Category Archives: ಜೀವಿ

ಹಂಪಿಯಲ್ಲಿ ಇದೇ ಶನಿವಾರ-ಭಾನುವಾರದಂದು “ನಾವು ನಮ್ಮಲ್ಲಿ” ಕಾರ್ಯಕ್ರಮ

ಆತ್ಮೀಯರೇ,

ನಮ್ಮ ವರ್ತಮಾನ.ಕಾಮ್ ಓದುಗರಿಗೆ “ನಾವು ನಮ್ಮಲ್ಲಿ” ಮತ್ತು ಅದರ ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಪರಿಚಯಿಸುವ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ. ವರ್ತಮಾನ.ಕಾಮ್ ಆರಂಭವಾದಾಗಿನಿಂದಲೂ “ನಾವು ನಮ್ಮಲ್ಲಿ”ಯೊಡನೆ ವರ್ತಮಾನ ಬಳಗಕ್ಕೆ ಅವಿನಾಭಾವ ಸಂಬಂಧವಿದೆ. ನಿಮಗೆ ಗೊತ್ತಿರುವಂತೆ ವರ್ತಮಾನ.ಕಾಮ್ ಆರಂಭಿಸಬೇಕೆಂಬ ಯೋಚನೆ ಬಂದಿದ್ದೇ ನಾನು 2011 ರಲ್ಲಿ ಚಿತ್ರದುರ್ಗದಲ್ಲಿ ನಡೆದ “ನಾವು ನಮ್ಮಲ್ಲಿ” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಂದರ್ಭ ಬಂದಾಗ. ಪ್ರಾಮಾಣಿಕತೆ ಮತ್ತು ಬದ್ಧತೆಯನ್ನು ಹೊಂದಿರುವ ಯುವ ತಲೆಮಾರಿನ ಸಮಾಜಮುಖಿ ಕನ್ನಡ ಮನಸ್ಸುಗಳು ಈ ಕಾರ್ಯಕ್ರಮವನ್ನು ಪ್ರತಿವರ್ಷ ಆಯೋಜನೆ ಮಾಡುತ್ತಿವೆ. ಮತ್ತು ಸಮಾನಮನಸ್ಕರು ಇದರಲ್ಲಿ ಪಾಲ್ಗೊಳ್ಳುತ್ತ ಬಂದಿದ್ದಾರೆ. ಕೊಟ್ಟೂರಿನ ’ಬಯಲು ಸಾಹಿತ್ಯ ವೇದಿಕೆ’ ವತಿಯಿಂದ ಆರಂಭವಾದ ಈ ವಾರ್ಷಿಕ ಕಾರ್ಯಕ್ರಮಕ್ಕೆ ಈಗ ಹನ್ನೊಂದನೇ ಪ್ರಾಯ.

ಈ ಬಾರಿಯ ಕಾರ್ಯಕ್ರಮ ಇದೇ ಶನಿವಾರ ಮತ್ತು ಭಾನುವಾರ (ಅಕ್ಟೋಬರ್ 3-4, 2015) ದಂದು ಹಂಪಿಯ naavu-nammalli-2015-1 ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ನಾಡಿನ ಅನೇಕ ಚಿಂತಕರು ಮತ್ತು ಹೋರಾಟಗಾರರು “ಸಂವಿಧಾನ ಭಾರತ” ದ ಬಗ್ಗೆ ಚರ್ಚೆ, ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರೀಪಾದ್ ಭಟ್, ಶ್ರೀಧರ್ ಪ್ರಭು ಸೇರಿದಂತೆ ವರ್ತಮಾನ ಬಳಗದ  ಹಲವಾರು ಮಿತ್ರರು ಅದರಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವರ್ತಮಾನ.ಕಾಮ್‌ನಲ್ಲಿ ಇತ್ತೀಚೆಗೆ ಅನೇಕ ಲೇಖನಗಳನ್ನು ಬರೆದ ವಿಜಯಕುಮಾರ್ ಸಿಗರನಹಳ್ಳಿಯವರ ಆ ಲೇಖನಗಳ ಸಂಗ್ರಹ ಈ ಕಾರ್ಯಕ್ರಮದಲ್ಲಿ ಬಿಡುಗಡೆ ಆಗಲಿದೆ. ’ನಾವು ನಮ್ಮಲ್ಲಿ’ ಸಹಯೋಗದಲ್ಲಿ ನಮ್ಮ ಬಳಗದ ಇನ್ನೊಬ್ಬರಾದ ಅಕ್ಷತಾ ಹುಂಚದಕಟ್ಟೆಯವರ ’ಅಹರ್ನಿಶಿ’ ಈ ಪುಸ್ತಕ ಪ್ರಕಟಿಸಿದೆ.

ಎಂದಿನಂತೆ ಈ ವಾರ್ಷಿಕ ಕಾರ್ಯಕ್ರಮಕ್ಕೆ ಹೋಗಲು ನಾನೂ ಉತ್ಸುಕನಾಗಿದ್ದೇನೆ. ನಿಮ್ಮೆಲ್ಲರನ್ನೂ ಅಲ್ಲಿ ನೋಡುವ ವಿಶ್ವಾಸದಲ್ಲಿ…

ನಮಸ್ಕಾರ,
ರವಿ

naavu-nammalli-2015
naavu-nammalli-2015
naavu-nammalli-book

ರಾಗಿಮುದ್ದೆ ಕಳ್ಳತನ ಮಾಡಿದ್ದಕ್ಕೆ ಜೀವ ಉಳಿದಿದೆ…

– ಜೀವಿ

ನನಗಿನ್ನು ಎಂಟು-ಒಂಬತ್ತು ವರ್ಷ ವಯಸ್ಸು. ಊರಿನಲ್ಲೆ ಇದ್ದ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದೆ. ತಿಂದುಂಡು ಆಡಿ ನಲಿಯುವ ಕಾಲ. ಆದರೆ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದ ಕಾರಣ ಅಪ್ಪ ಶಾಲೆ ಬಿಡಿಸಿ ಜೀತಕ್ಕೆ ಅಟ್ಟಿದ್ದ. ಅಲ್ಲಾದರೂ ಮಗ ಹೊಟ್ಟೆ ತುಂಬಾ ಊಟ ಮಾಡ್ತಾನೆ ಎನ್ನೋದು ಅಪ್ಪನ ಲೆಕ್ಕಾಚಾರ. ಬೆಟ್ಟ ಸುತ್ತಿ ಐವತ್ತು ಕುರಿ ಮೇಯಿಸುವುದು, ಕೊಟ್ಟಿಗೆ ಕಸ ಬಾಚುವುದು ನನ್ನ dalit_pantherಜವಾಬ್ದಾರಿ. ಅಪ್ಪ ಕೂಡ ಕೈಒಡ್ಡಿದ್ದ ಸಾಲ ತೀರಿಸಲು ಜಮೀನ್ದಾರನ ಮನೆ ಆಲೆಮನೆಯಲ್ಲಿ ಗಾಣದಾಳಾಗಿ ದುಡಿಯುತ್ತಿದ್ದ. ಇತ್ತ ಅವ್ವ ಒಂಬತ್ತು ತಿಂಗಳ ಗಭರ್ಿಣಿ. ಅವಳು ಹೊಟ್ಟೆ ತುಂಬ ಊಟ ಮಾಡಿ ಅದೆಷ್ಟೋ ದಿನಗಳು ಕಳೆದಿದ್ದವು. ಊರಿನಲ್ಲಿ ಯಾವುದಾದರೂ ಮದುವೆ-ತಿಥಿ ನಡೆದರೆ ಅಂದು ಹೊಟ್ಟೆ ತುಂಬ ಊಟ. ಬೇರೆ ದಿನವೆಲ್ಲ ಅರೆಹೊಟ್ಟೆಯೇ ಗತಿ. ಹೇಗೋ ದಿನಗಳು ಉರುಳುತ್ತಿದ್ದವು.

ಪಟೇಲರ ಮನೆಯಲ್ಲಿ ಮದುವೆ ಎದ್ದಿತ್ತು. ಎಲ್ಲರು ಆ ದಿನಕ್ಕಾಗಿಯೇ ಕಾದು ಕುಳಿತಿದ್ದರು. ಅವ್ವ ಮತ್ತು ತಂಗಿ ನಾಲ್ಕೈದು ದಿನ ಮುನ್ನವೇ ಆ ಮನೆಯ ದನ-ಕರು, ಕಸ-ಮುಸುರೆಯ ಜವಾಬ್ದಾರಿ ನೋಡಿಕೊಂಡಿದ್ದರು. ದಿನದಲ್ಲಿ ಎರಡು ಹೊತ್ತು ಹೊಟ್ಟೆ ತುಂಬ ಊಟ ಸಿಗುತ್ತಿರುವುದೇ ತೃಪ್ತಿಯಾಗಿತ್ತು. ಮದುವೆ ಕಾರ್ಯ ಮುಗಿದು ಹೋಯಿತು. ನಿರೀಕ್ಷೆಯಷ್ಟು ನೆಂಟರು ಬರಲಿಲ್ಲ. ಮಾಡಿದ್ದ ಅನ್ನವೆಲ್ಲಾ ಮಿಕ್ಕಿತ್ತು. ಪಟೇರಿಗೆ ಅನ್ನ ಮಿಕ್ಕಿದೆ ಎಂಬ ಸಂಕಟವಾದರೆ ನಮ್ಮೂರಿನ ದಲಿತರಿಗೆ ಸಂಭ್ರಮ. ಮಿಕ್ಕಿರುವ ಅನ್ನ ನಮ್ಮ ಪಾಲೇ ಎಂಬುದು ಅವರಿಗೆ ಗೊತ್ತಿತ್ತು. ನಿರೀಕ್ಷೆಯಂತೆ ಅನ್ನ ಕೊಂಡೊಯ್ದು ಹಂಚಿಕೊಳ್ಳಲು ಪಟೇಲರು ಹೇಳಿ ಕಳುಹಿಸಿದ್ದರು.

ಬಿದಿರು ಕುಕ್ಕೆಗಳನ್ನು ಹೊತ್ತು ದಲಿತ ಕೇರಿಯ ಹೆಂಗಸರು ಮಕ್ಕಳು ಮದುವೆ ಮನೆ ಮುಂದೆ ಹಾಜರಾದರು. ಒಬ್ಬೊಬ್ಬರಿಗೆ ಮುಕ್ಕಾಲು ಕುಕ್ಕೆಯಷ್ಟು ಅನ್ನ ಸಿಕ್ಕಿತ್ತು. ಮಧ್ಯಾಹ್ನ ಮದುವೆ ಮನೆಯಲ್ಲೇ ಊಟ ಆಗಿತ್ತು. ಸಂಜೆ ಕೂಡ ಹೊಟ್ಟೆ ಬಿರಿಯುವಂತೆ ಎಲ್ಲರು ಊಟ ಮಾಡಿದರು. ಆದರೂ ಅರ್ಧ ಕುಕ್ಕೆ ಅನ್ನ ಉಳಿದಿತ್ತು. ನಾಳೆಗೂ ಚಿಂತೆ ಇಲ್ಲ ಎಂದುಕೊಂಡು ಮಲಗಿದ್ದರು. ಬೆಳಗ್ಗೆ ಸಾರು ಮಾಡಿ ಅನ್ನ ಇಕ್ಕಲು ಅವ್ವ ಕುಕ್ಕೆ ತೆಗೆದಳು. ಆದರೆ ಅದೇಕೋ ಅನ್ನ ಮೆತ್ತಾಗಾಗಿತ್ತು, ಉಳಿ ಘಮಲು ಆವರಿಸಿತ್ತು. ಅವ್ವ ಅಯ್ಯೋ…. ಎಂದು ದೊಡ್ಡದಾಗಿ ಉಸಿರು ಬಿಟ್ಟಳು. ಕೈತೊಳೆದು ತಟ್ಟೆ ಹಾಸಿಕೊಂಡು ಮೂಲೆಯಲ್ಲಿ ಕುಳಿತಿದ್ದ ಅಜ್ಜಿ ಅನ್ನಕ್ಕೂ ನಮ್ಮ ಮೇಲೆ ಮುನಿಸೇ ಎಂದು ತಟ್ಟೆ ಬದಿಗೆ ಸರಿಸಿ ನೀರು ಕುಡಿದಳು. ಬಿಸಿನೀರು ಕಾಯಿಸಿ ಅದಕ್ಕೆ ಅನ್ನ ಸುರಿದು ಕುದಿಸು ಎಂದು ಅಜ್ಜಿ ಅವ್ವನಿಗೆ ಆಜ್ಞೆ ಮಾಡಿದಳು. ಜಮೀನ್ದಾರರ ಮನೆಯಲ್ಲಿ ಅನ್ನ ಹಳಸಿದರೆ ಅದನ್ನು ತಂದು ಬಿಸಿನೀರಿನಲ್ಲಿ ಕುದಿಸಿ ಉಪ್ಪು ಹಾಕಿ ಹಿಂಡಿಕೊಂಡು ತಿನ್ನುವುದು ಸಾಮಾನ್ಯವಾಗಿತ್ತು. ಅವ್ವ ಅದೇ ರೀತಿ ಮಾಡಿ ಕಾದು ಕುಳಿತಿದ್ದ ಅಜ್ಜಿ ಮತ್ತು ಮಕ್ಕಳಿಗೆ ಬಡಿಸಿದಳು. ಉಳಿಯ ಘಮಲು ಇದ್ದರೂ ಒಂದಿಷ್ಟು ಕಡಿಮೆ ಆಗಿದೆ ಎನ್ನಿಸಿತು. ಅಂದಿನ ತುತ್ತಿನ ಚೀಲ ತುಂಬಿಸಿಕೊಳ್ಳಲು ಬೇರೆ ದಾರಿ ಇರಲಿಲ್ಲ. ಹಾಗಾಗಿ ಹಳಸಿದ ಅನ್ನ ಊಟ ಮಾಡಲೇಬೇಕಾಯಿತು. ರಾತ್ರಿ ಕೂಡ ಹೇಗೋ ಮೂಗು ಮುಚ್ಚಿಕೊಂಡು ಅದೇ ಅನ್ನ ಉಂಡು ಮಲಗಿದರು.

ನನಗೋ ಜಮೀನ್ದಾರರ ಮನೆಯಲ್ಲಿ ಜೀತದಾಳಾಗಿದ್ದ ಕಾರಣಕ್ಕೆ ಊಟ ಸಿಗುತ್ತಿತ್ತು. ಅಜ್ಜಿ, ತಂಗಿ, ತಮ್ಮ ಮತ್ತು ಅವ್ವನಿಗೆ ದಿನದಲ್ಲಿ ಎರಡು ಹೊತ್ತು ಊಟ ಮಾಡಿದರೆ ಅದು ಸುಖದ ದಿನ. ಹೇಗೋ ಕೂಡಿಟ್ಟುಕೊಂಡಿದ್ದ ರಾಗಿ ಚೀಲ ಬರಿದಾಗಿ ಹಲವು ದಿನವೇ ಕಳೆದಿತ್ತು. ಹಿಟ್ಟಿನ ಮಡಿಕೆ ಲೊಟ್ಟೆ ಹೊಡೆಯುತ್ತಿದ್ದಂರಿಂದ ಹೆಡಕಲಿಗೆ ಸುಂಡ(ಇಲಿ) ಕೂಡ ಹತ್ತುವುದನ್ನು ಮರೆತಿತ್ತು. ಊರಿನಲ್ಲೆ ಕೆರೆ ಹಿಂಭಾಗದ ಗದ್ದೆಯಲ್ಲಿ ಗಾಣದಾಳಗಿದ್ದ ಅಪ್ಪ ರಾತ್ರಿ ಮನೆಗೆ ಬರುವಾಗ ಅಲ್ಲಿ ಉಳಿದಿದ್ದ ಮುದ್ದೆ ತಂದು ಕೊಡುತ್ತಿದ್ದ. ಅಲ್ಲಿ ಖಾಲಿ ಆಗಿದ್ದರೆ ಮನೆಯಲ್ಲಿ ಎಲ್ಲರೂ ಖಾಲಿ ಹೊಟ್ಟೆ. ಅದೊಂದು ದಿನ ಕುರಿ ಮೇಯಿಸಿಕೊಂಡು ಸಂಜೆ ಕೊಟ್ಟಿಗೆಯತ್ತ ಹೆಜ್ಜೆ ಹಾಕುತ್ತಿದ್ದೆ. ಅಲ್ಲಿಗೆ ಬಂದ ಅಪ್ಪ, ಮನೆಯೊಡತಿಗೆ ಏನಾದರೂ ಹೇಳಿ ಕತ್ತಲಾಗುವ ಹೊತ್ತಿಗೆ ಮನೆ ಹತ್ತಿರ ಬಾ ಎಂದು ಅಪ್ಪ ಹೇಳಿ ಹೊರಟ. ಕುರಿಗಳನ್ನು ಕೊಟ್ಟಿಗೆಗೆ ಕೂಡಿ, ಮನೆಯೊಡತಿಗೆ ಏನೋ ಸುಳ್ಳು ಹೇಳಿ ಮನೆಗೆ ಬಂದೆ. ಮನೆಯಲ್ಲಿ ಏನೋ ವಿಶೇಷ ಎರಬಹುದು ಎಂದು ಊಹಿಸಿ ಓಡಿ ಬಂದೆ. ಕತ್ತಲಾಗುವುದನ್ನೇ ಕಾದು ಕುಳಿತಿದ್ದ ಅಪ್ಪ, ನನಗೂ, ತಂಗಿಗೂ ಒಂದೊಂದು ರಗ್ಗು ಹೊದಿಸಿ ತನ್ನನ್ನು ಹಿಂಬಾಲಿಸುವಂತೆ ಹೇಳಿದ. ಬೆಳದಿಂಗಳು ಹಾಲು ಚೆಲ್ಲದಿಂತೆ ಹರಡಿತ್ತು. ಅಪ್ಪಿ-ತಪ್ಪಿಯೂ ತುಟಿ ಬಿಚ್ಚದಂತೆ ಆಜ್ಞೆ muddeಮಾಡಿದ್ದ. ಹಾಗಾಗಿ ಅಪ್ಪ ಏನೋ ಕಳ್ಳತನಕ್ಕೆ ಕರೆದೊಯ್ಯುತ್ತಿದ್ದಾನೆ ಎಂಬುದು ನಮಗೆ ಖಾತ್ರಿ ಆಗಿತ್ತು. ಅಕ್ಟೋಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಸಾಮಾನ್ಯವಾಗಿ ರಾಗಿ ಪೈರು ಕಟಾವಾಗುವ ಕಾಲ. ಜಮೀನು ಉಳ್ಳವರು ಬೆಳೆ ಕಟಾವು ಮಾಡಿ ಒಣಗಲು ಅನುಕೂಲ ಆಗುವಂತೆ ಸಣ್ಣ-ಸಣ್ಣ ಗುಪ್ಪೆ ಹಾಕಿದ್ದರು. ಏಳೆಂಟು ಗುಪ್ಪೆ ಒಂದೇ ಕಡೆ ಇರುವ ಜಾಗದಲ್ಲಿ ನಿಂತ ಅಪ್ಪ, ಅಲ್ಲೆ ಕೂರುವಂತೆ ಇಬ್ಬರಿಗೂ ಆಜ್ಞೆ ಮಾಡಿದ. ರಗ್ಗುಗಳನ್ನು ತಲೆ ತುಂಬ ಹೊದ್ದು ಕುಳಿತೆವು. ಅಪ್ಪ ಒಂದೊಂದು ಗುಪ್ಪೆಯಿಂದಲೂ ಒಂದೊಂದೇ ರಾಗಿ ಪೈರಿನ ಕಂತೆ ತಂದು ನಮಗೆ ಕೊಟ್ಟ ಅದನ್ನು ರೊಗ್ಗಿನೊಳಗೆ ಮುದುರಿಕೊಂಡು ಕುಳಿತೆವು. ಇನ್ನಷ್ಟ ತರಲು ಅಪ್ಪ ಹೋಗಿದ್ದ. ಅದ್ಯಾವ ಕೇಡುಗಾಲಕ್ಕೋ ನನಗೂ ಅಂದು ಬರಬಾರದ ಕೆಮ್ಮು ಬಂದಿತ್ತು. ತುಟಿ ಬಿಚ್ಚದಂತೆ ಅಪ್ಪ ಆಜ್ಞೆ ಮಾಡಿದ್ದರಿಂದ ತಡೆದು ನಿಲ್ಲಿಸಿಕೊಂಡಿದ್ದೆ. ತಡೆದಷ್ಟು ಕೆಮ್ಮು ಜೋರಾಯಿತು. ತಡೆದುಕೊಳ್ಳಲಾಗದೆ ಜೋರಾಗಿ ಕೆಮ್ಮಿಬಿಟ್ಟೆ. ದೂರದಲ್ಲಿದ್ದ ಅಪ್ಪ ಓಡಿ ಬಂದವನೆ ಬೆನ್ನಿಗೆ ನಾಲ್ಕೈದು ಬಾರಿ ತನ್ನ ಶಕ್ತಿಯನ್ನೆಲ್ಲಾ ಒಂದು ಮಾಡಿಕೊಂಡು ಗುದ್ದಿದ. ಜೀವ ಹೋದಂತಾಯಿತು. ಅಪ್ಪಕೊಟ್ಟ ಗುದ್ದು, ಎದೆಯಿಂದ ಉಕ್ಕಿ ಬರುತ್ತಿದ್ದ ಕೆಮ್ಮು ಎರಡನ್ನೂ ತಡೆದುಕೊಳ್ಳುವು ಕಷ್ಟವಾಯಿತು. ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿದು ಹೋದವು. ಉಸಿರು ನಿಂತ ಅನುಭವ ಆಯಿತು. ತಂಗಿ ಬೆನ್ನು-ಎದೆ ನೀವಿ, ಕಣ್ಣೀರು ಒರೆಸಿ ಸಮಾಧಾನ ಮಾಡಿದಳು. ಹೇಗೋ ನಿಧಾನವಾಗಿ ಉಸಿರು ಎಳೆದುಕೊಂಡೆ. ಮತ್ತೊಮ್ಮೆ ಕೆಮ್ಮು ಬಂದೇ ಬಿಟ್ಟಿತು. ಕೆಮ್ಮಿದರೆ ಈ ಬಾರಿ ಅಪ್ಪ ಸಾಯಿಸಿಯೇ ಬಿಡುತ್ತಾನೆ ಎಂದು ಮನದಲ್ಲೆ ಆಲೋಚಿಸಿದೆ. ಕೆಮ್ಮಿನ ಶಬ್ದ ಕೇಳಿ ರಾಗಿ ಕಂತೆ ಕಳ್ಳತನ ಸಿಕ್ಕಿ ಬೀಳುವ ಆತಂಕ ಅಪ್ಪನದು. ಕೆಮ್ಮು ತಡೆದು ಸಾಕಾಗಿದ್ದ ನನಗೊಂದು ಉಪಾಯ ಹೊಳೆಯಿತು. ಹೊದ್ದು ಕುಳಿತಿದ್ದ ರಗ್ಗನ್ನು ಮುದುರಿಕೊಂಡು ಬಾಯಿಗೆ ತುರುಕಿಕೊಂಡು ಕುಳಿತೆ. ಕೆಮ್ಮುತ್ತಿದ್ದರೂ ಶಬ್ದ ಹೊರಕ್ಕೆ ಕೇಳಲಿಲ್ಲ. ಐದರಿಂದ ಹತ್ತು ನಿಮಿಷದಲ್ಲಿ ಎಲ್ಲಾ ಗುಪ್ಪೆಯಿಂದ ಒಂದೊಂದು ಕಂತ ತಂದು ನಾವು ಕುಳಿತಿದ್ದ ಜಾಗದಲ್ಲಿ ಅಪ್ಪ ರಾಶಿ ಹಾಕಿದ. ತಲಾ ನಾಲ್ಕೈದು ಕಂತೆ ರಗ್ಗಿನೊಳಗೆ ಮುದುರಿಕೊಂಡು ಮನೆಯತ್ತ ಹೊರಟೆವು. ಕಾದು ಕುಳಿತಿದ್ದ ಅವ್ವ ಮತ್ತು ಅಜ್ಜಿ ಮನೆ ಬಾಗಿಲು ಹಾಕಿಕೊಂಡು ತೆನೆಗಳನ್ನು ಕೊಯ್ದು ಉಜ್ಜಿ ರಾಗಿ ಬಿಡಿಸಿದರು. ಸ್ವಚ್ಛಗೊಳಿಸಿ ರಾಗಿ ಬೀಸಿಕೊಂಡು ಮುದ್ದೆ ತಯಾರು ಮಾಡಿದರು. ರಾಗಿ ಕಂತೆ ಕಳ್ಳತನ ಸಿಕ್ಕಿಬೀಳಬಾರದು ಎಂಬ ಕಾರಣಕ್ಕೆ ಹುಲ್ಲಿನ ಕಂತೆಯನ್ನು ಒಲೆಗೆ ಹಾಕಿ ಬೂದಿ ಮಾಡಿದರು. ಎಲ್ಲವು ಮುಗಿಯುವಷ್ಟರಲ್ಲಿ ಮಧ್ಯರಾತ್ರಿಯಾಗಿತ್ತು. ಮನೆಯಲ್ಲಿ ಏನೋ ಸಂಭ್ರಮ ಎಂದುಕೊಂಡು ಓಡೋಡಿ ಬಂದ ನನಗೆ ಅಪ್ಪ ಕೊಟ್ಟ ಗುದ್ದು ಸುಧಾರಿಸಿಕೊಳ್ಳಲು ಇಡೀ ರಾತ್ರಿ ನರಳಬೇಕಾಯಿತು.

ನಾಲ್ಕೈದು ದಿನ ಕಳೆಯಿತು. ಕುರಿ ಕೊಟ್ಟಿಗೆಗೆ ಮುಟ್ಟಿಸಿ ಮನೆಗೆ ಬರುವಷ್ಟರಲ್ಲಿ ಮನೆಮುಂದೆ ಜನ ನಿಂತಿದ್ದರು. ಅವ್ವನಿಗೆ ಹೆರಿಗೆ ನೋವು ಶುರುವಾಗಿತ್ತು. ಮಧ್ಯರಾತ್ರಿ ಹೊತ್ತಿಗೆ ಗಂಡು ಮಗುವಿಗೆ ಅವ್ವ ಜನ್ಮ ನೀಡಿದ್ದಳು. ಮಗು ಗುಂಡು-ಗುಂಡಾಗಿತ್ತು, ಆದರೆ ಅವ್ವನಿಗೆ ಹೋದ ಪ್ರಜ್ಞೆ ಬಂದಿರಲಿಲ್ಲ. ಗರ್ಭಿಣಿ ಸಂದರ್ಭದಲ್ಲಿ ಹೊಟ್ಟೆ ತುಂಬ ಊಟ ಮಾಡದ ಕಾರಣಕ್ಕೆ ಅವ್ವನಿಗೆ ಅದ್ಯಾವುದೋ ಖಾಯಿಲೆ ಬಡಿದಿತ್ತು. ಬಟ್ಟೆ-ಬರೆಗಳ ಮೇಲೆ ragiನಿಗಾ ಇರಲಿಲ್ಲ, ಮಾನಸಿಕ ಅಸ್ವಸ್ಥೆಯಂತಾಗಿದ್ದಳು. ಮಗುವಿನ ಕಡೆಗೂ ಗಮನ ಇರಲಿಲ್ಲ. ಅಜ್ಜಿ ಜಮೀನ್ದಾರನ ಮನೆಯಲ್ಲಿ ಎಮ್ಮೆ ಹಾಲು ಬೇಡಿ ತಂದು ಕುಡಿಸಿ ಹೇಗೋ ಮಗುವಿನ ಜೀವ ಉಳಿಸಿಕೊಂಡಿದ್ದಳು. ಮೂರು ತಿಂಗಳು ಕಳೆದರೂ ಅವ್ವನ ಆರೋಗ್ಯ ಸುಧಾರಿಸಲಿಲ್ಲ. ಖಾಯಿಲೆ ಗುಣಪಡಿಸಲು ಅಪ್ಪ ಆಸ್ಪತ್ರೆ ಮತ್ತು ದೇವಸ್ಥಾನ ಎಂದು ಸುತ್ತಾಡಿ ಸಾಲದ ಹೊರೆಯನ್ನು ಮತ್ತಷ್ಟು ಮೈಮೇಲೆ ಎಳೆದುಕೊಂಡಿದ್ದ. ಹಾಲಿಗಾಗಿ ಮಗು ಹಾತೊರೆಯುತ್ತಿತ್ತು. ಸಿಕ್ಕಿದ್ದನ್ನು ತಿನ್ನಿಸುತ್ತಿದ್ದ ಅಜ್ಜಿಗೆ ದಿಕ್ಕು ತೋಚದಾಗಿತ್ತು. ಮುದ್ದೆ ಸಿಕ್ಕಿದರೂ ತಿನ್ನಿಸಿ ಮಗು ಉಳಿಸಿಕೊಳ್ಳಲು ಅಜ್ಜಿ ಪರದಾಡುತ್ತಿದ್ದಳು.

ಮಗು ಉಳಿಸಿಕೊಳ್ಳಲು ಏನು ಮಾಡಬೇಕು ಎಂಬುದು ತೋಚದಾಯಿತು. ನಾನು ಜೀತಕ್ಕೆ ಸೇರಿದ್ದ ಮನೆಯಲ್ಲಿ ಊಟಕ್ಕೆ ಕಡಿಮೆಯಾಗಿರಲಿಲ್ಲ. ಬೆಳಗ್ಗೆ ಕುರಿ ಮೇಯಿಸಲು ಹೋಗುವ ಮುನ್ನ ನಾನು ಕೊಟ್ಟಿಗೆ ಕಸ ಬಾಚಿ ತಿಪ್ಪಿಗೆ ಸೇರಿಸಿ ನಂತರ ಊಟ ಮಾಡುತ್ತಿದ್ದೆ. ತಿಪ್ಪೆಗೆ ಕಸ ಎಸೆದು ಕೈಕಾಲು ತೊಳೆದುಕೊಂಡು ಬರುವಾಗ ಮುತ್ತುಗದ ಎಲೆಯೊಂದನ್ನು ಚಡ್ಡಿ ಜೇಬಿನಲ್ಲಿ ಇರಿಸಿಕೊಂಡು ಊಟಕ್ಕೆ ಕೂರುತ್ತಿದ್ದೆ. ಕೊಟ್ಟಿಗೆಯಲ್ಲಿ ಕುಳಿತು ಊಟ ಮಾಡುವಾಗ ಮನೆಯೊಡತಿ ಮುದ್ದೆ ಇಕ್ಕಿ, ಸಾಂಬಾರ್ ಬಿಟ್ಟು ಹೋಗುತ್ತಿದ್ದಳು. ಅವಳು ಒಳ ಹೋಗುತ್ತಿದ್ದಂತೆ ಮುದ್ದೆಯಲ್ಲಿ ಮುಕ್ಕಾಲು ಭಾಗ ಮುರಿದುಕೊಂಡು ಮುತ್ತುಗದ ಎಲೆಗೆ ಮುದುರಿಕೊಂಡು ಜೇಬಿನೊಳಗೆ ತುರುಕಿಕೊಳ್ಳುತ್ತಿದ್ದೆ. ಅವ್ವ ಮುದ್ದೆ ಎಂದರೆ ಮನೆಯೊಡತಿ ಮತ್ತೊಂರ್ಧ ಮುದ್ದೆ ಇಕ್ಕುತ್ತಿದ್ದಳು. ಊಟ ಮಾಡಿ ಕೈತೊಳೆದುಕೊಂಡವನೇ ಓಡೋಡಿ ಬಂದು ಅಜ್ಜಿ ಕೈಗೆ ಮುದ್ದೆ ಒಪ್ಪಿಸುತ್ತಿದ್ದೆ. ಮೂರು ಹೊತ್ತು ಆ ಮುದ್ದೆ ತಿನ್ನಿಸಿ ಹೇಗೋ ಮಗು ಉಳಿಸಿಕೊಂಡಳು. ಒಂದಷ್ಟು ದಿನ ಮುದ್ದೆ ಕಳ್ಳತನ ಮುಂದುವರಿಯಿತು. ಮಗು ಜೀವವೂ ಉಳಿಯಿತು. 6 ತಿಂಗಳ ನಂತರ ಅವ್ವನ ಆರೋಗ್ಯ ಸುಧಾರಿಸಿತು. ಪಟೇಲರ ಮನೆ ಕೊಟ್ಟಿಗೆ ಬಾಚುವ ಕೆಲಸಕ್ಕೆ ಸೇರಿಕೊಂಡ ಅವ್ವ ಮಗು ಉಳಿಸಿಕೊಂಡಳು. ರಾಗಿ ಮತ್ತು ಮುದ್ದೆ ಕದ್ದು ಜೀವ ಉಳಿಸಿಕೊಂಡಿದ್ದೇವೆ. ಅಂದಿನ ಸ್ಥಿತಿ ನೆನದರೆ ಇಂದಿಗೂ ಕಣ್ಣಂಚು ಒದ್ದೆಯಾಗುತ್ತವೆ.

ಅನ್ನ ಹಾಕಿದ ತಪ್ಪಿಗೆ ದಂಡ ಕಟ್ಟಿದವರು – 2 (ಸಣ್ಣ ಕಲ್ಲಿನ ಮೇಲೆ ದೊಡ್ಡ ಕಲ್ಲು ಬಿದ್ದರೆ ಏನಾಗುತ್ತದೆ ಗೊತ್ತೆ?)

-ಜೀವಿ.

ಭಾಗ -1 : ಅನ್ನ ಹಾಕಿದ ತಪ್ಪಿಗೆ ದಂಡ ಕಟ್ಟಿದವರು..

ದಂಡ ಕಟ್ಟಿ ಊರಿನಿಂದ ದಲಿತರು ಬಹಿಷ್ಕಾರ ಹಾಕಿಸಿಕೊಂಡು ಐದು ದಿನ ಕಳೆದಿತ್ತು. ರಾತ್ರಿ 8 ರ ಸುಮಾರಿಗೆ ಪೊಲೀಸ್ ಜೀಪೊಂದು ಊರಿನತ್ತ ಬರುತ್ತಿರುವ ಶಬ್ಧ ಕೇಳಿತು. ಮಾರಮ್ಮನಿಗೆ ಅರ್ಪಿಸಲು ತಳಿಗೆ (ದೇವರಿಗೆ ಎಡೆ ಇಡುವ ಊಟ) ಹೊತ್ತು ಹೊರಟಿದ್ದ ದೇವರಾಜನ ಅಪ್ಪ ಪುಟ್ಟಯ್ಯ ಜೀಪಿನ ಶಬ್ಧ ಕೇಳಿ ವಾಪಸ್ ಮನೆಗೆ ಓಡಿ ಬಂದವನೇ ಪೊಲೀಸರು ಕೇರಿಯತ್ತ ಬರುತ್ತಿರುವ ಸುದ್ದಿ ತಿಳಿಸಿದ. dalit_panther2ನಂತರ ಮನೆಯ ಗಂಡು ಮಕ್ಕಳೊಂದಿಗೆ ಎದ್ದು ಬಿದ್ದು ಓಡಿ ಹೋಗಿ ಊರ ಹೊರಗಿನ ಬೇಲಿಯೊಂದರಲ್ಲಿ ಅಡಗಿ ಕುಳಿತ. ಮಾರಮ್ಮನಿಗೆ ತಳಿಗೆ ಒಪ್ಪಿಸಲು ಕೋಣನನ್ನು ಬಲಿ ಕೊಟ್ಟಿರುವ ವಿಷಯ ಗೊತ್ತಾಗಿ ಪೊಲೀಸರು ಕೇರಿಯತ್ತ ನುಗ್ಗುತ್ತಿದ್ದಾರೆ ಎಂಬುದು ಪುಟ್ಟಯ್ಯನ ಆತಂಕಕ್ಕೆ ಕಾರಣವಾಗಿತ್ತು. ಜೀಪು ಇಳಿದು ಬರುತ್ತಿದ್ದ ಪೊಲೀಸರ ಬೂಟಿನ ಸದ್ದು ಕೇಳಿ ಕೇರಿಯಲ್ಲಿ ಎಲ್ಲರ ಎದೆ ಬಡಿತ ಜಾಸ್ತಿಯಾಗಿತ್ತು. ಎಲ್ಲರ ಮನೆಗೂ ಮಾಂಸ ಹಂಚಿಕೆಯಾಗಿತ್ತು. ಮೇಲ್ಜಾತಿ ಹುಡುಗರಿಗೆ ಊಟ ಹಾಕಿರುವ ಸಿಟ್ಟಿನಿಂದ ಯಾರೋ ಪೊಲೀಸರಿಗೆ ಸುದ್ದಿ ಮುಟ್ಟಿಸಿರಬೇಕು ಎಂದುಕೊಂಡು ಎದೆ ಬಡಿತ ಹೆಚ್ಚಿಸಿಕೊಂಡಿದ್ದರು.

ಇದ್ಯಾವುದರ ಗೊಡವೆ ಇಲ್ಲದೆ ಮನೆಯಲ್ಲಿ ಮಾಂಸದೂಟ ಸಿದ್ದವಾಗಿರುವುದನ್ನು ನೆನೆದು ಸಂಭ್ರಮದಲ್ಲಿ ಓಡಾಡುತ್ತಿದ್ದ ಮಕ್ಕಳಲ್ಲಿ ಒಬ್ಬರನ್ನು ಕರೆದ ಪೊಲೀಸರು, ಗುಂಡಯ್ಯನ ಮನೆ ತೋರಿಸುವಂತೆ ತಿಳಿಸಿದರು. ಮನೆ ಬಾಗಿಲು ತಟ್ಟಿದ ಪೊಲೀಸರನ್ನು ಕಂಡು ಆತ ಆಶ್ಚರ್ಯಗೊಂಡು ತಬ್ಬಿಬ್ಬಾಗಿದ್ದ. ’ಗುಂಡಯ್ಯ ಎಂದರೆ ನೀನೇನಾ’ ಎಂದು ಕೇಳಿದ ಪೊಲೀಸರಿಗೆ ಆತಂಕದಿಂದಲೇ ’ನಾನೇ ಸ್ವಾಮಿ’ ಎಂದು ಉತ್ತರಿಸಿದ. ಮೇಲ್ಜಾತಿ ಹುಡುಗರಿಗೆ ಊಟ ಹಾಕಿದ ತಪ್ಪಿಗೆ ದಂಡ ಹಾಕಿ ಬಹಿಷ್ಕಾರಕ್ಕೆ ಒಳಗಾಗಿದೇವೆ. ಈಗ ಕೋಣವನ್ನು ಕಡಿತ ತಪ್ಪಿಗೆ ಜೈಲೇ ಸೇರಬೇಕೇನೋ ಎಂದು ಮನದಲ್ಲೆ ಗೊಣಗಿಕೊಂಡ ಗುಂಡಯ್ಯ ಮುಂದೇನು ಮಾಡುವುದು ಎಂದು ಆಲೋಚನೆಯಲ್ಲಿ ತೊಡಗಿದ್ದ. ಅಷ್ಟರಲ್ಲಿ ’ಐದು ದಿನದ ಹಿಂದೆ ನಾಮಕರಣ ಆಗಿದ್ದ ನಿನ್ನ ಮಗಳದ್ದೇನಾ?’ ಎಂದು ಪೊಲೀಸರು ಕೇಳಿದರು. ’ಹೌದು ಸ್ವಾಮಿ’ ಎಂದು ಗುಂಡಯ್ಯನಿಂದ ಅಂದು ಏನಾನಾಯ್ತು ಎಂಬ ಮಾಹಿತಿ ಪಡೆದುಕೊಂಡರು. ಅಷ್ಟೊತ್ತಿಗೆ ಕೇರಿಯ ಎಲ್ಲರೂ ಪೊಲೀಸರತ್ತ ಮುತ್ತಿಕೊಂಡಿದ್ದರು. ಅಲ್ಲಿಗೆ ಆಗಮಿಸಿದ ಪಕ್ಕದೂರಿನ ದಲಿತ ಕೇರಿಯ ರಾಮಕುಮಾರ, ನಡೆದಿರುವ ಎಲ್ಲಾ ವಿಷಯವನ್ನು ವಿವರವಾಗಿ ಪೊಲೀಸರಿಗೆ ತಿಳಿಸಿ ಯಾರಿಗೂ ಯಾವುದೇ ತೊಂದರೆ ಆಗುವುದಿಲ್ಲ ಎಂದು ದಂಡ ಹಾಕಿಸಿಕೊಂಡ ದಲಿತರಿಗೆ ಹೇಳಿದ. ಸುತ್ತಮುತ್ತಲ ಊರಿನಲ್ಲಿ ಒಂದಿಷ್ಟು ಓದಿಕೊಂಡು ದಲಿತ ಚಳವಳಿಯಲ್ಲಿ ತೊಡಗಿಕೊಂಡಿದ್ದ ರಾಮಕುಮಾರನ ಬಗ್ಗೆ ಎಲ್ಲರಿಗೂ ತಿಳಿದಿತ್ತು. ಏನು ತೊಂದರೆ ಆಗಲಾರದು ಎಂದುಕೊಂಡು ನಡೆದ ಸಂಗತಿಯನ್ನು ಪೊಲೀಸರ ಮುಂದೆ ತೆರದಿಟ್ಟರು.

ಕಾನೂನಿನ ಅರಿವಿದ್ದು ದಲಿತ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ರಾಮಕುಮಾರನಿಗೆ ತನ್ನ ಪಕ್ಕದೂರಿನ ದಲಿತರ ಮನೆಯಲ್ಲಿ cooked-riceಊಟ ಮಾಡಿದ ಮೇಲ್ಜಾತಿಯವರು ಕೊನೆಗೆ ದಂಡ ಕಟ್ಟಿಸಿಕೊಂಡು ಬಹಿಷ್ಕಾರ ಹಾಕಿರುವ ಸುದ್ದಿ ತಡವಾಗಿ ತಿಳಿದಿತ್ತು. ಹೊರ ಊರಿನಿಂದ ಬಂದ ಕೂಡಲೇ ವಿಷಯ ತಿಳಿದು ದಲಿತ ಕೇರಿಗೆ ರಾಮಕುಮಾರ ಬಂದಿದ್ದ. ಬೀದಿಯಲ್ಲಿ ಸಿಕ್ಕಿದ್ದ ಮುಕ್ಕಜ್ಜಿಯಿಂದ ಘಟನೆಯ ಸಂಪೂರ್ಣ ವಿವರ ಪಡೆದುಕೊಂಡಿದ್ದ. ದಲಿತ ಕೇರಿಯಲ್ಲಿ ಮತ್ಯಾರನ್ನು ಮಾತನಾಡಿಸದೆ ನೇರವಾಗಿ ಪಟ್ಟಣಕ್ಕೆ ಹೋಗಿ ಪತ್ರಕರ್ತರಿಗೆ ವಿಷಯ ಮುಟ್ಟಿಸಿದ್ದ. ಮರುದಿನ ರಾಜ್ಯಮಟ್ಟದಲ್ಲಿ ಸುದ್ದಿ ಪ್ರಕಟವಾಗಿತ್ತು. ಪತ್ರಿಕೆಗಳಲ್ಲಿ ಬಂದ ಸುದ್ದಿ ನೋಡಿ ಜಿಲ್ಲಾಧಿಕಾರಿ ಪ್ರಶ್ನೆ ಮಾಡಿದ ನಂತರ ಪೊಲೀಸರು ದಲಿತ ಕೇರಿಗೆ ದಾಂಗುಡಿ ಇಟ್ಟಿದ್ದರು. ಇದ್ಯಾವುದರ ಅರಿವಿಲ್ಲದ ದಲಿತ ಕೇರಿಯ ಜನ ಮೇಲ್ಜಾತಿ ಹುಡುಗರಿಗೆ ಊಟ ಹಾಕಿದ್ದು ನಮ್ಮದೇ ತಪ್ಪು, ಅದಕ್ಕಾಗಿ ದಂಡ ಮತ್ತು ಬಹಿಷ್ಕಾರದ ಹಾಕಿದ್ದಾರೆ ಎಂದು ಭಾವಿಸಿದ್ದರು. ಮುಂದೆ ಈ ರೀತಿ ತಪ್ಪು ಮಾಡದಂತೆ ನೋಡಿಕೊಳ್ಳಲು ತೋಟದ ಮಾರಿಗೆ ಕೋಣವೊಂದನ್ನು ಬಲಿಕೊಟ್ಟು ಸಂಕಷ್ಟದಿಂದ ಪಾರು ಮಾಡಲು ಕೇಳಿಕೊಂಡಿದ್ದರು. ದಂಡ ಮತ್ತು ಬಹಿಷ್ಕಾರದ ವಿಷಯವನ್ನು ರಾಮಕುಮಾರ ಬಹಿರಂಗಪಡಿಸಿದ ನಂತರ ಊರಿಗೆ ಕಾಲಿಟ್ಟಿದ್ದ ಪೊಲೀಸರು, ದಂಡ ಹಾಕಿದವರ ಮನೆ ಬಾಗಿಲು ತಟ್ಟಿ ಮಾರನೆಯ ದಿನ ಠಾಣೆಗೆ ಬರುವಂತೆ ಸೂಚನೆ ನೀಡಿ ಹೋದರು.

ಅದುವರೆಗೂ ದಲಿತರಿಗೆ ಬುದ್ದಿ ಕಲಿಸಿದ್ದೀವಿ ಎಂದುಕೊಂಡಿದ್ದ ಮೇಲ್ಜಾತಿ ಪಂಚಾಯ್ತಿದಾರರಿಗೆ ಪೊಲೀಸರ ಮಾತಿನಿಂದ ನಡುಕ ಉಂಟಾಯಿತು. ಪಕ್ಕದೂರಿನ ರಾಜಕೀಯ ಪುಡಾರಿಗಳ ಮನೆಗೆ ಧಾವಿಸಿ ಪೊಲೀಸರು ಬಂದು ಹೋಗಿರುವ ವಿಷಯ ತಿಳಿಸಿದರು. ಅಂದಿನ ರಾಜ್ಯ ಸರ್ಕಾರದಲ್ಲಿ ಪ್ರಮುಖ ಸಚಿವರಾಗಿದ್ದ ವ್ಯಕ್ತಿ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಮತ್ತು ಅವರ ಹುಟ್ಟೂರಿನಿಂದ ಕೇವಲ ಒಂದೂವರೆ ಮೈಲಿ ದೂರದಲ್ಲಿರುವ ಊರಿನಲ್ಲಿ ಈ ಅಮಾನವೀಯ ಘಟನೆ ನಡೆದಿತ್ತು. dalit_panther1ದಲಿತರ ಮೇಲೆ ದೌರ್ಜನ್ಯ ನಡೆಸಿದವರು ಕೂಡ ಮಂತ್ರಿಯ ಸ್ವಜಾತಿಯವರೇ ಆಗಿದ್ದರು. ಕೆಲವರು ರಕ್ತ ಸಂಬಂಧಿಗಳು ಆಗಿದ್ದರು. ಪತ್ರಿಕೆಗಳಲ್ಲಿ ಓದಿ ವಿಷಯ ತಿಳಿದಿದ್ದ ಸಚಿವ, ಠಾಣೆಯಲ್ಲಿ ಮೊಕದ್ದಮೆ ದಾಖಲಾಗದಂತೆ ನೋಡಿಕೊಂಡಿದ್ದ. ಮತ್ತೊಂದು ಪಂಚಾಯ್ತಿ ಮಾಡಿ ಎಲ್ಲವನ್ನು ಸರಿಪಡಿಸುವುದಾಗಿ ಹೇಳಿದ್ದ. ಮೊಕದ್ದಮೆ ದಾಖಲಾಗಬೇಕು, ದಂಡ ಮತ್ತು ಬಹಿಷ್ಕಾರ ಹಾಕಿದವರಿಗೆ ಕಾನೂನಿನ ಅಡಿ ಶಿಕ್ಷೆ ಆಗಬೇಕು ಎಂಬ ಪಟ್ಟನ್ನು ಹೋರಾಟಗಾರ ರಾಮಕುಮಾರ ಹಿಡಿದಿದ್ದ. ಆದರೆ ಮೊಕದ್ದಮೆ ದಾಖಲಿಸದಂತೆ ಕೇವಲ ಸಚಿವ ಮಾತ್ರವಲ್ಲದೇ ಅಂದಿನ ಸರ್ಕಾರ ರಚನೆಗೆ ಪ್ರಮುಖ ಪಾತ್ರದಾರಿಯೂ ಆಗಿದ್ದ ಕಾರಣಕ್ಕಾಗಿ ಜಿಲ್ಲಾಧಿಕಾರಿ ಆದಿಯಾಗಿ ಯಾರೊಬ್ಬರು ಅವರ ಮಾತು ಉಲ್ಲಂಘಿಸುವ ಸ್ಥಿತಿಯಲ್ಲಿ ಇರಲಿಲ್ಲ.

ಸುತ್ತಮುತ್ತಲ ಊರಿಗೆ ವೃತ್ತದಂತಿದ್ದ ಪಕ್ಕದೂರಿನಲ್ಲಿ ದೊಡ್ಡ ಪಂಚಾಯ್ತಿ ಸೇರಿಕೊಂಡಿತು. ಅದಾಗಲೇ ಸುದ್ದಿ ಸುತ್ತಮುತ್ತಲ ಊರಿಗೆ ಹರಡಿತ್ತು. dalit_pantherಪ್ರಭಾವಿ ಸಚಿವ ಆಗಮಿಸುತ್ತಿರುವ ಕಾರಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಇದು ದಂಡ ಹಾಕಿದವರಿಗೆ ದೊಡ್ಡ ಬಲ ಇದ್ದಂತಾಗಿತ್ತು. ಸಚಿವ ಕೂಡ ನಮ್ಮ ಜಾತಿಯವನೇ ಆಗಿದ್ದು, ರಕ್ಷಣೆ ಮಾಡುವುದರಲ್ಲಿ ಅನುಮಾನ ಇಲ್ಲ ಎಂದುಕೊಂಡು ನಗು ಮುಖದೊಂದಿಗೆ ಪಂಚಾಯ್ತಿಗೆ ಹಾಜರಾಗಿದ್ದರು. ಆಗಮಿಸಿದ ಸಚಿವನಿಗೆ ಜೈಕಾರಗಳು ಮೊಳಗಿದವು. ಮೇಲ್ಜಾತಿಯವರ ಮೇಳದಲ್ಲಿ ಕಾಣೆಯಾದವರಂತೆ ಮೂಲೆಯೊಂದರಲ್ಲಿ ಕುಳಿತಿದ್ದ ದಲಿತರನ್ನು ಪಂಚಾಯ್ತಿ ಮುಂದೆ ಹಾಜರಾಗಲು ಸಚಿವ ಆಜ್ಞೆ ಮಾಡಿದ. ಈಗಲೂ ತಪ್ಪು ಮಾಡಿದ ಸ್ಥಿತಿಯಲ್ಲೇ ನಿಂತಿದ್ದ ದಲಿತರಿಗೆ ರಾಮಕುಮಾರ ನಾಯಕನಾಗಿದ್ದ. ಆತ ಮಾತ್ರ ಎದೆಗುಂದದೆ ದಲಿತರ ಮೇಲೆ ನಡೆದಿರುವ ದೌರ್ಜನ್ಯ ಮತ್ತು ಅಟ್ಟಹಾಸವನ್ನು ಪ್ರಶ್ನೆ ಮಾಡಿದ. ಅಮಾಯಕರಿಗೆ ನ್ಯಾಯ ಸಿಗಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಪಟ್ಟು ಹಿಡಿದ. ’ನೀನಿನ್ನೂ ಯುವಕ, ಬಿಸಿರಕ್ತದಲ್ಲಿ ಮಾತನಾಡುತ್ತಿದ್ದಿಯಾ…’ ಎಂದು ಮಾತು ಆರಂಭಿಸಿದ ಮಂತ್ರಿ, ’ಎಲ್ಲರೂ ಅಣ್ಣತಮ್ಮಂದಿರಂತೆ ಬಾಳಬೇಕು. ನಮ್ಮ ಸಚಿವ ಸಂಪುಟದಲ್ಲಿ ರಾಮಯ್ಯ ಮಂತ್ರಿಯಾಗಿದ್ದಾರೆ. ಅವರು ಕೂಡ ದಲಿತರೇ ಆಗಿದ್ದು, ಅವರ ಮನೆಯಲ್ಲಿ ನಾನೂ ಕೂಡ ಊಟ ಮಾಡಿದ್ದೇನೆ. ಹಾಗೆಂದ ಮಾತ್ರಕ್ಕೆ ನನ್ನನ್ನು ಜಾತಿಯಿಂದ ಹೊರ ಹಾಕುತ್ತೀರಾ?’ ಎಂದು ಸ್ವಜಾತಿಯವರನ್ನು ಸಚಿವ ಪ್ರಶ್ನೆ ಮಾಡಿದ. ಹೀಗೆ ಮಾಡಬಾರದು ಎಂದು ಹೇಳಿದ ಸಚಿವನ ಮಾತಿಗೆ ಎಲ್ಲರೂ ಮರುಳಾದರು. ಬಹಿಷ್ಕಾರ ಹಿಂದಕ್ಕೆ ಪಡೆದು ದಂಡದ ಹಣ ವಾಪಸ್ ಕೊಡಿ ಎಂದು ಆಜ್ಞೆ ಮಾಡಿದ. ದಲಿತರಿಗೆ ಈತ ನಮ್ಮ ಪರವಾಗಿಯೇ ಮಾತನಾಡುತ್ತಿದ್ದಾನೆ ಎಂಬ ಭಾವನೆ ಬಂದಿತು. ಆದರೆ ಮಾತಿನ ನಡುವೆಯೇ ದಲಿತರತ್ತ ತಿರುಗಿ ನೀವು ಕೂಡ ಎಚ್ಚರಿಕೆಯಿಂದ ಬಾಳಬೇಕು. ’ಸಣ್ಣ ಕಲ್ಲಿನ ಮೇಲೆ ದೊಡ್ಡ ಕಲ್ಲು ಬಿದ್ದರೆ ಏನಾಗುತ್ತದೆ ಗೊತ್ತೆ?’ ಎಂದು ಪ್ರಶ್ನೆ ಮಾಡಿದ. ’ಕೇಸು ದಾಖಲಾದರೆ ಹಳ್ಳಿಯಲ್ಲಿ ಸೌಹಾರ್ದ ವಾತಾವರಣ ಹಾಳಾಗುತ್ತದೆ. ಅಣ್ಣ-ತಮ್ಮಂದಿರಂತೆ ಜೀವನ ನಡೆಸಿ’ ಎಂದು ಹೇಳಿ ಪಂಚಾಯ್ತಿಗೆ dalithsಕೊನೆಗೊಳಿಸಿದ.

’ದೊಡ್ಡ ಕಲ್ಲನ್ನು ಮತ್ತೆಂದೂ ಮೈಮೇಲೆ ಎಳೆದುಕೊಳ್ಳಬೇಡಿ’ ಎಂಬ ಎಚ್ಚರಿಕೆಯನ್ನು ಕೆಳಜಾತಿಯವರಿಗೆ ನೀಡಿ ಕಾನೂನಿನ ಅಂಕುಶಕ್ಕೆ ಸಿಗದಂತೆ ಸ್ವಜಾತಿಯವರನ್ನು ರಕ್ಷಣೆ ಮಾಡಿದ ಸಚಿವನ ಜಾಣತನ ಅಂದು ದಲಿತರಿಗೆ ಅರ್ಥವಾಗಲಿಲ್ಲ. ಅರ್ಥ ಮಾಡಿಕೊಂಡ ರಾಮಕುಮಾರ ಸೇರಿ ಕೆಲವರಿಂದ ಬೇರೇನು ಮಾಡಲಾಗಲಿಲ್ಲ. ನಾವು ದೊಡ್ಡಕಲ್ಲು ಎಂದು ಬೀಗಿಕೊಂಡು ಮೇಲ್ಜಾತಿಯವರು ಮತ್ತೊಮ್ಮೆ ಸಚಿವನಿಗೆ ಜೈಕಾರು ಮೊಳಗಿಸಿದರು. ಸಣ್ಣಕಲ್ಲಿಗೆ ಕಾನೂನಿನ ರಕ್ಷಣೆ ಇದ್ದರೂ ಅದರ ಹಿಡಿತ ದೊಡ್ಡ ಕಲ್ಲುಗಳ ಕೈಲಿದ್ದರೆ ಏನಾಗುತ್ತದೆ ಎಂಬುದಕ್ಕೆ ಅನ್ನ ಹಾಕಿದ ತಪ್ಪಿಗೆ ತಂಡ ಕಟ್ಟಿದ ದಲಿತರೇ ಸಾಕ್ಷಿ.