Category Archives: ಇತರೆ

ವಿಭಾಗಿಸಿಲ್ಲದ ಲೇಖನಗಳು

ಕುವೆಂಪು ರಚಿತ ಮಕ್ಕಳ ನಾಟಕಗಳು


– ರೂಪ ಹಾಸನ


 

ಕುವೆಂಪು ಅವರು ಈ ನಾಡು ಕಂಡ ಶ್ರೇಷ್ಠ ಕವಿ ಹಾಗೂ ದಾರ್ಶನಿಕ. ಇಷ್ಟೇ10156079_609745305782339_685038433_n ಆಗಿದ್ದರೆ ಅವರನ್ನು ಇಂದಿಗೂ ನೆನಪಿಸಿಕೊಳ್ಳುವ ತುರ್ತು ಇರುತ್ತಿರಲಿಲ್ಲ. ಅವರು ಸಮಕಾಲೀನ ವಿಚಾರಗಳಿಗೆ ಸ್ಪಂದಿಸುತ್ತಿದ್ದ ರೀತಿ, ಅವರ ಸಾಮಾಜಿಕ ಕಾಳಜಿ, ಬದುಕಿನ ಹಕ್ಕಿನ ಬಗೆಗೆ ಇದ್ದ ಗೌರವ, ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ನೀಡಿದ ಮಹತ್ವ, ತುರ್ತು ಪರಿಸ್ಥಿತಿಯ ವಿರುದ್ಧ ಅವರು ವ್ಯಕ್ತ ಪಡಿಸಿದ ಆಕ್ರೋಶ….. ಹೀಗೆ ಅವರ ಇಡೀ ಬದುಕೇ ಇತರರಿಗೆ ಮಾದರಿಯಾಗಿರುವಂತದ್ದು. ಕುವೆಂಪು ಅವರ ವೈಚಾರಿಕತೆಗೆ ಇರುವ ಮುಖ್ಯ ಲಕ್ಷಣ ವೈಜ್ಞಾನಿಕ ದೃಷ್ಟಿಕೋನವಾದ್ದರಿಂದಲೇ ಅದು ಸಾರ್ವಕಾಲಿಕತೆಯನ್ನು ಪಡೆದಿದೆ. ಅವರು ಕಥೆ, ಕವಿತೆ, ಕಾದಂಬರಿ, ವಿಚಾರ ಸಾಹಿತ್ಯ, ನಾಟಕ ಅಷ್ಟೇ ಅಲ್ಲದೇ ಮಹಾಕಾವ್ಯವನ್ನು ಬರೆದಷ್ಟೇ ಪ್ರೀತಿಯಿಂದ ಮಕ್ಕಳ ಸಾಹಿತ್ಯ ಕೃಷಿಯನ್ನೂ ಮಾಡಿರುವುದು ಅವರ ಹೆಗ್ಗಳಿಕೆಯಾಗಿದೆ.

ಸಾಮಾನ್ಯವಾಗಿ ಹಿರಿಯರ ಸಾಹಿತ್ಯ-ಚರ್ಚೆ-ಸಂವಾದಗಳಲ್ಲಿ ಮಕ್ಕಳನ್ನು ಮರೆತೇ ಬಿಟ್ಟಿರುತ್ತೇವೆ. ಮಕ್ಕಳ ಸಾಹಿತ್ಯ ಇಂದಿಗೂ ಅತ್ಯಂತ ನಿರ್ಲಕ್ಷಿತ ಕ್ಷೇತ್ರವಾಗಿದೆ. ಹಾಗೇ ಮಕ್ಕಳ ಸಾಹಿತಿಯ ಬಗೆಗೂ ಸಮಾಜದಲ್ಲಿ ಒಂದು ಬಗೆಯ ಅವಜ್ಞೆ ಮನೆಮಾಡಿದೆ. ಹಿರಿಯರಿಗಾಗಿ ಸಾಹಿತ್ಯ ರಚಿಸುವ ಹೆಚ್ಚಿನ ಸಾಹಿತಿಗಳು ಮಕ್ಕಳಿಗಾಗಿ ಸಾಹಿತ್ಯ ರಚಿಸುವುದು ಕೀಳೆಂದು ಭಾವಿಸುತ್ತಾರೆ. ಆದರೆ ನವೋದಯ ಕಾಲದ ಹಲವು ಸಾಹಿತಿಗಳು ಹಿರಿಯರಿಗಾಗಿ ಸಾಹಿತ್ಯ ರಚಿಸುವ ಜೊತೆಗೇ ಮಕ್ಕಳ ಮೇಲಿನ ಪ್ರೀತಿಯಿಂದಲೂ ಕೃತಿಗಳನ್ನು ರಚಿಸಿದ್ದು ಮೆಚ್ಚಬೇಕಾದುದು. ಅದರಲ್ಲಿ ಕುವೆಂಪು ಅವರು ಕೂಡ ಒಬ್ಬರು.

ಮಕ್ಕಳ ಸಾಹಿತ್ಯಕ್ಕೆ ಕುವೆಂಪು ಅವರ ಕೊಡುಗೆ ಗಮನಾರ್ಹವಾದುದೆಂದೇ ಹೇಳಬೇಕು. ಅವರು ರಚಿಸಿದ ಮಕ್ಕಳ ನಾಟಕಗಳು ಎರಡೇ. 1926 ರಲ್ಲಿ ಬರೆದ ‘ಮೋಡಣ್ಣನ ತಮ್ಮ’. ಅದು ಇದುವರೆಗೆ ಆರು ಮುದ್ರಣಗಳನ್ನು ಕಂಡಿದೆ. 1930 ರಲ್ಲಿ ರಚಿಸಿದ ‘ನನ್ನ ಗೋಪಾಲ’ ನಾಟಕ ಏಳು ಮುದ್ರಣಗಳನ್ನು ಕಂಡಿದೆ. ಇದಲ್ಲದೇ ಇಂಗ್ಲೀಷ್ ಕವಿ ರಾಬರ್ಟ್ ಬ್ರೌನಿಂಗ್ ನ ‘ದಿ ಪೈಡ್ ಪೈಪರ್ ಆಫ್ ಹ್ಯಾಮಲಿನ್’ ಕವಿತೆಯ ಪ್ರೇರಣೆಯಿಂದ ರೂಪುಗೊಂಡ ‘ಬೊಮ್ಮನ ಹಳ್ಳಿಯ ಕಿಂದರಿ ಜೋಗಿ’ ಆರ್.ಕೆ.ಲಕ್ಷ್ಮಣ್ ಅವರ ಚಿತ್ರಗಳನ್ನೊಳಗೊಂಡು ರಚಿತವಾದ ಕಥನ ಕಾವ್ಯ ಹಾಗೂ ನೀಳ್ಗಾವ್ಯವಾಗಿದ್ದು, ಮಹಾರಾಜಾ ಕಾಲೇಜಿನ ಕರ್ನಾಟಕ ಸಂಘದ ಕಿರಿಯರ ಕಾಣಿಕೆಯಲ್ಲಿ 1928ರಲ್ಲಿ ಮೊದಲಿಗೆ ಪ್ರಕಟವಾಗಿ, ನಂತರದಲ್ಲಿ ಆರು ಮುದ್ರಣವನ್ನು ಕಂಡಿದೆ. ನನ್ನ ಮನೆ, ಮರಿ ವಿಜ್ಞಾನಿ, ಶಿಶು ಗೀತಾಂಜಲಿ, ಮೇಘಪುರ, ಬೆಳ್ಳಿ ಹಬ್ಬದ ಕಟ್ಟಿದ ಬಳ್ಳಿ ಎಂಬ ಶಿಶುಕಾವ್ಯ ಸಂಕಲನಗಳನ್ನು ಮಕ್ಕಳಿಗೆ ಕಾಣಿಕೆಯಾಗಿ ನೀಡಿರುವ ಕುವೆಂಪು ಅವರು, ಮೀನಾಕ್ಷಿ ಮನೆ ಮೇಷ್ಟ್ರು, ಒಂದು ಯಶಸ್ವೀ ಕಥೆ, ಸನ್ಯಾಸಿ, ಗುಪ್ತಧನ, ಧನ್ವಂತರಿ ಚಿಕಿತ್ಸೆ, ವೈರಾಗ್ಯದ ಮಹಿಮೆ, ನರಿಗಳಿಗೇಕೆ ಕೋಡಿಲ್ಲ ಎಂಬ ಕಥಾ ಸಂಕಲನಗಳನ್ನೂ ರಚಿಸಿದ್ದಾರೆ.

1926ರಲ್ಲಿ ರಚಿತವಾದ ಕುವೆಂಪು ಅವರ ಮೊದಲ ನಾಟಕ, ಹಾಗೂ ಮಕ್ಕಳ ಗೀತ ನಾಟಕವೂ ಆಗಿರುವ ‘ಮೋಡಣ್ಣನ ತಮ್ಮ’ ಮೋಡದ ಜೊತೆಗೆ modannana-tammaಆಡಲು ಬಯಸುವ ಕಿಟ್ಟು ಎಂಬ ಪುಟ್ಟ ಹುಡುಗನ ಕತೆಯಾಗಿದೆ. ಒಂಟಿಯಾಗಿರುವ ಕಿಟ್ಟುವಿಗೆ ಒಮ್ಮೆ ಇದ್ದಕ್ಕಿದ್ದಂತೆ ಆಕಾಶದಲ್ಲಿ ಒಂಟಿಯಾಗಿ ತೇಲುತ್ತಿರುವ ಮೋಡವನ್ನು ನೋಡಿ ತಾನೂ ಅದರ ಜೊತೆಗೆ ಆಕಾಶಕ್ಕೆ ಹಾರಿ ಬಿಡುವ ಮನಸಾಗುತ್ತದೆ. ಅವನು ‘ಓ ಮೋಡಣ್ಣ, ಓ ಮೋಡಣ್ಣ ನಾನೂ ಬರುವೆನು ಕೈ ನೀಡಣ್ಣ’ ಎಂದು ಬೇಡಿಕೊಳ್ಳುತ್ತಾನೆ. ಆದರೆ ಮೋಡಣ್ಣನಿಗೆ ಈ ಹುಡುಗನನ್ನು ತನ್ನೊಂದಿಗೆ ಕರೆದೊಯ್ಯುವ ಮನಸಿಲ್ಲ. ಹೀಗೆಂದೇ ‘ನಿನ್ನ ತಾಯಿ ಬೈಯ್ದಾಳು’ ಎಂಬ ನೆಪವೊಡ್ಡಿ ಹುಡುಗನಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಕಿಟ್ಟುವಿಗೆ ಎತ್ತರದಲ್ಲಿ ತೇಲುವ ಮೋಡ, ಅದರ ಆಟ, ಮಿಂಚನ್ನೇ ಬಳೆಯಾಗಿ ಧರಿಸಿರುವ, ಗುಡುಗಿನೊಂದಿಗೆ ಆಡುವ ಎತ್ತರೆತ್ತರದ ಬೆಟ್ಟಗಳನ್ನು ಏರುವ, ದೂರ ದೂರದ ಊರುಗಳನ್ನು ನೋಡುವ ಮೋಡದ ಬದುಕು ವಿಶಿಷ್ಟವಾದುದು ಎನ್ನಿಸಿಬಿಟ್ಟಿದೆ. ಅದಕ್ಕೆ ಮೋಡದೊಡನೆ ಹೋಗಲು ತುದಿಗಾಲಲ್ಲಿ ನಿಂತಿದ್ದಾನೆ. ಆದರೆ ಮೋಡ ಒಪ್ಪುತ್ತಿಲ್ಲ. ಹೀಗಾಗಿ ಕಿಟ್ಟು ಬೆಟ್ಟದ ಮೊರೆ ಹೋಗುತ್ತಾನೆ. ಇಡೀ ದಿನ ಬೆಟ್ಟದಲ್ಲೇ ಅಲೆವ ಕಿಟ್ಟುವಿಗೆ ಅದೂ ಒಬ್ಬ ಮಿತ್ರ. ಬೆಟ್ಟ ಕಿಟ್ಟುವಿನ ಪರವಾಗಿ ಮೋಡವನ್ನು ಬೇಡಿಕೊಳ್ಳುತ್ತದೆ. ಇಲ್ಲಿ ಕುವೆಂಪು ಅವರ ಕಲ್ಪನಾ ಶಕ್ತಿಯನ್ನು ಗಮನಿಸಬೇಕು.

ಶರಧಿಯ ನೀರನೆ ಹೊರುವಾ ನಿನಗೆ
ಕಿರಿಯವನಿವನತಿ ಭಾರವೆ, ಅಣ್ಣಾ?
ಸಿಡಿಲನು ಮಿಂಚನು ಆಳುವೆ ನೀನು
ಹುಡುಗನ ಆಳುವುದಸದಳವೇನು
ರೈತರ ನಿಂದೆಯ ಸೈರಿಪ ನೀನು
ತಾಯಿಯ ದೂರನು ಹೊಂದಿದರೇನು?

ಎನ್ನುತ್ತಾರೆ. ಆದರೆ ಮೋಡ ಇದಕ್ಕೂ ಜಗ್ಗುವುದಿಲ್ಲ. ಹತ್ತು ಕಡಲನ್ನ ಹೊತ್ತರೂ ಒಬ್ಬ ಹುಡುಗನನ್ನ ಹೊರಲಾರೆ. ರೈತರ ಗುಂಪೇ ಬೈಯ್ಯಬಹುದು, ಆದರೆ ತಾಯಿಯ ಶಾಪವನ್ನು ಸಹಿಸಲಾರೆ ಎನ್ನುತ್ತದೆ ಮೋಡ. ತಾಯಿಯ ಘನತೆಯನ್ನೂ ಈ ಮೂಲಕ ಕುವೆಂಪು ಅವರು ಸೂಕ್ಷ್ಮದಲ್ಲೇ ಎತ್ತಿ ಹಿಡಿಯುತ್ತಾರೆ. ಮತ್ತೆ ಮತ್ತೆ ಕಿಟ್ಟು ಮೋಡವನ್ನು ಬೇಡಿಕೊಳ್ಳುತ್ತಾನೆ. ಮೋಡದ ಮನೆಯಲ್ಲಿ ಉಳಿಯಲು ಕೊಡೆ, ಕಂಬಳಿ, ಹಾಸಿಗೆ, ಹೊದಿಕೆ ಎಲ್ಲವನ್ನೂ ತರುತ್ತೇನೆ ಒಂದೇ ದಿನ ಉಳಿದು ವಾಪಸ್ ಬಂದು ಬಿಡುತ್ತೇನೆ ಎನ್ನುತ್ತಾನೆ. ಮೋಡದಲ್ಲಿ ಹುಲಿ, ರಾಕ್ಷಸರು, ದೊಡ್ಡ ಊರುಗಳನ್ನು, ಕುರಿಗಳ ಹಿಂಡು, ಹೊಳೆ, ತೊರೆ, ಕಡಲು, ದಟ್ಟಡವಿಗಳನ್ನು ಕಾಣುತ್ತಿದ್ದೇನೆ ಎನ್ನುವ ಕಿಟ್ಟುವಿನ ಕಣ್ಣಿನ ಮೂಲಕ ಕುವೆಂಪು ಅವರು ಮಕ್ಕಳ ಮುಗ್ಧ ಕಾಲ್ಪನಿಕ ಹಾಗೂ ಭಾವುಕ ಜಗತ್ತನ್ನು ಕಟ್ಟಿಕೊಡುತ್ತಾರೆ. ನಂತರ ಕಿಟ್ಟು ಕಾಡನ್ನು ತನ್ನ ಪರವಾಗಿ ಮೋಡದ ಬಳಿ ಬೇಡಿಕೊಳ್ಳಲು ತಿಳಿಸುತ್ತಾನೆ. ಆದರೆ ಕಾಡಿಗೆ ಇಡೀ ಮನುಜ ಕುಲದ ಬಗ್ಗೆಯೇ ಅಸಹನೆ. ಮರಗಳನ್ನು ಕಡಿದು ಕಾಡನ್ನು ನಾಶಪಡಿಸುತ್ತಿರುವ, ಹೊಸ ಕಾಡನ್ನು ರೂಪಿಸಲು ಸಿದ್ಧವಿಲ್ಲದ ಮನುಷ್ಯರ ಸಂತತಿಯ ಕಿಟ್ಟುವನ್ನೂ ನಿನ್ನೊಂದಿಗೆ ಕರೆದೊಯ್ಯ ಬೇಡ ಎಂದು ಹೇಳುವ ಕಾಡಿನ ಮೂಲಕ, ಕಾಡಿನ ಮೂಕ ನೋವುಗಳ ಎಲ್ಲ ಮುಖಗಳನ್ನೂ ಕುವೆಂಪು ಅನಾವರಣಗೊಳಿಸುತ್ತಾ ಮಕ್ಕಳ ಮನಸಿನಲ್ಲಿ ಪ್ರಕೃತಿ ಪ್ರೀತಿಯನ್ನೂ ಮೂಡಿಸುವ ಪ್ರಯತ್ನ ಮಾಡುತ್ತಾರೆ.

ಪುರಾಣದಲ್ಲಿ ಚರ್ಚಿತವಾದ ಮೋಡದ ಕುರಿತ ವಿವರಗಳು, ಲೌಕಿಕ ಜಗತ್ತಿನ ವಿವರಗಳನ್ನು ಒಳಗೊಂಡಂತೆ, ಮೋಡದ ಬಾಯಿಂದ ಮಕ್ಕಳಿಗೆ ನೈತಿಕತೆಯ ಪಾಠವನ್ನು ಹೇಳಿಸುವುದನ್ನೂ ಇಲ್ಲಿ ಕಾಣುತ್ತೇವೆ. ಆದರ್ಶ ಪುರುಷರನ್ನೆಲ್ಲಾ ಕಿಟ್ಟುವಿಗೆ ಹೋಲಿಸಿ ಅವರಂತೆ ನೀನೂ ಆಗಬೇಕೆಂದು ಮೋಡ ಹಾರೈಸುತ್ತದೆ. ಅಷ್ಟರಲ್ಲಿ ಅವನ ತಾಯಿ ಕರೆಯುತ್ತಾಳೆ. ಮೋಡದ ಬಳಿ ಕಿಟ್ಟುವಿನ ಬೇಡಿಕೆಯೂ ಕರಗಿರುತ್ತದೆ. ಅವನು ಸಂತೋಷದಿಂದ ಮೋಡವನ್ನು ಬೀಳ್ಗೊಡುತ್ತಾನೆ ಎಂಬಲ್ಲಿಗೆ ನಾಟಕ ಮುಗಿಯುತ್ತದೆ. ನಾಟಕದ ಓದಿಗಿಂತ, ಅಭಿನಯದ ಮೂಲಕ ನಾಟಕ ಹೆಚ್ಚು ಸಮರ್ಥವೂ ಸಾರ್ಥಕವೂ ಆಗುವುದು ನಿಜ. ಅಲ್ಲಲ್ಲಿ ಕೆಲವು ಮುಖ್ಯ ತಿದ್ದುಪಡಿಯೊಂದಿಗೆ ಈ ‘ಮೋಡಣ್ಣನ ತಮ್ಮ’ ನಾಟಕದ ಕೆಲವು ಯಶಸ್ವಿ ರಂಗ ಪ್ರಯೋಗಗಳೂ ಆಗಿವೆ ಎಂದು ಕೇಳಿದ್ದೇನೆ.

ಇನ್ನು ಕುವೆಂಪು ಅವರ ಎರಡನೆಯ ಮಕ್ಕಳ ನಾಟಕ 1930 ರಲ್ಲಿ ರಚಿತವಾದ ‘ನನ್ನ ಗೋಪಾಲ’. nanna-gopalaಇದರಲ್ಲಿ ದೇವರು ಮಗುವಿನ ಮುಗ್ಧತೆಗೆ ಒಲಿಯುತ್ತಾನೆ, ಕರ್ಮಠರಿಗಲ್ಲ ಎಂಬ ಸಂದೇಶವಿದೆ. ಬಡ ವಿಧವೆ ತಾಯಿಯೊಡನೆ ಕಾಡಿನ ಅಂಚಿನಲ್ಲಿ ವಾಸಿಸುವ ಬಾಲಕ ಗೋಪಾಲ, ಶಾಲೆಗೆ ಕಾಡನ್ನು ದಾಟಿ ಹೋಗ ಬೇಕಾದ ಅನಿವಾರ್ಯತೆ ಇದೆ. ಶ್ರೀಮಂತರ ಮನೆಯ ಮಕ್ಕಳಿಗೆ ಕಾಡನ್ನು ದಾಟಿ ಹೋಗಲು ಆಳುಗಳು ಜೊತೆಗಿದ್ದಾರೆ. ಕೃಷ್ಣನಲ್ಲಿ ನಿಷ್ಕಲ್ಮಶ ಭಕ್ತಿ ಇರುವ ಗೋಪಾಲನ ತಾಯಿ ತನ್ನ ಮಗನ ಜವಾಬ್ದಾರಿಯನ್ನು ಅವನಿಗೇ ವಹಿಸಿ ನಿಶ್ಚಿಂತಳಾಗಿದ್ದಾಳೆ. ಕಾಡಿನಲ್ಲಿ ಹೆದರಿಕೆಯಾದಾಗಲೆಲ್ಲ ಬಾಲಕ ಗೋಪಾಲ, ತನ್ನ ಅಣ್ಣನೆಂದು ತಾಯಿ ಹೇಳಿಕೊಟ್ಟ ಕೃಷ್ಣನನ್ನೇ ಕರೆದು ತನ್ನ ಭಯವನ್ನು ಹಂತ ಹಂತವಾಗಿ ಮೀರುತ್ತಲೇ ಕೃಷ್ಣನೊಂದಿಗೆ ಆಪ್ತತೆ ಮೂಡಿಬಿಡುತ್ತದೆ. ತಾಯಿಗೂ ಇದನ್ನು ತಿಳಿದು ಅತ್ಯಂತ ನಿರಾಳತೆ. ಕುವೆಂಪು ಅವರು ಬಾಲ್ಯವನ್ನು ವಿಶೇಷ ದೃಷ್ಟಿಯಿಂದ ಇಲ್ಲಿ ವಿವರಿಸಿದ್ದಾರೆ. ಮಗುವಿನ ಮನಸ್ಸನ್ನು ಹೊಕ್ಕು ಅದರ ಮನಸ್ಸಿನಲ್ಲಿ ಇರುವ ಬಾಲ್ಯ ಸಹಜವಾದ ಕುತೂಹಲ, ತಳಮಳ, ಆತಂಕಗಳನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಕಾಡಿನಲ್ಲಿನ ಕೃಷ್ಣ ಹಾಗು ಗೋಪಾಲರ ಆತ್ಮೀಯ ಮಾತುಕತೆಗಳಲ್ಲಿ ಮಕ್ಕಳ ಮುಗ್ಧ ಲೋಕದ ಅನಾವರಣವಿದೆ. ಗೋಪಾಲನ ಕುತೂಹಲದ ಪ್ರಶ್ನೆಗಳು ಹಾಗೂ ಕೃಷ್ಣನ ಸಮಂಜಸ ಉತ್ತರಗಳಲ್ಲಿ ಲೋಕದ ಎಲ್ಲ ವ್ಯಾಪಾರಗಳೂ ಮಗುವಿನ ನಿರ್ಮಲ ಮನಸ್ಸಿನ ಒಳತೋಟಿಯನ್ನು ಹಿಡಿದೇ ಚಲಿಸುತ್ತವೆ. ಶಾಲೆಯ ಗುರುಗಳು ತಮ್ಮ ಮನೆಯಲ್ಲಿ ವಿಶೇಷ ಮಂಗಳ ಕಾರ್ಯ ನಡೆಯುವುದೆಂದು ಗುರುದಕ್ಷಿಣೆ ನೀಡಬೇಕೆಂದು ಶಿಷ್ಯರಲ್ಲಿ ಕೇಳಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಗೋಪಾಲನ ತಾಯಿ ತನ್ನ ಬಳಿ ಕೊಡಲು ಏನೂ ಇಲ್ಲವೆಂದು ಅಣ್ಣನೆಂದೇ ತಿಳಿದ ಬನದ ಕೃಷ್ಣನಲ್ಲೇ ಕಾಣಿಕೆ ಕೇಳೆಂದು ಹೇಳುತ್ತಾಳೆ. ಕೃಷ್ಣ ಒಂದು ಕುಡಿಕೆಯಲ್ಲಿ ಮೊಸರು ಕೊಟ್ಟು ಕಳಿಸುತ್ತಾನೆ. ಶ್ರೀಮಂತರ ಮನೆಯ ಮಕ್ಕಳೆಲ್ಲ ಬೆಲೆ ಬಾಳುವ ವಸ್ತುಗಳನ್ನು ಕಾಣಿಕೆಯಾಗಿ ತಂದಿದ್ದು, ಅವರೆಲ್ಲ ಗೋಪಾಲನ ಕುಡಿಕೆಯ ಮೊಸರನ್ನು ತಮಾಷೆಯಾಗಿ ಆಡಿಕೊಂಡು ನಗುವ ಚಿತ್ರಣವನ್ನು ಕುವೆಂಪು ಅವರು ಅತ್ಯಂತ ಸಹಜವಾಗಿ ಮಕ್ಕಳ ತುಂಟ ಮನಸಿನಾಳವನ್ನು ಅರಿತವರಂತೆ ಚಿತ್ರಿಸಿದ್ದಾರೆ.

ಕುಡಿಕೆಯ ಮೊಸರು ಪಾತ್ರೆಗೆ ಎಷ್ಟು ಸುರಿದರೂ ಮತ್ತೆ ಮತ್ತೆ ತುಂಬುವ ಕಾಲ್ಪನಿಕತೆಯನ್ನೂ ಮಕ್ಕಳ ಮನೋಲೋಕದ ಪರಿಧಿಗೆ ಹಿಗ್ಗಲಿಸಿ ಕಟ್ಟಿಕೊಡುವ ಕುವೆಂಪು ಅವರು ಗುರುಗಳ ಮೂಲಕ ಗೋಪಾಲನ ತಾಯಿಯ ಹಿರಿಮೆಯನ್ನು ಕುರಿತು ಹೇಳಿಸುತ್ತಾ ಇಡೀ ವಿಶ್ವದ ತಾಯಂದಿರ ಹೃದಯ ವೈಶಾಲ್ಯತೆಯನ್ನೇ ಕಟ್ಟಿಕೊಡುವ ಪ್ರಯತ್ನ ಮಾಡುತ್ತಾರೆ. ಕೊನೆಯ ಅಂಕದಲ್ಲಿ ಗೋಪಾಲ ಮತ್ತು ಗುರುಗಳೊಂದಿಗೆ ಅ ಅಕ್ಷಯ ಮೊಸರನ್ನು ಕೊಟ್ಟ ಬನದ ಕೃಷ್ಣನನ್ನು ನೋಡಲು ಎಲ್ಲ ಹುಡುಗರೂ ಹೋಗುತ್ತಾರೆ. ಗೋಪಾಲ ಎಷ್ಟು ಕರೆದರೂ ಕೃಷ್ಣ ಕಾಣಿಸದಿದ್ದಾಗ, ಅವನು ದರ್ಶನ ತೋರುವಂತೆ ಕೃಷ್ಣನಲ್ಲಿ ಕಣ್ಣು ತುಂಬಿ ಬೇಡಿಕೊಳ್ಳುತ್ತಾನೆ. ಕೊನೆಗೆ ಅವನ ದನಿಯಷ್ಟೇ ಕೇಳುತ್ತದೆ, ಅವನು ಪ್ರತ್ಯಕ್ಷನಾಗುವುದಿಲ್ಲ. ಈ ಮೂಲಕ ಗೋಪಾಲ ಮತ್ತು ಅವನ ತಾಯಿಯ ಪ್ರಾಮಾಣಿಕ ಭಕ್ತಿ ಮತ್ತು ಪ್ರೀತಿಗಳು ಗೆಲ್ಲುವುದನ್ನು ಕುವೆಂಪು ಅವರು ಮನೋಜ್ಞವಾಗಿ ಕಟ್ಟಿಕೊಡುತ್ತಾರೆ. ಹಾಗೇ ಈ ನಾಟಕ ಪುರಾಣ ಪ್ರತಿಮೆಯ ಪುನರ್ ಸೃಷ್ಟಿಯನ್ನು ಮಾಡುತ್ತಾ ಮನಸ್ಸಿನ ಅಂತರ್ ದೃಷ್ಟಿಯ ಕಡೆಗೆ ಒತ್ತು ಕೊಡುವುದನ್ನು ಕಾಣುತ್ತೇವೆ. ಈ ನಾಟಕವೂ ಯಶಸ್ವಿ ರಂಗ ಪ್ರಯೋಗವನ್ನು ಕಂಡು ಮಕ್ಕಳ ಮನಸನ್ನು ಗೆದ್ದಿದೆ.

‘ನನ್ನ ಗೋಪಾಲ’ ನಾಟಕವನ್ನು ಓದಿದ ಶ್ರೀ ಎ. ಆರ್, ಕೃಷ್ಣಶಾಸ್ತ್ರಿಗಳು ಕುವೆಂಪು ಅವರಿಗೆ ಬರೆದ ಪತ್ರದಲ್ಲಿ “ನಿಮ್ಮ ‘ನನ್ನ ಗೋಪಾಲ’ನಾಟಕ ಭಗವದ್ಗೀತೆ ಮತ್ತು ಭಾಗವತ ಎರಡರ ಸಾರಸರ್ವಸ್ವವನ್ನೂ ತನ್ನಲ್ಲಿ ಒಳಗೊಂಡಿರುವ ಒಂದು ಪುಟ್ಟ ಅನಘ್ರ್ಯ ರತ್ನ. ಕಣ್ಣೀರು ತುಂಬಿ ಅದನ್ನು ಓದಿದ್ದೇನೆ.” ಎನ್ನುತ್ತಾರೆ. ಬಹುಶಃ ಇದು ಕುವೆಂಪು ಅವರ ನಾಟಕಕ್ಕೆ ಸಿಕ್ಕ ಬಹು ದೊಡ್ಡ ಮೆಚ್ಚುಗೆ. ಆದರೆ ಈ ಎರಡೂ ಮಕ್ಕಳ ನಾಟಕದಲ್ಲಿ ಇರಲೇಬೇಕಾದ ರಂಜನೆ ಹಿಡಿದಿಡುವಂತಹ ಗುಣಕ್ಕಿಂತಾ ಹೆಚ್ಚಾಗಿ ಉಪದೇಶಾತ್ಮಕ, ಆದರ್ಶಮಯ ನೆಲೆಯಲ್ಲಿ ಚಿತ್ರಿತವಾಗಿದೆ. ಇಂದಿನ ಮಕ್ಕಳಿಗೆ 80-90 ವರ್ಷಗಳ ಹಿಂದೆ ರಚಿತವಾದ ಕುವೆಂಪು ಅವರ ಈ ನಾಟಕಗಳು ಹೇಗೆನ್ನಿಸುತ್ತದೆ ಎಂದು ತಿಳಿದುಕೊಳ್ಳಲೆಂದೇ ಈ ನಾಟಕಗಳನ್ನು ನಮ್ಮ ಮಕ್ಕಳ ಸಂಸ್ಥೆ ಪ್ರೇರಣಾ ವಿಕಾಸ ವೇದಿಕೆಯ ಸಾಹಿತ್ಯಾಸಕ್ತ ಮಕ್ಕಳಿಗೆ ಓದಲು ನೀಡಿದ್ದೆ. ಅವರು ಅದರ ಒಟ್ಟು ಕಥೆಯ ಸಾರಾಂಶವನ್ನು ಇಷ್ಟಪಟ್ಟರೂ ಅದರಲ್ಲಿ ತಮ್ಮನ್ನ ಕಾರ್ಟೂನು ಅಥವಾ ಮಕ್ಕಳ ಇತ್ತೀಚೆಗಿನ ನಾಟಕ ಹಾಗೂ ಮಕ್ಕಳ ಟಿವಿ ಶೋಗಳು ಹಿಡಿದಿಡುವಂತೆ ಹಿಡಿದಿಡಲ್ಲ ಎಂದು ಆರೋಪಿಸಿದರು. ಒಂದಿಷ್ಟು ನೀರಸವಾಗಿದೆ ಎಂಬ ಆಕ್ಷೇಪವನ್ನೂ ಮಾಡಿದರು. ಅದೂ 8 ರಿಂದ 10-12 ವರ್ಷದ ಮಕ್ಕಳಿಗಷ್ಟೇ ಇಂತಹ ಮುಗ್ಧ ಲೋಕದ ಕಥೆಗಳು ಇಷ್ಟವಾಗುತ್ತವೆಯೇ ಹೊರತು ಅದಕ್ಕಿಂತಾ ದೊಡ್ಡ ಮಕ್ಕಳಿಗೆ ಇಂತಹ ಭಾವುಕ ಕಥಾ ಹಂದರ ಹಿಡಿಸುವುದಿಲ್ಲ. ಆದರೆ ‘ಕಿಂದರಿ ಜೋಗಿ’ಯನ್ನು ಮಕ್ಕಳು ಬಹುವಾಗಿ ಮೆಚ್ಚಿಕೊಳ್ಳುತ್ತಾರೆ. ಈ ನೀಳ್ಗಾವ್ಯ ಸಶಕ್ತವಾಗಿ ಮಕ್ಕಳ ಮನಸ್ಸನ್ನು ಗೆಲ್ಲಲು ಸಫಲವಾಗಿದೆ ಎಂದೇ ಹೇಳಬೇಕು.

ಅವರ ‘ಬೊಮ್ಮನಹಳ್ಳಿಯ ಕಿಂದರಿ ಜೋಗಿ’ ಮಕ್ಕಳ ಕಥನಕಾವ್ಯವಾದರೂ ಅದು ತನ್ನ 7325e9bab174325596e65326641444341587343ನಾಟಕೀಯ ಗುಣಗಳಿಂದ ಅದ್ಭುತ ನಾಟಕವಾಗಿ ಮಾರ್ಪಟ್ಟಿದೆ. ಈ ಕಥೆಯ ಭಾಷೆಯ ಲಾಲಿತ್ಯ ಎಂಥಹಾ ಅರಸಿಕ ಮಗುವನ್ನೂ ಹಿಡಿದಿಡುವಷ್ಟು ಸಶಕ್ತವಾಗಿದೆ. ಕಿಂದರಿಜೋಗಿ ಈ ಹೊತ್ತಿಗೂ ಮಕ್ಕಳನ್ನು ಬೆರಗುಗೊಳಿಸುವ ಸಾಮರ್ಥ್ಯ ಹೊಂದಿದೆ. ಅದರ ಕಥಾ ಹಂದರ, ಸ್ವಾರಸ್ಯಕರ ನಿರೂಪಣೆ, ತಮಾಷೆಯ ಪ್ರಸಂಗಗಳು ಎಲ್ಲವೂ ಮನವನ್ನು ಸೆಳೆಯುತ್ತವೆ. ಇದು ವಿದೇಶಿ ಕಥೆಯ ರೂಪಾಂತರವಾದರೂ ನಮ್ಮ ಸಾಮಾಜಿಕ ಪರಿಸರದಲ್ಲಿಯೇ ಸಂಭವಿಸಿದಂತೆ, ಕನ್ನಡ ನಾಡಿನ ಮಣ್ಣಿನ ಹದವನ್ನು ತುಂಬಿ ಕುವೆಂಪು ಅವರ ಕಥನ ಸಾಮರ್ಥ್ಯದ ಮೂಲಕ ಪುನರ್ ಸೃಷ್ಟಿಯಾಗಿದೆ. ಇದು ಮೇಲ್ನೋಟಕ್ಕೆ ಮಕ್ಕಳ ನೀತಿ ಕಥೆಯಂತೆ ಕಂಡರೂ ಅದರೊಳಗೆ ಮಕ್ಕಳ ಮನೋಲೋಕವನ್ನು ವಿಸ್ತರಿಸುವ ಕಾಲ್ಪನಿಕ ಜಗತ್ತು ಅದ್ಭುತವಾಗಿ ಹೆಣೆದುಕೊಂಡಿದೆ.

ಕುವೆಂಪು ಅವರು ಈ ಕವಿತೆಯನ್ನು ಮೊದಲಿಗೆ ಶಿವಮೊಗ್ಗದ ಸಭೆಯೊಂದರಲ್ಲಿ ವಾಚಿಸಿದಾಗ ಪ್ರತಿ ನುಡಿಗೂ ದೀರ್ಘ ಕರತಾಡನದ ಪ್ರತಿಕ್ರಿಯೆ ದೊರಕಿತ್ತಂತೆ. ಮಕ್ಕಳಿಗೆ ಇಲಿಗಳ ದೊಡ್ಡ ಬಳಗದ ಕತೆ, ಅವುಗಳ ಅಸಾಧ್ಯ ಚೇಷ್ಟೆ ಖಂಡಿತಾ ರಂಜನೆಯ ಸಂಗತಿಯೇ. ಕಿನ್ನರಿಯ ನಾದಕ್ಕೆ ಇದ್ದಕ್ಕಿದ್ದ ಹಾಗೆ ಎಲ್ಲ ಅವನನ್ನು ಹಿಂಬಾಲಿಸುವುದು, ನೀರಲ್ಲಿ ಮುಳುಗಿ ಹೋಗುವುದು, ಹಾಗೇ ಮಕ್ಕಳೆಲ್ಲಾ ಹಿಂಬಾಲಿಸುವುದು, ಬೆಟ್ಟ ಬಾಯ್ದೆರೆದು ಅವರೆಲ್ಲಾ ಅದರೊಳಗೆ ಹೋಗಿಬಿಡುವುದು, ಅವಾಸ್ತವದ ಸಂಗತಿಗಳಾಗಿಯೂ ಬಾಲ ಮನಸ್ಸಿನ ಕುತೂಹಲವನ್ನು, ಅಚ್ಚರಿಯನ್ನು ಇಮ್ಮಡಿಗೊಳಿಸುತ್ತದೆ. ಹೀಗಾಗಿಯೇ ಮಕ್ಕಳಿಗೆ ಇದು ಹಿಡಿಸಿದೆ ಮತ್ತು ಮುದಗೊಳಿಸಿದೆ.

ಬಾಲ್ಯದ ಕುರಿತು, ಕಳೆದುಹೋದ ಆ ಸಮಯದ ಕುರಿತು ಮರಳಿ ಅದನ್ನು ಪ್ರಕೃತಿಯ ಮಡಿಲಲ್ಲಿ ಪಡೆಯುವ ಕುರಿತು ಕುವೆಂಪು ಅವರು ಹಲವು ನಾಟಕಗಳಲ್ಲಿ ಬರೆಯುತ್ತಾ ಬಾಲ್ಯದ ಕುರಿತ ತಮ್ಮ ಅತ್ಯಂತ ಸಂತಸದ ಸಂಗತಿಗಳನ್ನು ಅಭಿವ್ಯಕ್ತಿಗೊಳಿಸಿದ್ದಾರೆ. ಬಾಲ್ಯ ಒಂದು ಅಪರೂಪದ ಸಮಯ, ಮತ್ತೆಂದೂ ಸಿಗಲಾರದೇ ಹೋಗಿ ಬಿಡುತ್ತದೆ ಎಂಬ ಲಹರಿಯೊಂದಿಗೆ, ಬಾಲ್ಯವನ್ನು ದೈವೀಕವಾಗಿ ಕಾಣುವ ಕಣ್ಣು ನಮಗೆ ಕುವೆಂಪು ಅವರ ಎಲ್ಲ ಮಕ್ಕಳ ಸಾಹಿತ್ಯದಲ್ಲೂ ಸಿಗುತ್ತದೆ. ಬಾಲ್ಯವೆಲ್ಲ ಬದುಕಿನ ತಯಾರಿಗಾಗಿ ಸಿದ್ಧಗೊಳಿಸುವ ಹಂತವಾಗಿ ಕಾಣದೇ ಅದರಲ್ಲಿಯೂ ಒಂದು ಬಗೆಯ ಪರಿಪೂರ್ಣತೆಯನ್ನು ಕಾಣುವ ಬಗೆ ಇಲ್ಲೆಲ್ಲ ಗೋಚರಿಸುತ್ತದೆ.

ತಾಯಿ, ಮಗು ಮತ್ತು ಪ್ರಕೃತಿಯ ನಡುವಿನ ಸಂಬಂಧದ ಗಾಢತೆ ಹಾಗೂ ನಿಗೂಢತೆ ಪ್ರಕೃತಿ ಸಹಜವಾದರೂ ಅಪರೂಪದ ಭಾವಲೋಕಕ್ಕೆ ಕರೆದೊಯ್ಯುವ ಶಕ್ತಿ ಕುವೆಂಪು ಅವರಿಗಿದೆ. ಹೀಗೆಂದೇ ಅವರು ರಚಿಸಿದ ಮಕ್ಕಳ ಕಥೆ, ಕವಿತೆ, ನಾಟಕಗಳಲ್ಲೆಲ್ಲಾ ಈ ಬಗೆಯ ಭಾವ ಲೋಕವನ್ನು ಕಾಣುತ್ತೇವೆ. ಮಕ್ಕಳ ಮನೋರಂಗದ ಸಹಜವಾದ ಹರಿವು ಮತ್ತು ಪರಕಾಯ ಪ್ರವೇಶದ ಸಾಧ್ಯತೆಯನ್ನು ಅವರ ಇಂತಹ ಅಭಿವ್ಯಕ್ತಿಗಳಲ್ಲಿ ಕಾಣಬಹುದಾಗಿದೆ. ನೈಜವಾಗಿ ಎಲ್ಲ ಮಕ್ಕಳಲ್ಲಿ ಕಾಣುವ ಮನೋಲೋಕದ ಭಾವಲಹರಿಗಳು ಈ ಎರಡು ಮಕ್ಕಳ ನಾಟಕಗಳಲ್ಲೂ ಕೆಲಸ ಮಾಡಿದೆ. ಅವರ ಅನೇಕ ಮಕ್ಕಳ ಕಥೆಗಳಲ್ಲೂ ನಾಟಕೀಯ ಗುಣವಿರುವುದರಿಂದ ಅವೂ ಕೂಡ ಯಶಸ್ವಿಯಾಗಿ ನಾಟಕಗಳಾಗಿ ಪರಿವರ್ತನೆ ಹೊಂದಿ ಪ್ರದರ್ಶನಗೊಳ್ಳಲು ಸಾಧ್ಯವಾಗಿದೆ. ಆದರೆ ಮಕ್ಕಳ ರಂಗ ಸಾಧ್ಯತೆಗಳು ಇಂದಿಗೂ ಕೆಲವು ಪ್ರಮುಖ ಪಟ್ಟಣಗಳಿಗಷ್ಟೇ ಸೀಮಿತವಾಗಿರುವುದರಿಂದ, ಅವುಗಳನ್ನು ಹೊರತು ಪಡಿಸಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕುವೆಂಪು ಅವರ ನಾಟಕಗಳು ಸಾಹಿತ್ಯವಾಗಿಯಷ್ಟೇ ತಲುಪುವುದೂ ಅವರ ಕಲ್ಪನೆಯ ಪರಿಧಿಯನ್ನು ವಿಸ್ತರಿಸಲು ಇರುವ ಒಂದು ತೊಡಕು ಎಂದು ನಾನು ಭಾವಿಸುತ್ತೇನೆ.

ಕುವೆಂಪು ಅವರಿಗೆ ಮಕ್ಕಳ ಬಗೆಗಿದ್ದ ಅನನ್ಯ ಪ್ರೀತಿಯ ಹಾಗೂ ಅವನು ದೊಡ್ಡವನಾಗುತ್ತಾ ಹೋದಂತೆ ದುರ್ಗುಣಗಳು ಬೆಳೆಯುತ್ತಾ ಪಶುವಾಗುವ ವಿಪಯರ್ಯಾಸವನ್ನು ಕುರಿತು ರಚಿಸಿದ ಈ ಪುಟ್ಟ ಕವಿತೆಯನ್ನು ಓದಿ,

ದೊಡ್ಡವರೆಲ್ಲರ ಹೃದಯದಿ ಕಟ್ಟಿಹ
ತೊಟ್ಟಿಲ ಲೋಕದಲಿ
ನಿತ್ಯ ಕಿಶೋರತೆ ನಿದ್ರಿಸುತಿರುವುದು
ವಿಸ್ತೃತ ನಾಕದಲಿ
ಮಕ್ಕಳ ಸಂಗದೊಳೆಚ್ಚರಗೊಳ್ಳಲಿ
ಆನಂದದ ಆ ದಿವ್ಯ ಶಿಶು
ಹಾಡಲಿ ಕುಣಿಯಲಿ ಹಾರಲಿ ಏರಲಿ
ದಿವಿಜತ್ವಕೆ ಈ ಮನುಜ ಪಶು.

ಮನುಷ್ಯ ಮಗುವಾದರೆ ಅಥವಾ ಮಗುವಿನ ಮುಗ್ಧತೆ ಉಳಿಸಿಕೊಂಡರೆ ಸಾಕು ಅವನು ದೇವರಿಗೆ ಸಮಾನ ಎಂಬ ಕುವೆಂಪು ಅವರ ಕಲ್ಪನೆ ನಿಜಕ್ಕೂ ಇಂದಿನ ಕ್ಷುದ್ರಗೊಂಡ ಬದುಕಿಗೆ ಅತ್ಯಂತ ಅವಶ್ಯಕ ಎಂದು ಭಾವಿಸುವೆ.

ಬಾಡೂಟದ ಜೊತೆಗೆ ಗಾಂಧಿ ಜಯಂತಿ: ಬಿ.ಎಂ ಬಶೀರ್ ಅವರ ಲೇಖನಗಳ ಸಂಕಲನ


– ಡಾ.ಎಸ್.ಬಿ. ಜೋಗುರ


 

‘ಬಾಡೂಟದ ಜೊತೆಗೆ ಗಾಂಧಿ ಜಯಂತಿ’ ಇದು ಲಡಾಯಿ ಪ್ರಕಾಶನದವರು ಪ್ರಕಟಿಸಿರುವ ಬಿ.ಎಂ ಬಶೀರ್ ಅವರ ಬಿಡಿ ಲೇಖನಗಳ ಕೃತಿ. ಒಟ್ಟು 28 ಬೇರೆ ಬೇರೆ ವಿಷಯಗಳನ್ನಾಧರಿಸಿದ ಇಲ್ಲಿಯ ಲೇಖನಗಳು ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರದ ಸಹವಾಸದಲ್ಲಿ ಅದ್ದಿ ತೆಗೆದಂತಿವೆ. ಇಲ್ಲಿಯ ಜಾತಿ, ಧರ್ಮ, ಭಾಷೆ, ಆಹಾರ, ವೇಷ ಭೂಷಣ ಮುಂತಾದವುಗಳ ಪಲಕಿನೊಂದಿಗೆ, ಆಯಾ ಸಂದರ್ಭಕ್ಕೆ ತಕ್ಕ ಹಾಗೆ ಬರೆಯಿಸಿಕೊಂಡ ಬರಹಗಳಿವು. ಸಮಾಜವೊಂದರ ನಗ್ನತೆಯನ್ನು ನಿಚ್ಚಳವಾಗಿ ತೋರುವ ಶುಭ್ರವಾದ ಕನ್ನಡಿಯಂತೆ ಇಲ್ಲಿಯ ಬರಹಗಳು ಕೆಲಸ ಮಾಡುತ್ತವೆ. ಕೆಲ ಲೇಖನಗಳ ವಿಷಯ ಪುನರಾವರ್ತಿತ ಎಂದೆನಿಸಿದರೂ ಮನುಷ್ಯನ ಮರೆಗುಳಿತನದ ಎಚ್ಚರದ ಹಿನ್ನೆಲೆ ತಾನೇ ತಾನಾಗಿ ಈ ಬರಹಗಳಿಗೆ ಮೈಗೂಡಿಕೊಂಡಿದೆ. ಲೇಖಕರೇ ಖುದ್ದಾಗಿ ‘ಇಲ್ಲಿರುವ ಎಲ್ಲ ಲೇಖನಗಳು ಪತ್ರಿಕೆಗಳಿಗಾಗಿ ಬರೆದವುಗಳು. ಪತ್ರಿಕಾ ಬರಹಗಳಿಗಿರುವ ಎಲ್ಲ ಮಿತಿಗಳನ್ನು ಇಲ್ಲಿರುವ ಲೇಖನಗಳು ತನ್ನದಾಗಿಸಿಕೊಂಡಿವೆ’ ಎಂದು ಹೇಳಿರುವುದರಿಂದ ಮತ್ತೆ ಅವುಗಳ ಮಿತಿಯ ಪ್ರಸ್ತಾಪ ಅನಗತ್ಯವೆನಿಸುತ್ತದೆ.

ಅಬ್ಬೂ ಕಾಕಾನ ಗೂಡಂಗಡಿಯ ಚಾ ಮತ್ತು ಅಲ್ಲಿಯ ರಾಜಕೀಯ ಚರ್ಚೆಯೊಂದಿಗೆ ರೂಪಿತವಾದ ಅನೇಕuntitled ವ್ಯಕ್ತಿತ್ವಗಳ ಬಗೆಗಿನ ವಿವರಣೆಯೊಂದಿಗೆ ಆರಂಭವಾಗುವ ಲೇಖನ ಅದು ಗೂಡಂಗಡಿ ಕಂ ಕ್ಲಾಸ್ ರೂಂ ಆಗಿ ಕೆಲಸ ಮಾಡಿದ ಬಗೆಯನ್ನು ಲೇಖಕರು ವಿವರಿಸುತ್ತಾ ‘ಆ ಗೂಡಂಗಡಿಯಲ್ಲಿ ದೊರೆಯುತ್ತಿದ್ದ ನೀರು ದೋಸೆ, ಕಲ್ತಪ್ಪವನ್ನು ಮೀನು ಸಾರಿನೊಂದಿಗೆ ಬಡಿಸಿದರೆಂದರೆ..’ ಎನ್ನುತ್ತಲೇ ಓದುಗರ ನಾಲಿಗೆಯನ್ನೂ ನೀರಾಗಿಸುತ್ತಾರೆ. ‘ಯಕ್ಷರಂಗದ ರಾಕ್ಷಸ ವೇಷಗಳು’ ಎನ್ನುವ ಲೇಖನದಲ್ಲಿ ಅವರು ಯಕ್ಷಗಾನ ಕಲೆ ಕ್ರಮೇಣವಾಗಿ ಮೇಲಿನ ಸ್ತರಗಳ ಸ್ವತ್ತಾಗಿ ಅದು ವೈದಿಕೀಕರಣ ಮತ್ತು ಕೋಮುವಾದೀಕರಣಗೊಂಡ ಬಗ್ಗೆ ಖೇದವನ್ನು ವ್ಯಕ್ತಪಡಿಸುತ್ತಲೇ ಅದು ಕಮರ್ಷಿಯಲ್ ಆದ ಬಗ್ಗೆಯೂ ಬೇಸರಿಸುತ್ತಾರೆ. ಆದರೆ ‘ಕಮರ್ಷಿಯಲ್ ಆಗಿರುವುದು ಹಸಿವಿನ ಕಾರಣದಿಂದ ಆಗಿದ್ದರೆ ಅದನ್ನು ಯಾವ ಕಾರಣಕ್ಕೂ ಪ್ರಶ್ನಿಸುವಂತಿಲ್ಲ. ಕಲೆಗಿಂತ ದೊಡ್ಡ ಸತ್ಯ ಬದುಕು. ಆದರೆ ಎರಡನೆಯದನ್ನು ನಾವು ಪ್ರಶ್ನಿಸಲೇ ಬೇಕಾಗುತ್ತದೆ’ ಎನ್ನುವುದು ಲೇಖಕರ ಮನದಾಳದ ನೋವಿನ ಅಭಿಪ್ರಾಯವೂ ಹೌದು. ‘ಮೂತ್ರ ರಾಜಕೀಯ’ ಎನ್ನುವ ಲೇಖನದಲ್ಲಿ ದನದ ಮೂತ್ರವನ್ನು ಔಷಧಿಯಾಗಿ ಬಳಸುವ ಬಗ್ಗೆ ‘ವೈದ್ಯರ ಕೆಲಸವನ್ನು ರಾಜಕಾರಣಿಗಳು ಮಾಡುವಂತಿಲ್ಲ. ಔಷಧಿಗಳಿಗೆ, ವೈದ್ಯಕೀಯಕ್ಕೆ ಅದರದ್ದೇ ಆದ ಚೌಕಟ್ಟುಗಳಿವೆ, ನೀತಿ ಸಂಹಿತೆಗಳಿವೆ’ ಎನ್ನುವ ಲೇಖಕರು ಮೂತ್ರವನ್ನು ಔಷಧಿಗಾಗಿ ಬಳಸುವ ಒತ್ತಡ ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆಯನ್ನೂ ಎತ್ತುತ್ತಾರೆ.

ಕವಿತಾ ಲಂಕೇಶರ ‘ಅವ್ವ’ ಸಿನೇಮಾದ ಬಗ್ಗೆ ಬರೆಯುವಾಗ ಗಾಂಧಿಯಂಥಾ ಮಹಾನ್ ವ್ಯಕ್ತಿತ್ವದ ಅಂತರ್ಯದಲ್ಲಿ ಓರ್ವ ಹೆಣ್ಣಿದ್ದಳು. ಹಾಗಾಗಿಯೇ ಅವರ ಹೋರಾಟ ಗಂಗಾ ನದಿಯ ಹಾಗೆ ಉದ್ದಕ್ಕೂ ಹರಿಯಿತು ಎನ್ನುತ್ತಾರೆ. ‘ಅವ್ವ’ ಚಿತ್ರ ನಿರೀಕ್ಷೆಯ ಮಟ್ಟಕ್ಕೆ ಬಾರದೇ ಇದ್ದದ್ದು ಮತ್ತು ಆ ಪಾತ್ರಕ್ಕಾಗಿ ಆಯ್ಕೆಯಾದ ಶೃತಿ ಪಕ್ಕಾ ಲಂಕೆಶರ ‘ಅವ್ವ’ ಆಗದೇ ಇದ್ದದ್ದನ್ನು ವಿಮರ್ಶಾತ್ಮಕ ನೆಲೆಯಲ್ಲಿ ಗುರುತಿಸುತ್ತಾರೆ. ‘ಚಿತ್ರದುದ್ದಕ್ಕೂ ನಿರ್ದೇಶಕಿಯನ್ನು ಕಾಡಿದ ಲಂಕೇಶ್ ನೆರಳು. ಅದರಿಂದಾಗಿ ಅತ್ತ ಕವಿತಾರ ಚಿತ್ರವೂ ಆಗದೇ ಇತ್ತ ಲಂಕೆಶರ ಕಾದಂಬರಿಯೂ ಆಗದೇ ಪ್ರೇಕ್ಷಕರನ್ನು ನಡುಗಡಲಲ್ಲಿ ಕೈ ಬಿಟ್ಟು ಬಿಡುತ್ತದೆ’ ಎನ್ನುತಾರೆ. ಬ್ಯಾರಿ ಚಿತ್ರ ಮತ್ತು ಸಾರಾ ಅಬೂಬಕ್ಕರ್ ಕುರಿತು ಬರೆಯುವಾಗ ಅತ್ಯಂತ ಸಣ್ಣದಾದ ಪ್ರಾದೇಶಿಕ ಭಾಷೆಯೊಂದರ ಚಿತ್ರಕ್ಕೆ ಸ್ವರ್ಣ ಕಮಲ ದಕ್ಕಿದ್ದು ಸಾಮಾನ್ಯವಲ್ಲ. ‘ತನ್ನ ಇದ್ದ ಬಿದ್ದ ಶಕ್ತಿಯೊಂದಿಗೆ ಒಂದು ಸಣ್ಣ ಭಾಷೆ, ಸಂಸ್ಕೃತಿ, ಸಿನೇಮಾ ರೂಪ ಪಡೆದು ಹಿಂದಿ ಸೇರಿದಂತೆ ರಾಷ್ಟ್ರದ ಎಲ್ಲ ಭಾಷೆಗಳಿಗೆ ಸಡ್ಡು ಹೊಡೆದು ಸ್ವರ್ಣ ಕಮಲವನ್ನು ತನ್ನದಾಗಿಸುವುದು ಸಣ್ಣ ವಿಷಯ ಅಲ್ಲವೇ ಅಲ್ಲ. ಅದು ಈ ದೇಶದ ಬಹು ಸಂಸ್ಕೃತಿಯನ್ನು ನಾಶ ಮಾಡಿ ಏಕ ಸಂಸ್ಕೃತಿಯನ್ನು ಪ್ರತಿಸ್ಠಾಪನೆ ಮಾಡುವವರಿಗೆ ಹಾಕಿದ ಸವಾಲು’ ಎನ್ನುತ್ತಲೇ ತಾವು ಬ್ಯಾರಿ ಭಾಷೆಯನ್ನು ಮಾತನಾಡುವವರು ಎನ್ನುವ ಕಾರಣಕ್ಕಾಗಿಯೇ ಬಾಲ್ಯದಲ್ಲಿ ಅನುಭವಿಸಿದ ನೋವುಗಳನ್ನು ಬ್ಯಾರಿ ಭಾಷೆಯ ಚಿತ್ರವೊಂದರ ಗೆಲುವು ಮರೆಸಿದ್ದ ವಿಚಾರವನ್ನು ಪ್ರಸ್ತಾಪಿಸುತ್ತಾರೆ. ‘ಗೋರಿಗಳ ತೋಟದ ಕಾವಲುಗಾರರು’ ಎನ್ನುವ ಲೇಖನದಲ್ಲಿ ಸಾಹಿತಿಯೊಬ್ಬ ನಮ್ಮ ನಡುವಿನಿಂದ ನಿರ್ಗಮಿಸಿದಾಗ ಅವನನ್ನು ಆತ ಮಾಡಿಟ್ಟ ಆಸ್ತಿ ಅಂದರೆ ಮನೆ, ತೋಟ, ಮಣ್ಣು ಮಾಡಿದ ಸ್ಥಳದಲ್ಲಿ ಹುಡುಕುವದಲ್ಲ. ಹಾಗೆಯೇ ಅವರ ಗೋರಿಗಳ ಕಾವಲುಗಾರರಾಗುವುದರಲ್ಲೂ ಯಾವ ಪುರುಷಾರ್ಥವೂ ಇಲ್ಲ ಎನ್ನುವುದನ್ನು ಅತ್ಯಂತ ಮಾರ್ಮಿಕವಾಗಿ ಬಶೀರ್ ಪ್ರತಿಪಾದಿಸಿದ್ದಾರೆ. ‘ಕೋಳಿ ಅಂಕಕ್ಕೆ ಒಂದು ಸುತ್ತು’ ಎನ್ನುವ ಲೇಖನದಲ್ಲಿ ಕೋಳಿಗಳ ನಡುವಿನ ಕಾಳಗ ಹೇಗೆ ಮನುಷ್ಯನ ಮೇಲಿನ ಸೇಡಾಗಿ ರೂಪುಗೊಂಡಿರುತ್ತದೆ ಎನ್ನುವುದನ್ನು ಹೇಳುತ್ತಲೇ ‘ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನಿಗೆ ಥಳಿಸುವುದು ನಮಗೆ ರಂಜಿಸುತ್ತದೆ ಎಂದಾದರೆ ಗುಜರಾತ ಹತ್ಯಾಕಾಂಡವೂ ನಮ್ಮನ್ನು ರಂಜಿಸಬಲ್ಲದು’ ಎನ್ನುತ್ತಾರೆ. ‘ದಲಿತರು ‘ಸತ್ತ ದನ’ದ ವಾರಸುದಾರರಾಗಬೇಕೆ..?’ ಎನ್ನುವ ಲೇಖನದಲ್ಲಿ ಅವರನ್ನು ಮೇಲಿನ ಸ್ತರಗಳು ಪೂಸಿ ಹೊಡೆಯುತ್ತಲೇ ಮೋಸ ಮಾಡುವ ಕ್ರಮವನ್ನು ಒಂದು ನಿರಂತರವಾದ ಪ್ರಕ್ರಿಯೆಯಾಗಿ ಹೇಗೆ ಸಮಾಜ ಮತ್ತು ಸಂಸ್ಕೃತಿಯೊಂದರ ಭಾಗವೆಂಬಂತೆ ನಡೆಯಿಸಿಕೊಂಡು ಬರಲಾಗಿದೆ ಎನ್ನುವುದನ್ನು ‘ಅವರೂ ಅರ್ಚಕರಾಗಬಹುದು’ ಎನ್ನುವ ಹೇಳಿಕೆಯ ಅಪಾಯವನ್ನು ಮುಂದಿಟ್ಟುಕೊಂಡು ಚರ್ಚಿಸುತ್ತಾರೆ..

‘ನನ್ನ ತಂದೆಯನ್ನು ಯಾಕೆ ಕೊಂದೆ?’ ಎನ್ನುವ ಲೇಖನದಲ್ಲಿ ರಾಜೀವ ಗಾಂಧಿಯವರ ಮಗಳು ಪ್ರಿಯಾಂಕಾ ಜೈಲಿನಲ್ಲಿದ್ದ ನಳಿನಿಯನ್ನು ಕುರಿತು ಕೇಳಿದ ಪ್ರಶೆಯ ಹಿನ್ನಲೆಯಲ್ಲಿ ಹಲವು ಗಹನವಾದ ವಿಚಾರಗಳನ್ನು ವಿಶ್ಲೇಷಿಸಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ನಳಿನಿಯೂ ‘ನನ್ನ ತಂದೆಯನ್ನು ನೀವೆಲ್ಲಾ ಸೇರಿ ಯಾಕೆ ಕೊಂದಿರಿ..?’ ಎನ್ನುವ ಮರು ಪ್ರಶ್ನೆ ಹಾಕಿದ್ದರೆ ಬಹುಷ: ಪ್ರಿಯಾಂಕಾಳಲ್ಲಿಯೂ ನಳಿನಿಯ ಮೌನವೇ ಉತ್ತರವಾಗಿರುತ್ತಿತ್ತು ಎನ್ನುವುದು ಲೇಖಕರ ಅಭಿಪ್ರಾಯ. ಶ್ರೀಲಂಕಾದ ನಾಯಕ ಜಯವರ್ಧನೆ ಮತ್ತು ರಾಜೀವಗಾಂಧಿ ಬೆಂಗಳೂರಿನಲ್ಲಿ ಭೇಟಿ ಮಾಡಿದ ಆ ದಿನಗಳ ಬಗ್ಗೆ ಶ್ರೀಲಂಕಾದ ತಮಿಳು ಕವಿ ಚೇರನ್ ಅವರ ಕವಿತೆಯ ಕೆಲವು ಸಾಲುಗಳನ್ನು ಲೇಖಕರು ಬಳಸಿದ್ದಾರೆ.

‘ಕಪ್ಪುಗಳಲ್ಲಿ ಚಹಾ ದಿಢೀರನೇ ರಕ್ತವಾಗಿದ್ದನ್ನು ತಿಳಿಯದೇ
ಇಬ್ಬರೂ ನಾಯಕರು ಕುರುಡು ರಾಜಕೀಯದಲ್ಲಿ ಕಾಲ ಕಳೆದರು
ಮನುಷ್ಯ ಮೂಳೆಗಳು ಸುಂದರ ಚಮಚೆಗಳಾಗಿ
ತಲೆಬುರುಡೆಗಳು ತಟ್ಟೆಗಳಾಗಿ ರೂಪಾಂತರಗೊಂಡವು
ಊಟದ ಮೇಜಿನ ಮೇಲೆ
ದೂರದರ್ಶನ ಕಣ್ನುಗಳೆಲ್ಲಾ ಕುರುಡಾದವು
ನಾವಿಲ್ಲದೇ ನಡೆದ ಒಪ್ಪಂದ ಸಾವಿರಾರು ಜೀವಗಳ
ನುಂಗಿ ನೆತ್ತರಲ್ಲಿ ಬರೆದ ಚರಿತ್ರೆ’– ಚೇರನ್

‘ಅಳು ತರಿಸುವ ರಾಂಪನ ಜೋಕುಗಳು’ ಎನ್ನುವ ಬರಹ ರಾಮಪ್ಪಣ್ಣ ಎನ್ನುವ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಕೇಂದ್ರಿತವಾದ ಬರಹ. ಕೇವಲ 5 ರೂಪಾಯಿಗೆ ಹೊಟ್ಟೆ ತುಂಬ ಊಟ ಕೊಡುವ ಈ ಮನುಷ್ಯ ವಡ್ಡರ್ಸೆ ರಘುರಾಮ ಶೆಟ್ಟರ ಮುಂಗಾರಿಗೂ ಚೈತನ್ಯವಾಗಿದ್ದರು ಎನ್ನುವುದನ್ನು ತೀರಾ ಮನೋಜ್ಞವಾಗಿ ಬರೆದಿದ್ದಾರೆ. ‘ವಿವೇಕ್ ಶಾನಭಾಗ್ ಕಂಡ ಉದ್ಯಾನವೊಂದರ ಕನಸು’ ಎನ್ನುವ ಲೇಖನದಲ್ಲಿ ’ದೇಶ-ಕಾ’ ದಲ್ಲಿಯ ಅಚ್ಚುಕಟ್ಟುತನ ತನ್ನನ್ನು ಬೆರಗುಗೊಳಿಸಿತ್ತಾದರೂ ‘ಜಗತ್ತಿನ ಶ್ರೇಷ್ಟವಾದುದೆಲ್ಲಾ ತನ್ನಲ್ಲಿರಬೇಕೆಂಬ ಹಟ ಈ ಪತ್ರಿಕೆಯೊಳಗಿದೆ ಎನಿಸಿತು’ ಕ್ರಮೇಣವಾಗಿ ‘ಈ ಪತ್ರಿಕೆಗೆ ಒಂದು ಪ್ರತಿ ಆಲೋಚನೆಯನ್ನು ಸೃಷ್ಟಿಸುವುದು ಸಾಧ್ಯವಾಗುತ್ತಿಲ್ಲ ಎನ್ನುವುದು ಗೊತ್ತಾಗತೊಡಗಿತು’ ಎನ್ನುತ್ತಾರೆ. ‘ಬಾಡೂಟದ ಜೊತೆಗೆ ಗಾಂಧಿ ಜಯಂತಿ’ ಎನ್ನುವ ಪುಸ್ತಕದ ಶಿರ್ಷಿಕೆಯ ಲೇಖನದಲ್ಲಿ ಹೇಗೆ ಒಂದು ಧರ್ಮದ ಆಚರಣೆ ಇನ್ನೊಂದು ಧರ್ಮದವರ ಆಹಾರದ ಹಕ್ಕನ್ನು ಕಸಿಯುತ್ತದೆ ಎನ್ನುವುದನ್ನು ಲೇಖಕ ಹೀಗೆ ಹೆಳುತ್ತಾರೆ. “ಕೆಲ ವರ್ಷಗಳ ಹಿಂದೆ ಬಕ್ರೀದ್ ಮತ್ತು ಮಹಾವೀರ ಜಯಂತಿ ಜೊತೆ ಜೊತೆಯಾಗಿಯೇ ಬಂತು. ಆಗ ರಾಜ್ಯದ ಮೂರ್ಖ ಸರಕಾರ [ ಬಾಡೂಟವನ್ನು ಅತಿಯಾಗಿ ಪ್ರೀತಿಸುತ್ತಿದ್ದ ಜೆ.ಎಚ್.ಪಟೆಲರೇ ಆಗ ಮುಖ್ಯ ಮಂತ್ರಿಯಾಗಿದ್ದದ್ದು ದುರಂತ] ಮಹಾವೀರ ಜಯಂತಿ ದಿನ ಮಾಂಸ ಮಾರಾಟವನ್ನು ನಿಷೇಧಿಸಿತು. ಒಂದು ಧರ್ಮವನ್ನು ಗೌರವಿಸುವ ಹೆಸರಿನಲ್ಲಿ ಇನ್ನೊಂದು ಧರ್ಮದ ಮೌಲ್ಯವನ್ನು ಅವಮಾನಿಸಿತು” ಎನ್ನುವುದನ್ನು ವಸ್ತು ನಿಷ್ಟವಾಗಿ ದಾಖಲಿಸುತ್ತಾರೆ. ‘ಹುಲ್ಲು ಹುಲ್ಲು ತಿಂದು ರಾಕ್ಷಸರಾದವರು’ ಎನ್ನುವ ಇನ್ನೊಂದು ಲೇಖನದಲ್ಲಿ ಕವಿ ಎನ್ಕೆ ಹನುಮಂತಯ್ಯನವರ ’ಗೋವು ತಿಂದು ಗೋವಿನಂತಾದವನು’ ಎನ್ನುವ ಕವಿತೆಯ ಸಾಲುಗಳನ್ನು ಉಲ್ಲೇಖಿಸುತ್ತಾ ‘ಇತಿಹಾಸದುದ್ದಕ್ಕೂ ಗೋವು ತಿನ್ನದವರು ಗೋವು ತಿಂದವರ ಮೇಲೆ ದೌರ್ಜನ್ಯ ನಡೆಸಿದರೇ ಹೊರತು ಗೋವು ತಿಂದು ಬದುಕಿದವರು ಸಸ್ಯಾಹಾರಿಗಳ ಮೆಲೆ ಎರಗಿದ ಒಂದೇ ಒಂದು ಉದಾಹರಣೆಗಳಿಲ್ಲ’ ಎನ್ನುವ ಲೇಖಕರು ದೇವರು ಮತ್ತು ರಾಕ್ಷಸರ ನಡುವಿನ ಸಂಘರ್ಷ ಆರ್ಯ-ದ್ರಾವಿಡರ ಘರ್ಷಣೆಯೂ ಹೌದು ಎನ್ನುತ್ತಾರೆ. ‘ಜಾತಿಗೊಬ್ಬ ಕುಲಗುರು’, ‘ರಾವಣನನ್ನು ಸುಡುವುದು ಎಷ್ಟು ಸರಿ..?’ ‘ಎದೆಯ ಧ್ವನಿಯನ್ನು ಆಲಿಸೋಣ’ ಹೀಗೆ ಇಡೀ ಕೃತಿ ಸಾಮಾಜಿಕ ಅಸಮಾನತೆ, ಮೇಲಿನ ಸ್ತರಗಳ ಶೋಷಣೆ, ಉಪ ಸಂಸ್ಕೃತಿಗಳ ಮೇಲೆ ಪ್ರಧಾನ ಸಂಸ್ಕೃತಿಯ ಹಾವಳಿ, ದಂತಕತೆಗಳ ವೈಭವೀಕರಣದ ಮೂಲಕ ಸವಾರಿ ಮಾಡುವ ಕ್ರಮ ಮೊದಲಾದ ವಿಚಾರಗಳ ಜೊತೆಗೆ ವಸ್ತುನಿಷ್ಟ ಅಭಿಪ್ರಾಯಗಳೊಂದಿಗೆ ಓದುಗನನ್ನು ಮುಖಾಮುಖಿಯಾಗಿಸುತ್ತವೆ. ಒಂದು ಕೃತಿಯಿಂದ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುವ ಅಗತ್ಯವಿಲ್ಲ ಎಂದುಕೊಳ್ಳುತ್ತೇನೆ.

ಗಲಬೆಯಲ್ಲಿ ಹೆಣ ನೋಡೋ ಸಂಭ್ರಮದಲ್ಲಿ ತಂದೆಯ ಹೆಣ ಮರೆತ ಮುತಾಲಿಕ್


– ನವೀನ್ ಸೂರಿಂಜೆ


 

ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಬಿಜೆಪಿ ಸೇರಿದ ಒಂದೇ ಗಂಟೆಯಲ್ಲಿ ಬಿಜೆಪಿ ಹೈಕಮಾಂಡ್ ಮುತಾಲಿಕ್ ಗೆ ಪ್ರಾಥಮಿಕ ಸದಸ್ಯತ್ವ ScreenClipನಿರಾಕರಣೆ ಮಾಡಿದ್ದರಿಂದ ತೀವ್ರ ಮುಖಭಂಗಕ್ಕೊಳಗಾಗಿ ಪತ್ರಿಕಾಗೋಷ್ಠಿ ನಡೆಸಿದ್ದ ಪ್ರಮೋದ್ ಮುತಾಲಿಕ್ ಅಕ್ಷರಶಃ ಬಿಕ್ಕಿ ಬಿಕ್ಕಿ ಅತ್ತರು. ಅಳುತ್ತಲೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್ “ನಾನು ಸನ್ಯಾಸಿಯಾಗಿದ್ದು ಉತ್ತಮ ಚಾರಿತ್ರ್ಯವನ್ನು ಹೊಂದಿದ್ದೇನೆ. ನನ್ನ ಇಡೀ ಜೀವನವನ್ನು ಹಿಂದುತ್ವಕ್ಕಾಗಿ ಮೀಸಲಿರಿಸಿದ್ದೇನೆ. ನಾನು ವೈಯುಕ್ತಿಕ ಬದುಕನ್ನೇ ಕಂಡಿಲ್ಲ. ನನ್ನ ತಂದೆ ತೀರಿಕೊಂಡಾಗಲೂ ನಾನು ತಂದೆಯ ಹೆಣ ಕೂಡಾ ನೋಡಲು ಹೋಗಿರಲಿಲ್ಲ. ಆಗಲೂ ನಾನು ಆರ್ ಎಸ್ ಎಸ್ ಕೆಲಸ ಮಾಡುತ್ತಿದ್ದೆ. ನನ್ನ ಸಹೋದರನ ಮದುವೆಗೂ ನಾನು ಹೋಗಿಲ್ಲ. ತಂದೆಯ ಹೆಣ, ಸಹೋದರನ ಮದುವೆಯಂತಹ ವೈಯುಕ್ತಿಕ ಜೀವನವನ್ನು ಬದಿಗೊತ್ತಿ ಆರ್ ಎಸ್ ಎಸ್ ನ ಕೆಲಸ ಮಾಡಿದ್ದ ನನಗೆ ಬಿಜೆಪಿ ಈ ರೀತಿ ಅವಮಾನ ಮಾಡಬಾರದಿತ್ತು. ನಾನು ಯಾವ ತಪ್ಪೂ ಮಾಡದಿದ್ದರೂ ನನ್ನನ್ನು ಯಾಕೆ ನೋಯಿಸುತ್ತಿದ್ದೀರಿ ? ” ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಬಿಕ್ಕಿ ಬಿಕ್ಕಿ ಅತ್ತರು.

ಆರ್ ಎಸ್ ಎಸ್ ಕಾರ್ಯಕರ್ತನಾಗಿ, ಆರ್ ಎಸ್ ಎಸ್ ನ ಕಿಶೋರ ವಿಭಾಗದ ಮುಖ್ಯಸ್ಥನಾಗಿ, ಆರ್ ಎಸ್ ಎಸ್ ಪ್ರಚಾರಕನಾಗಿ, ಭಜರಂಗದಳದ ರಾಜ್ಯಾಧ್ಯಕ್ಷನಾಗಿ, ಭಜರಂಗದಳದ ದಕ್ಷಿಣ ಭಾರತ ಪ್ರಾಂತ್ಯ ಸಂಚಾಲಕನಾಗಿ, ಶಿವಸೇನೆಯ ರಾಜ್ಯಾಧ್ಯಕ್ಷನಾಗಿ, ಶ್ರೀರಾಮ ಸೇನೆಯ ಸ್ಥಾಪಕನಾಗಿ ಇಡೀ ದೇಶದ ಹಿಂದೂ ಕೋಮುವಾದಿ ಯುವಕರಲ್ಲಿ ಮುಸ್ಲಿಂ ವಿರೋಧದ ಕಿಡಿ ಹಚ್ಚಿಸಿದ ದೇಶದ ಅತ್ಯಂತ ವಿವಾದಾಸ್ಪದ “ಮುಖಂಡ”ನ ಅಳುವನ್ನೂ ವಿಮರ್ಶಿಸಬೇಕಾಗುತ್ತದೆ. ನೂರಾರು ಸಿಂಹ ಘರ್ಜನೆಯ ಹಿಂದೂ ಯುವಕರನ್ನು ಸೃಷ್ಠಿಸಿದ್ದ ಮುತಾಲಿಕ್ ರ ಅಳು-ಕಣ್ಣೀರು-ಬಿಕ್ಕಳಿಸಿದ ಮಾತುಗಳನ್ನು ನಿರ್ಲಕ್ಷಿಸುವಂತಿಲ್ಲ. ಮುತಾಲಿಕ್ ಕಣ್ಣೀರಿಗೂ, ಅವರ ಬಾಯಲ್ಲಿ ಬಂದ ಮಾತುಗಳಿಗೂ ವಿಶೇಷವಾದ ಮಹತ್ವ ಇದೆ.

ಕಣ್ಣೀರು

ಆಗ ಪ್ರಮೋದ್ ಮುತಾಲಿಕ್ ಭಜರಂಗದಳದ ದಕ್ಷಿಣ ಭಾರತ ಪ್ರಾಂತ್ಯ ಸಂಚಾಲಕ. ಹಳ್ಳಿ ಹಳ್ಳಿಗೆ ತೆರಳಿ ಭಜರಂಗದಳಕ್ಕೆ ಯುವಕರನ್ನು ಸಿದ್ದಗೊಳಿಸುತ್ತಿದ್ದರು. “ಗೋವು ನಮ್ಮ ತಾಯಿ. ಗೋವು ಸಾಗಾಟ ನಡೆಸುವ ಮತ್ತು ತಿನ್ನುವ ಮುಸ್ಲೀಮರು ಸಮಾಜದಲ್ಲಿ ಇರಲು ಅನರ್ಹರು” ಎಂಬ ರೀತಿಯಲ್ಲಿ ಕೋಮು ಪ್ರಚೋದಕ ಭಾಷಣಗಳನ್ನು ಮುತಾಲಿಕ್ ಮಾಡುತ್ತಿದ್ದರು. ಇವರ ಭಾಷಣದ ಫಲವಾಗಿ ಆದಿ ಉಡುಪಿಯಲ್ಲಿ ದನ ಸಾಗಾಟ ನಡೆಸುತ್ತಿದ್ದ ಜಾಜಬ್ಬ ಮತ್ತು ಹಸನಬ್ಬ ಎಂಬ ತಂದೆ ಮಗನನ್ನು ನಡು ರಸ್ತೆಯಲ್ಲಿ ಪೂರ್ತಿ ಬೆತ್ತಲು ಮಾಡಲಾಯಿತು. ತಂದೆಯ ಮುಂದೆ ಮಗನನ್ನು, ಮಗನ ಮುಂದೆ ತಂದೆಯನ್ನು ಸಾರ್ವಜನಿಕವಾಗಿ ಬೆತ್ತಲು ಮಾಡಿದಾಗ ಅವರಿಬ್ಬರ ವೇದನೆ ಯಾವ ರೀತಿಯದ್ದಾಗಿರಬಹುದು ಎಂದು ಆಗ ದಕ್ಷಿಣ ಪ್ರಾಂತ್ಯ ಸಂಚಾಲಕನಾಗಿದ್ದ ಪ್ರಮೋದ್ ಮುತಾಲಿಕ್ ಗೆ ಅರಿವಾಗಿಲ್ಲ. ತಂದೆ ಮತ್ತು ಮಗನ ಬೆತ್ತಲೆ ಫೋಟೋಗಳನ್ನು ಮರುದಿನ ಪತ್ರಿಕೆಯಲ್ಲಿ ನೋಡಿದ ಅವರ ಅಮ್ಮ, ಅಕ್ಕ ತಂಗಿಯರು ಅದೆಷ್ಟು ನೋವಿನಿಂದ ಅತ್ತಿರಬಹುದು, ಗೊಗೆರೆದಿದ್ದಿರಬಹುದು; ಅದೆಷ್ಟು ಕಣ್ಣಿರು ಸುರಿಸಿದ್ದಿರಬಹುದು. ಅವರ ಅಸಾಹಯಕತೆ ಅಥವಾ ವೇದನೆಯ ಬಗ್ಗೆ ಯಾವತ್ತಾದರೂ ಪ್ರಮೋದ್ ಮುತಾಲಿಕ್ ಯೋಚಿಸಿರಬಹುದೇ?

ಹೆಣ ನೋಡೋ ಸಂಭ್ರಮದಲ್ಲಿ

“ಆರ್ ಎಸ್ ಎಸ್ ಗಾಗಿ ಬದುಕನ್ನೇ ಮುಡಿಪಾಗಿಟ್ಟ ಪ್ರಮೋದ್ ಮುತಾಲಿಕ್ ಗೆ ತಂದೆಯ ಹೆಣವನ್ನೂ ನೋಡೋಕೆ ಆಗಿಲ್ಲ” ಎಂದು ಅವಲತ್ತುಕೊಂಡಿದ್ದಾರೆ. ತನ್ನ ತಂದೆ Newನಿಧನ ಹೊಂದಿದ ಸಂದರ್ಭದಲ್ಲಿ ಮುತಾಲಿಕ್ ದೇಶ ಕಾಯುವ ಸೈನ್ಯದಲ್ಲೂ ಇರಲಿಲ್ಲ. ಯುದ್ಧದಲ್ಲೂ ಭಾಗವಹಿಸಿರಲಿಲ್ಲ. ತನ್ನ ತಂದೆಯ ಹೆಣ ನೋಡಿ ಅಗ್ನಿ ಸ್ಪರ್ಶ ಮಾಡಬೇಕಾದ ಹೊತ್ತಲ್ಲಿ ಮುಸ್ಲಿಮರ ಮನೆಗಳಿಗೆ, ಅಂಗಡಿಗೆ ಕೊಳ್ಳಿ ಇಡುತ್ತಿದ್ದರು. ತಂದೆಯ ಶವವನ್ನು ನೋಡದೆ ಮುಸ್ಲೀಮರ ಶವಗಳನ್ನು ನೋಡಿ ಖುಷಿಪಡುತ್ತಿದ್ದರು. ಪ್ರಮೋದ್ ಮುತಾಲಿಕ್ ಭಜರಂಗದಳದ ರಾಜ್ಯಾಧ್ಯಕ್ಷನಾಗಿದ್ದ ವೇಳೆ ಮಂಗಳೂರಿನಲ್ಲಿ ಹಲವಾರು ಬಾರಿ ಕೋಮುಗಲಭೆಗಳು ನಡೆದಿದ್ದವು. ಉಳ್ಳಾಲ, ಸುರತ್ಕಲ್ ಪ್ರದೇಶಗಳಲ್ಲಿ ಹಲವು ಮನೆ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಾಕಲಾಯಿತು. ಹಲವು ಮುಸ್ಲೀಮರು ಶವವಾಗಿದ್ದರು. ಪ್ರಮೋದ್ ಮುತಾಲಿಕ್ ಭಜರಂಗದಳ ದಕ್ಷಿಣ ಭಾರತ ಪ್ರಾಂತ್ಯ ಸಂಚಾಲಕನಾಗಿದ್ದ ವೇಳೆಯಲ್ಲಿ ಹಲವಾರು ಹಿಂದೂ ಸಮಾಜೋತ್ಸವಗಳನ್ನು ಸಂಘಟಿಸಿ ಮುಸ್ಲಿಂ ವಿರೋಧಿ ಪ್ರಚೋಧನಾಕಾರಿ ಭಾಷಣಗಳನ್ನು ಮಾಡಿದ್ದರು. ಹಾವೇರಿಯ ಮಾಲೆಬೆನ್ನೂರು ಎಂಬಲ್ಲಿ ಹಿಂದೂ ಸಮಾಜೋತ್ಸವದಲ್ಲಿ ಮುತಾಲಿಕ್ ದಿಕ್ಸೂಚಿ ಭಾಷಣ ಮಾಡುತ್ತಾ “ಮಾಲೆಬೆನ್ನೂರಿನ ರಸ್ತೆ ಬದಿಯಲ್ಲಿ ಎಲ್ಲಿ ನೋಡಿದರೂ ಮುಸ್ಲೀಮರ ಅಂಗಡಿಗಳು, ಮನೆಗಳೇ ಕಾಣಸಿಗುತ್ತದೆ. ನಿಮಗೆ ರಕ್ತ ಕುದಿಯುವುದಿಲ್ಲವೇ ?” ಎಂದು ಸೂಚ್ಯವಾಗಿ ಹೇಳಿದ್ದರು. ಸಮಾವೇಶ ನಡೆದ ರಾತ್ರಿಯೇ ಮಾಲೆಬೆನ್ನೂರಿನ ಮುಸ್ಲೀಮರ ಸಣ್ಣ ಪುಟ್ಟ ಗೂಡಂಗಡಿಗಳಿಗೆ ಬೆಂಕಿ ಬಿದ್ದಿತ್ತು.

ತನಗೆ ತನ್ನ ತಂದೆಯ ಹೆಣ ನೋಡಲು ಸಾಧ್ಯವಾಗಿಲ್ಲ ಎಂದು ಮುತಾಲಿಕ್ ಈಗ ಅಳುತ್ತಿದ್ದಾರೆ. ಮಂಗಳೂರಿನ ಪಬ್ ನ ಮೇಲೆ ಮುತಾಲಿಕ್ ನೇತೃತ್ವದ ಶ್ರೀರಾಮmangalore_moral1 ಸೇನೆಯ ಕಾರ್ಯಕರ್ತರು ದಾಳಿ ನಡೆಸಿ 27 ಜನ ಬಂಧಿತರಾದರು. ಬಂಧಿತ ಒರ್ವ ಯುವಕನ ಮನೆಯಲ್ಲಿ ಸಾವು ಸಂಭವಿಸಿದ್ದರೂ ಹೆಣ ನೋಡಲೂ, ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲೂ ಆತನಿಗೆ ನ್ಯಾಯಾಲಯ ಅನುಮತಿ ನೀಡಿರಲಿಲ್ಲ. ಇದೇ ಶ್ರೀರಾಮ ಸೇನೆಯ ಗುಂಪು ಹಿಂದೂ ಜಾಗರಣಾ ವೇದಿಕೆ ಸೇರಿಕೊಂಡು “ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ” ಮೇಲೆ ದಾಳಿ ನಡೆಸಿ 30ಕ್ಕೂ ಅಧಿಕ ಕಾರ್ಯಕರ್ತರು ಬಂಧನಕ್ಕೊಳಗಾದರು. ಸುಮಾರು ಒಂದು ವರ್ಷಕ್ಕೂ ಅಧಿಕ ಕಾಲ ಅವರು ಜೈಲಿನಲ್ಲಿದ್ದರು. ಈ ಸಂಧರ್ಭದಲ್ಲಿ ಒಬ್ಬ ಆರೋಪಿಯ ಮನೆಯಲ್ಲಿ ಮೂವರು ಸಾವನ್ನಪ್ಪಿದ್ದರು. ಆ ಮೂವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಆತನಿಗೆ ಸಾಧ್ಯವಾಗಲಿಲ್ಲ. ಹಿಂದೂ ಸಮುದಾಯದ ಅಮಾಯಕ ಹಿಂದುಳಿದ ವರ್ಗಗಳ ಯುವಕರ ತಲೆಯಲ್ಲಿ ಕೋಮುವಾದದ ವಿಷ ಬೀಜ ಬಿತ್ತಿ ಅವರು ಜೈಲಲ್ಲಿ ಕೊಳೆಯುವಂತೆ ಮಾಡಿ ಅವರಿಗೆ ತನ್ನ ಕುಟುಂಬದವರ ಅಂತ್ಯಸಂಸ್ಕಾರದಲ್ಲೂ ಭಾಗವಹಿಸದಂತಹ ಹಲವಾರು ಪರಿಸ್ಥಿತಿಗಳನ್ನು ಸೃಷ್ಠಿ ಮಾಡಿದವರೇ ಪ್ರಮೋದ್ ಮುತಾಲಿಕ್ ಮತ್ತು ಅವರಂತಹ ನಾಯಕರು.

ಅಭಿನವ ಭಾರತ್ ಸಂಘಟನೆಯು ಮಾಲೆಗಾಂವ್ ಸ್ಪೋಟ ನಡೆಸಿದಾಗ ಇದೇ ಪ್ರಮೋದ್ ಮುತಾಲಿಕ್ ಮಾಲೇಗಾಂವ್ ಸ್ಪೋಟವನ್ನು ಸಮರ್ಥಿಸಿಕೊಂಡಿದ್ದರು. 2009 ಜನವರಿ 17 ರ ಸಂಜೆ ಉಡುಪಿ ಎಂಜಿಎಂ ಕಾಲೇಜು ಆವರಣದಲ್ಲಿ ನಡೆದ ಹಿಂದೂ ಧರ್ಮ ಜಾಗೃತಿ ಸಭೆಯಲ್ಲಿ ಭಾಷಣ ಮಾಡಿದ್ದ ಪ್ರಮೋದ್ ಮುತಾಲಿಕ್ “ಮಾಲೆಗಾಂವ್ ಸ್ಪೋಟ malegaon_blast_site_2_060909ಒಂದು ಝಲಕ್ ಮಾತ್ರ. ಇಂತಹ ಹಲವಾರು ಘಟನೆಗಳು ನಡೆಯಲಿಕ್ಕಿದೆ” ಎಂದಿದ್ದರು. ಈ ಸಂಧರ್ಭದಲ್ಲಿ ಅಲ್ಲಿ ಸೇರಿದ್ದ ಸಂಘಟನೆಗಳ ಕಾರ್ಯಕರ್ತರು “ಹರ ಹರ ಮಹಾದೇವ್” ಎಂದು ಬೊಬ್ಬೆ ಹಾಕಿ ಮುತಾಲಿಕ್ ಭಾಷಣಕ್ಕೆ ಅನುಮೋದನೆ ನೀಡಿದ್ದರು. ಮಾಲೆಗಾಂವ್ ಸ್ಪೋಟವು ಸ್ಮಶಾನದ ಸನಿಹದಲ್ಲಿ ನಡೆದಿದ್ದು, ಈ ಘಟನೆಯಲ್ಲಿ 37 ಜನ ಸಾವನ್ನಪ್ಪಿದ್ದರು. ಈ ಮೂವತ್ತೇಳು ಜನರ ಹೆಣಗಳನ್ನು ನೋಡಿಯೂ ಪ್ರಮೋದ್ ಮುತಾಲಿಕ್ “ಇಂತಹ ಇನ್ನಷ್ಟೂ ದಾಳಿಗಳು ನಡೆಯಲಿಕ್ಕಿದೆ” ಎಂದಿದ್ದರು.  ಹೀಗೆ ಹೆಣಗಳು ಉದುರುವ ಬಾಂಬ್ ಸ್ಪೋಟಗಳನ್ನು ಸಮರ್ಥಿಸುತ್ತಾ, ಕೋಮುಗಲಭೆಗಳನ್ನು ಮಾಡಿ, ಬೆಂಕಿ ಹಚ್ಚಿ ಮುಸ್ಲೀಮರ ಶವಗಳನ್ನು ನೋಡುವ ಸಂಭ್ರಮದಲ್ಲೇ ತಲ್ಲೀನನಾಗಿದ್ದ ಪ್ರಮೋದ್ ಮುತಾಲಿಕ್  ತಂದೆ ಶವ ನೋಡಲು ಮರೆತಿದ್ದರೆ ಅದಕ್ಕೆ ಯಾರು ತಾನೆ ಜವಾಬ್ದಾರರು?

ಸಹೋದರನ ಮದುವೆಗೂ ಹೋಗದಿದ್ದ ಮುತಾಲಿಕ್

ಪ್ರಮೋದ್ ಮುತಾಲಿಕ್ ಸಹೋದರನ ಮದುವೆಗೂ ಹೋಗದೆ ಹಿಂದುತ್ವ ಪ್ರತಿಪಾದನೆಯ ಕೆಲಸದಲ್ಲಿದ್ದರು. ವೆಲೆಂಟೈನ್ ಡೇ ಸಂದರ್ಭ ದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಪ್ರಮೋದ್ ಮುತಾಲಿಕ್ “ಪಾರ್ಕಿನಲ್ಲಿ ಯುವಕ ಯುವತಿಯರು ಇರುವುದನ್ನು ಕಂಡರೆ ಅಲ್ಲೇ ಅವರ ಮನೆಯವರನ್ನು ಕರೆಸಿ ನಮ್ಮ ಕಾರ್ಯಕರ್ತರು ಮದುವೆ ಮಾಡಿಸುತ್ತಾರೆ” ಎಂದು ಹೇಳಿಕೆ ನೀಡಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಚರ್ಚೆಯೂ ಆಗಿತ್ತು. ಹೀಗೆ ಕಂಡ ಕಂಡ ಪ್ರೇಮಿಗಳನ್ನು ಹಿಡಿದು ಬಲವಂತವಾಗಿ ಮದುವೆ ಮಾಡಿಸೋ ಮುತಾಲಿಕ್ ಗೆ ತನ್ನ ಸ್ವಂತ ಸಹೋದರ ಮದುವೆಗೆ ಹೋಗೋಕೆ ಆಗಿಲ್ಲ ಅನ್ನುವುದದು ಆತನೇ ತಂದುಕೊಂಡ ದುರಂತವಲ್ಲದೆ ಮತ್ತೇನೂ ಅಲ್ಲ.

ಹೀಗೆ ತನ್ನ ತಂದೆಯ ಹೆಣ ನೋಡೋಕೂ, ಸಹೋದರನ ಮದುವೆಗೂ ಬರದೆ ಹಿಂದುತ್ವದ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ ಎಂಬ ಪ್ರಮೋದ್ ಮುತಾಲಿಕರ ಅಳುವಿಗೆ ಬೇರಾವ ರೀತಿಯಲ್ಲೂ ವಿಮರ್ಶೆ ಸಾಧ್ಯವಿಲ್ಲ ಎನಿಸುತ್ತದೆ. ಮಂಗಳೂರೊಂದರಲ್ಲೇ ಅದೆಷ್ಟೋ ಹಿಂದೂ-ಮುಸ್ಲಿಂ ಯುವಕ ಯುವತಿಯರ ಮೇಲೆ ಸಾರ್ವಜನಿಕವಾಗಿ ದಾಳಿಗಳು ನಡೆದಿತ್ತು. ಆಗೆಲ್ಲಾ ದಾಳಿಗೊಳಗಾದ ಯುವತಿಯರು ರಸ್ತೆ ಬದಿಯಲ್ಲೇ ಸಾರ್ವಜನಿಕವಾಗಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಕಾಲಿಗೆ ಬಿದ್ದು ಅಳುತ್ತಾ “ಬಿಟ್ಟು ಬಿಡುವಂತೆ” ಗೋಗರೆಯುತ್ತಿದ್ದರು. ಅದೆಷ್ಟೋ ಹೆಣ, ಅದೆಷ್ಟೋ ಮನೆಗಳ ಬೆಂಕಿ, ಅದೆಷ್ಟೋ ಪ್ರೇಮಿಗಳ ಆರ್ತನಾದ ಕೇಳುತ್ತಾ ಸದಾ ಖುಷಿಪಟ್ಟಿದ್ದ ಪ್ರಮೋದ್ ಮುತಾಲಿಕ್ ಕಣ್ಣಲ್ಲಿ ಪ್ರಥಮ ಬಾರಿ ಅಳು ಕಂಡಿದ್ದು ಸಂತ್ರಸ್ತರಿಗೆ ನ್ಯಾಯ ಒದಗಿದಂತೆ ಅಲ್ಲದೇ ಇದ್ದರೂ ಮುತಾಲಿಕರಿಗಾದ ಇಂತಹ ಅವಮಾನ ಮತ್ತು ನೋವುಗಳು ಅವರಿಗೊಂದು “ಅವಮಾನದ ನೋವಿನ ಪಾಠ” ಕಲಿಸುವಂತಾಗಲಿ.

“ರಾಷ್ಟ್ರಕ್ಕೆ ಮೋದಿ, ರಾಜ್ಯಕ್ಕೆ ಮುತಾಲಿಕ್”


– ನವೀನ್ ಸೂರಿಂಜೆ


 

’ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಬೇಕು’ ಎಂಬ ಒಂದೇ ಉದ್ದೇಶದಿಂದ ತಾನು ಬಲವಾಗಿ ವಿರೋಧಿಸುತ್ತಿದ್ದ ಬಿಜೆಪಿಯನ್ನು ಸೇರುತ್ತಿರುವುದಾಗಿ ಹೇಳಿ ಬಿಜೆಪಿಗೆ ಸೇರ್ಪಡೆಯಾದ ಶ್ರೀರಾಮ ಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್  ದಿನ ಬೆಳಗಾಗುವುದರೊಳಗೆ ಅಲ್ಲಿಂದ ಹೊರದಬ್ಬಲ್ಪಟ್ಟಿದ್ದಾರೆ. ಬಿಜೆಪಿಯು ಹಲವು ತಿಂಗಳ (2013 ಸೆಪ್ಟೆಂಬರ್  13) ಹಿಂದೆಯೇ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರೂ ಅಂದು ಬಿಜೆಪಿಗೆmuthalik_joins bjp ಬೆಂಬಲ ನೀಡದೆ  ಆ ಪಕ್ಷವನ್ನು ನಿರಂತರವಾಗಿ  ಟೀಕಿಸುತ್ತಲೇ ಬಂದ ಪ್ರಮೋದ್ ಮುತಾಲಿಕ್  2014  ಮಾರ್ಚ್ 10 ರಂದು ರಾಜ್ಯದ ಆರು ಲೋಕಸಭಾ ಕ್ಷೇತ್ರಗಳಿಗೆ ಶ್ರೀರಾಮ ಸೇನೆಯ ಅಭ್ಯರ್ಥಿಗಳ ಪಟ್ಟಿಯನ್ನು ಕೂಡಾ ಬಿಡುಗಡೆ ಮಾಡಿದ್ದರು. ಅದಾದ ಹದಿಮೂರನೆಯ ದಿನಕ್ಕೇ ”ನರೇಂದ್ರ ಮೋದಿ ದೇಶದ ಪ್ರಧಾನಿಯಾಗಬೇಕು” ಎಂದು ಮುತಾಲಿಕ್ ಗೆ ಜ್ಞಾನೋದಯವಾಗಿ ತಾವೇ ಖುದ್ದು ಬಿಜೆಪಿ ಸೇರ್ಪಡೆಗೊಂಡು ಕೆಲವೇ ಕ್ಷಣಗಳಲ್ಲಿ ಮುಖಭಂಗ ಅನುಭವಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಸ್ಪರ್ಧಿಸುತ್ತಿರುವ ಹುಬ್ಬಳ್ಳಿ ಧಾರವಾಡ ಕ್ಷೇತ್ರದಿಂದ ಸ್ವತಃ ತಾವೇ ಸ್ಪರ್ಧಿಸುವುದಾಗಿ ಪ್ರಮೋದ್ ಮುತಾಲಿಕ್ ಘೊಷಿಸಿದ್ದರು. ಉಳಿದಂತೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ರಮಾಕಾಂತ ಕೊಂಡೂಸ್ಕರ, ಚಿಕ್ಕೋಡಿಗೆ ಜಯದೀಪ ದೇಸಾಯಿ,  ಬಾಗಕೋಟೆಯಲ್ಲಿ ಬಸವರಾಜ ಮಹಾಲಿಂಗೇಶ್ವರಮಠ, ಹಾವೇರಿಯಿಂದ ಕುಮಾರ ಹಕಾರಿ ಹಾಗೂ  ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಿ.ಎಸ್‌. ಶಾರದಮ್ಮರವರನ್ನು ಶ್ರೀರಾಮ ಸೇನೆಯ ವತಿಯಿಂದ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಸುವುದಾಗಿ ಪ್ರಮೋದ್ ಮುತಾಲಿಕ್ ಘೋಷಿಸಿದ್ದರು. ವಿಶೇಷವೆಂದರೆ ಈ ಪಟ್ಟಿ ಬಿಡುಗಡೆ ಮಾಡುವ ಸಂಧರ್ಭದಲ್ಲೂ  ಶ್ರೀರಾಮ ಸೇನೆಯು ರಾಜ್ಯದ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವುದು ನರೇಂದ್ರ ಮೋದಿಯನ್ನು ಪ್ರಧಾನಿ ಮಾಡುವ ಉದ್ದೇಶದಿಂದಲೇ ಎಂದು ನುಡಿದಿದ್ದರು. ಇದೀಗ ಅದೇ ಮುತಾಲಿಕ್  ”ಹಿಂದೂ ಮತಗಳು ಒಡೆಯಬಾರದು” ಎಂಬ ಕಾರಣ ಮುಂದಿಟ್ಟುಕೊಂಡು ಬಿಜೆಪಿ ಸೇರಿದ್ದಾರೆ. ಇನ್ನುಳಿದ ಐದು ಕ್ಷೇತ್ರಗಳಲ್ಲಿ  ಶ್ರೀರಾಮ ಸೇನೆಯ ಅಭ್ಯರ್ಥಿಗಳ ಪಾಡೇನು ಎಂಬುದರ ಬಗ್ಗೆ ಮುತಾಲಿಕ್ ಸ್ಪಷ್ಟನೆ ನೀಡದೆಯೇ ಬಿಜೆಪಿ ಸೇರಿದ್ದರು.

ಯಾರು ಈ ಮುತಾಲಿಕ್?

ಪ್ರಮೋದ್ ಮುತಾಲಿಕ್ ಅವರ ಪೂರ್ತಿ ಹೆಸರು ಪ್ರಮೋದ ಮುತಾಲಿಕ ದೇಸಾಯಿ. ಅವರ ತಂದೆ ಬೆಳಗಾವಿ ಜಿಲ್ಲೆ ಹುಕ್ಕೇರಿಯ ಜಮೀನ್ದಾರರು. ಕೃಷ್ಣಾ ನದಿ ತೀರದಲ್ಲಿ ಕಬ್ಬು ಬೆಳೆದು ತಕ್ಕಮಟ್ಟಿಗೆ ಸ್ಥಿತಿವಂತ ಎನ್ನಿಸಿಕೊಂಡವರು. ಪ್ರಮೋದ್ ಅವರ ಸಂಬಂಧಿಕರಲ್ಲಿ ಅನೇಕರು ಆರ್ ಎಸ್ ಎಸ್ ಬೆಂಬಲಿಗರಾಗಿದ್ದರಿಂದ ಅವರ ಮನೆಯಲ್ಲಿ ಸಹಜವಾಗಿಯೇ ಸಂಘದ ಪ್ರಭಾವವಿತ್ತು.

ಮುತಾಲಿಕ್ ಸಣ್ಣ ವಯಸ್ಸಿನಲ್ಲಿಯೇ ಆರ್ ಎಸ್ ಎಸ್ ಸ್ವಯಂ ಸೇವಕರಾದರು. ಸಂಘದ ತತ್ವ ಸಿದ್ಧಾಂತಗಳಿಗೆ ತುಸು ಅತಿಯಾಗಿಯೇ ಒಡ್ಡಿಕೊಂಡಿದ್ದರಿಂದ ಅವರನ್ನು ಅವರ ಗೆಳೆಯರು `ಇವ ಆರು ಎಸ್ ಎಸ್ ಅಲ್ಲ, ಏಳು ಎಸ್ ಎಸ್’ ಎಂದು ಕರೆಯುತ್ತಿದ್ದರಂತೆ.  ಪದವಿ ಮುಗಿಸಿದ ನಂತರದಲ್ಲಿ ಉದ್ಯೋಗಕ್ಕೆ ಸೇರದೆ ಮದುವೆಯೂ ಆಗದೆ ನೇರವಾಗಿ ಸಂಘದ ಪೂರ್ಣಾವಧಿ ಕಾರ್ಯಕರ್ತರಾದರು. ಪ್ರಚಾರಕರಾಗಿ ರಾಜ್ಯವೆಲ್ಲಾ ಸುತ್ತಿದರು. ಮುಂದೆ ಮೈಸೂರು ವಿಭಾಗದ ಪ್ರಚಾರಕರಾಗಿ ಅಲ್ಲಿ ನೆಲೆಸಿದರು. ಆ ಸಂದರ್ಭದಲ್ಲಿ ಮುತಾಲಿಕ್  ತುಂಬ ಶಾಂತ ಸ್ವಭಾವದವರು, ಸಹನೆ ಉಳ್ಳವರು ಅಂತ ಹೆಸರು ಗಳಿಸಿದ್ದರಿಂದ ಮಕ್ಕಳಿಗೆ ಕತೆ ಹೇಳುವ ಆರ್ ಎಸ್ ಎಸ್ ನ ”ಕಿಶೋರ ವಿಭಾಗ” ದ ಜವಾಬ್ದಾರಿ ನೀಡಲಾಗಿತ್ತು.

ತರುವಾಯ ಆರ್ ಎಸ್ ಎಸ್ ನಿಂದ ವಿಶ್ವ ಹಿಂದೂ ಪರಿಷತ್ ಗೆ, ಅಲ್ಲಿಂದ ಬಜರಂಗ ದಳಕ್ಕೆ ಎರವಲು ಸೇವೆಯ ಮೇಲೆ ಮುತಾಲಿಕರನ್ನು ಕಳುಹಿಸಲಾಯಿತು. ಕ್ರಮೇಣ ಮುತಾಲಿಕ್ ಮುತಾಲಿಕ್ ಜೀ ಆದರು. ನಿಧಾನವಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದರು. ಅವರ ಖಾರವಾದ, ಖತರನಾಕ್ ಭಾಷಣಗಳು ಆರಂಭವಾದದ್ದು ಇಲ್ಲಿಂದಲೇ. ಭಜರಂಗದಳದ ರಾಜ್ಯಾಧ್ಯಕ್ಷರಾದ ಮುತಾಲಿಕ್ ನಂತರದಲ್ಲಿ ಅದೇ ಸಂಘಟನೆಯಲ್ಲಿ ದಕ್ಷಿಣ ಭಾರತ ಪ್ರಾಂತ್ಯ ಸಂಚಾಲಕ ಸ್ಥಾನ ಪಡೆದರು. ಮುಂದೆ ತನ್ನ ಭಾಷಣಗಳಿಂದಲೇ ಬಿಜೆಪಿ ಶಾಸಕರು ಆಯ್ಕೆಯಾಗುತ್ತಿದ್ದಾರೆ ಎಂದು ಹೇಳುವ ಮೂಲಕ ಎಡವಟ್ಟು ಮಾಡಿಕೊಂಡ ಮುತಾಲಿಕ್  ಆರ್ ಎಸ್ ಎಸ್ ಮತ್ತು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾದರು.  ನಿಧಾನವಾಗಿ ಮುತಾಲಿಕ್ ಆರ್ ಎಸ್ ಎಸ್ ಅನ್ನು ತಾನೇ ತೊರೆಯುವಂತೆ ಮಾಡುವಲ್ಲಿ ಸಂಘದ ಹಿರಿಯ ಮುಖಂಡರು ಯಶಸ್ವಿಯಾಗಿದ್ದರು.

ಶ್ರೀರಾಮ ಸೇನೆ ಸ್ಥಾಪನೆ

ಪ್ರಮೋದ್ ಮುತಾಲಿಕ್ ಆರ್ ಎಸ್ ಎಸ್ ತೊರೆದ ನಂತರ ಶ್ರೀರಾಮ ಸೇನೆ ಎಂಬ ಸಂಘಟನೆಯನ್ನು ಸ್ಥಾಪಿಸಿದರು. ಆ ಸಂಧರ್ಭದಲ್ಲಿ ’ಆರ್ ಎಸ್ ಎಸ್ ಸಂಘಟನೆಯದ್ದು 20090124pub4ರಾಜಕೀಯ ಹಿಂದುತ್ವ. ನಮ್ಮದು ನೈಜ ಹಿಂದುತ್ವ” ಎಂದು ಘೋಷಿಸಿದ್ದರು. ಪ್ರಗತಿಪರ ವಿಚಾರಧಾರೆಗಳು ಮತ್ತು ಮಹಿಳಾ ಸ್ವಾತಂತ್ರ್ಯವನ್ನು ಬಲವಾಗಿ ವಿರೋಧಿಸುವ ಮೂಲಕ ಮನುವಾದವನ್ನು ಜಾರಿಗೆ ತರುವುದೇ ನಿಜವಾದ ಹಿಂದುತ್ವ ಎಂದು ಬಲವಾಗಿ ನಂಬಿದ್ದ ಮುತಾಲಿಕ್ ಅದರ ಅನುಷ್ಠಾನಕ್ಕೆ ಶ್ರೀರಾಮ ಸೇನೆ ಸಂಘಟನೆಯ ಮೂಲಕ ಶ್ರಮಿಸಿದ್ದರು. ಇದರ ಭಾಗವಾಗಿಯೇ ನಡೆದದ್ದು ಪಬ್ ನಲ್ಲಿ ಊಟ ಮಾಡುತ್ತಿದ್ದ ಯುವತಿಯರ ಮೇಲೆ ದಾಳಿ. ಮಂಗಳೂರಿನ ಅಮ್ನೇಶಿಯಾ ಪಬ್ ನಲ್ಲಿ ಯುವಕ ಯುವತಿಯರು ಒಟ್ಟಿಗೆ ಕುಳಿತು ಪಾರ್ಟಿ ಆಚರಿಸುತ್ತಿದ್ದಾರೆ ಎಂದು ತಿಳಿದ ಶ್ರೀರಾಮ ಸೇನೆಯ ಕಾರ್ಯಕರ್ತರು ಅಲ್ಲಿ ದಾಳಿ ನಡೆಸಿದ್ದರು. ಯುವತಿಯರ ಮೇಲೆ ನಡೆದ ಅಮಾನುಷ ದಾಳಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಮುತಾಲಿಕ್ ಸಹಿತ ಶ್ರೀರಾಮ ಸೇನೆಯ ಹಲವು ಕಾರ್ಯಕರ್ತರು ಬಂಧಿಸಲ್ಪಟ್ಟಿದ್ದರು. ನಂತರ ಕೆಲ ದಿನ ಮುತಾಲಿಕ್ ಸುವರ್ಣಯುಗ ಆರಂಭವಾಗಿತ್ತು. ರಾಷ್ಟ್ರಮಟ್ಟದ ನಾಯಕನ ರೀತಿ ಮಿಂಚಿದ್ದ ಮುತಾಲಿಕ್ ಹೇಳಿಕೆಗಳು ಮಾಧ್ಯಮಗಳಿಗೆ ಮುಖ್ಯವಾಗಿ ಬಿಟ್ಟಿತ್ತು. ಪ್ರೇಮಿಗಳ ದಿನ, ಹೋಟೆಲ್ ನಲ್ಲಿ ಬರ್ತ್ ಡೇ ಆಚರಣೆಯನ್ನೂ ಮುತಾಲಿಕ್ ವಿರೋಧಿಸಲು ಶುರು ಮಾಡುವ ಮೂಲಕ ಭಜರಂಗದಳಕ್ಕೆ ಪರ್ಯಾಯ ಹಿಂದೂ ಸಂಘಟನೆಯಾಗಿ ಶ್ರೀರಾಮ ಸೇನೆಯನ್ನು ಬೆಳೆಸುವಲ್ಲಿ ಸಫಲರಾದರು.  ಶ್ರೀರಾಮ ಸೇನೆಯ ಕಾರ್ಯಕರ್ತರು ನಿರಂತರವಾಗಿ ಮಂಗಳೂರಿನಲ್ಲಿ ಪ್ರೇಮಿಗಳ ಮೇಲೆ  ದಾಳಿ ನಡೆಸುತ್ತಿದ್ದರು . ಇದೇ ಸಂದರ್ಭದಲ್ಲಿ ಮಂಗಳೂರಿಗೆ ಎಸ್ಪಿಯಾಗಿ ನೇಮಕಗೊಂಡು ಆಗಮಿಸಿದ ಡಾ ಎ ಸುಬ್ರಹ್ಮಣ್ಯೇಶ್ವರ ರಾವ್  ಶ್ರೀರಾಮ ಸೇನೆಯ ಆಟಾಟೋಪಗಳನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ಪ್ರೇಮಿಗಳನ್ನು ಅಡ್ಡಗಟ್ಟಿ ದಾಳಿ ನಡೆಸುವ ಶ್ರೀರಾಮ ಸೇನೆಯ ಕಾರ್ಯಕರ್ತರ ಮೇಲೆ ಅತ್ಯಾಚಾರ, ಡಕಾಯಿತಿ ಕೇಸು ಹಾಕುವಂತೆ ಪೊಲೀಸ್ ಠಾಣೆಗಳಿಗೆ ಆದೇಶ ನೀಡಿ ಅದು ಜಾರಿಯಾಗುವಂತೆ ನೋಡಿಕೊಳ್ಳುವ ಮೂಲಕ ಶ್ರೀರಾಮ ಸೇನೆಯ ಆರ್ಭಟವನ್ನು ಅಕ್ಷರಶ ನಿಲ್ಲಿಸಿದ್ದರು. ಇದರ ಮಧ್ಯದಲ್ಲಿಯೇ ಪ್ರೇಮಿಗಳ ದಿನಾಚರಣೆಯ ದಿನ ಕೆಲವು ಮಹಿಳಾ ಕಾರ್ಯಕರ್ತರು ”ಪಿಂಕ್ ಚೆಡ್ಡಿ ಅಭಿಯಾನ” ಮಾಡಿದರು. ಪಿಂಕ್ ಚೆಡ್ಡಿಗಳನ್ನು ಮುತಾಲಿಕ್ ಮನೆ ವಿಳಾಸ ಮತ್ತು ಕಚೇರಿಗಳಿಗೆ ಕೊರಿಯರ್ ಮಾಡಿ ಅವರಿಗೆ ಮುಜುಗರ ಹುಟ್ಟಿಸಿದ್ದರು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ಬಲ ಕಳೆದುಕೊಂಡು ಮುತಾಲಿಕ್ ಮುಸ್ಲಿಂ ವಿರೋಧಿ ಭಾಷಣಕ್ಕಷ್ಟೇ ಪ್ರಾಮುಖ್ಯತೆ ಪಡೆದುಕೊಂಡಿದ್ದರು.

ಹಣಕ್ಕಾಗಿ ಹಿಂದುತ್ವ?

ಪ್ರಮೋದ್ ಮುತಾಲಿಕ್ ಹಣ ಸಂಪಾದನೆಯ ದೃಷ್ಠಿಯಿಂದ ಹಿಂದುತ್ವದ ಬಗ್ಗೆ ಬೊಗಳೆ ಬಿಡುತ್ತಿದ್ದಾರೆ ಎಂಬ ಆರೋಪ ಇಂದು ನಿನ್ನೆಯದ್ದಲ್ಲ. ಮಂಗಳೂರಿನ ಪಬ್ ದಾಳಿಯ ಹಿಂದೆಯೂ ಹಪ್ತಾ ಮಾಫಿಯಾ ಇದೆ ಎಂಬ ಗುಮಾನಿ ಇತ್ತು. ಮಂಗಳೂರಿನಲ್ಲಿ ಹಲವಾರು ಪಬ್ ಗಳಿದ್ದರೂ ಕೇವಲ ಅಮ್ನೇಶಿಯಾ  ಮಾತ್ರವೇ ದಾಳಿಗೆ ಗುರಿಯಾಗಿದ್ದು ಯಾಕೆ ಎಂಬ ಪ್ರಶ್ನೆಗೆ ಅಮ್ನೇಶಿಯಾ ಪಬ್ ಮಾಲಕರು, ”ವಾರದ ಹಿಂದೆ ಶ್ರೀರಾಮ ಸೇನೆಯ ಕೆಲ ಯುವಕರು ಬಂದು ಪಬ್ ನ ಸೆಕ್ಯೂರಿಟಿ ಕಾಂಟ್ರಾಕ್ಟ್ ಮತ್ತು ಬೌನ್ಸರ್ ಗಳ ಕಾಂಟ್ರಾಕ್ಟನ್ನು ನಮಗೇ ನೀಡಬೇಕು ಎಂದು ಕೇಳಿಕೊಂಡಿದ್ದರು. ನಾನು ಒಪ್ಪಿರಲಿಲ್ಲ. ಇಂದು ದಾಳಿಯಾಗಿದೆ” ಎಂದು ಉತ್ತರಿಸಿದ್ದರು. ನಂತರ ನಾನು ಮತ್ತು ನನ್ನ ಗೆಳೆಯರು ಇತರ ಪಬ್ ಮತ್ತು ಬಾರ್ ಗಳನ್ನು ಪರಿಶೀಲಿಸಿದಾಗ ಹಲವಾರು ಕಡೆಗಳಲ್ಲಿ ಶ್ರೀರಾಮ ಸೇನೆ ಸೆಕ್ಯೂರಿಟಿ ಕಾಂಟ್ರಾಕ್ಟ್ ಮತ್ತು ಬೌನ್ಸರ್ ಕಾಂಟ್ರಾಕ್ಟ್ ಹೊಂದಿರುವ ಸಂಗತಿ ಅರಿವಿಗೆ ಬಂತು. ಎಲ್ಲೆಲ್ಲಿ ಶ್ರೀರಾಮ ಸೇನೆ ಈ ರೀತಿ ಕಾಂಟ್ರಾಕ್ಟ್ ಗಳನ್ನು ಹೊಂದಿದೆಯೋ ಅಂತಹ ಪಬ್ ಗಳಲ್ಲಿ ಹುಡುಗ ಹುಡುಗಿಯರು ಹಿಂದುತ್ವ ಮರೆತು ಕುಡಿಯಬಹುದು ಮತ್ತು ನರ್ತಿಸಬಹುದು ಎಂಬ ಅಂಶ ಅಲ್ಲಿಗೆ ಸ್ಪಷ್ಟವಾಯಿತು.

ಇಷ್ಟೇ ಅಲ್ಲದೆ ಹಣ ನೀಡಿದರೆ ದೇಶದಲ್ಲಿ ಹಿಂಸಾಚಾರ ಮತ್ತು ಗಲಭೆ ಸೃಷ್ಟಿಸಲು ಸಿದ್ಧ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒಪ್ಪಿಕೊಂಡಿರುವ ವಿಷಯ ತೆಹಲ್ಕಾ-ಹೆಡ್‌ಲೈನ್ಸ್ ಟುಡೆ ನಡೆಸಿದ ಜಂಟಿ ಗುಪ್ತ ಕಾರ್ಯಾಚರಣೆಯಲ್ಲಿ ಬಹಿರಂಗಗೊಂಡಿತ್ತು. ಸೂಕ್ತ ಮೊತ್ತದ ಹಣ ನೀಡಿದರೆ ಯಾವುದೇ ಹಿಂಸಾಚಾರ ಅಥವಾ ಹಿಂಸಾತ್ಮಕ ಪ್ರತಿಭಟನೆಯನ್ನು ನಡೆಸಲು ತಾನು ಸಿದ್ಧನಿರುವುದಾಗಿ ಗುಪ್ತ ಕಾರ್ಯಾಚರಣೆಯ ತಂಡಕ್ಕೆ ಮುತಾಲಿಕ್ ಭರವಸೆ ನೀಡಿರುವ ವಿಷಯ ಕ್ಯಾಮರಾದಲ್ಲಿ ದಾಖಲಾಗಿತ್ತು. ಕುಟುಕು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪತ್ರಕರ್ತರು ಮುತಾಲಿಕ್ ಅನ್ನು ಬೇಟಿಯಾಗಿ ”ತಮ್ಮ  ವ್ಯವಹಾರ ಪ್ರಸಿದ್ದಿ ಪಡೆಯಲು ವಿನಾಕಾರಣ ವಿವಾದ ಸೃಷ್ಠಿಸಿ ಗಲಬೆ ಎಬ್ಬಿಸಬೇಕು” ಎಂದು ದೀರ್ಘ ಕಾಲ ಮಾತುಕತೆ ನಡೆಸಿದ್ದರು. ಅದಕ್ಕೆ ಮುತಾಲಿಕ್ ಒಪ್ಪಿಕೊಂಡಿದ್ದರು. ಈ ಮೂಲಕ  ಈವರೆಗೆ ಮುತಾಲಿಕ್ ನಡೆಸಿರುವ ಸಂಸ್ಕೃತಿ ರಕ್ಷಣೆಯ ದಾಳಿಗಳೆಲ್ಲಾ ಹಫ್ತಾ ಪ್ರಾಯೋಜಿತ ಎಂದು ಸಾಬೀತಾಗಿತ್ತು.

ಬಿಜೆಪಿ ಸೇರ್ಪಡೆ ಹಿಂದೆ ವ್ಯವಹಾರ?

ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಸ್ಪರ್ಧಿಸುವ ಹುಬ್ಬಳ್ಳಿ ದಾರವಾಡ ಲೋಕಸಭಾ ಕ್ಷೇತ್ರವೂ ಸೇರಿದಂತೆ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಶ್ರೀರಾಮ ಸೇನೆಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದ ಪ್ರಮೋದ್ ಮುತಾಲಿಕ್ ಕೇವಲ 13 ದಿನಗಳಲ್ಲಿ ಬಿಜೆಪಿ ಜೊತೆ ವಿಲೀನವಾಗುವುದರ ಹಿಂದೆ ಭಾರೀ ಮೊತ್ತದ ಹಣಕಾಸು ವ್ಯವಹಾರ ನಡೆದಿದೆ ಎನ್ನಲಾಗುತ್ತಿದೆ. ಆದರೆ ಇದಕ್ಕೆ ”ಮೋದಿ ದೇಶದ ಪ್ರಧಾನಿಯಾಗಬೇಕು” ಎಂಬ ತಲೆಬರಹ ನೀಡಲಾಗುತ್ತಿದೆಯಷ್ಟೇ ಎಂಬ ಸಂಶಯ ಇದೆ. ’ಮೋದಿ ದೇಶದ ಪ್ರಧಾನಿಯಾಗಬೇಕು’ ಎಂದು ಪ್ರಮೋದ್ ಮುತಾಲಿಕ್ ಹಣಕಾಸು ವ್ಯವಹಾರ ಮಾಡುತ್ತಿರುವುದು ಇದೇ ಮೊದಲಲ್ಲ. ಮೋದಿ ಹೆಸರಲ್ಲಿ ಮುತಾಲಿಕ್ ಹಣ ಸಂಪಾದನೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದು ಬೇರಾರೂ ಅಲ್ಲ. ಬಿಜೆಪಿಯ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಬಿಜೆಪಿ ಅಧ್ಯಕ್ಷ ಲಿಂಗರಾಜ್ ಪಾಟೀಲ್.

2013 ನವೆಂಬರ್ 8 ರಿಂದ ಮೂರು ದಿನಗಳ ಕಾಲ ಶ್ರೀರಾಮಸೇನೆ ಹಾಗೂ ಹಿಂದೂ ಜನಜಾಗೃತಿ ಸಮಿತಿ ಹಿಂದೂ ಅಧಿವೇಶನ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕಾಗಿ ”ಮೋದಿ-ಮುತಾಲಿಕ್ ಬ್ರಿಗೇಡ್ ”ಸ್ಥಾಪನೆಗೊಂಡಿದ್ದು, ”ದೇಶಕ್ಕೆ ಮೋದಿ-ರಾಜ್ಯಕ್ಕೆ ಮುತಾಲಿಕ್” ಎಂದು ಬ್ಯಾನರ್ ಬರೆದುಕೊಂಡು ಸ್ಥಳೀಯರಿಂದ 100 ರೂ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ನವೆಂಬರ್ 09 ರಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಮತ್ತು ಸ್ಥಳೀಯ ಬಿಜೆಪಿ ಮುಖಂಡ ಲಿಂಗರಾಜ್ ಪಾಟೀಲ್ ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದ್ದರು. ಹುಬ್ಬಳ್ಳಿ ದಾರವಾಡ ಮಹಾನಗರ ಬಿಜೆಪಿಯ ಅಧ್ಯಕ್ಷ ಲಿಂಗರಾಜ್ ಅವರ ಆರೋಪ ಇಷ್ಟಕ್ಕೇ ಮುಗಿದಿರಲಿಲ್ಲ. ಅವರು ಮುತಾಲಿಕ್ ರನ್ನು ಉದ್ದೇಶಿಸಿ ಪತ್ರಿಕಾಗೋಷ್ಠಿಯಲ್ಲಿ ಹೀಗೆ ಹೇಳಿದ್ದರು, ” ಮೈಬಗ್ಗಿಸಿ ದುಡಿದು ಬದುಕಲು ಯೋಗ್ಯತೆಯಿಲ್ಲದ ಕಿಡಿಗೇಡಿಗಳು ದೇವರ ಹೆಸರಿನಲ್ಲಿ ಹಣ ಪೀಕುವಂತೆ ಅಥವಾ ಗೂಂಡಾಗಿರಿ ದಬ್ಬಾಳಿಕೆ ಮಾಡಿ ಹಣ ವಸೂಲಿ ಮಾಡುವಂತೆ, ಹಣ ಹೊಂದಿಸುವ ನಿಟ್ಟಿನಲ್ಲಿ ಐದಾರು ರೂಪಾಯಿ ಮೌಲ್ಯದ ಸ್ಟಿಕರೊಂದನ್ನು ಮುದ್ರಿಸಿ ಅದನ್ನು ನೂರು ರೂಪಾಯಿಗೆ ಒತ್ತಾಯಪೂರ್ವಕವಾಗಿ ಮಾರಾಟ ಮಾಡುವ ಅಡ್ಡ ಕಸುಬು ನಡೆಸುತ್ತಿದ್ದಾರೆ. ರಸ್ತೆಯಲ್ಲಿ ಓಡಾಡುವ ಜನಸಾಮಾನ್ಯರಿಂದ ಹಿಡಿದು ಸಣ್ಣಪುಟ್ಟ ಚಿಲ್ಲರೆ ವ್ಯಾಪಾರಸ್ಥರ ಮೇಲೂ ದಬ್ಬಾಳಿಕೆ ಪ್ರದರ್ಶಿಸುತ್ತಿರುವ ಶ್ರೀರಾಮ ಸೇನೆಯ ಕಾರ್ಯಕರ್ತರು, ತಾವು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಅಭಿಮಾನಿಗಳು ಎಂದು ಪರಿಚಯಿಸಿಕೊಂಡು ಪ್ರತೀ ಟಿಕೇಟಿಗೆ ನೂರು ರೂಪಾಯಿಯಂತೆ ಹಣ ವಸೂಲಿ ಮಾಡುತ್ತಿದ್ದಾರೆ” ಎಂದು  ಲಿಂಗರಾಜ್ ಪಾಟೀಲ್ ನೇರವಾಗಿ ಆರೋಪಿಸಿದ್ದರು.

ಇದೀಗ ಅದೇ ಪ್ರಮೋದ್ ಮುತಾಲಿಕ್ ಬಿಜೆಪಿ ಸೇರಿ ಒದೆ ತಿಂದಿದ್ದಾರೆ. ಮತ್ತದೇ ನರೇಂದ್ರ ಮೋದಿಯ ಕಾರಣಕ್ಕಾಗಿ.

ವರ್ತಮಾನ.ಕಾಮ್‌ನ 2013 ಭೂತಕಾಲ


– ರವಿ ಕೃಷ್ಣಾರೆಡ್ಡಿ


 

2012 ಆರಂಭವಾದಾಗ ನಮ್ಮ ಆಶಾವಾದಗಳು ಆಕಾಶದಲ್ಲಿ ಹಾರುತ್ತಿದ್ದವು. ಆ ವರ್ಷದ ಆರಂಭದಲ್ಲಿ ನಾನು ಬರೆದ “2012 – ಪಲ್ಲಟಗಳ ವರ್ಷದಲ್ಲಿ ವರ್ತಮಾನ” ಎಂಬ ಲೇಖನದಲ್ಲಿ ಅದಕ್ಕೆ ಕಾರಣಗಳನ್ನು ನೀವು ಗುರುತಿಸಬಹುದು. ಹಾಗೆ ನೋಡಿದರೆ 2012 ರಲ್ಲಿ ಅಂತಹ ದೊಡ್ಡ ಬದಲಾವಣೆಗಳಾಗಲಿಲ್ಲ. ಆದರೆ ಮುಂದಿನ ವರ್ಷ, ಅಂದರೆ 2013 ರಲ್ಲಿ, ಈ ದೇಶ ಪಡೆದುಕೊಂಡ ತಿರುವುಗಳ ಬೀಜಗಳೆಲ್ಲ 2012 ರಲ್ಲಿ ಬಿತ್ತಲ್ಪಟ್ಟವು ಎನ್ನುವುದನ್ನು ನಾವು ಮರೆಯಬಾರದು.

2013 ಈ ದೇಶವಾಸಿಗಳಲ್ಲಿ ಹೊಸ ಹುಮ್ಮಸ್ಸನ್ನು, ಕನಸನ್ನು, ಧೈರ್ಯವನ್ನು, ನಗುವನ್ನು, (ಬಹುಶಃ ಒಂದಷ್ಟು ಭ್ರಮೆಗಳನ್ನೂ) ತುಂಬಿದೆ. ಆದರೆ ಕರ್ನಾಟಕದ ರಾಜಕೀಯದ ವಿಚಾರಕ್ಕೆ ಹೇಳುವುದಾದರೆ, ramya-siddaramaiahಭ್ರಷ್ಟ ಬಿಜೆಪಿ ವಿರುದ್ಧ ಭ್ರಷ್ಟ ಕಾಂಗ್ರೆಸ್ ಬಂದು ಕುಳಿತಿದೆ. ಒಂದೇ ಸಮಾಧಾನ ಎಂದರೆ ಸಿದ್ಧರಾಮಯ್ಯನವರು ಯಡ್ಡಯೂರಪ್ಪನವರಲ್ಲ ಎನ್ನುವುದು. ಆದರೆ ಸರ್ಕಾರ ಕೇವಲ ಸಿದ್ಧರಾಮಯ್ಯ ಅಲ್ಲ ಎನ್ನುವುದನ್ನು ನಾವು ನೆನಪಿಡಬೇಕು. 2014 ರ ಮೊದಲನೆಯ ದಿನವೇ ಈ ಸರ್ಕಾರ ಕಳಂಕಿತರನ್ನು, ಭ್ರಷ್ಟರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳ ಹೊರಟಿದೆ. ಭ್ರಷ್ಟ ಯಡ್ಡಯೂರಪ್ಪ ಭ್ರಷ್ಟ ಬಿಜೆಪಿಗೆ ಮರಳಲಿದ್ದಾರೆ. ಜೆಡಿಎಸ್ ಒಡೆಯಲು ಕಾಲ ದೂರವಿಲ್ಲ. (ಇಂತಹುದನ್ನೆಲ ಊಹಿಸಿಯೇ ನಾನು 2013 ರ ಬಗ್ಗೆ ವರ್ಷದ ಹಿಂದೆ “2013 – ಕರ್ನಾಟಕದಲ್ಲಿ ಮೌಲ್ಯಗಳು ಪಾತಾಳದ ತಳ ಕಾಣಲಿರುವ ವರ್ಷ…” ಲೇಖನ ಬರೆದದ್ದು.)

ದೆಹಲಿಯ ಜನತೆ ತಿಂಗಳ ಹಿಂದೆ ಮಾಡಿದ ಪವಾಡಸದೃಶ ಮಾದರಿಯ ಕಾರ್ಯದ ಹಿನ್ನೆಲೆಯಲ್ಲಿ ಹೇಳುವುದಾದರೆ, ಅಂತಹುದೇ ಪರ್ಯಾಯವೊಂದನ್ನು 2013 ರ ಮೊದಲಾರ್ಧದಲ್ಲಿ ಇಲ್ಲಿ ಕಟ್ಟಿಕೊಳ್ಳಲು ಸೋತ ಕರ್ನಾಟಕ 2014 ರ ನಂತರವಾದರೂ ಆ ನಿಟ್ಟಿನಲ್ಲಿ ನಡೆಯಲಿದೆಯೇ ಎನ್ನುವುದನ್ನು ನಾವು ನೋಡಬೇಕಿದೆ. ನೋಡುವುದಕ್ಕಿಂತ ಹೆಚ್ಚಾಗಿ ನಾವೇ ಸಾಧ್ಯ ಮಾಡಿಕೊಳ್ಳಬೇಕಿದೆ.

ಇಲ್ಲಿ ಒಂದು ವಿಷಯ ಹೇಳಿ ವರ್ತಮಾನ.ಕಾಮ್‌ನ ವಿಷಯಕ್ಕೆ ಬರುತ್ತೇನೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಗೆಲುವಿನ ಹಿಂದೆ ಅನೇಕ ಅಂಶಗಳು ಮತ್ತು ದೀರ್ಘಕಾಲದ ಹೋರಾಟಗಳಿವೆ. manishsisodia-yogendrayadav-arvindkejriwal-prashantbhushan“ಭ್ರಷ್ಟಾಚಾರದ ವಿರುದ್ಧ ಭಾರತ” ಹೋರಾಟದ ಹಿನ್ನೆಲೆ ಅದರ ನಾಯಕರಿಗಿತ್ತು. ಅರವಿಂದ್ ಕೇಜ್ರಿವಾಲ್ ಹತ್ತು ವರ್ಷಕ್ಕೂ ಮಿಗಿಲಾಗಿ “ಪರಿವರ್ತನ್” ಸಂಸ್ಥೆಯನ್ನು ನಡೆಸುತ್ತ, ಆಂದೋಳನಗಳನ್ನು ರೂಪಿಸುತ್ತ, ಭ್ರಷ್ಟಾಚಾರದ ವಿರುದ್ದ ಹೋರಾಡುತ್ತ ಬಂದವರು. ಪ್ರಶಾಂತ್ ಭೂಷಣ್ ಸುಪ್ರೀಮ್‌ಕೋರ್ಟ್‌ನ ಹೆಸರಾಂತ ನ್ಯಾಯವಾದಿ ಮತ್ತು ಜನಪರ ಹೋರಾಟಗಾರ. ನಮ್ಮ ರಾಜ್ಯದ ಹಿರೇಮಠರು ನಡೆಸುತ್ತಿರುವ ಅನೇಕ ಮೊಕದ್ದಮೆಗಳನ್ನು ಇವರು ಉಚಿತವಾಗಿ ವಾದಿಸಿ ನಡೆಸಿಕೊಡುತ್ತಿದ್ದಾರೆ. ಯೋಗೇಂದ್ರ ಯಾದವ್ ದೇಶದ ಪ್ರಜ್ಞಾವಂತರ ನಂಬಿಕೆ ಉಳಿಸಿಕೊಂಡಿರುವ ಬದ್ಧತೆಯುಳ್ಳ ಚಿಂತಕ. ಮನೀಷ್ ಸಿಸೋಡಿಯ ಮತ್ತು ಶಜಿಯಾ ಇಲ್ಮಿ ಪತ್ರಕರ್ತರಾಗಿ ಹೆಸರಾದವರು. ಕುಮಾರ್ ವಿಶ್ವಾಸ್ ಹಿಂದಿಯ ಯುವತಲೆಮಾರಿನ ಹೆಸರಾಂತ ಕವಿ. ಇವರೆಲ್ಲರ ಜೊತೆಗೆ ಲಕ್ಷಾಂತರ ಜನರ ನಿಸ್ವಾರ್ಥ ಶ್ರಮ, ಮತ್ತು ದೇಶವಿದೇಶಗಳಲ್ಲಿಯ ಲಕ್ಷಾಂತರ ಜನರ ಧನಸಹಾಯ ದೆಹಲಿಯಲ್ಲಿ ಆ ಪಕ್ಷವನ್ನು ಎರಡನೆ ಅತಿದೊಡ್ಡ ಪಕ್ಷವಾಗಿಸಿತು. ಕರ್ನಾಟಕದಲ್ಲಿ ಆ ತರಹದ ವಾತಾವರಣವಿದೆಯೆ? ಸಂಗಯ್ಯ ಹಿರೇಮಠರು ಖಂಡಿತವಾಗಿ ಕೇಜ್ರಿವಾಲರಿಗಿಂತ ಹಿರಿಯರು ಮತ್ತು ಇತಿಹಾಸ ಹೊಂದಿರುವವರು. sr-hiremathಅವರನ್ನು ಬಿಟ್ಟರೆ ಮೇಲಿನ ಜನಕ್ಕೆ ಹೋಲಿಸಲು ಕರ್ನಾಟಕದಲ್ಲಿ ಯಾರಿದ್ದಾರೆ? ನಮ್ಮ ರಾಜ್ಯದ ಯಾವ ನ್ಯಾಯವಾದಿಯನ್ನು ನಾವು ಪ್ರಶಾಂತ್ ಭೂಷಣರಿಗೆ ಹೋಲಿಸೋಣ? ಯಾವ ವಿಶ್ವವಿದ್ಯಾಲಯದ ಪ್ರೊಫೆಸರ್ ಅನ್ನು ಯೋಗೇಂದ್ರ ಯಾದವರಿಗೆ ಹೋಲಿಸೋಣ? ಯಾವ ಪತ್ರಕರ್ತರನ್ನು ಸಿಸೋಡಿಯ ಮತ್ತು ಇಲ್ಮಿಗೆ ಹೋಲಿಸೋಣ? ಯಾವ ಕವಿ-ಸಾಹಿತಿಯಲ್ಲಿ ಕುಮಾರ್ ವಿಶ್ವಾಸನನ್ನು ಕಾಣೋಣ? ಅಂತಹ ವ್ಯಕ್ತಿಗಳು ಇರಬಹುದು ಮತ್ತು ಇದ್ದಾರೆ. ಆದರೆ ಅವರ್‍ಯಾರಿಗೂ ಈ ಹೋರಾಟಗಳು ಬೇಕಿಲ್ಲ. ಜನರೇನೋ ಸಿದ್ಧವಿದ್ದಾರೆ. ಆದರೆ ಜನರ ಮುಂದೆ ಅಗತ್ಯ ವಿಚಾರಗಳನ್ನು ಪ್ರತಿಪಾದಿಸಬಲ್ಲ, ನೆಲದ ಮೇಲೆ ಮಲಗಲು, ದೈಹಿಕ ಶ್ರಮ ಹಾಕಲು, ಹಗಲು-ರಾತ್ರಿ ಹೋರಾಡಲು, ಪೋಲಿಸರಿಂದ ಬಂಧನಕ್ಕೊಳಗಾಗಲು, ಗೆಲುವಿಗಿಂತ ಮೊದಲು ಸೋಲಲು, ಗೌರವ ಪಡೆಯುವುದಕ್ಕಿಂತ ಮೊದಲು ವಿನಾಕಾರಣ ಅವಮಾನಕ್ಕೊಳಗಾಗಲು ಸಿದ್ಧವಿರುವವರು ಕರ್ನಾಟಕದಲ್ಲಿ ಎಲ್ಲಿದ್ದಾರೆ, ಎಷ್ಟಿದ್ದಾರೆ? ಕರ್ನಾಟಕ ಅಂತಹವರನ್ನು ಕಂಡುಕೊಂಡ ದಿನ ಇಲ್ಲಿಯೂ ಬದಲಾವಣೆಯ ಪರ್ವ ಆರಂಭವಾಗುತ್ತದೆ. (ಆದರೆ ಅದಕ್ಕಿಂತ ಮೊದಲೇ ಅಧಿಕಾರದ ಹಪಾಹಪಿಯ, ಹಸುವಿನ ವೇಷದಲ್ಲಿರುವ ಹುಲಿಗಳು, ಜನಪರ ಕಾಳಜಿಗಳಿಲ್ಲದಿದ್ದರೂ ಸಹ ಒಳ್ಳೆಯವರು, ಯೋಗ್ಯರು ಎಂದು ಮಾಧ್ಯಮಗಳ ಮೂಲಕ ಬಿಂಬಿಸಿಕೊಳ್ಳಬಲ್ಲ ತಾಕತ್ತಿರುವ ಸ್ವಕೇಂದ್ರಿತ ವ್ಯಕ್ತಿಗಳು ಈಗಾಗಲೆ ಮುನ್ನೆಲೆಗೆ ಬರಲು ಸಿದ್ಧವಾಗುತ್ತಿರುವ ಮಾಹಿತಿ ಇದೆ. ಇದೇನಾದರೂ ಆದರೆ ಕರ್ನಾಟಕ ಆ ಅವಕಾಶವನ್ನೂ ಕಳೆದುಕೊಳ್ಳುತ್ತದೆ.)

ವರ್ತಮಾನ.ಕಾಮ್‌ಗೂ 2013 ಪ್ರಮುಖ ವರ್ಷವೇ. ನಾನು ಚುನಾವಣೆಗೆ ಸ್ಪರ್ಧಿಸಿದ ಕಾರಣವಾಗಿ ಇದು ಒಂದೆರಡು ತಿಂಗಳು ಸೊರಗಿದ್ದು ನಿಜ. ಆದರೆ ನಮ್ಮ ಬಳಗದ ಪ್ರಯತ್ನ ಅದನ್ನು ನಿಲ್ಲಲು ಬಿಡಲಿಲ್ಲ. courtesy-announcementಸಾಮುದಾಯಿಕ ಪ್ರಯತ್ನ ಒಬ್ಬ ವ್ಯಕ್ತಿಯ ಮೇಲೆ ನಿಂತಿಲ್ಲ. ಮೊದಲಿನಿಂದ ನಮ್ಮ ಜೊತೆಗಿದ್ದ ಕೆಲವು ಲೇಖಕರು ಈ ವರ್ಷ ಬರೆಯುವುದನ್ನು ನಿಲ್ಲಿಸಿದರು ಇಲ್ಲವೇ ಕಡಿಮೆ ಮಾಡಿದರು. ಹಲವರಿಗೆ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಎದುರಾದದ್ದು ಮುಖ್ಯ ಕಾರಣ. ಇನ್ನು ಕೆಲವರು ಯಾಕೆ ನಿಲ್ಲಿಸಿದರು ಎಂದು ಅವರು ಹೇಳಲಿಲ್ಲ, ನಾನು ಕೇಳಲಿಲ್ಲ. ಆದರೆ, ಅಷ್ಟೇ ಸಂಖ್ಯೆಯಲ್ಲಿ ಹೊಸಬರು ಬಂದರು. ಇನ್ನೂ ಹೆಚ್ಚಿನ ಬದ್ದತೆಯಿಂದ ಕೆಲವರು ಬರವಣಿಗೆಯನ್ನು ಹೆಚ್ಚು ಮಾಡಿದರು. ಕಳೆದ ವರ್ಷದ ಕೊನೆಯ ಮೂರು ತಿಂಗಳಿನಲ್ಲಿ ಹಿಂದಿನ ಎಲ್ಲಾ ತಿಂಗಳುಗಳಿಗಿಂತ ಹೆಚ್ಚಿನ ವ್ಯಾಪ್ತಿಯನ್ನು ವರ್ತಮಾನ.ಕಾಮ್ ಪಡೆದುಕೊಂಡಿತು. ಇದರಲ್ಲಿ ನಮ್ಮಲ್ಲಿ ಇಲ್ಲಿಯವರೆಗೆ ಒಂದೇ ಒಂದು ಲೇಖನವನ್ನು ಬರೆದವರಿಂದ ಹಿಡಿದು, ಓದುಗರು, ಪ್ರತಿಕ್ರಿಯಿಸಿದವರು, ಫೇಸ್‌ಬುಕ್‌ನಲ್ಲಿ ಲೈಕ್/ಷೇರ್ ಮಾಡಿದವರು, ಹೀಗೆ ಎಲ್ಲರ ಪಾಲೂ ಇದೆ.

ಹಾಗೆಯೇ ವರ್ತಮಾನ.ಕಾಮ್ ಬಳಗ “ದಲಿತರು ಮತ್ತು ಉದ್ಯಮಶೀಲತೆ” ವಿಚಾರವಾಗಿ dalit-entrepreneurship-16ಹಾಸನದಲ್ಲಿ ಮತ್ತು ತುಮಕೂರಿನಲ್ಲಿ ಎರಡು ಕಾರ್ಯಕ್ರಮಗಳನ್ನು ಹಾಕಿಕೊಂಡಿತ್ತು. ಈ ಕಾರ್ಯಕ್ರಮಗಳು ಅನೇಕ ಕಡೆ ಹೇಗೆ ಸಕಾರಾತ್ಮಕವಾಗಿ ಪ್ರತಿಫಲಿಸುತ್ತಿವೆ ಮತ್ತು ಕೆಲವರನ್ನು ಹೇಗೆ ಕ್ರಿಯಾಶೀಲಗೊಳಿಸುತ್ತಿದೆ ಎಂದು ನನಗೆ ಮತ್ತು ನಮ್ಮ ಬಳಗದ ಶ್ರೀಪಾದ ಭಟ್ಟರ ಅರಿವಿಗೆ ಬಂದಿದೆ ಮತ್ತು ಅದು ನಮಗೆ ತೃಪ್ತಿಯನ್ನೂ ಕೊಟ್ಟಿದೆ. ಇದರ ಜೊತೆಗೆ ಹಾಸನದಲ್ಲಿ ನಡೆದ “ನಾವು-ನಮ್ಮಲ್ಲಿ” ಮತ್ತು ಮಂಗಳೂರಿನಲ್ಲಿ ನಡೆದ “ಜನ-ನುಡಿ” ಕಾರ್ಯಕ್ರಮಗಳನ್ನೂ ವರ್ತಮಾನ.ಕಾಮ್ ಬೆಂಬಲಿಸಿತ್ತು.

ಇದೇ ಸಂದರ್ಭದಲ್ಲಿ ವರ್ತಮಾನ.ಕಾಮ್‌ಗೆ ಬೀಳುವ ನನ್ನ ಶ್ರಮದ ಬಗ್ಗೆಯೂ ಒಂದು ಮಾತು. ಈಗ್ಗೆ ಸುಮಾರು ಒಂದು ವರ್ಷದಿಂದ-ಚುನಾವಣೆಯ ಸಂದರ್ಭ ಹೊರತುಪಡಿಸಿ- ನಮ್ಮಲ್ಲಿ ಬರುವ ಎಲ್ಲಾ ಲೇಖನಗಳನ್ನು ಯೂನಿಕೋಡ್‌ಗೆ ಪರಿವರ್ತಿಸಿ, ವ್ಯಾಕರಣ ಮತ್ತು ಕಾಗುಣಿತಗಳನ್ನು ಪರಿಷ್ಕರಿಸಿ, ಸೂಕ್ತ ಫೋಟೋಗಳನ್ನು ಆಯ್ದು, ಪುಟವಿನ್ಯಾಸ ಮಾಡಿ, ಪೋಸ್ಟ್ ಮಾಡುವ ಕೆಲಸವನ್ನು ನಾನೇ ಮಾಡುತ್ತಿದ್ದೇನೆ. ನನ್ನ ಎಚ್ಚರದ ಸ್ಥಿತಿಯ ಸರಾಸರಿ vartamaana-2-years-smallಶೇ.10-15 ಭಾಗ ವರ್ತಮಾನ.ಕಾಮ್‌ಗೇ ಪ್ರತಿದಿನ ವಿನಿಯೋಗವಾಗುತ್ತಿದೆ. ಇದನ್ನೇ ನಾನು ಪ್ರತಿದಿನವೂ ಮಾಡಲಾಗುವುದಿಲ್ಲ. ಈ ಮೊದಲು ಇದೇ ಕೆಲಸಕ್ಕೆ ಒಬ್ಬರನ್ನು ನೇಮಿಸಿಕೊಂಡಿದ್ದೆ. ವರ್ಷದಿಂದ ಆ ಸಹಾಯವೂ ಇಲ್ಲ. ನಮ್ಮ ಬಳಗದ ಇಬ್ಬರು-ಮೂವರು ಮೊದಲ ವರ್ಷ ಈ ಕೆಲಸವನ್ನು ಹಂಚಿಕೊಂಡು ಮಾಡುತ್ತಿದ್ದರು. ಅದರಲ್ಲಿ ಕೆಲವರಿಗೆ ಈ ಒಂದು ವರ್ಷದಿಂದ ಕೆಲವು ಗಂಭೀರ ವೈಯಕ್ತಿಕ-ತಾಂತ್ರಿಕ-ನೌಕರಿ ಸಂಬಂಧಿತ ಸಮಸ್ಯೆಗಳಿಂದಾಗಿ ಈ ಕೆಲಸವನ್ನು ಹಂಚಿಕೊಳ್ಳಲಾಗುತ್ತಿಲ್ಲ. ನನಗೂ ಸಹ ಮುಂದಿನ ದಿನಗಳಲ್ಲಿ ಇಷ್ಟೆಲ್ಲ ಸಮಯವನ್ನು ವಿನಿಯೋಗಿಸಲು ಆಗುವುದಿಲ್ಲ. ಹಾಗೆಂದು ವರ್ತಮಾನ.ಕಾಮ್‌ ಯಾವುದೇ ರೀತಿಯಲ್ಲಿ ನಿಧಾನಗೊಳ್ಳುವ ಪ್ರಮೇಯವೇ ಇಲ್ಲ. ಇಲ್ಲಾ ಸಹಾಯಕ್ಕೆ ಯಾರನ್ನಾದರೂ ನೇಮಿಸಿಕೊಳ್ಳಲಾಗುವುದು, ಇಲ್ಲದಿದ್ದರೆ ಬಳಗವನ್ನು ವಿಸ್ತರಿಸಲಾಗುವುದು. ಬರಹ/ನುಡಿಯನ್ನು ಯೂನಿಕೋಡ್‌ಗೆ ಬದಲಾಯಿಸಲು ಗೊತ್ತಿರುವ ಮತ್ತು ಒಂದು ಬ್ಲಾಗ್ ಪೋಸ್ಟ್ ಮಾಡುವುದು ಹೇಗೆಂದು ಗೊತ್ತಿರುವ ಯಾರಾದರೂ ಈ ಕೆಲಸ ಹಂಚಿಕೊಳ್ಳಲು ಅರ್ಹರು. ವಾರಕ್ಕೆ ಒಂದೆರಡು ದಿನ, ಕನಿಷ್ಟ ಒಂದು ಗಂಟೆ ವರ್ತಮಾನ.ಕಾಮ್‌ಗೆ ಕೊಡಬಲ್ಲವರು ಮುಂದೆ ಬಂದರೆ ಸಹಾಯವಾದೀತು. ಸಂಪರ್ಕಿಸುವುದು ಹೇಗೆಂದು ನಿಮಗೆ ಗೊತ್ತು.

ಕೊನೆಯದಾಗಿ, ನಾನು ಎರಡು ವರ್ಷದ ಹಿಂದೆ, 2002 ರ ಆರಂಭದ ಲೇಖನದಲ್ಲಿ ಬರೆದಿದ್ದ ಈ ಕೊನೆಯ ಪ್ಯಾರಾ ಇವತ್ತಿಗೂ ಸೂಕ್ತವಾಗಿದೆ ಎಂದು ಭಾವಿಸಿ ಅದರೊಂದಿಗೆ ಕೊನೆ ಮಾಡುತ್ತೇನೆ.

“ನಾನು ಇತ್ತೀಚೆಗೆ ಸ್ನೇಹಿತರ ಜೊತೆ ಮಾತನಾಡುತ್ತಿದ್ದಾಗ ಒಂದು ಮಾತು ಹೇಳಿದ್ದೆ: ‘ಚೆನ್ನಾಗಿರುವ ಒಂದು ಉತ್ತಮ ಎನ್ನಬಹುದಾದ ವ್ಯವಸ್ಥೆಯಲ್ಲಿ ನನಗೆ ಪಾತ್ರವಿಲ್ಲದಿದ್ದರೂ ಚಿಂತೆಯಿಲ್ಲ, ಆದರೆ ಕೆಟ್ಟದರ ಭಾಗವಾಗಿ ಮಾತ್ರ ಇರಲಾರೆ.’ ಬಹುಶಃ ನಮ್ಮ ಅನೇಕ ಸಮಾನಮನಸ್ಕರ ಯೋಚನೆಯೂ ಹೀಗೇ ಇರಬಹುದು. ನಾವು ಕೆಟ್ಟ ಸಂದರ್ಭವೊಂದರಲ್ಲಿ ಅಥವ ಸ್ಥಿತ್ಯಂತರದ ಸಂದರ್ಭದಲ್ಲಿ ಜೀವಿಸುತ್ತಿದ್ದೇವೆ. ನಮ್ಮ ತುಡಿತಗಳು, ಆಕ್ರೋಶಗಳು, ಚಟುವಟಿಕೆಗಳು ಕೆಟ್ಟದರ ವಿರುದ್ದ, ಮತ್ತು ಹಾಗೆ ಇರುವುದನ್ನು ಸರಿಪಡಿಸಿಕೊಳ್ಳುವ ಸುತ್ತಲೂ ಇವೆ. ಆದರೆ ಅದು ಮಾತಿನಲ್ಲಿ ಮುಗಿಯದೆ ಕೃತಿಗೆ ಇಳಿಯಬೇಕು. ಆ ನಿಟ್ಟಿನಲ್ಲಿ ಈ ವರ್ಷ ವರ್ತಮಾನ.ಕಾಮ್ ಮೂಲಕ ಅಥವ ನಮ್ಮ ಇತರೆ ಪ್ರಯತ್ನಗಳ ಮೂಲಕ ನಾವೆಲ್ಲಾ ಯತ್ನಿಸೋಣ. ನಮ್ಮ ಪ್ರಯತ್ನಕ್ಕೆ ಬೆಂಬಲ ಸೂಚಿಸಿರುವ, ಒಲವಿರುವ ಎಲ್ಲಾ ಮಿತ್ರರಲ್ಲಿ ಒಂದು ಮನವಿ: ಬೇಲಿಯ ಮೇಲೆ ಕುಳಿತಿರುವ ಮತ್ತು ಬೇಲಿಯ ಹೊರಗಿನಿಂದಲೇ ನಿಂತು ನೋಡುತ್ತಿರುವ ಸ್ನೇಹಿತರೇ, ದಯವಿಟ್ಟು ಒಳಬನ್ನಿ; ಪಾಲ್ಗೊಳ್ಳಿ. ಈ ಮೂಲಕ ನಮ್ಮ ಚಿಂತನೆಗಳನ್ನು, ಕ್ರಿಯೆಗಳನ್ನು, ಬದ್ಧತೆಗಳನ್ನು ಪಕ್ವಗೊಳಿಸಿಕೊಳ್ಳುತ್ತ, ಗಟ್ಟಿಗೊಳಿಸಿಕೊಳ್ಳುತ್ತ ಹೋಗೋಣ. ಹೋಗಲೇ ಬೇಕಾದಾಗ ಹೊರಹೋಗುವುದು ಇದ್ದೇ ಇರುತ್ತದೆ. ಈ ವರ್ಷ ಬಹಳ ಮುಖ್ಯವಾದ ವರ್ಷವಾಗುವ ಎಲ್ಲಾ ಸೂಚನೆಗಳೂ ಇವೆ. ಇಂತಹ ಸಂದರ್ಭದಲ್ಲಿ ದೇಶ ಮತ್ತು ಕಾಲ ನಮ್ಮ ಮಾತು ಮತ್ತು ಕೃತಿ ಎರಡನ್ನೂ ಕೇಳುತ್ತದೆ. ಅಲ್ಲವೇ?”

ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.