-ಚಿದಂಬರ ಬೈಕಂಪಾಡಿ
ಕಾವೇರಿ ಮತ್ತೆ ಸುದ್ದಿಯಾಗಿದ್ದಾಳೆ. ಕಾವೇರಿ ಕನ್ನಡಿಗರ ಜೀವಸೆಲೆ. ಕಾವೇರಿಯೇ ರಾಜ್ಯದ 40ಕ್ಕೂ ಹೆಚ್ಚು ತಾಲೂಕುಗಳ ಜನ, ಜಾನುವಾರುಗಳಿಗೆ ಆಸರೆ. ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಮೈಸೂರು, ಮಂಡ್ಯ, ಚಾಮರಾಜನಗರದ ಮೂಲಕ ಹಾದು ತಮಿಳುನಾಡು, ಕೇರಳ, ಪಾಂಡಿಚೇರಿಯಿಂದ ಸಮುದ್ರ ಸೇರುವ ಕಾವೇರಿ ಸಾಗುವ ಹಾದಿಯುದ್ದಕ್ಕೂ ಸಮೃದ್ಧವಾದ ಬೆಳೆ, ಅತಿಸುಂದರ ಧರೆ; ಈಕೆ ವಸುಂಧರೆ.
ಕಾವೇರಿಯಿಂದ ತನಗೆ ನೀರು ಹರಿಸಬೇಕೆಂದು ತಮಿಳುನಾಡು ಹಕ್ಕೊತ್ತಾಯ ಮಂಡಿಸುವುದು, ನೀರು ಬಿಡಲು ಸಾಧ್ಯವಿಲ್ಲವೆಂದು ಕರ್ನಾಟಕ ವಾದಿಸುವುದು, ಎರಡೂ ರಾಜ್ಯಗಳು ಸುಪ್ರೀಂಕೋರ್ಟ್ ಬಾಗಿಲು ಬಡಿಯುವುದು, ಪ್ರಧಾನಿಯ ಅಧ್ಯಕ್ಷತೆಯಲ್ಲಿ ನೀರಿನ ವಿವಾದಕ್ಕೆ ಸಭೆ ಸೇರುವುದು, ಅಲ್ಲಿಂದ ಬರುವ ನಿರ್ದೇಶನ, ಆದೇಶಗಳನ್ನು ಪಾಲಿಸುವುದು ಅಥವಾ ಪುನರ್ಪರಿಶೀಲಿಸಲು ಮನವಿ ಮಾಡುವುದು; ಇಂಥ ವರಸೆಗಳು ಇನ್ನೂ ಎಷ್ಟು ವರ್ಷಗಳ ಕಾಲ ಈ ನಾಡಿನ ಜನರನ್ನು ಕಾಡಲಿವೆ ಎನ್ನುವುದು ಊಹೆಗೂ ನಿಲುಕದ ಪ್ರಶ್ನೆಗಳು. ಬ್ರಿಟೀಷರ ಕಾಲದಿಂದ ಆರಂಭವಾದ ಕಾವೇರಿ ನೀರಿನ ವಿವಾದ ದೇಶ ಸ್ವಾತಂತ್ರ್ಯ ಗಳಿಸಿ, ಮೈಸೂರು ಕರ್ನಾಟಕವಾದರೂ ಬಗೆ ಹರಿದಿಲ್ಲ ಎನ್ನುವುದು ಶೋಚನೀಯ.
ಕಾವೇರಿ ನದಿ ನೀರಿನ ವಿವಾದ ಈ ನದಿ ಇರುವಷ್ಟು ಕಾಲವೂ ಇದ್ದೇ ಇರುತ್ತದೆ ಎನ್ನುವುದಂತು ಕಟು ಸತ್ಯ. ಈ ನದಿ ನೀರಿನ ಇತಿಹಾಸವನ್ನು ಅವಲೋಕಿಸಿದರೆ ಎರಡು ಪ್ರಮುಖ ಅಂಶಗಳು ಮನದಟ್ಟಾಗುತ್ತವೆ. ತಮಿಳುನಾಡು ಮತ್ತು ಕರ್ನಾಟಕ ಈ ಎರಡೂ ರಾಜ್ಯಗಳ ಜನರಿಗೆ ಈ ವಿವಾದ ಕೊನೆಯಾಗಬೇಕು ಎನ್ನುವ ಹಂಬಲವಿರುವುದು ಮತ್ತು ರಾಜಕೀಯ ಕಾರಣಗಳಿಗಾಗಿ ಈ ವಿವಾದ ಜೀವಂತವಿರಬೇಕು ಎನ್ನುವುದು.
ಜನರು ಈ ವಿವಾದಕ್ಕೆ ತೆರೆ ಬೀಳಬೇಕು ಎನ್ನುವುದಕ್ಕೆ ಬಲವಾದ ಕಾರಣವೆಂದರೆ ಕಾವೇರಿಯನ್ನೇ ನಂಬಿರುವುದು, ಈ ನೀರನ್ನೇ ಆಧರಿಸಿ ಭತ್ತ, ಕಬ್ಬು ಸಹಿತ ಕೃಷಿ ಚಟುವಟಿಕೆ ಮಾಡುತ್ತಿರುವುದು ಅಥವಾ ತುತ್ತು ಅನ್ನ ತಿನ್ನುತ್ತಿರುವುದು ಮತ್ತು ದಾಹ ತೀರಿಸಿಕೊಳ್ಳುತ್ತಿರುವುದು. ಅನ್ನ ಬೇಯಿಸಲು ಒಲೆ ಹೊತ್ತಿಸಿ ಅಕ್ಕಿ ಹೊಂದಿಸಿಕೊಂಡ ಮೇಲೆ ನೀರಿಗಾಗಿ ಬಿಂದಿಗೆ ಹಿಡಿದು ಬಾವಿಗೆ ಹೋಗುವಂಥ ಸ್ಥಿತಿಯಲ್ಲೇ ಮೂರು ತಲೆಮಾರುಗಳನ್ನು ಕಳೆದಿದ್ದಾರೆ ಕಾವೇರಿ ನದಿಪಾತ್ರದ ಜನರು. ಇವರಿಗೆ ಬಹುಬೇಗ ಈ ವಿವಾದ ಕೊನೆಯಾಗಲೇಬೇಕೆಂಬ ತುಡಿತವಿದೆ.
ರಾಜಕಾರಣಿಗಳಿಗೆ ಈ ವಿವಾದ ಬಗೆಹರಿದರೆ ತಮ್ಮ ಭಾಗದ ಜನರು ಈ ನದಿಯೊಂದಿಗೆ ಹೊಂದಿರುವ ಭಾವನಾತ್ಮಕ ಸಂಬಂಧಗಳ ಭಾವನೆಕಳೆದುಕೊಳ್ಳುತ್ತವೆ. ಆಗ ಅದು ಒಂದು ನದಿಯಾಗಿ ಮಾತ್ರ ಅವರ ಮನಸ್ಸಿನಲ್ಲಿ ಉಳಿದುಬಿಡುತ್ತದೆ. ಹೀಗಾದರೆ ಐದುವರ್ಷಕ್ಕೊಮ್ಮೆ ಬರುವ ಚುನಾವಣೆಯಲ್ಲಿ ಭಾಷಣಕ್ಕೆ ವಿಷಯವೂ ಇಲ್ಲ, ಹೋರಾಟಕ್ಕೆ ಕಾರಣವೂ ಇಲ್ಲದಂತಾಗುತ್ತದೆ.
ನಿಜಕ್ಕೂ ನಾಚಿಕೆಗೇಡು ಅನ್ನಿಸುತ್ತದೆ ಈ ವಿವಾದ ಮತ್ತೆ ಮತ್ತೆ ಜನರನ್ನು ಬೀದಿಗಿಳಿಸುತ್ತಿರುವುದಕ್ಕೆ. ನದಿನೀರಿಗಿಳಿದು ಜಲಸತ್ಯಾಗ್ರಹ ಮಾಡುತ್ತಾರೆ. ನೀರು ಹರಿಯುವ ತೂಬಿನ ಕೆಳಗೆ ಮಲಗಿ ರಾತ್ರಿ ಕಳೆಯುತ್ತಾರೆ ಜನ. ಬೆಂಗಳೂರು, ದೆಹಲಿಯಲ್ಲಿ ನದಿ ವಿವಾದ ಬಗೆಹರಿಸಲು ಸಭೆ ನಡೆಸಿದವರು ರಾತ್ರಿ ತಮ್ಮ ತಮ್ಮ ಬಂಗ್ಲೆಗಳಲ್ಲಿ ಹಾಯಾಗಿ ನಿದ್ದೆ ಮಾಡುತ್ತಾರೆ. ಕಾವೇರಿ ರಾತೋರಾತ್ರಿ ಹರಿದುಹೋಗಿರುತ್ತಾಳೆ. ಹಗಲು ಹೊತ್ತು ಜನ ಬೀದಿಗಿಳಿದು ಬಸ್ಸು, ಕಾರು, ಸೈಕಲ್ಗಳನ್ನು ತಡೆದು ರಸ್ತೆ ಬಂದ್ ಮಾಡುತ್ತಾರೆ. ಧರಣಿ, ಮೆರವಣಿಗೆ ಮಾಡಿ ಪೊಲೀಸರಿಂದ ಒದೆ ತಿಂದು ಮನೆ ಸೇರುತ್ತಾರೆ. ಇಷ್ಟೇ ಅಲ್ಲವೇ ಕಾವೇರಿ ವಿವಾದದಿಂದ ಹಳ್ಳಿಗಳಲ್ಲಿ ಆಗುತ್ತಿರುವುದು, ಇದಕ್ಕಿಂತ ಬೇರೇನು ಆಗುತ್ತಿದೆ?
ಕಾವೇರಿ ನೀರಿಗಾಗಿ ಹೋರಾಟ ಎನ್ನುವುದು ನಿಮ್ಮ ನಿಮ್ಮ ಮನೆಯಲ್ಲಿ ಮಕ್ಕಳ ಹುಟ್ಟು ಹಬ್ಬ ಆಚರಿಸುವ ವಾರ್ಷಿಕ ಘಟನೆಯಂತೆ. ಈ ನೆಪದಲ್ಲಾದರೂ ಬಂಧು ಬಳಗ ಒಂದು ದಿನ ಸೇರುವಂತೆ ಕಾವೇರಿ ಹೋರಾಟದ ಹೆಸರಲ್ಲಿ ಒಂದಷ್ಟು ಜನ ಬೀದಿಗಿಳಿಯುತ್ತಾರೆ ಅಥವಾ ರಾಜಕಾರಣಿಗಳು ಬೀದಿಗಿಳಿಸುತಾರೆ.
ರಾಜಕಾರಣಿಗಳು ಜನರ ಭಾವನೆಗಳನ್ನು ಕೋರ್ಟ್, ಪ್ರಾಧಿಕಾರದ ಮುಂದೆ ಇಟ್ಟು ವಾದ ಮಂಡಿಸುತ್ತಾರೆ ಹೊರತು ವಾಸ್ತವಿಕೆ ನೆಲೆಗಟ್ಟಿನಲ್ಲಿ ನದಿಯಲ್ಲಿ ಹರಿವು, ಅಣೆಕಟ್ಟೆಗಳಲ್ಲಿ ಸಂಗ್ರಹವಾಗುವ ಪ್ರಮಾಣ, ವಾಸ್ತವ ಬೇಡಿಕೆ ಇಂಥ ಅಂಕಿಅಂಶಗಳನ್ನು ಮುಂದಿಟ್ಟುಕೊಂಡು ವಾದ ಮಂಡಿಸುತ್ತಿಲ್ಲ. ಕೋರ್ಟ್, ಪ್ರಾಧಿಕಾರ ಜನರ ಭಾವನೆಗಳ ಆಧಾರದಲ್ಲಿ ತೀರ್ಮಾನ ಕೊಡಲಾಗುವುದಿಲ್ಲ. ಆಧಾರ, ಪುರಾವೆಗಳನ್ನು ಕಣ್ಣಮುಂದಿಟ್ಟುಕೊಂಡು ಯಾರಿಗೆ ಎಷ್ಟು ನೀರು ಎನ್ನುವುದನ್ನು ತೀರ್ಮಾನಿಸಬೇಕಾಗುತ್ತದೆ. ಯಾವ ರಾಜ್ಯ ತನ್ನ ವಾದಕ್ಕೆ ಪುರಾವೆ ಒದಗಿಸುತ್ತದೋ ಅದರ ಪರವಾಗಿ ಮಧ್ಯಂತರ ತೀರ್ಪು ಹೊರಬೀಳುತ್ತಿದೆಯೇ ಹೊರತು ಅಂತಿಮ ತೀರ್ಮಾನ ಕೊಡಲು ಸಾಧ್ಯವಾಗುತ್ತಿಲ್ಲ.
ಕಾವೇರಿ ನದಿ ವಿವಾದದ ಹಿನ್ನೆಲೆಯಲ್ಲಿ ನಡೆದ ಸರ್ವಪಕ್ಷ ಸಭೆಯ ತೀರ್ಮಾನವನ್ನು ವಿಶ್ಲೇಷಿಸಿದರೆ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ಮನದಟ್ಟಾಗಿಬಿಡುತ್ತದೆ. ಆಡಳಿತಪಕ್ಷ, ಪ್ರತಿಪಕ್ಷಗಳು ಇಲ್ಲೂ ತಮ್ಮ ಅಜೆಂಡಾವನ್ನು ಮುಂದಿಟ್ಟುಕೊಂಡೇ ಕೆಲಸ ಮಾಡಿರುವುದು ಸ್ಪಷ್ಟವಾಗುತ್ತದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕಾವೇರಿ ನೀರಿನ ವಿವಾದ ಜೀವಂತವಾಗಿದೆ ಹೊರತು ಅನ್ಯಕಾರಣಗಳಿಂದಲ್ಲ. ಕಾವೇರಿ ನೀರು ಹರಿಸಿದರೆ ರಾಜೀನಾಮೆ ಕೊಡುತ್ತೇವೆ ಎಂದು ರಾಜಕಾರಣಿಗಳು ಹೇಳುವುದು ಜನರ ಭಾವನೆಗಳನ್ನು ಹಿಡಿಟ್ಟುಕೊಂಡು ಚಲಾವಣೆಯಲ್ಲಿರಲು ಹೊರತು ಆ ರಾಜೀನಾಮೆಯಿಂದ ಕಾವೇರಿ ನೀರು ಹರಿಯುವುದು ನಿಲ್ಲುತ್ತದೆಯೇ?
ಕಾವೇರಿ ನದಿಯ ಪುರಾಣ ಕತೆಯಲ್ಲಿ ಅಗಸ್ತ್ಯ ಮುನಿ ಲೋಪಮುದ್ರೆಯನ್ನು ಮದುವೆಯಾಗುತ್ತಾನೆ. ತನ್ನನ್ನು ಕಾಯಿಸಬಾರದು ಎನ್ನುವ ಆಕೆಯ ಕೋರಿಕೆಗೆ ಮುನಿಯೂ ಸಮ್ಮತಿಸಿರುತ್ತಾನೆ. ಆದರೆ ಮುನಿ ಶಿಷ್ಯರಿಗೆ ಪಾಠಮಾಡುವುದರಲ್ಲಿ ತಲ್ಲೀನನಾಗಿ ಲೋಪಮುದ್ರೆಯನ್ನು ಮರೆತು ತಡವಾಗಿ ಹೋದಾಗ ಆಕೆ ತಾಳ್ಮೆಕಳೆದುಕೊಂಡು ಕಾವೇರಿ ನದಿಯಾಗಿ ಹರಿದುಹೋಗುತ್ತಿರುತ್ತಾಳೆ. ಆಗ ಮುನಿಯಿಂದಲೂ ಆಕೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುವುದಿಲ್ಲ. ಆದ್ದರಿಂದ ಅಗಸ್ತ್ಯ ಮುನಿಗೇ ಕಾಯದ ಕಾವೇರಿ ರಾಜಕಾರಣಿಗಳನ್ನು ಕಾಯುತ್ತಾಳೆಯೇ? ಅವರ ರಾಜೀನಾಮೆಗೆ ಬೆದರುಳುತ್ತಾಳೆಯೇ?
ಕೇವಲ ರಾಜಕೀಯ ಕಾರಣಗಳಿಗಾಗಿ ಕಾವೇರಿ ನದಿ ವಿವಾದವನ್ನು ಬಗೆಹರಿಸದೆ ಜೀವಂತವಾಗಿಡುವ ಮೂಲಕ ಎರಡೂ ರಾಜ್ಯಗಳ ಜನರ ನಡುವೆ ದ್ವೇಷ ಹುಟ್ಟು ಹಾಕುವಂಥ ಕಾಯಕವನ್ನು ಜನರೇ ಅರ್ಥಮಾಡಿಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯಗಳ ನಡುವೆ ಹೊಂದಾಣಿಕೆ ಕೊರತೆಯೂ ಕೂಡಾ ಈ ವಿವಾದ ಬಗೆಹರಿಯದಿರಲು ಕಾರಣವಾಗಿದೆ. ಎರಡೂ ರಾಜ್ಯಗಳು ರಾಜಕೀಯವನ್ನು ಬದಿಗಿಟ್ಟು ವಾಸ್ತವಿಕೆ ನೆಲೆಗಟ್ಟಿನಲ್ಲಿ ಚರ್ಚಿಸಿ ವಿವಾದಕ್ಕೆ ತೆರೆ ಎಳೆಯಬೇಕೇ ಹೊರತು ಕೋರ್ಟು, ಪ್ರಾಧಿಕಾರ ಎನ್ನುವ ಪ್ರಕ್ರಿಯೆಗಳು ಈ ವಿವಾದವನ್ನು ಇತ್ಯರ್ಥಪಡಿಸುವುದಿಲ್ಲ.