Category Archives: ಆರ್ಥಿಕ

ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಮೋದಿಯ ಹಿಂದಣ ಸತ್ಯ, ಮಿಥ್ಯಗಳು…


– ಸಂಜ್ಯೋತಿ ವಿ.ಕೆ.


 

ಪ್ರಜಾಪ್ರಭುತ್ವ ವ್ಯವಸ್ಥೆ (ತನ್ನೆಲ್ಲ ಕೊರೆಗಳಿದ್ದಾಗ್ಯೂ) ಮನುಷ್ಯನ ಅತ್ಯುನ್ನತ ಸಾಮಾಜಿಕ ಆವಿಷ್ಕಾರಗಳಲ್ಲೊಂದು. ಮನುಷ್ಯನ ಸ್ವಾತಂತ್ರ್ಯ, ಘನತೆ ಮತ್ತು ಸಮಾನತೆಯ ಮೌಲ್ಯಗಳನ್ನು ಎತ್ತಿಹಿಡಿಯುವ ಮತ್ತೊಂದು ಪರ್ಯಾಯವಿಲ್ಲದಿರುವುದರಿಂದ ಈ ವ್ಯವಸ್ಥೆಯ ಕೊರೆಗಳನ್ನು ಮುಂದಿಟ್ಟುಕೊಂಡು ಇದನ್ನು ನಿರಾಕರಿಸಲು ಸಾಧ್ಯವಿಲ್ಲ. ಬದಲಿಗೆ ಆ ಕೊರೆಗಳನ್ನು ಸರಿಪಡಿಸಿ ಇದನ್ನು ಮತ್ತಷ್ಟು ಬಲಪಡಿಸುವುದೇ ನಮ್ಮ ಮುಂದಿರುವ ಸವಾಲು ಮತ್ತು ಸಾಧ್ಯತೆ.

ಈ ವ್ಯವಸ್ಥೆಯ ಅತಿ ಮುಖ್ಯ ಹಕ್ಕು ಮತ್ತು ಭಾದ್ಯತೆ ಅಡಗಿರುವುದು ಚುನಾವಣೆ ಮತ್ತು ಮತದಾನದಲ್ಲಿ. ಭಾರತದಂತಹ ಬಹುಧರ್ಮೀಯ, ಬಹುಸಂಸ್ಕೃತಿಯ, ಶ್ರೇಣೀಕೃತ ಅಸಮಾನ ಸಮಾಜದಲ್ಲಿ; ವಿಚಾರ-ಮಾಹಿತಿಗಳ ಪ್ರಸರಣ ಕೆಲವೇ ವ್ಯಕ್ತಿ, ಸಂಸ್ಥೆ, ವ್ಯವಸ್ಥೆಗಳ ಮರ್ಜಿಗೆ ಸಿಲುಕಿರುವಾಗ; grass-map-indiaಸಂಪೂರ್ಣ ಸಾಕ್ಷರತೆಯನ್ನೇ ಇನ್ನೂ ಸಾಧಿಸದ, ಅಕ್ಷರಸ್ಥರಾದರೂ ವಿದ್ಯಾವಂತರಾಗದ, ವಿದ್ಯೆಯ ಜೊತೆಗೆ ಜ್ಞಾನ ವಿವೇಚನೆಗಳನ್ನು ಸಮಾನವಾಗಿ ನಿರೀಕ್ಷಿಸಲಾಗದ ವ್ಯವಸ್ಥೆಯಲ್ಲಿ ಚುನಾವಣೆ-ಮತದಾನದ ಹಕ್ಕುಗಳು ನಿಚ್ಚಳವಾಗಿ ಚಲಾಯಿಸಲ್ಪಡುತ್ತವೆ ಮತ್ತು ಬಾಧ್ಯತೆಗಳು ನಿಭಾಯಿಸಲ್ಪಡುತ್ತವೆ ಎಂದು ನಿರೀಕ್ಷಿಸಲಾಗದು. ಜೊತೆಗೆ ತೃತೀಯ ರಂಗ ಎಂಬುದು ಇನ್ನೂ ಒಂದು ಆದರ್ಶ ಕನಸಾಗಿಯೇ ಉಳಿದಿರುವಾಗ ಚುನಾವಣೆ ಎನ್ನುವುದು ಭಾಜಪ ಮತ್ತು ಕಾಂಗ್ರೆಸ್ ಎಂಬ ಎರಡು ಧೃವಗಳ ನಡುವಣ ಪೈಪೋಟಿಯಾಗಿರುವಾಗ ಚುನಾವಣಾ ಫಲಿತಾಂಶಗಳು ಜನರ ನೈಜ ಆಯ್ಕೆಯನ್ನು ಸಂಪೂರ್ಣವಾಗಿ ಬಿಂಬಿಸುತ್ತದೆಂದು ಹೇಳಲಾಗದು.

ಇಷ್ಟೆಲ್ಲ ಸಂಕೀರ್ಣತೆಗಳ ನಡುವೆಯೂ 2004 ರ ಸಾರ್ವತಿಕ ಚುನಾವಣೆಯಲ್ಲಿ ಜನರನ್ನು ಮತ-ಧರ್ಮಗಳ ಹೆಸರಿನಲ್ಲಿ ಒಡೆಯುವ, ಭಾರತ ಹೊಳೆಯುತ್ತಿದೆ ಎಂಬ ಮಂಕುಬೂದಿ ಎರಚಲು ಹೊರಟ ಭಾಜಪವನ್ನು ಸೋಲಿಸಿದ್ದು ಇದೇ ಮತದಾರರು ದೇಶವನ್ನು ಅವೈಜ್ಞಾನಿಕ ರೀತಿಯಲ್ಲಿ ಉದಾರೀಕರಣ, ಖಾಸಗೀಕರಣ, ಜಾಗತೀಕರಣಗಳಿಗೆ (LPG) ಒಡ್ಡಿ ಅನೂಹ್ಯ ಆರ್ಥಿಕ, ಸಾಮಾಜಿಕ ಪರಿಣಾಮಗಳಿಗೆ ಕಾರಣವಾದ ಕಾಂಗ್ರೆಸ್ಸಿನ ಮೇಲೆ ಕಮ್ಯುನಿಸ್ಟರ ಕಣ್ಗಾವಲನ್ನು ಇರಿಸಲು ಸಾಧ್ಯವಾಗಿಸಿದ್ದು ಸಹ ಇದೇ ಮತದಾರರು. ಪಶ್ಚಿಮ ಬಂಗಾಳದಲ್ಲಿ ದೀರ್ಘಾವಧಿಯ ಅಧಿಕಾರ ದೊರೆತರೂ ಭ್ರಷ್ಟಾಚಾರವನ್ನು ವೈಯುಕ್ತಿಕ ನೆಲೆಯಲ್ಲಿ ಹತ್ತಿರ ಸುಳಿಯಗೊಡದಿದ್ದ ಕಮ್ಯುನಿಸ್ಟರು ತಮ್ಮದೇ ಸಿದ್ಧಾಂತಗಳನ್ನು ಸ್ವವಿಮರ್ಶೆಗೊಳಪಡಿಸಿ ಆಧುನಿಕತೆಗೆ ತೆರೆದುಕೊಳ್ಳದೆ ಸಂಕೋಲೆಗಳಾಗಿಸಿಕೊಂಡಾಗ ಅವರನ್ನು ನಿರಾಕರಿಸಿದ್ದು ಇದೇ ಪ್ರಜಾತಂತ್ರ ವ್ಯವಸ್ಥೆ. ನಂತರದ ಬೆಳವಣಿಗೆಗಳು ಇತಿಹಾಸದಲ್ಲಿ ಕಲಿಯಬೇಕಾದ ಪಾಠಗಳಾಗಿ ದಾಖಲಾಗಿದ್ದು ನಿಜ (ರಾಜಕೀಯ ಪಕ್ಷಗಳಿಗೆ ಆ ಪಾಠಗಳನ್ನು ಕಲಿಯುವ ಮನಸ್ಸಿಲ್ಲದಿರುವುದು ವಿಷಾದನೀಯ). ಆದರೆ ಇಂತಹ ಅನಾಮಿಕ ಮತದಾರನ ಗುಪ್ತಗಾಮಿ ಶಕ್ತಿ (under current) ಯಾವಾಗಲೂ ಸರಿಯಾದ ದಿಕ್ಕಿನಲ್ಲೇ ಹರಿಯುತ್ತದೆ ಎನ್ನಲಾಗದು. ಧರ್ಮಾಂದತೆಯ ಅಫೀಮು ತಲೆಗೆ ಹತ್ತಿರುವ ಬಹುಸಂಖ್ಯಾತರ ಮತಗಳು ಧ್ರುವೀಕರಣಗೊಂಡು ಗುಜರಾತಿನಲ್ಲಿ ಮೋದಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದದ್ದು.

ಈಗ ಈ ಗುಜರಾತ್ ಮಾದರಿಯನ್ನು ಇಡೀ ದೇಶಕ್ಕೆ ವಿಸ್ತರಿಸುವ ಉಮೇದಿನಲ್ಲಿ ಭಾಜಪ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುತ್ತಿದೆ. ಭಾಜಪ ಮುಖ್ಯವಾಗಿ ನೆಚ್ಚಿಕೊಂಡಿರುವುದು ಒಂದು ಕಡೆ ಮತಾಂಧತೆಯ ಅಮಲು ಹತ್ತಿರುವ ಹಿಂದೂಗಳ ಮತಗಳನ್ನು; ಮತ್ತೊಂದೆಡೆ ಅಭಿವೃದ್ಧಿ ಮಾದರಿಯನ್ನು ಮುಂದಿಟ್ಟುಕೊಂಡು ಮಧ್ಯಮವರ್ಗದ ಮತಗಳನ್ನು. ಇದಲ್ಲದೆ ಮಾಧ್ಯಮಗಳು ಸೃಷ್ಟಿಸುವ ಭ್ರಮಾಲೋಕದಲ್ಲಿ, ಜಾಲತಾಣಗಳಲ್ಲಿ ವಿಹರಿಸುತ್ತ ತಮಗೆ Modiಅನುಕೂಲವೆನಿಸುವ ಸತ್ಯಗಳನ್ನು ಅನುಮೋದಿಸುವ ವಿದ್ಯಾವಂತರೆನಿಸಿಕೊಂಡ ಅಕ್ಷರಸ್ಥರ ಮತಗಳನ್ನು ಸೆಳೆಯಲು ಇತ್ತೀಚಿನ ದಿನಗಳಲ್ಲಿ ಮೋದಿಯನ್ನು ‘ಸೆಕ್ಯುಲರ್’, ‘ಭ್ರಷ್ಟಾಚಾರ ವಿರೋಧಿ’ ಎಂದು ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ.

ಆದರೆ ಕನಿಷ್ಠ ವಿವೇಚನಾಶಕ್ತಿಯಿಂದ ನೈಜ ಸ್ಥಿತಿಯನ್ನು ವಸ್ತುನಿಷ್ಠವಾಗಿ ನೋಡುವ ಮನಸ್ಸಿದ್ದರೆ ಸಾಕು ಮತಾಂಧತೆಯಿಂದ ಜನಮಾನಸವನ್ನು ವಿಷಮಯವಾಗಿಸುವ, ದೇಶವನ್ನು ಧರ್ಮದ ಹೆಸರಿನಲ್ಲಿ ಒಡೆಯುವ ‘ದೇಶಭಕ್ತ’ ಭಾಜಪವನ್ನು; ‘ಭಾರತೀಯ ಸಂಸ್ಕೃತಿ’ ಎಂಬ ಮಾಯಾಜಿಂಕೆಯನ್ನು ತೋರಿ ಬಹುಸಂಸ್ಕೃತಿಯನ್ನು ಅಳಿಸಿ ಶ್ರೇಣೀಕೃತ ಜಾತಿವ್ಯವಸ್ಥೆಯನ್ನು ಮರುಸ್ಥಾಪಿಸಬಯಸುವಂತ ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವಹಿಂದೂಪರಿಷತ್‌ಗಳನ್ನು; ಮತ್ತು ಭಾರತದ ಸಂವಿಧಾನ ಕಾನೂನುಗಳ ಬಗ್ಗೆ ಯಾವುದೇ ಗೌರವವಿರದೆ ಉಳ್ಳವರ ಸೇವೆಗಾಗಿ ಇಡೀ ವ್ಯವಸ್ಥೆಯನ್ನು ಬಗ್ಗಿಸಲು ಹಿಂಜರಿಯದ ಭಾಜಪದ ಉತ್ಸವಮೂರ್ತಿ ಮೋದಿಯನ್ನು ಖಡಾಖಂಡಿತವಾಗಿ ನಿರಾಕರಿಸಲೇಬೇಕಾದ ಅನಿವಾರ್ಯತೆ ಏಕಿದೆ ಎಂದು ತಿಳಿಯುತ್ತದೆ.

ಗುಜರಾತ್ ಅಭಿವೃದ್ಧಿ ಎಂಬ ಭ್ರಮೆ

ಒಂದು ದೇಶ/ ರಾಜ್ಯದ ಒಟ್ಟಾರೆ ಆದಾಯ ಅಥವಾ ಸರಾಸರಿ ತಲಾವಾರು ಆದಾಯ ಹೆಚ್ಚಾಗುವುದನ್ನು Poverty_4C_--621x414ಆರ್ಥಿಕ ಬೆಳವಣಿಗೆ (economic growth) ಎಂದೂ, ಹಾಗೆ ಹೆಚ್ಚಾಗುವ ಆದಾಯ ಹೆಚ್ಚು ಸಮಾನವಾಗಿ ಹಂಚಿಕೆಯಾಗಿ ಉಳ್ಳವರ ಮತ್ತು ಬಡವರ ನಡುವಣ ಅಂತರವನ್ನು ಕಡಿಮೆಮಾಡಿದರೆ ಅದನ್ನು ಆರ್ಥಿಕ ಅಭಿವೃದ್ಧಿ (economic development) ಎಂದೂ ಗುರುತಿಸಬಹುದು. ಹೀಗೆ ಸಮಾನವಾಗಿ ಹಂಚಿಕೆಯಾದ ಆದಾಯವು ಜನರ ಜೀವನ ಮಟ್ಟವನ್ನು ಉತ್ತಮಗೊಳಿಸುವುದನ್ನು ಮಾನವ ಅಭಿವೃದ್ಧಿ ಸೂಚ್ಯಂಕ (HDI) ಸೂಚಿಸುತ್ತದೆ. ಮೋದಿ ಆಳ್ವಿಕೆಯಲ್ಲಿ ‘HDI’ ನ ಬಹುತೇಕ ಎಲ್ಲ ಸೂಚಕಗಳೂ ಹಿಮ್ಮುಖ ಚಲನೆಯನ್ನೇ ತೋರುತ್ತವೆ. ಮೋದಿ ಮತ್ತು ಭಾಜಪ ಹೇಳಿಕೊಳ್ಳುವಂತೆ ಗುಜರಾತ್ ಹೊಳೆಯುತ್ತಲೂ ಇಲ್ಲ, ಅಭಿವೃದ್ಧಿಯ ಮುಂಚೂಣಿಯಲ್ಲೂ ಇಲ್ಲ.

  • ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಗುಜರಾತಿಗೆ ದೇಶದಲ್ಲಿ 11 ನೇ ಸ್ಥಾನ.
  • 2004-10 ರ ನಡುವಣ ಶೇಕಡವಾರು ಬಡತನ ನಿವಾರಣೆಯಲ್ಲಿ ಗುಜರಾತ್ ಕೊನೆಯ ಸ್ಥಾನದಲ್ಲಿದೆ. (8.6%).
  • 1990-95 ರ ನಡುವೆ ರಾಜ್ಯದ ಒಟ್ಟಾರೆ ವೆಚ್ಚದ 4.25 %ರಷ್ಟಿದ್ದ ಸಾರ್ವಜನಿಕ ಆರೋಗ್ಯದ ಮೇಲಣ ಖರ್ಚು 2005-10 ರ ನಡುವೆ ಕೇವಲ 0.77 %ಕ್ಕೆ ಇಳಿದಿದೆ.
  • ಕಳೆದ ಹತ್ತು ವರ್ಷಗಳಲ್ಲಿ ರೈತರಿಗೆ ವಿದ್ಯುತ್ ಲಭ್ಯತೆ ದಿನಂಪ್ರತಿ 10 ರಿಂದ 6 ಗಂಟೆಗಳಿಗೆ ಇಳಿದಿದೆ.
  • ಕಳೆದ ಹನ್ನೆರಡು ವರ್ಷಗಳಲ್ಲಿ ಔದ್ಯೋಗಿಕ ಬೆಳವಣಿಗೆ ದರ ಶೂನ್ಯದಲ್ಲಿ ನಿಂತಿದೆ.
  • ಗುಜರಾತಿನಲ್ಲಿ ಕೇವಲ 16.7 % ಜನರಿಗೆ ಸಾರ್ವಜನಿಕ ಕೊಳಾಯಿಯ ಮೂಲಕ ಸಂಸ್ಕರಿಸಿದ ನೀರು ಪೂರೈಸಲಾಗುತ್ತಿದೆ.
  • ಇಲ್ಲಿನ 47% ಕ್ಕೂ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ (ಇದು ಆಫ್ರಿಕಾದ ಅತೀ ಬಡ ರಾಷ್ಟ್ರಗಳ ಸರಾಸರಿಯನ್ನು ಮೀರಿಸಿದೆ).
  • ಶಿಶುಮರಣ ಅನುಪಾತ ಕಡಿತಗೊಳಿಸುವಲ್ಲಿ ಗುಜರಾತ್ ಹನ್ನೊಂದನೆ ಸ್ಥಾನದಲ್ಲಿದೆ.
  • ಇಲ್ಲಿ ಕೇವಲ 45% ರಷ್ಟು ಮಕ್ಕಳಿಗೆ ಜೀವರಕ್ಷಕ ಲಸಿಕೆಗಳನ್ನು ಕೊಡಲಾಗುತ್ತದೆ. ಗುಜರಾತಿಗೆ ಇದರಲ್ಲಿ 19 ನೇ ಸ್ಥಾನ.
  • ದೇಶದಲ್ಲಿ ನಾಲ್ಕನೇ ಅತಿಹೆಚ್ಚು ಬಾಲ್ಯವಿವಾಹಗಳು ನಡೆಯುವುದು ಗುಜರಾತಿನಲ್ಲಿ.
  • ಗುಜರಾತಿನಲ್ಲಿ ಶಾಲೆ ಬಿಡುವ ಮಕ್ಕಳ ಅನುಪಾತ 59%. ಮಕ್ಕಳು ಶಾಲೆ ಬಿಡುವುದನ್ನು ತಡೆಯುವ ನಿಟ್ಟಿನಲ್ಲಿ ಗುಜರಾತ್ 18 ನೇ ಸ್ಥಾನದಲ್ಲಿದೆ.
  • ಹೆಣ್ಣು-ಗಂಡು ಮಕ್ಕಳ ಅನುಪಾತದ ಅನುಸಾರ ಗುಜರಾತ್‌ಗೆ 24 ನೇ ಸ್ಥಾನ.
  • ಸಾಕ್ಷರತೆಯ ಸಾಧನೆಯಲ್ಲಿ ಗುಜರಾತ್ 12 ನೇ ಸ್ಥಾನದಲ್ಲಿದೆ.
  • ಯೋಜಿತ ಕಾರ್ಯಕ್ರಮಗಳ (ವಿಶೇಷವಾಗಿ ಅಭಿವೃದ್ಧಿ-ಬಡತನ ನಿರ್ಮೂಲನ ಕಾರ್ಯಕ್ರಮಗಳು) ಅನುಷ್ಟಾನದ ಅನುಪಾತ 73% ರಿಂದ (2003) 13% ಕ್ಕೆ (2011) ಕುಸಿದಿದೆ.
  • ಗುಜರಾತಿನ 28.2% ರಷ್ಟು ಪುರುಷರು ಮತ್ತು 32,3 %ರಷ್ಟು ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.
  • ಮೂಲಸೌಕರ್ಯದ ಅಭಿವೃದ್ಧಿಯಲ್ಲಿ ಮೋದಿಯ ಗುಜರಾತ್ ದೇಶಕ್ಕೆ ಮಾದರಿ ಉತ್ತರಾಖಂಡದ ಪ್ರವಾಹಕ್ಕೆ ಸಿಲುಕಿದ್ದ 15,000 ಜನರನ್ನು ಮೋದಿ ಒಂದೇ ದಿನದಲ್ಲಿ ರಕ್ಷಿಸಿದರು ಎಂಬೆಲ್ಲ ಸುಳ್ಳುಗಳು ಸರಾಗವಾಗಿ ಹರಿದಾಡುತ್ತಿರುವಾಗಲೇ ರಾತ್ರಿಯಿಡೀ ಸುರಿದ ಮಳೆಗೆ ಅಹiದಾಬಾದ್ ನಗರ ನೀರಿನಲ್ಲಿ ಮುಳುಗಿದ್ದ ಚಿತ್ರಗಳು (ಸೆಪ್ಟಂಬರ್ 25) ಜಾಲತಾಣದಲ್ಲಿ ಹರಿದಾಡುತ್ತಿತ್ತು.

ಭೂಸುಧಾರಣೆಯಲ್ಲ, ಇದು ಭೂ ಕಬಳಿಕೆ

ಗುಜರಾತ್ ಅಭಿವೃದ್ಧಿ ಪ್ರಾಧಿಕಾರ (GIDC) ೮೦ರ ದಶಕದಲ್ಲಿ ಮುಖ್ಯವಾಗಿ ಎರಡು ಉದ್ದೇಶಗಳಿಗಾಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಿತ್ತು. (1) ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ಧಿಗಾಗಿ ಭೂಮಿ ಒದಗಿಸುವುದು. (2) ಹೆಚ್ಚುವರಿ ಭೂಮಿಯನ್ನು ಭೂರಹಿತರಿಗೆ ವಿತರಿಸುವುದು. GIDC ವತಿಯಿಂದ ಪ್ರಾರಂಭವಾದ 262 ಕೈಗಾರಿಕಾ ಪ್ರದೇಶಗಳಲ್ಲಿ ಈಗ ಚಾಲ್ತಿಯಲ್ಲಿರುವುದು 182. ಅದೂ ಸಹ ದೊಡ್ಡ ಕೈಗಾರಿಕೆಗಳ/ಉದ್ದಿಮೆದಾರರ ಕೈ ಕೆಳಗೆ. ಸಾರ್ವಜನಿಕ ಉದ್ದೇಶಗಳಿಗಾಗಿ ಎಂದು ವಶಪಡಿಸಿಕೊಂಡ ರೈತರ ಭೂಮಿಯನ್ನು ಈಗ ಅಕ್ರಮವಾಗಿ ಖಾಸಗಿ ಉದ್ದಿಮೆದಾರರಿಗೆ ಮಾರುಕಟ್ಟೆದರದಲ್ಲಿ ಮಾರಿ ಲಾಭಗಳಿಸುತ್ತಿರುವುದು. ಅಂದು ಭೂಮಿ ಕಳೆದುಕೊಂಡ ರೈತರಿಗೆ ಎಸಗುತ್ತಿರುವ ದ್ರೋಹ.

ಗೋಮಾಳದ ಭೂಮಿಯನ್ನು ವಶಪಡಿಸಿಕೊಳ್ಳುವಾಗಲೂ ಮೋದಿ ಸರ್ಕಾರ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದೆ. ಗೋಮಾಳಗಳು ಗ್ರಾಮಸಭೆ/ಪಂಚಾಯ್ತಿಗಳ ಒಡೆತನದಲ್ಲಿದ್ದು ಅವುಗಳನ್ನು ಅತೀ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಮಾರುಕಟ್ಟೆಯ ದರಕ್ಕಿಂತ 30% ಹೆಚ್ಚಿನ ಬೆಲೆ ಕೊಟ್ಟು ಸರ್ಕಾರ ವಶಪಡಿಸಿಕೊಳ್ಳಬಹುದು. ಗುಜರಾತಿನಲ್ಲಿ ಹಳ್ಳಿಗಳ ಭೂರಹಿತರ (ಸಾಮಾನ್ಯವಾಗಿ ದಲಿತರು ಮತ್ತು ಮುಸ್ಲಿಂರು) ಆರ್ಥಿಕತೆ ಬಹುತೇಕ ಈ ಗೋಮಾಳಗಳನ್ನು ಅವಲಂಭಿಸಿದೆ. ಆದಾಗ್ಯೂ ಗ್ರಾಮಸಭೆ/ಪಂಚಾಯಿತಿಯ ಅನುಮತಿ ಪಡೆಯದೆಯೆ ಸಾಕಷ್ಟು ಗೋಮಾಳದ ಜಾಗವನ್ನು ಖಾಸಗಿ ಕೈಗಾರಿಕೆಗಳಿಗೆ ನೀಡಲು/SEZ ಗಳಿಗಾಗಿ ವಶಪಡಿಸಿಕೊಳ್ಳಲಾಗಿದೆ. Reliance-Gujarathಹಾಗೆ ವಶಪಡಿಸಿಕೊಳ್ಳುವಾಗ ಅವುಗಳ ಮಾರುಕಟ್ಟೆ ದರವನ್ನು ಬಹಳ ಕಡಿಮೆಯಾಗಿ ನಮೂದಿಸಲಾಗಿದೆ.

ಭಾವ್‌ನಗರದ ಮಹುವ ಕಡಲತೀರದ ಭೂಮಿಯನ್ನು ಕೃಷಿಯೋಗ್ಯವಲ್ಲದ ಜೌಳುಭೂಮಿಯೆಂದು ವರ್ಗೀಕರಿಸಿ ನಿರ್ಮಾ ವಿಶೇಷ ಆರ್ಥಿಕ ವಲಯದ ಸ್ಥಾಪನೆಗಾಗಿ ಮಂಜೂರು ಮಾಡಲಾಗಿದೆ. ಆದರೆ ಇದು ಗುಜರಾತಿನ ಅತ್ಯಂತ ಫಲವತ್ತಾದ ಭೂಪ್ರದೇಶಗಳಲ್ಲೊಂದು. ಮಹಾರಾಷ್ಟ್ರದ ನಾಸಿಕ್‌ನ ನಂತರ ಭಾರತದ ಎರಡನೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಪ್ರದೇಶ ಈ ಮಹುವ. ಗುಜರಾತಿನ ಬಹುತೇಕ ಕಡಲತೀರ ಸುಣ್ಣದ ಕಲ್ಲಿನಿಂದ ಆವೃತ್ತವಾಗಿದ್ದು ಇದು ಸಮುದ್ರದ ನೀರಿನಿಂದ ಉಪ್ಪನ್ನು ಹೀರಿ ತೀರಕ್ಕೆ ಹೊಂದಿಕೊಂಡ ಸುಮಾರು 50 ಕಿ.ಮೀ. ಪ್ರದೇಶಕ್ಕೆ ಶುದ್ಧ ಸಿಹಿ ನೀರನ್ನು ಬಿಡುಗಡೆ ಮಾಡುತ್ತದೆ. ಇದರಿಂದ ತೀರ ಪ್ರದೇಶದ ರೈತರು ವರ್ಷದಲ್ಲಿ ಮೂರು ಬೆಳೆ ತೆಗೆಯುವಷ್ಟು ಈ ಭೂಮಿ ಫಲವತ್ತಾಗಿದೆ. ನಿರ್ಮಾದ ಲೆಕ್ಕಾಚಾರವೇ ಬೇರೆ. ಇಲ್ಲಿ ಸಿಮೆಂಟ್ ಕಾರ್ಖಾನೆ ಸ್ಥಾಪಿಸಿದರೆ ಈ ಸುಣ್ಣದ ಕಲ್ಲುಗಳನ್ನು ಒಡೆದು ಸಿಮೆಂಟ್ ತಯಾರಿಸಿ ಇಲ್ಲೇ ಅಭಿವೃದ್ಧಿ ಪಡಿಸುವ ಬಂದರಿನ ಮೂಲಕ ಸಾಗಿಸಬಹುದಾದ್ದರಿಂದ ಸಾಗಾಣಿಕಾ ವೆಚ್ಚವೂ ಉಳಿಯಿತು. ಅಲ್ಲಿಗೆ ಫಲವತ್ತಾದ ಈ ಭೂಮಿ ನಿಜಕ್ಕೂ ಜೌಳು ಭೂಮಿಯೇ ಆಗುವುದಲ್ಲ! ಈ SEZ ಸ್ಥಾಪಿಸಿದರೆ ತೀರ ಪ್ರದೇಶದ ರೈತರು ಮಾತ್ರವಲ್ಲದೆ ಮೀನುಗಾರರು ಸೇರಿದಂತೆ ಸುಮಾರು 15,000 ಜನರ ಆರ್ಥಿಕತೆಗೆ ಕುತ್ತು ಬರುತ್ತದೆ. ಆದರೆ ಮೋದಿ ಸರ್ಕಾರ ನಿರ್ಮಾಕ್ಕೆ ಜಮೀನು ಮಂಜೂರು ಮಾಡಲು ನೀಡಿರುವ ಕಾರಣ ‘ಇದರಿಂದ ಸುಮಾರು 416 ಜನರಿಗೆ ಉದ್ಯೋಗಾವಕಾಶ ದೊರೆಯುವುದು’ ಎಂದು!

ಕಛ್‌ನ ಮುಂದ್ರಾದಲ್ಲಿ ಅದಾನಿ ಸಮೂಹ ಸಂಸ್ಥೆಗೆ ಬಂದರು ಮತ್ತು ವಿಶೇಷ ವ್ಯಾಪಾರ ವಲಯ ಸ್ಥಾಪನೆಗಾಗಿ ಅರಣ್ಯಹಕ್ಕು ಕಾಯ್ದೆ (2008) ಯನ್ನು ಧಿಕ್ಕರಿಸಿ 56 ಮೀನುಗಾರಿಕಾ ಗ್ರಾಮಗಳನ್ನು, 126 ಠರಾವಣೆಗಳನ್ನು ಈಗಾಗಲೇ ಒಕ್ಕಲೆಬ್ಬಿಸಲಾಗಿದೆ. ಇದು ಮೀನುಗಾರರ ಸಮುದ್ರದ ಮೇಲಣ ಸಹಜ ಹಕ್ಕನ್ನು ಕಸಿದುಕೊಳ್ಳುವುದು ಮಾತ್ರವಲ್ಲದೆ ಅರಣ್ಯ ಉತ್ಪನ್ನಗಳ ಅವಲಂಬಿತರ, ದನಗಾಹಿಗಳ ಹಾಗೂ ತೀರ ಪ್ರದೇಶದ ರೈತರ ಜೀವನಾಧಾರವನ್ನೇ ಕಸಿಯುತ್ತವೆ. ಒಟ್ಟಾರೆಯಾಗಿ ಮೋದಿಯ ಈ ಮಾದರಿ ಗ್ರಾಮೀಣ ಆರ್ಥಿಕತೆಯ ಮೇಲೆ ಗದಾಪ್ರಹಾರ.

ಅದಾನಿ ಸಂಸ್ಥೆಗೆ ಈಗಾಗಲೇ ಪ್ರತಿ ಚ.ಮೀ.ಗೆ ರೂ.1 – ರೂ.32 ರಂತೆ (ಮಾರುಕಟ್ಟೆ ಬೆಲೆ ರೂ.1500) 5 ಕೋಟಿ ಚ.ಮೀ. ಕಡಲ ತೀರದ ಭೂಮಿಯನ್ನು ಮಂಜೂರು ಮಾಡಲಾಗಿದೆ. ಬಂದರು ಅಭಿವೃದ್ಧಿ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ಪಡೆದ ಈ ಭೂಮಿಯ ಸಾಕಷ್ಟು ಭಾಗವನ್ನು ಅದಾನಿ ಸಂಸ್ಥೆ ಬೇರೆ ಕಾರ್ಪೊರೆಟ್ ಸಂಸ್ಥೆಗಳಿಗೆ ಮಾರಿದೆ/ಭೋಗ್ಯಕ್ಕೆ ನೀಡಿದೆ. ಇದು ಸರ್ಕಾರದೊಂದಿಗಿನ ಖರೀದಿ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ.

ಹಾಜೀರಾ ಪ್ರದೇಶದಲ್ಲಿ ಪ್ರತಿ ಚ.ಮೀ.ಗೆ ಜಿಲ್ಲಾ ಭೂಮೌಲ್ಯಮಾಪನ ಸಮಿತಿ (DLVC) ರೂ.1000 – ರೂ.1050 ಎಂದೂ ರಾಜ್ಯ ಭೂಮೌಲ್ಯಮಾಪನ ಸಮಿತಿ (SLVC) ರೂ.2020 ಎಂದೂ ಬೆಲೆ ನಿಗದಿ ಮಾಡಿದ್ದರೂ L&T ಸಂಸ್ಥೆಗೆ ರೂ.700/ ಚ.ಮೀ.ಯಂತೆ 8.53 ಲಕ್ಷ ಚದುರ ಕಿಮೀ ಭೂಮಿಯನ್ನು ಹಸ್ತಾಂತರಿಸುವ ನಿರ್ಧಾರವನ್ನು ಮೋದಿಯ ಸಂಪುಟ (2008) ಅನುಮೋದಿಸಿತು. ಇದರಿಂದ ಉತ್ತೇಜನಗೊಂಡು 2009 ರಲ್ಲಿ ಯೋಜನೆಯ ವಿಸ್ತರಣೆಗಾಗಿ ಇನ್ನೂ 12.14 ಲಕ್ಷ ಚ.ಮೀ. ಭೂಮಿಗಾಗಿ L&T ಸಂಸ್ಥೆ ಕೋರಿಕೆ ಸಲ್ಲಿಸಿತು. ಈ ಬಾರಿ DVLC ನಿಗದಿಪಡಿಸಿದ ಬೆಲೆ ರೂ.2400-ರೂ.2800. ಆಗಲೂ ಮೋದಿಯ ಸಂಪುಟ ಹಳೆಯ ದರದಲ್ಲೇ 5.8 ಲಕ್ಷ ಚ.ಮೀ. ಭೂಮಿಯನ್ನು L&T ಸಂಸ್ಥೆಗೆ ನೀಡಿತು. ಇದರಿಂದ ಸರ್ಕಾರಕ್ಕಾದ ನಷ್ಟ ರೂ.128.71 ಕೋಟಿ. ಇದು ಇಲ್ಲಿಗೇ ನಿಲ್ಲದೆ ಹಾಜಿರಾದಲ್ಲಿ ಅಕ್ರಮವಾಗಿ ಸರ್ಕಾರಿ ಭೂಮಿಯನ್ನು ಆವರಿಸಿಕೊಂಡಿದ್ದ ಎಸ್ಸಾರ್ ಸ್ಟೀಲ್ ಅದನ್ನು ಸಕ್ರಮಗೊಳಿಸಿಕೊಳ್ಳಲು ಅರ್ಜಿ ಹಾಕಿದಾಗ ಇದೇ ರಿಯಾಯಿತಿ ದರದಲ್ಲಿ ಅದನ್ನು ಸಕ್ರಮಗೊಳಿಸಿ ಸರ್ಕಾರ ರೂ.238.5 ಕೋಟಿ ನಷ್ಟಮಾಡಿಕೊಂಡಿತು.

ಮೋದಿ ಸರ್ಕಾರದ ವಿವೇಚನಾರಹಿತ (ಅಥವ ಉದ್ದೇಶಪೂರ್ವಕ) ಯೋಜನೆಗಳಿಗೆ ಮತ್ತೊಂದು ನಿದರ್ಶನ ವಾಗ್ರಾ ಮತ್ತು ಭರೂಛ್‌ನ ರೈತರ ಪರಿಸ್ಥಿತಿ. ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲೆಂದೇ ಸರ್ದಾರ್ ಸರೋವರ್ ಅಣೆಕಟ್ಟು ನಿರ್ಮಿಸಲಾಯಿತಾದರೂ ಈಗ ಇದೇ ಭಾಗದ ನರ್ಮದಾ ಅಚ್ಚುಕಟ್ಟು ಪ್ರದೇಶದ 14,977 ಹೆಕ್ಟೇರ್ ಭೂಮಿಯನ್ನು ಪೆಟ್ರೋಲಿಯಂ ಮತ್ತು ರಾಸಾಯನಿಕಗಳ ವಿಶೇಷ ಹೂಡಿಕೆ ವಲಯ ಸ್ಥಾಪನೆಗೆಂದು ವಶಪಡಿಸಿಕೊಳ್ಳಲಾಗಿದೆ. ನರ್ಮದಾ ನದಿಯ ಬಹುತೇಕ ನಾಲೆಗಳ ನೀರು ಜನರ ದಾಹವನ್ನು, ರೈತರ ಬವಣೆಯನ್ನು ತೀರಿಸುವ ಬದಲು ಬೃಹತ್ ಕೈಗಾರಿಕೆಗಳ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಉದಾ: ವಡೋದರ ಬಳಿ ಸ್ಥಾಪಿಸಲಾಗಿರುವ ರಾಸಾಯನಿಕ ಕೈಗಾರಿಕೆಗಳು ಶ್ರಮವೇ ಇಲ್ಲದೆ ನರ್ಮದಾ ನಾಲೆಯ ನೀರನ್ನು ಬಳಸಿಕೊಂಡು ನಗರದ ಸಂಸ್ಕರಿತ ಕೊಳಚೆ ನೀರನ್ನು ಒಯ್ಯುವ ನಾಲೆಗೆ ತಮ್ಮ ಸಂಸ್ಕರಿಸದ ತ್ಯಾಜ್ಯ ನೀರನ್ನು ಸುರಿಯುತ್ತದೆ. ಇದು ಮಾಹಿ ನದಿಯನ್ನು ಸೇರುತ್ತದೆ. ಗುಜರಾತ್ ಮಾಲಿನ್ಯ ನಿಯಂತ್ರಣ ಮಂಡಳಿಯ ಯಾವ ಕಾನೂನೂ ಇವರನ್ನು ಅಲುಗಿಸಲಾರದು. ದೇಶದ ಅತಿ ಹೆಚ್ಚು ಮಲಿನಗೊಂಡ ೮೮ ಪ್ರದೇಶಗಳ ಪೈಕಿ 8 ಗುಜರಾತಿಗೆ ಸೇರಿರುವುದು ಸಹಜವೇ ಆಗಿದೆ. ಗುಜರಾತಿನ ವಾಪಿ ಮತ್ತು ಅಂಕಲೇಶ್ವರ ನಗರಗಳು ಈ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದುಕೊಂಡಿವೆ.

ಸರ್ಕಾರಿ ಉದ್ದಿಮೆಗಳ ಅವನತಿ ಮತ್ತು ಖಾಸಗಿ ಉದ್ದಿಮೆದಾರರ ಪರಿಚಾರಿಕೆ

ಮೋದಿ ಮತ್ತವರ ಪ್ರಚಾರಕರು ಗುಜರಾತಿನಲ್ಲಿ ಸರ್ಕಾರಿ ಉದ್ದಿಮೆಗಳಿಗೆ ವೃತ್ತಿಪರತೆ ತಂದಿರುವುದಾಗಿ ಸಾರುತ್ತಿದ್ದರೂ ಸಿಎಜಿಯ ಇತ್ತೀಚಿನ ಮೂರು ವರದಿಗಳು ಬೇರೆಯದೇ ಕಥೆ ಹೇಳುತ್ತವೆ. ಇದರ ಪ್ರಕಾರ ಗುಜರಾತಿನ ಸರ್ಕಾರಿ ಉದ್ದಿಮೆಗಳು ಅನುಭವಿಸಿದ ರೂ.4052.37 ಕೋಟಿ ನಷ್ಟವನ್ನು ಉತ್ತಮ ಆಡಳಿತ ನಿರ್ವಹಣೆ ಮತ್ತು ನಿಯಂತ್ರಿಸಬಹುದಾದ ನಷ್ಟಗಳನ್ನು ತಡೆಯುವುದರಿಂದ ತಪ್ಪಿಸಬಹುದಾಗಿತ್ತು. ಇಂತಹ ನಷ್ಟಗಳು ವರ್ಷದಿಂದ ವರ್ಷಕ್ಕೆ ಏರುತ್ತಿರುವುದನ್ನು ಈ ವರದಿಗಳು ತೋರುತ್ತವೆ. 2006-11 ರವರೆಗಿನ ಗುಜರಾತ್ ಸ್ಟೇಟ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ., (GSPCL) ಒಟ್ಟಾರೆ ಆದಾಯ 19245.39 ಕೋಟಿ. ಅದರಲ್ಲಿ ತನ್ನ ಸ್ವಂತ ಉತ್ಪಾದನೆಯ ಮಾರಾಟದಿಂದ ಬಂದ ಆದಾಯ ಕೇವಲ ರೂ.1563.63 ಕೋಟಿ (ಶೇ.8) ಮಾತ್ರ. ಉಳಿದ ಆದಾಯ ಇತರ ಖಾಸಗಿ ಉತ್ಪಾದಕರ ಉತ್ಪನ್ನಗಳ ಮಾರಾಟದಿಂದ ಬಂದದ್ದು.

ಮೋದಿ ತಾನು ಉದ್ಯಮಸ್ನೇಹಿ ಪರಿಸರ ನಿರ್ಮಿಸಿ ಗುಜರಾತನ್ನು ಅಭಿವೃದ್ಧಿ ಪರವಾಗಿಸಿರುವುದಾಗಿ ಹೇಳಿಕೊಳ್ಳುತ್ತಿದ್ದರೂ ಸಿಎಜಿ ವರದಿಗಳು ambani-modiಮೋದಿ ಸಾರ್ವಜನಿಕರ ಹಾಗೂ ಸರ್ಕಾರ ಉದ್ದಿಮೆಗಳ ಬೆಲೆ ತೆತ್ತು ಖಾಸಗಿ ಉದ್ದಿಮೆದಾರರ ಪರಿಚಾರಿಕೆ ಮಾಡುತ್ತಿರುವುದನ್ನು ನಿಚ್ಚಳವಾಗಿ ತೋರಿಸುತ್ತದೆ. GSPCL ಹಾಗೂ ರಿಲೆಯನ್ಸ್ ಇಂಡಸ್ಟ್ರೀಸ್ ಲಿ., ನಡುವಣ ಒಪ್ಪಂದದ ಪ್ರಕಾರ (2007) ರೂ.52.27 ಕೋಟಿ ಸಾಗಾಣಿಕಾ ವೆಚ್ಚವನ್ನು ಸಂಗ್ರಹಿಸಬೇಕಿತ್ತು. ಮತ್ತೊಂದೆಡೆ ಹಲವು ಖಾಸಗಿ ಸಂಸ್ಥೆಗಳು ಒಪ್ಪಿಕೊಂಡ ಸರಕನ್ನು ಕೊಳ್ಳದ ಕಾರಣಕ್ಕೆ ರೂ.502.19 ಕೋಟಿಯನ್ನು ಸಂಗ್ರಹಿಸಬೇಕಿತ್ತು. ಆದರೆ ಅದರ ಮೇಲಿನ ದಂಡವನ್ನೂ ಸೇರಿಸಿ ಇದನ್ನು ಮಾಫಿ ಮಾಡಲಾಗಿದೆ. (ಮುಖ್ಯ ಫಲಾನುಭವಿಗಳು ಎಸ್ಸಾರ್ ಪವರ್ ಲಿ., ಮತ್ತು ಗುಜರಾತ್ ಪಗುನಾನ್ ಎನರ್ಜಿ ಕಾರ್ಪೊರೇಷನ್ ಲಿ.,) ಇದೆಲ್ಲವನ್ನೂ ಬಿಟ್ಟುಕೊಟ್ಟು ನಷ್ಟಮಾಡಿಕೊಂಡಿದ್ದೇಕೆ ಎಂಬ ಸಿಎಜಿ ಪ್ರಶ್ನೆಗೆ ಸಮರ್ಪಕ ಉತ್ತರವೇ ಇಲ್ಲ. ಅನಿಲ ವಹಿವಾಟಿನಲ್ಲಿ (2006-09) ಕೊಂಡ ಬೆಲೆಗಿಂತ ಕಡಿಮೆ ಬೆಲೆಗೆ ಅದಾನಿ ಎನರ್ಜಿಸ್‌ಗೆ ಅನಿಲ ಮಾರಿ ರೂ.20.54 ಕೋಟಿ ನಷ್ಟ ಅನುಭವಿಸಿದ್ದು ದಾಖಲಾಗಿದೆ. ಒಪ್ಪಂದ ನಿರ್ವಹಣೆಯಲ್ಲಿನ ತಪ್ಪಿನಿಂದ ಎಸ್ಸಾರ್ ಆಯಿಲ್ ಲಿ.,ಗೆ ಆದ ಲಾಭ ಅಥವಾ GSPCL ಗೆ ಆದ ನಷ್ಟ 106.71 ಕೋಟಿ. ಈ ರೀತಿ ಸರ್ಕಾರಿ ಉದ್ದಿಮೆಗಳ ಉತ್ಪಾದನಾ ಚಟುವಟಿಕೆಗಳನ್ನು ಕುಗ್ಗಿಸುವುದು ಹೀಗೆ ಕಣ್ಣು ಮುಚ್ಚಿಕೊಂಡು ನಷ್ಟ ಹೆಚ್ಚಾಗುವಂತೆ ನೋಡಿಕೊಳ್ಳುವುದು, ಮುಂದೊಂದು ದಿನ ನಿರಂತರ ನಷ್ಟದ ನೆಪ ಒಡ್ಡಿ ಇಂತಹ ಉದ್ದಿಮೆಗಳನ್ನು ಖಾಸಗೀಕರಣಕ್ಕೆ ತೆರೆದಿಡುವುದು ಇವೆಲ್ಲ ಕಣ್ಣಮುಂದಿನ ತೆರೆದ ರಹಸ್ಯಗಳು.

ಮೋದಿ ಸರ್ಕಾರದ ಇಷ್ಟೆಲ್ಲ ಹಗರಣಗಳನ್ನು ಮಾಧ್ಯಮಗಳು ಜಾಣಕುರುಡಿನಿಂದ ನಿರ್ಲಕ್ಷಿಸುತ್ತ ಮೋದಿ ಕುರಿತಾದ ಕ್ಷುಲ್ಲಕ ವಿಷಯಗಳನ್ನು ದೊಡ್ಡ ವಿಷಯವೆಂಬಂತೆ ಬಿಂಬಿಸುತ್ತ ಆತ ನಿರಂತರ ಪ್ರಚಾರದಲ್ಲಿರುವಂತೆ ನೋಡಿಕೊಳ್ಳುತ್ತಿವೆ. ಈ ರೀತಿ ಮಾಧ್ಯಮಗಳ ನೈತಿಕ ಪ್ರಜ್ಞೆಯನ್ನು ಮಂಕಾಗಿಸಿರುವುದು ಮೋದಿ ಸರ್ಕಾರದ ಕಾರ್ಪೋರೇಟ್ ಫಲಾನುಭವಿಗಳ ಹಣ ಮತ್ತು ಸನಾತನಿಗಳ ಮನಸ್ಸು.

“ಸಿಎಜಿ ವರದಿಯಲ್ಲಿನ ಉಲ್ಲೇಖಗಳು ಭ್ರಷ್ಟಾಚಾರವಲ್ಲ ಕೇವಲ ಆಡಳಿತಾತ್ಮಕ ತಪ್ಪುಗಳು. ಅವನ್ನು ಸರಿಪಡಿಸಿಕೊಳ್ಳಲಾಗುವುದು,” ಎಂಬುದು ಮೋದಿ ಸರ್ಕಾರದ ಪ್ರತಿಕ್ರಿಯೆ. ಸಿಎಜಿ ವರದಿಯನ್ನೇ ಆಧರಿಸಿದ 2ಜಿ ಹಗರಣ, ಕಲ್ಲಿದ್ದಲು ಗಣಿ ಹಂಚಿಕೆ ಹಗರಣಗಳಲ್ಲಿನ ಕಾಂಗ್ರೆಸ್ಸಿನ ಭ್ರಷ್ಟಾಚಾರವನ್ನು ಚುನಾವಣಾ ವಿಷಯವನ್ನಾಗಿಸಿಕೊಂಡ ಭಾಜಪ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಇದೇ ಮೋದಿಯನ್ನು ಅನುಮೋದಿಸಬೇಕೆನ್ನುತ್ತದೆ!

ಭ್ರಷ್ಟಾಚಾರ ವಿರೋಧಿ ಮುಖವಾಡ

ಸಿಎಜಿ ವರದಿಯಲ್ಲಿ ಬಯಲಾದ ಭ್ರಷ್ಟಾಚಾರಗಳು ಒತ್ತೊಟ್ಟಿಗಿರಲಿ, ಮೋದಿಯ ಭ್ರಷ್ಟಾಚಾರ ವಿರೋಧಿ ಮುಖವಾಡವನ್ನು ಕಿತ್ತೊಗೆಯಲು ಭ್ರಷ್ಟಾಚಾರ ನಿಯಂತ್ರಣಕ್ಕಾಗಿಯೇ ಇರುವ ಸ್ವಾಯತ್ತ ಸಂಸ್ಥೆ ಲೋಕಾಯುಕ್ತವನ್ನು ಈತ ನಿಯಂತ್ರಿಸಲು ಹೊರಟಿರುವ ರೀತಿಯೇ ಸಾಕು. 2004 ರಿಂದಲೂ ಗುಜರಾತಿನಲ್ಲಿ ಲೋಕಾಯುಕ್ತರ ಹುದ್ದೆ ಖಾಲಿ ಇದೆ. ಲೋಕಾಯುಕ್ತರ ನೇಮಕಾತಿ ವಿಚಾರದಲ್ಲಿ ಸರ್ಕಾರದ ವಿಳಂಬ ಧೋರಣೆಯನ್ನು ವಿರೋಧಿಸಿ ರಾಜ್ಯಪಾಲೆ ಕಮಲಾ ಬಿನಿವಾಲ್ ಸಂಪುಟ Narendra_Modiಮತ್ತು ಮುಖ್ಯಮಂತ್ರಿ ಮೋದಿಯನ್ನು ಕಡೆಗಣಿಸಿ 2011ರಲ್ಲಿ ನಿವೃತ್ತ ನ್ಯಾ.ವಿ.ಆರ್.ಮೆಹ್ತಾರನ್ನು ಈ ಹುದ್ದೆಗೆ ನೇಮಕಮಾಡಿದರು. ಇದನ್ನು ವಿರೋಧಿಸಿ ಮೋದಿ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತು. ಹೈಕೋರ್ಟ್‌ನಲ್ಲಿ ನಂತರ ಸುಪ್ರೀಂ ಕೋರ್ಟ್‌ನಲ್ಲಿಯೂ ಲೋಕಾಯುಕ್ತರ ನೇಮಕಾತಿ ಊರ್ಜಿತವಾಯಿತು (ಖಟ್ಲೆ ಖರ್ಚಿಗಾಗಿ ಮೋದಿ ಸರ್ಕಾರ ವ್ಯಯಿಸಿದ ಸಾರ್ವಜನಿಕರ ಹಣ ರೂ.45 ಕೋಟಿ). ಆದರೆ ನ್ಯಾ.ವಿ.ಆರ್.ಮೆಹ್ತಾ ಆ ಹುದ್ದೆಯ ಘನತೆಯನ್ನು ಕಾಪಾಡಲಾಗದ ಸರ್ಕಾರದಲ್ಲಿ ಲೋಕಾಯುಕ್ತರಾಗಿ ಕಾರ್ಯನಿರ್ವಹಿಸಲು ನಿರಾಕರಿಸಿದರು.

ಇಷ್ಟೆಲ್ಲ ಆದಮೇಲೂ ಮೋದಿ ಮಾಡಿದ್ದು ಬಲಿಷ್ಠ ಲೋಕಾಯುಕ್ತವನ್ನು ಸಹಿಸಲಾಗದ ಭ್ರಷ್ಟ ಸರ್ಕಾರ ಅಥವಾ ಅಹಂ ಪೆಟ್ಟಾದ್ದನ್ನು ಸಹಿಸಲಾಗದ ಸರ್ವಾಧಿಕಾರಿ ಮಾಡುವಂತದ್ದನ್ನೇ. 1986 ರ ಲೋಕಾಯುಕ್ತ ಕಾಯ್ದೆಗೆ ಬದಲಾವಣೆ ತಂದು ಲೋಕಾಯುಕ್ತರ ನೇಮಕಾತಿಯಲ್ಲಿ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ರಾಜ್ಯಪಾಲರ ಪಾತ್ರವನ್ನು ಗೌಣವಾಗಿಸಿ ಅದನ್ನು ಮುಖ್ಯಮಂತ್ರಿಯ ಕೆಳಗೆ ತರಲಾಗಿದೆ. ಅಷ್ಟೇ ಅಲ್ಲದೆ ಹೊಸ ಕಾಯ್ದೆಯ ಪ್ರಕಾರ ಸರ್ಕಾರ ಬಯಸಿದಲ್ಲಿ ಯಾವುದೇ ಸರ್ಕಾರಿ ಯಂತ್ರವನ್ನು ಲೋಕಾಯುಕ್ತ ವ್ಯಾಪ್ತಿಯಿಂದ ಹೊರಗಿಡಬಹುದಾಗಿದೆ. ಈ ಕಾಯ್ದೆಗೆ ಸದನದ ಅನುಮೋದನೆ ದೊರೆತರೂ ರಾಜ್ಯಪಾಲರ ಸಹಿಗಾಗಿ ಇನ್ನೂ ಕಾಯುತ್ತಿದೆ. (ಇದೇ ಮೋದಿ ಕೇಂದ್ರದಲ್ಲಿ ತಾನು ಅಣ್ಣಾ ಹಜಾರೆಯ ಲೋಕಪಾಲ ಕಾಯ್ದೆಯನ್ನು ಬೆಂಬಲಿಸುವುದಾಗಿ ಹೇಳುತ್ತಾರೆ.)

ಹಳಿತಪ್ಪಿದ ಆಡಳಿತ

ಭಾಜಪ ಮೋದಿಯನ್ನು ಅತ್ಯುತ್ತಮ ಆಡಳಿತಗಾರ ಎಂದು ಹಾಡಿ ಹೊಗಳುತ್ತಿದೆ. ಆದರೆ 2008-11 ರ ನಡುವೆ ರಾಜ್ಯದ ಹೂಡಿಕೆಗಳ ಮೇಲಣ ಗಳಿಕೆ (ROI) ಕೇವಲ 0.25%. ಸರ್ಕಾರ ಈ ಅವಧಿಯಲ್ಲಿ ಪಾವತಿಸಿದ ಸಾಲದ ಮೇಲಣ ಬಡ್ಡಿ ಸರಾಸರಿ 7.67%ರಷ್ಟು. ಇದು ರಾಜ್ಯದ ಮಧ್ಯಮ ಮತ್ತು ದೀರ್ಘಕಾಲೀನ ಆರ್ಥಿಕತೆಯ ಮೇಲೆ ಋಣಾತ್ಮಕ ಪ್ರಭಾವ ಬೀರುವುದು ನಿಶ್ಚಿತ. ಸರ್ದಾರ್ ಸರೋವರ್ ಯೋಜನೆಯನ್ನು ಒಳಗೊಂಡಂತೆ ಬಹುತೇಕ ಸರ್ಕಾರಿ ಯೋಜನೆಗಳಲ್ಲಿನ ಅತಿಹೆಚ್ಚಿನ ಖರ್ಚು (55%) ಸಾಲದ ಮೇಲಣ ಬಡ್ಡಿಯೇ ಆಗಿರುವುದು ಅತ್ಯಂತ ಆತಂಕಕಾರಿ ವಿಚಾರ. ಒಂದು ಕಡೆ ಶಿಕ್ಷಣ ಆರೋಗ್ಯದಂತಹ ಮೂಲಭೂತ ಸೌಕರ್ಯಗಳಿಗೆ ಸರ್ಕಾರದ ವೆಚ್ಚ ಕಡಿಮೆಯಾಗುತ್ತಿರುವುದು, ಉತ್ಪಾದನಾ ಸಾಮರ್ಥ್ಯ ಕುಗ್ಗುತ್ತಿರುವುದು ಮತ್ತೊಂದೆಡೆ ರಾಜ್ಯದ ಮೇಲಿನ ಸಾಲ, ಬಡ್ಡಿಗಳ ಹೊರೆ ಹೆಚ್ಚಾಗುತ್ತಿರುವುದು ಗುಜರಾತಿನ ಆರ್ಥಿಕತೆ ಅವನತಿಯತ್ತ ಸಾಗುತ್ತಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ದಲಿತವಿರೋಧಿ ಧೋರಣೆ

“ನನಗೆ ಇವರು (ದಲಿತರು) ತಮ್ಮ ಕೆಲಸವನ್ನು ಕೇವಲ ಜೀವನೋಪಾಯಕ್ಕಾಗಿ ಮಾಡುತ್ತಿದ್ದಾರೆ ಅನ್ನಿಸುವುದಿಲ್ಲ. ಹಾಗಿದ್ದಲ್ಲಿ ಇವರು ತಲತಲಾಂತರದಿಂದ ಇದೇ ಕೆಲಸಗಳನ್ನು ಮಾಡಿಕೊಂಡಿರುತ್ತಿರಲಿಲ್ಲ… ಯಾವುದೋ ಒಂದು ಗಳಿಗೆಯಲ್ಲಿ ಅವರಿಗೆ ‘ಸಮಾಜದ ಹಾಗೂ ದೇವರ ಸಂತೋಷಕ್ಕಾಗಿ ದುಡಿಯುವುದು ತಮ್ಮ ಕೆಲಸ, ದೇವರು ತಮಗೆ ಕೊಟ್ಟಿರುವ ಕೆಲಸವನ್ನು ಮಾಡುವುದು ತಮ್ಮ ಕರ್ತವ್ಯ. ಶುಚಿಗೊಳಿಸುವ ಈ ಕೆಲಸ ತಮ್ಮೊಳಗಣ ಆಧ್ಯಾತ್ಮಿಕ ಕಸುವು’ ಎಂದು ಜ್ಞಾನೋದಯವಾಗಿದ್ದಿರಬೇಕು.” ಇವು ತನ್ನ ಕರ್ಮಯೋಗ ಪುಸ್ತಕದಲ್ಲಿ (2007) ಮೋದಿ ಹೇಳಿರುವ ಮಾತುಗಳು. ಇವು ಸ್ಪಷ್ಟವಾಗಿ ಮೋದಿಯ ಫ್ಯಾಸಿಸ್ಟ್, ದಲಿತವಿರೋಧಿ, ಸನಾತನವಾದಿ modi-advaniಮನಸ್ಥಿತಿಯನ್ನು ಬಿಂಬಿಸುತ್ತದೆ. ಹಾಗಾಗಿಯೇ ಆತನ ಎಲ್ಲ “ಅಭಿವೃದ್ಧಿ” ಯೋಜನೆಗಳೂ ಬಲ್ಲಿದರ ಪರವಾಗಿಯೂ ಶೋಷಿತರ, ದಲಿತರ ವಿರುದ್ಧವಾಗಿಯೂ ಇರುತ್ತವೆ.

2011 ರ ಸಿಎಜಿ ವರದಿ ಪ್ರಕಾರ ಗುಜರಾತ್ ಭೂಸ್ವಾಧೀನ ಕಾಯ್ದೆ ಅಡಿಯಲ್ಲಿ ವಶಪಡಿಸಿಕೊಂಡ ಭೂಮಿಯಲ್ಲಿ ಪರಿಶಿಷ್ಟ ಜಾತಿ/ಪಂಗಡಗಳಿಗೆ ಸೇರಿದ ಭೂರಹಿತರಿಗೆ ಹಂಚಬೇಕಿದ್ದ 15,587 ಹೆಕ್ಟೇರ್ ಹೆಚ್ಚುವರಿ ಭೂಮಿಯನ್ನು ತನ್ನಲ್ಲಿಯೇ ಉಳಿಸಿಕೊಂಡಿದ್ದಕ್ಕೆ ಸರಿಯಾದ ಕಾರಣ ಕೊಡುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. 2008-11 ರ ನಡುವೆ ನಡೆದ ಭೂಹಂಚಿಕೆಯಲ್ಲಿ ಕೇವಲ 52% ಫಲಾನುಭವಿಗಳಿಗೆ (1003 ರಲ್ಲಿ 520 ಜನರಿಗೆ) ಮಾತ್ರ ಹೆಕ್ಟೇರಿಗೆ ರೂ.5,000 ಸಹಾಯಧನ ನೀಡಲಾಗಿದೆ. ಉಳಿದವರಿಗೆ ಈ ಸೌಲಭ್ಯ ವಿಸ್ತರಿಸದಿರುವುದಕ್ಕೆ ಯಾವುದೇ ಸೂಕ್ತ ವಿವರಣೆ ಇಲ್ಲ. ಇಂತಹ ಮೋದಿಯ ಪರಿವಾರಕ್ಕೆ ಅಧಿಕಾರ ಸಿಕ್ಕರೆ ಭಾರತದ ಹಿಮ್ಮುಖ ಚಲನೆ ಬಹುವೇಗವಾಗಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಅಲ್ಪಸಂಖ್ಯಾತರು ಎರಡನೇ ದರ್ಜೆ ಪ್ರಜೆಗಳು

ಭಾರತ ಭಾರತೀಯರೆಲ್ಲರ ರಾಷ್ಟ್ರವೆಂಬ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ‘ಇದು ಬಹುಸಂಖ್ಯಾತ ಹಿಂದೂಗಳ ರಾಷ್ಟ್ರ. ಇಲ್ಲಿ ಮುಸ್ಲಿಮರಾದಿಯಾಗಿ ಇತರ ಎಲ್ಲ ಧರ್ಮೀಯರು ಇವರ ಪಾರಮ್ಯವನ್ನು ಒಪ್ಪಿ ಇವರಿಗೆ ಬಗ್ಗಿ ಭಯದ ನೆರಳಲ್ಲೇ ಬದುಕಬೇಕು’ ಎನ್ನುವ ಆರ್‌ಎಸ್‌ಎಸ್, ಭಾಜಪಾದ ಜೀವವಿರೋಧಿ ಸಿದ್ಧಾಂತ ಅಕ್ಷರಶಃ ಅನುಷ್ಟಾನಗೊಂಡಿರುವುದು ಮೋದಿ ಆಳ್ವಿಕೆಯ ಗುಜರಾತಿನಲ್ಲಿ.

ಇತ್ತೀಚಿನ ಸಾಕಷ್ಟು ಅಧ್ಯಯನಗಳು ಗುಜರಾತಿನ ಮುಸ್ಲಿಮರು ದೇಶದ ಕಡುಬಡವರ ಗುಂಪಿಗೆ ಸೇರಿರುವುದಲ್ಲದೆ ಧರ್ಮದ ಹೆಸರಿನಲ್ಲಿ ಅತ್ಯಂತ ಹೆಚ್ಚು ಪಕ್ಷಪಾತಕ್ಕೆ ಒಳಗಾದವರು ಎಂಬುದನ್ನು ಸಾಬೀತು ಪಡಿಸಿದೆ.

ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಯಾಗದಂತೆ ನೋಡಿಕೊಳ್ಳುವುದರಲ್ಲಿ ಮೋದಿ ವಿಶೇಷ ಮುತುವರ್ಜಿ ವಹಿಸುತ್ತಾರೆ. ಅಲ್ಪಸಂಖ್ಯಾತರ ಮೆಟ್ರಿಕ್ಯುಲೇಷನ್‌ಪೂರ್ವ ವಿದ್ಯಾರ್ಥಿವೇತನ ಯೋಜನೆಯಡಿ ಕೇಂದ್ರಸರ್ಕಾರ 55,000 ಮಂದಿಗೆ ವಿದ್ಯಾರ್ಥಿವೇತನವನ್ನು (ಅದರಲ್ಲಿ 53,000 ಅರ್ಹ ಮುಸ್ಲಿಂ ವಿದ್ಯಾರ್ಥಿಗಳಿದ್ದಾರೆ) ಗುಜರಾತಿಗೆ ಮಂಜೂರು ಮಾಡಿತ್ತು. ’ಇತರ ಧರ್ಮದ ವಿದ್ಯಾರ್ಥಿಗಳ ವಿರುದ್ಧ ಪಕ್ಷಪಾತ’ ಎಂಬ ಕಾರಣ ನೀಡಿ ಮೋದಿ ಸರ್ಕಾರ ಅದನ್ನು ತಡೆಹಿಡಿದಿತ್ತು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿ ಯೋಜನೆಯ ಪರವಾಗಿ ತೀರ್ಪು ಬಂದಿದೆ. ಕೇವಲ 26% ರಷ್ಟು ಗುಜರಾತಿ ಮುಸ್ಲಿಮರು ಮೆಟ್ರಿಕ್ಯುಲೇಷನ್ ಹಂತ ತಲುಪುತ್ತಾರೆ. ಶಾಲೆ ಬಿಡುವ ಮಕ್ಕಳ ಶೇಕಡವಾರು ಲೆಕ್ಕದಲ್ಲಿ ಮುಸ್ಲಿಮರದು ಅತಿದೊಡ್ಡಪಾಲು.

ರಾಷ್ಟ್ರೀಯ ಆನ್ವಯಿಕ ಅರ್ಥಶಾಸ್ತ್ರ ಮಂಡಳಿ (NCAER) ಯ 2011 ರ ವರದಿ ರಾಜ್ಯಸರ್ಕಾರದ ಮುಸ್ಲಿಂ ವಿರೋಧಿ Gujarat_muslimಧೋರಣೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದರನ್ವಯ ಮೇಲ್ಜಾತಿ ಹಿಂದೂಗಳ ಹೋಲಿಕೆಯಲ್ಲಿ ನಗರವಾಸಿ ಮುಸ್ಲಿಮರ ಬಡತನ 8 ಪಟ್ಟು (800%) ಮತ್ತು ಹಿಂದೂ ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಹೋಲಿಕೆಯಲ್ಲಿ 50% ರಷ್ಟು ಹೆಚ್ಚು ಇದೆ. ಗ್ರಾಮವಾಸಿ ಮುಸ್ಲಿಮರ ಬಡತನ ಮೇಲ್ಜಾತಿಯಲ್ಲಿ ಹಿಂದೂಗಳ ಹೋಲಿಕೆಯಲ್ಲಿ 200% ಹೆಚ್ಚಾಗಿದೆ. ಗುಜರಾತಿನ 60% ರಷ್ಟು ಮುಸ್ಲಿಮರು ನಗರವಾಸಿಗಳಾಗಿದ್ದು ಇವರು ರಾಜ್ಯದ ಅತ್ಯಂತ ನಿರ್ಲಕ್ಷಿತ ಗುಂಪಿಗೆ ಸೇರಿದ್ದಾರೆ.

ಸರ್ದಾರ್‌ಪುರ ಮತೀಯ ಗಲಭೆಯ 22 ಸಂತ್ರಸ್ತ ಕುಟುಂಬಗಳಿಗಾಗಿ ಹಿಮ್ಮತ್‌ನಗರದಲ್ಲಿ ದಲಿತ ಕಾಲೋನಿಗೆ ಹೊಂದಿಕೊಂಡಂತೆ ನಿರ್ಮಿಸಿರುವ ‘ಸುರಕ್ಷಿತ ಕಾಲೋನಿ’ ಎಲ್ಲ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿ ಸಾಮಾಜಿಕ ಬಹಿಷ್ಕಾರದ ವಿಸ್ತರಿಸಿದ ರೂಪವಾಗಿ ಕಾಣುತ್ತದೆ.

ಸಂವಿಧಾನ ದತ್ತ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನೇ ಅಣಕ ಮಾಡುವಂತೆ ‘ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ’ (2003)ಯ ಪ್ರಕಾರ ರಾಜ್ಯದಲ್ಲಿ ಮತ್ತೊಂದು ಧರ್ಮಕ್ಕೆ ಮತಾಂತರ ಹೊಂದಲು ಬಯಸುವವರು ಸರ್ಕಾರದ ಅನುಮತಿ ಪಡೆಯಬೇಕಿದೆ. ‘ಸ್ಥಳಾಂತರದ ವಿರುದ್ಧ ಗಲಭೆ ಪೀಡಿತ ಪ್ರದೇಶದ ನಿವಾಸಿಗಳ ರಕ್ಷಣೆ ಮತ್ತು ಸ್ಥಿರಾಸ್ತಿ ಹಸ್ತಾಂತರ ನಿಯಂತ್ರಣ ಕಾಯ್ದೆ-1991 ಕ್ಕೆ 2009ರಲ್ಲಿ ಬದಲಾವಣೆ ತಂದು ಅದನ್ನು ಅಲ್ಪಸಂಖ್ಯಾತರ ವಿರುದ್ಧ ಅಸ್ತ್ರವಾಗಿ ಬಳಸಲಾಗುತ್ತಿದೆ.

ಮೋದಿಯ ಜೀವವಿರೋಧಿ, ಪ್ರತಿಗಾಮಿ ಸಾಧನೆಗಳ ಪಟ್ಟಿ ಇನ್ನೂ ಬಹುದೊಡ್ಡದಿದೆ. ಆದರೆ ಯಾವುದೇ ಪ್ರಜ್ಞಾವಂತ ಮನಸ್ಸಿಗೆ ಮೋದಿ ನಮಗೆ ಯಾಕೆ ಬೇಡ ಎಂದು ಅರಿವಾಗಲು ಇವೇ ಬಹಳಷ್ಟಾಯಿತು ಅನ್ನಿಸುತ್ತದೆ. ಕಾಂಗ್ರೆಸ್/ಯುಪಿಎ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ), ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ), ಆಹಾರ ಭದ್ರತಾ ಕಾಯ್ದೆಯಂತಹ ಹಲವು ಜನಪರ (ಅವು ತಮ್ಮಷ್ಟಕ್ಕೆ ಪರಿಪೂರ್ಣವಲ್ಲದಿದ್ದರೂ) ಯೋಜನೆಗಳನ್ನು ಜಾರಿಗೆ ತಂದಿದೆಯಾದರೂ ಆರಂಭದಲ್ಲಿ ಹೇಳಿದಂತೆ ಇವರ ಭ್ರಷ್ಟಾಚಾರದ ಪ್ರಕರಣಗಳು, ಅವೈಜ್ಞಾನಿಕ ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಯೋಜನೆಗಳು ದೇಶದಲ್ಲಿ ಅನೇಕ ಆರ್ಥಿಕ, ಸಾಮಾಜಿಕ ತಲ್ಲಣಗಳಿಗೆ ಕಾರಣವಾಗಿದೆ. ಹಾಗಾಗಿ ಕಾಂಗ್ರೆಸ್ಸೇ ಅಧಿಕಾರಕ್ಕೆ ಬಂದರೂ ಜನಶಕ್ತಿಯು ನಿರಂತರ ವಿರೋಧ ಪಕ್ಷವಾಗಿ ಜನ/ಜೀವ ಪರವಾಗಿ ದನಿಯೆತ್ತುತ್ತಲೇ ಇರಬೇಕಾಗುತ್ತದೆ. ಅದಕ್ಕಾಗಿಯಾದರೂ ಮತಾಂಧತೆಯ ಅಫೀಮು ದ್ವೇಷದ ದಳ್ಳುರಿ ಹಬ್ಬಿಸದೆ ಸಾಮರಸ್ಯ ಉಳಿಯಬೇಕಿದೆ. ಬಡವರು ‘ದೈನೇಸಿ’ ಸ್ಥಿತಿ ತಲುಪದೆ ದನಿಯೆತ್ತುವಷ್ಟಾದರೂ ಸಾಮರ್ಥ್ಯ ಉಳಿಸಿಕೊಂಡಿರಬೇಕಿದೆ.

“ಮೋದಿಯೆಂಬ ಭಯವನ್ನು ಬಿತ್ತಿ ನಮ್ಮ ಮತ ಕೇಳುವುದು ಬಿಟ್ಟು ನಿಮ್ಮ ಯೋಜಿತ ಕಾರ್ಯಕ್ರಮಗಳ ಮೂಲಕ ನಮ್ಮ ಮತ ಗೆಲ್ಲಿ” ಎಂಬ ಮುಸ್ಲಿಮರ ಮಾತುಗಳು ಕಾಂಗ್ರೆಸ್ಸಿಗೆ ಸರಿದಾರಿ ತೋರಲೆಂದು ಆಶಿಸೋಣ.

ಪಾಪಪ್ರಜ್ಞೆಯ ಚಿತ್ತ, ಅಂಧಶ್ರದ್ದೆಯ ಸರಳ ವಾಸ್ತುವಿನತ್ತ..

– ಬಿ.ಜಿ. ಗೋಪಾಲಕೃಷ್ಣ, ಹಾಸನ

ವಾಸ್ತುಶಾಸ್ತ್ರ, ಇತ್ತೀಚಿನ ದಿನಗಳಲ್ಲಿ ಸರಳ ವಿಶೇಷಣದೊಂದಿಗೆ ದುಬಾರಿಯ ಮೌಢ್ಯವನ್ನು ಬಿತ್ತುತ್ತಾ ಸರಳ ವಾಸ್ತುಶಾಸ್ತ್ರವಾಗಿ ಬದಲಾಗಿದೆ. ಮನುಷ್ಯನಿಗೆ ರೋಗ-ರುಜಿನಗಳು ಅವನ ಶ್ರೀಮಂತಿಕೆಯ ವೈಭವವನ್ನು ತಿಳಿದು ಬರುವುದಿಲ್ಲ. ಅವನ ಐಷಾರಾಮಿತನದ ಸೋಮಾರಿತನ, ಒತ್ತಡದ ಜೀವನ ಶೈಲಿಗಳಿಗೆ ಓಗೊಟ್ಟು ಸಖ್ಯ ಬಯಸಿ ಬರುತ್ತವೆ. ಆದರೆ ಸರಳ ವಾಸ್ತುವಿನ ವಿಷಯವೇ ಬೇರೆ, ಶ್ರೀಮಂತಿಕೆಯ ಅಂಧಕಾರದ ಮೌಢ್ಯತೆಯನ್ನು ಅನುಸರಿಸಿ ತನ್ನ ಕೆನ್ನಾಲಿಗೆಯನ್ನು ಚಾಚುತ್ತದೆ.

‘ಭಯವೇ ಭಕ್ತಿಯ ಮೂಲವಯ್ಯ’ ಎಂಬಂತೆ, ಭಯ ಇದ್ದೆಡೆ ಅಂಧಕಾರ, ಮೌಢ್ಯತೆ, ಮೂಢನಂಬಿಕೆ, ಅಂಧಶ್ರದ್ಧೆಗಳ sarala-vaastuಭಕ್ತಿ ಮನೆಮಾಡುವುದರಲ್ಲಿ ಎರಡನೆಯ ಮಾತಿಲ್ಲ. ಭಯದ ಮೂಲ, ತಿಳಿವಳಿಕೆಯ ಕೊರತೆ ಇರಬಹುದೇ ಹೊರತು, ಸಾಕ್ಷರತೆಯ ಕೊರತೆ ಇರಲಾರದು. ಏಕೆಂದರೆ ಇತ್ತೀಚಿನ ದಿನಳಲ್ಲಿ ಅಕ್ಷರ ಜ್ಞಾನವಿಲ್ಲದವರಿಗಿಂತ ಅಕ್ಷರ ತಿಳಿದ ಮತ್ತು ನಗರವಾಸಿಗಳೇ ಇಂತಹ ಮೌಢ್ಯತೆಗೆ ಹೆಚ್ಚು ಹೆಚ್ಚು ಬಲಿಯಾಗತ್ತಿದ್ದಾರೆ.

ಪಠ್ಯಕ್ರಮದಲ್ಲಿ ಅಭ್ಯಸಿಸುವುದೇ ಒಂದು, ನಿಜ ಜೀವನದಲ್ಲಿ ಅಳವಡಿಸಿಕೂಳ್ಳುವುದೇ ಮತ್ತೊಂದಾಗಿದೆ. ಓದಿನಿಂದ ಅಕ್ಷರಸ್ತರಾಗುತ್ತಿದ್ದಾರೆಯೇ ವಿನಃ, ಜ್ಞಾನವಂತರಾಗುತ್ತಿರುವವರ ಸಂಖ್ಯೆ ವಿರಳ. ಇದಕ್ಕೆ ಪೂರಕ ಎಂಬಂತೆ ನಮ್ಮ ಸುತ್ತಮುತ್ತಲಿನ ಸಮಾಜಘಾತುಕ ಪಟ್ಟಭದ್ರ ಹಿತಾಸಕ್ತಿಗಳು, ಮೂಲಭೂತವಾದಿಗಳು ನಮ್ಮ ಜೀವನಕ್ಕೆ ವ್ಯವಸ್ಥಿತ ಸಂಚಿನೊಡನೆ ಜನಮಾನಸದಲ್ಲಿ ಮೌಢ್ಯವನ್ನು ಬಿತ್ತುತ್ತಾ ತಮ್ಮ ಹಾದಿಯನ್ನು ಸುಗಮಗೊಳಿಸಿಕೂಳ್ಳುತ್ತಿವೆ.

ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನ, ಜಾಗತೀಕರಣ, ಉದಾರಿಕರಣ ಫಲಶೃತಿಯಿಂದ ಮಾನವನ ಜೀವನವನ್ನು ಸುಲಭೀಕರಿಸುವುದರೊಂದಿಗೆ ಸುಖ ಭೋಗದ ಜೀವನಕ್ಕೆ ದಾರಿಯಾಗಿವೆ. ಐಷಾರಾಮಿ ಜೀವನಕ್ಕೆ ಮಾರುಹೋಗುವ ಮನಸ್ಸು, ತನ್ನ ಮನಸ್ಸಾಕ್ಷಿಗೆ ವಿರುದ್ದವಾಗಿ ಗಳಿಸಿ, ತನ್ನ ಅವಶ್ಯಕತೆ, ಅನಾವಶ್ಯಕತೆಗಳನ್ನು ಯೋಚಿಸದೇ ಪರರನ್ನು ಹಿಂಬಾಲಿಸುತ್ತಾ ಕೊಳ್ಳುಬಾಕ ಸಂಸ್ಕೃತಿಗೆ ಮಾರುಹೋಗಿ ಪುಟ್ಟ ಸಂಸಾರಕ್ಕೆ ಭೌವ್ಯ ಭಂಗಲೆಯೊಂದನ್ನು ನಿರ್ಮಿಸಿ ’ನೆಮ್ಮದಿಯ ಗುಡಿಸಲು’ ಎಂದು ನಾಮಕರಣ ಮಾಡಿ ವಾಸ್ತವ್ಯ ಹೂಡಿದರೆ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯವೇ? ಪಾಪಪ್ರಜ್ಞೆ ಕಾಡದಿರಲು ಸಾಧ್ಯವೇ?

ಸರ್ಕಾರಕ್ಕೆ ತೆರಿಗೆ ಸರಿಯಾದ ರೀತಿ ಸಂದಾಯ ಮಾಡಿ, ಭ್ರಷ್ಟಾಚಾರದಲ್ಲಿ ತೊಡಗದೆ, ಪರರನ್ನು ಆಥವಾ ಸಂಬಂಧಿಕರನ್ನುsarala-vastu ವಂಚಿಸದೆ ತಮ್ಮ ನಿಜವಾದ ನ್ಯಾಯಯುತ ಗಳಿಕೆಯಿಂದ ಜೀವನ ಸಾಗಿಸುವವರಿಗೆ ಪಾಪಪ್ರಜ್ಞೆ ಕಾಡಲು ಹೇಗೆ ಸಾಧ್ಯ ಈ ಪಾಪಪ್ರಜ್ಞೆಯ ಮುಂದುವರೆದ ಭಾಗವಾಗಿ ಆಂಧಕಾರ ಮೌಢ್ಯತೆ ಮನೆಮಾಡುತ್ತದೆ. ನೆಮ್ಮದಿಯ ಬದುಕು ದೂರವಾಗುತ್ತದೆ. ಇದ್ದ ನೆಮ್ಮದಿಯನ್ನು ಹಾಳು ಮಾಡಿಕೂಂಡು ಇಲ್ಲದ ನೆಮ್ಮದಿಯನ್ನು ಅರಸುತ್ತಾ ತಮ್ಮ ಪಾಪದ ಫಲಶೃತಿಗಳಿಗೆ ಪರಿಹಾರ ಹುಡುಕುತ್ತಾ ಮೌಢ್ಯತೆಗಳಲ್ಲೊಂದಾದ ವಾಸ್ತುವಿನ ಮರೆ ಹೋಗುತ್ತಾರೆ.

ಸರಳ ವಾಸ್ತುವಿನಲ್ಲಿ ಅಲ್ಪ-ಸ್ವಲ್ಪ ವಿಜ್ಞಾನ ಅಡಗಿರಬಹುದು. ಆ ವಿಜ್ಞಾನ ನಮ್ಮ ಕುಗ್ರಾಮದ ಕಟ್ಟಡ ಕಾರ್ಮಿಕನ ಜ್ಞಾನಕಿಂತ ಹೆಚ್ಚಿನದೇನೂ ಇರಲು ಸಾಧ್ಯವಿಲ್ಲ. ಇರುವ ಸ್ಥಳದಲ್ಲಿ ವ್ಯವಸ್ಥಿತವಾಗಿ, ಕಲಾತ್ಮಕವಾಗಿ ಕಟ್ಟಡ ನಿರ್ಮಿಸಲು ವಾಸ್ತುಶಿಲ್ಪಿಯ ಅವಶ್ಯಕತೆ ಇರುವುದೇ ಹೊರತು. ಸರಳ ವಾಸ್ತುಶಾಸ್ತ್ರದ ಪಂಡಿತನ ಸಲಹೆ ಸೂಚನೆಗಳಲ್ಲ.

ಇಂದಿನ ಜಾಗತೀಕರಣದ, ಉದಾರೀಕರಣ ಮತ್ತು ರಾಜಕೀಯ ನೀತಿಗಳು ’ಹಳ್ಳಕ್ಕೇ ನೀರು ಹರಿಯುವಂತೆ’ ಉಳ್ಳವರನ್ನು ಹೆಚ್ಚು ಉಳ್ಳವರನ್ನಾಗಿಸುತ್ತಾ, ಬಡವರನ್ನು ಅತೀ ಬಡವರನ್ನಾಗಿಸುತ್ತಾ, ಬಡವ-ಬಲ್ಲಿದರ ನಡುವಿನ ಅಂತರ ಹೆಚ್ಚಿಸುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ನಮ್ಮಗಳ ನಡುವೆಯೇ ನಾಗರಿಕ ಯುದ್ದ ಸಂಭವಿಸುವ ಸಮಯ ದೂರವೇನಿಲ್ಲ.

ಹಿಂದಿನ ದಿನಗಳಲ್ಲಿ ಮತ್ತು ಇಂದೂ ಮುಂದುವರೆದಂತೆ ಹಸಿವಿನಿಂದ ಬಳಲುತ್ತಿರುವವರ ಸಮ್ಮುಖದಲ್ಲೇ ಮೌಢ್ಯತೆಯ ಹೆಸರಿನಲ್ಲಿ ಆಥವಾ ಶ್ರೀಮಂತಿಕೆಯ ತೋರಿಕೆಯ ಅಹಂನ ಮಧದಲ್ಲಿ ಆಹಾರಧಾನ್ಯಗಳನ್ನು ಅಪವ್ಯಯಮಾಡುವುದು, ಧನದಾಹಿ ವ್ಯಾಪಾರಸ್ಥರು ಅಹಾರಧಾನ್ಯಗಳ ಕೃತಕ ಅಭಾವ ಸೃಷ್ಟಿಸಿ house-plansಹಣಗಳಿಸುವುದು, ಹಣವಂತರು ಅಕ್ರಮ ಬಡ್ಡಿ ದಂಧೆಯಲ್ಲಿ ತೊಡಗಿಸಿಕೊಳ್ಳುವುದು, ಸರ್ಕಾರಿ ಕೆಲಸಗಳಲ್ಲಿ ಭ್ರಷ್ಟಾಚಾರದಲ್ಲಿ ತೊಡಗುವುದು. ಅವಶ್ಯಕತೆ ಇಲ್ಲದಿದ್ದರೂ ಹೆಚ್ಚು ಹೆಚ್ಚು ಸೈಟುಗಳನ್ನು ಖರೀದಿಸುವುದು ಅಥವಾ ಹಣ ಹೆಚ್ಚಾಗಿರುವವರು ಸುಸ್ಥಿತಿಯಲ್ಲೇ ಇರುವ ಮನೆಯನ್ನು ನವೀಕರಿಸಲು ಪ್ರಾರಂಭಿಸಿ ಮೂಲ ಮನೆಯ ಆಕೃತಿಯನ್ನೇ ಇಲ್ಲವಾಗಿಸಿಕೊಳ್ಳುವುದು. ಇವುಗಳೆಲ್ಲಾ ನೇರವಾಗಿ ಅಥವಾ ಪರೋಕ್ಷವಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುವ ಸನ್ಮಂಗಳ ಕಾರ್ಯಗಳೇ ಆಗಿವೆ. ಇಂಥವರಿಗೆ ಪಾಪಪ್ರಜ್ಞೆ ಕಾಡದಿರಲು ಸಾಧ್ಯವೇ?

ನಮ್ಮ ಜೀವಿತಾವಧಿಯಲ್ಲಿ ಸಾವು, ನೋವು ಆಥವಾ ಯಾವುದಾದರೊಂದು ಅವಘಡ ಸಂಭವಿಸಿದ ಪಕ್ಷದಲ್ಲಿ ನಮ್ಮ ಮನೆಯ ವಾಸ್ತುವಿಗೂ ಸಂಭವಿಸಿದ ಘಟನೆಗಳಿಗೂ ಸಂಬಂಧವಿರಲು ಸಾಧ್ಯವೇ? ನಮ್ಮ ಮನೆಗಳಲ್ಲಿ ನಡೆದ ಅಶುಭಗಳಿಗೆ ಪಾಪಪ್ರಜ್ಞೆ ಕಾಡಿ ಕಾರಣ ಹುಡುಕಿ ಜ್ಯೋತಿಷಿಯನ್ನು ಸಂಪರ್ಕಿಸಿದರೆ ಮುಗಿಯಿತು. ಆ ಜ್ಯೋತಿಷಿಯೇನು ಆಜ್ಞಾನಿಯಾಗಿರುವುದಿಲ್ಲ, ಅಲ್ಪ-ಸ್ವಲ್ಪ ಪ್ರಸಕ್ತ ಸಮಾಜಿಕ ಸ್ಥಿತಿಗತಿಯನ್ನು ಅರಿತು ಮನೋತಜ್ಞನೂ ಆಗಿರುತ್ತಾನೆ. ಅವನ ಕಸುಬಿನ ಸಲಹೆ ಸೂಚನೆಗಳನ್ನು ಅರಸಿ ಅವನನ್ನು ಸಂಪರ್ಕಿಸುವ ಜನಸಾಮಾನ್ಯರಿಂದ ಮತ್ತು ಅನುಭವದಿಂದ ಈ ಜ್ಞಾನವನ್ನು ಮೈಗೂಡಿಸಿಕೊಂಡಿರುತ್ತಾನೆ. ನಮ್ಮ ಪೂರ್ವಪರವನ್ನು ಸವಿವರವಾಗಿ ವಿಚಾರಿಸಿ, ಕುಲಂಕುಷವಾಗಿ ಚರ್ಚಿಸಿ. ನಮ್ಮ ಶ್ರೀಮಂತಿಕೆಗೆ ಅನುಗುಣವಾಗಿ ಪರಿಹಾರವನ್ನು ಸೂಚಿಸುತ್ತಾನೆ.

ಮಾತಿನ ಮಧ್ಯೆ ಮನೆಯ ವಿನ್ಯಾಸದ ಬಗ್ಗೆ ಚಕಾರವೆತ್ತಿದರೆ ಮುಗಿಯಿತು. ವಾಸ್ತು ಪರಿಶೋಧಕರು, ಸರಳ ವಾಸ್ತು ವಿನ್ಯಾಸಕರು, model-houseಗುತ್ತಿಗೆದಾರರು, ಕಟ್ಟಡ ಕಾರ್ಮಿಕರು, ವಾಸ್ತುವಿನ ಅನುಸಾರವಾಗಿ ಬಣ್ಣಮಾರುವವರು, ಅದಕ್ಕನುಸಾರವಾಗಿ ಬಣ್ಣಬಳಿಯುವವರು. ಅದಕ್ಕೂಂದು ಪೂಜೆ ಹೋಮ ಹವನ ಹೀಗೆ ಮುಂದುವರೆಯುತ್ತದೆ. ಪ್ರಜ್ಞಾವಂತರು ಪ್ರಜ್ಞಾಪೂರ್ವಕವಾಗಿ ಮಾಡಿದ ಪಾಪಕರ್ಮದ ಪೂಜಾಫಲ ಪ್ರಾಯಶ್ಚಿತ್ತ.

ಈ ವಿಷವರ್ತುಲವನ್ನು ಪ್ರವೇಶಿಸುವುದು ಸುಲಭ ಮತ್ತು ಸರಳವಾದರೂ ಹೊರ ಬರುವುದರೊಳಗೆ ನಮ್ಮ ಆಯಸ್ಸಿನ ಕಡೆಯ ಹಂತ ತಲುಪಿರುತ್ತದೆ. ನಮಗೆ ತಿಳುವಳಿಕೆ ಮೂಡುವುದರೊಳಗಾಗಿ ಇದೇ ನಂಬಿಕೆಗಳು ನಮ್ಮ ಮುಂದಿನ ಪೀಳಿಗೆಗಳಿಗೂ ಸಾಂಕ್ರಾಮಿಕ ರೋಗದಂತೆ ಹರಡಿರುತ್ತವೆ.

ಪಾಪ, ಪುಣ್ಯಗಳಿಲ್ಲದ ಮನುಜನಾಗಿ ಜನಿಸಿದ ಮೇಲೆ, ನಮ್ಮ ನ್ಯಾಯಯುತ ಗಳಿಕೆಯ ಬದುಕಿಗೇಕೆ ಬೇಕು ಸರಳ ವಾಸ್ತುವಿನ ಪರಿಹಾರ?

ಪ್ರಕೃತಿ ಕೇಂದ್ರಿತ ಅಭಿವೃದ್ಧಿ ನಮ್ಮದಾಗಲಿ


– ರೂಪ ಹಾಸನ


 

ಯಾವುದೇ ಪರಿಸರ ಸಂಬಂಧಿ ಯೋಜನೆಗಳ ಕುರಿತು ಸರ್ಕಾರದಿಂದ ಚರ್ಚೆ ಪ್ರಾರಂಭವಾದೊಡನೆ ಪರಿಸರವಾದಿಗಳು ಅದು ಸಲ್ಲದು ಎಂದು ತಮ್ಮ ಗಲಾಟೆ ಪ್ರಾರಂಭಿಸುತ್ತಾರೆ. ಅಭಿವೃದ್ಧಿವಾದಿಗಳು ಯೋಜನೆಯ ಅವಶ್ಯಕತೆಯನ್ನು ಪ್ರತಿಪಾದಿಸಿ ತಮ್ಮ ವಾದ ಮುಂದಿಡುತ್ತಾರೆ. ವಿಧಾನಮಂಡಲ ಅಧಿವೇಶನದಲ್ಲಿ ಶಾಸಕರು ಪರ-ವಿರೋಧ ಚರ್ಚೆ ನಡೆಸುತ್ತಾರೆ. ಎಲ್ಲರಿಗೂ ಅವರವರದೇ ಒಂದೊಂದು ಸಿದ್ಧಾಂತ. ಮತ್ತೆ ಯೋಜನೆ ಕಾರ್ಯರೂಪಕ್ಕೆ ಬರದೇ ನೆನೆಗುದಿಗೆ ಬೀಳುತ್ತದೆ. ಆಗೀಗ ಪ್ರಸ್ತಾಪಗೊಂಡು ಮತ್ತೆ ಮರೆತೂ ಹೋಗುತ್ತದೆ. ಆದರೆ ಮೂಲ ಸಮಸ್ಯೆ? ಅದು ಒಂದಿಂಚೂ ಕದಲದೇ ಹಾಗೇ ಇರುತ್ತದೆ. ಜೊತೆಗೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಾ ಹೋಗುತ್ತದೆ. ಇದರ ಮಧ್ಯೆ ಸಿಕ್ಕಿಕೊಳ್ಳುವ ಸಾಮಾನ್ಯ ಜನರು ಪರಿತಪಿಸುತ್ತಲೇ ಇರಬೇಕಾಗುತ್ತದೆ.

ಇದೆಲ್ಲಾ ಮತ್ತೆ ನೆನಪಾದದ್ದು ಎತ್ತಿನಹೊಳೆ ತಿರುವು ಯೋಜನೆಯ ಕುರಿತು ವರದಿ, ಪೂರ್ವ-ಪರ ಚರ್ಚೆಗಳು ಪ್ರಕಟವಾಗುತ್ತಿರುವುದನ್ನು ಕಂಡಾಗ. p3-24 city.inddಈ ಹಿಂದೆ ನೇತ್ರಾವತಿ ತಿರುವು ಯೋಜನೆಯ ಕುರಿತು ಹೀಗೇ ಪೂರ್ವ-ಪರ ಚರ್ಚೆಗಳಾಗಿ ನಿಂತು ಹೋಗಿತ್ತು. ಈಗ ಹೆಸರು ಬದಲಾದ, ಅದೇ ಉದ್ದೇಶ ಹೊಂದಿದ ಮತ್ತೊಂದು ಯೋಜನೆಯ ಚರ್ಚೆ. ಯೋಜನೆಯ ಸಂಪೂರ್ಣ ವಿವರಗಳು ಇನ್ನೂ ಸ್ಪಷ್ಟವಾಗಿಲ್ಲವಾದರೂ ಪಶ್ಚಿಮಘಟ್ಟದ ಒಡಲೊಳಗೆ ಮೈಲಿಗಟ್ಟಲೆ ನಡೆಯಬೇಕಿರುವ ಇದರ ಕಾರ್ಯಾಚರಣೆಯಲ್ಲಿ ಒಡ್ಡು ನಿರ್ಮಾಣಕ್ಕೆ, ಪೈಪ್‌ಲೈನ್ ಅಳವಡಿಕೆಗೆ, ಪಂಪಿಂಗ್ ಮೋಟರ್ ಸ್ಥಾಪನೆಗೆ, ಜಲ ಸಂಗ್ರಹಣೆಗೆ, ಕಾಲುವೆ, ಅಣೆಕಟ್ಟೆ ನಿರ್ಮಾಣಕ್ಕೆ,…. ಹೀಗೆ ಪಶ್ಚಿಮಘಟ್ಟದಲ್ಲಿ ಏನೆಲ್ಲಾ ಅಲ್ಲೋಲಕಲ್ಲೋಲ ಆಗಬಹುದೆಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿದೆ. ಈ ಇಡೀ ಕಾರ್ಯಾಚರಣೆ ನಡೆವ ಅರಣ್ಯ, ಪ್ರಾಣಿ-ಪಕ್ಷಿ ಪ್ರಭೇದಗಳನ್ನು ಮತ್ತೆ ಎಲ್ಲಾದರೂ ಸ್ಥಳಾಂತರಿಸಲು, ಪುನರ್ ಸೃಷ್ಟಿಸಲು ಸಾಧ್ಯವೇ? ಮನುಷ್ಯನನ್ನು ಸೃಷ್ಟಿಸುವುದು ಸುಲಭ. ಹೀಗೆಂದೇ ಮನುಷ್ಯ ಸಂತತಿ ಮಿತಿಮೀರಿ ಬೆಳೆಯುತ್ತಿದೆ. ಅವನ ಅಗಾಧ ಹಸಿವು ಹಿಂಗಿಸಲು ಪ್ರಕೃತಿಯ ಒಡಲು ಲೂಟಿಯಾಗುತ್ತಿದೆ. ಆದರೆ ವೈವಿಧ್ಯಮಯವಾದ ಪ್ರಕೃತಿಯನ್ನು ಸೃಷ್ಟಿಸುವುದು ಹೇಗೆ? ಒಂದು ಮರವನ್ನು ಸೃಷ್ಟಿಸಲು ಹತ್ತೆಂಟು ವರ್ಷಗಳೇ ಬೇಕು. ಒಂದು ಕಾಡು ಸೃಷ್ಟಿಯಾಗಲು ಶತಮಾನವೇ ಬೇಕಾಗಬಹುದು. ಅದೂ ಸೃಷ್ಟಿಸುವ ಮನಸ್ಸು ಮತ್ತು ಜಾಗವಿದ್ದರೆ ಮಾತ್ರ!

ಮುಖ್ಯವಾಗಿ ನಾವು ಗಮನಿಸಬೇಕಿರುವುದು ಅಭಿವೃದ್ಧಿಗಾಗಿ ನಾವು ತೆರುತ್ತಿರುವ ಬೆಲೆ ಏನು? ಹಾಗೂ ಪರಿಸರ ಸಂರಕ್ಷಣೆಗಾಗಿ ನಾವು ತೆರಬೇಕಿರುವ ಬೆಲೆ ಏನು? ಎಂಬುದು. ಪರಿಸರವನ್ನು ನಾಶಮಾಡದೇ ಕಟ್ಟಿಕೊಳ್ಳುವ ಅಭಿವೃದ್ಧಿ ಹಾಗೂ ಅಭಿವೃದ್ಧಿಗೆ ಪೂರಕವಾಗುವಂತೆ ಉಳಿಸಿಕೊಳ್ಳುವ ಪರಿಸರ ಎರಡೂ ನಮಗಿಂದು ಮುಖ್ಯವಾಗಬೇಕು. ಏಕೆಂದರೆ ಪರಿಸರ ಹಾಗೂ ಅಭಿವೃದ್ಧಿ ಎರಡೂ ಯಾವುದೇ ಒಂದು ಪ್ರದೇಶದ ಜನರಿಗೆ ಸೇರಿದ ವಿಷಯವಲ್ಲ. ಅದು ಸಾರ್ವತ್ರಿಕವಾದುದು ಹಾಗು ಸಾರ್ವಕಾಲಿಕವಾದುದು. ಅಭಿವೃದ್ಧಿ ಪ್ರಕೃತಿ ಕೇಂದ್ರಿತವಾಗಿದ್ದಾಗ ಅದು ಮಾನವೀಯವೂ, ಸಕಲ ಜೀವಪರವೂ ಆಗಿರುತ್ತದೆ. ಆದರೆ ನಾವಿಂದು ಮಾಡುತ್ತಿರುವ ಅಭಿವೃದ್ಧಿ ಮನುಷ್ಯ ಕೇಂದ್ರಿತವಾಗಿರುವುದರಿಂದ ರೂಕ್ಷವೂ, ಅಮಾನವೀಯವೂ ಆಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಅವೈಜ್ಞಾನಿಕವಾಗಿ, ಅಸೂಕ್ಷ್ಮವಾಗಿ ಕೈಗೊಳ್ಳುವ ಯಾವುದೇ ಯೋಜನೆಯಿಂದ ದೀರ್ಘಕಾಲೀನ, ಹಲವು ಬಾರಿ ಶಾಶ್ವತ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಪಶ್ಚಿಮಘಟ್ಟದಲ್ಲಿ ಇದುವರೆಗೆ ನಡೆದ ರಸ್ತೆಮಾರ್ಗ, ರೈಲುಮಾರ್ಗ, ವಿದ್ಯುತ್‌ಮಾರ್ಗ, ಪೆಟ್ರೋಲಿಯಂ ಪೈಪ್‌ಲೈನ್, ಅಣೆಕಟ್ಟೆ, ಜಲವಿದ್ಯುತ್ ಘಟಕಗಳ ನಿರ್ಮಾಣ ಕಾರ್ಯದಲ್ಲಿ ತೋರಿದ ಇಂತಹ ದುಡುಕುತನಗಳು ಶಾಶ್ವತ ಪಶ್ಚಾತ್ತಾಪಕ್ಕೆ ಕಾರಣವಾಗಿವೆ. ಅನೇಕ ನದಿ ಹಾಗೂ ಜಲಮೂಲಗಳು ಬತ್ತಿ ಹೋಗುವಂತೆ ಅವೈಜ್ಞಾನಿಕವಾಗಿ ನಡೆಸಿದ ಅಭಿವೃದ್ಧಿ ಕಾರ್ಯಗಳು, ದಕ್ಷಿಣ ಭಾರತದ ಹೆಚ್ಚಿನ ನದಿಗಳಿಗೆ ಜನ್ಮಸ್ಥಳವಾದ ಪಶ್ಚಿಮಘಟ್ಟವನ್ನು ಬರಡಾಗಿಸುತ್ತಿದೆ. ಮೊದಲಿಗೆ ಇಲ್ಲೀಗ ಆ ಜಲಮೂಲಗಳನ್ನು ಪುನರ್ ಸೃಷ್ಟಿಸುವ ಕೆಲಸ ತುರ್ತಾಗಿ ಆಗಬೇಕಿದೆ.

ಪರಿಸರವಾದಿಗಳು ಪಶ್ಚಿಮಘಟ್ಟಗಳ ಕಾಡು, ಅನನ್ಯ ಬೆಲೆಬಾಳುವ ಗಿಡ-ಮರ, ಅಮೂಲ್ಯ ಜೀವವೈವಿಧ್ಯ, heritage_western_ghatsಅಸಂಖ್ಯಾತ ಪ್ರಾಣಿಪಕ್ಷಿ ಪ್ರಭೇದಗಳು, ನೈಸರ್ಗಿಕ ನದಿ-ಝರಿ-ಜಲಪಾತಗಳ ಕುರಿತು ಭಾವುಕರಾಗಿ ಮಾತ್ರ ಮಾತನಾಡುತ್ತಿಲ್ಲ. ಮುಖ್ಯವಾಗಿ ಒಮ್ಮೆ ನಾಶವಾದರೆ ಇಂತಹ ಪ್ರಕೃತಿಯದ್ಭುತಗಳನ್ನು ನಾವು ಮರುಸೃಷ್ಟಿಸಲು ಸಾಧ್ಯವಿಲ್ಲ ಎಂಬ ಎಚ್ಚರ ಸದಾ ಅವರನ್ನು ಕಾಡುತ್ತಿದೆ. ಇದರ ಜೊತೆಗೆ ಪಶ್ಚಿಮಘಟ್ಟದ ಸಮೀಪದಲ್ಲಿ ವಾಸಿಸುತ್ತಿರುವ ನಮ್ಮಂಥ ಜನರಿಗೆ ಬೇರೆಯದೇ ಆದ ಸಮಸ್ಯೆಗಳು ಕಾಡುತ್ತಿರುತ್ತವೆ. ಪ್ರಮುಖವಾಗಿ ಆನೆ ಹಾಗೂ ಚಿರತೆಯಂಥಾ ವನ್ಯಜೀವಿಗಳು ಕಾಡು ನಾಶವಾದಂತೆಲ್ಲಾ ನಾಡಿಗೆ ನುಗ್ಗಿ ಬೆಳೆ, ಮನೆ-ಮಠಗಳನ್ನು, ಜನರು ಕಟ್ಟಿಕೊಂಡ ಬದುಕನ್ನು ನಾಶಮಾಡುವ ಕೆಲಸಕ್ಕೆ ತೊಡಗಿಕೊಳ್ಳುತ್ತವೆ. ಅವುಗಳನ್ನು ಹಿಡಿಯುವ, ಅಥವಾ ಕೊಂದು ಮನುಷ್ಯರ ಪ್ರಾಣ ರಕ್ಷಿಸಲೆಂದೇ ಅರಣ್ಯ ಇಲಾಖೆಯ ಸಿಬ್ಬಂದಿ ತಾವು ಮಾಡುವ ಕೆಲಸ ಬಿಟ್ಟು, ಹಲವು ಬಾರಿ ವನ್ಯಜೀವಿ ರಕ್ಷಣೆಯ ಕಾನೂನನ್ನು ಮೀರಿ ತಿಪ್ಪರಲಾಗ ಹಾಕಬೇಕಾಗಿದೆ. ಇದರಿಂದ ಈಗಾಗಲೇ ಕೋಟ್ಯಾಂತರ ರೂಪಾಯಿಗಳಷ್ಟು ಸರ್ಕಾರಿ ಹಣ ಹಾಗೂ ರೈತರ, ಬೆಳೆದು ನಿಂತ ಫಸಲು ನಷ್ಟವಾಗುವುದರೊಂದಿಗೆ, ಗಣನೀಯ ಪ್ರಮಾಣದಲ್ಲಿ ಜೀವ ಹಾನಿಯೂ, ವನ್ಯಜೀವಿ ಹತ್ಯೆಯೂ ಆಗುತ್ತಿದೆ. ಇದರೊಂದಿಗೆ ಕಾಡಿನಿಂದ ನಾಡಿಗೆ ವಲಸೆ ಬರುವ ಸಣ್ಣ-ಪುಟ್ಟ ಪ್ರಾಣಿ, ಪಕ್ಷಿ, ಕೀಟ, ಕ್ರಿಮಿಗಳ ದಾಳಿ ನಿರಂತರವಾಗಿ ಮಲೆನಾಡಿನ ಜನರನ್ನು ಕಾಡುತ್ತಿದೆ. ಇದು ಕಾಡಿನಲ್ಲೇ ತಮ್ಮ ಪಾಡಿಗೆ ತಾವು ವಾಸಿಸುತ್ತಾ ಬಂದಿರುವ ವನ್ಯಜೀವಿಗಳ, ಕ್ರಿಮಿ-ಕೀಟಗಳ ತಪ್ಪಲ್ಲ. ಪ್ರಕೃತಿಯ ಸಂಪತ್ತೆಲ್ಲಾ ತನಗಾಗಿ ಮಾತ್ರವೇ ಇರುವುದೆಂಬಂತೆ ಅದನ್ನು ಅಮಾನವೀಯವಾಗಿ ಲೂಟಿ ಮಾಡುತ್ತಿರುವ ಮನುಷ್ಯನ ಪರಮ ಸ್ವಾರ್ಥದ ಮಹಾಪರಾಧದ ಫಲ. ಇದು ಕಣ್ಣಿಗೆ ಕಾಣುವ ವಾಸ್ತವದ ಒಂದು ಮುಖ. ತಕ್ಷಣಕ್ಕೆ ಕಾಣದಂತಾ ಸೃಷ್ಟಿ ವೈಪರೀತ್ಯಗಳು ಲೆಕ್ಕವಿಲ್ಲದಷ್ಟಿರಬಹುದು.

ಹಾಗೇ ಬಯಲುಸೀಮೆಯ ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ತತ್ವಾರವಾಗಿ ಜನರು ಬಳಲುತ್ತಿರುವುದು, ದಿನಬಳಕೆಯ ಅಗತ್ಯತೆಗಳಿಗೆ, ವ್ಯವಸಾಯಕ್ಕೆ ನೀರಿಲ್ಲದೇ ಕಂಗಾಲಾಗಿರುವುದು, ವಾಸ್ತವದ ಇನ್ನೊಂದು ಮುಖ.

ಆದರೆ ಆ ವಾಸ್ತವ ಹಾಗೂ ಈ ವಾಸ್ತವ ಒಂದಕ್ಕೊಂದು ಮುಖಾಮುಖಿಯಾಗಿ ನಿಂತು ಯುದ್ಧವಾಡುವುದಾದರೆ ಪರಿಹಾರ ಹೇಗೆ ಸಾಧ್ಯ? ಈ ವೈರುಧ್ಯದ ನಡುವೆಯೇ ನಾವೊಂದು ಮಧ್ಯಮ ಮಾರ್ಗವನ್ನು ಕಂಡುಕೊಳ್ಳಬೇಕಿದೆ. ನಮಗಿಂದು ಸುಲಭದ, ತಕ್ಷಣದ, ದುಬಾರಿಯಾದ ಪರಿಹಾರಗಳ ಕಡೆಗೆ ಗಮನವೇ ಹೊರತು, ನೈಸರ್ಗಿಕವಾದ, ಕಡಿಮೆ ಖರ್ಚಿನ ಹಾಗೂ ಪರಿಸರಕ್ಕೆ ಹಾನಿಯಾಗದಂತೆ ಪ್ರಕೃತಿಯಿಂದಲೇ ಪ್ರಕೃತಿಯನ್ನು ಪುನರ್ ಸೃಷ್ಟಿಸುವ ಪರಿಹಾರಗಳ ಕಡೆಗೆ ಹೆಚ್ಚಿನ ಗಮನವಿಲ್ಲ. ಈ ದಿಕ್ಕಿನಲ್ಲಿ ಪ್ರಯತ್ನಗಳು ಆಗುತ್ತಿವೆಯಾದರೂ ಅದು ಅತ್ಯಲ್ಪ ಪ್ರಮಾಣದ್ದು. ಅಂಥಹ ಕೆಲವು ಮಾದರಿಗಳು ಇಲ್ಲಿವೆ.

ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ, ರಾಜಸ್ಥಾನದ ಆಳ್ವಾರ್‌ನ ರಾಜೇಂದ್ರಸಿಂಗ್ ಅವರ ಭಗೀರಥ ಪ್ರಯತ್ನ ಪ್ರಕೃತಿಯಿಂದಲೇ rajendra-singh-check-damಪ್ರಕೃತಿಯನ್ನು ಸೃಷ್ಟಿಸುವ ಒಂದು ಮಾದರಿ. ಅವರು ತರುಣ ಭಾರತ ಸಂಘವೆಂಬ ಸ್ವಯಂ ಸೇವಾ ಸಂಸ್ಥೆಯೊಂದನ್ನು ಸ್ಥಾಪಿಸಿ, ಮಳೆ ನೀರನ್ನು ಸಂಗ್ರಹಿಸಲು ಹಳ್ಳಿ ಹಳ್ಳಿಗಳಲ್ಲಿ 4500 ಜೋಹಡ್‌ಗಳನ್ನು [ಮಣ್ಣಿನ ತಡೆಗೋಡೆಗಳು] ನಿರ್ಮಿಸಿ, ಬತ್ತಿ ಹೋಗಿದ್ದ 5 ನದಿಗಳನ್ನು ಪುನರುತ್ಥಾನಗೊಳಿಸಿ, ಪೂರ್ವ ರಾಜಸ್ಥಾನದ ಮರುಭೂಮಿಯಿಂದ ಆವೃತವಾದ 850 ಹಳ್ಳಿಗಳಲ್ಲಿ ಯತೇಚ್ಛ ನೀರು ಉಕ್ಕಿಸಿ ಹಸಿರು ಸೃಷ್ಟಿಸಿದ ಹರಿಕಾರರಾಗಿದ್ದಾರೆ. ನೀರುಸಂತ, ನೀರುಸಂರಕ್ಷಕನೆಂಬ ಬಿರುದಿಗೆ ಪಾತ್ರರಾಗಿ ಮಳೆ ನೀರಿನ ಕೊಯ್ಲಿಗೆ ಹೊಸ ಭಾಷ್ಯ ಬರೆದ ಆಧುನಿಕ ಕ್ರಾಂತಿ ಭಗೀರಥ ಅವರಾಗಿದ್ದಾರೆ. ಅವರ ತಾಳ್ಮೆ, ಸಂಘಟನಾ ಕೌಶಲ್ಯ, ಪ್ರಕೃತಿ ಸೂಕ್ಷ್ಮತೆಯನ್ನೊಳಗೊಂಡು, ಕಡಿಮೆ ವೆಚ್ಚದಲ್ಲಿ ನಮ್ಮ ದೇಸೀ ಪರಂಪರಾಗತ ಜಾಣ್ಮೆಯನ್ನು ಬಳಸಿ ಮಾಡಿದ ಈ ಸಾಧನೆ, ನಮ್ಮ ಶೈಕ್ಷಣಿಕ ಶಿಸ್ತಿನ ಪಾಂಡಿತ್ಯಕ್ಕಿಂಥಾ ಸಮರ್ಥವಾದುದೆಂದು ಸಾಬೀತಾಗಿದೆ.

ಅದೇ ಉತ್ತರ ರಾಜಸ್ಥಾನದ ಲಾಪೋಡಿಯಾದ ಲಕ್ಷ್ಮಣಸಿಂಗ್ ಅವರದು ಬರಕ್ಕೇ ಬೇಲಿ ಹಾಕಿದ ಇನ್ನೊಂದು ನೀರಿನ ಗಾಥೆ. ರಾಜಸ್ಥಾನದ ಈ ಅವಿದ್ಯಾವಂತ ರೈತ ಊರವರನ್ನು ಸಂಘಟಿಸಿ ಬರಡು ಮರುಭೂಮಿಯ ಹಳ್ಳಿಯಲ್ಲಿ ಹಸಿರು ಸೃಷ್ಟಿಸಿದ್ದು, ಅಕ್ಕಪಕ್ಕದ 20 ಗ್ರಾಮಗಳ 31 ಕೆರೆಗಳನ್ನು ಜೋಡಿಸಿ, ಬರ ಹಾಗೂ ನೆರೆಗಳನ್ನು ಏಕಕಾಲಕ್ಕೆ ನಿಯಂತ್ರಿಸಿ, ಸುತ್ತಲ 350 ಹಳ್ಳಿಗಳಿಗೆ ನೀರುಣಿಸುವ ಕೆಲಸ ಮಾಡುತ್ತಿರುವುದು ಈಗ ಒಂದು ಇತಿಹಾಸ. ಈ ಭಾಗದ ಹಳ್ಳಿಗಳಿಗೆ ಸೂಕ್ತವಾಗುವ ನೆಲ-ಜಲ ಸಂರಕ್ಷಣೆಯ OLYMPUS DIGITAL CAMERAಮಾದರಿಯೊಂದನ್ನು ಲಕ್ಷ್ಮಣ್ ಅಭಿವೃದ್ಧಿಪಡಿಸಿದ್ದಾರೆ. ಅದು ಚೌಕ ವಿಧಾನವೆಂದೇ ಜನಪ್ರಿಯವಾಗಿದೆ. ಹುಲ್ಲುಗಾವಲಿನಲ್ಲಿ ಚೌಕಗಳನ್ನು ನಿರ್ಮಿಸಿ ನೀರನ್ನು ಇಂಗಿಸಿ, ಸಂಗ್ರಹಿಸುವ ವಿಧಾನ ಇದಾಗಿದೆ. ಇಲ್ಲೂ ಗ್ರಾಮೀಣ ವಿಕಾಸ ನವ್ ಯುವಕ್ ಮಂಡಲ್ ಎಂಬ ಸಂಘಟನೆಯಿಂದಲೇ ಇಷ್ಟೆಲ್ಲಾ ಸಾಧ್ಯವಾಗಿದ್ದು ಎಂಬುದು ಗಮನಾರ್ಹ. ಮಳೆ ನೀರನ್ನು ಶೇಖರಿಸಿ, ಇಂಗಿಸಿ ಅಂತರ್ಜಲ ಮರುಪೂರಣಕ್ಕಾಗಿ ಕೆರೆಗಳನ್ನು ನಿರ್ಮಿಸಿ ಇವರು ದಾಖಲೆ ಬರೆದಿದ್ದಾರೆ. ಇದಾವುದೂ ಪವಾಡಗಳಲ್ಲ. ಪ್ರಕೃತಿಯಲ್ಲೇ ಇರುವ ಉತ್ತರಗಳು. ಅದನ್ನು ಕಂಡುಕೊಳ್ಳುವ ಸೂಕ್ಷ್ಮತೆಯಷ್ಟೇ ನಮಗಿಂದು ಬೇಕಿರುವುದು. ನಿಸರ್ಗದ ಒಂದೊಂದೇ ಗುಟ್ಟುಗಳನ್ನರಿತು ನಮ್ಮ ಸೋಲಿನ ಮೂಲ ಎಲ್ಲಿದೆ ಎಂದು ಅರಿತೆ ಎನ್ನುವ ಲಕ್ಷ್ಮಣ್ ಅವರ ಮಾತು ನಮಗೆಲ್ಲರಿಗೂ ಪ್ರೇರಣೆಯಾಗಬೇಕಿದೆ.

ಇದು ದೂರದ ರಾಜಸ್ಥಾನದ ಮಾತಾಯ್ತು. ನಮ್ಮಲ್ಲಿ ಇಂಥ ಪ್ರಯತ್ನಗಳು ಆಗಿಯೇ ಇಲ್ಲವೇ? ಎಂದು ಹುಡುಕಲು ಹೊರಟರೆ, ಗದಗ ಜಿಲ್ಲೆಯ ಕಪ್ಪತಗುಡ್ಡದಲ್ಲಿ ನೀರಿನಜೋಗಿ ಎಂದೇ ಹೆಸರು ಮಾಡಿರುವ ಕೃಷಿ ಪಂಡಿತ ಶಿವಕುಮಾರ ಸ್ವಾಮೀಜಿ, ಬರದ ನಾಡಿನಲ್ಲೂ ಮಳೆ ನೀರು ಸಂಗ್ರಹ ಮಾಡಿ, ಹಸಿರು ಸೃಷ್ಟಿಸಿ ಸುತ್ತಲಿನ ಹಳ್ಳಿಗಳಿಗೆ ಜೀವ ಚೈತನ್ಯ ತುಂಬಿದ್ದಾರೆ.

ಮಳೆಕುಯ್ಲು ಹಾಗೂ ಸಂಗ್ರಹಣಾ ವಿಧಾನವನ್ನು ಸಮರ್ಥವಾಗಿ ಅಳವಡಿಸಿಕೊಂಡರೆ ನಮ್ಮ ಬಹಳಷ್ಟು ನೀರಿನ ಸಮಸ್ಯೆ ನೀಗಿಹೋಗುತ್ತದೆ ಎನ್ನುತ್ತಾರೆ ನಮ್ಮ ನೀರಿನ ತಜ್ಞರು. ಸರ್ಕಾರದ ಸುವರ್ಣ ಜಲ ಯೋಜನೆ ಈಗಾಗಲೇ 23683 ಸರ್ಕಾರಿ ಶಾಲೆಗಳಲ್ಲಿ ಅಳವಡಿಕೆಯಾಗಿ ಸಮರ್ಥ ಮಳೆಕೊಯ್ಲು ವಿಧಾನದಿಂದ ನೀರಿನ ಕೊರತೆ ನೀಗಿಕೊಂಡಿದೆ. ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ಮಳೆನೀರಿನ ಒಟ್ಟು ಸಂಗ್ರಹಣಾ ಸಾಮರ್ಥ್ಯ 8000 ದಿಂದ 15000 ಲೀಟರ್‌ಗಳಷ್ಟಿವೆ. water-harvestingಮನೆ, ಶಾಲೆ, ಯಾವುದೇ ಬೃಹತ್ ಕಟ್ಟಡದ ಮೇಲ್ಚಾವಣಿಗಳಿಂದ ಮಳೆ ನೀರು ಸಂಗ್ರಹಿಸಿ, ಅದರ ಪುನರ್ ಬಳಕೆಯ ಮೂಲಕ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ಈ ಕುರಿತು ಒಂದು ಆಂದೋಲನದ ರೀತಿಯಲ್ಲಿ, ಸಾರ್ವತ್ರಿಕವಾಗಿ ಜನರಲ್ಲಿ ಜಲ ಜಾಗೃತಿಯನ್ನೂ, ಅದನ್ನು ಪ್ರತಿಯೊಂದು ಕಟ್ಟಡದಲ್ಲೂ ಅಳವಡಿಸುವ ಕುರಿತು ಕಟ್ಟುನಿಟ್ಟಿನ ಕಾನೂನು ಕ್ರಮವನ್ನು ಕೈಗೊಂಡಾಗ ನಮ್ಮ ಜನರಲ್ಲೂ ಅದರ ಅರಿವು ಮೂಡುತ್ತದೆ. ಬೆಂಗಳೂರು ಜಲಮಂಡಳಿ ಈಗಾಗಲೇ ಮಳೆನೀರು ಕೊಯ್ಲು ಮಾದರಿ ಉದ್ಯಾನವನವನ್ನು ರೂಪಿಸಿ ಪ್ರಚಾರ ಕಾರ್ಯ ಆರಂಭಿಸಿರುವುದೂ ಒಂದು ಗಮನಾರ್ಹ ಪ್ರಯತ್ನ. ಇದಲ್ಲದೇ ಹಳ್ಳಿಗಳಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿಯಾದರೂ ಮಳೆ ನೀರಿನ ಸಮರ್ಥ ಬಳಕೆ ಕುರಿತು ಕೃಷಿ ಹಾಗೂ ಪರಿಸರ ತಜ್ಞರು ಜಾಗೃತಿ ಮೂಡಿಸುತ್ತಿದ್ದಾರೆ.

ಇಂತಹ ಪ್ರಕೃತಿಯಿಂದಲೇ ಪ್ರಕೃತಿಯನ್ನು ಪುನರ್ ಸೃಷ್ಟಿಸುವ, ಪ್ರಕೃತಿ ಕೇಂದ್ರಿತ ನೈಸರ್ಗಿಕ ಪ್ರಯತ್ನಗಳು ಭೂಮಿಯ ಮೇಲೆ ಮನುಷ್ಯ ಇನ್ನಷ್ಟು ವರ್ಷ ನೆಮ್ಮದಿಯಾಗಿ ಬದುಕಲು ಅನುವು ಮಾಡಿಕೊಡುತ್ತವೆ. ಅದಿಲ್ಲದೇ ಪ್ರಕೃತಿಯ ವಿರುದ್ಧವಾಗಿ ನಾವಿಡುವ ಪ್ರತಿ ಹೆಜ್ಜೆಯೂ ನಮ್ಮ ನಾಶಕ್ಕೆ ಕಂದಕವನ್ನು ನಾವೇ ತೋಡಿಕೊಳ್ಳುವಂತಾ ಮೂರ್ಖತನವಾದೀತು. ಸಹನಾಮಯಿ ಧರಿತ್ರಿ ತನ್ನ ಮೇಲಿನ ಅತ್ಯಾಚಾರಗಳಿಗೆ, ವರ್ತಮಾನವಷ್ಟೇ ಮುಖ್ಯ, ಎಂಬ ನಮ್ಮ ಹುಂಬತನಕ್ಕೆ, ಈಗಾಗಲೇ ನಾವು ಚೇತರಿಸಿಕೊಳ್ಳಲಾಗದಂತಾ ಪೆಟ್ಟುಗಳನ್ನು ಕೊಡುತ್ತಿದ್ದಾಳೆ. ಅವಳೊಂದಿಗಿನ ಪ್ರೀತಿಯ ಅನುಸಂಧಾನದಿಂದ ಮಾತ್ರ ನಾವು ನೆಮ್ಮದಿಯ ನಾಳೆಗಳನ್ನು ಕಾಣಲು ಸಾಧ್ಯ.

ಜನರಿಂದ, ಜನರಿಗಾಗಿ ಸಮಾಜದಿಂದ ನಾಯಕನಿಂದ, ನಾಯಕನಿಗಾಗಿ ಎನ್ನುವ ಫ್ಯಾಸಿಸ್ಟ್ ವ್ಯವಸ್ಥೆಗೆ ತೆವಳುತ್ತಿರುವ ಇಂಡಿಯಾ

– ಬಿ.ಶ್ರೀಪಾದ ಭಟ್

ಕೆಲವೊಮ್ಮೆ ಚರಿತ್ರೆ ತೆವಳುತ್ತದೆ, ಬಸವನ ಹುಳುವಿನ ಹಾಗೆ;ನಿ ಧಾನಕ್ಕೆ ಚಲಿಸುವ ಉಡದ ಹಾಗೆ. ಕೆಲವೊಮ್ಮೆ ಚರಿತ್ರೆ ಹಾರುತ್ತದೆ, ಹದ್ದಿನ ಹಾಗೆ. ಮಿಂಚಿನ ಹಾಗೆ ಕಣ್ಣು ಕುಕ್ಕಿ ಮಾಯವಾಗುತ್ತದೆ. -ಡಿ.ಆರ್.ನಾಗರಾಜ್

2012 ರಲ್ಲಿ ಮಾಯಾವತಿ ನೇತೃತ್ವದ ಬಿಎಸ್‌ಪಿ ಸರ್ಕಾರವನ್ನು ಸೋಲಿಸಿ ಅಧಿಕಾರಕ್ಕೇರಿದ ಗೂಂಡಾಗಿರಿ ಪಕ್ಷವೆಂದೇ ಕುಖ್ಯಾತಿಗೊಂಡ ಸಮಾಜವಾದಿ ಪಕ್ಷದ ಒಂದು ವರ್ಷದ ಅಧಿಕಾರದ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಕೋಮು ಗಲಭೆಗಳು ಮತ್ತು ಹಿಂಸಾಚಾರ ಘಟನೆಗಳು :

2/6/12 ಮಥುರಾ 4 ಜನರ ಸಾವು. 4/6/12 ಮುಜಪ್ಫರ್ ನಗರ 20 ಜನರ ಸಾವು
23/7/12 ಬರೇಲಿ 3 ಜನರ ಸಾವು 16/9/12 ಘಜಿಯಾಬಾದ್ 6 ಜನರ ಸಾವು
24/10/12 ಫೈಜಾಬಾದ್ 1 ಜನರ ಸಾವು 6/12/12 ಅಜಮಗರ್ 11 ಜನರ ಸಾವು
16/1/13 ಲಖ್ನೋ 2 ಜನರ ಸಾವು 4/2/13 ಮಥುರಾ 1 ಜನರ ಸಾವು
24/2/13 ಇಟಾವ 1 ಜನರ ಸಾವು 3/3/13 ಪ್ರತಾಪ್ ಘಡ್ 2 ಜನರ ಸಾವು
27/8/13 ಮುಜಪ್ಫರ್ ನಗರ 4 ಜನರ ಸಾವು 9/9/13 ಮುಜಪ್ಫರ್ ನಗರ 50 ಜನರ ಸಾವು

ಇದಲ್ಲದೆ ಅಮೇಥಿಯಲ್ಲಿ ದಲಿತರ ಮನೆಗಳ ಮೇಲೆ ದಾಳಿ ನಡೆಸಿ ಸುಡಲಾಗಿದೆ.
– (ತೆಹೆಲ್ಕ, 21ನೇ ಸೆಪ್ಟೆಂಬರ್ 2013 )

ಕೋಮು ಗಲಭೆಗಳಲ್ಲಿ ನಿಜಾಂಶಗಳು ಗೌಣಗೊಂಡು ಕಟ್ಟುಕಥೆಗಳು ಮೇಲುಗೈ ಸಾಧಿಸುತ್ತವೆ. ವದಂತಿಗಳು ಅನೇಕ ಬಗೆಯ ಹೌದು ಮತ್ತು ಅಲ್ಲಗಳೊಂದಿಗೆ ಪ್ರಾಮುಖ್ಯತೆ ಪಡೆದು ಪ್ರತಿಯೊಂದು ಕೋಮುಗಲಭೆಗಳನ್ನು ಹಿಂದಿನದಿಕ್ಕಿಂಲೂ ವಿಭಿನ್ನವೆಂಬಂತೆಯೂ, ಈ ಸಂದರ್ಭದಲ್ಲಿ ಹಿಂಸಾಚಾರ ಮತ್ತು ಹತ್ಯೆಗಳು ಅನಿವಾರ್ಯವೆಂಬಂತೆಯೂ ಸಮರ್ಥಿಸಲ್ಪಡುತ್ತವೆ ಮತ್ತು ಕಾಲಕ್ರಮೇಣ ತೆರೆಮರೆಗೆ ಸರಿಯಲ್ಪಡುತ್ತವೆ. -ಫರಾ ನಕ್ವಿ

ಮೇಲಿನ ಕೋಮು ಗಲಭೆಗಳಿಗೆ ಅಖಿಲೇಶ್ ಸರ್ಕಾರದ ಸಂಪೂರ್ಣ ವೈಫಲ್ಯತೆ ಮೂಲಭೂತ ಕಾರಣವಾದರೆ, ಇದರ ಹುಟ್ಟಿಗೆ ಕಾರಣರಾರು, ಇದನ್ನು ಬೆಂಕಿ ಹಾಕಿ ಬೆಳೆಸಿದವರಾರು ಎಂಬ ಪ್ರಶ್ನೆಗೆ ಅನಾಯಾಸವಾಗಿ ನಮ್ಮ ಗೋಣು ಬಿಜೆಪಿಯ ದಿಕ್ಕಿಗೆ ತಿರುಗುತ್ತದೆ. ಇದಕ್ಕೆ ಕಳೆದ ಎಂಬತ್ತು ವರ್ಷಗಳಲ್ಲಿ ಇಂಡಿಯಾದಲ್ಲಿ ಘಟಿಸುವ ಪ್ರತಿಯೊಂದು ಕೋಮು ಗಲಭೆಯ ಸಂದರ್ಭಗಳನ್ನು, ಹಿನ್ನೆಲೆಗಳನ್ನು ಅವಲೋಕಿಸಿದಾಗ ಈ ಸಂಘ ಪರಿವಾರದ ಪ್ರಚೋದನೆಗಳು, ಗುಪ್ತ ಆಶಯಗಳು ಅದಕ್ಕಾಗಿ ಯಾವುದೇ ಕೃತ್ಯಕ್ಕೂ ರೆಡಿಯಾಗುವ ಮನಸ್ಥಿತಿ ಇವೆಲ್ಲವೂ ಇತಿಹಾಸದಲ್ಲಿ ದಾಖಲಾಗಿವೆ. ಪ್ರತಿಯೊಂದು ದುಷೃತ್ಯದಲ್ಲೂ ತನ್ನ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಅದನ್ನು ನಿರಾಕರಿಸುವುದರ ಬದಲು ಸಂಘ ಪರಿವಾರ ತೀಕ್ಷಣವಾಗಿ ಪ್ರತಿಕ್ರಿಯಿಸುವುದು ‘ನೀವು ಕೇವಲ ನಮ್ಮನ್ನು ದೂಷಿಸುತ್ತೀರಿ ಆದರೆ ಅವರೇನು ಕಡಿಮೆಯೇ ? ಮೊದಲು ಅವರಿಗೆ ತಣ್ಣಗಿರಲು ಹೇಳಿ, ಇಲ್ಲದಿದ್ದರೆ ನಾವು ಪಾಠ ಕಲಿಸುತ್ತೇವೆ’ ಎಂದೇ. ಹೀಗೆ ಕಳೆದ ಎಂಬತ್ತು ವರ್ಷಗಳಲ್ಲಿ ಅವರು ಎನ್ನುವ ಗುಮ್ಮನನ್ನು ಸದಾ ಜೀವಂತವಾಗಿರಿಸಿಕೊಂಡೇ ಹಿಂದೂತ್ವದ ವೋಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡು ಬಂದ ಸಂಘ ಪರಿವಾರ ಇಂದು ತಮ್ಮವರಿಗಾಗಿಯೇ ದೇಶವನ್ನು ತಯಾರಿಸಲು ಹೊರಟಿದೆ.

2002 ರಲ್ಲಿ ಫ್ಯಾಸಿಸ್ಟ್ ಮುಖ್ಯಮಂತ್ರಿ ನರೇಂದ್ರ ಮೋದಿಯ ನೇತೃತ್ವದ ಅಧಿಕಾರದ ಅವಧಿಯಲ್ಲಿ ಗುಜರಾತ್‌ನಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡದಲ್ಲಿ ಸಾವಿರಾರು ಮುಸ್ಲಿಂರನ್ನು ಹತ್ಯೆ ಮಾಡಲಾಗಿಯಿತು. ಕಳೆದ ದಶಕದಲ್ಲಿ ಗುಜರಾತ್ ನಂತರ ಮಧ್ಯಪ್ರದೇಶದಲ್ಲಿ ಅಲ್ಲಿನ ಸಂಘ ಪರಿವಾರದ ಸೋಕಾಲ್ಡ್ ಜನಪ್ರಿಯ ಮುಖ್ಯಮಂತ್ರಿಯ ರಾಜ್ಯಭಾರದಲ್ಲಿ ಹೆಚ್ಚಿನ ಕೋಮು ಗಲಭೆಗಳು ಜರುಗಿವೆ. ಹೈದರಾಬಾದನಲ್ಲಿ ನಡೆದ ಸಣ್ಣ ಮಟ್ಟದ ಹಿಂಸಾಚಾರವನ್ನು ಹೊರತುಪಡಿಸಿದರೆ ಸೆಪ್ಪೆಂಬರ್ 2013 ರಲ್ಲಿ ಉತ್ತರ ಪ್ರದೇಶದ ಮುಜಫರ್ ನಗರ್ ಜಿಲ್ಲೆಯಾದ್ಯಾಂತ ಜರುಗಿದ ಕೋಮು ಗಲಭೆಗಳು ಮತ್ತು ಹತ್ಯಾಕಾಂಡಗಳಲ್ಲಿ ಸುಮಾರು 56 ಜನ ಸಾವಿಗೀಡಾಗಿದ್ದಾರೆ. Mulayam_Muzaffarnagarಮೋದಿಯು ದೇಶದ ಪ್ರಧಾನಿಯಾಗಲು ಮತ್ತು ಸಂಘ ಪರಿವಾರವು 2014 ರಲ್ಲಿ ಡೆಲ್ಲಿ ಗದ್ದುಗೆ ಕಬಳಿಸಲು ಯಾವುದೇ ಬಗೆಯ ಹಿಂಸಾಚಾರಕ್ಕೆ ಮತ್ತು ಮತಾಂಧತೆಗೆ ತಯಾರಾಗಿದ್ದರೆ ಅದಕ್ಕೆ ಎಣ್ಣೆ ಸುರಿದದ್ದು ಈ ಮುಲಾಯಂ ಸಿಂಗ್ ಎನ್ನುವ ಮತ್ತೊಬ್ಬ ಮತಾಂಧ ರಾಜಕಾರಣಿ.

ಒಂದು ಕಡೆ ಇಂಡಿಯಾದ ಮುಸ್ಲಿಂರು ತಮ್ಮ ಮೌಢ್ಯದ ಕೂಪಗಳಾದ Ghettoಗಳಿಂದ ಹೊರಬರದಂತೆ ಅಲ್ಲಿನ ಧರ್ಮಗುರುಗಳು ಅಡ್ಡಗೋಡೆಯಾಗಿ ನಿಂತಿದ್ದರೆ ಈ ಮೂಲಭೂತವಾದಿಗಳನ್ನು ಓಲೈಸುತ್ತ ಮುಸ್ಲಿಂರನ್ನು ಸದಾ ಅಭದ್ರತೆಯ ನೆರಳಿನಲ್ಲಿ ಬದಕುವಂತೆ ಮಾಡಿದ್ದು ಈ ಮುಲಾಯಂ ಎನ್ನುವ ಅಪಾಯಕಾರಿ ರಾಜಕಾರಣಿ. ಕಾಂಗ್ರೆಸ್ ಸಹ ಅಲ್ಪಸಂಖ್ಯಾತರನ್ನು ಬಳಸಿ ಓಟ್ ಬ್ಯಾಂಕ್ ರಾಜಕಾರಣ ಮಾಡಿತ್ತು. ಅದಕ್ಕೆ ಸರಿಯಾಗಿ ಬೆಲೆ ತೆತ್ತಿದೆ ಕೂಡ. ಆದರೆ ಈ ಮುಲಾಯಂನಂತೆ ಈ ಮಟ್ಟದಲ್ಲೆಂದೂ ಬೆಂಕಿಯೊಂದಿಗೆ ನಿರಂತರವಾಗಿ ಸರಸವಾಡಿದಂತಿಲ್ಲ. ಆದರೆ ಸಂಘ ಪರಿವಾರ ಮತ್ತು ಮುಲಾಯಂ ಸಿಂಗ್ ತಮ್ಮ ತಮ್ಮ ನೆಲೆಗಟ್ಟಿನ ಮತಗಳ ಬೇಟೆಗೋಸ್ಕರ ಹಿಂದೂ ಮತ್ತು ಮುಸ್ಲಿಂರ ನಡುವೆ ಹುಟ್ಟಿ ಹಾಕಿದ ವೈಮನಸ್ಯ ಈ ಕೋಮು ಗಲಭೆಗಳಗೆ ಮೂಲ ಬೀಜಗಳು. ಅದಕ್ಕಾಗಿಯೇ ಗುಜರಾತ್ ಹಿಂಸಾಚಾರದ ಆರೋಪಿ, ಮೋದಿಯ ಬಲಗೈ ಬಂಟ ಅಮಿತ್ ಷಾಗೆ ಉತ್ತರ ಪ್ರದೇಶದ ಉಸ್ತುವಾರಿ ವಹಿಸಲಾಯಿತು. ಉಸ್ತುವಾರಿಯ ಜವಬ್ದಾರಿ ವಹಿಸಿಕೊಂಡ ನಂತರ ಈ ಮತೀಯವಾದಿ ಅಮಿತ್ ಷಾ ಮಾಡಿದ ಮೊದಲ ಕೆಲಸ ಅಯೋಧ್ಯೆಗೆ ಭೇಟಿ ನೀಡಿ ರಾಮಮಂದಿರ ನಿರ್ಮಾಣಕ್ಕಾಗಿ ಪಣ ತೊಟ್ಟಿದ್ದು. ಅದೇ ವೇಳೆಯಲ್ಲಿ ಸಂಫ ಪರಿವಾರದ ಅಂಗ ಪಕ್ಷವಾದ ವಿಚ್‌ಪಿ ಅಯೋಧ್ಯೆ ಚಲೋ ಎನ್ನುವ ಕೇಸರೀ ಯಾತ್ರೆಯನ್ನು ಪ್ರಾರಂಭಿಸಿತು. ಸಂಘ ಪರಿವಾರ ಮತ್ತೊಮ್ಮೆ ಏಕ್ ಧಕ್ಕ ಔರ್ ದೋ ಮಾದರಿಯ ಮತಾಂಧತೆಯ ಉನ್ಮಾದದ ಅಲೆ ಸೃಷ್ಟಿಸಲು ಸಜ್ಜಾಯಿತು. ಇವರೊಂದಿಗೆ ಅನಧಿಕೃತವಾಗಿ ಹೊಂದಾಣಿಕೆ ಮಾಡಿಕೊಂಡಂತೆ ಮುಲಾಯಂ ಸಿಂಗ್ ವರ್ತಿಸತೊಡಗಿದ್ದು, ಮುಸ್ಲಿಂ ಸಮುದಾಯವನ್ನು ಸದಾ ಭೀತಿಯ ನೆರಳಿನಲ್ಲಿ ಬದುಕುವಂತೆ ವಾತಾವರಣ ಸೃಷ್ಟಿಸಿ ಅಥವಾ ಆ ಬಗೆಯ ಭೀತಿಯ ವಾತಾವರಣ ಸೃಷ್ಟಿಸಲು ಸಂಘ ಪರಿವಾರಕ್ಕೆ ಕುಮ್ಮಕ್ಕು ನೀಡಿದ್ದರ ಫಲವಾಗಿ ಇಂದು ಮತ್ತೊಮ್ಮೆ ಉತ್ತರ ಪ್ರದೇಶವು ಮತೀಯವಾದಿಗಳ ಫೆನೆಟಿಸಂಗೆ ಆಡೊಂಬಲವಾಗುತ್ತಿದೆ. ಸಂಘ ಪರಿವಾರ ಮತ್ತು ಈ ಮುಲಾಯಂ ಧರ್ಮವನ್ನು ಮತ್ತೊಮ್ಮೆ ರಾಜಕಾರಣದ ಆಯುಧವೆಂಬಂತೆ ಬಳಸಿಕೊಂಡು ಜನರನ್ನು ಭಾವಾವೇಶಕ್ಕೆ ತಳ್ಳಿ ಮರಳಿ ತೊಂಬತ್ತರ ದಶಕದ ಮತೀಯವಾದದ ಅತಿರೇಕತೆಯನ್ನು ಹುಟ್ಟು ಹಾಕಲು ಕೈ ಜೋಡಿಸಿದ್ದಾರೆ.

ಒಂದಂತೂ ನಿಜ ಹಂದಿಯನ್ನು ಕೊಂದು ಮಸೀದಿಯ ಮುಂದೆ ಬಿಸಾಡುವ ಮತಾಂಧತೆಯ ಹಿಂಸೆಯ ಸ್ವರೂಪ ಮತ್ತೆ ಮರುಕಳಿಸುತ್ತಿದೆ. ಧರ್ಮಾಂಧತೆಯ ಐಡೆಂಟಿಟಿ ಪಾಲಿಟಿಕ್ಸ್ ತನ್ನೆಲ್ಲ ಆಯುಧಗಳೊಂದಿಗೆ ಬೆಂಕಿಯುಗುಳುವ ಹಿಂದೂ ರಾಷ್ಟೀಯವಾದಿಯ ನುಡಿಕಟ್ಟುಗಳೊಂದಿಗೆ ಚಾಲನೆಗೆ ಬರುತ್ತಿದೆ. ಮತೀಯ ರಾಷ್ಟ್ರೀಯತೆ ತನ್ನೆಲ್ಲ ಫ್ಯಾಸಿಸಂನೊಂದಿಗೆ ದೇಶದ ಉದ್ದಗಲಕ್ಕೂ ವ್ಯಾಪಿಸಿಕೊಳ್ಳುತ್ತಿದೆ.

ಮೊನ್ನೆ ಮುಜಫರ್ ಜಿಲ್ಲೆಯಲ್ಲಿ ನಡೆದ ಕೋಮು ಗಲಭೆಗಳಿಗೂ 2002 ರ ಗುಜರಾತ್‌ನ ನರಮೇಧದ ಹಿನ್ನೆಲೆಗೂ ಸಾಮ್ಯತೆಗಳಿವೆ:

2002 ರ ಫೆಬ್ರವರಿಯಲ್ಲಿ ಗೋಧ್ರಾದಲ್ಲಿ ಸಂಭವಿಸಿದ ರೈಲು ಅಗ್ನಿ ದುರಂತದಲ್ಲಿ ಸುಮಾರು ಐವತ್ತು ಪ್ರಯಾಣಿಕರು ಸಾವನ್ನಪ್ಪಿದರು, muzaffarnagar-riots-tentsಅವರೆಲ್ಲ ಹಿಂದೂಗಳು. ಅದರ ಕುರಿತಾಗಿ ನ್ಯಾಯಾಂಗ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೆ ಮತ್ತೆರೆಡು ಸ್ವತಂತ್ರ ತನಿಖೆಗಳು ನಡೆದು ಈ ಅಗ್ನಿ ದುರಂತವು ಆಕಸ್ಮಿಕವೆಂದು ವರದಿ ನೀಡಿದವು. ಮತ್ತೊಂದು ಕಡೆ 2002 ಫೆಬ್ರವರಿ 27 ರಂದು ಗೋಧ್ರಾ ರೈಲು ನಿಲ್ದಾಣದಲ್ಲಿ, ಅಗ್ನಿಗೆ ಆಹುತಿಗೊಳಗಾದ ಬೋಗಿಯಲ್ಲಿ ಮುಸ್ಲಿಂ ನಾಗರಿಕರು ಇರದಂತೆ, ಕೇವಲ ಹಿಂದೂ ಕರಸೇವಕರು ಮಾತ್ರ ಇರುವಂತೆ ಆಯೋಜಿಸಬೇಕೆಂದು ಪೋಲೀಸರಿಗೆ ಸೂಚನೆ ನೀಡಲಾಗಿತ್ತು ಎನ್ನುವ ಅನುಮಾನದ ಅಂಶಗಳು ಕೂಡ ತನಿಖೆಗೆ ಒಳಗಾಗುತ್ತಿದೆ. ಆದರೆ ಫೆಬ್ರವರಿ 28 ರಂದು ಗುಜರಾತ್‌ನ ಪ್ರಾದೇಶಿಕ ದಿನಪತ್ರಿಕೆಗಳು ಗೋದ್ರಾ ಘಟನೆಯನ್ನು ತಿರುಚಿ, ಹಿಂದೂಗಳ ಮತೀಯ ಭಾವನೆಗಳನ್ನು ಕೆರಳಿಸುವಂತಹ ವರದಿಗಳನ್ನು ಪ್ರಕಟಿಸಿದವು. ಅಂದು ಗೋಧ್ರಾ ರೈಲು ನಿಲ್ದಾಣದಲ್ಲಿ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಯಿತೆಂದು ಸುಳ್ಳು ವರದಿಗಳನ್ನು ಪ್ರಕಟಿಸಲಾಯಿತು. ಅತ್ಯಾಚಾರಕ್ಕೊಳಗೊಂಡ, ಇರಿತದಿಂದ ಸಾವನ್ನಪ್ಪಿದ ಕೆಲವು ಮಹಿಳೆಯರ ಫೋಟೋಗಳನ್ನು ತಮ್ಮ ದಿನ ಪತ್ರಿಕೆಗಳಲ್ಲಿ ಪ್ರಕಟಿಸಿ ಇದು ಗೋದ್ರಾ ರೈಲು ನಿಲ್ದಾಣದಲ್ಲಿ ನಡೆದದ್ದೆಂದು ಹಸಿ ಹಸಿ ಸುಳ್ಳುಗಳನ್ನು ಪ್ರಚಾರ ಮಾಡಲಾಯಿತು. 2002 ರ ಫೆಬ್ರವರಿಯ ಗೋಧ್ರಾ ರೈಲು ದುರಂತದ ನಂತರ ಹಿಂದೂಗಳ ಮತೀಯ ಭಾವನೆಗಳನ್ನು ಕೆರಳಿಸಿ ಗುಜರಾತ್ ರಾಜ್ಯಾದ್ಯಾಂತ ಮುಸ್ಲಿಂ ವಿರೋಧಿ ಪ್ರಚಾರ ನಡೆಸಿದ ಸಂಘ ಪರಿವಾರ ಇದಕ್ಕೆ ಕುಮ್ಮಕ್ಕು ನೀಡಿದ ನರೇಂದ್ರ ಮೋದಿ ನಂತರದ ವಾರಗಳಲ್ಲಿ ನಡೆಸಿದ ಹತ್ಯಾಕಾಂಡದಲ್ಲಿ ಪ್ರತ್ಯಕ್ಷವಾಗಿಯೇ, ಸರ್ಕಾರದ ಮತ್ತು ಗೃಹ ಖಾತೆಯ ಬೆಂಬಲದಿಂದ ಸಾವಿರಾರು ಮುಸ್ಲಿಂರ ಹತ್ಯೆ ಮಾಡಲಾಯಿತು. ಅದಾಗಿ 11 ವರ್ಷಗಳ ನಂತರವೂ ಇಂದಿಗೂ ಅಲ್ಲಿ ಭಯದ ವಾತಾವರಣವಿದೆ. ಮುಸ್ಲಿಂರನ್ನು ಸದಾ ಅಭದ್ರತೆಯಲ್ಲಿ ನರಳುವಂತೆ ಮಾಡಲಾಗಿದೆ. ಇನ್ನೂ ಕೆಲವು ನಿರಾಶ್ರಿತ ಶಿಬಿರಗಳಲ್ಲಿ ಮುಸ್ಲಿಂರು ಅತಂತ್ರರಾಗಿ ಬದುಕುತ್ತಿದ್ದಾರೆ.ಮಾನವ ವಿರೋಧಿ ಹಿಂದುತ್ವದ ಆಫೀಮು ಇಂದಿಗೂ ಗುಜರಾತ್‌ನಲ್ಲಿ ಜಾರಿಯಲ್ಲಿದೆ

2013 ಆಗಸ್ಟ್ 27 ರಂದು ಮುಜಫರ್ ನಗರದಲ್ಲಿ ಮುಸ್ಲಿಂ ಯುವಕರು ಹಿಂದೂ ಯುವತಿಯೊಬ್ಬಳನ್ನು ಚುಡಾಯಿಸಿದರೆಂಬ ವದಂತಿಯಿಂದ ಪ್ರಾರಂಭಗೊಂಡ ಈ ಚಿಲ್ಲರೆ ಜಗಳ ಜಾಟ್ ಸಮುದಾಯಕ್ಕೆ ಸೇರಿದ ಗುಂಪೊಂದು ಮುಸ್ಲಿಂ ಯುವಕನನ್ನು ಹತ್ಯೆಗೈಯುವಷ್ಟರ ಮಟ್ಟಿಗೆ ಬಂದು ಮುಟ್ಟಿತು. ಇದಕ್ಕೆ ಪ್ರತಿಯಾಗಿ ಹತ್ಯೆಗೆ ಪ್ರತೀಕಾರವೆಂಬಂತೆ ಮುಸ್ಲಿಂರ ಗುಂಪೊಂದು ಯುವತಿಯ ಇಬ್ಬರು ಸಂಬಂಧಿಕರ ಮೇಲೆ ಹಲ್ಲೆ ನಡೆಸಿತೆಂದೂ ನಂತರ ಈ ಪ್ರಾಣಾಂತಿಕ ಹಲ್ಲೆಯಿಂದಾಗಿ ಈ ಇಬ್ಬರು ಸಹೋದರರು ಸಾವನ್ನಪ್ಪಿದರೆಂದೂ ಪತ್ರಿಕೆಗಳಲ್ಲಿ ವರದಿಯಾಯಿತು. ಆದರೆ ಕೆಲವು ಕಿಡಿಗೇಡಿಗಳು ಪಕ್ಕದ ತಾಲಿಬಾನ್ ರಾಷ್ಟ್ರಗಳಲ್ಲಿ ಚಿತ್ರೀಕರಣಗೊಂಡ ಇಬ್ಬರು ಯುವಕರನ್ನು ಇರಿದು ಸಾಯಿಸುವ ವಿಡಿಯೋ ದೃಶ್ಯವನ್ನು ಮುಜಫರ್ ನಗರದ ಈ ಘಟನೆಗೆ ಸಂಬಂದಿಸಿದ್ದೆಂದು ಸುಳ್ಳು ಪ್ರಚಾರ ಪ್ರಾರಂಬಿಸಿದರು. ಈ ನಕಲಿ ವಿಡಿಯೋ ಅಂತರ್ಜಾಲದಲ್ಲೆಲ್ಲ ಹರಿದಾಡಿತು. ಆಗಸ್ಟ್ 31 ರ ವೇಳೆಗೆ ಮೊಬೈಲ್‌ಗಳಲ್ಲಿ ಎಸ್ಸೆಮ್ಮೆಸ್ ಮೂಲಕ ರವಾನೆಯಾಗತೊಡಗಿತು. ಈ ನಕಲಿ ವಿಡಿಯೋವನ್ನು ಕಾಳ್ಗಿಚ್ಚಿನಂತೆ ಹಬ್ಬಿಸಿ ಹಿಂದೂಗಳ ಭಾವನೆಗಳನ್ನು ಕೆರಳಿಸುವಲ್ಲಿ ಸಂಘಪರಿವಾರದ ಕೈವಾಡವಿದೆಯೆಂದೂ ನೇರವಾಗಿಯೇ ಆರೋಪಿಸಲಾಗುತ್ತಿದೆ. ಆದರೆ ಬಿಜೆಪಿ ಇದನ್ನು ನಿರಾಕರಿಸುತ್ತಿದೆ. ಒಟ್ಟಿನಲ್ಲಿ ಈ ಮತೀಯವಾದವನ್ನು ಈ ಸಂಘ ಪರಿವಾರ ಹುಟ್ಟು ಹಾಕಿತೋ ಇಲ್ಲವೋ ಅದು ತನಿಖೆಯಿಂದ ಗೊತ್ತಾಗುತ್ತದೆ, ಆದರೆ ಈ ಬಗೆಯ ಆಕಸ್ಮಿಕ ವಿಷಮಯ ವಾತಾವರಣಕ್ಕೆ ಕಾಯುತ್ತಿದ್ದ ಸಂಘ ಪರಿವಾರವು ಮುಜಫರ್ ನಗರದಲ್ಲಿ ಘಟಿಸಿದ ಈ ಅಂತಧರ್ಮಗಳ ಒಳ ಕಲಹವನ್ನು ತದನಂತರ ತನ್ನ ಕೈಗೆತ್ತಿಕೊಂಡು ಅದು ಜಿಲ್ಲೆಯಾದ್ಯಾಂತ ವ್ಯಾಪಿಸುವಂತೆ ಮಾಡುವುದರಲ್ಲಿ ಮಾತ್ರ ತನ್ನ ಕೈವಾಡವಿರುವುದನ್ನು ನಿರಾಕರಿಸಲು ಸಾಧ್ಯವೇ ಇಲ್ಲ. ಉತ್ತರ ಪ್ರದೇಶದ ಬಿಜೆಪಿ ಶಾಸಕರಾದ ಸಂಗೀತ್ ಸಿಂಗ್ ಸೋಮ್ ಮತ್ತು ಭಾರತೇಂದು ಸಿಂಗ್ ಮತ್ತು ಹುಕುಮ್ ಸಿಂಗ್ ಮೇಲೆ ಮತೀಯ ಭಾವನೆಗಳನ್ನು ಕೆರಳಿಸಿ ಮುಜಫರ ನಗರದ ಕೋಮು ಗಲಭೆಗಳಿಗೆ ಕಾರಣರಾದರೆಂದು ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಜಾಮೀನುರಹಿತ ವಾರೆಂಟ್ ಜಾರಿಯಾಗಿದೆ. Suresh ranaಆದರೆ ಅವರನ್ನು ಬಂಧಿಸಲು ಇಂದಿಗೂ ಸಾಧ್ಯವಾಗುತ್ತಿಲ್ಲ. ಅದಕ್ಕೆ ಪೋಲೀಸರು ಕೊಡುತ್ತಿರುವ ಕಾರಣ ಆಡಳಿತಾತ್ಮಕ ತೊಂದರೆಗಳು. ಕಡೆಗೆ ಬಂದಿಸಿದ್ದಾರೆ ಎಂದು ವರದಿಯಾಗಿದೆ. ಇದೇ ಸಂದರ್ಭದಲ್ಲಿ ಮೊಟ್ಟ ಮೊದಲ ಬಾರಿಗೆ ಅಲ್ಲಿನ ಶಾಸಕಿಯಾಗಿ ಆಯ್ಕೆಗೊಂಡ, ತನ್ನ ತೊಂಬತ್ತರ ದಶಕದ ಹಿಂಸಾತ್ಮಕ ವ್ಯಕ್ತಿತ್ವಕ್ಕೆ ಮರಳಿದ ಬಿಜೆಪಿಯ ಉಮಾಭಾರತಿ ಸದನದಲ್ಲಿ ಮಾತನಾಡುತ್ತ “ಹುಷಾರ್! ಬಿಜೆಪಿಯ ಶಾಸಕರನ್ನು ಬಂಧಿಸಿದರೆ ಮುಂದಿನ ಗತಿ ನೆಟ್ಟಗಾಗಲಿಕ್ಕಿಲ್ಲ, ತೀವ್ರವಾದ ಪರಿಣಾಮಗಳನ್ನು ಎದರುರಿಸಬೇಕಾಗುತ್ತದೆ,” ಎಂದು ಗುಡುಗಿದ್ದಾರೆ. (ದ ಹಿಂದೂ, ಸೆಪ್ಟೆಂಬರ್ 19, 2013)

ಈ ಬಿಜೆಪಿ ನಾಯಕರು, ಮೋದಿ ಮತ್ತು ಮತಾಂಧ ಗುಂಪುಗಳು ತಮ್ಮ ಹಿಂದೂ ಧರ್ಮದ ಭಗವದ್ಜಜ, ಶಂಖ, ಕಮಂಡಲ, ಓಂ ಇತ್ಯಾದಿಗಳು ಧರ್ಮ ರಕ್ಷಣೆಯ, ಸದ್ಭಾವನೆಯ, ರಾಷ್ಟ್ರೀಯವಾದಿ ಸಂಕೇತಗಳೆಂದೂ ಇತರೇ ಧರ್ಮಗಳ ಆಚರಣೆಗಳು ಮತ್ತು ಉಡುಗೆ ತೊಡುಗೆಗಳನ್ನು ಅಪಾಯಕಾರಿ, ರಾಷ್ಟ್ರ ವಿರೋಧಿ ಸಂಕೇತಗಳಾಗಿ ಬಿಂಬಿಸಿ ಅವುಗಳ ಕುರಿತಾಗಿ ಒಂದು ಬಗೆಯ ಹೀಗಳಿಕೆಯ ನುಡಿಕಟ್ಟನ್ನು, ಮನೋಭೂಮಿಕೆಯನ್ನು ಜಾರಿಗೊಳಿಸಿತು. ಎರಡು ವರ್ಷಗಳ ಹಿಂದೆ ಇದೇ ಮೋದಿ ತನ್ನ ಸದ್ಭಾವನಾ ರ್‍ಯಾಲಿಯಲ್ಲಿ ಮುಸ್ಲಿಂ ನಾಯಕರು ತೊಡಿಸಲು ಬಂದ ಸ್ಕಲ್ ಕ್ಯಾಪ್ ಅನ್ನು ತೊಡಲು ಬಹಿರಂಗವಾಗಿಯೇ ನಿರಾಕರಿಸಿದ್ದ. ಕಳೆದ ಹತ್ತು ವರ್ಷಗಳಲ್ಲಿ ನಾನೇನು ಬದಲಾಗಿಲ್ಲ, ಹುಷಾರಾಗಿರಿ ಎಂಬ ವಾರ್ನಿಂಗ್ ರೀತಿಯಲ್ಲಿತ್ತು ಈ ಸರ್ವಾಧಿಕಾರಿಯ ವರ್ತನೆ. ಮಿಯ್ಯಾ ಮುಶ್ರಫ್, ಮೇಡಂ ಮೇರಿ, ಮೈಖೆಲ್ ಲಿಂಗ್ಡೋ ಎಂದು ಅತ್ಯಂತ ಸ್ಯಾಡಿಸ್ಟ್ ಮನಸ್ಥಿತಿಯಲ್ಲಿ ಇತರೇ ಧರ್ಮಗಳನ್ನು ಕ್ರೂರವಾಗಿ, ಅಮಾನವೀಯವಾಗಿ ಹಂಗಿಸಿದ್ದ ಈ ಮೋದಿ ಈ ವರ್ಷ ಮುಂದುವರೆದು “ಬುರ್ಖಾ ಸೆಕ್ಯುಲರಿಸಂ” ಎಂದು ಅಮಾನವೀಯವಾಗಿ ಮಾತನಾಡಿದ್ದಾನೆ. ಇದೇ ಫ್ಯಾಸಿಸ್ಟ್ ಆರೆಸಸ್ 1926 ರಲ್ಲಿ ನಾಗಪುರದಲ್ಲಿ ಹಿಂದೂ ಡಾಕ್ಟರ್ ಮನೆಯ ಮೇಲೆ ಯಾರೋ ಅಲ್ಲಾಹೊ ಅಕ್ಬರ್ ಎಂದು ಕೂಗುತ್ತ ದಾಳಿ ನಡೆಸಿದರು ಎಂದು ಗುಲ್ಲೆಬ್ಬಿಸಿ ಕೋಮು ಗಲಭೆಗಳನ್ನು ಹುಟ್ಟು ಹಾಕಿದ್ದ ಕಾಲದಿಂದ ಹಿಡಿದು 2013 ರಲ್ಲಿ ಮುಜಫರ್ ನಗರದಲ್ಲಿ ನಡೆದ ಕೋಮು ಗಲಭೆಗಳವರೆಗೂ ವರೆಗೂ ಅಂದರೆ ಕಳೆದ 87 ವರ್ಷಗಳಿಂದ ‘ದಾಡಿ, ಟೋಪಿ, ಬುರ್ಖಾದವರೇನಾದರು ಕಂಡಲ್ಲಿ ಅವರ ಮೇಲೆ ಹಲ್ಲೆ ನಡೆಸಿ ಏಕೆಂದರೆ ಅವರು ಇಲ್ಲಿಯವರಲ್ಲ, ನಮ್ಮವರಲ್ಲ’ ಎಂದು ವ್ಯವಸ್ಥಿತ ಅಪಪ್ರಚಾರ ನಡೆಸುತ್ತಾ ಕಾಲಕಾಲಕ್ಕೆ ಲುಂಪೆನ್ ಹಿಂದುತ್ವವಾದಿ ದಾಳಿಕೋರ ತಲೆಮಾರುಗಳನ್ನು ಬೆಳೆಸಿತ್ತು. ಎಂಟು ದಶಕಗಳ ಕಾಲ ಎರಡು ಧರ್ಮಗಳ ನಡುವೆ ವೈಷಮ್ಯದ, ದ್ವೇಷದ ವಾತಾವರಣವನ್ನು ಜೀವಂತವಾಗಿಟ್ಟಿತ್ತು. ಇವರ ಜೊತೆಗಾರ ಬಾಳಾ ಠಾಕ್ರೆ ಮುಂಬೈಯಲ್ಲಿ ಈ ದಾಡಿ, ಟೋಪಿ, ಬುರ್ಖಾದ ವಿರುದ್ಧ ಬೆಂಕಿಯುಗುಳುತ್ತಿದ್ದರೆ ಇತ್ತ ಈ ಅರೆಸೆಸ್ ಉತ್ತರ ಭಾರತಾದ್ಯಾಂತ ‘ಗರ್ವಸೆ ಕಹೋ ಹಂ ಹಿಂದೂ ಹೈ’ ಎಂಬ ಪ್ರಚೋದನಾತ್ಮಕವಾದ, ದೇಶ ವಿರೋಧಿ ಘೋಷಣೆಯನ್ನು ಪ್ರತಿಧ್ವನಿಸುತ್ತಿತ್ತು.

ಸ್ವಂತಂತ್ರೋತ್ತರ ಭಾರತದಲ್ಲಿ ಸಂಘ ಪರಿವಾರವು ದೇಶದ ಯಾವುದೇ ಭಾಗದಲ್ಲಾಗಲಿ ಈ ದಾಡಿಯವರು, ಬುರ್ಖಾದವರೇನದರೂ ಕಂಡರೆ ಅವರ ಮೇಲೆ ಹಲ್ಲೆ ನಡೆಸಿ, ಅವರನ್ನು ಬಿಡಬೇಡಿ ಎಂದು ಕರೆ ಕೊಟ್ಟು ಭಿವಂಡಿಯಲ್ಲಿ, ಮುಂಬೈನಲ್ಲಿ, ಮೀರತ್‌ನಲ್ಲಿ, ಕಾನ್ಪುರದಲ್ಲಿ, ಭಾಗಲ್ಪುರದಲ್ಲಿ, ಅಯೋಧ್ಯೆಯಲ್ಲಿ, ಮುಜಫರ್ ನಗರ ದಲ್ಲಿ, ಗುಜರಾತ್‌ನಲ್ಲಿ ಕೋಮು ಗಲಭೆಗಳನ್ನು ಹುಟ್ಟು ಹಾಕಿ ಸಾವಿರಾರು ಮುಗ್ಧ ನಾಗರಿಕರ ಹತ್ಯೆಗಳಿಗೆ ಬೀಜವನ್ನು ಬಿತ್ತಿತು. ತೊಂಬತ್ತರ ದಶಕದಲ್ಲಿ ‘ಜೈ ಶ್ರೀರಾಂ, ಹರ ಹರ ಮಹಾದೇವ’ ಘೋಷಣೆಗಳು ಅಲ್ಪಸಂಖ್ಯಾತರ ಪಾಲಿಗೆ ಮರಣ ಶಾಸನವಾಗಿದ್ದು ನಿಜಕ್ಕೂ ಉತ್ಪ್ರೇಕ್ಷೆಯಲ್ಲ. ಕೋಮು ಗಲಭೆಗಳಲ್ಲಿ ಸತ್ತ ಮುಸ್ಲಿಂ ನಾಗರಿಕರ ಸಂಖ್ಯೆಗಳನ್ನು ಎದೆ ತಟ್ಟಿ ಘೋಷಿಸಿಕೊಳ್ಳುತ್ತಿತ್ತು ಈ ಸಂಘ ಪರಿವಾರ. ಒಟ್ಟಿನಲ್ಲಿ ಇಂಡಿಯಾದ ಮುಸ್ಲಿಂರು ತಮ್ಮ ಮೌಢ್ಯದ, ಕ್ರೌರ್ಯದ ಕೂಪಗಳಾದ Ghetto ಗಳಿಂದ ಹೊರಬಂದು ಮುಖ್ಯವಾಹಿನಿಗೆ ಬರಲು ಅಣಿಯಾಗುತ್ತಿದ್ದಂತೆಯೇ ಈ ಸಂಘ ಪರಿವಾರ ಮತ್ತು ಈ ಮೋದಿ ಅವರನ್ನು ಸಮಾಜದ ಎರಡನೇ ದರ್ಜೆಯ ನಾಗರಿಕರನ್ನಾಗಿಸುತ್ತ, ಅವರ ಧಾರ್ಮಿಕ ಸಂಕೇತಗಳನ್ನು ವಿಂಡಬನಾತ್ಮಕವಾಗಿ ಹೀನಾಯವಾಗಿ ಹಂಗಿಸುತ್ತ ದೇಶದಾದ್ಯಂತ ಧಾರ್ಮಿಕ ಧ್ರುವೀಕರಣಕ್ಕೆ ಚಾಲ್ತಿ ನೀಡಿತ್ತು.

ಆದರೆ ಮತ್ತೊಂದು ಕಡೆ ತನ್ನನ್ನು ಸರ್ವಧರ್ಮ ಸಹಿಷ್ಣುವೆಂಬಂತೆ ಬಿಂಬಿಸಿಕೊಳ್ಳಲು ಅನೇಕ ವಾಮಮಾರ್ಗಗಳನ್ನು ಹುಡುಕುತ್ತಿದೆ ಸಂಘ ಪರಿವಾರ. ಇದಕ್ಕೆ ಜ್ವಲಂತ ಉದಾಹರಣೆಯೆಂದರೆ 2013 ರ ಸೆಪ್ಟೆಂಬರ್‌ನಲ್ಲಿ ರಾಜಸ್ತಾನದ ಜೈಪುರದಲ್ಲಿ ಮೋದಿಯ ನೇತೃತ್ವದಲ್ಲಿ ನಡೆದ ಬಿಜೆಪಿಯ ರ್‍ಯಾಲಿಯಲ್ಲಿ ಭಾಗವಹಿಸಲು ಮುಸ್ಲಿಂರ ಗುಂಪೊಂದನ್ನು ಆರಿಸಿ ಅವರಿಗೆಲ್ಲ ಸ್ಕಲ್ ಟೋಪಿ ಮತ್ತು ಬುರ್ಖಾಗಳನ್ನು ಉಚಿತವಾಗಿ ವಿತರಿಸಿ, modi_skull_capಇದನ್ನು ಕಡ್ಡಾವಾಗಿ ಧರಿಸಿ ಈ ಬಿಜೆಪಿ ರ್‍ಯಾಲಿಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಲಾಗಿತ್ತು. ಈ ಮುಸ್ಲಿಂ ಗುಂಪು ತಮ್ಮ ಸಾಂಪ್ರದಾಯಿಕ ಸ್ಕಲ್ ಕ್ಯಾಪ್ ಅನ್ನು ಧರಿಸಿಕೊಂಡು ಬರುವಂತೆ ಅವರಿಗೆ ವಿಶೇಷವಾಗಿ ಸೂಚಿಸಲಾಗಿತ್ತು. ಇದನ್ನು ಪ್ರಶ್ನಿಸಿದ್ದಕ್ಕೆ ಸಂಘ ಪರಿವಾರದ ನಾಯಕರು ಇದರಲ್ಲಿ ವಿಶೇಷತೆಯೇನಿದೆ? ಅವರರವರ ನಂಬಿಕೆ ಅವರದ್ದು, ಇದು ಸಂಘ ಪರಿವಾರದ ಧರ್ಮ ಸಹಿಷ್ಣತೆಯನ್ನು ಸೂಚಿಸುತ್ತದೆ ಎಂದು ಹೇಳಿ ಪ್ರಜ್ಞಾವಂತರು ಕಕ್ಕಾಬಿಕ್ಕಯಾಗುವಂತೆ ಮಾಡಿದರು. ಅಂದರೆ ಪ್ರಜಾಪ್ರಭುತ್ವ, ಸೆಕ್ಯುಲರ್ ದೇಶವೊಂದರ ಪ್ರಧಾನ ಮಂತ್ರಿ ಆಕಾಂಕ್ಷಿ ನೀವಂದುಕೊಂಡಂತೆ ಧರ್ಮಾಂಧನಲ್ಲ, ಆತನಿಗೂ ಒಳಗೊಳ್ಳುವಿಕೆಯ ಅರಿವಿದೆ, ಅದಕ್ಕೇ ನೋಡಿ ಈ ಸ್ಕಲ್ ಕ್ಯಾಪ್ ಧರಿಸಿರುವ ಮಂದಿ ಹೇಗೆ ಹಿಂದೂಗಳೊಂದಿಗೆ ಬಿಜೆಪಿ ರ್‍ಯಾಲಿಯಲ್ಲಿ ಕೂತಿದ್ದಾರೆ ಎನ್ನುವ ಸಂದೇಶವನ್ನು ರವಾನಿಸುವ ಮಾರ್ಕೆಟಿಂಗ್ ತಂತ್ರವನ್ನು ಹೆಣೆಯಲಾಗಿತ್ತು.

ಇಂದು ಆರೆಸಸ್ ತನ್ನ ಮತೀಯವಾದಿ, ಹಿಂಸಾತ್ಮಕ ರಾಜಕಾರಣದ ಪಯಣದಲ್ಲಿ ಅತ್ಯಂತ ಮುಖ್ಯ ಘಟ್ಟದಲ್ಲಿದೆ. ಬಿಜೆಪಿಯ ಜುಟ್ಟಿನ ಮೇಲೆ ತನ್ನ ಕೇಶವಕೃಪಾದ ಹಿಡಿತವನ್ನು ಬಿಗಿಗೊಳಿಸಿಕೊಳ್ಳುತ್ತಲೇ ಅಖಂಡ ಭಾರತವನ್ನು ಆಳುವ ತನ್ನ ದಶಕಗಳ ಕಾಲದ ಕನಸನ್ನು ನನಸಾಗಿಸುವ ಕಾಲ ಹೆಚ್ಚೂ ಕಡಿಮೆ ಕೈಯಳತೆಯಲ್ಲಿದೆ ಎಂದು ಭ್ರಮಿಸಿರುವ ಈ ಆರೆಸಸ್ ಅದಕ್ಕಾಗಿ ಯೂರೋಪಿಯನ್ ಫ್ಯಾಸಿಸ್ಟರ ಮಾದರಿಯಲ್ಲಿಯೇ ನೇರವಾಗಿ ತನ್ನ ಸಿದ್ಧಾಂತಗಳನ್ನು ಮುಂದಿಟ್ಟುಕೊಂಡೇ ಡೆಲ್ಲಿ ಗದ್ದುಗೆ ಕಬಳಿಸುವ ಹುನ್ನಾರದಲ್ಲಿದೆ. ಏಕೆಂದರೆ ಬ್ರಾಹ್ಮಣರಾದ ವಾಜಪೇಯಿಯವರಿಗೆ ಸುಧಾರಣವಾದಿ ಮುಖವಾಡ ತೊಡೆಸಿ ಅವರ ಇಮೇಜ್‌ಗೆ ಯಾವುದೇ ಕುಂದು ಬರದಂತೆ ಅತ್ಯಂತ ಜತನದಿಂದ ಕಾಪಾಡಿಕೊಳ್ಳುತ್ತ, ಅತ್ತ ಅಡ್ವಾನಿಯವರನ್ನು ಮತೀಯವಾದಿ ರಾಜಕಾರಣಕ್ಕೆ ಬಹಿರಂಗವಾಗಿಯೇ ಪಟ್ಟಾಭಿಷೇಕ ಮಾಡಿ ಅಡ್ವಾನಿಯ ಕೋಮುವಾದಿ ರಾಜಕಾರಣದ ಫಲವನ್ನು ತೊಂಬತ್ತರ ದಶಕದ ಮಧ್ಯದ ವೇಳೆಗೆ ಹೆಚ್ಚೂ ಕಡಿಮೆ ತನ್ನ ಕೈಗೆಟುಕಿಸಿಕೊಂಡುಬಿಟ್ಟಿತ್ತು ಈ ಆರೆಸೆಸ್. ಆದರೂ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತೆ ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ತಾತ್ಕಲಿಕವಾಗಿ ತನ್ನ ತೀವ್ರವಾದಿ ಮಾರ್ಗವನ್ನು ಹಿಂದಿಟ್ಟು ಮಧ್ಯಮ ಮಾರ್ಗದ ರಾಜಕಾರಣಕ್ಕೆ ಅಣಿಗೊಳ್ಳುವ ಅನಿವಾರ್ಯತೆಗೆ ವಿಷಾದಿಂದ ಒಪ್ಪಿಕೊಳ್ಳುತ್ತಲೇ ತಮ್ಮ ನೀಲಿ ಕಣ್ಣಿನ ಹುಡುಗ ವಾಜಪೇಯಿಗೆ ಪ್ರಧಾನಮಂತ್ರಿಯ ಪಟ್ಟ ತೊಡೆಸಿ, ತಮ್ಮ ಸೇನಾಧಿಪತಿ ಅಡ್ವಾನಿಗೆ ಅವರ ಡೆಪ್ಯುಟಿಯನ್ನಾಗಿಸಿತ್ತು. ಇದು ಆರೆಸಸ್‌ನ ಎರಡಂಚಿನ ಕತ್ತಿಯ ನಡುಗೆಯ ಶೈಲಿ. ಆದರೆ ತಾತ್ಕಾಲಿಕವಾಗಿ ದಕ್ಕಿದ ಆಧಿಕಾರ ಕೈತಪ್ಪಿ ಇಂದಿಗೆ ಹತ್ತು ವರ್ಷಗಳಾಗಿವೆ. ಅಂದು ತೀವ್ರ ಹಿಂದೂತ್ವದ ಪ್ರತಿಪಾದಕರಾಗಿದ್ದ ಅಡ್ವಾನಿಯವರಿಗೆ ವಾಜಪೇಯಿಯವರ ಸುಧಾರಣವಾದಿ ಮುಖವಾಡದ ಅನುಕೂಲತೆಗಳು ಮತ್ತು ಅದರ ತೋರಿಕೆಯ, ಹುಸಿಯಾದ ಒಳಗೊಳ್ಳುವಿಕೆಯ ಪ್ರಾಮುಖ್ಯತೆ ಅರಿವಾಗಿ ಅತ್ತ ಕಡೆ ವಾಲತೊಡಗಿದಾಗ ಆರೆಸಸ್‌ಗೆ ತನ್ನ ಕಟ್ಟರ್ ಹಿಂದುತ್ವದ ಪೋಸ್ಟರ್ ಬಾಯ್ ಆಗಿ ಕಂಡಿದ್ದು ಈ ನರೇಂದ್ರ ಮೋದಿ. ಆತನ ಈ ಫ್ಯಾಸಿಸಂ ವ್ಯಕ್ತಿತ್ವ ಆರೆಸಸ್‌ಗೆ ವರವಾಗಿ ದೊರೆತಂತಾಗಿದೆ. ಮತ್ತೊಮ್ಮೆ ತನ್ನ ಅಖಂಡ ಭಾರತವನ್ನು ಈ ಬಾರಿ ಕರಾರುವಕ್ಕಾಗಿ ಹಿಂದೂ ಮತಾಂಧತೆಯ ಕಪಿಮುಷ್ಟಿಗೆ ಸೆಳೆದುಕೊಳ್ಳುವ, ಧರ್ಮಾಂಧ ರಾಜಕಾಣಕ್ಕೆ ಬಿಡಿಸಲಾಗದಂತೆ ಬಂಧಿಸುವ ಮತ್ತು ಮುಖ್ಯವಾಗಿ ತನ್ನ ಗುರಿಯಾದ ಹಿಂದೂ ರಾಷ್ಟ್ರಕ್ಕಾಗಿ ಈ ಅವಕಾಶವನ್ನು ಬಳಸಿಕೊಳ್ಳಲು ಆರೆಸಸ್ ಪಣತೊಟ್ಟಿದೆ. ಇವರ ಅನುಕೂಲಕ್ಕೆ ಆರೆಸಸ್‌ನ ಅಧಿಪತಿ ಮೋಹನ್ ಭಾಗವತ್ ಮತ್ತು ನರೇಂದ್ರ ಮೋದಿಯ ನಡುವಿನ ಕೆಮಿಸ್ಟ್ರಿ ಸರಿಯಾಗಿಯೇ ಕೂಡಿಕೊಂಡಿದೆ. ಈಗ ಆರೆಸಸ್ ಕೇಶವ ಕೃಪಾದಿಂದ ಹೊರಬಂದು ಬಿಜೆಪಿಯ ಹೈಕಮಾಂಡ್ ಸ್ಥಾನವನ್ನು ಬಹಿರಂಗವಾಗಿಯೇ ವಹಿಸಿಕೊಂಡಿದೆ. ಇಂದು ಇದು ಓಪನ್ ಸೀಕ್ರೆಟ್.

ಚಿಂತಕ ಜ್ಯೋತಿರ್ಮಯೀ ಶರ್ಮ ಅವರು ಹಿಂದೊಮ್ಮೆ ರಾಜಕಾರಣವನ್ನು ತನ್ನ ವೈಯುಕ್ತಿಕ ಆಶೆಗಳ ಪೂರೈಕೆಗಾಗಿ ಯಾರೊಂದಿಗಾದರೂ ಕೂಡಿಕೊಳ್ಳುವ, ಹೊಂದಾಣಿಕೆ ಮಾಡಿಕೊಳ್ಳುವ ಹಾದಿ ತಪ್ಪಿದ ಹೆಂಗಸೆಂದು ಬಣ್ಣಿಸಿದ ಗೋಳ್ವಕರ್ ಮಾತುಗಳನ್ನು ಸ್ವತಃ ತಾನೇ ಚಾಲ್ತಿಗೆ ತರಲು ಆರೆಸಸ್ ಮುಂದಾಗಿದೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಮೋದಿ ಮತ್ತು ಮೋಹನ್ ಭಾಗವತ್ ಜೋಡಿ ತಮ್ಮ ಜಂಟಿ ಕಾರ್ಯಾಚರಣೆಯ ಮೂಲಕ ದಂಡ ಮತ್ತು ಧರ್ಮದ ಬಳಕೆಯನ್ನು ಯಶಸ್ವಿಯಾಗಿ ಬಳಸಿಕೊಳ್ಳಲು ಪಣತೊಟ್ಟಿದ್ದಾರೆ. ಇವರ ಹಿಂದೂ ರಾಷ್ಟ್ರದ ಪರಿಕಲ್ಪನೆಯಲ್ಲಿ ಮೋದಿಯು ಕ್ಷತ್ರಿಯ ರಾಜನಾಗಿ ಪಟ್ಟಾಭಿಷೇಕಗೊಂಡರೆ ಮೋಹನ್ ಭಾಗವತ್ ಆತನ ರಾಜಗುರು. ಬಿಜೆಪಿ ರಾಜ್ಯಭಾರ ಮಾಡುವ ಕ್ಷತ್ರಿಯ ವಂಶವಾದರೆ ಆರೆಸಸ್ ಈ ಕ್ಷತ್ರಿಯ ವಂಶದ ಗುರುಕುಲ ಮತ್ತು ಧರ್ಮಪೀಠ. ಇಪ್ಪತೊಂದನೇ ಶತಮಾನದಲ್ಲಿ ಹಿಂದೂ ಮತ್ತು ಹಿಂದೂ ರಾಷ್ಟ್ರವು ಕಾರ್ಪೋರೇಟ್ ವರ್ಗಗಳದೇ ಒಂದು ಇಂಡಿಯಾ ಆಗಿ ರೂಪುಗೊಳ್ಳುತ್ತದೆ. ಅದು ಕಾರ್ಪೋರೇಟ್ ಇಂಡಿಯಾ ಎಂದು ಕರೆಸಿಕೊಳ್ಳುತ್ತದೆ. ಇಡೀ ಪಾರ್ಲಿಮೆಂಟ್ ವ್ಯವಸ್ಥೆ ಬೋರ್ಡ ರೂಮ್ ಆಗಿ ಕಂಗೊಳಿಸುತ್ತದೆ ಎಂದು ಮಾರ್ಮಿಕವಾಗಿ ಬರೆಯುತ್ತಾರೆ

ಈ ಮೋಮೋ (ಮೋದಿ ಮತ್ತು ಮೋಹನ್ ಭಾಗವತ್) ಜೋಡಿಯ ಕಾರ್ಯಾಚರಣೆಯ ಮೊದಲ ಬಲಿಯೇ ಭಾರತದ ಸಂವಿಧಾನ. bhagvat-gadkari-modiಈ ಮೋಮೋ ಜೋಡಿ ಮಾಡುವ ಮೊದಲ ಕೆಲಸ ನಮ್ಮ ಸಂವಿಧಾನವನ್ನು ಹಿಂದೂ ಮತ್ತು ಹಿಂದೂ ರಾಷ್ಟ್ರದ ಕನಸಿನ ಸಾಕಾರಕ್ಕೆ ಅನುಗುಣವಾಗುವಂತೆ ಸಂಪೂರ್ಣವಾಗಿ ಬದಲಿಸುವುದು. ಇದು ನಿಜಕ್ಕೂ ಉತ್ಪ್ರೇಕ್ಷೆಯಲ್ಲ. ಏಕೆಂದರೆ ಗಣರಾಜ್ಯಗಳ ಮಾದರಿಯ ಪಾರ್ಲಿಮೆಂಟ್ ವ್ಯವಸ್ಥೆಯನ್ನು ಪ್ರತಿಪಾದಿಸುವ ನಮ್ಮ ಸಂವಿಧಾನದ ಸಮತಾವಾದದ, ಸೆಕ್ಯುಲರ್ ಆಶಯವನ್ನು ಧಿಕ್ಕರಿಸುವಂತೆ, ಅಲ್ಲಗೆಳೆಯುವಂತೆ ಮೋದಿಯನ್ನು ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯಂದು ಪಟ್ಟ ಕಟ್ಟಿದ ಪ್ರಕ್ರಿಯೆಯೇ ಪ್ರಜಾಪ್ರಭುತ್ವದ ಮಾದರಿಗೆ ವಿರೋಧವಾದದ್ದು. ಇದು ಅಧ್ಯಕ್ಷೀಯ ವ್ಯವಸ್ಥೆಯ ಮಾದರಿ. ಆದರೆ ಈ ಅಧ್ಯಕ್ಷೀಯ ಮಾದರಿಯನ್ನು ನಮ್ಮ ಸಂವಿಧಾನ ಪುರಸ್ಕರಿಸುವುದಿಲ್ಲ. ಆದರೆ ಮೋಮೋ ಜೋಡಿಯ ಮೊದಲ ಉದ್ದೇಶವೇ ನಮ್ಮ ಸಂವಿಧಾನದ ಆಶಯಗಳಿಗೆ ವಿರೋಧವಾದ ಅಧ್ಯಕ್ಷೀಯ ವ್ಯವಸ್ಥೆಯನ್ನು ಜಾರಿಗೆ ತರುವುದು. ಈ ಮೋಮೋ ಆಡಳಿತದ ಮತ್ತೊಂದು ಉದ್ದೇಶ ಜನರಿಂದ, ಜನರಿಗಾಗಿ ಎನ್ನುವ ಪ್ರಜಾಪ್ರಭುತ್ವದ ಮೂಲ ನ್ಯಾಯ ನೀತಿಯನ್ನೇ ತಿರಸ್ಕೃತಗೊಳಿಸುವುದು. ಆ ಸ್ಥಾನದಲ್ಲಿ ನಾಯಕನಿಂದ, ನಾಯಕನಿಗಾಗಿ ಎನ್ನುವ ಸರ್ವಾಧಿಕಾರಿ ವ್ಯವಸ್ಥೆಯನ್ನು ಹುಟ್ಟುಹಾಕುವುದು. ಇದು ಕೂಡ ಉತ್ಪ್ರೇಕ್ಷೆಯಲ್ಲ.

ಮುಖ್ಯವಾದ ಮತ್ತೊಂದು ಗುರಿಯೆಂದರೆ ಆರೆಸಸ್‌ನ ಗುಪ್ತ ಕಾರ್ಯಸೂಚಿಯಾದ ಪ್ರಾಚೀನ ಭಾರತದ ಪುನರುಜ್ಜೀವನ. ಬ್ರಾಹ್ಮಣ ಮತ್ತು ಶೂದ್ರ ಶಕ್ತಿಯನ್ನು ಕ್ರೋಢೀಕರಿಸಿ ದಲಿತರನ್ನು ಮರಳಿ ಊರ ಹೊರಗಿನ ಕೇರಿಗೆ ತಳ್ಳುವ ವರ್ಣಾಶ್ರಮದ ಯುಗದ ಪುನನಿರ್ಮಾಣ. ಅದಕ್ಕೆ ಶಕ್ತಿವಂತ ಶೂದ್ರ ಮೋದಿಯನ್ನು ಸರಿಯಾಗಿ ಗಾಳ ಹಾಕಿ ತನ್ನ ಕಬ್ಜಾದೊಳಕ್ಕೆ ಹಿಡಿದಿಟ್ಟುಕೊಂಡಿದೆ ಈ ಆರೆಸಸ್.

ಮೂವತ್ತರ ದಶಕದಲ್ಲಿ ಫ್ಯಾಸಿಸ್ಟ್ ಪಕ್ಷದ ನಾಯಕ ಮಸಲೋನಿ ಇಟಲಿಯ ಮಹಾನ್ ಚಿಂತಕ ಗ್ರಾಮ್ಷಿಯನ್ನು ಜೈಲಿಗೆ ತಳ್ಳಿ ತನ್ನ ಅಧಿಕಾರಿಗಳಿಗೆ gramsciಹೇಳುತ್ತಾನೆ: “ಈತನನ್ನು ( ಗ್ರಾಮ್ಷಿಯನ್ನು) ಸಾಯಿಸಬೇಡಿ. ಆದರೆ ಮುಂದಿನ ಇಪ್ಪತ್ತು ವರ್ಷಗಳ ಕಾಲ ಈತ ಚಿಂತಿಸಬಾರದು, ಓದಬಾರದು. ಆ ರೀತಿ ಈತನ ಬೌದ್ಧಿಕತೆಯನ್ನು ನಾಶಗೊಳಿಸಿ.” ಇದು ಈ ಮೋಮೋ ಜೋಡಿಯ ಸಂದರ್ಭದಲ್ಲಿ ಇಂಡಿಯಾದ ಮಟ್ಟಿಗೆ ಕೂಡ ನಿಜವಾಗುತ್ತದೆ. ಇದು ಕೂಡ ಉತ್ಪ್ರೇಕ್ಷೆಯಲ್ಲ. ಏಕೆಂದರೆ ಗುಜರಾತ್‌ನಲ್ಲಿ ಮೋದಿ ಆಡಳಿತದ ಕಳೆದ ಹತ್ತು ವರ್ಷಗಳಲ್ಲಿ ಪ್ರಜ್ಞಾವಂತರ ಚಿಂತನೆಗಳು, ಬೌದ್ಧಿಕತೆ, ವಿಚಾರಶೀಲತೆ ಸತ್ತು ಹೋಗಿದೆ. ಇದು ಇಂಡಿಯಾದ ಪಾಲಿಗೂ ನಿಜವಾಗುತ್ತದೆ. ಏಕೆಂದರೆ ಬಿಜೆಪಿಯ ಕನಸೇ ಇಂಡಿಯಾವನ್ನು ಗುಜರಾತ್ ಮಾದರಿಯಲ್ಲಿ ರೂಪಿಸುವುದು.

ಆದರೆ ಮತ್ತೊಂದು ಕಡೆ ಬಿಜೆಪಿ ಪಕ್ಷವು ಮಾಧ್ಯಮಗಳು ಸೃಷ್ಟಿಸಿದ ಮೋದಿಯ ಅಭಿವೃದ್ಧಿಯ ಜನಪ್ರಿಯತೆಯನ್ನು ಬಳಸಿಕೊಂಡು ದೇಶದ ಮಧ್ಯಮ ಹಾಗೂ ಮೇಲ್ವರ್ಗಗಳ ಮತಗಳನ್ನು ಬೇಟೆಯಾಡಲು ಕಾರ್ಯತಂತ್ರ ರೂಪಿಸುತ್ತಿದೆ. ಕಳೆದ ಎರಡು ದಶಕಗಳಲ್ಲಿ ಜಾಗತೀಕರಣದ ಫಲವಾದ ಕನ್ಸೂಮರಿಸಂನ ಸೆಳೆತಕ್ಕೆ ಒಳಗಾಗಿ ಕೊಳ್ಳುಬಾಕ ಸಂಸ್ಕೃತಿಯನ್ನು ಚಾಲ್ತಿಗೊಳಿಸಿದ ಈ ಅಖಂಡ ಭಾರತದ ಮಧ್ಯಮವರ್ಗ ಈ ಕೊಳ್ಳುಬಾಕ ಸಂಸ್ಕೃತಿಯನ್ನೇ ಅಭಿವೃದ್ಧಿಯೆಂದು ಭ್ರಮಿಸಿ ಇಂದಿಗೂ ಕೂಪಮಂಡೂಕಗಳಂತೆ ಬದುಕುತ್ತಿವೆ. ಮೊನ್ನೆಯವರೆಗೂ ಈ ಮಧ್ಯಮವರ್ಗ ಮತ್ತು ಕಾರ್ಪೋರೇಟ್ ವರ್ಗಗಳಿಗೆ ಈ ಜಾಗತೀಕರಣದ ಹರಿಕಾರ Manmohan Singhಮನಮೋಹನ್ ಸಿಂಗ್ ಡಾರ್ಲಿಂಗ್ ಆಗಿದ್ದರು. ಆದರೆ ಇಂದು ಇವರ ಪಾಲಿಗೆ ಮನಮೋಹನ್ ಸಿಂಗ್ ಖಳನಾಯಕ. ಏಕೆಂದರೆ ಇವರ ಆಡಳಿತದಲ್ಲಿ ಮತ್ತಷ್ಟು ಕೊಳ್ಳಲು, ಮಗದಷ್ಟು ಕೊಳ್ಳಲು ಕಷ್ಟವಾಗುತ್ತಿದೆ. ಆದರೆ ನಮ್ಮ ಮಾಧ್ಯಮಗಳ ಮತ್ತು ಮಧ್ಯಮವರ್ಗಗಳ ಈ ಬೌದ್ಧಿಕ ದಿವಾಳಿತನ ಇಂದು ನಮ್ಮ ಪ್ರಜಾಪ್ರಭುತ್ವಕ್ಕೆ, ಒಕ್ಕೂಟ ವ್ಯವಸ್ಥೆಗೆ ತುಂಬಾ ಅಪಾಯಕಾರಿಯಾದ್ದು. ಡಬಲ್ ಡಿಗ್ರಿಗಳನ್ನು ಪಡೆದು, ಎಲ್ಲವನ್ನೂ ಬಲ್ಲವರಂತೆ ಮಹಾನ್ ಬುದ್ದಿವಂತರಂತೆ ವರ್ತಿಸುವ ಮಾಧ್ಯಮಗಳು ಮತ್ತು ಮಧ್ಯಮವರ್ಗಗಳಿಗೆ ಆರೆಸಸ್‌ನ ಮೇಲಿನ ಸರ್ವಾಧಿಕಾದ ಆಶಯಗಳು ಅಪ್ಯಾಯಮಾನವಾಗಿ ಕಂಡಿದ್ದು ಇಂದಿನ ಸಂದರ್ಭದಲ್ಲಿ ಇಂಡಿಯಾವನ್ನು ಸಂಪೂರ್ಣ ಅಪಮೌಲ್ಯೀಕರಣಗೊಳಿಸಿದೆ. ಈ ಮೋದಿ ಬಂದರೆ ಈತ ಮರಳಿ ತಮ್ಮನ್ನು ಕಳೆದ ದಶಕದ ಸ್ವರ್ಗಕ್ಕೆ ಕೊಂಡೊಯ್ಯೊತ್ತಾನೆಂಬ ಸ್ವಾರ್ಥದ ಲೋಲುಪತೆಯಲ್ಲಿ ಮೋದಿಯ ಪರವಾಗಿ ತಾವು ಮಾಡುವ ಪ್ರತಿಯೊಂದು ಮತವೂ ಇಡೀ ದೇಶವನ್ನು ಫ್ಯಾಸಿಸಂಗೆ ತಳ್ಳುತ್ತದೆ ಎಂಬ ಪ್ರಾಥಮಿಕ ಜ್ಞಾನವಿಲ್ಲದೆ ಅತ್ಯಂತ ಬೇಜವಬ್ದಾರಿಯಿಂದ ವರ್ತಿಸಿ ನಾಶವಾಗುತ್ತಿದ್ದಾರೆ ಈ ಮಧ್ಯಮವರ್ಗ. ಕರಾರುವಕ್ಕಾದ ರಾಜಕೀಯ ಭಾಷೆಯನ್ನು ಬಳಸಲು ನಿರಾಕರಿಸುವ ಈ ಮಧ್ಯಮವರ್ಗ ಇಂದು ಸಂವಿಧಾನದ ಮೂಲ ಆಶಯವಾದ ಸೆಕ್ಯುಲರಿಸಂ ಮತ್ತು ಜಾತ್ಯಾತೀತ ಗುಣಗಳನ್ನು ನಿರಾಕರಿಸುತ್ತಿರುವುದು ಇಂಡಿಯಾದ ದುರಂತ. ಈ ಜನ ಸಂಘ ಪರಿವಾರದ ಜೊತೆಗೂಡಿ ದೇಶದ ಜೀವ ತೋರಣಗಳನ್ನು,ಅದರ ಮಾದರಿಗಳನ್ನು ಸ್ಯೂಡೋ ಸೆಕ್ಯುಲರಿಸ್ಟ್ ಎಂದು ಹಂಗಿಸುತ್ತಿರುವುದು ಇವರ ಪತನವಷ್ಟೇ.

ಇನ್ನು ಈ ನರೇಂದ್ರ ಮೋದಿಯು ಪ್ರಧಾನ ಮಂತ್ರಿಯಾದರೆ ಇಂಡಿಯಾದ ವಿದೇಶಾಂಗ ನೀತಿಯನ್ನು ನೆನೆಸಿಕೊಂಡರೆ ಮೂರ್ಛೆ ಬರುತ್ತದೆ. ಈತನಿಗೆ ಅಮೇರಿಕಾ, ಇಂಗ್ಲೆಂಡಿನಲ್ಲಿ ಪ್ರವೇಶವಿಲ್ಲ. ಫ್ಯಾಸಿಸ್ಟರಿಗೆ ನೋ ಎಂಟ್ರಿ. ಇನ್ನು ಪಕ್ಕದ ದೇಶಗಳಾದ ಪಾಕಿಸ್ತಾನ, ಅಪಘಾನಿಸ್ತಾನ, ಬಾಂಗ್ಲಾದೇಶ ಮತ್ತು ಮಧ್ಯ ಏಷ್ಯಾ ಹಾಗೂ ಅರಬ್ ರಾಷ್ಟ್ರಗಳಿಗೆ ಈ ಮೋದಿ ಯಾವ ಮುಖವಿಟ್ಟುಕೊಂಡು ಹೋಗಬಲ್ಲ? ಸಹಜವಾಗಿಯೇ ಮುಸ್ಲಿಂ ರಾಷ್ಟ್ರಗಳಲ್ಲಿ ಈತ ತಿರಸ್ಕೃತ ನಾಯಕ. ಅಲ್ಲದೆ ಈತ ಮಹಾನ್ ದೇಶಭಕ್ತನಾದುದರಿಂದ ಪ್ರತಿ ವರ್ಷ ಪಾಕಿಸ್ತಾನದೊಂದಿಗೆ ಯುದ್ಧ ಗ್ಯಾರಂಟಿ. ಏಕೆಂದರೆ ಶತೃಗಳನ್ನು ಧೂಳಿಪಟ ಮಾಡಬೇಕೆಂದು ಜಂಬ ಕೊಚ್ಚಿಕೊಂಡಿದ್ದಾರಲ್ಲವೇ ಈ ಸಂಘ ಪರಿವಾರ!! ಕಡೆಗೆ ಸ್ವತಃ ದೇಶದೊಳಗೆ ಮತ್ತು ವಿದೇಶದೊಳಗೆ ತಿರಸ್ಕೃತಗೊಂಡ ರಾಜಕಾರಣಿಯನ್ನು ತನ್ನ ದೇಶದ ಪ್ರಧಾನ ಮಂತ್ರಿಯಾಗಿ ಆಯ್ಕೆ ಮಾಡಿಕೊಂಡ ದುರಂತಮಯ ರಾಷ್ಟ್ರ ಭಾರತವೆಂದು ಈ ದೇಶ ಇತಿಹಾಸ ನಿರ್ಮಿಸಬೇಕಾಗುತ್ತದೆ.

ಆದರೆ ನಮ್ಮ ಪುಣ್ಯಕ್ಕೆ ಆರೆಸಸ್ ಏನೇ ತಿಪ್ಪರಲಾಗ ಹಾಕಿದರೂ, ಮಾಧ್ಯಮಗಳು ಆತ್ಮವಂಚನೆಯಿಂದ ಮೋದಿಯ ಪರ ಎಷ್ಟೇ ಕಿರುಚಾಡಿದರೂ, 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗರಿಷ್ಠ 160 ರಿಂದ 170 ಸೀಟುಗಳನ್ನು ಮಾತ್ರ ಗಳಿಸಬಲ್ಲದಷ್ಟೇ. ಅದನ್ನು ದಾಟಲು ಸಾಧ್ಯವೇ ಇಲ್ಲ. ಕೆಲವು ಮಾಧ್ಯಮಗಳ ಈ ಸಮೀಕ್ಷೆ ನಮ್ಮ ಪ್ರಜಾಪ್ರಭುತ್ವವನ್ನು ಬದುಕಿಸಿದೆ. ಅದು ನಿಜವಾಗಬೇಕಷ್ಟೆ. ಆದರೂ ನಮ್ಮೆಲ್ಲರ ಮುಂದೆ ದೊಡ್ಡ ಸವಾಲಿದೆ. ಅದು ಈ ಶಕ್ತಿ ಕೇಂದ್ರಗಳನ್ನು ಒಡೆಯುವುದು. ಇದಕ್ಕಾಗಿ ನಾವೆಲ್ಲ ಗ್ರಾಮ್ಷಿಗಳಾಗಲು ತಯಾರಾಗಬೇಕು.

ಭಾರತಕ್ಕೆ ಬೇಕಾಗಿರುವುದಾದರೂ ಏನು?

– ಎಮ್.ಸಿ.ಡೋಂಗ್ರೆ

ನಾವೀಗ ಸಂದಿಗ್ಧ ಕಾಲಘಟ್ಟದಲ್ಲಿ ನಿಂತಿದ್ದೇವೆ. 1991 ರಲ್ಲಿ ಆರಂಭಗೊಂಡ ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣದ ಬಗ್ಗೆ ಇದ್ದ ಭ್ರಮೆಗಳು ಒಂದೊಂದಾಗಿ ಕಳಚಿಬೀಳುತ್ತಿದ್ದು ಅಮೇರಿಕಾ ಹಾಗೂ ಇತರ ಬಂಡವಾಳಶಾಹೀ ರಾಷ್ಟ್ರಗಳ ಸ್ವಾರ್ಥಪರ ಸಂಚುಗಳು ಒಂದೊಂದಾಗಿ Globalizationನಮಗೆಲ್ಲರಿಗೂ ಅರಿವಾಗುತ್ತಿದೆ. ಈ ಹಿನ್ನೆಲೆಯಲ್ಲಿ 2014 ರ ಸಾರ್ವತ್ರಿಕ ಚುನಾವಣೆಯು ಬಹಳ ಪ್ರಾಮುಖ್ಯತೆಯನ್ನು ಪಡೆಯಲಿದೆ.

ದೇಶದ ಜನತೆಯ ಮುಂದೆ “ನಮ್ಮ ಮುಂದಿನ ಪ್ರಧಾನಿ ಯಾರು?” ಎಂಬ ಪ್ರಶ್ನೆಯನ್ನಿಡುವುದರ ಬದಲು “ನಮ್ಮ ಮುಂದಿನ ನೀತಿಗಳು ಏನಾಗಿರಬೇಕು?” ಎಂಬ ಪ್ರಶ್ನೆಯನ್ನಿಡುವುದು ಈಗಿನ ತುರ್ತುಸ್ಥಿತಿಯಾಗಿರುತ್ತದೆ. ಮೋದಿ ಮತ್ತು ಈಗಿನ ಕಾಂಗ್ರೆಸ್ ಇವರಿಬ್ಬರೂ ವಿಶ್ವಬ್ಯಾಂಕ್ ಪ್ರಣೀತ ನೀತಿಗಳನ್ನು ಅನುಷ್ಟಾನಗೊಳಿಸುವಲ್ಲಿ ಪರಸ್ಪರ ಪೈಪೋಟಿಯಲ್ಲಿ ನಿರತರಾಗಿದ್ದು ಇವರಲ್ಲಿ ಯಾರು ಗೆದ್ದು ಬಂದರೂ ಸಹ ಅಮೇರಿಕಾ ಅಥವಾ ಇತರ ಯುರೋಪಿಯನ್ ದೇಶಗಳಿಗೆ ಆತಂಕವಿಲ್ಲ. ಭಾರತದ ಈ ಎರಡೂ ಬಣಗಳೂ ಅಮೇರಿಕಾದ ಆಜ್ಞಾನುವರ್ತಿಗಳಾಗಿರುತ್ತಾರೆ-ಇದರಲ್ಲಿ ಯಾವ ಸಂಶಯವೂ ಇಲ್ಲ.

ಹಾಗಾದರೆ ಭಾರತಕ್ಕೆ ಬೇಕಾಗಿರುವುದಾದರೂ ಏನು? ಎಂಬುದನ್ನು ನಾವು ಯೋಚಿಸಬೇಕಾಗಿದೆಯೇ ವಿನಹ ಪಾಶ್ಚಿಮಾತ್ಯ ದೇಶಗಳ ಸಂಚಿಗೆ ಬಲಿಯಾಗಿ ಈಗಿನ ಕಾಂಗ್ರೆಸ್ ಅಥವಾ ಮೋದಿ-ಇವರಿಬ್ಬರಲ್ಲಿ ಒಬ್ಬರನ್ನು ಅಧಿಕಾರಕ್ಕೆ ತರುವ ಗಾಳಕ್ಕೆ ಬೀಳಬಾರದು. ಭಾರತಕ್ಕೆ ಬೇಕಾಗಿರುವುದಾದರೂ ಏನು? ಎಂಬುದನ್ನು ಮೊದಲು ಅರಿಯಬೇಕು.

ಮೋದಿ ಮತ್ತು ಈಗಿನ ಕಾಂಗ್ರೆಸ್ ಇವರಿಬ್ಬರೂ FDI ಯನ್ನು ಭಾರತಕ್ಕೆ ತರುವುದರಲ್ಲಿ, ಈ ದೇಶದ ಸಾರ್ವಜನಿಕ ಉದ್ದಿಮೆಗಳನ್ನು ನಾಶಮಾಡುವುದರಲ್ಲಿ ನಿರತರಾಗಿದ್ದಾರೆ. ನಮ್ಮಿಂದ ಬೇರೆ ದೇಶಗಳಿಗೆ ಜ್ಞಾನದ ಹಾಗೂ ವಸ್ತುಗಳ ಮಾರಾಟವಾಗಬೇಕು. ಭಾರತದ ಸಾಮರ್ಥ್ಯದ Investment ಬೇರೆಡೆಗೆ, ಅನ್ಯರನ್ನು ಶೋಷಣೆಗೈಯ್ಯದೇ, ನಮ್ಮ ದೇಶಕ್ಕೆ ಲಾಭ ತರುವ ನಿಟ್ಟಿನಲ್ಲಿ ಆಗಬೇಕಾಗಿದೆ. ನಮಗೆ ಬೇಕಾಗಿರುವುದು ಪರ್ಯಾಯ ನೀತಿಗಳೇ ವಿನಹ ಪರ್ಯಾಯ ಪಕ್ಷಗಳಲ್ಲ!!

ಯಾವಾಗ ದೇಶದ ಜನ ಹಸಿವಿನಿಂದ ಬಳಲುವ ಪ್ರಸಂಗ ಇರುವುದಿಲ್ಲವೋ, ಯಾವಾಗ ದೇಶದಲ್ಲಿ ಜನ ವಿದ್ಯಾವಂತರಾಗಿರುತ್ತಾರೋ, ಎಲ್ಲಿ ಗಂಡು-ಹೆಣ್ಣುಗಳ ನಡುವೆ ತಾರತಮ್ಯವಿರುವುದಿಲ್ಲವೋ, ಯಾವಾಗ ದೇಶದಲ್ಲಿ ನಿರಂತರ ಉದ್ಯೋಗ ಸೃಷ್ಟಿಯಾಗುತ್ತಿರುತ್ತದೋ, ಯಾವಾಗ ದೇಶದಲ್ಲಿ ಕೋಮು ಗಲಭೆಗಳು ಇರುವುದಿಲ್ಲವೋ, ಎಲ್ಲಿ ಆರ್.ಎಸ್.ಎಸ್., ಭಜರಂಗ ದಳ ಅಥವಾ ಶ್ರೀ ರಾಮಸೇನೆಯಂತಹ ಬೇಜಬ್ದಾರೀ ಸಂಘಟನೆಗಳು ಇರುವುದಿಲ್ಲವೋ, india-poverty-hungerಎಲ್ಲಿ ಮುಸ್ಲಿಂ ಧಾರ್ಮಿಕ ಮತಾಂಧರಿಗೆ ಬೆಳೆಯಲು ಅವಕಾಶಗಳನ್ನು ತೊಡೆದುಹಾಕಲಾಗುತ್ತದೋ-ಆಗ ಮಾತ್ರ ಭಾರತ ಬೆಳೆಯಲು ಸಾಧ್ಯ.

ಭಾರತಕ್ಕೆ ಬೇಕಾಗಿರುವುದು ಏನು ಎಂಬುದನ್ನು ಅರಿಯುವ ಮೊದಲು ಈಗ ಭಾರತ ಏನಾಗಿದೆ ಎಂಬುದನ್ನು ತಿಳಿಯುವುದು ಬಹಳ ಮುಖ್ಯ.

ಜಾಗತಿಕ ಹಸಿವಿನ ಸೂಚ್ಯಂಕ (2008):
ಹಸಿವಿನ ಜಾಗತಿಕ ಸೂಚ್ಯಂಕ (2008)ರಲ್ಲಿ ಭಾರತದ ದಾಖಲೆ ಅತ್ಯಂತ ಚಿಂತಾಜನಕವಾಗಿದೆ. 88 ದೇಶಗಳ ಪಟ್ಟಿಯಲ್ಲಿ ಭಾರತ 66 ನೇ ಸ್ಥಾನದಲ್ಲಿದೆ. ಹಸಿವಿನ ಜಾಗತಿಕ ಸೂಚ್ಯಂಕ (2008) ರಲ್ಲಿ ಭಾರತವು 23.70% ಅಂಕಗಳನ್ನು ಪಡೆದು “ಅತಿ ಗಂಭೀರ” ಎಂಬ ಹಣೆಪಟ್ಟಿಯನ್ನು ತನ್ನದಾಗಿಸಿದೆ. ಹಸಿವಿನ ಜಾಗತಿಕ ಸೂಚ್ಯಂಕ (2012)ರಲ್ಲಿ ಭಾರತ ಪಡೆದಿರುವ ಅಂಕ 22.90% ಅಂದರೆ, ಈಗಲೂ ಅದೇ “ಹಣೆಬರಹ”.

ಭಾರತದ ಹಸಿವಿನ ಸೂಚ್ಯಂಕ (2008) ರ ಪ್ರಕಾರ (ಇದಕ್ಕಿಂತ ಈಚಿನ ಅಂಕಿ-ಅಂಶಗಳು ಇಲ್ಲ) ನಮ್ಮ ದೇಶದ 17 ರಾಜ್ಯಗಳ ಸ್ಥಿತಿ-ಗತಿಗಳನ್ನು ಗಮನಿಸೋಣ.

ರಾಜ್ಯ ಅಪೌಷ್ಟಿಕತೆಯಿಂದ ನರಳುವವರು (ಅಲ್ಲಿಯ ಜನಸಂಖ್ಯೆಯ ಶೇಕಡಾವಾರು) 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ underweight ಮಕ್ಕಳ (ಶೇಕಡಾವಾರು) 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸಾವನ್ನಪ್ಪುವವರ ಶೇಕಡಾವಾರು ಸಂಖ್ಯೆ ಹಸಿವಿನ ಸೂಚ್ಯಂಕ ರ್‍ಯಾಂಕ್ ಪಟ್ಟಿಯಲ್ಲಿ ಸ್ಥಾನ
ಪಂಜಾಬ್ 11.1 24.6 5.2 13.63 1
ಕೇರಳ 28.6 22.7 1.6 17.63 2
ಆಂಧ್ರ ಪ್ರದೇಶ 19.6 32.7 6.3 19.53 3
ಅಸ್ಸಾಂ 14.6 36.4 8.5 19.83 4
ಹರಿಯಾಣ 15.1 39.7 5.2 20.00 5
ತಮಿಳುನಾಡು 29.1 30.0 3.5 20.87 6
ರಾಜಾಸ್ಥಾನ್ 14.0 40.0 8.5 20.97 7
ಪಶ್ಚಿಮ ಬಂಗಾಳ 18.5 38.5 5.9 20.97 8
ಉತ್ತರ ಪ್ರದೇಶ 14.5 42.3 9.6 22.13 9
ಮಹಾರಾಷ್ಟ್ರ 27.0 36.7 4.7 22.80 10
ಕರ್ನಾಟಕ 28.0 37.6 5.5 23.73 11
ಓರಿಸ್ಸಾ 21.4 40.9 9.1 23.80 12
ಗುಜರಾತ್ 23.3 44.7 6.1 24.70 13
ಛತ್ತೀಸ್ ಘರ್ 23.3 47.6 9.0 26.63 14
ಬಿಹಾರ್ 17.3 56.1 8.5 27.30 15
ಝಾರ್ ಖಂಡ್ 19.6 57.1 9.3 28.67 16
ಮಧ್ಯ ಪ್ರದೇಶ್ 23.4 59.8 9.4 30.87 17
ಭಾರತ 20.0 42.5 7.4 23.30

ಅಂದರೆ ಪಂಜಾಬ್ ರಾಜ್ಯವು ಭಾರತದ ರಾಜ್ಯಗಳ ಪೈಕಿ ಸ್ವಲ್ಪ ಉತ್ತಮ ಬೆಳವಣಿಗೆಯನ್ನು ಹೊಂದಿದೆ ಹಾಗೂ ಮಧ್ಯ ಪ್ರದೇಶದ ಸ್ಥಿತಿ ಅತ್ಯಂತ ಹೀನವಾಗಿದೆ. ಜಾಗತಿಕ ಮಟ್ಟದಲ್ಲಿ ಇಥಿಯೋಪಿಯಾಗೆ ಮಧ್ಯಪ್ರದೇಶದ ಸ್ಥಿತಿ ಇದೆ. ನಿಕಾರಾಗುವ ಹಾಗೂ ಘಾನಾಗಳ ಸಾಲಿಗೆ ಪಂಜಾಬ್, ಕೇರಳ, ಆಂಧ್ರ ಹಾಗೂ ಅಸ್ಸಾಂ ಸೇರಿದರೆ, ಉಳಿದ ರಾಜ್ಯಗಳ ಪರಿಸ್ಥಿತಿ “ಅತಿ ಗಂಭೀರ” (Alarming) ಸ್ಥಿತಿಯಲ್ಲಿದೆ.

ಒಂದು ರಾಜ್ಯದ ಅಭಿವೃದ್ಧೀ ದರ ಹೆಚ್ಚಾಗಿದೆ ಎಂದಾಕ್ಷಣ ಅಲ್ಲಿಯ ಜನರಿಗೆ ಸಂಪತ್ತಿನ ಹಂಚಿಕೆಯು ಸಮರ್ಪಕವಾಗಿದೆ ಎಂದಾಗುವುದಿಲ್ಲ. ಅಥವಾ ಒಂದು ರಾಜ್ಯವು ಅತಿ ಹೆಚ್ಚಿನ FDI ಯನ್ನು ತನ್ನದಾಗಿಸಿದೆ (ಉದಾ: ಮಹಾರಾಷ್ಟ್ರ) ಎಂದಾಕ್ಷಣ ಅಲ್ಲಿಯ ಜನ ಹಸಿವು ಇತ್ಯಾದಿಗಳಿಂದ ಮುಕ್ತರಾಗಿರುತ್ತಾರೆ ಎನ್ನುವುದೂ ಸಹ ಸರಿಯಲ್ಲ.
ಅಂದರೆ ಸಂಪತ್ತನ್ನು ಸರಿಯಾಗಿ, ಎಲ್ಲರಿಗೂ ಸಮನಾಗಿ ಹಂಚುವ ನೀತಿಯನ್ನು ಜಾರೀ ತರುವ ನೀತಿಯುಳ್ಳವರು ನಮಗೆ ಬೇಕಾಗಿದ್ದಾರೆಯೇ ವಿನಹ ಬರೀ “ಅಭಿವೃದ್ಧಿ ದರ”ಗಳ ಲೆಕ್ಕಾಚಾರದ ಮಂಕುಬೂದಿಯನ್ನು ಎರಚುವವರಲ್ಲ.

ಭ್ರಷ್ಟಾಚಾರದ ನಿಗ್ರಹ:

ಜಾಗತಿಕ ಮಟ್ಟದ Corruption Perception Index (2012) ರ ಪಟ್ಟಿಯಲ್ಲಿ 178 ದೇಶಗಳ ನಡುವೆ ಭಾರತಕ್ಕೆ 94ನೇ ಸ್ಥಾನ. corruption-india-democracyಅಂದರೆ ಅತ್ಯಂತ ಭ್ರಷ್ಟ ದೇಶಗಳಲ್ಲಿ ಭಾರತವೂ ಸಹ ಒಂದು. 1998 ರಲ್ಲಿ 66 ನೇ ಸ್ಥಾನ, 2000 ನೇ ಇಸವಿಯಲ್ಲಿ 69 ನೇ ಸ್ಥಾನ, 2004 ರಲ್ಲಿ 90 ನೇ ಸ್ಥಾನ, 2008 ರಲ್ಲಿ 85 ನೇ ಸ್ಥಾನ!!.
ಅನೈತಿಕತೆಗೆ, ಕಪ್ಪುಹಣದ ವೃದ್ಧಿಗೆ ಮತ್ತು ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಗೆ ಭ್ರಷ್ಟಾಚಾರವೂ ಸಹ ಒಂದು ಕಾರಣ. ವ್ಯಕ್ತಿಗತ ಭ್ರಷ್ಟಾಚಾರಗಳು ಹಾಗೂ ರಾಜಕೀಯ ಭ್ರಷ್ಟಾಚಾರ ಇವೆರಡನ್ನೂ ನಿಯಂತ್ರಣದಲ್ಲಿಡಬಲ್ಲ ಪರ್ಯಾಯ ರಾಜಕೀಯ ನಾಯಕತ್ವದ ಅವಶ್ಯಕತೆ ನಮಗೆ ಬಹಳವಿದೆ.

ಭ್ರಷ್ಟಾಚಾರ = ಅವಕಾಶಗಳು-ತಡೆಗಳು.
ಸರಿಯಾದ ತಡೆಗಳಿಲ್ಲದಿದ್ದಲ್ಲಿ ಭ್ರಷ್ಟಾಚಾರವು ಮಿತಿ ಮೀರುವುದು ಸಹಜ.

  • ಆರ್ಥಿಕ ಸಂಕಷ್ಟ ಅಥವಾ ಅನಿಶ್ಚಿತತೆಯಲ್ಲಿ ತೊಳಲುವ ಪ್ರಜೆಗಳು ಭ್ರಷ್ಟಾಚಾರದ ಕುಕೃತ್ಯದಲ್ಲಿ ತೊಡಗುತ್ತಾರೆ. ಗುಮಾಸ್ತರು, ಪೋಲೀಸರು, ನ್ಯಾಯಾಧೀಶರು, ಸರ್ಕಾರೀ ಡಾಕ್ಟರುಗಳು, ರಾಜಕೀಯ ವ್ಯಕ್ತಿಗಳು ಆರ್ಥಿಕವಾಗಿ ಒಳ್ಳೆಯ ಮಟ್ಟದಲ್ಲಿದ್ದಲ್ಲಿ ಅವರು ಭ್ರಷ್ಟಾಚಾರದಲ್ಲಿ ತೊಡಗುವುದು ಎಷ್ಟೋ ಕಮ್ಮಿಯಾಗುತ್ತದೆ. ಹೀಗಾಗಿ ಇವರೆಲ್ಲರಿಗೆ ಅತ್ಯಾಕರ್ಷಕ ವೇತನವನ್ನು ನೀಡುವುದು ಬಹಳ ಮುಖ್ಯವಾಗಿದೆ.
  • ಚುನಾವಣೆಗಳ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಹೊರುವುದು ಬಹಳ ಉತ್ತಮವಾದ ನಡೆಯಾಗಿರುತ್ತದೆ. ಒಂದು ವಿಧಾನಸಭಾ ಕ್ಷೇತ್ರ ಅಥವಾ ಲೋಕಸಭಾ ಕ್ಷೇತ್ರದಲ್ಲಿ ನಿಗದಿಪಡಿಸಿದ ಮಾನದಂಡಗಳಿಗನುಸಾರವಾಗಿ ಅಭಿವೃದ್ಧೀ ಕೆಲಸಗಳು ಜಾರಿಯಾದ್ದಲ್ಲಿ ಅಲ್ಲಿಯ ವಿಧಾಸಸಭಾ ಸದಸ್ಯನಿಗೆ ಹಾಗೂ ಲೋಕಸಭಾ ಸದಸ್ಯನಿಗೆ ಪ್ರೋತ್ಸಾಹ-ಧನವನ್ನು ಕೊಡುವ ವ್ಯವಸ್ಥೆಯನ್ನು ತರಬೇಕು.
  • ಯಾವ, ಯಾವ ಇಲಾಖೆ/ಕ್ಷೇತ್ರಗಳಲ್ಲಿ ಭ್ರಷ್ಟಾಚಾರದ ಅನುಮಾನಗಳು, ಆರೋಪಗಳು ಅಥವಾ ಅನಿಸಿಕೆಗಳು ಇರುತ್ತವೆಯೋ ಅಂತಹ ಇಲಾಖೆ ಅಥವಾ ಕ್ಷೇತ್ರಗಳ ಕುರಿತು ಅಧ್ಯಯನ ತಂಡಗಳನ್ನು, ಆಡಿಟ್ ಸಂಸ್ಥೆಗಳನ್ನು ಅಗಿಂದಾಗ್ಗೆ ಕಳುಹಿಸಿ ವಾಸ್ತವಗಳನ್ನು ಗೊತ್ತುಪಡಿಸಿಕೊಳ್ಳುವುದು ಆಗಬೇಕು ಅಲ್ಲದೇ ಸ್ವಯಂ-ಸೇವಾ ಸಂಸ್ಥೆಗಳನ್ನು ಬಳಸಿಕೊಂಡು ಇಂತಹ ಇಲಾಖೆ/ಕ್ಷೇತಗಳ ಕುರಿತು ಆಗುತ್ತಿರುವ ಬದಲಾವಣೆಗಳ ಬಗ್ಗೆ ಪ್ರಚಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು.
  • ಸಾಧ್ಯವಾದೆಡೆಯಲ್ಲೆಲ್ಲ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕವೇ (E-governance) ಕೆಲಸಗಳು ಆಗುವಂತೇ ವ್ಯವಸ್ಥೆಯನ್ನು ತರಬೇಕು.

1991 ರ ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣವನ್ನು ಒಳಗೊಂಡ ಹೊಸ ಆರ್ಥಿಕ ನೀತಿಯ ನಂತರ ದೇಶದಲ್ಲಿ ಭ್ರಷ್ಟಾಚಾರವು ಎಲ್ಲೆ ಮೀರಿರುವುದನ್ನು ನೋಡಬಹುದು. ಬಹುರಾಷ್ಟ್ರೀಯ ಕಂಪೆನಿಗಳು ಎಷ್ಟು ಕೋಟಿ ಹಣವನ್ನು ಬೇಕಾದರೂ ನೀಡಲು ತಯಾರಾಗಿರುವುದೇ ಮುಖ್ಯ ಕಾರಣ.

ಸಾರ್ವಜನಿಕ ಕ್ಷೇತ್ರವನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆಸಿ, ಭ್ರಷ್ಟಾಚಾರದ ವಿರುದ್ಧ ಸಮರ್ಪಕ ತಡೆಗಳನ್ನು ನಿರ್ಮಿಸಿ, ದೇಶದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವೆದೇ ನಮ್ಮ ಮುಂದಿರುವ ಮಾರ್ಗ.

ತನ್ನ ರಾಜ್ಯದಲ್ಲಿ ಅನೇಕ ವರ್ಷಗಳಿಂದ “ಲೋಕಾಯುಕ್ತ”ರನ್ನು ನೇಮಿಸದ, ಕರ್ನಾಟಕದ “ಕಳಂಕಿತ” ಮಾಜಿ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರನ್ನು ಅಧಿಕಾರ-ಲಾಲಸೆಯಿಂದ ಪುನಹ ಪಕ್ಷಕ್ಕೆ ಸೇರಿಸಿಕೊಳ್ಳಲು ಹಿಂಜರಿಯದ ಹಾಗೂ ರಾಜ್ಯಯಂತ್ರವನ್ನು ಒಂದು ವರ್ಗದ ಜನರನ್ನು ಕೊಲೆ ಮಾಡಲು ಉಪಯೋಗಿಸಿದ ಮಾನ್ಯ ನರೇಂದ್ರ ಮೋದಿಯಿಂದ ಇದೆಲ್ಲವನ್ನು ಅಪೇಕ್ಷಿಸುವುದು ಒಂದು ದುಸ್ಸಾಹಸವೇ ಸರಿ.

ವಿದೇಶಾಂಗ ನೀತಿ :

ಭಾರತವು ತನ್ನ “ಅಲಿಪ್ತ ನೀತಿ”ಗೆ ಹೆಸರುವಾಸಿಯಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನ್ಯಾಯಗಳನ್ನು ವಿರೋಧಿಸುವ ನೈತಿಕತೆಯನ್ನು ಭಾರತವು ಬೆಳೆಸಿಕೊಂಡು ಬಂದಿತ್ತು. ಈ ದೇಶ ಕಂಡ ಅತ್ಯುತ್ತಮ ಪ್ರಧಾನಿ ಶ್ರೀ ನೆಹರೂರವರ ಮುತ್ಸದ್ದೀತನದ ಪರಿಣಾಮವೇ ನಮ್ಮ ವಿದೇಶಾಂಗ ನೀತಿಯಾಗಿತ್ತು. ಸೋವಿಯತ್ ಯೂನಿಯನ್ನಿನ ಪತನಾನಂತರ “ಭಾರತದ ಅಲಿಪ್ತ ನೀತಿ”ಯು ತನ್ನ ಕೊನೆಯನ್ನು ಕಂಡಿರುತ್ತದೆ.

ಈಗ ಭಾರತದ ವಿದೇಶಾಂಗ ನೀತಿಯ ಪ್ರಮುಖ ಗುರಿಯು ತನ್ನ ಸುತ್ತಮುತ್ತಲಿನ ದೇಶಗಳೊಡನೆ ಪರಸ್ಪರ ವಿಶ್ವಾಸ ಮತ್ತು ಸ್ನೇಹದ ಸಂಬಂಧಗಳನ್ನು ಬೆಳೆಸಿ ಮುಂದುವರಿಸುವುದು ಹಾಗೂ ಅಮೇರಿಕಾ ಮತ್ತು ಇತರ ಯುರೋಪಿಯನ್ ದೇಶಗಳಿಂದ ಭಾರತಕ್ಕೆ ಉಪಯೋಗವಾಗುವ ರೀತಿಯಲ್ಲಿ Nehruಸಂಬಂಧಗಳನ್ನು ಜೋಡಿಸುವುದು ಇವು ಬಹಳ ಪ್ರಮುಖವಾದದ್ದಾಗಿದೆ.

ಈ ಹಿನ್ನೆಲೆಯಲ್ಲಿ ತನ್ನ ನೆರೆಯ ಪಾಕಿಸ್ತಾನ್ ಅಥವಾ ಚೀನದಿಂದ ಎಷ್ಟೇ provocation ಗಳು ಬಂದರೂ ಸಂಯಮವನ್ನು ಭಾರತವು ಕಾಪಾಡಿಕೊಂಡು ಬಂದಿದೆ. ಈಗಿನ ವಿದೇಶಾಂಗ ನೀತಿಯು ಭವಿಷ್ಯದಲ್ಲಿ ಭಾರತಕ್ಕೆ ಅತ್ಯಂತ ಉಪಯೋಗಕ್ಕೆ ಬರುವುದರಲ್ಲಿ ಸಂಶಯವಿಲ್ಲ.

ಭಾರತವು ಅತ್ಯಂತ ನಾಜೂಕಿನ ಆರ್ಥಿಕ ಪರಿಸ್ಥಿಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತವನ್ನು ಯುದ್ಧಕ್ಕೆ ತಳ್ಳಲು ಅನೇಕ ಶಕ್ತಿಗಳು ಪ್ರಯತ್ನಪಡುತ್ತಿವೆ. ಅತ್ಯಂತ ತಾಳ್ಮೆಯನ್ನು ಪ್ರದರ್ಶಿಸುವ ಕಾಲ ಇದಾಗಿದ್ದು,ಭಾರತವು ಈ ಅಗ್ನಿಪರೀಕ್ಷೆಯನ್ನು ಯಶಸ್ವಿಯಾಗಿ ದಾಟಬಲ್ಲದು-ಈಗಿನ ನಾಯಕತ್ವದ ಚಿಂತನೆಗಳು ಮುಂದುವರಿದರೆ ಮಾತ್ರ ಇದು ಸಾಧ್ಯ.

ಮಾಜಿ ಪ್ರಧಾನಿ ವಾಜಪೇಯೀಯವರು ಇದನ್ನೆಲ್ಲ ಅರ್ಥಮಾಡಿಕೊಂಡಿದ್ದರು ಹಾಗೂ ಆಗ ವಾಜಪೇಯಿಯವರು ಹೇಳಿದಂತೆ ಆರ್.ಎಸ್.ಎಸ್. ಕೇಳುತ್ತಿತ್ತು (ಎನ್.ಡಿ.ಎ.ಸರ್ಕಾರ ಅಧಿಕಾರಕ್ಕೆ ಬಂದಾಕ್ಷಣ ಸಂಘ ಪರಿವಾರವು “ಸ್ವದೇಶೀ ಜಾಗರಣ ಮಂಚ್‌”ನ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ತ್ಯಜಿಸಿ ವಿದೇಶೀ ವಸ್ತುಗಳನ್ನು ಹಾಗೂ ವಿದೇಶೀ ಬಂಡವಾಳವನ್ನು ವಿರೋಧಿಸುವುದನ್ನು ಕೈಬಿಟ್ಟಿದ್ದು ಒಂದು ದೊಡ್ಡ ಉದಾಹರಣೆ.) ಆದರೆ ಈಗ ಮೋದಿಯು ಆರ್.ಎಸ್.ಎಸ್ ನ್ನು ಮೀರಿ ನಡೆವಷ್ಟು ಸಮರ್ಥರೇನು?

ಪಂಚಸೂತ್ರಗಳು :

ಈ ಮುಂದೆ ಹೇಳಿರುವ ಪಂಚಸೂತ್ರಗಳು ಮುಂಬರುವ “ಪರ್ಯಾಯ ನೀತಿ”ಗಳ ಅವಿಭಾಜ್ಯ ಅಂಗವಾಗಿದ್ದಲ್ಲಿ ಮಾತ್ರ ಹೊಸ ಭಾರತವನ್ನು ನೋಡಬಹುದು.

  1. ಆಹಾರ ಭದ್ರತಾ ಕಾಯ್ದೆಯನ್ನು ಕೇವಲ ಬಿ.ಪಿ.ಎಲ್.ಕಾರ್ಡುದಾರರಿಗೆ ಮಾತ್ರ ಸೀಮಿತಗೊಳಿಸದೆ ದೇಶದ ಎಲ್ಲ ಜನವಿಭಾಗಕ್ಕೂ ವಿಸ್ತರಿಸುವುದು ಹಾಗೂ ಅದರಲ್ಲಿ ಪರಿಷ್ಕರಣವನ್ನು ಅಳವಡಿಸುವುದು. ಖಾಸಗೀ ಕ್ಷೇತ್ರದಲ್ಲೂ ಸಹ ಮೀಸಲಾತಿಯನ್ನು ಕಡ್ಡಾಯಗೊಳಿಸುವುದು.
  2. ದೇಶದಲ್ಲಿ ತೆರಿಗೆ ಪಾವತಿ ಮಾಡುವವರ ಸಂಖ್ಯೆ ಜನಸಂಖ್ಯೆಯ ಕೇವಲ ಶೇಕಡಾ 3 ಮಾತ್ರ. ನಮ್ಮಲ್ಲಿ ಮಿಲಿಯಾಧಿಪತಿ ಹಾಗೂ ಕೋಟ್ಯಾಧಿಪತಿಗಳಿಂದ ಅತಿಹೆಚ್ಚು ಎಂದರೆ ಅವರ ಆದಾಯದ ಕೇವಲ 30%ನ್ನು ಮಾತ್ರ ತೆರಿಗೆಯನ್ನು ಸರ್ಕಾರವು ಸಂಗ್ರಹಿಸುತ್ತಿದ್ದು, ಇದನ್ನು ಬ್ರಿಟನ್, ಸ್ಪೈನ್,ಸ್ವೀಡನ್ ಇತ್ಯಾದಿ ದೇಶಗಳಲ್ಲಿರುವಂತೆ 50%ಗೆ ಏರಿಸುವುದು.
  3. ಮೂಲಭೂತ ಸೌಕರ್ಯಗಳನ್ನು ವೃದ್ಧಿಸುವಲ್ಲಿ ಆದ್ಯತೆ ನೀಡುವುದು. ಈ ಕಾರ್ಯವನ್ನು ಖಾಸಗೀಯವರಿಗೆ ವಹಿಸದೇ ಸರ್ಕಾರವೇ ಕೈಗೆತ್ತಿಕೊಳ್ಳುವುದು.
  4. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯ ಜೊತೆ-ಜೊತೆಯಲ್ಲೇ ನಗರ ಪ್ರದೇಶಗಳ ಬದಲು ಗ್ರಾಮಗಳಲ್ಲಿ ಉದ್ಯೋಗ ನಿರ್ಮಾಣದ ವಿಕೇಂದ್ರೀಕರಣ ಯೋಜನೆಗಳನ್ನು ಹಮ್ಮಿಕೊಳ್ಳುವುದು ತನ್ಮೂಲಕ ಗ್ರಾಮಗಳಲ್ಲೂ ಕೊಳ್ಳುವ ಶಕ್ತಿಯನ್ನು ವೃಧ್ಧಿಸುವುದು
  5. ವಸತಿ ಸೌಕರ್ಯವನ್ನು ಆದ್ಯತೆ ಮೇರೆಗೆ ವಿಸ್ತರಿಸುವುದು .