ಸಿದ್ಧರಾಮಯ್ಯ ಮತ್ತು ಜನರ ನಿರೀಕ್ಷೆ

-ಚಿದಂಬರ ಬೈಕಂಪಾಡಿ

ಸಹಜವಾಗಿಯೇ ನಾಡಿನ ಜನರ ಕುತೂಹಲ ನಿಯೋಜಿತ ಮುಖ್ಯಮಂತ್ರಿ ಸಿದ್ಧರಾಮಯ ಅವರತ್ತ ನೆಟ್ಟಿದೆ, ಇದೇ ಅವರ ವಿಶೇಷತೆ. ಭ್ರಷ್ಟಾಚಾರ, ಹಗರಣಗಳು, ಹಳಿತಪ್ಪಿದ ಅರ್ಥವ್ಯವಸ್ಥೆ, ಹಿಡಿತ ಕಳೆದುಕೊಂಡಿರುವ ಆಡಳಿತ, ನಿರುದ್ಯೋಗ, ಗಗನಕ್ಕೇರುತ್ತಿರುವ ಬೆಲೆ, ಕೃಷಿ ದಿನದಿನಂದ ದಿನಕ್ಕೆ ಕಳೆಕಳೆದುಕೊಳ್ಳುತ್ತಿರುವುದು, ಗ್ರಾಮೀಣ ಭಾಗದ ಜನರ ನೀರಿನ ಬವಣೆ, ವಿದ್ಯುತ್ ಸಮಸ್ಯೆ ಹೀಗೆ ನಾಡಿನ ಜನರನ್ನು ಚಿಂತೆಗೀಡುಮಾಡಿವೆ. ಹಾಗೆಂದು ಸಿದ್ಧರಾಮಯ್ಯ ಮ್ಯಾಜಿಕ್ ಮಾಡಿಬಿಡುತ್ತಾರೆ ಎನ್ನುವ ಅರ್ಥವಲ್ಲ. ಎಲ್ಲವನ್ನು ಹತೋಟಿಗೆ ತರುತ್ತಾರೆ ಎನ್ನುವ ಬಲವಾದ ನಿರೀಕ್ಷೆ, ಆಶಾವಾದ.

ಇಂಥ ನಿರೀಕ್ಷೆ ಇಟ್ಟುಕೊಳ್ಳಲು ಕಾರಣ ಅವರು ಕಳೆದ ನಾಲ್ಕು ದಶಕಗಳಿಂದ ರಾಜಕೀಯ ಜೀವನದಲ್ಲಿ ಇಟ್ಟಿರುವ ಹೆಜ್ಜೆಗಳು ಮತ್ತು ಸ್ವಾಭಿಮಾನ ಉಳಿಸಿಕೊಂಡು ಕೈಶುದ್ಧವಾಗಿಟ್ಟುಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವುದು. ಸಿದ್ಧರಾಮಯ್ಯ ಅವರಂಥ ವ್ಯಕ್ತಿಗೆ ಇಂಥ ಅವಕಾಶ ಒಂದು ಸವಾಲು. ಹಿಂದುಳಿದವರ ಮತ್ತು ಬಹುಸಂಖ್ಯಾತರ ಬದುಕಿನಲ್ಲಿ ಈಗಲೂ ದೇವರಾಜ ಅರಸು ನೆನಪಿನಲ್ಲಿ ಉಳಿದಿರುವುದಕ್ಕೆ ಕಾರಣಗಳು ಅನೇಕ. ಆಗಿನ ಕಾಲಘಟ್ಟವನ್ನು ಅವಲೋಕಿಸಿದರೆ ಈಗಿನ ಪರಿಸ್ಥಿತಿ ಮತ್ತು ರಾಜಕಾರಣದ ಮುಂದಿರುವ ಸವಾಲುಗಳು ತೀರಾ ಭಿನ್ನ. ಅರಸು ಅವರಿಗೆ ಈಗಿನ ಸವಾಲುಗಳಿರಲಿಲ್ಲ ಆದರೆ ರಾಜಕೀಯ ಒತ್ತಡಗಳಿದ್ದವು. ಅಸ್ಪ್ರಷ್ಯತೆ ಹಾಗೂ ಬಡತನ ತಾಂಡವವಾಡುತ್ತಿದ್ದವು. ರೈತ, ರೈತನ ಮಕ್ಕಳು ಧಣಿಯ ಮನೆಯಲ್ಲಿ ಜೀತ ಮಾಡುತ್ತಿದ್ದರು. ತಮ್ಮ ಬೆವರು ಸುರಿಸಿ ಭೂಮಾಲೀಕನ ಭೂಮಿಯನ್ನು ಉತ್ತು, ಬಿತ್ತಿದರೂ ತಾನು ಮಾತ್ರ ಕೃಷಿ ಕಾರ್ಮಿಕನಾಗಿದ್ದ. ಅಂಥವರ ಬದುಕಿಗೆ ಬೆಳಕು ನೀಡಿದವರು ಅರಸು. ಆಗ ಬಹುಷ ಈಗಿನ ಸಮಸ್ಯೆಗಳಿರುತ್ತಿದ್ದರೆ ಖಂಡಿತಕ್ಕೂ ಅರಸು ಅವುಗಳಿಗೆ ಪರಿಹಾರ ಸೂಚಿಸುವಷ್ಟು ಸಮರ್ಥರಿದ್ದರು. ಅಂಥ ಸಾಮರ್ಥ್ಯವನ್ನು ಸಿದ್ಧರಾಮಯ್ಯ ಅವರಲ್ಲಿ ಜನ ಹುಡುಕುವುದು ನಿಶ್ಚಿತಕ್ಕೂ ಅಪರಾಧವೆನಿಸುವುದಿಲ್ಲ. ಯಾಕೆಂದರೆ ಸಿದ್ಧರಾಮಯ್ಯ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುತ್ತಲೇ ರಾಜಕೀಯದಲ್ಲಿ ಬೆಳೆದವರು.

ಸಿದ್ಧರಾಮಯ್ಯ ಅವರಿಗಿರುವ ಕಾಳಜಿಯ ನೆಲೆಗಳನ್ನು ಗಮನಿಸುವುದಾದರೆ ಯಾವುದೇ ಬಲಿಷ್ಠ ರಾಜಕೀಯ ಹಿನ್ನೆಲೆಯಿಂದ ಬರದಿದ್ದ ಕಾರಣವೇ Siddaramaiahಅವರು ಈಗಲೂ ಜನರ ಜೊತೆ ಹೆಜ್ಜೆ ಹಾಕುತ್ತಿರುವುದು ಅನ್ನಿಸದಿರದು. ಒಂದು ವೇಳೆ ಅವರು ಬಲಿಷ್ಠ ರಾಜಕೀಯ ಹಿನ್ನೆಲೆ, ಬಲಾಢ್ಯ ಆರ್ಥಿಕ ಶಕ್ತಿಯ ಮೂಲದಿಂದ ಬಂದಿದ್ದರೆ ಅವರಿಂದ ಜನ ಓರ್ವ ಹೈಪ್ರೊಫೈಲ್ ರಾಜಕೀಯ ನೇತಾರರನ್ನು ಮಾತ್ರ ಕಾಣಲು ಸಾಧ್ಯವಾಗುತ್ತಿತ್ತು. ಆದರೆ ಅವರು ಹಳ್ಳಿಯಿಂದ ಪಟ್ಟಣಕ್ಕೆ ಬಂದವರು, ಹಳ್ಳಿ ಹೈಕಳ ಜೊತೆ ಬೆರೆತು ಬದುಕನ್ನು ಅರಳಿಸಿಕೊಂಡವರು, ಆದ್ದರಿಂದಲೇ ಅವರ ನಡೆ, ನುಡಿ, ಚಿಂತನೆಗಳು ಇನ್ನೂ ಹಳ್ಳಿಯ ಸೊಗಡಿನಿಂದ ಬೆರ್ಪಟ್ಟಿಲ್ಲ, ಬೇರ್ಪಡುವುದೂ ಬೇಡ. ಹಳ್ಳಿ ಮತ್ತು ಸಿದ್ಧರಾಮಯ್ಯ ಅವರ ನಡುವಿನ ಸಂಬಂಧ ತಾಯಿ ಮಗುವಿನ ಕರುಳು ಬಳ್ಳಿಯ ಸಂಬಂಧವಿದ್ದಂತೆ.

ಸಿದ್ಧರಾಮಯ್ಯ ಒಂದು ವೇಳೆ ರಾಜಕೀಯಕ್ಕೆ ಬರದೇ ಇರುತ್ತಿದ್ದರೆ ಓರ್ವ ನ್ಯಾಯವಾದಿಯಾಗಿ ಅಪಾರ ಸಂಪಾದನೆ ಮಾಡಿ ನಾಡಿನ ಜನರ ಕಣ್ಣಿಗೆ ಕಾಣಿಸಿಕೊಳ್ಳದ ಕೋಟ್ಯಾಂತರ ಮಂದಿಯಲ್ಲಿ ಒಬ್ಬರಾಗುತ್ತಿದ್ದರು. ಅವರು ರೈತ ನಾಯಕ ಪ್ರೊ.ನಂಜುಂಡಸ್ವಾಮಿಯವರ ಕಣ್ಣಿಗೆ ಬಿದ್ದು ಹೋರಾಟಗಳಲ್ಲಿ ತೊಡಗಿಸಿಕೊಂಡು ಜನರು ಬಯಸುವ ನಾಯಕನಾದರು. ಚುನಾವಣೆಯಲ್ಲಿ ಸ್ಪರ್ಧಿಸಲು ಠೇವಣಿ ಕಟ್ಟಲು ಹಣವಿಲ್ಲದ ಸಿದ್ಧರಾಮಯ್ಯ ಅವರನ್ನು ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿರುವವರು ಜನರು ಎನ್ನುವುದು ಸುಲಭ, ಆದರೆ ಅದರೊಂದಿಗೆ ಅವರು ಪಾಲಿಸಿಕೊಂಡು ಬಂದ ಸಿದ್ಧಾಂತಗಳ ಪಾಲೂ ಇದೆ ಎನ್ನುವುದನ್ನು ನಿರಾಕರಿಸುವಂತಿಲ್ಲ.

ಸಿದ್ಧರಾಮಯ್ಯ ಅವರ ರಾಜಕೀಯ ನಡೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಎಲ್ಲವನ್ನೂ ಸುಲಭವಾಗಿ ಮತ್ತು ಭಾವನಾತ್ಮಕವಾಗಿ ಅಪ್ಪಿಕೊಳ್ಳುವವರೂ ಅಲ್ಲ, ಪ್ರತಿಷ್ಠೆಗಾಗಿ ಎಲ್ಲವನ್ನೂ ನಿರಾಕರಿಸುವಂಥ ಮನಸ್ಥಿತಿಯವರೂ ಅಲ್ಲ. ಅಪ್ಪಿಕೊಳ್ಳುವ ಮತ್ತು ಸಕಾರಣ ಸಹಿತ ನಿರಾಕರಿಸುವ ಎರಡೂ ಗುಣಗಳು ಅವರಲ್ಲಿವೆ. ಅಧಿಕಾರಕ್ಕಾಗಿ ತಮ್ಮ ನಿಲುವುಗಳನ್ನು ಒತ್ತಯಿಡುವಂಥ ರಾಜಕೀಯ ಸ್ವಾರ್ಥಿಯಲ್ಲ ಎನ್ನುವುದನ್ನು ಬಹಳ ಮುಖ್ಯವಾಗಿ ಗಮನಿಸಬೇಕು.

ರಾಜಕೀಯವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮೇಲಕ್ಕೇರಲು ಪಟ್ಟಶ್ರಮ, ಅನುಭವಿಸಿದ ಯಾತನೆಯನ್ನು ಸಿದ್ಧರಾಮಯ್ಯ ಅವರೂ ಅನುಭವಿಸಿದ್ದಾರೆ. ಒಂದು ಕಾಲಘಟ್ಟದಲ್ಲಿ ಅತ್ಯಂತ ನಿಷ್ಠುರವಾದಿಯಾದ ದೇವೇಗೌಡರು ರಾಮಕೃಷ್ಣ ಹೆಗಡೆ ಅವರ ರಾಜಕೀಯ ಚಾಣಕ್ಷತೆಯಿಂದ ಭಾರೀ ಯಾತನೆ ಅನುಭವಿಸಿದರೂ ಮತ್ತೆ ಅವರನ್ನು ಮೆಟ್ಟಿ ನಿಲ್ಲಲು ರಾಜಿಮಾಡಿಕೊಂಡು ಹೆಗಡೆ ಕೈಹಿಡಿದರು. ಆನಂತರ ತಮ್ಮ ತಂತ್ರಗಾರಿಕೆಯಿಂದ ಹೆಗಡೆಯವರನ್ನು ರಾಜಕೀಯವಾಗಿ ಮಣಿಸಿ ಮೂಲೆಗುಂಪುಮಾಡಿದರು. ಹಾಗೆಯೇ ಸಿದ್ಧರಾಮಯ್ಯ ಅವರೂ ಕೂಡಾ ದೇವೇಗೌಡರಿಂದ ರಾಜಕೀಯವಾಗಿ ಹಿಂಸೆ ಅನುಭವಿಸಿದ್ದಾರೆ, ಅವಕಾಶ ಕಳೆದುಕೊಂಡಿದ್ದಾರೆ, ಆದರೆ ದೇವೇಗೌಡರಂತೆ ತಂತ್ರಗಾರಿಕೆ ಮಾಡಲು ಅವಕಾಶವಿದ್ದರೂ ಮಾಡದೆ ಜನತಾ ಮನೆಯಿಂದಲೇ ಹೊರನಡೆದರು. ಸಿದ್ಧರಾಮಯ್ಯ ಅವರು ಈಗಿನ ಈ ಸ್ಥಾನಕ್ಕೇರಲು ಪ್ರೊ.ನಂಜುಂಡಸ್ವಾಮಿ, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್ ಅವರ ಕೊಡುಗೆಯಿದೆ, ಅವರು ಕೊಟ್ಟ ಅವಕಾಶಗಳನ್ನು ನಿರಾಕರಿಸುವಂತಿಲ್ಲ. ಹಾಗೆಯೇ ದೇವೇಗೌಡರ ಜೊತೆ ಹೆಜ್ಜೆ ಹಾಕಿದ್ದರಿಂದಲೂ ಸಿದ್ಧರಾಮಯ್ಯ ಅವರಿಗೆ ಸಾಕಷ್ಟು ಅನುಭವ ಸಿಕ್ಕಿದೆ.

ಜನತಾ ದಳದಿಂದ ಹೊರನಡೆಯುವುದು ಖಚಿತವಾಗಿದ್ದರೂ ಸಿದ್ಧರಾಮಯ್ಯ ಕಾಂಗ್ರೆಸ್ ಸೇರಬೇಕೆಂದು ಜನರ ಒತ್ತಡವಿತ್ತೇ ಹೊರತು ಸಿದ್ಧರಾಮಯ್ಯ ಅವರಿಗೆ ವೈಯಕ್ತಿಕವಾಗಿ ಒಲವಿರಲಿಲ್ಲ. ಅದಕ್ಕೆ ಕಾರಣ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಂಸ್ಕೃತಿ. ಇಂದಿರಾ ಗಾಂಧಿ, ರಾಜೀವ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ನಡೆಗಳನ್ನು, ಪಕ್ಷದ ಒಳಗಿನ ಆಂತರಿಕ ಸ್ವಾತಂತ್ರ್ಯಗಳ ಸ್ಪಷ್ಟ ಅರಿವುದು ಸಿದ್ಧರಾಮಯ್ಯ ಅವರಿಗಿತ್ತು. ಆದರೆ ಸಿದ್ಧರಾಮಯ್ಯ ಅವರ ನಾಯಕತ್ವ, ಅವರ ಬದ್ಧತೆ, ಜನರಿಗಿರುವ ಸಿದ್ಧರಾಮಯ್ಯ ಅವರ ಮೇಲಿನ ಒಲವನ್ನು ಕಾಂಗ್ರೆಸ್ ನಾಯಕರು ಗುರುತಿಸಿದ್ದರು ಮತ್ತು ಸೋನಿಯಾ ಗಾಂಧಿ ಅವರೂ ಮನವರಿಕೆ ಮಾಡಿಕೊಂಡಿದ್ದರು.

ಒಬ್ಬ ಹಿಂದುಳಿದ ನಾಯಕ ರಾಜಕೀಯದಿಂದ ದೂರವಾಗುತ್ತಾನೆ, ತುಳಿತಕ್ಕೊಳಗಾಗಿ ನೇಪಥ್ಯಕ್ಕೆ ಸರಿಯುತ್ತಿದ್ದಾನೆ ಎನ್ನುವ ನೋವು ಅನುಭವಿಸಿದ ಎಚ್.ವಿಶ್ವನಾಥ್ ಸಿದ್ಧರಾಮಯ್ಯ ಅವರನ್ನು ಕಾಂಗ್ರೆಸ್ ಮನೆಗೆ ಕರೆತರಲು ಮಾಡಿದ ದೊಡ್ಡ ಮನಸ್ಸನ್ನು ಜನರು ಮೆಚ್ಚಲೇ ಬೇಕು. ತಮ್ಮನ್ನು ಹಿಂದಿಕ್ಕಿ ಬೆಳೆಯುವ ಸಾಮರ್ಥ್ಯ ಸಿದ್ಧರಾಮಯ್ಯ ಅವರಿಗಿದೆ ಎನ್ನುವ ಸ್ಪಷ್ಟ ಕಲ್ಪನೆಯಿದ್ದರೂ ವಿಶ್ವನಾಥ್ ತಳೆದ ನಿಲುವು ಇಂದು ಈ ನಾಡಿಗೆ ಓರ್ವ ಸಮರ್ಥ ನಾಯಕನ ಕೈಗೆ ಅಧಿಕಾರ ಸಿಗುವಂತಾಗಿದೆ.

ಸಿದ್ಧರಾಮಯ್ಯ ಅವರು ಗುಟ್ಟಾಗಿ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಸೇರಿಲ್ಲ. ಬಹುಷ ರಾಜಕೀಯ ಇತಿಹಾಸದಲ್ಲಿ ದೊಡ್ಡ ಮಟ್ಟದ ಸಾರ್ವಜನಿಕ ಸಭೆ ಮೂಲಕ ಕಾಂಗ್ರೆಸ್ ಸೇರಿದವರಲ್ಲಿ siddaramaiah_dharam_khargeಸಿದ್ಧರಾಮಯ್ಯ ಅವರೂ ವಿರಳರಲ್ಲಿ ವಿರಳರು. ಇದಕ್ಕೂ ಕಾರಣವಿದೆ. ಕಾಂಗ್ರೆಸ್ ಪಕ್ಷದಲ್ಲಿ ಇಂಥ ಸ್ವಾಗತ ತೀರಾ ಅಪರೂಪ ಎನ್ನುವುದು ಆ ಪಕ್ಷದ ಇತಿಹಾಸ ನೋಡಿದರೆ ಗೊತ್ತಾಗುತ್ತದೆ. ಚಿರಂಜೀವಿ ಕಾಂಗ್ರೆಸ್ ಸೇರಿದ ಸನ್ನಿವೇಶ ಮತ್ತು ಸಿದ್ಧರಾಮಯ್ಯ ಕಾಂಗ್ರೆಸ್ ಸೇರಿದ ಕ್ಷಣವನ್ನು ಕಣ್ಣಮುಂದಿಟ್ಟುನೋಡಿ. ಚಿರುಗೂ ಅಪಾರವಾದ ಬೆಂಬಲಿಗರಿದ್ದಾರೆ ಓರ್ವ ನಟನಾಗಿ. ಆದರೆ ಅವರು ಅತ್ಯಂತ ಸರಳವಾಗಿ ಕಾಂಗ್ರೆಸ್ ಸೇರಿದರು. ಬೆಂಗಳೂರಲ್ಲಿ ಐತಿಹಾಸಿಕ ಸಮಾವೇಶದಲ್ಲಿ ಸಿದ್ಧರಾಮಯ್ಯ ಅವರನ್ನು ಸ್ವತ: ಸೋನಿಯಾ ಗಾಂಧಿ ಪಕ್ಷಕ್ಕೆ ಬರಮಾಡಿಕೊಂಡರು. ಅಂದು ಸೋನಿಯಾ ಗಾಂಧಿ ಮಾಡಿದ್ದ ಭಾಷಣದಲ್ಲಿ ಸಿದ್ಧರಾಮಯ್ಯ ಅವರು ದೊಡ್ಡ ಶಕ್ತಿ, ಅವರ ಅಗತ್ಯ ಕಾಂಗ್ರೆಸ್ ಪಕ್ಷಕ್ಕೆ ಬೇಕಿತ್ತು, ಅವರಿಂದ ಕಾಂಗ್ರೆಸ್ ಬಲಗೊಳ್ಳುತ್ತದೆ ಎನ್ನುವ ವಿಶ್ವಾಸವಿದೆ ಎಂದಿದ್ದರು. ಅವರ ನಿರೀಕ್ಷೆ ಖಂಡಿತಕ್ಕೂ ಸುಳ್ಳಾಗಲಿಲ್ಲ.

ಹೀಗೆ ಸಿದ್ಧರಾಮಯ್ಯ ಅವರ ರಾಜಕೀಯ ನಡೆಗಳು, ಅವರು ಉಪಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ, ಸಾರಿಗೆ ಸಚಿವರಾಗಿ, ಪಶುಸಂಗೋಪನಾ ಸಚಿವರಾಗಿ ಕಾರ್ಯನಿವಹಿಸಿರುವುದು, ಇತ್ತೀಚಿನವರೆಗೂ ಪ್ರತಿಪಕ್ಷದ ನಾಯಕರಾಗಿ ಅಧಿಕಾರ ನಿಭಾಯಿಸಿದ ವೈಖರಿ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳುವಂತೆ ಮಾಡಿವೆ.

ಮುಖ್ಯಮಂತ್ರಿ ಹುದ್ದೆ ಸುಖದ ಸುಪ್ಪತ್ತಿಗೆಯಲ್ಲ, ಮುಳ್ಳಿನ ಹಾಸಿಗೆ ಎಂದು ಸಿದ್ಧರಾಮಯ್ಯ ಹೇಳಿರುವುದು ಹಾಗಾದರೆ ಇವರಿಗೆ ಯಾಕೆ ಬೇಕಿತ್ತು ಈ ಹುದ್ದೆ ಎಂದು ಕೇಳಲು ಅವಕಾಶವಿದೆ. ನೋವಿನಲ್ಲೂ ಸುಖವಿದೆ, ಆದರೆ ಆ ಸುಖವನ್ನು ಅನುಭವಿಸಲು ಬಯಸುವವರು ತೀರಾ ಕಡಿಮೆ. ನೋವಿರದ ಸುಖವೇ ಬೇಕು ಎನ್ನುವವರೇ ಹೆಚ್ಚು. ಈ ಜಗತ್ತಿನಲ್ಲಿ ಹೆರಿಗೆಯ ನೋವಿನಷ್ಟು ಯಾತನೆ ಬೇರೆ ಇರಲಾರದು, ಆದರೆ ಅಂಥ ನೋವನ್ನು ಸಹಿಸಿಕೊಂಡು ಮಗುವನ್ನು ಹೆರುವ ತಾಯಿ ತಾನು ನೋವು ಅನುಭವಿಸಿ ಹಡೆದ ಮಗುವನ್ನು ನೋಡಿ ಅನುಭವಿಸಿದ ನೋವನ್ನು ಮರೆತುಬಿಡುತ್ತಾಳೆ. ಒಂದು ದಿನವೂ ನಿನ್ನಿಂದಾಗಿ ನಾನು ನೋವು ಅನುಭವಿಸಿದೆ ಎನ್ನುವ ಆರೋಪ ಮಾಡುವುದಿಲ್ಲ. ಅಂಥ ಪರಿಕಲ್ಪನೆಯನ್ನು ಸಿದ್ಧರಾಮಯ್ಯ ಅವರ ಆಡಳಿತದಿಂದ ನಿರೀಕ್ಷೆ ಮಾಡಬಹುದು ಎನ್ನುವುದೇ ನಾಡಿನ ಜನರದ್ದಾಗಿದ್ದರೆ ಅಚ್ಚರಿಪಡಬೇಕಾಗಿಲ್ಲ.

ಸಿದ್ಧರಾಮಯ್ಯ ಅವರ ಹೆಗ್ಗುರುತು ಅವರ ನಂಬಿಕೆ ಮತ್ತು ಅವರು ಇಲ್ಲಿಯವರೆಗೆ ಪಾಲಿಸಿಕೊಂಡು ಬಂದಿರುವ ಸಿದ್ಧಾಂತಗಳು ನಿಜ. ಸಿದ್ಧರಾಮಯ್ಯ ಅವರಿಗಿರುವ ಬಹುಮುಖ್ಯ ದೌರ್ಬಲ್ಯ ಮುಂಗೋಪ ಮತ್ತು ನಿಷ್ಠುರ ಮಾತು. ಇವುಗಳಿಗೆ ಸ್ವಯಂ ನಿಯಂತ್ರಣ ಹಾಕಿಕೊಂಡರೆ ಅವರು ಅಂದುಕೊಂಡದ್ದನ್ನು ಸಾಧಿಸಲು, ಜನರ ನಿರೀಕ್ಷೆಗಳನ್ನು ನಿಜಗೊಳಿಸಲು ಸುಲಭವಾಗುತ್ತದೆ.

ಚುನಾವಣೋತ್ತರ ಸಂದರ್ಭದಲ್ಲಿ “ವರ್ತಮಾನ.ಕಾಮ್”ನ ದಾರಿ…

ಸ್ನೇಹಿತರೇ,

ಕಳೆದ ಒಂದು-ಒಂದೂವರೆ ತಿಂಗಳು ದಿನಕ್ಕೆ ಸರಾಸರಿ ಏಳೆಂಟು ಕಿ.ಮೀ. ನಡೆದು, ನೂರಾರು ಜನರ ಕೈಕುಲುಕಿ, ಮಾತನಾಡಿಸಿ, ಕಷ್ಟಸುಖ ಹಂಚಿಕೊಂಡು, ಬೆವರು ಸುರಿಸಿ, ಕೊಬ್ಬು ಕರಗಿಸಿ, ಬಹಳ ಸಂತಸದಿಂದ ಕಳೆದೆ. ಜೊತೆಯಾದದ್ದು ಹಲವರು. ಹಣಸಹಾಯದಿಂದ ಹಿಡಿದು, ಸಾಧ್ಯವಾದಾಗಲೆಲ್ಲ ಜೊತೆಗೂಡಿ ಪ್ರಚಾರ ಮಾಡಿದ ಅನೇಕರಿದ್ದಾರೆ. ಅವರೆಲ್ಲರಿಗೂ ನನ್ನ ನಮನಗಳು. ಸುಮಾರು ನೂರಕ್ಕೂ ಹೆಚ್ಚು ಜನ ಕೂಡಿ ಸುಮಾರು ಐದೂವರೆ ಲಕ್ಷ ರೂಪಾಯಿಯಷ್ಟು ದೇಣಿಗೆ ನೀಡಿದ್ದಾರೆ. ನಾನು ನನ್ನ ಕಡೆಯಿಂದ ಸುಮಾರು ಮೂರ್ನಾಲ್ಕು ಲಕ್ಷ ರೂಪಾಯಿ ಹಾಕಿಕೊಂಡಿದ್ದೇನೆ.

ಬಿಟಿಎಮ್ ಲೇಔಟ್‌ನ 6596 ಮತದಾರರು ಯಾವುದೇ ಪ್ರಲೋಭನೆಗೊಳಗಾಗದೆ ಒಂದು ಗುಂಪಾಗಿ ಮತ ಹಾಕಿದ್ದಾರೆ BTMLayout-2013ಎಂದರೆ, ಅದು ಸಾಮಾನ್ಯ ಸಂಗತಿಯಲ್ಲ. ಈ ಕ್ಷೇತ್ರದಲ್ಲಿ ನಡೆದ ಅಕ್ರಮ, ಆಮಿಷ, ಮತ್ತು ಜಾತಿರಾಜಕಾರಣದ ನಡುವೆಯೂ ಇಷ್ಟೊಂದು ಜನ ಅವೆಲ್ಲವನ್ನೂ ಮೀರಿ ವರ್ತಿಸಿದ್ದು ಪ್ರಶಂಸನೀಯ. ನಾನು ಚುನಾವಣೆಯ ಸಂದರ್ಭದಲ್ಲಿ ಬಹಿರಂಗ ಭಾಷಣಗಳಲ್ಲಿ ಹೇಳುತ್ತಿದ್ದಂತೆ, ನಮಗೆ ಬೀಳುವ ಪ್ರತಿಯೊಂದು ಮತವೂ ಅನಾಚಾರ-ಅಕ್ರಮದ ವಿರುದ್ಧ ಬಿದ್ದ ಮತ ಮತ್ತು ಅರ್ಹತೆ-ಪ್ರಾಮಾಣಿಕತೆಯ ಪರ ಬಿದ್ದ ಮತ, ಮತ್ತು ಒಂದೊಂದು ಮತವೂ ಮುಖ್ಯ. ಈ ಚುನಾವಣೆ ಇಲ್ಲಿಯ ಜನರಿಗೆ ಒಂದು ಹಂತದವರೆಗೆ ಜಾಗೃತಿ ಮೂಡಿಸಿದೆ ಮತ್ತು ಇಲ್ಲಿಯ ಅನೇಕ ಜನ ನಮ್ಮ ಹೋರಾಟವನ್ನು ಮತ್ತು ಪ್ರತಿಪಾದಿಸಿದ ವಿಚಾರಗಳನ್ನು ಮತ ಹಾಕದಿದ್ದರೂ ಒಪ್ಪಿಕೊಂಡಿದ್ದಾರೆ. ಆ ನಿಟ್ಟಿನಲ್ಲಿ ನಮ್ಮದು ಗೆಲುವೇ.

ಅಂದ ಹಾಗೆ, ಇಡೀ ಕ್ಷೇತ್ರದಲ್ಲಿ ನನ್ನಷ್ಟು ಸುತ್ತಾಡಿದ, ಜನರಿಗೆ ಮುಖ ತೋರಿಸಿದ, ಮತ್ತು ಮತದಾರರ ಕೈಯ್ಯಲ್ಲಿ ಬೈಯಿಸಿಕೊಂಡ ಇನ್ನೊಬ್ಬ ಅಭ್ಯರ್ಥಿ ಇಲ್ಲ. ಅವರು ಬೈದದ್ದು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಮುಖ ತೋರಿಸುವ ರಾಜಕಾರಣಿಗಳನ್ನು. ವಿಷಾದದ ಸಂಗತಿ ಏನೆಂದರೆ, ಹಾಗೆ ಬೈದ ಬಹುಪಾಲು ಜನ ಓಟು ಹಾಕಿರುವುದಿಲ್ಲ ಅಥವ ಮತ್ಯಾವುದೋ ಆಮಿಷಕ್ಕೆ ಒಳಗಾಗಿ ಅವರ ಬೈಗುಳಕ್ಕೆ ಅರ್ಹವಾಗಿದ್ದವರಿಗೇ ಮತ ಹಾಕಿರುತ್ತಾರೆ.

ನಾನು ಪ್ರತಿನಿಧಿಸಿದ್ದ ಲೋಕ್‌ಸತ್ತಾ ಪಕ್ಷ ಮಾಡಿದ ಪ್ರಚಾರ ಮತ್ತು ಪಾಲ್ಗೊಂಡ ರೀತಿ ಮುಂದಿನ ಏಳೆಂಟು ವರ್ಷಗಳಲ್ಲಿ ಕರ್ನಾಟಕದ ಚುನಾವಣಾ ರಾಜಕೀಯ ಹೇಗಿರುತ್ತದೆ Ravi-SripadBhat-Sriharshaಎನ್ನುವುದಕ್ಕೆ ಮುನ್ನುಡಿ ಬರೆದಂತಿದೆ ಎಂದು ಹೇಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ. ನಿಸರ್ಗ ಅತ್ತಲೇ ಕ್ರಮಿಸುತ್ತಿದೆ. ಐದು ವರ್ಷದ ಹಿಂದೆ, ಸಾಂಕೇತಿಕವಾಗಿ ಎಂದು ಪ್ರತಿಭಟನೆಯ ಸ್ಪರ್ಧೆ ಮಾಡಿ, ಜನರಿಂದ ಹಣಸಂಗ್ರಹಿಸಿ, ಸಾಧ್ಯವಾದಷ್ಟು ಪ್ರಚಾರ ಮಾಡಿದವನು ಬಹುಶಃ ನಾನೊಬ್ಬನೆ. ಆದರೆ, ಈ ಸಲ ನಮ್ಮ ಪಕ್ಷದಿಂದಲೇ 24 ಜನ ಇದ್ದರು. ಮತ್ತು ಅದೇ ರೀತಿ ಮಾಡಿದ ಇತರೆ ಪಕ್ಷಗಳ ಮತ್ತು ಪಕ್ಷೇತರ ಅಭ್ಯರ್ಥಿಗಳು ಅನೇಕರಿದ್ದರು. ಇನ್ನೈದು ವರ್ಷಗಳಲ್ಲಿ ಕರ್ನಾಟಕದ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮಂತೆ ಚುನಾವಣೆಗೆ ಸ್ಪರ್ಧಿಸುವ ಒಬ್ಬರಾದರೂ ಇರುತ್ತಾರೆ ಎನ್ನುವುದರಲ್ಲಿ ನನಗೆ ಸಂದೇಹವಿಲ್ಲ. ಅದು ಇತರೆ ಪಕ್ಷಗಳ ಮೇಲೆ ಮತ್ತು ಪ್ರತ್ರಿನಿಧಿಗಳಾಗಬೇಕೆಂದು ಬಯಸುವವರ ನಡವಳಿಕೆಗಳ ಮೇಲೆ ನೇರ ಪ್ರಭಾವ ಬೀರಲಿದೆ.

ಈ ಚುನಾವಣೆಯಲ್ಲಿ ನಮಗೆ ಗೆಲುವಿನ ಸಮೀಪ ಹೋಗಲಾಗಿಲ್ಲ. ಆದರೆ ನಾವು ಸರಾಸರಿ ಸುಮಾರು ಮೂರು ಸಾವಿರ ಓಟು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ನಾವು ಸ್ಪರ್ಧಿಸಿದ ಎರಡು ಕಡೆ ಮೂರನೇ ಸ್ಥಾನದಲ್ಲಿದ್ದರೆ, ಬಹುತೇಕ ಕಡೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಂತರದ ಸ್ಥಾನದಲ್ಲಿದ್ದೇವೆ. ಇದು ಕಡಿಮೆ ಸಾಧನೆಯಲ್ಲ. ಇದನ್ನು ನಾವು ಹೆಚ್ಚುಹೆಚ್ಚು ಪ್ರಚುರಗೊಳಿಸಿದಷ್ಟೂ ಇಂತಹ ಪ್ರಯತ್ನಗಳಿಗೆ ಮುಂದಾಗುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ಮತ್ತು ಪರ್ಯಾಯ ರಾಜಕಾರಣದ ಹುಡುಕಾಟದಲ್ಲಿರುವವರಿಗೆ ಸ್ಫೂರ್ತಿಯೂ ಆಗುತ್ತದೆ.

ಚುನಾವಣೆಗೆ ಸಂಬಧಿಸಿದಂತೆ ಇನ್ನೊಮ್ಮೆ ಬರೆಯುತ್ತೇನೆ. ಈಗ ವರ್ತಮಾನ.ಕಾಮ್ ವಿಚಾರವಾಗಿ ಒಂದಿಷ್ಟು ಹಂಚಿಕೊಳ್ಳುತ್ತೇನೆ.

ನಿಮಗೆ ಗೊತ್ತಿದೆ, ಇಲ್ಲಿ ನಾನೂ ಸೇರಿದಂತೆ ನಮ್ಮ ಅನೇಕ ಬರಹಗಾರ ಮಿತ್ರರು ನಿರ್ಭಯ ಮತ್ತು ನಿರ್ಭೀತಿಯಿಂದ ನಮ್ಮ ವರ್ತಮಾನದ ಸಾಮಾಜಿಕ-ರಾಜಕೀಯ-ಮಾಧ್ಯಮ ವಿಷಯಗಳ ಬಗ್ಗೆ ಸತ್ಯವನ್ನು ಹೇಳಬೇಕೆಂಬ ತುಡಿತದಲ್ಲಿ ಬರೆದಿದ್ದಾರೆ. ಬೇರೆ ಯಾವುದೇ ಮಾಧ್ಯಮದಲ್ಲಿ ಪ್ರಕಟವಾಗದ ಮತ್ತು ಚರ್ಚೆಯಾಗದ ವಿಷಯಗಳು ಇಲ್ಲಿ ಚರ್ಚೆಯಾಗಿವೆ. ಇದರಲ್ಲಿ ಕನಿಷ್ಟ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಇನ್ನು ನಿರ್ಬಂಧ ಹಾಕಿಕೊಳ್ಳಲಾಗುತ್ತದೆ. ಅದು, ಮಾಧ್ಯಮಕ್ಕೆ ಸಂಬಂಧಿಸಿದ ವಿಷಯಕ್ಕೆ.

ನನಗೆ ಕಳೆದ ಒಂದೂವರೆ ತಿಂಗಳಿನಿಂದ ಈ ಮೂರ್ನಾಲ್ಕು ದಿನಗಳಿಂದ ಯೊಚಿಸಲು ಸಿಕ್ಕಷ್ಟು ಸಮಯ ಸಿಕ್ಕಿರಲಿಲ್ಲ. ನಿಮ್ಮಲ್ಲಿ ಈಗಾಗಲೆ ಕೆಲವರು ಗಮನಿಸಿರಬಹುದು. ರಾಜಧಾನಿಯ ಹಲವು ಪ್ರಮುಖ ಪತ್ರಕರ್ತರಿಗೆ ಮತ್ತು ಮಾಧ್ಯಮ ಸಂಸ್ಥೆಗಳಿಗೆ ನನ್ನ ಬಗ್ಗೆ (ವರ್ತಮಾನ.ಕಾಮ್‌ನ ಕಾರಣವಾಗಿ) ಸಿಟ್ಟಿದೆ. ನಾನು ಅಥವ ನಮ್ಮ ವರ್ತಮಾನ.ಕಾಮ್‌ನ ಲೇಖಕರು ಅವರನ್ನು ಅಥವ ಅವರ ಮಾಧ್ಯಮ ಸಂಸ್ಥೆಗಳನ್ನು ವಿಮರ್ಶಿಸಿದ್ದು ಮತ್ತು ಟೀಕಿಸಿದ್ದೇ ಅದಕ್ಕೆ ಬಹುತೇಕ ಕಾರಣ. ಅದರಲ್ಲಿ ನಮಗೆ ವೈಯಕ್ತಿಕ ದ್ವೇಷವೇನೂ ಇರಲಿಲ್ಲ. ತಪ್ಪಾಗಿದ್ದು ಸರಿಯಾಗಬೇಕು ಎನ್ನುವ ಸಕಾರಣವೇ ಆ ವಿಮರ್ಶೆಗಳಿಗೆ ಕಾರಣ. ಆದರೆ ವಿಮರ್ಶೆಗೊಳಪಟ್ಟವರು ಹಾಗೆ ಅಂದುಕೊಂಡಿಲ್ಲ. ಹಾಗಾಗಿಯೆ, ಚುನಾವಣೆಯ ಸಂದರ್ಭದಲ್ಲಿ ನನ್ನ ಹೆಸರು ಪ್ರಸ್ತಾಪವಾಗಬೇಕಿದ್ದ ಅನೇಕ ಕಡೆ ಅದು ಪ್ರಸ್ತಾಪವಾಗಿಲ್ಲ, ಮತ್ತು ಆದರೂ ಅದು ನಗಣ್ಯ ರೀತಿಯಲ್ಲಿ ಇರುತ್ತಿತ್ತು. ಯಾಕೆ ಯಾವ ಮಾಧ್ಯಮದಲ್ಲೂ (ಒಂದೆರಡು ಕಡೆ ಬಿಟ್ಟು) ನಿಮ್ಮ ಪ್ರಸ್ತಾಪವಿಲ್ಲ ಎಂಬ ಸ್ನೇಹಿತರ ಪ್ರಶ್ನೆಗಳನ್ನು ಕೇಳಿಕೇಳಿ ನನಗೆ ಸಾಕಾಗಿ ಹೋಗಿತ್ತು.

ಇದರಿಂದ ದೊಡ್ದ ಹೊಡೆತ ಬಿದ್ದದ್ದು ನಾನು ಪ್ರತಿಪಾದಿಸಬೇಕೆಂದುಕೊಂಡಿದ್ದ ವಿಚಾರಗಳಿಗೆ.

ಈಗ ನಾನು ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಿಗೆ ತೊಡಗಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಇಂತಹ ಒಂದು ಹೊರೆ ಅನಗತ್ಯ ಮತ್ತು ಅನಾನುಕೂಲಕರ. ವರ್ತಮಾನ.ಕಾಮ್‌ನಿಂದ ಹಣಕಾಸಿನ ನಷ್ಟವಿದೆಯೇ ಹೊರತು ನಮಗ್ಯಾರಿಗೂ ಲಾಭವಿಲ್ಲ. ಬದ್ದತೆಯ ಮತ್ತು ಸಾಮಾಜಿಕ ಜವಾಬ್ದಾರಿಯ ಕಾರಣಕ್ಕೆ ಇದನ್ನು ನಿಭಾಯಿಸುತ್ತಿದ್ದೇವೆಯೇ ಹೊರತು ಇಲ್ಲಿ ಹಣ ಮಾಡುವ ಸಾಧ್ಯತೆಗಳೇ ಇಲ್ಲ. ಹೀಗಿರುವಾಗ, ಮಾಧ್ಯಮಕ್ಕೆ ಸಂಬಂಧಿಸಿದ ನಮ್ಮ ವಿಮರ್ಶೆಗಳು ಇಲ್ಲಿಯವರೆಗೆ ಬಹುಪಾಲು ಸಮಯದಲ್ಲಿ ವರ್ತಮಾನ.ಕಾಮ್‌‌ನ ಬೆಳವಣಿಗೆಗೆ ವ್ಯತಿರಿಕ್ತವಾಗಿ ಪರಿಣಮಿಸಿದೆಯೇ ಹೊರತು ಪರವಾಗಿ ಅಲ್ಲ. ಇಲ್ಲಿ ಲೇಖನ ಬರೆದರೆ ನಮ್ಮ ಲೇಖನಗಳು ಬೇರೆಡೆ ಪ್ರಕಟವಾಗುವುದಿಲ್ಲ ಮತ್ತು ಪ್ರಕಟಣೆಗೆ ಅವಕಾಶಗಳು ಸಿಗುವುದಿಲ್ಲ ಎನ್ನುವ ತನಕ ಯೋಚಿಸಿರುವ ಅನೇಕ ಮಿತ್ರರು ನಮಗೆ ಬರೆಯಲು ಹೋಗಲೇ ಇಲ್ಲ, ಮತ್ತು ಒಂದೆರಡು ಸಲ ಬರೆದವರು ಬರೆಯುವುದನ್ನೇ ನಿಲ್ಲಿಸಿದ ಉದಾಹರಣೆಗಳಿವೆ.

ಈ ಚುನಾವಣೆ ಆ ನಿಟ್ಟಿನಲ್ಲಿ ನನಗೆ ಪಾಠ ಕಲಿಸಿದೆ. ನಾವು ಒಂದು ಸಶಕ್ತ ಮಾಧ್ಯಮವಾಗದ ಹೊರತು ಅಂತಹ “ಧೈರ್ಯ” ಅನಗತ್ಯ. ಸಮಾಜ ಮತ್ತು ವರ್ತಮಾನ ತನಗೆ ಅಗತ್ಯವಾದದ್ದನ್ನು ಉಳಿಸಿಕೊಳ್ಳುತ್ತದೆ ಮತ್ತು ಬೇಡವಾದದ್ದನ್ನು ಬಿಸಾಕುತ್ತದೆ. ನಾವು ನಮ್ಮ ಗುರಿಯನ್ನು ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಗಳಿಗೆ ಇಟ್ಟಿರುವ ಸಂದರ್ಭದಲ್ಲಿ ಮಾಧ್ಯಮಗಳಿಂದ “ಬಹಿಷ್ಕೃತ”ರಾಗುವುದು counter-productive. ಬರೆದರೆ ಮಾಧ್ಯಮಗಳ ಸಕಾರಾತ್ಮಕ ವಿಷಯಗಳ ಬಗ್ಗೆ ಬರೆಯುತ್ತೇವೆಯೇ ಹೊರತು ಅವರ ನಕಾರಾತ್ಮಕ ವಿಷಯಗಳನ್ನು ಎತ್ತಿ ತೋರಿಸಲು ಹೋಗುವುದಿಲ್ಲ. ಸಮುದಾಯಕ್ಕೆ ಆ ರಂಗದ ವಿಮರ್ಶೆ ಅಗತ್ಯವಿದೆ ಎಂದಾದಾಗ ಅದಕ್ಕೆ ಅನೇಕ ವೇದಿಕೆಗಳಿವೆ ಮತ್ತು ದಾರಿಗಳಿವೆ.

ಈ ವಾರ ಬಹುಶಃ ವರ್ತಮಾನ ಬಳಗದ ಹಲವು ಸ್ನೇಹಿತರನ್ನು ಮುಖತಃ ಭೇಟಿಯಾಗಲಿದ್ದೇನೆ. ಮತ್ತೆ ಎಂದಿನಂತೆ ನಿಯತಕಾಲಿಕವಾಗಿ ಲೇಖನಗಳನ್ನು ಪ್ರಕಟಿಸಲು ಮಾಡಬೇಕಾದ ಕೆಲಸಗಳ ಕಡೆ ಗಮನ ಕೊಡಲಿದ್ದೇವೆ. ವರ್ತಮಾನ.ಕಾಮ್‌ನ ಪ್ರಸ್ತುತತೆ ಬಗ್ಗೆ ನಮಗ್ಯಾರಿಗೂ ಸಂದೇಹಗಳಿಲ್ಲ. ಆದರೆ ಎಲ್ಲಿ ಬದಲಾವಣೆಗಳಾಗಬೇಕು ಎನ್ನುವುದರ ಬಗ್ಗೆ ಬದಲಾದ ಸಂದರ್ಭದಲ್ಲಿ ಸ್ಪಷ್ಟವಾಗಬೇಕಿದೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

ಸೋತು ಗೆದ್ದ ಹಳೆಯ ಜಾತ್ಯಾತೀತ ಪಕ್ಷವೊಂದರ ಕಥೆ, ವ್ಯಥೆ?

– ಬಿ.ಶ್ರೀಪಾದ ಭಟ್

ಕಟ್ಟ ಕಡೆಗೂ ಕಾಂಗ್ರೆಸ್ ಗೆದ್ದಿದೆ. ತಾನು ಗೆದ್ದಿದ್ದು ನಿಜವೇ ಎಂದು ಖಾತರಿಪಡಿಸಿಕೊಳ್ಳಲು ಪದೇ ಪದೇ ಮೈ ಚಿವುಟಿಕೊಳ್ಳುತ್ತಿದೆ. ಕಷ್ಟಪಟ್ಟು, ಅಯಾಸದಿಂದ ಬೆಟ್ಟವನ್ನೇರಿದ ರೀತಿಯಲ್ಲಿ ಸುಧಾರಿಸಿಕೊಳ್ಳುತ್ತಿದೆ. ಕಳೆದು ಏಳು ವರ್ಷಗಳ ಸತತ ಸೋಲಿನಿಂದ ಕಂಗೆಟ್ಟಿದ, ಹೆಚ್ಚೂ ಕಡಿಮೆ ಆತ್ಮವಂಚನೆಯ ಮಟ್ಟಕ್ಕೆ ತಳ್ಳಲ್ಟಟ್ಟಿದ್ದ ಈ ಕಾಂಗ್ರೆಸ್ ಪಕ್ಷ, ಮತ್ತು ಕಳೆದ ಏಳು ವರ್ಷಗಳಲ್ಲಿ ಯಾವುದೇ ಸೈದ್ಧಾಂತಿಕ ಬದ್ಧತೆಗಳಿಲ್ಲದ, ಭವಿಷ್ಯದ ಕುರಿತಾದ ನಿಖರವಾದ ವ್ಯಾಖ್ಯಾನಗಳಿಲ್ಲದ, ಆಧುನಿಕ ಕರ್ನಾಟಕದ ರೂಪುರೇಷಗಳ ಬಗೆಗೆ ಕೊಂಚವೂ ತಿಳುವಳಿಕೆಗಳಿಲ್ಲದ ಈ ಕಾಂಗ್ರೆಸ್‌ನ ನೇತಾರರ ಪ್ರತಿಯೊಂದು ಮಾತುಗಳು ನಗೆಪಾಟಲಿಗೀಡಾಗುತ್ತಿತು, ತಿರಸ್ಕಾರಕ್ಕೆ ಗುರಿಯಾಗುತ್ತಿತ್ತು. ಬಿಜೆಪಿಯ ಕಡು ಭ್ರಷ್ಟಾಚಾರದ ಆಡಳಿತಕ್ಕೆ, ಅವರ ದುರಹಂಕಾರದ, ಮತಾಂಧತೆಯ ಬಿರುಗಾಳಿಗೆ, ಮತೀಯ ರಾಷ್ತ್ರೀಯತೆಗೆ ಈ 125 ವರ್ಷಗಳ ಇತಿಹಾಸವಿರುವ ಜಾತ್ಯಾತೀತ ಪಕ್ಷವಾದ ಕಾಂಗ್ರೆಸ್ ಬಳಿ ನೇರವಾಗಿ ಮುಖಾಮುಖಿಯಾಗುವಂತಹ ಯಾವುದೇ ಬಗೆಯ ಬೌದ್ಧಿಕ ಗಟ್ಟಿತನದ ಕಸುವಿನ ಶಕ್ತಿಯಾಗಲೀ, ರಾಜಕೀಯ ಮುತ್ಸದ್ದಿತನವಾಗಲೀ, ಒಂದು ಕಾಲಕ್ಕೆ ತಮಗೆ ಊರುಗೋಲಾಗಿದ್ದ ಸಮಾಜವಾದದ ಹತಾರಗಳಾಗಲಿ ಇರಲೇ ಇಲ್ಲ. ಹಾಗೂ ಹೆಚ್ಚೂ ಕಡಿಮೆ ಅದರ ಆಸ್ತಿತ್ವವೇ ನಾಶವಾಗಿತ್ತು.

ಇಂತಹ ದಿಕ್ಕೆಟ್ಟ ಸ್ಥಿತಿಯಿಂದ ಹಠಾತ್ತಾಗಿ ಅಧಿಕಾರದ ಗದ್ದುಗೆಯ ಹತ್ತಿರಕ್ಕೆ ತಲುಪಿದ ಈ ಕಾಂಗ್ರೆಸ್‌ಗೆ ಈ ಕ್ಷಣಕ್ಕೆ ತನ್ನ Siddaramaiahಈ ಗೆಲುವಿನ ಕಾರಣಕ್ಕೆ ಹರ್ಷೋದ್ಗಾರದಿಂದ ಕುಣಿದಾಡುವಂತಹ ಸ್ಥಿತಿಯೇನು ಇಲ್ಲದಿದ್ದರೂ, ಮಂದಹಾಸ ಬೀರುತ್ತಾ, ಮುಗುಳುನಗೆಯಿಂದ ವಿ ಆಕಾರದಲ್ಲಿ ಕೈಯನ್ನು ಎತ್ತಬಹುದು ಯಾವ ಮುಲಾಜಿಲ್ಲದೆ. ಏಕೆಂದರೆ ಬೇರೆಯವರ ಮಾತು ಬಿಡಿ, ತಮ್ಮ ಗೆಲುವೆನ್ನುವ ಗೆಲುವು ಹೆಚ್ಚೂ ಕಡಿಮೆ ಋಣಾತ್ಮಕ ಮತಗಳಿಂದ ಬಂದಿದ್ದು, ಈ ಗೆಲುವು ಕೋಮುವಾದಿ, ಭ್ರಷ್ಟ ಬಿಜೆಪಿ ವಿರುದ್ಧದ ಆಡಳಿತ ವಿರೋಧ ಅಲೆಯ ಮೇಲೆ ತೇಲಿ ಬಂದಿದ್ದು ಎಂದು ಸ್ವತಃ ಕಾಂಗ್ರೆಸ್ಸಿಗರಿಗೇ ಗೊತ್ತು. ಕರಾವಳಿ ಜಿಲ್ಲೆಗಳಲ್ಲಿ ಸಂಘ ಪರಿವಾರದ ಪುಂಡಾಟಿಕೆಯಿಂದ, ವಿಷಮಯವಾದ ಹಿಂದುತ್ವದ ಅಜೆಂಡಾದಿಂದ ಅಲ್ಲಿನ ಜನತೆ ಸಂಪೂರ್ಣ ರೋಸಿ ಹೋಗಿದ್ದು ಆ ಜಿಲ್ಲೆಗಳಲ್ಲಿ ಕಾಂಗ್ರೆಸ್ ಸ್ವೀಪ್ ಮಾಡಿದ್ದಕ್ಕೆ ಮೂಲಭೂತ ಕಾರಣ. ಇದೇ ಮಾತನ್ನು ಹೈದರಾಬಾದ್ ಕರ್ನಾಟಕ, ಬಿಜಾಪುರ, ಬಾಗಲಕೋಟೆ ಹಾಗೂ ಇತರೇ ಜಿಲ್ಲೆಗಳಿಗೂ ಅನ್ವಯಿಸುತ್ತದೆ. ಇವೆಲ್ಲ ಕಾಂಗ್ರೆಸ್‌ನ್ನು ಕೈ ಹಿಡಿದೆತ್ತಿವೆ. ಈ ಬಾರಿಯ ಚುನಾವಣೆಯಲ್ಲಿ ಬೆರಳಣಿಕೆಯಷ್ಟು ಅಭ್ಯರ್ಥಿಗಳನ್ನು ಹೊರತುಪಡಿಸಿ ಇತರೇ ಬಹುಪಾಲು ಕಾಂಗ್ರೆಸ್ಸಿಗರು ಬಿಜೆಪಿಯ ವಿರೋಧಿ ಅಲೆಯ ಮತಗಳು ತಮ್ಮ ಬುಟ್ಟಿಗೆ ಬಂದು ಬೀಳುತ್ತವೆ ಎಂಬ ಆತ್ಮ ವಿಶ್ವಾಸದಿಂದ, ಅತ್ಯಂತ ನಿರ್ಲಕ್ಷ್ಯ ಮತ್ತು ಉಢಾಫೆಯಿಂದಲೇ ಈ ಬಾರಿಯ ಚುನಾವಣೆಯನ್ನು ಎದುರಿಸಿದ್ದರು.

ಹಾಗೆಯೇ ಕರ್ನಾಟಕವನ್ನು ದೇಶದಲ್ಲಿಯೇ ಭ್ರಷ್ಟ ರಾಜ್ಯವನ್ನಾಗಿಸಿದ, ಮುಖ್ಯಮಂತ್ರಿ, ಮಂತ್ರಿ, ಶಾಸಕರು ಭ್ರಷ್ಟಾಚಾರದ ಅಪಾದನೆಯ ಮೇಲೆ ಜೈಲು ಸೇರಬೇಕಾದಂತಹ ದುರಂತಕ್ಕೆ ತಳ್ಳಲ್ಪಟ್ಟ, ಕರ್ನಾಟಕವನ್ನು ದಿನನಿತ್ಯ ಹಗರಣಗಳ ಗೂಡನ್ನಾಗಿಸಿದ, ಹಿಂದುತ್ವದ ಅಜೆಂಡವನ್ನು ಅತ್ಯಂತ ನೀಚ ಮಟ್ಟದಲ್ಲಿ ಪ್ರಯೋಗಿಸಿ ಅಲ್ಪಸಂಖ್ಯಾತರ ಜೀವನವನ್ನು ನರಕವನ್ನಾಗಿಸಿದ ಬಿಜೆಪಿ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡಲು, ಸಂಘ ಪರಿವಾರವನ್ನು ಕಸದ ಬುಟ್ಟಿಗೆ ತಳ್ಳಲು ಕನ್ನಡದ ಪ್ರಜ್ಞಾವಂತ ಜನತೆ ನಿರ್ಧಾರ ಮಾಡಿಯಾಗಿತ್ತು. ಇದಕ್ಕೆ ಪರ್ಯಾಯ ಪಕ್ಷದ ಅವಶ್ಯಕತೆಯಾಗಿ ಮೂಡಿ ಬಂದದ್ದೇ ಕಾಂಗ್ರೆಸ್. ಏಕೆಂದರೆ ಕನ್ನಡಿಗರು ತಂದೆ, ಮಕ್ಕಳ ಪಕ್ಷ ಮತ್ತವರ ಆಸ್ತಿಯಂತಾಗಿರುವ ಜನತಾ ದಳವನ್ನು ನಂಬಲು ಸುತಾರಾಂ ಸಿದ್ಧರಿರಲಿಲ್ಲ. ಅವರ ಎಲ್ಲಾ ರಾಜಕೀಯ ನಡೆಗಳೂ, ಪಟ್ಟುಗಳೂ ಸ್ವಹಿತಾಸಕ್ತಿಯ, ಕುಟಂಬದ ನೆಲೆಯಲ್ಲಿಯೇ ನಿರ್ಧರಿಲ್ಪಡುತ್ತವೆ. ಅಲ್ಲದೆ ಸರ್ವಜನರನ್ನೂ ತುಳಿಯುವ, ಹತ್ತಿಕ್ಕುವ ಈ ಕುಟುಂಬದ ಸರ್ವಾಧಿಕಾರದ ಧೋರಣೆಯ ಗುಣಗಳನ್ನು ಕನ್ನಡಿಗರು ೨೦೦೮ರಲ್ಲಿಯೇ ತಿರಸ್ಕರಿಸಿದ್ದರು. ಇನ್ನು ಹಾಳೂರಿಗೆ ಉಳಿದವನೇ ರಾಜ ಎಂಬಂತೆ ಅನಿವಾರ್ಯವಾಗಿ ಪರಿಗಣಿತವಾಗಿದ್ದು ಈಗಾಗಲೇ ಸೋತು ಕಂಗೆಟ್ಟಿದ್ದ ಕಾಂಗ್ರೆಸ್ ಪಕ್ಷ. ಅಲ್ಲದೆ ಎಷ್ಟೇ ಭ್ರಷ್ಟಗೊಂಡರೂ ಕಾಂಗ್ರೆಸ್‌ನೊಳಗಿರುವ ಜಾತ್ಯಾತೀತತೆಯ ಮೂಲ ಸೆಲೆ ಇನ್ನೂ ಬತ್ತಿರಲಿಲ್ಲ ಎನ್ನುವ ಜನರ ನಂಬಿಕೆ ಹಾಗೂ ಏನಿಲ್ಲದಿದ್ದರೂ ಸಂಘ ಪರಿವಾರದ ಮತಾಂಧತೆ ಮತ್ತು ಧರ್ಮದ ಆಧಾರದ ಮೇಲಿನ ಸಮಾಜವನ್ನು ಛಿದ್ರವಾಗಿಸುವ ಅತಿರೇಕ ಘಟನೆಗಳು ಕಾಂಗ್ರೆಸ್ ಆಡಳಿತದ ಸಂದರ್ಭದಲ್ಲಿ ನಡೆಯಲಾರವು ಎನ್ನುವ ವಿಶ್ವಾಸವು ಪ್ರಜ್ಞಾವಂತ, ಪ್ರಗತಿಪರ ಕನ್ನಡಿಗರು ಕಾಂಗ್ರಸ್‌ನ ಪರ ನಿಲ್ಲಲು ಮುಖ್ಯ ಕಾರಣವಾಗಿತ್ತು. ಅಷ್ಟರ ಮಟ್ಟಿಗೆ ಕರ್ನಾಟಕವನ್ನು ನರಕವನ್ನಾಗಿಸಿದ್ದರು ಈ ಮತಾಂಧ, ಭ್ರಷ್ಟ ಸಂಘ ಪರಿವಾರದವರು.

ಈ ಎಲ್ಲ ಹಿನ್ನೆಲೆಯಲ್ಲಿ ಇಂದಿನ ರಾಜಕಾರಣವನ್ನು ಅವಲೋಕಿಸಿದಾಗ ಇಂದಿನ 2013 ರ ಕರ್ನಾಟಕದ ರಾಜಕೀಯ ವಾತಾವರಣಕ್ಕೂ, ಮೂವತ್ತು ವರ್ಷಗಳಷ್ಟು ಹಿಂದಿನ 1983 ರ ಕರ್ನಾಟಕದ ರಾಜಕೀಯ ವಾತಾವರಣಕ್ಕೂ ಬಹಳ ಸಾಮ್ಯತೆಗಳಿವೆ. ಆಗ ಸಂಜಯ್ ಬ್ರಿಗೇಡ್ ಗುಂಪಿಗೆ ಸೇರಿದ್ದ, ಅಪಕ್ವ ರಾಜಕಾರಣಿಯಾಗಿದ್ದ ಗುಂಡೂರಾವ್ ನೇತೃತ್ವದಲ್ಲಿ ಅಂಧಾದುಂಧಿ, ಭ್ರಷ್ಟ, ಕ್ಲಬ್ ಮಟ್ಟದ ಆಡಳಿತ ನೀಡಿದ್ದ ಕಾಂಗ್ರೆಸ್ ಪಕ್ಷವು ಕನ್ನಡಿಗರ ತಿರಸ್ಕಾರಕ್ಕೆ ಗುರಿಯಾಗಿತ್ತು. ಕಂಡ ಕಂಡಲ್ಲಿ ಜನತೆ ಕಾಂಗ್ರೆಸ್ಸಿಗರನ್ನು ಉಗಿಯುತ್ತಿದ್ದರು. ಕಾಂಗ್ರೆಸ್‌ನ್ನು ಕಸದ ಬುಟ್ಟಿಗೆ ಎಸೆಯಲು ಕನ್ನಡಿಗರು ತುದಿಗಾಗಲಲ್ಲಿ ನಿಂತಿದ್ದರು. ಕಾಂಗ್ರೆಸ್ ಪಕ್ಷದ ಆಗಿನ ಸ್ಥಿತಿಯು ಇಂದಿನ ಬಿಜೆಪಿ ಸ್ಥಿತಿಯಂತಿತ್ತು. ಆಗ ಉತ್ತುಂಗ ಸ್ಥಿತಿಯಲ್ಲಿದ್ದ ರೈತ ಚಳುವಳಿ, ದಲಿತ ಚಳುವಳಿ ಮತ್ತು ಪ್ರಜ್ಞಾವಂತರ ಪತ್ರಿಕೆಯಾದ ಲಂಕೇಶ್ ಪತ್ರಿಕೆಯ ಸಂಯುಕ್ತ ಮತ್ತು ಸತತ ಹೋರಾಟದ ಫಲವಾಗಿ ಕಾಂಗ್ರೆಸ್ ಧೂಳೀಪಟವಾಗಿತ್ತು. ಸಂಭಾವಿತರಂತೆ ಕಂಗೊಳಿಸುತ್ತಿರುವ ಈಗಿನ ಬಹುಪಾಲು ಕಾಂಗ್ರೆಸ್ ರಾಜಕಾರಣಿಗಳು ಆಗ ವಿಲನ್‌ಗಳಾಗಿ ಮೂಲೆಗುಂಪಾಗಿದ್ದರು. ಅದರ ಫಲವಾಗಿಯೇ ಕರ್ನಾಟಕ ರಾಜಕೀಯದಲ್ಲಿ ಹೊಸ ಪಲ್ಲಟ,ಹೊಸ ಯುಗ ಪ್ರಾರಂಭವಾಗಿತ್ತು. ಆಗ ಈ ಹೊಸ ಯುಗದ ನಾಯಕರಾಗಿ, ಬದಲಾವಣೆಯ ಹರಿಕಾರರಾಗಿ ಮೂಡಿಬಂದಿದ್ದು ಎಂ.ಪಿ.ಪ್ರಕಾಶ್, ಸಿಂಧ್ಯ, ಜೆ.ಹೆಚ್.ಪಟೇಲ್, ನಜೀರ್ ಸಾಬ್, ಬಿ.ರಾಚಯ್ಯ, ಜಾಲಪ್ಪ, ಜೀವಿಜಯ, ದೇವೇಗೌಡ, ಬಿ.ಎಲ್.ಗೌಡ, ಲಕ್ಮೀಸಾಗರ್, ಬಂಗಾರಪ್ಪ, ವೈ.ಕೆ.ರಾಮಯ್ಯ, ಬೈರೇಗೌಡ, ಸಿದ್ದರಾಮಯ್ಯ, ಬಿ.ಆರ್.ಯಾವಗಲ್, ಎಂ.ಚಂದ್ರಶೇಖರ್ ಮುಂತಾದ ಜನತಾ ಪರಿವಾರದ ರಾಜಕಾರಣಿಗಳು. ಇವರೆಲ್ಲರೂ ಶಾಸಕರಾಗಿ ಆಯ್ಕೆಯಾಗಿದ್ದು ಕರ್ನಾಟಕದಲ್ಲಿ ಆಗ ತಂಗಾಳಿಯನ್ನು ಬೀಸಿದಂತಿತ್ತು. ಆಗ ಒಂದು ಬಗೆಯ ಹೊಸ ಗುಣಲಕ್ಷಣಗಳು ನಿಧಾನವಾಗಿ ಮೈದಾಳುತ್ತಿತ್ತು. ಆದರೆ ಚಲಾವಣೆಯಲ್ಲಿ ಇಲ್ಲದ, ಕುತಂತ್ರ ರಾಜಕಾರಣಿ ರಾಮಕೃಷ್ಣ ಹೆಗಡೆ ದೆಹಲಿಯಿಂದ ನೇರವಾಗಿ ಕರ್ನಾಟಕದ ಮೇಲೆರೆಗಿ ಬಿಲ ಹೊಕ್ಕ ಹಾವಿನಂತೆ ಜನತಾ ಪರಿವಾರದಲ್ಲಿ ಸೇರಿಕೊಂಡು, ಭಟ್ಟಂಗಿ, ಜಾತಿವಾದಿ ಪತ್ರಕರ್ತರ ಕುಮ್ಮಕ್ಕಿನಿಂದ ಮುಖ್ಯಮಂತ್ರಿಯೂ ಆಗಿ ಬಿಟ್ಟರು.

ಆದರೂ ಸಹ ಎಂಬತ್ತರ ದಶಕದ ಜನತಾ ಪರಿವಾರದ ಆಡಳಿತದಲ್ಲಿ ಕಂಡುಬಂದ, ಜಾರಿಗೊಂಡ ಹೊಸ ಸಂಕೇತಗಳು, ಅನೇಕ ಗುಣಾತ್ಮಕ ಬದಲಾವಣೆಗಳನ್ನು ನಾವು ಮರೆಯುವಂತಿಲ್ಲ. ಸೀಮಿತ ನೆಲೆಯಲ್ಲಿಯೇ ಆದರೂ ರಾಜ್ಯದ ಆಡಳಿತವು ವಿಕೇಂದ್ರೀಕರಣಗೊಂಡಿದ್ದು ಈ ಜನತಾ ಪರಿವಾರದ ಕಾಲಘಟ್ಟದಲ್ಲಿ. ಭಿನ್ನವಾದ ರಾಜಕೀಯ ಮಾದರಿಗೆ ಜನತಾ ಪರಿವಾರ ಉದಾಹರಣೆಯಂತಿದ್ದದ್ದೂ ಸಹ ನಿಜ.ಹೊಸ ನುಡಿಕಟ್ಟಿನ ಬಳಕೆಗಾಗಿ ಹೊಸ ವೇದಿಕೆಗಳು ನಿರ್ಮಾಣಗೊಂಡಿದ್ದೂ ನಿಜ. ಆದರೆ ಇದೇ ಪರಿವಾರದ ಆಡಳಿತದ ಕಾಲಘಟ್ಟದಲ್ಲಿ ನಡೆದ ಕುದುರೆಮೋತಿ ಸ್ವಾಮಿ ಅತ್ಯಾಚಾರ, ಬೆಂಡಿಗೇರಿ ಪ್ರಕರಣ, ಬದನವಾಳು ಪ್ರಕರಣಗಳು ಶೋಷಿತ ವರ್ಗಗಳನ್ನು, ತಳ ಸಮುದಾಯಗಳನ್ನು ಅತಂತ್ರ ಸ್ಥಿತಿಗೆ, ಮತ್ತಷ್ಟು ದಯನೀಯ ಸ್ಥಿತಿಗೆ ತಳ್ಳಿತು. ಅನೇಕ ಭೂ ಹಗರಣಗಳು ಬಯಲಿಗೆ ಬಂದವು. ಹೆಗಡೆಯ ಕಾಲದಲ್ಲೇ ಬೆಂಗಳೂರು ನಗರ ತನ್ನ ಹಸಿರು ಪಟ್ಟಿಯನ್ನು ಕಳೆದುಕೊಂಡು ರಾಕ್ಷಸ ರೂಪದಲ್ಲಿ ಬೆಳದದ್ದು. ಈ ರಿಯಲ್ ಎಸ್ಟೇಟ್‌ನ ಭೂಗತ ವ್ಯವಹಾರಕ್ಕೆ ಆಗಲೇ ನಾಂದಿ ಹಾಡಿದ್ದು. ಇಂತಹ ಸ್ಥಿತ್ಯಂತರ ಕಾಲದಲ್ಲಿ ಹೆಗಡೆಯವರ ಗುಳ್ಳೇನರಿಯ ತಂತ್ರಗಳು, ಆಸೆಬುರುಕತನ, ಜಾತೀಯತೆಯ ಪ್ರಯೋಗಗಳು, ಇಂದಿನ ಯಡಿಯೂರಪ್ಪನವರ ಮೇಲಿನ ಭ್ರಷ್ಟಾಚಾರದ ಅಪಾದನೆಗಳಿಗೆ ಸಾಮ್ಯತೆ ಇರುವ ಆಗಿನ ಹೆಗಡೆಯವರ ಮೇಲಿನ ಭ್ರಷ್ಟಾಚಾರದ ಆರೋಪಗಳು, ರಶೀದ್ ಕೊಲೆ ಪ್ರಕರಣ, ಒಳ ಜಗಳ, ತನ್ನೊಳಗೆ ಹರಡಿಕೊಂಡಿದ್ದ ಜಾತೀಯತೆಯ ರೋಗ ಮುಂತಾದ ಅನಿಷ್ಟಗಳೆಲ್ಲ ಜನತಾ ಪಕ್ಷಕ್ಕೇ ಉರುಳಾಗಿದ್ದು ಹಾಗೂ ನಂತರ ನಡೆದದ್ದೆಲ್ಲಾ ಇಂದು ಇತಿಹಾಸ.

ಮೂವತ್ತು ವರ್ಷಗಳ ನಂತರ 1983 ರಲ್ಲಿ ಜನತಾ ಪರಿವಾರ ನಿಂತ ನೆಲೆಯಲ್ಲಿ ಇಂದು ೨೦೧೩ರಲ್ಲಿ ಕಾಂಗ್ರೆಸ್ ಬಂದು ನಿಂತಿದೆ. ಮೇಲ್ನೊಟಕ್ಕಂತೂ ಈ ಬಾರಿ ಆಯ್ಕೆಯಾದ ಬಹುಪಾಲು ಕಾಂಗ್ರೆಸ್ ಶಾಸಕರನ್ನು ಆ ಕಾಲದ ಜನತಾ ಪರಿವಾರದ ನಾಯಕರೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಇದು ಕಾಂಗ್ರೆಸ್ ಪಕ್ಷದ ಬಲು ದೊಡ್ಡ ಮಿತಿ ಹಾಗು ಸರಿಯಾಗಿ ಮಟ್ಟ ಹಾಕದಿದ್ದರೆ ಪಕ್ಷಕ್ಕೇ ಮುಂದೆ ಉರುಳಾಗುವ ಸಾಧ್ಯತೆಗಳಿವೆ. ಆದರೆ ಇದನ್ನು ಹೊರತುಪಡಿಸಿ ಇಂದು ಬದಲಾವಣೆಯ ಜವಬ್ದಾರಿಯನ್ನು, ಹಿಂದುಳಿದ ವರ್ಗಗಳ ಮತ್ತು ದಲಿತರ ನಡುವೆ ಹೊಸ ಧ್ರುವೀಕರಣದ ಆಶಯಗಳನ್ನು, ಕರ್ನಾಟಕವನ್ನು ಮತೀಯವಾದದ, ಹಿಂದುತ್ವದ ಫೆನೆಟಿಸಂನಿಂದ ಬಿಡುಗಡೆಗೊಳಿಸುವ ಅತ್ಯಂತ ಭಾರವಾದ ಆದರೆ ಅತ್ಯಂತ ಗುರುತರವಾದ ಜವಬ್ದಾರಿಗಳನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡಿರುವ ಈಗಿನ ಕಾಂಗ್ರೆಸ್ ಪಕ್ಷ ಇದನ್ನೆಲ್ಲ ಹೇಗೆ ನಿಭಾಯಿಸುತ್ತದೆ?? ಕರ್ನಾಟಕವನ್ನು ಪ್ರಗತಿಪರ, ಜಾತ್ಯಾತೀತ ರಾಜ್ಯವಾಗಿ ಕಟ್ಟುವ ಸುವರ್ಣಾವಕಾಶವನ್ನು ಪಡೆದುಕೊಂಡ ಕಾಂಗ್ರೆಸ್‌ನ ನಾಯಕರಲ್ಲಿ ಬಳಿ ಕನಿಷ್ಟ ಇವುಗಳ ಕುರಿತಾಗಿ ಕನಸುಗಳಿವೆಯೇ?? ಕನಸುಗಳಿದ್ದರೆ ಅದನ್ನು ಅನುಷ್ಟಾನಗೊಳಿಸಲು ಇಚ್ಛಾಶಕ್ತಿಯ ಕ್ರೋಢೀಕರಣ ಯಾವ ಮಟ್ಟದಲ್ಲಿದೆ?? ಕ್ರೂರ ಮತ್ತು ಅರಾಜಕತೆಯಿಂದ ಕೂಡಿದ ವ್ಯವಸ್ಥೆಯನ್ನು ಸಹನೀಯಗೊಳಿಸಲು ಒಗ್ಗಟ್ಟಾಗಿ ದುಡಿಯುವ ಧೃಢ ಸಂಕಲ್ಪವನ್ನು ಹೊಂದಿದ್ದಾರೆಯೇ?? ಸಂಘ ಪರಿವಾರದ ಕ್ರೂರ ಸಂತತಿಗಳನ್ನು ಹೆಕ್ಕಿ, ಹೆಕ್ಕಿ ತೆಗೆದು ಶಿಕ್ಷೆಗೆ ಗುರಿಪಡಿಸುತ್ತೇವೆ, ಕರ್ನಾಟಕವನ್ನು ಉಸಿರುಗಟ್ಟಿಸುತ್ತಿರುವ ಭ್ರಷ್ಟಾಚಾರ ಮತ್ತು ಅಪಾಯಕಾರಿ ಹಿಂದುತ್ವದ ಕಬಂಧ ಬಾಹುಗಳಿಂದ ಬಿಡುಗಡೆಗೊಳಿಸುತ್ತೇವೆ ಎಂದು ತುಂಬಾ ಸೂಕ್ಷ್ಮಮತಿಗಳಾಗಿ, ಪ್ರಜ್ಞಾಪೂರ್ವಕವಾಗಿ ಕಾಂಗ್ರೆಸ್ಸಿಗರು ಪಣ ತೊಡಬಲ್ಲರೇ?? ಭೀಕರ ವಾಸ್ತವತೆಯನ್ನು ಮುಖಾಮುಖಿಯಾಗುವ ಎದೆಗಾರಿಕೆ ಮತ್ತು ಮಾನಸಿಕ ಸಿದ್ದತೆಯನ್ನು ಕರ್ನಾಟಕದ ಜನತೆಯ ಮುಂದೆ ಪ್ರಾಮಾಣಿಕವಾಗಿ ನಿವೇದಿಸಿಕೊಳ್ಳಬಲ್ಲರೇ ಈ ಕಾಂಗ್ರೆಸ್ಸಿಗರು?? ಇಂದು ಓಬಿಸಿ ಮತ್ತು ಅಲ್ಪಸಂಖ್ಯಾತ ವರ್ಗಗಳ ಸಂಪೂರ್ಣ ಬೆಂಬಲ ಗಳಿಸಿ ಆ ಮೂಲಕ ತನ್ನ ಹಳೇ ಓಟ್ ಬ್ಯಾಂಕ್ ಅನ್ನು ಮರಳಿ ಗಳಿಸಿರುವ ಕಾಂಗ್ರೆಸ್ ಈ ಓಟ್ ಬ್ಯಾಂಕ್ ಅನ್ನು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿ, ತನ್ನ ಅವಕಾಶವಾದಿತನದ ಮುಖವಾಡ ಕಳಚಿ ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ದುಡಿಯಬಲ್ಲದೇ?? ಅಲ್ಲದೆ ಮುಖ್ಯವಾಗಿ ಈ ಕಾಂಗ್ರೆಸ್ ಡಿ.ಕೆ.ಶಿವಕುಮಾರ್, ದೇವರಾಜ್ ರಂತಹ ಹಾಗೂ ಇನ್ನಿತರ ಅವಾಂತಕಾರಿ ರಾಜಕಾರಣಿಗಳನ್ನು ಹೇಗೆ ನಿಭಾಯಿಸುತ್ತದೆ??

ಕೊನೆಯದಾಗಿ, ಈಗಿನ ಚುನಾವಣಾ ಫಲಿತಾಂಶಗಳು ಕರ್ನಾಟಕ ರಾಜಕೀಯವನ್ನು ಒಂದು ನಿರ್ಣಾಯಕ ಹಂತದಲ್ಲಿ ತಂದು ನಿಲ್ಲಿಸಿದೆ. ಅದೇನೆಂದರೆ ಇನ್ನು ಮುಂದಿನ ವರ್ಷಗಳಲ್ಲಿ ಕರ್ನಾಟಕದ ರಾಜಕಾರಣವು ತನ್ನ ಪಕ್ಕದ ತಮಿಳುನಾಡು, ಕೇರಳದ ಜಾಡಿಗೆ ಹೊರಳುತ್ತಿದೆ ಎಂಬುದು. ಈ ಅವಕಾಶವಾದಿ, ಭ್ರಷ್ಟ ಕೆಜೆಪಿ ಪಕ್ಷ ಸಂಪೂರ್ಣವಾಗಿ ಮುಗ್ಗರಿಸಿ ನಾಮಾವಶೇಷವಾಗಿದೆ. ಇನ್ನು ಭವಿಷ್ಯದಲ್ಲಿ ತಂದೆ ಮಕ್ಕಳ ಪಕ್ಷ ಜನತಾ ದಳದ ಪ್ರಭಾವ ಮತ್ತು ಬಲಾಬಲ ಮತ್ತಷ್ಟು ಕುಗ್ಗುವ ಸಾಧ್ಯತೆಗಳಿವೆ. ಕಡೆಗೆ ತಮಿಳುನಾಡಿನ ಡಿ.ಎಂ.ಕೆ ಮತ್ತು ಏಐಡಿಎಂಕೆ, ಕೇರಳದ ಯುಡಿಎಫ್ ಮತ್ತು ಎಲ್‌ಡಿಫ್ ಮಾದರಿಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಅಧಿಕಾರದ ಚುಕ್ಕಾಣಿಯನ್ನು ಹಿಡಿಯಬಹುದು. ಅದಕ್ಕೆ ೨೦೧೩ರ ಚುನಾವಣೆ ಮುನ್ನುಡಿಯನ್ನು ಬರೆದಂತಿದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಇದನ್ನು ಸುಳ್ಳು ಮಾಡಲು ಮುಂದಿನ ಐದು ವರ್ಷಗಳ ಅವಕಾಶವಿದೆ.

ಮೇಲಿನ ಸಾಧ್ಯತೆಗಳನ್ನು ಸುಳ್ಳು ಮಾಡಲು ಇಂದಿನ ಚುನಾವಣೆಯಲ್ಲಿ ನಮ್ಮ ಪ್ರೀತಿಯ, ಪ್ರಗತಿಪರ ನಾಯಕ ಪುಟ್ಟಣ್ಣಯ್ಯ ಗೆದ್ದಿದ್ದಾರೆ. ಇದು ಭವಿಷ್ಯದ ಕುರಿತಾಗಿ ಹೊಸ ಭರವಸೆ. ಲೋಕಸತ್ತಾ ಪಕ್ಷದಿಂದ ಸ್ಪಧಿಸಿದ್ದ ರವಿ ಕೃಷ್ಣಾರೆಡ್ಡಿ 6596 ರಷ್ಟು ಮತಗಳನ್ನು ಗಳಿಸಿ ನಾಲ್ಕನೇ ಸ್ಥಾನದಲ್ಲಿಯೂ, ಅಶ್ವಿನ್ ಮಹೇಶ್ 11915 ಮತಗಳನ್ನು ಗಳಿಸಿ ಮೂರನೇ ಸ್ಥಾನದಲ್ಲಿಯೂ, ಶಾಂತಲಾ ದಾಮ್ಲೆ 9071 ಮತಗಳನ್ನು ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇದು ಇವರೆಲ್ಲ ಹಣ ಹಂಚದೆ, ಬದಲಾಗಿ ಜನತೆಯಿಂದಲೇ ಹಣ ಪಡೆದು ಪ್ರಾಮಾಣಿಕ ಚುನಾವಣೆ ನಡೆಸಿದವರು. ಈ ಸಂದರ್ಭದಲ್ಲಿ ದಲಿತ ಸಂಘಟನೆಗಳು, ರೈತ ಸಂಘಟನೆಗಳು, ಲೋಕಸತ್ತಾ ಪಕ್ಷ, ಮತ್ತು ಕಮ್ಯುನಿಷ್ಟ್ ಪಕ್ಷ ಇವರೆಲ್ಲರೂ ಒಗ್ಗಟ್ಟಾಗಿ ಧ್ರವೀಕರಣಗೊಳ್ಳಬೇಕಾಗಿದೆ. ಆ ಮೂಲಕ ಪರ್ಯಾಯ ರಾಜಕಾರಣಕ್ಕೆ ಒಂದು ಮುನ್ನುಡಿಯನ್ನು ಬರೆಯಬಾರದೇಕೆ??

ಇದು ಕತ್ತಲ ದಾರಿಯೇ ನಿಜ, ಆದರೆ ಇಚ್ಛಾಶಕ್ತಿಯ ಬಲ, ಪ್ರಾಮಾಣಿಕತೆಯ, ನೈತಿಕತೆಯ ಬಲ ಎಂದಿಗೂ ಬೆಳಕಿನ ಹಣತೆಗಳೇ. ಇದನ್ನು ಹಚ್ಚಬೇಕಷ್ಟೇ.

ಹರ್ಷ ಮಂದೇರ್ ಬರಹ 5: ಹಸಿವಿನ ಒಂಟಿತನ

Harsha Manderಮೂಲ ಲೇಖನ: ಹರ್ಷ ಮಂದೇರ್

ಕನ್ನಡಕ್ಕೆ: ರಾಜಲಕ್ಷ್ಮಿ ಕೋಡಿಬೆಟ್ಟು

ಒರಿಸ್ಸಾದ ಬೊಲಾಂಗೀರ್ ಎಂಬ ಹಳ್ಳಿ. ಹಸಿವು ತಾಂಡವ ಆಡುತ್ತಿರುವ ಆ ಹಳ್ಳಿಯಲ್ಲಿ ಉಮರ್ಿಳಾ ಎಂಬ ಬೆಳ್ಳಿಕೂದಲ ಹೆಂಗಸನ್ನು ನಾವು ಭೆಟ್ಟಿಯಾದೆವು. ಅದು ಸಣ್ಣದೊಂದು ಹುಲ್ಲಿನ ಗುಡಿಸಲು. ಅಂಗಳದಲ್ಲಿ ನಿಧಾನಕ್ಕೆ ಹೆಜ್ಜೆಯಿಡುತ್ತಾ ಓಡಾಡುವ ಹೇಂಟೆ.

ನೋಡು ಈ ಹೇಂಟೆಯನ್ನು. ಕೊಡಲು ನನ್ನಲ್ಲಿ ಏನೂ ಇಲ್ಲ ಅಂತ ಗೊತ್ತಿದ್ದರೂ ಅದು ನನ್ನ ಬಳಿ ಬರುತ್ತದೆ. ಮೂರ್ಖ ಹೇಂಟೆ. ಶುಶ್ಶೂ ಅಂತ ಅವಳನ್ನು ಓಡಿಸಬೇಡಿ. ಅವಳು ನನಗಿರುವ ಒಬ್ಬಳೆ ಅತಿಥಿ ಅಲ್ವ…
ಉಮರ್ಿಳಾ ಮಾತಿನಲ್ಲಿ ಏಕಾಂಗಿತನದ ಭಾರವಿತ್ತು. ನನಗೆ ಆಹಾರ ಬೇಕು ಎನ್ನುವ ಹಸಿವು ಮಾತ್ರ ಅಲ್ಲ. ಪ್ರೀತಿಯ ಹಸಿವೂ ಹೌದು. ಆದರೆ ವಿಪರ್ಯಾಸವೆಂದರೆ ಉಮರ್ಿಳಾಗೆ ಜನರೆಂದರೆ ಹೆದರಿಕೆಯೂ ಹೌದು. ಅದಕ್ಕಾಗಿ ಹೆಚ್ಚಾಗಿ ಅವಳು ಮನೆಯಲ್ಲಿಯೇ ಇರುತ್ತಾಳೆ. ಸ್ನಾನಕ್ಕೆಂದು ನದಿಗೆ ಹೋಗುವಾಗಲೂ ಅವಳು ಮುಖ್ಯರಸ್ತೆಯಲ್ಲಿ ಓಡಾಡುವುದಿಲ್ಲ. ನಾನು ಒಬ್ಬಳೇ ಬದುಕುತ್ತೇನಲ್ಲಾ ಅದಕ್ಕೇ ನನಗೆ ಹೆದರಿಕೆ !.
ಹಸಿವಿನ ಅನುಭವ ತುಂಬ ಸಂಕೀರ್ಣವಾದುದು. ಶರೀರಕ್ಕೆ ಸಂಬಂಧಿಸಿದ ತೀವ್ರವಾದ ನಷ್ಟದ ಭಾವದ ಜತೆಗೆ ಹತಾಶೆ ಮತ್ತು ಅವಮಾನವೂ ಸೇರಿರುತ್ತದೆ. ಅದು ತುತರ್ಾಗಿ ಆಹಾರಕ್ಕಾಗಿ ಉಂಟಾಗುವ ಹಾಹಾಕಾರ. ಅದೇವೇಳೆ ತೀವ್ರವಾದ ಆಯಾಸ, ದೌರ್ಬಲ್ಯ ಮತ್ತು ತುಸು ಓಲೈಕೆಯನ್ನು ಬಯಸುವ ಆಶಯ ಅಂತರಂಗದಲ್ಲಿರುತ್ತದೆ. ಅದರಲ್ಲಿ ಏಕಾಂಗಿತನವಿದೆ, ಸಾಮಾಜಿಕ ಅಪಮೌಲ್ಯಗೊಳ್ಳುವಿಕೆ ಮತ್ತು ಆತ್ಮಗೌರವದಿಂದಕುಸಿಯುವ ನೋವಿದೆ.

ಪ್ರತಿದಿನವೂ ಅಗ್ನಿಪರೀಕ್ಷೆ

ನಾವು ಭೇಟಿಯಾಗುವ ಹೆಚ್ಚಿನ ನಿರ್ಗತಿಕರು ದೀರ್ಘಕಾಲದ ಹಸಿವಿನ ಕ್ಲೇಶವನ್ನಷ್ಟೇ ಅಲ್ಲ, ಪ್ರತಿದಿನವೂ ಏಕಾಂಗಿತನದ ಕಡುನೋವನ್ನೂ ಉಣ್ಣುತ್ತ ಬದುಕುತ್ತಾರೆ. ಹತ್ತು ಹಲವು ವಿಧಗಳಲ್ಲಿ ಅವರು ಸಾಮಾಜಿಕವಾಗಿ ಪ್ರತ್ಯೇಕಗೊಂಡಿರುತ್ತಾರೆ. ಅವರ ಭಾವಗಳಿಗೆ ಕಿಂಚಿತ್ ಬೆಲೆ ಇಲ್ಲದಂತಾಗಿರುತ್ತದೆ. ಕಾವಾ ಮನತ್ ಎಂಬ ಈ ವ್ಯಕ್ತಿಗೆ ಹುಟ್ಟಿನಿಂದ ಅಂಗವೈಕಲ್ಯ. ತನ್ನ ದೊರಗಾದ ಕೈಗಳ ಮೂಲಕ ದೇಹವನ್ನು ಎಳೆದುಕೊಂಡು ಸಾಗುತ್ತಾನೆ. ಮದುವೆ ಮಕ್ಕಳು ಅಂತ ತನ್ನದೇ ಸಂಸಾರ ಮಾಡಿಕೊಳ್ಳಲಿಕ್ಕೆ ಆಗಲಿಲ್ಲವಲ್ಲಾಎಂಬುದು ಆತನ ಬದುಕಿನ ದೊಡ್ಡ ವಿಷಾದ. ಜತೆಗೊಬ್ಬಳು ಸಂಗಾಗತಿ ಇದ್ದಿದ್ದರೆ ತನ್ನ ನೋವು, ಖುಷಿಯನ್ನು ಹಂಚಿಕೊಳ್ಳಬಹುದಿತ್ತು ಎಂದೆನಿಸುತ್ತದೆ ಆತನಿಗೆ. ಸಂಗಾತಿಯ ಬೆಂಬಲದೊಂದಿಗೆ ಆತ್ಮಗೌರವದೊಂದಿಗೆ ಬದುಕಿನಲ್ಲಿ ಕೊಂಚ ದೂರ ಸಾಗಬಹುದಿತ್ತಲ್ಲ ಎನ್ನುವುದು ಅವನ ಆಶಯ. ಆಗ ತನ್ನ ಭವಿಷ್ಯದ ಬಗ್ಗೆ ಅವನು ವಿಪರೀತ ಆತಂಕಗೊಳ್ಳುತ್ತಿರಲಿಲ್ಲ. ಬಡತನ ಮತ್ತು ಹಸಿವು ಮನುಷ್ಯನನ್ನು ಕೊಲ್ಲುವುದಷ್ಟೇ ಅಲ್ಲ, ಆತ್ಮಗೌರವವನ್ನೂ ನಾಶ ಮಾಡುತ್ತವೆ.

ಆಂಧ್ರಪ್ರದೇಶದಲ್ಲಿ ಓರ್ವ ಅಜ್ಜಿ ಅಂತಮ್ಮ. ತನ್ನ ಮಕ್ಕಳನ್ನು ಕಷ್ಟಪಟ್ಟು ಸಾಕಿ ಬೆಳೆಸಿ ಬದುಕಿನ ನೋವುಂಡವಳು. ಆದರೆ ಕೊನೆಗಾಲದಲ್ಲಿ ಆಕೆಯನ್ನು ಮಕ್ಕಳು ಕೈಬಿಟ್ಟಿದ್ದಾರೆ. ಒಂಟಿಬದುಕಿನಲ್ಲಿ ಹಬ್ಬಹರಿದಿನಗಳನ್ನು ಹೇಗೆ ಆಚರಿಸುವುದು? ಸಣ್ಣಪುಟ್ಟ ಹಬ್ಬಗಳನ್ನು ನಾನು ಆಚರಿಸುವುದಿಲ್ಲ. ದೀಪಾವಳಿ, ಹೋಳಿ,ಸಂಕ್ರಾಂತಿ ಮುಂತಾದ ದೊಡ್ಡ ಹಬ್ಬಗಳನ್ನು ಒಬ್ಬಳೇ ತನಗೆ ತೋಚಿದಂತೆ, ತನ್ನ ಕೈಲಾದಂತೆ ಆಚರಿಸುತ್ತಾಳೆ. ಒಂದು ಹಿಡಿ ಅನ್ನ ಹೆಚ್ಚು ಊಟ ಮಾಡುವುದು, ಅಥವಾ ಇಷ್ಟು ತರಕಾರಿ ತಂದು ಒಂದೊಳ್ಳೆ ಸಾಂಬಾರು ಮಾಡುವುದು. . . ಇಷ್ಟಕ್ಕೆ ಮುಗಿಯುತ್ತದೆ ಆಕೆಯ ಹಬ್ಬ. ವಯಸ್ಸಾದ ಮತ್ತೋರ್ವ ವಿಧವೆ ಅಜ್ಜಿ ಸಜ್ನಾ ನಾಗ್ ಮನೆಯವರಿಂದ ದೂರಾಗಿದ್ದಾಳೆ. ಹಬ್ಬಗಳು ಯಾವಾಗ ಬರುತ್ತವೋ, ಹೋಗುತ್ತವೋ ನನಗೆ ಗೊತ್ತಾಗುವುದಿಲ್ಲ. ಆದರೆ ನನ್ನ ಗಂಡ ಇದ್ದಾಗ ಹಬ್ಬಗಳಿಗಾಗಿ ಕಾತರದಿಂದ ಕಾಯುತ್ತಿದ್ದೆ ಎಂದು ಆಕೆ ನೆನಪಿಸಿಕೊಳ್ಳುತ್ತಾಳೆ.

ಲಕ್ಷ್ಮನ್ನ ಎಂಬ ಅಜ್ಜಿಗೆ ಮಕ್ಕಳು ತನ್ನ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯದ ಬಗ್ಗೆ ಅಪಾರ ಸಿಟ್ಟಿದೆ. ಹಬ್ಬದ ಸಮಯದಲ್ಲಿ ಆಕೆ ಯಾವುದಾದರೂ ಹೊಲದ ಬಳಿ ಹೋಗಿ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾಳೆ.. ಮಕ್ಕಳನ್ನು ಶಪಿಸುತ್ತಾಳೆ. ಹಳೇ ನೆನಪುಗಳು ಕಣ್ಣೀರು ತರುತ್ತವೆ. ಕಣ್ಣೀರು ಕೊಂಚ ಸಮಾಧಾನ ತರುತ್ತದೆ.

ಲೈಬನಿ ಮಂಝಿ ಎಂಬಾಕೆಗೆ ಗಾಯಿಟರ್ ಕಾಯಿಲೆ ಬಂತೆಂದು ಆಕೆಯನ್ನು ಗಂಡ ತೊರೆದು ಹೋದ. ಅನಂತರ ಲೈಬನಿ ಯಾವುದೇ ಹಬ್ಬ ಹರಿದಿನ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ. ತನ್ನ ಊದಿದ ಗಂಟಲಿನ ಬಗ್ಗೆ ಯಾರಾದರೂ ಆಡಿಕೊಂಡಾರೆಂದು ಅಥವಾ ತನ್ನನ್ನು ಗಂಡ ಬಿಟ್ಟು ಹೋದ ಬಗ್ಗೆ ಯಾರಾದರೂ ಜರೆದಾರು ಎನ್ನುವ ಅಳುಕು.
ಇನ್ನು ಕುಷ್ಟ ರೋಗದಿಂದ ಬಳಲುವ ವಾಲಿ ಮತ್ತು ಧನು ಎಂಬ ಹಿರಿಯ ನಾಗರಿಕರನ್ನು ಯಾರೂ ಯಾವುದೇ ಕಾರ್ಯಕ್ರಮಗಳಿಗೂ ಕರೆಯುವುದಿಲ್ಲ. ಧಾನು ಎಂಬ ಅಜ್ಜನಿಗೆ ಜನಸಂದಣಿ ನೋಡಿದರೆ ನಾಚಿಕೆ. ತನ್ನ ಆಡುಕುರಿಗಳನ್ನು ಮೇಯಿಸಲು ಮನೆಯಿಂದ ಹೊರ ಬೀಳುತ್ತಾನೆಯೇ ವಿನಃ ಸಾಮಾಜಿಕ ಕಾರ್ಯಕ್ರಮಗಳಿಗೆ ಆಕೆ ಬರುವುದೇ ಇದಲ್ಲ. ನೌಟಂಕಿ ಮುಂತಾದ ಮನರಂಜನೆಯಲ್ಲಿ ಭಾಗವಹಿಸುವುದಿಲ್ಲ. ಅಷ್ಟೇ ಏಕೆ, ಅವನು ನಡೆದು ಹೋಗುವಾಗ ಹೆಂಗಸರ ತಮ್ಮ ಮಕ್ಕಳನ್ನು ಸರಕ್ಕನೆ ಪಕ್ಕಕ್ಕೆ ಎಳೆದುಕೊಂಡು ದೂರ ಸರಿಯುತ್ತಾರೆ.
ಒಂಟಿಯಾಗಿ ಬದುಕುವ ಹಿರಿಯನಾಗರಿಕರು ಕೆಲವೊಮ್ಮೆ ಯಾರ ಬಳಿಯೂ ಮಾತನಾಡದೆಯೇ ದಿನವಿಡೀ ಕಳೆಯುತ್ತಾರೆ. ತನ್ನಪಾಲಿಗೆ ಮಾತ್ರವೇ ಅಡುಗೆ ಮಾಡಿಕೊಳ್ಳುವುದು ಒಂದು ದೊಡ್ಡ ಸಮಸ್ಯೆ. ಅದರಲ್ಲಿಯೂ ಗಂಡಸರು ಅಡುಗೆ ಮಾಡುವುದು ರೂಢಿಯಿಲ್ಲದ ಗಂಡಸರು ಹೆಚ್ಚು ಪರದಾಡುತ್ತಾರೆ. ಕೊನೆಗೆ ಅವರು ರಾತ್ರಿಗಳಲ್ಲಿ ಹೊಟ್ಟೆತುಂಬ ನೀರು ಕುಡಿದು ಮಲಗಿಬಿಡುತ್ತಾರೆ. ಇಳಿವಯಸ್ಸಿನಲ್ಲಿ ಹೆಂಡತಿಯನ್ನು ಕಳೆದುಕೊಂಡ ಪುರುಷರು ಉಣ್ಣುವ ವಿಷಯದಲ್ಲಿ ತುಂಬ ಒಂಟಿಯಾಗಿಬಿಡುತ್ತಾರೆ. ವಯಸ್ಸಾಗುತ್ತಿದ್ದಂತೆಯೇ ಅಜ್ಜ ಅಜ್ಜಿಯರು ಜತೆಯಾಗಿ ಇರುವುದೇ ಉತ್ತಮ. ಆದರೆ ರಾಜಸ್ಥಾನಿ ಅಜ್ಜಿಯೊಬ್ಬರು ಹೇಳುವ ಪ್ರಕಾರ, ಈ ಅಜ್ಜ ಅಜ್ಜಿಯರು ತಮ್ಮ ಹಳೇ ದಿನಗಳನ್ನು ಜ್ಞಾಪಿಸಿಕೊಂಡು ಎಷ್ಟು ಅಂತ ಮಾತಾಡಬಹುದು. ತನ್ನ ಸಂಗಾತಿಎಲ್ಲಿ ಕಾಯಿಲೆಬಿಳುತ್ತಾನೋ, ಅಥವಾ ಇದ್ದಕ್ಕಿದ್ದಂತೆಯೇ ಸತ್ತುಬಿಡುತ್ತಾರೋ ಎಂಬ ಆತಂಕ ಪ್ರತಿಕ್ಷಣ ಅವರನ್ನು ಕಾಡುತ್ತದೆ. ಅಥವಾ ಸಂಗಾತಿ ತನ್ನನ್ನು ತಾನು ನಿಭಾಯಿಸಲಾರದ ಸ್ಥಿತಿ ತಲುಪಿ ಇತರರಿಗೆ ಹೊರೆಯಾಗುತ್ತಾರೋ ಎಂಬ ಆತಂಕವೂ ಇಲ್ಲದಿಲ್ಲ. ತಮ್ಮ ಕೈ ಕಾಲು ಅಲ್ಲಾಡುವವರೆಗೆ ಏನೇ ಪರಿಸ್ಥಿತಿ ಬಂದರೂ ನಿಭಾಯಿಸಬಹುದೇನೋ, ಆದರೆ ಹಾಸಿಗೆ ಹಿಡಿದುಬಿಟ್ಟರೆ ಮತ್ತೇನು ಮಾಡುವುದು ಎಂಬಭಯ ಇದ್ದದ್ದೇ.

ಇದೊಂದು ಅವಕಾಶವಲ್ಲ
ಜೀವನ ಸಾಗಿಸಲು ದುಡಿಮೆ ಹುಡುಕಿಕೊಂಡು ನಗರಗಳಿಗೆ ಹೋಗುವುದು ಹಿರಿಯ ನಾಗರಿಕರಿಗೆ ಸಾಧ್ಯವಿಲ್ಲದ ಮಾತು. ವಯಸ್ಸು ಮತ್ತು ಅಶಕ್ತತೆ ಅವರಿಗೆ ವಲಸೆ ಅವಕಾಶವನ್ನು ಕೊಡುವುದಿಲ್ಲ. ಆದರೆ ಮಕ್ಕಳು ವಲಸೆ ಹೋದ ಮೇಲೆ ಊರಿನಲ್ಲಿಯೇ ಉಳಿದುಬಿಡುವ ಹಿರಿಯ ನಾಗರಿಕರನ್ನು ನಾವು ಭೇಟಿಯಾದೆವು. ವಲಸೆ ಹೋದ ಮಕ್ಕಳು ಅವರನ್ನು ನೋಡಿಕೊಂಡರೂ, ಏಕಾಂಗಿತನದ ನೋವು ಹಾಗೇ ಉಳಿದಿತ್ತು.

ಬೊಲಾಂಗೀರ್ ಎನ್ನುವ ಊರಿನಲ್ಲಿರುವ ಅಜ್ಜ ಇಂದ್ರದೀಪ್ ಅಂಗವಿಕಲರೂ ಹೌದು. ಮಗ ಸಾಧು ತನ್ನ ಪತ್ನಿಯೊಂದಿಗೆ ದುಡಿಮೆಗಾಗಿ ಪ್ರತಿ ವರ್ಷ ಹೈದರಾಬಾದ್ಗೆ ವಲಸೆ ಹೋಗುತ್ತಾನೆ. ಇಟ್ಟಿಗೆ ಕೆಲಸಗಳನ್ನು ನಿರ್ವಹಿಸುತ್ತಾನೆ. ಮಗ ಕಳುಹಿಸಿದ ದುಡ್ಡಿನಲ್ಲಿ ಇಂದ್ರದೀಪಜ್ಜನ ಜೀವನ ಸಾಗಬೇಕು. ತಮಗೆ ಕೆಲಸ ಕೊಡುವ ಗುತ್ತಿಗೆದಾರನಿಂದ ಮುಂಚಿತವಾಗಿಯೇ 8000 ರೂ. ಮುಂಗಡ ಪಡೆಯುತ್ತಾರೆ. ಕಳೆದ ವರ್ಷ ದಂಪತಿಗಳು ಅಜ್ಜನಿಗೆ 500 ರೂ. ಕೊಟ್ಟಿದ್ದರು. ನಂತರ ಊರಿನ ಲೇವಾದೇವಿದಾರನಲ್ಲಿ ಅಡವಿಟ್ಟಿದ್ದ ಚಿನ್ನವನ್ನು ಬಿಡಿಸಿ ಅಮ್ಮನಿಗೆ ಕೊಟ್ಟರು. ಆದರೆ ಇಂದ್ರದೀಪಜ್ಜ ಮತ್ತು ಆತನ ಪತ್ನಿಗೆ ಆಸರೆಯಾಗಿ ಮಕ್ಕಳು ಜತೆಯಲ್ಲಿಲ್ಲ. ಅಶಕ್ತರಾಗಿದ್ದಾಗ ಕೈ ನೀಡಿ ಎಬ್ಬಿಸುವ ಕೈಗಳು ಮನೆಯಲ್ಲಿಲ್ಲ.

ಕೆಲವು ಸಂದರ್ಭಗಳಲ್ಲಿ ದೀರ್ಘಕಾಲದ ವಲಸೆ, ಅಗಲುವಿಕೆ ಕುಟುಂಬದ ನಂಟನ್ನೂ ಸಡಿಲು ಮಾಡಿಬಿಡುತ್ತದೆ. ಮಾಲ್ತಿ ಬರಿಹಾ ಎಂಬ ಅಜ್ಜಿಯ ವಿಚಾರವನ್ನೇ ತೆಗೆದುಕೊಳ್ಳೋಣ. ಆರಂಭದಲ್ಲಿ ವಲಸೆ ಹೋದ ಮಗ ಕಳುಹಿಸುವ 300 ರೂ. ಮನಿ ಆರ್ಡರು ಅಜ್ಜಿಯ ಕೈ ತಲುಪುತ್ತಿತ್ತು. ಆದರೆ ಸ್ವಲ್ಪ ಸಮಯದ ನಂತರ ಮನಿ ಆರ್ಡರ್ ನಿಂತಿತು. ಮಗನ ಸಂಸಾರ ಮನೆಗೆ ಬರುವುದೂ ಕಡಿಮೆಯಾಯಿತು. ಗಂಡ ತೀರಿಕೊಂಡ ಸಂದರ್ಭದಲ್ಲಿಯೂ ಮಗ ಜತೆಗಿರಲಿಲ್ಲ ಎಂದು ಮಾಲ್ತಿಅಜ್ಜಿ ಕಣ್ಣಲ್ಲಿ ನೀರಾಡುತ್ತದೆ. ರಾಜಸ್ಥಾನಿ ಮತ್ತೋರ್ವ ವಿಧವೆ ಸೋಮಿ ಕೂಡ ಇದನ್ನೇ ಹೇಳುತ್ತಾಳೆ – ಮಗ ತನ್ನ ಹೆಂಡತಿಯೊಂದಿಗೆ ಗುಜರಾತ್ಗೆ ವಲಸೆ ಹೋಗಿ, ಮತ್ತೆ ವಾಪಸ್ ಬರಲಿಲ್ಲ. ಮನೆಯ ನಂಟನ್ನೂ, ಹಳ್ಳಿಯ ನಂಟನ್ನೂ ತೊರೆದಿದ್ದಾನೆ. ತನ್ನ ಅಮ್ಮನ ನೋವನ್ನೂ ಮರೆತಿದ್ದಾನೆ.

ಸ್ಥಳೀಯ ಸಮುದಾಯಗಳು ನಿರ್ಗತಿಕರ ಬಗ್ಗೆ ತೀರಾ ನಿರ್ಲಕ್ಷ್ಯದ ಧೋರಣೆ ಹೊಂದಿರುತ್ತಾರೆ. ಮಾನಸಿಕವಾಗಿ ಸ್ವಲ್ಪ ನಿಧಾನವಾಗಿ ಯೋಚಿಸುವ ಬೆಟ್ಕಾಯಿ ಟಂಡಿ ಎಂಬ ಹೆಂಗಸನ್ನು ಮೂರ್ಖ ಹುಚ್ಚಿ ಎಂದೇ ಎಲ್ಲರೂ ಸಂಬೋಧಿಸುತ್ತಾರೆ. ಆಕೆ ಬೇಸರಿಂದ ಕೇಳುತ್ತಾಳೆ ನಾನು ಮೂರ್ಖಳ ಹಾಗೆ ಕಾಣುತ್ತೇನಾ ? ಅಲ್ಲ ನೀವೇ ಹೇಳಿ..ನಾನು ಹುಚ್ಚಿಯಾ ? ಮತ್ತೆ ಈ ಊರಿನವರು ಯಾಕೆ ನನ್ನನ್ನು ಹೀಗೆ ನೋಡುತ್ತಾರೆ. ಹಾಗೆ ಟೀಕಿಸುವವರ ಮಕ್ಕಳು ಕಲ್ಲು ಬಿಸಾಡುವುದು ಯಾಕೆ ? -ಒಂಟಿಯಾಗುವ ಬದುಕುವ ಅವಳ ಏಕಾಂಗಿ ಲೋಕದಲ್ಲಿ ಸುತ್ತ ಭೂತ ಪಿಶಾಚಿಗಳಂತೆ ಈ ಪ್ರಶ್ನೆಗಳು ಕಾಡುತ್ತವೆ.

ನಾವು ಅಧ್ಯಯನ ಮಾಡಿದ ಮೂರು ರಾಜ್ಯಗಳಲ್ಲಿ ಇಂತಹ ನಿರ್ಗತಿಕರಿಗೆ ನೆರವಾಗುವ ಯಾವುದೇ ಸಾಂಸ್ಥಿಕ ಸಮುದಾಯದ ಬೆಂಬಲ ಇರುವುದು ಗೋಚರಿಸಲಿಲ್ಲ. ಕೆಲವು ಹಳ್ಳಿಗಳಲ್ಲಿ ಚಂದಾ ಸಂಗ್ರಹಿಸಿ ಅಥವಾ ಸ್ವಯಂ ಇಚ್ಛೆಯಿಂದ ಕೊಟ್ಟ ಹಣ ಸಂಗ್ರಹಿಸಿ ಅಂಗವಿಕಲರ ಮಕ್ಕಳ ಮದುವೆಗೆ ಅಥವಾ ದುರ್ಬಲ ವಿಧವೆಯರ ಮಕ್ಕಳ ಮದುವೆಗೆ ನೆರವಾಗುವ ಪದ್ಧತಿ ಮಾತ್ರ ಕೆಲವೆಡೆ ಕಾಣ ಸಿಕ್ಕಿತು. ವಯಸ್ಸಾದವರಿಗೆ, ಒಂಟಿ ಹೆಂಗಸರಿಗೆ ಒಂದಿಷ್ಟು ಕೆಲಸ ಕಾರ್ಯಗಳನ್ನು ಹಚ್ಚುವುದೇ ಇಲ್ಲಿನ ದೊಡ್ಡ ಪರೋಪಕಾರಿ ಧೋರಣೆ. ಕೊಡುವ ಸಂಬಳ ಮೂರು ಕಾಸಾದರೂ, ಕೆಲಸದ ಅವಧಿಗೆ ಮಿತಿಯಿಲ್ಲದೇ ಇದ್ದರೂ, ಅಂತಹವರಿಗೆ ಕೆಲಸ ಕೊಟ್ಟಿರುವುದೇ ಮಹಾನ್ ಎಂಬಂತೆ ವರ್ತಿಸಲಾಗುತ್ತದೆ.

ಯಾಕೆ ಈ ಸಾಮಾಜಿಕ ನಿರ್ಲಕ್ಷ್ಯವಿದೆ ? ಏನನ್ನೂ ಉತ್ಪಾದನೆ ಮಾಡಲಾರದವರು, ಗಳಿಕೆ ಸಾಧ್ಯವಾಗದ ಕೈಲಾಗದ ವ್ಯಕ್ತಿಗಳು ಎಂಬ ಧೋರಣೆ ಇರುವುದರಿಂದ ಹೀಗೆ ನಿರ್ಲಕ್ಷ್ಯ ಮಾಡಲಾಗುತ್ತದೆ ಎನಿಸುತ್ತದೆ. ಗಳಿಸಲಾರದವರು ಎನ್ನುವುದು ನಿಜವೇ ಇರಬಹುದು. ಆದರೆ ನಿರ್ಲಕ್ಷ್ಯ ಸಮಂಜಸ ಎನಿಸುವುದಿಲ್ಲ. ಚಳಿಗಾಲದ ರಾತ್ರಿಯಲ್ಲಿ ಮೈ ಬೆಚ್ಚಗೆ ಮಾಡಿಕೊಳ್ಳಲು ಹೊತ್ತಿಮುಗಿದ ಅಗ್ಗಿಷ್ಟಿಕೆ ಮುಂದೆ ಕುಳಿತವರನ್ನು ನೋಡಿದ್ದೀರಾ.. ಕೆಂಡವಾರಿ, ಬೂದಿ ತಣ್ಣಗಾಗಿದ್ದರೂ ಅವರು ಒಂದಿಷ್ಟು ಬೆಚ್ಚನೆಯ ಭಾವಕ್ಕೆ ಹಾತೊರೆಯುತ್ತಿರುತ್ತಾರೆ.

ಆಕಾಂಕ್ಷೆಗಳು ಮತ್ತು ಕನಸುಗಳು
ಉದಿಯಾ ಬರಿಹಾ ಎಂಬಾಕೆಯ ಬಾಲ್ಯ ಏಕಾಂಗಿತನದ್ದು. ಆಕೆಯನ್ನು ಶಾಲೆಗೂ ಕಳುಹಿಸಿಲ್ಲ. ಯಾಕೆಂದರೆ ಆಕೆಗೆ ಕಣ್ಣುಗಳು ಕಾಣುವುದಿಲ್ಲ. ಹಾಗಾಗಿ ಮನೆಯಲ್ಲಿಯೇ ಒಂಟಿಯಾಗಿ ಆಡುತ್ತಿರುತ್ತಾಳೆ. ಆ ಹಳ್ಳಿಯಲ್ಲಿ ಇನ್ನೂ ಕೆಲವರು ಅಂಧ ಮಕ್ಕಳಿದ್ದರು. ಆದರೆ ಅವರೆಲ್ಲರೂ ಪರಸ್ಪರ ಭೇಟಿಯಾಗೇ ಇಲ್ಲ. ದೊಡ್ಡವಳಾದಂತೆಯೇ ಅವಳಿಗೆ ಮದುವೆಯಾಗುವ ಪ್ರಶ್ನೆಯೇ ಇಲ್ಲ ಎಂದುಕೊಂಡಿದ್ದಳು. ಇದ್ದಕ್ಕಿದ್ದಂತೆಯೇ ಆಕೆಯ ತಂದೆ ತಾಯಿ ಯಾವುದೋ ಜ್ವರ ಬಂದು ತೀರಿಕೊಂಡುಬಿಟ್ಟರು.

ಆಮೇಲೆ ಅವಳು ಒಂಟಿಯಾಗಿಯೇ ಜೀವನ ಕಳೆಯಬೇಕಾಯಿತು. 15ನೇ ವರ್ಷಕ್ಕೆ ಒಂಟಿಯಾದ ಅವಳು ಮುಂದಿನ 60 ವರ್ಷಗಳ ವರೆಗೆ ಒಂಟಿ ಬದುಕು ಸವೆಸಿ, ಕೊನೆಗಾಲದಲ್ಲಿ ಭಿಕ್ಷೆ ಬೇಡುವುದು ಕೂಡ ಅನಿವಾರ್ಯವಾಯಿತು. ಆಕೆಯನ್ನು ಯಾರೂ ಭೇಟಿಯಾಗಲಿಲ್ಲ. ಹೇಗಿದ್ದೀರಾ… ಖುಷಿಯಾಗಿದ್ದೀರಾ.. ಎಂದು ಆಕೆಯನ್ನು ನಾವು ಪ್ರಶ್ನಿಸುತ್ತಲೇ `ಹೌದು ಖುಷಿಯಾಗಿದ್ದೇನೆ’ ಎಂದು ಥಟ್ಟನೆ ಉತ್ತರಿಸುತ್ತಾಳೆ. ಏನೇನು ಆಕಾಂಕ್ಷೆಗಳಿವೆ ನಿಮ್ಮದು ಎಂಬ ಮಾತು ಬಂದಾಗ ತುಂಬ ಹೊತ್ತು ಮೌನವಾಗಿ… ನಂತರ ಉತ್ತರಿಸುತ್ತಾಳೆ. ಯೋಚನೆಗಳೂ ಮರೆತು ಹೋದಂತೆ, ತುಂಬ ನಿಧಾನವಾಗಿ. ಒಂದೊಳ್ಳೆ ಮನೆ, ಉಡೋಕೆ, ಉಣ್ಣೋಕೆ ಸಾಕಷ್ಟು ದೊರೆತಿದ್ದರೆ..ನೆಮ್ಮದಿಯಾಗಿರಬಹುದಿತ್ತೇನೋ..

ಅನುವಾದಕರ ಪರಿಚಯ: ರಾಜಲಕ್ಷ್ಮಿ ಕೋಡಿಬೆಟ್ಟು ಲೇಖಕಿ, ಕತೆಗಾರ್ತಿ ಮತ್ತು ಪತ್ರಕರ್ತೆ. “ಒಂದು ಮುಷ್ಟಿ ನಕ್ಷತ್ರ” ಅವರ ಪ್ರಕಟಿತ ಕಥಾ ಸಂಕಲನ. ಇದೇ ಕೃತಿಗೆ ಸಾರಾ ಅಬೂಬ್ಕರ್ ಪ್ರಶಸ್ತಿ ಲಭಿಸಿದೆ. ದಟ್ಸ್ ಕನ್ನಡ, ವಿಕ್ರಾಂತ ಕರ್ನಾಟಕ, ಟೈಮ್ಸ್ ಆಫ್ ಇಂಡಿಯಾ (ಕನ್ನಡ) ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕೆಲಸ ನಿರ್ವಹಿಸಿದ್ದಾರೆ. ಸದ್ಯ ಮಂಗಳೂರಿನಲ್ಲಿ ವಿಜಯ ಕರ್ನಾಟಕ ವರದಿಗಾರರಾಗಿದ್ದಾರೆ.

ಪಕ್ಷೇತರ ಶಕ್ತಿ ಕೇಂದ್ರ ಉಗಮ!

-ಚಿದಂಬರ ಬೈಕಂಪಾಡಿ

ಸಾಕಪ್ಪಾ ಸಾಕು, ಬೇಕಪ್ಪಾ ಬೇಕು ಎನ್ನುವ ಎರಡು ಭಿನ್ನ ಹಾಗೂ ಪರಸ್ಪರ ಸಮರ್ಥಿಸಿಕೊಳ್ಳುವ ಮತದಾರರ ಮನವೊಲಿಕೆಯ ಕಸರತ್ತನ್ನು ಮಾಧ್ಯಮಗಳಲ್ಲಿ ಗಮನಿಸಿರಬಹುದು. ಸಾಮಾನ್ಯ ಮತದಾರ ಯಾಕೆ ಸಾಕು, ಯಾಕೆ ಬೇಕು ಎನ್ನುವುದಕ್ಕಿಂತ ನೀವಿಬ್ಬರೂ ನಮಗೆ ಅನಿವಾರ್ಯವಲ್ಲ ಎನ್ನುವ ಸಂದೇಶ ನೀಡಿದರೆ ಹೇಗೆ ಎಂದು ಯೋಚಿಸುವುದು ಅಪರಾಧವೇ?1111111
ಒಂದು ರಾಜಕೀಯ ಪಕ್ಷ ಸಾಕು ಎನ್ನಲು, ಮತ್ತೊಂದು ಬೇಕು ಎನ್ನಲು  ಅವರದ್ದೇ ಆದ ಕಾರಣಗಳನ್ನು ಕೊಡಬಹುದು. ಇವರಿಬ್ಬರನ್ನೂ ನಿರಾಕರಿಸುವುದಕ್ಕೆ ಸಾಕಷ್ಟು ಕಾರಣಗಳಿವೆ. ನೀವೇ ಯಾಕೆ ಬೇಕು ? ಅವರೇ ಯಾಕೆ ಬೇಡ ? ಎನ್ನುವುದಕ್ಕಿಂತಲೂ ನೀವಿಬ್ಬರೂ ನಮಗೆ ಬೇಡದವರು ಎನ್ನುವುದೇ ಲೇಸು.
ಅಧಿಕಾರ ನಡೆಸುವ ಅವಕಾಶ ಕೊಟ್ಟರೂ ಜನರ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳದ ಪಕ್ಷ, ಪ್ರತಿಪಕ್ಷದ ಸಾಲಲ್ಲಿ ಕುಳಿತು ಆಡಳಿತ ನಡೆಸುವವರ ಮೇಲೆ ಕಣ್ಣಿಡಿ ಎನ್ನುವ ಅಧಿಕಾರ ಕೊಟ್ಟರೆ ಕಣ್ಣಿದ್ದೂ ಕುರುಡಾದ ಇಬ್ಬರೂ ಮತದಾರರ ಮಟ್ಟಿಗೆ ದೋಷಿಗಳು. ಒಂದು ಆಡಳಿತಾರೂಢ ಪಕ್ಷ ಎಷ್ಟರಮಟ್ಟಿಗೆ ವಿಫಲವಾಗಿದೆಯೋ ಅಷ್ಟೇ ವೈಫಲ್ಯದ ಹೊಣೆ ಪ್ರತಿಪಕ್ಷಕ್ಕೂ ಇದೆ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಜನರ ನಿರೀಕ್ಷೆಗೆ ತಕ್ಕಂತೆ ನಡೆದುಕೊಂಡಿಲ್ಲ. ಆದ್ದರಿಂದ ನಿಜಕ್ಕೂ ಈಗ ಅತಂತ್ರ ಮತದಾರ.
ಮಾಧ್ಯಮಗಳು ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಬೇರೆ ಆಯಾಮಗಳಿಂದ ಮಾಡಿವೆ. ಮತದಾರರ ನಾಡಿಮಿಡಿತವನ್ನು ಆಧಾರವಾಗಿಟ್ಟುಕೊಂಡು ಫಲಿತಾಂಶದ ಸಾಧ್ಯತೆಗಳ ಮೇಲೆ ಬೆಳಕು ಚೆಲ್ಲಿವೆ. ರಾಜಕೀಯ ಪಂಡಿತರು ವಿದ್ಯುನ್ಮಾನ ಮಾಧ್ಯಮಗಳ ಮುಂದೆ ಕುಳಿತು ಚರ್ಚೆ ಮಾಡಿದ್ದಾರೆ. ಅಂಕಣಕಾರರು ತಮ್ಮ ಅನುಭವದ ಮೂಸೆಯಿಂದ ಮತದಾರರ ಮನದಾಳವನ್ನು ಹೆಕ್ಕಿತೆಗೆದು ಹೇಳಿದ್ದಾರೆ. ಎಲ್ಲರ ಗಮನ ಪಕ್ಷಗಳು ಗಳಿಸುವ ಸ್ಥಾನಗಳು, ಯಾರಿಗೆ ಮುನ್ನಡೆ-ಹಿನ್ನಡೆ ಮತ್ತು ಯಾಕೆ ಎನ್ನುವ ಕುರಿತು ವಿಶ್ಲೇಷಣೆ ಕುರಿತೇ ಆಗಿದೆ. ಆದರೆ ಮಾಧ್ಯಮಗಳು ಅಷ್ಟೊಂದು ಗಂಭೀರವಾಗಿ ಅವಲೋಕಿಸದ ಪಕ್ಷೇತರರ ಸ್ಪರ್ಧೆಯನ್ನು ಗಂಭೀರವಾಗಿ ಗಮನಿಸಬೇಕಾದ ಅನಿವಾರ್ಯತೆ ಬಂದಿದೆ.
ಸಾಮಾನ್ಯವಾಗಿ ಪಕ್ಷೇತರರ ಪಾತ್ರ ಯಾರನ್ನು ಸೋಲಿಸುವುದು ಮತ್ತು ಯಾರಿಗೆ ಲಾಭ ಮಾಡಿಕೊಡುವುದು ಎನ್ನುವಷ್ಟಕ್ಕೆ ಸೀಮಿತವಾಗಿತ್ತು ಒಂದು ಕಾಲದಲ್ಲಿ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಅದಕ್ಕೆ 2008ರ ವಿಧಾನಸಭಾ ಚುನಾವಣೆಯಲ್ಲಿ ಆರಿಸಿ ಬಂದಿದ್ದ ಪಕ್ಷೇತರರು ನಿರ್ಣಾಯಕರಾಗುವಷ್ಟರ ಮಟ್ಟಿಗೆ ಬೆಳೆದುಬಿಟ್ಟರು. ಪಕ್ಷ ರಾಜಕಾರಣದಲ್ಲಿ ಪಕ್ಷೇತರರು ಒಂಥರಾ `ಲೆಕ್ಕಕ್ಕುಂಟು ಆಟಕ್ಕಿಲ್ಲ ಎನ್ನುವಂತಿದ್ದರು. ಬಿಜೆಪಿ ಸರಕಾರಕ್ಕೆ  ಜೀವತುಂಬಿದವರು ಇದೇ ಪಕ್ಷೇತರರು ಎನ್ನುವುದನ್ನು ನಿರಾಕರಿಸುವಂತಿಲ್ಲ. ಇಲ್ಲಿಂದ ಪಕ್ಷೇತರರಿಗೂ ರಾಜಕೀಯದಲ್ಲಿ ಮಹತ್ತರ ಪಾತ್ರನಿರ್ವಹಿಸುವುದು ಸಾಧ್ಯ ಎನ್ನುವಂತಾಗಿದೆ.
2013ರ  ವಿಧಾನಸಭಾ ಚುನಾವಣೆಯಲ್ಲಿ ಕಣದಲ್ಲಿರುವ ಪಕ್ಷೇತರರ ಸಂಖ್ಯೆಯನ್ನು ಗಮನಿಸಿದರೆ ರಾಜಕೀಯ ಪಂಡಿತರ ಲೆಕ್ಕಾಚಾರಗಳು ನಿಶ್ಚಿತಕ್ಕೂ ಉಲ್ಟಾಪಲ್ಟಿಯಾಗಲಿವೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಮೇಲೆ ಕಣ್ಣಾಡಿಸಿದರೆ ಒಂದು ಜಿಲ್ಲೆಯಲ್ಲಿ ಒಬ್ಬ ಪಕ್ಷೇತರ ಅಭ್ಯರ್ಥಿ ಖಂಡಿತಕ್ಕೂ ಗೆಲ್ಲುವಂಥ ಸಾಧ್ಯತೆಗಳು ಕಂಡುಬರುತ್ತಿವೆ. ಕೆಲವು ಜಿಲ್ಲೆಗಳಲ್ಲಿ ಎರಡರಿಂದ ಮೂರು ಮಂದಿ ಪಕ್ಷೇತರರು ಆರಿಸಿಬಂದರೂ ಅಚ್ಚರಿಯಿಲ್ಲ ಎನ್ನುವಂಥ ಸ್ಥಿತಿ ಗೋಚರಿಸುತ್ತಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಈ ಬಾರಿ ಪಕ್ಷೇತರರ ಹವಾ ಜೋರಾಗಿಯೇ ಇದೆ.
ಯಾಕೆ ಇಂಥ ವಾತಾವರಣ ನಿಮರ್ಾಣವಾಯಿತು ಎನ್ನುವುದಕ್ಕೆ ಕಾರಣಗಳು ಸುಲಭವಾಗಿ ಅರಿವಿಗೆ ಬರುತ್ತಿವೆ. ಪಕ್ಷಗಳು ಟಿಕೆಟ್ ಹಂಚಿಕೆಯಲ್ಲಿ ಮತದಾರರ ಒಲವಿದ್ದವರನ್ನು ಕಡೆಗಣಿಸಿರುವುದು, ಹಣ ಬಲದ ಮೂಲಕ ಟಿಕೆಟ್ ಗಿಟ್ಟಿಸಿಕೊಂಡಿರುವವರು, ಸ್ವಹಿತಾಸಕ್ತಿಗಾಗಿ ನಾಯಕರು ತಮ್ಮ ಪ್ರಭಾವ ಬೀರಿ ತಮಗೆ ಬೇಕಾದವರನ್ನು ಕಣಕ್ಕಿಳಿಸಿರುವುದು ಹೀಗೆ ಪಟ್ಟಿ ಮಾಡಬಹುದು. ಮತ್ತೆ ಮತ್ತೆ ಹಳೇ ಮುಖಗಳನ್ನೇ ಕಣಕ್ಕಿಳಿಸುವಂಥ ಕೆಟ್ಟ ಪ್ರಯೋಗಕ್ಕೆ ಎಲ್ಲಾ ರಾಜಕೀಯ ಪಕ್ಷಗಳೂ ಶರಣಾಗಿರುವುದು ಕೂಡಾ ಪಕ್ಷೇತರರ ಹಾದಿಯನ್ನು ಸುಗಮಗೊಳಿಸಿದಂತಿದೆ.
ಕಾಂಗ್ರೆಸ್ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವಷ್ಟು ಮಂದಿ ಗೆಲ್ಲುತ್ತಾರೆ ಎನ್ನುವ ವಿಶ್ವಾಸದಿಂದ ಬೀಗುತ್ತಿದೆ. ಅದಕ್ಕೆ ಮುಖ್ಯಕಾರಣ ಸ್ಥಳೀಯ ಸಂಸ್ಥೆಗಳಲ್ಲಿ ಅದು ಮಾಡಿದ ಸಾಧನೆ ಅಂದುಕೊಂಡಿರಬಹುದು. ವಾಸ್ತವ ಅದಲ್ಲ. ಬಿಜೆಪಿ ವಿಭಜನೆ, ಕೆಜೆಪಿ ಉದಯ ಕಾಂಗ್ರೆಸ್ ಪರ ಜನರು ವಾಲುವಂತೆ ಮಾಡಿತು. ಆದರೆ ಇದನ್ನು ಬಳಕೆ ಮಾಡುವಲ್ಲಿ ಕಾಂಗ್ರೆಸ್ ಮುಖಂಡರು ಸಂಪೂರ್ಣವಾಗಿ ವಿಫರಾದರು. ಮುಖ್ಯಮಂತ್ರಿ ಹುದ್ದೆಗೇರುವ ಕುರಿತೇ ಚಿಂತಿಸಿದರೇ ಹೊರತು  ಗೆಲ್ಲುವ ಅಭ್ಯರ್ಥಿಗಳನ್ನು ಗುರುತಿಸಿ ಕಣಕ್ಕಿಳಿಸುವ ಸಾಮೂಹಿಕ ಚಿಂತನೆ ಮಾಡಲಿಲ್ಲ. ಮೂರು-ನಾಲ್ಕು ಮಂದಿ ನಾಯಕರು ತಮ್ಮ ಅಧಿಕಾರದ ಆಸೆ ಈಡೇರಿಸಿಕೊಳ್ಳಲು ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಗಮನಹರಿಸಿದರು ಎನ್ನುವುದನ್ನು ನಿರಾಕರಿಸುವಂತಿಲ್ಲ. ಇದರಿಂದಾಗಿಯೇ ಸರಿ ಸುಮಾರು 20 ಸ್ಥಾನಗಳನ್ನು ಕಾಂಗ್ರೆಸ್ ಕಳೆದುಕೊಂಡಿದೆ.
ಬಿಜೆಪಿಗೆ ನಾಯಕತ್ವದ ಕೊರತೆ ಎದುರಾಗಿದೆ. ಬಿ.ಎಸ್.ಯಡಿಯೂರಪ್ಪ ಅವರಷ್ಟು ಗಟ್ಟಿಯಾಗಿ ನಾಯಕತ್ವ ಕೊಡುವಂಥ ಸಾಮರ್ಥ್ಯವನ್ನು ರೂಢಿಸಿಕೊಳ್ಳಲು ಹೈಕಮಾಂಡ್ ಅವಕಾಶವನ್ನೇ ಕೊಟ್ಟಿರಲಿಲ್ಲ. ನಾಯಕರೊಳಗಿನ ಗುಂಪುಗಾರಿಕೆಯಿಂದಾಗಿ ನಾಯಕತ್ವ ಮೂರು ನಾಲ್ಕು ಗುಂಪುಗಳಾಗಿ ಹಂಚಿಹೋಯಿತು. ಇದರ ಪೂರ್ಣ ಲಾಭ ಪಡೆದುಕೊಂಡಿರುವುದು ಕೆಜೆಪಿ. ಬಿಜೆಪಿ ಸೋತರೆ ಅದಕ್ಕೆ ಸಿಂಹಪಾಲು ಕೆಜೆಪಿಯ ಯಡಿಯೂರಪ್ಪ ಅವರ ವರ್ಚಸ್ಸೇ ಕಾರಣ ಹೊರತು ಅದು ಕಾಂಗ್ರೆಸ್ ಸಾಧನೆಯಲ್ಲ, ಕಾರಣವೂ ಅಲ್ಲ.
ಬಿಜೆಪಿಯನ್ನು ಮಂಡಿಯೂರುವಂತೆ ಮಾಡಿದರೆ ಕೆಜೆಪಿಗೇನು ಲಾಭ ಎನ್ನುವ ಪ್ರಶ್ನೆ ಎದುರಾದರೆ ಉತ್ತರ ಸುಲಭ. ಯಡಿಯೂರಪ್ಪ ಇಲ್ಲದ ಬಿಜೆಪಿಯ ಬಲ ಎಷ್ಟೆಂದು ಹೈಕಮಾಂಡ್ ಗೆ ತೋರಿಸುವುದೇ ಸಿಂಗಲ್ ಪಾಯಿಂಟ್ ಅಜೆಂಡಾ ಯಡಿಯೂರಪ್ಪ ಅವರಿಗೆ, ಅದು ಸಾಕಾರಗೊಳಿಸಿದ ಸಂತೃಪ್ತಿ ಸಿಗಬಹುದು.
ಜೆಡಿಎಸ್ ವಿಚಾರಕ್ಕೆ ಬಂದರೆ ಅದು ಸ್ವಂತ ಶಕ್ತಿಯಿಂದ ಅಧಿಕಾರಕ್ಕೇರುವಂಥ ಸ್ಥಿತಿ ಕರ್ನಾಟಕದಲ್ಲಿ ಖಂಡಿತಕ್ಕೂ ಇಲ್ಲ. ರಾಮಕೃಷ್ಣ ಹೆಗಡೆ ನಿರ್ಗಮಿಸಿದ ಕ್ಷಣದಿಂದಲೇ ರಾಜ್ಯದಲ್ಲಿ ಜೆಡಿಎಸ್ ಬಲ ಕುಗ್ಗಿತು. ಈಗಲೂ ಅದಕ್ಕಿರುವ ಶಕ್ತಿಯೆಂದರೆ ಯಾವುದೇ ಸರಕಾರ ಬಂದರೂ ನಿರ್ಣಾಯಕ ಪಾತ್ರ ನಿರ್ವಹಿಸುವಂಥ ಅನಿವಾರ್ಯವಾದ ಶಕ್ತಿ. ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವಷ್ಟರಮಟ್ಟಿಗೆ ಅದು ಸಾಮರ್ಥ್ಯ ಹೊಂದಿದೆ.
ಹಾಗಾದರೆ ಯಾರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎನ್ನುವ ಪ್ರಶ್ನೆ ಧುತ್ತನೆ ಎದುರಾಗುತ್ತದೆ. ಅತಂತ್ರ ಸ್ಥಿತಿ ನಿರ್ಮಾಣವಾದರೆ ಅಚ್ಚರಿಪಡಬೇಕಾಗಿಲ್ಲ. ಈಗಿನ ಲೆಕ್ಕಾಚಾರಗಳನ್ನು ಗಮನಿಸಿದರೆ ಕನಿಷ್ಠ 20 ರಿಂದ 25 ಸ್ಥಾನಗಳನ್ನು ಗೆಲ್ಲುವ ಪಕ್ಷೇತರರು ರಾಜ್ಯದಲ್ಲಿ ಸರಕಾರ ರಚನೆಗೆ ನಿರ್ಣಾಯಕರಾಗುವ ಸಾಧ್ಯತೆಗಳೇ ಹೆಚ್ಚು. ಹೀಗಾದಾಗ ಪಕ್ಷೇತರರ ಶಕ್ತಿಕೇಂದ್ರ ಕರ್ನಾಟಕದಲ್ಲಿ  ಉಗಮವಾಗಲಿದೆ. ಇದು ರಾಜಕೀಯದ ಮಹತ್ತರ ಬೆಳವಣಿಗೆಯಾಗಲಿದೆ, ಕರ್ನಾಟಕವೇ ಇಂಥ ಶಕ್ತಿ ಕೇಂದ್ರದ ಮೂಲಬೇರಾಗಲಿದೆ.