“ಮಹಾತ್ಮ” – ಗಾಂಧಿ ಜಯಂತಿ ಕಥಾ ಸ್ಪರ್ಧೆ 2013 ರ ಬಹುಮಾನಿತ ಕತೆ

 – ವಿಶ್ವಾಸ್ ಪ್ರಭಾಕರ್ ಭಾರದ್ವಾಜ್

ಕಳೆದ ಮೂರು ದಿನಗಳಿಂದ ‘ಗಾಂಧಿ’ ಎನ್ನುವ ಮನುಷ್ಯ ನಿತ್ಯವೂ ತಪ್ಪದಂತೆ ಕನಸಿನಲ್ಲಿ ಸಂಭಾಷಿಸುತ್ತಿದ್ದಾನೆ. ನನಗೆ ಗೊತ್ತಿದೆ ಅದು ಸ್ವಪ್ನ. ಹಗಲಿನಲ್ಲಿ ಗಾಂಧಿಯ ಕುರಿತಂತೆ ಅವಿರತವಾಗಿ ಎಡಬಿಡದೆ ಚಿಂತಿಸಿದ್ದರ ಫಲವಾಗಿ ರಾತ್ರಿ ಕನಸ್ಸಿನಲ್ಲಿಯೂ ಆವರಿಸಿಕೊಂಡುಬಿಟ್ಟಿದ್ದಾನೆ ಪುಣ್ಯಾತ್ಮ. ಗಾಂಧಿ ಒಳ್ಳೆಯವನಾಗಿದ್ದನೆ? ಗಾಂಧಿಯಲ್ಲಿಯೂ ಸಣ್ಣತನಗಳಿದ್ದವೆ? ಈ ವಿಚಾರಗಳಿಗಾಗಿಯೇ ಅನೇಕ ಪುಸ್ತಕಗಳನ್ನು ಓದತೊಡಗಿದ್ದೆ. ತಕ್ಕಮಟ್ಟಿಗೆ ಗಾಂಧಿ ಅರ್ಥವಾದ ಎಂದುಕೊಳ್ಳುತ್ತಿದ್ದಂತೆಯೇ ಹಿಂಬಾಲಿಸುತ್ತಿದ್ದ ಪರಿಚಿತ ಗಾಂಧಿ ಅಪರಿಚಿತ ನೆರಳಿನಂತೆ ಹಿಂದೆ ಸರಿದುಬಿಡುತ್ತಿದ್ದ.

ಈ ಗಾಂಧಿ ಎನ್ನುವ ಇತಿಹಾಸದ ಮಹಾಪುರುಷ ನನ್ನ ಚಿಂತನೆಗೆ ಆಹಾರವಾಗಿದ್ದು ಎಂದಿನಿಂದ? ನನಗೆ ತಿಳುವಳಿಕೆ ಬಂದ ನಂತರದ ಈ ಎರಡು ದಶಕಗಳಿಂದ ಒಂದಿಲ್ಲೊಂದು ಸಂದರ್ಭಗಳಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಗಾಂಧೀ-ಮೇನಿಯಾದಲ್ಲಿ ಬಿದ್ದು ಒದ್ದಾಡಿದ್ದಿದೆ. ನಿಖರವಾಗಿ ಹೇಳುವುದಾದರೆ,…

ಹೌದು! ನನಗೆ ನೆನಪಿದೆ ನಾನು ಚಿಕ್ಕವನಿದ್ದಾಗ ಅಜ್ಜಿ-ತಾತ ತೊಡೆಯ ಮೇಲೆ ಕೂರಿಸಿಕೊಂಡು ಭಾರತದ ಸ್ವತಂತ್ರ್ಯ ಸಂಗ್ರಾಮದ ಕಥೆಗಳನ್ನು ಹೇಳುತ್ತಿದ್ದರು. mahatma_gandhi_artworkನಮ್ಮ ದೇಶವನ್ನು ಹಿಂದೆ ಬ್ರಿಟೀಶರು ಆಳುತ್ತಿದ್ದರು, ಅವರಿಂದ ನಮಗೆ ಸ್ವಾತಂತ್ರ್ಯ ಕೊಡಿಸಿದ್ದ ಮಹಾಮಹಿಮ, ಅವರೆಲ್ಲರ ಪ್ರಕಾರ ಗಾಂಧಿ. ಉಪವಾಸ-ವನವಾಸ ಮಾಡಿದ ಬರಿಮೈ ಪಕೀರ ನಿಸ್ವಾರ್ಥ ದೃಷ್ಠಿಕೋನದಿಂದ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿ, ಕೊನೆಗೆ ಗೋಡ್ಸೆಯ ಗುಂಡಿಗೆ ಬಲಿಯಾಗಿ ಹುತಾತ್ಮನಾದ. ನನ್ನ ಬಾಲ್ಯದಲ್ಲಿ ನಾನು ಗೋಡ್ಸೆಯನ್ನು ಪರಮ ನೀಚ, ಭ್ರಷ್ಟ, ರಾಕ್ಷಸನಂತೆ ನನ್ನ ಕಲ್ಪನಾ ವಿಸ್ತಾರದಲ್ಲಿ ಚಿತ್ರಿಸಿಕೊಂಡಿದ್ದೆ. ಆಗೆಲ್ಲ ದೇಶದ ಸ್ವಾತಂತ್ರ್ಯದ ವಿಚಾರ ಬಂದಾಗ ಮೊದಲು ನೆನಪಾಗುತ್ತಿದ್ದ ಹೆಸರು ಹಾಗೆಯೇ ಕೊನೆಯ ಹೆಸರೂ ಸಹ ಗಾಂಧಿಯದ್ದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ ದಿನ ಚರ್ವಿತಚರ್ವಣ ಭಾಷಣ ಕೇಳುತ್ತಿದ್ದಾಗ, ಅಂದು ಶಾಲಾ ಮೈಧಾನವನ್ನು ಸ್ವಚ್ಛಗೊಳಿಸುವಾಗ, ಗಾಂಧಿಯ ಸೇವಾ ಮನೋಭಾವನೆಯ ಮತ್ತು ದೀನದಲಿತರ ಕುರಿತಾದ ಕಾಳಜಿ ಮುಂತಾದ ವಿವರಣೆಗಳನ್ನು ಕೇಳುತ್ತಿದ್ದ ಸಂದರ್ಭದಲ್ಲಿ ಗಾಂಧಿ ದೈವೀ ಸ್ವರೂಪಿಯಾಗಿರುತ್ತಿದ್ದ. ಫೋಟೋದಲ್ಲಿ ಇಷ್ಟಗಲ ಬೊಚ್ಚು ಬಾಯಗಲಿಸಿ ನಗುವ ಕನ್ನಡಕಧಾರಿ ಅರೆಬೆತ್ತಲೆ ಸಂತ ಸಾಕ್ಷಾತ್ ಸ್ವಯಂಪ್ರಭೆಯ ಸೂರ್ಯನಂತೆ ಮನದಂಗಳದಲ್ಲಿ ಬೆಳಗುತ್ತಿದ್ದ. ಅಜ್ಜಯ್ಯ ಭಾಗವತ ಹಾಗೂ ಪುರಾಣಗಳನ್ನು ಓದುವಾಗೆಲ್ಲ ಹೇಳುತ್ತಿದ್ದರು ಲೋಕಕಲ್ಯಾಣಕ್ಕಾಗಿ ಭಗವಂತ ಮತ್ತೆ ಮತ್ತೆ ಅವತರಿಸಿ ಬರುತ್ತಾನೆ. ಅವನದು ಈಗಾಗಲೆ ಒಂಬತ್ತು ಅವತಾರಗಳು ಮುಗಿದಿವೆ. ಕಲಿಯುಗದಲ್ಲಿ ಕಲ್ಕಿಯಾಗಿ ಉದ್ಭವಿಸುತ್ತಾನೆ. “ಸಂಭವಾಮಿ ಯುಗೆ ಯುಗೆ”.

ಅಲ್ಲಿಗೆ ಕಲ್ಕಿಯ ಅವತಾರ ಗಾಂಧಿಯೇ ಇರಬಹುದೆ? ಅದೆಷ್ಟು ಬಾರಿ ಈ ಕುರಿತಾಗಿ ನಾನು ಯೋಚಿಸಿದ್ದೆ. ಮನೆಯಲ್ಲಿ ಅಮ್ಮನ ಬಳಿ ಇದನ್ನು ಹೇಳಿದ್ದಾಗ, ಅವಳು ಫೋಟೋದಲ್ಲಿನ ಗಾಂಧಿಯಷ್ಟೆ ಇಷ್ಟಗಲ ಬಾಯಿಕಳೆದು ನಕ್ಕು ಬಿಟ್ಟಿದ್ದಳು. ಅದಕ್ಕಿಂತ ಅವಮಾನವಾಗಿದ್ದು ಆನಂತರ ಇದೇ ಕಥೆಯನ್ನು ಸಂಘಪರಿವಾರದ ಬೈಠಕ್ಕಿನಲ್ಲಿ ಹೇಳಿದ್ದಾಗ ಅಲ್ಲಿ ನಮಗೆ ಶಾಖೆ ಮಾಡಿಸುತ್ತಿದ್ದ ’ಜಿ’ ಒಬ್ಬರು ನಕ್ಕಿದ್ದ ಸಂದರ್ಭದಲ್ಲಿ.

ಆನಂತರ ಗಾಂಧಿ ಬೇರೆಯದೇ ಸ್ವರೂಪದಲ್ಲಿ ಅರ್ಥವಾಗತೊಡಗಿದ. ಗಾಂಧಿಯ ಪಕ್ಕದಲ್ಲಿ ಸೇರಿಸುತ್ತಿದ್ದ ’ಜಿ’ ಯನ್ನು ಕಿತ್ತುಹಾಕಿದ ಹಾಗೂ ಗಾಂಧಿಯ ಸಂಬೋಧನೆಯಲ್ಲಿ ಬಹುವಚನದ ಬದಲಿಗೆ ಏಕವಚನ ಬಳಸಿದ ದಿನಗಳವು. ಆಗ ಪ್ರಾಯಶಃ ನನಗೆ ಹನ್ನೆರಡು ವರ್ಷಗಳಿದ್ದಾವು. ಸ್ವಾತಂತ್ರ್ಯ ಸಂಗ್ರಾಮದ ಹೊಸ ಹೊಸ ಚರಿತ್ರೆಗಳ ಪರಿಚಯವಾಗತೊಡಗಿತ್ತಾಗ. ಪ್ರತಿನಿತ್ಯ ಬೈಠಕ್‌ಗೆ ತೆರಳುತ್ತಿದ್ದೆ. ಅಲ್ಲಿ ಭಗತ್ ಸಿಂಗ್, ಶಹೀದ್ ಉದ್ದಮ್ ಸಿಂಗ್, ಚಂದ್ರಶೇಖರ್ ಆಜಾದ್, ಭಟುಕೇಶ್ವರ್ ದತ್ತಾ, ಸುಖ್‌ದೇವ್, ರಾಜ್‌ಗುರು, ತಿಲಖ್, ಲಾಲಾಜಿ, ಬಿಪಿನ್ ಚಂದ್ರಪಾಲ್, ಹೀಗೆ ಅನೇಕ ಹೆಸರುಗಳ ಪರಿಚಯವಾಯಿತು. ಕೇವಲ ಹೆಸರುಗಳು ಮಾತ್ರವಲ್ಲ ಅದರ ಹಿನ್ನಲೆಯಲ್ಲಿ ಆವರೆಗೆ ಅಪರಿಚಿತವಾಗಿದ್ದ ಭಾರತ ಸ್ವತಂತ್ರ್ಯ ಕದನದ ರಕ್ತಸಿಕ್ತ ಅಧ್ಯಾಯಗಳ ಅಧ್ಯಯನ ಆರಂಭವಾಯಿತು. ದೇಶಕ್ಕೆ ಸ್ವತಂತ್ರ್ಯ ಬಂದಿದ್ದು ಕೇವಲ ಗಾಂಧಿಯ ಉಪವಾಸ ಸತ್ಯಾಗ್ರಹದಿಂದಲ್ಲ. ಮೊಂಡ ಬ್ರಿಟೀಶರೇನು ಸತ್ಯಾಗ್ರಹಕ್ಕೆ ಬಗ್ಗುವವರಾಗಿರಲಿಲ್ಲ. ಅಜಾದ್ ಹಿಂದ್ ಫೌಜ್ ಎನ್ನುವ ಸ್ವತಂತ್ರ್ಯ ಸೈನ್ಯ ಕಟ್ಟಿದ ಹಾಗೂ ಜಪಾನಿನಲ್ಲಿ ಭಾರತದ್ದೆ ಆದ ಒಂದು ಪರ್ಯಾಯ ಸರ್ಕಾರ ರಚನೆ ಮಾಡಿದ್ದ ಬಂಗಾಲಿ ಸುಭಾಷ್ ಬಾಬು ಕಥೆ ಕೇಳಿದ್ದ ದಿನ ನಿಜಕ್ಕೂ ಮೈನವಿರೇಳಿಸಿಕೊಂಡಿದ್ದೆ. ಬೋಸರ ಬದುಕಿನಾದ್ಯಂತ ಅವರನ್ನು ವಿರೋಧಿಸಿದ ಗಾಂಧಿ ಮೊತ್ತ ಮೊದಲ ಬಾರಿಗೆ ನನಗೆ ಬೇರೆಯದೇ ದೃಷ್ಠಿಯಲ್ಲಿ ಕಂಡಿದ್ದ. ಜಪಾನ್ ಹಾಗೂ ಬ್ರಹ್ಮ ದೇಶಗಳ ಬೆಂಬಲ ಪಡೆದುಕೊಂಡು ಸ್ವತಃ ದಂಡನಾಯಕನಾಗಿ ಇರಾವತಿ ನದಿ ತಟದಲ್ಲಿ ವೀರಾವೇಶದಿಂದ ಕಾದಿದ್ದ ಸುಭಾಷ್ ಚಂದ್ರ ಬೋಸ್ ಆಗ ನಿಜವಾದ ಹೀರೋ ಎನ್ನಿಸಿಕೊಂಡಿದ್ದರು. ಗಾಂಧಿಯ ಬದಲು ಕೃಷ್ಣನ ಹತ್ತನೆ ಅವತಾರ ಸುಭಾಷ್ ಬಾಬುವಿಗೆ ರೀಪ್ಲೇಸ್ ಆಗಿಬಿಟ್ಟಿತ್ತು. ಇಂಫಾಲ ಹಾಗೂ ಮಣಿಪುರದ ಬಳಿ ಬಂದುಬಿಟ್ಟಿದ್ದ ಸುಭಾಷರ ಅಜಾದ್ ಹಿಂದ್ ಫೌಜ್‌ನ ಮುಂದಿನ ನಡೆ ಚಲೋ ದಿಲ್ಲಿ ಎನ್ನುವುದನ್ನು ತಿಳಿದಾಗ ಸ್ವತಃ ಆಗಿನ ಬ್ರಿಟನ್ ವೈಸ್‌ರಾಯ್ ಮೌಂಟ್ ಬ್ಯಾಟನ್ ಸಹ ಬೆವತುಬಿಟ್ಟಿದ್ದನಂತೆ. ಮಾಸ್ಕೋಗೆ ತೆರಳುತ್ತಿದ್ದ ವಿಮಾನ ಅಪಘಾತದಲ್ಲಿ ಸುಭಾಷ್ ಮೃತರಾದರು ಎನ್ನುವ ಸಂಗತಿ ಅನೇಕ ಸಂಶಯಗಳ ಸುತ್ತಾ ಪ್ರವಹಿಸಿ ಆನಂತರವೂ ಅರ್ಥವೇ ಆಗದೆ ದ್ವಂದ್ವವಾಗಿ ಉಳಿದು ಹೋಯಿತು. ಕೊನೆಗೆ ಸುಭಾಷರ ಅಕಾಲಿಕ ಮೃತ್ಯು ಮಿಲಿಯನ್ ಡಾಲರ್ ಪ್ರಶ್ನೆಯಂತಾಗಿ ಉಳಿದು ಹೋಯಿತು. ಅದೇನೇ ಇದ್ದರೂ ಬದುಕಿದ್ದ ಸಂದರ್ಭದಲ್ಲಿ ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ ಮೈ ಹಣ್ಣಾಗಿಸಿ ಬಡಿದಾಡಿದ ಸುಭಾಷ್‌ರನ್ನು ಹೆಜ್ಜೆ ಹೆಜ್ಜೆಗೂ ವಿರೋಧಿಸಿದ್ದ ಗಾಂಧಿ ಮಾತ್ರ ನನ್ನ ದೃಷ್ಠಿಯಲ್ಲಿ ಪಾಪಿ ಜೀವಾತ್ಮನಾಗಿಬಿಟ್ಟಿದ್ದ. ತಪ್ಪು ತಪ್ಪಾಗಿ ಇತಿಹಾಸ ಬೋಧಿಸಿದ ಶಾಲೆಯ ಅಧ್ಯಾಪಕರಿಂದ, ಅಜ್ಜಿ ತಾತರವರೆಗೂ ಯಾರು ಯಾರು ಗಾಂಧಿಯನ್ನು “ಅವರ್ ಫಾದರ್ ಆಫ್ ನೇಷನ್” ಎಂದು ಸಮರ್ಥಿಸಿದ್ದರೋ ಅವರ ಮೇಲೆಲ್ಲ ಕೋಪ ತಾರಕಕ್ಕೇರಿಬಿಟ್ಟಿತು. ಗಾಂಧಿ, ನೆಹರೂ ಸೇರಿದಂತೆ ಯಾವ ಮಹಾಪುರುಷರುಗಳು ಪ್ರತಿ ವರ್ಷ ಸ್ವಾತಂತ್ರ್ಯೋತ್ಸವದಂದು ಭಾಷಣಗಳಿಗೆ ವಸ್ತುವಾಗುತ್ತಿದ್ದರೋ ಅವರುಗಳ ಮೇಲೆ ಏನೋ ಒಂದು ಬಗೆಯ ಅಸಹ್ಯ ಮೂಡತೊಡಗಿಬಿಟ್ಟಿತ್ತು. ಹೀಗೆ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಅಜ್ಞಾತವಾಗಿ ಉಳಿದಿದ್ದ ಕೆಲವು ಧ್ಯೇಯನಿಷ್ಠ ಹೋರಾಟಗಾರರ ಹೆಸರ ನಡುವೆ ಅದೊಂದು ಹೆಸರು ನನಗೆ ತಿಳಿಯದಂತೆ ಆಪ್ತವಾಗಿಬಿಟ್ಟಿತ್ತು. ವಿನಾಕಾರಣ ಆ ವ್ಯೆಕ್ತಿಯ ಮೇಲೆ ಅಭಿಮಾನ ಉಕ್ಕತೊಡಗಿತ್ತು. ಆ ಹೆಸರೇ “ನಾಥೋರಾಂ ವಿನಾಯಕ್ ಗೋಡ್ಸೆ”.

“ಯಾವ ಪುಣ್ಯನದಿಯ ತಟದಲ್ಲಿ ತಪಸ್ವಿಗಳು ಕುಳಿತು ಧ್ಯಾನ-ತಪವನ್ನಾಚರಿಸಿದ್ದರೋ, ಯಾವ ಪುಣ್ಯವಾಹಿನಿ ಅಖಂಡ ಭಾರತದ ಶ್ರೇಷ್ಠ ನದಿಯೆಂದು Mahatma-Gandhiಕರೆಸಿಕೊಂಡಿತ್ತೊ ಆ ಪರಮ ಪಾವನೆ ಸಿಂಧೂ ಪ್ರಸ್ತುತ ಪಾಕಿಸ್ತಾನದಲ್ಲಿ ಹರಿಯುತ್ತಿದ್ದಾಳೆ. ಎಂದು ಆ ನದಿ ಪುನಃ ಹಿಂದೂಸ್ತಾನದ ಧ್ವಜದಡಿಯಲ್ಲಿ ಹರಿಯತೊಡಗುತ್ತಾಳೋ ಅಂದು ನನ್ನ ಚಿತಾಭಸ್ಮವನ್ನು ಅದರಲ್ಲಿ ವಿಸರ್ಜಿಸಬೇಕು. ನನ್ನ ಮರಣ ಕಾಲದ ನಂತರವೂ ನನ್ನ ಚಿತಾಭಸ್ಮವನ್ನು ಶೇಖರಿಸಿಡಬೇಕು. ಮರಳಿ ಅಖಂಡಭಾರತ ರಚನೆಗೆ ಶತಮಾನಗಳು ಕಳೆದರೂ ಚಿಂತೆಯಿಲ್ಲ. ಆದರೆ ನನ್ನ ಆಸೆ ಈಡೇರಲೇಬೇಕು ಎನ್ನುವುದಾದರೆ ಮತ್ತೆ ಭಾರತ ಭೂಮಿ ಅಖಂಡತೆಯನ್ನು ಹೊಂದಬೇಕು.”-ಗೋಡ್ಸೆಯ ಈ ಅಂತಿಮ ಹೇಳಿಕೆ ಓದಿದ ದಿನದಿಂದಲೂ ಅವನಲ್ಲಿದ್ದ ದೇಶಭಕ್ತ ನನ್ನನ್ನು ಬಹುತೇಕ ಆವರಿಸಿಕೊಂಡಿದ್ದ. “ನಾನೇಕೆ ಗಾಂಧಿಯನ್ನು ಕೊಂದೆ”-ಎನ್ನುವ ಸ್ವತಃ ಗೋಡ್ಸೆ ಹೇಳಿಕೆಯನ್ನು ಕೇಳಿದ ನಂತರ ಹಾಗೂ ಅದರ ಕಡತಗಳನ್ನು ತಕ್ಕಮಟ್ಟಿಗೆ ಅಧ್ಯಯನ ಮಾಡಿದ ತರುವಾಯ ನನಗೇಕೋ ಗಾಂಧಿಯ ಬಗ್ಗೆ ತುಚ್ಛ ಭಾವ ಮೂಡತೊಡಗಿತ್ತು. ಯಾವುದೋ ಒಂದು ಹಂತದಲ್ಲಿ ಗಾಂಧಿ ಹತ್ಯೆ ಸಹ ಸಮಯೋಚಿತ ಹಾಗೂ ಅನಿವಾರ್ಯವಾಗಿತ್ತು ಎಂದು ಒಪ್ಪಿಕೊಳ್ಳುವ ಹಂತ ತಲುಪಿದ್ದಾಗ ನನಗೆ ಬಿಸಿರಕ್ತದ ತಾರುಣ್ಯ.

ಹಾಗಂತ ಗಾಂಧಿಯನ್ನು ಸಾರಾಸಗಟಾಗಿ ತಳ್ಳಿ ಹಾಕುವಂತಿಲ್ಲವಲ್ಲ. ಗಾಂಧಿಯ ಗ್ರಾಮ ಸ್ವರಾಜ್ಯ, ರಾಮರಾಜ್ಯದ ಕಲ್ಪನೆಗಳು, ಸೆಕ್ಯುಲರಿಸಂ ಧೋರಣೆ, ಆಧುನಿಕರಣವನ್ನು ವಿರೋಧಿಸುವ ನಿಲುವುಗಳು ಇತ್ಯಾದಿ ವಿಚಾರಗಳು ನಾವು ಎಷ್ಟೇ ಬೇಡವೆಂದರೂ ನಮ್ಮನ್ನು ಬಿಡಲಾರವು. ಭಾರತದಂತಹ ಬಹುಸಂಸ್ಕೃತಿ, ಬಹುಜನಾಂಗೀಯ ಹಾಗೂ ಬಹುಭಾಷೀಯ ರಾಷ್ಟ್ರದಲ್ಲಿ ಗಾಂಧಿ ಎಂದಿಗೂ ಪ್ರಸ್ತುತ. ಗಾಂಧಿ ಎನ್ನುವ ವ್ಯಕ್ತಿ ಕೇವಲ ಓರ್ವ ಐತಿಹಾಸಿಕ ಲೆಜೆಂಡ್ ಎನ್ನಿಸಿಕೊಳ್ಳಲಿಲ್ಲ, ಬದಲಿಗೆ ಈ ಎರಡು-ಮೂರು ತಲೆಮಾರುಗಳ ಜನತೆಗೆ ಎಂದಿಗೂ ಅರ್ಥವಾಗದ, ಅರ್ಥಮಾಡಿಕೊಳ್ಳಲೇಬೇಕಾದ ಸಂದಿಗ್ದ ದ್ವಂದ್ವವಾಗಿ ಉಳಿದು ಹೋಗಿಬಿಟ್ಟ ಎನ್ನುವ ವಿಷಯದಲ್ಲಿ ಯಾವುದೇ ಸಂದೇಹಗಳಿರಲಿಲ್ಲ. ಪ್ರತಿ ವರ್ಷವೂ ಗಾಂಧಿ ಅನೇಕ ವೇದಿಕೆಗಳಲ್ಲಿ ಚರ್ಚೆಗೆ ಬರುತ್ತಾನೆ. ಕೆಲವರು ಗಾಂಧಿ ವಿಚಾರಧಾರೆಯ ಪರವಾಗಿ ಇನ್ನೊಂದಷ್ಟು ಜನ ಅದರ ವಿರುದ್ದವಾಗಿ ದ್ವನಿಯೆತ್ತುತ್ತಾರೆ. ಒಂದಿಲ್ಲೊಂದು ವಿಶ್ವವಿದ್ಯಾನಿಲಯಗಳು ಗಾಂಧಿಯನ್ನು ಮರಳಿ-ಹೊರಳಿ ಅನ್ವೇಶಿಸುತ್ತಲೇ ಇವೆ. ನಿರಂತರ ಸಂಶೋಧನೆಗಳೂ ಸಾಗಿವೆ. ಅನೇಕ ವಿದ್ಯಾ ಕೇಂದ್ರಗಳಲ್ಲಿ ಗಾಂಧಿ ಎನ್ನುವ ವಿಷಯದ ಮೇಲೆಯೇ ಅಧ್ಯಯನ ಕೇಂದ್ರ ತೆರೆಯಲಾಗಿದೆ. ಇತಿಹಾಸದ ಕೆಲವು ಅವಿತಿದ್ದ ಸತ್ಯಗಳನ್ನು ಅರಿತ ನಂತರ ಉದ್ದೇಶಪೂರ್ವಕವಾಗಿ ಗಾಂಧಿಯನ್ನು ನಾನು ವಿರೋಧಿಸುವ ನಿರ್ಧಾರಕ್ಕೆ ಬಂದಿದ್ದೆ. ಅದಕ್ಕೆ ಸಂಬಂಧಿಸಿದಂತೆ ಒಂದಷ್ಟು ದಾಖಲೆಗಳನ್ನು, ಪುಸ್ತಕಗಳನ್ನು, ಇತಿಹಾಸದ ಹೊತ್ತಿಗೆಗಳನ್ನು ತಿರುಗಿಸತೊಡಗಿದ್ದೆ. ಕೊನೆಗೆ ಯಾವುದೇ ವೇದಿಕೆಯಲ್ಲಾದರೂ, ಯಾವ ಮಹಾ ಮೇಧಾವಿ ಬುದ್ದಿಜೀವಿಯ ಎದುರಲ್ಲಾದರೂ ನಿಂತು ವಾದ ಮಾಡಲು ಸಿದ್ದನಾಗತೊಡಗಿದ್ದೆ.

ಅದ್ಯಾವುದು ಗಾಂಧಿಯನ್ನು ನನ್ನ ಕನಸಿಗೆ ಕರೆತರಲಿಲ್ಲ. ಹೊಲಸೆದ್ದು ಹೋಗಿರುವ ವ್ಯವಸ್ಥೆಯ ಭ್ರಷ್ಟತಾಂಡವದ ನಡುವೆ ಸದ್ಯ ಗಾಂಧಿ ಸಹ ಅಪ್ರಸ್ತುತರೆನಿಸಿಕೊಂಡಿದ್ದಾನೆ. ತೀರ ಇತ್ತೀಚೆಗೆ ಒಂದು ಸಿನಿಮಾ ನೋಡಿದೆ. ಪ್ರಾಯಶಃ ಅದರ ನಿರ್ದೇಶಕರು ಮಣಿರತ್ನಂ ಎಂದೆನಿಸುತ್ತದೆ. ತಮಿಳಿನ ಮೇರು ನಟ ಕಮಲ್ ಹಸನ್ ನಾಯಕನಾಗಿದ್ದ ಅದರ ಹೆಸರು “ಹೇ ರಾಮ್”. ಗಾಂಧಿಯ ಹತ್ಯೆಯ ಸಂದರ್ಭವನ್ನು ಆಧಾರದಲ್ಲಿಟ್ಟುಕೊಂಡು ತಯಾರಿಸಿದ್ದ ಚಿತ್ರ. ದೇಶವಿಭಜನೆಯ ಸಂದರ್ಭದಲ್ಲಿ ಹಿಂದು ಮತ್ತು ಮುಸಲ್ಮಾನರ ನಡುವೆ ನಡೆದ ಮಾರಣ ಹೋಮ, ಕೊಲೆ, ಅತ್ಯಾಚಾರ ಇತ್ಯಾಧಿಗಳನ್ನು ಚಿತ್ರದಲ್ಲಿ ಮನೋಜ್ಞವಾಗಿ ಚಿತ್ರಿಸಲಾಗಿದೆ. ಚಿತ್ರದ ಮುಕ್ತಾಯ ಹೇಗೇ ಇರಲಿ, ಪೂರ್ವಾರ್ಧದ ಕಥೆ ಇಷ್ಟವಾಗಿ ಹೋಗಿತ್ತು. ಮತ್ತೆ ಮತ್ತೆ ಅದೇ ಚಿತ್ರವನ್ನು ನೋಡಿದೆ. ಗಾಂಧಿ ಹಾವಳಿಯಿಡಲು ಶುರುವಿಟ್ಟೇಬಿಟ್ಟ.

ನಮ್ಮಲ್ಲಿ ಬಹುತೇಕರಿಗೆ ದೇಶವಿಭಜನೆಯ ಹಿಂದಿನ ಚರಿತ್ರೆಯೇ ತಿಳಿದಿಲ್ಲ. ಪಾಕಿಸ್ತಾನ ಎನ್ನುವ ಕಲ್ಪನೆಗೆ ರೆಕ್ಕೆ ಮೂಡಿದ್ದು ಮುಸ್ಲಿಂ ಲೀಗ್‌ನ ಸ್ಥಾಪನೆಯಾದ ಕೆಲವೇ ಕಾಲದ ನಂತರ. ಬಹುಸಂಖ್ಯಾತ ಹಿಂದೂಗಳೊಂದಿಗೆ ಅಲ್ಪಸಂಖ್ಯಾತ ಮುಸಲ್ಮಾನರು ಬದುಕುವುದು ದುಸ್ತರ ಎನ್ನುವ ವಿಷ ಬೀಜವನ್ನು ಅದ್ಯಾರೋ ಪಾಪಿಗಳು ಬಿತ್ತಿದ್ದರು. ಹತ್ತೊಂಬತ್ತನೆಯ ಶತಮಾನದ ನಲ್ವತ್ತರ ದಶಕದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಖಚಿತವಾಗಿ ದೊರೆಯುತ್ತದೆ ಎನ್ನುವ ಸನ್ನಿವೇಶವೂ ಸೃಷ್ಠಿಯಾಗತೊಡಗಿತ್ತು. ಜೊತೆಗೆ ಗಾಂಧಿಯಂತಹ ಗಾಂಧಿಯೇ ಖಿಲಾಫತ್ ಆಂದೋಲನದಲ್ಲಿ ಮುಸಲ್ಮಾನರ ಪರವಾಗಿ ನಿಂತಿದ್ದೂ ಸಹ ಸ್ವತಂತ್ರ ಪಾಕಿಸ್ತಾನದ ಕನಸು ಹೊತ್ತಿದ್ದ ಕೆಲವು ಮುಸ್ಲಿಂ ನಾಯಕರಿಗೆ ಪೂರಕವಾಗಿ ಪರಿಣಮಿಸಿತ್ತು. ಬ್ಯಾರಿಸ್ಟರ್ ಮೊಹಮದ್ ಅಲಿ ಜಿನ್ನಾ ವಿಭಜನೆಯಾಗಲೇ ಬೇಕು ಎಂದು ಪಟ್ಟು ಹಿಡಿದಿದ್ದ. ಆದರೆ ಹಾವೂ ಸಾಯಬಾರದು ಕೋಲೂ ಮುರಿಯಬಾರದು ಎನ್ನುವ ಧೋರಣೆಯನ್ನು ಅನುಸರಿಸಿದ ಕಾಂಗ್ರೆಸ್ ಇದೇ ವಿಷಯವನ್ನು ಹಿಗ್ಗಾಮುಗ್ಗಾ ಎಳೆದಾಡಿದತು. ಗಾಂಧಿ ನೇರವಾಗಿ ವಿರೋಧಿಸಲೂ ಇಲ್ಲ, ಪರವಾಗಿ ಮುಕ್ತ ಮಾತನಾಡಲೂ ಇಲ್ಲ. ಇಂತಹ ಆಷಾಡಭೂತಿತನದಿಂದ ಕಲ್ಕತ್ತಾ, ಲಾಹೋರ್ ಪಂಜಾಬ್‌ಗಳಲ್ಲಿ ಭೀಕರ ಕೋಮುಗಲಭೆಗಳಾದವು. ಸತ್ತವರೆಷ್ಟೋ, ಗಾಯಗೊಂಡವರೆಷ್ಟೋ, ಮನೆ-ಮಠಗಳನ್ನು ಕಳೆದು ಬೀದಿಯಲ್ಲಿ ಬಿಕಾರಿಗಳಂತೆ ನಿಂತವರೆಷ್ಟೋ. ಅವರೆಲ್ಲರ ಒಕ್ಕೊರಲಿನ ಶಾಪ ಜಿನ್ನಾ ಮೇಲಿರಲಿಲ್ಲ, ಅದಿದ್ದಿದ್ದು ಗಾಂಧಿಯ ಮೇಲೆ.

ಪ್ರತಿ ಬಾರಿಯೂ ಒಂದಿಲ್ಲೊಂದು ಸ್ಥಳದಲ್ಲಿ ಕೋಮುಗಲಭೆಗಳಾದಾಗ ಗಾಂಧಿ ನೀಡುತ್ತಿದ್ದ ಹೇಳಿಕೆ ಒಂದೆ, ಹಿಂದೂ-ಮುಸಲ್ಮಾನ ಸಹೋದರರಂತೆ ಬದುಕಬೇಕು. mahatma_gandhi_in_type_by_dencii-d1ucmsiನೀವು ಹಿಂದೂಗಳು ನಿಮ್ಮ ಸಂಗಡ ಮುಸ್ಲೀಂ ಸಹೋದರರಿಗೂ ಬದುಕಲು ಅವಕಾಶ ಮಾಡಿಕೊಡಬೇಕು. ಒಂದು ಕಡೆ ಹಿಂದೂಗಳು ಕಗ್ಗೊಲೆಯಾಗತೊಡಗಿದ್ದರು. ಮನೆಗಳಿಗೆ ನುಗ್ಗುವ ಭಯೋತ್ಪಾದಕರು ಹೆಂಗಸರು, ಅಬಾಲ ಮಕ್ಕಳ ಮೇಲೆ ಅತ್ಯಾಚಾರವೆಸಗತೊಡಗಿದ್ದರು. ಇದಕ್ಕೆ ಪ್ರತಿಯಾಗಿ ಹುಟ್ಟಿಕೊಂಡ ಹಿಂದೂ ಸಂಘಟನೆಯೊಂದು ಸೇಡಿನ ಸರಣಿ ಮುಂದುವರಿಸುವ ಸಲುವಾಗಿ ಮುಸಲ್ಮಾನರನ್ನು ಗುರಿಯಾಗಿಸಿ ಕೊಲ್ಲುತ್ತಿತ್ತು. ರಸ್ತೆಗಳು ರಕ್ತದ ಓಕುಳಿಯಿಂದ ಕೆಂಪಾಗಿಬಿಟ್ಟಿದ್ದವು. ಊರಿಗೆ ಊರು ಸ್ಮಶಾನ ಸದೃಶ್ಯವಾಗಿತ್ತು. ಪ್ರತ್ಯಕ್ಷವಾಗಿಯಲ್ಲದಿದ್ದರೂ ತನ್ನ ಉದಾಸೀನ ಹಾಗೂ ಕಾರಣವೇ ಇಲ್ಲದ ಮೌನ ಧಾರಣೆಯಿಂದಾಗಿ ಪರೋಕ್ಷವಾಗಿ ಅದಕ್ಕೆಲ್ಲಾ ಕಾರಣವಾಗಿದ್ದ ವ್ಯೆಕ್ತಿಯ ಹೆಸರು ’ಬ್ಯಾರಿಸ್ಟರ್ ಮೋಹನ್‌ದಾಸ್ ಕರಮ್‌ಚಂದ್ ಗಾಂಧಿ’.

ಅಂದು ಗಾಂಧಿ ಒಂದು ಮಾತು ಹೇಳಿದ್ದರೂ ಸಾಕಿತ್ತು ಪಾಕಿಸ್ತಾನದ ಕಲ್ಪನೆ ಸಾಕಾರಗೊಳ್ಳುತ್ತಿರಲಿಲ್ಲ. ಅಥವಾ ಪಾಕಿಸ್ತಾನ ಸ್ವತಂತ್ರ್ಯ ರಾಷ್ಟ್ರವಾಗಿ ಘೋಷಣೆಯನ್ನಾದರೂ ಕೂಡಲೆ ಮಾಡಿದ್ದರೆ, ಅಮಾಯಕರ ಮೇಲಿನ ದೌರ್ಜನ್ಯ-ಹಿಂಸಾಚಾರಗಳನ್ನು ತಪ್ಪಿಸಬಹುದಿತ್ತು. ಮೊದಮೊದಲು ದೇಶವಿಭಜನೆಗೆ ಕಡುವಿರೋಧ ವ್ಯೆಕ್ತಪಡಿಸಿದ್ದ ಬಾಪೂ ಆನಂತರ ಹಿಂಸಾಚಾರ ಹೆಚ್ಚಾದ ಮೇಲೆಯೇ ಒಪ್ಪಿಗೆ ನೀಡಿದ್ದಂತೆ. ಈ ವಿಷಯಗಳು ದೇಶದ ಆಂತರಿಕ ಗೌಪ್ಯ ದಾಖಲೆಗಳ ಕಡತ-ಹೊತ್ತಿಗೆಗಳಿಂದಲೂ ನಾಪತ್ತೆಯಾಗಿಬಿಟ್ಟಿದ್ದವು. ಸ್ವಾತಂತ್ರ್ಯಾ ನಂತರ ಗಾಂಧಿ ಪರಾಕುಗಳ ಭರಾಟೆ ಗಾಂಧಿಪ್ರಭೆಯ ಸುತ್ತಮುತ್ತಲಿನ ಸ್ಪಷ್ಟ ಕಪ್ಪು ಅಪರಾಧಿ ಛಾಯೆಯನ್ನೂ ಮರೆಯಾಗಿಸಿಬಿಟ್ಟಿತ್ತು. ಅದು ಆನಂತರದ ಕೆಲವು ದಶಕಗಳ ನಂತರ ಹೊರಬಂದಿತಷ್ಟೆ. ಇತ್ತೀಚೆಗೆ ನಾನು ಅರ್ಥ ಮಾಡಿಕೊಂಡಿದ್ದ ಗಾಂಧಿ ಹೀಗಿದ್ದ.

ಹೀಗೆ ಗಾಂಧಿ ಎನ್ನುವ ಲೆಜೆಂಡ್ ಎನ್ನಿಸಿಕೊಳ್ಳುವ ಬೊಚ್ಚುಬಾಯಿಯ ಸಾಬರಮತಿಯ ಸಂತ ನನ್ನ ಕನಸಿಗೆ ನಿತ್ಯವೂ ಬಂದು ವೈಚಾರಿಕ ದಾಂಗುಡಿಯಿಡುತ್ತಿದ್ದಾನೆ ಎಂದು ಯಾರ ಬಳಿಯಾದರೂ ಹೇಳಿದರೆ ಕೂಡಲೆ ನನ್ನನ್ನು ಹುಚ್ಚಾಸ್ಪತ್ರೆಗೆ ಸೇರಿಸುತ್ತಾರೆ. ನನಗೆ ಅತೀವವಾಗಿ ಆಶ್ಚರ್ಯಕ್ಕೆ ಈಡು ಮಾಡಿರುವುದು, ಈ ಎರಡು ರಾತ್ರಿ ಕನಸಿನಲ್ಲಿ ನಾನು ಮತ್ತು ಗಾಂಧಿ ನಡೆಸಿದ ಸಂಭಾಷಣೆ, ಬೆಳಿಗ್ಗೆ ಎಚ್ಚರವಾದ ನಂತರವೂ ಸ್ಪಷ್ಟವಾಗಿ ನೆನಪಿನಲ್ಲಿ ಉಳಿದಿದೆ ಎನ್ನುವುದು. ಇವತ್ತು ಮೂರನೆಯ ದಿನ. ಇವತ್ತೂ ಸಹ ಗಾಂಧಿಯ ಬಗ್ಗೆ ಇಷ್ಟೆಲ್ಲಾ ಯೋಚಿಸಿದ್ದೇನೆ. ಅಲ್ಲಿಗೆ ಮತ್ತೆ ಗಾಂಧಿ ರಾತ್ರಿ ಕನಸಿನಲ್ಲಿ ಪ್ರತ್ಯಕ್ಷವಾಗುವುದು ಶತಃಸಿದ್ದ. ನಿನ್ನೆ, ಮೊನ್ನೆ ನಮ್ಮ ಮಾತುಕತೆಗೆ ಒಂದು ಸ್ಪಷ್ಟ ತಾರ್ಕಿಕ ಅಂತ್ಯ ದೊರೆತಿರಲಿಲ್ಲ. ಇಂದಿಗೆ ಮುಗಿಸಲೇಬೇಕು ಈ ವಿಚಾರವನ್ನು ಎನ್ನುವ ನಿರ್ಧಾರವಂತೂ ಮಾಡಿಬಿಟ್ಟಿದ್ದೆ. ಅದಾಗಲೆ ರಜನಿಯ ಕತ್ತಲ ಕವಳ ಪಸರಿಸಿಬಿಟ್ಟಿತ್ತು. ಯೋಚಿಸುತ್ತಲೆ ತಾಸುಗಟ್ಟಲೆ ಕಳೆದುಬಿಟ್ಟಿದ್ದೆ. ಅಮ್ಮ ಊಟಕ್ಕೆ ಬಡಿಸಿದ್ದೇನೆ ಎಂದು ಮೂರು ಬಾರಿ ಕರೆದು ಹೋಗಿದ್ದಳು. ಹೊಟ್ಟೆಯಲ್ಲಿ ಹಸಿವಿನ ಪೀಕಲಾಟ ಕಾಣಿಸಿತು. ಗಾಂಧಿ ನನ್ನ ಮನಸ್ಸನ್ನು ಹಾಗೆ ಯರ್ರಾಬಿರ್ರಿ ಹಾಳು ಮಾಡಿದ್ದರ ಫಲವೋ ಏನೋ ಈ ಎರಡು ದಿನಗಳಿಂದ ಸರಿಯಾಗಿ ಉದರಪೋಷಣೆಯನ್ನೇ ಮಾಡಿರಲಿಲ್ಲ. ಇಂದೇ ಗಾಂಧಿಯ ವಿಷಯವನ್ನು ಕೊನೆಯಾಗಿಸಬೇಕು ಎಂದು ಗಟ್ಟಿನಿರ್ಧಾರ ತೆಗೆದುಕೊಂಡ ಸಂಭ್ರಮದೊಂದಿಗೆ ಪುಷ್ಕಳ ಭೋಜನವೂ ಆಯಿತು. ಆತುರಾತುರದಲ್ಲಿಯೇ ಹಾಸಿಗೆಗೆ ಮಗ್ಗುಲಾನಿಸಿದೆ. ನಿದ್ರೆ ಮಾಡಬೇಕು, ಆದರೆ ನಿದ್ರೆ ಗಾಢವಾಗಬಾರದು, ನಿದ್ರೆ ನಿದ್ರೆಯಂತಿರಬಾರದು. ಇಂದು ಗಾಂಧಿಯೊಂದಿಗೆ ನನ್ನ ಅಂತಿಮ ಸಂಭಾಷಣೆ. ಇವತ್ತಿಗೆ ಗಾಂಧಿ ಯೋಚನೆ ಮುಗಿಯಬೇಕು, ಆತ ನನ್ನ ಚಿಂತನೆಯಿಂದ ದೂರ ಸರಿಯಬೇಕು. ಭವಿಷ್ಯದಲ್ಲಿ ಇನ್ಯಾವತ್ತಿಗೂ ಆ ವ್ಯೆಕ್ತಿಯ ಹೆಸರು ತೆಗೆಯಬಾರದು ಅದಕ್ಕಾಗಿಯಾದರೂ ಇಂದು ಗಾಂಧಿ ಬರಬೇಕು ಮಾತಿಗೆ. ಅಸಲಿಗೆ ಗಾಂಧಿ ಇಂದು ನನ್ನ ಕನಸಿನಲ್ಲಿ ನಿಜವಾಗಿಯೂ ಬರುತ್ತಾನಾ? ಸ್ಪಷ್ಟತೆಯಂತೂ ಇರಲಿಲ್ಲ.

ಮಲಗಿದ ನಂತರ ಬಹಳ ಹೊತ್ತು ಮಗ್ಗುಲು ಹೊರಳಿಸುತ್ತಲೇ ಇದ್ದೇ. ನಿನ್ನೆ ಮೊನ್ನೆಯೆಲ್ಲ, ಪುಣ್ಯಾತ್ಮ ಗಾಂಧಿ ಮಲಗಿದ ಕೂಡಲೆ ಸ್ವಪ್ನದಲ್ಲಿ ಪ್ರತ್ಯಕ್ಷನಾಗುತ್ತಿದ್ದವನು ಇಂದೇಕೋ ಬಹಳ ಹೊತ್ತು ಸತಾಯಿಸಿದ. ಆದರೂ ಗಾಂಧೀ ಬರಲೇಬೇಕಿತ್ತು. ಬಂದೇ ಬರುತ್ತಾನೆ ಎನ್ನುವ ನಂಬಿಕೆಯಿಂದಲೇ ವಿಧಿಯಿಲ್ಲದೆ ಅತ್ತಿತ್ತ ಹೊರಳುತ್ತಲೇ ಇದ್ದೆ. ವಿರೋಧಿ ಭಾವನೆಯಿದ್ದರೂ ವಿನಾಕಾರಣ ಗಾಂಧಿ ನಿರೀಕ್ಷಣೆಯಲ್ಲಿ ಕಾಯುತ್ತಿದ್ದ ನನ್ನ ಮನಃಸ್ಥಿತಿ ನನಗೆ ಆಶ್ಚರ್ಯ ಮೂಡಿಸತೊಡಗಿತ್ತು. ಸುಮಾರು ಗಂಟೆ ಹನ್ನೆರಡಾಗಿತ್ತು ಎನಿಸುತ್ತದೆ. ಗಾಂಧಿಯ ಜಪ ಮಾಡುತ್ತಲೆ ನಿಧಾನವಾಗಿ ನಿದ್ರಾದೇವಿಯ ತೆಕ್ಕೆಗೆ ಜಾರಿದೆ. ಲಘುವಾಗಿ ಸ್ವಪ್ನ ಸಂಚಾರದ ಹೆಜ್ಜೆಗಳನ್ನಿಡುತ್ತಾ ವಾರ್ಮ್ ಅಪ್ ಆಗುತ್ತಿದ್ದೆ. ಮನೆಯ ಮಾಳಿಗೆಯ ಖಾಲಿ ಜಾಗದಲ್ಲಿ ವರಚ್ಚಾಗಿ ನಿಂತಿದ್ದ ಆಳೆತ್ತರದ ಪುರಾನಾ ಜಮಾನದ ಗಡಿಯಾರ ಟಣ್ ಎಂದು ಬಾರಿಸಿದ ಸದ್ದಾಯಿತು. ಆ ಗಡಿಯಾರದ ಮೇಲ್ಮುಖದಲ್ಲಿಯೂ ಗಾಂಧಿಯ ಭಾವಚಿತ್ರವಿರುವುದು ಈಗ ಅಪ್ರಸ್ತುತವೆನಿಸುವಂತಹ ಕಾಕತಾಳೀಯ.

ಹನ್ನೆರಡು ಗಂಟೆಯ ನನ್ನ ಪಾಲಿನ (ಅ?)ಶುಭ ಮಹೂರ್ತದಲ್ಲಿ ಗಾಂಧಿಯ ಆಗಮನವಾಯಿತು. ಮೊದಲಿಗೆ ಕೋಲಿನ ಕಟ್ ಕಟ್ ಶಭ್ದ, ಆನಂತರ ಗಾಂಧಿ ಮೆಟ್ಟಿದ್ದ ಚರ್ಮದ ಚಪ್ಪಲಿಯ ಪಟ್-ಪಟ್ ಸದ್ದು. ಅಸ್ಪಷ್ಟವಾಗಿ ಕಾಣಿಸುತ್ತಿದ್ದ ಬಿಳಿಯ ಧೋತಿ, ಚಕ್ಕಡ-ತೊಗಲು ಮಾತ್ರ ತುಂಬಿದ್ದ ಎದೆ, ಬೋಳು ತಲೆ, ಅದೇ ನಿರ್ವಿಕಾರದ ಲೋಕಪ್ರಸಿದ್ದ ಬೊಚ್ಚುಬಾಯಿ. “ಬಾ ತಂದೆ ನಿನ್ನನ್ನೆ ಕಾಯುತ್ತಿದ್ದೆ” ಎಂದೆ.

“ಹ್ಹ ಹ್ಹ ಹ್ಹ…ನೀನು ನನ್ನ ಹಾದಿ ಕಾಯುವಂತಾಗಿದ್ದು ನನ್ನ ಸುಕೃತ.” ಕೊಂಕಿಸಿ ಮಾತನಾಡಿದ ಗಾಂಧಿ.

“ವ್ಯಂಗ್ಯ ಬೇಡ ಬಾಪೂ, ನನಗೆ ಇಂದಿಗೆ ಕೆಲವು ಸಂಶಯಗಳು, ದ್ವಂದ್ವಗಳು ನಿವಾರಣೆಯಾಗಲೇಬೇಕಿವೆ. ನಿನ್ನೆ ಮೊನ್ನೆ ಮಾತನಾಡಿದ ಹಾಗೆ ಅಡ್ಡಗೋಡೆಯ ಮೇಲೆ ದೀಪವಿಡುವ ಮಾತನಾಡಬೇಡ. ನೇರವಾದ ಮಾತು, ನಿಖರವಾದ ನಿನ್ನ ಅಂತರಂಗ ನನಗಿಂದು ತಿಳಿಯಬೇಕು. ಇವತ್ತಿಗೆ ನನ್ನ ನಿನ್ನ ಸಂಬಂಧ ಮುಗಿಯುತ್ತದೆ. ಇನ್ನು ಮೇಲೆ ಅಪ್ಪಿತಪ್ಪಿಯೂ ನಿನ್ನ ವಿಚಾರ ಎತ್ತಲಾರೆ. ಅದು ಒಳ್ಳೆಯದೂ ಕೆಟ್ಟದ್ದೋ, ನಿನ್ನ ಪರವಾಗಿಯೂ ಮಾತನಾಡಲಾರೆ, ವಿರುದ್ಧವಾಗಿಯೂ ಮಾತನಾಡಲಾರೆ. ನಿನ್ನನ್ನು ಸಮರ್ಥಿಸುವುದೂ ಇಲ್ಲ, ವಿರೋಧಿಸುವುದೂ ಇಲ್ಲ. ನನ್ನ ಚಿಂತನಾ ಪರಿಧಿಯಲ್ಲಿ ಇನ್ನು ಮುಂದೆ ಗಾಂಧಿ ವಿಚಾರಧಾರೆಗೆ ಜಾಗವಿಲ್ಲ. ಇವತ್ತಿನ ಸಂಭಾಷಣೆ ನಮ್ಮ ಕೊನೆಯ ಸಂಭಾಷಣೆಯಾಗಬೇಕು. ಹಾಗೆ ಇವತ್ತಿನ ಸಂಭಾಷಣೆಯನ್ನೂ ಮರೆತು ಬಿಡುತ್ತೇನೆ. ಆದರೆ ಅದೆಲ್ಲದಕ್ಕೂ ಮೊದಲು ನನಗೆ ಒಂದಷ್ಟು ಸ್ಪಷ್ಟೀಕರಣ ಬೇಕಿದೆ. ನಿನ್ನನ್ನು ಆರಾಧಿಸುವ, ಪೂಜಿಸುವ, ನೀನೆ ಸರಿ ಎಂದು ವರ್ಣಮಯವಾಗಿ ವೇದಿಕೆಗಳಲ್ಲಿ ಹೊಗಳುವ ಬುದ್ದಿಜೀವಿಗಳ ವಾದ ಸತ್ಯವೋ? ಅಥವಾ ತಕ್ಕಮಟ್ಟಿಗೆ ಇತಿಹಾಸವನ್ನೂ, ಅದರ ಕರಾಳ ಸತ್ಯಗಳನ್ನು ತಿಳಿದುಕೊಳ್ಳುತ್ತಿರುವ ಮತ್ತು ನಿನ್ನ ಬಗ್ಗೆ ಅಧ್ಯಯನ ಮಾಡಿರುವ ನನ್ನ ಲಾಜಿಕ್ ಸತ್ಯವೋ? ಇವತ್ತಿಗೆ ಇದು ನನಗೆ ತಿಳಿಯಬೇಕಿದೆ.” ನೇರವಾಗಿ ಪ್ರಸ್ತಾಪ ಮಂಡಿಸಿದೆ.

ನಿಧಾನವಾಗಿ ಮಂಚದೆಡೆಗೆ ನೆಡೆದು ಬಂದ ಆ ವೃದ್ದ, ಮಂಚದ ಪಕ್ಕದಲ್ಲಿದ್ದ ಖುರ್ಚಿಯನ್ನು ಪ್ರಯಾಸಪಟ್ಟು ಎಳೆದು ಕುಳಿತುಕೊಂಡ. ಖೇದವೆನಿಸಿತು. ಗಾಂಧಿ ಏನೇ ಮಾಡಿದ್ದರೂ ಪಾಪ ಜೀವ ತನಗಾಗಿ ಏನೂ ಮಾಡಿಕೊಳ್ಳಲಿಲ್ಲ. ದೇಶಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಲೆಕ್ಕವಿಲ್ಲದಷ್ಟು ಬಾರಿ ಒಂದು ಹನಿ ನೀರೂ ಕುಡಿಯದೆ ಉಪವಾಸ ಕುಳಿತುಕೊಂಡಿದ್ದ ಹಾಗೂ ಯಾವುದೇ ಪ್ರತಿಫಲವನ್ನು ಬಯಸಿರಲಿಲ್ಲ. ಸಾಕಷ್ಟು ವಯಸ್ಸಾಗಿದೆ. ದೇಹ ಮುದಿ ಬಿದ್ದಿದೆ, ಹಲ್ಲುಗಳು ಉದುರಿವೆ, ತನು ಬಾಗಿದೆ. ಚರ್ಮ ಸುಕ್ಕುಗಟ್ಟಿದೆ. ಒಂದು ಕ್ಷಣ ಸಹಾನುಭೂತಿ ವ್ಯಕ್ತವಾಯಿತು. ಅದರ ಹಿಂದೆಯೇ ಕಷ್ಟ ಪಟ್ಟು ಮನಸ್ಸನ್ನು ಕಲ್ಲಾಗಿಸಿಕೊಂಡೆ.

ಕುಳಿತ ನಂತರ ನಿಧಾನ ಉಸಿರು ಬಿಟ್ಟು ಸಾವಕಾಶವಾಗಿ “ಹೇಳು ಮಗು, ನಿನ್ನಂತೆ ಇನ್ನೂ ಅನೇಕರಿಗೆ ನನ್ನ ಬಗೆಗೆ ಅಗಣಿತ ಸಂಶಯಗಳು ಕಾಡಿವೆ, ಕಾಡುತ್ತಲೇ ಇವೆ, ಮುಂದೆಯೂ ಕಾಡುತ್ತಲೇ ಇರುತ್ತವೆ. ನನಗೂ ನನ್ನ ನಿರ್ಧಾರಗಳನ್ನು, ಧ್ಯೇಯ-ಸಿದ್ದಾಂತ ಹಾಗೂ ವೈಚಾರಿಕತೆಯ ನಿಲುವನ್ನು ಸಮರ್ಥಿಸಿಕೊಳ್ಳುವ ಇಂತಹ ಅವಕಾಶ ದೊರಕುವುದು ವಿರಳ. ನಿನ್ನ ಎಲ್ಲಾ ಪ್ರಶ್ನೆಗಳಿಗೂ ನಾನು ಉತ್ತರಿಸಲು ಸಿದ್ದ. ನನಗೆ ಯಾವ ಹಿಂಜರಿಕೆಯೂ ಇಲ್ಲ, ಭಯವೂ ಇಲ್ಲ, ಲಜ್ಜೆಯೂ ಇಲ್ಲ. ಪ್ರಾರಂಭಿಸು.”

ಗಾಂಧಿಯ ಒಪ್ಪಿಗೆ ದೊರೆತ ಸಂಭ್ರಮದಲ್ಲಿ ಒಂದೇ ಉಸಿರಿನಲ್ಲಿ ಆರಂಭಿಸಿಬಿಟ್ಟೆ. “ಸ್ವಾತಂತ್ರ್ಯ ಹೋರಾಟ ನಿನ್ನ ಕೈ ಮುಷ್ಠಿಯಲ್ಲಿ ಉಳಿಯಬೇಕೆಂದು ಏಕೆ ಬಯಸಿದೆ ನೀನು? ಹೋರಾಟದ ರೂಪುರೇಷೆ ನಿನ್ನ ಸಾಬರಮತಿ ಆಶ್ರಮದಲ್ಲಿಯೇ ನಿರ್ಧರಿತವಾಗಬೇಕು, ಹೋರಾಟಗಾರರು ನಿನ್ನ ಹಾದಿಯಲ್ಲಿಯೇ ಸಾಗಬೇಕು, ನಿನ್ನ ಮಾತೆ ಅಂತಿಮವಾಗಬೇಕು ಎಂದು ನೀನೇಕೆ ಅಪೇಕ್ಷಿಸುತ್ತಿದ್ದೆ? ಆಮೆಲೆ… ” ಇನ್ನೂ ನನ್ನ ಪ್ರಶ್ನೆಗಳು ಬಾಕಿಯಿತ್ತು. ಗಾಂಧಿ ಮುಗುಳುನಗುತ್ತಾ ತಲೆಯಾಡಿಸಿ ಕೈ ಎತ್ತಿ ನಿಲ್ಲಿಸುವಂತೆ ಸೂಚಿಸಿದ. ನಾನು ನಿಲ್ಲಿಸಿದೆ.

“ಅರೆ ಬಚ್ಚೆ, ಇತನಾ ಜಲ್ದಿ ಕ್ಯೂ? ನೀನಿಷ್ಟು ಅವಸರಿಸಿದರೆ ನನಗೆ ಉತ್ತರಿಸಲು ಕಷ್ಟವಾಗುತ್ತದೆ. ಒಂದು ವೇಳೆ ಉತ್ತರಿಸಿದರೂ ಅದು ನಿನಗೆ ಅರ್ಥವಾಗುವುದಿಲ್ಲ. ಕೊಂಚ ನಿಧಾನಿಸು. ಸಾವಕಾಶವಾಗಿ ಒಂದೊಂದಾಗಿ ಪ್ರಶ್ನೆಗಳನ್ನು ಕೇಳು. ನನಗೆ ಗೊತ್ತಿದೆ ನೀನು ಈ ಇಡೀ ದಿನ ನನಗೆ ಕೇಳಬೇಕಾದ ಪ್ರಶ್ನೆಗಳನ್ನು ಸಿದ್ದಪಡಿಸಿಕೊಂಡು ಪೂರ್ವತಯಾರಿಯನ್ನೂ ಮಾಡಿಕೊಂಡಿದ್ದೀಯ.” ನಗುತ್ತಲೆ ಗಾಂಧಿ ಹೇಳಿದ.

ಸತ್ತವರು ದೇವರಾಗುತ್ತಾರಂತೆ. ದೇವರಿಗೆ ಮಾತ್ರ ಮನುಷ್ಯರ ಮನಸ್ಸು ಅರ್ಥವಾಗುತ್ತದೆ. ಈ ಗಾಂಧಿಯೂ ದೇವರಾಗಿರಬಹುದೇ? ತಕ್ಷಣ ಆಲೋಚನೆ ಬಂದಿತಾದರೂ ಹಿಂದೆಯೇ ನಗುವೂ ಬಂದಿತು.

ಅರೆನಿಮಿಷ ಸುಮ್ಮನಿದ್ದ ಗಾಂಧಿ ಉತ್ತರಿಸತೊಡಗಿದ. “ಮೊದಲಿಗೆ ನಿನಗೆ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಬೇಕಿದೆ. ನಾನು ಅಹಿಂಸಾ ಮಾರ್ಗ ಹಾಗೂ ಸತ್ಯಾಗ್ರಹದಲ್ಲಿ ನಂಬಿಕೆಯಿಟ್ಟವನು. ನನ್ನ ದಾರಿ ಅದಾಗಿತ್ತು. ಹಿಂಸೆಗಿಂತ ಶಾಂತಿ, ಸಹನೆ ಹಾಗೂ ವಿವೇಕ ಉತ್ತಮ ಎಂದು ಸದಾ ನನ್ನ ಮಾತಿನಲ್ಲಿ ಹೇಳುತ್ತಿದ್ದೆ. ಪ್ರತಿಭಟನೆ, ಹರತಾಳಗಳು ಶಾಂತಿಯುತವಾಗಿ ಸಾಗಬೇಕು ಎನ್ನುವುದು ನನ್ನ ಮನೋಭಿಲಾಷೆಯಾಗಿತ್ತು ಅಷ್ಟೆ. ನಾನು, ಗುರುದೇವ ರವೀಂದ್ರನಾಥ ಟ್ಯಾಗೋರ್, ವಿವೇಕಾನಂದರು ಸಮಕಾಲೀನರು ಎನ್ನುವುದು ನಿನಗೆ ತಿಳಿದಿರಬಹುದು. ನಮ್ಮ ಮೂವರ ದೃಷ್ಠಿಕೋನವೂ ಒಂದೇ ಆಗಿತ್ತು. ವಿಶ್ವದ ಸರ್ವ ಮಾನವರಲ್ಲಿಯೂ ಮಾನವತೆಯನ್ನು ಮೂಲಭಾವವನ್ನು ಹುಟ್ಟುಹಾಕಬೇಕು ಎಂದು ನಾವು ಬಯಸಿದ್ದೆವು. ಪಾಶ್ಚಿಮಾತ್ಯ ಭಾಗದ ಕೆಲವು ಮೇಧಾವಿಗಳ ಅಭಿಪ್ರಾಯವೂ ಇದೇ ಆಗಿತ್ತು. ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟಿನ್, ಸುಪ್ರಸಿದ್ದ ನಟ ಚಾರ್ಲಿ ಸ್ಪೆನ್ಸರ್ ಚಾಪ್ಲಿನ್, ಇನ್ನೂ ಅನೇಕರಿದ್ದರು. ಅವರೆಲ್ಲರ ಮತ್ತು ನನ್ನ ಮಧ್ಯೆ ಉತ್ತಮ ಸಂಬಂಧವಿತ್ತು ಎನ್ನುವ ಹಿಂದೆ ಇದ್ದ ಕಾರಣ ನನ್ನ ಅಹಿಂಸಾತ್ಮಕ ಹಾಗೂ ಶಾಂತಿಪ್ರಧಾನ ಧೋರಣೆಯೇ ಆಗಿತ್ತು. ನಾನು ನನ್ನ ಹೋರಾಟದ ಬದುಕಿನಲ್ಲಿ ಎಂದಿಗೂ ಯಾರೂ ನನ್ನ ಹಾದಿಯಲ್ಲೆ ಸಾಗಬೇಕು ಎಂದು ಬಯಸಿರಲಿಲ್ಲ. ನನ್ನನ್ನು ಒಪ್ಪಲೇಬೇಕು ಎಂದೂ ನಿರೀಕ್ಷಿಸಿರಲಿಲ್ಲ. ಆದರೆ ಹೋರಾಟಗಾರರು ಯಾರೇ ಆಗಿರಲಿ ಅವರ ಮಾರ್ಗಗಳು ಯಾವುದೇ ಆಗಿರಲಿ ಅವರ ಪ್ರಥಮ ಆದ್ಯತೆ ಶಾಂತಿ, ಸಂಯಮ ಹಾಗೂ ಅಹಿಂಸೆಯಾಗಿರಬೇಕು ಎನ್ನುವುದು ನನಗಿದ್ದ ಆಸೆಯಾಗಿತ್ತು.”

“ಸರಿ; ಹಾಗಿದ್ದರೆ ನೀನು ಸುಭಾಷ್ ಬಾಬುವಿನ ವಿರುದ್ದ ಹೇಳಿಕೆಗಳನ್ನೇಕೆ ನೀಡುತ್ತಿದ್ದೆ. ಬೊಸ್‌ರ ಕಾರ್ಯಾಚರಣೆಯ ವಿರುದ್ದ ಹರಿಜನ ಪತ್ರಿಕೆಯಲ್ಲಿ ಸಂಪಾದಕೀಯ ಏಕೆ ಬರೆಯುತ್ತಿದ್ದೆ?” ನಾನು ಸಮಾಧಾನದಲ್ಲೆ ಕೇಳಿದೆ.

“ಮಗು. ಇತಿಹಾಸ ಎನ್ನುವುದು ಇದೆಯಲ್ಲ ಅದು ಯಾವತ್ತಿಗೂ ಅರ್ಥವಾಗದ ಸಂಕೀರ್ಣ ದಾಖಲೆಗಳ ಸಮೂಹ. ನೀನು ಓದುವುದು ಒಂದಾದರೆ ಅದು ಅರ್ಥವಾಗುವ ಬಗೆ ಇನ್ನೊಂದು ತರ. ಇದರ ನಡುವೆ ಜರುಗಿರುವ ಇತಿಹಾಸವೇ ಬೇರೆಯದ್ದಾಗಿರುತ್ತದೆ. ಅದನ್ನು ಬರೆಯುವವರು ಒಂದಷ್ಟು ತಿರುಚುತ್ತಾರೆ. ಆಮೇಲೆ ಆ ತಿರುಚಲ್ಪಡುವ ಮೂಲ ಇತಿಹಾಸವನ್ನು ಬರೆಯುವಾತ ತನ್ನ ಸ್ವಂತಿಕೆಯನ್ನು ಬಳಸಿಕೊಂಡು ಇನ್ನೊಂದಷ್ಟು ತಿರುಚುತ್ತಾನೆ. ಈಗ ನೀನು ಅರ್ಥಮಾಡಿಕೊಂಡಿರುವ ಹಾಗೂ ಚಿಂತಿಸುತ್ತಿರುವ ದಾಟಿಯಿದೆಯಲ್ಲ ಅದು ಮೂಲ ಇತಿಹಾಸದಿಂದ ಬಹುಪಾಲು ರೂಪಾಂತರಗೊಂಡು ಮಾರ್ಪಾಡಾಗಿರುವ ಸರಕು ಅಷ್ಟೆ. Mahatma-artಇದರ ಅಷ್ಟೂ ಕರ್ಮ ಹಾಗೂ ಶ್ರೇಯ ನಿಮ್ಮ ದೊಡ್ಡ ದೊಡ್ಡ ವಿಶ್ವವಿದ್ಯಾನಿಲಯಗಳ ಮಹಾ ಮೇಧಾವಿ ಪ್ರೊಫೆಸರ್‌ಗಳಿಗೆ ಸಲ್ಲಬೇಕು. ನೋಡು ಸತ್ಯ ಹೇಳುತ್ತಿದ್ದೇನೆ, ಮಾತೃಭೂಮಿಯ ಬಿಡುಗಡೆಗಾಗಿ ಸುಭಾಷ್ ಬಾಬುವಿನ ಆಂತರಿಕ ತುಡಿತ ಇತ್ತಲ್ಲ ಅದನ್ನು ಒಂದಲ್ಲ ನೂರು ಬಾರಿ ಪ್ರಾಮಾಣಿಕವಾಗಿ ಮೆಚ್ಚಿದ್ದೇನೆ. ಬಾ ಬಳಿ ಈ ಬಗ್ಗೆ ಅನೇಕ ಬಾರಿ ಪ್ರಸ್ತಾಪಿಸಿದ್ದೇನೆ. ನಮ್ಮ ಸಾಬರಮತಿ ಆಶ್ರಮ ಇತ್ತಲ್ಲ, ಅಲ್ಲಿ ವಿದೇಶಿ ಪದ್ದತಿಗಳಿಗೆ ಅವಕಾಶವಿರಲಿಲ್ಲ. ವಿದೇಶಿ ಪದ್ದತಿಗಳೆಂದರೆ ಧೂಮಪಾನ, ಮಧ್ಯಪಾನ, ಚಹಾ ಸೇವನೆ, ವಿದೇಶಿ ವಸ್ತ್ರಗಳು-ಉಡುಗೆ ತೊಡುಗೆ ಇತ್ಯಾಧಿ. ನಮ್ಮ ಆಶ್ರಮದಲ್ಲಿ ಕೆಲವು ಪದ್ದತಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿತ್ತು. ನೀವು ನನ್ನ ಹಿಂಬಾಲಕರು, ಅನುಯಾಯಿಗಳೆಂದು ಕರೆಯುತ್ತೀರಲ್ಲ ಅಂತಹ ರಾಜಾಜಿ, ಸರ್ದಾರ್ ಪಟೇಲರು, ಆಚಾರ್ಯ ಕೃಪಲಾನಿ, ಜವಾಹರ ಇವರಿಗೂ ಈ ನಿಯಮಗಳು ಅನ್ವಯವಾಗುತ್ತಿತ್ತು. ಜವಾಹರನಂತೂ ಆಶ್ರಮಕ್ಕೆ ಬರಲು ಪ್ರಾರಂಭಿಸಿದ ಮೇಲೆಯೇ ಖಾದಿ ವಸ್ತ್ರಗಳನ್ನು ತೊಡಲು ಶುರು ಮಾಡಿದ್ದ. ಅಂತಹದರಲ್ಲಿ ಈ ಎಲ್ಲಾ ನಿಯಮಗಳನ್ನು ನಾನು ಒಬ್ಬ ವ್ಯಕ್ತಿಗೆ ಮಾತ್ರ ಅನ್ವಯಿಸಿರಲಿಲ್ಲ. ಸಡಿಲಿಸಿದ್ದೆ. ಮತ್ತು ಆ ವ್ಯಕ್ತಿ ಅಷ್ಟೇನೂ ನನ್ನ ಆತ್ಮೀಯ ವಲಯದಲ್ಲಯೂ ಇರಲಿಲ್ಲ. ಅನುಭವದಲ್ಲಿ ಹಾಗೂ ವಯಸ್ಸಿನಲ್ಲಿ ಆತ ನನಗಿಂತ ಚಿಕ್ಕವನು. ಆ ವ್ಯಕ್ತಿ ಯಾರು ಗೊತ್ತೆ? ಬಂಗಾಳಿ ಸುಭಾಷ್ ಚಂದ್ರ ಬೋಸ್. ಸಾಬರಮತಿಗೆ ಆತ ಮೊದಮೊದಲು ವಿದೇಶಿ ಸೂಟು ತೊಟ್ಟಿಕೊಂಡು ಬರುತ್ತಿದ್ದಾಗಲೂ ನನಗೆ ಇರಿಸುಮುರಿಸು ಆಗಿರಲಿಲ್ಲ. ಇಂಗ್ಲೆಂಡಿನಲ್ಲಿ ಐಸಿಎಸ್ ಕಲಿಯುತ್ತಿದ್ದಾಗ ಸುಭಾಷ್ ಚಹಾ ಸೇವನೆಯ ಅಭ್ಯಾಸ ಕಲಿತಿದ್ದು ನನಗೆ ತಿಳಿದಿತ್ತು. ಬಾ, ಹಾಗಾಗಿ ಆಶ್ರಮವಾಸಿಗಳಿಗೆ ತಿಳಿಯದಂತೆ ಸುಭಾಷ್ ಬಾಬುವಿಗೆ ಚಹಾ ಮಾಡಿಕೊಡುತ್ತಿದ್ದರು. ಇದು ನನ್ನ ಗಮನಕ್ಕೂ ಬಂದಿತ್ತು. ಆದರೂ ನನಗದು ಸಹ್ಯವಾಗಿತ್ತು. ಅದಕ್ಕೆ ಕಾರಣ ಸುಭಾಷ್ ಬಾಬೂವಿನ ಧ್ಯೇಯನಿಷ್ಠ ಹಾಗೂ ರಾಷ್ಟ್ರಭಕ್ತಿಯ ನಿಸ್ವಾರ್ಥ ವ್ಯಕ್ತಿತ್ವ. ನಾನು ಸುಭಾಷರು ಅನುಸರಿಸಿದ ಮಾರ್ಗವನ್ನು ತಪ್ಪು ಎಂದು ಮಾತ್ರ ಹೇಳಿದ್ದೆ. ಒಂದರ್ಥದಲ್ಲಿ ಅದು ದುಡುಕಿನ ಮಾರ್ಗವೇ ಹೊರತು ತಪ್ಪಾಗಿರಲಿಲ್ಲ. ಹಾಗಾಗಿ ಅದನ್ನು ತಪ್ಪು ಎಂದು ಖಡಾಖಂಡಿತವಾಗಿ ಹೇಳಲು ಈಗಲೂ ಹಿಂಜರಿಯುತ್ತೇನೆ. ಸುಭಾಷರ ಆಜಾದ್ ಹಿಂದ್ ಫೌಜ್ ಸೈನ್ಯದ ಕಾರ್ಯಾಚರಣೆಯಿಂದ ಸಾವು ನೋವುಗಳಾಗುವ ಸಾಧ್ಯತೆಯಿತ್ತು. ಹಾಗಾಗಿ ಶಾಂತಿ ಮಾರ್ಗದಿಂದ ಸ್ವಾತಂತ್ರ್ಯಕ್ಕೆ ಆಗ್ರಹ ಪಡಿಸಬೇಕು ಎನ್ನುವ ವಾದ ನನ್ನದಾಗಿತ್ತು. ಇದು ನಾನು ಹರಿಜನ ಪತ್ರಿಕೆಯಲ್ಲಿ ಬರೆದಿದ್ದ ಸಂಪಾದಕೀಯದ ಸಾರಾಂಶ. ಇದನ್ನು ಕಾಲಾಂತರದಲ್ಲಿ ತಪ್ಪಾಗಿ ಅಧ್ಯಯನಿಸಿ, ವಿಮರ್ಶಿಸಿ, ಅರ್ಥೈಸಿಕೊಳ್ಳಲಾಯಿತೇ ಹೊರತು ನನಗೆ ಬೋಸರ ಬಗ್ಗೆ ಯಾವುದೇ ಕಹಿ ಇರಲೇ ಇಲ್ಲ.” ಮಾತಿನಲ್ಲಿ ಎಲ್ಲಿಯೂ ತಡವರಿಸದೆ, ಉದ್ವೇಗಗೊಳ್ಳದೆ ಗಾಂಧಿ ಮಾತನಾಡಿದ್ದ.

“ಆಯಿತು ಬಾಪೂ, ಸುಭಾಷರ ವಿಚಾರ ಬಿಡೋಣ. ನಿನಗೆ ನಿನ್ನ ಉತ್ತರಾಧಿಕಾರವನ್ನು ನೀಡಲು ಎರಡು ಆಯ್ಕೆಗಳಿದ್ದವು. ಮೊದಲೆಯದು ಸಮರ್ಥ ಸರ್ದಾರ್ ಪಟೇಲ್ ಹಾಗೂ ಎರಡನೆಯದು ಪಂಡಿತ್ ನೆಹರೂ. ನೆಹರೂರವರಿಗೆ ಹೋಲಿಕೆ ಮಾಡಿದಲ್ಲಿ ಪಟೇಲರು ಸಮರ್ಥರು ಎನ್ನುವುದನ್ನು ನೀನು ಒಪ್ಪಿಕೊಳ್ಳಲೇಬೇಕು. ಆದಾಗ್ಯೂ ನೀನು ಪಟೇಲರನ್ನು ದೂರವಿಟ್ಟು ನೆಹರೂರನ್ನೆ ಹೆಚ್ಚು ಓಲೈಕೆ ಮಾಡಿದ್ದೇಕೆ?” ಬಾಣ ಬಿಟ್ಟಂತೆ ಪ್ರಶ್ನಿಸಿದೆ ಎನ್ನುವ ಅಹಂಕಾರ ಈಗ ನನ್ನದಾಯಿತು.

ಮೊಗದಲ್ಲಿನ ನಸುನಗೆಯನ್ನು ಜೋಪಾನವಾಗಿಟ್ಟುಕೊಂಡೆ ಗಾಂಧಿ ಉತ್ತರಿಸಿದ, “ಇದು ನನ್ನ ಆಯ್ಕೆಯೇನಲ್ಲ. ನಾನು ಕಾಂಗ್ರೆಸ್ ಪಕ್ಷವನ್ನು ಕಟ್ಟಲಿಲ್ಲ. ಉತ್ತರಾಧಿಕಾರವನ್ನು ನೀಡಲು ನಾನು ರಾಜನೂ ಅಲ್ಲ. ನನಗೆ ರಾಜಕಾರಣವೂ ಬೇಕಿರಲಿಲ್ಲ. ನಾನೊಬ್ಬ ಸ್ವಾತಂತ್ರ್ಯದ ಪರವಾಗಿ ವಾದಿಸುವ, ಅದಕ್ಕಾಗಿ ಶತಾಯಗತಾಯ ಹೊರಾಟ ಮಾಡುವ ಸಾಮಾನ್ಯ ಹೋರಾಟಗಾರನಾಗಿದ್ದೆ. ಮೊತಿಲಾಲರು ಬಂದು ಜವಾಹರನಿಗೆ ಹೋರಾಟದ ತಿಳುವಳಿಕೆ ಮತ್ತು ಸಂಘಟನೆಯ ಜವಬ್ದಾರಿಯನ್ನು ನೀಡಲು ಕೋರಿಕೊಂಡರು. ತಾರುಣ್ಯದಲ್ಲಿದ್ದ ಜವಾಹರನಿಗೆ ರಾಷ್ಟ್ರದ ಹೊಣೆಗಾರಿಕೆಯ ಪಾಠ ಹೇಳಿಕೊಡುವುದಾಗಿ ನಾನು ಅವರಿಗೆ ಮಾತು ಕೊಟ್ಟೆ. gandhi-artಕೊಟ್ಟ ಮಾತಿನಂತೆಯೇ ನನ್ನ ಆಂದೋಲನಗಳಿಗೆ ಜವಾಹರರನ್ನು ಕರೆದೊಯ್ಯುತ್ತಿದ್ದೆ. ಬಿಡುವಿನ ವೇಳೆಯಲ್ಲಿ ಸ್ವಾತಂತ್ರ್ಯದ ಹೋರಾಟ ನೀತಿಗಳು ಹಾಗೂ ಕಾರ್ಯಚಟುವಟಿಕೆಗಳ ಕುರಿತಾಗಿ ಆಶ್ರಮದಲ್ಲಿ ಒಟ್ಟಿಗೆ ಕುಳಿತು ಚರ್ಚಿಸಿದ್ದಿದೆ. ಆ ವಿಚಾರದಲ್ಲಿ ನನಗೆ ಪಟೇಲರು ಒಂದೇ ಜವಾಹರನೂ ಒಂದೇ ಹಾಗೂ ದೇಶದ ಅಸಂಖ್ಯ ಸಾಮಾನ್ಯ ನಾಗರೀಕರೂ ಒಂದೇ. ವಿದೇಶದಲ್ಲಿ ಓದಿದ್ದ ಜವಾಹರ ಆಂಗ್ಲರೊಂದಿಗೆ ಆಂಗ್ಲರಷ್ಟೆ ಸಮರ್ಥವಾಗಿ ಇಂಗ್ಲೀಷ್‌ನಲ್ಲಿ ಮಾತನಾಡುತ್ತಿದ್ದ. ನನಗೆ ಇದರಿಂದ ಅನೇಕ ಕಡೆ ಅನುಕೂಲವೂ ಆಗಿತ್ತು. ಆದರೆ ಸ್ವಾತಂತ್ರ್ಯ ನಂತರದ ಭಾರತದ ರಾಜಕಾರಣ ಜವಾಹರ್ ಲಾಲ್ ನೆಹರೂರವರನ್ನು ಆರಿಸಿತು ಪಟೇಲರನ್ನು ನೇಪಥ್ಯಕ್ಕೆ ಸರಿಸಿತು ಎಂದರೆ ಅದಕ್ಕೆ ಹೇಗೆ ನಾನು ಕಾರಣನಾಗುತ್ತೇನೆ? ಇಷ್ಟಕ್ಕೂ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಕಾಂಗ್ರೇಸ್ಸನ್ನು ಬರ್ಕಾಸ್ತುಗೊಳಿಸಬೇಕು ಎಂದು ನಾನೇ ಬಯಸಿದ್ದೆ ಎನ್ನುವುದು ನಿನಗೆ ಗೊತ್ತಿದೆಯಾ? ಇದೆಲ್ಲವೂ ಒಂದು ವ್ಯವಸ್ಥಿತ ದಾರಿ ತಪ್ಪಿಸುವ ತಂತ್ರವಷ್ಟೆ. ಅದನ್ನು ಯಾರು ಮಾಡುತ್ತಾರೆ, ಏಕೆ ಮಾಡುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಇದರಿಂದ ಇತಿಹಾಸದ ಸಾರ ಬದಲಾಗುತ್ತದೆ ಎನ್ನುವುದಷ್ಟೆ ನನ್ನ ವಾದ.”

ಗಾಂಧಿಯ ಮಾತಿನ ಮೋಡಿಗೆ ನಿಧಾನವಾಗಿ ನಾನು ಆಕರ್ಷಿತಗೊಳ್ಳುತ್ತಿದ್ದೆ, ಆದರೆ ಕೆಲವು ದ್ವಂದ್ವಗಳನ್ನು ಪರಿಹರಿಸಿಕೊಳಲೇಬೇಕಿತ್ತು. ಹಾಗಾಗಿ ಬಿಗುಮಾನ ಬಿಡದೆ ಪ್ರಶ್ನೆಗಳನ್ನು ಮುಂದುವರಿಸಿದೆ. “ಅದೂ ಆಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ಯಕಃಶ್ಚಿತ್ ಚೌರಿಚೌರಾ ಪ್ರಕರಣವನ್ನು ನೆಪವನ್ನಾಗಿಟ್ಟುಕೊಂಡು ನೀನು ಅಸಹಕಾರ ಚಳವಳಿಯನ್ನು ಅರ್ಧದಲ್ಲಿ ಕೈಬಿಟ್ಟೆದ್ದೇಕೆ? ಇದು ಸರ್ವಾಧಿಕಾರದ ಅಥವಾ ಏಕಪ್ರಭುತ್ವದ ಧೋರಣೆಯಲ್ಲವೇ? ನೀನು ಹಾಗೆ ಮಾಡಿದ್ದರಿಂದ ನಿನ್ನ ಒಂದು ಕರೆಗೆ ಓಗೊಟ್ಟು ಬೀದಿಗಿಳಿದಿದ್ದ ಭಾರತೀಯರನ್ನು ನೀರಸವಾಗಿ ನಿರಾಸೆಗೆ ಒಳಪಡಿಸಿದ್ದು ತಪ್ಪು ಅಲ್ಲವೆ?”

“ನೋಡು ಮಗು ನೀನು ತಾರುಣ್ಯದಲ್ಲಿದ್ದೀಯ, ಹಾಗಾಗಿ ನಿನಗೆ ಈ ಸಂಗತಿ ಅತಿರೇಕ ಎನ್ನಿಸಬಹುದು. ಆದರೆ ನಾನು ದಕ್ಷಿಣ ಆಫ್ರಿಕದಿಂದ ಬರುವಾಗಲೇ ಈ ಹೋರಾಟಗಳ ಬಗ್ಗೆ ಒಂದು ಮೂರ್ತ ರೂಪ ಹಾಕಿಕೊಂಡು ಬಂದಿದ್ದೆ. ಮೊದಲೆ ಹೇಳುವಂತೆ ನನಗೆ ಹಿಂಸೆ ಎಂದರೆ ವರ್ಜ್ಯ. ಚೌರಿಚೌರಾದಲ್ಲಿ ಪೋಲೀಸ್ ಠಾಣೆಗೆ ಬೆಂಕಿಯಿಡುವ ಮೂಲಕ ಜನ ಹಿಂಸೆಗಿಳಿದರು. ಅದೇ ಸಂದರ್ಭದಲ್ಲಿ ನಾನು ಚಳವಳಿ ಮುಂದುವರೆಸಿದ್ದರೆ ಅದು ಒಂದರ್ಥದಲ್ಲಿ ಆ ಬೆಂಕಿಯಿಟ್ಟ ಮಂದಿಗೆ ನನ್ನ ಬೆಂಬಲವಿದೆ ಎನ್ನುವಂತಾಗುತ್ತಿತ್ತು. ಮುಂದೆ ಅವರು ಇನ್ನು ಹೆಚ್ಚಿನ ಹಾನಿ ಮಾಡುವವರಿದ್ದರು. ಹಾಗೆ ನಾನು ಚಳುವಳಿಯನ್ನು ಕೈಬಿಡುವ ಮೂಲಕ ನನ್ನ ಅಸಮಧಾನವನ್ನು ನೇರವಾಗಿ ವ್ಯೆಕ್ತಪಡಿಸಿದಂತಾಯಿತಲ್ಲ. ಆನಂತರದ ದಿನಗಳಲ್ಲಿ ಆ ಪ್ರಮಾಣದ ಹಿಂಸೆ ಎಲ್ಲಾದರೂ ಕಂಡುಬಂದಿತಾ? ಒಂದು ವೇಳೆ ಅಲ್ಲಲ್ಲಿ ನಡೆದರೂ ನಾನು ಅದನ್ನೂ ಹರಿಜನದಲ್ಲಿ ಉಗ್ರವಾಗಿ ವಿರೊಧಿಸುತ್ತಿದ್ದೆ ಅಲ್ಲವೆ? ಈ ದೃಷ್ಠಿಯಲ್ಲಿ ನೀನೇಕೆ ಯೋಚನೆ ಮಾಡಲಾರೆ?”

“ಅಲ್ಲ ಬಾಪೂ, ಜನರಲ್ ಡಯರ್ ಜಲಿಯನ್ ವಾಲಾಬಾಗ್‌ನಲ್ಲಿ ಸಾವಿರಾರು ಜನರ ನರಮೇಧ ಮಾಡಿದ್ದು ಹಿಂಸೆಯಲ್ಲವೇ? ಅವರು ಹಿಂಸಾ ದಾರಿ ಹಿಡಿದಾಗ ನೀನು ಅಹಿಂಸೆ ಅಹಿಂಸೆ ಎನ್ನುತ್ತಿದ್ದರೆ ಅದಕ್ಕೆ ಅರ್ಥವಿತ್ತಾ?” ಈ ಬಾರಿ ನನಗೆ ಉದ್ವೇಗ ತಡೆಯಲಾಗಲಿಲ್ಲ.

“ಆಂಗ್ಲರ ಆ ಕೃತ್ಯವನ್ನು ನಾನೆಲ್ಲಾದರೂ ಸಮರ್ಥಿಸಿದ್ದೆನಾ? ಆ ಪ್ರಕರಣವನ್ನು ನನ್ನ ಎಲ್ಲಾ ಸಾರ್ವಜನಿಕ ಭಾಷಣಗಳಲ್ಲಿ ಖಂಡಿಸಿದ್ದೇನೆ. ಹರಿಜನ, ಯಂಗ್ ಇಂಡಿಯಾದಲ್ಲಿ ಕಟುವಾಗಿ ಟೀಕಿಸಿದ್ದೇನೆ. ನನ್ನ ದೇಶವಾಸಿಗಳು ಹಿಂಸಾಚಾರದಲ್ಲಿ ತೊಡಗುವುದು ನನಗೆ ಇಷ್ಟವಿಲ್ಲ ಎಂದಷ್ಟೇ ಹೇಳಲು ಹೊರಟೆ. ನೋಡು ಸತ್ಯ, ನ್ಯಾಯದ ಮಾರ್ಗದಲ್ಲಿ ಎಂದಿಗೂ ಜಯವಿದೆ. ಇದನ್ನೆ ನಿಜವಾದ ಧರ್ಮ ಎನ್ನುತ್ತಾರೆ. ಇದನ್ನು ನಾನು ಹೇಳಿದ್ದು ಎಂದುಕೊಳ್ಳಬೇಡ. ನೀನು ಪುರಾಣಗಳನ್ನು ನಂಬುತ್ತೀಯಾ ಎಂದಾದರೆ ಇದನ್ನು ಹೇಳಿದ್ದು ಶ್ರೀ ರಾಮಚಂದ್ರ ಪ್ರಭು ಎಂದಿಟ್ಟುಕೊ. ಅದೇ ಕಾರಣಕ್ಕೆ ನಾನು ಹಿಂದೂಸ್ತಾನವನ್ನು ರಾಮರಾಜ್ಯವನ್ನಾಗಿಸಬೇಕು ಎನ್ನುವ ಕನಸು ಕಂಡಿದ್ದೆ. ಹಿಂಸೆಯಿಂದ ವ್ಯಥಾ ಸಾವುನೋವುಗಳಾಗುತ್ತವೆ. ಇದರಿಂದಲೂ ಮುಕ್ತಿ ಸಾಧ್ಯವಿದೆ. ಆದರೆ ಕೊನೆಗೆ ಸ್ವಾತಂತ್ರ್ಯದ ನಂತರ ನಾವು ಈ ಹಿಂಸಾಮಾರ್ಗದಿಂದ ಸ್ವಾತಂತ್ರ್ಯ ಗಳಿಸಿಕೊಂಡೆವು ಎನ್ನುವುದನ್ನು ಇತಿಹಾಸ ದಾಖಲಿಸಿಕೊಳ್ಳುತ್ತದೆ. ಇವತ್ತಿನ ದಿವಸ ನೀನು ಬದುಕುತ್ತಿರುವ ಭಾರತಕ್ಕೆ ಅಂತರ್ರಾಷ್ಟ್ರೀಯವಾಗಿ ಶಾಂತಿಗೆ ಆದ್ಯತೆ ನೀಡುವ ರಾಷ್ಟ್ರ ಎಂದು ಗೌರವ ನೀಡಲಾಗುತ್ತಿದೆ. ಅದಕ್ಕೆ ಕಾರಣ ನಾನು ಅನುಸರಿಸಿದ್ದ ಅಹಿಂಸಾ ಸತ್ಯಾಗ್ರಹ ಎನ್ನುವುದು ನನಗೆ ಸಮಾಧಾನ ತರುವ ವಿಷಯ. ನೀನು ನನ್ನ ಮೇಲಿನ ಕೋಪಕ್ಕೆ ಅದನ್ನು ಒಪ್ಪದಿದ್ದರೂ ಅದೇ ಸತ್ಯ.” ಅತ್ಯಂತ ಸ್ಪುಟವಾಗಿ ಹಾಗೂ ಆತ್ಮವಿಶ್ವಾಸದಿಂದ ಗಾಂಧಿ ಮಾತನಾಡುತ್ತಲೇ ಇದ್ದ.

ಅಸ್ಖಲಿತ ಹಿಂದಿ ಹಾಗೂ ಅಗತ್ಯಕ್ಕೆ ತಕ್ಕ ಉತ್ತಮ ಇಂಗ್ಲೀಷ್ ಬಳಸುತ್ತಿದ್ದ ಗಾಂಧಿಯ ಮಾತುಗಳು ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಲೇ ಇದ್ದವು. ಆ ಹೊತ್ತಿಗಾಗಲೆ ನನಗೆ ಏನೋ ಕಾರಣರಹಿತ ತಳಮಳ ಪ್ರಾರಂಭವಾಗಿತ್ತು. ಗಾಂಧಿ ಸರಿಯಿದ್ದನೆ? ಎನ್ನುವ ಅನುಮಾನಗಳು ಮತ್ತೆ ಆಂತರ್ಯದಲ್ಲಿ ಹಳೆಯ ಮಾಮೂಲಿ ತರ್ಕ ಮತ್ತೆ ಕಾಣಿಸತೊಡಗಿತ್ತು. ಇನ್ನೊಂದು ಪ್ರಶ್ನೆಯನ್ನು ಕೇಳಿ ನಿರ್ಧಾರಕ್ಕೆ ಬರೋಣ ಎಂದು ಗಾಂಧಿಯತ್ತ ತಿರುಗಿದೆ. ಗಾಂಭೀರ್ಯದಿಂದ ಕುಳಿತಿದ್ದ ಆ ವದನದಲ್ಲಿ ಅದೇ ಮಂದಹಾಸ. ಸ್ವಲ್ಪವೂ ಮಾಸಿರಲಿಲ್ಲ.

“ಈ ಪ್ರಶ್ನೆ ನನ್ನನ್ನು ಅತಿಯಾಗಿ ಕಾಡುತ್ತಲೇ ಇದೆ ಬಾಪೂ, ದೇಶವಿಭಜನೆಯನ್ನು ಅತ್ಯುಗ್ರವಾಗಿ ವಿರೋಧಿಸಿದ್ದ ನೀನು, ಆನಂತರ ಪಾಕಿಸ್ತಾನ ರಚನೆಗೆ ಸಮ್ಮತಿಸಿದ್ದೇಕೆ? ಅದೂ ತಡವಾಗಿ. ಅಷ್ಟರಲ್ಲಾಗಲೆ ದೇಶದ ಮುಖ್ಯ ನಗರಗಳೆಲ್ಲ ಕೋಮುದಳ್ಳುರಿಯಿಂದ ಹೊತ್ತಿ ಉರಿದಿದ್ದವು. ಅನೇಕ ಹಿಂದೂ ಮುಸಲ್ಮಾನ ಕುಟುಂಬಗಳು ಬೀದಿಗೆ ಬಿದ್ದಿದ್ದವು. ಸಾವು ನೋವುಗಳಾಗಿದ್ದವು. ಇದಕ್ಕೆಲ್ಲಾ ಯಾರು ಹೊಣೆ? ನೀನೇ ಹೊಣೆಯೆಂದು ನಾನು ನಿನ್ನನ್ನು ಆಪಾದಿಸುತ್ತೇನೆ. ಪಾಕಿಸ್ತಾನಕ್ಕೆ ಆರ್ಥಿಕ ಸ್ವಾವಲಂಬನೆ ನೀಡಬೇಕು ಎಂದು ನೀನು ಉಪವಾಸ ಕುಳಿತೆಯಲ್ಲಾ ಅದು ತಪ್ಪಲ್ಲವೇ? ಅಷ್ಟೆಲ್ಲಾ ರಾದ್ಧಾಂತವಾದ ಮೇಲೆ ಒಪ್ಪಿಗೆ ನೀಡುವ ಬದಲು ಮೊದಲೇ ನೀಡಿದ್ದರೆ ಆ ಪ್ರಮಾಣದ ಹಿಂಸೆಯನ್ನು ನೀನು ತಡೆಯಬಹುದಿತ್ತಲ್ಲವೇ?” ಒಂದು ಸುದೀರ್ಘ ನಿಟ್ಟುಸಿರು ಅದಾಗೆ ಹೊರಬಂದಿತು.

ಆ ಪ್ರಶ್ನೆಯಿಂದ ಗಾಂಧಿ ಕೊಂಚ ವಿಚಲಿತನಾದಂತೆ ಕಂಡುಬಂದಿತು. ತುಸು ಗಂಭೀರ ಧ್ವನಿಯಿಂದ ಉತ್ತರಿಸತೊಡಗಿದ, “ಅದು ಈಗಲೂ ನನ್ನನ್ನು ಕಾಡುತ್ತಲೇ ಇದೆ. ಅದಕ್ಕೆ ಸತ್ಯವಾಗಿಯೂ ನಾನು ಕಾರಣನಲ್ಲ. ಬ್ಯಾರಿಸ್ಟರ್ ಮೊಹಮದ್ ಅಲಿ ಜಿನ್ನಾನೂ ಕಾರಣ ಎಂದು ಹೇಳಲಾರೆ. ಇದು ನಮ್ಮ ರಾಷ್ಟ್ರದ ನಿಜವಾದ ದುರಂತ. ಅಖಂಡ ಭಾರತ ಛಿದ್ರವಾಗುವುದನ್ನು ಓರ್ವ ದೇಶಭಕ್ತನಾಗಿ ನಾನು ಹೇಗೆ ನೋಡಿಕೊಂಡು ಸುಮ್ಮನಿರಲಿ. ಹಾಗಾಗೆ ಅದನ್ನು ವಿರೋಧಿಸಿದ್ದೆ. ವಿಭಜನೆ ಮಾಡುವುದಾದರೆ ನನ್ನ ಮೃತ ದೇಹದ ಮೇಲೆ ಮಾಡಿ ಎಂದು ಹೇಳಿದ್ದೆ. ಜಿನ್ನಾರನ್ನು ಒಪ್ಪಿಸಲು ಅನೇಕ ಬಾರಿ ಪ್ರಯತ್ನಿಸಿದ್ದೆ. ಇದೇ ಪ್ರಯತ್ನವನ್ನು ಸುಭಾಷ್ ಬಾಬೂ ಸಹ ಮಾಡಿದ್ದರು. ಆದರೆ ಆತ ಮೊಂಡ ತನ್ನ ಹಠ ಬಿಡಲೇ ಇಲ್ಲ. ನನಗೆ ಅಸಮಾಧಾನವಾಗಿತ್ತು, ನೋವಾಗಿತ್ತು. ಸ್ವಾತಂತ್ರ್ಯ ಗಳಿಸಿಕೊಳ್ಳುವ ಮೊದಲು ಅಣ್ಣ-ತಮ್ಮಂದಿರಂತೆ ಜೊತೆಯಿದ್ದ ಹಿಂದೂಗಳು ಮತ್ತು ಮುಸಲ್ಮಾನರು ಆನಂತರ ಕುರುಡು ವ್ಯಾಮೋಹಕ್ಕೆ ದಾಸರಾಗಿ ಬಡಿದಾಡಿಕೊಂಡರು. ಆಗ ನಾನು ಮುಸಲ್ಮಾನ ನಾಯಕರನ್ನೂ ಭೇಟಿಯಾಗಿದ್ದೆ, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದೆ. ಹಿಂದೂಗಳಲ್ಲಿಯೂ ಅದೇ ಪ್ರಾರ್ಥನೆ ಮಾಡಿಕೊಂಡಿದ್ದೆ. ಆದರೆ ಪರಿಸ್ಥಿತಿ ಕೈ ಮೀರುವ ಸೂಚನೆ ಕಂಡುಬಂದ ಹಿನ್ನೆಲೆಯಲ್ಲಿ ನಾನು ಮಣಿಯಲೇ ಬೇಕಾಯಿತು. ಬಂಗಾಲದ ಅಸಲು ವಿಚಾರ ನಿನಗೆ ಗೊತ್ತಾ? ಓರ್ವ ಹಿಂದೂವಾಗಿಯೂ ನಾನು ಮುಸಲ್ಮಾನರ ಮನೆಯಲ್ಲಿ ಉಣ್ಣುತ್ತಿದ್ದೆ ಉಳಿದುಕೊಳ್ಳುತ್ತಿದ್ದೆ. ಆ ದಿನ ಬಂಗಾಲದಲ್ಲಿ ವಿಭಜನೆಯ ವಿಷಯ ಇಟ್ಟುಕೊಂಡು ಮುಸಲ್ಮಾನ ಬಾಂಧವರು ಹಿಂದೂಗಳ ವಿರುದ್ದ ದಂಗೆಯೆದ್ದಿದ್ದರು. ಪೂರ್ಣ ಬಂಗಾಲ ನರಕಸದೃಶ್ಯವಾಗಿತ್ತು. ಇನ್ನೂ ಹಿಂಸಾಚಾರವನ್ನು ಮುಂದುವರಿಸಿದರೆ ನಾನು ನನ್ನ ದೇಹದ ಅಷ್ಟೂ ರಕ್ತವನ್ನು ಹಿಂಡಿ-ದೇಹತ್ಯಾಗ ಮಾಡಿಕೊಳ್ಳುತ್ತೇನೆ ಎಂದು ಎಚ್ಚರಿಸಿದ್ದರ ಪರಿಣಾಮವಾಗಿ ಮುಸಲ್ಮಾನರು ನನ್ನ ಮೇಲಿನ ಗೌರವದಿಂದ ಆ ದಿನ ಹಿಂಸಾಚಾರ ನಿಲ್ಲಿಸಿದರು. ಗಾಂಧಿಯೆಂಬ ಏಕಾಂಗಿ ಯೋಧನ ವಿನಃ ಬೇರೆ ಯಾವ ರಕ್ಷಣಾ ವ್ಯವಸ್ಥೆಯೂ ಆ ದಿನ ಹಿಂಸಾಚಾರ ತಡೆಯಲಿಲ್ಲ ಎನ್ನುವ ಸತ್ಯವನ್ನು ಹೇಳಿದರೆ ನಿನಗೆ ಅಹಂಕಾರವೆನಿಸುತ್ತದೆಯಾ? ನೀನು ಹಾಗೆಂದುಕೊಂಡರೂ ಇದು ಸತ್ಯ, ಹಾಗೂ ನನ್ನ ಸಮರ್ಥನೆಯಂತೆ ನನಗೆ ಸಿಕ್ಕಿದ್ದ ಆತ್ಮಸಮಾಧಾನ. ನಾನು ವಿಭಜನೆಗೆ ಒಪ್ಪಿಗೆ ನೀಡದಿದ್ದರೆ ದೇಶ ಹೊತ್ತಿ ಉರಿಯುತ್ತಿತ್ತು. ಅಂತಹ ಒಂದು ವ್ಯವಸ್ಥಿತ ಮನೆಹಾಳು ಯೋಜನೆಯನ್ನು ಬ್ರಿಟೀಶರು ಹೋಗುವ ಮುಂಚೆಯೇ ಮಾಡಿಟ್ಟು ಹೋಗಿದ್ದರು. ಸೌಹಾರ್ದಯುತವಾದ ಹಾಗೂ ನೆಮ್ಮದಿಯಾದ ಬೆಚ್ಚಗಿನ ಜೀವನ ನೆಡೆಸಲು ಪಾಕಿಸ್ತಾನ ಎನ್ನುವ ಸ್ವತಂತ್ರ್ಯ ರಾಷ್ಟ್ರಕ್ಕೆ ಆರ್ಥಿಕ ನೆರವು ಬೇಕಿತ್ತು. ಅದಕ್ಕಾಗಿ ನಾನು ಆಗ್ರಹಿಸಿದೆ ಅಷ್ಟೆ. ಹಾಗೆಂದ ಮಾತ್ರಕ್ಕೆ ನನ್ನನ್ನು ಒಂದು ಧರ್ಮದ ಪರವಾದ ನಿಲುವಿನವನು ಎಂದು ನೀನು ತೀರ್ಮಾನಿಸಿದರೆ ನಿನ್ನಂತಹ ಶತಮೂರ್ಖ ಬೇರೊಬ್ಬ ಇಲ್ಲ ಎನ್ನುವ ನಿರ್ಧಾರಕ್ಕೆ ನಾನೂ ಬರಬೇಕಾಗುತ್ತದೆ. ನನಗೆ ಜಾತಿ, ಮತ, ಪಂಥ, ಬಣ ಇತ್ಯಾದಿಗಳ ಮೇಲೆ ನಂಬಿಕೆಯೂ ಇಲ್ಲ ಆದರವೂ ಇಲ್ಲ. ಮುಖ್ಯವಾಗಿ ಮಾನವತೆಗೆ ಬೆಲೆ ನೀಡುವವ ನಾನು.” ತಣ್ಣಗಿದ್ದ ಗಾಂಧಿಯ ಮುಖ ಸಿಟ್ಟಿಗೆದ್ದದ್ದು ನೋಡಿ ನನಗೆ ಆಶ್ಚರ್ಯ ಹಾಗೂ ಕೊಂಚ ಆಘಾತವೂ ಆಯಿತು.

ಕೊಂಚ ನಿಲ್ಲಿಸಿ ನಿಟ್ಟುಸಿರು ಬಿಟ್ಟ ಗಾಂಧಿ ಮತ್ತೆ ಮೊಗದಲ್ಲಿನ ಅಸಮಾಧಾನ ಮುಂದುವರೆಸುತ್ತಲೇ, “ಇನ್ನೊಂದು ಸೂಕ್ಷ್ಮ ಹಾಗೂ ವಿವಾದಾತ್ಮಕ ಸಂಗತಿ ಹೇಳುತ್ತೇನೆ ಕೇಳು. ಇದು ಈ ಸಂದರ್ಭದಲ್ಲಿ ಹೇಳಬೇಕಾಗಿರುವ ಪ್ರಸ್ತುತ ಅಂಶವೂ ಹೌದು. ನಮ್ಮ ಜವಾಹರನಿಗೆ ಸ್ವಲ್ಪ ಅಧಿಕಾರದ ಲಾಲಸೆಯಿತ್ತು. ವಿಶ್ವದ ಪ್ರಸಿದ್ಧ ನಾಯಕನಾಗಬೇಕು ಎನ್ನುವ ಅತಿಯಾದ ಮಹಾತ್ವಾಕಾಂಕ್ಷೆಯಿತ್ತು. ಒಂದರ್ಥದಲ್ಲಿ ಆತ ಆ ಸಂದರ್ಭದಲ್ಲಿ ಅದಕ್ಕೆ ಪಟೇಲರಷ್ಟೆ ತಕ್ಕ ವ್ಯಕ್ತಿಯೂ ಆಗಿದ್ದ ಎಂದಿಟ್ಟುಕೋ. ವಿದೇಶದಲ್ಲಿ ಪದವಿ ಮುಗಿಸಿದ್ದ. ಹಲವಾರು ದೇಶಗಳನ್ನು ಸುತ್ತಿದ್ದ. ಅನೇಕ ಹೆಸರಾಂತ ಗ್ರಂಥಗಳ ಅಧ್ಯಯನ ಮಾಡಿದ್ದ. ನನ್ನ ಜೊತೆಯಲ್ಲಿ ಆಂದೋಲನದಲ್ಲಿ ಭಾಗವಹಿಸಿದ್ದ. ಎರಡು ಅವಧಿಗೆ ಕಾಂಗ್ರೆಸ್ ಅಧ್ಯಕ್ಷನಾಗಿದ್ದ. ಉತ್ತಮ ವಾಗ್ಮಿ, ಅತ್ಯುತ್ತಮ ಸಂಘಟಕ, ದೂರದೃಷ್ಟಿಯುಳ್ಳ ನಾಯಕ. ಅನೇಕಬಾರಿ ಜೈಲುವಾಸ ಎದುರಿಸಿದ್ದ. ಆದರೆ ಜವಾಹರನಷ್ಟೆ ಸಮರ್ಥ ಇನ್ನೊಬ್ಬ ಅವಿಭಜಿತ ಭಾರತದಲ್ಲಿದ್ದ. ಆತನೂ ವಕೀಲ, ಆತನೂ ಉತ್ತಮ ಸಂಘಟಕ, ವಾಗ್ಮಿ, ಅವನ ಮಾತನ್ನೂ ಕಿವಿಗೊಟ್ಟು ಆಲಿಸಿ ಚಾಚೂತಪ್ಪದೆ ಪಾಲಿಸುತ್ತಿದ್ದ ಒಂದು ಸಮುದಾಯವಿತ್ತು. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಅವನ ರಾಜಕಾರಣವೂ ನಡೆಯುತ್ತಿತ್ತು. ಅವನ್ಯಾರು ಗೊತ್ತಾ?-ಬ್ಯಾರಿಸ್ಟರ್ ಮೊಹಮ್ಮದಾಲಿ ಜಿನ್ನಾ. ಅವನು ನಿಜಾರ್ಥದಲ್ಲಿ ಜವಾಹರನಿಗೆ ಅತ್ಯಂತ ಪ್ರಬಲ ಪೈಪೋಟಿಯಾಗುತ್ತಿದ್ದ. ವಿಭಜನೆಯಾಗದಿದ್ದರೆ ಆತ ಜವಾಹರನೊಂದಿಗೆ ಪ್ರಧಾನಿ ಸ್ಥಾನಕ್ಕೂ ಸ್ಪರ್ಧೆ ನೀಡುವ ಸಾಧ್ಯತೆಯಿತ್ತು. ಈ ರೇಖೆಯಲ್ಲಿ ತಕಿಸಿದಾಗ ಅಖಂಡ ಭಾರತ ವಿಭಜನೆಯಾಗುವ ಹಿಂದೆ ಜವಾಹರನ ಸ್ವಾರ್ಥವೂ ಇದ್ದಿರಬಹುದೇನೋ? ಜವಾಹರನೇನಾದರೂ ಈ ರೀತಿ ಅವಿತಿದ್ದ ತನ್ನ ಮನದಿಂಗಿತವನ್ನು ನನ್ನೆದುರು ತೆರೆದಿಟ್ಟಿದ್ದರೆ, ಖಂಡಿತವಾಗ್ಯೂ ನಾನು ಅವನನ್ನು ನೇರವಾಗಿ ಖಂಡಿಸುತ್ತಿದ್ದೆ. ಜವಾಹರ್‌ಲಾಲ್ ಅದನ್ನೆಂದು ತೆರೆದಿಡಲಿಲ್ಲ. ಈ ನಿಟ್ಟಿನಲ್ಲಿ ಯೋಚಿಸಿದರೂ ಕೂಡ ಅದಕ್ಕೆ ನಾನು ಕಾರಣನಲ್ಲ. ಹೇಗೆ ನೀನು ಭಾರತಭೂಮಿ ವಿಭಜನೆಗೆ ನಾನು ಕಾರಣ ಎಂದು ತೀರ್ಮಾನಿಸಿಬಿಟ್ಟೆ. ಇಷ್ಟು ವರ್ಷಗಳ ಅಧ್ಯಯನದಲ್ಲಿ ನೀನು ನನ್ನ ಅರ್ಥಮಾಡಿಕೊಂಡಿದ್ದು ಇಷ್ಟೆಯೇ?”

“ಅರೆ ಬಾಪೂ ನಿನಗೂ ಸಿಟ್ಟು ಬರುತ್ತದೆ ಎಂದಾಯಿತು. ಹೋಗಲಿ ಬಿಡು. ಯಾವ ದೇಶವನ್ನು ಒಬ್ಬ ಸಾಮಾನ್ಯ ವ್ಯೆಕ್ತಿಯ ಹೆಸರಿನಿಂದ ಗುರುತಿಸುತ್ತಾರೋ ಆ ದೇಶ ಭಾರತ ಮತ್ತು ಆ ವ್ಯಕ್ತಿ ಗಾಂಧಿ ಎನ್ನುವುದು ನಿರ್ವಿವಾದಿತ ಸತ್ಯ. ಇಲ್ಲಿಗೆ ನನ್ನ ಪ್ರಶ್ನೆಗಳು ಮುಗಿಯಿತು. ಈಗ ನಾಥೋರಾಂ ಗೋಡ್ಸೆಯ ಬಗ್ಗೆ ಏನು ಹೇಳುತ್ತೀಯಾ? ಅದಷ್ಟನ್ನು ಹೇಳು ಮತ್ತೆ ನಿನಗೆ ತೊಂದರೆ ನೀಡಲಾರೆ.” ನಗುತ್ತಲೆ ಕೇಳಬೇಕಾಗಿದ್ದ ಅತ್ಯಂತ ಕುತೂಹಲಕಾರಿ ಮಾತು ಕೇಳಿದ್ದೆ.

“ಆ ವ್ಯಕ್ತಿ ಈಗ ನನ್ನ ಚಿತ್ತದಲ್ಲಿ ತಿಲಕರು ಹಾಗೂ ಸುಭಾಷರ ನಂತರದ ಸ್ಥಾನದಲ್ಲಿದ್ದಾನೆ. ಆತ ನನಗೆ ಗುಂಡು ಹಾರಿಸುವ ಮೊದಲು gandhiಆತನ ಬಗ್ಗೆ ನನಗೆ ಅಲ್ಪ ಸ್ವಲ್ಪ ತಿಳಿದಿತ್ತು. ಸಾವರ್ಕರ್ ಗರಡಿಯಲ್ಲಿ ಕಲಿತಿದ್ದ ಯುವಕ. ಬಿಸಿರಕ್ತ, ಉಗ್ರ ವಿಚಾರಧಾರೆ, ಅದ್ವಿತೀಯ ದೇಶಭಕ್ತಿ. ಹೀಗೆ ಆತ ನನ್ನನ್ನು ಆಕರ್ಷಿಸಿದ್ದನೇನೋ? ಆತ ನನ್ನ ಮುಂದೆ ಕೇವಲ ಮೂರು ಅಡಿಯಲ್ಲಿ ನಿಂತು ಪಿಸ್ತೂಲು ತೆಗೆದು ’ಸಾರಿ ಬಾಪೂ..’ ಎಂದು ಗುಂಡು ಹಾರಿಸುವಾಗ ಸ್ಪಷ್ಟವಾಗಿ ಹಾಗೂ ಹತ್ತಿರದಿಂದ ಅವನ ಮುಖ ನೋಡಿದ್ದೆ. ಅದೆಂತಹ ತೇಜಸ್ಸಿತ್ತು ಅವನ ಮುಖದಲ್ಲಿ. ಅದೇನೊ ಆತ್ಮವಿಶ್ವಾಸ. ಸಾಧನೆಗೆ ಹತ್ತಿರದಲ್ಲಿರುವ ಸಾಧಕನ ಮುಖದಲ್ಲಿ ದಿಢೀರನೆ ಉದ್ಭವಿಸುತ್ತಲ್ಲ ಅಂತಹ ತೇಜಸ್ಸದು. ಆತನ ಚಿತಾಭಸ್ಮ ಇನ್ನೂ ವಿಸರ್ಜನೆಯಾಗಿಲ್ಲ ಎಂದು ಕೇಳಿದ್ದೇನೆ. ಅಂತಹ ವ್ಯಕ್ತಿಗಳು ಬಹು ವಿರಳ. ಆತನ ಆತ್ಮಕ್ಕೆ ಈಶ್ವರ ಶಾಂತಿಯನ್ನು ನೀಡಲಿ.”

ಮಾತೆ ಹೊರಡಲಿಲ್ಲ. ದಿಙ್ಮೂಡನಾಗಿ ಗಾಂಧಿ ಮುಖ ನೋಡುತ್ತಾ ಕುಳಿತುಬಿಟ್ಟೆ. ನಿಜ ಗಾಂಧಿ ಹೀಗೆಯೇ ಇದ್ದನೇನೂ. ನಾನು ತಪ್ಪಾಗಿ ಅರ್ಥ ಮಾಡಿಕೊಂಡನೇನೋ? ಅಥವಾ ಅದೂ ಗಾಂಧಿ ಎನ್ನುವ ವಿಷಯದ ಸಹ ಕಲಿಕೆಯ ಒಂದು ಭಾಗವೇನೋ?

“ನಿನ್ನ ಪ್ರಶ್ನೆಗಳು ಮುಗಿದಿವೆ ಎಂದು ಭಾವಿಸುತ್ತೇನೆ. ನಾನಿನ್ನು ಹೊರಡುತ್ತೇನೆ. ನಿನ್ನ ಆಸೆಯಂತೆ ಮತ್ತೆ ನಾನು ಮರಳಿ ಬರಲಾರೆ. ನನ್ನ ಆತ್ಮ ಸದಾ ಸಂಚಾರದಲ್ಲಿರುತ್ತದೆ. ಆಗ ನಾನು ದೈಹಿಕವಾಗಿ ಪಾದಯಾತ್ರೆ ಮಾಡಿದ್ದೆ. ಈಗ ನನ್ನ ಆತ್ಮ ಭಾರತದಾದ್ಯಂತ ಸಂಚರಿಸುತ್ತಿದೆ. ಇಂದು ಇಲ್ಲಿ ನಾಳೆ ಮತ್ತೆಲ್ಲೋ. ನಾನು ದೇವರಲ್ಲ. ನಿನ್ನಂತೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿದ್ದವನು. ನನ್ನ ವಿಚಾರಧಾರೆಯನ್ನು ಸಾಧ್ಯವಾದರೆ ಸರಿಯಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡು. ನನ್ನ ಸತ್ಯಾನ್ವೇಷಣೆಯನ್ನು ಕೂಲಂಕಷವಾಗಿ ಓದು. ನನ್ನನ್ನು ತಪ್ಪಾಗಿ ಅರ್ಥಮಾಡಿಕೊಳ್ಳುವವರನ್ನು ಸಾಧ್ಯವಾದರೆ ಸರಿಪಡಿಸು.” ಮಾತುಗಳು ಅಸ್ಪಷ್ಟವಾಗಿ ಕಿವಿಗೆ ಬೀಳುತ್ತಿತ್ತು. ನಿಧಾನವಾಗಿ ಗಾಂಧಿ ಪ್ರತಿಮೆ ಮಾಯವಾಯಿತು. ಅಶರೀರವಾಣಿಯೂ ಕೇಳದಂತಾಯಿತು. ಆನಂತರ ಗಾಢ ನಿದ್ರೆ ಆವರಿಸಿಕೊಂಡುಬಿಟ್ಟಿತು.

“ಎದ್ದೇಳೋ ಸೋಂಬೇರಿ.”-ಅಮ್ಮ ಬಯ್ದು ಎಬ್ಬಿಸಿದಾಗ ಸಮಯ ಅದಾಗಲೆ ಎಂಟಾಗಿಬಿಟ್ಟಿತ್ತು. ರಾತ್ರಿಯ ಗಾಂಧಿ ಜೊತೆಗಿನ ಸಂಭಾಷಣೆಯನ್ನು ಮೆಲುಕು ಹಾಕುತ್ತಿದ್ದಾಗಲೆ ಗಾಂಧಿ ಚಿತ್ರಪಟ ನೋಡುವ ಮನಸ್ಸಾಯಿತು. ಮಾಳಿಗೆಯ ಹಳೆಯ ದೊಡ್ಡ ಗಡಿಯಾರದ ಬಳಿಗೆ ಬಂದೆ. ಅದರಲ್ಲಿ ಗಾಂಧಿ ಫೋಟೋ ಅಂಟಿಸಲಾಗಿತ್ತಲ್ಲ. ಆ ದೃಶ್ಯ ನೋಡಿ ನನಗೆ ಶಾಕ್ ತಡೆದುಕೊಳ್ಳಲೇ ಆಗಲಿಲ್ಲ. ಅಲ್ಲಿದ್ದ ಗಾಂಧಿ ಫೋಟೋ ಒಡಿದು ಚೂರಾಗಿತ್ತು. ಗಾಂಧಿಯ ಚಿತ್ರಪಟವೂ ಅಲ್ಲಲ್ಲಿ ಹರಿದು ಹೊಗಿತ್ತು.

ಅಲ್ಲಿಗೆ ಬಂದ ಅಮ್ಮ, “ನೋಡು ನೀನು ಮುದ್ದಿಂದ ಸಾಕಿದ್ದೀಯಲ್ಲ ಆ ಬೆಕ್ಕಿನ ಮರಿ ನಿನ್ನೆ ರಾತ್ರಿ ಇದರ ಮೇಲೆ ಸರ್ಕಸ್ಸು ಮಾಡಿ ಗಾಂಧೀಜೀಯ ಪೋಟೊ ಒಡೆದು ಹಾಕಿದೆ” ಎಂದಳು.

ಹಾಗೆ ಆ ಫೋಟೊ ಒಡೆದುಹೋಗಿದ್ದು ಗಾಂಧಿ ಕನಸ್ಸಿನಿಂದ ಮಾಯವಾದ ನಂತರ ಎನ್ನುವ ಸ್ಪಷ್ಟೀಕರಣ ಕೂಡಲೆ ದೊರೆಯಿತು. ಆದರೆ ಅದಕ್ಕೆ ಕಾರಣ ಮಾತ್ರ ತಿಳಿಯಲೇ ಇಲ್ಲ. ತಲೆಯಲ್ಲಿ ಹೊಸದೊಂದು ಪ್ರಶ್ನೆ ಹುಟ್ಟಿಕೊಂಡಿತ್ತು-“ಗಾಂಧಿ ಫೋಟೋ ಒಡೆದುಹೋಗಿದ್ದು ಕಾಕತಾಳೀಯವೇ?”.

ಪಾಪಪ್ರಜ್ಞೆಯ ಚಿತ್ತ, ಅಂಧಶ್ರದ್ದೆಯ ಸರಳ ವಾಸ್ತುವಿನತ್ತ..

– ಬಿ.ಜಿ. ಗೋಪಾಲಕೃಷ್ಣ, ಹಾಸನ

ವಾಸ್ತುಶಾಸ್ತ್ರ, ಇತ್ತೀಚಿನ ದಿನಗಳಲ್ಲಿ ಸರಳ ವಿಶೇಷಣದೊಂದಿಗೆ ದುಬಾರಿಯ ಮೌಢ್ಯವನ್ನು ಬಿತ್ತುತ್ತಾ ಸರಳ ವಾಸ್ತುಶಾಸ್ತ್ರವಾಗಿ ಬದಲಾಗಿದೆ. ಮನುಷ್ಯನಿಗೆ ರೋಗ-ರುಜಿನಗಳು ಅವನ ಶ್ರೀಮಂತಿಕೆಯ ವೈಭವವನ್ನು ತಿಳಿದು ಬರುವುದಿಲ್ಲ. ಅವನ ಐಷಾರಾಮಿತನದ ಸೋಮಾರಿತನ, ಒತ್ತಡದ ಜೀವನ ಶೈಲಿಗಳಿಗೆ ಓಗೊಟ್ಟು ಸಖ್ಯ ಬಯಸಿ ಬರುತ್ತವೆ. ಆದರೆ ಸರಳ ವಾಸ್ತುವಿನ ವಿಷಯವೇ ಬೇರೆ, ಶ್ರೀಮಂತಿಕೆಯ ಅಂಧಕಾರದ ಮೌಢ್ಯತೆಯನ್ನು ಅನುಸರಿಸಿ ತನ್ನ ಕೆನ್ನಾಲಿಗೆಯನ್ನು ಚಾಚುತ್ತದೆ.

‘ಭಯವೇ ಭಕ್ತಿಯ ಮೂಲವಯ್ಯ’ ಎಂಬಂತೆ, ಭಯ ಇದ್ದೆಡೆ ಅಂಧಕಾರ, ಮೌಢ್ಯತೆ, ಮೂಢನಂಬಿಕೆ, ಅಂಧಶ್ರದ್ಧೆಗಳ sarala-vaastuಭಕ್ತಿ ಮನೆಮಾಡುವುದರಲ್ಲಿ ಎರಡನೆಯ ಮಾತಿಲ್ಲ. ಭಯದ ಮೂಲ, ತಿಳಿವಳಿಕೆಯ ಕೊರತೆ ಇರಬಹುದೇ ಹೊರತು, ಸಾಕ್ಷರತೆಯ ಕೊರತೆ ಇರಲಾರದು. ಏಕೆಂದರೆ ಇತ್ತೀಚಿನ ದಿನಳಲ್ಲಿ ಅಕ್ಷರ ಜ್ಞಾನವಿಲ್ಲದವರಿಗಿಂತ ಅಕ್ಷರ ತಿಳಿದ ಮತ್ತು ನಗರವಾಸಿಗಳೇ ಇಂತಹ ಮೌಢ್ಯತೆಗೆ ಹೆಚ್ಚು ಹೆಚ್ಚು ಬಲಿಯಾಗತ್ತಿದ್ದಾರೆ.

ಪಠ್ಯಕ್ರಮದಲ್ಲಿ ಅಭ್ಯಸಿಸುವುದೇ ಒಂದು, ನಿಜ ಜೀವನದಲ್ಲಿ ಅಳವಡಿಸಿಕೂಳ್ಳುವುದೇ ಮತ್ತೊಂದಾಗಿದೆ. ಓದಿನಿಂದ ಅಕ್ಷರಸ್ತರಾಗುತ್ತಿದ್ದಾರೆಯೇ ವಿನಃ, ಜ್ಞಾನವಂತರಾಗುತ್ತಿರುವವರ ಸಂಖ್ಯೆ ವಿರಳ. ಇದಕ್ಕೆ ಪೂರಕ ಎಂಬಂತೆ ನಮ್ಮ ಸುತ್ತಮುತ್ತಲಿನ ಸಮಾಜಘಾತುಕ ಪಟ್ಟಭದ್ರ ಹಿತಾಸಕ್ತಿಗಳು, ಮೂಲಭೂತವಾದಿಗಳು ನಮ್ಮ ಜೀವನಕ್ಕೆ ವ್ಯವಸ್ಥಿತ ಸಂಚಿನೊಡನೆ ಜನಮಾನಸದಲ್ಲಿ ಮೌಢ್ಯವನ್ನು ಬಿತ್ತುತ್ತಾ ತಮ್ಮ ಹಾದಿಯನ್ನು ಸುಗಮಗೊಳಿಸಿಕೂಳ್ಳುತ್ತಿವೆ.

ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನ, ಜಾಗತೀಕರಣ, ಉದಾರಿಕರಣ ಫಲಶೃತಿಯಿಂದ ಮಾನವನ ಜೀವನವನ್ನು ಸುಲಭೀಕರಿಸುವುದರೊಂದಿಗೆ ಸುಖ ಭೋಗದ ಜೀವನಕ್ಕೆ ದಾರಿಯಾಗಿವೆ. ಐಷಾರಾಮಿ ಜೀವನಕ್ಕೆ ಮಾರುಹೋಗುವ ಮನಸ್ಸು, ತನ್ನ ಮನಸ್ಸಾಕ್ಷಿಗೆ ವಿರುದ್ದವಾಗಿ ಗಳಿಸಿ, ತನ್ನ ಅವಶ್ಯಕತೆ, ಅನಾವಶ್ಯಕತೆಗಳನ್ನು ಯೋಚಿಸದೇ ಪರರನ್ನು ಹಿಂಬಾಲಿಸುತ್ತಾ ಕೊಳ್ಳುಬಾಕ ಸಂಸ್ಕೃತಿಗೆ ಮಾರುಹೋಗಿ ಪುಟ್ಟ ಸಂಸಾರಕ್ಕೆ ಭೌವ್ಯ ಭಂಗಲೆಯೊಂದನ್ನು ನಿರ್ಮಿಸಿ ’ನೆಮ್ಮದಿಯ ಗುಡಿಸಲು’ ಎಂದು ನಾಮಕರಣ ಮಾಡಿ ವಾಸ್ತವ್ಯ ಹೂಡಿದರೆ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯವೇ? ಪಾಪಪ್ರಜ್ಞೆ ಕಾಡದಿರಲು ಸಾಧ್ಯವೇ?

ಸರ್ಕಾರಕ್ಕೆ ತೆರಿಗೆ ಸರಿಯಾದ ರೀತಿ ಸಂದಾಯ ಮಾಡಿ, ಭ್ರಷ್ಟಾಚಾರದಲ್ಲಿ ತೊಡಗದೆ, ಪರರನ್ನು ಆಥವಾ ಸಂಬಂಧಿಕರನ್ನುsarala-vastu ವಂಚಿಸದೆ ತಮ್ಮ ನಿಜವಾದ ನ್ಯಾಯಯುತ ಗಳಿಕೆಯಿಂದ ಜೀವನ ಸಾಗಿಸುವವರಿಗೆ ಪಾಪಪ್ರಜ್ಞೆ ಕಾಡಲು ಹೇಗೆ ಸಾಧ್ಯ ಈ ಪಾಪಪ್ರಜ್ಞೆಯ ಮುಂದುವರೆದ ಭಾಗವಾಗಿ ಆಂಧಕಾರ ಮೌಢ್ಯತೆ ಮನೆಮಾಡುತ್ತದೆ. ನೆಮ್ಮದಿಯ ಬದುಕು ದೂರವಾಗುತ್ತದೆ. ಇದ್ದ ನೆಮ್ಮದಿಯನ್ನು ಹಾಳು ಮಾಡಿಕೂಂಡು ಇಲ್ಲದ ನೆಮ್ಮದಿಯನ್ನು ಅರಸುತ್ತಾ ತಮ್ಮ ಪಾಪದ ಫಲಶೃತಿಗಳಿಗೆ ಪರಿಹಾರ ಹುಡುಕುತ್ತಾ ಮೌಢ್ಯತೆಗಳಲ್ಲೊಂದಾದ ವಾಸ್ತುವಿನ ಮರೆ ಹೋಗುತ್ತಾರೆ.

ಸರಳ ವಾಸ್ತುವಿನಲ್ಲಿ ಅಲ್ಪ-ಸ್ವಲ್ಪ ವಿಜ್ಞಾನ ಅಡಗಿರಬಹುದು. ಆ ವಿಜ್ಞಾನ ನಮ್ಮ ಕುಗ್ರಾಮದ ಕಟ್ಟಡ ಕಾರ್ಮಿಕನ ಜ್ಞಾನಕಿಂತ ಹೆಚ್ಚಿನದೇನೂ ಇರಲು ಸಾಧ್ಯವಿಲ್ಲ. ಇರುವ ಸ್ಥಳದಲ್ಲಿ ವ್ಯವಸ್ಥಿತವಾಗಿ, ಕಲಾತ್ಮಕವಾಗಿ ಕಟ್ಟಡ ನಿರ್ಮಿಸಲು ವಾಸ್ತುಶಿಲ್ಪಿಯ ಅವಶ್ಯಕತೆ ಇರುವುದೇ ಹೊರತು. ಸರಳ ವಾಸ್ತುಶಾಸ್ತ್ರದ ಪಂಡಿತನ ಸಲಹೆ ಸೂಚನೆಗಳಲ್ಲ.

ಇಂದಿನ ಜಾಗತೀಕರಣದ, ಉದಾರೀಕರಣ ಮತ್ತು ರಾಜಕೀಯ ನೀತಿಗಳು ’ಹಳ್ಳಕ್ಕೇ ನೀರು ಹರಿಯುವಂತೆ’ ಉಳ್ಳವರನ್ನು ಹೆಚ್ಚು ಉಳ್ಳವರನ್ನಾಗಿಸುತ್ತಾ, ಬಡವರನ್ನು ಅತೀ ಬಡವರನ್ನಾಗಿಸುತ್ತಾ, ಬಡವ-ಬಲ್ಲಿದರ ನಡುವಿನ ಅಂತರ ಹೆಚ್ಚಿಸುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ನಮ್ಮಗಳ ನಡುವೆಯೇ ನಾಗರಿಕ ಯುದ್ದ ಸಂಭವಿಸುವ ಸಮಯ ದೂರವೇನಿಲ್ಲ.

ಹಿಂದಿನ ದಿನಗಳಲ್ಲಿ ಮತ್ತು ಇಂದೂ ಮುಂದುವರೆದಂತೆ ಹಸಿವಿನಿಂದ ಬಳಲುತ್ತಿರುವವರ ಸಮ್ಮುಖದಲ್ಲೇ ಮೌಢ್ಯತೆಯ ಹೆಸರಿನಲ್ಲಿ ಆಥವಾ ಶ್ರೀಮಂತಿಕೆಯ ತೋರಿಕೆಯ ಅಹಂನ ಮಧದಲ್ಲಿ ಆಹಾರಧಾನ್ಯಗಳನ್ನು ಅಪವ್ಯಯಮಾಡುವುದು, ಧನದಾಹಿ ವ್ಯಾಪಾರಸ್ಥರು ಅಹಾರಧಾನ್ಯಗಳ ಕೃತಕ ಅಭಾವ ಸೃಷ್ಟಿಸಿ house-plansಹಣಗಳಿಸುವುದು, ಹಣವಂತರು ಅಕ್ರಮ ಬಡ್ಡಿ ದಂಧೆಯಲ್ಲಿ ತೊಡಗಿಸಿಕೊಳ್ಳುವುದು, ಸರ್ಕಾರಿ ಕೆಲಸಗಳಲ್ಲಿ ಭ್ರಷ್ಟಾಚಾರದಲ್ಲಿ ತೊಡಗುವುದು. ಅವಶ್ಯಕತೆ ಇಲ್ಲದಿದ್ದರೂ ಹೆಚ್ಚು ಹೆಚ್ಚು ಸೈಟುಗಳನ್ನು ಖರೀದಿಸುವುದು ಅಥವಾ ಹಣ ಹೆಚ್ಚಾಗಿರುವವರು ಸುಸ್ಥಿತಿಯಲ್ಲೇ ಇರುವ ಮನೆಯನ್ನು ನವೀಕರಿಸಲು ಪ್ರಾರಂಭಿಸಿ ಮೂಲ ಮನೆಯ ಆಕೃತಿಯನ್ನೇ ಇಲ್ಲವಾಗಿಸಿಕೊಳ್ಳುವುದು. ಇವುಗಳೆಲ್ಲಾ ನೇರವಾಗಿ ಅಥವಾ ಪರೋಕ್ಷವಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುವ ಸನ್ಮಂಗಳ ಕಾರ್ಯಗಳೇ ಆಗಿವೆ. ಇಂಥವರಿಗೆ ಪಾಪಪ್ರಜ್ಞೆ ಕಾಡದಿರಲು ಸಾಧ್ಯವೇ?

ನಮ್ಮ ಜೀವಿತಾವಧಿಯಲ್ಲಿ ಸಾವು, ನೋವು ಆಥವಾ ಯಾವುದಾದರೊಂದು ಅವಘಡ ಸಂಭವಿಸಿದ ಪಕ್ಷದಲ್ಲಿ ನಮ್ಮ ಮನೆಯ ವಾಸ್ತುವಿಗೂ ಸಂಭವಿಸಿದ ಘಟನೆಗಳಿಗೂ ಸಂಬಂಧವಿರಲು ಸಾಧ್ಯವೇ? ನಮ್ಮ ಮನೆಗಳಲ್ಲಿ ನಡೆದ ಅಶುಭಗಳಿಗೆ ಪಾಪಪ್ರಜ್ಞೆ ಕಾಡಿ ಕಾರಣ ಹುಡುಕಿ ಜ್ಯೋತಿಷಿಯನ್ನು ಸಂಪರ್ಕಿಸಿದರೆ ಮುಗಿಯಿತು. ಆ ಜ್ಯೋತಿಷಿಯೇನು ಆಜ್ಞಾನಿಯಾಗಿರುವುದಿಲ್ಲ, ಅಲ್ಪ-ಸ್ವಲ್ಪ ಪ್ರಸಕ್ತ ಸಮಾಜಿಕ ಸ್ಥಿತಿಗತಿಯನ್ನು ಅರಿತು ಮನೋತಜ್ಞನೂ ಆಗಿರುತ್ತಾನೆ. ಅವನ ಕಸುಬಿನ ಸಲಹೆ ಸೂಚನೆಗಳನ್ನು ಅರಸಿ ಅವನನ್ನು ಸಂಪರ್ಕಿಸುವ ಜನಸಾಮಾನ್ಯರಿಂದ ಮತ್ತು ಅನುಭವದಿಂದ ಈ ಜ್ಞಾನವನ್ನು ಮೈಗೂಡಿಸಿಕೊಂಡಿರುತ್ತಾನೆ. ನಮ್ಮ ಪೂರ್ವಪರವನ್ನು ಸವಿವರವಾಗಿ ವಿಚಾರಿಸಿ, ಕುಲಂಕುಷವಾಗಿ ಚರ್ಚಿಸಿ. ನಮ್ಮ ಶ್ರೀಮಂತಿಕೆಗೆ ಅನುಗುಣವಾಗಿ ಪರಿಹಾರವನ್ನು ಸೂಚಿಸುತ್ತಾನೆ.

ಮಾತಿನ ಮಧ್ಯೆ ಮನೆಯ ವಿನ್ಯಾಸದ ಬಗ್ಗೆ ಚಕಾರವೆತ್ತಿದರೆ ಮುಗಿಯಿತು. ವಾಸ್ತು ಪರಿಶೋಧಕರು, ಸರಳ ವಾಸ್ತು ವಿನ್ಯಾಸಕರು, model-houseಗುತ್ತಿಗೆದಾರರು, ಕಟ್ಟಡ ಕಾರ್ಮಿಕರು, ವಾಸ್ತುವಿನ ಅನುಸಾರವಾಗಿ ಬಣ್ಣಮಾರುವವರು, ಅದಕ್ಕನುಸಾರವಾಗಿ ಬಣ್ಣಬಳಿಯುವವರು. ಅದಕ್ಕೂಂದು ಪೂಜೆ ಹೋಮ ಹವನ ಹೀಗೆ ಮುಂದುವರೆಯುತ್ತದೆ. ಪ್ರಜ್ಞಾವಂತರು ಪ್ರಜ್ಞಾಪೂರ್ವಕವಾಗಿ ಮಾಡಿದ ಪಾಪಕರ್ಮದ ಪೂಜಾಫಲ ಪ್ರಾಯಶ್ಚಿತ್ತ.

ಈ ವಿಷವರ್ತುಲವನ್ನು ಪ್ರವೇಶಿಸುವುದು ಸುಲಭ ಮತ್ತು ಸರಳವಾದರೂ ಹೊರ ಬರುವುದರೊಳಗೆ ನಮ್ಮ ಆಯಸ್ಸಿನ ಕಡೆಯ ಹಂತ ತಲುಪಿರುತ್ತದೆ. ನಮಗೆ ತಿಳುವಳಿಕೆ ಮೂಡುವುದರೊಳಗಾಗಿ ಇದೇ ನಂಬಿಕೆಗಳು ನಮ್ಮ ಮುಂದಿನ ಪೀಳಿಗೆಗಳಿಗೂ ಸಾಂಕ್ರಾಮಿಕ ರೋಗದಂತೆ ಹರಡಿರುತ್ತವೆ.

ಪಾಪ, ಪುಣ್ಯಗಳಿಲ್ಲದ ಮನುಜನಾಗಿ ಜನಿಸಿದ ಮೇಲೆ, ನಮ್ಮ ನ್ಯಾಯಯುತ ಗಳಿಕೆಯ ಬದುಕಿಗೇಕೆ ಬೇಕು ಸರಳ ವಾಸ್ತುವಿನ ಪರಿಹಾರ?

ಮರೆತು ಹೋದ 1949ರಲ್ಲಿ ಕೊಟ್ಟ ವಾಗ್ದಾನ

ಮೂಲ : ವಿದ್ಯಾ ಸುಬ್ರಮಣ್ಯಂ
ಅನುವಾದ : ಬಿ.ಶ್ರೀಪಾದ ಭಟ್

ರಾಷ್ಟ್ರೀಯ ಸ್ವಯಂ ಸೇವಕ ಸಂಘವು ತಾನು ಸಕ್ರಿಯ ರಾಜಕಾರಣದಿಂದ ದೂರವಿರುತ್ತೇನೆ ಎಂದು ತನ್ನ ಪಕ್ಷದ ಸಂವಿಧಾನದಲ್ಲಿ ಅತ್ಯಂತ ಸ್ಪಷ್ಟವಾಗಿ ಬರೆದಿದೆ. ತನ್ನ ಪಕ್ಷದ ಸಂವಿಧಾನವನ್ನು ಸಹ ಅನಿವಾರ್ಯವಾಗಿ ಆಗಿನ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಒತ್ತಾಯದ ಮೇರೆಗೆ 1949 ರಲ್ಲಿ ಬರೆದಿತ್ತು ಆರೆಸಸ್. ಆದರೆ ಭಾರತದ ಆ ಕಾಲದ ಇತಿಹಾಸವನ್ನು 2013ರ ಘಟನೆಗಳು ಸಂಪೂರ್ಣವಾಗಿ ಅಳಸಿಹಾಕುತ್ತವೆ. Sardar_patelಇಂದು ಆರೆಸಸ್ ಭಾರತೀಯ ಜನತಾ ಪಕ್ಷವನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ತನ್ನ ಪಕ್ಷದೊಳಗಿನ ಅಂತರಿಕ ಭಿನ್ನಮತವನ್ನು ಸಂಪೂರ್ಣವಾಗಿ ತಳ್ಳಿಹಾಕಿ ನರೇಂದ್ರ ಮೋದಿಯನ್ನು ತನ್ನ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಬಹಿರಂಗವಾಗಿ ಘೋಸಿತು. ರಾಜಕೀಯವಾಗಿ ತಾನು ಸನ್ನಧ್ಧ ಎಂದು ಇದಕ್ಕಿಂತಲೂ ಮಿಗಿಲಾಗಿ ಹೇಳಲು ಸಾಧ್ಯವಿಲ್ಲ

ಒಂದು ಕಾಲದ ಜನಸಂಘ ಮತ್ತು ಈಗಿನ ಬಿಜೆಪಿಯನ್ನು ಹುಟ್ಟಿ ಹಾಕಿದ್ದು ಆರೆಸಸ್. ಆಗಿನ ಜನಸಂಘದ ಸಾಂಸ್ಕೃತಿಕ ಮತ್ತು ರಾಜಕೀಯ ಘಟಕಗಳಾಗಿ ಅದರ ಸ್ವಯಂಸೇವಕರು ನೇಮಕಗೊಂಡಿದ್ದರು. ತನ್ನ ಪಕ್ಷದ ಸಂವಿಧಾನದಲ್ಲಿ ತಾನು ರಾಜಕೀಯದಿಂದ ದೂರವಿರುವುದನ್ನು ಸ್ಪಷ್ಟವಾಗಿ ಹೇಳಿದ್ದ ಆರೆಸಸ್ ತನ್ನ ಸ್ವಯಂಸೇವಕರಿಗೆ ಮಾತ್ರ ರಾಜಕೀಯವನ್ನು ಪ್ರವೇಶಿಸುವುದಕ್ಕೆ ಅನುಮತಿಯನ್ನು ನೀಡಿತ್ತು. ಇದನ್ನೇ ತನ್ನ ಅನುಕೂಲಸಿಂಧು ರಾಜಕಾರಣಕ್ಕೆ ಬಳಸಿಕೊಂಡ ಆರೆಸಸ್ ತನ್ನ ಸ್ವಯಂಸೇವಕರನ್ನು ಜನಸಂಘ/ಬಿಜೆಪಿಯಲ್ಲಿ ಆಯಕಟ್ಟಿನ ಸ್ಥಾನಗಳಲ್ಲಿ ಕೂರಿಸಿತು. ಆರೆಸಸ್‌ನ ತಳಮಟ್ಟದ ಕಾರ್ಯಕರ್ತರಾಗಿ ಜನಸಂಘ/ಬಿಜೆಪಿಯನ್ನು ಪ್ರವೇಶಿಸಿದ ಲಾಲ್‌ಕೃಷ್ಣ ಅಡ್ವಾನಿಯವರಿಂದ ನರೇಂದ್ರ ಮೋದಿಯವರೆಗೂ ಪ್ರತಿಯೊಬ್ಬ ನಾಯಕರೂ ನಂತರ ದೆಹಲಿ ಮತ್ತು ನಾಗಪುರದ ಆರೆಸಸ್ ಕಛೇರಿಗೆ ತೀರ್ಥಯಾತ್ರೆಯಂತೆ ಭೇಟಿಕೊಡುತ್ತಿದ್ದುದು ಒಂದು ಕಡ್ಡಾಯವಾದ ಪಠ್ಯಕ್ರಮವಾಗಿತ್ತು. ಆದರೆ ಆರೆಸಸ್‌ನ ಮುಖ್ಯಸ್ಥ ಸರಸಂಚಾಲಕ ಮಾತ್ರ ಬಹಿರಂಗವಾಗಿ ತನ್ನ ಹಕ್ಕನ್ನು ಪ್ರತಿಪಾದಿಸುವಂತಿಲ್ಲವೆಂಬುದು ಬಿಜೆಪಿ ಮತ್ತು ಆರೆಸಸ್ ನಡುವಿನ ಒಂದು ಆನಧಿಕೃತ ವಿಷಯವಷ್ಟೇ. ಈ ಹಿನ್ನೆಲೆಯಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲರೊಂದಿಗೆ ಮಾಡಿಕೊಂಡ ಒಪ್ಪಂದಂತೆ 1977-79 ಮತ್ತು 1998-2004 ಸಂದರ್ಭದ ಕೇಂದ್ರ ಸರ್ಕಾರಗಳಲ್ಲಿ ಆರೆಸಸ್ ಬಹಿರಂಗ ರಾಜಕಾರಣದಿಂದ ದೂರವುಳಿದತ್ತು. 2013 ರ ರಾಜಕೀಯ ವಿದ್ಯಮಾನಗಳು ವಿಚಿತ್ರ ತಿರುವುಗಳನ್ನು ಪಡೆದುಕೊಂಡು ತೆರೆಮರೆಯಲ್ಲಿದ್ದ ಆರೆಸಸ್ ಹಠಾತ್ತಾನೆ ಮುನ್ನೆಲೆಗೆ ಬಂದು ಅಧಿಕಾರದ ಚುಕ್ಕಾಣಿಯನ್ನು ಕೈಗೆತ್ತಿಕೊಂಡಿತು.

2005 ರಿಂದೀಚಿಗಿನ ಕಳೆದ ಕೆಲವು ವರ್ಷಗಳ ವಿದ್ಯಮಾನಗಳನ್ನು ಅವಲೋಕಿಸಿದಾಗ ಅಡ್ವಾನಿಯವರು ತಮ್ಮ ಪಾಕಿಸ್ತಾನದ ಭೇಟಿಯ ಸಂದರ್ಭದಲ್ಲಿ ಜಿನ್ನಾರನ್ನು ಪ್ರಶಂಸಿಸಿ ಮಾತನಾಡಿದ್ದು ಸಂಘಪರಿವಾರವನ್ನು ಎಷ್ಟರಮಟ್ಟಿಗೆ ಕೆರಳಿಸಿತೆಂದರೆ ಅಡ್ವಾನಿಯವರನ್ನು ಬಿಜೆಪಿಯ ಅಧ್ಯಕ್ಷ ಪದವಿಯಿಂದ ನಿರ್ಗಮಿಸುವವರೆಗೂ ಬಿಡಲಿಲ್ಲ. ತದನಂತರ 2009 ರಲ್ಲಿ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿಯೆಂದು ಬಿಂಬಿತವಾದರೂ ಅಡ್ವಾನಿಯವರ ವರ್ಚಸ್ಸು ಸಂಘಪರಿವಾರದಲ್ಲಿ ಸಂಪೂರ್ಣವಾಗಿ ಕಳೆಗುಂದಿತ್ತು. Advaniಅಡ್ವಾನಿಯವರ ಕಡೆಗಣಿಸುವಿಕೆಯ ಪ್ರಕ್ರಿಯೆ 2005 ರಿಂದ ಶುರುವಾಗಿ ಅದು ಇಂದು ಅವರನ್ನು ಪಕ್ಷದೊಳಗೆ ಸಂಪೂರ್ಣವಾಗಿ ಏಕಾಂಗಿಯನ್ನಾಗಿ ಮೂಲೆಗುಂಪು ಮಾಡುವವರೆಗೂ ಬಂದು ತಲುಪಿದೆ. ಇದರಿಂದ ಹತಾಶರಾಗಿದ್ದ ಅಡ್ವಾನಿಯವರು 2005ರ ಸೆಪ್ಪೆಂಬರ್‌ನಲ್ಲಿ ಚೆನ್ನೈಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯ ಅಂತಿಮ ದಿನದಂದು ಮಾತನಾಡುತ್ತ “ತನ್ನ ಪಕ್ಷ ಬಿಜೆಪಿಯು ಆರೆಸಸ್‌ನೊಂದಿಗೆ ಸಮಾಲೋಚಿಸದೆ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುವುದಿಲ್ಲ. ಈ ನೀತಿಯು ಪಕ್ಷಕ್ಕಾಗಲೀ ಆರೆಸಸ್‌ಗಾಗಲಿ ಯಾವುದೇ ಒಳಿತನ್ನು ಮಾಡುವುದಿಲ್ಲ. ಈ ನೀತಿಯಿಂದ ಆರೆಸಸ್‌ನ ಧ್ಯೇಯವಾದ ರಾಷ್ಟ್ರ ನಿರ್ಮಾಣದ ಕಾರ್ಯಕ್ಕೆ ಹಿನ್ನೆಡೆ ಉಂಟಾಗುತ್ತದೆ. ಆರೆಸಸ್ ಮತ್ತು ಬಿಜೆಪಿ ಈ ಭಾವನೆಯನ್ನು ಹೋಗಲಾಡಿಸಲು ಒಂದಾಗಿ ಪ್ರಯತ್ನಿಸಬೇಕು.” ಎಂದು ಹೇಳಿದರು. ಆಡ್ವಾನಿಯವರು ದಾಕ್ಷಿಣ್ಯವಿಲ್ಲದೆ ಆಗ ಆರೆಸಸ್ ಅನ್ನು ತಂಟೆಕೋರನೆಂದು ಕರೆದರು. ಆದರೆ ಏಳು ವರ್ಷಗಳ ನಂತರ ನರೇಂದ್ರ ಮೋದಿಯನ್ನು ಮೊದಲು ಚುನಾವಣಾ ಪ್ರಚಾರದ ಅಧ್ಯಕ್ಷನನ್ನಾಗಿಯೂ ನಂತರ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿಯೂ ಪಟ್ಟ ಕಟ್ಟಿದ ಆರೆಸಸ್ ಆ ಮೂಲಕ ಮತ್ತೊಮ್ಮೆ ಬಿಜಿಪಿ ಮೇಲಿನ ತನ್ನ ಆಧಿಕಾರವನ್ನು ದಾಖಲಿಸಿತು. ಜೂನ್ 11, 2013ರಲ್ಲಿ ಸಂಘಪರಿವಾರವು ಈಗಿನ ಸರಸಂಚಾಲಕರಾದ ಮೋಹನ ಭಾಗವತ್ ಅವರು ಅಡ್ವಾನಿಯವರನ್ನು ಮಾತನಾಡಿಸಿ ಬಿಜೆಪಿಯ ಸಂಸದೀಯ ಮಂಡಳಿಯ ನಿರ್ಣಯವನ್ನು ಗೌರವಿಸಬೇಕೆಂದು, ರಾಷ್ಟ್ರದ ಹಿತವನ್ನು ಗಮನದಲ್ಲಿರಿಸಿಕೊಂಡು ಪಕ್ಷವನ್ನು ಮುನ್ನಡೆಸಬೇಕೆಂದು ಹೇಳಿದರು ಎಂದು ತನ್ನ ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿತು. ಬಿಜೆಪಿಯಿಂದ ಅಡ್ವಾನಿಯವರಿಗೆ ಬೇಡಿಕೆಯನ್ನು ಸಲ್ಲಿಸಿದ್ದರೆ ಆರೆಸಸ್ ಮುಖ್ಯಸ್ಥ ಮೋಹನ್ ಭಾಗವತ್‌ರು ಅಡ್ವಾನಿಯವರಿಗೆ ಆಜ್ಞೆಯನ್ನು ನೀಡಿದ್ದರು. ಪದಗಳು ಸೌಜನ್ಯತೆಯಿಂದ ಕೂಡಿದ್ದರೂ ಆ ಮೂಲಕ ತಲುಪಿಸಿದ ಸಂದೇಶ ಮಾತ್ರ ಕಟುವಾಗಿತ್ತು. ಈ ರೀತಿಯಾಗಿ 2005 ರಲ್ಲಿ ಶುರುವಾದ ಬಿಜೆಪಿಯ ಕಬ್ಜಾ ಪ್ರಕ್ರಿಯೆ 2013 ರ ವೇಳೆಗೆ ಸಂಪೂರ್ಣಗೊಂಡು ತನ್ನ ಲಾಜಿಕಲ್ ಗುರಿಯನ್ನು ಮುಟ್ಟಿದೆ.

1949 ರಲ್ಲಿ ಪಟೇಲರಿಗೆ ಕೊಟ್ಟ ಮಾತಿನ ಪ್ರಕಾರ ತನ್ನ ಪಕ್ಷದ ಸಂವಿಧಾನವನ್ನು ರಚಿಸಿದ ಆರೆಸಸ್ ಅದರಲ್ಲಿ ರಾಜಕೀಯವನ್ನು ಪ್ರವೇಶಿಸುವುದಿಲ್ಲವೆಂದೂ ತನ್ನನ್ನು ಕೇವಲ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸೀಮಿತಗೊಳಿಸಿಕೊಳ್ಳುವುದೆಂದೂ ಸ್ಪಷ್ಟವಾಗಿ ತಿಳಿಸಿತ್ತು. 1948 ರಲ್ಲಿ ಗಾಂಧಿ ಹತ್ಯೆಯ ಸಂದರ್ಭದಲ್ಲಿ ಆರೆಸಸ್‌ನ ಮೇಲೆ ವಿಧಿಸಿದ ನಿರ್ಬಂಧನೆಯನ್ನು ಹಿಂತೆಗುದುಕೊಳ್ಳುವ ಸಂದರ್ಭದಲ್ಲಿ ಮೇಲಿನ ಕಂಡೀಶನ್ ಅನ್ನು ಪ್ರ್ರಮುಖವಾಗಿ ಪ್ರತಿಪಾದಿಸಿದ್ದರು ಆಗಿನ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್. ಆರೆಸಸ್ gandhi_dead_bodyಅನ್ನು ಗಾಂಧಿಯವರ ಹತ್ಯೆಗೆ ನೇರವಾಗಿ ಕಾರಣವೆಂದು ಆಪಾದಿಸದಿದ್ದರೂ ಆರೆಸಸ್‌ನ ಹಿಂಸಾತ್ಮಕ ನಡುವಳಿಕೆ ಮತ್ತು ಪ್ರಚೋದನಾತ್ಮಕ ಚಿಂತನೆಗಳೇ ಗಾಂಧಿಯವರ ಹತ್ಯೆಗೆ ಕಾರಣಗಳಲ್ಲೊಂದು ಎಂದು ಪಟೇಲರು ನಂಬಿದ್ದರು. ಗಾಂಧೀಜಿಯವರ ಹತ್ಯೆಯ ನಂತರ ಆರೆಸಸ್ ಅನ್ನು ನಿಷೇಧಿಸಲು 4 ನೇ ಫೆಬ್ರವರಿ 1948 ರಂದು ಹೊರಡಿಸಿದ ನೋಟಿಫಿಕೇಶಿನಿನಲ್ಲಿ ಆಗಿನ ಸರ್ಕಾರವು “ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ಮೂಲಭೂತ ಆದರ್ಶಗಳಾದ ಭ್ರಾತೃತ್ವ, ಪ್ರೀತಿ, ಸಮಾನತೆಗಳನ್ನು ಪಾಲಿಸಲಿಲ್ಲ. ಬದಲಾಗಿ ಸಂಘಪರಿವಾರದ ಸದಸ್ಯರು ಗುರುತರವಾದ ಭಯ ಹುಟ್ಟಿಸುವ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಸಂಘಪರಿವಾರದ ಸದಸ್ಯರು ವ್ಯವಸ್ಥೆಯಲ್ಲಿ ಹಿಂಸೆಯನ್ನು ಹುಟ್ಟುಹಾಕಿದರು. ದರೋಡೆ, ಗಲಭೆ, ಹತ್ಯೆಗಳನ್ನು ನಡೆಸಿದರು. ಶಸ್ತ್ರಗಳನ್ನು, ಹಣವನ್ನು ವಸೂಲಿ ಮಾಡಿದರು. ದ್ವೇಷಮಯವಾದ, ಗಲಭೆಗಳನ್ನು ನಡೆಸುವಂತೆ ಕರೆಕೊಡುವಂತಹ, ಭಯೋತ್ಪಾದಕ ಪಾಠಗಳನ್ನು ತಿಳಿಸುವಂತಹ ಕರಪತ್ರಗಳನ್ನು ಸಾರ್ವಜನಿಕವಾಗಿ ಹಂಚಿದರು. ಈ ಕಾರ್ಯತಂತ್ರಗಳನ್ನು ಗುಪ್ತವಾಗಿ ನಡೆಸಿದರು,” ಎಂದು ಅಭಿಪ್ರಾಯಪಟ್ಟಿತು.

4 ನೇ ನವೆಂಬರ್‌ನಲ್ಲಿ ಪಟೇಲ್ ಅವರು ನೀಡಿದ ಪತ್ರಿಕಾ ಹೇಳಿಕೆಯಲ್ಲಿ, “ಇತರೇ ರಾಜ್ಯಗಳಿಂದಲೂ ಈ ಆರೆಸಸ್ ವಿರುದ್ಧ ನಮಗೆ ದೂರುಗಳು ಬಂದಿವೆ. ಆ ದೂರುಗಳ ಪ್ರಕಾರ ಆರೆಸಸ್ ಸದಸ್ಯರು ನಡಾವಳಿಗಳು ದೇಶ ವಿರೋಧಿ ಲಕ್ಷಣಗಳನ್ನು ಹೊಂದಿದ್ದು. ಸದಾ ಗಲಭೆಗಳನ್ನು ಪ್ರಚೋದಿಸುತ್ತಿದ್ದರು,” ಎಂದು ತಿಳಿಸಿದ್ದರು.

ಇದಕ್ಕೂ ಮುಂಚೆ ಗೃಹಮಂತ್ರಿ ಎರಡು ಪತ್ರಗಳನ್ನು ಬರೆದಿದ್ದರು. ಮೊದಲನೇ ಪತ್ರವನ್ನು ಜುಲೈ 1948ರಲ್ಲಿ ಆಗಿನ ಆರೆಸಸ್ ಮುಖ್ಯಸ್ಥ ಶ್ಯಾಮ್ ಪ್ರಸಾದ್ ಮುಖರ್ಜಿಯವರಿಗೆ ಬರೆದಿದ್ದರು. ಅದರಲ್ಲಿ ಆರೆಸಸ್ ಚಟುವಟಿಕೆಗಳು ಸರ್ಕಾರದ ವಿರುದ್ಧದ ಪಿತೂರಿಯಾಗಿದೆ. ಸರ್ಕಾರದ ಇರುವಿಕೆಗೇ ಭಂಗ ತರುವಂತಿದೆ. ಬುಡಮೇಲು ಮಾಡುವಂತಹ ಅದರ ಕೃತ್ಯಗಳು ದಿನಗಳೆದಂತೆ ಹೆಚ್ಚಾಗುತ್ತಿವೆ ಎಂದು ಸ್ಪಷ್ಟವಾಗಿ ಬರೆದಿದ್ದರು.

11 ನೇ ಸೆಪ್ಟೆಂಬರ್ 1948 ರಂದು ಗೋಳ್ವಾಲ್ಕರ್ ಅವರಿಗೆ ಬರೆದ ಎರಡನೇ ಪತ್ರದಲ್ಲಿ ಪಟೇಲರು “Gandhi's Funeralಇಂದು ಆರೆಸಸ್ ಹುಟ್ಟುಹಾಕಿದ ದ್ವೇಷದ ಚಿಂತನೆಗಳಿಂದಾಗಿ ದೇಶದಲ್ಲಿ ಸೃಷ್ಟಿಗೊಂಡ ಕಮ್ಯೂನಲ್‌ನ ವಿಷಯುಕ್ತ ವಾತಾವರಣ ಗಾಂಧಿಯವರನ್ನು ಬಲಿ ತೆಗೆದುಕೊಂಡಿತು. ಗಾಂಧೀಜಿವರು ತೀರಿಕೊಂಡ ಬಳಿಕ ಆರೆಸಸ್ ಸದಸ್ಯರು ಸಿಹಿಯನ್ನು ಹಂಚಿದರು. ಇದು ನಾಗರಿಕರಲ್ಲಿ ತಿರಸ್ಕಾರವನ್ನು ಹುಟ್ಟಿಸಿದೆ,” ಎಂದು ಬರೆಯುತ್ತಾರೆ.

ಈ ಎಲ್ಲ ಹಿನ್ನೆಲೆಗಳಲ್ಲಿ ಆಗಿನ ಗೃಹಮಂತ್ರಿ ವಲ್ಲಭಭಾಯಿ ಪಟೇಲರು ಆರೆಸಸ್‌ನಿಂದ ದೇಶದ ಧ್ವಜವನ್ನು ಗೌರವಿಸುವಂತೆ ಆದೇಶಿಸುತ್ತಾರೆ (ಕಡೆಗೂ ಆರೆಸಸ್ ಗೌರವಿಸುವುದು ತನ್ನದೇ ಆದ ಭಗವದ್ವಜವನ್ನು). ತನ್ನ ಎಲ್ಲಾ ಚಟುವಟಿಕೆಗಳನ್ನು ಬಹಿರಂಗವಾಗಿ ಕಾನೂನಿನ ಅಡಿಯಲ್ಲಿ ನಡೆಸಬೇಕೆಂತಲೂ, ಸಕ್ರಿಯ ರಾಜಕಾರಣದಿಂದ ದೂರವಿರಬೇಕೆಂತಲೂ ಆರೆಸಸ್‌ನಿಂದ ವಾಗ್ದಾನ ಪಡೆಯುತ್ತಾರೆ.

ಆದರೆ ಇಂದು ಆರೆಸಸ್ ಸಕ್ರಿಯ ರಾಜಕಾರಣಕ್ಕೆ ಮರಳುವ ಮೂಲಕ 1949 ರಲ್ಲಿ ವಲ್ಲಭಭಾಯಿ ಪಟೇಲರಿಗೆ ನೀಡಿದ ವಾಗ್ದಾನವನ್ನು ಭಂಗಗೊಳಿಸಿದೆ.

( ಕೃಪೆ : ದಿ ಹಿಂದೂ, 8ನೇ ಅಕ್ಟೋಬರ್, 2013)

ಗಾಂಧಿ ಜಯಂತಿ ಕಥಾ ಸ್ಪರ್ಧೆ -2013 : ತೀರ್ಪುಗಾರರ ಟಿಪ್ಪಣಿ


– ಡಾ.ರಾಮಲಿಂಗಪ್ಪ ಟಿ. ಬೇಗೂರು


 

ಸ್ಪರ್ಧೆಗೆ ಬಂದಿದ್ದ 50 ಕ್ಕು ಹೆಚ್ಚು ಕಥೆಗಳನ್ನು ಮೊದಲ ಸುತ್ತಿನಲ್ಲಿ ಕೇರಿ, ತೂರಿ ಅಂತಿಮವಾಗಿ 39 ಕಥೆಗಳನ್ನು ಪರಿಶೀಲನೆಗೆ ನೀಡಿದ್ದರು. ಇವುಗಳಲ್ಲಿ ಒಂದೆ ಓದಿನಲ್ಲೆ ಸಾಧಾರಣ ಎನಿಸಿದ್ದರಿಂದ 22 ಕಥೆಗಳನ್ನು ಪಕ್ಕಕ್ಕಿಡುವುದು ಸುಲಭವಾಯಿತು. ಆದರೆ ಉಳಿದ ಹದಿನೇಳು ಕಥೆಗಳು ಸರಿಸಮಾ ಪೈಪೋಟಿಯ ಕಥೆಗಳಾಗಿದ್ದವು. ಮಿತ್ರ ರವಿ ಕೃಷ್ಣಾರೆಡ್ಡಿ ನನ್ನ ಕೋರಿಕೆಯ ಮೇರೆಗೆ ಕಥೆಗಾರರ ಹೆಸರುಗಳನ್ನು ತೆಗೆದು ಬರಿ ಕಥೆಗಳನ್ನು ಮಾತ್ರ ನೀಡಿದ್ದರು. ಇದರಿಂದ ಮಿತ್ರರ ಕಥೆಗಳು ಇಲ್ಲವೆ ಪ್ರಖ್ಯಾತರ ಕಥೆಗಳು ಎಂಬ ಮುಲಾಜಿಲ್ಲದೆ ನಿರುಮ್ಮಳವಾಗಿ ಕಥೆಗಳನ್ನು ಓದಲು ಸಾಧ್ಯವಾಯಿತು. ಅಂತಿಮವಾಗಿ ಆಯ್ಕೆಯಾದ ೫ ಕಥೆಗಳನ್ನು ನಂತರ ಯಾರು ಬರೆದಿದ್ದಾರೆ ಎಂದು ನೋಡಿದಾಗ ಅವರೆಲ್ಲ ಹೊಸಬರೆ ಆಗಿದ್ದರು. ಬರೆದವರಿಗಿಂತ ಕಥೆಯೇ ಮುಖ್ಯ ಅಲ್ಲವೆ?

ಬಹುಮಾನ ಪಡೆಯದ ಕಥೆಗಳೆಲ್ಲ ಒಳ್ಳೆಯವಲ್ಲ ಎಂದಲ್ಲ. ಅಷ್ಟೆ ಅಲ್ಲ ಯಾರಾದರೂ ಒಟ್ಟಿಗೇ ಇಲ್ಲಿನ ಐದೂ ಕಥೆಗಳನ್ನು ಓದಿದರೆ ಅರೆ! katha-sprade-2013ಸಮಾಧಾನಕರ ಬಹುಮಾನ ಕೊಟ್ಟಿರುವ ಕಥೆಗೆ ಮೊದಲ ಬಹುಮಾನವನ್ನೆ ಕೊಡಬಹುದಿತ್ತಲ್ಲ, ಮೊದಲ ಬಹುಮಾನದ ಕಥೆಗೆ ಸಮಾಧಾನಿತ ಬಹುಮಾನ ನೀಡಿದ್ದರೆ ಸಾಕಿತ್ತಲ್ಲ ಅನ್ನಿಸಬಹುದು. ನಾವೇನೇ ವಸ್ತುನಿಷ್ಠವಾದ ಓದು ಎಂದು ಹೇಳಿದರೂ ನಮ್ಮ ಓದುಗಳೆಲ್ಲ ವ್ಯಕ್ತಿನಿಷ್ಠವಾದ ಓದುಗಳೇ ಅಲ್ಲವೆ? ಹಾಗಾಗಿ ಒಂದು ಓದಿಗೆ ಇಲ್ಲಿನ ಈ ಕಥೆಗಳು ಬಹುಮಾನ ಪಡೆದಿವೆ. ಇನ್ನೊಂದು ಓದಿಗೆ ಬೇರೆಯದೆ ಕಥೆಗಳು ಬಹುಮಾನಕ್ಕೆ ಅರ್ಹ ಎನ್ನಿಸಬಹುದು. ತೀರ್ಪುಗಾರರ ಸಂವೇದನೆ, ದೃಷ್ಟಿಕೋನಗಳೆ ಇಂಥ ಕಡೆ ಪ್ರಧಾನ ಎನ್ನುವುದು ನಮಗೆಲ್ಲ ತಿಳಿದ ಸಂಗತಿಯೆ ಅಲ್ಲವೆ?

ಮೊದಲು, ಎರಡನೆ, ಮೂರನೆ ಹೀಗೆ ಕಥೆಗಳನ್ನು ಶ್ರೇಣಿ ಮಾಡಿ ಬಹುಮಾನ ನೀಡುವುದನ್ನು ನಾವು ಒಪ್ಪಬೇಕಿಲ್ಲ; ಹತ್ತು ಒಳ್ಳೆಯ, ಸಶಕ್ತ ಕಥೆಗಳನ್ನು ಓದುವಾಗ ಅವುಗಳಲ್ಲಿ ಒಂದು ಕಥೆಯನ್ನು ಇದು ಶ್ರೇಷ್ಠ ಎಂದೂ ಮತ್ತೊಂದನ್ನು ಕಡಿಮೆ ಎಂದೂ ಶ್ರೇಣಿ ಮಾಡುವ ಸ್ಪರ್ಧಾ ಪರಿಯನ್ನು ನಾವು ಸರಿಯಾದದ್ದು ಎಂದೇನೂ ಭಾವಿಸಬೇಕಿಲ್ಲ. ಒಂದೊಂದು ಕಥೆಗಳೂ ತಮ್ಮ ವಸ್ತು ಸಾಮಗ್ರಿ, ನಿರೂಪಣಾ ಕ್ರಮ ಇತ್ಯಾದಿಗಳಿಂದಾಗಿ ಭಿನ್ನ ಆಗಿ ಇರುತ್ತವೆ. ಹಾಗಿರುವಾಗ ಶ್ರೇಣೀಕರಣ ಮಾಡಿ ಇದು ಮೊದಲ ಬಹುಮಾನಕ್ಕೆ ಅರ್ಹ, ಇದು ಎರಡನೆ ಬಹುಮಾನಕ್ಕೆ ತಕ್ಕುದು ಎಂದು ಸಾಹಿತ್ಯ ಕಥನವನ್ನು ಸ್ಥಾನೀಕರಣ ಮಾಡುವುದು ಅಷ್ಟು ಒಳ್ಳೆಯದೇನೂ ಅಲ್ಲ. ಇಂಥ ಸಮಸ್ಯೆ ಎಲ್ಲ ಸ್ಪರ್ಧೆಗಳಲ್ಲು ಎದುರಾಗುತ್ತದೆ. ಇಲ್ಲೂ ಎದುರಾಗಿತ್ತು. ಆದಾಗ್ಯೂ ಸ್ಪರ್ಧೆಯ ನಿಯಮಗಳನ್ನು ಪಾಲಿಸಿ ಇಲ್ಲಿ ಬಹುಮಾನ ನೀಡಲಾಗಿದೆ.

ಸ್ಪರ್ಧೆಗೆ ಬಂದಿದ್ದ ಮಹಾಂತೇಶ ನವಲಕಲ್ ಅವರ ಡಿಪ್ರೆಶನ್ ಕಥೆ, ಹನುಮಂತ ಹಾಲಿಗೇರಿ ಅವರ ಮಠದ ಹೋರಿ, ಎಸ್.ಬಿ.ಜೋಗುರ ಅವರ ಹೊತ್ತಿಗೊದಗಿದ ಮಾತು, ಕೆ.ಈಶ್ವರ್ ಭಟ್ ಅವರ ಪುಷ್ಪ ಕತೆ, ವೀರನ್ನಾರಾಯಣ ಅವರ ಗುಲಾಬಿ ಚೀಟಿ, ಆನಂದ ಕುಂಚನೂರ ಅವರ ಕೃಷ್ಣ ತುಳಸಿ, ಸೈಫ್ ಜಾನ್ಸ್ ಅವರ ಅಯ್ಯಕ್ಕ, ಬಸು ಬೇವಿನಗಿಡದ ಅವರ ಹಳೇ ಟ್ರಂಕು, ಶಿರೋಳ ಸೋಮಯಾಜಿ ಅವರ ಪದ್ದಕ್ಕನ ಅರಮನೆ, ಶ್ರೀನಾಥ ರಾಯಸಂ ಅವರ ಉಮಿಯೊಳಗಿನ ಬೆಂಕಿ, ಎಚ್.ಎನ್. ಅಪರ್ಣಾ ಅವರ ಹುಡುಕಾಟ ಈ ಎಲ್ಲ ಕಥೆಗಳೂ ತಮ್ಮದೆ ವಿಶಿಷ್ಟತೆ ಇರುವ ಕಥೆಗಳು. ಶಕ್ತ ಕಥೆಗಳು. ಇವುಗಳಲ್ಲಿ ಕೆಲವು ಕಥೆಗಳು ವಿಚಾರವೆ ಮುನ್ನೆಲೆಗೆ ಬಂದು ಕಥನ ಹಿನ್ನೆಲೆಗೆ ಸರಿದಿರುವುದರಿಂದ, ಕೆಲವೆಡೆ ಕಥನ ಲಂಬಿತ ಆಗಿದೆ ಎನ್ನಿಸುವುದರಿಂದ, ಕೆಲವು ಕಥೆಗಳು ಬಂಧ ಮತ್ತು ವಿಚಾರ ಹಾಗೂ ನಿರೂಪಣೆ ಮೂರೂ ನೆಲೆಗಳಲ್ಲಿ ಅಂತಹ ಹೊಸತೇನನ್ನೂ ಅಭಿವ್ಯಕ್ತಿಸುತ್ತಿಲ್ಲ ಎನ್ನಿಸುವುದರಿಂದ ಈ ಕಥೆಗಳಿಗೆ ಬಹುಮಾನ ಕೊಟ್ಟಿಲ್ಲ ಅಷ್ಟೆ. ಆದರೆ ಈ ಎಲ್ಲ ಕಥೆಗಳೂ ತಮ್ಮದೆ ರೀತಿಯಲ್ಲಿ ಕನ್ನಡ ಕಥನ ಪರಂಪರೆಯಲ್ಲಿ ಸಲ್ಲುತ್ತವೆ; ಆದ್ದರಿಂದ ಇವೆಲ್ಲವೂ ನನ್ನ ಪ್ರಕಾರ ಪುರಸ್ಕಾರಕ್ಕೆ ಅರ್ಹ ಕಥೆಗಳೇ. ರವಿ ಕೃಷ್ಣಾರೆಡ್ಡಿ ಅವರು ಈ ಕಥೆಗಳಿಗೆ ಬಹುಮಾನ ಬರದಿದ್ದರೂ ಇವುಗಳನ್ನು ಕ್ರಮವಾಗಿ ತಮ್ಮ “ವರ್ತಮಾನ”ದಲ್ಲಿ ಪ್ರಕಟಿಸಿದರೆ ಓದುಗರಿಗೆ ತೌಲನಿಕವಾಗಿ ತಮ್ಮದೇ ಓದುಗಳನ್ನು ಹೊಂದಲು ಸಾಧ್ಯವಾದೀತು.

ಕನ್ನಡ ಕಥನ ಲೋಕಕ್ಕೆ ಇದುವರೆಗೆ ಬಂದಿಲ್ಲದ ಲೋಕದ ಏನಾದರೂ ಹೊಸತನ್ನು ತಂದು ಹೇಳುವ ಗುಣ ಅಂದರೆ ನವೀನ ವಸ್ತು ಸಾಮಗ್ರಿಯ ಕಥನ, ನವೀನ ನಿರೂಪಣೆಯ ಕ್ರಮ, ನವೀನ ಭಾಷೆಯ ಬಳಕೆ, ಕಥನದಲ್ಲಿನ ಬಿಗಿತನ, ಬೋರಾಗದಂತೆ ಓದಿಸಿಕೊಂಡು ಹೋಗುವ ಗುಣ, ಓದುಗನ ಮೇಲೆ ಬೀರುವ ಪರಿಣಾಮ ಅಥವಾ ಓದಿದ ನಂತರ ಕಾಡುವ, ಡಿಸ್ಟರ್ಬ್ ಮಾಡುವ ಗುಣ, ಕಥನದ ವಿಚಾರ ಮತ್ತು ಭಾವತೀವ್ರತೆಯ ಗುಣಗಳು ಇವೆಲ್ಲವನ್ನೂ ಮುಖ್ಯವಾಗಿ ಪರಿಗಣಿಸಿ ಇಲ್ಲಿನ ಕಥೆಗಳನ್ನು ಓದಲಾಗಿದೆ.

ಬಹುಮಾನ ಪಡೆದಿರುವ ಇಲ್ಲಿನ ಐದೂ ಕಥೆಗಳೂ ಒಂದಕ್ಕೊಂದು ಭಿನ್ನ. ಮಹಾತ್ಮ ಕಥೆ ಮಹಾತ್ಮ ಗಾಂಧಿಯೊಂದಿಗೆ ಒಂದು ಮುಖಾಮುಖಿಯನ್ನು ನಡೆಸುತ್ತದೆ. ನಮ್ಮಲ್ಲಿ ಸದಾ ಮಹಾತ್ಮರಲ್ಲಿನ ಹುಳುಕುಗಳನ್ನು ಹೆಕ್ಕಿ ತೆಗೆಯುವುದು ಅಥವಾ ಅವರನ್ನು ತಪ್ಪಿತಸ್ಥರನ್ನಾಗಿ ಮಾಡಿ ಮತ್ತೆ ಮತ್ತೆ ಅವರನ್ನು ಬದುಕಿಸಿ ಕರೆದು ತಮ್ಮದೇ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿ ಪಾಟೀಸವಾಲು ಮಾಡುವುದು ಯಾವತ್ತಿನ ರೂಢಿ. ಮಹಾತ್ಮರೆಂದು ನಾವು ಕರೆದುಕೊಳ್ಳುವ ‘ಮಹಾತ್ಮ’ರನ್ನು ನಾವು ನಮ್ಮಂತೆಯೆ ಅವರೂ ಮನುಷ್ಯರಾಗಿದ್ದರು ಎಂದು ಭಾವಿಸುವುದೇ ಕಡಿಮೆ. ಇಂಥ ಒಂದು ಚಿಂತನೆಯನ್ನು ಮಹಾತ್ಮ ಕಥೆ ಒಳಗೊಂಡಿದೆ ಮತ್ತು ನಮ್ಮಲ್ಲು ಅದು ಹುಟ್ಟುವಂತೆ ಮಾಡುತ್ತದೆ.

ಬೆಂದಕಾಳೂರು ಕಥೆ ಬೆಂಗಳೂರೆಂಬ ಮಹಾನಗರದ ಮೂರು ಚಿತ್ರಗಳನ್ನು ನೀಡುತ್ತದೆ. ಇವೆಲ್ಲ ಒಂದೊಂದು ಸ್ವತಂತ್ರ ಕಥೆ ಆಗಬಲ್ಲ ಚಿತ್ರಗಳು. ಇಲ್ಲಿನ ಮೂರೂ ಚಿತ್ರಗಳೂ ಪರಸ್ಪರ ಸಿಂಕಾಗುವುದಿಲ್ಲ; ಪ್ರತ್ಯೇಕ ಆಗಿಯೆ ಉಳಿಯುತ್ತವೆ. ನಮ್ಮಲ್ಲಿ ನಗರವೆಂದರೆ ನರಕ; ಪಾಪಕೂಪ; ಎಲ್ಲ ಕೇಡುಗಳೂ ಸಂಭವಿಸುವುದು ಇಲ್ಲೆ ಎಂಬ ನಂಬುಗೆಯೊಂದು ಇದೆ. ಇಂತಹ ನಂಬುಗೆಯಿಂದಲೆ ಈ ಕಥೆ ಹುಟ್ಟಿದೆ. ಆದಾಗ್ಯೂ ಬೆಂದಕಾಳೂರು ಲೋಕದ ಎಲ್ಲ ಮಹಾನಗರಗಳ ರೂಪಕ ಆಗಬಲ್ಲ ಸಾಧ್ಯತೆ ಇರುವ ಕಥೆ. ದುಃಖ, ಬಿಕ್ಕಟ್ಟು, ಅವ್ಯವಸ್ಥೆಗಳನ್ನು ಸ್ಪೋಟಿಸುವುದೆ ಸಾಹಿತ್ಯದ ಕಾಳಜಿ ಆಗಬೇಕಲ್ಲವೆ? ನಮಗೆ ಮನರಂಜನೆ ನೀಡುವುದು ಅಥವಾ ಸಂತೋಷ ನೀಡುವುದಷ್ಟೆ ಸಾಹಿತ್ಯ ಕಥನದ ಜವಾಬ್ದಾರಿಯೊ?

ಬೆಂದಕಾಳೂರು ನಗರದ ಗಲೀಜನ್ನು ತೆರೆದು ತೋರಿದರೆ, ಗಲೀಜು ಕಥೆ ಗಾಮಗಳ ಗಲೀಜನ್ನು ತೆರೆದು ತೋರುತ್ತದೆ. ಗಲೀಜು ಕಥೆಯಲ್ಲಿನ ಶಣಿಯಾರ, ಕಜ್ಜಿ, ಚಿಕ್ಕವ್ವೋರು, ದೊಡ್ಡ ಯಜಮಾನ, ಪೂಜಾರಪ್ಪ, ಸಾವುತ್ರ ಹೀಗೆ ಎಲ್ಲ ಪಾತ್ರಗಳೂ ಒಂದಲ್ಲ ಒಂದು ರೀತಿ ದೌರ್ಬಲ್ಯಗಳ ಪ್ರತಿನಿಧೀಕರಣಗಳೇ. ಅಂಚಿನ ಜನತೆಯ ಪ್ರತಿನಿಧಿ ಆದ ಕಜ್ಜಿ ಅಂತಿಮವಾಗಿ ಇಲ್ಲಿ ದೌರ್ಜನ್ಯಕ್ಕೆ ಬಲಿಯಾಗುತ್ತಾನೆ. ಗ್ರಾಮೀಣ ಊಳಿಗಮಾನ್ಯ ವ್ಯವಸ್ಥೆಯಲ್ಲಿನ ಕ್ರೌರ್‍ಯಗಳು (ಜಾತಿ, ವರ್ಗ, ಜ್ಞಾನಗಳ) ಅಸಮಾನತೆಯಿಂದ ಮತ್ತಷ್ಟು ಉಗ್ರವಾಗಿ ಇಲ್ಲಿ ಪ್ರಕಟಗೊಂಡಿವೆ. ಜೈವಿಕ ಪ್ರವೃತ್ತಿಯಾದ ಲೈಂಗಿಕತೆಯನ್ನು ಮಾನವ ಮಾನಸಿಕ ವ್ಯಸನವನ್ನಾಗಿ ಮಾರ್ಪಡಿಸಿಕೊಂಡಾಗ ಮತ್ತು ಲೈಂಗಿಕತೆಯ ಸುತ್ತ ತನ್ನದೆ ವಿಧಿನಿಷೇಧಗಳನ್ನು ಹೇರಿಕೊಂಡಾಗ ಆಗುವ ಅಲವಾಟುಗಳು ಈ ಕಥೆಯಲ್ಲಿ ತೀವ್ರವಾಗಿ ಪ್ರಕಟವಾಗಿವೆ.

ಮುಗಿಲ ಮಾಯೆಯ ಕರುಣೆ ಮತ್ತು ಹುಲಿ ಸಾಕಣೆ ಕಥೆಗಳು ತಮ್ಮ ಪರಿಣಾಮಕ್ಕಿಂತಲೂ ಅವು ಮಂಡಿಸುವ ವಿಚಾರದ ಕಾರಣಕ್ಕೆ ಹೆಚ್ಚು ಆಪ್ತವಾಗುತ್ತವೆ. ಹಳ್ಳಿಯಲ್ಲಿನ ಮೌಢ್ಯ; ಅಲ್ಲಿನ ವೈರ-ದೋಪಾರ್ಟಿ ಸ್ಥಿತಿಗಳನ್ನು ಮುಗಿಲ ಮಾಯೆಯ ಕರುಣೆ ಚೆನ್ನಾಗಿ ಅಭಿವ್ಯಕ್ತಿಸಿದೆ. ಹೊಲೇರ ಶರಣನೊಬ್ಬ ಮಳೆ ತರಿಸುವ ಇಚ್ಛಾಶಕ್ತಿ ಪ್ರಕಟಿಸುವುದು ಈ ಕಥೆಯ ಶಕ್ತಿ. ಹುಲಿ ಸಾಕಣೆ ಎನ್.ಜಿ.ಒ.ಗಳ ದಗಲಬಾಜಿತನ ಮತ್ತು ಬೆಪ್ಪುತನ ಎರಡನ್ನೂ ಒಟ್ಟಿಗೇ ಪ್ರಕಟಿಸುತ್ತದೆ. ಸಣ್ಣ ಮೀನನ್ನು ದೊಡ್ಡ ಮೀನು ನುಂಗುವ ನಮ್ಮ ಬಂಡವಾಳಶಾಹಿ ಧೋರಣೆ, ಪರಿಸರವಾದ-ಕೃಷಿ ವಲಯಗಳನ್ನೂ ಪ್ರವೇಶಿಸಿರುವ ಕೈಗಾರಿಕೀಕರಣದ ದುಸ್ಥಿತಿಯನ್ನು ಹುಲಿಸಾಕಣೆ ಕತೆ ಹೇಳುತ್ತದೆ.

ಇಲ್ಲಿ ಬಹುಮಾನಕ್ಕೆ ಆರಿಸಿರುವ ಎಲ್ಲ ಕಥೆಗಳೂ ಒಂದಿಲ್ಲೊಂದು ಬಗೆಯಲ್ಲಿ ನಮ್ಮ ವ್ಯವಸ್ಥೆಯೊಳಗೆ ಇರಬಹುದಾದ ತಪ್ಪುನಡೆಗಳನ್ನು ವಂಗ್ಯ, katha-sprade-2013ವಿಶಾದ, ತಲ್ಲಣಗಳಿಂದ ಬಯಲು ಮಾಡುತ್ತವೆ. ನಮ್ಮ ಬದುಕನ್ನು ಹಸನುಗೊಳಿಸುವ ಕಾಳಜಿ ಇಲ್ಲಿನ ಎಲ್ಲ ಕಥೆಗಳಲ್ಲೂ ಅಂತಸ್ಥವಾಗಿದೆ. ಮಹಾತ್ಮ, ಬೆಂದಕಾಳೂರು ಮತ್ತು ಹುಲಿಸಾಕಣೆ ಮೂರೂ ಕಥೆಗಳು ವೈಚಾರಿಕತೆಯನ್ನೆ ಕಥೆಯನ್ನಾಗಿ ಮಾರ್‍ಪಡಿಸುವ ಭರದಲ್ಲಿ ಕಲಾತ್ಮಕತೆಯನ್ನು ಹಿನ್ನೆಲೆಗೆ ದೂಡುತ್ತವೆ. ಆದರೆ ಗಲೀಜು ಮತ್ತು ಮುಗಿಲ ಮಾಯೆಯ ಕರುಣೆ ಅಂಥವಲ್ಲ. ಇವುಗಳಲ್ಲಿ ವೈಚಾರಿಕ ಆಕೃತಿಗೆ ಒಗ್ಗಿಸಲು ಆಗದ ಕಥನಗಾರಿಕೆ ಇದೆ. ಇಲ್ಲಿ ಕಥನ ಮುನ್ನೆಲೆಗೆ ಬಂದು ವಿಚಾರ ಹಿನ್ನೆಲೆಗೆ ಸರಿದಿದೆ.

ವಿಶೇಷವೆಂದರೆ ಸ್ಪರ್ಧೆಗೆ ಬಂದ ಎಲ್ಲ ಕಥೆಗಳನ್ನು ಲೇಖಕರ ಹೆಸರುಗಳನ್ನು ತೆಗೆದು ಓದಿದಾಗ ಉತ್ತರ ಕನ್ನಡದ ಭಾಶೆ ಮತ್ತು ಶೈಕ್ಷಣಿಕ ಭಾಶೆ ಎಂಬ ವ್ಯಾತ್ಯಾಸಗಳನ್ನು ಬಿಟ್ಟರೆ ಮಿಕ್ಕಂತೆ ಒಬ್ಬರೇ ಬರೆದ ಕಥೆಗಳನ್ನು ಓದುತ್ತಿದ್ದೇವೇನೋ ಎಂಬ ಭಾವನೆ ಉಂಟಾಗುತ್ತದೆ. ಕೆಲವು ಕಥೆಗಳಂತು ತೀರಾ ಸಿನಿಮ್ಯಾಟಿಕ್ ಮತ್ತು ಇನ್ಸಿಡೆಂಟಲ್ ಆಗಿ ಇವೆ. ನಿಸರ್ಗದ ಮತ್ತು ಮನುಷ್ಯರ ಒಳ ಮನಸ್ಸಿನ ಅಗೆಯುವಿಕೆ ಬಹುಪಾಲು ಕಥೆಗಳಲ್ಲಿ ಕಡಿಮೆ. ಘಟನಾತ್ಮಕ ನಿರೂಪಣೆಯೆ ಹೆಚ್ಚು! ಏಕೆ ಹೀಗೆ? ಸಾಮಾಜಿಕ ಹೊಣೆಗಾರಿಕೆ, ಕಾಳಜಿಗಳಲ್ಲಿ ಸಾಮ್ಯತೆ ಇದ್ದರೆ ಅದು ಆರೋಗ್ಯದ ಲಕ್ಷಣ. ಆದರೆ ಅಭಿವ್ಯಕ್ತಿ ಕ್ರಮದಲ್ಲಿ ಏಕತಾನತೆ ಇದ್ದರೆ? ಈ ಸ್ಪರ್ಧೆಯ ಕಥೆಗಳನ್ನು ಓದುತ್ತಿದ್ದರೆ ಇಂದಿನ ಹೊಸ ಪೀಳಿಗೆಯಲ್ಲಿ ಕನ್ನಡ ಸಣ್ಣ ಕಥೆಯ ಬಂಧ-ಚೌಕಟ್ಟು-ರೂಪ ಮತ್ತು ಅದು ನಿರೂಪಿತ ಆಗುವ ಕ್ರಮಗಳು ಏಕತಾನತೆಗೆ ಗುರಿಯಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಭಾಷಿಕ ವೈವಿದ್ಯತೆ ಮಾತ್ರವೆ ಕಥನದ ಭಿನ್ನತೆಯ ಗುಣವಲ್ಲ. ಇನ್ನಾದರೂ ನಮ್ಮ ಹೊಸ ಪೀಳಿಗೆಯು ತನ್ನ ನಿರೂಪಣಾ ಕ್ರಮಗಳು, ಗಮ್ಯತೆ ಮತ್ತು ಸಣ್ಣ ಕಥೆಯ ಚೌಕಟ್ಟುಗಳನ್ನು ಕ್ರಾಂತಿಕಾರಕವಾಗಿ ಬದಲಾವಣೆ ಮಾಡಿಕೊಳ್ಳುವ ಅಗತ್ಯ ಇದೆಯಲ್ಲವೆ?

ಸ್ಪರ್ಧೆಯ ಹೆಸರಲ್ಲಿ ಹೊಸ ಪೀಳಿಗೆಯವರು ಬರೆದ ಹಲವಾರು ಕಥೆಗಳನ್ನು ಒಮ್ಮೆಗೆ ಓದಲು ಮತ್ತು ಆ ಮೂಲಕ ಹೊಸಬರ ಸಂವೇದನೆಗಳನ್ನು ಅರಿಯಲು ಅನುವು ನೀಡಿದ್ದಕ್ಕಾಗಿ ಮಿತ್ರ ರವಿ ಕೃಷ್ಣಾರೆಡ್ಡಿ ಅವರಿಗೆ ಮತ್ತು ವರ್ತಮಾನ ಬಳಗಕ್ಕೆ ನನ್ನ ಧನ್ಯವಾದಗಳು.

ಧರ್ಮಾಧಾರಿತ ರಾಜಕಾರಣವು ಪ್ರಜಾಪ್ರಭುತ್ವಕ್ಕೆ ಒಂದು ಕಂಟಕ – ಸೈಯದ್ ಹೈದರ್ ಫರೂಕ್ ಸಿದ್ದಿಕಿ

ಸರ್ಕಾರವೊಂದು ಧರ್ಮವನ್ನು ಬಹಿರಂಗವಾಗಿ ಪ್ರತಿಪಾದಿಸಿದರೆ ಅದು ಪ್ರಜಾಪ್ರಭುತ್ವವನ್ನು ಪಾಲಿಸುತ್ತಿಲ್ಲ, ಬೇರೇನನ್ನೋ ಎತ್ತಿ ಹಿಡಿಯುತ್ತಿದೆ ಎಂದರ್ಥ. – ಸೈಯದ್ ಹೈದರ್ ಫರೂಕ್ ಸಿದ್ದಿಕಿ

ಸೈಯದ್ ಹೈದರ್ ಫರೂಕ್ ಸಿದ್ದಿಕಿಯವರು ಜಮಾತೆ ಎ-ಇಸ್ಲಾಮಿ ಸ್ಥಾಪಕ ಸೈಯದ್ ಅಬ್ದುಲ್ಲ ಮೌದೂಡಿಯ ಮಗ. ಇಂದು ಪಾಕಿಸ್ತಾನದ ಲಾಹೋರಿನ ಪತ್ರಿಕೆಯೊಂದರ ಅಂಕಣಕಾರ. 69 ವರ್ಷದ ಇವರು ಒಂದು ಕಾಲದಲ್ಲಿ ಪೈಲಟ್ ಆಗಿದ್ದರು. ತಮ್ಮ ವಿದ್ಯಾಭ್ಯಾಸವನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಮಾಡಿದ್ದರೂ ಇಂಗ್ಲೀಷಿನಲ್ಲಿ ಮಾತನಾಡಲು ನಿರಾಕರಿಸುವ ಫರೂಕ್ ಸಿದ್ದಿಕಿ ಉಪಖಂಡದಲ್ಲಿ ಜಮಾತೆಯ ರಾಜಕಾರಣದ ಕುರಿತಾಗಿ, ಇಸ್ಲಾಂನ ರಾಜಕೀಯ, ಮಿಲಿಟೆನ್ಸಿ, ರಾಜ್ಯದ ಧರ್ಮ, ಬಾಂಗ್ಲ ದೇಶದ ಯುದ್ಧ ಕಾಲದ ಅಪರಾಧಗಳು ಮತ್ತು ಅವುಗಳ ಕುರಿತಾದ ಟ್ರಿಬ್ಯೂನಲ್ ವಿಚಾರಣೆಗಳನ್ನು “ಢಾಕಾ ಟ್ರಿಬ್ಯೂನ್” ಪತ್ರಿಕೆಯೊಂದಿಗೆ ನಡೆಸಿದ ಸಂದರ್ಶನದುದ್ದಕ್ಕೂ ಹಂಚಿಕೊಂಡಿದ್ದಾರೆ.

ನಿಮ್ಮ ತಂದೆ ಅಬುಲ್ ಅಲಾ ಮೌದೂನಿ ಜಮಾತ್-ಎ-ಇಸ್ಲಾಮಿಯ ಸ್ಥಾಪಕರು. ನೀವಾಗಲಿ ಅಥವಾ ನಿಮ್ಮ ಅಣ್ಣತಂಗಿಯರಾಗಲೀ ಈ ಜಮಾತೆಯೊಂದಿಗೆ ಗುರುತಿಸಿಕೊಂಡಿದ್ದೀರ?
ಇಲ್ಲ. ನಾವೆಂದೂ ರಾಜಕಾರಣದಲ್ಲಾಗಲಿ, ಜಮಾತೆಯಾಗಲಿ ಅಥವಾ ಬೇರಾವುದೇ ಪಕ್ಷದೊಂದಿಗಾಗಲಿ ಗುರುತಿಸಿಕೊಂಡಿಲ್ಲ. syed-haiderನನ್ನ ತಂದೆ ನಾವು ರಾಜಕಾರಣದಲ್ಲಿ ಪ್ರವೇಶಿಸಲು ಅನುಮತಿ ಕೊಡಲಿಲ್ಲ. ಅವರ ಮನಸ್ಸಿನಲ್ಲಿ ಏನಿತ್ತೋ ನಮಗೆ ಗೊತ್ತಿಲ್ಲ, ನನ್ನ ತಂದೆ ಮಾತ್ರವಲ್ಲ ಬೇಕಿದ್ದರೆ ಇತರೇ ಜಮಾತೆ ನಾಯಕರನ್ನು ಗಮನಿಸಿ, ಅವರೂ ಸಹ ತಮ್ಮ ಮಕ್ಕಳನ್ನು ರಾಜಕೀಯಕ್ಕೆ ಅಥವಾ ಪಕ್ಷದ ಚಟುವಟಿಕೆಗಳಿಗೆ ತೊಡಗಿಕೊಳ್ಳಲು ಪ್ರೋತ್ಸಾಹಿಸಲಿಲ್ಲ.

ಜಮಾತೆ ನಾಯಕರ ಮಕ್ಕಳು ಇತರೆ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಆದರೆ ಅವೆಲ್ಲವೂ ಜಮಾತೆ ಪಕ್ಷದ ಕಾರ್ಯಗಳಿಗೆ ಹೊರತಾದವು. ಇದಕ್ಕೆ ಪ್ರಮುಖವಾದ ಕಾರಣವೆಂದರೆ ಬಹುಶಃ ಒಮ್ಮೆ ನೀವು ಧರ್ಮಾಧಾರಿತ ರಾಜಕಾರಣ ಮಾಡಿದ ತಕ್ಷಣ ನಿಮ್ಮ ಕೆಲವು ವೈಯುಕ್ತಿಕ ಗುರಿಗಳನ್ನು ಸಾಧ್ಯವಾಗಿಸಿಕೊಳ್ಳಬಹುದು. ಅದರೆ ಧರ್ಮದ ಆಧಾರಿತ ರಾಜಕಾರಣದಲ್ಲಿ ಕಡೆಗೂ ನೀವು ಶತೃಗಳನ್ನು ಸೃಷ್ಟಿಸಿಕೊಳ್ಳುವುದಂತೂ ಖಂಡಿತ. ತಾನು ಸತ್ತ ನಂತರ ತನ್ನ ಮಕ್ಕಳಿಗೆ ಆತ ಬಿಟ್ಟುಹೋಗುವುದು ಶತೃಗಳನ್ನು ಮಾತ್ರ.

ಬಾಂಗ್ಲಾ ದೇಶದ ಜಮಾತೆಯ ಕುರಿತಾಗಿ ನಿಮ್ಮ ಅಭಿಪ್ರಾಯವೇನು?
ಬಾಂಗ್ಲಾ ದೇಶದ ಹುಟ್ಟಿಗೆ ವಿರೋಧ ವ್ಯಕ್ತಪಡಿಸಿದ ಜಮಾತೆಗೆ ಬಾಂಗ್ಲಾ ದೇಶದಲ್ಲಿ ರಾಜಕೀಯ ಅಥವಾ ರಾಜಕಾರಣ ಮಾಡಲು ಯಾವುದೇ ಹಕ್ಕಿಲ್ಲ. ಇವರಿಗೆ ಇಲ್ಲಿ ರಾಜಕೀಯ ಮಾಡಲು ಅವಕಾಶ ನೀಡಬಾರದು. ಆದರೆ ವಾಸ್ತವ ಪರಿಸ್ಥಿತಿ ಬೇರೆ ಇದೆ. ಸ್ವಾತಂತ್ರದ ನಂತರ ನಿಮ್ಮಲ್ಲಿನ ರಾಜಕೀಯ ನಾಯಕರೇ ಜಮಾತೆಗೆ ರಾಜಕೀಯ ಮಾಡಲು ಪ್ರೇರಣೆ ನೀಡಿದರು. ಅದು ನಿಮ್ಮ ನಾಯಕರದೇ ತಪ್ಪು. ನೀವು ಜಮಾತೆಗೆ ರಾಜಕೀಯದಲ್ಲಿ ಪ್ರವೇಶಕ್ಕೆ ಅನುಮತಿ ಕೊಟ್ಟಿದ್ದೀರೆಂದರೆ ಧರ್ಮ ಆಧಾರಿತ ರಾಜಕಾರಣಕ್ಕೆ ನಿಮ್ಮ ಅನುಮತಿ ಇದೆಯೆಂದರ್ಥ. ಆದರೆ ಬಾಂಗ್ಲಾ ದೇಶದ ಇಂದಿನ ಪರಿಸ್ಥಿತಿಗೆ ಯಾರು ಹೊಣೆಗಾರರು?

ನೋಡಿ, ಷೇಕ್ ಮುಜೀಬುರ್ ರೆಹಮಾನ್ ಅವರು ರಚಿಸಿದ ಸಂವಿಧಾನ ಇಂದು ಬಾಂಗ್ಲಾ ದೇಶದಲ್ಲಿಲ್ಲ. ಇದು ಹೇಗೆ ಸಾಧ್ಯವಾಯಿತು? ಇದನ್ನು ಯಾರು ಬದಲಾಯಿಸಿದರು? ಈ ವಿಷಯಗಳನ್ನು ಕುರಿತಾಗಿ ಚಿಂತಿಸಬೇಕಾಗಿದೆ. ನಿಜಕ್ಕೂ ಜನತೆ ಜಮಾತೆಯ ಪರವಾಗಿ ಮತದಾನ ಮಾಡುವುದಿಲ್ಲ. ಎಪ್ಪತ್ತರ ದಶಕದಲ್ಲೂ ಅವರಿಗೆ ಬೆಂಬಲವಿಲ್ಲ, ಈಗಲೂ ಬೆಂಬಲವಿಲ್ಲ, ಅವರ ಬಹುತೇಕ ಅಭ್ಯರ್ಥಿಗಳು ಹೀನಾಯ ಸೋಲು ಕಂಡರು. ಜಮಾತೆ ರಾಜಕಾರಿಣಿಗಳಿಗೆ ಎಷ್ಟು ಕಡಿಮೆ ಮತಗಳು ಬಡವೆಂದರೆ ಅವರು ಡೆಪಾಸಿಟ್ ಸಹ ಪಡೆಯಲಾಗದಷ್ಟು.

ಷೇಕ್ ಸಾಹೇಬರು ಜಮಾತೆಯನ್ನು ನಿಷೇಧಿಸಿದ್ದರು, ಅಲ್ಲವೇ? ಹಾಗಿದ್ದಲ್ಲಿ ಮರಳಿ ಅವರನ್ನು ರಾಜಕಾರಣಕ್ಕೆ ಕರೆದು ತಂದವರು ಯಾರು? ನೀವು, ಈ ದೇಶದ ಪ್ರಜೆಗಳು, ಯೋಚಿಸಿ. ಬಾಂಗ್ಲಾ ದೇಶದಲ್ಲಿ ಜಮಾತೆಯ ಬೆಂಬಲದ ಮೂಲಗಳಾವುವು? ಅವರ ಶಕ್ತಿ ಕೇಂದ್ರಗಳಾವುವು ? ಇವೆಲ್ಲವನ್ನೂ ಪತ್ತೆ ಹಚ್ಚದೆ ಸಂಕಷ್ಟಗಳ ಮೂಲವನ್ನು ಸಹ ಪತ್ತೆ ಹಚ್ಚಲಾಗದು.

ಒಂದು ವೇಳೆ ಯದ್ಧ ಕಾಲದ ಅತ್ಯಾಚಾರಗಳ ಕುರಿತಾಗಿ ಈಗ ನಡೆಯುತ್ತಿರುವ ವಿಚಾರಣೆಗಳು ಇವರ ಬಲವನ್ನು ಕುಗ್ಗಿಸುತ್ತದೆಯೆಂದುಕೊಂಡರೆ ನೀವು ಸಂಪೂರ್ಣವಾಗಿ ದಿಕ್ಕುತಪ್ಪಿದ್ದೀರ ಅಷ್ಟೆ. ಏಕೆಂದರೆ ಈ ವಿಚಾರಣೆಯು ಅವರಿಗೆ ವರವಾಗಿ ಪರಿಣಮಿಸಿದೆ. ಇದನ್ನು ಬಳಸಿಕೊಂಡು ಈ ಜಮಾತೆಯವರು ಜನರ ಬಳಿ ಹೋಗಿ ನಾವು ಇಸ್ಲಾಂ ಅನ್ನು ಬೆಂಬಲಿಸಿದ್ದರಿಂದ ನಮ್ಮನ್ನು ವಿಚಾರಣೆಗೆ ಗುರಿಪಡಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಹಿಂದಿನಂತೆಯೂ ಈ ವಿಚಾರಣೆಗಳು ಮತ್ತು ಇಸ್ಲಾಂ ಅನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ.

ಈ ಉಪಖಂಡದ ರಾಜಕಾರಣದಲ್ಲಿ ಇಸ್ಲಾಂನ ಪಾತ್ರದ ಕುರಿತಾಗಿ ನಿಮ್ಮ ಅಭಿಪ್ರಾಯವೇನು?
ರಾಜಕಾರಣದೊಳಗೆ ಧರ್ಮ ಪ್ರವೇಶಿಸಿದಾಕ್ಷಣ ಇದು ಮನುಷ್ಯರನ್ನು ಮತ್ತು ಮಾನವತೆಯನ್ನು ಕೊಂದು ಹಾಕುತ್ತದೆ. ಬುದ್ಧಿಸಂ, ಇಸ್ಲಾಂ, ಕ್ರಿಶ್ಚಿಯನ್, ಸಿಖ್ಖಿಸಂ ಹೀಗೆ ಯಾವುದೇ ಧರ್ಮಗಳಾಗಲಿ ವೈಯುಕ್ತಿಕ ನೆಲೆಯಲ್ಲಿ ಆಚರಣೆಯಲ್ಲಿದ್ದಾಗ ಅವು ಪ್ರತಿಯೊಬ್ಬನನ್ನೂ ಮಾನವಂತನಾಗುವಂತೆ ರೂಪಿಸಬಲ್ಲವು. ಪವಿತ್ರ ಖುರಾನ್ ರಾಜಕಾರಣದ ಕುರಿತಾಗಿ ಏನನ್ನೂ ಹೇಳುವುದಿಲ್ಲ, ಬದಲಾಗಿ ಮನುಷ್ಯತ್ವದ ಕುರಿತಾಗಿ ಮಾತನಾಡುತ್ತದೆ.

ಧರ್ಮಾಧಾರಿತ ರಾಜಕಾರಣವು ಸಮಾಜದೊಳಗೆ ವಿಘಟನೆಯನ್ನು ಹುಟ್ಟಿಹಾಕುತ್ತದೆ. ಪವಿತ್ರ ಖುರಾನ್ ಕೇವಲ ಮನುಷ್ಯರ ಕುರಿತಾಗಿ ಮಾತನಾಡುತ್ತದೆ. ಅದು ಆಡಳಿತ, ಅಧಿಕಾರದ ಕುರಿತಾಗಿ ಮಾತನಾಡುವುದಿಲ್ಲ. ಒಂದು ವೇಳೆ ಖುರಾನ್ ಅಧಿಕಾರದ ಕುರಿತಾಗಿ ಮಾತನಾಡಿದ್ದರೆ ಆಗ ಅದು ಖಲೀಫನನ್ನು ಹೇಗೆ ನೇಮಕ ಮಾಡಿಕೊಳ್ಳಬಹುದು, ಖಲೀಫನನ್ನು ಅಧಿಕಾರದಿಂದ ಹೇಗೆ ಪದಚ್ಯುತಗೊಳಿಸಬಹುದು, ಶುರಾವನ್ನು ಹೇಗೆ ಸ್ಥಾಪಿಸಬಹುದು, ಶುರಾವನ್ನು ಹೇಗೆ ವಿಲೀನಗೊಳಿಸಬಹುದು, ಶುರಾಗೆ ಯಾವ ಬಗೆಯ ಅಧಿಕಾರ ಕೊಡಬಹುದು, ಖಲೀಫಾ ಮತ್ತು ಶುರಾ ನಡುವಿನ ಸಂಬಂಧವೇನು? ಖಲೀಫಾ ಯಾವಾಗ ಅಧಿಕಾರವನ್ನು ಚಲಾಯಿಸಬಹುದು, ಶುರಾದ ಸರದಿ ಯಾವಾಗ? ಹೀಗೆ ಇಂತಹ ವಿಷಯಗಳ ಕುರಿತಾಗಿ ಚರ್ಚಿಸಬಹುದಿತ್ತು. ಆದರೆ ಖುರಾನ್ ಇದೆಲ್ಲದರ ಬಗ್ಗೆ ಮಾತನಾಡುತ್ತದೆಯೇ? ಇಲ್ಲ. ದೇವರು ಪವಿತ್ರ ಖುರಾನ್ ಅನ್ನು ಗಮನಿಸುವ ಹಾಗಿದ್ದರೆ ಖಿಲಾಫತ್ (ರಾಜಕೀಯ ವಾರಸುದಾರರು) ಅನ್ನೂ ನೋಡಿಕೊಳ್ಳುತ್ತಿದ್ದ. ಧರ್ಮವನ್ನು ತಪ್ಪಾಗಿ ವ್ಯಾಖ್ಯಾನಿಸಲಾಗುತ್ತಿದೆ. ಧರ್ಮದ ಉದ್ದೇಶ ದೇಶವನ್ನು ಆಳುವುದಂತೂ ಖಂಡಿತ ಅಲ್ಲವೇ ಅಲ್ಲ.

ಬಾಂಗ್ಲಾದಲ್ಲಿ ವೈಯುಕ್ತಿಕ ಲಾಭಕ್ಕಾಗಿ ಧರ್ಮವನ್ನು ರಾಜಕಾರಣದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಈ ರಾಜಕಾರಣಿಗಳ ಉದ್ದೇಶ ಜನತೆ ತಮ್ಮ ಧಾರ್ಮಿಕ ನಂಬುಗೆಗಳು ಮತ್ತು ಭಾವನೆಗಳನ್ನು ಆಧರಿಸಿ ಮತವನ್ನು ನೀಡುವಂತೆ ಪ್ರೇರೇಪಿಸುವುದು. ಧಾರ್ಮಿಕ ನಂಬಿಕೆಗಳನ್ನು ದುರ್ಲಾಭ ಪಡೆದುಕೊಳ್ಳುವುದಷ್ಟೇ ಇವರ ಉದ್ದೇಶ.

ಜಿನ್ನಾ ಸಾಹೇಬರು ವಿಭಜನೆಗೂ ಮುಂಚೆ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು. 1931 ರಲ್ಲಿ ಖಿಲಾಫತ್ ಚಳುವಳಿಯ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರು ಮೌಲಾನ ಅಬ್ದುಲ್ ಕಲಾಮ್ ಅವರ ಚಳುವಳಿಯನ್ನು ಬೆಂಬಲಿಸಿದ್ದರು. ಆದರೆ ಅದನ್ನು ಜಿನ್ನಾ ವಿರೋಧಿಸಿ ಕಾಂಗ್ರೆಸ್‌ಗೆ ರಾಜಿನಾಮೆ ನೀಡಿದರು. jinnahಆ ಸಂದರ್ಭದಲ್ಲಿ ಜಿನ್ನಾ ಸಾಹೇಬರು ಗಾಂಧೀಜಿಯವರಿಗೆ ಬರೆದ ಪತ್ರದ ಸಾರಾಂಶ ಹೀಗಿತ್ತು: “ನೀವು ಧರ್ಮವನ್ನು ರಾಜಕಾರಣದೊಳಗೆ ಬಳಸಿಕೊಳ್ಳುತ್ತಿದ್ದೀರಿ. ಆದರೆ ಇದು ರಕ್ತಪಾತವನ್ನಷ್ಟೇ ಉಂಟು ಮಾಡುತ್ತದೆ. ಈ ಬಗೆಯ ಧರ್ಮದ ಬಳಕೆಯಿಂದ ಭಾರತ ಇಬ್ಭಾಗವಾಗುವುದು ಖಂಡಿತ.” ಆದರೆ ದುರಂತವೆಂದರೆ ಇದೇ ಜಿನ್ನಾ ಸಾಹೇಬರು ಮುಂದೆ ಮಾಡಿದ್ದು ಇದನ್ನೇ. ಮುಸ್ಲೀಂ ಲೀಗನ್ನು ಸ್ಥಾಪಿಸಿದರು. ನಂತರ ಏನಾಯಿತು? ಇಂಡಿಯಾ ಮತ್ತು ಪಾಕಿಸ್ತಾನ ಬೇರೆ ಬೇರೆ ಆಯಿತು.

ಕೇವಲ ಎರಡು ಧರ್ಮಗಳ ಆಧಾರದ ಮೇಲೆ ಈ ಎರಡ್ಯ್ ದೇಶಗಳ ಸ್ಥಾಪನೆ ಆಯಿತು. ಆದರೆ ಅದು ಸರಿ ಇತ್ತೇ? ಹಿಂದುಸ್ತಾನದಲ್ಲಿ ಸುಮಾರು 17 ಧರ್ಮಗಳಿದ್ದವು/ವೆ. ಅಂದರೆ ಇಂಡಿಯಾವನ್ನು 17 ಭಾಗಗಳಾಗಿ ಮಾಡಬೇಕೆ? ಇದು ಎಂತಹ ಭಯಂಕರ ಅಲ್ಲವೆ? ವಿಭಜನೆ ಯಾರು ಮುಸ್ಲಿಮ್, ಯಾರು ಮುಸ್ಲಿಮ್ ಅಲ್ಲ ಎನ್ನುವ್ ಆಧಾರದ ಮೇಲೆ ಆಯಿತು. ಹಿಂದು, ಬೌಧ್ಹರು, ಸಿಖ್ಖರು, ಪಾರ್ಸಿಗಳು, ಇವರೆಲ್ಲ ಹಿಂದುಗಳಾಗಿದ್ದರೆ? ಧರ್ಮದ ಟೊಳ್ಳು ಅರ್ಥೈಸುವಿಕೆಯಿಂದ ಅಂತಹ ವಿಭಜನೆ ಆಗಿದ್ದು ನಿಜಕ್ಕೂ ನಿಜಕ್ಕೂ ಅಪಾಯಕಾರಿ. ಇದೇ ಬಗೆಯ ಬೇಧೀಯ ನೀತಿಯು ಇಸ್ಲಾಂ ಧರ್ಮವನ್ನೇ ನಾಶ ಮಾಡುತ್ತದೆ.

ಧರ್ಮವನ್ನು ಆಧರಿಸಿದ ಎಲ್ಲ ಪಕ್ಷಗಳ ನೀತಿಯು ಒಂದೇ ಆಗಿರುತ್ತದೆ. ಮುಸ್ಲಿಂ ಲೀಗನ್ನೇ ತೆಗೆದುಕೊಳ್ಳಿ. ಅವರ ಪ್ರಕಾರ ನೀನು ಮುಸ್ಲಿಂ ಆಗಿದ್ದರೆ ನೀನು ಮುಸ್ಲಿಂ ಲೀಗ್ ಅನ್ನು ಸೇರಬೇಕು. ಅಂದರೆ ಇನ್ನೊಂದು ರೀತಿಯಲ್ಲಿ ಇವರು ನೀನು ಮುಸ್ಲಿಂ ಲೀಗ್‌ಗೆ ಸೇರಿಲ್ಲವಾದ್ದರಿಂದ ನೀನು ಮುಸ್ಲಿಂನಲ್ಲ ಎಂದು ಹೇಳುತ್ತಿದ್ದಾರಲ್ಲವೇ? ಇದೇ ಮಾದರಿಯಲ್ಲಿ ಈ ಧರ್ಮಾಧಾರಿತ ರಾಜಕಾರಣವು ಜನರ ಧಾರ್ಮಿಕ ಭಾವನೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತದೆ. ದುರಂತವೆಂದರೆ ಈ ರಾಜಕಾರಣಿಗಳನ್ನು ಟೀಕಿಸಿದರೆ ಅವರು ತಮ್ಮ ವಿರುದ್ಧದ ಈ ಟೀಕೆಯನ್ನು ಇಸ್ಲಾಂನ ವಿರುದ್ಧದ ಟೀಕೆಯೆಂದು ಪ್ರತಿಬಿಂಬಿಸುತ್ತಾ ಜನತೆಯನ್ನು ಉದ್ರೇಕಿಸುತ್ತಾರೆ. ಇದು ಧರ್ಮಾಧಾರಿತ ರಾಜಕಾರಣದ ಬಲು ದೊಡ್ಡ ಅಪಾಯ. ನೀವೆಂದಾದರು ಮೌಲ್ವಿಗಳು ತಮ್ಮಲ್ಲಿನ ತಪ್ಪುಗಳನ್ನು ಒಪ್ಪಿಕೊಂಡಿದ್ದನ್ನು ಕಂಡಿದ್ದೀರ? ಇಲ್ಲ, ಏಕೆಂದರೆ ಅವರು ಇಸ್ಲಾಂ ಅನ್ನು ರಕ್ಷಣೆಯಾಗಿ ಬಳಸಿಕೊಳ್ಳುತ್ತಾರೆ. ತಪ್ಪು ಮಾಡಿಯೂ ತಪ್ಪೊಪ್ಪಿಕೊಳ್ಳದವರು ಈಗಾಗಲೆ ನರಕದಲ್ಲಿದ್ದಾರೆಯೆ ಹೊರತು ಇಸ್ಲಾಮನ್ನು ಕೆಟ್ಟದ್ದಕ್ಕಾಗಿ ಬಳಸಿಕೊಳ್ಳುವುದರ ಬಗ್ಗೆ ಮಾತನಾಡುವವರು ಅಲ್ಲ.

ನಮಗೆಲ್ಲ ತಿಳಿದಿರುವಂತೆ ಇಸ್ಲಾಂ ಧರ್ಮವು ಶಾಂತಿಯನ್ನು ಬೋಧಿಸುತ್ತದೆ. ಆದರೆ 1971 ರ ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ಜಮಾತೆಯು ಪಾಕಿಸ್ತಾನ್ ಆಕ್ರಮಿತ ಸೈನ್ಯದೊಂದಿಗೆ ಬೆರೆತು ಆಗಿನ ಅತ್ಯಾಚಾರಗಳಲ್ಲಿ ಭಾಗಿಯಾಗುತ್ತದೆ. ನೀವು ಈ 1971 ಮತ್ತು ಇಸ್ಲಾಂ ನಡುವಿನ ಸಂಬಂಧವನ್ನು ಹೇಗೆ ವಿವರಿಸುತ್ತೀರಿ?
1970 ರ ಚುನಾವಣೆಯಲ್ಲಿ ಜಮಾತೆಯು ಧರ್ಮದ ಆಧಾರದ ಮೇಲೆ ರಾಷ್ಟ್ರೀಯ ಚುನಾವಣೆಗಳಲ್ಲಿ ಭಾಗವಹಿಸಿತ್ತು. ಆದರೆ ಅವರಿಗೆ ಗೆಲ್ಲಲಾಗಲಿಲ್ಲ. ಅಗ ಪಾಕಿಸ್ತಾನ್ ಆಕ್ರಮಿತ ಸೈನ್ಯವು ಅವರನ್ನು ಬಳಸಿಕೊಂಡಿತು. ಈ ಎಲ್ಲ ಗುಂಪುಗಳನ್ನು ಪಾಕಿಸ್ತಾನ್ ಆಕ್ರಮಿತ ಸೈನ್ಯವೇ ಸ್ಥಾಪಿಸಿದ್ದು. ಆ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ನಡೆದ ಸಭೆಯೊಂದರಲ್ಲಿ ಪಾಕಿಸ್ತಾನದ ಜನರಲ್ ನಿಯಾಜಿ ಬಾಂಗ್ಲಾದೇಶ ಜಮಾತ್ ಎ- ಇಸ್ಲಾಂನ ನಾಯಕರಿಗೆ ಹೇಳಿದ್ದು ನಾವು ಅಲ್- ಬಾದ್ರ್, ಅಲ-ಶಾಮ್ಸ ಅನ್ನು ಸ್ಥಾಪಿಸಿದ್ದೇವೆ. ನಿಮಗೆ ಹಣವನ್ನು, ಶಸ್ತ್ರಗಳನ್ನು, ತರಬೇತಿಯನ್ನು ನೀಡುತ್ತೇವೆ. ಈ ಗುಂಪುಗಳನ್ನು ನಿಮ್ಮದೆಂದು ಹೇಗೆ ವಾದಿಸುತ್ತೀರಿ?”

ಈ ಅಲ್- ಬಾದ್ರ್, ಅಲ-ಶಾಮ್ಸ ಗುಂಪುಗಳ ಪ್ರಾಂತೀಯ ನಾಯಕ ಮೋತಿರ್ ರೆಹಮಾನ್ ನಿಜಾಮಿ. ಆತನ ಮೇಲಧಿಕಾರಿ ಕುರ್ರುಮ್ ಝಾ ಮುರಾದ್. ತನಿಖಾ ತಂಡವೊಂದರ ವರದಿಯ ಪ್ರಕಾರ ಕುರ್ರುಮ್ ಝಾ ಮುರಾದ್ 15 ಬಾಂಗ್ಲಾ ದೇಶಿಯರನ್ನು ಸಾಯಸಿದ್ದ. ಇಸ್ಲಾಮ್ ಆಧರಿತ ಗುಂಪುಗಳು ಪಾಕಿಸ್ತಾನಿ ಆರ್ಮಿಯ ಪರವಾಗಿ ಕೆಲಸ ಮಾಡಿದ್ದವು.

ನಾವು ಈ ವಿದ್ಯಾಮಾನಗಳನ್ನು ಅರ್ಥ ಮಾಡಿಕೊಳ್ಳಲು ಮತ್ತಷ್ಟು ಹಿಂದಕ್ಕೆ ಹೋಗಬೇಕು. ರೂಸ್‌ವೆಲ್ಟ್ ಅವರಿಂದ ಚರ್ಚಿಲ್ ಅವರಿಗೆ ಪತ್ರವೊಂದು ಬರುತ್ತದೆ. ಅದರಲ್ಲಿ ರೂಸ್‌ವೆಲ್ಟ್ ಅವರು ಚರ್ಚಿಲ್ ಅವರಿಗೆ “ನೀವು ಎರಡನೇ ಮಹಾಯುದ್ಧದಲ್ಲಿ ನಿಮಗೆ ಬೆಂಬಲಿಸಬೇಕೆಂದು ನಮ್ಮನ್ನು ಕೇಳಿದ್ದೀರಿ. ಸರಿ. ನಾವು ಬೆಂಬಲಿಸುತ್ತೇವೆ. ಆದರೆ ನಮ್ಮ ಕರಾರೆಂದರೆ ನೀವು ಇಂಡಿಯಾವನ್ನು ದುರ್ಬಲಗೊಳಿಸಬೇಕು ಮತ್ತು ಇದನ್ನು ಇಬ್ಭಾಗವಾಗಿಸಿ ಎರಡು ಮಿಲಿಟರಿ ರಾಜ್ಯಗಳನ್ನು ಸ್ಥಾಪಿಸಬೇಕು,” ಎಂದು ಹೇಳುತ್ತಾರೆ. ಈಗ ಅರ್ಥವಾಗಿರಬೇಕಲ್ಲವೇ ಇಲ್ಲಿ ಯಾರು ಪ್ರಮುಖ ಪಾತ್ರ ವಹಿಸಿದ್ದಾರೆಂದು.

ಯುದ್ಧ ಕಾಲದ ಅತ್ಯಾಚಾರಗಳ ವಿಚಾರಣೆಗಾಗಿ ನಿಯುಕ್ತಗೊಂಡ ಟ್ರಿಬ್ಯೂನಲ್ 1971 ರ ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಅಪರಾಧಗಳನ್ನೆಸಿಗಿದ ಕ್ರಿಮಿನಲ್‌ಗಳ ವಿರುದ್ಧ ಮೊಕದ್ದಮೆಗಳನ್ನು ನಡೆಸುತ್ತಿದೆ. ಈ ಕ್ರಿಮಿನಲ್‌ಗಳ ಪಟ್ಟಿಯನ್ನು ಗಮನಿಸಿದಾಗ ಈ ಬಹುಪಾಲು ಆರೋಪಿಗಳು ಜಮಾತ್ ಎ- ಇಸ್ಲಾಂನ ಬಾಂಗ್ಲಾ ದೇಶದ ಅಂಗವಾಗಿರುತ್ತಾರೆ. ಇದರ ಕುರಿತಾಗಿ ನಿಮ್ಮ ಅಭಿಪ್ರಾಯವೇನು?
ಮೊದಲಿಗೆ ಮಾನವತೆಯ ವಿರುದ್ಧವಾಗಿ ಯಾರೇ ಅತ್ಯಾಚಾರ ಮಾಡಲಿ ಅವರು ಶಿಕ್ಷೆಗೆ ಒಳಪಡಲೇಬೇಕು. ಸ್ಥಳೀಯ ಬಾಂಗ್ಲಾ ದೇಶೀಯರ ಹೊಣೆಯೇನೆಂದರೆ ಈ ಕ್ರಿಮಿನಲ್‌ಗಳಿಗೆ ರಾಜಕೀಯ ಪ್ರವೇಶವನ್ನು ನಿರಾಕರಿಸುವುದು. ಷೇಕ್ ಸಾಹೇಬರು ಗತಿಸಿದ ನಂತರ ಅಧಿಕಾರ ವಹಿಸಿಕೊಂಡ ಪಕ್ಷದವರೇ ಈ ಅಪರಾಧಿಗಳನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡರು. ಇಂದು ಖಲೀದ ಜಿಯಾ ಚುನಾವಣೆಗೆ ಸ್ಪರ್ಧಿಸಿದರೆ ಜಮಾತೆಯು ಆಕೆಯ ಬೆಂಬಲಕ್ಕಿರುತ್ತದೆ. ಇವರು ಅಧಿಕಾರಕ್ಕೆ ಬಂದರೆ ಏನಾಗಬಹುದೆಂದು ಈಗಾಗಲೇ ನಿಮ್ಮ ಅನುಭವಕ್ಕೆ ಬಂದಿರುತ್ತದೆ.

ನೀವು ಬಾಂಗ್ಲಾ ಮತ್ತು ಪಾಕಿಸ್ತಾನ ದೇಶಗಳ ಜಮಾತೆಯ ಚಟುವಟಿಕೆಗಳನ್ನು ಅಧ್ಯಯನ ಮಾಡಿದ್ದೀರಾ? ನಿಮಗೇನಾದರೂ ಇವೆರಡರ ನಡುವೆ ಸಾಮ್ಯತೆ ಗೋಚರಿಸಿದೆಯೇ?
ಎರಡೂ ದೇಶಗಳಲ್ಲಿರುವ ಜಮಾತೆಯ ಎರಡೂ ಪಕ್ಷಗಳು ವ್ಯಕ್ತಿಯೊಬ್ಬನ ಎಡಗೈ ಮತ್ತು ಬಲಗೈಯಂತೆ. ಆದರೆ ಇವೆರಡನ್ನು ನಿಯಂತ್ರಿಸಲು ಎರಡು ಅಧಿಕಾರ ಕೇಂದ್ರಗಳಿಲ್ಲ, ಬದಲಾಗಿ ಇವೆರೆಡನ್ನು ನಿಯಂತ್ರಿಸುವುದು ಮಾತ್ರ ಒಂದೇ ಕೈ. ಪಾಕಿಸ್ತಾನದ ಮಾಧ್ಯಮಗಳಲ್ಲಿ ಬಾಂಗ್ಲಾದೇಶದ ವಿದ್ಯಮಾನಗಳ ಕುರಿತಾಗಿ ಬರೆಯುವಾಗ ಅಲ್ಲಿನ ಜಮಾತೆಯ ಬಗೆಗೂ ಬರೆಯುತ್ತಾರೆ. ಅಲ್ಲಿನ ಸರ್ಕಾರದ ವಿರೋಧದ ವರದಿಗಳನ್ನು ಪ್ರಟಿಸುತ್ತಾರೆ.ಉದಾಹರಣೆಗೆ ನೋಡಿ ಆ ಸೆಕ್ಯುಲರ್ ಬಾಂಗ್ಲಾ ದೇಶದಲ್ಲಿ ಇಸ್ಲಾಂ ಅನ್ನು ಹೇಗೆ ಅಪಮಾನಗೊಳಿಸುತ್ತಿದ್ದಾರೆ ಎಂದು ಬರೆಯುತ್ತಾ ಈ ಸೆಕ್ಯುಲರ್ ಬಾಂಗ್ಲಾದಲ್ಲಿ ಇಸ್ಲಾಂ ಅನ್ನು ಮಾತನಾಡಿದ್ದಕ್ಕೆ ಶಿಕ್ಷಿಸುತ್ತಾರೆ ಎಂದು ಸಹ ವರದಿ ಮಾಡುತ್ತಾರೆ.

ಯುದ್ಧ ಕಾಲದ ಅತ್ಯಾಚಾರಗಳ ವಿಚಾರಣೆಗಾಗಿ ನಿಯುಕ್ತಗೊಂಡ ಟ್ರಿಬ್ಯೂನಲ್‌ನ ವಿಚಾಣೆಯಲ್ಲಿ ಕೇವಲ ಬಾಂಗ್ಲಾ ದೇಶದ ಅಪರಾಧಿಗಳ ವಿಚಾರಣೆ ನಡೆಸಲಾಗುತ್ತಿದೆ. ಆದರೆ ಜೊತೆಗೆ ಪಾಕಿಸ್ತಾನದ ಸೈನ್ಯ ಮತ್ತು ಇತರೇ ದೇಶದ ಯುದ್ಧ ಕಾಲದ ಅಪರಾಧಿಗಳನ್ನು ಸಹ ವಿಚಾರಣೆಗೆ ಒಳಪಡಿಸಬೇಕಲ್ಲವೇ? ಕನಿಷ್ಟ ಅಂತರಾಷ್ಟ್ರೀಯ ಕೋರ್ಟಗಳಲ್ಲಿ.
ಕ್ರೈಮ್ ಟ್ರಿಬ್ಯೂನಲ್ ತನ್ನ ಆದೇಶವನ್ನು ಪ್ರಕಟಿಸಿದಾಗ ಪಾಕಿಸ್ತಾನದ ಜಮಾತ್ ಅಮೀರ್ ಸೈಯದ್ ಮುನಾವರ್ ಹಸನ್ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಾ ಪಾಕಿಸ್ತಾನ ಸರ್ಕಾರಕ್ಕೆ ಷೇಕ್ ಹಸೀನಾ ಅವರ ಬಳಿ ನಿಯೋಗವನ್ನು ಕಳಿಸಬೇಕೆಂದು ಸೂಚಿಸುತ್ತಾರೆ. ಮುಂದುವರೆದು “ನಾವು ಮುಜೀಬರ್ ಅವರೊಂದಿಗೆ ಯುದ್ಧ ಕಾಲದ ಖೈದಿಗಳನ್ನು ವಿಚಾರಣೆ ನಡೆಸಬಾರದೆಂದು ಒಪ್ಪಂದ ಮಾಡಿಕೊಂಡಿದ್ದೇವೆ. ಹಾಗಿದ್ದಲ್ಲಿ ಅವರು ಹೇಗೆ ಈ ಒಪ್ಪಂದವನ್ನು ಧಿಕ್ಕರಿಸಿ ಅಪರಾಧಿಗಳನ್ನು ವಿಚಾರಣೆ ನಡೆಸುತ್ತಾರೆ?” ಎಂದು ಹೇಳುತ್ತಾರೆ. ಈಗ ನಾನು ಕೇಳುವ ಪ್ರಶ್ನೆ ಆ ಒಪ್ಪಂದ ಯಾವುದು? ನಿಜಕ್ಕೂ ಆ ಒಪ್ಪಂದದಲ್ಲಿ ಯುದ್ಧ ಕಾಲದ ಅಪರಾಧಿಗಳನ್ನು ವಿಚಾರಣೆಗೆ ಗುರಿಪಡಿಸಬಾರದೆಂದು ಹೇಳಿದ್ದಾರೆಯೇ?

ವಾಸ್ತವದಲ್ಲಿ ಆ ಬಗೆಯ ಒಪ್ಪಂದವೊಂದು ಜಾರಿಯಲ್ಲಿದೆ. ಅದರಲ್ಲಿ ಸುಮಾರು 195 ಯುದ್ಧಕಾಲದ ಅಪರಾಧಿಗಳನ್ನು ತನ್ನ ದೇಶದಲ್ಲಿ ವಿಚಾರಣೆ ನಡೆಸಬುಹುದೆಂದು ತಿಳಿಸಲಾಗಿದೆ. ಆದರೆ ಆ ರೀತಿ ಇದುವರೆಗು ಪಾಕಿಸ್ತಾನ ನಡೆದುಕೊಂಡಿದೆಯೇ?1971_Surrender_of_Pakistan ಕೊನೆವರೆಗೂ ಜನರಲ್ ನಿಯಾಜಿ ಹೇಳುತ್ತಿದ್ದದ್ದು “ನಾನು ಕೇವಲ ಆರ್ಮಿ ಅಧಿಕಾರಿ. ಮೇಲಿನವರ ಆದೇಶಗಳನ್ನು ಪಾಲಿಸಿದ್ದೇನಷ್ಟೆ.” ಈ ಆದೇಶಗಳನ್ನು ಪಾಲಿಸಿದ್ದಕ್ಕೆ ಆರ್ಮಿಯನ್ನು ಇದೇ ಬಗೆಯಲ್ಲಿ ವಿಚಾರಣೆಗೆ ಗುರಿಪಡಿಸಿದ್ದಲ್ಲಿ ಆರ್ಮಿಯ ಅವಶ್ಯಕತೆ ಎಲ್ಲಿದೆ? ನಿಯಾಜಿ ಇದನ್ನು ಹಮಿದುರ್ ರೆಹಮಾನ್ ಕಮಿಷನ್‌ಗೆ ಹೇಳಿದ್ದು.

ಆದರೆ ಅದೇ ಸಂದರ್ಭದಲ್ಲಿ ಲೆಫ್ಟಿನೆಂಟ್ ಜನರಲ್ ಶಹಬಾಜಾ ಯಾಕೂಬ್ ಅಲಿ ಖಾನ್ ಈ 1971 ಯುದ್ಧದಲ್ಲಿ ಭಾಗವಹಿಸುವುದಿಲ್ಲವೆಂದು ಹೇಳಿ ಪಾಕಿಸ್ತಾನ ಆರ್ಮಿಯಿಂದ ನಿವೃತ್ತಿ ಹೊಂದುತ್ತಾರೆ. ಆದರೆ ಇವರಿಗೆ ಆರ್ಮಿಯ ಆದೇಶವನ್ನು ಧಿಕ್ಕರಿಸಿದ್ದಾರೆಂದೇನು ಶಿಕ್ಷೆಯನ್ನು ನೀಡುವುದಿಲ್ಲ. ಬದಲಾಗಿ ಜುಲ್ಫೀಕರ್ ಅಲಿ ಭುಟ್ಟೋ ಅವರು ಶಹಬಾಜಾ ಅವರನ್ನು ವಿದೇಶಾಂಗ ಮಂತ್ರಿಯಾಗಿ ನೇಮಿಸುತ್ತಾರೆ.

ಲಾಹೋರಿನಲ್ಲಿ ಸೆಮಿನಾರ್ ಒಂದರಲ್ಲಿ ಈ ಸೇನಾಧಿಕಾರಿ ನಿಯಾಜಿಯ ಮಗಳು ಪ್ರೆಸಿಡೆಂಟ್ ಮುಷರಫ್ ಅವರ ಸಮ್ಮುಖದಲ್ಲಿ ತನ್ನ ತಂದೆ (ನಿಯಾಜಿ)ಯವರಿಗೆ ಕಿರುಕಳ ಕೊಡುತ್ತಿದ್ದಾರೆ .ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಪೆನ್ಷನ್ ಅನ್ನು ತಡೆ ಹಿಡಿದಿದ್ದಾರೆ ಎಂದು ಆರೋಪಿಸುತ್ತಾರೆ

ಕೆಲವೊಮ್ಮೆ ಈ ಧಾರ್ಮಿಕ ನಾಯಕರು ಅಧಿಕಾರಸ್ತರ ಷಡ್ಯಂತ್ರಕ್ಕೆ ಬಲಿಯಾಗುತ್ತಾರೆ. ಇದರಿಂದ ಹೊರಬರಲಾಗದೆ ಸೋತು ಹೋಗುತ್ತಾರೆ. ಅಲ್- ಬಾದ್ರ್, ಅಲ-ಶಾಮ್ಸ ಗುಂಪಿನ ಸದಸ್ಯರು ಬಾಂಗ್ಲಾ ಸ್ವತಂತ್ರದ ನಂತರ ಪಾಕಿಸ್ತಾನಕ್ಕೆ ವಲಸೆ ಹೋದರು. ಇಂದಿಗೂ ಅವರು ಅಲ್ಲಿ ಭಿಕ್ಷೆ ಬೇಡುತ್ತಿದ್ದಾರೆ.ಇವರೆಲ್ಲ ಶೋಷಿಸಲ್ಪಟ್ಟವರು. ಇಲ್ಲಿ ವ್ಯಕ್ತಿ ಮುಖ್ಯವಾಗುವುದಿಲ್ಲ. ಆದರೆ ಧರ್ಮಾಧಾರಿತ ಸಂಸ್ಥೆಗಳು ವಿಚಾರಣೆಗೊಳಗಾಬೇಕು.

ಜಮಾತೆ ಸಹ 1971ರ ಯುದ್ಧಕಾಲದ ಅಪರಾಧಗಳಿಗಾಗಿ ಟ್ರಿಬ್ಯೂನಲ್‌ನ ವಿಚಾರಣೆಗೆ ಒಳಪಟ್ಟಿದೆ. ಇದರ ಕುರಿತಾಗಿ ನಿಮ್ಮ ಅಭಿಪ್ರಾಯವೇನು?
ನನ್ನ ಗ್ರಹಿಕೆಯ ಪ್ರಕಾರ 1971 ರಲ್ಲಿ ತಾವು ನಡೆಸಿದ ಕೃತ್ಯದ ಬಗ್ಗೆ ಜಮಾತೆಗೆ ಪಶ್ಚತ್ತಾಪವಿಲ್ಲ. ಬದಲಾಗಿ ಅದರ ಕುರಿತಾಗಿ ಅಭಿಮಾನವಿದೆ. ಅವರ ಪ್ರಕಾರ ಇಸ್ಲಾಂಗೆ ಅನುಗುಣವಾಗಿಯೇ ನಡೆದುಕೊಂಡಿದ್ದೇವೆಂದೇ ವಾದಿಸುತ್ತಾರೆ. ಇವರು ಇಸ್ಲಾಂ ರಾಷ್ಟ್ರವನ್ನು ಪ್ರತಿಪಾದಿಸುತ್ತಾರೆ. ಬಾಂಗ್ಲಾ ದೇಶವು ಇಸ್ಲಾಂ ರಾಷ್ಟ್ರವಾಗದೆ ಸೆಕ್ಯುಲರ್ ದೇಶವೆಂದು ಘೋಷಿಸಿಕೊಂಡಿದ್ದು ಇದರ ವಿರುದ್ಧ ಧಾರ್ಮಿಕ ಅನುಕಂಪವುಳ್ಳ ಜನರ ವಿಶ್ವಾಸ ಗಳಿಸುತ್ತಿದ್ದಾರೆ. ಇವರಾಗಲೇ ಸೆಕ್ಯುಲರ್ ಎನ್ನುವ ಪದವನ್ನು ಒಂದು ಬಯ್ಗಳ ಪದವಾಗಿ ಚಾಲ್ತಿಗೆ ತಂದಿದ್ದಾರೆ.

ಸೆಕ್ಯುಲರ್ ಎನ್ನುವ ಪದವನ್ನು ಧರ್ಮವಿರೋಧಿ ಪದವೆಂದು ಅಪಪ್ರಚಾರ ನಡೆಸಿದ್ದು ನನ್ನ ಪ್ರಕಾರ ಜಮಾತೆಯ ಬಲು ದೊಡ್ಡ ಕ್ರೈಮ್. ಏಕೆಂದರೆ ಸೆಕ್ಯುಲರ್ ಅಂದರೆ ಅದು ಒಂದು ಧೋರಣೆ. ಒಂದು ಮನೋವೃತ್ತಿ. ಅದರ ಭಾವಾರ್ಥ ನಿನ್ನ ಒರಿಜಿನಾಲಿಟಿಯನ್ನು ಕಳೆದುಕೊಳ್ಳಬೇಡ, ಹಾಗೆಯೇ ಬೇರೊಬ್ಬರ ನಂಬಿಕೆಯನ್ನು ಘಾಸಿಗೊಳಿಸಬೇಡ. ಆದರೆ ಜಮಾತೆಯ ಪ್ರಕಾರ ಇಸ್ಲಾಂ ಅನ್ನು, ಅದರ ರಾಜಕಾರಣವನ್ನು ಬೆಂಬಲಿಸದವರೆಲ್ಲರನ್ನೂ ನಾಶಮಾಡಬೇಕು.

ತನ್ನ ಪತಿ ಜಿಯಾ ಉರ್ ರೆಹಮಾನ್ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದಿಂದ ಖಲೀದಾ ಜಿಯಾ ತೋರಿಕೆಗಾಗಿ ಪ್ರಜಾಪ್ರಭುತ್ವದ ಕಡೆಗೆ ವಾಲಿದ್ದಾರಷ್ಟೆ.

ಜಮಾತ್ ಎ- ಇಸ್ಲಾಮಿಯಂತಹ ಪಕ್ಷವು ಪಾಕಿಸ್ತಾನ, ಇಂಡಿಯಾ, ಬಾಂಗ್ಲಾದೇಶದಲ್ಲಿ ಇಸ್ಲಾಂ ಮಿಲಿಟೆನ್ಸಿಯಂತಹ ರಾಡಿಕಲ್ ಚಳುವಳಿಗೆ ತನ್ನ ಕೊಡುಗೆಯನ್ನು ನೀಡಿದೆಯೇ ?
ಕಡೆಗೆ ಜಮಾತೆಯ ಗುರಿ ಏನೆಂದರೆ ಇಸ್ಲಾಂ ಅನ್ನು ವಿವಾದಾಸ್ಪದ ಧರ್ಮವನ್ನಾಗಿಸುವುದು. ಇವರ ಈ ಕೃತ್ಯಗಳು ಪಾಕಿಸ್ತಾನದಲ್ಲಿ ಜುಲ್ಫೀಕರ್ ಅಲಿ ಭುಟ್ಟೋ ಅವರ ವಿರುದ್ಧದ ಚಳುವಳಿಗಳಾಗಿ ಸಹ ರೂಪುಗೊಂಡವು. ಅಲ್ಲಿ ಇಸ್ಲಾಂ ಮುರ್ದಾಬಾದ್ ಎನ್ನುವ ಘೋಷಣೆಯೂ ಕೇಳಿಬರುತ್ತಿತ್ತು. ಅಂದರೆ ಇಸ್ಲಾಂ ಅನ್ನು ರಾಜಕಾರಣಕ್ಕೆ ಬಳಿಸಿಕೊಂಡಿದ್ದಕ್ಕಾಗಿ ನಾವೆಲ್ಲ ಇಸ್ಲಾಂ ಮುರ್ದಾಬಾದ್ ಘೋಷಣೆಯನ್ನು ಕೇಳಬೇಕಾಯಿತು.

ಹಾಗಿದ್ದಲ್ಲಿ ನಿಮ್ಮ ಪ್ರಕಾರ ಇಸ್ಲಾಮಿಕ್ ರಾಜ್ಯ ಮತ್ತು ಸೆಕ್ಯುಲರ್ ರಾಜ್ಯದ ಅರ್ಥವೇನು ?
ಒಂದು ದೇಶವು ಇಸ್ಲಾಂ ಅನ್ನು ಆಧರಿಸಿ ಕಟ್ಟಿದ್ದೇವೆ ಎಂದು ವಾದಿಸುವುದಾದರೆ, ಅದು ಪಾಕಿಸ್ತಾನದಂತಹ ಇಸ್ಲಾಮಿಕ್ ದೇಶವಾಗಿದ್ದರೆ dhaka-tribuneಅಲ್ಲಿ ತಾಲಿಬಾನ್‌ಗಳಿಗೆ ಅಧಿಕಾರವನ್ನು ಗಳಿಸಲು ಹಕ್ಕಿದೆ. ಯಾವುದೇ ದೇಶವೊಂದರಲ್ಲಿ ಧರ್ಮವು ಜನತೆಗಾಗಿ ಇರಬೇಕೇ ಹೊರತು ಜನತೆ ಧರ್ಮಕ್ಕಾಗಿ ಅಲ್ಲ. ತನ್ನ ಛಾವಣೆಯಡಿಯಲ್ಲಿ ವಿಭಿನ್ನ ಧರ್ಮಗಳು ಒಂದಾಗಿ ಬದುಕುವಂತಹ ಅವಕಾಶ ಕಲ್ಪಿಸುವ ದೇಶ ಬದುಕುಳಿಯುತ್ತದೆ. ದೇಶವೊಂದು ಪ್ರಜಾಪ್ರಭುತ್ವವನ್ನು ಸ್ಥಾಪಿಸಬೇಕೆಂದರೆ ಅಲ್ಲಿ ಧರ್ಮವಿರುವುದಿಲ್ಲ. ಪ್ರಜಾಪ್ರಭುತ್ವ ಯಾವಾಗಲೂ ಸೆಕ್ಯುಲರ್ ಆಗಿರುತ್ತದೆ. ನೀವು ಸೆಕ್ಯುಲರ್ ಆಗದಿದ್ದರೆ ನಿಮ್ಮನ್ನು ಪ್ರಜಾಪ್ರಭುತ್ವವಾದಿಗಳೆಂದು ಕರೆಯಲು ಸಾಧ್ಯವಿಲ್ಲ. “ಒಬ್ಬ ಮನುಷ್ಯ, ಒಂದು ಪದ” ಎಂದರೆ ಎಲ್ಲರೂ ಸಮಾನರು ಎಂದರ್ಥ. ಅಂದರೆ ವಿಭಿನ್ನ ಧರ್ಮದವರಾಗಿದ್ದರೂ ಎಲ್ಲರೂ ಸಮಾನರೆಂದರ್ಥ. ಯಾರು ಮುಸ್ಲಿಂ ಯಾರು ಮುಸ್ಲಿಮ ಅಲ್ಲ ಎಂಬುದು ಮುಖ್ಯವೇ ಅಗುವುದಿಲ್ಲ.

ಆದರೆ ಇಸ್ಲಾಂ ಅಂದರೆ ರಾಜಕೀಯವೆಂದೇ ಇಸ್ಲಾಂ ರಾಜಕೀಯ ಪಕ್ಷಗಳು ವಾದಿಸುತ್ತಾವಲ್ಲ?
(ನಗುತ್ತ) ಇಸ್ಲಾಂ ಮತ್ತೇನಲ್ಲದೇ ರಾಜಕೀಯವಷ್ಟೆ ಎಂಬುದಾದಲ್ಲಿ ಅವರಿಗೆ ಮತ ಹಾಕದವರೆಲ್ಲರೂ ಕಾಫಿರರು ಹಾಗಾದರೆ.

ನಿಮ್ಮ ತಂದೆಯವರು ಜಮಾತೆಯ ಸ್ಥಾಪಕರಲ್ಲೊಬ್ಬರು. ಇಂದಿಗೂ ಬಾಂಗ್ಲಾ ದೇಶದಲ್ಲಿ ಅದರ ಸ್ಥಾಪಕರೆಂದೇ ಗುರುತಿಸಲ್ಪಡುತ್ತಾರೆ. ಈ ಜಮಾತೆಯ ಸ್ಥಾಪಕರ ಮಗನಾಗಿ ಅವರಿಗೆ ಏನಾದರೂ ಉಪದೇಶಿಸ ಬಯಸುತ್ತೀರ?
(ನಗುತ್ತ) ಇಂದು ಅವರೆಲ್ಲ ಸಲಹೆಗಳನ್ನು ಸ್ವೀಕರಿಸುವ ಮಟ್ಟವನ್ನು ಮೀರಿದ್ದಾರೆ. ನನಗನ್ನಿಸುತ್ತದೆ ಇಂದು ಅವರಿಗೆ ಯಾರ ಅವಶ್ಯಕತೆಯೂ ಬೇಕಾಗಿಲ್ಲ.

– ಕೃಪೆ : ಢಾಕಾ ಟ್ರಿಬ್ಯುಲ್; ಅಕ್ಟೋಬರ್ 6, 2013.
ಸಂದರ್ಶಕರು : ಜುಲ್ಫೀಕರ್ ಅಲಿ ಮನಿಕ್, ಮಕ್ತಾಶ್ರೀ ಚಕ್ಮಾ ಸಾಥಿ
ಅನುವಾದ: ಬಿ. ಶ್ರೀಪಾದ ಭಟ್