’ನಾವು ನಮ್ಮಲ್ಲಿ’ಯ “ಅಭಿವ್ಯಕ್ತಿ ಕರ್ನಾಟಕ” : ಹಾಸನದಲ್ಲಿ, ನವೆಂಬರ್ 16-17, 2013

ಸ್ನೇಹಿತರೇ,

ಸುಮಾರು 30-40ರ ವಯೋಮಾನದ ಆಸುಪಾಸಿನಲ್ಲಿರುವ ಪ್ರಗತಿಪರ ಮನೋಭಾವದ ಕನ್ನಡ ಲೇಖಕ ಮತ್ತು ಪತ್ರಕರ್ತರ ಒಂದು ಗುಂಪು ಹಲವು ವರ್ಷಗಳಿಂದ “ಬಯಲು ಸಾಹಿತ್ಯ ವೇದಿಕೆ ಕೊಟ್ಟೂರು” ಇದರ ಆಶ್ರಯದಲ್ಲಿ ಪ್ರತಿವರ್ಷವೂ ಎರಡು ದಿನಗಳ ಚರ್ಚೆ-ಸಂವಾದ-ವಿಚಾರಸಂಕಿರಣಗಳನ್ನು ಏರ್ಪಡಿಸಿಕೊಂಡು ಬರುತ್ತಿದೆ. ಎರಡು ವರ್ಷದ ಹಿಂದೆ ಇವರು ಚಿತ್ರದುರ್ಗದಲ್ಲಿ ನಡೆಸಿದ “ಮಾಧ್ಯಮ ಕರ್ನಾಟಕ” ನಾನು ಪಾಲ್ಗೊಂಡ ಮೊದಲ ಕಾರ್ಯಕ್ರಮ. ಆ ಸಂದರ್ಭದಲ್ಲಿ ನಾನು “ಪರ್ಯಾಯ ಮಾಧ್ಯಮ”ದ ಕುರಿತು ಮಾತನಾಡಿದ್ದೆ. ಅದಕ್ಕೆ ಸಿದ್ದವಾಗುವ ವೇಳೆಯಲ್ಲಿಯೇ “ವರ್ತಮಾನ.ಕಾಮ್”ನ ಯೋಚನೆ ಮೊಳೆತದ್ದು ಮತ್ತು ಆ ಸಭೆಯ ನಂತರದ ಕೆಲವು ಚರ್ಚೆಗಳಲ್ಲಿ ಅದು ಗಟ್ಟಿಯಾದದ್ದು ಎನ್ನುವುದು ನಮ್ಮ ಬಳಗದ ಅನೇಕರಿಗೆ ಗೊತ್ತಿರುವ ವಿಚಾರ. 2011 ರ “ಮಾಧ್ಯಮ ಕರ್ನಾಟಕ” ಕಾರ್ಯಕ್ರಮ ನಡೆದ ಎರಡು ತಿಂಗಳಿಗೆಲ್ಲ “ವರ್ತಮಾನ.ಕಾಮ್” ಆರಂಭವಾಗಿತ್ತು.

ಕಳೆದ ವರ್ಷ (2012) ಇದೇ ಗುಂಪು ಕುಪ್ಪಳಿಯಲ್ಲಿ “ಚಳವಳಿ ಕರ್ನಾಟಕ” ಕುರಿತು ಕಾರ್ಯಕ್ರಮ ಏರ್ಪಡಿಸಿತ್ತು. ಪ್ರಾಮಾಣಿಕತೆ ಮತ್ತು ಬದ್ಧತೆ ಉಳಿಸಿಕೊಂಡ ನಾಡಿನ ಅನೇಕ ಜನಪರ ಮನಸ್ಸುಗಳು, ಲೇಖಕರು, ಪತ್ರಕರ್ತರು, ಹೋರಾಟಗಾರರು ಅಲ್ಲಿ ನೆರೆದಿದ್ದರು. ಈ ವರ್ಷದ ಕಾರ್ಯಕ್ರಮ ಕಾರಣಾಂತರಗಳಿಂದ ಕೆಲ ತಿಂಗಳುಗಳ ಕಾಲ ಮುಂದೂಡಲ್ಪಟ್ಟರೂ ಇದೇ ನವೆಂಬರ್ ತಿಂಗಳ 16 ಮತ್ತು 17 ರಂದು ಹಾಸನದಲ್ಲಿ ನಡೆಯಲಿದೆ. ವಿಷಯ : “ಅಭಿವ್ಯಕ್ತಿ ಕರ್ನಾಟಕ”. ದೇವನೂರು ಮಹಾದೇವ, ದಿನೇಶ್ ಅಮೀನ್‌ಮಟ್ಟು, ಹೆಚ್.ನಾಗವೇಣಿ, ಸುಗತ ಶ್ರೀನಿವಾಸರಾಜು, ರಹಮತ್ ತರೀಕೆರೆ, ಫಣಿರಾಜ್, ಇನ್ನೂ ಅನೇಕ ಚಿಂತಕರು, ಲೇಖಕರು, ಪತ್ರಕರ್ತರು ಪಾಲ್ಗೊಳ್ಳಲಿದ್ದಾರೆ ಮತ್ತು ಮಾತನಾಡಲಿದ್ದಾರೆ. ವರ್ತಮಾನದ ಓದುಗರಿಗೂ ಈ ಮೂಲಕ ಆಹ್ವಾನಿಸಲಾಗುತ್ತಿದೆ. ವರ್ತಮಾನ ಬಳಗದ ಹಲವು ಲೇಖಕರು ಮತ್ತು ಮಿತ್ರರೂ ಅಲ್ಲಿ ಬರಲಿದ್ದಾರೆ. ದಯವಿಟ್ಟು ಬಂದು, ಭಾಗವಹಿಸಿ. ಕಾರ್ಯಕ್ರಮಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಶನಿವಾರದ ರಾತ್ರಿ ವಸತಿ ಸೌಕರ್ಯ ಇರುತ್ತದೆ, ಮತ್ತು ಎರಡೂ ದಿನ ತಿಂಡಿ-ಊಟದ ವ್ಯವಸ್ಥೆ ಇರುತ್ತದೆ. ವಿವರಗಳಿಗೆ ಕೆಳಗಿನ ಆಹ್ವಾನ ಪತ್ರಿಕೆಯಲ್ಲಿರುವ ಆಯೋಜಕರನ್ನು ಸಂಪರ್ಕಿಸಿ ಮತ್ತು ಬರುವಿರಾದರೆ ಅವರಿಗೆ ತಿಳಿಸಿ. ಆಯೋಜನೆ ಮಾಡಲು ಅವರಿಗೂ ಸುಲಭವಾಗುತ್ತದೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ, ವರ್ತಮಾನ.ಕಾಮ್

’ನಾವು ನಮ್ಮಲ್ಲಿ’ಯ “ಅಭಿವ್ಯಕ್ತಿ ಕರ್ನಾಟಕ” ಕಾರ್ಯಕ್ರಮಕ್ಕೆ ಆಹ್ವಾನ

ಆತ್ಮೀಯರೇ,

“ಬಯಲು ಸಾಹಿತ್ಯ ವೇದಿಕೆ ಕೊಟ್ಟೂರು” ಸಮಾನ ಮನಸ್ಕ ಬರಹಗಾರರ, ಚಿಂತಕರ ಒಕ್ಕೂಟ. ಇದು ಪ್ರತಿವರ್ಷ ’ನಾವು ನಮ್ಮಲ್ಲಿ’ ಎಂಬ ಕಾರ್ಯಕ್ರಮ ನಡೆಸುವುದರ ಮೂಲಕ ರಾಜ್ಯದ ಬರಹಗಾರರನ್ನು, ಸಮಾನ ಮನಸ್ಕ ಗೆಳೆಯರನ್ನು ಒಂದೆಡೆ ಸೇರಿಸಿ ಅವರ ತುಡಿತಗಳಿಗೆ, ಮುಕ್ತ ಸಂವಾದಕ್ಕೆ ವೇದಿಕೆ ಒದಗಿಸುತ್ತ ಬಂದಿದೆ. ರಾಜಕೀಯವಾಗಿ, ಸಾಂಸ್ಕೃತಿಕ, ಸಾಮಾಜಿಕವಾಗಿ ಕರ್ನಾಟಕ ಎತ್ತ ಸಾಗುತ್ತಿದೆ ಎಂಬ ಬಗ್ಗೆ ಚರ್ಚಿಸಿದ್ದೇವೆ. ಬಂಡವಾಳಶಾಹಿಗಳ ಕೈ ಸೇರಿ ಮಾಧ್ಯಮ ಕ್ಷೇತ್ರ ಹೇಗೆ ಸ್ಥಿತ್ಯಂತರವಾಗುತ್ತಿದೆ ಎಂಬ ಆತಂಕಗಳನ್ನು ಹಂಚಿಕೊಂಡಿದ್ದೇವೆ. ಹಕ್ಕು, ದನಿ, ಸ್ಥಾನಮಾನ, ಸಾಮಾಜಿಕ ಬದಲಾವಣೆಗೆ ಕಾರಣವಾದ ಚಳವಳಿಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡೆವು. ಈಗ `ಅಭಿವ್ಯಕ್ತಿ’ಯನ್ನು ಕುರಿತು ಒಂದಿಷ್ಟು ಆಲೋಚಿಸಬೇಕಾದ ಹೊತ್ತು. ಮುಕ್ತವಾಗಿ ನಮ್ಮ ಅಭಿಪ್ರಾಯವನ್ನು ದಾಖಲಿಸಲಾಗದ, ಅಸೂಕ್ಷ್ಮವಾದ, ಸಂಯಮವೇ ಇಲ್ಲದ ಕಾಲಘಟ್ಟದತ್ತ ಸಮಾಜ ಹೊರಳುತ್ತಿದೆ. ಮಾಧ್ಯಮ ಕೇಂದ್ರಿತವಾದ ಈ ಕಾಲದಲ್ಲಿ ಅಭಿವ್ಯಕ್ತಿಗೆ ಧಕ್ಕೆ ತರುವಂತಹ ಹಲವು ಘಟನೆಗಳು ಭಯ ಹುಟ್ಟಿಸುವಂತೆ ನಡೆಯುತ್ತಿದ್ದರೆ, ಪ್ರಚೋದಕವಾದ, ಆವೇಶದ, ಹಿಂಸಾತ್ಮಕ ಮಾತು ಮತ್ತು ದೃಶ್ಯಗಳು ಇನ್ನೊಂದೆಡೆ ಅಭಿವ್ಯಕ್ತಿಯ ಹೆಸರಿನಲ್ಲೇ ಎಡಬಿಡದೇ ಭಿತ್ತರಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಸವಾಲು ಮತ್ತು ಅಭಿವ್ಯಕ್ತಿಯ ಹಲವು ಮಜಲುಗಳ ಸುತ್ತ ಚರ್ಚೆ ಮತ್ತು ಸಂವಾದ ನಡೆಸಲು ಎರಡು ದಿನಗಳ ವಿಚಾರ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಕನ್ನಡದ ಆರೋಗ್ಯವಂತ ಮನಸ್ಸುಗಳು ಪಾಲ್ಗೊಂಡು ಈ ಸಮಾವೇಶ ಒಂದು ಮಹತ್ವದ ಹೆಜ್ಜೆಯಾಗಬೇಕು ಎಂಬುದು ನಮ್ಮೆಲ್ಲರ ಆಶಯ. ಕಾರ್ಯ ಕ್ರಮದ ರೂಪುರೇಷೆಯನ್ನು ತಿಳಿಸುವ ಪತ್ರವನ್ನು ಇದರೊಂದಿಗೆ ಇರಿಸಿದ್ದೇವೆ.

ನಾವೆಲ್ಲರೂ ಜೊತೆಗಿದ್ದು ಸಂವಾದವನ್ನು ಯಶಸ್ವಿಯಾಗಿಸೋಣ.

ನಿಮ್ಮ ಬರವನ್ನು ನಿರೀಕ್ಷಿಸುವ
ನಾವು ನಮ್ಮಲ್ಲಿ ಬಳಗ

ನಾವು ನಮ್ಮಲ್ಲಿ - ಅಭಿವ್ಯಕ್ತಿ ಕರ್ನಾಟಕನಾವು ನಮ್ಮಲ್ಲಿ - ಅಭಿವ್ಯಕ್ತಿ ಕರ್ನಾಟಕ

ಸಮಾನ ಶಿಕ್ಷಣದೆಡೆಗಿನ ಪಯಣ…….


– ರೂಪ ಹಾಸನ


 

ಹಳ್ಳಿಗಳ ಸರ್ಕಾರಿ ಶಾಲೆಗಳ ಮಕ್ಕಳಿಗಾಗಿ ನಮ್ಮ ಪ್ರೇರಣಾ ವಿಕಾಸ ವೇದಿಕೆಯಿಂದ ನಡೆಸುವ ನಿರಂತರ ಕಾರ್ಯಕ್ರಮಗಳಿಂದಾಗಿ ಬಹಳಷ್ಟು ವಿಶೇಷಗಳು, ವೈರುಧ್ಯಗಳೂ ಕಣ್ಣಿಗೆ ಬೀಳುತ್ತಿರುತ್ತವೆ. ಈಗ್ಗೆ 3-4 ವರ್ಷದ ಹಿಂದೆ ಹಳ್ಳಿಯ ಶಾಲೆಯೊಂದರಲ್ಲಿ ಕಾರ್ಯಕ್ರಮದಲ್ಲಿದ್ದಾಗ ಹೆಣ್ಣುಮಕ್ಕಳೇ ಹೆಚ್ಚಾಗಿದ್ದರು. ಈಗ ಹೆಣ್ಣುಮಕ್ಕಳಿಗೂ ಶಿಕ್ಷಣ ಕೊಡಬೇಕೆಂದು ಜನರಲ್ಲೂ ಜಾಗೃತಿ ಮೂಡಿದೆ ಎನಿಸಿ ಸಮಾಧಾನವಾಗಿತ್ತು. ಆದರೆ ಮುಂದೆ ಬೇರೆ ಹಳ್ಳಿಗಳ ಶಾಲೆಗಳಿಗೆ ಹೋದಾಗಲೂ ಹೆಣ್ಣುಮಕ್ಕಳೇ ಹೆಚ್ಚಾಗಿ ಕಾಣಲಾರಂಭಿಸಿದಾಗ ಸಂದೇಹ ಕಾಡಲಾರಂಭಿಸಿತು. ಸಮಾಜದಲ್ಲಿ ಹೆಣ್ಣುಮಕ್ಕಳು ಹುಟ್ಟುವ ಸಂಖ್ಯೆಯೇ ಗಣನೀಯ ಪ್ರಮಾಣದಲ್ಲಿ ಕುಸಿದಿರುವಾಗ, ಶಾಲೆಗಳಲ್ಲಿ ಹೆಣ್ಣುಮಕ್ಕಳು ಹೆಚ್ಚಾಗಿರಲು ಹೇಗೆ ಸಾಧ್ಯ? ಅನುಮಾನದಿಂದ ಶಿಕ್ಷಕ ಮಿತ್ರರನ್ನು ಅಡ್ಡಪ್ರಶ್ನೆ ಮಾಡಲಾರಂಭಿಸಿದಾಗ ತಿಳಿದದ್ದು…… ಈಗ ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ ಉಳಿದಿರುವವರು ಬಡ ಹೆಣ್ಣುಮಕ್ಕಳು ಮತ್ತು ತಳಸಮುದಾಯದ ಮಕ್ಕಳು! ಹತ್ತಿರದಲ್ಲೆಲ್ಲೂ ಖಾಸಗಿ ಶಾಲೆಗಳಿಲ್ಲದೇ, ಅನಿವಾರ್ಯವಾಗಿ ಸರ್ಕಾರಿ ಶಾಲೆಯನ್ನೇ ಅವಲಂಬಿಸಬೇಕಾದಲ್ಲಿ ಮಾತ್ರ ಜಾತಿ, ವರ್ಗ, ಲಿಂಗ ಭೇದವಿಲ್ಲದೇ kannada-schoolಎಲ್ಲರೂ ಸರ್ಕಾರಿ ಶಾಲೆಗೇ ಬರುತ್ತಾರಷ್ಟೇ. ಆಯ್ಕೆ ಇದ್ದರೆ ಹೆಚ್ಚಿನ ಉಳ್ಳವರು ಬಯಸುವುದು ಕಾನ್ವೆಂಟ್‌ಗಳನ್ನೇ. ಅದರಲ್ಲೂ ಒಂದೇ ಮನೆಯಲ್ಲಿ ಗಂಡು-ಹೆಣ್ಣುಮಕ್ಕಳಿಬ್ಬರೂ ಇದ್ದರೆ, ಬಡತನವಿದ್ದರೂ ಕಷ್ಟಪಟ್ಟಾದರೂ ಗಂಡನ್ನು ಕಾನ್ವೆಂಟ್ ಶಾಲೆಗೆ ಸೇರಿಸಿ, ಹೆಣ್ಣನ್ನು ಸರ್ಕಾರಿ ಶಾಲೆಗೆ ಸೇರಿಸಲಾಗುತ್ತದೆ! ಸಮಾನ ಶಿಕ್ಷಣ ವ್ಯವಸ್ಥೆ ಇಲ್ಲದಿದ್ದರೆ, ದುರ್ಬಲರು, ಶೋಷಿತರು ಹೇಗೆ ಅಂಚಿಗೆ ತಳ್ಳಲ್ಪಡುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೇ.

ಸ್ವಾತಂತ್ರ್ಯ ದೊರೆತ ಎರಡು ದಶಕಗಳ ನಂತರ ಹುಟ್ಟಿ, ಗ್ರಾಮೀಣ ಪ್ರದೇಶದ ಸಾಮಾಜಿಕ ಭೇದವಿಲ್ಲದೇ ಕಿಕ್ಕಿರಿದು ತುಂಬಿರುತ್ತಿದ್ದ ಸರ್ಕಾರಿ ಶಾಲೆಗಳಲ್ಲಿ ಓದಿದ ನನ್ನಂತವರಿಗೆ, ಕಳೆದೆರಡು ದಶಕಗಳಿಂದ ಆಗುತ್ತಿರುವ ವೇಗದ ಬದಲಾವಣೆ ದಿಗ್ಭ್ರಮೆ ಮೂಡಿಸುತ್ತಿದೆ. ನಮ್ಮ ಭಾರತಕ್ಕೆ ಇದೆಲ್ಲಾ ಏನಾಗಿ ಹೋಯ್ತು? ಎಲ್ಲೆಲ್ಲೂ ಅಸಮಾನತೆಯೇ ತಾಂಡವವಾಡುತ್ತಿರುವಂತೆ ಯಾಕೆ ಕಾಣುತ್ತಿದೆ? ಇದನ್ನು ಎಲ್ಲಿಂದ ಸರಿಪಡಿಸುವುದು? ಸರಿಪಡಿಸುವವರಾರು? ಹೇಗೆ ಸರಿಪಡಿಸುವುದು? ಎಂಬ ಪ್ರಶ್ನೆಗಳು ಕಾಡಲಾರಂಭಿಸುತ್ತವೆ.

ಸಮ ಸಮಾಜವೆಂಬ ಬಂಗಲೆಯ ಅಡಿಪಾಯವಾದ, ಸಮಾನ ಶಿಕ್ಷಣ ವ್ಯವಸ್ಥೆ ಎಂಬುದೇ ಒಂದು ಆದರ್ಶದ ಸ್ಥಿತಿ ಇರಬಹುದೇ? ಅದನ್ನು ಎಂದಿಗೂ ಸಾಧಿಸಲು ಸಾಧ್ಯವಾಗುವುದಿಲ್ಲವೇ? ಆದರೆ ಸಮಾನ ಶಿಕ್ಷಣ ವ್ಯವಸ್ಥೆಯನ್ನು ಉಳ್ಳ ಅಮೆರಿಕಾ, ಕ್ಯೂಬಾ, ಚೈನಾ, ರಷ್ಯಾ, ಬ್ರಿಟನ್ ರಾಷ್ಟ್ರಗಳು ಕಣ್ಣೆದುರಿಗಿವೆಯಲ್ಲಾ? ಅಲ್ಲಿ ಸಾಧ್ಯವಾಗಿದ್ದು ಇಲ್ಲೇಕೆ ಸಾಧ್ಯವಾಗುತ್ತಿಲ್ಲ? ಇಲ್ಲಿ ಅಂತಹ ಪ್ರಯತ್ನಗಳು ಆಗಲೇ ಇಲ್ಲವೇ? – ಚರಿತ್ರೆಯ ಗರ್ಭವನ್ನು ಬಗೆಯುತ್ತಾ ಹೊರಟರೆ, ಅಸಹನೀಯ ಸತ್ಯಗಳು ಕಣ್ಣ ಮುಂದೆ ನಿಲ್ಲುತ್ತವೆ.

ನಿಜವಾದ ಸಮಾನತೆಯ ಅಡಿಪಾಯದ ಶಿಕ್ಷಣ ಹಕ್ಕು ಕಾಯ್ದೆ ಮೊದಲು ಮಂಡನೆಯಾದದ್ದು ಸ್ವಾತಂತ್ರ್ಯಪೂರ್ವದ 1882 ರಲ್ಲಿ ಜ್ಯೋತಿ ಬಾ ಫುಲೆ ಅವರಿಂದ. phuleಅದುವರೆಗೆ ಕೆಲವೇ ಕೆಲವು ಮೇಲ್ಜಾತಿ, ಮೇಲ್ವರ್ಗದ ಪುರುಷರಿಗೆ ಸೀಮಿತವಾಗಿದ್ದ ಶಿಕ್ಷಣ, ಎಲ್ಲರ ಹಕ್ಕು ಎಂದು ಪ್ರತಿಪಾದಿಸಿದ್ದು, ಜೊತೆಗೆ ತಮ್ಮ ಪತ್ನಿ ಸಾವಿತ್ರಿಬಾಯಿ ಫುಲೆ ಅವರೊಡಗೂಡಿ ಮಹಿಳೆ ಮತ್ತು ತಳಸಮುದಾಯದವರಿಗಾಗಿಯೇ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದು, ಶಿಕ್ಷಣ ಮತ್ತು ಸಮಾನತೆ ಕುರಿತ ಅವರ ನಿಜವಾದ ಕಾಳಜಿಯನ್ನು ತೋರಿಸುತ್ತದೆ. ಆ ನಂತರ ಗೋಪಾಲಕೃಷ್ಣ ಗೋಖಲೆಯವರು 1911 ರಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಬಿಲ್ ಮಂಡನೆ ಮಾಡಿದಾಗ ಬಹುಸಂಖ್ಯಾತರ ವಿರೋಧವನ್ನು ಎದುರಿಸಬೇಕಾಯ್ತು. ಇದರ ವಿರುದ್ಧವಾಗಿ ೧೧೦೦೦ ವಿರೋಧಿ ಸಹಿಗಳನ್ನು ಸಂಗ್ರಹಿಸಲಾಯ್ತು. 1937 ರವರೆಗೂ ಈ ಬಿಲ್ ಪಾಸ್ ಆಗಲಿಲ್ಲ. ಮಹಾತ್ಮಾ ಗಾಂಧಿ ಎಲ್ಲರಿಗೂ ಶಿಕ್ಷಣ ಎಂಬುದಕ್ಕೆ ಪರವಾಗಿ ವಾದಿಸಿದ್ದು ಗಟ್ಟಿಯಾಗಿ ನಿಂತಿದ್ದು ಒಂದು ಇತಿಹಾಸ. ರಾಜ ಮಹಾರಾಜರು, ಸಾಮಂತರು, ಭೂಮಾಲಿಕರು ಎಲ್ಲರಿಗೂ ಶಿಕ್ಷಣ ಕೊಟ್ಟರೆ ಆಳುಗಳ ಕೆಲಸವನ್ನು ಮಾಡುವವರ್‍ಯಾರು ಎಂದು ಪ್ರತಿರೋಧ ಒಡ್ಡಿದರು. ಸ್ವಾತಂತ್ರ್ಯಾ ನಂತರ 1948-49 ರಲ್ಲಿ ಅಸೆಂಬ್ಲಿಯಲ್ಲಿ ಮತ್ತೆ ಉಚಿತ ಶಿಕ್ಷಣದ ಕುರಿತು ಚರ್ಚೆಗಳಾಯ್ತು. ಅಲ್ಲಿಯವರೆಗೆ 14 ವರ್ಷದವರೆಗಿನ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕೆಂದಿದ್ದು 11 ವರ್ಷಕ್ಕೆ ಇಳಿಸಬೇಕೆಂದು ಭೂಮಾಲೀಕರು ವಾದ ಮಾಡಿದರು. ಆದರೆ ಅಂಬೇಡ್ಕರ್ ಅವರು 11 ವರ್ಷದ ನಂತರ ಮಕ್ಕಳು ಬಾಲಕಾರ್ಮಿಕರಾಗುತ್ತಾರೆಂಬ ಭವಿಷ್ಯವನ್ನು ಮುಂದಾಲೋಚಿಸಿ 14 ವರ್ಷದವರೆಗಿನ ಶಿಕ್ಷಣವನ್ನು ಕಡ್ಡಾಯಗೊಳಿಸಲು ಒಪ್ಪಿಸಿದರು. ಆದರೆ ನಮ್ಮ ಅಸಮಾನ ಭಾರತದ ಸಾಮಾಜಿಕ ವ್ಯವಸ್ಥೆಗೆ ಇದರೊಂದಿಗೇ ಸಮಾನ ಶಿಕ್ಷಣ ವ್ಯವಸ್ಥೆಯೂ ಕಡ್ಡಾಯವಾಗಿ ಜಾರಿಗೊಳ್ಳಬೇಕಿತ್ತು. ಏಕೋ ಕಡ್ಡಾಯ ಶಿಕ್ಷಣದ ಕುರಿತೇ ನಡೆದ ಸುದೀರ್ಘ ಚರ್ಚೆಗಳು ಸಮಾನ ಶಿಕ್ಷಣದವರೆಗೆ ಆ ಹಂತದಲ್ಲಿ ತಲುಪಲೇ ಇಲ್ಲ.

ಭಾರತದಲ್ಲಿ ಬಹುಶಃ ಅತಿ ಹೆಚ್ಚು ಚರ್ಚೆಗೊಳಗಾಗಿದ್ದು ನಮ್ಮ ಶಿಕ್ಷಣ ವ್ಯವಸ್ಥೆ. ದೇಶದ ವಿವಿಧ ನ್ಯಾಯಾಲಯಗಳಲ್ಲಿ ಇಂದಿಗೂ ಶಿಕ್ಷಣಕ್ಕೆ ಸಂಬಂಧಿಸಿದ 3000 ಕೇಸುಗಳು ಜೀವಂತವಾಗಿರುವುದೇ ಇದಕ್ಕೆ ಸಾಕ್ಷಿ. ಎಷ್ಟೆಲ್ಲಾ ಸಂಘರ್ಷಗಳಾದರೂ ಸಂವಿಧಾನದ ಮೂಲ ಆಶಯವಾದ ಸಮಾನತೆ, ಸಾಮಾಜಿಕ ನ್ಯಾಯ, govt-school-kidsತಾರತಮ್ಯರಹಿತವಾದ ಶಿಕ್ಷಣದಿಂದ ನಿಧಾನಕ್ಕೆ ದೂರ ಸರಿಯುತ್ತಾ, ಇವುಗಳನ್ನೇ ಒಡೆದು ದೊಡ್ಡ ಗೋಡೆಗಳನ್ನು ಕಟ್ಟಿ ಶ್ರೇಣೀಕೃತ ಶಿಕ್ಷಣ ವ್ಯವಸ್ಥೆಯನ್ನು ಬೆಳೆಸಲಾಗುತ್ತಿದೆಯೆಂಬುದೇ ದುರಂತ. ವರ್ಗ ಹಾಗೂ ಪಟ್ಟಭದ್ರಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಬಂಡವಾಳಶಾಹಿಗಳ ಕಪಿಮುಷ್ಟಿಗೆ ಸಿಕ್ಕಿ ಇಂದು ಶಿಕ್ಷಣವೂ ಒಂದು ವ್ಯಾಪಾರವಾಗಿಬಿಟ್ಟಿದೆ. ಸಾಮಾಜಿಕ-ಆರ್ಥಿಕತೆಯ ದಟ್ಟವಾದ ತಾರತಮ್ಯಕ್ಕೆ ಒಳಗಾಗಿದ್ದ, ಅಸಮಾನತೆಯೇ ತಾಂಡವವಾಡುತ್ತಿದ್ದ ನಮ್ಮ ದೇಶ, ಸಮಾನತೆಯ ಆಶಯದ ಸಂವಿಧಾನವನ್ನು ರೂಪಿಸಿಕೊಂಡ ನಂತರವಾದರೂ ಇದನ್ನೆಲ್ಲಾ ಮೀರಲು ತನ್ನದೇ ಆದ ಸಶಕ್ತ ಸಮಾನ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕಿತ್ತಲ್ಲವೇ? ಪ್ರಯತ್ನಗಳು ಆಗಲೇ ಇಲ್ಲವೆಂದಲ್ಲ……

ಸಮಾನ ಶಾಲಾ ವ್ಯವಸ್ಥೆಯನ್ನು ಪ್ರತಿಪಾದಿಸುವ 1964-66 ರ ಕೊಥಾರಿ ಆಯೋಗ ಸಮಾನ ಶಿಕ್ಷಣದ ಆಶಯದ ಸಾರ್ವಜನಿಕ ಶಾಲಾ ವ್ಯವಸ್ಥೆಯ ಮೂಲಕ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಿ, ಸಾಮಾಜಿಕ ಬದಲಾವಣೆಯನ್ನು ತರುವ ದೊಡ್ಡ ಕನಸನ್ನು ಕಂಡಿತ್ತು. ಸಮಾನ ಶೈಕ್ಷಣಿಕ ವ್ಯವಸ್ಥೆಯು ದೇಶದ ಅಭಿವೃದ್ಧಿಗೆ ಭದ್ರ ತಳಪಾಯವಾಗುವುದಲ್ಲದೇ ರಾಷ್ಟ್ರೀಯ ಐಕ್ಯತೆಯನ್ನು ಸಾಧಿಸುವ ಆಶಯವಿತ್ತು. ಅದು ಸಾಕಾರವಾಗಿದ್ದರೆ ಬಹುಶಃ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಾತ್ರವಲ್ಲ ಸಾಮಾಜಿಕವಾಗಿಯೂ ಮಹತ್ತರವಾದ ಬದಲಾವಣೆಗಳಾಗಿರುತ್ತಿದ್ದವು. ಸಮಾನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಜಾತಿ, ಮತ, ಲಿಂಗ, ಆರ್ಥಿಕ-ಸಾಮಾಜಿಕ ಸ್ಥಿತಿ ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೇ ಎಲ್ಲರಿಗೂ ಶಿಕ್ಷಣವೆಂಬುದಕ್ಕೆ ಮಾತ್ರ ಪ್ರಾಮುಖ್ಯತೆ ನೀಡುವ ಆರೋಗ್ಯಕರವಾದ ಆಶಯವಿತ್ತು. ನೆರೆಹೊರೆ ಶಾಲಾ ಪದ್ಧತಿಯ ಮೂಲಕ ಒಂದು ಪ್ರದೇಶದ ಮಕ್ಕಳು rte_schoolಯಾವುದೇ ಭೇದವಿಲ್ಲದೇ, ಒಂದೇ ಶಾಲೆಯಲ್ಲಿ ಓದುವ ವ್ಯವಸ್ಥೆಯ ಜೊತೆಗೆ ಸಂಪೂರ್ಣವಾಗಿ ಉಚಿತವಾದ ಶಿಕ್ಷಣವನ್ನು ಸರ್ಕಾರವೇ ನೀಡುವುದರೊಂದಿಗೆ ಕನಿಷ್ಠ ಮಟ್ಟದ ಮೂಲಭೂತ ಸೌಕರ್ಯಗಳನ್ನು ಎಲ್ಲಾ ಶಾಲೆಗಳೂ ಹೊಂದಬೇಕೆಂದು ವಿಧಿಸಲಾಗಿತ್ತು. ಎಲ್ಲಕ್ಕಿಂಥಾ ಮುಖ್ಯವಾಗಿ ಪ್ರಾಥಮಿಕ ಹಂತದವರೆಗೆ ಮಾತೃಭಾಷಾ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿತ್ತು. ಇವು ಸಮಾನತೆಯನ್ನು ಬಯಸುವವರೆಲ್ಲರೂ ಒಪ್ಪಿಕೊಳ್ಳುವಂತಹಾ ಆಶಯಗಳೇ.

ಈ ಕೊಥಾರಿ ಆಯೋಗದ ಶಿಫಾರಸ್ಸಿನಂತೆ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಲು 1968, 1986 ಮತ್ತು 1992 ರ ರಾಷ್ಟ್ರೀಯ ಶಿಕ್ಷಣ ನೀತಿಗಳು ಭರವಸೆಯನ್ನೇನೋ ನೀಡಿದವು. ಆದರೆ ಅದನ್ನು ಜಾರಿಗೊಳಿಸುವ ಪ್ರಾಮಾಣಿಕ ಪ್ರಯತ್ನಗಳು ಆಗಲೇ ಇಲ್ಲ. ಈ ಉನ್ನತ ಕನಸಿನ ಸಾಕಾರಕ್ಕಾಗಿ ದೇಶದ ಒಟ್ಟು ಉತ್ಪನ್ನದ ಶೇಕಡ 6 ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಬೇಕೆಂದು ಕೊಥಾರಿ ಆಯೋಗ ಸೂಚಿಸಿದ್ದರೂ, ಇದುವರೆಗೂ ಯಾವ ಸರ್ಕಾರವೂ ಶೇಕಡ 3 ರ ಮೀಸಲನ್ನೂ ಮೀರಿಲ್ಲದಿರುವುದು ನಮ್ಮ ಪಟ್ಟಭದ್ರಹಿತಾಸಕ್ತಿಗಳಿಗೆ ಶೈಕ್ಷಣಿಕ ಕ್ಷೇತ್ರದ ಬಗೆಗಿನ ನಿರ್ಲಕ್ಷ್ಯವನ್ನೂ, ಮಾನವ ಸಂಪನ್ಮೂಲದ ಅಭಿವೃದ್ಧಿ ಕುರಿತು ಆಮೂಲಾಗ್ರ ಬದಲಾವಣೆಯ ಕನಸುಗಳಿಲ್ಲದಿರುವುದನ್ನು ಸೂಚಿಸುತ್ತದೆ. ಆಳುವ ವರ್ಗವಾಗಲೀ ಅಧಿಕಾರಶಾಹಿಯಾಗಲೀ ಕೊಥಾರಿ ಆಯೋಗದ ಮಹತ್ವವನ್ನು ಅರಿಯಲೇ ಇಲ್ಲ. ಅಥವಾ ಅರಿತರೂ ಅಸಮಾನತೆಯನ್ನೇ ಉಂಡುಡುವ ಪೂರ್ವಾಗ್ರಹಪೀಡಿತ ಮನಸ್ಸುಗಳು ಅದನ್ನು ಸದ್ದಿಲ್ಲದೇ ಪಕ್ಕಕ್ಕಿಟ್ಟವೋ? ಒಟ್ಟಿನಲ್ಲಿ ಶಿಫಾರಸ್ಸು ಮೂಲೆಗುಂಪಾಯ್ತು.

1986 ರಲ್ಲಿ ಎಚ್ಚೆತ್ತ ಸರ್ಕಾರ, ಈ ಶಿಫಾರಸ್ಸು ಜಾರಿಯಾಗದೇ ಇರುವುದಕ್ಕೆ ಕಾರಣಗಳನ್ನು ಹುಡುಕಲು ಆಚಾರ್ಯ ರಾಮಮೂರ್ತಿ ಸಮಿತಿಯನ್ನು ನೇಮಿಸಿತು. ಅದು ಸಮುದಾಯದಲ್ಲಿ ತಾರತಮ್ಯ ಮತ್ತು ಸಾಮಾಜಿಕ ಅಸಮಾನತೆ ಆಳವಾಗಿ ಬೇರೂರಿರುವುದರಿಂದ ಪರಸ್ಪರರಲ್ಲಿ ಅಸಹನೆ ಬೆಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಹೇರಲಾಗುವುದಿಲ್ಲ, ಗುಣಾತ್ಮಕ ಶಿಕ್ಷಣ ಬೇಕೆನಿಸಿದ ಪೋಷಕರು ತಮಗೆ ಬೇಕೆನಿಸಿದ ಕಾನ್ವೆಂಟ್‌ಗಳಿಗೆ ಮಕ್ಕಳನ್ನು ಕಳಿಸುತ್ತಾರೆ ಅಲ್ಲಿ ಜಾತಿ-ಮತಗಳ ತಾರತಮ್ಯವಿಲ ಎಂದು ಹೇಳಿತು. ಆದರೆ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮಕ್ಕಳ ನಡುವಿನ ವರ್ಗ ತಾರತಮ್ಯ, ಹಾಗೂ ಆಂಗ್ಲಭಾಷೆ ಹಾಗೂ ಮಾತೃಭಾಷಾ ಮಾಧ್ಯಮದ ಮಕ್ಕಳ ನಡುವಿನ ವ್ಯತ್ಯಾಸ ದಿನದಿಂದ ದಿನಕ್ಕೆ ಅಧಿಕವಾಗುತ್ತಾ ಈಗ ಅಗಾಧವಾಗಿ ಬೆಳೆದು ನಿಂತಿದೆ. private-schoolಸಮಾನ ಶಿಕ್ಷಣವೆಂಬುದು ಅಸಮಾನತೆಯನ್ನು ತೊಡೆಯುವಲ್ಲಿನ ಪ್ರಮುಖ ಅಸ್ತ್ರವಾಗಿರುವುದರಿಂದ, ಅದು ಹೇರಿಕೆ ಎಂದೆನಿಸದೇ ಕಷ್ಟವಾದರೂ ಎಲ್ಲರೂ ಅನುಸರಿಸಲೇ ಬೇಕಾದ ಕಾನೂನಾಗಬೇಕು. ಆಗ ಸಾಮಾಜಿಕ ಅಸಮಾನತೆಯನ್ನು ಮೀರುವ ಸ್ಪಷ್ಟ ಮಾರ್ಗಗಳು ಕಾಣಲಾರಂಭಿಸುತ್ತದೆ. ಸಮುದಾಯದಲ್ಲಿ, ಸಮಾಜದಲ್ಲಿ ಅಸಮಾನತೆಯನ್ನು ತೊಡೆಯಲೆಂದೇ ಸಮಾನ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದ್ದು ಎಂಬುದನ್ನು ನಾವು ಮರೆಯಬಾರದು. ಅಸಮಾನತೆಯ ಯಥಾಸ್ಥಿತಿಯೇ ಮುಂದುವರೆಯುವುದಾದರೆ ಇದನ್ನು ಸಂವಿಧಾನಬದ್ಧ ಪ್ರಜಾಪ್ರಭುತ್ವವಾದಿ ದೇಶವೆಂದು ಏಕೆ ಹೇಳಬೇಕು?

ಜೊತೆಗೆ ತಮ್ಮದೇ ಆದ ಶಾಲೆಗಳನ್ನು ತೆರೆದು ನಿರ್ವಹಿಸುವ ಹಕ್ಕು ಸಂವಿಧಾನದಲ್ಲಿಯೇ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ದೊರಕಿರುವುದರಿಂದ ಇದೂ ಸಮಾನ ಶಿಕ್ಷಣ ವ್ಯವಸ್ಥೆಗೆ ಮಾರಕ ಮತ್ತು ಸರ್ಕಾರವೇ ಒಂದು ಸೀಮಿತ ವರ್ಗಕ್ಕಾಗಿ ಸೈನಿಕ ಶಾಲೆ, ನವೋದಯ ವಿದ್ಯಾಶಾಲೆ, ಕೇಂದ್ರೀಯ ಶಾಲೆಗಳನ್ನು ನಡೆಸುವುದೇ ಸಂವಿಧಾನ ವಿರೋಧಿ ನಿಲುವು ಎಂದು ಸಮಿತಿ ಆರೋಪಿಸಿದ್ದರಲ್ಲಿ ಕೊಂಚ ವಾಸ್ತವಾಂಶವಿದೆ. ಆದರೆ ಅಲ್ಪಸಂಖ್ಯಾತರ ಹಕ್ಕುಗಳನ್ನು ಗೌರವಿಸುತ್ತಲೇ ಐಕ್ಯತೆಯ ಆಶಯವನ್ನೂ ಅಳವಡಿಸಿಕೊಳ್ಳಲು ಸಂವಿಧಾನದಲ್ಲೇ ಇರುವ ಅಪಾರ ಸಾಧ್ಯತೆಗಳೆಡೆಗೆ ನಾವಿಂದು ಗಮನಹರಿಸಬೇಕಾಗಿದೆ. ಇದರೊಂದಿಗೇ ಕಾನ್ವೆಂಟ್‌ಗಳು ದುಬಾರಿ ವಂತಿಗೆ, ಶುಲ್ಕ ಪಡೆದು ಉತ್ತಮ ಶೈಕ್ಷಣಿಕ ಹಾಗೂ ಮೂಲಭೂತ ಸೌಕರ್ಯವನ್ನು ನೀಡಲಾರಂಭಿಸಿದ್ದು, ಆ ಮಟ್ಟದ ವ್ಯವಸ್ಥೆಯನ್ನು ಒದಗಿಸಲು ಸರ್ಕಾರ ಸೋತಿದ್ದು, ಖಾಸಗಿಗೆ ಕಡಿವಾಣವಿಲ್ಲದ ಸರ್ಕಾರಿ ನುಸುಳುಗಳು ಸಮಾನ ಶಿಕ್ಷಣ ವ್ಯವಸ್ಥೆಯ ಆಶಯಕ್ಕೆ ಧಕ್ಕೆಯಾಗಿವೆ. ಖಾಸಗಿ ಶಾಲಾ ವ್ಯವಸ್ಥೆ ಈ 15-20 ವರ್ಷಗಳಲ್ಲಿ ಉಳ್ಳವರು-ಇಲ್ಲದವರ ಮಧ್ಯೆ ಬೃಹತ್ ಕಂದಕ ಸೃಷ್ಟಿಸಿಬಿಟ್ಟಿದೆ.

ಸಂವಿಧಾನದ 350[ಎ] ಕಲಂ ಪ್ರಾಥಮಿಕ ಹಂತದವರೆಗಾದರೂ ಮಾತೃಭಾಷೆ ಶಿಕ್ಷಣಕ್ಕೆ ಆಯಾ ರಾಜ್ಯ ಸರ್ಕಾರಗಳು ಅನುವು ಮಾಡಿಕೊಟ್ಟು tribal-schools-educationಮಕ್ಕಳ ಹಕ್ಕನ್ನು ಕಾಪಾಡಬೇಕೆಂದು ಪ್ರತಿಪಾದಿಸುತ್ತದೆ. 2009 ರಲ್ಲಿ ಜಾರಿಯಾದ ಶಿಕ್ಷಣ ಹಕ್ಕು ಕಾಯ್ದೆ ಕೂಡ ಇದನ್ನೇ ಹೇಳುತ್ತದೆ. 19[ಎ] ಕಲಂ ಮಗುವಿನ ಮಾತೃಭಾಷೆಯ ಕಲಿಕೆಗೆ ಒತ್ತು ನೀಡುತ್ತದೆ. ಅದನ್ನು ನಿರ್ಲಕ್ಷಿಸಿ ಬೇರೆ ಭಾಷೆಯನ್ನು ಹೇರುವುದರಿಂದ ಮಕ್ಕಳ ನಿಜವಾದ ವ್ಯಕ್ತಿತ್ವ ಪೂರ್ಣಪ್ರಮಾಣದಲ್ಲಿ ಹೊರಹೊಮ್ಮಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮಗು ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಕ್ರಿಯಾಶೀಲತೆಯನ್ನೂ ಕಳೆದುಕೊಳ್ಳುತ್ತದೆ. ಆದರೆ ನಮ್ಮ ಸರ್ಕಾರಗಳು, ಜೊತೆಗೆ ನ್ಯಾಯಂಗವೂ ಈ ಆಶಯಕ್ಕೆ ಗಂಭೀರವಾದ ಒತ್ತನ್ನು ನೀಡದಿರುವುದು ನಿಜಕ್ಕೂ ಖೇದಕರ.

ಜಾಗತೀಕರಣದ ದಾಳಿಯಿಂದಾಗಿ ಪ್ರಾದೇಶಿಕ ಸಂಸ್ಕೃತಿ, ಭಾಷೆ, ಜಾನಪದೀಯ ಸತ್ವ ನಿಧಾನಕ್ಕೆ ಕಣ್ಮರೆಯಾಗುತ್ತಿರುವುದನ್ನು ಕಾಣುತ್ತಿದ್ದೆವೆ. ಆಧುನಿಕ ಅವಶ್ಯಕತೆಗಳ ನೆಪ ಹೇಳಿ ನಾವೂ ಆಂಗ್ಲಭಾಷೆ ಕಲಿಕೆಯೆಡೆಗೆ ಮುಖ ಮಾಡುತ್ತಿದ್ದೇವೆ. ನಮ್ಮ ಉಚ್ಛ ನ್ಯಾಯಾಲಯವೂ ಶಾಲೆ ಹಾಗೂ ಭಾಷಾ ಮಾಧ್ಯಮದ ಆಯ್ಕೆಯನ್ನು ಪೋಷಕರಿಗೇ ಕೊಟ್ಟಿದ್ದು ಸಮಾನ ಶಿಕ್ಷಣ ವ್ಯವಸ್ಥೆಯೆಡೆಗಿನ ಹಿನ್ನೆಡೆಯಾಗಿದೆ. ಕಳೆದ 19 ವರ್ಷದಿಂದ ನಡೆಯುತ್ತಿರುವ ಕರ್ನಾಟಕದ ಭಾಷಾ ಮಾಧ್ಯಮದ ವಿವಾದವನ್ನು ಮೊನ್ನೆ ಸರ್ವೋಚ್ಛ ನ್ಯಾಯಾಲಯ, ಇದರಲ್ಲಿ ಸಂವಿಧಾನಾತ್ಮಕ ತೊಡಕುಗಳಿರುವುದರಿಂದ ಸಾಂವಿಧಾನಿಕ ಪೀಠವೇ ಇದನ್ನು ಬಗೆಹರಿಸಲೆಂದು ಹೇಳಿ ಕೈ ತೊಳೆದುಕೊಂಡಿದೆ. ತೀರ್ಪು ಭಾಷಾಮಾಧ್ಯಮದ ಪರವಾಗಿ ಬಂದರೆ ಭಾರತದ ಒಟ್ಟು ಶೈಕ್ಷಣಿಕ ವ್ಯವಸ್ಥೆಯೇ ಬದಲಾಗುವ ಸಾಧ್ಯತೆಗಳಿವೆ. ಹೀಗೆ ಸಮಾನ ಶಿಕ್ಷಣಕ್ಕಾಗಿ ನಡೆದ ಪ್ರಯತ್ನಗಳೆಲ್ಲವೂ ವಿಫಲವಾಗಿದ್ದಕ್ಕೆ ಬಹುಶಃ ನಮ್ಮನ್ನಾಳುವ ಪ್ರಭುಗಳಿಗೆ ಇಚ್ಛಾಶಕ್ತಿ ಇಲ್ಲದ್ದು, ಆಡಳಿತಯಂತ್ರದ ವೈಫಲ್ಯ, ನ್ಯಾಯಾಂಗದ ವ್ಯತಿರಿಕ್ತ ತೀರ್ಪುಗಳು, ಜನರ ನಿರಾಸಕ್ತಿ ಎಲ್ಲವೂ ಕಾರಣವಿರಬಹುದೆನಿಸುತ್ತದೆ.

ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದಲೇ ರೂಪಿತವಾದ 2009 ರ ಶಿಕ್ಷಣ ಹಕ್ಕು ಕಾಯ್ದೆಯಿಂದ ಸಮಾನ ಶಿಕ್ಷಣ ಸಾಧ್ಯವೆಂದು ಸರ್ಕಾರ ಹೇಳುತ್ತಿದೆ. ಆದರೆ ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ್ದೆಂದರೆ ಇದು ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯೇ ಹೊರತು ಸಮಾನ ಶಿಕ್ಷಣ ಕಾಯ್ದೆಯಲ್ಲ! ನಮ್ಮ ಸಂವಿಧಾನದಲ್ಲೇ ಶಿಕ್ಷಣವನ್ನು ಒಂದು ಹಕ್ಕಾಗಿ ಪರಿಗಣಿಸಿದ ನಂತರ ಇದಕ್ಕಾಗಿ ಇನ್ನೊಂದು ಕಾಯ್ದೆಯ ಅವಶ್ಯಕತೆಯೂ ಇರಲಿಲ್ಲ. ಜೊತೆಗೆ ಶೇಕಡಾ 25 ರ ಹಿಂದುಳಿದ ವರ್ಗಗಳ ಮೀಸಲಾತಿ, ಶಿಕ್ಷಣ ಖಾಸಗೀಕರಣದ ಸ್ಪಷ್ಟ ನಿದರ್ಶನವಾಗಿದೆ. ಈ ಮೀಸಲಾತಿಯೇ ಕೆಲವೇ ವರ್ಷಗಳಲ್ಲಿ ಸರ್ಕಾರಿ ಶಿಕ್ಷಣ ವ್ಯವಸ್ಥೆಗೆ ಮಾರಕವಾಗಿ ಶಾಲೆಗಳು ಮುಚ್ಚಲ್ಪಟ್ಟರೆ, ಇನ್ನೂ ಶಾಲೆಯಿಂದ ಹೊರಗುಳಿದ ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಕೊಡುವವರಾರು? ಲಾಭಕ್ಕಾಗಿ ಶಾಲೆಯೆಂಬ ಅಂಗಡಿಗಳನ್ನು ತೆರೆದಿರುವ ಖಾಸಗಿಯವರು ಕಾಳಜಿಯಿಂದ ಮಕ್ಕಳನ್ನು ಹುಡುಕಿ ತಂದು ಶಿಕ್ಷಣ ನೀಡುವ ಜವಾಬ್ದಾರಿ ಹೊರುತ್ತಾರೆಯೇ? ಎಲ್ಲವನ್ನೂ ಖಾಸಗಿಯವರೇ ನಿರ್ವಹಿಸುವುದಾದರೆ ಸರ್ಕಾರದ ಹೊಣೆಗಾರಿಕೆಯೇನು? ಜೊತೆಗೆ 6 ವರ್ಷದ School_children_line_Cochin_Kerala_Indiaಒಳಗಿನ ಮಕ್ಕಳ ವಿದ್ಯಾಭ್ಯಾಸದ ಕುರಿತು ಈ ಕಾಯ್ದೆ ಮತ್ತು ಇದುವರೆಗಿನ ಎಲ್ಲಾ ಸರ್ಕಾರಿ ಶೈಕ್ಷಣಿಕ ನೀತಿಗಳೂ ಮೌನವಾಗಿರುವುದು ಏನನ್ನು ಸೂಚಿಸುತ್ತದೆ? ಸರ್ಕಾರದಿಂದ ಈ ವಯಸ್ಸಿನ ಮಕ್ಕಳಿಗೆ ಯಾವುದೇ ಶೈಕ್ಷಣಿಕ ವ್ಯವಸ್ಥೆ ಇಲ್ಲದಿರುವುದರಿಂದ ಸಹಜವಾಗಿ ಅವರು ಖಾಸಗಿ ವ್ಯವಸ್ಥೆಯ ಮೊರೆ ಹೋಗುತ್ತಾರೆ. ಇಂತಹವರು 6 ವರ್ಷ ತುಂಬಿದ ನಂತರ ಮತ್ತೆ ಸರ್ಕಾರಿ ಶಾಲೆಗಳಿಗೆ ಹಿಂದಿರುಗುತ್ತಾರೆ ಎಂಬ ನಿರೀಕ್ಷೆಯೇ ಮೂರ್ಖತನದ್ದಾಗುತ್ತದೆ. ಖಾಸಗಿಗೆ ಕಡಿವಾಣ ಸಾಧ್ಯವಿಲ್ಲವೆಂದಾದರೆ ಶಿಕ್ಷಣ ರಾಷ್ಟ್ರೀಕರಣವೊಂದೇ ಅಂತಿಮ ಮದ್ದೇನೋ ಎನಿಸುತ್ತದೆ. ಈ ಶಿಕ್ಷಣ ಹಕ್ಕು ಕಾಯ್ದೆಗೇ ನೆರೆಹೊರೆ ತತ್ವವನ್ನು ಮೂಲವಾಗಿಟ್ಟುಕೊಂಡು ಖಾಸಗಿ ಹಾಗೂ ಸರ್ಕಾರಿ ಶಾಲೆಗಳೆರಡಕ್ಕೂ ಅನ್ವಯಿಸುವಂತೆ ಸಮಾನ ಶಾಲಾ ವ್ಯವಸ್ಥೆ, ಸಮಾನ ಪಠ್ಯ, ಸಮಾನ ಮೂಲಭೂತ ಸೌಲಭ್ಯಗಳಿರುವ, ಆಯಾ ರಾಜ್ಯಗಳ ಮಾತೃಭಾಷೆಯನ್ನು ಪ್ರಾಥಮಿಕ ಹಂತದವರೆಗಾದರೂ ಶಿಕ್ಷಣ ಮಾಧ್ಯಮವಾಗಿಸಿ ಇಂಗ್ಲಿಷನ್ನು ಒಂದನೇ ತರಗತಿಯಿಂದಲೇ ಒಂದು ಭಾಷೆಯಾಗಿ ಕಲಿಸುವ ಸಮಾನ ಶಿಕ್ಷಣವನ್ನು ಪ್ರತಿಪಾದಿಸುವ ತಿದ್ದುಪಡಿ ತಂದರೆ ಮಾತ್ರ ಏನಾದರೂ ಬೇರುಮಟ್ಟದ ಗುಣಾತ್ಮಕ ಬದಲಾವಣೆಗಳಾಗಬಹುದೆನಿಸುತ್ತದೆ.

“ಮಾತೃಭಾಷೆ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಒಳಗೊಂಡೇ ಸಮಾನ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕು. ಖಾಸಗಿ ಶಿಕ್ಷಣ ವ್ಯವಸ್ಥೆ ತಾರತಮ್ಯಕ್ಕಾಗಿಯಲ್ಲದೇ, ಲಾಭಕ್ಕಾಗಿಯಲ್ಲದೇ ಸರ್ಕಾರದ ನಿಯೋಜಿತ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕು. ರಾಜ್ಯ ಸರ್ಕಾರದ ಆದೇಶ-ಶಿಸ್ತು ಮತ್ತು ರಾಷ್ಟ್ರೀಯ ಶೈಕ್ಷಣಿಕ ನೀತಿಯಡಿಯೇ ಕೆಲಸ ಮಾಡಬೇಕು. ೬ವರ್ಷಕ್ಕೆ ಮೊದಲಿನಿಂದ ಹಿಡಿದು ೧೪ವರ್ಷದವರೆಗೆ ಸಂಪೂರ್ಣ ಉಚಿತ ಶಿಕ್ಷಣ, ಸರ್ಕಾರ ನೀಡಬೇಕು ಮತ್ತು ವಿಕೇಂದ್ರಿತ ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಹಣಕಾಸು ನೆರವನ್ನು ಸರ್ಕಾರವೇ ನೀಡಬೇಕು. ಸಂವಿಧಾನದ ಸಮಾನತೆಯ ತತ್ವಕ್ಕೆ ಬದ್ಧವಾಗಿ ಶಿಕ್ಷಣ ವ್ಯವಸ್ಥೆಯಿರಬೇಕು. ಸಮಾನ ಶಿಕ್ಷಣವನ್ನು ಏಕರೂಪ ಶಿಕ್ಷಣವೆಂದು ಗ್ರಹಿಸಿದ್ದರಿಂದ ಇದರ government_schoolಬಗ್ಗೆ ದ್ವಂದ್ವವೇರ್ಪಟ್ಟಿದೆ. ಅದನ್ನು ಸರಿಯಾದ ಕ್ರಮದಲ್ಲಿ ತಿಳಿಹೇಳಿ ಜನಾಭಿಪ್ರಾಯ ಮೂಡಿಸಬೇಕು,” ಎನ್ನುತ್ತಾರೆ ಖ್ಯಾತ ಶಿಕ್ಷಣತಜ್ಞ ಅನಿಲ್ ಸದ್ಗೋಪಾಲ್.

ಇತ್ತೀಚೆಗೆ ಕರ್ನಾಟಕ ಸರ್ಕಾರ ನೆರೆಹೊರೆ ಶಾಲಾ ನಿಯಮವನ್ನು ಅನುಸರಿಸಿ ಪಬ್ಲಿಕ್ ಶಾಲೆಗಳನ್ನು ಸದ್ಯಕ್ಕೆ ಪ್ರತಿ ಜಿಲ್ಲೆಯ ಒಂದು ಗ್ರಾಮಪಂಚಾಯಿತಿಯಲ್ಲಿ ಪ್ರಾಯೋಗಿಕವಾಗಿ ಸ್ಥಾಪಿಸುವ ಪ್ರಸ್ತಾಪ ಮಾಡಿದೆ. ಸುತ್ತಲಿನ ಸರ್ಕಾರಿ ಶಾಲೆಗಳನ್ನು ಇದರಲ್ಲಿ ವಿಲೀನಗೊಳಿಸುವ ಉದ್ದೇಶವಿದೆ. ಆದರೆ ಈ ನೆರೆಹೊರೆ ನಿಯಮ ಸರ್ಕಾರಿ ಶಾಲೆಗಳಿಗೆ ಮಾತ್ರ ಅನ್ವಯಿಸಿ ಖಾಸಗಿ ಶಾಲೆಗಳನ್ನು ಇದರಿಂದ ಹೊರಗಿಟ್ಟರೆ ಅದು ಅಸಮಾನತೆಯನ್ನು ಮತ್ತಷ್ಟು ವೃದ್ಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ವೈವಿಧ್ಯತೆಯ ಭಾರತ ದೇಶಕ್ಕೆ ಐಕ್ಯತೆಯನ್ನು ಕಲಿಸಲಾಗುವುದು ಸಮಾನ ಶಿಕ್ಷಣ ವ್ಯವಸ್ಥೆಯಿಂದ. ಇದನ್ನು ಗುರಿಯೆಡೆಗಿನ ಪಯಣವಾಗಿಸಿ, ಹಂತ ಹಂತವಾಗಿ ಸಮಾನತೆಯನ್ನು ಅನುಷ್ಠಾನಗೊಳಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ರೂಪಿಸಲು ಸರ್ಕಾರ ಗಟ್ಟಿ ಮನಸು ಮಾಡಿದರೆ ಮಾತ್ರ ಈ ಆಶಾವಾದ ಉಳಿದೀತೇನೋ?

“ಬೆಂದಕಾಳೂರು” – ಗಾಂಧಿ ಜಯಂತಿ ಕಥಾ ಸ್ಪರ್ಧೆ 2013 ರ ಬಹುಮಾನಿತ ಕತೆ

– ವಿಜಯ್ ಹೂಗಾರ್

ಯಾವುದೂ ಪೂರ್ಣವಾಗಿಲ್ಲ, ಯಾವುದೂ ಪೂರ್ಣವಾಗುವದಿಲ್ಲ. ನನ್ನೊಳಗೆ ಒಬ್ಬ ಸೃಷ್ಟಿಕರ್ತನಿದ್ದಾನೆ ಎಂದುಕೊಂಡೆ ನನ್ನ ಬರವಣಿಗೆಯನ್ನ ಆರಂಭಿಸಿದ್ದೇನೆ. ಕೆಲವು ಕಥೆಗಳಾಗಿ ನನ್ನಿಂದ ಮುಕ್ತಿ ಪಡೆದವು. ಇನ್ನು ಕೆಲವು ಆತ್ಮಕಥೆಯಾಗಲು ನನ್ನಲ್ಲೇ ಬಂಧಿಯಾಗಿವೆ. ಬೆಂಗಳೂರಿಗೆ ಬಂದು ಅದೆಷ್ಟೋ ವರ್ಷಗಳಾಗಿಯೇ ಹೋಗಿದ್ದವು. ಅಂದುಕೊಂಡ ಕೆಲಸ ಇದ್ದ ಜಾಗದಲ್ಲೇ ಸತ್ತು ಹೋಗಿತ್ತು. ಸಾವೇ ಇಲ್ಲದ ಯುಗಕ್ಕೆ ದಿನಗಳು ಸಂತಾನವಾಗಿ ಹುಟ್ಟುತ್ತಿದ್ದವು. ದಿನದ ಸಾವು ಮರುದಿನಕ್ಕೆ ‘ಖೋ’ ಕೊಟ್ಟಂತೆ. ಈ ಆಟದಲ್ಲಿ ನಮ್ಮ ಓಟ ನಿರಂತರ. ಮೈ ಮರೆಯುವ ಹಾಗಿಲ್ಲ. ಮರೆತರೆ ಅಂದಿನ ದಿನದ ಸಾವು ತನ್ನ ಜೊತೆಗೆ ನಮ್ಮನ್ನು ಕರೆದೊಯ್ಯುತ್ತದೆ.

***

ಚಿರತೃಷೆ

ಕತ್ತಲಿಗೆ ಸದಾ ಹಲ್ಲು ಕಿರಿದು ನಿಂತ ಬೀದಿ ದೀಪಕ್ಕೆ ಶಾಂತಿ ಸಿಕ್ಕಿದ್ದು ಹಗಲು ತನ್ನ ಕಾಲಿಂದ ನಸುಕು ಅಳಿಸಿ ಹಾಕಿದಾಗ. ಅಂದಿನ ಮುಂಜಾವಿನ ತುಂತುರು ಮಳೆ, ಗುರಿಯಿಟ್ಟು ಕಾಲಿಡುತ್ತಾ ರಸ್ತೆ ದಾಟುವ ಸಕಲ ಮನುಕುಲದ ಬೈಗುಳಕ್ಕೆ ಬಲಿಯಾಗಿತ್ತು ಮಳೆ. ನೆರಿಗೆಯಲಿ ತೋಯ್ದು ಒದ್ದೆಯಾದ ಬೆಳಕು ಕೆಳಗಿಳಿಯದೆ ಮೋಡದಲ್ಲೇ ಅಡಗಿಕೊಂಡಿತ್ತು. ಅಕ್ಟೋಬರ್ ಎರಡರ ಪ್ರಯುಕ್ತ ಇಡಿ ಬೆಂಗಳೂರೇ ರಜೆಯ ಮಜೆಯಲ್ಲಿತ್ತು. ಕೆಲವು ಶಾಲೆಯ ಆವರಣಗಳು, ಸರಕಾರಿ ದಫ್ತರುಗಳು ಬೆಳಗಿನ ಕೆಲ ಕಾಲ ಬಿಗಿ ಹಿಡಿದ ಉಸಿರಿನಂತೆ ಜಾಗೃತವಾಗಿದ್ದವು. ಅಲ್ಲಲ್ಲಿ ಬಿಳಿ ಬಟ್ಟೆ ಧರಿಸಿ ಅಮ್ಮನ ಕೈ ಹಿಡಿದು ನಾಜೂಕಾಗಿ ಹೆಜ್ಜೆ ಇಡುತ್ತ ನಡೆಯುವ ಮಕ್ಕಳು ಶಾಲೆಯ ತಲುಪುವ ಅವಸರದಲ್ಲಿದ್ದರು.

ಮುಂಜಾವ ಮಳೆ ಕೆಲವರಿಗೆ ಕಾಫಿ ಕುಡಿಯುವ ನಶೆ ಏರಿಸುತ್ತದೆ. ರಾತ್ರಿಯಿಡಿ ಫ್ಲೈ ಓವರ್ ಕೆಳಗೆ ನಡಗುತ್ತ ಕುಳಿತ ಜನರಿಗೆ ಚಿರನಿದ್ರೆಗೆ ಕೈ ಬೀಸಿ ಕರೆಯುತ್ತದೆ. ಇನ್ನೂ ಕೆಲವರಿಗೆ ಹಳೆ ನೆನಪಿನ ಹೊಸ ಹೊನಲು ತರಿಸುತ್ತದೆ. ಪೇಪರ್ ಹಾಕುವ ಹುಡುಗನಿಗೆ ಜೊತೆಗೊಂದು ಪ್ಲಾಸ್ಟಿಕ್ ಕವರ್ ಜೊತೆ ತರಲು ನೆನಪಿಸುತ್ತದೆ. ಕೆಲವರಿಗೆ ಮೊದಲ ಮಳೆಯಲಿ ಪ್ರೇಯಸಿಗೆ ಮುತ್ತಿಡುವಂತೆ ಒತ್ತಾಯಿಸುತ್ತದೆ. ಇನ್ನೂ ಕೆಲವರಿಗೆ ಕೊರೆವ ಚಳಿ ಮೈ ಮುಚ್ಚುವ ಬಟ್ಟೆಗೆ ಪರಿತಪಿಸುವಂತೆ ಮಾಡುತ್ತದೆ. ಮಳೆಯ ಲೀಲೆಯೇ ಅಪಾರ. ಅವರವರ ಗ್ರಹಿಕೆಗೆ ಮಳೆ ತನ್ನ ಮಗ್ಗುಲು ಬದಲಾಯಿಸುತ್ತದೆ.

ಭಗ್ನ ಸೇತುವೆಯಂತೆ ಅರ್ಧಕ್ಕೆ ನಿಂತ ಫ್ಲೈ ಓವರ್ ಪಕ್ಕ ಎರಡು ಅಂತಸ್ತಿನ ವಾಣಿಜ್ಯ ಮಳಿಗೆಯ ಮೂಲೆಯಲ್ಲಿ ವಿನಾಯಕ್ ಇಂಟರ್ನೆಟ್ ಬ್ರೌಸಿಂಗ್ ಸೆಂಟರ್ ಅನ್ನುವ ಮಳೆಗೆಯೊಂದು ಬಹುದಿನದಿಂದ ನೆಲೆಯುರಿತ್ತು. ವಿಶಾಲವಾದ ಒಳಗಂಗಣದಲ್ಲಿ ಸುಮಾರು ಇಪ್ಪತ್ತು ಕಂಪ್ಯೂಟರ್ ಇಟ್ಟಿಕೊಳ್ಳುವ ಸಾಮರ್ಥ್ಯ ಹೊಂದಿತ್ತು. artಒಂದು ಸಾಲಿನಲ್ಲಿ ಹತ್ತು ಕಂಪ್ಯೂಟರ್ ಮತ್ತದರ ಅಭಿಮುಖವಾಗಿ ಮಿಕ್ಕ ಹತ್ತು ಕಂಪ್ಯೂಟರ್‌ಗಳು ನಡುವೆ ಓಡಾಡುವ ಜನರ ಅನಾಗರಿಕ ದೃಷ್ಟಿಯ ಪಾಲಾಗಿತ್ತು. ಇದರ ಮಾಲೀಕ ವಿನಾಯಕ ಮದುವೆಯಾಗಿ ಕೆಲ ವರ್ಷಗಳ ಬಳಿಕ ಹೆಂಡತಿಯನ್ನು ಕಳೆದುಕೊಂಡಿದ್ದ. ಬದುಕಿದ್ದಾಗ ಆಗಾಗ ಬಂದು ಲೆಕ್ಕ ಸಂಭಾಳಿಸುತ್ತಿದ್ದಳು. ಕಂಪ್ಯೂಟರ್ ಬಳಸುವ ಇನ್ ಟೈಮ್, ಔಟ್ ಟೈಮ್ ಎಲ್ಲ ವ್ಯವಸ್ಥಿತವಾಗಿ ಬರೆದಿಡುತ್ತಿದ್ದಳು. ಅವಳ ಆಕಸ್ಮಿಕ ಸಾವಿನ ನಂತರ ಲೆಕ್ಕ ಬರೆದಿಡಲು ಕೆಲ ಹುಡುಗರಿಗೆ ಕೆಲಸಕ್ಕೆ ಇಟ್ಟುಕೊಂಡಿದ್ದ. ಆದರೆ ಯಾರೂ ಅಲ್ಲಿ ತುಂಬಾ ದಿವಸ ಕೆಲಸ ಮಾಡುತ್ತಿರಲಿಲ್ಲ. ಕಾರಣ ಮಾತ್ರ ತಿಳಿಯುತ್ತಿರಲಿಲ್ಲ. ಅದೇ ಹೊತ್ತಲ್ಲಿ ಗೆಳೆಯ ಸುಧಾಂಶುವಿನ ಶಿಫಾರಸಿನಿಂದ ನಿಶೀಥ ಅಲ್ಲಿ ಕೆಲಸಕ್ಕೆ ಸೇರಿದ್ದ.

ನಿಶೀಥ ಬೆಂಗಳೂರಿನಲ್ಲಿ ಮಾಡಿರದ ಕೆಲಸವೇ ಉಳಿದಿರಲಿಲ್ಲ. ಬೂಟ್ ಪಾಲಿಶು, ಬ್ಲಾಕ್ ಟಿಕೆಟ್ ಮಾರೋದು, ‘ರೇ ಬ್ಯಾನ್’ ಹೆಸರಿನ ಖೋಟಾ ತಂಪು ಕನ್ನಡಕ ಮಾರೋದು, ತಳ್ಳು ಗಾಡಿಯಲಿ ಸೋವಿ ದರದ ಇಂಗ್ಲಿಷ್ ಪುಸ್ತಕ ಮಾರೋದು, ಫುಟ್‌ಪಾತಿನಲ್ಲಿ ಹತ್ತು ರೂಪಾಯಿಗೆ ಎರಡು ಬಿಳಿ ಬಣ್ಣದ ಕರ್ಚಿಫು ಮಾರೋದು, ಹೀಗೆ ಹತ್ತು ಹಲವಾರು ಕೆಲಸಗಳನ್ನು ಮಾಡಿ ಕೊನೆಗೆ ಇಲ್ಲಿ ಬಂದು ನಿಂತಿದ್ದ. ಇರಲು ಮನೆ ಇರಲಿಲ್ಲ. ಅದಕ್ಕೆ ಮಾಲೀಕ ಅದೇ ಮಹಡಿಯ ಅವನ ಸ್ಟೋರ್ ರೂಮ್‌ನಲ್ಲಿ ಸ್ವಲ್ಪ ಜಾಗ ಮಾಡಿ ಸೂರು ಕೊಟ್ಟಿದ್ದ.

ಬೆಂಗಳೂರಿಗೆ ಬಂದು ಅದೆಷ್ಟೋ ವರ್ಷಗಳೇ ಆದ ನಿಶೀಥನಿಗೆ ತಾನು ಬಂದ ಕಾರಣವೇ ಮರೆತು ಹೋದಂತಾಗಿತ್ತು. ಪಿಯುಸಿಯಲ್ಲಿ ಪ್ರೀತಿ ಮಾಡಿ ಓಡಿ ಮದುವೆಯಾಗಿ ಬಂದು ಸ್ವಲ್ಪ ದಿವಸ ಸಂಸಾರ ಮಾಡಿದ್ದ. ಮದುವೆಯಾದ ಕೆಲವು ದಿನಗಳಲ್ಲಿ ಹುಡುಗಿ ಮತ್ತೆ ತವರು ಮನೆಗೆ ಓಡಿ ಹೋಗಿದ್ದಳು. ವರ್ಷಗಳ ಹಿಂದೆ ಹಾಕಿದ್ದ ಡೈವೋರ್ಸ್ ಮೊನ್ನೆ ಕ್ಲಿಯರ್ ಆಗಿ ಈಗ ಒಂಟಿಯಾಗಿದ್ದಾನೆ. ಊರಿಗೆ ಹೋಗಬಹುದಲ್ಲ ಅಂತ ಯಾರಾದರು ಕೇಳಿದರೆ ಅವನು ಇನ್ಯಾವ ಮುಖ ಇಟ್ಕೊಂಡ್ ಹೋಗಲಿ ಇಲ್ಲೇ ಏನಾದ್ರು ಮಾಡಿ ಜೀವನ ಸಾಗಸ್ತಿನಿ ಅಂತ ಹೇಳ್ತಿದ್ದ. ಕೊನೆಗೂ ಇಂಟರ್ನೆಟ್ ಬ್ರೌಸಿಂಗ್ ಸೆಂಟರ್‌ನಲ್ಲಿ ಸಿಕ್ಕ ಕೆಲಸ ಅವನಿಗೆ ಸೂರು ಮತ್ತು ಊಟಕ್ಕೆ ಸರಿ ಹೋಗುತ್ತಿತ್ತು. ಪ್ರತಿ ದಿನ ಸಾವಿರಾರು ರೂಪಾಯಿಗಳ ವ್ಯವಹಾರ ಆಗುತ್ತಿತ್ತು. ಮಳಿಗೆಯ ಪಕ್ಕದ ರಸ್ತೆಯಲ್ಲೇ ಒಂದು ಪಿಯು ಕಾಲೇಜ್ ಇದ್ದುದ್ದರಿಂದ ಸೀಸನ್‌ಗಳ ಹಂಗಿಲ್ಲದೆ ಸದಾ ಜನಭರಿತ ವಾಗಿರುತ್ತಿತ್ತು.‍

ಕೆಲಸಕ್ಕೆ ಸೇರಿದ ಮೊದಮೊದಲು ಕೆಲಸದ ಮೇಲೆ ತುಂಬಾ ಆಸಕ್ತಿ ಇಟ್ಟಿಕೊಂಡಿದ್ದ. ಬಂದವರ ಐ.ಡಿ ಕಾರ್ಡ್ ಕೇಳಿಯೇ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳಲು ಕೊಡುತ್ತಿದ್ದ. ಸಮಯ ಮುಗಿದ ತಕ್ಷಣ ಮಾಸ್ಟರ್ ಕಂಪ್ಯೂಟರ್‌ನಿಂದ ಕನೆಕ್ಷನ್ ಕೀಳುತ್ತಿದ್ದ. ಗೋಡೆಗಳ ಮೇಲೆಲ್ಲಾ ‘ಧೂಮಪಾನ ನಿಷೇಧಿಸಿದೆ’, ‘ಇಲ್ಲಿ ಉಗುಳಬಾರದು’, ‘ಗಂಟೆಗೆ ಇಂತಿಷ್ಟು ಮತ್ತೆ ಮಿನಿಮಂ ಇಂತಿಷ್ಟು’ ಅಂತ ನಾಮಫಲಕಗಳೆಲ್ಲ ಹಾಕಿಸಿದ್ದ. ಒತ್ತಾಯದ ಮೇರೆಗೆ ಮಾತ್ರ ಹೆಡ್‌ಫೋನ್ ಕೊಡುತ್ತಿದ್ದ. ಮಾಲೀಕ ಬಂದ ತಕ್ಷಣ ಎಲ್ಲ ಲೆಕ್ಕ ಸರಿಯಾಗಿ ನೀಡುತ್ತಿದ್ದ.

ದಿನ ಕಳೆದಂತೆ ಕೆಲವು ಅಹಿತಕರವಾದ ಘಟನೆಗಳು ಅವನ ಗಮನಕ್ಕೆ ಬರುತ್ತಾ ಹೋದವು. ಕೀ ಬೋರ್ಡ್ ಮತ್ತು ಮೌಸ್ ಯಾವಾಗಲು ಹಸಿಯಾಗಿ ಜಿಗುಟಾಗಿರುತ್ತಿತ್ತು. ಕ್ಯಾಬಿನ್‌ನಿಂದ ವಿಚಿತ್ರವಾದ ಸದ್ದು ಬರುತ್ತಿತ್ತು. ಸಂಜೆ ಬಾಗಿಲು ಹಾಕಲು ಹೋಗುವ ಮೊದಲು ಎಲ್ಲ ಕಂಪ್ಯೂಟರ್ ಆಫ್ ಮಾಡುವಾಗ ಅಸಂಖ್ಯಾತ ನೀಲಿಚಿತ್ರಗಳು ಡೌನ್ಲೋಡ್ ಆಗಿ ಬಿದ್ದಿರುತ್ತಿದ್ದವು.

ದಿನ ಕಳೆದಂತೆ ಎಲ್ಲವು ಸರ್ವೇ ಸಾಮಾನ್ಯ ಅಂತ ತಿಳಿಯುತ್ತಾ ಬಂತು. ಅಲ್ಲಿಗೆ ಬರುವ ಹುಡುಗರು ಒಳ ಹೊಕ್ಕರೆ ಎರಡು, ಮೂರು ಗಂಟೆಗಳು ಹೊರ ಬರುತ್ತಲೇ ಇರಲಿಲ್ಲ. ಕಣ್ಣಲ್ಲಿ ವಿಪರೀತ ದಾಹವೊಂದರ ನಾಲಿಗೆ ಸದಾ ಹೊರಚಾಚಿರುತ್ತಿತ್ತು. ಮರಭೂಮಿಯ ಚಿರತೃಷೆಯಂತೆ. ಅದೇನೋ ಸಂತೃಪ್ತವಲ್ಲದ ಭಾವ. ಅದ್ಯಾವದೋ ತುರ್ತು ಪರಿಸ್ಥಿತಿಯಲ್ಲಿ ಸಿಕ್ಕಿಬಿದ್ದವರ ಹಾಗೆ, ಏನೋ ಕಳೆದುಕೊಂಡ ಹಾಗೆ. ಇನ್ಯಾವದೋ ಹುಡುಕುವ ಹಾಗೆ. ಯಾವುದೊ ಮಾಯಮೃಗದ ಹಿಂದೆ ಜೋತು ಬಿದ್ದಂಗೆ. ವಯಸ್ಸಿನ ಹಂಗಿಲ್ಲದೆ ಜನರ ದಂಡೆ ಅಲ್ಲಿಗೆ ಬರುತ್ತಿತ್ತು. ಅದರಲ್ಲೂ ಕಾಲೇಜಿನ ಹುಡುಗ ಹುಡುಗಿಯರು ಮುಂಚೂಣಿಯಲ್ಲಿದ್ದರು. ಮಾನಸಿಕವಾಗಿ ಅಸ್ವಸ್ಥ ಜನ ತುಂಬಾ ಹೊತ್ತು ಕಳೆಯುತ್ತಿದ್ದರು. ತಮ್ಮ ಕೊಳಕು ನೋಟದಲ್ಲಿ ಸುಂದರ ಜಗತ್ತನ್ನು ನೋಡಲು ಯತ್ನಿಸುತ್ತಿದ್ದರು.

ಹೀಗೆ ನಡೆಯುತ್ತಿರುವಾಗ ಒಂದು ದಿನ ಅಷ್ಟಾಗಿ ಹೆಚ್ಚು ಜನ ಇರಲಿಲ್ಲ. ಭಾನುವಾರವಾಗಿದ್ದರಿಂದ ಜನರ ಓಡಾಟ ಕಡಿಮೆಯೇ ಇತ್ತು. ಶಾಂತವಾಗಿದ್ದರಿಂದ ಇದ್ದಕ್ಕಿದ್ದಂತೆ ಒಂದು ಕ್ಯಾಬಿನ್‌ನಿಂದ ವಿಚಿತ್ರವಾದ ಸದ್ದೊಂದು ಜೋರಾಗಿ ಬರಲಾರಂಭಿಸಿತು. ಇನ್ನೊಬ್ಬರ ಪ್ರೈವಸಿಗೆ ಧಕ್ಕೆ ತರಬಾರದೆಂದು ತುಸು ಹೊತ್ತು ಸುಮ್ಮನಿದ್ದ. ಸಾರ್ವಜನಿಕವಾಗಿ ಆ ಸದ್ದು  ಅನಾಗರಿಕ. ಆದರೆ ಆ ಸದ್ದು ಎಲ್ಲರ ಕಿವಿ ಮುಟ್ಟುವ ಹಾಗೆ ಕೇಳಿ ಬರುತ್ತಿತ್ತು. ಎದ್ದು ಕ್ಯಾಬಿನ್ ತೆರೆದರೆ ಇಬ್ಬರು ಹುಡುಗರು ಅರ್ಧ ಪ್ಯಾಂಟ್ ಬಿಚ್ಚಿ ತಮ್ಮ ಲೋಕದಲ್ಲೇ ಮುಳುಗಿದ್ದರು. ನಿಶೀಥನಿಗೆ ದಂಗು ಬಡಿದಂತಾಯಿತು. ಇನ್ನೇನು ತನ್ನ ಮಾತು ಹೊರ ಹಾಕುವ ಮುನ್ನವೇ ಆ ಹುಡುಗರು ಅಲ್ಲಿಂದ ಪರಾರಿಯಾದರು. ಅವರು ಪ್ರತಿ ದಿನ ಇಲ್ಲಿಗೆ ಬರುವ ಕಾಲೇಜಿನ ಹುಡುಗರೇ ಆಗಿದ್ದರು. ತುಂಬಾ ಹೇಸಿಗೆ ಎನಿಸಿ.ವಾಂತಿ ಬಂದ ಹಾಗೆ ಭಾಸವಾಯಿತು. ಆವಾಗಿನಿಂದ ಆ ಕೆಲಸದ ಮೇಲೆ ಆಸಕ್ತಿಯೇ ಕಳೆದುಕೊಂಡಿದ್ದ.

ಅದಾದ ಮರುದಿನವೇ ಮಾಲಿಕನ ಮುಂದೆ ವಿಷಯ ಪ್ರಸ್ತಾಪಿಸಿದ. ಅದಕ್ಕೆ ಅವನು ಇದೆಲ್ಲ ಇಲ್ಲಿ ಸಾಮಾನ್ಯ ಸಂಗತಿ. ನನಗೂ ತುಂಬಾ ದಿವಸದ ಹಿಂದೆಯೇ ಗೊತ್ತಾಗಿತ್ತು. ನನ್ನ ಹೆಂಡತಿ ಹೇಳಿದ್ದಳು. ಅದನ್ನು ತಡೆಯುವ ಹಾಗಿಲ್ಲ. ಇಲ್ಲಿಗೆ ಬರುವ ಎಲ್ಲಾ ಹುಡುಗರಿಗೆ ಅದೇ ಬೇಕು. ಅದಕ್ಕೆ ಬಂದಿರುತ್ತಾರೆ. ಅದನ್ನೆಲ್ಲ ತಡೆ ಹಿಡಿದರೆ ಮುಂದೆ ಯಾರು ಇಲ್ಲಿ ತಲೆ ಹಾಕಲ್ಲ. ಇಡೀ ಸುತ್ತಮುತ್ತಲಿನ ಬ್ರೌಸಿಂಗ್ ಸೆಂಟರ್‌ಗಳಿಗಿಂತಲೂ ನಮ್ಮದೇ ಹೆಚ್ಚು ಲಾಭ. ಅಂತ ಬುದ್ಧಿಮಾತು ಹೇಳಿದ್ದ.

ಮಾಲಿಕನೆ ಹೇಳಿದ ಮೇಲೆ ಇವನು ಕೂಡ ಅದನ್ನ ನಿರ್ಲಕ್ಷಿಸುತ್ತ ಹೋದ. ಬರು ಬರುತ್ತಾ ಸ್ವಯಂಲಿಂಗ, ಸಲಿಂಗ, ಬಹುಲಿಂಗ, ನಾನಾ ಪ್ರಕಾರದ ಕ್ರೀಡೆಗಳು ಜರಗುತ್ತಲೇ ಹೋದವು. ಕೊನೆಗೆ ‘ಧೂಮಪಾನ ನಿಷೇಧಿಸಲಾಗಿದೆ’ ಎಂಬ ನಾಮಫಲಕ ತೆಗೆದು ‘ಧೂಮಪಾನ ಮತ್ತು ಮೈಥುನ ನಿಷೇಧಿಸಲಾಗಿದೆ’ ಅಂತ ಬದಲಿಸಿದ. computer-pornಆದರೂ ಯಾವುದೇ ಪರಿಣಾಮ ಬೀರಲಿಲ್ಲ. ಎಲ್ಲವು ಗಮನಿಸಿ ಗಮನಿಸದ ಹಾಗೆ ಅನ್ಯಮನಸ್ಕನಂತೆ ಸುಮ್ಮನಾಗಿದ್ದ. ಅಲ್ಲಿಗೆ ಬರುವ ಎಲ್ಲಾ ಗಿರಾಕಿಗಳಿಗೆ ನೋಡಿದರೆ ಏನೋ ಒಂಥರಾ ವಾಕರಿಕೆ ಬಂದ ಹಾಗೆ ಭಾಸವಾಗುತ್ತಿತ್ತು. ಬರು ಬರುತ್ತಾ ಮಾಡುವ ಕೆಲಸ ಹೇಸಿಗೆ ಅನಿಸತೊಡಗಿತು. ಹಾಗೋ ಹೇಗೋ ಅಲ್ಲಿಂದ ಹೊರ ಬರಬೇಕು ಅನ್ನುತ್ತಲೇ ಇದ್ದ. ಆದರೆ ಬಿಟ್ಟಿಯಾಗಿ ಸಿಗುವ ಸೂರು ಮತ್ತೆ ತಕ್ಕ ಮಟ್ಟಿಗೆ ಸಿಗುವ ಸಂಬಳ ಬಿಡುವ ಪರಿಸ್ಥಿತಿಯಲ್ಲಿರಲಿಲ್ಲ.

ಈ ಹಿನ್ನೆಲೆಯಲಿ ಅಂದು ಗಾಂಧಿ ಜಯಂತಿ ಇದ್ದುದ್ದರಿಂದ ಅಷ್ಟೊಂದು ಜನ ಬರುವದಿಲ್ಲವೆಂದು ತಿಳಿದ ನಿಶೀಥ್ ಸ್ವಲ್ಪ ತಡವಾಗಿಯೇ ಹೋದರಾಯಿತು ಅಂತ ಇನ್ನು ಮಲಗಿಯೇ ಇದ್ದ. ತುಂತುರು ಮಳೆ ನಿದ್ದೆ ತನ್ನ ಆಳದ ಅರಮನೆಯನ್ನೇ ಪರಿಚಯಿಸುತ್ತಿತ್ತು. ತಾನು ಮಲಗಿರುವ ಸ್ಟೋರ್ ರೂಮಿಗೆ ಬಾಗಿಲನ್ನೆ ಲೇವಡಿ ಮಾಡುವಂತಹ ಬಾಗಿಲೊಂದು ನೇತಾಡುವಂತೆ ನಿಂತಿತ್ತು. ಒಳಹೊಕ್ಕರೆ ಕಂಪ್ಯೂಟರ್ ಬೆವರು ವಾಸನೆ ಭಗ್ಗೆಂದು ಮುಗು ಹಿಡಿಯುತ್ತಿತ್ತು. ಇವನು ಮಲಗಿದ ಮಂಚದ ಸುತ್ತ ಸುತ್ತುವರಿದು ಪ್ರಜ್ಞೆ ಕಳೆದುಕೊಂಡು ಬಿದ್ದ ಕಂಪ್ಯೂಟರ್ ಗಳು ಬಿಕೋ ಅಂತ ಮೌನ ರಾಗ ಹಾಡುತ್ತಿದ್ದವು.

ಇವತ್ತು ಗೆಳೆಯ ಸುಧಾಂಶು ಇಲ್ಲಿಗೆ ಬರುತ್ತೇನೆಂದು ಹೇಳಿದ್ದು ನೆನಪಾಯಿತು. ಅವನ ಮುಂದೆ ಈ ವಿಷಯ ಹೇಳಿ ಸ್ವಲ್ಪ ಮನಸಿನ ಭಾರ ಇಳಿಸಿಕೊಂಡು ಬೇರೆ ಎಲ್ಲಾದರೂ ಕೆಲಸಕ್ಕೆ ನೋಡು ಅಂತ ಹೇಳುವ ನಿರ್ಧಾರ ಮಾಡಿಕೊಂಡ. ಎದ್ದೇಳುವ ಮನಸ್ಸಿರಲಿಲ್ಲ. ಆದರು ಎದ್ದು ಸ್ನಾನಕ್ಕೆ ಹೋಗಿ ಕೆಳಗಡೆ ಬಂದು ನಿಂತ. ಮಳಿಗೆಯ ಪಕ್ಕದ ಮನೆಯ ಪುಟಾಣಿಗಳೆಲ್ಲ ಆಗಷ್ಟೇ ಶಾಲೆಯಿಂದ ಬಂದು ಧ್ವಜ ಹಿಡಿದು ಆಡುತ್ತ ನಿಂತಿದ್ದವು. ಅವುಗಳ ತಲೆಗೊಂದು ಏಟು ಮಟುಕಿ ತಿಂಡಿ ತಿನ್ನಲು ಪಕ್ಕದ ಹೋಟೆಲ್‌ಗೆ ಹೋಗಿ ಸರಿಯಾಗಿ ತಿಂದು ಮತ್ತೆ ಎಂದಿನಂತೆ ಮಳಿಗೆ ತೆರೆದು ತನ್ನ ದೈನಂದಿನ ಕೆಲಸ ಮುಗಿಸಿ ಉದೂ ಹಚ್ಚಿ ಕುಳಿತುಕೊಂಡ.

ರಜೆ ಇರುವದರಿಂದ ಜನರ ಓಡಾಟ ಕಡಿಮೆ ಇತ್ತು. ಬ್ರೌಸಿಂಗ್ ಸೆಂಟರ್‌ಗೂ ಅವತ್ತು ಜನ ಕಡಿಮೆಯಿತ್ತು. ತುಸು ಹೊತ್ತಾದ ಮೇಲೆ ಚೆಕ್ಕಿಂಗ್ ಮಾಸ್ಟರ್ ತರಹ ಮಾಲಿಕ ಒಳಗಡೆ ಬಂದ. ನಿಶೀಥ ಎಲ್ಲ ಲೆಕ್ಕ ಒಂದೊಂದಾಗಿಯೇ ನೀಡುತ್ತ ಹೋದ. ಮಾಲಿಕ ಲೆಕ್ಕ ನೋಡುವ ಮೂಡಿನಲ್ಲಿರಲಿಲ್ಲ. ‘ಆಯ್ತು ಆಯ್ತು ಎಲ್ಲ ಸರಿಯಾಗಿ ಬರೆದಿಡು’ ಅಂತ ಹೇಳಿದ. ಸ್ವಲ್ಪ ಅರ್ಜೆಂಟ್ ಆಗಿ ಏನೋ ಬ್ರೌಸ್ ಮಾಡಬೇಕಿತ್ತು. ಸಿಸ್ಟಮ್ ಖಾಲಿ ಇದಿಯಾ ಅಂತ ಕೇಳಿದ. ಅದಕ್ಕೆ ನಿಶೀಥ ಅಲ್ಲೇ ಪಕ್ಕದ ಸಿಸ್ಟಮ್‌ಗೆ ಲಾಗಿನ್ ಕೊಟ್ಟ. ಯಾರನ್ನು ನನ್ನ ಕ್ಯಾಬಿನ್ ಒಳಗಡೆ ಬಿಡಬೇಡ ಅಂತ ಒಳಗಡೆ ಹೋಗುವಾಗ ಹೇಳಿದ. ಮಾಲಿಕನ ಕಣ್ಣಲ್ಲಿ ಕಂಡ ಸಂತೃಪ್ತವಲ್ಲದ ತುರ್ತು ಪರಿಸ್ಥಿತಿಯ ಭಾವ ಕಂಡು ಹಿಡಿಯಲು ನಿಶೀಥನಿಗೆ ಹೆಚ್ಚು ಸಮಯ ಹಿಡಿಯಲಿಲ್ಲ. ಈ ತರಹದ ಅದೆಷ್ಟೋ ಕಣ್ಣಗಳನ್ನು ಪ್ರತಿದಿನ ನೋಡುತ್ತಿದ್ದ.

ಬದುಕಿನ ಹೆಚ್ಚುವರಿ ಭಾಗ ಇರದುದೆಡೆಗೆ ತುಡಿಯುವದೆ ಆಯಿತಲ್ಲ ಅಂತ ಬೇಸತ್ತು ಕುಳಿತಿದ್ದ. ಅಷ್ಟರಲ್ಲೇ ಗೆಳೆಯ ಸುಧಾಂಶು ಆಟವಾಡುತ್ತಿದ್ದ ಪುಟ್ಟ ಮಗುವನ್ನು ಎತ್ತಿ ಹಿಡಿದು ಮುತ್ತಿಟ್ಟು ಚಾಕಲೇಟ್ ಕೊಡಿಸಿ ನಿಶೀಥನ ಹತ್ತಿರ ಬಂದ. ಅದಕ್ಕೆ ನಿಶೀಥ ‘ಹಾಗೆಲ್ಲ ಚಾಕಲೇಟ್ ಆಸೆ ತೋರಿಸಬೇಡಪ್ಪ, ನಾಳೆ ನೀನು ಇಲ್ಲಿ ಇರುವದಿಲ್ಲ ನಾನು ಕೊಡಿಸಬೇಕಾಗುತ್ತದೆ’ ಅಂತ ಹೇಳುತ್ತಿದ್ದ. ‘ಥೂ ಈ ಅಂಕಲ್ ಸರಿ ಇಲ್ಲ’ ಅಂತ ನಿಶೀಥನಿಗೆ ಬೈಯುತ್ತಿರುವಾಗ. ಆ ಪಾಪುವನ್ನು ಹಿಡಿಯಲು ಓಡಿದಾಗ ಅದು ಯಾರ ಕೈಗೂ ಸಿಗದೇ ಓಡಿ ಮಾಯವಾಯಿತು.

ಬಂದ ವಿಷಯ ಶುರು ಮಾಡುವ ಮೊದಲು ನನಗೆ ಇದರ ಪ್ರಿಂಟ್ ಔಟ್ ಕೊಡು ಅಂತ ಮೊದಲೇ ನಿಶೀಥನಿಗೆ ಹೇಳಿದ. ಏನಿದು ಅಂತ ಕೇಳಿದ್ದಕ್ಕೆ. ನಾ ಬರೆದಿರುವ ಹೊಸ ಕಥೆ. ಪ್ರೊಡ್ಯುಸೆರ್ ಕರೆದಿದ್ದಾರೆ ಅದಕ್ಕೆ ಹೋಗ್ತಾ ಇದ್ದೀನಿ ಅಂತ ಹೇಳಿದ. ಅವನಿಗೆ ಪ್ರಿಂಟ್ ಔಟ್ ಕೊಟ್ಟಮೇಲೆ, ಟೀ ಕುಡಿಯಲು ಮತ್ತು ತುಸು ಹೊತ್ತು ಮಾತಾಡಲು ಪಕ್ಕದ ಟೀ ಅಂಗಡಿಗೆ ಹೋದರು. ಹೋಗುವ ಮುನ್ನ ಒಳಗಡೆ ಕುಳಿತಿರುವ ಮಾಲಿಕನಿಗೆ ಒಂದು ಮಾತು ಹೇಳಿ ಬಂದನು.

ಇಲ್ಲಿ ನಡೆದಿರುವ ಘಟನೆಯನ್ನು ವಿಸ್ತಾರವಾಗಿ ಹೇಳಿದ. ಬೇರೆ ಎಲ್ಲಾದರು ಕೆಲಸ ಇದ್ದಾರೆ ನೋಡು ಅಂತ ಸುಧಾಂಶುಗೆ ಕೇಳಿದ. ಆಯ್ತು ಈ ಕೆಲಸ ಬಿಡುವಂತೆ ಕೊನೆ ಪಕ್ಷ ಈ ತಿಂಗಳ ಸಂಬಳನಾದ್ರು ಸಿಗುವರೆಗೂ ಕೆಲಸ ಮಾಡು. ಅಲ್ಲಿಯವರೆಗೆ ಏನಾದರೂ ವ್ಯವಸ್ಥೆ ಮಾಡುತ್ತೇನೆ ಅಂತ ಅವನಂದ. ಅವನ ಮಾತು ಕೂಡ ನಿಶೀಥನಿಗೆ ಸರಿಯೆನಿಸಿತು. ಸರಿ ನಾನೀಗ ಹೊರಡುತ್ತೇನೆ  ಪ್ರೊಡ್ಯುಸೆರ್ ಕಾಯ್ತಾ ಇರ್ತಾನೆ ಅಂತ ಹೇಳಿ ಅವನು ಅಲ್ಲಿಂದ ಹೊರಟ.

ಟೀ ಅಂಗಡಿಯವನು ‘ಇತ್ತೀಚಿಗೆ ನಮ್ ಹೋಟೆಲ್ ಕಡೆಗೆ ಕಾಣ್ತಾನೆ ಇಲ್ವಲ್ಲ?’ ಅಂತ ನಿಶೀಥನಿಗೆ ಕೇಳಿದಾಗ. ‘ನೀವು ಯಾವತ್ತಾದರೂ ನಮ್ ಬ್ರೌಸಿಂಗ್ ಸೆಂಟರ್‌ಗೆ ಬಂದಿದ್ದಿರಾ?’  ಅಂತ ಮರು ಪ್ರಶ್ನೆ ಹಾಕಿ ಅಲ್ಲಿಂದ ಬ್ರೌಸಿಂಗ್ ಸೆಂಟರ್‌ಗೆ ಮರಳಿದ.

ಮರಳಿ ಬರಬೇಕಾದರೆ ಏನೋ ಒಂದು ಅಪಶಕುನ ಕಾದಂತೆ ಹೆಜ್ಜೆ ಹೆಜ್ಜೆಗೂ ಭಾಸವಾಗುತ್ತಿತ್ತು. ಹತ್ತಿರ ಹೋದಂತೆ ತನ್ನ ಬ್ರೌಸಿಂಗ್ ಸೆಂಟರ್ ಹತ್ತಿರ ಜನ ಜಮಾಯಿಸಿರುವದು ಕಣ್ಣಿಗೆ ಕಾಣುತ್ತಿತ್ತು. ಓಡುತ್ತ ಹೋಗಿ ನೋಡಿದಾಗ

ಬ್ರೌಸಿಂಗ್ ಸೆಂಟರ್‌ನ ಅರ್ಧ ಶಟರ್ ಮುಚ್ಚಿತ್ತು.
ತ್ರಿವರ್ಣ ಧ್ವಜ ಹೊಸ್ತಿಲ ಮೇಲೆ ಬಿದ್ದಿತ್ತು.
ಅರ್ದ ತಿಂದು ಬಿಟ್ಟ ಚಾಕಲೇಟ್ ದ್ವಜದ ಪಕ್ಕ ಬಿದ್ದಿತ್ತು.

ಒಳಗಡೆ ಹೋಗುವ ಧೈರ್ಯ ಆಗಲಿಲ್ಲ. ಶಟರ್ ಪೂರ್ಣವಾಗಿ ಎಳೆದು ಒಳಗೆ ನೋಡಿದನು. ಚಿಕ್ಕ ಪಾಪುವಿನ ಸ್ಕೂಲ್ ಯುನಿಫಾರ್ಮ್ ಮೂಲೆಯಲ್ಲಿ ಬಿದ್ದಿತ್ತು. ನಿಶೀಥ ತಟಸ್ಥವಾಗಿ ನಿಂತು ಬಿಟ್ಟ. ಕಣ್ಣಿರು ಹರಿಯತೊಡಗಿತು. ಆಕಾಶವೇ ಎದೆಯ ಮೇಲೆ ಇಟ್ಟಂತೆ ಭಾಸವಾಯಿತು. ಮಾಲೀಕ ಎಲ್ಲೋ ಮಾಯವಾಗಿದ್ದನು .ಹಿನ್ನೆಲೆಯಲ್ಲಿ ಪೋಲಿಸು ಬರುವ ಶಬ್ದವಾಯಿತು. ನಿಂತಲ್ಲೇ ವಿಗ್ರಹವಾದ. ಮಾತು ಕಳೆದು ಹೋಯಿತು.

 ***

ಪದಬಂಧ

ಎಂಎಸ್‌ಸಿ ರಸಾಯನಶಾಸ್ತ್ರದಲ್ಲಿ ಪದವಿ ಮುಗಿಸಿದ ಸುಧಾಂಶುಗೆ ಊರಲ್ಲೇ ಇದ್ದು ಪಿಯು ಕಾಲೇಜಿನಲ್ಲಿ ಲೆಕ್ಚರರ್ ಆಗಿ ಕೆಲಸ ಮಾಡುವುದು ಸ್ವಲ್ಪವು ಇಷ್ಟವಿರಲಿಲ್ಲ. ಮನೆಯಲ್ಲಿ ತಂಗಿ, ಅಮ್ಮ, ಚಿಕ್ಕಪ್ಪ, ದೊಡ್ಡಪ್ಪ, ಗೆಳೆಯರು, ಗುರುಗಳು ಎಷ್ಟೇ ಹೇಳಿದರು ಒಪ್ಪಿರಲಿಲ್ಲ. ಮೊನ್ನೆ ತಾನೇ ಎಂಎಸ್‌ಸಿ ಮೇಲೆ ಸುಮಾರು ಸರಕಾರಿ ಪೋಸ್ಟ್‌ಗಳು ಬಿಟ್ಟಿದ್ದವು. ಅಮ್ಮನ ಒತ್ತಾಯದ ಮೇರೆಗೆ ಹಾಕಿದ್ದ. ಆದರೆ ಎಕ್ಸಾಮ್ ಮಾತ್ರ ಬರೆದಿರಲಿಲ್ಲ. ಅವನ ಜೊತೆಗಿನ ಗೆಳೆಯರು ಈಗ ಅದೇ ಪೋಸ್ಟಿನ ಮೇಲೆ ಆಯ್ಕೆಯಾಗಿ ಒಂದು ಟೂ ವೀಲರ್ ಬೈಕ್ ಅನ್ನು ಕಂತುಗಳಲ್ಲಿ ಖರೀದಿಸಿ ರಾಜಾರೋಷವಾಗಿ ಊರಲ್ಲೇ ತಿರುಗುತ್ತಿದ್ದರು. ಆದರೆ ಅವನಿಗೆ ಅದರ ಯಾವುದೇ ಕೊರಗು ಇರಲಿಲ್ಲ. ಅವನ ಗುರಿಯೇ ಬೇರೆಯಾಗಿತ್ತು. ಸಿನಿಮಾದಲ್ಲಿ ಒಬ್ಬ ಬರಹಗಾರನಾಗಿ ಹೆಸರು ಮಾಡುವದು.

ಚಿಕ್ಕಂದಿನಿಂದಲೂ ಸುಧಾಂಶುವಿಗೆ ಬರವಣಿಗೆಯಲ್ಲಿ ತುಂಬಾ ಆಸಕ್ತಿ. ಪುಸ್ತಕದಲ್ಲಿ ಖಾಲಿ ಹಾಳೆ ಅದ್ದಿದ ಮೇಲೆ ಅದರ ಮೇಲೆ ಮೂಡುವ ಅಕ್ಷರದಂತೆ ಬರೆಯುತ್ತಿದ್ದ. ಕನ್ನಡ ಮೇಷ್ಟ್ರು ತುಂಬಾ ಚನ್ನಾಗಿ ಬರೀತಿಯ ಅಂತ ಹೋಗುಳುತ್ತಿದ್ದರು. ಅವರು ಹೊಗಳಿದ್ದು ದುಂಡಾಗಿ ಬರೆದಿದ್ದಕ್ಕೆ ವಿನಹ ಬರೆದಿರುವ ವಿಷಯಕ್ಕೆ ಅಲ್ಲ ಅಂತ ಗೊತ್ತಾಗುತ್ತಿರಲಿಲ್ಲ. ಆದರು ಮನಸಿಗೆ ತೋಚಿದ್ದೆಲ್ಲ ಗೀಚುತ್ತ ಹೋಗುತ್ತಿದ್ದ. ದೈನಂದಿನ ಡೈರಿ ಬರೆಯುವದಕ್ಕೆ ಶುರುಮಾಡಿದ.

ಬರವಣಿಗೆಯ ಮೂಲ ಓದಿನಲ್ಲಿ ಅಡಗಿರುತ್ತದೆ ಅನ್ನುವ ಮಾತು ಅರಿವಾದದ್ದೆ ಅವನು ಬರೆದಿರುವ ಕಥೆ ಒಂದು ಕಥಾ ಸ್ಪರ್ಧೆಯಲ್ಲಿ ಕೊನೆಯವನಾಗಿ ನಿಂತಿರುವಾಗ. ಆವಾಗ ಓದಿನ ಬಂಡಿ ಹತ್ತಿದ್ದ. ಮೊದಮೊದಲು ಇಷ್ಟೆಲ್ಲಾ ಓದಬೇಕಾ ಅಂತ ನಟನೆ ಶುರುವಾಯಿತು. ಮೊದಲಿಗೆ ಪುಸ್ತಕ ಕೈಗೆತ್ತಿಕೊಂಡು ಒಟ್ಟು ಪುಟಗಳು ಎಣಿಸಿ ಉಗುಳು ನುಂಗಿ ಒಮ್ಮೆ ಫರ್ರನೆ ಎಲ್ಲ ಪುಟಗಳು ತಿರುವಿ ಹಾಕುತ್ತಿದ್ದ. ಓದಿನ ಪ್ರತಿ ಪುಟ ಮುಗಿಸಿದ ಮೇಲೆ ಒಟ್ಟು ಪುಟದ ಸಂಖ್ಯೆಯ ಜೊತೆ ಕಳೆದು ಉಸಿರು ಬಿಡುತ್ತಿದ್ದ. ಓದಿನ ಮೊದಲನೆಯ ದಿನಗಳ ವೈವಿಧ್ಯಮಯ ತಿಕಲಾಟಗಳು ಹೋಗಲಾಡಿಸಲು ಒಂದು ಉಪಾಯ ಹೂಡಿ ಶೃಂಗಾರ ಕಥೆಗಳು ಓದಲು ಶುರು ಮಾಡಿದ. ಹತ್ತು ರೂಪಾಯಿಗೆ ರೈಲ್ವೆ ನಿಲ್ದಾಣದಲ್ಲಿLonely-Lady ತಳ್ಳು ಗಾಡಿಯ ಮೇಲೆ ರಾಜಾರೋಷವಾಗಿ ಸಿಗುವ ಕಾಡತಾವ್ ನೆನಪುಗಳು, ರೂಪಸಿ, ಮೋಜು ಮಜಾ, ರತಿ ಶೃಂಗಾರ, ಹೀಗೆ ಹಲವಾರು ಅನಾಮಿಕ ಬರಹಗಾರರ ಪುಸ್ತಕಗಳನ್ನು ಪಾಪಪ್ರಜ್ಞೆಯ ಭಾವದಿಂದ ಕೇಳಿ, ಹೊಟ್ಟೆಯ ಒಳಗೆ ಗೌಪ್ಯವಾಗಿ ಇಟ್ಟು ರಾತ್ರಿಯ ಹೊತ್ತಲ್ಲಿ ಲೈಟ್ ಆರಿಸಿ ಬ್ಯಾಟರಿ ಬೆಳಕಲ್ಲಿ ಓದುವ ರೋಮಾಂಚನ ಕಸುಬು ಶುರು ಮಾಡಿದ. ಓದಿನ ತೀವ್ರತೆ ಹೆಚ್ಚಾಗಿ ಈ ತರಹದೆ ಒಂದು ಕಾಲ್ಪನಿಕ ಕಥೆ ಬರೆಯುವ ಮನಸಾಗಿ ಹಳೆ ಕಥೆಗೆ ಶೃಂಗಾರ ಸೇರಿಸಿ ಒಂದು ಕಮರ್ಷಿಯಲ್ ಕಥೆ ಬರೆದು ನಮ್ಮ ಗೆಳಯ ವೃಂದದ ಮುಂದಿಟ್ಟ. ಕಥೆಯ ವಾಸನೆ ಗೆಳೆಯರ ಮುಂದೆ ಅಲ್ಲದೆ ಶಾಲೆಯಲ್ಲೂ ಸಂಚಲನ ಮೂಡಿಸಿತು. ಆ ಕಥೆಯನ್ನ ಹುಡುಗಿಯರೂ ಬೇಡಿಕೆಯ ಮೇಲೆ ಓದಿದ್ದಾರೆ ಅನ್ನು ಸುದ್ದಿ ಕೂಡ ಬಂದು ಮುಟ್ಟಿತು. ಈ ತರಹ ಸಂಚಲನ ಮೂಡಿಸಿದ ಸಂಚಾರಿ ಯಾರು ಅಂತ ಶಾಲೆಯ ಮುಖ್ಯ ಗುರುಗಳು ಕರೆದು ಅಮ್ಮನ ಮುಂದೆ ಕಪಾಳಕ್ಕೆ ಬೀಸಿದ್ದರು. ಆದರೆ ಆ ಕಥೆ ಓದಿ ಮುಖ್ಯ ಗುರುಗಳೂ ಕೂಡ ವಿಚಲಿತರಾಗಿದ್ದರು ಅಂತ ಗೊತ್ತಾಗಿದ್ದೆ ಮರುದಿನ ಕರೆದು ‘ಚನ್ನಾಗಿಯೇ ಬರಿತಿಯ, ಆದರೆ ಒಳ್ಳೆಯದು ಬರಿ’ ಅಂತ ಹೇಳಿದಾಗಲೇ. ಆಗ ನನ್ನ ಕೈಗೆ ‘ಗೃಹಭಂಗ’ ಕಾದಂಬರಿ ಕೊಟ್ಟು ‘ಒಳ್ಳೆಯದನ್ನು ಬರೆಯಬೇಕಾದರೆ ಒಳ್ಳೆಯದು ಓದಬೇಕು’ ಅಂತ ಹೇಳಿದ್ದರು.

ಒಮ್ಮೆ ಶಾಲೆಯ ದೈಹಿಕ ಶಿಕ್ಷಕ ಶಾಮಣ್ಣರ ಜೀವನದಲ್ಲಿ ನಡೆದ ಅನೈತಿಕ ಸಂಬಧವನ್ನು ಕಥೆಯಲ್ಲಿ ಸೇರಿಸಿ ಬರೆದು. ಅದು ಪತ್ರಿಕೆಯಲ್ಲು ಪ್ರಕಟವಾಗಿತ್ತು. ಪತ್ರಿಕೆಯಲ್ಲಿ ಕಥೆ ಬಂದಿದೆ ಅಂದ ತಕ್ಷಣ ಶಾಲೆಯ ಎಲ್ಲರು ಹೆಮ್ಮೆಯಿಂದ ಕಥೆ ಓದಿದರು. ಓದುತ್ತ ಹೋದಂತೆ ಕಥೆಯೊಳಗಿನ ಪಾತ್ರಗಳು, ಹೆಸರುಗಳು ಎಲ್ಲವೂ ತಮ್ಮ ಶಾಲೆಯದ್ದೆ ಅಂತ ಎಲ್ಲರಿಗೂ ಗೊತ್ತಾಗಿ ಇಡಿ ಶಾಲೆಯ ಮರ್ಯಾದೆ ಹರಾಜಾಗಿ ಹೋಗಿತ್ತು. ಅದೇ ದಿನ ಶಾಮಣ್ಣರ ಕೈಯಿಂದ ಮೈತುಂಬ ಒದೆ ತಿನಿಸಿಕೊಂಡಿದ್ದ. ಅವತ್ತಿನ ದಿನವೇ ಬರವಣಿಗೆಯ ಶಕ್ತಿ ತಿಳಿಯಿತು. ಸುಧಾಂಶುವಿನ ಸಂಚಲನಗಳನ್ನ ನೋಡಿ ಮುಖ್ಯ ಗುರುಗಳು ಕರೆದು ‘ಬರವಣಿಗೆ ಒಂದು ಕಲೆ, ಆ ಕಲೆ ಎಲ್ಲರಿಗೂ ಒಲೆಯುವದಿಲ್ಲ. ನಿನ್ನಲ್ಲಿ ಆ ಕಲೆ ಕರಗತವಾಗಿದೆ’ ಎಂದು ಎಂಎಸ್‌ಸಿ ಮುಗಿಸಿ ಊರು ಬಿಟ್ಟು ಬೆಂಗಳೂರಿಗೆ ಬರುವಾಗ ಹೇಳಿದ್ದರು.

ಎಲ್ಲರೂ ಬೆಂಗಳೂರಿಗೆ ನಟ ಇಲ್ಲವೇ ನಿರ್ದೇಶಕ ಆಗಬೇಕೆಂದು ಕನಸು ಹೊತ್ತು ಬರುತ್ತಾರೆ, ಆದರೆ ಸುಧಾಂಶು ಬರಹಗಾರ ಆಗಬೇಕೆಂದು ಬಂದವನು. ಇದೇ ಒಂದು ಕಾರಣಕ್ಕಾಗಿ ಊರಲ್ಲಿ ಸಿಗುತ್ತಿರುವ ಎಲ್ಲ ಸೌಕರ್ಯ, ಸರಕಾರಿ ನೌಕರಿ ತ್ಯಜಿಸಿ ಬೆಂಗಳೂರಿಗೆ ಬಂದು ನೆಲೆಸಿದ್ದ.

ಎಂಎಸ್‌ಸಿ ರಸಾಯನ ಶಾಸ್ತ್ರದಲ್ಲಿ ಪರಿಣಿತಿ ಪಡೆದಿದ್ದರಿಂದ ತಮ್ಮ ಗುರುಗಳ ಕೃಪಾಕಟಾಕ್ಷದಿಂದ ಹೆಸರುಘಟ್ಟ ಸಮೀಪದ ಭಾರತಿಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ (IIHR) ಜೂನಿಯರ್ ವಿಜ್ಞಾನಿಯಾಗಿ ಕೆಲಸ ದೊರಕಿತು. ಕೆಲಸದ ಜೊತೆ ಕ್ವಾರ್ಟರ್ಸ್ ಕೂಡ ಸಿಕ್ಕಿತು. ಸಂಬಳ ತುಂಬಾ ಕಡಿಮೆಯಾದರು ತನ್ನ ಕನಸಿನ ಊರಲ್ಲಿರುವದು ಅವನಿಗೆ ಸಮಾಧಾನವಿತ್ತು. ಬರುವ ಸಂಬಳದಲ್ಲಿ ಊರಿಗೆ ಅರ್ದಕ್ಕೂ ಹೆಚ್ಚಿಗೆ ಕಳುಹಿಸಿ ತಿಂಗಳ ಕೊನೆಗೆ ಸಾಲ ಮಾಡಿ ಮತ್ತೆ ಸಂಬಳಕ್ಕೆ ಕಾಯುತ್ತಿದ್ದ.

ದಿನ ಕಳೆದಂತೆ ಕೆಲಸ ಬೋರ್ ಆಗತೊಡಗಿತು. ಬಿಎಸ್‍ಸಿ ಮತ್ತು ಎಂಎಸ್‌ಸಿ ಓದುವಾಗಲೇ ಕನ್ನಡದ ಎಲ್ಲಾ ಕಥೆ, ಕಾದಂಬರಿ, ಕವನಗಳನ್ನೂ ಓದಿ ಮುಗಿಸಿದ್ದ. ಇಲ್ಲಿ ಬಂದು ಖಾಲಿ ಖಾಲಿ ಅನಿಸತೊಡಗಿತು. ಅವನ ಪಾಲಿಗೆ ಉಳಿದಿದ್ದು ಬರವಣಿಗೆ ಮತ್ತು ಪದಬಂಧ ಬಿಡಿಸುವದು. ಪದಬಂಧ ಬಿಡಿಸುವದರಿಂದ ನಮ್ಮ ಶಬ್ದ ಸಂಗ್ರಹ ಹೆಚ್ಚಾಗುತ್ತದೆ, ಅದು ಬರಹಗಾರಿನಿಗೆ ಉಸಿರಿನಷ್ಟೇ ಅವಶ್ಯಕ ಅನ್ನುವ ಮಾತು ತನ್ನ ಗುರುಗಳಿಂದ ತಿಳಿದಿದ್ದ. IIHR ಎದುರುಗಡೆ ಟೀ ಅಂಗಡಿಯಲ್ಲಿ ಸಿಗುವ ಪೇಪರ್‌ನಲ್ಲಿ ಬರುವ ಪದಬದದ ಇರುವ ಜಾಗವಷ್ಟೇ ಯಾರಿಗೂ ಗೊತ್ತಾಗದೆ ಹರಿದು ಮನೆಯಲ್ಲಿ ತಂದು ಅದನ್ನು ಬಿಡಿಸುತ್ತಿದ್ದ. ಮಿಕ್ಕ ಸಮಯದಲ್ಲಿ ಬರೆಯಲು ಆರಂಭಿಸಿದ. ಸಿನಿಮಾ ಕ್ಷೇತ್ರಕ್ಕೆ ಸಂಭಂಧಿಸಿದ ಯಾವುದೇ ಕಾರ್ಯಕ್ರಮ ಸಿಕ್ಕರೂ ತಪ್ಪದೆ ಹೋಗಿ ಸಂಪಲ್ಮೂನ ವ್ಯಕ್ತಿಗಳನ್ನ ಪರಿಚಯ ಮಾಡಿಕೊಳ್ಳುತ್ತಿದ್ದ. ಫೇಸ್‌ಬುಕ್‌ನಲ್ಲಿ ಎಲ್ಲ ಬರಹಗಾರರು, ನಿರ್ದೇಶಕರ ಗೆಳೆಯರ ಲಿಸ್ಟ್‌ನಲ್ಲಿ ಒಬ್ಬನಾಗಲು ಹಂಬಲಿಸುತ್ತಿದ್ದ. ದೀಪಾವಳಿ, ಯುಗಾದಿ, ಗಾಂಧಿ ಜಯಂತಿ, ಕರವೇ ನಲ್ನುಡಿ ಕಥಾ ಸ್ಪರ್ಧೆಗೆ ತಪ್ಪದೆ ತನ್ನ ಕಥೆ ಕಳುಹಿಸುತ್ತಿದ್ದ.

ಇದು ಸುಧಾಂಶುವಿನ ಮೊದಲ ದಿನಗಳ ಪರಿಚಯ. ಇವತ್ತಿಗೆ ಬಂದು ಅವನಿಗೆ ಆರು ವರ್ಷವೇ ಆಯಿತು. ಬದುಕಿನಲ್ಲಿ ಹಲವಾರು ಬದಲಾವಣೆ ಆಗಿವೆ .ಬರಹದಲ್ಲೂ. ಬರಹದ ಮೇಲೆ ಮೊದಲು ಇದ್ದ ತುಡಿತ ಈಗ ಕಡಿಮೆಯಾಗಿತ್ತು. ಹೀಗೆ ತನ್ನ ಇತಿಹಾಸ ನೆನೆಯುತ್ತ ಬೆಚ್ಚನೆ ಮಲಗಿರುವಾಗ. ಗೆಳೆಯ ಗೌರೀಶ, ಸುಧಾಂಶು ಮನೆಯ ಡೋರ್ ಬೆಲ್ ಬಾರಿಸುತ್ತಾನೆ. ಬಾಗಿಲ ಮೇಲೆ ‘ತೆರೆದಿದೆ ಮನೆ ಓ ಬಾ ಅತಿಥಿ’ ನೋಡಿ ಬಾಗಿಲು ತಳ್ಳಲು ಪ್ರಯತ್ನಿಸುತ್ತಾನೆ. ಆದರೆ ಒಳಗಡೆಯಿಂದ ಬಾಗಿಲು ಮುಚ್ಚಿರುತ್ತದೆ. ಇನ್ನೊಂದು ಎರಡು ಮೂರು ಸಾರಿ ಬೆಲ್ ಬಾರಿಸಿದ ಮೇಲೆ ಎದ್ದರಾಯಿತು ಅಂತ ಸುಧಾಂಶು ಹಾಗೆಯೇ ಮಲಗುತ್ತಾನೆ. ಮತ್ತೆ ಶಬ್ದವಾಗುತ್ತದೆ.ಎದ್ದು ಗೆಳೆಯನನ್ನ ‘ರಜೆ ದಿವಸ ಕೂಡ ನಿದ್ದೆ ಮಾಡಲು ಬಿಡುವದಿಲ್ಲ’ ಅಂತ ಮುಖದ ತುಂಬಾ ಉಗಿದು ಬರಮಾಡಿಕೊಳ್ಳುತ್ತಾನೆ.

ಸುಧಾಂಶು ಶೌಚಕ್ಕೆ ಹೋದಾಗ ಗೌರೀಶ್ ‘ತೆರೆದಿದೆ ಮನೆ ಓ ಬಾ ಅತಿಥಿ’ ಬರಹದ ಕೆಳಗೆ ‘ಕಡ್ಡಾಯವಾಗಿ ಮೂರು ಬೆಲ್ ಒತ್ತಿದರೆ ಮಾತ್ರ’ ಅಂತ ಟ್ಯಾಗ್ ಲೈನ್ ಸೇರಿಸುತ್ತಾನೆ. ಅಡುಗೆ ಮನೆಯಲ್ಲಿ ಏನಾದರೂ ತಿನ್ನಲು ಸಿಗುತ್ತಾ ಅಂತ ಒಳಗಡೆ ಹೋಗುತ್ತಾನೆ. ಎಷ್ಟೋ ದಿವಸದ ಒರೆಗೆ ತೊಳೆಯದೇ ಇದ್ದ ಪಾತ್ರೆಗಳಿಂದ ಗಬ್ಬು ನಾತ ಒಳಗಡೆ ಕಾಲಿಡುವ ಮುನ್ನವೇ ಅರಿವಾಗುತ್ತದೆ. ಪರಿಸ್ಥಿಯ ಗಂಭೀರತೆ ಗಮನಿಸಿ ಒಳ ಹೋಗದೆ ಹೊರ ಬರುತ್ತಾನೆ. ಟೇಬಲ್ ಮೇಲೆ ಪುಸ್ತಕಗಳ ರಾಶಿಯೇ ನೋಡುತ್ತಾನೆ. ಅದರ ಮೇಲೊಂದು ಬಿಳಿ ಹಾಳೆಯ ಮೇಲೆ ಬರೆದ ನಾಲ್ಕು ಸಾಲಿನ ಕವಿತೆ.

ಹೂವು ಕೈಯ ಚಾಚಿದೆ
ನಿನ್ನ ಅಂದ ನೀಡಲೇ
ನೀನು ನನ್ನ ಪಾಲಿಗೆ
ದೇವರೆಂದು ತಿಳಿಯಲೇ
ರೆಪ್ಪೆ ಕಾದು ಸೋತಿದೆ ಮುಚ್ಚಿಬಿಡಲೇ.

ಅಬ್ಬಾ ತುಂಬಾ ಭಾರವಾಗಿದೆ. ನನ್ ಹುಡುಗಿಗೆ ಹೇಳಿದ್ರೆ ಪಕ್ಕಾ ಬಿಳ್ತಾಳೆ. ಡೌಟೇ ಇಲ್ಲ.

ಹೊರಬಂದ ಸುಧಾಂಶು ‘ಹಾ ತೊಗೊಳಪ್ಪ ಯಾವ ಕೆಲಸಕ್ಕಾದ್ರು ಬರಲಿ ನಾ ಬರ್ದಿರೋದು.’ ಅಂತ ಹೇಳಿ ಅರ್ಧಕ್ಕೆ ನಿಲ್ಲಿಸಿದ ನೆನ್ನೆಯ ಪದಬಂಧ ಬಿಡಿಸುತ್ತ ಕುಳಿತುಕೊಳ್ಳುತ್ತಾನೆ.

ಹೌದು ಅದೇನೋ ಹೇಳ್ತಿದ್ದಿಯಲ್ಲ….ಯಾರೋ ಪ್ರೊಡ್ಯುಸರ್ ಸಿನಿಮಾ ಹಾಡು ಬರೆಯೋದಕ್ಕೆ ಚಾನ್ಸ್ ಕೊಟ್ಟಿದ್ದಾರೆ ಅಂತ, ಏನಾಯ್ತು….?

ಎಲ್ಲ ಚಂಬು…! ಚಂಬು ಪದ ತುಂಬುತ್ತಾನೆ.

ಅದಕ್ಕೆ ಗೌರೀಶ್ ಅದೇನದು ಚಂಬು? ಅಂತ ಕೇಳುತ್ತಾನೆ.

ಏನಿಲ್ಲ…..! ಅದಾ….? ಹಾಡು ಬರೆದಿದ್ದೆ ಆದ್ರೆ…. ಹಾಡು ಇಷ್ಟ ಆಯ್ತು ಆದ್ರೆ ನನ್ನ್ ಹೆಸರು ಇಷ್ಟ ಆಗಲಿಲ್ಲ.

ಹೆಸರು ಇಷ್ಟ ಆಗಲಿಲ್ಲ ಅಂದ್ರೆ?

ಗ್ರಹಚಾರ….! ಗ್ರಹಚಾರ ಪದ ತುಂಬುತ್ತಾನೆ.

ಅಂದ್ರೆ….ಆ ಪ್ರೊಡ್ಯುಸರ್ ಮಗ ಮೂವಿ ಡೈರೆಕ್ಟ್ ಮಾಡ್ತಾ ಇರೋದು. ಅದಕ್ಕೆ ಅವನಿಗೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಕಲನ, ವ್ಯವಕಲನ ಎಲ್ಲ ಅವನ ಮಗನ ಹೆಸರಲ್ಲೇ ಇರಬೇಕಂತೆ. ನಿರ್ದೇಶಕ ಬರಹಗಾರನಾಗಿದ್ರೆ ಇಂಡಸ್ಟ್ರಿಯಲ್ಲಿ ತುಂಬಾ ಬೆಲೆ ಅದಕ್ಕೆ ‘ದುಡ್ಡು ಕೊಡ್ತೀವಿ ಎರಡು ಸಾವಿರ ನಿಮ್ ಹಾಡು ಮಾರ್ಬಿಡಿ’ ಅಂತ ಕೇಳ್ದ .ನಾ ಆಗಲ್ಲ ಅಂದೇ .ಅಂತ ತುಂಬಾ ಬೇಜಾರಿಂದ ಉತ್ತರಿಸಿದ.

ಈ ಹಾಡು ಅದಕ್ಕೆ ಬರೆದಿರೋದಾ……? ಅಂತ ಹಾಳೆ ನೋಡುತ್ತಾ ಕೇಳುತ್ತಾನೆ.

ಅದಕ್ಕೆ ಗ್ರಹಚಾರ ಅಂತ ಹೇಳಿದ್ದು…!

ಮುಂದೆ ಏನು ಮಾಡಬೇಕು? ಮತ್ತೆ ಯಾರಾದರು, ಯಾರಿಗಾದರು ಕಥೆ ಹೇಳಿದ್ದಿಯ ಅಂತ ಕೇಳುವನು.

ಪರಿಸ್ಥಿತಿ……! ಪರಿಸ್ಥಿತಿ ಪದ ತುಂಬುತ್ತಾನೆ.

ಎಲ್ಲದಕ್ಕೂ ಟೈಮ್ ಬರತ್ತೆ. ಎರಡು ತಿಂಗಳಿಂದ ಮನೆಗೆ ದುಡ್ಡೇ ಕಳಿಸಿಲ್ಲ. ಮೊದ್ಲು ಅದಕ್ಕೆ ಏನಾದ್ರು ಒಂದು ವ್ಯವಸ್ಥೆ ಮಾಡಬೇಕು. ಬಾ ಟೀ ಕುಡಿದು ಬರೋಣ ಅಂತ ಹೇಳುತ್ತಾನೆ.

ಆ ಹೋಟಲಿನಿಂದ ಪೇಪರ್ ಹರ್ಕೊಂಡು ಬರೋನು ನೀನೇನಾ? ಅಂತ ನಗುತ್ತ ಗೌರೀಶ್ ಕೇಳಿದಾಗ. ನಗುತ್ತಲೇ ‘ಪರಿಸ್ಥಿತಿ ಕಣಪ್ಪ’ ಅಂತ ಹೇಳಿ ಹೊರನಡೆಯುವರು. ತುಂತುರು ಮಳೆಯಲಿ ತಲೆಯ ಮೇಲೆ ಕೈಯಿಟ್ಟು ಓಡುತ್ತ ಟೀ ಅಂಗಡಿಯ ತಲುಪುವರು.

ಇವತ್ತು ಅಕ್ಟೋಬರ್ ಎರಡಲ್ಲಾ? ನೀನ್ ಬಂದು ಇವತ್ತಿಗೆ ಆರು ವರ್ಷ ಆಯಿತು. ಎಷ್ಟು ಬದಲಾಗಿದೆ ಅಲ್ಲ? ಅಂತ ಹೇಳುತ್ತಾನೆ ಗೌರೀಶ್. ಟೀ ಕುಡಿಯುತ್ತ ‘ಇವತ್ತು ಒಬ್ಬ ಪ್ರೊಡ್ಯುಸರ್ ಬಾ ಅಂತ ಹೇಳಿದ್ದಾನೆ. ರಿಮೇಕ್ ಚಿತ್ರಕ್ಕೆ ಸಂಭಾಷಣೆ ಬರೆಯಲು. ಸ್ವಂತ ಬರೆದದ್ದು ಕಳಿಸಿದ್ದೆ ಅವರಿಗೆ ರಿಸ್ಕ್ ತೆಗೆದುಕೊಳ್ಳುವದು ಇಷ್ಟ ಇಲ್ಲ ಅಂತೆ.’

ಒಹ್ ಒಳ್ಳೆಯದು….ಎಷ್ಟು ಗಂಟೆಗೆ ಹೊರಡುವದು?

ಇನ್ನೇನು ಸ್ನಾನ ಮುಗಿಸಿ ಹೋಗೋದೇ.

ನಿನ್ನ ಕಥೆ ಕೂಡ ಜೊತೆಯಲ್ಲಿ ತೆಗೆದುಕೊಂಡು ಹೋಗು. ಈ ಸಲ ಇಷ್ಟ ಆಗಬಹುದೇನೋ. ಹೋಪ್ ಫಾರ್ ದಿ ಬೆಸ್ಟ್. ಸಾಫ್ಟ್ ಕಾಪಿ ಇರಲಿ ಅಂತ ಸಲಹೆ ನೀಡುವನು.

ಆಯ್ತು ಅಂತ ಇವತ್ತಿನ ಖರ್ಚಿಗೆ ನೂರು ರುಪಾಯಿ ಗೌರೀಶನ ಹತ್ತಿರ ತೆಗೆದುಕೊಂಡು ಸುಧಾಂಶು ಮತ್ತೆ ರೂಮಿಗೆ ಮರಳುವನು.

ಮತ್ತದೇ ಜಡಿ ಮಳೆಯಲಿ ಬಿಎಂಟಿಸಿ ಬಸ್ಸು ಹತ್ತಿ ಮೆಜೆಸ್ಟಿಕ್ ಹತ್ರಾ ಇರುವ ವಿನಾಯಕ್ ಇಂಟರ್ನೆಟ್ ಸೆಂಟರ್ ಅಲ್ಲಿ ಕೆಲಸ ಮಾಡುವ ಗೆಳೆಯನ ಹತ್ತಿರ ಹೋಗಿ ಈ ಕಥೆಯ ಒಂದು ಹಾರ್ಡ್ ಕಾಪಿ ಪ್ರಿಂಟ್ ಔಟ್ ತೆಗೆದುಕೊಂಡು ಪ್ರೊಡ್ಯುಸರ್ ಮನೆಯ ಕಡೆಗೆ ಹೋಗುತ್ತಾನೆ. ಅವನ ದುರದೃಷ್ಟಕ್ಕೆ ಪ್ರೊಡ್ಯುಸರ್ ಮನೆ ಬೀಗ ಹಾಕಿತ್ತು. ಪಕ್ಕದ ಮನೆಯ ಒಬ್ಬ ಅಜ್ಜ ಆಗಷ್ಟೇ ಬಿಸಿ ಬಿಸಿ ಕಾಫಿ ಕುಡಿದು ಇವತ್ತಿನ ಪೇಪರ್ ಹಿಡಿದು ಕುಳಿತಿದ್ದ. ಸುಧಾಂಶು ಅವರ ಹತ್ತಿರ ಹೋಗಿ ಪ್ರೊಡ್ಯುಸರ್ ಯಾವಾಗ ಬರುತ್ತಾರೆ ಅಂತ ವಿಚಾರಿಸಲು ಹೋಗುವನು.

ಸುಧಾಂಶು ಹತ್ತಿರ ಬರುವದನ್ನು ನೋಡಿ ‘ಏನಾಗಬೇಕಿತ್ತು?’ ಅಂತ ಕೇಳುತ್ತಾನೆ.

ಪ್ರೊಡ್ಯುಸರ್ ಬರ ಹೇಳಿದ್ರು.ಯಾವಾಗ ಬರ್ತಾರೆ?

ಅಜ್ಜ: ‘ಗೊತ್ತಿಲ್ಲ ಮಗ….ಇವತ್ತು ಅವರ ಪಿಕ್ಚರ್ ರಿಲೀಸು…ಬ್ಯುಸಿ ಇರ್ತಾರೆ, ಬಂದ್ರೆ ಬರಬಹುದು. ಏನು ಕೆಲಸ ಇತ್ತು?’

ಸುಧಾಂಶು: ರೈಟರ್ ಕೆಲಸಕ್ಕೆ.

ಒಳ್ಳೆಯದಾಗಲಿ…. ಅಂತ ಹೇಳಿ ಅಜ್ಜ ಪೇಪರ್‌ನಲ್ಲಿ ಬಂದಿರುವ ಪದಬಂಧ ಬಿಡಿಸಲು ಕುಳಿತುಕೊಳ್ಳುತ್ತಾನೆ. ರೈಟರ್ ಸಾಹೇಬ್ರೆ ಸ್ವಲ್ಪ ಪೆನ್ನು ಇದ್ರೆ ಕೊಡಿ ಅಂತ ಕೇಳುತ್ತಾನೆ.

ಸುಧಾಂಶು ಪೆನ್ ಕೊಟ್ಟು ಅಜ್ಜನ ಪಕ್ಕ ಕುಳಿತುಕೊಳ್ಳುತ್ತಾನೆ.

ಅಜ್ಜ: ‘ನಿಮ್ ಪ್ರೊಡ್ಯುಸರ್ ಬರುವವರೆಗೂ ನಾನು ನಿನ್ನ ಇಂಟರ್ವ್ಯೂ ತೆಗೆದುಕೊಳ್ಳುತ್ತೇನೆ’ ಅಂತ  ನಗುತ್ತ ಸುಧಾಂಶುವಿಗೆ ಹೇಳುವನು.

ಸುಧಾಂಶು: ಹೇಯ್ ತೊಗೊಳ್ಳಿ ಅದಕ್ಕೇನಂತೆ…!

ಅಜ್ಜ: ರೈಟರ್ ಕೆಲಸಕ್ಕೆ ಬಂದಿರುವ ಮಾನ್ಯ ಕನ್ನಡ ಪಂಡಿತರೆ ಇದಕ್ಕೆ ಉತ್ತರ ಹೇಳಿ
‘ಗಡಿ ಭಾಗದಲ್ಲಿ ವಸ್ಥಾದ ವ್ಯಾಯಾಮ ಶಾಲೆ’ .ಮೂರು ಅಕ್ಷರ.

ಸುಧಾಂಶು ಠಕ್ಕನೆ ‘ಗರಡಿ’ ಎಂದು ಉತ್ತರಿಸುವನು.

ಅಜ್ಜ: ಪರವಾಗಿಲ್ಲ ಕಣಯ್ಯಾ….ಕನ್ನಡ ವ್ಯಾಯಾಮ ಚನ್ನಾಗೇ ಮಾಡಿದ್ದಿಯ. (ಗರಡಿ ಪದ ತುಂಬುತ್ತಾನೆ )
ಇದನ್ನ ಹೇಳು. ಕಾವೇರಿದಂತೆ ಕಂಡ ಉತ್ತರ ಕರ್ನಾಟಕದ ಜಿಲ್ಲಾ ಕೇಂದ್ರ.

ಸುಧಾಂಶು: ಕೆಂಗೇರಿ……?

ಅಜ್ಜ: ಕೆಂಗೇರಿ ಬೆಂಗಳೂರಿನಲ್ಲಿ ಇರೋದು…..ಉತ್ತರ ಕರ್ನಾಟಕದಲ್ಲಿ ಅಲ್ಲ.

ಸುಧಾಂಶು: ಶೃಂಗೇರಿ……?

ಅಜ್ಜ: (ಸಿಟ್ಟಿನಿಂದ) ಶೃಂಗೇರಿ ಉತ್ತರ ಕರ್ನಾಟಕಕ್ಕೆ ಯಾವಾಗ ಕೊಟ್ರು…..?

ಸುಧಾಂಶು (ತುಂಬಾ ಯೋಚನೆ ಮಾಡಿ):  ಹಾವೇರಿ…..!

ಅಜ್ಜ: (ಆಶ್ಚರ್ಯದಿಂದ) ಹಾ …..ಹಾವೇರಿ…..ಕರೆಕ್ಟ್….! (ಹಾವೇರಿ ಪದ ತುಂಬುತ್ತಾನೆ)
ಇದನ್ನ ಹೇಳಪ್ಪ ‘ಇದು ಪ್ರಣಯದಂತೆ ಅನ್ಯರ ಎದುರು ಮಾಡಲಾಗುವದಿಲ್ಲ’ ಮೂರು ಅಕ್ಷರ.

ಹೀಗೆ ಒಂದೊಂದು ಪದಗಳನ್ನು ಸುಧಾಂಶುವಿನಿಂದ ಪಡೆದು ತುಂಬಾ ಹೊತ್ತು ಕಳೆಯುತ್ತಾರೆ. ಅಜ್ಜ ಕೂಡ ತುಂಬಾ ಕ್ಯಾಶುಯಲ್ ಆಗಿ ಸಮಯ ಕಳೆಯುತ್ತಾನೆ. ಪದಬಂಧದ ಎಲ್ಲವೂ ಬಿಡಿಸಿ ಕೊನೆಯದಾಗಿ ಒಂದು ಉಳಿದಿರುತ್ತದೆ.

ಅಜ್ಜ: ಇದನ್ನ ಹೇಳಪ್ಪ ‘ಇದು ಪ್ರಣಯದಂತೆ ಅನ್ಯರ ಎದುರು ಮಾಡಲಾಗುವದಿಲ್ಲ’ ಮೂರು ಅಕ್ಷರ.

ಸುಧಾಂಶು: (ಯೋಚನೆ ಮಾಡುತ್ತಾನೆ) ‘ಪ್ರಣಯದಂತೆ…ಅನ್ಯರ ಎದುರು ಮಾಡಲಾಗುವದಿಲ್ಲ’ ಮೂರು ಅಕ್ಷರ….. ?!!!

ಅಷ್ಟರಲ್ಲೇ ಪ್ರೊಡ್ಯುಸರ್ ಕಾರು ಒಳಗಡೆ ಹೋಗುತ್ತದೆ. ಸುಧಾಂಶು ಎದ್ದೋ ಬಿದ್ದು ನಗುತ್ತ ಹಿಂದೆ ಓಡಿ ಹೋಗುವನು. ಅಜ್ಜ ಅಲ್ಲೇ ಕುಳಿತು ಪದಬಂಧ ತುಂಬುತ್ತ ಕುಳಿತಿರುತ್ತಾನೆ.

ಪ್ರೊಡ್ಯುಸರ್ ಓಹ್ ಬನ್ನಿ ಬನ್ನಿ ರೈಟರ್ ಸಾಹೇಬ್ರೆ. ತುಂಬಾ ಕಾಯಿಸಿದ್ನಾ? ಏನ್ ಮಾಡೋದು ನಮ್ ಕೆಲಸಾನೆ ಹಿಂಗೆ ಅಂತ ಹೇಳಿ ತಮ್ಮ ಕ್ಯಾಬಿನ್ ಒಳಗಡೆ ಕರೆದುಕೊಂಡು ಹೋಗುವರು. ನೀವು ಅದೇನೋ ನಿಮ್ ಸ್ವಂತ ಕಥೆ ಕಳಿಸಿದ್ರಂತೆ. ನನಗೆ ತಲುಪೇ ಇಲ್ಲ. ನನಗು ಟೈಮ್ ಇರಲಿಲ್ಲ. ನೋಡಿ ಸ್ವಂತ ಕಥೆ ಚನ್ನಾಗಿದ್ರೆ ಮಾಡೋಣ ಅದಕ್ಕೇನಂತೆ. ಏನಂತೀರಿ ಸೋಮಣ್ಣ? ಅಂತ ತಮ್ಮ ಅಸಿಸ್ಟೆಂಟ್ ಕಡೆಗೆ ಹಲ್ಲು ಕಿರಿಯುವರು. ಸೋಮಣ್ಣ ಅವರ ಮಾತಿಗೆ ಹೂಂಕಾರ ಹಾಕಿ ನಿಲ್ಲುವರು.

ವಿಷಯಕ್ಕೆ ಬರೋಣ, ಅದೇನೆಂದ್ರೆ ನಿಮ್ಮ ಬರವಣಿಗೆ ನಾನು ನೋಡಿಲ್ಲ. ಈಗ ಯೇನಾದ್ರು ನಮ್ಮ ಎದುರಿಗೆ ಬರೆದು ತೋರಿಸಿದರೆ ನಮಗೂ ಖುಷಿ. ಯಾಕೆಂದ್ರೆ ಕೋಟ್ಯಾಂತರ ರುಪಾಯಿ ಬಂಡವಾಳ ಹಾಕಿ ಸಿನಿಮಾ ಮಾಡಬೇಕಾದ್ರೆ ಎಲ್ಲೂ ಎಡವ ಬಾರದು ಅದಕ್ಕೆ ನೋಡಿ ಅಂತ ಹೇಳಿ ಒಂದು ಹಾಳೆ ಮತ್ತು ಪೆನ್ನು ಸುಧಾಂಶುವಿನ ಮುಂದಿಟ್ಟು ತಮ್ಮ ಅಸಿಸ್ಟೆಂಟ್ ಜೊತೆ ಮಾತಾಡುತ್ತ ಕುಳಿತರು.

ಸುಧಾಂಶುವಿಗೆ ಒಂಥರಾ ಮುಜುಗರವಾಗುತ್ತದೆ. ಏನು ಬರೆಯಬೇಕು ಅನ್ನುವದೇ ತೋಚುವದಿಲ್ಲ. ಸ್ವಲ್ಪ ಸಮಯದ ನಂತರ ಮತ್ತೆ ಪ್ರೊಡ್ಯುಸರ್ ಯಾಕ್ರೀ ಆಗ್ತಾ ಇಲ್ವಾ? ನಾವು ಹೊರಗಡೆ ಹೋಗಬೇಕಾ? ಅಂತ ಕೇಳುವರು. ಇಲ್ಲ ಪರವಾಗಿಲ್ಲ ಅಂತ ಸುಧಾಂಶು ಗೋಣು ಅಲುಗಾಡಿಸುವನು. ಒಂಥರಾ ಕಣ್ಣಲ್ಲಿ ನೀರು ಬಂದಂಗಾಗಿ ಕೈಯಲ್ಲಿ ಹಿಡಿದ ಪೆನ್ನು ಕೆಳಗಿಡುವನು.

ಏನ್ರೀ ನಿಮಗೆ ನಾಲ್ಕು ಅಕ್ಷರ ಬರೆಯುವದಕ್ಕಾಗುವದಿಲ್ವಾ? ನಿಮ್ಮನ್ನ ನಂಬಿ ನಾನು ದುಡ್ಡು ಹಾಕಿದ್ರೆ ಅಷ್ಟೇ ನಮ್ ಕಥೆ. ರೀ ಯಾರ್ರಿ ಇವರನ್ನೆಲ್ಲ ಸೆಲೆಕ್ಟ್ ಮಾಡೋದು……ಸ್ವಲ್ಪ ಫಿಲ್ಟರ್ ಮಾಡಿ ಕಳಸ್ರಿ ಅಂತ ತನ್ನ ಅಸಿಸ್ಟೆಂಟ್ ಮೇಲೆ ಪ್ರೊಡ್ಯುಸರ್ ಕೆಟ್ಟದಾಗಿ ರೇಗುವರು.

ಅಲ್ಲಿಂದ ಎದ್ದು ಬರಲು ಸಜ್ಜಾಗಿ ತನ್ನ ಹಿಂಬ್ಯಾಗು ಹಿಡಿದು ಕೊನೆಗೆ ‘ಬರಹ ಒಂದು ಪ್ರಣಯದಂತೆ, ಅದನ್ನು ಅನ್ಯರ ಎದುರುಗಡೆ ಮಾಡಲಾಗುವದಿಲ್ಲ’ ಅಂತ ಬರೆದು. ಅಲ್ಲಿಂದ ಹೊರಬರುತ್ತಾನೆ. ಪ್ರೊಡ್ಯುಸರ್ ಅದನ್ನ ಓದಿ ‘ಪ್ರಣಯ’ ಅಂದ್ರೆನ್ರಿ ಅಂತ ಸೋಮಣ್ಣನಿಗೆ ಕೇಳುತ್ತಾರೆ.

ಹೊರ ಬಂದ ಸುಧಾಂಶುವಿಗೆ ಯಾವುದೊ ಒಂದು ಬಂಧನದಿಂದ ಕಳಚಿ ಹೊರಬಂದಂತೆ ಭಾಸವಾಯಿತು. ಅಜ್ಜನಿಗೆ ಕೊಟ್ಟ ಪೆನ್ನು ವಾಪಸ್ಸು ತೆಗೆದುಕೊಳ್ಳಬೇಕೆಂದು ಆ ಜಾಗಕ್ಕೆ ಹೋದರೆ ಅಜ್ಜ ಪೇಪರ್ ಮತ್ತು ಪೆನ್ನು ಅಲ್ಲೇ ಬಿಟ್ಟು ಒಳಗಡೆ ಹೋಗಿರುತ್ತಾನೆ. ಜಾಣ ಅಜ್ಜ ಪದಬಂಧದ ಎಲ್ಲ ಸ್ಥಳಗಳನ್ನು ತುಂಬಿರುತ್ತಾನೆ ಒಂದನ್ನು ಬಿಟ್ಟು. ಆ ಖಾಲಿ ಜಾಗದಲ್ಲಿ ‘ಬರಹ’ ಅಂತ ಬರೆದು ಪೆನ್ನು ಅಜ್ಜನಿಗಾಗಿ ಅಲ್ಲೇ ಇಟ್ಟು, ಅತ್ತಿತ್ತ ಅಜ್ಜನಿಗಾಗಿ ನೋಡುತ್ತಾನೆ. ಆ ಮನೆಯ ಹಿಂಭಾಗದಲ್ಲಿ ಜನರ ಗುಂಪೊಂದು ನೋಡುತ್ತಾನೆ. ಯಾರೋ ಹಾವಾಡಿಗರು ಇಲ್ಲಾ ಇನ್ಯಾರೋ ಸರ್ಕಸ್ ಮಾಡುತ್ತಿರಬೇಕು ಅಂತ ಸುಧಾಂಶು ಅಲ್ಲಿಂದ ತನ್ನ ಮನೆ ಕಡೆಗೆ ಹೆಜ್ಜೆ ಇಡುತ್ತಾನೆ.

***

ಆತ್ಮಹತ್ಯೆ

ಜೀವಿತ ಏನೆಂದು ತಿಳಿಯದೆ ಜೀವಿಸುವ, ಸುಖ ಏನೆಂದು ತಿಳಿಯದೆ ಸುಖಿಸುವ, ಮರಣ ಏನೆಂದು ತಿಳಿಯದೆ ಸಾಯುವ, ಕೋಟ್ಯಾನುಕೋಟಿ ಜೀವರಾಶಿಗಳ ಮಧ್ಯೆ ಒಂದು ಆಶ್ಚರ್ಯಚಕಿತ ಮನಸ್ಸು ಜೀವಿತದ ಅರ್ಥವನ್ನು ತಿಳಿಯಲು ಪ್ರಶ್ನೆಗಳನ್ನು ಹಾಕಿದಾಗಲೇ ಜಟಿಲವಾದ ಅನೇಕಾನೇಕ ಸಮಸ್ಯಗಳು ಹುಟ್ಟಿಕೊಳ್ಳುತ್ತವೆ. ಉತ್ತರಗಳು ಹುಟ್ಟಿಕೊಳ್ಳುತ್ತವೆ. ರಾಮರಾಯರ ಬದುಕಿನಲ್ಲೂ ಈ ತರಹದ ಪ್ರಶ್ನೆಗಳೇ ಹುಟ್ಟಿದ್ದು, ಮಗನ ಓದಿಗಾಗಿ ಇದ್ದ ಆಸ್ತಿಯನ್ನೆಲ್ಲ ಮಾರಿ ಮಗನನ್ನೇ ಒಂದು ಆಸ್ತಿಯನ್ನಾಗಿಸಿದಾಗ, ಅದೇ ಮಗ ಅಳಿದುಳಿದ ಹೊಲ ಮನೆ ಆಸ್ತಿಯನ್ನು ಮಾರಿ ಬೆಂಗಳೂರಿಗೆ ಬಾ ಎಂದು ಹಠ ಮಾಡಿದಾಗ.

ರಿಟೈರ್ಮೆಂಟ್ ಆದಮೇಲೆ ಹೊಲ ಗದ್ದೆ ಸಂಪೂರ್ಣವಾಗಿ ನೋಡಿಕೊಂಡು ಇರೋಣವೆಂದು ಅಂದುಕೊಂಡಿದ್ದರು. ಆದರೆ ಮಗನ ಮೇಲಿನ ಪ್ರೀತಿ ಒತ್ತಾಯ ಬೆಂಗಳೂರಿಗೆ ದರದರನೆ ಎಳೆದುಕೊಂಡು ಬಂದಿತ್ತು. ರಾಮರಾಯರ ಹೆಂಡತಿಗೂ ಮಗನ ಜೊತೆ ಇರುವ ಆಸೆ ಬಹು ಬೇಗನೆ ಊರಿಂದ ಇಲ್ಲಿಗೆ ಸ್ಥಳಾಂತರ ಮಾಡುವಂತಾಯಿತು.

ಬೆಂಗಳೂರಿನ ಕತ್ರಿಗುಪ್ಪೆಯ ನಾಲ್ಕನೆಯ ಕ್ರಾಸ್‌ನಲ್ಲಿ ಒಂದು ವಿಶಾಲವಾದ ಮನೆಯಲ್ಲಿ ಮಗ ಮತ್ತು ಸೊಸೆ ವಾಸಿಸುತ್ತಿದ್ದರು. ಮಗನ ಮದುವೆಯಾಗಿ ಒಂದು ವರ್ಷವಾಗಿತ್ತು. ಸೊಸೆ ಮೇರಿ. ಇವರ ಅಂತರ್ಜಾತಿ ವಿವಾಹಕ್ಕೆ ಊರಿಗೂರೇ ವಿರೋಧಿಸಿದರು. ಇವರಿಬ್ಬರು ಎರಡು ಮಾತಿಲ್ಲದೆ ಒಪ್ಪಿಕೊಂಡಿದ್ದರು.

ಬೆಂಗಳೂರಿನ ಮನೆ ಸೊಸೆ ಮತ್ತು ಮಗನಿಗೆ ವಿಶಾಲವಾದ ಆಕಾಶ ಸಿಕ್ಕಿದಂತೆ ರಾಮರಾಯ ಮತ್ತು ಅವರ ಹೆಂಡತಿಗೆ ಸಿಕ್ಕಿರಲಿಲ್ಲ. ಪದೇ ಪದೇ ಡಿಕ್ಕಿಯಾಗುವ ಗೋಡೆಗಳ ಮಧ್ಯ ಬಹು ಬೇಗನೆ ಖೈದಿಯಾದರು. ಕಿಟಕಿ ಆಕಾಶಕ್ಕೆ ತೆರೆದುಕೊಳ್ಳುತ್ತಿತ್ತು. ಥಳಥಳನೆ ಹೊಳೆಯುವ ವಿಶಾಲ ಮನೆ ಇವರನ್ನು ಇನ್ನಷ್ಟು ಒಂಟಿಯಾಗಿಸಿತು. ಬೆಳಕು, ಆಕಾಶದ ತುಣುಕು ಮತ್ತು ಸದಾ ಶಬ್ದಿಸುವ ನಗರದ ಯಾಂತ್ರಿಕ ಸದ್ದುಗಳು ಇವರಿಗೆ ಕಿವುಡರನ್ನಾಗಿ ಮಾಡಿತ್ತು.

ಇವರು ಬಂದ ಕೆಲವು ತಿಂಗಳಲ್ಲಿ ಮಗ ಮತ್ತು ಸೊಸೆ ಅಮೇರಿಕಾಕ್ಕೆ ಹೊರಡಲು ನಿಂತಿದ್ದರು. ಒಂದೈದು ವರ್ಷ ಅಷ್ಟೇ ಮತ್ತೆ ತಿರುಗಿ ಬರುತ್ತೇನೆ ಅಂತ ಅಪರವಯಸ್ಸಿನ ಹಿರಿಯರನ್ನ ಮನೆಯ ಕಾವಲುಗಾರರನ್ನಾಗಿ ಬಿಟ್ಟು ಹೋದರು. ಮಗನ ಪ್ರೀತಿ ಮತ್ತು ಒತ್ತಾಯದ ಮೇರೆಗೆ ಊರು ಬಿಟ್ಟು ಬಂದ ರಾಮರಾಯರು ತಾವು ಬಂದದ್ದು ವ್ಯರ್ಥವಾಯಿತು ಅನ್ನುವಂತೆ ಅವರಿಗೆ ಬಂದ ಕೆಲವು ದಿನಗಳಲ್ಲಿಯೇ ಭಾಸವಾಯಿತು. ರಾಯರ ಹೆಂಡತಿಗೆ ಅದನ್ನು ಸಹಿಸಿಕೊಳ್ಳಲು ಆಗಲಿಲ್ಲ.

ಬೆಂಗಳೂರಿನಲ್ಲೇ ಇದ್ದರೂ ಮಗನಿಗೆ ದಿನಕ್ಕೆ ಒಂದೈದು ನಿಮಿಷ ಮಾತಡುವದಕ್ಕೆ ಸಿಗುವದೇ ಅಪರೂಪ. ಆ ಐದು ನಿಮಿಷದ ತರಾತುರಿ ಮಾತುಕತೆಗೆ ಇಡಿ ದಿನ ಎರಡು ಮುಡಿ ಜೀವ ಜೀವಂತವಾಗಿರುತ್ತಿದ್ದವು. ಪಕ್ಕದ ಮನೆಯವರ ಜೊತೆ ಮಾತಾಡಲು ವಿಷಯಗಳು ಹುಡುಕುತ್ತಿದ್ದರು. ಆದರೆ ಈಗ ಒಮ್ಮೆಗೆ ಇವರ ಅನುಪಸ್ಥಿತಿ ಉಮ್ಮಳಿಸಿ ಬಂದ ಸಂಕಟ ಒಳಗೆ ಮಣ್ಣಾದಂತೆ ಮುಳುಗಿಹೋಯಿತು.

ರಾಯರು ಸಮಯ ಕಳೆಯಲು ಸಮಯ ಹುಡುಕುತ್ತಿದ್ದರು. ಬೆಳಗಿನ ಎರಡು ಮೂರು ಗಂಟೆ ಪೇಪರ್ ಓದುವದರಲ್ಲಿ ಕಳೆಯುತ್ತಿದ್ದರು. ಪಾರ್ಕಿಗೆ ಬರುವ ಸಮವಯಸ್ಕ ಜನರ ಜೊತೆ ಹರಟೆ ಹೊಡೆಯುತ್ತಿದ್ದರು. ಅವರ ಬದುಕಿನ ಕಥೆಗಳನ್ನು ಕಿವಿಗೊಟ್ಟು ಕೇಳುತ್ತಿದ್ದರು. ಬಂದು ಆ ಕಥೆಗಳನ್ನು ರಸವತ್ತಾಗಿ ಹೆಂಡತಿಗೆ ಹೇಳುತ್ತಿದ್ದರು. ಆದರೆ ಹೆಂಡತಿಗೆ ಸಮಯ ಕಳೆಯುವ ಯಾವುದೇ ಸಾಧನ ಸಿಕ್ಕಿರಲಿಲ್ಲ. ಕುಳಿತಲ್ಲೇ ಕುಳಿತು ಭ್ರಾಂಥಳಾಗುತ್ತಿದ್ದಳು. ನಗಬೇಕಾದಲ್ಲಿ ಅಳು, ಅಳಬೇಕಾದಲ್ಲಿ ನಗು. ಹೀಗೆ ಬದುಕಿನ ಅಂತಿಮ ದಿನಗಳು ಸಾಗುತ್ತಿದ್ದವು.

ತಿಂಗಳು ತಿಂಗಳು ಅಮೇರಿಕಾದಿಂದ ಹಣ ಬರುತ್ತಿತ್ತು. ಮೊದಮೊದಲಿಗೆ ವಾರಕ್ಕೆ ಬರುವ ಫೋನ್ ಈಗ ತಿಂಗಳಿಗೆ ಬರುತ್ತಿತ್ತು. ನೆನ್ನೆ ಮಗನಿಂದ ಫೋನ್ ಬರಬೇಕಿತ್ತು, ಬಂದಿರಲಿಲ್ಲ. ರಾಯರ ಹೆಂಡತಿ ಫೋನಿನ ಪಕ್ಕ ಕುಳಿತು ಜಪಿಸುತ್ತಿದ್ದಳು. ಯಾಕೆಂದರೆ ಮುಂಚೆ ಫೋನು ಮಾಡಿದಾಗ ಯಾವುದೊ ಕಷ್ಟದಲ್ಲಿ ಇರುವಂತೆ ಮಗನ ಧ್ವನಿ ಕಂಪಿಸುತ್ತಿತ್ತು. ಮಗನ ಸೊಲ್ಲಿಗಾಗಿ ಕಾತರಿಸಿದ್ದಳು. ರಾಯರಿಗೆ ಮನೆಯ ಬಂಧನದಲ್ಲಿ ಕುಳಿತುಕೊಳ್ಳಲಾಗಲಿಲ್ಲ. ಪೇಪರ್ ಹಿಡಿದು ಎದ್ದು ಹೊರಬಂದರು. ಎಂದಿನನತೆ ಮನೆಯ ಎದುರುಗಡೆ ಪೇಪರ್ ಓದುತ್ತ ಕುಳಿತಿದ್ದರು. ಸರಕಾರೀ ರಜೆ ಇರುವದರಿಂದ ಜನಪ್ರವಾಹ ಕಡಿಮೆಯಾಗಿತ್ತು. ಒಂದೆರೆಡು ಬಾರಿ ಮಗನಿಗೆ ರಿಂಗಣಿಸಿ ನೋಡಿದಳು. ಆ ಕಡೆಯಿಂದ ಬ್ಯುಸಿ ಬರುತ್ತಿತ್ತು. ಇತ್ತ ರಾಯರು ಯಾರದೋ ಜೊತೆಗೆ ಕುಳಿತು ಪದಬಂಧ ಬಿಡಿಸುತ್ತಿದ್ದರು. ಅವಳ ಆತಂಕ ಏರುತ್ತಲೇ ಇತ್ತು. ತುಂಬಾ ಹೊತ್ತಿನ ನಂತರ ಅಮೇರಿಕಾದಿಂದ ಫೋನು ರಿಂಗಣಿಸಿತು.

ಎದ್ದು ಓಡೋಡಿ ರಾಯರನ್ನು ಕರೆದು ಫೋನು ಕೈಗೆತ್ತಿಕೊಂಡರು. ಲೌಡ್ ಸ್ಪೀಕರ್ ಇಟ್ಟು ಮಾತಿಗಿಳಿದರು. ಇಲ್ಲಿ ಹಗಲು, ಅಲ್ಲಿ ರಾತ್ರಿ. ‘ಪಪ್ಪಾ ನಾನು ಹೋಗುತ್ತಿದ್ದೇನೆ’ ಅಂತ ಮಗನ ಸದ್ದು ಕೇಳಿಸಿತು .’ಅಮ್ಮ ನಾನು ಸಾಯುತ್ತಿದ್ದೇನೆ’, ‘ನಾನು ನಾಶವಾದೆ’ ಅನ್ನುವ ಧ್ವನಿ ಕೇಳಿ ಬರುತ್ತಿತ್ತು. ಇಲ್ಲಿ ಇಬ್ಬರು ದಿಗ್ಭ್ರಾಂತರಾಗಿ ಮೈಯಿಂದ ರಕ್ತ ಕಳಚಿ ಹೋದಂತೆ ಕೇಳುತ್ತ ಕುಳಿತ್ತಿದ್ದರು. ‘ಮಗನೇ ಹಾಗೆನ್ನಬೇಡ ನೀನು ಬದುಕಬೇಕು. ನೀನು ನಮ್ಮ ಜೀವ’ ಎಂದು ಕಂಪಿಸುವ ಧನಿಯಲ್ಲೇ ಧೈರ್ಯ ತುಂಬಲು ಯತ್ನಿಸಿದ್ದರು. ‘ಮೇರಿ ದ್ರೋಹ ಮಾಡಿದಳು. ಅವಳ ಮೋಹಕ ಮಾತು ನನ್ನನ್ನು ಸೆಳೆಯಿತು. ಅವಳು ಅವಳ ಉದ್ದೇಶಕ್ಕಾಗಿ ನನ್ನ ಇಲ್ಲಿಗೆ ಕರೆ ತಂದಿದ್ದಳು. ಕೇಳಿಸಿಕೊಳ್ಳುತ್ತಿದ್ದಿಯಾ ಪಪ್ಪಾ? ಇದು ನನ್ನ ಕೊನೆಯ ಹೇಳಿಕೆ. ನಿಮ್ಮೊಂದಿಗೆ ಇದ್ದಾಗಲೂ ಮಾತನಾಡಲು ಆಗಲಿಲ್ಲ ಅಮ್ಮಾ. ಒಂದು ಸುಳಿಯಲ್ಲಿ ಸಿಲುಕಿಕೊಂಡಿದ್ದೆ. ಅದರಿಂದ ಬಿಡಿಸಿಕೊಳ್ಳುತ್ತಿದ್ದೆ. ಸದಾ ಅದೇ ಚಿಂತೆ’ ಎಂದ. ’ಚಿಂತೆ ಬೇಡ ಮಗನೇ ಇಲ್ಲಿ ಬಾ ಹೊಸ ಬದುಕು ಬದುಕೋಣ’ ಎಂದರು.

‘ಇಲ್ಲ ಪಪ್ಪಾ, ನನ್ನ ಪಪ್ಪಾ ಇನ್ನು ನೀವು ಈ ಕೈಗಳನ್ನು ಹಿಡಿದು ನಡೆಸಲಾರಿರಿ. ಮೇರಿ ಇಲ್ಲಿ ಬಂದು ಪೂರ್ತಿ ಬದಲಾದಳು. suicide-paintingಅವಳ ಪೂರ್ವಕಾಲದ ಪ್ರೇಮಿಯನ್ನು ಹುಡುಕುತ್ತ ಇಲ್ಲಿ ಬಂದಿದ್ದಳು. ನನ್ನನ್ನು ಒಂದು ವಾಹನವನ್ನಾಗಿ ಉಪಯೋಗಿಸಿಕೊಂಡಳು. ನನ್ನೆದುರೇ ಅವರ ಪ್ರಣಯದಾಟ ನಡೆಯುತ್ತಿತ್ತು. ಆ ವಿಘ್ನವಿನೋದ ನನ್ನ ಪೂರ್ತಿ ಕಂಗೆಡಿಸುತ್ತ ಬಂತು. ಭಯಾನಕ ಡಿಪ್ರೆಷನ್. ಕೆಲಸ ಕಳೆದುಕೊಂಡೆ. ಈ ರಾತ್ರಿಯೂ ಇನ್ನೊಂದು ಕೋಣೆಯಲ್ಲಿ ಅವರಿಬ್ಬರೂ ಇದ್ದಾರೆ. ಮಣಿಗಂಟಿನ ಬಳಿ ಬ್ಲೇಡಿನಿಂದ ರಕ್ತನಾಳವನ್ನು ಈಗ ತಾನೇ ಕೊಯ್ದು ಕೊಂಡಿದ್ದೇನೆ. ಪ್ಲೀಸ್ ಪಪ್ಪಾ ದಯವಿಟ್ಟು ಫೋನ್ ಇಡಬೇಡಿ. ಬಹಳ ಒಂಟಿಯಾಗಿದ್ದೇನೆ. ಈ ಕೊನೆಯ ಹೆಜ್ಜೆಗಳಲ್ಲಿ ನನ್ನ ಜೊತೆಯಾಗಿರಿ. ಪಪ್ಪಾ ಅಮ್ಮ. ಎಂದ.

‘ಅಮ್ಮಾ ನೋವು……. ನಿಮ್ಮನ್ನು ಬಿಟ್ಟು ಹೋಗಲು ಮನಸ್ಸಾಗುತ್ತಿಲ್ಲ….. ಬೇರೆ ವಿಧಿಯಿಲ್ಲ…… ಅಯ್ಯೋ ರಕ್ತ…..! ನೋವು ಹೆಚ್ಚಾಗುತ್ತಿದೆ ಪಪ್ಪಾ… .ಆಯ್ತು ಇನ್ನೇನು ನನ್ನ ಪ್ರಾಣ ನನ್ನ ಬಿಟ್ಟು ಹೋಗಲು ಸಿದ್ಧವಾಗಿದೆ……. ಪಪ್ಪಾ ಮಾತಾಡು ಪಪ್ಪಾ………! ನಿನ್ನ ಧ್ವನಿ ಕೇಳಬೇಕು ನಾನು ಪಪ್ಪಾ….!’ ಮೊಬೈಲ್ ಬಿದ್ದು ಸದ್ದಾಗುವವರೆಗೂ ಕೊನೆ ಕೊನೆಗೆ ನೋವಿನ ಚಿತ್ಕಾರ ಮಾತ್ರ ಇತ್ತು. ಕೊನೆಗೂ ಫೋನ್ ಬಿದ್ದ ಸದ್ದಾಯಿತು. ಮಾತು ನಿಂತು ಹೋಯಿತು, ಜೀವವೂ. ರಾಯರಿಗೂ ಮಾತು ನಿಂತು ಹೋಯಿತು. ಕುಳಿತಲ್ಲೇ ವಿಗ್ರಹವಾದರು. ರಾಯರ ಹೆಂಡತಿ ಎದ್ದು ಹೊರಗಡೆ ನಡೆದರು. ಎಲ್ಲಿಗೆ ಅನ್ನುವದು ಗೊತ್ತಿಲ್ಲ. ಯಾರು ಕಿಟಾರನೆ ಚೀರಿದ ಸಾವಿನ ಶಬ್ದ ಕೇಳಿಸಿತು. ತುಸು ಹೊತ್ತು ಕಳೆದ ಮೇಲೆ ರಾಯರು ತಮ್ಮ ಹೆಂಡತಿಯನ್ನು ಹುಡುಕತೊಡಗಿದರು. ಎರಡಂತಸ್ತಿನ ಮನೆಯ ಮಾಳಿಗೆಯ ಮೇಲೆ ನೋಡಿದರು. ಮನೆಯ ಹಿತ್ತಲುಕಡೆ ಇಣುಕಿ ನೋಡಿದರು.

ಜನರ ಗುಂಪು ರಕ್ತದ ಸುತ್ತ ಸುತ್ತುವರೆದಿದ್ದರು. ರಾಯರು ಓಡತೊಡಗಿದರು. ಮುದಿ ವಯಸ್ಸಿನಲ್ಲಿ ಇನ್ನು ಜೋರಾಗಿ ಓಡತೊಡಗಿದರು.

ತುಝೆ ಚಲ್ನಾ ಹೋಗ, ತುಝೆ ಚಲ್ನಾ ಹೋಗ

– ಶ್ರೀಪಾದ ಭಟ್

ಕೆಲವು ತಿಂಗಳ ಹಿಂದೆಯಷ್ಟೇ ಹಿಂದಿ ಚಿತ್ರರಂಗದ ಮಹಾನ್ ಗಾಯಕಿ ಶಂಶಾದ್ ಬೇಗಂ ತೀರಿಕೊಂಡಿದ್ದರು. ನಿನ್ನೆ ಮತ್ತೊಬ್ಬ ಮಹಾನ್ ಗಾಯಕ ಮನ್ನಾಡೆ ನಿಧನರಾಗಿದ್ದಾರೆ. ಇವರಿಬ್ಬರೂ ತೀರಿಕೊಂಡಾಗ ಅವರು ವಯಸ್ಸು 90 ರಿಂದ 95 ವರ್ಷಗಳು. ಇದೊಂದೇ ಅಲ್ಲ ಇವರ ನಡುವೆ ಇನ್ನೂ ಹಲವಾರು ಸಾಮ್ಯತೆಗಳಿವೆ. ಇಬ್ಬರೂ ತಮ್ಮ ವೃತ್ತಿಜೀವನದಲ್ಲಿ ತಮ್ಮ ತಲೆಮಾರಿನ ಜನಪ್ರಿಯ ಗಾಯಕ/ಗಾಯಕಿಯರಾದ ಮಹಮದ್ ರಫಿ, ಮುಖೇಶ್, ಕಿಶೋರ್ ಕುಮಾರ್, ಲತಾ ಮಂಗೇಶ್ಕರ್, ಆಶಾ ಭೋಸ್ಲೆರಂತಹವರ ನೆರಳಿನಲ್ಲಿ, ಸೆಕೆಂಡ್ ಲೆವೆಲ್‌ನಲ್ಲಿ ಬದುಕಿದ್ದರು. ಆದರೆ ಶಂಶಾದ್ ಬೇಗಂ ಮತ್ತು ಮನ್ನಾಡೆ ಅವರೆಲ್ಲರಿಗಿಂತಲೂ ತಮ್ಮ ಭಿನ್ನತೆ ಕಾಪಾಡಿಕೊಂಡಿದ್ದರು. Manna_Deyಇವರಿಬ್ಬರ ಕಂಠದ, ಹಾಡುಗಳ ಅನನ್ಯತೆ ಅದ್ಭುತವಾದದ್ದು. ಏಕೆಂದರೆ ದೇವ್ ಆನಂದ್, ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್. ಶಮ್ಮಿ ಕಪೂರ್‌ರಂತಹ ಸೂಪರಸ್ಟಾರ್‌ಗಳ ಕಂಠವಾಗಿದ್ದವರು ಮಹಮದ್ ರಫಿ. ರಾಜ ಕಪೂರ್, ಮನೋಜ್ ಕುಮಾರರಂತಹ ನಟರಿಗೆ ಕಂಠವಾಗಿದ್ದವರು ಮುಖೇಶ್. ರಾಜೇಶ್ ಖನ್ನಾ, ದೇವ್ ಆನಂದ್ ರವರಿಗೆ ಕಂಠವಾಗಿದ್ದವರು ಕಿಶೋರ್ ಕುಮಾರ್. ಆದರೆ ಶಂಶಾದ್ ಬೇಗಂ ಮತ್ತು ಮನ್ನಾಡೆ ಯಾವುದೇ ನಟ/ನಟಿಯೊಂದಿಗೆ ಗುರುತಿಸಿಕೊಳ್ಳದೆ ಬದಲಾಗಿ ಶಂಶಾದ್ ಬೇಗಂ ಎಂದೇ ಮತ್ತು ಮನ್ನಾಡೆ ಎಂದೇ ವಿಶಿಷ್ಟವಾಗಿ ಗುರುತಿಸಲ್ಪಡುತ್ತಿದ್ದರು. ಇವರಿಬ್ಬರ ಮತ್ತೊಂದು ಗುಣವೆಂದರೆ ಜನಪ್ರಿಯತೆಗೆ ಬೆನ್ನು ಹಾಕಿ ಒಂದು ಬಗೆಯ Low Profile ಜೀವನ ನಡೆಸಿದರು. ಖ್ಯಾತಿವಂತರಾಗಿದ್ದರೂ ತಮ್ಮದೇ ಆದ ಒಂದು ಕಟ್ಟುನಿಟ್ಟಿನ, ಮುಗ್ಧತೆಯೇ ಮೈವೆತ್ತಂತಹ ಬಾಳು ಸಾಗಿಸಿದರು.

ಕೌನ್ ಆಯಾ ಮೇರೆ ದಿಲ್ ಕೆ ದ್ವಾರೆ ಪಾಯಲ್ ಕಿ ಝನ್‌ಕಾರ್ ಲಿಯೇ, ಧರ್ತಿ ಕಹೆ ಪುಕಾರ್ ಕೆ, ಮೌಸಮ್ ಬೀತಾ ಜಾ ಐ ಮೇರೆ ಪ್ಯಾರೇ ವತನ್, ಐ ಮೇರೆ ಬಿಗಡೇ ಚಮನ್, ಮುಡು ಮುಡುಕೇನ ದೆಖ್ ಮುಡುಮುಡುಕೆ, ನೈನ್ ಮಿಲೆ ಚೈನ್ ಕಹಾ, ಸುರ್ ನ ಸಜೆ, ಜಿಂದಗಿ ಕೈಸಿ ಹೈ ಪಹೇಲಿ, ಕಭಿ ತೊ ಹಸಾಯೆ ಕಭಿ ತೊ ರುಲಾಯೆ, ತೂ ಪ್ಯಾರ್ ಕ ಸಾಗರ್ ಹೈ, ಪೂಛೋನ ಮೈನೆ ಕೈಸೆ, ಲಾಗಾ ಚುನುರೀ ಮೆ ದಾಗ್, ಯೆ ರಾತ್ ಭೀಗೀ ಭೀಗೀ, ಚಲತಾ ಮುಸಾಫಿರ್ ಮೊಹಲಿಯರೇ, ಯಾರೀ ಹೈ ಇಮಾನ್ ಮೇರ ಯಾರ್ ಮೇರಿ ಜಿಂದಗಿ, ಕಸ್ಮೆ ವಾದೆ ಪ್ಯಾರ್ ವಫಾ, ತುಜೆ ಸೂರಜ್ ಕಹೂ ಯ ಚಂದಾ, ನದಿಯಾ ಚಲೇ ರೆ ಧಾರ, ತುಜೆ ಚಲ್ನಾ ಹೋಗ, ಹೀಗೆ ಎಣೆಯಿಲ್ಲದ ನೂರಾರು ಹಾಡುಗಳನ್ನು ಅದ್ಭುತವಾಗಿ ಹಾಡಿದರು ಮತ್ತು ನಮ್ಮನ್ನೆಲ್ಲ ಮೋಡಿಗೊಳಿಸಿದರು. ಬಸಂತ್ ಬಹಾರ್ ಚಿತ್ರದಲ್ಲಿ ಭೀಮಸೇನ್ ಜೋಶಿಯವರೊಂದಿಗೆ ಜುಗಲ್ ಬಂದಿಯನ್ನು ಸರಿಸಮನಾಗಿ ಹಾಡಿದ್ದರು. ಆದರೆ ಕಡೆಗೂ ಮನ್ನಾಡೆ ತಾನು ಮುಟ್ಟಬೇಕಾದ ನಂ.1 ಸ್ಥಾನವನ್ನು ತಲುಪಲೇ ಇಲ್ಲ. ಇದಕ್ಕೆ ಸ್ವತಃ ಮನ್ನಾಡೆಯವರ ಸಂಕೋಚದ, ಇದ್ದುದರಲ್ಲೇ ತೃಪ್ತಿ ಪಡುವಂತಹ ಗುಣ ಮತ್ತು ಮಹತ್ವಾಕಾಂಕ್ಷಿಯಾಗಲೊಲ್ಲದ ವ್ಯಕ್ತಿತ್ವ ಮೂಲಭೂತ ಕಾರಣಗಳಾದರೆ ಹಿಂದಿ ಸಿನಿಮಾ ರಂಗದ ನಿಗೂಢತೆ, ಮಾಯೆ, ಐಶ್ವರ್ಯಗಳನ್ನು ಮನ್ನಾಡೆ ಅರಿಯದೇ ಹೋದದ್ದು ಮತ್ತೊಂದು ಕಾರಣವಿರಬಹುದೇನೋ.

ಶಂಕರ್ ಜೈ ಕಿಶನ್, ಓ.ಪಿ.ನಯ್ಯರ್, ಮದನ್ ಮೋಹನ್, ಅನಿಲ್ ಬಿಶ್ವಾಸ್, ಎಸ್.ಡಿ.ಬರ್ಮನ್, ರೋಶನ್, ಸಲೀಲ್ ಚೌಧುರಿ, ವಸಂತ್ ದೇಸಾಯಿಯವರಂತಹ ಪ್ರಖ್ಯಾತ ಸಂಗೀತ ನಿರ್ದೇಶಕರೊಂದಿಗೆ ಹಾಡಿದ ಮನ್ನಾಡೆ ನಮ್ಮಂತಹ ಅಸಂಖ್ಯಾತ ಅಭಿಮಾನಿಗಳಿಗೆ ಆದರ್ಶವಾಗಿದ್ದರು. ಅಂದರೆ ಒಂದು ಬಗೆಯ ಮೀಡಿಯೋಕರ್ ವ್ಯಕ್ತಿತ್ವದವರಿಗೆ, ಆರಕ್ಕೇರದೆ ಮೂರಕ್ಕಿಳಿಯದಂತಹವರಿಗೆ ಈ ಮಿತಿಗಳ ನಡುವೆಯೂ ಜೀವನದಲ್ಲಿ ಅದ್ಭುತವಾದುದ್ದನ್ನು ಸಾಧಿಸಬಹುದೆಂದು ತೋರಿಸಿಕೊಟ್ಟಿದ್ದು ಮನ್ನಾಡೆ. ರೋಮ್ಯಾಂಟಿಕ್ ಅಥವಾ ದುಖಃಭರಿತ ಹಾಡುಗಳನ್ನು ಆ ಸನ್ನಿವೇಶಕ್ಕೆ ಅನುಗುಣವಾಗಿ ಉಚ್ಛ್ರಾಯ ಗತಿಯಲ್ಲಿ ಹಾಡಿ ಪ್ರೇಕ್ಷಕರಲ್ಲಿ ಹುಚ್ಚೆಬ್ಬಿಸುವಂತೆ ಹಾಡುವುದು ಮನ್ನಾಡೆಯವರ ಶೈಲಿ ಅಲ್ಲವೇ ಅಲ್ಲ. ಇದೇ ನಿಮ್ಮ ಮಿತಿಯಾಗಿತ್ತಲ್ಲವೇ ಎಂಬ ಪ್ರಶ್ನೆಗೆ manna-deyಸುಮ್ಮನೆ ಮುಗುಳ್ನಗುತ್ತಿದ್ದರು ಮನ್ನಾಡೆ. ನೌಶಾದ್ ಸಾಬ್ ಸಹ ಮನ್ನಾಡೆಯವರ ಧ್ವನಿ ರೋಮ್ಯಾಂಟಕ್ ಹಾಡುಗಳಿಗೆ ಬೇಕಾದಂತಹ ಧ್ವನಿಯ ಇಲ್ಲವೆಂದೆ ಅಪಸ್ವರ ಎತ್ತಿದ್ದರು. ಇವರದು ನದಿಯ ಜುಳು ಜುಳು ಎನ್ನುವ ಆದ್ರತೆ ಮತ್ತು ಸಮ್ಮೋಹನಕರ. ಅಲ್ಲದೆ ಮನ್ನಾಡೆ ಹಿಂದಸ್ತಾನಿ ಶಾಸ್ತ್ರೀಯ ಶೈಲಿಯಲ್ಲಿ ಗಳಿಸಿದ ನೈಪುಣ್ಯತೆ ಮತ್ತು ಈ ಹಿಂದುಸ್ತಾನಿ ಸಂಗೀತದಲ್ಲಿನ ಪರಿಣಿತಿಯನ್ನು ಚಲನಚಿತ್ರದ ಹಾಡುಗಳಿಗೆ ಅದ್ಭುತವಾಗಿ ಉಪಯೋಗಿಸಿಕೊಂಡ ಮನ್ನಾಡೆ ದಿನನಿತ್ಯ ರಿಯಾಜ್ ಮಾಡುತ್ತಿದ್ದರು. ಇದೂ ಕೂಡ ನಮಗೆ ಒಂದು ಪಾಠ. ಮಲ್ಹಾರ್, ಯಮನ್, ಶುದ್ದ ಸಾರಂಗ್, ಬಹಾರ್, ಮುಧು ರಂಜನಿಯಂತಹ ಹಿಂದುಸ್ತಾನಿ ರಾಗಗಳನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ಸುಲಲಿತವಾಗಿ ಹಾಡುತ್ತಿದ್ದರು ಮನ್ನಾಡೆ. ಇದಕ್ಕೆಂದೇ ಇರಬೇಕು ಎಪ್ಪತ್ತರ ದಶಕದ ವೇಳೆಗೆ ಶಾಸ್ತ್ರೀಯ ರಾಗಗಳ ಆಧಾರಿತ ಸಿನಿಮಾ ಗೀತೆಗಳು ಹಿನ್ನೆಲೆಗೆ ಸರಿಯತೊಡಗಿದಾಗ ಮನ್ನಾಡೆಯಂತಹ ಗಾಯಕರು ಮಂಕಾಗತೊಡಗಿದರು. ಅನೇಕ ವೇಳೆ ಏಕ್ ಚತುರ ನಾರ್ ಬಡೆ ಹೋಶಿಯಾರ್, ಆ ವೋ ಟ್ವಿಸ್ಟ್ ಕರೇ, ಗಳಂತಹ ತನಗೊಪ್ಪದ, ಸಾಧಾರಣ ಹಾಡುಗಳನ್ನು ಹಾಡುವಂತ ಸ್ಥಿತಿಗೆ ತಲುಪಿದರು ಮನ್ನಾಡೆ. ನಂತರ ಎಪ್ಪತ್ತು ಮತ್ತು ಎಂಬತ್ತರ ದಶಕಗಳಲ್ಲಿ ಕಿಶೋರ್ ಕುಮಾರ್ ಅವರ ಅಲೆಯಲ್ಲಿ ಹೆಚ್ಚೂ ಕಡಿಮೆ ತಣ್ಣಾಗಾಗದರು. ಇದರ ಕುರಿತಾಗಿಯೂ ಅವರಲ್ಲಿ ವೇದನೆ, ಬೇಸರ ಇದ್ದಂತಿಲ್ಲ..

ಬದುಕಿದ್ದಾಗ ಭೌತಿಕವಾಗಿ ಯಾರೊಂದಿಗೂ ಬೆರೆಯದೆ ಒಂಟಿಯಾಗಿದ್ದ ಮನ್ನಾಡೆ ತಮ್ಮ ಗೀತೆಗಳ ಮೂಲಕ ನಮ್ಮೊಂದಿಗಿದ್ದರು, ಆದರೆ ಮನ್ನಾಡೆ ಇಂದು ನಮ್ಮೊಂದಿಗಿಲ್ಲ ಆದರೂ ಅವರ ಕಂಠ ನಮ್ಮೊಳಗೆ ಹಾಡುತ್ತಲೇ ಇರುತ್ತದೆ ತುಜೆ ಚಲ್ನಾ ಹೋಗ, ತುಜೆ ಚಲ್ನಾ ಹೋಗ.

ಈ ವಿಚಾರಗಳು ಅರ್ಥವಾಗುವುದು ಸೌಜನ್ಯ ನಮ್ಮವಳು ಅಂದುಕೊಂಡಾಗ ಮಾತ್ರ…

– ಶರ್ಮಿಷ್ಠ

ಕಳೆದ ಹದಿನೈದು ದಿನಗಳಿಂದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಲೇಖನಗಳಿಗೆ ಬರುತ್ತಿರುವ ಪ್ರತಿಕ್ರಿಯೆಯನ್ನು ಗಮನಿಸುವಾಗ ಕೆಲವು ಓದುಗರು, ಕಮ್ಯುನಿಸ್ಟ್‌ರು ನಡೆಸುತ್ತಿರುವ ಹೋರಾಟ ಎಂಬ ಕಾರಣಕ್ಕೆ ತಮ್ಮ ಆರ್‌ಎಸ್‌ಎಸ್ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಪ್ರಕರಣವನ್ನು, ಎಲ್ಲರ ಕಾಳಜಿಯನ್ನು ಹಾದಿ ತಪ್ಪಿಸುತ್ತಿಸುತ್ತಿದ್ದಾರೆ ಎಂದು ನನಗನ್ನಿಸುತ್ತಿದೆ. ಇಲ್ಲಿ ನಕ್ಸಲರ ವಿಷಯ ಯಾಕೆ ಬೇಕು?

ಇಲ್ಲಿ ಒಂದು ಸ್ಪಷ್ಟವಾಗಬೇಕು ಮಹೇಶ ತಿಮರೋಡಿ ವಿಶ್ವಹಿಂದು ಪರಿಷತ್‌ನ ಮುಖಂಡನೇ ಹೊರತು ಕಮ್ಯುನಿಸ್ಟ್ ಪಕ್ಷದವರಲ್ಲ. Dharmasthala_Templeಅವರು ಯಾಕೆ ಈ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ? ಜೊತೆಗೆ ಕೆಲವು ಹಿಂದೂ ಪರ ಸಂಘಟನೆಗಳು ಅವರ ಜೊತೆ ಹೋರಾmಕ್ಕೆ ಕೈ ಜೋಡಿಸಿವೆ. ಜೊತೆಗೆ ಬಿಜೆಪಿ ನಾಯಕರ್‍ಯಾರು ಹೆಗ್ಗಡೆಯವರನ್ನು ಕಾಂಗ್ರೆಸ್ ನಾಯಕರ ಮಟ್ಟಿಗೆ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ.

ಅವರ ವೈಯಕ್ತಿಕ ಹಿತಾಸಕ್ತಿ ಎಂದು ಎಲ್ಲರು ಕೊಡುವ ಕಾರಣಗಳನ್ನೇ ಇಟ್ಟುಕೊಳ್ಳೋಣ. ರಾಜಕೀಯ ಭವಿಷ್ಯಕ್ಕೆ ಹಾದಿಮಾಡಿಕೊಳ್ಳುತ್ತಿದ್ದಾರೆ ಎಂಬ ಆಪಾದನೆ ಕೇಳಿ ಬರುತ್ತಿದೆ. ಪೂಜಾರಿಯಂತಹ ಹಿರಿಯ ರಾಜಕಾರಣಿ ಚುನಾವಣೆಗಾಗಿ ತನ್ನತನವನ್ನೇ ಮಾರಿಕೊಂಡು ಚೀಪ್ ಗಿಮಿಕ್ ಮಾಡಲು ಹೊರಟಿರುವಾಗ, ಗೋಧ್ರಾ ಹತ್ಯಾಕಾಂಡದ ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ವಿಜೃಂಭಿಸುತ್ತಿರುವಾಗ, ರಿಯಲ್ ಎಸ್ಟೇಟ್ ಡಾನ್‌ಗಳು, ಗಣಿ ಕಳ್ಳರೆಲ್ಲ ಮಂತ್ರಿ ಪದವಿಗಾಗಿ ತಾಮುಂದು ತಾಮುಂದು ಎಂದು ಹೊರಟಿರುವಾಗ, ಅವರನ್ನೆಲ್ಲ ನಾವು ಸಹಿಸಿಕೊಂಡಿರುವಾಗ, ಸೌಜನ್ಯ ಪ್ರಕರಣವನ್ನು ಮುಂದಿಟ್ಟುಕೊಂಡು ಅದಕ್ಕಾಗಿ ಹೋರಾಟ ಮಾಡಿ, ರಾಜಕೀಯಕ್ಕೆ ಹಾದಿ ಮಾಡಿಕೊಳ್ಳುವದರಲ್ಲಿ ಯಾವ ತಪ್ಪಿದೆ? ಬಡವರಿಗಾದ ಅನ್ಯಾಯಕ್ಕೆ ಧ್ವನಿ ಎತ್ತುವುದು ಯಾವ ತಪ್ಪು?

ನಮಗೆ ರಾಜಕೀಯ ಪಕ್ಷಗಳ ನಿಲುವು ನೊಂದವರ ಶೋಷಿತರ ಪರವಾಗಿರಬೇಕು. ತಿಮರೋಡಿಯೋ, ಕಮ್ಯುನಿಸ್ಟರೋ ಶೋಷಿತರಿಗಾಗಿ ಬೀದಿ ಬೀದಿಯಲ್ಲಿ ಪ್ರತಿಭಟನೆ ಮಾಡುತ್ತಿರುವಾಗ ಮೊಸರಲ್ಲಿ ಕಲ್ಲು ಹುಡುಕುವ ಸಿನಿಕತನ ಯಾಕೆ? ಅವರನ್ನು ದೂಷಿಸುವರಿಗೆ ಸೌಜನ್ಯಳ ಪರವಾಗಿ ಹೋರಾಡಲು, ನ್ಯಾಯಕ್ಕಾಗಿ ಕಿಂಚಿತ್ತಾದರೂ ಮಾಡಲು ಸಾಧ್ಯವಿದೆಯೇ? ಬೇರೆಯವರ ಹೋರಾಟವನ್ನು ಯಾಕೆ ತೆಗಳಬೇಕು?

ಎಷ್ಟು ಜನ ರಾಜಕಾರಣಿಗಳು ತಮ್ಮ ಪ್ರಣಾಳಿಕೆಯಲ್ಲಿ ಬಡವರಿಗೆ ನ್ಯಾಯ ಒದಗಿಸುತ್ತೇವೆ ಎಂದು ಬರೆದುಕೊಳ್ಳುತ್ತಾರೆ? ಎಲ್ಲರೂ ಜನರನ್ನು ಮರಳು ಮಾಡಲು ಬಳಸುವುದು ಅಗ್ಗದ ಪ್ರಚಾರ ತಂತ್ರವನ್ನ ತಾನೇ? ಬಡವರು ಒಂದು ರೂಪಾಯಿ ಅಕ್ಕಿಗೆ, ಬಿಪಿಲ್ ಕಾರ್ಡ್‌ಗೆ, ಆಶ್ರಯ ಮನೆ ಕೇಳಲು ಮಾತ್ರ ಅರ್ಹರೇ?

ಸರ್ಕಾರ, ಪೋಲೀಸ್ ಇಲಾಖೆ ಎಲ್ಲರೂ sowjanya-heggadeಪ್ರಭಾವಿಗಳ ಕೃಪಾಕಟಾಕ್ಷದಲ್ಲಿರುವಾಗ ಆ ಬಡ ಕುಟುಂಬಕ್ಕೆ ನ್ಯಾಯ ಒದಗಿಸುವವರಾದರೂ ಯಾರು? ಅವರಿಗೆ ನ್ಯಾಯ ಕೇಳುವ ಹಕ್ಕಿಲ್ಲವೇ? ಯಾರಾದರೂ ಮುಂದೆ ಬಂದು ಧ್ವನಿ ಎತ್ತಿದರೆ ಆಗುವ ನಷ್ಟವಾದರೂ ಏನು? ಅನ್ಯಾಯವಾಗಿ ಯಾರದೋ ಕಾಮದಾಹಕ್ಕೆ ಬಲಿಯಾದ ಆಕೆಯ ಮೇಲೆ ಎಳ್ಳಷ್ಟೂ ಕನಿಕರ ತೋರದೆ, ಹೋರಾಟವನ್ನೇ ಆರೋಪಿಸಿದರೆ?

ಆಕೆಯ ಮನೆಯವರು ಆರೋಪಿಸಿದವರನ್ನು ಪೋಲಿಸರು ತನಿಖೆ ಮಾಡಿದ್ದು ತೀರಾ ಇತ್ತೀಚೆಗೆ ತಾನೆ? ಅಂದರೆ ಹೋರಾಟ ಆರಂಭವಾದ ಬಳಿಕ. ತನ್ನದೇ ಸಂಸ್ಥೆ, ತನ್ನದೇ ಗ್ರಾಮದ ಹುಡುಗಿಯ ಸಾವಿನ ತನಿಖೆಗೆ ಹಗ್ಗಡೆಯವರೇ ಮುಂದೆಬರಬಹುದಿತ್ತಲ್ಲ? ಕಮಿನಿಸ್ಟರೋ, ತಿಮ್ಮರೋಡಿಯೋ, ಪ್ರಗತಿಪರರೋ ಯಾಕೆ. ಸಿಬಿಐ ತನಿಖೆಗೆ ಒತ್ತಾಯಿಸಲು ಒಂದು ವರ್ಷದ ನಂತರದ ಹೋರಾಟ ಬೇಕಾಯಿತೋ? ಸಮಾಜ ಸುಧಾರಕ ಖಾವಂದರಿಗೆ, ಧರ್ಮನಿಷ್ಠರಿಗೆ ಕಾಲಬುಡದಲ್ಲೇ ಹೋದ ಅಮಾಯಕ ಜೀವ ಕಾಣಲೇ ಇಲ್ಲವೇ? ಯಾಕೆ ಬಡವರಿಗೆ ನ್ಯಾಯ ಎಂಬ ಉದಾಸೀನವೋ ಅಥವಾ ಅಸಡ್ಡೆಯೋ?

ತಾನೇ ಗೃಹಮಂತ್ರಿಗಳಿಗೆ ತನಿಖೆ ಮಾಡಿಸಿ ಎಂದ ಹೆಗ್ಗಡೆಯವರಿಗೆ ಸಿಬಿಐ ಹೋಗಲಿ ಕನಿಷ್ಠ ಪಕ್ಷ ಸಿಓಡಿ ತನಿಖೆ ಯಾವ ಮಟ್ಟದಲ್ಲಿದೆ ಎಂಬ ವಿಷಯವನ್ನಾದರೋ ಫಾಲೋಅಪ್ ಮಾಡಿ ತನಿಖೆ ತ್ವರಿತಗತಿಯಲ್ಲಿ ಸಾಗುವಂತೆ ಮಾಡಬಹುದಿತ್ತಲ್ಲಾ?

ಅಷ್ಟಕ್ಕೂ ಸೋಮನಾಥ ನಾಯಕ್ ಹಾಗು ನರೇಂದ್ರ ನಾಯಕ್ ವ್ಯಥಾ ಯಾರ ಮೇಲೂ ಆರೋಪ ಹೊರಿಸುವವರಲ್ಲ. ಅವರು ಸೌಜನ್ಯ ಪ್ರಕರಣದಿಂದ ಲಾಭ ಮಾಡಿಕೊಂಡು ಯಾವ ಚುನಾವಣೆಯನ್ನೂ ಸ್ಫರ್ಧಿಸಬೇಕಿಲ್ಲ. ಹೆಗ್ಗಡೆಯವರ ವಿರುದ್ಧ ಆರೋಪಕ್ಕೆ ದಾಖಲೆ ಕೇಳುವವರು , ಸ್ವಸಹಾಯ ಸಂಘ, ಭೂ ಮಾಫಿಯಾಕ್ಕೆ ಸಂಬಂಧಿಸಿದ ಅವ್ಯವಹಾರಗಳಿಗೆ ಸೋಮನಾಥ ನಾಯಕರನ್ನು ಸಂಪರ್ಕಿಸಬಹುದು. ಅವರಲ್ಲಿ ಆರ್‌ಟಿಐ ಮೂಲಕ ಪಡೆದ ದಾಖಲೆಗಳಿವೆ. ಅದು ಸುಳ್ಳಾಗಲು ಸಾಧ್ಯವಿಲ್ಲ ಅಲ್ಲವೇ? ಧರ್ಮಸ್ಥಳದಲ್ಲಿ ಆದ ಅಸಹಜ ಸಾವಿಗೆ ಸಂಬಂಧಪಟ್ಟಂತೆ ಮಾಧ್ಯಮಗಳಲ್ಲಿ ಈ ಮೊದಲೇ ಪ್ರಕಟವಾಗಿದೆ. ಪಿಪಿ ಹೆಗ್ಡೆಯಂತಹ ಲಾಯರ್ ಮಾನಹಾನಿ ಎಂಬ ಬ್ರಹ್ಮಾಸ್ತ್ರವನ್ನು ಹಿಡಿದು ನಿಂತಿರುವಾಗ ಯಾರೂ ಸುಳ್ಳು ಸುದ್ದಿ ಪ್ರಕಟಿಸುವಂತಹ ಹುಂಬತನ ಕೈ ಹಾಕುವುದಿಲ್ಲ. ಬೇಕಾದವರು ಆರ್‌ಟಿಐ ಮೂಲಕ ಅಸಹಜ JusticeForSowjanyaಸಾವಿನ ಬಗ್ಗೆ ಮಾಹಿತಿ ಪಡೆದುಕೊಂಡು ಆರೋಪ ಸುಳ್ಳು ಎಂದು ಸಾಬೀತುಪಡಿಸಬಹುದು. ಇನ್ನೂ ಅಗತ್ಯವಿದ್ದರೆ ಧರ್ಮಸ್ಥಳದಲ್ಲಿ ತಿರುಗಾಡಿ ಜನರ ಹತ್ತಿರ ಮಾತನಾಡಿದರೆ ಸತ್ಯಸಂಧ, ಧರ್ಮಸಂಧರ ಬಗೆಗೆ, ಅಲ್ಲಿನ ರಿಯಲ್ ಎಸ್ಟೇಟ್ ಮಾಫಿಯಾದ ಬಗ್ಗೆ ಹೆಚ್ಚಿನ ವಿಷಯ ತಿಳಿಯುತ್ತದೆ.

ಅಷ್ಟಕ್ಕೂ ಈ ಎಲ್ಲಾ ವಿಚಾರಗಳು ಅರ್ಥವಾಗುವುದು ಸೌಜನ್ಯ ನಮ್ಮವಳು ಅಂದುಕೊಂಡಾಗ ಮಾತ್ರ. ಸತ್ತದ್ದು ಯಾವುದೋ ಜೀವ, ಹತ್ತರೊಂದಿಗೆ ಇದು ಹನ್ನೊಂದನೇ ರೇಪ್ ಪ್ರಕರಣ ಅಂದುಕೊಂಡಾಗಲ್ಲ. ನಮ್ಮ ಮನೆಮಗಳಿಗೇ ಈ ಸ್ಥಿತಿ ಬಂದಿದ್ದರೆ? ಸೌಜನ್ಯಳ ಅಸಹಾಯಕ ತಂದೆತಾಯಿಯ ಸ್ಥಾನದಲ್ಲಿ ನಾವಿದ್ದಿದ್ದರೆ, ಇದೇ ಕೊಂಕು ಮಾತು ಹೇಳುತ್ತಿದ್ದೆವಾ?