Category Archives: ಬಸವರಾಜು

ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯೇ?

-ಬಸವರಾಜು

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಹೋದಲ್ಲಿ ಬಂದಲ್ಲಿ “ನಾನು ಕೂಡ ಸಿಎಂ ಪದವಿ ಆಕಾಂಕ್ಷಿ” ಎಂದು ಬಹಿರಂಗವಾಗಿಯೇ ಹೇಳಿಕೊಂಡು ಓಡಾಡುತ್ತಿದ್ದಾರೆ. ಕಾಂಗ್ರೆಸ್ ಕಲ್ಚರ್ ಅರಿತವರು, ಹೈಕಮಾಂಡ್ ಅರ್ಥ ಮಾಡಿಕೊಂಡವರು ಯಾರೂ ಹೀಗೆ ಮಾತನಾಡಲಾರರು. ಆದರೆ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದು ಏಳು ವರ್ಷಗಳಾದರೂ ಸಿದ್ದರಾಮಯ್ಯನವರು ಇನ್ನೂ ಫ್ಯೂಡಲ್ ಗುಣಗಳನ್ನು ಬಿಟ್ಟಿಲ್ಲ. ಸಿದ್ದರಾಮಯ್ಯನವರ ದುರಾದೃಷ್ಟವೋ ಏನೋ, ಅವರ “ಸಿಎಂ ಆಕಾಂಕ್ಷಿ” ಒಬ್ಬೊಬ್ಬರಿಗೆ ಒಂದೊಂದು ರೀತಿ ಕೇಳಿಸುತ್ತಿದೆ. ಹತ್ತಾರು ವಿರೋಧಿಗಳನ್ನು ಹುಟ್ಟುಹಾಕಿದೆ. ಸಮಸ್ಯೆಯನ್ನು ಸೃಷ್ಟಿಸುತ್ತಿದೆ.

ಹಾಗೆ ನೋಡಿದರೆ, ಸಿದ್ದರಾಮಯ್ಯನವರು ಚಾಣಾಕ್ಷ ರಾಜಕಾರಣಿಯಲ್ಲ. ಇವತ್ತಿನ ರಾಜಕಾರಣಕ್ಕೆ ಬೇಕಾದ ಡ್ಯಾಷಿಂಗ್ ಗುಣಗಳಿಲ್ಲ. Siddaramaiahಆದರೆ ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತರದವರು. ಅಷ್ಟೇ ಅಲ್ಲ, ಜನಪರವಾಗಿ ಚಿಂತಿಸುವವರು. ನೆಲ-ಜಲ-ಭಾಷೆಯ ವಿಷಯದಲ್ಲಿ ಬದ್ಧತೆಯಿಂದ ವರ್ತಿಸುವವರು. ಜೊತೆಗೆ ರಾಮಮನೋಹರ ಲೋಹಿಯಾರ ಚಿಂತನೆಗಳಿಂದ ಪ್ರಭಾವಿತರಾಗಿ ಸಮಾಜವಾದಿ ಹೋರಾಟ, ಎಡಪಂಥೀಯ ವಿಚಾರಧಾರೆಗಳತ್ತ ಒಲವುಳ್ಳವರು. ಹಿಂದುಳಿದವರು, ಬಡವರು, ದಲಿತರ ಪರ ಕಾಳಜಿ ಕಳಕಳಿಯುಳ್ಳವರು. ತಮ್ಮ ಹಿಂಬಾಲಕರಿಗೆ, ಜಾತಿಯವರಿಗೆ ಅನುಕೂಲ ಮಾಡಿಕೊಟ್ಟರೂ, ಕಡು ಭ್ರಷ್ಟರ ಪಟ್ಟಿಗೆ ಸೇರದವರು. ಅಧಿಕಾರದಲ್ಲಿದ್ದಾಗ ಜನರತ್ತ ನೋಡದೆ “ಹಾಂ ಹೂಂ” ಎನ್ನುವ ಅಹಂಕಾರದ ಮೂಟೆಯಂತೆ ಕಂಡರೂ, ಕೇಡಿ ರಾಜಕಾರಣದಿಂದ ದೂರವಿರುವವರು.

ಇಂತಹ ಸಿದ್ಧರಾಮಯ್ಯನವರು ಹುಟ್ಟಿದ್ದು 12 ಆಗಸ್ಟ್, 1948ರಲ್ಲಿ, ಮೈಸೂರು ತಾಲೂಕಿನ ವರುಣಾ ಹೋಬಳಿಯ ಸಿದ್ದರಾಮನಹುಂಡಿಯಲ್ಲಿ. ರಾಜಕೀಯ ರಂಗಕ್ಕೆ ಧುಮುಕಿದ್ದು 1978ರಲ್ಲಿ, ತಾಲೂಕ್ ಬೋರ್ಡ್ ಮೆಂಬರ್ ಆಗುವ ಮೂಲಕ. ಆನಂತರ 1983ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಮೊಟ್ಟ ಮೊದಲಬಾರಿಗೆ ಭಾರತೀಯ ಲೋಕದಳ ಪಕ್ಷದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆದ್ದ ಸಿದ್ದರಾಮಯ್ಯನವರು, ಆ ನಂತರ ಜನತಾ ಪಕ್ಷ ಸೇರಿ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಕರ್ನಾಟಕದಾದ್ಯಂತ ಪರಿಚಿತರಾದರು. 1985ರಲ್ಲಿ ಮತ್ತೆ ಶಾಸಕರಾಗಿ ಚುನಾಯಿತರಾದ ಸಿದ್ದರಾಮಯ್ಯನವರು, ಮೊದಲ ಬಾರಿಗೆ ಪಶು ಸಂಗೋಪನೆ ಮಂತ್ರಿಯಾದರು. ಅಲ್ಲಿಂದ ಇಲ್ಲಿಯವರೆಗೆ, ತಮ್ಮ 35 ವರ್ಷಗಳ ಸುದೀರ್ಘ ರಾಜಕೀಯ ಬದುಕಿನಲ್ಲಿ ಹತ್ತು ಹಲವು ಹುದ್ದೆಗಳನ್ನು ನಿರ್ವಹಿಸಿ ನಿಭಾಯಿಸಿ ಹೆಸರು ಗಳಿಸಿದರು. ಈಗ ಮುಖ್ಯಮಂತ್ರಿ ಗಾದಿಯ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ.

ಸದ್ಯದ ಸಂದರ್ಭದಲ್ಲಿ ಕಾಂಗ್ರೆಸ್ಸಿಗೆ ಗೆಲುವಿನ ಗಾಳಿ ಬೀಸುತ್ತಿದೆ, ಸಿದ್ದರಾಮಯ್ಯನವರ ಮುಖ್ಯಮಂತ್ರಿಯಾಗುವ ಕನಸು ಈಡೇರುವ ಕಾಲ ಕೂಡಿ ಬರುತ್ತಿದೆ. ಆದರೆ ಸಿದ್ದರಾಮಯ್ಯನವರ ಒರಟು ಸ್ವಭಾವ ಅವಕಾಶಗಳಿಂದ ವಂಚಿತರನ್ನಾಗಿಸುತ್ತಿದೆ. ಸಿದ್ದರಾಮಯ್ಯನವರನ್ನು ಹತ್ತಿರದಿಂದ ಬಲ್ಲವರು, “ಪಾರ್ಟಿಗೆ ಸೇರಿಸಿಕೊಂಡು ಮೊದಲು ಮಂತ್ರಿ ಮಾಡಿದವರು ರಾಮಕೃಷ್ಣ ಹೆಗಡೆಯವರು. ಸಿದ್ದರಾಮಯ್ಯನವರು ಅವರನ್ನು ಬಿಟ್ಟು ದೇವೇಗೌಡರ ಹಿಂದೆ ಹೋದರು. ಗೌಡರು ಸಿದ್ದರಾಮಯ್ಯರನ್ನು ಪಕ್ಷದ ಅಧ್ಯಕ್ಷರನ್ನಾಗಿಸಿದರು. ಉಪಮುಖ್ಯಮಂತ್ರಿಯನ್ನಾಗಿಸಿದರು. ಸಿದ್ದರಾಮಯ್ಯನವರು ಗೌಡರನ್ನೂ ಬಿಟ್ಟರು. siddaramaiah_dharam_khargeಈಗ ಕಾಂಗ್ರೆಸ್ಸಿನಲ್ಲಿದ್ದಾರೆ. ಆ ಪಕ್ಷದ ರೀತಿ ರಿವಾಜುಗಳನ್ನು ಅರಿತು ವರ್ತಿಸಬೇಕಾದವರು, ಹೋದಲ್ಲಿ ಬಂದಲ್ಲಿ ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ಇದು ಅವರ ಹಾದಿಗೆ ತೊಡಕಾದರೂ ಆಗಬಹುದು” ಎನ್ನುತ್ತಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದಲ್ಲಿ ಸದ್ಯಕ್ಕೆ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ- ಇವರಿಬ್ಬರದೇ ಕಾರುಬಾರು. ಹೈಕಮಾಂಡ್ ಕೂಡ ಕುರುಬ-ದಲಿತ ಜಾತಿ ಸಮೀಕರಣವನ್ನು ಮುಂದಿಟ್ಟು, ಸಿದ್ದರಾಮಯ್ಯ- ಪರಮೇಶ್ವರ್ ಅವರುಗಳ ನೇತೃತ್ವದಲ್ಲಿಯೇ ಮುಂದಿನ ಚುನಾವಣೆಯನ್ನು ಎದುರಿಸುವುದೆಂದು ನಿರ್ಧರಿಸಿದೆ. ಹೈಕಮಾಂಡ್ ಹೀಗೆ ನಿರ್ಧರಿಸಿದ ಮೇಲೆ, ಸಿದ್ದರಾಮಯ್ಯನವರು ಮುತ್ಸದ್ದಿ ರಾಜಕಾರಣಿಯಂತೆ ವರ್ತಿಸಿ ಎಲ್ಲರ ನಾಯಕನಾಗಿ ಹೊರಹೊಮ್ಮಬೇಕಾದವರು, ಯಾಕೋ ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಪರಮೇಶ್ವರ್ ಗುಂಪು, ಎಸ್.ಎಂ. ಕೃಷ್ಣರ ಗುಂಪು ಮತ್ತು ಹಿರಿಯ ನಾಯಕರ ಗುಂಪುಗಳಿಗೆ ಕಂಡರಾಗದ ವ್ಯಕ್ತಿಯಾಗುತ್ತಿದ್ದಾರೆ.

ಕೇಂದ್ರ ವಿದೇಶಾಂಗ ಸಚಿವ ಖಾತೆಗೆ ರಾಜೀನಾಮೆ ಕೊಟ್ಟು ಎಸ್.ಎಂ. ಕೃಷ್ಣ ಮರಳಿ ಕರ್ನಾಟಕಕ್ಕೆ ಬರುತ್ತಿದ್ದಾರೆ ಎಂದಾಗ,smkrsihwig ನಿಜಕ್ಕೂ ಕಂಗಾಲಾದವರು ಜೆಡಿಎಸ್‌ನ ದೇವೇಗೌಡ ಮತ್ತು ಕುಮಾರಸ್ವಾಮಿ. ಜೆಡಿಎಸ್‌ಗೆ ಬಲ ಇರುವುದೇ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಹಳೆ ಮೈಸೂರು ಪ್ರಾಂತ್ಯದಲ್ಲಿ. ಅಲ್ಲಿಗೆ ಮತ್ತೊಬ್ಬ ಒಕ್ಕಲಿಗ ನಾಯಕ ಬಂದರೆ, ಪಕ್ಷಾಂತರದ ಮೂಲಕ ಶಾಸಕರನ್ನು ಪಕ್ಷಕ್ಕೆ ಸೆಳೆದುಕೊಂಡರೆ ಸಹಜವಾಗಿಯೇ ಜೆಡಿಎಸ್ ಸೊರಗುತ್ತದೆ. ಇದನ್ನರಿತ ಅಪ್ಪಮಕ್ಕಳು ಕೃಷ್ಣರ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ಸಿದ್ಧರಾಗುತ್ತಿದ್ದರು. ಅಷ್ಟರಲ್ಲಿ ಸಿದ್ದರಾಮಯ್ಯನವರೇ ಕೃಷ್ಣರ ವಿರುದ್ಧ ಉಗ್ರ ವಿರೋಧ ವ್ಯಕ್ತಪಡಿಸಿ ಹೈಕಮಾಂಡ್ ಮೇಲೆ ಒತ್ತಡ ಹೇರಿ ಕೃಷ್ಣರಿಗೆ ಯಾವ ಸ್ಥಾನವನ್ನೂ ನೀಡದಿರುವಂತೆ ನೋಡಿಕೊಂಡರು.

ಹೈಕಮಾಂಡ್ ಮೇಲೆ ಒತ್ತಡ ಹಾಕಲು ಸಿದ್ದರಾಮಯ್ಯನವರನ್ನು ಮುಂದೆ ಬಿಟ್ಟು, ಬೆನ್ನ ಹಿಂದೆ ನಿಂತು ಬೆಂಬಲಿಸಿದವರು ಯಾರು ಎಂದರೆ, “ಕೃಷ್ಣರನ್ನು ಕಂಡರಾಗದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಂಡಿಸ್, ಕೆ.ಎಚ್. ಮುನಿಯಪ್ಪ, ಬಿ.ಕೆ. ಹರಿಪ್ರಸಾದ್ ಮತ್ತು ಶ್ಯಾಮನೂರು ಶಿವಶಂಕರಪ್ಪನವರು” ಎಂದು ಹೆಸರು ಹೇಳಲು ಇಚ್ಛಿಸದ ಕಾಂಗ್ರೆಸ್ಸಿನ ಹಿರಿಯ ನಾಯಕರೊಬ್ಬರು ಕಾಂಗ್ರೆಸ್ಸಿನೊಳಗಿನ ಗುಂಪು ರಾಜಕಾರಣವನ್ನು ಬಿಚ್ಚಿಟ್ಟರು. ಮುಂದುವರೆದು, “ಈ ಗುಂಪಿಗೆ ಮುಂದಿನ ಮುಖ್ಯಮಂತ್ರಿಯಾಗುವ ಆಸೆ ಇದೆ. ಸೀನಿಯಾರಿಟಿ ಮುಂದೆ ಮಾಡಿ ಖರ್ಗೆಯವರನ್ನು ಸಿಎಂ ಮಾಡಿದರೆ, ಸಿದ್ದರಾಮಯ್ಯನವರಿಗೆ ಡೆಪ್ಯೂಟಿ ಸಿಎಂ ಮಾಡುವುದು. ಇಲ್ಲ, ಚುನಾವಣೆಯನ್ನು ಎದುರಿಸಿದವರೇ ಸಿಎಂ ಆಗಬೇಕು ಎಂದರೆ, ಪರಮೇಶ್ವರ್ ಬಿಟ್ಟು ಸಿದ್ದುವನ್ನು ಬೆಂಬಲಿಸುವುದು ಈ ಗುಂಪಿನ ಒಳ ಒಪ್ಪಂದ” ಎನ್ನುತ್ತಾರೆ ಆ ಹಿರಿಯರು.

ಹೀಗಾಗಿ ಈ ಗುಂಪು ಕೃಷ್ಣರನ್ನು, ಅವರ ಶಿಷ್ಟಕೋಟಿಯನ್ನು ವ್ಯವಸ್ಥಿತವಾಗಿ ಅಧಿಕಾರ ರಾಜಕಾರಣದಿಂದ ದೂರವಿಡಲು ಈ ಸಂಚನ್ನು ರೂಪಿಸಿತು. ಹೈಕಮಾಂಡ್ ಕೂಡ ಈ ಸಂಚಿಗೆ ಬಲಿಯಾಗಿ, ಕೃಷ್ಣರಿಗೆ ಯಾವ ಸ್ಥಾನಮಾನ ನೀಡದಂತೆ ನೋಡಿಕೊಂಡಿತು. ಮುಂದುವರೆದು, ಲಿಂಗಾಯಿತ ಕೋಮಿನ ವೀರಣ್ಣ ಮತ್ತಿಕಟ್ಟಿಯನ್ನು ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿಸಿತು. ಅಲ್ಲಿಗೆ ಕೃಷ್ಣರ ಅಧ್ಯಾಯ ಮುಗಿಯಿತು. ಸಿದ್ದರಾಮಯ್ಯನವರ ಹಾದಿ ಸುಗಮವಾಯಿತು.

ಹೀಗಾಗಿದ್ದು, ಕಾಂಗ್ರೆಸ್ಸಿನ ಕೃಷ್ಣ ಮತ್ತವರ ಗುಂಪಿಗಷ್ಟೇ ಅಲ್ಲ, ಸಿದ್ದರಾಮಯ್ಯನವರನ್ನು ಕಂಡರಾಗದ ಜೆಡಿಎಸ್‌ನ devegowda_kumaraswamyದೇವೇಗೌಡ ಮತ್ತವರ ಮಕ್ಕಳಿಗೆ ಸಹಿಸಲಸಾಧ್ಯ ಸಂಕಟ ತಂದಿಟ್ಟಿದೆ. ಮತ್ತೊಂದು ಕಡೆ, ಬಿಜೆಪಿಯ ಮತ್ತೊಬ್ಬ ಕುರುಬ ಜನಾಂಗದ ನಾಯಕ ಕೆ.ಎಸ್. ಈಶ್ವರಪ್ಪನವರ ಮೆರೆದಾಟಕ್ಕೆ ಬ್ರೇಕ್ ಹಾಕಿದೆ. ಸಹಜವಾಗಿ ಈಗ ಇವರೆಲ್ಲರೂ ಸಿದ್ದು ಮೇಲೆ ಬಿದ್ದಿದ್ದಾರೆ. ಹೇಗಾದರೂ ಸರಿ, ಸಿದ್ದು ಸಿಎಂ ಆಗದಂತೆ ನೋಡಿಕೊಳ್ಳಬೇಕೆಂಬ ಒಳ ಒಪ್ಪಂದಕ್ಕೆ ಬಂದಿದ್ದಾರೆ. ಅವರೆಲ್ಲರ ಕಣ್ಣು ವರುಣಾ ಕ್ಷೇತ್ರದತ್ತ ನೆಟ್ಟಿದೆ.

ಸಿದ್ದರಾಮಯ್ಯನವರ ಉಡಾಫೆ ಗುಣಕ್ಕೆ ಸರಿಯಾಗಿ, ಮೈಸೂರಿನ ವರುಣಾದಿಂದ ಗೆದ್ದುಬಂದ ದಿನದಿಂದ ಇಲ್ಲಿಯವರೆಗೆ ಪಾರ್ಟಿಯೊಳಗಿನ ಕಸರತ್ತಿನಲ್ಲಿ ಕಳೆದುಹೋಗಿ, ಹೈಕಮಾಂಡಿನ ಜೊತೆ ಜಗಳಕ್ಕಿಳಿದು ವಿರೋಧಪಕ್ಷದ ನಾಯಕನ ಸ್ಥಾನ ಗಿಟ್ಟಿಸುವಲ್ಲಿ ಬುದ್ಧಿಯನ್ನೆಲ್ಲ ಖರ್ಚು ಮಾಡಿ ಮತ ನೀಡಿ ಗೆಲ್ಲಿಸಿದ ಮತದಾರರನ್ನೇ ಮರೆತುಬಿಟ್ಟಿದ್ದಾರೆ. ಜೊತೆಗೆ ಕ್ಷೇತ್ರವನ್ನು ಮಗ ರಾಕೇಶನ ಉಸ್ತುವಾರಿಗೆ ಕೊಟ್ಟಿದ್ದರಿಂದ, ಆ ಹುಡುಗಾಟಿಕೆಗೆ ಜನ ಬೆಚ್ಚಿ ಬಿದ್ದು ಸಿದ್ದರಾಮಯ್ಯನವರಿಂದ ದೂರವಾಗಿದ್ದಾರೆ.

ಸಿದ್ದರಾಮಯ್ಯನವರು ಕೈಬಿಟ್ಟ ಕ್ಷೇತ್ರ ವಿರೋಧಿಗಳ ಪಾಲಾಗಿದೆ. ವರುಣಾ ಕ್ಷೇತ್ರಕ್ಕೆ ಸೇರಿದ, ಯಡಿಯೂರಪ್ಪನವರ ಬಲಗೈ ಬಂಟ ಕಾಪು ಸಿದ್ದಲಿಂಗಸ್ವಾಮಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಹುಟ್ಟಿದೆ. ಜೊತೆಗೆ ಕ್ಷೇತ್ರದಲ್ಲಿ 42 ಸಾವಿರ ಲಿಂಗಾಯತ ಕೋಮಿನ ಮತದಾರರಿರುವುದು, ಇದಕ್ಕೆ ಸುತ್ತೂರು ಸ್ವಾಮಿಗಳ ಸಹಕಾರವಿರುವುದು ಸಿದ್ದಲಿಂಗಸ್ವಾಮಿಗೆ ಆನೆಬಲ ಬಂದಂತಾಗಿದೆ. ಅಷ್ಟೇ ಅಲ್ಲ, ಯಡಿಯೂರಪ್ಪನವರು ಸಿಎಂ ಆಗಿದ್ದಾಗ, ಸಿದ್ದಲಿಂಗಸ್ವಾಮಿಗೆ ತಾವೇ ಶಾಸಕರಂತೆ ಓಡಾಡುತ್ತ, ಸರ್ಕಾರದಿಂದ ಹತ್ತೆಂಟು ಕೋಟಿ ರೂಪಾಯಿಗಳ ಯೋಜನೆಗಳನ್ನು ತಂದು ಸುರಿಯುತ್ತ, ಕೇಳಿದವರಿಗೆಲ್ಲ ಹಣ ಕೊಟ್ಟು ಆಪ್ತರಾಗಿದ್ದಾರೆ. ಸಿದ್ದರಾಮಯ್ಯನವರ ಮಗನ ಅಟಾಟೋಪಕ್ಕೆ ಬೇಸತ್ತಿದ್ದ ಜನ ಸಿದ್ದಲಿಂಗಸ್ವಾಮಿ ಕೆಲಸ ಮತ್ತು ಹಣಕ್ಕೆ ಮನಸೋತು, ಅವರಿಗಿಂತ ಇವರೇ ವಾಸಿ ಎನ್ನತೊಡಗಿದ್ದಾರೆ.

ಮತ್ತೊಂದು ಬದಿಯಿಂದ ಜೆಡಿಎಸ್‌ನ ದೇವೇಗೌಡರು, “ಬೆನ್ನಿಗೆ ಚೂರಿ ಹಾಕಿ ಹೋದವನು, ಅದು ಹೇಗೆ ಮುಖ್ಯಮಂತ್ರಿಯಾಗುತ್ತಾನೋ ನೋಡ್ತೀನಿ” ಎಂದು ಹಠಕ್ಕೆ ಬಿದ್ದಿದ್ದಾರೆ. ವರುಣಾ ಕ್ಷೇತ್ರದಲ್ಲಿ ಸಿದ್ದು ಎದುರಿಗೆ ನಿಲ್ಲಿಸಲು ಐನಾತಿ ಆಸಾಮಿಯನ್ನೇ ಅಭ್ಯರ್ಥಿಯನ್ನಾಗಿ ಹುಡುಕಿದ್ದಾರೆ. ಮೈಸೂರಿನ ದೇವರಾಜ ಠಾಣೆಯಲ್ಲಿ ಎಸಿಪಿಯಾಗಿದ್ದ ಚೆಲುವರಾಜು ಎಂಬ ನಾಯಕ ಜನಾಂಗದ ಪೊಲೀಸ್ ಅಧಿಕಾರಿ, ಸ್ವಯಂನಿವೃತ್ತಿ ಪಡೆದು ಮನೆಗೆ ಮರಳಿದ್ದಾರೆ. ಜೊತೆಗೆ ಸೇವೆಯಲ್ಲಿದ್ದಾಗ ಒಳ್ಳೆಯ ಹೆಸರನ್ನೂ ಸಂಪಾದಿಸಿದ್ದಾರೆ. ಈಗ ಗೌಡರು ಈ ಚೆಲುವರಾಜು ಅವರನ್ನು ಸಿದ್ದರಾಮಯ್ಯನವರ ವಿರುದ್ಧ ಕಣಕ್ಕಿಳಿಸುತ್ತಿದ್ದಾರೆ. ಹಾಗೆ ನೋಡಿದರೆ, ವರುಣಾ ಕ್ಷೇತ್ರದಲ್ಲಿ 35 ಸಾವಿರ ಕುರುಬ ಮತದಾರರಿದ್ದಾರೆ. ಇವರಷ್ಟೇ ಸಂಖ್ಯೆಯಲ್ಲಿ ನಾಯಕರ ಜನಾಂಗದ ಜನರೂ ಇದ್ದಾರೆ.

ಇದಷ್ಟೇ ಅಲ್ಲ, ಮುಂಬರುವ ಚುನಾವಣೆ ಮತ್ತು ಚುನಾವಣಾ ನಂತರ ಬಿಜೆಪಿ-ಜೆಡಿಎಸ್ ಒಂದಾಗುವ ಸೂಚನೆಗಳಿವೆ. KS-Eshwarappaಒಳಒಪ್ಪಂದವೂ ನಡೆದಿದೆ. ಹೀಗಾಗಿ ದೇವೇಗೌಡರ ಮಾತು ಈಗ ಬಿಜೆಪಿಗೆ ವೇದವಾಕ್ಯವಾಗಿದೆ. ಮೊದಲೇ ಸಿದ್ಧರಾಮಯ್ಯನವರನ್ನು ಕಂಡರಾಗದ ಈಶ್ವರಪ್ಪ, ದೇವೇಗೌಡರ ತಂತ್ರಕ್ಕೆ ತಲೆಬಾಗಿ ಬಿಜೆಪಿಯಿಂದ ವರುಣಾ ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕದೆ ಜೆಡಿಎಸ್ ಅಭ್ಯರ್ಥಿಯನ್ನೇ ಬೆಂಬಲಿಸಿದರೆ, ಬಿಜೆಪಿಯ ಮತಗಳ ಜೊತೆಗೆ ಜೆಡಿಎಸ್‌ನ ಮತಗಳು ಸೇರಿ ನಾಯಕ ಜನಾಂಗದ ಚೆಲುವರಾಜು, ಸಿದ್ದರಾಮಯ್ಯನವರನ್ನು ಹಿಂದಿಕ್ಕುವ ಸಾಧ್ಯತೆಗಳಿವೆ. ಇದೇ ಫಾರ್ಮುಲಾ 2006 ರಲ್ಲಿ ನಡೆದ ವರುಣಾ ಉಪಚುನಾವಣೆಯಲ್ಲಿ ಕಾರ್ಯರೂಪಕ್ಕೆ ಬಂದಿತ್ತು, ಕೇವಲ 257 ಓಟುಗಳಿಂದ ಸಿದ್ಧರಾಮಯ್ಯ ಏದುಸಿರು ಬಿಟ್ಟು ಗೆದ್ದಿದ್ದರು. ಇದು ಮತ್ತೆ ಪುನರಾವರ್ತನೆಯಾಗಲಿದೆ.

ಹಾಗೆಯೇ ಮತ್ತೊಂದು ಬದಿಯಿಂದ ಕಾಪು ಸಿದ್ದಲಿಂಗಸ್ವಾಮಿ, ಸುತ್ತೂರು ಸ್ವಾಮಿ, ಯಡಿಯೂರಪ್ಪನವರ ಹೊಡೆತವೂ ಬಿದ್ದರೆ ಸಿದ್ದು ಮೇಲೇಳುವುದು ಕಷ್ಟವಿದೆ. ಇದಲ್ಲಕ್ಕಿಂತಲೂ ಮುಖ್ಯವಾಗಿ ಕಾಂಗ್ರೆಸ್ಸಿನ ಸಿದ್ದರಾಮಯ್ಯನವರ ವಿರೋಧಿ ಗುಂಪು ಒಳಗಿಂದೊಳಗೇ ಸಿದ್ದರಾಮಯ್ಯನವರ ವಿರೋಧಿಗಳೊಂದಿಗೆ ಕೈ ಜೋಡಿಸಿದರೆ, ಅಲ್ಲಿಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವುದಿರಲಿ, ಶಾಸಕರಾಗುವುದೂ ಕಷ್ಟವಾಗುತ್ತದೆ.

ಈಗ ಸಿದ್ದರಾಮಯ್ಯನವರ ಮುಂದಿರುವ ದಾರಿ- ತಮ್ಮ ಗುಣಸ್ವಭಾವವನ್ನು ಬದಲಿಸಿಕೊಳ್ಳುವುದು, ಕಾಂಗ್ರೆಸ್ ಕಲ್ಚರ್ ಅಳವಡಿಸಿಕೊಳ್ಳುವುದು, ವಿರೋಧಿಗಳ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವುದು. ಇದು ಸಿದ್ದರಾಮಯ್ಯನವರಿಗೆ ಸಾಧ್ಯವೇ?

ರಿಯಲ್ ಎಸ್ಟೇಟ್‌ನ ಒಂದು ರಿಯಲ್ ಕತೆ

– ಬಸವರಾಜು

ರಜನೀಕಾಂತ್… ಒಂದು ಕಾಲದಲ್ಲಿ ಬಿಟಿಎಸ್ ಕಂಡಕ್ಟರ್ ಆಗಿದ್ದ ಇವರು, ಇವತ್ತು ಭಾರತೀಯ ಸಿನಿಮಾ ಲೋಕದ ಸೂಪರ್ ಸ್ಟಾರ್. ಅಂತಾರಾಷ್ಟ್ರೀಯ ಮಟ್ಟದ ಜನಪ್ರಿಯ ವ್ಯಕ್ತಿ. ಬೆಂಗಳೂರಿನ ಹನುಮಂತನಗರದ ರಜನೀಕಾಂತ್ ಕಂಡಕ್ಟರ್ ಕೆಲಸ ಬಿಟ್ಟು, ಬಣ್ಣದ ಬದುಕನ್ನು ಅರಸಿ ಮದ್ರಾಸಿಗೆ ಹೋಗಿದ್ದು, ಜನಪ್ರಿಯ ಚಿತ್ರತಾರೆಯಾಗಿ ರೂಪುಗೊಂಡದ್ದು ಇವತ್ತು ದಂತಕತೆ.

ನಾವಿಲ್ಲಿ ಪ್ರಸ್ತಾಪಿಸಲಿರುವ ವ್ಯಕ್ತಿಯ ಕತೆ ಕೂಡ ರಜನೀಕಾಂತ್ ಥರದ್ದೆ. LNR2ಆದರೆ ಕೊಂಚ ಬೇರೆ. ರಜನಿ ನಟನಾಗಲು ಕಂಡಕ್ಟರ್ ಕೆಲಸ ಬಿಟ್ಟರೆ, ಈ ನಮ್ಮ ಕಥಾನಾಯಕ ರಿಯಲ್ ಎಸ್ಟೇಟ್ ಬ್ರೋಕರ್ ಆಗಲು ಕಂಡಕ್ಟರ್ ಕೆಲಸ ಬಿಟ್ಟರು. ಕ್ಲಿಕ್ ಆದರು.

ಹೆಸರು- ಲಕ್ಷ್ಮಿನಾರಾಯಣ ರಾಜ ಅರಸ್.
ವಿದ್ಯಾಭ್ಯಾಸ- ಎಸ್‌ಎಸ್‌ಎಲ್‌ಸಿ.
ವೃತ್ತಿ- ಬಿಟಿಎಸ್ ಕಂಡಕ್ಟರ್, ಬ್ಯಾಡ್ಜ್ ನಂಬರ್ 6259.
ಊರು- ರಾಮೋಹಳ್ಳಿ, ದೊಡ್ಡ ಆಲದಮರಕ್ಕೆ ಮೂರು ಕಿ.ಮಿ. ದೂರ ಮತ್ತು ಮಂಚನಬೆಲೆ ಡ್ಯಾಂಗೆ ಹತ್ತಿರ.

ಲಕ್ಷ್ಮಿನಾರಾಯಣ ಬಿಟಿಎಸ್ ಕಂಡಕ್ಟರ್ ಆಗಿದ್ದು 20 ವರ್ಷಗಳ ಹಿಂದೆ. ಈಗ ಇವರು ಕಂಡಕ್ಟರ್ ಅಲ್ಲ, ರಿಯಲ್ ಎಸ್ಟೇಟ್ ಕಿಂಗ್!

ಕಿಂಗ್ ಎಂದು ಕರೆಯುವುದು ಸುಲಭ. ಆದರೆ ಅವರನ್ನು ನೋಡಿದರೆ, ಕಿಂಗ್ ಎಂದು ಕರೆಯಲಿಕ್ಕೆ ಇರಬೇಕಾದ ಕನಿಷ್ಠ ಕುರುಹುಗಳೂ ಕಾಣುವುದಿಲ್ಲ. ಅಂದರೆ, ಇವತ್ತಿನ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿರುವವರ ಗೆಟಪ್ಪು, ಗತ್ತು, ದಿಮಾಕು, ದೌಲತ್ತು ಯಾವುದೂ ಇಲ್ಲ. ಮೂರ್‍ನಾಲ್ಕು ಐಶಾರಾಮಿ ವೆಹಿಕಲ್‌ಗಳಿಲ್ಲ, ಹಿಂದೆ ಮುಂದೆ ಸುಳಿದಾಡುವ ಶಿಷ್ಯರಿಲ್ಲ, ವೈಟ್ ಅಂಡ್ ವೈಟ್ ಸೂಟಿಲ್ಲ, ಹಣೆಯಲ್ಲಿ ಕಾಸಗಲ ಕುಂಕುಮವಿಲ್ಲ, ಇಂಪೋರ್‍ಟೆಡ್ ಗಾಗಲ್, ಶೂಸ್‌ಗಳಿಲ್ಲ, ಕತ್ತಿನಲ್ಲಿ ನಾಯಿಗೆ ಹಾಕುವಂತಹ ಭಾರೀ ತೂಕದ ಚಿನ್ನದ ಚೈನಿಲ್ಲ, ಕೈಯಲ್ಲಿ ಬ್ರೇಸ್ ಲೆಟ್ ಇಲ್ಲ, ಐದು ಬೆರಳಿಗೆ ಐದು ಉಂಗುರಗಳಂತೂ ಇಲ್ಲವೇ ಇಲ್ಲ.

ವಯಸ್ಸು ೪೧, ಆರೂವರೆ ಅಡಿ ಹೈಟು, ಕಪ್ಪು ಮೈಬಣ್ಣ, ಕಣ್ಣಿಗೊಂದು ಕನ್ನಡಕ, ಸಾಧಾರಣವೆನ್ನಿಸುವ ಡ್ರೆಸ್, ಸಾದಾ ಸೀದಾ ನಡೆ, ನುಡಿ… ಥೇಟ್ ಪಕ್ಕದ್ಮನೆ ಹುಡುಗ.

ಲಕ್ಷ್ಮಿಯವರೆ, ಮತ್ತೆ ಕಿಂಗ್ ಆಗಿದ್ದು ಹೇಗೆ?

“ನಮ್ಮದು ಬಡ ಕುಟುಂಬ, ಮನೆ ತುಂಬಾ ಮಕ್ಕಳು, ಜಮೀನಿತ್ತು, ಆದರೆ ಹುಟ್ಟುವಳಿ ಇರ್‍ಲಿಲ್ಲ. LNR1ನಮ್ ತಂದೆಯವರು ಬಿಟಿಎಸ್‌ನಲ್ಲಿ ಮೆಕ್ಯಾನಿಕ್ ಆಗಿದ್ದರು. 1987 ರಲ್ಲಿ, ನಾನಿನ್ನೂ ಆಗ ಚಿಕ್ಕ ಹುಡುಗ, ನಮ್ಮಪ್ಪ ತೀರಿಕೊಂಡರು. ಅನುಕಂಪದ ಆಧಾರದ ಮೇಲೆ ನಮ್ಮ ಮನೆಯಲ್ಲಿ ಯಾರಿಗಾದರೂ ಕೆಲಸ ಕೊಡಲಿಕ್ಕೆ, ಆಗ ನಾವ್ಯಾರೂ ಎಸ್‌ಎಸ್‌ಎಲ್‌ಸಿ ಕೂಡ ಮಾಡಿರ್‍ಲಿಲ್ಲ. ಗೌರ್‍ಮೆಂಟ್ ಕೆಲಸ ಬಿಟ್ರೆ ಹೋಗ್ತದಲ್ಲ ಅಂತ ಕಷ್ಟಬಿದ್ದು ನಾನೇ ಎಸ್‌ಎಸ್‌ಎಲ್‌ಸಿ ಮುಗಿಸಿದೆ, ಅಪ್ಪ ಸತ್ತು ಮೂರು ವರ್ಷಕ್ಕೆ ನನಗೆ ಬಿಟಿಎಸ್ ಕಂಡಕ್ಟರ್ ಕೆಲಸ ಸಿಕ್ತು. ನನ್ನ ಬ್ಯಾಡ್ಜ್ ನಂಬರ್ 6259. ಮೊದಲು ನಾನು ಕೆಲಸ ಮಾಡಿದ್ದು ಬೆಂಗಳೂರಿನ ಬಿಟಿಎಸ್‌ನ 11 ನೇ ಡಿಪೋನಲ್ಲಿ.

“1991 ರಿಂದ 1998 ರವರೆಗೆ ಬಿಟಿಎಸ್‌ನಲ್ಲಿ ನಾನು ಕಂಡಕ್ಟರ್ ಕೆಲಸ ಮಾಡಿದೆ. ಸಿಟಿ ಸುತ್ತಾಡ್ತಾ, ಟಿಕೆಟ್ ಹರೀತಾ, ರಿಯಲ್ ಎಸ್ಟೇಟ್ ವ್ಯವಹಾರದತ್ತ ಗಮನ ಹರಿಸಿದೆ. ನನಗೆ ಆಗ ಅದು ರಿಯಲ್ ಎಸ್ಟೇಟ್ ಅಂತಾನೂ ಗೊತ್ತಿರಲಿಲ್ಲ. ಎಕ್ಸ್‌ಟ್ರಾ ಇನ್‌ಕಮ್ ಬರೋ ಒಂದು ವ್ಯವಹಾರ ಅಂತ ಗೊತ್ತಿತ್ತು, ಓಡಾಡ್ತಾ ಇದ್ದೆ. ಎಷ್ಟರಮಟ್ಟಿಗೆ ಅಂದ್ರೆ ಕಂಡಕ್ಟರ್ ಕೆಲಸಕ್ಕೆ ಚಕ್ಕರ್ ಹೊಡೆದು, ಯಾರ್‍ಯಾರಿಂದೇನೋ ಹೋಗ್ತಿದ್ದೆ, ಇಡೀ ದಿನ ಅಲೆದರೂ ಒಂದು ರೂಪಾಯಿ ಗಿಟ್ತಿರಲಿಲ್ಲ. ಹಿಂಗೆ 1992 ರಿಂದ 2000 ದವರೆಗೆ, ಸುಮಾರು ಎಂಟು ವರ್ಷ ಸಾರ್… ಒಂದೇ ಒಂದು ವ್ಯವಹಾರವೂ ಕುದುರಲಿಲ್ಲ. ಅತ್ತ ಅಬ್ಸೆಂಟ್ ಆಗಿ, ಸಸ್ಪೆಂಡ್ ಆಗಿ ಕಂಡಕ್ಟರ್ ಕೆಲಸವೂ ಹೋಯ್ತು. ಲೈಫ್ ಬಗ್ಗೆ ಭಾರೀ ಬೇಜಾರಾಯ್ತು. ಮನೆ ಪರಿಸ್ಥಿತಿ ಬೇರೆ ಸರಿಯಿರಲಿಲ್ಲ. ಬದುಕೋದೆ ಕಷ್ಟ ಅನ್ನಿಸಿಬಿಡ್ತು.

“ಇಂಥ ಸಂದರ್ಭದಲ್ಲಿಯೇ, ಒಂದಿನ ನನ್ನ ಫ್ರೆಂಡ್ ಒಬ್ಬ ಬಂದು, ‘ನಮ್ಮ ಪರಿಚಯದವರೊಬ್ಬರು ಪೆಪ್ಸಿ ಕಂಪನಿಲಿದಾರೆ, ವಿನಾಯಕ ನಗರದಲ್ಲಿ ಅವರದೊಂದು ಸೈಟ್ ಇದೆ, ಮಾರಾಟ ಮಾಡಿಸಿಕೊಡು’ ಅಂದ. ನಾನು ಅವರನ್ನು ಮೀಟ್ ಮಾಡಿ, ರೇಟ್ ಕೇಳಿ, ಗಿರಾಕಿಗಳನ್ನು ಹುಡುಕೋಕೆ ಶುರು ಮಾಡಿದೆ. ಅದೇನು ಗ್ರಹಚಾರವೋ ಯಾರೊಬ್ರು ಮುಂದೆ ಬರಲಿಲ್ಲ, ಇದೂ ಕೂಡ ಸಾಧ್ಯವಾಗಲಿಲ್ಲವಲ್ಲ ಎಂದು ಕಂಗಾಲಾದೆ. ಕೊನೆಗೊಂದು ನಿರ್ಧಾರಕ್ಕೆ ಬಂದು, ಎಲ್ಲೆಲ್ಲೋ ಸಾಲಸೋಲ ಮಾಡಿ ೮ ಸಾವಿರ ಹೊಂದಿಸಿಕೊಂಡು ಆ ಸೈಟನ್ನ ನಾನೇ ಕೊಂಡುಕೊಂಡೆ. ಅದೇ ನೋಡಿ ನಾನ್ ಮಾಡಿದ ಮೊಟ್ಟಮೊದಲ ರಿಯಲ್ ಎಸ್ಟೇಟ್ ಡೀಲು. ಆ ಸೈಟ್ ಕೊಂಡು ಎಂಟು ತಿಂಗಳಿಗೆ ಒಂದು ಒಳ್ಳೆ ಆಫರ್ ಬಂತು, 40 ಸಾವಿರಕ್ಕೆ ಆ ಸೈಟ್ ಮಾರಾಟ ಆಯ್ತು. ಎಂಟು ವರ್ಷದಲ್ಲಿ ಸಿಗದಿದ್ದದ್ದು ಎಂಟೇ ತಿಂಗಳಲ್ಲಿ ಸಿಕ್ತು.

“ಆ 40 ಸಾವಿರದಲ್ಲಿ ನಾನು… ನಮ್ಮೂರಿನ ಶ್ಯಾನುಭೋಗರ ಮಗ, ‘ನನ್ ಒಂದು ಎಕರೆ ಜಮೀನು ಮಾರ್‍ತೀನಿ ಗಿರಾಕಿ ಇದ್ರೆ ನೋಡಿ’ ಅಂತ ಹೇಳಿದ್ದು ನೆನಪಾಯಿತು, ಅವತ್ತು ಅಮಾವಾಸ್ಯೆ ರಾತ್ರಿ, ಸಾಮಾನ್ಯವಾಗಿ ಮಾರೋರು, ಕೊಳ್ಳೋರು ಯಾರು ಅವತ್ತು ಮಾತೂ ಆಡಲ್ಲ, ನಾನು ಅದ್ನೇನು ನೋಡ್ಲಿಲ್ಲ, ಅವರೂ ಕೇಳ್ಲಿಲ್ಲ, ಒಂದು ಎಕರೆ ಜಮೀನು 1 ಲಕ್ಷ 90 ಸಾವಿರಕ್ಕೆ ಮಾತಾಯಿತು. ಕೈಯಲ್ಲಿದ್ದ 40 ಸಾವಿರ ಅಡ್ವಾನ್ಸ್ ಅಂತ ಅವರ ಮುಂದೆ ಇಟ್ಟೆ, ಅಗ್ರಿಮೆಂಟ್ ಮಾಡಿಕೊಂಡು ಬಂದೆ. ಐದಾರು ತಿಂಗಳಲ್ಲಿ ಅದೇ ಒಂದು ಎಕರೆ ಜಮೀನು, ನೀವು ನಂಬಲ್ಲ, 6 ಲಕ್ಷಕ್ಕೆ ಮಾರಾಟ ಆಯ್ತು. 40 ಸಾವಿರದಿಂದ 4 ಲಕ್ಷಕ್ಕೆ ಸಡನ್ ಜಂಪ್ ಆದೆ.

“ಈ ವ್ಯವಹಾರದಲ್ಲಿ ಒಂದು ಟ್ರಿಕ್ ಇದೆ, ಎಲ್ಲರೂ ಏನ್ ಮಾಡ್ತರೆ, ಕೈಗೆ ದುಡ್ಡು ಬರ್ತಿದ್ದಹಾಗೆ ಗಾಡಿ, ಕ್ಲಬ್ಬು, ಕುಡಿತ, ಫ್ರೆಂಡ್ಸು ಅಂತ ಶೋಕಿಗೇ ಸಿಕ್ಕಾಪಟ್ಟೆ ಖರ್ಚು ಮಾಡ್ತರೆ. ಆದರೆ ನನಗೆ ಬಡತನ ಬೆನ್ನಿಗಿತ್ತಲ್ಲ, ಅದು ಬಿಡಲಿಲ್ಲ. ನಾಲ್ಕು ಲಕ್ಷವನ್ನು ಹತ್ತಾರು ಪ್ರಾಪರ್ಟಿ ಮೇಲೆ ಹಾಕ್ದೆ, ಅಗ್ರಿಮೆಂಟ್ ಮಾಡ್ಕೊಂಡೆ, ಹತ್ತಾರು ವರ್ಷ ಅದೇ ವ್ಯವಹಾರದಲ್ಲಿ ಓಡಾಡ್ತಿದ್ನಲ್ಲ, ಗಿರಾಕಿಗಳನ್ನು ಹಿಡಿಯೋದು, ಮಾರಾಟ ಮಾಡೋದು, ರಿಜಿಸ್ಟ್ರೇಷನ್ನು ಎಲ್ಲ ಗೊತ್ತಿತ್ತು, ಅನುಕೂಲ ಆಯ್ತು. ಅದರಲ್ಲೂ 2003 ರಿಂದ 2007 ರವರೆಗಿನ ಟೈಮ್ ಇದೆಯಲ್ಲ, ಅದು ರಿಯಲ್ ಎಸ್ಟೇಟ್‌ನ ಪ್ರೈಮ್ ಟೈಮು. ಬೂಮ್ ಟೈಮು, ಆಗ ನಾನು ಕ್ಲಿಕ್ ಆದೆ… ನಿಮ್ಮ ಪ್ರಕಾರ ‘ಕಿಂಗ್’ ಅಂತಿದೀರಲ್ಲ ಅದಾದೆ.”

ರಾಮೋಹಳ್ಳಿಯ ವ್ಯಾಪ್ತಿಗೆ ಬರುವ ಮೂರೂವರೆ ಎಕರೆ ಜಮೀನನ್ನು ಹೀಗೆಯೇ 18 ಲಕ್ಷಕ್ಕೆ ಖರೀದಿಸಿದ್ದ ಲಕ್ಷ್ಮಿನಾರಾಯಣ ರಾಜ ಅರಸ್, ಅದರ ಅರ್ಧ ಎಕರೆಯನ್ನು ಕೇವಲ ಒಂದು ವರ್ಷದ ಅವಧಿಯೊಳಗೆ 20 ಲಕ್ಷಕ್ಕೆ ಮಾರಿದ್ದರು. ಅಷ್ಟೇ ಅಲ್ಲ, ಮಿಕ್ಕ ಮೂರು ಎಕರೆಯಲ್ಲಿ, ಅದರಿಂದಲೇ ಬಂದ 20 ಲಕ್ಷ ಹಣವನ್ನು ವಿನಿಯೋಗಿಸಿ, ಸುತ್ತಮುತ್ತಲ ಹಳ್ಳಿಯ ಮಕ್ಕಳಿಗಾಗಿ 1 ರಿಂದ 10 ರ ತನಕದ ಸ್ಕೂಲ್‌ವೊಂದನ್ನು ತೆರೆದಿದ್ದರು. LNR5ಸ್ಕೂಲಿಗೆ ‘ಎಲ್‌ಎನ್‌ಆರ್ ವಿದ್ಯಾ ಸಂಸ್ಥೆ’ ಎಂದು ಹೆಸರಿಟ್ಟಿದ್ದರು. ಆ ಸ್ಕೂಲಿನ ಕೊಠಡಿಯಲ್ಲಿ ಕೂತು ಕಂಡಕ್ಟರ್‌ನಿಂದ ರಿಯಲ್ ಎಸ್ಟೇಟ್ ಕಿಂಗ್ ಆದ ಕತೆಯನ್ನು ಬಿಚ್ಚಿಡುತ್ತಿದ್ದರು.

ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಆ ಸ್ಕೂಲ್ ಎಷ್ಟು ವ್ಯವಸ್ಥಿತವಾಗಿದೆ ಎಂದರೆ, ನುರಿತ ಅನುಭವಿ ಟೀಚರ್‌ಗಳು, ಸುಸಜ್ಜಿತ ಕೊಠಡಿಗಳು, ಎಲ್ಲ ಕೊಠಡಿಗಳಲ್ಲೂ ಸ್ಮಾರ್ಟ್ ಬೋರ್ಡ್‌ಗಳು, ಸುತ್ತಮುತ್ತಲ ಹಳ್ಳಿಯ ಮಕ್ಕಳನ್ನು ಕರೆತರಲು ೫ ವ್ಯಾನ್‌ಗಳು, ಅದೆಲ್ಲಕ್ಕಿಂತ ಮುಖ್ಯವಾಗಿ ಕೈಗೆಟುಕುವ ದರದಲ್ಲಿ ಸ್ಕೂಲ್ ಫೀಸು. ಸ್ಕೂಲ್ ಶುರು ಮಾಡಿ ಮೂರು ವರ್ಷಗಳಾಗಿವೆ, ಆಗಲೇ 600 ಮಕ್ಕಳು ಅಲ್ಲಿ ಓದುತ್ತಿದ್ದಾರೆ. ಕುತೂಹಲಕರ ಸಂಗತಿ ಎಂದರೆ, ಆ ಅಷ್ಟೂ ಮಕ್ಕಳು ಸ್ಕೂಲ್‌ನ ಮಾಲೀಕ ಲಕ್ಷ್ಮಿಯನ್ನು ಬಹಳವಾಗಿ ಇಷ್ಟಪಡುತ್ತವೆ ಮತ್ತು ಎಲ್ಲೇ ಇದ್ದರೂ ಗುರುತು ಹಿಡಿದು ಮಾತನಾಡಿಸುತ್ತವೆ.

ಈ ವ್ಯಕ್ತಿಯ ವಿಶೇಷತೆ ಇಷ್ಟೇ ಅಲ್ಲ, ವ್ಯವಹಾರ ಗರಿಗಟ್ಟಿದ ಮೇಲೆ, ಹಣ ದ್ವಿಗುಣಗೊಂಡ ಮೇಲೆ ಅವರಿಗಾಗಿ ಒಂದು ಫಾರ್ಮ್ ಹೌಸ್ ಕಟ್ಟಿಸಿಕೊಂಡರು. ಆದರೆ ಅದೇನನ್ನಿಸಿತೋ, ಅದನ್ನು ‘ಆಸರೆ ಸೇವಾ ಟ್ರಸ್ಟ್’ ಎಂಬ ಅನಾಥಾಶ್ರಮಕ್ಕೆ ಬರೆದು ಕೊಟ್ಟರು. ಅವರೇ ಖುದ್ದು ನಿಂತು, ಅನಾಥಾಶ್ರಮಕ್ಕೆ ಒಂದು ಟ್ರಸ್ಟ್ ರಚಿಸಿ, ರಿಜಿಸ್ಟರ್ ಮಾಡಿಸಿದರು. ಅಲ್ಲೀಗ ನಾಡಿನ ಮೂಲೆ ಮೂಲೆಯಿಂದ ಬಂದ 21 ಅನಾಥ ಮಕ್ಕಳಿವೆ. ಆ ಮಕ್ಕಳಿಗೆ ಉಚಿತ ಊಟ, ಬಟ್ಟೆ, ವಸತಿ ಮತ್ತು ತಮ್ಮದೇ ಸ್ಕೂಲಿನಲ್ಲಿ ಉಚಿತ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. LNR3ಸದ್ಯಕ್ಕೆ ಅನಾಥಾಶ್ರಮಕ್ಕೆ ತಿಂಗಳಿಗೆ 40 ಸಾವಿರ ಖರ್ಚು ಬರುತ್ತಿದೆ. ಲಕ್ಷ್ಮಿ ಆ ಖರ್ಚಿಗೂ ಒಂದು ದಾರಿ ಮಾಡಿದ್ದಾರೆ. ಅದೇನೆಂದರೆ, ಲಕ್ಷ್ಮಿ ರಾಮೋಹಳ್ಳಿಯಲ್ಲಿ ಒಂದು ಸುಸಜ್ಜಿತವಾದ ಕಲ್ಯಾಣ ಮಂಟಪ ಕಟ್ಟಿಸಿದ್ದಾರೆ. ಸುತ್ತಮುತ್ತಲ ಹಳ್ಳಿಯವರಿಗಾಗಿ ಅತ್ಯಂತ ಕಡಿಮೆ ಅಂದರೆ, 2 ದಿನಕ್ಕೆ 25 ಸಾವಿರ ರೂ. ಬಾಡಿಗೆ ಪಡೆಯುತ್ತಾರೆ. ಬಡವರಾದರೆ ಅವರು ಕೊಟ್ಟಷ್ಟು ಇವರು ಪಡೆದಷ್ಟು. ಈ ಕಲ್ಯಾಣ ಮಂಟಪದಿಂದ ಬರುವ ಆದಾಯದಲ್ಲಿ, ತಿಂಗಳಲ್ಲಿ ಒಂದು ದಿನದ ಬಾಡಿಗೆಯನ್ನು ಅನಾಥಾಶ್ರಮಕ್ಕೆ ಮೀಸಲಿಟ್ಟಿದ್ದಾರೆ. ಮಿಕ್ಕಿದ್ದನ್ನು ತಮ್ಮ ಸ್ವಂತ ಜೇಬಿನಿಂದ ಹಾಕುತ್ತಿದ್ದಾರೆ.

ಜನಪರವಾಗಿ ಇರಬೇಕು ಅನ್ನಿಸಿದ್ದು ಯಾಕೆ? ಎಂದರೆ.

“ನನಗೇ ಗೊತ್ತಿರಲಿಲ್ಲ, ನಾನು ಈ ಮಟ್ಟಕ್ಕೆ ಬೆಳಿತೀನಿ ಅಂತ, ಅವತ್ತೊಂದು ದಿನ ನನಗೇನೂ ಇರಲಿಲ್ಲ, ಇವತ್ತು ಎಲ್ಲಾ ಇದೆ. ಅದೆಲ್ಲ ಬಂದಿದ್ದೇ ಈ ಜನರಿಂದ. ಅಂದಮೇಲೆ ಅದೆಲ್ಲ ಅವರಿಗೇ ಹೋಗಲಿ ಅನ್ನೋದು ನನ್ನ ಪಾಲಿಸಿ. ಅದಕ್ಕೆ ರಾಜಕಾರಣೀನೆ ಆಗಬೇಕು, ಅಧಿಕಾರವೇ ಇರಬೇಕು ಅಂತೇನಿಲ್ವಲಾ? ನೋಡಿ, ಇವತ್ತಿಗೂ ಅಪ್ಪ ಕಟ್ಟಿಸಿದ ಹಳ್ಳಿಯ ಹಳೆ ಹಂಚಿನ ಮನೆಯಲ್ಲಿಯೇ ವಾಸವಾಗಿದ್ದೇನೆ. ಮನೇಲಿ ಮಿಕ್ಸಿ ಇಲ್ಲ, ಒಳಕಲ್ಲಿದೆ. ಹಳ್ಳಿಯವರ ಜೊತೆ ಹಳ್ಳಿಯವನಾಗಿಯೇ ಇದ್ದೇನೆ. ಇದರಲ್ಲಿಯೇ ಖುಷಿ ನನಗೆ.

“ಬೆಂಗಳೂರಿನಿಂದ ಮಂಚನಹಳ್ಳಿ ಡ್ಯಾಂವರೆಗೆ ಯಾವುದೇ ಜಮೀನಿರಲಿ, ಸೈಟಿರಲಿ, ಯಾವ್ಯಾವುದು ಯಾರ್‍ಯಾರಿಗೆ ಸೇರಿದ್ದು ಅಂತ ನೋಡ್ತಿದ್ದ ಹಾಗೇ ಹೇಳ್ತೀನಿ, ಎಂಥದೇ ತಕರಾರಿರಲಿ ಬಗೆಹರಿಸ್ತೀನಿ. ಅದಕ್ಕೆ ಜನ ನನ್ನ ಹುಡಕ್ಕೊಂಡು ಬರ್‍ತಾರೆ. ನಂಬಿಕೆ ಮುಖ್ಯ. ರಿಯಲ್ ಎಸ್ಟೇಟ್ ವ್ಯವಹಾರ ಅಂದಮೇಲೆ ಅಲ್ಲಿ ಕೋರ್ಟು, ಕೇಸು, ಹೊಡೆದಾಟ, ರೌಡಿಗಳು, ಲಾಯರ್‍ಸ್, ಪೊಲೀಸು, ಎಲ್ಲ ಇದ್ದದ್ದೇ. ಆದರೆ ನಾನು ಕೈ ಹಾಕಿದ ವ್ಯವಹಾರದಲ್ಲಿ ಅದ್ಯಾವುದೂ ಇರಲ್ಲ ಅಂಥಾಲ್ಲ, ಇರ್ತದೆ ತುಂಬಾ ಕಡಿಮೆ.”

ಸಾಮಾನ್ಯವಾಗಿ ದುಡ್ಡು ಬಂದ ಮೇಲೆ, ಅದರಲ್ಲೂ ರಿಯಲ್ ಎಸ್ಟೇಟ್‌ನಿಂದ ಬಂದು ಈ ಮಟ್ಟಕ್ಕೆ ಬೆಳೆದ ಮೇಲೆ, ರಕ್ಷಣೆಗಾಗಿ ಯಾವುದಾದರೂ ಪಕ್ಷ ಸೇರಿ ರಾಜಕಾರಣಿಯಾಗುತ್ತಾರೆ, ಅಧಿಕಾರ ಪಡೆಯುತ್ತಾರೆ. ನೀವು ಆ ಹಾದಿಯಲ್ಲಿ ಏನಾದರೂ? ಎಂದರೆ.

“2005 ರಿಂದ 2010 ರವರೆಗೆ ರಾಮೋಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯನಾಗಿ ಅವಿರೋಧವಾಗಿ ಆಯ್ಕೆಯಾಗಿದ್ದೆ. LNR4ಅದು ನಾನಾಗಿ ಬಯಸಿ ಆಗಿದ್ದಲ್ಲ, ಜನ ಮಾಡಿದ್ದು. ಆಗ ಜನರಿಗಾಗಿ ನನ್ನ ಕೈಲಾದ ಸೇವೆಯನ್ನೂ ಮಾಡಿದೆ. ಆದರೆ ರಾಜಕೀಯ ನಮಗಲ್ಲ… ಅದಕ್ಕೆ ಜಾತಿ, ಹಣ, ತೋಳ್ಬಲ ಅಷ್ಟೇ ಅಲ್ಲ ಇನ್ನೂ ಏನೇನೋ ಇರಬೇಕು. ರಾಮೋಹಳ್ಳಿಯಲ್ಲಿ ನಮ್ಮ ಜಾತಿಯ ಜನಗಳಿರೋದು 10 ಮನೆ. ಒಕ್ಕಲಿಗರು ಹೆಚ್ಚಾಗಿದಾರೆ. ಆದರೆ ಅವರೆಲ್ಲ ನಮ್ಮನ್ನ ಅಣ್ಣತಮ್ಮಂದಿರಂತೆಯೇ ಕಾಣ್ತರೆ. ನಾನೂ ಅಷ್ಟೆ, ಸುತ್ತಮುತ್ತಲಿನ ಹಳ್ಳಿಯ ಜನಕ್ಕೆ ನನ್ನ ಕೈಲಾದ ಸಹಾಯ ಮಾಡಿದರೆ, ಅಷ್ಟೇ ಸಾಕು. ನೋಡಿ, ಅವರ ಮಕ್ಕಳೆಲ್ಲ ನನ್ನ ಸ್ಕೂಲಿನಲ್ಲಿ ಓದ್ತಿದಾರೆ. ಕೆಲವರು ಫೀಸು ಕಟ್ಟಕ್ಕಾಗದೆ ಇದ್ರು ಅವರಿಗೆಲ್ಲ ನನ್ನ ಸ್ಕೂಲಿನಲ್ಲಿ ಸೀಟ್ ಕೊಟ್ಟಿದೀನಿ. ಅವರ್‍ನ ಅಷ್ಟೆ ಪ್ರೀತಿಯಿಂದ ನೋಡ್ಕೊಂಡಿದೀನಿ. ಇದಕ್ಕೆ ರಾಜಕೀಯ ಯಾಕ್ ಬೇಕೇಳಿ… ಜೊತೆಗೆ ಈಗ ನನಗೆ ರಾಜಕೀಯಕ್ಕಿಂತ ಈ ಕಲ್ಯಾಣ ಮಂಟಪ, ಸ್ಕೂಲು, ಅನಾಥಾಶ್ರಮ… ಸಮಾಜ ಸೇವಾ ಕಾರ್ಯಗಳನ್ನು ಚೆನ್ನಾಗಿ ನಡೆಸಿಕೊಂಡು ಹೋದ್ರೆ ಸಾಕು.”

ನಿಮ್ಮ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಿಮಗಾದ ವಿಚಿತ್ರ ಅನುಭವಗಳು?

“ಈ ವ್ಯವಹಾರಾನೇ ವಿಚಿತ್ರ. ಬೆಂಗಳೂರಿನ ಸುತ್ತಮುತ್ತಲ ಜಾಗ ಇದೆಯಲ್ಲ, ಇದು ಮಣ್ಣಲ್ಲ ಹೊನ್ನು. ಇವತ್ತು ಎಲ್ರೂ, ಕಸ ಗುಡಿಸುವ ಜವಾನರಿಂದ ಹಿಡಿದು ಐಎಎಸ್ ಅಧಿಕಾರಿಗಳವರೆಗೆ, ಪೆಟ್ಟಿಗೆ ಅಂಗಡಿಯ ಮಾಲೀಕನಿಂದ ಫಿಲ್ಮ್ ಪ್ರೊಡ್ಯೂಸರ್‌ಗಳವರೆಗೆ, ಪುಡಿ ಪುಢಾರಿಗಳಿಂದ ಮಂತ್ರಿಗಳವರೆಗೆ, ಲೋಕಲ್ ರೌಡಿಗಳಿಂದ ಡಾನ್‌ಗಳವರೆಗೆ, ಪೊಲೀಸ್ ಪೇದೆಯಿಂದ ಐಪಿಎಸ್ ಆಫೀಸರ್‌ವರೆಗೆ… ಇಂಥೋರಿಲ್ಲ ಅನ್ನುವ ಹಾಗೇ ಇಲ್ಲ, ಎಲ್ಲರೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡೋರೆ. ಎಲ್ರೂ ಕಾಗದ ಪತ್ರ ಹಿಡಕ್ಕೊಂಡು ಓಡಾಡರೆ, ಎಲ್ಲೋದ್ರು ಅದೇ ಮಾತೆ. ಯಾಕಂದ್ರೆ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಹಾಗಿದೆ. ಇವತ್ತು ಭಿಕಾರಿಯಾಗಿದ್ದೋನು ನಾಳೆ ಇದ್ದಕ್ಕಿದ್ದಂತೆ ಕೋಟ್ಯಧಿಪತಿಯಾಗಬಹುದು. ಹಣ ಎಲ್ಲರಲ್ಲೂ ಆಸೆ ಹುಟ್ಟಿಸಿಬಿಟ್ಟಿದೆ. ಆದರೆ ಎಲ್ಲರೂ ಶ್ರೀಮಂತರಾಗಲಿಕ್ಕಾಗಲ್ಲ, ಎಲ್ಲರಿಗೂ ಈ ವ್ಯವಹಾರ ಮಾಡಕ್ಕಾಗಲ್ಲ.

“ಈಗ ನನ್ನದೇ ಅನುಭವ ತಗೊಂಡ್ರೆ, ನನ್ನ ಜೊತೆ ಜೊತೆಗೇ ನಮ್ಮ ಸುತ್ತಮುತ್ತಲಿನ ಹಳ್ಳಿಯ ಸುಮಾರು 25 ಜನ ನನ್ನ ಸ್ನೇಹಿತರೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡ್ತಿದ್ದರು. ಈ 25 ರಲ್ಲಿ ನಾನೊಬ್ಬನೇ, ಇವತ್ತು ಈ ಮಟ್ಟಕ್ಕೆ ಇರೋದು. ಉಳಿದೋರೆಲ್ಲ… ಕೆಲವರು ಉಳಿದೇ ಇಲ್ಲ. ಸಿಕ್ಕಾಪಟ್ಟೆ ದುಡ್ಡು, ಸಿಕ್ಕಾಪಟ್ಟೆ ರಿಸ್ಕು… ಅಷ್ಟೇ ಸಾರ್.

“ವಿಚಿತ್ರ ಅನುಭವ ಕೇಳಿದ್ರಲ್ವಾ… ಒಂದು ಸೈಟಿತ್ತು. ಅದಕ್ಕೆ ನಾನೇ ಮೊದಲ ಮೀಡಿಯೇಟರ್. ನೀವು ನಂಬ್ತೀರಾ, ಅದು ಇಲ್ಲಿಯವರೆಗೆ ಏಳು ಕೈ ಬದಲಾಗಿದೆ, ಏಳಕ್ಕೂ ನಾನೇ ಮೀಡಿಯೇಟರ್. ಮೊದಲ ಸಲ ಮಾರಾಟವಾದ ಆ ಸೈಟಿನ ಅಮೌಂಟಿತ್ತಲ್ಲ, ಅಷ್ಟೇ ಅಮೌಂಟು ನನಗೆ ಕಮಿಷನ್ ಬಂದಿದೆ. ಈ ಕಮಿಷನ್ ಹೇಗೆ ಅಂದ್ರೆ, 25 ಸಾವಿರದಿಂದ 50 ಸಾವಿರದವರೆಗಿನ ವ್ಯವಹಾರ ಆದ್ರೆ 2%. 50 ಸಾವಿರದಿಂದ ಮೇಲೆ ಎಷ್ಟೇ ಕೋಟಿಯಾಗಲಿ 1% ಕಮಿಷನ್.”

ಇವತ್ತಿನ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಯಾರ ಕೈಯಲ್ಲಿದೆ?

“ಹಳ್ಳಿಯ ಜನರ ಕೈಯಲ್ಲಂತೂ ಇಲ್ಲ. ಜಮೀನಾದ್ರು ಇದೆಯಾ ಅಂದ್ರೆ ಅದೂ ಇಲ್ಲ. ಇವತ್ತಿನ ರಿಯಲ್ ಎಸ್ಟೇಟ್ ಪೂರ್ತಿ ಉಳ್ಳವರ ಕೈಯಲ್ಲಿದೆ. ಹಾಗೆಯೇ ಶೇಠುಗಳು, ಶೆಟ್ರುಗಳು, ಮಾರ್ವಾಡಿಗಳು, ರಾಜಕಾರಣಿಗಳು, ಸ್ವಾಮೀಜಿಗಳ ಕೈಯಲ್ಲಿದೆ. ಆದರೆ ಅವರ್‍ಯಾರೂ ಓಪನ್ನಾಗಿ ಕಾಣಿಸಿಕೊಳ್ಳೋದಿಲ್ಲ. ಲೋಕಲ್ ಜನಗಳನ್ನು ಮುಂದೆ ನಿಲ್ಲಿಸ್ತಾರೆ, ಹಣ ಹಾಕ್ತರೆ, ನೂರಾರು ಎಕರೆ ಜಮೀನು ತೆಗೀತರೆ. ಬರೀ ಕೈ ಬದಲಾಗೋದ್ರೊಳಗೆ ಕೋಟ್ಯಂತರ ರೂಪಾಯಿ ದುಡೀತಾರೆ…. ಹಂಗೇ ಕೋಟ್ಯಂತರ ಕಳಕೊಂಡಿರೋರು, ನೂರಾರು ಥರದ ಮೋಸಕ್ಕೆ ಒಳಗಾಗಿರೋರು ಇಲ್ಲಿ ಬೇಕಾದಷ್ಟು ಜನ ಇದಾರೆ…”, ಎನ್ನುವ ಲಕ್ಷ್ಮಿನಾರಾಯಣ ರಾಜ ಅರಸ್, ತಾವೂ ಅದೇ ಹೊಸಗಾಲದ ವ್ಯವಹಾರದಲ್ಲಿದ್ದರೂ, ದುಡಿದ ದುಡ್ಡಿಂದ ಮತ್ತಷ್ಟು ಹಣ ಮಾಡುವ ಉದ್ದಿಮೆಗಳತ್ತ ಎಲ್ಲರ ಗಮನವಿದ್ದರೂ, ಸಮಾಜ ಸ್ಮರಿಸಿಕೊಳ್ಳುವ ಸೇವೆ ಸಲ್ಲಿಸಬೇಕು ಎಂಬುದರತ್ತ ತುಡಿಯುವ, ಎಲ್ಲರೊಂದಿಗೆ ಬೆರೆತು ಬಾಳುವುದರಲ್ಲಿಯೇ ಖುಷಿ ಕಾಣುವ ಅಪರೂಪದ ಆಸಾಮಿ. ಅವರೇ ಬೇರೆ, ಅವರ ಶೈಲಿಯೇ ಬೇರೆ… ರಜನೀಕಾಂತ್ ಥರ.

ವೀರಪ್ಪನ್ ಅಟ್ಟಹಾಸ ಮತ್ತು ಎಎಂಆರ್ ರಮೇಶ್

-ಬಸವರಾಜು

ವೀರಪ್ಪನ್… ಹೆಸರೇ ವಿಚಿತ್ರ. ವ್ಯಕ್ತಿಯೂ ವಿಚಿತ್ರ. ನಾವು ನಾಡಿನಲ್ಲಿರಲು ಬಯಸಿದರೆ, Veerappanಈತ ಕಾಡಿನಲ್ಲಿ ಕಣ್ಮರೆಯಾಗಲು ಕಾತರಿಸುತ್ತಿದ್ದ. ಕರ್ನಾಟಕ, ತಮಿಳುನಾಡು, ಕೇರಳದ ದಟ್ಟ ಕಾಡುಗಳನ್ನೇ ತನ್ನ ಕಾರಾಸ್ಥಾನವನ್ನಾಗಿಸಿಕೊಂಡಿದ್ದ. ಕೋಟ್ಯಂತರ ರೂಪಾಯಿಗಳ ಕಾಡಿನ ಸಂಪತ್ತನ್ನು ಲೂಟಿ ಮಾಡುತ್ತಿದ್ದ. ತನ್ನ ದಾರಿಗೆ ಅಡ್ಡ ಬಂದ 184ಕ್ಕೂ ಹೆಚ್ಚು ಜನರನ್ನು ಕ್ರೂರವಾಗಿ ಕೊಂದಿದ್ದ. ಕಾಯ್ದೆ, ಕಾನೂನು, ಕಟ್ಟುಪಾಡುಗಳು ನನಗಲ್ಲ ಎನ್ನುತ್ತಿದ್ದ. ತಲೆಗೆ ಐದು ಕೋಟಿ ಬಹುಮಾನ ಘೋಷಿಸುವಷ್ಟು ಭಯಂಕರ ವ್ಯಕ್ತಿಯಾಗಿ ಬೆಳೆದಿದ್ದ. ಕಾಡಿನ ಅಂಚಿನಲ್ಲಿ ವಾಸಿಸುವ ಜನಗಳಿಗೆ ರಾಬಿನ್ ವುಡ್ ಥರ ಕಾಣುತ್ತಿದ್ದ. ತಮಿಳು ಭಾಷೆ ಬಲ್ಲವನಾಗಿದ್ದರಿಂದ ತಮಿಳರಿಗೆ ಹೀರೋ, ಕನ್ನಡಿಗರಿಗೆ ವಿಲನ್ ಆಗಿದ್ದ. ಕನ್ನಡದ ಮೇರುನಟ ಡಾ. ರಾಜ್ ಕುಮಾರ್ ಅವರನ್ನು ಅಪಹರಿಸಿ, 109 ದಿನ ಒತ್ತೆಯಾಳಾಗಿ ಹಿಡಿದಿಟ್ಟುಕೊಂಡಿದ್ದ. ಹಿಡಿಯಲು ಹೋದ ಪೊಲೀಸಿನವರ ಪಾಲಿಗೆ ದುಃಸ್ವಪ್ನವಾಗಿದ್ದ. 20 ವರ್ಷಗಳ ಕಾಲ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಕ್ಕೆ ತಲೆನೋವಾಗಿದ್ದ. ನಕ್ಕಿರನ್ ಗೋಪಾಲನ್, ನೆಡುಮಾರನ್ ಗಳಿಗೆ ಮಿತ್ರನಾಗಿದ್ದ. ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಅನುಕೂಲಕ್ಕೊದಗುವ ಆಪ್ತನಾಗಿದ್ದ. ಪತ್ರಕರ್ತರ ಸ್ಟೋರಿಗೆ ಸಾಲಿಡ್ ಸ್ಪಫ್ ಆಗಿದ್ದ. 52 ವರ್ಷ ಬದುಕಿದ್ದು, ಅಕ್ಟೋಬರ್ 18, 2004ರಂದು ಪೊಲೀಸರ ಗುಂಡಿಗೆ ಬಲಿಯಾಗಿದ್ದ.

ಇಂತಹ ವೀರಪ್ಪನ್‍ನನ್ನು ಖುದ್ದಾಗಿ ಕಂಡವರು ಎಷ್ಟು ಜನ?

ಈ ಕಾರಣಕ್ಕಾಗಿಯೇ ವೀರಪ್ಪನ್ ಎಂದರೆ ಕುತೂಹಲದ ಕಡಲು. ಇದನ್ನು ಅರಿತಿರುವ ನಿರ್ದೇಶಕ ಎಎಂಆರ್ ರಮೇಶ್, attahasa-rameshವೀರಪ್ಪನ್‌ನನ್ನು ಮುಖ್ಯ ಭೂಮಿಕೆಯಲ್ಲಿಟ್ಟು `ಅಟ್ಟಹಾಸ’ ಎಂಬ ಚಿತ್ರ ನಿರ್ಮಿಸಿದ್ದಾರೆ. ಸುಮಾರು ಹನ್ನೆರಡು ವರ್ಷಗಳ ಕಾಲ, ಇನ್ನೂರೈವತ್ತಕ್ಕೂ ಹೆಚ್ಚು ಜನರನ್ನು ಭೇಟಿ ಮಾಡಿ ವೀರಪ್ಪನ್ ಬಗೆಗಿನ ಮಾಹಿತಿಯನ್ನು ಕಲೆಹಾಕಿದ್ದಾರೆ. ವೀರಪ್ಪನ್ ಜೊತೆಗಿದ್ದವರನ್ನೇ ಚಿತ್ರಕ್ಕೆ ದುಡಿಸಿಕೊಂಡು ಅಥೆಂಟಿಸಿಟಿ ತಂದಿದ್ದಾರೆ. ಪೊಲೀಸ್ ಅಧಿಕಾರಿಗಳಾದ ಕೆಂಪಯ್ಯ ಮತ್ತು ಗೋಪಾಲ್ ಹೊಸೂರ್ ಅವರ ಬಳಿಯಿದ್ದ ಮಹತ್ವಪೂರ್ಣ ಮಾಹಿತಿಯನ್ನು ಪಡೆದು ಚಿತ್ರಕ್ಕೆ ಶಕ್ತಿ ತುಂಬಿದ್ದಾರೆ. ವೀರಪ್ಪನ್ ಓಡಾಡಿದ ಜಾಗಗಳಲ್ಲೇ ಚಿತ್ರೀಕರಿಸಿ, ಚಿತ್ರಕ್ಕೆ ಜೀವ ತುಂಬಿದ್ದಾರೆ. ವೀರಪ್ಪನ್ ಪಾತ್ರಕ್ಕೆ ಕನ್ನಡದ ಕಿಶೋರ್‌ರನ್ನು ಆಯ್ಕೆ ಮಾಡಿದ್ದಾರೆ. ಒಂಟಿಗಣ್ಣಿನ ಹಂತಕ ಶಿವರಾಸನ್ ಕುರಿತ `ಸೈನೈಡ್’ ಚಿತ್ರದ ನಂತರ ನರಹಂತಕ ವೀರಪ್ಪನ್ ಕುರಿತ `ಅಟ್ಟಹಾಸ’ ಚಿತ್ರಕ್ಕೆ ಬರೋಬ್ಬರಿ ಏಳು ವರ್ಷಗಳನ್ನು ತೆಗೆದುಕೊಂಡಿದ್ದಾರೆ.

ವೀರಪ್ಪನ್ ಎಂದಮೇಲೆ ವಿವಾದಗಳಿಲ್ಲದಿದ್ದರೆ ಹೇಗೆ?

“ನನ್ನ ಪತಿಯನ್ನು ವಿಲನ್ ಮಾಡಿ, ರಾಜಕುಮಾರ್ ಅವರನ್ನು ಹೀರೋ ಮಾಡಲಾಗಿದೆ, ನನ್ನ ಮತ್ತು attahasa-veerappan-4ನನ್ನ ಮಕ್ಕಳ ಭವಿಷ್ಯದ ಬದುಕಿಗೆ ಈ ಚಿತ್ರ ತೊಂದರೆ ಕೊಡುತ್ತದೆ” ಎಂದು ತಗಾದೆ ತೆಗೆದಿದ್ದರು ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ. “ವೀರಪ್ಪನ್‌ಗಿದ್ದ ಒಬ್ಬನೇ ಒಬ್ಬ ನಂಬಿಕಸ್ಥ ಸ್ನೇಹಿತ ನಾನು, ಚಿತ್ರದಲ್ಲಿ ನನ್ನ ಪಾತ್ರವೇನು?” ಎಂದಿದ್ದರು ನಕ್ಕಿರನ್ ಗೋಪಾಲನ್. “ನನ್ನ ಕತೆ ಕದ್ದು ಚಿತ್ರ ಮಾಡಲಾಗಿದೆ” ಎಂದಿದ್ದರು ಮೈಸೂರಿನ ಪತ್ರಕರ್ತ ಗುರುರಾಜ್. “ಅಪ್ಪಾಜಿಯನ್ನು ಚಿತ್ರದಲ್ಲಿ ಹೇಗೆ ಬಳಸಿಕೊಂಡಿದ್ದೀರಿ” ಎಂದಿತ್ತು ಡಾ. ರಾಜ್ ಕುಟುಂಬ.

30 ವರ್ಷಗಳಿಂದ ಡಾ. ರಾಜ್ ಅಭಿಮಾನಿ ಸಂಘದಲ್ಲಿರುವ, ಗೋಕಾಕ್ ಚಳುವಳಿಯಲ್ಲಿ ಗುರುತಿಸಿಕೊಂಡಿರುವ, ಮದ್ರಾಸ್ ಫಿಲ್ಮ್ ಇನ್ಸ್‌ಟಿಟ್ಯೂಟ್‌ನಿಂದ ಚಿನ್ನದ ಪದಕ ಪಡೆದಿರುವ, `ಸೈನೈಡ್’, `ಪೊಲೀಸ್ ಕ್ವಾರ್ಟರ್ಸ್’ಗಳಂತಹ ಭಿನ್ನ ಆಯಾಮದ ಚಿತ್ರಗಳನ್ನು ಮಾಡಿ ಹೆಸರು ಮಾಡಿರುವ, ಪ್ರತಿಭಾವಂತ ನಿರ್ದೇಶಕ ಎಎಂಆರ್ ರಮೇಶ್, ಈ ಎಲ್ಲ ಪ್ರಶ್ನೆಗಳಿಗೆ, ಗೊಂದಲಗಳಿಗೆ, ವಿವಾದಗಳಿಗೆ ನೇರವಾಗಿ ಉತ್ತರಿಸಿದ್ದಾರೆ, ಓದಿ.

“ನನ್ನ `ಅಟ್ಟಹಾಸ’ ವೀರಪ್ಪನ್ ಬದುಕನ್ನು ಕುರಿತ ಚಿತ್ರ. ಇದು ರೆಗ್ಯುಲರ್ ಫಾರ್ಮ್ಯಾಟ್ ಚಿತ್ರವಲ್ಲ. attahasa-veerappan-2ಲವ್, ಸಾಂಗ್, ಡಾನ್ಸು, ರೊಮಾನ್ಸ್, ಸೆಂಟಿಮೆಂಟ್ಸ್, ಕಾಮಿಡಿ ಖಂಡಿತ ಇಲ್ಲಿಲ್ಲ.

“ವೀರಪ್ಪನ್‌ನನ್ನು ನಟೋರಿಯಸ್ ಅಂತಾರೆ, ಆದರೆ ಆತನಿಂದ ಡೈರೆಕ್ಟಾಗಿ ಯಾರಿಗೂ ತೊಂದರೆಯಾಗಿಲ್ಲ. ಪೊಲೀಸಿನವರಿಗೆ ತೊಂದರೆಯಾಗಿದೆ, ನಿಜ. ಆದರೆ ವನ್ನಿಯಾರ್ ಜನರ ಪಾಲಿಗೆ ಆತ ದೇವರ ಸಮ. ಆ ಊರಿಗೆ ಕುಡಿಯುವ ನೀರು ಬಂದಿದ್ದೆ ವೀರಪ್ಪನ್‌ನಿಂದ. ಆ ಜನಗಳಲ್ಲಿ, ಕಾಡಿನ ಸ್ವತ್ತನ್ನು ಲೂಟಿ ಮಾಡುತ್ತಿದ್ದಾನೆ, ನಮ್ಮದಲ್ಲವಲ್ಲ ಎಂಬ ಭಾವನೆ ಇದೆ. ಕಾಡು ಯಾರ ಸ್ವತ್ತು, ಅದನ್ನು ಕಾಪಾಡುವ ಜವಾಬ್ದಾರಿ ಯಾರದು? ನನ್ನ ಚಿತ್ರದಲ್ಲಿ ಇದೂ ಇದೆ.

“ಕನ್ನಡಿಗರ ಕಣ್ಮಣಿ ಡಾ. ರಾಜ್ ಕುಮಾರ್ ಅಪಹರಣವಾದಾಗಲೇ ನಮಗೆ ಈತ ಡೇಂಜರಸ್ ಅನ್ನಿಸಿದ್ದು. ಅಲ್ಲಿಯವರೆಗೆ ಎಷ್ಟು ಪೊಲೀಸ್ ಅಧಿಕಾರಿಗಳನ್ನ, ಎಂಥೆಂಥವರನ್ನ ಕೊಂದಿದ್ದ? ರಾಜ್ ಅಪಹರಣವಾದಾಗ ಫಸ್ಟ್ ಟೈಮ್ ಕಾಡಿಗೆ ಹೋದವನೆ ನಾನು. ನೆಡುಮಾರನ್, ಕೊಳತ್ತೂರು ಮಣಿಯನ್ನು ಮೊದಲಿಗೆ ಭೇಟಿ ಮಾಡಿದವನೂ ನಾನೆ. ಅಲ್ಲಿಂದಲೇ ನನಗೆ ವೀರಪ್ಪನ್ ಬಗೆಗೆ ಆಸಕ್ತಿ ಬೆಳೆಯುತ್ತಾ ಹೋಯಿತು. ಅವನ ವಿವರಗಳ ಹುಡುಕಾಟಕ್ಕಾಗಿ 12 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಅವನನ್ನು ಬಲ್ಲ 200 ಜನರನ್ನು ಖುದ್ದಾಗಿ ಭೇಟಿ ಮಾಡಿದ್ದೇನೆ. attahasa-veerappan-1ರಾಜ್ ಅಪಹರಣ ಕಾರ್ಯದಲ್ಲಿ ಭಾಗಿಯಾಗಿದ್ದ ವೀರಪ್ಪನ್ ಬಂಟರಾದ ಮುಗಿಲನ್, ಪೆರುಮಾಳ್, ಸೆಲ್ವಂ ಹಾಗೂ ಕಾಡಿನಿಂದ ತಪ್ಪಿಸಿಕೊಂಡು ಬಂದು ಭಯಾತಂಕ ಸೃಷ್ಟಿಸಿದ್ದ ನಾಗಪ್ಪ ಮಾರಡಗಿ ಅವರನ್ನೇ ಚಿತ್ರದೊಳಗೆ ಪಾತ್ರಧಾರಿಗಳನ್ನಾಗಿ ಬಳಸಿಕೊಂಡಿದ್ದೇನೆ. ರಾಜ್ ಅಪಹರಣದ ಭಾಗ ನನಗಿಷ್ಟವಾದ್ದು. ಸುರೇಶ್ ಓಬೇರಾಯ್ ಅಣ್ಣಾವ್ರ ಪಾತ್ರಕ್ಕೆ ಜೀವ ತುಂಬಿದ್ದಾರೆ.

“ವೀರಪ್ಪನ್ ಚಿತ್ರ ಮೂರು ಭಾಷೆಗಳಲ್ಲಿ- ಕನ್ನಡ, ತಮಿಳು ಮತ್ತು ತೆಲುಗುಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡ ಮತ್ತು ತಮಿಳು ಭಾಷೆಗಾಗಿ ಬೇರೆ ಬೇರೆಯಾಗಿ ಚಿತ್ರೀಕರಿಸಲಾಗಿದೆ. ತಮಿಳಿನ ಚಿತ್ರವನ್ನು ತೆಲುಗಿಗೆ ಡಬ್ ಮಾಡಲಾಗಿದೆ. ಹಾಗೆಯೇ ತಮಿಳು-ತೆಲುಗು ಭಾಷೆಗಳ ಚಿತ್ರಗಳಲ್ಲಿ ಹಣ ಹೂಡಿರುವ ಹಂಚಿಕೆದಾರರಿಗಾಗಿ ಫಾಸ್ಟ್ ಟ್ರಾಕ್ ನಲ್ಲಿ, ಕಮರ್ಷಿಯಲ್ಲಾಗಿ ಯೋಚಿಸಿ, ಚಿತ್ರದ ಅವಧಿಯನ್ನು 2 ಗಂಟೆ 5 ನಿಮಿಷಕ್ಕೆ ಸೀಮಿತಗೊಳಿಸಲಾಗಿದೆ. ಆದರೆ ಕನ್ನಡದ `ಅಟ್ಟಹಾಸ’ ಚಿತ್ರ ಪೂರ್ತಿ ನನ್ನದು. 2 ಗಂಟೆ 45 ನಿಮಿಷದ ಚಿತ್ರ ಖಂಡಿತ ನಿಮಗಿಷ್ಟವಾಗುತ್ತದೆ, ಆ ಬಗ್ಗೆ ನನಗೆ ವಿಶ್ವಾಸವಿದೆ.

“ನನಗೆ ಚಿತ್ರವನ್ನು ಕಾಂಟ್ರೋವರ್ಸಿ ಮಾಡ್ಲಿಕ್ಕೆ ಇಷ್ಟವಿಲ್ಲ. ಹಾಗೆ ಕಾಂಟ್ರೋವರ್ಸಿ ಮಾಡೋರು ಟಿವಿ ಸ್ಟುಡಿಯೋಗಳಲ್ಲಿ ಕುಳಿತಿರುತ್ತಾರೆ, attahasa-veerappan-4ಪ್ರಚಾರದ ಮೂಲಕ ಚಿತ್ರವನ್ನು ಗೆಲ್ಲಿಸಲು ಹವಣಿಸುತ್ತಿರುತ್ತಾರೆ. ನಾನು ಆ ಥರದ ವ್ಯಕ್ತಿಯಲ್ಲ, ನಾನೇ ಬೇರೆ ನನ್ನ ಸ್ಟೈಲೇ ಬೇರೆ. ನನ್ನ ಈ ಹಿಂದಿನ ಚಿತ್ರಗಳನ್ನು ನೋಡಿದರೆ ಅದು ನಿಮಗರ್ಥವಾಗಬಹುದು. ನನ್ನ ಚಿತ್ರಕ್ಕೆ ಅಂತಹ ಯಾವ ಪ್ರಚಾರವೂ ಬೇಕಿಲ್ಲ. ಚಿತ್ರ, ಅದರ ತಾಖತ್ತಿನ ಮೇಲೇ ನಿಲ್ಲಬೇಕು, ನಿಲ್ಲುತ್ತೆ.

“ಇನ್ನು ಮುತ್ತುಲಕ್ಷ್ಮಿ… ವೀರಪ್ಪನ್ ಆಕೆಗೆ ಪತಿ ಇರಬಹುದು. ಆದರೆ ವೀರಪ್ಪನ್ ಯಾರ ಸ್ವತ್ತೂ ಅಲ್ಲ. ಕೋರ್ಟಿಗೆ ಹೋಗಿದ್ದರು, ಬೇರೆಯವರ ಕಡೆಯಿಂದ ದುಡ್ಡಿಗೆ ಡಿಮ್ಯಾಂಡ್ ಇಟ್ಟಿದ್ದರು. ಈಗ ಅದೆಲ್ಲ ಕ್ಲಿಯರ್ ಆಗಿದೆ. ಅದೇ ರೀತಿ ನಕ್ಕಿರನ್ ಗೋಪಾಲನ್ ಕೂಡ ಕೋರ್ಟಿಗೆ ಹೋಗಿದ್ದರು. ಚಿತ್ರ ನೋಡಿದ ಮೇಲೆ, ನನ್ನ ಬೆನ್ನು ತಟ್ಟಿ ಕಳಿಸಿದರು. ಅಣ್ಣಾವ್ರ ಮನೆಯವರದಂತೂ ವಿರೋಧವಿಲ್ಲ ಬಿಡಿ.

“ಕತೆ ನನ್ನದು ಅಂತ ಹೇಳೋರಿಗೆ ನನ್ನ ಪ್ರಶ್ನೆ ಏನಂದರೆ, ಬರೆಯುವವರಿಗೆ ಒಂದು ನ್ಯಾಯ, ಸಿನಿಮಾ ಮಾಡುವವರಿಗೇ ಒಂದು ನ್ಯಾಯಾನಾ? ವೀರಪ್ಪನ್ ಬಗ್ಗೆ ಸಾವಿರಾರು ಪತ್ರಕರ್ತರು ಬರೆದಿದ್ದಾರೆ. ಅವರೆಲ್ಲ ವೀರಪ್ಪನ್‌ನಿಂದ ಪರ್ಮಿಷನ್ ಪಡೆದಿದ್ದರಾ? ಅವರಿಗೆ ಕಂಡಂತೆ ಅವರು ಬರೆದಿದ್ದಾರೆ. ಹಾಗೆಯೇ ನನ್ನ ಚಿತ್ರದಲ್ಲಿ ನಾನು ಕಂಡ ವೀರಪ್ಪನ್‌ನನ್ನು ಚಿತ್ರಿಸಿದ್ದೇನೆ.

“ಚಿತ್ರದ ಪೂರ್ತಿ ಡಿಜಿ ವಿಜಯಕುಮಾರ್ ಇದಾರೆ. ಈ ಪಾತ್ರವನ್ನು ಅರ್ಜುನ್ ಸರ್ಜಾ ನಿರ್ವಹಿಸಿದ್ದಾರೆ. ವೀರಪ್ಪನ್ ಕಥಾನಕದಲ್ಲಿ ವಿಜಯಕುಮಾರ್ ಪಾತ್ರ ಎಷ್ಟಿತ್ತು ಎನ್ನುವುದು ಗೊತ್ತಿದೆಯಾ? ಸೇತುಕುಳಿ ಗೋವಿಂದನ್ ವೀರಪ್ಪನ್ ಬಂಟ- ಇದು ಎಲ್ಲರಿಗೂ ಗೊತ್ತು. ಈತ ಬರುವುದಕ್ಕೆ ಮುಂಚೆ ಯಾರಿದ್ರು ಗೊತ್ತಾ? ಗುರುನಾಥನ್, ವೀರಪ್ಪನ್ ರೈಟ್ ಹ್ಯಾಂಡ್ ಆಗಿದ್ದ. ಇದು ಎಷ್ಟು ಜನಕ್ಕೆ ಗೊತ್ತಿದೆ ಹೇಳಿ? ಈತನ ಪಾತ್ರವನ್ನು ನಾನೇ ಮಾಡಿದ್ದೇನೆ. ನನ್ನ ಚಿತ್ರದಲ್ಲಿ ಯಾವುದೂ ರೀಲ್ ಇಲ್ಲ, ಎಲ್ಲ ರಿಯಲ್. ವ್ಯಕ್ತಿಗಳು, ಜಾಗಗಳು, ಘಟನೆಗಳು ಎಲ್ಲವೂ.

“ಸಿನಿಮಾಕ್ಕಾಗಿ ಭೇಟಿ ಮಾಡಿದವರು, ಬಳಸಿಕೊಂಡವರು, ಸಣ್ಣಪುಟ್ಟ ಸಹಾಯ ಮಾಡಿದವರು ಎಲ್ಲರಿಗೂ ಚಿತ್ರ ತೋರಿಸುತ್ತೇನೆ. ಅವರಿಂದೆಲ್ಲ ಓಕೆ ಅನ್ನಿಸಿಕೊಂಡೇ ಚಿತ್ರ ಬಿಡುಗಡೆ ಮಾಡ್ತಿದೀನಿ. ಯಾಕೆ ಗೊತ್ತಾ? 99% ನನಗೆ ಕನ್ವಿನ್ಸ್ ಆದಮೇಲೆಯೇ ಚಿತ್ರ ಮಾಡ್ಲಿಕ್ಕೆ ಕೈ ಹಾಕಿರೋದು.

“ಕಿಶೋರ್… ವೀರಪ್ಪನ್ ಮುಖ ಮರೆತುಹೋಗಿ ಅಲ್ಲಿ ಕಿಶೋರ್ ನೆಲೆ ನಿಲ್ತಾರೆ, ನೋಡ್ತಿರಿ. attahasa-veerappan-5ಅಷ್ಟರಮಟ್ಟಿಗೆ ಪಾತ್ರದಲ್ಲಿ ಕರಗಿಹೋಗಿದ್ದಾರೆ. ನಾನು ವೀರಪ್ಪನ್‌ಗಾಗಿ 12 ವರ್ಷದಿಂದ ಮಾಹಿತಿ ಕಲೆ ಹಾಕ್ತಿದ್ರೆ, ಕಿಶೋರ್ 6 ವರ್ಷಗಳಿಂದ ನನ್ನ ಜೊತೆ ಕಾಡಿನಲ್ಲಿ ಅಲೆದಾಡ್ತಿದ್ರು. ವೀರಪ್ಪನ್‌ನ ವಿಕ್ಷಿಪ್ತತೆ, ಅವನ ಕಲ್ಲುಗುಂಡಿಗೆ, ತಣ್ಣನೆಯ ಕ್ರೌರ್ಯ, ಜಿಗುಟುತನ, ಜಿಪುಣತನ- ಎಲ್ಲವನ್ನು ತುಂಬ ಹತ್ತಿರದಿಂದ ನೋಡಿದವರೊಡನೆ ಒಡನಾಡಿ, ಕೇಳಿ ತಿಳಿದುಕೊಂಡರು. ವೀರಪ್ಪನ್‌ನನ್ನು ಆವಾಹಿಸಿಕೊಂಡು ಹತ್ತಾರು ಶೇಡ್‌ಗಳನ್ನು ಅಭಿವ್ಯಕ್ತಿಗೊಳಿಸಿದರು. ಒಂದು ಪಾತ್ರಕ್ಕೆ, ಒಂದು ಚಿತ್ರಕ್ಕೆ, ಯಾವ ಹೀರೋ ಈ ರೀತಿ ಮಾಡ್ತರೆ ಹೇಳಿ?

“ಎಲ್ಲಕ್ಕಿಂತ ಹೆಚ್ಚಾಗಿ, ವೀರಪ್ಪನ್ ಸಾವಿನ ಗುಟ್ಟು ಎಷ್ಟು ಜನಕ್ಕೆ ಗೊತ್ತು? ಇದನ್ನ ನಾನು ರಿಲೀವ್ ಮಾಡಿದ್ದೇನೆ. ನಾನು ಕಂಡಿರೋ ಸತ್ಯವನ್ನು ಬಿಚ್ಚಿಟ್ಟಿದ್ದೇನೆ. ಚಿತ್ರದ ಕ್ಲೈಮ್ಯಾಕ್ಸ್ ನನ್ನದು. ಅಲ್ಲಿ ನನ್ನ ಕ್ರಿಯೇಟಿವಿಟಿ ಕಾಣುತ್ತದೆ. ನಾನೇ ನನ್ನ ಚಿತ್ರದ ಬಗ್ಗೆ ಹೇಳಿಕೊಳ್ಳೋದು ತಪ್ಪಾಗಬಹುದು, ಇರಲಿ. ಥಿಯೇಟರ್ ಗೆ ಬರೋರು, ಕಾಸು ಕೊಡೋರು, ಸಮಯ ಕೊಡೋರು ಪ್ರೇಕ್ಷಕರು. ಅವರು ಪ್ರಭುಗಳು. ಅವರ ತೀರ್ಮಾನವೆ ಅಂತಿಮ. ಚಿತ್ರ ನೋಡಿ ಅವರು ಹೇಳಲಿ.”

(ಬಾಲಗಂಗಾಧರನಾಥ) ಸ್ವಾಮಿ ಅಂಡ್ ಫ್ರೆಂಡ್ಸ್

– ಬಸವರಾಜು

68, ಸಾಮಾನ್ಯವಾಗಿ ಸ್ವಾಮೀಜಿಗಳು ಸಾಯುವ ವಯಸ್ಸಲ್ಲ. ಸ್ವಾಮೀಜಿಗಳೆಂದರೆ ಆಧ್ಯಾತ್ಮ ಅರಿತವರು, ಅಪಾರ ಅನುಭವವುಳ್ಳವರು, ಅರಿವನ್ನು ಹಂಚುವವರು ಎಂಬ ಪ್ರತೀತಿ ಇದೆ. ಇಷ್ಟೆಲ್ಲ ಅರಿವು-ಅನುಭವ ಪಡೆಯುವುದಕ್ಕೆ ಕನಿಷ್ಠ ಐವತ್ತಾದರೂ ವಯಸ್ಸಾಗಿರಬೇಕು ಎಂಬುದು ಸಾಮಾನ್ಯರ ತಿಳುವಳಿಕೆಯಾಗಿದೆ. ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮಿಗಳ 68, ಸಾಯುವ ವಯಸ್ಸಾಗಿರಲಿಲ್ಲ ಎನ್ನುವುದು ಅವರ ಪಾರ್ಥಿವ ಶರೀರ ವೀಕ್ಷಿಸಲು ಬಂದ ಭಕ್ತಸಮೂಹದಿಂದ ಕೇಳಿಬರುತ್ತಿದ್ದ ಮಾತಾಗಿತ್ತು. ಏಕೆಂದರೆ, ಪಕ್ಕದ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ 105 ವರ್ಷ, ಉಡುಪಿಯ ವಿಶ್ವೇಶತೀರ್ಥ ಸ್ವಾಮೀಜಿಗಳ 83 ವರ್ಷ ವಯಸ್ಸು ಭಕ್ತರ ತಲೆಯಲ್ಲಿ ತೇಲುತ್ತಿತ್ತು. ಆದರೆ 68ಕ್ಕೇ ಇಹಲೋಕ ತ್ಯಜಿಸಿದ ಬಾಲಗಂಗಾಧರನಾಥ ಸ್ವಾಮಿಯವರು, ಕಳೆದ ನಾಲ್ಕು ವರ್ಷಗಳಿಂದ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದರು.

bgs1ರಾಮನಗರ ತಾಲೂಕಿನ ಬಾನಂದೂರು ಗ್ರಾಮದ ಚಿಕ್ಕಲಿಂಗೇಗೌಡ-ಬೋರಮ್ಮ ದಂಪತಿಗಳ ಮಗನಾಗಿ ಜನವರಿ 18, 1945 ರಲ್ಲಿ ಹುಟ್ಟಿದ ಗಂಗಾಧರಯ್ಯ, ಬಾಲ್ಯದಲ್ಲಿಯೇ ಆಧ್ಯಾತ್ಮದ ಕಡೆಗೆ ಒಲವುಳ್ಳವರಾಗಿದ್ದರು. ಇವರ ಬುದ್ಧಿ ಮತ್ತು ಶ್ರದ್ಧೆಗೆ ಮರುಳಾದ ಅವರ ತಾತ ಅವರನ್ನು ಆಗಲೇ `ಸ್ವಾಮಿ’ ಎಂದೇ ಸಂಬೋಧಿಸುತ್ತಿದ್ದರು.

ಎಲ್ಲರಂತೆ ಓದು ವಿದ್ಯಾಭ್ಯಾಸ ಮುಗಿಸಿದ ಗಂಗಾಧರಯ್ಯ, ತಾವು ಓದಿದ ರಾಮನಗರ ಪ್ರೌಢಶಾಲೆಯಲ್ಲಿಯೇ ಕೆಲ ಕಾಲ ಗುಮಾಸ್ತರಾಗಿಯೂ ಕೆಲಸ ಮಾಡಿದರು. ಆ ನಂತರ ಬೆಂಗಳೂರಿಗೆ ಬಂದು ಬಿ.ಎಸ್ಸಿ. ಪದವಿ ಪಡೆದರು. ಅದೇ ಸಮಯಕ್ಕೆ ಸರಿಯಾಗಿ, 1968 ರಲ್ಲಿ ಬೆಳ್ಳೂರಿನ ಆದಿಚುಂಚನಗಿರಿ ಮಠದ ರಾಮಾನಂದನಾಥ ಸ್ವಾಮಿಗಳು ಅನಾರೋಗ್ಯದಿಂದ ಬಳಲುತ್ತಿದ್ದು, ಮಠಕ್ಕೆ ಯೋಗ್ಯ ಅಭ್ಯರ್ಥಿಗಳು ಬೇಕು ಎಂದು ಪತ್ರಿಕಾ ಪ್ರಕಟಣೆ ನೀಡಿದ್ದರು. ಅಧ್ಯಾತ್ಮದ ಒಲವುಳ್ಳ ಗಂಗಾಧರಯ್ಯ ಸಹಜವಾಗಿಯೇ ಚುಂಚನಗಿರಿ ಮಠದತ್ತ ಹೆಜ್ಜೆ ಹಾಕಿದರು, ಸನ್ಯಾಸತ್ವ ಸ್ವೀಕರಿಸಲು ಮುಂದಾದರು.

ಆಗ ರಾಮಾನಂದನಾಥ ಸ್ವಾಮಿಗಳು ಗಂಗಾಧರಯ್ಯ ಹೆಸರನ್ನು ಬಾಲಗಂಗಾಧರನಾಥ ಸ್ವಾಮಿ ಎಂದು ಬದಲಿಸಿದರು. ಆನಂತರ ಬಾಲಗಂಗಾಧರನಾಥರು ವಿದ್ಯುಕ್ತವಾಗಿ ದೀಕ್ಷೆ ಪಡೆದು, ಸನ್ಯಾಸತ್ವ ಸ್ವೀಕರಿಸಿದರು. ಮಠದ ಉತ್ತರಾಧಿಕಾರಿಯಾಗಲು ಇಷ್ಟು ಸಾಲದು ಎಂದರಿತ ರಾಮಾನಂದನಾಥಸ್ವಾಮಿಗಳು, ಅದ್ವೈತ ವೇದಾಂತ ಸಂಸ್ಕೃತ ಪದವಿ ಪಡೆಯಲು ಬೆಂಗಳೂರಿನ ಕೈಲಾಸ ಮಠಕ್ಕೆ ಕಳುಹಿಸಿಕೊಟ್ಟರು. pontiffsವೇದಾಧ್ಯಯನ ಪೂರ್ಣಗೊಂಡ ನಂತರ, ಸೆಪ್ಟೆಂಬರ್ 25, 1974 ರಂದು ಬಾಲಗಂಗಾಧರನಾಥ ಸ್ವಾಮಿಯವರನ್ನು ಶ್ರೀ ಆದಿಚುಂಚನಗಿರಿ ಕ್ಷೇತ್ರದ ಮಠಕ್ಕೆ 71 ನೇ ಪೀಠಾಧ್ಯಕ್ಷರನ್ನಾಗಿ ನೇಮಿಸಿದರು.

ಬಾಲಗಂಗಾಧರನಾಥ ಸ್ವಾಮಿಗಳು ಆದಿಚುಂಚನಗಿರಿ ಮಠಕ್ಕೆ ಪೀಠಾಧ್ಯಕ್ಷರಾದ ಕಾಲಕ್ಕೆ, ಕಾಲಭೈರವೇಶ್ವರ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಪ್ರಸಾದ ನೀಡುವುದಕ್ಕೂ ಕೂಡ ಕಷ್ಟವಾಗಿತ್ತು. ಮಠ ಆರ್ಥಿಕವಾಗಿ ದುಃಸ್ಥಿತಿಯಲ್ಲಿತ್ತು. ಮಂಡ್ಯ, ಬೆಂಗಳೂರು, ತುಮಕೂರು ಜಿಲ್ಲೆಗಳ ಕೆಲವು ಒಳ ಪಂಗಡಗಳಒಕ್ಕಲಿಗ ಸಮುದಾಯಕ್ಕಷ್ಟೇ ಸೀಮಿತವಾಗಿತ್ತು. ಅಂತಹ ಸಮಯದಲ್ಲಿ ಬಾಲಗಂಗಾಧರನಾಥ ಸ್ವಾಮಿಗಳು ತಾವೇ ಖುದ್ದಾಗಿ ನೇಗಿಲು ಹಿಡಿದು ಹೊಲ ಉಳುವ ಕಾರ್ಯಕ್ಕೆ ಕೈಹಾಕಿದರು. ಗಾಡಿ ಕಟ್ಟಿಕೊಂಡು ಊರೂರು ಸುತ್ತಿ ದವಸ ಧಾನ್ಯ, ತೆಂಗಿನಕಾಯಿ, ಹಣ ಸಂಗ್ರಹಿಸಿದರು. 9 ಸಲ ವಿಶ್ವ ಪರ್ಯಟನೆ ಕೈಗೊಂಡು ಮಠಕ್ಕೆ ಹಣದ ಹೊಳೆ ಹರಿಸಿದರು. ಆನಂತರ ಧಾರ್ಮಿಕ ಕಾರ್ಯಗಳಿಗಷ್ಟೇ ಸೀಮಿತವಾಗಿದ್ದ ಮಠವನ್ನು ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳತ್ತ ವಿಸ್ತರಿಸಿದರು. ಅನ್ನ, ಅಕ್ಷರ, ಆರೋಗ್ಯದ ಪರಿಕಲ್ಪನೆಗೆ ಜೀವ ತುಂಬಿದರು. ಮಠವನ್ನು ಹಂತ ಹಂತವಾಗಿ ಪ್ರಗತಿಯತ್ತ ಕೊಂಡೊಯ್ದರು.

ಬಾಲಗಂಗಾಧರನಾಥ ಸ್ವಾಮಿಗಳ ಈ ಅವಿಶ್ರಾಂತ ಸೇವೆಯ ಫಲವಾಗಿ ಇಂದು ಆದಿಚುಂಚನಗಿರಿ ಮಠ- ದೇಶದ ವಿವಿಧೆಡೆ 40 ಶಾಖಾ ಮಠಗಳನ್ನು ಹೊಂದಿದೆ. adichunchanagiri460 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದೆ. 5 ಸಾವಿರಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ, ವಿದ್ಯಾರ್ಜನೆ ನೀಡುತ್ತಿದೆ. ರಾಮನಗರ ತಾಲೂಕಿನ ಅರ್ಚಕರಹಳ್ಳಿಯಲ್ಲಿ ಅಂಧರಿಗೆ ಉಚಿತ ಶಾಲೆ ತೆರೆದಿದೆ. ಅರ್ಚಕ ವೃತ್ತಿಗೆ ಪ್ರೋತ್ಸಾಹ ನೀಡುವ ವೇದಾಗಮ ಶಾಲಾಕಾಲೇಜುಗಳನ್ನು ಶುರು ಮಾಡಿದೆ. ಮಧ್ಯಮ ವರ್ಗ ಡೊನೇಷನ್ ಕೊಟ್ಟು ಓದಿಸುವ ಉತ್ಸುಕತೆಯಿದ್ದ ಸಂದರ್ಭದಲ್ಲಿ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುವಂತಹ ನಾಲ್ಕು ಎಂಜಿನಿಯರಿಂಗ್, ಎರಡು ವೈದ್ಯಕೀಯ, ಎರಡು ಆಯುರ್ವೇದಿಕ್ ಕಾಲೇಜುಗಳನ್ನು ಸ್ಥಾಪಿಸಿದೆ. ನಾಲ್ಕು ಸುಸಜ್ಜಿತ ಆಸ್ಪತ್ರೆಗಳನ್ನು (ಜವರನಹಳ್ಳಿ ಕ್ರಾಸ್ ನಲ್ಲಿ ವೈದ್ಯಕೀಯ ಕಾಲೇಜಿಗಾಗಿ ಆಸ್ಪತ್ರೆ, ಬೆಂಗಳೂರಿನಲ್ಲಿ ಅತ್ಯಾಧುನಿಕ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ) ಕಟ್ಟಿಸಿ ಜನರ ಸೇವೆಗೆ ಒದಗಿಸಿದೆ. ಒಂದು ಕಾಲದಲ್ಲಿ ಪ್ರಸಾದಕ್ಕೂ ಕಷ್ಟವಿದ್ದ ಕಾಲಭೈರವೇಶ್ವರ ದೇವಸ್ಥಾನವನ್ನು 85 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನವೀಕರಿಸಲಾಗಿದೆ.

ಚುಂಚನಗಿರಿ ಮಠ ಹೀಗೆ ಬೃಹದಾಕಾರವಾಗಿ ಬೆಳೆದು ನಿಂತಿದ್ದು, ಅಂತರರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದ್ದು, AshokKheny-ambarish-balagangadharaಐಷಾರಾಮಿ ವಿದೇಶಿ ಕಾರುಗಳಲ್ಲಿ, ಹೆಲಿಕಾಪ್ಟರ್‌ನಲ್ಲಿ ಸ್ವಾಮೀಜಿಗಳು ಓಡಾಡುವಂತಾಗಿದ್ದು, ಮಠದ ಆಸ್ತಿ ಸುಮಾರು 15 ರಿಂದ 20 ಸಾವಿರ ಕೋಟಿ ರೂಪಾಯಿಗಳನ್ನು ದಾಟಿದ್ದು- ಕೇವಲ ಮೂರೂವರೆ ದಶಕಗಳಲ್ಲಿ. ಬಾಲಗಂಗಾಧರನಾಥರು ಪೀಠಾಧ್ಯಕ್ಷರಾಗಿದ್ದ ಕಾಲಾವಧಿಯಲ್ಲಿ.

ಇಂತಹ ಸ್ವಾಮೀಜಿಗಳನ್ನು ನಾನು ಮೊದಲ ಬಾರಿಗೆ ಕಂಡಿದ್ದು 1983 ರಲ್ಲಿ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ. ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ. ಆ ಕಾಲೇಜು ಮಾಜಿ ಮಂತ್ರಿ ಎಚ್.ಸಿ. ಶ್ರೀಕಂಠಯ್ಯನವರ ಒಡೆತನದಲ್ಲಿತ್ತು. ಹೆಸರು ಮಾತ್ರ ಆದಿಚುಂಚನಗಿರಿ ಮಠದ್ದಾಗಿತ್ತು. ಅದೇ ಸಮಯದಲ್ಲಿ, ಕಾಲೇಜಿನ ಕಾರ್ಯಕ್ರಮಕ್ಕೆ ಸ್ವಾಮೀಜಿಗಳು ಮತ್ತು ಶ್ರೀಕಂಠಯ್ಯನವರು ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಅತಿಥಿಗಳು ಆಗಮಿಸುವಾಗ, ಅವರು ನಡೆದು ಬರುವ ಹಾದಿಯುದ್ದಕ್ಕೂ ಸಾಲಾಗಿ ನಿಂತ ವಿದ್ಯಾರ್ಥಿನಿಯರು ಅವರ ಪಾದಗಳ ಮೇಲೆ ಮೆಲ್ಲಗೆ ಬೀಳುವಂತೆ ಮಲ್ಲಿಗೆ ಹೂಗಳನ್ನು ಹಾಕುತ್ತಿದ್ದರು. ಪ್ರಿನ್ಸಿಪಾಲರಾದಿಯಾಗಿ ಎಲ್ಲರೂ ಸ್ವಾಮೀಜಿಗಳ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದರು.

ಆ ನಂತರ ನನ್ನ ಗಮನಕ್ಕೆ ಬಂದ ಸಂಗತಿ ಎಂದರೆ, ಆದಿಚುಂಚನಗಿರಿ ಕಾಲೇಜಿನ ಜಾಗ ಒಕ್ಕಲಿಗರ ಸಂಘಕ್ಕೆ ಸೇರಿತ್ತು. ಅದನ್ನು ಶ್ರೀಕಂಠಯ್ಯನವರು ತಮ್ಮ ಅಧಿಕಾರ ಬಳಸಿ, ಶಿಕ್ಷಣ ಸಂಸ್ಥೆಗೆ ಬಳಸಿಕೊಂಡಿದ್ದರು. ತಂಟೆ ತಕರಾರುಗಳು ಬರಬಾರದೆಂದು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಎಂದು ಹೆಸರಿಟ್ಟಿದ್ದರು. ಆಶ್ಚರ್ಯವೆಂದರೆ, ಚುಂಚನಗಿರಿ ಮಠಕ್ಕೂ ಈ ಶಿಕ್ಷಣ ಸಂಸ್ಥೆಗೂ ಯಾವುದೇ ಸಂಬಂಧವಿರಲಿಲ್ಲ. ಆಗತಾನೆ ಬೆಳೆಯುತ್ತಿದ್ದ ಸ್ವಾಮೀಜಿಗೆ ಅಧಿಕಾರಸ್ಥ ರಾಜಕಾರಣಿಯ ಸ್ನೇಹ-ಸಂಪರ್ಕದ ಅಗತ್ಯವಿತ್ತು, ರಾಜಕಾರಣಿ ಶ್ರೀಕಂಠಯ್ಯನವರಿಗೆ ಸ್ವಾಮೀಜಿಯ ಬೆಂಬಲ ಬೇಕಾಗಿತ್ತು. ಹೀಗಾಗಿ ಅವರಿಬ್ಬರೂ ಒಂದಾಗಿದ್ದರು. ಬಹುಸಂಖ್ಯಾತ ಒಕ್ಕಲಿಗರು ಸುಮ್ಮನಾಗಿದ್ದರು. ಆದರೆ 2011 ರಲ್ಲಿ, ಮಾಜಿ ಮಂತ್ರಿ ಎಚ್.ಸಿ. ಶ್ರೀಕಂಠಯ್ಯನವರು ಇಹಲೋಕ ತ್ಯಜಿಸಿದಾಗ, ಬಾಲಗಂಗಾಧರನಾಥ ಸ್ವಾಮೀಜಿಗಳು ಚನ್ನರಾಯಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯನ್ನು ಮಠದ ವಶಕ್ಕೆ ತೆಗೆದುಕೊಂಡರು. ಶ್ರೀಕಂಠಯ್ಯನವರ ಮಗ ವಿಜಯಕುಮಾರ್‌ರನ್ನು ನಾಮಕಾವಾಸ್ತೆ ಕಾರ್ಯದರ್ಶಿಯನ್ನಾಗಿ ನೇಮಿಸಿದರು.

ಇರಲಿ, ಮಂತ್ರಿ ಶ್ರೀಕಂಠಯ್ಯನವರು ಮತ್ತು ಬಾಲಗಂಗಾಧರನಾಥ ಸ್ವಾಮಿಗಳು ಪರಸ್ಪರ ಸ್ನೇಹ-ಸಂಪರ್ಕಕ್ಕೆ ಬಂದ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಒಕ್ಕಲಿಗರಿಗೂ ಚುಂಚನಗಿರಿ ಮಠಕ್ಕೂ ಯಾವುದೇ ವೃತಾನೇಮಗಳಿರಲಿಲ್ಲ. ಯಾರ ಮನೆಯಲ್ಲೂ ಸ್ವಾಮೀಜಿಯ ಫೋಟೋ ಇಟ್ಟು ಪೂಜಿಸುತ್ತಿರಲಿಲ್ಲ. ಮಠಕ್ಕೆ ನಡೆದುಕೊಳ್ಳುವ ರೂಢಿಯೂ ಇರಲಿಲ್ಲ.

ಆದರೆ ಶ್ರೀಕಂಠಯ್ಯನವರು ಸ್ವಾಮೀಜಿಗಳಿಗೆ ಹತ್ತಿರವಾಗಿದ್ದನ್ನು, ಲಾಭ ಪಡೆದಿದ್ದನ್ನು ನೋಡಿದ ಹಾಸನ ಜಿಲ್ಲೆಯ swamy with gowdaಮತ್ತೊಬ್ಬ ರಾಜಕಾರಣಿ ಜಿ. ಪುಟ್ಟಸ್ವಾಮಿಗೌಡರೂ ಮಠಕ್ಕೆ ಹೋಗಿಬರುತ್ತ ಸ್ವಾಮೀಜಿಗಳಿಗೆ ಹತ್ತಿರವಾದರು. ಪುಟ್ಟಸ್ವಾಮಿಗೌಡರು ಆಗ ಹಾಸನ ಜಿಲ್ಲೆಯ ಪ್ರಮುಖ ರಾಜಕಾರಣಿಯಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬದ್ಧದ್ವೇಷಿಯಾಗಿದ್ದರು. ದೈತ್ಯ ದೇವೇಗೌಡರನ್ನು ಎದುರಿಸಲು ಕಾಂಗ್ರೆಸ್ ಪಕ್ಸ ಸೇರಿದ್ದರು, ಶ್ರೀಕಂಠಯ್ಯನವರೊಂದಿಗೆ ನೆಂಟಸ್ತನ ಬೆಳೆಸಿದ್ದರು.

ಆಶ್ಚರ್ಯವೆಂದರೆ, 1983 ರಿಂದ 1989 ರವರೆಗೆ ಜನತಾ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಆಗ ಒಕ್ಕಲಿಗ ಸಮುದಾಯದ ನಾಯಕನೆನ್ನಿಸಿಕೊಂಡಿದ್ದ ಎಚ್.ಡಿ.ದೇವೇಗೌಡರು ಚುಂಚನಗಿರಿ ಮಠದತ್ತ ಕಾಲಿಟ್ಟಿದ್ದಾಗಲಿ, ಸ್ವಾಮೀಜಿಯ ಸ್ನೇಹ ಸಂಪಾದಿಸಿದ್ದಾಗಲಿ ಇಲ್ಲ. ಆದರೆ 1989 ರಲ್ಲಿ ಜನತಾ ಪರಿವಾರ ಸರ್ಕಾರ ಪತನಗೊಂಡು, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ, ಒಕ್ಕಲಿಗ ಜಾತಿಯ ರಾಜಕಾರಣಿಗಳು ಮಠದತ್ತ ಕಾಲಿಡುವುದು ಹೆಚ್ಚಾಯಿತು. ರಾಜಕಾರಣಿಗಳೊಂದಿಗೆ ಸ್ವಾಮೀಜಿಗಳ ಸ್ನೇಹ ದಿನದಿಂದ ದಿನಕ್ಕೆ ವೃದ್ಧಿಸತೊಡಗಿತು.

ಇದನ್ನರಿತ ದೇವೇಗೌಡರು, 1994 ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಮೊಟ್ಟ ಮೊದಲ ಬಾರಿಗೆ ಮಠಕ್ಕೆ ಕಾಲಿಟ್ಟು, ಸ್ವಾಮೀಜಿಗಳ ಕಾಲಿಗೆ ಬಿದ್ದರು. ಆ ಚುನಾವಣೆಯಲ್ಲಿ ಜನಾಭಿಪ್ರಾಯ ಕೂಡ ಜನತಾ ಪಕ್ಷದ ಪರವಾಗಿತ್ತು. ದೇವೇಗೌಡರು ಮುಖ್ಯಮಂತ್ರಿಯಾಗಲಿ ಎಂಬುದು ಇಡೀ ರಾಜ್ಯದ ಜನರ ಆಶಯವಾಗಿತ್ತು. ಪರಿಸ್ಥಿತಿ ದೇವೇಗೌಡರ ಪರವಾಗಿದ್ದರೂ, ರಾಜ್ಯದಾದ್ಯಂತ ರ್ಯಾಲಿ (Rally) ಮಾಡಿ, ಅಂತಿಮವಾಗಿ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾರೀ ಬಹಿರಂಗ ಸಮಾವೇಶವನ್ನು ಹಮ್ಮಿಕೊಂಡಿದ್ದರು. ಆದರೆ ದೇವೇಗೌಡರು ಆ ರಾಜಕೀಯ ಸಮಾವೇಶಕ್ಕೆ, ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿಯವರನ್ನು ಕರೆಸುವ ಮೂಲಕ ಒಕ್ಕಲಿಗ ಜಾತಿಯ ಸಮಾವೇಶವನ್ನಾಗಿ ಪರಿವರ್ತಿಸಿದರು. ಹಾಗೆಯೇ ಇಡೀ ಒಕ್ಕಲಿಗ ಸಮುದಾಯ ಒಂದಾಗಿ ದೇವೇಗೌಡರ ಬೆಂಬಲಕ್ಕೆ ನಿಲ್ಲುವಂತೆ ಸ್ವಾಮೀಜಿ ಕರೆ ಕೊಡುವಂತೆ ನೋಡಿಕೊಂಡರು. ಆನಂತರ ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾದರು.

ಒಂದು ಜಾತಿಗೆ ಸೇರಿದ ಧಾರ್ಮಿಕ ಮಠವನ್ನು ಮತ್ತು ಸರ್ವಸಂಗ ಪರಿತ್ಯಾಗಿಯಂತಹ ಸ್ವಾಮೀಜಿಯನ್ನು ರಾಜಕೀಯವಾಗಿ ಹೇಗೆ ಬಳಸಿಕೊಳ್ಳಬಹುದು, ಲಾಭ ಪಡೆಯಬಹುದು ಎಂಬುದು ಎಲ್ಲರಿಗೂ ನಿಚ್ಚಳವಾಗಿ ಕಾಣತೊಡಗಿತು. ಆಗ ಬಾಲಗಂಗಾಧರನಾಥ ಸ್ವಾಮೀಜಿಯ ಶಕ್ತಿ ಏನೆಂಬುದು ಎಲ್ಲರ ಅರಿವಿಗೂ ಬಂತು. ಮಾಧ್ಯಮಗಳ ಪರ-ವಿರೋಧದ ಪ್ರಚಾರವೂ ಜೋರಾಯಿತು. yeddy-ashok-katta-balagangadharಒಕ್ಕಲಿಗ ಜಾತಿಗೆ ಸೇರಿದ ಹಿರಿ-ಮರಿ ರಾಜಕಾರಣಿಗಳು ಮಠಕ್ಕೆ ಹೋಗುವುದು, ಸ್ವಾಮೀಜಿಗಳ ಆಶೀರ್ವಾದ ಪಡೆಯುವುದು ಹೆಚ್ಚಾಯಿತು. ಹಾಗೆಯೇ ಸ್ವಾಮೀಜಿಗಳೂ ತಮ್ಮ ಈ ಶಕ್ತಿ ಮತ್ತು ಸಂಪರ್ಕವನ್ನು ಮಠದ ಅಭಿವೃದ್ಧಿಗಾಗಿ ಬಳಸಿಕೊಳ್ಳುವ ಬಗ್ಗೆ ಯೋಚಿಸಿದರು. ಬೆಳ್ಳೂರಿನ ಚುಂಚನಗಿರಿ ಕ್ಷೇತ್ರಕ್ಕಷ್ಟೇ ಸೀಮಿತವಾಗಿದ್ದ ಮಠ ದೇಶದಾದ್ಯಂತ 40 ಶಾಖಾ ಮಠಗಳನ್ನು, ಹತ್ತಾರು ಮರಿಸ್ವಾಮಿಗಳನ್ನು ಹೊಂದುವಂತಾಯಿತು. ಹಾಗೆಯೇ 460 ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸಾರ್ವಭೌಮತೆಯನ್ನು ಸ್ಥಾಪಿಸಿತು. ಆರ್ಥಿಕವಾಗಿ ಹಿಂದುಳಿದಿದ್ದ ಮಠ ಸಮೃದ್ಧಿಯತ್ತ ದಾಪುಗಾಲು ಹಾಕುವಂತಾಯಿತು. ಮೇಲ್ಜಾತಿಯ ಸ್ವಾಮೀಜಿಗಳಾದ ವಿಶ್ವೇಶತೀರ್ಥ, ಶಿವಕುಮಾರಸ್ವಾಮಿಗಳ ಸರಿಸಮಕ್ಕೆ ವೇದಿಕೆಯನ್ನಲಂಕರಿಸುವ ಮಟ್ಟಕ್ಕೆ ಬಾಲಗಂಗಾಧರನಾಥರು ಬೆಳೆದು ನಿಂತರು. ಇದನ್ನು ನೋಡಿದ ಮುಖ್ಯಮಂತ್ರಿ ದೇವೇಗೌಡರು ಇದೇ ಆದಿಚುಂಚನಗಿರಿ ಸ್ವಾಮೀಜಿಯನ್ನು ಪಕ್ಕಕ್ಕೆ ಸರಿಸಿ, ಕಂಗೇರಿಯಲ್ಲಿ ಮತ್ತೊಂದು ವಿಶ್ವಒಕ್ಕಲಿಗ ಮಠವನ್ನು ಸ್ಥಾಪಿಸಿ, ಚಂದ್ರಶೇಖರಸ್ವಾಮಿಯನ್ನು ಪೀಠಾಧ್ಯಕ್ಷರನ್ನಾಗಿ ಮಾಡಿದ್ದೂ ಆಯಿತು.

ಆದರೂ ಬಾಲಗಂಗಾಧರನಾಥ ಸ್ವಾಮೀಜಿಗಳ ಪ್ರಭಾವವೇನೂ ಕಡಿಮೆಯಾಗಲಿಲ್ಲ. ಅಷ್ಟೇ ಅಲ್ಲ, ಅವಕಾಶವಾದಿ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು, ಭಟ್ಟಂಗಿ ದಲ್ಲಾಳಿಗಳು, ಹುಸಿ ಹೋರಾಟಗಾರರು, ಅಸಾಹಿತಿಗಳು, ಅಡ್ಡದಾರಿಯಲ್ಲಿ ಅತಿಶ್ರೀಮಂತರಾದ ರಿಯಲ್ ಎಸ್ಟೇಟ್ ಕುಳಗಳು ಬಾಲಗಂಗಾಧರನಾಥ ಸ್ವಾಮೀಜಿಗಳ ಕೃಪಾಶೀರ್ವಾದಕ್ಕಾಗಿ ಕಾತರಿಸತೊಡಗಿದರು. ಅವರಿಗೆ ಇವರು, ಇವರಿಗೆ ಅವರು ಪರಸ್ಪರ ನೆರವಾಗಿ ಇಬ್ಬರೂ ಅಭಿವೃದ್ಧಿ ಹೊಂದಿದರು. vokkaliga-meet-hinduತದನಂತರ ಇದು ಇದೇ ರೀತಿಯ ಎಲ್ಲ ಜಾತಿಯ ಜನಗಳಿಗೂ ವಿಸ್ತರಣೆಯಾಯಿತು. ಸ್ವಾಮೀಜಿಯವರ ಸಾವಿನಿಂದ ತುಂಬಲಾರದ ನಷ್ಟ ಅಂತ ಏನಾದರೂ ಆಗಿದ್ದರೆ ಅದು ಈ ಕ್ರೀಮಿ ಲೇಯರ್‌ಗೆ.

ಆ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮಿಯವರಿಗೆ ಮಾದರಿಯಾಗಿದ್ದು, ಕಣ್ಣೆದುರಿಗಿದ್ದದ್ದು ಸಮೃದ್ಧವಾಗಿ ಬೆಳೆದು ನಿಂತಿದ್ದ ಮೇಲ್ಜಾತಿಯ ಬ್ರಾಹ್ಮಣ ಮತ್ತು ಲಿಂಗಾಯತ ಮಠಗಳು. ಆ ಮಠಗಳು, ಸ್ವಾಮೀಜಿಗಳು ಏನು ಮಾಡುತ್ತಿದ್ದರೋ ಅದನ್ನೇ ಬಾಲಗಂಗಾಧರನಾಥರೂ ಮಾಡಿದರು, ಚುಂಚನಗಿರಿ ಕ್ಷೇತ್ರವನ್ನು ಒಕ್ಕಲಿಗರ ಸಾಮ್ರಾಜ್ಯವನ್ನಾಗಿ ಪರಿವರ್ತಿಸಿದರು. ಇದರ ಪರಿಣಾಮವಾಗಿ ಎಲ್ಲ ರೀತಿಯಿಂದಲೂ ಹಿಂದುಳಿದಿದ್ದ ಕೆಳಜಾತಿಯ ಜನರಲ್ಲಿ ಅಸೂಯೆ ಹುಟ್ಟಿತು. ತಮ್ಮ ಜಾತಿಗೂ ಒಂದು ಮಠ, ಒಬ್ಬ ಸ್ವಾಮೀಜಿ ಬೇಕೆಂಬ ಬೇಡಿಕೆ ಬೇರುಬಿಡತೊಡಗಿತು. ಇದರ ಫಲವಾಗಿ ಇವತ್ತು ಒಂದೊಂದು ಜಾತಿಗೂ ಒಬ್ಬರಲ್ಲ ಹತ್ತಾರು ಸ್ವಾಮೀಜಿಗಳು, ಮಠಗಳು ಹುಟ್ಟಿಕೊಳ್ಳುವಂತಾಯಿತು. ಕರ್ನಾಟಕ ಕಾವಿಮಯವಾಯಿತು.

ಇದು ಸಾಲದು ಎಂಬಂತೆ, ದಕ್ಷಿಣ ಭಾರತದ ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ, ಬಜೆಟ್‌ನಲ್ಲಿ ಮಠಗಳಿಗೆ ಹಣ ನೀಡುವ ಹೊಸ ಸಂಪ್ರದಾಯಕ್ಕೆ ನಾಂದಿಯಾಡಿತು. ಅದರಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪನವರು ಮಠಗಳಿಗೆ ಕೋಟ್ಯಂತರ ರೂಪಾಯಿಗಳ ಅನುದಾನ ನೀಡಿ ಹೊಸ ಇತಿಹಾಸವನ್ನೇ ಬರೆದರು. ಸಾರ್ವಜನಿಕರ ತೆರಿಗೆಯ ಹಣವನ್ನು ಹೀಗೆ ಅವರ ಅನುಕೂಲಕ್ಕೆ ಹಂಚಿದ್ದು ಮಹಾಪರಾಧ ಎಂದು ಮುಖ್ಯಮಂತ್ರಿಗಳಿಗೂ ಅನ್ನಿಸಲಿಲ್ಲ, ಪಡೆದ ಸ್ವಾಮೀಜಿಗಳಿಗೂ ಅನ್ನಿಸಲಿಲ್ಲ.

ಇವತ್ತು ಆದಿಚುಂಚನಗಿರಿ ಮಠ ಸಮೃದ್ಧವಾಗಿ ಬೆಳೆದು ನಿಂತಿರಬಹುದು, ಅತಿಶ್ರೀಮಂತ ಮಠಗಳಲ್ಲಿ ಒಂದಾಗಿರಬಹುದು. ಇದರ ಹಿಂದೆ ಬಾಲಗಂಗಾಧರನಾಥ ಸ್ವಾಮೀಜಿಗಳ ಪ್ರಾಮಾಣಿಕ ಶ್ರಮವಿರಬಹುದು. ಇದು ಒಕ್ಕಲಿಗ ಸಮುದಾಯದಲ್ಲಿ ಹೆಮ್ಮೆಯ ವಿಷಯವಾಗಿರಬಹುದು. ಮಠ ಮತ್ತು ಸ್ವಾಮೀಜಿಯಿಂದ ಕೆಲವರಿಗೆ ಅನುಕೂಲವಾಗಿರಬಹುದು. ಈ ಅನುಕೂಲ ಎನ್ನುವುದೇ ಇವತ್ತಿನ ಸಂದರ್ಭದಲ್ಲಿ ಬಹು ದೊಡ್ಡ ಕಾಣಿಕೆಯಾಗಿ ಕಾಣಬಹುದು. ಮಾಧ್ಯಮಗಳ ಹೊಗಳಿಕೆಗೆ ಪಾತ್ರವಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಲೂಬಹುದು. ಆ ಮೂಲಕ ಬಾಲಗಂಗಾಧರನಾಥ ಸ್ವಾಮೀಜಿಯವರ ಸೇವೆ, ಸಾಧನೆ, ಸಾರ್ಥಕ ಬದುಕು ಇನ್ನೊಂದಿಷ್ಟು ಸ್ವಾಮೀಜಿಗಳಿಗೆ ಮಾದರಿಯಾಗಲೂಬಹುದು.

ಆದರೆ ಅವರ ಸಾವಿನ ನಂತರ, ಅವರು ಹಾಕಿಕೊಟ್ಟ ಹಾದಿಯಲ್ಲಿಯೇ ಮಠ ಮುಂದುವರೆಯುವುದೆ? ಜಾತಿರಾಜಕಾರಣದ ಶಕ್ತಿಕೇಂದ್ರವಾಗುಳಿಯುವುದೆ? ಇಲ್ಲ, ಎಲ್ಲ ಜಾತಿಯ ಜನರನ್ನು ಒಳಗೊಳ್ಳುವ ಅಪ್ಪಟ ಧಾರ್ಮಿಕ ಕ್ಷೇತ್ರವಾಗಲಿದೆಯೆ? ಜಾತಿ ಮತ್ತು ಮತಗಳನ್ನು ಮೀರಿ, ಪ್ರಜಾಪ್ರಭುತ್ವವಾದಕ್ಕೆ ಪೂರಕವಾಗಿ ಕೆಲಸ ಮಾಡಲಿದೆಯೇ?

ಮರಣದಂಡನೆ ಮತ್ತು ಹ್ಯಾಂಗ್‌ಮನ್‌ಗಳು

– ಬಸವರಾಜು

ಭಾರತದ 1.2 ಬಿಲಿಯನ್ ಜನರಲ್ಲಿ ಎಲ್ಲಾ ತರಹದ ಕೆಲಸಗಳನ್ನು ಮಾಡುವವರಿದ್ದಾರೆ. ಆದರೆ ಇಲ್ಲಿ ಒಂದು ಕೆಲಸ ಖಾಲಿ ಇದೆ. ಆದ್ರೆ ಅದನ್ನು ಮಾಡೋಕೆ ಯಾರೂ ಮುಂದೆ ಬರುತ್ತಿಲ್ಲ. ಅದು ಗಲ್ಲಿಗೇರಿಸುವ ಕೆಲಸ!

2004ರಲ್ಲಿ ಅಸ್ಸಾಂ ಗಲ್ಲಿಗೇರಿಸುವ ಕೆಲಸಕ್ಕೆ ಆಸಕ್ತರನ್ನು ಕರೆದಿತ್ತು. ಈ ವೇಳೆ ಯಾರೊಬ್ಬರೂ ಅತ್ತ ಕಡೆ ತಲೆ ಹಾಕಿರಲಿಲ್ಲ. ಇಂದು ದೇಶದಾದ್ಯಂತ ಗಲ್ಲಿಗೇರಿಸುವ ಕೆಲಸ ಮಾಡುತ್ತಿರುವವರು ಕೆಲವೇ ಕೆಲವು ಮಂದಿ ಮಾತ್ರ. ಬಹುತೇಕರು ನಿವೃತ್ತಿ ತೆಗೆದುಕೊಂಡು ಮನೆಯಲ್ಲಿದ್ದಾರೆ.

ಮಹಾರಾಷ್ಟ್ರದಲ್ಲಿದ್ದ ಗಲ್ಲಿಗೇರಿಸುವ ಕೆಲಸಗಾರ ಜಾಧವ್ 1995ರಲ್ಲಿ ನಿವೃತಿಯಾದ. ತಿಹಾರ್ ಜೈಲ್ನಲ್ಲಿ ಅಂತಿಮ ಬಾರಿಗೆ 1989ರಲ್ಲಿ ಗಲ್ಲಿಗೇರಿಸಿದ್ದು. ಇಂದಿರಾ ಗಾಂಧಿ ಹಂತಕರಾದ ಸತ್ವಂತ್ ಸಿಂಗ್ ಮತ್ತು ಕೆಹಾರ್ ಸಿಂಗ್ರನ್ನು ಗಲ್ಲಿಗೇರಿಸಲಾಯ್ತು. ಇವರನ್ನು ಗಲ್ಲಿಗೇರಿಸಿದ್ದು ಕಲ್ಲು ಹಾಗೂ ಫಕೀರ್ ಎಂಬ ಹ್ಯಾಂಗ್ಮ್ಯಾನ್ಗಳು. ಅವರೀಗ ಇಲ್ಲ.

ಆದ್ರೆ ಕಲ್ಲು ಅವರ ಮಗ ಮಾಮು ಸಿಂಗ್ ಮೀರತ್ ಜೈಲಿನಲ್ಲಿ ಹ್ಯಾಂಗ್‌ಮ್ಯಾನ್  ಆಗಿ ಕೆಲಸ ಮಾಡುತ್ತಿದ್ದರು. ಇವರು 1997ರಲ್ಲಿ 10 ಮಂದಿಯ ಕುತ್ತಿಗೆಗೆ ನೇಣು ಬಿಗಿದಿದ್ದಾರೆ. ಆದರೆ, 1995 ರಿಂದಲೂ ಬಿಹಾರ, ಅಸ್ಸಾಂ, ಮಹಾರಾಷ್ಟ್ರ ಒಳಗೊಂಡು ಹಲವಾರು ರಾಜ್ಯದ ಜೈಲುಗಳಲ್ಲಿ ಹ್ಯಾಂಗ್‌ಮ್ಯಾನ್‌ಗಳ ಕೆಲಸ ಖಾಲಿಯಿದೆ. ಬಹುಶಃ ಇದಕ್ಕೆ ಅವರಿಗೆ ಸಿಗುವ ಕೇವಲ 150 ರೂಪಾಯಿ ಕೂಲಿ, ತಾತ್ಕಾಲಿಕವಾದ ಕೆಲಸ, ಪಾಪಪ್ರಜ್ಞೆಯ ಕೀಳರಿಮೆ, ಇವೆಲ್ಲವೂ ಇರಬಹುದು.

ಇಷ್ಟಕ್ಕೂ, ಗಲ್ಲಿಗೇರಿಸುವ ದಿನ ಹ್ಯಾಂಗ್‌ಮ್ಯಾನ್ ಏನ್ ಕೆಲಸ ಮಾಡ್ಬೇಕು? ಆತ ಬೆಳಗ್ಗೆ 5 ಗಂಟೆಗೆ ಏಳಬೇಕು. ಗಲ್ಲುಗೇರುವವನಿಗೆ ಚಹ ನೀಡಿ, ಅವನ ಮೆಚ್ಚುಗೆಯ ಪವಿತ್ರ ಗ್ರಂಥವನ್ನು ಓದಲು ಕೊಡಬೇಕು. ಅಲ್ಲದೇ ಕೊನೆಯ ಆಸೆಯನ್ನೂ ಫೂರೈಸಲು ಮುಂದಾಗಬೇಕು.

ಮತ್ತು, ಗಲ್ಲಿಗೇರಿಸುವುದೂ ಒಂದು ಕಲೆ. ನೇಣಿಗೇರಿಸುವ ಪ್ರಕ್ರಿಯೆ ಸರಳವಾಗುವ ನಿಟ್ಟಿನಲ್ಲಿ ಹಗ್ಗ ತಯಾರಿಸಲು ಕೆಲವು ಹಂತಗಳ ತಯಾರಿ ಅಗತ್ಯವಿರುತ್ತದೆ. ಯಾವುದೇ ವ್ಯಕ್ತಿಯನ್ನು ಗಲ್ಲಿಗೆ ಹಾಕುವ ಮೊದಲು ಮಾರ್ಜಕ, ತುಪ್ಪ ಮತ್ತು ಇತರ ದ್ರವ್ಯಗಳನ್ನು ಹಗ್ಗಕ್ಕೆ ಲೇಪಿಸುತ್ತಾರೆ. ಮತ್ತು ನೇಣಿಗೆ ಹಾಕುವ ವ್ಯಕ್ತಿ ಅಪರಾಧಿಯನ್ನು ಗಲ್ಲಿಗೇರಿಸುವ ಸಂದರ್ಭದಲ್ಲಿ ಸ್ವತಃ ದೃಢ ಮನೋಭಾವವನ್ನು ಹೊಂದಿರುವುದು ಅಗತ್ಯ.

ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ತಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಳೆದ ನಾಲ್ಕು ದಶಕಗಳಿಂದ ಈ 65ರ ಮಾಮು ಸಿಂಗ್ ನೇರ ಅಥವಾ ಪರೋಕ್ಷವಾಗಿ ಪಾತಕಿಗಳನ್ನು ಗಲ್ಲಿಗೆ ಹಾಕುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ಬಂದಿದ್ದರು.

ಇಷ್ಟರವರೆಗೆ ಮಾಮು ಸಿಂಗ್ ಹಲವು ರಾಜ್ಯಗಳಲ್ಲಿ 10 ಮಂದಿಯನ್ನು ನೇಣಿಗೇರಿಸಿದ್ದಾರೆ. ಅವರ ಪ್ರಕಾರ ತನ್ನ ಅನುಭವವನ್ನು ಪರಿಗಣಿಸಿ ಸರಕಾರವು ತನ್ನನ್ನೇ ಕಸಬ್ ನೇಣಿಗೆ ಹಾಕಲು ಕರೆಸುತ್ತದೆ. ಹಾಗೆ ಮಾಡಿದಲ್ಲಿ ನನಗೆ ಅತೀವ ಸಂತೋಷವಾಗುತ್ತದೆ ಎಂದು ಹೇಳಿಕೊಂಡಿದ್ದರು. ಆದ್ರೆ ಕಸಬ್ನನ್ನು ಗಲ್ಲಿಗೇರಿಸುವ ಮುಂಚೆಯೇ ಮಾಮು ಸಿಂಗ್ ಸತ್ತರು.

2009ರಲ್ಲಿ ದೇಶದ ಕೊನೆಯ ಹ್ಯಾಂಗ್‌ಮ್ಯಾನ್‌ ಅನಿಸಿಕೊಳ್ಳುತ್ತಿದ್ದ ನಾಥಾ ಮಲ್ಲಿಕ್ ಕೂಡ ಇಲ್ಲವಾದ. ಈ ಮೂಲಕ ರಾಷ್ಟ್ರದ ಹಲವು ಜೈಲುಗಳಲ್ಲಿ ಗಲ್ಲಿಗೇರಿಸುವ ಹುದ್ದೆ ಖಾಲಿಯಾಯ್ತು. 1995ರಿಂದ ಇಲ್ಲಿಯವರೆಗೂ ಒಬ್ಬರೂ ಆ ಕೆಲಸಕ್ಕೆ ಸ್ವಯಂಪ್ರೇರಿತರಾಗಿ ಸೇರಿಕೊಳ್ಳಲಿಲ್ಲ. ಇವತ್ತು ರಾಷ್ಟ್ರದ ಹಲವು ಜೈಲುಗಳಲ್ಲಿ ಹ್ಯಾಂಗ್‌ಮ್ಯಾನ್‌ಗಳೇ ಇಲ್ಲ. ಆದರೆ ಗಲ್ಲು ಶಿಕ್ಷೆಗೆ ಒಳಪಟ್ಟ 300 ಮಂದಿ ಖೈದಿಗಳಿದ್ದಾರೆ. ಈಗಾಗಿಯೇ, ಕಸಬ್‌ನನ್ನು ಅನಿವಾರ್ಯವಾಗಿ ಸ್ವತಃ ಜೈಲಿನ ಜೈಲರ್ ಗಲ್ಲಿಗೇರಿಸಬೇಕಾಯಿತು.

ಮರಣದಂಡನೆಯನ್ನು ರದ್ದು ಪಡಿಸಬೇಕೆಂದು ಜಾಗತಿಕ ಮಟ್ಟದಲ್ಲಿ ಮತ್ತು ಮುಂದುವರೆದ ದೇಶಗಳಲ್ಲಿ ಜನಾಭಿಪ್ರಾಯ ರೂಪುಗೊಳ್ಳುತಿರುವಾಗ ಬಹುಶಃ ಭಾರತದಲ್ಲಿಯೂ ಮುಂದಿನ ದಿನಗಳಲ್ಲಿ ಹ್ಯಾಂಗ್‌ಮ್ಯಾನ್‌ಗಳು ಇಲ್ಲವಾಗಬಹುದೇನೊ.