Category Archives: ಪ್ರದೀಪ್ ಮಾಲ್ಗುಡಿ

ರಂಗಸಮಾಜದ ಸದಸ್ಯರ ಜವಾಬ್ದಾರಿ

– ಪ್ರದೀಪ್ ಮಾಲ್ಗುಡಿ

ಕರ್ನಾಟಕ ರಂಗಾಯಣ ವಿಕೇಂದ್ರೀಕರಣದ ಸಂದರ್ಭದಲ್ಲಿ ಮೈಸೂರಿನ ರಂಗಾಯಣ ಕಲಾವಿದರ ಅನುಭವವನ್ನು ಶಿವಮೊಗ್ಗ, ಧಾರವಾಡ ಹಾಗೂ ಗುಲ್ಬರ್ಗಾ ಶಾಖೆಗಳಲ್ಲಿ ಬಳಸಿಕೊಳ್ಳಬೇಕಾಗಿದೆ. ಬಿ.ವಿ.ಕಾರಂತ, ಸಿ.ಬಸವಲಿಂಗಯ್ಯ, ಪ್ರಸನ್ನ, ಚಿದಂಬರರಾವ್ ಜಂಬೆ ಮೊದಲಾದ ನಿರ್ದೇಶಕರ ಗರಡಿಯಲ್ಲಿ ಪಳಗಿ, ಕಾರ್ಯ ನಿರ್ವಹಿಸಿ, ಅಭಿನಯಿಸಿರುವ ಈ ನಟನಟಿಯರು ಭಾರತೀಯ, ಪಾಶ್ಚಿಮಾತ್ಯ ರಂಗಕರ್ಮಿಗಳು ಮತ್ತು ರಂಗಸಿದ್ಧಾಂತಗಳು ಹಾಗೂ ಅವುಗಳ ಪ್ರಾಯೋಗಿಕ ಸಾಧ್ಯತೆಗಳು-ಸಮಸ್ಯೆಗಳನ್ನು ಅರಿತವರು. ಹಾಗೆಯೇ, ಅನೇಕ ರಂಗಶಿಬಿರಗಳಲ್ಲಿ, ಧ್ವನಿ-ಬೆಳಕು ಪ್ರದರ್ಶನಗಳಲ್ಲಿ, ರಂಗಕ್ಕೆ ಸಂಬಂಧಿಸಿದ ಕಾರ್ಯಾಗಾರಗಳಲ್ಲಿ ಭಾಗವಹಿಸುವ ಮೂಲಕ ಅವರು ರಂಗಭೂಮಿಗೆ ಸಂಬಂಧಿಸಿದ ಅನೇಕ ಜ್ಞಾನಶಿಸ್ತುಗಳ ಬಗೆಗೆ ಪಡೆದಿರುವ ಅನುಭವವನ್ನು ರಂಗಭೂಮಿಯ ಕಡೆಗೆ ತಿರುಗಿಸಬೇಕಾದ ಕೆಲಸ ಅಗತ್ಯವಾಗಿ ಹಾಗೂ ತುರ್ತಾಗಿ ಆಗಬೇಕಿದೆ.

ಈ ಕಲಾವಿದರು ಕರ್ನಾಟಕದ ರಂಗಭೂಮಿಯ ಬೆಳವಣಿಗೆಯ ದೃಷ್ಟಿಯಿಂದ ಅಸಂಖ್ಯ ಸಾಧ್ಯತೆಗಳನ್ನು ಸೃಷ್ಟಿಸಬಲ್ಲರು. ರಂಗಾಯಣದ Kalamandira_Mysoreಕ್ರಿಯಾಶೀಲತೆಯನ್ನು ಹೆಚ್ಚಿಸುವಲ್ಲಿ ಇವರ ಪಾತ್ರ ದೊಡ್ಡದು. ಕಾಲಕಾಲಕ್ಕೆ ವಿವಿಧ ವಯೋಮಾನದ, ಭಿನ್ನ ಅನುಸಂಧಾನದ ನಿರ್ದೇಶಕರೊಡನೆ ಇವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಈ ಕಲಾವಿದರ ಅನುಭವ ಹೊಸ ರಂಗಾಯಣಗಳ ಬೆಳವಣಿಗೆಗೆ ಅವಶ್ಯಕ. ಅದರಲ್ಲೂ ಈಗ ಹೊಸದಾಗಿ ಆರಂಭವಾಗುತ್ತಿರುವ ಶಾಖೆಗಳಿಗೆ ಈ ಕಲಾವಿದರ ಅನುಭವದ ಮೂಲಕ ಯುವ ಕಲಾವಿದರನ್ನು ಬೆಳೆಸುವ ಕೆಲಸ ಅಗತ್ಯವಾಗಿ ಆಗಬೇಕಾಗಿದೆ.

ಆದರೆ ಅವರನ್ನು ಹೊಸ ರಂಗಾಯಣದ ಘಟಕಗಳಲ್ಲಿ ದ್ವಿತೀಯ ದರ್ಜೆಯವರಂತೆ ಪರಿಗಣಿಸಬಾರದು. ರಂಗಾಯಣಗಳ ನಿರ್ದೇಶಕರ ಆಯ್ಕೆಯಲ್ಲಿ ಈ ಹಿರಿಯ ಕಲಾವಿದರಿಗೆ ಅವಮಾನ ಮಾಡುವಂಥ ಕೆಲಸಗಳಾಗಬಾರದು. ಅವರ ಅನುಭವವನ್ನು ಈ ಶಾಖೆಗಳು ಬಳಸಿಕೊಳ್ಳುವಂಥ ವಾತಾವರಣ ನಿರ್ಮಾಣವಾಗಬೇಕು. ಈಗಿರುವ ಈ ಎಲ್ಲ ಕಲಾವಿದರು ಏಳೆಂಟು ವರ್ಷಗಳಲ್ಲಿ ನಿವೃತ್ತರಾಗಲಿದ್ದಾರೆ. ಇವರ ನಿವೃತ್ತಿಯ ನಂತರ ರಂಗಾಯಣಗಳಲ್ಲಿ ನಿರ್ವಾತ ಉಂಟಾಗಬಾರದು. ಇವರ ನಿರ್ಗಮನದ ತರುವಾಯ ಹೊಸ ಕಲಾವಿದರನ್ನು ನೇಮಿಸಿಕೊಂಡು, ಅವರಿಗೆ ತರಬೇತಿ ನೀಡುವುದು, ಇತ್ಯಾದಿ ಪ್ರಯೋಗಗಳಿಗಿಂಥ ಇವರ ಗರಡಿಯಲ್ಲಿ ಯುವ ಕಲಾವಿದರ ಪಡೆಯನ್ನು ಸಜ್ಜುಗೊಳಿಸಿಕೊಂಡು, ಅವರನ್ನು ರಂಗಾಯಣಗಳನ್ನು ಕಟ್ಟುವ ನಿಟ್ಟಿನಲ್ಲಿ ಕ್ರಿಯಾಶೀಲಗೊಳಿಸಬೇಕಾದ ಅಗತ್ಯವಿದೆ.

ರಂಗಾಯಣದ ಹಿರಿಯ ಕಲಾವಿದರನ್ನು ಹೊಸ ರಂಗಾಯಣಗಳ ನಿರ್ದೇಶಕರ ಆಯ್ಕೆಯ ಸಂದರ್ಭದಲ್ಲಿ ಪರಿಗಣಿಸಬಹುದು. ಈ ನುರಿತ ಕಲಾವಿದರ ಸೇವಾಹಿರಿತನವನ್ನು ಮಾನದಂಡವಾಗಿಟ್ಟುಕೊಂಡು, ಅವರಿಗೆ ಸರದಿಯ ಪ್ರಕಾರ ನಿರ್ದೇಶಕ ಸ್ಥಾನದ ಜವಾಬ್ದಾರಿಯನ್ನು ನೀಡಬಹುದು. ಹೊಸ ರಂಗಾಯಣಗಳ ನಿರ್ದೇಶಕರ ನೇಮಕಾತಿ ಸಮಯದಲ್ಲಿ ರಂಗಾಯಣದ ಹಿರಿಯ ಕಲಾವಿದರನ್ನೂ ಪರಿಗಣಿಸಬೇಕಾಗಿದೆ. ಏಕೆಂದರೆ, ವಿಕೇಂದ್ರೀಕರಣದ ಸಂದರ್ಭದಲ್ಲಿ ಮೈಸೂರಿನ ರಂಗಾಯಣದ ಕಲಾವಿದರ ವ್ಯಾಪಕವಾದ ಅನುಭವವನ್ನು ಶಿವಮೊಗ್ಗ, ಧಾರವಾಡ ಹಾಗೂ ಗುಲ್ಬರ್ಗಾ ಶಾಖೆಗಳಲ್ಲಿ ಬಳಸಿಕೊಳ್ಳಬೇಕಾಗಿದೆ. ಈ ಮೂಲಕ ಇಷ್ಟು ದಿನಗಳ ಅವರ ನಿರಂತರವಾದ ರಂಗಭೂಮಿಯ ಸೇವೆಯನ್ನು ಪರಿಗಣಿಸಿ ಅವರನ್ನು ಗೌರವಿಸಿದಂತಾಗುತ್ತದೆ.

ಈ ಹಿಂದಿನ ಸರ್ಕಾರವು ಸಾಂಸ್ಕೃತಿಕ ವಿಷಯಕ್ಕೆ ಸಂಬಂಧಿಸಿದಂತೆ ಮಾಡಿದ ಒಂದೇ ಒಂದು ಒಳ್ಳೆಯ ಕೆಲಸವೆಂದರೆ, ರಂಗಾಯಣ ಕಲಾವಿದರ ವರ್ಗಾವಣೆ. ಆದರೆ ಈ ಹೊಸ ರಂಗಸಮಾಜದ ಸದಸ್ಯರು ಅದನ್ನು ರದ್ದುಗೊಳಿಸಿ ಅಚಾತುರ್ಯವೆಸಗಿದ್ದಾರೆ. ಮೈಸೂರಿನ ಕೆಲವು ಬುದ್ಧಿಜೀವಿಗಳು, ಸಾಹಿತಿ, ಕಲಾವಿದರು ಹಾಗೂ ಪ್ರೇಕ್ಷಕರು ತಾವು ಹಾಗೂ ರಂಗಾಯಣದ ಕಲಾವಿದರು ಸಾಯುವವರೆಗೂ ಮೈಸೂರಿನಲ್ಲೇ ನೆಲೆನಿಲ್ಲುವ, ಆ ಮೂಲಕ ಅವರ ನಟನೆ, ಅನುಭವ ಎಲ್ಲಿಯೂ ಬಳಕೆಯಾಗದಂತೆ, ಮತ್ತಾರಿಗೂ ಅವರ ಅಭಿನಯವನ್ನು ವೀಕ್ಷಿಸುವ ಅವಕಾಶ ಲಭಿಸದಂತೆ ಹುನ್ನಾರಗಳನ್ನು ಹೂಡುತ್ತಿದ್ದಾರೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ರಂಗಸಮಾಜದ ಸದಸ್ಯರು ಕಾರ್ಯನಿರ್ವಹಿಸಬೇಕಾಗಿದೆ.

ಈಗಾಗಲೇ ರಂಗಾಯಣದ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳು ಕ್ರಿಯಾಶೀಲವಾಗಿದ್ದಾರೆ. ಈಗಿರುವ ರಂಗಾಯಣದ ನಿಯಮಾವಳಿಗಳಿಗೆ ಕೂಡ ಇದೇ ಸಮಯದಲ್ಲಿ ಸೂಕ್ತ ತಿದ್ದುಪಡಿ ತರುವ ಮೂಲಕ ರಂಗಾಯಣದ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಆಗ ಬಾಹ್ಯ ಒತ್ತಡಗಳು ಇಲ್ಲವಾಗುತ್ತವೆ.

ರಂಗಾಯಣದ ಮುಂದಿನ ಬಿಕ್ಕಟ್ಟುಗಳು:

ರಂಗಾಯಣದ ಮುಂದಿನ ನಿರ್ದೇಶಕರಾರು? ಎಂಬ ಪ್ರಶ್ನೆ ಈಗ ಮತ್ತೆ ರಂಗಭೂಮಿ ಹಾಗೂ ಸಾಂಸ್ಕೃತಿಕ ವಲಯದಲ್ಲಿ ತೀವ್ರವಾದ ಚರ್ಚೆಗೆ ಗ್ರಾಸ ಒದಗಿಸಿದೆ. ರಂಗಾಯಣದ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳು ಹಾಗೂ ಪರಸ್ಪರರನ್ನು ಬೆಂಬಲಿಸುವ ಅನೇಕ ಗುಂಪುಗಳು – ಅನೇಕ ಬಗೆಯಲ್ಲಿ ಕ್ರಿಯಾಶೀಲವಾಗಿವೆ. ರಂಗಾಯಣದ ಈಚಿನ ಮೂವರು ನಿರ್ದೇಶಕರು – ಬಿ.ಜಯಶ್ರೀ ಅವರ ರಾಜೀನಾಮೆ, ಪ್ರೊ.ಲಿಂಗದೇವರು ಹಳೆಮನೆಯವರ ಅಕಾಲಿಕ ನಿಧನ ಹಾಗೂ ಡಾ.ಬಿ.ವಿ.ರಾಜಾರಾಂ ಅವರನ್ನು ಸರ್ಕಾರವು ವಜಾಗೊಳಿಸಿದ ಕ್ರಮಗಳಿಂದ – ಈ ಮೂವರೂ ಅಕಾಲದಲ್ಲಿ ಹುದ್ದೆ ತೊರೆಯುವಂತಾದುದು ಪ್ರಸ್ತುತ ಸನ್ನಿವೇಶ ನಿರ್ಮಾಣಕ್ಕೆ ಕಾರಣ.

ಇದುವರೆಗಿನ ರಂಗಾಯಣದ ನಿರ್ದೇಶಕರ ಪಟ್ಟಿಯನ್ನು ಗಮನಿಸಿದಾಗ ಎದ್ದು ಕಾಣುವ ಅಂಶವೆಂದರೆ; ಎನ್.ಎಸ್.ಡಿ. ಪದವೀಧರರು ಹೆಚ್ಚಿನ ಅವಕಾಶಗಳನ್ನು ಪಡೆದಿದ್ದಾರೆ. ಪ್ರೊ.ಲಿಂಗದೇವರು ಹಳೆಮನೆಯವರು ಹಾಗೂ ಬಿ.ವಿ.ರಾಜಾರಾಂರನ್ನು ಹೊರತುಪಡಿಸಿದರೆ, ಉಳಿದವರೆಲ್ಲ ಎನ್.ಎಸ್.ಡಿ., ಪದವೀಧರರೆ ಆಗಿದ್ದಾರೆ. ಇದನ್ನು ಗಮನಿಸಿದಾಗ, ರಂಗಸಮಾಜದ ಸದಸ್ಯರು ಈ ಅರ್ಹತೆಯನ್ನು ಅಲಿಖಿತ ನಿಯಮವನ್ನಾಗಿ ಅನುಸರಿಸಿರುವಂತೆ ತೋರುತ್ತದೆ. ರಂಗಾಯಣದ ಕ್ರಿಯಾಶೀಲತೆಯನ್ನು ಅನೇಕ ಹಂತಗಳಲ್ಲಿ ವಿಸ್ತರಿಸುವ ಕೆಲಸವನ್ನು ಈ ಪದವೀಧರರು ಮಾಡಿದ್ದಾರೆ. ಈಗಲಾದರೂ ರಂಗಸಮಾಜವು ಆಯ್ಕೆಯಲ್ಲಿ ಅಂತಿಮಪಟ್ಟಿ ಕಳಿಸುವಾಗ ಈ ಬಗೆಯ ಅಲಿಖಿತ ನಿಯಮಗಳು ಇನ್ನೆಷ್ಟು ದಿನ ಅಗತ್ಯ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ.

ರಂಗಸಮಾಜದ ಸದಸ್ಯರು ಕರ್ನಾಟಕದ ರಂಗಭೂಮಿಯಲ್ಲಿ ದೀರ್ಘಾವಧಿಯಿಂದ ತೊಡಗಿಕೊಂಡಿದ್ದಾರೆ. ರಂಗಭೂಮಿಯ ವಿವಿಧ ವಿಭಾಗಗಳಲ್ಲಿ ಕ್ರಿಯಾಶೀಲವಾಗಿ ಭಾಗವಹಿಸುವ ಮೂಲಕ ರಂಗಭೂಮಿಯ ಚರಿತ್ರೆ, ಆಧುನಿಕ ವಿದ್ಯಮಾನ, ಅಧಿಕಾರ ಹಾಗೂ ಅದರ ಸಾಂಸ್ಥಿಕ ರೂಪಗಳು ಅದು ತರುವ ಒತ್ತಡಗಳನ್ನು ಅರಿಯದವರೇನೂ ಅಲ್ಲ. ಅವರು ಈ ಎಲ್ಲ ಸಮಸ್ಯೆಗಳ ನಡುವೆಯೂ ರಂಗಾಯಣದ ಸ್ಥಾಪನೆ, ಅದರ ಧ್ಯೇಯೋದ್ದೇಶಗಳನ್ನು ಅರ್ಥಪೂರ್ಣಗೊಳಿಸುವ ಸಲುವಾಗಿ ಅರ್ಹರನ್ನು ಆಯ್ಕೆ ಮಾಡಬೇಕಾಗಿದೆ.

ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ರಂಗಸಮಾಜವು ಹೆಸರುಗಳನ್ನು ಸೂಚಿಸುವಾಗ ನಿರ್ದೇಶಕರಾಗಿ ಹೆಸರಾದವರನ್ನು ಮತ್ತು ಅವರ ರಂಗಭೂಮಿಯ ಆಸಕ್ತಿ, ತೊಡಗುವಿಕೆ, ರಂಗಾಯಣದ ಆಡಳಿತವನ್ನು ನಿರ್ವಹಿಸುವ ಸಾಧ್ಯತೆ ಇತ್ಯಾದಿ ವಿಷಯಗಳನ್ನೂ ಗಮನದಲ್ಲಿರಿಸಿಕೊಂಡು ಮೂವರು ಸೂಕ್ತ ಅಭ್ಯರ್ಥಿಗಳ ಪಟ್ಟಿಯನ್ನು ಸಲ್ಲಿಸುತ್ತಿತ್ತು. ಈ ಬಾರಿಯೂ ಈ ಸಂಖ್ಯೆ ಹೆಚ್ಚಳವಾಗದಂತೆ ನೋಡಿಕೊಳ್ಳಬೇಕಾಗಿರುವುದು ರಂಗಸಮಾಜದ ಮೊದಲ ಜವಾಬ್ದಾರಿ. ಆ ಮೂಲಕ ಈ ಪಟ್ಟಿಯಲ್ಲಿ ಯೋಗ್ಯರಾದವರು ಮಾತ್ರ ಉಳಿದುಕೊಳ್ಳುವ ಆಯ್ಕೆ ಮಾಡುವುದು ಎರಡನೇ ಜವಾಬ್ದಾರಿಯಾಗಿದೆ.

ಆದರೆ ರಂಗಸಮಾಜವು ಸೂಚಿಸಿದ ಹೆಸರುಗಳನ್ನು ಇತ್ತೀಚೆಗೆ ಮೈಸೂರು, ಶಿವಮೊಗ್ಗ ಹಾಗೂ ಧಾರವಾಡದ ರಂಗಾಯಣಗಳಿಗೆ ಪರಿಗಣಿಸದಿರುವುದು ಗೊತ್ತಾಗಿದೆ. ಹಾಗಾದರೆ ರಂಗಾಯಣಕ್ಕೆ ರಂಗಸಮಾಜವೇಕೆ ಬೇಕು? ರಂಗಸಮಾಜದ ಅಸ್ತಿತ್ವವಿರುವುದು ರಂಗಾಯಣದ ನಿರ್ದೇಶಕರ ಆಯ್ಕೆಯಲ್ಲಿ. ಪ್ರಜಾಪ್ರಭುತ್ವ ಮಾದರಿಯನ್ನು ಅನುಸರಿಸುವಲ್ಲಿ. ಅದು ಮುಂದೆ ರಂಗಾಯಣದ ಅಸ್ತಿತ್ವದ ಸ್ಥಿತ್ಯಂತರಗಳಿಗೂ ಕಾರಣವಾಗುತ್ತದೆ. ಆದ್ದರಿಂದ, ರಂಗಾಯಣದ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರಿಂದ ಬರುತ್ತಿರುವ, ಮುಂದೆ ಬರಬಹುದಾದ ಒತ್ತಡಗಳನ್ನು ಯಶಸ್ವಿಯಾಗಿ ನಿಭಾಯಿಸುವ ಸಾಮರ್ಥ್ಯವನ್ನು ರಂಗಭೂಮಿಯೇ ಒದಗಿಸುತ್ತದೆ. ರಂಗಭೂಮಿಯ ಒಡನಾಟವು ಈ ಬಗೆಯ ವಿವೇಕವನ್ನು ಕಲಿಸಿರುತ್ತದೆ. ಆದಾಗ್ಯೂ, ಸಾಂದರ್ಭಿಕವಾಗಿ ಪ್ರಭುತ್ವದ ಒತ್ತಡಗಳು ಈ ವಿವೇಕವನ್ನು ಹೊಸಕಿ ಹಾಕಿ-ತನಗೆ ಬೇಕಾದವರನ್ನು ಆರಿಸುವಂತಾಗಬಾರದು. ಪ್ರಭುತ್ವದ ಒತ್ತಡಕ್ಕೆ ಮಣಿಯುವುದಾದಲ್ಲಿ ರಂಗಸಮಾಜದ ಅಗತ್ಯವೇನಿದೆ?

ಇದುವರೆಗೆ ರಂಗಾಯಣದ ನಿರ್ದೇಶಕರಾಗಿರುವವರು ದಕ್ಷಿಣ ಕರ್ನಾಟಕದ ವ್ಯಾಪ್ತಿಯವರು, ಹವ್ಯಾಸಿ ರಂಗಕರ್ಮಿಗಳು, ನಿರ್ದೇಶಕರು. ಆದರೆ, ಉತ್ತರ ಕರ್ನಾಟಕದ ರಂಗಕರ್ಮಿಗಳು, ವೃತ್ತಿ ರಂಗಕರ್ಮಿಗಳು, ರಂಗಭೂಮಿಯ ತಂತ್ರಜ್ಞರು ಹಾಗೂ ನಾಟಕಕಾರರು ರಂಗಾಯಣದ ನಿರ್ದೇಶಕರಾಗಿಲ್ಲ. ರಂಗ ಸಮಾಜದ ಸದಸ್ಯರುಗಳು ಈ ಅನೇಕ ಅಂಶಗಳನ್ನು ಕೂಡ ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಬೇಕಾಗಿದೆ. ಸಾಮಾಜಿಕ ನ್ಯಾಯದ ದೃಷ್ಟಿಯನ್ನು ಪರಿಗಣಿಸಿದ್ದಾದಲ್ಲಿ ಈಗಿನ ಆಕಾಂಕ್ಷಿಗಳ ಪಟ್ಟಿಯು ಅರ್ಧಕ್ಕಿಳಿಯುತ್ತದೆ. ಈ ಮಾನದಂಡಗಳನ್ನು ಅನುಸರಿಸಿದಲ್ಲಿ ರಂಗಾಯಣದ ಘನತೆಯೂ ಹೆಚ್ಚುತ್ತದೆ.

ಅಕಾಡೆಮಿಗಳು, ಪ್ರಾಧಿಕಾರಗಳು ಸಾಂಸ್ಕೃತಿಕ ಕ್ಷೇತ್ರದವರ ಗಂಜಿ ಕೇಂದ್ರಗಳಾಗಿ ಬದಲಾಗದಿರಲಿ

– ಪ್ರದೀಪ್ ಮಾಲ್ಗುಡಿ

ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಇತರೆ ಅಕಾಡೆಮಿ, ಪ್ರಾಧಿಕಾರ, ನಿಗಮ ಮಂಡಳಿಗಳು, ರಂಗಾಯಣದ ಕೇಂದ್ರಗಳಿಗೆ ಸರ್ಕಾರವು ಅಧ್ಯಕ್ಷರು, ನಿರ್ದೇಶಕರನ್ನು ಆದಷ್ಟು ಶೀಘ್ರವಾಗಿ ನೇಮಿಸಬೇಕಿದೆ. ಅದರಲ್ಲೂ ಸಾಂಸ್ಕೃತಿಕ ಮಹತ್ವವುಳ್ಳ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ರಂಗಾಯಣದಂತಹ ಸಂಸ್ಥೆಗಳು ದೀರ್ಘಕಾಲ ಖಾಲಿ ಉಳಿಯಬಾರದು. ಅದರಿಂದ ಸಾಂಸ್ಕೃತಿಕ ಕ್ಷೇತ್ರ ಬಡವಾಗುತ್ತದೆ. ಈ ವಿಳಂಬ ಕ್ರಿಯೆ ಕನ್ನಡ ಸಂಸ್ಕೃತಿಗೆ ಭವಿಷ್ಯದಲ್ಲಿ ಹಾನಿಯುಂಟುಮಾಡಬಲ್ಲುದು. ಆದರೆ ಈ ನೇಮಕದ ವಿಷಯದಲ್ಲಿ ಇದುವರೆಗೆ ಅನೇಕ ತಪ್ಪುಗಳು ಘಟಿಸಿವೆ.

ಸಾಂಸ್ಕೃತಿಕ ವಲಯದ ಬಹುತೇಕ ಬುದ್ಧಿಜೀವಿಗಳು, ವಿದ್ವಾಂಸರು, ರಂಗಕರ್ಮಿಗಳು ಹಾಗೂ ರಂಗಾಸಕ್ತರು ಈಗಾಗಲೇ ಒಂದು ಹುದ್ದೆಯನ್ನು ಪಡೆದಿರುವ ವ್ಯಕ್ತಿ ಮತ್ತೆ ಮತ್ತೆ ಅದೇ ಹುದ್ದೆಯಲ್ಲಿ ಮುಂದುವರೆಯುವುದು ಹಾಗೂ ಈಗಿನ ಅಕಾಡೆಮಿಗಳು, ಪ್ರಾಧಿಕಾರಗಳು ಮೊದಲಾದವುಗಳಿಂದ ಒಂದರಿಂದ ಮತ್ತೊಂದಕ್ಕೆ ವರ್ಗಾವಣೆ ಮಾಡುವುದನ್ನು ಅಂತರಂಗ-ಬಹಿರಂಗದಲ್ಲಿ ಖಂಡಿಸಿದ್ದಾರೆ. ಆದರೆ, ಈ ಯಾವ ಖಂಡನೆಗಳೂ ಅಧಿಕಾರದ ಆಕಾಂಕ್ಷಿಗಳ ಮಂಡನೆಗಳ ಮುಂದೆ ಪರಿಣಾಮಕಾರಿಯಾಗುತ್ತಿಲ್ಲ.

ಇರುವ ಎಲ್ಲ ಸಾಂಸ್ಕೃತಿಕ ಹುದ್ದೆಗಳನ್ನು ಅಲಂಕರಿಸುವ ಅನಿವಾರ್ಯತೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಾಗೇನಾದರೂ ಇದೆ ಎಂದಾದರೆ, beggingಆ ವ್ಯಕ್ತಿಗಳು ಎರಡನೆ ತಲೆಮಾರಿನ ವ್ಯಕ್ತಿಗಳನ್ನು ಬೆಳೆಸಿಲ್ಲವೆಂದರ್ಥ. ಯುವ ಜನಾಂಗದ ಮೇಲೆ ತಮ್ಮ ನಡೆ-ನುಡಿಗಳಿಂದ ಪ್ರೇರಣೆ ಬೀರಲಾಗದಂಥ-ಭಿನ್ನ ಕ್ಷೇತ್ರಗಳಲ್ಲಿ ಆಳವಾಗಿ ತೊಡಗಿಸಿಕೊಳ್ಳುವ ದಾರಿಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಡದವರು ಯಾವ ಹುದ್ದೆಯಲ್ಲಿದ್ದರೂ-ನಿರಂತರ ಹುದ್ದೆಗಳನ್ನು ಪಡೆಯುತ್ತಿದ್ದರೂ ಅದು ಅವರವರ ವೈಯಕ್ತಿಕ ಸಾಧನೆಯಾಗುತ್ತದೆಯೇ ಹೊರತು ಸಾಂಘಿಕ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಯಾಗಲಾರದು.

ಅಕಾಡೆಮಿ, ಪ್ರಾಧಿಕಾರ ಹಾಗೂ ಸರ್ಕಾರದ ಇತರೆ ಸಂಸ್ಥೆಗಳ ಅಧ್ಯಕ್ಷ, ನಿರ್ದೇಶಕ ಹುದ್ದೆಗಳನ್ನು ಒಂದು ಬಾರಿ ನಿರ್ವಹಿಸಿರುವವರನ್ನೇ ವರ್ಗಾಯಿಸುವ/ಪುನರ್ನೇಮಿಸುವ ಕ್ರಿಯೆಯು ಈಗಾಗಲೇ ಅಧಿಕಾರದಲ್ಲಿರುವವರನ್ನು ಬಿಟ್ಟು-ಅರ್ಹರಾದ ಒಬ್ಬ ವ್ಯಕ್ತಿಯೂ ಕರ್ನಾಟಕದಲ್ಲಿಲ್ಲ ಎಂದು ಹೇಳಿದಂತಾಗುತ್ತದೆ. ಈ ಬಗೆಯ ಅಪಕಲ್ಪನೆಗಳನ್ನು ಸಾಂಸ್ಕೃತಿಕ ವಾತಾವರಣದ ಹಿನ್ನೆಲೆಯುಳ್ಳವರು ಹುಟ್ಟು ಹಾಕಬಾರದು. ‘ಯಯಾತಿ’ ನಾಟಕವನ್ನು ಓದಿ, ನೋಡಿ, ಅಭಿನಯಿಸಿ, ನಿರ್ದೇಶಿಸಿ, ಬೋಧಿಸಿ, ವಿಮರ್ಶಿಸಿದವರು ಆ ‘ಯಯಾತಿ’ಯಂತಾಗಬಾರದಲ್ಲವೆ? ಸಾಂಸ್ಕೃತಿಕ ಕ್ಷೇತ್ರದಲ್ಲಿರುವವರು ಯಯಾತಿಯ ನೆನಪೇ ಇಲ್ಲದಂತೆ ವರ್ತಿಸುತ್ತಿರುವುದೇಕೆ? ಯುವ ಜನಾಂಗ ಈ ಎಲ್ಲವನ್ನು ಎಚ್ಚರದಿಂದ ಗಮನಿಸುತ್ತಿದೆ. ನೀವುಗಳು ಕೇಳಿದ ಪ್ರಶ್ನೆಗಳನ್ನೇ ಮತ್ತೆ ಯುವ ಜನಾಂಗವು ಇನ್ನೆಷ್ಟು ಕಾಲ ಮುಂದುವರಿಸಬೇಕು?

ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಅಧ್ಯಕ್ಷರಾದವರನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಗೆ, ಪುಸ್ತಕ ಪ್ರಾಧಿಕಾರಕ್ಕೆ, ನಾಟಕ ಅಕಾಡೆಮಿ ಅಧ್ಯಕ್ಷರಾದವರನ್ನು ರಂಗಾಯಣಕ್ಕೆ, ರಂಗಾಯಣದ ನಿರ್ದೇಶಕರಾದವರನ್ನು ನಾಟಕ ಅಕಾಡೆಮಿಗೆ, ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದವರನ್ನು ಮತ್ತೊಂದು ಹುದ್ದೆಗೆ ನೇಮಿಸಿದರೆ (ಹೀಗೆ ಒಂದು ಹುದ್ದೆಯನ್ನು ಅಲಂಕರಿಸಿರುವವರಿಗೆ ಮತ್ತೆ ಮತ್ತೆ ಮಣೆ ಹಾಕಿದರೆ) ಅದರಿಂದ ಯಾವ ಸಾಂಸ್ಕೃತಿಕ ಲಾಭ ಯಾರಿಗೆ ಎಂದು ಇದೇ ಸಂದರ್ಭದಲ್ಲಿ ಸ್ವತಃ ಆಕಾಂಕ್ಷಿಗಳು ಹಾಗು ಅವರ ಪರ ವಾದಿಸುವವರು ಮತ್ತು ಪ್ರಭಾವ ಬೀರಲು ಪ್ರಯತ್ನಿಸುವವರು ವಿವೇಚಿಸಬೇಕಿದೆ. ಅಕಾಡೆಮಿಗಳು, ಪ್ರಾಧಿಕಾರಗಳು ಸಾಂಸ್ಕೃತಿಕ ಕ್ಷೇತ್ರದವರ ಗಂಜಿ ಕೇಂದ್ರಗಳಾಗಿ ಬದಲಾಗದಿರಲಿ.

ಸರ್ಕಾರವಾದರೂ ಈ ಸಂದರ್ಭದಲ್ಲಿ ಕಠಿಣವಾದರೂ ನಿಷ್ಠುರವಾದ, ಸೂಕ್ತವಾದ ನಿರ್ಧಾರವನ್ನು ಕೈಗೊಂಡು ಇನ್ನುಮುಂದಾದರೂ ಮೇಲ್ಪಂಕ್ತಿಯನ್ನು ಹುಟ್ಟುಹಾಕಬೇಕಾಗಿದೆ.

ಕುವೆಂಪು ಹೆಸರಿನಲ್ಲಿ ದುಂದು ವೆಚ್ಚ ಬೇಕೆ?

– ಪ್ರದೀಪ್ ಮಾಲ್ಗುಡಿ

ಮೈಸೂರಿನ ರಂಗಾಯಣದ ಮಲೆಗಳಲ್ಲಿ ಮದುಮಗಳು

ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಡಾ.ಕೆ.ವೈ.ನಾರಾಯಣ ಸ್ವಾಮಿಯವರು ನೀಡಿದ ರಂಗರೂಪವು ಸಿ.ಬಸವಲಿಂಗಯ್ಯನವರ ನಿರ್ದೇಶನದಲ್ಲಿ 2010ರಲ್ಲಿ ಮೈಸೂರಿನ ರಂಗಾಯಣದಲ್ಲಿ ಪ್ರಯೋಗಗೊಂಡಿತ್ತು. ಕುವೆಂಪು ಅವರ ಹೆಸರು ಹಾಗೂ ಕಾದಂಬರಿಯ ಕಾರಣಕ್ಕೆ ಹಾಗೂ ಕನ್ನಡದಲ್ಲಿ ನಡೆಯುತ್ತಿರುವ ಹೊಸ ಪ್ರಯೋಗದಿಂದಾಗಿ ಇದು ಹೆಸರಾಯಿತು. ಅಂತೆಯೇ ರಂಗಾಯಣದ ಕಲಾವಿದರಿಂದ ಆ ಪ್ರಯೋಗವು ಅದ್ಭುತವಾಗಿ ಮೂಡಿಬಂದಿತ್ತು. ನಿರ್ದೇಶಕರ ವಿನ್ಯಾಸ, ಅದ್ದೂರಿ ಸೆಟ್ ಇತ್ಯಾದಿಗಳೂ ಇಲ್ಲಿ ಜೊತೆಗೂಡಿದ್ದವು.

ಆಗಲೇ ಈ ಪ್ರಯೋಗದ ಖರ್ಚಿನ ಬಗೆಗೆ ಭಿನ್ನಾಭಿಪ್ರಾಯಗಳು ಎದುರಾಗಿದ್ದವು. ಆದರೆ ಆಗ ನಾಡಿನ ಚಿಂತಕರು, ರಂಗಕರ್ಮಿಗಳು ಹಾಗೂ ಸಾಹಿತ್ಯಾಸಕ್ತರು ಪ್ರಯೋಗದ ಪರವಾಗಿ ವಾದಿಸಿದ್ದರು. ಬೆಂಗಳೂರಿನಲ್ಲಿ ಸಂಸ ಪತ್ರಿಕೆಯ ಸಂಪಾದಕರಾದ ಸುರೇಶ್ ಅವರು ಆಯೋಜಿಸಿದ್ದ ಸಂವಾದದಲ್ಲಿ ಡಾ.ಕೆ.ಮರುಳಸಿದ್ದಪ್ಪ, ಪ್ರೊ.ಕಿ.ರಂ.ನಾಗರಾಜ, ಡಾ.ಕೆ.ವೈ.ನಾರಾಯಣಸ್ವಾಮಿ, ಜಿ.ಕೆ.ಗೋವಿಂದರಾವ್, ಬೋಳುವಾರು ಮಹಮದ್ ಕುಂಞ, ಗುಡಿಹಳ್ಳಿ ನಾಗರಾಜ ಕ.ವೆಂ.ರಾಜಗೋಪಾಲ್, ಡಾ.ಬಿ.ವಿ.ರಾಜಾರಾಂ, ಎನ್.ಮಂಗಳ ಮೊದಲಾದ ರಂಗಾಸಕ್ತರು ಈ ಪ್ರದರ್ಶನದ ಕುರಿತು ಸಂವಾದ ನಡೆಸಿದ್ದರು. ಆಗ ಪ್ರೊ.ಕಿ.ರಂ.ನಾಗರಾಜ ಕುವೆಂಪು ಅವರ ಕವಿತೆಗಳನ್ನು ಪ್ರಯೋಗದಲ್ಲಿ ಬಳಸಿಕೊಳ್ಳದಿರುವ ಹಾಗೂ ಅವರ ಜಾತಿಯನ್ನು ಕುರಿತ ಚರ್ಚೆಗಳನ್ನು ಭಿನ್ನವಾಗಿ ಮುಖಾಮುಖಿಯಾಗಿದ್ದರು. ಆದರೆ ಆಗ ಕಿ.ರಂ.ರವರು ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಬೆಂಗಳೂರಿನ ಪ್ರಯೋಗದಲ್ಲೂ ಯಾವುದೇ ಬೆಲೆ ಇಲ್ಲ ಎಂಬುದು ಪ್ರಯೋಗದ ನಂತರ ನನ್ನ ಅರಿವಿಗೆ ಬಂತು.

ಬೆಂಗಳೂರಿನ ಮಲೆಗಳಲ್ಲಿ ಮದುಮಗಳು

ಬೆಂಗಳೂರಿನಲ್ಲಿ ನಡೆದ ಮಲೆಗಳಲ್ಲಿ ಮದುಮಗಳು ರಂಗರೂಪದ ಪ್ರದರ್ಶನದ ಬಗೆಗೆ ಇತ್ತೀಚೆಗೆ ಮಾಧ್ಯಮಗಳಲ್ಲಿ ವಿವಿಧ ಗಣ್ಯರು ಹಾಗೂ ಸಹೃದಯರು ಅನೇಕ ಬಗೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಪ್ರಯೋಗದ ಬಗೆಗಿನ ಸಕಾರಾತ್ಮಾಕ ಅಂಶಗಳೆಲ್ಲವನ್ನು ಒಪ್ಪಿಕೊಂಡು ನನ್ನ ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದೇನೆ. ಬೆಂಗಳೂರಿನ ಪ್ರದರ್ಶನವನ್ನು ಮೊಟ್ಟಮೊದಲ ಬಾರಿಗೆ ನೋಡಿದವರಿಗೆ ಹಾಗೂ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು malegalalli-1ಓದದವರಿಗೆ ಇದು ಅದ್ಭುತವಾದ ಪ್ರದರ್ಶನ ಎನ್ನಿಸಬಹುದೇನೋ? ಆದರೆ ಮೈಸೂರಿನ ಪ್ರಯೋಗವನ್ನು ನೋಡಿದವರಿಗೆ ಹಾಗೂ ಕಾದಂಬರಿಯನ್ನು ಓದಿದವರಿಗೆ ಇಲ್ಲಿನ ಪ್ರದರ್ಶನವು ನೀರಸವೆಸನಿಸುತ್ತದೆ. ಏಕೆಂದರೆ ನಿರಂತರವಾದ 9 ಗಂಟೆಗಳ ಪ್ರಯೋಗವೊಂದು ಯಶಸ್ವಿಯಾಗಬೇಕಾದರೆ ಅನುಭವೀ ನಟನಟಿಯರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯವಾಗುತ್ತದೆ. ಆಗ ಮಾತ್ರ ಇಂತಹ ಪ್ರಯೋಗಗಳ ಯಶಸ್ಸು ಸಾಧ್ಯವಾಗುತ್ತದೆ.

ಅಲ್ಲದೇ ಅನುಭವೀ ನಟರು ಸಿಕ್ಕರಷ್ಟೇ ಸಿ.ಬಸವಲಿಂಗಯ್ಯನವರ ಪ್ರದರ್ಶನವು ಯಶಸ್ಸಾಗುತ್ತದೆ. ಇಲ್ಲವಾದಲ್ಲಿ ಸಿ.ಬಸವಲಿಂಗಯ್ಯನವರು ಸಂಗೀತ, ರಂಗಪರಿಕರ, ವೇಷಭೂಷಣಗಳ ಮೇಲೆ ಹೆಚ್ಚು ಕೆಲಸ ಮಾಡುತ್ತಾರೆ. ಆ ಮೂಲಕ ಉಳಿದ ಕೊರತೆಗಳನ್ನು ನೀಗಿಸುವ ಪ್ರಯತ್ನವನ್ನು ಮಾಡುತ್ತಾರೆ. ಇಲ್ಲಿ ಅವರು ಯಶಸ್ಸನ್ನೂ ಸಾಧಿಸುತ್ತಾರೆ. ಈ ಮಾತುಗಳನ್ನು ತಾವರೆ ಕೆರೇಲಿ ತಾಳಿ ಕಟ್ಟೋಕೆ ಕೂಲೀನೇ ಹಾಗೂ ಕಾತಚಿ ಕಥಾರಂಗ ಪ್ರಯೋಗಗಳನ್ನು ನೆನಪಿಸಿಕೊಂಡು ಹೇಳುತ್ತಿದ್ದೇನೆ.

30.04.2013 ರಂದು ಬೆಂಗಳೂರಿನಲ್ಲಿ ಪ್ರಯೋಗವಾದ ಮಲೆಗಳಲ್ಲಿ ಮದುಮಗಳು ರಂಗರೂಪದ ಪ್ರದರ್ಶನ ತೀವ್ರವಾದ ನಿರಾಸೆಯನ್ನು ಮೂಡಿಸಿತು. ಪ್ರಸ್ತುತ ರಂಗಪ್ರಯೋಗದಲ್ಲಿ ಅನೇಕ ಅವಘಡಗಳು ಸಂಭವಿಸಿದವು. ಮೊಟ್ಟಮೊದಲು ನನಗೆ ಈ ಪ್ರಯೋಗದಲ್ಲಿ ಕುವೆಂಪುರವರ ಕಾದಂಬರಿಯ ಭಾಷೆಯೆ ಇಲ್ಲವೆನಿಸಿತು. ಪ್ರಯೋಗದಲ್ಲಿನ ನಟರ ಭಾಷಾ ಬಳಕೆ ಕಾದಂಬರಿಯ ಭಾಷೆಯ ಸಮೀಪವೂ ಸುಳಿಯಲಾಗಲಿಲ್ಲ. ಇಡೀ ಪ್ರಯೋಗದಲ್ಲಿ ಮಲೆನಾಡಿನ ಭಾಷೆಯ ಗೈರುಹಾಜರಿ ಎದ್ದು ಕಾಣುತ್ತಿತ್ತು. ಬೆಂಗಳೂರು, ಮೈಸೂರು, ಮಂಡ್ಯಗಳ ಸುತ್ತಮುತ್ತಲ ಭಾಷೆಯ ನಡುವೆ ಆಗೊಮ್ಮೆ, ಈಗೊಮ್ಮೆ ಮಲೆನಾಡಿನ ಭಾಷೆಯನ್ನು ಕೇಳಬಹುದಾಗಿತ್ತು. ಮಲೆನಾಡಿನ ಪರಿಸರದಲ್ಲಿ ಮಲೆನಾಡಿನ ಭಾಷೆಯನ್ನು ತರುವಲ್ಲಿ ಈ ಪ್ರಯೋಗ ಸೋತಿತು. ಅದು ರಂಗತಾಲೀಮಿನ ಕೊರತೆಯನ್ನು ಪ್ರಯೋಗದುದ್ದಕ್ಕೂ ಎತ್ತಿ ತೋರಿಸುತ್ತಿತ್ತು.

ಮೈಸೂರಿನಲ್ಲಿ ಅಭಿನಯಿಸಿದ ಪಾತ್ರಧಾರಿಗಳು ಹಾಗೂ ಬೀದಿ ರಂಗಭೂಮಿಯಲ್ಲಿ ಪಳಗಿದ ಕೆಲವು ನಟನಟಿಯರನ್ನು ಹೊರತು ಪಡಿಸಿದರೆ ಉಳಿದವರ ಅಭಿನಯ ಅತೃಪ್ತಿಕರವಾಗಿತ್ತು. ಸಂಭಾಷಣೆಯನ್ನು ಉರು ಹೊಡೆದು, ಅದನ್ನು ಪ್ರೇಕ್ಷಕರೆದುರು ಕಷ್ಟಪಟ್ಟು ಹೇಳಿದ ಮಾತ್ರಕ್ಕೆ ನಾಟಕವಾಗುವುದಿಲ್ಲ. ಹಾಗೆ ಉರು ಹೊಡೆದ ಸಂಭಾಷಣೆಗಳನ್ನು ಹೇಳಲು ಕೂಡ ನಟನಟಿಯರು ಸಜ್ಜಾಗಿರಬೇಕಾಗುತ್ತದೆ. ಇಲ್ಲಿನ ನಟನಟಿಯರಲ್ಲಿ ಬಹುತೇಕರು ಉರು ಹೊಡೆದ malegalalli-3ಸಂಭಾಷಣೆಯನ್ನು ಹೇಳಿಬಿಟ್ಟರೆ ಸಾಕಪ್ಪ ಎಂಬ ಭಾವನೆಯಲ್ಲೆ ನಟಿಸಿದರು. ಇನ್ನು ಕೆಲವರು ಸಂಭಾಷಣೆಯನ್ನು ಮರೆತು ಸುಮ್ಮನಾಗಿ, ಮುಂದಿನ ಸಂಭಾಷಣೆಯನ್ನು ಎದುರಿನ ಪಾತ್ರಧಾರಿಯೂ ಎತ್ತಿಕೊಳ್ಳದೆ ಆಭಾಸವಾಗುತ್ತಿತ್ತು. ಆದರೆ ಹೆಚ್ಚುಹೆಚ್ಚು ರಂಗತಾಲೀಮುಗಳು ನಡೆದಾಗ ಈ ಬಗೆಯ ಆಭಾಸಗಳು ಇಲ್ಲವಾಗುತ್ತವೆ. ನಿರಂತರವಾದ ರಂಗತಾಲೀಮಿನಿಂದ ಈ ಬಗೆಯ ತಪ್ಪುಗಳು ಪ್ರಯೋಗದಲ್ಲಿ ನುಸುಳದಂತೆ ನೋಡಿಕೊಳ್ಳಬಹುದು. ನುರಿತ ನಿರ್ದೇಶಕರಾದ ಸಿ.ಬಸವಲಿಂಗಯ್ಯನವರಿಂದಲೂ ಇದು ಸಾಧ್ಯವಾಗುತ್ತದೆ. ಆದರೆ ಈ ಪ್ರಯೋಗ ಮಾತ್ರ ಅದಕ್ಕೆ ವ್ಯತಿರಿಕ್ತವಾಗಿತ್ತು.

ಇನ್ನು ಸೂತ್ರಧಾರರಂತೂ ಇಡೀ ಪ್ರಯೋಗದಲ್ಲಿ ಎಲ್ಲೂ ತಮ್ಮ ಚಾಕಚಕ್ಯತೆಯನ್ನು ತೋರಿಸಲಿಲ್ಲ. ಇದುವರೆಗಿನ ಸೂತ್ರಧಾರರ ಪಾತ್ರಗಳನ್ನು ನೋಡಿರುವವರಿಗೆ ತಿಳಿದಿರುವಂತೆ, ಇವರು ಚುರುಕಾಗಿ ಇರಲಿಲ್ಲ. ಕಥನವು ವೇಗ ಪಡೆದುಕೊಳ್ಳಬೇಕಾದ ಸಂದರ್ಭದಲ್ಲೆಲ್ಲ ಇವರು ಪ್ರವೇಶಿಸಿ ಪ್ರಯೋಗದ ಟೆಂಪೋವನ್ನು ಹಾಳುಗೆಡವುತ್ತಿದ್ದರು. ದೇಯಿಯ ಸಾವಿನ ಸನ್ನಿವೇಶದಲ್ಲಿ ದೇಯಿಯ ಶವ! ವೇದಿಕೆಯಲ್ಲಿರದೇ, ದೃಶ್ಯ ಆರಂಭವಾಯಿತು. ನಂತರ ಲೈಟ್ಸ್‌ಗಳನ್ನು ಆಫ್ ಮಾಡಿ ದೇಯಿಯ ಶವವನ್ನು ಕರೆಸಲಾಯಿತು!

ಮುಸ್ಲಿಂ ಪಾತ್ರಧಾರಿಗಳಂತೂ ಇಲ್ಲಿನ ಪ್ರಯೋಗದಲ್ಲಿ ಮನುಷ್ಯರಂತೆ ಚಿತ್ರಿತವಾಗಿರಲೇ ಇಲ್ಲ. ಕ್ರೈಸ್ತ ಪಾದ್ರಿಗಳಂತೂ ಜೋಕರ್‌ಗಳಾಗಿ ಬದಲಾಗಿದ್ದರು. ಕಾದಂಬರಿಯಲ್ಲಿಲ್ಲದ ದೃಶ್ಯೀಕರಣ ಹಾಗೂ ಡಬಲ್ ಮೀನಿಂಗ್‌ಗಳಂತೂ ಪ್ರೇಕ್ಷಕರಿಂದ ಅಪಾರವಾದ ಚಪ್ಪಾಳೆಗಳನ್ನು ಗಿಟ್ಟಿಸಿಕೊಂಡವು. ಈ ರೀತಿಯ ಚಪ್ಪಾಳೆಗಳನ್ನು ಮೈಸೂರಿನಲ್ಲಿ ಕಾಣಲಾಗಿರಲಿಲ್ಲ. ಅಲ್ಲಿನ ನಟನಟಿಯರು ಯಾವ ಸಂದರ್ಭದಲ್ಲಿ ಏನನ್ನು, ಹೇಗೆ, ಎಷ್ಟನ್ನು ಅಭಿವ್ಯಕ್ತಿಸಬೇಕೆಂದು ಅರಿತವರಾಗಿದ್ದರು. ಅವರ ಪ್ರಬುದ್ಧತೆಯನ್ನು ನಿರ್ದೇಶಕರು ಇಲ್ಲಿನ ಪಾತ್ರಧಾರಿಗಳಿಗೆ ಕಲಿಸಬೇಕಿತ್ತು. ನಿದೇಶಕರ ಸಾಮರ್ಥ್ಯವಿರುವುದೇ ಹೊಸ ನಟರನ್ನು ಸೃಷ್ಟಿಸುವುದರಲ್ಲಿ. ಸಿ.ಬಸವಲಿಂಗಯ್ಯನವರ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ನಾಟಕ ನೋಡಲು ಹೋದ ನಮ್ಮಂತಹ ಅವರ ಅಭಿಮಾನಿಗಳಿಗೆ ಅದ್ಧೂರಿ ಸೆಟ್ ಹಾಗೂ ಸಿ.ಡಿ.ಸಂಗೀತ ನಿರಾಶೆ ಮೂಡಿಸಿತು. ರಂಗಸಂಗೀತದ ಸೊಗಡಿಲ್ಲದ ಗೇಯಗೀತೆಗಳು ಪ್ರಯೋಗಕ್ಕೆ ಪೂರಕವಾಗಿದ್ದರೂ ರಂಗಸಂಗೀತದ ಕೊರತೆ ಕಿವಿಗೆ ಕೇಳಿಸುತ್ತಿತ್ತು.

ಇನ್ನು ನಟನಟಿಯರ ಸಮಸ್ಯೆಯನ್ನು ಹೇಳುವಂತಿಲ್ಲ. ಪ್ರೇಕ್ಷಕರು ತಮ್ಮ ಸೀಟ್‌ಗಾಗಿ ಓಡುತ್ತಿದ್ದರೆ, ಪಾತ್ರಧಾರಿಗಳೂ ನಟಿಸಲು ಓಡುತ್ತಿದ್ದರು. ಕುವೆಂಪು ಅವರ ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ ಎಂಬ ಮಾತು ನೆನಪಾಗುತ್ತಿತ್ತು.

ಬಸವಲಿಂಗಯ್ಯನವರ ನಾಟಕಗಳ ಆಯ್ಕೆಯೇ ಇದುವರೆಗೆ ಕನ್ನಡ ರಂಗಭೂಮಿಯಲ್ಲಿ ಒಂದು ಮಹತ್ತರ ಸಂಚಲನವನ್ನು ಉಂಟು ಮಾಡುತ್ತಿದ್ದವು. ಅವರ ಅಪ್ರತಿಮ ಕ್ರಿಯಾಶೀಲತೆಗೆ ಕುಸುಮಬಾಲೆ, ಕುಲಂ, ಅಗ್ನಿ ಮತ್ತು ಮಳೆ, ಮನುಷ್ಯ ಜಾತಿ ತಾನೊಂದೆವಲಂ ಮೊದಲಾದವುಗಳನ್ನು ಉದಾಹರಿಸಬಹುದು. ಇಂತಹ ಆಯ್ಕೆಯ ಹಿಂದಿನ ಸೂಕ್ಷ್ಮತೆಗಳು ರಂಗಭೂಮಿಯ ಜೀವಂತಿಕೆ ಹಾಗೂ ಚಲನೆಗೆ ಅವಶ್ಯಕವಾದುದು. ಕುಸುಮ ಬಾಲೆಯಿಂದ, ಮಲೆಗಳಲ್ಲಿ ಮದುಮಗಳುವರೆಗಿನ ಬಸವಲಿಂಗಯ್ಯನವರ ಆಯ್ಕೆಗಳೆ ರಂಗಕರ್ಮಿಯೋರ್ವನ ಪ್ರಗತಿಪರತೆಯನ್ನು ಸೂಚಿಸುವಂತೆ, ರಂಗದಲ್ಲಿ ಅವರ ತೊಡಗುವಿಕೆಯನ್ನೂ ಮಂಡಿಸುತ್ತದೆ. ಆದರೆ ಮೈಸೂರಿನ ಮಲೆಗಳಲ್ಲಿ ಮದುಮಗಳು ಬೆಂಗಳೂರಿನಲ್ಲಿ ನೀರಸವಾದಳು. ಅದಕ್ಕೆ ಅನೇಕ ಕಾರಣಗಳಿವೆ. ಮೈಸೂರಿನ ರಂಗಾಯಣ ಕಲಾವಿದರ ಕೊರತೆ ಇಲ್ಲಿನ ಪ್ರಯೋಗದಲ್ಲಿ ಎದ್ದು ಕಾಣುತ್ತಿತ್ತು. ಹಾಗೆಯೇ ಕಾದಂಬರಿಯಲ್ಲಿ ಇಲ್ಲದ ಡಬ್ಬಲ್ ಮೀನಿಂಗ್ ಅನ್ನು ಪ್ರೇಕ್ಷಕರು ಕಲ್ಪಿಸಿಕೊಳ್ಳುವಂತೆ ಇಲ್ಲಿನ ನಟರ ಅಭಿವ್ಯಕ್ತಿ ಇತ್ತು. ಅನೇಕ ಕಡೆಗಳಲ್ಲಿ ಇದು ಕುವೆಂಪು ಅವರ ಮಲೆಗಳಲ್ಲಿ ಮದುಮಗಳುವಿನ ವಿಕೃತ ರೂಪವೆನಿಸುತ್ತಿತ್ತು. ನಾಟಕದ ಅಪಾರ್ಥಗಳು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡವು. ಆದರೆ ಈ ಬಗೆಯ ಡಬಲ್ ಮೀನಿಂಗ್‌ಗಳಿಂದ ಚಪ್ಪಾಳೆ ಗಿಟ್ಟಿಸಿದ ಮಾತ್ರಕ್ಕೆ ಈ ಪ್ರಯೋಗವು ಯಶಸ್ವಿಯಾದಂತೆಯೇ? ಎಂಬ ಪ್ರಶ್ನೆಯನ್ನು ನನಗೆ ಈ ಪ್ರಯೋಗವು ಮೂಡಿಸಿತು.

ಕುವೆಂಪು ವಿಚಾರಧಾರೆಗೆ ಅಪಚಾರವಾಗಿಲ್ಲವೇ?

ಕುವೆಂಪು ಅವರು ಅಂದಿನ ಕಾಲದಲ್ಲೇ ಮದುವೆಯ ಸಂದರ್ಭದಲ್ಲಿ ಉಂಟಾಗುತ್ತಿರುವ ದುಂದು ವೆಚ್ಚ ಹಾಗೂ ಪುರೋಹಿತಶಾಹಿ ಶೋಷಣೆಗಳನ್ನು ವಿರೋಧಿಸಿ ಸರಳ ವಿವಾಹಗಳನ್ನು ಪ್ರೋತ್ಸಾಹಿಸಲು ಮಂತ್ರ ಮಾಂಗಲ್ಯವನ್ನು ಜಾರಿಗೆ ತರಬೇಕೆಂದು ಮನವಿ ಮಾಡಿಕೊಂಡರು. ಆದರೆ ಅವರ ಕಾದಂಬರಿಯ ರಂಗರೂಪಕ್ಕೆ ಬೆಂಗಳೂರಿನಲ್ಲಿ 2013ರ ಏಪ್ರಿಲ್ 18 ರಿಂದ ಜೂನ್ 3 ರವರೆಗೆ ನಡೆದ ಪ್ರಯೋಗಕ್ಕಾಗಿ 70 ಲಕ್ಷ ರೂಗಳನ್ನು ಖರ್ಚು ಮಾಡುತ್ತಿರುವುದು ಕುವೆಂಪು ಅವರ ವಿಚಾರಧಾರೆಗಳಿಗೆ ಸಂಪೂರ್ಣ ವ್ಯತಿರಿಕ್ತವಾಗಿಲ್ಲವೇ? ಇನ್ನಾದರೂ ಪಜ್ಞಾವಂತಿಕೆಯಿಂದ ನಾವೆಲ್ಲರೂ ವರ್ತಿಸಬೇಕಿದೆಯಲ್ಲವೇ?

ಈ ಪ್ರಯೋಗ ಬೆಂಗಳೂರಿನಲ್ಲಿ ಆರಂಭವಾದಾಗ ಬೆಂಗಳೂರೂ ಸೇರಿದಂತೆ ರಾಜ್ಯದ ವಿವಿಧೆಡೆ ನೀರಿಗಾಗಿ ಹಾಹಾಕಾರವೆದ್ದಿತ್ತು. ಇಂತಹ ಸಂದರ್ಭದಲ್ಲಿ ನಾಳೆಯ ನೀರಿನ ಸಮಸ್ಯೆಯನ್ನು ಬಿಟ್ಟು, ಕುವೆಂಪುರವರ ಹೆಸರಿನಲ್ಲಿ ಬೊಕ್ಕಸದ 70 ಲಕ್ಷಗಳನ್ನು ಈಗಾಗಲೇ ಆಗಿರುವ ಪ್ರಯೋಗಕ್ಕಾಗಿ ಸುರಿದಿರುವುದು ಸರಿಯೇ? ಹಾಗೊಂದು ವೇಳೆ ಈ ನಾಟಕವನ್ನು ಮಾಡಿಯೆ ತೀರಬೇಕೆಂದಾದರೆ ಮೈಸೂರಿನಲ್ಲಿ ಈಗಾಗಲೇ 40 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಮಾಡಿದ ಸೆಟ್‌ಗಳನ್ನು ಹಾಗೆಯೇ ಉಳಿಸಿಕೊಂಡು ಅಲ್ಲಿಯೇ ಸಾಂದರ್ಭಿಕವಾಗಿ ಈ ಪ್ರಯೋಗವನ್ನು ಮಾಡಬಹುದಾಗಿತ್ತಲ್ಲವೇ?

ಅರ್ಥವಾಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದ್ವಂದ್ವ ನಿಲುವು

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅನುದಾನ ನೀಡುವ ರಂಗಪ್ರಯೋಗಗಳಿಗೆ ಪ್ರವೇಶ ಶುಲ್ಕವನ್ನು ಇಡುವಂತಿಲ್ಲ ಎಂಬ malegalalli-2ನಿಯಮವನ್ನು ಎಲ್ಲ ರಂಗತಂಡಗಳಿಗೆ ವಿಧಿಸಲಾಗಿದೆ. ಆದರೆ ಈ ನಿಯಮವನ್ನು ಈ ಪ್ರಯೋಗದಲ್ಲಿ ಮೀರಲಾಗಿದೆ. ಅಲ್ಲದೆ ಪ್ರವೇಶಕ್ಕೆ ನೂರು ರೂಪಾಯಿ ನಿಗದಿ ಮಾಡಿ, ಮಲೆಗಳಲ್ಲಿ ಮದುಮಗಳು ಪ್ರಯೋಗದ ಹಾಡುಗಳ ಸಿ.ಡಿ.ಯನ್ನು ನೀಡುವುದಾಗಿ ಘೋಷಿಸಲಾಗಿತ್ತು. ಆದರೆ ಅನೇಕರಿಗೆ ಈ ಸಿ.ಡಿ.ಯನ್ನೂ ಕೂಡ ನೀಡಿಲ್ಲ. ಕೇಳಿದರೆ ಆಗ ಬಾ, ಈಗ ಬಾ, ನಾಳೆ ಬಾ ಅಥವಾ ಕಲಾಕ್ಷೇತ್ರಕ್ಕೆ ಹೋಗಿ ಎಂಬ ಉತ್ತರವನ್ನು ನೀಡಲಾಗಿದೆ.

ಯುವಕರು ಹಾಗೂ ಹೊಸ ತಂಡಗಳು ಸಂಸ್ಕೃತಿ ಇಲಾಖೆಯ ಮೆಟ್ಟಿಲು ಹಾಗೂ ಕಲ್ಲುಹಾಸುಗಳನ್ನು ಸವೆಸಿದರೂ ದೊರೆಯದ ೨೦ ಸಾವಿರ ರೂಪಾಯಿಗಳ ಅನುದಾನ ಕೋಟಿ ಹಾಗೂ ಲಕ್ಷಗಳ ಲೆಕ್ಕದಲ್ಲಿ ಮತ್ತೆ ಮತ್ತೆ ಸಿ.ಬಸವಲಿಂಗಯ್ಯನವರಿಗೇ ಸಿಗುತ್ತಿರುವುದೇಕೆ? ಇರುವ ಎಲ್ಲ ಅವಕಾಶಗಳನ್ನೂ ಒಬ್ಬರಿಗೆ ನೀಡಿದರೆ ಸಾಮಾಜಿಕ ನ್ಯಾಯದ ತಕ್ಕಡಿ ವ್ಯತಿರಿಕ್ತವಾಗುವುದಿಲ್ಲವೇ? ಇದೇ 70 ಲಕ್ಷ ರೂಪಾಯಿಗಳನ್ನು ತಲಾ 20 ಸಾವಿರದಂತೆ ಹೊಸ ತಂಡ ಹಾಗೂ ನಿರ್ದೇಶಕರಿಗೆ ನೀಡಿದ್ದರೆ 350 ನಾಟಕಗಳು ಹಾಗೂ 350 ತಂಡಗಳಿಗೆ ಅವಕಾಶ ನೀಡಬಹುದಾಗಿತ್ತಲ್ಲವೇ? ಆ ಮೂಲಕ ಕರ್ನಾಟಕದಲ್ಲಿ ಹೊಸ ರಂಗಕ್ರಾಂತಿಯನ್ನೇ ಮಾಡಬಹುದಾಗಿತ್ತಲ್ಲವೇ? ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಈ ಇಬ್ಬಂದಿತನವನ್ನು ಪ್ರಶ್ನಿಸುವವರಾರು ಇಲ್ಲವೇ?

ಅಕಾಡೆಮಿಗಳು, ಪ್ರಾಧಿಕಾರಗಳ ನೇಮಕಾತಿ ಸಮಯದಲ್ಲಿ ಹೊಸಬರಿಗೆ ಅವಕಾಶ ಸಿಗಲಿ

– ಪ್ರದೀಪ್ ಮಾಲ್ಗುಡಿ

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಇತರೆ ಅಕಾಡೆಮಿ, ಪ್ರಾಧಿಕಾರ, ನಿಗಮ ಮಂಡಳಿಗಳು, ರಂಗಾಯಣದ ಕೇಂದ್ರಗಳಿಗೆ ಸರ್ಕಾರವು ಅಧ್ಯಕ್ಷರು, ನಿರ್ದೇಶಕರನ್ನು ಆದಷ್ಟು ಶೀಘ್ರವಾಗಿ ನೇಮಿಸಬೇಕಿದೆ. ಅದರಲ್ಲೂ ಸಾಂಸ್ಕೃತಿಕ ಮಹತ್ವವುಳ್ಳ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ರಂಗಾಯಣದಂತಹ ಸಂಸ್ಥೆಗಳು ದೀರ್ಘಕಾಲ ಖಾಲಿ ಉಳಿಯಬಾರದು. ಅದರಿಂದ ಸಾಂಸ್ಕೃತಿಕ ಕ್ಷೇತ್ರ ಬಡವಾಗುತ್ತದೆ. ಇದು ಕನ್ನಡ ಸಂಸ್ಕೃತಿಗೆ ಭವಿಷ್ಯದಲ್ಲಿ ಹಾನಿಯುಂಟುಮಾಡಬಲ್ಲುದು. ಆದರೆ ಈ ನೇಮಕದ ವಿಷಯದಲ್ಲಿ ಇದುವರೆಗೆ ಅನೇಕ ತಪ್ಪುಗಳು ಘಟಿಸಿವೆ.

ಸಾಂಸ್ಕೃತಿಕ ವಲಯದ ಬಹುತೇಕ ವಿದ್ವಾಂಸರು, ರಂಗಕರ್ಮಿಗಳು, ರಂಗಾಸಕ್ತರು ಈಗಾಗಲೇ ಒಂದು ಹುದ್ದೆಯನ್ನು ಪಡೆದಿರುವ ವ್ಯಕ್ತಿ ಮತ್ತೆ ಮತ್ತೆ ಅದೇ ಹುದ್ದೆಯಲ್ಲಿ ಮುಂದುವರೆಯುವುದು ಹಾಗೂ ಈಗಿನ ಅಕಾಡೆಮಿಗಳು, ಪ್ರಾಧಿಕಾರಗಳು ಮೊದಲಾದವುಗಳಿಂದ ಒಂದರಿಂದ ಮತ್ತೊಂದಕ್ಕೆ ವರ್ಗಾವಣೆ ಮಾಡುವುದನ್ನು ಅಂತರಂಗ-ಬಹಿರಂಗದಲ್ಲಿ ಖಂಡಿಸಿದ್ದಾರೆ. ಆದರೆ, ಈ ಯಾವ ಖಂಡನೆಗಳೂ ಅಧಿಕಾರದ ಆಕಾಂಕ್ಷಿಗಳ ಮಂಡನೆಗಳ ಮುಂದೆ ಪರಿಣಾಮಕಾರಿಯಾಗುತ್ತಿಲ್ಲ.

ಇರುವ ಎಲ್ಲ ಸಾಂಸ್ಕೃತಿಕ ಹುದ್ದೆಗಳನ್ನು ಅಲಂಕರಿಸುವ ಅನಿವಾರ್ಯತೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಾಗೇನಾದರೂ ಇದೆ ಎಂದಾದರೆ, ಆ ವ್ಯಕ್ತಿಗಳು ಎರಡನೆ ತಲೆಮಾರಿನ ವ್ಯಕ್ತಿಗಳನ್ನು ಬೆಳೆಸಿಲ್ಲವೆಂದರ್ಥ. ಯುವ ಜನಾಂಗದ ಮೇಲೆ ತಮ್ಮ ನಡೆ-ನುಡಿಗಳಿಂದ ಪ್ರೇರಣೆ ಬೀರಲಾಗದಂಥ-ಭಿನ್ನ ಕ್ಷೇತ್ರಗಳಲ್ಲಿ ಆಳವಾಗಿ ತೊಡಗಿಸಿಕೊಳ್ಳುವ ದಾರಿಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಡದವರು ಯಾವ ಹುದ್ದೆಯಲ್ಲಿದ್ದರೂ-ನಿರಂತರ ಹುದ್ದೆಗಳನ್ನು ಪಡೆಯುತ್ತಿದ್ದರೂ ಅದು ಅವರವರ ವೈಯಕ್ತಿಕ ಸಾಧನೆಯಾಗುತ್ತದೆಯೇ ಹೊರತು ಸಾಂಘಿಕ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಯಾಗಲಾರದು.

ಅಕಾಡೆಮಿ, ಪ್ರಾಧಿಕಾರ ಹಾಗೂ ಸರ್ಕಾರದ ಇತರೆ ಸಂಸ್ಥೆಗಳ ಅಧ್ಯಕ್ಷ, ನಿರ್ದೇಶಕ ಹುದ್ದೆಗಳನ್ನು ಒಂದು ಬಾರಿ ನಿರ್ವಹಿಸಿರುವವರನ್ನೇ ವರ್ಗಾಯಿಸುವ/ಪುನರ್ನೇಮಿಸುವ ಕ್ರಿಯೆಯು ಈಗಾಗಲೇ ಅಧಿಕಾರದಲ್ಲಿರುವವರನ್ನು ಬಿಟ್ಟು-ಅರ್ಹರಾದ ಒಬ್ಬ ವ್ಯಕ್ತಿಯೂ ಕರ್ನಾಟಕದಲ್ಲಿಲ್ಲ ಎಂದು ಹೇಳಿದಂತಾಗುತ್ತದೆ. ಈ ಬಗೆಯ ಅಪಕಲ್ಪನೆಗಳನ್ನು ಸಾಂಸ್ಕೃತಿಕ ವಾತಾವರಣದ ಹಿನ್ನೆಲೆಯುಳ್ಳವರು ಹುಟ್ಟು ಹಾಕಬಾರದು. ಯಯಾತಿ’ ನಾಟಕವನ್ನು ಓದಿ, ನೋಡಿ, ಅಭಿನಯಿಸಿ, ನಿರ್ದೇಶಿಸಿ, ಬೋಧಿಸಿ, ವಿಮರ್ಶಿಸಿದವರು ಆ ಯಯಾತಿ’ಯಂತಾಗಬಾರದಲ್ಲವೆ? ಸಾಂಸ್ಕೃತಿಕ ಕ್ಷೇತ್ರದಲ್ಲಿರುವವರು ಯಯಾತಿಯ ನೆನಪೇ ಇಲ್ಲದಂತೆ ವರ್ತಿಸುತ್ತಿರುವುದೇಕೆ? ಯುವ ಜನಾಂಗ ಈ ಎಲ್ಲವನ್ನು ಎಚ್ಚರದಿಂದ ಗಮನಿಸುತ್ತಿದೆ. ನೀವುಗಳು ಕೇಳಿದ ಪ್ರಶ್ನೆಗಳನ್ನೇ ಮತ್ತೆ ಯುವ ಜನಾಂಗವು ಇನ್ನೆಷ್ಟು ಕಾಲ ಮುಂದುವರಿಸಬೇಕು?

ಸರ್ಕಾರವಾದರೂ ಈ ಸಂದರ್ಭದಲ್ಲಿ ಕಠಿಣವಾದರೂ ನಿಷ್ಠುರವಾದ, ಸೂಕ್ತವಾದ ನಿರ್ಧಾರವನ್ನು ಕೈಗೊಂಡು ಇನ್ನುಮುಂದಾದರೂ ಮೇಲ್ಪಂಕ್ತಿಯನ್ನು ಹುಟ್ಟುಹಾಕಬೇಕಾಗಿದೆ.

ಮುಂದಿನ ರಂಗಾಯಣದ ನಿರ್ದೇಶಕರು ಯಾರು?

ಕಳೆದ ನಾಲ್ಕು ಬಾರಿಯಿಂದ ರಂಗಾಯಣದ ನಿರ್ದೇಶಕರ ಸ್ಥಾನಕ್ಕೆ ಜನಾರ್ಧನ್ ಹೆಸರು ಮೊದಲ ಆದ್ಯತೆಯಲ್ಲಿರುತ್ತದೆ. ಆದರೆ ಮತ್ತಾರದ್ದೋ ನೇಮಕ ಆಗುತ್ತದೆ. ಅವರು ನಿರ್ದೇಶಕರಾಗದಿರುವುದಕ್ಕೆ ಕಾರಣಗಳೇನಿರಬಹುದು? ಕೇಳಿದರೆ ಆಯ್ಕೆಯ ಪ್ರಕ್ರಿಯೆಯಲ್ಲಿದ್ದವರೆಲ್ಲ ಇಬ್ಬಂದಿತನ ಮಾಡಿದರೆನಿಸುತ್ತದೆ. ಅವರೆ ಆಯ್ಕೆ ಆಗುತ್ತಾರೆಂದು ಹೇಳುತ್ತಲೆ ಆಗದಂತೆ ನೋಡಿಕೊಂಡಿದ್ದಾರೆ. ಪಿಳ್ಳೆ ನೆವಗಳನ್ನು ಹೇಳುತ್ತ ಬಂದಿದ್ದಾರೆ. ಬಿ.ವಿ.ಕಾರಂತರ ಶಿಷ್ಯರಲ್ಲೊಬ್ಬರಾದ ಜನ್ನಿ ದೇಶದ ಪ್ರಸಿದ್ಧ ರಂಗಕರ್ಮಿಗಳಲ್ಲೊಬ್ಬರು. ಒಬ್ಬ ಗಾಯಕನಾಗಿ ದಲಿತ-ಬಂಡಾಯ ಕಾವ್ಯ ಹಾಗೂ ತತ್ವಪದ ಪರಂಪರೆಗೆ ಹೊಸಜೀವ ನೀಡಿದವರು. ಸಿ.ಅಶ್ವಥ್‌ರಂತ ಸಂಗೀತ ನಿರ್ದೇಶಕರು ಜನ್ನಿಯ ಸಹಚರ್ಯದಿಂದ ತಮ್ಮ ಸಂಗೀತದಲ್ಲಿ ಹೊಸ ಸಾಧ್ಯತೆಗಳನ್ನು ಕಂಡವರು. ರಂಗಸಂಗೀತಕ್ಕೆ ಹೊಸತನವನ್ನು ತಂದವರಲ್ಲಿ ಜನ್ನಿ ಪ್ರಮುಖರು. ಕುಸುಮಬಾಲೆ ಕಾದಂಬರಿಯನ್ನು ಮೊದಲು ರಂಗಕ್ಕೆ ಅಳವಡಿಸಿದವರು. ದಲಿತ ಸಂಘರ್ಷ ಸಮಿತಿಗೆ ಮುಖವಾಣಿಯಂತ ಗಾಯಕರು. ಕನ್ನಡದ ಅಲಕ್ಷಿತ ಕಾವ್ಯಕ್ಕೆ ಸಂಗೀತ ಸಂಯೋಜಿಸಿದವರು. ಪ್ರಸಿದ್ಧ ರಂಗನಿರ್ದೇಶಕರು. ಬಸವಲಿಂಗಯ್ಯನವರ ನಂತರ ಮತ್ತೊಂದು ದಲಿತ ಪ್ರತಿಭೆ ರಂಗಾಯಣಕ್ಕೆ ಬೇಕಿಲ್ಲವೇ?

ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಲಿತ ಜನ್ನಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಂಗಭೂಮಿ ಮತ್ತು ರಂಗಸಂಗೀತದಲ್ಲಿ ಪ್ರಸಿದ್ಧರಾದವರು. ಇಂಥವರಿಗೆ ಮೈಸೂರಿನಲ್ಲೆ ಇರುವ ರಂಗಾಯಣದ ನಿರ್ದೇಶಕರಾಗುವ ಅರ್ಹತೆಯಿಲ್ಲವೇ? ದಲಿತ, ಬುಡಕಟ್ಟು, ಅಲೆಮಾರಿ ಹಾಗೂ ಬೀದಿರಂಗಭೂಮಿಯಲ್ಲಿ ಪರಿಣಿತರಾದ ಜನ್ನಿ ಅಭಿಜಾತ ರಂಗಭೂಮಿಯಲ್ಲೂ ಪಳಗಿದವರು. ಅವರ ನಾಲ್ಕು ದಶಕಗಳ ರಂಗಾನುಭವ ರಂಗಾಯಣಕ್ಕೆ ಹೊಸ ಸತ್ವವನ್ನು ನೀಡಬಲ್ಲದು. ಪ್ರತಿಭಾವಂತನೊಬ್ಬನನ್ನು ಮತ್ತೆ ಮತ್ತೆ ರಂಗಾಯಣದಿಂದ ದೂರವಿಡುತ್ತಿರುವುದು ಜಾತಿಯ ಕಾರಣದಿಂದಲೋ ಅಥವಾ ಹೊಸ ವಿಚಾರಗಳು ರಂಗಾಯಣದಲ್ಲಿ ಸೃಜನಗೊಳ್ಳದಿರುವ ರಾಜಕಾರಣದಿಂದಲೋ ತಿಳಿಯುತ್ತಿಲ್ಲ.

ರಂಗಾಯಣದ ವಿಕೇಂದ್ರೀಕರಣ ಹಾಗೂ ವರ್ಗಾವಣೆ:

ರಂಗಾಯಣದ ವಿಕೇಂದ್ರೀಕರಣದ ಸಂದರ್ಭದಲ್ಲಿ ಮೈಸೂರಿನ ರಂಗಾಯಣದ ಕಲಾವಿದರ ವ್ಯಾಪಕವಾದ ಅನುಭವವನ್ನು ಶಿವಮೊಗ್ಗ ಹಾಗೂ ಧಾರವಾಡ ಶಾಖೆಗಳಲ್ಲಿ ಬಳಸಿಕೊಳ್ಳಬೇಕಾಗಿದೆ. ಬಿ.ವಿ.ಕಾರಂತ, ಸಿ.ಬಸವಲಿಂಗಯ್ಯ, ಪ್ರಸನ್ನ, ಚಿದಂಬರರಾವ್ ಜಂಬೆ ಮೊದಲಾದ ನಿರ್ದೇಶಕರುಗಳ ಅಡಿಯಲ್ಲಿ ಕಾರ್ಯ ನಿರ್ವಹಿಸಿರುವ, ಅಭಿನಯಿಸಿರುವ ಈ ನಟ ನಟಿಯರು ಭಾರತೀಯ, ಪಾಶ್ಚಿಮಾತ್ಯ ರಂಗಕರ್ಮಿಗಳು ಮತ್ತು ರಂಗಸಿದ್ಧಾಂತಗಳು ಹಾಗೂ ಅವುಗಳ ಪ್ರಾಯೋಗಿಕ ಸಾಧ್ಯತೆಗಳು-ಸಮಸ್ಯೆಗಳನ್ನು ಅರಿತವರು. ಹಾಗೆಯೇ, ಅನೇಕ ರಂಗಶಿಬಿರಗಳಲ್ಲಿ, ಧ್ವನಿ-ಬೆಳಕು ಪ್ರದರ್ಶನಗಳಲ್ಲಿ, ರಂಗಕ್ಕೆ ಸಂಬಂಧಿಸಿದ ಕಾರ್ಯಾಗಾರಗಳಲ್ಲಿ ಭಾಗವಹಿಸುವ ಮೂಲಕ ಈ ನಟನಟಿಯರು ಕರ್ನಾಟಕದ ರಂಗಭೂಮಿಯ ಬೆಳವಣಿಗೆಯ ದೃಷ್ಟಿಯಿಂದ ಅಸಂಖ್ಯ ಸಾಧ್ಯತೆಗಳನ್ನು ಸೃಷ್ಟಿಸಬಲ್ಲರು.

ಆದರೆ ಅವರನ್ನು ಹೊಸ ರಂಗಾಯಣದ ಘಟಕಗಳಲ್ಲಿ ದ್ವಿತೀಯ ದರ್ಜೆಯವರಂತೆ ಪರಿಗಣಿಸಬಾರದು. ರಂಗಾಯಣದ ನಿರ್ದೇಶಕರ ಆಯ್ಕೆಯಲ್ಲಿ ಈ ಹಿರಿಯ ಕಲಾವಿದರಿಗೆ ಅವಮಾನ ಮಾಡುವಂಥ ಕೆಲಸಗಳಾಗಬಾರದು. ಅವರ ಅನುಭವವನ್ನು ಈ ಶಾಖೆಗಳು ಬಳಸಿಕೊಳ್ಳುವಂಥ ವಾತಾವರಣ ನಿರ್ಮಾಣವಾಗಬೇಕು. Kalamandira_Mysoreಈಗಿರುವ ಈ ಕಲಾವಿದರು ಏಳೆಂಟು ವರ್ಷಗಳಲ್ಲಿ ನಿವೃತ್ತರಾಗಲಿದ್ದಾರೆ. ಇವರ ನಂತರ ರಂಗಾಯಣ ಹೊಸ ಕಲಾವಿದರನ್ನು ನೇಮಿಸಿಕೊಂಡು, ಅವರಿಗೆ ನಂತರ ತರಬೇತಿ ನೀಡುವುದು, ಇತ್ಯಾದಿ ಪ್ರಯೋಗಗಳಿಗಿಂಥ ಇವರ ಗರಡಿಯಲ್ಲಿ ಯುವ ಕಲಾವಿದರನ್ನು ನೇಮಿಸಿಕೊಂಡು, ಅವರನ್ನು ರಂಗಾಯಣಗಳನ್ನು ಕಟ್ಟುವ ನಿಟ್ಟಿನಲ್ಲಿ ಕ್ರಿಯಾಶೀಲಗೊಳಿಸಬೇಕಾದ ಅಗತ್ಯವಿದೆ.

ರಂಗಾಯಣದ ಕ್ರಿಯಾಶೀಲತೆಯನ್ನು ಹೆಚ್ಚಿಸುವಲ್ಲಿ ನಿಲಯದ ಕಲಾವಿದರ ಪಾತ್ರ ದೊಡ್ಡದು. ಕಾಲಕಾಲಕ್ಕೆ ವಿವಿಧ ವಯೋಮಾನದ, ಭಿನ್ನ ಅನುಸಂಧಾನದ ನಿರ್ದೇಶಕರುಗಳೊಡನೆ ಕಲಾವಿದರು ತಮ್ಮ ಸಾಮರ್ಥ್ಯವನ್ನು ಸಾಬೀತುಗೊಳಿಸಿದ್ದಾರೆ. ಬಂದು-ಹೋಗುವ ನಿರ್ದೇಶಕರುಗಳ ಜೊತೆ ಅಲ್ಲಿಯೇ ಖಾಯಂ ಆಗಿರುವ ಕಲಾವಿದರು ತಗಾದೆ ತೆಗೆದದ್ದೂ ಉಂಟು. ಕಲಾವಿದರ ಅನುಭವ ರಂಗಾಯಣದ ಬೆಳವಣಿಗೆಗೆ ಅವಶ್ಯಕ. ಅದರಲ್ಲೂ ಈಗ ಹೊಸದಾಗಿ ಆರಂಭವಾಗುತ್ತಿರುವ ಶಾಖೆಗಳಿಗೆ ಈ ಅನುಭವೀ ಕಲಾವಿದರು ಹಾಗೂ ಯುವ ಕಲಾವಿದರನ್ನು ಬೆಳೆಸುವ ಕೆಲಸ ಅಗತ್ಯವಾಗಿದೆ. ಏಕೆಂದರೆ, ರಂಗಾಯಣದ ’ಗೋರಾ’ ರಂಗ ಪ್ರಯೋಗದಲ್ಲಿ 16,17,18 ವಯೋಮಾನದ ಪಾತ್ರಗಳನ್ನು 35-45 ರ ಆಸುಪಾಸಿನ ಪ್ರಾಯದ ಪಾತ್ರಧಾರಿಗಳು ಅಭಿನಯಿಸುತ್ತಿದ್ದರು. ಇದು ಪ್ರೇಕ್ಷಕರಿಗಿರಲಿ, ಕಲಾವಿದರಿಗೇ ಮುಜುಗರ ತರುತ್ತಿತ್ತು.

ಸ್ವತಃ ರಂಗಭೂಮಿಯ ನಟಿ ಉಮಾಶ್ರೀ ತಮ್ಮ ರಂಗ ಗುರುಗಳಾದ ಸಿ.ಜಿ.ಕೆ.ಯ ನೆನಪಿಗಾದರೂ ತಮಗಿಂತ ಹಿರಿಯ ಸಿ.ಜಿ.ಕೆ. ರಂಗಶಿಷ್ಯ ಜನಾರ್ಧನ್ ಅವರನ್ನು ರಂಗಾಯಣದ ನಿರ್ದೇಶಕರನ್ನಾಗಿ ಮಾಡುವ ಮೂಲಕ ತಮ್ಮ ಜವಾಬ್ದಾರಿಯನ್ನು ನಿಷ್ಪಕ್ಷಪಾತವಾಗಿ ನಿಭಾಯಿಸುತ್ತಾರೆಂದು ಅಪೇಕ್ಷಿಸಬಹುದೇ?