Category Archives: ಶ್ರೀಪಾದ್ ಭಟ್

ಫ್ಯಾಸಿಸ್ಟರ ಕೈಯಲ್ಲಿ ಮಕ್ಕಳಾಟಿಕೆಯಂತಾಗಿರುವ ಇಂಡಿಯಾ

– ಬಿ.ಶ್ರೀಪಾದ ಭಟ್

15 ನೇ ಅಕ್ಟೋಬರ್ 2013 ರಂದು ’ದ ಹಿಂದೂ’ ದಿನಪತ್ರಿಕೆಯ ಸಹ ಸಂಪಾದಕಿ ’ವಿದ್ಯಾ ಬಾಲಸುಬ್ರಮಣ್ಯಂ’ ಅವರು ನವದೆಹಲಿಯ ಪೋಲಿಸ್ ಠಾಣೆಯಲ್ಲಿ ” ತಾವು ‘The forgotten promise of 1949′ ಲೇಖನವನ್ನು ಬರೆದ ನಂತರ ದಿನನಿತ್ಯ ನನ್ನ ಮೊಬೈಲ್‌ಗೆ ಬೆದರಿಕೆ ಕರೆಗಳು ಬರುತ್ತಿವೆ. 15 ಮತ್ತು 16 ನೇ ಅಕ್ಟೋಬರ್ 2013 ರಂದು ಸುಮಾರು 250 ಬೆದರಿಕೆ ಕರೆಗಳು ಬಂದಿವೆ. ಈ ಬೆದರಿಕೆ ಕರೆಗಳನ್ನು ಮಾಡುತ್ತಿರುವುವರು ತಾವು ಆರೆಸಸ್ ಮತ್ತು ವಿಎಚ್‌ಪಿ ಸಂಘಟನೆಗಳಿಗೆ ಸೇರಿದ್ದೇವೆ ಎಂದು ಬೆದರಿಸುತ್ತಿದ್ದಾರೆ,” ಎಂದು ದೂರು ದಾಖಲಿಸಿದ್ದಾರೆ. (ದ ಹಿಂದೂ, 1 ನವೆಂಬರ್, 2013)

ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ, ಜನರಿಂದ ಚುನಾಯಿತರಾಗಿ ಅಧಿಕಾರಕ್ಕೆ ಬರುವ ಸರ್ಕಾರಗಳು ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮತ್ತು ಪತ್ರಿಕಾರಂಗಗಳೆಂಬ ಪ್ರಜಾಪ್ರಭುತ್ವದ ನಾಲ್ಕು ಸ್ತಂಭಗಳ ಆಧಾರದೊಂದಿಗೆ ಕಾರ್ಯ ನಿರ್ವಹಿಸುತ್ತವೆ ಮತ್ತು ಈ ಸರ್ಕಾರ ಹಾಗೂ ಈ ನಾಲ್ಕೂ ಸ್ತಂಭಗಳು ಭಾರತದ ಸಂವಿಧಾನಕ್ಕೆ ಬದ್ಧರಾಗಿ ಸಂವಿಧಾನದ ಆಶಯಗಳಿಗೆ ಅನುಗುಣವಾಗಿಯೇ ಕಾರ್ಯ ನಿರ್ವಹಿಸಬೇಕು. BJP-RSS-Gadkariಇಲ್ಲಿ ಯಾವುದೇ ಧರ್ಮಕ್ಕೂ ಮತ್ತು ಧರ್ಮಗ್ರಂಥಗಳಿಗೂ ಅಧಿಕೃತವಾಗಿ, ಸಾರ್ವಜನಿಕವಾಗಿ, ಕಾನೂನಿನ ಚೌಕಟ್ಟಿನಲ್ಲಿ ಮಾನ್ಯತೆ ಇಲ್ಲವೇ ಇಲ್ಲ. ಕಡೆಗೆ ಸಂವಿಧಾನವೇ ಅಂತಿಮ. ಇಂದು ಫ್ಯಾಸಿಸ್ಟ್ ಸಂಘಟನೆಯಾದ ಆರೆಸಸ್ ಮತ್ತು ಫ್ಯಾಸಿಸ್ಟ್ ನಾಯಕ ನರೇಂದ್ರ ಮೋದಿ ಭಾರತವನ್ನು ಕಬ್ಜಾ ಮಾಡಲು ದೇಶಾದ್ಯಾಂತ ದಂಡಯಾತ್ರೆಯನ್ನು ನಡೆಸುತ್ತಿದ್ದಾರೆ. ಹಾಗಿದ್ದಲ್ಲಿ ಪ್ರಜಾಪ್ರಭುತ್ವದ, ಸಂವಿಧಾನದ ವಿರೋಧಿಯಾದ ಈ ಫ್ಯಾಸಿಸಂನ ಗುಣಗಳೇನು?

ಚಿಂತಕ ಪಾರ್ಥ ಬ್ಯಾನರ್ಜಿಯವರ ಸಂಶೋಧನ ಲೇಖನದ ಸಾರಾಂಶ:

1920 ರ ದಶಕದಲ್ಲಿ ಯುರೋಪ್ ರಾಷ್ಟ್ರಗಳಲ್ಲಿ ಈ ಫ್ಯಾಸಿಸ್ಟ್ ಪದ ಮತ್ತು ಇದರ ವ್ಯವಸ್ಥೆ ಆಸ್ತಿತ್ವಕ್ಕೆ ಬಂತು. ಜರ್ಮನಿಯ ಗುಟೇನ್‌ಬರ್ಗ ಯೂನಿವರ್ಸಿಟಿಯಲ್ಲಿ ಫ್ರೊಫೆಸರ್ ಆಗಿರುವ ಡಾ. ಮಾರ್ಕ ಟ್ರಿಶ್ಚ್ ಅವರು ಫ್ಯಾಸಿಸಂ ಅನ್ನು ಈ ಕೆಳಗಿನಂತೆ ವಿವರಿಸುತ್ತಾರೆ

  • ಸಾವಿರಾರು ವರ್ಷಗಳ ಹಿಂದಿನ ಸಂಪ್ರದಾಯಗಳಿಗೆ ( ಭಾರತದ ಸಂದರ್ಭದಲ್ಲಿ ವರ್ಣಾಶ್ರಮದ ವ್ಯವಸ್ಥೆಗೆ) ಮರಳಬೇಕೆಂಬ ಸಿದ್ಧಾಂತ
  • ಶ್ರೇಣೀಕೃತ, ಮಿಲಿಟರಿ ಆಧಾರಿತ, ಕಾರ್ಪೋರೇಟ್ ಸಮಾಜದ ನಿರ್ಮಾಣವನ್ನು ಕಟ್ಟಬೇಕೆಂಬ ಸಿದ್ಧಾಂತ
  • ನಾಯಕತ್ವದ, ನಾಯಕನ ವೈಭವೀಕರಣ. ನಾಯಕನ ಮಾತೇ ಅಂತಿಮವೆನ್ನುವ ಸಿದ್ಧಾಂತ
  • ರಾಷ್ಟ್ರೀಯತೆಯನ್ನು ದೇಶಪ್ರೇಮದೊಂದಿಗೆ ಸಮೀಕರಿಸಿ ವೈಭವೀಕರಿಸುವುದು
  • ಈ ರಾಷ್ಟ್ರೀಯತೆಯ ಆಧಾರದ ಮೇಲೆಯೇ ವಿದೇಶಾಂಗ ನೀತಿಗಳನ್ನು ರೂಪಿಸುವುದು

ಹಾಗಾದರೆ ಆರೆಸಸ್ ಮತ್ತು ಅದರ ಅಂಗಪಕ್ಷಗಳಾದ ಬಿಜೆಪಿ, ವಿಎಚ್‌ಪಿ, ಬಜರಂಗದಳಗಳು ಫ್ಯಾಸಿಸಂನ ಮೇಲಿನ ಗುಣಲಕ್ಷಣಗಳನ್ನು ಹೊಂದಿವೆಯೇ? ಉತ್ತರ, ಹೌದು. ಈ ಸಂಘ ಪರಿವಾರದ ಎಲ್ಲಾ ನೀತಿನಿಯಮಗಳು ಮೇಲಿನ ಫ್ಯಾಸಿಸಂನ ಗುಣಲಕ್ಷಣಗಳನ್ನು ಹೊಂದಿವೆ.

ಆರೆಸಸ್ ಕಳೆದ ಎಂಬತ್ತು ವರ್ಷಗಳಿಂದ ಪ್ರತಿಪಾದಿಸುತ್ತಾ ಬಂದಿರುವ “ಭಾರತೀಯ ಸಂಸ್ಕೃತಿ, ಭಾರತೀಯ ಸಂಸ್ಕಾರ ಅಂದರೆ ಹಿಂದೂ ಸಂಸ್ಕೃತಿ ಮತ್ತು ಹಿಂದೂ ಸಂಸ್ಕಾರ.” ಇದು ಫ್ಯಾಸಿಸಂನ ಮೊದಲ ಸಿದ್ಧಾಂತ. ಅಂದರೆ ವೈವಿಧ್ಯತೆಯನ್ನೇ ನಿರಾಕರಿಸುವುದು. ಬಹುರೂಪಿ ಸಂಸ್ಕೃತಿಯನ್ನೇ ಧ್ವಂಸಗೊಳಿಸುವುದು. ತನ್ನ ದಿನನಿತ್ಯದ ಬೈಠಕ್‌ಗಳಲ್ಲಿ, ಶಾಖೆಗಳಲ್ಲಿ, ಸ್ವಯಂಸೇವಕರ ಸಮಾವೇಶಗಳಲ್ಲಿ ಬೋಧಿಸುವುದು ಮತ್ತು ಕಡ್ಡಾಯವಾಗಿ ಪಾಲಿಸಬೇಕೆಂದು ಒತ್ತಾಯಿಸುವುದು “ಪ್ರಾಚೀನ ಕಾಲದ ಭರತವರ್ಷ”ವನ್ನು. ಇದು ಭೂಖಂಡದಲ್ಲೇ ಅತ್ಯುತ್ತಮವಾದದ್ದೆಂದು ಬಣ್ಣಿಸುತ್ತದೆ savarkar-gowalkarಈ ಆರೆಸಸ್. ಮುಂದುವರೆದು ಇಂಥ ಶ್ರೇಷ್ಠ ಹಿಂದೂ ರಾಷ್ಟ್ರದ ಅವನತಿ ಪ್ರಾರಂಭವಾಗಿದ್ದು ಹಿಂದೂಗಳ ನಡುವಿನ ಒಡಕಿನಿಂದ (ಅದರೆ ಜಾತೀಯತೆ ಎನ್ನುವ ಪದವನ್ನು ಎಲ್ಲಿಯೂ ಬಳಸುವುದಿಲ್ಲ) ಮತ್ತು ಮುಸ್ಲಿಂ ದೊರೆಗಳ, ಬ್ರಿಟೀಷರ ಆಕ್ರಮಣದಿಂದ ನಮ್ಮ ದೇಶದ ಪಾವಿತ್ರ್ಯವೇ ನಾಶವಾಯಿತು ಎಂದು ಬ್ರೈನ್‌ವಾಶ್ ಮಾಡುತ್ತಾರೆ. ಮರಳಿ ಹಿಂದೂ ಧರ್ಮದ ಅಖಂಡ ಭಾರತವನ್ನು ಅಂದರೆ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ, ಗಂಧಾರದಿಂದ ಭ್ರಹ್ಮದೇಶದವರೆಗೆ (ಉತ್ತರದ ಟಿಬೆಟ್‌ನಿಂದ ದಕ್ಷಿಣದ ತುದಿಯವರೆಗೆ ಮತ್ತು ಪಶ್ಚಿಮದ ಅಫಘಾನಿಸ್ತಾನದಿಂದ ಮಯನ್ಮಾರ್, ಥೈಲಾಂಡ್, ಕಾಂಬೋಡಿಯ, ಲ್ಹಾಸಾಗಳನ್ನೊಳಗೊಂಡ ವಾಯುವ್ಯ ಏಷ್ಯಾದವೆರೆಗೆ) ಕಟ್ಟಬೇಕೆಂಬುದೇ ತಮ್ಮ ಸಿದ್ಧಾಂತವೆಂದು ಇವರು ಪ್ರತಿಪಾದಿಸುತ್ತಾರೆ. ಇದು ಫ್ಯಾಸಿಸಂ ಮೊದನೇ ಗುಣಲಕ್ಷಣವನ್ನು ಸಂಪೂರ್ಣವಾಗಿ ಪ್ರತಿಪಾದಿಸುತ್ತದೆ. ಇದು ಉತ್ಪ್ರೇಕ್ಷೆಯಲ್ಲ. ಆರೆಸಸ್ ನಡೆಸುವ ಬೈಠಕ್‌ಗಳಿಗೆ, ಸಮಾವೇಶಗಳಿಗೆ ಒಮ್ಮೆ ಭೇಟಿ ಕೊಡಿ. ಅಲ್ಲಿ ಸ್ವಯಂಸೇವಕರು ಉಗುಳುವ ಬೆಂಕಿಯನ್ನು ದಯವಿಟ್ಟು ಆಲಿಸಿ. ಆರೆಸಸ್‌ನ ಸಂಸ್ಥಾಪಕ ನಾಯಕರಾದ ಗೋಳ್ವಲ್ಕರ್, ಸಾವರ್ಕರ್, ಶ್ಯಾಮ್ ಪ್ರಸಾದ್ ಮುಖರ್ಜಿ ಇವರು ಬರೆದ ಪುಸ್ತಕಗಳನ್ನು, ಲೇಖನಗಳನ್ನು ದಯವಿಟ್ಟು ಓದಿ. ಮೇಲೆ ಹೇಳಿದ ಎಲ್ಲಾ ಚಿಂತನೆಗಳು ಅಲ್ಲಿ ಇನ್ನೂ ಉಗ್ರ ಸ್ವರೂಪದಲ್ಲಿವೆ.

ಇದು ಹಳೆಯ ಕಾಲದ ಮಾತಾಯ್ತು ಎನ್ನುವಿರಾ? ಸಾಧ್ಯವೇ ಇಲ್ಲ. ಸಂಘ ಪರಿವಾರಕ್ಕೆ ಈ ನಾಯಕರು ಇಂದಿಗೂ ಆದರ್ಶಪ್ರಾಯರು. ಇಂದಿಗೂ ಇವರ ಚಿಂತನೆಗಳೇ ಸಂಘ ಪರಿವಾರಕ್ಕೆ ವೇದವಾಕ್ಯ.

ಆರೆಸಸ್ ಪಕ್ಷದ ಸಂವಿಧಾನವನ್ನು ಅದರ ಚೌಕಟ್ಟನ್ನು ವಿವರವಾಗಿ ಪರಿಶೀಲಿಸಿದಾಗ ಅದು ಮಿಲಿಟರಿಯ ರೆಜಿಮೆಂಟ್ ಮಾದರಿಯನ್ನು ಅಳವಡಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ಆರೆಸಸ್ ಮುಖ್ಯಸ್ಥನನ್ನು “ಸರಸಂಚಾಲಕ”ರೆಂದು ಕರೆಯುತ್ತಾರೆ. ಅಂದರೆ ಪರಮೋಚ್ಛ ನಾಯಕ. ಅಂದರೆ ಮಿಲಿಟರಿ ಮುಖ್ಯಸ್ಥನಂತೆ. ಈ ಸ್ವರ ಸಂಚಾಲಕರನ್ನು ಯಾವುದೇ ಅಂತರಿಕ ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ಚುನಾಯಿಸುವುದಿಲ್ಲ. ಅಲ್ಲಿ ಅಂತರಿಕ ಚುನಾವಣೆಯೇ ಇಲ್ಲ. ಆತನ ಪಾತ್ರ ಮತ್ತು ಹೊಣೆಗಾರಿಕೆಗಳು ಪರಮೋಚ್ಛ ನಾಯಕನ ಹೊಣೆಗಾರಿಕೆಗಳಿಗೆ ಸಮ. ಪ್ರತಿ ವರ್ಷ ವಿಜಯದಶಮಿ ದಿನದಂದು ನಾಗಪುರದ ಆರೆಸಸ್‌ನ ಕೇಂದ್ರ ಕಛೇರಿಯಲ್ಲಿ ಈ ಸ್ವರಸಂಚಾಲಕ ಮಾಡುವ ಭಾಷಣ ಮತ್ತು ನೀಡುವ ಸಂದೇಶವೇ ಸಂಘಪರಿವಾರಕ್ಕೆ ಮುಂದಿನ ಗುರಿಗಳ ಕುರಿತಾದ ಆಜ್ಞೆಯ ಸ್ವರೂಪ. ಆತನ ಮಾತೇ ಅಂತಿಮ. ಅವರು ಹೇಳಿದ್ದು ಲಕ್ಷ್ಮಣ ರೇಖೆ. ಹೆಗಡೇವಾರ್ ಮತ್ತು ಗೋಳ್ವಲ್ಕರ್ ಅವರನ್ನು ಇಂದಿಗೂ ದೇವತಾ ಸ್ವರೂಪಿಗಳಾಗಿಯೇ ಪೂಜಿಸುತ್ತಾರೆ. ಇವರಿಬ್ಬರಿಗೂ ಅವತಾರ ಪುರುಷರೆಂಬ ಪಟ್ಟವನ್ನು ಕಟ್ಟಲಾಗಿದೆ. ಇವರ ಕುರಿತಾಗಿ ದಂತಕತೆಗಳನ್ನು ದಿನನಿತ್ಯದ ಬೈಠಕ್‌ಗಳಲ್ಲಿ, ತಮ್ಮ ಶಾಖೆಗಳಲ್ಲಿ, ಸಮಾವೇಶಗಳಲ್ಲಿ ಭಕ್ತಿಯಿಂದ ಮಾತನಾಡುತ್ತಾರೆ. ಶಿವಸೇನೆಯ ಬಾಳಾ ಠಾಕ್ರೆಯನ್ನು ಮತ್ತೊಬ್ಬ ಸಾಮಂತ ರಾಜನಂತೆ ಗೌರವಿಸುತ್ತಾರೆ. ಈ ಅಂಶಗಳು ಫ್ಯಾಸಿಸಂನ ಎರಡನೇ ಮತ್ತು ಮೂರನೇ ಅಂಶಗಳನ್ನು ಧೃಡೀಕರಿಸುತ್ತದೆ.

(ಆಧಾರ : ಚಿಂತಕ ಪಾರ್ಥ ಬ್ಯಾನರ್ಜಿಯವರ ಸಂಶೋಧನ ಲೇಖನಗಳು.)

ರಾಷ್ಟ್ರೀಯ ಸ್ವಾವಲಂಬನೆಯನ್ನು ಸಾಧಿಸಲು ಸ್ವದೇಶಿ ಮಂತ್ರವನ್ನು ದೇಶಾದ್ಯಾಂತ ಹರಡಲು ಹುಟ್ಟಿಕೊಂಡಿದ್ದೇ “ಸ್ವದೇಶಿ ಜಾಗರಣ ಮಂಚ್” ಎನ್ನುವ ಸಂಘಟನೆ. ಇದೂ ಸಹ ಆರೆಸಸ್‌ನ ಅಂಗಪಕ್ಷ. ಈ ಸಂಘಟನೆಯು ಪಶ್ಚಿಮ ರಾಷ್ಟ್ರಗಳ ಪರಮೋಚ್ಛತೆಯನ್ನು ತೀವ್ರವಾಗಿ ಖಂಡಿಸುತ್ತದೆ. ಅದರಲ್ಲೂ ಅಮೇರಿಕಾದ ನೀತಿಗಳು ದೇಶಕ್ಕೇ ಮಾರಕವೆಂದೇ ಈ “ಸ್ವದೇಶಿ ಜಾಗರಣ ಮಂಚ್” ಸಾರುತ್ತಾ ಬಂದಿದೆ. ಇದನ್ನು ವಸಾಹತು ನೆಲೆಯಲ್ಲಿ, ಕಲೋನಿಯಲ್ ನೆಲೆಯಲ್ಲಿ ವಿಶ್ಲೇಷಿಸದೆ ಬದಲಾಗಿ “ಹಿಂದೂ ರಾಷ್ಟ್ರೀಯತೆ”ಯ ನೆಲೆಯಲ್ಲಿ ವಿರೋಧಿಸುತ್ತಿದೆ ಆರೆಸಸ್. Globalizationಅಂದರೆ ಈ ಪಶ್ಷಿಮ ರಾಷ್ಟ್ರಗಳಿಂದ ನಮ್ಮ ವೈವಿಧ್ಯಮಯವಾದ ಜೀವನಕ್ರಮ, ನಮ್ಮ ಗ್ರಾಮೀಣ ಬದುಕು ಅಳಿಸಿಹೋಗುತ್ತಿರುವುದು, ನಮ್ಮ ನೆಲದ ಜೀವತೋರಣಗಳು, ಈ ಮಣ್ಣಿನ ಅವೈದಿಕ ಸಂಸ್ಕೃತಿ ನಾಶವಾಗುತ್ತಿವೆ ಎನ್ನುವ ಮಾನವೀಯ, ಜೀವಪರ ನೆಲೆಯಿಂದ ಮಾತನಾಡುತ್ತಿಲ್ಲ. ಬದಲಾಗಿ ಇವರ ವಿರೋಧವಿರುವುದು ಈ ಪಶ್ಚಿಮ ರಾಷ್ಟ್ರಗಳ ಆಕ್ರಮಣತೆಯಿಂದ ಹಿಂದೂ ಸಂಸ್ಕೃತಿ ನಾಶವಾಗುತ್ತಿದೆ ಎಂಬುದಾಗಿ ಮಾತ್ರ. ಆದರೆ ಇವರ ನಾಯಕ ಮೋದಿ ಒಂದು ಕಡೆ ತಾನು ಹಿಂದೂ ರಾಷ್ಟ್ರೀಯವಾದಿ ಎಂದು ಎದೆ ತಟ್ಟಿ ಹೇಳುತ್ತಾನೆ. ಮತ್ತೊಂದು ಕಡೆ ವಿದೇಶಿ ಬಂಡವಾಳ ಹೂಡಿಕೆಯೇ ಬಾರತದ ಮುಂದಿನ ಭವಿಷ್ಯ ಎಂದು ಪಕ್ಕಾ ಕಾರ್ಪೋರೇಟ್ ಸಂಸ್ಕೃತಿಯಲ್ಲಿ ಕಂಡಲೆಲ್ಲಾ ಭಾಷಣ ಬಿಗಿಯುತ್ತಾನೆ.

ಇಂದು ಮಧ್ಯಮವರ್ಗ ಮತ್ತು ಕಾರ್ಪೋರೇಟ್ ವಲಯ ಈ ಮೋದಿಗೆ ಬೆಂಬಲಿಸುತ್ತಿರುವುದು ಈ ಆರ್ಥಿಕ ನೀತಿಗಾಗಿ ಮಾತ್ರ. ಈ ಮೋದಿಯ ಬಂಡವಾಳಶಾಹಿಗಳ, ಶ್ರೀಮಂತರ ಪರವಾದ ಆರ್ಥಿಕ ನೀತಿಗಳು ಈ ಮಧ್ಯಮವರ್ಗ ಮತ್ತು ಕಾರ್ಪೋರೇಟ್ ಗುಂಪನ್ನು ಪುಳಕಿತಗೊಳಿಸುತ್ತಿದೆ. ಅದನ್ನೇ ಈ ಗುಂಪು ಬದಲಾವಣೆಗಾಗಿ ಎಂದು ಅನೈತಿಕತೆಯಿಂದ ಸಮರ್ಥಿಸಿಕೊಳ್ಳುತ್ತಿವೆ. ಹಾಗಿದ್ದರೆ ಆರೆಸಸ್‌ನ ಮೂಲ ಸಿದ್ಧಾಂತ “ಸ್ವದೇಶಿ ಜಾಗರಣ ಮಂಚ್”ನ ಕತೆ ಏನು?? ಈ ಮೋದಿ ಸಮರ್ಥಕರಿಗೆ ಆರೆಸಸ್ ಮತ್ತು ಮೋದಿಯ ಈ ಎರಡಂಚಿನ ಕತ್ತಿಯ ನಡಿಗೆ ಪರಿಣಾಮ ಇನ್ನೂ ಅನುಭವಿಸಿದಂತಿಲ್ಲ. ಒಮ್ಮೆ ಕತ್ತಿಯ ಅಲುಗಿನ ಎರಡೂ ಕಡೆಯಿಂದ ಹೊಡೆತಕ್ಕೆ ಸಿಕ್ಕಾಗ ಮಾತ್ರ ಅದರ ಪರಿಣಾಮದ ತೀವ್ರತೆ ಅನುಭವಕ್ಕೆ ಬುರುವುದು. ಇದು ಫ್ಯಾಸಿಸಂನ ನಾಲ್ಕನೇ ಅಂಶವನ್ನು ಧೃಡೀಕರಿಸುತ್ತದೆ.

ಮತ್ತೊಂದು ಕಡೆ ಬಿಹಾರನ ಪಾಟ್ಣಾದಲ್ಲಿ ಭಾಷಣ ಮಾಡುತ್ತಾ ಮೋದಿ “ಯದುವಂಶದ ಮೂಲಪುರುಷ ಕೃಷ್ಣ ಪರಮಾತ್ಮನು ಗುಜರಾತನ ದ್ವಾರಕೆಯಿಂದ ಬಂದಿದ್ದಾನೆ. ಹೀಗಾಗಿ ಯಾದವರ ಮೂಲಸ್ಥಾನ ಗುಜರಾತ್” ಎಂದೆಲ್ಲ ಮಾತನಾಡಿದ್ದಾನೆ. ಅಂದು ರಾಮನನ್ನು ಬಳಸಿಕೊಂಡಿದ್ದಾಯಿತು. ಇಂದು ಕೃಷ್ಣನ ಸರದಿ. ಇದು ಯಾವ ಬಗೆಯ ಓಲೈಕೆ?? ಧರ್ಮ ಮತ್ತು ಧಾರ್ಮಿಕ ವ್ಯಕ್ತಿಗಳನ್ನು ಸಾರ್ವಜನಿಕವಾಗಿ ಬಳಸಿಕೊಳ್ಳುವುದು ಸಂವಿಧಾನಕ್ಕೆ ಮಾಡಿದ ಅಪಚಾರ. ಆದರೆ ಆರೆಸಸ್ ಮತ್ತು ಮೋದಿಗೆ ಸಂವಿಧಾನ ಕುರಿತಾಗಿ ಯಾವುದೇ ಬಗೆಯ ಗೌರವವಿಲ್ಲ. ಇದು ಪ್ರತಿ ದಿನ ಸಾಬೀತಾಗುತ್ತಿದೆ.

ಅಲ್ಲದೆ ಬಿಹಾರಿಗಳ ಮತವನ್ನು ಪಡೆಯಲು ಇತಿಹಾಸವನ್ನು ತಿರುಚಿ ಸುಳ್ಳುಗಳನ್ನು ಹೇಳಲೂ ನಾಚಲಿಲ್ಲ ಈ ಮೋದಿ. ಔಟ್‌ಲುಕ್, 11 ನೇ ನವೆಂಬರ್, 2013 ರ ವರದಿಯ ಪ್ರಕಾರ ಮೋದಿಯ ಪಾಟ್ಣಾ ಉವಾಚಗಳು:

ಅಲೆಕ್ಸಾಂಡರ್‌ನನ್ನು ಧೈರ್ಯಶಾಲಿ ಬಿಹಾರಿಗಳು ಗಂಗಾ ನದಿಯ ದಂಡೆಯ ಮೇಲೆ ಸೋಲಿಸಿದರು.” : (ವಾಸ್ತವದಲ್ಲಿ ಅಲೆಕ್ಸಾಂಡರ್‌ನನ್ನು ಪಂಜಾಬಿನಿಂದಲೇ ವಾಪಸ್ಸು ಕಳುಹಿಸಲಾಯಿತು.)

ತಕ್ಷಶಿಲಾ ಬಿಹಾರಿನಲ್ಲಿತ್ತು.” : (ವಾಸ್ತವವಾಗಿ Taksasilaತಕ್ಷಶಿಲಾ ಪಾಕಿಸ್ತಾನದಲ್ಲಿದೆ)

ಎನ್‌ಡಿಎ ಆಡಳಿತದಲ್ಲಿ ಭಾರತದ ಅಭಿವೃದ್ಧಿ ಸೂಚ್ಯಾಂಕ ಶೇಕಡ 8.4 ರಷ್ಟಿತ್ತು.” : (ವಾಸ್ತವವಾಗಿ ಎನ್‌ಡಿಎ ಆಡಳಿತದಲ್ಲಿ ಭಾರತದ ಅಭಿವೃದ್ಧಿ ಸೂಚ್ಯಾಂಕ ಶೇಕಡ 6 ಕ್ಕಿಂತಲೂ ಕಡಿಮೆ ಇತ್ತು.)

ನೆಹರೂ ಅವರು ಸರ್ದಾರ್ ಪಟೇಲರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ. “: (ವಾಸ್ತವವಾಗಿ ಡಿಸೆಂಬರ್ 15, 1950 ರಂದು ಜರುಗಿದ ಅಂತ್ಯಕ್ರಿಯೆಯಲ್ಲಿ ಪ್ರಧಾನಮಂತ್ರಿ ನೆಹರೂ ಮತ್ತು ರಾಷ್ಟ್ರಪತಿ ರಾಜೇಂದ್ರಪ್ರಸಾದ್ ಭಾಗವಹಿಸಿದ್ದರು.)

ಮೋದಿಯು ಗುಜರಾತ್‌ನಲ್ಲಿ ಮುಸ್ಲಿಂ ಶಾಲೆಯ ವಿಧ್ಯಾರ್ಥಿ/ ವಿಧ್ಯಾರ್ಥಿನಿಯರಿಗೆ ಸ್ಕಾಲರ್‌ಶಿಪ್ ಅನ್ನು ನಿರಾಕರಿಸಿದ್ದಾನೆ. ಅಲ್ಲಿ ಅಂತರ್ಜಾತಿ ವಿವಾಹವಾಗಬೇಕಾದರೆ, ಮತಾಂತರಗೊಳ್ಳಬೇಕಾದರೆ ಕಠಿಣ ಕಾನೂನುಗಳನ್ನು ಪಾಲಿಸಬೇಕು. ಅಲ್ಲಿ ಮತಾಂತರಗೊಳ್ಳಬೇಕಾದರೆ ಮೊದಲು ಸರ್ಕಾರದ ಅನುಮತಿ ಪಡೆದಕೊಳ್ಳಬೇಕು.

— (ಕೃಪೆ : ಔಟ್‌ಲುಕ್, 11 ನೇ ನವೆಂಬರ್, 2013)

ಉತ್ತರಪ್ರದೇಶದಲ್ಲಿ ಮಾತನಾಡುತ್ತ ರಾಹುಲ್ ಗಾಂಧಿ “ಮುಝಫರ್ ನಗರದಲ್ಲಿ ಹತಾಶಗೊಂಡ ಮುಸ್ಲಿಂ ಯುವಕರನ್ನು ದುರ್ಬಳಕೆ ಮಾಡಿಕೊಳ್ಳಲು ಐಎಸ್‌ಐ ಸಂಚು ನಡೆಸಿದೆ” ಎಂದು ಹೇಳಿದಾಗ ಇದೇ ಮೋದಿ ರಾಹುಲ್ ಗಾಂಧಿಯ ವಿರುದ್ಧ ಹಿಗ್ಗಾಮುಗ್ಗಾ ದಾಳಿ ನಡೆಸಿ ಇದು ಅಲ್ಪಸಂಖ್ಯಾತರಿಗೆ ಮಾಡಿದ ಅವಮಾನ ಎಂದು ಕೂಗಾಡಿದ. ಇದು ಯಾವ ಬಗೆಯ ಓಲೈಕೆ?? ಇದು ಆರೆಸಸ್ ಅನ್ನು ಕೋಪಗೊಳಿಸಿತ್ತು ಸಹ. ನಂತರ ಮೋದಿ ಈ ವಿಷಯದ ಕುರಿತಾಗಿ ಬಾಯಿ ಬಿಚ್ಚಲಿಲ್ಲ.
ಮಂದಿರಕ್ಕಿಂತಲೂ ಶೌಚಾಲಯಗಳ ಅವಶ್ಯಕತೆ ಇದೆ ಎಂದು ಬಾಯಿತಪ್ಪಿ ಮೊದಲ ಬಾರಿಗೆ ನಿಜ ನುಡಿದ ನರೇಂದ್ರ ಮೋದಿಗೆ ಆರೆಸಸ್ ಚೆನ್ನಾಗಿಯೇ ತರಾಟೆಗೆ ತೆಗೆದುಕೊಂಡಿದೆ. ನಂತರ ಇದರ ಕುರಿತಾಗಿ ಮೋದಿ ಎಲ್ಲಿಯೂ ಮಾತನಾಡಿಲ್ಲ. ಮತ್ತೆ ಹಿಂದೂ ರಾಷ್ಟ್ರೀಯತೆಗೆ ಮರಳಿದ್ದಾನೆ.

ಕಳೆದ ತಿಂಗಳು ಬಿಜೆಪಿ ಪಕ್ಷದ ನಾಯಕರು ತಮ್ಮಲ್ಲೂ ಒಳಗೊಳ್ಳುವಿಕೆಯ ತತ್ವವಿದೆ ಎಂದು ಮಾರ್ಕೆಟಿಂಗ್ ಮಾಡಲು ರ್‍ಯಾಲಿಗಳಲ್ಲಿ ಮುಸ್ಲಿಂರನ್ನು ಕರೆದುತಂದು ಅವರಿಗೆ ಸ್ಕಲ್ ಟೋಪಿ ಮತ್ತು ಬುರ್ಖಾಗಳನ್ನು ಹಂಚಿದರು. ಇದು ಆರೆಸಸ್ ಅನ್ನು ಕೆಂಗಣ್ಣಾಗಿಸಿತು. ನಂತರ ಈ ಪ್ರಾಜೆಕ್ಟ್ ಅನ್ನೇ ಕೈಬಿಡಲಾಯಿತು. ಅಷ್ಟೇಕೆ ಮೊನ್ನೆ ಭೂಪಾಲ್‌ನಲ್ಲಿ ನಡೆದ ಸಮಾವೇಶದಲ್ಲಿ ಮುಸ್ಲಿಂರನ್ನು ಒಳಗೆ ಬಿಡಲೇ ಇಲ್ಲ. ಪ್ರವೇಶದ್ವಾರದಿಂಲೇ ಹಿಂದಕ್ಕೆ ಕಳುಹಿಸಲಾಯಿತು.

ಆರೆಸಸ್ ಮೋದಿಯನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಬಯಸಿದರೆ ಈ ಮೋದಿ ಬಂಡವಾಳ ಹೂಡಿಕೆಯ ಮಾರ್ಕೆಟ್ ತತ್ವ, ಕೇವಲ ಕೈಗಾರಕೋದ್ಯಮಿಗಳಿಗೆ ಮಾತ್ರ ರತ್ನಗಂಬಳಿ ಹಾಸುವ ಆರ್ಥಿಕ ತತ್ವ ಮತ್ತು ಹಿಂದುತ್ವ ಎನ್ನುವ ಎರಡು ಕುದುರೆಯನ್ನೇರಲು ಹೊರಟಿದ್ದಾನೆ. ಇನ್ನು ಬಿಜೆಪಿ ಎನ್ನುವ ರಾಜಕೀಯ ಪಕ್ಷದ ಸ್ಥಿತಿ ಕರಣಾಜನಕ. ಇಂದು ಅದು ರಾಜಕೀಯ ಪಕ್ಷವಾಗಿ ತನ್ನ ಇರುವಿಕೆಯೇ ಪ್ರಶ್ನಾರ್ಹವಾಗಿರುವುದು ನಿಜಕ್ಕೂ ಒಂದು ದುರಂತ.

ಇನ್ನೂ ಸಂಪೂರ್ಣವಾಗಿ ತನ್ನ ಸಿದ್ಧಾಂತಗಳ ಮೆಟ್ಟಿಲುಗಳ ಮೇಲೆ ಅಧಿಕಾರ ಹಿಡಿಯಲು ಆರೆಸಸ್ ವಿಫಲಗೊಂಡಿರುವುದರಿಂದ ಅದರ ವಿದೇಶಾಂಗ ನೀತಿಗಳ ಕುರಿತಾಗಿ ಇನ್ನೂ ಸ್ಪಷ್ಟ ಚಿತ್ರಣ ದೊರೆತಿಲ್ಲ. ಸದ್ಯಕ್ಕೆ ಅದು ಓಬಿರಾಯನ ಕಾಲದ ವಾಜಪೇಯಿಯವರ ಮುತ್ಸದ್ದಿತನದ ರಾಜಕಾರಣವನ್ನೇ ನೆಚ್ಚಿದಂತಿದೆ. ಆದರೆ ನೆರೆಯ ಮುಸ್ಲಿಂ ರಾಷ್ಟ್ರಗಳ ಕುರಿತಾಗಿ ಮಾತ್ರ ಇವರ ವಿದೇಶಾಂಗ ನೀತಿ ಸ್ಪಷ್ಟವಾಗಿದೆ. ಅದು ಹಿಂದಿನ ಕಾಲದ ರಾಜ್ಯಾಡಳಿತದ ಮಾದರಿ. ಅಂದರೆ ಮೋದಿ ಕ್ಷತ್ರಿಯ ರಾಜ. ಬಿಜೆಪಿ ಕ್ಷತ್ರಿಯ ವಂಶ. ವಿಎಚ್‌ಪಿ, ಭಜರಂಗದಳ ಈ ಕ್ಷತ್ರಿಯ ವಂಶದ ಸೇನಾಪಡೆಗಳು. bhagvat-gadkari-modiಸಾವಿರಾರು ವರ್ಷಗಳ ಹಿಂದಿನ ಕಾಲದಂತೆಯೆ ಈ ಕಾಲದಲ್ಲೂ ಕಾಲಾನುಕಾಲಕ್ಕೆ ಶತೃಗಳೊಂದಿಗೆ ಯುದ್ಧಗಳನ್ನು ನಡೆಸುತ್ತಾ ಅವರ ಸಾಮ್ರಾಜ್ಯಗಳನ್ನು ಕಬಳಿಸುತ್ತಾ “ಅಖಂಡ ಹಿಂದೂ ರಾಷ್ಟ್ರ”ದ ಸ್ಥಾಪಿಸುವುದು. ಶತೃರಾಷ್ಟ್ರಗಳನ್ನು ಸದಾಕಾಲ ಭೀತಿಯಲ್ಲಿಡಲು ನಿಯಮಿತವಾಗಿ ಅಣುಪರೀಕ್ಷೆಯನ್ನು ನಡೆಸುತ್ತಿರುವುದು ಮತ್ತೊಂದು ಮಹತ್ವದ ನೀತಿಯಾಗಿರುತ್ತದೆ.

ದೇಶದ ಭವಿಷ್ಯದ ನಾಯಕನೆಂದು ಅಭಿಮಾನಿಗಳಿಂದ ಹೊಗಳಿಸಿಕೊಳ್ಳುತ್ತಿರುವ ಮೋದಿಯ ಬಾಲಿಶ, ತರ್ಕರಹಿತ, ಅನಾಯಕತ್ವದ ಉದಾಹರಣೆಗಳ ನಿದರ್ಶನಕ್ಕಾಗಿ ಮೇಲಿನ ಘಟನೆಗಳನ್ನು ಬರೆಯಬೇಕಾಯಿತು.

ಮಾನವೀಯತೆ, ಸೆಕ್ಯುಲರಿಸಂ ಕುರಿತಾಗಿ ಬಿಟ್ಟುಬಿಡಿ, ಕನಿಷ್ಟ ಮಟ್ಟದ ಆದರ್ಶಗಳು, ದೂರದರ್ಶತ್ವ, ಕನಸುಗಳು ಇಲ್ಲದ ಈ ಮೋದಿಯೆಂಬ ರಾಜಕಾರಣಿಯ ದರ್ಪ ಮತ್ತು ಬಾಲಿಶತನ ಮುಂದೊಂದು ದಿನ ಆತನಿಗೇ ಮುಳುವಾಗಲಿದೆ. ಇದು ದೇಶವನ್ನಾಳ ಬಯಸುವ ಆರೆಸಸ್ ಮತ್ತು ಮೋದಿಯವರ ಡೇಂಜರಸ್ ಆದ ಹುಚ್ಚು ಅವತಾರಗಳು. ಈ ಫ್ಯಾಸಿಸ್ಟರು ದೇಶವನ್ನು ಒಂದು ಮಕ್ಕಳಾಟಿಕೆ ಎಂದು ಭಾವಿಸಿದಂತಿದೆ.

ಇವಕ್ಕೆಲ್ಲ ಮೋದಿಯ ಸಮರ್ಥಕರು ಬಳಿ ಉತ್ತರಗಳಿವೆಯೇ ??

ಆರೆಸಸ್ ಮೋದಿಯನ್ನು ಹೇಗೆ ತನ್ನ ಮುಷ್ಟಿಯೊಳಗೆ ಇಟ್ಟುಕೊಳ್ಳುತ್ತದೆ? ಕಡೆಗೆ ಈ ಮೋದಿ ಎರಡು ಧ್ರುವಗಳಂತಿರುವ ಆರೆಸಸ್ ಮತ್ತು ತನ್ನ ಜಾಗತೀಕರಣದ ಮಾರ್ಕೆಟ್ ಸಿದ್ಧಾಂತವನ್ನು ಹೇಗೆ ಬ್ಯಾಲೆನ್ಸ್ ಮಾಡುತ್ತಾನೆ?? ಕಡೆಗೆ ಪ್ರಜಾಪ್ರಭುತ್ವವನ್ನು ಗೌರವಿಸುತ್ತೇವೆ ಎಂದೇ ವಚನ ನೀಡಿ ಇಂಡಿಯಾದಲ್ಲಿ ರಾಜಕಾರಣ ಮಾಡುತ್ತಿರುವ ಈ ಬಿಜೆಪಿ ಪಕ್ಷ ಆರೆಸಸ್ ಮತ್ತು ಮೋದಿಯನ್ನು ಹೇಗೆ ನಿಭಾಯಿಸುತ್ತದೆ?? ಇದು ಯಕ್ಷಪ್ರಶ್ನೆ.

ಆದರೆ ದೇಶ ಈ ಫ್ಯಾಸಿಸ್ಟ್ ಗುಂಪನ್ನು ಹೇಗೆ ನಿಭಾಯಿಸುತ್ತದೆ ?? ನಾವೆಲ್ಲಾ ಬಿಜೆಪಿ ಮತ್ತು ಮೋದಿಯ ಗುಮ್ಮನನ್ನು ತೋರಿಸಿ ಸಧ್ಯಕ್ಕೆ ಕಾಂಗ್ರೆಸ್ ಮಾತ್ರ ಇವರಿಗೆ ಪರ್ಯಾಯವೆಂದುಕೊಳ್ಳುವ ಮನಸ್ಥಿತಿಯಿಂದ ಹೊರಬಂದು ಹೊಸ ನುಡಿಕಟ್ಟು, ಹೊಸ ಚಿಂತನೆಗಳನ್ನು, ಪರ್ಯಾಯ ಸಾಂಸ್ಕೃತಿಕ ಮಾದರಿಗಳನ್ನು ರೂಪಿಸಲು ಪ್ರಯತ್ನಿಸಿದರೆ ಇದು ಕ್ಲಿಷ್ಟಕರವೂ ಅಲ್ಲ. ಜಟಿಲವೂ ಅಲ್ಲ.

ತುಝೆ ಚಲ್ನಾ ಹೋಗ, ತುಝೆ ಚಲ್ನಾ ಹೋಗ

– ಶ್ರೀಪಾದ ಭಟ್

ಕೆಲವು ತಿಂಗಳ ಹಿಂದೆಯಷ್ಟೇ ಹಿಂದಿ ಚಿತ್ರರಂಗದ ಮಹಾನ್ ಗಾಯಕಿ ಶಂಶಾದ್ ಬೇಗಂ ತೀರಿಕೊಂಡಿದ್ದರು. ನಿನ್ನೆ ಮತ್ತೊಬ್ಬ ಮಹಾನ್ ಗಾಯಕ ಮನ್ನಾಡೆ ನಿಧನರಾಗಿದ್ದಾರೆ. ಇವರಿಬ್ಬರೂ ತೀರಿಕೊಂಡಾಗ ಅವರು ವಯಸ್ಸು 90 ರಿಂದ 95 ವರ್ಷಗಳು. ಇದೊಂದೇ ಅಲ್ಲ ಇವರ ನಡುವೆ ಇನ್ನೂ ಹಲವಾರು ಸಾಮ್ಯತೆಗಳಿವೆ. ಇಬ್ಬರೂ ತಮ್ಮ ವೃತ್ತಿಜೀವನದಲ್ಲಿ ತಮ್ಮ ತಲೆಮಾರಿನ ಜನಪ್ರಿಯ ಗಾಯಕ/ಗಾಯಕಿಯರಾದ ಮಹಮದ್ ರಫಿ, ಮುಖೇಶ್, ಕಿಶೋರ್ ಕುಮಾರ್, ಲತಾ ಮಂಗೇಶ್ಕರ್, ಆಶಾ ಭೋಸ್ಲೆರಂತಹವರ ನೆರಳಿನಲ್ಲಿ, ಸೆಕೆಂಡ್ ಲೆವೆಲ್‌ನಲ್ಲಿ ಬದುಕಿದ್ದರು. ಆದರೆ ಶಂಶಾದ್ ಬೇಗಂ ಮತ್ತು ಮನ್ನಾಡೆ ಅವರೆಲ್ಲರಿಗಿಂತಲೂ ತಮ್ಮ ಭಿನ್ನತೆ ಕಾಪಾಡಿಕೊಂಡಿದ್ದರು. Manna_Deyಇವರಿಬ್ಬರ ಕಂಠದ, ಹಾಡುಗಳ ಅನನ್ಯತೆ ಅದ್ಭುತವಾದದ್ದು. ಏಕೆಂದರೆ ದೇವ್ ಆನಂದ್, ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್. ಶಮ್ಮಿ ಕಪೂರ್‌ರಂತಹ ಸೂಪರಸ್ಟಾರ್‌ಗಳ ಕಂಠವಾಗಿದ್ದವರು ಮಹಮದ್ ರಫಿ. ರಾಜ ಕಪೂರ್, ಮನೋಜ್ ಕುಮಾರರಂತಹ ನಟರಿಗೆ ಕಂಠವಾಗಿದ್ದವರು ಮುಖೇಶ್. ರಾಜೇಶ್ ಖನ್ನಾ, ದೇವ್ ಆನಂದ್ ರವರಿಗೆ ಕಂಠವಾಗಿದ್ದವರು ಕಿಶೋರ್ ಕುಮಾರ್. ಆದರೆ ಶಂಶಾದ್ ಬೇಗಂ ಮತ್ತು ಮನ್ನಾಡೆ ಯಾವುದೇ ನಟ/ನಟಿಯೊಂದಿಗೆ ಗುರುತಿಸಿಕೊಳ್ಳದೆ ಬದಲಾಗಿ ಶಂಶಾದ್ ಬೇಗಂ ಎಂದೇ ಮತ್ತು ಮನ್ನಾಡೆ ಎಂದೇ ವಿಶಿಷ್ಟವಾಗಿ ಗುರುತಿಸಲ್ಪಡುತ್ತಿದ್ದರು. ಇವರಿಬ್ಬರ ಮತ್ತೊಂದು ಗುಣವೆಂದರೆ ಜನಪ್ರಿಯತೆಗೆ ಬೆನ್ನು ಹಾಕಿ ಒಂದು ಬಗೆಯ Low Profile ಜೀವನ ನಡೆಸಿದರು. ಖ್ಯಾತಿವಂತರಾಗಿದ್ದರೂ ತಮ್ಮದೇ ಆದ ಒಂದು ಕಟ್ಟುನಿಟ್ಟಿನ, ಮುಗ್ಧತೆಯೇ ಮೈವೆತ್ತಂತಹ ಬಾಳು ಸಾಗಿಸಿದರು.

ಕೌನ್ ಆಯಾ ಮೇರೆ ದಿಲ್ ಕೆ ದ್ವಾರೆ ಪಾಯಲ್ ಕಿ ಝನ್‌ಕಾರ್ ಲಿಯೇ, ಧರ್ತಿ ಕಹೆ ಪುಕಾರ್ ಕೆ, ಮೌಸಮ್ ಬೀತಾ ಜಾ ಐ ಮೇರೆ ಪ್ಯಾರೇ ವತನ್, ಐ ಮೇರೆ ಬಿಗಡೇ ಚಮನ್, ಮುಡು ಮುಡುಕೇನ ದೆಖ್ ಮುಡುಮುಡುಕೆ, ನೈನ್ ಮಿಲೆ ಚೈನ್ ಕಹಾ, ಸುರ್ ನ ಸಜೆ, ಜಿಂದಗಿ ಕೈಸಿ ಹೈ ಪಹೇಲಿ, ಕಭಿ ತೊ ಹಸಾಯೆ ಕಭಿ ತೊ ರುಲಾಯೆ, ತೂ ಪ್ಯಾರ್ ಕ ಸಾಗರ್ ಹೈ, ಪೂಛೋನ ಮೈನೆ ಕೈಸೆ, ಲಾಗಾ ಚುನುರೀ ಮೆ ದಾಗ್, ಯೆ ರಾತ್ ಭೀಗೀ ಭೀಗೀ, ಚಲತಾ ಮುಸಾಫಿರ್ ಮೊಹಲಿಯರೇ, ಯಾರೀ ಹೈ ಇಮಾನ್ ಮೇರ ಯಾರ್ ಮೇರಿ ಜಿಂದಗಿ, ಕಸ್ಮೆ ವಾದೆ ಪ್ಯಾರ್ ವಫಾ, ತುಜೆ ಸೂರಜ್ ಕಹೂ ಯ ಚಂದಾ, ನದಿಯಾ ಚಲೇ ರೆ ಧಾರ, ತುಜೆ ಚಲ್ನಾ ಹೋಗ, ಹೀಗೆ ಎಣೆಯಿಲ್ಲದ ನೂರಾರು ಹಾಡುಗಳನ್ನು ಅದ್ಭುತವಾಗಿ ಹಾಡಿದರು ಮತ್ತು ನಮ್ಮನ್ನೆಲ್ಲ ಮೋಡಿಗೊಳಿಸಿದರು. ಬಸಂತ್ ಬಹಾರ್ ಚಿತ್ರದಲ್ಲಿ ಭೀಮಸೇನ್ ಜೋಶಿಯವರೊಂದಿಗೆ ಜುಗಲ್ ಬಂದಿಯನ್ನು ಸರಿಸಮನಾಗಿ ಹಾಡಿದ್ದರು. ಆದರೆ ಕಡೆಗೂ ಮನ್ನಾಡೆ ತಾನು ಮುಟ್ಟಬೇಕಾದ ನಂ.1 ಸ್ಥಾನವನ್ನು ತಲುಪಲೇ ಇಲ್ಲ. ಇದಕ್ಕೆ ಸ್ವತಃ ಮನ್ನಾಡೆಯವರ ಸಂಕೋಚದ, ಇದ್ದುದರಲ್ಲೇ ತೃಪ್ತಿ ಪಡುವಂತಹ ಗುಣ ಮತ್ತು ಮಹತ್ವಾಕಾಂಕ್ಷಿಯಾಗಲೊಲ್ಲದ ವ್ಯಕ್ತಿತ್ವ ಮೂಲಭೂತ ಕಾರಣಗಳಾದರೆ ಹಿಂದಿ ಸಿನಿಮಾ ರಂಗದ ನಿಗೂಢತೆ, ಮಾಯೆ, ಐಶ್ವರ್ಯಗಳನ್ನು ಮನ್ನಾಡೆ ಅರಿಯದೇ ಹೋದದ್ದು ಮತ್ತೊಂದು ಕಾರಣವಿರಬಹುದೇನೋ.

ಶಂಕರ್ ಜೈ ಕಿಶನ್, ಓ.ಪಿ.ನಯ್ಯರ್, ಮದನ್ ಮೋಹನ್, ಅನಿಲ್ ಬಿಶ್ವಾಸ್, ಎಸ್.ಡಿ.ಬರ್ಮನ್, ರೋಶನ್, ಸಲೀಲ್ ಚೌಧುರಿ, ವಸಂತ್ ದೇಸಾಯಿಯವರಂತಹ ಪ್ರಖ್ಯಾತ ಸಂಗೀತ ನಿರ್ದೇಶಕರೊಂದಿಗೆ ಹಾಡಿದ ಮನ್ನಾಡೆ ನಮ್ಮಂತಹ ಅಸಂಖ್ಯಾತ ಅಭಿಮಾನಿಗಳಿಗೆ ಆದರ್ಶವಾಗಿದ್ದರು. ಅಂದರೆ ಒಂದು ಬಗೆಯ ಮೀಡಿಯೋಕರ್ ವ್ಯಕ್ತಿತ್ವದವರಿಗೆ, ಆರಕ್ಕೇರದೆ ಮೂರಕ್ಕಿಳಿಯದಂತಹವರಿಗೆ ಈ ಮಿತಿಗಳ ನಡುವೆಯೂ ಜೀವನದಲ್ಲಿ ಅದ್ಭುತವಾದುದ್ದನ್ನು ಸಾಧಿಸಬಹುದೆಂದು ತೋರಿಸಿಕೊಟ್ಟಿದ್ದು ಮನ್ನಾಡೆ. ರೋಮ್ಯಾಂಟಿಕ್ ಅಥವಾ ದುಖಃಭರಿತ ಹಾಡುಗಳನ್ನು ಆ ಸನ್ನಿವೇಶಕ್ಕೆ ಅನುಗುಣವಾಗಿ ಉಚ್ಛ್ರಾಯ ಗತಿಯಲ್ಲಿ ಹಾಡಿ ಪ್ರೇಕ್ಷಕರಲ್ಲಿ ಹುಚ್ಚೆಬ್ಬಿಸುವಂತೆ ಹಾಡುವುದು ಮನ್ನಾಡೆಯವರ ಶೈಲಿ ಅಲ್ಲವೇ ಅಲ್ಲ. ಇದೇ ನಿಮ್ಮ ಮಿತಿಯಾಗಿತ್ತಲ್ಲವೇ ಎಂಬ ಪ್ರಶ್ನೆಗೆ manna-deyಸುಮ್ಮನೆ ಮುಗುಳ್ನಗುತ್ತಿದ್ದರು ಮನ್ನಾಡೆ. ನೌಶಾದ್ ಸಾಬ್ ಸಹ ಮನ್ನಾಡೆಯವರ ಧ್ವನಿ ರೋಮ್ಯಾಂಟಕ್ ಹಾಡುಗಳಿಗೆ ಬೇಕಾದಂತಹ ಧ್ವನಿಯ ಇಲ್ಲವೆಂದೆ ಅಪಸ್ವರ ಎತ್ತಿದ್ದರು. ಇವರದು ನದಿಯ ಜುಳು ಜುಳು ಎನ್ನುವ ಆದ್ರತೆ ಮತ್ತು ಸಮ್ಮೋಹನಕರ. ಅಲ್ಲದೆ ಮನ್ನಾಡೆ ಹಿಂದಸ್ತಾನಿ ಶಾಸ್ತ್ರೀಯ ಶೈಲಿಯಲ್ಲಿ ಗಳಿಸಿದ ನೈಪುಣ್ಯತೆ ಮತ್ತು ಈ ಹಿಂದುಸ್ತಾನಿ ಸಂಗೀತದಲ್ಲಿನ ಪರಿಣಿತಿಯನ್ನು ಚಲನಚಿತ್ರದ ಹಾಡುಗಳಿಗೆ ಅದ್ಭುತವಾಗಿ ಉಪಯೋಗಿಸಿಕೊಂಡ ಮನ್ನಾಡೆ ದಿನನಿತ್ಯ ರಿಯಾಜ್ ಮಾಡುತ್ತಿದ್ದರು. ಇದೂ ಕೂಡ ನಮಗೆ ಒಂದು ಪಾಠ. ಮಲ್ಹಾರ್, ಯಮನ್, ಶುದ್ದ ಸಾರಂಗ್, ಬಹಾರ್, ಮುಧು ರಂಜನಿಯಂತಹ ಹಿಂದುಸ್ತಾನಿ ರಾಗಗಳನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ಸುಲಲಿತವಾಗಿ ಹಾಡುತ್ತಿದ್ದರು ಮನ್ನಾಡೆ. ಇದಕ್ಕೆಂದೇ ಇರಬೇಕು ಎಪ್ಪತ್ತರ ದಶಕದ ವೇಳೆಗೆ ಶಾಸ್ತ್ರೀಯ ರಾಗಗಳ ಆಧಾರಿತ ಸಿನಿಮಾ ಗೀತೆಗಳು ಹಿನ್ನೆಲೆಗೆ ಸರಿಯತೊಡಗಿದಾಗ ಮನ್ನಾಡೆಯಂತಹ ಗಾಯಕರು ಮಂಕಾಗತೊಡಗಿದರು. ಅನೇಕ ವೇಳೆ ಏಕ್ ಚತುರ ನಾರ್ ಬಡೆ ಹೋಶಿಯಾರ್, ಆ ವೋ ಟ್ವಿಸ್ಟ್ ಕರೇ, ಗಳಂತಹ ತನಗೊಪ್ಪದ, ಸಾಧಾರಣ ಹಾಡುಗಳನ್ನು ಹಾಡುವಂತ ಸ್ಥಿತಿಗೆ ತಲುಪಿದರು ಮನ್ನಾಡೆ. ನಂತರ ಎಪ್ಪತ್ತು ಮತ್ತು ಎಂಬತ್ತರ ದಶಕಗಳಲ್ಲಿ ಕಿಶೋರ್ ಕುಮಾರ್ ಅವರ ಅಲೆಯಲ್ಲಿ ಹೆಚ್ಚೂ ಕಡಿಮೆ ತಣ್ಣಾಗಾಗದರು. ಇದರ ಕುರಿತಾಗಿಯೂ ಅವರಲ್ಲಿ ವೇದನೆ, ಬೇಸರ ಇದ್ದಂತಿಲ್ಲ..

ಬದುಕಿದ್ದಾಗ ಭೌತಿಕವಾಗಿ ಯಾರೊಂದಿಗೂ ಬೆರೆಯದೆ ಒಂಟಿಯಾಗಿದ್ದ ಮನ್ನಾಡೆ ತಮ್ಮ ಗೀತೆಗಳ ಮೂಲಕ ನಮ್ಮೊಂದಿಗಿದ್ದರು, ಆದರೆ ಮನ್ನಾಡೆ ಇಂದು ನಮ್ಮೊಂದಿಗಿಲ್ಲ ಆದರೂ ಅವರ ಕಂಠ ನಮ್ಮೊಳಗೆ ಹಾಡುತ್ತಲೇ ಇರುತ್ತದೆ ತುಜೆ ಚಲ್ನಾ ಹೋಗ, ತುಜೆ ಚಲ್ನಾ ಹೋಗ.

ಯಾರ ಜಪ್ತಿಗೂ ಸಿಗದ ಧರ್ಮಸ್ಥಳದ ಕಲೋನಿಯಲ್ ಪಟ್ಟಭದ್ರ ವ್ಯವಸ್ಥೆ

– ಬಿ.ಶ್ರೀಪಾದ ಭಟ್

ಒಂದು ವರ್ಷದ ಹಿಂದೆ ನಡೆದ ಸೌಜನ್ಯ ಹತ್ಯೆ ಪ್ರಕರಣ ಈಗ ಅನಿರೀಕ್ಷಿತವಾದ ತಿರುವು ಪಡೆದುಕೊಂಡು ಕಡೆಗೆ ಧರ್ಮಸ್ಥಳದ ಸೋ ಕಾಲ್ಡ್ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಅಂಗಳಕ್ಕೆ ಬಂದು ತಲುಪಿದೆ. ಅಷ್ಟೇ ಅಲ್ಲ ಅವರಿಗೆ ಉರುಳಾಗುತ್ತಾ ಸಾಗಿದೆ. ಇವರನ್ನು ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸಿದೆ. Dharmasthala_Templeಇಂದು ಸೌಜನ್ಯ ಹತ್ಯೆಯ ಹಿಂದೆಯೇ ಧರ್ಮಸ್ಥಳ ಮತ್ತು ಉಜಿರೆಯ ಸುತ್ತ ಕಳೆದ ಕೆಲವು ವರ್ಷಗಳಿಂದ ನಿಗೂಢ ಕೊಲೆಗಳು ಮತ್ತು ಅದು ಮುಚ್ಚಿ ಹಾಕಿದ ಪ್ರಭಾವಶಾಲಿ ವ್ಯಕ್ತಿ ಮತ್ತು ಸಂಸ್ಥೆಗಳ ಕೈವಾಡ ಇಂದು ಬಯಲಿಗೆ ಬರುತ್ತಿದೆ.

ಸೌಜನ್ಯಳ ಕುಟುಂಬಕ್ಕೆ ನ್ಯಾಯ ಒದಗಿಸಲು ಮತ್ತು ಕೆಲವು ವರ್ಷಗಳಿಂದ ಧರ್ಮಸ್ಥಳ ಮತ್ತು ಉಜಿರೆಯ ಸುತ್ತ ಮುತ್ತ ನಡೆದಿದೆ ಎನ್ನಲಾದ ಕೊಲೆಗಳ ಸತ್ಯಶೋಧನೆಗಾಗಿ ಮಂಗಳೂರಿನ ಕಮ್ಯುನಿಷ್ಟ ಮಿತ್ರರು ಕಳೆದ ಒಂದು ವರ್ಷದಿಂದ ನಿರಂತರವಾಗಿ ನಡೆಸುತ್ತಿರುವ ಹೋರಾಟ ಈ ಪ್ರಕರಣ ಮರುಜೀವ ಪಡೆದುಕೊಳ್ಳಲು ಕಾರಣ. ನಿಸ್ವಾರ್ಥದಿಂದ ಈ ಹೋರಾಟವನ್ನು ನಡೆಸಿದ ನಮ್ಮ ಕಮ್ಯುನಿಷ್ಟ ಮಿತ್ರರಿಗೆ ಕನ್ನಡಿಗರು ಧನ್ಯವಾದಗಳನ್ನು ಹೇಳಬೇಕಾಗಿದೆ. ನಮ್ಮ ಮಿತ್ರರು ಇದೇ ತಿಂಗಳು ಸೌಜನ್ಯಳ ಹುಟ್ಟುಹಬ್ಬದ ದಿನವಾದ ಅಕ್ಟೋಬರ್ 18ರಂದು ಬೆಳ್ತಂಗಡಿಯಲ್ಲಿ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಂಡಿದ್ದಾರೆ. ನಮ್ಮ ಪ್ರೀತಿಯ ಗೆಳೆಯರಿಗೆ ನಾವೆಲ್ಲ ಸಂಪೂರ್ಣ ಬೆಂಬಲ ಕೊಡಬೇಕಾಗಿದೆ.

ಪ್ರಜಾಪ್ರಭುತ್ವದ ದೇಶದಲ್ಲೂ ಧರ್ಮಸ್ಥಳದಲ್ಲಿ ಈ ವೀರೇಂದ್ರ ಹೆಗ್ಗಡೆಯವರು ಅನಭಿಷಕ್ತ ರಾಜರಂತೆ ರಾಜ್ಯಾಭಾರ ನಡೆಸುತ್ತಿದ್ದಾರೆ. ಅಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಅವರ ಉಕ್ಕಿನ ಹಿಡಿತ ಸಡಿಲಗೊಂಡಿಲ್ಲ. ಇಂದು ಈ ಸರ್ವಾಧಿಕಾರದ ಆಡಳಿತಕ್ಕೆ ಸಮಾಜ ಸೇವೆಯ ಮುಖವಾಡ ಗಟ್ಟಿಯಾಗಿ ಅಂಟಿಕೊಂಡಿದೆ. ಇಷ್ಟಾದರೂ ನಮ್ಮ ದೇಶದ ಪ್ರಜಾಪ್ರಭುತ್ವದ ಸಂವಿಧಾನ ಸಮಾನತೆಗಾಗಿ ಕಲ್ಪಿಸಿಕೊಟ್ಟ ಅಲ್ಪಸಂಖ್ಯಾತರಿಗಾಗಿ ಇರುವ ಮೀಸಲಾತಿಯ ಸವಲತ್ತನ್ನು ತಮ್ಮ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಬಳಸಿಕೊಳ್ಳಲು ಈ  ವೀರೇಂದ್ರ ಹೆಗ್ಗಡೆಯವರಿಗೆ ಯಾವುದೇ ಸಂಕೋಚವಿಲ್ಲ. ಮಾತೆತ್ತಿದರೆ ನಮ್ಮ ಪರಿಸರ, ನಮ್ಮ ಸಂಸ್ಕೃತಿಯ ಕುರಿತಾಗಿ ಮಾತನಾಡುವ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ಸುತ್ತಮುತ್ತ ವಸಾಹುಶಾಹಿಯ ಸಮಾಜವನ್ನು ನಿರ್ಮಿಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಅದು ಕಲೋನಿಯಲ್ ರೂಪದಂತೆ ಗೋಚರಿಸದಿರಲು ಅಲ್ಲಿ ಉದಾರವಾದಿ ಮುಖವಾಡವನ್ನು ತೊಡಿಸಲಾಗಿದೆ. ಇದಕ್ಕೆ ಪೂರಕವಾಗಿ ವೀರೇಂದ್ರ ಹೆಗ್ಗಡೆಯವರ ಸಂಘ ಸಂಸ್ಥೆಗಳ ಸಮಾಜ ಸೇವೆಯ ಗರಿಗಳು ಮುಡಿಗೇರಿರುವುದು ಪ್ರಜ್ಞಾವಂತರಲ್ಲಿ ಅಚ್ಚರಿ ಮೂಡಿಸಿದೆ. ಈ ವೀರೇಂದ್ರ ಹೆಗ್ಗಡೆಯವರ ಧಾರ್ಮಿಕ ಮೂಲಭೂತವಾದವನ್ನು ಪ್ರಗತಿಪರರು ಬಿಚ್ಚಿ ತೋರಿಸಿದರೆ ಬೆಂಬಲಿಗರು ಅದನ್ನು ಅಲ್ಲಗೆಳೆಯದೆಯೇ ಬದಲಾಗಿ ಹೆಗ್ಗಡೆಯವರ ಸಮಾಜಸೇವೆಯ ಪಟ್ಟಿಗಳನ್ನು ನೀಡಿ ಇದೇ ಅವರ ಅಸ್ಮಿತೆ ನೆನಪಿರಲಿ ಎಂದು ತಾಕೀತು ಮಾಡುತ್ತಾರೆ. ಇಂದು ಧರ್ಮಸ್ಥಳದ ಧಾರ್ಮಿಕತೆಯ ಅಮಾನವೀಯ ಅಟ್ಟಹಾಸವನ್ನು Sowjanya-Rape-Murderದೈವತ್ವದ ಪವಾಡವಾಗಿ ಬಳಸಿಕೊಂಡಿರುವುದು ವೀರೇಂದ್ರ ಹೆಗ್ಗಡೆಯವರ ಚಾಣಾಕ್ಷತೆ ಎನ್ನುವದರಲ್ಲಿ ಅನುಮಾನವೇ ಇಲ್ಲ. ಅಲ್ಲಿನ ಗುಲಾಮಿತನವನ್ನು ಭಕ್ತಿಯ ಪರಾಕಷ್ಟೆಯೆಂಬಂತೆ ಜಗಜ್ಜಾಹೀರುಗೊಳಿಸಿರುವುದು ವೀರೇಂದ್ರ ಹೆಗ್ಗಡೆಯವರ ಬಲು ದೊಡ್ಡ ಮಾರ್ಕೆಟಿಂಗ್‌ ಸಕ್ಸೆಸ್. ಅಲ್ಲಿನ ನಾಗರಿಕರು ಚಿಂತನೆಗೆ ಒರೆ ಹಚ್ಚಬೇಕಾದಂತಹ ತಮ್ಮದೇ ಆದ ಮಿದುಳನ್ನು ಮೌನವಾಗಿ ನಿಷ್ಕ್ರಿಯೆಗೊಳಿಸಿ ಧರ್ಮಸ್ಥಳದ ಧರ್ಮಾಧಿಕಾರಿಗಳ ಪದತಲದಲ್ಲಿ ಮುಡಿಪಾಗಿರಿಸಿದ್ದಾರೆ. ಕಲೋನಿಯಲ್ನ ಈ ದಿಗ್ವಿಜಯದ ಫಲವಾಗಿ  ಅಲ್ಲಿನ ‘ಒಡೆಯ-ಗುಲಾಮ’ ವ್ಯವಸ್ಥೆ ಗುರು-ಶಿಷ್ಯ ಸಂಬಂಧದ ಮುಖವಾಡ ಧರಿಸಿದೆ. ಹಾಗಾದಲ್ಲಿ ವೀರೇಂದ್ರ ಹೆಡೆಯವರ ಸಾಮ್ರಾಜ್ಯದಲ್ಲಿ ಆಧುನಿಕತೆಯ, ವೈಚಾರಿಕತೆಯ ವ್ಯಾಖ್ಯಾನವೇನು?? ಸ್ವಘೋಷಿತ ಧಾರ್ಮಿಕ ನಾಯಕನ ಈ ಸಕ್ಸೆಸ್ ಓಟ ಎಗ್ಗಿಲ್ಲದೆ ಜನಬೆಂಬಲ ಪಡೆದುಕೊಳ್ಳತೊಡಗಿದರೆ ಇನ್ನೆಲ್ಲಿದೆ ಮಾನವೀಯ ನಾಯಪರವಾದ ಸಂವಾದ?? ಇನ್ನೆಲ್ಲಿದೆ ಹೃದಯ ವೈಶಾಲ್ಯತೆ?

ಈ ವೀರೇಂದ್ರ ಹೆಗ್ಗಡೆಯವರ ಈ ಶಕ್ತಿಕೇಂದ್ರ ಯಾವುದೇ ಬಗೆಯ ಹೊನ್ನಾಳಿ ಹೊಡೆತಕ್ಕೂ, ಬಲವಾದ ಸುತ್ತಿಗೆ ಏಟಿಗೂ ಒಂದಿಂಚೂ ಅಲ್ಲಾಡದಿರಲು ಕಾರಣವೇನು?? ಧರ್ಮಸ್ಥಳ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಸಹಜ ಸಾವುಗಳ ಪ್ರಕರಣಗಳು ಸೂಕ್ತವಾಗಿ ತನಿಖೆಯಾಗದಂತೆ ತಡೆಯುತ್ತಿರುವ ಕಾಣದ ಕೈಗಳಾವವು?? ಅಲ್ಲಿನ ಪೋಲೀಸರು ನಿಷ್ಪಕ್ಷಪಾತ ತನಿಖೆ ನಡೆಸದಂತೆ ನಿಗ್ರಹಿಸುತ್ತಿರುವ ರಾಜಕೀಯ ಶಕ್ತಿಗಳಾವುವು?? ಉತ್ತರ ಕ್ಲಿಷ್ಟವೇನಲ್ಲ. ತುಂಬಾ ಸರಳ.

ಸೀನ್ 1:
ಈ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಕೊಲೆ ಸಂಚಿನ ಆರೋಪ ಎದುರಿಸುತ್ತಿರುವಂತಹ ಈ ಸೂಕ್ಷ್ಮ ಸಂದರ್ಭದಲ್ಲಿ  ಸೋ ಕಾಲ್ಡ್ ಸೆಕ್ಯುಲರ್ ಪಕ್ಷ ಕಾಂಗ್ರೆಸ್‌ನ ಬುದ್ಧಿಜೀವಿ ರಾಜಕಾರಣಿ ಎಂದೇ ಪ್ರಖ್ಯಾತರಾದ ಕನ್ನಡ ಚಿತ್ರಕಲಾ ಪರಿಷತ್‌ನ ಅಧ್ಯಕ್ಷರೂ ಆಗಿರುವ ರಾಜಕಾರಣಿ ಬಿ.ಎಲ್. ಶಂಕರ್ ಏಕಾಏಕಿ ಅವರಿಗೆ ಬೆಂಬಲ ಸೂಚಿಸುತ್ತಿರುವುದರಲ್ಲಿ ಈ ಉತ್ತರ ಅಡಗಿದೆ.

ಸೀನ್ 2:
17ನೇ ಅಕ್ಟೋಬರ್ 2013ರಂದು ತನ್ನ ಶಕ್ತಿಯನ್ನು ಸಾಬೀತುಪಡಿಸಲು ಉಜಿರೆಯಲ್ಲಿ ರಾಜಕಾರಣಿಯಂತೆ ತನ್ನ ಬೆಂಬಲಿಗರ ಸಮಾವೇಶ ನಡೆಸಿದ ವೀರೇಂದ್ರ ಹೆಗ್ಗಡೆಯವರೊಂದಿಗೆ ನಾಚಿಕೆ, ಮಾನವಿಲ್ಲದೆ ವೇದಿಕೆ ಹಂಚಿಕೊಂಡ ಸಚಿವರಾದ ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ ಅಷ್ಟಕ್ಕೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ವೀರೇಂದ್ರ ಹೆಗ್ಗಡೆಯವರ ಪರವಾಗಿ ಜಿದ್ದಿಗೆ ಬಿದ್ದವರಂತೆ ಮಾತನಾಡಿದರು. ಇವರಿಗೆ ಸಂವಿಧಾನದ ಆಶಯಗಳೇ ಮರೆತುಹೋಗಿದ್ದು ದುರಂತವಲ್ಲದೇ ಮತ್ತಿನ್ನೇನು ?? ನೆನಪಿರಲಿ ಇವರೆಲ್ಲ ಸೆಕ್ಯುಲರ್ ರಾಜಕಾರಣಿಗಳು.

ಸೀನ್ 3:
17ನೇ ಅಕ್ಟೋಬರ್ 2013ರಂದು ಬೆಂಗಳೂರಿನಲ್ಲಿ ವೀರೇಂದ್ರ ಹೆಗ್ಗಡೆಯವರ ಪರವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದವರು ಸಭ್ಯ, ನಿಷ್ಠಾವಂತ, ಶಿಕ್ಷಿತ, ಸೆಕ್ಯುಲರ್ ರಾಜಕಾರಣಿ ಎಂದೇ ಪ್ರಖ್ಯಾತರಾದ  ಕಾಂಗ್ರೆಸ್‌ನ ಸುದರ್ಶನ್, ಜನಪರ ರಾಜಕಾರಣಿ ಎಂದು ಪ್ರಸಿದ್ಧಿ ಪಡೆದ ಸಿಂಧ್ಯಾ, ಮತಾಂಧ ರಾಜಕಾರಣಿ ಸಿ.ಟಿ.ರವಿ, ಕನ್ನಡ ಚಲನಚಿತ್ರ ರಂಗದ ಗಣ್ಯರು ಮತ್ತು ಪ್ರಖ್ಯಾತ, ಜಾತ್ಯಾತೀತ, ಸೆಕ್ಯುಲರ್ ಸಾಹಿತಿಗಳಾದ ಕಮಲಾ ಹಂಪಾನಾ ಮತ್ತು ಇತ್ಯಾದಿ, ಇತ್ಯಾದಿ, ಇತ್ಯಾದಿ ಮುಖಂಡರು!!

ಸೀನ್ 4:
ಕೇವಲ ಕನ್ನಡ ಸಾಹಿತ್ಯ ಸಂಬಂದಿತ ವಿವಾದಗಳಿಗೆ ಮಾತ್ರ ತೀಕ್ಷಣವಾಗಿ ಪ್ರತಿಕ್ರಿಯಿಸಿ ಅಭಿವ್ಯಕ್ತಿ ಸ್ವಾತಂತ್ರ ನಮ್ಮ ಆಜನ್ಮ ಸಿದ್ಧ ಹಕ್ಕು ಎಂದು ಮುಗಿಲುಮುಟ್ಟುವಂತೆ ಘೋಷಿಸುವ ನಮ್ಮ ಬಹುಪಾಲು ಸಾಹಿತಿಗಳು ಮತ್ತು ವಿಮರ್ಶಕರು ಸಾಹಿತ್ಯೇತರವಾದ ಯಾವುದೇ ಬಗೆಯ ಶೋಷಣೆಯ ಕುರಿತಾಗಿ ತಳೆಯುವ ದಿವ್ಯ ನಿರ್ಲಕ್ಷ್ಯ, ನ್ಯಾಯದ, ಸಮತಾವಾದದ ಪರವಾಗಿ ಚಳುವಳಿ ನಡೆಸುವ ಚಳುವಳಿಗಾರರ ಕುರಿತಾದ ಈ ಯುಜಿಸಿ ಪಂಡಿತರ ಅಸಡ್ಡೆ ಇವರ ಕುರಿತಾಗಿ ನಮ್ಮಲ್ಲಿ ಅಸಹ್ಯ ಹುಟ್ಟಿಸಲು ಮಾತ್ರ ಸಾಧ್ಯವಷ್ಟೇ. ಇವರೆಲ್ಲ ತಿರಸ್ಕಾರಕ್ಕೆ ಮಾತ್ರ ಅರ್ಹರು. ಕನ್ನಡಿಗರು ಇವರ ಬೌದ್ಧಿಕ ಅಹಂಕಾರವನ್ನು ನಿರಾಕರಿಸಿ ಎಷ್ಟು ಬೇಗ ಮೂಲೆಗೆ ಎಸೆಯುತ್ತಾರೋ ಅಷ್ಟು ಒಳ್ಳೆಯದು. ಚಿಂತಕರು ಹೇಳಿದಂತೆ ಸಮತಾವಾದದ, ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮಾರಕವಾದದ್ದೇನೆಂದರೆ ಪ್ರಜ್ಞಾವಂತರ, ಅಧಿಕಾರಶಾಹಿಯ ದಿವ್ಯ ಮೌನ. ಅನ್ಯಾಯದ, ಅತ್ಯಾಚಾರದ ವಿರುದ್ಧ ತುಟಿಬಿಚ್ಚದ ಭೀಕರವಾದ ಈ ಮೌನ ದಿನಗಳೆದಂತೆ ಒಂದೇ ಏಟಿಗೆ ಎಲ್ಲಾ ಬಗೆಯ ಮಾನವೀಯ, ಜನಪರ ಚಳುವಳಿಗಳನ್ನು ನಾಶಮಾಡಬಲ್ಲದು. ಅಂದರೆ ನ್ಯಾಯದ ಪರವಾಗಿ ಹೋರಾಟ ನಡೆಸುತ್ತಿರುವ ಚಳುವಳಿಗಾರರ ಪರವಾಗಿ ನೀವು ಮಾತನಾಡಲಿಲ್ಲವೆಂದರೆ ನೀವು ನಮ್ಮ ವಿರುದ್ಧ ಇದ್ದೀರಿ ಎಂಬುದಷ್ಟೇ ಈ ಭೀಕರ ಮೌನದ ತಾತ್ಪರ್ಯ. ಈ ಅತ್ಯಾಚಾರ, ಹಲ್ಲೆಗಳನ್ನು ನಡೆಸುವ ಪಟ್ಟಭದ್ರ ವ್ಯವಸ್ಥೆಯನ್ನು ವಿರೋಧಿಸುವವರೆನ್ನಲ್ಲ ತಂಟೆಕೋರರೆಂದು ವ್ಯಾಖ್ಯಾನಿಸುವ ಗುಂಪಿಗೆ ಈ ಮೌನಧಾರಿಗಳೂ ಸೇರಿಕೊಂಡಿದ್ದಾರೆ ಎಂಬುದು ಸೂರ್ಯ ಸ್ಪಷ್ಟ.

ಸೀನ್ 5 :
ಬದಲಾವಣೆಯ ತಂಗಾಳಿ ಬೀಸಿದೆ ಎನ್ನುವ ಹೆಗ್ಗಳಿಕೆಯೊಂದಿಗೆ ಗದ್ದುಗೆ ಹಿಡಿದಿರುವ ಸೋ ಕಾಲ್ಡ್ ಸೆಕ್ಯುಲರ್ ಪಕ್ಷ ಕಾಂಗ್ರೆಸ್‌ನ ದಿವ್ಯ ಮೌನದ ಅರ್ಥ ಬಿಡಿಸಿ ಹೇಳಬೇಕೆ ?? ತನ್ನ ರಾಜ್ಯಭಾರದಲ್ಲಿ ಯಾವುದೇ ಪ್ರಜೆಗೆ ಅನ್ಯಾಯವಾದರೂ ತನ್ನ ಶಾಸಕಾಂಗ ಮತ್ತು ಕಾರ್ಯಾಂಗವು ಆತನ/ಆಕೆಯ ಪರವಾಗಿ ಬೆಂಬಲಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕೆನ್ನುವುದು ಸಂವಿಧಾನ ಮೂಲ ಆಶಯವೆಂಬುದು ನಮ್ಮ ಮಾನವೀಯ ರಾಜಕಾರಣಿ ಸಿದ್ಧರಾಮಣ್ಣನವರಿಗೆ ಮರೆತು ಹೋಯಿತೆ? ಅಥವಾ ಜಾಣ ಮೌನವೇ !! ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಮತ್ತು ಸೌಜನ್ಯ ಕೊಲೆ ಪ್ರಕರಣ ಮತ್ತು ಧರ್ಮಸ್ಥಳ ಸುತ್ತಮುತ್ತ ನಡೆದ ಅಸಹಜ ಕೊಲೆಗಳ ವಿರುದ್ಧದ ತನಿಖೆ ಮುಗಿಯುವವರೆಗೂ ತನ್ನ ಸರ್ಕಾರದ ಮಂತ್ರಿಗಳಿಗೆ, ತನ್ನ ಪಕ್ಷದ ಶಾಸಕರಿಗೆ, ಕಾರ್ಯಕರ್ತರಿಗೆ ನೀತಿಸಂಹಿತೆಯನ್ನು ಬೋಧಿಸಿ ಈ ಹೆಗ್ಗಡೆಯವರೊಂದಿಗೆ ಸಮಾನ ದೂರದಲ್ಲಿರಬೇಕೆಂದು ಆದೇಶಿಸಲು ಸಿದ್ಧರಾಮಯ್ಯನವರಿಗೆ ಇರುವ ತೊಂದರೆಯಾದರೂ ಏನು? ಅದು ಒಂದೇ ತೊಂದರೆ, ಅದು ರಾಜಕೀಯ ಇಚ್ಛಾಶಕ್ತಿಯ ಕೊರತೆ.

ಬಹುಮತವೇ ನಿರ್ಣಾಯಕವಾಗುವಂತಹ ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ವೀರೇಂದ್ರ ಹೆಗ್ಗಡೆಯಂತಹ ಅತಿರಥರಿಗೆ ರಾಜ್ಯಾದ್ಯಾಂತ ಈ ನಿಗೂಢ ಬಹುಮತವನ್ನು ಗಳಿಸುವುದು ನೀರು ಕುಡಿದಷ್ಟೇ ಸುಲಭ. ಈ ನಿಗೂಢ ಬಹುಮತವನ್ನು ಆಧಾರವಾಗಿಟ್ಟುಕೊಂಡು ಶತಮಾನಗಳವರೆಗೆ ತನ್ನ ಸ್ಥಾನ ಮಾನವನ್ನು ಅಭಾದಿತವಾಗಿ ಕಾಪಾಡಿಕೊಳ್ಳುವ ನೈಪುಣ್ಯತೆಯೂ ವೀರೇಂದ್ರ ಹೆಗ್ಗಡೆಯವರಿಗೆ ಗೊತ್ತು.  ಸ್ನೇಹ – ಪ್ರೀತಿ – ಭಕ್ತಿಯ ಅಪೂರ್ವ ಸಮ್ಮಿಳನದ ಫಲವನ್ನು ಪಡೆದುಕೊಳ್ಳುವ ಕಲೆಗಾರಿಕೆ ಈ ವೀರೇಂದ್ರ ಹೆಗ್ಗಡೆಯವರಿಗೆ ಸಿದ್ಧಿಸಿದೆ.

ಆದರೆ ಇದನ್ನು ವಿರೋಧಿಸುವ ನೈತಿಕತೆ ಮತ್ತು ಪ್ರಾಮಾಣಿಕತೆ ನಮಗೆ ಸಿದ್ಧಿಸಿಲ್ಲವಲ್ಲ! ಇದಲ್ಲವೇ ದುರಂತ.

ಆರೆಸಸ್ ಅಂದರೆ ಏನು?

ಹಿಂದಿ ಮೂಲ : ಮಧು ಲಿಮಯೆ
ಇಂಗ್ಲೀಷ್ ಅನುವಾದ : ಜಾವೇದ್ ಆನಂದ್
ಅನುವಾದ : ಬಿ.ಶ್ರೀಪಾದ ಭಟ್

(ಹಿರಿಯ ಸಮಾಜವಾದಿ ನಾಯಕ, ಲೋಹಿಯಾವಾದಿ ದಿವಂಗತ ಮಧು ಲಿಮಯೆ 1979 ರಲ್ಲಿ, ಅಂದರೆ ಜನತಾ ಪಕ್ಷ ಹೋಳಾದ ನಂತರದ ದಿನಗಳಲ್ಲಿ ಹಿಂದಿ ವಾರ ಪತ್ರಿಕೆ “ರವಿವಾರ್”ಗೆ ಬರೆದ ಲೇಖನ. ಇಂದಿಗೆ ಇದು 34 ವರ್ಷಗಳಷ್ಟು ಹಳೆಯದಾದರೂ ಅದರ ವಿವರಗಳು ಇಂದಿಗೂ ಪ್ರಸ್ತುತ ಎನ್ನುವ ಕಾರಣಕ್ಕೆ ಆಂಶಿಕವಾಗಿ ಅನುವಾದಿಸಲಾಗಿದೆ.)

ನಾನು 1937 ರಲ್ಲಿ ರಾಜಕೀಯವನ್ನು ಪ್ರವೇಶಿಸಿದೆ. madhu-limaye-postal-stampಆಗ ತರುಣನಾಗಿದ್ದ ನಾನು ಚಿಕ್ಕ ವಯಸ್ಸಿನಲ್ಲಿಯೇ ಮೆಟ್ರಿಕ್ಯುಲೇಷನ್ ಪಾಸಾಗಿದ್ದೆ ಮತ್ತು ಕೂಡಲೇ ಕಾಲೇಜಿಗೆ ಪ್ರವೇಶವನ್ನು ಪಡೆದಿದ್ದೆ. ಆ ಕಾಲದಲ್ಲಿ ಪುಣೆಯಲ್ಲಿ ಒಂದು ಕಡೆ ಆರೆಸಸ್ ಮತ್ತು ಸಾವರ್ಕರ್‌ವಾದಿಗಳು (ವಿನಾಯಕ್ ದಾಮೋದರ್ ಸಾವರ್ಕರ್ ಬೆಂಬಲಿಗರು) ಮತ್ತೊಂದು ಕಡೆ ಸೋಷಿಯಲಿಷ್ಟರು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕಮ್ಯುನಿಷ್ಟರು ಕ್ರಿಯಾಶೀಲರಾಗಿದ್ದರು. 1 ನೇ ಮೇ 1937 ರಂದು ನಾವೆಲ್ಲ ಮೇ ದಿನವನ್ನು ಆಚರಿಸುತ್ತಿದ್ದೆವು. ಆಗ ಶಾಂತಿಯುತವಾಗಿ ನಡೆಯುತ್ತಿದ್ದ ಮೆರವಣಿಗೆಗಾರರ ಮೇಲೆ ಆರೆಸಸ್ ಮತ್ತು ಸಾವರ್ಕರ್‌ವಾದಿಗಳು ಏಕಾಏಕಿ ಹಲ್ಲೆ ನಡೆಸಿದರು. ಈ ಹಲ್ಲೆಯಿಂದ ಕ್ರಾಂತಿಕಾರಿ ಸೇನಾಪತಿ ಬಾಪಟ್ ಮತ್ತು ಸಮಾಜವಾದಿ ನಾಯಕ ಎಸ್.ಎಂ.ಜೋಶಿ ಗಾಯಗೊಂಡರು. ಈ ಘಟನೆಯ ನಂತರ ಅಂದಿನಿಂದ ಇಂದಿನವರೆಗೂ ಈ ಆರೆಸಸ್ ಮತ್ತು ಸಾವರ್ಕರ್‌ವಾದಿಗಳೊಂದಿಗೆ ನಾವೆಲ್ಲ ತೀವ್ರವಾಗಿ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದೇವೆ.

ಆರೆಸಸ್‌ನೊಂದಿಗೆ ನಮ್ಮ ಮೊದಲ ತಕರಾರು ಶುರುವಾದದ್ದು ರಾಷ್ಟ್ರೀಯತೆಯ ಕುರಿತಾಗಿ. ನಾವೆಲ್ಲ ಭಾರತದ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕುಗಳಿವೆ ಎಂದು ನಂಬಿದ್ದರೆ ಈ ಆರೆಸಸ್ ಮತ್ತು ಸಾವರ್ಕರ್‌ವಾದಿಗಳು ಹಿಂದೂ ರಾಷ್ಟ್ರದ ಕನಸನ್ನು ಪ್ರತಿಪಾದಿಸುತ್ತಿದ್ದರು. ಜಿನ್ನಾ ಅವರು ಸಹ ಈ ಪರಿಕಲ್ಪನೆಯ ಬಲಿಪಶುವಾಗಿದ್ದರು. savarkar-golwalkarಇಂಡಿಯಾ ಎರಡು ದೇಶಗಳಿಂದ ರೂಪಿಸಲ್ಪಟ್ಟಿದೆ, ಅದು ಮುಸ್ಲಿಂ ದೇಶ ಮತ್ತು ಹಿಂದೂ ದೇಶ ಎಂದು ಜಿನ್ನಾ ವಾದಿಸುತ್ತಿದ್ದಾಗ ಅದನ್ನು ಸಾವರ್ಕರ್ ಅನುಮೋದಿಸುತ್ತಿದ್ದರು.

ಅವರೊಂದಿಗಿನ ಮತ್ತೊಂದು ಭಿನ್ನಮತವೆಂದರೆ ನಾವು ಪ್ರಜಾಪ್ರಭುತ್ವ ಮಾದರಿಯ ಗಣರಾಜ್ಯವನ್ನು ಪ್ರತಿಪಾದಿಸುತ್ತಿದ್ದರೆ ಈ ಆರೆಸಸ್ ಪಕ್ಷವು ಪ್ರಜಾಪ್ರಭುತ್ವ ಮಾದರಿಯು ಪಶ್ಚಿಮ ರಾಷ್ಟ್ರಗಳ ಪರಿಕಲ್ಪನೆಯೆಂದೂ ಹಾಗೂ ಇದೆಂದೂ ಇಂಡಿಯಾಕ್ಕೆ ಸರಿ ಹೊಂದುವುದಿಲ್ಲವೆಂದೂ ವಾದಿಸುತ್ತಿತ್ತು. ಹಾಗೆಂದು ಅದರ ಸ್ವಯಂಸೇವಕರು ಬಲವಾಗಿ ನಂಬಿದ್ದರು. ಆ ದಿನಗಳಲ್ಲಿ ಆರೆಸಸ್ ಸಂಚಾಲಕರು ಹಿಟ್ಲರ್‌ನನ್ನು, ಗುರೂಜಿ ಗೋಳ್ವಲ್ಕರ್‌ರನ್ನು ಆರಾಧಿಸುತ್ತಿದ್ದರು ಮತ್ತು ಅವರ ಐಡಿಯಾಲಜಿಗಳನ್ನು ನಂಬುತ್ತಿದ್ದರು.

ಈ ಗುರೂಜಿ ಗೋಳ್ವಲ್ಕರ್ ಮತ್ತು ನಾಜಿಗಳ ನಡುವೆ ಅಪಾರ ಸಾಮ್ಯತೆ ಇತ್ತು. ತಮ್ಮ ಪುಸ್ತಕ “ನಾವು ಮತ್ತು ನಮ್ಮ ರಾಷ್ಟ್ರೀಯತೆ”ಯಲ್ಲಿ ಬರೆಯುತ್ತ ಗೋಳ್ವಲ್ಕರ್ ಅವರು ಹೇಳುತ್ತಾರೆ, “ಭಾರತದಲ್ಲಿರುವ ಅನ್ಯಧರ್ಮೀಯರು ಹಿಂದೂ ಧರ್ಮದ ಆಚರಣೆಗಳನ್ನು ಮತ್ತು ಸಂಸ್ಕೃತಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಹಿಂದೂ ಧರ್ಮವನ್ನು ಗೌರವಿಸಬೇಕು. ಹಿಂದೂ ಧರ್ಮವನ್ನಲ್ಲದೆ ಬೇರೇನನ್ನೂ ಪ್ರಚಾರ ಮಾಡಬಾರದು. ಈ ದೇಶದ ಕುರಿತಾದ ಅಸಹನೆಯನ್ನು ಬಿಟ್ಟುಕೊಡಬೇಕು. ಭಾರತದಲ್ಲಿ ಅನ್ಯಧರ್ಮೀಯರನ್ನು ವಿದೇಶಿಯರೆಂದೇ ಪರಿಗಣಿಸಬೇಕು. ಅನ್ಯಧರ್ಮೀಯರು ಈ ದೇಶದಲ್ಲಿ ಎರಡನೇ ದರ್ಜೆಯ ನಾಗರಿಕರಂತೆ ಬದುಕಬೇಕು. ಇವರಿಗೆ ಯಾವುದೇ ವಿಶೇಷ ಸೌಕರ್ಯಗಳನ್ನು ನೀಡಲಾಗುವುದಿಲ್ಲ .ಇವರಿಗೆ ಸಮಾನ ನಾಗರಿಕ ಹಕ್ಕುಗಳಿರುವುದಿಲ್ಲ.”

ಈ ಆರೆಸಸ್ ಸದಸ್ಯರು ಮತ್ತು ಸಂಚಾಲಕರು ಹಿಟ್ಟರ್‌ನ ಹಿಂಬಾಲಕರಾಗಿದ್ದರು. ಇವರೆಲ್ಲ ಜರ್ಮನಿಯಲ್ಲಿ ಹಿಟ್ಲರ್ ನಾಜಿಗಳನ್ನು ನಡೆಸಿಕೊಂಡ ರೀತಿಯಲ್ಲಿಯೇ ಇಂಡಿಯಾದ ಮುಸ್ಲಿಂ ಮತ್ತು ಕ್ರಿಶ್ಚಿಯನ್‌ರನ್ನು ನಡೆಸಿಕೊಳ್ಳಬೇಕು ಎಂದು ಪ್ರತಿಪಾದಿಸುತ್ತಿದ್ದರು.

ಗೋಳ್ವಲ್ಕರ್ ಅವರು ಬರೆದ “ನಾವು ಅಥವಾ ನಮ್ಮ ರಾಷ್ಟ್ರೀಯತೆ” ಪುಸ್ತಕ ಒಂದು ಭಾಗ “ತನ್ನ ಬಣ್ಣದ ಮತ್ತು ಸಂಸ್ಕೃತಿಯ ಪರಿಶುದ್ಧತೆಯನ್ನು ಕಾಪಾಡಬೇಕಾದಂತಹ ಸಂದರ್ಭದಲ್ಲಿ ತನ್ನ ದೇಶದ ಅನ್ಯಧರ್ಮೀಯರಾದ ಯಹೂದಿಗಳನ್ನು ಸಂಪೂರ್ಣವಾಗಿ ನಾಶ ಮಾಡುವುದರ ಮೂಲಕ ಜರ್ಮನಿ ಜಗತ್ತನ್ನೇ ನಿಬ್ಬೆರಗಾಗಿಸಿತು. ಇದು ಇಂದು ನಮಗೆ ಆದರ್ಶವಾಗಬೇಕು” ( ಪುಟ 42, ನಾವು ಅಥವಾ ನಮ್ಮ ರಾಷ್ಟ್ರೀಯತೆ, 1947 ) ಎನ್ನುತ್ತದೆ. KZ Mauthausen, Sowjetische Kriegsgefangeneನೀವು ಇದನ್ನು ಹಳೆ ಕಾಲದ, ಸ್ವಾತಂತ್ರ ಪೂರ್ವದ ಪುಸ್ತಕವೆಂದು ವಾದಿಸಬಹುದು. ಆದರೆ ಗೋಳ್ವಲ್ಕರ್ ಅವರ ಮತ್ತೊಂದು ಪುಸ್ತಕ “ಚಿಂತನ ಗಂಗಾ” 1966 ರಲ್ಲಿ ಪ್ರಕಟವಾಯಿತು. ಆ ಪುಸ್ತಕದಲ್ಲಿ ಗೋಳ್ವಲ್ಕರ್ ಭಾರತದ ಪ್ರತಿಯೊಬ್ಬ ಮುಸ್ಲಿಂರು, ಕ್ರಿಶ್ಚಿಯನ್ನರು, ಕಮ್ಯುನಿಷ್ಟರನ್ನು ಅಂತರಿಕ ಶತೃಗಳೆಂದು, ಅವರು ದೇಶದ ಭದ್ರತೆಗೆ ಅಪಾಯಕಾರಿಗಳೆಂದು ಬರೆಯುತ್ತಾರೆ. ಇದು ಈ ಗುರೂಜಿಯ ಐಡಿಯಾಲಜಿ.

ಜಾತೀಯತೆಯ ಕುರಿತಾಗಿ ಈ ಆರೆಸಸ್ ಮತ್ತು ಗೋಳ್ವಲ್ಕರ್ ಅವರೊಂದಿಗೆ ನಮ್ಮ ಮತ್ತೊಂದು ಭಿನ್ನಮತವಿತ್ತು. ಈ ಆರೆಸಸ್ ಮತ್ತು ಗೋಳ್ವಲ್ಕರ್ ಜಾತಿ ಪದ್ಧತಿಯನ್ನು ಬೆಂಬಲಿಸುತ್ತಿದ್ದರು. ಆದರೆ ಸಮಾಜವಾದಿಗಳಾದ ನಮಗೆ ಈ ಜಾತಿ ಪದ್ಧತಿ ಒಂದು ಶತೃವಾಗಿತ್ತು. ನಾನು ಈ ಜಾತೀಯತೆ ಮತ್ತು ಬ್ರಾಹ್ಮಣತ್ವದ ಚಿಂತನೆಗಳನ್ನು ವಿರೋಧಿಸುತ್ತಿದ್ದೆ. ಇವೆರೆಡೂ ನಾಶವಾಗುವವರೆಗೂ ನಮ್ಮ ಸಮಾಜದಲ್ಲಿ ಸಮಾನತೆ ಸಾಧ್ಯವಿಲ್ಲವೆಂಬುದು ನನ್ನ ಅಚಲ ನಂಬಿಗೆಯಾಗಿತ್ತು. ಆದರೆ ಈ ಗೋಳ್ವಲ್ಕರ್ ತಮ್ಮ “ಚಿಂತನ ಗಂಗಾ” ಪುಸ್ತಕದಲ್ಲಿ ಬರೆಯುತ್ತಾರೆ, “ನಮ್ಮ ಸಮಾಜದ ವಿಶಿಷ್ಟತೆಯೆಂದರೆ ಅದು ವರ್ಣಾಶ್ರಮ ಪದ್ಧತಿ. ಈ ಸಮಾಜವು ಶಕ್ತಿಯುತ ದೇವರನ್ನು ಒಳಗೊಂಡಿದೆ. ಈ ದೇವರನ್ನು ಸಮಾಜದ ವಿವಿಧ ಸ್ತರಗಳಲ್ಲಿರುವವರಿಗೆ ವಿಭಿನ್ನ ನೆಲೆಗಳಲ್ಲಿ ಪೂಜಿಸಲು ಅವಕಾಶ ನೀಡಲಾಗುತ್ತದೆ. ಸಕಲ ಜ್ಞಾನವನ್ನು ಹೊಂದಿದ ಬ್ರಾಹ್ಮಣರು ಶ್ರೇಷ್ಠರೆಂದು ಪರಿಗಣಿಸಲಾಗುತ್ತದೆ. ಕ್ಷತ್ರಿಯರನ್ನು ಸಹ ಅದೇ ಮಟ್ಟದ ಶ್ರೇಷ್ಠರೆಂದೇ ಗುರತಿಸಲಾಗುತ್ತದೆ, ಏಕೆಂದರೆ ಅವರು ಶತೃಗಳನ್ನು ಸಂಹರಿಸುತ್ತಾರೆ. ವೈಶ್ಯರೂ ಸಹ ಅಷ್ಟೇ ಮುಖ್ಯರಾಗುತ್ತಾರೆ, ಏಕೆಂದರೆ ಅವರು ವ್ಯಾಪಾರದ ಮೂಲಕ ಸಮಾಜವನ್ನು ಸಮತೋಲನದಲ್ಲಿಡುತ್ತಾರೆ. ತಮ್ಮ ಕೌಶಲ್ಯದ ಆಧರಿಸಿ ಸಮಾಜದ ಅವಶ್ಯಕತೆಗಳನ್ನು ಪೂರೈಸುವುದರ ಮೂಲಕ ಶೂದ್ರರೂ ಮುಖ್ಯರಾಗುತ್ತಾರೆ.” ಆದರೆ ಇಲ್ಲಿ ಗೋಳ್ವಲ್ಕರ್ ಅವರು ಚಾಣಕ್ಯನ ಆರ್ಥಿಕ ನೀತಿಯನ್ನು ಅನುಮೋದಿಸುತ್ತ ಶೂದ್ರನ ಕಾಯಕವನ್ನು ಅವನ ಕರ್ತವ್ಯವೆಂದೇ ಷರಾ ಬರೆಯುತ್ತಾರೆ. ಅವರ ಪ್ರಕಾರ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರ ಸೇವೆ ಮಾಡುವುದು ಶೂದ್ರರ ಧರ್ಮ. ಅವರ ಧಾರ್ಮಿಕ ಕರ್ತವ್ಯ.

ಈ ಆರೆಸಸ್ ಮತ್ತು ಅದರ ಮುಖ್ಯಸ್ಥ ಗೋಳ್ವಲ್ಕರ್ ಅವರೊಂದಿಗೆ ನಮ್ಮ ಮತ್ತೊಂದು ಪ್ರಮುಖ ಭಿನ್ನಾಭಿಪ್ರಾಯವೆಂದರೆ ಅವರು ಪ್ರತಿಪಾದಿಸುವ ಭಾಷೆ. ಗೋಳ್ವಲ್ಕರ್ ಅವರ ಪ್ರಕಾರ ಹಿಂದಿಯನ್ನು ಸಾರ್ವಜನಿಕ ಭಾಷೆಯನ್ನಾಗಿಯೂ, ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬೇಕು. ತಮ್ಮ ಚಿಂತನ ಗಂಗಾ ಪುಸ್ತಕದಲ್ಲಿ ಗೋಳ್ವಲ್ಕರ್ ಅವರು “ಸಧ್ಯದ ಅನುಕೂಲಕ್ಕಾಗಿ ಹಿಂದಿ ಭಾಷೆಯನ್ನು ಸಂಪರ್ಕ ಭಾಷೆಯಾಗಿ ಬಳಸಿಕೊಳ್ಳಬೇಕಾಗುತ್ತದೆ. ಆದರೆ ಸಂಸ್ಕೃತವು ರಾಷ್ಟ್ರ ಭಾಷೆಯಾಗಬೇಕೆಂಬುದೇ ನಮ್ಮ ಅಂತಿಮ ಗುರಿ.” ಎಂದು ಬರೆಯುತ್ತಾರೆ. ಆದರೆ ಮಹಾತ್ಮ ಗಾಂಧಿ ಮತ್ತು ಟಿಳಕರಂತೆ ನಾವೆಲ್ಲರೂ ಪ್ರಾಂತೀಯ ಭಾಷೆಗಳನ್ನು ಬೆಂಬಲಿಸುತ್ತಿದ್ದೆವು. ನಾಗರಿಕರ ಮೇಲೆ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವುದನ್ನು ನಾವು ವಿರೋಧೀಸುತ್ತಿದ್ದೆವು. ತಮಿಳುನಾಡಿನಲ್ಲಿ ತಮಿಳು, ಆಂಧ್ರದಲ್ಲಿ ತೆಲುಗು, ಕರ್ನಾಟಕದಲ್ಲಿ ಕನ್ನಡ, ಪಶ್ಚಿಮ ಬಂಗಾಲದಲ್ಲಿ ಬೆಂಗಾಲಿ, ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆಗಳ ಬಳಕೆಗೆ ನಮ್ಮ ಬೆಂಬಲವಿತ್ತು. ಸಂಸ್ಕೃತವನ್ನು ರಾಷ್ಟ್ರಭಾಷೆಯನ್ನಾಗಿಸುವುದನ್ನು ನಾವು ತೀವ್ರವಾಗಿ ವಿರೋಧಿಸುತ್ತಿದ್ದೆವು. ಏಕೆಂದರೆ ಅದು ಮೇಲ್ಜಾತಿಯವರ ಭಾಷೆಯಾಗಿತ್ತು.

ಸ್ವಾತಂತ್ರ ಹೋರಾಟದ ರಾಷ್ಟ್ರೀಯ ಚಳುವಳಿಯು ಭಾರತದ ಗಣರಾಜ್ಯ ಸ್ವರೂಪವನ್ನು ಒಪ್ಪಿಕೊಂಡಿತ್ತು. ಕೆಲವು ಪ್ರಮುಖ ಇಲಾಖೆಗಳ ಅಧಿಕಾರವು ದೇಶದ ಹಿತರಕ್ಷಣೆಯ ದೃಷ್ಟಿಯಿಂದ ಕೇಂದ್ರದ ಸುಪರ್ದಿಯಲ್ಲಿದ್ದರೆ ಇತರೇ ವಿವಿಧ ಇಲಾಖೆಗಳ ಜವಬ್ದಾರಿಯು ರಾಜ್ಯ ಸರ್ಕಾರಗಳಗೆ ಸೇರಬೇಕೆಂಬ ವಿಕೇಂದ್ರಿಕರಣದ ನೀತಿ ನಮ್ಮ ನಿಲುವಾಗಿತ್ತು. ಗಣರಾಜ್ಯದ ಈ ಪರಿಕಲ್ಪನೆಯನ್ನು ಸ್ವಾತಂತ್ರ ನಂತರ ರಚಿತವಾದ ಸಂವಿಧಾನವೂ ಅನುಮೋದಿಸಿತ್ತು.

ಪ್ರಜಾಪ್ರಭುತ್ವದ, ವಿಕೇಂದ್ರೀಕರಣದ ಈ ಗಣರಾಜ್ಯ ಮಾದರಿಯನ್ನು, ಅದರ ಸಂವಿಧಾನವನ್ನು ಈ ಆರೆಸಸ್ ಮತ್ತು ಅದರ ಮುಖ್ಯಸ್ಥ ಗೋಳ್ವಲ್ಕರ್ ಅವರು ನಿರಂತರವಾಗಿ ವಿರೋಧಿಸಿದರು. ಈ ಗುಂಪು ಗಣರಾಜ್ಯಗಳ ಪರಿಕಲ್ಪನೆಯನ್ನೇ ಅಪಹಾಸ್ಯ ಮಾಡುತ್ತಿದ್ದವು. ಈ ಗಣರಾಜ್ಯಗಳ ಬಹುರೂಪಿ ತತ್ವಗಳನ್ನು ಪ್ರತಿಪಾದಿಸುವ ಭಾರತದ ಸಂವಿಧಾನವನ್ನೇ ರದ್ದುಗೊಳಿಸಬೇಕೆಂದು ಈ ಆರೆಸಸ್ ಮತ್ತು ಅದರ ಮುಖ್ಯಸ್ಥ ಗೋಳ್ವಲ್ಕರ್ ಅವರು ಒತ್ತಾಯಿಸುತ್ತಿದ್ದರು. ತಮ್ಮ ಚಿಂತನಗಂಗಾ ಪುಸ್ತಕದಲ್ಲಿ ಗೋಳ್ವಲ್ಕರ್ ಬರೆಯುತ್ತಾರೆ, “ಸಂವಿಧಾನವನ್ನು ಪುನರ್ವಿಮರ್ಶಿಸಬೇಕು. ಕೇಂದ್ರಾಡಳಿತ ರಾಜ್ಯವನ್ನು ಸಂವಿಧಾನದಲ್ಲಿ ಸೇರಿಸಬೇಕು.” ಗೋಳ್ವಲ್ಕರ್ ಬಯಸುವುದು ಒಂದು ದೇಶ, ಒಂದು ರಾಜ್ಯ, ಒಂದು ಪಾರ್ಲಿಮೆಂಟ್, ಒಂದು ಕಾರ್ಯಾಂಗ ಮಾತ್ರ. ಇವರು ವಿಭಿನ್ನ ರಾಜ್ಯಗಳ ವಿಧಾನ ಸಭೆಗಳನ್ನು ಮತ್ತು ಮಂತ್ರಿಮಂಡಳಿಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸುತ್ತಾರೆ. ಅಂದರೆ ಇವರ ಗುರಿ ಸರ್ವಾಧಿಕಾರದ ಆಡಳಿತ. ಕೇಂದ್ರಾಡಳಿತ ರಾಜ್ಯಭಾರ.

ಮತ್ತೊಂದು ವಿವಾದವೆಂದರೆ ತ್ರಿವರ್ಣಧ್ವಜ. ಈ ತ್ರಿವರ್ಣ ಧ್ವಜವನ್ನು ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ಭಾರತದ ಬಿಡುಗಡೆಯ ಸಂಕೇತವಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ತ್ರಿವರ್ಣ ಧ್ವಜವನ್ನು ಸ್ವಾತಂತ್ರದ ಸಂಕೇತವಾಗಿ ಹೋರಾಟಗಳಲ್ಲಿ ಬಳಲಾಗುತ್ತಿತ್ತು. ಅದರ ಘನತೆಯನ್ನು ಕಾಪಾಡಲು ಸಾವಿರಾರು ದೇಶಾಭಿಮಾನಿಗಳು ಪ್ರಾಣ ತ್ಯಾಗ ಮಾಡಿದರು. ಆಶ್ಚರ್ಯವೆಂದರೆ ಆರೆಸಸ್ ಈ ತ್ರಿವರ್ಣ ಧ್ಜಜವನ್ನು ರಾಷ್ಟ್ರ ಧ್ವಜವನ್ನಾಗಿ ಎಂದಿಗೂ ಮಾನ್ಯ ಮಾಡಲೇ ಇಲ್ಲ. ಆರೆಸಸ್ ಮಾನ್ಯ ಮಾಡಿದ್ದು ಕೇಸರೀ ಧ್ಜಜವನ್ನು. ಭಗವಧ್ವಜವನ್ನು. ಈ ಕೇಸರೀ ಧ್ವಜವು ಹಿಂದೂ ರಾಷ್ಟ್ರದ ಸಂಕೇತವೆಂದು ಆರೆಸಸ್ ಬಲವಾಗಿ ನಂಬಿತ್ತು.

ಗಣರಾಜ್ಯ ಮಾದರಿಯ ವಿಕೇಂದ್ರೀಕರಣ ತಿರಸ್ಕರಿಸಿದಂತೆಯೇ ಈ ಈ ಆರೆಸಸ್ ಮತ್ತು ಅದರ ಮುಖ್ಯಸ್ಥ ಗೋಳ್ವಲ್ಕರ್ ಅವರು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೂ ತಿರಸ್ಕರಿಸಿದ್ದರು. ಈ ಪ್ರಜಾಪ್ರಭುತ್ವ ವ್ಯವಸ್ಥೆಯು ಪಶ್ಚಿಮ ದೇಶಗಳಿಂದ ನಕಲು ಮಾಡಲಾಗಿದ್ದು ಅದು ಭಾರತದ ಚಿಂತನೆಗಳೊಂದಿಗೆ ಬೆರೆಯುವುದಿಲ್ಲವೆಂದು ಇವರು ನಂಬಿದ್ದರು. ಇವರಿಗೆ ಸೋಷಿಯಲಿಸಂ ಅಂತೂ ಸಂಪೂರ್ಣ ಪರಕೀಯವಾಗಿತ್ತು. ಗೋಳ್ವಲ್ಕರ್ ಅವರು ಈ ಎಲ್ಲಾ ಇಸಂಗಳು ವಿದೇಶಿ ಸಂಸ್ಕೃತಿಗಳೆಂದೂ ಇವನ್ನೆಲ್ಲವನ್ನೂ ತಿರಸ್ಕರಿಸಬೇಕೆಂದೂ ಕರೆ ಕೊಟ್ಟಿದ್ದರು.

1975 ರಲ್ಲಿ ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿದಾಗ ಅದನ್ನು ವಿರೋಧಿಸಿ ನಾವೆಲ್ಲಾ ಈ ಆರೆಸಸ್‌ನವರೊಂದಿಗೆ ಕೈಜೋಡಿಸಬೇಕಾದಂತಹ ಸಂದರ್ಭ ಬಂದಿತು. ಚೌಧುರಿ ಚರಣ ಸಿಂಗ್ ಅವರೂ ಸಹ ಇದೇ ಅಭಿಮತವನ್ನು ವ್ಯಕ್ತಪಡಿಸಿದರು. ಎಲ್ಲರೂ ಒಂದಾಗಿ ಒಂದೇ ಪಕ್ಷದ ಅಡಿಯಲ್ಲಿ ಕಾಂಗ್ರೆಸ್ ವಿರುದ್ಧದ ಚುನಾವಣೆಯನ್ನು ಎದುರಿಸಬೇಕೆಂದು ಚರಣ ಸಿಂಗ್ ಒತ್ತಾಯಿಸುತ್ತಿದ್ದರು. ಜಯಪ್ರಕಾಶ ನಾರಾಯಣ ಮತ್ತು ಇತರ ನಾಯಕರೂ ಇದನ್ನು ಅನುಮೋದಿಸಿದ್ದರು. Jayaprakash Narayanಆಗ ನಮ್ಮೆಲ್ಲರ ಆಯ್ಕೆಗಳೆಂದರೆ ಜನಸಂಘ, ಸೋಷಲಿಸ್ಟ್ ಪಕ್ಷಗಳು, ಕಾಂಗ್ರೆಸ್ ( ಓ ), ಭಾರತೀಯ ಲೋಕದಳ, ಮತ್ತು ಭಿನ್ನಮತೀಯ ಕಾಂಗ್ರೆಸ್ ಪಕ್ಷಗಳ ಗುಂಪು. ಈ ಸಂದರ್ಭದಲ್ಲಿಯೂ ನಾವೆಂದೂ ಆರೆಸಸ್ ಜೊತೆಗೆ ಕೈ ಜೋಡಿಸಿರಲಿಲ್ಲ. ಆದರೆ ಈ ಸಂದರ್ಭದಲ್ಲಿ ಚರಣಸಿಂಗರು ಸುಮಾರು ಜುಲೈ 7, 1976 ರಂದು ಜೈಲಿನಿಂದ ಬರೆದ ಪತ್ರದಲ್ಲಿ ನಮ್ಮ ಮೇಲಿನ ಆಯ್ಕೆಗಳಲ್ಲಿರುವ ಪ್ರಮುಖ ಬಿಕ್ಕಟ್ಟಾದ ದ್ವಿಸದಸ್ಯದ ಕುರಿತಾಗಿ ವಿವರಿಸಿದರು. ಆರೆಸಸ್‌ನ ಸಂಚಾಲಕರಾದ ಜನಸಂಘದ ಸದಸ್ಯರು ಹೊಸ ಪಕ್ಷದ ಸದಸ್ಯರಾಗಬಹುದೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸುತ್ತಾ ಆಗಿನ ಜನಸಂಘದ ಕಾರ್ಯದರ್ಶಿ ಓಂ ಪ್ರಕಾಶ್ ತ್ಯಾಗಿ ಅವರು ಇದನ್ನು ಮುಕ್ತ ಮನಸ್ಸಿನಿಂದ ಚರ್ಚಿಸಲು ಜನಸಂಘವು ಸಿದ್ಧವೆಂದೂ ಹೇಳುತ್ತಾ, ಅಂತಹ ಬಿಕ್ಕಟ್ಟು ಎದುರಾದಲ್ಲಿ ಆರೆಸಸ್ ಅನ್ನು ವಿಸರ್ಜಿಲೂ ಸಹ ತಯಾರು ಎಂದು ಆಶ್ವಾಸನೆ ಕೊಟ್ಟರು.

ಆದರೆ ಜನತಾ ಪಕ್ಷದ ಸಂವಿಧಾನವನ್ನು ರಚಿಸುವ ಜವಾಬ್ದಾರಿ ಹೊತ್ತುಕೊಂಡ ಉಪಸಮಿತಿಯು ಹೊಸ ಪಕ್ಷದ ತತ್ವಗಳಿಗೆ, ಚಿಂತನೆಗಳಿಗೆ, ವಿಚಾರಗಳಿಗೆ ಭಿನ್ನವಾಗಿರುವವರಿಗೆ ದ್ವಿಸದಸ್ಯತ್ವವನ್ನು ಕೊಡಬಾರದೆಂದು ಅಭಿಪ್ರಾಯ ವ್ಯಕ್ತಪಡಿಸಿತು. ಇದರ ಮಹತ್ವವನ್ನು ಅರಿತುಕೊಂಡ ಎಲ್ಲರೂ ಇದನ್ನು ಒಪ್ಪಿಕೊಂಡರು. ಈ ಸಂದರ್ಭದಲ್ಲಿ ಇದಕ್ಕೆ ವಿರೋಧ ಬಂದಿದ್ದು ಜನಸಂಘದ ಸುಂದರ್ ಸಿಂಗ್ ಭಂಡಾರಿ ಅವರಿಂದ. ಆಗ ಜನಸಂಘ ಮತ್ತು ಆರೆಸಸ್‌ನ ಪರವಾಗಿ ಅಟಲ್ ಬಿಹಾರಿ ವಾಜಪೇಯಿಯವರು ಪತ್ರವನ್ನು ಬರೆದು ಜನತಾ ಪಕ್ಷದ ಸದಸ್ಯರ ನೊಂದಣಿಯ ಸಂದರ್ಭದಲ್ಲಿ ಆರೆಸಸ್ ಕುರಿತಾದ ಚರ್ಚೆಯೇ ಅಪ್ರಸ್ತುತ ಎಂದು ಹೇಳಿದರು. ಆಗ ನಾನು ಜೈಲಿನಲ್ಲಿದ್ದೆ. ಹೀಗಾಗಿ ಆಗ ನಡೆದ ತೀರ್ಮಾನಗಳಿಗೆ ನಾನು ಜವಾಬ್ದಾರನಾಗಿರಲಿಲ್ಲ.

ಜನತಾ ಪಕ್ಷದ ಚುನಾವಣಾ ಪ್ರಣಾಳಿಕೆ ಬರೆಯುವಂತಹ ಸಂದರ್ಭದಲ್ಲಿ ಆರೆಸಸ್ ಬಗ್ಗೆ ನಾವೆಲ್ಲ ಅಂತಹ ಆತಂಕವನ್ನು ಹೊಂದಿರಲಿಲ್ಲ. ಪ್ರತಿಯೊಂದು ವಾಕ್ಯವನ್ನು ಸ್ಪಷ್ಟವಾಗಿ ವಿವರಿಸಲಾಗಿತ್ತು. ನಿಜಕ್ಕೂ ಹೇಳಬೇಕೆಂದರೆ ಜನತಾ ಪಕ್ಷದ ಪ್ರಣಾಳಿಕೆಯು ಸೋಷಿಯಲಿಸ್ಟ್ ಸಮಾಜದ, ಸೆಕ್ಯುಲರ್ ಪ್ರಜಾಪ್ರಭುತ್ವದ, ಗಾಂಧಿ ಕನಸಿನ ಆದರ್ಶಗಳನ್ನು ಹೊಂದಿತ್ತಲ್ಲವೇ? ಅಲ್ಲಿ ಹಿಂದೂ ರಾಷ್ಟ್ರದ ಪ್ರಸ್ತಾಪವೇ ಇರಲಿಲ್ಲ. ಮಿಗಿಲಾಗಿ ನಮ್ಮ ಪ್ರಣಾಳಿಕೆಯಲ್ಲಿ ಅಲ್ಪಸಂಖ್ಯಾತರಿಗೆ ಸಮಾನ ನಾಗರಿಕತೆಯನ್ನು ಧೃಡೀಕರಿಸಿದ್ದೆವು. ಪ್ರಣಾಳಿಕೆಯಲ್ಲಿ ಸರ್ಕಾರಿ ನೌಕರಿಯಲ್ಲಿ ಹಿಂದುಳಿದ ಜಾತಿಗಳಿಗೆ ಶೇಕಡಾ 25-33 ಮೀಸಲಾತಿಯನ್ನು ಕಲ್ಪಿಸುವುದಾಗಿ ಹೇಳಿದ್ದೆವು.

ಆದರೆ ಆರೆಸಸ್ ಸದಸ್ಯರು ಜನತಾ ಪಕ್ಷದ ಈ ಪ್ರಣಾಳಿಕೆಯನ್ನು ಮನಃಪೂರ್ವಕವಾಗಿ ಒಪ್ಪಿರಲಿಲ್ಲ. ಈ ಸಂದರ್ಭದಲ್ಲಿ ಕುಶುಭಾವು ಠಾಕ್ರೆ ಅವರಿಗೆ ಪತ್ರವನ್ನು ಬರೆದು ಜನಸಂಘ ಮತ್ತು ಆರೆಸಸ್‌ನ ದ್ವಂದವನ್ನು ವಿವರಿಸಿ ಇದರಿಂದ ನಿಮ್ಮ ಕಾರ್ಯಸೂಚಿಗಳ ಕುರಿತಾಗಿಯೇ ಅನುಮಾನ ಮೂಡುತ್ತದೆ ಎಂದು ಹೇಳಿದ್ದೆ. ಆದರೂ ಸಂಯುಕ್ತ ವಿರೋಧ ಪಕ್ಷವಾಗಿ ಕಾಂಗ್ರೆಸ್ ಅನ್ನು ಎದುರಿಸಲು ನಾವೆಲ್ಲ ಒಂದಾಗಲೇಬೇಕೆಂಬ ಜಯಪ್ರಕಾಶ ನಾರಾಯಣರ ಅನಿಸಿಕೆಯನ್ನು ಒಪ್ಪಿಕೊಳ್ಳಬೇಕೆಂದರೆ ಎರಡು ಮುಖ್ಯ ವಿಷಯಗಳ ಕುರಿತಾಗಿ ನನ್ನಲ್ಲಿ ಖಚಿತತೆ ಇತ್ತು. ಈ ಸಂಯುಕ್ತ ವಿರೋಧ ಪಕ್ಷ ಚಾಲ್ತಿಗೆ ಬರಬೇಕೆಂದರೆ ಆರೆಸಸ್ ತನ್ನ ಸಿದ್ಧಾಂತಗಳನ್ನು ಬದಲಿಸಿಕೊಳ್ಳಬೇಕು. ಅದು ಸೆಕ್ಯುಲರ್ ಐಡಿಯಾಲಜಿಯನ್ನು ಒಪ್ಪಿಕೊಳ್ಳಬೇಕು. ಎರಡನೇಯದಾಗಿ ಆರೆಸಸ್‌ನ ಇತರೇ ಅಂಗ ಪಕ್ಷಗಳು ವಿಸರ್ಜನೆಗೊಂಡು ಸೆಕ್ಯುಲರ್ ಪಕ್ಷಗಳೊಂದಿಗೆ ವಿಲೀನಗೊಳ್ಳಬೇಕು. ಇದನ್ನು ನಾನು ಅರೆಸಸ್‌ನ ಪ್ರಮುಖರಿಗೆ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದೆ. ಆಗ ಆರೆಸಸ್‌ನ ಪ್ರಮುಖರು ಈ ನಿಬಂಧನೆಗಳನ್ನು ಈ ಕೂಡಲೆ ಪಾಲಿಸಲು ಕಷ್ಟ, ಅದರೆ ಹಂತಹಂತವಾಗಿ ತಾವು ಬದಲಾಗುತ್ತೇವೆಂದು ಆಶ್ವಾಸನೆಯನ್ನು ಕೊಟ್ಟರು. ಮುಂದಿನ ದಿನಗಳಲ್ಲಿ ಇದರ ಕುರಿತಾಗಿ ಪ್ರಶ್ನಿಸಿದಾಗ ಹಾರಿಕೆಯ ಉತ್ತರಗಳನ್ನು ನೀಡುತ್ತಿದ್ದರು. ಇವರ ಈ ದ್ವಂದ ವರ್ತನೆಗಳಿಂದ ನನಗೆ ಖಚಿತವಾಗಿದ್ದು ಇವರು ಬದಲಾಗಲು ತಯಾರಿಲ್ಲ ಎಂದು. ಅದರಲ್ಲೂ 1977 ರ ನಂತರ ನಡೆದ ಚುನಾವಣೆಗಳಲ್ಲಿ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರಾಂತದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಸಂಘ ಪರಿವಾರ ಈ ಜನಬೆಂಬಲವಿದ್ದರೆ ನಾವು ಬದಲಾಗುವ ಅಗತ್ಯವೇ ಇಲ್ಲವೆಂದು ಬೀಗಿತ್ತು. ಇದೇ ತಂತ್ರಗಾರಿಕೆಯ ಮೂಲಕ ದೇಶದ ಇತರೇ ರಾಜ್ಯಗಳಲ್ಲಿಯೂ ಅಧಿಕಾರವನ್ನು ಕಬ್ಜಾ ಮಾಡಿಕೊಳ್ಳಬೇಕೆಂದು ಮಹತ್ವಾಕಾಂಕ್ಷೆಯಿಂದಿತ್ತು ಸಂಘ ಪರಿವಾರ. ಕಡೆಗೆ ಕೇಂದ್ರ ಮೇಲೆ ಸಹ ಅದು ಕಣ್ಣಿಟ್ಟಿತ್ತು.

ಆರೆಸಸ್‌ನ ಮುಖವಾಣಿ ಪಾಂಚಜನ್ಯದಲ್ಲಿ ಲೇಖನಗಳಲ್ಲಿ ನನ್ನನ್ನೂ ಒಳಗೊಂಡು ಆರೆಸಸ್‌ನ ನೀತಿಗಳನ್ನು ವಿರೋಧಿಸುವ ಪ್ರತಿಯೊಬ್ಬ ಜನತಾ ಪಕ್ಷದ ಸದಸ್ಯನನ್ನೂ ಟೀಕಿಸಲಾಗಿತ್ತು.

ಈ ಸಂದರ್ಭದಲ್ಲಿ ಆರೆಸಸ್‌ನ ಸರಸಂಚಾಲಕ ಬಾಬಾ ಸಾಹೇಬ್ ದೇವರಸ್ ಅವರು ನನ್ನ ಮನೆಗೆ ಬಂದಿದ್ದರು. morarji-desaiಆದರೆ ಹೊಸ ಬಗೆಯ ಬದಲಾವಣೆಗಳಿಗೆ ಅವರು ಮುಕ್ತ ಮನಸ್ಸಿನವರಾಗಿರಲಿಲ್ಲ. ಅವರೊಂದಿಗೆ ನಿರಂತರ ಸಂಭಾಷಣೆ ನಡೆಸುತ್ತ ಅವರನ್ನು ಬದಲಾಯಿಸಲು ನಾನು ನಡೆಸಿದ ನನ್ನ ಎಲ್ಲ ಪ್ರಯತ್ನಗಳು ವಿಫಲಗೊಂಡವು. ಅರೆಸಸ್‌ನ ಅಂಗ ಸಂಸ್ಥೆಗಳಾದ ಭಾರತೀಯ ಮಜ್ದೂರ್ ಸಂಘ, ಎಬಿವಿಪಿ, ಯುವ ಮೋರ್ಚ ಮುಂತಾದ ಸಂಘಟನೆಗಳೊಂದಿಗೆ ನಡೆಸಿದ ಮಾತುಕತೆಗಳು ಫಲ ನೀಡಲಿಲ್ಲ. ಇದಕ್ಕೆ ಪ್ರತಿಯಾಗಿ ನನಗೆ ಅವರಿಂದ ತೆಗಳಿಕೆಗಳು ಉತ್ತರ ರೂಪದಲ್ಲಿ ದೊರೆತವು.

ಅವರ ಉದ್ದೇಶಗಳು ಸ್ಪಷ್ಟವಾಗಿದ್ದವು. ಅವರು ಉದ್ದೇಶ ಜನಜೀವದ ಪ್ರತಿಯೊಂದು ಘಟ್ಟಗಳಲ್ಲೂ ತಾವು ಭಾಗಿಗಳಾಗಬೇಕು ಮತ್ತು ಅವರನ್ನು ನಿಯಂತ್ರಿಸಬೇಕೆಂಬುದಾಗಿತ್ತು. ಅವರ ಮೊದಲ ಗುರಿ ಜನತಾ ಪಕ್ಷವನ್ನು ಕಬ್ಜಾ ಮಾಡಿಕೊಳ್ಳುವುದು. ಇದಕ್ಕಾಗಿಯೇ ಸಂಘ ಪರಿವಾರವು ಹಲವಾರು ಜನತಾ ಪಕ್ಷದ ನಾಯಕರ ಮುಂದೆ ಅಧಿಕಾರದ ಕ್ಯಾರೆಟ್ ಅನ್ನು ಅಲ್ಲಾಡಿಸುತ್ತಿದ್ದರು. ಒಂದು ಕಡೆ ಮುರಾರ್ಜಿ ದೇಸಾಯಿಯವರಿಗೆ ನೀವೇ ನಮಗೆ ಪ್ರಶ್ನಾತೀತ ನಾಯಕರೆಂದು ಬಣ್ಣಿಸುತ್ತಿದ್ದರು. ಆದರೆ ಮತ್ತೊಂದು ಕಡೆ ಚರಣಸಿಂಗ್ ಅವರಿಗೆ ನೀವು ಪ್ರಧಾನಿ ಪಟ್ಟಕ್ಕಾಗಿ ಬಯಸಿದರೆ ನಿಮಗೆ ನಮ್ಮ ಬೆಂಬಲ ಖಾತ್ರಿ ಎಂದು ಆಸೆ ಹುಟ್ಟಿಸುತ್ತಿದ್ದರು. ಈಗಲೂ (1979) ಅವರು ಚಂದ್ರಶೇಖರ್, ಜಗಜೀವನ್ ರಾಂ ಮತ್ತು ಜಾರ್ಜ ಫರ್ನಾಂಡೀಸ್ ಅವರಿಗೆ ಈ ಭರವಸೆಗಳನ್ನು ನೀಡುತ್ತಿದ್ದಾರೆ. ಆದರೆ ಒಮ್ಮೆಯೂ ಅವರು ನನ್ನ ಹೆಸರನ್ನು ಎತ್ತಲಿಲ್ಲ!! ಅವರಿಗೆ ಗೊತ್ತಾಗಿರಬೇಕು ಈ ಮನುಷ್ಯನನ್ನು ಮೂರ್ಖನಾಗಿಸಲು ಸಾಧ್ಯವಿಲ್ಲವೆಂದು. ಅದರೆ ಬದಲಾಗಿ ಅಂತಹ ಪ್ರಯತ್ನಗಳು ಆತನನ್ನು ( ಲಿಮಯೆ) ಮತ್ತಷ್ಟು ಹುಷಾರುಗೊಳಿಸುತ್ತದೆ ಎಂದು ಆರೆಸಸ್ ಮಂದಿಗೆ ಗೊತ್ತಿತ್ತು.

ಈ ಆರೆಸಸ್ ಮಂದಿ ಜೈಲಿನಲ್ಲಿದ್ದಾಗ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು, ರಾಜ ನಾರಾಯಣ ಕೇಸ್‌ನಲ್ಲಿ ಸುಪ್ರೀಂಕೋರ್ಟ್ ಇಂದಿರಾ ಗಾಂಧಿಯವರ ಪರ ತೀರ್ಪು ನೀಡಿದಾಗ ಆರೆಸಸ್ ಸರಸಂಚಾಲಕ ಬಾಳಾಸಾಹೇಬ ದೇವರಸರು ಇಂದಿರಾ ಗಾಂಧಿಯವರಿಗೆ ಶುಭ ಕೋರಿದ್ದರು. ಇವರ ಕುರಿತಾಗಿ ನನಗೆ ನಂಬುಗೆ ಇಲ್ಲ.

ಮರೆತು ಹೋದ 1949ರಲ್ಲಿ ಕೊಟ್ಟ ವಾಗ್ದಾನ

ಮೂಲ : ವಿದ್ಯಾ ಸುಬ್ರಮಣ್ಯಂ
ಅನುವಾದ : ಬಿ.ಶ್ರೀಪಾದ ಭಟ್

ರಾಷ್ಟ್ರೀಯ ಸ್ವಯಂ ಸೇವಕ ಸಂಘವು ತಾನು ಸಕ್ರಿಯ ರಾಜಕಾರಣದಿಂದ ದೂರವಿರುತ್ತೇನೆ ಎಂದು ತನ್ನ ಪಕ್ಷದ ಸಂವಿಧಾನದಲ್ಲಿ ಅತ್ಯಂತ ಸ್ಪಷ್ಟವಾಗಿ ಬರೆದಿದೆ. ತನ್ನ ಪಕ್ಷದ ಸಂವಿಧಾನವನ್ನು ಸಹ ಅನಿವಾರ್ಯವಾಗಿ ಆಗಿನ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಒತ್ತಾಯದ ಮೇರೆಗೆ 1949 ರಲ್ಲಿ ಬರೆದಿತ್ತು ಆರೆಸಸ್. ಆದರೆ ಭಾರತದ ಆ ಕಾಲದ ಇತಿಹಾಸವನ್ನು 2013ರ ಘಟನೆಗಳು ಸಂಪೂರ್ಣವಾಗಿ ಅಳಸಿಹಾಕುತ್ತವೆ. Sardar_patelಇಂದು ಆರೆಸಸ್ ಭಾರತೀಯ ಜನತಾ ಪಕ್ಷವನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ತನ್ನ ಪಕ್ಷದೊಳಗಿನ ಅಂತರಿಕ ಭಿನ್ನಮತವನ್ನು ಸಂಪೂರ್ಣವಾಗಿ ತಳ್ಳಿಹಾಕಿ ನರೇಂದ್ರ ಮೋದಿಯನ್ನು ತನ್ನ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಬಹಿರಂಗವಾಗಿ ಘೋಸಿತು. ರಾಜಕೀಯವಾಗಿ ತಾನು ಸನ್ನಧ್ಧ ಎಂದು ಇದಕ್ಕಿಂತಲೂ ಮಿಗಿಲಾಗಿ ಹೇಳಲು ಸಾಧ್ಯವಿಲ್ಲ

ಒಂದು ಕಾಲದ ಜನಸಂಘ ಮತ್ತು ಈಗಿನ ಬಿಜೆಪಿಯನ್ನು ಹುಟ್ಟಿ ಹಾಕಿದ್ದು ಆರೆಸಸ್. ಆಗಿನ ಜನಸಂಘದ ಸಾಂಸ್ಕೃತಿಕ ಮತ್ತು ರಾಜಕೀಯ ಘಟಕಗಳಾಗಿ ಅದರ ಸ್ವಯಂಸೇವಕರು ನೇಮಕಗೊಂಡಿದ್ದರು. ತನ್ನ ಪಕ್ಷದ ಸಂವಿಧಾನದಲ್ಲಿ ತಾನು ರಾಜಕೀಯದಿಂದ ದೂರವಿರುವುದನ್ನು ಸ್ಪಷ್ಟವಾಗಿ ಹೇಳಿದ್ದ ಆರೆಸಸ್ ತನ್ನ ಸ್ವಯಂಸೇವಕರಿಗೆ ಮಾತ್ರ ರಾಜಕೀಯವನ್ನು ಪ್ರವೇಶಿಸುವುದಕ್ಕೆ ಅನುಮತಿಯನ್ನು ನೀಡಿತ್ತು. ಇದನ್ನೇ ತನ್ನ ಅನುಕೂಲಸಿಂಧು ರಾಜಕಾರಣಕ್ಕೆ ಬಳಸಿಕೊಂಡ ಆರೆಸಸ್ ತನ್ನ ಸ್ವಯಂಸೇವಕರನ್ನು ಜನಸಂಘ/ಬಿಜೆಪಿಯಲ್ಲಿ ಆಯಕಟ್ಟಿನ ಸ್ಥಾನಗಳಲ್ಲಿ ಕೂರಿಸಿತು. ಆರೆಸಸ್‌ನ ತಳಮಟ್ಟದ ಕಾರ್ಯಕರ್ತರಾಗಿ ಜನಸಂಘ/ಬಿಜೆಪಿಯನ್ನು ಪ್ರವೇಶಿಸಿದ ಲಾಲ್‌ಕೃಷ್ಣ ಅಡ್ವಾನಿಯವರಿಂದ ನರೇಂದ್ರ ಮೋದಿಯವರೆಗೂ ಪ್ರತಿಯೊಬ್ಬ ನಾಯಕರೂ ನಂತರ ದೆಹಲಿ ಮತ್ತು ನಾಗಪುರದ ಆರೆಸಸ್ ಕಛೇರಿಗೆ ತೀರ್ಥಯಾತ್ರೆಯಂತೆ ಭೇಟಿಕೊಡುತ್ತಿದ್ದುದು ಒಂದು ಕಡ್ಡಾಯವಾದ ಪಠ್ಯಕ್ರಮವಾಗಿತ್ತು. ಆದರೆ ಆರೆಸಸ್‌ನ ಮುಖ್ಯಸ್ಥ ಸರಸಂಚಾಲಕ ಮಾತ್ರ ಬಹಿರಂಗವಾಗಿ ತನ್ನ ಹಕ್ಕನ್ನು ಪ್ರತಿಪಾದಿಸುವಂತಿಲ್ಲವೆಂಬುದು ಬಿಜೆಪಿ ಮತ್ತು ಆರೆಸಸ್ ನಡುವಿನ ಒಂದು ಆನಧಿಕೃತ ವಿಷಯವಷ್ಟೇ. ಈ ಹಿನ್ನೆಲೆಯಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲರೊಂದಿಗೆ ಮಾಡಿಕೊಂಡ ಒಪ್ಪಂದಂತೆ 1977-79 ಮತ್ತು 1998-2004 ಸಂದರ್ಭದ ಕೇಂದ್ರ ಸರ್ಕಾರಗಳಲ್ಲಿ ಆರೆಸಸ್ ಬಹಿರಂಗ ರಾಜಕಾರಣದಿಂದ ದೂರವುಳಿದತ್ತು. 2013 ರ ರಾಜಕೀಯ ವಿದ್ಯಮಾನಗಳು ವಿಚಿತ್ರ ತಿರುವುಗಳನ್ನು ಪಡೆದುಕೊಂಡು ತೆರೆಮರೆಯಲ್ಲಿದ್ದ ಆರೆಸಸ್ ಹಠಾತ್ತಾನೆ ಮುನ್ನೆಲೆಗೆ ಬಂದು ಅಧಿಕಾರದ ಚುಕ್ಕಾಣಿಯನ್ನು ಕೈಗೆತ್ತಿಕೊಂಡಿತು.

2005 ರಿಂದೀಚಿಗಿನ ಕಳೆದ ಕೆಲವು ವರ್ಷಗಳ ವಿದ್ಯಮಾನಗಳನ್ನು ಅವಲೋಕಿಸಿದಾಗ ಅಡ್ವಾನಿಯವರು ತಮ್ಮ ಪಾಕಿಸ್ತಾನದ ಭೇಟಿಯ ಸಂದರ್ಭದಲ್ಲಿ ಜಿನ್ನಾರನ್ನು ಪ್ರಶಂಸಿಸಿ ಮಾತನಾಡಿದ್ದು ಸಂಘಪರಿವಾರವನ್ನು ಎಷ್ಟರಮಟ್ಟಿಗೆ ಕೆರಳಿಸಿತೆಂದರೆ ಅಡ್ವಾನಿಯವರನ್ನು ಬಿಜೆಪಿಯ ಅಧ್ಯಕ್ಷ ಪದವಿಯಿಂದ ನಿರ್ಗಮಿಸುವವರೆಗೂ ಬಿಡಲಿಲ್ಲ. ತದನಂತರ 2009 ರಲ್ಲಿ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿಯೆಂದು ಬಿಂಬಿತವಾದರೂ ಅಡ್ವಾನಿಯವರ ವರ್ಚಸ್ಸು ಸಂಘಪರಿವಾರದಲ್ಲಿ ಸಂಪೂರ್ಣವಾಗಿ ಕಳೆಗುಂದಿತ್ತು. Advaniಅಡ್ವಾನಿಯವರ ಕಡೆಗಣಿಸುವಿಕೆಯ ಪ್ರಕ್ರಿಯೆ 2005 ರಿಂದ ಶುರುವಾಗಿ ಅದು ಇಂದು ಅವರನ್ನು ಪಕ್ಷದೊಳಗೆ ಸಂಪೂರ್ಣವಾಗಿ ಏಕಾಂಗಿಯನ್ನಾಗಿ ಮೂಲೆಗುಂಪು ಮಾಡುವವರೆಗೂ ಬಂದು ತಲುಪಿದೆ. ಇದರಿಂದ ಹತಾಶರಾಗಿದ್ದ ಅಡ್ವಾನಿಯವರು 2005ರ ಸೆಪ್ಪೆಂಬರ್‌ನಲ್ಲಿ ಚೆನ್ನೈಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯ ಅಂತಿಮ ದಿನದಂದು ಮಾತನಾಡುತ್ತ “ತನ್ನ ಪಕ್ಷ ಬಿಜೆಪಿಯು ಆರೆಸಸ್‌ನೊಂದಿಗೆ ಸಮಾಲೋಚಿಸದೆ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುವುದಿಲ್ಲ. ಈ ನೀತಿಯು ಪಕ್ಷಕ್ಕಾಗಲೀ ಆರೆಸಸ್‌ಗಾಗಲಿ ಯಾವುದೇ ಒಳಿತನ್ನು ಮಾಡುವುದಿಲ್ಲ. ಈ ನೀತಿಯಿಂದ ಆರೆಸಸ್‌ನ ಧ್ಯೇಯವಾದ ರಾಷ್ಟ್ರ ನಿರ್ಮಾಣದ ಕಾರ್ಯಕ್ಕೆ ಹಿನ್ನೆಡೆ ಉಂಟಾಗುತ್ತದೆ. ಆರೆಸಸ್ ಮತ್ತು ಬಿಜೆಪಿ ಈ ಭಾವನೆಯನ್ನು ಹೋಗಲಾಡಿಸಲು ಒಂದಾಗಿ ಪ್ರಯತ್ನಿಸಬೇಕು.” ಎಂದು ಹೇಳಿದರು. ಆಡ್ವಾನಿಯವರು ದಾಕ್ಷಿಣ್ಯವಿಲ್ಲದೆ ಆಗ ಆರೆಸಸ್ ಅನ್ನು ತಂಟೆಕೋರನೆಂದು ಕರೆದರು. ಆದರೆ ಏಳು ವರ್ಷಗಳ ನಂತರ ನರೇಂದ್ರ ಮೋದಿಯನ್ನು ಮೊದಲು ಚುನಾವಣಾ ಪ್ರಚಾರದ ಅಧ್ಯಕ್ಷನನ್ನಾಗಿಯೂ ನಂತರ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿಯೂ ಪಟ್ಟ ಕಟ್ಟಿದ ಆರೆಸಸ್ ಆ ಮೂಲಕ ಮತ್ತೊಮ್ಮೆ ಬಿಜಿಪಿ ಮೇಲಿನ ತನ್ನ ಆಧಿಕಾರವನ್ನು ದಾಖಲಿಸಿತು. ಜೂನ್ 11, 2013ರಲ್ಲಿ ಸಂಘಪರಿವಾರವು ಈಗಿನ ಸರಸಂಚಾಲಕರಾದ ಮೋಹನ ಭಾಗವತ್ ಅವರು ಅಡ್ವಾನಿಯವರನ್ನು ಮಾತನಾಡಿಸಿ ಬಿಜೆಪಿಯ ಸಂಸದೀಯ ಮಂಡಳಿಯ ನಿರ್ಣಯವನ್ನು ಗೌರವಿಸಬೇಕೆಂದು, ರಾಷ್ಟ್ರದ ಹಿತವನ್ನು ಗಮನದಲ್ಲಿರಿಸಿಕೊಂಡು ಪಕ್ಷವನ್ನು ಮುನ್ನಡೆಸಬೇಕೆಂದು ಹೇಳಿದರು ಎಂದು ತನ್ನ ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿತು. ಬಿಜೆಪಿಯಿಂದ ಅಡ್ವಾನಿಯವರಿಗೆ ಬೇಡಿಕೆಯನ್ನು ಸಲ್ಲಿಸಿದ್ದರೆ ಆರೆಸಸ್ ಮುಖ್ಯಸ್ಥ ಮೋಹನ್ ಭಾಗವತ್‌ರು ಅಡ್ವಾನಿಯವರಿಗೆ ಆಜ್ಞೆಯನ್ನು ನೀಡಿದ್ದರು. ಪದಗಳು ಸೌಜನ್ಯತೆಯಿಂದ ಕೂಡಿದ್ದರೂ ಆ ಮೂಲಕ ತಲುಪಿಸಿದ ಸಂದೇಶ ಮಾತ್ರ ಕಟುವಾಗಿತ್ತು. ಈ ರೀತಿಯಾಗಿ 2005 ರಲ್ಲಿ ಶುರುವಾದ ಬಿಜೆಪಿಯ ಕಬ್ಜಾ ಪ್ರಕ್ರಿಯೆ 2013 ರ ವೇಳೆಗೆ ಸಂಪೂರ್ಣಗೊಂಡು ತನ್ನ ಲಾಜಿಕಲ್ ಗುರಿಯನ್ನು ಮುಟ್ಟಿದೆ.

1949 ರಲ್ಲಿ ಪಟೇಲರಿಗೆ ಕೊಟ್ಟ ಮಾತಿನ ಪ್ರಕಾರ ತನ್ನ ಪಕ್ಷದ ಸಂವಿಧಾನವನ್ನು ರಚಿಸಿದ ಆರೆಸಸ್ ಅದರಲ್ಲಿ ರಾಜಕೀಯವನ್ನು ಪ್ರವೇಶಿಸುವುದಿಲ್ಲವೆಂದೂ ತನ್ನನ್ನು ಕೇವಲ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸೀಮಿತಗೊಳಿಸಿಕೊಳ್ಳುವುದೆಂದೂ ಸ್ಪಷ್ಟವಾಗಿ ತಿಳಿಸಿತ್ತು. 1948 ರಲ್ಲಿ ಗಾಂಧಿ ಹತ್ಯೆಯ ಸಂದರ್ಭದಲ್ಲಿ ಆರೆಸಸ್‌ನ ಮೇಲೆ ವಿಧಿಸಿದ ನಿರ್ಬಂಧನೆಯನ್ನು ಹಿಂತೆಗುದುಕೊಳ್ಳುವ ಸಂದರ್ಭದಲ್ಲಿ ಮೇಲಿನ ಕಂಡೀಶನ್ ಅನ್ನು ಪ್ರ್ರಮುಖವಾಗಿ ಪ್ರತಿಪಾದಿಸಿದ್ದರು ಆಗಿನ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್. ಆರೆಸಸ್ gandhi_dead_bodyಅನ್ನು ಗಾಂಧಿಯವರ ಹತ್ಯೆಗೆ ನೇರವಾಗಿ ಕಾರಣವೆಂದು ಆಪಾದಿಸದಿದ್ದರೂ ಆರೆಸಸ್‌ನ ಹಿಂಸಾತ್ಮಕ ನಡುವಳಿಕೆ ಮತ್ತು ಪ್ರಚೋದನಾತ್ಮಕ ಚಿಂತನೆಗಳೇ ಗಾಂಧಿಯವರ ಹತ್ಯೆಗೆ ಕಾರಣಗಳಲ್ಲೊಂದು ಎಂದು ಪಟೇಲರು ನಂಬಿದ್ದರು. ಗಾಂಧೀಜಿಯವರ ಹತ್ಯೆಯ ನಂತರ ಆರೆಸಸ್ ಅನ್ನು ನಿಷೇಧಿಸಲು 4 ನೇ ಫೆಬ್ರವರಿ 1948 ರಂದು ಹೊರಡಿಸಿದ ನೋಟಿಫಿಕೇಶಿನಿನಲ್ಲಿ ಆಗಿನ ಸರ್ಕಾರವು “ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ಮೂಲಭೂತ ಆದರ್ಶಗಳಾದ ಭ್ರಾತೃತ್ವ, ಪ್ರೀತಿ, ಸಮಾನತೆಗಳನ್ನು ಪಾಲಿಸಲಿಲ್ಲ. ಬದಲಾಗಿ ಸಂಘಪರಿವಾರದ ಸದಸ್ಯರು ಗುರುತರವಾದ ಭಯ ಹುಟ್ಟಿಸುವ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಸಂಘಪರಿವಾರದ ಸದಸ್ಯರು ವ್ಯವಸ್ಥೆಯಲ್ಲಿ ಹಿಂಸೆಯನ್ನು ಹುಟ್ಟುಹಾಕಿದರು. ದರೋಡೆ, ಗಲಭೆ, ಹತ್ಯೆಗಳನ್ನು ನಡೆಸಿದರು. ಶಸ್ತ್ರಗಳನ್ನು, ಹಣವನ್ನು ವಸೂಲಿ ಮಾಡಿದರು. ದ್ವೇಷಮಯವಾದ, ಗಲಭೆಗಳನ್ನು ನಡೆಸುವಂತೆ ಕರೆಕೊಡುವಂತಹ, ಭಯೋತ್ಪಾದಕ ಪಾಠಗಳನ್ನು ತಿಳಿಸುವಂತಹ ಕರಪತ್ರಗಳನ್ನು ಸಾರ್ವಜನಿಕವಾಗಿ ಹಂಚಿದರು. ಈ ಕಾರ್ಯತಂತ್ರಗಳನ್ನು ಗುಪ್ತವಾಗಿ ನಡೆಸಿದರು,” ಎಂದು ಅಭಿಪ್ರಾಯಪಟ್ಟಿತು.

4 ನೇ ನವೆಂಬರ್‌ನಲ್ಲಿ ಪಟೇಲ್ ಅವರು ನೀಡಿದ ಪತ್ರಿಕಾ ಹೇಳಿಕೆಯಲ್ಲಿ, “ಇತರೇ ರಾಜ್ಯಗಳಿಂದಲೂ ಈ ಆರೆಸಸ್ ವಿರುದ್ಧ ನಮಗೆ ದೂರುಗಳು ಬಂದಿವೆ. ಆ ದೂರುಗಳ ಪ್ರಕಾರ ಆರೆಸಸ್ ಸದಸ್ಯರು ನಡಾವಳಿಗಳು ದೇಶ ವಿರೋಧಿ ಲಕ್ಷಣಗಳನ್ನು ಹೊಂದಿದ್ದು. ಸದಾ ಗಲಭೆಗಳನ್ನು ಪ್ರಚೋದಿಸುತ್ತಿದ್ದರು,” ಎಂದು ತಿಳಿಸಿದ್ದರು.

ಇದಕ್ಕೂ ಮುಂಚೆ ಗೃಹಮಂತ್ರಿ ಎರಡು ಪತ್ರಗಳನ್ನು ಬರೆದಿದ್ದರು. ಮೊದಲನೇ ಪತ್ರವನ್ನು ಜುಲೈ 1948ರಲ್ಲಿ ಆಗಿನ ಆರೆಸಸ್ ಮುಖ್ಯಸ್ಥ ಶ್ಯಾಮ್ ಪ್ರಸಾದ್ ಮುಖರ್ಜಿಯವರಿಗೆ ಬರೆದಿದ್ದರು. ಅದರಲ್ಲಿ ಆರೆಸಸ್ ಚಟುವಟಿಕೆಗಳು ಸರ್ಕಾರದ ವಿರುದ್ಧದ ಪಿತೂರಿಯಾಗಿದೆ. ಸರ್ಕಾರದ ಇರುವಿಕೆಗೇ ಭಂಗ ತರುವಂತಿದೆ. ಬುಡಮೇಲು ಮಾಡುವಂತಹ ಅದರ ಕೃತ್ಯಗಳು ದಿನಗಳೆದಂತೆ ಹೆಚ್ಚಾಗುತ್ತಿವೆ ಎಂದು ಸ್ಪಷ್ಟವಾಗಿ ಬರೆದಿದ್ದರು.

11 ನೇ ಸೆಪ್ಟೆಂಬರ್ 1948 ರಂದು ಗೋಳ್ವಾಲ್ಕರ್ ಅವರಿಗೆ ಬರೆದ ಎರಡನೇ ಪತ್ರದಲ್ಲಿ ಪಟೇಲರು “Gandhi's Funeralಇಂದು ಆರೆಸಸ್ ಹುಟ್ಟುಹಾಕಿದ ದ್ವೇಷದ ಚಿಂತನೆಗಳಿಂದಾಗಿ ದೇಶದಲ್ಲಿ ಸೃಷ್ಟಿಗೊಂಡ ಕಮ್ಯೂನಲ್‌ನ ವಿಷಯುಕ್ತ ವಾತಾವರಣ ಗಾಂಧಿಯವರನ್ನು ಬಲಿ ತೆಗೆದುಕೊಂಡಿತು. ಗಾಂಧೀಜಿವರು ತೀರಿಕೊಂಡ ಬಳಿಕ ಆರೆಸಸ್ ಸದಸ್ಯರು ಸಿಹಿಯನ್ನು ಹಂಚಿದರು. ಇದು ನಾಗರಿಕರಲ್ಲಿ ತಿರಸ್ಕಾರವನ್ನು ಹುಟ್ಟಿಸಿದೆ,” ಎಂದು ಬರೆಯುತ್ತಾರೆ.

ಈ ಎಲ್ಲ ಹಿನ್ನೆಲೆಗಳಲ್ಲಿ ಆಗಿನ ಗೃಹಮಂತ್ರಿ ವಲ್ಲಭಭಾಯಿ ಪಟೇಲರು ಆರೆಸಸ್‌ನಿಂದ ದೇಶದ ಧ್ವಜವನ್ನು ಗೌರವಿಸುವಂತೆ ಆದೇಶಿಸುತ್ತಾರೆ (ಕಡೆಗೂ ಆರೆಸಸ್ ಗೌರವಿಸುವುದು ತನ್ನದೇ ಆದ ಭಗವದ್ವಜವನ್ನು). ತನ್ನ ಎಲ್ಲಾ ಚಟುವಟಿಕೆಗಳನ್ನು ಬಹಿರಂಗವಾಗಿ ಕಾನೂನಿನ ಅಡಿಯಲ್ಲಿ ನಡೆಸಬೇಕೆಂತಲೂ, ಸಕ್ರಿಯ ರಾಜಕಾರಣದಿಂದ ದೂರವಿರಬೇಕೆಂತಲೂ ಆರೆಸಸ್‌ನಿಂದ ವಾಗ್ದಾನ ಪಡೆಯುತ್ತಾರೆ.

ಆದರೆ ಇಂದು ಆರೆಸಸ್ ಸಕ್ರಿಯ ರಾಜಕಾರಣಕ್ಕೆ ಮರಳುವ ಮೂಲಕ 1949 ರಲ್ಲಿ ವಲ್ಲಭಭಾಯಿ ಪಟೇಲರಿಗೆ ನೀಡಿದ ವಾಗ್ದಾನವನ್ನು ಭಂಗಗೊಳಿಸಿದೆ.

( ಕೃಪೆ : ದಿ ಹಿಂದೂ, 8ನೇ ಅಕ್ಟೋಬರ್, 2013)