Category Archives: ಬಿಳಿ ಸಾಹೇಬನ ಭಾರತ

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-25)


– ಡಾ.ಎನ್.ಜಗದೀಶ್ ಕೊಪ್ಪ


1924ರ ಮೇ 16 ರಂದು ಜಿಮ್ ಕಾರ್ಬೆಟ್‌ನ ತಾಯಿ ಮೇರಿ ಕಾರ್ಬೆಟ್ ತೀರಿಕೊಂಡಾಗ ಇಡೀ ನೈನಿತಾಲ್ ಪಟ್ಟಣದಲ್ಲಿ ಆ ದಿನ ಶೋಕಾಚರಣೆಯನ್ನು ಆಚರಿಸಲಾಯಿತು. ಅಲ್ಲಿನ ಆಂಗ್ಲ ಸಮುದಾಯದಲ್ಲಿ ಅತ್ಯಂತ ಹಿರಿಯ ಹಾಗೂ ಗೌರವಾನ್ವಿತ ಮಹಿಳೆಯಾಗಿದ್ದ ಮೇರಿ ಕಾರ್ಬೆಟ್ ಎಲ್ಲರ ನೋವು, ನಲಿವುಗಳಿಗೆ ಸ್ಪಂದಿಸುವ ಹೃದಯವಂತ ಮಹಿಳೆಯಾಗಿದ್ದಳು. 1857ರ ಸಿಪಾಯಿ ದಂಗೆಯಲ್ಲಿ ತನ್ನ ಪತಿಯನ್ನು ಕಳೆದುಕೊಂಡು ತನ್ನ ಮೂವರು ಮಕ್ಕಳೊಂದಿಗೆ ಆಗ್ರಾ ಕೋಟೆಯನ್ನು ಹಾರಿ ಜೀವ ಉಳಿಸಿಕೊಳ್ಳುವ ಸಲುವಾಗಿ ನೈನಿತಾಲ್ ಸೇರಿದ ಈಕೆ, ನಂತರ ಕಾರ್ಬೆಟ್‌ನ ತಂದೆ ಕ್ರಿಷ್ಟೋಪರ್‌ನನ್ನು ಮರು ವಿವಾಹವಾಗಿ, ಕಾರ್ಬೆಟ್ ಕುಟುಂಬಕ್ಕೆ ಆಧಾರಸ್ಥಂಭವಾಗಿ ನಿಂತ ದಿಟ್ಟ ಮಹಿಳೆ ಮೇರಿ. ತನ್ನ ಬದುಕಿನುದ್ದಕ್ಕೂ ಎದುರಿಸಿದ ಹೋರಾಟಗಳು, ಸಂಕಷ್ಟಗಳ ಬಗ್ಗೆ ಪೂರ್ಣ ಅರಿವಿದ್ದ ಮೇರಿ ಸದಾ ಕುಟುಂಬದ ಭದ್ರತೆ ಮತ್ತು ಭವಿಷ್ಯದ ಜೀವನದ ಬಗ್ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಳು. ಆಕೆಯ ಇಂತಹ ದೃಢನಿರ್ಧಾರದಿಂದಾಗಿ ನೈನಿತಾಲ್ ಗಿರಿಧಾಮದಲ್ಲಿ ಕಾರ್ಬೆಟ್ ಕುಟುಂಬ ಪ್ರತಿಷ್ಟಿತ ಕುಟುಂಬವಾಗಿ ಬೆಳೆಯಲು ಸಾಧ್ಯವಾಯಿತು.

ಮೇರಿಯ ಸಾವು, ಕಾರ್ಬೆಟ್ ಹಾಗೂ ಅವಿವಾಹಿತರಾಗಿ ಉಳಿದುಹೋಗಿದ್ದ, ಸಹೋದರಿ ಮ್ಯಾಗಿ ಮತ್ತು ಮಲಸಹೋದರಿ ಡೊಯಲ್ ಪಾಲಿಗೆ ಚೇತರಿಸಿಕೊಳ್ಳಲಾಗದ ಹೊಡೆತ ನೀಡಿತು. ವಯಸ್ಸಾಗಿದ್ದ ಮೇರಿಯ ಸಾವು ನಿರಿಕ್ಷೀತವಾದರೂ, 60 ವರ್ಷದ ಡೊಯಲ್, 50 ವಯಸ್ಸಿನ ಕಾರ್ಬೆಟ್ ಮತ್ತು 52 ವರ್ಷದ ಮ್ಯಾಗಿ ಇವರೆಲ್ಲರ ಪಾಲಿಗೆ ಆ ವಯಸ್ಸಿನಲ್ಲೂ ಅಕ್ಷರಶಃ ತಾಯಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಳು. ಇವರೆಲ್ಲರೂ ಅವಿವಾಹಿತರಾಗಿ ಉಳಿದುಕೊಂಡ ಕಾರಣ, ಅವರ ಬೇಕು ಬೇಡಗಳನ್ನು ಪೂರೈಸುವ ಹೊಣೆಗಾರಿಕೆ ಮೇರಿಯದಾಗಿತ್ತು. ತನ್ನ ಇಬ್ಬರು ಹೆಣ್ಣು ಮಕ್ಕಳು ವಿವಾಹವಾಗದಿದ್ದರೂ, ವಿಚಲಿತಲಾಗದ, ಆಕೆ ಅವರನ್ನು ಎಂದಿಗೂ ಅನೈತಿಕತೆಯ ಹಾದಿ ತುಳಿಯದಂತೆ ಎಚ್ಚರ ವಹಿಸಿ ಘನತೆಯಿಂದ ಬೆಳೆಸಿದ್ದಳು.

ತಾಯಿಯ ನಿಧನಾನಂತರ ನಿಧಾನವಾಗಿ ಚೇತರಿಸಿಕೊಂಡ ಕಾರ್ಬೆಟ್ ತಾನು ತನ್ನ ಕೆಲವು ಸೇವಕರೊಂದಿಗೆ ಮೌಂಟ್ ಪ್ಲೆಸೆಂಟ್ ಮೌಂಟೆನ್ ಎಂಬ ತಮ್ಮ ಕುಟುಂಬದ ಇನ್ನೊಂದು ಮನೆಯಲ್ಲಿ ವಾಸಿಸತೊಡಗಿದ. ತನ್ನಿಬ್ಬರು ಸಹೋದರಿಯರು ಗಾರ್ನಿ ಹೌಸ್ ಬಂಗಲೆಯಲ್ಲಿ ವಾಸಿಸತೊಡಗಿದರು. ಈ ನಡುವೆ ಕಾರ್ಬೆಟ್‌ಗೆ ತಾಯಿ ನಿಧನವಾದ ಒಂದು ತಿಂಗಳ ನಂತರ ವೈವಾಹಿಕ ಜೀವನದ ಬಗ್ಗೆ ಆಸಕ್ತಿ ಮೂಡತೊಡಗಿತು. ಅಕಸ್ಮಾತ್ತಾಗಿ ಅವನ ಎದೆಯೊಳೆಗೆ ಪ್ರೀತಿ ಮೊಳಕೆಯೊಡೆದು, ಅದು ಚಿಗುರುವ ಮುನ್ನವೇ ಬಾಡಿಹೋಯಿತು. ನಂತರ ಈ ಘಟನೆ ದುರಂತದಲ್ಲಿ ಅಂತ್ಯ ಕಂಡಿತು.

ಐವತ್ತು ವಯಸ್ಸಿನ ಕಾರ್ಬೆಟ್‌ಗೆ ಆ ಕಾಲದಲ್ಲಿ ವಿವಾಹವಾಗುವುದು ಕಷ್ಟದ ಸಂಗತಿಯಾಗಿರಲಿಲ್ಲ. ಬ್ರಿಟಿಷ್ ಆಳ್ವಿಕೆಯ ಆ ಸಮಯದಲ್ಲಿ ಉತ್ತರ ಭಾರತದಲ್ಲಿ ವಾಸವಾಗಿದ್ದ ಬಹುತೇಕ ಆಂಗ್ಲ ಸಮುದಾಯದ ವಿಧವೆಯರೂ, ವಿಧುರರು ಮರು ವಿವಾಹವಾಗುತ್ತಿದ್ದುದು ಸಾಮಾನ್ಯವಾಗಿತ್ತು. ವಾಸ್ತವವಾಗಿ ಕಾರ್ಬೆಟ್ ತಾಯಿ ಮೇರಿ ಕೂಡ ತನ್ನ ಮೊದಲ ಪತಿಯಿಂದ ಪಡೆದಿದ್ದ ಮೂರು ಮಕ್ಕಳ ಜೊತೆ ಕಾರ್ಬೆಟ್‌ನ ತಂದೆ ಕ್ರಿಷ್ಟೋಪರ್‌ನನ್ನು ಮದುವೆಯಾಗಿದ್ದಳು. ಕಾರ್ಬೆಟ್‌ಗೆ ಇಂತಹ ಅನೇಕ ಆಹ್ವಾನಗಳು ಬಂದರೂ ಕೂಡ ಅವನು ತಿರಸ್ಕರಿಸುತ್ತಾ ಬಂದಿದ್ದ.

ತನ್ನ ತಾಯಿಯ ಸಾವಿನ ನಂತರ ಒಂದು ತಿಂಗಳಲ್ಲೇ 19ರ ಹೆಲನ್ ಎಂಬ ಯುವತಿಯ ಮೋಹಕ್ಕೆ ಒಳಗಾಗಿ ಅವಳನ್ನು ಅಪಾರವಾಗಿ ಪ್ರೀತಿಸತೊಡಗಿದ. ಈಕೆ, ಕಾರ್ಬೆಟ್ ಸ್ನೇಹಿತನಾಗಿದ್ದ ಅರಣ್ಯಾಧಿಕಾರಿಯೊಬ್ಬನ ಹೆಂಡತಿಯ ತಂಗಿಯಾಗಿದ್ದಳು. ಹೆಲನ್ ಇಂಗ್ಲೆಂಡ್‌ನಿಂದ ತನ್ನ ತಂದೆ ತಾಯಿಯ ಜೊತೆ ಪ್ರವಾಸಕ್ಕಾಗಿ ಭಾರತಕ್ಕೆ ಬಂದಾಗ ನೈನಿತಾಲ್ ಗಿರಿಧಾಮದಲ್ಲಿದ್ದ ಅಕ್ಕನ ಮನೆಯಲ್ಲಿ ಕಾರ್ಬೆಟ್‌ನ ಪರಿಚಯ ಬೆಳೆಯಿತು. ನಂತರ ಅವನ ಜೊತೆ ಕಾಡು ಅಲೆಯುವುದು, ಮೀನು ಶಿಕಾರಿಮಾಡುವುದು, ಸಂಜೆ ವೇಳೆ, ಕ್ಲಬ್‌ನಲ್ಲಿ ಟೆನ್ನೀಸ್ ಕ್ರೀಡೆ ಹೀಗೆ ಮೂರು ತಿಂಗಳ ಇವರಿಬ್ಬರ ಒಡನಾಟ ನಿರಂತರ ಮುಂದುವರಿಯಿತು. ಹೆಲನ್‌ಳ ನಡೆ ನುಡಿಯಿಂದ ಆಕರ್ಷಿತನಾದ ಕಾರ್ಬೆಟ್‌ಗೆ ಈಕೆ ನನಗೆ ಸಂಗಾತಿಯಾಗಲು ಸೂಕ್ತ ಹೆಣ್ಣು ಮಗಳು ಎಂದು ಅನಿಸತೊಡಗಿತು. ಹೆಲೆನ್ ಕೂಡ. ಜಿಮ್ ಕಾರ್ಬೆಟ್‌ಗಿದ್ದ ಅಭಿರುಚಿ, ನೈನಿತಾಲ್ ಪಟ್ಟಣದಲ್ಲಿ ಅವನಿಗಿದ್ದ ಗೌರವ ಇವೆಲ್ಲವನ್ನು ಗಮನಿಸಿದ್ದ ಹೆಲನ್ ಮಾನಸಿಕವಾಗಿ ಅವನನ್ನು ಸ್ವೀಕರಿಸಲು ತಯಾರಿದ್ದಳು. ನೈನಿತಾಲ್‌ನ ಜನತೆ ಸಹ ಇವರಿಬ್ಬರ ಗೆಳೆತನ, ತಿರುಗಾಟ ಎಲ್ಲವನ್ನು ಗಮನಿಸಿ, ಅಂತಿಮವಾಗಿ ಜಿಮ್ ಕಾರ್ಬೆಟ್‌ಗೆ ಒಬ್ಬ ಸಂಗಾತಿ ಸಿಕ್ಕಳು ಎಂದು ಮಾತನಾಡಿಕೊಂಡರು. ಆದರೆ ಅವರೆಲ್ಲರ ನಿರೀಕ್ಷೆ ಹುಸಿಯಾಯಿತು. ಒಂದು ದಿನ ಕಾರ್ಬೆಟ್ ತನ್ನ ಗೆಳೆಯರ ಮೂಲಕ ಹೆಲನ್‌ಳನ್ನು ಮದುವೆಯಾಗುವ ಪ್ರಸ್ತಾಪವನ್ನು ಆಕೆಯ ತಂದೆ ತಾಯಿಗಳ ಮುಂದಿಟ್ಟ. ಆದರೆ, ವಯಸ್ಸಿನ ಕಾರಣಕ್ಕಾಗಿ ನೇರವಾಗಿ ಅವನ ಪ್ರಸ್ತಾಪವನ್ನು ತಿರಸ್ಕರಿಸಿದ ಆಕೆಯ ಪೋಷಕರು ಹೆಲನ್ ಜೊತೆ ಇಂಗ್ಲೆಂಡ್‌ಗೆ ತಕ್ಷಣವೇ ಹಿಂತಿರುಗಿಬಿಟ್ಟರು.

ಈ ಘಟನೆ ಮಾನಸಿಕವಾಗಿ ಕಾರ್ಬೆಟ್‌ನನ್ನು ತೀವ್ರ ಅಘಾತಕ್ಕೊಳಪಡಿಸಿತು. ಇದರಿಂದಾಗಿ ಅವನು ಹಲವು ತಿಂಗಳು ಕಾಲ ಮೌನಿಯಾಗಿಬಿಟ್ಟ. ನೋವನ್ನು ಮರೆಯಲು. ತಾಂಜೇನಿಯಾದ ಕೃಷಿತೋಟಕ್ಕೆ ತೆರಳಿ ಸ್ವಲ್ಪದಿನ ಇದ್ದು, ಆಫ್ರಿಕಾದ ಕಾಡುಗಳಲ್ಲಿ ಗೆಳೆಯರ ಜೊತೆ ಶಿಕಾರಿಯಲ್ಲಿ ತೊಡಗಿಕೊಂಡ. ಆದರೂ ಹೆಲನ್‌ಳನ್ನು ಮರೆಯಲು ಅವನಿಂದ ಸಾಧ್ಯವಾಗಲಿಲ್ಲ. ಅದೇ ವೇಳೆಗೆ ತಾಂಜೇನಿಯ ಕೃಷಿ ಪಾರ್ಮ್‌ಗೆ ಅವನ ಪಾಲುದಾರನಾಗಿದ್ದ ವಿಂದಮ್ ಕಿನ್ಯಾ ತ್ಯಜಿಸಿ, ಇಂಗ್ಲೆಂಡಿನ ತನ್ನ ಪೂರ್ವಿಕರ ಮನೆಯಲ್ಲಿ ನೆಲೆಸಿದ್ದ. ಅಂತಿಮವಾಗಿ ಹೆಲನ್ ಮುಂದೆ ತನ್ನ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳಲು ಕಾರ್ಬೆಟ್ ನೇರವಾಗಿ ಇಂಗ್ಲೇಂಡ್‌ಗೆ ತೆರಳಿದ. ವಿಂದಮ್ ಮನೆಯಲ್ಲಿದ್ದುಕೊಂಡು ಆಕೆಯನ್ನು ಭೇಟಿ ಮಾಡಲು ಪ್ರಯತ್ನಿಸಿದಾಗ, ಅವನಿಗೊಂದು ಅಘಾತಕಾರಿ ಸುದ್ಧಿಯೊಂದು ಕಾದಿತ್ತು. ಎಡಿನ್‌ಬರೊ ನಗರದಲ್ಲಿ ವಾಸವಾಗಿದ್ದ ಹೆಲನ್‌ಗೆ ಆಕೆಯ ಕುಟುಂಬದವರು ವಿವಾಹ ನಿಶ್ಚಯ ಮಾಡಿ, ಸಿದ್ಧತೆಯಲ್ಲಿ ತೊಡಗಿರುವುದನ್ನು ಕಂಡು ನಿರಾಶನಾದ ಕಾರ್ಬೆಟ್, ವಾಪಸ್ ಭಾರತಕ್ಕೆ ಹಿಂತಿರುಗಿದ. ಈ ಘಟನೆಯ ನಂತರ ವಿವಾಹವಾಗುವ ವಿಚಾರವನ್ನು ಶಾಶ್ವತವಾಗಿ ಕಾರ್ಬೆಟ್ ತನ್ನ ಮನಸಿನಿಂದ ತೆಗೆದುಹಾಕಿಬಿಟ್ಟ. ಪ್ರಾಣಿ, ಪಕ್ಷಿ, ಪರಿಸರ, ಮತ್ತು ಈ ನೆಲದ ಸಂಸ್ಕೃತಿಯ ಎಳೆಯ ಮಕ್ಕಳು ಅವನ ಆರಾಧನೆಯ ಕೇಂದ್ರ ಬಿಂದುವಾದರು. ಯಾರಾದರೂ ವಿವಾಹವಾಗುವ ಪ್ರಸ್ತಾಪವನ್ನು ಕಾರ್ಬೆಟ್ ಮುಂದಿಟ್ಟರೆ, ಭಾರತವೇ ನನ್ನ ಪತ್ನಿ, ಇಲ್ಲಿನ ಈ ಮಕ್ಕಳು ನನ್ನ ಮಕ್ಕಳು ಎನ್ನುವುದರ ಮೂಲಕ ಆಹ್ವಾನವನ್ನು ನಿರಾಕರಿಸುತ್ತಿದ್ದ.

ಜಗತ್ತಿನ ಯಾವುದೇ ಧರ್ಮ, ಪುರಾಣಗಳು, ಅಥವಾ ವೇದ ಉಪನಿಷತ್ತುಗಳು ಏನೇ ಹೇಳಲಿ, ಲೌಕಿಕ ಜಗತ್ತಿನ ಮನುಷ್ಯನೊಬ್ಬ ಹಸಿವು, ಮತ್ತು ಕಾಮವನ್ನು ಗೆಲ್ಲುವುದು ಸಾಮಾನ್ಯ ಸಂಗತಿಯೇನಲ್ಲ. ಈ ಕಾರಣಕ್ಕಾಗಿ ಏನೊ? ನಮ್ಮ ಋಷಿಪುಂಗವರು ಅಂತಹ ಸಾಹಸ ಮಾಡಲಾರದೆ, ಪತ್ನಿಯರೊಡನೆ ಕಾಡಿನ ಆಶ್ರಮದಲ್ಲಿ ವಾಸವಾಗಿಬಿಟ್ಟರು. ಕಾರ್ಬೆಟ್‌ಗೆ ವಿಷಯದಲ್ಲೂ ಇಂತಹದ್ದೇ ಅನುಮಾನಗಳು ಕಂಡು ಬರುತ್ತವೆ ಆದರೆ, ಯಾವುದೇ ನಿಖರ ದಾಖಲೆಗಳು ಸಿಗುತ್ತಿಲ್ಲ. ರುದ್ರ ಪ್ರಯಾಗ ಪ್ರಾಂತ್ಯಕ್ಕೆ ಜಿಲ್ಲಾಧಿಕಾರಿಯಾಗಿ ಬಂದಿದ್ದ ಇಬ್ಸ್‌ಟನ್ ಪತ್ನಿ ಜೀನ್ ಜೊತೆ ಕಾರ್ಬೆಟ್‌ಗೆ ಸಂಬಂಧವಿತ್ತು ಎಂಬ ಅನುಮಾನಗಳು ಚರಿತ್ರೆಯಲ್ಲಿ ದಾಖಲಾಗಿವೆ. ಇಬ್ಸ್‌ಟನ್ ಕಾರ್ಯನಿಮಿತ್ತ ವಾರಗಟ್ಟಲೆ ಮನೆಯಿಂದ ಹೊರಗಿರುತ್ತಿದ್ದ ಸಮಯದಲ್ಲಿ ಜೀನ್, ದಿನಗಟ್ಟಲೆ ಹಗಲು ರಾತ್ರಿ ಎನ್ನದೆ ಕಾಡಿನಲ್ಲಿ ಶಿಕಾರಿಯ ನೆಪದಲ್ಲಿ ಕಾರ್ಬೆಟ್ ಜೊತೆ ಕಾಲ ಕಳೆಯುತ್ತಿದ್ದಳು. ಅವರಿಬ್ಬರ ನಡುವೆ ಗುಪ್ತವಾಗಿ ಪತ್ರ ವ್ಯವಹಾರ ಕೂಡ ನಡೆಯುತಿತ್ತು. ಆದರೆ, ಇವರಿಬ್ಬರ ಈ ಸಂಬಂಧ ಕೇವಲ ಭಾವನಾತ್ಮಕ ಸಂಬಂಧವೆ? ಅಥವಾ ಅದನ್ನೂ ಮೀರಿದ ದೈಹಿಕ ಆಕರ್ಷಣೆಯೆ? ಎಂಬುದರ ಬಗ್ಗೆ ಯಾವ ನಿಖರ ದಾಖಲೆಯೂ ಇಲ್ಲ. ಒಟ್ಟಾರೆ, ತನ್ನ ಪ್ರೀತಿಯ ವಿಫಲತೆಯ ನಂತರ ಕಾರ್ಬೆಟ್ ಪರಿಸರದತ್ತ ಮುಖ ಮಾಡಿ ಅದರ ರಕ್ಷಣೆಗೆ ಮುಂದಾದ. ಈವರೆಗೆ ಬಂದೂಕ ಹಿಡಿದು ಕಾಡು ಅಲೆಯುತ್ತಿದ್ದ ಕಾರ್ಬೆಟ್, ನಂತರದ ದಿನಗಳಲ್ಲಿ ಕ್ಯಾಮರಾ ಹಿಡಿದು ಕಾಡು ಅಲೆಯ ತೊಡಗಿದ.

1092 ಮತ್ತು 30 ರ ದಶಕದಲ್ಲಿ ಭಾರತದಲ್ಲಿ ಛಾಯಾಚಿತ್ರವಾಗಲಿ, ಅದರ ಬಳಕೆಯಾಗಲಿ ಹೇಳಿಕೊಳ್ಳುವಂತಹ ಪ್ರಸಿದ್ಧಿಗೆ ಬಂದಿರಲಿಲ್ಲ. ಕ್ಯಾಮರಾ ಕೂಡ ಜನಸಾಮಾನ್ಯರಿಗೆ ನಿಲುಕುತ್ತಿರಲಿಲ್ಲ. ಆದರೆ, ಕಾರ್ಬೆಟ್ ಕೊಲ್ಕತ್ತ ನಗರಕ್ಕೆ ತೆರಳಿ ಒಂದು ಸ್ಥಿರ ಚಿತ್ರ ತೆಗೆಯ ಬಹುದಾದ ಕ್ಯಾಮರಾ ಮತ್ತು 16 ಎಂ.ಎಂ.ನ ಚಲನಚಿತ್ರ ತೆಗೆಯಬಹುದಾದ ಕ್ಯಾಮರಾ ಮತ್ತು ಅವುಗಳಿಗೆ ಬೇಕಾದ ಕಪ್ಪು ಬಿಳುಪಿನ ಕಚ್ಛಾ ಫಿಲಂಗಳನ್ನು ಕೊಂಡುತಂದ. ಅಂದಿನ ದಿನಗಳಲ್ಲಿ ಬಳಕೆಯಲ್ಲಿದ್ದ  ಕ್ಯಾಮರಾಗಳಲ್ಲಿ ಜೂಂ ಲೆನ್ಸ್, ಆಗಲಿ, ಕ್ಲೋಸ್ ಅಪ್ ಚಿತ್ರ ತೆಗೆಯಬಹುದಾದ ಲೆನ್ಸ್‌ಗಳಾಗಲಿ ಇರುತ್ತಿರಲಿಲ್ಲ. ಯಾವುದೇ ಪ್ರಾಣಿಗಳ ಚಿತ್ರವನ್ನು ಹತ್ತಿರದಿಂದ ತೆಗೆಯಬೇಕಾದರೆ, ಪ್ರಾಣಿಗಳ ಹತ್ತಿರವೇ ನಿಂತು ತೆಗೆಯಬೇಕಾಗಿತ್ತು. ಹಾಗಾಗಿ ವನ್ಯಮೃಗ ಛಾಯಾಚಿತ್ರಣ ಎಂಬುದು ಅಪಾಯಕಾರಿ ಹವ್ಯಾಸವಾಗಿತ್ತು. ಅರಣ್ಯವನ್ನು, ಅಲ್ಲಿನ ಪ್ರಾಣಿಗಳ ಚಲನವಲನಗಳನ್ನು ಚೆನ್ನಾಗಿ ಅರಿತ್ತಿದ್ದ ಕಾರ್ಬೆಟ್, ನೀರಿನ ತಾಣವಿರುವ ಪ್ರದೇಶದಲ್ಲಿ ಪೊದೆಯ ಹಿಂದೆ ಅಡಗಿ ಪ್ರಾಣಿಗಳ ಚಿತ್ರಗಳನ್ನು ತೆಗೆಯುತ್ತಿದ್ದ. ಅಪಾಯಕಾರಿ ಪ್ರಾಣಿಗಳಾದ ಹುಲಿ, ಸಿಂಹ, ಚಿರತೆಗಳ ಚಿತ್ರಗಳನ್ನು ತೆಗೆಯಲು ಕೆಲವೊಮ್ಮೆ ಆನೆಗಳ ಮೇಲೆ ಸವಾರಿ ಹೋಗಿ ಹತ್ತಿರದಿಂದ ತೆಗೆಯುವ ಹವ್ಯಾಸ ಬೆಳಸಿಕೊಂಡಿದ್ದ.

ಕೇವಲ ಐದಾರು ವರ್ಷಗಳಲ್ಲಿ ಬಗೆ ಬಗೆಯ ಪಕ್ಷಿಗಳು, ಪತಂಗ, ಜಿಂಕೆ, ನವಿಲು, ಸೇರಿದಂತೆ ಹುಲಿ, ಚಿರತೆ, ಸಿಂಹಗಳ ಸಾವಿರಾರು ಚಿತ್ರಗಳನ್ನು ತೆಗೆದು ದಾಖಲಿಸಿದ್ದ. ಅದೇ ರೀತಿ ಸಾವಿರಾರು ಅಡಿ ಉದ್ದದ 16 ಎಂ.ಎಂ. ನ ಚಿತ್ರೀಕರಣವನ್ನು ಮಾಡಿದ್ದ. (ಈ ಅಪರೂಪಪದ ಚಿತ್ರಗಳು ಈಗ ಲಂಡನ್ನಿನ ಬಿ.ಬಿ.ಸಿ. ಛಾನಲ್ ಸಂಗ್ರಹದಲ್ಲಿವೆ). ಚಿತ್ರಗಳ ಜೊತೆ ಜೊತೆಯಲ್ಲಿ ಪ್ರಾಣಿ ಪಕ್ಷಿಗಳ ಬದುಕನ್ನು ಸಂಗ್ರಹಿಸಿ, ಇವುಗಳ ಬಗ್ಗೆ ಕಾಲೇಜಿನಲ್ಲಿ, ಕ್ಲಬ್ಬುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ವಿದ್ಯಾರ್ಥಿ ಮತ್ತು ಜನಸಾಮಾನ್ಯರಿಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಕಾರ್ಬೆಟ್ ರೂಢಿಸಿಕೊಂಡ. ಅತ್ಯಂತ ಹುರುಪಿನಿಂದ ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ಕಾರ್ಬೆಟ್. ತನ್ನ ಈ ಹೊಸ ಪ್ರವೃತ್ತಿಯಿಂದಾಗಿ ನಂತರದ ದಿನಗಳಲ್ಲಿ ಅಂದರೇ, 1932ರ ವೇಳೆಗೆ ಜಗತ್ ಪ್ರಸಿದ್ದ ಅರಣ್ಯ ಸಂರಕ್ಷಕನಾಗಿ ಪ್ರಖ್ಯಾತಿ ಹೊಂದಿದ.

                                                (ಮುಂದುವರಿಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 24 )


– ಡಾ.ಎನ್.ಜಗದೀಶ್ ಕೊಪ್ಪ


 

ಜಿಮ್ ಕಾರ್ಬೆಟ್‌ಗೆ ವಯಸ್ಸಾಗುತ್ತಿದ್ದಂತೆ, ಜೀವನದ ವಿಶ್ರಾಂತಿಯ ಬಯಕೆ ಹೆಚ್ಚಾಗತೊಡಗಿತು. ನೈನಿತಾಲ್ ಪಟ್ಟಣದ ಪುರಸಭೆಯ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ. ಜೊತೆಗೆ ಮೊಕಮೆಘಾಟ್‌ನ ರೈಲ್ವೆ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಅಲ್ಲಿನ ಸರಕು ಮತ್ತು ಕಲ್ಲಿದ್ದಲು ಸಾಗಾಣಿಕೆಯ ಗುತ್ತಿಗೆಯನ್ನ ತನ್ನ ಬಳಿ ಎರಡು ದಶಕಕ್ಕೂ ಹೆಚ್ಚು ಕಾಲ ದುಡಿದ ನಿಷ್ಟಾವಂತ ಕೂಲಿಕಾರ್ಮಿಕರಿಗೆ ವಹಿಸಿ, ಅವರ ಪರವಾಗಿ ತಾನೇ ರೈಲ್ವೆ ಇಲಾಖೆಗೆ ಠೇವಣಿ ಹಣವನ್ನು ತುಂಬಿದ. ಎರಡು ದಶಕ ನನ್ನ ಜೊತೆ ದುಡಿದ ನಿಮಗೆ ಮತ್ತು ನಿಮ್ಮ ಪ್ರೀತಿಗೆ ನಾನು ನೀಡಬಹುದಾದ ಕಾಣಿಕೆ ಇದೊಂದೇ ಎಂದು ಅಗಲಿಕೆಯ ಸಂದರ್ಭದಲ್ಲಿ ಹೆಮ್ಮೆಯಿಂದ ಕಾರ್ಬೆಟ್ ಘೋಷಿದ. ನೈನಿತಾಲ್ ಪಟ್ಟಣದಲ್ಲಿ ನಡೆಯುತ್ತಿದ್ದ ರಿಯಲ್ ಎಸ್ಟೇಟ್ ವ್ಯವಹಾರವನ್ನು ತಾಯಿ ಮೇರಿ ಕಾರ್ಬೆಟ್ ಹಾಗೂ ಮ್ಯಾಥ್ಯು ಕಂಪನಿಯ ವ್ಯವಹಾರವನ್ನು ಸಹೋದರಿ ಮ್ಯಾಗಿ ಹಾಗೂ ಮಲಸಹೋದರಿ ಮೇರಿಡೊಯಲ್ ಯಶಸ್ವಿಯಾಗಿ ನಿರ್ವಹಿಸುತ್ತಿದ್ದ ಕಾರಣ, ಕಾರ್ಬೆಟ್ ಆಪ್ರಿಕಾದ ತಾಂಜೇನಿಯಾದ ಕೃಷಿ ಚಟುವಟಿಕೆಗಳತ್ತ ಗಮನ ನೀಡತೊಡಗಿದ.

ನೈನಿತಾಲ್ ಗಿರಿಧಾಮದ ಪ್ರತಿಷ್ಟಿತ ಯುರೋಪಿಯನ್ ಕುಟುಂಬಗಳಲ್ಲಿ ಕಾರ್ಬೆಟ್ ಕುಟುಂಬಕ್ಕೆ ಮಹತ್ವದ ಸ್ಥಾನವಿತ್ತು. ಅಲ್ಲಿನ ಜನ ಎಲ್ಲಾ ವ್ಯವಹಾರಗಳಿಗೆ ಕಾರ್ಬೆಟ್‌ನ ತಾಯಿ ಮೇರಿಯನ್ನು ಆಶ್ರಯಿಸುತ್ತಿದ್ದರು. ಮೇರಿ ಕಾರ್ಬೆಟ್ ಜೀವನ ಪೂರ್ತಿ ಹೋರಾಟ ನಡೆಸಿ ಬದುಕು ಕಟ್ಟಿಕೊಂಡ ಪರಿಣಾಮ ಸದಾ ತನ್ನ ಕುಟುಂಬ ಭದ್ರತೆ ಬಗ್ಗೆ ಮತ್ತು ಭವಿಷ್ಯದ ಬಗ್ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಳು. ಮುಂದೆ ಎಂತಹದ್ದೇ ಸಂದರ್ಭಗಳಲ್ಲಿ ತಾನಾಗಲಿಗಲಿ, ಅಥವಾ ತನ್ನ ಮಕ್ಕಾಳಾಗಲಿ ಸಂಕಷ್ಟಕ್ಕೆ ಸಿಲುಕಬಾರದು ಎಂಬುದು ಮೇರಿಯ ನಿಲುವಾಗಿತ್ತು. ಹಾಗಾಗಿ ಸಂಪಾದಿಸಿದ ಹಣಕ್ಕೆ ಮೇರಿ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದ್ದಳು. ನೈನಿತಾಲ್ ಪಟ್ಟಣದಲ್ಲಿ ಅಷ್ಟೆಲ್ಲಾ ಆಸ್ತಿ ಇದ್ದರೂ ಕೂಡ ತನ್ನ ಹಾಗೂ ಮಕ್ಕಳ ಹೆಸರಿನಲ್ಲಿ ಬ್ಯಾಂಕುಗಳಲ್ಲಿ ಹಣವನ್ನು ಠೇವಣಿ ಇಡುತ್ತಿದ್ದಳು. ಜಿಮ್ ಕಾರ್ಬೆಟ್ ಹೊರತುಪಡಿಸಿ, ಇಡೀ ಕುಟುಂಬದ ಎಲ್ಲರೂ ಯಾವುದಕ್ಕೂ ಕೊರತೆ ಇಲ್ಲದಂತೆ ಐಷಾರಾಮದ ಬದುಕನ್ನು ರೂಢಿಸಿಕೊಂಡಿದ್ದರು. ಜಿಮ್ ಕಾರ್ಬೆಟ್ ಮಾತ್ರ ಎಂದೂ ದುಂದುವೆಚ್ಚಕ್ಕೆ ಅಥವಾ ಐಷಾರಾಮದ ಬದುಕಿಗೆ ಮನಸೋತವನಲ್ಲ. ಅವನ ಕೈಯಲ್ಲಿ ಕಾಡಿಗೆ ಶಿಕಾರಿಗೆ ತೆರಳುವ ಸಂದರ್ಭದಲ್ಲಿ ಮಾತ್ರ ರಿಸ್ಟ್ ವಾಚೊಂದು ಇರುತ್ತಿತ್ತು. ಉಳಿದಂತೆ ಸಾಧಾರಣ ಉಡುಪುಗಳಲ್ಲಿ ಇರುವುದು ಅವನ ಹವ್ಯಾಸವಾಗಿತ್ತು. ತಲೆಗೊಂದು ಹ್ಯಾಟ್ ಧರಿಸುವುದು ಅವನ ಮೆಚ್ಚಿನ ಹವ್ಯಾಸಗಳಲ್ಲಿ ಒಂದಾಗಿತ್ತು. ರಾತ್ರಿ ಎರಡು ಪೆಗ್ ವಿಸ್ಕಿ ಮತ್ತು ದಿನಕ್ಕೆ ಇಪ್ಪತ್ತು ಸಿಗರೇಟ್ ಸೇದುವ ಹವ್ಯಾಸ, ಬೇಸರವಾದಾಗಲೆಲ್ಲಾ ಹಾಲಿಲ್ಲದ ಕಪ್ಪು ಚಹಾ ಕುಡಿಯುವ ಅಭ್ಯಾಸ ಅವನಿಗಿತ್ತು.

ಜಿಮ್ ಕಾರ್ಬೆಟ್ ಯಾವಾಗಲೂ ಅರಣ್ಯಕ್ಕೆ ಕಾಡ್ಗಿಚ್ಚು ಆವರಿಸಿಕೊಳ್ಳುವ ಸಂದರ್ಭದಲ್ಲಿ ಹೆಚ್ಚು ಚಿಂತಾಕ್ರಾಂತನಾಗುತ್ತಿದ್ದ. ಆಫ್ರಿಕಾದಲ್ಲಿ ವಿಶೇಷವಾಗಿ ಕೀನ್ಯಾ ಮತ್ತು ತಾಂಜೇನಿಯ ಕಾಡುಗಳಲ್ಲಿ ಬೇಸಿಗೆ ಸಮಯದಲ್ಲಿ ನೈಸರ್ಗಿಕವಾಗಿ ಕಾಡ್ಗಿಚ್ಚು ಆವರಿಸಿಕೊಳ್ಳುವುದನ್ನು ನೋಡಿದ್ದ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಭಾರತದಲ್ಲಿ ಮರಗಳ್ಳರು ಮತ್ತು ಅಕ್ರಮ ಬೇಟೆಗಾರರು ಕಾಡಿಗೆ ಬೆಂಕಿ ಇಡುವುದನ್ನು ಕಂಡು ಬಹುವಾಗಿ ನೊಂದುಕೊಳ್ಳತ್ತಿದ್ದ. ಈ ಕಾರಣಕ್ಕಾಗಿ ಬೇಸಿಗೆಯ ಸಮಯದಲ್ಲಿ ಕಲದೊಂಗಿ ಮತ್ತು ಚೋಟಾಹಲ್ದಾನಿಯ ರೈತರನ್ನು ಕರೆದುಕೊಂಡು ಅರಣ್ಯದಲ್ಲಿ ಅಲೆದಾಡಿ ಕಾಡ್ಗಿಚ್ಚು ಆವರಿಸದಂತೆ ಎಚ್ಚರಿಕೆ ವಹಿಸುತ್ತಿದ್ದ. ಬಿದಿರು ಬೆಳೆದಿರುವ ಪ್ರದೇಶದಲ್ಲಿ ಹೆಚ್ಚಿನ ನಿಗಾ ಇಡುವಂತೆ ಸ್ಥಳಿಯರಿಗೆ ಕರೆ ನೀಡುತ್ತಿದ್ದ. ಇಡೀ ಕುಮಾವನ್ ಪ್ರಾಂತ್ಯದ ಅರಣ್ಯಾಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಇಂಜಿನಿಯರ್‌ಗಳು ವೈದ್ಯರು ಕಾರ್ಬೆಟ್‌ಗೆ ಪರಿಚತರಾಗಿದ್ದರು. ಅವರು ಭೇಟಿಯಾದಾಗಲೆಲ್ಲಾ ಸ್ಥಳೀಯ ಭಾಷೆಯಲ್ಲಿ ಅವರ ಯೋಗಕ್ಷೇಮ ವಿಚಾರಿಸಿ, ಅವರ ಸೇವೆ ಬಗ್ಗೆ ಮಾಹಿತಿ ಪಡೆದು ಸಲಹೆ ನೀಡುತ್ತಿದ್ದ. ಮತ್ತು ವೃತ್ತಿಯಲ್ಲಿ ಇರಬೇಕಾದ ಕಾಳಜಿಗಳ ಬಗ್ಗೆ ವಿವರಿಸಿ ಹೇಳುತ್ತಿದ್ದ. ಭಾರತದ ಗೌರ್ವನ್ ಜನರಲ್‌ಗಳು. ಪ್ರಾಂತ್ಯದ ಜಿಲ್ಲಾಧಿಕಾರಿಗಳು, ಕಾರ್ಬೆಟ್‌ಗೆ ಗೆಳೆಯರಾದ ಕಾರಣ ಅಲ್ಲಿನ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ಜಿಮ್ ಕಾರ್ಬೆಟ್ ಕುರಿತು ಭಯ ಮಿಶ್ರಿತ ಗೌರವವಿತ್ತು.

ತಾನು ವಾಸಿಸುತ್ತಿದ್ದ ನೈನಿತಾಲ್ ಗಿರಿಧಾಮದ ಪರಿಸರ ಅತಿಯಾದ ಪ್ರವಾಸಿಗರ ಭೇಟಿಯಿಂದಾಗಿ ಕಲುಷಿತವಾಗುತ್ತಿರುವುದನ್ನು ಕಂಡ ಕಾರ್ಬೆಟ್ ನಾಗರೀಕ ಸಮಿತಿಯೊಂದನ್ನು ರಚಿಸಿಕೊಂಡು, ಅದರ ರಕ್ಷಣೆಗೆ ಮುಂದಾದ. ಇದು ನಾಗರೀಕ ಸಮಿತಿಯಿಂದ ಸಾಧ್ಯವಿಲ್ಲ ಎಂಬುದನ್ನ ಮನಗಂಡಕೂಡಲೇ ಕಾರ್ಬೆಟ್ ಮತ್ತೇ ಅಲ್ಲಿನ ಪುರಸಭೆಗೆ ಸ್ಪರ್ಧಿಸಿ ಆಯ್ಕೆಯಾಗುವುದರ ಜೊತೆಗೆ ಉಪಾಧ್ಯಕ್ಷನ ಸ್ಥಾನ ಅಲಂಕರಿಸಿ, ನೈನಿತಾಲ್ ಪರಿಸರದ ರಕ್ಷಣೆಗೆ ಮುಂದಾದ. ಪಟ್ಟಣದ ಜನತೆ ಕುಡಿಯುವ ನೀರಿನ ಗುಣ ಮಟ್ಟ ಅಳೆಯಲು ಸಣ್ಣದೊಂದು ಪ್ರಯೋಗಾಲವೊಂದನ್ನು ನಿರ್ಮಿಸಿದ. ಮನೆಗಳಿಂದ ಹೊರಬರುವ ಕೊಳಚೆ ನೀರು ಅಲ್ಲಿನ ಸರೋವರ ಸೇರದಂತೆ ಮಾಡಲು ಪ್ರಪಥಮವಾಗಿ ಒಳಚರಂಡಿ ವ್ಯವಸ್ಥೆಯನ್ನು ಜಾರಿಗೆ ತಂದ. ಪರಿಸರದಲ್ಲಿ ಸಮತೋಲನ ಕಾಯ್ದುಕೊಳ್ಳುವ ಸಲುವಾಗಿ ಪಟ್ಟಣದ ರಸ್ತೆಗಳಲ್ಲಿ ಸಾಲು ಮರಗಳ ಸಸಿಗಳನ್ನು ನೆಟ್ಟು ಪೋಷಿಸಿದ. ಎಲ್ಲಾ ಧರ್ಮದ ಜನರಿಗೆ ಅನುಕೂಲವಾಗುವಂತೆ ಪ್ರತ್ಯೇಕ ಸ್ಮಶಾನ ಭೂಮಿಗಳನ್ನು ನಿರ್ಮಿಸಿದ. ಪಟ್ಟಣದ ಹೃದಯ ಭಾಗದಲ್ಲಿದ್ದ ನೈನಿ ಸರೋವರದ ಸುತ್ತ-ಮುತ್ತ ತಡೆಗೋಡಯನ್ನು ನಿರ್ಮಿಸಿ, ರಸ್ತೆಯ ಕೊಳಚೆ ನೀರು ಸರೋವರಕ್ಕೆ ಸೇರದಂತೆ ಮಾಡಿ, ಅಪರೂಪದ ಮಷೀರ್ ಜಾತಿಯ ಮೀನುಗಳನ್ನು ಸಾಕುವ ಯೋಜನೆಯೊಂದನ್ನು ರೂಪಿಸಿದ. ರಾತ್ರಿಯ ವೇಳೆ ಕೆಲವರು ಮೀನು ಶಿಕಾರಿಯಲ್ಲಿ ತೊಡಗಿರುವದನ್ನು ಕಂಡು, ಸರೋವರದಲ್ಲಿ  ಮೀನು ಶಿಕಾರಿ ನಿಷೇದಿಸಿದ ಕಾನೂನನ್ನು ಜಾರಿಗೆ ತಂದ.

ಅತಿ ವೇಗವಾಗಿ ಬೆಳೆಯುತ್ತಿದ್ದ ನೈನಿತಾಲ್ ಗಿರಿಧಾಮಕ್ಕೆ ಬೆಳೆವಣಿಗೆಗೆ ಕಡಿವಾಣ ಹಾಕಲು, ಸುತ್ತ ಮುತ್ತಲಿನ ಗುಡ್ಡ ಪ್ರದೇಶದಲ್ಲಿ ಅಕ್ರಮವಾಗಿ ವಸತಿ ಪ್ರದೇಶಗಳು ತಲೆ ಎತ್ತುವುದಕ್ಕೆ ಕಡಿವಾಣ ಹಾಕಿ, ಬಹುಮಹಡಿ ಕಟ್ಟಡಗಳಿಗೆ ಉತ್ತೇಜನ ನೀಡಿದ. ಕಣ್ಣೆದುರು, ವೇಗವಾಗಿ ಬೆಳೆಯುತ್ತಿರುವ ನಾಗರೀಕತೆಯಿಂದ ಅರಣ್ಯ ನಾಶವಾಗುತ್ತಿರುವುದನ್ನು ಮನಗಂಡು, ಭಾರತ ಸರ್ಕಾರದೊಂದಿಗೆ ಸಮಾಲೋಚಿಸಿ ಕುಮಾವನ್ ಪ್ರಾಂತ್ಯದ ಅರಣ್ಯ ರಕ್ಷಣೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ಮುಂದಾದ. ಕೆಲವೊಮ್ಮೆ ಸರ್ಕಾರದ ನಿರ್ಧಾರಗಳು ಅವನಲ್ಲಿ ಜಿಗುಪ್ಸೆ ಮೂಡಿಸುತ್ತಿದ್ದವು.

ಭಾರತದಲ್ಲಿ ಆಗ ತಾನೇ ವಿಸ್ತಾರಗೊಳ್ಳುತ್ತಿದ್ದ ರೈಲ್ವೆ ಯೋಜನೆಗಳಿಗೆ ಈಶಾನ್ಯ ರಾಜ್ಯಗಳ ಅರಣ್ಯ ಮತ್ತು ಹಿಮಾಲಯ ತಪ್ಪಲಿನ ಅರಣ್ಯ ಪ್ರದೇಶ ಬಲಿಯಾಗುತ್ತಿರುದನ್ನು ಕಂಡು ಕಾರ್ಬೆಟ್ ನೊಂದುಕೊಳ್ಳುತ್ತಿದ್ದ. ರೈಲ್ವೆ ಹಳಿಗಳ ಕೆಳಗೆ ಹಾಸಲು ವಯಸ್ಸಾದ ಸದೃಢ ಮರಗಳನ್ನು ಕಡಿದು ಹಾಕುವುದರ ಬಗ್ಗೆ ಅವನು ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಿದ. ಮರ ಕಡಿದ ಜಾಗದಲ್ಲಿ ಅತಿ ಶೀಘ್ರವಾಗಿ ಬೆಳೆಯವ ಮರಗಳನ್ನು ಬೆಳಸುವ ಸರ್ಕಾರದ ಯೋಜನೆಗಳಿಗೆ ಪ್ರತಿಭಟಿಸಿದ. ಆಯಾ ಪ್ರದೇಶದ ಬೌಗೂಳಿಕ ಲಕ್ಷಣಗಳಿಗೆ ಅನುಸಾರವಾಗಿ ಒಕ್ ಮತ್ತು ದೇವದಾರು ಮರಗಳನ್ನು ಬೆಳೆಸಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರಿದ. ಸರ್ಕಾರ ಮತ್ತು ಅಧಿಕಾರಿಗಳು ಅರಣ್ಯವನ್ನು ಮತ್ತು ಅಲ್ಲಿನ ಮರಗಳನ್ನು ವಾಣಿಜ್ಯ ದೃಷ್ಟಿಕೋನದಿಂದ ನೋಡುವುದರ ಬಗ್ಗೆ ಕಾರ್ಬೆಟ್‌ಗೆ ತೀವ್ರ ಅಸಹನೆಯಿತ್ತು. ಮರಗಳ ನಾಶದಿಂದ ಗೂಡು ಕಟ್ಟಲು ಪರಿತಪಿಸುತಿದ್ದ ಪಕ್ಷಿಗಳನ್ನು ಕಂಡಾಗ ಕಾರ್ಮೆಟ್ ತೀವ್ರವಾಗಿ ನೊಂದುಕೊಳ್ಳುತ್ತಿದ್ದ. ಒಮ್ಮೊಮ್ಮೆ ತನ್ನ ಅಂತರಂಗಕ್ಕೆ ತಾನೇ ಪ್ರಶ್ನೆಗಳನ್ನು ಹಾಕಿಕೊಂಡು, ಪರಿಸರ ಕುರಿತಂತೆ ತನ್ನ ನಿಲುವುಗಳಲ್ಲಿ ದ್ವಂದ್ವ ಇರುವುದನ್ನು ಕಂಡು ಮುಜುಗರ ಪಟ್ಟುಕೊಂಡ. ಇದಕ್ಕೆ ಪ್ರಾಯಸ್ಛಿತ್ತವಾಗಿ ಎಲ್ಲಾ ಬಗೆಯ ಅರಣ್ಯ ಶಿಕಾರಿಗಳಿಗೆ ತಿಲಾಂಜಲಿ ನೀಡಲು ನಿರ್ಧರಿಸಿದ.

ಬೆಳಿಗ್ಗೆ ತಿಂಡಿ ತಿಂದು ಮನೆಯಿಂದ ಹೊರಟನೆಂದರೆ, ಮತ್ತೇ ರಾತ್ರಿಗೆ ಹಿಂತಿರುಗುತ್ತಿದ್ದ ಜಿಮ್ ಕಾರ್ಬೆಟ್ ತನ್ನ ವಯಸ್ಸು ಮಾಗುತ್ತಿದ್ದಂತೆ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ಮತ್ತು ಪರಿಸರ ರಕ್ಷಿಸುವಲ್ಲಿ ಆಸಕ್ತಿ ತೋರತೊಡಗಿದ. ನೈನಿತಾಲ್ ಪಟ್ಟಣದ ರಸ್ತೆಗಳ ಅಗಲೀಕರಣಕ್ಕಾಗಿ ಸರ್ಕಾರದ ಲೋಕೋಪಯೊಗಿ ಇಲಾಖೆ ಮರಗಳನ್ನು ಕಡಿಯಲು ಮುಂದಾದಾಗ, ಪ್ರತಿಭಟಿಸಿ ತಡೆಯೊಡ್ಡಿದ. ಕಾರ್ಬೆಟ್, ರಸ್ತೆಗಾಗಿ ನೆಲಕ್ಕೆ ಉರುಳುವ ಮರಗಳ ಬದಲಾಗಿ ಅವುಗಳ ಸಂಖ್ಯೆಯ ದುಪ್ಪಟ್ಟು ಮರಗಳನ್ನು ನೆಡಲಾಗುವುದೆಂದು ಸರ್ಕಾರದಿಂದ ಆಶ್ವಾಸನೆ ಪಡೆದು ನಂತರವಷ್ಟೇ ರಸ್ತೆಯ ಅಗಲೀಕರಣಕ್ಕೆ ಅನುವು ಮಾಡಿಕೊಟ್ಟ. ಪಟ್ಟಣ ಪುರಸಭೆಯ ಹಿರಿಯ ಉಪಾಧ್ಯಕ್ಷ ಹಾಗೂ ಸಮಾಜದ ಗೌರವಾನ್ವಿತ ವ್ಯಕ್ತಿಯಾಗಿದ್ದ ಕಾರ್ಬೆಟ್‌ನ ಕಾಳಜಿಗಳ ಬಗ್ಗೆ ಅಥವಾ ಆತನ ನಿಲುವುಗಳ ಬಗ್ಗೆ ಪ್ರಶ್ನಿಸುವ ಧೈರ್ಯ ನೈನಿತಾಲ್ ಪಟ್ಟಣ ಮಾತ್ರವಲ್ಲ, ಕುಮಾವನ್ ಪ್ರಾಂತ್ಯದಲ್ಲಿ ಯಾರಿಗೂ ಇರಲಿಲ್ಲ. ಪ್ರಾಣಿ ಮತ್ತು ಪರಿಸರ ಕುರಿತು ಅಪಾರ ಕಾಳಜಿ ಬೆಳಸಿಕೊಂಡಿದ್ದ. ಕಾರ್ಬೆಟ್, ಸಾಮಾನ್ಯ ಜನತೆಗೆ ಈ ಕುರಿತು ಜಾಗೃತಿ ಮೂಡಿಸಲು ಹೊಸದೊಂದು ಯೋಜನೆಯನ್ನು ರೂಪಿಸಿದ. ಕ್ಯಾಮರಾ ಮೂಲಕ ಪ್ರಾಣಿ, ಪಕ್ಷಿಗಳ ಚಿತ್ರವನ್ನು ಸರೆಹಿಡಿದು ಅವುಗಳ ಬದುಕನ್ನು ಜನಸಾಮಾನ್ಯರಿಗೆ ವಿವರಿಸುವುದು, ಅವನ ಮಹತ್ವಾಕಾಂಕ್ಷೆಯ ಯೋಜನೆಯಾಗಿತ್ತು.

(ಮುಂದುವರಿಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 23)


– ಡಾ.ಎನ್.ಜಗದೀಶ್ ಕೊಪ್ಪ


 

1925ರ ಡಿಸಂಬರ್ ತಿಂಗಳಿನಲ್ಲಿ ಕ್ರಿಸ್‌ಮಸ್ ಹಬ್ಬದ ಆಚರಣೆ ಹಾಗೂ ಒಂದಿಷ್ಟು ವಿಶ್ರಾಂತಿಗಾಗಿ ನೈನಿತಾಲ್‌ಗೆ ಬಂದ ಕಾರ್ಬೆಟ್‌‍ಗೆ ಮತ್ತೇ ರುದ್ರಪ್ರಯಾಗಕ್ಕೆ ಹೋಗಿ ನರಭಕ್ಷಕನನ್ನು ಬೇಟೆಯಾಡಬೇಕೆಂದು ಮನಸ್ಸಿನಲ್ಲಿ ಕೊರೆಯುತಿತ್ತು. ಆದರೆ, ನೈನಿತಾಲ್ ಹಾಗೂ ದೂರದ ತಾಂಜೇನಿಯಾದಲ್ಲಿನ ಅವನ ಕೃಷಿ ಮತ್ತು ಎಸ್ಟೇಟ್ ವ್ಯವಹಾರಗಳು ಅವನಿಗೆ ಅಡ್ಡಿಯಾಗುತಿದ್ದವು. ಜೊತೆಗೆ ಚಳಿಗಾಲದ ಶೀತಗಾಳಿ ಅವನ ಕಾರ್ಯಾಚರಣೆಗೆ ದೊಡ್ಡ ಸವಾಲಾಗಿತ್ತು. ಇವತ್ತು ಕೂಡ, ಸಂಜೆ ಆರರ ನಂತರ ನಾವು ನೈನಿತಾಲ್, ಅಲ್ಮೋರ. ರಾಣಿಖೇತ್, ರುದ್ರಪ್ರಯಾಗ ಅಥವಾ ಮನಾಲಿಯಲ್ಲಿ ಗಾಳಿಗೆ ಮೈಯೊಡ್ಡಿ ನಿಲ್ಲಲು ಸಾಧ್ಯವಾಗುವುದಿಲ್ಲ. ಇನ್ನು 85 ವರ್ಷಗಳ ಹಿಂದಿನ ಪರಿಸ್ಥಿತಿ ಹೇಗಿತ್ತು ನೀವೇ ಊಹಿಸಿ.

ಕಾರ್ಬೆಟ್‌ ರುದ್ರಪ್ರಯಾಗದಿಂದ ನೈನಿತಾಲ್‌ಗೆ ವಾಪಸ್ ಬಂದ ನಂತರ, ನರಭಕ್ಷಕ ಚಿರತೆ ರುದ್ರಪ್ರಯಾಗದ ಆಸುಪಾಸಿನ ಹಳ್ಳಿಗಳಲ್ಲಿ ಅಸಂಖ್ಯಾತ ಮೇಕೆ, ಹಸುಗಳು ಅಲ್ಲದೇ, ಹತ್ತು ಜನರನ್ನು ಬಲಿತೆಗೆದುಕೊಂಡಿತ್ತು. ಈ ಎಲ್ಲಾ ಸುದ್ಧಿಗಳು ಕಾರ್ಬೆಟ್‌ಗೆ ಇಬ್ಸ್‌ಟನ್ ಮೂಲಕ ತಲಪುತಿದ್ದವು. ಏಪ್ರಿಲ್ ತಿಂಗಳಿನಲ್ಲಿ ಬೇಸಿಗೆ ಆರಂಭವಾಗುತಿದ್ದಂತೆ, ಕಾಬೆಟ್ ತನ್ನ ಸಂಗಡಿಗರೊಂದಿಗೆ ಮತ್ತೆ ರುದ್ರಪ್ರಯಾಗಕ್ಕೆ ನರಭಕ್ಷಕನ ಬೇಟೆಗೆ ಹೊರಟ. ಈ ಬಾರಿ ಅವನು ಕಾಲ್ನಡಿಗೆ ಅಥವಾ ಕುದುರೆ ಸವಾರಿ ಬದಲಿಗೆ, ನೈನಿತಾಲ್ ಗಿರಿಧಾಮದ ಕೆಳಗಿರುವ ಕತಂಗೊಂಡಂನಿಂದ ರೈಲಿನಲ್ಲಿ ಹರಿದ್ವಾರ, ಕೋಟದ್ವಾರದ ಮೂಲಕ ರುದ್ರಪ್ರಯಾಗ ತಲುಪಿದನು ಇದರಿಂದಾಗಿ 8-10 ದಿನಗಳ ಕಾಲ್ನಡಿಗೆಯ ಪ್ರಯಾಣದ ಸಮಯ ಉಳಿತಾಯವಾಯಿತು.

ಕಾರ್ಬೆಟ್‌ ತನ್ನ ನೆಚ್ಚಿನ ಭಂಟ ಮಾಧೂಸಿಂಗ್ ಮತ್ತು ಸೇವಕರೊಡನೆ ರುದ್ರಪ್ರಯಾಗ ತಲುಪುವ ವೇಳೆಗೆ, ಛಾರ್ ಧಾಮ್ ಎಂದು ಕರೆಸಿಕೊಳ್ಳುವ ಹೃಷಿಕೇಶ, ಹರಿದ್ವಾರ, ಕೇದಾರನಾಥ, ಮತ್ತು ಬದರಿನಾಥ ಯಾತ್ರೆಗಾಗಿ ದೇಶಾದ್ಯಂತ ಭಕ್ತರು ಆಗಮಿಸುತಿದ್ದರು. ಎಲ್ಲಾ ಪಟ್ಟಣಗಳು ಮತ್ತು ಯಾತ್ರೆಯ ಹಾದಿಯಲ್ಲಿದ್ದ ಹಳ್ಳಿಗಳು ಭಕ್ತರಿಂದ ತುಂಬಿ ತುಳುಕುತಿದ್ದವು.. ನರಭಕ್ಷಕ ಚಿರತೆ ಯಾತ್ರೆಯ ಹಾದಿಯಲ್ಲಿರುವ ಹಳ್ಳಿಗಳನ್ನ ಗುರಿಯಾಗಿರಿಸಿಕೊಂಡು ನರಬಲಿ ತೆಗೆದುಕೊಳ್ಳುವುದನ್ನು ಆರಂಭಿಸಿತ್ತು.

ಎರಡನೇ ಬಾರಿ ರುದ್ರಪ್ರಯಾಗಕ್ಕೆ ಕಾರ್ಬೆಟ್‌ ಮತ್ತು ಅವನ ತಂಡ ಬಂದಾಗ ಜಿಲ್ಲಾಧಿಕಾರಿ ಇಬ್ಸ್‌ಟನ್ ಬಂದು ಇವರನ್ನು ಸೇರಿಕೊಳ್ಳಲಾಗಲಿಲ್ಲ. ಪೌರಿಯಲ್ಲಿ ಸರ್ಕಾರದ ಕೆಲಸದ ಒತ್ತಡದಿಂದಾಗಿ ವಾರ ಕಳೆದು ಪತ್ನಿ ಜೀನ್ ಬರುವುದಾಗಿ, ಸಂದೇಶ ಕಳಿಸಿ, ಕಾರ್ಬೆಟ್‌ ಮತ್ತು ಅವನ ತಂಡಕ್ಕೆ ಸಕಲ ವ್ಯವಸ್ಥೆ ಕಲ್ಪಿಸಿದ್ದನು.

ಕಾರ್ಬೆಟ್‌ ಬರುವುದರೊಳಗೆ, ರುದ್ರಪ್ರಯಾಗದ ಸನೀಹದ ಗೋಲಬಾರಿ ಹಳ್ಳಿಯಲ್ಲಿ ನರಭಕ್ಷಕ ಮಧ್ಯವಯಸ್ಸಿನ ಹೆಂಗಸೊಬ್ಬಳನ್ನು ಬಲಿತೆಗೆದುಕೊಂಡಿತ್ತು. ಆ ನತದೃಷ್ಟ ಮಹಿಳೆ ಕತ್ತಲಾದ ಕಾರಣ ತನ್ನ ಹಳ್ಳಿಗೆ ಹಿಂತಿರುಗಲಾರದೆ, ಪಂಡಿತನ ಮನೆಯಲ್ಲಿ ಆಶ್ರಯ ಪಡೆದಿದ್ದಳು. ಸೋಜಿಗವೆಂದರೆ, ಐವತ್ತಕ್ಕೂ ಪ್ರವಾಸಿಗರು ಮಲಗಿದ್ದ ವಿಶಾಲವಾದ ಜಾಗದಲ್ಲಿ ಎಲ್ಲರನ್ನು ಬಿಟ್ಟು ಈಕೆಯನ್ನು ಮಿಸುಕಾಡಲು ಆಸ್ಪದ ನೀಡದೆ, ಕೊಂದು ಹೊತ್ತೊಯ್ದು ತಿಂದು ಹಾಕಿತ್ತು.

ಈ ಘಟನೆಯ ಹಿಂದಿನ ಐದು ದಿನಗಳ ಹಿಂದೆ ಇದೇ ನರಭಕ್ಷ ಪಕ್ಕದ ಹಳ್ಳಿಯಲ್ಲಿ ರಾತ್ರಿಯ ವೇಳೆ ಜಾನುವಾರುಗಳಿಗೆ ಮೇವನ್ನು ಹಾಕುತಿದ್ದ ರೈತ ಮಹಿಳೆಯ ಮೇಲೆ ದಾಳಿ ಮಾಡಿತ್ತು. ಮೇವು ಕತ್ತರಿಸಲು ಆಕೆ ಕೈಯಲ್ಲಿ ಕುಡಗೋಲು ಇದ್ದ ಕಾರಣ ಅದರ ಮೂತಿಗೆ ಬಲವಾಗಿ ಹೊಡೆದು ತಪ್ಪಿಸಿಕೊಂಡಿದ್ದಳು. ಆದರೂ ಅದು ಅವಳ ಮೊಣಕಾಲಿನ ಹಿಂಬದಿಯ ಮಾಂಸ ಖಂಡವನ್ನು ಬಲವಾಗಿ ಕಚ್ಚಿ ಹಿಡಿದು ಗಾಯಗೋಳಿಸಿತ್ತು. ಇದೇ ರೀತಿ ನರಭಕ್ಷಕ ದಾಳಿಯಿಂದ ಬದುಕುಳಿದ ಇನ್ನೋರ್ವ ವ್ಯಕ್ತಿಯೆಂದರೆ, ಪಂಡಿತ. ಅವನು ಒಮ್ಮೆ ತನ್ನ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿ ಪ್ರವಾಸಿಗರ ಜೊತೆ ಮಲಗಿದ್ದಾಗ, ನಡುರಾತ್ರಿ ಉಸಿರು ಕಟ್ಟಿದ ಅನುಭವವಾಗಿ ಬಾಗಿಲು ತೆರೆದು ಹೊರಗಿನ ಹಜಾರಕ್ಕೆ ಬಂದ ತಕ್ಷಣ ಕಾದು ಕುಳಿತಿದ್ದ ನರಭಕ್ಷಕ ಇವನ ಮೇಲೆ ಎರಗಿತ್ತು. ಕಂಬದ ಬಳಿ ಅವನು ನಿಂತಿದ್ದರಿಂದ ಅದನ್ನು ಬಲವಾಗಿ ತಬ್ಬಿ ಹಿಡಿದು, ಚಿರತೆಯ ಹೊಟ್ಟೆಗೆ ಬಲವಾಗಿ ಒದ್ದು ಅದರ ಹಿಡಿತದಿಂದ ಬಿಡಿಸಿಕೊಂಡಿದ್ದ. ಆದರೆ, ಅದರ ಬಲವಾದ ಉಗುರುಗಳು ಅವನ ಕತ್ತನ್ನು ಸೀಳಿ, ಅನ್ನನಾಳ, ಮತ್ತು ಶ್ವಾಸನಾಳಗಳೆರಡನ್ನು ಘಾಸಿಗೊಳಿಸಿದ್ದವು. ರುದ್ರಪ್ರಯಾಗದ ಆಸ್ಪತ್ರೆಯಲ್ಲಿ ನಾಲ್ಕು ತಿಂಗಳ ಕಾಲ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದನು.

ಈ ಬಾರಿ ನರಭಕ್ಷಕ ಚಿರತೆಯನ್ನು ಅರಸಿಕೊಂಡು ಹಳ್ಳಿಗಳನ್ನು ಸುತ್ತುವ ಬದಲು. ಯಾತ್ರಿಕರ ಹಾದಿಯಲ್ಲಿ ಗಸ್ತು ತಿರುಗುತ್ತಿರುವ ಅದನ್ನು ಹಾದಿಯ ಸಮೀಪದಲ್ಲೇ ಮೇಕೆಯೊಂದನ್ನು ಕಟ್ಟಿ ಕಾಕಿ, ಮರದ ಮೇಲೆ ಕುಳಿತು ಬೇಟೆಯಾಡಬೇಕೆಂದು ಕಾರ್ಬೆಟ್‌ ತೀರ್ಮಾನಿಸಿದನು. ಅಷ್ಟರ ವೇಳೆಗೆ ರುದ್ರಪ್ರಯಾಗಕ್ಕೆ ಆಗಮಿಸಿದ ಇಬ್ಸ್‌ಟನ್ ದಂಪತಿಗಳು ಸಹ ಇದಕ್ಕೆ ಸಹಮತ ವ್ಯಕ್ತಪಡಿಸಿದರು.

ಯಾತ್ರಿಕರ ಹಾದಿಯಲ್ಲಿ ಹೊಂಚು ಹಾಕಿ ಪ್ರತಿ ಐದು ದಿನಕ್ಕೊಮ್ಮೆ ಮನುಷ್ಯರನ್ನು ಬಲಿತೆಗೆದುಕೊಳ್ಳತಿದ್ದ ನರಭಕ್ಷಕನನ್ನು ಹೊಡೆಯಲು, ಗೋಲಬಾರಿ ಹಳ್ಳಿಯ ಪಂಡಿತನ ಮನೆಯ ಮೊಭಾಗದ ಹಳ್ಳದಲ್ಲಿರುವ ಕಾಡಿಗೆ ಸಂಪರ್ಕ ಕಲ್ಪಿಸುವ ಹಾದಿಯೇ ಸೂಕ್ತ ಎಂದು ಕಾರ್ಬೆಟ್‌ ನಿರ್ಧರಿಸಿದನು. ಅಲ್ಲೊಂದು ಮಾವಿನ ಮರವಿದ್ದ ಕಾರಣ ಆ ಸ್ಥಳವನ್ನು ಬೇಟೆಗಾಗಿ ಆಯ್ಕೆ ಮಾಡಿಕೊಂಡನು. ತನ್ನ ಸೇವಕರನ್ನು ಕರೆಸಿ ಮರದ ಮೇಲೆ ಮಚ್ಚಾನು ಕಟ್ಟಿಸಿ, ಪಕ್ಕದ ಹಳ್ಳಿಯೊಂದರಿಂದ ಮೇಕೆಯೊಂದನ್ನು ಖರೀದಿಸಿ ತಂದನು. ಸಾಮಾನ್ಯವಾಗಿ ಮನುಷ್ಯರ ಬೇಟೆಗಾಗಿ ಪಕ್ಕದ ಕಾಡಿನಿಂದ ಚಿರತೆ ಈ ಹಾದಿಯಲ್ಲಿ ಬರುತಿದ್ದುದನ್ನು ಅದರ ಹೆಜ್ಜೆಯ ಗುರುತುಗಳಿಂದ ಕಾರ್ಬೆಟ್‌ ದೃಢಪಡಿಸಿಕೊಂಡಿದ್ದ.

ಈ ಬಾರಿ ನರಭಕ್ಷಕನ ಬೇಟೆ ವಿಫಲವಾದರೆ, ಮತ್ತೇ ನಾನು ರುದ್ರಪ್ರಯಾಗಕ್ಕೆ ಬರಲಾರೆ ಎಂದು ಕಾರ್ಬೆಟ್‌ ಜಿಲ್ಲಾಧಿಕಾರಿ ಇಬ್ಸ್‌ಟನ್‌ಗೆ ತಿಳಿಸಿದ್ದ. ಇದರ ಸಲುವಾಗಿಯೇ ಅವನ ಹಲವಾರು ವ್ಯವಹಾರಗಳು ಕುಂಠಿತಗೊಂಡಿದ್ದವು. ತಾನು ತುರ್ತಾಗಿ ಬೇಟಿ ನೀಡಬೇಕಾಗಿದ್ದ ತಾಂಜೇನಿಯ ಪ್ರವಾಸವನ್ನು ಕಳೆದ ಮೂರು ತಿಂಗಳಿನಿಂದ ಮುಂದೂಡತ್ತಲೇ ಬಂದಿದ್ದನು.

ಕಾರ್ಬೆಟ್‌ ಮೇಕೆಯ ಕೊರಳಿಗೆ ಗಂಟೆಯನ್ನು ಕಟ್ಟಿ ಅದನ್ನು ಮಾವಿನ ಮರದ ಸಮೀಪ ಕೇವಲ 20 ಅಡಿ ದೂರದಲ್ಲಿ ಕಟ್ಟಿ ಹಾಕಿ ಪ್ರತಿದಿನ ಸಂಜೆ ಬಂದು ರಾತ್ರಿಯೆಲ್ಲಾ ನರಭಕ್ಷಕನಿಗೆ ಕಾಯಲು ಆರಂಭಿಸಿದ. ಮಾವಿನ ಮರ ಎತ್ತರವಿದ್ದ ಕಾರಣ ಚಿರತೆಗೆ ಕಾರ್ಬೆಟ್‌ನ ಸುಳಿವು ಸಿಗಲು ಸಾಧ್ಯವಿರಲಿಲ್ಲ. ಹೀಗೆ ಸತತ ಹತ್ತು ರಾತ್ರಿಗಳನ್ನು ಮರದ ಮೇಲೆ ಕುಳಿತು ಕಾದರೂ ಏನೂ ಫಲ ಸಿಗದ ಕಾರಣ ಅವನಲ್ಲಿ ಹತಾಶೆಯ ಮನೋಭಾವ ಮೋಡತೊಡಗಿತು. ಇನ್ನೆರೆಡು ದಿನ ಕಾದು, ಈ ನರಭಕ್ಷಕನ ಶಿಕಾರಿ ನನ್ನಿಂದ ಸಾಧ್ಯವಿಲ್ಲ ಎಂದು ತಿಳಿಸಿ, ಹೋಗೋಣವೆಂದು ಕಾರ್ಬೆಟ್‌ ಅಂತಿಮವಾಗಿ ದೃಢ ನಿಶ್ಚಯಕ್ಕೆ ಬಂದ. ಆದರೆ, ಅವನ ಕಾಯುವಿಕೆಯನ್ನು ನಿರಾಶೆಗೊಳಿಸದೆ, ಹನ್ನೊಂದನೇ ದಿನದ ರಾತ್ರಿ 9 ಗಂಟೆ ಸುಮಾರಿಗೆ ನರಭಕ್ಷಕ ಚಿರತೆ ಮಾವಿನ ಮರದ ಬಳಿ ಕಟ್ಟಿ ಹಾಕಿದ್ದ ಮೇಕೆಯ ಬಳಿ ಬಂತು. ಈ ಬಾರಿ ನೈನಿತಾಲ್‌ನಿಂದ ಖರೀದಿಸಿ ತಂದಿದ್ದ ನೇರವಾಗಿ ಬೆಳಕು ಚೆಲ್ಲುವ ಟಾರ್ಚ್ ಒಂದನ್ನು ಬಂದೂಕದ ನಳಿಕೆಗೆ ಕಾರ್ಬೆಟ್‌ ಜೋಡಿಸಿಕೊಂಡಿದ್ದ. ಕತ್ತಲೆಯಲ್ಲಿ ಮೈಯೆಲ್ಲವನ್ನು ಕಣ್ಣು ಮತ್ತು ಕಿವಿಯಾಗಿಸಿಕೊಂಡು ನೋಡತೊಗಿದ. ಮೇಕೆಯ ಸನೀಹ ಬಂದು ಕುಳಿತ ಚಿರತೆ ಅದರ ಮೇಲೆ ಎರಗುವ ಮುನ್ನ ಸುತ್ತ ಮುತ್ತ ಅಪಾಯವಿರಬಹುದೇ ಎಂಬಂತೆ ಸುತ್ತೆಲ್ಲಾ ನೋಡತೊಡಗಿತು. ಮೇಕೆ ಗಾಬರಿಯಿಂದ ಅಲುಗಾಡಿದ ಪರಿಣಾಮ ಅದರ ಕೊರಳಿದ್ದ ಗಂಟೆಯ ಶಬ್ಧ ಕಾರ್ಬೆಟ್‌ಗೆ ಕೇಳತೊಡಗಿತು. ತಕ್ಷಣವೆ ಟಾರ್ಚ್ ಬೆಳಕು ಬಿಟ್ಟ. ಮೇಕೆ ಮೇಲೆ ಎರಗಲು ಭೂಮಿಯ ಮೇಲೆ ಕವುಚಿ ಹಾಕಿ ಕುಳಿತ ನರಭಕ್ಷಕ ಬೆಳಕು ಬಂದ ಮಾವಿನ ಮರದತ್ತ ನೋಡತೊಡಗಿತು. ಕೂಡಲೇ ಕಾರ್ಬೆಟ್‌ ಗುಂಡು ಹಾರಿಸಿಬಿಟ್ಟ. ಆ ಕತ್ತಲೆಯಲ್ಲಿ ಏನು ಜರುಗಿದೆ ಎಂಬುದು ತಿಳಿಯದ ಸ್ಥಿತಿ. ಗುಂಡಿನ ಶಬ್ಧ ಕೇಳಿ, ಕೇವಲ ನೂರೈವತ್ತು ಅಡಿ ದೂರದಲ್ಲಿದ್ದ ಮನೆಯ ಬಾಗಿಲು ತೆರೆದು ಹೊರಬಂದ ಪಂಡಿತ ಜೋರಾಗಿ ಅರುಚುತ್ತಾ, ’ಸಾಹೇಬ್ ಗುಂಡಿಗೆ ಚಿರತೆ ಸಿಕ್ತಾ?’ ಎಂದು ಕೇಳಿದ. ಕಾರ್ಬೆಟ್‌ಗೆ ಆ ಕ್ಷಣದಲ್ಲಿ ಪಂಡಿತನ ಮೇಲೆ ಇನ್ನಿಲ್ಲದ ಸಿಟ್ಟು ಬಂದಿತು. ಆವನ ಕೂಗಿಗೆ ಕಾರ್ಬೆಟ್‌ ಉತ್ತರಿಸಲಿಲ್ಲ.

ಆಕಾಶದಲ್ಲಿ ಕತ್ತಲೆಯಿದ್ದ ಕಾರಣ ಚಂದ್ರನ ಬೆಳಕಿಗೆ ಬೆಳಗಿನ ಜಾವ ಮೂರು ಗಂಟೆಯವರೆಗೆ ಕಾಯಬೇಕಿತ್ತು. ಸ್ವಲ್ಪ ಸಮಯದ ನಂತರ ಮೇಕೆಯ ಗಂಟೆ ಸದ್ದು ಮತ್ತೇ ಕೇಳಿದ ನಂತರ ಕಾರ್ಬೆಟ್‌ಗೆ ಕುತೂಹಲ ಹೆಚ್ಚಾಗತೊಡಗಿತು. ಮರದ ಮೇಲಿನ ಭಾಗಕ್ಕೆ ಹೋಗಿ ಸುತ್ತೆಲ್ಲಾ ವೀಕ್ಷಿಸತೊಡಗಿದ. ಏನೂ ಕಾಣಲಿಲ್ಲ. ಬೆಳಗಿನ ಜಾವದವರೆಗೆ ಕಾಯೋಣವೆಂದುಕೊಂಡು ಮರದಮೇಲೆ ನಿದ್ರೆಗೆ ಮೊರೆಹೋದ.

ಬೆಳಗಿನ ಜಾವ ಬೆಳಕರಿದ ಮೇಲೆ ಮರದಿಂದ ಇಳಿದು ಬಂದ ಕಾರ್ಬೆಟ್‌ ಮೇಕೆಯ ಹತ್ತಿರ ಬಂದಾಗ ಅದು ಏನೂ ನಡೆದಿಲ್ಲವೆಂಬಂತೆ ತನ್ನ ಬಳಿ ಇದ್ದ ಸೊಪ್ಪನ್ನು ಮೇಯುತ್ತಲಿತ್ತು. ಆದರೆ, ಅದರ ಬಳಿ ನೆಲದ ಮೇಲೆ ರಕ್ತದ ಕೋಡಿಯೇ ಹರಿದಿತ್ತು. ಮುಂದೆ ಸುಮಾರು ಐವತ್ತು ಅಡಿ ದೂರದಲ್ಲಿ ನರಭಕ್ಷಕ ಸಾವಿಗೀಡಾಗಿ ನೆಲಕ್ಕೊಗಿತ್ತು. ಅದರ ಬಳಿ ಬಂದು ಸಾವನ್ನು ಖಚಿತಪಡಿಸಿಕೊಂಡ ಕಾರ್ಬೆಟ್‌ ತನ್ನ ಎರಡು ಕೈಗಳನ್ನು ಆಕಾಶಕ್ಕೆ ಎತ್ತಿ ಹಿಡಿದು ಜೋರಾಗಿ ಹುರ್ರಾ ಎನ್ನುತ್ತಾ ಒಮ್ಮೆ ಕುಪ್ಪಳಿಸಿಸಿಬಿಟ್ಟ. ಇಡೀ ಗೋಲಬಾರಿ ಗ್ರಾಮಸ್ಥರು ಮತ್ತು ಕಾರ್ಬೆಟ್‌ನ ಸಂಗಡಿಗರು ಓಡೋಡಿ ಬಂದರು. ನಾಲ್ಕು ಮೈಲಿ ದೂರದ ಪ್ರವಾಸಿ ಮಂದಿರದಲ್ಲಿದ್ದ ಇಬ್ಸ್‌ಟನ್‌ಗೆ ಸುದ್ಧಿ ತಲುಪಿದಾಕ್ಷಣ ಕುದುರೆ ಹತ್ತಿ ಸ್ಥಳಕ್ಕೆ ಬಂದ ಅವನು, ತಾನು ಈ ಪ್ರಾಂತ್ಯದ ಜಿಲ್ಲಾಧಿಕಾರಿ ಎಂಬುದನ್ನು ಮರೆತು ಚಿರತೆಯ ಕಳೇಬರದ ಸುತ್ತಾ ಸಂತೋಷದಿಂದ ನರ್ತಿಸಿದನು. ಹಳ್ಳಿಗರ ಪ್ರಶಂಸೆ, ಮತ್ತು ಕೃತಜ್ಙತೆಯ ನಡುವೆ ಮಾತು ಬಾರದ ಮೂಕನಂತೆ ಕುಳಿತಿದ್ದ ಕಾರ್ಬೆಟ್‌, ಅವರು ತಂದುಕೊಟ್ಟ ಚಹಾ ಹೀರುತ್ತಾ, ಉದ್ವೇಗ ತಡೆದುಕೊಳ್ಳಲಾಗದೆ, ಒಂದೇ ಸಮನೆ ಸಿಗರೇಟು ಸೇದತೊಡಗಿದ.

ಸುಮಾರು ಏಳು ಅಡಿ ಉದ್ದ, 180 ಕೆ.ಜಿ. ಗಿಂತಲೂ ಹೆಚ್ಚು ತೂಕವಿದ್ದ ವಯಸ್ಸಾದ ಗಂಡು ನರಭಕ್ಷಕ ಚಿರತೆಯನ್ನು ಕಾರ್ಬೆಟ್‌ ಮತ್ತು ಇಬ್ಸ್‌ಟನ್ ಇಬ್ಬರೂ ಪರಿಶೀಲಿಸತೊಡಗಿದರು. ಪ್ರಥಮ ಬಾರಿಗೆ ರುದ್ರಪ್ರಯಾಗದ ಸೇತುವೆ ಮೇಲೆ ಸಾಗಿ ಬರುತಿದ್ದಾಗ ಇಬ್ಬರು ಬ್ರಿಟಿಷ್ ಅಧಿಕಾರಿಗಳು ಹಾರಿಸಿದ್ದ ಗುಂಡಿನಿಂದಾಗಿ ಅದರ ಮುಂಗಾಲಿನ ಎರಡು ಉಗುರು ಕಿತ್ತು ಹೋಗಿದ್ದವು. ಅಲ್ಲದೇ, ಕಾರ್ಬೆಟ್‌ ನ ಗುಂಡಿನಿಂದ ಒಮ್ಮೆ ಕೂದಲೆಳೆಯ ಅಂತರದಿಂದ ತಪ್ಪಿಸಿಕೊಂಡಿದ್ದ ಅದರ ಕುತ್ತಿಗೆ ಭಾಗದಲ್ಲಿ ಗುಂಡು ಸವರಿಕೊಂಡು ಹೋದ ಗಾಯದ ಗುರುತು ಹಾಗೇ ಇತ್ತು. ಸೈನೈಡ್ ಪಾಷಣವನ್ನು ತಿಂದು ಬದುಕುಳಿದ ಪ್ರಯುಕ್ತ ಅದರ ನಾಲಗೆ ಕಪ್ಪಾಗಿತ್ತು. ಇವೆಲ್ಲಾ ಆಧಾರಗಳಿಂದ ಇದೇ ರುದ್ರಪ್ರಯಾಗದ ನರಭಕ್ಷಕ ಎಂಬ ತೀರ್ಮಾನಕ್ಕೆ ಬರಲಾಯಿತು.

ಚಿರತೆಯನ್ನು ಮೆರವಣಿಗೆಯಲ್ಲಿ ರುದ್ರಪ್ರಯಾಗದ ಪ್ರವಾಸಿ ಮಂದಿರಕ್ಕೆ ಹೊತ್ತು ತರಲಾಯಿತು. ಸತತ ಎರಡು ದಿನಗಳ ಕಾಲ ಇಡೀ ಪ್ರಾಂತ್ಯದ ಜನರೆಲ್ಲಾ ಸತ್ತು ಮಲಗಿದ್ದ ಭಯಾನಕ ನರಭಕ್ಷಕನನ್ನು ಒಮ್ಮೆ ನೋಡಿ ಹಿಡಿಶಾಪ ಹಾಕುತ್ತಾ ಹೋದರೆ, ಇದರ ದೆಶೆಯಿಂದ ತಮ್ಮ ಜಾನುವಾರುಗಳು, ಹಾಗೂ ಸಂಬಂಧಿಕರನ್ನು ಕಳೆದುಕೊಂಡ ಜನ ಕಾರ್ಬೆಟ್‌ ನ ಕಾಲಿಗೆ ನಮಸ್ಕರಿಸಿ ಕೃತಜ್ಞತೆ ಸಲ್ಲಿಸುತಿದ್ದರು. ಈ ಸಂಭ್ರಮದ ನಡುವೆ ಬದುಕುಳಿದ ಮೇಕೆ ಕೂಡ ಜಿಮ್ ಕಾರ್ಬೆಟ್‌ನಷ್ಟೇ ಪ್ರಸಿದ್ದಿ ಪಡೆಯಿತು. ಸಕಾರದ ವತಿಯಿಂದ ಇಬ್ಸ್‌ಟನ್ ಅದರ ಕುತ್ತಿಗೆಗೆ ಒಂದು ತಾಮ್ರ ಮತ್ತು ಹಿತ್ತಾಳೆಯ ಪಟ್ಟಿಯೊಂದನ್ನು ಮಾಡಿಸಿ ಹಾಕಿದ. ಅದೃಷ್ಟದ ಮೇಕೆಯೆಂದು ರುದ್ರಪ್ರಯಾಗದ ಪ್ರಾಂತ್ಯದಲ್ಲಿ ಹೆಸರುವಾಸಿದ ಅದನ್ನು ಹಲವಾರು ಜನ ಬಂದು ನೋಡುತಿದ್ದರು. ಅದರ ಯಜಮಾನನಿಗೆ ಮತ್ತೇ ಉಡುಗರೆಯಾಗಿ ಕಾರ್ಬೆಟ್‌ ಮೇಕೆಯನ್ನು ನೀಡಿದ. ಅವನು ಅದು ಸಾಯುವವರೆಗೂ ಮಾಲೀಕ ಅತ್ಯಂತ ಜತನದಿಂದ ನೋಡಿಕೊಂಡಿದ್ದು ವಿಶೇಷ.

ಈ ಒಂದು ನರಭಕ್ಷಕ ಚಿರತೆಯ ಬೇಟೆಯಿಂದಾಗಿ ಕಾರ್ಬೆಟ್‌ ವಿಶ್ವ ಪ್ರಸಿದ್ಧನಾದ. ಅವನ ಸಂದರ್ಶನಕ್ಕಾಗಿ ಜಗತ್ತಿನ ದಿನಪತ್ರಿಕೆಗಳ ವರದಿಗಾರರು ಮುಗಿಬಿದ್ದರು. ಸರ್ಕಾರ ಕೂಡ ಅವನನ್ನು ಅತ್ಯಂತ ಗೌರವದಿಂದ ಸನ್ಮಾನಿಸಿತು. ಅಲ್ಲದೇ ಅವನು ರುದ್ರಪ್ರಯಾಗದ ಚಿರತೆಯನ್ನು ಕೊಂದ ಸ್ಥಳದಲ್ಲಿ ಒಂದು ಸ್ಮಾರಕವನ್ನು ನಿಲ್ಲಿಸಿತು. ಈಗಲೂ ಕೂಡ ರುದ್ರಪ್ರಯಾಗದ ಸಮೀಪದ ಗೋಲ್ಬಾರಿ ಹಳ್ಳಿಯಲ್ಲಿರುವ ಆ ಸ್ಮಾರಕಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಬೇಟಿ ನೀಡುತ್ತಾರೆ.

(ಮುಂದುವರೆಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 22)


– ಡಾ.ಎನ್.ಜಗದೀಶ್ ಕೊಪ್ಪ


 

ಚಿರತೆಯ ಆರ್ಭಟ ಮತ್ತು ಗುಂಡಿನ ಸದ್ದು ಕೇಳಿದ ರುದ್ರಪ್ರಯಾಗದ ಜನ ನರಭಕ್ಷಕ ಗುಂಡಿಗೆ ಬಲಿಯಾಗಿದೆ ಎಂದು ಭಾವಿಸಿ, ಲಾಟೀನು, ದೊಣ್ಣೆ ಸಮೇತ, ಕಾರ್ಬೆಟ್ ಮತ್ತು ಇಬ್ಸ್‌ಟನ್ ಕುಳಿತ್ತಿದ್ದ ಸ್ಥಳಕ್ಕೆ ಓಡೋಡಿ ಬಂದರು. ಹಳ್ಳಿಯ ಜನರೆಲ್ಲಾ ಬಂದಿದ್ದರಿಂದ ಧೈರ್ಯ ಮಾಡಿದ ಕಾರ್ಬೆಟ್ ಮರದಿಂದ ಕೆಳಗಿಳಿದು ಟಾರ್ಚ್‌ ಬೆಳಕಿನ ಸಹಾಯದಿಂದ ಹಳ್ಳದಲ್ಲಿ ಚಿರತೆಗಾಗಿ ತಡಕಾಡಿದ. ತನ್ನ ಮುಂಗಾಲುಗಳು ಕತ್ತರಿಯಲ್ಲಿ ಸಿಲುಕಿದ್ದ ಕಾರಣ ಚಲಿಸಲಾರದೆ, ಅದರಿಂದ ಬಿಡಿಸಿಕೊಳ್ಳಲು ಹೆಣಗಾಡುತ್ತಿದ್ದ ಚಿರತೆಯನ್ನು ಹಳ್ಳದಲ್ಲಿ ಕಂಡಾಕ್ಷಣ ತಡ ಮಾಡದೆ, ಕಾರ್ಬೆಟ್ ಅದರ ತಲೆಗೆ ಗುಂಡುಹಾರಿಸಿದ. ಅತ್ಯಂತ ಹತ್ತಿರದಿಂದ ಹಾರಿಸಿದ ಗುಂಡಿನ ಹೊಡೆತಕ್ಕೆ ಕ್ಷಣಾರ್ಧದಲ್ಲೇ ಚಿರತೆ ಸಾವನ್ನಪ್ಪಿತು.

ಕಗ್ಗತ್ತಲೆಯಲ್ಲಿ ಸತ್ತು ಮಲಗಿದ ಚಿರತೆಯನ್ನು ನೋಡಿದಾಕ್ಷಣ ಗ್ರಾಮಸ್ಥರ ಸಂತಸ ಎಲ್ಲೇ ಮೀರಿತು. ಕಾರ್ಬೆಟ್ ಮತ್ತು ಇಬ್ಸ್‌ಟನ್ ಇಬ್ಬರನ್ನು ಹೆಗಲ ಮೇಲೆ ಎತ್ತಿ ಕುಣಿದಾಡಿದರು. ಬಿದರಿನ ಗಳಕ್ಕೆ ಚಿರತೆಯನ್ನು ಕಟ್ಟಿ ಆ ರಾತ್ರಿಯಲ್ಲೇ ಪ್ರಯಾಗದ ಪಟ್ಟಣದಲ್ಲಿ ಮೆರವಣಿಗೆ ಮಾಡಿದರು. ಕಾರ್ಬೆಟ್‌ನನ್ನೂ ಸಹ ಬಿಡದೆ, ಊರಿನ ಹೊರವಲಯದಿಂದ ಮೆರವಣಿಗೆಯಲ್ಲಿ ಹೊತ್ತು ತಂದರು. ಎಲ್ಲರೂ ನರಭಕ್ಷಕ ಗುಂಡಿಗೆ ಬಲಿಯಾಯಿತು ಎಂದು ನಂಬಿದ್ದರು. ಆದರೆ, ಕಾರ್ಬೆಟ್ ಅದನ್ನು ಖಚಿತ ಪಡಿಸಿಕೊಳ್ಳವ ತನಕ ನಂಬಲು ಸಿದ್ದನಿರಲಿಲ್ಲ. ಈ ಹಿಂದೆ ಶಿಕಾರಿಯ ಸಂದರ್ಭದಲ್ಲಿ ನೋಡಿದ್ದ ಚಿರತೆಗೂ, ಈಗ ಬಲಿಯಾಗಿರುವ ಚಿರತೆಯ ಮೈಬಣ್ಣದಲ್ಲಿನ ಅಲ್ಪ ವ್ಯತ್ಯಾಸ ಕಾರ್ಬೆಟ್‌ನನ್ನು ಗೊಂದಲದಲ್ಲಿ ದೂಡಿತ್ತು.

ಪ್ರವಾಸಿ ಮಂದಿರದ ಬಳಿಗೆ ಚಿರತೆಯ ಶವ ತಂದ ನಂತರ ಅದರ ಕುತ್ತಿಗೆ ಭಾಗವನ್ನು ಸೂಕ್ಷ್ಮವಾಗಿ ಗಮನಿಸಿದ. ಕೇವಲ ಎಂಟು ಹತ್ತು ದಿನಗಳ ಹಿಂದೆ ಕೂದಲೆಳೆಯ ಹಂತರದಿಂದ ಪಾರಾಗಿದ್ದ ನರಭಕ್ಷಕನಿಗೆ ಗುಂಡು ಅದರ ಕುತ್ತಿಗೆಯನ್ನು ಸವರಿಕೊಂಡು ಹೋಗಿತ್ತು, ಅಲ್ಲದೇ ಆ ಭಾಗದಲ್ಲಿ ಅದರ ಕೂದಲುಗಳು ಉದುರಿಹೋಗಿದ್ದವು. ಆದರೆ, ಈ ಚಿರತೆಯಲ್ಲಿ ಅದರ ಯಾವ ಲಕ್ಷಣಗಳು ಕಾಣಲಿಲ್ಲ. ಹಾಗಾಗಿ ಇದು ನರಭಕ್ಷಕ ಚಿರತೆಯಲ್ಲ, ಬೇರೊಂದು ಗಂಡು ಚಿರತೆ ಎಂದು ಜಿಮ್ ಕಾರ್ಬೆಟ್ ನಿರ್ಧರಿಸಿದ. ಆದರೆ, ಇವನ ತೀರ್ಮಾನವನ್ನು ಇಬ್ಸ್‌ಟನ್ ಆಗಲಿ, ರುದ್ರಪ್ರಯಾಗದ ಜನರಾಗಲಿ ನಂಬಲು ಸಿದ್ಧರಿರಲಿಲ್ಲ. ಸದ್ಯಕ್ಕೆ ಯಾವುದೇ ವಾದವಿವಾದ ಬೇಡ, ಕನಿಷ್ಟ ಒಂದು ವಾರ ಮೊದಲಿನ ಹಾಗೆ ರಾತ್ರಿ ವೇಳೆ ಎಚ್ಚರ ವಹಿಸಿ ಎಂದು ಪ್ರಯಾಗದ ಜನರಿಗೆ ಕಾರ್ಬೆಟ್ ಮನವಿ ಮಾಡಿಕೊಂಡ.

ತಡರಾತ್ರಿ ಪ್ರವಾಸಿ ಮಂದಿರದಲ್ಲಿ, ಇಬ್ಸ್‌ಟನ್ ಅವನ ಪತ್ನಿ ಜೀನ್ ಜೊತೆ ಕುಳಿತು ಊಟ ಮಾಡುವಾಗ, ತಕ್ಣಣ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡುವುದು ಬೇಡ ಎಂದು ಕಾರ್ಬೆಟ್ ಇಬ್ಸ್‌ಟನಗೆ ಮನವಿ ಮಾಡಿದ. ಅದಕ್ಕೆ ಅವನು ಸಮ್ಮತಿ ಸೂಚಿಸಿದ. ಮಾರನೇ ದಿನ ಬೆಳಿಗ್ಗೆ ಪೌರಿಯಿಂದ ಬಂದಿದ್ದ ಕೆಲವು ಕಾಗದ ಪತ್ರಗಳನ್ನು ವಿಲೇವಾರಿ ಮಾಡುವುದರಲ್ಲಿ ಇಬ್ಸ್‌ಟನ್ ನಿರತನಾದ. ಕಾರ್ಬೆಟ್ ತನ್ನ ಸಹಾಯಕರಿಗೆ ಚಿರತೆಯ ಚರ್ಮ ಸುಲಿಯಲು ತಿಳಿಸಿ, ಮಂದಾಕಿನಿ ನದಿಯಲ್ಲಿ ಮೀನು ಬೇಟೆಯಾಡಲು ಹೊರಟ. ಕಾರ್ಬೆಟ್ ನರಭಕ್ಷಕನ ಸಾವಿನ ಬಗ್ಗೆ ಖಚಿತಪಡಿಸಿಕೊಳ್ಳಲು ಒಂದು ವಾರ ಸಮಯ ಕೇಳಿದ್ದ ಆದರೆ, ಕೇವಲ ಎರಡು ದಿನಗಳ ಅವಧಿಯಲ್ಲಿ ನರಭಕ್ಷಕ ನದಿಯಾಚೆಗಿನ ಹಳ್ಳಿಯಲ್ಲಿ ಪ್ರತ್ಯಕ್ಷವಾಗಿ ಒಬ್ಬ ಹೆಂಗಸನ್ನು ಬಲಿತೆಗೆದುಕೊಂಡ ವಿಷಯವನ್ನು ಹಳ್ಳಿಗರು ಬೆಳಗಿನ ಜಾವ ಪ್ರವಾಸಿ ಮಂದಿರಕ್ಕೆ ಬಂದು ಕಾರ್ಬೆಟ್‌ಗೆ ಮುಟ್ಟಿಸಿದರು.

ಕಾರ್ಬೆಟ್‌ನ ಸಂಶಯ ಕಡೆಗೂ ನಿಜವಾಯಿತು. ಆ ವೇಳೆಗಾಗಲೇ ಇಬ್ಸ್‌ಟನ್ ವಾಪಸ್ ಪೌರಿಗೆ ಮತ್ತು ಕಾರ್ಬೆಟ್ ನೈನಿತಾಲ್‌ಗೆ ಹೋಗಿ ಸ್ವಲ್ಪ ದಿನ ವಿಶ್ರಾಂತಿ ತೆಗೆದುಕೊಂಡು ಬರುವುದೆಂದು ನಿರ್ಧಾರವಾಗಿತ್ತು. ಇಬ್ಬರೂ ಎರಡು ದಿನಗಳ ಮಟ್ಟಿಗೆ ತಮ್ಮ ಕಾರ್ಯಕ್ರಮವನ್ನು ಮುಂದೂಡಿ, ಹೆಂಗಸು ಬಲಿಯಾಗಿದ್ದ ಹಳ್ಳಿಗೆ ಕುದುರೆಯೇರಿ ಹೊರಟರು. ಊರ ಹೊರ ವಲಯದಲ್ಲಿ ಹೆಂಗಸಿನ ಶವವಿದ್ದ ಜಾಗದಲ್ಲಿ ಆಕೆಯ ಸಂಬಂಧಿ ಕಾರ್ಬೆಟ್ ಬರುವಿಕೆಗಾಗಿ ಕಾಯುತ್ತಿದ್ದ. ಕಾರ್ಬೆಟ್‌ಗೆ ರಾತ್ರಿ ನಡೆದ ಘಟನೆಯನ್ನು ವಿವರಿಸಿದ. ಚಿರತೆಗೆ ಬಲಿಯಾದ ಹೆಂಗಸಿನ ಶವವಿದ್ದ ಜಾಗ ಮತ್ತು ಆಕೆಯ ಮನೆ ಎಲ್ಲವನ್ನು ಕಾರ್ಬೆಟ್ ಮತ್ತು ಇಬ್ಸ್‌ಟನ್ ಇಬ್ಬರೂ ಸೂಕ್ಷ್ಮವಾಗಿ ಅವಲೋಕಿಸಿದರು.

ಹಿಂದಿನ ರಾತ್ರಿ ಮಳೆಯಾಗಿದ್ದ ಕಾರಣ ನರಭಕ್ಷಕನ ಹೆಜ್ಜೆ ಗುರುತು ಎಲ್ಲೆಡೆ ಸ್ಪಷ್ಟವಾಗಿ ಮೂಡಿದ್ದವು. ಮನೆಯಿಂದ ದೃಡವಾಗಿದ್ದ, ಐವತ್ತು ಕೆ.ಜಿ. ಗೂ ಹೆಚ್ಚು ತೂಕವಿದ್ದ ಹೆಂಗಸಿನ ಶವವನ್ನು ಎಲ್ಲಿಯೂ ಭೂಮಿಗೆ ತಾಗದಂತೆ ಬಾಯಲ್ಲಿ ಕಚ್ಚಿ ಹಿಡಿದು ಸಾಗಿದ್ದ ನರಭಕ್ಷಕ ಚಿರತೆಯ ಸಾಮರ್ಥ್ಯದ ಬಗ್ಗೆ ಕಾರ್ಬೆಟ್ ನಿಜಕ್ಕೂ ಬೆರಗಾದ. ಸಂಜೆ ನಾಲ್ಕು ಗಂಟೆಯ ವೇಳೆಗೆ ಶವವಿದ್ದ ಜಾಗದಿಂದ ಸುಮಾರು 60 ಅಡಿ ದೂರದಲ್ಲಿದ್ದ ಮರವೇರಿ ರಾತ್ರಿ ಹತ್ತು ಗಂಟೆಯವರೆಗೂ ಚಿರತೆಗಾಗಿ ಕಾಯಲು ಇಬ್ಬರೂ ನಿರ್ಧರಿಸಿದರು. ಕಾರ್ಬೆಟ್‌ನ ಸೇವಕರು ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳಸಿದ್ದರಿಂದ ಅವರಿನ್ನೂ ಹಳ್ಳಿ ತಲುಪಿರಲಿಲ್ಲ. ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲು ಹಳ್ಳಿಯ ಮುಖಂಡನಿಗೆ ತಿಳಿಸಿದ ಕಾರ್ಬೆಟ್ ಮತ್ತು ಇಬ್ಸ್‌ಟನ್ ಇಬ್ಬರೂ ಕೋವಿ, ಟಾರ್ಚ್ ಮತ್ತು ಪೆಟ್ರೋಮ್ಯಾಕ್ಸ್ ಜೊತೆ ಹೊರಟು ಮರವೇರಿ ಕುಳಿತರು.

ಗ್ರಾಮಸ್ಥರು ಚಿರತೆ ಉತ್ತರ ದಿಕ್ಕಿನ ಕಾಡಿನತ್ತ ಹೋಯಿತು ಎಂದು ತಿಳಿಸಿದ್ದರಿಂದ, ಎತ್ತರದ ಕೊಂಬೆಯೇರಿದ ಇಬ್ಸ್‌ಟನ್ ಉತ್ತರ ದಿಕ್ಕಿಗೆ ಮುಖಮಾಡಿ ಕೈಯಲ್ಲಿ ಬಂದೂಕ ಹಿಡಿದು ಕುಳಿತರೆ, ಕಾರ್ಬೆಟ್ ಇನ್ನೊಂದು ದಿಕ್ಕಿಗೆ ಮುಖಮಾಡಿ ಕುಳಿತ. ಪೆಟ್ರೋಮ್ಯಾಕ್ಸ್ ಮೇಲೆ ತೆಗೆದುಕೊಂಡು ಹೋಗಲು ಸಾಧ್ಯವಾಗದೆ ಮರದ ಬುಡದ ಪೊಟರೆಯಲ್ಲಿ ಇಟ್ಟರು. ಇಬ್ಬರ ಬಳಿ ಟಾರ್ಚ್ ಇತ್ತಾದರೂ ಅವುಗಳ ಬ್ಯಾಟರಿಗಳು ಶಕ್ತಿಗುಂದಿದ್ದವು. ಆದರೂ ನರಭಕ್ಷಕ ಬಂದರೆ, ಗುರಿಯಿಡುವ ಆತ್ಮವಿಶ್ವಾಸ ಇಬ್ಬರಿಗೂ ಇತ್ತು. ಆದರೆ, ಇವರ ನಿರೀಕ್ಷೆ ಮೀರಿ, ಉತ್ತರ-ದಕ್ಷಿಣ ದಿಕ್ಕುಗಳನ್ನು ಬಿಟ್ಟು ಪಶ್ಚಿಮ ದಿಕ್ಕಿನ ಪರ್ವತದಿಂದ ನರಭಕ್ಷಕ ಇಳಿದು ಬರುವುದನ್ನು ಕಾಡು ಕೋಳಿಗಳು ಕೂಗುವುದರ ಮೂಲಕ ಸೂಚನೆ ನೀಡಿದವು. ಇವರು ಕುಳಿತ್ತಿದ್ದ ಮರಕ್ಕೂ ಆ ಪಶ್ಚಿಮ ದಿಕ್ಕಿನ ನಡುವೆ ಕಲ್ಲು ಬಂಡೆ ಅಡ್ಡಿಯಾದ್ದರಿಂದ ಇಬ್ಬರೂ ಸರಸರನೆ ಮರದಿಂದ ಇಳಿದು ಕಲ್ಲು ಬಂಡೆ ಏರಲು ನಿರ್ಧರಿಸಿದರು. ಅದಕ್ಕಾಗಿ ಪೊಟರೆಯಲ್ಲಿ ಇಟ್ಟಿದ್ದ ಪೆಟ್ರೋಮ್ಯಾಕ್ಸ್ ತೆಗೆದು ಹತ್ತಿಸಿದರು. ಆದರೆ, ಇಬ್ಸ್‌ಟನ್ ಅದನ್ನು ಹಿಡಿದು ಬಂಡೆಯತ್ತ ಸಾಗುತ್ತಿರುವಾಗ, ನೆಲದ ಮೇಲಿನ ಕಲ್ಲೊಂದಕ್ಕೆ ತಾಗಿಸಿಬಿಟ್ಟ. ಇದರಿಂದಾಗಿ ಅದರ ಗಾಜು ಮತ್ತು ರೇಷ್ಮೆ ಬತ್ತಿ ಎರಡೂ ಉದುರಿಹೋದವು. ಆದರೂ ಅದರಿಂದ ಸಣ್ಣನೆಯ ನೀಲಿ ಜ್ವಾಲೆ ಹೊರಹೊಮ್ಮುತ್ತಿತ್ತು ಇದರ ಸಾಮರ್ಥ್ಯ ಕೇವಲ ಐದಾರು ನಿಮಿಷ ಎಂದು ಇಬ್ಸ್ ಹೇಳಿದ ಕೂಡಲೇ ಕಾರ್ಬೆಟ್, ಕತ್ತಲೆಯಲ್ಲಿ ಇಲ್ಲಿರುವುದು ಅಪಾಯಕಾರಿ ಎಂದು ನಿರ್ಧರಿಸಿ, ಹಳ್ಳಿಯತ್ತ ಹೆಜ್ಜೆ ಹಾಕಲು ಇಬ್ಸ್‌ಟನ್‌ಗೆ ಸೂಚಿಸಿದ.

ಇಬ್ಸ್ ಉರಿಯುತ್ತಿರುವ ಪೆಟ್ರೋಮ್ಯಾಕ್ಸ್‌ನ ಸಣ್ಣ ಜ್ವಾಲೆಯ ಬೆಳಕಿನಲ್ಲಿ ಹೆಜ್ಜೆ ಹಾಕುತ್ತಿದ್ದರೆ, ಕಾರ್ಬೆಟ್ ಅವನ ಹಿಂದೆ ಬಂದೂಕ ಹಿಡಿದು ಪ್ರತಿ ಎರಡು ಹೆಜ್ಜೆಗೆ ಒಮ್ಮೆ ಹಿಂತಿರುಗಿ ನೋಡಿ ಹೆಜ್ಜೆ ಹಾಕುತ್ತಿದ್ದ. ಕತ್ತಲೆಯಲ್ಲಿ ನರಭಕ್ಷಕ ಯಾವ ಕ್ಷಣದಲ್ಲಾದರೂ ನಮ್ಮ ಮೇಲೆ ದಾಳಿ ಮಾಡಬಹುದೆಂಬ ಅಂಜಿಕೆ ಆ ಕ್ಷಣದಲ್ಲಿ ಕಾರ್ಬೆಟ್‌ನನ್ನು ಬಲವಾಗಿ ಕಾಡಿತು ಕೊನೆಗೂ ಪೆಟ್ರೋಮ್ಯಾಕ್ಷ್ ಆರಿ ಹೋಗುವ ಮುನ್ನ ಊರಿನ ಹೊರಭಾಗದಲ್ಲಿದ್ದ ರೈತನ ಮನೆ ಬಾಗಿಲಿಗೆ ಮುಟ್ಟಿದ್ದರು. ಕಾರ್ಬೆಟ್ ಬಾಗಿಲು ಬಡಿದು ವಿನಂತಿಸಿಕೊಂಡ ಮೇಲೆ ರೈತ ಬಾಗಿಲು ತೆರೆದು, ಅವರಿಗೆ ಚಹಾ ಮಾಡಿಕೊಟ್ಟು, ಅವನ ಸೇವಕರು ಉಳಿದುಕೊಂಡಿದ್ದ ಮನೆಯ ಬಗ್ಗೆ ಮಾಹಿತಿ ನೀಡಿದ. ಅವನಿಂದ ಚಿಮಣಿ ಎಣ್ಣಿಯ ಒಂದು ಪುಟ್ಟ ಲಾಂಧ್ರವೊಂದನ್ನು ಪಡೆದು, ಅದರ ಮಂದ ಬೆಳಕಿನಲ್ಲಿ ಆ ಮನೆಯಲ್ಲಿದ್ದ ಕೆಲವು ಗಂಡಸರ ನೆರವಿನಿಂದ ಕಾರ್ಬೆಟ್ ಮತ್ತು ಇಬ್ಸ್‌ಟನ್ ಸೇವಕರು ಉಳಿದುಕೊಂಡಿದ್ದ ಮನೆ ತಲುಪಿದರು. ಮನೆಯ ಬಾಗಿಲಲ್ಲಿ ಮಲಗಿದ್ದ ಬೀದಿ ನಾಯಿ ಇವರನ್ನು ಕಾಲು ಮೂಸಿ ಸ್ವಾಗತಿಸಿತು. ಮನೆಯೊಳಗೆ ಹೋಗಿ, ಇಬ್ಬರೂ ಮಲಗಲು ಸಿದ್ಧರಾಗುವ ವೇಳೆಗೆ ನಾಯಿ ವಿಚಿತ್ರವಾಗಿ ಬೊಗಳತೊಡಗಿತು. ಅವರು ಉಳಿದು ಕೊಂಡಿದ್ದ ರಸ್ತೆಯಿಂದ ಹತ್ತು ಅಡಿ ಎತ್ತರದ ಪ್ರದೇಶದಲ್ಲಿದ್ದ ಕಾರಣ ಮೆಟ್ಟಲಿನ ಮೇಲೆ ನಿಂತಿದ್ದ ನಾಯಿ ಒಂದೇ ದಿಕ್ಕಿನಿತ್ತ ಮುಖ ಮಾಡಿ ಬೊಗಳುತ್ತಿತ್ತು. ನಾಯಿಯ ಈ ವರ್ತನೆಯಿಂದ ನರಭಕ್ಷಕ ನಮ್ಮನ್ನು ಮನೆಯವರಿಗೂ ಹಿಂಬಾಲಿಸಿಕೊಂಡು ಬಂದಿದೆ ಎಂಬ ಸೂಚನೆ ಕಾರ್ಬೆಟ್‌ಗೆ ಸಿಕ್ಕಿತು. ಮನೆಯ ಕಿಟಕಿ, ಬಾಗಿಲುಗಳನ್ನು ಮತ್ತಷ್ಟು ಭದ್ರಪಡಿಸಿ ಮಲಗಿದ ಜೊತೆಗೆ ನಾಯಿ ಬಾಗಿಲಲ್ಲಿ ಇದ್ದ ಕಾರಣ ಅವನಿಗೆ ಆತಂಕ ಮತ್ತು ಭಯ ಇಲ್ಲವಾಗಿತ್ತು.

ಬೆಳಿಗ್ಗೆ ಎದ್ದು ನೋಡಿದಾಗ, ಕಾರ್ಬೆಟ್‌ಗೆ ಚಿರಪರಿಚಿತವಾದ ಅದೇ ನರಭಕ್ಷಕನ ಹೆಜ್ಜೆಗುರುತುಗಳು ಮನೆಯ ಮುಂಭಾಗದಲ್ಲಿ ಮೂಡಿದ್ದವು. ಬೆಳಿಗ್ಗೆ ತಿಂಡಿ ಮುಗಿಸಿದ ಕಾರ್ಬೆಟ್ ಮತ್ತೆ ಹೆಂಗಸಿನ ಶವ ಇದ್ದ ಜಾಗಕ್ಕೆ ಹೋಗಿ ನೋಡಿ ಬಂದ. ಆ ರಾತ್ರಿ ಚಿರತೆ ಶವವನ್ನು ಮುಟ್ಟಿರಲಿಲ್ಲ. ಮಧ್ಯಾದ ವೇಳೆಗೆ ರುದ್ರಪ್ರಯಾಗದಲ್ಲಿದ್ದ ಜಿನ್ ಕತ್ತರಿಯನ್ನು ತರಿಸಿಕೊಂಡ ಕಾರ್ಬೆಟ್, ಸಂಜೆ ಮತ್ತೇ ಹೆಂಗಸಿನ ಶವವಿದ್ದ ಸ್ಥಳಕ್ಕೆ ತೆರಳಿ, agave ಬರುವ ಹಾದಿಯಲ್ಲಿ ಕತ್ತರಿಯನ್ನಿಟ್ಟು, ರುದ್ರಪ್ರಯಾಗದಲ್ಲಿ ಸಂಗ್ರಹಿಸಿದ್ದ ಸೈನೈಡ್ ವಿಷದ ಮಾತ್ರೆಗಳನ್ನು ಶವದ ಅಂಗಾಂಗಳ ನಡುವೆ ಹುದುಗಿಸಿ ಇಟ್ಟ. ಚಾಣಾಕ್ಷ ನರಭಕ್ಷಕ ಇವೆರಡರಲ್ಲಿ ಒಂದಕ್ಕೆ ಬಲಿಯಾಗುವುದು ಖಚಿತ ಎಂದು ಅವನು ನಂಬಿದ್ದ. ಆ ರಾತ್ರಿ ಕೂಡ ಅವನ ನಿರೀಕ್ಷೆ ಹುಸಿಯಾಯಿತು. ಇನ್ನು ಕಾಯುವುದು ಪ್ರಯೋಜವಿಲ್ಲ ಎಂದು ತೀರ್ಮಾನಿಸದ ಕಾರ್ಬೆಟ್, ಹೆಂಗಸಿನ ಸಂಬಂಧಿಕರಿಗೆ ಶವವನ್ನು ಅಂತ್ಯ ಸಂಸ್ಕಾರ ಮಾಡಲು ತಿಳಿಸಿ, ನೈನಿತಾಲ್‌ಗೆ ಹೊರಡಲು ಅನುವಾದ.

ಇಬ್ಸ್‌ಟನ್‌ನ ಹದಿನೈದು ದಿನಗಳ ರಜೆ ಮುಗಿದ ಕಾರಣ ಅವನೂ ಕೂಡ ಪೌರಿಗೆ ವಾಪಸ್ ಹಿಂತಿರುಗಬೇಕಿತ್ತು. ತಮ್ಮ ತಮ್ಮ ಸಾಮಾನುಗಳನ್ನು ಪ್ರಯಾಣಕ್ಕೆ ಸಿದ್ಧಪಡಿಸುತ್ತಿದ್ದ ವೇಳೆಗೆ ನಾಲ್ಕು ಮೈಲಿ ದೂರದಲ್ಲಿ ನರಭಕ್ಷಕ ಹಸುವೊಂದನ್ನು ಬಲಿತೆಗೆದುಕೊಂಡ ಸುದ್ಧಿ ಕಾರ್ಬೆಟ್‌ಗೆ ಮುಟ್ಟಿತು. ನೈನಿತಾಲ್‌ಗೆ ಹೋಗುವ ದಾರಿಯಲ್ಲಿ ಅದನ್ನು ಗಮನಿಸಿ ಹೋಗೋಣವೆಂದು ತನ್ನ ಸೇವಕರೊಂದಿಗೆ ಕಾರ್ಬೆಟ್ ಹಳ್ಳಿಯತ್ತ ಪ್ರಯಾಣ ಬೆಳಸಿದ. ಇಲ್ಲು ಕೂಡ ನರಭಕ್ಷಕ ಚಿರತೆ ಮನೆಗೆ ನುಗ್ಗಲುಯತ್ನಿಸಿ, ವಿಫಲವಾದ ನಂತರ ಕೊಟ್ಟಿಗೆಗೆ ನುಗ್ಗಿ ಹಸುವನ್ನು ಕೊಂದು ಕೊಂಡೊಯ್ದಿತ್ತು. ಪ್ರಯಾಣ ಮತ್ತು ನಿರಂತರವಾಗಿ ಅನೇಕ ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದು ಆಯಾಸಗೊಂಡಿದ್ದ ಕಾರ್ಬೆಟ್ ಹಸುವಿನ ಕಳೇಬರಕ್ಕೆ ವಿಷವನ್ನು ಬೆರಸಿ, ಜಿನ್ ಕತ್ತರಿಯನ್ನು ಸನೀಹದ ದಾರಿಯಲ್ಲಿ ಇರಿಸಿದ. ಕತ್ತಲಾಗುವ ಮುನ್ನವೇ ರಾತ್ರಿಯ ಊಟ ಮುಗಿಸಿ, ದೋರದ ಪೈನ್ ಮರದ ಮೇಲೆ ಕಟ್ಟಲಾಗಿದ್ದ ಮಚ್ಚಾನ್ ಮೇಲೆ ಬಂದು ಮಲಗಿ ನಿದ್ರಿಸಿದ.

ಕತ್ತರಿಗೆ ನರಭಕ್ಷಕ ಸಿಲುಕಿಕೊಂಡರೆ, ಹೋಗಿ ಗುಂಡು ಹಾರಿಸಿ ಕೊಲ್ಲುವುದು ಅವನ ಯೋಜನೆಯಾಗಿತ್ತು. ಆದರೆ, ಚಾಣಾಕ್ಷತನದ ನರಭಕ್ಷಕ ಅಡಕತ್ತರಿಯನ್ನು ದಾಟಿ ಹಸುವಿನ ಕಳೇಬರವನ್ನು ಬೇರೊಂದು ಜಾಗಕ್ಕೆ ಎಳೆದೊಯ್ದು ತಿಂದು ಮುಗಿಸಿತ್ತು. ಬೆಳಿಗ್ಗೆ ಎದ್ದು ನೋಡಿದ ಕಾರ್ಬೆಟ್, ಹಳ್ಳಿಯ ಜನರನ್ನು ಕರೆಸಿ ಸುತ್ತಮುತ್ತಲಿನ ಕಾಡನ್ನು ಜಾಲಾಡಿಸಿದ ಎಲ್ಲಿಯೂ ಚಿರತೆ ಸತ್ತು ಬಿದ್ದಿರುವ ಕುರುಹು ಕಾಣಲಿಲ್ಲ. ಸಾಮಾನ್ಯವಾಗಿ ಬೆಕ್ಕು ಮತ್ತು ಚಿರತೆಗಳು ವಿಷವನ್ನು ತಿಂದ ಸಮಯದಲ್ಲಿ ಗರಿಕೆ ಹುಲ್ಲನ್ನು ತಿಂದು ವಾಂತಿ ಮಾಡುತ್ತವೆ. ಇಲ್ಲಿಯೂ ಸಹ ನರಭಕ್ಷಕ ವಿಷ ತಿಂದರೂ ಸಾವಿನಿಂದ ಪಾರಾಗಿತ್ತು. ಈ ಘಟನೆಯಿಂದ ಒಂದು ರೀತಿಯಲ್ಲಿ ತೀವ್ರ ಹತಾಶನಾದಂತೆ ಕಂಡು ಬಂದ ಕಾರ್ಬೆಟ್ ಹಳ್ಳಿಯ ಜನರಿಗೆ ಎಚ್ಚರಿಕೆಯಿಂದ ಇರಲು ಹೇಳಿ, ವಿಶ್ರಾಂತಿ ಪಡೆದು ಮತ್ತೆ ಮರಳಿ ಬರತ್ತೇನೆ ಎಂಬ ಭರವಸೆ ನೀಡಿ ನೈನಿತಾಲ್‌ನತ್ತ ಪ್ರಯಾಣ ಬೆಳಸಿದ.

(ಮುಂದುವರಿಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 21)


– ಡಾ.ಎನ್.ಜಗದೀಶ್ ಕೊಪ್ಪ


ಪ್ರವಾಸಿ ಮಂದಿರದಲ್ಲಿ ತಂಗಿದ್ದ ಕಾರ್ಬೆಟ್ ಬೆಳಿಗ್ಗೆ ಎದ್ದು ಸ್ನಾನ ಮುಗಿಸಿ, ನರಭಕ್ಷಕ ಚಿರತೆ ರಾತ್ರಿ ಹಾರಿಸಿದ್ದ ಗುಂಡೇಟಿಗೆ ಬೆದರಿ ಅಲಕಾನಂದ ನದಿಯ ಸೇತುವೆ ದಾಟಿ ಹೋಗಿರಬಹುದೇ ಎಂದು ಸಂಶಯಿಸಿ, ಸೇತುವೆ ಬಳಿ ಬಂದು ಪರೀಕ್ಷಿಸಿದ. ಸೇತುವೆಯನ್ನು ಅವನ ಅಣತಿಯಂತೆ ಹಳ್ಳಿಗರು ಕಲ್ಲು ಮತ್ತು ಮುಳ್ಳಗಳಿಂದ ಮುಚ್ಚಿದ್ದ ಕಾರಣ ಅದು ಸೇತುವೆ ದಾಟಿ ಹೋಗಲು ಅಸಾಧ್ಯವಾಗಿತ್ತು. ಇನ್ನೊಂದು ಸೇತುವೆ ಸುಮಾರು 14 ಕಿಲೋಮೀಟರ್ ದೂರದ ಚಿಟ್ಪಾವಲ್ ಹಳ್ಳಿಯಲ್ಲಿ ಇದ್ದ ಕಾರಣ ಅಷ್ಟು ದೂರ ಹೋಗಿರಲಾರದು ಎಂದು ಕಾರ್ಬೆಟ್ ಊಹಿಸಿದ. ಸೇತುವೆ ಬಳಿ ಅದರ ಹೆಜ್ಜೆಯ ಗುರುತುಗಳು ಇರಲಿಲ್ಲವಾದರಿಂದ ಚಿರತೆ ಇಲ್ಲೇ ಕಾಡಿನಲ್ಲೆ ಅಡಗಿದೆ ಎಂಬ ತೀರ್ಮಾನಕ್ಕೆ ಬಂದ. ಏನೇ ಆಗಲಿ ಗುಂಡೇಟಿನಿಂದ ಗಾಬರಿಗೊಂಡಿರುವ ಚಿರತೆ ರಾತ್ರಿ ವೇಳೆ ಸೇತುವ ದಾಟುವ ಸಾಧ್ಯತೆ ಇದೆ ಎಂದುಕೊಂಡ ಕಾರ್ಬೆಟ್, ಅಲ್ಲಿ ಹಾಕಲಾಗಿದ್ದ ಕಲ್ಲು, ಮುಳ್ಳುಗಳನ್ನು ತೆಗೆಸಿ ರಾತ್ರಿ ವೇಳೆ ಕಾವಲು ಕಾಯಲು ಕುಳಿತ.

ಸೇತುವೆಯ ಒಂದು ಬದಿಯ ಗೋಪುರದಲ್ಲಿ ಸತತ 20 ದಿನಗಳ ರಾತ್ರಿ ಶೀತಗಾಳಿ, ತುಂತುರು ಮಳೆಯ ನಡುವೆ ಕಾರ್ಬೆಟ್ ಕಾದು ಕುಳಿತರೂ ಏನೂ ಪ್ರಯೋಜನವಾಗಲಿಲ್ಲ. ಒಂದು ದಿನ ಬೆಳಗಿನ ಜಾವ ನರಿಯೊಂದು ಸೇತುವೆಯನ್ನು ದಾಟಿದ್ದನ್ನು ಅವನು ಮೂಕಪ್ರೇಕ್ಷಕನಾಗಿ ನೋಡಬೇಕಾಗಿಬಂತು. ಇದೇ ವೇಳೆಗೆ ಜಿಲ್ಲಾಧಿಕಾರಿ ಇಬ್ಸ್‌ಟನ್ ತನ್ನ ಪತ್ನಿಯೊಂದಿಗೆ ಘರ್‌ವಾಲ್‌ಗೆ ‌ಬಂದ. ನರಭಕ್ಷಕನ ಬೇಟೆಯಲ್ಲಿ ತೊಡಗಿರುವ ಕಾರ್ಬೆಟ್ ಜೊತೆ ಪಾಲ್ಗೊಳ್ಳವ ಉದ್ದೇಶದಿಂದ ಕೆಲಸದ ನಡುವೆಯೂ ವಿರಾಮ ಮಾಡಿಕೊಂಡು ಬಂದಿದ್ದ. ಕಾರ್ಬೆಟ್‌ಗೆ ಕಂಪನಿ ಕೊಟ್ಟು ಅವನ ಏಕಾಂಗಿತನ ಹೋಗಲಾಡಿಸುವ ಉದ್ದೇಶ ಕೂಡ ಇದರಲ್ಲಿ ಅಡಗಿತ್ತು.

ಪ್ರವಾಸಿ ಮಂದಿರದಲ್ಲಿ ಕೇವಲ ಒಂದು ಕೊಠಡಿ ಇದ್ದ ಕಾರಣ ಕಾರ್ಬೆಟ್ ಅದನ್ನು ಇಬ್ಸ್‌ಟನ್ ದಂಪತಿಗಳಿಗೆ ಬಿಟ್ಟುಕೊಟ್ಟು ತನ್ನ ಸೇವಕರೊಡನೆ ಹೊರಗೆ ಟೆಂಟ್ ಹಾಕಿಕೊಂಡು ಮಲಗಲು ನಿರ್ಧರಿಸಿದ. ಅಂದು ಸಂಜೆ ತನ್ನ ಎಂಟು ಮಂದಿ ಸೇವಕರ ನೆರವಿನೊಂದಿಗೆ ಪ್ರವಾಸಿ ಮಂದಿರದ ಮುಂದೆ ಟೆಂಟ್ ಹಾಕಿಸಿ, ಸುತ್ತಲಿನ ಬೇಲಿಯನ್ನು ಭದ್ರಪಡಿಸಿದ. ಬೇಲಿಯ ನಡುವೆ ಒಂದು ಮರವಿದ್ದು ಅದರ ಕೊಂಬೆಗಳು ಒಳಕ್ಕೆ ಚಾಚಿದ್ದವು. ಅವುಗಳನ್ನು ಸಹ ಕಾರ್ಬೆಟ್ ಕಡಿಸಿಹಾಕಿದ. ಹಿಂದೊಂಮ್ಮೆ ನರಭಕ್ಷಕ ಕಾಡಿನಿಂದ ಪ್ರವಾಸಿ ಮಂದಿರದವರೆಗೂ ಕಾರ್ಬೆಟ್‌ನನ್ನು ಹಿಂಬಾಲಿಸಿ ಬಂದಿದ್ದರಿಂದ ಅವನು ಈ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದ.

ಕಡೆಗೂ ಕಾರ್ಬೆಟ್‌ನ ನಿರೀಕ್ಷೆ ನಿಜವಾಯಿತು. ಆದಿನ ತಡ ರಾತ್ರಿ ನರಭಕ್ಷಕ ಮರಹತ್ತಿ ಬೇಲಿ ನೆಗೆಯಲು ಪ್ರಯತ್ನಿಸಿತು. ಮರದ ಸಣ್ಣ ಸಣ್ಣ ರಂಬೆಗಳು ಚಿರತೆಯ ಭಾರ ತಾಳಲಾರದೆ, ಲಟಲಟನೆ ಮುರಿಯತೊಡಗಿದಾಗ, ಟೆಂಟ್‌ನಲ್ಲಿ ಮಲಗಿದ್ದ ಕಾರ್ಬೆಟ್‌ಗೆ ಎಚ್ಚರವಾಯಿತು. ಕೂಡಲೇ ಅವನು ತನ್ನ ಮಗ್ಗುಲಲ್ಲೆ ಇರಿಸಿದ್ದ ಕೋವಿ ತೆಗೆದುಕೊಂಡು ಟಾರ್ಚ್‌ಎತ್ತಿಕೊಂಡು ಹೊರಬಂದ. ಇದಾವುದರ ಪರಿವಿಲ್ಲದೆ ಅವನ ಸೇವಕರು ಮರದಕೆಳಗಿನ ಗುಡಾರದಲ್ಲಿ ಆರಾಮವಾಗಿ ಮಲಗಿದ್ದರು, ಮಾಧೂಸಿಂಗ್ ದೊಡ್ಡಧ್ವನಿಯ ಗೊರಕೆಯಲ್ಲಿ ಮುಳುಗಿಹೋಗಿದ್ದ. ಕಾರ್ಬೆಟ್ ಹೊರಬರುವುದು ಕೆಲವೇ ಕ್ಷಣ ತಡವಾಗಿದ್ದರೆ, ಅದು ಮಾಧೂಸಿಂಗ್ ಮೇಲೆ ನೆಗೆದು ಅವನನ್ನು ಬಲಿತೆಗೆದುಕೊಳ್ಳುತ್ತಿತ್ತು. ಮರದ ತುದಿಯ ಕೊಂಬೆಯೊಂದು ಸೇವಕರಿಗೆ ಎಟುಕದ ಕಾರಣ ಕಡಿಯದೇ ಹಾಗೇ ಬಿಟ್ಟಿದ್ದರು. ಆ ಕೊಂಬೆಯ ಮೇಲಿಂದ ಚಿರತೆ ನರಬಲಿಗೆ ಹೊಂಚು ಹಾಕಿತ್ತು. ಕಾರ್ಬೆಟ್ ಬಿಟ್ಟ ಟಾರ್ಚ್ ಬೆಳಕಿಗೆ ಗಾಬರಿಗೊಂಡ ಅದು ಮರದಿಂದ ಜಿಗಿದು ಓಡಿ ಹೋಗಿ ಪಕ್ಕದ ಕಾಡು ಸೇರಿಕೊಂಡಿತ್ತು.

ಮಾರನೇ ದಿನ ಬೆಳಿಗ್ಗೆ ಕಾರ್ಬೆಟ್ ಎದ್ದವನೇ ಮರದ ಕೊಂಬೆಗಳನ್ನು ಸಂಪೂರ್ಣವಾಗಿ ಕಡಿಸಿ ಹಾಕಿದ. ಬೇಲಿಯನ್ನು ಮತ್ತಷ್ಟು ಭದ್ರಪಡಿಸಿದ ನರಭಕ್ಷಕ ಇಲ್ಲೆ ಆಸು ಪಾಸಿನ ಪ್ರದೇಶದಲ್ಲಿ ಇರುವುದು ರಾತ್ರಿಯ ಘಟನೆಯಿಂದ ಖಚಿತವಾಯಿತು. ಇಬ್ಸ್‌ಟನ್ ಕೂಡ ಬಂದಿದ್ದರಿಂದ ಆದಿನ ಬೆಳಿಗ್ಗೆ ಕಾರ್ಬೆಟ್ ಅವನನ್ನು ಕರೆದುಕೊಂಡು ಹೋಗಿ ಅಲಕನಂದಾ ನದಿಯಲ್ಲಿ ತನ್ನ ಮೆಚ್ಚಿನ ಹವ್ಯಾಸಗಳಲ್ಲಿ ಒಂದಾದ ಮೀನು ಶಿಕಾರಿಯಲ್ಲಿ ತೊಡಗಿದ. ಸಂಜೆವೇಳೆಗೆ ಇಬ್ಬರೂ ಹಿಡಿದಿದ್ದ ಮೀನುಗಳನ್ನು ತಂದು ಸೇವಕರಿಗೆ ಕೊಟ್ಟು, ರಾತ್ರಿ ಪ್ರವಾಸಿ ಮಂದಿರದಲ್ಲಿ ವಿಸ್ಕಿ ಹೀರುತ್ತಾ ನರಭಕ್ಷಕನ ಬೇಟೆಗೆ ಯೋಜನೆ ರೂಪಿಸತೊಡಗಿದರು. ಬೆಳಗಿನ ಜಾವದ ವೇಳೆಗೆ ಪಕ್ಕದ ಹಳ್ಳಿಯಲ್ಲಿ ನರಭಕ್ಷಕ ಪ್ರತ್ಯಕ್ಷವಾಗಿ ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿದ ಸುದ್ಧಿ ಕಾರ್ಬೆಟ್‌ಗೆ ತಲುಪಿತು. ಕೂಡಲೇ ಇಬ್ಸ್‌ಟನ್ ಜೊತೆ ಕಾರ್ಬೆಟ್ ಹಳ್ಳಿಗೆ ಹೊರಟ.

ಹಳ್ಳಿ ರೈತನ ಮನೆಗೆ ನುಗ್ಗಲು ವಿಫಲಯತ್ನ ನಡೆಸಿದ ಚಿರತೆ, ಮನೆಯ ಬಾಗಿಲನ್ನು ತನ್ನ ಉಗುರಿನಿಂದ ಕೆರೆದು ಮುರಿಯಲು ಪ್ರಯತ್ನಿಸಿತ್ತು. ಅದು ಸಾಧ್ಯವಾಗದೇ, ನಂತರ ಮನೆಯ ಹಿಂಭಾಗದ ಕೊಟ್ಟಿಗೆಗೆ ನುಗ್ಗಿ ಹಸುವನ್ನು ಬಲಿ ತೆಗೆದುಕೊಂಡಿತ್ತು. ಕೊಂದ ಹಸುವನ್ನು ಕಚ್ಚಿ ಎಳೆದೊಯ್ಯಲು ಅದು ಪ್ರಯತ್ನಿಸಿತ್ತು ಆದರೆ, ಬಾಗಿಲು ಚಿಕ್ಕದಾಗಿದ್ದು, ಹಸುವಿನ ಕಳೇಬರ ಬಾಗಿಲಿಗೆ ಅಡ್ಡಲಾಗಿ ಸಿಕ್ಕಿ ಹಾಕಿಕೊಂಡ ಪರಿಣಾಮ ಅದನ್ನು ಅಲ್ಲೇ ಇರಿಸಿ ಅರ್ಧ ಭಾಗವನ್ನು ತಿಂದು ಹೋಗಿತ್ತು. ಸ್ಥಳವನ್ನು ಅವಲೋಕಿಸಿದ ಕಾರ್ಬೆಟ್ ಮತ್ತು ಇಬ್ಸ್‌ಟನ್ ರಾತ್ರಿ ಕೊಟ್ಟಿಗೆಗೆ ಬಂದು ಕಾವಲು ಕೂರಲು ನಿರ್ಧರಿಸಿದರು. ಮತ್ತೇ ರಾತ್ರಿ ಹಸುವಿನ ಕಳೇಬರವನ್ನು ತಿನ್ನಲು ಚಿರತೆ ಬರುತ್ತದೆ ಎಂಬುದು ಇಬ್ಬರ ನಿರೀಕ್ಷೆಯಾಗಿತ್ತು. ರಾತ್ರಿ ಊಟವಾದ ನಂತರ ಒಂದಿಷ್ಟು ಸ್ಯಾಂಡ್ವಿಚ್ ಮತ್ತು ಚಹಾ ಮತ್ತು ಬಂದೂಕುಗಳೊಂದಿಗೆ ರೈತನ ಮನೆಯ ಕೊಟ್ಟಿಗೆಗೆ ಬಂದು ಕಾವಲು ಕುಳಿತರು. ಆದರೆ, ನರಭಕ್ಷ ಆ ರಾತ್ರಿ ಹಸುವಿನ ಕಳೇಬರದತ್ತ ಸುಳಿಯಲೇ ಇಲ್ಲ. ಇದಾದ ಎರಡು ದಿನಗಳ ನಂತರ ಮತ್ತೊಂದು ಹಳ್ಳಿಯಲ್ಲಿ ನರಭಕ್ಷಕ ಮತ್ತೇ ಕೊಟ್ಟಿಗೆಯಲ್ಲಿ ಇದ್ದ ಹಸುವೊಂದನ್ನು ಬಲಿತೆಗೆದುಕೊಂಡಿತ್ತು.

ಈ ಬಾರಿ ಹಸುವನ್ನು ಬಾಗಿಲಿನ ಹೊರಭಾಗದವರೆಗೆ ಎಳೆದು ತಂದಿತ್ತು ಆದರೆ ಭಾರಿ ಗಾತ್ರದ ಹಸುವಿನ ಶವವನ್ನು ಕೊಂಡೊಯ್ಯಲು ಸಾಧ್ಯವಾಗದೆ, ಅಲ್ಲೆ ಕೆಲವು ಭಾಗಗಳನ್ನು ತಿಂದುಹೋಗಿತ್ತು. ಕೊಟ್ಟಿಗೆಯ ಮುಂಭಾಗದಲ್ಲಿ ಚಪ್ಪರವೊಂದನ್ನು ನಿರ್ಮಿಸಿ ಅದರ ಮೇಲೆ ಜಾನುವಾರುಗಳಿಗೆ ರೈತ ಹುಲ್ಲನ್ನು ಸಂಗ್ರಹಿಸಿ ಇಟ್ಟಿದ್ದ. ಇದನ್ನು ನೋಡಿದ ಕಾರ್ಬೆಟ್ ಹುಲ್ಲನ್ನು ತನ್ನ ಸೇವಕರಿಂದ ತೆಗೆಸಿ , ಚಪ್ಪರದ ಮೇಲೆ ಗೂಡನ್ನು ನಿರ್ಮಿಸಿದ, ಮತ್ತೇ ಕೆಲವು ಬಿದಿರಿನ ಬೊಂಬುಗಳನ್ನು ನೆಡಸಿ, ತನ್ನ ಗೂಡಿನ ಮೇಲೆ ಇನ್ನೊಂದು ಅಂತಸ್ತಿನ ಗೂಡನ್ನ ಇಬ್ಸ್‌ಟನ್‌ಗಾಗಿ ನಿರ್ಮಿಸಿದ. ರಾತ್ರಿ ಇಬ್ಬರೂ ಆರಾಮವಾಗಿ ಕುಳಿತುಕೊಳ್ಳಲು ಮರದ ಹಲಗೆಗಳನ್ನು ಚಪ್ಪರದ ಮೇಲೆ ಹಾಸಿಸಿದ್ದ. ಮತ್ತೆ ಆ ರಾತ್ರಿ ಕೂಡ ಇಬ್ಬರು ಕಾವಲು ಕುಳಿತರು. ಇಬ್ಸ್‌ಟನ್ ಕಾರ್ಬೆಟ್‌ಗಿಂತ ಕುಳ್ಳಗಿದ್ದ ಕಾರಣ ಅವನು ಮೇಲಿನ ಅಂತಸ್ತಿನ ಚಪ್ಪರದಲ್ಲಿ ಕುಳಿತರೆ, ಕಾರ್ಬೆಟ್ ನೆಲದಿಂದ ಹತ್ತು ಅಡಿ ಎತ್ತರವಿದ್ದ ಕೆಳ ಹಂತಸ್ತಿನ ಗೂಡಿನಲ್ಲಿ ಕುಳಿತ. ಇವರ ಸೂಚನೆಯಂತೆ ರಾತ್ರಿ ಎಂಟು ಗಂಟೆ ವೇಳೆಗೆ ಹಳ್ಳಿ ಗ್ರಾಮಸ್ಥರು ಊಟ ಮುಗಿಸಿ ತಮ್ಮ ಮನೆಗಳ ಕಿಟಕಿ ಬಾಗಿಲುಗಳನ್ನು ಭದ್ರಪಡಿಸಿ ಮಲಗಿದರು.

ರಾತ್ರಿ ಹನ್ನೋಂದರ ವೇಳೆಗೆ ನರಭಕ್ಷಕ ಪರ್ವತದಿಂದ ಇಳಿದು ಹಳ್ಳಿಯತ್ತ ಬರುತ್ತಿರುವುದನನ್ನು ಕಾಡಿನ ಪ್ರಾಣಿ ಮತ್ತು ಪಕ್ಷಿ ಸಂಕುಲ ಕಾರ್ಬೆಟ್‌ಗೆ ಸೂಚನೆ ನೀಡಿದವು. ಇಬ್ಬರೂ ಮಾತು ನಿಲ್ಲಿಸಿ ತಮ್ಮ ತಮ್ಮ ಬಂದೂಕುಗಳನ್ನು ಕೈಗೆ ತೆಗೆದುಕೊಂಡು ನರಭಕ್ಷಕನಿಗಾಗಿ ಕಾಯತೊಡಗಿದರು. ಈ ಬಾರಿ ಕಾರ್ಬೆಟ್‌ನ ನಿರೀಕ್ಷೆಯನ್ನು ಹುಸಿ ಮಾಡದೇ ನರಭಕ್ಷಕ  ಹಸುವಿನ ಕಳೇಬರವಿದ್ದ ಸ್ಥಳದತ್ತ ಬರತೊಡಗಿತು ಆದರೆ, ಅದಕ್ಕೆ ಹತ್ತಿರ ಬರುತ್ತಿದ್ದಂತೆ ನರಮನುಷ್ಯನ ವಾಸನೆ ಮೂಗಿಗೆ ಬಡಿದ ಕಾರಣ ನೇರವಾಗಿ ಹಸುವಿದ್ದ ಜಾಗಕ್ಕೆ ಹೋಗದೆ, ಕಾರ್ಬೆಟ್ ಮತ್ತು ಇಬ್ಸ್‌ಟನ್ ಕುಳಿತ್ತಿದ್ದ ಚಪ್ಪರದಕೆಳೆಕ್ಕೆ ಬಂದು ಸುತ್ತ ಮುತ್ತ ಎಚ್ಚರಿಕೆಯಿಂದ ಗಮನಿಸತೊಡಗಿತು ಅಲ್ಲದೆ ಚಪ್ಪರಕ್ಕೆ ನೆಡಲಾಗಿದ್ದ ಬೊಂಬುಗಳಿಗೆ ತನ್ನ ಮೈಯನ್ನು ಸವರತೊಡಗಿತು. ಉಸಿರು ಬಿಗಿ ಹಿಡಿದು ಕುಳಿತ ಕಾರ್ಬೆಟ್ ನರಭಕ್ಷಕ ಚಪ್ಪರದ ಕೆಳಭಾಗದಿಂದ ಹೊರಬಂದ ಕೂಡಲೇ ಗುಂಡು ಹಾರಿಸಿ ಕೊಲ್ಲಬೇಕೆಂದು ಮೈಯೆಲ್ಲಾ ಕಣ್ಣಾಗಿಸಿಕೊಂಡು ಕಾಯುತ್ತಿದ್ದ ಅಷ್ಟರಲ್ಲಿ ಮೇಲಂತಸ್ತಿನ ಗೂಡಿನ ಮರದ ಹಲಗೆ ಲಟಾರನೆ ಮುರಿಯಿತು ಶಬ್ಧಕ್ಕೆ ಅಂಜಿದ ಚಿರತೆ ಮುಂಭಾಗದಲ್ಲಿ ಓಡಿ ಹೋಗದೆ, ಹಿಂಭಾಗದಿಂದ ಓಡಿಹೋಯಿತು. ಗೂಡಿನ ಸುತ್ತ ಹುಲ್ಲು ಹೊದಿಸಿದ್ದ ಕಾರಣ ಅದಕ್ಕೆ ಗುರಿಯಿಡಲು ಕಾರ್ಬೆಟ್‌ಗೆ ಸಾಧ್ಯವಾಗಲಿಲ್ಲ.

ಒಂದೇ ಸ್ಥಿತಿಯಲ್ಲಿ ಕುಳಿತ್ತಿದ್ದ ಇಬ್ಸ್‌ಟನ್ ಮೇಲಿನ ಗೂಡಿನಲ್ಲಿ ಮಗ್ಗುಲು ಬದಲಿಸುವಾಗ ಹಲಗೆ ಮುರಿದು ಶಬ್ಧಮಾಡುವುದರ ಮೂಲಕ ನರಭಕ್ಷಕನ ಪ್ರಾಣ ಉಳಿಸಿತ್ತು. ಇಬ್ಬರೂ ತಮ್ಮ ದುರಾದೃಷ್ಟವನ್ನು ಅಳಿದುಕೊಳ್ಳುತ್ತಾ ಪ್ರವಾಸಿ ಮಂದಿರಕ್ಕೆ ಹಿಂತಿರುಗಿದರು. ಈ ಘಟನೆ ನಡೆದ ಎರಡು ದಿನಗಳ ನಂತರ ನರಭಕ್ಷಕ ರುದ್ರಪ್ರಯಾಗದ ಪಟ್ಟಣದಲ್ಲೇ ಮನೆಯೊಂದರ ಮುಂಭಾಗದ ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ದಾಳಿ ಮಾಡಿ ಅದನ್ನು ಕೊಂದು ಹೊರಭಾಗದ ಬಯಲಲ್ಲಿ ತಿಂದು ಹೋಗಿತ್ತು. ನಿರಂತರ ಘಟನೆಗಳಿಂದ ಹತಾಶರಾಗಿದ್ದ ಕಾರ್ಬೆಟ್ ಮತ್ತು ಇಬ್ಸ್‌ಟನ್ ಇಬ್ಬರೂ ಈ ಸಾರಿ ನರಭಕ್ಷಕನ ಬೇಟೆಗೆ ಹೊಸತಂತ್ರವನ್ನು ರೂಪಿಸಿದ್ದರು. ಸರ್ಕಾರಕ್ಕೆ ಮನವಿ ಸಲ್ಲಿಸಿ ಸುಮಾರು ಎಂಬತ್ತು ಕೆ.ಜಿ. ಗಾತ್ರದ ಅಡಕತ್ತರಿಯೊಂದನ್ನು (ಜಿನ್ ಕತ್ತರಿ) ತರಿಸಿದ್ದರು ಇದನ್ನು ಮುರದಾಬಾದ್‌ನಲ್ಲಿ ವಿಶೇಷವಾಗಿ  ತಯಾರಿಸಲಾಗಿತ್ತು. ಅದರ ಎರಡು ಅಲಗುಗಳನ್ನು ಗರಗಸದ ಹಲ್ಲಿನಂತೆ ಮಾಡಲಾಗಿತ್ತು ಅದಕ್ಕೆ ಬಲವಾದ ಸ್ಪ್ರಿಂಗ್ ಜೋಡಿಸಿದ್ದ ಕಾರಣ ಇಬ್ಬರು ಅವುಗಳನ್ನು ಎಳೆದು ಅದರ ಬಾಯಿ ಬಿಡಿಸಬೇಕಾಗಿತ್ತು ಆ ಜಿನ್ ಕತ್ತರಿಯ ನಡುಭಾಗಕ್ಕೆ ಯಾವ ಪ್ರಾಣಿ ಕಾಲಿಟ್ಟ ತಕ್ಷಣ ಕತ್ತರಿಯ ಅಲುಗುಗಳು ಮುಚ್ಚಿಕೊಳ್ಳುತ್ತಿದ್ದವು. ಎಂತಹ ಪ್ರಾಣಿಯೂ ಅದರಿಂದ ಬಿಡಿಸಿಕೊಳ್ಳಲು ಸಾಧ್ಯವಿರಲಿಲ್ಲ.

ಹಸುವಿನ ಕಳೇಬರವಿದ್ದ ನೂರು ಅಡಿ ದೂರದಲ್ಲಿ ಒಂದು ಎತ್ತರದ ಬಲಿಷ್ಟವಾದ ಮರವಿತ್ತು ಅದರ ಮೇಲೆ ಇಬ್ಬರೂ ಕೂರಲು ನಿರ್ಧರಿಸಿದರು. ನರಭಕ್ಷಕ ಯಾವ ದಿಕ್ಕಿನಿಂದ ಕಾಡಿನತ್ತ ತೆರಳಿದೆ ಎಂಬುದನ್ನು ಅದರ ಹೆಜ್ಜೆ ಗುರುತುಗಳ ಮೂಲಕ ಗುರುತಿಸಿ ಆ ಹಾದಿಯಲ್ಲಿ ಅಡಕತ್ತರಿಯನ್ನು ಇರಿಸಿ, ಅದನ್ನು ತರಗೆಲೆಗಳಿಂದ ಮುಚ್ಚಿದರು. ನರಭಕ್ಷಕ ಸಿಕ್ಕಿಕೊಂಡಾಗ ಅದನ್ನು ಎಳೆದೊಯ್ಯಬಾರದು ಎಂದು ಅದಕ್ಕೆ ಸರಪಣಿ ಜೋಡಿಸಿ ಮರಕ್ಕೆ ಬಿಗಿಯಲಾಗಿತ್ತು. ಎಂದಿನಂತೆ ಆ ರಾತ್ರಿ ಕೂಡ ಕಾರ್ಬೆಟ್ ಮತ್ತು ಇಬ್ಸ್‌ಟನ್ ಸೇವಕರ ಜೊತೆ ಮರದ ಬಳಿ ಬಂದು ಏಣಿ ಮುಖಾಂತರ ಮೇಲಕ್ಕೆ ಹತ್ತಿ ಕುಳಿತು, ಸೇವಕರನ್ನು ಪ್ರವಾಸಿ ಮಂದಿರಕ್ಕೆ ಕಳಿಸಿದರು. ಈ ಬಾರಿ ಅವರ ಬಳಿ ಸಕಾರ ಕಳಿಸಿದ್ದ ಭಾರೀ ಗಾತ್ರದ ಟಾರ್ಚ್ ಅವರ ಬಳಿ ಇದ್ದುದರಿಂದ ರಾತ್ರಿ ಶಿಕಾರಿಗೆ ಅನುಕೂಲವಾಗಿತ್ತು.

ರಾತ್ರಿ ಕತ್ತಲಾಗುತ್ತಿದ್ದಂತೆ ಒಂಬತ್ತರ ವೇಳೆಗೆ ಚಿರತೆಯ ಆರ್ಭಟ ಕೇಳತೊಗಿತು ಅದರ ಮುಂಗಾಲುಗಳರೆಡು ಅಡಕತ್ತರಿಗೆ ಸಿಲುಕಿಕೊಂಡು ಅದರಿಂದ ಬಿಡಿಸಿಕೊಲ್ಳಲು ಹೋರಾಡುತ್ತಾ ಭೀಕರವಾಗಿ ಸದ್ದುಮಾಡುತ್ತಿತ್ತು. ಕಾರ್ಬೆಟ್ ಟಾರ್ಚ್ ಮುಖಾಂತರ ಅದರತ್ತ ಬೆಳಕು ಹಾಯಿಸಿದಾಗ ಚಿರತೆ ಅಡಕತ್ತರಿಯನ್ನು ಎಳೆಯುತ್ತಾ ರೋಷಾವೇಷದಿಂದ ಘರ್ಜಿಸುತ್ತಿತ್ತು. ಇದೇ ಸುಸಮಯ ಎಂದುಕೊಂಡ ಕಾರ್ಬೆಟ್ ಅದರತ್ತ ಗುಂಡು ಹಾರಿಸಿದ ಆದರೆ, ಗುಂಡು ಚಿರತೆಗೆ ತಾಗುವ ಬದಲು ಸರಪಣಿಗೆ ತಗುಲಿ ಅದು ತುಂಡಾಯಿತು. ಕೂಡಲೇ ಇಬ್ಸ್‌ಟನ್ ಕೂಡ ಗುಂಡು ಹಾರಿಸದ ಆದರೆ, ಕತ್ತಲಿನಲ್ಲಿ ಎಲ್ಲವೂ ಗುರಿತಪ್ಪಿದ್ದವು ಇದರಿಂದಾಗಿ ತಪ್ಪಿಸಿಕೊಂಡ ಚಿರತೆ ಕತ್ತರಿಯನ್ನು ಎಳೆದುಕೊಂಡು ಮರಗಿಡಗಳ ನಡುವೆ ಕೆಳಗಿನ ಹಳ್ಳವೊಂದರಲ್ಲಿ ಮರೆಯಾಯಿತು.

(ಮುಂದುವರಿಯುವುದು)