Monthly Archives: January 2016

ರೋಹಿತ್ ಸಾವು: ಸಾಲು ಸಾಲು ಅಪರಾಧಿಗಳು!

-ಶಿವರಾಂ

ಪ್ರತಿಯೊಬ್ಬರೂ ಹುಟ್ಟೂ ಆಕಸ್ಮಿಕ. ಆದರೆ ‘ತನ್ನ ಹುಟ್ಟು ಮಾರಣಾಂತಿಕ ಅವಘಡ’ ಎಂದು ಬರೆದಿಟ್ಟು ನೇಣು ಹಾಕಿಕೊಂಡ ರೋಹಿತ್ ವೇಮುಲ ಮಾತ್ರ ಭಾರತದ ಪ್ರಜ್ಞೆಯನ್ನು ಬಹುವಾಗಿ ಬಹಳ ಕಾಲ ಕಾಡುತ್ತಾನೆ. ಜಾತಿಯ ಅಹಂ ಮತ್ತು ಅಸ್ಪೃಶ್ಯತೆಯನ್ನು ಪೋಷಿಸುವ ರಾಜಕಾರಣ ರೋಹಿತ್ ನನ್ನು ನೇಣಿಗೆ ಏರಿಸಿ, ತಮ್ಮದೇನೂ ತಪ್ಪೇ ಇಲ್ಲದಂತೆ ಬೀಗುತ್ತಿವೆ. ದೇಶದ ಕಾನೂನಿನಲ್ಲಿ ಮರಣ ದಂಡನೆಯಂತಹ ಘೋರ ಶಿಕ್ಷೆ ಇರಬಾರದು ಎಂದು ಪ್ರತಿಭಟಿಸಿದ್ದ ವೇಮುಲ ಈಗ ತಾನೇrohit-2 ನೇಣಿನ ಕುಣಿಕೆಗೆ ತಲೆ ಒಡ್ಡಿದ. ತನ್ನ ಸುತ್ತಲ ವ್ಯವಸ್ಥೆಯ ತಪ್ಪಿಗೆ, ತನಗೆ ತಾನೇ ಶಿಕ್ಷೆ ವಿಧಿಸಿಕೊಂಡ.
ಕಳೆದ ಡಿಸೆಂಬರ್ 16 ರಂದು ವಿಶ್ವವಿದ್ಯಾನಿಲಯ ರೋಹಿತ್ ಸೇರಿದಂತೆ ಐವರನ್ನು ಹಾಸ್ಟೆಲ್ನಿಂದ ಉಚ್ಚಾಟನೆ ಮಾಡಿತು. ಪ್ರತಿಭಾನ್ವಿತ ವಿದ್ಯಾರ್ಥಿಯಾದ ರೋಹಿತ್ ಮತ್ತು ಗೆಳೆಯರು ವಿದ್ಯಾರ್ಥಿ ವೇತನ ಪಡೆದು ಸಂಶೋಧನೆಗೆಂದು ವಿ.ವಿಗೆ ಬಂದವರು. ಅವರಿಗೆ ಬೇರೆ ಆದಾಯದ ಮೂಲಗಳಿರುವುದಿಲ್ಲ. ಅಂತಹವರಿಗೆ ಇರಲು ಜಾಗ ಕೊಡದೆ, ಹೊರಗೆ ನೂಕುವುದು ಘೋರ. ಅವರ ಮೇಲಿರುವ ಆರೋಪ (ಸುಳ್ಳು) ಗಳ ಕಾರಣಕ್ಕೆ ಪೊಲೀಸರು ಬಂಧಿಸಿದ್ದರೂ, ಆತನಿಗೆ ಅನ್ನ, ಆಶ್ರಯಕ್ಕೆ ತೊಂದರೆ ಮಾಡುತ್ತಿರಲಿಲ್ಲ. ಆದರೆ ಶಿಕ್ಷಣ ಪಡೆಯಲು ಸೇರಿಕೊಂಡಿದ್ದ ಸಂಸ್ಥೆಯೇ ಅವರನ್ನು ಹೊರಹಾಕಿತು. ನಿರ್ಧಾರವನ್ನು ಪ್ರತಿಭಟಿಸಿ ಉಪವಾಸ ಕುಂತರೂ, ಕುಲಪತಿಗೆ ಕರುಣೆ ಬಾರಲಿಲ್ಲ.
ವಿಶ್ವವಿದ್ಯಾನಿಲಯ ಈ ವಿದ್ಯಾರ್ಥಿಗಳ ಪ್ರವೇಶ ನಿರ್ಬಂಧಿಸಿದ್ದು – ಸಾಮಾಜಿಕವಾಗಿ ಇತರರೊಂದಿಗೆ ಬೆರೆಯಬಹುದಾದ ಎಲ್ಲಾ ಪ್ರದೇಶಗಳಿಗೆ. (ಹಾಸನ ಜಿಲ್ಲೆಯ ಸಿಗರನಹಳ್ಳಿ ಗ್ರಾಮದಲ್ಲಿ ದಲಿತರಿಗೆ ವಿಧಿಸಲಾಗಿರುವ ಸಾrohit-1ಮಾಜಿಕ ಬಹಿಷ್ಕಾರಕ್ಕೂ, ಈ ವಿ.ವಿ. ನಿರ್ಧಾರಕ್ಕೂ ಏನಾದರೂ ವ್ಯತ್ಯಾಸ ಇದೆಯೆ?) ಇತರರೊಂದಿಗೆ ಮಾತನಾಡಲು ಕನಿಷ್ಟ ಅವಕಾಶಗಳಿರುವ ತರಗತಿ ಹಾಗೂ ಲೈಬ್ರರಿಗೆ ಮಾತ್ರ ಪ್ರವೇಶ ಅವಕಾಶ ಇತ್ತು. ಮೇಲಾಗಿ, ವಿದ್ಯಾರ್ಥಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಇಂತಹ ನಿರ್ಧಾರಕ್ಕೆ ಇದ್ದ ಮೂಲ ಕಾರಣವಾದರೂ ಏನು – ತಮ್ಮನ್ನು ಗೂಂಡಾಗಳು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದ ಎಬಿವಿಪಿ ಹುಡುಗರ ಮೇಲೆ ಹಲ್ಲೆ ಮಾಡಿದರು ಎಂಬ ಆರೋಪ. ವಿಚಿತ್ರ ಎಂದರೆ, ಅಂತಹದೊಂದು ‘ಹಲ್ಲೆ’ ಗೆ ಒಳಗಾದ ವಿದ್ಯಾರ್ಥಿಯ ಮೇಲೆ ಯಾವುದೇ ಗಾಯದ ಕುರುಹುಗಳಿಲ್ಲ ಎಂದು ಪರೀಕ್ಷಿಸಿದ ವೈದ್ಯರು ವರದಿ ನೀಡಿದ್ದರು. ಅದೇ ವರದಿ ಆಧರಿಸಿ ವಿ.ವಿ ನೇಮಿಸಿದ್ದ ಮೊದಲ ಸಮಿತಿ ತನ್ನ ನಿರ್ಧಾರ ತಿಳಿಸಿತ್ತು.

 
ಆದರೆ, ತನಗೆ ಒಪ್ಪಿತವಾಗದ ವರದಿಯನ್ನು ವಿ.ವಿ ತಿರಸ್ಕರಿಸಿ ಮತ್ತೊಂದು ವ್ಯತಿರಿಕ್ತ ವರದಿಗೆಂದೇ ಇನ್ನೊಮ್ಮೆ ಇನ್ನೊಂದು ಸಮಿತಿ ನೇಮಿಸಿ ತನಿಖೆಗೆ ಆದೇಶಿಸಿತು. ಕುಲಪತಿ ಅಪ್ಪಾರಾವ್ ಹೇಳುತ್ತಾರೆ, ಮೊದಲಿನದ್ದು ಮಧ್ಯಂತರ ವರದಿಯಂತೆ, ಎರಡನೆಯದು ಅಂತಿಮ ಅಂತೆ. ಮೊದಲನೆಯ ವರದಿ ಮಧ್ಯಂತರ ಆಗಿದ್ದರೆ, ಆರೋಪ ಹೊತ್ತಿರುವ ಹುಡುಗರ ಮೇಲೆ ಯಾವುದೇ ಶಿಕ್ಷೆಯ ಕ್ರಮಗಳು ಬೇಡ ಎಂದೇಕೆ ಶಿಫಾರಸ್ಸು ಮಾಡುತ್ತಿದ್ದರು? ಹೀಗೆ ದಿಕ್ಕುತಪ್ಪಿಸುವ ಹೇಳಿಕೆಗಳನ್ನು ನೀಡಿ, ತಮ್ಮ ತಪ್ಪುಗಳನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ ಕುಲಪತಿ. ಸನ್ನಿವೇಶ ಎಷ್ಟು ಕ್ರೂರವಾಗಿದೆ ಎಂದರೆ, ಈಗಲೂ ಕುಲಪತಿ ಹುಡುಗರ ಜೊತೆ ಮಾತುಕತೆಗೆ ಮುಂದಾಗಿಲ್ಲ, ಮೃತನ ಕುಟುಂಬದವರ ಜೊತೆ ಸಾಂತ್ವನದ ಮಾತುಗಳನ್ನಾಡಿಲ್ಲ. ಹುಡುಗರ ಉಪವಾಸ, ಪ್ರತಿಭಟನೆಗಳಿಗೆ ಬೆಲೆ ಇಲ್ಲವೆ?

 
ಭಾರತದ ಪ್ರತಿಷ್ಟಿತ ವೈದ್ಯಕೀಯ ಸಂಸ್ಥೆಯಲ್ಲಿ ದಲಿತ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ನಂತರ ಸುಖದೇವ್ ತೋರಟ್ ಅಧ್ಯಯನ ನಡೆಸಿ (2007ರಲ್ಲಿ) ವರದಿ ಸಲ್ಲಿಸಿದ್ದರು. ಅವರ ಶಿಫಾರಸ್ಸಿನ ಪ್ರಮುಖ ಅಂಶಗಳು, ಶಿಕ್ಷಣ ಸಂಸ್ಥೆಗಳಲ್ಲಿ ಅಸ್ಪೃಶ್ಯತೆ, ಶೋಷಣೆ ತಡೆಯಲು ಸೂಕ್ತ ಕಾನೂನಿನ ಅಗತ್ಯ ಇದೆ, ಸದ್ಯ ಚಾಲ್ತಿಯಲ್ಲಿರುವ ಎಸ್ಸಿ-ಎrohit-3ಸ್ಟಿ ಕಾಯ್ದೆ ಈ ವಿಚಾರದಲ್ಲಿ ಪರಿಣಾಮಕಾರಿಯಾಗಿಲ್ಲ ಎನ್ನುವುದು ಅವರ ಅನಿಸಿಕೆ. ಹಾಗೇ ಶಿಕ್ಷಣ ಸಂಸ್ಥೆಯ ಎಲ್ಲಾ ಆಯಕಟ್ಟಿನ ಸ್ಥಾನಗಳಲ್ಲಿ ನಿಮ್ನ ವರ್ಗದ ಪ್ರತಿನಿಧಿಗಳಿಗೆ ಸೂಕ್ತ ಅವಕಾಶ ಬೇಕು. ಜೊತೆಗೆ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಒಳಗೊಳ್ಳುವಂತೆ ಸಿವಿಕ್ ಎಜುಕೇಶನ್ ನೀಡುವುದು ಅಗತ್ಯ. ಜಾತಿ, ವರ್ಣ, ಲಿಂಗ, ವರ್ಗ ಆಧಾರಿತ ತಾರತಮ್ಯಗಳ ಬಗ್ಗೆ ಸೂಕ್ತ ತಿಳವಳಿಕೆ ನೀಡುವುದರಿಂದ ವಿದ್ಯಾರ್ಥಿ ಸಮೂಹ ಸಮಾನತೆಯನ್ನು ಬಯಸುತ್ತಾ ಎಲ್ಲರನ್ನೂ ಒಂದೇ ರೀತಿ ನೋಡವ ಮನೋಭಾವ ಬೆಳೆಸಲು ಈ ಕ್ರಮ ಅಗತ್ಯವಾಗಿತ್ತು.

 

ಆದರೆ, ಈ ಯಾವ ಶಿಫಾರಸ್ಸುಗಳ ಬಗೆಯೂ ಸರಕಾರಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿಲ್ಲ. ಆ ಕಾರಣ ಅಂಬೇಡ್ಕರ್ ಅಥವಾ ಪೆರಿಯಾರ್ ಹೆಸರಿಟ್ಟುಕೊಂಡು ಚಟುವಟಿಕೆ ನಡೆಸುವವರನ್ನೆಲ್ಲಾ ದೇಶದ್ರೋಹಿಗಳೆಂದು ಕೆಲವರು ದೂರುತ್ತಾರೆ, ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಈ ಹುಡುಗರ ಮೇಲೆ ಕ್ರಮ ಜರುಗಿಸಲೆಂದು ಪದೇ ಪದೇ ಪತ್ರ ಬರೆದೂ, ತನ್ನದೇನೂ ಪಾತ್ರವಿಲ್ಲ ಎನ್ನುತ್ತಾರೆ. ಆದರೆ ರೋಹಿತ್ ಮಾತ್ರ ಯಾರನ್ನೂ ದೂಷಿಸಬೇಡಿ ಎಂದು ಸಾವಿಗೆ ಶರಣಾಗಿದ್ದಾನೆ. ಅವನ ಸಾವಿಗೆ ಯಾರನ್ನೇ ಆಗಲಿ ದೂಷಿಸಿ, ಇಂದಿನ ಕಾನೂನಿನಡಿ ‘ಆತ್ಮಹತ್ಯೆಗೆ ಪ್ರಚೋದನೆ’ ಎಂದು ತೀರ್ಪು ಪಡೆಯುವುದು ದೀರ್ಘದ ಪ್ರಕ್ರಿಯೆ ಇರಬಹದುದು. ಆದರೆ ಒಂದಂತೂ ಸತ್ಯ, ಆತನನ್ನು ಸಾವಿಗೆ ದೂಡಿದ್ದು, ಈ ದೇಶ, ವ್ಯವಸ್ಥೆ, ಶಿಕ್ಷಣ, ಮಧ್ಯಮ ವರ್ಗದ ಮೀಸಲಾತಿ-ವಿರೋಧಿ, ದಲಿತ-ವಿರೋಧಿ ಆಲೋಚನೆ ಹಾಗೂ ಎಲ್ಲಡೆ ಹೇರಳವಾಗಿ ಹಬ್ಬುತ್ತಿರುವ ‘ಮೇಲ್ವರ್ಗ ಕೇಂದ್ರಿತ ರಾಜಕಾರಣ’.

ಸರ್ಕಾರೇತರ ವಲಯಗಳಲ್ಲಿ ಸಾಮಾಜಿಕ ಪ್ರಾತಿನಿಧ್ಯ


– ಶ್ರೀಧರ್ ಪ್ರಭು


 

ಸುಮಾರು ವರ್ಷಗಳಿಂದ ಜನಪರ ಕಾಳಜಿಯ ಪತ್ರಕರ್ತ ಪಿ. ಸಾಯಿನಾಥ್ ತಮ್ಮ ಲೇಖನಗಳಲ್ಲಿ ನಮ್ಮ ದೇಶದ ಸರಕಾರಗಳು ಬೃಹತ್ ಉದ್ದಿಮೆಗಳಿಗೆ ನೀಡಿರುವ ಸಬ್ಸಿಡಿ ಹಣದ ಬಗ್ಗೆ ಬರೆಯುತ್ತಿದ್ದಾರೆ. ಜುಲೈ ೨೮, ೨೦೧೪ ರಲ್ಲಿ ಔಟ್ಲುಕ್ ಪತ್ರಿಕೆಗೆ ಬರೆದ ‘How Much Can We Forgo To India Inc?’ ಎಂಬ ತಮ್ಮ ಲೇಖನದಲ್ಲಿ ಒಂದು ಆಸಕ್ತಿಕರ ವಿಚಾರವನ್ನು ಸಾಯಿನಾಥ್ ಬರೆದರು:

ನಮ್ಮ ದೇಶದ ಉದ್ಯೋಗಪತಿಗಳಿಗೆ ಸರಕಾರ ಕೊಟ್ಟ ಸಬ್ಸಿಡಿ ಹಣ ಸರಾಸರಿ ಪ್ರತಿ ಒಂದು ಗಂಟೆಗೆ ಏಳು ಕೋಟಿ ರೂಪಾಯಿಗಳು, ಪ್ರತಿ ದಿನಕ್ಕೆ ೧೬೮ ರೂಪಾಯಿಗಳು ಹಾಗೆ ಒಟ್ಟಾರೆ ೨೦೧೩-೨೦೧೪ ರ ಅರ್ಥಿಕ ವರ್ಷದಲ್ಲಿ ನಮ್ಮ ದೇಶದ ಸರಕಾರ ಬಂಡವಾಳಶಾಹಿಗಳಿಗೆ ಒಟ್ಟಾರೆಯಾಗಿ ಕೊಟ್ಟ ನೇರ ಸಬ್ಸಿಡಿ ಮೊತ್ತ ರೂ.೫.೩೨ ಲಕ್ಷ ಕೋಟಿಗಳು (ರೂ. ೫,೩೨,೦೦೦,೦೦೦೦೦೦೦). ಈ ಮೊತ್ತವು ೨೦೧೦-೨೦೧೧ ರ ಅರ್ಥಿಕ ವರ್ಷದಲ್ಲಿ ರೂ. ೩.೭೩ ಲಕ್ಷ ಕೋಟಿ ರೂಪಾಯಿ (ರೂ. ೫,೩೨,೦೦೦,೦೦೦೦೦೦೦) ಆಗಿದ್ದಿತು. ಯು ಪಿ ಎ ಸರಕಾರ ಆಡಳಿತದಲ್ಲಿದ್ದ 2005-06 ರಿಂದ 2013-14 ವರೆಗಿನ ಅರ್ಥಿಕ ವರ್ಷಗಳಲ್ಲಿ ಒಟ್ಟಾರೆಯಾಗಿ ೩೬.೫ ಲಕ್ಷ ಕೋಟಿ ಗಳಷ್ಟು ಔದ್ಯಮಿಕ ಸಾಲ ಮನ್ನಾ ಮಾಡಲಾಗಿದೆ.

ನಮ್ಮ ದೇಶದಲ್ಲಿ ಔದ್ಯೋಗಿಕ ಪ್ರಗತಿ, ನಿರುದ್ಯೋಗ ನಿವಾರಣೆ ಇತ್ಯಾದಿ ಸಾಧ್ಯವಾಗಿದ್ದರೆ outlookindia-how-much-can-we-forgo-to-india-inc-psainathಉದ್ದಿಮೆಗಳಿಗೆ ಸಬ್ಸಿಡಿ ಕೊಡುವುದನ್ನು ಸಮರ್ಥಸಿಕೊಳ್ಳಲು ಸಾಧ್ಯವಿದೆ. ಆದರೆ ಇವ್ಯಾವೂ ಸಾಧ್ಯವಾಗಿಲ್ಲ. ೨೦೧೧-೧೪ ವರೆಗಿನ ಮೂರು ಅರ್ಥಿಕ ವರ್ಷಗಳಲ್ಲಿ ಸುಮಾರು ೧.೬೭ ಲಕ್ಷ ಕೋಟಿಗಳಷ್ಟು ಹಣವನ್ನು ಬಂಗಾರ ಬೆಳ್ಳಿಗಳ ಮೇಲಿನ ಕಸ್ಟಮ್ ಸುಂಕ ಮನ್ನಾ ರೂಪದಲ್ಲಿ ಕೊಡಲಾಗಿದೆ. ಬೆಳ್ಳಿ ಬಂಗಾರ ಕೊಳ್ಳಲು ಸಬ್ಸಿಡಿ ಕೊಟ್ಟರೆ ಉದ್ಯೋಗಗಳು ಹುಟ್ಟಿಕೊಳ್ಳುವುದಿಲ್ಲ. ಇದರಿಂದ ಬಂಡವಾಳಶಾಹಿಗಳ ಹೊಟ್ಟೆ ಮಾತ್ರ ತುಂಬುತ್ತದೆ.

ತಳ ಸಮುದಾಯಗಳ ಜಮೀನು ಮತ್ತು ಬದುಕು ಕಿತ್ತುಕೊಂಡು ಜನರು ದುಡಿದ ಹಣವನ್ನು ಅವ್ಯಾಹತವಾಗಿ ಭಿಕ್ಷೆರೂಪದಲ್ಲಿ ಸ್ವೀಕರಿಸುತ್ತಿರುವ ಕಾರ್ಪೊರೇಟ್ ವರ್ಗಕ್ಕೆ ಜನರಿಗೆ ಈವರೆಗೆ ಯಾವುದೇ ಪಾಪ ಪ್ರಜ್ಞೆ ಕಾಡಿಲ್ಲ. ಕಾರ್ಪೊರೇಟ್ ವಲಯಗಳಲ್ಲಿ ತಳ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಈವರೆಗೆ ಯಾವ ಸರಕಾರಗಳಿಗೂ ಎನ್ನಿಸಿಲ್ಲ. ಜನರ ಹಣವನ್ನು ಉದ್ದಿಮೆದಾರರಿಗೆ ಸಬ್ಸಿಡಿ ರೂಪದಲ್ಲಿ ಕೊಡುವಾಗ ಯಾವ ಹಂತದಲ್ಲಾದರೂ ಸರಿ ದುಡಿಯುವ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಯಾವ ಸರಕಾರಗಳಿಗೂ ಎನ್ನಿಸಲಿಲ್ಲ.

ಒಂದು ಉದ್ದಿಮೆಯ ಒಡೆತನ ಹೇಗೆ ನಿರ್ಧರಿತವಾಗುತ್ತದೆ? ಆ ಉದ್ದಿಮೆಯಲ್ಲಿ ಯಾರ ಹಣ ಹೆಚ್ಚು ಹೂಡಿಕೆಯಾಗಿದೆಯೋ ಅವರೇ ಅದರ ಮಾಲೀಕರು. ಯಾವ ರೀತಿಯಲ್ಲಿ ನೋಡಿದರೂ ನಮ್ಮ ಉದ್ದಿಮೆಗಳಲ್ಲಿ ಸರಕಾರದ ಮತ್ತು ಸರಕಾರಿ ವಲಯದ ಬ್ಯಾಂಕುಗಳ ಹಣವೇ ಹೂಡಿಕೆಯಾಗಿದೆ. ನಮ್ಮ ಮನೆಗಳಿಗೆ ಹಾಕಿಸಿಕೊಳ್ಳುವ ಸೌರ ವಿದ್ಯುತ್ ಯಂತ್ರಗಳನ್ನು ಅಳವಡಿಸಲು Industrial_Mangaloreಹತ್ತು ಸಾವಿರ ಸಾಲ ಕೊಡುವಾಗ ಕೂಡ ಈ ಬ್ಯಾಂಕುಗಳು ನೂರಾರು ಪುಟಗಳಷ್ಟು ಕಾಗದದ ಮೇಲೆ ಏನೇನೂ ಬರೆಸಿದುಕೊಂಡು ನಮ್ಮ ಸಹಿ ಹಾಕಿಸುತ್ತವೆ. ಕಣ್ಣ ಮುಚ್ಚಿ ಸಹಿ ಹಾಕುವುದು ಬಿಟ್ಟರೆ ನಮ್ಮ ಬಳಿ ಯಾವುದೇ ಅನ್ಯ ಮಾರ್ಗವಿರುವುದಿಲ್ಲ. ಉದ್ದಿಮೆದಾರರಿಗೆ ಇಷ್ಟೊಂದು ಷರತ್ತು ಕರಾರುಗಳನ್ನು ವಿಧಿಸುವ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಈ ಉದ್ದಿಮೆಗಳಲ್ಲಿ ತಳಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸುವ ಒಂದೇ ಒಂದು ಕರಾರು ವಿಧಿಸಿಲ್ಲ. ಪ್ರತಿ ಸಾಲ ಪತ್ರದಲ್ಲಿ ಒಂದೇ ಒಂದು ಇಂಥಹ ಕರಾರು ವಿಧಿಸಿದರೆ ಯಾವ ಸಾಲಗಾರ ಉದ್ದಿಮೆದಾರ ಅದನ್ನು ನಿರಾಕರಿಸಲು ಸಾಧ್ಯ? ಅದು ಹೋಗಲಿ ಪ್ರಾತಿನಿಧ್ಯ ಕಲ್ಪಿಸಿದರೆ ಬಡ್ಡಿ ದರದಲ್ಲಿ ವಿನಾಯತಿ ನೀಡುವ ಪ್ರಸ್ತಾವನೆ ಇದ್ದರೆ ಯಾವ ಉದ್ದಿಮೆದಾರ ಇಂದು ಪ್ರಾತಿನಿಧ್ಯ ಕಲ್ಪಿಸುವುದಿಲ್ಲ. ಒಬ್ಬ ಅಥವಾ ಕೆಲವೇ ದಲಿತ-ಹಿಂದುಳಿದ ಉದ್ದಿಮೆದಾರರಿಗೆ ನೇರ ಸಬ್ಸಿಡಿ ಕೊಡುವ ಬದಲು ಒಬ್ಬ ಉದ್ದಿಮೆದಾರ ಎಷ್ಟು ದಲಿತ- ಹಿಂದುಳಿದ ವರ್ಗದ ಕಾರ್ಮಿಕರನ್ನು ನೇಮಿಸಿಕೊಂಡಿದ್ದಾನೆ/ಳೆ ಎಂಬುದರ ಮೇಲೆ ಸಬ್ಸಿಡಿ ನಿರ್ಧಾರಿತವಾದರೆ ಹೆಚ್ಚು ಸೂಕ್ತ.

ಒಟ್ಟಿನಲ್ಲಿ ಸರಕಾರ ಮನಸ್ಸು ಮಾಡಿದರೆ ಯಾವುದೇ ಕಾನೂನು ಸರ್ಜರಿ ಅಗತ್ಯವಿಲ್ಲದೇ ಸೂಕ್ತ ಪ್ರಾತಿನಿಧ್ಯ ಸುಲಭ ಸಾಧ್ಯ. ಇದ್ದ ಕಾನೂನಿಗೆ ಸಣ್ಣ ಪುಟ್ಟ ಬದಲಾವಣೆ ಮಾಡಿದರೆ ಹೆಚ್ಚಿನದನ್ನು ಕೆಲವೇ ವರ್ಷಗಳಲ್ಲಿ ಸಾಧಿಸಬಹುದು. ಪ್ರಾತಿನಿಧಿಕವಾಗಿ ಕೆಲವು ಅಂಶಗಳನ್ನು ಇಲ್ಲಿ ಚರ್ಚಿಸೋಣ:

  • ಒಂದು ಕಂಪನಿ ಮತ್ತು ಒಂದು ಸಹಕಾರ ಸಂಘಕ್ಕೆ ಅತ್ಯಂತ ಹತ್ತಿರದ ‘ಸಂಬಂದಿ’ ಎಂದು ಹೇಳಬಹುದು. ಹಾಗಾಗಿ ಕಾರ್ಪೊರೇಟ್ ವಲಯದ ಪ್ರಾತಿನಿಧ್ಯದ ಸೂತ್ರವನ್ನು ಹೊಸದಾಗಿ ಹುಡುಕಿಕೊಳ್ಳುವ ಅಗತ್ಯವಿಲ್ಲ. ಸಹಕಾರ ಸಂಘಗಳಲ್ಲಿ ಕಲ್ಪಿಸಿದ ಮಹಿಳಾ ಮತ್ತು ದಲಿತ ಪ್ರಾತಿನಿಧ್ಯದ ಸೂತ್ರವನ್ನೇ ಕಂಪನಿಗಳಿಗೆ ವಿಸ್ತರಿಸಬಹುದು. ಸಹಕಾರ ಸಂಘಗಳಿಗೆ ಸಂಬಂದಿಸಿದ ಹೊಸ ಕಾನೂನನ್ನು ತಂದ ಸಂದರ್ಭದಲ್ಲಿ ಸಂವಿಧಾನದಲ್ಲಿ ಸೂಕ್ತ ಪರಿಷ್ಕರಣೆ ಮಾಡಲಾಯಿತು. ಇದೇ ಮಾದರಿಯನ್ನು ಕಂಪನಿವಲಯಕ್ಕೆ ವಿಸ್ತರಿಸುವುದು ಸುಲಭ ಸಾಧ್ಯ. ಹಾಗೆ ನೋಡಿದರೆ ಕಂಪನಿಗಳಿಗೆ ಹೋಲಿಸಿದರೆ ಸಾಮಾಜಿಕ ಮೇಲ್ವರ್ಗಗಳ ಹಿಡಿತದಲ್ಲಿರುವ ಸಹಕಾರ ಸಂಘಗಳಲ್ಲಿ ಪ್ರಾತಿನಿಧ್ಯ ಕಲ್ಪಿಸುವುದೇ ಅತ್ಯಂತ ಕಷ್ಟಕರವಾಗಿತ್ತು. ಇದು ಸಾಧ್ಯವಾದ ಮೇಲೆ ಕಂಪನಿಗಳಲ್ಲಿ ಪ್ರಾತಿನಿಧ್ಯ ಸುಲಬವಾಗಿ ಸಾಧಿಸಬಹುದು.
  • ೨೦೧೩ ರಲ್ಲಿ ಬಂದ ಹೊಸ ಕಂಪನಿ ಕಾಯಿದೆಯ ಪ್ರಕಾರ ಐನೂರು ಕೋಟಿಗಳಷ್ಟು ನಿವ್ವಳ ಸಂಪತ್ತಿರುವ (net worth) ಅಥವಾ ಒಂದು ಸಾವಿರ ಕೋಟಿಗಳಷ್ಟು ವಾರ್ಷಿಕ ವಹಿವಾಟಿರುವ (turnover) ಒಂದು ಕಂಪನಿ ತನ್ನ ಕಳೆದ ಮೂರು ವರ್ಷಗಳ ನಿವ್ವಳ ಆದಾಯದ ೨% ಮೊತ್ತವನ್ನು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಹೆಸರಿನಲ್ಲಿ ಖರ್ಚು ಮಾಡಲೇಬೇಕು. ಇದೇ ಕಾನೂನಿನಡಿಯಲ್ಲಿ ತಮ್ಮ ಕಂಪನಿಗಳಲ್ಲಿ ಎಲ್ಲ ಹಂತದಲ್ಲೂ, ಅದರಲ್ಲೂ ಉನ್ನತ ಹುದ್ದೆಗಳಲ್ಲಿ ಸೂಕ್ತ ಸಾಮಾಜಿಕ ಪ್ರಾತಿನಿಧ್ಯ ಕಲ್ಪಿಸಿದ ಕಂಪನಿಗಳಿಗೆ ಸಾಮಾಜಿಕ ಜವಾಬ್ದಾರಿಯಿಂದ ಸೂಕ್ತ ವಿನಾಯತಿ ಕಲ್ಪಿಸಿದರೆ ಅನೇಕ ಕಂಪನಿಗಳು ತಾವೇ ಮುಂದೆ ಬಂದು ಸೂಕ್ತ ಪ್ರಾತಿನಿಧ್ಯ ಕಲ್ಪಿಸಬಹುದು.
  • ನಮ್ಮ ದೇಶದ ಎಲ್ಲಾ ಬ್ಯಾಂಕುಗಳು ನಡೆಯುವದು ರಿಸರ್ವ್ ಬ್ಯಾಂಕ್ ನೀಡುವ ಪರವಾನಗಿಯ ಮೇಲೆ. ಹೀಗಾಗಿ ಬ್ಯಾಂಕುಗಳನ್ನು ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಬ್ಯಾಂಕುಗಳು ಎಂದು ವಿಂಗಡಣೆ ಮಾಡುವುದು ಅಸಮಂಜಸ. ೧೬-೧೨-೨೦೧೫ ರಲ್ಲಿ ಬಂದ ರಿಸರ್ವ್ ಬ್ಯಾಂಕ್ ಮತ್ತು ಜಯಂತಿಲಾಲ್ ಮಿಸ್ತ್ರಿ ಪ್ರಕರಣದಲ್ಲಿ ಖಾಸಗಿ ಬ್ಯಾಂಕುಗಳೂ ಸೇರಿದಂತೆ ಎಲ್ಲ ಬ್ಯಾಂಕುಗಳೂ ಸಾರ್ವಜನಿಕ ಪ್ರಾಧಿಕಾರಗಳಾಗಿದ್ದು (Public Authority) ಮಾಹಿತಿ ಹಕ್ಕು ಕಾಯಿದೆಯಡಿ ಸಾರ್ವಜನಿಕ ಹಿತಾಸಕ್ತಿ ಇರುವ ಯಾವುದೇ ಮಾಹಿತಿಯನ್ನು ಕೊಡಲೇಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಹೀಗಾಗಿ ಪ್ರಾತಿನಿಧ್ಯದ ಪ್ರಶ್ನೆ ಬಂದಾಗ ಎಲ್ಲ ಬ್ಯಾಂಕುಗಳನ್ನೂ ಸಮಾನವಾಗಿ ನೋಡಬೇಕಿದೆ.
  • ವಿದ್ಯುತ್ ಉತ್ಪಾದನೆ, ನೀರಾವರಿ, ವಿಮಾನ ನಿಲ್ದಾಣ ನಿರ್ಮಾಣ, ಹೆದ್ದಾರಿ ನಿರ್ಮಾಣ ಮತ್ತಿತರ ಮೂಲಭೂತ ಸೌಕರ್ಯ ಯೋಜನೆಗಳನ್ನು ಸಾರ್ವಜನಿಕ ಮತ್ತು ಖಾಸಗಿ ಸಹಯೋಗದ (Private Public Partnership – PPP) ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ನಿಜಕ್ಕೂ ನೋಡಿದರೆ ಖಾಸಗಿ ಸಹಭಾಗಿತ್ವ ಇಲ್ಲಿ ನಗಣ್ಯ. ಯೋಜನೆಗಳಿಗೆ ಬೇಕಾದ ಭೂಮಿಯನ್ನು ಸರಕಾರವೇ ಕೊಡಮಾಡುತ್ತದೆ. ಈ ಯೋಜನೆಗಳಲ್ಲಿ ಭೂಮಿಯೇ ೨೦%-೩೦% ಮೂಲ ಬಂಡವಾಳವೆಂದು ತೋರಿಸಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕು ಮತ್ತು ಹಣಕಾಸು ಸಂಸ್ಥೆ ಗಳಿಂದ ೭೦%-೮೦% ರಷ್ಟು ಸಾಲ ಪಡೆಯಲಾಗುತ್ತದೆ. ಅದರೊಂದಿಗೆ ಈ ಯೋಜನೆಗಳಿಗೆ ಕಡಿಮೆ ಬಡ್ಡಿ ದರದ ಸಾಲ, ತೆರಿಗೆ ವಿನಾಯತಿ ರೂಪದಲ್ಲಿ ಪರೋಕ್ಷ ಮತ್ತು ಪ್ರತ್ಯಕ್ಷ ರೂಪದಲ್ಲಿ ಸಾಕಷ್ಟು ಹಣಕಾಸಿನ ನೆರವು ನೀಡುತ್ತದೆ. ಅನೇಕ ಬಾರಿ ಈ ಯೋಜನೆಗಳಿಗೆ ಸರಕಾರವೇ ಮುಖ್ಯ ಗ್ರಾಹಕನಾಗಿ ಹೆಚ್ಚಿನ ಬೆಂಬಲ ಬೆಲೆ ಕೊಟ್ಟು ಸಿದ್ಧ ವಸ್ತುಗಳನ್ನು ಖರೀದಿ ಮಾಡುತ್ತದೆ. ಉದಾಹರಣೆಗೆ ನವೀಕೃತ ಮೂಲಗಳ ವಿದ್ಯುತ್ ಉತ್ಪಾದನೆ ಯೋಜನೆಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್ತನ್ನು ಸರಕಾರವೇ ತನ್ನ ಒಡೆತನದ ಕಂಪನಿಗಳ ಮೂಲಕ ಹೆಚ್ಚಿನ ಬೆಲೆಗೆ ಖರೀದಿಸುತ್ತದೆ, ಪವನ ವಿದ್ಯುತ್ ಮತ್ತು ಸೌರ ಶಕ್ತಿ ಯೋಜನೆಗಳಿಂದ ಉತ್ಪಾದನೆಯಾಗುವ ವಿದ್ಯುತ್ತಿಗೆ ಸಾಮಾನ್ಯವಾಗಿ ೩೦-೩೦% ಹೆಚ್ಚಿನ ದರ ನಿಗದಿಯಾಗಿರುತ್ತದೆ. ಇದನ್ನು ಸರಕಾರವೇ ತನ್ನ ಕಂಪನಿಗಳ ಮುಖೇನ ಖರೀದಿಸಿ ಯೋಜನೆಗಳಿಗೆ ೩೦ ವರ್ಷಗಳವರೆಗೆ ದರ ಖಾತರಿ ನೀಡುತ್ತದೆ. ಸರಕಾರಿ ಒಡೆತನದ ಸಂಸ್ಥೆಗಳೇ ಈ ಯೋಜನೆಗಳಿಗೆ ಬೇಕಾಗುವ ನಾನಾ ಪರವಾನಗಿಗಳನ್ನು ತೆಗೆಸಿಕೊಡುತ್ತವೆ. ಕಂದಾಯ ಇಲಾಖೆಯ ಸರಕಾರಿ ಭೂಮಿ ಅಥವಾ ಅರಣ್ಯ ಭೂಮಿಯನ್ನು ಉಪಯೋಗಿಸಿಕೊಂಡು ಇಷ್ಟೆಲ್ಲಾ ಸವಲತ್ತುಗಳನ್ನೂ ಪಡೆಯುವ ಈ ಸಂಸ್ಥೆಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ನಿರೂಪಿಸಿ ಉದ್ಯೋಗ ಮತ್ತು ಒಡೆತನಗಳಲ್ಲಿ ತಳ ಸಮುದಾಯಗಳು ಮತ್ತು ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸಿದ ಉದಾಹರಣೆಗಳೇ ಇಲ್ಲ.
  • ಸರಕಾರಿ ಮಾನ್ಯತೆ ಮತ್ತು ಅನುದಾನ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾತಿನಿಧ್ಯವನ್ನು ಜಾರಿಗೊಳಿಸಬೇಕಾದ ಅಗತ್ಯವಿದೆ. ಸಮಾನ ಶಿಕ್ಷಣವನ್ನು ಜಾರಿಗೊಳಿಸಿದ ಸರಕಾರ (ಕನಿಷ್ಟ ಕಾಗದದಲ್ಲಾದರೂ ಸರಿ) ಪ್ರಾತಿನಿಧ್ಯವನ್ನು ಜಾರಿಗೊಳಿಸದಿರುವುದಕ್ಕೆ ಯಾವ ಸಕಾರಣಗಳೂ ಇಲ್ಲ. ಪ್ರಾಥಮಿಕ ಶಿಕ್ಷಣ ಒಂದು ಮೂಲಭೂತ ಹಕ್ಕು ಎಂದಾದರೆ ಅದನ್ನು ಒದಗಿಸುವ ಜವಾಬ್ದಾರಿಯನ್ನು ಹೊತ್ತಿರುವ ವಿದ್ಯಾ ಸಂಸ್ಥೆಗಳು ಸರಕಾರದ ಕೆಲಸವನ್ನೇ ಮಾಡುತ್ತಿವೆ. ಅದಕ್ಕಾಗಿ ಸರಕಾರ ಅನುದಾನವನ್ನೂ ಕೊಡುತ್ತಿದೆ ಎಂದಾದರೆ ಅವು ಸರಕಾರದ ನಿಯಂತ್ರಣಕ್ಕೆ ಒಳಪಡಲೇಬೇಕಲ್ಲವೇ?
  • ನಮ್ಮ ದೇಶದ ಮೂರು ಔದ್ಯೋಗಿಕ ಸಂಘಟನೆಗಳಾದ ಸಿಐಐ, ಫಿಕ್ಕಿ ಮತ್ತು ಅಸ್ಹೊಚೆಮ್ ಗಳು ಪ್ರಾತಿನಿಧ್ಯದ ವಿಚಾರದಲ್ಲಿ ಸರಕಾರದ ಹಸ್ತಕ್ಷೇಪವನ್ನು ವಿರೋಧಿಸುತ್ತಲೇ ತಾವೇ ಸ್ವಯಂ ಪ್ರೇರಿತವಾಗಿ ದಲಿತ ಪ್ರಾತಿನಿಧ್ಯ ಕೊಡುವುದಾಗಿ ಹೇಳಿಕೊಂಡು ಮುಂದೆ ಬಂದಿವೆ. ಪ್ರಾತಿನಿಧ್ಯವನ್ನು ಕಲ್ಪಿಸಲು ತಾವೇ ಸ್ವಯಂ ಪ್ರೇರಿತ ನಿಯಮಗಳನ್ನು (Voluntary Code of Conduct) ಮಾಡಿಕೊಂಡಿರುವುದಾಗಿ ಘೋಷಿಸಿ ೨೦೧೪ ಡಿಸೆಂಬರನಲ್ಲಿ ಅವುಗಳೇ ಕೆಲವು ಅಂಕಿ ಅಂಶಗಳ ಪ್ರಕಟಿಸಿ ತಾವು ಕೈಗೊಂಡ ಕ್ರಮಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿವೆ. ಅವರೇ ಘೋಶಿಸಿಕೊಂಡಂತೆ ದೇಶದ ಮೂರೂ ಬೃಹತ್ ಸಂಘಟನೆಗಳು ಸೇರಿ ದೇಶದ ಎಂಟು ಜಿಲ್ಲೆಗಳನ್ನು ದತ್ತು ಪಡೆದಿವೆ. ೬೭೬ ಜಿಲ್ಲೆಗಳಿರುವ ಈ ಬೃಹತ್ ದೇಶದಲ್ಲಿ ಏಳೆಂಟು ಜಿಲ್ಲೆಗಳಲ್ಲಿ ಕೆಲಸ ಮಾಡಿದರೆ ಸಾಕೇ? ಇನ್ನು ಉದ್ದಿಮೆಗಳಿಗೆ ಸ್ವಯಂ ನಿಯಂತ್ರಣ ಸಾಧ್ಯವಾಗಿರುತ್ತಿದ್ದರೆ ನಮ್ಮ ದೇಶದಲ್ಲಿ ಕಾನೂನು ಕಟ್ಟಳೆಗಳು ಬೇಕಿತ್ತೇ? ಉದ್ದಿಮೆಗಳು ಸ್ವಯಂ ಪ್ರೇರಣೆಯಿಂದ ಸರಿಯಾದ ಸಮಯದಲ್ಲಿ ಕಾನೂನು ರೀತ್ಯಾ ತೆರಿಗೆ, ಸಾಲಪಾವತಿ ಮತ್ತು ವಿದ್ಯುತ್ ದರ ಕಟ್ಟಿದ್ದರೆ ನಮ್ಮ ದೇಶ ಇಂದು ಅಮೇರಿಕಾವನ್ನೂ ಮೀರಿಸುತ್ತಿತ್ತು. ಹೀಗಾಗಿ ಪ್ರಾತಿನಿಧ್ಯದ ವಿಚಾರದಲ್ಲಿ ಸ್ವಯಂ ನಿಯಂತ್ರಣದಿಂದ ಸಾರ್ವಜನಿಕ ನಿಯಂತ್ರಣಕ್ಕೆ ನಾವು ಸಾಗಬೇಕಿದೆ.
  • ಮಠಮಾನ್ಯಗಳಿಗೆ ಸಾಕಷ್ಟು ಸರಕಾರಿ ಅನುದಾನ ಸಂದಿದೆ. ಧರ್ಮಬೇದವಿಲ್ಲದೆ ಸರಕಾರದ ಹಣ / ಅನುದಾನ ಪಡೆಯುತ್ತಿರುವ ಎಲ್ಲ ಜಾತಿ ಧರ್ಮಗಳ ಮಠ- ಮದರಸ- ಇಗರ್ಜಿಗಳಲ್ಲಿ ಮತ್ತು ಮುಖ್ಯವಾಗಿ ಅವರು ನಡೆಸುತ್ತಿರುವ ಸಂಸ್ಥೆಗಳಲ್ಲಿ ಪ್ರಾತಿನಿಧ್ಯವನ್ನು ಕಲ್ಪಿಸಬೇಕಿದೆ. ಮಠಗಳನ್ನು ನಡೆಸುವುದು ಧಾರ್ಮಿಕ ಕಾರ್ಯ ಅದರಲ್ಲಿ ಸರಕಾರದ ಹಸ್ತಕ್ಷೇಪವಿರಬಾರದು ಎಂಬುದು ದಿಟ. ಆದರೆ ಮಠಮಾನ್ಯಗಳು ಲಾಭಕ್ಕಾಗಿ ನಡೆಸುವ ಸಂಸ್ಥೆಗಳನ್ನು ಇತರ ವಾಣಿಜ್ಯ ಸಂಸ್ಥೆಗಳ ಜೊತೆಯಲ್ಲಿಯೇ ಪರಿಗಣಿಸಬೇಕಾಗುತ್ತದೆ. ತಮ್ಮ ಧರ್ಮದ ಮೂಲ ಆಶಯ ಸಮಾನತೆ ಎಂದು ಸಾರುವ ಧಾರ್ಮಿಕ ಮುಖಂಡರು ಧಾರ್ಮಿಕ ಸಂಸ್ಥೆಗಳು ನಡೆಸುವ ವಾಣಿಜ್ಯ ಚಟುವಟಿಕೆಗಳಲ್ಲಿ ಪ್ರಾತಿನಿಧ್ಯವನ್ನು ಕಲ್ಪಿಸುವುದನ್ನು ಸ್ವಾಗತಿಸಬೇಕಿದೆ. ಸಾಚಾರ್ ಆಯೋಗದ ಶಿಫಾರಸ್ಸನ್ನು ಮೊದಲ್ಗೊಂಡು ಮುಸ್ಲಿಂ ಸಮುದಾಯದ ಸಂಸ್ಥೆಗಳಲ್ಲಿ ವರದಿಯಲ್ಲಿ ತಿಳಿಸಿರುವ ಅಶ್ರಫ್, ಅಜ್ಲಫ಼್ ಮತ್ತು ಅರ್ಜಲ್ ಸಮುದಾಯಗಳಿಗೆ ವಿಶೇಷ ಪ್ರಾತಿನಿಧ್ಯ ಕಲ್ಪಿಸುವ ಕುರಿತು ಮಾಡಿರುವ ಪ್ರಸ್ತಾವನೆಗಳನ್ನು ಮುಸ್ಲಿಂ ಸಮುದಾಯದ ನಡೆಸುತ್ತಿರುವ ಸಂಸ್ಥೆಗಳಲ್ಲೇ ಮೊದಲಿಗೆ ಜಾರಿಗೆ ತರಬೇಕಿದೆ. ಹಾಗೆಯೇ ದಲಿತ ಕ್ರೈಸ್ತರ ವಿಚಾರದಲ್ಲಿ ಕ್ರೈಸ್ತ ಧರ್ಮದ ಅಡಿಯಲ್ಲಿ ನಡೆಯುತ್ತಿರುವ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ ಕಲ್ಪಿಸುವ ನಿರ್ಧಾರ ತೆಗೆದುಕೊಳ್ಳಬೇಕಿದೆ.
  • ಇಂದು ಎಲ್ಲ ಕ್ಷೇತ್ರಗಳಿಗಿಂತ ಉನ್ನತ ನ್ಯಾಯಾಂಗದಲ್ಲಿ ಪ್ರಾತಿನಿಧ್ಯವನ್ನು ಕಲ್ಪಿಸುವುದು ಅತ್ಯಗತ್ಯವಾಗಿದೆ. ಇದರ ಸಂಬಂಧವಾಗಿ ಇದೇ ಲೇಖಕ ಬರೆದ “ನ್ಯಾಯಾಂಗದಲ್ಲಿ ದಲಿತ ಮತ್ತು ಹಿಂದುಳಿದವರ ಪ್ರಾತಿನಿಧ್ಯದ ಪ್ರಶ್ನೆ” ಎಂಬ ಲೇಖನದ ಕೆಲ ಅಂಶಗಳನ್ನು ಇಲ್ಲಿ ಗಮನಿಸಬಹುದು:

೧೯೫೦ ರಿಂದ ಇಂದಿನವರೆಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ನೇಮಕವಾದ ದಲಿತರ ಸಂಖ್ಯೆ ಕೇವಲ ನಾಲ್ಕು – ಎ. ವರದರಾಜನ್, ಬಿ. ಸಿ. ರಾಯ್, ಕೆ. ರಾಮಸ್ವಾಮಿ ಮತ್ತು ಕೆ. ಜಿ. ಬಾಲಕೃಷ್ಣನ್. ಕಳೆದ ಅರವೈತ್ತೈದು ವರ್ಷಗಳಲ್ಲಿ ಈ ದೇಶದ ದಲಿತರಲ್ಲಿ ನಾಲ್ಕು ಜನ ಮಾತ್ರ Supreme Courtಸುಪ್ರೀಂ ಕೋರ್ಟ್ ಲ್ಲಿ ಕೂರಲು ಲಾಯಕ್ಕದವರೇ?

ಹಾಗೆಯೆ, ಒಂದು ಅಂದಾಜಿನ ಪ್ರಕಾರ ಸುಪ್ರೀಂ ಕೋರ್ಟ್ ನ ಸುಮಾರು ೫೬% ರಷ್ಟು ನ್ಯಾಯಾಧೀಶರು ಬ್ರಾಹ್ಮಣರು. ಒಟ್ಟು ಹೈ ಕೋರ್ಟ್ ನ್ಯಾಯಾಧೀಶರಲ್ಲಿ ಕೂಡ ಬ್ರಾಹ್ಮಣರ ಅನುಪಾತ ೫೦% ನಷ್ಟು. ೨೦೦೯ ರ ಸುಮಾರಿಗೆ ಕೇಂದ್ರ ಗೃಹ ಇಲಾಖೆ ಸುಪ್ರೀಂ ಕೋರ್ಟ್ ಗೆ ಒಂದು ಮನವಿ ಸಲ್ಲಿಸಿ ನ್ಯಾಯಾಂಗದಲ್ಲಿ ದಲಿತರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲು ಮಾರ್ಗದರ್ಶಿ ಸೂತ್ರಗಳನ್ನು ನಿರೂಪಿಸಲು ಕೋರಿತು. ಆದರೆ ಈವರೆಗೂ ಸರ್ವೋಚ್ಚ ನ್ಯಾಯಾಲಯವೂ ಸೇರಿದಂತೆ ಯಾವುದೇ ಉಚ್ಚ ನ್ಯಾಯಾಲಯವೂ ಯಾವ ಸೂತ್ರ ಯಾ ನಿರ್ದೇಶನಗಳನ್ನೂ ಜಾರಿ ಮಾಡಲಿಲ್ಲ. ಕೇಶವಾನಂದ ಭಾರತಿ ಪ್ರಕರಣದಿಂದ ಮೊದಲ್ಗೊಂಡು ಅನೇಕ ತೀರ್ಮಾನಗಳಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ: ನ್ಯಾಯಾಂಗವೆಂದರೆ “ಪ್ರಭುತ್ವ” (State). ಪ್ರಭುತ್ವದ ಇನ್ನೆರಡು ಅಂಗಗಳಲ್ಲಿ ಮೀಸಲಾತಿ ಇರುವುದು ನಿಜವಾದರೆ ನ್ಯಾಯಾಂಗ ಇದಕ್ಕೆ ಹೊರತಾಗಿರಬೇಕೇ? ಇನ್ನು ನ್ಯಾಯಾಲಯಗಳ ಸಿಬ್ಬಂದಿಗಳ ನೇಮಕದಲ್ಲಿ ಮೀಸಲಾತಿ ಇದೆ. ಆದರೆ ನ್ಯಾಯಮೂರ್ತಿಗಳ ನೇಮಕದಲ್ಲಿ ಏಕಿಲ್ಲ? ರಾಷ್ಟ್ರೀಯ ನ್ಯಾಯಾಂಗ ಸೇವಾ ಆಯೋಗ ರಚಿಸಲು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಆಯೋಗ ರಚನೆಯಾದರೆ ಎಲ್ಲಿ ಮೀಸಲಾತಿ ಜಾರಿಮಾಡುವ ಪ್ರಮೇಯ ಬಂದೀತೋ ಎಂದು ಈವರೆಗೆ ಯಾವ ಸರಕಾರವೂ ನ್ಯಾಯಾಂಗ ಸೇವೆಗಳ ಆಯೋಗ ರಚನೆ ಮಾಡುವ ಸಾಹಸ ಮಾಡಿಲ್ಲ. ಕೊಲಿಜಿಯಂ ಪದ್ಧತಿ ರದ್ದಾಗಿ ಈ ಕುರಿತ ಪ್ರಕರಣ ಸುಪ್ರೀಂ ಕೋರ್ಟ್ ನ ಮುಂದಿದೆ. ಈ ಕೊಲಿಜಿಯಂ ಪದ್ಧತಿಯಡಿ ದಲಿತರಿಗೆ ಸೇರಿದಂತೆ ಅನೇಕ ಜನಪರ ಕಾಳಜಿಯ ನ್ಯಾಯಾಧೀಶರಿಗೆ ಹಿನ್ನಡೆಯಾಗಿದೆಯೆಂದು ಬಹುತೇಕ ಎಲ್ಲ ವಕೀಲರೂ ವಾದಿಸಿದ್ದಾರೆ.

ಯಾವುದೇ ರಾಜ್ಯ ಮತ್ತು ಕೇಂದ್ರ ಸರಕಾರಗಳು ತಮ್ಮನ್ನು ಪ್ರತಿನಿಧಿಸುವ ಅಟಾರ್ನಿ ಜನರಲ್, ಸಾಲಿಸಿಟರ್ ಜನರಲ್,ಅಡ್ವೋಕೇಟ್ ಜನರಲ್ ಹೋಗಲಿ ಸಾಮಾನ್ಯ ಸರಕಾರೀ ವಕೀಲರ ನೇಮಕಾತಿಗಳಲ್ಲಿ ಮೀಸಲಾತಿಯನ್ನು ಪಾಲಿಸಿಲ್ಲ. ಸರಕಾರದ ಯಾವ ಬ್ಯಾಂಕ್, ನಿಗಮ, ಮಂಡಳಿಗಳು ಕೂಡ ತಮ್ಮ ಪ್ಯಾನೆಲ್ ಗಳಲ್ಲಿ ಮೀಸಲಾತಿ ಹೋಗಲಿ ದಲಿತರ ಬಗ್ಗೆ ಕನಿಷ್ಠ ಪ್ರಾತಿನಿಧ್ಯದ ಬಗ್ಗೆ ಕೂಡ ಗಮನ ಹರಿಸಿಲ್ಲ. ಇಂಥ ನೇಮಕಾತಿಗಳಲ್ಲಿ ಮೀಸಲಾತಿ ಬಗ್ಗೆ ಯಾವುದೇ ಕಾನೂನು ಅಥವಾ ನಿಯಮಗಳು ಹೋಗಲಿ ಕನಿಷ್ಠ ನಿರ್ದೇಶನ ಸೂತ್ರಗಳು ಕೂಡ ಇಲ್ಲ. ಎಲ್ಲಾ ಸರಕಾರಗಳು ದಲಿತರ ಪರ ಮೊಸಳೆ ಕಣ್ಣೀರು ಹಾಕುವುದು ಎಲ್ಲರಿಗೂ ಗೊತ್ತಿರುವುದೇ. ಆದರೆ ಈವರೆಗೆ ದಲಿತರ ಪರವಾಗಿ ದಲಿತ ವಕೀಲರೇ ಧ್ವನಿ ಎತ್ತಿಲ್ಲ ಎಂದರೆ ಎಂಥ ಬೇಸರದ ವಿಷಯ. ವಕೀಲರ ಸಾರ್ವತ್ರಿಕ ಪ್ರಾತಿನಿಧ್ಯದ ಸಂಸ್ಥೆ ವಕೀಲರ ಪರಿಷತ್ತು (ಬಾರ್ ಕೌನ್ಸಿಲ್) ನಲ್ಲಿ ಕೂಡ ಯಾವ ಪ್ರಾತಿನಿಧ್ಯವಿಲ್ಲ. ಇಂದು ವಕೀಲರಾಗಿ ನೊಂದಣಿ ಬಾರ್ ಕೌನ್ಸಿಲ್ ಪರೀಕ್ಷೆ ತೇರ್ಗಡೆ ಕಡ್ಡಾಯ. ಆದರೆ ಈ ಪರೀಕ್ಷೆ ಗಳಲ್ಲಿ ಕೂಡ ಮೀಸಲಾತಿಯಿಲ್ಲ. ದಲಿತ ವಿದ್ಯಾರ್ಥಿಗಳಿಗೆ, ಹಿಂದುಳಿದ ವರ್ಗ ಹೋಗಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಕೂಡ ಕನಿಷ್ಠ ಶುಲ್ಕ ವಿನಾಯತಿ ಕೊಡುವ ಔದಾರ್ಯವನ್ನೂ ವಕೀಲರ ಪರಿಷತ್ತು ತೋರಿಲ್ಲ. ತನ್ನ ವೆಬ್ಸೈಟ್ ನಲ್ಲಿ ನಮೂದಿಸಿರುವ ಪ್ರಶ್ನಾವಳಿ (FAQ) ಗಳಲ್ಲಿ ವಕೀಲರ ಪರಿಷತ್ತು “ನಮ್ಮ ಪರೀಕ್ಷೆಗಳಲ್ಲಿ ದಲಿತ ವಿದ್ಯಾರ್ಥಿಗಳಿಗೆ ಯಾವುದೇ ವಿಶೇಷ ಸೌಲಭ್ಯಗಳಿಲ್ಲ” ಎಂದು ಘೋಷಿಸಿ ಕೊಂಡಿದೆ.

ವಿಪರ್ಯಾಸವೆಂದರೆ ವಕೀಲರ ಪರಿಷತ್ತಿನ ವೆಬ್ಸೈಟ್ ನಲ್ಲಿ ದೊಡ್ಡದೊಂದು ಅಂಬೇಡ್ಕರ್ ಪಟವಿದೆ! ದುರಂತವೆಂದರೆ ಇಂದು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ದಲಿತ ವಕೀಲರನ್ನು ಪ್ರತಿನಿಧಿಸುವ ಯಾವುದೇ ಸಂಘ ಸಂಸ್ಥೆಗಳಿಲ್ಲ. ಸಣ್ಣ ಪುಟ್ಟ ಕಾರ್ಖಾನೆಗಳಲ್ಲಿಯೂ ದಲಿತ ಕಾರ್ಮಿಕ ಸಂಘಟನೆಗಳನ್ನು ರಚಿಸಿಕೊಳ್ಳುವ ದಲಿತರು ಇಂದಿನವರೆಗೂ ವಕೀಲರ ಮಧ್ಯೆ ಸಂಘಟನೆ ಕಟ್ಟಿಲ್ಲ. ಸಂಘಟಿತರಾಗದವರೆಗೂ ದಲಿತರಿಗೆ ಮುಕ್ತಿಯಿಲ್ಲ ಎಂಬುದಕ್ಕೆ ಈ ಕ್ರೂರ ವಾಸ್ತವಗಳಿಗಿಂತಲೂ ಹೆಚ್ಚಿನ ಸಾಕ್ಷಿಗಳು ದಲಿತರಿಗೆ, ಅದರಲ್ಲೂ ಮುಖ್ಯವಾಗಿ ವಕೀಲರಿಗೆ ಬೇಕಿಲ್ಲ ಎಂದು ಕೊಳ್ಳೋಣ. ೨೦೧೧ ರಲ್ಲಿ ಸಂವಿಧಾನ ತಿದ್ದುಪಡಿ ತಂದು ಸಹಕಾರ ಸಂಘಗಳ ಕಾನೂನಿಗೆ ಸಮಗ್ರ ಸರ್ಜರಿ ಮಾಡಲಾಯಿತು. ಸಹಕಾರಿ ಸಂಘಗಳನ್ನು ರಚಿಸಿಕೊಳ್ಳುವುದು ಮೂಲಭೂತ ಕರ್ತವ್ಯವೆಂದು ಸಾರಲಾಯಿತು. ಜೊತೆಗೆ, ಸಹಕಾರ ಸಂಘಗಳಲ್ಲಿ ಸಾಮಾಜಿಕ ಮತ್ತು ಮಹಿಳಾ ಮೀಸಲಾತಿ ಜಾರಿಗೊಳಿಸಲಾಯಿತು. ಆದರೆ ವಕೀಲರ ಸಂಘಗಳಲ್ಲಿ ಈ ಮೀಸಲಾತಿ ಜಾರಿಯಾಗಿಲ್ಲ. ವಕೀಲರ ಸಂಘಗಳಿಗೆ ಸರಕಾರಗಳು ಸಾಕಷ್ಟು ಸಹಾಯ ಧನ ನೀಡಿವೆ. ಏಷ್ಯಾದಲ್ಲಿಯೇ ಅತೀ ದೊಡ್ಡದು ಎನ್ನಿಸಿಕೊಳ್ಳುವ ಬೆಂಗಳೂರು ವಕೀಲರ ಸಂಘದ ಬೈ ಲಾ ಗಳನ್ನು ಅನುಮೋದಿಸಿದ್ದು ಸ್ವತಃ ಸಹಕಾರ ಸಂಘಗಳ ಪ್ರಬಂಧಕರು. ಆದರೆ ಇಲ್ಲಿ ಮಹಿಳಾ, OBC ಮತ್ತು ದಲಿತ ಮೀಸಲಾತಿಯ ಪ್ರಶ್ನೆಯೇ ಇಲ್ಲ. ಈವರೆಗೆ ಯಾವ ದಲಿತರೂ ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳಾಗಿಲ್ಲ. ಈವರೆಗೆ ಯಾವ ದಲಿತರೂ ಹಿಂದುಳಿದವರು ಮತ್ತು ಮಹಿಳೆಯರು ಈ ಬಗ್ಗೆ ಪ್ರಶ್ನೆ ಮಾಡಿಲ್ಲ. ದಲಿತ, ಮಹಿಳಾ ಮತ್ತು ಹಿಂದುಳಿದ ವರ್ಗಗಳು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಮರ್ಪಕವಾಗಿ ಪ್ರನಿಧಿಸುತ್ತಿಲ್ಲ ಎಂಬುದು ಕೇವಲ ಈ ವರ್ಗ ವಿಭಾಗಗಳ ಪ್ರಶ್ನೆಯಲ್ಲ. ಇದು ನಮ್ಮ ಇಡೀ ಸಮಾಜದ ಆತ್ಮಸಾಕ್ಷಿಯನ್ನು ಕಾಡಬೇಕಿರುವ ಪ್ರಶ್ನೆ. ‘ದಲಿತರು ಎಲ್ಲರಿಗೂ ಸಮನಾಗಿ ಬದುಕುತ್ತಿದ್ದಾರೆ’, ‘ಜಾತಿ ವ್ಯವಸ್ಥೆ ಸತ್ತು ಹೋಗಿದೆ’ ಅಥವಾ ‘ಬರೀ ವರ್ಗವೊಂದೇ ಸತ್ಯ ಜಾತಿ ಮಿಥ್ಯ’ ಎಂದು ವಾದಿಸುವ ಸಿದ್ಧಾಂತಿಗಳು ನ್ಯಾಯಾಂಗದಲ್ಲಿ ಏಕೆ ಇಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಯೋಚಿಸುವರೆ?”

*******

ವಿಷಯದ ವ್ಯಾಪ್ತಿ ಅಗಾಧವಾಗಿರುವ ಕಾರಣ ಇಲ್ಲಿ ಕೆಲವೇ ಕೆಲವು ನಿದರ್ಶನಗಳನ್ನು ಚರ್ಚಿಸಲಾಗಿದೆ. ಇದು ಕೇವಲ ಚರ್ಚೆಗೆ ಅನುವಾಗುವ ರೀತಿಯಲ್ಲಿನ ಒಂದು ಪ್ರಾಥಮಿಕ ಪ್ರಯತ್ನ ಮಾತ್ರ. ಇಲ್ಲಿರುವ ಸಲಹೆಗಳು ಕಾರ್ಯಸಾಧುವೇ ಅಲ್ಲವೇ ಎಂಬುದು ವಿಸ್ತ್ರತ ಚರ್ಚೆಗೆ ಒಳಪಡಬೇಕಾದ ವಿಚಾರ.

ಸಾಮಾಜಿಕ ಪ್ರಾತಿನಿಧ್ಯದ ಜೊತೆಯಲ್ಲೇ ಚರ್ಚೆಗೆ ಒಳಪಡಬೇಕಾದ ವಿಚಾರ ಅನುಷ್ಥಾನದ್ದು. ಇಂದು ಸರಕಾರಿ ವಲಯದಲ್ಲೇ ಬ್ಯಾಕ್ ಲಾಗ್ ಸಮಸ್ಯೆ ಬೃಹತ್ತಾಗಿ ಬೆಳೆದು ನಿಂತಿರುವಾಗ ಸರ್ಕಾರೇತರ ವಲಯಗಳಲ್ಲಿ ಪ್ರಾತಿನಿಧ್ಯವನ್ನು ಸಮರ್ಪಕವಾಗಿ ಅನುಷ್ಥಾನಗೊಳಿಸಬಹುದೇ? ಸಮಸ್ಯೆಗಳು ಮತ್ತು ಸವಾಲುಗಳು ಸಾಕಷ್ಟಿವೆ. ಸರಕಾರೇತರ ವಲಯದಲ್ಲಿ ಅರ್ಥಿಕ ಹಿಂಜರಿತ, ಲಾಭ ಹೆಚ್ಚಿಸುವ ಒತ್ತಡಗಳು, ಉದ್ಯೋಗ ಕಳೆದುಕೊಳ್ಳುವ ಭಯ, ಅಸಂಘಟಿತ ಕಾರ್ಮಿಕರ ಶೋಷಣೆ ಅತ್ಯಂತ ಹೆಚ್ಚಾಗಿದೆ. ವಿಶೇಷ ವಿತ್ತ ವಲಯಗಳಿಗೆ ಮತ್ತು ಸಾಫ್ಟ್ವೇರ್ ಕಂಪನಿಗಳಿಗೆ ಕಾರ್ಮಿಕ ಕಾನೂನುಗಳೂ ಸೇರಿದಂತೆ ದೇಶದ ಕಲ್ಯಾಣದ ಸದುದ್ದೇಶವುಳ್ಳ ಅನೇಕ ಕಾನೂನುಗಳು (Welfare Legislation) ಅನ್ವಯಿಸುವುದೇ ಇಲ್ಲ. ಹೆಚ್ಚಿನ ಕಡೆಗಳಲ್ಲಿ ಯಾವುದೇ ಕಾರ್ಮಿಕ ಸಂಘಟನೆಗಳಿಗೆ ಅವಕಾಶವಿಲ್ಲ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲವರ್ಗಗಳಿಗೆ ಸೇರಿದವರಿಗೆ ಸಹ ಇನ್ನೂ ನ್ಯಾಯ ದೊರೆತಿಲ್ಲ. ಅದರಲ್ಲಿ ತಳ ಸಮುದಾಯಗಳ ಪ್ರಾತಿನಿಧ್ಯವನ್ನು ಅರಗಿಸಿಕೊಳ್ಳುವಷ್ಟು ನಮ್ಮ ಸಮಾಜ ಇನ್ನೂ ಬೆಳೆದಿಲ್ಲ ಎನ್ನುವುದು ಸತ್ಯವೇ.

ಆದರೆ ಸಣ್ಣ ಪುಟ್ಟ ವಿಚಾರಗಳಿಗೆ ಒಂದು ಆಯೋಗ ರಚಿಸುವ ಸರಕಾರಗಳು ಸರಕಾರೇತರ ವಲಯಗಳ ಪ್ರಾತಿನಿಧ್ಯದ ವಿಶ್ಲೇಷಣೆಗೆ ಯಾವುದೇ ಒಂದು ಆಯೋಗವನ್ನು ರಚಿಸದಿರುವುದು ವಿಷಾದನೀಯ. ರಾಜ್ಯ ಮತ್ತು ರಾಷ್ಟ್ರದ ಕಾನೂನು ಅಯೋಗಗಳೂ (Law Commissions) ಕೂಡ ಈ ಬಗ್ಗೆ ಕಣ್ಣು ಹರಿಸಿಲ್ಲ. ಸಧ್ಯದ ಸಂವಿಧಾನದ ಮತ್ತು ಕಾನೂನುಗಳ ಚೌಕಟ್ಟಿನಲ್ಲೇ ಅಥವಾ ಅವುಗಳನ್ನು ವಿಸ್ತರಿಸಿ ಪ್ರಾತಿನಿಧ್ಯವನ್ನು ಕಲ್ಪಿಸುವ ಪ್ರಯತ್ನ ಮುಂದಿನ ದಿನಗಳಲ್ಲಿ ಸಾಗಬೇಕಿದೆ.

ಇಂಥಹ ಒಂದು ಪ್ರಾಮಾಣಿಕ ಪ್ರಯತ್ನ ನಮ್ಮ ರಾಜ್ಯದ ‘ಅಹಿಂದ’ ಸರಕಾರದಿಂದಲೇ ಪ್ರಾರಂಭವಾದರೆ ತುಂಬಾ ಸಂತೋಷ.

ಏಕೆ ಹೀಗಾಡಿದೆಯೇ ಗೆಳತಿ…… !?


-ಸುಧಾ ಚಿದಾನಂದಗೌಡ


“You won’t get marks for this…”

“I don’t want marks sir…”

ಒಂದು ಕ್ಷಣ ಡಿಯೋ ಲೋಬೋ, ಫಿಸಿಕ್ಸ್ ಲೆಕ್ಚರರ್ ನನ್ನ ಪೇಪರನ್ನು ನೋಡುವುದನ್ನು ನಿಲ್ಲಿಸಿ ತಲೆ ಮೇಲೆತ್ತಿ ನನ್ನನ್ನೇ ನೋಡಿದರು. ನಾನೋ…. ಹಲ್ಲು ಕಚ್ಚಿ, ಗಂಟಲುಬ್ಬಿಬಂದ ದುಃಖವನ್ನು ಹೊರಚೆಲ್ಲಕೂಡದೆಂಬ ನಿರ್ಧಾರದಿಂದ ಕಂಬನಿಯನ್ನು ರೆಪ್ಪೆಗಳಡಿಯಲ್ಲಿ ತಡೆ ಹಿಡಿದಿದ್ದೆ. ಮತ್ತೇನು ಮಾಡಲಿ..? ಅವರು ಹೇಳುವುದಕ್ಕೆ ಮುಂಚೆಯೇ ನನಗೇ ಗೊತ್ತಿತ್ತು- ಈ ಟೆಸ್ಟ್ ನಲ್ಲಿ ಮಾರ್ಕ್ಸ್ ಬರುವುದಿಲ್ಲ ಎಂದು. ಓದಿದ್ದರೆ ತಾನೇ..? ಓದಲು ಜತನದಿಂದ, ಏಕಾಗ್ರತೆಯಿಂದ ಮಾಡಿಟ್ಟುಕೊಂಡಿದ್ದ ನೋಟ್ಸ್ ಇದ್ದರೆ ತಾನೇ..? ಕಳುವಾಗಿ ಹೋಗಿತ್ತಲ್ಲ ನಾಲ್ಕುದಿನಗಳ ಹಿಂದೆಯೇ..! ಆದರೆ ನೋವಾಗಿದ್ದು ಕಳೆದುಕೊಂಡೆ ಎಂಬುದಕ್ಕಾಗಿ ಅಲ್ಲ. ಯಾರು, ಯಾಕಾಗಿ ಕದ್ದರು ಎಂಬುದು ತಿಳಿದುಬಂದಿದ್ದರಿಂದ..! ನೋಟ್ಸ್ ಇಲ್ಲ ಎಂದಲ್ಲ. ಓದಬಾರದು ಎಂಬ ಸಿಟ್ಟಿನಿಂದಾಗಿಯೇ ಓದಿರಲಿಲ್ಲ.

ಅಂಜನಾ ಹೀಗೆ ಮಾಡಬಹುದಿತ್ತೇ..? ರೂಂಮೇಟ್ ಗಳನ್ನೂ ನಂಬಬಾರದು ಎಂದಾದರೆfriendship-art ಇನ್ನು ಯಾರನ್ನಾದರೂ ಹೇಗೆ ನಂಬುವುದು ಆ ಹಾಸ್ಟೆಲ್ ಎಂಬ ನಮಗೆ ನಾವೇ ರಾಣಿಯರೆನ್ನಬಹುದಾದ ಹೊಸಪ್ರಪಂಚದಲ್ಲಿ..? ಇಷ್ಟಕ್ಕೂ ನಾನು ಮಾಡಿದ ತಪ್ಪಾದರೂ ಏನಿತ್ತು..? ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಸೈನ್ಸ್ ಓದುತ್ತಿದ್ದ ನಾನೂ ಅಂಜನಾಳೂ ಚೆನ್ನಾಗೇ ಇದ್ದೆವು ಒಂದೇ ರೂಮನ್ನು ಹಂಚಿಕೊಂಡು. “Come, let’s play a game..” ಎಂದು ಆ ಸಂಜೆ ಆಹ್ವಾನಿಸಿದ್ದು ಅವಳೇ. ನಾನು ಲ್ಯಾಬ್ ಮ್ಯಾನ್ಯುಯಲ್ ಹಿಡಿದು ಕೂತಿದ್ದೆ ರೆಕಾರ್ಡ ಬರೆಯಲು. ಬಿಡದೆ ಜಗ್ಗಿ ಸೇರಿಸಿಕೊಂಡಿದ್ದರು ಐದಾರು ಜನ ಗೆಳತಿಯರು ನಮ್ಮ ರೂಮಿನಲ್ಲೇ. ಆಟವೇನೆಂದರೆ- ವ್ಯಕ್ತಿಗಳ ಹೆಸರುಗಳನ್ನು ಹೇಳುತ್ತಾ ಹೋಗಬೇಕು. ಯಾವುದೇ ಧರ್ಮದ್ದು, ಹೆಂಗಸರು, ಗಂಡಸರು ಒಟ್ಟಿನಲ್ಲಿ ನಾಮಧೇಯಗಳು. ಆದರೆ ರಿಪೀಟ್ ಆಗಬಾರದು, ತೊದಲಬಾರದು, ಯೋಚಿಸಲು ನಿಲ್ಲಿಸಬಾರದು. ಓತಪ್ರೋತ ಯಾರು ಎಷ್ಟು ಹೆಚ್ಚು ಹೆಸರು ಹೇಳುತ್ತಾರೋ ಅವರು ಗೆದ್ದಂತೆ. ನನ್ನ ಸರದಿ ಬಂತು. ಅದೇನ್ಮಹಾ…. ಲಲಿತಾ ಸಹಸ್ರನಾಮ, ಗೌರೀ ಅಷ್ಟೋತ್ತರ ಶತನಾಮಾವಳಿ, ಶಿವ ಸಹಸ್ರನಾಮ, ಗಣಪತೀ ಅಷ್ಟೋತ್ತರಗಳೆಲ್ಲ ಮನೇಲೂ, ರಾಷ್ಟ್ರೋತ್ಥಾನ ಸ್ಕೂಲಲ್ಲೂ ಹೇಳಿ ಹೇಳಿ ಕಂಠಪಾಠ ಆಗೋಗಿದ್ದವು. (ಈಗಲೂ..!)  ಸರಿ, ಮೊದಲಿನ ಓಂ ಅನ್ನೂ, ಕೊನೆಯ ನಮಃವನ್ನೂ ತೆಗೆದುಹಾಕಿ ಮಧ್ಯಭಾಗದಲ್ಲಿ ಬರುವ ಹೆಸರುಗಳನ್ನೆಲ್ಲ ನಿರರ್ಗಳ ಹೇಳುತ್ತಾ ಹೋದೆ, ಅನಾಯಾಸ ಗೆದ್ದೂಬಿಟ್ಟೆ….. ಎನಫ್, ಎನಫ್.. ಎಂದು ಒಂದಿಬ್ಬರು ಹೇಳಿ ನಿಲ್ಲಿಸಿದ್ದರು ನನ್ನನ್ನು….. ಅಂಜನಾಗೆ ಶಾಕ್ ಆದಂತಿತ್ತು. ಅದುವರೆಗೂ ಈ ನಾಮಸ್ಫರ್ಧೆಯಲ್ಲಿ ಅವಳೇ ಗೆಲ್ಲುತ್ತಿದ್ದಳಂತೆ. ನಂಗೇನ್ಗೊತ್ತು…. ಇಷ್ಟಕ್ಕೂ ನಾನ್ಯಾಕೆ ಗೆಲ್ಲಬಾರದು..? ಅವಳು ಕುವೇತ್ ನಿಂದ ಬಂದಿದ್ಲು. ಸೋ, ವಾಟ್? ನಂ ಹಗರಿಬೊಮ್ನಳ್ಳಿ ಏನ್ ಕಮ್ಮೀನಾ? ಎಂಬ ಧಿಮಾಕು ನನ್ನಲ್ಲೂ ಇತ್ತು. ನಿರ್ಲಕ್ಷಿಸಿದೆ.

ಆದರೆ….. ಮಾರನೆಯ ದಿನ ನನ್ನ ಮಾರ್ಕರ್ ಕಾಣೆಯಾಯಿತು ಇದ್ದಕ್ಕಿದ್ದಂತೆ. ಅನಂತರ ಪೆನ್ಸಿಲ್ ಬಾಕ್ಸ್ ಕೂಡಾ. ನಾನೇ ಎಲ್ಲೋ ಬಿಟ್ಟುಬಂದಿದ್ದೇನೆ ಎಂದುಕೊಂಡು ಸುಮ್ಮನಾದೆ. ಆದರೆ ಅಂದು ಬಯಾಲಜಿ ಲ್ಯಾಬ್ ನಲ್ಲಿ ಇನ್ಸ್ಟ್ರುಮೆಂಟ್ ಬಾಕ್ಸ್ ತೆಗೀತೇನೆ….. ನೈಫ್ ಕಾಣಿಸ್ತಿಲ್ಲ.. ಹೇಗೆ ಎಕ್ಸ್ಪೆರಿಮೆಂಟ್ ಮಾಡಲಿ..? ಸಂಜೆಯಷ್ಟೊತ್ತಿಗೆ  “S” ಅಕ್ಷರದ ಕಸೂತಿ ಹಾಕಿದ್ದ ಮೊಲದಷ್ಟು ಬಿಳುಪೂ, ಮೃದುವೂ ಆಗಿದ್ದ ನನ್ನ ಫೇವರೇಟ್ ಕರ್ಚೀಫೂ ಕಾಣೆಯಾಗಿಹೋಯ್ತು..! ಆಗ ಅನಿಸಿತು..  “Something is wrong..” ಅಂತ.

ಮಾರನೆಯ ದಿನ…. ಅತಿಕ್ರೂರ ಭಾನುವಾರ…. ನನ್ನ ಪಾಲಿಗೆ ಬ್ಲ್ಯಾಕ್ ಸಂಡೇ

ಬೆಳಿಗ್ಗೆ ಬ್ರೇಕ್ ಫಾಸ್ಟ್ ಮುಗಿಸಿಬರುವಷ್ಟರಲ್ಲಿ ಫಿಸಿಕ್ಸ್ ನೋಟ್ಸೇ ಇಲ್ಲವಾಗಿಹೋಗಿತ್ತು. ಚೆನ್ನಾಗಿ ನೆನಪಿತ್ತು, ಬೆಳಿಗ್ಗೆ ಒಂದಷ್ಟು ಓದಿ. ತಿಂಡಿ ತಿನ್ಕೊಂಡು ಬಂದು ಮತ್ತೆ ಓದೋಣವೆಂದು ಟೇಬಲ್ ಮೇಲೇನೇ ಇಟ್ಟಿದ್ದು ಚೆನ್ನಾಗಿ ನೆನಪಿದೆ. ಅರ್ಧಘಂಟೆಯಲ್ಲಿ ಕಾಣಿಸ್ತಿಲ್ಲ ಎಂದರೆ…. ಸಿಟ್ಟು, ದುಃಖ, ಹತಾಶೆ, ಸೋತ ಭಾವ, ಮತ್ತು ನಾಲ್ಕುದಿನಗಳಲ್ಲಿ ಟೆಸ್ಟ್ ಇದೆಯೆಂಬ ಟೆನ್ಷನ್.. ಎಲ್ಲ ಸೇರಿ ವಾರ್ಡನ್ ಸಿಸ್ಟರ್ ಜ್ವನಿತಾ ಬಳಿ ಕಂಪ್ಲೇಂಟ್ ಮಾಡಿಬಿಡಲು ಸಿದ್ಧಳಾದೆ….. ಆಗ ಹೇಳಿದ್ದು ಕುಮುದಾ…..

“May be she…. You defeated her so badly on that day…I am not sure….but…”

ಉಳಿದ ಗೆಳತಿಯರ ಮುಖಗಳೂ ಅದನ್ನೇ ಹೇಳುತ್ತಿದ್ದವು..

ಆ ದಿನ ಉಂಟಾದ ದಿಗ್ಭ್ರಮೆ ಬಹುಕಾಲ ನನ್ನ ಮಿದುಳು, ಮನಸುಗಳನ್ನು ರಾಕ್ಷಸನಂತೆ ಆಳಿತು. “Lost everything..everyone..everywhere..”ಎಂಬಂತೆ ಕುಸಿದುಹೋದೆ. ಸಾಲದ್ದಕ್ಕೆ ಡಿಯೋ ಲೋಬೋ ಕ್ಲಾಸಿನಲ್ಲಿ

ಯಾಕೆ ರೂಮಲ್ಲಿ ನೀನು ಬರೀ ಹರಟೆ ಹೊಡ್ಕೊಂಡು ಎಲ್ರಿಗೂ ಡಿಸ್ಟರ್ಬ ಮಾಡ್ತಿರ್ತಿಯಂತೆ..?

ಎನ್ನಬೇಕೇ? ಇದೂ ಅವಳದೇ ಕೆಲಸವೆಂದು ಸ್ಪಷ್ಟವಾಗಿಹೋಯ್ತು. ನನ್ನ ಮುಖ ನೋಡಿ ಅವರಿಗೇನನಿಸಿತೋ “do well next time” ಎಂದಷ್ಟೇ ಹೇಳಿ ಒಳ್ಳೆ ಅಂಕಗಳನ್ನೇ ನೀಡಿದ್ದರು. ಆದರೆ ನಂಗೆ ಬೇಡವೆನಿಸಿಬಿಟ್ಟಿತ್ತು.

ಇಪ್ಪತ್ತೆಂಟು ವರ್ಷಗಳಾಗಿಹೋಗಿವೆ ಅದೆಲ್ಲ ಆಗಿಹೋಗಿ..

ಏಕೆ ಹೀಗಾಡಿದೆ ಗೆಳತೀ.. ನೋಡು ಈಗಲೂ ನಂಗೆ ಮರೆಯಲಾಗುತ್ತಿಲ್ಲ.. ಒಂದು ಸೋಲು ಅಥವಾ ಒಂದು ಗೆಲುವು.. ಅದೂ ಚಿಕ್ಕದೊಂದು ಸ್ಫರ್ಧೆಯಲ್ಲಿ….. ಇಷ್ಟು ಮುಖ್ಯವಾ? ಅಷ್ಟೊಂದು ಅವಮಾನಕಾರಿಯಾ..?ಇವೊತ್ತಿಗೂ ನಾನು ಗೆಲುವನ್ನು ಸಂಪೂರ್ಣ ಆಸ್ವಾದಿಸಲಾರೆ.. ಸೋತಾಗ ಅಂಥ ದುಃಖವೂ ಆಗೋದಿಲ್ಲ. ಮನಸು ಮತ್ತೆ ಮತ್ತೆ ಕೇಳುವುದು ಅದೇ ಪ್ರಶ್ನೆ.. ಅಂದು ಹಾಗೇಕಾಡಿದೆ ಗೆಳತೀ.. ಅದರ ಅವಶ್ಯಕತೆಯಿತ್ತೇ? ಎಂದು.

“ನನ್ನ ಮಕ್ಕಳು ವಿಧಾನಸೌಧದ ಕಡೆ ತಲೆಹಾಕಲಿಲ್ಲ” – ಗೋವಿಂದ ಗೌಡರು

– ಸ್ವಾಮಿ ದುರ್ಗ

ಮಾಜಿ ಮಂತ್ರಿ ಎಚ್.ಜಿ.ಗೋವಿಂದ ಗೌಡರು ನಿನ್ನೆ (ಬುಧವಾರ) ಪಯಣ ಮುಗಿಸಿದರು. ಅನೇಕ ಮಾಜಿ ಮಂತ್ರಿ, ಶಾಸಕರು ಸಾವನ್ನಪ್ಪಿರುವ ಸುದ್ದಿ ಆಗಾಗ ಪತ್ರಿಕೆಗಳ ಮೂಲೆಯಲ್ಲಿ ಅಥವಾ ತಳದಲ್ಲಿ ನಿಧನ ವಾರ್ತೆಯಾಗಿ ಬರುವುದುಂಟು. ಆದರೆ, ಗೋವಿಂದ ಗೌಡರದು ಹಾಗಲ್ಲ. ಅವರು ರಾಜಕೀಯ ನಿವೃತ್ತಿ ಪಡೆದ ಹದಿನೇಳು ವರ್ಷಗಳ ನಂgovindagowdaತರವೂ, ಅವರನ್ನು ತಂಪು ಹೊತ್ತಲ್ಲಿ ನೆನಪಿಸಿಕೊಳ್ಳುವ ಬಹುದೊಡ್ಡ ವರ್ಗ ನಮ್ಮ ಮಧ್ಯೆ ಇದೆ. ಅವರೆಲ್ಲರೂ ಇಂದು ತಪ್ಪದೇ ಈ ಮಾಜಿ ಶಿಕ್ಷಣ ಮಂತ್ರಿಯನ್ನು ನೆನಪಿಸಿಕೊಳ್ಳುತ್ತಾರೆ. ಕೊಪ್ಪ ಸುತ್ತ ಮುತ್ತಲಿನ ನೂರಾರು ಶಿಕ್ಷಕರು ಅವರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇದು ಸುಖಾ ಸುಮ್ಮನೆ ಬಂದ ಮನ್ನಣೆ ಅಲ್ಲ.
ಕೊಪ್ಪದ ಮುಖ್ಯರಸ್ತೆಯನ್ನು ತೋರಿಸಿ, ಆ ಊರಿನ ಒಬ್ಬರು ಒಮ್ಮೆ ಹೇಳುತ್ತಿದ್ದರು, “ನೋಡಿ ಈ ರಸ್ತೆ ಗೋವಿಂದ ಗೌಡರ ಕಾಲದ್ದು. ಅದು ಈಗಲೂ ಗಟ್ಟಿ ಮುಟ್ಟಾಗಿದೆ, ಆದರೆ ಈಗಿನವರು ಮೊನ್ನೆಯಷ್ಟೆ ಮಾಡಿಸಿದ್ದು ಈಗಾಗಲೇ ಗುಂಡಿ ಕಂಡಿದೆ”. ಪ್ರಾಮಾಣಿಕತೆ ಮತ್ತು ಬದ್ಧತೆ ಇರುವ ವ್ಯಕ್ತಿ ಆಡಳಿತಕ್ಕೆ ಬಂದರೆ ಏನಾಗಬಹುದು ಎನ್ನುವುದಕ್ಕೆ ಆ ಊರಿನ ಅದೊಂದು ಸಣ್ಣ ರಸ್ತೆಯ ಉದಾಹರಣೆ ಸಾಕು.
1926 ರಲ್ಲಿ ಜನಿಸಿದ ಗೌಡರು ಹರೆಯದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದರು. ನಂತರ ಮೈಸೂರು ಚಲೋ. ಸ್ವತಂತ್ರ ಭಾರತದಲ್ಲಿ ರಾಜಕೀಯ ಅವರನ್ನು ಆಕರ್ಷಿಸಿತು. 1952 ರಲ್ಲಿ ಮೊದಲ ಬಾರಿಗೆ ಅವರು ಕೊಪ್ಪ ಪುರಸಭೆಗೆ ಆಯ್ಕೆಯಾದರು. ನಂತರ ಅವರು ಶಾಸಕರಾಗಿದ್ದು 1983 ರಲ್ಲಿ. ಮೂರು ಬಾರಿ ಶಾಸಕರಾಗಿ ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ಎಚ್.ಡಿ.ದೇವೇಗೌಡ ಹಾಗೂ ಜೆ.ಎಚ್.ಪಟೇಲರ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದರು. ಶಿಕ್ಷಣ ಇಲಾಖೆಯಲ್ಲಿನ ಬಹುಚರ್ಚಿತ ಹಾಗೂ ಅಪಾರ ಮನ್ನಣೆ ಗಳಿಸಿದ ಕಾರ್ಯಕ್ರಮಗಳ ಮೂಲಕ ಅವರು ಅಪಾರ ಜನಪ್ರಿಯತೆ ಹೊಂದಿದ ಸಂದರ್ಭದಲ್ಲಿಯೇ ಅವರು ರಾಜಕಾರಣಕ್ಕೆ ವಿದಾಯ ಹೇಳಿದರು. ಹಾಗೆ ಹೇಳಿದ ಅನೇಕರು ತಮ್ಮ ಮನೆ ಮಕ್ಕಳನ್ನು ರಾಜಕೀಯಕ್ಕೆ ತಂದಿರುತ್ತಾರೆ. ಆದರೆ, ಇವರು ಹಾಗೂ ಮಾಡಲಿಲ್ಲ. ಹಾಗಾಗಿ ಅವರು ಅಪರೂಪದ ರಾಜಕಾರಣಿ.
ಅವರು ಮೈಸೂರಿಗೆ ಭೇಟಿ ನೀಡಿದಾಗೊಮ್ಮೆ ಕೆಲ ವಿದ್ಯಾರ್ಥಿಗಳು ಭೇಟಿ ನೀಡಿ, ತಾವು ಅಂದಾಜಿಸಿದ್ದಕ್ಕಿಂತ ಕಡಿಮೆ ಅಂಕಗಳು ಬಂದಿವೆ ಎಂದು ದೂರಿದರು. ಸಚಿವರು ತಕ್ಷಣ ಅಂದಿನ ಶಿಕ್ಷಣ ಇಲಾಖೆ ಕಾರ್ಯದರ್ಶಿ ಎಸ್. ವಿ. ರಂಗನಾಥ್ ಹಾಗೂ ಹಿರಿಯ ಅಧಿಕಾರಿ ಹರೀಶ್ ಗೌಡರನ್ನು ಸಂಪರ್ಕಿಸಿ ಇದಕ್ಕೊಂದು ಪರಿಹಾರವೆಂಬಂತೆ ಉತ್ತರ ಪತ್ರಿಕೆಗಳ ಛಾಯಾಪ್ರತಿ ನೀಡುವ ವ್ಯವಸ್ಥೆ ಜಾರಿಗೆ ತಂದರು. ಅದು ಇಂದು ಅನೇಕ ಸಂಸ್ಥೆ, ವಿಶ್ವ ವಿದ್ಯಾನಿಲಯಗಳಿಗೆ ಅನುಕರಣನೀಯವಾಗಿದೆ.
ಮೊದಲು ಶಿಕ್ಷಕರನ್ನು ನೇಮಿಸಲು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಗಳಿರುತ್ತಿದ್ದವು. ಸಮಿತಿಗಳಲ್ಲಿ ಕೆಲವೊಮ್ಮೆ ಪ್ರಾಮಾಣಿಕವಾಗಿ ನೇಮಕಾತಿ ಆದರೂ, ಬಹುತೇಕ ಸಂದರ್ಭಗಳಲ್ಲಿ ಜಾತಿ, ಹಣ, ಪ್ರಭಾವಗಳು ಕೆಲಸ ಮಾಡುತ್ತಿದ್ದವು. ಗೌಡರು ಆ ಪದ್ಧತಿಗೆ ಇತಿಶ್ರೀ ಹಾಡಿ, ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ನೇಮಕ ಮಾಡುವ ವ್ಯವಸ್ಥೆ ಜಾರಿಗೆ ತಂದರು. ಆ ಮೂಲಕ ಪರಿಶ್ರಮದಿಂದ ಅಭ್ಯಾಸ ಮಾಡಿದ್ದ ಅಭ್ಯರ್ಥಿಗಳಿಗೆ ಯಾವುದೇ ಲಂಚ, ಪ್ರಭಾವಗಳ ಅಗತ್ಯ ಬೀಳದೆ ಕೆಲಸ ಸಿಗುವಂತಾಯ್ತು.
ಸಚಿವರಾಗಿ ಉತ್ತಮ ಆಡಳಿತ ಅಂದ್ರೇನು ಎನ್ನುವುದನ್ನೂ ತೋರಿಸಿದರು. ಯಾವುದೇ ವ್ಯಕ್ತಿ, ಅಧಿಕಾರಿ ತಪ್ಪು ಮಾಡಿದ್ದಾರೆ ಎಂದು ಗೊತ್ತಾದರೆ, ಮುಲಾಜಿಲ್ಲದೆ ಕ್ರಮ ಕೈಗೊಂಡಿದ್ದರು. ಹತ್ತಿರದ ಸಂಬಂಧಿ ಎಂದೋ, ಪ್ರಭಾವಿ ಸಚಿವರಿಗೆ ಬೇಕಾದವರೆಂದೋ ಸುಮ್ಮನಾದವರಲ್ಲ.
ಅವರು ಒಮ್ಮೆ ಹೇಳಿದ್ದ ನೆನಪು, “ನಾನು ವಿಧಾನಸೌಧದಲ್ಲಿರುವ ತನಕ, ನನ್ನ ಆರು ಮಕ್ಕಳಲ್ಲಿ ಯಾರೊಬ್ಬರೂ ಒಮ್ಮೆಯೂ ಆಕಡೆ ತಲೆ ಹಾಕಲಿಲ್ಲ”. ಈಗಿನ ಯಾವುದೇ ಮಂತ್ರಿ ಇಂತಹ ಮಾತನ್ನು ವಿಶ್ವಾಸದಿಂದ ಹೇಳಲು ಸಾಧ್ಯವಿದೆಯೇ?
ಮೂರು ವರ್ಷಗಳ ಹಿಂದೆ ಹರಿಯಾಣ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ ಚೌತಾಲ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಆರೋಪಿಗಳಾಗಿ ಜೈಲಿಗೆ ಹೋಗಿದ್ದರು. ಅದೇ ಸಂದರ್ಭದಲ್ಲಿ ಗೌಡರು ಮಾತನಾಡುತ್ತಾ, “ನಾನು ಇಂದು ನೆಮ್ಮದಿಯಾಗಿ ನನ್ನ ತೋಟದ ಮನೆಯಲ್ಲಿ ಕಾಲ ಕಳೆಯುತ್ತಿದ್ದೇನೆ. ಅದರರ್ಥ, ನಾನು ನನಗೆ ಸಿಕ್ಕ ಅಧಿಕಾರವನ್ನು ತಪ್ಪಾಗಿ ಎಲ್ಲಿಯೂ ಬಳಸಿಕೊಂಡಿಲ್ಲ”.

ರಿಯಾಲಿಟಿ ಶೋ ಪ್ರಧಾನಿ!

ಗುರು, ಚಿಕ್ಕಮಗಳೂರು

ವಿಪರ್ಯಾಸ ಎಂದರೆ ಇದೇ ಇರಬೇಕು. ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಉದ್ಘಾಟನೆಗೆ ಮೈಸೂರಿಗೆ ಬಂದ ಪ್ರಧಾನಿ ಸ್ವಾಮೀಜಿಯ ಜನ್ಮ ಶತಮಾನೋತ್ಸವದಲ್ಲಿ ಭಾಗವಹಿಸಿ ಬುದ್ಧಿಜೀವಿಗಳನ್ನು ಹೀಗಳೆಯುತ್ತಾರೆ. ತಾನು ಅದೇ ಊರಲ್ಲಿ ಭಾಗವಹಿಸುತ್ತಿರುವ ಇನ್ನೊಂದು ಕಾರ್ಯಕ್ರಮದಲ್ಲಿ ಎದುರು ನೋಡುತ್ತಿರುವುದು ಬುದ್ದಿಜೀವಿ ವಲಯವನ್ನು ಪ್ರತಿನಿಧಿಸುವ ವಿಜ್ಞಾನಿಗಳನ್ನು ಎನ್ನುವ ಪ್ರಜ್ಞೆಯೂ ಅವರಿಗಿರುವುದಿಲ್ಲ.

ಮಾರನೇ ದಿನ ಬೆಂಗಳೂರಿನಲ್ಲಿ ಯೋಗ ಕ್ಯಾಂಪ್ ಉದ್ಘಾಟಿಸುತ್ತಾರೆ. ಅದೇ ಹೊತ್ತಿಗೆ ಪಠಾಣಕೋಟ್ ನಲ್ಲಿ ಈ ದೇಶದ ಸೈನಿಕರು ಭಯೋತ್ಪಾದಕರ ಗುಂಡಿಗೆ ಅಸುನೀಗುತ್ತಿದ್ದಾರೆ, ಅಷ್ಟೇ ಅಲ್ಲ ಸೂಕ್ತ ರಕ್ಷಣಾತ್ಮಕ ವ್ಯವಸ್ಥೆ ಇಲ್ಲದೆ ಗ್ರನೇಡ್ ನಿಷ್ಕ್ರಿಯ ಗೊಳಿಸಲು ಹೋದ ವೀರನೂ ಮೃತಪಡುತ್ತಾನೆ. ಸಾವಿರಾರು modi-in-biharಭಕ್ತರನ್ನು ಹೊಂದಿರುವ ಈ ವ್ಯಕ್ತಿಗೆ ಮಾತ್ರ ಏನೂ ಅನ್ನಿಸುವುದಿಲ್ಲ. (ಈ ಘಟನೆಯೊಂದಿಗೆ ತಕ್ಷಣ ನೆನಪಾಗುವುದು 2009 ರಲ್ಲಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ನೆರೆಯಿಂದ ಜಲಾವೃತಗೊಂಡಿದ್ದಾಗ ಅಂದು ಅಧಿಕಾರದಲ್ಲಿದ್ದ ಬಿಜೆಪಿ ಮಂತ್ರಿಗಳು ಮೈಸೂರಿನ ಮಠವೊಂದರ ಆವರಣದಲ್ಲಿ ಯೋಗಾಭ್ಯಾಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಪಿ.ಮಹಮ್ಮದ್ ಬರೆದ ಪರಿಣಾಮಕಾರಿ ಕಾರ್ಟೂನ್ ಇನ್ನೂ ಅನೇಕರಿಗೆ ನೆನಪಿರಬಹುದು).

ದೇಶವೊಂದರ ನಾಯಕ, ಆತನ ಮನಸ್ಥಿತಿ, ಬುದ್ದಿವಂತಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನೇ ಪ್ರತಿನಿಧಿಸುತ್ತಿರುತ್ತವೆ. ದುರಂತವೆಂದರೆ ಸದ್ಯ ಆಡಳಿತ ಚುಕ್ಕಾಣಿ ಹಿಡಿದಿರುವ ಮನುಷ್ಯ ಪ್ರಚಾರದ ಹುಚ್ಚಿಗೆ ಮರುಳಾಗಿ ಬಿಗ್ ಬಾಸ್ ನಂತಹ ರಿಯಾಲಿಟಿ ಶೋಗಳ ಸ್ಪರ್ದಿಗಳಂತೆ ವರ್ತಿಸುತ್ತಿರುವುದು. ಆ ಸ್ಪರ್ದಿಗಳಿಗೆ ಇರುವ ದೊಡ್ಡ ಮಟ್ಟದ ಚಾಲೆಂಜ್ ತಾವು ಸದಾ ಟಿ.ಆರ್.ಪಿ ಪುಲ್ಲರ್ಸ್ ಆಗಿರಬೇಕು. ಅಂತಹದೊಂದು ಪ್ರಯತ್ನದಲ್ಲಿ ಯಶಸ್ವಿಯಾದರೆ ಎಲಿಮಿನೇಟ್ ಆಗದಂತೆ ಬಹಳ ಕಾಲ ಉಳಿಯಬಹುದು. ಪ್ರಸ್ತುತ ಪ್ರಧಾನ ಮಂತ್ರಿಗೂ ಇಂತಹದೇ ಗೀಳು ಹತ್ತಿದಂತಿದೆ.

ನಮ್ಮಲ್ಲಿ ಬಹುತೇಕರು ಕೈಗಳ ಮೇಲೆ ಹಚ್ಚೆ ಹಾಕಿಸುತ್ತಾರೆ. ಹಾಗೆ ಹಾಕಿಸುವರಾರೂ ತಮ್ಮ ಹೆಸರನ್ನು ಬರೆಸಿಕೊಳ್ಳುವುದಿಲ್ಲ, ಬದಲಿಗೆ ತಮ್ಮ ಪ್ರೀತಿಪಾತ್ರರ ಹೆಸರನ್ನು ಸದಾ ಹಸಿರಾಗಿರಿಸಲು ಬರೆಸಿಕೊಳ್ಳುತ್ತಾರೆ. ಈಗ ಟಾಟ್ಟೂ ಕಾಲದಲ್ಲೂ ಅದೇ ಮನೋಭಾವ ಮುಂದುವರಿದಿದೆ. (ಇಲ್ಲಿ ಹೆಸರಿಗಿಂತ ಚಿತ್ರ ಮುನ್ನೆಲೆಗೆ ಬಂದಿರಬಹುದು). ಆದರೆ ತನ್ನ ಹೆಸರನ್ನೇ ಅಚ್ಚಾಗಿಸಿರುವ ಅಂಗಿಯನ್ನು ಪ್ರಮುಖ ರಾಜತಾಂತ್ರಿಕ ಮಾತುಕತೆ (ಒಬಾಮಾ ಭೇಟಿ) ಸಂದರ್ಭದಲ್ಲಿ ಹಾಕಿಕೊಂಡ ಪ್ರಧಾನಿ ಮನಸ್ಥಿತಿ ನೆನಸಿಕೊಂಡರೆ ರೇಜಿಗೆ ಹುಟ್ಟುತ್ತೆ.

ಮೊನ್ನೆ ಮೊನ್ನೆವರೆಗೆ ಪಾಕಿಸ್ತಾನಕ್ಕೆ ‘ಲವ್ ಲೆಟರ್ಸ್ ಬರೆಯುವುದನ್ನ ನಿಲ್ಲಿಸಬೇಕು’ ಎಂದು ಗುಟುರು ಹಾಕುತ್ತಿದ್ದ ವ್ಯಕ್ತಿ, ಇದ್ದಕ್ಕಿದ್ದಂತೆ ಪಾಕ್ ಗೆ ಭೇಟಿ ನೀಡುತ್ತಾರೆ. ಸೌಹಾರ್ದ ವಾತಾವರಣಕ್ಕೆ ಅಂತಹದೊಂದು ಪ್ರಯತ್ನ ಶ್ಲಾಘನೀಯವೇ, ಆದರೆ, ಅದರ ಹಿಂದಿನ ಬದ್ಧತೆ ಪ್ರಶ್ನಾರ್ಹ. ಸಂಗೀತಗಾರರು, ಕ್ರಿಕೆಟಿಗರು ಎರಡೂ ದೇಶಗಳಲ್ಲಿ ಮುಕ್ತವಾಗಿ ಓಡಾಡಿಕೊಂಡಿರಲು ವಿರೋಧ ವ್ಯಕ್ತ ಪಡಿಸುವ ಪರಿವಾರಕ್ಕೆ ನಿಷ್ಠನಾಗಿರುವ ವ್ಯಕ್ತಿಯ ಬದ್ಧತೆ ಪ್ರಶ್ನಿಸುವುದು ಸಹಜ. ಅದರಾಚೆಗೆ, ಇದು ಕೇವಲ ಪ್ರಚಾರಕ್ಕೆ ಜೋತು ಬಿದ್ದವರ ಸ್ಟ್ರಾಟಜಿಯಾಗಿದ್ದರೆ (ಮತ್ತದೇ ಬಿಗ್ ಬಾಸ್ ಸ್ಪರ್ಧಿಯಂತೆ) ನಾಚಿಕೆಗೇಡು.
ಇವರ ಪ್ರಚಾರದ ಗೀಳಿಗೆ ಇನ್ನೊಂದು ಉದಾಹರಣೆ ವಿದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿ ನಡೆಸುವ ಎನ್.ಆರ್.ಐ ಸಭೆಗಳು. ಬಿಹಾರದಲ್ಲಿ ಸೋತು ಮುಖ ಮುಚ್ಚಿಕೊಳ್ಳುವ ಪರಿಸ್ಥಿತಿ ಎದುರಾದಾಗ, ಇಲ್ಲಿ ಕಳೆದುಕೊಂಡದ್ದನ್ನು ಹುಡುಕಲು ಲಂಡನ್ ನಲ್ಲಿ ಪ್ರಯತ್ನಿಸುತ್ತಾರೆ.

ಭಾರತಕ್ಕೆ ಹೂಡಿಕೆ ತರುವ ಪ್ರಯತ್ನವಾಗಿ ಅವರು ಅನೇಕ ಗ್ಲೋಬಲ್ ನಾಯಕರನ್ನು ಭೇಟಿ ಮಾಡುತ್ತಿರುವ ಸುದ್ದಿಗಳು ವಿದೇಶಿ ಪ್ರವಾಸದ ಹೊತ್ತಿನಲ್ಲಿ ಬಂದಿವೆ. ಗೂಗಲ್, ಮೈಕ್ರೋಸಾಫ್ಟ್ ಫೇಸ್ ಬುಕ್..ಹೀಗೆ ಹಲವು ಸಂಸ್ಥೆಗಳ ಮುಖ್ಯಸ್ಥರನ್ನು ಅವರು ಭೇಟಿ ಮಾಡಿದ್ದಾರೆ. ಅದರ ಹಿಂದೆಯೂ ಕೂಡ ದೂರದೃಷ್ಟಿಗಿಂತ ಪ್ರಚಾರದ ಗೀಳೇ ಪ್ರಮುಖವಾಗಿ ಕಾಣುತ್ತಿದೆ. ಮೇಲೆ ಹೇಳಿರುವ ಯಾವ ಕಂಪನಿಗಳೂ, ಭಾರತದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗೆ ಸಮಾಧಾನಕಾರ ಪರಿಹಾರ ನೀಡಲಾರವು. ಅವರು ಇಲ್ಲಿಯ ರೈಲ್ವೇ ನಿಲ್ದಾಣಗಳಲ್ಲಿ ವೈ-ಫೈ ಅಳವಡಿಸಬಹುದು, ಫ್ರೀ-ಬೇಸಿಕ್ಸ್ ಹೆಸರಿನಲ್ಲಿ ಮಂಗಮಾಡಬಹುದು. ಆದರೆ ನಿರುದ್ಯೋಗ ಸಮಸ್ಯೆ ನೀಗಬಲ್ಲವಂತಹವು ದೊಡ್ಡ ದೊಡ್ಡ ಉದ್ದಿಮೆಗಳು.

ಲಕ್ಷ್ಮಿ ಮಿತ್ತಲ್ ಬಳ್ಳಾರಿ ಸಮೀಪ ಸ್ಟೀಲ್ ಪ್ಲಾಂಟ್ ಹಾಕುವ ಯೋಜನೆ ಬಹಳ ದಿನಗಳಿಂದ ಪೂರ್ಣಗೊಂಡಿಲ್ಲ. ಅಂತಹದೊಂದು ಉದ್ದಿಮೆ ಬಂದರೆ, ನೂರಾರು ಕೈಗಳಿಗೆ ಕೆಲಸ ಸಿಗುತ್ತೆ. ಫೇಸ್ ಬುಕ್ ನವರು ಬಂದು ಇಲ್ಲಿ ಕನಿಷ್ಟ ಪಕ್ಷ ಒಂದು ಪುಸ್ತಕ ಅಂಗಡಿಯನ್ನೂ ಇಡುತ್ತಾರೆಂದು ನಿರೀಕ್ಷಿಸಲಾಗದು. ಹೀಗಿರುವಾಗ ಕೇವಲ ಪ್ರಚಾರ ಪ್ರೇರಿತ ಸ್ಟ್ರಾಟಜಿಗಳನ್ನು ಅನುಸರಿಸಿ ಬಿಗ್ ಬಾಸ್ ಸ್ಪರ್ಧಿಯೊಬ್ಬ ಟಿ.ಆರ್.ಪಿ ರೇಸ್ ನಲ್ಲಿ ಕೊನೆತನಕ ಉಳಿದುಕೊಂಡು ದುಡ್ಡು ಗೆಲ್ಲಬಹುದು. ಆದರೆ ಪ್ರಜಾಪ್ರಭುತ್ವದಲ್ಲಿ ಹಾಗಾಗುವುದಿಲ್ಲ. ಜನರನ್ನು ಮರಳು ಮಾಡಲಾಗದು. ಬ್ಯಾಂಕ್ ಅಕೌಂಟ್ ತೆರೆದಿರುವ ಮಂದಿ ಆಗಾಗ ಬ್ಯಾಂಕ್ ಗಳಿಗೆ ಭೇಟಿ ನೀಡಿ 15 ಲಕ್ಷ ರೂ ಯಾವಾಗ ಬರುತ್ತೆ ಎಂದು ಕೇಳುತ್ತಿದ್ದಾರೆ.