Category Archives: ಜಗದೀಶ್ ಕೊಪ್ಪ

ಬಡತನಕ್ಕೆ ಬಾಯಿಲ್ಲವಾಗಿ…


– ಡಾ.ಎನ್.ಜಗದೀಶ್ ಕೊಪ್ಪ


ಜಗತ್ತನ್ನು ಕಾಡುತ್ತಿರುವ ಮಹಾಮಾರಿ ಎನಿಸಿಕೊಂಡ ಕಾಯಿಲೆಗಳಲ್ಲಿ ಏಡ್ಸ್ ರೋಗ ಕೂಡ ಒಂದು. ಹೈಟಿ ದ್ವೀಪದಲ್ಲಿ 1980 ರ ದಶಕದಲ್ಲಿ ಗೊರಿಲ್ಲಾ ಮುಖಾಂತರ ಮನುಷ್ಯನಿಗೆ ತಗುಲಿಕೊಂಡ, ಮದ್ದಿಲ್ಲದ ಈ ಕಾಯಿಲೆಗೆ ಬಲಿಯಾದವರ ಸಂಖ್ಯೆ ಈಗ ನಿಖರವಾದ ಅಂಕಿ ಅಂಶಗಳಿಗೂ ನಿಲುಕದ ಸಂಗತಿ. ಪಾಶ್ಚಿಮಾತ್ಯ ಜಗತ್ತು ರೂಢಿಸಿಕೊಂಡ ಭೋಗದ ಲೋಲುಪತೆಯಯಿಂದಾಗಿ, ರಕ್ತದ ಮೂಲಕ, ವಿರ್ಯಾಣು ಮೂಲಕ, ತಾಯಿಯ ಎದೆ ಹಾಲು ಮೂಲಕ ರಕ್ತ ಬಿಜಾಸುರನಂತೆ ಹರಡಿ ಎದ್ದು ನಿಂತ ಈ ಮಹಾ ರೋಗಕ್ಕೆ ಕಡಿವಾಣವಿಲ್ಲದಂತಾಗಿದೆ. ನಿರಂತರ ಸಂಶೋಧನೆ ಮತ್ತು ಅವಿಷ್ಕಾರಗಳಿಂದ ಕೆಲವು ಔಷಧಗಳನ್ನು ಕಂಡುಕೊಂಡಿದ್ದರೂ ಸಹ ಅವುಗಳು, ಬರೆದಿಟ್ಟ ಸಾವಿನ ದಿನಾಂಕವನ್ನು ಅಲ್ಪದಿನಗಳ ಕಾಲ ಮುಂದೂಡಬಲ್ಲ ಸಾಧನಗಳಾಗಿವೆ ಅಷ್ಟೇ.

ಸೋಜಿಗದ ಸಂಗತಿಯೆಂದರೆ, ಪಾಶ್ಚಿಮಾತ್ಯ ಜಗತ್ತು ಅಂಟಿಸಿದ ಈ ಕಾಯಿಲೆಗೆ ಬಲಿಯಾದದ್ದು ಮಾತ್ರ ತೃತೀಯ ಜಗತ್ತು. ಅಂದರೆ, ಏಷ್ಯಾ ಮತ್ತು ಆಫ್ರಿಕಾ ಖಂಡದ ಜನತೆ. ಆಫ್ರಿಕಾದ ಹಲವಾರು ದೇಶಗಳಲ್ಲಿ ಛಾಲ್ತಿಯಲ್ಲಿದ್ದ ಮುಕ್ತ ಲೈಂಗಿಕ ಚಟುವಟಿಗಳು ರೋಗದ ಕ್ಷಿಪ್ರ ಹರಡುವಿಕೆಗೆ ಪರೋಕ್ಷವಾಗಿ ಸಹಕಾರಿಯಾದವು. ವಿಶ್ವಾದ್ಯಂತ ಜನತೆ ಒಣಗಿ ಹೋದ ತರಗಲೆಗಳಂತೆ ಉದುರಿ ಬಿದ್ದರು. ಭಾರತವೂ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಕಾಯಿಲೆಗೆ ಮದ್ದು ಹುಡುಕುವುದಕ್ಕಿಂತ ಈ ಮಹಾಮಾರಿ ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂಬ ತೀರ್ಮಾನಕ್ಕೆ ಬಂದ ಆಧುನಿಕ ಜಗತ್ತು, ಇತ್ತೀಚೆಗೆ ಏಡ್ಸ್ ರೋಗ ನಿಯಂತ್ರಣದತ್ತ ಗಂಭೀರವಾಗಿ ಗಮನ ಹರಿಸಿದೆ. ಇಂತಹ ಒಂದು ಪ್ರಯತ್ನಕ್ಕೆ ಕೈ ಜೋಡಿಸಿದ್ದು, ಬಿಲ್-ಮಿಲಿಂಡ  ಗೇಟ್ಸ್ ಪೌಂಡೇಶನ್. ಮೈಕ್ರೋಸಾಪ್ಟ್ ಸಂಸ್ಥೆಯ ಸಂಸ್ಥಾಪಕ ಬಿಲ್ ಗೇಟ್ಸ್‌ನ ಮಾನವೀಯ ಮುಖದ ಒಂದು ಭಾಗವಾಗಿರುವ ಈ ಪೌಂಡೇಶನ್ ಪ್ರತಿವರ್ಷ ಏಡ್ಸ್ ನಿಯಂತ್ರಣಾಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ದಾನವಾಗಿ ವಿನಿಯೋಗಿಸುತ್ತಿದೆ. ಇತ್ತೀಚೆಗಿನ ವರ್ಷಗಳಲ್ಲಿ ಜಗತ್ ಪ್ರಸಿದ್ಧ ಹೂಡಿಕೆದಾರ ವಾರೆನ್ ಬಪೆಟ್ ತನ್ನ ಸಂಪಾದನೆಯ ಬಹು ಭಾಗವನ್ನು ಧಾರೆಯರೆದು ಈ ಸಂಸ್ಥೆಯ ಜೊತೆ ಕೈಜೋಡಿಸಿದ್ದಾನೆ.

ಮಿಲಿಂಡ ಫೌಂಡೇಶನ್ ನೀಡುತ್ತಿರುವ ಆರ್ಥಿಕ ಸಹಾಯದ ಸಿಂಹ ಪಾಲು ಭಾರತ ಉಪಖಂಡದ ದೇಶಗಳು ಮತ್ತು ಆಫ್ರಿಕಾದ ದೇಶಗಳಿಗೆ ಸಲ್ಲುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಮಲೇರಿಯ, ಕ್ಷಯ ರೋಗ ನಿಯಂತ್ರಣ ಮತ್ತು ಮಕ್ಕಳ ಆರೋಗ್ಯದ ಕಡೆ ಸಹ ಗಮನ ಹರಿಸಿ ಈ ಸಂಸ್ಥೆ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ದೆಹಲಿಯಲ್ಲಿ ಮಿಲಿಂಡ ಗೇಟ್ಸ್‌ ಪೌಂಡೇಶನ್ ಸಂಸ್ಥೆಯ ಕಚೇರಿಯಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೂಲಕ ಸ್ವಯಂ ಸೇವಾ ಸಂಘಟನೆಗಳನ್ನು ಬಳಸಿಕೊಂಡು ದೇಶಾದ್ಯಂತ ಈ ಸಂಸ್ಥೆ ಕಾರ್ಯನಿರತವಾಗಿದೆ. 1998 ರಿಂದ ಈ ಸಂಸ್ಥೆಯ ಗೌರವ ಸಂದರ್ಶಕ ಸಲಹೆಗಾರರಾಗಿ ಕೆಲಸ ಮಾಡಿ ಅನುಭವ ಇರುವ ನಾನು ಮತ್ತು ಇತರೆ ರಂಗದ ಅನೇಕ ಮಿತ್ರರು, ಯೋಜನೆಗಳು ಗುರಿ ತಪ್ಪಿದಾಗ ಸರಿ ದಾರಿಗೆ ತರುವಲ್ಲಿ ಶ್ರಮಿಸಿದ್ದೇವೆ. (ಇದಕ್ಕೆ ಕಾರಣರಾದವರು ಈಗ ಪ್ರಧಾನಿ ಕಚೇರಿಯ ಹಿರಿಯ 19 ಮಂದಿ ಅಧಿಕಾರಿಗಳಲ್ಲಿ ಒಬ್ಬರಾಗಿರುವ ಕರ್ನಾಟಕದ ಹಿರಿಯ ಐ.ಎ.ಎಸ್. ಅಧಿಕಾರಿ ಹಾಗೂ ತುಮಕೂರಿನ ನನ್ನ ಮಿತ್ರ ಎಲ್.ಕೆ. ಅತಿಕ್ ಅಹಮ್ಮದ್.)

ಭಾರತದಲ್ಲಿ ಏಡ್ಸ್ ಕಾಯಿಲೆ ಹರಡಲು ವೈಶ್ಯೆಯರು ಮತ್ತು ಲಾರಿ ಚಾಲಕರು ಎಂದು ಬಲವಾಗಿ ನಂಬಿದ್ದ ನಂಬಿಕೆಗಳನ್ನು ಅಲುಗಾಡಿಸಿ, ಅವರಿಗಿಂತ ಹೆಚ್ಚಾಗಿ ರೋಗ ಹರಡುತ್ತಿರುವುದು ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗುತ್ತಿರುವ ಕುಶಲರಲ್ಲದ ಕಾರ್ಮಿಕರು ಎಂಬುದನ್ನು ಅಧ್ಯಯನದಿಂದ ಸಾಬೀತು ಪಡಿಸಲಾಗಿದೆ. ಇದಕ್ಕೆ ಆರ್ಥಿಕ ಮತ್ತು ಸಾಮಾಜಿಕ ಕಾರಣಗಳಿರುವುದನ್ನೂ ಸಹ ಗುರುತಿಸಲಾಗಿದೆ.

ಈ ಅಧ್ಯಯನಕ್ಕೆ ಆರಿಸಿಕೊಂಡ ಸ್ಥಳವೆಂದರೆ, ಗುಜರಾತಿನ ಆಳಂಗ್ ಎಂಬ ಕಡಲ ತೀರದ ಹಡಗು ಒಡೆಯುವ ಬಂದರಿನ ಒಂದು ಪ್ರದೇಶ. ಈ ಪುಟ್ಟ ಊರಿನಲ್ಲಿ ಉತ್ತರಪ್ರದೇಶ ಮತ್ತು ಬಿಹಾರದಿಂದ ದಿನಗೂಲಿಗೆ ದುಡಿಯುವ 56 ಸಾವಿರ ಕಾರ್ಮಿಕರು ಹಡಗು ಒಡೆಯುವ ಕೆಲಸದಲ್ಲಿ ನಿರತರಾಗಿದ್ದರು (ಇದು 2000 ನೇ ಇಸವಿಯ ಅಂಕಿ ಅಂಶ, ಈಗ ಇದು ದುಪ್ಪಟ್ಟಾಗಿರಬಹುದು.) ಇವರೆಲ್ಲರೂ ತಮ್ಮ ಕುಟುಂಬಗಳನ್ನ ಸ್ವಂತ ಊರುಗಳಲ್ಲಿ ಬಿಟ್ಟು ಬಂದು ಕಾರ್ಮಿಕರ ಶೆಡ್ಡುಗಳಲ್ಲಿ ಪ್ರಾಣಿಗಳಂತೆ ವಾಸಿಸುತ್ತಿದ್ದಾರೆ. ಕಠಿಣ ದುಡಿಮೆ, ಏಕಾಂತ, ಇವುಗಳ ನಡುವೆ ನರಳುವ ಇವರುಗಳು ಬಲುಬೇಗ ಕುಡಿತ ಮತ್ತು ವೈಶ್ಯಾವಾಟಿಕೆಗೆ ಬಲಿಯಾಗುವ ನತದೃಷ್ಟರು. ಸಮೀಕ್ಷೆಯ ಪ್ರಕಾರ ಇಲ್ಲಿನ ಶೇಕಡ 64ರಷ್ಟು ಕಾರ್ಮಿಕರು ಏಡ್ಸ್ ರೋಗಕ್ಕೆ ತಮಗೆ ಅರಿವಿಲ್ಲದಂತೆ ತುತ್ತಾಗಿದ್ದರು.  ಅಲ್ಲದೇ ತಮ್ಮ ತಮ್ಮ ಊರಿಗಳಿಗೆ ಹೋದಾಗ ತಾವು ಅಂಟಿಸಿಕೊಂಡ ಈ ಮಹಾಮಾರಿಯನ್ನು ತಮ್ಮ ಪತ್ನಿಯರಿಗೆ ದಾಟಿಸಿಬಂದಿದ್ದರು. ಅವರುಗಳು ಸಹ ತಮಗೆ ಅರಿವಿಲ್ಲದೆ, ಎದೆಯ ಹಾಲಿನ ಮೂಲಕ ಮಕ್ಕಳಿಗೆ ಈ ಕಾಯಿಲೆಯನ್ನು ಬಳುವಳಿಯಾಗಿ ನೀಡಿದ್ದರು. ಇದು ಆಳಂಗ್‌ನ ಒಂದು ಕಥೆ ಮಾತ್ರವಲ್ಲ, ಎಲ್ಲಾ ನಗರಗಳ ದುಡಿಯುವ, ಗ್ರಾಮೀಣ ಪ್ರದೇಶದಿಂದ ಬಂದ ಕಾರ್ಮಿಕರ ಕಥನವೂ ಹೌದು. (ಈ ಕುರಿತು ಮದ್ದಿಲದ ಸಾವ ಕುರಿತು ಎಂಬ ನನ್ನ ಸುಧೀರ್ಘ ಲೇಖನ, ಆರು ತಿಂಗಳ ಹಿಂದೆ ಸಂವಾದ ಮಾಸಪತ್ರಿಕೆಯಲ್ಲಿ ಮತ್ತು ಆಯಾಮ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಆಸಕ್ತರು ಗಮನಿಸಬಹುದು.)

ಏಡ್ಸ್ ರೋಗ ನಿಯಂತ್ರಣ ಕುರಿತಂತೆ ಹಮ್ಮಿಕೊಂಡ ಕಾರ್ಯಕ್ರಮಗಳು ಭಾರತದಲ್ಲಿ ಹೆಮ್ಮೆ ಪಡುವಷ್ಟು ಸುಧಾರಣೆಯಾಗಿಲ್ಲ. ಹಣದಾಸೆಗೆ ಸೃಷ್ಟಿಯಾದ ಹಲವಾರು ಎನ್.ಜಿ.ಓ.ಗಳ ಅಸಮರ್ಪಕ ಕಾರ್ಯವೈಖರಿ ಇದಕ್ಕೆ ಮೂಲ ಕಾರಣ. ಜೊತೆಗೆ ಇದೊಂದು ಕಾಟಾಚಾರದ ಕೆಲಸ ಎಂಬ ಆಲಸ್ಯ ಬೆಳಸಿಕೊಂಡ ಸರ್ಕಾರಿ ಅಧಿಕಾರಿಗಳ ಸೋಮಾರಿತನ ಕೂಡ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಡಾಬದ ಬಳಿ ನಿಂತು ಅಲ್ಲಿಗೆ ಬರುವ ಲಾರಿ ಚಾಲಕರಿಗೆ ಉಚಿತ ಕಾಂಡೋಮ್ ಹಂಚುವುದು, ಅಥವಾ ವೈಶ್ಯಾವಾಟಿಕೆ ಪ್ರದೇಶಗಳಲ್ಲಿ ವೈಶ್ಯೆಯರಿಗೆ ಹಂಚುವುದರಿಂದ ಏಡ್ಸ್ ನಿಯಂತ್ರಣ ಸಾಧ್ಯ ಎಂಬ ಹುಂಬತನವನ್ನು ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಬೆಳಸಿಕೊಂಡಿವೆ. ಅದಕ್ಕೂ ಮೀರಿ, ಅವರ ಮನವೊಲಿಸುವುದು, ಅವರ ಆರ್ಥಿಕ ಬದುಕನ್ನು ಸುಧಾರಣೆ ಮಾಡುವುದು, ಕಾರ್ಮಿಕರ ವಲಸೆ ತಡೆಗಟ್ಟವುದು, ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿಗೆ ಒತ್ತುಕೊಡುವುದು, ಇವುಗಳು ಏಡ್ಸ್ ನಿಯಂತ್ರಣದಲ್ಲಿ ಪರಿಣಾಮಕಾರಿಯಾಗಬಲ್ಲವು ಎಂಬುದನ್ನು ಮನದಟ್ಟು ಮಾಡಿಕೊಡುವುದು ನಿಜಕ್ಕೂ ಸವಾಲಿನ ಕೆಲಸವಾಗಿದೆ.

ವರ್ಷದ ಹಿಂದೆ ಮಿಲಿಂಡ ಗೇಟ್ಸ್‌ ಸಂಸ್ಥೆ, ಕಾರ್ಯಕರ್ತರಿಗಾಗಿ ಮೂರು ದಿನಗಳ ತರಬೇತಿ ಶಿಬಿರವನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಿತ್ತು. ನಿಯಂತ್ರಣದ ಕಾರ್ಯತಂತ್ರವನ್ನು ಬದಲಿಸುವ ನಿಟ್ಟಿನಲ್ಲಿ ಈ ಶಿಬಿರವನ್ನು ಏರ್ಪಡಿಸಲಾಗಿತ್ತು. ಸಮಾಲೋಚಕನಾಗಿ ಪಾಲ್ಗೊಂಡಿದ್ದ ನಾನು ಮತ್ತು ಗೆಳೆಯರು ಸಲಹೆ ನೀಡುವ ಮೊದಲು ಕಾರ್ಯಕರ್ತರ ಸಮಸ್ಯೆಯನ್ನು ತಿಳಿಯೋಣವೆಂದು ಕಾರ್ಯಕರ್ತರ ಅಭಿಪ್ರಾಯ ಮಂಡನೆಗೆ ಅವಕಾಶ ಮಾಡಿಕೊಟ್ಟೆವು.

ಪಾತಿಮಾ ಎಂಬ 55 ವರ್ಷದ ಮುಸ್ಲಿಂ ವಿಧವೆಯೊಬ್ಬಳು, ದಿನಕ್ಕೆ 50ರೂ ವೇತನದ ಆಧಾರದ ಮೇಲೆ ಸ್ಥಳಿಯ ಸ್ವಯಂ ಸೇವಾಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಳು. ಅವಳ ಕೆಲಸ ಪ್ರತಿ ದಿನ ಕನಿಷ್ಟ ಹತ್ತು ಮಂದಿ ವೇಶ್ಯೆಯರನ್ನು ಗುರುತಿಸಿ ಸಂಸ್ಥೆಗೆ ಕರೆತರಬೇಕು. ಸಂಸ್ಥೆ ಅವರಿಗೆ ಏಡ್ಸ್ ಬಗ್ಗೆ ತಿಳುವಳಿಕೆ ನೀಡಿ ಕಾಂಡೋಮ್ ಉಪಯೋಗಿಸುವಂತೆ ಮನವೊಲಿಸುತಿತ್ತು. ಮಾತನಾಡಲು ಎದ್ದು ನಿಂತ ಆಕೆ “ಸಾಹೇಬ್ರ, ರಂಡೀರು (ವೇಶ್ಯೆಯರು) ಕರ್ಕೋಬರ್ರಿ, ಕರ್ಕೋಬರ್ರಿ ಅಂತಾರ, ಯಾವ ಹೆಣ್ಮಗಳು ನಾನು ರಂಡಿ ಅಂತ ಮುಂದ ಬತ್ತಾಳ ನೀವೇ ಹೇಳ್ರಲಾ? ಹಾಂಗ ನೋಡಿದ್ರೆ ನಾವು ಕೂಡ ರಂಡೀರೆ ಇದ್ದೀವಿ ಸಾಹೇಬ್ರ. ನಮ್ಮ ಗಂಡಂದಿರು ಸರಿ ಇದ್ರ ನಮಗೆ ಈ ಪಾಡು ಯಾಕ್ ಬತ್ತಿತು ಹೇಳ್ರಲಾ,” ಎನ್ನುತ್ತಾ ತನ್ನ ಸೆರಗಿನಿಂದ ಮುಖಮುಚ್ಚಿಕೊಂಡು ಬಿಕ್ಕಳಿಸಿ ಅತ್ತುಬಿಟ್ಟಳು. ತಡೆಹಿಡಿದುಕೊಂಡಿದ್ದ ಆಕೆಯ ಸಹನೆಯೆಲ್ಲಾ ಆ ಕ್ಷಣದಲ್ಲಿ ಕಟ್ಟೆಯೊಡೆದು ಮಾತುಗಳ ರೂಪದಲ್ಲಿ ಹೊರಬಿದ್ದಿತು. ಅವಳ ನೋವು ಮತ್ತು ಆಕ್ರೋಶದಲ್ಲಿ ನಾವು ಈವರೆಗೆ ಕಾಣಲಾಗದ ಬಡತನದ ಕರಾಳ ಮುಖವೊಂದು ಅಲ್ಲಿ ಅನಾವರಣಗೊಂಡಿತ್ತು.

ಹುಬ್ಬಳಿ ಧಾರವಾಡ ಅವಳಿ ನಗರಗಳಲ್ಲಿ ಮುಸ್ಲಿಂ ಮಹಿಳೆಯರೂ ಸೇರಿದಂತೆ 30 ಸಾವಿರಕ್ಕು ಹೆಚ್ಚು ಬಡ ಮಹಿಳೆಯರು ತಮ್ಮ ಕುಟುಂಬದ ರಥ ಎಳೆಯಬೇಕಾದ ಹೊಣೆ ಹೊತ್ತಿಕೊಂಡು ಉಳ್ಳವರ ಮನೆಯಲ್ಲಿ ಮನೆಗೆಲಸ ಮಾಡುತ್ತಾರೆ. ಸುಮಾರು ಎರಡು ಸಾವಿರ ಮಹಿಳೆಯರು ಖಾಸಾಗಿ ಹೋಟೆಲ್‌‍ಗಳಲ್ಲಿ ಮತ್ತು ಜೋಳದ ರೊಟ್ಟಿ ಮಾರುವ ಅಂಗಡಿಗಳಲ್ಲಿ ರೊಟ್ಟಿ ಬಡಿಯುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಇನ್ನಿತರೆ ಮೂರು ನಾಲ್ಕು ಸಾವಿರದಷ್ಟು ಹೆಂಗಸರು ಧಾರವಾಡ ಮತ್ತು ಹುಬ್ಬಳ್ಳಿ ಮಾರುಕಟ್ಟೆ ಪ್ರದೇಶದಲ್ಲಿ ಕಾಯಿಪಲ್ಲೆ ಮಾರುತ್ತಾರೆ. ಮನೆಗೆಲಸ ಮಾಡುತ್ತಿರುವ ಹೆಣ್ಣುಮಕ್ಕಳಲ್ಲಿ ಹಲವರು ಲೈಂಗಿಕ ಶೋಷಣೆಗೆ ಒಳಗಾಗುತ್ತಿದ್ದು, ಮಾನ ಮರ್ಯಾದೆ ದೃಷ್ಟಿಯಿಂದ ಇಲ್ಲವೇ ಅನೈತಿಕ ಸಂಬಂಧಕ್ಕೆ ಸಹಕರಿಸದಿದ್ದರೆ, ಕೆಲಸ ಕಳೆದುಕೊಳ್ಳುವ ಭಯದಿಂದ ತಾನು ಹೆತ್ತ ಮಕ್ಕಳ ತುತ್ತಿನ ಚೀಲ ತುಂಬಿಸಬೇಕಾದ ತುರ್ತು ಅಗತ್ಯದಿಂದ ಪುರುಷ ಲೋಕದ ಕ್ರೌರ್ಯಕ್ಕೆ ತಣ್ಣಗೆ ಬಲಿಯಾಗುತ್ತಿದ್ದಾರೆ. ಇದು ಪಾತಿಮಾ ಬಿಚ್ಚಿಟ್ಟ ವಾಸ್ತವದ ಬದುಕಿನ ಸತ್ಯ. ಇಂತಹ ಶೋಷಣೆಗೆ ಒಡ್ಡಿಕೊಳ್ಳಲು ಇಷ್ಟವಾಗದ ಮಹಿಳೆಯರು ಉರಿವ ಬಿಸಿಲಿನಲ್ಲಿ, ಸುರಿವ ಮಳೆಯಲ್ಲಿ ಸೊಪ್ಪು ತರಕಾರಿ ಮಾರುತ್ತಾ ತಮ್ಮ ಕಾಯವನ್ನು ಕರ್ಪೂರದಂತೆ ಕರಗಿಸುತ್ತಿದ್ದಾರೆ. ಇದು ಕೇವಲ ಹುಬ್ಬಳ್ಳಿ ಧಾರವಾಡದ ಕಥೆಯಲ್ಲ, ಈ ದೇಶದ ಯಾವುದೇ ನಗರದಲ್ಲಿ ನಡೆಯುತ್ತಿರುವ ಕಥೆ. ಈ ದುರಂತ ನಮ್ಮ ನಾಗರೀಕ ಜಗತ್ತು ತಲೆತಗ್ಗಿಸಬೇಕಾದ ಸಂಗತಿ. (ಕಳೆದ ವಾರ ಧಾರವಾಡ ಕರ್ನಾಟಕ ವಿ.ವಿ.ಯ ಪ್ರಾಧ್ಯಾಪಕನೊಬ್ಬ ಮನೆ ಗೆಲಸ ಮಾಡುತಿದ್ದ ವಿಧವೆ ಹೆಣ್ಣು ಮಗಳೊಬ್ಬಳನ್ನು ಒಂಬತ್ತು ತಿಂಗಳ ಕಾಲ ಪ್ರತ್ಯೇಕ ಮನೆ ಮಾಡಿ ಇರಿಸಿಕೊಂಡು ಶೋಷಿಸಿದ ಘಟನೆ ಬಹಿರಂಗಗೊಂಡು ಈಗ ಆತನ ವಿರುದ್ಧ  ಮೊಕದ್ದಮೆ ದಾಖಲಾಗಿದೆ.)

ಅಮಾಯಕ ಮಹಿಳೆಯರನ್ನು ಇಂತಹ ನರಕ ಸದೃಶ್ಯ ಬದುಕಿಗೆ ದೂಡಿದ, ದೂಡುತ್ತಿರುವ ಇವರ ಪತಿ ಮಹಾಶಯರ ಕಥನ ಒಂದು ರೀತಿಯಲ್ಲಿ ಶಹಜಾದೆ ಹೇಳುತ್ತಿದ್ದ ಅರೇಬಿಯನ್ ನೈಟ್ಸ್ ಕಥೆಯಂತಹದ್ದು. ಅದಕ್ಕೆ ಆದಿ-ಅಂತ್ಯವೆಂಬುದೇ ಇಲ್ಲ. 10 ವರ್ಷದ ಹಿಂದೆ ಇದೇ ಅವಳಿ ನಗರಕ್ಕೆ ಹೊಂದಿಕೊಂಡಂತೆ ಇರುವ 70ಕ್ಕೂ ಹೆಚ್ಚು ಹಳ್ಳಿಗಳ ಕಾರ್ಮಿಕರ ದಿನಗೂಲಿ ಕೇವಲ 35 ರೂಪಾಯಿ ಇತ್ತು. ಈ ಅಲ್ಪ ಹಣದಲ್ಲಿ ಅವರು ನೆಮ್ಮದಿಯ ಜೀವನ ಕೂಡ ಸಾಗಿಸುತಿದ್ದರು. ಅವರಿಗೆ ಬೇರೆ ಯಾವುದೇ ದುಶ್ಚಟಗಳು ಇರಲಿಲ್ಲ. ಮೂರು ರೂಪಾಯಿಗೆ ಒಂದು ಕೆ.ಜಿ. ರಾಗಿ, ಏಳು ರೂಪಾಯಿಗೆ ಜೋಳ, ಎಂಟರಿಂದ ಒಂಬತ್ತು ರೂಪಾಯಿಗೆ ಅಕ್ಕಿ, ಐದರಿಂದ ಹತ್ತು ರೂಪಾಯಿ ಒಳಗೆ ಕೈಚೀಲಸದ ತುಂಬಾ ಕಾಯಿ ಪಲ್ಲೆ ದೊರೆಯುತಿತ್ತು. ಇವರು ಕೂಲಿಗೆ ಬರುವಾಗ ಮನೆಯಿಂದ ತಂದ ರೊಟ್ಟಿ, ಪಲ್ಯ, ಬೇಸರವಾದಾಗ ಅಗಿಯಲು ಎಲೆ ಅಡಿಕೆ ತರುತ್ತಿದ್ದರು. ಇವಿಷ್ಟೇ ಅವರ ಹವ್ಯಾಸಗಳಾಗಿದ್ದವು. ದುಡಿದು ಸಂಪಾದಿಸಿದ ಹಣ ಅವರ  ಕುಟುಂಬದ ನಿರ್ವಹಣೆಗೆ ಮತ್ತು ಸರಳ ಜೀವನಕ್ಕೆ ಸಾಕಾಗುತ್ತಿತ್ತು.

ಈಗಿನ ಕೂಲಿದರ ಈ ರೀತಿ ಇದೆ.  ಕೃಷಿ ಚಟುವಟಿಕೆಗೆ ಹಳ್ಳಿಗಳಲ್ಲಿ ನೂರಾಐವತ್ತು ರೂ ಇದ್ದರೆ, ನಗರಗಳಲ್ಲಿ ಮಣ್ಣು ಅಗೆತ, ಕಟ್ಟಡ ನಿರ್ಮಾಣ ಕೆಲಸಕ್ಕೆ ಇನ್ನೂರು ರೂಪಾಯಿ ಇದೆ. ಅರೆ ಕುಶಲ ಕೆಲಸಗಳಾದ ನೆಲಕ್ಕೆ ಟೈಲ್ಸ್ ಹಾಕುವುದು, ನಳ ಜೋಡಿಸುವುದು, ಕಬ್ಬಿಣ ಕಟ್ಟುವುದು ಇವುಗಳ ಸಹಾಯಕರ ಕೆಲಸಕ್ಕೆ ಇನ್ನೂರ ಐವತ್ತು ಕೂಲಿ ಸಿಗುತ್ತಿದೆ. ಸರಾಸರಿ ಒಬ್ಬನ ಕೂಲಿ ಇನ್ನೂರು ರೂ. ಎಂದು ಲೆಕ್ಕ ಹಾಕಿದರೂ ತಿಂಗಳಲ್ಲಿ ನಾಲ್ಕು ವಾರದ ರಜೆ ಮತ್ತು ಮದುವೆ, ಹಬ್ಬ ಇತ್ಯಾದಿಗೆ ಒಂದು ದಿನ ರಜೆ ಇವುಗಳನ್ನು ಕಳೆದು ಉಳಿದ 25 ದಿನಗಳಿಗೆ ಒಬ್ಬ ಕಾರ್ಮಿಕನ ಸಂಪಾದನೆ 5 ಸಾವಿರ ರೂಪಾಯಿ.

ಇವತ್ತಿನ ವ್ಯಕ್ತಿಯೊಬ್ಬನ 5 ಸಾವಿರ ರೂ.ಗಳ ಆದಾಯದಲ್ಲಿ ಅವನ ವೈಯಕ್ತಿಕ ಖರ್ಚಿನ ವಿವರ ಹೀಗಿದೆ. ಪ್ರತಿ ದಿನ ನಗರಕ್ಕೆ ಬಂದು ಹೋಗವ ಬಸ್ ಪ್ರಯಾಣದ ವೆಚ್ಚ-20 ರೂ., ಹತ್ತು ಗುಟ್ಕಾ ಪಾಕೇಟ್ ಗಳಿಗೆ 20 ರೂ., ಎರಡು ಚಹಾ, ಮತ್ತು ಮಿರ್ಚಿಗೆ 20 ರೂ., ಮಧ್ಯಾಹ್ನದ ಲಘು ಊಟ ಅಥವಾ ಉಪಹಾರಕ್ಕೆ 15 ರೂ., ರಾತ್ರಿಯ ಕುಡಿತಕ್ಕೆ ಕಡಿಮೆ ದರದ ವಿಸ್ಕಿಗೆ (180 ಎಂ.ಎಲ್.) 50 ರೂ., ವಿಸ್ಕಿ ಜೊತೆ ತಿನ್ನುವ ಕುರುಕು ತಿಂಡಿಗೆ 10 ರೂ., ಆನಂತರ ಒಳಗೆ ಹೋದ ಪರಮಾತ್ಮ ಮಾತಾಡು ಕಂದಾ, ಮಾತಾಡು ಕಂದಾ ಎಂದು ರುದ್ರ ನರ್ತನ ಮಾಡಿ ಎದೆಗೆ ಒದ್ದ ಪರಿಣಾಮ, ಅವನ ಪರಿಚಿತರಿಗೆಲ್ಲಾ ಮಲಗಿರಲಿ ಎದ್ದಿರಲಿ ಮೊಬೈಲ್‌ನಲ್ಲಿ ಕರೆ ಮಾಡಿ ಮಾತನಾಡಿದ್ದಕ್ಕೆ ಸರಾಸರಿ ಕರೆನ್ಸಿ ವೆಚ್ಚ 20 ರೂಪಾಯಿ. ಇವುಗಳ ಒಟ್ಟು ಮೊತ್ತ ದಿನವೊಂದಕ್ಕೆ 145 ರೂಪಾಯಿ, ಅಂದರೆ, 30 ದಿನಗಳಿಗೆ 4ಸಾವಿರದ 350 ರೂಪಾಯಿ. ಉಳಿದ 650 ರೂಪಾಯಿಗಳಲ್ಲಿ ವಾರಕ್ಕೆ ಒಂದು ಸಿನಿಮಾ ಎಂದರೂ ನಾಲ್ಕು ವಾರಕ್ಕೆ 400 ರೂ. ಹೀಗೆ ಅವನ ಒಟ್ಟು ಸಂಪಾದನೆಯಲ್ಲಿ ಖರ್ಚು ಕಳೆದು ಉಳಿಯ ಬಹುದಾದ ಹಣ ಕೇವಲ 250 ರೂಪಾಯಿ. ಈ ಹಣದಲ್ಲಿ ಕುಟುಂಬ ಹೇಗೆ ನಡೆಯಬೇಕು, ನೀವೆ ನಿರ್ಧರಿಸಿ.

ನಗರ ಮತ್ತು ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿಯಾಗಿದೆ, ದುಡಿಯುವ ಕೈಗಳಿಗೆ ಕೈ ತುಂಬಾ ಕೆಲಸ ಮತ್ತು ಸಂಬಳ ಸಿಕ್ಕಿದೆ ಎಂದು ಅಭಿವೃದ್ಧಿಯ ಬಗ್ಗೆ ಬೊಗಳೆ ಬಿಡುವವರ ಮಾತಿನ ಹಿಂದೆ ಇರುವ ಕಹಿ ಸತ್ಯ ಇದು. ಆಧುನಿಕ ಜಗತ್ತಿನ ಅಭಿವೃದ್ಧಿಯ ಮಂತ್ರವೆಂದರೆ, ಬಲಗೈಯಲ್ಲಿ ಹತ್ತು ರೂಪಾಯಿ ನೀಡಿ, ಎಡಗೈಯಲ್ಲಿ ಒಂಬತ್ತು ರೂಪಾಯಿ ಕಿತ್ತು ಕೊಳ್ಳುವುದೇ ಆಗಿದೆ. ಭಾರತ ಮತ್ತು ಜಗತ್ತಿನ ಹಿರಿಯಣ್ಣ ಅಮೇರಿಕಾ ಸೇರಿದಂತೆ ಹಲವು ರಾಷ್ಟ್ರಗಳು ಆರ್ಥಿಕ ಬೆಳವಣಿಗೆಯಲ್ಲಿ ಏಕೆ ಮುಗ್ಗರಿಸುತ್ತಿವೆ, ಬಡತನ ಏಕೆ ನಿರ್ಮೂಲನವಾಗುತ್ತಿಲ್ಲ ಎಂಬ ಪ್ರಶ್ನೆಗೆ ನಾವು ರೂಪಿಸಿರುವ ಅಭಿವೃದ್ಧಿಯ ಕ್ರಮ ಎಂತಹದ್ದು ಎಂಬುದರ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಈ ರಾಜ್ಯದ ಅಬಕಾರಿ ಸಚಿವನೊಬ್ಬ ಅಬಕಾರಿ ಆದಾಯ 6 ಸಾವಿರ ಕೋಟಿಯಿಂದ 9 ಸಾವಿರ ಕೋಟಿಗೆ ಹೆಚ್ಚಿದೆ ಎಂದು ಹೆಮ್ಮೆಯಿಂದ ಹೇಳುಕೊಳ್ಳವದು ನಾಚಿಕೆಗೇಡಿನ ಸಂಗತಿ ಎಂದು ಯಾರಿಗೂ ಅನಿಸುತ್ತಿಲ್ಲ. 9 ಸಾವಿರ ಕೋಟಿ ಆದಾಯದಲ್ಲಿ ಈ ರಾಜ್ಯದ ಎಷ್ಟು ಹೆಣ್ಣು  ಮಕ್ಕಳ ಕಣ್ಣೀರಿನ ಕಥೆ ಅಡಗಿದೆ ಎಂಬುದು ನಮ್ಮನ್ನಾಳುವ ಮೂರ್ಖರಿಗೆ ಗೊತ್ತಿದೆಯಾ?

ಮನು ಕುಲವನ್ನು ಉದ್ಧಾರ ಮಾಡಲಾಗದ, ಈ ನೆಲದ ಮೇಲಿನ ಮನುಷ್ಯನ ಬದುಕಿಗೆ ಘನತೆ ತರಲಾದ ಯಾವುದೇ ಆರ್ಥಿಕ ಸಿದ್ಧಾಂತಗಳಿಗೆ, ಚಿಂತನೆಗಳಿಗೆ, ವೇದ, ಪುರಾಣ, ಉಪನ್ಯಾಸಗಳಿಗೆ ಬೆಂಕಿ ಹಚ್ಚಿ ನಾವೀಗ ಮನುಷ್ಯರಾಗಿ ಬದುಕುವ ಚಿಂತನೆಯ ಮಾದರಿಯನ್ನು ರೂಪಿಸಕೊಳ್ಳಬೇಕಾಗಿದೆ.

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – ಅಂತಿಮ ಅಧ್ಯಾಯ)


– ಡಾ.ಎನ್.ಜಗದೀಶ್ ಕೊಪ್ಪ


 

[ಸ್ನೇಹಿತರೆ, ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಆಂಗ್ಲ ದಂಪತಿಗಳ ಮಗನಾಗಿ ಹುಟ್ಟಿ, ಇಲ್ಲಿಯೇ ತನ್ನ ಜೀವನದ ಬಹುಪಾಲು ಸಮಯವನ್ನು ಕಳೆದು, ವಿಶ್ವಮಾನವನಾಗಿ ಬೆಳೆದ  ಜಿಮ್ ಕಾರ್ಬೆಟ್‌ ಎಂಬ ಅಸಾಮಾನ್ಯ ಮನುಷ್ಯನ ಕುರಿತು ಜಗದೀಶ್ ಕೊಪ್ಪರವರು ಕಳೆದ 29 ವಾರಗಳಿಂದ ನಮಗೆ ಬಹಳ ಆಪ್ತವಾಗಿ ಮತ್ತು ವಸ್ತುನಿಷ್ಟವಾಗಿ ಹೇಳುತ್ತ ಬಂದ ಲೇಖನ ಸರಣಿಯ ಕೊನೆಯ ಕಂತು ಇದು. ಕನ್ನಡದಲ್ಲಿ ಜಿಮ್ ಕಾರ್ಬೆಟ್ ಬಗ್ಗೆ ಇಷ್ಟು ವಿಷದವಾಗಿ  ಬರೆದಿರುವ ಇನ್ನೊಂದು ಕೃತಿ ಇಲ್ಲ. ಹಾಗಾಗಿಯೇ ಇದು ಸಹಜವಾಗಿ ವಿಶಿಷ್ಟವಾದದ್ದು. ಆದಷ್ಟು ಬೇಗ ಇದು ಪುಸ್ತಕವಾಗಿ “ವರ್ತಮಾನ.ಕಾಮ್” ಮತ್ತು ಕನ್ನಡದ ಅಂತರ್ಜಾಲದ ಹೊರಗಿರುವ ಕನ್ನಡ ಓದುಗರಿಗೂ ತಲುಪಲಿ ಎಂದು ಬಯಸುತ್ತೇನೆ. ಇದನ್ನು ವರ್ತಮಾನ.ಕಾಮ್‌ನಲ್ಲಿ ಸರಣಿ ರೂಪದಲ್ಲಿ ಬರೆದಿದ್ದಕ್ಕೆ ಮತ್ತು ವರ್ತಮಾನ.ಕಾಮ್‌ನ ಆರಂಭದ ದಿನಗಳಿಂದಲೂ ನಮ್ಮ ಜೊತೆಗಿದ್ದು ನಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತ ಇರುವ ಶ್ರೀ ಕೊಪ್ಪರವರಿಗೆ ಧನ್ಯವಾದಗಳು ಮತ್ತು ಕೃತಜ್ಞತೆಗಳನ್ನು ಈ ಮೂಲಕ ಸಲ್ಲಿಸಬಯಸುತ್ತೇನೆ. -ರವಿ ಕೃಷ್ಣಾರೆಡ್ಡಿ]

ಕೀನ್ಯಾದ ನೈರಿ ಪಟ್ಟಣದ ಸಮೀಪ ಪರ್ವತದ ತಪ್ಪಲಿನಲ್ಲಿ ಇದ್ದ ಔಟ್ ಸ್ಪಾನ್ ಹೆಸರಿನ ಹೊಟೇಲ್‌ನ ವಿಶೇಷ ಕಾಟೇಜ್‌ನಲ್ಲಿ ಉಳಿದುಕೊಂಡ ಬಳಿಕ, ಕಾರ್ಬೆಟ್ ಮತ್ತು ಸಹೋದರಿ ಮ್ಯಾಗಿಯ ಅಲೆದಾಟದ ಬದುಕಿಗೆ ಅಂತಿಮ ತೆರೆಬಿದ್ದಿತು. ಸುಂದರ ಹೂದೋಟ ಮತ್ತು ಹಿಮ ಪರ್ವತದ ಹಿನ್ನಲೆಯಿದ್ದ ಈ ಹೋಟೆಲ್ ಇಬ್ಬರ ಮನಸಿಗೆ ಹಿಡಿಸಿತು. ನೈನಿತಾಲ್ ಗಿರಿಧಾಮದ ವಾತಾವರಣವನ್ನು ಅವರು ಅಲ್ಲಿ ಕಂಡುಕೊಂಡರು.

ಭಾರತದಿಂದ ಕೀನ್ಯಾಕ್ಕೆ ಬಂದ ಮೇಲೆ ವೃದ್ಧಾಪ್ಯದ ವಯಸ್ಸಿನ ಕಾರಣದಿಂದ ಕಾರ್ಬೆಟ್ ಆರೋಗ್ಯದಲ್ಲಿ ಏರು ಪೇರು ಕಾಣತೊಡಗಿತು. ಮಲೇರಿಯಾ ರೋಗದಿಂದ ಚೇತರಿಸಿಕೊಂಡ ನಂತರವೂ ಕಾರ್ಬೆಟ್‌ನ ಎದೆಯಲ್ಲಿ ಕಫ ಕಟ್ಟಿಕೊಂಡು ತೊಂದರೆ ಕೊಡತೊಡಗಿತು. ಆತನ ನಡಿಗೆಯಲ್ಲಿ ಮೊದಲಿನ ವೇಗ ಇರಲಿಲ್ಲ. ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದ. ಬೇಸರವಾದಾಗ ಅರಣ್ಯಕ್ಕೆ ಹೋಗಿ ಬಗೆ ಬಗೆಯ ಪ್ರಾಣಿ, ಪಕ್ಷಿಗಳ ಛಾಯಾಚಿತ್ರ ತೆಗೆಯುವ ಹವ್ಯಾಸ ರೂಢಿಸಿಕೊಂಡಿದ್ದ. ಉಳಿದ ವೇಳೆ ಅಕ್ಕ ತಮ್ಮ ಇಬ್ಬರೂ ತಮ್ಮ ಕಾಟೇಜ್ ವರಾಂಡದಲ್ಲಿ ಕೂರುತ್ತಿದ್ದರು, ಇಲ್ಲವೇ ಸಣ್ಣ ವಾಕ್ ಮಾಡುತ್ತಿದ್ದರು. ವಾರಾಂತ್ಯದಲ್ಲಿ  ಕಾರ್ಬೆಟ್ ಒಬ್ಬನೇ ಕೀನ್ಯಾದ ಉತ್ತರ ಭಾಗದಲ್ಲಿದ್ದ ಕಡಲತೀರಕ್ಕೆ ಹೋಗಿ ಅಲ್ಲಿ ಮಲಿಂಡಿ ಎಂಬ ನಗರದ ಹೊಟೇಲ್‌ನಲ್ಲಿ ಉಳಿದುಕೊಂಡು ಮೀನು ಶಿಕಾರಿ ಮಾಡುತ್ತಿದ್ದ. ಇಷ್ಟೆಲ್ಲಾ ಹವ್ಯಾಸಗಳ ನಡುವೆ ಅವನಿಗೆ ಭಾರತದಲ್ಲಿದ್ದಂತೆ ಸಾಮಾಜಿಕ ಬದುಕನ್ನು ಅಲ್ಲಿ ಕಟ್ಟಿಕೊಳ್ಳಲು ಸಾಧ್ಯವಾಗಲಿಲ್ಲ. ಇದೊಂದು ಕೊರತೆ ಸದಾ ಕಾರ್ಬೆಟ್‌ನನ್ನು ಕಾಡುತಿತ್ತು.

ಕೀನ್ಯಾದ ಅರಣ್ಯಕ್ಕೆ ಭೇಟಿ ನೀಡಲು ವಿಶ್ವಾದ್ಯಂತ ಪ್ರವಾಸಿಗರು ಬರುತ್ತಿದ್ದದನ್ನು ಗಮನಿಸಿದ ಜಿಮ್ ಕಾರ್ಬೆಟ್ ತನ್ನ ಗೆಳೆಯ ಇಬ್ಬೊಟ್‌ಸನ್  ಹಾಗೂ ಮತ್ತೊಬ್ಬ ಗೆಳೆಯನ ಜೊತೆಗೂಡಿ ಅರಣ್ಯ ಸಫಾರಿಗಾಗಿ ಪ್ರವಾಸಿ ಸಂಸ್ಥೆಯನ್ನು 1948 ರಲ್ಲಿ ಹುಟ್ಟು ಹಾಕಿದ. ಪ್ರವಾಸಿಗರು ನೇರವಾಗಿ ಅರಣ್ಯಕ್ಕೆ ನುಸುಳಿ ಅಲ್ಲಿನ ಪ್ರಾಣಿಗಳ ಸಹಜ ಜೀವನಕ್ಕೆ ತೊಂದರೆ ಕೊಡುವುದರ ಜೊತೆಗೆ ಕೆಲವೊಮ್ಮೆ ತಾವೇ ಅಪಾಯದ ಸ್ಥಿತಿಗೆ ಸಿಲುಕಿಕೊಳ್ಳತ್ತಿದ್ದರು. ಇದನ್ನು ತಪ್ಪಿಸುವ ಉದ್ದೇಶದಿಂದ ಆರಂಭಿಸಿದ ಪ್ರವಾಸಿ ಸಂಸ್ಥೆ “ಸಫಾರಿ ಲ್ಯಾಂಡ್” ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿತು. ಇದರಿಂದ ಬಂದ ಲಾಭದಿಂದ ಕಾರ್ಬೆಟ್ ಒಂದು ಐಷಾರಾಮಿ ಕಾರು ಖರೀದಿಸಿದ. ಅವನ ಓಡಾಟದ ಖರ್ಚಿಗೆ ತಾನು ಬರೆದಿದ್ದ ಕೃತಿಗಳಿಂದ ಆ ಕಾಲಕ್ಕೆ ಲಕ್ಷ ರೂಪಾಯಿಗೂ ಮೀರಿ ಬರುತ್ತಿದ್ದ ಲೇಖಕನ ಸಂಭಾವನೆ ಹಣವನ್ನು ವಿನಿಯೋಗಿಸುತ್ತಿದ್ದ.

1950 ರ ವೇಳೆಗೆ ಕೀನ್ಯಾದಲ್ಲೂ ಕೂಡ ಬ್ರಿಟಿಷರಿಂದ ಬಿಡುಗಡೆಗೊಳ್ಳುವ ನಿಟ್ಟಿನಲ್ಲಿ ಸ್ಥಳೀಯ ಬುಡಕಟ್ಟು ಜನಾಂಗದಿಂದ ಹಿಂಸಾತ್ಮಕ ಹೋರಾಟಗಳು ಆರಂಭಗೊಂಡವು. ಕೀನ್ಯಾದಲ್ಲಿ ಇದ್ದ ಯುರೋಪಿಯನ್ನರ ಕೃಷಿ ತೋಟಗಳು, ಕಾಫಿ, ಚಹಾ ಎಸ್ಟೇಟ್‌ಗಳು ದಾಳಿಗೆ ತುತ್ತಾದವು. ಬ್ರಿಟಿಷರ ಬಳಿ ಕೆಲಸ ಮಾಡುತ್ತಿದ್ದ ಆಫ್ರಿಕನ್ನರು ಹಿಂಸೆಯ ಹೋರಾಟದಲ್ಲಿ ಕೊಲ್ಲಲ್ಪಟ್ಟರು.

ಕಾರ್ಬೆಟ್ ಮತ್ತು ಮ್ಯಾಗಿ ಇವರ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಯಿತು. ಎರಡೂ ವೃದ್ಧ ಜೀವಗಳು ಸಾವಿನ ಭಯದಿಂದ ತತ್ತರಿಸಿ ಹೋದವು. ಕಿಕಿಯೂ ಎಂಬ ಬುಡಕಟ್ಟು ಜನಾಂಗ ಪ್ರಾರಂಭಿಸಿದ ಈ ಹೋರಾಟಕ್ಕೆ ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯ ಪ್ರೇರಣೆಯಾಗಿತ್ತು. ಕಾರ್ಬೆಟ್ ಮತ್ತು ಮ್ಯಾಗಿ ಇಬ್ಬರೂ ಸ್ವಲ್ಪ ಕಾಲ ಕೀನ್ಯಾ ತೊರೆದು ಇಂಗ್ಲೆಂಡ್‌ಗೆ ಬಂದು ವಾಸವಾಗಿದ್ದರು. ಭಾರತದಲ್ಲಿ ಪರಿಚಯವಾಗಿ ಇಂಗ್ಲೆಂಡ್‌ನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದ ಅವನ ಅನೇಕ ಅಧಿಕಾರಿ ಮಿತ್ರರು ನೆರವಾದರು.

1951 ರಿಂದ 1953ರ ನಡುವೆ ಕೀನ್ಯಾದಲ್ಲಿ ಹೋರಾಟ ತೀವ್ರವಾದಾಗಲೆಲ್ಲಾ ಇಂಗ್ಲೆಂಡ್‌ಗೆ ಬಂದು ಅಕ್ಕ ತಮ್ಮ ವಾಸಿಸುತ್ತಿದ್ದರು. ಈ ನಡುವೆ ಕಾರ್ಬೆಟ್‌ಗೆ ಭಾರತದ ನೆನಪು ಕಾಡತೊಡಗಿತು. ಅವನ ಸೇವಕರು, ಅವನ ಹಳ್ಳಿಯ ಜನ, ಕುಮಾವನ್ ಪ್ರಾಂತ್ಯದ ಘರ್ವಾಲ್ ಬುಡಕಟ್ಟು ಜನಾಂಗದ ಅನೇಕ ಹಳ್ಳಿಯ ರೈತರು ಅವನ ಸ್ಮೃತಿಯಲ್ಲಿ ಬರತೊಡಗಿದರು. ಇದರ ಪ್ರಭಾವದಿಂದ ಅವನು 1952 ರಲ್ಲಿ “ಮೈ ಇಂಡಿಯ” ಎಂಬ ಕೃತಿಯನ್ನು ಬರೆಯಲು ಸಾಧ್ಯವಾಯಿತು. ಇದನ್ನೂ ಕೂಡ ಆಕ್ಸಫರ್ಡ್ ಪ್ರಕಾಶನ ಸಂಸ್ಥೆ ಪ್ರಕಟಿಸಿತು. ಈ ಕೃತಿಯಲ್ಲಿ ಜಿಮ್ ಕಾರ್ಬೆಟ್ ಭಾರತದ ಬಗ್ಗೆ, ಇಲ್ಲಿನ ಜನರ ಔದಾರ್ಯದ ಬಗ್ಗೆ, ಶ್ರೀಮಂತ ಜಮೀನ್ದಾರರು, ಮತ್ತು ಹಣದ ಲೇವಾದೇವಿದಾರರ ಕೌರ್ಯದ ಬಗ್ಗೆ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನೆ. ಹಳ್ಳಿಗಳ ಸಾಮಾನ್ಯ ಜನ ಕಾರ್ಬೆಟ್‌ನ ಈ ಕೃತಿಯಲ್ಲಿ ನಾಯಕರಂತೆ ವಿಜೃಂಭಿಸಿದ್ದಾರೆ. ಈ ಕೃತಿ ಕೂಡ ವಿಶ್ವ ಪ್ರಸಿದ್ಧಿ ಪಡೆಯಿತು. “ಮೈ ಇಂಡಿಯ” ಕೃತಿಯ ಮೂಲಕ  ಕಾರ್ಬೆಟ್, ಪಾಶ್ಚಿಮಾತ್ಯ ಜಗತ್ತಿಗೆ ಭಾರತೀಯರ ಬಗ್ಗೆ ಇದ್ದ ಕೆಟ್ಟ ಭಾವನೆಗಳನ್ನು ಹೋಗಲಾಡಿಸಿದ. ಅಷ್ಟೇ ಅಲ್ಲ, ಭಾರತದ ಬಹು ಸಂಸ್ಕೃತಿಯ ನಡುವೆ ಇಲ್ಲಿ ಮುಗ್ಧ ಜನ ಸರಳವಾಗಿ ಬದುಕುವ ಕಲೆಯನ್ನ, ಅವರ ಔದಾರ್ಯವನ್ನು ಪರಿಣಾಮಕಾರಿಯಾಗಿ ಈ ಕೃತಿಯಲ್ಲಿ ಕಾರ್ಬೆಟ್ ಕಟ್ಟಿಕೊಟ್ಟಿರುವುದು ವಿಶೇಷ. ಇದು ಅವನ ಹೃದಯವಂತಿಕೆಗೆ ಸಾಕ್ಷಿಯಾಗಿದೆ. ಈ ಕೃತಿಯ ನಂತರ ಕಾರ್ಬೆಟ್ ನೈನಿತಾಲ್ ಮತ್ತು ಕಲಾದೊಂಗಿ, ಚೋಟಿಹಲ್ದಾನಿ ಹಳ್ಳಿಗಳಲ್ಲಿ ಕಳೆದ ತನ್ನ ಬಾಲ್ಯವನ್ನು ಮತ್ತು ಅರಣ್ಯ ಮತ್ತು ಪರಿಸರಕ್ಕೆ ತನಗೆ ಪ್ರೇರಣೆಯಾದ ಬಗೆಯನ್ನು ವಿವರಿಸುವ “ಜಂಗಲ್ ಲೋರ್” ಕೃತಿಯನ್ನು ಬರೆದ. ಕಾರ್ಬೆಟ್‌ನ ಕೃತಿಗಳಿಗೆ ವಿಶ್ವಾದ್ಯಂತ ಬೇಡಿಕೆ ಹೆಚ್ಚಾಗುತ್ತಿದ್ದಂತೆ ತನ್ನ ಶಿಕಾರಿಯ ಅನುಭವಗಳನ್ನೆಲ್ಲ ದಾಖಲಿಸಿದ. ಇಂತಹ ಕೃತಿಗಳಲ್ಲಿ “ಟೆಂಪಲ್ ಟೈಗರ್” ಪ್ರಮುಖವಾದುದು.

ಜಿಮ್ ಕಾರ್ಬೆಟ್ ಬರೆದ ಕೊನೆಯ ಪುಸ್ತಕವೆಂದರೆ, “ಟ್ರೀ ಟಾಪ್” ಎನ್ನುವ ಪುಟ್ಟ ಕೃತಿ. ಈಗಿನ ಇಂಗ್ಲೆಂಡಿನ ಎಲಿಜಬತ್ ರಾಣಿ (ಕಳೆದ ಜೂನ್‌ನಲ್ಲಿ ಈ ರಾಣಿಯ ಪಟ್ಟಾಭಿಷೇಕದ 60 ನೇ ವರ್ಷದ ಆಚರಣೆಯನ್ನು ಇಂಗ್ಲೆಂಡ್‌ನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು) ಈಕೆ ತನ್ನ 22 ನೇ ವಯಸ್ಸಿನಲ್ಲಿ ತನ್ನ ಪತಿ ರಾಜಕುಮಾರ ಪಿಲಿಪ್ ಜೊತೆ 1952ರಲ್ಲಿ ಕೀನ್ಯಾ ಪ್ರವಾಸ ಕೈಗೊಂಡಿದ್ದಾಗ ಒಂದು ರಾತ್ರಿ ಮರದ ಮೇಲೆ ನಿರ್ಮಿಸುವ ಮಚ್ಚಾನಿನ ಮೇಲೆ ಕುಳಿತು ವನ್ಯ ಮೃಗಗಳನ್ನು ವೀಕ್ಷಿಸಬೇಕು ಎಂದು ಅಪೇಕ್ಷೆಪಟ್ಟಳು. ಅವಳ ಆಸೆಯಂತೆ ಕೀನ್ಯಾದ ಅರಣ್ಯದ ನಡುವೆ ಮರಗಳ ಮೇಲೆ 50 ಅಡಿ ಉದ್ದ ಮತ್ತು 20 ಅಡಿ ಅಗಲದ ವಿಶಾಲವಾದ ವೇದಿಕೆ ನಿರ್ಮಿಸಿ, ರಾಣಿ ಮತ್ತು ಅವಳ ಪರಿವಾರದ ನಲವತ್ತು ಸದಸ್ಯರಿಗೆ ರಾತ್ರಿ ಕಳೆಯಲು ವ್ಯವಸ್ಥೆ ಮಾಡಲಾಗಿತ್ತು. ರಾಣಿ ಕುಟುಂಬದ ಸುರಕ್ಷತೆ ಮತ್ತು ಉಸ್ತುವಾರಿಯನ್ನು ಕಾರ್ಬೆಟ್ ಹೊತ್ತಿದ್ದ. ಇಡೀ ರಾತ್ರಿ ರಾಣಿ ಕುಟುಂಬಕ್ಕೆ ಪ್ರಾಣಿಗಳ ಚಲನ ವಲನ, ಅವುಗಳ ಜೀವನ ವೈಖರಿ ಎಲ್ಲವನ್ನು ವಿವರಿಸಿದ. ನೀರಿನ ಹೊಂಡವಿದ್ದ ಸಮೀಪ ವೇದಿಕೆ ನಿರ್ಮಿಸಿದ್ದರಿಂದ ರಾತ್ರಿ ನೀರು ಕುಡಿಯಲು ಬಂದ ಪ್ರಾಣಿಗಳನ್ನು ನೋಡುವ ಅವಕಾಶ ರಾಣಿಗೆ ದೊರೆಯಿತು. ಇದು ಆಕೆಯ ಪಾಲಿಗೆ ಅತ್ಯಂತ ಸ್ಮರಣೀಯವಾದ ದಿನ. ಈ ಅನುಭವಗಳನ್ನು ಕುರಿತು. ಸುಮಾರು ನಲವತ್ತು ಪುಟಗಳಿರುವ ಕೃತಿ ಕಾರ್ಬೆಟ್ ಪಾಲಿಗೆ ಕೊನೆಯ ಕೃತಿಯಾಯಿತು.

1953ರ ವೇಳೆಗೆ ಸತತ ಅನಾರೋಗ್ಯದಿಂದ ಬಳಲಿದ ಕಾರ್ಬೆಟ್ ಕ್ಷಯ ರೋಗಕ್ಕೆ ಬಲಿಯಾಗಿ ನರಳತೊಡಗಿದ. ಅಂತಿಮವಾಗಿ 1955ರ ಏಪ್ರಿಲ್ 18 ರಂದು ಹೃದಯಾಘಾತಕ್ಕೆ ತುತ್ತಾಗಿ ಮರು ದಿನ 19ರಂದು ನೈರಿ ಆಸ್ಪತ್ರೆಯಲ್ಲಿ ತನ್ನ ಅಕ್ಕ ಮ್ಯಾಗಿಯ ತೊಡೆಯ ಮೇಲೆ ತಲೆ ಇಟ್ಟು ತನ್ನ 79 ವರ್ಷದ ವರ್ಣರಂಜಿತ ಬದುಕಿಗೆ ವಿದಾಯ ಹೇಳಿದ. ಸಾಯುವ ಮುನ್ನ ಕಾರ್ಬೆಟ್ ತನ್ನ ಅಕ್ಕನಿಗೆ ಹೇಳಿದ ಕೊನೆಯ ಮಾತುಗಳಿವು: “ಧೈರ್ಯವಾಗಿರು, ಇತರರು ಸುಖದಿಂದ ಬಾಳುವೆ ಮಾಡಲು, ಜಗತ್ತು ಸದಾ ಸಂತೋಷದಿಂದ ಇರುವಂತೆ ನೋಡಿಕೊ.” ಯುರೋಪ್ ಮೂಲದ ಕುಟುಂಬದಿಂದ ಭಾರತದಲ್ಲಿ ಹುಟ್ಟಿ, ನಂತರ ಆಫ್ರಿಕಾ ಖಂಡದಲ್ಲಿ ಸಾವನ್ನಪ್ಪಿದ ಕಾರ್ಬೆಟ್, ಒಂದರ್ಥದಲ್ಲಿ ಯುರೋಪ್, ಏಷ್ಯಾ, ಮತ್ತು ಆಫ್ರಿಕಾ ಖಂಡಗಳನ್ನು ತನ್ನ ಬದುಕಿನ ಮೂಲಕ ಬೆಸೆದು, ವಿಶ್ವಮಾನವನಾಗಿ, ಜಗತ್ತಿನಲ್ಲಿ ಚಿರಸ್ಥಾಯಿಯಾದ. ಜಿಮ್ ಕಾರ್ಬೆಟ್‌ನ ಶವವನ್ನು ನೃತಿ ಪಟ್ಟಣದ ಚರ್ಚ್‌ಗೆ ತಂದು ಅಲ್ಲಿ ಪ್ರಾರ್ಥನೆ ಸಲ್ಲಿಸಿ, ಅಲ್ಲಿ ಕ್ರೈಸ್ತರ ರುಧ್ರಭೂಮಿಯಲ್ಲಿ ಹೂಳಲಾಯಿತು.

ಜಿಮ್ ಕಾರ್ಬೆಟ್‌ನ ಸಾವಿನ ಸುದ್ಧಿಯನ್ನು ಜಗತ್ತಿನಾದ್ಯಂತ ಪತ್ರಿಕೆಗಳು ಸುದ್ದಿ ಮಾಡಿ, ಶ್ರದ್ಧಾಂಜಲಿಯ ಲೇಖನ ಬರೆದವು. ಟೈಮ್ಸ್ ನಿಯತಕಾಲಿಕೆ ತನ್ನ ಮೇ ತಿಂಗಳ ಸಂಚಿಕೆಯನ್ನು ಕಾರ್ಬೆಟ್‌ಗಾಗಿ ಮೀಸಲಿಟ್ಟು, ಅವನ ಒಡನಾಡಿಗಳಿಂದ ಲೇಖನಗಳನ್ನು ಬರೆಸಿ ಅವನನ್ನು ಹಾಡಿ ಹೊಗಳಿತು. ಕಾರ್ಬೆಟ್ ನಿಧನದ ನಂತರ ಅವನ ಆಸೆಯಂತೆ ಸಹೋದರಿ ಮ್ಯಾಗಿ ಭಾರತದ ಚೋಟಿ ಹಲ್ದಾನಿಯ ಹಳ್ಳಿಯ ಕಂದಾಯವನ್ನು ರೈತರ ಪರವಾಗಿ ಭರಿಸುತ್ತಾ ಬಂದಳು. 1957ರಲ್ಲಿ ಆಕೆಯ ನಿಧನಾನಂತರ ಭಾರತ ಸರ್ಕಾರ, ಅಲ್ಲಿನ ಭೂಮಿ ಮತ್ತು ನಿವೇಶನವನ್ನು ಕಾರ್ಬೆಟ್‌ನ ಕೊನೆಯ ಆಸೆಯಂತೆ ರೈತರ ಹೆಸರಿಗೆ ವರ್ಗಾಯಿಸಿತು. ಅವನು ವಾಸವಾಗಿದ್ದ ಚೋಟಿ ಹಲ್ದಾನಿಯ ಬಂಗಲೆಯನ್ನು ಸ್ಮಾರಕವನ್ನಾಗಿ ಮಾಡಿ, ಹಳ್ಳಿಯ ಜನರ ಉಸ್ತುವಾರಿಗೆ ವಹಿಸಿತು. ಇದಲ್ಲದೆ, ಹಿಂದೊಮ್ಮೆ ಜಿಮ್ ಕಾರ್ಬೆಟ್ ಆಸಕ್ತಿ ವಹಿಸಿ ಅಭಯಾರಣ್ಯ ಮಾಡಿದ್ದ ಅರಣ್ಯ ಪ್ರದೇಶವನ್ನು ಭಾರತ ಸರ್ಕಾರ ಅಧಿಕೃತವಾಗಿ “ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್” ಎಂದು ಘೋಷಿಸಿ ಕಾರ್ಬೆಟ್‌ಗೆ ಗೌರವ ಸೂಚಿಸಿತು.

ಇಂದು ಕೂಡ ಕಲದೊಂಗಿ ಮತ್ತು ಚೋಟಹಲ್ದಾನಿ ಹಳ್ಳಿಗಳ ಜನರ ಪಾಲಿಗೆ ದಂತ ಕಥೆಯಾಗಿರುವ, ತಮ್ಮ ಬದುಕಿಗೆ ಭೂಮಿ ಮತ್ತು ಮನೆ ನಿರ್ಮಿಸಿಕೊಟ್ಟು ದೈವವಾಗಿರುವ ಕಾರ್ಬೆಟ್ ಬಗ್ಗೆ ಎಲ್ಲಿಲ್ಲದ ಪ್ರೀತಿ ಮತ್ತು ಗೌರವ. ಈ ತಲೆಮಾರು ಕಾರ್ಬೆಟ್‌ನನ್ನು ನೋಡದಿದ್ದರೂ, ಬಾಯಿಂದ ಬಾಯಿಗೆ, ಎದೆಯಿಂದ ಎದೆಗೆ ಹರಿದು ಬಂದ ಅವನ ಗುಣವನ್ನು ಕಾಪಿಟ್ಟುಕೊಂಡು ಬಂದಿದೆ. ಹಾಗಾಗಿ ರಾಮನಗರ್, ಕಲದೊಂಗಿ, ಚೋಟಿ ಹಲ್ದಾನಿ ಹಳ್ಳಿಗಳಲ್ಲಿ, ಕಾರ್ಬೆಟ್ ಹೆಸರಿನ ಟೈಲರಿಂಗ್ ಶಾಪ್, ಸೇವಿಂಗ್ ಶಾಪ್, ಹೊಟೇಲ್, ಮೊಬೈಲ್ ಶಾಪ್ ಮತ್ತು ಬಡಾವಣೆಗಳನ್ನು ಕಾಣಬಹುದು. ಆದರೆ. ನೈನಿತಾಲ್ ಗಿರಿಧಾಮದಲ್ಲಿ ಜಿಮ್ ಕಾರ್ಬೆಟ್ ಹೆಸರು ಹೇಳಿದರೆ, ಹಾಗಂದರೇನು ಎಂದು ಪ್ರಶ್ನಿಸುವ ಜನರಿದ್ದಾರೆ. ಸ್ವತಃ ಕಾರ್ಬೆಟ್‌ನ ತಂದೆ ಕ್ರಿಸ್ಟೊಪರ್ ಹಾಗೂ ಕಾರ್ಬೆಟ್ ನಾಲ್ಕು ದಶಕಗಳ ಕಾಲ ಅಲ್ಲಿನ ಪುರಸಭೆಯ ಪ್ರತಿನಿಧಿಗಳಾಗಿ, ಉಪಾಧ್ಯಕ್ಷರಾಗಿ ದುಡಿದಿದ್ದರೂ ಕೂಡ ಈ ಕುರಿತು ಒಂದು ಸಣ್ಣ ದಾಖಲೆಯಿಲ್ಲ. ಇವತ್ತಿಗೂ ಉತ್ತರ ಭಾರತದ ಜನ ನೈನಿತಾಲ್ ಗಿರಿಧಾಮವನ್ನು ಕಾರ್ಬೆಟ್ ನೈನಿತಾಲ್ ಎಂದು ಕರೆಯುವುದು ವಾಡಿಕೆಯಲ್ಲಿದೆ. ಆದರೆ, ನೈನಿತಾಲ್ ಜನಕ್ಕೆ ಈ ಬಗ್ಗೆ  ಇತಿಹಾಸದ ಪ್ರಜ್ಞೆಯೇ ಇಲ್ಲ. ಇದು ನಿಜಕ್ಕೂ ನೋವಿನ ಸಂಗತಿ.

(ಮುಗಿಯಿತು.)

ಮಾಧ್ಯಮಗಳು ಮತ್ತು ಅವತಾರಗಳು


– ಡಾ.ಎನ್.ಜಗದೀಶ್ ಕೊಪ್ಪ


[ಕಳೆದ ನವಂಬರ್ ನಲ್ಲಿ ಮಂಡ್ಯ ನಗರದಲ್ಲಿ ಹಾಸ್ಯ ಸಾಹಿತಿ, ಲಂಕೇಶರ ಒಡನಾಡಿ, ಪ್ರಗತಿಪರ ಚಿಂತಕ ಪ್ರೊ. ಹೆಚ್.ಎಲ್.ಕೆ. ಯವರ 73ನೇ ವರ್ಷದ ಹುಟ್ಟು ಹಬ್ಬದ ಆಚರಣೆಯ ಅಂಗವಾಗಿ ಎರಡು ದಿನಗಳ ಕಾಲ ನಡೆದ “ಕರ್ನಾಟಕ ಮುನ್ನಡೆ” ವಿಚಾರ ಸಂಕಿರಣದಲ್ಲಿ ಮಾಡಿದ ಮಾಧ್ಯಮ ಗೋಷ್ಟಿಯ ಅಧ್ಯಕ್ಷ ಭಾಷಣದ ಲಿಖಿತ ರೂಪ.]

ಎಲ್ಲರಿಗೂ ನಮಸ್ಕಾರ. ಗೆಳೆಯರೇ ನಾನು ಇಲ್ಲಿಗೆ ಮಾತನಾಡಲು ಬಂದಿರಲಿಲ್ಲ, ಪ್ರೊ. ಹೆಚ್.ಎಲ್.ಕೆ. ಅವರ ಮೇಲಿನ ಗೌರವದಿಂದ ದೂರದ ಧಾರವಾಡದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾತ್ರ ಬಂದಿದ್ದೆ. ನನ್ನ ಬರೆವಣಿಗೆ ಮತ್ತು ಚಿಂತನೆಯ ಹಿಂದೆ ಈ ಮಂಡ್ಯ ಜಿಲ್ಲೆಯ ಎರಡು ದೈತ್ಯ ಪ್ರತಿಭೆಗಳ ಪ್ರಭಾವವಿದೆ. ಅವರಿಂದ ಪ್ರೇರಿತನಾಗಿ, ಅವರ ಜೊತೆ ಒಡನಾಡಿ ಬೆಳೆದವನು ನಾನು. ಅಷ್ಟೇ ಅಲ್ಲ, ನನ್ನನ್ನು ಅಕ್ಷರ ಲೋಕಕ್ಕೆ ಕೈಹಿಡಿದು ಕರೆತಂದು ಇಲ್ಲಿಯವರೆಗೆ ಬೆಳೆಸಿದ ಕೀರ್ತಿ ಈ ನೆಲದ ಡಾ. ಬೆಸಗರಹಳ್ಳಿ ರಾಮಣ್ಣ ಮತ್ತು ಪ್ರೊ. ಹೆಚ್.ಎಲ್. ಕೇಶವಮೂರ್ತಿಯವರಿಗೆ ಸಲ್ಲಬೇಕು. ಹಾಗಾಗಿ ಈ ಇಬ್ಬರೂ ಮಹನೀಯರು ನನ್ನ ಪಾಲಿಗೆ ಗುರುಗಳು, ಮಾರ್ಗದರ್ಶಿಗಳು, ಗೆಳೆಯರೂ ಎಲ್ಲರೂ ಆಗಿದ್ದಾರೆ. ಜೊತೆಗೆ, ಈಗಲೂ ನನ್ನ ಆತ್ಮ ಸಾಕ್ಷಿಯ ಪ್ರಜ್ಙೆಯಂತೆ ಇದ್ದಾರೆ.

ಈ ಮಾಧ್ಯಮ ಗೋಷ್ಠಿಗೆ ನಾನು ಸಿದ್ಧನಾಗಿ ಬಂದವನಲ್ಲ, ಹೆಚ್.ಎಲ್.ಕೆ.ಯವರ ಮಾತಿಗೆ ಮಣಿದು ಈ ಗೋಷ್ಠಿಯ ಅಧ್ಯಕ್ಷ ಸ್ಥಾನದಲ್ಲಿ ಕುಳಿತು ಈಗ ನಿಮ್ಮೆದುರು ನನ್ನ ಪತ್ರಕರ್ತ ಜೀವನದ ಕೆಲವು ಅನುಭವಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ನನ್ನ ಮಾತು ಕಠಿಣವಾಗಿದ್ದರೆ, ಕ್ಷಮೆಯಿರಲಿ. ಬದುಕಿನುದ್ದಕ್ಕೂ ಬೆಂಕಿಯ ಕೆಂಡ ನುಂಗಿದವನಂತೆ ಮಾತನಾಡವುದು, ಬರೆಯುವುದು, ನನ್ನ ಶೈಲಿ ಮತ್ತು ದೌರ್ಬಲ್ಯ. ತುಟಿಗೆ ತುಪ್ಪ ಹಚ್ಚಿಕೊಂಡು ಮಾತನಾಡುವುದು ನನ್ನ ಜಾಯಮಾನವಲ್ಲ. ಕೆಲವು ನನ್ನ ಕೆಲವು ಇತ್ತೀಚೆಗಿನ ಅನುಭವಗಳೊಂದಿಗೆ ಮಾತನ್ನು ಆರಂಭಿಸುತ್ತೇನೆ.

ಎರಡು ವರ್ಷದ ಹಿಂದೆ ಮೈಸೂರಿನ ಜೆ.ಎಸ್.ಎಸ್. ಮಠದ ಕೆಲವು ಪದಾಧಿಕಾರಿಗಳು ಹುಬ್ಬಳ್ಳಿ ನಗರಕ್ಕೆ ಬಂದು, ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಪ್ರಸ್ತಾಪ ಮಾಡಿದರು. ಆ ವೇಳೆ, ನಾನು ಮತ್ತು ನನ್ನ ಮಿತ್ರರಾದ ಹಿಂದೂ ಪತ್ರಿಕೆಯ ಸ್ಥಾನಿಕ ಸಂಪಾದಕ ಗಿರೀಶ್ ಪಟ್ಟಣಶೆಟ್ಟಿ, ಉದಯವಾಣಿಯ ಸ್ಥಾನಿಕ ಸಂಪಾದಕ ಸುರೇಶ್ ಕೆಲವು ಸಲಹೆಗಳನ್ನು ಅವರ ಮುಂದಿಟ್ಟೆವು. ಉತ್ತರ ಕರ್ನಾಟಕಕ್ಕೆ ನಿಮ್ಮ ಮಠದ ವತಿಯಿಂದ ಮೈಸೂರಿನಲ್ಲಿರುವಂತೆ ಇಂಜಿನೀಯರಿಂಗ್, ವೈದ್ಯಕೀಯ ಅಥವಾ ದಂತ ವಿಜ್ಙಾನ ಶಿಕ್ಷಣ ಸಂಸ್ಥೆಗಳು ಅವಶ್ಯಕತೆಯಿಲ್ಲ. ಬದಲಾಗಿ ಈ ಪ್ರದೇಶದಲ್ಲಿ ಎಸ್.ಎಸ್,ಎಲ್.ಸಿ. ಮತ್ತು ಪಿ.ಯು.ಸಿ. ನಂತರ ಶಿಕ್ಷಣಕ್ಕೆ ತಿಲಾಂಜಲಿ ಇತ್ತ ಯುವಕರು ಬಹಳ ಮಂದಿ ಇದ್ದಾರೆ. ಅವರ ಉದ್ಯೋಗಕ್ಕೆ ನೆರವಾಗುವ ದೃಷ್ಟಿಯಲ್ಲಿ ವೃತ್ತಿ ನಿರತ ಕೋರ್ಸ್‌ಗಳನ್ನು ಪ್ರಾರಂಭಿಸಿ, ಎಂಬುದು ನಮ್ಮ ಸಲಹೆಯಾಗಿತ್ತು. ಉದಾಹರಣೆಗೆ, ನೀರು ಎತ್ತುವ ವಿದ್ಯುತ್‌ಮೋಟಾರ್, ಮೊಬೈಲ್, ಮಿಕ್ಸಿ, ಗ್ರೈಂಡರ್‌ಗಳ ದುರಸ್ತಿ, ಮರಗೆಲಸ, ಹೊಸಮನೆಗಳಿಗೆ ವಿದ್ಯುತ್ ವೈರಿಂಗ್ ಮಾಡಲು ಬೇಕಾದ ಕುಶಲತೆ, ಕಟ್ಟಡ ನಿರ್ಮಾಣ, ಮೋಟಾರ್ ವಾಹನ, ದ್ವಿಚಕ್ರ ವಾಹನ ದುರಸ್ತಿ ಇತ್ಯಾದಿ ಅದೇ ರೀತಿ ಮಹಿಳೆಯರಿಗೆ ಟೈಲರಿಂಗ್ ಕಸೂತಿ ಮುಂತಾದ ಜೀವನಕ್ಕೆ ಆಧಾರವಾಗಬಲ್ಲ ತರಬೇತಿ ನೀಡುವ ತರಬೇತಿ ನೀಡುವ ಸಂಸ್ಥೆಗಳನ್ನು ತೆರೆಯುವಂತೆ ಸೂಚನೆ ನೀಡಿದೆವು. ನಮ್ಮ ಸಲಹೆ ಅವರಿಗೂ ಇಷ್ಟವಾಯಿತು.

ಮುಂದಿನ ತಿಂಗಳು ಮಠಾಧೀಶರು ಧಾರವಾಡಕ್ಕೆ ಬರುತಿದ್ದು ನಿಮ್ಮ ಸಲಹೆಗಳನ್ನು ಅವರ ಮುಂದೆ ಇಡಬೇಕೆಂದು ಜೆ.ಎಸ್.ಎಸ್. ಮಠದ ಪದಾಧಿಕಾರಿಗಳು ನಮ್ಮಲ್ಲಿ ವಿನಂತಿಸಿಕೊಂಡಾಗ ನಾವೂ ಸಹ ಒಪ್ಪಿಗೆ ಸೂಚಿಸಿದೆವು. ಅದರಂತೆ ಮುಂದಿನ ಒಂದು ತಿಂಗಳಲ್ಲಿ ಜೆ.ಎಸ್.ಎಸ್. ಸಂಸ್ಥೆಯ ಸ್ವಾಮೀಜಿ ತಮ್ಮ ಸಂಸ್ಥೆಯ ಸಲಹೆಗಾರರ ಜೊತೆ ಧಾರವಾಡಕ್ಕೆ ಬಂದರು. ನಾನು ಮತ್ತು ನನ್ನ ಇಬ್ಬರು ಗೆಳೆಯರನ್ನು ಧಾರವಾಡದ ತಮ್ಮ ಕಛೇರಿಗೆ ಕರೆಸಿಕೊಂಡು ನಮ್ಮ ಸಲಹೆ ಕೇಳತೊಡಗಿದರು. ಅದಕ್ಕೂ ಮುನ್ನ ಅವರ ಸಂಸ್ಥೆಯ ಪದಾಧಿಕಾರಿಗಳನ್ನು ನಮಗೆ ಪರಿಚಯಿಸಿದರು. ಅವರೆಲ್ಲಾ ಕರ್ನಾಟಕ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದ ಹಿರಿಯ ಐ.ಎ.ಎಸ್. ಅಧಿಕಾರಿಗಳು. ನಿವೃತ್ತ ಮುಖ್ಯ ಇಂಜಿನಿಯರ್‌ಗಳು ಮತ್ತು ವಿ.ವಿ. ಗಳ ನಿವೃತ್ತ ಉಪಕುಲಪತಿಗಳಾಗಿದ್ದರು. ನಾವು ಕೂಡ ಪರಿಚಯ ಮಾಡಿಕೊಂಡೆವು. ಅದೇ ವೇಳೆ ನನ್ನನ್ನ್ನು ಸ್ವಾಮೀಜಿಗೆ ವಿಶೇಷವಾಗಿ ಪರಿಚಯಿಸಿದ ಮೈಸೂರು ನಗರದ ಗೆಳೆಯ ಜಂಬುಕೇಶ್ವರ, ಇವರು ಮಂಡ್ಯ ಜಿಲ್ಲೆಯವರು, ಜಾಗತೀಕರಣ ಕುರಿತಂತೆ ಡಾಕ್ಟರೇಟ್ ಮಾಡಿದ್ದಾರೆ ಎಂದು ತಿಳಿಸಿದ. ಇದರಿಂದ ಕುತೂಹಲಗೊಂಡ ಸ್ವಾಮೀಜಿ, ಜಾಗತೀಕರಣ ಕುರಿತು ನಿಮ್ಮ ಅಭಿಪ್ರಾಯವೇನು? ಎಂದು ನನ್ನನ್ನು ಪ್ರಶ್ನಿಸಿದರು.

ಜಾಗತೀಕರಣದ ಕಡು ವಿರೋಧಿಗಳಲ್ಲಿ ನಾನೂ ಒಬ್ಬ ಎಂದು ತಿಳಿಸಿ, ಅದರ ವಂಚನೆಯ ನಾನಾ ಮುಖಗಳನ್ನು ಸ್ವಾಮೀಜಿಗೆ ಸಂಕ್ಷಿಪ್ತವಾಗಿ ವಿವರಿಸಿದೆ. ನನ್ನ ವಿವರಣೆಯಲ್ಲಿ ರೈತರಿಗೆ ಆಗುತ್ತಿರುವ ವಂಚನೆಗಳು, ಬಹು ರಾಷ್ಟ್ರೀಯ ಕಂಪನಿಗಳ ಎಂಜಲು ಕಾಸಿಗೆ ಕೈಯೊಡ್ಡಿರುವ ಈ ದೇಶದ ಕೃಷಿ ವಿ.ವಿ.ಗಳು ಮತ್ತು ಅಲ್ಲಿನ ವಿಜ್ಙಾನಿಗಳು ಸೃಷ್ಟಿಸುತ್ತಿರುವ ಅವಾಂತರಗಳು ಈ ಬಗ್ಗೆ ಕೆಲವು ಅಂಕಿ ಅಂಶಗಳ ಮೂಲಕ ಅವರಿಗೆ ಮನವರಿಕೆ ಮಾಡಿಕೊಟ್ಟೆ.

ನನ್ನ ಈ ಮಾತುಗಳಿಂದ ಅಪಮಾನಿತರಾದಂತೆ ಕಂಡುಬಂದ ಸ್ವಾಮೀಜಿ ಪಕ್ಕದಲ್ಲಿ ಕುಳಿತಿದ್ದ ಧಾರವಾಡ ಕೃಷಿ ವಿ.ವಿ.ಯ ಮಾಜಿ ಉಪಕುಲಪತಿ, ಭತ್ತದ ತಳಿ ವಿಜ್ಙಾನಿ ಹಾಗೂ ಪದ್ಮಶ್ರಿ ಪ್ರಶಸ್ತಿ ವಿಜೇತ ಡಾ. ಮಹಾದೇವಪ್ಪ ನನ್ನ ಜೊತೆ ವಾದಕ್ಕೆ ಇಳಿದರು. ಅವರ ವಾದಕ್ಕೆ ಉತ್ತರವೆಂಬಂತೆ ಧಾರವಾಡದ ಕೃಷಿ ವಿಶ್ವ ವಿದ್ಯಾಲಯ 2002 ರ ರಾಷ್ಟ್ರೀಯ ಜೀವ ವೈವಿಧ್ಯ ಹಾಗೂ ಕರ್ನಾಟಕದ 2006 ರ ಜೀವ ವೈವಿಧ್ಯ ಕಾಯ್ದೆಯನ್ನು ಉಲ್ಲಂಘಿಸಿ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟುಗುಳ್ಳ ಎಂಬ ದೇಶಿ ಬದನೆ ಸೇರಿದಂತೆ ಕರ್ನಾಟಕದ ಆರು ದೇಶಿ ಬದನೆತಳಿಗಳನ್ನು ಕುಲಾಂತರಿ ಪ್ರಯೋಗಕ್ಕೆ ಒಡ್ಡಿರುವುದನ್ನು ವಿವರಿಸಿದೆ. ಜೊತೆಗೆ ಈ ಪ್ರಯೋಗಕ್ಕೆ ಅಮೇರಿಕಾ ಮೂಲದ ಮಾನ್ಸೆಂಟೊ ಕಂಪನಿ ತನ್ನ ಭಾರತದ ಸಹಭಾಗಿತ್ವದ ಕಂಪನಿಯಾದ ಮಹಿಕೊ ಸಂಸ್ಥೆ ಮೂಲಕ ಕೃಷಿ ವಿ.ವಿ.ಗೆ ಮತ್ತು ಅಲ್ಲಿನ ವಿಜ್ಙಾನಿಗಳಿಗೆ ಅಪಾರ ಪ್ರಮಾಣದ ಹಣ ಪಡೆದಿರುವುದನ್ನು ಸಹ ನಾನು ಪ್ರಸ್ತಾಪಿಸಿದೆ. ಸೋಜಿಗದ ಸಂಗತಿಯೆಂದರೆ, ಧಾರವಾಡದ ಕೃಷಿ ವಿ.ವಿ. ಸೇರಿದಂತೆ ತಮಿಳು ನಾಡು ಮತ್ತು ಚಂಡಿಘರ್ ಕೃಷಿ ವಿ.ವಿ.ಗಳು ಬದನೆ, ಭತ್ತ, ಗೋಧಿ ಹಾಗು ಇತರೆ ಬೆಳೆಗಳ ಪ್ರಯೋಗಕ್ಕೆ ಕೇಂದ್ರ ಸರ್ಕಾರದ ಅಥವಾ ವಿ.ವಿ. ಹಣಕಾಸು ಆಯೋಗದಿಂದ (ಅಪಾಯಕಾರಿ ಪ್ರಯೋಗಳಿಗೆ) ಅನುಮತಿ ಪಡೆದಿರಲಿಲ್ಲ. ಈ ಎಲ್ಲಾ ಅಂಶಗಳನ್ನು ಸವಿವರವಾಗಿ ನಾನು ಅವರ ಮುಂದಿಟ್ಟಾಗ, ಡಾ. ಮಹಾದೇವಪ್ಪನವರ ಬಳಿ ಉತ್ತರವಿರಲಿಲ್ಲ. ಕ್ಷಣ ಹೊತ್ತು ಮೌನ ವಹಿಸಿದ ಅವರು, ಇದ್ದಕ್ಕಿದ್ದಂತೆ ನನ್ನ ವೃತ್ತಿಯ ಮೇಲೆ ಧಾಳಿ ಮಾಡಿದರು. “ಜಗದೀಶ್ ವಿಜ್ಙಾನಿಗಳ ಬಗ್ಗೆ ಇಷ್ಟೆಲ್ಲಾ ಮಾತನಾಡುವ ನೀವು, ಅಂದರೆ ಪತ್ರಕರ್ತರು, ಸಾಚಾಗಳಾ?” ಎಂದು ಕೇಳಿದರು. ನಾನು ಸಾವಧಾನದಿಂದ ನಿಮ್ಮ ವಿಜ್ಙಾನಿಗಳ ಸಮುದಾಯದಂತೆ ನಮ್ಮ ಪತ್ರಕರ್ತ ಸಮುದಾಯ ಕೂಡ ಕೆಟ್ಟು ಕೆರಹಿಡಿದಿದೆ. ಅದರಲ್ಲಿ ಎರಡು ಮಾತಿಲ್ಲ ಎಂದೆ. ಜೊತೆಗೆ ಇವತ್ತಿನ ಪತ್ರಿಕೋದ್ಯಮದ ವೃತ್ತಿ ಹೆಂಗಸರನ್ನು ಅಡ್ಡದಾರಿಗೆ ನೂಕುವ ತಲೆಹಿಡುಕುತನದ ವೃತ್ತಿಗೆ ಸಮೀಪವಾಗಿದೆ. ಈ ವೃತ್ತಿಯ ಬಗ್ಗೆ ನನಗೆ ಬೇಸರವಿದ್ದರೂ, ಈವರೆಗೆ ಆತ್ಮಸಾಕ್ಷಿಗೆ ಧಕ್ಕೆಯಾಗದಂತೆ, ಘನತೆಯಿಂದ ಈ ವೃತ್ತಿಯನ್ನು ನಿರ್ವಹಿಸಿದ್ದೇನೆ ಎಂದು ಶಾಂತವಾಗಿ ಆದರೆ, ಕಟುವಾಗಿ ಉತ್ತರಿಸಿದೆ. ನನ್ನ ಮಾತುಗಳಿಂದ ಶಾಕ್‌ಗೆ ಒಳಗಾದವರಂತೆ ಕಂಡು ಬಂದ ಸ್ವಾಮೀಜಿ ಚರ್ಚೆಯನ್ನು ಅಲ್ಲಿಗೆ ನಿಲ್ಲಿಸಿ ವೃತ್ತಿ ತರಬೇತಿ ಸಂಸ್ಥೆ ಆರಂಭಿಸುವ ಬಗ್ಗೆ ನಮ್ಮಗಳ ಸಲಹೆ ಕೇಳತೊಡಗಿದರು.

ನಂತರ ಊಟದ ಸಮಯದಲ್ಲಿ ನನ್ನ ಬಳಿ ಬಂದ ಡಾ. ಮಹಾದೇವಪ್ಪ, “ಕ್ಷಮಿಸಿ ಜಗದೀಶ್, ಆವೇಶದಲ್ಲಿ ಕೆಲವು ಮಾತನಾಡಿದೆ. ನೀವು ಎತ್ತಿದ ಕೆಲವು ವಿಷಯಗಳಲ್ಲಿ ಸತ್ಯಾಂಶ ಇದೆ. ಕೆಲವು ವಿಜ್ಙಾನಿಗಳು ಹಣದ ಹಿಂದೆ ಬಿದ್ದು ರೈತರ ಹಿತಾಸಕ್ತಿಗೆ ಮಾರಕವಾಗಿದ್ದಾರೆ,” ಎಂದು ಒಪ್ಪಿಕೊಂಡರು. ಅವರನ್ನು ಸಮಾಧಾನಿಸಿ, “ನೀವು ಕ್ಷಮೆ ಕೇಳುವ ಅಗತ್ಯವಿಲ್ಲ ಸಾರ್. ಪತ್ರಕರ್ತರು ನಿಮ್ಮ ಊಹೆಗಿಂತ ದುಪ್ಪಟು ಭ್ರಷ್ಟರಾಗಿದ್ದಾರೆ,” ಎಂದೆ.

ಮಿತ್ರರೇ, ಯಾಕೆ ಇಷ್ಟೊಂದು ವಿವರವಾಗಿ ಈ ಸಂಗತಿಯನ್ನು ಚರ್ಚಿಸಿದೆ ಎಂದರೆ, ಇವತ್ತಿನ ನಮ್ಮ ಕಣ್ಣೆದುರಿನ ಮಾಧ್ಯಮ ಮತ್ತು ಅದರ ಅಂಗವಾಗಿರುವ ನಮ್ಮಗಳ ಬಗ್ಗೆ ಮಾತನಾಡುವುದೇ ನಾಚಿಕೆಗೇಡಿನ ಸಂಗತಿಯಾಗಿದೆ. ಜನಸಾಮಾನ್ಯರಲ್ಲಿ ಕೇವಲ ಅಧಿಕಾರಿಶಾಹಿ ಮತ್ತು ಆಡಳಿತಶಾಹಿ ಮಾತ್ರ ಭ್ರಷ್ಟಾಚಾರದಲ್ಲಿ ಮುಳುಗಿವೆ ಎಂಬ ಸಾಮಾನ್ಯ ನಂಬಿಕೆಯಿದೆ. ಆದರೆ, ಇತ್ತೀಚೆಗಿನ ದಿನಗಳಲ್ಲಿ ಇವುಗಳ ಜೊತೆ ಕೈ ಜೋಡಿಸಿರುವ ಪತ್ರಿಕೋದ್ಯಮ ಸತ್ಯ ಮತ್ತು ಪ್ರಾಮಾಣಿಕತೆಯ ಮುಖವಾಡದಲ್ಲಿ ಅಕ್ಷರದ ಹಾದರತನಕ್ಕೆ ಇಳಿದಿದೆ. ಈ ಮಾತನ್ನು ಅತ್ಯಂತ ಕಠಿಣವಾದ ಶಬ್ದಗಳಲ್ಲಿ ಹೇಳುತ್ತಿರುವುದಕ್ಕೆ ನಿಮ್ಮ ಕ್ಷಮೆ ಇರಲಿ.

Deccan Herald - Mining Payments

Deccan Herald – Mining Payments

ಅದೊಂದು ಕಾಲವಿತ್ತು, ಪತ್ರಿಕೋದ್ಯಮ ಮತ್ತು ಪತ್ರಕರ್ತರೆಂದರೆ, ಗೌರವದಿಂದ ನೋಡುವ, ಮಾತನಾಡಿಸುವ, ಪ್ರೀತಿಸುತಿದ್ದ ಆದಿನಗಳು ಈಗ ಕೇವಲ ನೆನಪುಗಳು ಮಾತ್ರ. ಪತ್ರಕರ್ತರೆಂದರೆ ಪವರ್ ಬ್ರೋಕರ್ ಎಂದು ಕರೆಯುವ ಕಾಲ ಇದಾಗಿದೆ. ಭ್ರಷ್ಟ ರಾಜಕಾರಣಿಗಳ ಮತ್ತು ಅಧಿಕಾರಿಗಳ ಅಕ್ರಮ ಸಂಪತ್ತಿನ ಬಗ್ಗೆ ಪುಟಗಟ್ಟಲೆ ಮುದ್ರಿಸುವ, ಗಂಟೆಗಟ್ಟಲೆ ಭಿತ್ತರಿಸುವ ನಮ್ಮ ಸುದ್ಧಿ ಮಾಧ್ಯಮಗಳು, ಕಳೆದ ಒಂದು ದಶಕದಿಂದೀಚೆಗೆ ಪತ್ರಕರ್ತರ ಆಸ್ತಿ ಯಾವ ಮಟ್ಟದಲ್ಲಿ ಬೆಳೆದಿದೆ ಎಂದು ಎಂದಾದರೂ ಆತ್ಮಾವಲೋಕನ ಮಾಡಿಕೊಂಡ ಸಂಗತಿಯನ್ನು ನೀವ್ಯಾರಾದರೂ ಬಲ್ಲಿರಾ? ಇವತ್ತು ಪತ್ರಕರ್ತರು ಓಡಾಡುವ ಕಾರು, ಅವರು ಕಟ್ಟಿಕೊಂಡಿರುವ ಮನೆ, ನಗರದ ಹೊರವಲಯದಲ್ಲಿ ನಿರ್ಮಿಸಿಕೊಂಡಿರುವ ಕೃಷಿತೋಟಗಳು, ಇವುಗಳೆಲ್ಲಾ ಅವರ ಸಂಬಳದಿಂದ ಸಾಧ್ಯವೆ? ಎಂಬುದನ್ನು ಪ್ರಜ್ಞಾವಂತ ನಾಗರೀಕರು ಒಮ್ಮೆ ಯೋಚಿಸಬೇಕು. ತಾವೇ ಬೌದ್ಧಿಕವಾಗಿ, ನೈತಿಕವಾಗಿ ದಿವಾಳಿಯೆದ್ದು ಹೋಗಿರುವಾಗ ಇಂತಹ ಸಮುದಾಯದಿಂದ ಏನನ್ನು ನಿರಿಕ್ಷಿಸಲು ಸಾಧ್ಯ ಹೇಳಿ?

ತಮ್ಮ ಕಣ್ಣ ಮುಂದೆ ನಡೆಯುವ ಕೊಲೆ, ಅತ್ಯಾಚಾರಗಳ, ಹಿಂಸೆಗಳನ್ನು ಮಸಾಲೆ ಹಾಕಿ ಅರೆದು ರುಬ್ಬಿ ವೀಕ್ಷರಿಗೆ ಉಣ ಬಡಿಸುವ ಸುದ್ದಿಚಾನಲ್ ಗಳು ಒಂದು ಕಡೆಯಾದರೆ, ಕೆಟ್ಟ ಮತ್ತು ಅನೈತಿಕ ರಾಜಕಾರಣದ ಸುತ್ತಾ ಗಿರಕಿ ಹೊಡೆಯುತ್ತಾ, ಚಮತ್ಕಾರದ ತಲೆ ಬರೆಹ ನೀಡುತ್ತಾ ನಿಂತಲ್ಲೆ ನಿಂತಿರುವ ಪತ್ರಿಕೋದ್ಯಮ ಇನ್ನೊಂದು ಕಡೆ ನಮ್ಮ ಮುಂದಿದೆ. ಈ ಸ್ಥಿತಿಯಲ್ಲಿ ಕೆಟ್ಟು ಕೆರವಾಗಿರುವ ಈ ಮಾಧ್ಯಮಗಳೇ ನಮ್ಮಗಳ ಅನಿವಾರ್ಯ ಆಯ್ಕೆ ಎಂಬಂತಾಗಿದೆ.

ನಾನು ಉತ್ತರ ಕರ್ನಾಟಕಕ್ಕೆ ಹೋಗಿ 11 ವರ್ಷ ಕಳೆದು, 12ನೇ ವರ್ಷಕ್ಕೆ ಕಾಲಿಟ್ಟಿದೆ. ಅಲ್ಲಿನ ಬಡತನ, ಬದುಕು, ನನಗೆ ಮೂರು ಜನ್ಮಕ್ಕೆ ಆಗುವಷ್ಟು ಪತ್ರಿಕೋದ್ಯಮದ ಪಾಠವನ್ನು ಕಲಿಸಿದೆ. ಕಳೆದ ವರ್ಷ ಇಡೀ ಉತ್ತರ ಕರ್ನಾಟಕ ಬರದ ಬವಣೆಯಲ್ಲಿ ತತ್ತರಿಸಿ ಹೋಯಿತು, ಅದರಾಚೆಗಿನ ವರ್ಷ ಅತೀವೃಷ್ಟಿಯಲ್ಲಿ ಮುಳುಗಿ ನಲುಗಿಹೋಯಿತು. ಬಿಜಾಪುರ ಜಿಲ್ಲೆಯಲ್ಲಿ ಕಳೆದ ವರ್ಷ ಕೇವಲ 37 ನಿಮಿಷಗಳ ಕಾಲ ಮಳೆಬಿದ್ದಿದೆ ಎಂದರೆ ನೀವು ನಂಬುತ್ತೀರಾ? ನಂಬುವುದಿಲ್ಲ, ಏಕೆಂದರೆ, ಯಾವುದೇ ಸುದ್ದಿಮಾಧ್ಯದಲ್ಲಿ ಈ ಬಗ್ಗೆ ಚರ್ಚೆಯಾಗಿಲ್ಲ ಅಥವಾ ಸುದ್ಧಿಯಾಗಿಲ್ಲ. ಇಂತಹ ಬಡತನದ ನಡುವೆ ಅಲ್ಲಿನ ಜನಕ್ಕೆ ಬದುಕುವ ಕಲೆಗೊತ್ತಿದೆ. ರಾತ್ರೋರಾತ್ರಿ ರೈಲುಗಳನ್ನ ಹತ್ತಿ ಗೋವಾ, ಮುಂಬೈ ನಗರಗಳನ್ನು ತಲುಪಿ, ಕಟ್ಟಡ ಕಾರ್ಮಿಕರಾಗಿ ದುಡಿಯಲು ಅಲ್ಲಿನ ಕೊಳೇಗೇರಿಗಳಲ್ಲಿ ಜಮೆಯಾಗುತ್ತಾರೆ. ಆದರೆ, ಅವರು ಬಿಟ್ಟುಹೋದ ಅಮಾಯಕ ಮೂಕಪ್ರಾಣಿಗಳ ನೋವು ಮಾತ್ರ ಹೇಳತೀರಲಾಗದು.

ಕಳೆದ ತಿಂಗಳು ಬಿಜಾಪುರ ನಗರದಿಂದ 70 ಕಿ.ಮಿ. ದೂರದ ಗಡಿಭಾಗದ ಊರಾದ ಚಡಚಣದ ನನ್ನ ಆತ್ಮೀಯ ಮಿತ್ರನೊಬ್ಬನ ತಾಯಿಯ ಅಂತ್ಯಸಂಸ್ಕಾರಕ್ಕೆ ಹೋಗಿದ್ದೆ. ರಾತ್ರಿ ಬಿಜಾಪುರದಲ್ಲಿ ಊಟ ಮಾಡಿ, ಜಮಖಂಡಿ, ರಾಮದುರ್ಗ ಮಾರ್ಗವಾಗಿ ಕಾರಿನಲ್ಲಿ ಗೆಳೆಯರ ಜೊತೆ ವಾಪಾಸ್ ಬರುತ್ತಿರಬೇಕಾದರೆ ಬೆಳಗಿನ ಜಾವ ಮೂರು ಗಂಟೆ ಸಮಯದಲ್ಲಿ ರಾಮದುರ್ಗ-ಸವದತ್ತಿ ನಡುವೆ ಬರುವ ಮುಳ್ಳಳ್ಳಿ ಘಾಟ್ ರಸ್ತೆಯಲ್ಲಿ ರೈತನೊಬ್ಬ ಧಾರವಾಡದ ಕಸಾಯಿಖಾನೆಗೆ ದನಗಳನ್ನು ಹಿಡಿದುಕೊಂಡು ಸಾಗುತ್ತಿದ್ದ. ಅವನನ್ನು ತಡೆದು ನಿಲ್ಲಿಸಿ ಕೇಳಿದೆ. (ಇತ್ತೀಚೆಗೆ ಹಿಂದು ಸಂಘಟನೆಗಳ ಪ್ರತಿಭಟನೆಗೆ ಹೆದರಿ ರಾತ್ರಿ ವೇಳೆ ದನಗಳನ್ನು ಸಾಗಿಸುವ ಪದ್ಧತಿಯಿದೆ.) ನನ್ನನ್ನು ನೋಡಿ ಪೊಲೀಸ್ ಅಧಿಕಾರಿ ಇರಬೇಕೆಂದು ಊಹಿಸಿ, ಬೆಚ್ಚಿದ ಆತ ದನಗಳ ಹಗ್ಗ ಹಿಡಿದ ತನ್ನ ಎರಡು ಕೈಗಳನ್ನು ಜೋಡಿಸಿ ಮುಗಿಯುತ್ತಾ “ಸಾಹೇಬ್ರ, ದಿನಕ್ಕೆ ಒಂದು ಎತ್ತಿಗೆ ಎರಡು ಕೊಡಪಾನ ನೀರು ಬೇಕು, ಎಮ್ಮಿಗೆ ಮೂರು ಕೊಡಪಾನ ನೀರು ಬೇಕಾಗೈತಿ ನಮಗ ಕುಡಿಲಿಕ್ಕೆ ನೀರಿಲ್ಲ, ಇವುಗಳಿಗೆ ನೀರು ಎಲ್ಲಿಂದ ತರಲಿ ನೀವೆ ಹೇಳ್ರಲಾ? ಇವಕ್ಕೆ ನೀರು ಮೇವು ಕೊಡ್ರಲಾ ಸಾಕು, ರೊಕ್ಕ ಬೇಡಾ ತಗೋರಿ ಇವುಗಳನ್ನ,” ಎನ್ನುತ್ತಾ ಅವುಗಳ ಹಗ್ಗವನ್ನು ನನಗೆ ನೀಡಲು ಬಂದಾಗ ಅವನಿಗೆ ಏನು ಉತ್ತರಿಸಬೇಕು ಎಂಬುದೇ ನನಗೆ ತೋಚಲಿಲ್ಲ. ನಾನು ಒಬ್ಬ ರೈತನ ಮಗನಾಗಿ ಹುಟ್ಟಿ, ದನ ಕರುಗಳ ಜೊತೆ ಒಡನಾಡಿ ಬೆಳೆದವನಾಗಿದ್ದರೂ, ಒಂದು ಎತ್ತು, ಅಥವಾ ಎಮ್ಮೆ ಎಷ್ಟು ಪ್ರಮಾಣದ ನೀರು ಕುಡಿಯುತ್ತವೆ ಎಂಬ ಜ್ಙಾನವಿರಲಿಲ್ಲ. ನೀರಿನ ಮಹತ್ವ ಗೊತ್ತಿರುವ ಆ ಮಂದಿಗೆ ಇದು ಗೊತ್ತಿದೆ. ಇಂತಹ ನಾವು ಕಾಣಲಾಗದ, ಕೇಳಲಾಗದ ರೈತರ ಬವಣೆಗಳು ಸುದ್ದಿಮಾಧ್ಯಗಳಿಗೆ ಆದ್ಯತೆಯ ವಿಷಯಗಳೇ ಅಲ್ಲ.

ನಿಮಗೆಲ್ಲಾ ಗೊತ್ತಿರುವಂತೆ ಕರ್ನಾಟಕದಲ್ಲಿ ಗಣಿ ಉದ್ಯಮ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದಾಗ ಪ್ರತಿದಿನ ಬಳ್ಳಾರಿಯಿಂದ ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ ಮಾರ್ಗವಾಗಿ ಕಾರವಾರ ಬಂದರಿಗೆ ಆರು ಸಾವಿರ ಲಾರಿಗಳು ಸಂಚರಿಸುತಿದ್ದವು. ಎಷ್ಟೋ ಹಳ್ಳಿಗಳಲ್ಲಿ ಮಾನಸಿಕ ಅಸ್ವಸ್ತರಾದ ವ್ಯಕ್ತಿಗಳನ್ನು ಸಾಕಲಾರದ ಕುಟುಂಬಗಳು, ಲಾರಿಯ ಚಾಲಕನಿಗೆ ನೂರು ರೂಪಾಯಿ ನೀಡಿ ಎಲ್ಲಿಯಾದರೂ ಇಳಿಸಿಬಿಡು ಎಂದು ನತದೃಷ್ಟರನ್ನು ಸಾಗಹಾಕುತಿದ್ದರು. ಅದರ ಪರಿಣಾಮವಾಗಿ ಇವತ್ತಿಗೂ ಹುಬ್ಬಳ್ಳಿ-ಕಾರವಾರ ರಸ್ತೆಯ ಹೆದ್ದಾರಿಯಲ್ಲಿ ಕಲಘಟಗಿ ಪಟ್ಟಣದ ನಂತರ ಬರುವ ಕಿರುವತ್ತಿ ಎಂಬ ಊರನ್ನು ದಾಟಿದ ಮೇಲೆ ಸಿಗುವ ಕಾಡಿನ ನಡುವೆ ಕಾರವಾರದ ವರೆಗೆ ಹೆದ್ದಾರಿಯಲ್ಲಿ ಬೆತ್ತಲೆಯಾಗಿ ಓಡಾಡುವ ಇವರನ್ನು ಕಾಣಬಹುದು. ಅಲ್ಲಿನ ಮಳೆ, ಚಳಿ, ಗಾಳಿ ಎನ್ನದೆ ರಸ್ತೆ ಬದಿ ನತದೃಷ್ಟರು ಕುಳಿತಿರುವುದನ್ನು ನೋಡಿದರೆ, ಕರಳು ಕಿವುಚಿದಂತಾಗುತ್ತದೆ.

ಎರಡು ವರ್ಷದ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ ಹಳ್ಳಿಯೊಂದರ ಐವತ್ತು ವರ್ಷದ ವಿಧವೆ ಹೆಣ್ಣು ಮಗಳೊಬ್ಬಳು ತನ್ನ 18 ವರ್ಷದ ಮಾನಸಿಕ ಅಸ್ವಸ್ಥ ಮಗನೊಂದಿಗೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಳು. ಹೆತ್ತ ತಾಯಿಯ ಎದುರು ಮಗ ಅರಿವಿಲ್ಲದೆ ಬೆತ್ತಲೆಯಾಗಿ ನಿಲ್ಲುವುದನ್ನು ನೋಡಲಾಗದ ಆ ತಾಯಿ ಬಾವಿಯಲ್ಲಿ ನೀರು ಸೇದುವ ಹಗ್ಗದಲ್ಲಿ ತನ್ನ ದೇಹದ ಜೊತೆ ಮಗನ ದೇಹವನ್ನು ಬಂಧಿಸಿ, ಬಿಗಿಯಾಗಿ ಕಟ್ಟಿಕೊಂಡು ಸಮುದ್ರಕ್ಕೆ ಹಾರಿದ ಆ ಹೃದಯ ವಿದ್ರಾವಕ ಘಟನೆಗೆ ಆ ದಿನ ಕುಮಟಾ ಪ್ರವಾಸಿ ಮಂದಿರದಲ್ಲಿದ್ದ ನಾನು ಸಾಕ್ಷಿಯಾಗಿದ್ದೆ. ಬಡತನಕ್ಕೆ ಎಷ್ಟೊಂದು ಕರಾಳ ಮುಖಗಳಿವೆ ಎಂಬುದಕ್ಕೆ ಉದಾಃಹರಣೆಯಾಗಿ ಇವುಗಳನ್ನು ನಿಮಗೆ ನಾನು ಹೇಳಬೇಕಾಯಿತು. ಆರು ಕೋಟಿ ಜನಸಂಖ್ಯೆ ದಾಟಿರುವ ಕರ್ನಾಟಕದಲ್ಲಿ ಇಂದು ಲಕ್ಷಾಂತರ ಮಂದಿ ಮಾನಸಿಕ ಅಸ್ವಸ್ಥರಿದ್ದಾರೆ. ಆದರೆ, ಇರುವುದು ಎರಡೇ ಆಸ್ಪತ್ರೆಗಳು, ಒಂದು ಬೆಂಗಳೂರು, ಮತ್ತೊಂದು ಧಾರವಾಡದಲ್ಲಿ. ಇವುಗಳ ಸ್ಥಿತಿ ಕೂಡ ನರಕ ಸದೃಶ್ಯ ಎಂದರೆ ತಪ್ಪಾಗಲಾರದು. ಇಂತಹ ಮನಕಲಕುವ ಸುದ್ದಿಗಳು ಯಾಕೆ ಸಾರ್ವಜಿನಿಕರ, ಅಥವಾ ಸಮಾಜದ ಗಮನ ಸೆಳೆಯುವಲ್ಲಿ ವಿಫಲವಾಗಿವೆ ಎಂಬುದರ ಬಗ್ಗೆ ಪತ್ರಕರ್ತರಾದ ನಾವು ಒಮ್ಮೆ ನಮ್ಮ ಆತ್ಮ ಸಾಕ್ಷಿಗೆ ಪ್ರಶ್ನೆ ಹಾಕಿಕೊಳ್ಳುವುದು ಒಳಿತು.

ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಒಂದುವಾರ ಕೇರಳ ಮತ್ತು ತಮಿಳುನಾಡು ಪ್ರವಾಸದಲ್ಲಿದ್ದೆ. ತಿರುವನಂತಪುರದಲ್ಲಿದ್ದಾಗ ಹಿಂದೂ ಪತ್ರಿಕೆಯಲ್ಲಿ ಕರ್ನಾಟಕದ ಅಘಾತಕಾರಿ ಸುದ್ಧಿಯೊಂದು ರಾಷ್ಟ್ರೀಯ ಸುದ್ಧಿಯಾಗಿ ಪ್ರಕಟವಾಗಿತ್ತು. ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ 10 ವರ್ಷಗಳ ಅನುಭವ ಇರುವ ವಕೀಲರಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಏರ್ಪಡಿಸಲಾಗಿತ್ತು. 528 ವಕೀಲರು ಪರೀಕ್ಷೆ ತೆಗೆದುಕೊಂಡು ಕೇವಲ ಒಬ್ಬ ಅಭ್ಯರ್ಥಿ ಮಾತ್ರ ಪಾಸಾಗಿದ್ದ. ಮಾರನೇ ದಿನ ನಾನು ಮಧುರೈ ನಗರಕ್ಕೆ ಬಂದಾಗ ಅಲ್ಲಿನ ಇಂಡಿಯನ್‌ ಎಕ್ಸ್‌ಪ್ರೆಸ್ ದಿನಪತ್ರಿಕೆ ಈ ಕುರಿತು ಸಂಪಾದಕೀಯ ಬರೆದು ಬೆಂಗಳೂರಿನಲ್ಲಿ ರಾಷ್ಟ್ರೀಯ ಕಾನೂನು ಶಾಲೆ ಇದ್ದೂ ಕೂಡ ವಕೀಲರ ಬುಧ್ಧಿಮತ್ತೆ ಕುರಿತು ತೀವ್ರ ವಿಷಾದ ವ್ಯಕ್ತಪಡಿಸಿ, ಇದೊಂದು ಅಘಾತಕಾರಿ ಬೆಳವಣಿಗೆ ಎಂದು ಲೇಖನ ಬರೆದಿತ್ತು. ಪ್ರವಾಸ ಮುಗಿಸಿ ಬಂದ ನಾನು, ಕನ್ನಡದ ಅಷ್ಟೂ ಪತ್ರಿಕೆಗಳನ್ನು ತೆಗೆದು ಹುಡುಕಿದರೆ ಈ ಸುದ್ದಿ ಎಲ್ಲಿಯೂ ಪ್ರಕಟವಾಗಿರಲಿಲ್ಲ. ನಂತರ ನಾನೇ “ನಿಂತ ನೀರಾಗಿ ಕೊಳೆತವರು” ಎಂಬ ತಲೆ ಬರಹದ ಅಡಿ ಒಂದು ಲೇಖನವನ್ನು ಬರೆದು ಅಂತರ್ಜಾಲ ಪತ್ರಿಕೆ ವರ್ತಮಾನದಲ್ಲಿ ಪ್ರಕಟಿಸಿದೆ. ಈ ಲೇಖನ ತೀವ್ರ ಚರ್ಚೆಗೆ ಗ್ರಾಸವಾಯಿತು. ನಂತರ ಇದೇ ಲೇಖನವನ್ನು ಪ್ರಜಾವಾಣಿಯ ಸಂಪಾದಕೀಯ ಪುಟದಲ್ಲಿ ಬರುವ ಸಂಗತ ವಿಭಾಗಕ್ಕೆ ಕಳಿಸಿಕೊಟ್ಟೆ. ಆದರೆ, ಪತ್ರಿಕೆ ನನ್ನ ಲೇಖನವನ್ನು ಪ್ರಕಟಿಸಲಿಲ್ಲ. ಬದಲಾಗಿ ಅದನ್ನು ಆಧಾರವಾಗಿಟ್ಟುಕೊಂಡು ವಕೀಲರ ಸಂಘದ ಅಧ್ಯಕ್ಷ ಮತ್ತು ಹಿರಿಯ ವಕೀಲರ ಅಭಿಪ್ರಾಯದೊಂದಿಗೆ ಒಂದು ವಾರದ ನಂತರ ಮುಖಪುಟ ಸುದ್ದಿಯಾಗಿ ಪ್ರಕಟಿಸಿತು.

ಇತ್ತೀಚೆಗೆ ನಮ್ಮ ಮಾಧ್ಯಮಗಳ ಆದ್ಯತೆಗಳು ಹೇಗೆ ಬದಲಾಗುತ್ತಿವೆ ಎಂಬುದನ್ನು ತಿಳಿಸಲು ಇದನ್ನು ಪ್ರಸ್ತಾಪಿಸಿದೆ.

ಇನ್ನೊಂದು ಇಂಗ್ಲೀಷ್ ದಿನ ಪತ್ರಿಕೆಯ ಹೀನ ಇತಿಹಾಸವನ್ನು ನಾನು ನಿಮ್ಮೆದುರು ಪ್ರಸ್ತಾಪಿಸಲೇಬೇಕು. ಬಿರ್ಲಾ ಒಡೆತನಕ್ಕೆ ಸೇರಿದ ದೆಹಲಿ ಮೂಲದ ಹಿಂದೂಸ್ತಾನ್ ಟೈಮ್ಸ್ ಎಂಬ ಇಂಗ್ಲೀಷ್ ದಿನಪತ್ರಿಕೆಯೊಂದಿದೆ. ಅದು ಮುಂಬೈ ಆವೃತ್ತಿಯನ್ನು ಇತ್ತೀಚೆಗೆ ಪ್ರಾರಂಭಿಸಿತು. ತನ್ನ ಪ್ರಸಾರವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಒಂದು ಸ್ಕೂಪ್ ವರದಿಯೊಂದಿಗೆ ತನ್ನ ಮುಂಬೈ ಆವೃತ್ತಿಯನ್ನು ಆರಂಭಿಸಿತು. ಈಗ ದೇಶದ ಬಹು ದೊಡ್ಡ ಹಗರಣಗಳಲ್ಲಿ ಒಂದಾಗಿರುವ, ಮಹಾರಾಷ್ಟ್ರದ ಮುಖ್ಯಮಂತ್ರಿ ಅಶೋಕ್ ಚವಾಣ್ ರಾಜಿನಾಮೆಗೆ ಕಾರಣವಾದ ಆದರ್ಶ ಹೌಸಿಂಗ್ ಸೊಸೈಟಿ ಹಗರಣವನ್ನು ಈ ಪತ್ರಿಕೆ ಬಯಲಿಗೆ ತರುವ ಮೂಲಕ ಮಹಾರಾಷ್ಟ್ರದಲ್ಲಿ ಸಂಚಲನವನ್ನು ಉಂಟುಮಾಡಿತು.

ಇಂತಹದ್ದೇ ಸ್ಕೂಪ್ ಸುದ್ಧಿಯ ಮೂಲಕ ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಆವೃತ್ತಿ ತರಲು ಹೋದೀ ಪತ್ರಿಕೆ ತೀವ್ರ ಮುಖಭಂಗ ಅನುಭವಿಸಿತು. ಇಂದೂರ್ ಆಸ್ಪತ್ರೆಯಲ್ಲಿ ಜನಿಸುವ ಮಕ್ಕಳಿಗೆ ಲಿಂಗ ಪರಿವರ್ತನೆ ಮಾಡಲಾಗುತ್ತಿದೆ ಎಂಬ ಅವೈಜ್ಙಾನಿಕ ವರದಿಯೊಂದನ್ನು ಪ್ರಕಟಿಸಿದ ಹಿಂದೂಸ್ಥಾನ್ ಟೈಮ್ಸ್, ಕೇಂದ್ರ ಮತ್ತು ಮಧ್ಯಪ್ರದೇಶದ ರಾಜ್ಯ ಸರ್ಕಾರಗಳಿಗೆ ಮುಜುಗರವನ್ನುಂಟು ಮಾಡಿತು. ಎರಡು ಸರ್ಕಾರಗಳು ತನಿಖೆಗೆ ಕೂಡ ಆದೇಶಿಸಿದ್ದವು. ಆದರೆ, ಹಿಂದೂ ಇಂಗ್ಲೀಷ್ ದಿನ ಪತ್ರಿಕೆ ಈ ಕುರಿತು ವಿಶ್ವದ ನಾನಾ ದೇಶಗಳಲ್ಲಿರುವ ಮಕ್ಕಳ ತಜ್ಙರನ್ನು ಸಂಪರ್ಕಿಸಿ, ಅವರ ಸಂದರ್ಶನವನ್ನು ಪ್ರಕಟಿಸಿ, ಎಳೆಯ ಮಕ್ಕಳ ಲಿಂಗ ಪರಿವರ್ತನೆ ಅಸಾಧ್ಯ ಎಂಬುದನ್ನ ಸಾಬೀತು ಪಡಿಸಿತು. ಇದಕ್ಕಾಗಿ ಭಾರತವೂ ಸೇರಿದಂತೆ ನೂರೈವತ್ತುಕ್ಕೂ ಹೆಚ್ಚು ತಜ್ಙರನ್ನು ಅದು ಸಂಪರ್ಕಿಸಿತ್ತು. ಈ ಕುರಿತು ಲೇಖನ ಬರೆದು, ಸಂದರ್ಶನಗಳ ಜೊತೆ ಪ್ರಕಟಿಸಿತು. ಅಲ್ಲದೆ, ನಮ್ಮ ಪ್ರತಿಸ್ಪರ್ಧಿ ಪತ್ರಿಕೆಯೊಂದು ಜನತೆಯನ್ನು ತಪ್ಪು ಹಾದಿಯಲ್ಲಿ ಕೊಂಡೊಯ್ಯುವಾಗ ಓದುಗರಿಗೆ ವಾಸ್ತವ ಸತ್ಯ ತಿಳಿಸುವುದು ನಮ್ಮ ಕರ್ತವ್ಯ ಎಂದು ಒಂದು ಅಡಿ ಟಿಪ್ಪಣಿಯನ್ನು ಸಹ ಬರೆಯಲಾಗಿತ್ತು. ಇದರ ಪರಿಣಾಮವಾಗಿ ವರದಿ ಮಾಡಿದ್ದ ಓರ್ವ ವರದಿಗಾರ್ತಿ ಮತ್ತು ಸ್ಥಳೀಯ ಸ್ಥಾನಿಕ ಸಂಪಾದಕ ಇಬ್ಬರೂ ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆಯ ಇಂದೋರ್ ಆವೃತ್ತಿ ಪ್ರಾರಂಭವಾದ ಮಾರನೇ ದಿನ ಕೆಲಸ ಕಳೆದುಕೊಂಡರು. ಇದನ್ನೆಲ್ಲಾ ನೋಡುತಿದ್ದರೆ, ನನ್ನ ಗುರು ಸಮಾನರಾದ ವಡ್ಡರ್ಸೆ ರಘುರಾಮ ಶೆಟ್ಟರು ಸುದ್ಧಿ ಕುರಿತಂತೆ ಪದೇ ಪದೇ ಹೇಳುತಿದ್ದ ಒಂದು ಮಾತು ನೆನಪಿಗೆ ಬರುತ್ತದೆ. “ಆಳವಾಗಿ ಯೋಚಿಸಿ. ಸುದ್ಧಿಯ ಸತ್ಯಾಂಶವನ್ನು ವಿವಿದ ಮೂಲಗಳಿಂದ ಖಚಿತಪಡಿಸಿಕೊಂಡು ಬರೆಯ ಬೇಕು. ಇದು ಹೇಗಿರಬೇಕೆಂದರೆ, ಒಟ್ಟಿಗೆ ಎಲ್ಲವನ್ನು ವಾಂತಿ ಮಾಡಿದಂತಿರಬೇಕು, ಆದರೆ, ಮಾಡಿದ ವಾಂತಿಯನ್ನು ಮಾತ್ರ ಮತ್ತೇ ತಿನ್ನುವಂತಾಗಬಾರದು.” ಇದು ಶೆಟ್ಟರ ಅನುಭವದ ಮಾತು.

ಇತ್ತೀಚೆಗೆ ತಮ್ಮ ಪ್ರಸಾರ ಹೆಚ್ಚಿಸಿಕೊಳ್ಳಲು ಪತ್ರಿಕೆಗಳು ಮತ್ತು ವೀಕ್ಷಕರನ್ನು ಹೆಚ್ಚಿಸಿಕೊಳ್ಳಲು ಸುದ್ಧಿವಾಹಿನಿಗಳು ಎಂತಹದ್ದೇ ಅಡ್ಡ ಹಾದಿ ಹಿಡಿಯಲು ಸಿದ್ಧವಾಗಿವೆ. ನೀವೇ ಗಮನಿಸಿದ್ದೀರಿ ಎಂದು ಭಾವಿಸಿದ್ದೇನೆ. ಕನ್ನಡದ ದಿನ ಪತ್ರಿಕೆಯೊಂದು ಯಡಿಯೂರಪ್ಪ ಜೈಲಿಗೆ ಹೋದಾದ ಇಡೀ ಮುಖಪುಟದ ತುಂಬ ಸರಳುಗಳ ಹಿಂದೆ ಯಡಿಯೂರಪ್ಪ ಕುಳಿತಿರುವ ಚಿತ್ರವನ್ನು ಪ್ರಕಟಿಸಿತು. ಅದೇ ಪತ್ರಿಕೆ ಆತ ಜೈಲಿನಿಂದ ಬಿಡುಗಡೆಯಾದಾಗ ಆತ್ಮಾವಲೋಕನ ಎಂಬ ತಲೆಬರಹದ ಅಡಿ ಆತನ ಸಂದರ್ಶನವನ್ನು ಪ್ರಕಟಿಸಿ, ಅನುಕಂಪದ ಲೇಖನವನ್ನು ಬರೆಯಿತು. ನೀವೇ ಹೇಳಿ ಇದನ್ನು ಹೇಗೇ ಅರ್ಥೈಸಿಕೊಳ್ಳಬೇಕು? ರಾಜಕಾರಣಿ ಹಾಗೂ ಬೆಳಗಾವಿ ಮೂಲದ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಪ್ರಭಾಕರ ಕೋರೆ ಎಂಬ ವ್ಯಕ್ತಿ ಅದೇ ಪತ್ರಿಕೆಯಲ್ಲಿ ತನ್ನ ಶಿಕ್ಷಣ ಸಂಸ್ಥೆಯ ಬಗ್ಗೆ ಅಂಕಣ ಬರೆಯುತಿದ್ದಾರೆ. ಎದೆ ಸೀಳಿದರೂ ನಾಲ್ಕು ಕನ್ನಡ ಅಕ್ಷರ ಬರೆಯಲು ಬಾರದ ಕೋರೆ ಇಂದು ಅಂಕಣಕಾರ. ನಿಮಗೊಂದು ಸತ್ಯ ಹೇಳುತ್ತೇನೆ. ಒಂಬತ್ತು ವರ್ಷದ ಹಿಂದೆ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಬಗ್ಗೆ ಉದಯ ಟಿ.ವಿ. ಗಾಗಿ ನಾನು 10 ನಿಮಿಷಗಳ ಅವಧಿಯ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದೆ. ಆ ಸಂದರ್ಭದಲ್ಲಿ ಬೆಳಗಾವಿ ನಗರದಲ್ಲಿ ಸಂಸ್ಥೆಯ ಅತಿಥಿ ಗೃಹದಲ್ಲಿ ಮೂರು ದಿನ ತಂಗಿ ಎಲ್ಲರನ್ನೂ ಸಂದರ್ಶನ ಮಾಡಿದ್ದೆ. ಸಂಸ್ಥೆಯ ಒಂಬತ್ತು ನಿರ್ದೆಶಕರಲ್ಲಿ ಐದು ಮಂದಿಗೆ ಕನ್ನಡವೇ ಗೊತ್ತಿರಲಿಲ್ಲ. ಪ್ರಭಾಕರ ಕೋರೆ ಮರಾಠಿ ಛಾಯೆಯ ಕನ್ನಡ ಮಾತನಾಡಬಲ್ಲರೇ ಹೊರತು ಬರೆಯುವ ವ್ಯಕ್ತಿ ಅಲ್ಲ. ಇದೇ ಪತ್ರಿಕೆಯಲ್ಲಿ ಶ್ರೀಮಂತ ರಾಜಕಾರಣಿಗಳು ( ಆರ್.ವಿ. ದೇಶಪಾಂಡೆ, ಮುರುಗೇಶ್ ನಿರಾಣಿ ಮುಂತಾದವರು) ಕೂಡ ತಮ್ಮ ಪೋಟೊ ಛಾಪಿಸಿಕೊಂಡು ಅಂಕಣ ಬರೆಯುತಿದ್ದಾರೆ. ಇವರುಗಳು ತಾವು ಪ್ರತಿನಿಧಿಸುವ ತಮ್ಮ ಕ್ಷೇತ್ರಗಳ ಸಮಸ್ಯೆಯ ಬಗ್ಗೆ ನನ್ನೆದುರು ಒಂದು ಪುಟದ ಲೇಖನ ಬರೆದು ಕೊಟ್ಟರೆ, ಆ ಕ್ಷಣಕ್ಕೆ ನಾನು ಪತ್ರಿಕೋದ್ಯಮಕ್ಕೆ ವಿದಾಯ ಹೇಳಲು ಸಿದ್ಧನಿದ್ದೇನೆ.

ನಾವು ಪತ್ರಕರ್ತರು ಎಷ್ಟರ ಮಟ್ಟಿಗೆ ಕುಲಗೆಟ್ಟುಹೋಗಿದ್ದೇವೆ ಎಂದರೆ, ನಮಗೆ ಕುಡಿಯಲು ವಿಸ್ಕಿ, ಊಟ ಮತ್ತು ಹೋಟೇಲ್ ಕೊಠಡಿ ಕೊಡುವ ಮಾಲಿಕರು, ಕುಡಿತಕ್ಕೆ ನೆಂಚಿಕೊಳ್ಳಲು ಎಂ.ಟಿ.ಆರ್. ಬ್ರಾಂಡ್ ನಂತಹ ಕುರುಕಲು ತಿಂಡಿಗಳಾದ ಚಕ್ಕುಲಿ, ಕೋಡುಬಳೆ, ಗೋಡಂಬಿ ಸರಬರಾಜು ಮಾಡುವ ಗಿರಾಕಿಗಳು, ಇಲ್ಲವೇ ನಮ್ಮಗಳ ವಿಮಾನ ಪ್ರಯಾಣಕ್ಕೆ ಟಿಕೇಟ್ ತೆಗೆಸಿಕೊಡುವ ಭ್ರಷ್ಟರಾಜಕಾರಣಿಗಳು ಇವರುಗಳನ್ನು ನಾವು ಪತ್ರಿಕೆಗಳ ಮುಖಾಂತರ ದಿನ ಬೆಳಗಾಗುವದರೊಳಗೆ ಅಂಕಣಕಾರರನ್ನಾಗಿ ಮಾಡಬಲ್ಲೆವು. ಇವರು ಅಂಕಣಕಾರರೋ? ಅಥವಾ ಅಂಕಣಕೋರರೋ? ಎಂಬುದನ್ನ ಮುಂದಿನ ದಿನಗಳಲ್ಲಿ ಇತಿಹಾಸ ನಿರ್ಧರಿಸುತ್ತದೆ. ಆದರೆ, ನನ್ನ ಪ್ರಶ್ನೆ ಇಷ್ಟೇ ನಮ್ಮ ಪತ್ರಿಕೆಗಳ ಆದರ್ಶ, ನೈತಿಕತೆ, ಮೌಲ್ಯ, ಬದ್ಧತೆಗಳು ಎಲ್ಲಿ ಮರೆಯಾಗಿ ಹೋದವು?

ಕೇವಲ ಒಂದು ದಶಕದ ಹಿಂದೆ ಯಾವ ಕಾರಣಕ್ಕೂ ಪತ್ರಿಕೆಗಳ ಮುಖಪುಟದಲ್ಲಿ ಕಾಲುಪುಟಕ್ಕಿಂತ ಹೆಚ್ಚು ಜಾಹಿರಾತು ಬಳಸಬಾರದು ಎಂಬ ಅಲಿಖಿತ ನಿಯಮವೊಂದು ಜಾರಿಯಲ್ಲಿತ್ತು. ಇದು ಯಾರೋ ಹಾಕಿದ ನಿಬಂಧನೆಯಾಗಿರಲಿಲ್ಲ. ತಾವಾಗಿಯೇ ಮಾಲಿಕರು ಹಾಕಿಕೊಂಡಿದ್ದ ಲಕ್ಷ್ಮಣ ರೇಖೆಯಾಗಿತ್ತು. ಇಂದು ಇಡೀ ಪುಟವೇಕೆ? ಅಷ್ಟೂ ಪತ್ರಿಕೆಯ ಪುಟಗಳನ್ನು ಜಾಹಿರಾತಿಗೆ ಒತ್ತೆ ಇಡಲು ತಯಾರಿದ್ದಾರೆ. ಮಾಧ್ಯಮಗಳು ಇತ್ತೀಚೆಗೆ ಭ್ರ್ರಷ್ಟ ಮತ್ತು ಶ್ರೀಮಂತ ರಾಜಕಾರಣಿಗಳ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಪಾಲಾಗುತ್ತಿರುವ ಪರಿಣಾಮವಿದು. ಉತ್ಪನ್ನ ವೆಚ್ಚ ಅಧಿಕವಾದ ಕಾರಣ ಜಾಹಿರಾತು ಅನಿವಾರ್ಯ ಎಂಬ ವಾದವನ್ನು ಇವರು ನಮ್ಮ ಮುಂದೆ ಮಂಡಿಸುತಿದ್ದಾರೆ. ಅವರ ಮಾತನ್ನೂ ನಾವು ಗೌರವಿಸೊಣ, ಆದರೆ, ಜಾಹಿರಾತುಗಳನ್ನ ಪ್ರಕಟಿಸುವಾಗ ಸಾಮಾಜಿಕ ಜವಾಬ್ದಾರಿ ಬೇಡವೆ? ಇತ್ತೀಚೆಗೆ ಪತ್ರಿಕೆಗಳಲ್ಲಿ ಮೂರನೇ ದರ್ಜೆ ಸಂಸ್ಕೃತಿಯ ಜಾಹಿರಾತುಗಳು ಪ್ರಕಟವಾಗುತ್ತಿರುವುದನ್ನು ಗಮನಿಸಿದಾಗ ಭಾರತದ ಪುರುಷರೆಲ್ಲಾ ನಪುಂಷಕರು ಇಲ್ಲವೇ ಷಂಡರೆನೋ ಎಂಬ ಸಂಶಯ ಕಾಡುತ್ತದೆ. ಇವಿಷ್ಟೆಯಲ್ಲ, ಹೆಂಗಸರಿಗೆ ಸ್ತನ ದೊಡ್ಡದು ಮಾಡುವುದಕ್ಕೆ, ಗಂಡಸರ ಬೋಳುತಲೆಯಲ್ಲಿ ಕೂದಲು ಬೆಳೆಯುವುದಕ್ಕೆ, ಸಣ್ಣಗಿರುವವರು ದಪ್ಪವಾಗುವುದಕ್ಕೆ, ದಪ್ಪಗಿದ್ದವರು ಸಣ್ಣಗಾಗುವುದಕ್ಕೆ ಎಲ್ಲಾ ಬಗೆಯ ಜಾಹಿರಾತಿಗೂ ಇಲ್ಲಿ ಅವಕಾಶಗಳಿವೆ. ಕ್ಯಾನ್ಸರ್ ರೋಗ ವಾಸಿ ಮಾಡುವ ಕಡ್ಡಿಪುಡಿ ವೈದ್ಯರು ಪತ್ರಿಕೆಗಳಲ್ಲಿ ರಾರಾಜಿಸತೊಡಗಿದ್ದಾರೆ. ಇದೇ ಕರ್ನಾಟಕದಲ್ಲಿ ಲಂಕೇಶ್‌ರವರು ಜಾಹಿರಾತು ನಿರಾಕರಿಸಿ ಪತ್ರಿಕೆಯನ್ನು ಹುಟು ಹಾಕಿ ಆ ಮೂಲಕ ರಾಜ್ಯದ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಬದುಕನ್ನು ಬದಲಾಯಿಸಿದ ಇತಿಹಾಸವಿದೆ. ಅದನ್ನು ನಾವೀಗ ಮರೆತಿದ್ದೆವೆ. ಎಲ್ಲರೂ ಇಂದಿನ ಮಾಲಿಕರ ರೀತಿಯಲ್ಲಿ ಯೋಚಿಸಿದ್ದರೆ, ಕರ್ನಾಟಕದಲ್ಲಿ ಪ್ರಜಾವಾಣಿ ದಿನಪತ್ರಿಕೆ ಹುಟ್ಟುತ್ತಿರಲಿಲ್ಲ. ಮದ್ರಾಸ್ ನಗರದಲ್ಲಿ ಹಿಂದೂ ಎಂಬ ಇಂಗ್ಲೀಷ್ ದಿನಪತ್ರಿಕೆ ಹುಟ್ಟುತ್ತಿರಲಿಲ್ಲ. ಮುಂಬಯನಗರದಲ್ಲಿ ಇಂಡಿಯನ್ ಎಕ್ಸ್ ಪ್ರಸ್ ಪತ್ರಿಕೆ ಹುಟ್ಟುತ್ತಿರಲಿಲ್ಲ.

ಪ್ರಜಾವಾಣಿಯ ಸಂಸ್ಥಾಪಕ ಕೆ.ಎನ್. ಗುರುಸ್ವಾಮಿ ಅವರ ಮಾತೃಬಾಷೆ ತೆಲುಗು. ಅವರು ಮೂಲತಃ ಆಂಧ್ರ್ರದ ಆಧೋನಿ ಪಟ್ಟಣದವರು. ಈಡಿಗ ಸಮುದಾಯಕ್ಕೆ ಸೇರಿದ ಅವರ ಕುಟುಂಬದ ವೃತ್ತಿ ಹೆಂಡ, ಸಾರಾಯಿ ಮಾರುವದಾಗಿತ್ತು.ಅವರು ಅದನ್ನು ಬಿಟ್ಟು 1948 ರಲ್ಲಿ ಬೆಂಗಳೂರಿನಲ್ಲಿ ಪ್ರಥಮವಾಗಿ ಡೆಕ್ಕನ್ ಹೆರಾಲ್ಡ್ ಇಂಗ್ಲೀಷ್ ದಿನಪತ್ರಿಕೆ ತೆಗೆದರು, ಮರುವರ್ಷ ಪ್ರಜಾವಾಣಿ ಪತ್ರಿಕೆ ಪ್ರಾರಂಭಿಸಿದರು. ಶತಮಾನದ ಹಿಂದೆ ಅಂದಿನ ಮದ್ರಾಸ್ ನಗರದಲ್ಲಿ ನಾಲ್ವರು ಬ್ರಾಹಣ ವಕೀಲರು ಸೇರಿ ಆರಂಭಿಸಿದ ಹಿಂದು ಇಂಗ್ಲೀಷ್ ದಿನಪತ್ರಿಕೆಗೆ ಇಡೀ ಭಾರತದಲ್ಲಿ ಒಂದು ವಿಶಿಷ್ಟ ಸ್ಥಾನವಿದೆ. ವೃತ್ತಿಯಲ್ಲಿ ಮಾರವಾಡಿ ಕುಟುಂಬದಿಂದ ಬಂದ ರಾಮನಾಥ ಗೋಯಂಕಾ, ಮುಂಬೈನಲ್ಲಿ ಆರಂಭಿಸಿದ ಇಂಡಿಯನ್ ಎಕ್ಸ್‌ಪ್ರೆಸ್ ಇಂಗ್ಲೀಷ್ ಪತ್ರಿಕೆಗೂ ಒಂದು ದೊಡ್ಡ ಇತಿಹಾಸವಿದೆ. 1975ರ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾಗಾಂಧಿ ವಿರುದ್ಧ ಸಮರವನ್ನೆ ಸಾರಿದ್ದ ಈ ಪತ್ರಿಕೆಯ ಅಂದಿನ ವರದಿಗಳು ಭಾರತದ ಪತ್ರಿಕೋದ್ಯದಲ್ಲಿ ಮೈಲಿಗಲ್ಲು. ಇವರುಗಳು ಲಾಭವನ್ನೇ ಪ್ರಧಾನ ಗುರಿಯಾಗಿಸಿಕೊಡವರಲ್ಲ. ವ್ಯವಹಾರದ ಜೊತೆಜೊತೆಗೆ ಆದರ್ಶವನ್ನು ಮೈಗೂಡಿಸಿಕೊಂಡವರು.

ನನ್ನ ಪ್ರಶ್ನೆ ಇಷ್ಟೆ; ವ್ಯವಹಾರದ ಜೊತೆ ಜೊತೆಗೆ ನೈತಿಕತೆ ಇಲ್ಲದಿದ್ದರೆ ಹೇಗೆ? ನಿಮಗೆ ಲಾಭ ಮಾಡುವ ದೃಷ್ಟಿಕೋನವಿದ್ದರೆ, ಈ ವಲಯಕ್ಕೆ ಏಕೆ ಬರುತ್ತೀರಿ? ಬೇರೆ ವ್ಯಾಪಾರ ಮಾಡಿ.

ಈ ಸಂದರ್ಭದಲ್ಲಿ ಒಂದು ಘಟನೆ ನೆನಪಿಗೆ ಬರುತ್ತಿದೆ: ದಶಕದ ಹಿಂದೆ ವಿಜಯ ಸಂಕೇಶ್ವರರು ‘ವಿಜಯ ಕರ್ನಾಟಕ’ ಪತ್ರಿಕೆ ಹುಟ್ಟು ಹಾಕಿದಾಗ, ಜೊತೆಯಲ್ಲಿ ‘ನೂತನ’ ಎಂಬ ವಾರಪತ್ರಿಕೆ ಹಾಗೂ ‘ಭಾವನಾ’ ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು. ತರಂಗ ಪತ್ರಿಕೆಯ ಸಂಪಾದಕರಾಗಿದ್ದ ಸಂತೂಷ್ ಕುಮಾರ ಗುಲ್ವಾಡಿ ಸಂಪಾದಕರಾಗಿದ್ದ ವಾರಪತ್ರಿಕೆಯನ್ನ ಕೇವಲ 12 ವಾರಗಳಲ್ಲಿ ಮುಚ್ಚಿಹಾಕಲಾಯಿತು. ಮಿತ್ರರಾದ ಜಯಂತ್ ಕಾಯ್ಕಿಣಿ ಇವರ ಸಂಪಾದಕತ್ವದಲ್ಲಿ ಭಾವನಾ ಮಾಸಪತ್ರಿಕೆ ಹತ್ತು ತಿಂಗಳು ಕಾಲ ನಡೆದು ಕನ್ನಡದ ಮಾಸಪತ್ರಿಕೆಗಳಲ್ಲಿ ಹೊಸ ಶಕೆಯನ್ನು ಆರಂಭಿಸಿತ್ತು. ಒಂದು ದಿನ ಕಾಯ್ಕಿಣಿ ಕಚೇರಿಗೆ ಹೋದಾಗ ಅಲ್ಲಿನ ಸಿಬ್ಬಂದಿಯೊಬ್ಬ ‘ಸಾರ್. ಮುಂದಿನ ತಿಂಗಳಿನಿಂದ ಭಾವನಾ ಪತ್ರಿಕೆ ಬರೋದಿಲ್ಲ, ನೀವು ವಿಜಯ ಕರ್ನಾಟಕದ ಸಾಪ್ತಾಹಿಕದಲ್ಲಿ ಕೆಲಸ ಮಾಡಬೇಕೆಂತೆ,’ ಎಂದು ಹೇಳಿದಾಗ, ಏಕಂತೆ ಎಂದು ಕಾಯ್ಕಿಣಿ ಪ್ರಶ್ನಿಸಿದರು. ಪತ್ರಿಕೆ ಲಾಭ ತರುತ್ತಿಲ್ಲ ಎಂದು ಅವನು ಉತ್ತರಿಸಿದಾಗ, ಕುಪಿತಗೊಂಡ ಕಾಯ್ಕಿಣಿ, ‘ನಿಮ್ಮ ಮಾಲಿಕನಿಗೆ ಲಾಭ ಬೇಕಿದ್ದರೆ, ಬೆಂಗಳೂರು ನಗರದಲ್ಲಿ ವೈನ್ ಶಾಪ್ ತೆರಯಲಿಕ್ಕೆ ಹೇಳು,’ ಎನ್ನುತ್ತಾ ಆದಿನ ಕುರ್ಚಿಯಿಂದ ಎದ್ದು ಬಂದರು.

ವರ್ತಮಾನದ ಪತ್ರಿಕೋದ್ಯಮ ಯಾವ ಹಂತ ತಲುಪಿದೆ ಎಂಬುವುದರ ಬಗ್ಗೆ ನಿಮಗೆ ಆಸಕ್ತಿ ಇದ್ದರೆ, ಒಮ್ಮೆ ನೀವು ಬೆಂಗಳೂರಿನ ಮಹಾನಗರ ಪಾಲಿಕೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕಚೇರಿಗೆ ಬೇಟಿ ಕೊಡುವುದು ಒಳಿತು. ಬೆಂಗಳೂರು ನಗರವೊಂದರಲ್ಲೇ ಇನ್ನೂರಕ್ಕೂ ಹೆಚ್ಚು ವಾರಪತ್ರಿಕೆಗಳಿವೆ. ಪ್ರತಿ ಕೌನ್ಸಿಲರ್‌ಗೆ ಬಕೆಟ್ ಹಿಡಿಯಲು ಎರಡೆರಡು ಪತ್ರಿಕೆಗಳಿವೆ. ನನ್ನ ಮಿತ್ರ ಡಾ. ಕೆ. ಪುಟ್ಟಸ್ವಾಮಿ ಅಲ್ಲಿ ಅಧಿಕಾರಿಯಾಗಿದ್ದಾಗ‍ ಬೇಟಿ ಮಾಡಲು ಹೋಗಿದ್ದ ನನಗೆ ಈ ಸಂಗತಿ ತಿಳಿಯಿತು. ಸಂಪಾದಕರು ಎನಿಸಿಕೊಂಡ ಆ ಮಹಾಶಯರ ಗತ್ತು, ದೌಲತ್ತು ಇವುಗಳನ್ನ ನೋಡುವುದೇ ಚೆಂದ. ಇನ್ನು ನಾಲ್ಕು ವರ್ಷ ನನ್ನ ಮಿತ್ರ ಅಲ್ಲೇ ಇದ್ದಿದ್ದರೆ, ಆತ ಸಂತನಾಗುವ ಅವಕಾಶವಿತ್ತು. ಏಕೆಂದರೆ, ಆ ರೋಲ್ ಕಾಲ್ ಗಿರಾಕಿಗಳಿಗೆ ಪುಟ್ಟಸ್ವಾಮಿ ತಾಳ್ಮೆಯಿಂದ ಉತ್ತರಿಸುತಿದ್ದ ರೀತಿ ನೋಡಿ ನಾನೇ ಬೆರಗಾಗಿದ್ದೀನಿ. ನಾನು ಮಿತ್ರನ ಆ ಸ್ಥಾನದಲ್ಲಿದ್ದಿದ್ದರೆ ಕಚೇರಿಯಲ್ಲಿ ನಾಲ್ಕು ಹೆಣ ಬಿದ್ದು, ಇಷ್ಟರಲ್ಲಿ ನಾನು ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯಬೇಕಿತ್ತು.

ಇದು ಕೇವಲ ಮುದ್ರಣ ಮಾದ್ಯಮದ ಅವತಾರವಷ್ಟೇ ಅಲ್ಲ, ಇವರನ್ನೂ ಮೀರಿಸುವ ಹಲಾಲುಕೋರರು ನಮ್ಮ ದೃಶ್ಯ ಮಾಧ್ಯದಲ್ಲೂ ಕೂಡ ಇದ್ದಾರೆ. ಕಳೆದ ವರ್ಷ ಬೆಳಗಾವಿ ನಗರದಲ್ಲಿ 45 ವರ್ಷದ ಮಕ್ಕಳಿಲ್ಲದ ವಿಧವೆಯೊಬ್ಬಳು ನೆರೆ ಮನೆಯ ಹನ್ನೊಂದು ವರ್ಷದ ಗಂಡು ಮಗುವನ್ನು ಮುದ್ದಿಸಿದ ಏಕೈಕ ಕಾರಣಕ್ಕಾಗಿ, “ಆಂಟಿ ಬಲು ತುಂಟಿ” ಎಂಬ ಹೆಸರಿನಲ್ಲಿ ಸುದ್ದಿ ಚಾನಲ್ ಒಂದು ವಿಧವೆಯೊಬ್ಬಳು ಲೈಂಗಿಕ ತೃಷೆಗಾಗಿ ಬಾಲಕನೊಬ್ಬನನ್ನು ಬಳಸಿಕೊಂಡಳು ಎಂಬಂತೆ ಇಡೀ ದಿನ ಸುದ್ದಿ ಪ್ರಸಾರ ಮಾಡಿತು. ಹನ್ನೊಂದು ವರ್ಷದ ಮಗುವಿಗೆ ಲೈಂಗಿಕ ವಿಷಯಗಳ ಬಗ್ಗೆ ಅರಿವು ಇರುವುದಿಲ್ಲ ಎಂಬ ಕನಿಷ್ಟ ತಿಳುವಳಿಕೆ ಈ ಅಯೋಗ್ಯರಿಗೆ ಬೇಡವೇ? ಆ ಹೆಣ್ಣು ಮಗಳ ಖಾಸಗಿ ಬದುಕು ಏನಾಗಿರಬೇಡ, ನೀವೆ ಯೋಚಿಸಿ?

ಮಾಧ್ಯಮದ ಮೇಲೆ, ಇದರ ಭಾಗವಾಗಿರುವ ನಮ್ಮಗಳ ಮೇಲೆ ಯಾವುದೇ ಹಿಡಿತವಿಲ್ಲದೇ ಇರುವುದು ಇಂತಹ ದುರಂತಗಳಿಗೆ ಕಾರಣವಾಗಿದೆ. ನೈತಿಕತೆಯನ್ನ, ಪ್ರಾಮಾಣಿಕತೆಯನ್ನ ಸಮಾಜಕ್ಕೆ ಬೋಧಿಸುವ ಮೊದಲು ನಾವು ಇವುಗಳನ್ನು ಅಳವಡಿಸಿಕೊಳ್ಳಬೇಕಿದೆ. ಮಿತ್ರರೆ, ಮೂರು ದಶಕಗಳಿಂದ ಈ ವೃತ್ತಿಯಲ್ಲಿರುವ ನಾನು ಮಾಧ್ಯಮದ ಸಹದ್ಯೋಗಿಗಳ ಬಗ್ಗೆ ಪ್ರೀತಿಯನ್ನಾಗಲಿ, ದ್ವೇಷವನ್ನಾಗಲಿ ಇಟ್ಟುಕೊಂಡವನಲ್ಲ. ಅಂದ ಮಾತ್ರಕ್ಕೆ ಕಣ್ಣೆದುರುಗಿನ ವಂಚನೆಗಳನ್ನು ಮುಚ್ಚಿಟ್ಟುಕೊಂಡವನೂ ಅಲ್ಲ. ಇದ್ದದನ್ನು ಇದ್ದ ಹಾಗೆ, ಎದೆಗೆ ಒದ್ದ ಹಾಗೆ ಹೇಳುವುದು ನನ್ನ ಮಂಡ್ಯದ ಮಣ್ಣಿನ ಗುಣ. ಅದರ ಭಾಗವಾಗಿರುವ ನಾನು ನನಗೆ ಅನಿಸದ್ದನ್ನು ಇಲ್ಲಿ ನಿಮ್ಮೆದುರು ಹಂಚಿಕೊಂಡಿದ್ದೇನೆ. ಯಾರಿಗಾದರೂ ನೋವಾಗಿದ್ದರೆ, ಕ್ಷಮೆ ಇರಲಿ.

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-28)


– ಡಾ.ಎನ್.ಜಗದೀಶ್ ಕೊಪ್ಪ


ಜಿಮ್ ಕಾರ್ಬೆಟ್ ಭಾರತ ತೊರೆಯುವ ಮುನ್ನ ಕೊನೆಯ ದಿನಗಳಲ್ಲಿ ಬರೆದ ಎರಡು ಕೃತಿಗಳಿಂದ ವಿಶ್ವ ಪ್ರಸಿದ್ಧನಾದ. ಆತನ ಮೊದಲ ಕೃತಿಯನ್ನು (ಜಂಗಲ್ ಸ್ಟೊರೀಸ್) ಇಂಗ್ಲೆಂಡ್ ಮೂಲದ ‘ಆಕ್ಸ್‌ಫರ್ಡ್ ಯೂನಿರ್ವಸಿಟಿ ಪ್ರೆಸ್’ ಪ್ರಕಟಿಸಲು ಮುಂದೆ ಬಂದಿತು. ಭಾರತದ ಓದುಗರಿಗಾಗಿ ಮದ್ರಾಸ್ ಶಾಖೆಯ ಮುಖಾಂತರ ಪುಸ್ತಕವನ್ನು ಪ್ರಕಟಿಸಿದ ಸಂಸ್ಥೆ ನಂತರ ಅದನ್ನು ಕ್ರಮವಾಗಿ ಇಂಗ್ಲೆಂಡ್ ಮತ್ತು ಅಮೇರಿಕಾದಲ್ಲಿ ಪ್ರಕಟಿಸಿತು. ಜಿಮ್ ಕಾರ್ಬೆಟ್‌ನ “ಜಂಗಲ್ ಸ್ಟೊರೀಸ್” ಕೃತಿ ನಿರೀಕ್ಷೆಗೂ ಮೀರಿ ಆತನಿಗೆ ಮತ್ತು ಪ್ರಕಟಿಸಿದ “ಆಕ್ಸ್‌ಫರ್ಡ್ ಯೂನಿರ್ವಸಿಟಿ ಪ್ರೆಸ್” ಸಂಸ್ಥೆಗೆ ಯಶಸ್ಸನ್ನು ತಂದುಕೊಟ್ಟಿತು. ಕೇವಲ ಒಂದು ವರ್ಷದಲ್ಲಿ ಐದು ಲಕ್ಷ ಪ್ರತಿಗಳು ಮಾರಾಟವಾದವು. ಇಂಗ್ಲೆಂಡಿನಲ್ಲಿ ಪರಿಸರ ಕ್ಲಬ್ ರಚಿಸಿಕೊಂಡಿದ್ದ ಕೆಲವರು, ಈ ಕೃತಿಯನ್ನು ಕೊಂಡು ಸದಸ್ಯರಿಗೆ ಉಚಿತವಾಗಿ ಹಂಚಿದರು.

ಮತ್ತೇ ಆಕ್ಸ್‌ಫರ್ಡ್ ಪ್ರಕಾಶನ ಸಂಸ್ಥೆ, ಶಿಕಾರಿಯ ಅನುಭವನ್ನು ಬರೆದುಕೊಡುವಂತೆ  ಜಿಮ್ ಕಾರ್ಬೆಟ್‌ಗೆ ಮನವಿ ಮಾಡಿತು. ಇದರ ಫಲವಾಗಿ  ಕಾರ್ಬೆಟ್‌ನಿಂದ “ಮ್ಯಾನ್ ಈಟರ್ ಆಪ್ ಕುಮಾವನ್” ಎಂಬ ಕೃತಿ ಹೊರಬಂದಿತು. ಅವನ ಮೊದಲ ಕೃತಿ “ಜಂಗಲ್ ಸ್ಟೊರೀಸ್”, ಕಾಡಿನ ಅನುಭವಗಳ ಲೇಖನಗಳ ಸಂಕಲನವಾಗಿದ್ದರೆ, ಎರಡನೇ ಕೃತಿ ತಾನು ಬೇಟೆಯಾಡಿದ ನರಭಕ್ಷಕ ಚಿರತೆಯ ಒಂದು ಸುಧೀರ್ಘ ರೋಚಕ ಕಥನವಾಗಿತ್ತು. ಒಂದು ರೊಮಾಂಚಕಾರಿ ಪತ್ತೆದಾರಿ ಮಾದರಿಯಲ್ಲಿ ತಾನು ಬೇಟೆಯಾಡಿದ ನರಭಕ್ಷಕ ಹುಲಿಯ ಬಗ್ಗೆ ಪ್ರತಿ ಪುಟದಲ್ಲೂ ಓದುಗರಿಗೆ ಕುತೂಹಲವಿರುವಂತೆ ರೋಚಕತೆಯ ಅಂಶವನ್ನು ಕಾಪಾಡಿಕೊಂಡು ಬರೆದದ್ದು ಕಾರ್ಬೆಟ್‌ನ ವಿಶೇಷವಾಗಿತ್ತು.

ಈ ಕೃತಿ ಕೂಡ ಅಭೂತ ಪೂರ್ವ ಯಶಸ್ಸನ್ನು ಕಂಡಿತು. ಇದರಿಂದ ಪ್ರೇರಿತನಾದ ಕಾರ್ಬೆಟ್ ಮುಂದೆ ರುದ್ರ ಪ್ರಯಾಗದ ನರಭಕ್ಷಕ ಚಿರತೆಯನ್ನು ಬೇಟೆಯಾಡಿದ ಅನುಭವವನ್ನು  “ದ ಮ್ಯಾನ್ ಈಟಿಂಗ್ ಲೆಪರ್ಡ್ ಆಫ್ ರುದ್ರಪ್ರಯಾಗ್” ಎಂಬ ಹೆಸರಿನಲ್ಲಿ ಪ್ರಕಟಿಸಿದ. ಈ ಕೃತಿ ಇಂದಿಗೂ ಕೂಡ ಜಗತ್ತಿನ ಅತಿ ಹೆಚ್ಚು ಮಾರಾಟವಾದ ಪುಸ್ತಕಗಳ ಪಟ್ಟಿಗೆ ಸೇರಿದೆ. ಎರಡು ಸಾವಿರದ ಇಸವಿಯ ಅಂತ್ಯದ ವೇಳೆಗೆ ಈ ಕೃತಿ  ಜಗತ್ತಿನಾದ್ಯಂತ 56 ಲಕ್ಷ ಪ್ರತಿ ಮಾರಾಟವಾಗಿದೆ. ಅಲ್ಲದೆ, ಲೆಕ್ಕಕ್ಕೆ ಸಿಗದ ಹಾಗೆ ಸ್ಥಳಿಯ ಭಾಷೆಗಳಲ್ಲಿ ಪ್ರಕಟವಾಗಿದೆ, (ಕನ್ನಡದಲ್ಲಿ ತೇಜಸ್ವಿ ಅನುವಾದ ಮಾಡಿರುವ ಈ ಕೃತಿ ಹದಿನಾಲ್ಕಕ್ಕೂ ಹೆಚ್ಚು ಮುದ್ರಣವನ್ನು ಕಂಡಿದೆ)

1946ರ ಮಾರ್ಚ್‌ನಲ್ಲಿ ಅಮೇರಿಕಾದ “ಯೂನಿವರ್ಸಲ್ ಪಿಕ್ಚರ್ಸ್ ಸಂಸ್ಥೆ” ಜಿಮ್ ಕಾರ್ಬೆಟ್‌ನಿಂದ ಹಕ್ಕು ಪಡೆದು, “ಮ್ಯಾನ್ ಈಟರ್ ಆಪ್ ಕುಮಾವನ್” ಚಿತ್ರವನ್ನು ನಿರ್ಮಿಸಿತು. ಭಾರತದ ಮೂಲದ ನಟ ಸಾಬು ನಾಯಕನಾಗಿದ್ದ ಈ ಚಿತ್ರಕ್ಕೆ ಭಾರತ ಸರ್ಕಾರ ಭಾರತದ ಅರಣ್ಯದಲ್ಲಿ ಚಿತ್ರೀಕರಣ ಮಾಡಲು ಅನುಮತಿ ನೀಡಲಿಲ್ಲ. ಹಾಗಾಗಿ ಹಾಲಿವುಡ್‌ನಲ್ಲಿ  ಸೆಟ್ ನಿರ್ಮಿಸಿ ಈ ಚಿತ್ರವನ್ನು ತಯಾರಿಸಲಾಯಿತು. ಹೀಗೆ ಭಾರತ ತೊರೆಯುವ ಮುನ್ನ ಅಪ್ಪಟ ಪರಿಸರ ಪ್ರೇಮಿಯಾಗಿದ್ದ ಕಾರ್ಬೆಟ್‌ಗೆ ಸಂಧಿಗ್ದ ಸ್ಥಿತಿಯೊಂದು ಎದುರಾಯಿತು. ತನ್ನ ಶಿಕಾರಿಯ ಅನುಭವಗಳನ್ನು ದಾಖಲಿಸುತ್ತಾ ಜಗತ್ ಪ್ರಸಿದ್ಧ ಲೇಖಕನಾಗಿ ಹೊರಹೊಮ್ಮಿದ ಕಾರ್ಬೆಟ್ ಅನಿರೀಕ್ಷಿತವಾಗಿ ಮಲೇರಿಯಾ ರೋಗಕ್ಕೆ ತುತ್ತಾಗಿ ತಿಂಗಳು ಗಟ್ಟಲೆ ಹಾಸಿಗೆ ಹಿಡಿದ. ಅದೃಷ್ಟವಶಾತ್ ಆ ವೇಳೆಗೆ ಅವಿಷ್ಕಾರಗೊಂಡಿದ್ದ ಪೆನ್ಸಿಲಿನ್ ಔಷಧದಿಂದಾಗಿ ಚೇತರಿಸಿಕೊಂಡ. ಆದರೆ, ಅವನಿಗೆ ಗಂಟಲು ಬೇನೆ ಕಾರ್ಬೆಟ್‌ಗೆ ಕಾಣಿಸತೊಡಗಿತು. ತಮ್ಮನ ಅನಾರೋಗ್ಯವನ್ನು ನೋಡಿ, ಹೆದರಿದ ಅಕ್ಕ ಮ್ಯಾಗಿ ಭಾರತ ತೊರೆಯುವ ನಿರ್ಧಾರವನ್ನು ಕೈಬಿಡುವಂತೆ ಕೇಳಿಕೊಂಡಳು. ಸ್ವಾತಂತ್ರ್ಯ ನಂತರ ಭಾರತದಲ್ಲಿ ನಮ್ಮ ಆಸ್ತಿಗಳನ್ನು ಭಾರತ ಮುಟ್ಟುಗೋಲು ಹಾಕಿಕೊಂಡರೆ, ಏನು ಮಾಡುವುದು ಎಂಬ ಅವನ ಪ್ರಶ್ನೆಗೆ ಮ್ಯಾಗಿ ಬಳಿ ಉತ್ತರವಿರಲಿಲ್ಲ. ಆಕೆಗಂತೂ ನೈನಿತಾಲ್ ತೊರೆದು ಹೋಗುವುದು ಸಂಕಟದ ವಿಷಯವಾಗಿತ್ತು.

ಗಾರ್ನಿ ಹೌಸ್ ಬಂಗಲೆಯನ್ನು ಮಾರಿದ ನಂತರ ಒಂದು ವಾರ ಆ ಮನೆಯಲ್ಲಿದ್ದು. ಮನೆ ತೊರೆದು ಬರುವಾಗ, ಸೇವಕರು ಮತ್ತು ಅವರ ಕುಟುಂಬದ ಸದಸ್ಯರು ಕೈಮುಗಿಯುತ್ತಾ ಗೇಟಿನ ಮುಂದೆ ತಲೆತಗ್ಗಿಸಿ ನಿಂತಿದ್ದರು. ಅವರ ಕೆನ್ನೆಗಳು ಕಣ್ಣೀರಿನಿಂದ ತೊಯ್ದು ಹೋಗಿದ್ದವು. ಕಾರ್ಬೆಟ್ ಮತ್ತು ಮ್ಯಾಗಿ ಅವರನ್ನು ಸಂತೈಸುವ ಶಕ್ತಿ ಕಳೆದುಕೊಂಡು, ಕಣ್ಣೀರು ಹಾಕುತ್ತಾ ನೈನಿತಾಲ್ ಪರ್ವತವನ್ನು ಇಳಿದು, ಕಲದೊಂಗಿಯ ಮನೆ ಸೇರಿಕೊಂಡಿದ್ದರು. ಬರುವಾಗ ಆ ಎರಡು ವೃದ್ಧ ಜೀವಗಳು ಪರಸ್ಪರ ಕೈ ಹಿಡಿದುಕೊಂಡು ಹಸ್ತವನ್ನು ಅದುಮುವುದರ ಮೂಲಕ ಒಬ್ಬರಿಗೊಬ್ಬರು ಸಂತೈಸಿಕೊಳ್ಳತ್ತಿದ್ದರು. ನೈನಿತಾಲ್, ಮ್ಯಾಗಿ ಮತ್ತು ಕಾರ್ಬೆಟ್‌ಗೆ ಕೇವಲ ಗಿರಿಧಾಮ ಮಾತ್ರವಲ್ಲ, ತಾಯಿ ನೆಲವಾಗಿತ್ತು. ಅಲ್ಲಿಯೇ ಹುಟ್ಟಿ, ಆ ನೆಲದ ಜೊತೆ ಸುಧೀರ್ಘ ಒಡನಾಡಿದ ಆ ಹಿರಿಯ ಜೀವಗಳ ಬಾಲ್ಯದ ನೆನಪುಗಳು ಅಲ್ಲಿನ ಕಲ್ಲು, ಮಣ್ಣು, ಗಿಡ, ಮರ, ಪಕ್ಷಿ, ನೀರು, ಗಾಳಿ ಎಲ್ಲವುಗಳ ಜೊತೆ ತಳಕು ಹಾಕಿಕೊಂಡಿದ್ದವು. ಇನ್ನೆಂದೂ ತಿರುಗಿ ಈ ನೆಲಕ್ಕೆ ನಾವು ಬಾರೆವು ಎಂಬ ಸಂಕಟ ಅವರನ್ನು ತೀವ್ರವಾಗಿ ಬಾಧಿಸಿತು. ಕೀನ್ಯಾಕ್ಕೆ ತೆರಳುವ ಮುನ್ನ ಕಾರ್ಬೆಟ್ ತನ್ನ ಆರೋಗ್ಯವನ್ನು ಸುಧಾರಿಸಿಕೊಳ್ಳುವ ಸಲುವಾಗಿ, ಅಕ್ಕ ಮ್ಯಾಗಿಯ ಜೊತೆ ಸಿಷೆಲ್ಸ್ ದ್ವೀಪಕ್ಕೆ ಹೋಗಿ ಮೂರು ತಿಂಗಳು ವಿಶ್ರಾಂತಿ ಪಡೆದು ಮರಳಿ ಭಾರತಕ್ಕೆ ಬಂದ.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ನೀಡುವ ನಿಟ್ಟಿನಲ್ಲಿ ಲಾರ್ಡ್‌ ಮೌಂಟ್‌ಬ್ಯಾಟನ್‌ನನ್ನು ವೈಸ್‌ರಾಯ್ ಆಗಿ ನೇಮಕ ಮಾಡಿತು. ಆಗಸ್ಟ್ 15 ಕ್ಕೆ ಮುಂಚಿತವಾಗಿ ಬ್ರಿಟಿಷ್ ಸರ್ಕಾರ ಭಾರತದ ಸರ್ಕಾರದ ಮುಂದೆ ಹಲವಾರು ನಿಬಂಧನೆಗಳನ್ನು ವಿಧಿಸಿತ್ತು. ಅವುಗಳಲ್ಲಿ ಭಾರತದಲ್ಲಿರುವ ಬ್ರಿಟಿಷರ ಆಸ್ತಿ ಮತ್ತು ಅವರ ಜೀವಗಳಿಗೆ ಧಕ್ಕೆಯಾಗಬಾರದು ಎಂಬುದು ಒಂದಾಗಿತ್ತು. ಈ ಕಾರಣಕ್ಕಾಗಿ ಸ್ವಾತಂತ್ರ್ಯಾ ನಂತರವೂ ಬ್ರಿಟಿಷ್ ಸೇನೆ ಭಾರತದಲ್ಲಿ ಇರುತ್ತದೆ ಎಂಬ ಷರತ್ತನ್ನು ವಿಧಿಸಲಾಗಿತ್ತು. ಸ್ವಾತಂತ್ರ್ಯದ ದಿನಗಳು ಹತ್ತಿರವಾದಂತೆ ದೇಶಾದ್ಯಂತ ನೆಲೆಸಿದ್ದ ಬ್ರಿಟಿಷರ ಸುರಕ್ಷತೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇವೆಲ್ಲವನ್ನು ಕುತೂಹಲದಿಂದ ಎದುರು ನೋಡುತ್ತಿದ್ದ ಕಾರ್ಬೆಟ್ ಮತ್ತು ಮ್ಯಾಗಿಗೆ, ಭಾರತದ ವಿಭಜನೆಯ ಸಂದರ್ಭದಲ್ಲಿ ಉತ್ತರಭಾರತದಲ್ಲಿ, ವಿಶೇಷವಾಗಿ ಪಂಜಾಬ್ ಲಾಹೋರ್ ನಗರಗಳಲ್ಲಿ ಸಂಭವಿಸಿದ ಗಲಭೆಯಿಂದ ಆತಂಕಕ್ಕೆ ಒಳಗಾದರು. ಹಿಂಸೆಯಿಂದ ಭಯಭೀತರಾದ ಇಬ್ಬರೂ ಕೂಡಲೇ ಭಾರತ ತೊರೆಯಲು ನಿರ್ಧರಿಸಿದರು.

ಕೀನ್ಯಾದಲ್ಲಿ ಕಾರ್ಬೆಟ್‌ನ ಹಿರಿಯ ಸಹೋದರ ಟಾಮ್ ಕಾರ್ಬೆಟ್ ಮತ್ತು ಸಹೋದರಿಯ ಮಗ ನೆಸ್ಟರ್ ಇದ್ದುದರಿಂದ ಇವರಿಬ್ಬರ ವಾಸಕ್ಕೆ ಅಲ್ಲಿ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿತ್ತು. ಆ ವೇಳೆಗೆ ತಾಂಜೇನಿಯಾದಲ್ಲಿದ್ದ ಕೃಷಿತೋಟವನ್ನು, ಪಾಲುದಾರ ಮತ್ತು ಕುಮಾವನ್ ಪ್ರಾಂತ್ಯದ ಮಾಜಿ ಜಿಲ್ಲಾಧಿಕಾರಿ ವಿಂದಮ್ ವಾಪಸ್ ಇಂಗ್ಲೆಂಡಿಗೆ ತೆರಳಿದ ಕಾರಣ ಮಾರಾಟ ಮಾಡಲಾಗಿತ್ತು. ಕಾರ್ಬೆಟ್ ತನ್ನ ಪಾಲಿನ ಹಣವನ್ನು ಅಕ್ಕನ ಮಗ ನೆಸ್ಟರ್‌ಗೆ ನೀಡಿ ಕೀನ್ಯಾದಲ್ಲಿ ತೋಟ ಮತ್ತು ಮನೆ ಸಿದ್ಧಪಡಿಸಲು ಕೇಳಿಕೊಂಡಿದ್ದನು. ತಾವು ಭಾರತ ತೊರೆಯುತ್ತಿರುವ ವಿಷಯವನ್ನು ಚೋಟಿ ಹಲ್ದಾನಿ ಹಳ್ಳಿಯ ಜನಕ್ಕೆ ತಿಳಿಸಲಾಗದೆ, ಅಣ್ಣನ ಮನೆಗೆ ಹೋಗಿ ಬರುತ್ತೀವಿ ಎಂದು ತಿಳಿಸಿ, ಅವರಿಗೆ ನಂಬಿಕೆ ಬರುವ ಹಾಗೆ ಮನೆಯ ಬೀಗದ ಕೀಲಿಯನ್ನು ಅವರಿಗೆ ಒಪ್ಪಿಸಿ, ಲಕ್ನೊ ಮಾರ್ಗವಾಗಿ ಬಾಂಬೆಗೆ ರೈಲಿನಲ್ಲಿ ತೆರಳಿದರು.

ಕಾರ್ಬೆಟ್ ಮತ್ತು ಮ್ಯಾಗಿ ಭಾರತ ತೊರೆಯುತ್ತಿರುವುದು ಅವರ ಆಪ್ತ ಸೇವಕ ರಾಮ್‌ಸಿಂಗ್‌ಗೆ ಮಾತ್ರ ತಿಳಿದಿತ್ತು ಅವನಿಗೆ ಚೋಟಿ ಹಲ್ದಾನಿ ಹಳ್ಳಿಯಲ್ಲಿ ಮನೆ ನಿರ್ಮಿಸಿಕೊಟ್ಟು, ಪ್ರತಿ ತಿಂಗಳು ತಿಂಗಳಿಗೆ 10 ರೂ. ಮಾಸಾಶನ ಸಿಗುವಂತೆ ಕಾರ್ಬೆಟ್ ವ್ಯವಸ್ಥೆ ಮಾಡಿದ್ದ. ಲಕ್ನೊ ರೈಲು ನಿಲ್ದಾಣದಲ್ಲಿ ಅವರನ್ನು ಬೀಳ್ಕೊಡಲು ಬಂದಿದ್ದ ರಾಮ್‌ಸಿಂಗ್‌ ರೈಲು ಹೊರಡುತ್ತಿದ್ದಂತೆ ಪ್ಲಾಟ್ ಫಾರಂ ಮೇಲೆ ಕುಕ್ಕರುಗಾಲಿನಲ್ಲಿ ಬಿಕ್ಕಳಿಸಿ ಅತ್ತುಬಿಟ್ಟ. ಅವನಿಗೆ ವಿದಾಯ ಹೇಳಲು ಬೋಗಿಯ ಬಾಗಿಲಲ್ಲಿ ನಿಂತಿದ್ದ ಕಾರ್ಬೆಟ್ ಮತ್ತು ಮ್ಯಾಗಿಯ ಕಣ್ಣುಗಳು ತೇವವಾದವು.

ಬಾಂಬೆ ತಲುಪಿದ ಕಾರ್ಬೆಟ್ ಮತ್ತು ಅವನ ಸಹೋದರಿ, 1947ರ ಡಿಸಂಬರ್ 15ರಂದು ಹಡಗಿನ ಮೂಲಕ ಮೊಂಬಸ ಪಟ್ಟಣ ತಲುಪಿದರು. ಅಲ್ಲಿಂದ ರೈಲಿನಲ್ಲಿ ರಾಜಧಾನಿ ನೈರೋಬಿ ನಗರಕ್ಕೆ ಬಂದಿಳಿದರು. ಆ ವೇಳೆಗಾಗಲೇ  ಜಿಮ್ ಕಾರ್ಬೆಟ್‌ನ ಜೀವದ ಗೆಳೆಯ ಹಾಗೂ ರುದ್ರ ಪ್ರಯಾಗದ ಜಿಲ್ಲಾಧಿಕಾರಿಯಾಗಿದ್ದ ಇಬ್ಬೊಟ್ ಸನ್ ಸೇವೆಯಿಂದ ನಿವೃತ್ತನಾಗಿ ಬ್ರಿಟಿಷ್ ಸರ್ಕಾರದಿಂದ ಸರ್ ಪದವಿ ಪಡೆದು ತನ್ನ ಪತ್ನಿ ಜೀನ್ ಜೊತೆ ನೈರೋಬಿಯಲ್ಲಿ ವಾಸವಾಗಿದ್ದ. ಒಂದು ವಾರ ಅಕ್ಕ ತಮ್ಮ ಇಬ್ಬರೂ ಇಬ್ಬೊಟ್ ಸನ್ ಮನೆಯಲ್ಲಿ ತಂಗಿ ವಿಶ್ರಾಂತಿ ಪಡೆದರು. ಇಬ್ಬೊಟ್ ಸನ್ ಮತ್ತು ಕಾರ್ಬೆಟ್ ಇಬ್ಬರೂ ಕುಳಿತು ಭಾರತದಲ್ಲಿದ್ದ ಸಂದರ್ಭದಲ್ಲಿ ರುದ್ರ ಪ್ರಯಾಗದ ನರಭಕ್ಷಕ ಚಿರತೆಯನ್ನು ಕೊಲ್ಲಲು ತಾವುಗಳು  ಅನುಭವಿಸಿದ ಬವಣೆಗಳನ್ನು ಮೆಲುಕು ಹಾಕಿದರು.

ಇತ್ತ ಕಾಬೆಟ್‌ನ ಅಕ್ಕನ ಮಗ ನೆಸ್ಟರ್ ತನ್ನ ಸೋದರ ಮಾವ ಕಾರ್ಬೆಟ್ ಮತ್ತು ಚಿಕ್ಕಮ್ಮ ಮ್ಯಾಗಿ ಇವರುಗಳ ವಿಶ್ರಾಂತಿ ಜೀವನಕ್ಕಾಗಿ ಕೀನ್ಯಾದ ಕಿಪ್ ಕರೆನ್ ಎಂಬಲ್ಲಿ 650 ಎಕರೆ ಕಾಫಿ ತೋಟ ಖರೀದಿಸಿ, ಅವರಿಗಾಗಿ ಒಂದು ಸುಂದರ ಹಾಗೂ ಚಿಕ್ಕದಾದ ಕಾಟೇಜ್ ನಿರ್ಮಾಣ ಮಾಡಿದ್ದ. ಈ ಪ್ರದೇಶ ಮತ್ತು ಪರಿಸರ ಕಾರ್ಬೆಟ್‌ಗೆ ಇಷ್ಟವಾದರೂ ಅಕ್ಕ ಮ್ಯಾಗಿಗೆ ಇಷ್ಟವಾಗಲಿಲ್ಲ. ನಗರ ಮತ್ತು ಪಟ್ಟಣಗಳಿಂದ ಬಹು ದೂರದಲ್ಲಿದ್ದ ಈ ತೋಟದಲ್ಲಿ ಇರುವುದು ಕಷ್ಟ ಎಂಬ ಭಾವನೆ ಮ್ಯಾಗಿಗೆ ಕಾಡತೊಡಗಿತು. ಇಬ್ಬರೂ ಎಪ್ಪತ್ತು ದಾಟಿದ್ದ ವಯೋವೃದ್ಧರಾದ್ದರಿಂದ ಅನಾರೋಗ್ಯಕ್ಕೆ ತುತ್ತಾದರೆ, ವೈದ್ಯರಾಗಲಿ, ಆಸ್ಪತ್ರೆಗಳಾಗಲಿ ಹತ್ತಿರದಲ್ಲಿ ಇರದಿರುವುದು ಮ್ಯಾಗಿಯ ಬೇಸರಕ್ಕೆ ಕಾರಣವಾಗಿತ್ತು. ಸಹೋದರಿಯ ಮಾತಿಗೆ ಎದುರಾಡದ ಕಾರ್ಬೆಟ್ ಗೊಂದಲಕ್ಕೆ ಸಿಲುಕಿದ. ನಂತರ ಅವಳ ಇಚ್ಛೆಯಂತೆ ಆ ಮನೆ ಮತ್ತು ಕಾಫಿ ತೋಟವನ್ನು ತೊರೆದು ಅವನ ಹಿರಿಯಣ್ಣ ಟಾಮ್ ಕಾರ್ಬೆಟ್‌ನ ಎಸ್ಟೇಟ್‌ಗೆ ತನ್ನ ವಾಸ್ತವ್ಯವನ್ನು ಬದಲಿಸಿದ.

ಭಾರತವನ್ನು, ವಿಶೇಷವಾಗಿ ನೈನಿತಾಲ್ ತೊರೆದು ಬಂದಿರುವುದು ಮ್ಯಾಗಿಯ ಮಾನಸಿಕ ಕ್ಲೇಶಕ್ಕೆ ಕಾರಣವಾಗಿದೆ ಎಂದು ಊಹಿಸಿದ ಕಾರ್ಬೆಟ್ ಹಿರಿಯಣ್ಣನ ಸನೀಹದಲ್ಲಿ ನೈನಿತಾಲ್ ಗಿರಿಧಾಮದ ಬಾಲ್ಯದ ನೆನಪುಗಳ ಜೊತೆ ಅಕ್ಕ ಮ್ಯಾಗಿ ನೆಮ್ಮದಿಯಿಂದ ಇರುತ್ತಾಳೆ ಎಂದು ನಂಬಿದ್ದ. ಆದರೆ, ಇಲ್ಲಿಯೂ ಬಹಳ ಕಾಲ ಇರಲು ಮ್ಯಾಗಿ ತಕರಾರು ತೆಗೆದಳು. ನೈನಿತಾಲ್‌ನ ವಿಶಾಲವಾದ ಬಂಗಲೆಯಲ್ಲಿ ತಣ್ಣನೆಯ ವಾತಾವರಣ, ಸ್ವಚ್ಛಂಧ ಪರಿಸರದ ಬದುಕಿನಲ್ಲಿ ಹುಟ್ಟಿ ಬೆಳೆದು, ಜೀವನ ಬಹುತೇಕ ಭಾಗವನ್ನು ಕಳೆದಿದ್ದ ಮ್ಯಾಗಿಗೆ ಕೀನ್ಯಾದ ಗ್ರಾಮಾಂತರ ಪ್ರದೇಶ, ಮತ್ತು ಪುಟ್ಟ ಮನೆಯ ವಾಸಕ್ಕೆ ಹೊಂದಿಕೊಳ್ಳುವುದು ಕಷ್ಟವಾಯಿತು. ಅಂತಿಮವಾಗಿ ಕೀನ್ಯಾದ ಹಿಮ ಪರ್ವತದ ತಪ್ಪಲಿನಲ್ಲಿ ಇದ್ದ ಹೊಟೇಲ್ ಒಂದರಲ್ಲಿ ವಿಶಾಲವಾದ ಕಾಟೇಜ್ ಅನ್ನು ಬಾಡಿಗೆ ಪಡೆದು ಕಾರ್ಬೆಟ್ ಮ್ಯಾಗಿ ಇಬ್ಬರೂ ವಾಸಿಸತೊಡಗಿದರು. ಪರ್ವತದ ಇಳಿಜಾರಿನಲ್ಲಿ ಇದ್ದ ಹೊಟೇಲ್‌ನ ಕೊಠಡಿಯಿಂದ ಕಾಣುತ್ತಿದ್ದ ಹಿಮ ಪರ್ವತ ಅರಣ್ಯ ಇವೆಲ್ಲವೂ ಮ್ಯಾಗಿಯ ಪಾಲಿಗೆ ನೈನಿತಾಲ್ ಗಿರಿಧಾಮದ ವಾತಾವರಣದಂತೆ ಕಂಡು ಬಂದವು. ಹೊಟೇಲ್‌ನಲ್ಲಿ ಶಾಶ್ವತವಾಗಿ ಇರಲು ಬಯಸಿ, ತಂಗಿದ್ದ ಕೊಠಡಿಯನ್ನು ದೀರ್ಘಾವಧಿಗೆ ಒಪ್ಪಂದದ ಆಧಾರದ ಮೇಲೆ ಪಡೆದುಕೊಂಡರು.

(ಮುಂದುವರಿಯುವುದು)

ನೂತನ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್ ಮುಂದಿನ ಸವಾಲುಗಳು


– ಡಾ.ಎನ್.ಜಗದೀಶ್ ಕೊಪ್ಪ


ಉತ್ತರ ಕರ್ನಾಟಕದ ಸಜ್ಜನ ರಾಜಕಾರಣಿ ಮತ್ತು ಸೋಲಿಲ್ಲದ ಸರದಾರ ಎಂದೇ ಪ್ರಸಿದ್ಧರಾದ ಹುಬ್ಬಳ್ಳಿಯ ಶಾಸಕ ಜಗದೀಶ್ ಶೆಟ್ಟರ್ ಕರ್ನಾಟಕದ 27ನೇ ಮುಖ್ಯಮಂತ್ರಿಯಾಗಿ ಹಾಗೂ ನಾಲ್ಕು ವರ್ಷಗಳ ಅವಧಿಯ ಬಿ.ಜೆ.ಪಿ. ಸರ್ಕಾರದ ಮೂರನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ, ಅಧಿಕಾರ ಸ್ವೀಕರಿಸಿದ್ದಾರೆ. ಉಳಿದ ಇನ್ನೊಂದು ವರ್ಷದ ಅವಧಿಯಲ್ಲಿ, ಸ್ವಚ್ಛ ಹಾಗೂ ಪಾರದರ್ಶಕ ಆಡಳಿತ ನೀಡುವುದಾಗಿ ಜನತೆಗೆ ಭರವಸೆ ನೀಡಿದ್ದಾರೆ. ಆದರೆ, ಸಧ್ಯದ ಬಿ.ಜೆ.ಪಿ. ಪಕ್ಷದ ಆಂತರೀಕ ಗೊಂದಲಗಳನ್ನು ಗಮನಿಸಿದರೆ, ಮುಖ್ಯಮಂತ್ರಿ ಗಾದಿ ಶೆಟ್ಟರ್ ಪಾಲಿಗೆ ಮುಳ್ಳಿನ ಹಾಸಿಗೆಯಾಗುವ ಲಕ್ಷಣಗಳು ಕಾಣತೊಡಗಿವೆ.

ಆರ್.ಎಸ್.ಎಸ್. ಸಂಘಟನೆಯ ನಿಷ್ಟಾವಂತ ಅನುಯಾಯಿಯಾಗಿ, ಬಿ.ಜೆ.ಪಿ. ಕಾರ್ಯಕರ್ತನಾಗಿ ಮೂರು ದಶಕಗಳ ಕಾಲ ದುಡಿದು, 1994ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಆರ್, ಬೊಮ್ಮಾಯಿ ಅವರನ್ನು ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಲ್ಲಿ ಮಣಿಸಿ, ವಿಧಾನಸಭೆ ಪ್ರವೇಶಿಸಿದ ಜಗದೀಶ್ ಶೆಟ್ಟರ್, ಮೃದು ಹೃದಯದ ಹಾಗೂ ಮಿತವಾದ ಮಾತಿಗೆ ಹೆಸರಾದವರು. ಬಿ.ಜೆ.ಪಿ. ಪಕ್ಷದಲ್ಲಿ ಇರುವ ಹಲವು ಸಜ್ಜನ ರಾಜಕಾರಣಿಗಳಲ್ಲಿ ಇವರೂ ಒಬ್ಬರು.

ಜೆ.ಡಿ.ಎಸ್. ಮತ್ತು ಬಿ.ಜೆ.ಪಿ. ಮೈತ್ರಿ ಸರ್ಕಾರದಲ್ಲಿ ಕಂದಾಯ ಸಚಿವರಾಗಿ, ನಂತರ ತಮ್ಮದೇ ಪಕ್ಷ ಅಧಿಕಾರಕ್ಕೆ ಬಂದಾಗ, ವಿಧಾನಸಭೆಯ ಅದ್ಯಕ್ಷರಾಗಿ,ಆನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಗ್ರಾಮೀಣಾಭಿವೃದ್ಧಿಯ ಸಚಿವರಾಗಿ ಹಲವು ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಶೆಟ್ಟರ್ ಈಗ ಮುಖ್ಯಮಂತ್ರಿಯಾಗದ್ದಾರೆ. ಆದರೆ, ಅವರ ಮುಂದಿನ ಹಾದಿ ಮಾತ್ರ ಅತ್ಯಂತ ಕಠಿಣವಾಗಿದೆ.

ಎಡ ಮತ್ತು ಬಲಕ್ಕೆ ಇಬ್ಬರು ಉಪ ಮುಖ್ಯಮಂತ್ರಿಗಳು. ಜೊತೆಗೆ ತಲೆಯ ಮೇಲೆ ಮುಖ್ಯಮಂತ್ರಿ ಮಾಡಿದ ಯಡಿಯೂರಪ್ಪನವರ ಭಯ ಮತ್ತು ಅತಂತ್ರತೆಯ ತೂಗುಕತ್ತಿ,  ಇವುಗಳ ನಡುವೆ ಕಳಸವಿಟ್ಟಂತೆ ಸಚಿವ ಸ್ಥಾನ ಸಿಗದ ಶಾಸಕರ ಅಸಹನೆ, ಅಸಹಕಾರ; ಇವುಗಳನ್ನು ಮಡಿಲಲ್ಲಿ ಕೆಂಡ ಕಟ್ಟಿಕೊಂಡಂತೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವುದು ಜಗದೀಶ್ ಶೆಟ್ಟರ್ ಪಾಲಿಗೆ ಸುಲಭದ ಸಂಗತಿಯಲ್ಲ.

ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಬಿ.ಜೆ.ಪಿ. ಸರ್ಕಾರದ ಹಗರಣಗಳು, ಸಚಿವರ ನಡುವಳಿಕೆಗಳು, ಪಕ್ಷದ ನಾಯಕರ ಜಾತಿ ಸಂಘರ್ಷ ಇವುಗಳಿಂದ ಜನಸಾಮಾನ್ಯರಷ್ಟೇ ಅಲ್ಲ, ಸ್ವತಃ ಪಕ್ಷದ ನಿಷ್ಟಾವಂತ ಕಾರ್ಯಕರ್ತರೇ ರೋಸಿ ಹೋಗಿದ್ದಾರೆ. ಇಂತಹ ಶೋಚನೀಯ ಸ್ಥಿತಿಯಲ್ಲಿ ಬಿ.ಜೆ.ಪಿ. ಸರ್ಕಾರದಿಂದಾಗಲಿ, ಅಥವಾ ನೂತನ ಮುಖ್ಯಮಂತ್ರಿಯಿಂದಾಗಲಿ ಯಾವುದೇ ಪವಾಡಗಳನ್ನು ಯಾರೊಬ್ಬರು ನಿರಿಕ್ಷಿಸಿಲ್ಲ.

ಕಳೆದ ಎರಡು ವರ್ಷಗಳಿಂದ ಕಾಡುತ್ತಿರುವ ಬರಗಾಲದಿಂದ ಉತ್ತರ ಕರ್ನಾಟಕದ ಜನತೆ ತತ್ತರಿಸಿ ಹೋಗಿದ್ದಾರೆ. ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಇಲ್ಲದೆ, ಅವುಗಳನ್ನ ಕಸಾಯಿಖಾನೆಗೆ ಅಟ್ಟಿ ಇಲ್ಲಿನ ಜನ ದೂರದ ನಗರಗಳಿಗೆ ವಲಸೆ ಹೋಗುತಿದ್ದಾರೆ. ಮೂರು ವರ್ಷದ ಹಿಂದೆ ಸಂಭವಿಸಿದ ಅತಿವೃಷ್ಟಿಯಲ್ಲಿ ಮನೆ ಮಠಗಳನ್ನು ಕಳೆದುಕೊಂಡ ಉತ್ತರ ಕರ್ನಾಟಕದ ಜನರಿಗೆ ಈವರೆಗೆ ಮನೆಗಳನ್ನು ನಿರ್ಮಿಸಿಕೊಡಲು ಈ ಸರ್ಕಾರದಿಂದ ಸಾಧ್ಯವಾಗಿಲ್ಲ. ಸರ್ಕಾರ ಗುರಿ ಹಾಕಿಕೊಂಡಿದ್ದ ಒಂದು ಲಕ್ಷ ಮನೆ ನಿರ್ಮಾಣ ಯೋಜನೆಗಳಲ್ಲಿ ಈವರೆಗೆ ಸಿದ್ಧವಾಗಿರುವ 33 ಸಾವಿರ ಮನೆಗಳು ಧಾನಿಗಳು ಕಟ್ಟಿಸಿಕೊಟ್ಟ ಮನೆಗಳು ಮಾತ್ರ.

ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಕರ್ನಾಟಕದ ಇತಿಹಾಸದಲ್ಲಿ ಕಂಡರಿಯದ ಭೂ ಹಗರಣ, ಸಚಿವರ ಮಿತಿ ಮೀರಿದ ಭ್ರಷ್ಟಾಚಾರ, ಲೈಂಗಿಕ ಹಗರಣ, ಗಣಿ ಹಗರಣ, ಇವುಗಳ ಫಲವಾಗಿ ಸಚಿವ ಸಂಪುಟ ಸದಸ್ಯರ ಸರತಿಯ ರಾಜಿನಾಮೆ ಇವೆಲ್ಲವೂ ಶಿಸ್ತಿಗೆ ಹೆಸರಾದ ಬಿ.ಜೆ.ಪಿ. ಪಕ್ಷದ ಮುಖಕ್ಕೆ ರಾಷ್ಟ್ರ ಮಟ್ಟದಲ್ಲಿ ಕಪ್ಪು ಮಸಿ ಬಳಿದಿವೆ. ಈಗ ಇವುಗಳ ಜೊತೆಗೆ ಜಾತಿ ರಾಜಕಾರಣ ಹೊಸದಾಗಿ ಸೇರ್ಪಡೆಯಾಗಿದ್ದು, ಇಂತಹ ಬೆಳವಣಿಗೆಗಳು ಪ್ರಜ್ಞಾವಂತರಲ್ಲಿ ಅಸಹ್ಯ ಮಾತ್ರವಲ್ಲ, ಜಿಗುಪ್ಸೆ ಮೂಡಿಸಿವೆ.

ಅತ್ಯಂತ ಸಜ್ಜನಿಕೆ ಸ್ವಭಾವದ ಜಗದೀಶ್‌ ಶೆಟ್ಟರಿಗೆ ಅವರ ಗುಣವೇ ಅವರ ಪಾಲಿಗೆ ಮಾರಕವಾಗುವ ಸಂಭವವಿದೆ. ಇಲ್ಲಿಯವರೆಗೆ, ಯಡಿಯೂರಪ್ಪನವರನ್ನು ಓಲೈಕೆ ಮಾಡಿಕೊಂಡು ಸಚಿವ ಸ್ಥಾನದಲ್ಲಿ ಮುಂದುವರಿದ, ಅಸಮರ್ಥ ಸಚಿವರುಗಳೆಲ್ಲಾ ಈಗಿನ ಶೆಟ್ಟರ್ ಮಂತ್ರಿ ಮಂಡಲದಲ್ಲಿ ಸ್ಥಾನ ಪಡೆದಿರುವುದು ನಿರಾಶೆಯ ಸಂಗತಿ.

ಈವರೆಗೆ ಹೆಚ್ಚುವರಿಯಾಗಿ ಒಂದು ಯೂನಿಟ್ ವಿದ್ಯುತ್ ಉತ್ಪಾದಿಸಲಾಗದ, ರಾಜ್ಯದ ರಸ್ತೆಗಳನ್ನು ದುರಸ್ತಿ ಮಾಡಲಾಗದ, ಗ್ರಾಮೀಣ ಜನತೆಗೆ ಕುಡಿಯುವ ನೀರು ಒದಗಿಸಲಾಗದ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗದ ಬಿ.ಜೆ.ಪಿ. ಸರ್ಕಾರದಿಂದ ಯಾವ ನಿರೀಕ್ಷೆ ಇಟ್ಟುಕೊಳ್ಳದ ಜನತೆ ಜಗದೀಶ್ ಶೆಟ್ಟರ್‌ರಿಂದ ಏನು ನಿರಿಕ್ಷಿಸಲು ಸಾಧ್ಯ?

ಉಳಿದ ಒಂದು ವರ್ಷದ ಅವಧಿಯಲ್ಲಿ ಸ್ವಚ್ಛ ಆಡಳಿತ ನೀಡುತ್ತೇನೆ ಎನ್ನುವ ಮಾತು ಕೇವಲ ಅವರ ಆವೇಶದ ಮಾತಾಗಬಹುದು. ಏಕೆಂದರೆ, ಹನ್ನೊಂದು ತಿಂಗಳ ಕಾಲ ಯಾವುದೇ ಹಗರಣಗಳಿಗೆ ಎಡೆ ಮಾಡಿಕೊಡದಂತೆ ಆಡಳಿತ ನಡೆಸಿದ ಸದಾನಂದ ಗೌಡರಿಗೆ ಪಕ್ಷ ನೀಡಿರುವ ಬಳುವಳಿ ಈಗ ದೇಶಾದ್ಯಂತ ಚರ್ಚೆಯಾಗುತ್ತಿದೆ.

ಆಡಳಿತ ಒಳಸುಳಿಗಳನ್ನು ಅರ್ಥ ಮಾಡಿಕೊಳ್ಳಲು ಒಂದು ವರ್ಷದ ಅವಧಿ ಅಗತ್ಯವಿರುವಾಗ, ಸಮರ್ಥ ಆಡಳಿತವನ್ನು ಜಗದೀಶ್ ಶೆಟ್ಟರ್ ಮತ್ತು ಅವರ ಮಂತ್ರ ಮಂಡಲದಿಂದ  ಬಯಸಲು ಸಾಧ್ಯವಿಲ್ಲ. ಯಡಿಯೂರಪ್ಪನಂತಹ ಮೋಹಿನಿ ಭಸ್ಮಾಸುರನ ಮನಸ್ಸಿರುವ ವ್ಯಕ್ತಿಯಿಂದ ಆಯ್ಕೆಯಾಗಿರುವ ಜಗದೀಶ್‌ ಶೆಟ್ಟರ್ ಈವರಗೆ ತಾವು ಕಾಪಾಡಿಕೊಂಡು ಬಂದಿದ್ದ ತಮ್ಮ ವರ್ಚಸ್ಸನು ಹಾಗೇ ಉಳಿಸಿಕೊಂಡರೆ ಸಾಕು ಅದು ಅವರ ಪಾಲಿಗೆ ದೊಡ್ಡ ಸಾಧನೆಯಾಗಬಲ್ಲದು. ಏಕೆಂದರೆ ಇಂಗ್ಲೀಷ್ ಭಾಷೆಯಲ್ಲಿ ಒಂದು ಗಾದೆ ಮಾತಿದೆ, ’ರೈಟ್ ಪರ್ಸನ್ ಇನ್ ದ ರಾಂಗ್ ಪ್ಲೇಸ್’ ಎಂದು. ಅದೇ ಸ್ಥಿತಿ ಈಗ ಶೆಟ್ಟರಿಗೆ ಎದುರಾಗಿದೆ.