋಡುತ್ತಿರುತ್ತಾರೆ. ಅಂದರೆ ಯಡಿಯೂರಪ್ಪ ಕರ್ನಾಟಕದ ಬಿಜೆಪಿಗೆ ಟ್ರಂಪ್ ಕಾರ್ಡ್ ಇದ್ದಂತೆ, ಆದ್ದರಿಂದಲೇ ಇಷ್ಟೊಂದು ಮಹತ್ವ.

ಯಡಿಯೂರಪ್ಪ ಅವರ ರಾಜಕೀಯ ನಡೆಗಳನ್ನು ಗಮನಿಸಿದವರಿಗೆ ಅವರು ಉಪ ಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಈಗ ಮಾಜಿ ಮುಖ್ಯಮಂತ್ರಿಯಾದ ಮೇಲೆ ಪ್ರತಿಯೊಂದು ಹಂತದಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವುದನ್ನು ಅರ್ಥಮಾಡಿ ಕೊಳ್ಳಬಹುದು.

ಉಪಮುಖ್ಯಮಂತ್ರಿಯಾಗಿದ್ದಾಗಲೂ ಅವರು ಬಹಳ ಕಾಲ ಅಧಿಕಾರಕ್ಕೆ ಒಗ್ಗಿಕೊಳ್ಳುವುದು ಕಷ್ಟವಾಗಿತ್ತು, ಸರ್ಕಾರದ ವಿರುದ್ಧವೇ ಸಿಡಿದು ಪ್ರತಿಪಕ್ಷಗಳ ನಾಯಕರಂತೆ ನಡೆದುಕೊಳ್ಳುತ್ತಿದ್ದರು. ಮುಖ್ಯಮಂತ್ರಿಯಾದಾಗಲೂ ಆವೇಶಕ್ಕೆ ಒಳಗಾಗಿ ಮಾತನಾಡಿ ಪ್ರತಿಪಕ್ಷದ ನಾಯಕರಂತೆ ಗುರುತಿಸಿಕೊಳ್ಳುತ್ತಿದ್ದರು. ಇದಕ್ಕೆ ಮುಖ್ಯ ಕಾರಣ ಯಡಿಯೂರಪ್ಪ ಮೂರು ದಶಕಗಳ ಕಾಲ ಆಡಳಿತ ವ್ಯವಸ್ಥೆಯ ವಿರುದ್ಧ ಮಾಡಿಕೊಂಡು ಬಂದ ಹೋರಾಟ. ಆ ಹೋರಾಟದ ಗುಂಗಿನಿಂದ ಹೊರಬರುವುದು ಈಗಲೂ ಅವರಿಗೆ ಸಾಧ್ಯವಾಗಿಲ್ಲ.

ಕರ್ನಾಟಕದಲ್ಲಿ ಬಿಜೆಪಿಗೆ ಈಗಲೂ ಯಡಿಯೂರಪ್ಪ ಅನಿವಾರ್ಯ ಪಕ್ಷವನ್ನು ಅಧಿಕಾರದ ದಡಮುಟ್ಟಿಸಲು. ಅವರಿಗಿರುವ ಪಕ್ಷ ಸಂಘಟನೆಯ ಸಾಮರ್ಥ್ಯ ಮತ್ತು ತಂತ್ರಗಾರಿಕೆ ಬಿಜೆಪಿಯ ಕರ್ನಾಟಕ ಘಟಕದಲ್ಲಿ ಇನ್ನೂ ಅನೇಕರಿಗಿದೆಯಾದರೂ ಅದು ಭಿನ್ನನೆಲೆಯಲ್ಲಿದೆ ಹೊರತು ತಳಮಟ್ಟದಲ್ಲಿಲ್ಲ. ಜಾತಿಯ ಬಲವಿಲ್ಲದೆಯೇ ರಾಜಕೀಯದಲ್ಲಿ ಬೆಳೆದಿರುವ ಯಡಿಯೂರಪ್ಪ ಈಗ ಜಾತಿಯ ತೆಕ್ಕೆಗೆ ವಾಲುತ್ತಿದ್ದಾರೆ ಅನ್ನಿಸುತ್ತಿರುವುದು ವಾಸ್ತವ ಮತ್ತು ಬೇರೆ ಕಾರಣಗಳಿಗಾಗಿ. ಯಡಿಯೂರಪ್ಪ ಅವರ ಸಾಮರ್ಥ್ಯವನ್ನು ಹೈಕಮಾಂಡ್ ಕೂಡಾ ಚೆನ್ನಾಗಿ ಅರಿತಿದೆ, ಈ ಕಾರಣಕಾಗಿಯೇ ಅವರು ಹೈಕಮಾಂಡ್ ವಿರುದ್ಧ ಅದೆಷ್ಟೇ ಗುಟುರು ಹಾಕಿದರೂ ಸಹಿಸಿಕೊಂಡಿದೆ. ಇದು ಹೈಕಮಾಂಡ್‌ನ ದುರಂತವೇ ಹೊರತು ಯಡಿಯೂರಪ್ಪ ಅವರ ಹತಾಶೆಯಷ್ಟೇ ಅಲ್ಲ. ಪ್ರಸ್ತುತ ರಾಜಕೀಯ ಸ್ಥಿತಿಯಲ್ಲಿ ಯಡಿಯೂರಪ್ಪ ಅವರಿಲ್ಲದ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಸಾಧ್ಯವಿಲ್ಲವೆಂದು ನಿಯತಕಾಲಿಕದ ಸರ್ವೇ ವರದಿಯನ್ನೇ ಆಧರಿಸಿ ಹೇಳಬೇಕಾಗಿರಲಿಲ್ಲ,  ಬಿಜೆಪಿಯ ಹೈಕಮಾಂಡ್‌ನ ಯಾರೇ ಕರ್ನಾಟಕದಲ್ಲಿ ಒಂದು ಸುತ್ತು ಹೊಡೆದರೆ ತಾಜಾ ವರದಿ ಸಿಕ್ಕಿಬಿಡುತ್ತದೆ. ಹೈಕಮಾಂಡ್ ಯಡಿಯೂರಪ್ಪ ಅವರು ಈ ಸ್ಥಿತಿಗೆ ತಲುಪಲು ಕಾರಣವೇ ಹೊರತು ಅನ್ಯರನ್ನು ಹೆಸರಿಸುವುದು ಅಥವಾ ಯಡಿಯೂರಪ್ಪ ಅವರನ್ನು ದೂಷಿಸುವುದು ಈ ಹಂತದಲ್ಲಿ ಸರಿಯಲ್ಲ.

ನೀವು ಕರ್ನಾಟಕದ ರಾಜಕೀಯ ಇತಿಹಾಸವನ್ನು ಹಿಂದಕ್ಕೆ ತಿರುಗಿ ನೋಡಿದರೆ ಯಡಿಯೂರಪ್ಪ ಅವರಂಥ ಅನೇಕ ಮಂದಿಯ ಮುಖಗಳು ಅನಾವರಣಗೊಳ್ಳುತ್ತವೆ. ಹಿಂದುಳಿದ ವರ್ಗದ ಚಾಂಪಿಯನ್ ಡಿ.ದೇವರಾಜ ಅರಸು, ಜನರಿಂದಲೇ ನಾಯಕರಾಗಿ ಬೆಳೆದ ಎಸ್.ಬಂಗಾರಪ್ಪ, ರಾಜಕೀಯ ತಂತ್ರಗಾರಿಕೆಯಲ್ಲಿ ದೇಶದಲ್ಲೇ ನಿಪುಣರೆನಿಸಿಕೊಂಡಿದ್ದ ರಾಮಕೃಷ್ಣ ಹೆಗಡೆ ಈ ಮೂರೇ ಮಂದಿಯನ್ನು ವಿಶ್ಲೇಷಣೆ ಮಾಡಿದರೆ ಸಾಕು ಯಡಿಯೂರಪ್ಪ ಅವರೂ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ ಅನ್ನಿಸಲು.

ದೇವರಾಜ ಅರಸು ಇಂದಿರಾಗಾಂಧಿಯವರ ನೆರಳಾಗಿದ್ದವರು. ಕರ್ನಾಟಕದಲ್ಲಿ ಅವರು ಜಾರಿಗೆ ತಂದ ಸುಧಾರಣಾ ಕ್ರಮಗಳು ಇಂದಿಗೂ ಹಿಂದುಳಿದವರು ಸ್ಮರಿಸಲು ಕಾರಣವಾಗಿದೆ. ಜನಪ್ರಿಯತೆ ಮತ್ತು ಅಧಿಕಾರ ತನ್ನ ನಾಯಕಿ ಇಂದಿರಾ ಅವರನ್ನೇ ಎದುರು ಹಾಕಿಕೊಳ್ಳುವಂತೆ ಮಾಡಿತು. ಹಿಂದುಳಿದವರು ಹಾಡಿಹೊಗಳಿದ ಕಾರಣದಿಂದಲೂ, ತನ್ನ ಬೆನ್ನ ಹಿಂದೆ ಜನ ಇರುತ್ತಾರೆ ಎನ್ನುವ ಭ್ರಮೆಯಿಂದಲೋ ಕಾಂಗ್ರೆಸ್ ಪಕ್ಷವನ್ನೇ ಇಬ್ಭಾಗ ಮಾಡಿದರು. ಕಾಂಗ್ರೆಸ್-ಯು (ಅರಸು ಕಾಂಗ್ರೆಸ್) ಸ್ಥಾಪಿಸಿದರು. ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧವೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು. ಆದರೆ ಜನ ಅರಸು ಅವರನ್ನು ರಾಜಕೀಯವಾಗಿ ಬೆಂಬಲಿಸಲಿಲ್ಲ, ಇಂದಿರಾ ಅವರ ಬೆನ್ನಿಗೆ ನಿಂತರು. ಅಂದು ಅರಸು ಕಾಂಗ್ರೆಸ್ ಪರವಿದ್ದವರೆಲ್ಲರೂ ಇಂದಿರಾ ಗಾಂಧಿ ಅವರ ನೆರಳಾಗಿದ್ದವರು ಮಾತ್ರವಲ್ಲ ಟಿ.ಎ.ಪೈ ಅವರಂಥ ಮೇಧಾವಿ ಕೂಡಾ ಇಂದಿರಾರನ್ನು ತೊರೆದು ಅರಸು ಬೆಂಬಲಕ್ಕೆ ನಿಂತು ಚುನಾವಣೆಯಲ್ಲಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡರು. ಹಾಗಾದರೆ ಅರಸು ಅವರನ್ನು ಆರಾಧಿಸುತ್ತಿದ್ದ ಜನರು ಚುನಾವಣೆಯಲ್ಲಿ ಕೈಬಿಟ್ಟರೇಕೆ, ಇಂದಿರಾ ಕೈ ಹಿಡಿದರೇಕೆ?

ಎಸ್.ಬಂಗಾರಪ್ಪ ಜನನಾಯಕ ಎನ್ನುವುದರಲ್ಲಿ ಅನುಮಾನಗಳಿಲ್ಲ. ಸ್ವಂತ ಪಕ್ಷ ಕಟ್ಟಿದರು. ಮೊದಲ ಯತ್ನದಲ್ಲಿ ಅರ್ಧ ಯಶಸ್ಸು ಸಾಧಿಸಿದ್ದರಾದರೂ ರಾಮಕೃಷ್ಣ ಹೆಗಡೆಯವರ ಚಾಣಕ್ಯ ರಾಜಕೀಯ ನಡೆಯಿಂದಾಗಿ ಹಿನ್ನಡೆ ಅನುಭವಿಸಿದರು. ಮತ್ತೆ ಕಾಂಗ್ರೆಸ್ ಸೇರಿದರು, ಮುಖ್ಯಮಂತ್ರಿಯಾದರು. ಹೊರಬರುವ ಅನಿವಾರ್ಯತೆ ಎದುರಾದಾಗ ಕಾಂಗ್ರೆಸ್ ವಿರುದ್ಧ ಸೆಟೆದುನಿಂತು ನರಸಿಂಹರಾವ್ ಅವರನ್ನು ಹಾವು, ಚೇಳು ಅಂತೆಲ್ಲಾ ಹೀಯಾಳಿಸಿದ್ದರು. ರಾಜಕೀಯ ನಪುಂಸಕರೆಂದು ತಮ್ಮನ್ನು ಬೆಂಬಲಿಸದೆ ಕಾಂಗ್ರೆಸ್ ಜೊತೆ ಗುರುತಿಸಿಕೊಂಡವರನ್ನು ತೆಗಳಿದರು. ಒಬ್ಬ ರಾಜಕೀಯ ನಾಯಕನಾಗಿ ಬಂಗಾರಪ್ಪ ಅವರನ್ನು ಜನ ಮೆಚ್ಚಿಕೊಂಡರೇ ಹೊರತು ಅವರನ್ನು ಒಂದು ಪಕ್ಷ ಸ್ಥಾಪಕರಾಗಿ ಒಪ್ಪಿಕೊಳ್ಳಲಿಲ್ಲ.

ರಾಮಕೃಷ್ಣ ಹೆಗಡೆ ಮತ್ತು ವೀರೇಂದ್ರ ಪಾಟೀಲ್ ರಾಜಕೀಯದಲ್ಲಿ `ಲವಕುಶ’ ರೆನಿಸಿಕೊಂಡವರು. ಕರ್ನಾಟಕದಲ್ಲಿ ಗುಂಡೂರಾವ್ ಸರ್ಕಾರ ಪತನವಾಗಿ ಜನತಾಪಕ್ಷ, ಬಂಗಾರಪ್ಪ ಅವರ ಕ್ರಾಂತಿರಂಗ ಜೊತೆಯಾಗಿ ಕಾಂಗ್ರೆಸೇತರ ಸರ್ಕಾರ ರಚನೆಗೆ ಯತ್ನಿಸಿದಾಗ ಮಣಿಪಾಲದ ಐಷಾರಾಮಿ ಹೊಟೇಲಲ್ಲಿ ವಾಸ್ತವ್ಯವಿದ್ದ ರಾಮಕೃಷ್ಣ ಹೆಗಡೆ ಸಂಧಾನಕಾರರಾಗಿ ನಿಯೋಜಿತರಾದವರು ತಾವೇ ಆ ಸರ್ಕಾರ ನಡೆಸುವ ಸಾರಥಿಯಾದರು. ಅಂಥ ಚಾಣಕ್ಯ ರಾಜಕಾರಣಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದವರು. ಅವರ ರಾಜಕೀಯ ಬದುಕು ಕೂಡಾ ದುರಂತಮಯವಾಯಿತು.

ಕರ್ನಾಟಕಕ್ಕೆ ಈ ಮೂರೂ ವ್ಯಕ್ತಿಗಳ ಕೊಡುಗೆ ಅಪಾರ. ಅವರ ರಾಜಕೀಯ ಚಿಂತನೆಗಳೂ ಕೂಡಾ ಅನುಕರಣೀಯವೇ. ಆದರೂ ಜನ ಮಾತ್ರ ಅವರನ್ನು ಪಕ್ಷದಿಂದ ಹೊರಬಂದಾಗ ಒಬ್ಬ ಜನನಾಯಕನೆಂದು ಗುರುತಿಸಿ ಬೆನ್ನಿಗೆ ನಿಲ್ಲಲಿಲ್ಲ. ಅವರುಗಳು ಪಕ್ಷದ ಮುಂಚೂಣಿಯಲ್ಲಿದ್ದಾಗ ಮೆಚ್ಚಿದ್ದರು, ನಂಬಿದರು, ಬೆಂಬಲಿಸಿದರು. ಅವರೇ ಒಂದು ಪಕ್ಷ ಕಟ್ಟಿದಾಗ ಅದೇ ಜನ ಅವರನ್ನು ಬೆಂಬಲಿಸಲಿಲ್ಲ. ಇದು ರಾಜಕೀಯದ ನೀತಿ ಪಾಠ ಮತ್ತು ಜನರ ಭಾವನೆಗಳು ಹೇಗಿರುತ್ತವೆ ಎನ್ನುವುದಕ್ಕೆ ಉದಾಹರಣೆ.

ಪ್ರಸ್ತುತ ಯಡಿಯೂರಪ್ಪ ಅವರು ಬಿಜೆಪಿಗೆ ಅನಿವಾರ್ಯ. ಆದರೆ ಅವರಿಗೆ ಬಿಜೆಪಿ ಅನಿವಾರ್ಯವಲ್ಲವೆಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ ಬಿಜೆಪಿ ಅನಿವಾರ್ಯವಲ್ಲದಿರಬಹುದು ಈಗ. ಯಾಕೆಂದರೆ ಅವರು ಪಕ್ಷ ಕಟ್ಟಿದ್ದಾರೆ, ಪಕ್ಷ ಅವರಿಗೆ ಅಧಿಕಾರ ಕೊಟ್ಟಿದೆ. ಈಗ ಯಡಿಯೂರಪ್ಪ ಅವರೂ ತಮ್ಮದೇ ಆದ ಜನರನ್ನು ಹೊಂದಿದ್ದಾರೆ. ಯಡಿಯೂರಪ್ಪ ಅವರಿಗಿಂತಲೂ ಅವರ ಬೆಂಬಲಿಗರಿಗೆ ಅಧಿಕಾರದ ದಾಹ ಎಂದರೂ ತಪ್ಪಾಗಲಾರದು. ಇಂಥ ಬೆಂಬಲಿಗರ ಹೊಗಳಿಕೆಗೆ ಮನಸೋತು ಯಡಿಯೂರಪ್ಪ ಎಡವುತ್ತಾರೆಯೋ ಎನ್ನುವ ಅನುಮಾನಗಳು ಕಾಡುತ್ತಿದ್ದರೆ ತಪ್ಪಲ್ಲ. ಯಾಕೆಂದರೆ ಅದು ಮನುಷ್ಯನ ವೀಕ್ನೆಸ್. ಹೊಗಳಿಕೆಯನ್ನು ಮನಸ್ಸು ಬಹುಸುಲಭವಾಗಿ ಗುರುತಿಸುತ್ತದೆ, ತೆಗಳಿಕೆಯನ್ನು ಜೀರ್ಣಿಸಿಕೊಳ್ಳಲು ಹಿಂದೇಟು ಹಾಕುತ್ತದೆ. ಇಲ್ಲೂ ಯಡಿಯೂರಪ್ಪ ಅವರಿಗೂ ಇದೇ ಆಗುತ್ತಿದೆಯೇನೋ ಅನ್ನಿಸುತ್ತಿದೆ. ಈ ಹೊಗಳಿಕೆಗಳು ಅವರು ಪಕ್ಷದಲ್ಲಿರುವಷ್ಟು ಕಾಲ ಮಾತ್ರ. ಅರಸು ಅವರಂಥ ಧೀಮಂತ ರಾಜಕಾರಣಿ ಕೂಡಾ ತನ್ನ ಸುತ್ತಲೂ ಇರುವ ಜನರನ್ನು ನಂಬಿಯೇ ಕಾಂಗ್ರೆಸ್ ತೊರೆದು ಇಂದಿರಾ ಅವರಿಗೆ ಸೆಡ್ಡುಹೊಡೆಯಲು ಕಾರಣ. ಅದು ಕೇವಲ ಕಾಲ್ಪನಿಕ ಎನ್ನುವುದು ಅವರ ಪಕ್ಷ ಚುನಾವಣೆಯಲ್ಲಿ ಸೋತು ಸುಣ್ಣವಾದಾಗ ಅರಿವಾಯಿತೇ ಹೊರತು ಅದಕ್ಕೂ ಮೊದಲು ಅರ್ಥವಾಗಿರಲಿಲ್ಲ.

ಯಡಿಯೂರಪ್ಪ ಅವರೂ ಈಗ ಬಹುಷ ಮಾಡಬೇಕಾದ ಕೆಲಸವೆಂದರೆ ಇತಿಹಾಸವನ್ನು ಪುನರಾವಲೋಕನ ಮಾಡುವುದು. ಭೂತಕಾಲವನ್ನು ವರ್ತಮಾನದಲ್ಲಿ ನಿಂತು ನೋಡಿದರೆ ಭವಿಷ್ಯ ಗೋಚರವಾಗುತ್ತದೆ. ಅದು ಅವರ ಮುಂದಿನ ನಡೆಗೆ ದೀವಿಗೆಯಾಗುತ್ತದೆ.

ಸಿದ್ಧಾಂತ ಮತ್ತು ವ್ಯಕ್ತಿ ನಡುವೆ ಬಿಜೆಪಿ ತೊಳಲಾಟ


-ಚಿದಂಬರ ಬೈಕಂಪಾಡಿ


ಇದು ಎರಡು ಅತ್ಯಂತ ಮುಖ್ಯ ವಿಷಯಗಳ ನಡುವಿನ ಆಯ್ಕೆ, ಸಿದ್ಧಾಂತ ಮತ್ತು ವ್ಯಕ್ತಿ. ಸಿದ್ಧಾಂತ ಅನಿವಾರ್ಯವೋ, ವ್ಯಕ್ತಿ ಅನಿವಾರ್ಯವೋ? ಸಿದ್ಧಾಂತವನ್ನು ರೂಪಿಸುವವನು ವ್ಯಕ್ತಿ. ಸಿದ್ಧಾಂತವನ್ನು ಅನುಷ್ಠಾನ ಮಾಡುವವನು ವ್ಯಕ್ತಿ. ಇವೆರಡರಲ್ಲಿ ಯಾವುದು ಮುಖ್ಯ? ಎರಡೂ ಮುಖ್ಯ ಎನ್ನುವ ಉತ್ತರ ಸಹಜವಾದರೂ ಆಯ್ಕೆ ಮಾಡಬೇಕಾಗಿರುವುದು ಒಂದನ್ನು ಮಾತ್ರ.

ನಿಜಕ್ಕೂ ಇಂಥ ಸಂದರ್ಭದಲ್ಲಿ ಆಯ್ಕೆ ಅಷ್ಟು ಸುಲಭವಲ್ಲ, ಇದೇ ಸ್ಥಿತಿ ಈಗ ಬಿಜೆಪಿಗೆ. ಸೂರಜ್‌ಕುಂಡ್‌ನಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿಯಲ್ಲಿ ಕೂಡಾ ಈ ವಿಚಾರ ಅತ್ಯಂತ ಗಹನವಾಗಿ ಚರ್ಚೆಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ. ರಾಷ್ಟ್ರಮಟ್ಟದಲ್ಲಿ ಮತ್ತು ರಾಜ್ಯಮಟ್ಟದಲ್ಲಿ ಕೂಡಾ ಬಿಜೆಪಿಯ ಪಾಲಿಗೆ ಸಿದ್ಧಾಂತ ಮತ್ತು ವ್ಯಕ್ತಿ ನಡುವೆ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ಕಗ್ಗಂಟಾಗಿದೆ. ವಾಸ್ತವ ಸ್ಥಿತಿಯ ಹಿನ್ನೆಲೆಯಲ್ಲಿ ಬಿಜೆಪಿಯ ಇತಿಹಾಸವನ್ನು ಅವಲೋಕಿಸಿದರೆ ಇನ್ನೂ ಹೆಚ್ಚು ಸೂಕ್ಷ್ಮವಾದ ಸಂಗತಿಗಳು ಅನಾವರಣಗೊಳ್ಳುತ್ತವೆ.

ಸಂಘಪರಿವಾರ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು, ಹೀಗೆಂದು ವ್ಯಾಖ್ಯಾನಿಸಲಾಗುತ್ತದೆ. ಇದು ಅರ್ಧ ಸತ್ಯ ಈಗ. ಬಿಜೆಪಿ ಅಸ್ತಿತ್ವಕ್ಕೆ ಬರುವ ಮೊದಲು ಜನಸಂಘವನ್ನು ನೆನಪಿಸಿಕೊಂಡರೆ ಅದು ನಿಜಕ್ಕೂ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಯಾವ ಕಾಲಕ್ಕೂ ಪ್ರಸ್ತುತವಾಗುವ ತನ್ನದೇ ವ್ಯಾಪ್ತಿ ಮತ್ತು ಉದ್ದೇಶಗಳನ್ನು ಇಟ್ಟುಕೊಂಡು ಕಾರ್ಯಾಚರಿಸುತ್ತಿದ್ದ ಸಂಘಟನೆ. ಅದಕ್ಕೆ ರಾಜಕೀಯವಾದ ಮಹತ್ವಕಾಂಕ್ಷೆ ಅಂದು ಇರಲಿಲ್ಲ, ಬದಲಾಗಿ ಸಿದ್ಧಾಂತವನ್ನು ಪ್ರತಿಪಾದಿಸುವುದು ಮೂಲ ಆಶಯವಾಗಿತ್ತು. ಚುನಾವಣೆಗೆ ಸ್ಪರ್ಧಿಸುತ್ತಿದ್ದರೂ ಗೆಲುವನ್ನು ನಿರೀಕ್ಷೆ ಮಾಡುತ್ತಿರಲಿಲ್ಲ ಬದಲಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದೇ ಆದ್ಯತೆಯಾಗಿತ್ತು.

ಆದರೆ ರಾಜಕೀಯ ಆಶೋತ್ತರಗಳು ಬೆಳೆದಂತೆಲ್ಲಾ ಸಂಘಪರಿವಾರವೂ ತನ್ನ ಅಜೆಂಡಾವನ್ನು ಅನುಷ್ಠಾನಕ್ಕೆ ತರಲು ಮನಸ್ಸು ಮಾಡಿತು. ಸಿದ್ಧಾಂತವನ್ನು ಇಟ್ಟುಕೊಂಡೇ ರಾಜಕೀಯ ಶಕ್ತಿಯನ್ನು ಉದ್ಧೀಪನಗೊಳಿಸುವುದು ಅದರ ಆಶಯವಾಗಿ ಗೋಚರಿಸಿತು. ಇದಕ್ಕೆ ಕ್ರಿಯಾತ್ಮಕ ಮತ್ತು ಹೆಚ್ಚು ವ್ಯವಸ್ಥಿತವಾದ ಚೌಕಟ್ಟು ಹಾಕಿಕೊಳ್ಳಲು ಅದಕ್ಕೆ ಸಾಧ್ಯವಾಗಿರಲಿಲ್ಲ ದೇಶದಲ್ಲಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಜಾರಿಗೊಳಿಸುವ ತನಕ. ತನ್ನ ಸರ್ವಾಧಿಕಾರಕ್ಕೆ ಧಕ್ಕೆಯಾಗುತ್ತಿದೆ ಎನ್ನುವ ಆತಂಕ ಕಾಡಿದಾಗ ಇಂದಿರಾಗಾಂಧಿ ಮನಸ್ಸಿನಲ್ಲಿ ಮೂಡಿದ ತುರ್ತು ಪರಿಸ್ಥಿತಿ ಘೋಷಣೆ ಸಂಘಪರಿವಾರ ಬಯಸುತ್ತಿದ್ದ ಮತ್ತು ರಾಜಕೀಯ ಶಕ್ತಿಯಾಗಿ ಬೆಳೆಯಲು ಬೇಕಾದ ತನ್ನದೇ ಆದ ಚೌಕಟ್ಟು ಹಾಕಿಕೊಳ್ಳಲು ನೆರವಾಯಿತು ಎನ್ನುವುದನ್ನು ಮರೆಯಬಾರದು. ಸಂಘಪರಿವಾರದ ಟಿಸಿಲಾಗಿ ಬಿಜೆಪಿ ಚಿಗುರಲು ಈ ದೇಶದಲ್ಲಿ ಜನರು ಕಾರಣರು ಎನ್ನುವುದು ವಾಸ್ತವ ಸತ್ಯವಾದರೂ ಇಂದಿರಾಗಾಂಧಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದ್ದೇ ಇದು ನೀರು, ಗೊಬ್ಬರ ದೊರಕಿ ಪೊಗದಸ್ತಾಗಿ ಬೆಳೆಯಲು ಕಾರಣ ಎಂದರೆ ಅತಿಶಯೋಕ್ತಿಯಲ್ಲ. ಈ ಕಾರಣಕ್ಕಾಗಿ ಬಿಜೆಪಿ ತನ್ನ ಹುಟ್ಟುಹಬ್ಬದಂದು ಇಂದಿರಾ ಅವರ ಸ್ಮರಣೆಯನ್ನು ಮಾಡಿದರೆ ತಪ್ಪಿಲ್ಲ.

ಬಿಜೆಪಿಯ ಸಿದ್ಧಾಂತ ಸಂಘಪರಿವಾರದ ಸಿದ್ಧಾಂತದ ಪಡಿಯಚ್ಚಲ್ಲ ಅಥವಾ ಹೌದು ಎನ್ನುವುದು ಚರ್ಚೆಯ ಮತ್ತೊಂದು ಮುಖ. ಆದರೆ ಸಂಘಪರಿವಾರದ ಸಿದ್ಧಾಂತದ ತಳಹದಿಯಮೇಲೆಯೇ ಬಿಜೆಪಿ ಬೆಳೆದಿದೆ ಎನ್ನುವುದನ್ನು ಯಾರೂ ನಿರಾಕರಿಸುವಂತಿಲ್ಲ. ಸಂಘಪರಿವಾರಕ್ಕೆ ತನ್ನ ಸಿದ್ಧಾಂತವನ್ನು ಗಟ್ಟಿಗೊಳಿಸುತ್ತಾ ರಾಜಕೀಯ ಶಕ್ತಿಯಾಗಿ ಬೆಳೆಯಬೇಕೆನ್ನುವುದು ಆಶಯ. ಆದರೆ ಬಿಜೆಪಿ ಸಂಘಪರಿವಾರದ ಆಶಯವನ್ನು ಪೂರ್ಣವಾಗಿ ಅನುಷ್ಠಾನಗೊಳಿಸಲಾಗದೆ, ರಾಜಕೀಯ ಶಕ್ತಿಯಾಗಿ ಬೆಳೆಯಲು ತನ್ನದೇ ಆದ ಅಜೆಂಡಾವನ್ನು ಅನುಷ್ಠಾನಕ್ಕೆ ತರಲಾಗದೆ ತೊಳಲಾಡಿರುವುದು ಕೂಡಾ ಇತಿಹಾಸದ ಒಂದು ಭಾಗ.

ರಾಮಜನ್ಮಭೂಮಿ ವಿವಾದ ಅಥವಾ ಶ್ರೀರಾಮ ಮಂದಿರ ನಿರ್ಮಾಣ ಬಿಜೆಪಿಯ ಮೊದಲ ಆದ್ಯತೆ ಎಂದು ಒಪ್ಪಿಕೊಳ್ಳಲಾಗದು. ಒಂದು ವೇಳೆ ಇದೇ ಆಗಿದ್ದರೆ ಕೇಂದ್ರದಲ್ಲಿ ಅಧಿಕಾರವಿದ್ದಾಗ ಸಂಘಪರಿವಾರದ ಆಶಯವನ್ನು ಒಪ್ಪಿಕೊಂಡು ಅದನ್ನು ಕಾರ್ಯಗತಮಾಡುವಂಥ ದಿಟ್ಟತನವನ್ನು ತೋರಿಸುತ್ತಿತ್ತು, ಅದು ಸರಿಯೇ?, ತಪ್ಪೇ? ಎನ್ನುವುದು ಚರ್ಚೆಯ ಮತ್ತೊಂದು ಮಗ್ಗುಲು, ಇಲ್ಲಿ ಅದನ್ನು ಚರ್ಚಿಸುವುದು ಉದ್ದೇಶವಲ್ಲ. ಬಿಜೆಪಿಗೆ ಆಗಲೂ ಸಂಘಪರಿವಾರದ ಪರಿಧಿಯಲ್ಲೇ ಸಾಗುತ್ತಾ ತನ್ನದೇ ಆದ ಕ್ಯಾನ್ವಾಸ್ ರೂಪಿಸಿಕೊಳ್ಳುವುದು ಮುಖ್ಯವಾಗಿತ್ತು. ಆದ್ದರಿಂದ ಯಾರೂ ಬಿಜೆಪಿ ಸಿದ್ಧಾಂತದಿಂದ ಅರ್ಥಾತ್ ಸಂಘಪರಿವಾರದ ಸಿದ್ಧಾಂತದಿಂದ ದೂರಾವಾಗಿದೆ ಎಂದು ಭಾವಿಸಬೇಕಾಗಿಲ್ಲ ಅಥವಾ ಅದನ್ನೇ ನೆಚ್ಚಿಕೊಂಡಿದೆ ಎಂದೂ ಭ್ರಮೆಗೊಳಗಾಗುವ ಅಗತ್ಯವಿಲ್ಲ. ಸಿದ್ಧಾಂತದೊಂದಿಗೆ ರಾಜಕೀಯ ಶಕ್ತಿಯಾಗಿ ಬೆಳೆಯುವ ಮಹತ್ವಾಕಾಂಕ್ಷೆ ಇದೆ.

ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ನಿತಿನ್ ಗಡ್ಕರಿ, ಮುರಳಿಮನೋಹರ ಜೋಷಿ, ರಾಜನಾಥ್ ಸಿಂಘ್, ನರೇಂದ್ರಮೋದಿ, ಬಿ.ಎಸ್. ಯಡಿಯೂರಪ್ಪ ಅವರುಗಳೊಳಗೇ ಸಂಘಪರಿವಾರ ಮತ್ತು ಬಿಜೆಪಿ ಸಿದ್ಧಾಂತಗಳ ತಾಕಲಾಟವಿದೆ.

ಸಂಘಪರಿವಾರದ ಮನಸ್ಸುಗಳು ಅಡ್ವಾಣಿಯವರನ್ನು ಒಪ್ಪುವಂತೆ, ನರೇಂದ್ರ ಮೋದಿಯವರನ್ನು ಒಪ್ಪುವಂತೆ ನಿತಿನ್ ಗಡ್ಕರಿ ಅವರನ್ನು ಒಪ್ಪುವುದಿಲ್ಲ. ಹಾಗೆಯೇ ಬಿಜೆಪಿ ಮನಸ್ಸುಗಳು ಕೂಡಾ ಈ ನಾಯಕರುಗಳ ನಡುವೆ ವ್ಯತ್ಯಾಸಗಳನ್ನು ಗುರುತಿಸುತ್ತವೆ. ಅಟಲ್ ಬಿಹಾರಿ ವಾಜಪೇಯಿ ರಾಜಕೀಯ ಮುತ್ಸದ್ದಿಯಾದ ಕಾರಣ ಸಂಘಪರಿವಾರ ಮತ್ತು ಬಿಜೆಪಿಯ ನಡುವೆ ಸಮತೋಲನ ಕಾಪಾಡಿಕೊಂಡು ಯಶಸ್ವಿ ನಾಯಕರೆಂದು ಈಗಲೂ ಗೌರವಪಡೆಯುತ್ತಿದ್ದಾರೆ.

ಈ ಹಿನ್ನೆಲೆಯಲ್ಲೇ ಸಿದ್ಧಾಂತ ಮತ್ತು ವ್ಯಕ್ತಿ ಈ ಎರಡರ ನಡುವೆ ಆಯ್ಕೆ ಬಹುಕಷ್ಟ ಎನ್ನುವುದು. ನರೇಂದ್ರ ಮೋದಿಯವರ ಅಭಿವೃದ್ಧಿಯ ಹೆಜ್ಜೆಗಳನ್ನು ಗುಣಗಾನಮಾಡುವವರು ಅವರ ಸಿದ್ಧಾಂತವನ್ನು ಇಷ್ಟಪಡುವುದಿಲ್ಲ. ನಿತಿನ್ ಗಡ್ಕರಿಯನ್ನು ಸಂಘಪರಿವಾರ ಮೆಚ್ಚಿಕೊಂಡರೂ ಅದರ ಭಾಗವೇ ಆಗಿರುವ ಅಡ್ವಾಣಿಯವರು ಯಾಕೆ ಮೆಚ್ಚುತ್ತಿಲ್ಲ?, ಮೋದಿಯನ್ನು ಯಾಕೆ ಬೆಂಬಲಿಸುತ್ತಿಲ್ಲ?, ಇಲ್ಲೇ ತಾಕಲಾಟವಿರುವುದು.

ಸಂಘಪರಿವಾರದ ಮೂಲಕವೇ ಬೆಳೆದು ಬಂದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಈಗಿನ ನಡೆಗಳಲ್ಲಿ ಯಾವ ಸಿದ್ಧಾಂತವನ್ನು ಗುರುತಿಸಲು ಸಾಧ್ಯ?. ಸಂಘಪರಿವಾರದ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಅವರು ರಾಜಕೀಯ ಮಾಡುತ್ತಿದ್ದಾರೆಯೇ ಅಥವಾ ಬಿಜೆಪಿಯ ಸಿದ್ಧಾಂತವನ್ನು ಪ್ರತಿಪಾದಿಸುತ್ತಾ ಮುನ್ನಡೆಯುತ್ತಿದ್ದಾರೆಯೇ?

ಕರ್ನಾಟಕದಲ್ಲಿ ಅಧಿಕಾರ ಸೂತ್ರ ಹಿಡಿದಿರುವ ಬಿಜೆಪಿಯಲ್ಲಿ ಸಂಘಪರಿವಾರದ ಸಿದ್ಧಾಂತವನ್ನು ಕಾಣುತ್ತಿದ್ದೀರಾ?, ಅಥವಾ ರಾಜಕೀಯ ಪಕ್ಷವಾಗಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಹಂಬಲವನ್ನು ಗುರುತಿಸುತ್ತಿದ್ದೀರಾ? ’ಬಿಜೆಪಿಗೆ ಬರುವವರು ಸಿದ್ಧಾಂತವನ್ನು ಜೀರ್ಣಿಸಿಕೊಳ್ಳಲು ಮೊದಲು ಕಲಿಯಿರಿ,’ ಹೀಗೆಂದು ಬಿಜೆಪಿ ಹಿರಿತಲೆಗಳೇ ರಾಮಕೃಷ್ಣ ಹೆಗಡೆ ಕಟ್ಟಾಶಿಷ್ಯ ಡಾ.ಜೀವರಾಜ್ ಆಳ್ವರನ್ನು ಕುರಿತು ಹೇಳಿದ್ದ ಹಳೆ ಮಾತು ಎನ್ನುವಂತಿಲ್ಲ. ಯಾಕೆಂದರೆ ಆಪರೇಷನ್ ಕಮಲದ ಮೂಲಕ ಬಂದವರಿಗೆ ಇತ್ತೀಚೆಗೆ ಬಿಜೆಪಿ ನಾಯಕರು ಹೇಳುತ್ತಿರುವ ನೀತಿ ಪಾಠ.

ಹಾಗಾದರೆ ಬಿಜೆಪಿಯಿಂದ ಹೊರಗೆ ಹೋಗುವವರು ತಮ್ಮ ಸಿದ್ಧಾಂತವನ್ನು ಬಿಟ್ಟುಹೋಗಲೇ ಬೇಕಲ್ಲವೇ? ಯಾಕೆಂದರೆ ಅವರು ನಂಬಿಕೊಂಡು ಬಂದ ಸಿದ್ಧಾಂತ ಅವರನ್ನು ಅಧಿಕಾರದಿಂದ ವಂಚಿಸಿದೆ ಎನ್ನುವ ಕಾರಣಕ್ಕಾಗಿಯಲ್ಲವೇ ಪಕ್ಷ ತೊರೆಯುತ್ತಿರುವುದು.

ಆದ್ದರಿಂದಲೇ ಕರ್ನಾಟಕದಲ್ಲಿ ಯಡಿಯೂರಪ್ಪ ಮತ್ತು ಬಿಜೆಪಿ ಸಿದ್ಧಾಂತ ಇವೆರಡರಲ್ಲಿ ಒಂದನ್ನು ಆಯ್ಕೆಮಾಡಿಕೊಳ್ಳುವುದು ಅದೆಷ್ಟು ಕಠಿಣವೆಂದು. ಬಿಜೆಪಿ ಹೈಕಮಾಂಡ್ ಇದೇ ಸಂಧಿಗ್ಧತೆಯಲ್ಲಿದೆ ಅನ್ನಿಸುತ್ತದೆ. ಇದನ್ನು ಯಡಿಯೂರಪ್ಪ ಅವರೂ ಚೆನ್ನಾಗಿ ಅರಿತುಕೊಂಡಿರುವುದರಿಂದಲೇ ಪಟ್ಟುಹಿಡಿದಿದ್ದಾರೆ. ಸಿದ್ಧಾಂತವನ್ನು ಪಾಲಿಸಲೇಬೇಕು, ಶಿಸ್ತನ್ನು ಬಿಡುವಂತಿಲ್ಲ ಎಂದಾರೆ ಯಡಿಯೂರಪ್ಪ ಅವರನ್ನು ಹೈಕಮಾಂಡ್ ಸಹಿಸುವಂತಿಲ್ಲ. ಸಿದ್ಧಾಂತಕ್ಕಿಂತಲೂ ವ್ಯಕ್ತಿ ಮತ್ತು ಅಧಿಕಾರ ಮುಖ್ಯ ಎನ್ನುವುದಾದರೆ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಮಣೆ ಹಾಕಲೇಬೇಕು. ಸಿದ್ಧಾಂಕ್ಕಿಂತ ತನಗೆ ಅಧಿಕಾರವೇ ಮುಖ್ಯ, ತಾನು ಆ ಪಕ್ಷಕ್ಕೆ ಅನಿವಾರ್ಯವೆಂದು ಯಡಿಯೂರಪ್ಪ ಭಾವಿಸಿದರೆ? ಈ ಹಿನ್ನೆಲೆಯಲ್ಲಿ ಸೂರಜ್‌ಕುಂಡ್ ಸಿದ್ಧಾಂತ ಮತ್ತು ವ್ಯಕ್ತಿ ಇವೆರಡರಲ್ಲಿ ಯಾವುದನ್ನು ಆಯ್ಕೆಮಾಡಿಕೊಳ್ಳಬಹುದು ಎನ್ನುವುದು ಈಗಿನ ಕುತೂಹಲ.

ಪ್ರತಿಪಕ್ಷದಿಂದ ಅಧಿಕಾರದೆಡೆಗೆ ಬಿಜೆಪಿ ನಡೆ


-ಚಿದಂಬರ ಬೈಕಂಪಾಡಿ


ಕರ್ನಾಟಕದ ಬಿಜೆಪಿ ಸರ್ಕಾರ ನಿಜಕ್ಕೂ ರಾಜಕೀಯ ಇತಿಹಾಸದಲ್ಲಿ ಹೊಸ ಪರಂಪರೆಯನ್ನೇ ಹುಟ್ಟುಹಾಕಿದೆ ಎನ್ನಬಹುದು. ಯಾವುದೇ ಪಕ್ಷಕ್ಕೂ ಜನ ಪೂರ್ಣ ಬಹುಮತ ಕೊಡದಿದ್ದಾಗ ಸಂಖ್ಯಾಬಲ ಒಟ್ಟುಗೂಡಿಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದು ಅದು ಸಾಗಿ ಬಂದ ಹಾದಿಯನ್ನು ಅವಲೋಕಿಸಿದರೆ ಯಾರೇ ಆದರೂ ಕನಿಕರ ಪಡಬೇಕು. ಹಾಗೆಂದು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಯನ್ನು ಇಷ್ಟೊಂದು ಸುಲಭವಾಗಿ ದಕ್ಕಿಸಿಕೊಳ್ಳುತ್ತೇನೆಂದು ಭಾವಿಸಲು ಕಾರಣಗಳೇ ಇರಲಿಲ್ಲ. 1980ರ ದಶಕದಲ್ಲಿ ಶಾಸನ ಸಭೆ ಪ್ರವೇಶ ಮಾಡಲು ಆರಂಭಿಸಿ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಮಿತ್ರಪಕ್ಷಗಳ ಸಹಕಾರದಲ್ಲಿ ಸಮರ್ಥವಾಗಿ ಅಧಿಕಾರ ನಡೆಸಿದ್ದೇ ಕರ್ನಾಟಕದಲ್ಲೂ ಜನ ಬಿಜೆಪಿ ಪರ ಒಂದು ರೀತಿಯ ಅನುಕಂಪದ ಮೂಲಕವೇ ಅಧಿಕಾರ ಕೊಟ್ಟು ನೋಡಬಹುದೇನೋ ಎನ್ನುವ ಭಾವನೆ ಮೂಡಲು ಕಾರಣ.

ಕರ್ನಾಟಕವನ್ನು ಕಾಂಗ್ರೆಸ್ ಪಕ್ಷ ಆಳ್ವಿಕೆ ಮಾಡುತ್ತಲೇ ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ ಮತ್ತು ಎಚ್.ಡಿ.ದೇವೇಗೌಡರ ಸಮಾಗಮನದ ಮೂಲಕ ತನ್ನ ಹಿಡಿತ ಕಳೆದುಕೊಂಡು ಮೂಲೆಗುಂಪಾಯಿತು.ಒಂದು ದಶಕ ಕಾಲ ಜನತಾಪರಿವಾರ ಕರ್ನಾಟಕವನ್ನು ಆಳಿ ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದು ತನ್ನೊಳಗಿನ ಕಲಹದಿಂದ ಅಧಿಕಾರ ಕಳೆದುಕೊಂಡಿತು. ಮತ್ತೆ ಕಾಂಗ್ರೆಸ್ ವೀರೇಂದ್ರ ಪಾಟೀಲ್, ಎಸ್.ಎಂ.ಕೃಷ್ಣ ಅವರ ಸಾರಥ್ಯದಲ್ಲಿ ಅಧಿಕಾರಕ್ಕೇರಿತು. ರಾಜೀವ್ ಗಾಂಧಿ ಅವರು ವೀರೇಂದ್ರ ಪಾಟೀಲ್ ಅವರನ್ನು ಅಧಿಕಾರದಿಂದ ಇಳಿಸಿದ ಕ್ಷಣದಿಂದಲೇ ಕಾಂಗ್ರೆಸ್ ಪಕ್ಷ ಈ ನಾಡಿನ ಅತ್ಯಂತ ಬಲಿಷ್ಠ ಸಮುದಾಯಗಳಲ್ಲಿ ಒಂದಾದ ವೀರಶೈವರ ಅವಕೃಪೆಗೆ ಗುರಿಯಾಯಿತು.

ವೀರೇಂದ್ರ ಪಾಟೀಲ್ ಅನಾರೋಗ್ಯಕ್ಕೆ ತುತ್ತಾದರು ಎನ್ನುವುದನ್ನು ಬಿಟ್ಟರೆ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಅನಿವಾರ್ಯತೆಯೂ ಇರಲಿಲ್ಲ ಮತ್ತು ಪಾಟೀಲ್‌ರನ್ನು  ರಾಜೀವ್ ಗಾಂಧಿ ಅಧಿಕಾರದಿಂದ ಇಳಿಸಿದ ಕ್ರಮವೂ ಸರಿಯಾಗಿರಲಿಲ್ಲ. ಎಸ್.ಬಂಗಾರಪ್ಪ, ಎಂ.ವೀರಪ್ಪ ಮೊಯ್ಲಿ ಅವರಿಂದಲೂ ಕಾಂಗ್ರೆಸ್ ಪಕ್ಷವನ್ನು ಶಾಶ್ವತವಾಗಿ  ಅಧಿಕಾರದಲ್ಲಿ ಉಳಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಮತ್ತೆ ದೇವೇಗೌಡರು ಕರ್ನಾಟಕದಲ್ಲಿ ಜನತೆಯ ವಿಶ್ವಾಸಗಳಿಸಿ ಮುಖ್ಯಮಂತ್ರಿಯಾಗುವ ಕನಸು ಸಾಕಾರಗೊಳಿಸಿಕೊಂಡರು, ಅದೇ ಹೊತ್ತಿಗೆ ಪ್ರಧಾನಿ ಹುದ್ದೆಗೂ ಏರಿದರು. ಈ ಕಾಲಕ್ಕೂ ಬಿಜೆಪಿ ಅಧಿಕಾರ ಸೂತ್ರ ಹಿಡಿಯುವ ಲಕ್ಷಣಗಳು ಗೋಚರಿಸಿರಲಿಲ್ಲ. ಎಸ್.ಎಂ.ಕೃಷ್ಣ `ಪಾಂಚಜನ್ಯ’ ಮೊಳಗಿಸಿ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಕರ್ನಾಟಕದಲ್ಲಿ ಅಧಿಕಾರಕ್ಕೆ ತಂದರು. ಆನಂತರ ಧರಂ ಸಿಂಗ್ ಅಧಿಕಾರದೊಂದಿಗೆ ಕಾಂಗ್ರೆಸ್ ಯುಗ ಮುಗಿಯಿತು.

ಎಚ್.ಡಿ.ಕುಮಾರಸ್ವಾಮಿ ರಾಜ್ಯರಾಜಕಾರಣದಲ್ಲಿ ಇದ್ದಕ್ಕಿದ್ದಂತೆಯೇ ಪ್ರಭಾವಿಯಾಗಿ ಬೆಳೆದು ಬೆರಗು ಮೂಡಿಸಿದರು. ಮೂರು ದಶಕಗಳ ಕಾಲ ವಿಧಾನಸಭೆಯ ಒಳಗೆ ಮತ್ತು ಹೊರಗೆ ಬಿಜೆಪಿಯ ಸಾರಥಿಯಾಗಿ ಬಿ.ಎಸ್.ಯಡಿಯೂರಪ್ಪ ಮಾಡಿದ ಹೋರಾಟಗಳು, ಜನಪರವಾದ ಅವರ ನಿಲುವುಗಳು ಅಧಿಕಾರದ ಸನಿಹಕ್ಕೆ ಬಂದು ನಿಲ್ಲುವಂತೆ ಮಾಡಿತು. ರಾಜಕೀಯದ ಇತಿಹಾಸವನ್ನು ಮತ್ತೊಮ್ಮೆ ಅವಲೋಕಿಸಿದರೆ ಬಿಜೆಪಿ ಕರ್ನಾಟಕದಲ್ಲಿ ಭದ್ರ ನೆಲೆಯೂರಲು ಮೂರು ಮಂದಿ ಗೋಚರಿಸುತ್ತಾರೆ.

ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಮತ್ತು ಡಿ.ವಿ.ಸದಾನಂದ ಗೌಡ. ಜೆಡಿಎಸ್ ಮುನ್ನಡೆಸುತ್ತಿದ್ದವರು ಎಚ್.ಡಿ.ದೇವೇಗೌಡರೇ ಆಗಿದ್ದರೂ ನಾಡಿನ ಜನ ಕುಮಾರಸ್ವಾಮಿಯವರನ್ನು ಅತಿಯಾಗಿ ನೆಚ್ಚಿಕೊಂಡಿದ್ದರು. ಬಿಜೆಪಿಯನ್ನು ತಾತ್ವಿಕವಾಗಿ ಒಪ್ಪದಿದ್ದರೂ ಬಿ.ಎಸ್.ಯಡಿಯೂರಪ್ಪ ಅವರ ಕಾಳಜಿಯನ್ನು ಸಂಶಯದಿಂದ ನೋಡಲು ಕಾರಣಗಳೇ ಇರಲಿಲ್ಲ. ವಯಸ್ಸಿನಲ್ಲಿ ಕಿರಿಯರಾಗಿದ್ದರೂ ಡಿ.ವಿ.ಸದಾನಂದ ಗೌಡರು ಸಂಸತ್ ಸದಸ್ಯರಾಗಿ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನಡೆದುಕೊಳ್ಳುತ್ತಿದ್ದ ರೀತಿ ಭರವಸೆ ಮೂಡಿಸಿದ್ದು ಸುಳ್ಳಲ್ಲ. ಇಂಥ ಕಾಲಘಟ್ಟದಲ್ಲೇ 20-20 ಕರ್ನಾಟಕದಲ್ಲಿ ಪ್ರಚಲಿತಕ್ಕೆ ಬರಲು ಕಾರಣವಾಯಿತು.

ಕುಮಾರಸ್ವಾಮಿಯವರ ಯುವಮನಸ್ಸಿಗೆ ಜನ ಮನಸೋತಿದ್ದರು. ಯಡಿಯೂರಪ್ಪ ಅವರ ಹೋರಾಟದ ಕೆಚ್ಚನ್ನು ಜನ ಮೆಚ್ಚಿದ್ದರು. ಸದಾನಂದ ಗೌಡರ ಪಾದರಸದಂಥ ನಡವಳಿಕೆಯನ್ನು ಪಕ್ಷಾತೀತವಾಗಿ ಹೊಗಳುತ್ತಿದ್ದರು. ನಿಚ್ಚಳ ಬಹುಮತವಿಲ್ಲದಿದ್ದಾಗ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರು ಮಾಡಿಕೊಂಡ 20 ತಿಂಗಳ ಅಧಿಕಾರ ಸೂತ್ರವನ್ನು ಜೆಡಿಎಸ್ ನಾಯಕರಾಗಿ ದೇವೇಗೌಡರು ವಿರೋಧಿಸಿದ್ದರು, ಆದರೆ ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ಸದಾನಂದ ಗೌಡರು ದೆಹಲಿ ಹೈಕಮಾಂಡ್‌ನ್ನು ಮನವೊಲಿಸಿದ್ದರು. ಈ ತ್ರಿಮೂರ್ತಿಗಳ ಸಮತೋಲನದ ನಡಿಗೆಯೇ ಜೆಡಿಎಸ್ ಮತ್ತು ಬಿಜೆಪಿ ಸರ್ಕಾರದ ಅಸ್ತಿತ್ವಕ್ಕೆ ಕಾರಣವಾಗಿತ್ತು.

ಜನರು ನಿರೀಕ್ಷೆ ಮಾಡದಿದ್ದ ಸ್ವರೂಪದಲ್ಲಿ ಮೊದಲ ವರ್ಷ ಈ ಜುಗಲ್ ಬಂಧಿ ಸರ್ಕಾರ ಕರ್ನಾಟಕವನ್ನು ಹೊಸ ದಿಕ್ಕಿನತ್ತ ಕೊಂಡೊಯ್ದಿತ್ತು. ಯಡಿಯೂರಪ್ಪ ಅಕ್ಷರಷ: ಅಧಿಕಾರಕ್ಕೆ ಒಗ್ಗಿಕೊಳ್ಳಲು ಆ ಸಂದರ್ಭದಲ್ಲಿ ಹೆಣಗಿದ್ದರು ಅಂದರೂ ತಪ್ಪಾಗಲಾರದು. ಯಾಕೆಂದರೆ ಯಡಿಯೂರಪ್ಪ ಟ್ರೆಜರಿ ಬೆಂಚಲ್ಲಿ ಹಿಂದೆಂದೂ ಕುಳಿತವರೇ ಅಲ್ಲದ ಕಾರಣ ಅದೆಷ್ಟೋ ಸಲ ಅವರು ವಿಧಾನ ಸಭೆಯಲ್ಲಿ ಪ್ರತಿಪಕ್ಷದವರಂತೆ ನಡೆದುಕೊಳ್ಳುತ್ತಿದ್ದರು, ತಮ್ಮವರ ವಿರುದ್ಧವೇ ತಿರುಗಿಬೀಳುತ್ತಿದ್ದರು. ಇಂಥ ಸಂದರ್ಭದಲ್ಲಿ ಡಿ.ವಿ.ಸದಾನಂದ ಗೌಡರು ಸರ್ಕಾರದ ಮೈತ್ರಿಗೆ ಭಂಗ ಬರದ ರೀತಿಯಲ್ಲಿ ಪಕ್ಷ ಮುನ್ನಡೆಸಿದ್ದರು ಎನ್ನುವುದನ್ನು ಮರೆಯುವಂತಿಲ್ಲ.

ಮೊದಲ 20 ತಿಂಗಳ ಅಧಿಕಾರ ನಿರ್ವಹಣೆ ನಂತರ ಬಿಜೆಪಿಗೆ ಅಧಿಕಾರ ಹಸ್ತಾಂತರಿಸುವ ಮೂರು ತಿಂಗಳ ಅವಧಿ ಜೆಡಿಎಸ್ ಮತ್ತು ಬಿಜೆಪಿಯ ವೈಮನಸ್ಸಿಗೆ ಸಿಲುಕಿ ತತ್ತರಿಸಿತು. ಯಡಿಯೂರಪ್ಪ ಅವರ ಹಠ, ಕುಮಾರಸ್ವಾಮಿಯವರ ಜಿದ್ದಿನ ಕಾರಣದಿಂದಾಗಿ ಸರ್ಕಾರ ಪತನವಾಯಿತು, ಮೈತ್ರಿ ಮುರಿದು ಬಿತ್ತು. ಕುಮಾರಸ್ವಾಮಿಯವರು ನುಡಿದಂತೆ ನಡೆದುಕೊಂಡು ಬಿಜೆಪಿಗೆ ಅಧಿಕಾರ ಹಸ್ತಾಂತರಿಸಿದ್ದರೆ ಬಹುಷ: ರಾಜಕೀಯದ ಚಿತ್ರಣವೇ ಬದಲಾಗುತ್ತಿತ್ತೇನೋ? ಯಡಿಯೂರಪ್ಪ ಅವರಿಗೆ ಜೆಡಿಎಸ್ ವಿರುದ್ಧ ಕಹಳೆ ಮೊಳಗಿಸಿ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಸುಲಭವಾಗುತ್ತಿರಲಿಲ್ಲವೇನೋ?   ಆದರೆ ಈ ಹೊತ್ತಿಗೆ ಕರ್ನಾಟಕದ ಜನರ ಮನಸ್ಸಿನಲ್ಲೂ ಬಿಜೆಪಿಯನ್ನು ಅಧಿಕಾರಕ್ಕೆ ತಂದು ನಿಲ್ಲಿಸುವ ನಿರ್ಧಾರ ನೆಲೆಯೂರಿತ್ತು. ಇದರ ಪರಿಣಾಮವೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಬದಿಗೆ ಸರಿಸಿ ಬಿಜೆಪಿ ಅಧಿಕಾರ ಸೂತ್ರಹಿಡಿಯಿತು. ಇದರಲ್ಲಿ ಬಳ್ಳಾರಿ ಗಣಿಧಣಿಗಳ ಪಾತ್ರವನ್ನು ಬಿಜೆಪಿ ಮರೆಯುವಂತಿಲ್ಲ. ಒಂದರ್ಥದಲ್ಲಿ ಬಿಜೆಪಿಗೆ ಕರ್ನಾಟಕದಲ್ಲಿ ಯಡಿಯೂರಪ್ಪ ಅವರನ್ನು ಬಿಟ್ಟರೆ ಜನಾಕರ್ಷಣೆ ಮಾಡುವಂತ ನಾಯಕರು ಮತ್ತೊಬ್ಬರಿರಲಿಲ್ಲ, ಈಗಲೂ ಈ ಕೊರತೆ ಬಿಜೆಪಿಯನ್ನು ಕಾಡುತ್ತಿದೆ. ಬಿಜೆಪಿ ಹೈಕಮಾಂಡ್ ಕೂಡಾ ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಇದಕ್ಕಿದ್ದ ಬಲವಾದ ಕಾರಣ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರು ಪಟ್ಟಿದ್ದ ಶ್ರಮ. ಆದರೆ ಹೈಕಮಾಂಡ್ ಇಟ್ಟ ವಿಶ್ವಾಸವನ್ನು ಬಹುಕಾಲ ಯಡಿಯೂರಪ್ಪ ಉಳಿಸಿಕೊಳ್ಳಲಿಲ್ಲ ಎನ್ನುವುದು ದುರಂತ.

ಈಗ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಜನರಿಗಿದ್ದ ನಂಬಿಕೆ, ವಿಶ್ವಾಸಗಳು ಮಂಜಿನಂತೆ ಕರಗಿಹೋಗಿವೆ. ಐದು ವರ್ಷಕ್ಕೆ ಮೂರು ಮಂದಿ ಮುಖ್ಯಮಂತ್ರಿಗಳು. ಅಗಣಿತವಾದ ಹಗರಣಗಳು, ಜೈಲುಪಾಲಾದವರು, ಲೋಕಾಯುಕ್ತ, ಸಿಬಿಐ, ಕ್ರಿಮಿನಲ್ ಕೇಸುಗಳಿರುವುದು ಬಿಜೆಪಿಯವರ ಮೇಲೆಯೇ ಅತೀ ಹೆಚ್ಚು. ಅಧಿಕಾರ ಅಲ್ಪ ಅವಧಿಯಲ್ಲೇ ಇಷ್ಟೊಂದು ಪ್ರಮಾಣದ ಪ್ರಮಾದಗಳು ನಡೆದುಹೋಗಿವೆ ಎನ್ನುವುದನ್ನು ಜನ ಜೀರ್ಣಿಸಿಕೊಳ್ಳುವುದಾದರೂ ಹೇಗೆ?

ಅಧಿಕಾರಶಾಹಿ ಮನಸ್ಸು ಮತ್ತು ಸೋನಿಯಾ ಗಾಂಧಿ


-ಚಿದಂಬರ ಬೈಕಂಪಾಡಿ


 

ಕೇಂದ್ರದಲ್ಲಿ ಯುಪಿಎ ಸರ್ಕಾರದ ಅವನತಿಗೆ ಕ್ಷಣಗಣನೆ ಆರಂಭವಾದಂತಿದೆ. ಎಲ್ಲಾ ರಾಜಕೀಯ ಪಕ್ಷಗಳೂ ಮಧ್ಯಂತರ ಚುನಾವಣೆಗ ಹಪಹಪಿಸುತ್ತಿವೆ. ಅವುಗಳ ದಾಹ ನೀಗಿಸಲು ಕಾಂಗ್ರೆಸ್ ಪಕ್ಷ ಮುಂದಾಗಿದೆಯೇನೋ ಎನ್ನುವ ರೀತಿಯಲ್ಲಿ ಘಟನಾವಳಿಗಳು ಘಟಿಸುತ್ತಿವೆ. ಇಲ್ಲಿ ಅತ್ಯಂತ ಮುಖ್ಯವಾಗಿ ಗಮನಿಸಬೇಕಾಗಿರುವುದು ಯುಪಿಎ ಸರ್ಕಾರದ ಸಂಕಷ್ಟಕ್ಕೆ ಯಾರು ಹೊಣೆ ಎನ್ನುವ ಕುರಿತು. ಯುಪಿಎ ಘಟಕ ಪಕ್ಷಗಳು ಖಂಡಿತಕ್ಕೂ ಕಾರಣವಲ್ಲ, ಹಾಗಾದರೆ ಇದರ ಹೊಣೆಯನ್ನು ಕಾಂಗ್ರೆಸ್ ಪಕ್ಷದ ಹೆಗಲಿಗೆ ಹೊರಿಸಬೇಕಾಗುತ್ತದೆ ಮತ್ತು ಅದು ಸಹಜವೂ ಹೌದು.

2ಜಿ ಹಗರಣ, ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಿಂದ ಹಿಡಿದು ಡೀಸೆಲ್ ದರ ಏರಿಕೆ, ಚಿಲ್ಲರೆಯಲ್ಲೂ ನೇರಬಂಡವಾಳ ಹೂಡಿಕೆ ತನಕ ಯುಪಿಎ ಸರ್ಕಾರದ ಹೆಜ್ಜೆಗಳನ್ನು ಅವಲೋಕಿಸಿದರೆ ಇವೆಲ್ಲವೂ ಕಾಂಗ್ರೆಸ್ ಪಕ್ಷ ತಾನಾಗಿಯೇ ಮೈಮೇಲೆ ಎಳೆದುಕೊಂಡವು ಎನ್ನಿಸುತ್ತದೆ. ಇತ್ತೀಚಿನ ದಿನಗಳಲ್ಲಂತೂ ಯುಪಿಎ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷದ ಸರ್ವಾಧಿಕಾರಿ ಮನೋಭಾವ ಹೆಚ್ಚಿದಂತೆ ಭಾಸವಾಗುತ್ತಿದೆ. ಆದರೆ ಬಹುಮುಖ್ಯವಾಗಿ ಇಬ್ಬರನ್ನು ಈ ಸಂದರ್ಭದಲ್ಲಿ ಚರ್ಚಿಸಬೇಕಾಗುತ್ತದೆ.

ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಡಾ.ಮನಮೋಹನ್ ಸಿಂಗ್ ಇಬ್ಬರೂ ಯುಪಿಎ ಸರ್ಕಾರವನ್ನು ಮುನ್ನಡೆಸುತ್ತಿರುವವರು. ಪ್ರಧಾನಿಯಾಗಿ ಡಾ.ಮನಮೋಹನ್ ಸಿಂಗ್ ಅಧಿಕಾರ ನಿರ್ವಹಿಸುತ್ತಿದ್ದರೆ ಅವರನ್ನು ನಿಯಂತ್ರಿಸುತ್ತಿರುವವರು ಸೋನಿಯಾ ಗಾಂಧಿ. ಸೋನಿಯಾ ಗಾಂಧಿ ಅವರಿಗೆ ರಾಜಕೀಯ ಮುತ್ಸದ್ದಿತನದ ಕೊರತೆಯಿದೆ ಎನ್ನುವುದನ್ನು ಹೇಳಲು ಯಾವ ಪಂಡಿತರೂ ಬೇಕಾಗಿಲ್ಲ. ಅವರು ಬೆಳೆದಿರುವ ಹಿನ್ನೆಲೆಯಲ್ಲಿ ಅವರನ್ನು ಮುತ್ಸದ್ಧಿಯನ್ನಾಗಿಸುವ ಯಾವ ಕುರುಹುಗಳೂ ಇಲ್ಲ. ಅನಿವಾರ್ಯವಾಗಿ ರಾಜಕೀಯಕ್ಕೆ ಧುಮುಕಿ ಅಧಿಕಾರ ಅನುಭವಿಸುತ್ತಿದ್ದಾರೆ. ಇನ್ನು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ರಾಜಕಾರಣಿಯಂತೂ ಅಲ್ಲವೇ ಅಲ್ಲ. ಓರ್ವ ಸರ್ಕಾರಿ ಅಧಿಕಾರಿಯಾಗಿ ಡಾ.ಸಿಂಗ್ ಅವರು ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಇವರ ರಾಜಕೀಯ ಪ್ರವೇಶ ಕೂಡಾ ಆಕಸ್ಮಿಕ. ಆದ್ದರಿಂದಲೇ ಡಾ.ಸಿಂಗ್ ಅವರಿಗೆ ಜನರ ನಾಡಿಮಿಡಿತದ ನೇರ ಅನುಭವವಿಲ್ಲ.

ಒಂದು ರಾಜಕೀಯ ಪಕ್ಷವಾಗಿ ಕಾಂಗ್ರೆಸ್ ಈಗ ತನ್ನ ಹೊಣೆಗಾರಿಕೆ ನಿಭಾಸುತ್ತಿದೆ ಅನ್ನಿಸದಿರುವುದಕ್ಕೆ ಅದು ಯುಪಿಎ ಸರ್ಕಾರದ ಸಾರಥ್ಯವಹಿಸಿ ನಡೆದುಕೊಂಡ ರೀತಿಯೇ ಸಾಕ್ಷಿ. ರಾಜಕೀಯ ಪಕ್ಷ ಯಾವೊತ್ತೂ ಜನರ ಜೊತೆ ಹೆಜ್ಜೆ ಹಾಕಲು ಬಯಸುತ್ತದೆ. ಅದು ಅಧಿಕಾರದಲ್ಲಿ ಉಳಿಯಲು ಅನಿವಾರ್ಯ ಕೂಡಾ. ಆದರೆ ರಾಜಕೀಯ ಪಕ್ಷದ ನಡೆಗಳಿಗೆ ಅಧಿಕಾರಶಾಹಿ ವಿರುದ್ಧವಾಗಿ ಹೆಜ್ಜೆ ಹಾಕುತ್ತದೆ. ಇಲ್ಲೂ ಹೀಗೆ ಆಗುತ್ತಿದೆ. ಕಾಂಗ್ರೆಸ್ ಪಕ್ಷ ಜನರ ನಾಡಿಮಿಡಿತಕ್ಕೆ ಸ್ಪಂದಿಸಿ ನಡೆಗಳನ್ನು ಇಡಬೇಕಾಗಿತ್ತು. ಅಂತೆಯೇ ಪ್ರಧಾನಿಯೂ ಕೂಡಾ. ಆದರೆ ಸೋನಿಯಾ ಗಾಂಧಿ ಮತ್ತು ಡಾ.ಮನಮೋಹನ್ ಸಿಂಗ್ ಜನರಿಂದ ವಿಮುಖರಾಗುತ್ತಿದ್ದಾರೆ ಅನ್ನಿಸತೊಡಗಿದೆ.

ಸೋನಿಯಾ ಗಾಂಧಿ ಅವರ ಇಂಥ ನಡೆಗಳಿಗೆ ಮತ್ತೆ ಕಾರಣ ಹುಡುಕಿದರೆ ಅವರಿಗೆ ಸಿಗುತ್ತಿರುವ ಸಲಹೆಗಳು ಸರಿಯಾಗಿಲ್ಲ ಎನ್ನುವುದು ಅರಿವಿಗೆ ಬರುತ್ತವೆ. ಅವರಿಗೆ ಸಿಗುವ ಸಲಹೆಗಳನ್ನು ವಿಮರ್ಶೆಗೆ ಒಳಪಡಿಸುವ ಜಾಣ್ಮೆಯ ಕೊರತೆ ಎದ್ದುಕಾಣುತ್ತದೆ. ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರ ಯಡವಟ್ಟೇ ಹಗರಣಗಳಿಗೆ ಕಾರಣ ಎನ್ನುವುದಂತೂ ಸ್ವತ: ಸೋನಿಯಾ ಅವರು ಹೇಗೆ ತಾನೇ ಜೀರ್ಣಿಸಿಕೊಳ್ಳಲು ಸಾಧ್ಯ? ವಾಸ್ತವವಾಗಿ ಸೋನಿಯಾ ಅವರು ಜನರ ನಾಡಿಮಿಡಿತಕ್ಕೆ ಪೂರಕವಾಗಿ ಹೆಜ್ಜೆ ಹಾಕುತ್ತಿದ್ದರೆ ಇಂಥ ಬಿಕ್ಕಟ್ಟು ಬರಲು ಸಾಧ್ಯವಿರಲಿಲ್ಲ. ಬದಲಾಗಿ ಅವರು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಡೆಗಳನ್ನು ಗೌರವಪೂರ್ವಕವಾಗಿ ಮಾನ್ಯಮಾಡುವ ಮೂಲಕ ಹಿನ್ನಡೆ ಕಾಣುವಂತಾಯಿತು.

ಡಾ.ಮನಮೋಹನ್ ಸಿಂಗ್ ಅವರು ಈ ದೇಶಕಂಡ ಉತ್ತಮ ಅರ್ಥಶಾಸ್ತ್ರಪಂಡಿತ ಥಿಯರಿಟಿಕಲ್ ಆಗಿ. ಆದರೆ ರಾಜಕೀಯ ಪಕ್ಷಕ್ಕೆ ಥಿಯರಿಗಿಂತಲೂ ಪ್ರಾಕ್ಟಿಕಲ್ ಮುಖ್ಯವಾಗುತ್ತದೆ. ಇದನ್ನು ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರು ಸಮರ್ಥವಾಗಿ ಗುರುತಿಸಿದ್ದರು ಮತ್ತು ಅನುಷ್ಠಾನಕ್ಕೆ ತರುವ ಎದೆಗಾರಿಕೆ ತೋರಿಸಿದರು. ಅಂಥ ಎದೆಗಾರಿಕೆಯನ್ನು ರಾಜೀವ್ ಗಾಂಧಿ ಮತ್ತು ಪಿ.ವಿ.ನರಸಿಂಹರಾವ್ ಮುಂದುವರಿಸಿದರು. ನಂತರ ಬಂದ ಡಾ.ಮನಮೋಹನ್ ಸಿಂಗ್ ಥಿಯರಿಗೆ ಮಾತ್ರ ಅಂಟಿಕೊಂಡರೇ ಹೊರತು ಪ್ರಾಕ್ಟಿಕಲ್ ಆಗಿ ಯೋಚಿಸಲಿಲ್ಲ, ಹಾಗೆ ಯೋಚಿಸುವುದು ಅವರ ಜಾಯಮಾನವೂ ಅಲ್ಲ.

ಡಾ.ಮನಮೋಹನ್ ಸಿಂಗ್ ಅವರ ಸುದೀರ್ಘ ನಡೆಗಳನ್ನು ಹತ್ತಿರದಿಂದ ಗಮನಿಸಿದರೆ ಅವರು ಓರ್ವ ಬ್ಯೂರೋಕ್ರೆಟ್ ಹೊರತು ಅವರಲ್ಲಿ ರಾಜಕಾರಣಿಯ ಮನಸ್ಸನ್ನು ಗುರುತಿಸುವುದು ಸಾಧ್ಯವಿಲ್ಲ. ಲಲಿತ್ ನಾರಾಯಣ್ ಮಿಶ್ರ ಅವರ ಮೂಲಕ ಡಾ.ಸಿಂಗ್ 70ರ ದಶಕದಲ್ಲಿ ವಿದೇಶಾಂಗ ವ್ಯವಹಾರ ವಿಭಾಗದ ಸಲಹೆಗಾರರಾಗಿ ಅಖಾಡಕ್ಕಿಳಿದರು. 1982ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮುಖ್ಯಸ್ಥರಾದರು. ಈ ಹುದ್ದೆ ದೇಶದ ಆರ್ಥಿಕ ವ್ಯವಸ್ಥೆಯನ್ನು ನಿಭಾಯಿಸುವ ಗುರುತರವಾದ ಹುದ್ದೆ. ಆ ಕಾಲಕ್ಕೆ ಇಂದಿರಾಗಾಂಧಿ ಅವರು ಪ್ರಧಾನಿಯಾಗಿ ಅನೇಕ ಸುಧಾರನೆಗಳನ್ನು ಜಾರಿಗೆ ತರುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡುವ ಮೂಲಕ ರಾಜಕೀಯ ಶಕ್ತಿಗೆ ದುರ್ಬಲವರ್ಗದವರ ಬೆಂಬಲ ಪಡೆಯುವುದು ಅವರ ಉದ್ದೇಶವಾಗಿತ್ತು. ಆ ಕಾಲದಲ್ಲೇ ಬಿ.ಜನಾರ್ಧನ ಪೂಜಾರಿ ಅವರನ್ನು ಇಂದಿರಾ ಗಾಂಧಿ ಅವರು ಹಣಕಾಸು ಖಾತೆ ಸಹಾಯಕ ಸಚಿವರನ್ನಾಗಿ ಮಾಡಿದ್ದರು. ತೀರಾ ಹಿಂದುಳಿದ ವರ್ಗದಿಂದ ಬಂದಿದ್ದ ಜನಾರ್ಧನ ಪೂಜಾರಿಯವರು ಬ್ಯಾಂಕ್‌ಗಳ ಮೂಲಕ ಸಾಲಮೇಳ ಜಾರಿಗೆ ತಂದು ಹೊಸ ಕ್ರಾಂತಿಯುಂಟುಮಾಡಿದರು. ಈ ಸಂದರ್ಭದಲ್ಲಿ ಡಾ.ಮನಮೋಹನ್ ಸಿಂಗ್ ಅರ್ಥವ್ಯವಸ್ಥೆಯನ್ನು ಓರ್ವ ಅಧಿಕಾರಿಯಾಗಿ ನಿಭಾಯಿಸುತ್ತಾ ಸಾಲಮೇಳವನ್ನು ಬೆಂಬಲಿಸಿರಲಿಲ್ಲ. ಆದರೆ ಪೂಜಾರಿ ಅವರ ಈ ವಿನೂತನ ಹೆಜ್ಜೆ ಇಂದಿರಾ ಅವರಿಗೆ ಪ್ರಿಯವಾಗಿತ್ತು. ಬ್ಯಾಂಕ್‌ಗಳಿಂದ ಸಣ್ಣಮಟ್ಟದ ಸಾಲ ವಿತರಣೆ ದೇಶವ್ಯಾಪಿ ಚಳುವಳಿಯ ರೂಪದಲ್ಲಿ ಬೆಳೆಯಿತು. ಇದನ್ನು ಡಾ.ಸಿಂಗ್ ಮುಗುಮ್ಮಾಗಿ ನೋಡಿದರು. ರಾಜೀವ್ ಗಾಂಧಿ ಅವರು ಸಾಲಮೇಳ ಬೆಂಬಲಿಸಿದರು, ನಂತರ ಪಿ.ವಿ.ನರಸಿಂಹ ರಾವ್ ಅವರೂ ಜನರನ್ನು ತನ್ನ ತೆಕ್ಕೆಗೆ ಸೆಳೆಯಲು ಸಾಲಮೇಳ ಅಸ್ತ್ರವೆಂದೇ ಬೆಂಬಲಿಸಿದ್ದರು. ಸುಮಾರು ಐದು ವರ್ಷಗಳ ಕಾಲ ಜನಾರ್ಧನ ಪೂಜಾರಿ ಅವರು ಅಕ್ಷರಷ: ಈ ದೇಶದ ಬ್ಯಾಂಕ್‌ಗಳು ಬಡವರತ್ತ ಮುಖಮಾಡುವಂತೆ ಮಾಡಿದರು. ಆದರೆ ಅವುಗಳಿಂದ ಆದ ಆರ್ಥಿಕ ಬದಲಾವಣೆಗಳನ್ನು ಗುರುತಿಸುವುದು ಬೇರೆಯೇ ಮಾತು. ಪೂಜಾರಿ ಅವರನ್ನು ಬ್ಯೂರೋಕ್ರೆಟ್ ವ್ಯವಸ್ಥೆ ಆ ಸ್ಥಾನದಿಂದ ಕದಲಿಸುವಲ್ಲಿ ಸಫಲವಾಯಿತು. ಮತ್ತೆ ಇಂದಿನತನಕ ಸಾಲಮೇಳಗಳನ್ನು ಮಾಡಿಲ್ಲ. ಕಾಂಗ್ರೆಸ್ ಪಕ್ಷ ಈ ಸಾಲಮೇಲಗಳ ಮೂಲಕ ಚೈತನ್ಯ ಪಡೆದುಕೊಂಡಿದ್ದಂತೂ ನಿಜ.

ಅಂದರೆ ಜನಪರವಾದ ಕಾಳಜಿ ಮತ್ತು ಒಂದು ರಾಜಕೀಯ ಪಕ್ಷದ ನಾಯಕನಿಗೆ ಇರಬೇಕಾದ ಮುಂದಾಲೋಚನೆ ಆಗಲೂ ಡಾ.ಮನಮೋಹನ್ ಸಿಂಗ್ ಅವರಿಗೆ ಇರಲಿಲ್ಲ ಎನ್ನುವುದಕ್ಕೆ ಈ ಮಾತುಗಳು ಪುಷ್ಠಿ ನೀಡುತ್ತವೆ. ಇಂಥ ಹಿನ್ನೆಲೆಯಿರುವ ಸಾರಥಿಯಿಂದ ಸಾಮಾನ್ಯ ಜನರು ಡೀಸೆಲ್ ಬೆಲೆ ಹೆಚ್ಚಿಸಬೇಡಿ ಎನ್ನುವುದು ಕೇಳಿಸುವುದು ಹೇಗೆ? ಅಡುಗೆ ಅನಿಲ ಸಿಲಿಂಡರ್‌ಗಳು ವರ್ಷಕ್ಕೆ ಆರು ಮಾತ್ರ ಎನ್ನುವ ಮಿತಿ ಸರಿಯಲ್ಲ ಎನ್ನುವುದು ಅರ್ಥವಾಗುವುದಾದರೂ ಹೇಗೆ? ವಿದೇಶಿ ಬಂಡವಾಳ ಹೂಡಿಕೆಗೆ ಬಾಗಿಲು ತೆರೆಯಬೇಡಿ ಎನ್ನುವುದು ಅರ್ಥವಾಗುವುದಾರೂ ಹೇಗೆ?

ಆದ್ದರಿಂದ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷ ಮುತ್ಸದ್ದಿತನದ ಕೊರತೆಯಿಂದಾಗಿ ತನ್ನ ಭವಿಷ್ಯವನ್ನು ಮಸುಕಾಗಿಸಿಕೊಳ್ಳುತ್ತಿದೆ. ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಕಳೆದುಕೊಳ್ಳುವುದೇನೂ ಇಲ್ಲ, ಅವರಿಗೆ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸುವ ಜರೂರತ್ತೂ ಇಲ್ಲ ಎನ್ನುವುದನ್ನು ಕಾಂಗ್ರೆಸ್ ಅಧಿನಾಯಕಿ ಅರ್ಥ ಮಾಡಿಕೊಂಡಿದ್ದರೆ ಅನಾಹುತ ತಪ್ಪಿಸಬಹುದಾಗಿತ್ತು. ಹಾಗೆ ನೋಡಿದರೆ ಬಿಜೆಪಿಗೆ ಬ್ಯೂರೋಕ್ರೆಟ್ ಮನಸ್ಸಿರಬೇಕಿತ್ತು, ಅದು ಬದಲಾವಣೆ ಮಾಡಿಕೊಂಡಿದೆ. ಮಮತಾ ಬ್ಯಾನರ್ಜಿ, ಮುಲಾಯಂ, ಶರದ್ ಯಾದವ್, ಕರುಣಾನಿಧಿ, ಲಾಲೂಪ್ರಸಾದ್ ಯಾದವ್, ದೇವೇಗೌಡ ಸಹಿತ ಈ ದೇಶದ ಎಡಪಕ್ಷಗಳು ಒಗ್ಗಟ್ಟಾಗುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಯಾವ ಸಂದೇಶ ರವಾನಿಸುತ್ತಿದೆ? ಆದ್ದರಿಂದ ಈ ದೇಶದ ರಾಜಕೀಯ ಶಕ್ತಿಯನ್ನು ಕಾಂಗ್ರೆಸ್ ನಿರಾಯಾಸವಾಗಿ ಕಳೆದುಕೊಳ್ಳಲು ಯಾರು ಹೊಣೆ?