Category Archives: ಸದಾನಂದ ಲಕ್ಷ್ಮೀಪುರ

ಸಾಹಿತ್ಯ ಸಮ್ಮೇಳನ = ಊಟ + ವಸತಿ!!

– ಸದಾನಂದ ಲಕ್ಷ್ಮೀಪುರ

ಶ್ರವಣಬೆಳಗೊಳದಲ್ಲಿ ನಡೆದದ್ದು ಅದ್ಧೂರಿ ಸಾಹಿತ್ಯ ಸಮ್ಮೇಳನ. ಸಾಹಿತ್ಯ ಪರಿಷತ್, ಜೈನ ಮಠದ ಸ್ವಾಮೀಜಿ ಹಾಗೂ ಸಮ್ಮೇಳನದ ವ್ಯವಸ್ಥೆಗೆ ಓಡಾಡಿದ ಎಲ್ಲರಿಗೂ ಅನ್ನಿಸಿದೆ – ಇದೊಂದು ಯಶಸ್ವಿ ಸಮ್ಮೇಳನ. hassan-sahitya-sammelana-2ಹಾಗಾದರೆ, ಅವರು ಕಂಡ ಯಶಸ್ಸು ಯಾವುದು..? ಅವರ ಮಾತುಗಳಿಂದ ಗ್ರಹಿಸಬಹುದಾದ್ದೆಂದರೆ, ಊಟಕ್ಕಾಗಿ ಗದ್ದಲವಾಗಲಿಲ್ಲ. ಸರಕಾರಿ ನೌಕರರು ಓಓಡಿಗಾಗಿ ಬಟ್ಟೆ ಹರಿದುಕೊಳ್ಳಲಿಲ್ಲ. ವಸತಿ ಸಮಸ್ಯೆ ಸರಿಯಿಲ್ಲ ಎಂಬ ಕೂಗಾಟಗಳಿರಲಿಲ್ಲ. ಮುಖ್ಯವಾಗಿ ಈ ತೆರೆನ ಸುದ್ದಿಗಳಾವುವೂ ಮಾಧ್ಯಮಗಳಲ್ಲಿ ವರದಿಯಾಗಲಿಲ್ಲ ಎಂಬ ಕಾರಣಕ್ಕೆ, ಅವರು ‘ಯಶಸ್ವಿ’ ಪದ ಪ್ರಯೋಗ ಮಾಡುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವುದೆಂದರೆ, ‘ವ್ಯವಸ್ಥೆ’ ಮಾಡುವುದು ಎಂಬ ಅರ್ಥಕ್ಕೆ ಸೀಮಿತವಾಗಿರುವುದೇ ಇಷ್ಟಕ್ಕೆಲ್ಲಾ ಕಾರಣ. ಸಮ್ಮೇಳನಕ್ಕೆ ಸಂಬಂಧಿಸಿದಂತೆ, ಹಾಸನದಲ್ಲಿ ನಡೆದ ಬಹುತೇಕ ಸಭೆಗಳಲ್ಲಿ ವ್ಯಕ್ತವಾಗಿದ್ದು ಊಟ, ವಸತಿ, ವೇದಿಕೆ ವಿಚಾರಗಳು. ಬಂದವರಿಗೆಲ್ಲಾ ಇರಲು ವ್ಯವಸ್ಥೆ ಮಾಡಿ, ಹೊತ್ತಿಗೆ ಸರಿಯಾಗಿ ಊಟ ಹಾಕಿದರೆ ಸಮ್ಮೇಳನ ಖಂಡಿತ ‘ಯಶಸ್ವಿ’ ಎಂದೇ ಅನೇಕರ ಅಭಿಪ್ರಾಯ. ಈ ಬಾರಿ ವೇದಿಕೆಗೆ ಆದ ಖರ್ಚು ಬರೋಬ್ಬರಿ 1.88 ಕೋಟಿ ರೂ. ಅದರಲ್ಲಿ ರಾಜ್ ಎಂಟರ್ ಪ್ರೈಸಸ್ ನವರಿಗೆ 1.70 ಕೋಟಿ ರೂ. ಉಳಿದ ಹದಿನೆಂಟು ಲಕ್ಷ ಖರ್ಚಾದದ್ದು, ಆಯ್ಕೆ ಮಾಡಿಕೊಂಡಿದ್ದ ಜಾಗೆಯ ಸಮತಟ್ಟು ಮಾಡಲು. ವಿಚಿತ್ರ ಎಂದರೆ, ಸಮತಟ್ಟು ಮಾಡುವ ಕಾಮಗಾರಿಗೆ ಮೊದಲು ಲೋಕೋಪಯೋಗಿ ಇಲಾಖೆ 42 ಲಕ್ಷ ರೂಗಳ ಅಂದಾಜು ಸಿದ್ಧಪಡಿಸುತ್ತದೆ. ನಂತರ ಭೂ ಸೇನಾ ನಿಗಮದವರಿಗೆ ಆ ಕೆಲಸ ಒಪ್ಪಿಸಿ 18 ಲಕ್ಷ ರೂಗಳಿಗೆ ಮಾಡಲು ಒಪ್ಪಿಸಲಾಗುತ್ತದೆ. ನಿಜಕ್ಕೂ 42 ಲಕ್ಷ ರೂ ಮೌಲ್ಯದ ಕೆಲಸವನ್ನು 18 ಲಕ್ಷಕ್ಕೆ ಮಾಡಲು ಸಾಧ್ಯವೇ..? ಅಥವಾ 42 ಲಕ್ಷದ ಅಂದಾಜು ಸಿದ್ಧಪಡಿಸಿದವರು, ಎಂಜಿನಿಯರಿಂಗ್ ಓದದವರೇ?

ವೇದಿಕೆ ಸಿದ್ಧಪಡಿಸಲು ಟೆಂಡರ್ ಆಹ್ವಾನಿಸಲಾಗಿತ್ತು. ರಾಜ್ ಎಂಟರ್ ಪ್ರೈಸಸ್ ನವರು 2.28 ಕೋಟಿರೂಗಳನ್ನು ನಮೂದಿಸಿದ್ದರು. ಅದುವೇ ಅತೀ ಕಡಿಮೆ. ನಂತರ ಜಿಲ್ಲಾಡಳಿತ, ಹಣಕಾಸು ಸಮಿತಿ, ಸಾಹಿತ್ಯ ಪರಿಷತ್ತು ರಾಜ್ ಎಂಟರ್ ಪ್ರೈಸಸ್ ನವರೊಂದಿಗೆ ಮಾತುಕತೆ ಮಾಡಿ, ಆ ಕೆಲಸವನ್ನು 1.70 ಕೋಟಿಗೆ ಒಪ್ಪಿಸಿದರು! ಆ ಮೂಲಕ 58 ಲಕ್ಷರೂಗಳಷ್ಟು ವೆಚ್ಚ ಕಡಿಮೆಯಾಯಿತು. ವೇದಿಕೆ ನಿರ್ಮಾಣ ವೆಂದರೆ, ಅದರಲ್ಲಿ ಪುಸ್ತಕ ಮಳಿಗೆಗಳು, hassana-sahitya-sammelana-1ಊಟದ ಹಾಲ್ ಗಳು, ಮೀಡಿಯಾ ಸೆಂಟರ್, ಏಳೆಂಟು ಸಾವಿರ ಹಾಸಿಗೆ ಒದಗಿಸುವುದು, 200 ರಷ್ಟು ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸುವುದು..ಹೀಗೆ ಸಮ್ಮೇಳನಕ್ಕೆ ಬೇಕಾಗುವ ಎಲ್ಲಾ ತಾತ್ಕಾಲಿಕ ಕಟ್ಟಡಗಳ ನಿರ್ಮಾಣ ಸೇರಿಕೊಳ್ಳುತ್ತದೆ. ಮೂರು ದಿನದ ಸಂಭ್ರಮಕ್ಕಾಗಿ ನೂರಾರು ಕಾರ್ಮಿಕರು 20 ದಿನಗಳಿಗೂ ಹೆಚ್ಚುಕಾಲ ಶ್ರಮಪಟ್ಟು ವೇದಿಕೆ ನಿರ್ಮಿಸಿದ್ದಾರೆ.

ಈ ದುಬಾರಿ ವೆಚ್ಚದ ಅದ್ಧೂರಿತನ ಬೇಕಿತ್ತೆ? ಇದುವರೆಗೆ ನಡೆದ ಯಾವುದೇ ಸಮ್ಮೇಳನದಲ್ಲಿ ವೇದಿಕೆಗಾಗಿ ಈ ಪಾಟಿ ಖರ್ಚಾಗಿರಲಿಲ್ಲ. ಹಿಂದಿನ ವರ್ಷ ಮಡಿಕೇರಿಯಲ್ಲಿ ನಡೆದಾಗ ವೇದಿಕೆ ನಿರ್ಮಾಣಕ್ಕೆ ಆದ ಖರ್ಚು 1.31 ಕೋಟಿ ರೂ. ಅಲ್ಲಿ ಊಟ, ವಸತಿ, ಗೋಷ್ಟಿಗಳು ಎಲ್ಲದರ ಒಟ್ಟು ವೆಚ್ಚ 3.31 ಕೋಟಿ ರೂ. ಆದರೆ ಈ ಬಾರಿ ಒಟ್ಟು ವೆಚ್ಚ ಹಿಂದಿನದ್ದಕ್ಕಿಂತ ಎರಡು ಪಟ್ಟು ಹೆಚ್ಚಾದರೂ ಅಚ್ಚರಿ ಇಲ್ಲ. ಸಾಹಿತ್ಯ ಪರಿಷತ್ ಲೆಕ್ಕ ಹಾಕಿರುವಂತೆ ಒಟ್ಟು ಅಗತ್ಯವಾದ ಹಣ 4.8 ಕೋಟಿ ರೂ. ಅದರಲ್ಲಿ ಶ್ರವಣಬೆಳಗೊಳ ಮಠ ವಹಿಸಿಕೊಂಡಿರುವ ಊಟದ ಖರ್ಚು ಸೇರಿಕೊಂಡಿಲ್ಲ.

ಸಮ್ಮೇಳನವನ್ನು ‘ಯಶಸ್ವಿ’ ಎಂದು ಘೋಷಿಸುವವರ ಮನಸ್ಸಿನಲ್ಲಿ ಈ ಪಾಟಿ ದುಡ್ಡು ಮಹತ್ವವಾದ ಕಾರ್ಯವೊಂದಕ್ಕೆ ಖರ್ಚಾಗಿದೆ ಎಂಬ ಭಾವನೆ ಇದ್ದಂತಿದೆ. ಊಟ ಮಾಡಿದವರು ವ್ಯವಸ್ಥೆ ಚೆನ್ನಾಗಿತ್ತು ಎಂದಿದ್ದಾರೆ. ಉಳಿದುಕೊಂಡವರು ವಸತಿ ವ್ಯವಸ್ಥೆ ಪರವಾಗಿಲ್ಲ ಎಂದರು. ಹಲವರು ಸಾಂಸ್ಕೃತಿಕ ಕಾರ್ಯಕ್ರಮಗಳು ಮನೆಸೆಳೆದವು ಎಂದು ಹೇಳುವವರು ಅನೇಕರಿದ್ದಾರೆ. ಹಾಗಾದರೆ ಸಮ್ಮೇಳನ ನಡೆಸುವುದು ಈ ಕಾರಣಗಳಿಗಾಗಿ ಮಾತ್ರವಾ..?

ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ: ರೈತರಿಗೆ ನೇಣಿನ ಕುಣಿಕೆ – ಸರ್ವಾಧಿಕಾರಿ ಆಡಳಿತ ಅಂದ್ರೆ ಇದಲ್ಲದೆ ಮತ್ತೇನು..?

– ಸದಾನಂದ ಲಕ್ಷ್ಮೀಪುರ

ರೈತರ ಸರಣಿ ಆತ್ಮಹತ್ಯೆಗಳ ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಮಹಾರಾಷ್ಟ್ರ ವಿದರ್ಭ ಪ್ರದೇಶದ ಅಕೋಲ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಸಂಸದ ಸಂಜಯ್ ಧೋತ್ರೆ ಮೊನ್ನೆ ತಮ್ಮ ಹೇಳಿಕೆಯಿಂದ ಸುದ್ದಿಯಲ್ಲಿದ್ದರು. ಅವರು ಹೇಳಿದ್ದು ರೈತರು ತಮ್ಮ ಸಾಮರ್ಥ್ಯದಿಂದ ಕೃಷಿ farmers-suicideಮಾಡಲಾಗದಿದ್ದರೆ, ಸಾಯಲಿ ಬಿಡಿ. ಹಾಗೆ ಹೇಳಿದ್ದು ರೈತರ ಕಾರ್ಯಕ್ರಮವೊಂದರಲ್ಲಿ. ಸಭೆಯಲ್ಲಿ ಹಾಜರಿದ್ದ ಕಂದಾಯ ಸಚಿವ ಏಕನಾಥ್ ಖಡ್ಸೆ ತನ್ನ ಪಕ್ಷದ ಸಂಸದನ ಮಾತಿಗೆ ಸಮ್ಮತಿ ಸೂಚಿಸುವ ಧಾಟಿಯಲ್ಲಿ ತಲೆದೂಗಿದ್ದರು.

ಅದೇ ಹೊತ್ತಿಗೆ ಕೇಂದ್ರ ಸರಕಾರದ ಕ್ಯಾಬಿನೆಟ್ 2013 ರ ಭೂ ಸ್ವಾಧೀನ ಕಾಯಿದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಮೂಲಕ ಜಾರಿಗೆ ತೀರ್ಮಾನಿಸಿತು. ಕ್ಯಾಬಿನೆಟ್ ತೀರ್ಮಾನದಂತೆ, ರಕ್ಷಣಾ, ಇಂಧನ, ಗ್ರಾಮೀಣ ವಸತಿ, ಕೈಗಾರಿಕಾ ಕಾರಿಡಾರ್ ಒಳಗೊಂಡಂತೆ ಕೆಲ ವಲಯಗಳಲ್ಲಿನ ಹೂಡಿಕೆಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಮಾಲೀಕರ/ರೈತರ ಸಮ್ಮತಿ ಕೇಳುವ ಅಗತ್ಯವಿಲ್ಲ. ಅಷ್ಟೇ ಅಲ್ಲ ಅಂತಹ ಯೋಜನೆಯಿಂದ ಆಗುವ ಸಾಮಾಜಿಕ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸುವ ಅಗತ್ಯವೂ ಇಲ್ಲ. ಮತ್ತಷ್ಟು ನೇರ ಮಾತುಗಳಲ್ಲಿ ಹೇಳುವುದಾದರೆ, ರೈತ ತನ್ನ ಭೂಮಿಯ ಮೇಲಿನ ಹಕ್ಕನ್ನು ಕಳೆದುಕೊಂಡು, ಯಾವಾಗ ಯಾವ ಯೋಜನೆಗೆ ತನ್ನ ಭೂಮಿ ಸ್ವಾಧೀನ ಆಗುತ್ತದೆಯೋ ಎಂದು ಆತಂಕದಲ್ಲಿರಬೇಕಾಗುತ್ತದೆ. ಭಾರತದ ಅತಿ ದೊಡ್ಡ ದುಡಿವ ವರ್ಗವಾದ ರೈತರ ಹಿತಕ್ಕೆ ಧಕ್ಕೆ ತರುವಂತಹ ತಿದ್ದುಪಡಿಯನ್ನು ಸಂಸತ್ತಿನಲ್ಲಿ ಚರ್ಚೆಯಿಲ್ಲದೆ ಸುಗ್ರೀವಾಜ್ಞೆ ಮೂಲಕ ತರುವ ಕ್ರಮವೇ ಆಡಳಿತದಲ್ಲಿರುವವರ ದುರುದ್ದೇಶವನ್ನು ಸೂಚಿಸುತ್ತದೆ. ತೀರಾ ತುರ್ತು ಸಂದರ್ಭಗಳಲ್ಲಿ ಸುಗ್ರೀವಾಜ್ಞೆ ಮೂಲಕ ಕಾನೂನನ್ನು ಜಾರಿಗೆ ತರಲು ಅವಕಾಶ ಇದೆ. ಆದರೆ, ಇಂತಹ ರೈತವಿರೋಧಿ ಕಾನೂನನ್ನು ಜಾರಿಗೆ ತರುವಲ್ಲಿ ಸರಕಾರ ತೋರಿಸುತ್ತಿರುವ ತುರ್ತು ಆತಂಕಕಾರಿ.

ಇಂತಹದೊಂದು ಕಾನೂನು ಜಾರಿಗೆ ಬಂದನಂತರದ ಪರಿಣಾಮಗಳನ್ನು ಎಂಥಹವರೂ, ಸರಳ ಬುದ್ಧಿಮತ್ತೆಯಿಂದ ಊಹಿಸಬಲ್ಲರು.farmer-land-acquisition ಬ್ರಿಟಿಷರ ಆಡಳಿತ ಅವಧಿಯಲ್ಲಿ ಸ್ಥಳೀಯರ ಮಾತಿಗೆ ಬೆಲೆ ಇರಲಿಲ್ಲ ಹಾಗೂ ಯೋಜನೆಗಳಿಗೆ ಅಗತ್ಯ ಭೂಮಿಯನ್ನು ವಶಪಡಿಸಿಕೊಳ್ಳಲು ಮಾಲೀಕರ, ಅನುಭವಿಸುತ್ತಿರುವವರ ಸಮ್ಮತಿ ಕೇಳುವ ಪರಿಪಾಠ ಇರಲಿಲ್ಲ. ಈಗ ಮತ್ತದೇ ಪರಿಸ್ಥಿತಿ ಮರುಕಳಿಸುತ್ತಿದೆ ಅಂದರೆ, ಮತ್ತೆ ದಾಸ್ಯದೆಡೆಗೆ.

ಸದ್ಯ ಜಾರಿಯಲ್ಲಿರುವ ಕಾನೂನನ್ನು ದುರುಪಯೋಗ ಮಾಡಿಕೊಂಡು ತಮ್ಮ ರಾಜಕೀಯ ಕಾರಣಗಳಿಗಾಗಿ ಹಲವು ಬಡವರ ಭೂಮಿಯನ್ನು ಬಲಾಢ್ಯರು ವಿವಿಧ ಯೋಜನೆ ಹೆಸರಿನಲ್ಲಿ ವಶ ಪಡಿಸಿಕೊಂಡು ಸಾಕಷ್ಟು ಕಷ್ಟ ಕೊಟ್ಟಿದ್ದಾರೆ. ಹೊಳೆನರಸೀಪುರ ಎಂಬ ಊರಿನೊಂದಿಗೆ ಸಂಪರ್ಕ ಇಟ್ಟಕೊಂಡ ಯಾರಿಗೇ ಆಗಲಿ, ಸೂರನಹಳ್ಳಿಯ ಬಗ್ಗೆ ಗೊತ್ತಿರುತ್ತದೆ. ಹೊಳೆನರಸೀಪುರದಿಂದ ಕೂಗಳತೆ ದೂರದಲ್ಲಿ ಇರುವ ಹಳ್ಳಿ ಸೂರನಹಳ್ಳಿ. ಫಲವತ್ತಾದ ಜಮೀನು. ಹೇಮಾವತಿ ನೀರಿನ ಅನುಕೂಲ ಇರುವುದರಿಂದ ರೈತರು ಭತ್ತ ಬೆಳೆಯುವರು. ಇಂತಹ ಫಲವತ್ತಾದ ಜಮೀನಿನ ಪೈಕಿ 88 ಎಕರೆ ಪ್ರದೇಶವನ್ನು 1997 ರಲ್ಲಿ ಅಂದಿನ ಜನತಾದಳ ಸರಕಾರ ಆಶ್ರಯ ಮನೆಗಳಿಗೆಂದು ಪುರಸಭೆ ರೂಪಿಸಿದ್ದ ಯೋಜನೆಗಾಗಿ ಸ್ವಾಧೀನ ಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿತು. ಅಂದಿನಿಂದ ಇದುವರೆವಿಗೂ ರೈತರು ತಮ್ಮ ಭೂಮಿಗಾಗಿ ಹೋರಾಡುತ್ತಲೇ ಬಂದಿದ್ದಾರೆ. ಹೊಳೆನರಸೀಪುರ ಪಟ್ಟಣದಲ್ಲಿ ಇದೇ ಯೋಜನೆಗೆ ಸೂಕ್ತವಾದ ಜಮೀನು ಲಭ್ಯವಿತ್ತು, ಆದರೂ ಅಲ್ಲಿಯ ಶಾಸಕರಿಗೆ ಸೂರನಹಳ್ಳಿಯ ಜಮೀನೇ ಆಗಬೇಕು.

ರೈತರು ನ್ಯಾಯಾಲಯದ ಮೊರೆ ಹೋದರು. ಪುರಸಭೆ ಮೇಲ್ಮನವಿ ಸಲ್ಲಿಸಲು ಆರ್ಥಿಕವಾಗಿ ಶಕ್ತಿ ಹೊಂದಿತ್ತು. ಆದರೆ ರೈತರ ಪಾಡೇನು? ಎಸ್.ಎಂ.ಕೃಷ್ಣ ಸರಕಾರ ಆಡಳಿತಕ್ಕೆ ಬಂದಾಗ ಪುರಸಭೆಯಲ್ಲಿ ಕಾಂಗ್ರೆಸ್ ನ ಆಡಳಿತವಿತ್ತು. ಅವರು ಯೋಜನೆಯನ್ನು ಕೈ ಬಿಡುವ ನಿರ್ಣಯ ಕೈಗೊಂಡರು. ಆ ನಿರ್ಣಯದ ಆಧಾರದ ಮೇಲೆ ಸರಕಾರ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿತು (ಡಿನೋಟಿಫಿಕೇಶನ್). ಆ ಹೊತ್ತಿಗೆ ರೈತರು ನಿಟ್ಟುಸಿರು ಬಿಟ್ಟರು. guj-agricultureಆದರೆ, ಅಲ್ಲಿಗೆ ಮುಗಿಯಲಿಲ್ಲ. ನಂತರ ಜೆಡಿಎಸ್-ಕಾಂಗ್ರೆಸ್ ಹಾಗೂ ಜೆಡಿಎಸ್-ಬಿಜೆಪಿ ಆಡಳಿತದ ಅವಧಿಗಳಲ್ಲಿ ಪುರಸಭೆಯ ನಿರ್ಧಾರಗಳು ಬದಲಾದವು. ಡಿನೋಟಿಫಿಕೇಶನ್ ವಿರುದ್ಧ ಪುರಸಭೆ ಕಾನೂನು ಸಮರ ಸಾರಿತು.

ರೈತರು ತಾಂತ್ರಿಕವಾಗಿ ದಾಖಲೆಗಳಲ್ಲಿ ತಮ್ಮ ಭೂಮಿಯ ಮೇಲಿನ ಮಾಲೀಕತ್ವ ಕಳೆದುಕೊಂಡಿದ್ದರೂ, ಭೂಮಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಅವರೇ ಕೃಷಿ ಮುಂದುವರಿಸಿದ್ದರು. ಆದರೆ, ದಾಖಲೆಗಳ ಪ್ರಕಾರ ಹಕ್ಕುದಾರರಲ್ಲದ ಕಾರಣ ಜಮೀನಿನ ಆಧಾರದ ಮೇಲೆ ಸಾಲ ಪಡೆಯುವುದಾಗಲಿ, ಮಾರಾಟ ಮಾಡಿ ಮನೆಯಲ್ಲಿ ಆಗಬೇಕಿರುವ ಮದುವೆ ಇನ್ನಿತರೆ ಕೆಲಸ ಕಾರ್ಯಗಳಿಗೆ ಹಣ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೂ ಅಧಿಕಾರಿಗಳು ಸರಕಾರಕ್ಕೆ ಮಾಹಿತಿ ಸಲ್ಲಿಸುವಾಗ, ಜಮೀನು ಪುರಸಭೆಯ ಸ್ವಾಧೀನದಲ್ಲಿದೆ ಎಂದು ತಪ್ಪು ವರದಿ ಕೊಟ್ಟರು. ಇಷ್ಟೆಲ್ಲಾ ತೊಡಕುಗಳ ಹೊರತಾಗಿಯೂ ರೈತರು ಹೋರಾಡುತ್ತಲೇ ಬಂದರು. ನ್ಯಾಯಾಲಯ ಕಳೆದ ವರ್ಷ ಹೊರಡಿಸಿದ ತನ್ನ ಅಂತಿಮ ಆದೇಶದಲ್ಲಿ ಜಮೀನಿನ ಖಾತೆಯನ್ನು ರೈತರಿಗೆ ವರ್ಗಾಯಿಸಬೇಕೆಂದು ಆದೇಶ ನೀಡಿತು. ಆದರೂ ಸ್ಥಳೀಯ ಅಧಿಕಾರಿಗಳು ಆದೇಶವನ್ನು ಜಾರಿಗೆ ತರಲು ಹಿಂದೇಟು ಹಾಕಿದರು. ಹಗಲು-ರಾತ್ರಿ ಪ್ರತಿಭಟನೆ ನಡೆಸಿ ಖಾತೆಗಳನ್ನು ವರ್ಗ ಮಾಡಿಸಿಕೊಳ್ಳುವಲ್ಲಿ ರೈತರು ಯಶಸ್ವಿಯಾದರು. ಈ ಹದಿನೇಳು ವರ್ಷಗಳಲ್ಲಿ ಅನೇಕ ರೈತರು ಅಸುನೀಗಿದ್ದಾರೆ. ಹಲವು ಮನೆಗಳಲ್ಲಿ ಮದುವೆಗಳು ಮುಂದೆ ಹೋಗಿವೆ. ಮನೆ ಕಟ್ಟಬೇಕೆಂದುಕೊಂಡವರು ಈ ಕಾರಣಕ್ಕಾಗಿ ಸುಮ್ಮನಾಗಿದ್ದಾರೆ. ಅವರ ಪಾಲಿಗೆ ಹದಿನೇಳು ವರ್ಷಗಳು ಕರಾಳ ದಿನಗಳು!

ಇಷ್ಟಕ್ಕೆಲ್ಲಾ ಕಾರಣ ಸೂರನಹಳ್ಳಿಯ ಜನ ಸಾರಸಗಟಾಗಿ ಒಂದು ಪಕ್ಷಕ್ಕೆ ಮತಹಾಕುತ್ತಾ ಬಂದಿದ್ದಾರೆ. ಅವರಿಗೆ ಪಾಠ ಕಲಿಸಬೇಕು. ಹೀಗೆ ಪಾಠ ಕಲಿಸಲು ಹೊರಟವರು ಯಾರೆಂದು ಹೊಳೆನರಸೀಪುರ ಮಹಿಮೆ ಗೊತ್ತಿರುವ ಯಾರಿಗೇ ಆಗಲಿ ಊಹಿಸುವುದು ಕಷ್ಟ ಅಲ್ಲ. farmer-land-acquisition-2ಇಲ್ಲಿ ಆ ವ್ಯಕ್ತಿ ಮತ್ತು ಅವರ ಪಕ್ಷ ಮುಖ್ಯವಲ್ಲ. ಒಂದು ಉದಾಹರಣೆಯಾಗಿ ಮಾತ್ರ ಈ ಘಟನೆಯನ್ನು ಇಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯದ ನೂರಾರು ವಿಧಾನಸಭಾ ಕ್ಷೇತ್ರಗಳಲ್ಲಿ ಇಂತಹ ಅನೇಕ ಘಟನೆಗಳು ಇದ್ದೇ ಇರುತ್ತವೆ. ಇಲ್ಲಿ ರಾಜಕೀಯ ದುರುದ್ದೇಶದ ಕಾರಣಕ್ಕೆ ರೈತರಿಗೆ ಹಿಂಸೆ ಕೊಡಲು ಪ್ರಯತ್ನಿಸಿದ ನಾಯಕರ ಪಕ್ಷಕ್ಕೆ ಸೇರಿದವರೇ ಮತ್ತೊಂದೆಡೆ ನೊಂದವರಾಗಿರಬಹುದು.

ಒಟ್ಟಿನಲ್ಲಿ ಅನೇಕ ಕಡೆ ಇಂತಹವರಿದ್ದಾರೆ. ಸದ್ಯ ಜಾರಿಯಲ್ಲಿರುವ ಕಾನೂನಿನಡಿಯಲ್ಲಿಯೇ ರೈತರಿಗೆ ಇಷ್ಟೆಲ್ಲಾ ಕಷ್ಟ ಕೊಡುವ ಇವರು, ಮುಂದೆ ರೈತರ ಸಮ್ಮತಿಯ ಅಗತ್ಯವೇ ಇಲ್ಲ ಎನ್ನುವ ಕಾನೂನು ಜಾರಿಯಾದರೆ ಏನೆಲ್ಲಾ ಮಾಡಬಹುದು? ತಮಗೆ ಆಗದವರ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲೆಂದೇ ಹಲವು ಯೋಜನೆಗಳನ್ನು ರೂಪಿಸಬಹುದು. ಎಲ್ಲಾ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕೆಂದೇನೂ ಇಲ್ಲ. ಸಂಬಂಧಪಟ್ಟವರಿಗೆ ಕಷ್ಟ ಕೊಟ್ಟರೆ ಸಾಕು, ಉದ್ದೇಶ ಈಡೇರಿದಂತೆ. ಅಂದಹಾಗೆ ಹೊಳೆನರಸೀಪುರದಲ್ಲಿ ಕಳೆದ 17 ವರ್ಷದಿಂದ ಆಶ್ರಯ ಯೋಜನೆ ಜಾರಿಯಾಗಲೇ ಇಲ್ಲ! ಸೂರು ಇಲ್ಲದವರಿಗೆ ನೆಲೆ ಒದಗಿಸುವುದೇ ಮುಖ್ಯ ಉದ್ದೇಶವಾಗಿದ್ದರೆ, ಅಧಿಕಾರದಲ್ಲಿರುವವರು ಎಲ್ಲಿಯಾದರೂ ಯೋಜನೆಯನ್ನು ಪೂರ್ಣಗೊಳಿಸಬೇಕಿತ್ತು. repeal-land-acquisitionಆದರೆ, ಅವರ ಗುರಿ ಸೂರು ಇಲ್ಲದವರಿಗೆ ಮನೆ ಕೊಡಿಸುವುದಾಗಿರಲಿಲ್ಲ, ಬದಲಿಗೆ ಸೂರನಹಳ್ಳಿಯವರಿಗೆ ಪಾಠ ಕಲಿಸುವುದು!

ಆದರೆ ಇಂತಹ ಜನವಿರೋಧಿ ಕಾನೂನಿಗಾಗಿ ಸುಗ್ರೀವಾಜ್ಞೆ ರೂಪುಗೊಳ್ಳುತ್ತಿದ್ದರೆ, ನಮ್ಮ ಮಾಧ್ಯಮಗಳು (ಎಲ್ಲವೂ ಅಲ್ಲ) ಈ ವಿಚಾರವನ್ನು ಚರ್ಚೆಗೆ ಎತ್ತಿಕೊಳ್ಳುವುದೇ ಇಲ್ಲ. ಬದಲಿಗೆ ಬಂಡವಾಳ ಹೂಡಿಕೆಗೆ ಪೂರಕವಾದ ವಾತಾವರಣ ಸೃಷ್ಟಿಸುವಲ್ಲಿ ಇಂತಹ ಕ್ರಮಗಳು ಅಗತ್ಯ ಎಂಬ ಧಾಟಿಯಲ್ಲಿ ವರದಿ ಒಪ್ಪಿಸಿ ಸುಮ್ಮನಾಗುತ್ತವೆ. ಹೇಗೂ ಪ್ರತಿದಿನದ ಸಂಜೆಯ ಪಾನೆಲ್ ಚರ್ಚೆಗಳಿಗೆ ಬೇಕಾದಷ್ಟು ವಿಚಾರಗಳು ಇದ್ದೇ ಇವೆಯಲ್ಲ. ರೈತರ ದನಿ ಕೇಳುವವರಾರು? ಅಚ್ಚೇ ದಿನಗಳೆಂದರೆ ಇವೇ ನೋಡಿ. ಹೂಡಿಕೆ ಮಾಡಲು ಬರುವವರಿಗೆ ಅಚ್ಚೇ ದಿನ.

ಉಳುವವನೇ ಒಡೆಯ ಎಂಬ ಕಾನೂನು ಸಂಪೂರ್ಣವಾಗಿ ಅಲ್ಲದಿದ್ದರೂ ತಕ್ಕಮಟ್ಟಿಗೆ ಜಾರಿಯಾದ ಕಾರಣ ಸಾವಿರಾರು ಕುಟುಂಬಗಳು ಜಮೀನು ಹೊಂದುವಂತಾಯ್ತು. ಆದರೆ ಈಗ ಬಂಡವಾಳ ಹೂಡಿಕೆ ಮಾಡುವವರೇ ಒಡೆಯರು! ಹಿಂದೂ ಧರ್ಮ ಉಳಿಸುವ ಮಹತ್ಕಾರ್ಯಕ್ಕಾಗಿ ಎಲ್ಲಾ ಕಡೆ ಸಭೆ ನಡೆಸುವ ಮಹಾಶಯರೇ, ನಿಮ್ಮ ಲೆಕ್ಕಾಚಾರದ ಪ್ರಕಾರವೇ ಹೋದರೂ, ಈ ನೆಲದ ಅತಿಹೆಚ್ಚು ರೈತರು ಹಿಂದೂಗಳು. ಅವರ ಬಗ್ಗೆ ಒಂದಿಷ್ಟು ಯೋಚಿಸಿ.