Category Archives: ಮಾಧ್ಯಮ

ಸಮೂಹ ಮಾಧ್ಯಮಕ್ಕೆ ಸಂಬಂಧಿಸಿದ ಲೇಖನಗಳು, ವಿಡಿಯೋಗಳು…

ಸೌಜನ್ಯ ಕೊಲೆಯ ತನಿಖೆ ಬಗೆಗಿನ ಕೆಲವು ಸಂದೇಹಗಳು

– ಆನಂದ ಪ್ರಸಾದ್

ಧರ್ಮಸ್ಥಳದಲ್ಲಿ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಕೊಲೆಯ ಆರೋಪಿಯಾಗಿ ಮಾನಸಿಕ ಅಸ್ವಸ್ಥ ಸಂತೋಷ್ ರಾವ್ ಎಂಬಾತನನ್ನು ಕೊಲೆ ನಡೆದ ಕೆಲವು ದಿನಗಳ ನಂತರ ಬಂಧಿಸಲಾಗಿದೆ. ಈ ಘಟನೆಯಲ್ಲಿ ಸಂತೋಷ್ ರಾವ್ ಒಬ್ಬನೇ ಕೊಲೆ ನಡೆಸಿದ್ದಾನೆ ಎಂಬುದು ಪೋಲೀಸರ ಆರೋಪ. ಸೌಜನ್ಯ ದೈಹಿಕವಾಗಿ ಗಟ್ಟಿಮುಟ್ಟಾಗಿದ್ದ ಹೆಣ್ಣುಮಗಳು. ಆಕೆಯನ್ನು ಸಂತೋಷ್ ರಾವ್ ಒಬ್ಬನೇ ಹಿಡಿದು ಕಟ್ಟಿ ಹಾಕಿ ಅತ್ಯಾಚಾರ ನಡೆಸಿ ಕೊಲ್ಲುವುದು ಸಾಧ್ಯವೇ ಎಂಬುದು ಮೇಲ್ನೋಟಕ್ಕೇ ಎದ್ದು ಕಾಣುತ್ತದೆ. ಒಬ್ಬ ವ್ಯಕ್ತಿ ಹಿಡಿದರೆ ಆತನ ಕೈಯನ್ನು ಕೊಸರಿ ಅಥವಾ ಕಚ್ಚಿ ಓಡಿ ಹಾಗೂ ಬೊಬ್ಬೆ Sowjanya-Rape-Murderಹಾಕಿ ಪಾರಾಗಲು ಸೌಜನ್ಯಳಂಥ ಗಟ್ಟಿಮುಟ್ಟಾಗಿರುವ ಹೆಣ್ಣುಮಗಳಿಗೆ ಸಾಧ್ಯ ಎಂಬುದು ಸ್ಪಷ್ಟವಾಗಿ ತೋರುತ್ತದೆ. ಅತ್ಯಾಚಾರ ಹಾಗೂ ಕೊಲೆ ನಡೆಸಲು ಒಂದಕ್ಕಿಂತ ಹೆಚ್ಚಿಗೆ ಜನ ಭಾಗಿಯಾಗಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಒಬ್ಬ ಹೆಣ್ಣುಮಗಳನ್ನು ಬಲಾತ್ಕಾರವಾಗಿ ಹಿಡಿದುಕೊಂಡರೆ ಆಕೆ ರಕ್ಷಣೆಗಾಗಿ ಬೊಬ್ಬೆ ಹಾಕುವ ಸಾಧ್ಯತೆ ಇದ್ದೇ ಇದೆ. ಹೀಗಾಗಿ ಬೊಬ್ಬೆ ಹಾಕದಂತೆ ಬಾಯಿಯನ್ನು ಬಲವಂತವಾಗಿ ಮುಚ್ಚಿರುವ ಮತ್ತು ಹೀಗೆ ಮಾಡಲು ಒಂದಕ್ಕಿಂಥ ಹೆಚ್ಚು ಜನ ಬೇಕಾಗುತ್ತದೆ. ಒಬ್ಬನೇ ಹಿಡಿದು ಒಬ್ಬ ಹೆಣ್ಣಿನ ಬಾಯಿ ಮುಚ್ಚಿಸುವುದು ಸಾಧ್ಯವಿಲ್ಲ. ಹಾಗೆ ಮಾಡಿದರೆ ಆಕೆ ಕೈಯನ್ನು ಕಚ್ಚಿ ಓಡಿ ತಪ್ಪಿಸಿಕೊಂಡು ಬೊಬ್ಬೆ ಹಾಕುವ ಸಾಧ್ಯತೆ ಇರುತ್ತದೆ. ಸೌಜನ್ಯಳ ಶವ ಒಂದು ಕಾಲು ಹಾಗೂ ಒಂದು ಕೈಯನ್ನು ಕಟ್ಟಿ ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ರೀತಿ ಒಬ್ಬ ಗಟ್ಟಿಮುಟ್ಟಾದ ಹೆಣ್ಣನ್ನು ಒಬ್ಬನೇ ಕಟ್ಟಿಹಾಕಲು ಸಾಧ್ಯವಿದೆಯೇ? ಇಲ್ಲವೆಂದು ಮೇಲ್ನೋಟಕ್ಕೆ ಕಂಡುಬರುತ್ತದೆ. ಈ ನಿಟ್ಟಿನಿಂದ ಯೋಚಿಸಿದಾಗಲೂ ಇದು ಒಬ್ಬನೇ ನಡೆಸಿದ ಕೃತ್ಯ ಅಲ್ಲವೆಂದು ಕಂಡುಬರುತ್ತದೆ.

ಪೊಲೀಸರು ಸಂತೋಷ್ ರಾವ್ ಎಂಬ ವಿಕೃತ ಕಾಮಿ ಕೊಲೆ ಮಾಡಿದ್ದಾನೆ ಎಂದು ಆತನಿಗೆ ವಿಕೃತ ಕಾಮಿಯ ಪಟ್ಟ ಕಟ್ಟಿದ್ದಾರೆ. ಈ ಸಂತೋಷ್ ರಾವ್ ಎಂಬಾತ ಯಾರು, ಆತನ ಊರು, ಮನೆ, ತಂದೆ ತಾಯಿ, ಬಂಧು ಬಳಗದ ಅಧ್ಯಯನ ಮಾಡಿ ಮಾಧ್ಯಮಗಳು ವರದಿ ಕೊಡಬೇಕಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಹೆಚ್ಚಿನ ವರದಿ ಬಂದ ಹಾಗೆ ಇಲ್ಲ. ಸಂತೋಷ್ ರಾವ್ ವಿಕೃತ ಕಾಮಿ ಆಗಿದ್ದರೆ ಅವನು ಇದಕ್ಕಿಂಥ ಮೊದಲು ಎಷ್ಟು ಅತ್ಯಾಚಾರ ಮಾಡಿದ್ದಾನೆ ಮತ್ತು ಎಷ್ಟು ಕೊಲೆ ಮಾಡಿದ್ದಾನೆ ಎಂದು ಆತನ ಊರಿನ ಜನರನ್ನು ವಿಚಾರಿಸಬೇಕಾದ ಅಗತ್ಯ ಇದೆ. ಇದಕ್ಕಿಂಥ ಮೊದಲು ಆತ sowjanya-murderedವಿಕೃತ ಕಾಮಿಯ ರೀತಿಯಲ್ಲಿ ನಡೆದುಕೊಂಡಿದ್ದಾನೆಯೇ ಎಂದು ಕೂಡ ಆತನ ಊರಿನ ಸುತ್ತಮುತ್ತ ವಿಚಾರಿಸಿ ಕಂಡುಕೊಳ್ಳಬೇಕಾಗಿದೆ. ಪೊಲೀಸರು ಸಿಐಡಿ ವರದಿಯಲ್ಲಿ ಸೌಜನ್ಯ್ಲ ಮೇಲೆ ಅತ್ಯಾಚಾರ ನಡೆದಿಲ್ಲ, ಸಂತೋಷ್ ರಾವ್ ಫಿಮೊಸಿಸ್ ಎಂಬ ಶಿಶ್ನದ ಚರ್ಮ ಬಿಗಿಯಾಗಿರುವ ಹಾಗೂ ಹಿಂದಕ್ಕೆ ಸರಿಯದಿರುವ ದೈಹಿಕ ತೊಂದರೆಯನ್ನು ಹೊಂದಿದ್ದ ಎಂದು ವರದಿಯಲ್ಲಿ ಹೇಳಿದ್ದಾರೆ. ಫಿಮೊಸಿಸ್ ತೊಂದರೆ ಇರುವವರು ಸಂಭೋಗ ನಡೆಸಲು ಅಸಮರ್ಥರೇನೂ ಅಲ್ಲ ಎಂದು ಇಂಟರ್ನೆಟ್ ಮಾಹಿತಿಯಿಂದ ತಿಳಿದುಬರುತ್ತದೆ. ಹೀಗಾಗಿ ಸಂತೋಷನೇ ಅಪರಾಧಿಯಾಗಿದ್ದರೆ ಆತನು ಅತ್ಯಾಚಾರ ಮಾಡಿರುವ ಸಾಧ್ಯತೆ ಇದ್ದೇ ಇದೆ. ಹೀಗಾಗಿ ಅತ್ಯಾಚಾರ ನಡೆದಿಲ್ಲ ಎಂಬುದು ಸುಳ್ಳು ಎಂದು ಕಂಡುಬರುತ್ತದೆ. ಸೌಜನ್ಯಳ ಯೋನಿಯೊಳಗೆ ಮಣ್ಣು ಹಾಕಿದ್ದಾರೆ ಎಂದು ಹೇಳಲಾಗುತ್ತದೆ. ಯೋನಿಯೊಳಗೆ ಮಣ್ಣು ತುಂಬಿಸಿ ಅತ್ಯಾಚಾರದಿಂದ ಅಲ್ಲಿ ಸಿಗಬಹುದಾದ ವೀರ್ಯಾಣುಗಳು ಸಿಗದಂತೆ ಮಾಡಲು ಅತ್ಯಾಚಾರಿಗಳು ಮಣ್ಣು ತುಂಬಿಸುತ್ತಾರೆ ಎಂದು ಹೇಳಲಾಗುತ್ತದೆ. ಮಾನಸಿಕ ಅಸ್ವಸ್ಥನಿಗೆ ಈ ರೀತಿಯ ವಿವೇಕ ಇರುವ ಸಾಧ್ಯತೆ ಇಲ್ಲ. ಹಾಗಾಗಿ ಇದು ಸ್ಪಷ್ಟವಾದ ವೈಜ್ಞಾನಿಕ ಮಾಹಿತಿ ಇರುವ ವ್ಯಕ್ತಿಗಳೇ ಮಾಡಿದ ಅತ್ಯಾಚಾರ ಎಂಬ ಸಂಶಯ ಬರುತ್ತದೆ. ಅತ್ಯಾಚಾರ ಮಾಡಿದ ನಂತರ ಯೋನಿಯೊಳಗೆ ಮಣ್ಣು ತುಂಬಿಸಿದರೂ ವೀರ್ಯಾಣುಗಳನ್ನು ಸಂಗ್ರಹಿಸಿ ಡಿಎನ್ಎ ಪರೀಕ್ಷೆ ಮಾಡಿ ಅಪರಾಧಿಯ ಪತ್ತೆ ಹಚ್ಚಿ ನಿಖರ ಸಾಕ್ಷ್ಯ ಒದಗಿಸಲು ಸಾಧ್ಯವಿದೆ. ಪೊಲೀಸರು ಈ ಕೆಲಸವನ್ನು ಯಾಕೆ ಮಾಡಿಲ್ಲ ಎಂಬ ಪ್ರಶ್ನೆಗೆ ಪೊಲೀಸರು ಉತ್ತರಿಸಬೇಕಾಗುತ್ತದೆ.

ಇನ್ನೂ ಒಂದು ಅಂಶವಿದೆ. ಸಂತೋಷನ ಮುಖ ಹಾಗೂ ಬೆನ್ನಿನ ಮೇಲೆ ಗಾಯದ ಗುರುತು ಇದೆ. ಈ ಗಾಯ ಅತ್ಯಾಚಾರ ಮಾಡುವಾಗ ಅತ್ಯಾಚಾರಕ್ಕೊಳಗಾದ ಹೆಣ್ಣು ಅತ್ಯಾಚಾರಿಯನ್ನು ಪರಚುವುದರಿಂದ ಉಂಟಾದದ್ದು ಎಂದು ಪೊಲೀಸರು ವರದಿಯಲ್ಲಿ ಹೇಳಿದ್ದಾರೆ. ಹೀಗಿರುವಾಗ ಆರೋಪಿಯ ರಕ್ತ ಸೌಜನ್ಯಳ ಕೈಯ ಉಗುರುಗಳಲ್ಲಿ ಹಾಗೂ ಬೆರಳುಗಳಿಗೆ ಅಂಟಿಕೊಂಡಿರಲೇಬೇಕು. ಈ ಅಂಟಿಕೊಂಡ ರಕ್ತದಿಂದಲೇ sowjanya-rape-murderಡಿಎನ್ಎ ಪರೀಕ್ಷೆ ಮಾಡಿ ಅಪರಾಧಿ ಸಂತೋಷ್ ಎಂದು 100% ನಿಖರವಾಗಿ ಹೇಳಲು ಸಾಧ್ಯವಿರುವಾಗ ಪೊಲೀಸರು ಆ ರಕ್ತದ ಕಲೆಗಳನ್ನು ಸಂಗ್ರಹಿಸಿ ಡಿಎನ್ಎ ಪರೀಕ್ಷೆಗೆ ಯಾಕೆ ಕಳುಹಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಬೇಕಾಗಿದೆ. ಈ ಪರೀಕ್ಷೆ ಮಾಡಿದ್ದರೆ ಕೋರ್ಟುಗಳಲ್ಲಿ ಇದನ್ನು ಬಲವಾದ ಸಾಕ್ಷ್ಯವಾಗಿ ಪರಿಗಣಿಸಲು ಸಾಧ್ಯವಾಗುತ್ತಿತ್ತು. ಹೀಗಾಗಿ ಪೋಲೀಸರ ತನಿಖೆ ಸರಿಯಾಗಿ ನಡೆದಿಲ್ಲ ಎಂಬುದು ಮೇಲ್ನೋಟಕ್ಕೇ ಕಂಡುಬರುತ್ತದೆ. ರಕ್ತದ ಕಲೆ ಅಲ್ಲದೆ ಕಿತ್ತು ತೆಗೆದ (ರೋಮಕೂಪ ಇರುವ) ಕೂದಲುಗಳಿಂದಲೂ ಡಿಎನ್ಎ ಪರೀಕ್ಷೆ ನಡೆಸಿ ಅಪರಾಧಿಯನ್ನು ನಿಖರವಾಗಿ ಪತ್ತೆ ಹಚ್ಚಲು ಸಾಧ್ಯ. ಸಂತೋಷನ ಮುಖ, ಬೆನ್ನಿಗೆ ಪರಚಿದ ಗಾಯ ಆಗಿದೆ ಎಂದರೆ ಆತನ ಕೂದಲನ್ನೂ ಅತ್ಯಾಚಾರಕ್ಕೊಳಗಾದ ವ್ಯಕ್ತಿ ಕಿತ್ತುಹಾಕುವ ಸಂಭವ ಇದೆ. ಇಂಥ ಕಿತ್ತ ಕೂದಲುಗಳಿಂದಲೂ ಡಿಎನ್ಎ ಪರೀಕ್ಷೆ ಮಾಡಲು ಸಾಧ್ಯವಿರುವಾಗ ಇಂಥ ಸಾಕ್ಷ್ಯಗಳನ್ನು ಪೊಲೀಸರು ಏಕೆ ಸಂಗ್ರಹಿಸಿಲ್ಲ ಎಂದು ತನಿಖೆ ನಡೆಸಿದವರನ್ನು ಪ್ರಜ್ಞಾವಂತರು ಕೇಳಬೇಕಾಗಿದೆ. ಪೊಲೀಸರು ಅತ್ಯಾಚಾರ ಹಾಗೂ ಕೊಲೆ ನಡೆದದ್ದು ಮೃತದೇಹ ಸಿಕ್ಕಿದ ಜಾಗದಲ್ಲೇ ಎಂದು ಹೇಳುತ್ತಾರೆ. ಸೌಜನ್ಯಳ ಕೊಲೆ ಆದ ದಿನ ಜೋರು ಮಳೆ ಬಂದಿದೆ. ಹೀಗಿದ್ದರೂ ಸೌಜನ್ಯಳ ಮೃತ ದೇಹ ಪತ್ತೆಯಾದಾಗ ದೇಹ ಹಾಗೂ ಕೈಚೀಲ ಹಾಗೂ ಪುಸ್ತಕಗಳು ಒದ್ದೆಯಾಗಿರಲಿಲ್ಲ ಎಂದು ಸೌಜನ್ಯ ಪೋಷಕರು ಹೇಳುತ್ತಿದ್ದಾರೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ತನಿಖೆ ನಡೆಸಿದ ತಜ್ಞ ಪೋಲೀಸರ ಉತ್ತರ ಏನು ಎಂದು ಜನರಿಗೆ ತಿಳಿಯಬೇಕಾಗಿದೆ.

ಫ್ಯಾಸಿಸ್ಟರ ಕೈಯಲ್ಲಿ ಮಕ್ಕಳಾಟಿಕೆಯಂತಾಗಿರುವ ಇಂಡಿಯಾ

– ಬಿ.ಶ್ರೀಪಾದ ಭಟ್

15 ನೇ ಅಕ್ಟೋಬರ್ 2013 ರಂದು ’ದ ಹಿಂದೂ’ ದಿನಪತ್ರಿಕೆಯ ಸಹ ಸಂಪಾದಕಿ ’ವಿದ್ಯಾ ಬಾಲಸುಬ್ರಮಣ್ಯಂ’ ಅವರು ನವದೆಹಲಿಯ ಪೋಲಿಸ್ ಠಾಣೆಯಲ್ಲಿ ” ತಾವು ‘The forgotten promise of 1949′ ಲೇಖನವನ್ನು ಬರೆದ ನಂತರ ದಿನನಿತ್ಯ ನನ್ನ ಮೊಬೈಲ್‌ಗೆ ಬೆದರಿಕೆ ಕರೆಗಳು ಬರುತ್ತಿವೆ. 15 ಮತ್ತು 16 ನೇ ಅಕ್ಟೋಬರ್ 2013 ರಂದು ಸುಮಾರು 250 ಬೆದರಿಕೆ ಕರೆಗಳು ಬಂದಿವೆ. ಈ ಬೆದರಿಕೆ ಕರೆಗಳನ್ನು ಮಾಡುತ್ತಿರುವುವರು ತಾವು ಆರೆಸಸ್ ಮತ್ತು ವಿಎಚ್‌ಪಿ ಸಂಘಟನೆಗಳಿಗೆ ಸೇರಿದ್ದೇವೆ ಎಂದು ಬೆದರಿಸುತ್ತಿದ್ದಾರೆ,” ಎಂದು ದೂರು ದಾಖಲಿಸಿದ್ದಾರೆ. (ದ ಹಿಂದೂ, 1 ನವೆಂಬರ್, 2013)

ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ, ಜನರಿಂದ ಚುನಾಯಿತರಾಗಿ ಅಧಿಕಾರಕ್ಕೆ ಬರುವ ಸರ್ಕಾರಗಳು ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮತ್ತು ಪತ್ರಿಕಾರಂಗಗಳೆಂಬ ಪ್ರಜಾಪ್ರಭುತ್ವದ ನಾಲ್ಕು ಸ್ತಂಭಗಳ ಆಧಾರದೊಂದಿಗೆ ಕಾರ್ಯ ನಿರ್ವಹಿಸುತ್ತವೆ ಮತ್ತು ಈ ಸರ್ಕಾರ ಹಾಗೂ ಈ ನಾಲ್ಕೂ ಸ್ತಂಭಗಳು ಭಾರತದ ಸಂವಿಧಾನಕ್ಕೆ ಬದ್ಧರಾಗಿ ಸಂವಿಧಾನದ ಆಶಯಗಳಿಗೆ ಅನುಗುಣವಾಗಿಯೇ ಕಾರ್ಯ ನಿರ್ವಹಿಸಬೇಕು. BJP-RSS-Gadkariಇಲ್ಲಿ ಯಾವುದೇ ಧರ್ಮಕ್ಕೂ ಮತ್ತು ಧರ್ಮಗ್ರಂಥಗಳಿಗೂ ಅಧಿಕೃತವಾಗಿ, ಸಾರ್ವಜನಿಕವಾಗಿ, ಕಾನೂನಿನ ಚೌಕಟ್ಟಿನಲ್ಲಿ ಮಾನ್ಯತೆ ಇಲ್ಲವೇ ಇಲ್ಲ. ಕಡೆಗೆ ಸಂವಿಧಾನವೇ ಅಂತಿಮ. ಇಂದು ಫ್ಯಾಸಿಸ್ಟ್ ಸಂಘಟನೆಯಾದ ಆರೆಸಸ್ ಮತ್ತು ಫ್ಯಾಸಿಸ್ಟ್ ನಾಯಕ ನರೇಂದ್ರ ಮೋದಿ ಭಾರತವನ್ನು ಕಬ್ಜಾ ಮಾಡಲು ದೇಶಾದ್ಯಾಂತ ದಂಡಯಾತ್ರೆಯನ್ನು ನಡೆಸುತ್ತಿದ್ದಾರೆ. ಹಾಗಿದ್ದಲ್ಲಿ ಪ್ರಜಾಪ್ರಭುತ್ವದ, ಸಂವಿಧಾನದ ವಿರೋಧಿಯಾದ ಈ ಫ್ಯಾಸಿಸಂನ ಗುಣಗಳೇನು?

ಚಿಂತಕ ಪಾರ್ಥ ಬ್ಯಾನರ್ಜಿಯವರ ಸಂಶೋಧನ ಲೇಖನದ ಸಾರಾಂಶ:

1920 ರ ದಶಕದಲ್ಲಿ ಯುರೋಪ್ ರಾಷ್ಟ್ರಗಳಲ್ಲಿ ಈ ಫ್ಯಾಸಿಸ್ಟ್ ಪದ ಮತ್ತು ಇದರ ವ್ಯವಸ್ಥೆ ಆಸ್ತಿತ್ವಕ್ಕೆ ಬಂತು. ಜರ್ಮನಿಯ ಗುಟೇನ್‌ಬರ್ಗ ಯೂನಿವರ್ಸಿಟಿಯಲ್ಲಿ ಫ್ರೊಫೆಸರ್ ಆಗಿರುವ ಡಾ. ಮಾರ್ಕ ಟ್ರಿಶ್ಚ್ ಅವರು ಫ್ಯಾಸಿಸಂ ಅನ್ನು ಈ ಕೆಳಗಿನಂತೆ ವಿವರಿಸುತ್ತಾರೆ

  • ಸಾವಿರಾರು ವರ್ಷಗಳ ಹಿಂದಿನ ಸಂಪ್ರದಾಯಗಳಿಗೆ ( ಭಾರತದ ಸಂದರ್ಭದಲ್ಲಿ ವರ್ಣಾಶ್ರಮದ ವ್ಯವಸ್ಥೆಗೆ) ಮರಳಬೇಕೆಂಬ ಸಿದ್ಧಾಂತ
  • ಶ್ರೇಣೀಕೃತ, ಮಿಲಿಟರಿ ಆಧಾರಿತ, ಕಾರ್ಪೋರೇಟ್ ಸಮಾಜದ ನಿರ್ಮಾಣವನ್ನು ಕಟ್ಟಬೇಕೆಂಬ ಸಿದ್ಧಾಂತ
  • ನಾಯಕತ್ವದ, ನಾಯಕನ ವೈಭವೀಕರಣ. ನಾಯಕನ ಮಾತೇ ಅಂತಿಮವೆನ್ನುವ ಸಿದ್ಧಾಂತ
  • ರಾಷ್ಟ್ರೀಯತೆಯನ್ನು ದೇಶಪ್ರೇಮದೊಂದಿಗೆ ಸಮೀಕರಿಸಿ ವೈಭವೀಕರಿಸುವುದು
  • ಈ ರಾಷ್ಟ್ರೀಯತೆಯ ಆಧಾರದ ಮೇಲೆಯೇ ವಿದೇಶಾಂಗ ನೀತಿಗಳನ್ನು ರೂಪಿಸುವುದು

ಹಾಗಾದರೆ ಆರೆಸಸ್ ಮತ್ತು ಅದರ ಅಂಗಪಕ್ಷಗಳಾದ ಬಿಜೆಪಿ, ವಿಎಚ್‌ಪಿ, ಬಜರಂಗದಳಗಳು ಫ್ಯಾಸಿಸಂನ ಮೇಲಿನ ಗುಣಲಕ್ಷಣಗಳನ್ನು ಹೊಂದಿವೆಯೇ? ಉತ್ತರ, ಹೌದು. ಈ ಸಂಘ ಪರಿವಾರದ ಎಲ್ಲಾ ನೀತಿನಿಯಮಗಳು ಮೇಲಿನ ಫ್ಯಾಸಿಸಂನ ಗುಣಲಕ್ಷಣಗಳನ್ನು ಹೊಂದಿವೆ.

ಆರೆಸಸ್ ಕಳೆದ ಎಂಬತ್ತು ವರ್ಷಗಳಿಂದ ಪ್ರತಿಪಾದಿಸುತ್ತಾ ಬಂದಿರುವ “ಭಾರತೀಯ ಸಂಸ್ಕೃತಿ, ಭಾರತೀಯ ಸಂಸ್ಕಾರ ಅಂದರೆ ಹಿಂದೂ ಸಂಸ್ಕೃತಿ ಮತ್ತು ಹಿಂದೂ ಸಂಸ್ಕಾರ.” ಇದು ಫ್ಯಾಸಿಸಂನ ಮೊದಲ ಸಿದ್ಧಾಂತ. ಅಂದರೆ ವೈವಿಧ್ಯತೆಯನ್ನೇ ನಿರಾಕರಿಸುವುದು. ಬಹುರೂಪಿ ಸಂಸ್ಕೃತಿಯನ್ನೇ ಧ್ವಂಸಗೊಳಿಸುವುದು. ತನ್ನ ದಿನನಿತ್ಯದ ಬೈಠಕ್‌ಗಳಲ್ಲಿ, ಶಾಖೆಗಳಲ್ಲಿ, ಸ್ವಯಂಸೇವಕರ ಸಮಾವೇಶಗಳಲ್ಲಿ ಬೋಧಿಸುವುದು ಮತ್ತು ಕಡ್ಡಾಯವಾಗಿ ಪಾಲಿಸಬೇಕೆಂದು ಒತ್ತಾಯಿಸುವುದು “ಪ್ರಾಚೀನ ಕಾಲದ ಭರತವರ್ಷ”ವನ್ನು. ಇದು ಭೂಖಂಡದಲ್ಲೇ ಅತ್ಯುತ್ತಮವಾದದ್ದೆಂದು ಬಣ್ಣಿಸುತ್ತದೆ savarkar-gowalkarಈ ಆರೆಸಸ್. ಮುಂದುವರೆದು ಇಂಥ ಶ್ರೇಷ್ಠ ಹಿಂದೂ ರಾಷ್ಟ್ರದ ಅವನತಿ ಪ್ರಾರಂಭವಾಗಿದ್ದು ಹಿಂದೂಗಳ ನಡುವಿನ ಒಡಕಿನಿಂದ (ಅದರೆ ಜಾತೀಯತೆ ಎನ್ನುವ ಪದವನ್ನು ಎಲ್ಲಿಯೂ ಬಳಸುವುದಿಲ್ಲ) ಮತ್ತು ಮುಸ್ಲಿಂ ದೊರೆಗಳ, ಬ್ರಿಟೀಷರ ಆಕ್ರಮಣದಿಂದ ನಮ್ಮ ದೇಶದ ಪಾವಿತ್ರ್ಯವೇ ನಾಶವಾಯಿತು ಎಂದು ಬ್ರೈನ್‌ವಾಶ್ ಮಾಡುತ್ತಾರೆ. ಮರಳಿ ಹಿಂದೂ ಧರ್ಮದ ಅಖಂಡ ಭಾರತವನ್ನು ಅಂದರೆ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ, ಗಂಧಾರದಿಂದ ಭ್ರಹ್ಮದೇಶದವರೆಗೆ (ಉತ್ತರದ ಟಿಬೆಟ್‌ನಿಂದ ದಕ್ಷಿಣದ ತುದಿಯವರೆಗೆ ಮತ್ತು ಪಶ್ಚಿಮದ ಅಫಘಾನಿಸ್ತಾನದಿಂದ ಮಯನ್ಮಾರ್, ಥೈಲಾಂಡ್, ಕಾಂಬೋಡಿಯ, ಲ್ಹಾಸಾಗಳನ್ನೊಳಗೊಂಡ ವಾಯುವ್ಯ ಏಷ್ಯಾದವೆರೆಗೆ) ಕಟ್ಟಬೇಕೆಂಬುದೇ ತಮ್ಮ ಸಿದ್ಧಾಂತವೆಂದು ಇವರು ಪ್ರತಿಪಾದಿಸುತ್ತಾರೆ. ಇದು ಫ್ಯಾಸಿಸಂ ಮೊದನೇ ಗುಣಲಕ್ಷಣವನ್ನು ಸಂಪೂರ್ಣವಾಗಿ ಪ್ರತಿಪಾದಿಸುತ್ತದೆ. ಇದು ಉತ್ಪ್ರೇಕ್ಷೆಯಲ್ಲ. ಆರೆಸಸ್ ನಡೆಸುವ ಬೈಠಕ್‌ಗಳಿಗೆ, ಸಮಾವೇಶಗಳಿಗೆ ಒಮ್ಮೆ ಭೇಟಿ ಕೊಡಿ. ಅಲ್ಲಿ ಸ್ವಯಂಸೇವಕರು ಉಗುಳುವ ಬೆಂಕಿಯನ್ನು ದಯವಿಟ್ಟು ಆಲಿಸಿ. ಆರೆಸಸ್‌ನ ಸಂಸ್ಥಾಪಕ ನಾಯಕರಾದ ಗೋಳ್ವಲ್ಕರ್, ಸಾವರ್ಕರ್, ಶ್ಯಾಮ್ ಪ್ರಸಾದ್ ಮುಖರ್ಜಿ ಇವರು ಬರೆದ ಪುಸ್ತಕಗಳನ್ನು, ಲೇಖನಗಳನ್ನು ದಯವಿಟ್ಟು ಓದಿ. ಮೇಲೆ ಹೇಳಿದ ಎಲ್ಲಾ ಚಿಂತನೆಗಳು ಅಲ್ಲಿ ಇನ್ನೂ ಉಗ್ರ ಸ್ವರೂಪದಲ್ಲಿವೆ.

ಇದು ಹಳೆಯ ಕಾಲದ ಮಾತಾಯ್ತು ಎನ್ನುವಿರಾ? ಸಾಧ್ಯವೇ ಇಲ್ಲ. ಸಂಘ ಪರಿವಾರಕ್ಕೆ ಈ ನಾಯಕರು ಇಂದಿಗೂ ಆದರ್ಶಪ್ರಾಯರು. ಇಂದಿಗೂ ಇವರ ಚಿಂತನೆಗಳೇ ಸಂಘ ಪರಿವಾರಕ್ಕೆ ವೇದವಾಕ್ಯ.

ಆರೆಸಸ್ ಪಕ್ಷದ ಸಂವಿಧಾನವನ್ನು ಅದರ ಚೌಕಟ್ಟನ್ನು ವಿವರವಾಗಿ ಪರಿಶೀಲಿಸಿದಾಗ ಅದು ಮಿಲಿಟರಿಯ ರೆಜಿಮೆಂಟ್ ಮಾದರಿಯನ್ನು ಅಳವಡಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ಆರೆಸಸ್ ಮುಖ್ಯಸ್ಥನನ್ನು “ಸರಸಂಚಾಲಕ”ರೆಂದು ಕರೆಯುತ್ತಾರೆ. ಅಂದರೆ ಪರಮೋಚ್ಛ ನಾಯಕ. ಅಂದರೆ ಮಿಲಿಟರಿ ಮುಖ್ಯಸ್ಥನಂತೆ. ಈ ಸ್ವರ ಸಂಚಾಲಕರನ್ನು ಯಾವುದೇ ಅಂತರಿಕ ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ಚುನಾಯಿಸುವುದಿಲ್ಲ. ಅಲ್ಲಿ ಅಂತರಿಕ ಚುನಾವಣೆಯೇ ಇಲ್ಲ. ಆತನ ಪಾತ್ರ ಮತ್ತು ಹೊಣೆಗಾರಿಕೆಗಳು ಪರಮೋಚ್ಛ ನಾಯಕನ ಹೊಣೆಗಾರಿಕೆಗಳಿಗೆ ಸಮ. ಪ್ರತಿ ವರ್ಷ ವಿಜಯದಶಮಿ ದಿನದಂದು ನಾಗಪುರದ ಆರೆಸಸ್‌ನ ಕೇಂದ್ರ ಕಛೇರಿಯಲ್ಲಿ ಈ ಸ್ವರಸಂಚಾಲಕ ಮಾಡುವ ಭಾಷಣ ಮತ್ತು ನೀಡುವ ಸಂದೇಶವೇ ಸಂಘಪರಿವಾರಕ್ಕೆ ಮುಂದಿನ ಗುರಿಗಳ ಕುರಿತಾದ ಆಜ್ಞೆಯ ಸ್ವರೂಪ. ಆತನ ಮಾತೇ ಅಂತಿಮ. ಅವರು ಹೇಳಿದ್ದು ಲಕ್ಷ್ಮಣ ರೇಖೆ. ಹೆಗಡೇವಾರ್ ಮತ್ತು ಗೋಳ್ವಲ್ಕರ್ ಅವರನ್ನು ಇಂದಿಗೂ ದೇವತಾ ಸ್ವರೂಪಿಗಳಾಗಿಯೇ ಪೂಜಿಸುತ್ತಾರೆ. ಇವರಿಬ್ಬರಿಗೂ ಅವತಾರ ಪುರುಷರೆಂಬ ಪಟ್ಟವನ್ನು ಕಟ್ಟಲಾಗಿದೆ. ಇವರ ಕುರಿತಾಗಿ ದಂತಕತೆಗಳನ್ನು ದಿನನಿತ್ಯದ ಬೈಠಕ್‌ಗಳಲ್ಲಿ, ತಮ್ಮ ಶಾಖೆಗಳಲ್ಲಿ, ಸಮಾವೇಶಗಳಲ್ಲಿ ಭಕ್ತಿಯಿಂದ ಮಾತನಾಡುತ್ತಾರೆ. ಶಿವಸೇನೆಯ ಬಾಳಾ ಠಾಕ್ರೆಯನ್ನು ಮತ್ತೊಬ್ಬ ಸಾಮಂತ ರಾಜನಂತೆ ಗೌರವಿಸುತ್ತಾರೆ. ಈ ಅಂಶಗಳು ಫ್ಯಾಸಿಸಂನ ಎರಡನೇ ಮತ್ತು ಮೂರನೇ ಅಂಶಗಳನ್ನು ಧೃಡೀಕರಿಸುತ್ತದೆ.

(ಆಧಾರ : ಚಿಂತಕ ಪಾರ್ಥ ಬ್ಯಾನರ್ಜಿಯವರ ಸಂಶೋಧನ ಲೇಖನಗಳು.)

ರಾಷ್ಟ್ರೀಯ ಸ್ವಾವಲಂಬನೆಯನ್ನು ಸಾಧಿಸಲು ಸ್ವದೇಶಿ ಮಂತ್ರವನ್ನು ದೇಶಾದ್ಯಾಂತ ಹರಡಲು ಹುಟ್ಟಿಕೊಂಡಿದ್ದೇ “ಸ್ವದೇಶಿ ಜಾಗರಣ ಮಂಚ್” ಎನ್ನುವ ಸಂಘಟನೆ. ಇದೂ ಸಹ ಆರೆಸಸ್‌ನ ಅಂಗಪಕ್ಷ. ಈ ಸಂಘಟನೆಯು ಪಶ್ಚಿಮ ರಾಷ್ಟ್ರಗಳ ಪರಮೋಚ್ಛತೆಯನ್ನು ತೀವ್ರವಾಗಿ ಖಂಡಿಸುತ್ತದೆ. ಅದರಲ್ಲೂ ಅಮೇರಿಕಾದ ನೀತಿಗಳು ದೇಶಕ್ಕೇ ಮಾರಕವೆಂದೇ ಈ “ಸ್ವದೇಶಿ ಜಾಗರಣ ಮಂಚ್” ಸಾರುತ್ತಾ ಬಂದಿದೆ. ಇದನ್ನು ವಸಾಹತು ನೆಲೆಯಲ್ಲಿ, ಕಲೋನಿಯಲ್ ನೆಲೆಯಲ್ಲಿ ವಿಶ್ಲೇಷಿಸದೆ ಬದಲಾಗಿ “ಹಿಂದೂ ರಾಷ್ಟ್ರೀಯತೆ”ಯ ನೆಲೆಯಲ್ಲಿ ವಿರೋಧಿಸುತ್ತಿದೆ ಆರೆಸಸ್. Globalizationಅಂದರೆ ಈ ಪಶ್ಷಿಮ ರಾಷ್ಟ್ರಗಳಿಂದ ನಮ್ಮ ವೈವಿಧ್ಯಮಯವಾದ ಜೀವನಕ್ರಮ, ನಮ್ಮ ಗ್ರಾಮೀಣ ಬದುಕು ಅಳಿಸಿಹೋಗುತ್ತಿರುವುದು, ನಮ್ಮ ನೆಲದ ಜೀವತೋರಣಗಳು, ಈ ಮಣ್ಣಿನ ಅವೈದಿಕ ಸಂಸ್ಕೃತಿ ನಾಶವಾಗುತ್ತಿವೆ ಎನ್ನುವ ಮಾನವೀಯ, ಜೀವಪರ ನೆಲೆಯಿಂದ ಮಾತನಾಡುತ್ತಿಲ್ಲ. ಬದಲಾಗಿ ಇವರ ವಿರೋಧವಿರುವುದು ಈ ಪಶ್ಚಿಮ ರಾಷ್ಟ್ರಗಳ ಆಕ್ರಮಣತೆಯಿಂದ ಹಿಂದೂ ಸಂಸ್ಕೃತಿ ನಾಶವಾಗುತ್ತಿದೆ ಎಂಬುದಾಗಿ ಮಾತ್ರ. ಆದರೆ ಇವರ ನಾಯಕ ಮೋದಿ ಒಂದು ಕಡೆ ತಾನು ಹಿಂದೂ ರಾಷ್ಟ್ರೀಯವಾದಿ ಎಂದು ಎದೆ ತಟ್ಟಿ ಹೇಳುತ್ತಾನೆ. ಮತ್ತೊಂದು ಕಡೆ ವಿದೇಶಿ ಬಂಡವಾಳ ಹೂಡಿಕೆಯೇ ಬಾರತದ ಮುಂದಿನ ಭವಿಷ್ಯ ಎಂದು ಪಕ್ಕಾ ಕಾರ್ಪೋರೇಟ್ ಸಂಸ್ಕೃತಿಯಲ್ಲಿ ಕಂಡಲೆಲ್ಲಾ ಭಾಷಣ ಬಿಗಿಯುತ್ತಾನೆ.

ಇಂದು ಮಧ್ಯಮವರ್ಗ ಮತ್ತು ಕಾರ್ಪೋರೇಟ್ ವಲಯ ಈ ಮೋದಿಗೆ ಬೆಂಬಲಿಸುತ್ತಿರುವುದು ಈ ಆರ್ಥಿಕ ನೀತಿಗಾಗಿ ಮಾತ್ರ. ಈ ಮೋದಿಯ ಬಂಡವಾಳಶಾಹಿಗಳ, ಶ್ರೀಮಂತರ ಪರವಾದ ಆರ್ಥಿಕ ನೀತಿಗಳು ಈ ಮಧ್ಯಮವರ್ಗ ಮತ್ತು ಕಾರ್ಪೋರೇಟ್ ಗುಂಪನ್ನು ಪುಳಕಿತಗೊಳಿಸುತ್ತಿದೆ. ಅದನ್ನೇ ಈ ಗುಂಪು ಬದಲಾವಣೆಗಾಗಿ ಎಂದು ಅನೈತಿಕತೆಯಿಂದ ಸಮರ್ಥಿಸಿಕೊಳ್ಳುತ್ತಿವೆ. ಹಾಗಿದ್ದರೆ ಆರೆಸಸ್‌ನ ಮೂಲ ಸಿದ್ಧಾಂತ “ಸ್ವದೇಶಿ ಜಾಗರಣ ಮಂಚ್”ನ ಕತೆ ಏನು?? ಈ ಮೋದಿ ಸಮರ್ಥಕರಿಗೆ ಆರೆಸಸ್ ಮತ್ತು ಮೋದಿಯ ಈ ಎರಡಂಚಿನ ಕತ್ತಿಯ ನಡಿಗೆ ಪರಿಣಾಮ ಇನ್ನೂ ಅನುಭವಿಸಿದಂತಿಲ್ಲ. ಒಮ್ಮೆ ಕತ್ತಿಯ ಅಲುಗಿನ ಎರಡೂ ಕಡೆಯಿಂದ ಹೊಡೆತಕ್ಕೆ ಸಿಕ್ಕಾಗ ಮಾತ್ರ ಅದರ ಪರಿಣಾಮದ ತೀವ್ರತೆ ಅನುಭವಕ್ಕೆ ಬುರುವುದು. ಇದು ಫ್ಯಾಸಿಸಂನ ನಾಲ್ಕನೇ ಅಂಶವನ್ನು ಧೃಡೀಕರಿಸುತ್ತದೆ.

ಮತ್ತೊಂದು ಕಡೆ ಬಿಹಾರನ ಪಾಟ್ಣಾದಲ್ಲಿ ಭಾಷಣ ಮಾಡುತ್ತಾ ಮೋದಿ “ಯದುವಂಶದ ಮೂಲಪುರುಷ ಕೃಷ್ಣ ಪರಮಾತ್ಮನು ಗುಜರಾತನ ದ್ವಾರಕೆಯಿಂದ ಬಂದಿದ್ದಾನೆ. ಹೀಗಾಗಿ ಯಾದವರ ಮೂಲಸ್ಥಾನ ಗುಜರಾತ್” ಎಂದೆಲ್ಲ ಮಾತನಾಡಿದ್ದಾನೆ. ಅಂದು ರಾಮನನ್ನು ಬಳಸಿಕೊಂಡಿದ್ದಾಯಿತು. ಇಂದು ಕೃಷ್ಣನ ಸರದಿ. ಇದು ಯಾವ ಬಗೆಯ ಓಲೈಕೆ?? ಧರ್ಮ ಮತ್ತು ಧಾರ್ಮಿಕ ವ್ಯಕ್ತಿಗಳನ್ನು ಸಾರ್ವಜನಿಕವಾಗಿ ಬಳಸಿಕೊಳ್ಳುವುದು ಸಂವಿಧಾನಕ್ಕೆ ಮಾಡಿದ ಅಪಚಾರ. ಆದರೆ ಆರೆಸಸ್ ಮತ್ತು ಮೋದಿಗೆ ಸಂವಿಧಾನ ಕುರಿತಾಗಿ ಯಾವುದೇ ಬಗೆಯ ಗೌರವವಿಲ್ಲ. ಇದು ಪ್ರತಿ ದಿನ ಸಾಬೀತಾಗುತ್ತಿದೆ.

ಅಲ್ಲದೆ ಬಿಹಾರಿಗಳ ಮತವನ್ನು ಪಡೆಯಲು ಇತಿಹಾಸವನ್ನು ತಿರುಚಿ ಸುಳ್ಳುಗಳನ್ನು ಹೇಳಲೂ ನಾಚಲಿಲ್ಲ ಈ ಮೋದಿ. ಔಟ್‌ಲುಕ್, 11 ನೇ ನವೆಂಬರ್, 2013 ರ ವರದಿಯ ಪ್ರಕಾರ ಮೋದಿಯ ಪಾಟ್ಣಾ ಉವಾಚಗಳು:

ಅಲೆಕ್ಸಾಂಡರ್‌ನನ್ನು ಧೈರ್ಯಶಾಲಿ ಬಿಹಾರಿಗಳು ಗಂಗಾ ನದಿಯ ದಂಡೆಯ ಮೇಲೆ ಸೋಲಿಸಿದರು.” : (ವಾಸ್ತವದಲ್ಲಿ ಅಲೆಕ್ಸಾಂಡರ್‌ನನ್ನು ಪಂಜಾಬಿನಿಂದಲೇ ವಾಪಸ್ಸು ಕಳುಹಿಸಲಾಯಿತು.)

ತಕ್ಷಶಿಲಾ ಬಿಹಾರಿನಲ್ಲಿತ್ತು.” : (ವಾಸ್ತವವಾಗಿ Taksasilaತಕ್ಷಶಿಲಾ ಪಾಕಿಸ್ತಾನದಲ್ಲಿದೆ)

ಎನ್‌ಡಿಎ ಆಡಳಿತದಲ್ಲಿ ಭಾರತದ ಅಭಿವೃದ್ಧಿ ಸೂಚ್ಯಾಂಕ ಶೇಕಡ 8.4 ರಷ್ಟಿತ್ತು.” : (ವಾಸ್ತವವಾಗಿ ಎನ್‌ಡಿಎ ಆಡಳಿತದಲ್ಲಿ ಭಾರತದ ಅಭಿವೃದ್ಧಿ ಸೂಚ್ಯಾಂಕ ಶೇಕಡ 6 ಕ್ಕಿಂತಲೂ ಕಡಿಮೆ ಇತ್ತು.)

ನೆಹರೂ ಅವರು ಸರ್ದಾರ್ ಪಟೇಲರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ. “: (ವಾಸ್ತವವಾಗಿ ಡಿಸೆಂಬರ್ 15, 1950 ರಂದು ಜರುಗಿದ ಅಂತ್ಯಕ್ರಿಯೆಯಲ್ಲಿ ಪ್ರಧಾನಮಂತ್ರಿ ನೆಹರೂ ಮತ್ತು ರಾಷ್ಟ್ರಪತಿ ರಾಜೇಂದ್ರಪ್ರಸಾದ್ ಭಾಗವಹಿಸಿದ್ದರು.)

ಮೋದಿಯು ಗುಜರಾತ್‌ನಲ್ಲಿ ಮುಸ್ಲಿಂ ಶಾಲೆಯ ವಿಧ್ಯಾರ್ಥಿ/ ವಿಧ್ಯಾರ್ಥಿನಿಯರಿಗೆ ಸ್ಕಾಲರ್‌ಶಿಪ್ ಅನ್ನು ನಿರಾಕರಿಸಿದ್ದಾನೆ. ಅಲ್ಲಿ ಅಂತರ್ಜಾತಿ ವಿವಾಹವಾಗಬೇಕಾದರೆ, ಮತಾಂತರಗೊಳ್ಳಬೇಕಾದರೆ ಕಠಿಣ ಕಾನೂನುಗಳನ್ನು ಪಾಲಿಸಬೇಕು. ಅಲ್ಲಿ ಮತಾಂತರಗೊಳ್ಳಬೇಕಾದರೆ ಮೊದಲು ಸರ್ಕಾರದ ಅನುಮತಿ ಪಡೆದಕೊಳ್ಳಬೇಕು.

— (ಕೃಪೆ : ಔಟ್‌ಲುಕ್, 11 ನೇ ನವೆಂಬರ್, 2013)

ಉತ್ತರಪ್ರದೇಶದಲ್ಲಿ ಮಾತನಾಡುತ್ತ ರಾಹುಲ್ ಗಾಂಧಿ “ಮುಝಫರ್ ನಗರದಲ್ಲಿ ಹತಾಶಗೊಂಡ ಮುಸ್ಲಿಂ ಯುವಕರನ್ನು ದುರ್ಬಳಕೆ ಮಾಡಿಕೊಳ್ಳಲು ಐಎಸ್‌ಐ ಸಂಚು ನಡೆಸಿದೆ” ಎಂದು ಹೇಳಿದಾಗ ಇದೇ ಮೋದಿ ರಾಹುಲ್ ಗಾಂಧಿಯ ವಿರುದ್ಧ ಹಿಗ್ಗಾಮುಗ್ಗಾ ದಾಳಿ ನಡೆಸಿ ಇದು ಅಲ್ಪಸಂಖ್ಯಾತರಿಗೆ ಮಾಡಿದ ಅವಮಾನ ಎಂದು ಕೂಗಾಡಿದ. ಇದು ಯಾವ ಬಗೆಯ ಓಲೈಕೆ?? ಇದು ಆರೆಸಸ್ ಅನ್ನು ಕೋಪಗೊಳಿಸಿತ್ತು ಸಹ. ನಂತರ ಮೋದಿ ಈ ವಿಷಯದ ಕುರಿತಾಗಿ ಬಾಯಿ ಬಿಚ್ಚಲಿಲ್ಲ.
ಮಂದಿರಕ್ಕಿಂತಲೂ ಶೌಚಾಲಯಗಳ ಅವಶ್ಯಕತೆ ಇದೆ ಎಂದು ಬಾಯಿತಪ್ಪಿ ಮೊದಲ ಬಾರಿಗೆ ನಿಜ ನುಡಿದ ನರೇಂದ್ರ ಮೋದಿಗೆ ಆರೆಸಸ್ ಚೆನ್ನಾಗಿಯೇ ತರಾಟೆಗೆ ತೆಗೆದುಕೊಂಡಿದೆ. ನಂತರ ಇದರ ಕುರಿತಾಗಿ ಮೋದಿ ಎಲ್ಲಿಯೂ ಮಾತನಾಡಿಲ್ಲ. ಮತ್ತೆ ಹಿಂದೂ ರಾಷ್ಟ್ರೀಯತೆಗೆ ಮರಳಿದ್ದಾನೆ.

ಕಳೆದ ತಿಂಗಳು ಬಿಜೆಪಿ ಪಕ್ಷದ ನಾಯಕರು ತಮ್ಮಲ್ಲೂ ಒಳಗೊಳ್ಳುವಿಕೆಯ ತತ್ವವಿದೆ ಎಂದು ಮಾರ್ಕೆಟಿಂಗ್ ಮಾಡಲು ರ್‍ಯಾಲಿಗಳಲ್ಲಿ ಮುಸ್ಲಿಂರನ್ನು ಕರೆದುತಂದು ಅವರಿಗೆ ಸ್ಕಲ್ ಟೋಪಿ ಮತ್ತು ಬುರ್ಖಾಗಳನ್ನು ಹಂಚಿದರು. ಇದು ಆರೆಸಸ್ ಅನ್ನು ಕೆಂಗಣ್ಣಾಗಿಸಿತು. ನಂತರ ಈ ಪ್ರಾಜೆಕ್ಟ್ ಅನ್ನೇ ಕೈಬಿಡಲಾಯಿತು. ಅಷ್ಟೇಕೆ ಮೊನ್ನೆ ಭೂಪಾಲ್‌ನಲ್ಲಿ ನಡೆದ ಸಮಾವೇಶದಲ್ಲಿ ಮುಸ್ಲಿಂರನ್ನು ಒಳಗೆ ಬಿಡಲೇ ಇಲ್ಲ. ಪ್ರವೇಶದ್ವಾರದಿಂಲೇ ಹಿಂದಕ್ಕೆ ಕಳುಹಿಸಲಾಯಿತು.

ಆರೆಸಸ್ ಮೋದಿಯನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಬಯಸಿದರೆ ಈ ಮೋದಿ ಬಂಡವಾಳ ಹೂಡಿಕೆಯ ಮಾರ್ಕೆಟ್ ತತ್ವ, ಕೇವಲ ಕೈಗಾರಕೋದ್ಯಮಿಗಳಿಗೆ ಮಾತ್ರ ರತ್ನಗಂಬಳಿ ಹಾಸುವ ಆರ್ಥಿಕ ತತ್ವ ಮತ್ತು ಹಿಂದುತ್ವ ಎನ್ನುವ ಎರಡು ಕುದುರೆಯನ್ನೇರಲು ಹೊರಟಿದ್ದಾನೆ. ಇನ್ನು ಬಿಜೆಪಿ ಎನ್ನುವ ರಾಜಕೀಯ ಪಕ್ಷದ ಸ್ಥಿತಿ ಕರಣಾಜನಕ. ಇಂದು ಅದು ರಾಜಕೀಯ ಪಕ್ಷವಾಗಿ ತನ್ನ ಇರುವಿಕೆಯೇ ಪ್ರಶ್ನಾರ್ಹವಾಗಿರುವುದು ನಿಜಕ್ಕೂ ಒಂದು ದುರಂತ.

ಇನ್ನೂ ಸಂಪೂರ್ಣವಾಗಿ ತನ್ನ ಸಿದ್ಧಾಂತಗಳ ಮೆಟ್ಟಿಲುಗಳ ಮೇಲೆ ಅಧಿಕಾರ ಹಿಡಿಯಲು ಆರೆಸಸ್ ವಿಫಲಗೊಂಡಿರುವುದರಿಂದ ಅದರ ವಿದೇಶಾಂಗ ನೀತಿಗಳ ಕುರಿತಾಗಿ ಇನ್ನೂ ಸ್ಪಷ್ಟ ಚಿತ್ರಣ ದೊರೆತಿಲ್ಲ. ಸದ್ಯಕ್ಕೆ ಅದು ಓಬಿರಾಯನ ಕಾಲದ ವಾಜಪೇಯಿಯವರ ಮುತ್ಸದ್ದಿತನದ ರಾಜಕಾರಣವನ್ನೇ ನೆಚ್ಚಿದಂತಿದೆ. ಆದರೆ ನೆರೆಯ ಮುಸ್ಲಿಂ ರಾಷ್ಟ್ರಗಳ ಕುರಿತಾಗಿ ಮಾತ್ರ ಇವರ ವಿದೇಶಾಂಗ ನೀತಿ ಸ್ಪಷ್ಟವಾಗಿದೆ. ಅದು ಹಿಂದಿನ ಕಾಲದ ರಾಜ್ಯಾಡಳಿತದ ಮಾದರಿ. ಅಂದರೆ ಮೋದಿ ಕ್ಷತ್ರಿಯ ರಾಜ. ಬಿಜೆಪಿ ಕ್ಷತ್ರಿಯ ವಂಶ. ವಿಎಚ್‌ಪಿ, ಭಜರಂಗದಳ ಈ ಕ್ಷತ್ರಿಯ ವಂಶದ ಸೇನಾಪಡೆಗಳು. bhagvat-gadkari-modiಸಾವಿರಾರು ವರ್ಷಗಳ ಹಿಂದಿನ ಕಾಲದಂತೆಯೆ ಈ ಕಾಲದಲ್ಲೂ ಕಾಲಾನುಕಾಲಕ್ಕೆ ಶತೃಗಳೊಂದಿಗೆ ಯುದ್ಧಗಳನ್ನು ನಡೆಸುತ್ತಾ ಅವರ ಸಾಮ್ರಾಜ್ಯಗಳನ್ನು ಕಬಳಿಸುತ್ತಾ “ಅಖಂಡ ಹಿಂದೂ ರಾಷ್ಟ್ರ”ದ ಸ್ಥಾಪಿಸುವುದು. ಶತೃರಾಷ್ಟ್ರಗಳನ್ನು ಸದಾಕಾಲ ಭೀತಿಯಲ್ಲಿಡಲು ನಿಯಮಿತವಾಗಿ ಅಣುಪರೀಕ್ಷೆಯನ್ನು ನಡೆಸುತ್ತಿರುವುದು ಮತ್ತೊಂದು ಮಹತ್ವದ ನೀತಿಯಾಗಿರುತ್ತದೆ.

ದೇಶದ ಭವಿಷ್ಯದ ನಾಯಕನೆಂದು ಅಭಿಮಾನಿಗಳಿಂದ ಹೊಗಳಿಸಿಕೊಳ್ಳುತ್ತಿರುವ ಮೋದಿಯ ಬಾಲಿಶ, ತರ್ಕರಹಿತ, ಅನಾಯಕತ್ವದ ಉದಾಹರಣೆಗಳ ನಿದರ್ಶನಕ್ಕಾಗಿ ಮೇಲಿನ ಘಟನೆಗಳನ್ನು ಬರೆಯಬೇಕಾಯಿತು.

ಮಾನವೀಯತೆ, ಸೆಕ್ಯುಲರಿಸಂ ಕುರಿತಾಗಿ ಬಿಟ್ಟುಬಿಡಿ, ಕನಿಷ್ಟ ಮಟ್ಟದ ಆದರ್ಶಗಳು, ದೂರದರ್ಶತ್ವ, ಕನಸುಗಳು ಇಲ್ಲದ ಈ ಮೋದಿಯೆಂಬ ರಾಜಕಾರಣಿಯ ದರ್ಪ ಮತ್ತು ಬಾಲಿಶತನ ಮುಂದೊಂದು ದಿನ ಆತನಿಗೇ ಮುಳುವಾಗಲಿದೆ. ಇದು ದೇಶವನ್ನಾಳ ಬಯಸುವ ಆರೆಸಸ್ ಮತ್ತು ಮೋದಿಯವರ ಡೇಂಜರಸ್ ಆದ ಹುಚ್ಚು ಅವತಾರಗಳು. ಈ ಫ್ಯಾಸಿಸ್ಟರು ದೇಶವನ್ನು ಒಂದು ಮಕ್ಕಳಾಟಿಕೆ ಎಂದು ಭಾವಿಸಿದಂತಿದೆ.

ಇವಕ್ಕೆಲ್ಲ ಮೋದಿಯ ಸಮರ್ಥಕರು ಬಳಿ ಉತ್ತರಗಳಿವೆಯೇ ??

ಆರೆಸಸ್ ಮೋದಿಯನ್ನು ಹೇಗೆ ತನ್ನ ಮುಷ್ಟಿಯೊಳಗೆ ಇಟ್ಟುಕೊಳ್ಳುತ್ತದೆ? ಕಡೆಗೆ ಈ ಮೋದಿ ಎರಡು ಧ್ರುವಗಳಂತಿರುವ ಆರೆಸಸ್ ಮತ್ತು ತನ್ನ ಜಾಗತೀಕರಣದ ಮಾರ್ಕೆಟ್ ಸಿದ್ಧಾಂತವನ್ನು ಹೇಗೆ ಬ್ಯಾಲೆನ್ಸ್ ಮಾಡುತ್ತಾನೆ?? ಕಡೆಗೆ ಪ್ರಜಾಪ್ರಭುತ್ವವನ್ನು ಗೌರವಿಸುತ್ತೇವೆ ಎಂದೇ ವಚನ ನೀಡಿ ಇಂಡಿಯಾದಲ್ಲಿ ರಾಜಕಾರಣ ಮಾಡುತ್ತಿರುವ ಈ ಬಿಜೆಪಿ ಪಕ್ಷ ಆರೆಸಸ್ ಮತ್ತು ಮೋದಿಯನ್ನು ಹೇಗೆ ನಿಭಾಯಿಸುತ್ತದೆ?? ಇದು ಯಕ್ಷಪ್ರಶ್ನೆ.

ಆದರೆ ದೇಶ ಈ ಫ್ಯಾಸಿಸ್ಟ್ ಗುಂಪನ್ನು ಹೇಗೆ ನಿಭಾಯಿಸುತ್ತದೆ ?? ನಾವೆಲ್ಲಾ ಬಿಜೆಪಿ ಮತ್ತು ಮೋದಿಯ ಗುಮ್ಮನನ್ನು ತೋರಿಸಿ ಸಧ್ಯಕ್ಕೆ ಕಾಂಗ್ರೆಸ್ ಮಾತ್ರ ಇವರಿಗೆ ಪರ್ಯಾಯವೆಂದುಕೊಳ್ಳುವ ಮನಸ್ಥಿತಿಯಿಂದ ಹೊರಬಂದು ಹೊಸ ನುಡಿಕಟ್ಟು, ಹೊಸ ಚಿಂತನೆಗಳನ್ನು, ಪರ್ಯಾಯ ಸಾಂಸ್ಕೃತಿಕ ಮಾದರಿಗಳನ್ನು ರೂಪಿಸಲು ಪ್ರಯತ್ನಿಸಿದರೆ ಇದು ಕ್ಲಿಷ್ಟಕರವೂ ಅಲ್ಲ. ಜಟಿಲವೂ ಅಲ್ಲ.

ಮೋದಿಯ ಹಿಂದಣ ಸತ್ಯ, ಮಿಥ್ಯಗಳು…


– ಸಂಜ್ಯೋತಿ ವಿ.ಕೆ.


 

ಪ್ರಜಾಪ್ರಭುತ್ವ ವ್ಯವಸ್ಥೆ (ತನ್ನೆಲ್ಲ ಕೊರೆಗಳಿದ್ದಾಗ್ಯೂ) ಮನುಷ್ಯನ ಅತ್ಯುನ್ನತ ಸಾಮಾಜಿಕ ಆವಿಷ್ಕಾರಗಳಲ್ಲೊಂದು. ಮನುಷ್ಯನ ಸ್ವಾತಂತ್ರ್ಯ, ಘನತೆ ಮತ್ತು ಸಮಾನತೆಯ ಮೌಲ್ಯಗಳನ್ನು ಎತ್ತಿಹಿಡಿಯುವ ಮತ್ತೊಂದು ಪರ್ಯಾಯವಿಲ್ಲದಿರುವುದರಿಂದ ಈ ವ್ಯವಸ್ಥೆಯ ಕೊರೆಗಳನ್ನು ಮುಂದಿಟ್ಟುಕೊಂಡು ಇದನ್ನು ನಿರಾಕರಿಸಲು ಸಾಧ್ಯವಿಲ್ಲ. ಬದಲಿಗೆ ಆ ಕೊರೆಗಳನ್ನು ಸರಿಪಡಿಸಿ ಇದನ್ನು ಮತ್ತಷ್ಟು ಬಲಪಡಿಸುವುದೇ ನಮ್ಮ ಮುಂದಿರುವ ಸವಾಲು ಮತ್ತು ಸಾಧ್ಯತೆ.

ಈ ವ್ಯವಸ್ಥೆಯ ಅತಿ ಮುಖ್ಯ ಹಕ್ಕು ಮತ್ತು ಭಾದ್ಯತೆ ಅಡಗಿರುವುದು ಚುನಾವಣೆ ಮತ್ತು ಮತದಾನದಲ್ಲಿ. ಭಾರತದಂತಹ ಬಹುಧರ್ಮೀಯ, ಬಹುಸಂಸ್ಕೃತಿಯ, ಶ್ರೇಣೀಕೃತ ಅಸಮಾನ ಸಮಾಜದಲ್ಲಿ; ವಿಚಾರ-ಮಾಹಿತಿಗಳ ಪ್ರಸರಣ ಕೆಲವೇ ವ್ಯಕ್ತಿ, ಸಂಸ್ಥೆ, ವ್ಯವಸ್ಥೆಗಳ ಮರ್ಜಿಗೆ ಸಿಲುಕಿರುವಾಗ; grass-map-indiaಸಂಪೂರ್ಣ ಸಾಕ್ಷರತೆಯನ್ನೇ ಇನ್ನೂ ಸಾಧಿಸದ, ಅಕ್ಷರಸ್ಥರಾದರೂ ವಿದ್ಯಾವಂತರಾಗದ, ವಿದ್ಯೆಯ ಜೊತೆಗೆ ಜ್ಞಾನ ವಿವೇಚನೆಗಳನ್ನು ಸಮಾನವಾಗಿ ನಿರೀಕ್ಷಿಸಲಾಗದ ವ್ಯವಸ್ಥೆಯಲ್ಲಿ ಚುನಾವಣೆ-ಮತದಾನದ ಹಕ್ಕುಗಳು ನಿಚ್ಚಳವಾಗಿ ಚಲಾಯಿಸಲ್ಪಡುತ್ತವೆ ಮತ್ತು ಬಾಧ್ಯತೆಗಳು ನಿಭಾಯಿಸಲ್ಪಡುತ್ತವೆ ಎಂದು ನಿರೀಕ್ಷಿಸಲಾಗದು. ಜೊತೆಗೆ ತೃತೀಯ ರಂಗ ಎಂಬುದು ಇನ್ನೂ ಒಂದು ಆದರ್ಶ ಕನಸಾಗಿಯೇ ಉಳಿದಿರುವಾಗ ಚುನಾವಣೆ ಎನ್ನುವುದು ಭಾಜಪ ಮತ್ತು ಕಾಂಗ್ರೆಸ್ ಎಂಬ ಎರಡು ಧೃವಗಳ ನಡುವಣ ಪೈಪೋಟಿಯಾಗಿರುವಾಗ ಚುನಾವಣಾ ಫಲಿತಾಂಶಗಳು ಜನರ ನೈಜ ಆಯ್ಕೆಯನ್ನು ಸಂಪೂರ್ಣವಾಗಿ ಬಿಂಬಿಸುತ್ತದೆಂದು ಹೇಳಲಾಗದು.

ಇಷ್ಟೆಲ್ಲ ಸಂಕೀರ್ಣತೆಗಳ ನಡುವೆಯೂ 2004 ರ ಸಾರ್ವತಿಕ ಚುನಾವಣೆಯಲ್ಲಿ ಜನರನ್ನು ಮತ-ಧರ್ಮಗಳ ಹೆಸರಿನಲ್ಲಿ ಒಡೆಯುವ, ಭಾರತ ಹೊಳೆಯುತ್ತಿದೆ ಎಂಬ ಮಂಕುಬೂದಿ ಎರಚಲು ಹೊರಟ ಭಾಜಪವನ್ನು ಸೋಲಿಸಿದ್ದು ಇದೇ ಮತದಾರರು ದೇಶವನ್ನು ಅವೈಜ್ಞಾನಿಕ ರೀತಿಯಲ್ಲಿ ಉದಾರೀಕರಣ, ಖಾಸಗೀಕರಣ, ಜಾಗತೀಕರಣಗಳಿಗೆ (LPG) ಒಡ್ಡಿ ಅನೂಹ್ಯ ಆರ್ಥಿಕ, ಸಾಮಾಜಿಕ ಪರಿಣಾಮಗಳಿಗೆ ಕಾರಣವಾದ ಕಾಂಗ್ರೆಸ್ಸಿನ ಮೇಲೆ ಕಮ್ಯುನಿಸ್ಟರ ಕಣ್ಗಾವಲನ್ನು ಇರಿಸಲು ಸಾಧ್ಯವಾಗಿಸಿದ್ದು ಸಹ ಇದೇ ಮತದಾರರು. ಪಶ್ಚಿಮ ಬಂಗಾಳದಲ್ಲಿ ದೀರ್ಘಾವಧಿಯ ಅಧಿಕಾರ ದೊರೆತರೂ ಭ್ರಷ್ಟಾಚಾರವನ್ನು ವೈಯುಕ್ತಿಕ ನೆಲೆಯಲ್ಲಿ ಹತ್ತಿರ ಸುಳಿಯಗೊಡದಿದ್ದ ಕಮ್ಯುನಿಸ್ಟರು ತಮ್ಮದೇ ಸಿದ್ಧಾಂತಗಳನ್ನು ಸ್ವವಿಮರ್ಶೆಗೊಳಪಡಿಸಿ ಆಧುನಿಕತೆಗೆ ತೆರೆದುಕೊಳ್ಳದೆ ಸಂಕೋಲೆಗಳಾಗಿಸಿಕೊಂಡಾಗ ಅವರನ್ನು ನಿರಾಕರಿಸಿದ್ದು ಇದೇ ಪ್ರಜಾತಂತ್ರ ವ್ಯವಸ್ಥೆ. ನಂತರದ ಬೆಳವಣಿಗೆಗಳು ಇತಿಹಾಸದಲ್ಲಿ ಕಲಿಯಬೇಕಾದ ಪಾಠಗಳಾಗಿ ದಾಖಲಾಗಿದ್ದು ನಿಜ (ರಾಜಕೀಯ ಪಕ್ಷಗಳಿಗೆ ಆ ಪಾಠಗಳನ್ನು ಕಲಿಯುವ ಮನಸ್ಸಿಲ್ಲದಿರುವುದು ವಿಷಾದನೀಯ). ಆದರೆ ಇಂತಹ ಅನಾಮಿಕ ಮತದಾರನ ಗುಪ್ತಗಾಮಿ ಶಕ್ತಿ (under current) ಯಾವಾಗಲೂ ಸರಿಯಾದ ದಿಕ್ಕಿನಲ್ಲೇ ಹರಿಯುತ್ತದೆ ಎನ್ನಲಾಗದು. ಧರ್ಮಾಂದತೆಯ ಅಫೀಮು ತಲೆಗೆ ಹತ್ತಿರುವ ಬಹುಸಂಖ್ಯಾತರ ಮತಗಳು ಧ್ರುವೀಕರಣಗೊಂಡು ಗುಜರಾತಿನಲ್ಲಿ ಮೋದಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದದ್ದು.

ಈಗ ಈ ಗುಜರಾತ್ ಮಾದರಿಯನ್ನು ಇಡೀ ದೇಶಕ್ಕೆ ವಿಸ್ತರಿಸುವ ಉಮೇದಿನಲ್ಲಿ ಭಾಜಪ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುತ್ತಿದೆ. ಭಾಜಪ ಮುಖ್ಯವಾಗಿ ನೆಚ್ಚಿಕೊಂಡಿರುವುದು ಒಂದು ಕಡೆ ಮತಾಂಧತೆಯ ಅಮಲು ಹತ್ತಿರುವ ಹಿಂದೂಗಳ ಮತಗಳನ್ನು; ಮತ್ತೊಂದೆಡೆ ಅಭಿವೃದ್ಧಿ ಮಾದರಿಯನ್ನು ಮುಂದಿಟ್ಟುಕೊಂಡು ಮಧ್ಯಮವರ್ಗದ ಮತಗಳನ್ನು. ಇದಲ್ಲದೆ ಮಾಧ್ಯಮಗಳು ಸೃಷ್ಟಿಸುವ ಭ್ರಮಾಲೋಕದಲ್ಲಿ, ಜಾಲತಾಣಗಳಲ್ಲಿ ವಿಹರಿಸುತ್ತ ತಮಗೆ Modiಅನುಕೂಲವೆನಿಸುವ ಸತ್ಯಗಳನ್ನು ಅನುಮೋದಿಸುವ ವಿದ್ಯಾವಂತರೆನಿಸಿಕೊಂಡ ಅಕ್ಷರಸ್ಥರ ಮತಗಳನ್ನು ಸೆಳೆಯಲು ಇತ್ತೀಚಿನ ದಿನಗಳಲ್ಲಿ ಮೋದಿಯನ್ನು ‘ಸೆಕ್ಯುಲರ್’, ‘ಭ್ರಷ್ಟಾಚಾರ ವಿರೋಧಿ’ ಎಂದು ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ.

ಆದರೆ ಕನಿಷ್ಠ ವಿವೇಚನಾಶಕ್ತಿಯಿಂದ ನೈಜ ಸ್ಥಿತಿಯನ್ನು ವಸ್ತುನಿಷ್ಠವಾಗಿ ನೋಡುವ ಮನಸ್ಸಿದ್ದರೆ ಸಾಕು ಮತಾಂಧತೆಯಿಂದ ಜನಮಾನಸವನ್ನು ವಿಷಮಯವಾಗಿಸುವ, ದೇಶವನ್ನು ಧರ್ಮದ ಹೆಸರಿನಲ್ಲಿ ಒಡೆಯುವ ‘ದೇಶಭಕ್ತ’ ಭಾಜಪವನ್ನು; ‘ಭಾರತೀಯ ಸಂಸ್ಕೃತಿ’ ಎಂಬ ಮಾಯಾಜಿಂಕೆಯನ್ನು ತೋರಿ ಬಹುಸಂಸ್ಕೃತಿಯನ್ನು ಅಳಿಸಿ ಶ್ರೇಣೀಕೃತ ಜಾತಿವ್ಯವಸ್ಥೆಯನ್ನು ಮರುಸ್ಥಾಪಿಸಬಯಸುವಂತ ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವಹಿಂದೂಪರಿಷತ್‌ಗಳನ್ನು; ಮತ್ತು ಭಾರತದ ಸಂವಿಧಾನ ಕಾನೂನುಗಳ ಬಗ್ಗೆ ಯಾವುದೇ ಗೌರವವಿರದೆ ಉಳ್ಳವರ ಸೇವೆಗಾಗಿ ಇಡೀ ವ್ಯವಸ್ಥೆಯನ್ನು ಬಗ್ಗಿಸಲು ಹಿಂಜರಿಯದ ಭಾಜಪದ ಉತ್ಸವಮೂರ್ತಿ ಮೋದಿಯನ್ನು ಖಡಾಖಂಡಿತವಾಗಿ ನಿರಾಕರಿಸಲೇಬೇಕಾದ ಅನಿವಾರ್ಯತೆ ಏಕಿದೆ ಎಂದು ತಿಳಿಯುತ್ತದೆ.

ಗುಜರಾತ್ ಅಭಿವೃದ್ಧಿ ಎಂಬ ಭ್ರಮೆ

ಒಂದು ದೇಶ/ ರಾಜ್ಯದ ಒಟ್ಟಾರೆ ಆದಾಯ ಅಥವಾ ಸರಾಸರಿ ತಲಾವಾರು ಆದಾಯ ಹೆಚ್ಚಾಗುವುದನ್ನು Poverty_4C_--621x414ಆರ್ಥಿಕ ಬೆಳವಣಿಗೆ (economic growth) ಎಂದೂ, ಹಾಗೆ ಹೆಚ್ಚಾಗುವ ಆದಾಯ ಹೆಚ್ಚು ಸಮಾನವಾಗಿ ಹಂಚಿಕೆಯಾಗಿ ಉಳ್ಳವರ ಮತ್ತು ಬಡವರ ನಡುವಣ ಅಂತರವನ್ನು ಕಡಿಮೆಮಾಡಿದರೆ ಅದನ್ನು ಆರ್ಥಿಕ ಅಭಿವೃದ್ಧಿ (economic development) ಎಂದೂ ಗುರುತಿಸಬಹುದು. ಹೀಗೆ ಸಮಾನವಾಗಿ ಹಂಚಿಕೆಯಾದ ಆದಾಯವು ಜನರ ಜೀವನ ಮಟ್ಟವನ್ನು ಉತ್ತಮಗೊಳಿಸುವುದನ್ನು ಮಾನವ ಅಭಿವೃದ್ಧಿ ಸೂಚ್ಯಂಕ (HDI) ಸೂಚಿಸುತ್ತದೆ. ಮೋದಿ ಆಳ್ವಿಕೆಯಲ್ಲಿ ‘HDI’ ನ ಬಹುತೇಕ ಎಲ್ಲ ಸೂಚಕಗಳೂ ಹಿಮ್ಮುಖ ಚಲನೆಯನ್ನೇ ತೋರುತ್ತವೆ. ಮೋದಿ ಮತ್ತು ಭಾಜಪ ಹೇಳಿಕೊಳ್ಳುವಂತೆ ಗುಜರಾತ್ ಹೊಳೆಯುತ್ತಲೂ ಇಲ್ಲ, ಅಭಿವೃದ್ಧಿಯ ಮುಂಚೂಣಿಯಲ್ಲೂ ಇಲ್ಲ.

  • ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಗುಜರಾತಿಗೆ ದೇಶದಲ್ಲಿ 11 ನೇ ಸ್ಥಾನ.
  • 2004-10 ರ ನಡುವಣ ಶೇಕಡವಾರು ಬಡತನ ನಿವಾರಣೆಯಲ್ಲಿ ಗುಜರಾತ್ ಕೊನೆಯ ಸ್ಥಾನದಲ್ಲಿದೆ. (8.6%).
  • 1990-95 ರ ನಡುವೆ ರಾಜ್ಯದ ಒಟ್ಟಾರೆ ವೆಚ್ಚದ 4.25 %ರಷ್ಟಿದ್ದ ಸಾರ್ವಜನಿಕ ಆರೋಗ್ಯದ ಮೇಲಣ ಖರ್ಚು 2005-10 ರ ನಡುವೆ ಕೇವಲ 0.77 %ಕ್ಕೆ ಇಳಿದಿದೆ.
  • ಕಳೆದ ಹತ್ತು ವರ್ಷಗಳಲ್ಲಿ ರೈತರಿಗೆ ವಿದ್ಯುತ್ ಲಭ್ಯತೆ ದಿನಂಪ್ರತಿ 10 ರಿಂದ 6 ಗಂಟೆಗಳಿಗೆ ಇಳಿದಿದೆ.
  • ಕಳೆದ ಹನ್ನೆರಡು ವರ್ಷಗಳಲ್ಲಿ ಔದ್ಯೋಗಿಕ ಬೆಳವಣಿಗೆ ದರ ಶೂನ್ಯದಲ್ಲಿ ನಿಂತಿದೆ.
  • ಗುಜರಾತಿನಲ್ಲಿ ಕೇವಲ 16.7 % ಜನರಿಗೆ ಸಾರ್ವಜನಿಕ ಕೊಳಾಯಿಯ ಮೂಲಕ ಸಂಸ್ಕರಿಸಿದ ನೀರು ಪೂರೈಸಲಾಗುತ್ತಿದೆ.
  • ಇಲ್ಲಿನ 47% ಕ್ಕೂ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ (ಇದು ಆಫ್ರಿಕಾದ ಅತೀ ಬಡ ರಾಷ್ಟ್ರಗಳ ಸರಾಸರಿಯನ್ನು ಮೀರಿಸಿದೆ).
  • ಶಿಶುಮರಣ ಅನುಪಾತ ಕಡಿತಗೊಳಿಸುವಲ್ಲಿ ಗುಜರಾತ್ ಹನ್ನೊಂದನೆ ಸ್ಥಾನದಲ್ಲಿದೆ.
  • ಇಲ್ಲಿ ಕೇವಲ 45% ರಷ್ಟು ಮಕ್ಕಳಿಗೆ ಜೀವರಕ್ಷಕ ಲಸಿಕೆಗಳನ್ನು ಕೊಡಲಾಗುತ್ತದೆ. ಗುಜರಾತಿಗೆ ಇದರಲ್ಲಿ 19 ನೇ ಸ್ಥಾನ.
  • ದೇಶದಲ್ಲಿ ನಾಲ್ಕನೇ ಅತಿಹೆಚ್ಚು ಬಾಲ್ಯವಿವಾಹಗಳು ನಡೆಯುವುದು ಗುಜರಾತಿನಲ್ಲಿ.
  • ಗುಜರಾತಿನಲ್ಲಿ ಶಾಲೆ ಬಿಡುವ ಮಕ್ಕಳ ಅನುಪಾತ 59%. ಮಕ್ಕಳು ಶಾಲೆ ಬಿಡುವುದನ್ನು ತಡೆಯುವ ನಿಟ್ಟಿನಲ್ಲಿ ಗುಜರಾತ್ 18 ನೇ ಸ್ಥಾನದಲ್ಲಿದೆ.
  • ಹೆಣ್ಣು-ಗಂಡು ಮಕ್ಕಳ ಅನುಪಾತದ ಅನುಸಾರ ಗುಜರಾತ್‌ಗೆ 24 ನೇ ಸ್ಥಾನ.
  • ಸಾಕ್ಷರತೆಯ ಸಾಧನೆಯಲ್ಲಿ ಗುಜರಾತ್ 12 ನೇ ಸ್ಥಾನದಲ್ಲಿದೆ.
  • ಯೋಜಿತ ಕಾರ್ಯಕ್ರಮಗಳ (ವಿಶೇಷವಾಗಿ ಅಭಿವೃದ್ಧಿ-ಬಡತನ ನಿರ್ಮೂಲನ ಕಾರ್ಯಕ್ರಮಗಳು) ಅನುಷ್ಟಾನದ ಅನುಪಾತ 73% ರಿಂದ (2003) 13% ಕ್ಕೆ (2011) ಕುಸಿದಿದೆ.
  • ಗುಜರಾತಿನ 28.2% ರಷ್ಟು ಪುರುಷರು ಮತ್ತು 32,3 %ರಷ್ಟು ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.
  • ಮೂಲಸೌಕರ್ಯದ ಅಭಿವೃದ್ಧಿಯಲ್ಲಿ ಮೋದಿಯ ಗುಜರಾತ್ ದೇಶಕ್ಕೆ ಮಾದರಿ ಉತ್ತರಾಖಂಡದ ಪ್ರವಾಹಕ್ಕೆ ಸಿಲುಕಿದ್ದ 15,000 ಜನರನ್ನು ಮೋದಿ ಒಂದೇ ದಿನದಲ್ಲಿ ರಕ್ಷಿಸಿದರು ಎಂಬೆಲ್ಲ ಸುಳ್ಳುಗಳು ಸರಾಗವಾಗಿ ಹರಿದಾಡುತ್ತಿರುವಾಗಲೇ ರಾತ್ರಿಯಿಡೀ ಸುರಿದ ಮಳೆಗೆ ಅಹiದಾಬಾದ್ ನಗರ ನೀರಿನಲ್ಲಿ ಮುಳುಗಿದ್ದ ಚಿತ್ರಗಳು (ಸೆಪ್ಟಂಬರ್ 25) ಜಾಲತಾಣದಲ್ಲಿ ಹರಿದಾಡುತ್ತಿತ್ತು.

ಭೂಸುಧಾರಣೆಯಲ್ಲ, ಇದು ಭೂ ಕಬಳಿಕೆ

ಗುಜರಾತ್ ಅಭಿವೃದ್ಧಿ ಪ್ರಾಧಿಕಾರ (GIDC) ೮೦ರ ದಶಕದಲ್ಲಿ ಮುಖ್ಯವಾಗಿ ಎರಡು ಉದ್ದೇಶಗಳಿಗಾಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಿತ್ತು. (1) ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ಧಿಗಾಗಿ ಭೂಮಿ ಒದಗಿಸುವುದು. (2) ಹೆಚ್ಚುವರಿ ಭೂಮಿಯನ್ನು ಭೂರಹಿತರಿಗೆ ವಿತರಿಸುವುದು. GIDC ವತಿಯಿಂದ ಪ್ರಾರಂಭವಾದ 262 ಕೈಗಾರಿಕಾ ಪ್ರದೇಶಗಳಲ್ಲಿ ಈಗ ಚಾಲ್ತಿಯಲ್ಲಿರುವುದು 182. ಅದೂ ಸಹ ದೊಡ್ಡ ಕೈಗಾರಿಕೆಗಳ/ಉದ್ದಿಮೆದಾರರ ಕೈ ಕೆಳಗೆ. ಸಾರ್ವಜನಿಕ ಉದ್ದೇಶಗಳಿಗಾಗಿ ಎಂದು ವಶಪಡಿಸಿಕೊಂಡ ರೈತರ ಭೂಮಿಯನ್ನು ಈಗ ಅಕ್ರಮವಾಗಿ ಖಾಸಗಿ ಉದ್ದಿಮೆದಾರರಿಗೆ ಮಾರುಕಟ್ಟೆದರದಲ್ಲಿ ಮಾರಿ ಲಾಭಗಳಿಸುತ್ತಿರುವುದು. ಅಂದು ಭೂಮಿ ಕಳೆದುಕೊಂಡ ರೈತರಿಗೆ ಎಸಗುತ್ತಿರುವ ದ್ರೋಹ.

ಗೋಮಾಳದ ಭೂಮಿಯನ್ನು ವಶಪಡಿಸಿಕೊಳ್ಳುವಾಗಲೂ ಮೋದಿ ಸರ್ಕಾರ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದೆ. ಗೋಮಾಳಗಳು ಗ್ರಾಮಸಭೆ/ಪಂಚಾಯ್ತಿಗಳ ಒಡೆತನದಲ್ಲಿದ್ದು ಅವುಗಳನ್ನು ಅತೀ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಮಾರುಕಟ್ಟೆಯ ದರಕ್ಕಿಂತ 30% ಹೆಚ್ಚಿನ ಬೆಲೆ ಕೊಟ್ಟು ಸರ್ಕಾರ ವಶಪಡಿಸಿಕೊಳ್ಳಬಹುದು. ಗುಜರಾತಿನಲ್ಲಿ ಹಳ್ಳಿಗಳ ಭೂರಹಿತರ (ಸಾಮಾನ್ಯವಾಗಿ ದಲಿತರು ಮತ್ತು ಮುಸ್ಲಿಂರು) ಆರ್ಥಿಕತೆ ಬಹುತೇಕ ಈ ಗೋಮಾಳಗಳನ್ನು ಅವಲಂಭಿಸಿದೆ. ಆದಾಗ್ಯೂ ಗ್ರಾಮಸಭೆ/ಪಂಚಾಯಿತಿಯ ಅನುಮತಿ ಪಡೆಯದೆಯೆ ಸಾಕಷ್ಟು ಗೋಮಾಳದ ಜಾಗವನ್ನು ಖಾಸಗಿ ಕೈಗಾರಿಕೆಗಳಿಗೆ ನೀಡಲು/SEZ ಗಳಿಗಾಗಿ ವಶಪಡಿಸಿಕೊಳ್ಳಲಾಗಿದೆ. Reliance-Gujarathಹಾಗೆ ವಶಪಡಿಸಿಕೊಳ್ಳುವಾಗ ಅವುಗಳ ಮಾರುಕಟ್ಟೆ ದರವನ್ನು ಬಹಳ ಕಡಿಮೆಯಾಗಿ ನಮೂದಿಸಲಾಗಿದೆ.

ಭಾವ್‌ನಗರದ ಮಹುವ ಕಡಲತೀರದ ಭೂಮಿಯನ್ನು ಕೃಷಿಯೋಗ್ಯವಲ್ಲದ ಜೌಳುಭೂಮಿಯೆಂದು ವರ್ಗೀಕರಿಸಿ ನಿರ್ಮಾ ವಿಶೇಷ ಆರ್ಥಿಕ ವಲಯದ ಸ್ಥಾಪನೆಗಾಗಿ ಮಂಜೂರು ಮಾಡಲಾಗಿದೆ. ಆದರೆ ಇದು ಗುಜರಾತಿನ ಅತ್ಯಂತ ಫಲವತ್ತಾದ ಭೂಪ್ರದೇಶಗಳಲ್ಲೊಂದು. ಮಹಾರಾಷ್ಟ್ರದ ನಾಸಿಕ್‌ನ ನಂತರ ಭಾರತದ ಎರಡನೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಪ್ರದೇಶ ಈ ಮಹುವ. ಗುಜರಾತಿನ ಬಹುತೇಕ ಕಡಲತೀರ ಸುಣ್ಣದ ಕಲ್ಲಿನಿಂದ ಆವೃತ್ತವಾಗಿದ್ದು ಇದು ಸಮುದ್ರದ ನೀರಿನಿಂದ ಉಪ್ಪನ್ನು ಹೀರಿ ತೀರಕ್ಕೆ ಹೊಂದಿಕೊಂಡ ಸುಮಾರು 50 ಕಿ.ಮೀ. ಪ್ರದೇಶಕ್ಕೆ ಶುದ್ಧ ಸಿಹಿ ನೀರನ್ನು ಬಿಡುಗಡೆ ಮಾಡುತ್ತದೆ. ಇದರಿಂದ ತೀರ ಪ್ರದೇಶದ ರೈತರು ವರ್ಷದಲ್ಲಿ ಮೂರು ಬೆಳೆ ತೆಗೆಯುವಷ್ಟು ಈ ಭೂಮಿ ಫಲವತ್ತಾಗಿದೆ. ನಿರ್ಮಾದ ಲೆಕ್ಕಾಚಾರವೇ ಬೇರೆ. ಇಲ್ಲಿ ಸಿಮೆಂಟ್ ಕಾರ್ಖಾನೆ ಸ್ಥಾಪಿಸಿದರೆ ಈ ಸುಣ್ಣದ ಕಲ್ಲುಗಳನ್ನು ಒಡೆದು ಸಿಮೆಂಟ್ ತಯಾರಿಸಿ ಇಲ್ಲೇ ಅಭಿವೃದ್ಧಿ ಪಡಿಸುವ ಬಂದರಿನ ಮೂಲಕ ಸಾಗಿಸಬಹುದಾದ್ದರಿಂದ ಸಾಗಾಣಿಕಾ ವೆಚ್ಚವೂ ಉಳಿಯಿತು. ಅಲ್ಲಿಗೆ ಫಲವತ್ತಾದ ಈ ಭೂಮಿ ನಿಜಕ್ಕೂ ಜೌಳು ಭೂಮಿಯೇ ಆಗುವುದಲ್ಲ! ಈ SEZ ಸ್ಥಾಪಿಸಿದರೆ ತೀರ ಪ್ರದೇಶದ ರೈತರು ಮಾತ್ರವಲ್ಲದೆ ಮೀನುಗಾರರು ಸೇರಿದಂತೆ ಸುಮಾರು 15,000 ಜನರ ಆರ್ಥಿಕತೆಗೆ ಕುತ್ತು ಬರುತ್ತದೆ. ಆದರೆ ಮೋದಿ ಸರ್ಕಾರ ನಿರ್ಮಾಕ್ಕೆ ಜಮೀನು ಮಂಜೂರು ಮಾಡಲು ನೀಡಿರುವ ಕಾರಣ ‘ಇದರಿಂದ ಸುಮಾರು 416 ಜನರಿಗೆ ಉದ್ಯೋಗಾವಕಾಶ ದೊರೆಯುವುದು’ ಎಂದು!

ಕಛ್‌ನ ಮುಂದ್ರಾದಲ್ಲಿ ಅದಾನಿ ಸಮೂಹ ಸಂಸ್ಥೆಗೆ ಬಂದರು ಮತ್ತು ವಿಶೇಷ ವ್ಯಾಪಾರ ವಲಯ ಸ್ಥಾಪನೆಗಾಗಿ ಅರಣ್ಯಹಕ್ಕು ಕಾಯ್ದೆ (2008) ಯನ್ನು ಧಿಕ್ಕರಿಸಿ 56 ಮೀನುಗಾರಿಕಾ ಗ್ರಾಮಗಳನ್ನು, 126 ಠರಾವಣೆಗಳನ್ನು ಈಗಾಗಲೇ ಒಕ್ಕಲೆಬ್ಬಿಸಲಾಗಿದೆ. ಇದು ಮೀನುಗಾರರ ಸಮುದ್ರದ ಮೇಲಣ ಸಹಜ ಹಕ್ಕನ್ನು ಕಸಿದುಕೊಳ್ಳುವುದು ಮಾತ್ರವಲ್ಲದೆ ಅರಣ್ಯ ಉತ್ಪನ್ನಗಳ ಅವಲಂಬಿತರ, ದನಗಾಹಿಗಳ ಹಾಗೂ ತೀರ ಪ್ರದೇಶದ ರೈತರ ಜೀವನಾಧಾರವನ್ನೇ ಕಸಿಯುತ್ತವೆ. ಒಟ್ಟಾರೆಯಾಗಿ ಮೋದಿಯ ಈ ಮಾದರಿ ಗ್ರಾಮೀಣ ಆರ್ಥಿಕತೆಯ ಮೇಲೆ ಗದಾಪ್ರಹಾರ.

ಅದಾನಿ ಸಂಸ್ಥೆಗೆ ಈಗಾಗಲೇ ಪ್ರತಿ ಚ.ಮೀ.ಗೆ ರೂ.1 – ರೂ.32 ರಂತೆ (ಮಾರುಕಟ್ಟೆ ಬೆಲೆ ರೂ.1500) 5 ಕೋಟಿ ಚ.ಮೀ. ಕಡಲ ತೀರದ ಭೂಮಿಯನ್ನು ಮಂಜೂರು ಮಾಡಲಾಗಿದೆ. ಬಂದರು ಅಭಿವೃದ್ಧಿ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ಪಡೆದ ಈ ಭೂಮಿಯ ಸಾಕಷ್ಟು ಭಾಗವನ್ನು ಅದಾನಿ ಸಂಸ್ಥೆ ಬೇರೆ ಕಾರ್ಪೊರೆಟ್ ಸಂಸ್ಥೆಗಳಿಗೆ ಮಾರಿದೆ/ಭೋಗ್ಯಕ್ಕೆ ನೀಡಿದೆ. ಇದು ಸರ್ಕಾರದೊಂದಿಗಿನ ಖರೀದಿ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ.

ಹಾಜೀರಾ ಪ್ರದೇಶದಲ್ಲಿ ಪ್ರತಿ ಚ.ಮೀ.ಗೆ ಜಿಲ್ಲಾ ಭೂಮೌಲ್ಯಮಾಪನ ಸಮಿತಿ (DLVC) ರೂ.1000 – ರೂ.1050 ಎಂದೂ ರಾಜ್ಯ ಭೂಮೌಲ್ಯಮಾಪನ ಸಮಿತಿ (SLVC) ರೂ.2020 ಎಂದೂ ಬೆಲೆ ನಿಗದಿ ಮಾಡಿದ್ದರೂ L&T ಸಂಸ್ಥೆಗೆ ರೂ.700/ ಚ.ಮೀ.ಯಂತೆ 8.53 ಲಕ್ಷ ಚದುರ ಕಿಮೀ ಭೂಮಿಯನ್ನು ಹಸ್ತಾಂತರಿಸುವ ನಿರ್ಧಾರವನ್ನು ಮೋದಿಯ ಸಂಪುಟ (2008) ಅನುಮೋದಿಸಿತು. ಇದರಿಂದ ಉತ್ತೇಜನಗೊಂಡು 2009 ರಲ್ಲಿ ಯೋಜನೆಯ ವಿಸ್ತರಣೆಗಾಗಿ ಇನ್ನೂ 12.14 ಲಕ್ಷ ಚ.ಮೀ. ಭೂಮಿಗಾಗಿ L&T ಸಂಸ್ಥೆ ಕೋರಿಕೆ ಸಲ್ಲಿಸಿತು. ಈ ಬಾರಿ DVLC ನಿಗದಿಪಡಿಸಿದ ಬೆಲೆ ರೂ.2400-ರೂ.2800. ಆಗಲೂ ಮೋದಿಯ ಸಂಪುಟ ಹಳೆಯ ದರದಲ್ಲೇ 5.8 ಲಕ್ಷ ಚ.ಮೀ. ಭೂಮಿಯನ್ನು L&T ಸಂಸ್ಥೆಗೆ ನೀಡಿತು. ಇದರಿಂದ ಸರ್ಕಾರಕ್ಕಾದ ನಷ್ಟ ರೂ.128.71 ಕೋಟಿ. ಇದು ಇಲ್ಲಿಗೇ ನಿಲ್ಲದೆ ಹಾಜಿರಾದಲ್ಲಿ ಅಕ್ರಮವಾಗಿ ಸರ್ಕಾರಿ ಭೂಮಿಯನ್ನು ಆವರಿಸಿಕೊಂಡಿದ್ದ ಎಸ್ಸಾರ್ ಸ್ಟೀಲ್ ಅದನ್ನು ಸಕ್ರಮಗೊಳಿಸಿಕೊಳ್ಳಲು ಅರ್ಜಿ ಹಾಕಿದಾಗ ಇದೇ ರಿಯಾಯಿತಿ ದರದಲ್ಲಿ ಅದನ್ನು ಸಕ್ರಮಗೊಳಿಸಿ ಸರ್ಕಾರ ರೂ.238.5 ಕೋಟಿ ನಷ್ಟಮಾಡಿಕೊಂಡಿತು.

ಮೋದಿ ಸರ್ಕಾರದ ವಿವೇಚನಾರಹಿತ (ಅಥವ ಉದ್ದೇಶಪೂರ್ವಕ) ಯೋಜನೆಗಳಿಗೆ ಮತ್ತೊಂದು ನಿದರ್ಶನ ವಾಗ್ರಾ ಮತ್ತು ಭರೂಛ್‌ನ ರೈತರ ಪರಿಸ್ಥಿತಿ. ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲೆಂದೇ ಸರ್ದಾರ್ ಸರೋವರ್ ಅಣೆಕಟ್ಟು ನಿರ್ಮಿಸಲಾಯಿತಾದರೂ ಈಗ ಇದೇ ಭಾಗದ ನರ್ಮದಾ ಅಚ್ಚುಕಟ್ಟು ಪ್ರದೇಶದ 14,977 ಹೆಕ್ಟೇರ್ ಭೂಮಿಯನ್ನು ಪೆಟ್ರೋಲಿಯಂ ಮತ್ತು ರಾಸಾಯನಿಕಗಳ ವಿಶೇಷ ಹೂಡಿಕೆ ವಲಯ ಸ್ಥಾಪನೆಗೆಂದು ವಶಪಡಿಸಿಕೊಳ್ಳಲಾಗಿದೆ. ನರ್ಮದಾ ನದಿಯ ಬಹುತೇಕ ನಾಲೆಗಳ ನೀರು ಜನರ ದಾಹವನ್ನು, ರೈತರ ಬವಣೆಯನ್ನು ತೀರಿಸುವ ಬದಲು ಬೃಹತ್ ಕೈಗಾರಿಕೆಗಳ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಉದಾ: ವಡೋದರ ಬಳಿ ಸ್ಥಾಪಿಸಲಾಗಿರುವ ರಾಸಾಯನಿಕ ಕೈಗಾರಿಕೆಗಳು ಶ್ರಮವೇ ಇಲ್ಲದೆ ನರ್ಮದಾ ನಾಲೆಯ ನೀರನ್ನು ಬಳಸಿಕೊಂಡು ನಗರದ ಸಂಸ್ಕರಿತ ಕೊಳಚೆ ನೀರನ್ನು ಒಯ್ಯುವ ನಾಲೆಗೆ ತಮ್ಮ ಸಂಸ್ಕರಿಸದ ತ್ಯಾಜ್ಯ ನೀರನ್ನು ಸುರಿಯುತ್ತದೆ. ಇದು ಮಾಹಿ ನದಿಯನ್ನು ಸೇರುತ್ತದೆ. ಗುಜರಾತ್ ಮಾಲಿನ್ಯ ನಿಯಂತ್ರಣ ಮಂಡಳಿಯ ಯಾವ ಕಾನೂನೂ ಇವರನ್ನು ಅಲುಗಿಸಲಾರದು. ದೇಶದ ಅತಿ ಹೆಚ್ಚು ಮಲಿನಗೊಂಡ ೮೮ ಪ್ರದೇಶಗಳ ಪೈಕಿ 8 ಗುಜರಾತಿಗೆ ಸೇರಿರುವುದು ಸಹಜವೇ ಆಗಿದೆ. ಗುಜರಾತಿನ ವಾಪಿ ಮತ್ತು ಅಂಕಲೇಶ್ವರ ನಗರಗಳು ಈ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದುಕೊಂಡಿವೆ.

ಸರ್ಕಾರಿ ಉದ್ದಿಮೆಗಳ ಅವನತಿ ಮತ್ತು ಖಾಸಗಿ ಉದ್ದಿಮೆದಾರರ ಪರಿಚಾರಿಕೆ

ಮೋದಿ ಮತ್ತವರ ಪ್ರಚಾರಕರು ಗುಜರಾತಿನಲ್ಲಿ ಸರ್ಕಾರಿ ಉದ್ದಿಮೆಗಳಿಗೆ ವೃತ್ತಿಪರತೆ ತಂದಿರುವುದಾಗಿ ಸಾರುತ್ತಿದ್ದರೂ ಸಿಎಜಿಯ ಇತ್ತೀಚಿನ ಮೂರು ವರದಿಗಳು ಬೇರೆಯದೇ ಕಥೆ ಹೇಳುತ್ತವೆ. ಇದರ ಪ್ರಕಾರ ಗುಜರಾತಿನ ಸರ್ಕಾರಿ ಉದ್ದಿಮೆಗಳು ಅನುಭವಿಸಿದ ರೂ.4052.37 ಕೋಟಿ ನಷ್ಟವನ್ನು ಉತ್ತಮ ಆಡಳಿತ ನಿರ್ವಹಣೆ ಮತ್ತು ನಿಯಂತ್ರಿಸಬಹುದಾದ ನಷ್ಟಗಳನ್ನು ತಡೆಯುವುದರಿಂದ ತಪ್ಪಿಸಬಹುದಾಗಿತ್ತು. ಇಂತಹ ನಷ್ಟಗಳು ವರ್ಷದಿಂದ ವರ್ಷಕ್ಕೆ ಏರುತ್ತಿರುವುದನ್ನು ಈ ವರದಿಗಳು ತೋರುತ್ತವೆ. 2006-11 ರವರೆಗಿನ ಗುಜರಾತ್ ಸ್ಟೇಟ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ., (GSPCL) ಒಟ್ಟಾರೆ ಆದಾಯ 19245.39 ಕೋಟಿ. ಅದರಲ್ಲಿ ತನ್ನ ಸ್ವಂತ ಉತ್ಪಾದನೆಯ ಮಾರಾಟದಿಂದ ಬಂದ ಆದಾಯ ಕೇವಲ ರೂ.1563.63 ಕೋಟಿ (ಶೇ.8) ಮಾತ್ರ. ಉಳಿದ ಆದಾಯ ಇತರ ಖಾಸಗಿ ಉತ್ಪಾದಕರ ಉತ್ಪನ್ನಗಳ ಮಾರಾಟದಿಂದ ಬಂದದ್ದು.

ಮೋದಿ ತಾನು ಉದ್ಯಮಸ್ನೇಹಿ ಪರಿಸರ ನಿರ್ಮಿಸಿ ಗುಜರಾತನ್ನು ಅಭಿವೃದ್ಧಿ ಪರವಾಗಿಸಿರುವುದಾಗಿ ಹೇಳಿಕೊಳ್ಳುತ್ತಿದ್ದರೂ ಸಿಎಜಿ ವರದಿಗಳು ambani-modiಮೋದಿ ಸಾರ್ವಜನಿಕರ ಹಾಗೂ ಸರ್ಕಾರ ಉದ್ದಿಮೆಗಳ ಬೆಲೆ ತೆತ್ತು ಖಾಸಗಿ ಉದ್ದಿಮೆದಾರರ ಪರಿಚಾರಿಕೆ ಮಾಡುತ್ತಿರುವುದನ್ನು ನಿಚ್ಚಳವಾಗಿ ತೋರಿಸುತ್ತದೆ. GSPCL ಹಾಗೂ ರಿಲೆಯನ್ಸ್ ಇಂಡಸ್ಟ್ರೀಸ್ ಲಿ., ನಡುವಣ ಒಪ್ಪಂದದ ಪ್ರಕಾರ (2007) ರೂ.52.27 ಕೋಟಿ ಸಾಗಾಣಿಕಾ ವೆಚ್ಚವನ್ನು ಸಂಗ್ರಹಿಸಬೇಕಿತ್ತು. ಮತ್ತೊಂದೆಡೆ ಹಲವು ಖಾಸಗಿ ಸಂಸ್ಥೆಗಳು ಒಪ್ಪಿಕೊಂಡ ಸರಕನ್ನು ಕೊಳ್ಳದ ಕಾರಣಕ್ಕೆ ರೂ.502.19 ಕೋಟಿಯನ್ನು ಸಂಗ್ರಹಿಸಬೇಕಿತ್ತು. ಆದರೆ ಅದರ ಮೇಲಿನ ದಂಡವನ್ನೂ ಸೇರಿಸಿ ಇದನ್ನು ಮಾಫಿ ಮಾಡಲಾಗಿದೆ. (ಮುಖ್ಯ ಫಲಾನುಭವಿಗಳು ಎಸ್ಸಾರ್ ಪವರ್ ಲಿ., ಮತ್ತು ಗುಜರಾತ್ ಪಗುನಾನ್ ಎನರ್ಜಿ ಕಾರ್ಪೊರೇಷನ್ ಲಿ.,) ಇದೆಲ್ಲವನ್ನೂ ಬಿಟ್ಟುಕೊಟ್ಟು ನಷ್ಟಮಾಡಿಕೊಂಡಿದ್ದೇಕೆ ಎಂಬ ಸಿಎಜಿ ಪ್ರಶ್ನೆಗೆ ಸಮರ್ಪಕ ಉತ್ತರವೇ ಇಲ್ಲ. ಅನಿಲ ವಹಿವಾಟಿನಲ್ಲಿ (2006-09) ಕೊಂಡ ಬೆಲೆಗಿಂತ ಕಡಿಮೆ ಬೆಲೆಗೆ ಅದಾನಿ ಎನರ್ಜಿಸ್‌ಗೆ ಅನಿಲ ಮಾರಿ ರೂ.20.54 ಕೋಟಿ ನಷ್ಟ ಅನುಭವಿಸಿದ್ದು ದಾಖಲಾಗಿದೆ. ಒಪ್ಪಂದ ನಿರ್ವಹಣೆಯಲ್ಲಿನ ತಪ್ಪಿನಿಂದ ಎಸ್ಸಾರ್ ಆಯಿಲ್ ಲಿ.,ಗೆ ಆದ ಲಾಭ ಅಥವಾ GSPCL ಗೆ ಆದ ನಷ್ಟ 106.71 ಕೋಟಿ. ಈ ರೀತಿ ಸರ್ಕಾರಿ ಉದ್ದಿಮೆಗಳ ಉತ್ಪಾದನಾ ಚಟುವಟಿಕೆಗಳನ್ನು ಕುಗ್ಗಿಸುವುದು ಹೀಗೆ ಕಣ್ಣು ಮುಚ್ಚಿಕೊಂಡು ನಷ್ಟ ಹೆಚ್ಚಾಗುವಂತೆ ನೋಡಿಕೊಳ್ಳುವುದು, ಮುಂದೊಂದು ದಿನ ನಿರಂತರ ನಷ್ಟದ ನೆಪ ಒಡ್ಡಿ ಇಂತಹ ಉದ್ದಿಮೆಗಳನ್ನು ಖಾಸಗೀಕರಣಕ್ಕೆ ತೆರೆದಿಡುವುದು ಇವೆಲ್ಲ ಕಣ್ಣಮುಂದಿನ ತೆರೆದ ರಹಸ್ಯಗಳು.

ಮೋದಿ ಸರ್ಕಾರದ ಇಷ್ಟೆಲ್ಲ ಹಗರಣಗಳನ್ನು ಮಾಧ್ಯಮಗಳು ಜಾಣಕುರುಡಿನಿಂದ ನಿರ್ಲಕ್ಷಿಸುತ್ತ ಮೋದಿ ಕುರಿತಾದ ಕ್ಷುಲ್ಲಕ ವಿಷಯಗಳನ್ನು ದೊಡ್ಡ ವಿಷಯವೆಂಬಂತೆ ಬಿಂಬಿಸುತ್ತ ಆತ ನಿರಂತರ ಪ್ರಚಾರದಲ್ಲಿರುವಂತೆ ನೋಡಿಕೊಳ್ಳುತ್ತಿವೆ. ಈ ರೀತಿ ಮಾಧ್ಯಮಗಳ ನೈತಿಕ ಪ್ರಜ್ಞೆಯನ್ನು ಮಂಕಾಗಿಸಿರುವುದು ಮೋದಿ ಸರ್ಕಾರದ ಕಾರ್ಪೋರೇಟ್ ಫಲಾನುಭವಿಗಳ ಹಣ ಮತ್ತು ಸನಾತನಿಗಳ ಮನಸ್ಸು.

“ಸಿಎಜಿ ವರದಿಯಲ್ಲಿನ ಉಲ್ಲೇಖಗಳು ಭ್ರಷ್ಟಾಚಾರವಲ್ಲ ಕೇವಲ ಆಡಳಿತಾತ್ಮಕ ತಪ್ಪುಗಳು. ಅವನ್ನು ಸರಿಪಡಿಸಿಕೊಳ್ಳಲಾಗುವುದು,” ಎಂಬುದು ಮೋದಿ ಸರ್ಕಾರದ ಪ್ರತಿಕ್ರಿಯೆ. ಸಿಎಜಿ ವರದಿಯನ್ನೇ ಆಧರಿಸಿದ 2ಜಿ ಹಗರಣ, ಕಲ್ಲಿದ್ದಲು ಗಣಿ ಹಂಚಿಕೆ ಹಗರಣಗಳಲ್ಲಿನ ಕಾಂಗ್ರೆಸ್ಸಿನ ಭ್ರಷ್ಟಾಚಾರವನ್ನು ಚುನಾವಣಾ ವಿಷಯವನ್ನಾಗಿಸಿಕೊಂಡ ಭಾಜಪ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಇದೇ ಮೋದಿಯನ್ನು ಅನುಮೋದಿಸಬೇಕೆನ್ನುತ್ತದೆ!

ಭ್ರಷ್ಟಾಚಾರ ವಿರೋಧಿ ಮುಖವಾಡ

ಸಿಎಜಿ ವರದಿಯಲ್ಲಿ ಬಯಲಾದ ಭ್ರಷ್ಟಾಚಾರಗಳು ಒತ್ತೊಟ್ಟಿಗಿರಲಿ, ಮೋದಿಯ ಭ್ರಷ್ಟಾಚಾರ ವಿರೋಧಿ ಮುಖವಾಡವನ್ನು ಕಿತ್ತೊಗೆಯಲು ಭ್ರಷ್ಟಾಚಾರ ನಿಯಂತ್ರಣಕ್ಕಾಗಿಯೇ ಇರುವ ಸ್ವಾಯತ್ತ ಸಂಸ್ಥೆ ಲೋಕಾಯುಕ್ತವನ್ನು ಈತ ನಿಯಂತ್ರಿಸಲು ಹೊರಟಿರುವ ರೀತಿಯೇ ಸಾಕು. 2004 ರಿಂದಲೂ ಗುಜರಾತಿನಲ್ಲಿ ಲೋಕಾಯುಕ್ತರ ಹುದ್ದೆ ಖಾಲಿ ಇದೆ. ಲೋಕಾಯುಕ್ತರ ನೇಮಕಾತಿ ವಿಚಾರದಲ್ಲಿ ಸರ್ಕಾರದ ವಿಳಂಬ ಧೋರಣೆಯನ್ನು ವಿರೋಧಿಸಿ ರಾಜ್ಯಪಾಲೆ ಕಮಲಾ ಬಿನಿವಾಲ್ ಸಂಪುಟ Narendra_Modiಮತ್ತು ಮುಖ್ಯಮಂತ್ರಿ ಮೋದಿಯನ್ನು ಕಡೆಗಣಿಸಿ 2011ರಲ್ಲಿ ನಿವೃತ್ತ ನ್ಯಾ.ವಿ.ಆರ್.ಮೆಹ್ತಾರನ್ನು ಈ ಹುದ್ದೆಗೆ ನೇಮಕಮಾಡಿದರು. ಇದನ್ನು ವಿರೋಧಿಸಿ ಮೋದಿ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತು. ಹೈಕೋರ್ಟ್‌ನಲ್ಲಿ ನಂತರ ಸುಪ್ರೀಂ ಕೋರ್ಟ್‌ನಲ್ಲಿಯೂ ಲೋಕಾಯುಕ್ತರ ನೇಮಕಾತಿ ಊರ್ಜಿತವಾಯಿತು (ಖಟ್ಲೆ ಖರ್ಚಿಗಾಗಿ ಮೋದಿ ಸರ್ಕಾರ ವ್ಯಯಿಸಿದ ಸಾರ್ವಜನಿಕರ ಹಣ ರೂ.45 ಕೋಟಿ). ಆದರೆ ನ್ಯಾ.ವಿ.ಆರ್.ಮೆಹ್ತಾ ಆ ಹುದ್ದೆಯ ಘನತೆಯನ್ನು ಕಾಪಾಡಲಾಗದ ಸರ್ಕಾರದಲ್ಲಿ ಲೋಕಾಯುಕ್ತರಾಗಿ ಕಾರ್ಯನಿರ್ವಹಿಸಲು ನಿರಾಕರಿಸಿದರು.

ಇಷ್ಟೆಲ್ಲ ಆದಮೇಲೂ ಮೋದಿ ಮಾಡಿದ್ದು ಬಲಿಷ್ಠ ಲೋಕಾಯುಕ್ತವನ್ನು ಸಹಿಸಲಾಗದ ಭ್ರಷ್ಟ ಸರ್ಕಾರ ಅಥವಾ ಅಹಂ ಪೆಟ್ಟಾದ್ದನ್ನು ಸಹಿಸಲಾಗದ ಸರ್ವಾಧಿಕಾರಿ ಮಾಡುವಂತದ್ದನ್ನೇ. 1986 ರ ಲೋಕಾಯುಕ್ತ ಕಾಯ್ದೆಗೆ ಬದಲಾವಣೆ ತಂದು ಲೋಕಾಯುಕ್ತರ ನೇಮಕಾತಿಯಲ್ಲಿ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ರಾಜ್ಯಪಾಲರ ಪಾತ್ರವನ್ನು ಗೌಣವಾಗಿಸಿ ಅದನ್ನು ಮುಖ್ಯಮಂತ್ರಿಯ ಕೆಳಗೆ ತರಲಾಗಿದೆ. ಅಷ್ಟೇ ಅಲ್ಲದೆ ಹೊಸ ಕಾಯ್ದೆಯ ಪ್ರಕಾರ ಸರ್ಕಾರ ಬಯಸಿದಲ್ಲಿ ಯಾವುದೇ ಸರ್ಕಾರಿ ಯಂತ್ರವನ್ನು ಲೋಕಾಯುಕ್ತ ವ್ಯಾಪ್ತಿಯಿಂದ ಹೊರಗಿಡಬಹುದಾಗಿದೆ. ಈ ಕಾಯ್ದೆಗೆ ಸದನದ ಅನುಮೋದನೆ ದೊರೆತರೂ ರಾಜ್ಯಪಾಲರ ಸಹಿಗಾಗಿ ಇನ್ನೂ ಕಾಯುತ್ತಿದೆ. (ಇದೇ ಮೋದಿ ಕೇಂದ್ರದಲ್ಲಿ ತಾನು ಅಣ್ಣಾ ಹಜಾರೆಯ ಲೋಕಪಾಲ ಕಾಯ್ದೆಯನ್ನು ಬೆಂಬಲಿಸುವುದಾಗಿ ಹೇಳುತ್ತಾರೆ.)

ಹಳಿತಪ್ಪಿದ ಆಡಳಿತ

ಭಾಜಪ ಮೋದಿಯನ್ನು ಅತ್ಯುತ್ತಮ ಆಡಳಿತಗಾರ ಎಂದು ಹಾಡಿ ಹೊಗಳುತ್ತಿದೆ. ಆದರೆ 2008-11 ರ ನಡುವೆ ರಾಜ್ಯದ ಹೂಡಿಕೆಗಳ ಮೇಲಣ ಗಳಿಕೆ (ROI) ಕೇವಲ 0.25%. ಸರ್ಕಾರ ಈ ಅವಧಿಯಲ್ಲಿ ಪಾವತಿಸಿದ ಸಾಲದ ಮೇಲಣ ಬಡ್ಡಿ ಸರಾಸರಿ 7.67%ರಷ್ಟು. ಇದು ರಾಜ್ಯದ ಮಧ್ಯಮ ಮತ್ತು ದೀರ್ಘಕಾಲೀನ ಆರ್ಥಿಕತೆಯ ಮೇಲೆ ಋಣಾತ್ಮಕ ಪ್ರಭಾವ ಬೀರುವುದು ನಿಶ್ಚಿತ. ಸರ್ದಾರ್ ಸರೋವರ್ ಯೋಜನೆಯನ್ನು ಒಳಗೊಂಡಂತೆ ಬಹುತೇಕ ಸರ್ಕಾರಿ ಯೋಜನೆಗಳಲ್ಲಿನ ಅತಿಹೆಚ್ಚಿನ ಖರ್ಚು (55%) ಸಾಲದ ಮೇಲಣ ಬಡ್ಡಿಯೇ ಆಗಿರುವುದು ಅತ್ಯಂತ ಆತಂಕಕಾರಿ ವಿಚಾರ. ಒಂದು ಕಡೆ ಶಿಕ್ಷಣ ಆರೋಗ್ಯದಂತಹ ಮೂಲಭೂತ ಸೌಕರ್ಯಗಳಿಗೆ ಸರ್ಕಾರದ ವೆಚ್ಚ ಕಡಿಮೆಯಾಗುತ್ತಿರುವುದು, ಉತ್ಪಾದನಾ ಸಾಮರ್ಥ್ಯ ಕುಗ್ಗುತ್ತಿರುವುದು ಮತ್ತೊಂದೆಡೆ ರಾಜ್ಯದ ಮೇಲಿನ ಸಾಲ, ಬಡ್ಡಿಗಳ ಹೊರೆ ಹೆಚ್ಚಾಗುತ್ತಿರುವುದು ಗುಜರಾತಿನ ಆರ್ಥಿಕತೆ ಅವನತಿಯತ್ತ ಸಾಗುತ್ತಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ದಲಿತವಿರೋಧಿ ಧೋರಣೆ

“ನನಗೆ ಇವರು (ದಲಿತರು) ತಮ್ಮ ಕೆಲಸವನ್ನು ಕೇವಲ ಜೀವನೋಪಾಯಕ್ಕಾಗಿ ಮಾಡುತ್ತಿದ್ದಾರೆ ಅನ್ನಿಸುವುದಿಲ್ಲ. ಹಾಗಿದ್ದಲ್ಲಿ ಇವರು ತಲತಲಾಂತರದಿಂದ ಇದೇ ಕೆಲಸಗಳನ್ನು ಮಾಡಿಕೊಂಡಿರುತ್ತಿರಲಿಲ್ಲ… ಯಾವುದೋ ಒಂದು ಗಳಿಗೆಯಲ್ಲಿ ಅವರಿಗೆ ‘ಸಮಾಜದ ಹಾಗೂ ದೇವರ ಸಂತೋಷಕ್ಕಾಗಿ ದುಡಿಯುವುದು ತಮ್ಮ ಕೆಲಸ, ದೇವರು ತಮಗೆ ಕೊಟ್ಟಿರುವ ಕೆಲಸವನ್ನು ಮಾಡುವುದು ತಮ್ಮ ಕರ್ತವ್ಯ. ಶುಚಿಗೊಳಿಸುವ ಈ ಕೆಲಸ ತಮ್ಮೊಳಗಣ ಆಧ್ಯಾತ್ಮಿಕ ಕಸುವು’ ಎಂದು ಜ್ಞಾನೋದಯವಾಗಿದ್ದಿರಬೇಕು.” ಇವು ತನ್ನ ಕರ್ಮಯೋಗ ಪುಸ್ತಕದಲ್ಲಿ (2007) ಮೋದಿ ಹೇಳಿರುವ ಮಾತುಗಳು. ಇವು ಸ್ಪಷ್ಟವಾಗಿ ಮೋದಿಯ ಫ್ಯಾಸಿಸ್ಟ್, ದಲಿತವಿರೋಧಿ, ಸನಾತನವಾದಿ modi-advaniಮನಸ್ಥಿತಿಯನ್ನು ಬಿಂಬಿಸುತ್ತದೆ. ಹಾಗಾಗಿಯೇ ಆತನ ಎಲ್ಲ “ಅಭಿವೃದ್ಧಿ” ಯೋಜನೆಗಳೂ ಬಲ್ಲಿದರ ಪರವಾಗಿಯೂ ಶೋಷಿತರ, ದಲಿತರ ವಿರುದ್ಧವಾಗಿಯೂ ಇರುತ್ತವೆ.

2011 ರ ಸಿಎಜಿ ವರದಿ ಪ್ರಕಾರ ಗುಜರಾತ್ ಭೂಸ್ವಾಧೀನ ಕಾಯ್ದೆ ಅಡಿಯಲ್ಲಿ ವಶಪಡಿಸಿಕೊಂಡ ಭೂಮಿಯಲ್ಲಿ ಪರಿಶಿಷ್ಟ ಜಾತಿ/ಪಂಗಡಗಳಿಗೆ ಸೇರಿದ ಭೂರಹಿತರಿಗೆ ಹಂಚಬೇಕಿದ್ದ 15,587 ಹೆಕ್ಟೇರ್ ಹೆಚ್ಚುವರಿ ಭೂಮಿಯನ್ನು ತನ್ನಲ್ಲಿಯೇ ಉಳಿಸಿಕೊಂಡಿದ್ದಕ್ಕೆ ಸರಿಯಾದ ಕಾರಣ ಕೊಡುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. 2008-11 ರ ನಡುವೆ ನಡೆದ ಭೂಹಂಚಿಕೆಯಲ್ಲಿ ಕೇವಲ 52% ಫಲಾನುಭವಿಗಳಿಗೆ (1003 ರಲ್ಲಿ 520 ಜನರಿಗೆ) ಮಾತ್ರ ಹೆಕ್ಟೇರಿಗೆ ರೂ.5,000 ಸಹಾಯಧನ ನೀಡಲಾಗಿದೆ. ಉಳಿದವರಿಗೆ ಈ ಸೌಲಭ್ಯ ವಿಸ್ತರಿಸದಿರುವುದಕ್ಕೆ ಯಾವುದೇ ಸೂಕ್ತ ವಿವರಣೆ ಇಲ್ಲ. ಇಂತಹ ಮೋದಿಯ ಪರಿವಾರಕ್ಕೆ ಅಧಿಕಾರ ಸಿಕ್ಕರೆ ಭಾರತದ ಹಿಮ್ಮುಖ ಚಲನೆ ಬಹುವೇಗವಾಗಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಅಲ್ಪಸಂಖ್ಯಾತರು ಎರಡನೇ ದರ್ಜೆ ಪ್ರಜೆಗಳು

ಭಾರತ ಭಾರತೀಯರೆಲ್ಲರ ರಾಷ್ಟ್ರವೆಂಬ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ‘ಇದು ಬಹುಸಂಖ್ಯಾತ ಹಿಂದೂಗಳ ರಾಷ್ಟ್ರ. ಇಲ್ಲಿ ಮುಸ್ಲಿಮರಾದಿಯಾಗಿ ಇತರ ಎಲ್ಲ ಧರ್ಮೀಯರು ಇವರ ಪಾರಮ್ಯವನ್ನು ಒಪ್ಪಿ ಇವರಿಗೆ ಬಗ್ಗಿ ಭಯದ ನೆರಳಲ್ಲೇ ಬದುಕಬೇಕು’ ಎನ್ನುವ ಆರ್‌ಎಸ್‌ಎಸ್, ಭಾಜಪಾದ ಜೀವವಿರೋಧಿ ಸಿದ್ಧಾಂತ ಅಕ್ಷರಶಃ ಅನುಷ್ಟಾನಗೊಂಡಿರುವುದು ಮೋದಿ ಆಳ್ವಿಕೆಯ ಗುಜರಾತಿನಲ್ಲಿ.

ಇತ್ತೀಚಿನ ಸಾಕಷ್ಟು ಅಧ್ಯಯನಗಳು ಗುಜರಾತಿನ ಮುಸ್ಲಿಮರು ದೇಶದ ಕಡುಬಡವರ ಗುಂಪಿಗೆ ಸೇರಿರುವುದಲ್ಲದೆ ಧರ್ಮದ ಹೆಸರಿನಲ್ಲಿ ಅತ್ಯಂತ ಹೆಚ್ಚು ಪಕ್ಷಪಾತಕ್ಕೆ ಒಳಗಾದವರು ಎಂಬುದನ್ನು ಸಾಬೀತು ಪಡಿಸಿದೆ.

ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಯಾಗದಂತೆ ನೋಡಿಕೊಳ್ಳುವುದರಲ್ಲಿ ಮೋದಿ ವಿಶೇಷ ಮುತುವರ್ಜಿ ವಹಿಸುತ್ತಾರೆ. ಅಲ್ಪಸಂಖ್ಯಾತರ ಮೆಟ್ರಿಕ್ಯುಲೇಷನ್‌ಪೂರ್ವ ವಿದ್ಯಾರ್ಥಿವೇತನ ಯೋಜನೆಯಡಿ ಕೇಂದ್ರಸರ್ಕಾರ 55,000 ಮಂದಿಗೆ ವಿದ್ಯಾರ್ಥಿವೇತನವನ್ನು (ಅದರಲ್ಲಿ 53,000 ಅರ್ಹ ಮುಸ್ಲಿಂ ವಿದ್ಯಾರ್ಥಿಗಳಿದ್ದಾರೆ) ಗುಜರಾತಿಗೆ ಮಂಜೂರು ಮಾಡಿತ್ತು. ’ಇತರ ಧರ್ಮದ ವಿದ್ಯಾರ್ಥಿಗಳ ವಿರುದ್ಧ ಪಕ್ಷಪಾತ’ ಎಂಬ ಕಾರಣ ನೀಡಿ ಮೋದಿ ಸರ್ಕಾರ ಅದನ್ನು ತಡೆಹಿಡಿದಿತ್ತು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿ ಯೋಜನೆಯ ಪರವಾಗಿ ತೀರ್ಪು ಬಂದಿದೆ. ಕೇವಲ 26% ರಷ್ಟು ಗುಜರಾತಿ ಮುಸ್ಲಿಮರು ಮೆಟ್ರಿಕ್ಯುಲೇಷನ್ ಹಂತ ತಲುಪುತ್ತಾರೆ. ಶಾಲೆ ಬಿಡುವ ಮಕ್ಕಳ ಶೇಕಡವಾರು ಲೆಕ್ಕದಲ್ಲಿ ಮುಸ್ಲಿಮರದು ಅತಿದೊಡ್ಡಪಾಲು.

ರಾಷ್ಟ್ರೀಯ ಆನ್ವಯಿಕ ಅರ್ಥಶಾಸ್ತ್ರ ಮಂಡಳಿ (NCAER) ಯ 2011 ರ ವರದಿ ರಾಜ್ಯಸರ್ಕಾರದ ಮುಸ್ಲಿಂ ವಿರೋಧಿ Gujarat_muslimಧೋರಣೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದರನ್ವಯ ಮೇಲ್ಜಾತಿ ಹಿಂದೂಗಳ ಹೋಲಿಕೆಯಲ್ಲಿ ನಗರವಾಸಿ ಮುಸ್ಲಿಮರ ಬಡತನ 8 ಪಟ್ಟು (800%) ಮತ್ತು ಹಿಂದೂ ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಹೋಲಿಕೆಯಲ್ಲಿ 50% ರಷ್ಟು ಹೆಚ್ಚು ಇದೆ. ಗ್ರಾಮವಾಸಿ ಮುಸ್ಲಿಮರ ಬಡತನ ಮೇಲ್ಜಾತಿಯಲ್ಲಿ ಹಿಂದೂಗಳ ಹೋಲಿಕೆಯಲ್ಲಿ 200% ಹೆಚ್ಚಾಗಿದೆ. ಗುಜರಾತಿನ 60% ರಷ್ಟು ಮುಸ್ಲಿಮರು ನಗರವಾಸಿಗಳಾಗಿದ್ದು ಇವರು ರಾಜ್ಯದ ಅತ್ಯಂತ ನಿರ್ಲಕ್ಷಿತ ಗುಂಪಿಗೆ ಸೇರಿದ್ದಾರೆ.

ಸರ್ದಾರ್‌ಪುರ ಮತೀಯ ಗಲಭೆಯ 22 ಸಂತ್ರಸ್ತ ಕುಟುಂಬಗಳಿಗಾಗಿ ಹಿಮ್ಮತ್‌ನಗರದಲ್ಲಿ ದಲಿತ ಕಾಲೋನಿಗೆ ಹೊಂದಿಕೊಂಡಂತೆ ನಿರ್ಮಿಸಿರುವ ‘ಸುರಕ್ಷಿತ ಕಾಲೋನಿ’ ಎಲ್ಲ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿ ಸಾಮಾಜಿಕ ಬಹಿಷ್ಕಾರದ ವಿಸ್ತರಿಸಿದ ರೂಪವಾಗಿ ಕಾಣುತ್ತದೆ.

ಸಂವಿಧಾನ ದತ್ತ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನೇ ಅಣಕ ಮಾಡುವಂತೆ ‘ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ’ (2003)ಯ ಪ್ರಕಾರ ರಾಜ್ಯದಲ್ಲಿ ಮತ್ತೊಂದು ಧರ್ಮಕ್ಕೆ ಮತಾಂತರ ಹೊಂದಲು ಬಯಸುವವರು ಸರ್ಕಾರದ ಅನುಮತಿ ಪಡೆಯಬೇಕಿದೆ. ‘ಸ್ಥಳಾಂತರದ ವಿರುದ್ಧ ಗಲಭೆ ಪೀಡಿತ ಪ್ರದೇಶದ ನಿವಾಸಿಗಳ ರಕ್ಷಣೆ ಮತ್ತು ಸ್ಥಿರಾಸ್ತಿ ಹಸ್ತಾಂತರ ನಿಯಂತ್ರಣ ಕಾಯ್ದೆ-1991 ಕ್ಕೆ 2009ರಲ್ಲಿ ಬದಲಾವಣೆ ತಂದು ಅದನ್ನು ಅಲ್ಪಸಂಖ್ಯಾತರ ವಿರುದ್ಧ ಅಸ್ತ್ರವಾಗಿ ಬಳಸಲಾಗುತ್ತಿದೆ.

ಮೋದಿಯ ಜೀವವಿರೋಧಿ, ಪ್ರತಿಗಾಮಿ ಸಾಧನೆಗಳ ಪಟ್ಟಿ ಇನ್ನೂ ಬಹುದೊಡ್ಡದಿದೆ. ಆದರೆ ಯಾವುದೇ ಪ್ರಜ್ಞಾವಂತ ಮನಸ್ಸಿಗೆ ಮೋದಿ ನಮಗೆ ಯಾಕೆ ಬೇಡ ಎಂದು ಅರಿವಾಗಲು ಇವೇ ಬಹಳಷ್ಟಾಯಿತು ಅನ್ನಿಸುತ್ತದೆ. ಕಾಂಗ್ರೆಸ್/ಯುಪಿಎ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ), ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ), ಆಹಾರ ಭದ್ರತಾ ಕಾಯ್ದೆಯಂತಹ ಹಲವು ಜನಪರ (ಅವು ತಮ್ಮಷ್ಟಕ್ಕೆ ಪರಿಪೂರ್ಣವಲ್ಲದಿದ್ದರೂ) ಯೋಜನೆಗಳನ್ನು ಜಾರಿಗೆ ತಂದಿದೆಯಾದರೂ ಆರಂಭದಲ್ಲಿ ಹೇಳಿದಂತೆ ಇವರ ಭ್ರಷ್ಟಾಚಾರದ ಪ್ರಕರಣಗಳು, ಅವೈಜ್ಞಾನಿಕ ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಯೋಜನೆಗಳು ದೇಶದಲ್ಲಿ ಅನೇಕ ಆರ್ಥಿಕ, ಸಾಮಾಜಿಕ ತಲ್ಲಣಗಳಿಗೆ ಕಾರಣವಾಗಿದೆ. ಹಾಗಾಗಿ ಕಾಂಗ್ರೆಸ್ಸೇ ಅಧಿಕಾರಕ್ಕೆ ಬಂದರೂ ಜನಶಕ್ತಿಯು ನಿರಂತರ ವಿರೋಧ ಪಕ್ಷವಾಗಿ ಜನ/ಜೀವ ಪರವಾಗಿ ದನಿಯೆತ್ತುತ್ತಲೇ ಇರಬೇಕಾಗುತ್ತದೆ. ಅದಕ್ಕಾಗಿಯಾದರೂ ಮತಾಂಧತೆಯ ಅಫೀಮು ದ್ವೇಷದ ದಳ್ಳುರಿ ಹಬ್ಬಿಸದೆ ಸಾಮರಸ್ಯ ಉಳಿಯಬೇಕಿದೆ. ಬಡವರು ‘ದೈನೇಸಿ’ ಸ್ಥಿತಿ ತಲುಪದೆ ದನಿಯೆತ್ತುವಷ್ಟಾದರೂ ಸಾಮರ್ಥ್ಯ ಉಳಿಸಿಕೊಂಡಿರಬೇಕಿದೆ.

“ಮೋದಿಯೆಂಬ ಭಯವನ್ನು ಬಿತ್ತಿ ನಮ್ಮ ಮತ ಕೇಳುವುದು ಬಿಟ್ಟು ನಿಮ್ಮ ಯೋಜಿತ ಕಾರ್ಯಕ್ರಮಗಳ ಮೂಲಕ ನಮ್ಮ ಮತ ಗೆಲ್ಲಿ” ಎಂಬ ಮುಸ್ಲಿಮರ ಮಾತುಗಳು ಕಾಂಗ್ರೆಸ್ಸಿಗೆ ಸರಿದಾರಿ ತೋರಲೆಂದು ಆಶಿಸೋಣ.

’ನಾವು ನಮ್ಮಲ್ಲಿ’ಯ “ಅಭಿವ್ಯಕ್ತಿ ಕರ್ನಾಟಕ” : ಹಾಸನದಲ್ಲಿ, ನವೆಂಬರ್ 16-17, 2013

ಸ್ನೇಹಿತರೇ,

ಸುಮಾರು 30-40ರ ವಯೋಮಾನದ ಆಸುಪಾಸಿನಲ್ಲಿರುವ ಪ್ರಗತಿಪರ ಮನೋಭಾವದ ಕನ್ನಡ ಲೇಖಕ ಮತ್ತು ಪತ್ರಕರ್ತರ ಒಂದು ಗುಂಪು ಹಲವು ವರ್ಷಗಳಿಂದ “ಬಯಲು ಸಾಹಿತ್ಯ ವೇದಿಕೆ ಕೊಟ್ಟೂರು” ಇದರ ಆಶ್ರಯದಲ್ಲಿ ಪ್ರತಿವರ್ಷವೂ ಎರಡು ದಿನಗಳ ಚರ್ಚೆ-ಸಂವಾದ-ವಿಚಾರಸಂಕಿರಣಗಳನ್ನು ಏರ್ಪಡಿಸಿಕೊಂಡು ಬರುತ್ತಿದೆ. ಎರಡು ವರ್ಷದ ಹಿಂದೆ ಇವರು ಚಿತ್ರದುರ್ಗದಲ್ಲಿ ನಡೆಸಿದ “ಮಾಧ್ಯಮ ಕರ್ನಾಟಕ” ನಾನು ಪಾಲ್ಗೊಂಡ ಮೊದಲ ಕಾರ್ಯಕ್ರಮ. ಆ ಸಂದರ್ಭದಲ್ಲಿ ನಾನು “ಪರ್ಯಾಯ ಮಾಧ್ಯಮ”ದ ಕುರಿತು ಮಾತನಾಡಿದ್ದೆ. ಅದಕ್ಕೆ ಸಿದ್ದವಾಗುವ ವೇಳೆಯಲ್ಲಿಯೇ “ವರ್ತಮಾನ.ಕಾಮ್”ನ ಯೋಚನೆ ಮೊಳೆತದ್ದು ಮತ್ತು ಆ ಸಭೆಯ ನಂತರದ ಕೆಲವು ಚರ್ಚೆಗಳಲ್ಲಿ ಅದು ಗಟ್ಟಿಯಾದದ್ದು ಎನ್ನುವುದು ನಮ್ಮ ಬಳಗದ ಅನೇಕರಿಗೆ ಗೊತ್ತಿರುವ ವಿಚಾರ. 2011 ರ “ಮಾಧ್ಯಮ ಕರ್ನಾಟಕ” ಕಾರ್ಯಕ್ರಮ ನಡೆದ ಎರಡು ತಿಂಗಳಿಗೆಲ್ಲ “ವರ್ತಮಾನ.ಕಾಮ್” ಆರಂಭವಾಗಿತ್ತು.

ಕಳೆದ ವರ್ಷ (2012) ಇದೇ ಗುಂಪು ಕುಪ್ಪಳಿಯಲ್ಲಿ “ಚಳವಳಿ ಕರ್ನಾಟಕ” ಕುರಿತು ಕಾರ್ಯಕ್ರಮ ಏರ್ಪಡಿಸಿತ್ತು. ಪ್ರಾಮಾಣಿಕತೆ ಮತ್ತು ಬದ್ಧತೆ ಉಳಿಸಿಕೊಂಡ ನಾಡಿನ ಅನೇಕ ಜನಪರ ಮನಸ್ಸುಗಳು, ಲೇಖಕರು, ಪತ್ರಕರ್ತರು, ಹೋರಾಟಗಾರರು ಅಲ್ಲಿ ನೆರೆದಿದ್ದರು. ಈ ವರ್ಷದ ಕಾರ್ಯಕ್ರಮ ಕಾರಣಾಂತರಗಳಿಂದ ಕೆಲ ತಿಂಗಳುಗಳ ಕಾಲ ಮುಂದೂಡಲ್ಪಟ್ಟರೂ ಇದೇ ನವೆಂಬರ್ ತಿಂಗಳ 16 ಮತ್ತು 17 ರಂದು ಹಾಸನದಲ್ಲಿ ನಡೆಯಲಿದೆ. ವಿಷಯ : “ಅಭಿವ್ಯಕ್ತಿ ಕರ್ನಾಟಕ”. ದೇವನೂರು ಮಹಾದೇವ, ದಿನೇಶ್ ಅಮೀನ್‌ಮಟ್ಟು, ಹೆಚ್.ನಾಗವೇಣಿ, ಸುಗತ ಶ್ರೀನಿವಾಸರಾಜು, ರಹಮತ್ ತರೀಕೆರೆ, ಫಣಿರಾಜ್, ಇನ್ನೂ ಅನೇಕ ಚಿಂತಕರು, ಲೇಖಕರು, ಪತ್ರಕರ್ತರು ಪಾಲ್ಗೊಳ್ಳಲಿದ್ದಾರೆ ಮತ್ತು ಮಾತನಾಡಲಿದ್ದಾರೆ. ವರ್ತಮಾನದ ಓದುಗರಿಗೂ ಈ ಮೂಲಕ ಆಹ್ವಾನಿಸಲಾಗುತ್ತಿದೆ. ವರ್ತಮಾನ ಬಳಗದ ಹಲವು ಲೇಖಕರು ಮತ್ತು ಮಿತ್ರರೂ ಅಲ್ಲಿ ಬರಲಿದ್ದಾರೆ. ದಯವಿಟ್ಟು ಬಂದು, ಭಾಗವಹಿಸಿ. ಕಾರ್ಯಕ್ರಮಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಶನಿವಾರದ ರಾತ್ರಿ ವಸತಿ ಸೌಕರ್ಯ ಇರುತ್ತದೆ, ಮತ್ತು ಎರಡೂ ದಿನ ತಿಂಡಿ-ಊಟದ ವ್ಯವಸ್ಥೆ ಇರುತ್ತದೆ. ವಿವರಗಳಿಗೆ ಕೆಳಗಿನ ಆಹ್ವಾನ ಪತ್ರಿಕೆಯಲ್ಲಿರುವ ಆಯೋಜಕರನ್ನು ಸಂಪರ್ಕಿಸಿ ಮತ್ತು ಬರುವಿರಾದರೆ ಅವರಿಗೆ ತಿಳಿಸಿ. ಆಯೋಜನೆ ಮಾಡಲು ಅವರಿಗೂ ಸುಲಭವಾಗುತ್ತದೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ, ವರ್ತಮಾನ.ಕಾಮ್

’ನಾವು ನಮ್ಮಲ್ಲಿ’ಯ “ಅಭಿವ್ಯಕ್ತಿ ಕರ್ನಾಟಕ” ಕಾರ್ಯಕ್ರಮಕ್ಕೆ ಆಹ್ವಾನ

ಆತ್ಮೀಯರೇ,

“ಬಯಲು ಸಾಹಿತ್ಯ ವೇದಿಕೆ ಕೊಟ್ಟೂರು” ಸಮಾನ ಮನಸ್ಕ ಬರಹಗಾರರ, ಚಿಂತಕರ ಒಕ್ಕೂಟ. ಇದು ಪ್ರತಿವರ್ಷ ’ನಾವು ನಮ್ಮಲ್ಲಿ’ ಎಂಬ ಕಾರ್ಯಕ್ರಮ ನಡೆಸುವುದರ ಮೂಲಕ ರಾಜ್ಯದ ಬರಹಗಾರರನ್ನು, ಸಮಾನ ಮನಸ್ಕ ಗೆಳೆಯರನ್ನು ಒಂದೆಡೆ ಸೇರಿಸಿ ಅವರ ತುಡಿತಗಳಿಗೆ, ಮುಕ್ತ ಸಂವಾದಕ್ಕೆ ವೇದಿಕೆ ಒದಗಿಸುತ್ತ ಬಂದಿದೆ. ರಾಜಕೀಯವಾಗಿ, ಸಾಂಸ್ಕೃತಿಕ, ಸಾಮಾಜಿಕವಾಗಿ ಕರ್ನಾಟಕ ಎತ್ತ ಸಾಗುತ್ತಿದೆ ಎಂಬ ಬಗ್ಗೆ ಚರ್ಚಿಸಿದ್ದೇವೆ. ಬಂಡವಾಳಶಾಹಿಗಳ ಕೈ ಸೇರಿ ಮಾಧ್ಯಮ ಕ್ಷೇತ್ರ ಹೇಗೆ ಸ್ಥಿತ್ಯಂತರವಾಗುತ್ತಿದೆ ಎಂಬ ಆತಂಕಗಳನ್ನು ಹಂಚಿಕೊಂಡಿದ್ದೇವೆ. ಹಕ್ಕು, ದನಿ, ಸ್ಥಾನಮಾನ, ಸಾಮಾಜಿಕ ಬದಲಾವಣೆಗೆ ಕಾರಣವಾದ ಚಳವಳಿಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡೆವು. ಈಗ `ಅಭಿವ್ಯಕ್ತಿ’ಯನ್ನು ಕುರಿತು ಒಂದಿಷ್ಟು ಆಲೋಚಿಸಬೇಕಾದ ಹೊತ್ತು. ಮುಕ್ತವಾಗಿ ನಮ್ಮ ಅಭಿಪ್ರಾಯವನ್ನು ದಾಖಲಿಸಲಾಗದ, ಅಸೂಕ್ಷ್ಮವಾದ, ಸಂಯಮವೇ ಇಲ್ಲದ ಕಾಲಘಟ್ಟದತ್ತ ಸಮಾಜ ಹೊರಳುತ್ತಿದೆ. ಮಾಧ್ಯಮ ಕೇಂದ್ರಿತವಾದ ಈ ಕಾಲದಲ್ಲಿ ಅಭಿವ್ಯಕ್ತಿಗೆ ಧಕ್ಕೆ ತರುವಂತಹ ಹಲವು ಘಟನೆಗಳು ಭಯ ಹುಟ್ಟಿಸುವಂತೆ ನಡೆಯುತ್ತಿದ್ದರೆ, ಪ್ರಚೋದಕವಾದ, ಆವೇಶದ, ಹಿಂಸಾತ್ಮಕ ಮಾತು ಮತ್ತು ದೃಶ್ಯಗಳು ಇನ್ನೊಂದೆಡೆ ಅಭಿವ್ಯಕ್ತಿಯ ಹೆಸರಿನಲ್ಲೇ ಎಡಬಿಡದೇ ಭಿತ್ತರಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಸವಾಲು ಮತ್ತು ಅಭಿವ್ಯಕ್ತಿಯ ಹಲವು ಮಜಲುಗಳ ಸುತ್ತ ಚರ್ಚೆ ಮತ್ತು ಸಂವಾದ ನಡೆಸಲು ಎರಡು ದಿನಗಳ ವಿಚಾರ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಕನ್ನಡದ ಆರೋಗ್ಯವಂತ ಮನಸ್ಸುಗಳು ಪಾಲ್ಗೊಂಡು ಈ ಸಮಾವೇಶ ಒಂದು ಮಹತ್ವದ ಹೆಜ್ಜೆಯಾಗಬೇಕು ಎಂಬುದು ನಮ್ಮೆಲ್ಲರ ಆಶಯ. ಕಾರ್ಯ ಕ್ರಮದ ರೂಪುರೇಷೆಯನ್ನು ತಿಳಿಸುವ ಪತ್ರವನ್ನು ಇದರೊಂದಿಗೆ ಇರಿಸಿದ್ದೇವೆ.

ನಾವೆಲ್ಲರೂ ಜೊತೆಗಿದ್ದು ಸಂವಾದವನ್ನು ಯಶಸ್ವಿಯಾಗಿಸೋಣ.

ನಿಮ್ಮ ಬರವನ್ನು ನಿರೀಕ್ಷಿಸುವ
ನಾವು ನಮ್ಮಲ್ಲಿ ಬಳಗ

ನಾವು ನಮ್ಮಲ್ಲಿ - ಅಭಿವ್ಯಕ್ತಿ ಕರ್ನಾಟಕನಾವು ನಮ್ಮಲ್ಲಿ - ಅಭಿವ್ಯಕ್ತಿ ಕರ್ನಾಟಕ

ಈ ವಿಚಾರಗಳು ಅರ್ಥವಾಗುವುದು ಸೌಜನ್ಯ ನಮ್ಮವಳು ಅಂದುಕೊಂಡಾಗ ಮಾತ್ರ…

– ಶರ್ಮಿಷ್ಠ

ಕಳೆದ ಹದಿನೈದು ದಿನಗಳಿಂದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಲೇಖನಗಳಿಗೆ ಬರುತ್ತಿರುವ ಪ್ರತಿಕ್ರಿಯೆಯನ್ನು ಗಮನಿಸುವಾಗ ಕೆಲವು ಓದುಗರು, ಕಮ್ಯುನಿಸ್ಟ್‌ರು ನಡೆಸುತ್ತಿರುವ ಹೋರಾಟ ಎಂಬ ಕಾರಣಕ್ಕೆ ತಮ್ಮ ಆರ್‌ಎಸ್‌ಎಸ್ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಪ್ರಕರಣವನ್ನು, ಎಲ್ಲರ ಕಾಳಜಿಯನ್ನು ಹಾದಿ ತಪ್ಪಿಸುತ್ತಿಸುತ್ತಿದ್ದಾರೆ ಎಂದು ನನಗನ್ನಿಸುತ್ತಿದೆ. ಇಲ್ಲಿ ನಕ್ಸಲರ ವಿಷಯ ಯಾಕೆ ಬೇಕು?

ಇಲ್ಲಿ ಒಂದು ಸ್ಪಷ್ಟವಾಗಬೇಕು ಮಹೇಶ ತಿಮರೋಡಿ ವಿಶ್ವಹಿಂದು ಪರಿಷತ್‌ನ ಮುಖಂಡನೇ ಹೊರತು ಕಮ್ಯುನಿಸ್ಟ್ ಪಕ್ಷದವರಲ್ಲ. Dharmasthala_Templeಅವರು ಯಾಕೆ ಈ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ? ಜೊತೆಗೆ ಕೆಲವು ಹಿಂದೂ ಪರ ಸಂಘಟನೆಗಳು ಅವರ ಜೊತೆ ಹೋರಾmಕ್ಕೆ ಕೈ ಜೋಡಿಸಿವೆ. ಜೊತೆಗೆ ಬಿಜೆಪಿ ನಾಯಕರ್‍ಯಾರು ಹೆಗ್ಗಡೆಯವರನ್ನು ಕಾಂಗ್ರೆಸ್ ನಾಯಕರ ಮಟ್ಟಿಗೆ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ.

ಅವರ ವೈಯಕ್ತಿಕ ಹಿತಾಸಕ್ತಿ ಎಂದು ಎಲ್ಲರು ಕೊಡುವ ಕಾರಣಗಳನ್ನೇ ಇಟ್ಟುಕೊಳ್ಳೋಣ. ರಾಜಕೀಯ ಭವಿಷ್ಯಕ್ಕೆ ಹಾದಿಮಾಡಿಕೊಳ್ಳುತ್ತಿದ್ದಾರೆ ಎಂಬ ಆಪಾದನೆ ಕೇಳಿ ಬರುತ್ತಿದೆ. ಪೂಜಾರಿಯಂತಹ ಹಿರಿಯ ರಾಜಕಾರಣಿ ಚುನಾವಣೆಗಾಗಿ ತನ್ನತನವನ್ನೇ ಮಾರಿಕೊಂಡು ಚೀಪ್ ಗಿಮಿಕ್ ಮಾಡಲು ಹೊರಟಿರುವಾಗ, ಗೋಧ್ರಾ ಹತ್ಯಾಕಾಂಡದ ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ವಿಜೃಂಭಿಸುತ್ತಿರುವಾಗ, ರಿಯಲ್ ಎಸ್ಟೇಟ್ ಡಾನ್‌ಗಳು, ಗಣಿ ಕಳ್ಳರೆಲ್ಲ ಮಂತ್ರಿ ಪದವಿಗಾಗಿ ತಾಮುಂದು ತಾಮುಂದು ಎಂದು ಹೊರಟಿರುವಾಗ, ಅವರನ್ನೆಲ್ಲ ನಾವು ಸಹಿಸಿಕೊಂಡಿರುವಾಗ, ಸೌಜನ್ಯ ಪ್ರಕರಣವನ್ನು ಮುಂದಿಟ್ಟುಕೊಂಡು ಅದಕ್ಕಾಗಿ ಹೋರಾಟ ಮಾಡಿ, ರಾಜಕೀಯಕ್ಕೆ ಹಾದಿ ಮಾಡಿಕೊಳ್ಳುವದರಲ್ಲಿ ಯಾವ ತಪ್ಪಿದೆ? ಬಡವರಿಗಾದ ಅನ್ಯಾಯಕ್ಕೆ ಧ್ವನಿ ಎತ್ತುವುದು ಯಾವ ತಪ್ಪು?

ನಮಗೆ ರಾಜಕೀಯ ಪಕ್ಷಗಳ ನಿಲುವು ನೊಂದವರ ಶೋಷಿತರ ಪರವಾಗಿರಬೇಕು. ತಿಮರೋಡಿಯೋ, ಕಮ್ಯುನಿಸ್ಟರೋ ಶೋಷಿತರಿಗಾಗಿ ಬೀದಿ ಬೀದಿಯಲ್ಲಿ ಪ್ರತಿಭಟನೆ ಮಾಡುತ್ತಿರುವಾಗ ಮೊಸರಲ್ಲಿ ಕಲ್ಲು ಹುಡುಕುವ ಸಿನಿಕತನ ಯಾಕೆ? ಅವರನ್ನು ದೂಷಿಸುವರಿಗೆ ಸೌಜನ್ಯಳ ಪರವಾಗಿ ಹೋರಾಡಲು, ನ್ಯಾಯಕ್ಕಾಗಿ ಕಿಂಚಿತ್ತಾದರೂ ಮಾಡಲು ಸಾಧ್ಯವಿದೆಯೇ? ಬೇರೆಯವರ ಹೋರಾಟವನ್ನು ಯಾಕೆ ತೆಗಳಬೇಕು?

ಎಷ್ಟು ಜನ ರಾಜಕಾರಣಿಗಳು ತಮ್ಮ ಪ್ರಣಾಳಿಕೆಯಲ್ಲಿ ಬಡವರಿಗೆ ನ್ಯಾಯ ಒದಗಿಸುತ್ತೇವೆ ಎಂದು ಬರೆದುಕೊಳ್ಳುತ್ತಾರೆ? ಎಲ್ಲರೂ ಜನರನ್ನು ಮರಳು ಮಾಡಲು ಬಳಸುವುದು ಅಗ್ಗದ ಪ್ರಚಾರ ತಂತ್ರವನ್ನ ತಾನೇ? ಬಡವರು ಒಂದು ರೂಪಾಯಿ ಅಕ್ಕಿಗೆ, ಬಿಪಿಲ್ ಕಾರ್ಡ್‌ಗೆ, ಆಶ್ರಯ ಮನೆ ಕೇಳಲು ಮಾತ್ರ ಅರ್ಹರೇ?

ಸರ್ಕಾರ, ಪೋಲೀಸ್ ಇಲಾಖೆ ಎಲ್ಲರೂ sowjanya-heggadeಪ್ರಭಾವಿಗಳ ಕೃಪಾಕಟಾಕ್ಷದಲ್ಲಿರುವಾಗ ಆ ಬಡ ಕುಟುಂಬಕ್ಕೆ ನ್ಯಾಯ ಒದಗಿಸುವವರಾದರೂ ಯಾರು? ಅವರಿಗೆ ನ್ಯಾಯ ಕೇಳುವ ಹಕ್ಕಿಲ್ಲವೇ? ಯಾರಾದರೂ ಮುಂದೆ ಬಂದು ಧ್ವನಿ ಎತ್ತಿದರೆ ಆಗುವ ನಷ್ಟವಾದರೂ ಏನು? ಅನ್ಯಾಯವಾಗಿ ಯಾರದೋ ಕಾಮದಾಹಕ್ಕೆ ಬಲಿಯಾದ ಆಕೆಯ ಮೇಲೆ ಎಳ್ಳಷ್ಟೂ ಕನಿಕರ ತೋರದೆ, ಹೋರಾಟವನ್ನೇ ಆರೋಪಿಸಿದರೆ?

ಆಕೆಯ ಮನೆಯವರು ಆರೋಪಿಸಿದವರನ್ನು ಪೋಲಿಸರು ತನಿಖೆ ಮಾಡಿದ್ದು ತೀರಾ ಇತ್ತೀಚೆಗೆ ತಾನೆ? ಅಂದರೆ ಹೋರಾಟ ಆರಂಭವಾದ ಬಳಿಕ. ತನ್ನದೇ ಸಂಸ್ಥೆ, ತನ್ನದೇ ಗ್ರಾಮದ ಹುಡುಗಿಯ ಸಾವಿನ ತನಿಖೆಗೆ ಹಗ್ಗಡೆಯವರೇ ಮುಂದೆಬರಬಹುದಿತ್ತಲ್ಲ? ಕಮಿನಿಸ್ಟರೋ, ತಿಮ್ಮರೋಡಿಯೋ, ಪ್ರಗತಿಪರರೋ ಯಾಕೆ. ಸಿಬಿಐ ತನಿಖೆಗೆ ಒತ್ತಾಯಿಸಲು ಒಂದು ವರ್ಷದ ನಂತರದ ಹೋರಾಟ ಬೇಕಾಯಿತೋ? ಸಮಾಜ ಸುಧಾರಕ ಖಾವಂದರಿಗೆ, ಧರ್ಮನಿಷ್ಠರಿಗೆ ಕಾಲಬುಡದಲ್ಲೇ ಹೋದ ಅಮಾಯಕ ಜೀವ ಕಾಣಲೇ ಇಲ್ಲವೇ? ಯಾಕೆ ಬಡವರಿಗೆ ನ್ಯಾಯ ಎಂಬ ಉದಾಸೀನವೋ ಅಥವಾ ಅಸಡ್ಡೆಯೋ?

ತಾನೇ ಗೃಹಮಂತ್ರಿಗಳಿಗೆ ತನಿಖೆ ಮಾಡಿಸಿ ಎಂದ ಹೆಗ್ಗಡೆಯವರಿಗೆ ಸಿಬಿಐ ಹೋಗಲಿ ಕನಿಷ್ಠ ಪಕ್ಷ ಸಿಓಡಿ ತನಿಖೆ ಯಾವ ಮಟ್ಟದಲ್ಲಿದೆ ಎಂಬ ವಿಷಯವನ್ನಾದರೋ ಫಾಲೋಅಪ್ ಮಾಡಿ ತನಿಖೆ ತ್ವರಿತಗತಿಯಲ್ಲಿ ಸಾಗುವಂತೆ ಮಾಡಬಹುದಿತ್ತಲ್ಲಾ?

ಅಷ್ಟಕ್ಕೂ ಸೋಮನಾಥ ನಾಯಕ್ ಹಾಗು ನರೇಂದ್ರ ನಾಯಕ್ ವ್ಯಥಾ ಯಾರ ಮೇಲೂ ಆರೋಪ ಹೊರಿಸುವವರಲ್ಲ. ಅವರು ಸೌಜನ್ಯ ಪ್ರಕರಣದಿಂದ ಲಾಭ ಮಾಡಿಕೊಂಡು ಯಾವ ಚುನಾವಣೆಯನ್ನೂ ಸ್ಫರ್ಧಿಸಬೇಕಿಲ್ಲ. ಹೆಗ್ಗಡೆಯವರ ವಿರುದ್ಧ ಆರೋಪಕ್ಕೆ ದಾಖಲೆ ಕೇಳುವವರು , ಸ್ವಸಹಾಯ ಸಂಘ, ಭೂ ಮಾಫಿಯಾಕ್ಕೆ ಸಂಬಂಧಿಸಿದ ಅವ್ಯವಹಾರಗಳಿಗೆ ಸೋಮನಾಥ ನಾಯಕರನ್ನು ಸಂಪರ್ಕಿಸಬಹುದು. ಅವರಲ್ಲಿ ಆರ್‌ಟಿಐ ಮೂಲಕ ಪಡೆದ ದಾಖಲೆಗಳಿವೆ. ಅದು ಸುಳ್ಳಾಗಲು ಸಾಧ್ಯವಿಲ್ಲ ಅಲ್ಲವೇ? ಧರ್ಮಸ್ಥಳದಲ್ಲಿ ಆದ ಅಸಹಜ ಸಾವಿಗೆ ಸಂಬಂಧಪಟ್ಟಂತೆ ಮಾಧ್ಯಮಗಳಲ್ಲಿ ಈ ಮೊದಲೇ ಪ್ರಕಟವಾಗಿದೆ. ಪಿಪಿ ಹೆಗ್ಡೆಯಂತಹ ಲಾಯರ್ ಮಾನಹಾನಿ ಎಂಬ ಬ್ರಹ್ಮಾಸ್ತ್ರವನ್ನು ಹಿಡಿದು ನಿಂತಿರುವಾಗ ಯಾರೂ ಸುಳ್ಳು ಸುದ್ದಿ ಪ್ರಕಟಿಸುವಂತಹ ಹುಂಬತನ ಕೈ ಹಾಕುವುದಿಲ್ಲ. ಬೇಕಾದವರು ಆರ್‌ಟಿಐ ಮೂಲಕ ಅಸಹಜ JusticeForSowjanyaಸಾವಿನ ಬಗ್ಗೆ ಮಾಹಿತಿ ಪಡೆದುಕೊಂಡು ಆರೋಪ ಸುಳ್ಳು ಎಂದು ಸಾಬೀತುಪಡಿಸಬಹುದು. ಇನ್ನೂ ಅಗತ್ಯವಿದ್ದರೆ ಧರ್ಮಸ್ಥಳದಲ್ಲಿ ತಿರುಗಾಡಿ ಜನರ ಹತ್ತಿರ ಮಾತನಾಡಿದರೆ ಸತ್ಯಸಂಧ, ಧರ್ಮಸಂಧರ ಬಗೆಗೆ, ಅಲ್ಲಿನ ರಿಯಲ್ ಎಸ್ಟೇಟ್ ಮಾಫಿಯಾದ ಬಗ್ಗೆ ಹೆಚ್ಚಿನ ವಿಷಯ ತಿಳಿಯುತ್ತದೆ.

ಅಷ್ಟಕ್ಕೂ ಈ ಎಲ್ಲಾ ವಿಚಾರಗಳು ಅರ್ಥವಾಗುವುದು ಸೌಜನ್ಯ ನಮ್ಮವಳು ಅಂದುಕೊಂಡಾಗ ಮಾತ್ರ. ಸತ್ತದ್ದು ಯಾವುದೋ ಜೀವ, ಹತ್ತರೊಂದಿಗೆ ಇದು ಹನ್ನೊಂದನೇ ರೇಪ್ ಪ್ರಕರಣ ಅಂದುಕೊಂಡಾಗಲ್ಲ. ನಮ್ಮ ಮನೆಮಗಳಿಗೇ ಈ ಸ್ಥಿತಿ ಬಂದಿದ್ದರೆ? ಸೌಜನ್ಯಳ ಅಸಹಾಯಕ ತಂದೆತಾಯಿಯ ಸ್ಥಾನದಲ್ಲಿ ನಾವಿದ್ದಿದ್ದರೆ, ಇದೇ ಕೊಂಕು ಮಾತು ಹೇಳುತ್ತಿದ್ದೆವಾ?