Category Archives: ಇತರೆ

ವಿಭಾಗಿಸಿಲ್ಲದ ಲೇಖನಗಳು

ಕಣ್ಣಿಗೆ ಕಾಣಿಸುತ್ತಿರುವ ಐಸಾನ್ ಧೂಮಕೇತು

– ಅಹಮದ್ ಹಗರೆ

ಆಕಾಶದ ರಂಗಮಂಟಪದಲ್ಲಿ ನಕ್ಷತ್ರ, ಗ್ರಹ, ಚಂದ್ರ, ಗ್ರಹಣಗಳಿಗೆ ಹೊರತಾಗಿ ಇನ್ನೊಬ್ಬ ಹೊಸ ಅತಿಥಿ ಶ್ವೇತ ವರ್ಣದ ದೇಹ, ಕೂದಲರಾಶಿ ಹೊದ್ದುಕೊಂಡು ಮಂಗಳನನ್ನು ಸವರಿ ಸೂರ್ಯನಿಗೆ ಪ್ರದಕ್ಷಿಣೆ ಸಲ್ಲಿಸಲು ಪೂರ್ವದಂಚಿನಿಂದ ಬರುತ್ತಿದ್ದಾನೆ “ಐಸಾನ್” ಧೂಮಕೇತು.

ರಷ್ಯ ದೇಶದ ವಿಟಾಲಿ ಲೆವಸ್ಕಿ ಮತ್ತು ಅರ್‍ಟಿಯೋಂ ನೋವಿಚೋಂಕ್ ಎನ್ನುವ ಖಗೋಳತಜ್ಞರು ಸೆಪ್ಟೆಂಬರ್ 2012 ರಂದು CometISONNov15_m_1125ತಮ್ಮ ಟೆಲೆಸ್ಕೋಪನ್ನು ಆಕಾಶದತ್ತ ತಿರುಗಿಸಿದಾಗ ಅಕಸ್ಮಾತಾಗಿ ಸೆರೆಸಿಕ್ಕ ಆಕೃತಿಯ ಬೆನ್ನ ಹತ್ತಿ ಪತ್ತೆ ಹಚ್ಚಿದಾಗ ಪಕ್ಕದ ಓರ್‍ಟನ ಮೇಘದಿಂದ ಸೂರ್ಯನ ನೋಡಲು ಭೂಮಿಮಾರ್ಗವಾಗಿ ಓರ್ವ ಅತಿಥಿ ಬರುತ್ತಿದ್ದಾನೆ ಎಂದು ತಿಳಿಯಿತು ಈ ಪತ್ತೆ ಕಾರ್ಯ ಆ ಖಗೋಳತಜ್ಞರಿಗೆ ರಷ್ಯದ ಕಿಸ್ಲೊಡೋವಸ್ಕ್‌ನಲ್ಲಿರುವ ವೈಜ್ಞಾನಿಕ ವೀಕ್ಷಣಾ ಜಾಲ (International Scientific Optical Network) ದಲ್ಲಿ ಪತ್ತೆಯಾದುದರಿಂದ ಆ ಧೂಮಕೇತುವಿಗೆ ಆ ಜಾಲಾದ ಸಂಕ್ಷಿಪ್ತ ರೂಪ ಐಸಾನ್(ISON) ಎಂದು ಹೆಸರಿಸಿದರು. ಈ ಶತಮಾನದ ಅತ್ಯಂತ ಪ್ರಖರ ಹಾಗೂ ಮಹತ್ತರ ಧೂಮಕೇತು ಇದು ಎಂದು ವಿಜ್ಞಾನಿಗಳ ಲೆಕ್ಕಾಚಾರ. ಅಕ್ಟೋಬರ್ 1 ರಂದು ಮಂಗಳ ಕಕ್ಷೆ ಸವರಿಕೊಂಡು ನವೆಂಬರ್ ಮೊದಲ ವಾರ ಭೂ ಗಡಿಯನ್ನು ಪ್ರವೇಶಿಸಿದ ಇಸಾನ್ ಈಗ ಬರಿಗಣ್ಣಿಗೆ ಗೋಚರಿಸಲಾರಂಬಿಸಿದೆ. ಇಂದು (ನವೆಂಬರ್ 28) ಸೂರ್ಯನಿಗೆ ಅತಿ ಸನಿಹ ಬಂದು ಮುಂದಿನ ದಿನಗಳಲ್ಲಿ ಸ್ವಲ್ಪಸ್ವಲ್ಪವೇ ಮಂಕಾಗುತ್ತಾ 2014 ರ ಜನವರಿ 14 ಕ್ಕೆ ಕೊನೆ ದರ್ಶನ ನೀಡಿ ಕಣ್ಮರೆಯಾಗುವುದು. (ಅದಾದ ನಂತರ ದೂರದರ್ಶಕದಲ್ಲಿ ನೋಡಬಹುದು).

ಇತಿಹಾಸ, ಪುರಾಣಗಳಲ್ಲಿ ಧೂಮಕೇತು:

ಆಕಾಶದಲ್ಲೊಂದು ಕಾಯ ಅದರ ಸುತ್ತ ದಟ್ಟ ಧೂಮದ ಹೊದಿಕೆ, ಅದರ ಹಿಂದೆ ಕುಮದೆ ಜಳಕ ಮಾಡಿ ಹರಿಯ ಬಿಟ್ಟು ನವೀರಾದ ಕೂದಲಂತೆ ಕಂಡ ಅದಕ್ಕೆ ಗ್ರೀಕರು Comet ಎಂದರು. ಕಾಮೆಟ್ ಎಂದರೆ ಗ್ರೀಕ್ ಭಾಷೆಯಲ್ಲಿ ಕೂದಲು ಎಂದರ್ಥ. ಬೇರೆ ಬೇರೆ ದೇಶದ ಜನ ಅವರವರ ಕಲ್ಪನೆಯಂತೆ (ಸಾಂಸ್ಕೃತಿಕ ಶೈಲಿಯಲ್ಲಿ) ರೂಪಕೊಟ್ಟು ಹೆಸರಿಸಿದರು. ಜ಼ೈರೆಯವರು ಕೂದಲ ನಕ್ಷತ್ರವೆಂದು, ಚೀನಿಯರು ಪೊರಕೆ ಎಂದು, ಟೋಂಗೋ ಜನ ಧೂಳಿನ ನಕ್ಷತ್ರವೆಂದು, ಜೆರೂಸಲಂನವರು ಖಡ್ಗ ಹಾಗೆ ಜರ್ಮನ್ನರು ಸ್ವಸ್ತಿಕ್ ರೂಪದಲ್ಲಿ ಭಾರತೀಯರು ತ್ರಿಶೂಲದ ಆಕೃತಿಯಲ್ಲಿ ಕಲ್ಪಿಸಿ ದಾಖಲಿಸಿದರು.

ಧರ್ಮ ಮತ್ತು ವಿಜ್ಞಾನ ಸಮನಾಂತರವಾಗಿ ಬೆಳೆಯುತ್ತಿದ್ದ ಕಾಲವದು. ಕ್ರಿ.ಶ.6 ನೇ ಶತಮಾನದಿಂದ 12 ನೇ ಶತಮಾನದವರೆಗೆ ಖಗೋಳ ಮಂದಗತಿಯಲ್ಲಿ ಸಾಗಿ ಬಂದಿತು. (ಆರ್ಯಭಟ, ವಾರಹಮಿಹಿರ, ಬ್ರಹ್ಮಗುಪ್ತರು ಅಲ್ಲಲ್ಲಿ ಕಂಡರು.) 12 ನೇ ಶತಮಾನದಿಂದ 16 ನೇ ಶತಮಾನದವರೆಗೆ (ನಿಖೋಲಸ್ ಕೋಪರ್ನಿಕಸ್ ಹುಟ್ಟುವವರೆಗೂ) ಖಗೋಳ ವಿಜ್ಞಾನ ಸಂಪೂರ್ಣವಾಗಿ ನೆಲಕಚ್ಚಿಬಿಟ್ಟಿತು. ಆ ಸಂದರ್ಭದಲ್ಲಿ ಅವಕಾಶವಾದಿಗಳು ಖಗೋಳವನ್ನು ತಿರುಚಿ ಧೂಮಕೇತುವನ್ನು ಅನಿಷ್ಟವನ್ನಾಗಿಸಿ, ಗ್ರಹಣವನ್ನು ಭೀಕರವಾಗಿಸಿ ಮೂಢನಂಬಿಕೆಗಳನ್ನು ಬಿತ್ತಿದರು.

ಶೇಕ್ಸ್‌ಪಿಯರ್‌ನ ಜೂಲಿಯಸ್ ಸೀಸರ್ ನಾಟಕದಲ್ಲಿ ಸೀಸರ್ ಕೊಲೆಯಾಗುವ ಹಿಂದಿನ ರಾತ್ರಿ ಆಗಸದಲ್ಲಿ ಧೂಮಕೇತು ಕಾಣಿಸಿಕೊಂಡಿತ್ತಂತೆ.comet_halley ಹಾಗಾಗಿ ಸೀಸರ್ ಸತ್ತ ಎಂದು ವದಂತಿ ಹಬ್ಬುತ್ತವೆ. ಇದು ಕಥೆಯ ಹಂದರ. ಆದರೆ ಅದೇ ಕವಿ ಕೊನೆಯಲ್ಲಿ ಹೀಗೆ ವ್ಯಂಗ್ಯವಾಡಿದ್ದಾನೆ: “ಸಾಮ್ರಾಟರು ಸತ್ತರೆ ಧೂಮಕೇತು ಗೋಚರಿಸುತ್ತದೆ. ಆದರೆ ಭಿಕ್ಷುಕರು ಸಾಯುವಾಗ ಮೂಡುವುದೇ ಇಲ್ಲ ಅಲ್ಲವೆ?”

ಮೆಕ್ಷಿಕೊದ ರಾಜ ಧೂಮಕೇತುವನ್ನು ವೀಕ್ಷಿಸಿ ದೇವಲೋಕದಿಂದ ದೇವಧೂತ ನಮಗೆ ಶುಭ ಸಂದೇಶ ತಂದಿದ್ದಾನೆ, ಅದನ್ನು ಎಲ್ಲರೂ ನೋಡಬೇಕೆಂದು ಆಜ್ಞೆ ಹೊರಡಿಸಿದ, ಏಕೆಂದರೆ ಹಿಂದಿನ ದಿನ ಆತ ಯುದ್ದದಲ್ಲಿ ಜಯಶಾಲಿಯಾಗಿದ್ದ.

ಕ್ರೈಸ್ತರಿಗೆ ಧೂಮಕೇತು ಇಂದಿಗೂ ಶುಭದ ಸಂಕೇತ. ಏಸುಕ್ರಿಸ್ತ ಜನಿಸಿದಾಗ ಆಗಸದಲ್ಲಿ ಧೂಮಕೇತು ಎರಡು ಭಾಗಗಳಾಗಿ ಗೋಚರಿಸುತ್ತಿತ್ತಂತೆ. ಅದನ್ನು ಬೆತ್ಲೆಹ್ಯಾಮಿನ ಚರ್ಚಿನ ಗೋಡೆಯ ಮೇಲೆ ದಾಖಲಿಸಿದರು. ಧೂಮಕೇತುಗಳನ್ನು ಇಂದಿಗೂ ಬೆತ್ಲೆಹ್ಯಾಮಿನ ನಕ್ಷತ್ರಗಳೆಂದೇ ಪೂಜಿಸುತ್ತಾರೆ.

ಕ್ರಿ.ಶ.1528 ರಲ್ಲಿ ಅಂಬ್ರೋಸ್ ಪ್ಯೂರೆ ಎಂಬ ವೈದ್ಯ ಒಂದು ಧೂಮಕೇತುವನ್ನು ನೋಡಿ ಅದನ್ನು ಭೀಕರವಾಗಿ ವರ್ಣಿಸುತ್ತಾನೆ. ಅದನ್ನು ಓದಿದ ನೂರಾರು ಜನ ಹೆದರಿ ಆತ್ಮಹತೆ ಮಾಡಿಕೊಂಡರು, ಕೇವಲ ಹದಿನೈದು ವರ್ಷಗಳ ಹಿಂದೆ (1997) ಹೇಲ್‌-ಬಾಪ್ ಧೂಮಕೇತು ಕಾಣಿಸಿಕೊಂಡಾಗ ಅಮೇರಿಕಾದಲ್ಲಿ ನಡೆದ ಘಟನೆ ಇಡೀ ವಿಶ್ವವೇ ನಾಚುವಂತದ್ದು, ಅನ್ಯಗ್ರಹದಿಂದ ದೇವಧೂತರು ನಮ್ಮನ್ನು ಕರೆದೊಯ್ಯಲು ಹೇಲ್-ಬಾಪ್ ಜೊತೆಗೆ ಬರುತ್ತಿದ್ದಾರೆ ಎಂದು ಬಹಳ ಉನ್ಮತ್ತರಾಗಿ ಕ್ಯಾಲಿಫೊರ್ನಿಯಾದ ಸ್ಯಾನ್‌ಡಿಯಾಗೂ ಪಟ್ಟಣದಲ್ಲಿ 39 ಜನ ಮಾರ್ಚ್ 23 ರಿಂದ 25 ರ ಅವಧಿಯಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡದ್ದು ಈ ವಿಜ್ಞಾನ ಯುಗದಲ್ಲೂ ಮಾನವ ಇತಿಹಾಸಕ್ಕೆ ಕಪ್ಪುಚುಕ್ಕೆ.

ಹ್ಯಾಲಿ 1910 ರಲ್ಲಿ ಭೂಮಿಗೆ ಹತ್ತಿರದಲ್ಲಿಯೇ ಹಾದು ಹೋಯಿತು, 1996 ರಲ್ಲಿ ಮೂಡಿದ್ದ ಹ್ಯಾಲಿಯ ದೂಳನ್ನು ಸಂಗ್ರಹ ಮಾಡಲಾಗಿದೆ. 1996 ರಲ್ಲಿ ಹಯಾಕುಟಾಕೆಯನ್ನು, 1997 ರಲ್ಲಿ ಹೇಲ್‌-ಬಾಪ್ ಅನ್ನೂ ನೋಡಿದ್ದೇವೆ. ಈಗ ಇಸಾನ್ ಅನ್ನು ನೋಡುತ್ತಿದ್ದೇವೆ.

ಭಾರತೀಯ ಪುರಾಣಗಳಲ್ಲಿ ಧೂಮಕೇತು:

ವೇದಕಾಲದಲ್ಲಿ: ಧೂಮಕೇತುವಿನ ಉಲ್ಲೇಖ ಕನಿಷ್ಟ ಒಂದು ಸಾವಿರ ಪುಸ್ತಕಗಳಲ್ಲಿ ಕಂಡು ಬಂದಿದೆ. ಅವುಗಳಲ್ಲಿ ಪ್ರಮುಖವಾದವು ಮಹಾಕಾವ್ಯ, ಪುರಾಣ, ತಂತ್ರ, ಜೈನಶಾಸ್ತ್ರ, ಅರ್ಥಶಾಸ್ತ್ರ, ಖಗೋಳಶಾಸ್ತ್ರ, ಜ್ಯೋತಿಶಾಸ್ತ್ರ, ಔಷಧಶಾಸ್ತ್ರ , ಕಾವ್ಯ, ನಾಟಕ, ಭಾಗವತ ಇನ್ನೂ ಮುಂತಾದ ಸಂಸ್ಕೃತ ಲೇಖನಗಳಲ್ಲಿ ಕಂಡು ಬಂದಿದೆ.
ಋಗ್ವೇದ 7.33 ರಲ್ಲಿ ಸೂರ್ಯನ ಕಣಗಳಿಂದ (ಧೂಳಿನ) ಧೂಮಕೇತು ಸೃಷ್ಟಿಯಾಗಿರುವುದನ್ನು ನಮೂದಿಸಲಾಗಿದೆ ಹಾಗೂ ಅದಕ್ಕೆ “ವಸಿಷ್ಟಪುತ್ರ”ನೆಂದು ಗುರುತಿಸಲಾಗಿದೆ, ಯಜುರ್ವೇದದಲ್ಲೂ ಹೀಗೆ ಉಲ್ಲೇಖಿತವಾಗಿದೆ. ಅಥರ್ವಣ ವೇದದಲ್ಲಿ ಧೂಮಕೇತುವನ್ನು “ಅರುಣ” ಎಂದು ಹೆಸರಿಸಲಾಗಿದೆ. ಅದರ ಉಲ್ಲೇಖ ಹೀಗಿದೆ: ಬಿಳಿಗೋಡೆ (ಅರುಣ)ಯ ಸುತ್ತ ಕೆಂಪು ಚೌಳಿ (ಜಡೆ). ಇದು ಬೀಳುವ ನಕ್ಷತ್ರ (ಉಲ್ಕೆ)ಗಳಿಗೆ ಡಿಕ್ಕಿ ಹೊಡೆಯುತ್ತಿತ್ತೆಂದು.
ರಾಮಾಯಣದಲ್ಲಿ: ರಾಮ-ರಾವಣರ ಯುದ್ಧ ನಡೆಯುವಾಗ ಮೂಲ ನಕ್ಷತ್ರ ಪುಂಜದಲ್ಲಿ ಧೂಮಕೇತು ಕಾಣುತಿತ್ತು ಎಂದು ದಾಖಲಿಸಿದ್ದಾನೆ ವಾಲ್ಮೀಕಿ.
ಮಹಾಭಾರತದಲ್ಲಿ: ದೇವತೆಗಳ ಒಡೆಯ ಇಂದ್ರ ತನ್ನ ವಜ್ರಾಯುಧದಿಂದ ಸ್ಕಂದನ ತಲೆಯನ್ನು 2 ಭಾಗವಾಗಿ ಕತ್ತರಿಸಿ ಬಿಸುಟ. ಅದು ಆಕಾಶದಲ್ಲಿ ಹೊಗೆಯುಗುಳುತ್ತ ತೇಲುತಿತ್ತು, ಜನ ಭಯಾಶ್ಚರ್ಯಗಳಿಂದ ನೋಡುತ್ತಿದ್ದರು ಎಂದು. ಭೀಷ್ಮಪರ್ವದಲ್ಲಿ ಧೂಮಕೇತು ಎರಡು ಸೀಳಾಗಿದ್ದನ್ನು ಹೇಳಲಾಗುತ್ತದೆ
ಬೃಹದ್ ಸಂಹಿತೆಯಲ್ಲಿ 108 ತರಹದ ಧೂಮಕೇತುವನ್ನು ವೈಜ್ಞಾನಿಕವಾಗಿ ಚಿತ್ರಿಸಲಾಗಿದೆ. ಅವುಗಳನ್ನು ನಕ್ಷತ್ರ ಸಂಜಾತ, ಗ್ರಹ ಸಂಜಾತ, ಭೂಕಕ್ಷು ಸಂಜಾತ ಎಂದು ಮೂರು ಭಾಗಗಳಾಗಿ ವಿಂಗಡಿಸಿದ್ದಾನೆ ಬ್ರಹ್ಮಗುಪ್ತ. ಆ ಕಾಲಘಟ್ಟಗಳಲ್ಲಿ ಕಂಡುಬಂದ ಧೂಮಕೇತುಗಳನ್ನು ಹೀಗೆ ಹೆಸರಿಸಿದ್ದಾರೆ: ರಿಷಿಕೇತು, ವಕ್ರಶಿಖ, ತ್ರಿಚುಲಾ, ತಾರಾಹ, ಶೂಲಾಗ್ರಹ ಮತ್ತು ಹರಿರಾಗೋಪಾಯ.
16 ನೇ ಶತಮಾನದಲ್ಲಿ ಏಕನಾಥ ತನ್ನ ಏಕನಾಥ ಭಾಗವತದಲ್ಲಿ ಒಂದೇ ಕಾಲದಲ್ಲಿ ಮೂರು ಧೂಮಕೇತುಗಳು ಗೋಚರಿಸಿದ್ದವು, ಅವುಗಳಲ್ಲೊಂದು ಹಗಲು ಹೊತ್ತಿನಲ್ಲೂ ಗೋಚರಿಸುತ್ತಿತ್ತು ಎನ್ನುತ್ತ, ಆ ಧೂಮಕೇತುಗಳಿಗೆ ಧೂಮಕೇತು, ದಂಡಕೇತು, ಶಿಖಾಕೇತು ಎಂದು ಹೆಸರಿಸಿ, ಶಿಕಾಕೇತುವಿಗೆ ಅದ್ಭುತವಾದ ಬಾಲವಿದ್ದು ಹಗಲಿನಲ್ಲೂ ಪ್ರಖರಿಸುತ್ತಿದ್ದ ಎಂದು ನಮೂದಿಸಿದ್ದಾನೆ.

ಧೂಮಕೇತುವಿಗೆ ಬಾಲವೇಕೆ?:

ಅನಂತ ದೂರದಲ್ಲಿರುವ ಧೂಮಕೇತುಗಳಿಗೆ ಸೂರ್ಯನ ಗುರುತ್ವ ಬಲ ಅತ್ಯಂತ ಕಡಿಮೆ, ಅದರ ಆಜುಬಾಜಿನಲ್ಲಿ ಯಾವುದೇ ನಕ್ಷತ್ರ ಹಾದು ಹೋದಾಗ ಸ್ವಲ್ಪ ಈ ಮೋಡಕ್ಕೆ ಗುರುತ್ವ ಕ್ಷೋಭೆ ಉಂಟಾಗುತ್ತದೆ. ನಿದ್ರಿಸುತ್ತಿದ್ದ ವ್ಯಕ್ತಿಗೆ ಬಸ್ ಬ್ರೇಕ್ ಹಾಕಿದಾಗ ಜೆರ್ಕ್ ಹೊಡೆದಾಗ ಡ್ರೈವರ್ ಮೇಲೆ ಸಿಟ್ಟುಗೊಂಡು ಹೌಹಾರುವಂತೆ ಮಲಗಿದ್ದ ಧೂಮಕೇತುವಿಗೆ ನಿದ್ರಾಭಂಗವಾದ ತಪ್ಪಿಗೆ ಸಮೀಪದ ನಕ್ಷತ್ರ(ಸೂರ್ಯ)ಕ್ಕೆ ಮುತ್ತಿಗೆ ಹಾಕಲು ಧಾವಿಸಿಬರುತ್ತದೆ. cometಬರುವ ಹಾದಿಯಲ್ಲಿ ಕೆಲವು ಅರ್ಧಕ್ಕೆ ನಾಶವಾಗುತ್ತವೆ. ಕೆಲವು ಸುಮ್ಮನೆ ಎಚ್ಚರವಾಗಿ ಮತ್ತೆ ಮಲಗುತ್ತವೆ. ಕೆಲವು ಪಟ್ಟು ಬಿಡದೆ ಧಾವಿಸಿಬರುತ್ತವೆ. ಆಗ ಅದೊಂದು ಪುಟ್ಟ ಗಾತ್ರದ ಹಿಮದ ಕಲ್ಲು. ಯಾವುದೇ ಕೋಮ ಬಾಲಗಳಾಗಲೀ ಇರುವುದಿಲ್ಲ. ಸ್ವಲ್ಪ ಸ್ವಲ್ಪ ಸನಿಹ ಸಮೀಪಿಸುತ್ತಿರುವಂತೆಯೇ ಗುರುತ್ವ ಬಲ ಹೆಚ್ಚಾಗಿ ವೇಗವಾಗಿ ಧಾವಿಸಿ ಬರಲಾರಂಭಿಸುತ್ತದೆ, ಶಾಖ ಹೆಚ್ಚಾಗಿ ಕರಗಲಾರಂಭಿಸುತ್ತದೆ. ಸುಮಾರು ಗುರುವಿನ ಕಕ್ಷೆಯಷ್ಟು ಸಮೀಪ ಬಂದಾಗ ಕರಗುತ್ತಿರುವ ಮಂಜು ಬಾಷ್ಪೀಕರಣಗೊಳ್ಳಲು ಪ್ರಾರಂಭಿಸುತ್ತದೆ. ಅನಿಲ ರೂಪದ ಮಂಜು ಮೂಲಧಾತುವಿನ ಸುತ್ತ ಕೋಮವಾಗಿ ರೂಪುಗೊಳ್ಳುತ್ತದೆ. ಅದರಲ್ಲಿ ನೀರು, ಇಂಗಾಲದ ಡೈಆಕ್ಸೈಡ್, ಇಂಗಾಲದ ಮಾನಾಕ್ಸೈಡ್ ಬೇರೆ ಬೇರೆ ಅನಿಲಗಳು ಘನೀಕೃತಗೊಂಡಿರುತ್ತದೆ. ಇದರ ಗರ್ಭದಲ್ಲಿ ಪುಟ್ಟ ಪುಟ್ಟ ಧೂಳಿನ ಕಣಗಳಿರುತ್ತವೆ. ಈ ಸಂದರ್ಬದಲ್ಲಿ ಧೂಮಕೇತು ಬರೇಗಣ್ಣಿಗೆ ಕಾಣಿಸುವುದಿಲ್ಲ. ಪ್ರಬಲ ದೂರದರ್ಶನಕ್ಕೆ ಮಾತ್ರ ಮಸುಕಾಗಿ ಕಾಣಿಸುತ್ತವೆ.

ಧೂಮಕೇತು ಸೂರ್ಯನಿಗೆ ಸುಮಾರು 30 ಕೋಟಿ ಕಿ.ಮೀ ನಷ್ಟು ಸಮೀಪ ಬಂದಾಗ ಹುರುಪಿನ ಹೋರಾಟ ಪ್ರಾರಂಭವಾಗುತ್ತದೆ. ಆಗ ವಿಜ್ಞಾನಿಗಳಿಗೆ ಹಬ್ಬ. ಧೂಮಕೇತುಗಳ ಮೇಲೆ ಸೂರ್ಯನ ಅತೀ ನೇರಳಾತೀತ ಕಿರಣಗಳ ಬಾಣ ಧೂಮಕೇತುವಿನ ಕೋಮದಲ್ಲಿರುವ ನೀರನ್ನು ಬಾಷ್ಪೀಕರಿಸಿ ಜಲಜನಕದ ಮೋಡವನ್ನಾಗಿ ಪರಿವರ್ತಿಸಲಾರಂಭಿಸುತ್ತದೆ. ಆ ಮೋಡ ಹೆದರಿ ಹಿಂಜರಿಯುವಂತೆ ಸೂರ್ಯನ ವಿರುದ್ಧ ದಿಕ್ಕಿಗೆ ಬಲವಾಗಿ ಓಡಲಾರಂಭಿಸುತ್ತದೆ. ಸೂರ್ಯನ ಇನ್ನೋಮ್ದು ಬಾಣವಾದ “ಸೌರಮಾರುತಗಳು” ಸೆಕೆಂಡಿಗೆ 400 ಕಿ.ಮೀ ವೇಗವಾಗಿ ಬೀಸುತ್ತಿರುತ್ತವೆ. ಅವಗೆಂಪು ಕಿರಣಗಳನ್ನು ತುಂಬಿಕೊಂಡ ಈ ಬಾಣ ಧೂಮಕೇತುವನ್ನು ಅಯಾನಿಕರಿಸಿ ಇನ್ನೊಂದು ಬಾಲ ಬೆಳೆಯಲಾರಂಭಿಸುತ್ತದೆ. ಇದಕ್ಕೆ ಅಯಾನುಬಾಲವೆಂದು ಹೆಸರು (ಅಯಾನೀಕರಣ ಎಂದರೆ, ಧೂಮಕೇತು ಮತ್ತು ಸೌರಮಾರುತಗಳ ನಡುವೆ ಅಯಾನುಗಳು (ಪ್ರೋಟಾನ್ ಮತ್ತು ಎಲೆಕ್ಟ್ರಾನುಗಳು)ಪಡೆದುಕೊಳ್ಳುವ ಕ್ರಿಯೆ).

ಪ್ರೋಟಾನ್ ಮತ್ತು ಎಲೆಕ್ಟ್ರಾನ್‌ಗಳ ಕಾಂತಕ್ಷೇತ್ರ (magnetic field)ದ ಬಲವರ್ಧನೆಗೆ ಸಿಲುಕೆ ತಿರುಗಲಾರಂಭಿಸುವಾಗ ಬಾಲ ಗಂಟುಗಂಟಾಗಿ ಒಡೆಯಲಾರಂಭಿಸಿ 1 -> 2 -> 4 -> 8…. ಆಗಿ ಆಕಾರಗಳು ಬರಲಾರಂಭಿಸುತ್ತದೆ.

ಸೂರ್ಯರಶ್ಮಿಗಳು ಧೂಮಕೇತುವಿನ ಬಾಲದ ಧೂಳು ಮತ್ತು ಅನಿಲದ ಕಣಗಳ ಮೇಲೆ ಬಿದ್ದಾಗ(ಸೂರ್ಯನ ಕಿರಣಕ್ಕೂ ತನ್ನದೇ ಆದ ತರಂಗ ದೂರವಿರುತ್ತದೆ. ಅಯಾನೀಕರಣವಾಗುವ ಸಂದರ್ಬದಲ್ಲಿ ತರಂಗ ಬದಲಾವಣೆಯಾಗುತ್ತದೆ) ಧೂಳಿನ ಕಣಗಳು ಸೂರ್ಯನ ರಶ್ಮಿಯನ್ನು ಪ್ರತಿಫಲಿಸಿ ಅದರ(ಧೂಮಕೇತುವಿನ) ಸ್ವಲ್ಪ ಬೆಳಕು ಹೊರಸೂಸುವುದು. ಈ ಕ್ರಿಯೆಗೆ ಪ್ಲೋರೋಸೆನ್ಸ್ ಎನ್ನುತ್ತಾರೆ. ಆ ಬೆಳಕೇ ನಮಗೆ ಧೂಮಕೇತುವಾಗಿ ಗೋಚರಿಸಿದಂತೆ ಕಾಣುತ್ತದೆ.

ರಾಜ್ಯದಲ್ಲಿ ಐಸಾನ್ ಧೂಮಕೇತು ವೀಕ್ಷಣೆ:

ಈಗ ಭೂಮಿಗೆ ಅತ್ಯಂತ ಸಮೀಪದಲ್ಲಿ Comet_ison_Dec1_17ಹಾದುಹೋಗುತಿರುವ ‘ಐಸಾನ್’ ಮಹಾಧೂಮಕೇತು ಡಿ. 10 ರಿಂದ 20 ರವರೆಗೆ ಬರಿಗಣ್ಣಿಗೆ ಗೋಚರಿಸಲಿದೆ. ಈ ಖಗೋಳ ವಿದ್ಯಮಾನವನ್ನು ಜನರ ಬಳಿಗೆ ಕೊಂಡೊಯ್ಯಲು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ಭಾರತ ಜ್ಞಾನ ವಿಜ್ಞಾನ ಸಮಿತಿಯು ಜಂಟಿಯಾಗಿ ‘ಐ ಆನ್ ಐಸಾನ್ – ಧೂಮಕೇತು ವೀಕ್ಷಣೆ ಆಂದೋಲನ’ವನ್ನು ಆಯೋಜಿಸಿವೆ.

“ಮಹಾತ್ಮ” – ಗಾಂಧಿ ಜಯಂತಿ ಕಥಾ ಸ್ಪರ್ಧೆ 2013 ರ ಬಹುಮಾನಿತ ಕತೆ

 – ವಿಶ್ವಾಸ್ ಪ್ರಭಾಕರ್ ಭಾರದ್ವಾಜ್

ಕಳೆದ ಮೂರು ದಿನಗಳಿಂದ ‘ಗಾಂಧಿ’ ಎನ್ನುವ ಮನುಷ್ಯ ನಿತ್ಯವೂ ತಪ್ಪದಂತೆ ಕನಸಿನಲ್ಲಿ ಸಂಭಾಷಿಸುತ್ತಿದ್ದಾನೆ. ನನಗೆ ಗೊತ್ತಿದೆ ಅದು ಸ್ವಪ್ನ. ಹಗಲಿನಲ್ಲಿ ಗಾಂಧಿಯ ಕುರಿತಂತೆ ಅವಿರತವಾಗಿ ಎಡಬಿಡದೆ ಚಿಂತಿಸಿದ್ದರ ಫಲವಾಗಿ ರಾತ್ರಿ ಕನಸ್ಸಿನಲ್ಲಿಯೂ ಆವರಿಸಿಕೊಂಡುಬಿಟ್ಟಿದ್ದಾನೆ ಪುಣ್ಯಾತ್ಮ. ಗಾಂಧಿ ಒಳ್ಳೆಯವನಾಗಿದ್ದನೆ? ಗಾಂಧಿಯಲ್ಲಿಯೂ ಸಣ್ಣತನಗಳಿದ್ದವೆ? ಈ ವಿಚಾರಗಳಿಗಾಗಿಯೇ ಅನೇಕ ಪುಸ್ತಕಗಳನ್ನು ಓದತೊಡಗಿದ್ದೆ. ತಕ್ಕಮಟ್ಟಿಗೆ ಗಾಂಧಿ ಅರ್ಥವಾದ ಎಂದುಕೊಳ್ಳುತ್ತಿದ್ದಂತೆಯೇ ಹಿಂಬಾಲಿಸುತ್ತಿದ್ದ ಪರಿಚಿತ ಗಾಂಧಿ ಅಪರಿಚಿತ ನೆರಳಿನಂತೆ ಹಿಂದೆ ಸರಿದುಬಿಡುತ್ತಿದ್ದ.

ಈ ಗಾಂಧಿ ಎನ್ನುವ ಇತಿಹಾಸದ ಮಹಾಪುರುಷ ನನ್ನ ಚಿಂತನೆಗೆ ಆಹಾರವಾಗಿದ್ದು ಎಂದಿನಿಂದ? ನನಗೆ ತಿಳುವಳಿಕೆ ಬಂದ ನಂತರದ ಈ ಎರಡು ದಶಕಗಳಿಂದ ಒಂದಿಲ್ಲೊಂದು ಸಂದರ್ಭಗಳಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಗಾಂಧೀ-ಮೇನಿಯಾದಲ್ಲಿ ಬಿದ್ದು ಒದ್ದಾಡಿದ್ದಿದೆ. ನಿಖರವಾಗಿ ಹೇಳುವುದಾದರೆ,…

ಹೌದು! ನನಗೆ ನೆನಪಿದೆ ನಾನು ಚಿಕ್ಕವನಿದ್ದಾಗ ಅಜ್ಜಿ-ತಾತ ತೊಡೆಯ ಮೇಲೆ ಕೂರಿಸಿಕೊಂಡು ಭಾರತದ ಸ್ವತಂತ್ರ್ಯ ಸಂಗ್ರಾಮದ ಕಥೆಗಳನ್ನು ಹೇಳುತ್ತಿದ್ದರು. mahatma_gandhi_artworkನಮ್ಮ ದೇಶವನ್ನು ಹಿಂದೆ ಬ್ರಿಟೀಶರು ಆಳುತ್ತಿದ್ದರು, ಅವರಿಂದ ನಮಗೆ ಸ್ವಾತಂತ್ರ್ಯ ಕೊಡಿಸಿದ್ದ ಮಹಾಮಹಿಮ, ಅವರೆಲ್ಲರ ಪ್ರಕಾರ ಗಾಂಧಿ. ಉಪವಾಸ-ವನವಾಸ ಮಾಡಿದ ಬರಿಮೈ ಪಕೀರ ನಿಸ್ವಾರ್ಥ ದೃಷ್ಠಿಕೋನದಿಂದ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿ, ಕೊನೆಗೆ ಗೋಡ್ಸೆಯ ಗುಂಡಿಗೆ ಬಲಿಯಾಗಿ ಹುತಾತ್ಮನಾದ. ನನ್ನ ಬಾಲ್ಯದಲ್ಲಿ ನಾನು ಗೋಡ್ಸೆಯನ್ನು ಪರಮ ನೀಚ, ಭ್ರಷ್ಟ, ರಾಕ್ಷಸನಂತೆ ನನ್ನ ಕಲ್ಪನಾ ವಿಸ್ತಾರದಲ್ಲಿ ಚಿತ್ರಿಸಿಕೊಂಡಿದ್ದೆ. ಆಗೆಲ್ಲ ದೇಶದ ಸ್ವಾತಂತ್ರ್ಯದ ವಿಚಾರ ಬಂದಾಗ ಮೊದಲು ನೆನಪಾಗುತ್ತಿದ್ದ ಹೆಸರು ಹಾಗೆಯೇ ಕೊನೆಯ ಹೆಸರೂ ಸಹ ಗಾಂಧಿಯದ್ದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ ದಿನ ಚರ್ವಿತಚರ್ವಣ ಭಾಷಣ ಕೇಳುತ್ತಿದ್ದಾಗ, ಅಂದು ಶಾಲಾ ಮೈಧಾನವನ್ನು ಸ್ವಚ್ಛಗೊಳಿಸುವಾಗ, ಗಾಂಧಿಯ ಸೇವಾ ಮನೋಭಾವನೆಯ ಮತ್ತು ದೀನದಲಿತರ ಕುರಿತಾದ ಕಾಳಜಿ ಮುಂತಾದ ವಿವರಣೆಗಳನ್ನು ಕೇಳುತ್ತಿದ್ದ ಸಂದರ್ಭದಲ್ಲಿ ಗಾಂಧಿ ದೈವೀ ಸ್ವರೂಪಿಯಾಗಿರುತ್ತಿದ್ದ. ಫೋಟೋದಲ್ಲಿ ಇಷ್ಟಗಲ ಬೊಚ್ಚು ಬಾಯಗಲಿಸಿ ನಗುವ ಕನ್ನಡಕಧಾರಿ ಅರೆಬೆತ್ತಲೆ ಸಂತ ಸಾಕ್ಷಾತ್ ಸ್ವಯಂಪ್ರಭೆಯ ಸೂರ್ಯನಂತೆ ಮನದಂಗಳದಲ್ಲಿ ಬೆಳಗುತ್ತಿದ್ದ. ಅಜ್ಜಯ್ಯ ಭಾಗವತ ಹಾಗೂ ಪುರಾಣಗಳನ್ನು ಓದುವಾಗೆಲ್ಲ ಹೇಳುತ್ತಿದ್ದರು ಲೋಕಕಲ್ಯಾಣಕ್ಕಾಗಿ ಭಗವಂತ ಮತ್ತೆ ಮತ್ತೆ ಅವತರಿಸಿ ಬರುತ್ತಾನೆ. ಅವನದು ಈಗಾಗಲೆ ಒಂಬತ್ತು ಅವತಾರಗಳು ಮುಗಿದಿವೆ. ಕಲಿಯುಗದಲ್ಲಿ ಕಲ್ಕಿಯಾಗಿ ಉದ್ಭವಿಸುತ್ತಾನೆ. “ಸಂಭವಾಮಿ ಯುಗೆ ಯುಗೆ”.

ಅಲ್ಲಿಗೆ ಕಲ್ಕಿಯ ಅವತಾರ ಗಾಂಧಿಯೇ ಇರಬಹುದೆ? ಅದೆಷ್ಟು ಬಾರಿ ಈ ಕುರಿತಾಗಿ ನಾನು ಯೋಚಿಸಿದ್ದೆ. ಮನೆಯಲ್ಲಿ ಅಮ್ಮನ ಬಳಿ ಇದನ್ನು ಹೇಳಿದ್ದಾಗ, ಅವಳು ಫೋಟೋದಲ್ಲಿನ ಗಾಂಧಿಯಷ್ಟೆ ಇಷ್ಟಗಲ ಬಾಯಿಕಳೆದು ನಕ್ಕು ಬಿಟ್ಟಿದ್ದಳು. ಅದಕ್ಕಿಂತ ಅವಮಾನವಾಗಿದ್ದು ಆನಂತರ ಇದೇ ಕಥೆಯನ್ನು ಸಂಘಪರಿವಾರದ ಬೈಠಕ್ಕಿನಲ್ಲಿ ಹೇಳಿದ್ದಾಗ ಅಲ್ಲಿ ನಮಗೆ ಶಾಖೆ ಮಾಡಿಸುತ್ತಿದ್ದ ’ಜಿ’ ಒಬ್ಬರು ನಕ್ಕಿದ್ದ ಸಂದರ್ಭದಲ್ಲಿ.

ಆನಂತರ ಗಾಂಧಿ ಬೇರೆಯದೇ ಸ್ವರೂಪದಲ್ಲಿ ಅರ್ಥವಾಗತೊಡಗಿದ. ಗಾಂಧಿಯ ಪಕ್ಕದಲ್ಲಿ ಸೇರಿಸುತ್ತಿದ್ದ ’ಜಿ’ ಯನ್ನು ಕಿತ್ತುಹಾಕಿದ ಹಾಗೂ ಗಾಂಧಿಯ ಸಂಬೋಧನೆಯಲ್ಲಿ ಬಹುವಚನದ ಬದಲಿಗೆ ಏಕವಚನ ಬಳಸಿದ ದಿನಗಳವು. ಆಗ ಪ್ರಾಯಶಃ ನನಗೆ ಹನ್ನೆರಡು ವರ್ಷಗಳಿದ್ದಾವು. ಸ್ವಾತಂತ್ರ್ಯ ಸಂಗ್ರಾಮದ ಹೊಸ ಹೊಸ ಚರಿತ್ರೆಗಳ ಪರಿಚಯವಾಗತೊಡಗಿತ್ತಾಗ. ಪ್ರತಿನಿತ್ಯ ಬೈಠಕ್‌ಗೆ ತೆರಳುತ್ತಿದ್ದೆ. ಅಲ್ಲಿ ಭಗತ್ ಸಿಂಗ್, ಶಹೀದ್ ಉದ್ದಮ್ ಸಿಂಗ್, ಚಂದ್ರಶೇಖರ್ ಆಜಾದ್, ಭಟುಕೇಶ್ವರ್ ದತ್ತಾ, ಸುಖ್‌ದೇವ್, ರಾಜ್‌ಗುರು, ತಿಲಖ್, ಲಾಲಾಜಿ, ಬಿಪಿನ್ ಚಂದ್ರಪಾಲ್, ಹೀಗೆ ಅನೇಕ ಹೆಸರುಗಳ ಪರಿಚಯವಾಯಿತು. ಕೇವಲ ಹೆಸರುಗಳು ಮಾತ್ರವಲ್ಲ ಅದರ ಹಿನ್ನಲೆಯಲ್ಲಿ ಆವರೆಗೆ ಅಪರಿಚಿತವಾಗಿದ್ದ ಭಾರತ ಸ್ವತಂತ್ರ್ಯ ಕದನದ ರಕ್ತಸಿಕ್ತ ಅಧ್ಯಾಯಗಳ ಅಧ್ಯಯನ ಆರಂಭವಾಯಿತು. ದೇಶಕ್ಕೆ ಸ್ವತಂತ್ರ್ಯ ಬಂದಿದ್ದು ಕೇವಲ ಗಾಂಧಿಯ ಉಪವಾಸ ಸತ್ಯಾಗ್ರಹದಿಂದಲ್ಲ. ಮೊಂಡ ಬ್ರಿಟೀಶರೇನು ಸತ್ಯಾಗ್ರಹಕ್ಕೆ ಬಗ್ಗುವವರಾಗಿರಲಿಲ್ಲ. ಅಜಾದ್ ಹಿಂದ್ ಫೌಜ್ ಎನ್ನುವ ಸ್ವತಂತ್ರ್ಯ ಸೈನ್ಯ ಕಟ್ಟಿದ ಹಾಗೂ ಜಪಾನಿನಲ್ಲಿ ಭಾರತದ್ದೆ ಆದ ಒಂದು ಪರ್ಯಾಯ ಸರ್ಕಾರ ರಚನೆ ಮಾಡಿದ್ದ ಬಂಗಾಲಿ ಸುಭಾಷ್ ಬಾಬು ಕಥೆ ಕೇಳಿದ್ದ ದಿನ ನಿಜಕ್ಕೂ ಮೈನವಿರೇಳಿಸಿಕೊಂಡಿದ್ದೆ. ಬೋಸರ ಬದುಕಿನಾದ್ಯಂತ ಅವರನ್ನು ವಿರೋಧಿಸಿದ ಗಾಂಧಿ ಮೊತ್ತ ಮೊದಲ ಬಾರಿಗೆ ನನಗೆ ಬೇರೆಯದೇ ದೃಷ್ಠಿಯಲ್ಲಿ ಕಂಡಿದ್ದ. ಜಪಾನ್ ಹಾಗೂ ಬ್ರಹ್ಮ ದೇಶಗಳ ಬೆಂಬಲ ಪಡೆದುಕೊಂಡು ಸ್ವತಃ ದಂಡನಾಯಕನಾಗಿ ಇರಾವತಿ ನದಿ ತಟದಲ್ಲಿ ವೀರಾವೇಶದಿಂದ ಕಾದಿದ್ದ ಸುಭಾಷ್ ಚಂದ್ರ ಬೋಸ್ ಆಗ ನಿಜವಾದ ಹೀರೋ ಎನ್ನಿಸಿಕೊಂಡಿದ್ದರು. ಗಾಂಧಿಯ ಬದಲು ಕೃಷ್ಣನ ಹತ್ತನೆ ಅವತಾರ ಸುಭಾಷ್ ಬಾಬುವಿಗೆ ರೀಪ್ಲೇಸ್ ಆಗಿಬಿಟ್ಟಿತ್ತು. ಇಂಫಾಲ ಹಾಗೂ ಮಣಿಪುರದ ಬಳಿ ಬಂದುಬಿಟ್ಟಿದ್ದ ಸುಭಾಷರ ಅಜಾದ್ ಹಿಂದ್ ಫೌಜ್‌ನ ಮುಂದಿನ ನಡೆ ಚಲೋ ದಿಲ್ಲಿ ಎನ್ನುವುದನ್ನು ತಿಳಿದಾಗ ಸ್ವತಃ ಆಗಿನ ಬ್ರಿಟನ್ ವೈಸ್‌ರಾಯ್ ಮೌಂಟ್ ಬ್ಯಾಟನ್ ಸಹ ಬೆವತುಬಿಟ್ಟಿದ್ದನಂತೆ. ಮಾಸ್ಕೋಗೆ ತೆರಳುತ್ತಿದ್ದ ವಿಮಾನ ಅಪಘಾತದಲ್ಲಿ ಸುಭಾಷ್ ಮೃತರಾದರು ಎನ್ನುವ ಸಂಗತಿ ಅನೇಕ ಸಂಶಯಗಳ ಸುತ್ತಾ ಪ್ರವಹಿಸಿ ಆನಂತರವೂ ಅರ್ಥವೇ ಆಗದೆ ದ್ವಂದ್ವವಾಗಿ ಉಳಿದು ಹೋಯಿತು. ಕೊನೆಗೆ ಸುಭಾಷರ ಅಕಾಲಿಕ ಮೃತ್ಯು ಮಿಲಿಯನ್ ಡಾಲರ್ ಪ್ರಶ್ನೆಯಂತಾಗಿ ಉಳಿದು ಹೋಯಿತು. ಅದೇನೇ ಇದ್ದರೂ ಬದುಕಿದ್ದ ಸಂದರ್ಭದಲ್ಲಿ ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ ಮೈ ಹಣ್ಣಾಗಿಸಿ ಬಡಿದಾಡಿದ ಸುಭಾಷ್‌ರನ್ನು ಹೆಜ್ಜೆ ಹೆಜ್ಜೆಗೂ ವಿರೋಧಿಸಿದ್ದ ಗಾಂಧಿ ಮಾತ್ರ ನನ್ನ ದೃಷ್ಠಿಯಲ್ಲಿ ಪಾಪಿ ಜೀವಾತ್ಮನಾಗಿಬಿಟ್ಟಿದ್ದ. ತಪ್ಪು ತಪ್ಪಾಗಿ ಇತಿಹಾಸ ಬೋಧಿಸಿದ ಶಾಲೆಯ ಅಧ್ಯಾಪಕರಿಂದ, ಅಜ್ಜಿ ತಾತರವರೆಗೂ ಯಾರು ಯಾರು ಗಾಂಧಿಯನ್ನು “ಅವರ್ ಫಾದರ್ ಆಫ್ ನೇಷನ್” ಎಂದು ಸಮರ್ಥಿಸಿದ್ದರೋ ಅವರ ಮೇಲೆಲ್ಲ ಕೋಪ ತಾರಕಕ್ಕೇರಿಬಿಟ್ಟಿತು. ಗಾಂಧಿ, ನೆಹರೂ ಸೇರಿದಂತೆ ಯಾವ ಮಹಾಪುರುಷರುಗಳು ಪ್ರತಿ ವರ್ಷ ಸ್ವಾತಂತ್ರ್ಯೋತ್ಸವದಂದು ಭಾಷಣಗಳಿಗೆ ವಸ್ತುವಾಗುತ್ತಿದ್ದರೋ ಅವರುಗಳ ಮೇಲೆ ಏನೋ ಒಂದು ಬಗೆಯ ಅಸಹ್ಯ ಮೂಡತೊಡಗಿಬಿಟ್ಟಿತ್ತು. ಹೀಗೆ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಅಜ್ಞಾತವಾಗಿ ಉಳಿದಿದ್ದ ಕೆಲವು ಧ್ಯೇಯನಿಷ್ಠ ಹೋರಾಟಗಾರರ ಹೆಸರ ನಡುವೆ ಅದೊಂದು ಹೆಸರು ನನಗೆ ತಿಳಿಯದಂತೆ ಆಪ್ತವಾಗಿಬಿಟ್ಟಿತ್ತು. ವಿನಾಕಾರಣ ಆ ವ್ಯೆಕ್ತಿಯ ಮೇಲೆ ಅಭಿಮಾನ ಉಕ್ಕತೊಡಗಿತ್ತು. ಆ ಹೆಸರೇ “ನಾಥೋರಾಂ ವಿನಾಯಕ್ ಗೋಡ್ಸೆ”.

“ಯಾವ ಪುಣ್ಯನದಿಯ ತಟದಲ್ಲಿ ತಪಸ್ವಿಗಳು ಕುಳಿತು ಧ್ಯಾನ-ತಪವನ್ನಾಚರಿಸಿದ್ದರೋ, ಯಾವ ಪುಣ್ಯವಾಹಿನಿ ಅಖಂಡ ಭಾರತದ ಶ್ರೇಷ್ಠ ನದಿಯೆಂದು Mahatma-Gandhiಕರೆಸಿಕೊಂಡಿತ್ತೊ ಆ ಪರಮ ಪಾವನೆ ಸಿಂಧೂ ಪ್ರಸ್ತುತ ಪಾಕಿಸ್ತಾನದಲ್ಲಿ ಹರಿಯುತ್ತಿದ್ದಾಳೆ. ಎಂದು ಆ ನದಿ ಪುನಃ ಹಿಂದೂಸ್ತಾನದ ಧ್ವಜದಡಿಯಲ್ಲಿ ಹರಿಯತೊಡಗುತ್ತಾಳೋ ಅಂದು ನನ್ನ ಚಿತಾಭಸ್ಮವನ್ನು ಅದರಲ್ಲಿ ವಿಸರ್ಜಿಸಬೇಕು. ನನ್ನ ಮರಣ ಕಾಲದ ನಂತರವೂ ನನ್ನ ಚಿತಾಭಸ್ಮವನ್ನು ಶೇಖರಿಸಿಡಬೇಕು. ಮರಳಿ ಅಖಂಡಭಾರತ ರಚನೆಗೆ ಶತಮಾನಗಳು ಕಳೆದರೂ ಚಿಂತೆಯಿಲ್ಲ. ಆದರೆ ನನ್ನ ಆಸೆ ಈಡೇರಲೇಬೇಕು ಎನ್ನುವುದಾದರೆ ಮತ್ತೆ ಭಾರತ ಭೂಮಿ ಅಖಂಡತೆಯನ್ನು ಹೊಂದಬೇಕು.”-ಗೋಡ್ಸೆಯ ಈ ಅಂತಿಮ ಹೇಳಿಕೆ ಓದಿದ ದಿನದಿಂದಲೂ ಅವನಲ್ಲಿದ್ದ ದೇಶಭಕ್ತ ನನ್ನನ್ನು ಬಹುತೇಕ ಆವರಿಸಿಕೊಂಡಿದ್ದ. “ನಾನೇಕೆ ಗಾಂಧಿಯನ್ನು ಕೊಂದೆ”-ಎನ್ನುವ ಸ್ವತಃ ಗೋಡ್ಸೆ ಹೇಳಿಕೆಯನ್ನು ಕೇಳಿದ ನಂತರ ಹಾಗೂ ಅದರ ಕಡತಗಳನ್ನು ತಕ್ಕಮಟ್ಟಿಗೆ ಅಧ್ಯಯನ ಮಾಡಿದ ತರುವಾಯ ನನಗೇಕೋ ಗಾಂಧಿಯ ಬಗ್ಗೆ ತುಚ್ಛ ಭಾವ ಮೂಡತೊಡಗಿತ್ತು. ಯಾವುದೋ ಒಂದು ಹಂತದಲ್ಲಿ ಗಾಂಧಿ ಹತ್ಯೆ ಸಹ ಸಮಯೋಚಿತ ಹಾಗೂ ಅನಿವಾರ್ಯವಾಗಿತ್ತು ಎಂದು ಒಪ್ಪಿಕೊಳ್ಳುವ ಹಂತ ತಲುಪಿದ್ದಾಗ ನನಗೆ ಬಿಸಿರಕ್ತದ ತಾರುಣ್ಯ.

ಹಾಗಂತ ಗಾಂಧಿಯನ್ನು ಸಾರಾಸಗಟಾಗಿ ತಳ್ಳಿ ಹಾಕುವಂತಿಲ್ಲವಲ್ಲ. ಗಾಂಧಿಯ ಗ್ರಾಮ ಸ್ವರಾಜ್ಯ, ರಾಮರಾಜ್ಯದ ಕಲ್ಪನೆಗಳು, ಸೆಕ್ಯುಲರಿಸಂ ಧೋರಣೆ, ಆಧುನಿಕರಣವನ್ನು ವಿರೋಧಿಸುವ ನಿಲುವುಗಳು ಇತ್ಯಾದಿ ವಿಚಾರಗಳು ನಾವು ಎಷ್ಟೇ ಬೇಡವೆಂದರೂ ನಮ್ಮನ್ನು ಬಿಡಲಾರವು. ಭಾರತದಂತಹ ಬಹುಸಂಸ್ಕೃತಿ, ಬಹುಜನಾಂಗೀಯ ಹಾಗೂ ಬಹುಭಾಷೀಯ ರಾಷ್ಟ್ರದಲ್ಲಿ ಗಾಂಧಿ ಎಂದಿಗೂ ಪ್ರಸ್ತುತ. ಗಾಂಧಿ ಎನ್ನುವ ವ್ಯಕ್ತಿ ಕೇವಲ ಓರ್ವ ಐತಿಹಾಸಿಕ ಲೆಜೆಂಡ್ ಎನ್ನಿಸಿಕೊಳ್ಳಲಿಲ್ಲ, ಬದಲಿಗೆ ಈ ಎರಡು-ಮೂರು ತಲೆಮಾರುಗಳ ಜನತೆಗೆ ಎಂದಿಗೂ ಅರ್ಥವಾಗದ, ಅರ್ಥಮಾಡಿಕೊಳ್ಳಲೇಬೇಕಾದ ಸಂದಿಗ್ದ ದ್ವಂದ್ವವಾಗಿ ಉಳಿದು ಹೋಗಿಬಿಟ್ಟ ಎನ್ನುವ ವಿಷಯದಲ್ಲಿ ಯಾವುದೇ ಸಂದೇಹಗಳಿರಲಿಲ್ಲ. ಪ್ರತಿ ವರ್ಷವೂ ಗಾಂಧಿ ಅನೇಕ ವೇದಿಕೆಗಳಲ್ಲಿ ಚರ್ಚೆಗೆ ಬರುತ್ತಾನೆ. ಕೆಲವರು ಗಾಂಧಿ ವಿಚಾರಧಾರೆಯ ಪರವಾಗಿ ಇನ್ನೊಂದಷ್ಟು ಜನ ಅದರ ವಿರುದ್ದವಾಗಿ ದ್ವನಿಯೆತ್ತುತ್ತಾರೆ. ಒಂದಿಲ್ಲೊಂದು ವಿಶ್ವವಿದ್ಯಾನಿಲಯಗಳು ಗಾಂಧಿಯನ್ನು ಮರಳಿ-ಹೊರಳಿ ಅನ್ವೇಶಿಸುತ್ತಲೇ ಇವೆ. ನಿರಂತರ ಸಂಶೋಧನೆಗಳೂ ಸಾಗಿವೆ. ಅನೇಕ ವಿದ್ಯಾ ಕೇಂದ್ರಗಳಲ್ಲಿ ಗಾಂಧಿ ಎನ್ನುವ ವಿಷಯದ ಮೇಲೆಯೇ ಅಧ್ಯಯನ ಕೇಂದ್ರ ತೆರೆಯಲಾಗಿದೆ. ಇತಿಹಾಸದ ಕೆಲವು ಅವಿತಿದ್ದ ಸತ್ಯಗಳನ್ನು ಅರಿತ ನಂತರ ಉದ್ದೇಶಪೂರ್ವಕವಾಗಿ ಗಾಂಧಿಯನ್ನು ನಾನು ವಿರೋಧಿಸುವ ನಿರ್ಧಾರಕ್ಕೆ ಬಂದಿದ್ದೆ. ಅದಕ್ಕೆ ಸಂಬಂಧಿಸಿದಂತೆ ಒಂದಷ್ಟು ದಾಖಲೆಗಳನ್ನು, ಪುಸ್ತಕಗಳನ್ನು, ಇತಿಹಾಸದ ಹೊತ್ತಿಗೆಗಳನ್ನು ತಿರುಗಿಸತೊಡಗಿದ್ದೆ. ಕೊನೆಗೆ ಯಾವುದೇ ವೇದಿಕೆಯಲ್ಲಾದರೂ, ಯಾವ ಮಹಾ ಮೇಧಾವಿ ಬುದ್ದಿಜೀವಿಯ ಎದುರಲ್ಲಾದರೂ ನಿಂತು ವಾದ ಮಾಡಲು ಸಿದ್ದನಾಗತೊಡಗಿದ್ದೆ.

ಅದ್ಯಾವುದು ಗಾಂಧಿಯನ್ನು ನನ್ನ ಕನಸಿಗೆ ಕರೆತರಲಿಲ್ಲ. ಹೊಲಸೆದ್ದು ಹೋಗಿರುವ ವ್ಯವಸ್ಥೆಯ ಭ್ರಷ್ಟತಾಂಡವದ ನಡುವೆ ಸದ್ಯ ಗಾಂಧಿ ಸಹ ಅಪ್ರಸ್ತುತರೆನಿಸಿಕೊಂಡಿದ್ದಾನೆ. ತೀರ ಇತ್ತೀಚೆಗೆ ಒಂದು ಸಿನಿಮಾ ನೋಡಿದೆ. ಪ್ರಾಯಶಃ ಅದರ ನಿರ್ದೇಶಕರು ಮಣಿರತ್ನಂ ಎಂದೆನಿಸುತ್ತದೆ. ತಮಿಳಿನ ಮೇರು ನಟ ಕಮಲ್ ಹಸನ್ ನಾಯಕನಾಗಿದ್ದ ಅದರ ಹೆಸರು “ಹೇ ರಾಮ್”. ಗಾಂಧಿಯ ಹತ್ಯೆಯ ಸಂದರ್ಭವನ್ನು ಆಧಾರದಲ್ಲಿಟ್ಟುಕೊಂಡು ತಯಾರಿಸಿದ್ದ ಚಿತ್ರ. ದೇಶವಿಭಜನೆಯ ಸಂದರ್ಭದಲ್ಲಿ ಹಿಂದು ಮತ್ತು ಮುಸಲ್ಮಾನರ ನಡುವೆ ನಡೆದ ಮಾರಣ ಹೋಮ, ಕೊಲೆ, ಅತ್ಯಾಚಾರ ಇತ್ಯಾಧಿಗಳನ್ನು ಚಿತ್ರದಲ್ಲಿ ಮನೋಜ್ಞವಾಗಿ ಚಿತ್ರಿಸಲಾಗಿದೆ. ಚಿತ್ರದ ಮುಕ್ತಾಯ ಹೇಗೇ ಇರಲಿ, ಪೂರ್ವಾರ್ಧದ ಕಥೆ ಇಷ್ಟವಾಗಿ ಹೋಗಿತ್ತು. ಮತ್ತೆ ಮತ್ತೆ ಅದೇ ಚಿತ್ರವನ್ನು ನೋಡಿದೆ. ಗಾಂಧಿ ಹಾವಳಿಯಿಡಲು ಶುರುವಿಟ್ಟೇಬಿಟ್ಟ.

ನಮ್ಮಲ್ಲಿ ಬಹುತೇಕರಿಗೆ ದೇಶವಿಭಜನೆಯ ಹಿಂದಿನ ಚರಿತ್ರೆಯೇ ತಿಳಿದಿಲ್ಲ. ಪಾಕಿಸ್ತಾನ ಎನ್ನುವ ಕಲ್ಪನೆಗೆ ರೆಕ್ಕೆ ಮೂಡಿದ್ದು ಮುಸ್ಲಿಂ ಲೀಗ್‌ನ ಸ್ಥಾಪನೆಯಾದ ಕೆಲವೇ ಕಾಲದ ನಂತರ. ಬಹುಸಂಖ್ಯಾತ ಹಿಂದೂಗಳೊಂದಿಗೆ ಅಲ್ಪಸಂಖ್ಯಾತ ಮುಸಲ್ಮಾನರು ಬದುಕುವುದು ದುಸ್ತರ ಎನ್ನುವ ವಿಷ ಬೀಜವನ್ನು ಅದ್ಯಾರೋ ಪಾಪಿಗಳು ಬಿತ್ತಿದ್ದರು. ಹತ್ತೊಂಬತ್ತನೆಯ ಶತಮಾನದ ನಲ್ವತ್ತರ ದಶಕದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಖಚಿತವಾಗಿ ದೊರೆಯುತ್ತದೆ ಎನ್ನುವ ಸನ್ನಿವೇಶವೂ ಸೃಷ್ಠಿಯಾಗತೊಡಗಿತ್ತು. ಜೊತೆಗೆ ಗಾಂಧಿಯಂತಹ ಗಾಂಧಿಯೇ ಖಿಲಾಫತ್ ಆಂದೋಲನದಲ್ಲಿ ಮುಸಲ್ಮಾನರ ಪರವಾಗಿ ನಿಂತಿದ್ದೂ ಸಹ ಸ್ವತಂತ್ರ ಪಾಕಿಸ್ತಾನದ ಕನಸು ಹೊತ್ತಿದ್ದ ಕೆಲವು ಮುಸ್ಲಿಂ ನಾಯಕರಿಗೆ ಪೂರಕವಾಗಿ ಪರಿಣಮಿಸಿತ್ತು. ಬ್ಯಾರಿಸ್ಟರ್ ಮೊಹಮದ್ ಅಲಿ ಜಿನ್ನಾ ವಿಭಜನೆಯಾಗಲೇ ಬೇಕು ಎಂದು ಪಟ್ಟು ಹಿಡಿದಿದ್ದ. ಆದರೆ ಹಾವೂ ಸಾಯಬಾರದು ಕೋಲೂ ಮುರಿಯಬಾರದು ಎನ್ನುವ ಧೋರಣೆಯನ್ನು ಅನುಸರಿಸಿದ ಕಾಂಗ್ರೆಸ್ ಇದೇ ವಿಷಯವನ್ನು ಹಿಗ್ಗಾಮುಗ್ಗಾ ಎಳೆದಾಡಿದತು. ಗಾಂಧಿ ನೇರವಾಗಿ ವಿರೋಧಿಸಲೂ ಇಲ್ಲ, ಪರವಾಗಿ ಮುಕ್ತ ಮಾತನಾಡಲೂ ಇಲ್ಲ. ಇಂತಹ ಆಷಾಡಭೂತಿತನದಿಂದ ಕಲ್ಕತ್ತಾ, ಲಾಹೋರ್ ಪಂಜಾಬ್‌ಗಳಲ್ಲಿ ಭೀಕರ ಕೋಮುಗಲಭೆಗಳಾದವು. ಸತ್ತವರೆಷ್ಟೋ, ಗಾಯಗೊಂಡವರೆಷ್ಟೋ, ಮನೆ-ಮಠಗಳನ್ನು ಕಳೆದು ಬೀದಿಯಲ್ಲಿ ಬಿಕಾರಿಗಳಂತೆ ನಿಂತವರೆಷ್ಟೋ. ಅವರೆಲ್ಲರ ಒಕ್ಕೊರಲಿನ ಶಾಪ ಜಿನ್ನಾ ಮೇಲಿರಲಿಲ್ಲ, ಅದಿದ್ದಿದ್ದು ಗಾಂಧಿಯ ಮೇಲೆ.

ಪ್ರತಿ ಬಾರಿಯೂ ಒಂದಿಲ್ಲೊಂದು ಸ್ಥಳದಲ್ಲಿ ಕೋಮುಗಲಭೆಗಳಾದಾಗ ಗಾಂಧಿ ನೀಡುತ್ತಿದ್ದ ಹೇಳಿಕೆ ಒಂದೆ, ಹಿಂದೂ-ಮುಸಲ್ಮಾನ ಸಹೋದರರಂತೆ ಬದುಕಬೇಕು. mahatma_gandhi_in_type_by_dencii-d1ucmsiನೀವು ಹಿಂದೂಗಳು ನಿಮ್ಮ ಸಂಗಡ ಮುಸ್ಲೀಂ ಸಹೋದರರಿಗೂ ಬದುಕಲು ಅವಕಾಶ ಮಾಡಿಕೊಡಬೇಕು. ಒಂದು ಕಡೆ ಹಿಂದೂಗಳು ಕಗ್ಗೊಲೆಯಾಗತೊಡಗಿದ್ದರು. ಮನೆಗಳಿಗೆ ನುಗ್ಗುವ ಭಯೋತ್ಪಾದಕರು ಹೆಂಗಸರು, ಅಬಾಲ ಮಕ್ಕಳ ಮೇಲೆ ಅತ್ಯಾಚಾರವೆಸಗತೊಡಗಿದ್ದರು. ಇದಕ್ಕೆ ಪ್ರತಿಯಾಗಿ ಹುಟ್ಟಿಕೊಂಡ ಹಿಂದೂ ಸಂಘಟನೆಯೊಂದು ಸೇಡಿನ ಸರಣಿ ಮುಂದುವರಿಸುವ ಸಲುವಾಗಿ ಮುಸಲ್ಮಾನರನ್ನು ಗುರಿಯಾಗಿಸಿ ಕೊಲ್ಲುತ್ತಿತ್ತು. ರಸ್ತೆಗಳು ರಕ್ತದ ಓಕುಳಿಯಿಂದ ಕೆಂಪಾಗಿಬಿಟ್ಟಿದ್ದವು. ಊರಿಗೆ ಊರು ಸ್ಮಶಾನ ಸದೃಶ್ಯವಾಗಿತ್ತು. ಪ್ರತ್ಯಕ್ಷವಾಗಿಯಲ್ಲದಿದ್ದರೂ ತನ್ನ ಉದಾಸೀನ ಹಾಗೂ ಕಾರಣವೇ ಇಲ್ಲದ ಮೌನ ಧಾರಣೆಯಿಂದಾಗಿ ಪರೋಕ್ಷವಾಗಿ ಅದಕ್ಕೆಲ್ಲಾ ಕಾರಣವಾಗಿದ್ದ ವ್ಯೆಕ್ತಿಯ ಹೆಸರು ’ಬ್ಯಾರಿಸ್ಟರ್ ಮೋಹನ್‌ದಾಸ್ ಕರಮ್‌ಚಂದ್ ಗಾಂಧಿ’.

ಅಂದು ಗಾಂಧಿ ಒಂದು ಮಾತು ಹೇಳಿದ್ದರೂ ಸಾಕಿತ್ತು ಪಾಕಿಸ್ತಾನದ ಕಲ್ಪನೆ ಸಾಕಾರಗೊಳ್ಳುತ್ತಿರಲಿಲ್ಲ. ಅಥವಾ ಪಾಕಿಸ್ತಾನ ಸ್ವತಂತ್ರ್ಯ ರಾಷ್ಟ್ರವಾಗಿ ಘೋಷಣೆಯನ್ನಾದರೂ ಕೂಡಲೆ ಮಾಡಿದ್ದರೆ, ಅಮಾಯಕರ ಮೇಲಿನ ದೌರ್ಜನ್ಯ-ಹಿಂಸಾಚಾರಗಳನ್ನು ತಪ್ಪಿಸಬಹುದಿತ್ತು. ಮೊದಮೊದಲು ದೇಶವಿಭಜನೆಗೆ ಕಡುವಿರೋಧ ವ್ಯೆಕ್ತಪಡಿಸಿದ್ದ ಬಾಪೂ ಆನಂತರ ಹಿಂಸಾಚಾರ ಹೆಚ್ಚಾದ ಮೇಲೆಯೇ ಒಪ್ಪಿಗೆ ನೀಡಿದ್ದಂತೆ. ಈ ವಿಷಯಗಳು ದೇಶದ ಆಂತರಿಕ ಗೌಪ್ಯ ದಾಖಲೆಗಳ ಕಡತ-ಹೊತ್ತಿಗೆಗಳಿಂದಲೂ ನಾಪತ್ತೆಯಾಗಿಬಿಟ್ಟಿದ್ದವು. ಸ್ವಾತಂತ್ರ್ಯಾ ನಂತರ ಗಾಂಧಿ ಪರಾಕುಗಳ ಭರಾಟೆ ಗಾಂಧಿಪ್ರಭೆಯ ಸುತ್ತಮುತ್ತಲಿನ ಸ್ಪಷ್ಟ ಕಪ್ಪು ಅಪರಾಧಿ ಛಾಯೆಯನ್ನೂ ಮರೆಯಾಗಿಸಿಬಿಟ್ಟಿತ್ತು. ಅದು ಆನಂತರದ ಕೆಲವು ದಶಕಗಳ ನಂತರ ಹೊರಬಂದಿತಷ್ಟೆ. ಇತ್ತೀಚೆಗೆ ನಾನು ಅರ್ಥ ಮಾಡಿಕೊಂಡಿದ್ದ ಗಾಂಧಿ ಹೀಗಿದ್ದ.

ಹೀಗೆ ಗಾಂಧಿ ಎನ್ನುವ ಲೆಜೆಂಡ್ ಎನ್ನಿಸಿಕೊಳ್ಳುವ ಬೊಚ್ಚುಬಾಯಿಯ ಸಾಬರಮತಿಯ ಸಂತ ನನ್ನ ಕನಸಿಗೆ ನಿತ್ಯವೂ ಬಂದು ವೈಚಾರಿಕ ದಾಂಗುಡಿಯಿಡುತ್ತಿದ್ದಾನೆ ಎಂದು ಯಾರ ಬಳಿಯಾದರೂ ಹೇಳಿದರೆ ಕೂಡಲೆ ನನ್ನನ್ನು ಹುಚ್ಚಾಸ್ಪತ್ರೆಗೆ ಸೇರಿಸುತ್ತಾರೆ. ನನಗೆ ಅತೀವವಾಗಿ ಆಶ್ಚರ್ಯಕ್ಕೆ ಈಡು ಮಾಡಿರುವುದು, ಈ ಎರಡು ರಾತ್ರಿ ಕನಸಿನಲ್ಲಿ ನಾನು ಮತ್ತು ಗಾಂಧಿ ನಡೆಸಿದ ಸಂಭಾಷಣೆ, ಬೆಳಿಗ್ಗೆ ಎಚ್ಚರವಾದ ನಂತರವೂ ಸ್ಪಷ್ಟವಾಗಿ ನೆನಪಿನಲ್ಲಿ ಉಳಿದಿದೆ ಎನ್ನುವುದು. ಇವತ್ತು ಮೂರನೆಯ ದಿನ. ಇವತ್ತೂ ಸಹ ಗಾಂಧಿಯ ಬಗ್ಗೆ ಇಷ್ಟೆಲ್ಲಾ ಯೋಚಿಸಿದ್ದೇನೆ. ಅಲ್ಲಿಗೆ ಮತ್ತೆ ಗಾಂಧಿ ರಾತ್ರಿ ಕನಸಿನಲ್ಲಿ ಪ್ರತ್ಯಕ್ಷವಾಗುವುದು ಶತಃಸಿದ್ದ. ನಿನ್ನೆ, ಮೊನ್ನೆ ನಮ್ಮ ಮಾತುಕತೆಗೆ ಒಂದು ಸ್ಪಷ್ಟ ತಾರ್ಕಿಕ ಅಂತ್ಯ ದೊರೆತಿರಲಿಲ್ಲ. ಇಂದಿಗೆ ಮುಗಿಸಲೇಬೇಕು ಈ ವಿಚಾರವನ್ನು ಎನ್ನುವ ನಿರ್ಧಾರವಂತೂ ಮಾಡಿಬಿಟ್ಟಿದ್ದೆ. ಅದಾಗಲೆ ರಜನಿಯ ಕತ್ತಲ ಕವಳ ಪಸರಿಸಿಬಿಟ್ಟಿತ್ತು. ಯೋಚಿಸುತ್ತಲೆ ತಾಸುಗಟ್ಟಲೆ ಕಳೆದುಬಿಟ್ಟಿದ್ದೆ. ಅಮ್ಮ ಊಟಕ್ಕೆ ಬಡಿಸಿದ್ದೇನೆ ಎಂದು ಮೂರು ಬಾರಿ ಕರೆದು ಹೋಗಿದ್ದಳು. ಹೊಟ್ಟೆಯಲ್ಲಿ ಹಸಿವಿನ ಪೀಕಲಾಟ ಕಾಣಿಸಿತು. ಗಾಂಧಿ ನನ್ನ ಮನಸ್ಸನ್ನು ಹಾಗೆ ಯರ್ರಾಬಿರ್ರಿ ಹಾಳು ಮಾಡಿದ್ದರ ಫಲವೋ ಏನೋ ಈ ಎರಡು ದಿನಗಳಿಂದ ಸರಿಯಾಗಿ ಉದರಪೋಷಣೆಯನ್ನೇ ಮಾಡಿರಲಿಲ್ಲ. ಇಂದೇ ಗಾಂಧಿಯ ವಿಷಯವನ್ನು ಕೊನೆಯಾಗಿಸಬೇಕು ಎಂದು ಗಟ್ಟಿನಿರ್ಧಾರ ತೆಗೆದುಕೊಂಡ ಸಂಭ್ರಮದೊಂದಿಗೆ ಪುಷ್ಕಳ ಭೋಜನವೂ ಆಯಿತು. ಆತುರಾತುರದಲ್ಲಿಯೇ ಹಾಸಿಗೆಗೆ ಮಗ್ಗುಲಾನಿಸಿದೆ. ನಿದ್ರೆ ಮಾಡಬೇಕು, ಆದರೆ ನಿದ್ರೆ ಗಾಢವಾಗಬಾರದು, ನಿದ್ರೆ ನಿದ್ರೆಯಂತಿರಬಾರದು. ಇಂದು ಗಾಂಧಿಯೊಂದಿಗೆ ನನ್ನ ಅಂತಿಮ ಸಂಭಾಷಣೆ. ಇವತ್ತಿಗೆ ಗಾಂಧಿ ಯೋಚನೆ ಮುಗಿಯಬೇಕು, ಆತ ನನ್ನ ಚಿಂತನೆಯಿಂದ ದೂರ ಸರಿಯಬೇಕು. ಭವಿಷ್ಯದಲ್ಲಿ ಇನ್ಯಾವತ್ತಿಗೂ ಆ ವ್ಯೆಕ್ತಿಯ ಹೆಸರು ತೆಗೆಯಬಾರದು ಅದಕ್ಕಾಗಿಯಾದರೂ ಇಂದು ಗಾಂಧಿ ಬರಬೇಕು ಮಾತಿಗೆ. ಅಸಲಿಗೆ ಗಾಂಧಿ ಇಂದು ನನ್ನ ಕನಸಿನಲ್ಲಿ ನಿಜವಾಗಿಯೂ ಬರುತ್ತಾನಾ? ಸ್ಪಷ್ಟತೆಯಂತೂ ಇರಲಿಲ್ಲ.

ಮಲಗಿದ ನಂತರ ಬಹಳ ಹೊತ್ತು ಮಗ್ಗುಲು ಹೊರಳಿಸುತ್ತಲೇ ಇದ್ದೇ. ನಿನ್ನೆ ಮೊನ್ನೆಯೆಲ್ಲ, ಪುಣ್ಯಾತ್ಮ ಗಾಂಧಿ ಮಲಗಿದ ಕೂಡಲೆ ಸ್ವಪ್ನದಲ್ಲಿ ಪ್ರತ್ಯಕ್ಷನಾಗುತ್ತಿದ್ದವನು ಇಂದೇಕೋ ಬಹಳ ಹೊತ್ತು ಸತಾಯಿಸಿದ. ಆದರೂ ಗಾಂಧೀ ಬರಲೇಬೇಕಿತ್ತು. ಬಂದೇ ಬರುತ್ತಾನೆ ಎನ್ನುವ ನಂಬಿಕೆಯಿಂದಲೇ ವಿಧಿಯಿಲ್ಲದೆ ಅತ್ತಿತ್ತ ಹೊರಳುತ್ತಲೇ ಇದ್ದೆ. ವಿರೋಧಿ ಭಾವನೆಯಿದ್ದರೂ ವಿನಾಕಾರಣ ಗಾಂಧಿ ನಿರೀಕ್ಷಣೆಯಲ್ಲಿ ಕಾಯುತ್ತಿದ್ದ ನನ್ನ ಮನಃಸ್ಥಿತಿ ನನಗೆ ಆಶ್ಚರ್ಯ ಮೂಡಿಸತೊಡಗಿತ್ತು. ಸುಮಾರು ಗಂಟೆ ಹನ್ನೆರಡಾಗಿತ್ತು ಎನಿಸುತ್ತದೆ. ಗಾಂಧಿಯ ಜಪ ಮಾಡುತ್ತಲೆ ನಿಧಾನವಾಗಿ ನಿದ್ರಾದೇವಿಯ ತೆಕ್ಕೆಗೆ ಜಾರಿದೆ. ಲಘುವಾಗಿ ಸ್ವಪ್ನ ಸಂಚಾರದ ಹೆಜ್ಜೆಗಳನ್ನಿಡುತ್ತಾ ವಾರ್ಮ್ ಅಪ್ ಆಗುತ್ತಿದ್ದೆ. ಮನೆಯ ಮಾಳಿಗೆಯ ಖಾಲಿ ಜಾಗದಲ್ಲಿ ವರಚ್ಚಾಗಿ ನಿಂತಿದ್ದ ಆಳೆತ್ತರದ ಪುರಾನಾ ಜಮಾನದ ಗಡಿಯಾರ ಟಣ್ ಎಂದು ಬಾರಿಸಿದ ಸದ್ದಾಯಿತು. ಆ ಗಡಿಯಾರದ ಮೇಲ್ಮುಖದಲ್ಲಿಯೂ ಗಾಂಧಿಯ ಭಾವಚಿತ್ರವಿರುವುದು ಈಗ ಅಪ್ರಸ್ತುತವೆನಿಸುವಂತಹ ಕಾಕತಾಳೀಯ.

ಹನ್ನೆರಡು ಗಂಟೆಯ ನನ್ನ ಪಾಲಿನ (ಅ?)ಶುಭ ಮಹೂರ್ತದಲ್ಲಿ ಗಾಂಧಿಯ ಆಗಮನವಾಯಿತು. ಮೊದಲಿಗೆ ಕೋಲಿನ ಕಟ್ ಕಟ್ ಶಭ್ದ, ಆನಂತರ ಗಾಂಧಿ ಮೆಟ್ಟಿದ್ದ ಚರ್ಮದ ಚಪ್ಪಲಿಯ ಪಟ್-ಪಟ್ ಸದ್ದು. ಅಸ್ಪಷ್ಟವಾಗಿ ಕಾಣಿಸುತ್ತಿದ್ದ ಬಿಳಿಯ ಧೋತಿ, ಚಕ್ಕಡ-ತೊಗಲು ಮಾತ್ರ ತುಂಬಿದ್ದ ಎದೆ, ಬೋಳು ತಲೆ, ಅದೇ ನಿರ್ವಿಕಾರದ ಲೋಕಪ್ರಸಿದ್ದ ಬೊಚ್ಚುಬಾಯಿ. “ಬಾ ತಂದೆ ನಿನ್ನನ್ನೆ ಕಾಯುತ್ತಿದ್ದೆ” ಎಂದೆ.

“ಹ್ಹ ಹ್ಹ ಹ್ಹ…ನೀನು ನನ್ನ ಹಾದಿ ಕಾಯುವಂತಾಗಿದ್ದು ನನ್ನ ಸುಕೃತ.” ಕೊಂಕಿಸಿ ಮಾತನಾಡಿದ ಗಾಂಧಿ.

“ವ್ಯಂಗ್ಯ ಬೇಡ ಬಾಪೂ, ನನಗೆ ಇಂದಿಗೆ ಕೆಲವು ಸಂಶಯಗಳು, ದ್ವಂದ್ವಗಳು ನಿವಾರಣೆಯಾಗಲೇಬೇಕಿವೆ. ನಿನ್ನೆ ಮೊನ್ನೆ ಮಾತನಾಡಿದ ಹಾಗೆ ಅಡ್ಡಗೋಡೆಯ ಮೇಲೆ ದೀಪವಿಡುವ ಮಾತನಾಡಬೇಡ. ನೇರವಾದ ಮಾತು, ನಿಖರವಾದ ನಿನ್ನ ಅಂತರಂಗ ನನಗಿಂದು ತಿಳಿಯಬೇಕು. ಇವತ್ತಿಗೆ ನನ್ನ ನಿನ್ನ ಸಂಬಂಧ ಮುಗಿಯುತ್ತದೆ. ಇನ್ನು ಮೇಲೆ ಅಪ್ಪಿತಪ್ಪಿಯೂ ನಿನ್ನ ವಿಚಾರ ಎತ್ತಲಾರೆ. ಅದು ಒಳ್ಳೆಯದೂ ಕೆಟ್ಟದ್ದೋ, ನಿನ್ನ ಪರವಾಗಿಯೂ ಮಾತನಾಡಲಾರೆ, ವಿರುದ್ಧವಾಗಿಯೂ ಮಾತನಾಡಲಾರೆ. ನಿನ್ನನ್ನು ಸಮರ್ಥಿಸುವುದೂ ಇಲ್ಲ, ವಿರೋಧಿಸುವುದೂ ಇಲ್ಲ. ನನ್ನ ಚಿಂತನಾ ಪರಿಧಿಯಲ್ಲಿ ಇನ್ನು ಮುಂದೆ ಗಾಂಧಿ ವಿಚಾರಧಾರೆಗೆ ಜಾಗವಿಲ್ಲ. ಇವತ್ತಿನ ಸಂಭಾಷಣೆ ನಮ್ಮ ಕೊನೆಯ ಸಂಭಾಷಣೆಯಾಗಬೇಕು. ಹಾಗೆ ಇವತ್ತಿನ ಸಂಭಾಷಣೆಯನ್ನೂ ಮರೆತು ಬಿಡುತ್ತೇನೆ. ಆದರೆ ಅದೆಲ್ಲದಕ್ಕೂ ಮೊದಲು ನನಗೆ ಒಂದಷ್ಟು ಸ್ಪಷ್ಟೀಕರಣ ಬೇಕಿದೆ. ನಿನ್ನನ್ನು ಆರಾಧಿಸುವ, ಪೂಜಿಸುವ, ನೀನೆ ಸರಿ ಎಂದು ವರ್ಣಮಯವಾಗಿ ವೇದಿಕೆಗಳಲ್ಲಿ ಹೊಗಳುವ ಬುದ್ದಿಜೀವಿಗಳ ವಾದ ಸತ್ಯವೋ? ಅಥವಾ ತಕ್ಕಮಟ್ಟಿಗೆ ಇತಿಹಾಸವನ್ನೂ, ಅದರ ಕರಾಳ ಸತ್ಯಗಳನ್ನು ತಿಳಿದುಕೊಳ್ಳುತ್ತಿರುವ ಮತ್ತು ನಿನ್ನ ಬಗ್ಗೆ ಅಧ್ಯಯನ ಮಾಡಿರುವ ನನ್ನ ಲಾಜಿಕ್ ಸತ್ಯವೋ? ಇವತ್ತಿಗೆ ಇದು ನನಗೆ ತಿಳಿಯಬೇಕಿದೆ.” ನೇರವಾಗಿ ಪ್ರಸ್ತಾಪ ಮಂಡಿಸಿದೆ.

ನಿಧಾನವಾಗಿ ಮಂಚದೆಡೆಗೆ ನೆಡೆದು ಬಂದ ಆ ವೃದ್ದ, ಮಂಚದ ಪಕ್ಕದಲ್ಲಿದ್ದ ಖುರ್ಚಿಯನ್ನು ಪ್ರಯಾಸಪಟ್ಟು ಎಳೆದು ಕುಳಿತುಕೊಂಡ. ಖೇದವೆನಿಸಿತು. ಗಾಂಧಿ ಏನೇ ಮಾಡಿದ್ದರೂ ಪಾಪ ಜೀವ ತನಗಾಗಿ ಏನೂ ಮಾಡಿಕೊಳ್ಳಲಿಲ್ಲ. ದೇಶಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಲೆಕ್ಕವಿಲ್ಲದಷ್ಟು ಬಾರಿ ಒಂದು ಹನಿ ನೀರೂ ಕುಡಿಯದೆ ಉಪವಾಸ ಕುಳಿತುಕೊಂಡಿದ್ದ ಹಾಗೂ ಯಾವುದೇ ಪ್ರತಿಫಲವನ್ನು ಬಯಸಿರಲಿಲ್ಲ. ಸಾಕಷ್ಟು ವಯಸ್ಸಾಗಿದೆ. ದೇಹ ಮುದಿ ಬಿದ್ದಿದೆ, ಹಲ್ಲುಗಳು ಉದುರಿವೆ, ತನು ಬಾಗಿದೆ. ಚರ್ಮ ಸುಕ್ಕುಗಟ್ಟಿದೆ. ಒಂದು ಕ್ಷಣ ಸಹಾನುಭೂತಿ ವ್ಯಕ್ತವಾಯಿತು. ಅದರ ಹಿಂದೆಯೇ ಕಷ್ಟ ಪಟ್ಟು ಮನಸ್ಸನ್ನು ಕಲ್ಲಾಗಿಸಿಕೊಂಡೆ.

ಕುಳಿತ ನಂತರ ನಿಧಾನ ಉಸಿರು ಬಿಟ್ಟು ಸಾವಕಾಶವಾಗಿ “ಹೇಳು ಮಗು, ನಿನ್ನಂತೆ ಇನ್ನೂ ಅನೇಕರಿಗೆ ನನ್ನ ಬಗೆಗೆ ಅಗಣಿತ ಸಂಶಯಗಳು ಕಾಡಿವೆ, ಕಾಡುತ್ತಲೇ ಇವೆ, ಮುಂದೆಯೂ ಕಾಡುತ್ತಲೇ ಇರುತ್ತವೆ. ನನಗೂ ನನ್ನ ನಿರ್ಧಾರಗಳನ್ನು, ಧ್ಯೇಯ-ಸಿದ್ದಾಂತ ಹಾಗೂ ವೈಚಾರಿಕತೆಯ ನಿಲುವನ್ನು ಸಮರ್ಥಿಸಿಕೊಳ್ಳುವ ಇಂತಹ ಅವಕಾಶ ದೊರಕುವುದು ವಿರಳ. ನಿನ್ನ ಎಲ್ಲಾ ಪ್ರಶ್ನೆಗಳಿಗೂ ನಾನು ಉತ್ತರಿಸಲು ಸಿದ್ದ. ನನಗೆ ಯಾವ ಹಿಂಜರಿಕೆಯೂ ಇಲ್ಲ, ಭಯವೂ ಇಲ್ಲ, ಲಜ್ಜೆಯೂ ಇಲ್ಲ. ಪ್ರಾರಂಭಿಸು.”

ಗಾಂಧಿಯ ಒಪ್ಪಿಗೆ ದೊರೆತ ಸಂಭ್ರಮದಲ್ಲಿ ಒಂದೇ ಉಸಿರಿನಲ್ಲಿ ಆರಂಭಿಸಿಬಿಟ್ಟೆ. “ಸ್ವಾತಂತ್ರ್ಯ ಹೋರಾಟ ನಿನ್ನ ಕೈ ಮುಷ್ಠಿಯಲ್ಲಿ ಉಳಿಯಬೇಕೆಂದು ಏಕೆ ಬಯಸಿದೆ ನೀನು? ಹೋರಾಟದ ರೂಪುರೇಷೆ ನಿನ್ನ ಸಾಬರಮತಿ ಆಶ್ರಮದಲ್ಲಿಯೇ ನಿರ್ಧರಿತವಾಗಬೇಕು, ಹೋರಾಟಗಾರರು ನಿನ್ನ ಹಾದಿಯಲ್ಲಿಯೇ ಸಾಗಬೇಕು, ನಿನ್ನ ಮಾತೆ ಅಂತಿಮವಾಗಬೇಕು ಎಂದು ನೀನೇಕೆ ಅಪೇಕ್ಷಿಸುತ್ತಿದ್ದೆ? ಆಮೆಲೆ… ” ಇನ್ನೂ ನನ್ನ ಪ್ರಶ್ನೆಗಳು ಬಾಕಿಯಿತ್ತು. ಗಾಂಧಿ ಮುಗುಳುನಗುತ್ತಾ ತಲೆಯಾಡಿಸಿ ಕೈ ಎತ್ತಿ ನಿಲ್ಲಿಸುವಂತೆ ಸೂಚಿಸಿದ. ನಾನು ನಿಲ್ಲಿಸಿದೆ.

“ಅರೆ ಬಚ್ಚೆ, ಇತನಾ ಜಲ್ದಿ ಕ್ಯೂ? ನೀನಿಷ್ಟು ಅವಸರಿಸಿದರೆ ನನಗೆ ಉತ್ತರಿಸಲು ಕಷ್ಟವಾಗುತ್ತದೆ. ಒಂದು ವೇಳೆ ಉತ್ತರಿಸಿದರೂ ಅದು ನಿನಗೆ ಅರ್ಥವಾಗುವುದಿಲ್ಲ. ಕೊಂಚ ನಿಧಾನಿಸು. ಸಾವಕಾಶವಾಗಿ ಒಂದೊಂದಾಗಿ ಪ್ರಶ್ನೆಗಳನ್ನು ಕೇಳು. ನನಗೆ ಗೊತ್ತಿದೆ ನೀನು ಈ ಇಡೀ ದಿನ ನನಗೆ ಕೇಳಬೇಕಾದ ಪ್ರಶ್ನೆಗಳನ್ನು ಸಿದ್ದಪಡಿಸಿಕೊಂಡು ಪೂರ್ವತಯಾರಿಯನ್ನೂ ಮಾಡಿಕೊಂಡಿದ್ದೀಯ.” ನಗುತ್ತಲೆ ಗಾಂಧಿ ಹೇಳಿದ.

ಸತ್ತವರು ದೇವರಾಗುತ್ತಾರಂತೆ. ದೇವರಿಗೆ ಮಾತ್ರ ಮನುಷ್ಯರ ಮನಸ್ಸು ಅರ್ಥವಾಗುತ್ತದೆ. ಈ ಗಾಂಧಿಯೂ ದೇವರಾಗಿರಬಹುದೇ? ತಕ್ಷಣ ಆಲೋಚನೆ ಬಂದಿತಾದರೂ ಹಿಂದೆಯೇ ನಗುವೂ ಬಂದಿತು.

ಅರೆನಿಮಿಷ ಸುಮ್ಮನಿದ್ದ ಗಾಂಧಿ ಉತ್ತರಿಸತೊಡಗಿದ. “ಮೊದಲಿಗೆ ನಿನಗೆ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಬೇಕಿದೆ. ನಾನು ಅಹಿಂಸಾ ಮಾರ್ಗ ಹಾಗೂ ಸತ್ಯಾಗ್ರಹದಲ್ಲಿ ನಂಬಿಕೆಯಿಟ್ಟವನು. ನನ್ನ ದಾರಿ ಅದಾಗಿತ್ತು. ಹಿಂಸೆಗಿಂತ ಶಾಂತಿ, ಸಹನೆ ಹಾಗೂ ವಿವೇಕ ಉತ್ತಮ ಎಂದು ಸದಾ ನನ್ನ ಮಾತಿನಲ್ಲಿ ಹೇಳುತ್ತಿದ್ದೆ. ಪ್ರತಿಭಟನೆ, ಹರತಾಳಗಳು ಶಾಂತಿಯುತವಾಗಿ ಸಾಗಬೇಕು ಎನ್ನುವುದು ನನ್ನ ಮನೋಭಿಲಾಷೆಯಾಗಿತ್ತು ಅಷ್ಟೆ. ನಾನು, ಗುರುದೇವ ರವೀಂದ್ರನಾಥ ಟ್ಯಾಗೋರ್, ವಿವೇಕಾನಂದರು ಸಮಕಾಲೀನರು ಎನ್ನುವುದು ನಿನಗೆ ತಿಳಿದಿರಬಹುದು. ನಮ್ಮ ಮೂವರ ದೃಷ್ಠಿಕೋನವೂ ಒಂದೇ ಆಗಿತ್ತು. ವಿಶ್ವದ ಸರ್ವ ಮಾನವರಲ್ಲಿಯೂ ಮಾನವತೆಯನ್ನು ಮೂಲಭಾವವನ್ನು ಹುಟ್ಟುಹಾಕಬೇಕು ಎಂದು ನಾವು ಬಯಸಿದ್ದೆವು. ಪಾಶ್ಚಿಮಾತ್ಯ ಭಾಗದ ಕೆಲವು ಮೇಧಾವಿಗಳ ಅಭಿಪ್ರಾಯವೂ ಇದೇ ಆಗಿತ್ತು. ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟಿನ್, ಸುಪ್ರಸಿದ್ದ ನಟ ಚಾರ್ಲಿ ಸ್ಪೆನ್ಸರ್ ಚಾಪ್ಲಿನ್, ಇನ್ನೂ ಅನೇಕರಿದ್ದರು. ಅವರೆಲ್ಲರ ಮತ್ತು ನನ್ನ ಮಧ್ಯೆ ಉತ್ತಮ ಸಂಬಂಧವಿತ್ತು ಎನ್ನುವ ಹಿಂದೆ ಇದ್ದ ಕಾರಣ ನನ್ನ ಅಹಿಂಸಾತ್ಮಕ ಹಾಗೂ ಶಾಂತಿಪ್ರಧಾನ ಧೋರಣೆಯೇ ಆಗಿತ್ತು. ನಾನು ನನ್ನ ಹೋರಾಟದ ಬದುಕಿನಲ್ಲಿ ಎಂದಿಗೂ ಯಾರೂ ನನ್ನ ಹಾದಿಯಲ್ಲೆ ಸಾಗಬೇಕು ಎಂದು ಬಯಸಿರಲಿಲ್ಲ. ನನ್ನನ್ನು ಒಪ್ಪಲೇಬೇಕು ಎಂದೂ ನಿರೀಕ್ಷಿಸಿರಲಿಲ್ಲ. ಆದರೆ ಹೋರಾಟಗಾರರು ಯಾರೇ ಆಗಿರಲಿ ಅವರ ಮಾರ್ಗಗಳು ಯಾವುದೇ ಆಗಿರಲಿ ಅವರ ಪ್ರಥಮ ಆದ್ಯತೆ ಶಾಂತಿ, ಸಂಯಮ ಹಾಗೂ ಅಹಿಂಸೆಯಾಗಿರಬೇಕು ಎನ್ನುವುದು ನನಗಿದ್ದ ಆಸೆಯಾಗಿತ್ತು.”

“ಸರಿ; ಹಾಗಿದ್ದರೆ ನೀನು ಸುಭಾಷ್ ಬಾಬುವಿನ ವಿರುದ್ದ ಹೇಳಿಕೆಗಳನ್ನೇಕೆ ನೀಡುತ್ತಿದ್ದೆ. ಬೊಸ್‌ರ ಕಾರ್ಯಾಚರಣೆಯ ವಿರುದ್ದ ಹರಿಜನ ಪತ್ರಿಕೆಯಲ್ಲಿ ಸಂಪಾದಕೀಯ ಏಕೆ ಬರೆಯುತ್ತಿದ್ದೆ?” ನಾನು ಸಮಾಧಾನದಲ್ಲೆ ಕೇಳಿದೆ.

“ಮಗು. ಇತಿಹಾಸ ಎನ್ನುವುದು ಇದೆಯಲ್ಲ ಅದು ಯಾವತ್ತಿಗೂ ಅರ್ಥವಾಗದ ಸಂಕೀರ್ಣ ದಾಖಲೆಗಳ ಸಮೂಹ. ನೀನು ಓದುವುದು ಒಂದಾದರೆ ಅದು ಅರ್ಥವಾಗುವ ಬಗೆ ಇನ್ನೊಂದು ತರ. ಇದರ ನಡುವೆ ಜರುಗಿರುವ ಇತಿಹಾಸವೇ ಬೇರೆಯದ್ದಾಗಿರುತ್ತದೆ. ಅದನ್ನು ಬರೆಯುವವರು ಒಂದಷ್ಟು ತಿರುಚುತ್ತಾರೆ. ಆಮೇಲೆ ಆ ತಿರುಚಲ್ಪಡುವ ಮೂಲ ಇತಿಹಾಸವನ್ನು ಬರೆಯುವಾತ ತನ್ನ ಸ್ವಂತಿಕೆಯನ್ನು ಬಳಸಿಕೊಂಡು ಇನ್ನೊಂದಷ್ಟು ತಿರುಚುತ್ತಾನೆ. ಈಗ ನೀನು ಅರ್ಥಮಾಡಿಕೊಂಡಿರುವ ಹಾಗೂ ಚಿಂತಿಸುತ್ತಿರುವ ದಾಟಿಯಿದೆಯಲ್ಲ ಅದು ಮೂಲ ಇತಿಹಾಸದಿಂದ ಬಹುಪಾಲು ರೂಪಾಂತರಗೊಂಡು ಮಾರ್ಪಾಡಾಗಿರುವ ಸರಕು ಅಷ್ಟೆ. Mahatma-artಇದರ ಅಷ್ಟೂ ಕರ್ಮ ಹಾಗೂ ಶ್ರೇಯ ನಿಮ್ಮ ದೊಡ್ಡ ದೊಡ್ಡ ವಿಶ್ವವಿದ್ಯಾನಿಲಯಗಳ ಮಹಾ ಮೇಧಾವಿ ಪ್ರೊಫೆಸರ್‌ಗಳಿಗೆ ಸಲ್ಲಬೇಕು. ನೋಡು ಸತ್ಯ ಹೇಳುತ್ತಿದ್ದೇನೆ, ಮಾತೃಭೂಮಿಯ ಬಿಡುಗಡೆಗಾಗಿ ಸುಭಾಷ್ ಬಾಬುವಿನ ಆಂತರಿಕ ತುಡಿತ ಇತ್ತಲ್ಲ ಅದನ್ನು ಒಂದಲ್ಲ ನೂರು ಬಾರಿ ಪ್ರಾಮಾಣಿಕವಾಗಿ ಮೆಚ್ಚಿದ್ದೇನೆ. ಬಾ ಬಳಿ ಈ ಬಗ್ಗೆ ಅನೇಕ ಬಾರಿ ಪ್ರಸ್ತಾಪಿಸಿದ್ದೇನೆ. ನಮ್ಮ ಸಾಬರಮತಿ ಆಶ್ರಮ ಇತ್ತಲ್ಲ, ಅಲ್ಲಿ ವಿದೇಶಿ ಪದ್ದತಿಗಳಿಗೆ ಅವಕಾಶವಿರಲಿಲ್ಲ. ವಿದೇಶಿ ಪದ್ದತಿಗಳೆಂದರೆ ಧೂಮಪಾನ, ಮಧ್ಯಪಾನ, ಚಹಾ ಸೇವನೆ, ವಿದೇಶಿ ವಸ್ತ್ರಗಳು-ಉಡುಗೆ ತೊಡುಗೆ ಇತ್ಯಾಧಿ. ನಮ್ಮ ಆಶ್ರಮದಲ್ಲಿ ಕೆಲವು ಪದ್ದತಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿತ್ತು. ನೀವು ನನ್ನ ಹಿಂಬಾಲಕರು, ಅನುಯಾಯಿಗಳೆಂದು ಕರೆಯುತ್ತೀರಲ್ಲ ಅಂತಹ ರಾಜಾಜಿ, ಸರ್ದಾರ್ ಪಟೇಲರು, ಆಚಾರ್ಯ ಕೃಪಲಾನಿ, ಜವಾಹರ ಇವರಿಗೂ ಈ ನಿಯಮಗಳು ಅನ್ವಯವಾಗುತ್ತಿತ್ತು. ಜವಾಹರನಂತೂ ಆಶ್ರಮಕ್ಕೆ ಬರಲು ಪ್ರಾರಂಭಿಸಿದ ಮೇಲೆಯೇ ಖಾದಿ ವಸ್ತ್ರಗಳನ್ನು ತೊಡಲು ಶುರು ಮಾಡಿದ್ದ. ಅಂತಹದರಲ್ಲಿ ಈ ಎಲ್ಲಾ ನಿಯಮಗಳನ್ನು ನಾನು ಒಬ್ಬ ವ್ಯಕ್ತಿಗೆ ಮಾತ್ರ ಅನ್ವಯಿಸಿರಲಿಲ್ಲ. ಸಡಿಲಿಸಿದ್ದೆ. ಮತ್ತು ಆ ವ್ಯಕ್ತಿ ಅಷ್ಟೇನೂ ನನ್ನ ಆತ್ಮೀಯ ವಲಯದಲ್ಲಯೂ ಇರಲಿಲ್ಲ. ಅನುಭವದಲ್ಲಿ ಹಾಗೂ ವಯಸ್ಸಿನಲ್ಲಿ ಆತ ನನಗಿಂತ ಚಿಕ್ಕವನು. ಆ ವ್ಯಕ್ತಿ ಯಾರು ಗೊತ್ತೆ? ಬಂಗಾಳಿ ಸುಭಾಷ್ ಚಂದ್ರ ಬೋಸ್. ಸಾಬರಮತಿಗೆ ಆತ ಮೊದಮೊದಲು ವಿದೇಶಿ ಸೂಟು ತೊಟ್ಟಿಕೊಂಡು ಬರುತ್ತಿದ್ದಾಗಲೂ ನನಗೆ ಇರಿಸುಮುರಿಸು ಆಗಿರಲಿಲ್ಲ. ಇಂಗ್ಲೆಂಡಿನಲ್ಲಿ ಐಸಿಎಸ್ ಕಲಿಯುತ್ತಿದ್ದಾಗ ಸುಭಾಷ್ ಚಹಾ ಸೇವನೆಯ ಅಭ್ಯಾಸ ಕಲಿತಿದ್ದು ನನಗೆ ತಿಳಿದಿತ್ತು. ಬಾ, ಹಾಗಾಗಿ ಆಶ್ರಮವಾಸಿಗಳಿಗೆ ತಿಳಿಯದಂತೆ ಸುಭಾಷ್ ಬಾಬುವಿಗೆ ಚಹಾ ಮಾಡಿಕೊಡುತ್ತಿದ್ದರು. ಇದು ನನ್ನ ಗಮನಕ್ಕೂ ಬಂದಿತ್ತು. ಆದರೂ ನನಗದು ಸಹ್ಯವಾಗಿತ್ತು. ಅದಕ್ಕೆ ಕಾರಣ ಸುಭಾಷ್ ಬಾಬೂವಿನ ಧ್ಯೇಯನಿಷ್ಠ ಹಾಗೂ ರಾಷ್ಟ್ರಭಕ್ತಿಯ ನಿಸ್ವಾರ್ಥ ವ್ಯಕ್ತಿತ್ವ. ನಾನು ಸುಭಾಷರು ಅನುಸರಿಸಿದ ಮಾರ್ಗವನ್ನು ತಪ್ಪು ಎಂದು ಮಾತ್ರ ಹೇಳಿದ್ದೆ. ಒಂದರ್ಥದಲ್ಲಿ ಅದು ದುಡುಕಿನ ಮಾರ್ಗವೇ ಹೊರತು ತಪ್ಪಾಗಿರಲಿಲ್ಲ. ಹಾಗಾಗಿ ಅದನ್ನು ತಪ್ಪು ಎಂದು ಖಡಾಖಂಡಿತವಾಗಿ ಹೇಳಲು ಈಗಲೂ ಹಿಂಜರಿಯುತ್ತೇನೆ. ಸುಭಾಷರ ಆಜಾದ್ ಹಿಂದ್ ಫೌಜ್ ಸೈನ್ಯದ ಕಾರ್ಯಾಚರಣೆಯಿಂದ ಸಾವು ನೋವುಗಳಾಗುವ ಸಾಧ್ಯತೆಯಿತ್ತು. ಹಾಗಾಗಿ ಶಾಂತಿ ಮಾರ್ಗದಿಂದ ಸ್ವಾತಂತ್ರ್ಯಕ್ಕೆ ಆಗ್ರಹ ಪಡಿಸಬೇಕು ಎನ್ನುವ ವಾದ ನನ್ನದಾಗಿತ್ತು. ಇದು ನಾನು ಹರಿಜನ ಪತ್ರಿಕೆಯಲ್ಲಿ ಬರೆದಿದ್ದ ಸಂಪಾದಕೀಯದ ಸಾರಾಂಶ. ಇದನ್ನು ಕಾಲಾಂತರದಲ್ಲಿ ತಪ್ಪಾಗಿ ಅಧ್ಯಯನಿಸಿ, ವಿಮರ್ಶಿಸಿ, ಅರ್ಥೈಸಿಕೊಳ್ಳಲಾಯಿತೇ ಹೊರತು ನನಗೆ ಬೋಸರ ಬಗ್ಗೆ ಯಾವುದೇ ಕಹಿ ಇರಲೇ ಇಲ್ಲ.” ಮಾತಿನಲ್ಲಿ ಎಲ್ಲಿಯೂ ತಡವರಿಸದೆ, ಉದ್ವೇಗಗೊಳ್ಳದೆ ಗಾಂಧಿ ಮಾತನಾಡಿದ್ದ.

“ಆಯಿತು ಬಾಪೂ, ಸುಭಾಷರ ವಿಚಾರ ಬಿಡೋಣ. ನಿನಗೆ ನಿನ್ನ ಉತ್ತರಾಧಿಕಾರವನ್ನು ನೀಡಲು ಎರಡು ಆಯ್ಕೆಗಳಿದ್ದವು. ಮೊದಲೆಯದು ಸಮರ್ಥ ಸರ್ದಾರ್ ಪಟೇಲ್ ಹಾಗೂ ಎರಡನೆಯದು ಪಂಡಿತ್ ನೆಹರೂ. ನೆಹರೂರವರಿಗೆ ಹೋಲಿಕೆ ಮಾಡಿದಲ್ಲಿ ಪಟೇಲರು ಸಮರ್ಥರು ಎನ್ನುವುದನ್ನು ನೀನು ಒಪ್ಪಿಕೊಳ್ಳಲೇಬೇಕು. ಆದಾಗ್ಯೂ ನೀನು ಪಟೇಲರನ್ನು ದೂರವಿಟ್ಟು ನೆಹರೂರನ್ನೆ ಹೆಚ್ಚು ಓಲೈಕೆ ಮಾಡಿದ್ದೇಕೆ?” ಬಾಣ ಬಿಟ್ಟಂತೆ ಪ್ರಶ್ನಿಸಿದೆ ಎನ್ನುವ ಅಹಂಕಾರ ಈಗ ನನ್ನದಾಯಿತು.

ಮೊಗದಲ್ಲಿನ ನಸುನಗೆಯನ್ನು ಜೋಪಾನವಾಗಿಟ್ಟುಕೊಂಡೆ ಗಾಂಧಿ ಉತ್ತರಿಸಿದ, “ಇದು ನನ್ನ ಆಯ್ಕೆಯೇನಲ್ಲ. ನಾನು ಕಾಂಗ್ರೆಸ್ ಪಕ್ಷವನ್ನು ಕಟ್ಟಲಿಲ್ಲ. ಉತ್ತರಾಧಿಕಾರವನ್ನು ನೀಡಲು ನಾನು ರಾಜನೂ ಅಲ್ಲ. ನನಗೆ ರಾಜಕಾರಣವೂ ಬೇಕಿರಲಿಲ್ಲ. ನಾನೊಬ್ಬ ಸ್ವಾತಂತ್ರ್ಯದ ಪರವಾಗಿ ವಾದಿಸುವ, ಅದಕ್ಕಾಗಿ ಶತಾಯಗತಾಯ ಹೊರಾಟ ಮಾಡುವ ಸಾಮಾನ್ಯ ಹೋರಾಟಗಾರನಾಗಿದ್ದೆ. ಮೊತಿಲಾಲರು ಬಂದು ಜವಾಹರನಿಗೆ ಹೋರಾಟದ ತಿಳುವಳಿಕೆ ಮತ್ತು ಸಂಘಟನೆಯ ಜವಬ್ದಾರಿಯನ್ನು ನೀಡಲು ಕೋರಿಕೊಂಡರು. ತಾರುಣ್ಯದಲ್ಲಿದ್ದ ಜವಾಹರನಿಗೆ ರಾಷ್ಟ್ರದ ಹೊಣೆಗಾರಿಕೆಯ ಪಾಠ ಹೇಳಿಕೊಡುವುದಾಗಿ ನಾನು ಅವರಿಗೆ ಮಾತು ಕೊಟ್ಟೆ. gandhi-artಕೊಟ್ಟ ಮಾತಿನಂತೆಯೇ ನನ್ನ ಆಂದೋಲನಗಳಿಗೆ ಜವಾಹರರನ್ನು ಕರೆದೊಯ್ಯುತ್ತಿದ್ದೆ. ಬಿಡುವಿನ ವೇಳೆಯಲ್ಲಿ ಸ್ವಾತಂತ್ರ್ಯದ ಹೋರಾಟ ನೀತಿಗಳು ಹಾಗೂ ಕಾರ್ಯಚಟುವಟಿಕೆಗಳ ಕುರಿತಾಗಿ ಆಶ್ರಮದಲ್ಲಿ ಒಟ್ಟಿಗೆ ಕುಳಿತು ಚರ್ಚಿಸಿದ್ದಿದೆ. ಆ ವಿಚಾರದಲ್ಲಿ ನನಗೆ ಪಟೇಲರು ಒಂದೇ ಜವಾಹರನೂ ಒಂದೇ ಹಾಗೂ ದೇಶದ ಅಸಂಖ್ಯ ಸಾಮಾನ್ಯ ನಾಗರೀಕರೂ ಒಂದೇ. ವಿದೇಶದಲ್ಲಿ ಓದಿದ್ದ ಜವಾಹರ ಆಂಗ್ಲರೊಂದಿಗೆ ಆಂಗ್ಲರಷ್ಟೆ ಸಮರ್ಥವಾಗಿ ಇಂಗ್ಲೀಷ್‌ನಲ್ಲಿ ಮಾತನಾಡುತ್ತಿದ್ದ. ನನಗೆ ಇದರಿಂದ ಅನೇಕ ಕಡೆ ಅನುಕೂಲವೂ ಆಗಿತ್ತು. ಆದರೆ ಸ್ವಾತಂತ್ರ್ಯ ನಂತರದ ಭಾರತದ ರಾಜಕಾರಣ ಜವಾಹರ್ ಲಾಲ್ ನೆಹರೂರವರನ್ನು ಆರಿಸಿತು ಪಟೇಲರನ್ನು ನೇಪಥ್ಯಕ್ಕೆ ಸರಿಸಿತು ಎಂದರೆ ಅದಕ್ಕೆ ಹೇಗೆ ನಾನು ಕಾರಣನಾಗುತ್ತೇನೆ? ಇಷ್ಟಕ್ಕೂ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಕಾಂಗ್ರೇಸ್ಸನ್ನು ಬರ್ಕಾಸ್ತುಗೊಳಿಸಬೇಕು ಎಂದು ನಾನೇ ಬಯಸಿದ್ದೆ ಎನ್ನುವುದು ನಿನಗೆ ಗೊತ್ತಿದೆಯಾ? ಇದೆಲ್ಲವೂ ಒಂದು ವ್ಯವಸ್ಥಿತ ದಾರಿ ತಪ್ಪಿಸುವ ತಂತ್ರವಷ್ಟೆ. ಅದನ್ನು ಯಾರು ಮಾಡುತ್ತಾರೆ, ಏಕೆ ಮಾಡುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಇದರಿಂದ ಇತಿಹಾಸದ ಸಾರ ಬದಲಾಗುತ್ತದೆ ಎನ್ನುವುದಷ್ಟೆ ನನ್ನ ವಾದ.”

ಗಾಂಧಿಯ ಮಾತಿನ ಮೋಡಿಗೆ ನಿಧಾನವಾಗಿ ನಾನು ಆಕರ್ಷಿತಗೊಳ್ಳುತ್ತಿದ್ದೆ, ಆದರೆ ಕೆಲವು ದ್ವಂದ್ವಗಳನ್ನು ಪರಿಹರಿಸಿಕೊಳಲೇಬೇಕಿತ್ತು. ಹಾಗಾಗಿ ಬಿಗುಮಾನ ಬಿಡದೆ ಪ್ರಶ್ನೆಗಳನ್ನು ಮುಂದುವರಿಸಿದೆ. “ಅದೂ ಆಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ಯಕಃಶ್ಚಿತ್ ಚೌರಿಚೌರಾ ಪ್ರಕರಣವನ್ನು ನೆಪವನ್ನಾಗಿಟ್ಟುಕೊಂಡು ನೀನು ಅಸಹಕಾರ ಚಳವಳಿಯನ್ನು ಅರ್ಧದಲ್ಲಿ ಕೈಬಿಟ್ಟೆದ್ದೇಕೆ? ಇದು ಸರ್ವಾಧಿಕಾರದ ಅಥವಾ ಏಕಪ್ರಭುತ್ವದ ಧೋರಣೆಯಲ್ಲವೇ? ನೀನು ಹಾಗೆ ಮಾಡಿದ್ದರಿಂದ ನಿನ್ನ ಒಂದು ಕರೆಗೆ ಓಗೊಟ್ಟು ಬೀದಿಗಿಳಿದಿದ್ದ ಭಾರತೀಯರನ್ನು ನೀರಸವಾಗಿ ನಿರಾಸೆಗೆ ಒಳಪಡಿಸಿದ್ದು ತಪ್ಪು ಅಲ್ಲವೆ?”

“ನೋಡು ಮಗು ನೀನು ತಾರುಣ್ಯದಲ್ಲಿದ್ದೀಯ, ಹಾಗಾಗಿ ನಿನಗೆ ಈ ಸಂಗತಿ ಅತಿರೇಕ ಎನ್ನಿಸಬಹುದು. ಆದರೆ ನಾನು ದಕ್ಷಿಣ ಆಫ್ರಿಕದಿಂದ ಬರುವಾಗಲೇ ಈ ಹೋರಾಟಗಳ ಬಗ್ಗೆ ಒಂದು ಮೂರ್ತ ರೂಪ ಹಾಕಿಕೊಂಡು ಬಂದಿದ್ದೆ. ಮೊದಲೆ ಹೇಳುವಂತೆ ನನಗೆ ಹಿಂಸೆ ಎಂದರೆ ವರ್ಜ್ಯ. ಚೌರಿಚೌರಾದಲ್ಲಿ ಪೋಲೀಸ್ ಠಾಣೆಗೆ ಬೆಂಕಿಯಿಡುವ ಮೂಲಕ ಜನ ಹಿಂಸೆಗಿಳಿದರು. ಅದೇ ಸಂದರ್ಭದಲ್ಲಿ ನಾನು ಚಳವಳಿ ಮುಂದುವರೆಸಿದ್ದರೆ ಅದು ಒಂದರ್ಥದಲ್ಲಿ ಆ ಬೆಂಕಿಯಿಟ್ಟ ಮಂದಿಗೆ ನನ್ನ ಬೆಂಬಲವಿದೆ ಎನ್ನುವಂತಾಗುತ್ತಿತ್ತು. ಮುಂದೆ ಅವರು ಇನ್ನು ಹೆಚ್ಚಿನ ಹಾನಿ ಮಾಡುವವರಿದ್ದರು. ಹಾಗೆ ನಾನು ಚಳುವಳಿಯನ್ನು ಕೈಬಿಡುವ ಮೂಲಕ ನನ್ನ ಅಸಮಧಾನವನ್ನು ನೇರವಾಗಿ ವ್ಯೆಕ್ತಪಡಿಸಿದಂತಾಯಿತಲ್ಲ. ಆನಂತರದ ದಿನಗಳಲ್ಲಿ ಆ ಪ್ರಮಾಣದ ಹಿಂಸೆ ಎಲ್ಲಾದರೂ ಕಂಡುಬಂದಿತಾ? ಒಂದು ವೇಳೆ ಅಲ್ಲಲ್ಲಿ ನಡೆದರೂ ನಾನು ಅದನ್ನೂ ಹರಿಜನದಲ್ಲಿ ಉಗ್ರವಾಗಿ ವಿರೊಧಿಸುತ್ತಿದ್ದೆ ಅಲ್ಲವೆ? ಈ ದೃಷ್ಠಿಯಲ್ಲಿ ನೀನೇಕೆ ಯೋಚನೆ ಮಾಡಲಾರೆ?”

“ಅಲ್ಲ ಬಾಪೂ, ಜನರಲ್ ಡಯರ್ ಜಲಿಯನ್ ವಾಲಾಬಾಗ್‌ನಲ್ಲಿ ಸಾವಿರಾರು ಜನರ ನರಮೇಧ ಮಾಡಿದ್ದು ಹಿಂಸೆಯಲ್ಲವೇ? ಅವರು ಹಿಂಸಾ ದಾರಿ ಹಿಡಿದಾಗ ನೀನು ಅಹಿಂಸೆ ಅಹಿಂಸೆ ಎನ್ನುತ್ತಿದ್ದರೆ ಅದಕ್ಕೆ ಅರ್ಥವಿತ್ತಾ?” ಈ ಬಾರಿ ನನಗೆ ಉದ್ವೇಗ ತಡೆಯಲಾಗಲಿಲ್ಲ.

“ಆಂಗ್ಲರ ಆ ಕೃತ್ಯವನ್ನು ನಾನೆಲ್ಲಾದರೂ ಸಮರ್ಥಿಸಿದ್ದೆನಾ? ಆ ಪ್ರಕರಣವನ್ನು ನನ್ನ ಎಲ್ಲಾ ಸಾರ್ವಜನಿಕ ಭಾಷಣಗಳಲ್ಲಿ ಖಂಡಿಸಿದ್ದೇನೆ. ಹರಿಜನ, ಯಂಗ್ ಇಂಡಿಯಾದಲ್ಲಿ ಕಟುವಾಗಿ ಟೀಕಿಸಿದ್ದೇನೆ. ನನ್ನ ದೇಶವಾಸಿಗಳು ಹಿಂಸಾಚಾರದಲ್ಲಿ ತೊಡಗುವುದು ನನಗೆ ಇಷ್ಟವಿಲ್ಲ ಎಂದಷ್ಟೇ ಹೇಳಲು ಹೊರಟೆ. ನೋಡು ಸತ್ಯ, ನ್ಯಾಯದ ಮಾರ್ಗದಲ್ಲಿ ಎಂದಿಗೂ ಜಯವಿದೆ. ಇದನ್ನೆ ನಿಜವಾದ ಧರ್ಮ ಎನ್ನುತ್ತಾರೆ. ಇದನ್ನು ನಾನು ಹೇಳಿದ್ದು ಎಂದುಕೊಳ್ಳಬೇಡ. ನೀನು ಪುರಾಣಗಳನ್ನು ನಂಬುತ್ತೀಯಾ ಎಂದಾದರೆ ಇದನ್ನು ಹೇಳಿದ್ದು ಶ್ರೀ ರಾಮಚಂದ್ರ ಪ್ರಭು ಎಂದಿಟ್ಟುಕೊ. ಅದೇ ಕಾರಣಕ್ಕೆ ನಾನು ಹಿಂದೂಸ್ತಾನವನ್ನು ರಾಮರಾಜ್ಯವನ್ನಾಗಿಸಬೇಕು ಎನ್ನುವ ಕನಸು ಕಂಡಿದ್ದೆ. ಹಿಂಸೆಯಿಂದ ವ್ಯಥಾ ಸಾವುನೋವುಗಳಾಗುತ್ತವೆ. ಇದರಿಂದಲೂ ಮುಕ್ತಿ ಸಾಧ್ಯವಿದೆ. ಆದರೆ ಕೊನೆಗೆ ಸ್ವಾತಂತ್ರ್ಯದ ನಂತರ ನಾವು ಈ ಹಿಂಸಾಮಾರ್ಗದಿಂದ ಸ್ವಾತಂತ್ರ್ಯ ಗಳಿಸಿಕೊಂಡೆವು ಎನ್ನುವುದನ್ನು ಇತಿಹಾಸ ದಾಖಲಿಸಿಕೊಳ್ಳುತ್ತದೆ. ಇವತ್ತಿನ ದಿವಸ ನೀನು ಬದುಕುತ್ತಿರುವ ಭಾರತಕ್ಕೆ ಅಂತರ್ರಾಷ್ಟ್ರೀಯವಾಗಿ ಶಾಂತಿಗೆ ಆದ್ಯತೆ ನೀಡುವ ರಾಷ್ಟ್ರ ಎಂದು ಗೌರವ ನೀಡಲಾಗುತ್ತಿದೆ. ಅದಕ್ಕೆ ಕಾರಣ ನಾನು ಅನುಸರಿಸಿದ್ದ ಅಹಿಂಸಾ ಸತ್ಯಾಗ್ರಹ ಎನ್ನುವುದು ನನಗೆ ಸಮಾಧಾನ ತರುವ ವಿಷಯ. ನೀನು ನನ್ನ ಮೇಲಿನ ಕೋಪಕ್ಕೆ ಅದನ್ನು ಒಪ್ಪದಿದ್ದರೂ ಅದೇ ಸತ್ಯ.” ಅತ್ಯಂತ ಸ್ಪುಟವಾಗಿ ಹಾಗೂ ಆತ್ಮವಿಶ್ವಾಸದಿಂದ ಗಾಂಧಿ ಮಾತನಾಡುತ್ತಲೇ ಇದ್ದ.

ಅಸ್ಖಲಿತ ಹಿಂದಿ ಹಾಗೂ ಅಗತ್ಯಕ್ಕೆ ತಕ್ಕ ಉತ್ತಮ ಇಂಗ್ಲೀಷ್ ಬಳಸುತ್ತಿದ್ದ ಗಾಂಧಿಯ ಮಾತುಗಳು ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಲೇ ಇದ್ದವು. ಆ ಹೊತ್ತಿಗಾಗಲೆ ನನಗೆ ಏನೋ ಕಾರಣರಹಿತ ತಳಮಳ ಪ್ರಾರಂಭವಾಗಿತ್ತು. ಗಾಂಧಿ ಸರಿಯಿದ್ದನೆ? ಎನ್ನುವ ಅನುಮಾನಗಳು ಮತ್ತೆ ಆಂತರ್ಯದಲ್ಲಿ ಹಳೆಯ ಮಾಮೂಲಿ ತರ್ಕ ಮತ್ತೆ ಕಾಣಿಸತೊಡಗಿತ್ತು. ಇನ್ನೊಂದು ಪ್ರಶ್ನೆಯನ್ನು ಕೇಳಿ ನಿರ್ಧಾರಕ್ಕೆ ಬರೋಣ ಎಂದು ಗಾಂಧಿಯತ್ತ ತಿರುಗಿದೆ. ಗಾಂಭೀರ್ಯದಿಂದ ಕುಳಿತಿದ್ದ ಆ ವದನದಲ್ಲಿ ಅದೇ ಮಂದಹಾಸ. ಸ್ವಲ್ಪವೂ ಮಾಸಿರಲಿಲ್ಲ.

“ಈ ಪ್ರಶ್ನೆ ನನ್ನನ್ನು ಅತಿಯಾಗಿ ಕಾಡುತ್ತಲೇ ಇದೆ ಬಾಪೂ, ದೇಶವಿಭಜನೆಯನ್ನು ಅತ್ಯುಗ್ರವಾಗಿ ವಿರೋಧಿಸಿದ್ದ ನೀನು, ಆನಂತರ ಪಾಕಿಸ್ತಾನ ರಚನೆಗೆ ಸಮ್ಮತಿಸಿದ್ದೇಕೆ? ಅದೂ ತಡವಾಗಿ. ಅಷ್ಟರಲ್ಲಾಗಲೆ ದೇಶದ ಮುಖ್ಯ ನಗರಗಳೆಲ್ಲ ಕೋಮುದಳ್ಳುರಿಯಿಂದ ಹೊತ್ತಿ ಉರಿದಿದ್ದವು. ಅನೇಕ ಹಿಂದೂ ಮುಸಲ್ಮಾನ ಕುಟುಂಬಗಳು ಬೀದಿಗೆ ಬಿದ್ದಿದ್ದವು. ಸಾವು ನೋವುಗಳಾಗಿದ್ದವು. ಇದಕ್ಕೆಲ್ಲಾ ಯಾರು ಹೊಣೆ? ನೀನೇ ಹೊಣೆಯೆಂದು ನಾನು ನಿನ್ನನ್ನು ಆಪಾದಿಸುತ್ತೇನೆ. ಪಾಕಿಸ್ತಾನಕ್ಕೆ ಆರ್ಥಿಕ ಸ್ವಾವಲಂಬನೆ ನೀಡಬೇಕು ಎಂದು ನೀನು ಉಪವಾಸ ಕುಳಿತೆಯಲ್ಲಾ ಅದು ತಪ್ಪಲ್ಲವೇ? ಅಷ್ಟೆಲ್ಲಾ ರಾದ್ಧಾಂತವಾದ ಮೇಲೆ ಒಪ್ಪಿಗೆ ನೀಡುವ ಬದಲು ಮೊದಲೇ ನೀಡಿದ್ದರೆ ಆ ಪ್ರಮಾಣದ ಹಿಂಸೆಯನ್ನು ನೀನು ತಡೆಯಬಹುದಿತ್ತಲ್ಲವೇ?” ಒಂದು ಸುದೀರ್ಘ ನಿಟ್ಟುಸಿರು ಅದಾಗೆ ಹೊರಬಂದಿತು.

ಆ ಪ್ರಶ್ನೆಯಿಂದ ಗಾಂಧಿ ಕೊಂಚ ವಿಚಲಿತನಾದಂತೆ ಕಂಡುಬಂದಿತು. ತುಸು ಗಂಭೀರ ಧ್ವನಿಯಿಂದ ಉತ್ತರಿಸತೊಡಗಿದ, “ಅದು ಈಗಲೂ ನನ್ನನ್ನು ಕಾಡುತ್ತಲೇ ಇದೆ. ಅದಕ್ಕೆ ಸತ್ಯವಾಗಿಯೂ ನಾನು ಕಾರಣನಲ್ಲ. ಬ್ಯಾರಿಸ್ಟರ್ ಮೊಹಮದ್ ಅಲಿ ಜಿನ್ನಾನೂ ಕಾರಣ ಎಂದು ಹೇಳಲಾರೆ. ಇದು ನಮ್ಮ ರಾಷ್ಟ್ರದ ನಿಜವಾದ ದುರಂತ. ಅಖಂಡ ಭಾರತ ಛಿದ್ರವಾಗುವುದನ್ನು ಓರ್ವ ದೇಶಭಕ್ತನಾಗಿ ನಾನು ಹೇಗೆ ನೋಡಿಕೊಂಡು ಸುಮ್ಮನಿರಲಿ. ಹಾಗಾಗೆ ಅದನ್ನು ವಿರೋಧಿಸಿದ್ದೆ. ವಿಭಜನೆ ಮಾಡುವುದಾದರೆ ನನ್ನ ಮೃತ ದೇಹದ ಮೇಲೆ ಮಾಡಿ ಎಂದು ಹೇಳಿದ್ದೆ. ಜಿನ್ನಾರನ್ನು ಒಪ್ಪಿಸಲು ಅನೇಕ ಬಾರಿ ಪ್ರಯತ್ನಿಸಿದ್ದೆ. ಇದೇ ಪ್ರಯತ್ನವನ್ನು ಸುಭಾಷ್ ಬಾಬೂ ಸಹ ಮಾಡಿದ್ದರು. ಆದರೆ ಆತ ಮೊಂಡ ತನ್ನ ಹಠ ಬಿಡಲೇ ಇಲ್ಲ. ನನಗೆ ಅಸಮಾಧಾನವಾಗಿತ್ತು, ನೋವಾಗಿತ್ತು. ಸ್ವಾತಂತ್ರ್ಯ ಗಳಿಸಿಕೊಳ್ಳುವ ಮೊದಲು ಅಣ್ಣ-ತಮ್ಮಂದಿರಂತೆ ಜೊತೆಯಿದ್ದ ಹಿಂದೂಗಳು ಮತ್ತು ಮುಸಲ್ಮಾನರು ಆನಂತರ ಕುರುಡು ವ್ಯಾಮೋಹಕ್ಕೆ ದಾಸರಾಗಿ ಬಡಿದಾಡಿಕೊಂಡರು. ಆಗ ನಾನು ಮುಸಲ್ಮಾನ ನಾಯಕರನ್ನೂ ಭೇಟಿಯಾಗಿದ್ದೆ, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದೆ. ಹಿಂದೂಗಳಲ್ಲಿಯೂ ಅದೇ ಪ್ರಾರ್ಥನೆ ಮಾಡಿಕೊಂಡಿದ್ದೆ. ಆದರೆ ಪರಿಸ್ಥಿತಿ ಕೈ ಮೀರುವ ಸೂಚನೆ ಕಂಡುಬಂದ ಹಿನ್ನೆಲೆಯಲ್ಲಿ ನಾನು ಮಣಿಯಲೇ ಬೇಕಾಯಿತು. ಬಂಗಾಲದ ಅಸಲು ವಿಚಾರ ನಿನಗೆ ಗೊತ್ತಾ? ಓರ್ವ ಹಿಂದೂವಾಗಿಯೂ ನಾನು ಮುಸಲ್ಮಾನರ ಮನೆಯಲ್ಲಿ ಉಣ್ಣುತ್ತಿದ್ದೆ ಉಳಿದುಕೊಳ್ಳುತ್ತಿದ್ದೆ. ಆ ದಿನ ಬಂಗಾಲದಲ್ಲಿ ವಿಭಜನೆಯ ವಿಷಯ ಇಟ್ಟುಕೊಂಡು ಮುಸಲ್ಮಾನ ಬಾಂಧವರು ಹಿಂದೂಗಳ ವಿರುದ್ದ ದಂಗೆಯೆದ್ದಿದ್ದರು. ಪೂರ್ಣ ಬಂಗಾಲ ನರಕಸದೃಶ್ಯವಾಗಿತ್ತು. ಇನ್ನೂ ಹಿಂಸಾಚಾರವನ್ನು ಮುಂದುವರಿಸಿದರೆ ನಾನು ನನ್ನ ದೇಹದ ಅಷ್ಟೂ ರಕ್ತವನ್ನು ಹಿಂಡಿ-ದೇಹತ್ಯಾಗ ಮಾಡಿಕೊಳ್ಳುತ್ತೇನೆ ಎಂದು ಎಚ್ಚರಿಸಿದ್ದರ ಪರಿಣಾಮವಾಗಿ ಮುಸಲ್ಮಾನರು ನನ್ನ ಮೇಲಿನ ಗೌರವದಿಂದ ಆ ದಿನ ಹಿಂಸಾಚಾರ ನಿಲ್ಲಿಸಿದರು. ಗಾಂಧಿಯೆಂಬ ಏಕಾಂಗಿ ಯೋಧನ ವಿನಃ ಬೇರೆ ಯಾವ ರಕ್ಷಣಾ ವ್ಯವಸ್ಥೆಯೂ ಆ ದಿನ ಹಿಂಸಾಚಾರ ತಡೆಯಲಿಲ್ಲ ಎನ್ನುವ ಸತ್ಯವನ್ನು ಹೇಳಿದರೆ ನಿನಗೆ ಅಹಂಕಾರವೆನಿಸುತ್ತದೆಯಾ? ನೀನು ಹಾಗೆಂದುಕೊಂಡರೂ ಇದು ಸತ್ಯ, ಹಾಗೂ ನನ್ನ ಸಮರ್ಥನೆಯಂತೆ ನನಗೆ ಸಿಕ್ಕಿದ್ದ ಆತ್ಮಸಮಾಧಾನ. ನಾನು ವಿಭಜನೆಗೆ ಒಪ್ಪಿಗೆ ನೀಡದಿದ್ದರೆ ದೇಶ ಹೊತ್ತಿ ಉರಿಯುತ್ತಿತ್ತು. ಅಂತಹ ಒಂದು ವ್ಯವಸ್ಥಿತ ಮನೆಹಾಳು ಯೋಜನೆಯನ್ನು ಬ್ರಿಟೀಶರು ಹೋಗುವ ಮುಂಚೆಯೇ ಮಾಡಿಟ್ಟು ಹೋಗಿದ್ದರು. ಸೌಹಾರ್ದಯುತವಾದ ಹಾಗೂ ನೆಮ್ಮದಿಯಾದ ಬೆಚ್ಚಗಿನ ಜೀವನ ನೆಡೆಸಲು ಪಾಕಿಸ್ತಾನ ಎನ್ನುವ ಸ್ವತಂತ್ರ್ಯ ರಾಷ್ಟ್ರಕ್ಕೆ ಆರ್ಥಿಕ ನೆರವು ಬೇಕಿತ್ತು. ಅದಕ್ಕಾಗಿ ನಾನು ಆಗ್ರಹಿಸಿದೆ ಅಷ್ಟೆ. ಹಾಗೆಂದ ಮಾತ್ರಕ್ಕೆ ನನ್ನನ್ನು ಒಂದು ಧರ್ಮದ ಪರವಾದ ನಿಲುವಿನವನು ಎಂದು ನೀನು ತೀರ್ಮಾನಿಸಿದರೆ ನಿನ್ನಂತಹ ಶತಮೂರ್ಖ ಬೇರೊಬ್ಬ ಇಲ್ಲ ಎನ್ನುವ ನಿರ್ಧಾರಕ್ಕೆ ನಾನೂ ಬರಬೇಕಾಗುತ್ತದೆ. ನನಗೆ ಜಾತಿ, ಮತ, ಪಂಥ, ಬಣ ಇತ್ಯಾದಿಗಳ ಮೇಲೆ ನಂಬಿಕೆಯೂ ಇಲ್ಲ ಆದರವೂ ಇಲ್ಲ. ಮುಖ್ಯವಾಗಿ ಮಾನವತೆಗೆ ಬೆಲೆ ನೀಡುವವ ನಾನು.” ತಣ್ಣಗಿದ್ದ ಗಾಂಧಿಯ ಮುಖ ಸಿಟ್ಟಿಗೆದ್ದದ್ದು ನೋಡಿ ನನಗೆ ಆಶ್ಚರ್ಯ ಹಾಗೂ ಕೊಂಚ ಆಘಾತವೂ ಆಯಿತು.

ಕೊಂಚ ನಿಲ್ಲಿಸಿ ನಿಟ್ಟುಸಿರು ಬಿಟ್ಟ ಗಾಂಧಿ ಮತ್ತೆ ಮೊಗದಲ್ಲಿನ ಅಸಮಾಧಾನ ಮುಂದುವರೆಸುತ್ತಲೇ, “ಇನ್ನೊಂದು ಸೂಕ್ಷ್ಮ ಹಾಗೂ ವಿವಾದಾತ್ಮಕ ಸಂಗತಿ ಹೇಳುತ್ತೇನೆ ಕೇಳು. ಇದು ಈ ಸಂದರ್ಭದಲ್ಲಿ ಹೇಳಬೇಕಾಗಿರುವ ಪ್ರಸ್ತುತ ಅಂಶವೂ ಹೌದು. ನಮ್ಮ ಜವಾಹರನಿಗೆ ಸ್ವಲ್ಪ ಅಧಿಕಾರದ ಲಾಲಸೆಯಿತ್ತು. ವಿಶ್ವದ ಪ್ರಸಿದ್ಧ ನಾಯಕನಾಗಬೇಕು ಎನ್ನುವ ಅತಿಯಾದ ಮಹಾತ್ವಾಕಾಂಕ್ಷೆಯಿತ್ತು. ಒಂದರ್ಥದಲ್ಲಿ ಆತ ಆ ಸಂದರ್ಭದಲ್ಲಿ ಅದಕ್ಕೆ ಪಟೇಲರಷ್ಟೆ ತಕ್ಕ ವ್ಯಕ್ತಿಯೂ ಆಗಿದ್ದ ಎಂದಿಟ್ಟುಕೋ. ವಿದೇಶದಲ್ಲಿ ಪದವಿ ಮುಗಿಸಿದ್ದ. ಹಲವಾರು ದೇಶಗಳನ್ನು ಸುತ್ತಿದ್ದ. ಅನೇಕ ಹೆಸರಾಂತ ಗ್ರಂಥಗಳ ಅಧ್ಯಯನ ಮಾಡಿದ್ದ. ನನ್ನ ಜೊತೆಯಲ್ಲಿ ಆಂದೋಲನದಲ್ಲಿ ಭಾಗವಹಿಸಿದ್ದ. ಎರಡು ಅವಧಿಗೆ ಕಾಂಗ್ರೆಸ್ ಅಧ್ಯಕ್ಷನಾಗಿದ್ದ. ಉತ್ತಮ ವಾಗ್ಮಿ, ಅತ್ಯುತ್ತಮ ಸಂಘಟಕ, ದೂರದೃಷ್ಟಿಯುಳ್ಳ ನಾಯಕ. ಅನೇಕಬಾರಿ ಜೈಲುವಾಸ ಎದುರಿಸಿದ್ದ. ಆದರೆ ಜವಾಹರನಷ್ಟೆ ಸಮರ್ಥ ಇನ್ನೊಬ್ಬ ಅವಿಭಜಿತ ಭಾರತದಲ್ಲಿದ್ದ. ಆತನೂ ವಕೀಲ, ಆತನೂ ಉತ್ತಮ ಸಂಘಟಕ, ವಾಗ್ಮಿ, ಅವನ ಮಾತನ್ನೂ ಕಿವಿಗೊಟ್ಟು ಆಲಿಸಿ ಚಾಚೂತಪ್ಪದೆ ಪಾಲಿಸುತ್ತಿದ್ದ ಒಂದು ಸಮುದಾಯವಿತ್ತು. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಅವನ ರಾಜಕಾರಣವೂ ನಡೆಯುತ್ತಿತ್ತು. ಅವನ್ಯಾರು ಗೊತ್ತಾ?-ಬ್ಯಾರಿಸ್ಟರ್ ಮೊಹಮ್ಮದಾಲಿ ಜಿನ್ನಾ. ಅವನು ನಿಜಾರ್ಥದಲ್ಲಿ ಜವಾಹರನಿಗೆ ಅತ್ಯಂತ ಪ್ರಬಲ ಪೈಪೋಟಿಯಾಗುತ್ತಿದ್ದ. ವಿಭಜನೆಯಾಗದಿದ್ದರೆ ಆತ ಜವಾಹರನೊಂದಿಗೆ ಪ್ರಧಾನಿ ಸ್ಥಾನಕ್ಕೂ ಸ್ಪರ್ಧೆ ನೀಡುವ ಸಾಧ್ಯತೆಯಿತ್ತು. ಈ ರೇಖೆಯಲ್ಲಿ ತಕಿಸಿದಾಗ ಅಖಂಡ ಭಾರತ ವಿಭಜನೆಯಾಗುವ ಹಿಂದೆ ಜವಾಹರನ ಸ್ವಾರ್ಥವೂ ಇದ್ದಿರಬಹುದೇನೋ? ಜವಾಹರನೇನಾದರೂ ಈ ರೀತಿ ಅವಿತಿದ್ದ ತನ್ನ ಮನದಿಂಗಿತವನ್ನು ನನ್ನೆದುರು ತೆರೆದಿಟ್ಟಿದ್ದರೆ, ಖಂಡಿತವಾಗ್ಯೂ ನಾನು ಅವನನ್ನು ನೇರವಾಗಿ ಖಂಡಿಸುತ್ತಿದ್ದೆ. ಜವಾಹರ್‌ಲಾಲ್ ಅದನ್ನೆಂದು ತೆರೆದಿಡಲಿಲ್ಲ. ಈ ನಿಟ್ಟಿನಲ್ಲಿ ಯೋಚಿಸಿದರೂ ಕೂಡ ಅದಕ್ಕೆ ನಾನು ಕಾರಣನಲ್ಲ. ಹೇಗೆ ನೀನು ಭಾರತಭೂಮಿ ವಿಭಜನೆಗೆ ನಾನು ಕಾರಣ ಎಂದು ತೀರ್ಮಾನಿಸಿಬಿಟ್ಟೆ. ಇಷ್ಟು ವರ್ಷಗಳ ಅಧ್ಯಯನದಲ್ಲಿ ನೀನು ನನ್ನ ಅರ್ಥಮಾಡಿಕೊಂಡಿದ್ದು ಇಷ್ಟೆಯೇ?”

“ಅರೆ ಬಾಪೂ ನಿನಗೂ ಸಿಟ್ಟು ಬರುತ್ತದೆ ಎಂದಾಯಿತು. ಹೋಗಲಿ ಬಿಡು. ಯಾವ ದೇಶವನ್ನು ಒಬ್ಬ ಸಾಮಾನ್ಯ ವ್ಯೆಕ್ತಿಯ ಹೆಸರಿನಿಂದ ಗುರುತಿಸುತ್ತಾರೋ ಆ ದೇಶ ಭಾರತ ಮತ್ತು ಆ ವ್ಯಕ್ತಿ ಗಾಂಧಿ ಎನ್ನುವುದು ನಿರ್ವಿವಾದಿತ ಸತ್ಯ. ಇಲ್ಲಿಗೆ ನನ್ನ ಪ್ರಶ್ನೆಗಳು ಮುಗಿಯಿತು. ಈಗ ನಾಥೋರಾಂ ಗೋಡ್ಸೆಯ ಬಗ್ಗೆ ಏನು ಹೇಳುತ್ತೀಯಾ? ಅದಷ್ಟನ್ನು ಹೇಳು ಮತ್ತೆ ನಿನಗೆ ತೊಂದರೆ ನೀಡಲಾರೆ.” ನಗುತ್ತಲೆ ಕೇಳಬೇಕಾಗಿದ್ದ ಅತ್ಯಂತ ಕುತೂಹಲಕಾರಿ ಮಾತು ಕೇಳಿದ್ದೆ.

“ಆ ವ್ಯಕ್ತಿ ಈಗ ನನ್ನ ಚಿತ್ತದಲ್ಲಿ ತಿಲಕರು ಹಾಗೂ ಸುಭಾಷರ ನಂತರದ ಸ್ಥಾನದಲ್ಲಿದ್ದಾನೆ. ಆತ ನನಗೆ ಗುಂಡು ಹಾರಿಸುವ ಮೊದಲು gandhiಆತನ ಬಗ್ಗೆ ನನಗೆ ಅಲ್ಪ ಸ್ವಲ್ಪ ತಿಳಿದಿತ್ತು. ಸಾವರ್ಕರ್ ಗರಡಿಯಲ್ಲಿ ಕಲಿತಿದ್ದ ಯುವಕ. ಬಿಸಿರಕ್ತ, ಉಗ್ರ ವಿಚಾರಧಾರೆ, ಅದ್ವಿತೀಯ ದೇಶಭಕ್ತಿ. ಹೀಗೆ ಆತ ನನ್ನನ್ನು ಆಕರ್ಷಿಸಿದ್ದನೇನೋ? ಆತ ನನ್ನ ಮುಂದೆ ಕೇವಲ ಮೂರು ಅಡಿಯಲ್ಲಿ ನಿಂತು ಪಿಸ್ತೂಲು ತೆಗೆದು ’ಸಾರಿ ಬಾಪೂ..’ ಎಂದು ಗುಂಡು ಹಾರಿಸುವಾಗ ಸ್ಪಷ್ಟವಾಗಿ ಹಾಗೂ ಹತ್ತಿರದಿಂದ ಅವನ ಮುಖ ನೋಡಿದ್ದೆ. ಅದೆಂತಹ ತೇಜಸ್ಸಿತ್ತು ಅವನ ಮುಖದಲ್ಲಿ. ಅದೇನೊ ಆತ್ಮವಿಶ್ವಾಸ. ಸಾಧನೆಗೆ ಹತ್ತಿರದಲ್ಲಿರುವ ಸಾಧಕನ ಮುಖದಲ್ಲಿ ದಿಢೀರನೆ ಉದ್ಭವಿಸುತ್ತಲ್ಲ ಅಂತಹ ತೇಜಸ್ಸದು. ಆತನ ಚಿತಾಭಸ್ಮ ಇನ್ನೂ ವಿಸರ್ಜನೆಯಾಗಿಲ್ಲ ಎಂದು ಕೇಳಿದ್ದೇನೆ. ಅಂತಹ ವ್ಯಕ್ತಿಗಳು ಬಹು ವಿರಳ. ಆತನ ಆತ್ಮಕ್ಕೆ ಈಶ್ವರ ಶಾಂತಿಯನ್ನು ನೀಡಲಿ.”

ಮಾತೆ ಹೊರಡಲಿಲ್ಲ. ದಿಙ್ಮೂಡನಾಗಿ ಗಾಂಧಿ ಮುಖ ನೋಡುತ್ತಾ ಕುಳಿತುಬಿಟ್ಟೆ. ನಿಜ ಗಾಂಧಿ ಹೀಗೆಯೇ ಇದ್ದನೇನೂ. ನಾನು ತಪ್ಪಾಗಿ ಅರ್ಥ ಮಾಡಿಕೊಂಡನೇನೋ? ಅಥವಾ ಅದೂ ಗಾಂಧಿ ಎನ್ನುವ ವಿಷಯದ ಸಹ ಕಲಿಕೆಯ ಒಂದು ಭಾಗವೇನೋ?

“ನಿನ್ನ ಪ್ರಶ್ನೆಗಳು ಮುಗಿದಿವೆ ಎಂದು ಭಾವಿಸುತ್ತೇನೆ. ನಾನಿನ್ನು ಹೊರಡುತ್ತೇನೆ. ನಿನ್ನ ಆಸೆಯಂತೆ ಮತ್ತೆ ನಾನು ಮರಳಿ ಬರಲಾರೆ. ನನ್ನ ಆತ್ಮ ಸದಾ ಸಂಚಾರದಲ್ಲಿರುತ್ತದೆ. ಆಗ ನಾನು ದೈಹಿಕವಾಗಿ ಪಾದಯಾತ್ರೆ ಮಾಡಿದ್ದೆ. ಈಗ ನನ್ನ ಆತ್ಮ ಭಾರತದಾದ್ಯಂತ ಸಂಚರಿಸುತ್ತಿದೆ. ಇಂದು ಇಲ್ಲಿ ನಾಳೆ ಮತ್ತೆಲ್ಲೋ. ನಾನು ದೇವರಲ್ಲ. ನಿನ್ನಂತೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿದ್ದವನು. ನನ್ನ ವಿಚಾರಧಾರೆಯನ್ನು ಸಾಧ್ಯವಾದರೆ ಸರಿಯಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡು. ನನ್ನ ಸತ್ಯಾನ್ವೇಷಣೆಯನ್ನು ಕೂಲಂಕಷವಾಗಿ ಓದು. ನನ್ನನ್ನು ತಪ್ಪಾಗಿ ಅರ್ಥಮಾಡಿಕೊಳ್ಳುವವರನ್ನು ಸಾಧ್ಯವಾದರೆ ಸರಿಪಡಿಸು.” ಮಾತುಗಳು ಅಸ್ಪಷ್ಟವಾಗಿ ಕಿವಿಗೆ ಬೀಳುತ್ತಿತ್ತು. ನಿಧಾನವಾಗಿ ಗಾಂಧಿ ಪ್ರತಿಮೆ ಮಾಯವಾಯಿತು. ಅಶರೀರವಾಣಿಯೂ ಕೇಳದಂತಾಯಿತು. ಆನಂತರ ಗಾಢ ನಿದ್ರೆ ಆವರಿಸಿಕೊಂಡುಬಿಟ್ಟಿತು.

“ಎದ್ದೇಳೋ ಸೋಂಬೇರಿ.”-ಅಮ್ಮ ಬಯ್ದು ಎಬ್ಬಿಸಿದಾಗ ಸಮಯ ಅದಾಗಲೆ ಎಂಟಾಗಿಬಿಟ್ಟಿತ್ತು. ರಾತ್ರಿಯ ಗಾಂಧಿ ಜೊತೆಗಿನ ಸಂಭಾಷಣೆಯನ್ನು ಮೆಲುಕು ಹಾಕುತ್ತಿದ್ದಾಗಲೆ ಗಾಂಧಿ ಚಿತ್ರಪಟ ನೋಡುವ ಮನಸ್ಸಾಯಿತು. ಮಾಳಿಗೆಯ ಹಳೆಯ ದೊಡ್ಡ ಗಡಿಯಾರದ ಬಳಿಗೆ ಬಂದೆ. ಅದರಲ್ಲಿ ಗಾಂಧಿ ಫೋಟೋ ಅಂಟಿಸಲಾಗಿತ್ತಲ್ಲ. ಆ ದೃಶ್ಯ ನೋಡಿ ನನಗೆ ಶಾಕ್ ತಡೆದುಕೊಳ್ಳಲೇ ಆಗಲಿಲ್ಲ. ಅಲ್ಲಿದ್ದ ಗಾಂಧಿ ಫೋಟೋ ಒಡಿದು ಚೂರಾಗಿತ್ತು. ಗಾಂಧಿಯ ಚಿತ್ರಪಟವೂ ಅಲ್ಲಲ್ಲಿ ಹರಿದು ಹೊಗಿತ್ತು.

ಅಲ್ಲಿಗೆ ಬಂದ ಅಮ್ಮ, “ನೋಡು ನೀನು ಮುದ್ದಿಂದ ಸಾಕಿದ್ದೀಯಲ್ಲ ಆ ಬೆಕ್ಕಿನ ಮರಿ ನಿನ್ನೆ ರಾತ್ರಿ ಇದರ ಮೇಲೆ ಸರ್ಕಸ್ಸು ಮಾಡಿ ಗಾಂಧೀಜೀಯ ಪೋಟೊ ಒಡೆದು ಹಾಕಿದೆ” ಎಂದಳು.

ಹಾಗೆ ಆ ಫೋಟೊ ಒಡೆದುಹೋಗಿದ್ದು ಗಾಂಧಿ ಕನಸ್ಸಿನಿಂದ ಮಾಯವಾದ ನಂತರ ಎನ್ನುವ ಸ್ಪಷ್ಟೀಕರಣ ಕೂಡಲೆ ದೊರೆಯಿತು. ಆದರೆ ಅದಕ್ಕೆ ಕಾರಣ ಮಾತ್ರ ತಿಳಿಯಲೇ ಇಲ್ಲ. ತಲೆಯಲ್ಲಿ ಹೊಸದೊಂದು ಪ್ರಶ್ನೆ ಹುಟ್ಟಿಕೊಂಡಿತ್ತು-“ಗಾಂಧಿ ಫೋಟೋ ಒಡೆದುಹೋಗಿದ್ದು ಕಾಕತಾಳೀಯವೇ?”.

ಗಾಂಧಿ ಜಯಂತಿ ಕಥಾ ಸ್ಪರ್ಧೆ -2013 : ತೀರ್ಪುಗಾರರ ಟಿಪ್ಪಣಿ


– ಡಾ.ರಾಮಲಿಂಗಪ್ಪ ಟಿ. ಬೇಗೂರು


 

ಸ್ಪರ್ಧೆಗೆ ಬಂದಿದ್ದ 50 ಕ್ಕು ಹೆಚ್ಚು ಕಥೆಗಳನ್ನು ಮೊದಲ ಸುತ್ತಿನಲ್ಲಿ ಕೇರಿ, ತೂರಿ ಅಂತಿಮವಾಗಿ 39 ಕಥೆಗಳನ್ನು ಪರಿಶೀಲನೆಗೆ ನೀಡಿದ್ದರು. ಇವುಗಳಲ್ಲಿ ಒಂದೆ ಓದಿನಲ್ಲೆ ಸಾಧಾರಣ ಎನಿಸಿದ್ದರಿಂದ 22 ಕಥೆಗಳನ್ನು ಪಕ್ಕಕ್ಕಿಡುವುದು ಸುಲಭವಾಯಿತು. ಆದರೆ ಉಳಿದ ಹದಿನೇಳು ಕಥೆಗಳು ಸರಿಸಮಾ ಪೈಪೋಟಿಯ ಕಥೆಗಳಾಗಿದ್ದವು. ಮಿತ್ರ ರವಿ ಕೃಷ್ಣಾರೆಡ್ಡಿ ನನ್ನ ಕೋರಿಕೆಯ ಮೇರೆಗೆ ಕಥೆಗಾರರ ಹೆಸರುಗಳನ್ನು ತೆಗೆದು ಬರಿ ಕಥೆಗಳನ್ನು ಮಾತ್ರ ನೀಡಿದ್ದರು. ಇದರಿಂದ ಮಿತ್ರರ ಕಥೆಗಳು ಇಲ್ಲವೆ ಪ್ರಖ್ಯಾತರ ಕಥೆಗಳು ಎಂಬ ಮುಲಾಜಿಲ್ಲದೆ ನಿರುಮ್ಮಳವಾಗಿ ಕಥೆಗಳನ್ನು ಓದಲು ಸಾಧ್ಯವಾಯಿತು. ಅಂತಿಮವಾಗಿ ಆಯ್ಕೆಯಾದ ೫ ಕಥೆಗಳನ್ನು ನಂತರ ಯಾರು ಬರೆದಿದ್ದಾರೆ ಎಂದು ನೋಡಿದಾಗ ಅವರೆಲ್ಲ ಹೊಸಬರೆ ಆಗಿದ್ದರು. ಬರೆದವರಿಗಿಂತ ಕಥೆಯೇ ಮುಖ್ಯ ಅಲ್ಲವೆ?

ಬಹುಮಾನ ಪಡೆಯದ ಕಥೆಗಳೆಲ್ಲ ಒಳ್ಳೆಯವಲ್ಲ ಎಂದಲ್ಲ. ಅಷ್ಟೆ ಅಲ್ಲ ಯಾರಾದರೂ ಒಟ್ಟಿಗೇ ಇಲ್ಲಿನ ಐದೂ ಕಥೆಗಳನ್ನು ಓದಿದರೆ ಅರೆ! katha-sprade-2013ಸಮಾಧಾನಕರ ಬಹುಮಾನ ಕೊಟ್ಟಿರುವ ಕಥೆಗೆ ಮೊದಲ ಬಹುಮಾನವನ್ನೆ ಕೊಡಬಹುದಿತ್ತಲ್ಲ, ಮೊದಲ ಬಹುಮಾನದ ಕಥೆಗೆ ಸಮಾಧಾನಿತ ಬಹುಮಾನ ನೀಡಿದ್ದರೆ ಸಾಕಿತ್ತಲ್ಲ ಅನ್ನಿಸಬಹುದು. ನಾವೇನೇ ವಸ್ತುನಿಷ್ಠವಾದ ಓದು ಎಂದು ಹೇಳಿದರೂ ನಮ್ಮ ಓದುಗಳೆಲ್ಲ ವ್ಯಕ್ತಿನಿಷ್ಠವಾದ ಓದುಗಳೇ ಅಲ್ಲವೆ? ಹಾಗಾಗಿ ಒಂದು ಓದಿಗೆ ಇಲ್ಲಿನ ಈ ಕಥೆಗಳು ಬಹುಮಾನ ಪಡೆದಿವೆ. ಇನ್ನೊಂದು ಓದಿಗೆ ಬೇರೆಯದೆ ಕಥೆಗಳು ಬಹುಮಾನಕ್ಕೆ ಅರ್ಹ ಎನ್ನಿಸಬಹುದು. ತೀರ್ಪುಗಾರರ ಸಂವೇದನೆ, ದೃಷ್ಟಿಕೋನಗಳೆ ಇಂಥ ಕಡೆ ಪ್ರಧಾನ ಎನ್ನುವುದು ನಮಗೆಲ್ಲ ತಿಳಿದ ಸಂಗತಿಯೆ ಅಲ್ಲವೆ?

ಮೊದಲು, ಎರಡನೆ, ಮೂರನೆ ಹೀಗೆ ಕಥೆಗಳನ್ನು ಶ್ರೇಣಿ ಮಾಡಿ ಬಹುಮಾನ ನೀಡುವುದನ್ನು ನಾವು ಒಪ್ಪಬೇಕಿಲ್ಲ; ಹತ್ತು ಒಳ್ಳೆಯ, ಸಶಕ್ತ ಕಥೆಗಳನ್ನು ಓದುವಾಗ ಅವುಗಳಲ್ಲಿ ಒಂದು ಕಥೆಯನ್ನು ಇದು ಶ್ರೇಷ್ಠ ಎಂದೂ ಮತ್ತೊಂದನ್ನು ಕಡಿಮೆ ಎಂದೂ ಶ್ರೇಣಿ ಮಾಡುವ ಸ್ಪರ್ಧಾ ಪರಿಯನ್ನು ನಾವು ಸರಿಯಾದದ್ದು ಎಂದೇನೂ ಭಾವಿಸಬೇಕಿಲ್ಲ. ಒಂದೊಂದು ಕಥೆಗಳೂ ತಮ್ಮ ವಸ್ತು ಸಾಮಗ್ರಿ, ನಿರೂಪಣಾ ಕ್ರಮ ಇತ್ಯಾದಿಗಳಿಂದಾಗಿ ಭಿನ್ನ ಆಗಿ ಇರುತ್ತವೆ. ಹಾಗಿರುವಾಗ ಶ್ರೇಣೀಕರಣ ಮಾಡಿ ಇದು ಮೊದಲ ಬಹುಮಾನಕ್ಕೆ ಅರ್ಹ, ಇದು ಎರಡನೆ ಬಹುಮಾನಕ್ಕೆ ತಕ್ಕುದು ಎಂದು ಸಾಹಿತ್ಯ ಕಥನವನ್ನು ಸ್ಥಾನೀಕರಣ ಮಾಡುವುದು ಅಷ್ಟು ಒಳ್ಳೆಯದೇನೂ ಅಲ್ಲ. ಇಂಥ ಸಮಸ್ಯೆ ಎಲ್ಲ ಸ್ಪರ್ಧೆಗಳಲ್ಲು ಎದುರಾಗುತ್ತದೆ. ಇಲ್ಲೂ ಎದುರಾಗಿತ್ತು. ಆದಾಗ್ಯೂ ಸ್ಪರ್ಧೆಯ ನಿಯಮಗಳನ್ನು ಪಾಲಿಸಿ ಇಲ್ಲಿ ಬಹುಮಾನ ನೀಡಲಾಗಿದೆ.

ಸ್ಪರ್ಧೆಗೆ ಬಂದಿದ್ದ ಮಹಾಂತೇಶ ನವಲಕಲ್ ಅವರ ಡಿಪ್ರೆಶನ್ ಕಥೆ, ಹನುಮಂತ ಹಾಲಿಗೇರಿ ಅವರ ಮಠದ ಹೋರಿ, ಎಸ್.ಬಿ.ಜೋಗುರ ಅವರ ಹೊತ್ತಿಗೊದಗಿದ ಮಾತು, ಕೆ.ಈಶ್ವರ್ ಭಟ್ ಅವರ ಪುಷ್ಪ ಕತೆ, ವೀರನ್ನಾರಾಯಣ ಅವರ ಗುಲಾಬಿ ಚೀಟಿ, ಆನಂದ ಕುಂಚನೂರ ಅವರ ಕೃಷ್ಣ ತುಳಸಿ, ಸೈಫ್ ಜಾನ್ಸ್ ಅವರ ಅಯ್ಯಕ್ಕ, ಬಸು ಬೇವಿನಗಿಡದ ಅವರ ಹಳೇ ಟ್ರಂಕು, ಶಿರೋಳ ಸೋಮಯಾಜಿ ಅವರ ಪದ್ದಕ್ಕನ ಅರಮನೆ, ಶ್ರೀನಾಥ ರಾಯಸಂ ಅವರ ಉಮಿಯೊಳಗಿನ ಬೆಂಕಿ, ಎಚ್.ಎನ್. ಅಪರ್ಣಾ ಅವರ ಹುಡುಕಾಟ ಈ ಎಲ್ಲ ಕಥೆಗಳೂ ತಮ್ಮದೆ ವಿಶಿಷ್ಟತೆ ಇರುವ ಕಥೆಗಳು. ಶಕ್ತ ಕಥೆಗಳು. ಇವುಗಳಲ್ಲಿ ಕೆಲವು ಕಥೆಗಳು ವಿಚಾರವೆ ಮುನ್ನೆಲೆಗೆ ಬಂದು ಕಥನ ಹಿನ್ನೆಲೆಗೆ ಸರಿದಿರುವುದರಿಂದ, ಕೆಲವೆಡೆ ಕಥನ ಲಂಬಿತ ಆಗಿದೆ ಎನ್ನಿಸುವುದರಿಂದ, ಕೆಲವು ಕಥೆಗಳು ಬಂಧ ಮತ್ತು ವಿಚಾರ ಹಾಗೂ ನಿರೂಪಣೆ ಮೂರೂ ನೆಲೆಗಳಲ್ಲಿ ಅಂತಹ ಹೊಸತೇನನ್ನೂ ಅಭಿವ್ಯಕ್ತಿಸುತ್ತಿಲ್ಲ ಎನ್ನಿಸುವುದರಿಂದ ಈ ಕಥೆಗಳಿಗೆ ಬಹುಮಾನ ಕೊಟ್ಟಿಲ್ಲ ಅಷ್ಟೆ. ಆದರೆ ಈ ಎಲ್ಲ ಕಥೆಗಳೂ ತಮ್ಮದೆ ರೀತಿಯಲ್ಲಿ ಕನ್ನಡ ಕಥನ ಪರಂಪರೆಯಲ್ಲಿ ಸಲ್ಲುತ್ತವೆ; ಆದ್ದರಿಂದ ಇವೆಲ್ಲವೂ ನನ್ನ ಪ್ರಕಾರ ಪುರಸ್ಕಾರಕ್ಕೆ ಅರ್ಹ ಕಥೆಗಳೇ. ರವಿ ಕೃಷ್ಣಾರೆಡ್ಡಿ ಅವರು ಈ ಕಥೆಗಳಿಗೆ ಬಹುಮಾನ ಬರದಿದ್ದರೂ ಇವುಗಳನ್ನು ಕ್ರಮವಾಗಿ ತಮ್ಮ “ವರ್ತಮಾನ”ದಲ್ಲಿ ಪ್ರಕಟಿಸಿದರೆ ಓದುಗರಿಗೆ ತೌಲನಿಕವಾಗಿ ತಮ್ಮದೇ ಓದುಗಳನ್ನು ಹೊಂದಲು ಸಾಧ್ಯವಾದೀತು.

ಕನ್ನಡ ಕಥನ ಲೋಕಕ್ಕೆ ಇದುವರೆಗೆ ಬಂದಿಲ್ಲದ ಲೋಕದ ಏನಾದರೂ ಹೊಸತನ್ನು ತಂದು ಹೇಳುವ ಗುಣ ಅಂದರೆ ನವೀನ ವಸ್ತು ಸಾಮಗ್ರಿಯ ಕಥನ, ನವೀನ ನಿರೂಪಣೆಯ ಕ್ರಮ, ನವೀನ ಭಾಷೆಯ ಬಳಕೆ, ಕಥನದಲ್ಲಿನ ಬಿಗಿತನ, ಬೋರಾಗದಂತೆ ಓದಿಸಿಕೊಂಡು ಹೋಗುವ ಗುಣ, ಓದುಗನ ಮೇಲೆ ಬೀರುವ ಪರಿಣಾಮ ಅಥವಾ ಓದಿದ ನಂತರ ಕಾಡುವ, ಡಿಸ್ಟರ್ಬ್ ಮಾಡುವ ಗುಣ, ಕಥನದ ವಿಚಾರ ಮತ್ತು ಭಾವತೀವ್ರತೆಯ ಗುಣಗಳು ಇವೆಲ್ಲವನ್ನೂ ಮುಖ್ಯವಾಗಿ ಪರಿಗಣಿಸಿ ಇಲ್ಲಿನ ಕಥೆಗಳನ್ನು ಓದಲಾಗಿದೆ.

ಬಹುಮಾನ ಪಡೆದಿರುವ ಇಲ್ಲಿನ ಐದೂ ಕಥೆಗಳೂ ಒಂದಕ್ಕೊಂದು ಭಿನ್ನ. ಮಹಾತ್ಮ ಕಥೆ ಮಹಾತ್ಮ ಗಾಂಧಿಯೊಂದಿಗೆ ಒಂದು ಮುಖಾಮುಖಿಯನ್ನು ನಡೆಸುತ್ತದೆ. ನಮ್ಮಲ್ಲಿ ಸದಾ ಮಹಾತ್ಮರಲ್ಲಿನ ಹುಳುಕುಗಳನ್ನು ಹೆಕ್ಕಿ ತೆಗೆಯುವುದು ಅಥವಾ ಅವರನ್ನು ತಪ್ಪಿತಸ್ಥರನ್ನಾಗಿ ಮಾಡಿ ಮತ್ತೆ ಮತ್ತೆ ಅವರನ್ನು ಬದುಕಿಸಿ ಕರೆದು ತಮ್ಮದೇ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿ ಪಾಟೀಸವಾಲು ಮಾಡುವುದು ಯಾವತ್ತಿನ ರೂಢಿ. ಮಹಾತ್ಮರೆಂದು ನಾವು ಕರೆದುಕೊಳ್ಳುವ ‘ಮಹಾತ್ಮ’ರನ್ನು ನಾವು ನಮ್ಮಂತೆಯೆ ಅವರೂ ಮನುಷ್ಯರಾಗಿದ್ದರು ಎಂದು ಭಾವಿಸುವುದೇ ಕಡಿಮೆ. ಇಂಥ ಒಂದು ಚಿಂತನೆಯನ್ನು ಮಹಾತ್ಮ ಕಥೆ ಒಳಗೊಂಡಿದೆ ಮತ್ತು ನಮ್ಮಲ್ಲು ಅದು ಹುಟ್ಟುವಂತೆ ಮಾಡುತ್ತದೆ.

ಬೆಂದಕಾಳೂರು ಕಥೆ ಬೆಂಗಳೂರೆಂಬ ಮಹಾನಗರದ ಮೂರು ಚಿತ್ರಗಳನ್ನು ನೀಡುತ್ತದೆ. ಇವೆಲ್ಲ ಒಂದೊಂದು ಸ್ವತಂತ್ರ ಕಥೆ ಆಗಬಲ್ಲ ಚಿತ್ರಗಳು. ಇಲ್ಲಿನ ಮೂರೂ ಚಿತ್ರಗಳೂ ಪರಸ್ಪರ ಸಿಂಕಾಗುವುದಿಲ್ಲ; ಪ್ರತ್ಯೇಕ ಆಗಿಯೆ ಉಳಿಯುತ್ತವೆ. ನಮ್ಮಲ್ಲಿ ನಗರವೆಂದರೆ ನರಕ; ಪಾಪಕೂಪ; ಎಲ್ಲ ಕೇಡುಗಳೂ ಸಂಭವಿಸುವುದು ಇಲ್ಲೆ ಎಂಬ ನಂಬುಗೆಯೊಂದು ಇದೆ. ಇಂತಹ ನಂಬುಗೆಯಿಂದಲೆ ಈ ಕಥೆ ಹುಟ್ಟಿದೆ. ಆದಾಗ್ಯೂ ಬೆಂದಕಾಳೂರು ಲೋಕದ ಎಲ್ಲ ಮಹಾನಗರಗಳ ರೂಪಕ ಆಗಬಲ್ಲ ಸಾಧ್ಯತೆ ಇರುವ ಕಥೆ. ದುಃಖ, ಬಿಕ್ಕಟ್ಟು, ಅವ್ಯವಸ್ಥೆಗಳನ್ನು ಸ್ಪೋಟಿಸುವುದೆ ಸಾಹಿತ್ಯದ ಕಾಳಜಿ ಆಗಬೇಕಲ್ಲವೆ? ನಮಗೆ ಮನರಂಜನೆ ನೀಡುವುದು ಅಥವಾ ಸಂತೋಷ ನೀಡುವುದಷ್ಟೆ ಸಾಹಿತ್ಯ ಕಥನದ ಜವಾಬ್ದಾರಿಯೊ?

ಬೆಂದಕಾಳೂರು ನಗರದ ಗಲೀಜನ್ನು ತೆರೆದು ತೋರಿದರೆ, ಗಲೀಜು ಕಥೆ ಗಾಮಗಳ ಗಲೀಜನ್ನು ತೆರೆದು ತೋರುತ್ತದೆ. ಗಲೀಜು ಕಥೆಯಲ್ಲಿನ ಶಣಿಯಾರ, ಕಜ್ಜಿ, ಚಿಕ್ಕವ್ವೋರು, ದೊಡ್ಡ ಯಜಮಾನ, ಪೂಜಾರಪ್ಪ, ಸಾವುತ್ರ ಹೀಗೆ ಎಲ್ಲ ಪಾತ್ರಗಳೂ ಒಂದಲ್ಲ ಒಂದು ರೀತಿ ದೌರ್ಬಲ್ಯಗಳ ಪ್ರತಿನಿಧೀಕರಣಗಳೇ. ಅಂಚಿನ ಜನತೆಯ ಪ್ರತಿನಿಧಿ ಆದ ಕಜ್ಜಿ ಅಂತಿಮವಾಗಿ ಇಲ್ಲಿ ದೌರ್ಜನ್ಯಕ್ಕೆ ಬಲಿಯಾಗುತ್ತಾನೆ. ಗ್ರಾಮೀಣ ಊಳಿಗಮಾನ್ಯ ವ್ಯವಸ್ಥೆಯಲ್ಲಿನ ಕ್ರೌರ್‍ಯಗಳು (ಜಾತಿ, ವರ್ಗ, ಜ್ಞಾನಗಳ) ಅಸಮಾನತೆಯಿಂದ ಮತ್ತಷ್ಟು ಉಗ್ರವಾಗಿ ಇಲ್ಲಿ ಪ್ರಕಟಗೊಂಡಿವೆ. ಜೈವಿಕ ಪ್ರವೃತ್ತಿಯಾದ ಲೈಂಗಿಕತೆಯನ್ನು ಮಾನವ ಮಾನಸಿಕ ವ್ಯಸನವನ್ನಾಗಿ ಮಾರ್ಪಡಿಸಿಕೊಂಡಾಗ ಮತ್ತು ಲೈಂಗಿಕತೆಯ ಸುತ್ತ ತನ್ನದೆ ವಿಧಿನಿಷೇಧಗಳನ್ನು ಹೇರಿಕೊಂಡಾಗ ಆಗುವ ಅಲವಾಟುಗಳು ಈ ಕಥೆಯಲ್ಲಿ ತೀವ್ರವಾಗಿ ಪ್ರಕಟವಾಗಿವೆ.

ಮುಗಿಲ ಮಾಯೆಯ ಕರುಣೆ ಮತ್ತು ಹುಲಿ ಸಾಕಣೆ ಕಥೆಗಳು ತಮ್ಮ ಪರಿಣಾಮಕ್ಕಿಂತಲೂ ಅವು ಮಂಡಿಸುವ ವಿಚಾರದ ಕಾರಣಕ್ಕೆ ಹೆಚ್ಚು ಆಪ್ತವಾಗುತ್ತವೆ. ಹಳ್ಳಿಯಲ್ಲಿನ ಮೌಢ್ಯ; ಅಲ್ಲಿನ ವೈರ-ದೋಪಾರ್ಟಿ ಸ್ಥಿತಿಗಳನ್ನು ಮುಗಿಲ ಮಾಯೆಯ ಕರುಣೆ ಚೆನ್ನಾಗಿ ಅಭಿವ್ಯಕ್ತಿಸಿದೆ. ಹೊಲೇರ ಶರಣನೊಬ್ಬ ಮಳೆ ತರಿಸುವ ಇಚ್ಛಾಶಕ್ತಿ ಪ್ರಕಟಿಸುವುದು ಈ ಕಥೆಯ ಶಕ್ತಿ. ಹುಲಿ ಸಾಕಣೆ ಎನ್.ಜಿ.ಒ.ಗಳ ದಗಲಬಾಜಿತನ ಮತ್ತು ಬೆಪ್ಪುತನ ಎರಡನ್ನೂ ಒಟ್ಟಿಗೇ ಪ್ರಕಟಿಸುತ್ತದೆ. ಸಣ್ಣ ಮೀನನ್ನು ದೊಡ್ಡ ಮೀನು ನುಂಗುವ ನಮ್ಮ ಬಂಡವಾಳಶಾಹಿ ಧೋರಣೆ, ಪರಿಸರವಾದ-ಕೃಷಿ ವಲಯಗಳನ್ನೂ ಪ್ರವೇಶಿಸಿರುವ ಕೈಗಾರಿಕೀಕರಣದ ದುಸ್ಥಿತಿಯನ್ನು ಹುಲಿಸಾಕಣೆ ಕತೆ ಹೇಳುತ್ತದೆ.

ಇಲ್ಲಿ ಬಹುಮಾನಕ್ಕೆ ಆರಿಸಿರುವ ಎಲ್ಲ ಕಥೆಗಳೂ ಒಂದಿಲ್ಲೊಂದು ಬಗೆಯಲ್ಲಿ ನಮ್ಮ ವ್ಯವಸ್ಥೆಯೊಳಗೆ ಇರಬಹುದಾದ ತಪ್ಪುನಡೆಗಳನ್ನು ವಂಗ್ಯ, katha-sprade-2013ವಿಶಾದ, ತಲ್ಲಣಗಳಿಂದ ಬಯಲು ಮಾಡುತ್ತವೆ. ನಮ್ಮ ಬದುಕನ್ನು ಹಸನುಗೊಳಿಸುವ ಕಾಳಜಿ ಇಲ್ಲಿನ ಎಲ್ಲ ಕಥೆಗಳಲ್ಲೂ ಅಂತಸ್ಥವಾಗಿದೆ. ಮಹಾತ್ಮ, ಬೆಂದಕಾಳೂರು ಮತ್ತು ಹುಲಿಸಾಕಣೆ ಮೂರೂ ಕಥೆಗಳು ವೈಚಾರಿಕತೆಯನ್ನೆ ಕಥೆಯನ್ನಾಗಿ ಮಾರ್‍ಪಡಿಸುವ ಭರದಲ್ಲಿ ಕಲಾತ್ಮಕತೆಯನ್ನು ಹಿನ್ನೆಲೆಗೆ ದೂಡುತ್ತವೆ. ಆದರೆ ಗಲೀಜು ಮತ್ತು ಮುಗಿಲ ಮಾಯೆಯ ಕರುಣೆ ಅಂಥವಲ್ಲ. ಇವುಗಳಲ್ಲಿ ವೈಚಾರಿಕ ಆಕೃತಿಗೆ ಒಗ್ಗಿಸಲು ಆಗದ ಕಥನಗಾರಿಕೆ ಇದೆ. ಇಲ್ಲಿ ಕಥನ ಮುನ್ನೆಲೆಗೆ ಬಂದು ವಿಚಾರ ಹಿನ್ನೆಲೆಗೆ ಸರಿದಿದೆ.

ವಿಶೇಷವೆಂದರೆ ಸ್ಪರ್ಧೆಗೆ ಬಂದ ಎಲ್ಲ ಕಥೆಗಳನ್ನು ಲೇಖಕರ ಹೆಸರುಗಳನ್ನು ತೆಗೆದು ಓದಿದಾಗ ಉತ್ತರ ಕನ್ನಡದ ಭಾಶೆ ಮತ್ತು ಶೈಕ್ಷಣಿಕ ಭಾಶೆ ಎಂಬ ವ್ಯಾತ್ಯಾಸಗಳನ್ನು ಬಿಟ್ಟರೆ ಮಿಕ್ಕಂತೆ ಒಬ್ಬರೇ ಬರೆದ ಕಥೆಗಳನ್ನು ಓದುತ್ತಿದ್ದೇವೇನೋ ಎಂಬ ಭಾವನೆ ಉಂಟಾಗುತ್ತದೆ. ಕೆಲವು ಕಥೆಗಳಂತು ತೀರಾ ಸಿನಿಮ್ಯಾಟಿಕ್ ಮತ್ತು ಇನ್ಸಿಡೆಂಟಲ್ ಆಗಿ ಇವೆ. ನಿಸರ್ಗದ ಮತ್ತು ಮನುಷ್ಯರ ಒಳ ಮನಸ್ಸಿನ ಅಗೆಯುವಿಕೆ ಬಹುಪಾಲು ಕಥೆಗಳಲ್ಲಿ ಕಡಿಮೆ. ಘಟನಾತ್ಮಕ ನಿರೂಪಣೆಯೆ ಹೆಚ್ಚು! ಏಕೆ ಹೀಗೆ? ಸಾಮಾಜಿಕ ಹೊಣೆಗಾರಿಕೆ, ಕಾಳಜಿಗಳಲ್ಲಿ ಸಾಮ್ಯತೆ ಇದ್ದರೆ ಅದು ಆರೋಗ್ಯದ ಲಕ್ಷಣ. ಆದರೆ ಅಭಿವ್ಯಕ್ತಿ ಕ್ರಮದಲ್ಲಿ ಏಕತಾನತೆ ಇದ್ದರೆ? ಈ ಸ್ಪರ್ಧೆಯ ಕಥೆಗಳನ್ನು ಓದುತ್ತಿದ್ದರೆ ಇಂದಿನ ಹೊಸ ಪೀಳಿಗೆಯಲ್ಲಿ ಕನ್ನಡ ಸಣ್ಣ ಕಥೆಯ ಬಂಧ-ಚೌಕಟ್ಟು-ರೂಪ ಮತ್ತು ಅದು ನಿರೂಪಿತ ಆಗುವ ಕ್ರಮಗಳು ಏಕತಾನತೆಗೆ ಗುರಿಯಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಭಾಷಿಕ ವೈವಿದ್ಯತೆ ಮಾತ್ರವೆ ಕಥನದ ಭಿನ್ನತೆಯ ಗುಣವಲ್ಲ. ಇನ್ನಾದರೂ ನಮ್ಮ ಹೊಸ ಪೀಳಿಗೆಯು ತನ್ನ ನಿರೂಪಣಾ ಕ್ರಮಗಳು, ಗಮ್ಯತೆ ಮತ್ತು ಸಣ್ಣ ಕಥೆಯ ಚೌಕಟ್ಟುಗಳನ್ನು ಕ್ರಾಂತಿಕಾರಕವಾಗಿ ಬದಲಾವಣೆ ಮಾಡಿಕೊಳ್ಳುವ ಅಗತ್ಯ ಇದೆಯಲ್ಲವೆ?

ಸ್ಪರ್ಧೆಯ ಹೆಸರಲ್ಲಿ ಹೊಸ ಪೀಳಿಗೆಯವರು ಬರೆದ ಹಲವಾರು ಕಥೆಗಳನ್ನು ಒಮ್ಮೆಗೆ ಓದಲು ಮತ್ತು ಆ ಮೂಲಕ ಹೊಸಬರ ಸಂವೇದನೆಗಳನ್ನು ಅರಿಯಲು ಅನುವು ನೀಡಿದ್ದಕ್ಕಾಗಿ ಮಿತ್ರ ರವಿ ಕೃಷ್ಣಾರೆಡ್ಡಿ ಅವರಿಗೆ ಮತ್ತು ವರ್ತಮಾನ ಬಳಗಕ್ಕೆ ನನ್ನ ಧನ್ಯವಾದಗಳು.

“ಗಾಂಧಿ ಜಯಂತಿ ಕಥಾ ಸ್ಪರ್ಧೆ – 2013″ರ ಫಲಿತಾಂಶ

ಸ್ನೇಹಿತರೇ,

“ಗಾಂಧಿ ಜಯಂತಿ ಕಥಾ ಸ್ಪರ್ಧೆ – 2013″ರ ಫಲಿತಾಂಶ ಮೂರು ದಿನ ತಡವಾಗಿ ಪ್ರಕಟಿಸುತ್ತಿರುವುದಕ್ಕೆ ವಿಷಾದವಿದೆ. ಈ ಬಾರಿ ಸುಮಾರು 50+ ಕತೆಗಳು katha-sprade-2013ಬಂದಿದ್ದವು. ಕಳೆದ ಸಾರಿಗೆ ಹೋಲಿಸಿದರೆ ಒಂದಿಪ್ಪತ್ತು ಕಮ್ಮಿ. ಆದರೆ ಕಳೆದ ಬಾರಿ ನಮ್ಮ ಕಥಾ ಸ್ಪರ್ಧೆಯ ಪ್ರಕಟಣೆ ಮತ್ತು ಕತೆಗಳ ಆಹ್ವಾನ ಪ್ರಜಾವಾಣಿ, ಕನ್ನಡ-ಒನ್‌ಇಂಡಿಯಾ, ಅವಧಿ ಒಳಗೊಂಡಂತೆ ಇತರೆ ಒಂದೆರಡು ಕಡೆ ಪ್ರಕಟವಾಗಿತ್ತು. ಕೆಲವೊಂದು ಕಡೆ, ವಿಶೇಷವಾಗಿ ಮುದ್ರಣ ಮಾಧ್ಯಮದಲ್ಲಿ, ನಿಯಮಗಳು ಸ್ಪಷ್ಟವಾಗಿ ಪ್ರಕಟವಾಗಿಲ್ಲದಿದ್ದ ಕಾರಣ ಆಗ ಅನೇಕ ಕತೆಗಳು ಕಾಗದದಲ್ಲಿ ಅಂಚೆಯ ಮೂಲಕ ಬಂದವುವಾಗಿದ್ದವು ಮತ್ತು ಅವು ನಮಗೆ ಒಂದಷ್ಟು ತಾಂತ್ರಿಕ ಸಮಸ್ಯೆಗಳನ್ನು ತಂದೊಡ್ಡಿದ್ದವು. ಹಾಗಾಗಿ ಈ ಬಾರಿ ಪ್ರಕಟಣೆಯನ್ನು ಎಲ್ಲಿಯೂ ಕಳುಹಿಸಲಿಲ್ಲ. ಈ ಸಾರಿ ಬಂದ ಎಲ್ಲಾ ಕತೆಗಳೂ ಇಮೇಲ್‌ನಲ್ಲಿ ಬಂದ ಸಾಫ್ಟ್‌ಕಾಪಿಗಳು.

ಕತೆಗಳು ಕಮ್ಮಿ ಸಂಖ್ಯೆಯಲ್ಲಿ ಬಂದಿದ್ದರೂ, ಬಂದ ಬಹುತೇಕ ಎಲ್ಲಾ ಕತೆಗಳು ಉತ್ತಮವಾಗಿವೆ ಎಂದು ನನಗೆ ಮೊದಲ ದಿನದಿಂದಲೇ ಅನ್ನಿಸಿತ್ತು. ನಮ್ಮ ಬಳಗದ ಶ್ರೀಪಾದ ಭಟ್ಟರು ಮತ್ತು ನಾನು ಒಂದು ದಿನ ಕುಳಿತು ಕತೆಗಳತ್ತ ಕಣ್ಣಾಡಿಸಿದೆವು. ಒಳ್ಳೆಯ ಕತೆಗಳು ಬಂದಿವೆ ಎಂದು ನಮಗೆ ಮೇಲ್ನೋಟಕ್ಕೇ ಗೊತ್ತಾಯಿತು. ನಾವಿಬ್ಬರೂ ಸೇರಿ ಕಥಾ ಸ್ಪರ್ಧೆಯ ನಿಬಂಧನೆಗಳಿಗೆ ಒಳಪಡದ ಮತ್ತು ಪಕ್ಕಕ್ಕಿಡಬಹುದು ಎನ್ನಿಸಿದ ಕೆಲವನ್ನು ಪ್ರತ್ಯೇಕಿಸಿ ಒಟ್ಟು 39 ಕತೆಗಳನ್ನು ತೀರ್ಪುಗಾರರಾದ ಸಾಹಿತಿ ಮತ್ತು ಪ್ರಾಧ್ಯಾಪಕ ರಾಮಲಿಂಗಪ್ಪ ಬೇಗೂರುರವರಿಗೆ ಮುದ್ರಿಸಿ ಕಳುಹಿಸಿದೆವು. ತೀರ್ಪುಗಾರರ ಇಚ್ಚೆಯಂತೆ ಅವರಿಗೆ ಕಳುಹಿಸಿದ ಕತೆಗಳಲ್ಲಿ ಯಾವುದರಲ್ಲೂ ಲೇಖಕರ ಹೆಸರುಗಳು ಇರಲಿಲ್ಲ. ಇಂದು ಅಂತಿಮವಾಗಿ ತೀರ್ಪುಗಾರರು ಫಲಿತಾಂಶ ಕಳುಹಿಸಿದ್ದಾರೆ.

ಮೊದಲ ಬಹುಮಾನ : “ಮಹಾತ್ಮ” – ವಿಶ್ವಾಸ್ ಭಾರದ್ವಾಜ್
ಎರಡನೆಯ ಬಹುಮಾನ : “ಗಲೀಜು” – ಗಿರಿ ರಾಜ್
ಮೂರನೆಯ ಬಹುಮಾನ : “ಬೆಂದಕಾಳೂರು” – ವಿಜಯ್ ಹೂಗಾರ್
ಪ್ರೋತ್ಸಾಹಕ ಬಹುಮಾನಗಳು :
ಮುಗಿಲ ಮಾಯೆಯ ಕರುಣೆ” – ಪಿ. ಮಂಜುನಾಥ
ಹುಲಿ ಸಾಕಣೆ” – ಗೋಪಿನಾಥ ರಾವ್

ಕಥಾ ಸ್ಪರ್ಧೆಗೆ ಕತೆಗಳನ್ನು ಕಳುಹಿಸಿದ ಎಲ್ಲಾ ಕತೆಗಾರರಿಗೂ ಧನ್ಯವಾದಗಳು ಮತ್ತು ಕೃತಜ್ಞತೆಗಳು. ಮತ್ತು ವಿಜೇತರಿಗೆ ಅಭಿನಂದನೆಗಳು. ತೀರ್ಪುಗಾರರಾದ ರಾಮಲಿಂಗಪ್ಪ ಬೇಗೂರುರವರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ಕಥಾ ಸ್ಪರ್ಧೆಯ ಆಯೋಜನೆಯಲ್ಲಿ ವಿಶೇಷವಾಗಿ ಸಹಕರಿಸಿದ ಶ್ರೀಪಾದ ಭಟ್ಟರಿಗೆ ಮತ್ತು ದೀಪಕ್ ಸಿ.ಎನ್.ರಿಗೆ ಧನ್ಯವಾದಗಳು.

ತೀರ್ಪುಗಾರರ ಅಭಿಪ್ರಾಯದ ಲೇಖನವನ್ನು ಸೋಮವಾರ ಪ್ರಕಟಿಸಲಾಗುವುದು.

ಬಹುಮಾನಿತ ಕತೆಗಳನ್ನು ಮುಂದಿನ ದಿನಗಳಲ್ಲಿ ವಾರಕ್ಕೊಂದರಂತೆ ಪ್ರಕಟಿಸಲಾಗುವುದು.

ಮತ್ತೊಮ್ಮೆ ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಮತ್ತು ವಿಜೇತರಿಗೆ ಅಭಿನಂದನೆಗಳು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ
ವರ್ತಮಾನ.ಕಾಮ್.

’ವರ್ತಮಾನ’ಕ್ಕೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ…

ಸ್ನೇಹಿತರೇ,

ಇಂದಿಗೆ ವರ್ತಮಾನ.ಕಾಮ್‌ಗೆ ಎರಡು ವರ್ಷ ತುಂಬುತ್ತದೆ. ಹೋದ ವರ್ಷಕ್ಕಿಂತ ಈ ವರ್ಷ ವರ್ತಮಾನ.ಕಾಮ್ ಹಲವು ಏರುಪೇರುಗಳನ್ನು ಕಂಡಿತು. ಸರಾಸರಿಯಾಗಿ ಲೆಕ್ಕ ಹಾಕುವುದಾದರೆ ಅತಿ ಹೆಚ್ಚು ಹಿಟ್ಸ್ (ವೆಬ್‌ಸೈಟ್ ಸಂದರ್ಶಿಸುವವರ) ಮತ್ತು ಅತಿ ಕಡಿಮೆ ಹಿಟ್ಸ್ ಪಡೆದುಕೊಂಡ ತಿಂಗಳುಗಳು ಈ ವರ್ಷದ ಅವಧಿಯಲ್ಲಿಯೇ ಇದ್ದವು. 2012 ರ ಸೆಪ್ಟೆಂಬರ್ ಮತ್ತು ನವೆಂಬರ್ ಅವಧಿಯಲ್ಲಿ ಈ ವೇದಿಕೆ ಅತಿ ಹೆಚ್ಚು ಸಕ್ರಿಯವಾಗಿದ್ದರೆ vartamaana-2-yearsಈ ವರ್ಷದ ಮೇ-ಜೂನ್ ತಿಂಗಳಿನಲ್ಲಿ ಅದು ಇಳಿಯುತ್ತಾ ಬಂದಿತ್ತು. ಕಳೆದ ತಿಂಗಳಿನಿಂದೀಚೆಗೆ ಮತ್ತೆ ಅದು ಏರುತ್ತಿದೆ.

ಆದರೆ, ಹಲವು ವಿಚಾರಗಳಲ್ಲಿ ವರ್ತಮಾನ.ಕಾಮ್ ಅದೇ ಅನನ್ಯತೆ ಮತ್ತು ಪರಿಣಾಮವನ್ನು ಉಳಿಸಿಕೊಂಡು ಬಂದಿದೆ ಮತ್ತು ಬೆಳೆಸಿಕೊಂಡಿಯೂ ಇದೆ. ನಾನು ರಾಜಕೀಯವಾಗಿ ಸಕ್ರಿಯವಾದ ಕಾರಣದಿಂದಾಗಿ ಹೊಸ ಲೇಖಕರನ್ನು ಈ ವೇದಿಕೆಗೆ ಕರೆದುಕೊಂಡುಬರುವ ಮತ್ತು ಪರಿಚಯಿಸುವ ಕಾರ್ಯ ಬಹಳ ಹಿನ್ನೆಲೆಗೆ ಸರಿದುಬಿಟ್ಟಿತು. ಆದರೂ ಹಲವಾರು ಲೇಖಕರು ಈ ವರ್ಷ ಮೊದಲ ಬಾರಿಗೆ ನಮಗೆ ಬರೆದರು. ಹಿರಿಯ ಪತ್ರಕರ್ತರಾದ ಜಗದೀಶ್ ಕೊಪ್ಪರ “ನಕ್ಸಲ್ ಕಥನ”ದ ಎರಡನೆಯ ಭಾಗ “ಪ್ರಜಾ ಸಮರ” 19 ವಾರಗಳ ಕಾಲ ಸರಣಿಯಾಗಿ ಈ ವರ್ಷ ಪ್ರಕಟವಾಯಿತು. ಮಂಗಳೂರಿನ ಹೋಮ್‌ಸ್ಟೇ ದಾಳಿಯ ಪ್ರಕರಣದಲ್ಲಿ ನವೀನ್ ಸೂರಿಂಜೆಯವರ ಬಂಧನವಾಗಿದ್ದನ್ನು ವಿರೋಧಿಸಿ ಮತ್ತು ಅವರ ಬಿಡುಗಡೆಗೆ ಆಗ್ರಹಿಸಿ ನಡೆದ ಒಂದು ಮಟ್ಟಿನ ಪ್ರಯತ್ನದಲ್ಲಿ ವರ್ತಮಾನ.ಕಾಮ್‌ನ ಸಂಪೂರ್ಣ ಬಳಗ ಮತ್ತು ಓದುಗರು-ಹಿತೈಷಿಗಳು ಪಾಲ್ಗೊಂಡರು. ವರ್ತಮಾನ.ಕಾಮ್‌ನ ಓದುಗರ ಸಂಖ್ಯೆಯ ಏರಿಕೆ ಮಾತ್ರವಲ್ಲ, ಇಂತಹ ಪ್ರಯತ್ನವೊಂದರ ಬಗ್ಗೆ ಗುಣಾತ್ಮಕವಾಗಿ ಸ್ಪಂದಿಸಿ ಬೆಂಬಲಿಸುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿರುವುದು ನನ್ನ ಗಮನಕ್ಕೆ ಬಂದಿದೆ.

ಇನ್ನು, ನಾವು ಯಾವುದೇ ಲೇಖಕರಿಗೆ ಬಲವಂತ ಪಡಿಸದೆ ಮತ್ತು ಅವರ ಬರವಣಿಗೆಗೆ ಯಾವುದೇ ರೀತಿಯ ಸಂಭಾವನೆಯನ್ನೂ ಕೊಡದೆ ಮಾಧ್ಯಮ ವಲಯದಲ್ಲಿ ಸೀಮಿತವಾದರೂ ಒಂದು ಗುರುತಿಸಬಹುದಾದ ಅಸ್ಮಿತೆ ಸಾಧಿಸಿದ್ದೇವೆ ಎಂದರೆ ಅದು ಕಮ್ಮಿ ಅಲ್ಲ ಎಂದು ನಾನು ಭಾವಿಸಿದ್ದೇನೆ. ಈ ನಿಟ್ಟಿನಲ್ಲಿ ನಮಗೆ ಲೇಖನ ಬರೆದ ಪ್ರತಿಯೊಬ್ಬರೂ ಇದರಲ್ಲಿ ಸಮಾನ ಪಾಲುದಾರರೇ. ನಮಗೆ ಕಂಪ್ಯೂಟರ್‌ನಲ್ಲಿ ಟೈಪ್ ಮಾಡಿಯೇ ಕಳುಹಿಸಬೇಕಾದ ಸಂದರ್ಭದಲ್ಲಿಯೂ ಇಷ್ಟೊಂದು ಸಮಾನಮನಸ್ಕ ಮತ್ತು ಬದ್ಧತೆಯುಳ್ಳ ಲೇಖಕರು ಬರೆದಿದ್ದಾರೆ ಮತ್ತು ಬರೆಯುತ್ತಿದ್ದಾರೆ ಎಂದರೆ ಕರ್ನಾಟಕದಲ್ಲಿ ಪ್ರಗತಿಪರ ಮನೋಧರ್ಮದ ಚಿಂತಕ ಮತ್ತು ಲೇಖಕರ ಗುಂಪು ಎಷ್ಟು ದೊಡ್ಡದಿದೆ ಎಂದು ನಿಮಗೆ ಅರಿವಾಗುತ್ತದೆ.

ಅಂದ ಹಾಗೆ ಈ ವರ್ಷದಲ್ಲಿ ಕರ್ನಾಟಕದ ವಿಧಾನಸಭೆಗೆ ಚುನಾವಣೆಯೂ ನಡೆದು ರಾಜ್ಯದ ರಾಜಕೀಯ ಇನ್ನೊಂದು ಮಗ್ಗುಲಿಗೆ ಹೊರಳಿದೆ. ಕಳೆದ ಐದು ವರ್ಷಗಳ ಬಿಜೆಪಿ ಆಡಳಿತ ನಿಜಕ್ಕೂ ಅಧ್ವಾನವಾಗಿತ್ತು; ಅವಮಾನಕಾರಿಯಾಗಿತ್ತು; ಹೇಸಿಗೆ ಪಟ್ಟುಕೊಳ್ಳುವಂತಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಅಷ್ಟು ಕೆಳಹಂತಕ್ಕೆ ಜಾರುವುದಿಲ್ಲ ಎಂಬ ವಿಶ್ವಾಸ ಬಹುತೇಕರಲ್ಲಿದೆ. ಆದರೆ ಗುಣಾತ್ಮಕವಾದ ಬದಲಾವಣೆಗಳು ಆಗುತ್ತವೆಯೇ ಎನ್ನುವುದರ ಬಗ್ಗೆ ಗಟ್ಟಿಯಾದ ವಿಶ್ವಾಸ ಮೂಡುತ್ತಿಲ್ಲ. ಆಡಳಿತ ನಿರ್ವಹಣೆ ಉತ್ತಮವಾಗಬಹುದಾದರೂ ನಮ್ಮ ರಾಜ್ಯದ ರಾಜಕೀಯ ವಾತಾವರಣ ಉತ್ತಮಗೊಳ್ಳುತ್ತದೆ ಎನ್ನುವ ವಿಶ್ವಾಸ ನನಗಿಲ್ಲ. ಎರಡು ಲೋಕಸಭೆ ಮತ್ತು ಮೂರು ವಿಧಾನಪರಿಷತ್ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ನಮ್ಮ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ನಡೆದುಕೊಳ್ಳುತ್ತಿರುವ ರೀತಿ ಮತ್ತು ಅವರು ನಿಲ್ಲಿಸಿರುವ ಆಭ್ಯರ್ಥಿಗಳನ್ನು ನೋಡಿದರೆ ಈ ರಾಜಕೀಯ ವಾತಾವರಣ ಈ ಪಕ್ಷಗಳಿಂದ ಮತ್ತು ಇವುಗಳ ನಾಯಕರುಗಳಿಂದ ಒಳ್ಳೆಯದರ ಕಡೆಗೆ ಬದಲಾಗುತ್ತದೆ ಎಂದು ಹೇಳಲಾಗುತ್ತದೆಯೇ? ಹಾಗೆಯೇ ಸಾಮಾಜಿಕವಾಗಿ ಪ್ರಗತಿಪರ ವಿಚಾರಗಳಿಗೆ ಬಲ ಮತ್ತು ಬೆಂಬಲ ಸಿಗಬೇಕಿದ್ದರೆ ನಮ್ಮ ರಾಜಕಾರಣಿಗಳು ಅದರ ಬಗ್ಗೆ ಒಂದು ಸ್ಪಷ್ಟತೆ ಮತ್ತು ನಿಲುವು ಬೆಳೆಸಿಕೊಂಡು ಅದನ್ನು ಬೇರೆಬೇರೆ ವೇದಿಕೆಗಳಲ್ಲಿ ಎತ್ತಿ, ಜನರ ಬಳಿಗೆ ತೆಗೆದುಕೊಂಡು ಹೋಗದಿದ್ದಲ್ಲಿ ಕಷ್ಟವಿದೆ. ಇಂತಹ ಸಂದರ್ಭದಲ್ಲಿ ವಿಶ್ವಾಸಾರ್ಹ ಮತ್ತು ಬದ್ಧತೆಯ ಲೇಖಕರ, ಮಾಧ್ಯಮ ಸಂಸ್ಥೆಗಳ ಮತ್ತು ವರ್ತಮಾನ.ಕಾಮ್‌ನಂಥ ಸ್ವತಂತ್ರ ವೇದಿಕೆಗಳ ಜವಾಬ್ದಾರಿ ಮತ್ತು ಅವಶ್ಯಕತೆಯೂ ಹೆಚ್ಚುತ್ತದೆ ಎಂಬ ಭಾವನೆ ನನಗಿದೆ.

ಇಡೀ ವಿಶ್ವದಲ್ಲಿ ಇಂದು ಮುದ್ರಣ ಮಾಧ್ಯಮ ನಿಧಾನವಾಗಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತ ಬರುತ್ತಿದೆ. ಮುದ್ರಣ ಮಾಧ್ಯಮದ ಪರಿಣಾಮಕಾರತೆಯನ್ನು ಮತ್ತು ಜನರ ಜ್ಞಾನದ ನೆಲೆಗಳನ್ನು ವಿಸ್ತರಿಸುವ ಸಾಧ್ಯತೆಗಳನ್ನು ಟಿವಿ ಮಾಧ್ಯಮ ಪಡೆದುಕೊಳ್ಳಲು ಅಸಾಧ್ಯ. ಹಾಗಾಗಿ ಮುದ್ರಣ ಮಾಧ್ಯಮದ ಪುನರಾವತಾರ ಇಂಟರ್ನೆಟ್ ಮಾಧ್ಯಮದ ರೂಪದಲ್ಲಿ ಆಗಲಿದೆ. ಅಮೆರಿಕದಲ್ಲಿ ನಾಲ್ಕಾರು ದಶಕಗಳ ಕಾಲ ಪ್ರಭಾವಶಾಲಿಯಾಗಿದ್ದ ’ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಗಿಂತ ಏಳೆಂಟು ವರ್ಷಗಳ ಹಿಂದೆ ಆರಂಭವಾದ ’ದಿ ಹಫ್ಫಿಂಗ್ಟನ್ ಪೋಸ್ಟ್’ ವೆಬ್‍ಸೈಟ್ ಇಂದು ಹೆಚ್ಚು ಪ್ರಭಾವಶಾಲಿಯೂ, ಹೆಚ್ಚು ಬೆಲೆಯುಳ್ಳದ್ದೂ, ಹೆಚ್ಚು ಲಾಭದಾಯಕವಾದದ್ದೂ ಆಗಿದೆ. ಕಳೆದ ವಾರ ಅಮೆಜಾನ್.ಕಾಮ್‌ನ ಮುಖ್ಯಸ್ಥ ಜೆಫ್ ಬೆಜೋಸ್ ನಷ್ಟದಲ್ಲಿದ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯನ್ನು 25 ಕೋಟಿ ಡಾಲರ್‌ಗೆ ಕೊಂಡುಕೊಂಡ. ಆದರೆ ಏಳೆಂಟು ವರ್ಷಗಳ ಹಿಂದೆ ಆರಂಭವಾದ ‘ದಿ ಹಫ್ಫಿಂಗ್ಟನ್ ಪೋಸ್ಟ್’ ಅನ್ನು ಎರಡು ವರ್ಷಗಳ ಹಿಂದೆಯೇ AOL ಕಂಪನಿ 31.5 ಕೋಟಿ ಡಾಲರ್‌ಗೆ ಕೊಂಡುಕೊಂಡಿತ್ತು.

ಆದರೆ ಇಂತಹ ಬದಲಾವಣೆಗಳನ್ನು ಭಾರತದ ಸಂದರ್ಭದಲ್ಲಿ ನೋಡಲು ಇನ್ನೂ ಹಲವಾರು ವರ್ಷ ಕಾಯಬೇಕಿದೆ. vartamaana-2 years-verticalಭಾರತೀಯ ಭಾಷಾ ಪತ್ರಿಕೆಗಳ ವಿಚಾರಕ್ಕೆ ಬಂದರೆ ಅದು ಇನ್ನೂ ನಿಧಾನವಾಗಬಹುದು ಮತ್ತು ಅಮೆರಿಕದಲ್ಲಿ ಮುದ್ರಣ ಮಾಧ್ಯಮದಲ್ಲಿ ಆಗುತ್ತಿರುವಷ್ಟು disruptive ಆಗದೇ ಇರಬಹುದು. ಆದರೂ, ಭಾರತದ ಮಾಧ್ಯಮ ಜಗತ್ತು ಇನ್ನೊಂದು ದಶಕದೊಳಗೆ ಇಂದು ಇರುವುದಕ್ಕಿಂತ ಬಹಳ ಭಿನ್ನವಾಗಿರುತ್ತದೆ ಮತ್ತು ಆ ಬದಲಾವಣೆ ವೇಗವಾಗಿಯೂ ಇರುತ್ತದೆ. ವರ್ತಮಾನ.ಕಾಮ್ ಎಲ್ಲಿಯವರೆಗೆ ಇರುತ್ತದೆ ಎನ್ನುವುದು ಗೊತ್ತಿಲ್ಲ ಮತ್ತು ಅದು ಮುಖ್ಯವೂ ಅಲ್ಲ. ಆದರೆ, ಇಂತಹ ವೇದಿಕೆಗಳು ಮತ್ತು ಪ್ರಯತ್ನಗಳು ಬಹುಶಃ ಇನ್ನೂ ದೊಡ್ಡ ನೆಲೆಯಲ್ಲಿ ಮತ್ತು ವ್ಯವಸ್ಥಿತವಾಗಿ, ಇನ್ನೂ ಹೆಚ್ಚಿನ ಸಂಪನ್ಮೂಲಗಳೊಂದಿಗೆ ಆರಂಭವಾಗುವುದನ್ನು ನಾವು ಬರಲಿರುವ ವರ್ಷಗಳಲ್ಲಿ ನೋಡಲಿದ್ದೇವೆ.

ಅಂದ ಹಾಗೆ, ಈ ವರ್ಷ ಹೋದ ವರ್ಷ ಆದಷ್ಟು ಹಣ ವ್ಯಯವಾಗಿಲ್ಲ. ಒಬ್ಬ ಸಹಾಯಕರಿಗೆ ಕೊಟ್ಟ ಐದಾರು ತಿಂಗಳುಗಳ ಅಲ್ಪಮೊತ್ತದ ಸಂಬಳ ಮತ್ತು ವೆಬ್‌‍ಸೈಟ್‌ನ ತಾಂತ್ರಿಕ ವಿಷಯಕ್ಕೆ ಸಂಬಂಧಪಟ್ಟ ಶುಲ್ಕ, ಎಲ್ಲವೂ ಸೇರಿ ಸುಮಾರು ರೂ. 35000 ಖರ್ಚಾಗಿರಬಹುದು. ಆದರೆ ಈ ವರ್ಷ ಅದು ಹೆಚ್ಚಾಗುತ್ತದೆ, ಹೆಚ್ಚಾಗಲೇಬೇಕು. ಆ ನಿಟ್ಟಿನಲ್ಲಿ ಕೆಲವೊಂದು ಖರ್ಚುಗಳನ್ನು ವಹಿಸಿಕೊಳ್ಳಲು ಸಮಾನಮನಸ್ಕ ಪ್ರಾಯೋಜಕರು ಮುಂದೆ ಬಂದರೆ ಅವರಿಗೆ ಖಂಡಿತ ಸ್ವಾಗತವಿದೆ.

ಮತ್ತು ಈ ವರ್ಷ ಒಂದಷ್ಟು ಸೆಮಿನಾರ್ ತರಹದ ಕಾರ್ಯಕ್ರಮಗಳನ್ನು ವರ್ತಮಾನ.ಕಾಮ್ ವತಿಯಿಂದ ಇತರ ಸಮಾನಮನಸ್ಕ ಗುಂಪು/ಸಂಸ್ಥೆಗಳ ಜೊತೆಗೂಡಿ ಆಯೋಜಿಸಬೇಕು ಎಂಬ ಯೋಜನೆಗಳಿವೆ. ಬರಹಗಾರರ ಬಳಗವನ್ನು ವಿಸ್ತರಿಸಲು ಕೆಲವೊಂದು ಸಭೆ ಮತ್ತು ಪ್ರವಾಸಗಳನ್ನು ಮಾಡಬೇಕೆಂತಲೂ ಅಂದುಕೊಳ್ಳುತ್ತಿದ್ದೇನೆ. ನನ್ನ ಹಲವು ವೈಯಕ್ತಿಕ ಅಶಿಸ್ತು ಮತ್ತು ನಿರಾಸಕ್ತಿಯ ಫಲವಾಗಿ ಹಲವಾರು ಯೋಜನೆಗಳು ಕಾರ್ಯರೂಪಕ್ಕೇ ಬರುತ್ತಿಲ್ಲ. ಕೆಲವೊಮ್ಮೆ ಮಾತನಾಡಲೇಬೇಕಾದವರ ಜೊತೆಯೂ, ಸಂಪರ್ಕದಲ್ಲಿರಬೇಕಾದವರ ಜೊತೆಯೂ ಫೋನ್ ಸಹ ಮಾಡದೆ ಇನ್ನೇತರದಲ್ಲಿಯೋ ವ್ಯಸ್ತನಾಗಿರುತ್ತೇನೆ. ಆ ವೈಯಕ್ತಿಕ ಅಶಿಸ್ತು ಮತ್ತು ದೌರ್ಬಲ್ಯಗಳನ್ನು ಕಳೆದುಕೊಂಡರೆ ವರ್ತಮಾನ.ಕಾಮ್ ಇನ್ನೂ ಸಕ್ರಿಯವಾಗುತ್ತದೆ. ಆದರೆ ಅದೇ ಸಂದರ್ಭದಲ್ಲಿ ಈ ಪ್ರಯತ್ನಕ್ಕೆ ಪೂರಕವಾಗಿರುವವರು ಮತ್ತು ನಮ್ಮ ಲೇಖಕ ಬಳಗದ ಮಿತ್ರರು–ವಿಶೇಷವಾಗಿ ನನಗಿರುವಂತಹ ದೌರ್ಬಲ್ಯಗಳಿಲ್ಲದವರು–ಹೆಚ್ಚು ಸಕ್ರಿಯರಾದರೆ ಇದು ತನ್ನಂತಾನೆ ವಿಸ್ತರಿಸಿಕೊಳ್ಳುತ್ತದೆ. ನೀವೆಲ್ಲರೂ ನಿಮ್ಮ ಸಕ್ರಿಯತೆಯನ್ನು ಇನ್ನಷ್ಟು ಹೆಚ್ಚಿಸುತ್ತೀರ ಎನ್ನುವ ನಂಬುಗೆಯಲ್ಲಿ ಇದ್ದೇನೆ.

ಕೊನೆಯದಾಗಿ, ಈ ವರ್ಷದ ಪ್ರಯತ್ನದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಾಯ ಮಾಡಿದವರಿಗೆ ಧನ್ಯವಾದ ಮತ್ತು ಕೃತಜ್ಞತೆ ಹೇಳಬೇಕಾಗಿರುವುದು. ಹಲವಾರು ಜನರಿದ್ದಾರೆ. ಕೆಲವರ ಹೆಸರು ತೆಗೆದುಕೊಳ್ಳಬಹುದು, ಕೆಲವರದು ಆಗದು. ಹಾಗಾಗಿ ಈ ವರ್ಷ ಅನೇಕ ಸಂದರ್ಭಗಳಲ್ಲಿ ಜೊತೆನಿಂತ, ಕೈಜೋಡಿಸಿದ ಮಿತ್ರರಾದ ಶ್ರೀಪಾದ್ ಭಟ್ಟರನ್ನು ಎಲ್ಲರಿಗೂ ಪ್ರಾತಿನಿಧಿಕವಾಗಿ ಇಟ್ಟುಕೊಂಡು ಧನ್ಯವಾದ ಅರ್ಪಿಸುತ್ತೇನೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ


ವರ್ತಮಾನ.ಕಾಮ್ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಬರೆದಿದ್ದ ಲೇಖನ : ವರ್ಷ ತುಂಬಿದ ಸಂದರ್ಭದಲ್ಲಿ ವರ್ತಮಾನದ ಪ್ರಸ್ತುತತೆ….

www.vartamaana.com 1st-anniversary