Category Archives: ಸಾಮಾಜಿಕ

ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ನೆಡುತೋಪು ಕಾಡಾದ ಕತೆ…

 – ಪ್ರಸಾದ್ ರಕ್ಷಿದಿ

35 ವರ್ಷಗಳ ಹಿಂದಿನ ಮಾತು ಕರ್ನಾಟಕದಲ್ಲಿ ರೈತಸಂಘ ಪ್ರಬಲವಾಗಿದ್ದ ಕಾಲ. ಆಗ ಅರಣ್ಯ ಇಲಾಖೆಯ ಸಿಬ್ಬಂದಿಗೂ ರೈತರಿಗೂ ನಿತ್ಯ ಜಟಾಪಟಿ ಇದ್ದೇ ಇರುತ್ತಿತ್ತು. ಮಲೆನಾಡಿನಲ್ಲಂತೂ ಅರಣ್ಯ ಇಲಾಖೆಯೇ ರೈತನ ಪ್ರಥಮ ಶತ್ರುವೆಂದು ಜನ ಭಾವಿಸತೊಡಗಿದ್ದರು. ಅಂತಹ ಸಮಯದಲ್ಲಿ ನಮ್ಮ ಸಕಲೇಶಪುರ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ಎಲ್ಲೆಲ್ಲಿ ಸಿ ಮತ್ತುಡಿ ವರ್ಗದ ಜಮೀನು ಇದೆಯೋ ಅಲ್ಲೆಲ್ಲ ಸಾಮಾಜಿಕ ಅರಣ್ಯ ಅಂದರೆ ನೆಡುತೋಪುಗಳನ್ನು ಬೆಳೆಸುವ ಕಾರ್ಯಕ್ರಮ ಪ್ರಾರಂಭಿಸಿತು. ಆದರೆ ಆ ಮೊದಲೇ ಕಂದಾಯ ಇಲಾಖೆ ನೌಕರ- ಅಧಿಕಾರಿಗಳು, ಅಲಕ್ಷ್ಯ ಮತ್ತು ಬೇಜವಾಬ್ದಾರಿ ವರ್ತನೆಯಿಂದ ಸಾವಿರಾರು ಎಕರೆ ಗೋಮಾಳ, ಮತ್ತು ಕೃಷಿಯೋಗ್ಯ ಜಮೀನನ್ನು ಕೂಡಾ ಸಿ ಮತ್ತು ಡಿ (ಅಂದರೆ ಬಂಜರು ಮತ್ತು ಕಲ್ಲು ಭೂಮಿ, ಏನೂ ಬೆಳೆಯಲಾಗದ್ದು) ಎಂದು ಗುರ್ತಿಸಿ ಅರಣ್ಯ ಇಲಾಖೆಗೆ ಕೊಟ್ಟಿದ್ದರು. ಹೆಚ್ಚಿನ ಕಡೆಗಳಲ್ಲಿಸ್ಥಳ ಪರೀಕ್ಷೆ ನಡೆಸದೆ ಕಛೇರಿಯಲ್ಲೇ ಕುಳಿತು ಸರ್ಕಾರಿಯೆಂದು ಕಂಡ ಸರ್ವೆ ನಂಬರುಗಳನ್ನೆಲ್ಲಾ ಬಂಜರೆಂದು ಗುರುತಿಸಿದ್ದರು.
ಸಾಮಾಜಿಕ ಅರಣ್ಯ ಮಾಡುತ್ತೇನೆಂದು ಇಲಾಖೆ ಗಿಡ ನೆಡಲು ಪ್ರಾರಂಭ ಮಾಡಿದಾಗ ಅದಕ್ಕೆ ವ್ಯಾಪಕವಾದ ವಿರೋಧ ವ್ಯಕ್ತವಾಯ್ತು. ಎಲ್ಲೆಲ್ಲಿ ರೈತ ಸಂಘ ಪ್ರಬಲವಾಗಿದೆಯೋ ಅಲ್ಲೆಲ್ಲೂ ಅರಣ್ಯ ಇಲಾಖೆಗೆ ಗಿಡ ನೆಡಲು ಸಾಧ್ಯವಾಗಲೇ ಇಲ್ಲ. ಯಾಕೆಂದರೆ ಇವರು ಗಿಡ ನೆಡಬೇಕೆಂದುಕೊಂಡ ಜಮೀನು ಕೃಷಿಯೋಗ್ಯ ಜಮೀನಾಗಿದ್ದು ದಾಖಲೆಯಲ್ಲಿ ಮಾತ್ರ ಬಂಜರಾಗಿತ್ತು. ಹಾಗಾಗಿ ದಾಖಲೆಯಲ್ಲಿರುವ ಸಿ ಮತ್ತು ಡಿ ವರ್ಗದ ಎಷ್ಟೋ ಜಮೀನು ಆಗಲೇ ಭೂಮಾಲಿಕರಿಂದ ಮತ್ತು ಸ್ವಲ್ಪಮಟ್ಟಿಗೆ ಭೂರಹಿತರಿಂದಲೂ ಒತ್ತುವರಿಯಾಗಿದ್ದವು. ಅಲ್ಲೆಲ್ಲೂ ರೈತ ಸಂಘದ ಕಾರ್ಯಕರ್ತರು ಗಿಡ ನೆಡಲು ಬಿಡಲೇ ಇಲ್ಲ. ಕೆಲವು ಕಡೆ ನೆಟ್ಟ ಗಿಡಗಳನ್ನು ಕಿತ್ತೆಸೆಯುವ ಕಾರ್ಯಕ್ರಮವೂ ನಡೆಯಿತು.

ನೆಲ 35 ವರ್ಷದ ಹಿಂದೆ ಹೀಗೆ ಬೋಳಾಗಿತ್ತು

ನೆಲ 35 ವರ್ಷದ ಹಿಂದೆ ಹೀಗೆ ಬೋಳಾಗಿತ್ತು

ಆದರೆ ಕೆಲವು ಕಡೆಗಳಲ್ಲಿ ನಿಜವಾದ ಬಂಜರು ಭೂಮಿ ಇತ್ತು ಇಂತಹ ನಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 700 ಎಕರೆಗಳಷ್ಟು ಬೋಳುಗುಡ್ಡವಿತ್ತು ಅಲ್ಲಿ ಹಲವಾರು ದಶಕಗಳಿಂದ ದನ ಮೇಯ್ದು ಬೋಳಾಗಿ ಸರಿಯಾಗಿ ಹುಲ್ಲು ಕೂಡಾ ಹುಟ್ಟುತ್ತಿರಲಿಲ್ಲ. ನಾವೊಂದಷ್ಟು ಜನ ಗೆಳೆಯರು ಇಂತಹ ಭೂಮಿಯಲ್ಲಿ ಗಿಡ ಬೆಳೆಯಲಿ ಮುಂದೆ ಇದು ನಮ್ಮದೇ ಊರಿನ ಆಸ್ತಿಯಾಗುತ್ತದೆ ಎಂದುಕೊಂಡು. ಅಲ್ಲಿ ಗಿಡನೆಡುವಂತೆ ಅರಣ್ಯ ಇಲಾಖೆಯವರನ್ನು ಕೇಳಿಕೊಂಡು ಬೆಂಬಲವಾಗಿ ನಿಂತೆವು. ಅದಕ್ಕೆ ಎರಡು ಕಾರಣಗಳಿದ್ದವು.

 

 

ಮೊದಲನೆಯದಾಗಿ ಆ ಬೋಳುಗುಡ್ಡಗಳಲ್ಲಿ ಹಸಿರೇ ಇರಲಿಲ್ಲ. ಬೇಸಗೆಯಲ್ಲಂತೂ ಪೂರ್ತಿ ನೆಲ ಕಾದು ಬಿಸಿಯಾಗಿ ಒಣಗಿರುತ್ತಿತ್ತು. ಅದರಲ್ಲಿ ಮಳೆನೀರೂ ಇಂಗುತ್ತಿರಲಿಲ್ಲ. ಎರಡನೆಯದಾಗಿ ನಮ್ಮ ಹಾಗೂ ಪಕ್ಕದ ಪಂಚಾಯತಿಗಳಲ್ಲಿ ಆ ಕಾಲಕ್ಕೇ ಜಮೀನಿಲ್ಲದ ಕೂಲಿಕಾರ್ಮಿಕರಿಗೆ ಜನತಾ ಮನೆಗಳನ್ನು ಕಟ್ಟಿಕೊಡುವ ಕಾರ್ಯಕ್ರಮ ಒಂದು ಚಳುವಳಿಯಂತೆ ನಡೆದು ನೂರಾರು ಮನೆಗಳಾಗಿ ಅವರೆಲ್ಲರಿಗೂ ಸೌದೆ ದೊರೆಯುವುದು ಸಮಸ್ಯೆಯಾಗಿತ್ತು. ಹತ್ತಿರದಲ್ಲೇ ಕೆಲಸಕ್ಕೇ ಹೋಗುವವರು, ಅವರು ಕೆಲಸಕ್ಕೆ ಹೋಗುತ್ತಿದ್ದ ಸ್ಥಳದಿಂದ (ಕಾಫೀ ತೋಟಗಳು) ಸೌದೆಯನ್ನು ತರುತ್ತಿದ್ದರು. ಆದರೆ ದೂರ ದೂರ ಕೆಲಸಕ್ಕೆ ಹೋಗುವವರು ಅಥವಾ ಬೇರೇನಾದರೂ ಸಣ್ಣಪುಟ್ಟ ಕೆಲಸ ಮಾಡುವ ಇತರರಿಗೆ ಸೌದೆಯಿಲ್ಲದೆ ಹತ್ತಿರ ತೋಟಗಳಲ್ಲಿ ಸೌದೆ ಕದಿಯುವುದು ಅನಿವಾರ್ಯವಾಗುತ್ತಿತ್ತು. ಊರಿನ ಪಕ್ಕದಲ್ಲೇ ಸಾಮಾಜಿಕ ಅರಣ್ಯವಾದರೆ ಸೌದೆ

 ನೆಡುತೋಪು ಇಂದು

ನೆಡುತೋಪು ಇಂದು

ಮತ್ತಿತರ ಅಗತ್ಯ ವಸ್ತುಗಳಾದ ಸೊಪ್ಪು, ಗಳ, ಕಂಬ ಇತ್ಯಾದಿಗಳ ಪೂರೈಕೆಗೂ ಅನುಕೂಲವಾಗುತ್ತಿತ್ತು.

 

 

ನಾವು ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿ ನಮ್ಮೂರಿನ ಬೋಳುಗುಡ್ಡಗಳಲ್ಲಿ ಗಿಡನೆಡುವಂತೆ ಕೇಳಿಕೊಂಡೆವು. ಅರಣ್ಯಾಧಿಕಾರಿಗಳು ಕೂಡಲೇ ಕೆಲಸ ಪ್ರಾರಂಭಿಸಿದರು. ನಾವು ರೈತ ಸಂಘದ ಸದಸ್ಯರೇ ಆಗಿದ್ದರೂ ಈ ವಿಚಾರದಲ್ಲಿ ಭಿನ್ನಾಭಿಪ್ರಾಯದಿಂದ ರೈತಸಂಘದೊಳಗೇ ಜಗಳ ಪ್ರಾರಂಭವಾಯಿತು. ನಾವು ಬೋಳುಗುಡ್ಡಗಳಲ್ಲಿ ಗಿಡನೆಡುವುದೇ ಸೂಕ್ತ ಎಂಬ ನಮ್ಮ ನಿಲುವಿನಿಂದ ಹಿಂದೆ ಸರಿಯದೆ ಬಲವಾಗಿ ನಿಂತೆವು.
ಆದರೆ ಆಗಲೂ ಅರಣ್ಯ ಇಲಾಖೆ ನೆಟ್ಟದ್ದು ಅಕೇಷಿಯಾವನ್ನೇ. ಅದರೊಂದಿಗೆ ಅರಣ್ಯ ಇಲಾಖೆಯಲ್ಲಿ ಗಿಡನೆಡುವ ಸಲುವಾಗಿ ತೆಗೆಯುವ ಅಡ್ಡ ಚರಂಡಿಯ ಮತ್ತು ಇತರ ಕೆಲಸಗಳ ಕೂಲಿ ವಿಚಾರದಲ್ಲಿ ಸುಳ್ಳು ಲೆಕ್ಕ ತೋರಿಸಿದ್ದಾರೆದು ತಕರಾರಾಗಿ ಮತ್ತೊಂದು ಹೋರಾಟಕ್ಕೆ ನಾವು ತಯಾರಾಗಬೇಕಾಯಿತು. ಅಂತೂ ಹೇಗೋ ನಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 400 ಎಕರೆಗಳಷ್ಟು ಅಕೇಷಿಯಾ ನೆಡುತೋಪು ನಿರ್ಮಾಣವಾಯಿತು. ಆವೇಳೆಗಾಗಲೇ ರೈತ ಸಂಘವೂ ದುರ್ಬಲವಾಗುತ್ತ ಬಂದಿತ್ತು.
ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಗೆ, ನಿಜವಾದ ಪರಿಸರ ಕಾಳಜಿಯುಳ್ಳವರೊಬ್ಬರು ವಲಯ ಅರಣ್ಯಾಧಿಕಾರಿಯಾಗಿ ಬಂದರು. ಆನಂತರದ ದಿನಗಳಲ್ಲಿ ಅವರು ಅಕೇಷಿಯಾದೊಂದಿಗೆ ಅನೇಕ ಬೇರೆ ಬೇರೆ ಸ್ಥಳೀಯ ಕಾಡು ಜಾತಿಯ ಗಿಡಗಳನ್ನೂ ನೆಡಿಸಿದರು. ಅವರಿದ್ದಾಗ ಕಳ್ಳನಾಟಾ ದಂದೆ ಮಾಡಿದವರನ್ನು ಎಳೆದು ತಂದು ಅವರ ಕೈಯಲ್ಲೇ “ಪ್ರಾಯಶ್ಚಿತ್ತ ಮಾಡಿಕೊಳ್ಳಿ” ಎಂದು ನೂರಾರು ಗಿಡಗಳನ್ನು ನೆಡಿಸುತ್ತಿದ್ದರು!.

 

ಆ ಅಧಿಕಾರಿ ವರ್ಗವಾದ ನಂತರ ಇಲಾಖೆ ಹಳೇ ಚಾಳಿಗೆ ಬಿತ್ತು. ಅಲ್ಲದೆ ಈಗ ಯಾರ ವಿರೋಧವೂ ಇಲ್ಲದ್ದರಿಂದ, ಖಾಲಿಯೆಂದು ಕಂಡ ಈಚಲು ದೀಣೆಗಳಲ್ಲೂ ಗಿಡನೆಟ್ಟು, ಈಚಲು ದೀಣೆಗಳು ನಾಶವಾಗಿ ಅದರೊಂದಿಗೆ ಅನೇಕ ಜಾತಿಯ ಕಾಡು ಹಣ್ಣುಗಳು, ಸಣ್ಣ ಪ್ರಾಣಿಗಳು ನಾಮಾವಶೇಷವಾದವು, ಎಷ್ಟೋ ಕಡೆಗಳಲ್ಲಿ ಖಾಲಿ ಬಿದ್ದಿದ್ದ ಹಿಡುವಳಿ ಜಾಗಗಳಲ್ಲೂ ಅಕೇಷಿಯಾ ನೆಟ್ಟರು. (ಈಗ ಅವೆಲ್ಲ ತಕರಾರಿನಲ್ಲಿದೆ) ಯಾಕೆಂದರೆ ಅಕೇಷಿಯಾ ಬೆಳೆದು ಖರ್ಚು ತೋರಿಸುವುದು ಸುಲಭದ ಕೆಲಸವಾಗಿತ್ತು.
ನಮ್ಮೂರ ಪಂಚಾಯತಿ ಕೇಂದ್ರದ ಪಕ್ಕದಲ್ಲೇ ಇರುವ ಅಗಲಟ್ಟಿ ಗ್ರಾಮದಲ್ಲಿ 250 ಎಕರೆಗಳಷ್ಟು ದೊಡ್ಡದಾದ ಅಕೇಷಿಯಾ ನೆಡುತೋಪು ಇದೆ. ಇದಕ್ಕೊಂದು ಗ್ರಾಮಾರಣ್ಯ ಸಮಿತಿಯೂ ಇದೆ. ಈ ನೆಲ 35 ವರ್ಷದ ಹಿಂದೆ ಒಂದು ಮರವೂ ಇಲ್ಲದ ಬೋಳುಗುಡ್ಡ ವಾಗಿತ್ತು. ನಮ್ಮಲ್ಲಿ ಕಾಡಿನಂತೆ ಬೆಳೆಯುವ ಲಂಟಾನ ಕೂಡಾ ಇಲ್ಲಿ ಬೆಳೆಯುತ್ತಿರಲಿಲ್ಲ.
ಲಂಟಾನದ ಬಗ್ಗೆ ಬೇರೆ ಬೇರೆ ಪ್ರದೇಶದ ರೈತರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಆದರೆ ಯಾಲಕ್ಕಿ ಮತ್ತು ಕಾಫಿ ಬೆಳೆಯುವ ನಮ್ಮ ತಾಲ್ಲೂಕುಗಳಲ್ಲಿ ಇದು ತುಂಬಾ ಉಪಕಾರಿ ಸಸ್ಯ. ಇದು ಬೆಳೆದಲ್ಲಿ ನೆಲ ಮೃದುವಾಗಿರುತ್ತದೆ. ಸಸಿ ಮಡಿಗಳಲ್ಲಿ ಕುಕ್ಕೆ ತುಂಬಲು ಲಂಟಾನ ಪೊದೆಗಳಿರುವ ಪ್ರದೇಶದ ಮಣ್ಣು ತುಂಬಾ ಒಳ್ಳೆಯದು. ಯಾಲಕ್ಕಿ-ಕಾಫೀ ಬೀಜ ಒಗ್ಗು ಹಾಕಿದಾಗ ಮಡಿಗಳಿಗೆ ಮುಚ್ಚಲು ಲಂಟಾನ ಕಡ್ಡಿಗಳನ್ನೇ ಬಳಸುತ್ತಾರೆ. ಇದರ ಪೊದೆಗಳ ಮಧ್ಯೆ ಹಕ್ಕಿಗಳಿಂದ ಬೀಜ ಪ್ರಸಾರವಾಗಿ ಇತರ ಗಿಡಗಳು ಹುಟ್ಟಿಬೆಳೆದು ಆ ನೆಲ ನಿಧಾನವಾಗಿ ಕಾಡಾಗುತ್ತದೆ. ಲಂಟಾನ ಈ ಪ್ರದೇಶದಲ್ಲಿ ಉಪಕಾರಿಯಾಗಿರಲು ಇಲ್ಲಿ ಬೀಳುವ ಹೆಚ್ಚು ಮಳೆಯೂ ಕಾರಣವಿರಬಹುದು. ಕಡಿಮೆ ಮಳೆಬೀಳುವ ಮತ್ತು ಒಣ ನೆಲದ ರೈತರು ಲಂಟಾನವನ್ನು ದೂರುವುದನ್ನು ಕೇಳಿದ್ದೇನೆ.
ನಮ್ಮ ಅಗಲಟ್ಟಿ ಗ್ರಾಮದ ನೆಡುತೋಪಿನಲ್ಲಿ ಹೆಚ್ಚಿನಂಶ ಅಕೇಷಿಯಾ ಮಾತ್ರವೇ ಇದ್ದರೂ ಅಲ್ಲಿ ಲಂಟಾನವೂ ಬೆಳೆಯತೊಡಗಿತು. ಅದರೊಂದಿಗೆ ಇತರ ಸಣ್ಣ ಪುಟ್ಟ ಗಿಡಗಳೂ ಮೊಳೆತವು. ಅಕೇಷಿಯಾ ಮೊದಲನೆಯ ಖಟಾವಿಗೆ ಬರುವ ವೇಳೆಗೆ ಅದರಡಿಯಲ್ಲಿ ಲಂಟಾನವೂ ಇತರ ಗಿಡಗಳೂ ವ್ಯಾಪಕವಾಗಿ ಬೆಳೆದಿದ್ದವು.
ಅಕೇಷಿಯಾ ಮೊದಲ ಖಟಾವಿನ ನಂತರ. ಈಗ ಮತ್ತೊಮ್ಮೆ ಬೆಳೆಯುತ್ತಿದೆ. ಆದರೆ ಇತರ ನೂರಾರು ಕಾಡು ಜಾತಿಯ ಗಿಡಮರಗಳು ಬೆಳೆದು ನಿಜವಾದ ಕಾಡಿನಂತೆ ಕಾಣತೊಡಗಿದೆ.
ಖ್ಯಾತ ಪರಿಸರವಾದಿ ಸುಂದರಲಾಲ ಬಹುಗುಣ ಅವರು ಗುಂಡ್ಯ ಜಲವಿದ್ಯುತ್ ಯೋಜನೆ ವಿರೋಧದ ಹೋರಾಟಕ್ಕೆ ಬಂದಾಗ ಒಂದು ರಾತ್ರಿ ನಮ್ಮೂರಿನಲ್ಲೂ ಉಳಿದಿದ್ದರು. ಈ ನೆಡುತೋಪಿನ ಪಕ್ಕದಲ್ಲೇ ಇರುವ ನಮ್ಮ ರಂಗಮಂದಿರದಲ್ಲಿ ಕುಳಿತು ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಗ್ರಾಮಸ್ಥರೊಬ್ಬರು, ಸುಂದರಲಾಲ ಬಹುಗುಣ ಬಂದದ್ದರಿಂದ ನೆಡುತೋಪಿಗೆ ಅವರ ಹೆಸರನ್ನಿಡಲು ಸೂಚಿಸಿದರು. ಅದಕ್ಕೆ ಉತ್ತರವಾಗಿ ಬಹುಗುಣ ಅವರು, ‘ನನ್ನ ಹೆಸರಿಡಬೇಡಿ ಇದು ನೆಡುತೋಪು, ಅಂದರೆ “ಟಿಂಬರ್ ಮೈನ್” ಇದನ್ನು ನಿಜವಾದ ಕಾಡಾಗಿ ಪರಿವರ್ತಿಸಿ.’ ಎಂದರು.

 

ನಮ್ಮೂರಿನಲ್ಲಿ ಸುಂದರಲಾಲ ಬಹುಗುಣ

ನಮ್ಮೂರಿನಲ್ಲಿ ಸುಂದರಲಾಲ ಬಹುಗುಣ

ನಮ್ಮೂರ ನೆಡುತೋಪು ನಿಧಾನವಾಗಿ ಕಾಡಾಗುತ್ತಿದೆ. ಈಗ ನಮ್ಮ ಮುಂದಿರುವ ಸವಾಲೆಂದರೆ ಎಲ್ಲೆಲ್ಲಿ ಅರಣ್ಯ ಲಾಖೆ ನೆಡುತೋಪುಗಳು ಇವೆಯೋ ಅಲ್ಲಿ ಅಕೇಷಿಯಾವನ್ನು ಖಟಾವು ಮಾಡಿ ಬೇರೆ ಜಾತಿ, ಅಂದರೆ ಆಯಾಪ್ರದೇಶದ ಸಸ್ಯಗಳನ್ನೇ ನೆಡಬೇಕು ಎಂದು ಒತ್ತಾಯಿಸುವುದು. ನಡು ನಡುವೆ ಒಂದೊಂದು ಅಕೇಷಿಯಾವೂ ಇದ್ದರೆ ತೊಂದರೆ ಏನಿಲ್ಲ. ಒಂದೇ ರೀತಿಯ (ಮೋನೋಕಲ್ಚರ್)ಸಸ್ಯಗಳನ್ನು ಬೆಳೆಸಲು ಅವಕಾಶ ಕೊಡಬಾರದು.

 

ಒಟ್ಟಾಗಿ ಹೋರಾಡಿ ಒತ್ತಾಯ ತಂದರೆ ಯಾವುದೂ ಅಸಾಧ್ಯವಲ್ಲ.

ಕಡಿಮೆ ಮಕ್ಕಳ ಶಾಲೆಗಳು: ಕೇವಲ ಭಾವನಾತ್ಮಕವಾಗಿ ನೋಡೋದು ಬೇಡ

– ಪ್ರಸಾದ್ ರಕ್ಷಿದಿ

ಈಗ ಶಾಲೆಗಳು ಪ್ರಾರಂಭವಾಗುವ ಸಮಯ. ಎಂದಿನಂತೆ ಸರಕಾರಿ ಶಾಲೆಗಳ ದುಸ್ಥಿತಿ, ಖಾಸಗಿ ಶಾಲೆಗಳ ಸುಲಿಗೆ, ತಾರತschool-3ಮ್ಯ ನೀತಿ, ಆರ್.ಟಿ.ಇ. ಗೆ ಸ್ಪಂದಿಸದಿರುವುದು. ಹಳ್ಳಿ ಮಕ್ಕಳ ಸಮಸ್ಯೆಗಳು ಎಲ್ಲವೂ ಚರ್ಚೆಗೆ ಬರುತ್ತವೆ. ಒಂದಿಷ್ಟು ಪ್ರತಿಭಟನೆ, ಭಾಷಣಗಳು, ಅಧಿಕಾರಸ್ಥರ ಹೇಳಿಕೆ ವಾದ-ವಿವಾದ, ವ್ಯಂಗ್ಯ ,ತಮಾಷೆಗಳೆಲ್ಲ ಮುಗಿದು ಯಥಾಸ್ಥಿತಿ ಮುಂದುವರಿಯುತ್ತದೆ. ಸರ್ಕಾರಿ ಶಾಲೆಗಳಲ್ಲಿ ಓದುವವರ ಸಂಖ್ಯೆ ಮತ್ತು ಹೊಸದಾಗಿ ದಾಖಲಾಗುವವರ ಸಂಖ್ಯೆ ಎರಡೂ ಇಳಿಯುತ್ತಿದೆ.

 

ಈಗಲೂ ಎಲ್ಲ ಕೊರತೆಗಳ ನಡುವೆಯೂ ಹಲವು ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿ ಕೆಲಸ ಮಾಡುತ್ತಿವೆ. ಕೆಳಮಧ್ಯಮ ಮತ್ತು ಬಡಜನರ ಮಕ್ಕಳೇ ಹೆಚ್ಚಾಗಿರುವ ಶಾಲೆಗಳ ಫಲಿತಾಂಶ ಮತ್ತು ಇತರ ಚಟುವಟಿಕೆಗಳೂ ಉತ್ತಮವಾಗಿವೆ. ಇದಕ್ಕೆ ಅಲ್ಲಿರುವ ಶಿಕ್ಷಕರು ಮತ್ತು ಪ್ರದೇಶದ- ಊರಿನ ಆಸಕ್ತ ಜನರೂ ಕಾರಣರಿರುತ್ತಾರೆ. ಆದರೆ ಈ ರೀತಿಯ ಶಾಲೆಗಳ ಸಂಖ್ಯೆಯೂ ಇಳಿಮುಖವಾಗುತ್ತಿದೆ.

 

ಇದಕ್ಕೆ ಹಲವಾರು ಕಾರಣಗಳನ್ನು ಹೇಳುತ್ತ ಹೋಗಬಹುದು. ಇಂದು ಇಡೀ ಭಾರತದ ಸಾಮಾಜಿಕ –ಸಾಂಸ್ಕೃತಿಕ, ಕೃಷಿ , ಉದ್ಯಮ ಎಲ್ಲವೂ ಖಾಸಗೀಕರಣಕ್ಕೊಳಗಾಗಬೇಕಾದ ಒತ್ತಡದಲ್ಲಿರುವಾಗ, ಶಿಕ್ಷಣ ಕ್ಷೇತ್ರ ಮಾತ್ರ ಇದಕ್ಕೆ ಹೊರತಾಗುವುದು ಹೇಗೆ. ಇಡೀ ಭಾರತವೇ ಕೆಲವೇ ಜನರ ಖಾಸಗಿ ಆಸ್ತಿಯಾಗುವತ್ತ ಸಾಗುತ್ತಿರುವಾಗ. ಶಿಕ್ಷಣ ಕ್ಷೇತ್ರವನ್ನು ಅದಕ್ಕೆ ಹೊರತಾಗಿ ಉಳಿಸಿಕೊಳ್ಳುವದಕ್ಕೆ ಬೇಕಾದ ಇಚ್ಛಾಶಕ್ತಿನ್ನಾಗಲೀ, ಜನಬಲವನ್ನಾಗಲೀ ನಾವು ಹೊಂದಿದ್ದೇವೆಯೆ?

 

ಅಧಿಕಾರವನ್ನು ಗಳಿಸಿದ ಹೊಸರಲ್ಲಿ ನಮ್ಮೂರಿಗೆ ಬಂದಿದ್ದ ರಾಜ್ಯ ಶಿಕ್ಷಣ ಸಚಿವರು, ನಮ್ಮೂರ ಶಾಲೆಯನ್ನು ನೋಡಿ ಸಂತೋಷ ಪಟ್ಟರು. ಹಾಗೇ ಖಾಸಗಿಯಾಗಿ ಮಾತನಾಡುತ್ತ. “ಎಲ್ಲ ಶಾಲೆಗಳನ್ನು ಉತ್ತಮ ಪಡಿಸಲು ಆರುಸಾವಿರ ಕೋಟಿ ರೂಗಳ ಅವಶ್ಯಕತೆಯಿದೆ, ನಮ್ಮಲ್ಲಿ ಅಷ್ಟು ಹಣವಿಲ್ಲ. ಅದಕ್ಕಾಗಿ, ಕಾರ್ಪೋರೇಟ್ ವಲಯದ ಸಹಾಯ ಕೇಳಲಿದ್ದೇನೆ” ಎಂದರು. ಅವರ ಉದ್ದೇಶವೇನೋ ಒಳ್ಳೆಯದೇ, ಆದರೆ ಇದೊಂದು ರೀತಿ ದೇಶವನ್ನೇ ಇನ್ನೊಬ್ಬನಿಗೆ ನೀಡಿ ಹತ್ತುಎಕರೆ ನೆಲವನ್ನು ಬೇಡಿದಂತಲ್ಲವೇ?

 

ಆಗಲೇ ಅವರು ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಮುಚ್ಚಿ ಆ ಮಕ್ಕಳಿಗೆ ವಾಹನದ ವ್ಯವಸ್ಥೆ ಮಾಡಿ ಒಂದು ಕೇಂದ್ರದಲ್ಲಿ ಶಾಲೆ ನಡೆಸುವ ಯೋಜನೆಯನ್ನು ಹೇಳಿದರು. ವಾಸ್ತವದಲ್ಲಿ ಇದು ಅವರ ಯೋಜನೆಯೇನಲ್ಲ. ಹಿಂದಿನ ಸರಕಾರವೂ ಈ ಮಾತನ್ನು ಹೇಳಿತ್ತು. ಮತ್ತು ಬುದ್ದಿಜೀವಿಗಳ ವಲಯದಿಂದ ವಿರೋಧವೂ ವ್ಯಕ್ತವಾಗಿತ್ತು.

 

ಆದರೆ ನಮ್ಮಲ್ಲಿ ಅನೇಕರು, ಗ್ರಾಮೀಣ ಪ್ರದೇಶಗಳ ವಾಸ್ತವವನ್ನು ಅರಿಯದೆ ಬೇರೆ ಬೇರೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಖಾಸಗಿ ಶಾಲೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಈ ರೀತಿಮಾಡಲಾಗುತ್ತಿದೆ. ಇದು ಕನ್ನschool-1ಡ ವಿರೋಧಿ ಮತ್ತು ಜನವಿರೋಧಿ ನೀತಿ ಎನ್ನುತ್ತಿದ್ದಾರೆ. ಇಂದು ಬರಗೂರು ರಾಮಚಂದ್ರಪ್ಪ ಮೊದಲಾದವರೂ ಸರ್ಕಾರಿ ಶಾಲೆ ಮುಚ್ಚಲು ತಮ್ಮ ವಿರೋಧವಿದೆ ಎನ್ನುತ್ತಿದ್ದಾರೆ. ಇದೆಲ್ಲದರ ನಡುವೆ ಹಲವು ಶಾಲೆಗಳು ಮಕ್ಕಳಿಲ್ಲದೆ ಖಾಲಿ ಬಿದ್ದಿವೆ.

 

ಅನೇಕ ಬಾರಿ ಒಳ್ಳೆಯ ಉದ್ದೇಶದಿಂದ ಮಾಡಿದ ಕೆಲಸಗಳಿಂದ ಒಳ್ಳೆಯದೇ ಆಗುತ್ತದೆಯೆಂಬ ಖಾತರಿಯೇನೂ ಇಲ್ಲ. ಇದಕ್ಕೆ ಆರ್. ಟಿ.ಇ.ಕಾನೂನು ಒಂದು ಉದಾಹರಣೆ. ಅದನ್ನು ಬಳಸಿಕೊಂಡೇ ಹಲವಾರು ಗ್ರಾಮೀಣ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳ ಮಕ್ಕಳನ್ನು ತಮ್ಮತ್ತ ಸೆಳೆದುಕೊಂಡರು. ಅಲ್ಲಿ ಸೇರಿದ ನಂತರವಷ್ಟೇ ಪೋಷಕರಿಗೆ ಅಲ್ಲಿನ ಬೇನಾಮಿ ಸುಲಿಗೆ ತಿಳಿಯಿತು. ಅದಲ್ಲದೆ, ಅಲ್ಲಿ ಈ ಬಡ ಮಕ್ಕಳು ತಾರತಮ್ಯ ಮತ್ತು ಅವಮಾನಕ್ಕೊಳಗಾಗುತ್ತಿದ್ದರೂ ಸಹ ತಮ್ಮ ಮಕ್ಕಳು ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದಾರೆಂಬ ಹುಸಿ ಹೆಮ್ಮೆಯಲ್ಲಿ ಕುಳಿತರು. ಅತಿ ಪ್ರತಿಷ್ಟಿತ ಶಾಲೆಗಳು ಆರ್.ಟಿ.ಇ.ಕಾನೂನಿಗೆ ಯಾವ ಕಿಮ್ಮತ್ತನ್ನೂ ಕೊಡದೆ ಕುಳಿತಿವೆ. ಅವರನ್ನು ಮಾತನಾಡಿಸುವ, ಕೇಳುವ ಧೈರ್ಯ ಯಾವ ಸರ್ಕಾರಕ್ಕೂ ಇಲ್ಲ. ಯಾಕೆಂದರೆ ಈ ಶಾಲೆಗಳ ಮಾಲೀಕರು, ಸರ್ಕಾರದಲ್ಲೂ ಪಾಲುದಾರರು.(ಆರ್.ಟಿ.ಇ.ಕಾನೂನಿನಿಂದಲೇ ನಗರಗಳಲ್ಲೂ ಅನೇಕ ಸರ್ಕಾರಿ ಶಾಲೆಗಳು ಕಲಿಯುವವರಿಲ್ಲದೆ ಹೇಗೆ ಬರಿದಾಗಿವೆಯೆಂಬುದನ್ನು ಗೆಳೆಯರೊಬ್ಬರು ಇತ್ತೀಚೆಗೆ ಫೇಸ್ ಬುಕ್ ನಲ್ಲಿ ವಿವರಿಸಿದ್ದರು)

 

ಇನ್ನೀಗ ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಮುಚ್ಚಿ ಒಂದೇ ಕೇಂದ್ರದಲ್ಲಿ ಶಾಲೆ ನಡೆಸುವ ಬಗ್ಗೆ. ಇದನ್ನು ನಾವು ಯಾವುದೇ ಪೂರ್ವಗ್ರಹವಿಲ್ಲದೆ ಯೋಚಿಸಿದರೆ ಒಳಿತು. ಹಿಂದೆಯೂ ಇದನ್ನು ಬುದ್ದಿಜೀವಿಗಳು ವಿರೋಧಿಸಿದ್ದರು ಇಂದೂ ವಿರೋಧಿಸುತ್ತಿದ್ದಾರೆ. ಆದರೆ ನಮ್ಮ ದೇಶದಂತಹ ಭೌಗೋಳಿಕವಾಗಿ ಸಾಮಾಜಿಕವಾ ಅಪಾರ ಭಿನ್ನತೆ, ವಿವಿಧತೆಗಳನ್ನು ಹೊಂದಿರು ನಾಡಿನಲ್ಲಿ ಅದು ಉದ್ಯೋಗ ಖಾತ್ರಿಯಿರಲಿ, ಅನ್ನಭ್ಯಾಗ್ಯವಾಗಿರಲಿ. ಅಥವಾ ಯಾವುದೇ ಸರ್ಕಾರದ ನೀತಿ ನಿಯಮಗಳಿರಲಿ ಪ್ರತಿಯೊಂದು ಪ್ರದೇಶಕ್ಕೂ ಅಲ್ಲಿನ ಅವಶ್ಯಕ್ಕೆ ತಕ್ಕಂತೆ ರೂಪಿಸುವುದು ಅಗತ್ಯ, ಹಾಗೆಯೇ ಅದನ್ನು ವಿರೋಧಿಸುವಾಗಲು ಸಾರಾಸಗಟಾಗಿ ವಿರೋಧಿಸದೆ. ತೊಂದರೆಯಾಗುವಲ್ಲಿ ಮಾತ್ರ ವಿರೋಧಿಸಬೇಕು. ಇಲ್ಲವಾದಲ್ಲಿ ನಮ್ಮ ಉದ್ದೇಶಕ್ಕೆ ವಿರುದ್ಧವಾದ ಫಲ ದೊರೆಯುತ್ತದೆ.

 

ಇದಕ್ಕೊಂದು ಉದಾಹರಣೆಯೆಂದರೆ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಇದು ಸುಮಾರು ಮೂವತ್ತು ವರ್ಷಗಳ ಹಿಂದೆ ಏಕೋಪಾದ್ಯಾಯ ಶಾಲೆಯಾಗಿ ಪ್ರಾರಂಭವಾಗಿ, ಇದೀಗ ಕೆಲವು ವರ್ಷಗಳಿಂದ, ನಮ್ಮತಾಲ್ಲೂಕಿನಲ್ಲಿ ಎರಡನೇ ಅತಿಹೆಚ್ಚು ಮಕ್ಕಳು ಕಲಿಯುತ್ತಿರುವ ಶಾಲೆಯಾಗಿದೆ. (ಕಳೆದ ಐದು ವರ್ಷಗಳಲ್ಲಿ ಇಲ್ಲಿಯೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸುತ್ತಲಿನ ಹಳ್ಳಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿದೆ). ಇದು ಪಂಚಾಯತ್ ಕೇಂದ್ರದಲ್ಲಿದ್ದು ಸುತ್ತ ಏಳುಗ್ರಾಮಗಳಲ್ಲಿ ಶಾಲೆಗಳಿವೆ, ಅವುಗಳಲ್ಲಿ ಮೂರು ಹಿರಿಯ ಪ್ರಾಥಮಿಕ ಶಾಲೆಗಳಾಗಿವೆ. ಅಲ್ಲಿ ಕಲಿಯುತ್ತಿರುವವರ ಸಂಖ್ಯೆ ಕ್ರಮವಾಗಿ ಏಳು, ಹನ್ನೊಂದು, ಇಪ್ಪತ್ಮೂರು, ಒಂಭತ್ತು, ಹದಿನೈದು, ನಲುವತ್ತೆರಡು, ಮತ್ತೊಂದರಲ್ಲಿ ಕೇವಲ ಮೂರು ಮಕ್ಕಳಿದ್ದಾರೆ. ಸರ್ಕಾರಿ ಕಾನೂನಿನಂತೆ ಈಗ ಏಕೋಪಾಧ್ಯಾಯ ಶಾಲೆ ಇರುವಂತಿಲ್ಲ. ಹಾಗಾಗಿ ಈ ಎಲ್ಲ ಶಾಲೆಗಳಲ್ಲೂ ಇಬ್ಬರು ಶಿಕ್ಷಕರು ಇರಲೇಬೇಕು (ಅದರೆ ಎಲ್ಲೂ ಇಲ್ಲ). ಕೇಂದ್ರ ಶಾಲೆಯಾದ ನಮ್ಮೂರ ಶಾಲೆಯಲ್ಲಿ ಸುಮಾರು ಇನ್ನೂರು ಮಕ್ಕಳಿದ್ದು ಆರು ಜನ ಶಿಕ್ಷಕರಿದ್ದಾರೆ. ಇವರಲ್ಲಿ ಒಬ್ಬರನ್ನೋ ಇಬ್ಬರನ್ನೋ ಪ್ರತಿದಿನ ಹತ್ತಿರದ ಶಾಲೆಗಳಿಗೆ ಡೆಪ್ಟೇಷನ್ ಮೇಲೆ ಕಳುಹಿಸುತ್ತಲೋ ಇನ್ನೊಬ್ಬರು ಶಾಲಾ ಸಂಬಂಧಿತ ಕೆಲಸ, ಮೀಟಿಂಗುಗಳಿಗೋ ಹೋಗುತ್ತಿರುತ್ತಾರೆ. (ಇದಲ್ಲದೆ ಅನೇಕ ಸರ್ಕಾರಿ ಕೆಲಸಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುವುದು ನಡೆದೇ ಇದೆ) ಹೀಗಾಗಿ ಇತ್ತ ಆ ಶಾಲೆಗಳಲ್ಲೂ ಪಾಠವಿಲ್ಲ. ಕೇಂದ್ರ ಶಾಲೆಯಲ್ಲೂ ಪಾಠವಿಲ್ಲದ ಸ್ಥಿತಿಯಿದೆ.

 

ಹತ್ತಿರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದೆರಡು ತರಗತಿಗಳಿಗೆ ಮಕ್ಕಳೇ ಇಲ್ಲ. ಹೊಸ ಯೋಜನೆಯಂತೆ ಇವುಗಳಲ್ಲಿ ಐದು ಶಾಲೆಗಳು ಮುಚ್ಚಿಹೋಗುತ್ತವೆ. ಆದರೆ ಅಲ್ಲಿಂದ ಹೆಚ್ಚುವರಿಯಾಗಿ ಆರುಜನ ಶಿಕ್ಷಕರು ದೊರೆಯುತ್ತಾರೆ. ಆ ಹಳ್ಳಿಗಳಲ್ಲಿ ಈಗ ಹಲವು ಶಾಲಾಕೊಠಡಿಗಳು ಖಾಲಿಬಿದ್ದಿವೆ. ಮತ್ತು ಇನ್ನೂಹೆಚ್ಚುವರಿ ಕೊಠಡಿಗಳನ್ನು ಕಟ್ಟಿ ‘ಬಿಲ್’ ವಿದ್ಯೆಯನ್ನು ಪ್ರದರ್ಶಿಸುತ್ತಿದ್ದಾರೆ. (ಈ ಎಲ್ಲ ಹಳ್ಳಿಗಳಿಗೂ ಈಗ ಖಾಸಗಿ ಶಾಲೆಯ ವಾಹನಗಳು ಬರುತ್ತಿವೆ. ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಿದ್ದಾರೆ) ಅಲ್ಲಿಯೇಶಾಲೆಯನ್ನು ಉಳಿಸಿಕೊಳ್ಳುವುದರಿಂದ ಯಾವುದೇ ಅನುಕೂಲವಿಲ್ಲ. ಇದನ್ನು ಭಾವನಾತ್ಮಕವಾಗಿ ನೋಡುವುದರಿಂದ ಖಂಡಿತ ಕನ್ನಡ ಶಾಲೆಗಾಗಲೀ. ಭಾಷೆಗಾಗಲೀ ಯಾವುದೇ ಪ್ರಯೋಜನವಿಲ್ಲ. ಒಂದುವೇಳೆ ಹತ್ತಿschool-4ದರಲ್ಲೆಲ್ಲೂ ಶಾಲೆಯೇ ಇಲ್ಲದಿದ್ದರೆ. ಮಕ್ಕಳ ಸಂಖ್ಯೆ ಕಡಿಮೆ ಇದ್ದರೂ ಆ ಶಾಲೆಯನ್ನು ಉಳಿಸಿಕೊಳ್ಳಬೇಕು.

 

ನಮ್ಮೂರು ಮಲೆನಾಡಿನ ಹಳ್ಳಿ . ಇಲ್ಲಿಗೆ ಅನ್ವಯಿಸಿದ್ದೇ ಇನ್ನೊಂದೆಡೆಗೆ ಅನ್ವಯಿಸಬೇಕಾಗಿಲ್ಲ. ಆದ್ದರಿಂದ ಇದನ್ನು ಭಾವನಾತ್ಮಕವಾಗಿ ಭಾಷಾ ಸಮಸ್ಯೆಯಾಗಿ ನೋಡದೆ. ಆಡಳಿತಾತ್ಮಕವಾಗಿ ಹೆಚ್ಚು ಪರಿಣಾಮಕಾರಿಯಾಗಿ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿ ನೋಡಬೇಕು. ಇಲ್ಲವಾದಲ್ಲಿ ನಾವು ಬಯಸಲಿ ಬಿಡಲಿ ಸರಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂಲೇ ಮುಚ್ಚುವ ಪ್ರಸಂಗ ಬರುತ್ತದೆ.

ಪೋಲೀಸ್ ಪ್ರತಿಭಟನೆ : ಒಂದು ಬದಿಯಲ್ಲಿ ನಪುಂಸಕತ್ವ, ಮತ್ತೊಂದು ಬದಿಯಲ್ಲಿ ಪುರುಷತ್ವ

– ಬಿ.ಶ್ರೀಪಾದ ಭಟ್

ನವೀನ್ ಸೂರಂಜೆಯವರು ’ಪೋಲೀಸ್ ಪ್ರತಿಭಟನೆ’ ಕುರಿತಾಗಿ ಬರೆಯುತ್ತಾ ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಆದರೆ ಅವರೇ ಸ್ವತ ತಮ್ಮ ಪ್ರಶ್ನೆಗಳ ಸುಳಿಗೆ ಬಲಿಯಾಗಿದ್ದಾರೆ. ನೋಡಿ ಅವರು ಪದೇ ಪದೇ ಪ್ರಭುತ್ವದ ಪದವನ್ನು ಬಳಸುತ್ತಾರೆ. ಆದರೆ ಈ ಪ್ರಭುತ್ವ ಮತ್ತು ಪ್ರಜೆ ಎನ್ನುವ ಸಂಘರ್ಷದ ಚರ್ಚೆ ತುಂಬಾ ಹಳೆಯದು ನಮ್ಮ ಮಿತಿಯ ಕಾರಣಕ್ಕಾಗಿ ಕ್ರಮೇಣ ಸವಕಲಾಗುತ್ತಿದೆ. ಏಕೆಂದರೆ ಪ್ರಭುತ್ವದ ಎಲ್ಲಾ ದೌರ್ಜನ್ಯಗಳನ್ನು ಮತ್ತು ಕ್ರೌರ್ಯವನ್ನು ಕ್ರಮೇಣ ವ್ಯವಸ್ಥೆಯು ಕೈಗೆತ್ತಿಕೊಳ್ಳುತ್ತದೆ. ಒಮ್ಮೆ ವ್ಯವಸ್ಥೆ ತನ್ನ ಹಾದಿಯಲ್ಲಿದೆ ಎಂದು ಗೊತ್ತಾದೊಡನೆ ಪ್ರಭುತ್ವ ಮತ್ತು ವ್ಯವಸ್ಥೆಯ ನಡುವಿನ ಹೆಣಿಗೆ ಊಹೆಗೂ ನಿಲುಕುವುದಿಲ್ಲ. ಇಲ್ಲಿ ನಾವು ಯುರೋಪಿಯನ್ ರಾಷ್ಟ್ರಗಳಿಂದ ಕಡತಂದ ಪ್ರಭುತ್ವದ ಪದಬಳಕೆಯನ್ನು KSP Recruitment 2015ಅದರ ಮೂಲ ಅರ್ಥದಲ್ಲಿ ಬಳಸಿದರೆ ಅಷ್ಟರಮಟ್ಟಿಗೆ ನಮ್ಮನ್ನು ಕತ್ತಲಲ್ಲಿ ಕೂಡಿ ಹಾಕಿಕೊಳ್ಳುತ್ತೇವೆ ಅಷ್ಟೆ. ಪಶ್ಚಿಮ ರಾಷ್ಟ್ರಗಳಲ್ಲಿ ಪ್ರಭುತ್ವದ ದೌರ್ಜನ್ಯಗಳು ವ್ಯವಸ್ಥೆಯ ಮನಸ್ಥಿತಿಯೊಂದಿಗೆ ಪರಸ್ಪರ ತಾಳೆಯಾಗುವ ರೀತಿಯೇ ಬೇರೆ ಅಥವಾ ಅನೇಕ ಬಾರಿ ಹೊಂದಿಕೊಂಡಿರುವುದಿಲ್ಲ. ಆದರೆ ಏಷ್ಯಾ ರಾಷ್ಟ್ರಗಳಲ್ಲಿ ಅದರಲ್ಲೂ ಭಾರತದಂತಹ ದೇಶದಲ್ಲಿ ಪ್ರಭುತ್ವದ ಕಣ್ಸನ್ನೆಯನ್ನು ವ್ಯವಸ್ಥೆ ಪಾಲಿಸುತ್ತಿರುತ್ತದೆ ಅಥವಾ ವ್ಯವಸ್ಥೆ ಪ್ರಭುತ್ವದ ಬಹುಪಾಲು ಕೆಲಸಗಳನ್ನು ಸ್ವತಃ ತಾನೇ ಕೈಗೆತ್ತಿಕೊಳ್ಳುತ್ತದೆ. ನಾವು ಇಂಡಿಯಾದಲ್ಲಿ ಬದುಕುತ್ತಾ ಕೇವಲ ಪ್ರಭುತ್ವವನ್ನು ಹೊಣೆಗಾರಿಕೆ ಮಾಡುವುದು ಬೇಜವಬ್ದಾರಿತನವಷ್ಟೆ.

ರೋಹಿತ ವೇಮುಲನ ಹತ್ಯೆ ವ್ಯವಸ್ಥೆಯ ಮೂಲಕ ನಡೆದ ಹತ್ಯೆ. ಕೆಲ್ವಿನ್ ಮಣಿ, ಲಕ್ಷ್ಮಣಪುರ ಬಾತೆ, ಕರಂಚೇಡು, ಕಂಬಾಲಪಲ್ಲಿ, ಖೈರ್ಲಾಂಜಿಯಲ್ಲಿ ದಲಿತರ ಕೊಲೆ ಮತ್ತು ಹತ್ಯಾಕಾಂಡವನ್ನು ವ್ಯವಸ್ಥೆ ಮುಂಚೂಣಿಯಲ್ಲಿ ನಿಂತು ನಡೆಸಿತ್ತು. ಪ್ರಭುತ್ವ ತನ್ನ ಮೌನ ಬೆಂಬಲ ನೀಡಿತ್ತು. 1984ರ ಸಿಖ್‌ರ ಹತ್ಯಾಕಾಂಡ ವ್ಯವಸ್ಥೆ ನಡೆಸಿದ ಹತ್ಯಾಕಾಂಡ. ಪ್ರಭುತ್ವ ನೇರ ಬೆಂಬಲ ಸೂಚಿಸಿತ್ತು. 2002ರ ಗುಜರಾತ್ ಹತ್ಯಾಕಾಂಡದಲ್ಲಿ ಅಲ್ಲಿನ ವ್ಯವಸ್ಥೆ ಮುಂಚೂಣಿಯಲ್ಲಿದ್ದರೆ ಪ್ರಭುತ್ವವು ಅದರ ಬೆಂಬಲವಾಗಿ ಬೆನ್ನ ಹಿಂದಿತ್ತು. naveen-soorinjeಇಂತಹ ನೂರಾರು ಉದಾಹರಣೆಗಳನ್ನು ಕೊಡಬಹುದು. ಅಷ್ಟೇಕೆ ಸ್ವತಃ ನವೀನ್ ಸೂರಿಂಜೆಯವರನ್ನು ಹೋಮ್ ಸ್ಟೇ ಪ್ರಕರಣದಲ್ಲಿ ಬಂದಿಸಿದ್ದು ಪ್ರಭುತ್ವವಾದರೂ ಅವರನ್ನು ತಪ್ಪಿತಸ್ಥರೆಂದು ಅಪಪ್ರಚಾರ ಮಾಡಿದ್ದು ಅಲ್ಲಿನ ಮತೀಯವಾದಿ ವ್ಯವಸ್ಥೆ. ನಾವು ಪ್ರಭುತ್ವ ಮತ್ತು ವ್ಯವಸ್ಥೆಯ ನಡುವಿನ ಈ ಸಂಕೀರ್ಣ ಆದರೆ ಅಪಾಯಕಾರಿ ಹೊಂದಾಣಿಕೆಯ, ಬದಲಾಗುತ್ತಿರುವ ಹೊಣೆಗಾರಿಕೆಯ ಅರಿವಿಲ್ಲದೆ ಮಾತನಾಡಿದರೆ ಹಾದಿ ತಪ್ಪಿದಂತೆಯೇ.

ಏಕೆಂದರೆ ನವೀನ್ ಅವರು ನೇರವಾಗಿ ಪೋಲೀಸ್ ವ್ಯವಸ್ಥೆಯನ್ನು ಪ್ರಭುತ್ವದ ರೂಪದಲ್ಲಿ ನೋಡುತ್ತಾ ಅಲ್ಲಿನ ಶ್ರೇಣೀಕೃತ ವ್ಯವಸ್ಥೆಯಾದ ಕಮೀಷನರ್, ಇನ್ಸ್‍ಪೆಕ್ಟರ್ ಜನರಲ್, ಡಿಸಿಪಿ, ಎಸಿಪಿ ಜೊತೆಜೊತೆಗೆ ಕಾನ್ಸಟೇಬಲ್ ಮತ್ತು  ಆರ್ಡಲೀಗಳನ್ನು ಪ್ರತಿಭಟನೆಯ ಹಿನ್ನೆಲೆಯಲ್ಲಿ ಒಂದೇ ತಕ್ಕಡಿಯಲ್ಲಿ ತೂಗಿರುವುದೇ ದೋಷಪೂರಿತವಾದದ್ದು. ಏಕೆಂದರೆ ಜೂನ್ 4ರಂದು ಪ್ರತಿಭಟನೆ ಮಾಡುತ್ತಿರುವವರು ಕೆಳ ಶ್ರೇಣಿಯ ಕಾನ್ಸಟೇಬಲ್ ಮತ್ತು  ಆರ್ಡಲೀಗಳು. ಅವರನ್ನು ಪ್ರಭುತ್ವವೆಂದು ನೋಡುವುದೇ ನಮಗೆ ನಾವು ಮಿತಿಯನ್ನು ಹಾಕಿಕೊಂಡಂತೆ. ಅವರಿಗೆ ಕೆಲಸಕ್ಕೆ ಸೇರುವಾಗ ಪೋಲೀಸ್ ವ್ಯವಸ್ಥೆಯ ನಿಯಮಗಳ ಅರಿವಿರಲಿಲ್ಲವೇ, ಅದು ಅನಿವಾರ್ಯವೆಂದು ಗೊತ್ತಿಲ್ಲವೇ ಎಂದು ನವೀನ್ ಪ್ರಶ್ನಿಸುತ್ತಾರೆಂದರೆ karnataka-policeನನಗೆ ಅಶ್ಚರ್ಯವಾಗುತ್ತದೆ. ಪ್ರೊಲಿಟರೇಯನ್ ಬದುಕು ಹೇಗೆ ಮತ್ತು ಯಾವ ರೀತಿ ರೂಪುಗೊಳ್ಳುತ್ತಾ ಹೋಗುತ್ತದೆ ಎಂದು ಗೊತ್ತಿದ್ದೂ ನವೀನ್ ಈ ಪ್ರಶ್ನೆ ಎತ್ತಿದ್ದು ದರ್ಪದಂತೆ ಕಾಣುತ್ತದೆ. ಏಕೆಂದರೆ ಕಾರ್ಖಾನೆಗೆ ಕೆಲಸಕ್ಕೆ ಸೇರಿಕೊಳ್ಳುವ ಕಾರ್ಮಿಕರಿಗೂ ಅಲ್ಲಿನ ಬಂಡವಾಳಶಾಹಿ ಮಾಲೀಕನ ಎಲ್ಲಾ ದೌರ್ಜನ್ಯಗಳ, ಕ್ರೌರ್ಯದ ಪರಿಚಯವಿರುತ್ತದೆ. ಆದರೆ ಕಾರ್ಮಿಕರಿಗೆ ನಿನಗೆ ಗೊತ್ತಿದ್ದೂ ಹೇಗೆ ಸೇರಿಕೊಂಡೆ, ಅಲ್ಲಿ ಸೇರಿಕೊಂಡು ಮಾಲೀಕನ ವಿರುದ್ಧ ಪ್ರತಿಭಟಿಸುವುದೂ ಅನ್ಯಾಯ ಎನ್ನುವುದೇ ಅಮಾನವೀಯ. ಪ್ರೊಲಿಟೇರಿಯನ್‌ನ ಬದುಕು ಅವದಾಗಿರುವುದಿಲ್ಲ. ಅವನ ಆಯ್ಕೆ ಅವನದಾಗಿರುವುದಿಲ್ಲ. ಆವನ ನಡತೆ ಅವನದಾಗಿರುವುದಿಲ್ಲ. ವ್ಯವಸ್ಥೆ ಅವನಿಗೆ ಕನಿಷ್ಠ ಮಾನವಂತನಾಗಿ ಬದುಕಲು ಬಿಡಲಾರದಷ್ಟು ಕಟುವಾಗಿರುತ್ತದೆ. ನವೀನ್ ಹೇಳುವ ಹತ್ತನೇ ತರಗತಿ ಓದಿನ ಕಾನ್ಸಟೇಬಲ್‌ಗಳು ಮತ್ತು ಆರ್ಡಲೀಗಳನ್ನು ಈ ಹಿನ್ನೆಲೆಯಲ್ಲಿ ನೋಡಬೇಕು. ಅನಿವಾರ್ಯ ಆಯ್ಕೆಗೆ ಬಲಿಯಾಗಿ ಪೋಲೀಸ್ ವ್ಯವಸ್ಥೆಗೆ ಸೇರಿಕೊಳ್ಳುತ್ತಾನೆ. ಅದರ ಭಾಗವಾಗುತ್ತಾನೆ. ಕ್ರೌರ್ಯಕ್ಕೆ ಬಲಿಯಾಗುತ್ತಾನೆ. ಕ್ರೌರ್ಯದ ಮುಖವಾಗುತ್ತಾನೆ. ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಗೋವಿಂದ ನಿಹಾಲನಿಯವರ “ಅರ್ಧಸತ್ಯ” ಸಿನಿಮಾವನ್ನು ನೋಡಲೇಬೇಕು. ಆ ಸಿನಿಮಾದಲ್ಲಿ ಬಳಸಿಕೊಂಡ ಖ್ಯಾತ ಮರಾಠಿ ಕವಿ ದಿಪೀಪ್ ಚಿತ್ರೆ ಬರೆದ ಕೆಲ ಸಾಲುಗಳು ಹೀಗಿವೆ:

ಚಕ್ರವ್ಯೂಹದ ಒಳಗಿದ್ದರೂ ಸಹಿತ
ಸಾಯುತ್ತೇನೆಯೋ ಅಥವಾ ಸಾಯಿಸುತ್ತೇನೆಯೋ
ಇದರ ಕುರಿತಾಗಿಯೂ ನಿರ್ಧರಿಸಲಾಗಲಿಲ್ಲ

ಒಂದು ಬದಿಯಲ್ಲಿ ನಪುಂಸಕತ್ವವನ್ನು
ಮತ್ತೊಂದು ಬದಿಯಲ್ಲಿ ಪುರುಷತ್ವದೊಂದಿಗೆ ಸಮವಾಗಿ ತೂಗುತ್ತ
ನ್ಯಾಯ ತಕ್ಕಡಿಯ ಈ ಮೊನೆಯು
ನಮಗೆ ಅರ್ಧಸತ್ಯದ ಕಡೆಗೆ ಬೆರಳು ತೋರಿಸುತ್ತದೆ

ಇಡೀ ಪೋಲೀಸ್ ವ್ಯವಸ್ಥೆ ಪ್ರಭುತ್ವದ ಅಡಿಯಲ್ಲಿ “ಒಂದು ಬದಿಯಲ್ಲಿ ನಪುಂಸಕತ್ವ ಮತ್ತೊಂದು ಬದಿಯಲ್ಲಿ ಪುರುಷತ್ವದೊಡನೆ ತೂಗುತ್ತಿರುತ್ತದೆ.” ಇದರ ಮೊದಲ ಮತ್ತು ನಿರಂತರ ಬಲಿಪಶುಗಳು ಪೋಲೀಸ್ ಪೇದೆಗಳು ಮತ್ತು ಕೆಳಹಂತದ ಅಧಿಕಾರಿಗಳು. ಅವರು ಠಾಣೆಯಲ್ಲಿ ನಿರಪರಾಧಿ ಕೈದಿಗಳ ಮೇಲೆ ನಡೆಸುವ ದೌರ್ಜನ್ಯ, ಲಾಕಪ್ ಡೆತ್, ಪ್ರತಿಭಟನೆಕಾರರ ಮೇಲೆ ನಡೆಸುವ ಹಲ್ಲೆಗಳು, ಗೋಲೀಬಾರು, ನಕಲಿ ಎನ್‌ಕೌಂಟರ್‌ಗಳು, Ardh_Satya,_1982_fimಎಲ್ಲವೂ ವ್ಯವಸ್ಥೆಯ ಪ್ರತಿನಿಧಿಯಾಗಿ ನಡೆಸುತ್ತಾರೆ ಹೊರತಾಗಿ ಪ್ರಭುತ್ವದ ಪ್ರತಿನಿಧಿಯಾಗಿ ಅಲ್ಲವೇ ಅಲ್ಲ. ನಂತರ ತಮ್ಮ ಕೃತ್ಯಗಳಿಗೆ ಪ್ರಭುತ್ವನ್ನು ಗುರಾಣಿಯಂತೆ ಬಳಸಿಕೊಳ್ಳುತ್ತಾರೆ. ಇದನ್ನು ನಿಹಾಲನಿ ಅರ್ಧಸತ್ಯ ಸಿನಿಮಾದಲ್ಲಿ ಸಮರ್ಥವಾಗಿ ಕಟ್ಟಿದ್ದಾರೆ. ಇತ್ತೀಚೆಗೆ ಪತ್ರಕರ್ತೆ ರಾಣಾ ಅಯೂಬ್ ಅವರ “ಗುಜರಾತ್ ಫೈಲ್ಸ್” ಎನ್ನುವ ಪುಸ್ತಕ ಬಿಡುಗಡೆಯಾಗಿದೆ. ಅದರಲ್ಲಿ ಅವರು 2002 ರ ಮುಸ್ಲಿಂ ಹತ್ಯಾಕಾಂಡ, ಇಶ್ರಾನ್ ಎನ್‌ಕೌಂಟರ್, ಸೊಹ್ರಾಬುದ್ದೀನ್ ಎನ್‌ಕೌಂಟರ್‌ನ ಸಂದರ್ಭಗಳ ಮತ್ತು ಆ ನಂತರದ ದಿನಗಳ ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಅದು ನಿಜಕ್ಕೂ ಮೈ ನಡುಗಿಸುತ್ತದೆ. ಅಲ್ಲಿನ ಬಹುತೇಕ ಪೋಲೀಸ್ ಅಧಿಕಾರಗಳು ತಳ ಸಮುದಾಯದಿಂದ ಬಂದವರು. ವ್ಯವಸ್ಥೆಯ ಭಾಗವಾಗಿಯೇ ಗುಜರಾತ್ ಹತ್ಯಾಕಾಂಡ ಮತ್ತು ಎನ್‌ಕೌಂಟರ್‌ಗಳಲ್ಲಿ ಭಾಗಿಯಾಗುತ್ತಾರೆ ಮತ್ತು ಪ್ರಭುತ್ವದ ದಾಳವಾಗಿ ಬಳಕೆಯಾಗುತ್ತಾರೆ. ಪ್ರಭುತ್ವ ಮತ್ತು ವ್ಯವಸ್ಥೆಯ ನಡುವಿನ ಸಂಕೀರ್ಣ ಸಂಬಂಧಗಳನ್ನು ಈ ಪುಸ್ತಕದಲ್ಲಿ ತಮ್ಮ ಪತ್ರಕರ್ತರ ಅನುಭವದ ಮೂಲಕ ರಾಣಾ ಅಯೂಬ್ ಸಮರ್ಥವಾಗಿ ತೋರಿಸಿದ್ದಾರೆ.

ಹೀಗಾಗಿ ನವೀನ್ ಅವರು ಪೋಲೀಸ್ ವ್ಯವಸ್ಥೆಯನ್ನು ಏಕಪಕ್ಷೀಯವಾಗಿ ಪ್ರಭುತ್ವದ ಸ್ಥಾನದಲ್ಲಿ ನಿಲ್ಲಿಸಿಕೊಂಡು ವಿಮರ್ಶಿಸತೊಡಗಿದೊಡನೆ ಸ್ವತ ತಮಗೆ ತಾವೇ ಲಕ್ಷ್ಮಣರೇಖೆಯನ್ನು ಎಳೆದುಕೊಂಡುಬಿಡುತ್ತಾರೆ. ಹೀಗಾಗಿಯೇ ಎಡಪಂಥೀಯರು ಪ್ರಭುತ್ವವನ್ನು ಸಂತ್ರಸ್ಥರ ಸ್ಥಾನದಲ್ಲಿ ನಿಲ್ಲಿಸುತ್ತಿದೆ ಎಂದು ತಪ್ಪಾಗಿ ಅರ್ಥೈಸುತ್ತಾರೆ. ಮಸಲ ನಾಳೆ ಯು.ಟಿ.ಖಾದರ್‌ಗೆ ಅನ್ಯಾಯವಾದಾಗ ಅವರ ಪರವಾಗಿ ಸಮರ್ಥನೆಗೆ ನಿಂತಾಗ ನಾವು ಪ್ರಭುತ್ವವನ್ನು ಬೆಂಬಲಿಸಿದಂತಾಗುತ್ತದೆಯೇ? ಅಥವಾ ಮಂಗಳೂರಿನ ಡಿ.ಸಿ.ಇಬ್ರಾಹಿಂ ಅವರಿಗೆ ಆದ ಅನ್ಯಾಯವನ್ನು ಪ್ರತಿಭಟಿಸಿದರೆ ಅದು ಪ್ರಭುತ್ವವನ್ನು ಸಂತ್ರಸ್ಥರನ್ನಾಗಿಸುತ್ತದೆಯೇ?

ಇನ್ನು ಪೋಲೀಸರ ಬೇಡಿಕೆಗಳ ಕುರಿತಾಗಿ ಅವರ ಸಂಬಳದ ಕುರಿತಾಗಿ ಮಾತನಾಡುವುದು ಔಚಿತ್ಯವೇ ಅಲ್ಲ. ಅಲ್ಲರೀ ದಿನವಿಡೀ ಬಿಸಿಲಲ್ಲಿ ದುಡಿಯುವವನಿಗೆ ನಿನಗೆ 18000 ಸಂಬಳ ಸಾಕಲ್ವೇನಯ್ಯ ಎಂದು ನವೀನ್ ಹೇಳುತ್ತಾರೆಂದು ನಾನು ನೆನಸಿರಲಿಲ್ಲ.

ಕಡೆಯದಾಗಿ ಪೋಲೀಸ್ ವ್ಯವಸ್ಥೆಯಿಂದ ನಡೆಯುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು,ದೌರ್ಜನ್ಯವನ್ನು,ಹತ್ಯಾಕಾಂಡಗಳನ್ನು ಈ ಪೇದೆಗಳು ಮತ್ತು ಆರ್ಡಲೀಗಳು ನಡೆಸುತ್ತಿರುವ ಪ್ರತಿಭಟನೆಗೆ ತಳುಕು ಹಾಕುವುದು ಸಂಪೂರ್ಣವಾಗಿ ಅರ್ಥಹೀನ ಮತ್ತು ಅಮಾನವೀಯ.

ಪ್ರಭುತ್ವ, ಪೋಲಿಸ್ ವ್ಯವಸ್ಥೆ ಮತ್ತು ಪ್ರತಿಭಟನೆ


– ಶ್ರೀಧರ್ ಪ್ರಭು


ಪತ್ರಕರ್ತ ನವೀನ ಸೂರಿಂಜೆ ಅವರು ವರ್ತಮಾನದಲ್ಲಿ ಬರೆದ ಪೋಲಿಸರೇ ಸಂತ್ರಸ್ತರಾಗುವ ಅಪಾಯ: ಎಡಪಂಥೀಯರ ಕೊಡುಗೆ ಲೇಖನದಲ್ಲಿ ಪೋಲಿಸ್ ಪ್ರತಿಭಟನೆಯ ವಿಚಾರವನ್ನು ತುಂಬಾ ಅರ್ಥಪೂರ್ಣವಾಗಿ ವಿಶ್ಲೇಷಿಸಿ ಬರೆದಿದ್ದಾರೆ. ಅವರೆಲ್ಲಾ ವಿಚಾರಗಳಿಗೂ ಸಂಪೂರ್ಣ ಸಹಮತಿ ಸೂಚಿಸುತ್ತಾ, ನನ್ನ ಕೆಲವು ಮಾತುಗಳನ್ನು ಸೇರಿಸುತ್ತಿದ್ದೇನೆ.

೧೯೧೭ ರಲ್ಲಿ ‘ಪ್ರಭುತ್ವ ಮತ್ತು ಕ್ರಾಂತಿ’ ಎಂಬ ತಮ್ಮ ಅಗ್ರ ಲೇಖದಲ್ಲಿ ಲೆನಿನ್ ಹೇಳುತ್ತಾರೆ: “A standing army and police are the chief instruments of state power.” ಪೋಲಿಸ್ ವ್ಯವಸ್ಥೆ ಪ್ರಭುತ್ವದ ಪ್ರಮುಖ ಅಸ್ತ್ರ. ಪೋಲೀಸರ ಪರವಾಗಿ ರಾಜಕೀಯ ಪಕ್ಷ ಮತ್ತು ಸಂಘಟನೆಗಳು ಜೊತೆಗೂಡಿ ಸೇನೆಯ ಅಥವಾ ಪೋಲೀಸರ ‘ಮುಕ್ತಿಗೆ’ ನಿಲ್ಲುವುದು ಅತ್ಯಂತ ದೊಡ್ಡ ಅಭಾಸ. ಪೇದೆಗಳು, ಕೆಳಹಂತ, ಮೇಲು ಹಂತ ಎಂದೆಲ್ಲಾ ಕೂದಲು ಸೀಳಿ ವಿಂಗಡಣೆ ಮಾಡುವುದು ಪ್ರಭುತ್ವದ ಒಂದು ಸಮಷ್ಟಿಪೂರ್ಣ ಸ್ವರೂಪವನ್ನು ಕೈ, ಕಾಲು, ತಲೆ ಎಂದೆಲ್ಲಾ ವಿಂಗಡಣೆ ಮಾಡುವ ರೀತಿ ಅನರ್ಥಪೂರ್ಣವಾದದ್ದು.

ನವೀನ್ ಸೂರಿಂಜೆ ಅವರು ಹೇಳುವ ಹಾಗೆ ಇಂದು ಧರ್ಮ ಮತ್ತು ಜಾತಿಯನ್ನು ಬಳಸಿ ಸಮಾಜದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವ ‘ಸಾಮಾಜಿಕ ಪೋಲಿಸ’ ರೊಂದಿಗೆ ಪ್ರಭುತ್ವದ ಪೊಲೀಸರು ಒಟ್ಟು ಸೇರಿದ್ದಾರೆ. ಹೀಗಾಗಿ, ಪೋಲೀಸರ ಬಗೆಗಿನ ಸಹಾನುಭೂತಿ ಪ್ರಭುತ್ವದ ಕುರಿತ ಸಹಾನುಭೂತಿಯೇ.

ಸಮಾಜದ ಎಲ್ಲ ವರ್ಗ ವಿಭಾಗಗಳಿಗೂ ಸಂಘಟನೆಯ ಹಕ್ಕಿದೆ. ನಿಜ. Police Forces (Restriction of Rights) Act, 1966 ಎಂಬ ಕಾಯಿದೆಯcaste-riot-police ಪ್ರಕಾರ ಪೊಲೀಸರು ಯಾವುದೇ ರಾಜಕೀಯ ಅಥವಾ ಕಾರ್ಮಿಕ ಸಂಘಟನೆಯ ಸದಸ್ಯರಾಗಲು ಕೇಂದ್ರ ಸರಕಾರದ ಅನುಮತಿ ಅವಶ್ಯಕ. ಕಾನೂನಿನಲ್ಲಿ ಇವರು ಸಂಘಟನೆಗಳನ್ನು ಸ್ಥಾಪಿಸಬಹುದು. ಆದರೆ ಈ ಸಂಘಟನೆಗೆ ಇಲಾಖೆ ಮಾನ್ಯತೆ ಕೊಟ್ಟಿರಬೇಕು. ಇಷ್ಟು ಬಿಟ್ಟರೆ ಪೊಲೀಸರಿಗೆ ಮುಷ್ಕರ, ಪ್ರತಿಭಟನೆ ಇತ್ಯಾದಿ ನಡೆಸುವ ಹಕ್ಕಿಲ್ಲ. ಈ ಕಾಯಿದೆ ಇಂದು ಎಡಪಂಥೀಯ ಆಡಳಿತವಿದ್ದ ರಾಜ್ಯಗಳಲ್ಲೂ ಜಾರಿಯಲ್ಲಿದೆ. ಇದನ್ನು ಬದಲಾಯಿಸಲು ಯಾವ ಸರಕಾರಗಳೂ ಪ್ರಯತ್ನಿಸಿಲ್ಲ. ಎಡ ಪಕ್ಷಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಪೋಲಿಸ್ ವ್ಯವಸ್ಥೆಯನ್ನು ಮಾನವೀಯವಾಗಿಸಲು ತಮ್ಮ ಸರಕಾರದ ಹಂತದಲ್ಲಿ ಏನೇನು ಕ್ರಮ ಕೈಗೊಂಡಿದ್ದಾರೆ ಮೊದಲು ಸ್ಪಷ್ಟಪಡಿಸಬೇಕು. ಒಂದು ವೇಳೆ ಈ ರೀತಿ ಪೋಲಿಸರ ಪ್ರತಿಭಟನೆ ಎಡ ಪಕ್ಷಗಳು ಆಡಳಿತವಿರುವ ಕೇರಳದಲ್ಲಿ ನಡೆದರೆ ಇವರ ನಿಲುವೇನು ಎನ್ನುವುದನ್ನೂ ಸ್ಪಷ್ಟಪಡಿಸಬೇಕು.

ಬಂಡವಾಳಷಾಹಿ, ಕೋಮುವಾದಿ ಮತ್ತು ಮನುವಾದಿ ವ್ಯವಸ್ಥೆಯನ್ನು ಕಾಪಾಡಲು ಪೋಲಿಸ್ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಪೋಲಿಸ್ ವ್ಯವಸ್ಥೆ ಕೇವಲ ಒಂದು ನಿರ್ಜೀವ ಯಂತ್ರವಲ್ಲ. ಈ ಬಂಡವಾಳಷಾಹಿ, ಕೋಮುವಾದಿ ಮತ್ತು ಮನುವಾದಿ ವ್ಯವಸ್ಥೆಯನ್ನು ಅಂತರಿಕವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ಪೋಲಿಸ್ ವ್ಯವಸ್ಥೆ ಪ್ರಯತ್ನಪೂರ್ವಕವಾಗಿ ಗಟ್ಟಿಗೊಳಿಸುತ್ತಿದೆ. ಇಂತಹ ಪ್ರಭುತ್ವವಾದಿ ಶಕ್ತಿಗಳನ್ನು ಪ್ರತಿನಿಧಿಸುವ ಮತ್ತು ಪೋಷಿಸುವ ಪೋಲೀಸರನ್ನು ಬೆಂಬಲಿಸಲು ಹೊರಟರೆ ಪ್ರಭುತ್ವವಾದಿ ಶಕ್ತಿಗಳಿಗೆ ಬಲಬರುವುದು.

ಪೋಲಿಸ್ ವ್ಯವಸ್ಥೆಯನ್ನು ‘ಮಾನವೀಯಗೊಳಿಸಲು’ ಒಂದು ಪಕ್ಷ ಮತ್ತು ರಾಜಕೀಯ ಪ್ರೇರಿತ ಸಂಘಟನೆಗಳ ರಾಜಕೀಯ ಪ್ರತಿಭಟನೆಗಳು ಹೇಗೆ ಸಹಕಾರಿಯಾದಾವು ಎಂಬ ಬಗೆಗೆ ಗಂಭೀರ ಭಿನ್ನಾಭಿಪ್ರಾಯಗಳಿವೆ. ಪೋಲಿಸ್ ವ್ಯವಸ್ಥೆಯ ನಡುವೆಯೇ ಮನುವಾದಿ ಮತ್ತು ಪ್ರಭುತ್ವದ ಪರ ರಾಜಕೀಯ ಮತ್ತಷ್ಟು ಬೇರೂರಲು ಇದು ಕಾರಣವಾಗುತ್ತದೆ.

ಇಂದು ಕರ್ನಾಟಕದಲ್ಲಿ ಪೋಲಿಸ್ ಮುಷ್ಕರಕ್ಕೆ ನೇತೃತ್ವ ಕೊಡಲು ಹೊರಟಿರುವ ಹಿಂದಿನ ಶಕ್ತಿಗಳ ಬಗೆಗೆ ಅನೇಕ ಅನುಮಾನಗಳಿವೆ. indian-policeಇವರೊಂದಿಗೆ ಎಡ ಮತ್ತು ಪ್ರಜಾಸತ್ತಾತ್ಮಕ ಸಂಘಟನೆಗಳು ಕೈಜೋಡಿಸುವ ಔಚಿತ್ಯವನ್ನು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಇಂದು ಈ ಪ್ರತಿಭಟನೆಯ ನೇತೃತ್ವವನ್ನು ವಹಿಸುತ್ತಿರುವ ಶಕ್ತಿಗಳ ಜೊತೆಗೆ ಎಡ ಮತ್ತು ಅವರ ಸಾಮೂಹಿಕ ಸಂಘಟನೆಗಳ ರಾಜಕೀಯ ಅಥವಾ ತಾತ್ವಿಕ ಸಹಮತಿಯಿದೆಯೇ? ಇದು ಬಹು ಮುಖ್ಯ ಪ್ರಶ್ನೆ.

ಪೊಲೀಸರು ಮುಷ್ಕರಕ್ಕೆ ಇಳಿದರೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ದುರ್ಬಲವರ್ಗಗಳ ಮೇಲಿನ ದೌರ್ಜನ್ಯ ಹೆಚ್ಚಾಗುವುದರಲ್ಲಿ ಸಂಶಯವೇ ಇಲ್ಲ. ದುಡುಕಿ ನಿರ್ಧರಿಸುವ ಮುನ್ನ ಇದಕ್ಕೆ ಪರ್ಯಾಯಗಳನ್ನು ಹುಡುಕದೇ ಇರಕೂಡದು.

ನವೀನ ಸೂರಿಂಜೆ ಅವರು ಅಭಿಪ್ರಾಯ ಪಡುವಂತೆ  “ಸರ್ವೋಚ್ಚ ನ್ಯಾಯಾಲಯದ ಮಾರ್ಗದರ್ಶಿ ಸೂತ್ರಗಳನ್ನು ಅನುಷ್ಠಾನ ಮಾಡುವಂತೆ ಪೋಲಿಸ್ ಇಲಾಖೆ ಹಾಗೂ ಸರಕಾರಗಳನ್ನು ಒತ್ತಾಯಿಸುವ ಕಾರ್ಯವನ್ನು ನಾವು ಮೊದಲು ಮಾಡಬೇಕಾಗಿದೆ. ಮಾನವ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಮತ್ತು ರಾಷ್ಟೀಯ ಮಾನವ ಹಕ್ಕು ಆಯೋಗಗಳು ಸಲ್ಲಿಸಿದ ಶಿಫಾರಸ್ಸುಗಳ ಜಾರಿಗೆ ಒತ್ತಡ ಸೃಷ್ಟಿಸುವುದು ಎಡಪಂಥೀಯ ಹೋರಾಟಗಾರರ ಮೊದಲ ಕಾರ್ಯವಾಗಬೇಕೇ ಹೊರತು ಪೋಲಿಸರ ಆಂತರಿಕ ಪ್ರತಿಭಟನೆಗಳಲ್ಲಿ ಭಾಗಿಯಾಗುವುದಲ್ಲ.”

ಪೋಲಿಸರೇ ಸಂತ್ರಸ್ತರಾಗುವ ಅಪಾಯ: ಎಡಪಂಥೀಯರ ಕೊಡುಗೆ

Naveen Soorinje


ನವೀನ್ ಸೂರಿಂಜೆ


 

ಅಸಂಖ್ಯ ಹೋರಾಟ, ಚಳುವಳಿಗಳನ್ನು ಕಂಡ ಕರ್ನಾಟಕದಲ್ಲಿ ಇದೀಗ ಪೋಲಿಸರ ಪ್ರತಿಭಟನೆ ದಿನೇದಿನೇ ಸುದ್ದಿಯಾಗುತ್ತಿದೆ. ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ನೇತೃತ್ವದಲ್ಲಿ ಹಲವು ತಳಹಂತದ ಪೋಲಿಸ್ ಸಿಬಂದಿಗಳು ವೇತನ ತಾರತಮ್ಯ, ಸಾಕಷ್ಟು ಸೌಲಭ್ಯಗಳು ಇಲ್ಲದಿರುವುದು, ರಜೆ ನಿರಾಕರಣೆ, ಮೇಲಾಧಿಕಾರಿಗಳ ಕಿರುಕುಳ ಹಾಗೂ ರಾಜಕೀಯ ಹಸ್ತಕ್ಷೇಪವನ್ನು ವಿರೋಧಿಸಿ ಇಂತಹ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ತಮ್ಮ ಅನ್ಯಾನ್ಯ ಬೇಡಿಕೆಗಳ ಈಡೇರಿಕೆಯ ವಿಚಾರವನ್ನು ಮುಂದಿಟ್ಟುಕೊಂಡು ಸಾವಿರಾರು ಪೊಲೀಸರು ಜೂನ್ 4 ರಂದು ಸಾಮೂಹಿಕ ರಜೆ ಹಾಕಲು ನಿರ್ಧರಿಸುವ ಮೂಲಕ ಸಂಘರ್ಷಾತ್ಮಕ ಹೋರಾಟದ ಮಾರ್ಗವನ್ನು ಹಿಡಿದಿದ್ದಾರೆ. ಅನ್ಯ ಸಂದರ್ಭಗಳಲ್ಲಿ ಪೋಲಿಸ್ ಇಲಾಖೆಯ ಮಟ್ಟದಲ್ಲೇ ಮಂಥನಕ್ಕೆ ಒಳಗಾಗಬಹುದಾಗಿದ್ದ, ಇತ್ಯರ್ಥವಾಗಬಹುದಾಗಿದ್ದ ಪೋಲಿಸರ ಪ್ರತಿಭಟನೆ ಮತ್ತು ಅವರ ಹಕ್ಕೊತ್ತಾಯದ ವಿಚಾರವು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ಹೊಸ ಆಯಾಮವನ್ನು ಪಡೆದುಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಕ್ರಿಯಾಶೀಲವಾಗಿರುವ ಯುವ ಕಾರ್ಯಕರ್ತರು ಹಾಗೂ ಲೇಖಕರು ಈ ವಿಚಾರದಲ್ಲಿ ಹೋರಾಟಕ್ಕೆ ಕಟಿಬದ್ಧವಾಗಿರುವ ಪೋಲಿಸರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ; ಸಹಾನುಭೂತಿ ಹಾಗೂ ಅನುಕಂಪವನ್ನು ಸೂಚಿಸುತ್ತಿದ್ದಾರೆ.

ಪೊಲೀಸರ ಹೆಸರಿನಲ್ಲಿ ನಡೆಯುವ ಪ್ರತಿಭಟನೆಗೆ ಇದೀಗ ದೊರಕುತ್ತಿರುವ ಅಭೂತಪೂರ್ವ ಬೆಂಬಲ ಹಲವು ಅನಪೇಕ್ಷಿತ ಪರಿಣಾಮಗಳಿಗೆ ಆಹ್ವಾನ ನೀಡುವ state-logoರೀತಿಯಲ್ಲಿ ಗೋಚರಿಸುತ್ತಿದೆ. ಯಜಮಾನ ಸ್ವರೂಪಿ ಪ್ರಭುತ್ವದ ಮೂರ್ತ ರೂಪವಾಗಿರುವ ಪೊಲೀಸರನ್ನೇ ಸಂತ್ರಸ್ತರನ್ನಾಗಿ ಬಿಂಬಿಸುವ ಪ್ರಯತ್ನ ಎಡಪಂಥೀಯ ಹೋರಾಟಗಾರರು ಮತ್ತು ಯುವ ಸಾಹಿತಿಗಳಿಂದ ನಡೆಯುತ್ತಿದೆ. ಇಂತಹ ಚಟುವಟಿಕೆಗಳು ಪರೋಕ್ಷವಾಗಿ ಪ್ರಭುತ್ವವನ್ನೇ ಸಂತ್ರಸ್ತರ ಸ್ಥಾನದಲ್ಲಿ ನಿಲ್ಲಿಸುವ ಅಪಾಯಕಾರಿ ಸಾಧ್ಯತೆಗಳನ್ನು ಹೊಂದಿವೆ. ಯುವ ಕಾರ್ಯಕರ್ತರ ಔದಾರ್ಯದ ಫಲವಾಗಿ ಇಂದು ಸಾಂಪ್ರದಾಯಿಕ ಶೋಷಿತ-ಶೋಷಕ ಸಮೀಕರಣದ ಸ್ವರೂಪವೇ ಒಮ್ಮೆಗೆ ಮಾರ್ಪಾಡಾದಂತೆ ಕಂಡುಬರುತ್ತಿದೆ.

ಅದಿರಲಿ. ಪೊಲೀಸರ ಬೇಡಿಕೆಗಳೇನು ಎಂಬುದರ ಬಗ್ಗೆ ಚರ್ಚಿಸೋಣಾ. ಸಾಮಾಜಿಕ ಜಾಲತಾಣದಲ್ಲಿ “ಪೊಲೀಸರ ಪರಿಸ್ಥಿತಿ ತೀರಾ ಹೀನಾಯವಾಗಿದೆ” ಎಂದು ಥರೇವಾರಿ ಬಿಂಬಿಸಲಾಗುತ್ತಿದೆ. ಅದರಲ್ಲೂ ಯುವ ಸಾಹಿತಿಗಳು ಮತ್ತು ಹೋರಾಟಗಾರರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, “ಪೊಲೀಸರೂ ನಮ್ಮಂತೆ ಮನುಷ್ಯರು!” ಎಂದು ಕೂಗಿ ಹೇಳುತ್ತಿದ್ದಾರೆ. ಆ ಮೂಲಕ ವ್ಯವಸ್ಥೆ ಪೊಲೀಸರನ್ನು ಕನಿಷ್ಠ ಮನುಷ್ಯರಂತೆ ನಡೆಸಿಕೊಳ್ಳುತ್ತಿಲ್ಲ ಎನ್ನುತ್ತಿದ್ದಾರೆ. ಇದನ್ನಂತೂ ಒಪ್ಪಲು ಅಸಾಧ್ಯ.

ಕೆಳ ಹಂತದ ಪೊಲೀಸರಿಗೆ ಸರಕಾರ ತೀರಾ ಕಡಿಮೆ ಸಂಬಳವನ್ನೇನೂ ನೀಡುತ್ತಿಲ್ಲ. ಕೇವಲ ಎಸ್ ಎಸ್ ಎಲ್ ಸಿ ಶಿಕ್ಷಣವನ್ನು ಹೊಂದಿದ ಪೊಲೀಸ್ ಸಿಬಂದಿಯೊಬ್ಬ ಕಾರ್ಯನಿರ್ವಹಿಸುವ ಜಿಲ್ಲೆಯ ವ್ಯಾಪ್ತಿಯಲ್ಲಿ ವಸತಿ ಸೌಲಭ್ಯದ ಜೊತೆಗೆ ವೇತನ ಪ್ರಾರಂಭವಾಗುವುದೇ 18 ಸಾವಿರ ರೂಪಾಯಿಗಳಿಂದ. ಸೈನ್ಯ ಹೊರತುಪಡಿಸಿ ಯಾವ ಸರಕಾರಿ ನೌಕರನಿಗೂ ಇಲ್ಲದ ಉಚಿತ ರೇಷನ್ ವ್ಯವಸ್ಥೆ ಪೊಲೀಸರಿಗಾಗಿ ಕರ್ನಾಟಕದಲ್ಲಿ ಜಾರಿಯಲ್ಲಿದೆ. ಪೊಲೀಸ್ ಸಿಬಂದಿಯೊಬ್ಬ ಕರ್ತವ್ಯದಲ್ಲಿ ಇದ್ದಾಗ ಸಾವನ್ನಪ್ಪಿದಲ್ಲಿ ಆತನ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲಾಗುತ್ತದೆ. ಈ ರೀತಿ ಬೇರೆ ಇಲಾಖೆಗಳಲ್ಲಿ ಇದ್ದರೂ ಅದಕ್ಕಾಗಿ ಅಲೆದಾಡಿಸಲಾಗುತ್ತದೆ. ಆದರೆ ಪೊಲೀಸ್ ಇಲಾಖೆಯಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯಲು ಸಲ್ಲಿಸಿದ ಒಂದೇ ಒಂದೇ ಅರ್ಜಿ ಇತ್ಯರ್ಥವಾಗದೆ ಬಾಕಿಯಾಗಿಲ್ಲ. ಒಂದು ವೇಳೆ ಪೊಲೀಸ್ ಪೇದೆಯೊಬ್ಬ ಕರ್ತವ್ಯ ನಿರ್ವಹಿಸುವ ಸಂದರ್ಭ ಮೃತನಾದಲ್ಲಿ ತಕ್ಷಣವೇ ಆತನ ಕುಟುಂಬಕ್ಕೆ 50 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಸಣ್ಣಪುಟ್ಟ ಗಾಯಗಳಾದಲ್ಲಿ 2 ಲಕ್ಷ ರೂಪಾಯಿಗಳನ್ನು ತಕ್ಷಣ ನೀಡಲಾಗುತ್ತದೆ. ಇನ್ನು ಪೊಲೀಸ್ ಸಿಬಂದಿಯೊಬ್ಬ ಯಾವುದೇ ಸಂದರ್ಭದಲ್ಲಿ ಅನಾರೋಗ್ಯಕ್ಕೀಡಾದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಸೌಲಭ್ಯ ಪಡೆಯುವ ವ್ಯವಸ್ಥೆ ಇದೆ. ಇಷ್ಟು ವ್ಯವಸ್ಥೆಗಳು ಬೇರಾವ ಇಲಾಖೆಯಲ್ಲೂ ಊಹಿಸಲೂ ಅಸಾಧ್ಯ. ಆದುದರಿಂದಲೇ ಈಗೀಗ ನಡೆಯುತ್ತಿರುವ ಪೋಲಿಸ್ ಪೇದೆ ನೇಮಕಾತಿ ಸಂದರ್ಭಗಳಲ್ಲಿ ಲಕ್ಷ ಲಕ್ಷ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಇದು ಮನುಷ್ಯನೊಬ್ಬನನ್ನು ನಡೆಸಿಕೊಳ್ಳುವ ರೀತಿಯಲ್ಲದೆ ಇನ್ನೇನು ಅನ್ನಬೇಕು?

ಇಷ್ಟೆಲ್ಲಾ ಸೌಲಭ್ಯಗಳು ಇದ್ದರೂ ಪೊಲೀಸರು ಪ್ರತಿಭಟಿಸೋದ್ಯಾಕೆ? ಕೇವಲ ರಜೆಯ ಕಾರಣಕ್ಕಾಗಿಯಂತೂ ಅಲ್ಲ. ಪೊಲೀಸ್ ಅಥವಾ ಸೈನ್ಯKSP Recruitment 2015 ಸೇರುವಾಗಲೇ ಅಲ್ಲಿನ ರಜಾ ಸೌಲಭ್ಯದ ಬಗ್ಗೆ ಅರಿವು ಇರುತ್ತದೆ. ಹಾಗೆಂದು ಸೈನಿಕರ ರೀತಿ ಪೊಲೀಸರಿಗೆ ರಜೆ ನೀಡುವುದೇ ಇಲ್ಲವೆಂದಲ್ಲ. ಕೆಲವೊಂದು ಕಠಿಣ ಮತ್ತು ಸಹಜ ನಿಯಮಗಳು ಇದ್ದೇ ಇರುತ್ತವೆ. ರಜೆಯಲ್ಲಿ ಅನಿಶ್ಚಿತತೆ ವಿಶೇಷವಾಗಿ ಪೋಲಿಸ್ ಮೊದಲಾದ ರಕ್ಷಣಾ ಪಡೆಗಳ, ಸುರಕ್ಷಾ ಸಂಸ್ಥೆಗಳ ಸೇವಾವೃತ್ತಿಯ ಅನಿವಾರ್ಯ ಲಕ್ಷಣ. ಅಷ್ಟಕ್ಕೂ ಪೋಲಿಸರಿಗೆ ರಜೆ ಇರಲೇಬೇಕು ಅನ್ನುವ ಕಾರಣಕ್ಕಾಗಿ ಈಗ ಅವರಿಗೆ ಬೆಂಬಲ ಕೊಡುವ ಪಕ್ಷಗಳು ಅಥವಾ ಸಾಮಾಜಿಕ ಕಾರ್ಯಕರ್ತರು ವಾರದ ರಜಾದಿನಗಳಲ್ಲಿಲಿ ಪ್ರತಿಭಟನೆ, ಆಂದೋಲನಗಳನ್ನು ಹಮ್ಮಿಕೊಳ್ಳುವುದಿಲ್ಲವೆಂಬ ನಿರ್ಧಾರವನ್ನು ಮಾಡುತ್ತಾರೆಯೇ ಎಂಬ ಪ್ರಶ್ನೆ ವ್ಯಂಗ್ಯವಾಗಿ ಕಂಡರೂ ಇಲ್ಲಿ ಪ್ರಸ್ತುತ. ಹಾಗೆಂದುಕೊಂಡು ಪೊಲೀಸರು ಪ್ರತಿಭಟಿಸಲೇ ಬಾರದೆಂದಲ್ಲ. ವೇತನ ತಾರತಮ್ಯ ಮತ್ತು ರಜೆಯ ಬಗ್ಗೆ ಈವೆರೆಗೂ ಒಂದೇ ಒಂದು ಮನವಿ ಪೊಲೀಸ್ ಇಲಾಖೆಗೆ ತಲುಪಿಲ್ಲ ಎಂಬುದು ಗೃಹ ಸಚಿವ ಡಾ ಜಿ ಪರಮೇಶ್ವರ್ ಇತ್ತಿಚೆಗೆ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಕನಿಷ್ಠ ಮನವಿಯನ್ನೂ ಮಾಡದೇ, ಇಲಾಖಾ ಮಟ್ಟದಲ್ಲೇ ಇರತಕ್ಕಂತಹ ಸಾಂಸ್ಥಿಕ ಮಾಧ್ಯಮಗಳನ್ನು ಬಳಸದೇ ಪೊಲೀಸ್ ಮ್ಯಾನುವಲ್ ನಲ್ಲಿ ಅವಕಾಶ ಇಲ್ಲದ, ಸಂವಿಧಾನ ವಿರೋಧಿಯಾಗಿ ಪೊಲೀಸರು ದಿಡೀರನೆ ಪ್ರತಿಭಟನೆ ನಡೆಸುತ್ತಿರೋದ್ಯಾಕೆ ಎಂಬುದರ ಬಗ್ಗೆ ಸಂಶಯಗಳು ಮೂಡಲಾರಂಭಿಸಿದೆ.

ಪೊಲೀಸರ ಪ್ರತಿಭಟನೆಗಿಂತಲೂ ಆತಂಕ ಸೃಷ್ಟಿಸಿರುವುದು ಪ್ರಜಾಸತ್ತಾತ್ಮಕ ಚಳುವಳಿಗಾರರು ಮತ್ತು ಯುವ ಸಾಹಿತಿಗಳ ಮಾತುಗಳು. “ಪೊಲೀಸರು ಹಲವು ಬಾರಿ ಜನಸಾಮಾನ್ಯರ ಮೇಲೆ ನಡೆಸುವ ಹಲ್ಲೆ ದೌರ್ಜನ್ಯಗಳಿಗೆ ಅವರ ಮೇಲಿರುವ ಒತ್ತಡಗಳೇ ಕಾರಣ….” ಈ ರೀತಿಯ ಅಭಿಪ್ರಾಯಗಳನ್ನು ತೇಲಿಸಲಾಗುತ್ತಿದೆ. ಇಂತಹ ವಾದಗಳು ತಮ್ಮ ಕುಟುಂಬದಿಂದ ದೂರ ಇರುವ ಸೈನಿಕರು ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಅತ್ಯಾಚಾರಗಳನ್ನು ನಡೆಸುವುದು ಸಹಜ ಎಂಬಷ್ಟೇ ಆಪಾಯಕಾರಿ.

ಕರ್ನಾಟಕ ಪೊಲೀಸರ ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳು ಒಂದೆರಡಲ್ಲ. ಈಗಲೂ ಪ್ರತೀ ಠಾಣೆಯ ಲಾಕಪ್ಪಿನಲ್ಲಿ ನೋಡಿದರೆpolice-brutality ಬರಿಮೈಯ್ಯಲ್ಲಿ, ಕೇವಲ ಚೆಡ್ಡಿ ಹಾಕಿಕೊಂಡು ಕುಳಿತಿರುವ ನ್ಯಾಯಾಂಗದ ಮುಂದೆ ಹಾಜರುಪಡಿಸದ ಆರೋಪಿಗಳು ಕಂಡುಬರುತ್ತಾರೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಿವಿಲ್ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ವ್ಯಾಪ್ತಿ ಮೀರಿ ಮನೆಯ ಯಜಮಾನನ್ನು ಬಂಧಿಸಿ ಆತನ ಮಗನ ಎದುರೇ ವಿವಸ್ತ್ರಗೊಳಿಸಿ, ಮರ್ಮಾಂಗಕ್ಕೆ ಸೂಜಿ ಹಾಕಿಸಿದ್ದು ಯಾವ ಮೇಲಾಧಿಕಾರಿಯಾಗಲೀ, ಐಪಿಎಸ್ ಅಧಿಕಾರಿಯಾಗಲೀ ಅಲ್ಲ. ದನದ ವ್ಯಾಪಾರ ಮಾಡುತ್ತಿದ್ದವರ ಜೊತೆ ಕೆಲಸ ಮಾಡುತ್ತಿದ್ದ ಕಬೀರ್ ನನ್ನು ಗುಂಡು ಹಾಕಿ ಸಾಯಿಸಿದ್ದು ಇದೇ ತಳ ಹಂತದ ಪೊಲೀಸ್ ಸಿಬಂದಿಗಳು. ಮೊನ್ನೆ ಮೊನ್ನೆ ಸಿಎಂ ಮನೆಗೆ ದೂರು ಕೊಡಲು ಬಂದ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ಠಾಣೆಯಲ್ಲಿ ದೌರ್ಜನ್ಯ ಎಸಗಿದ್ದು ಕುಮಾರಸ್ವಾಮಿ ಹೇಳುವಂತೆ ಸಿಎಂ ಸಿದ್ದರಾಮಯ್ಯ ಅಲ್ಲ; ಯಾವ ಮೇಲಾಧಿಕಾರಿಯ ಅಥವಾ ರಾಜಕಾರಣಿಯ ಕುಮ್ಮಕ್ಕೂ ಇಲ್ಲದ ಪೊಲೀಸ್ ಸಿಬಂದಿಗಳು! ಇಂತಹ ಸಾವಿರ ಸಾವಿರ ಪ್ರಕರಣಗಳು, ನಮ್ಮ ಮನೆಯ, ನೆರೆ ಮನೆಯ ವ್ಯಕ್ತಿಗಳಿಗಾದ ಅನ್ಯಾಯಗಳು ಕೇವಲ ಪೊಲೀಸ್ ಸಿಬಂದಿಗಳ ಅಮಾನವೀಯತೆಯಿಂದ ಕಾನೂನುಬಾಹಿರ ವರ್ತನೆಯಿಂದ ಆಗಿವೆಯೇ ಹೊರತು ಮೇಲಾಧಿಕಾರಿಗಳು ಮತ್ತು ರಾಜಕರಣಿಗಳ ಕುಮ್ಮಕ್ಕಿನಿಂದಲೋ ಅಥವಾ ವೇತನ ತಾರತಮ್ಯ, ರಜಾ ನಿರಾಕರಣೆಯಿಂದ ಅಲ್ಲ ಎಂಬುದಂತೂ ಸತ್ಯ.

ಹಾಗೆಯೇ ಈಗ ಪೊಲೀಸರ ಪ್ರತಿಭಟನೆಯನ್ನು ಬೆಂಬಲಿಸುವವರು ಎಡಪಂಥೀಯ ಹೋರಾಟಗಾರರು ಹೇಳುತ್ತಿರುವ “ನಾವು ಪ್ರತಿಭಟನೆ ಮಾಡುವ ಸಂದರ್ಭ ನಿಮ್ಮಿಂದ ಎಷ್ಟೇ ಹಲ್ಲೆಗೊಳಗಾದರೂ ನಿಮ್ಮ ಪ್ರತಿಭಟನೆಯನ್ನು ಬೆಂಬಲಿಸುತ್ತಿದ್ದೇವೆ” ಎಂಬ ಮಾತುಗಳೇ ಸಿನಿಕತನದ್ದು. ದಲಿತ ಅಥವಾ ಮುಸ್ಲೀಮನೊಬ್ಬ ತನ್ನ ಜಾತಿ ಧರ್ಮದ ಕಾರಣಕ್ಕಾಗಿಯೋ, ಕೇಳುವವರಿಲ್ಲ ಎನ್ನುವ ಕಾರಣಕ್ಕೋ ಲಾಕಪ್ಪಿನಲ್ಲಿ ಚಡ್ಡಿಯಲ್ಲಿ ಕುಳಿತು ಹಲ್ಲೆಗೊಳಗಾಗುವುದಕ್ಕೂ, ದಲಿತ ಮಹಿಳೆಯರು ವಿವಸ್ತ್ರಕ್ಕೊಳಗಾಗುವುದಕ್ಕೂ, ರಾಜಕೀಯ ಉದ್ದೇಶದ ಪ್ರತಿಭಟನೆಯ ಸಂದರ್ಭದ ಲಾಠಿಚಾರ್ಜ್ನ ಹಲ್ಲೆಗೂ ವ್ಯತ್ಯಾಸ ಇದೆ. ಕೇವಲ ಮುಸ್ಲೀಮರೆನ್ನುವ ಕಾರಣಕ್ಕೆ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಸಿಲುಕಿಸಲ್ಪಟ್ಟು ಹತ್ತು ವರ್ಷ ಜೈಲಿನಲ್ಲಿ ಕೊಳೆತು ಮೊನ್ನೆ ಮೊನ್ನೆಯಷ್ಟೇ ಬಿಡುಗಡೆಯಾದ ಒಂಬತ್ತು ದನಿಯಿಲ್ಲದ ನಿರಪರಾಧಿಗಳ ಜೈಲುವಾಸವೂ ರಾಜಕೀಯ ಪಕ್ಷಗಳು ಸಂಘಸಂಸ್ಥೆಗಳು ನಡೆಸುವ ಜೈಲ್ ಭರೋ ಆಂದೋಲನಗಳು ಏಕರೂಪದ್ದೇ? ಇದು ಸಮಸ್ಯೆಯನ್ನು ಸರಳೀಕರಿಸುವ ಪ್ರಯತ್ನವಲ್ಲವೇ?

ಅಷ್ಟಕ್ಕೂ ಪೊಲೀಸರ ಬೇಡಿಕೆಗಳ ಬಗ್ಗೆ ಯಾವ ಆಕ್ಷೇಪಗಳೂ ಇಲ್ಲ. ಸೌಲಭ್ಯಗಳನ್ನು ಹೊಂದಿರುವವರು ಮತ್ತಷ್ಟೂ ಸೌಲಭ್ಯಗಳು ಬೇಕು ಎನ್ನುವುದಕ್ಕೆ ಯಾರflowers in gun ಆಕ್ಷೇಪವೂ ಇಲ್ಲ. ಪೋಲಿಸರೇ ಖುದ್ದು ತಮಗೆ ಅದು ಬೇಕು ಇದು ಬೇಕು, ನಮ್ಮ ಸೇವಾಸ್ಥಿತಿ ಹಾಗಿರಬೇಕು ಹೀಗಿರಬೇಕು ಅನ್ನಲಿ. ಹಾಗೆಂದು ಜವಾಬ್ಧಾರಿಯುತ ರಾಜಕೀಯ ಪಕ್ಷಗಳು ಅಥವಾ ಸಾಮಾಜಿಕ ಕಾರ್ಯಕರ್ತರು “ಪೊಲೀಸರಿಗೆ ಮೂಲಭೂತ ಸೌಲಭ್ಯಗಳು ಇಲ್ಲದ ಕಾರಣಕ್ಕಾಗಿ ಅವರು ದೌರ್ಜನ್ಯ ಎಸಗುತ್ತಾರೆ” ಎಂಬಂತಹ ಮಾತುಗಳನ್ನು ಆಡುವುದು, “ಅವರೂ ಮನುಷ್ಯರೇ” ಎಂದು ಘೋಷಣೆ ಕೂಗುವುದು ಅನುಚಿತ. ಅವರ ಸದ್ಯದ ತುರ್ತು ಪೋಲಿಸ್ ವ್ಯವಸ್ಥೆಯನ್ನು ಹೆಚ್ಚು ಹೆಚ್ಚು ಮಾನವೀಯಗೊಳಿಸುವುದು ಹಾಗು ಅದನ್ನು ಪೂರ್ಣವಾಗಿ ಸಂವಿಧಾನ ಮತ್ತು ನೆಲದ ಕಾನೂನಿನ ಪರಿಧಿಗೆ ತರುವ ಕೆಲಸವಾಗಿದೆ. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಮಾರ್ಗದರ್ಶಿ ಸೂತ್ರಗಳನ್ನು ಅನುಷ್ಠಾನ ಮಾಡುವಂತೆ ಪೋಲಿಸ್ ಇಲಾಖೆ ಹಾಗೂ ಸರಕಾರಗಳನ್ನು ಒತ್ತಾಯಿಸುವ ಕಾರ್ಯವನ್ನು ನಾವು ಮೊದಲು ಮಾಡಬೇಕಾಗಿದೆ. ಮಾನವ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಮತ್ತು ರಾಷ್ಟೀಯ ಮಾನವ ಹಕ್ಕು ಆಯೋಗಗಳು ಸಲ್ಲಿಸಿದ ಶಿಫಾರಸ್ಸುಗಳ ಜಾರಿಗೆ ಒತ್ತಡ ಸೃಷ್ಟಿಸುವುದು ಎಡಪಂಥೀಯ ಹೋರಾಟಗಾರರ ಮೊದಲ ಕಾರ್ಯವಾಗಬೇಕೇ ಹೊರತು ಪೋಲಿಸರ ಆಂತರಿಕ ಪ್ರತಿಭಟನೆಗಳಲ್ಲಿ ಭಾಗಿಯಾಗುವುದಲ್ಲ.