Category Archives: ಸಾಮಾಜಿಕ

ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಕರ್ನಾಟಕದ ಪ್ರಸಕ್ತ ಸಾಮಾಜಿಕ ಮತ್ತು ರಾಜಕೀಯ ವಾತಾವರಣ

– ರವಿ ಕೃಷ್ಣಾರೆಡ್ಡಿ

[ಇದೇ ತಿಂಗಳ 9 ರಂದು (09-07-2016) ಧಾರವಾಡದಲ್ಲಿ ನಡೆದ “ಜನಪರ್ಯಾಯ” ಸಮಾವೇಶದಲ್ಲಿ ಮಂಡಿಸಿದ ವಿಷಯದ ಲೇಖನ ರೂಪ.]

ಭಾರತ ದೇಶದಲ್ಲಿ ಕರ್ನಾಟಕ ಭೌಗೋಳಿಕವಾಗಿ ಏಳನೇ ದೊಡ್ಡ ರಾಜ್ಯ ಮತ್ತು ಜನಸಂಖ್ಯೆಯಲ್ಲಿ ಎಂಟನೆಯದು. ದಕ್ಷಿಣ ಭಾರತದಲ್ಲಿ ಇಂದು ಭೌಗೋಳಿಕವಾಗಿ ಅತಿದೊಡ್ಡ ರಾಜ್ಯ ಮತ್ತು ಜನಸಂಖ್ಯೆಯಲ್ಲಿ ತಮಿಳುನಾಡಿನ ನಂತರದ ಸ್ಥಾನದಲ್ಲಿದೆ. ಅಪಾರ ವೈವಿಧ್ಯತೆ ಮತ್ತು ಸಂಕೀರ್ಣತೆಗಳಿಂದ ಕೂಡಿದ ರಾಜ್ಯ ಇದು.

ಇದೇ ರಾಜ್ಯದಲ್ಲಿಯೆ, ಇಲ್ಲಿಂದ ಅಷ್ಟೇನೂ ದೂರವಿರದ ಬಿಜಾಪುರ ಮತ್ತು ಬೀದರ್ ಜಿಲ್ಲೆಯ ಕಲ್ಯಾಣದಲ್ಲಿ ಸುಮಾರು ಎಂಟು-ಒಂಬತ್ತು ನೂರು ವರ್ಷಗಳ ಹಿಂದೆ ಭಾರತದಲ್ಲಿಯೇ ಅಪರೂಪವಾದ ಸಾಮಾಜಿಕ ಕ್ರಾಂತಿ ನಡೆದಿತ್ತು. rkr-janaparyaya-dharwad-09072016ಆ ಕ್ರಾಂತಿಯ ನೆರಳು ಮತ್ತು ಪ್ರಭಾವ ಇಂದೂ ಸಹ ಕರ್ನಾಟಕದಲ್ಲಿ ಗಾಢವಾಗಿದೆ. ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ ಯಂತಹ ನೂರಾರು ಶರಣರು ಸಾಮೂಹಿಕ ನೆಲೆಗಟ್ಟಿನಲ್ಲಿ ಅಂದಿನ ಅಸಮಾನತೆ, ಜಾತಿವ್ಯವಸ್ಥೆ, ಶೋಷಣೆಯ ವಿರುದ್ಧ ಕಟ್ಟಿದ ಹೋರಾಟ, ಬಂಡಾಯ, ಚಳವಳಿ ಅದು. ಅಂದು ಕಲ್ಯಾಣದಲ್ಲಿ ರಕ್ತಪಾತವಾಗಿ ನೂರಾರು-ಸಾವಿರಾರು ಕಗ್ಗೊಲೆಗಳಾಗಿ, ಬಸವಣ್ಣನೇ ಅಕಾಲಿಕ ಸಾವಿಗೆ ಈಡಾದರೂ, ಇಂದಿಗೂ ಆ ಕ್ರಾಂತಿ ಚಾಲ್ತಿಯಲ್ಲಿರುವುದು ಈ ನಾಡಿನ ಹೆಮ್ಮೆಯೂ ಹೌದು, ದುರಂತವೂ ಹೌದು.

ಅದೇ ರೀತಿ ಈ ನಾಡಿಗೆ ಕಳೆದ ಶತಮಾನದಲ್ಲಿ ವೈಚಾರಿಕ ದೀಕ್ಷೆ ಕೊಟ್ಟವರು ಕುವೆಂಪು. “ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ” ಎಂದು ಹೇಳಿದ ಆ ದಾರ್ಶನಿಕ ಕವಿ “ಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು, ಸೇರಿರೈ ಮನುಜ ಮತಕೆ” ಎಂದು ಆಹ್ವಾನ ಕೊಡುವ ಮೂಲಕ ಸರ್ವೋದಯ, ಸಹಕಾರ, ಸಹಬಾಳ್ವೆ, ಸಮಭಾಗಿತ್ವ, ಸಮತ್ವ, ಸಮಾನತೆಯ ದಾರಿದೀಪ ತೋರಿಸಿದವರು.

ಇಲ್ಲಿಯ ರಾಜಕಾರಣ ಜಾತಿ ಮತ್ತು ಹಣದ ಪ್ರಭಾವಕ್ಕೆ ಸಿಲುಕುತ್ತಿದ್ದಂತಹ ಸಂದರ್ಭದಲ್ಲಿ 50-60 ರ ದಶಕದಲ್ಲಿಯೇ “ಒಂದು ವೋಟು, ಒಂದು ನೋಟು” ಘೋಷಣೆಯ ಮೂಲಕ ಜನಸಾಮಾನ್ಯರ ಸಹಭಾಗಿತ್ವದಲ್ಲಿ, ಜನರ ದುಡ್ಡಿನಲ್ಲಿಯೇ ಬಲಾಢ್ಯರ ಹಣ ಮತ್ತು ಜಾತಿಯ ಪ್ರಭಾವವನ್ನು ಹಿಮ್ಮೆಟ್ಟಿಸಿ ಈ ರಾಜ್ಯದಲ್ಲಿ ಮುಂದಿನ ದಿನಗಳ ಸಾಮಾಜಿಕ ನ್ಯಾಯ ಮತ್ತು ಭೂಸುಧಾರಣೆಯ ಹೋರಾಟಗಳಿಗೆ ಜನಪರ್ಯಾಯ ಮಾರ್ಗ ತೋರಿಸಿದವರು ಶಾಂತವೇರಿ ಗೋಪಾಲ ಗೌಡರು.

ಹೀಗೆ ದೇಶದ ಯಾವುದೇ ಭಾಗದ ಆದರ್ಶ ಮತ್ತು ಕನಸುಗಳಿಗೂ ಕಡಿಮೆಯಿಲ್ಲದ ರೀತಿ ಈ ರಾಜ್ಯ, ಅಂದರೆ ಇಲ್ಲಿಯ ಜನ, ತಮ್ಮ ಜೀವನವನ್ನು ಹಲವಾರು ಸವಾಲುಗಳನ್ನು ಎದುರಿಸುತ್ತಾ ಕಟ್ಟಿಕೊಳ್ಳುತ್ತಾ ಬಂದಿದ್ದಾರೆ,

ಆದರೆ, ಈಗ?

ಇದೇ ಧಾರವಾಡದ ಅವಿಭಜಿತ ಜಿಲ್ಲೆಯಲ್ಲಿ ಮತ್ತು ಪಕ್ಕದ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಕುಡಿಯುವ ಮತ್ತು ನೀರಾವರಿ ಸೌಲಭ್ಯಕ್ಕಾಗಿ ರೈತರು ಕಳೆದ ಒಂದು kalasabanduri-mapವರ್ಷದಿಂದ ನಿರಂತರ ಹೋರಾಟ ಮಾಡುತ್ತಾ ಬರುತ್ತಿದ್ದಾರೆ. ನರಗುಂದ ಮತ್ತು ನವಲಗುಂದದಲ್ಲಿ ರೈತರು ಸ್ವಯಂಪ್ರೇರಣೆಯಿಂದ ಪ್ರತಿದಿನ ಧರಣಿಯ ಸ್ಥಳದಲ್ಲಿ ಹಾಜರಿದ್ದು ಹೋರಾಟವನ್ನು ಜೀವಂತ ಇಟ್ಟಿದ್ದಾರೆ. ಅದೇ ರೀತಿ ಚಿಕ್ಕಬಳ್ಳಾಪುರದಲ್ಲಿಯೂ ನೂರಕ್ಕೂ ಹೆಚ್ಚು ದಿನ ಬಯಲುಸೀಮೆ ಜಿಲ್ಲೆಗಳ ಶಾಶ್ವತ ನೀರಾವರಿ ಹೋರಾಟ ಸಮಿತಿ ಹೋರಾಟ ಮಾಡಿತು. ಮಂಡ್ಯ ಜಿಲ್ಲೆ ಒಂದರಲ್ಲಿಯೇ 2015 ರಲ್ಲಿ ನೂರು ರೈತರು ಆತ್ಮಹತ್ಯೆ ಮಾಡಿಕೊಂಡರು; ರಾಜ್ಯದಲ್ಲಿ ಆ ಸಂಖ್ಯೆ ಒಂದೂವರೆ ಸಾವಿರಕ್ಕಿಂತ ಹೆಚ್ಚು. 2015-16 ರಲ್ಲಿ ಸರ್ಕಾರಿ ಅಂಕಿಅಂಶಗಳ ಪ್ರಕಾರ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 817. ರಾಜ್ಯದಲ್ಲಿ ಆರೇಳು ತಿಂಗಳ ಹಿಂದೆ ಸುಮಾರು ನಾಲ್ಕೂವರೆ ಸಾವಿರ FDA/SDA ಹುದ್ದೆಗಳಿಗೆ KPSC ನಡೆಸಿದ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಯೇ ಸೋರಿಕೆ ಆಗಿತ್ತು. ಅದು ಮತ್ತು ಅಂತಹ ಅಕ್ರಮಗಳು ನಮ್ಮ ರಾಜ್ಯದಲ್ಲಿ ಆಗುತ್ತಲೇ ಇರುತ್ತವೆ. ನಮ್ಮ ರಾಜ್ಯಕ್ಕೆ ಅದು ದೊಡ್ದ ವಿಷಯವೇ ಅಲ್ಲ. ಆದರೆ ಅದಕ್ಕಿಂತ ದೊಡ್ಡ ವಿಷಯ ಅಥವ ದುರಂತ ಎಂದರೆ ಆ ನಾಲ್ಕೂವರೆ ಸಾವಿರ ನೌಕರಿಗಳಿಗೆ ಪರೀಕ್ಷೆ ಬರೆದವರು ಮಾತ್ರ ರಾಜ್ಯದ ಕೇವಲ 19 ಲಕ್ಷ ಬಡ ನಿರುದ್ಯೋಗಿ ಯುವಕರು!

ಈಗ ಎಲ್ಲದಕ್ಕಿಂತ ದೊಡ್ಡ ದುರಂತ ಯಾವುದು?

ತೀರಾ ಇತ್ತೀಚೆಗೆ, ಮೂರ್ನಾಲ್ಕು ತಿಂಗಳ ಹಿಂದೆ, ತಾಲ್ಲೂಕು-ಜಿಲ್ಲಾ ಪಂಚಾಯತ್ ಚುನಾವಣೆಗಳಾದವು. ಈ ಮೇಲಿನ ಯಾವುವೂ ಚುನಾವಣೆ ವಿಷಯಗಳಾಗಲಿಲ್ಲ.

ಇದೇ ಬಸವಣ್ಣನ ನಾಡಿನಲ್ಲಿ ಇಂದು ಮರ್ಯಾದಾಹತ್ಯೆಗಳಾಗುತ್ತಿವೆ. ಜಾತಿಯ ಕಾರಣಕ್ಕೆ ತಲೆ ಕಡಿಯುತ್ತಿದ್ದಾರೆ. ಈ ಜಾತ್ಯತೀತ ಪ್ರಜಾಪ್ರಭುತ್ವದಲ್ಲಿ ಸರ್ಕಾರ ಜಾತಿಜಾತಿಗೇ ಸ್ಮಶಾನ ಮೀಸಲೀಡುತ್ತದೆ. ಸರ್ಕಾರದ ಸಮುದಾಯ ಭವನಗಳು ಅಧಿಕೃತವಾಗಿ ಜಾತಿ ಸಮುದಾಯ ಭವನಗಳಾಗಿವೆ. ಜಾತಿಗಳಿಗಷ್ಟೇ ಮೀಸಲಾದ ರಾಜಕೀಯ ಪಕ್ಷಗಳಿವೆ; ಜಿಲ್ಲೆಗಳಿವೆ.

ಇದೇ ನೆಲದಲ್ಲಿ, garments-workers-2016ಯಾರದೇ ಚಿತಾವಣೆ ಇಲ್ಲದೆ ಲಕ್ಷಾಂತರ ಮಹಿಳಾ ಕಾರ್ಮಿಕರು ಇಡೀ ದೇಶದ ಕಾರ್ಮಿಕರಿಗೆ ನ್ಯಾಯ ಒದಗಿಸುತ್ತಾರೆ.

ಭ್ರಷ್ಟ ಬಿಜೆಪಿಯನ್ನು ಆಚೆಗಟ್ಟಿ ಅಪಾರ ನಿರೀಕ್ಷೆ ಮತ್ತು ಆಶಾಕಿರಣದೊಂದಿಗೆ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದು ನೈತಿಕವಾಗಿ ನೆಲಕಚ್ಚಿದೆ. ಅಧಿಕಾರ ಸ್ವೀಕರಿಸುತ್ತಲೇ ಅನ್ನಭಾಗ್ಯ ಹಾಗು ಇತರೆ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಆದರೆ ಇಂದು ಸಿದ್ಧರಾಮಯ್ಯ ಅವರ ಸರ್ಕಾರ ಸ್ವಜನ ಪಕ್ಷಪಾತ ಹಾಗು ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ. ಅಕ್ರಮ ಗಣಿಗಾರಿಕೆಯ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿ, ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪಾದಯಾತ್ರೆ ಮಾಡಿದ್ದರು. ಆದರೆ ಇಂದು ಅಕ್ರಮ ಗಣಿಗಾರಿಕೆ ಮಾಡಿರುವವರು ಅವರ ಸಚಿವ ಸಂಪುಟದಲ್ಲಿದ್ದಾರೆ ಮತ್ತು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಅಕ್ರಮ ಗಣಿಗಾರಿಕೆಯನ್ನು ವಿಸ್ತೃತವಾಗಿ ಬಯಲಿಗೆಳೆದ ಲೋಕಾಯುಕ್ತ ಸಂಸ್ಥೆಯನ್ನೇ ಇಂದು ಮೂಲೆಗುಂಪು ಮಾಡಿ ಸರ್ಕಾರದ ಕೈಗೊಂಬೆಯಂತಿರುವ ಮತ್ತು ಭ್ರಷ್ಟರನ್ನು ರಕ್ಷಿಸುವ ಎಸಿಬಿಯನ್ನು ಆರಂಭಿಸಿದ್ದಾರೆ. ಲೋಕಾಯುಕ್ತದಲ್ಲಿ ಹತ್ತಾರು ಮೊಕದ್ದಮೆಗಳಿರುವ ಮತ್ತು ಸರ್ಕಾರಿ ಅಧಿಕಾರಿಗಳ ಭ್ರಷ್ಟತೆಗೆ ಸಂಕೇತವಾಗಿರುವ ಶ್ಯಾಮ್ ಭಟ್ಟರನ್ನು ರಾಜ್ಯದ ಮುಂದಿನ ಸರ್ಕಾರಿ ಅಧಿಕಾರಿಗಳ ನೇಮಕಾತಿ ನಡೆಸುವ ಕೆಪಿಎಸ್‌ಸಿಗೆ ಅಧ್ಯಕ್ಷರನ್ನಾಗಿ ಮಾಡಲು ಹೊರಟಿದ್ದಾರೆ. lokayukta_karnatakaಸ್ವತಃ ಸಿದ್ಧರಾಮಯ್ಯನವರೇ ಸ್ವಜನ ಪಕ್ಷಪಾತದಲ್ಲಿ ಸಿಲುಕಿಕೊಂಡಿದ್ದಾರೆ. ದುಬಾರಿ ವಾಚ್ ಪ್ರಕರಣದಿಂದ ಹಿಡಿದು ತಮ್ಮ ಮಗನಿಗೆ ಆಸ್ಪತ್ರೆ ಕಾಂಟ್ರಾಕ್ಟ್ ನೀಡುವಿಕೆಯಲ್ಲಿ ಸೇರಿ ಹಲವಾರು ಅಕ್ರಮಗಳಲ್ಲಿ ಸಿಲುಕಿದ್ದಾರೆ. ಯಾವ ವ್ಯಕ್ತಿಯನ್ನು ಕಳಂಕಿತ ಎಂದು ಸಚಿವ ಸಂಪುಟದಿಂದ ಹೊರಗಿಟ್ಟಿದ್ದರೊ, ಯಾವ ವ್ಯಕ್ತಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಡಿನೋಟಿಫಿಕೇಷನ್ ಹಗರಣದ ಫಲಾನುಭವಿಯಾಗಿದ್ದರೋ, ಆ ಡಿ.ಕೆ.ಶಿವಕುಮಾರ್‌ರನ್ನು ಈಗ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡುತ್ತಾರೆ ಮತ್ತು ಅವರ ಉಸ್ತುವಾರಿಯಲ್ಲಿ ಆ ಪಕ್ಷ ಮುಂದಿನ ಚುನಾವಣೆ ನಡೆಸುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

ರಾಜ್ಯದ ಇತಿಹಾಸದಲ್ಲೇ ಜೈಲಿಗೆ ಹೋದ ಮುಖ್ಯಮಂತ್ರಿ ಎಂಬ ಅಪಖ್ಯಾತಿ ಪಡೆದ ಬಿ. ಎಸ್. ಯಡಿಯೂರಪ್ಪನವರನ್ನೇ ಇಂದು ಬಿಜೆಪಿಯು ಅಧಿಕಾರ ಹಿಡಿಯುವ ಸಲುವಾಗಿ ಮತ್ತು ಜಾತಿಯ ಬೆಂಬಲಕ್ಕಾಗಿ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಹೇಳಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದೆ. ತಮ್ಮ ಐದೂ ವರ್ಷದ ಆಡಳಿತಾವಧಿಯಲ್ಲಿ ಅಪಾರ ಭ್ರಷ್ಟಾಚಾರ ಮತ್ತು ’ಆಪರೇಷನ್ ಕಮಲ’ದಂತಹ ಅನೈತಿಕ ಚುನಾವಣಾ ರಾಜಕಾರಣ ಮಾಡಿದ್ದು ಬಿಜೆಪಿ. ಕಳ್ಳತನ ಮತ್ತು ಭ್ರಷ್ಟಾಚಾರವನ್ನು ಕದ್ದುಮುಚ್ಚಿ ಮಾಡದೇ ಬಹಿರಂಗವಾಗಿ ಮತ್ತು ಪಾರದರ್ಶಕವಾಗಿ ಮಾಡಿದ ಕೀರ್ತಿ ಅವರದು. ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿದ್ದು, ಜಾತೀಯತೆಯನ್ನು ಪೋಷಿಸುವ ಜಾತಿ ಸಂಘಗಳಿಗೆ ಹುಡುಕಿಹುಡುಕಿ ಹಣ ಕೊಟ್ಟಿದ್ದು, ಬೆಳಗ್ಗೆ ಸರ್ಕಾರಿ ಆದೇಶಕ್ಕೆ ಸಹಿ ಮಾಡಿ ಸಂಜೆಗೆ ಚೆಕ್‌ನಲ್ಲಿ ಲಂಚದ ಹಣ ಪಡೆದದ್ದು, ಗೊತ್ತಿದ್ದೂ ಗೊತ್ತಿದ್ದು ಭಾಸ್ಕರ್ ರಾವ್‌ರಂತಹ ಭ್ರಷ್ಟನನ್ನು ಲೋಕಾಯುಕ್ತರನ್ನಾಗಿ ನೇಮಿಸಿದ್ದು, ಶ್ಯಾಮ್ ಭಟ್‌ರನ್ನು ಬಿಡಿಎ ಯಂತಹ ಅಕ್ರಮ ಕೂಪಕ್ಕೆ ಅಧ್ಯಕ್ಷರನ್ನಾಗಿ ಮಾಡಿದ್ದು; ಅಕ್ರಮ ಗಣಿಗಾರಿಕೆಯಲ್ಲಿ ಸಚಿವರೇ ಪಾಲುದಾರರಾಗಿದ್ದದ್ದು, ಅಕ್ರಮ ಡಿನೋಟಿಫಿಕೇಷನ್‌ಗಳನ್ನು ಮಾಡಿ ಮಾಡಿ ಮಂತ್ರಿ-ಮುಖ್ಯಮಂತ್ರಿಗಳಾಗಿದ್ದವರೇ ಪ್ರತಿದಿನ ಕೋರ್ಟ್‍ಗೆ ಅಲೆದಿದ್ದು, ಮೂರು ವರ್ಷದಲ್ಲಿ ಮೂರು ಮುಖ್ಯಮಂತ್ರಿಗಳಾಗಿದ್ದು, ಒಂದು ಸಂದರ್ಭದಲ್ಲಿ ಒಬ್ಬ ಮಾಜಿ ಮುಖ್ಯಮಂತ್ರಿ, ನಾಲ್ವರು ಮಾಜಿ ಮಂತ್ರಿಗಳು, ಒಬ್ಬ ಶಾಸಕ ವಿಚಾರಣಾಧೀನ ಕೈದಿಗಳಾಗಿದ್ದದ್ದು, ಸಚಿವರೇ ಸದನದಲ್ಲಿ ಬ್ಲೂಫಿಲ್ಮ್ ನೋಡುತ್ತ ಕಾಲಕಳೆದದ್ದು; ಒಂದೇ ಎರಡೇ ಆ ಐದು ವರ್ಷಗಳಲ್ಲಿ ಘಟಿಸಿದ್ದು?

ಇನ್ನು, ಜಾತ್ಯತೀತ ಪಕ್ಷ ಎಂದು ತಮ್ಮ ಹೆಸರಿಗೆ ಸೇರಿಸಿಕೊಂಡಿರುವ ಜಾತ್ಯತೀತ ಜನತಾದಳ ತನ್ನ ಜಾತೀವಾದವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಮಾಜಿ ಪ್ರಧಾನ ಮಂತ್ರಿಗಳ ತವರು ಜಿಲ್ಲೆ ಹಾಸನದ ಸಿಗರನಹಳ್ಳಿಯ ಪ್ರಸಂಗ ಜಗಜ್ಜಾಹಿರು ಮಾಡಿದೆ. ಆ ಊರಿನಲ್ಲಿರುವ ಸರ್ಕಾರಿ ಸಮುದಾಯ ಭವನ ಒಂದು ನಿರ್ದಿಷ್ಟ ಜಾತಿಯ ಸಮುದಾಯ ಭವನ ಎಂಬ ಬೋರ್ಡ್ ಹಾಕಿಕೊಂಡಿತ್ತು. ಜನರ ಹೋರಾಟದ ಫಲವಾಗಿ ಮತ್ತು ಮಾಧ್ಯಮಗಳಲ್ಲಿ sigaranahalli-hassanರಾಜ್ಯ-ರಾಷ್ಟ್ರ ಮಟ್ಟದಲ್ಲಿ ವರದಿಯಾದ ಕಾರಣ ಇಂದು ಆ ನಾಮಫಲಕ ಬದಲಾಗಿದೆ. ಅಂದ ಮಾತ್ರಕ್ಕೆ ದಲಿತರಿಗೆ ಪ್ರವೇಶವೇನೂ ಸಿಕ್ಕಿಲ್ಲ. AC/DySP/ತಹಸೀಲ್ದಾರ್ ಹುದ್ದೆಗಳನ್ನು ಕೋಟಿಗಳಿಗೆ ಹರಾಜು ಹಾಕಿದ ಭ್ರಷ್ಟ ವ್ಯಕ್ತಿಯನ್ನು ದೇವೇಗೌಡರು ಇತ್ತೀಚೆಗೆ ಯಾವ ರೀತಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ ಎನ್ನುವುದು ನಮ್ಮ ಮುಂದೆಯೇ ಇದೆ. ಅನುಕೂಲಸಿಂಧು ರಾಜಕಾರಣಕ್ಕೆ ಉತ್ತಮ ಉದಾಹರಣೆಯಾಗಿರುವ ಈ ಜೆಡಿಎಸ್ ಜೊತೆಗೆ ಸ್ಥಳೀಯವಾಗಿ ನಗರಸಭೆ, ತಾಲ್ಲೂಕು, ಜಿಲ್ಲಾ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಹೊಂದಾಣಿಕೆ ಮಾಡಿಕೊಂಡಿವೆ. ಇದರಲ್ಲಿ ಜೆಡಿಎಸ್‌ದು ಮಾತ್ರ ಅನೈತಿಕ ರಾಜಕಾರಣ ಎಂದರೆ ಅದು ನಮ್ಮ ಅಪ್ರಾಮಾಣಿಕ ಮಾತಾಗುತ್ತದೆ.

ಇತ್ತೀಚೆಗೆ ತಾನೆ ವಿಧಾನಪರಿಷತ್ತು ಮತ್ತು ರಾಜ್ಯಸಭೆಗೆ ಶಾಸಕರಿಂದ ಚುನಾವಣೆ ನಡೆಯಿತು. ದೇಶದ ಪ್ರಮುಖ ಮಾಧ್ಯಮಗಳಲ್ಲಿ ರಾಜ್ಯದ ಹೆಸರು ಹರಾಜಾಯಿತು. ನಾಲ್ಕು ವಿಧಾನ ಪರಿಷತ್ ಸ್ಥಾನಗಳಿಗೆ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳಿಂದ ಚುನಾವಣೆ ನಡೆಯಿತು. ಶಿಕ್ಷಕರು ಮತ್ತು ಪದವೀಧರರಿಗೂ ಹಣ ಮತ್ತು ಗಿಫ್ಟ್‌ಗಳನ್ನು ಹಂಚಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಯಿತು. ಇದರಲ್ಲಿ ಆ ಪಕ್ಷ, ಈ ಪಕ್ಷ ಅಂತಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಮೂರೂ ಒಂದೇ ತರಹದ ಕಾರ್ಯಾಚರಣೆ, ತಂತ್ರಗಾರಿಕೆಯನ್ನು ಅಳವಡಿಸಿಕೊಂಡಿವೆ. ಆಯಾಯಾ ಕ್ಷೇತ್ರಕ್ಕೆ ಯಾರ ಹಣ ಹೆಚ್ಚಾಗಿ ಖರ್ಚಾಗುತ್ತಿದೆಯೋ, ಅಥವ ಯಾವ ಜಾತಿ/ಒಳಜಾತಿ ಲೆಕ್ಕಾಚಾರ ಕೆಲಸ ಮಾಡುತ್ತದೆಯೋ ಅದಕ್ಕೆ ಅನುಗುಣವಾಗಿ ಫಲಿತಾಂಶ ಬರುತ್ತಿದೆ.

ಹೀಗೆ ನೈತಿಕವಾಗಿ ದಿವಾಳಿಯಾಗಿರುವ ಪಕ್ಷಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ರಾಜ್ಯದ ನೈಸರ್ಗಿಕ ಸಂಪತ್ತುಗಳಾದ ಮರಳು, ಅರಣ್ಯ, ಗ್ರಾನೈಟ್, ಭೂಮಿ ಯಾವುದೇ ನಿಯಂತ್ರಣವಿಲ್ಲದೆ dharwad-janaparyaya-09072016ಪಟ್ಟಭದ್ರರ ಪಾಲಾಗುತ್ತಿದೆ. ಇದಾವುದೂ ಅವರುಗಳ ಗಮನಕ್ಕೆ ಬರದಂತೆಯೇ ವರ್ತಿಸುತ್ತಿದ್ದಾರೆ. ಈ ಪಟ್ಟಭದ್ರರು ಇಂದಿನ ಮತ್ತು ಹಿಂದಿನ ಸರ್ಕಾದಲ್ಲಿ ಇದ್ದವರೇ ಆಗಿದ್ದಾರೆ. ಇಂತಹವರಿಂದ ಜನ ಸಾಮಾನ್ಯರ ಹಕ್ಕು ಮತ್ತು ಆಸ್ತಿಗಳ ರಕ್ಷಣೆಯನ್ನು ಹೇಗೆ ತಾನೆ ನಿರೀಕ್ಷಿಸಲು ಸಾಧ್ಯ?

ನೈಸರ್ಗಿಕ ಸಂಪತ್ತುಗಳು ಕೆಲವೇ ಕೆಲವು ಮಂದಿಯ ಸ್ವತ್ತಾಗುವುದರ ಜೊತೆಗೆ, ಸಾಮಾಜಿಕ ನ್ಯಾಯ ಅರ್ಹ ವರ್ಗಗಳಿಗೆ ತಲುಪುತ್ತಿಲ್ಲ.

ಶೋಷಣೆ, ತಾರತಮ್ಯ, ದೇವರು-ದೆವ್ವ-ನಂಬಿಕೆ ಹೆಸರಿನಲ್ಲಿ ಅಮಾನವೀಯ ಆಚರಣೆಗಳು ಮುಂದುವರೆಯುತ್ತಲೇ ಇವೆ.

ಎಂಟು ನೂರು ವರ್ಷಗಳ ಹಿಂದೆ ಬಸವಣ್ಣ ಹೇಳಿದ್ದು ಇಂದಿಗೂ ಪ್ರಸ್ತುತ, ಏಕೆಂದರೆ ಇಂದಿಗೂ ಆವತ್ತಿನ ಸಮಸ್ಯೆಗಳು ಮುಂದುವರೆಯುತ್ತಿವೆ.

ಇದು ಕರ್ನಾಟಕದ ಪ್ರಸಕ್ತ ಸಾಮಾಜಿಕ ಮತ್ತು ರಾಜಕೀಯ ವಾತಾವರಣ.

ಡಾ.ಝಾಕಿರ್ ನಾಯ್ಕ್ ಮತ್ತು ಸ್ವಧರ್ಮ ಶ್ರೇಷ್ಠತಾ ವ್ಯಸನ


-ಇರ್ಷಾದ್ ಉಪ್ಪಿನಂಗಡಿ


 

ವಿವಾದಿತ ವಹಾಬಿ ಇಸ್ಲಾಮ್ ಧರ್ಮ ಪ್ರಚಾರಕ ಡಾ. ಜಾಕಿರ್ ನಾಯ್ಕ್ ಮತ್ತೆ ಸುದ್ದಿಯಲ್ಲಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ನಾಯ್ಕ್ ಕುರಿತಾಗಿ ಚರ್ಚೆಗಳು ನಡಿಯುತ್ತಿವೆ. ಝಾಕಿರ್ ನಾಯ್ಕ್ ಮತ್ತೆ ವಿವಾದದ ಕೇಂದ್ರ ಬಿಂದುವಾಗಲು ಕಾರಣ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆದ ಭಯೋತ್ಪಾದಕ ದಾಳಿ. 25 ಮಂದಿ ಅಮಾಯಕರನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಯ ರೂವಾರಿಗಳು ವಹಾಬಿ ಇಸ್ಲಾಮ್ ಧರ್ಮ ಪ್ರಚಾರಕ ಡಾ. ಝಾಕಿರ್ ನಾಯ್ಕ್ ವಿಚಾರಧಾರೆಗಳಿಂದ ಪ್ರಭಾವಿತಗೊಂಡಿದ್ದರು ಎಂಬ ಮಾಹಿತಿ. ಪರಿಣಾಮ ತನಿಖಾ ಸಂಸ್ಥೆಗಳು ಝಾಕಿರ್ ನಾಯ್ಕ್ ದೇಶ ವಿದೇಶಗಳಲ್ಲಿ ಮಾಡಿರುವ ಧರ್ಮ ಪ್ರಚಾರ ಭಾಷಣಗಳ ತನಿಖೆಗೂ ಮುಂದಾಗಿವೆ. ಮಾಧ್ಯಮಗಳು “ಬ್ಯಾನ್ ಝಾಕಿರ್ ನಾಯ್ಕ್” ಹ್ಯಾಶ್ ಟ್ಯಾಗ್ ಮೂಲಕ ಕ್ಯಾಂಪೇನ್ ನಡೆಸುತ್ತಿವೆ. ಇನ್ನೊಂದೆಡೆ ಝಾಕಿರ್ ನಾಯ್ಕ್ ಅಭಿಮಾನಿಗಳ “ಐ ಆಮ್ ವಿಥ್ ಝಾಕಿರ್ ನಾಯ್ಕ್” ಹ್ಯಾಶ್ ಟ್ಯಾಗ್ ಕ್ಯಾಂಪೇನ್ ಕೂಡಾ ಜೋರಾಗಿದೆ. ಹಾಗಾದರೆ ಡಾ. ಝಾಕಿರ್ ನಾಯ್ಕ್ ವಿಚಾರಧಾರೆಗಳೇನು? ಯುವ ಮನಸ್ಸುಗಳಲ್ಲಿ ಕ್ರೌರ್ಯವನ್ನು ತುಂಬುವಷ್ಟು ವಿಷಪೂರಿತವಾಗಿವೆಯಾ ನಾಯ್ಕ್ ಚಿಂತನೆಗಳು? ಈ ಎಲ್ಲಾ ವಿಚಾರಗಳನ್ನು ಗಂಭೀರವಾಗಿಯೇ ಚರ್ಚೆಗೆ ಕೈಗೆತ್ತಿಕೊಳ್ಳಬೇಕಿದೆ.

ಯಾರು ಈ ಡಾ. ಝಾಕಿರ್ ನಾಯ್ಕ್?

ಪೀಸ್ ಟಿವಿ ಎಂಬ ವಹಾಬಿ ಇಸ್ಲಾಮ್ ಧರ್ಮ ಪ್ರಚಾರಕ ವಾಹಿನಿಯನ್ನು ವೀಕ್ಷಿಸುತ್ತಿರುವ ಎಲ್ಲರಿಗೂ ಡಾ. ಝಾಕಿರ್ ನಾಯ್ಕ್ ಚಿರಪರಿಚಿತ. dr zhakir naikತಲೆಗೊಂದು ಟೊಪ್ಪಿ, ಮೀಸೆಯನ್ನು ಕತ್ತರಿಸಿ ಗಡ್ಡ ಬಿಟ್ಟು ಸೂಟ್ ಧರಿಸಿ ವಿದ್ಯುತ್ ಅಲಂಕಾರಗಳಿಂದ ಕೂಡಿರುವ ಜಗಮಗಿಸುವ ಸೆಟ್ ನಲ್ಲಿ ನಿಂತು ಸಾವಿರಾರು ಜನರ ಮುಂದೆ ಧರ್ಮಪ್ರವಚನ ನೀಡುತ್ತಾ ಇಸ್ಲಾಮ್ ಧರ್ಮದ ಪ್ರಚಾರ ಮಾಡುತ್ತಾರೆ. ಸಭಿಕರು ಇಸ್ಲಾಮ್ ಕುರಿತಾಗಿ ಕೇಳುವ ಪ್ರೆಶ್ನೆಗಳಿಗೆ ಕುರುಆನ್ ಹಾಗೂ ಹದೀಸ್ ಗಳನ್ನು ಮುಂದಿಟ್ಟುಕೊಂಡು ತನ್ನದೇ ಆದ ರೀತಿಯಲ್ಲಿ ಉತ್ತರವನ್ನು ಕೊಡುವ ಚಾಣಾಕ್ಷ ಮಾತುಗಾರ ಡಾ. ಝಾಕಿರ್ ನಾಯ್ಕ್. ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಸ್ಥಾಪಕರಾಗಿರುವ ಝಾಕಿರ್ ನಾಯ್ಕ್ ಧರ್ಮ ಪ್ರಚಾರ ಕಾರ್ಯಕ್ರಮಕ್ಕೆ ಬರುವವರು ಕೇವಲ ಮುಸ್ಲಿಮರಷ್ಟೇ ಅಲ್ಲ, ಹಿಂದೂ ಕ್ರೈಸ್ತ ಸಮುದಾಯದವರೂ ಬರುತ್ತಾರೆ. ಇಸ್ಲಾಮ್ ಕುರಿತಾಗಿ ತಮ್ಮ ಪ್ರೆಶ್ನೆಗಳನ್ನು ಡಾ. ನಾಯ್ಕ್ ಮುಂದಿಡುತ್ತಾರೆ. ಹೀಗೆ ಪ್ರೆಶ್ನೆ ಕೇಳುತ್ತಾ ಚರ್ಚೆ ನಡೆಸುತ್ತಾ ನೂರಾರು ಮಂದಿ ಇಸ್ಲಾಮ್ ಧರ್ಮವನ್ನು ಬಹಿರಂಗವಾಗಿಯೇ ಸ್ವೀಕಾರ ಮಾಡುತ್ತಾರೆ. ಪೀಸ್ ಟಿವಿ ಮೂಲಕ ಜನಜನಿತವಾಗಿರುವ ಡಾ.ಜಾಕಿರ್ ನಾಯ್ಕ್ ಗೆ ದೇಶ ವಿದೇಶಗಳಾದ್ಯಂತ ಅಭಿಮಾನಿಗಳಿದ್ದಾರೆ. ಡಾ. ಝಾಕಿರ್ ನಾಯ್ಕ್ ಇದುವರೆಗೂ ಪ್ರಪಂಚದಾದ್ಯಂತ 4000 ಕ್ಕೂ ಅಧಿಕ ಧಾರ್ಮಿಕ ಪ್ರವಚನಗಳನ್ನು ನೀಡಿದ್ದಾರೆ. ಅವೆಲ್ಲವೂ ಪೀಸ್ ಟಿವಿ ಮೂಲಕ ಪ್ರಸಾರವಾಗುತ್ತವೆ. ಕೆಲವು ದೇಶಗಳಲ್ಲಿ ಇವರು ಧರ್ಮ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುವುದಕ್ಕೂ ಹಾಗೂ ಇವರ ಭಾಷಣಗಳನ್ನು ಪ್ರಸಾರ ಮಾಡುವ ಪೀಸ್ ಟಿವಿ ವಾಹಿನಿಗೂ ನಿಷೇಧವಿದೆ. ಗಮನಾರ್ಹವಾದ ಸಂಗತಿ ಏನೆಂದರೆ ಮುಸ್ಲಿಮ್ ಯುವ ಸಮೂಹ ಡಾ.ಝಾಕಿರ್ ನಾಯ್ಕ್ ವಿಚಾರಧಾರೆಗಳತ್ತ ಇತ್ತೀಚೆಗೆ ಹೆಚ್ಚಾಗಿ ವಾಲುತ್ತಿವೆ. ಮನೆ ಮನೆಗಳಲ್ಲಿ ಟಿವಿ ಮೂಲಕ ಇವರ ಧಾರ್ಮಿಕ ವಿಚಾರಧಾರೆಗಳನ್ನು ವೀಕ್ಷಿಸುವವರಲ್ಲಿ ಯುವ ಸಮೂಹದ್ದೇ ಅಧಿಕ ಪಾಲು.

ಡಾ. ಜಾಕಿರ್ ನಾಯ್ಕ್ ಹಾಗೂ ಧರ್ಮ ಶ್ರೇಷ್ಠತಾ ವ್ಯಸನ

ಡಾ. ಜಾಕಿರ್ ನಾಯ್ಕ್ ವಹಾಬಿ ಇಸ್ಲಾಮ್ ಪ್ರತಿಪಾದಕ. 18 ನೇ ಶತಮಾನದಲ್ಲಿ ಅರೇಬಿಯಾದಲ್ಲಿ ಅಬ್ದುಲ್ ವಹಾಬ್ ಎಂಬುವವರು ಈ ಪಂಥವನ್ನು ಹುಟ್ಟುಹಾಕಿದರು. ಭಾರತೀಯ ಮುಸ್ಲಿಮರು ಪಾಲಿಸಿಕೊಂಡು ಬಂದ ಸೂಫೀ ಪರಂಪರೆಯ ಇಸ್ಲಾಮ್ ಧರ್ಮವನ್ನು ಈ ವಹಾಬಿ ಸಿದ್ದಾಂತವಾದಿಗಳು ಒಪ್ಪುವುದಿಲ್ಲ. ಕಾರಣ ಭಾರತೀಯ ಮುಸ್ಲಿಮರು ಪಾಲಿಸುವ ಇಸ್ಲಾಮ್ “ಅಶುದ್ಧಿಯಾಗಿದೆ” ಹಾಗೂ ಸೂಫಿ ವಿಚಾರಧಾರೆಗಳಿಂದ ಪ್ರಭಾವಿತವಾಗಿ ಇತರ ಧರ್ಮಗಳ ಸಂಸ್ಕೃತಿ ಹಾಗೂ ಆಚರಣೆಗಳನ್ನೂ ಇಸ್ಲಾಮ್ ಧರ್ಮದಲ್ಲಿ ಅಳವಡಿಸಿಕೊಂಡಿವೆ. ಇದು ಧರ್ಮ ನಿಷಿದ್ಧ ಕಾರ್ಯ ಎಂಬುವುದು ವಹಾಬಿ ಮೂಲಭೂತವಾದಿಗಳ ವಾದ. ಈ ಕಾರಣಕ್ಕಾಗಿ ಧರ್ಮದ ಪರಿಶುದ್ದೀಕರಣದ ಹೆಸರಲ್ಲಿ ಸೌದಿ ಅರೇಬಿಯಾದ ಕಟ್ಟರ್ ವಹಾಬಿ ಚಿಂತನೆಯನ್ನು ನೈಜ್ಯ ಇಸ್ಲಾಮ್ ಎಂದು ಬಿಂಬಿಸಲು ಇವರು ಹೊರಟಿದ್ದಾರೆ. ಡಾ. ಜಾಕಿರ್ ನಾಯ್ಕ್ ಮಾಡುತ್ತಿರುವುದು ಈ ಕಾರ್ಯವನ್ನೇ. ಪರಿಶುದ್ದ ಇಸ್ಲಾಮ್ ಹೆಸರಿನಲ್ಲಿ ವಹಾಬಿ ಮೂಲಭೂತವಾದ ಸಿದ್ದಾಂತವನ್ನು ವಿಶ್ವದಾದ್ಯಂತ ಪ್ರಚುರ ಪಡಿಸುವುದು ನಾಯ್ಕ್ ನೇತ್ವತ್ವದ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ಸಂಸ್ಥೆಯ ಪ್ರಮುಖ ಉದ್ದೇಶ. ಇವರ ಧಾರ್ಮಿಕ ಪ್ರವಚನಗಳನ್ನು ಆಲಿಸಿದಾಗ ಅವರಲ್ಲಿರುವ ಧರ್ಮ ಶ್ರೇಷ್ಠತಾ ವ್ಯಸನ ಎದ್ದು ಕಾಣುತ್ತದೆ. ಇಸ್ಲಾಮ್ ಧರ್ಮ ಹೊರತುಪಡಿಸಿ ಇತರ ಎಲ್ಲಾ ಧರ್ಮಗಳು ನ್ಯೂನ್ಯತೆಯಿಂದ ಕೂಡಿದೆ ಎಂಬ ವಾದ ಇವರ ಮತಪ್ರವಚನಗಳಲ್ಲಿ ಪದೇ ಪದೇ ಉಲ್ಲೇಖವಾಗುತ್ತದೆ. ತಾನು ಪಾಲಿಸುತ್ತಿರುವ ಧರ್ಮವನ್ನು ಸಮರ್ಥಿಸುತ್ತಾ ಹಾಗೂ ಅದರ ಶ್ರೇಷ್ಠತೆಯನ್ನು ಸಾರುತ್ತಾ ಇತರ ಧರ್ಮಗಳನ್ನು ಅವಹೇಳನಕಾರಿಯಾಗಿ ಬಿಂಬಿಸುವ ಮನೋಭಾವ ಯಾವ ಧರ್ಮದಲ್ಲೇ ಇರಲಿ ಅದು ತೀರಾ ಅಪಾಯಕಾರಿ.

ಇತರ ಧರ್ಮಗಳ ಬಗ್ಗೆ ವಿಮರ್ಶಿಸುವುದು ಖಂಡಿತಾ ತಪ್ಪಲ್ಲ. ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಅಥವಾ ಇನ್ನಾವುದೇ ಧರ್ಮದ ಅನುಯಾಯಿಗಳುdr zhakir naik_1 ಪರಸ್ಪರ ಎಲ್ಲಾ ಧರ್ಮಗಳ ಕುರಿತಾಗಿ ಚರ್ಚೆ ನಡೆಸಲು ಹಾಗೂ ವಿಮರ್ಶಿಸಲು ಅವಕಾಶವಿದೆ, ಇರಬೇಕು ಕೂಡಾ. ಆದರೆ ಇದು ವೈಜ್ಞಾನಿಕ ನೆಲೆಯಲ್ಲಿರಬೇಕು. ಹಾಗಲ್ಲದೆ, ತನ್ನ ಧರ್ಮದ ಶ್ರೇಷ್ಠತೆಯನ್ನು ಸಾರುವ ಭರದಲ್ಲಿ ಮತ್ತೊಂದು ಧರ್ಮದ ಅಸ್ತಿತ್ವವನ್ನೇ ನಿರಾಕರಿಸಿಸುವುದು ಹಾಗೂ ಇತರ ಧರ್ಮಗಳನ್ನು ಅವಹೇಳನಕಾರಿಯಾಗಿ ಚಿತ್ರಿಸುವುದು ಮಾತ್ರ ಅತಿರೇಕದ ನಡವಳಿಕೆ. ಡಾ. ಝಾಕಿರ್ ನಾಯ್ಕ್ ಬಹುತೇಕ ವಾದಗಳಲ್ಲೂ ಪರಧರ್ಮ ಅಸಹಿಷ್ಠುತಾ ಮನೋಭಾವ ಹೊಂದಿರುವುದು ಎದ್ದು ಕಾಣುತ್ತಿದೆ. ಇದು ಕೇವಲ ಝಾಕಿರ್ ನಾಯ್ಕ್ ರಲ್ಲಿ ಮಾತ್ರವಲ್ಲ ಅವರ ವಿಚಾರಧಾರೆಗಳನ್ನು ಪಾಲಿಸುವ ಸಿದ್ದಾಂತವಾದಿಗಳಲ್ಲೂ ಕಂಡುಬರುತ್ತದೆ. ಡಾ. ಝಾಕಿರ್ ನಾಯ್ಕ್ ಅವರ ಚಿಂತನೆಯನ್ನು ಪ್ರಚಾರ ಪಡಿಸುವ ಸಲಫೀ, ಅಹ್ಲೆಹದೀಸ್ ಸಿದ್ದಾಂತವಾದಿಗಳಲ್ಲಿ ಚರ್ಚೆ ನಡೆಸಿದರೆ ಅವರಲ್ಲಿ ಪರಧರ್ಮ ಅಸಹಿಷ್ಠುತಾ ಮನೋಭಾವ ಎಷ್ಟರ ಮಟ್ಟಿಗೆ ಇದೆ ಎಂಬುವುದನ್ನು ನಾವು ಕಾಣಬಹುದು. ಇಸ್ಲಾಮ್ ಧರ್ಮವನ್ನು ಹೊರತುಪಡಿಸಿ ಇನ್ನೊಂದು ಧರ್ಮದ ಅಸ್ತಿತ್ವವನ್ನೇ ಇವರು ಒಪ್ಪಲು ತಯಾರಿಲ್ಲ.

“ಬಹುಸಂಸ್ಕೃತಿ, ಕೂಡುಕೊಳ್ಳುವಿಕೆ ಮುಸ್ಲಿಮರ ಪಾಲಿಗೆ ಧರ್ಮ ನಿಷಿದ್ಧ. ನೈಜ್ಯ ಮುಸಲ್ಮಾನನೊಬ್ಬ ಹಿಂದೂಗಳ ಹಬ್ಬಹರಿದಿನಗಳಲ್ಲಿ ಭಾಗವಹಿಸಲಾರ, ಅವರು ಕೊಡುವ ಹಬ್ಬದೂಟವನ್ನೂ ಸ್ವೀಕರಿಸುವುದು ಧರ್ಮಬಾಹಿರ” ಎನ್ನುತ್ತಾರೆ ಮಂಗಳೂರಿನ ಸಲಫಿ ಮೂಮೆಂಟ್ ಮುಖಂಡರೊಬ್ಬರು. ಧರ್ಮಾಂಧತೆಯ ನಶೆಯಲ್ಲಿ ಮುಳುಗಿರುವ ಬಹುತೇಕ ಯುವಕರು ವಾದ ಮಾಡುವವಾಗ ಬಳಸುವುದು ಡಾ. ಝಾಕಿರ್ ನಾಯ್ಕ್ ಬಳಸೋ ಮೆಟೀರಿಯಲ್ ಗಳನ್ನೇ. ಬಹುಸಂಸ್ಕೃತಿ ವಿರೋಧಿ ಮನೋಭಾವ ಹಾಗೂ ಸ್ವಧರ್ಮ ಶ್ರೇಷ್ಠತಾ ವ್ಯಸನ ಯುವಮನಸ್ಸುಗಳಲ್ಲಿ ಆಳವಾಗಿ ಬೆರೂರುತ್ತಿರುವುದಕ್ಕೆ ಡಾ.ನಾಯ್ಕ್ ಕೊಡುಗೆ ತುಂಬಾನೇ ಇದೆ. ಇನ್ನೂ ಅಪಾಯಕಾರಿಯಾದ ಸಂಗತಿ ಏನಂದರೆ ಝಾಕಿರ್ ನಾಯ್ಕ್ ಮುಸ್ಲಿಮ್ ಯುವಮನಸ್ಸುಗಳಲ್ಲಿ ಸರ್ವಶ್ರೇಷ್ಠ ಮುಸ್ಲಿಮ್ ಧರ್ಮಗುರುವಾಗಿ ಸ್ಥಾನಪಡೆದುಕೊಳ್ಳುತ್ತಿರುವುದು. ಡಾ.ಝಾಕಿರ್ ನಾಯ್ಕ್ ವಿಚಾರಧಾರೆಗಳಿಗೆ ಭಿನ್ನವಾದ ಚಿಂತನೆಗಳು ಇಸ್ಲಾಮ್ ಧರ್ಮದಲ್ಲಿದ್ದರೂ ಅಲ್ಲದೆ ಅವರು ಪ್ರಚುರಪಡಿಸುವ ವಹಾಬಿ ಮೂಲಭೂತವಾದಿ ಚಿಂತನೆಗೆ ಮುಸ್ಲಿಮ್ ಸಮೂಹದಲ್ಲಿ ವಿರೋಧವಿದ್ದರೂ ಇಂದಿನ ಯುವಕರ ಪಾಲಿಗೆ ಡಾ. ಝಾಕಿರ್ ನಾಯ್ಕ್ ಪ್ರಮುಖ ಮುಸ್ಲಿಮ್ ಧಾರ್ಮಿಕ ನಾಯಕನಾಗಿ ಹೊರಹೊಮ್ಮುತ್ತಿದ್ದಾರೆ.

ಇತ್ತೀಚೆಗೆ ಕೆಲ ಮುಸ್ಲಿಮ್ ಯುವಕರಂತೂ ಅತಿಧಾರ್ಮಿಕತೆಯ ಗುಲಾಮರಾಗುತ್ತಿದ್ದಾರೆ. ಧಾರ್ಮಿಕತೆಯ ಗುಂಗಿನಲ್ಲೇ ದಿನದ ಅಧಿಕ ಸಮಯವನ್ನು ಕಳೆಯುವ ಸುಶಿಕ್ಷಿತ ಮುಸ್ಲಿಮ್ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ವಯೋಸಹಜ ನಡವಳಿಕೆಗೆ ಬದಲಾಗಿ ಪರಲೋಕ ಸ್ವರ್ಗ ನರಕಗಳ ಕುರಿತಾದ ವಿಚಾರಗಳಲ್ಲಿ ಅತಿಯಾಗಿ ತಲೆಕೆಡಿಸಿಕೊಳ್ಳುತ್ತಾರೆ. ಸಂಗೀತ, ಕಲೆ, ಸಿನಿಮಾಗಳ ವಿರುದ್ಧವಾದ ಮನಸ್ಥಿತಿಯನ್ನು ಹೊಂದಿರುತ್ತಾರೆ. ಅಲ್ಲದೆ ಇಂತಹಾ ಮನಸ್ಥಿತಿ ಹೊಂದಿರುವ ಯುವಕರು ಲೌಕಿಕ ಜೀವನದ ಕುರಿತಾಗಿ ತಾತ್ಸಾರ ಮನೋಭಾವ ಹೊಂದಿರುತ್ತಾರೆ. ಈ ಲೌಕಿಕ ಜೀವನವಿರುವುದೇ ಧಾರ್ಮಿಕ ಕಾರ್ಯಗಳನ್ನು ಪೂರ್ಣಗೊಳಿಸಲು; ನಮ್ಮ ಬದುಕು ಏನಿದ್ದರೂ ಪರಲೋಕದಲ್ಲ ಎಂಬ ನಂಬಿಕೆ ಅತಿಯಾಗಿ ಧರ್ಮಪಾಲನೆ ಹಾಗೂ ಧರ್ಮರಕ್ಷಣೆಯೇ ಈ ಯುವಕರ ಜೀವನದ ಪರಮ ಗುರಿಯಾಗುತ್ತಿದೆ. ನನ್ನ ಸ್ನೇಹಿತನೊಬ್ಬ ಮಧ್ಯಾಹ್ಮದ ನಮಾಜ್ ಮಾಡಲು ಕಚೇರಿಯಲ್ಲಿ ಅವಕಾಶವಿಲ್ಲ ಎಂಬ ಕಾರಣಕ್ಕಾಗಿ ಸಿಕ್ಕಿದ್ದ ಉತ್ತಮ ಉದ್ಯೋಗಕ್ಕೆ ರಾಜಿನಾಮೆ ನೀಡಿದ್ದ. ಐಸೀಸ್ ಗೆ ಸೇರಿದ್ದಾರೆಂದು ಶಂಕಿಸಲ್ಪಡುತ್ತಿರುವ ಕೇರಳದ ಯುವಕರ ಪೋಷಕರೊಬ್ಬರು ತನ್ನ ಮಗನ ಅತಿಧಾರ್ಮಿಕತೆಯ ಬಗ್ಗೆ ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆ ನಿಜಕ್ಕೂ ಆತಂಕಕ್ಕೆ ಎಡೆಮಾಡಿಕೊಡುತ್ತಿದೆ. ಆ ಯುವಕನ ಅತಿಧಾರ್ಮಿಕತೆ ಎಷ್ಟಿತ್ತೆಂದರೆ ತನ್ನ ತಂದೆಯನ್ನೇ “ಕಾಫಿರ್ ” ಎಂದು ಕರೆದಿದ್ದ. ಶರಿಯಾ ಕಾನೂನು ಜಾರಿಗಾಗಿ ಹೋರಾಡುತ್ತೇನೆ ಎಂದಿದ್ದನಂತೆ. ತನ್ನ ಹೋರಾಟದ ಮೂಲಕ ಸ್ವರ್ಗ ಪಡೆಯುತ್ತೇನೆ ಎನ್ನುತ್ತಿದ್ದನಂತೆ. ಈ ರೀತಿಯಲ್ಲಿ ಅತಿಧಾರ್ಮಿಕತೆಯತ್ತ ವಾಲುತ್ತಿರುವ ಯುವಮನಸ್ಸುಗಳ ಮೇಲೆ ಡಾ.ಝಾಕಿರ್ ನಾಯ್ಕ್ ಪ್ರಭಾವ ಬಹಳಷ್ಟಿದೆ. ಅತಿಧಾರ್ಮಿಕತೆ ಮಿತಿಮೀರಿದರೆ ಅದರ ಪರಿಣಾಮ ಹೇಗಿರುತ್ತದೆ ಎಂಬುವುದು ಇಂದು ನಾವು ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಂತಹಾ ನೆರೆ ರಾಷ್ಟ್ರಗಳಲ್ಲಿ ಕಾಣಸಿಗುತ್ತದೆ.

ಕೇಂದ್ರ ಸರ್ಕಾರದ ಕಣ್ಣು ಕೇವಲ ಡಾ. ಝಾಕಿರ್ ನಾಯ್ಕ್ ವಿರುದ್ಧ ಯಾಕೆ ?

ಬಾಂಗ್ಲಾದೇಶದಲ್ಲಿ ನಡೆದ ಭಯೋತ್ಪಾಧನಾ ಕೃತ್ಯದ ನಂತರ ಡಾ. ಝಾಕಿರ್ ನಾಯ್ಕ್ ಮೇಲೆ ನಿಗಾ ಇಡಲು ತನಿಖಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.gujarat_violence_1 ಆದರೆ ಡಾ. ಝಾಕಿರ್ ನಾಯ್ಕ್ ಎಂಬ ಇಸ್ಲಾಮ್ ಮೂಲಭೂತವಾದಿ ಧಾರ್ಮಿಕ ಮುಖಂಡನನ್ನು ಮಾತ್ರ ನಿಯಂತ್ರಿಸಿದರೆ ಸಾಕೇ? ಹಿಂದುತ್ವದ ಹೆಸರಲ್ಲಿ ಅಮಾಯಕರ ರಕ್ತ ಹರಿಸಲು ಪ್ರೇರೇಪಿಸುವ ಫ್ಯಾಸಿಸ್ಟ್ ಕೋಮುವಾದಿಗಳ ಬಾಯಿಗೆ ಬೀಗ ಹಾಕುವವರು ಯಾರು? ಬಾಂಗ್ಲಾದ ಇಸ್ಲಾಮಿಕ್ ಭಯೋತ್ಪಾದಕರು ಡಾ. ಝಾಕಿರ್ ನಾಯ್ಕ್ ರಿಂದ ಪ್ರಭಾವಿತರಾದರೆ ಹಿಂದುತ್ವದ ಹೆಸರಲ್ಲಿ ಅಮಾಯಕ ಮುಸ್ಲಿಮರ ರಕ್ತ ಹರಿಸುವವರಿಗೆ ಅಥವಾ ದಾಬೋಳ್ಕರ್, ಪನ್ಸಾರೆ, ಕಲ್ಬುರ್ಗಿ ಹತ್ಯೆಮಾಡಿದ ಹಿಂದುತ್ವ ಭಯೋತ್ಪಾದಕರಿಗೆ ಸಾದ್ವಿ ಪ್ರಾಗ್ಯ, ಮಾಯಾ ಕೊಡ್ನಾನಿ, ಪ್ರವೀಣ್ ತೊಗಾಡಿಯಾ, ಸ್ವಾದ್ವಿ ಪ್ರಾಚಿ, ಸಾಕ್ಷಿ ಮಹಾರಾಜ್, ಯೋಗಿ ಆದಿತ್ಯನಾಥರಂತಹಾ ಹಿಂದೂ ಮೂಲಭೂತವಾದಿಗಳು ಆದರ್ಶಪ್ರಾಯರಾಗಿದ್ದಾರೆ. ನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ಪ್ರಚೋದನೆಯಿಂದ ಕೂಡಿದ ಹೇಳಿಕೆಯನ್ನು ನೀಡುತ್ತಾ ಮುಝಾಫರ್ ನಗರ್, ದಾದ್ರಿಯಂತಹಾ ಹತ್ತಾರು ಅಮಾನುಷ ಘಟನೆಗಳಿಗೆ ಕಾರಣರಾದವರಲ್ಲವೇ ಇವರು. ಡಾ. ನಾಯ್ಕ್ ರಂತೆ ಧರ್ಮ ಶ್ರೇಷ್ಠತಾ ವ್ಯಸನ ಪ್ರಖರ ಹಿಂದುತ್ವವಾದಿಗಳಲ್ಲೂ ಹೆಚ್ಚಾಗುತ್ತಿದೆ. ಈ ಕೋಮುವಾದಿಗಳ ವಿರುದ್ಧ ಕೇಂದ್ರದ ತನಿಖಾ ಸಂಸ್ಥೆಗಳು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುವುದು ಪ್ರಶ್ನಾರ್ಹ ಸಂಗತಿ.

ಎಲ್ಲಾ ರೀತಿಯ ಧಾರ್ಮಿಕ ಮೂಲಭೂತವಾದ ಹಾಗೂ ಕೋಮುವಾದ ಮನುಕುಲಕ್ಕೆ ಅಪಾಯಕಾರಿ. ಕೇವಲ ಒಬ್ಬ ವ್ಯಕ್ತಿಯ ವಿರುದ್ಧ ಕ್ರಮಕೈಗೊಂಡರೆ ಸಾಲದು. ಬದಲಾವಣೆಯಾಗಬೇಕಾಗಿರೋದು ಜನರ ಮನಸ್ಸಿನಲ್ಲಿ. ಈ ನಿಟ್ಟಿನಲ್ಲಿ ನಾವೆಲ್ಲಾ ಕಾರ್ಯೋನ್ಮುಖರಾಗಬೇಕಿದೆ. ಧಾರ್ಮಿಕತೆಗೆ ವಿರೋಧವಿಲ್ಲ. ಆದರೆ ಅತಿ ಧಾರ್ಮಿಕತೆ ಯಾವತ್ತೂ ಅಪಾಯಕಾರಿ. ಸಂವಿಧಾನದ ಪ್ರಕಾರ ಎಲ್ಲರಿಗೂ ತಮ್ಮ ತಮ್ಮ ವಿಚಾರಧಾರೆಗಳನ್ನು ವ್ಯಕ್ತಪಡಿಸಲು ಹಾಗೂ ಪ್ರಚುರಪಡಿಸಲು ಹಕ್ಕಿದೆ. ಆದರೆ ಸದ್ಯ ನಮಗೆಲ್ಲಾ ಬೇಕಾಗಿರೋದು ಡಾ. ಝಾಕಿರ್ ನಾಯ್ಕ್ ಪ್ರಚಾರ ಪಡಿಸುವ ಇಸ್ಲಾಂ ಮೂಲಭೂತವಾದಿ ಸಿದ್ದಾಂತವಲ್ಲ ಅಥವಾ ಸಂಘಪರಿವಾರದ ಫ್ಯಾಶಿಸ್ಟ್ ಕೋಮುವಾದಿ ಸಿದ್ದಾಂತವದ ಪ್ರಚಾರವಲ್ಲ. ಬದಲಾಗಿ ಅಗತ್ಯವಿರೋದು ಮಾನವೀಯತೆ ಹಾಗೂ ಜೀವಪರ ವಿಚಾರಗಳನ್ನು ಯುವಮನಸ್ಸಿನೊಳಗೆ ಬಿತ್ತುವ ವಿಚಾರಾಧಾರೆಗಳು. ಒಡೆದುಹೋಗುತ್ತಿರುವ ಮನಸ್ಸುಗಳನ್ನು ಬೆಸೆಯುವ ಕೆಲಸ ಆಗಬೇಕಿರುವುದು ಇಂದಿನ ಜರೂರತ್ತು.

ಕೊನೆಗೊಂದು ಮಾತು ಹೇಳಲೇ ಬೇಕು. ಬಾಂಗ್ಲಾದ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದ ಉಗ್ರರು ಕುರಾನ್ ಪಠಿಸಲು ಬಾರದವರ ಕತ್ತುಸೀಳಿ ಹತ್ಯೆ ಮಾಡಿದ್ದರು. ಈ ಸಂದರ್ಭದಲ್ಲಿ ತನ್ನ ಗೆಳತಿ ತರುಷಿ ಜೊತೆಗಿದ್ದ ಮುಸ್ಲಿಮ್ ಯುವಕ ಫರಾಜ್ ಹುಸೇನ್ ಗೆ ಮುಸ್ಲಿಮ್ ಎಂಬ ಕಾರಣಕ್ಕಾಗಿ ಉಗ್ರರು ಜೀವದಾನವನ್ನು ನೀಡಿದ್ದರು. ಆದರೆ ಅದನ್ನ ತಿರಸ್ಕರಿಸಿ ಹುಸೇನ್ ಗೆಳತಿಯೊಡನೆ ತನ್ನ ಪ್ರಾಣತೆತ್ತ. ಈತನ ಪ್ರಾಣವನ್ನು ಕಸಿದುಕೊಂಡ ಉಗ್ರರಿಗೆ ಡಾ.ಝಾಕಿರ್ ನಾಯ್ಕ್ ಮಾದರಿಯಾದರೆ ನಮಗೆ ಮಾದರಿಯಾಗಬೇಕಾಗಿರುವುದು ಧರ್ಮಾಂಧರನ್ನು ಧಿಕ್ಕರಿಸಿ ಮಾನವಧರ್ಮವನ್ನು ಎತ್ತಿಹಿಡಿದ ನೈಜ್ಯ ಮುಸ್ಲಿಮ್ ಫರಾಜ್ ಹುಸೇನ್.

ಸಾವಿನ ನಂತರ ‘ಹೀರೋ’ ಆದ ಎಂ.ಕೆ. ಗಣಪತಿ!

                                                                                                             – ನವೀನ್ ಸೂರಿಂಜೆ

ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಈಗ ಚರ್ಚೆಯ ವಿಷಯವಾಗಿದೆ. ಈ ಗಣಪತಿಗೆ ಒಂದು ಇತಿಹಾಸವಿದೆ. ಮಂಗಳೂರಿನ ಚರ್ಚ್ ದಾಳಿಯಲ್ಲಿ ಆಗ ಕದ್ರಿ ಇನ್ಸ್ ಪೆಕ್ಟರ್ ಆಗಿದ್ದ ಎಂ ಕೆ ಗಣಪತಿ ಪಾತ್ರವನ್ನು ನಾನು ಕಣ್ಣಾರೆ ಕಂಡಿದ್ದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಭಜರಂಗದಳದಿಂದ ಪ್ರಾರಂಭವಾದ ಚರ್ಚ್ ದಾಳಿಯನ್ನು ಪೊಲೀಸ್ ಯೂನಿಫಾರಂ ಮೂಲಕವೇ ಮುನ್ನಡೆಸಿದವರು ಎಂ.ಕೆ ಗಣಪತಿ.

 

ಪೊಲೀಸರ ಚರ್ಚ್ ದಾಳಿಯಲ್ಲಿ ನೋವುಂಡವರು.

ಪೊಲೀಸರ ಚರ್ಚ್ ದಾಳಿಯಲ್ಲಿ ನೋವುಂಡವರು.

ಪೊಲೀಸ್ ಅಧಿಕಾರಿಯೊಬ್ಬನ ಸಾವಿಗೆ ಮರುಕವಿದೆ. ಆದರೆ ಆ ಪೊಲೀಸ್ ಅಧಿಕಾರಿಯನ್ನು ಹೀರೋ ಮಾಡುವ ಮುನ್ನ ಆತನ ಇತಿಹಾಸ ಅರಿಯುವುದು ಮುಖ್ಯ.

 

2008 ರಲ್ಲಿ ಮಂಗಳೂರಿನ ಮಿಲಾಗ್ರಿಸ್ ಅಡೋರೇಷನ್ ಮೊನೆಸ್ಟ್ರಿ ಎಂಬ ಕ್ರಿಶ್ಚಿಯನ್ನರ ಧರ್ಮಶಾಲೆ ಮೇಲೆ ಭಜರಂಗದಳ ದಾಳಿ ನಡೆಸಿತ್ತು. ಇದು ಮಂಗಳೂರಿನಲ್ಲಿ ಆ ವರೆಗೂ ಬೀದಿಗಿಳಿಯದ ಕ್ರಿಶ್ಚಿಯನ್ ಸಮುದಾಯ ಬೀದಿಗಿಳಿಯುವಂತೆ ಮಾಡಿತ್ತು. ರಾಜ್ಯದಲ್ಲಿ ಬಿಜೆಪಿ ಸರಕಾರ ಆಳ್ವಿಕೆ ಮಾಡುತ್ತಿದ್ದ ಸಂಧರ್ಭದಲ್ಲಿ ಭಜರಂಗದಳ ನಡೆಸಿದ ದಾಳಿಗೆ ಪೂರಕವಾಗಿ ಪೊಲೀಸರೂ ವರ್ತಿಸತೊಡಗಿದ್ರು.

 

ಅಡೋರೇಷನ್ ಮೊನೆಸ್ಟ್ರಿ ಮೇಲೆ ದಾಳಿ ನಡೆದ ಮಾಹಿತಿ ದೊರೆತ ತಕ್ಷಣ ನಾವು ಪತ್ರಕರ್ತರೂ ಚರ್ಚಗೆ ಭೇಟಿ ನೀಡಲಾರಂಭಿಸಿದೆವು. ನಂತರ ಮಂಗಳೂರಿನಾದ್ಯಂತ ಕ್ರಿಶ್ಚಿಯನ್ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಯಲಾರಂಭಿಸಿತು. ದಾಳಿ ಎಲ್ಲೆಲ್ಲಿ ನಡೆಯಿತೋ ಅಲ್ಲೆಲ್ಲಾ ಪತ್ರಕರ್ತರಾದ ನಾವುಗಳೂ ಇರುತ್ತಿದ್ದೆವು. ವಾಸ್ತವವಾಗಿ ಭಜರಂಗಿಗಳು ದಾಳಿ ನಡೆಸಿದ್ದು ಮಿಲಾಗ್ರಿಸ್ ಅಡೋರೇಷನ್ ಮೊನೆಸ್ಟ್ರಿ ಎಂಬ ಮಠದ ಮಾಧರಿಯ ಧರ್ಮಶಾಲೆಗೆ ಮಾತ್ರ. ಉಳಿದಂತೆ ಬಿಜೈ ಚರ್ಚ್, ಕುಲಶೇಖರ ಚರ್ಚ್ಗಳಿಗೆ ನಡೆದ ದಾಳಿಯ ವೇಳೆ ಒಂದೇ ಒಂದು ಭಜರಂಗಿಗಳು ಇರಲಿಲ್ಲ. ಆದರೂ ದಾಳಿಯಾಗಿತ್ತು.

 

ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಲಶೇಖರ ಚರ್ಚ್ ನಲ್ಲಿ ಕ್ರಿಶ್ಚಿಯನ್ ಯುವಕರು ಸೇರಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಬಂದಿತ್ತು. ತಕ್ಷಣ ಕದ್ರಿ ಪೊಲೀಸ್ ಇನ್ಸ್ಸ್ಪೆಕ್ಟರ್ ಎಂ ಕೆ ಗಣಪತಿ ನೇತೃತ್ವದಲ್ಲಿ ಪೊಲೀಸರು ಕುಲಶೇಖರ ಚಚರ್್ಗೆ ಧಾವಿಸಿದ್ರು. ಎಂ ಕೆ ಗಣಪತಿ ಮತ್ತು ತಂಡ ಕುಲಶೇಖರ ಚರ್ಚ್ ಗೆ ಬರುತ್ತಿದ್ದಂತೆಯೇ ನಾನೂ ಕೂಡಾ ಕುಲಶೇಖರ ಚರ್ಚ್ ಆವರಣ ಪ್ರವೇಶಿಸಿದ್ದೆ. ಕುಲಶೇಖರ ಚರ್ಚ್ ಒಳಗೆ ಕ್ರಿಶ್ಚಿಯನ್ನರು ಪ್ರಾರ್ಥನೆ ನಡೆಸುತ್ತಿದ್ದರು. ಪ್ರಾರ್ಥನೆ ಜೋರಾಗಿ ಹೊರಗೆ ಕೇಳಿಸುತ್ತಿತ್ತು.

 

ವಾಹನದಿಂದ ಇಳಿದ ಎಂ ಕೆ ಗಣಪತಿ ಕ್ರಿಶ್ಚಿಯನ್ನರು ಪ್ರಾರ್ಥನೆ ನಿಲ್ಲಿಸಿ ಹೊರಬರುವಂತೆ ಸೂಚಿಸಿದ್ರು. ಪ್ರಾರ್ಥನನಿರತರು ಹೊರಬರಲು ಒಪ್ಪಲಿಲ್ಲ. ಅಷ್ಟರಲ್ಲಿ ಚರ್ಚ್ ಒಳಗೆ ನುಗ್ಗುವಂತೆ ಪೊಲೀಸರಿಗೆ ಎಂ ಕೆ ಗಣಪತಿ ಸೂಚಿಸಿದ್ರು. ಆಗ ಹಿರಿಯ ವಕೀಲರಾದ ಮರಿಯಮ್ಮ ಥಾಮಸ್ ಮತ್ತು ಚರ್ಚ್ ನ ಫಾದರ್ ಒಬ್ಬರು ಮಧ್ಯ ಪ್ರವೇಶಿಸಿದರು. ಕೊನೆಗೆ ಎಂ ಕೆ ಗಣಪತಿ ಸೂಚನೆಯಂತೆ ಚರ್ಚ್ ಒಳಗಿದ್ದ ಮಹಿಳೆಯರು, ಮಕ್ಕಳು, ನನ್ ಗಳನ್ನು ಸರತಿ ಸಾಲಿನಲ್ಲಿ ಹೊರಗೆ ಬರುವಂತೆ ಮಾಡಲಾಯ್ತು. ಶಿಸ್ತುಬದ್ದವಾಗಿ, ಶಾಂತಿಯುತವಾಗಿ ಹೊರಬರುತ್ತಿದ್ದ ಮಹಿಳೆಯರು, ಮಕ್ಕಳು ಮತ್ತು ಧಾರ್ಮಿಕ ಸಮGanapatiವಸ್ತ್ರ ಧರಿಸಿದ್ದ ನನ್ ಗಳ ಮೇಲೆ ಪೊಲೀಸರು ಲಾಠಿ ಬೀಸಿದ್ದರು. ನನ್ ಗಳ ತೊಡೆ, ಕೈ ಕಾಲುಗಳು ಬಾತು ಹೋಗುವಂತೆ ಬಾರಿಸಲಾಗಿತ್ತು. ಆ ಚರ್ಚಿನಲ್ಲಿ ಪೊಲೀಸರ ಆಗಮನಕ್ಕೂ ಕಾರಣಗಳಿಲ್ಲದೇ ಇರುವ ಸಂಧರ್ಭದಲ್ಲಿ ಆರ್ ಎಸ್ ಎಸ್ ಹಿನ್ನಲೆಯ ಎಂ ಕೆ ಗಣಪತಿ ವಿನಾಕಾರಣ ದಾಳಿ ನಡೆಸಿದ್ದರು.

 

ಇದಾದ ನಂತರ ಚರ್ಚ್ ದಾಳಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಯ್ತು. ಮರುದಿನವೇ ರಾಜ್ಯ ಮಾನವ ಹಕ್ಕು ಆಯೋಗ, ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮಂಗಳೂರು ಬೇಟಿ ಮಾಡಿ ಚರ್ಚ್ ದಾಳಿಯ ವಿಚಾರಣೆ ಕೈಗೆತ್ತಿಕೊಂಡಿತ್ತು. ಅಮೇರಿಕಾದ ಅಧ್ಯಕ್ಷರೂ ಕೂಡಾ ಮಂಗಳೂರು ಚರ್ಚ್ ದಾಳಿ ಬಗ್ಗೆ ಮಾತನಾಡಿದ ನಂತರ ಗಂಭೀರವಾಗಿ ತೆಗೆದುಕೊಂಡ ಕೇಂದ್ರ ಸರಕಾರವು ಕೇಂದ್ರ ಗೃಹ ಕಾರ್ಯದರ್ಶಿಯನ್ನು ಮಂಗಳೂರಿಗೆ ಕಳುಹಿಸಿತ್ತು. ಮಂಗಳೂರಿಗೆ ಬಂದ ಕೇಂದ್ರ ಗೃಹ ಕಾರ್ಯದರ್ಶಿ ಕೆಲವು ಚರ್ಚ್ ಗಳ ವಿಸಿಟ್ ಮಾಡಿದ ನಂತರ ಕುಲಶೇಖರ ಚರ್ಚ್ ಗೂ ಬೇಟಿ ನೀಡಿದ್ರು. ಆಗ ಚರ್ಚ್ ನಲ್ಲಿದ್ದ ಕ್ರೈಸ್ತ ಸನ್ಯಾಸಿಗಳು ತಮ್ಮ ಬಟ್ಟೆಯನ್ನು ಎತ್ತಿ ಹಲ್ಲೆ ನಡೆದ ಭಾಗಗಳನ್ನು ತೋರಿಸುತ್ತಿದ್ದರು. ಈ ಸಂಧರ್ಭ ಕೇಂದ್ರ ಗೃಹ ಕಾರ್ಯದರ್ಶಿಯವರ ನಿಯೋಗಕ್ಕೆ ಭದ್ರತೆ ನೀಡಲು ಇದೇ ಎಂ ಕೆ ಗಣಪತಿ ಬಂದಿದ್ದರು.

 

ನಿಯೋಗಕ್ಕೆ ಪೊಲೀಸರ ದಾಳಿಯನ್ನು ಜನ ವಿವರಿಸುತ್ತಿರಬೇಕಾದರೆ ಸ್ವಲ್ಪ ಆಚೆ ಬಂದ ಎಂ. ಕೆ. ಗಣಪತಿ ಹಿಂದೂ ಸಂಘಟನೆಗಳ ಪ್ರಮುಖರಿಗೆ ಫೋನಾಯಿಸಿದ್ದರು. ನಾನು ಅಲ್ಲೇ ಇರುವುದನ್ನು ಗಮನಿಸದ ಎಂ ಕೆ ಗಣಪತಿ ಹಿಂದೂ ಸಂಘಟನೆಗಳನ್ನು ಗುಂಪು ಸೇರಿಸಲು ಪ್ರಯತ್ನಿಸುತ್ತಿದ್ದರು. “ಕ್ರಿಶ್ಚಿಯನ್ನರು ಅವರ ಮನವಿ ನೀಡ್ತಾ ಇದ್ದಾರೆ. ನೀವೂ ಕೂಡಾ ಬಂದು ಮತಾಂತರ ಮಾಡುತ್ತಿದ್ದನ್ನು ಹೇಳಿ” ಎಂದು ನನ್ನೆದುರಿಗೇ ಹೇಳಿದ್ದರು. ಕೇಂದ್ರ ಗೃಹ ಕಾರ್ಯದರ್ಶಿ ಚರ್ಚ್ ಆವರಣದಿಂದ ಹೊರಬರುತ್ತಿದ್ದಂತೆ ನೂರಕ್ಕೂ ಅಧಿಕ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾವಣೆಗೊಂಡಿದ್ದರು. ಅವರು ದಾಳಿಕೋರ ಸಂಘಟನೆಯವರು ಎಂದು ತಿಳಿದ ಕೇಂದ್ರ ಗೃಹ ಕಾರ್ಯದರ್ಶಿ ಅವರ ಮನವಿಯನ್ನು ಚರ್ಚ್ ಆವರಣ ಸುತ್ತಮುತ್ತ ಸ್ವೀಕರಿಸಲು ನಿರಾಕರಿಸಿದ್ರು. ಹಿಂದೂ ಸಂಘಟನೆಗಳು ಮನವಿ ನೀಡಬೇಕಾದ್ರೆ ಸರ್ಕ್ಯೂಟ್ ಹೌಸ್ ಗೆ ಬರಲಿ ಎಂದರು. ಇದರಿಂದ ಕೆರಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಕೇಂದ್ರ ಗೃಹ ಕಾರ್ಯದರ್ಶಿ ಕಾರನ್ನು ತಡೆಯಲು ಮುಂದಾದ್ರು. ಆಗ ಭದ್ರತೆಗೆ ನಿಯೋಜಿತರಾಗಿದ್ದ ಎಂ ಕೆ ಗಣಪತಿ ಸುಮ್ಮನಿದ್ದರು. ಇದು ಬಿಜೆಪಿ ಸರಕಾರವಿದ್ರೂ ಅಧಿಕಾರಿಗಳ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.

 

ಚರ್ಚ್ ದಾಳಿಯಲ್ಲಿ ಎಂ ಕೆ ಗಣಪತಿ ಪಾತ್ರ ಮತ್ತು ಕ್ರೈಸ್ತ ಸನ್ಯಾಸಿನಿಯರ ಮೇಲೆ ನಡೆದ ಭೀಕರ ದಾಳಿಯಲ್ಲಿ ಅವರ ಪಾತ್ರದ ಬಗ್ಗೆ ನಾನು ಚರ್ಚ್ ದಾಳಿಗಳ ವಿಚಾರಣಾ ಆಯೋಗದ ನ್ಯಾಯಮೂರ್ತಿಯಾಗಿದ್ದ ಸೋಮಶೇಖರ್ ರವರ ಬಳಿ ಮಾಹಿತಿ ಹಂಚಿಕೊಂಡಿದ್ದೆ.
ನಂತರ ಉರ್ವಸ್ಟೋರ್ ಎಂಬ ಪ್ರದೇಶದಲ್ಲಿ ಸಿಂಗಲ್ ನಂಬರ್ ದಂಧೆ ಹೆಚ್ಚಾದಾಗ ಡಿವೈಎಫ್ಐ ಹೋರಾಟಕ್ಕಿಳಿದಿತ್ತು. ಈ ಸಿಂಗಲ್ ನಂಬರ್ ದಂಧೆಯ ಹಿಂದೆ ಇನ್ಸ್ ಸ್ಪೆಕ್ಟರ್ ಎಂ ಕೆ ಗಣಪತಿ ಕೈವಾಡವಿತ್ತು. ಪ್ರತಿಭಟನೆ ನಡೆದ್ರೂ ಕೂಡಾ ಇನ್ಸ್ ಸ್ಪೆಕ್ಟರ್ ಎಂ ಕೆ ಗಣಪತಿ ಸಿಂಗಲ್ ನಂಬರ್ ಅಡ್ಡೆಗಳ ಮೇಲೆ ದಾಳಿ ನಡೆಸಲು ಸಿದ್ದರಿರಲಿಲ್ಲ. ಆಗ ಮಂಗಳೂರಿನಲ್ಲಿ ಐಜಿಪಿಯಾಗಿದ್ದವರು ಈಗ ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿರುವ ಅಶಿತ್ ಮೋಹನ್ ಪ್ರಸಾದ್. ಡಿವೈಎಫ್ ಐ ಐಜಿಪಿ ಅಶಿತ್ ಮೋಹನ್ ಪ್ರಸಾದ್ ಗೆ ದೂರು ನೀಡಿದಾಗ ಅವರೂ ಕೂಡಾ ಇನ್ಸ್ ಸ್ಪೆಕ್ಟರ್ ಗಣಪತಿ ಪಾತ್ರ ಇರುವುದನ್ನು ಮನಗಂಡು ನೇರವಾಗಿ ಸಿಂಗಲ್ ನಂಬರ್ ದಂಧೆಯ ಮೇಲೆ ದಾಳಿ ನಡೆಸಿದ್ದರು.
ನಾನೊಬ್ಬ ಆರ್ ಎಸ್ ಎಸ್ ಹಿನ್ನಲೆಯಿಂದ ಬಂದವನು ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದ ಎಂ ಕೆ ಗಣಪತಿ ಎಡಪಂಥೀಯ ಸಂಘಟನೆಗಳು ಮತ್ತು ಮುಸ್ಲೀಮರ ವಿರೋಧಿ ನಿಲುವನ್ನು ಹೊಂದಿದ್ದರು. ನೀರಿನ ಖಾಸಗೀಕರಣವನ್ನು ವಿರೋಧಿಸಿ ಮಂಗಳೂರು ಮಹಾನಗರ ಪಾಲಿಕೆಯ ಎದುರು ಡಿವೈಎಫ್ಐ ಪ್ರತಿಭಟನೆ ನಡೆಸುತ್ತಿತ್ತು. ಈ ಪ್ರತಿಭಟನೆಯ ಸ್ಥಳ ಬಂದರು ಪೊಲೀಸ್ ಠಾಣಾ ವ್ಯಾಪ್ತಿಯದ್ದು. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಇದೇ ಎಂ ಕೆ ಗಣಪತಿ ವ್ಯಾಪ್ತಿ ಮೀರಿ ಲಾಠಿ ಚಾರ್ಜ್ ಮಾಡಿದ್ದರು. ಲಾಠಿ ಚಾರ್ಜ್ ಆಗುವ ಬಗ್ಗೆ ಖುದ್ದು ಬಂದರು ಠಾಣೆಗೆ ಮಾಹಿತಿ ಇರಲಿಲ್ಲ. ಸೈದ್ದಾಂತಿಕವಾಗಿ ವಿರೋಧಿಸುತ್ತಿದ್ದವರನ್ನು ಹಣಿಯಲು ಎಂ ಕೆ ಗಣಪತಿ ಪೊಲೀಸ್ ಯೂನಿಫಾರಂ ಅನ್ನು ಬಳಸುತ್ತಿದ್ದರು.
ನಕಲಿ ಎನ್ ಕೌಂಟರ್, ಚರ್ಚ್ ದಾಳಿಯ ವೇಳೆ ಕ್ರೈಸ್ತ ಸನ್ಯಾಸಿನಿಯರ ಮೇಲೆ ದಾಳಿ, ಮಾನವ ಹಕ್ಕು ಉಲ್ಲಂಘನೆ ಮಾಡುತ್ತಿದ್ದ ಇನ್ಸ್ ಸ್ಪೆಕ್ಟರ್ ಎಂ ಕೆ ಗಣಪತಿ ಇದೀಗ ಸಾವಿನ ನಂತರ ಹೀರೋ ಆಗುತ್ತಿದ್ದಾರೆ.

 

ಅವರ ಸಾವು ನ್ಯಾಯಯುತವಾದುದಲ್ಲ. ಅವರಿಗೆ ಪೊಲೀಸ್ ಉನ್ನತಾಧಿಕಾರಿಗಳು, ಸಚಿವರುಗಳು ಕಿರುಕುಳ ನೀಡಿದ್ದರೆ ಅದು ಶಿಕ್ಷಾರ್ಹ. ಆದರೆ ಎಂ ಕೆ ಗಣಪತಿ ಒಬ್ಬ ದಕ್ಷ, ಕೆಚ್ಚೆದೆಯ ಪ್ರಾಮಾಣಿಕ, ರಿಯಲ್ ಹೀರೋ ಎಂದೆಲ್ಲಾ ಕರೆದರೆ ಅದು ಅಪ್ಪಟ ಸುಳ್ಳಾಗುತ್ತದೆ.

ಪ್ರೊ.ಕೆ.ರಾಮದಾಸ್ ಪ್ರತಿಭಟನೆ ಮತ್ತು ‘ರಾಮ’ ರಾಜ್ಯ!

ಕೆ.ಎಸ್. ಮಧು

ಅದು ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದ ಕಾಲ. ಮೈಸೂರಿನ ಉಸ್ತುವಾರಿ ಅಂದಿನ ಸಚಿವ ಎಚ್.ವಿಶ್ವನಾಥ್ ರ ಕೈಯಲ್ಲಿತ್ತು. ಮೈಸೂರು ವಿಶ್ವವಿದ್ಯಾನಿಲಯದ ಲಲಿತ ಕಲೆಗಳ ಕಾಲೇಜು ಆವರಣದಲ್ಲೊಂದು ಕಾರ್ಯಕ್ರಮ. ಮುಖ್ಯ ಅತಿಥಿಯಾಗಿ ವಿಶ್ವನಾಥ್ ಭಾಗವಹಿಸಿದ್ದರು. ಅವರು ಇನ್ನೇನು ತಮ್ಮ ಮಾತುಗಳನ್ನು ಆರಂಭಿಸಬೇಕಿತ್ತು. ಆಗ ಅದೆಲ್ಲಿದ್ದವರೋ ಎಂಬಂತೆ ವಿಚಾರವಾದಿ ಕೆ.ರಾಮದಾಸ್ ಎದ್ದು ನಿಂತರು. ‘ನಿಷೇಧವಾಗಿರುವ ಪ್ರಾಣಿ ಬಲಿಯನ್ನು ಮಾಡಿಬಂದಿರುವ ಮಂತ್ರಿ ನೀನು. ನೀನು ಆ ಹುದ್ದೆಗೆ ನಾಲಾಯಕ್..” ಎಂದು ದನಿ ಎತ್ತಿದರು. ಬೆಳವಣಿಗೆಯಿಂದ ಸ್ವಲ್ಪ ವಿಚಲಿತರಾದ ‘ನೀವು ನಾಲಾಯಕ್ ವಿಚಾರವಾದಿ’ ಎಂದು ಜಗಳಕ್ಕೆ ನಿಂತರು.

ಸಚಿವರಾದ ವಿಶ್ವನಾಥ್ ಅವರ ಕುಟುಂಬ ಕೆಲವೇ ದಿನಗಳ ಹಿಂದೆ ತಮ್ಮ ಊರಿನ ಹತ್ತಿರದ ದೇವರಿಗೆ ಕುರಿ ಬಲಿ ಕೊಟ್ಟು ಊಟ ಏರ್ಪಡಿಸಿದ್ದರು ಎಂಬ ಸುದ್ದಿ ಅದೇ ದಿನ ವರದಿಯಾಗಿತ್ತು. ಆ ಸುದ್ದಿಯನ್ನು ಓದಿದ ರಾಮದಾಸ್ ಅವರು, ಒಬ್ಬ ಮಂತ್ರಿಯಾದವProf.Ramadas-3ರು ಹೀಗೆ ಮಾಡುವುದು ಸರಿಯಲ್ಲ, ಹಾಗಾಗಿ ಅವರನ್ನು ನೇರಾನೇರ ಎಲ್ಲರ ಎದುರು ಟೀಕಿಸಬೇಕು ಎಂದು ತಮ್ಮ ಒಂದೆರಡು ಗೆಳೆಯರೊಂದಿಗೆ ಆ ಕಾರ್ಯಕ್ರಮಕ್ಕೆ ಹೋಗಿ ಹಾಗೆ ವಾದಕ್ಕಿಳಿದಿದ್ದರು.

ನೆನಪಿರಲಿ. ಅಂದಿಗೆ, ರಾಮದಾಸ್ ಮಹಾರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕ. ವಿಶ್ವನಾಥ್ ಕ್ಯಾಬಿನೆಟ್ ದರ್ಜೆಯ ಮಂತ್ರಿ. ಇಂದು ರಾಮದಾಸ್ ನಮ್ಮ ಮಧ್ಯೆ ಇಲ್ಲ. ಆದರೆ ವಿಶ್ವನಾಥ್ ಸೇರಿದಂತೆ, ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಅನೇಕರು ಇಂದು ಇದ್ದಾರೆ.

ಈಗ ಹೇಳಿ, ಇಂತಹದೊಂದು ಸನ್ನಿವೇಶವನ್ನು ನಾವು ಇಂದು ಕಾಣಬಹುದೇ? ಕ್ಯಾಬಿನೆಟ್ ದರ್ಜೆಯ ಮಂತ್ರಿ ಬೇಡ, ತನ್ನ ಊರಿನ ಶಾಸಕನನ್ನು ಟೀಕಿಸುವುದು ಒತ್ತಟ್ಟಿಗಿರಲಿ, ಎದುರು ನಿಂತು ಕತ್ತು ಬಗ್ಗಿಸದೆ ಮಾತನಾಡುವ ಸಾಮರ್ಥ್ಯ ಎಷ್ಟು ಪ್ರಾಧ್ಯಾಪಕರಿಗಿದೆ? ಕೆಲ ಕಾಲೇಜುಗಳಲ್ಲಿ ಶಾಸಕರು ಬಂದಾಗ ಕಾಲಿಗೆ ಬಿದ್ದ ಪ್ರಾಂಶುಪಾಲರುಗಳಿದ್ದಾದರೆ, ಪ್ರಾಧ್ಯಾಪಕರುಗಳಿದ್ದಾರೆ. ಇಂತಹವರಿಂದ ಹುಡುಗರು ಕಲಿಯುವುದೇನನ್ನು?

ಪ್ರೊ.ಕೆ.ರಾಮದಾಸ್ ಅವರ ಉದಾಹರಣೆಯನ್ನು ಈಗಿನ ಕೆಲ ಹುಡುಗರಿಗೆ ಹೇಳಿದರೆ, ‘ಇವನ್ಯಾರೋ ಸುಳ್ಳು ಹೇಳುತ್ತಿದ್ದಾನೆ’ ಎನ್ನಿಸಬಹುದು. ಏಕೆಂದರೆ ಇಂದಿನ ಪರಿಸ್ಥಿತಿ ಹಾಗಿದೆ. ಅಂತಹದೊಂದು ಘಟನೆ ಈ ಹೊತ್ತಲ್ಲಿ ನಡೆದಿದ್ದರೆ, ಏನೆಲ್ಲಾ ಆಗುತ್ತಿತ್ತು ಎನ್ನುವುದನ್ನು ಒಂದ್ಸಾರಿ ಯೋಚನೆ ಮಾಡೋಣ. “ಏ. Vishwa-1ಯಾರಲ್ಲಿ ಪೊಲೀಸರು, ಈತನನ್ನು ಒಳಗೆ ಹಾಕಿ..” – ಎಂದು ಆಜ್ಞೆ ಹೊರಡಿಸಬಹುದಾದ ಮಂತ್ರಿ, ಶಾಸಕರು ನಮ್ಮ ಮಧ್ಯೆ ಇದ್ದಾರೆ. “ಅದ್ಸರಿ, ಹೀಗೆ ಅವರು ಮಂತ್ರಿಯವರನ್ನು ಟೀಕೆ ಮಾಡಲು ಹೋಗುವಾಗ, ಕಾಲೇಜಿಗೆ ರಜೆ ಹಾಕಿದ್ರಾ..ಅಥವಾ ಹುಡಗರಿಗೆ ಪಾಠ ಮಾಡೋದನ್ನು ಬಿಟ್ಟು ಮಂತ್ರಿಗೆ ಪಾಠ ಮಾಡೋಕೆ ಬಂದಿದ್ದರಾ.?” – ಹೀಗೆ ಪ್ರಶ್ನೆ ಮಾಡುವ ಮಾಧ್ಯಮದವರಿದ್ದಾರೆ.

ರಾಮದಾಸ್ ಅಂತಹವರು ತಮ್ಮ ಅಂತಹದೊಂದು ಪ್ರತಿಭಟನೆಯ ಮೂಲಕ ಒಬ್ಬ ಶಿಕ್ಷಕ ಒಂದು ವರ್ಷ ಕಾಲ ಪಾಠ ಮಾಡಿ ಹುಡುಗರಿಗೆ ತಿಳಿಸುವುದಕ್ಕಿಂತ ಹೆಚ್ಚಿನ ಮೌಲ್ಯಯುತವಾದದ್ದನ್ನು ಬೋಧಿಸಿದ್ದರು. ಹಾಗೆ ಪಾಠ ಮಾಡುವವರು ಇಂದು ಬೇಕಾಗಿದ್ದಾರೆ. ಆದರೆ ನಮ್ಮನ್ನಾಳುವ ಸರಕಾರಕ್ಕೆ ಇಂತಹವರ ಅಗತ್ಯ ಇದ್ದಂತೆ ಕಾಣುವುದಿಲ್ಲ. ಇಲ್ಲವಾಗಿದ್ದಲ್ಲಿ, ಪ್ರೊ.ಬಿ.ಪಿ.ಮಹೇಶ್ ಚಂದ್ರ ಗುರು ಬಂಧನವಾಗುತ್ತಿರಲಿಲ್ಲ. ಅವರು ತಮ್ಮ ಮಾನವ ಹಕ್ಕುಗಳ ಬಗೆಗಿನ ಉಪನ್ಯಾಸದಲ್ಲಿ ಹೇಳಿದ್ದಿಷ್ಟೆ. “ರಾಮ ಸೀತೆಯನ್ನು ಶಂಕಿಸಿ, ಅಗ್ನಿ ಪ್ರವೇಶ ಮಾಡಲು ಹೇಳುವ ಮೂಲಕ, ಆತ ಸೀತೆಯ ಹಕ್ಕುಗಳನ್ನು ನಿರಾಕರಿಸಿದ್ದ”. ಅದೊಂದು ಮಾತನ್ನು ಸಹಿಸಿಕೊಳ್ಳಲಾಗದವರು ದೂರು ಕೊಟ್ಟರು. ಅವರ ಬಂಧನವಾಯ್ತು. ಅಷ್ಟರ ಮಟ್ಟಿಗೆ ನಮ್ಮದು ರಾಮ ರಾಜ್ಯ…ಸಿದ್ದರಾಮ ರಾಜ್ಯ!

ಎಮ್.ಆರ್.ಪಿ.ಎಲ್ ದುರಾಸೆಯ ಭೂಬೇಡಿಕೆ ಹಾಗೂ  ಸಂತ್ರಸ್ತರ ಗೋಳು


-ಇರ್ಷಾದ್ ಉಪ್ಪಿನಂಗಡಿ


“ನನಗೆ ನಾಲ್ಕು ಎಕರೆ ಕೃಷಿ ಇದೆ. ಕೃಷಿ ನನ್ನ ಪಾಲಿನ ದೇವರು. ಕಷ್ಟ ಪಟ್ಟು ತನ್ನ ಮಕ್ಕಳಂತೆ ಈ ಜಮೀನಿನಲ್ಲಿ ಮರಗಿಡಗಳನ್ನು  ನೆಟ್ಟು ಬೆಳೆಸಿದ್ದೇನೆ. ಇದೀಗ ಕೈಗಾರಿಕೆಗಂತ ನನ್ನ ಭೂಮಿಯನ್ನ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಜೀವ ಹೋದರೂ ನನ್ನMRPL ಜಮೀನನ್ನು ಕಂಪನಿಗೆ ಬಿಟ್ಟು ಕೊಡುವುದಿಲ್ಲ. ನನ್ನ ಬದುಕನ್ನು ಉಳಿಸಿಕೊಳ್ಳಲು ಅದ್ಯಾವ ರೀತಿಯ ಹೋರಾಟಕ್ಕೂ ನಾನು ತಯಾರಿದ್ದೀನಿ” ಹೀಗೆ ಆಕ್ರೋಶ ಭರಿತ ದುಖಃದೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡವರ ಹೆಸರು ಮೊಂತಿ ಡಿಸೋಜಾ. ಮಂಗಳೂರಿನ ಪೆರ್ಮುದೆ ನಿವಾಸಿಯಾಗಿರುವ ಮೊಂತಿ ಡಿಸೋಜಾಗೆ 78 ವರ್ಷ. ನಡೆಯಲು ಆಧಾರಕ್ಕಾಗಿ ಕೈಯಲ್ಲೊಂದು ಕೋಲು ಹಿಡಿದುಕೊಂಡು ಬೆಳೆದು ನಿಂತ ಪೈರು, ಹಚ್ಚ ಹಸಿರಾಗಿರುವ ತೋಟವನ್ನು ತೋರಿಸುತ್ತಾ ಕಂಪನಿಯವರು ಕೇಳ್ತಾರಂತಾ ಇದನ್ನೆಲ್ಲಾ ಬಿಟ್ಟುಕೊಟ್ಟು ನಾನು ಎಲ್ಲಿಗೆ ಹೋಗಲಿ ಅಂದಾಗ ಅವರ ಕಣ್ಣಲ್ಲಿ ಕಣ್ಣೀರು ತೊಟ್ಟಿಕ್ಕುತಿತ್ತು. ಹತ್ತು ವರ್ಷದ ಹಿಂದೆ ಕೂಡಾ ಮೊಂತಿ ಡಿಸೋಜಾರಿಗೆ ಇಂತಹದ್ದೇ ಪರಿಸ್ಥಿತಿ ಎದುರಾಗಿತ್ತು. ಮಂಗಳೂರು ವಿಶೇಷ ಆರ್ಥಿಕ ವಲಯಕ್ಕಾಗಿ ರಾಜ್ಯ ಸರ್ಕಾರ ರೈತರ ಕೃಷಿ ಭೂಮಿಯನ್ನ ಸ್ವಾಧೀನಪಡಿಸಿಕೊಂಡಿತ್ತು. ಭಾರೀ ಹೋರಾಟ ನಡೆಸಿ ಮೊಂತಿ ಡಿಸೋಜಾ ತನ್ನ ಕೃಷಿ ಭೂಮಿಯನ್ನ ಉಳಿಸಿಕೊಂಡಿದ್ದರು. ಒಲಿದುಕೊಂಡ ಭೂಮಿಯಲ್ಲಿ ಕೃಷಿ ಅಭಿವೃದ್ದಿಗೊಳಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ ಏನಂತೆ, ಇದೀಗ ಮತ್ತೆ ಎಂ.ಆರ್.ಪಿ.ಎಲ್  ತನ್ನ ನಾಲ್ಕನೇ ಹಂತದ ವಿಸ್ತರಣೆಗಾಗಿ ಸಾವಿರಾರು ಎಕರೆ ಭೂಸ್ವಾಧೀನಕ್ಕೆ ಮುಂದಾಗಿದೆ. ಪರಿಣಾಮ ಭೂಸ್ವಾಧೀನದ ಭೂತ ಮೊಂತಿಬಾಯಿಯವರನ್ನು ಮತ್ತೊಮ್ಮೆ ಕಾಡಲಾರಂಭಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಎಂ.ಆರ್.ಪಿ.ಎಲ್ ಕಾಲಿಟ್ಟಾಗಿನಿಂದಲೂ ಅದು ಸ್ಥಳೀಯರ ನಿದ್ದೆಗೆಡೆಸಿದೆ. 2006 ರಲ್ಲಿ ಎಂ.ಆರ್.ಪಿ.ಎಲ್wiliyam disoza ನೇತ್ರತ್ವ ಹಾಗೂ ಪಾಲುಗಾರಿಕೆಯಲ್ಲಿ ರೂಪು ತಳೆದ ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ರಾಜ್ಯ ಸರ್ಕಾರ ಈಗಾಗಲೇ 2017 ಎಕರೆ ಜಮೀನನ್ನು ರೈತರಿಂದ ಕಿತ್ತು ಕೊಟ್ಟಿದೆ. ಈ ಪೈಕಿ ಎಸ್.ಇ.ಜೆಡ್ ನೊಳಗೆ ವಿವಿಧ ಘಟಕಗಳ ಸ್ಥಾಪನೆಗಾಗಿ ಬಳಕೆಯಾಗಿರುವುದು ಕೇವಲ 717 ಎಕರೆ. ಉಳಿದ 1300 ಎಕರೆ ಜಮೀನು ಖಾಲಿ ಇದ್ದರೂ ತೃಪ್ತಿಗೊಳ್ಳದ ಎಂ.ಆರ್.ಪಿ.ಎಲ್ ಇದೀಗ ಮತ್ತೆ ಮಂಗಳೂರು ತಾಲೂಕಿನ ತೂಕೂರು, ಬೈಕಂಪಾಡಿ, ತಣ್ಣೀರುಬಾವಿ, ಕಳವಾರು, ಬಾಳ, ಜೋಕಟ್ಟೆ, ಪೆರ್ಮುದೆ, ಕುತ್ತೆತ್ತೂರು, ಸೂರಿಂಜೆ ಹಾಗೂ ದೇಲಂತಬೆಟ್ಟು ಗ್ರಾಮಗಳ ಸುಮಾರು 1050 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಡುವಂತೆ ಕರ್ನಾಟಕ ರಾಜ್ಯ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದೆ. ಅಲ್ಲದೆ ಮುಂದಿನ ಹಂತದಲ್ಲಿ 3000 ಎಕರೆಗೂ ಮೀರಿದ ಭೂಮಿಯನ್ನ ಸ್ವಾಧೀನ ಪಡಿಸಿಕೊಳ್ಳುವ ಗುರಿ ಎಮ್.ಆರ್.ಪಿ.ಎಲ್ ನದ್ದು. ಸರ್ಕಾರವೂ ಕಂಪನಿಯ ಈ ಎಲ್ಲಾ ಬೇಡಿಕೆಗೆ ಅಸ್ತು ಅಂದಿದೆ. ಪರಿಣಾಮ ಜನರು ತಾವು ಶ್ರಮಪಟ್ಟು ಬೆಳೆಸಿದ ಕೃಷಿ, ಜಮೀನು, ಮನೆ ಮಠಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಪೆರ್ಮುದೆ, ಕುತ್ತೆತ್ತೂರು ಗ್ರಾಮ ಮಂಗಳೂರು ನಗರದಿಂದ 30 ಕಿಲೋ ಮೀಟರ್ ದೂರದಲ್ಲಿದೆ. ಈ ಗ್ರಾಮದ ಜನಸಂಖ್ಯೆ ಸುಮಾರುpermude-sez-3 6000. ಗ್ರಾಮದ ಶೇ. 75 ರಷ್ಟು ಜನರು ಕೃಷಿಕರು. ಭತ್ತ, ಅಡಿಕೆ, ತೆಂಗು, ಬಾಳೆ, ತರಕಾರಿ ಇಲ್ಲಿಯ ಪ್ರಮುಖ ಕೃಷಿ. 2006 ರಲ್ಲಿ ಎಸ್.ಇ.ಜೆಡ್ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪೆರ್ಮುದೆ, ಕುತ್ತೆತ್ತೂರು, ತೆಂಕ ಎಕ್ಕಾರು ಹಾಗೂ ದೇಲಂತ ಬೆಟ್ಟು ಗ್ರಾಮಗಳು ಒಳಗೊಂಡಿದ್ದವು. ಆದರೆ ಬಲವಂತದ ಭೂಸ್ವಾಧೀನದ ವಿರುದ್ಧವಾಗಿ ನಡೆದ ತೀವ್ರ ಹೋರಾಟದ ಹಿನ್ನೆಲೆಯಲ್ಲಿ 2011 ರಲ್ಲಿ ಭೂಸ್ವಾಧೀನದಿಂದ ಈ ಗ್ರಾಮಗಳನ್ನು ಕೈಬಿಡಲಾಗಿತ್ತು. ಇದೀಗ ಮತ್ತೆ ಎಮ್.ಆರ್.ಪಿ.ಎಲ್ ನಾಲ್ಕನೇ ಹಂತಕ್ಕಾಗಿ ಭೂಸ್ವಾಧೀನದ ಪ್ರಕ್ರಿಯೆ ಚುರುಕು ಪಡೆಯುತ್ತಿರುವಂತೆ ಈ ಗ್ರಾಮದ ಜನರು ಆತಂಕಿತರಾಗಿದ್ದಾರೆ.

ವಿಲಿಯಂ ಡಿಸೋಜಾ ಕುತ್ತೆತ್ತೂರಿನ ನಿವಾಸಿ. ನಮ್ಮನ್ನು ಬರಮಾಡಿಕೊಂಡು ಕುತ್ತೆತ್ತೂರಿನ ಹಚ್ಚ ಹಸಿರಾದ ವಾತಾವರಣವನ್ನು ತೋರಿಸಲು ತಮ್ಮ ಜೀಪ್ ನಲ್ಲಿ ಕರೆದೊಯ್ದರು. ವಿಲಿಯಂ ಡಿಸೋಜಾರಿಗೆ 15 ಎಕರೆ ಜಮೀನಿದೆ. ಇವರ ಜಮೀನಿನಲ್ಲೊಮ್ಮೆ ನಿಂತು ಎಲ್ಲಿ ಕಣ್ಣು ಹಾಯಿಸಿದರೂ ಸಮೃದ್ದವಾಗಿ ಬೆಳೆದು ನಿಂತ ಕೃಷಿತೋಟ ನಮ್ಮನ್ನು ಸೆಳೆಯುತ್ತದೆ. ಪುಟ್ಟ ಮನೆ, ಹೆಂಡತಿ ಇಬ್ಬರು ಮಕ್ಕಳ ಜೊತೆ ನೆಮ್ಮದಿಯ ಪರಿಸರದಲ್ಲಿ ಜೀವನ ನಡೆಸುತ್ತಿರುವ ವಿಲಿಯಂಗೆ ಇದೀಗ ಎಲ್ಲವನ್ನೂ ಕಳೆದುಕೊಳ್ಳುತ್ತೇನೆಂಬ ಆತಂಕ. “ನಾನು ನನ್ನ ಸ್ವಂತ ಜಮೀನನ್ನು ಮಾರಿ ಬಿಟ್ಟು ಎಂ.ಆರ್.ಪಿ.ಎಲ್ ಕೂಲಿಯಾಳಾಗಲು ತಯಾರಿಲ್ಲ. ಮೈಮುರಿದು ಗದ್ದೆ ತೋಟ ಬೆಳೆಸಿದ್ದೇನೆ. ಉತ್ತಮ ಆದಾಯಗಳಿಸಿ ಯಾರ ಹಂಗಿಲ್ಲದೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದೇನೆ. ಇದೀಗ ಎಮ್.ಆರ್.ಪಿ.ಎಲ್ ಕಂಪನಿ ನನ್ನ ಜಮೀನಿಗೆ ಕನ್ನ ಹಾಕ್ತಿದೆ. ನನ್ನನ್ನು ಕೊಂದರೂ ನನ್ನ ಕೃಷಿ ಭೂಮಿಯನ್ನು ಬಿಟ್ಟು ಕೊಡುವುದಿಲ್ಲ” ಅಂತಿದ್ದಾರೆ ವಿಲಿಯಂ. ವಿಲಿಯಂ ಡಿಸೋಜಾ ಎಂ.ಆರ್.ಪಿ.ಎಲ್ ಭೂಸ್ವಾಧೀನದಿಂದ ರೈತರ ಕೃಷಿ ಭೂಮಿಯನ್ನ ಸಂರಕ್ಷಿಸಲು ಹುಟ್ಟಿಕೊಂಡ ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಉಪಾಧ್ಯಕ್ಷರು. ಗ್ರಾಮದ ಮನೆಮನೆಗಳನ್ನು ಸುತ್ತಿಕೊಂಡು ಭೂಸ್ವಾಧೀನದ ವಿರುದ್ಧ ಹೋರಾಟಕ್ಕೆ ಧುಮುಕುವಂತೆ ರೈತರನ್ನು ಸಂಘಟಿಸುವವರಲ್ಲಿ ಇವರೂ ಒಬ್ಬರಾಗಿದ್ದಾರೆ.

ಇದು ಕೇವಲ ಮೊಂತಿ ಡಿಸೋಜಾ, ವಿಲಿಯಂ ಡಿಸೋಜಾರಂತಹ ಕೃಷಿಕರ ಆತಂಕ ಮಾತ್ರವಲ್ಲ. ಪೆರ್ಮುದೆ, ಕುತ್ತೆತ್ತೂರು ಗ್ರಾಮದpermude-sez ಎಲ್ಲಾ ಕೃಷಿಕರ ಆತಂಕ ಕೂಡಾ ಹೌದು. ಕುತ್ತೆತ್ತೂರಿನ ನಾಗೇಶ್ ಎಂಬುವವರಿಗೆ 6 ಎಕರೆ ಜಮೀನಿದೆ. ಇವರ ತೋಟ ವರ್ಷವಿಡೀ ಹಸಿರಿನಿಂದ ಕಂಗೊಳಿಸುತ್ತೆ. ಎಲ್ಲಾ ರೀತಿಯ ಬೇಸಾಯವನ್ನು ತನ್ನ ಫಲವತ್ತಾದ ಭೂಮಿಯಲ್ಲಿ ನಾಗೇಶ್ ಮಾಡಿಕೊಂಡು ಬರುತ್ತಿದ್ದಾರೆ. ಇವರಿಗೆ ಕೃಷಿ ಭೂಮಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿದ್ದು ಅವರ ಮನೆ ದೈವದ ಸ್ಥಾನ. “ಕೃಷಿ ದೈವದೇವರುಗಳನ್ನು ಬಿಟ್ಟು ಇಲ್ಲಿಂದ ಹೊರಹೋಗೋದಕ್ಕಿಂತ ಹೋರಾಡಿ ಸಾಯೋದೇ ಲೇಸು” ಅನ್ನುತ್ತಾರೆ ನಾಗೇಶ್. ಇವರಂತೆ ಪೆರ್ಮುದೆಯ ನಿವಾಸಿ ರಾಘವೇಂದ್ರ. ಇವರು ವೃತ್ತಿಯಲ್ಲಿ ಅರ್ಚಕರು. ತೋಟದ ನಡುವಿನ ಮನೆಗೆ ಅವರನ್ನ ಮಾತನಾಡಿಸಲೆಂದು ಹೋದಾಗ ಮಾವಿನ ರಸದಿಂದ ತಯಾರಿಸಿದ ರುಚಿಯಾದ ತಿಂಡಿಯನ್ನು ನಮಗೆ ಸವಿಯಲು ನೀಡಿ ಇದು ನಿಮ್ಮ ಸಿಟಿಯಲ್ಲಿ ಸಿಗುತ್ತಾ ಮಾರಾಯರೇ ಎಂದು ನಗುತ್ತಾ ಮಾತಿಗಿಳಿದರು. “ನಾವೇನು ಕೈಗಾರಿಕೆಗಳ ವಿರೋಧಿಗಳಲ್ಲ ಆದ್ರೆ ಇವರಿಗೆ ಕೃಷಿ ಭೂಮಿಯೇ ಯಾಕೆ ಬೇಕು? ಎಮ್.ಆರ್.ಪಿ.ಎಲ್ ನಂತಹಾ ಕೈಗಾರಿಕೆ ಇಲ್ಲಿಗೆ ಬಂದ ನಂತರ ಇಲ್ಲಿನ ಪರಿಸರ, ಜೀವವೈವಿದ್ಯ ನಾಶವಾಗುತ್ತಿದೆ. ಜಿಲ್ಲೆಯ ಧಾರಣಾ ಸಾಮರ್ಥ್ಯವನ್ನು ಮೀರಿ  ಕೈಗಾರಿಕೆ ಬೆಳೆಯುತ್ತಿದೆ” ಎನ್ನುತ್ತಾ ತಮ್ಮ ತೋಟದ ಕಡೆಗೆ ನಮ್ಮನ್ನು ಕರೆದುಕೊಂಡು ಹೋದರು. ಎರಡೂವರೆ ಎಕರೆ ಜಮೀನಿನಲ್ಲಿ ಏನೆಲ್ಲಾ ಸಾಧ್ಯವೋ ಅವೆಲ್ಲವನ್ನೂ ರಾಘವೇಂದ್ರ ಬೆಳೆಸಿದ್ದಾರೆ. ಉತ್ತಮ ಪರಿಹಾರ ಸಿಗುತ್ತಲ್ಲಾ, ಕೈತುಂಬಾ ಹಣ ಸಿಗುತ್ತಲ್ವಾ ಮತ್ತೆ ನೀವು ಯಾಕೆ ಎಮ್.ಆರ್.ಪಿ.ಎಲ್ ಗೆ ಭೂಮಿ ಕೊಡುವುದಿಲ್ಲಾ ಎಂಬ ಪ್ರಶ್ನೆಗೆ “ಈ ಹಿಂದೆ ಹಣದ ದುರಾಸೆಗೆ ಬಿದ್ದು ಭೂಮಿ ಕೊಟ್ಟವರ ದುಸ್ಥಿತಿಯನ್ನ ಕಣ್ಣಾರೆ ಕಂಡಿದ್ದೇವೆ. ನಾವು ಅದನ್ನು ಅನುಭವಿಸಲು ಸಾಧ್ಯವಿಲ್ಲ. ನಮ್ಮ ಕೃಷಿ ಭೂಮಿಯಲ್ಲಿ ನಮ್ಮ ಭಾವನೆಗಳಿವೆ, ಇಲ್ಲಿ ನಮಗೆ ನೆಮ್ಮದಿಯಿದೆ ನಮ್ಮ ಬದುಕನ್ನು ಬಲವಂತವಾಗಿ ಕಸಿದುಕೊಳ್ಳಲು ನಾವು ಬಿಡುವುದಿಲ್ಲ” ಎನ್ನುತ್ತಾ ಮಾತು ಮುಗಿಸುವಾಗ ಅರ್ಚಕರ ಕಣ್ಣು ಕೆಂಪಾಗಿತ್ತು.

ಹೀಗೆ ಪೆರ್ಮುದೆ, ಕುತ್ತೆತ್ತೂರು ಗ್ರಾಮದಲ್ಲಿ ಮಾತಿಗೆ ಸಿಕ್ಕ ಬಹುತೇಕ ರೈತರ ಅಭಿಪ್ರಾಯ ಒಂದೇ ಆಗಿತ್ತು. ಯಾವುದೇ ಕಾರಣಕ್ಕೂVidya ಕಂಪನಿಗೆ ನಮ್ಮ ಕೃಷಿ ಭೂಮಿಯನ್ನು ನೀಡುವುದಿಲ್ಲವೆಂಬುವುದಾಗಿದೆ. ರೈತರ ವಿರೋಧದ ನಡುವೆಯೂ ಭೂಮಿಯನ್ನು ಕಿತ್ತುಕೊಳ್ಳಲು ಮುಂದಾಗಿರುವ ಎಮ್.ಆರ್.ಪಿ.ಎಲ್ ವಿರುದ್ಧ ಇವರೆಲ್ಲಾ ಸಂಘಟಿತರಾಗುತಿದ್ದಾರೆ. ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ನೇತ್ರತ್ವದಲ್ಲಿ ತಮ್ಮ ನೆಲ ಜನ ಉಳಿಸಿಕೊಳ್ಳಲು ಮತ್ತೊಮ್ಮೆ ಹೋರಾಟಕ್ಕೆ ಮುಂದಾಗಿದ್ದಾರೆ. “ನಮಗೆ ರೈತರ ಕೃಷಿ ಭೂಮಿ ಹಾಗೂ ಅವರ ಬದುಕು ಇಲ್ಲಿಯ ಪರಿಸರ ಮುಖ್ಯವಾಗಿವೆಯೇ ಹೊರತು ಎಮ್.ಆರ್.ಪಿ.ಎಲ್ ನಂತಹ ಕಂಪನಿಯಲ್ಲ. ಖಾಲಿ ಬಿದ್ದಿರುವ ಹೆಚ್ಚುವರಿ ಭೂಮಿ ಎಮ್.ಆರ್.ಪಿ.ಎಲ್ ಬಳಿ ಇದ್ದರೂ ಮತ್ತೆ ಮತ್ತೆ ಭೂಸ್ವಾಧೀನಕ್ಕೆ ಮುಂದಾಗೋ ಉದ್ದೇಶವೇನು” ಎಂದು ಪ್ರಶ್ನಿಸುತ್ತಾರೆ ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಮೂಲಕ ಈ ಭಾಗದ ರೈತರ ಹೋರಾಟಕ್ಕೆ ಮುಂದಾಳತ್ವವನ್ನು ನೀಡುತ್ತಿರುವ ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್. “ಭೂಮಿ ಕೊಡಲೊಪ್ಪದ ರೈತರ ಪರವಾಗಿ ಎಲ್ಲಾ ರೀತಿಯ ಹೋರಾಟಕ್ಕೆ ನಾವು ಸಜ್ಜಾಗಿದ್ದೇವೆ. ಈ ಹಿಂದೆ ಎಸ್.ಇ.ಜೆಡ್ ಗಾಗಿ ರೈತರ ಭೂಮಿಯನ್ನು ಸರ್ಕಾರ ಕಿತ್ತುಕೊಂಡಾಗ ಅದರ ವಿರುದ್ಧ ಹೋರಾಟ ನಡೆಸಿ ಭೂಮಿ ಉಳಿಸಿಕೊಂಡಿದ್ದೇವೆ. ಇದೀಗ ಮತ್ತೊಂದು ಹಂತದ ಹೋರಾಟ ಶುರುವಾಗಿದೆ” ಅನ್ನುತ್ತಾರೆ ವಿದ್ಯಾ ದಿನಕರ್.

ಪೆರ್ಮುದೆ ಗ್ರಾಮ ಪಂಚಾಯತ್ ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲೂ ಭೂಸ್ವಾಧೀನ ಪ್ರಕ್ರಿಯೆಗೆ ಆಕ್ಷೇಪಣೆ ಸಲ್ಲಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ. ಇಷ್ಟಾಗಿಯೂ ಜನರಿಗೆ ಹಾಗೂ ಸ್ಥಳೀಯ ಪಂಚಾಯತ್ ಗೆ ಯಾವುದೇ ಮಾಹಿತಿ ನೀಡದೆ ಗುಪ್ತವಾಗಿ ಭೂಸ್ವಾಧೀನದ ಪ್ರಕ್ರಿಯೆಗೆ ಎಮ್.ಆರ್.ಪಿ.ಎಲ್ ಮುಂದಾಗುತ್ತಿರುವುದು ಆತಂಕಕಾರಿ ವಿಚಾರ ಎಂಬುವುದು ಪೆರ್ಮುದೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರೋಜಾ ಅಭಿಪ್ರಾಯ. ಇಷ್ಟೆಲ್ಲಾ ಪ್ರಬಲ ವಿರೋಧಗಳ ನಡುವೆಯೂ ಎಮ್.ಆರ್.ಪಿ.ಎಲ್ ರೈತರಿಂದ ಭೂಮಿಯನ್ನು ಕಸಿದುಕೊಳ್ಳಲು ಹಿಂಭಾಗಿಲ ಮೂಲಕ ಪ್ರಯತ್ನ ನಡೆಸುತ್ತಿದೆ. ಊರಿನ ಜನರಿಗೂ, ಸ್ಥಳೀಯ ಗ್ರಾಮಪಂಚಾಯತ್ ಗೂ ಯಾವುದೇ ಮಾಹಿತಿ ನೀಡದೆ ಗ್ರಾಮದ ಸರ್ವೇ ಕಾರ್ಯ ನಡೆಸಲು ಎಮ್.ಆರ್.ಪಿ.ಎಲ್ ಸಿಬಂಧಿ ಬಂದಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರು ಸರ್ವೇ ನಡೆಸಲು ಬಂದ ಸಿಬ್ಬಂದಿಯನ್ನ ಬೆನ್ನಟ್ಟಿದ್ದಾರೆ. ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿ ಕಂಪನಿ ಹಾಗೂ ಗ್ರಾಮಸ್ಥರ ವಿರುದ್ಧ ದೂರು ದಾಖಲಾಗಿದೆ. ಜೊತೆಗೆ ಸ್ಥಳೀಯರನ್ನು ಚೂಬಿಟ್ಟು ರೈತರಿಗೆ ಅಮಿಷ ಒಡ್ಡುವ ಕೆಲಸದಲ್ಲೂ ಕಂಪನಿ ನಿರತವಾಗಿದೆ.

ದೈತ್ಯ ಕಂಪನಿಯ ದುರಾಸೆಯ ಭೂಬೇಡಿಕೆ ವಿರುದ್ಧದ ಹೋರಾಟ ಕೇವಲ ಪೆರ್ಮುದೆ ಕುತ್ತೆತ್ತೂರು ಗ್ರಾಮದ ಜನರಿಗಷ್ಟೇ ಸೀಮಿತವಾಗಬಾರದು. ಕಾರಣ ಎಮ್,ಆರ್.ಪಿ.ಎಲ್ ಭೂಬೇಡಿಕೆ ಅಷ್ಟು ಸುಲಭವಾಗಿ ತಣಿಯುವಂತಹದಲ್ಲ. ಇಂದು ಪೆರ್ಮುದೆ, ಕುತ್ತೆತ್ತೂರು ಗ್ರಾಮಸ್ಥರು ಎದುರಿಸುತ್ತಿರುವ ಆತಂಕ, ಅತಂತ್ರತೆ ಮುಂದಿನ ದಿನಗಳಲ್ಲಿ ಮಂಗಳೂರಿನ ಸುತ್ತಮುತ್ತಲ ಹಳ್ಳಿಯ ಜನರದ್ದಾಗಬಹುದು. ಈ ನಿಟ್ಟಿನಲ್ಲಿ ಎಮ್.ಆರ್.ಪಿ.ಎಲ್ ದುರಾಸೆಯ ಭೂಬೇಡಿಕೆಯ ವಿರುದ್ಧದ ರೈತ ಹೋರಾಟಕ್ಕೆ ಕೈಜೋಡಿಸಬೇಕಿದೆ. ಇಲ್ಲವಾದಲ್ಲಿ ಕೈಗಾರೀಕರಣ ಎಂಬ ಹೆಸರಿನ ಬುಲ್ಡೋಜರ್ ಬಾಯಿಗೆ ಮತ್ತಷ್ಟು ರೈತ ಸಮುದಾಯ ಬಲಿಯಾಗೋದಂತೂ ನಿಶ್ಚಿತ.