Category Archives: ಜಗದೀಶ್ ಕೊಪ್ಪ

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-2)


– ಡಾ.ಎನ್.ಜಗದೀಶ್ ಕೊಪ್ಪ


ಕಮ್ಯೂನಿಷ್ಟ್ ವಿಚಾರಧಾರೆಯಲ್ಲಿ ತಮ್ಮ ವ್ಯಕ್ತಿತ್ವಗಳನ್ನು ರೂಪಿಸಿಕೊಂಡಿದ್ದ ಚಾರು ಮುಜಂದಾರ್, ಕನು ಸನ್ಯಾಲ್ ಗೆಳೆಯರಾದ ಮೇಲೆ ಕೃಷಿ ಕೂಲಿಕಾರ್ಮಿಕರ ಹೋರಾಟಕ್ಕೆ ಹೊಸರೂಪ ಕೊಡಲು ನಿರ್ಧರಿಸಿದರು. ಹತ್ತಾರು ವರ್ಷ ಕೇವಲ ಪ್ರತಿಭಟನೆ ಮತ್ತು ಪೊಲೀಸರ ಬಂಧನದಿಂದ ದುಡಿಯುವ ವರ್ಗಕ್ಕೆ ನ್ಯಾಯ ಸಿಗುವುದಿಲ್ಲ ಎಂಬುದನ್ನು ಮನಗಂಡ ಈ ಇಬ್ಬರು ಗೆಳೆಯರು ನೇರಕಾರ್ಯಾಚರಣೆ (Direct Action) ನಡೆಸಲು ತೀರ್ಮಾನಿಸಿದರು. ಚಾರು ಪ್ರತಿಭಟನೆ ಮತ್ತು ಹೋರಾಟಗಳಿಗೆ ಯೋಜನೆ ರೂಪಿಸುವಲ್ಲಿ ಪರಿಣಿತನಾದರೆ, ಕನುಸನ್ಯಾಲ್  ಸಂಘಟನೆಗೆ ಜನರನ್ನು ಒಗ್ಗೂಡಿಸುವ ವಿಷಯದಲ್ಲಿ ಅದ್ಭುತ ಕ್ರಿಯಾಶೀಲ ವ್ಯಕ್ತಿಯಾಗಿದ್ದ. ಹಾಗಾಗಿ ಈ ಎರಡು ಪ್ರತಿಭೆಗಳ ಸಂಗಮ ಕೃಷಿಕರ ಮತ್ತು ಕೃಷಿಕೂಲಿ ಕಾರ್ಮಿಕರ ಹೋರಾಟಕ್ಕೆ ಹೊಸ ಆಯಾಮವನ್ನು ತಂದುಕೊಟ್ಟಿತು.  ಮೂಲಭೂತವಾಗಿ ಈ ಹೋರಾಟ ಹಿಂಸೆಯನ್ನು ಒಳಗೊಳ್ಳುವ ಆಲೋಚನೆಯಿಂದ ಕೂಡಿರಲಿಲ್ಲ. ಆದರೆ, ನಕ್ಸಲ್‍ಬಾರಿ ಹಳ್ಳಿಯ ಪ್ರಥಮ ಪ್ರತಿಭಟನೆ ಒಂದು ಕೆಟ್ಟ ಗಳಿಗೆಯಲ್ಲಿ ಅನಿರೀಕ್ಷಿತವಾಗಿ ತೆಗೆದುಕೊಂಡ ತಿರುವಿನಿಂದಾಗಿ ಇವರೆಲ್ಲರನ್ನು ಹಿಂಸೆಯ ಹಾದಿಯಲ್ಲಿ ಶಾಶ್ವತವಾಗಿ ನಡೆಯುವಂತೆ ಮಾಡಿದ್ದು ಭಾರತದ ಸಾಮಾಜಿಕ ಹೋರಾಟಗಳ ದುರಂತದ ಅಧ್ಯಾಯಗಳಲ್ಲಿ ಒಂದು.

1967 ರ ಮಾರ್ಚ್ ಮೂರರಂದು, ಲಪ, ಸಂಗು, ರೈತ ಎಂಬ ಮೂವರು ಸಣ್ಣ ಹಿಡುವಳಿದಾರರು ನೂರೈವತ್ತುಕ್ಕೂ ಹೆಚ್ಚು ಮಂದಿ ಇದ್ದ ಕಮ್ಯೂನಿಷ್ಟ್ ಕಾರ್ಯಕರ್ತರ ಬೆಂಬಲದಿಂದ ನಕ್ಸಲ್‍ಬಾರಿಯ ಜಮೀನುದಾರನ ಮನೆಗೆ ಬಿಲ್ಲು, ಬಾಣ, ಭರ್ಜಿ ಮುಂತಾದ ಆಯುಧಗಳೊಂದಿಗೆ ದಾಳಿ ಇಟ್ಟು ಮುನ್ನೂರು ಭತ್ತದ ಚೀಲಗಳನ್ನು ಹೊತ್ತೊಯ್ದು ಎಲ್ಲರೂ ಸಮನಾಗಿ ಹಂಚಿಕೊಂಡರು. ಈ ಸಣ್ಣ ಘಟನೆ ಕಮ್ಯೂನಿಷ್ಟ್ ಚಳವಳಿಗೆ ಭಾರತದಲ್ಲಿ ಪ್ರಥಮಬಾರಿಗೆ ಹೊಸ ಆಯಾಮ ನೀಡಿತು.

ನಕ್ಸಲ್‍ಬಾರಿ ಹಳ್ಳಿಯಲ್ಲಿ ನಡೆದ ರೈತರ ಪ್ರತಿಭಟನೆ ಕಮ್ಯೂನಿಷ್ಟ್ ಪಕ್ಷಕ್ಕೆ ವಿನೂತನವಾಗಿ ಕಂಡರೂ ಇದಕ್ಕೂ ಮೊದಲು ಪಕ್ಷದ ಕಾರ್ಯಕರ್ತರು  ರೈತರ ಪರವಾಗಿ ಧ್ವನಿಯೆತ್ತಿದ್ದರು. ಪಶ್ಚಿಮ ಬಂಗಾಳದ ದಿನಜಪುರ್ ಮತ್ತು ರಂಗ್ಪುರ್ ಜಿಲ್ಲೆಗಳಲ್ಲಿ ಜಮೀನುದಾರರು ಗೇಣಿದಾರರಿಗೆ ಬೇಳೆಯುವ ಫಸಲಿನಲ್ಲಿ ಅರ್ಧದಷ್ಟು ಪಾಲು ಕೊಡಬೇಕೆಂದು ಒತ್ತಾಯಿಸಿ ನಡೆಸಿದ ಹೋರಾಟ, ಬಂಗಾಳದ ಉತ್ತರ ಭಾಗದಿಂದ ದಕ್ಷಿಣದ 24 ಪರಗಣ ಜಿಲ್ಲೆಯವರೆಗೆ ಹಬ್ಬಿತ್ತು. ಇದಕ್ಕಾಗಿ ಕಮ್ಯೂನಿಷ್ಟ್ ಪಕ್ಷದಲ್ಲಿ ಕಿಸಾನ್‍ಸಭಾ ಎಂಬ ಘಟಕವನ್ನು ರಚಿಸಿಕೊಂಡು ಕಾರ್ಯಕರ್ತರು 1946 ರಿಂದ ಸತತ ಹೋರಾಟ ನಡೆಸುತ್ತಾ ಬಂದಿದ್ದರು.

ನೆರೆಯ ಆಂಧ್ರ ಪ್ರದೇಶದಲ್ಲಿಯೂ ಕೂಡ ತೆಲಂಗಾಣ ಪ್ರಾಂತ್ಯದಲ್ಲಿ ಕಮ್ಯೂನಿಷ್ಟ್ ಕಾರ್ಯಕರ್ತರ ಬೆಂಬಲದೊಂದಿಗೆ ನಿಜಾಮನ ಶೋಷಣೆಯ ವಿರುದ್ಧ ಸ್ಥಳೀಯ ರೈತರು ದಂಗೆಯೆದ್ದರು. ನಿಜಾಮನ ಆಳ್ವಿಕೆ ಹಾಗೂ ಅವನ ಆಡಳಿತದ ಅರಾಜಕತೆಯಿಂದ ಬೇಸತ್ತ ಅಲ್ಲಿನ ಜನತೆ 1946 ರಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯ ಕಾಡ್ಗಿಚ್ಚು ಆ ಪ್ರಾಂತ್ಯದ ಮೂರು ಸಾವಿರ ಹಳ್ಳಿಗಳಿಗೆ ಹರಡಿ ಪ್ರತಿಯೊಂದು ಹಳ್ಳಿಯೂ ಸ್ವಯಂ ಸ್ವತಂತ್ರ ಘಟಕದಂತೆ ನಡೆಯಲು ಪ್ರಾರಂಭಿಸಿದವು. ಕೇವಲ ಎರಡು ವರ್ಷಗಳ ಅವಧಿಯಲ್ಲಿ, ಸ್ವಾತಂತ್ರ್ಯಾನಂತರದ ಭಾರತದ ಸೇನೆ ಆಂಧ್ರಪ್ರದೇಶಕ್ಕೆ ಧಾವಿಸಿ ಬಂದು, ಹೈದರಾಬಾದ್ ಪ್ರಾಂತ್ಯವನ್ನು ನಿಜಾಮನಿಂದ ಕಿತ್ತುಕೊಳ್ಳುವವರೆಗೂ ನಾಲ್ಕುಸಾವಿರ ಮಂದಿ ರೈತರು ನಿಜಾಮನ ದಬ್ಬಾಳಿಕೆಯಲ್ಲಿ ಹೋರಾಟದ ಹೆಸರಿನಲ್ಲಿ ಮೃತಪಟ್ಟಿದ್ದರು. (ಹೈದರಾಬಾದ್ ನಿಜಾಮ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕನಂತರ ಹೈದರಾಬಾದ್ ಅನ್ನು ವಿಲೀನಗೊಳಿಸಲು ನಿರಾಕರಿಸಿ ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡಿದ್ದನು).

ಕಮ್ಯೂನಿಷ್ಟ್ ಪಕ್ಷದ ಅಂಗವಾದ ಕಿಸಾನ್‍ಸಭಾ ಘಟಕದ ಹೋರಾಟಕ್ಕೆ ನಿಜವಾದ ಹೊಸ ಆಯಾಮ ತಂದುಕೊಟ್ಟವರು ನಕ್ಸಲ್‍ಬಾರಿ ಗ್ರಾಮದ ರೈತರು ಮತ್ತು ಕೃಷಿಕೂಲಿ ಕಾರ್ಮಿಕರು. ಇವರಿಗೆ ಆಧಾರವಾಗಿ ನಿಂತವರು, ಚಾರು ಮುಜಂದಾರ್, ಕನುಸನ್ಯಾಲ್, ಮತ್ತು ಸ್ಥಳೀಯ ಆದಿವಾಸಿ ನಾಯಕ ಜಂಗಲ್ ಸಂತಾಲ್ ಎಂಬಾತ. ನಕ್ಸಲ್‍ಬಾರಿ ಘಟನೆ ಮೇಲು ನೋಟಕ್ಕೆ ಒಂದು ಸಣ್ಣ ಘಟನೆಯಂತೆ ಕಂಡು ಬಂದರೂ ಅದು ಕಮ್ಯೂನಿಷ್ಟ್ ಪಕ್ಷ ತಾನು ನಂಬಿಕೊಂಡು ಬಂದಿದ್ದ ವಿಚಾರ ಮತ್ತು ತಾತ್ವಿಕ ಸಿದ್ಧಾಂತಕ್ಕೆ ಅತಿ ದೊಡ್ಡ ಸವಾಲನ್ನು ಎಸೆದಿತ್ತು. ಅದು ಅನಿರೀಕ್ಷಿತವಾಗಿ ಸ್ಪೋಟಗೊಂಡರೂ ಸಹ ಅದರ ಹಿನ್ನಲೆಯಲ್ಲಿ ಅನೇಕ ರೈತರ, ಸಿಟ್ಟು, ಸಂಕಟ ಮತ್ತು ನೋವು ಹಿಂಸಾಚಾರದ ಮೂಲಕ ವ್ಯಕ್ತವಾಗಿತ್ತು.

ಇದಕ್ಕೆ ಭಾರತ ಸರ್ಕಾರ 1955 ರಲ್ಲಿ ಜಾರಿಗೆ ತಂದ ಭೂಮಿತಿ ಕಾಯ್ದೆ ಕೂಡ ಪರೋಕ್ಷವಾಗಿ ಕಾರಣವಾಗಿತ್ತು. ಪ್ರತಿಯೊಬ್ಬ ವ್ಯಕ್ತಿ 15 ಎಕರೆ ಕೃಷಿಭೂಮಿ, 25 ಎಕರೆ ಕೃಷಿಗೆ ಯೋಗ್ಯವಲ್ಲದ ಭೂಮಿ ಮತ್ತು ಮನೆ ಹಾಗೂ ಇನ್ನಿತರೆ ಬಳಕೆಗಾಗಿ 5 ಎಕರೆ, ಈಗೆ ಒಟ್ಟು 45 ಎಕರೆಯನ್ನು ಮಾತ್ರ ಹೊಂದಬಹುದಾಗಿತ್ತು. ಆದರೆ, ಪಶ್ಚಿಮ ಬಂಗಾಳ, ಆಂಧ್ರ ಸೇರಿದಂತೆ ದೇಶಾದ್ಯಂತ ಅನೇಕ ಜಮೀನುದಾರರು ಸಾವಿರಾರು ಎಕರೆ ಭೂಮಿ ಹೊಂದಿದ್ದರು. ಸರ್ಕಾರದ ಕಣ್ಣು ಒರೆಸುವ ಸಲುವಾಗಿ ತಮ್ಮ ಭೂಮಿಯನ್ನು ಮುಗ್ದ ರೈತರ ಹೆಸರಿಗೆ ವರ್ಗಾಯಿಸಿ, ಅವುಗಳ ದಾಖಲೆ ಪತ್ರಗಳನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದರು. ಭೂಮಿಯ ಒಡೆಯರಾಗಿದ್ದರೂ ಕೂಡ ರೈತರು ಜಮೀನ್ದಾರರಿಗೆ ಹಾಗೂ ಅವರು ಸಾಕಿಕೊಂಡಿದ್ದ ಗೂಂಡಗಳಿಗೆ ಹೆದರಿ ಗೇಣಿದಾರರಾಗಿ ದುಡಿಯುತ್ತಾ ತಾವು ಬೆಳೆದ ಫಸಲಿನ ಮುಕ್ಕಾಲು ಪಾಲು ಅವರಿಗೆ ನೀಡಿ, ಉಳಿದ ಕಾಲು ಪಾಲನ್ನು ತಾವು ಅನುಭವಿಸುತ್ತಿದ್ದರು.

ಈ ಅಸಮಾನತೆಯ ವಿರುದ್ಧ ನಕ್ಸಲ್‍ಬಾರಿ ಪ್ರದೇಶದಲ್ಲಿ ಸಣ್ಣ ಹಿಡುವಳಿದಾರರು, ಗೇಣಿದಾರರು ಮತ್ತು ಕೃಷಿ ಕೂಲಿಕಾರ್ಮಿಕರ ಪರವಾಗಿ ಕಿಸಾನ್‍ಸಭಾ ಸಂಘಟನೆ 1959 ರಲ್ಲಿ ಪ್ರಥಮ ಬಾರಿಗೆ ಪ್ರತಿಭಟನೆಯ ಬಾವುಟ ಹಾರಿಸಿತ್ತು. ಆದರೆ, ಈ ಹೋರಾಟ 1962 ರವರೆಗೆ ಮುಂದುವರಿದು ಕೆಲವು ನಾಯಕರ ಬಂಧನದೊಂದಿಗೆ ವಿಫಲತೆಯನ್ನು ಅನುಭವಿಸಿತು. ಇಂತಹ ಸೋಲಿನ ಹಿನ್ನಲೆಯಲ್ಲಿ ಹೋರಾಟವನ್ನು ಯಾವ ಮಾರ್ಗದಲ್ಲಿ ಕೊಂಡೊಯ್ಯಬೇಕು ಎಂಬುದರ ಬಗ್ಗೆ ನಾಯಕರಲ್ಲಿ ಜಿಜ್ಙಾಸೆ ಮೂಡಿಸಿತು. ಪಕ್ಷದ ನಾಯಕರಲ್ಲಿ ಕೆಲವರಿಗೆ ರೈತರ ಸಮಸ್ಯೆಗಳಿಗೆ ಸೈದ್ಧಾಂತಿಕ ನೆಲೆಗಟ್ಟಿನ ಹೋರಾಟದಲ್ಲಿ ಪರಿಹಾರ ಕಂಡುಕೊಳ್ಳುವ ಹಂಬಲವಿತ್ತು. ಆದರೆ, ಈ ಸೌಮ್ಯವಾದಿಗಳ ನಿರ್ಧಾರ ಕೆಲವು ತೀವ್ರವಾದಿ ಮನಸ್ಸಿನ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಒಪ್ಪಿಗೆಯಾಗಲಿಲ್ಲ. ಇವರಲ್ಲಿ ಚಾರು ಮತ್ತು ಕನುಸನ್ಯಾಲ್, ನಾಗಭೂಷಣ್ ಪಟ್ನಾಯಕ್, ಕೊಂಡಪಲ್ಲಿ ಸೀತಾರಾಮಯ್ಯ ಪ್ರಮುಖರು.

1966 ರ ಅಕ್ಟೋಬರ್ ತಿಂಗಳಿನಲ್ಲಿ ಪಶ್ಚಿಮ ಬಂಗಾಳದ ಬರ್ದಾನ್ ಜಿಲ್ಲೆಯ ಸಟ್‍ಗಚಿಯ ಎಂಬಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶ ನಡೆಯಿತು. ಅವರೆಗೂ ಮಾರ್ಕ್ಸ್ ಹಾಗೂ ಲೆನಿನ್ ವಿಚಾರಧಾರೆಯನ್ನು ಅನುಕರಿಸಿಕೊಂಡು ಬಂದಿದ್ದ ಪಕ್ಷಕ್ಕೆ ಹೊಸದಾಗಿ ಚೀನಾದ ಮಾವೋತ್ಸೆ ತುಂಗನ ಕ್ರಾಂತಿಕಾರಕ ವಿಚಾರಗಳನ್ನು ಅಳವಡಿಸಿಕೊಳ್ಳುವ ಸಂದಿಗ್ದತೆ ಎದುರಾಯಿತು. ಈ ಸಮಾವೇಶಕ್ಕೆ ಸಿಲುಗುರಿ ಪ್ರಾಂತ್ಯದಿಂದ ಚಾರು ಮುಜಂದಾರ್, ಕನುಸನ್ಯಾಲ್, ಜಂಗಲ್ ಸಂತಲ್ ಸೇರಿದಂತೆ ಎಂಟು ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದರು. ಇವರೆಲ್ಲರೂ 1965 ರ ಏಪ್ರಿಲ್ ತಿಂಗಳಿನಲ್ಲಿ ಮುದ್ರಿಸಿದ್ದ ಕರಪತ್ರವೊಂದನ್ನು ಜೊತೆಯಲ್ಲಿ ತಂದಿದ್ದರು. ಕರಪತ್ರದಲ್ಲಿ ರೈತರು, ಗೇಣಿದಾರರು ಮುಂದೆ ಬಂದು ಬಲತ್ಕಾರವಾಗಿ ಜಮೀನ್ದಾರರಿಂದ ಭೂಮಿಯನ್ನು ಕಿತ್ತುಕೊಳ್ಳಲು ಕರೆನೀಡಲಾಗಿತ್ತು. ಅಲ್ಲದೆ, ಸಮಾವೇಶಕ್ಕೆ ಮುನ್ನ ಎರಡು ತಿಂಗಳ ಮುಂಚೆ ಅಂದರೆ, ಆಗಸ್ಟ್ ತಿಂಗಳಿನಲ್ಲಿ ಮುದ್ರಿಸಲಾಗಿದ್ದ ಕರಪತ್ರವನ್ನು ಸಹಾ ಸಿಲಿಗುರಿ ಪ್ರಾಂತ್ಯದ ಪ್ರತಿನಿಧಿಗಳು, ಕಾರ್ಯಕರ್ತರಿಗೆ ಹಂಚಿದರು.

ಕರಪತ್ರದಲ್ಲಿ ಹಳ್ಳಿಗಳಲ್ಲಿ ವಾಸವಾಗಿರುವ ರೈತರು ಹಾಗೂ ಕೃಷಿಕೂಲಿ ಕಾರ್ಮಿಕರು ಸಂಘಟಿತರಾಗಲು ಕರೆ ನೀಡಲಾಗಿತ್ತು, ಎರಡನೇದಾಗಿ ದುರಂಕಾರದ ಜಮೀನ್ದಾರರು, ಮತ್ತು ಅವರ ಗೂಂಡಾ ಪಡೆಯನ್ನು ಸಮರ್ಥವಾಗಿ ಎದುರಿಸಲು ಬಿಲ್ಲು, ಬಾಣಗಳಿಂದ ಸಿದ್ಧರಾಗಲು ವಿನಂತಿಸಿಕೊಳ್ಳಲಾಗಿತ್ತು, ಮೂರನೇದಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಬಡವರು ಮತ್ತು ಕೂಲಿಕಾರರು, ಅಸಹಾಯಕ ಗೇಣಿದಾರರು ನೆಮ್ಮದಿಯಿಂದ ಬದುಕಬೇಕಾದರೆ, ಕೊಬ್ಬಿದ ಜಮೀನ್ದಾರರನ್ನು ಮಟ್ಟ ಹಾಕುವುದು ಅನಿವಾರ್ಯ ಎಂಬ ನಿರ್ಧಾರಕ್ಕೆ ಬರಲಾಗಿತ್ತು. ಇದೇ ವಿಚಾರಗಳನ್ನು ಪಕ್ಷದ ಸಮಾವೇಶದಲ್ಲಿ ಚಾರು ಮತ್ತು ಅವನ ಸಂಗಡಿಗರು ಬಲವಾಗಿ ಸಮರ್ಥಿಸಿಕೊಂಡು, ಪಕ್ಷ ಶೀಮಂತ ಜಮೀನ್ದಾರರ ಬಗ್ಗೆ ಕಠಿಣ ನಿಲುವು ತಳೆಯಬೇಕೆಂದು ಆಗ್ರಹಸಿದರು. ಕಮ್ಯೂನಿಷ್ಟ್ ಪಕ್ಷದ ಧುರೀಣರು ಚಾರು ಮತ್ತು ಅವನ ಸಂಗಡಿಗರು ಎತ್ತಿದ ಪ್ರಶ್ನೆಗಳಿಗೆ ಯಾವುದೇ ಸಮಜಾಯಿಸಿ ನೀಡಲು ಸಾಧ್ಯವಾಗದೇ ಮೌನಕ್ಕೆ ಶರಣಾದರು. ಇದು ಪರೋಕ್ಷವಾಗಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಲ್ಲಿ ತಾವು ನಂಬಿಕೊಂಡು ಬಂದಿದ್ದ ತಾತ್ವಿಕ ಸಿದ್ಧಾಂತಗಳಿಗಾಗಿ ಅಂಟಿಕೊಳ್ಳುವ ಅನಿವಾರ್ಯತೆ ಎದುರಾಯಿತು. ಒಟ್ಟಾರೆ, 1966 ರ ಈ ಸಮಾವೇಶ, ಕಮ್ಯೂನಿಷ್ಟ್ ಸಿದ್ಧಾಂತಗಳ ಸಂಘರ್ಷದಿಂದಾಗಿ ಹೋಳಾಗುವ ಸ್ಥಿತಿ ತಲುಪಿತು. ಕೆಲವರು ಮಾರ್ಕ್ಸ್ ಮತ್ತು ಲೆನಿನ್ ಸಿದ್ಧಾಂತಕ್ಕೆ ಅಂಟಿಕೊಂಡರೆ, ಮತ್ತೇ ಕೆಲವರು ತೀವ್ರಗಾಮಿ ಎನಿಸಿದ ಮಾವೋನ ವಿಚಾರಗಳಿಂದ ಪ್ರೇರಿತರಾಗಿ ಮಾವೋನನ್ನು ಆರಾಧಿಸತೊಡಗಿದರು.

(ಮುಂದುವರಿಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -15)


– ಡಾ.ಎನ್.ಜಗದೀಶ್ ಕೊಪ್ಪ


 

ಜಿಮ್ ಕಾರ್ಬೆಟ್ ಆದಿನ ಇಡೀ ರಾತ್ರಿ ನರಭಕ್ಷಕ ಹುಲಿಗಾಗಿ ಕಾದಿದ್ದು ಏನೂ ಪ್ರಯೋಜನವಾಗಲಿಲ್ಲ. ನರಭಕ್ಷಕ ತನ್ನ ಅಡಗುತಾಣವನ್ನು ಬದಲಾಯಿಸಿರಬಹುದು ಎಂಬ ಸಂಶಯ ಕಾರ್ಬೆಟ್‍ಗೆ ಕಾಡತೊಡಗಿತು. ಬೆಳಿಗ್ಗೆ ಸ್ನಾನ ಮಾಡಿದ ಅವನು ಏನಾದರೂ ಸುಳಿವು ಸಿಗಬಹುದೇ ಎಂಬ ನಿರೀಕ್ಷೆಯಿಂದ ನರಭಕ್ಷಕ ದಾಳಿ ಮಾಡಿದ್ದ ಮನೆಯೊಂದಕ್ಕೆ ಭೇಟಿ ನೀಡಿದ. ಕೇವಲ ಒಂದು ವಾರದ ಹಿಂದೆ ಮನೆಯ ಹಿತ್ತಲಲ್ಲಿ ಬಟ್ಟೆ ಒಗೆಯುತ್ತಿದ್ದ ಮಹಿಳೆಯೊಬ್ಬಳನ್ನು ನರಭಕ್ಷಕ ಹುಲಿ ಕೊಂಡೊಯ್ದಿತ್ತು. ಮನೆಯ ಸುತ್ತಾ ಅದರ ಹೆಜ್ಜೆ ಗುರುತಿಗಾಗಿ ಕಾರ್ಬೆಟ್ ಹುಡುಕಾಡಿದರೂ ಯಾವುದೇ ಸುಳಿವು ಸಿಗಲಿಲ್ಲ.

ಜಿಮ್ ಕಾರ್ಬೆಟ್‍ಗೆ ಹುಲಿಗಳ ಹೆಜ್ಜೆ ಗುರುತಿನ ಮೇಲೆ ಅವುಗಳ ವಯಸ್ಸನ್ನು ಅಂದಾಜಿಸಬಲ್ಲ ಶಕ್ತಿಯಿತ್ತು. ಅಷ್ಟೇ ಅಲ್ಲ ಸಾಮಾನ್ಯವಾಗಿ ಹುಲಿಗಳು ನಡೆಯುವಾಗ ಅವುಗಳ ಹಿಂದಿನ ಕಾಲುಗಳ ಹೆಜ್ಜೆ ಗುರುತುಗಳು ನೆಲದ ಮೇಲೆ ಮೂಡತ್ತವೆ ಎಂಬುದನ್ನು ಅವನು ಅರಿತ್ತಿದ್ದ. ಹುಲಿಗಳು ಪ್ರಾಣ ಭಯ ಅಥವಾ ಇನ್ನಿತರೆ ಕಾರಣಗಳಿಂದ ವೇಗವಾಗಿ ಓಡುವಾಗ ಮಾತ್ರ ಅವುಗಳ ಮುಂದಿನ ಕಾಲುಗಳ ಬಲವಾದ ಹೆಜ್ಜೆಯ ಗುರುತು ಮೂಡುತ್ತವೆ ಎಂಬುದು ಅವನ ಶಿಕಾರಿ ಅನುಭವದಲ್ಲಿ ಮನದಟ್ಟಾಗಿತ್ತು.

ಪಾಲಿಹಳ್ಳಿಯಲ್ಲಿ ಎರಡು ಹಗಲು, ಎರಡು ರಾತ್ರಿ ಕಳೆದರೂ ನರಭಕ್ಷಕನ ಸುಳಿವು ಸಿಗದ ಕಾರಣ, ಅದು ತನ್ನ ವಾಸ್ತವ್ಯ ಬದಲಾಯಿಸಿದೆ ಎಂಬ ತೀರ್ಮಾನಕ್ಕೆ ಬಂದ ಕಾರ್ಬೆಟ್ ತನ್ನ ಸೇವಕರೊಡನೆ ನೈನಿತಾಲ್‍ಗೆ ಹಿಂತಿರುಗಲು ಸಿದ್ಧನಾದ. ಆ ದಿನಗಳಲ್ಲಿ ನರಭಕ್ಷಕ ಆ ಪ್ರಾಂತ್ಯದಲ್ಲೇ ಸುಳಿದಾಡುತ್ತಿದ್ದರಿಂದ ಹಗಲಿನ ವೇಳೆಯಲ್ಲಿ ದಾರಿಯಲ್ಲಿ ಅತ್ಯಂತ ಎಚ್ಚರಿಕೆಯಿಂದ ನಡೆಯಬೇಕಾಗಿತ್ತು. ಕಾರ್ಬೆಟ್ ಬೆಟ್ಟ ಗುಡ್ಡ ಹತ್ತಿ, ಇಳಿದು. ನೈನಿತಾಲ್‍ಗೆ ಸಾಗುತ್ತಿದ್ದ ವೇಳೆ ಪಾಲಿಹಳ್ಳಿಯಿಂದ 20 ಕಿಲೋ ಮೀಟರ್ ದೂರದ ಚಂಪಾವತ್ ಎಂಬ ಹಳ್ಳಿಯಲ್ಲಿ ನರಭಕ್ಷಕ ಪ್ರತ್ಯಕ್ಷವಾಗಿ ಹಸುವೊಂದನ್ನು ಬಲಿತೆಗೆದುಕೊಂಡ ಸುದ್ದಿ ಕಾರ್ಬೆಟ್ ತಂಡಕ್ಕೆ ತಲುಪಿತು. ವಿಷಯ ತಿಳಿಯುತ್ತಿದ್ದಂತೆ ಕಾರ್ಬೆಟ್ ನೈನಿತಾಲ್ ಮಾರ್ಗವನ್ನು ತೊರೆದು ಚಂಪಾವತ್ ಹಳ್ಳಿಯತ್ತ ಹೊರಟ.

ಆ ಹಳ್ಳಿಯಲ್ಲಿ ಡಾಕ್ ಬಂಗ್ಲೆ ಎಂದು ಆ ಕಾಲದಲ್ಲಿ ಕರೆಯುತ್ತಿದ್ದ ಪ್ರವಾಸಿ ಮಂದಿರವಿದ್ದುದರಿಂದ ಕಾರ್ಬೆಟ್ ಮತ್ತು ಅವನ ಸಂಗಡಿಗರಿಗೆ ವಸತಿ ವ್ಯವಸ್ಥೆಗೆ ಯಾವುದೇ ತೊಂದರೆಯಾಗಲಿಲ್ಲ. ಚಂಪಾವತ್ ಹಳ್ಳಿಯ ಹೊರಭಾಗದಲ್ಲಿದ್ದ ಆ ಪ್ರವಾಸಿ ಮಂದಿರಕ್ಕೆ ಆಗಾಗ್ಗೆ ಸರ್ಕಾರದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಭೇಟಿ ನೀಡುತ್ತಿದ್ದರಿಂದ ಅಲ್ಲಿ ಒಬ್ಬ ಸೇವಕನನ್ನು ಸರ್ಕಾರ ನೇಮಕ ಮಾಡಿತ್ತು ಆತ ಅಲ್ಲಿಗೆ ಬರುವ ಅತಿಥಿಗಳ ಊಟೋಪಚಾರ, ವಸತಿ ವ್ಯವಸ್ಥೆ ಎಲ್ಲವನ್ನು ನೋಡಿಕೊಳ್ಳುತ್ತಿದ್ದ. ಬೆಳಗಿನ ಜಾವ ಪ್ರವಾಸಿ ಮಂದಿರಕ್ಕೆ ಬಂದ ಕಾರ್ಬೆಟ್ ಚಹಾ ಕುಡಿದು, ಸ್ನಾನ ಮುಗಿಸುವಷ್ಟರಲ್ಲಿ ಆ ಪ್ರದೇಶದ ತಹಸಿಲ್ದಾರ್  ಅಲ್ಲಿಗೆ ಬಂದು ಕಾರ್ಬೆಟ್‍ನನ್ನು ಪರಿಚಯಿಸಿಕೊಂಡ. ಇಬ್ಬರೂ ಉಪಹಾರ ಸೇವಿಸುತ್ತಾ ನರಭಕ್ಷಕ ಹುಲಿಯ ಬಗ್ಗೆ ಚರ್ಚೆ ಮಾಡುತ್ತಿರುವಾಗಲೇ ಹಳ್ಳಿಯಿಂದ ಯುವಕನೊಬ್ಬ ಓಡೋಡಿ ಬರುತ್ತಲೇ ಹುಲಿ ಯುವತಿಯೊಬ್ಬಳನ್ನು ಆಹುತಿ ತೆಗೆದುಕೊಂಡು ಕಾಡಿನತ್ತ ಕೊಂಡೊಯ್ದ ಸುದ್ದಿಯನ್ನು ಮುಟ್ಟಿಸಿದ. ತಮ್ಮ ಚರ್ಚೆಯನ್ನು ಅರ್ಧಕ್ಕೆ ನಿಲ್ಲಿಸಿದ ಇಬ್ಬರೂ ಬಂದೂಕಿನೊಂದಿಗೆ ಹಳ್ಳಿಯತ್ತ ತೆರಳಿದರು.

ಕಾರ್ಬೆಟ್ ಮತ್ತು ತಹಸಿಲ್ದಾರ್ ಚಂಪಾವತ್ ಗ್ರಾಮದ ಮಧ್ಯ ಇದ್ದ ದೇವಸ್ಥಾನದ ಬಳಿ ಬರುವುದರೊಳಗೆ ಹಳ್ಳಿ ಜನರೆಲ್ಲಾ ಆತಂಕ ಮತ್ತು ಭಯದೊಂದಿಗೆ ಗುಂಪುಗೂಡಿ ಚರ್ಚಿಸುತ್ತಾ ನಿಂತಿದ್ದರು. ಅವರಿಂದ ವಿವರಗಳನ್ನು ಪಡೆದ ಕಾರ್ಬೆಟ್, ಜನರೊಂದಿಗೆ ನರಭಕ್ಷಕ ಹುಲಿ ದಾಳಿ ನಡೆಸಿದ ಸ್ಥಳದತ್ತ ತೆರಳಿದ. ಇಲ್ಲಿಯೂ ಕೂಡ ನರಭಕ್ಷಕ ಹುಲಿ ಬಯಲಿನಲ್ಲಿ ಹಲವಾರು ಮಹಿಳೆಯರ ಜೊತೆ ಕಟ್ಟಿಗೆ ಸಂಗ್ರಹಿಸುತ್ತಿದ್ದ ಯುವತಿಯೊಬ್ಬಳ ಮೇಲೆ ಎರಗಿ ದಾಳಿ ನಡೆಸಿತ್ತು. ದಾಳಿ ನಡೆದ ಸ್ಥಳದಲ್ಲಿ ರಕ್ತದ ಕೋಡಿ ಹರಿದು ಹೆಪ್ಪುಗಟ್ಟಿದ್ದರಿಂದ, ಹುಲಿ ನೇರವಾಗಿ ಯುವತಿಯ ಕುತ್ತಿಗೆಗೆ ಬಾಯಿ ಹಾಕಿ ಸ್ಥಳದಲ್ಲೇ ಕೊಂದಿದೆ ಎಂದು ಕಾರ್ಬೆಟ್ ಊಹಿಸಿದ.

ಹುಲಿ ಯುವತಿಯನ್ನು ಹೊತ್ತೊಯ್ದ ಜಾಡು ಹಿಡಿದು ಸಾಗಿದಾಗ, ದಾರಿಯುದ್ದಕ್ಕೂ ಯುವತಿಯ ತಲೆ ನೆಲಕ್ಕೆ ತಾಗಿದ ಪರಿಣಾಮ ಆಕೆಯ ತಲೆ ಬುರುಡೆ ಒಡೆದು ಹೋಗಿ, ಅಲ್ಲಲ್ಲಿ ನೆಲದ ಮೇಲೆ, ಗಿಡಗಳ ಮೇಲೆ ರಕ್ತದ ಕಲೆಗಳು ಕಾಣಿಸಿದವು. ನರಭಕ್ಷ ಹುಲಿ ಯುವತಿಯ ಶವವನ್ನು ದಾಳಿ ನಡೆಸಿದ ಸ್ಥಳದಿಂದ ಸುಮಾರು ಒಂದೂವರೆ ಕಿಲೊಮೀಟರ್ ದೂರದ ಕಾಡಿನೊಳಗೆ 300 ಅಡಿಯಷ್ಟು ಆಳವಿದ್ದ ತಗ್ಗಿನ ಪ್ರದೇಶದ ಪೊದೆಗೆ ಕೊಂಡೊಯ್ದಿತ್ತು.

ಜಿಮ್ ಕಾರ್ಬೆಟ್ ತನ್ನೊಂದಿಗೆ ಬಂದಿದ್ದ ಜನರನ್ನು ಅಲ್ಲೇ ತಡೆದು, ತನ್ನ ಮೂವರು ಸೇವಕರ ಜೊತೆ, 300 ಅಡಿ ಆಳದ ಕಣಿವೆಗೆ ಇಳಿಯತೊಡಗಿದ. ದಾಳಿ ಅನಿರೀಕ್ಷಿತವಾಗಿ ನಡೆದಿದ್ದರಿಂದ ಶಿಕಾರಿಗೆ ಅವಶ್ಯವಿದ್ದ ಉಡುಪುಗಳನ್ನಾಗಲಿ, ಬೂಟುಗಳನ್ನಾಗಲಿ ಕಾರ್ಬೆಟ್ ಧರಿಸಿರಲಿಲ್ಲ. ಮಂಡಿಯುದ್ದಕ್ಕೂ ಧರಿಸುತ್ತಿದ್ದ ಕಾಲುಚೀಲ ಮತ್ತು ಕ್ಯಾನವಾಸ್ ಬೂಟುಗಳನ್ನು ಮಾತ್ರ ತೊಟ್ಟಿದ್ದ. ಅವುಗಳಲ್ಲೇ ಅತ್ಯಂತ ಜಾಗರೂಕತೆಯಿಂದ ಹಳ್ಳಕ್ಕೆ ಇಳಿಯತೊಡಗಿದ್ದ.

ಹಳ್ಳದಲ್ಲಿ ಒಂದು ಸರೋವರವಿದ್ದುದರಿಂದ ನರಭಕ್ಷಕ ಯುವತಿಯ ಕಳೇಬರವನ್ನು ಸರೋವರದ ಮಧ್ಯೆ ಮಂಡಿಯುದ್ದದ ನೀರಿನಲ್ಲಿ ಎಳೆದೊಯ್ದು ಆಚೆಗಿನ ಪೊದೆಯಲ್ಲಿ ಬೀಡು ಬಿಟ್ಟಿತ್ತು ಸರೋವರದ ನೀರು ರಕ್ತ ಮತ್ತು ಕೆಸರಿನಿಂದ ರಾಡಿಯಾಗಿತ್ತು, ಕಾರ್ಬೆಟ್ ತನ್ನ ಇಬ್ಬರು ಸೇವಕರನ್ನು ಹತ್ತಿರದಲ್ಲಿ ಇದ್ದ ಕಲ್ಲು ಬಂಡೆಯ ಮೇಲೆ ಕೂರಿಸಿ, ಸರೋವರದ ಬಳಿ ತೆರಳುತ್ತಿದ್ದಂತೆ, ಮನುಷ್ಯ ವಾಸನೆಯನ್ನು ಗ್ರಹಿಸಿದ ನರಭಕ್ಷಕ ಪೊದೆಯಿಂದಲೇ ಘರ್ಜಿಸತೊಡಗಿತು.

ಜಿಮ್ ಕಾರ್ಬೆಟ್ ಕ್ಯಾನ್ವಾಸ್ ಬೂಟುಗಳನ್ನು ಧರಿಸಿದ್ದರಿಂದ ನೀರಿಗೆ ಇಳಿಯಲು ಸಾದ್ಯವಾಗಲಿಲ್ಲ. ಒದ್ದೆಯಾದ ನೆಲದ ಮೇಲೆ ಮೂಡಿದ್ದ ನರಭಕ್ಷಕನ ಹೆಜ್ಜೆಯ ಗುರುತುಗಳನ್ನು ಪರಿಶೀಲಿಸಿ ಇದೊಂದು ವಯಸ್ಸಾದ ಹುಲಿ ಎಂಬ ತೀರ್ಮಾನಕ್ಕೆ ಬಂದ. ಸರೋವರದ ದಕ್ಷಿಣದ ತುದಿಯಲ್ಲಿ ನಿಂತು, ಅತ್ತ, ಇತ್ತ ತಿರುಗಾಡುತ್ತಾ ಆ ಬದಿಯಲ್ಲಿದ್ದ ನರಭಕ್ಷಕನ್ನು ಪ್ರಚೋದಿಸಲು ಪ್ರಯತ್ನಿಸಿದ. ಪೊದೆಯಿಂದ ಹೊರಬಂದು ಮುಖಮುಖಿಯಾದರೆ, ಗುಂಡಿಟ್ಟು ಕೊಲ್ಲಲು ಕಾರ್ಬೆಟ್ ಹವಣಿಸಿದ್ದ. ಆದರೆ, ನಿರಂತರ ನಾಲ್ಕು ಗಂಟೆಗಳು ಕಾರ್ಬೆಟ್ ಪ್ರಯತ್ನ ಪಟ್ಟರೂ, ಪೊದೆಯಿಂದ ನರಭಕ್ಷಕ ಹುಲಿಯ ಘರ್ಜನೆ ಸದ್ದು ಮಾತ್ರ ಹೊರಬರುತ್ತಿತ್ತು.

ಕೊನೆಗೆ ಕಾರ್ಬೆಟ್‍ನ ಧೈರ್ಯಕ್ಕೆ ಹೆದರಿದಂತೆ ಕಂಡ ನರಭಕ್ಷಕ ಯುವತಿಯ ಕಳೇಬರವನ್ನು ಅಲ್ಲೇ ಬಿಟ್ಟು ಕಣಿವೆಯ ಮೇಲ್ಭಾಗಕ್ಕೆ ಚಲಿಸತೊಡಗಿತು. ಅದು ಯಾವ ದಿಕ್ಕಿನತ್ತ ಚಲಿಸುತ್ತಿದೆ ಎಂಬುದು ಗಿಡಗೆಂಟೆಗಳ ಅಲುಗಾಡುವಿಕೆಯಿಂದ ತಿಳಿದು ಬರುತಿತ್ತು. ಅಂತಿಮವಾಗಿ ಕಣಿವೆಯಿಂದ ಮೇಲಕ್ಕೆ ಬಂದ ನರಭಕ್ಷಕ ಸಣ್ಣ ಸಣ್ಣ ಬಂಡೆಗಳು ಮತ್ತು ಕುರಚಲು ಗಿಡ ಮತ್ತು ಹುಲ್ಲುಗಾವಲು ಇದ್ದ ಬಯಲಿನಲ್ಲಿ ಅಡಗಿಕೊಂಡಿತು. ಅದನ್ನು ಅಲ್ಲಿಯೆ ಬಿಟ್ಟು ಸಂಗಡಿಗರೊಂದಿಗೆ ವಾಪಸ್ ಹಳ್ಳಿಗೆ ಬಂದ ಕಾರ್ಬೆಟ್ ಹೊಸ ಯೋಜನೆಯೊಂದನ್ನು ರೂಪಿಸಿದ.

ಸಾಮಾನ್ಯವಾಗಿ ಹುಲಿಗಳು ತಾವು ಬೇಟೆಯಾಡಿದ ಪ್ರಾಣಿಗಳನ್ನು ಒಂದು ಸ್ಥಳದಲ್ಲಿರಿಸಿಕೊಂಡು ಎರಡು ಅಥವಾ ಮೂರು ದಿನ ಆಹಾರವಾಗಿ ಬಳಸುವುದನ್ನು ಅರಿತಿದ್ದ ಜಿಮ್ ಕಾರ್ಬೆಟ್ ನರಭಕ್ಷಕ ಹುಲಿ ಯುವತಿಯ ಕಳೇಬರವನ್ನು ತಿಂದು ಮುಗಿಸದೇ ಬೇರೆ ದಾಳಿಗೆ ಇಳಿಯುವುದಿಲ್ಲ ಎಂದು ಅಂದಾಜಿಸಿದ. ಮಾರನೇ ದಿನ ಹಳ್ಳಿಯ ಜನರ ಜೊತೆಗೂಡಿ ಅದನ್ನು ಬಯಲು ಪ್ರದೇಶದಿಂದ ಮತ್ತೇ ಕಣಿವೆಗೆ ಇಳಿಯುವಂತೆ ಮಾಡುವುದು, ಕಣಿವೆಯ ದಾರಿಯಲ್ಲಿ ಅಡಗಿ ಕುಳಿತು ನರಭಕ್ಷಕ ಹುಲಿಯನ್ನು ಕೊಲ್ಲುವುದು ಎಂಬ ತನ್ನ ಯೋಜನೆಯನ್ನು ತಹಸಿಲ್ದಾರ್ ಮುಂದಿಟ್ಟ, ಕೂಡಲೆ ಒಪ್ಪಿಗೆ ಸೂಚಿಸಿದ ತಹಸಿಲ್ದಾರ್ ಮರುದಿನ, ನಡು ಮಧ್ಯಾಹ್ನದ ಹೊತ್ತಿಗೆ 298 ಗ್ರಾಮಸ್ತರನ್ನು ಹುಲಿ ಬೆದರಿಸುವುದಕ್ಕಾಗಿ ಸಜ್ಜುಗೊಳಿಸಿದ.

ಮಚ್ಚು, ಕೊಡಲಿ, ದೊಣ್ಣೆ ಹಾಗೂ ತಮ್ಮ ತಮ್ಮ ಮನೆಗಳಲ್ಲಿ ಇದ್ದ ನಾಡ ಬಂದೂಕಗಳೊಂದಿಗೆ ಹಾಜರಾದ ಹಳ್ಳಿಯ ಜನರನ್ನು ಕರೆದುಕೊಂಡು ಬಯಲು ಪ್ರದೇಶಕ್ಕೆ ಬಂದ ಕಾರ್ಬೆಟ್, ನರಭಕ್ಷಕ ಅಡಗಿದ್ದ ಬಯಲು ಪ್ರದೇಶದಲ್ಲಿ ಕಣಿವೆಗೆ ತೆರಳಲು ಇದ್ದ ಮಾರ್ಗವನ್ನು ಹೊರತುಪಡಿಸಿ, ಉಳಿದ ಜಾಗದಲ್ಲಿ ಎಲ್ಲರನ್ನು ಇಂಗ್ಲಿಷ್ ಯು ಅಕ್ಷರದ ಆಕಾರದಲ್ಲಿ ನಿಲ್ಲಿಸಿ, ನಾನು ಸೂಚನೆ ನೀಡಿದಾಗ ಜೋರಾಗಿ ಗದ್ದಲವೆಬ್ಬಿಸಿ, ಗಾಳಿಯಲ್ಲಿ ಗುಂಡು ಹಾರಿಸುತ್ತಾ ಕಣಿವೆಯ ದಾರಿಯತ್ತಾ ಬರಬೇಕೆಂದು ಸೂಚಿಸಿದ. ಬಯಲು ಪ್ರದೇಶದ ಕಾಡಿನಂಚಿನಿಂದ ಕಣಿವೆಗೆ ಇಳಿಯುವ ದಾರಿಯಲಿ ತಗ್ಗಿನ ಪ್ರದೇಶದಲ್ಲಿ ಕಾರ್ಬೆಟ್ ಅಡಗಿ ಕುಳಿತ. ಅಲ್ಲದೇ . ತಾನು ಕುಳಿತ ಸ್ಥಳದಿಂದ 100 ಅಡಿ ಎತ್ತರದ ಬಲಭಾಗದಲ್ಲಿ ತಹಸಿಲ್ದಾರ್  ಕೈಗೆ ಪಿಸ್ತೂಲ್ ಕೊಟ್ಟು ಬಂಡೆಯೊಂದರ ಮೇಲೆ ಹುಲಿ ಬರುವ ಬಗ್ಗೆ ಸುಳಿವು ಕೊಡುವ ಉದ್ದೇಶದಿಂದ ಅವನನ್ನು ಕೂರಿಸಿದ.

ಕಾರ್ಬೆಟ್ ಸೂಚನೆ ನೀಡಿದ ಕೂಡಲೆ ಗ್ರಾಮಸ್ಥರು ಕೇಕೆ ಹಾಕುತ್ತಾ, ಚಪ್ಪಾಳೆ ತಟ್ಟುತ್ತಾ, ಗಾಳಿಯಲ್ಲಿ ಗುಂಡು ಹಾರಿಸುತ್ತ ಜೋರಾಗಿ ಗದ್ದಲವೆಬ್ಬೆಸಿ ಬರತೊಡಗಿದರು. ಕಾರ್ಬೆಟ್‍ನ ನಿರೀಕ್ಷೆ ಸುಳ್ಳಾಗಲಿಲ್ಲ. ಬಯಲು ಪ್ರದೇಶದ ಹುಲ್ಲಿನೊಳಗೆ ಅಡಗಿ ಕುಳಿತಿದ್ದ ನರಭಕ್ಷಕ ಜನರ ಸದ್ದಿನ ಭಯದಿಂದ ಕಣಿವೆಗೆ ಇಳಿಯಲು ವೇಗವಾಗಿ ಧಾವಿಸುತ್ತಿತ್ತು. ಎರಡರಿಂದ ಮೂರು ಅಡಿ ಎತ್ತರಕ್ಕೆ ಹುಲ್ಲು ಬೆಳದಿದ್ದರಿಂದ ಕಾರ್ಬೆಟ್ ಕಣ್ಣಿಗೆ ಹುಲಿ ಕಾಣುತ್ತಿರಲಿಲ್ಲ. ಅದರೆ, ಹುಲ್ಲಿನ ಬಾಗುವಿಕೆಯಿಂದ ನರಭಕ್ಷಕ ಯಾವ ದಿಕ್ಕಿನಲಿ, ಬರುತ್ತಿದೆ ಎಂಬುದು ಕಾರ್ಬೆಟ್‍ಗೆ ಗೋಚರವಾಗುತ್ತಿತ್ತು. ತಾನು ಕುಳಿತ ಸ್ಥಳಕ್ಕೆ 50 ಅಡಿ ಹತ್ತಿರಕ್ಕೆ ಬರುತಿದ್ದಂತೆ ಕಾರ್ಬೆಟ್ ಹುಲ್ಲು ಅಲುಗಾಡುವಿಕೆಯನ್ನು ಗುರಿಯಾಗಿರಿಸಿಕೊಂಡು ಎರಡು ಗುಂಡು ಹಾರಿಸಿದ. ಆ ಕ್ಷಣಕ್ಕೆ ಅವುಗಳು ನರಭಕ್ಷಕನಿಗೆ ತಾಗಿದ ಬಗ್ಗೆ ಯಾವ ಸೂಚನೆ ಕಾಣಲಿಲ್ಲ. ಸ್ವಲ್ಪ ಹೊತ್ತು ಎಲ್ಲೆಡೆ ಮೌನ ಆವರಿಸಿತು. ನರಭಕ್ಷಕ ಗದ್ದಲವೆಬ್ಬಿಸುತ್ತಿರುವ ಗ್ರಾಮಸ್ತರ ಮೇಲೆ ಎರಗಲು ವಾಪಸ್ ಬಯಲಿನತ್ತ ತೆರಳುತ್ತಿರಬೇಕು ಎಂದು ಕಾರ್ಬೆಟ್ ಊಹಿಸಿದ್ದ.

ಆದರೆ, ಅದು ಅವನ ಸನಿಹಕ್ಕೆ ಕೇವಲ 30ನ ಅಡಿ ಹತ್ತಿರಕ್ಕೆ ಬಂದು ಒಮ್ಮೆ ಹುಲ್ಲಿನಿಂದ ತಲೆಯನ್ನು ಹೊರಚಾಚಿ ಕಾರ್ಬೆಟ್‍ನನ್ನು ನೋಡಿ ಗರ್ಜಿಸಿತು. ಕಾರ್ಬೆಟ್‍ಗೆ ಅಷ್ಟು ಸಾಕಾಗಿತ್ತು ಅವನು ಸಿಡಿಸಿದ ಮೂರನೇ ಗುಂಡು ನೇರವಾಗಿ ನರಭಕ್ಷನ ಎದೆಯ ಬಲಭಾಗಕ್ಕೆ ತಗುಲಿತು. ಆದರೂ ಕಾರ್ಬೆಟ್‍ಗೆ  ನಂಬಿಕೆ ಬಾರದೆ, ತಹಸಿಲ್ದಾರ್ ಬಳಿ ಓಡಿ ಹೋಗಿ ಅವನ ಬಳಿ ಇದ್ದ ಪಿಸ್ತೂಲ್ ಅನ್ನು ಕಸಿದು ತಂದು ಅದರಿಂದ ನರಭಕ್ಷಕ ಕಾಣಿಸಿಕೊಂಡ ಜಾಗದತ್ತ ಗುಂಡಿನ ಮಳೆಗರೆದ. ಸುಮಾರು ಒಂದು ಗಂಟೆಯವರೆಗೂ ನರಭಕ್ಷಕ ಹುಲಿಯ ನರಳುವಿಕೆಯಾಗಲಿ, ಘರ್ಜನೆಯಾಗಲಿ, ಕೇಳಬರದಿದ್ದರಿಂದ ಅತ್ಯಂತ ಜಾಗರೂಕತೆಯಿಂದ ತನ್ನ ಸಹಚರರ ಜೊತೆ ನಿಧಾನವಾಗಿ ಗುಂಡು ಹಾರಿಸಿದ ಸ್ಥಳಕ್ಕೆ ಬಂದ ಕಾರ್ಬೆಟ್ ನೋಡಿದ ದೃಶ್ಯ, ಸ್ವತಃ ಅವನಿಗೇ ಅಚ್ಚರಿ ಮೂಡಿಸಿತು. ಏಕೆಂದರೆ, ನೇಪಾಳದಲ್ಲಿ 200  ಹಾಗೂ ಭಾರತದಲ್ಲಿ 206 ಮಂದಿಯನ್ನು ಬಲಿತೆಗೆದುಕೊಂಡಿದ್ದ ವಯಸ್ಸಾದ ನರಭಕ್ಷಕ ಹೆಣ್ಣು ಹುಲಿ ಅಲ್ಲಿ ತಣ್ಣಗೆ ನೆಲಕ್ಕೊರಗಿ ಮಲಗಿತ್ತು.

    ( ಮುಂದುವರಿಯುವುದು) 

ಎಂದೂ ಮುಗಿಯದ ಯುದ್ಧ (ನಕ್ಸಲ್‍ ಕಥನ -1)


– ಡಾ.ಎನ್.ಜಗದೀಶ್ ಕೊಪ್ಪ


 

“ನಕ್ಸಲಿಯರು ಹಿಂಸೆಯ ಮೂಲಕ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಆಂತರೀಕ ಭದ್ರತೆಗೆ ಅತಿದೊಡ್ಡ ಸವಾಲಾಗಿದ್ದಾರೆ.” ಇದು ಪ್ರಧಾನ ಮಂತ್ರಿಯ ಮನದಾಳದ ಮಾತು. ಸ್ವತಃ ಜಗತ್ತಿನ ಶ್ರೇಷ್ಠ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿರುವ ಡಾ. ಮನಮೋಹನಸಿಂಗ್, ಭಾರತದ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ಬಲ್ಲವರು. ಹಾಗಾಗಿ  ಅವರ ಈ ಮಾತು ನೂರರಷ್ಟು ಸತ್ಯಕೂಡ ಹೌದು.

ಸ್ವಾತಂತ್ರ್ಯ ನಂತರ ಭಾರತದ ಒಡಲೊಳಗೆ ಒಂದು ಗಾಯದ ಹುಣ್ಣಿನಂತೆ ಹುಟ್ಟಿಕೊಂಡು ಕ್ಯಾನ್ಸರ್ ರೋಗದಂತೆ ಎಲ್ಲೆಡೆ ಹಬ್ಬುತ್ತಿರುವ ನಕ್ಸಲ್ ಹಿಂಸಾಚಾರದ ಚಳವಳಿಯ ಬೆಳವಣಿಗೆಗೆ ಪರೋಕ್ಷವಾಗಿ ಕಾರಣವಾದವರೆಂದರೆ, ಈ ದೇಶದ ಜನಪ್ರತಿನಿಧಿಗಳು, ಪೊಲೀಸರು, ಅಧಿಕಾರಿಗಳು, ಮತ್ತು ಜಮೀನುದಾರರು. ಇವರೆಲ್ಲರ ದಿವ್ಯ ನಿರ್ಲಕ್ಷ್ಯ, ಅಮಾನವೀಯತೆಯ ನಡುವಳಿಕೆ, ಹಾಗೂ ಬಡವರು ಮತ್ತು ಕೂಲಿಕಾರ್ಮಿಕರುಗಳ ಬಗ್ಗೆ ಇವರುಗಳು ಹೊಂದಿದ್ದ ತಿರಸ್ಕಾರ ಭಾವನೆಗೆ ಪ್ರತಿಯಾಗಿ ತಲೆ ಎತ್ತಿರುವ ಇವತ್ತಿನ ಹಿಂಸೆಗೆ ನಾವೆಲ್ಲಾ ಮೂಕ ಸಾಕ್ಷಿಯಾಗಬೇಕಿದೆ.

1967 ರ ಮಾರ್ಚ್ ತಿಂಗಳ ಮೂರರಂದು ಪಶ್ಚಿಮ ಬಂಗಾಳದ ಉತ್ತರಭಾಗದ ನಕ್ಸಲ್‍ಬಾರಿ ಎಂಬ ಪುಟ್ಟ ಹಳ್ಳಿಯಲ್ಲಿ ಸ್ಪೋಟಗೊಂಡ ಪ್ರತಿಭಟನೆಯ ಅಗ್ನಿಜ್ವಾಲೆ ಈಗ ನಕ್ಸಲ್ ಚಳವಳಿಯ ಹೆಸರಿನಲ್ಲಿ ಆರದೆ ಇಂದಿಗೂ ಉರಿಯುತ್ತ ದೇಶದೆಲ್ಲೆಡೆ ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿದೆ. ಈ ಅಗ್ನಿ ದೀವಿಗೆಯನ್ನು ಹೊತ್ತಿಸಿ ಎತ್ತಿ ಹಿಡಿದವರು ಚಾರು ಮುಜಂದಾರ್ ಮತ್ತು ಕನುಸನ್ಯಾಲ್ ಎಂಬ ಎಡಪಂಥೀಯ ವಿಚಾರೆಧಾರೆಗಳಿಂದ ಪ್ರಭಾವಿತರಾದ ಇಬ್ಬರು ನಾಯಕರು. ಉತ್ತರಕ್ಕೆ ನೇಪಾಳ. ಪೂರ್ವಕ್ಕೆ ಇಂದಿನ ಬಂಗ್ಲಾ ದೇಶಗಳ ಗುಡ್ಡಗಾಡು ಪ್ರದೇಶಗಳಿಂದ ಸುತ್ತುವರಿದಿರುವ ನಕ್ಸಲ್‍ಬಾರಿ ಹಳ್ಳಿಯ ಕೃಷಿ ಕೂಲಿಕಾರ್ಮಿಕರಿಂದ ಪ್ರಾರಂಭವಾದ ಪ್ರತಿಭಟನೆ ಒರ್ವ ಪೋಲಿಸ್ ಅಧಿಕಾರಿ ಹಾಗೂ ಹತ್ತು ಮಂದಿ ಚಳವಳಿಗಾರರ ಸಾವಿನೊಂದಿಗೆ (ಇವರಲ್ಲಿ ಆರು ಮಂದಿ ಮಹಿಳೆಯರು) ಹಿಂಸೆಯ ಅಧ್ಯಾಯಕ್ಕೆ ನಾಂದಿ ಹಾಡಿತು. ನಕ್ಸಲ್ ಚಳವಳಿ ಭಾರತದಲ್ಲಿ ದಿಡೀರನೆ ಹುಟ್ಟಿಕೊಂಡ ಹಿಂಸಾತ್ಮಕ ಚಳವಳಿಯಲ್ಲ. ಅದಕ್ಕೊಂದು ಸುದೀರ್ಘ ಇತಿಹಾಸವಿದೆ.

ಈ ಹಿಂದೆ ನಡೆದ ಭಾರತದ ರೈತರ ಮತ್ತು ಕೃಷಿ ಕೂಲಿಕಾರ್ಮಿಕರ ಪ್ರತಿಭಟನೆಯ ಇತಿಹಾಸ ಇದರ ಬೆನ್ನುಲುಬಾಗಿದೆ. ನಕ್ಸಲ್ ಹೋರಾಟ ಎಂದರೆ, ಹಿಂಸೆಯ ಪ್ರತಿರೂಪ ಎಂಬ ಇಂದಿನ ಉಢಾಪೆ ಮಾತು ಮತ್ತು ಹೇಳಿಕೆಗಳ ನಡುವೆ ಅದರ ಇತಿಹಾಸವನ್ನು ಕೂಲಂಕುಷವಾಗಿ ಮುಕ್ತ ಮನಸ್ಸಿನಿಂದ ಪರಾಮರ್ಶಿಸುವ ಅಗತ್ಯವಿದೆ. ಭಾರತದ ಇದೇ ಪಶ್ಚಿಮ ಬಂಗಾಳದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ನೀಲಿ ಬೆಳೆ ಬೆಳೆಯಲು ನಿರಾಕರಿಸಿ ಪ್ರತಿಭಟಿಸಿದ ರೈತರು, ಕೇರಳದಲ್ಲಿ ಮಾಪಿಳ್ಳೆಗಳು ನಡೆಸಿದ ಹೋರಾಟ, ಆಂಧ್ರದ ತೆಲಂಗಾಣದಲ್ಲಿ ಸರ್ಕಾರ ಮತ್ತು ಜಮೀನುದಾರರ ವಿರುದ್ಧ ಸಿಡಿದೆದ್ದ ಕೂಲಿ ಕಾರ್ಮಿಕರ ಪ್ರತಿಭಟನೆ ಇವೆಲ್ಲವೂ ನಕ್ಸಲ್ ಚಳವಳಿಯ ಪೂರ್ವ ಇತಿಹಾಸದ ಭಾಗಗಳೇ ಆಗಿವೆ. ಹಾಗಾಗಿ ನಕ್ಸಲ್ ಚಳವಳಿಯ ಅಧ್ಯಯನಕ್ಕೆ 1919 ರಲ್ಲಿ ಕಾಲಿಟ್ಟ ಕಮ್ಯೂನಿಷ್ಟ್ ವಿಚಾರಧಾರೆಯಿಂದ ಹಿಡಿದು ಇಂದಿನ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳ ಅರಾಜಕತೆಯ ಕೂಲಂಕುಷ ಅಧ್ಯಯನದ ಅವಶ್ಶಕತೆ ಇದೆ.

ಸ್ವಾತಂತ್ರ್ಯ ಪೂರ್ವದ ಭಾರತದಲ್ಲಿ ಇಂಗ್ಲಿಷರ ವಸಾಹಿತುಶಾಹಿ ಆಳ್ವಿಕೆಯಲ್ಲಿ ಮೊದಲ ಬಾರಿಗೆ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸುಧಾರಣೆ ಮತ್ತು ಕ್ರಾಂತಿಯಾದದ್ದು ಪಶ್ಚಿಮ ಬಂಗಾಳದಲ್ಲಿ. ಹಾಗಾಗಿ ದುಡಿಯುವ ವರ್ಗದ ಆರಾಧ್ಯ ದೈವ ಕಾರ್ಲ್ ಮಾರ್ಕ್ಸ್‌ನ ವಿಚಾರಧಾರೆಯ ಬೀಜಗಳು ಇದೇ ನೆಲದಲ್ಲಿ  ಮೊಳಕೆ ಹೊಡೆದವು. ನಕ್ಸಲ್ ಹೋರಾಟದ ಇತಿಹಾಸ ಅರಿಯಲು, ಪಶ್ಚಿಮ ಬಂಗಾಳದಲ್ಲಿ ಸ್ವಾತಂತ್ರ್ಯ ಪೂರ್ವದ ಸುಧಾರಣಾವಾದಿಗಳ ಬದುಕು, ಮತ್ತು ಅವರ ಹೋರಾಟ, ಹಾಗೂ 1919 ರಲ್ಲಿ ತಳವೂರಿ ನಂತರ ಹಲವು ಸಂಘಟನೆಗಳಾಗಿ ವಿಭಜನೆಗೊಂಡ ಕಮ್ಯೂನಿಷ್ಟ್ ಪಕ್ಷದ ಇತಿಹಾಸವನ್ನು ನೋಡಬೇಕಾಗಿದೆ. ಅದೇ ರೀತಿ. ಆಂಧ್ರದಲ್ಲಿ ನಿಜಾಮನ ಆಳ್ವಿಕೆಯ ದೌರ್ಜನ್ಯ, ಅರಾಜಕತೆ, ಸ್ವಾತಂತ್ರ್ಯ ಪೂರ್ವದಲ್ಲಿ ಆಂಧ್ರದಲ್ಲಿ ಸೃಷ್ಟಿಯಾದ “ದೇಸಕೋಸಂ (ದೇಶಕೊಸ್ಕರ)”, “ಈ ದಾರಿ ಎಕ್ಕಡಿಕಿ (ಈ ದಾರಿ ಎಲ್ಲಿಗೆ)”, “ಜ್ವಾಲಾತೋರಣಂ (ಬೆಂಕಿಯ ತೋರಣ)”, “ಕೊಳ್ಳಮುಗಟ್ಟಿತೆ ಏಮಿ (ತುಂಡು ಉಡುಗೆ ಉಟ್ಟರೇನು?)” ಮುಂತಾದ ವೈಚಾರಿಕ ಕಾದಂಬರಿಗಳು, ಮತ್ತು ಈ ಕೃತಿಗಳು ಅಂದಿನ ತಲೆಮಾರಿನ ಯುವಕರ ಮೇಲೆ ಬೀರಿದ ಪ್ರಭಾವ, ಹಾಗೂ ಆಂಧ್ರ ಪ್ರದೇಶದ ಹೊಲೆ ಮಾದಿಗರ ದಾರುಣ ಬದುಕನ್ನು ತೆರೆದಿಡುವ ವೈ.ಬಿ. ಸತ್ಯನಾರಾಣರ “ನನ್ನ ಅಪ್ಪ ಬಲಿಯ” ಎಂಬ ಆತ್ಮ ಕಥನ, ಕೇರಳದ ತಿರುವಾಂಕೂರು ರಾಜನ ತಲೆತಿರುಕುತನದ ಇತಿಹಾಸ ಇವೆಲ್ಲವನ್ನು ನಾವು ಅರಿಯಬೇಕಾಗಿದೆ.

ಭಾರತದ ನಿಜವಾದ ಬಡತನದ ಮುಖವನ್ನು ಕಾಣಬೇಕಾದರೆ, ಫ್ರೆಂಚ್ ಲೇಖಕ ಡಾಮಿನಿಕ್ಯೂ ಲಾಪಿಯರ್ರೆ‍ರವರ “ಸಿಟಿ ಆಫ್ ‍ಜಾಯ್” ಕಾದಂಬರಿ, ಇಲ್ಲಿನ ಆದಿವಾಸಿಗಳ ನೋವಿನ ಜಗತ್ತನ್ನು ಅರಿಯಬೇಕಾದರೆ ಎಸ್.ಕೆ. ಚೌಧುರಿಯವರ “ಇಂಡಿಯನ್ ಟ್ರೈಬ್ಸ್ ಅಂಡ್ ಮೆಯಿನ್‍ಸ್ಟ್ರೀಮ್ ಹಾಗೂ ಟ್ರೈಬಲ್ ಐಡೆಂಟಿಟಿ” ಕೃತಿಗಳನ್ನು ಓದಬೇಕು. ಇವೆಲ್ಲಕ್ಕಿಂತ ಹೆಚ್ಚಾಗಿ ಈ ಭೂಮಿಯ ಬಹುಭಾಗವನ್ನು ಹಲವು ಶತಮಾನಗಳು ಆಕ್ರಮಿಸಿಕೊಂಡು ಆಳಿದ ಬ್ರಿಟಿಷರು ಈ ನೆಲದ ಅನಕ್ಷರಸ್ತ, ಅಮಾಯಕ ಜನರ ಮೇಲೆ ನಡೆಸಿದ ಮಾನಸಿಕ ಹಾಗೂ ಬೌದ್ಧಿಕ ದೌರ್ಜನ್ಯವನ್ನು ತಿಳಿಯಬೇಕಾದರೆ, ಫ್ರಾನ್ಸ್ ಮೂಲದ ವೈದ್ಯ ಪ್ರಾಂಟ್ಜ್ ಪಾನನ್ ಬರೆದ “ದ ವ್ರೆಚ್ಚಡ್ ಆಪ್ ದ ಅರ್ಥ್ (ಭೂಮಿಯ ವಿಕೃತಿ)” ಹಾಗೂ ಎಲ್ಲೆಕೆಬೊಯಿಚ್ಮಿರ್ ಬರೆದ “ಕಲೋನಿಯಲ್ ಅಂಡ್ ಪೋಸ್ಟ್ ಕಲೋನಿಯಲ್ ಲಿಟ್‌ರೇಚರ್” ಕೃತಿಗಳನ್ನು ನಾವು ಅವಲೋಕಿಸಬೇಕಾಗಿದೆ. ಏಕೆಂದರೆ, ಇವತ್ತಿನ ಭಾರತದ ಗರ್ಭಗುಡಿ ಸಂಸ್ಕೃತಿಯಿಂದ ಬಂದ ತಲೆ ಮಾಸಿದ ಕೆಲವರು ನಕ್ಸಲ್ ಚಳವಳಿಯ ಬಗ್ಗೆ ನೀಡುವ ಬೀಸು ಹೇಳಿಕೆಯನ್ನು ಗಮನಿಸಿದಾಗ ಈ ರಕ್ತಸಿಕ್ತ ಹೋರಾಟಕ್ಕೆ ಹಲವು ಮುಖಗಳಿವೆ ಎಂಬುದನ್ನು ಮನದಟ್ಟು ಮಾಡಿಕೊಡಬೇಕಾಗಿದೆ.

ನಕ್ಸಲ್ ಚಳವಳಿಯನ್ನು ಹುಟ್ಟು ಹಾಕಿದ ಚಾರು ಮುಜಂದಾರ್, ಕನು ಸನ್ಯಾಲ್, ಮತ್ತು ಕೊಂಡಪಲ್ಲಿ ಸೀತರಾಮಯ್ಯ ಇವರುಗಳ ಬದುಕಿನ ಹೋರಾಟ ಮತ್ತು ದಾರುಣ ಅಂತ್ಯ, ನಕ್ಸಲ್ ಹೋರಾಟಕ್ಕೆ ಮನಸೋತು ಆತ್ಮಹತ್ಯೆಯ ದಾರಿ ಹಿಡಿದಿರುವ ಇಂದಿನ ಯುವಕರಿಗೆ ಎಚ್ಚರಿಕೆಯ ಗಂಟೆಯಾಗಬಲ್ಲದು. ನಕ್ಸಲ್ ಹೋರಾಟದ ಪಿತಾಮಹಾರೆಂದು ಗುರುತಿಸಿಕೊಂಡಿವ ಚಾರುಮುಜಂದಾರ್ ಮತ್ತು ಕನುಸನ್ಯಾಲ್ ಇವರ ಬದುಕು ಒಂದು ರೀತಿಯ ದುರಂತ ಕಥನವೆಂದರೆ ತಪ್ಪಾಗಲಾರದು. ಚಾರು ಮುಜಂದಾರ್ ಸಿಲಿಗುರಿಯ ಶ್ರೀಮಂತ ಜಮೀನ್ದಾರರ ಕುಟುಂಬದಲ್ಲಿ ಜನಿಸಿದವನು. (1918) ಅವನ ತಂದೆ ಬೀರೆಶ್ವರ್ ಮುಜಂದಾರ್ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಪ್ರಗತಿಪರ ಮನೋಭಾವವುಳ್ಳ ವ್ಯಕ್ತಿಯಾಗಿದ್ದರು.

ಬಾಲ್ಯದಿಂದಲೂ ಬಡವರು ಮತ್ತು ಬಡ ಕೂಲಿಕಾರ್ಮಿಕರ ಬಗ್ಗೆ ಅನುಕಂಪ ಹೊಂದಿದ್ದ ಚಾರುಮುಜಂದಾರ್ ಸಿಲಿಗುರಿಯಲ್ಲಿ ಪ್ರೌಢ ಶಿಕ್ಷಣ ಪಡೆದು ನಂತರ ಈಗ ಬಂಗ್ಲಾದೇಶಕ್ಕೆ ಸೇರಿಹೋಗಿರುವ ಪಾಬ್ನಾ ಪಟ್ಟಣದಲ್ಲಿನ ಎಡ್ವಡ್ ಕಾಲೇಜಿಗೆ ಸೇರ್ಪಡೆಯಾಗಿದ್ದ. ಆದರೆ, ತನ್ನ ಹರೆಯದಲ್ಲೇ ಕಾಲೇಜು ಶಿಕ್ಷಣಕ್ಕೆ ತಿಲಾಂಜಲಿ ಇತ್ತು ಚಹಾ ತೋಟದ ಕಾರ್ಮಿಕರ ಬಗ್ಗೆ ದನಿಯೆತ್ತಿದ್ದ. ಕಾರ್ಲ್ ಮಾರ್ಕ್ಸ್ ದುಡಿಯುವ ವರ್ಗದ ಬಗ್ಗೆ ಹೊಂದಿದ್ದ ಕಾಳಜಿಯಿಂದ ಪ್ರೇರಿತನಾದ ಚಾರು ತನ್ನ ಕಣ್ಣ ಮುಂದೆ ನಡೆಯುತ್ತಿದ್ದ ದೌರ್ಜನ್ಯಗಳನ್ನು ಗಮನಿಸತೊಡಗಿದ. ಡಾರ್ಜಿಲಿಂಗ್ ಸುತ್ತ ಮುತ್ತ ಇದ್ದ ಆಂಗ್ಲರ ಚಹಾ ತೋಟಗಳಲ್ಲಿ ಕಾರ್ಮಿಕರನ್ನು ಪ್ರಾಣಿಗಳಂತೆ ನಡೆಸಿಕೊಳ್ಳಲಾಗುತಿತ್ತು. ಇದನ್ನು ಸಹಿಸಲಾಗದೆ, ಕಾರ್ಮಿಕರನ್ನು ಸಂಘಟಿಸಿ, ಅವರಿಗೆ ಗೌರಯುತವಾದ ಜೀವನ ಮತ್ತು ಶ್ರಮಕ್ಕೆ ತಕ್ಕಂತೆ ಕೂಲಿ ದೊರಕಿಸಿಕೊಡುವಲ್ಲಿ ಯಶಸ್ವಿಯಾದನು.

ಈ ಒಂದು ಹೋರಾಟದ ಯಶಸ್ವಿನ ನಂತರ ಬಡ ಗೇಣಿದಾರರ ಬವಣೆಯತ್ತ ಗಮನ ಹರಿಸಿದ ಚಾರು ಆ ಪ್ರಾಂತ್ಯದ ಶ್ರೀಮಂತ ಜಮೀನುದಾರರ ವಿರುದ್ಧ ಹೋರಾಟಕ್ಕೆ ಅಣಿಯಾದನು. ಶ್ರೀಮಂತರಿಂದ ಭೂಮಿಯನ್ನು ಗುತ್ತಿಗೆ ಪಡೆದ ಬಡ ರೈತರು ತಾವೇ ಬಿತ್ತನೆ ಬೀಜ, ಗೊಬ್ಬರ ತಂದು ಉತ್ತಿ ಬಿತ್ತಿ ಬೆಳೆ ತೆಗೆದ ನಂತರ ಮಾಲಿಕರಿಗೆ ಮೂರು ಭಾಗದ ಫಸಲು ನೀಡಿ ಉಳಿದ ಕಾಲು ಭಾಗ ಫಸಲನ್ನು ತಾವು ಪಡೆಯುತ್ತಿದ್ದರು. ಇದೊಂದು ರೀತಿಯಲ್ಲಿ ಕೂತು ಉಣ್ಣುವವರು ಬೇರೆ, ದುಡಿಯುವವರು ಬೇರೆ ಎಂಬಂತಾಗಿತ್ತು ಇಂತಹ ಅಸಮಾನತೆಯ ವಿರುದ್ಧ ಬಂಡೆದ್ದ ಚಾರು ಮುಜಂದಾರ್, ದುಡಿಯುವ ರೈತರಿಗೆ ಮೂರು ಭಾಗ ಫಸಲು ಸೇರಬೇಕೆಂದು 1942 ರಿಂದ 1946 ರವರೆಗೆ ನಿರಂತರವಾಗಿ ಪ್ರತಿಭಟಿಸಿ ಹಲವಾರು ಬಾರಿ ಜೈಲು ಸೇರಬೇಕಾಯಿತು. ಇಂತಹ ಒಂದು ಸಂದರ್ಭದಲ್ಲಿ ಚಾರುಗೆ ಕನುಸನ್ಯಾಲ್ ಭೇಟಿಯಾದನು.

ಕನುಸನ್ಯಾಲ್ ಕೂಡ ಸಿಲುಗುರಿ ಸಮೀಪದ ಸೆಪ್ತುಲ್ಲಜ್ಯೂಟ್ ಎಂಬ ಹಳ್ಳಿಯಲ್ಲಿ 1919 ರಲ್ಲಿ ಜನಿಸಿದವನು. ತನ್ನ ಹರೆಯದಲ್ಲಿ ಎಡಪಂಥೀಯ ವಿಚಾರಧಾರೆಗೆ ಒಲಿದು ಕಮ್ಯೂನಿಷ್ಟ್ ಪಕ್ಷದ ಕಾರ್ಯಕರ್ತನಾಗಿದ್ದಕೊಂಡು, ಕಾಲೇಜು ಶಿಕ್ಷಣದ ನಂತರ ಸಿಲುಗುರಿಯ ನ್ಯಾಯಾಲಯದಲ್ಲಿ ಗುಮಾಸ್ತನಾಗಿ ಕಾರ್ಯನಿರ್ವಹಿಸುತಿದ್ದವನು. ಒಮ್ಮೆ ಪಶ್ಚಿಮ ಬಂಗಾಳದ ಸರ್ಕಾರ ಕಮ್ಯೂನಿಷ್ಟ್ ಪಕ್ಷವನ್ನು ನಿಷೇಧಿಸಿದಾಗ ಸರ್ಕಾರದ ನಿಲುವನ್ನು ಪ್ರತಿಭಟಿಸಿ ಜೈಲು ಸೇರಿದ ಕನುಸನ್ಯಾಲ್, ಜಲುಪಗುರಿಯ ಸೆರೆಮನೆಯಲ್ಲಿ ಚಾರು ಮುಜಂದಾರ್‌ನನ್ನು ಭೇಟಿಯಾಗುವುದರ ಮೂಲಕ ನಕ್ಸಲ್ ಹೋರಾಟದ ಇತಿಹಾಸಕ್ಕೆ ಹೊಸ ಆಯಾಮವೊಂದನ್ನು ಒದಗಿಸಿದ.

(ಮುಂದುವರಿಯುವುದು)

 

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-14)


– ಡಾ.ಎನ್.ಜಗದೀಶ್ ಕೊಪ್ಪ


 

ಜಿಮ್ ಕಾರ್ಬೆಟ್ ನರಭಕ್ಷಕ ಹುಲಿಯೊಂದನ್ನು ಪ್ರಥಮ ಬಾರಿಗೆ ಬೇಟೆಯಾಡಿದ್ದು 1907 ರಲ್ಲಿ. ಸುಮಾರು ಇನ್ನೂರು ಜನರನ್ನು ತಿಂದುಹಾಕಿದ್ದ ಈ ಹೆಣ್ಣು ಹುಲಿ ನೆರೆಯ ನೇಪಾಳದಿಂದ ಭಾರತಕ್ಕೆ ವಲಸೆ ಬಂದಿತ್ತು. ನೇಪಾಳದ ಬುಡಕಟ್ಟು ಜನ ಈ ನರಭಕ್ಷಕನ ಉಪಟಳ ತಾಳಲಾರದೆ, ಬಲೆ ಹಾಕಿ ಹಿಡಿಯಲು ಪ್ರಯತ್ನಿಸಿದ್ದರು. ಆದರೆ ಅವರಿಂದ ತಪ್ಪಿಸಿಕೊಂಡು 1903 ರಲ್ಲಿ ನೈನಿತಾಲ್‍ನ ಪೂರ್ವಕ್ಕೆ ಇರುವ ಲೋಹಘಾಟ್ ನದಿ ಕಣಿವೆ ಮುಖಾಂತರ 65 ಕಿಲೋಮೀಟರ್ ದೂರದ ಅಲ್ಮೋರ ಹಾಗೂ ಲೋಹಾರ್‍‌ಘಾಟ್ ಕಣಿವೆಗೆ ಬಂದ ಈ ಹುಲಿ ಇಡೀ ಪ್ರದೇಶವನ್ನು ತನ್ನ ಸಾಮ್ರಾಜ್ಯವನ್ನಾಗಿ ಮಾಡಿಕೊಂಡಿತು.

ಇಲ್ಲಿಗೆ ಬಂದ ನಂತರವೂ ಮನುಷ್ಯರ ಬೇಟೆಯನ್ನು ಮುಂದುವರಿಸಿದ ನರಭಕ್ಷಕ 1903 ರಿಂದ 1907 ರವರೆಗೆ ಮತ್ತೇ ಇನ್ನೂರು ಜನರನ್ನು ಬಲಿತೆಗೆದುಕೊಂಡಿತು. ಸರಾಸರಿ ಪ್ರತಿ ಮೂರುದಿನಕ್ಕೆ ಒಬ್ಬರಂತೆ ಬೇಟೆಯಾಡಿದ್ದ ಈ ಹೆಣ್ಣು ಹುಲಿಯನ್ನು ಸೇನೆಯ ಗೂರ್ಖ ರೆಜಿಮೆಂಟ್ ತಂಡ ಮತ್ತು ಹವ್ಯಾಸಿ ಶಿಕಾರಿಕಾರರು ಹಾಗೂ ಸರ್ಕಾರದ ಅಧಿಕಾರಿಗಳು ಹಿಡಿಯುವಲ್ಲಿ ಅಥವಾ ಕೊಲ್ಲುವಲ್ಲಿ ಪ್ರಯತ್ನಿಸಿ ವಿಫಲರಾದರು.

ಅಂತಿಮವಾಗಿ ಸರ್ಕಾರ ನೈನಿತಾಲ್‍ನ ಜಿಲ್ಲಾಧಿಕಾರಿಯ ಮೂಲಕ ಹುಲಿಗಳ ಚಲನವಲನದ ಬಗ್ಗೆ ನಿಷ್ಣಾತನಾಗಿದ್ದ ಜಿಮ್ ಕಾರ್ಬೆಟ್‍ನ ಮೊರೆ ಹೋಯಿತು. ಮೊಕಮೆಘಾಟ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಒಮ್ಮೆ ರಜೆಯ ಮೇಲೆ ನೈನಿತಾಲ್‍ಗೆ ಬಂದಿದ್ದ ಕಾರ್ಬೆಟ್ ಸರ್ಕಾರದ ಆಹ್ವಾನವನ್ನು ಸ್ವೀಕರಿಸಿದ. ಆದರೆ, ಸರ್ಕಾರದ ಮುಂದೆ ಎರಡು ಷರತ್ತುಗಳನ್ನು ವಿಧಿಸಿದ. ಈ ನರಭಕ್ಷಕ ಹುಲಿಯನ್ನು ಬೇಟೆಯಾಡಿದರೆ ಸರ್ಕಾರ ಯಾವುದೇ ಬಹುಮಾನ ಘೋಷಿಸಬಾರದು ಹಾಗೂ ಈ ನರಭಕ್ಷಕ ಹುಲಿಯನ್ನು ತಾನು ಕೊಲ್ಲುವವರೆಗೂ ಇತರರು ಈ ಪ್ರದೇಶದಲ್ಲಿ ಬೇರೆ ಯಾವುದೇ ಹುಲಿಯ ಶಿಕಾರಿಗೆ ಇಳಿಯಬಾರದು ಎಂಬುದು ಕಾರ್ಬೆಟ್‍ನ ಬೇಡಿಕೆಯಾಗಿತ್ತು.  ಒಂದು ರೀತಿಯಲ್ಲಿ ಅವನ ಬೇಡಿಕೆ ಅರ್ಥಪೂರ್ಣವಾಗಿತ್ತು. ಮುಂದಿನ ದಿನಗಳಲ್ಲಿ ಬಹುಮಾನದ ಆಸೆಗಾಗಿ ಬೇಟೆಗಾರರು ನರಭಕ್ಷಕವಲ್ಲದ ಹುಲಿಗಳನ್ನು ಕೊಂದುಹಾಕುತ್ತಾರೆ ಎಂಬ ಆತಂಕ ಹಾಗೂ ಹುಲಿಗಳನ್ನು ಗಾಯಗೊಳಿಸಿ ಅವುಗಳನ್ನು ಜೀವಂತ ಬಿಟ್ಟರೆ ಅವುಗಳು ಸೇಡು ತೀರಿಸಿಕೊಳ್ಳುವ ಸಲುವಾಗಿ ನರಭಕ್ಷಕ ಹುಲಿಗಳಾಗಿ ಪರಿವರ್ತನೆ ಹೊಂದುತ್ತವೆ ಎಂಬ ಕಾರ್ಬೆಟ್‍ನ ನಿಲುವು ಸರ್ಕಾರದ ಮುಂದೆ ಈ ಷರತ್ತುಗಳನ್ನು ವಿಧಿಸಲು ಕಾರಣವಾಗಿತ್ತು. ಜೊತಗೆ ಕಾರ್ಬೆಟ್ ತನ್ನ ಸುಧೀರ್ಘ ಕಾಡಿನ ಅನುಭವದಲ್ಲಿ ಹುಲಿಗಳ ಮನೋಭಾವವನ್ನು ಚೆನ್ನಾಗಿ ಅರಿತವನಾಗಿದ್ದ.

ಸಾಮಾನ್ಯವಾಗಿ ವಯಸ್ಸಾದ ಹುಲಿಗಳು ವೇಗವಾಗಿ ಚಲಿಸಿ ಜಿಂಕೆ, ಸಾರಂಗ, ಕಾಡೆಮ್ಮೆ ಮುಂತಾದ ಪ್ರಾಣಿಗಳನ್ನು ಹಿಡಿಯಲು ಸಾಧ್ಯವಾಗದ ಸ್ಥಿತಿಯಲ್ಲಿ ಹಸಿವು ತಾಳಲಾರದೆ ಮನುಷ್ಯನ ಕಡೆ ತಿರುಗುತ್ತವೆ ಎಂಬುದನ್ನು ಕಾರ್ಬೆಟ್ ಅನುಭವದಿಂದ ಗ್ರಹಿಸಿದ್ದ. ಅಲ್ಲದೇ, ಒಮ್ಮೆ ಮನುಷ್ಯನ ರಕ್ತದ ರುಚಿ ನೋಡಿದ ಹುಲಿಗಳು ಮತ್ತೇ ಬೇರೆಡೆ ಆಹಾರಕ್ಕಾಗಿ ಅಲೆದಾಡುವುದು ತೀರಾ ಕಮ್ಮಿ ಎಂಬುದನ್ನು ಸಹ ಕಾರ್ಬೆಟ್ ಅರಿತಿದ್ದ. ನರಭಕ್ಷಕ ಹುಲಿಗಳನ್ನು ಶಿಕಾರಿ ಮಾಡುವುದು ಅತ್ಯಂತ ಕ್ಲಿಷ್ಟಕರ ಕೆಲಸವಾಗಿತ್ತು. ನರಮನುಷ್ಯರ ಹಿಂದೆ ಬಿದ್ದ ಹುಲಿಗಳು ಅತ್ಯಂತ ಜಾಗರೂಕತೆಯಿಂದ ದಾಳಿ ಮಾಡುತ್ತವೆ ಇದಕ್ಕಾಗಿ ಅವುಗಳು ಗಂಟೆಗಟ್ಟಲೆ, ದಿನಗಟ್ಟಲೆ ಕಾಯ್ದು ಕುಳಿತು ಹೊಂಚು ಹಾಕಿ ಮನುಷ್ಯರನ್ನು ಬಲಿ ತೆಗೆದುಕೊಳ್ಳುವುದನ್ನು ಕಾರ್ಬೆಟ್ ಗಮನಿಸಿದ್ದ.

ಸರ್ಕಾರ ಜಿಮ್ ಕಾರ್ಬೆಟ್‍ನ ಬೇಡಿಕೆಗಳಿಗೆ ಸಮ್ಮತಿ ಸೂಚಿಸಿತು. ನರಭಕ್ಷಕ ಹುಲಿಯನ್ನು ಬೇಟೆಯಾಡುವ ತನಕ ಯಾರೂ ಕುಮಾವನ್ ಮತ್ತು ಅಲ್ಮೋರ ಪ್ರಾಂತ್ಯದಲ್ಲಿ ಹುಲಿ ಬೇಟೆಯಾಡಬಾರದು ಎಂಬ ಆದೇಶವನ್ನು ಹೊರಡಿಸಿತು. ಈ ಆದೇಶ ಕಾರ್ಬೆಟ್‍ನ ಕೈಗೆ ತಲುಪುವುದರೊಳಗೆ ನೈನಿತಾಲ್‍ನಿಂದ 48 ಕಿ.ಮಿ. ದೂರದ ಪಾಲಿ ಎಂಬ ಹಳ್ಳಿಯಲ್ಲಿ ನರಭಕ್ಷಕ ಹುಲಿ ಮನುಷ್ಯ ಜೀವವೊಂದನ್ನು ಆಹುತಿ ತೆಗೆದುಕೊಂಡಿತು.

ತಕ್ಷಣವೇ ಜಿಮ್ ಕಾರ್ಬೆಟ್ ತನ್ನ ಆರು ಮಂದಿ ಸೇವಕರು ಮತ್ತು ಸಹಾಯಕರೊಡನೆ ಪಾಲಿ ಹಳ್ಳಿಯತ್ತ ಕಾಲ್ನಡಿಗೆಯಲ್ಲಿ ಪ್ರಯಾಣ ಆರಂಭಿಸಿದ. ಸಾಮಾನ್ಯವಾಗಿ ನರಭಕ್ಷಕ ಪ್ರಾಣಿಗಳ ಬೇಟೆಗೆ ಹೊರಡುವಾಗ ಕಾರ್ಬೆಟ್ ಸೇವಕರನ್ನು ಕರೆದೊಯ್ಯುತ್ತಿದ್ದ. ಅಡುಗೆ ಮಾಡಲು, ಗುಡಾರ ಹಾಕಲು, ಕತ್ತಲೆಯಲ್ಲಿ ಲಾಂಟಿನ್ ಇಲ್ಲವೆ ಪಂಜು ಹಿಡಿಯಲು ಮೂವರು ಸೇವಕರು ಹಾಗೂ ಬೇಟೆಯ ವೇಳೆ ಮರದ ಮೇಲೆ ಮಚ್ಚಾನು ಕಟ್ಟಲು, ಜೊತೆಯಲ್ಲಿರಲು ಶಿಕಾರಿ ಅನುಭವ ಇರುವ ಮೂವರು ಸಹಾಯಕರನ್ನು ದಿನಗೂಲಿ ಆಧಾರದ ಮೇಲೆ ಕರೆದೊಯ್ಯುತ್ತಿದ್ದ. ನರಭಕ್ಷಕ ಪ್ರಾಣಿಗಳ ಬೇಟೆಯ ಸಮಯದಲ್ಲಿ ಕಾರ್ಬೆಟ್‍ನ ಖರ್ಚುವೆಚ್ಚಗಳನ್ನು ಸರ್ಕಾರ ಭರಿಸುತಿತ್ತು.

ಅಂದಿನ ದಿನಗಳಲ್ಲಿ ಕುಮಾವನ್ ಪ್ರಾಂತ್ಯದ 3500 ಅಡಿ ಎತ್ತರದ ಬೆಟ್ಟ ಗುಡ್ಡಗಳನ್ನ ಹತ್ತಿ ಇಳಿದು ಸಾಗುವ ದಾರಿ ದುರ್ಗಮವಾಗಿತ್ತು. ಆದರೆ ಜಿಮ್ ಕಾರ್ಬೆಟ್‍ಗೆ ಆ ಪ್ರದೇಶದ ಕಚ್ಛಾ ರಸ್ತೆಗಳು, ಅರಣ್ಯ ಪ್ರದೇಶ ಪರಿಚಿತವಾಗಿದ್ದ ಕಾರಣ ಪ್ರತಿ ದಿನ 20 ರಿಂದ 25 ಕಿಲೋಮೀಟರ್ ನಡೆಯುವ ಶಕ್ತಿಯನ್ನು ಕಾರ್ಬೆಟ್ ಮೈಗೂಡಿಸಿಕೊಂಡಿದ್ದ. ಸತತ ಎರಡು ದಿನಗಳ ಪ್ರಯಾಣದ ನಂತರ ಮೂರನೇ ದಿನ ಬೆಳಗಿನ ಜಾವ ನಾಲ್ಕು ಗಂಟೆ ಸಮಯಕ್ಕೆ ಕಾರ್ಬೆಟ್ ಪಾಲಿಹಳ್ಳಿಯನ್ನು ತಲುಪಿದಾಗ ಆ ಪುಟ್ಟ ಹಳ್ಳಿಯ ಜನ ಇನ್ನೂ ನಿದ್ರಿಸುತ್ತಿದ್ದರು.

ಊರ ಮುಂದಿನ ಬಯಲಿನಲ್ಲಿ ಬಿಡಾರ ಹೂಡಿದ ಕಾರ್ಬೆಟ್ ತನ್ನ ಸೇವಕರಿಗೆ ಚಹಾ ಮಾಡಲು ತಿಳಿಸಿ, ಹಾಗೆ ಹಳ್ಳಿಯನ್ನು ಒಂದು ಸುತ್ತು ಹಾಕಿ ವೀಕ್ಷಿಸಿದ. ಕೇವಲ 50 ರಷ್ಟು ಜನಸಂಖ್ಯೆ ಇದ್ದ ಪಾಲಿಯೆಂಬ ಆ ಹಳ್ಳಿ , ಸಣ್ಣ ಪ್ರಮಾಣದ ರೈತರು ಹಾಗೂ ಅರಣ್ಯದ ಕಿರು ಉತ್ಪನ್ನ ಮತ್ತು ಕೂಲಿಯನ್ನು ನಂಬಿ ಬದುಕುತ್ತಿರುವ ಕೂಲಿಕಾರ್ಮಿಕರಿಂದ ಕೂಡಿತ್ತು. ಇಡೀ ಊರಿನ ಜನ ನರಭಕ್ಷಕ ಹುಲಿಯ ಭಯದಿಂದ ತಮ್ಮ ಮನೆಯ ಬಾಗಿಲುಗಳನ್ನು ಭದ್ರ ಪಡಿಸಿ, ಕಿಟಕಿ, ಬಾಗಿಲು, ಮತ್ತು ಜಾನುವಾರು ಕೊಟ್ಟಿಗೆಗಳಿಗೆ ಮುಳ್ಳಿನ ಕಂತೆಗಳನ್ನು ಇರಿಸಿ ಹುಲಿಯಿಂದ ರಕ್ಷಣೆ ಪಡೆದುಕೊಂಡಿದ್ದರು. ಹಗಲಿನ ವೇಳೆ ತಮ್ಮ ತಮ್ಮ ಜಮೀನುಗಳಿಗೆ ಅಥವಾ ಕಾಡಿಗೆ ಗುಂಪಾಗಿ ಹೋಗಿ ಬರುತ್ತಿದ್ದರು. ಅದೇ ರೀತಿ ಹೆಂಗಸರು ಸಹ ನೀರು ತರಲು, ಬಟ್ಟೆ ತೊಳೆಯಲು, ಅಥವಾ ಕಾಡಿನ ಅಂಚಿನ ಪ್ರದೇಶದಿಂದ ಉರುವಲು ಕಟ್ಟಿಗೆ ತರಲು ಆಯುಧಗಳನ್ನು ಹಿಡಿದ ಪುರುಷರ ರಕ್ಷಣೆ ಪಡೆಯುತ್ತಿದ್ದರು.

ಬೆಳಕರಿದ ತಕ್ಷಣ ಊರಿಗೆ ಬಂದ ಅಪರಿಚಿತ ವ್ಯಕ್ತಿಗಳನ್ನು ನೋಡಿ, ಒಬ್ಬೊಬ್ಬರಂತೆ ಕಾರ್ಬೆಟ್ ಬಿಡಾರದತ್ತ ಸುಳಿದರು. ಊರಿನ ಕೆಲವು ಹಿರಿಯರಿಗೆ ಕಾರ್ಬೆಟ್ ಪರಿಚಯವಿದ್ದುದ್ದರಿಂದ ಅವನ ಮುಂದೆ ಕುಳಿತು ನರಭಕ್ಷಕ ಹುಲಿಯ ಹಾವಳಿ ಬಗ್ಗೆ ಮತ್ತು ಪ್ರತಿದಿನ ಪಕ್ಕದ ಕಾಡಿನಿಂದ ಅದು ಘರ್ಜಿಸುವ ಬಗ್ಗೆ ವಿವರಿಸಿದರು.

ಕಾರ್ಬೆಟ್ ಚಹಾ ಕುಡಿದು ನರಭಕ್ಷಕ ಹುಲಿ ಮೂರು ದಿನದ ಹಿಂದೆ ಪಾಲಿಹಳ್ಳಿಯ ಹೆಣ್ಣು ಮಗಳನ್ನು ಹಿಡಿದು ಕೊಂದು ಹಾಕಿದ್ದ ಸ್ಥಳಕ್ಕೆ ಗ್ರಾಮಸ್ಥರೊಂದಿಗೆ ವೀಕ್ಷಣೆಗಾಗಿ ಹೊರಟ. ಊರ ಹೊರಗಿನ ಬಯಲಿನಲ್ಲಿ ಹಲವಾರು ಹೆಣ್ಣು ಮಕ್ಕಳೊಂದಿಗೆ ಕಟ್ಟಿಗೆ ಸಂಗ್ರಹಿಸುತ್ತಿದ್ದ ಗೃಹಿಣಿಯೊಬ್ಬಳು ಓಕ್ ಮರದ ಕೊಂಬೆಯನ್ನು ಕಡಿಯುತ್ತಿರುವ ಸಂದರ್ಭದಲ್ಲಿ ಪೊದೆಯಲ್ಲಿ ಅಡಗಿ ಕುಳಿತ್ತಿದ್ದ ನರಭಕ್ಷಕ ಹಿಂದಿನಿಂದ ದಾಳಿ ನಡೆಸಿತ್ತು. ಸಂಗಾತಿಗಳ ಕೂಗಾಟ ಮತ್ತು ಚೀರಾಟಗಳ ನಡುವೆಯೂ ಗೃಹಿಣಿಯ ಕುತ್ತಿಗೆಯನ್ನು ಬಲವಾಗಿ ಬಾಯಲ್ಲಿ ಹಿಡಿದು ಎತ್ತೊಯ್ದಿತ್ತು. ಹೆಣ್ಣು ಮಕ್ಕಳ ಚೀರಾಟದ ಶಬ್ಧ ಕೇಳಿ ಗ್ರಾಮಸ್ಥನೊಬ್ಬ ಬಂದೂಕ ಹಿಡಿದು ಸ್ಥಳಕ್ಕೆ ಬರುವಷ್ಟರಲ್ಲಿ ನರಭಕ್ಷಕ ಗೃಹಿಣಿಯ ಶವದೊಂದಿಗೆ ಕಾಡು ಸೇರಿತ್ತು. ಆತ ಗಾಳಿಯಲ್ಲಿ ಗುಂಡು ಹಾರಿಸಿದ ತಕ್ಷಣ ನರಭಕ್ಷಕನ ಘರ್ಜನೆ ಕೇಳಿಬಂದಿದ್ದರಿಂದ ಎಲ್ಲರೂ ಹೆದರಿ ವಾಪಸ್ ಹಳ್ಳಿಗೆ ಬಂದರು.

ಜಿಮ್ ಕಾರ್ಬೆಟ್ ಗ್ರಾಮಸ್ಥರ ನೆರವಿನಿಂದ ನರಭಕ್ಷಕ ಹುಲಿ ಮಹಿಳೆಯನ್ನು ಎಳೆದೊಯ್ದಿದ್ದ ಜಾಡು ಹಿಡಿದು ಹೋಗಿ ಸ್ಥಳ ಪರಿಕ್ಷೀಸಿದಾಗ ಆಕೆಯ ಬಟ್ಟೆ ಮತ್ತು ಮೂಳೆಗಳು ಮಾತ್ರ ಅಲ್ಲಿ ಉಳಿದಿದ್ದವು. ನರಭಕ್ಷಕ ಹುಲಿ ಪಾಲಿ ಗ್ರಾಮದ ಜನರನ್ನು ಗುರಿಯಾಗಿಟ್ಟುಕೊಂಡು ಇಲ್ಲೆ ಬೀಡು ಬಿಟ್ಟಿದೆ ಎಂಬುದನ್ನು ಕಾರ್ಬೆಟ್ ಖಾತರಿಪಡಿಸಿಕೊಂಡು ವಾಪಸ್ಸಾದ. ಹುಲಿಗೆ ಬಲಿಯಾದ ಗೃಹಿಣಿಯ ಮನೆಯವರು ಆಕೆಯ ಶವ ಸಂಸ್ಕಾರದ ವಿಧಿ ವಿಧಾನದ ಪೂಜೆಗಾಗಿ ಆಕೆಯ ಮೂಳೆಗಳನ್ನು ಸಂಗ್ರಹಿಸಿಕೊಂಡು ಬಂದರು.

ಆದಿನ ಬೆಳಗಿನ ಜಾವವೇ ಕಾರ್ಬೆಟ್ ಪಾಲಿ ಎಂಬ ಪುಟ್ಟ ಹಳ್ಳಿಗೆ ಬಂದಿದ್ದರಿಂದ ಗ್ರಾಮಸ್ಥರಿಗೆ ತುಸು ಧೈರ್ಯ ಬಂದಂತಾಯಿತು. ಕಾರ್ಬೆಟ್ ಬಂದೂಕಿನ ರಕ್ಷಣೆಯಡಿ ರೈತರು ಬೇಸಾಯದ ಕೆಲಸಗಳನ್ನು ನಿರ್ವಹಿಸಿದರೆ ಹಳ್ಳಿಯ ಹೆಂಗಸರು ತಮ್ಮ ಮನೆಗಳಿಂದ ಹೊರ ಬಂದು ಬಾವಿಯಲ್ಲಿ ನೀರು ಸೇದುವುದು, ಬಟ್ಟೆ ಒಗೆಯುವುದು, ಕಟ್ಟಿಗೆ ಸಂಗ್ರಹಿಸುವ ಕೆಲಸವನ್ನು ನಿರಾಳವಾಗಿ ಮಾಡಿದರು.

ಆ ರಾತ್ರಿ ಊರಿನ ಮುಖಂಡ ಕಾರ್ಬೆಟ್ ಮತ್ತು ಅವನ ಸೇವಕರಿಗೆ ವಸತಿ ವ್ಯವಸ್ಥೆಗಾಗಿ ಒಂದು ಕೊಠಡಿಯಿದ್ದ ಮನೆಯೊಂದನ್ನು ನೀಡಿದ. ಕಾರ್ಬೆಟ್ ಸೇವಕರನ್ನು ಮನೆಯೊಳಗೇ ಮಲಗಿಸಿ, ಮನೆಯ ಮುಂಭಾಗದಲ್ಲಿ ಒಂದು ಕಡೆ ಗೋಡೆ ಮತ್ತೊಂದು ಕಡೆ ಮರವನ್ನು ರಕ್ಷಣೆ ಮಾಡಿಕೊಂಡು ನರಭಕ್ಷಕ ಹುಲಿಗಾಗಿ ರಾತ್ರಿಯೆಲ್ಲಾ ಕಾದು ಕುಳಿತ. ಕಾಡಿನಿಂದ ಈ ಹಳ್ಳಿಗೆ ಬರಲು ಇದ್ದ  ಏಕೈಕ ರಸ್ತೆಯಲ್ಲೇ ನರಭಕ್ಷಕ ಹುಲಿ ಸಹ ಊರಿನೊಳಕ್ಕೆ ಪ್ರವೇಶಿಸಬೇಕಾಗಿತ್ತು. ಗೃಹಿಣಿಯನ್ನು ಕೊಂದು ಮೂರು ದಿನವಾದ್ದರಿಂದ, ಮತ್ತೇ ಆಹಾರಕ್ಕಾಗಿ ನರಭಕ್ಷಕ ದಾಳಿ ಮಾಡುತ್ತದೆ ಎಂಬುದು ಕಾರ್ಬೆಟ್‍ನ ನಿರೀಕ್ಷೆಯಾಗಿತ್ತು.

(ಮುಂದುವರೆಯುವುದು)

ನಕ್ಸಲ್ ಕಥನಕ್ಕೊಂದು ಮುನ್ನುಡಿ

ಸ್ನೇಹಿತರೆ,

ಕನ್ನಡಕ್ಕೆ ಓದುಗರಿಗೆ ಅಷ್ಟೇನೂ ಪರಿಚಿತವಲ್ಲದ ಅಧ್ಯಾಯವೊಂದನ್ನು ಸಂಪೂರ್ಣವಾಗಿ ಪರಿಚಯಿಸಲು ನಮ್ಮ ಪ್ರೀತಿಯ ಜಗದೀಶ್ ಕೊಪ್ಪರವರು ಸಿದ್ಧವಾಗಿದ್ದಾರೆ. ಹಲವಾರು ತಿಂಗಳುಗಳ ಕರ್ನಾಟಕ ಮತ್ತು ಭಾರತದ ಹಲವು ಕಡೆಗಳ ಓಡಾಟ, ಅಧ್ಯಯನ, ಮಾತುಕತೆಗಳ ಫಲ ಇದು.

ನಕ್ಸಲ್ ಚಳವಳಿ ರಕ್ತಸಿಕ್ತ ಚಳವಳಿ. ಅದೊಂದು ಸಾಮಾಜಿಕ ಮತ್ತು ರಾಜಕೀಯ ಹೋರಾಟವೂ ಹೌದು. ಆದರೆ ಅದು ನಮ್ಮ ರಾಷ್ಟ್ರನಿರ್ಮಾತೃಗಳು ಒಪ್ಪಿಕೊಂಡ ಪ್ರಜಾಪ್ರಭುತ್ವ ಸಿದ್ಧಾಂತಕ್ಕೆ ಪೂರಕವಾಗಿಲ್ಲ. ಆದರೆ, ಭಾರತದಂತಹ ಅಸಮಾನ ಮತ್ತು ಶೋಷಣೆಯ ಸಮಾಜದಲ್ಲಿ, ಪ್ರಜಾಪ್ರಭುತ್ವ ಮತ್ತು ಆಧುನಿಕ ವಿಚಾರಧಾರೆಗಳು ಬೇರೂರದಂತಹ ಕಗ್ಗಾಡುಗಳಲ್ಲಿ, ಪಾಳೆಯಗಾರಿಕೆ ಪರಿಸರದಲ್ಲಿ, ಶೋಷಣೆ ಮತ್ತು ಅನ್ಯಾಯ ಮುಂದುವರೆಯುತ್ತಲೇ ಇದೆ. ಮಾನವ ಹಕ್ಕುಗಳ ದಮನವಾಗುತ್ತಲೇ ಇದೆ. ಜಮೀನ್ದಾರರ ಮತ್ತು ಶೋಷಕರ ವಿರುದ್ಧ ಸಿಗುವ ಕ್ಷಣಿಕ ಮತ್ತು ತಕ್ಷಣದ ನ್ಯಾಯವನ್ನೇ ನ್ಯಾಯ ಎಂದು ಭಾವಿಸುವಂತಹ ಸ್ಥಿತಿಯಲ್ಲಿ ನಾವಿದ್ದೇವೆ. ಆದರೆ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಪಡೆದುಕೊಳ್ಳುವ ನ್ಯಾಯ ಮತ್ತು ಸುಧಾರಣೆಗಳೇ ದೀರ್ಘಕಾಲೀನವಾದವು; ಸಾರ್ವಕಾಲಿಕವಾದವು; ಮತ್ತು ಅಹಿಂಸಾತ್ಮಕವಾದವು.

ವರ್ತಮಾನದಲ್ಲಿ ಅಪ್ರಸ್ತುತವಾಗಬೇಕಿದ್ದ ಈ ನಕ್ಸಲ್ ಚಳವಳಿ ಭಾರತದಲ್ಲಿ ಹಬ್ಬುತ್ತಲೇ ಇದೆ. ಒಂದೆಡೆ ನಕ್ಸಲರ ಎನ್‌ಕೌಂಟರ್ ಆಗುತ್ತಿದ್ದರೆ ಮತ್ತೊಂದೆಡೆ ಅವರೂ ಸಹ ಅಪಹರಣ ಮತ್ತು ಕಗ್ಗೊಲೆಗಳಲ್ಲಿ ತೊಡಗಿದ್ದಾರೆ. ಒಡಿಶಾದಲ್ಲಿ ಒಬ್ಬ ಶಾಸಕ ಮತ್ತು ಒಬ್ಬ ವಿದೇಶಿ ಪ್ರಜೆ ನಕ್ಸಲರಿಂದ ಅಪಹರಣಕ್ಕೊಳಗಾಗಿದ್ದಾರೆ. ಈ ಸಂದರ್ಭದಲ್ಲಿ ಜಗದೀಶ್ ಕೊಪ್ಪರವರು ಈ ಚಳವಳಿಯ ಇತಿಹಾಸ ಮತ್ತು ವರ್ತಮಾನವನ್ನು ಅದರೆಲ್ಲ ಮಗ್ಗಲುಗಳೊಂದಿಗೆ ನಮಗೆ ಪರಿಚಯಿಸ ಹೊರಟಿದ್ದಾರೆ.

ಇಂದಿನಿಂದ ಈ ಮಾಲಿಕೆ ಪ್ರತಿ ಗುರುವಾರದಂದು ಪ್ರಕಟವಾಗುತ್ತದೆ.

ಈ ಮಾಲಿಕೆ ಆರಂಭಿಸುತ್ತಿರುವ ಕೊಪ್ಪರವರಿಗೆ ವರ್ತಮಾನದ ಬಳಗದಿಂದ ಪ್ರೀತಿಯ ಧನ್ಯವಾದಗಳು ಮತ್ತು ಕೃತಜ್ಞತೆಗಳು. ಎಂದಿನಂತೆ ನಿಮ್ಮ ಅಭಿಪ್ರಾಯ ಮತ್ತು ಟಿಪ್ಪಣಿಗಳು ಬರುತ್ತಿರಲಿ.

– ರವಿ ಕೃಷ್ಣಾರೆಡ್ಡಿ



– ಡಾ.ಎನ್. ಜಗದೀಶ್ ಕೊಪ್ಪ  


ಇದು ಕಳೆದ ಎಂಟು ವರ್ಷದ ಹಿಂದಿನ ಒಂದು ಘಟನೆ, ಮೂಲತಃ ಅರ್ಥಶಾಸ್ತ್ರದ ವಿದ್ಯಾರ್ಥಿಯಾದ ನಾನು ಜಾಗತೀಕರಣ ಮತ್ತು ಗ್ರಾಮಭಾರತ ಎಂಬ ಶೀರ್ಷಿಕೆಯಡಿ ಡಾಕ್ಟರೇಟ್ ಪದವಿಗಾಗಿ ಜಾಗತೀಕರಣ ಕುರಿತಂತೆ ಅಧ್ಯಯನ ಕೈಗೊಂಡಿದ್ದ, ಸಂದರ್ಭದಲ್ಲಿ ದೆಹಲಿಯ ‘ಡೆಲ್ಲಿ ಸ್ಕೂಲ್ ಆಫ್ ಎಕಾನಾಮಿಕ್ಸ್’ ಕೇಂದ್ರಕ್ಕೆ ಭೇಟಿ ನೀಡಿದ್ದೆ. ಅಲ್ಲಿನ ಗ್ರಂಥಾಲಯದಲ್ಲಿ ಕಾಶ್ಮೀರದ ಸ್ಥಿತಿ ಗತಿ ಬಗ್ಗೆ ಎಮ್.ಫಿಲ್. ಅಧ್ಯಯನ ಮಾಡಿದ್ದ ವಿದ್ಯಾರ್ಥಿನಿಯೋರ್ವಳು ತನ್ನ ಸಂಶೋಧನಾ ಪ್ರಬಂಧದಲ್ಲಿ ಭಯೋತ್ಪಾದನೆ ಮತ್ತು ಬಡತನ ಕುರಿತು ಬರೆದಿದ್ದ ಒಂದು ಅಧ್ಯಾಯ ನನ್ನ ಗಮನ ಸೆಳೆಯಿತು.

ಕಾಶ್ಮೀರದ ಬಡ ಮುಸ್ಲಿಂ ಕುಟುಂಬಗಳ ಯುವಕರಿಗೆ ಪಾಕಿಸ್ತಾನದ ಐ.ಎಸ್,ಐ ಏಜೆಂಟರು ತಲಾ ಎರಡರಿಂದ ಮೂರು ಲಕ್ಷ ರೂ ಹಣ ನೀಡಿ, ಅವರಿಗೆ ಜೆಹಾದ್ ಹೆಸರಿನಲ್ಲಿ ಭಯೋತ್ಪಾದನೆ ಚಟುವಟಿಕೆ ಕುರಿತು ತರಬೇತಿ ನೀಡುವುದನ್ನು ದಾಖಲಿಸಿದ್ದಳು.

ಮನೆಯಲ್ಲಿ ಬೆಳೆದು ನಿಂತ ತಮ್ಮ ಸಹೋದರಿಯರ ಮದುವೆ ಖರ್ಚಿಗಾಗಿ ಕಾಶ್ಮೀರದ ಅಮಾಯಕ ಯುವಕರು ಇಂತಹ ಸಂಚಿಗೆ ಬಲಿಯಾಗುತ್ತಿರುವ ಬಗ್ಗೆ ಕ್ಷೇತ್ರ ಕಾರ್ಯದ ಮೂಲಕ ಸಮೀಕ್ಷೆ ಮಾಡಿ, ಪೋಲಿಸರಿಂದ ಬಂಧಿತರಾದ ಯುವಕರನ್ನು ಭೇಟಿಯಾಗಿ ಅಧಿಕೃತವಾಗಿ ಅಂಕಿ ಅಂಶಗಳನ್ನು ದಾಖಲಿಸಿದ್ದಳು. ಅಲ್ಲಿಯವರೆಗೆ ನಾನು ಬಡತನ ಮತ್ತು ಹಿಂಸೆ ಹಾಗೂ ಭಯೋತ್ಪಾದನೆ ನಡುವೆ ಹೀಗೊಂದು ಸಾವಯವ ಸಂಬಂಧ ಇದೆ ಎಂದು ಊಹಿಸಿರಲಿಲ್ಲ.

ಚಿಕ್ಕಂದಿನಿಂದಲೂ ದೇವರು, ಧರ್ಮ, ಮೂಢನಂಬಿಕೆ, ಕಂದಾಚಾರ ಇವುಗಳ ಆಚೆಗೆ ಬೆಳೆದು ಬಂದ ನಾನು. ಕಾಲೇಜು ದಿನಗಳಲ್ಲಿ ಎಡಪಂಥೀಯ ವಿಚಾರಗಳಿಂದ ಪ್ರಭಾವಿತನಾದವನು. ಇವುಗಳ ನಡುವೆಯೂ, ಅತಿಯಾದ ಎಡಪಂಥೀಯ ಅಥವಾ ಬಲಪಂಥೀಯ ವಿಚಾರಧಾರೆಗಳು ಮತೀಯವಾದದಷ್ಟೇ ಅಪಾಯಕಾರಿ ಎಂದು ನಂಬಿದವನು. ಹಾಗಾಗಿ ಗಾಂಧಿ ಮತ್ತು ಲೋಹಿಯಾ, ಅಂಬೇಡ್ಕರ್ ವಿಚಾರಗಳಲ್ಲಿ ನಂಬಿಕೆಯಿಟ್ಟುಕೊಂಡು ವರ್ತಮಾನದ ಎಲ್ಲಾ ವಿದ್ಯಾಮಾನಗಳನ್ನು ಈವರೆಗೆ ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದೇನೆ.

ಮುಂದಿನ ವರ್ಷದ ಮೇ ತಿಂಗಳಿಗೆ 45 ವರ್ಷ ತುಂಬುವ ನಕ್ಸಲ್ ಚಳವಳಿಯ ಹೋರಾಟವನ್ನು 1978 ರಿಂದ ಅವಲೋಕಿಸುತ್ತಾ ಅವರ ಹಿಂಸೆಯ ಹಾದಿಯೊಂದನ್ನು ಹೊರತುಪಡಿಸಿ, ಹಲವು ಸಂದರ್ಭಗಳಲ್ಲಿ ಅವರ ವಿಚಾರಧಾರೆಗೆ ಪರೋಕ್ಷವಾಗಿ ಬೆಂಬಲಿಸುತ್ತಾ ಬಂದಿದ್ದೇನೆ ಆದರೆ, ನಕ್ಸಲ್ ಹೋರಾಟದ ಏಳು ಬೀಳಿನ ಇತಿಹಾಸ ದಾಖಲಿಸುವ ಯಾವುದೇ ಆಸೆಯಾಗಲಿ, ಕನಸಾಗಲೀ ಕಳೆದ ನವಂಬರ್‌ವರೆಗೆ ನನ್ನಲ್ಲಿ ಇರಲಿಲ್ಲ.

ಕಾಶ್ಮೀರದ ಹಾಗೆ ನಕ್ಸಲ್ ಚಳವಳಿಯಲ್ಲಿ ಬಡತನ ಮತ್ತು ಹಿಂಸೆಯ ನಡುವೆ ಸಂಬಂಧವಿರಬಹುದೇ ಎಂಬ ಕುತೂಹಲ ಮಾತ್ರ ನನ್ನಲ್ಲಿತ್ತು. ಇವೆಲ್ಲಕ್ಕಿಂತ ಹೆಚ್ಚಾಗಿ ದೆಹಲಿಯ ಜವಹರಲಾಲ್‍ನೆಹರೂ ವಿ.ವಿ. ಹಾಗೂ ಕೊಲ್ಕತ್ತದ ಪ್ರೆಸಿಡೆನ್ಸಿ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದಕ್ಕಿದ್ದಂತೆ  ಕಾಣೆಯಾಗಿ ನಕ್ಸಲ್ ಚಳವಳಿಗೆ ಸೇರ್ಪಡೆಯಾಗುತ್ತಿರುವುದನ್ನು ಗಮನಿಸುತ್ತಾ ಬಂದಿದ್ದೆ. ಇವರಲ್ಲಿ ಐ.ಎ.ಎಸ್, ಐ.ಪಿ.ಎಸ್. ಅಧಿಕಾರಿಗಳ ಮಕ್ಕಳು ಸೇರಿರುವುದು ನನ್ನ ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ದೇಶಾದ್ಯಂತ ನಡೆಯುತ್ತಿದ್ದ ನಕ್ಸಲ್‍ರ ಹಿಂಸಾಚಾರ, ಪೋಲಿಸರ ಎನ್‍ಕೌಂಟರ್ ಇವುಗಳನ್ನು ಗಮನಿಸುತ್ತಿದ್ದ ನನಗೆ 2011 ರ ನವಂಬರ್ 24 ರಂದು ಪಶ್ಚಿಮ ಬಂಗಾಳದ ಪೋಲಿಸರು ನಕ್ಸಲಿಯರ ನಾಯಕ ಕಿಶನ್‍ಜಿಯನ್ನು ಬಲೆಗೆ ಕೆಡವಿ, ಕೊಂದುಹಾಕಿದ ಘಟನೆ ಮತ್ತು ಆನಂತರದ ಬೆಳವಣಿಗೆಗಳು ನನ್ನ ಈ ಕಥನಕ್ಕೆ ಪ್ರೇರಣೆಯಾದವು.

34 ವರ್ಷಗಳ ಹಿಂದೆ ಆಂಧ್ರದ ಕರೀಂನಗರ ಜಿಲ್ಲೆಯ ತನ್ನ ಹುಟ್ಟೂರನ್ನು ತೊರೆದ ಕಿಶನ್‍ಜಿ (ಮೂಲಹೆಸರು ಮಲ್ಲೋಜಲ ಕೋಟೇಶ್ವರರಾವ್) ನಂತರ ಆಂಧ್ರ, ಒಡಿಸ್ಸಾ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಛತ್ತೀಸ್‍ಘಡ್, ಮಹಾರಾಷ್ಟ್ರ ರಾಜ್ಯಗಳ 16 ಸಾವಿರ ಹಳ್ಳಿಗಳನ್ನು ತನ್ನ ಮನೆಯನ್ನಾಗಿ ಮಾಡಿಕೊಂಡು ಮಾವೋವಾದಿ ನಕ್ಸಲರ ನಾಯಕನಾಗಿ ಬೆಳೆದು ನಿಂತವನು. ಈ ಎಲ್ಲಾ ರಾಜ್ಯಗಳ ಗುಡ್ಡಗಾಡು ಜನರ ಪ್ರೀತಿಯ ಆರಾಧ್ಯ ದೈವವಾಗಿದ್ದ ಕಿಶನ್‍ಜಿ, ಪೋಲಿಸರಿಗೆ ಮತ್ತು ಕೇಂದ್ರ ಸರ್ಕಾರದ ನಕ್ಸಲ್ ನಿಗ್ರಹ ಪಡೆಗೆ ತನ್ನ ಮೊಬೈಲ್ ನಂಬರ್ ನೀಡಿ ತನ್ನನ್ನು ಬಂಧಿಸುವಂತೆ ಸವಾಲೆಸೆದ ಸಾಹಸಿ ಈತ. ಇದು ಸಾಲದೆಂಬಂತೆ ಮಾಧ್ಯಮದವರನ್ನು ತನ್ನ ಅಡಗುದಾಣಕ್ಕೆ ಕರೆಸಿಕೊಂಡು ಪತ್ರಿಕಾಗೋಷ್ಠಿ ನಡೆಸುತ್ತಾ ಸರ್ಕಾರದ ನೀತಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ. ಅಂತಿಮವಾಗಿ ಪೋಲಿಸರು ಆತನ ಸಹಚರರಾದ ನಕ್ಸಲಿಯರಿಗೆ ಹಣದ ಆಮಿಷ ಒಡ್ಡಿ ಕಿಶನ್‍ಜಿಯ ಚಲನವಲನದ ಮಾಹಿತಿ ಪಡೆದು ಕಳೆದ ನವಂಬರ್ 24 ರಂದು ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಆರಣ್ಯ ಪ್ರದೇಶದ ಅಡಗು ತಾಣದಲ್ಲಿ ಅವನನ್ನು ಜೀವಂತ ಹಿಡಿದುದಲ್ಲದೆ, ಸ್ಥಳದಲ್ಲೇ ಕೊಂದು ಹಾಕಿ, ಇಡೀ ಘಟನೆಯನ್ನು ಎನ್‍ಕೌಂಟರ್ ಎಂದು ಪ್ರತಿಬಿಂಬಿಸಿದರು.

‘ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ’ (ಮಾವೋವಾದಿ) ಸಂಘಟನೆಯ ಪ್ರಮುಖ ನಾಯಕನಾಗಿದ್ದ ಕಿಶನ್‍ಜಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನಜಿ ಕರೆ ನೀಡಿದ್ದ, ಶಾಂತಿಯುತ ಮಾತುಕತೆಗೆ ಒಲವು ತೋರಿದ್ದ. ಆದರೆ ತನ್ನ ಸಂಗಡಿಗರ ಕುತಂತ್ರಕ್ಕೆ ಬಲಿಯಾದ. ಐದು ದಿನಗಳ ನಂತರ ಆಂಧ್ರದ ಅವನ ಹುಟ್ಟೂರಿಗೆ ಶವವನ್ನು ತಂದಾಗ 34 ವರ್ಷಗಳ ನಂತರ ಶವವಾಗಿ ಬಂದ ಮಗನ ಮುಖವನ್ನು ನೋಡಿದ 89 ವರ್ಷದ ಅವನ ತಾಯಿ ಸದ್ದಿಲ್ಲದೆ ಕಣ್ಣೀರಿಟ್ಟಳು. ಕಿಶನ್‍ಜಿಯ ಅಂತ್ಯ ಸಂಸ್ಕಾರದ ದೃಶ್ಯಗಳನ್ನು ತೆಲುಗು ಸುದ್ಧಿ ಚಾನಲ್‍ಗಳು ನೇರ ಪ್ರಸಾರ ಮಾಡಿದವು. ಇದನ್ನು ವೀಕ್ಷಿಸುತ್ತಾ ಕುಳಿತ್ತಿದ್ದ ನಾನು. ಆಕೆ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯನ್ನು ನೋಡಿ ಆ ಕ್ಷಣಕ್ಕೆ ದಂಗಾಗಿ ಹೋದೆ.

“ಈ ದಿನ ನನ್ನ ಮಗ ಸತ್ತಿರಬಹುದು ಆದರೆ, ನನಗೆ ಈ ನೆಲದಲ್ಲಿ ಸಾವಿರಾರು ಕೋಟೇಶ್ವರರಾವ್‍ನಂತಹ (ಕಿಶನ್‍ಜಿ) ಮಕ್ಕಳಿದ್ದಾರೆ,” ಎನ್ನುವ ಆ ವೃದ್ಧೆಯ ಮಾತಿನ ಹಿಂದಿನ ಸಿಟ್ಟು ನೋವು, ಸಂಕಟ ಈ ಎಲ್ಲಾ ಭಾವನೆಗಳು ಏಕಕಾಲಕ್ಕೆ ಅನೇಕ ಅರ್ಥಗಳನ್ನು ಹೊರಹಾಕುತ್ತಿದ್ದವು. ಇಡೀ ನಕ್ಸಲ್ ಚಳವಳಿಯ ಇತಿಹಾಸವನ್ನು ಗಮನಿಸಿದರೆ, ಅದರ ನಾಯಕತ್ವ ವಹಿಸಿದ ಬಹುತೇಕ ನಾಯಕರು ಸಾಮಾನ್ಯ ವ್ಯಕ್ತಿಗಳಲ್ಲ, ನಮ್ಮ ಕರ್ನಾಟಕದ ಸಾಕೇತ್‍ರಾಜನ್‍ನಿಂದ ಹಿಡಿದು, ಕಿಶನ್‍ಜಿ, ಅಜಾದ್, ಚಾರುಮುಜಮ್ದಾರ್, ಕನುಸನ್ಯಾಲ್, ಸತ್ಯನಾರಾಯಣ, ಕೊಂಡಪಲ್ಲಿ ಸೀತಾರಾಮಯ್ಯ, ಗಣಪತಿ, ನಾಗಭೂಷಣ ಪಟ್ನಾಯಕ್, ಸುನೀತಿಘೋಷ್, ದತ್ತ ಸರೋಜ್, ಅಸೀಮ್ ಚಟರ್ಜಿ, ರಾಜೇಂದ್ರಕುಮಾರ್ ಇವರೆಲ್ಲಾ ಪದವೀಧರರು ಮತ್ತು ಇಂಜಿನಿಯರ್‍‍ಗಳು, ಇದಲ್ಲದೇ ಪತ್ರಿಕೋದ್ಯಮ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಇವರುಗಳು ಸಮಾಜದ ಮುಖ್ಯ ವಾಹಿನಿಯಲ್ಲಿದ್ದರೆ ಈ ನಾಡಿಗೆ, ಈ ನೆಲಕ್ಕೆ ಆಸ್ತಿಯಾಗಬಲ್ಲವರಾಗಿದ್ದರು. ಇವೆರೆಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆದ ಸಂಗತಿಯೆಂದರೆ, ಗುಡ್ಡಗಾಡಿನ ಬುಡಕಟ್ಟು ಜನಾಂಗವನ್ನು ಇನ್ನಿಲ್ಲದಂತೆ ಶೋಷಣೆ ಮಾಡಿದ ಜಮೀನುದಾರರು, ಅರಣ್ಯಾಧಿಕಾರಿಗಳು, ಮತ್ತು ಪೋಲಿಸರ ಅಮಾನುಷ ವರ್ತನೆ. ಬಾಯಿಲ್ಲದವರ ಶೋಷಿತರ ಸಂಘಟನೆಗೆ ಮುಂದಾಗಿ, ಅವರಿಗೆಲ್ಲಾ ನೆಮ್ಮದಿಯ ಬದುಕು ಕಟ್ಟಿಕೊಡಲು ಹೋಗಿ, ಅರಿವಿಲ್ಲದಂತೆ ತಮ್ಮ ಬದುಕನ್ನು ಬೀದಿಗೆ ಬಿಸಾಕಿ ಪೊಲೀಸರ ಗುಂಡಿಗೆ ಬಲಿಯಾಗಿ ಅನಾಥ ಹೆಣವಾದ ನತದೃಷ್ಟರು ಇವರು.

ಅಂದಿನ ದಿನಗಳ ಆ ಕಾಲಘಟ್ಟದಲ್ಲಿ ಇವರ ಹೋರಾಟ ನಿಜಕ್ಕೂ ಅತ್ಯಗತ್ಯವಾಗಿತ್ತು. ಆದರೆ, ಇವತ್ತಿನ ಈ ಸಂದರ್ಭಕ್ಕೆ ನಕ್ಸಲಿಯರ ಈ ಕದನ ಅಪ್ರಸ್ತುತ. ವರ್ತಮಾನದಲ್ಲಿ ನಾವು ಕಾಣುತ್ತಿರುವ ನಕ್ಸಲಿಯರ ಹೋರಾಟ ಏನಿದ್ದರೂ ತಮ್ಮ ಅಸ್ತಿತ್ವದ ಉಳಿವಿಗಾಗಿ ಎಂಬಂತಾಗಿದೆ. ಅಂದು ಅವರ ಕೈಯಲ್ಲಿ ಕೇವಲ ಬಿಲ್ಲು ಬಾಣಗಳಿದ್ದವು. ಈಗ ಅದೇ ಕೈಗಳಿಗೆ ಬಂದೂಕು, ಬಾಂಬುಗಳು ಬಂದಿವೆ.

1917 ರಲ್ಲಿ ರಷ್ಯಾ ಕ್ರಾಂತಿಗೆ ನಾಂದಿ ಹಾಡಿದ ಲೆನಿನ್ ಮತ್ತು ಚೀನಾದ ಸಾಮಾಜಿಕ ಕ್ರಾಂತಿಗೆ ಕಾರಣಕರ್ತನಾದ ಮಾವೋತ್ಸೆ ತುಂಗನ ವಿಚಾರಧಾರೆಗಳನ್ನು ನಂಬಿಕೊಂಡು ಭಾರತದಲ್ಲಿ ಕ್ರಾಂತಿ ಮಾಡುತ್ತೇವೆ ಎನ್ನುವುದು ನಕ್ಸಲಿಯರ ಭ್ರಮೆಯಷ್ಟೇ ಮಾತ್ರವಲ್ಲ, ಹುಚ್ಚುತನದ ಪರಮಾವಧಿ ಎಂದು ಕೂಡ ವಿಶ್ಲೇಷಿಸಬಹುದು. ಚೀನಾ ಮತ್ತು ರಷ್ಯಾ ಈ ಎರಡು ರಾಷ್ಟ್ರಗಳು ತಮ್ಮ ಕಮ್ಯೂನಿಷ್ಟ್ ಸಿದ್ಧಾಂತಗಳನ್ನು ಈಗಾಗಲೇ ಗಾಳಿಗೆ ತೂರಿ ಜಾಗತೀಕರಣವೆಂಬ ವಿಟ ಪುರುಷನಿಗೆ ಸೆರಗು ಹಾಸಿ ಮಲಗಿರುವಾಗ, ಭಾರತದಂತಹ ಬಹು ಸಂಸ್ಕೃತಿಯ ಈ ನೆಲದಲ್ಲಿ ಕ್ರಾಂತಿ ಸಾಧ್ಯವೆ? ಒಮ್ಮೆ ತಣ್ಣಗೆ ಕುಳಿತು ಯೋಚಿಸಿ ನೋಡಿ. ಆದರೆ, ನಕ್ಸಲಿಯರು ಇದನ್ನು ನಂಬುವುದಿಲ್ಲ. ಏಕೆಂದರೆ, ಅವರ ಜೊತೆಗಿನ ಮಾತುಕತೆಯ ಸಂದರ್ಭದಲ್ಲಿ ನನಗೆ ಇವರು ಮೆದುಳು ತೊಳೆಸಿಕೊಂಡವರು (Brain washed people) ಎಂಬ ಭಾವನೆ ಗಟ್ಟಿಯಾಗಿದೆ.

ಸದ್ಯದ ಸ್ಥಿತಿಯಲ್ಲಿ ಸರ್ಕಾರ ಮತ್ತು ನಕ್ಸಲಿಯರ ಹೋರಾಟಕ್ಕೆ ಅಂತ್ಯವೆಂಬುದು ಕನಸಾಗಿದೆ ಹಾಗಾಗಿ ಎಂದೂ ಮುಗಿಯದ ಯುದ್ಧ ಎಂಬ ಶೀರ್ಷಿಕೆಯ ಈ ಹೋರಾಟದ ಕಥನಕ್ಕಾಗಿ ಕಳೆದ ಜನವರಿಯಲ್ಲಿ ನಾನು ಆಂಧ್ರ, ಪಶ್ಚಿಮಬಂಗಾಳ, ಒಡಿಸ್ಸಾ, ಮಹಾರಾಷ್ಟ್ರ ರಾಜ್ಯಗಳ ಹದಿನೆಂಟು ನಕ್ಸಲ್‍ಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಅವರ ಅಡಗು ತಾಣಕ್ಕೆ ಭೇಟಿ ನೀಡಿ, ಮಾಜಿ ನಕ್ಸಲಿಯರು ಮತ್ತು ಮಾವೋವಾದಿ ಕಮ್ಯೂನಿಷ್ಟರ ಜೊತೆ ಮಾತನಾಡಿ, ಅವರಿಂದ ಸಂಗ್ರಹಿಸಿದ ಅಂಕಿ ಅಂಶ, ಮಾಹಿತಿ ಇವೆಲ್ಲವನ್ನು ಕ್ರೂಢೀಕರಿಸಿ ನಕ್ಸಲರ ಇತಿಹಾಸವನ್ನು ಕಥನ ರೂಪದಲ್ಲಿ ಇಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದೀನಿ.

ನಕ್ಸಲಿಯರ ಹೋರಾಟಕ್ಕೆ ಹಲವಾರು ಮಗ್ಗಲುಗಳಿವೆ. ಇದಕ್ಕೆ ಕೇವಲ ಒಂದು ದೃಷ್ಟಿಕೋನ ಸಾಲದು ಎಂಬ ನಂಬಿಕೆಯ ಆಧಾರದ ಮೇಲೆ ಈ ವಯಸ್ಸಿನಲ್ಲಿ, ಅದೂ ದಿನಕ್ಕೆ ಎರಡು ಬಾರಿ ಇನ್ಸುಲಿನ್ ತೆಗೆದುಕೊಳ್ಳುವ ಮಧುಮೇಹಿ ರೋಗಿಯಾಗಿ ರಿಸ್ಕ್ ಎನ್ನುವಂತಹ ಪ್ರವಾಸ ಕೈಗೊಂಡೆ.

ಹೈದರಾಬಾದ್‍ನಗರದ ಪೊಟ್ಟಿ ಶ್ರಿರಾಮುಲು ತೆಲುಗು ವಿ.ವಿ.ಯ ಮುಖ್ಯದ್ವಾರದಿಂದ ನನ್ನನ್ನು ಕರೆದೊಯ್ದ ನಕ್ಸಲ್ ಮಿತ್ರರು ಆಂಧ್ರದ ಕರೀಂ ನಗರ, ನಲ್ಗೊಂಡ, ವಿಜಯವಾಡ, ರಾಜಮಂಡ್ರಿ, ಶ್ರೀಕಾಕುಳಂ ಜಿಲ್ಲೆ ಹಾಗೂ ಒಡಿಸ್ಸಾದ ಗಂಜಾಂ ಜಿಲ್ಲೆಗಳಲ್ಲಿ ತಿರುಗಾಡಿಸಿ ಅಂತಿಮವಾಗಿ ಚಿಲ್ಕಾ ಸರೋವರದ ಬಳಿಯ ರೈಲು ನಿಲ್ದಾಣಕ್ಕೆ ಸುರಕ್ಷಿತವಾಗಿ ತಲುಪಿಸಿದರು. ಜೊತೆಗೆ ಪಶ್ಚಿಮ ಬಂಗಾಳದ ಹಾಗೂ ಮಹಾರಾಷ್ಟ್ರದ ಲಿಂಕ್ ದೊರಕಿಸಿಕೊಟ್ಟರು. ಇದೆಲ್ಲಾ ಸಾಧ್ಯವಾದದ್ದು, ಆಂಧ್ರದ ಪ್ರಮುಖ ದಿನಪತ್ರಿಕೆಯಲ್ಲಿ ಸುದ್ಧಿ ಸಂಪಾದಕನಾಗಿ ಸೇವೆ ಸಲ್ಲಿಸಿ ಈಗ ನಿವೃತ್ತನಾಗಿರುವ ನನ್ನ ಮಿತ್ರನಿಂದ. ಆತ ಮೂಲತಃ ಶ್ರೀಕಾಕುಳಂ ಜಿಲ್ಲೆಯ ಹಳ್ಳಿಯಿಂದ ಬಂದವನು, ಅವನ ಬಾಲ್ಯದ ಗೆಳೆಯರೆಲ್ಲಾ ನಕ್ಸಲ್ ಹೋರಾಟಗಾರರಾಗಿದ್ದವರು, ನಂತರದ ದಿನಗಳಲ್ಲಿ. ಭ್ರಮನಿರಶನಗೊಂಡವರು.

1967 ರಲ್ಲಿ ಪ್ರಪಥಮವಾಗಿ ಆಂಧ್ರದಲ್ಲಿ ಪೀಪಲ್ಸ್ ವಾರ್‍‌ಗ್ರೂಪ್ (ಪ್ರಜಾ ಸಮರಂ) ಎಂಬ ನಕ್ಸಲಿಯರ ಹೋರಾಟಕ್ಕೆ ನಾಂದಿ ಹಾಡಿದ ಪ್ರದೇಶವೆಂದರೆ,  ಶ್ರೀಕಾಕುಳಂ ಜಿಲ್ಲೆ. ಆದರೆ ಈಗ ಇಲ್ಲಿನ ಜನರಿಗೆ ಅದೊಂದು ಇತಿಹಾಸವೆನೋ ಎಂಬಾಂತಾಗಿದೆ. (ಈ ಬಗ್ಗೆ ಕಥನದಲ್ಲಿ ವಿವರಾಗಿ ಪ್ರಸ್ತಾಪಿಸಿದ್ದೇನೆ) ಕೊಲ್ಕತ್ತ ನಗರದಲ್ಲಿ ನಾನು ಉಳಿದಿದ್ದ ನಾಲ್ಕು ದಿನಗಳಲ್ಲಿ ಅಲ್ಲಿನ ಅನೇಕ ಕಮ್ಯೂನಿಷ್ಟ್ ಗೆಳೆಯರು ನನಗೆ ನಕ್ಸಲ್ ಇತಿಹಾಸ ಕುರಿತು ಸಮಗ್ರ ಮಾಹಿತಿ ಒದಗಿಸಿಕೊಟ್ಟರು, ಪ್ರತಿ ಗಂಟೆಗೊಮ್ಮೆ ಅವರ ಜೊತೆಗಿನ ಚಹಾ, ಸಿಗರೇಟು, ಮತ್ತು ರಾತ್ರಿಯ ಪಾರ್ಟಿಯಲ್ಲಿ ಅವರೊಂದಿಗೆ ನಡೆಸಿದ ಅಂತ್ಯವನ್ನೇ ಕಾಣದ ಚರ್ಚೆ ಇವೆಲ್ಲವೂ ನನ್ನ ಪಶ್ಚಿಮ ಬಂಗಾಳ ಒರಿಸ್ಸಾ ಪ್ರವಾಸವನ್ನು ನೆನಪಿನಲ್ಲಿ ಉಳಿಯುವಂತೆ ಮಾಡಿವೆ.

ಅಲ್ಲಿಂದ ಬಂದವನು ಮಾರ್ಚ್ ಮೊದಲವಾರ ಕರ್ನಾಟಕದ ನಕ್ಸಲ್ ಪೀಡಿತ ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣಕನ್ನಡ ಜಿಲ್ಲೆಯ ಕಾಡುಗಳಲ್ಲಿ ಅಲೆದು ಬಂದೆ. ಕೇವಲ 20 ರಿಂದ 25 ಮಂದಿಯಷ್ಟು ಇರುವ ಕರ್ನಾಟಕದ ನಕ್ಸಲಿಯರು ಇವತ್ತು ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಎಷ್ಟೋ ವೇಳೆ ಅಲ್ಲಿನ ಪ್ರಮುಖ ದೇವಸ್ಥಾನಗಳಲ್ಲಿ ನಡೆಯುತ್ತಿರುವ ಅನ್ನ ಸಂತರ್ಪಣೆಯಲ್ಲಿ ಭಕ್ತರಂತೆ ಭಾಗವಹಿಸಿ ಹೊಟ್ಟೆ ತುಂಬಿಸಿಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ಈ ಪ್ರದೇಶಗಳ ಗ್ರಾಮಸ್ಥರ ಸ್ಥಿ ತಿ ಹೇಳತೀರದಾಗಿದೆ. ಹಸಿದು ಬಂದು ಅನ್ನ ಕೇಳಿದವರಿಗೆ ಊಟ ಕೊಟ್ಟರೆ, ನಕ್ಸಲ್ ಬೆಂಬಲಿಗರೆಂಬ ಹಣೆಪಟ್ಟಿಯೊಂದಿಗೆ ಜೈಲು ಸೇರುವ ಸ್ಥಿತಿ, ಕೊಡದಿದ್ದರೆ, ನಕ್ಸಲಿಯರ ಬಂದೂಕಿನ ಭಯ ಅತ್ತ ಹಳ್ಳ, ಇತ್ತ ಹುಲಿ ಎಂಬಂತಿದೆ.

ನಾನು ಕರ್ನಾಟಕದ ಕಾಡುಗಳಲ್ಲಿ ಅಲೆಯುತ್ತಿದ್ದಾಗಲೇ ಪಶ್ಚಿಮ ಬಂಗಾಳದಲ್ಲಿ ತೀವ್ರತರವಾದ ಘಟನೆಗಳು ಜರುಗಿದವು. ಕಿಶನ್‍ಜಿ ನಂತರ ಸಂಘಟನೆಯ ಉಸ್ತುವಾರಿ ಹೊತ್ತಿದ್ದ ಆರ್,ಕೆ. ಹೆಸರಿನ ರಾಮಕೃಷ್ಣನನ್ನು ನಕ್ಸಲ್ ನಿಗ್ರಹ ಪಡೆ ಬಂಧಿಸಿದೆ. ಆಂಧ್ರ ಮೂಲದ ರಾಮಕೃಷ್ಣ ಮೆಕಾನಿಕಲ್ ಇಂಜಿನಿಯರ್ ಪದವೀಧರನಾಗಿದ್ದು, ಶಸ್ರಾಸ್ತ್ರಗಳ ತಯಾರಿಕೆಯಲ್ಲಿ ನಿಪುಣನಾಗಿದ್ದ. ಈತನ ಬಂಧನ ನಕ್ಸಲ್ ಹೋರಾಟದ ಬೆನ್ನು ಮೂಳೆಯನ್ನು ಮುರಿದಂತಾಗಿದೆ. ಇದಕ್ಕೆ ಪೂರಕವಾಗಿ ಹಲವು ಕಿಶನ್‍ಜಿ ಬೆಂಬಲಿಗರು ಇದೇ ಮಾರ್ಚ್ ಎಂಟರಂದು ಕೊಲ್ಕತ್ತ ನಗರದಲ್ಲಿ ಮಮತಾ ಬ್ಯಾನರ್ಜಿ ಎದುರು ಶರಣಾಗತರಾಗುವುದರ ಮೂಲಕ ಸಮಾಜದ ಮುಖ್ಯವಾಹಿನಿಯತ್ತ ಮುಖ ಮಾಡುತ್ತಿದ್ದಾರೆ. ಇದು ನಿಜಕ್ಕೂ ನೆಮ್ಮದಿಯ ಸಂಗತಿ.

(ಮುಂದುವರೆಯುವುದು)