Category Archives: ಜಗದೀಶ್ ಕೊಪ್ಪ

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -13)


– ಡಾ.ಎನ್.ಜಗದೀಶ್ ಕೊಪ್ಪ


 

ಅಭಿರುಚಿ ಮತ್ತು ಸಾಹಸಕ್ಕೆ ಇನ್ನೊಂದು ಹೆಸರೇ ಬ್ರಿಟಿಷರು. ಇದು ಅತಿಶಯೋಕ್ತಿಯ ಮಾತೆನಲ್ಲ. ಇಡೀ ಭಾರತದ ಗಿರಿಧಾಮಗಳ, ಚಹಾ ಮತ್ತು ಕಾಫಿ ತೋಟಗಳ ಇತಿಹಾಸ ಗಮನಿಸಿದರೇ, ಇವುಗಳ ಹಿಂದೆ ಬ್ರಿಟಿಷರು ತಮ್ಮ ಹೆಜ್ಜೆ ಗುರುತುಗಳನ್ನು ದಾಖಲಿಸಿ ಹೋಗಿರುವುದನ್ನು ನಾವು ಗಮನಿಸಬಹುದು. ಇಂದು ಭಾರತದಲ್ಲಿ ಪ್ರಸಿದ್ಧಿಯಾಗಿರುವ, ಸಿಮ್ಲಾ, ಮಸ್ಸೂರಿ, ಡಾರ್ಜಲಿಂಗ್, ನೈನಿತಾಲ್, ಕುಲು-ಮನಾಲಿ, ನೀಲಗಿರಿ, ಕೊಡೈಕೆನಾಲ್, ಸೇಲಂ ಬಳಿಯ ಏರ್ಕಾಡ್ ಇವೆಲ್ಲಾ ಗಿರಿಧಾಮಗಳು ಬ್ರಿಟಿಷರ ಅನ್ವೇಷಣೆ ಮತ್ತು ಕೊಡುಗೆಗಳಾಗಿವೆ.

ಸಾಮಾನ್ಯವಾಗಿ ಪ್ರತಿಯೊಬ್ಬ ಬ್ರಿಟಿಷ್ ಅಧಿಕಾರಿ ತನ್ನ ನಿವೃತ್ತಿಯ ದಿನಗಳನ್ನು ಅರಣ್ಯದ ನಡುವೆ ಇಲ್ಲವೇ, ಗಿರಿಧಾಮಗಳ ನಡುವೆ ಬೃಹತ್ ಕಾಫಿ ಇಲ್ಲವೆ ಚಹಾ ತೋಟಗಳನ್ನು ಮಾಡಿಕೊಂಡು ಬದುಕಿದ್ದನ್ನು ನಾವು ಇತಿಹಾಸದಲ್ಲಿ ಕಂಡಿದ್ದೇವೆ. ಇಂತಹ ಸಾಹಸ ಪ್ರವೃತ್ತಿ ಅವರಲ್ಲಿ ರಕ್ತಗತವಾಗಿ ಬಂದಿದೆ. ಇಂತಹದ್ದೇ ಗುಣವನ್ನು ನಾವು ಜಿಮ್ ಕಾರ್ಬೆಟ್‍ನಲ್ಲಿ ಕಾಣಬಹುದು. ಜಿಮ್ ಕಾರ್ಬೆಟ್ ಕೀನ್ಯಾ ಮತ್ತು ತಾಂಜೇನಿಯಾದಲ್ಲಿ ಭೂಮಿಯ ಮೇಲೆ ಬಂಡವಾಳ ತೊಡಗಿಸಿದ ಮೂಲ ಉದ್ದೇಶ ತನ್ನ ಸಂಸ್ಥೆಯಾದ ಮ್ಯಾಥ್ಯು ಅಂಡ್ ಕೊ ಹಾಗೂ ಕುಟುಂಬದ ಹಿತದೃಷ್ಟಿ ಮಾತ್ರ ಮುಖ್ಯವಾಗಿತ್ತು. ತನ್ನ ಭವಿಷ್ಯದ ಹಿತಾಸಕ್ತಿಯ ನಡುವೆಯೂ ತನ್ನ ಸುತ್ತ ಮುತ್ತ ವಾಸಿಸುತ್ತಿದ್ದ ಬಡ ಜನತೆಯ ಉದ್ಧಾರಕ್ಕಾಗಿ ಇಡೀ ಒಂದು ಹಳ್ಳಿಯನ್ನು ಖರೀದಿಸಿ ಅದನ್ನು ಹಳ್ಳಿಗರಿಗೆ ದಾನ ಮಾಡಿದ, ಭಾರತದ  ಏಕೈಕ ಹೃದಯವಂತ ಬ್ರಿಟಿಷ್ (ಐರೀಷ್) ಮೂಲದ ವ್ಯಕ್ತಿಯೆಂದರೆ ಅದು ಜಿಮ್ ಕಾರ್ಬೆಟ್ ಮಾತ್ರ. ಇದು ಅವನ ಮೃದು ವೈಶಾಲ್ಯತೆಗೆ ಸಾಕ್ಷಿಯಾಗಿದೆ.

ಆ ಕಾಲದಲ್ಲಿ ಬ್ರಿಟಿಷ್ ಸರ್ಕಾರದ ಉನ್ನತ ಹುದ್ದೆಯಲ್ಲಿ ಅಥವಾ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿದ್ದ ಅಧಿಕಾರಿಗಳಿಗೆ ಸರ್ಕಾರ ಅವರು ಕೇಳಿದ ಜಾಗದಲ್ಲಿ ಎಕರೆಗೆ ತಲಾ ಎರಡು ರೂಪಾಯಿನಿಂದ ಹಿಡಿದು ಇಪ್ಪತ್ತು ರೂಪಾಯಿ ಬೆಲೆಯಲ್ಲಿ ಭೂಮಿ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಈ ಅವಕಾಶವನ್ನು ಬಳಸಿಕೊಂಡ ಕಾರ್ಬೆಟ್, ಬೇಸಿಗೆಯ ದಿನಗಳಲ್ಲಿ ತನ್ನ ಕುಟುಂಬ ಕಾಲ ಕಳೆಯುತ್ತಿದ್ದ ಕಲದೊಂಗಿ ಸಮೀಪದ ಚೋಟಾಹಲ್ದಾನಿ ಎಂಬ ಇಡೀ ಹಳ್ಳಿಯನ್ನು ಖರೀದಿಸಿದ.

ಅರಣ್ಯದಿಂದ ಆವೃತ್ತವಾಗಿ ಸುಮಾರು ಎರಡು ಸಾವಿರ ಎಕರೆಗೂ ಅಧಿಕ ವಿಸ್ತೀರ್ಣವಿದ್ದ ಈ ಹಳ್ಳಿಯಲ್ಲಿ, ಜನಸಂಖ್ಯೆ ತೀರಾ ಕಡಿಮೆಯಿತ್ತು. ವ್ಯವಸಾಯವನ್ನು ನಂಬಿಕೊಂಡಿದ್ದ ಕೆಲವು ಕುಟುಂಬಗಳು ಮಾತ್ರ ವಾಸವಾಗಿದ್ದವು. ಬಹುತೇಕ ಮಂದಿ ಉದ್ಯೋಗ ಹರಸಿ ಬೇರೆಡೆ ವಲಸೆ ಹೋಗಿದ್ದರು. ಇಡೀ ಪ್ರದೇಶ ನೀರಿನಿಂದ ಕೂಡಿದ್ದ ಜೌಗು ಪ್ರದೇಶವಾಗಿತ್ತು ಅಲ್ಲದೇ ಕಾಡು ಪ್ರಾಣಿಗಳ ಉಪಟಳದಿಂದಾಗಿ ಅಲ್ಲಿ ವ್ಯವಸಾಯ ಮಾಡುವುದು ಕೂಡ ಕಷ್ಟಕರವಾಗಿತ್ತು.

ಕಾರ್ಬೆಟ್ ಚೋಟಾಹಲ್ದಾನಿ ಹಳ್ಳಿಯನ್ನು ತನ್ನ ವಶಕ್ಕೆ ತೆಗೆದುಕೊಂಡ ನಂತರ, ಬಸಿ ಕಾಲುವೆಗಳನ್ನು ನಿರ್ಮಿಸಿ ನೀರು ಹರಿದು ಹೋಗುವಂತೆ ಮಾಡಿದ. ಮೊಕಮೆಘಾಟ್‍ನಲ್ಲಿ ಕೆಲಸ ಮಾಡಿದ್ದ ಕೆಲವು ಕೂಲಿ ಕೆಲಸಗಾರರನ್ನು ಕರೆಸಿ ಅವರಿಂದ ಗಿಡಗೆಂಟೆಗಳನ್ನು ತೆರವುಗೊಳಿಸಿ, ವ್ಯವಸಾಯಕ್ಕೆ ಅನೂಕೂಲವಾಗುವಂತೆ ಭೂಮಿಯನ್ನು ಸಿದ್ದಪಡಿಸಿ, ಅವರಿಗೆಲ್ಲಾ ತಲಾ ಎರಡರಿಂದ ಐದು ಎಕರೆ ಭೂಮಿಯನ್ನು ಹಂಚಿದ. ಈ ಮೊದಲು ಹಳ್ಳಿಯಲ್ಲಿ ವ್ಯವಸಾಯ ಮಾಡುತ್ತಿದ್ದವರಿಗೆ ಮತ್ತಷ್ಟು ಭೂಮಿ ನೀಡುವುದರ ಜೊತೆಗೆ, ಗುಡಿಸಲುಗಳಲ್ಲಿ ವಾಸಿಸುತ್ತಿದ್ದವರಿಗೆ ವ್ಯವಸ್ಥಿತ ರೀತಿಯಲ್ಲಿ ಮನೆ ನಿರ್ಮಿಸಿ ಕೊಟ್ಟ. ಇಡೀ ಹಳ್ಳಿಗೆ ರಸ್ತೆಗಳನ್ನು ನಿರ್ಮಾಣ ಮಾಡುವುದರ ಜೊತೆಗೆ ಕೃಷಿಗೆ ಅನೂಕೂಲವಾಗುವಂತೆ ರೈತರಿಗೆ ಸಿಮೆಂಟ್ ಕಾಲುವೆಗಳನ್ನು ನಿರ್ಮಿಸಿದ.

ಜಿಮ್ ಕಾರ್ಬೆಟ್‍ನ ಈ ಸೇವೆ ಸುತ್ತ ಮುತ್ತಲಿನ ಹಳ್ಳಿಗಳಿಗೆ ಹರಡುತ್ತಿದ್ದಂತೆ ಊರು ಬಿಟ್ಟು ಹೋಗಿದ್ದ ಎಲ್ಲರೂ ಮತ್ತೆ ಹಳ್ಳಿಗೆ ಬಂದು ವಾಸಿಸತೊಡಗಿದರು. ತನ್ನ ಬಾಲ್ಯದಲ್ಲಿ, ವಿಶೇಷವಾಗಿ ಬೇಸಿಗೆಯ ದಿನಗಳಲ್ಲಿ ಅರಣ್ಯದಲ್ಲಿ ಅಲೆಯಲು ಹೋಗುತ್ತಿದ್ದ ಬಾಲಕ ಕಾರ್ಬೆಟ್‍ಗೆ ಈ ಹಳ್ಳಿಯ ಜನ ತೋರಿದ್ದ ಪ್ರೀತಿಗೆ ಪ್ರತಿಫಲವಾಗಿ ಅವನು ಚೋಟಾಹಲ್ದಾನಿ ಗ್ರಾಮವನ್ನೇ ಅವರಿಗೆ ಸಮರ್ಪಿಸಿದ. ಅಲ್ಲಿಯವರೆಗೆ ಸ್ಥಳೀಯ ಜನರ ಬಾಯಲ್ಲಿ ಕೇವಲ ಕಾರ್ಪೆಟ್ ಸಾಹೇಬ್ ಎಂದು ಕರೆಸಿಕೊಳ್ಳುತ್ತಿದ್ದ ಕಾರ್ಬೆಟ್, ನಂತರ ಜಮಿನ್ದಾರ್ ಕಾರ್ಪೆಟ್ ಸಾಹೇಬನಾದ.

ಈ ಹಳ್ಳಿಯಲ್ಲಿ ಜನತೆಗೆ ಬೇಸಾಯ ಮಾಡಲು ಕಾಡುಹಂದಿಗಳ ಕಾಟ ಅತಿ ದೊಡ್ಡ ತೊಡಕಾಗಿತ್ತು. ಇದನ್ನು ಶಾಶ್ವತವಾಗಿ ತಡೆಗಟ್ಟಲು ನಿರ್ಧರಿಸಿದ ಕಾರ್ಬೆಟ್ ಎಲ್ಲರೂ ಅಚ್ಚರಿ ಪಡುವಂತೆ ಇಡೀ ಗ್ರಾಮಕ್ಕೆ ನಾಲ್ಕು ಅಡಿ ದಪ್ಪ ಮತ್ತು ಆರು ಅಡಿ ಎತ್ತರದ ಕಾಂಪೌಂಡ್ ಗೋಡೆ ನಿರ್ಮಿಸಿ, (ಒಂದೂವರೆ ಚದುರ ಕಿ.ಮೀ. ಸುತ್ತಳತೆ) ಹಳ್ಳಿಯ ನಾಲ್ಕು ದಿಕ್ಕಿನಲ್ಲಿ ಬಾಗಿಲುಗಳನ್ನು ನಿರ್ಮಿಸಿದ. ಹಳ್ಳಿಯ ಜನತೆ ಇವುಗಳನ್ನು ತಮ್ಮ ಜಾನುವಾರುಗಳ ಜೊತೆ ಅರಣ್ಯಕ್ಕೆ ಹೋಗುವುದು, ಉರುವಲು ಕಟ್ಟಿಗೆ ತರುವುದು ಮುಂತಾದ ಕ್ರಿಯೆಗಳಿಗೆ ಬಳಸತೊಡಗಿದರು.

ಕೇವಲ 180 ಮಂದಿ ಜನಸಂಖ್ಯೆ ಇದ್ದ ಚೋಟಾಹಲ್ದಾನಿ ಹಳ್ಳಿ, ಕಾರ್ಬೆಟ್ ಅಭಿವೃದ್ಧಿ ಪಡಿಸಿದ ನಂತರ ಎರಡು ಸಾವಿರ ಜನಸಂಖೆಯನ್ನು ಒಳಗೊಂಡಿತು. ಇವರಲ್ಲಿ ಅರ್ಧದಷ್ಟು ಮಂದಿ ಮುಸ್ಲಿಮರು ಇದ್ದುದು ವಿಶೇಷ. ಈ ಹಳ್ಳಿಗರ ಜೊತೆ ಒಡನಾಟ ಇರಿಸಿಕೊಳ್ಳುವ ಸಲುವಾಗಿ ಕಾರ್ಬೆಟ್ ಅಲ್ಲಿಯೇ ತನಗಾಗಿ ಅರ್ಧ ಎಕರೆ ಪ್ರದೇಶದಲ್ಲಿ ಮನೆಯನ್ನು ನಿರ್ಮಿಸಿಕೊಂಡ. ಮನೆಯ ಸುತ್ತ ಹಲವು ಬಗೆಯ ಹಣ್ಣಿನ ಗಿಡಗಳು ನೆಡುವುದರ ಮೂಲಕ ಹಳ್ಳಿಗರಿಗೂ ಹಣ್ಣುಗಳ ಬಗ್ಗೆ ಅಭಿರುಚಿ ಬೆಳೆಯಲು ಕಾರಣ ಕರ್ತನಾದ (ಭಾರತ ಸರ್ಕಾರದಿಂದ ಈಗ ಮ್ಯೂಸಿಯಂ ಆಗಿರುವ ಕಾರ್ಬೆಟ್ ಮನೆಯ ಆವರಣದಲ್ಲಿ ಅವನು ನೆಟ್ಟಿದ್ದ ಮಾವಿನ ಗಿಡ ಈಗ ಹೆಮ್ಮರವಾಗಿ ಬೆಳೆದು ಅವನ ನೆನಪನ್ನು ಜೀವಂತವಾಗಿರಿಸಿದೆ.)

ಭಾರತದ ಬಡಜನತೆ ಹಸಿವು ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದುದನ್ನು ಕಣ್ಣಾರೆ ಕಂಡಿದ್ದ ಕಾರ್ಬೆಟ್ ತನ್ನ ಹಳ್ಳಿಯ ಜನಕ್ಕೆ ವಿವಿಧ ಬಗೆಯ ತರಕಾರಿ, ಹಣ್ಣುಗಳ ಜೊತೆಗೆ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಿದ. ಇದಕ್ಕಾಗಿ ಅವನು ಕೀನ್ಯಾ ಮತ್ತು ತಾಂಜೇನಿಯಾ ದೇಶಗಳೀಂದ ಹಲವು ಬಗೆಯ ಮುಸುಕಿನ ಜೋಳ, ಬಾಳೆಯ ಗಿಡ ಮತ್ತು ಗೆಣಸುಗಳ ತಳಿಯನ್ನು ತಂದು ಪರಿಚಯಿಸಿದ. ದ್ರಾಕ್ಷಿ ಮತ್ತು ಕಾಫಿ ಬೆಳಯ ಪ್ರಯೋಗಗಳನ್ನು ಸಹ ಮಾಡಿದ. ಆದರೆ ಅಲ್ಲಿನ ವಾತಾವರಣಕ್ಕೆ ಕಾಫಿ ಮತ್ತು ದ್ರಾಕ್ಷಿ ಹೊಂದಿಕೊಳ್ಳಲಾರದೆ ವಿಫಲವಾದವು.

ಕಾರ್ಬೆಟ್ ತನ್ನ ಭೂಮಿಯನ್ನು ವ್ಯವಸಾಯಕ್ಕಾಗಿ ಉಚಿತವಾಗಿ ಹಂಚುವುದರ ಜೊತೆಗೆ ಅವರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸಿಕೊಡುವ ನಿಟ್ಟಿನಲ್ಲಿ ನೈನಿತಾಲ್ ಪಟ್ಟಣದಲ್ಲಿ ಮಾರುಕಟ್ಟೆ ಸೃಷ್ಟಿಸಿದ. ಇದರಿಂದಾಗಿ ರೈತರಿಂದ ನೇರವಾಗಿ ಗ್ರಾಹಕರಿಗೆ ಹಣ್ಣು ತರಕಾರಿ, ಆಹಾರದ ಬೆಳೆಗಳು ಸಿಗುವಂತಾಯಿತು. ಮಧ್ಯವರ್ತಿಗಳ ಕಾಟವಿಲ್ಲದೆ, ತಾವು ಬೆಳೆದ ಬೆಳೆಗಳಿಗೆ ರೈತರು ಯೋಗ್ಯ ಬೆಲೆ ಪಡೆಯುವಂತಾಯಿತು.

ಜಿಮ್ ಕಾರ್ಬೆಟ್ ಚೋಟಾಹಲ್ದಾನಿಯ ಮನೆಯಲ್ಲಿ ಇದ್ದಾಗಲೆಲ್ಲಾ ಮನೆಯ ವರಾಂಡದಲ್ಲಿ ಕುಳಿತು ರೈತರ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದ. ವ್ಯಕ್ತಿ ವ್ಯಕ್ತಿಗಳ ನಡುವೆ, ಅಥವಾ ಕುಟುಂಬಗಳ ವೈಮನಸ್ಸು ಅಥವಾ ಜಗಳ ಕಂಡು ಬಂದರೆ, ತಾನೆ ಮುಂದಾಗಿ ಬಗೆಹರಿಸುತ್ತಿದ್ದ. ಕಾರ್ಬೆಟ್ ಮನುಷ್ಯರನ್ನು ಜಾತಿ, ಧರ್ಮದ ಆಧಾರದಲ್ಲಿ ವಿಂಗಡಿಸಿ ನೋಡಬಾರದು ಎಂದು ಯಾವಾಗಲೂ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡುತ್ತಿದ್ದ. ಇದಕ್ಕೆ ಅವನ ಬದುಕು, ನಡವಳಿಕೆ ಎಲ್ಲವೂ ಸ್ಥಳೀಯ ಜನರಿಗೆ ಮಾದರಿಯಾಗಿದ್ದವು. ಅಷ್ಡೇ ಅಲ್ಲದೆ, ಕಾರ್ಬೆಟ್‍ನ ಮಾತುಗಳನ್ನು ದೇವರ ಅಪ್ಪಣೆ ಎಂಬಂತೆ ಪಾಲಿಸುತ್ತಿದ್ದರು.

ಜಿಮ್ ಕಾರ್ಬೆಟ್ ಪ್ರತಿ ವರ್ಷ ತನ್ನ ಸಹೋದರಿ ಮ್ಯಾಗಿ ಜೊತೆಗೂಡಿ ಮನೆಯ ಆವರಣದಲ್ಲಿ ಗ್ರಾಮಸ್ಥರ ಜೊತೆ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದ. ಅದೇ ರೀತಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತನ್ನ ಸ್ವಂತ ಖರ್ಚಿನಲ್ಲಿ ನೈನಿತಾಲ್ ಪಟ್ಟಣದಿಂದ ಸಿಹಿ ತಿಂಡಿಯ ಪೊಟ್ಟಣಗಳನ್ನು ತಂದು ಪ್ರತಿ ಮನೆಗೂ ಹಂಚುವ ಪದ್ಧತಿಯನ್ನು ಇಟ್ಟುಕೊಂಡಿದ್ದ. ಮುಸ್ಲಿಮರ ರಂಜಾನ್ ಹಬ್ಬಕ್ಕೆ ಪ್ರತಿ ಮನೆಗೆ ಎರಡು ಕೆ.ಜಿ. ಕುರಿ ಇಲ್ಲವೆ ಮೇಕೆ ಮಾಂಸವನ್ನು ಉಚಿತವಾಗಿ ವಿತರಿಸುತ್ತಿದ್ದ. ಡಿಸೆಂಬರ್ ತಿಂಗಳಿನಲ್ಲಿ ಬರುತ್ತಿದ್ದ ಕ್ರಿಸ್‍ಮಸ್ ಹಬ್ಬಕ್ಕೆ ಅಂದಿನ ಭಾರತದ ವೈಸ್‍ರಾಯ್‍ಗಳು, ಉನ್ನತ ಮಟ್ಟದ ಅಧಿಕಾರಿಗಳು ಕಾರ್ಬೆಟ್‍ನ ವಿಶೇಷ ಅತಿಥಿಗಳಾಗಿ ಚೋಟಾಹಲ್ದಾನಿ ಹಳ್ಳಿಗೆ ಆಗಮಿಸುತ್ತಿದ್ದರು. ಇಡಿ ಹಳ್ಳಿಯ ಗ್ರಾಮಸ್ಥರನ್ನು ಕರೆಸಿ ಅವರ ಭಾಷೆ, ಸಂಸ್ಕೃತಿಯನ್ನು ಬ್ರಿಟಿಷ್ ಅಧಿಕಾರಿಗಳಿಗೆ ಪರಿಚಯ ಮಾಡಿಕೊಡುತ್ತಿದ್ದ. ಜೊತೆಗೆ ಅವರ ಜೊತೆಗೆ ಚಹಾ ಕೂಟವನ್ನು ಏರ್ಪಡಿಸುತ್ತಿದ್ದ. ಕ್ರಿಸ್‍ಮಸ್ ಆಚರಣೆಯ ಸಂದರ್ಭದಲ್ಲಿ ಒಂದು ವಾರ ಅವನ ಮನೆ ಹಳ್ಳಿಯ ಜನರಿಂದ, ಅತಿಥಿಗಳಿಂದ ತುಂಬಿರುತ್ತಿತ್ತು. ಇವತ್ತಿಗೂ ಆ ಹಳ್ಳಿಯ ಹಲವಾರು ಮನೆಗಳಲ್ಲಿ ಕ್ರಿಸ್‍ಮಸ್ ಹಬ್ಬದ ಆಚರಣೆಯ ಸಂದರ್ಭದಲ್ಲಿ ಒಟ್ಟಾಗಿ ತೆಗೆಸಿಕೊಂಡ ಕಪ್ಪು ಬಿಳುಪಿನ ಚಿತ್ರಗಳಿವೆ.

ನಾನು ಕಾರ್ಬೆಟ್ ಮನೆಯಲ್ಲಿ ಕುಳಿತು ಅಲ್ಲಿನ ಹಿರಿಯ ಜೀವಗಳ ಜೊತೆ ಮಾತನಾಡುತ್ತಾ ಮಾಹಿತಿ ಕಲೆಹಾಕುತ್ತಾ ಇರುವ ವೇಳೆಯಲ್ಲಿ  ನನ್ನ ಮಗಳ ವಯಸ್ಸಿನ ಒಬ್ಬ ಮುಸ್ಲಿಂ ಯುವತಿ ತನ್ನ ಮನೆಗೆ ಬರುವಂತೆ ನನ್ನನ್ನು ಆಹ್ವಾನಿಸಿದಳು. ಗೆಳೆಯ ಬಸು ಯಂಕಚಿ ಜೊತೆ ಆಕೆಯ ಮನೆಗೆ ಹೋದಾಗ ಆ ಯುವತಿ ತನ್ನ ಕುಟುಂಬದ ಸದಸ್ಯರನ್ನು ಪರಿಚಯಿಸಿ, ತನ್ನ ತಾತನ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಮಾಹಿತಿ ಒದಗಿಸಿದಳು. ಬಹದ್ದೂರ್ ಖಾನ್ ಎಂಬ ಹೆಸರಿನ ಅವಳ ತಾತ 30 ವರ್ಷಗಳ ಕಾಲ ಕಾರ್ಬೆಟ್‍ಗೆ ಆ ಹಳ್ಳಿಯಲ್ಲಿ ನೆಚ್ಚಿನ ಭಂಟನಾಗಿದ್ದ. ಕಾರ್ಬೆಟ್ ಅರಣ್ಯಕ್ಕೆ ತೆರಳುತಿದ್ದಾಗಲೆಲ್ಲಾ ಅವನ ರಕ್ಷಣೆಗಾಗಿ ತೆರಳುತ್ತಿದ್ದ. ವೈಸ್‍ರಾಯ್ ಮತ್ತು ಕಾರ್ಬೆಟ್ ಜೊತೆ ತೆಗೆಸಿಕೊಂಡಿರುವ ಅನೇಕ ಪೋಟೊಗಳನ್ನು ಆಕೆಯ ಕುಟುಂಬ ಇಂದಿಗೂ ಅಮೂಲ್ಯ ಆಸ್ತಿಯಂತೆ ಕಾಪಾಡಿಕೊಂಡು ಬಂದಿದೆ.

ಈಗ ಚೋಟಾಹಲ್ದಾನಿ ಹಳ್ಳಿಯಲ್ಲಿ ಸ್ಥಳೀಯ ಯುವಕರು ಒಗ್ಗೂಡಿ ಎಕೋ ಟೂರಿಸಂ ಹೆಸರಿನಲ್ಲಿ ನಿಸರ್ಗಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕಾರ್ಬೆಟ್ ಹೆಸರಿನಲ್ಲಿ ರೆಸಾರ್ಟ್ ಸ್ಥಾಪಿಸಿದ್ದಾರೆ. ದೇಶಿ ಶೈಲಿಯ ಆಹಾರ, ವಸತಿ ವ್ಯವಸ್ಥೆ, ಕುದುರೆ ಸವಾರಿ, ಅರಣ್ಯದ ಅಂಚಿನಲ್ಲಿ ತಿರುಗಾಟ ಎಲ್ಲ ಸೌಕರ್ಯಗಳನ್ನು ಇಲ್ಲಿ ಕಲ್ಪಿಸಿಕೊಡಲಾಗಿದೆ.

(ಮುಂದುವರಿಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -12)


– ಡಾ.ಎನ್.ಜಗದೀಶ್ ಕೊಪ್ಪ


 

ಜಿಮ್ ಕಾರ್ಬೆಟ್ ಮತ್ತು ವಿಂದಮ್ ಆತ್ಮೀಯ ಗೆಳೆಯರಾದ ನಂತರ  ಪ್ರತಿದಿನ ಸಂಜೆ ನೈನಿತಾಲ್ ಪಟ್ಟಣದಲ್ಲಿದ್ದ ಯುರೋಪಿಯನ್ನರ ಕ್ಲಬ್‍ನಲ್ಲಿ ಸೇರುವುದು ವಾಡಿಕೆಯಾಗಿತ್ತು. ಸೇವೆಯಿಂದ ನಿವೃತ್ತಿಯಾಗುವ ದಿನಗಳು ಹತ್ತಿರವಾಗುತ್ತಿದ್ದಂತೆ  ಜಿಲ್ಲಾಧಿಕಾರಿಯಾಗಿದ್ದ  ವಿಂದಮ್, ಒಂದು ದಿನ ತನ್ನ ಭವಿಷ್ಯದ ಯೋಜನೆಗಳನ್ನು ಮಿತ್ರ ಕಾರ್ಬೆಟ್ ಜೊತೆ ವಿನಿಮಯ ಮಾಡಿಕೊಂಡ.  ಇಂಗ್ಲೆಂಡ್‍ನಲ್ಲಿ ಪಿತ್ರಾರ್ಜಿತವಾಗಿ ಆಸ್ತಿ ಇದ್ದರೂ ಕೂಡ ವಿಂದಮ್‍ಗೆ ಮತ್ತೇ ತನ್ನ ತಾಯ್ನಾಡಿಗೆ ತೆರಳುವ ಆಸಕ್ತಿ ಇರಲಿಲ್ಲ. ಆದರೆ 200 ವರ್ಷಗಳ ಕಾಲ ಆಳಿಸಿಕೊಂಡು ಸ್ವಾತಂತ್ರ್ಯ ಪಡೆಯುವ ಹೊಸ್ತಿಲಲ್ಲಿ ಇದ್ದ ಭಾರತದಲ್ಲೂ ಕೂಡ  ನೆಲೆಸುವ ಇಚ್ಛೆ ಇರಲಿಲ್ಲ. ತನ್ನ ಭವಿಷ್ಯದ ನಿವೃತ್ತಿಯ ದಿನಗಳಿಗಾಗಿ ವಿಂದಮ್ ಪೂರ್ವ ಆಫ್ರಿಕಾದ ತಾಂಜೇನಿಯವನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದ.

ವಿಶ್ವದ ಮೊದಲ ಮಹಾಯುದ್ಧದ ನಂತರ ತಾಂಜೇನಿಯ ದೇಶ, ಜರ್ಮನರ ಕೈಯಿಂದ ಬ್ರಿಟಿಷರಿಗೆ ವರ್ಗಾವಣೆಯಾಗಿತ್ತು. ಹೊರ ಜಗತ್ತಿಗೆ ಪೂರ್ಣ ಪ್ರಮಾಣದಲ್ಲಿ ತೆರದು ಕೊಳ್ಳದ ಈ ನಾಡಿನಲ್ಲಿ ಹೇರಳವಾದ ಅರಣ್ಯ ಪ್ರದೇಶ, ಕಾಡು ಪ್ರಾಣಿಗಳು, ಬೇಸಾಯಕ್ಕೆ ಅನುಕೂಲವಾಗುವಂತಹ ಫಲವತ್ತಾದ ಭೂಮಿ, ಹಾಗೂ ಅತ್ಯಂತ ಕಡಿಮೆ ಕೂಲಿದರಕ್ಕೆ ಸಿಗುವ ಸ್ಥಳೀಯ ಬುಡಕಟ್ಟು ಜನಾಂಗದ ಕೂಲಿ ಕಾರ್ಮಿಕರು ಇವೆಲ್ಲವೂ ವಿಂದಮ್‍ನ ಆಲೋಚನೆಗೆ ಕಾರಣವಾಗಿದ್ದವು. ತಾಂಜೇನಿಯಾದಲ್ಲಿದ್ದ ತನ್ನ ಮಿತ್ರರಾದ ಕೆಲವು ಬ್ರಿಟಿಷ್ ಅಧಿಕಾರಿಗಳ ನೆರವಿನೊಂದಿಗೆ ಅಲ್ಲಿಗೆ ಭೇಟಿ ನೀಡಿದ ವಿಂದಮ್, ಅಲ್ಲಿನ ತಾಂಜೇನಿಕ ಎಂಬ ಕೀನ್ಯಾದ ಗಡಿಭಾಗದ ಪ್ರಾಂತ್ಯದಲ್ಲಿ 1450 ಎಕರೆ ಪ್ರದೇಶದ ಎಸ್ಟೇಟ್ ಒಂದನ್ನು ವೀಕ್ಷಿಸಿ ಬಂದಿದ್ದ.

ಪೂರ್ವ ಆಫ್ರಿಕಾದ ಅತ್ಯಂತ ಎತ್ತರದ ಪ್ರದೇಶವಾಗಿದ್ದು ಸದಾ ತಂಪು ಹವಾಗುಣವಿರುವ ಹಾಗೂ ಜಗತ್ ಪ್ರಸಿದ್ಧವಾದ ಮತ್ತು ಮಂಜಿನಿಂದ ಆವೃತ್ತವಾಗಿರುವ ಕಿಲಿಮಾಂಜರೊ ಕಣಿವೆ ಪ್ರದೇಶದಲ್ಲಿ ಕಿಕಾಪು ಎಂಬ ಹೆಸರಿನ ಈ ತೋಟವನ್ನು  ಒಬ್ಬ ಜರ್ಮನ್ ಪ್ರಜೆ ಅಭಿವೃದ್ಧಿ ಪಡಿಸಿದ್ದ. ಆದರೆ ತಾಂಜೇನಿಯ ದೇಶ ಬ್ರಿಟಿಷರ ತೆಕ್ಕೆಗೆ ಬರುತ್ತಿದ್ದಂತೆ ಅವನು ಇದನ್ನು ಒಬ್ಬ ಬ್ರಿಟಿಷ್ ಅಧಿಕಾರಿಗೆ ಮಾರಿ ತನ್ನ ಸ್ವದೇಶಕ್ಕೆ ಹಿಂತಿರುಗಿದ್ದ. ಕಿಕಾಪು ಎಂಬ ಹೆಸರಿನ ಈ ಎಸ್ಟೇಟ್ ಕೊಳ್ಳುವಷ್ಟು ಹಣ ವಿಂದಮ್ ಬಳಿ ಇರಲಿಲ್ಲವಾದ್ದರಿಂದ ಇಬ್ಬರೂ ಕೂಡಿ ಕೊಳ್ಳುವ ಯೋಜನೆಯನ್ನು ವಿಂದಮ್ ತನ್ನ ಗೆಳೆಯ ಕಾರ್ಬೆಟ್ ಮುಂದಿಟ್ಟ. ಆ ವೇಳೆಗಾಗಲೇ ಕಾರ್ಬೆಟ್ ನಿವೇಶನಗಳ ಬದಲಿಗೆ ಕೃಷಿ ಭೂಮಿಗಳ ಮೇಲೂ ತನ್ನ ಆದಾಯದ ಹಣವನ್ನು ವಿನಿಯೋಗಿಸಲು ಪ್ರಾರಂಭಿಸಿದ್ದ. ಒಮ್ಮೆ ಅನಿರಿಕ್ಷೀತವಾಗಿ ಚಹಾ ತೋಟವೊಂದಕ್ಕೆ ಪಾಲುದಾರನಾಗುವ ಅವಕಾಶ ಕಾರ್ಬೆಟ್‍ಗೆ ಒದಗಿ ಬಂದಿತು.

ಕಾರ್ಬೆಟ್ ವಿಶ್ವದ ಮೊದಲ ಮಹಾ ಯುದ್ದದ ಸಂದರ್ಭದಲ್ಲಿ ಫ್ರಾನ್ಸ್‌ನ ಯುದ್ಧಭೂಮಿಯಲ್ಲಿ ಕಾರ್ಯ ನಿರ್ವಹಿಸುತಿದ್ದಾಗ, ಬ್ರಿಟಿಷ್ ಸೇನೆಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಒಬ್ಬ ಯುವ ಅಧಿಕಾರಿ ರಾಬರ್ಟ್ ಬೆಲ್ಲೆಯರ್‍ಸ್ ಎಂಬಾತ ನೈನಿತಾಲ್ ಪಟ್ಟಣದ ಸಮೀಪದ ಅಲ್ಮೋರ ಎಂಬ ಗಿರಿಧಾಮದದಿಂದ ಬಂದವನಾಗಿದ್ದುದರಿಂದ ಇಬ್ಬರ ನಡುವೆ ಪರಿಚಯವಾಗಿ ನಂತರ ಅದು ಗಾಢ ಸ್ನೇಹಕ್ಕೆ ತಿರುಗಿತ್ತು.

ಮೊದಲನೇ ಮಹಾಯುದ್ಧ ಮುಗಿದ ನಂತರ ಬೆಲ್ಲೆಯರ್‍ಸ್ ಕೂಡ ವಾಪಸ್ ಭಾರತಕ್ಕೆ ಬಂದು ಕುಮಾವನ್ ಪ್ರಾಂತ್ಯದಲ್ಲಿ ಕಂದಾಯ ಇಲಾಖೆಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ. ಆತನಿಗೆ ಅರಣ್ಯದಲ್ಲಿನ ಶಿಕಾರಿಗಿಂತ ನದಿಯಲ್ಲಿ ಮೀನು ಶಿಕಾರಿ ಮಾಡುವ ಹವ್ಯಾಸವಿತ್ತು. ರಜೆ ಅಥವಾ ಬಿಡುವಿನ ದಿನಗಳಲ್ಲಿ ಕಾರ್ಬೆಟ್ ಮತ್ತು ಬೆಲ್ಲೆಯರ್‍ಸ್  ಜೊತೆಗೂಡಿ ನದಿಗಳಲ್ಲಿ ಮೀನು ಶಿಕಾರಿ ಮಾಡುತಿದ್ದರು.

ಒಂದು ದಿನ ಬೆಲ್ಲೆಯರ್‍ಸ್ ಕಾರ್ಬೆಟ್ ಜೊತೆ ತನ್ನ ಕುಟುಂಬದ ಸಮಸ್ಯೆಗಳನ್ನು ಹೇಳಿಕೊಳ್ಳುವುದರ ಜೊತೆಗೆ ಅವನಿಂದ ಸಹಾಯಕ್ಕಾಗಿ ವಿನಂತಿಸಿಕೊಂಡ. ಬೆಲ್ಲೆಯರ್‍ಸ್ ತಂದೆ ಸ್ವೀವನ್‍ಸನ್ ಅಲ್ಮೋರ ಬಳಿ 10 ಸಾವಿರ ಎಕರೆ ಚಹಾ ತೋಟವನ್ನು ಹೊಂದಿದ್ದ. ಕುಟುಂಬದ ನಿರ್ವಹಣೆಗಾಗಿ ಅದರಲ್ಲಿ ಸುಮಾರು 6 ಸಾವಿರ ಎಕರೆ ಪ್ರದೇಶವನ್ನು ಅವನು ಮೊದಲೇ ಮಾರಿಹಾಕಿದ್ದ. ಉಳಿದ ನಾಲ್ಕು ಸಾವಿರ ಎಕರೆ ಚಹಾ ತೋಟ ನಿರ್ವಹಣೆಯಿಲ್ಲದೆ ಪಾಳುಬಿದ್ದಿತ್ತು. ಸ್ಟೀವನ್‌ಸನ್ ನಿಧನದ ನಂತರ ಅದನ್ನು ನಿರ್ವಹಿಸಲು ಬೆಲ್ಲೆಯರ್‍ಸ್ ವಿಫಲನಾಗಿದ್ದ. ಅಲ್ಲದೆ ಬ್ರಿಟಿಷ್ ಸೇನೆಯಲ್ಲಿ ಕಾರ್ಯ ನಿರ್ವಹಿಸಲು ಅವನು ಹೊರಟು ಹೋದ ನಂತರ ಅದನ್ನು ನೋಡಿಕೊಳ್ಳುವವರೇ ಇರಲಿಲ್ಲ. ಚಹಾ ತೋಟದ ಅಭಿವೃದ್ಧಿಗಾಗಿ ಅಲಹಬಾದ್ ಬ್ಯಾಂಕ್‍ನಿಂದ ಪಡೆದಿದ್ದ ಒಂದು ಲಕ್ಷ ರೂಪಾಯಿ ಸಾಲ ಹಲವು ವರ್ಷಗಳ ನಂತರ ಬಡ್ಡಿ ಸೇರಿ ಎರಡು ಲಕ್ಷ ರೂಪಾಯಿ ದಾಟಿತ್ತು. ಈ ಕಾರಣಕ್ಕಾಗಿ ಬ್ಯಾಂಕ್ ಇಡೀ ತೋಟವನ್ನು ತನ್ನ ಸುಪರ್ಧಿಗೆ ತೆಗೆದುಕೊಂಡು ಹರಾಜು ಹಾಕುವ ಪ್ರಕ್ರಿಯೆಯಲ್ಲಿ ತೊಡಗಿತ್ತು.

ಬೆಲ್ಲೆಯರ್‍ಸ್ ವಿನಂತಿ ಮೇರೆಗೆ ಕಾರ್ಬೆಟ್ ಬ್ಯಾಂಕ್ ಸಾಲ ತೀರಿಸಲು ಮುಂದಾದ. ಬ್ಯಾಂಕ್ ಸಾಲ ತೀರಿದ ನಂತರ ಕಾರ್ಬೆಟ್ ನಾಲ್ಕು ಸಾವಿರ ಎಕರೆಯ ಚಹಾ ತೋಟಕ್ಕೆ ಜಂಟಿ ಪಾಲುದಾರನಾಗುವುದು,  ತೋಟದಿಂದ ಬರುವ ಆದಾಯವನ್ನು ಕಾರ್ಬೆಟ್ ತೆಗೆದುಕೊಂಡು ಪ್ರತಿ ತಿಂಗಳು ಒಂದು ಸಾವಿರ ರೂಪಾಯಿಯನ್ನು ಬೆಲ್ಲೆಯರ್‍ಸ್‌‌ಗೆ ನೀಡುವುದು ಎಂಬ ಕರಾರಿನ ಮೇ‍ಲೆ ಕಾ‍ರ್ಬೆಟ್ ತನ್ನ ಮ್ಯಾಥ್ಯು ಕಂಪನಿಯ ಪರವಾಗಿ ಬ್ಯಾಂಕ್ ಸಾಲವನ್ನು ತೀರಿಸಿದ.

ಅಲ್ಮೋರ ಸಮೀಪದ ಚೌಕುರಿ ಎಂಬ ಪ್ರದೇಶದಲ್ಲಿದ್ದ ಈ ಚಹಾ ತೋಟ ಸಂಪೂರ್ಣ ಪಾಳು ಬಿದ್ದಿತ್ತು. ಕಾರ್ಬೆಟ್ ಮೊಕಮೆಘಾಟ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿಷ್ಠಾವಂತ ಕೆಲವು ಕಾರ್ಮಿಕರನ್ನು ಅಲ್ಲಿಗೆ ಕರೆಸಿಕೊಂಡು ಒಂದೇ ವರ್ಷದಲ್ಲಿ ಅದನ್ನು ಸಹಜ ಸ್ಥಿತಿಗೆ ತಂದ. ನಂತರ ಅದನ್ನು ಕೇದಾರ್‌ನಾಥ್ ಎಂಬಾತನಿಗೆ ಎಂಟು ಲಕ್ಷ ರೂಪಾಯಿಗೆ ಮಾರಾಟ ಮಾಡಿ ತನ್ನ ಪಾಲಿನ ಹಣ ನಾಲ್ಕು ಲಕ್ಷ ರೂಗಳನ್ನು ಕಳೆದು, ಉಳಿದ ಹಣವನ್ನು ಬೆಲ್ಲೆಯರ್‍ಸಗೆ ನೀಡಿದ. ಕೇವಲ ಒಂದು ವರ್ಷದ ಅವಧಿಯಲ್ಲಿ ತನ್ನ ಕಂಪನಿ ಪರವಾಗಿ ಎರಡು ಲಕ್ಷ ಹಣ ವಿನಿಯೋಗಿಸಿದ್ದ ಕಾರ್ಬೆಟ್, ಅದರಲ್ಲಿ ಎರಡು ಲಕ್ಷ ರೂ ಆದಾಯವನ್ನು ಪಡೆದ. ತನ್ನ ವ್ಯವಹಾರದ ಜಾಣ್ಮೆಯ ಜೊತೆಗೆ ಗೆಳೆಯನ್ನು ಸಂಕಷ್ಟದಿಂದ ಪಾರು ಮಾಡಿದ ಕೀರ್ತಿ ಅವನದಾಗಿತ್ತು.

ಚಹಾ ತೋಟದ ವ್ಯವಹಾರದಿಂದ ಗಳಿಸಿದ ಆದಾಯವನ್ನು ಗೆಳೆಯ ವಿಂದಮ್ ಜೊತೆ ತಾಂಜೇನಿದಲ್ಲಿ ಭೂಮಿಗೆ ತೊಡಗಿಸಲು ನಿರ್ಧರಿಸಿದ ಕಾರ್ಬೆಟ್ ಈ ವ್ಯವಹಾರಕ್ಕಾಗಿ ಬೆಲ್ಲೆಯರ್‍ಸ್‌ನನ್ನು ಸಹ ಪಾಲುದಾರನಾಗಿ ಮಾಡಿದ. 1924 ರಲ್ಲಿ ವಿಂದಮ್, ಕಾರ್ಬೆಟ್, ಬೆಲ್ಲೆಯರ್‍ಸ್ ಮೂವರು ಸೇರಿ ಸ್ಟಾಕ್ ಕಂಪನಿಯೊಂದನ್ನು ಆರಂಭಿಸಿ, ಕಂಪನಿಯ ಹೆಸರಿನಲ್ಲಿ ತಾಂಜೇನಿಯಾದ 1450 ಎಕರೆ ಕಿಕಾಪು ಎಸ್ಟೇಟ್ ಅನ್ನು  ಖರೀದಿಸಿದರು. ವಿಂದಮ್, ಎಸ್ಟೇಟ್ ಖರೀದಿಸಿದ ವೇಳೆಗೆ ಇನ್ನು ನಿವೃತ್ತಿಯಾಗದ ಕಾರಣ ಕಾರ್ಬೆಟ್ ಮೇಲೆ ಅದನ್ನು ಅಭಿವೃದ್ಧಿ ಪಡಿಸುವ ಜವಬ್ದಾರಿ ಬಿದ್ದಿತು. ಆ ಕಾರಣಕ್ಕಾಗಿ ಪ್ರತಿ ಮೂರು ತಿಂಗಳಿಗೆ ತಾಂಜೇನಿಯಾಕ್ಕೆ ಅವನು ಪ್ರವಾಸ ಹೋಗುವುದು ಅನಿವಾರ್ಯವಾಯಿತು.

ಕಿಕಾಪು ಎಸ್ಟೇಟ್ ವ್ಯವಸಾಯಕ್ಕೆ ಯೋಗ್ಯವಾಗುವ ರೀತಿಯಲ್ಲಿ ಜರ್ಮನ್ ಪ್ರಜೆ ಅಭಿವೃದ್ಧಿ ಪಡಿಸಿದ್ದರಿಂದ ಜಿಮ್ ಕಾರ್ಬೆಟ್ ಸ್ಥಳಿಯ ಕೂಲಿ ಕಾರ್ಮಿಕರ ನೆರವಿನಿಂದ ಅಲ್ಲಿ ಬಾಳೆ, ಮುಸುಕಿನ ಜೋಳ, ವಿವಿಧ ಬಗೆಯ ಹಣ್ಣುಗಳನ್ನು ಬೆಳೆಯಲು ಪ್ರಾರಂಭಿಸಿದ. ಎಸ್ವೇಟ್‍ನಲ್ಲಿ ಕಾರ್ಮಿಕರು, ಹಾಗೂ ಮೆನೇಜರ್ ಉಳಿದುಕೊಳ್ಳಲು ಮಣ್ಣಿನ ಗೋಡೆಗಳಿಂದ ಕಟ್ಟಿದ ತಾಂಜೇನಿಯ ಶೈಲಿಯ ಮನೆಗಳು ಮಾತ್ರ ಇದ್ದವು. ಹಾಗಾಗಿ ವಿಂದಮ್ ಭಾರತದಿಂದ ಅಲ್ಲಿಗೆ ತೆರಳುವ ವೇಳೆಗೆ, ಕಾರ್ಬೆಟ್ ಬಂಗಲೆಯೊಂದನ್ನು ನಿರ್ಮಿಸಿದ. ಮೂವರು ಪಾಲುದಾರರ ಆಸಕ್ತಿಯ ಫಲವಾಗಿ ಮುಂದಿನ ದಿನಗಳಲ್ಲಿ ವಾರ್ಷಿಕವಾಗಿ ಒಳ್ಳೆಯ ಆದಾಯ ಎಸ್ಟೇಟ್‍ನಿಂದ ಬರತೊಡಗಿತು. ವಿಂದಮ್‍ಗೆ ಕಿಕಾಪು ಎಸ್ಟೇಟ್ ತನ್ನ ನಿವೃತ್ತಿಯ ದಿನ ಕಳೆಯಲು ಆಧಾರವಾದರೆ, ಬೆಲ್ಲಿಯರ್‍ಸ ಅದೇ ಜೀವನಾಧಾರವಾಗಿತ್ತು. ಜಿಮ್ ಕಾರ್ಬೆಟ್‍ಗೆ ತಾನು ಹಾಕಿದ ಬಂಡವಾಳಕ್ಕೆ ಸರಿಯಾದ ಪ್ರತಿಫಲ ಪಡೆಯುವುದು ಮುಖ್ಯವಾಗಿತ್ತು.

ಸುಮಾರು ಇಪ್ಪತ್ತು ವರ್ಷಗಳ ಕಾಲ ಮೂವರು ಜಂಟಿಯಾಗಿ ಎಸ್ಟೇಟ್‍ ಅನ್ನು ನಿರ್ವಹಿಸಿದ ನಂತರ ಅದನ್ನು ಮಾರಿ ಹಾಕಿದರು. ವಿಂದಮ್, ತಾಂಜೇನಿಯಾ ಪಕ್ಕದ ಕೀನ್ಯಾದಲ್ಲಿ ಮತ್ತೋಂದು ಚಹಾ ಎಸ್ಟೇಟ್ ಖರೀದಿಸಿದರೆ, ಬೆಲ್ಲಿಯರ್‍ಸ್ ರುಢಿಸಿಯಾಕ್ಕೆ ತೆರಳಿ ನಿವೃತ್ತಿಯ ಜೀವನ ಆರಂಭಿಸಿದ. ಜಿಮ್ ಕಾರ್ಬೆಟ್ ಕೂಡ ಕೀನ್ಯಾದಲ್ಲಿ 30 ಎಕರೆ ಪ್ರದೇಶದ ಒಂದು ಚಿಕ್ಕ ಚಹಾ ಎಸ್ಟೇಟ್‍ವೊಂದನ್ನು ಖರೀದಿಸಿದ. ಕೀನ್ಯಾದ ಅರಣ್ಯ ಪ್ರದೇಶದಲ್ಲಿ ವಿಂದಮ್ ಮತ್ತು ಕಾರ್ಬೆಟ್ ಬಿಡುವಾದಾಗಲೆಲ್ಲಾ ಜೋಡಿಯಾಗಿ ಶಿಕಾರಿ ಮಾಡುತ್ತಾ ಅಲೆಯುವ ಅಭ್ಯಾಸವನ್ನು ಮುಂದುವರಿಸಿದ್ದರು. ಇದಕ್ಕಾಗಿ ಕಾರ್ಬೆಟ್ ನೈನಿತಾಲ್ ಪಟ್ಟಣದ ವ್ಯವಹಾರವನ್ನು ತನ್ನ ಸಹೋದರಿ ಮ್ಯಾಗಿಗೆ ವಹಿಸಿ, ವರ್ಷದಲ್ಲಿ  ಕನಿಷ್ಠ  ಆರು ತಿಂಗಳು ಕೀನ್ಯಾದಲ್ಲಿ ವಾಸಿಸುತ್ತಿದ್ದ.

    (ಮುಂದುವರಿಯುವುದು)

(ಚಿತ್ರಕೃಪೆ: ವಿಕಿಪೀಡಿಯ)

ರಾಮಕೃಷ್ಣ ಹೆಗ್ಡೆಯ ನುಡಿಗಳು ಮತ್ತು ಯಡಿಯೂರಪ್ಪನ ನಡೆಗಳು


– ಡಾ.ಎನ್.ಜಗದೀಶ್ ಕೊಪ್ಪ


 

ಇದು 2003ರ ಡಿಸೆಂಬರ್ ತಿಂಗಳ ಒಂದು ಘಟನೆ. ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ದಿನಪತ್ರಿಕೆ, ಸುಧಾ ಮೂರ್ತಿಯವರ ಪ್ರವಾಸಕಥನ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕರ ನಿರಾಕರಣೆ ಚಳುವಳಿ ಕುರಿತ ಎರಡು ಕೃತಿಗಳನ್ನು ಪ್ರಕಟಿಸಿ, ಬಿಡುಗಡೆಗಾಗಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆಯವರನ್ನು ಆಹ್ವಾನಿಸಿತ್ತು. ಅಂದಿನ ದಿನಗಳಲ್ಲಿ ಮಾಧ್ಯಮ ಪ್ರತಿನಿಧಿಗಳ ಹಾವಳಿ ಈಗಿನ ಹಾಗೆ ಇರಲಿಲ್ಲ. ನಾಲ್ಕು ದಿನಪತ್ರಿಕೆ ಹಾಗೂ ಎರಡು ಚಾನಲ್‌ಗಳು ಮಾತ್ರ ಇದ್ದವು.

ಸಂಜೆ 6 ಗಂಟೆಗೆ ಪತ್ರಿಕೆಕೆಯ ಹುಬ್ಬಳ್ಳಿ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಾವು ಆರು ಮಂದಿ ಪತ್ರಕರ್ತರು ಸುಮಾರು 5:30ರ ವೇಳೆಗೆ ಕಾರ್ಯಕ್ರಮಕ್ಕೆ ಹಾಜರಾದಾಗ ಪತ್ರಿಕೆಯ ಟ್ರಸ್ಟ್ ಅಧ್ಯಕ್ಷರ ಕಚೇರಿಯಲ್ಲಿ ಲಘು ಉಪಹಾರ ಏರ್ಪಡಿಸಲಾಗಿತ್ತು. ಆ ವೇಳೆಗಾಗಲೇ ಆಗಮಿಸಿದ್ದ ರಾಮಕೃಷ್ಣ ಹೆಗ್ಡೆ ನಮ್ಮೊಂದಿಗೆ ತಿಂಡಿ ತಿನ್ನುತ್ತಾ ಇದ್ದಕ್ಕಿದ್ದಂತೆ ತಮ್ಮ ಒಂದು ಬಾಲ್ಯದ ಅನುಭವವನ್ನು ನಮ್ಮ ಮುಂದೆ ಬಿಚ್ಚಿಟ್ಟರು. ಅವರ ಮಾತಿನ ಲಹರಿ ಹೀಗಿತ್ತು:

ನನಗಾಗ ಕೇವಲ ಆರು ಅಥವಾ ಏಳು ವರ್ಷವಿರಬಹುದು. ಸಿದ್ದಾಪುರದ ಗದ್ದೆಯ ನಡುವೆ ಇದ್ದ ನಮ್ಮ ಮನೆ ಆ ಕಾಲಕ್ಕೆ ಬ್ರಿಟೀಷರ ವಿರುದ್ಧ ಹೋರಾಡುತಿದ್ದ ಸ್ವಾತಂತ್ರ್ಯ ಹೋರಾಟಗಾರರಿಗೆ ಒಂದು ರೀತಿಯಲ್ಲಿ ತಂಗುದಾಣವಾಗಿತ್ತು. ಶಿವಮೊಗ್ಗ ಮತ್ತು ಉತ್ತರ ಕನ್ನಡ ಗಡಿಭಾಗದಲ್ಲಿದ್ದ ನಮ್ಮ ಮನೆ ಸ್ವಾತಂತ್ರ್ಯ ಹೋರಾಟಗಾರರು ಪೋಲಿಸರಿಂದ ತಪ್ಪಿಸಿಕೊಳ್ಳಲು ಹೇಳಿ ಮಾಡಿಸಿದಂತಹ ಸ್ಥಳವಾಗಿತ್ತು.

ಶಿವಮೊಗ್ಗ ಪೋಲಿಸರಿಂದ ತಪ್ಪಿಸಿಕೊಳ್ಳಲು ಬೇಲಿ ನೆಗೆದು ನಮ್ಮ ಮನೆಗೆ ಬಂದರೆ ಹಿಡಿಯುವಂತಿರಲಿಲ್ಲ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆ ಪೋಲಿಸರು ಬಂದರೆ ಸಲೀಸಾಗಿ ಬೇಲಿ ನೆಗೆದು ಶಿವಮೊಗ್ಗ ಗಡಿಪ್ರದೇಶಕ್ಕೆ ತೆರಳಬಹುದಾಗಿತ್ತು. ಮೂಲತಃ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ನನ್ನ ತಂದೆ ಮಹಾಬಲೇಶ್ವರ ಹೆಗಡೆ ಯಾರೇ ನಮ್ಮ ಮನೆಗೆ ಬಂದರೂ ಜಾತಿ ಧರ್ಮ ಬೇಧವಿಲ್ಲದೆ ಆತಿಥ್ಯ ನೀಡುತಿದ್ದರು. ನನ್ನ ತಾಯಿ ಸರಸ್ವತಿ ಹೆಗಡೆ ಕೂಡ ಅಕ್ಷರಶಃ ಅನ್ನಪೂರ್ಣೆಯಂತೆ ನಡೆದುಕೊಳ್ಳುತಿದ್ದರು.

ನಮ್ಮ ಮನೆ ಬ್ರಿಟೀಷರಿಗೆ ತಲೆನೋವಾದ ಕಾರಣ ಸರ್ಕಾರ ಗದ್ದೆಯ ಬಯಲಿನಲ್ಲಿ ಇದ್ದ ನಮ್ಮ ಮನೆಯನ್ನು ಧ್ವಂಸ ಮಾಡುವಂತೆ ಪೋಲಿಸರಿಗೆ ಆದೇಶ ಜಾರಿ ಮಾಡಿತು. ಒಂದು ಬೆಳಗಿನ ಜಾವ ಮನೆಗೆ ಬಂದ ಪೋಲಿಸರು ನಮ್ಮ ಹೆಂಚಿನ ಮನೆ, ಅದರೊಳಗೆ ಅತಿಥಿಗಳಿಗಾಗಿ ನಿರ್ಮಿಸಿದ್ದ ಅಟ್ಟ, ಪಾತ್ರೆ, ದಿನಸಿ ಸಾಮಾನುಗಳನ್ನು ನಾಶ ಮಾಡಿ ಹೊರಟು ಹೋಯಿತು.

ನನ್ನ ಅಪ್ಪ, ಅಮ್ಮ, ನಾನು, ನನ್ನ ಸಹೋದರ ಎಲ್ಲರೂ ಬಯಲಿಗೆ ಬಿದ್ದೆವು. ದೃತಿಗೆಡೆದ ನನ್ನಪ್ಪ ನನ್ನನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ಸಿದ್ದಾಪುರದ ಸಂತೆಗೆ ಹೋಗಿ ಒಂದಿಷ್ಟು ಮಡಕೆಗಳನ್ನು ಕೊಂಡು ತಂದರು. ನಾವು ಸಂತೆಯಿಂದ ಬರುವ ವೇಳೆಗೆ ನಮ್ಮೂರಿನ ಸುತ್ತ ಮುತ್ತಲಿನ ಜನ ಅಕ್ಕಿ, ಬೇಳೆ, ಉಪ್ಪು, ಮೆಣಸಿನಕಾಯಿ, ಸಾಂಬಾರ್ ಪುಡಿ ಹೀಗೆ ಹಲವು ವಸ್ತುಗಳನ್ನು ಅಮ್ಮನ ಬಳಿ ಕೊಟ್ಟು ಹೋಗಿದ್ದರು. ಆ ದಿನ ನನ್ನಮ್ಮ ಬಯಲಿನಲ್ಲಿ ಕಲ್ಲುಗಳನ್ನು ಇಟ್ಟು ಅಡುಗೆ ಮಾಡಿ ನಮಗೆ ಬಡಿಸಿದಳು. ಆದಿನ ನಾನು ನನ್ನ ಕುಟುಂಬ ತಿಂದ ಅನ್ನ, ಬೇಳೆ ಅಥವಾ ಉಪ್ಪು ಯಾರ ಮನೆಯದು, ಯಾರ ಜಾತಿಯದು, ಯಾವ ಧರ್ಮದ್ದೆಂದು ನಾವ್ಯಾರು ಕೇಳಲಿಲ್ಲ. ಎಲ್ಲಾ ಧರ್ಮದ, ಎಲ್ಲ ಜಾತಿಯ ಋಣ ನನ್ನ ರಕ್ತದಲ್ಲಿ ಹರಿಯುತ್ತಿದೆ. ಹಾಗಾಗಿ ನಾನು ಇವುಗಳ ಬಗ್ಗೆ ಎಂದೂ ವಕಾಲತ್ತು ವಹಿಸಲಾರೆ.

ಅತ್ಯಂತ ತಾಳ್ಮೆಯಿಂದ ಯಾವುದೇ ಭಾವೋದ್ರೇಕವಿಲ್ಲದೆ, ತಣ್ಣನೆಯ ದನಿಯಲ್ಲಿ ಅವರು ಮಾತನಾಡುತ್ತಿದ್ದಾಗ ಅವರ ಕಣ್ಣುಗಳಿಂದ ಧಾರಾಕಾರವಾಗಿ ಹರಿಯುತ್ತಿದ್ದ ನೀರು ಅವರ ಕುರುಚಲು ಗಡ್ಡದಲ್ಲಿ ಲೀನವಾಗುತಿತ್ತು. ಅವರ ಮಾತುಗಳನ್ನು ಕೇಳುತ್ತಿದ್ದ ನಮ್ಮ ಕಣ್ಣುಗಳು ಸಹ ಒದ್ದೆಯಾಗಿದ್ದವು.

ಕಳೆದ ಆರು ತಿಂಗಳಿನಿಂದ ಮುಖ್ಯಮಂತ್ರಿಯ ಕುರ್ಚಿ ಬಿಟ್ಟು ಬೇರೆಲ್ಲೂ ನನ್ನ ಅಂಡು ಸ್ಥಳವೂರಲಾರದು ಎಂಬಂತೆ ವರ್ತಿಸುತ್ತ ಹಲವು ಅವತಾರಗಳನ್ನು ತಾಳುತ್ತಿರುವ ಯಡಿಯೂರಪ್ಪ ಎಂಬ ಅವಿವೇಕಿ ಮತ್ತು ಜಾತಿಯ ಹೆಸರಿನಲ್ಲಿ ಅವನ ಭಟ್ಟಂಗಿಗಳು ಮತ್ತು ಚೇಲಾಗಳು ಕರ್ನಾಟಕದಲ್ಲಿ ನಡೆಸುತ್ತಿರುವ ರಾಜಕೀಯ ವರಸೆ ನೋಡಿ ಏಕೋ ಏನೋ ರಾಮಕೃಷ್ಣ ಹೆಗ್ಡೆ ನೆನಪಾದರು.

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -11)


– ಡಾ.ಎನ್.ಜಗದೀಶ್ ಕೊಪ್ಪ


 

ಹತ್ತೊಂಬತ್ತನೇ ಶತಮಾನದ ಅಂತ್ಯ ಮತ್ತು ಇಪ್ಪತ್ತನೇ ಶತಮಾನದ ಆದಿಯಲ್ಲಿ ನೈನಿತಾಲ್ ಎಂಬ ಪ್ರಸಿದ್ದ ಗಿರಿಧಾಮವಾದ ಪಟ್ಟಣದಲ್ಲಿ ಫ್ರೆಡರಿಕ್ ಮ್ಯಾಥ್ಯು ಎಂಬುದು ಅತ್ಯಂತ ಪ್ರಸಿದ್ದವಾದ ಹೆಸರು. ರಿಯಲ್ ಎಸ್ಟೇಟ್ ವ್ಯವಹಾರ ಹಾಗೂ ಕಬ್ಬಿಣ ಮತ್ತು ದಿನಸಿ ಅಂಗಡಿಯ ವ್ಯಾಪಾರದ ಮೂಲಕ ಸ್ಥಳೀಯರಿಗೆ ಮತ್ತು ಯುರೋಪಿಯನ್ನರಿಗೆ ಅತ್ಯಂತ ಪ್ರೀತಿ ಪಾತ್ರನಾಗಿದ್ದ. ಆ ಕಾಲಕ್ಕೆ ಅವನ ಅಂಗಡಿಯಲ್ಲಿ ಸಿಗದೇ ಇರುವ ವಸ್ತುಗಳು ಇರಲಿಲ್ಲ. ಮ್ಯಾಥ್ಯು, ಜಿಮ್ ಕಾರ್ಬೆಟ್‍ನ ತಾಯಿ ಮೇರಿ ಕಾರ್ಬೆಟ್‍ಳ ವ್ಯವಹಾರಕ್ಕೆ ನೆರವಾಗುವುದರ ಮೂಲಕ ಆಕೆಗೆ ನಿವೇಶನ ಕೊಡಿಸುವುದು, ಮಾರಾಟ ಮಾಡುವುದು ಇವುಗಳಲ್ಲಿ ಭಾಗಿಯಾಗುತಿದ್ದ.

ಮಕ್ಕಳಿಲ್ಲದ ಮ್ಯಾಥ್ಯು ತನಗೆ ರಿಯಲ್ ಎಸ್ಟೇಟ್ ವ್ಯವಹಾರ ಮತ್ತು ಅಂಗಡಿಯ ವ್ಯಾಪಾರದಲ್ಲಿ ಬರುವ ಬಹುತೇಕ ಲಾಭವನ್ನು ಧರ್ಮ ಜಾತಿ ಎಂಬ ಭೇಧ ಭಾವವಿಲ್ಲದೆ ಬಡ ಮಕ್ಕಳ ಶಿಕ್ಷಣಕ್ಕೆ ಹಾಗೂ  ಆರೋಗ್ಯಕ್ಕೆ ವಿನಿಯೋಗಿಸುತಿದ್ದ. ಈ ಕಾರಣಕ್ಕಾಗಿ  ಅವನನ್ನು ನೈನಿತಾಲ್ ಪುರಸಭೆಗೆ ಅವಿರೋಧವಾಗಿ ಆಯ್ಕೆ ಮಾಡುತಿದ್ದರು. ವಯಸ್ಸಾದಂತೆ ತನ್ನ ವ್ಯವಹಾರಕ್ಕೆ ಯಾರನ್ನು ಉತ್ತರಾಧಿಕಾರಿಯನ್ನಾಗಿ ಮಾಡಬೇಕೆಂಬ ಯೋಚನೆ ಸದಾ ಮ್ಯಾಥ್ಯುವನ್ನು ಕಾಡುತಿತ್ತು. ಇಂತಹ ಸಂದರ್ಭದಲ್ಲಿ ಅವನ ಮನಸ್ಸಿಗೆ ಬಂದವನು ಜಿಮ್ ಕಾರ್ಬೆಟ್. ಮ್ಯಾಥ್ಯು ಬಾಲ್ಯದಿಂದಲೂ ಕಾರ್ಬೆಟ್‍ನನ್ನು ಗಮನಿಸುತಿದ್ದ. ಮೊಕಮೆಘಾಟ್‍ನಲ್ಲಿ ದುಡಿಯುತ್ತಿದ್ದ ವೇಳೆಯಲ್ಲಿ ಹಣವನ್ನು ದುಂದು ವೆಚ್ಚ ಮಾಡದೇ ತನ್ನ ತಾಯಿಯ ಮೂಲಕ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಬಂಡವಾಳವಾಗಿ ವಿನಯೋಗಿಸುತ್ತಿದ್ದುದ್ದನ್ನು ಗಮನಿಸುತ್ತಾ ಬಂದಿದ್ದ ಮ್ಯಾಥ್ಯು, ಕಾರ್ಬೆಟ್‍ನನ್ನು ತನ್ನ ವ್ಯವಹಾರಕ್ಕೆ ಪಾಲುದಾರನನ್ನಾಗಿ 1905 ರಲ್ಲಿ ನೇಮಕ ಮಾಡಿಕೊಂಡ.

ಕಾರ್ಬೆಟ್ ಮೊಕಮೆಘಾಟ್‍ನಲ್ಲಿ ಸೇವೆ ಸಲ್ಲಿಸುತಿದ್ದ ಸಂದರ್ಭದಲ್ಲೇ  ಈ ಎಲ್ಲಾ ಘಟನೆಗಳು ಜರುಗಿದವು. 1905 ರಲ್ಲಿ ಕಾರ್ಬೆಟ್, ಮ್ಯಾಥ್ಯು ಒಡೆತನದ ಎಫ್.ಮ್ಯಾಥ್ಯು ಅಂಡ್ ಕಂಪನಿಯ ವ್ಯವಹಾರಕ್ಕೆ ಪಾಲುದಾರನಾದ. ಇದಾದ ಎರಡೇ ವರ್ಷಗಳಲ್ಲಿ ಅಂದರೆ, 1907 ರಲ್ಲಿ ಮ್ಯಾಥ್ಯು ಮರಣ ಹೊಂದಿದ. ಆ ವೇಳೆಗಾಗಲೆ ಅವನ ರಿಯಲ್ ಎಸ್ಟೇಟ್ ಕಂಪನಿಯ ಮೇಲೆ ಅಲಹಬಾದ್ ಬ್ಯಾಂಕಿನಲ್ಲಿ ಸ್ವಲ್ಪ ಮಟ್ಟಿನ ಸಾಲವೂ ಇತ್ತು.

ಮ್ಯಾಥ್ಯು ತಾನು ಸಾಯುವ ಮುನ್ನವೇ ಉಯಿಲು ಬರೆದಿಟ್ಟು ತನ್ನ ಈ ಸಮಗ್ರ ರಿಯಲ್ ಎಸ್ಟೇಟ್ ವ್ಯವಹಾರ ಮತ್ತು ಅಂಗಡಿಯ ವ್ಯವಹಾರಕ್ಕೆ ಕಾರ್ಬೆಟ್ ಉತ್ತರಾಧಿಕಾರಿ ಎಂಬುದಾಗಿ ನಮೂದಿಸಿದ್ದ. ಅಂಗಡಿಯಲ್ಲಿ ಸುಮಾರು 10 ಸಾವಿರ ಬೆಲೆ ಬಾಳುವ ವಸ್ತುಗಳಿದ್ದವು. ಬ್ಯಾಂಕಿನ ಸಾಲ 60 ಸಾವಿರದಷ್ಟಿತ್ತು. ಇದರ ಪರಿಹಾರಕ್ಕಾಗಿ ಕಾರ್ಬೆಟ್ ನೈನಿತಾಲ್ ಪಟ್ಟಣದ ಸುತ್ತಮುತ್ತ ಕಂಪನಿಯ ಹೆಸರಿನಲ್ಲಿದ್ದ 14 ಎಕರೆ ಪ್ರದೇಶವನ್ನು ಮಾರುವುದರ ಜೊತೆಗೆ, ತನ್ನ ಉಳಿತಾಯದ ಹಣವನ್ನು ಸೇರಿಸಿ ಬ್ಯಾಂಕ್ ಸಾಲ ತೀರಿಸಿದ. ಮ್ಯಾಥ್ಯುವಿನ ವಯಸ್ಸಾದ ಪತ್ನಿಗೆ ಕಂಪನಿಯಲ್ಲಿ ಶೇರು ನೀಡಿ ಆಕೆಗೆ ತಿಂಗಳಿಗೆ ಸುಮಾರು ಒಂದೂವರೆ ಸಾವಿರ ರೂಪಾಯಿ ಆದಾಯ ಬರುವಂತೆ ಮಾಡಿ ಜೀವನೋಪಾಯಕ್ಕೆ ದಾರಿ ಮಾಡಿದ್ದ. ಇಡೀ ವ್ಯವಹಾರವೆಲ್ಲಾ ಜಿಮ್ ಕಾರ್ಬೆಟ್ ಒಡೆತನಕ್ಕೆ ಸೇರಿದ ನಂತರವೂ ಕಂಪನಿಯ ಹೆಸರು ಬದಲಾಯಿಸದೆ, ಮ್ಯಾಥ್ಯು ಅಂಡ್ ಕಂಪನಿ ಹೆಸರಿನಲ್ಲಿ ವ್ಯವಹಾರ ಮುಂದುವರಿಯಿತು. ಅವನ ಸಹೋದರಿ ಮ್ಯಾಗಿ ವ್ಯವಹಾರದ ಉಸ್ತುವಾರಿ ಹೊತ್ತಿದ್ದಳು. ಹೀಗೆ ಕುಟುಂಬ ನಿರ್ವಹಣೆ ಮತ್ತು ತನ್ನ ಭವಿಷ್ಯದ ಬದುಕಿಗೆ ಭದ್ರ ಬುನಾದಿಯನ್ನೆ ಹಾಕಿಕೊಂಡಿದ್ದ ಕಾರ್ಬೆಟ್ ರೈಲ್ವೆ ಇಲಾಖೆಯ ಉದ್ಯೋಗಕ್ಕೆ ತಿಲಾಂಜಲಿ ನೀಡಿದಾಗ ಅವನ ನೆಮ್ಮದಿಯ ಜೀವನಕ್ಕೆ ಯಾವುದೇ ಅಡ್ಡಿ ಇರಲಿಲ್ಲ.

ನೈನಿತಾಲ್ ಪಟ್ಟಣಕ್ಕೆ ವಾಪಸ್ ಬಂದ ಜಿಮ್ ಕಾರ್ಬೆಟ್ ತನ್ನ ಮೆಚ್ಚಿನ ಹವ್ಯಾಸವಾಗಿದ್ದ  ಶಿಕಾರಿಯೊಂದಿಗೆ ವ್ಯವಹಾರವನ್ನು ಅಭಿವೃದ್ಧಿಪಡಿಸಿದ. ಜೊತೆಗೆ 1924 ರಿದ 1928 ರ ಅವಧಿವರೆಗೆ ಅಲ್ಲಿನ ಪುರಸಭೆಯ ಸದಸ್ಯನಾಗಿ, ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿ ಇಡೀ ಪಟ್ಟಣವನ್ನು ವ್ಯವಸ್ಥಿತ ರೀತಿಯಲ್ಲಿ ಸಜ್ಜುಗೊಳಿಸಿದ. ಮನೆಗಳಿಂದ ಹೊರಬೀಳುವ ತ್ಯಾಜ್ಯ ನೀರು ನೈನಿ ಸರೋವರ ಸೇರದಂತೆ, ನೀಲನಕ್ಷೆ ತಯಾರಿಸಿ ಪ್ರಥಮ ಬಾರಿಗೆ ನೈನಿತಾಲ್ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ನಿರ್ಮಿಸಿಕೊಟ್ಟ. (ವರ್ತಮಾನದ ದುರಂತವೆಂದರೆ, ಈಗ ನೈನಿತಾಲ್ ಪುರಸಭೆಯಲ್ಲಿ ಈ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಅಲ್ಲಿನ ಸಿಬ್ಬಂದಿಗೆ ಜಿಮ್ ಕಾರ್ಬೆಟ್ ಎಂದರೆ ಯಾರೂ ಎಂಬುದು ಸಹ ತಿಳಿದಿಲ್ಲ.)

ಇದೇ ವೇಳೆಗೆ ವಿಂದಮ್ ಎಂಬ ಬ್ರಿಟಿಷ್ ಅಧಿಕಾರಿ ಕುಮಾವನ್ ಪ್ರಾಂತ್ಯಕ್ಕೆ ಜಿಲ್ಲಾಧಿಕಾರಿಯಾಗಿ ಬಂದ. 1886 ರಲ್ಲಿ ಇಂಗ್ಲೆಂಡಿನ  ಆಕ್ಸ್‌ಫರ್ಡ್ ಕಾಲೇಜಿನ ಪದವೀಧರನಾದ ಈತ 1889 ರಲ್ಲಿ ಭಾರತೀಯ ನಾಗರೀಕ ಸೇವೆಗೆ ಆಯ್ಕೆಯಾಗಿ ಭಾರತಕ್ಕೆ ಬಂದವನು. ಪ್ರಾರಂಭದಲ್ಲಿ ಪಾಕ್ ಮತ್ತು ಆಪ್ಘನಿಸ್ಥಾನದ ಗಡಿಭಾಗದಲ್ಲಿ ಕಾರ್ಯ ನಿರ್ವಹಿಸಿ, ನಂತರ ಔದ್ ಪ್ರಾಂತ್ಯದಲ್ಲಿ ಉಪವಿಭಾಗಾಧಿಕಾರಿಯಾಗಿ, ಬನಾರಸ್ ಸಂಸ್ಥಾನದ ಉಸ್ತುವಾರಿ ಅಧಿಕಾರಿಯಾಗಿ, ಕಂದಾಯ ಆಯುಕ್ತನಾಗಿ,  ಹೀಗೆ ಭಾರತದ ವಿವಿಧೆಡೆ ಸೇವೆ ಸಲ್ಲಸಿ, ಇಲ್ಲಿನ ಬಹುಮುಖಿ ಸಂಸ್ಕೃತಿ ಮತ್ತು ವಿವಿಧ ಭಾಷೆಗಳನ್ನು ಅರಿತವನಾಗಿದ್ದ. ಎಲ್ಲಕ್ಕಿಂತ ಹೆಚ್ಚಾಗಿ ಹಿಂದಿ ಸೇರಿದಂತೆ ಹಲವಾರು ಸ್ಥಳೀಯ ಭಾಷೆಗಳನ್ನು ಅಸ್ಖಲಿತವಾಗಿ ಮಾತನಾಡುವ ಪ್ರತಿಭೆಯನ್ನು ಹೊಂದಿದ್ದ.

ಜಿಮ್ ಕಾರ್ಬೆಟ್‍ನಂತೆ ಈತ ಕೂಡ  ಅವಿವಾಹಿತನಾಗಿದ್ದ. ತನ್ನೆಲ್ಲಾ ಕೆಲಸ ಕಾರ್ಯಗಳಿಗೆ ಒಬ್ಬ ಸಂಸ್ಥಾನದ ಮಾಂಡಲೀಕನಂತೆ ಹಲವಾರು ನೌಕರರನ್ನು ನೇಮಕ ಮಾಡಿಕೊಂಡಿದ್ದ. ಅತ್ಯಂತ ಮುಂಗೋಪಿಯಾಗಿದ್ದ ವಿಂದಮ್ ಸಣ್ಣ ಪುಟ್ಟ ವಿಷಯಗಳಿಗೆ ಎಲ್ಲರೆದುರು ಸಿಡಿದೇಳುತಿದ್ದ. ಆದರೆ, ಮರು ಕ್ಷಣವೇ ಶಾಂತನಾಗುತಿದ್ದ. ತನ್ನ ಬಳಿ ಕೆಲಸ ಮಾಡುವ ನೌಕರರ ಕಷ್ಟ ಸುಖಗಳಿಗೆ ಧಾರಳವಾಗಿ ನೆರವು ನೀಡುತಿದ್ದ. ಸಿಟ್ಟಿನ ನಡುವೆಯೂ ಅವನು ಎಂತಹ ಹೃದಯವಂತನೆಂದರೆ, ತನ್ನ ಕೈಕೆಳಗಿನ ಅಧಿಕಾರಿಗಳು ಅಥವಾ ನೌಕರರು ಭ್ರಷ್ಟಾಚಾರ ಇಲ್ಲವೆ ಕೆಲಸದಲ್ಲಿ ನಿರ್ಲಕ್ಷ್ಯತನ ತೋರಿದರೆ, ಉಳಿದ ಬ್ರಿಟಿಷ್ ಅಧಿಕಾರಿಗಳಂತೆ ಅವರನ್ನು ಕೆಲಸದಿಂದ ತೆಗೆಯುತ್ತಿರಲಿಲ್ಲ, ಬದಲಾಗಿ ಅವರಿಗೆ ಹಿಂಬಡ್ತಿ ನೀಡಿ ಉದ್ಯೋಗದಲ್ಲಿ ಮುಂದುವರಿಸುತಿದ್ದ. ಈ ಕುರಿತಂತೆ ಪ್ರತಿಕ್ರಿಯಿಸುತ್ತಾ  ಅವರ ಕುಟುಂಬದ ಅನ್ನವನ್ನು ಕಸಿಯಬಾರದು ಎಂದು ವಿಂದಮ್ ಮಾರ್ಮಿಕವಾಗಿ ನುಡಿಯುತಿದ್ದ. ತನ್ನ ನಿಷ್ಠುರ ಹಾಗೂ ಮಾನವೀತೆಯ ಮುಖವುಳ್ಳ ವ್ಯಕ್ತಿತ್ವದ ನಡುವೆಯೂ ವಿಂದಮ್‍ಗೆ ಶಿಕಾರಿಯ ಬಗ್ಗೆ ಹುಚ್ಚಿತ್ತು.

ಅದರಲ್ಲೂ ಹುಲಿ ಬೇಟೆಯೆಂದರೆ, ವಾರಗಟ್ಟಲೆ ಅರಣ್ಯಗಳಲ್ಲಿ ತನ್ನ ಸಿಬ್ಬಂದಿ ಕೊತೆ ಗುಡಾರದಲ್ಲಿ ಬೀಡು ಬಿಡುತಿದ್ದ. ಈತನಿಗೂ ಕಾರ್ಬೆಟ್‍ಗೂ ಹುಲಿ ಬೇಟೆಯಲ್ಲಿ ಇದ್ದ ಪ್ರಮುಖ ವ್ಯತ್ಯಾಸವೆಂದರೆ, ಕಾರ್ಬೆಟ್ ಕೇವಲ ನರಭಕ್ಷಕ ಹುಲಿಗಳನ್ನು ಮರದ ಮೇಲೆ ಕುಳಿತು, ಅವುಗಳು ಬೇಟೆಯಾಡಿದ ಮಾನವರ ಕಳೇಬರಗಳನ್ನು ತಿನ್ನಲು ಬಂದಾಗ ಮಾತ್ರ ಕೊಲ್ಲುತಿದ್ದ. ಆದರೆ, ವಿಂದಮ್ ಇದಕ್ಕೆ ವ್ಯತಿರಿಕ್ತವಾಗಿ ಗ್ರಾಮಸ್ಥರನ್ನು  ಅರಣ್ಯಕ್ಕೆ ಕಳಿಸಿ ಹುಲಿ ಇರುವ ಜಾಗ ಪತ್ತೆ ಮಾಡಿಸಿ ಆನೆ ಮೇಲೆ ಸವಾರಿ ಮಾಡುತ್ತಾ ಗ್ರಾಮಸ್ಥರು ಮತ್ತು ತನ್ನ ಸೇವಕರ ನೆರವಿನಿಂದ ಬೇಟೆಯಾಡುತಿದ್ದ. ಈ ಶಿಕಾರಿ ಹವ್ಯಾಸ ಮುಂದಿನ ದಿನಗಳಲ್ಲಿ ಈ ಇಬ್ಬರನ್ನು ಆತ್ಮೀಯ ಮಿತ್ರರನ್ನಾಗಿ ಮಾಡಿತು.

ವಿಂದಮ್ ನೈನಿತಾಲ್ ಪ್ರಾಂತ್ಯಕ್ಕೆ ಬಂದೊಡನೆ ಆ ಪ್ರದೇಶದ  ಸುತ್ತಮುತ್ತ ದಂತಕಥೆಯಾಗಿ ಹೋಗಿದ್ದ ಜಿಮ್ ಕಾರ್ಬೆಟ್ ಬಗ್ಗೆ ತಿಳಿದು ತಾನೇ ಮುಂದಾಗಿ ಸ್ನೇಹ ಹಸ್ತ ಚಾಚುವುದರ ಮೂಲಕ ಕಾರ್ಬೆಟ್‍ನನ್ನು ಗೆಳೆಯನನ್ನಾಗಿ ಮಾಡಿಕೊಂಡ. ಕಾರ್ಬೆಟ್ ಮೊಕಮೆಘಾಟ್‍ನಿಂದ ರಜೆಗೆ ಊರಿಗೆ ಬಂದಾಗಲೆಲ್ಲಾ ವಿಂದಮ್‍ನನ್ನು ಭೇಟಿಯಾಗುತಿದ್ದ ಇಬ್ಬರೂ ಕೂಡಿ ಶಿಕಾರಿ ಬಗ್ಗೆ ಚರ್ಚಿಸುವುದು ಇಲ್ಲವೇ ಅರಣ್ಯಕ್ಕೆ ತೆರಳಿ ಶಿಕಾರಿ ಮಾಡುವುದು ನಿರಂತರವಾಗಿ ನಡೆದಿತ್ತು.

ಕಾರ್ಬೆಟ್ ನಿವೃತ್ತಿ ಪಡೆದ ನಂತರ ಈ ಜೋಡಿ ವಾರಗಟ್ಟಲೆ ಕಾಡಿನಲ್ಲಿ ಬಿಡಾರ ಹೂಡಿ ಅಲೆಯುತಿದ್ದರು. ಶಿಕಾರಿ ಕುರಿತಂತೆ ಇಬ್ಬರ ಅನುಭವ ಭಿನ್ನವಾಗಿತ್ತು. ಕಾರ್ಬೆಟ್ ಬಳಿ ಜೋಡಿ ನಳಿಕೆಯ ಹಾಗೂ ಸಿಂಗಲ್ ಬ್ಯಾರಲ್ ಬಂದೂಕಗಳಿದ್ದವು. ಆದರೆ, ವಿಂದಮ್ ಬಳಿ ಆತ್ಯಾಧುನಿಕ ಬಂದೂಕಗಳಿದ್ದವು. ಅವುಗಳಲ್ಲಿ ಆನೆ ಮೇಲೆ ಕುಳಿತು ಹುಲಿ ಅಥವಾ ಚಿರತೆಗಳನ್ನು ಬೇಟೆಯಾಡಲು ಬಳಸುವ, ಬಂದೂಕದ ಮುಂಭಾಗದ ನಳಿಕೆಗಳು ಬಾಗಿರುವಂತಹ ವಿಶೇಷ ಬಂದೂಕಗಳಿದ್ದವು.

ಕಾರ್ಬೆಟ್, ವಿಂದಮ್‍ಗೆ ನೆಲದಲ್ಲಿ ನಿಂತು ಬೇಟೆಯಾಡುವ ಕಲೆ ಹಾಗೂ ಅಪಾಯಕಾರಿ ಪ್ರಾಣಿಗಳ ಕುರಿತಂತೆ ತೆಗೆದುಕೊಳ್ಳಬೇಕಾದ ಎಚ್ಚರಕೆ ಇವುಗಳನ್ನು ವಿವರಿಸುತಿದ್ದ. ಹುಲಿಗಳು ಮನುಷ್ಯನ ಇರುವನ್ನು ವಾಸನೆ ಮೂಲಕ ಕಂಡು ಹಿಡಿದು, ಸುಳಿವು ಸಿಗದಂತೆ ಸನಿಹಕ್ಕೆ ಬಂದು ಮನುಷ್ಯರ ಮೇಲೆ ಎರಗುವ ಬಗ್ಗೆ ರೋಚಕವಾಗಿ ಮನಮುಟ್ಟುವಂತೆ ಹೇಳುತಿದ್ದ. ಅದೇ ರೀತಿ ವಿಂದಮ್ ಸಹ  ಆನೆಯ ಮೇಲೆ ಕುಳಿತು ಬೇಟೆಯಾಡುವಾಗ ಬರುವ ತೊಂದರೆಗಳು, ಆನೆಯ ಮಾವುತನ ಧೈರ್ಯ ಮತ್ತು ವಿವೇಚನೆಗಳ ಮೇಲೆ ನಿರ್ಧಾರವಾಗುತಿದ್ದ ಶಿಕಾರಿ ಇಂತಹ ಅನುಭವಗಳನ್ನು ಕಾರ್ಬೆಟ್  ಜೊತೆ  ಹಂಚಿಕೊಳ್ಳುತ್ತಿದ್ದ.

(ಮುಂದುವರಿಯುತ್ತದೆ.)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-10)


– ಡಾ.ಎನ್.ಜಗದೀಶ್ ಕೊಪ್ಪ


 

ಜಿಮ್ ಕಾರ್ಬೆಟ್ ರೈಲ್ವೆ ಇಲಾಖೆಯಲ್ಲಿ ನೆಮ್ಮದಿಯ ಜೀವನ ಕಂಡುಕೊಂಡಿದ್ದರೂ ಸಹ ಅವನಲ್ಲಿ ತನ್ನ ತಾಯಿನಾಡಾದ ಬ್ರಿಟೀಷರ ಪರವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಆಸೆ ಬಹುದಿನಗಳಿಂದ ಮನೆ ಮಾಡಿತ್ತು.

1902 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿನ ಸ್ಥಳೀಯ ಬಿಳಿಯರು ಬ್ರಿಟಿಷ್ ಸರ್ಕಾರದ ವಿರುದ್ಧ ಬಂಡೆದ್ದಾಗ (ಬೋರ್ ‌ಯುದ್ಧ) ಸೇನೆಯಲ್ಲಿ ಸೇವೆ ಸಲ್ಲಿಸಲು ಕಾರ್ಬೆಟ್ ಅರ್ಜಿ ಸಲ್ಲಿಸಿದ್ದ. ಆದರೆ ಸರ್ಕಾರ ಅವನ ಅರ್ಜಿಯನ್ನು ತಿರಸ್ಕರಿಸಿತು. ಕಾರ್ಬೆಟ್‍ನನ್ನು ಸೇನೆಗೆ ನಿಯೋಜಿಸಿದರೆ, ಭಾರತದ ಪ್ರಮುಖ ರೈಲ್ವೆ ನಿಲ್ದಾಣಗಳಾದ ಮೊಕಮೆಘಾಟ್ ಮತ್ತು ಸಮಾರಿಯಘಾಟ್ ನಿಲ್ದಾಣಗಳಲ್ಲಿ ಸರಕು ಮತ್ತು ಪ್ರಯಾಣಿಕರ ಸಾಗಾಣಿಕೆಗೆ ಅಡ್ಡಿಯಾಗುತ್ತದೆ ಎಂಬುದು ಸರ್ಕಾರದ ನಿಲುವಾಗಿತ್ತು. ಕಾರ್ಬೆಟ್ ಸೇನೆಗೆ ಸೇರುವ ವಿಷಯದಲ್ಲಿ ಆತನ ತಾಯಿಗೂ ಇಷ್ಟವಿರಲಿಲ್ಲ. ಮಗನಿಗೆ ಮದುವೆ ಮಾಡಬೇಕೆಂಬ ಚಿಂತೆ ಮಾತ್ರ ಅವಳನ್ನು ಸದಾ ಕಾಡುತಿತ್ತು. ಒಮ್ಮೆ ಕಾರ್ಬೆಟ್ ರಜೆಯ ಮೇಲೆ ನೈನಿತಾಲ್‍ಗೆ ಬಂದಿದ್ದಾಗ, ಇಂಗ್ಲೆಂಡ್‍ನಿಂದ  ಸಂಬಂಧಿಕರ ಮನೆಗೆ ಬಂದಿದ್ದ ಒರ್ವ ತರುಣಿಯ ಜೊತೆ ಸ್ನೇಹ ಉಂಟಾಗಿ, ಅದು ಮದುವೆ ಹಂತದವರೆಗೆ ಬೆಳದು ಆನಂತರ  ಅನಿರೀಕ್ಷಿತವಾಗಿ ನಿಂತು ಹೋಯಿತು. ಸದಾ ಜನಜಂಗುಳಿಯಿಂದ ದೂರ ಉಳಿದು ಏಕಾಂಗಿಯಾಗಿ ಇರ ಬಯಸುತಿದ್ದ ಕಾರ್ಬೆಟ್, ಪ್ರಾಣಿ ಮತ್ತು ಪರಿಸರದ ಮೇಲಿನ ಅನನ್ಯ ಪ್ರೀತಿಯಿಂದ ನಂತರದ ದಿನಗಳಲ್ಲಿ  ಮದುವೆ ವಿಷಯಕ್ಕೆ ತಿಲಾಂಜಲಿ ನೀಡಿದ.

ಮೊಕಮೆಘಾಟ್‍ನಲ್ಲಿ ಸೇವೆ ಸಲ್ಲಿಸುತಿದ್ದಾಗಲೇ ಕಾರ್ಬೆಟ್‍ಗೆ ಸೇನೆಗೆ ಸೇರುವ ಅವಕಾಶ ಅನಿರೀಕ್ಷಿತವಾಗಿ ಒದಗಿ ಬಂತು. 1914 ರ ಜುಲೈ ತಿಂಗಳಲ್ಲಿ ಪ್ರಾರಂಭವಾದ ಮೊದಲ ವಿಶ್ವ ಮಹಾಯುದ್ಧದ ಪರಿಣಾಮ ಬ್ರಿಟಿಷ್ ಸೇನೆಯಲ್ಲಿ ಸೈನಿಕರ ಕೊರತೆ ಎದ್ದು ಕಾಣುತಿತ್ತು. ಇಂಗ್ಲೆಂಡ್ ತನ್ನ ವಸಾಹತು ಪ್ರದೇಶಗಳಲೆಲ್ಲಾ ಸೇನೆಯನ್ನು ನಿಯೋಜಿಸಿದ್ದರಿಂದ ಅದನ್ನು ವಾಪಸ್ ಕರೆಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಹಾಗಾಗಿ ಭಾರತದಿಂದ ಹೊಸದಾಗಿ ನೇಮಕ ಮಾಡಿಕೊಳ್ಳುವ ವಿಚಾರದಲ್ಲಿ ಬ್ರಿಟಿಷ್ ಸರ್ಕಾರ ಆಸಕ್ತಿ ತಾಳಿತ್ತು. ತನ್ನ ಅನುಪಸ್ಥಿತಿಯಲ್ಲಿ ಕೂಡ ಕಾರ್ಮಿಕರು ಕೆಲಸ ಮಾಡುತ್ತಾರೆ ಎಂಬ ಭರವಸೆಯನ್ನು ಕಾರ್ಬೆಟ್ ಸರ್ಕಾರಕ್ಕೆ ನೀಡಿದ ಮೇಲೆ ಆತನನ್ನು ಸೇನೆಗೆ ಕ್ಯಾಪ್ಟನ್ ಆಗಿ ನೇಮಕ ಮಾಡಲಾಯಿತು. ಆ ವೇಳೆಗಾಗಲೇ ಕಾರ್ಬೆಟ್‍ಗೆ ನಲವತ್ತು ವರ್ಷ ಮೀರಿದ್ದರಿಂದ ಆತನನ್ನು ಯುದ್ಧಭೂಮಿಗೆ ಬದಲಾಗಿ ಸೈನಿಕರಿಗೆ ಮೂಲಭೂತ ಸೌಕರ್ಯ ಒದಗಿಸುವ ಕಾರ್ಯವನ್ನು ವಹಿಸಲಾಯಿತು. ಕಾರ್ಬೆಟ್‍ಗೆ ಮೊದಲಿಗೆ ಈ ವಿಷಯದಲ್ಲಿ ನಿರಾಸೆಯಾದರೂ, ಸೇನೆಗೆ, ಅದಕ್ಕಿಂತ ಹೆಚ್ಚಾಗಿ  ತನ್ನ ತಾಯ್ನಾಡಿಗೆ ಸೇವೆ ಸಲ್ಲಿಸುವ ಅವಕಾಶ ಒದಗಿ ಬಂದುದ್ದಕ್ಕಾಗಿ ತೃಪ್ತಿಪಟ್ಟುಕೊಂಡ.

ಯುದ್ಧಭೂಮಿಯಲ್ಲಿ ಸೈನಿಕರಿಗೆ ತಾತ್ಕಾಲಿ ಶೆಡ್ ನಿರ್ಮಾಣ ಮಾಡುವುದು, ರಸ್ತೆ, ಸೇತುವೆ ನಿರ್ಮಿಸುವುದು, ಅವರಿಗೆ ಆಹಾರ, ಇನ್ನಿತರೆ ವಸ್ತುಗಳನ್ನು ರೈಲು ಇಲ್ಲವೆ ವಾಹನಗಳ ಮೂಲಕ ಸರಬರಾಜು ಮಾಡುವ ಜವಬ್ದಾರಿ ಇವೆಲ್ಲವನ್ನು ಕಾರ್ಬೆಟ್ ನಿರ್ವಹಿಸಬೇಕಾದ್ದರಿಂದ ಅವನಿಗೆ ಬೇಕಾದ 500 ಜನರ ತಂಡವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ‍ವನ್ನು ಅವನಿಗೆ ನೀಡಲಾಯಿತು. ಹಾಗಾಗಿ ನೈನಿತಾಲ್ ಪಟ್ಟಣಕ್ಕೆ ಬಂದ ಕಾರ್ಬೆಟ್ ಸುತ್ತಮುತ್ತಲಿನ ಹಳ್ಳಿಗಳ ಧೃಡಕಾಯದ ಯುವಕನ್ನು ಸೇನೆಯ ಸೇವೆಗಾಗಿ ಆಯ್ಕೆಮಾಡಿಕೊಂಡ. ಬ್ರಿಟಿಷ್ ಸರ್ಕಾರ ಕಾರ್ಬೆಟ್‍ನ ತಂಡಕ್ಕೆ ಕುಮಾವನ್-70 ಎಂದು ನಾಮಕರಣ ಮಾಡಿತು.

ಕಾರ್ಬೆಟ್ ಮೊಕಮೆಘಾಟ್‍ಗೆ ಹೋಗಿ ಸ್ಟೇಶನ್ ಮಾಸ್ಟರ್ ಸೇರಿದಂತೆ, ಎಲ್ಲರಿಗೂ ಕೆಲಸದ ಜವಬ್ದಾರಿ ವಹಿಸಿ, ಅವರ ಪ್ರಾರ್ಥನೆ, ಹಾರೈಕೆಗಳೊಂದಿಗೆ ಮರಳಿ ನೈನಿತಾಲ್‍ಗೆ ಬಂದು ತನ್ನ ತಂಡದೊಂದಿಗೆ ಬಾಂಬೆಗೆ ತೆರಳಿದ. 1917 ರ ಜೂನ್ ತಿಂಗಳಿನಲ್ಲಿ ಅವನ ತಂಡ ಹಡಗಿನಲ್ಲಿ ಇಂಗ್ಲೆಂಡ್‍ನತ್ತ ಪ್ರಯಾಣ ಬೆಳಸಿತು. 500 ಜನರಿದ್ದ ಅವನ ತಂಡದಲ್ಲಿ ಹಲವು ಜಾತಿಯ ಹಾಗೂ ಹಲವು ಧರ್ಮದ ಜನರಿದ್ದುದು ವಿಶೇಷ. ಅವರೆಲ್ಲಾ ಸಮುದ್ರದ ಮೂಲಕ ಭಾರತ ಬಿಟ್ಟು ತೆರಳುತಿದ್ದಂತೆ ತಮ್ಮ ಜಾತಿ, ಧರ್ಮದ ನೆಲೆಗಳನ್ನು ಮರೆತು, ಭಾರತೀಯರು ಎಂಬ ಭಾವನೆ ಅವರುಗಳ ಎದೆಯಲ್ಲಿ ಚಿಗುರೊಡೆದಿತ್ತು. ಕಾರ್ಬೆಟ್‍ಗೂ ಕೂಡ ಇದು ಅವನ ಪಾಲಿಗೆ ಮೊದಲ ವಿದೇಶ ಪ್ರವಾಸವಾಗಿತ್ತು. ತನ್ನ ಕುಟುಂಬ, ವೃದ್ಧ ತಾಯಿ, ಸಹೋದರಿ ಇವರೆಲ್ಲರನ್ನು ಅಗಲಿ ಹೋಗುವ ಸಂದರ್ಭದಲ್ಲಿ ಅವನೂ ಕೂಡ ಭಾವುಕನಾಗಿದ್ದ. ಅದರೆ ಅವನಲ್ಲಿ ತನ್ನ ಮೂಲ ನೆಲೆಯಾದ ಇಂಗ್ಲೆಂಡ್, ಅದರಲ್ಲೂ ವಿಶೇಷವಾಗಿ ಐತಿಹಾಸಿಕ  ಲಂಡನ್ ‍ನಗರ ನೋಡಬೇಕೆಂಬ ಆಸೆ ಮೊದಲಿನಿಂದಲೂ ಇತ್ತು.

ಅವನ ತಂಡ ಸುಮಾರು 30 ದಿನಗಳ ಪ್ರಯಾಣದ ನಂತರ ಇಂಗ್ಲೆಂಡಿನ ಸೌತ್ ಹ್ಯಾಂಪ್ಟೆನ್ ನಗರವನ್ನು ತಲುಪಿತು. ಒಂದು ವಾರ ಕಾಲ ಬಂದರಿನಲ್ಲಿ ಬೀಡು ಬಿಟ್ಟಿದ್ದ ಕಾರ್ಬೆಟ್ ನೇತೃತ್ವದ ಕುಮಾವನ್-70 ತಂಡವನ್ನು ಅಂತಿಮವಾಗಿ ಫ್ರಾನ್ಸ್ ನ ಯುದ್ದ ಭೂಮಿಗೆ ಕಳಿಸಿಕೊಡಲಾಯಿತು. ಅಲ್ಲಿನ ವಾತಾವರಣ, ಚಳಿ, ವಿವಿಧ ಬಗೆಯ ಸೊಳ್ಳೆಗಳು, ಅನಿರೀಕ್ಷಿತವಾಗಿ ಬಂದೆರಗುವ ಸಾಂಕ್ರಾಮಿಕ ರೋಗಗಳು ಇವೆಲ್ಲವೂ ಕಾರ್ಬೆಟ್ ತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದವು. ಇವೆಲ್ಲಕ್ಕಿಂತ ಹೆಚ್ಚಾಗಿ ಆಹಾರ ಸಮಸ್ಯೆ ಎದುರಾಯಿತು. ಸೇನೆಯಲ್ಲಿ ಯಥೇಚ್ಚವಾಗಿ ಸರಬರಾಜು ಮಾಡುತಿದ್ದ ದನದ ಮತ್ತು ಹಂದಿಯ ಮಾಂಸ ಹಾಗೂ ವಿಸ್ಕಿ, ರಮ್ ‍ಅನ್ನು ತಿನ್ನುವ ಅಥವಾ ಕುಡಿಯುವ ಅಭ್ಯಾಸ ಯಾರಿಗೂ ಇರಲಿಲ್ಲ. ಆದರೆ ತಂಬಾಕನ್ನು ಬಳಸುವ ಅಭ್ಯಾಸವಿತ್ತು. ಕಾರ್ಬೆಟ್‍ನ ಮನವಿ ಮೇರೆಗೆ ಮಾಂಸದ ಬದಲು ಆಲೂಗೆಡ್ಡೆ, ಬಟಾಣಿ ಮುಂತಾದ ಹಸಿರು ತರಕಾರಿಗಳು, ಮತ್ತು ಅಕ್ಕಿ ಹಾಗೂ ಗೋಧಿಹಿಟ್ಟನ್ನು ತಂಡಕ್ಕೆ ಸರಬರಾಜು ಮಾಡಲಾಯಿತು. ಇದಕ್ಕೆ ಕಾರಣ ಬಹುತೇಕ ಸದಸ್ಯರು ಸಸ್ಯಹಾರಿಗಳಾಗಿದ್ದದ್ದು.

ಯುದ್ಧಭೂಮಿಯಲ್ಲಿ ತೂರಿ ಬರುವ ಗುಂಡು ಹಾಗೂ  ಫಿರಂಗಿಯ ಶೆಲ್‍ಗಳ ನಡುವೆ, ಸೈನಿಕರಿಗೆ ಕಂದಕ ತೋಡುವುದು, ಅವರಿಗೆ ಬಂಕರ್ ನಿರ್ಮಿಸಿ ಕೊಡುವುದು ಇಲ್ಲವೆ ಕೇಬಲ್ ತಂತಿಯ ಜಾಲ ನಿರ್ಮಿಸಿ ಕೊಡುವ ಕೆಲಸವನ್ನು ಕಾರ್ಬೆಟ್ ತಂಡ ಯಶಸ್ವಿಯಾಗಿ ನಿರ್ವಹಿಸಿತು. ಎಷ್ಟೋಬಾರಿ ತುರ್ತು ವೇಳೆಯಲ್ಲಿ ಹಗಲು ಇರುಳು ಎಂಬ ಪರಿವಿಲ್ಲದೆ ಸೇತುವೆ ಮತ್ತು ರೈಲ್ವೆ ಮಾರ್ಗವನ್ನು ಸಹ ಈ ತಂಡ ನಿರ್ಮಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಬೆಟ್ ತನ್ನ ತಂಡದ ಸದಸ್ಯರ ಪಾಲಿಗೆ ಕೇವಲ ನಾಯಕನಾಗಿರದೆ, ಸಂತನಂತೆ, ಸಹೋದ್ಯೋಗಿಯಂತೆ ವರ್ತಿಸುತ್ತಾ ಅವರಲ್ಲಿ ಆತ್ಮವಿಶ್ವಾಸ ತುಂಬುತ್ತಾ ಕೆಲಸ ಮಾಡುವ ರೀತಿ ಅಲ್ಲಿನ ಇತರೆ ಸೈನ್ಯದ ಅಧಿಕಾರಿಗಳಿಗೆ ವಿಸ್ಮಯವನ್ನುಂಟು ಮಾಡಿತ್ತು. ಸೈನಿಕರೆಲ್ಲಾ ಚಳಿ ತಡೆಯಲು ರಮ್‍ನಂತಹ ಮಾದಕ ದ್ರವ್ಯಕ್ಕೆ ಮೊರೆ ಹೋದರೆ, ಭಾರತದ ಕಾರ್ಬೆಟ್ ತಂಡದ ಸದಸ್ಯರು ತಮ್ಮ ಎರಡು ಅಂಗೈಗಳನ್ನು ಉಜ್ಜಿಕೊಳ್ಳುತ್ತಾ, ಚಳಿಯನ್ನು ನಿಯಂತ್ರಿಸುವ ಬಗೆ ಅವರಲ್ಲಿ ಅಚ್ಚರಿ ಉಂಟು ಮಾಡಿತ್ತು.

ನೈನಿತಾಲ್ ಮತ್ತು ಕುಮಾವನ್ ಪರ್ವತ ಗಿರಿ ಶ್ರೇಣಿಗಳಲ್ಲಿ ಬೆಳೆದು ಬಂದಿದ್ದ ಕಾರ್ಬೆಟ್ ತಂಡದ ಸದಸ್ಯರಿಗೆ ಚಳಿಯ ವಾತಾವರಣದ ನಡುವೆ ಬದುಕುವ ಕಲೆ ಕರಗತವಾಗಿತ್ತು. ಹಾಲಿಲ್ಲದ ಕಪ್ಪು ಚಹಾ ಮತ್ತು ಚುಟ್ಟಾ,  ಈ ಎರಡು ವಸ್ತುಗಳಿದ್ದರೆ ಆಹಾರವಿಲ್ಲದೆ ದುಡಿಯುವ ಶಕ್ತಿ ಅವರಲ್ಲಿತ್ತು. 1918 ರ ಜನವರಿ ತಿಂಗಳಿನಲ್ಲಿ ಒಮ್ಮೆ ಇವರ ಬಿಡಾರಕ್ಕೆ ಆಗಮಿಸಿ, ಇವರ ಕಾರ್ಯ ಚಟುವಟಿಕೆ, ಆಹಾರ ಸಂಸ್ಕೃತಿ ಎಲ್ಲವನ್ನು ಕೂಲಂಕುಶವಾಗಿ ವೀಕ್ಷಿಸಿದ, ಬ್ರಿಟೀಷ್ ಸರ್ಕಾರದಲ್ಲಿ ವಿದೇಶಿ ಸೈನ್ಯ ಪಡೆಗಳ ಉಸ್ತುವಾರಿ ಹೊತ್ತಿದ್ದ ಲಾರ್ಡ್ ಅಂಪ್ತಿಲ್ ಸರ್ಕಾರಕ್ಕೆ ಪತ್ರ ಬರೆದು ಕಾರ್ಬೆಟ್ ತಂಡದ ಶ್ರಮವನ್ನು ಪ್ರಶಂಸಿಸಿದ. ಅಲ್ಲದೆ ನಂತರದ ದಿನಗಳಲ್ಲಿ ಕಾರ್ಬೆಟ್‍ನನ್ನು ಆತ್ಮೀಯ ಗೆಳೆಯನನ್ನಾಗಿ ಮಾಡಿಕೊಂಡ. (ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮ ಗಾಂಧಿ ಹೋರಾಟ ನಡೆಸುತಿದ್ದಾಗ, ಗಾಂಧಿಯ ಮೇಲೆ ಶಿಸ್ತು ಕ್ರಮ ಕೈಗೊಂಡ ಅಧಿಕಾರಿಗಳಲ್ಲಿ ಲಾರ್ಡ್ ಅಂಪ್ತಿಲ್ ಕೂಡ ಒಬ್ಬ.)

ಗಂಗಾನದಿಯ ತಟದ ಮೊಕಮೆಘಾಟ್‍ನಲ್ಲಿ ಉರಿವ ಬಿಸಿಲು, ಕೊರೆವ ಚಳಿ, ಅಥವಾ ಸುರಿವ ಮಳೆಯೆನ್ನದೆ ಕಾರ್ಮಿಕರನ್ನು ಹುರಿದುಂಬಿಸುತ್ತಾ ವರ್ಷಾನುಗಟ್ಟಲೆ ಕಠಿಣ ಕೆಲಸ ಮಾಡಿದ್ದ ಅನುಭವಗಳು ಕಾರ್ಬೆಟ್ ಪಾಲಿಗೆ ಯುದ್ಧಭೂಮಿಯ ಮೂಲಭೂತ ಸೌಕರ್ಯಗಳ ರಚಾನಾತ್ಮಕ ಕೆಲಸಗಳಿಗೆ ವರವಾಗಿ ಪರಿಣಮಿಸಿದವು. 1918 ರಲ್ಲಿ ವಿಶ್ವದ ಮೊದಲ ಮಹಾಯುದ್ಧ ಮುಗಿದಾಗ ಲಂಡನ್ ನಗರಕ್ಕೆ ಕಾರ್ಬೆಟ್ ತಂಡವನ್ನು ಕರೆಸಿಕೊಂಡ ಬ್ರಿಟಿಷ್ ಸರ್ಕಾರ ಪ್ರತಿಯೊಬ್ಬ ಸದಸ್ಯನಿಗೂ ಶೌರ್ಯ ಪದಕ ಹಾಗೂ ಪ್ರಶಸ್ತಿ ನೀಡಿ ಗೌರವಿಸಿತು. ಜಿಮ್ ಕಾರ್ಬೆಟ್‍ನ ಹುದ್ದೆಯನ್ನು ಕ್ಯಾಪ್ಟನ್ ದರ್ಜೆಯಿಂದ ಮೇಜರ್ ದರ್ಜೆಗೆ ಏರಿಸಿ ವಿಶೇಷವಾಗಿ ಸನ್ಮಾನಿಸಿತು.

ಭಾರತಕ್ಕೆ ಹಿಂತಿರುಗುವ ಮುನ್ನ ಕಾರ್ಬೆಟ್ ಲಂಡನ್ ನಗರದಲ್ಲಿ ಉಳಿದು, ತನ್ನ ಕನಸಿನ ಲಂಡನ್ ಗೋಪುರ, ಬಂಕಿಂಗ್ ಹ್ಯಾಮ್ ಅರಮನೆ, ಪಾರ್ಲಿಮೆಂಟ್ ಭವನ ಮುತಾಂದ ಸ್ಥಳಗಳನ್ನು ನೋಡಿ ಕಣ್ತುಂಬಿಕೊಂಡ. ಥೇಮ್ಸ್ ನದಿಯ ದಡದಲ್ಲಿ ಏಕಾಂಗಿ ಮನೊಸೋಇಚ್ಛೆ ನಡೆದಾಡಿದ. ನೈನಿತಾಲ್ ಅರಣ್ಯ ಪ್ರದೇಶದಲ್ಲಿ ಮೈಲಿಗಟ್ಟಲೆ ಒಡಾಡಿದ ಅನುಭವ ಇದ್ದ ಕಾರ್ಬೆಟ್ ಲಂಡನ್ ನಗರವನ್ನು ಕಾಲ್ನಡಿಗೆಯಲ್ಲೇ ವೀಕ್ಷಣೆ ಮಾಡಿದ. ತನ್ನ ಕುಮಾವನ್-70 ತಂಡದೊಂದಿಗೆ ಹಡಗಿನಲ್ಲಿ ವಾಪಾಸಾಗುತಿದ್ದಾಗ, ಈಜಿಪ್ಟನಲ್ಲಿ ಹಡಗು ಎರಡು ದಿನ ಲಂಗರು ಹಾಕಿದ ಪ್ರಯುಕ್ತ ಕಾರ್ಬೆಟ್ ತನ್ನ ಸದಸ್ಯರೊಂದಿಗೆ ಕೈರೊ ಸಮೀಪದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ. ಪಿರಮಿಡ್‍ಗಳನ್ನು ನೋಡಿ ಅವುಗಳ ರಚನೆ ಮತ್ತು ಅಗಾಧತೆಗೆ ಕಾರ್ಬೆಟ್ ಬೆರಗಾದ. ತನ್ನ ಸಹೋದರಿ ಮ್ಯಾಗಿ ಮತ್ತು ತಾಯಿಗೆ ಒಂದಿಷ್ಟು ಹತ್ತಿಯ ಬಟ್ಟೆಗಳನ್ನು ಖರೀದಿಸಿ ಬಾಂಬೆಯತ್ತ ಪ್ರಯಾಣ ಬೆಳಸಿದ. ತಾನು ಕರೆದುಕೊಂಡು ಹೋಗಿದ್ದ 500 ಮಂದಿ ಸದಸ್ಯರಲ್ಲಿ ಒರ್ವ ವ್ಯಕ್ತಿ ಮಾತ್ರ ಭಾರತಕ್ಕೆ ಹಿಂತಿರುಗುತಿದ್ದ ಸಂದರ್ಭದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಹಡಗಿನಲ್ಲೇ ಮೃತಪಟ್ಟ. ಉಳಿದವರೆಲ್ಲರೂ ಕಾರ್ಬೆಟ್ ಜೊತೆ ಸುರಕ್ಷಿತವಾಗಿ ಬಾಂಬೆ ನಗರದ ಮೂಲಕ ತಮ್ಮ ಊರುಗಳಿಗೆ ಹಿಂರುಗಿದರು.

ಕಾರ್ಬೆಟ್ ಎರಡು ತಿಂಗಳ ಕಾಲ ರಜೆ ಹಾಕಿ ತನ್ನ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆದ. ಆ ವೇಳೆಗೆ 43 ವರ್ಷ ದಾಟಿದ್ದ ಕಾರ್ಬೆಟ್ ತನ್ನ ಎಲ್ಲ ಉದ್ಯೋಗಗಳಿಗೆ ತಿಲಾಂಜಲಿ ಇತ್ತು ತನ್ನ ವೃದ್ಧ ತಾಯಿ ಮತ್ತು ಅವಿವಾಹಿತೆ ಅಕ್ಕನೊಂದಿಗೆ ಇದ್ದು ಬಿಡಬೇಕೆಂದು ಯೋಚಿಸಲಾರಂಭಿಸಿದ್ದ. ರಜೆಯ ಅವಧಿ ಮುಗಿಯುವ ಮುನ್ನವೇ ಕಾರ್ಬೆಟ್ ಮತ್ತೆ ತನ್ನ ತಂಡದೊಂದಿಗೆ ಆಫ್ಪಾನಿಸ್ಥಾನಕ್ಕೆ ತೆರಳಬೇಕೆಂದು ಸರ್ಕಾರದಿಂದ ಆದೇಶ ಬಂದಿತು. ಆಗಿನ ಅವಿಭಜಿತ ಭಾರತ (ಪಾಕ್ ಮತ್ತು ಭಾರತ,) ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತ್ತಾದರೂ, ನೈರುತ್ಯ ಭಾಗದ ಆಫ್ಫಾನಿಸ್ಥಾನ, ಬಲೂಚಿಸ್ತಾನ ಸ್ವತಂತ್ರ್ಯವಾಗಿದ್ದು ಹಲವು ಬುಡಕಟ್ಟು ನಾಯಕರ ಆಳ್ವಿಕೆಗೆ ಒಳಪಟ್ಟಿದ್ದವು. ಬುಡಕಟ್ಟು ನಾಯಕರ ಆಂತರಿಕ ಹೋರಾಟದ ಲಾಭವನ್ನು ಪಡೆಯಲು ಬಯಸಿದ ಬ್ರಿಟಿಷ್ ಸರ್ಕಾರ ಇಡೀ ಪ್ರಾಂತ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ  ಹಲವು ನಾಯಕರಿಗೆ ಪರೋಕ್ಷ ಬೆಂಬಲ ಸೂಚಿಸಿತ್ತು. ಅಲ್ಲದೆ ಸೈನ್ಯದ ಸಹಾಯವನ್ನೂ ನೀಡಿತ್ತು.

ಆಫ್ಫಾನಿಸ್ತಾನ ಕಾಬೂಲ್, ತಾಲ್, ವಜೀರಿಸ್ತಾನ್ ಮುಂತಾದ ಪ್ರದೇಶಗಳಲ್ಲಿ ಸುಮಾರು ಐದು ತಿಂಗಳು ಕಾರ್ಯ ನಿರ್ವಹಿಸಿದ ಕಾರ್ಬೆಟ್, ತನ್ನ ತಂಡದ ಸದಸ್ಯರು  ಹಾಗೂ ಪಂಜಾಬ್ ಬೆಟಾಲಿಯನ್ ತಂಡದ ಜೊತೆಗೂಡಿ ಪಾಕಿಸ್ತಾನದ ಗಡಿ ಭಾಗದಲ್ಲಿ ಸಮಾರು 50 ಕಿ.ಮಿ ಉದ್ದದ ರೈಲ್ವೆ ಮಾರ್ಗ ನಿರ್ಮಿಸಿ ಮಿಲಿಟರಿ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟ.  1918 ರ ನವಂಬರ್ ವೇಳೆಗೆ ವಾಪಸ್ ನೈನಿತಾಲ್‍ಗೆ ಬಂದ ಕಾರ್ಬೆಟ್ ಮುಂದಿನ ದಿನಗಳನ್ನು ನಿವೃತ್ತಿಯ ದಿನಗಳಾಗಿ ಕಳೆಯಬೇಕೆಂದು ನಿರ್ಧರಿಸಿ ತನ್ನ ಉದ್ಯೋಗಕ್ಕೆ ರಾಜೀನಾಮೆ ನೀಡಿದ. ನೈನಿತಾಲ್‍ನಿಂದ ನೇರವಾಗಿ ಮೊಕಮೆಘಾಟ್‍ಗೆ ತೆರಳಿ ಸರಕು ಸಾಗಾಣಿಕೆ ಕಾರ್ಯಗಳನ್ನು ತನ್ನ ಬಳಿ ಕೆಲಸ ಮಾಡುತಿದ್ದ ಕಾರ್ಮಿಕರಿಗೆ ವಹಿಸಿ, ಶಾಲೆಯ ಜವಬ್ದಾರಿಯನ್ನು ಸ್ಟೇಶನ್ ಮಾಸ್ಟರ್ ರಾಮ್‍ಶರಣ್‍ಗೆ ವಹಿಸಿ, ತನ್ನ ಎರಡು ದಶಕದ ಗಂಗಾನದಿಯ ತಟದ ಏಕಾಂಗಿ ಬದುಕಿಗೆ ವಿದಾಯ ಹೇಳಿ, ಬಾಲ್ಯದಿಂದಲೂ ತನಗೆ ಪ್ರಿಯವಾದ ನೈನಿತಾಲ್ ಪರಿಸರದ ಕಾಡಿನತ್ತ ತೆರಳಲು ಸಿದ್ಧನಾದ.

(ಮುಂದುವರೆಯುವುದು)