Author Archives: admin

ಕಾನ್ಶಿರಾಂ – ಕಲ್ಲಿದ್ದಲ ಕಗ್ಗತ್ತಲೆಯನ್ನು ಕೊಹಿನೂರೊಂದು ಕಳೆದ ಕಥೆ : ಭಾಗ-2


– ಶ್ರೀಧರ್ ಪ್ರಭು


ಕಾನ್ಶಿರಾಂ ಹುಟ್ಟಿದ್ದು ೧೫ ಮಾರ್ಚ್ ೧೯೩೪ ರಲ್ಲಿ ಪಂಜಾಬಿನ ರೂಪನಗರ ಜಿಲ್ಲೆಯ ಖವಾಸ್ಪುರ್ ಹೋಬಳಿಯ ಪಿಥಿಪುರ ಬಂಗ ಎಂಬ ಹಳ್ಳಿಯಲ್ಲಿ.

ಬಾಬು ಮಂಗು ರಾಮ ಚೌಧರಿ (೧೮೮೬-೧೯೮೦) ಎಂಬ ದಲಿತ ನಾಯಕ ೧೯೨೦ ರ ದಶಕದಲ್ಲಿ ಪಂಜಾಬಿನಲ್ಲಿ ’ಆದಿ-ಧರ್ಮ’ವೆಂಬ ಸಮಾನತೆಯ ಆಶಯವುಳ್ಳ ಚಳುವಳಿಯನ್ನು ಹುಟ್ಟುಹಾಕಿದರು. ಇಂದು ಹದಿನೈದನೆ ಶತಮಾನದ ಭಕ್ತಿ ಚಳುವಳಿಯ ಸಂತ ರಾಮದಾಸರ ಬೋಧನೆಗಳನ್ನು ವರ್ತಮಾನಕ್ಕೆ ಅಳವಡಿಸಿಕೊಂಡು ವೈದಿಕ ಧರ್ಮದಲ್ಲಿನ ಕೊಳಕುಗಳನ್ನು ತೊಳೆಯುವ ಪ್ರಯತ್ನವಾಗಿತ್ತು. ಕಾನ್ಶಿರಾಂ ಅವರ ಕುಟುಂಬ ರವಿದಾಸರ ಪಂಥಕ್ಕೆ ಸೇರಿದ್ದು ನಂತರದಲ್ಲಿ ಆದಿ-ಧರ್ಮದ ಚಳವಳಿಗೆ ಸೇರಿಕೊಂಡಿತ್ತು.

೧೯೩೦ ರ ದಶಕ – ಸಾಮಾಜಿಕ ಮತ್ತು ರಾಜಕೀಯ ತಲ್ಲಣಗಳ ಅವಧಿ
೧೯೩೦ ರ ದಶಕದ ಪಂಜಾಬಿನ ಸನ್ನಿವೇಶವನ್ನು ಗಮನಿಸಿ. ಇಂದಿನ ಹಿಮಾಚಲ ಪ್ರದೇಶ, ಹರಿಯಾಣ ಮತ್ತು ವಿಭಜನೆಯ ನಂತರ ಪಾಕಿಸ್ತಾನದ ಭಾಗವಾಗಿರುವ ಪ್ರಾಂತ್ಯಗಳೆಲ್ಲವೂ ಸೇರಿದ – ಪಂಜಾಬ್ – ಇತಿಹಾಸದುದ್ದಕ್ಕೂ undivided-punjabಅನೇಕ ಸಾಮಾಜಿಕ ರಾಜಕೀಯ ಕ್ರಾಂತಿಗಳು, ಸಂಘರ್ಷಗಳು, ಆಕ್ರಮಣಗಳಿಗೆ ಸಾಕ್ಷಿಯಾದ ನಾಡು. ಇಲ್ಲಿ ಹರಿದ ಐದು ನದಿಗಳು, ಹರಪ್ಪ-ಮೊಹೆಂಜೋದಾರೋ ನಾಗರೀಕತೆ, ವೈದಿಕ ಧರ್ಮ, ಬೌದ್ಧ ಧರ್ಮ, ನಂತರದಲ್ಲಿ ಇಸ್ಲಾಂ ಮತ್ತು ಸಿಖ್ ಧರ್ಮಗಳಿಗೆ ತೊಟ್ಟಿಲಾಗಿದ್ದವು. ಫಲವತ್ತಾದ ಐದು ನದಿಗಳು ಹುಟ್ಟಿ ಹರಿಯುವ ಪಂಜಾಬಿನ ಉತ್ತರದಲ್ಲಿ ಹಿಮಾಲಯವಿದ್ದರೆ, ದಕ್ಷಿಣ ಮತ್ತು ನೈಋತ್ಯ ಭಾಗದಲ್ಲಿ ಬರಡು ಮರುಭೂಮಿಯಿದೆ. ಹೀಗೆಯೇ ಒಂದು ಕಡೆ ಅತ್ಯಂತ ಕ್ರಾಂತಿಕಾರಿ ನಿಲುವಿನ ಭಕ್ತಿ ಪಂಥ, ಸಿಖ್ ಧರ್ಮ, (ಪಂಜಾಬಿನಲ್ಲಿ ಇಪ್ಪತ್ತನೇ ಶತಮಾನದಲ್ಲಿ ಹುಟ್ಟಿದ) ಆರ್ಯ ಸಮಾಜಗಳು ಹೇಗೆ ಪಂಜಾಬಿನಲ್ಲಿ ಹುಟ್ಟಿದವೋ ಅತ್ಯಂತ ವಿಷಮಪೂರಿತ ಧಾರ್ಮಿಕ ಮೂಲಭೂತವಾದವೂ ಇದೇ ನಾಡಿನಲ್ಲಿ ಬೆಳೆಯಿತು.ಎಲ್ಲ ರೀತಿಯ ಧಾರ್ಮಿಕ ಮತ್ತು ಜಾತಿ ವಿಷಮತೆಗಳ ಕುಲುಮೆಯಲ್ಲಿ ಬೆಂದ ಪಂಜಾಬಿಗೆ ಹಲವು ಕಾಲಮಾನಗಳಲ್ಲಿ ಹಲವು ಬಗೆಯ ನಂಜು ತಗುಲಿದೆ.

ಅವಿಭಜಿತ ಪಂಜಾಬಿನಲ್ಲಿ ೧೯೩೦ ರ ದಶಕದಲ್ಲಿ ಒಂದು ಕಡೆ ಉಗ್ರ ಮುಸ್ಲಿಂ ಮೂಲಭೂತವಾದ ದೈತ್ಯಾಕಾರವಾಗಿ ಬೆಳೆಯುತ್ತಿತ್ತು. ಒಂದು ಕಾಲದ ದೇಶಭಕ್ತ ಮಹಾಕವಿ ಅಲ್ಲಮಾ ಇಕ಼್ಬಾಲ್ ಇದೇ ದಶಕದಲ್ಲಿ ದೇಶ ವಿಭಜನೆಯ ಕೂಗು ಹಾಕಿದರು. ಅದರ ಮುಂದುವರಿಕೆಯ ಭಾಗವಾಗಿ ಜಿನ್ನಾ ಅತ್ಯಂತ ಪ್ರಗತಿಪರ ನಿಲುಮೆಯನ್ನು ತೊರೆದು ಒಬ್ಬ ಕೋಮುವಾದಿಯಾಗಿ ಬೆಳೆದದ್ದು ಪಂಜಾಬಿನಲ್ಲೇ. First_edition_of_Annihilation_of_Casteಇನ್ನೊಂದೆಡೆ ಪಂಜಾಬಿನ ಯುವ ಜನತೆ ಅತ್ಯುಗ್ರ ಹಿಂದೂ ಮೂಲಭೂತವಾದದ ಕಡೆ ಹೆಜ್ಜೆ ಹಾಕತೊಡಗಿದ್ದರು. ಹಿಂದೂ ಧರ್ಮದ ಐಕ್ಯತೆಯ ಉದ್ದೇಶ ದಿಂದ ಸ್ಥಾಪಿತವಾದ ಆರ್ಯ ಸಮಾಜ ಒಂದು ಉಗ್ರ ಧಾರ್ಮಿಕ ಸಂಘಟನೆಯ ಸ್ವರೂಪ ಪಡೆದಿತ್ತು. ಈ ಆರ್ಯ ಸಮಾಜದ ಭಾಗವಾಗಿದ್ದ ‘ಜಾತ್ – ಪಾತ್ ತೊಡಕ್ ಮಂಡಲ’ ದ ಯುವಕರು ಸಂಘಟಿಸಿದ್ದ ಸಭೆಯೊಂದರಲ್ಲಿ ಬಾಬಾ ಸಾಹೇಬರನ್ನು ಆಹ್ವಾನಿಸಿದ್ದು ನಂತರದಲ್ಲಿ ವಾಚನವಾಗದ ಅವರ ಭಾಷಣ “ಜಾತಿವಿನಾಶ” (Annihilation of Caste) ಪ್ರಬಂಧದ ಸ್ವರೂಪದಲ್ಲಿ ಹೊರಬಂದದ್ದು, ಪೂನ ಒಪ್ಪಂದವಾದದ್ದು ಈ ದಶಕದಲ್ಲಿಯೇ. ಹಾಗೆಯೇ, ಭಗತ್ ಸಿಂಗ್, ರಾಜಗುರು ಮತ್ತು ಸುಖದೇವರು ನೇಣುಗಂಬವೆರಿದ್ದೂ ಇದೇ ದಶಕದಲ್ಲಿ. ಒಟ್ಟಿನಲ್ಲಿ ಕಾನ್ಶಿರಾಂ ಹುಟ್ಟಿದ ಕಳೆದ ಶತಮಾನದ ಮೂವತ್ತರ ದಶಕ ಭಾರತವು ನಾನಾ ರೀತಿಯ ಕ್ರಾಂತಿ ಕುಲುಮೆಯಲ್ಲಿ ಕುದ್ದ ಅವಧಿ.

ಅಗಲಿದ ಯುಗ ಪ್ರವರ್ತಕ
೧೯೩೬ ರಲ್ಲಿ ಬಾಬಾ ಸಾಹೇಬ್ ‘ಸ್ವತಂತ್ರ ಕಾರ್ಮಿಕರ ಪಕ್ಷ’ (Indepedent Labour Party) ಎಂಬ ಪಕ್ಷವನ್ನು ಹುಟ್ಟು ಹಾಕಿದರೂ ಅದು ಯಶಸ್ಸು ಕಂಡಿರಲಿಲ್ಲ. ಚೆನ್ನೈ ನಲ್ಲಿ ೧೯೪೪ ರ ಸೆಪ್ಟೆಂಬರ್ ೨೪ ರಂದು ಬಾಬಾಸಾಹೇಬ್ ಒಂದು ಐತಿಹಾಸಿಕ ಕರೆ ನೀಡಿ “ನಮ್ಮ ಅಂತಿಮ ಗುರಿ ಈ ದೇಶವನ್ನು ಅಳುವುದು” ಎಂದು ಘೋಷಿಸಿದ್ದರು. ರಾಜಕೀಯ ಸ್ವಾತಂತ್ರ್ಯ ಬಂದ ನಲವತ್ತರ ದಶಕವು ಸಂದು ಐವತ್ತರ ದಶದ ಅಂಚಿಗೆ ಭಾರತವು ಬಂದು ನಿಂತಾಗ ಬಾಬಾ ಸಾಹೇಬ್ ದೇಶದ ಮೊದಲ ನೆಹರು ಮಂತ್ರಿ ಮಂಡಲದಲ್ಲಿ ಕಾನೂನು ಮಂತ್ರಿಗಳಾದರು. ನಂತರದಲ್ಲಿ ಸೆಪ್ಟೆಂಬರ್ ೨೯, ೧೯೫೧ರಲ್ಲಿ ಮಹಿಳೆಯರ ಹಕ್ಕು ರಕ್ಷಣೆ ಮತ್ತು ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ವಿಚಾರದಲ್ಲಿ ತಮ್ಮದೇ ಮಂತ್ರಿಮಂಡಲದ ಸಹೋದ್ಯೋಗಿಗಳು ಅಸಹಕಾರ ತೋರಿದ್ದನ್ನು ಪ್ರತಿಭಟಿಸಿ ರಾಜೀನಾಮೆ ಇತ್ತರು. Young_Ambedkar೧೯೫೬ ರ ಅಂಚಿಗೆ ಬಾಬಾ ಸಾಹೇಬರನ್ನು ಕಳೆದುಕೊಂಡ ದಲಿತ ಚಳುವಳಿ ಬಹುತೇಕವಾಗಿ ಅನಾಥವಾಗಿತ್ತು.

೩ ಅಕ್ಟೋಬರ್ ೧೯೫೭ ರಲ್ಲಿ ಬಾಬಾ ಸಾಹೇಬರ ಆಶಯಗಳನ್ನು ಹೊತ್ತ ರಿಪಬ್ಲಿಕನ್ ಪಾರ್ಟಿ ಸ್ಥಾಪನೆಯಾಯಿತು. ಒಂದೇ ವರ್ಷದಲ್ಲಿ ಒಟ್ಟಾರೆ ತಳಸಮುದಾಯಗಳನ್ನು ಜೊತೆಗೂಡಿಸಿಕೊಂಡು ಸಾಗಬೇಕಿದ್ದ ಈ ಪಕ್ಷ ಕೇವಲ ಮಹಾರಾಷ್ಟ್ರದ ಮಹರ್ ಸಮುದಾಯದ ಒಂದು ಪಕ್ಷವಾಗಿ ಪರಿವರ್ತನೆಯಾಯಿತು.

ಹೊಸ ಯುಗ ಪ್ರವರ್ತಕನೊಬ್ಬನ ಜನನ:
ಕಾನ್ಶಿರಾಂರ ತಂದೆಯ ತಂದೆ ತಾತ ಮೊದಲನೇ ಮಹಾ ಯುದ್ಧದಲ್ಲಿ ಸೇನಾ ಸೇವೆ ಸಲ್ಲಿಸಿದ್ದರು. ಅವರ ಪರಿವಾರದಲ್ಲಿ ಅವರ ತಂದೆಯವರನ್ನು ಬಿಟ್ಟು ಬಹುತೇಕ ಹಿರಿಯರೂ ಸೈನ್ಯದಲ್ಲಿ ಸೇವೆ ಸಲ್ಲಿಸಿದವರೇ ಆಗಿದ್ದರು. ಇನ್ನು ಅವರ ಪರಿವಾರ ಬಹು ಹಿಂದೆ ಸಿಖ್ ಧರ್ಮಕ್ಕೆ ಸೇರಿದ್ದ ಕಾರಣ ಬಹುತೇಕ ದಲಿತ ಕುಟುಂಬಗಳ ಮೇಲೆ ಜರುಗುವಷ್ಟು ಪ್ರಮಾಣದ ದೌರ್ಜನ್ಯ ಮತ್ತು ಅಸ್ಪೃಶ್ಯತೆಯ ಕ್ರೌರ್ಯ ಅವರನ್ನು ತಟ್ಟಿರಲಿಲ್ಲ.

ರೂಪನಗರದ ಸರಕಾರಿ ವಿಜ್ಞಾನ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದ ಕಾನ್ಶಿರಾಂ ೧೯೫೫ ರಲ್ಲಿ ಇಂದಿನ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನನಲ್ಲಿನ ಸರ್ವೇ ಆಫ್ ಇಂಡಿಯಾ ಸೇರಿಕೊಂಡರು. ಯೌವನದಲ್ಲಿ ಕಾನ್ಶಿರಾಂರನ್ನು ದೇಹದಾಢ್ಯದಲ್ಲಿ ಮೀರಿಸಿದವರೇ ಇರಲಿಲ್ಲ. ಡೆಹ್ರಾಡೂನ್ ನಲ್ಲಿ ನಡೆಯುತ್ತಿದ್ದ ಅನೇಕ ಸೈಕಲ್ ಸ್ಪರ್ಧೆಗಳಲ್ಲಿ ಅವರು ಪಾಲ್ಗೊಳ್ಳುತ್ತಿದ್ದರು. ಹಾಗೆಯೇ ಡೆಹ್ರಾಡೂನ್ ಸುತ್ತಮುತ್ತಲಿನ ಕೆಮ್ಟಿ ಜಲಪಾತ, ಮಸ್ಸೂರಿ ಅನೇಕ ಪ್ರೇಕ್ಷಣೀಯ ಸ್ಥಳಗಳಿಗೆ ಸೈಕಲ್ ಮುಖಾಂತರವೇ ಸಂಚರಿಸಿದ್ದರು. ಡೆಹ್ರಾಡೂನ್ನಲ್ಲಿ ಶುರುವಾದ ಅವರ ಸೈಕಲ್ ಯಾತ್ರೆ ಅವರ ಜೀವನದಾದ್ಯಂತ ಮುಂದುವರೆದಿತ್ತು.

೧೯೫೬ ರ ಡಿಸೆಂಬರ್ ೭ ರಂದು ಶುಕ್ರವಾರ ಕಾನ್ಶಿರಾಂ ಎಂದಿನಂತೆ ತಮ್ಮ ಕಚೇರಿಗೆ ಹೋದರು. ಅಲ್ಲಿ ತಮ್ಮ ಒಬ್ಬ ಸಹೋದ್ಯೋಗಿ ಪರಶುರಾಮ್ ಅಂದು ಊಟ ತಂದಿರಲಿಲ್ಲ. ತಮ್ಮ ಊಟವನ್ನು ಹಂಚಿಕೊಳ್ಳಲು ಕಾನ್ಶಿರಾಂ ಅವರನ್ನು ಕೇಳಿಕೊಂಡರು. ತುಂಬಾ ದುಃಖ ಮತ್ತು ಬೇಸರದಲ್ಲಿದ್ದ ಈ ಸಹೋದ್ಯೋಗಿ ಅಂದು ತಾವು ಉಪವಾಸವಿರುವುದಾಗಿ ತಿಳಿಸಿದರು. ಅದಕ್ಕೆ ಕಾರಣ ವಿಚಾರಿಸಿದಾಗ ಪರಶುರಾಮ್ ‘ನೆನ್ನೆ ದಿನ ಬಾಬಾಸಾಹೇಬ್ ಮಹಾ ಪರಿನಿಬ್ಬಾಣ ಹೊಂದಿದ್ದಕ್ಕೆ ನಾನು ಶೋಕಾಚರಣೆಯಲ್ಲಿದ್ದೇನೆ’ ಎಂದು ತಿಳಿಸಿದರು.

ಅದೇ ಮೊದಲ ಬಾರಿ ಕಾನ್ಶಿರಾಂ ಬಾಬಾಸಾಹೇಬ ಮತ್ತವರ ಮಹತಿಯನ್ನು ಕುರಿತು ಅರಿತದ್ದು. ತಕ್ಷಣವೇ ಕಾನ್ಶಿರಾಂ ಪರಶುರಾಮರಿಂದ ಬಾಬಾಸಾಹೇಬರ ಪಟವೊಂದನ್ನು ಪಡೆದು ತಮ್ಮ ಕೋಣೆಯಲ್ಲಿ ಹಾಕಿಕೊಳ್ಳುತ್ತಾರೆ. ಹಾಗೆಯೇ ತುಂಬಾ ಅಂದಿನ ದಿನಗಳಲ್ಲಿ ದುರ್ಲಭವಾಗಿದ್ದ ಬಾಬಾಸಾಹೇಬರ ಬರಹಗಳನ್ನು ಸಂಗ್ರಹಿಸಲು ತೊಡಗುತ್ತಾರೆ. ಅಂದಿನಿಂದಲೇ ಶುರುವಾದ ದಮನಿತರ ಕುರಿತ ಕಾಳಜಿ ಮತ್ತು ತಮ್ಮ ಗುರಿಯನ್ನು ತಲುಪಲು ಬೇಕಿರುವ ಶ್ರದ್ಧೆಯನ್ನು ಕಾನ್ಶಿರಾಂ ತಮ್ಮ ಕೊನೆಯುಸಿರಿನವರೆಗೂ ಕಾಪಾಡಿಕೊಂಡು ಬಂದರು.

ಕಾನ್ಶಿರಾಂ ಪುಣೆಯಲ್ಲಿರುವಾಗ ಬಾಬಾಸಾಹೇಬರ ಬಹುತೇಕ ಪ್ರಬಂಧ ಮತ್ತು ಲೇಖನಗಳನ್ನು ಓದಿಕೊಂಡರು. ಅವರ ಮೇಲೆ ಅತ್ಯಂತ ಪ್ರಭಾವ ಬೀರಿದ ಕೃತಿ ಎಂದರೆ ಬಾಬಾಸಾಹೇಬರ ‘ಅನಿಹಿಲೇಶನ್ ಆಫ್ ಕಾಸ್ಟ (“Annihilation of Caste”). ಈ ಪ್ರೌಢ ಪ್ರಬಂಧವನ್ನು ಒಂದೇ ರಾತ್ರಿಯಲ್ಲಿ ಮೂರು ಬಾರಿ ಓದಿಕೊಂಡರು. ಹೀಗಿರುವಾಗ ೧೯೬೫ ರ ಆರಂಭದಲ್ಲಿ ಕೇಂದ್ರ ಸರಕಾರ ತನ್ನ ರಜಾ ಪಟ್ಟಿಯನ್ನು ಪರಿಷ್ಕರಿಸಿ ಪ್ರಕಟಣೆ ಹೊರಡಿಸಿತು. ಬುದ್ಧ ಮತ್ತು ಅಂಬೇಡ್ಕರ್ ಜಯಂತಿಗಳ ರಜೆಯನ್ನು ರದ್ದುಗೊಳಿಸಿ ತಿಲಕ ಜಯಂತಿಗೆ ರಜಾ ಘೋಷಿಸಿ ದೀಪಾವಳಿಗೆ ಒಂದು ದಿನ ಜಾಸ್ತಿ ರಜೆ ಕೊಡಲಾಗಿತ್ತು. kanshiramಇದನ್ನು ಪ್ರತಿಭಟಿಸಿ ರಾಜಸ್ಥಾನದ ದಲಿತ ಉದ್ಯೋಗಿ ದೀನಾ ಭಾನ ಎಂಬುವವರು ಅಂದಿನ ಕೇಂದ್ರ ಸರಕಾರದ ವಿರುದ್ದ ಪ್ರತಿಭಟನೆ ಮಾಡಿದರು. ದೀನಾರನ್ನು ಕೇಂದ್ರ ಸರಕಾರದ ಸೇವೆಯಿಂದ ಸಸ್ಪೆಂಡ್ ಮಾಡಲಾಯಿತು.

ಇದನ್ನು ಪ್ರತಿಭಟಿಸಿ ರಾಷ್ಟ್ರಾದ್ಯಂತ ಚಳುವಳಿಯನ್ನು ಸಂಘಟಿಸಿದ ಕಾನ್ಶಿರಾಂ ದೀನಾ ಭಾನರಿಗೆ ಕಾನೂನು ನೆರವನ್ನೂ ಒದಗಿಸಿ ಕೊಡುತ್ತಾರೆ. ರಾಷ್ಟ್ರವ್ಯಾಪಿ ಚಳವಳಿಗೆ ಮಂಡಿಯೂರಿದ ಸರಕಾರ ಬುದ್ಧ ಮತ್ತು ಅಂಬೇಡ್ಕರ್ ಜಯಂತಿಗಳ ರಜೆಯನ್ನು ಮರುಸ್ಥಾಪನೆ ಮಾಡಿತು; ಹಾಗೆಯೇ ದೀನಾ ಭಾನರನ್ನೂ ಕೆಲಸಕ್ಕೆ ಸೇರಿಸಿಕೊಂಡಿತು. ಈ ಸಂಘಟಿತ ಹೋರಾಟದಿಂದ ಪ್ರೇರಣೆಗೊಂಡ ಮನ್ಯವರರು ೧೯೬೫ ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ಇತ್ತು ಸಾರ್ವಜನಿಕ ಜೀವನಕ್ಕೆ ಧುಮುಕುತ್ತಾರೆ.

ಅಂದು ಆವರು ತೊಟ್ಟ ಪ್ರತಿಜ್ಞೆ: “I will never get married, I will never acquire any property, I will never visit my home, I will devote and dedicate the rest of my life to achieve the goals of Phule-Ambedkar movement.” (“ನಾನೆಂದೂ ಮದುವೆಯಾಗುವುದಿಲ್ಲ, ನಾನೆಂದಿಗೂ ಅಸ್ತಿಯನ್ನು ಸಂಪಾದಿಸುವುದಿಲ್ಲ, ನನ್ನ ಮನೆಗೆ ಎಂದಿಗೂ ಹೋಗುವುದಿಲ್ಲ, ನನ್ನ ಸಂಪೂರ್ಣ ಜೀವನವನ್ನು ಫುಲೆ-ಅಂಬೇಡ್ಕರ್ ಚಳುವಳಿಗೆ ಮುಡಿಪಾಗಿಡುತ್ತೇನೆ.”)

(ಮುಂದುವರೆಯುತ್ತದೆ…)

ಮನ್ವಂತರ : ಗಾಂಧಿ ಜಯಂತಿ ಕಥಾಸ್ಪರ್ಧೆ 2015 – ಬಹುಮಾನಿತ ಕಥೆ

ಸಂವರ್ತಸಾಹಿಲ್

“ಇಲ್ಲ ಸಾರ್ ತಲುಪಿಲ್ಲ.”

“ನಾನು ಕಳುಹಿಸಿ ಹತ್ತು ದಿನದ ಮೇಲಾಯ್ತು.”

“ಅಡ್ರೆಸ್ ಸರಿ ಬರ್ದಿದ್ದೀರಾ?”

“ಹೌದು. ಸರಿಯಾಗೇ ಬರೆದಿದ್ದೇನೆ.”

“ಆದರೂ ಬಂದಿಲ್ಲ ಯಾಕೋ ಗೊತ್ತಿಲ್ಲ.”

ಫೋನ್ ಇಟ್ಟ ಶ್ರೀನಿವಾಸ ಮೇಷ್ಟ್ರಿಗೆ ಸಿಟ್ಟು ಬಂದಿತ್ತು. ಫೋನ್ ಇಟ್ಟ ರಭಸಕ್ಕೆ ಟೀಪಾಯಿ ಅಂಚಿನಲ್ಲಿ ಇದ್ದ ಪೆನ್ ಸ್ಟಾಂಡ್ ಗುರುತ್ವಾಕರ್ಷಣೆಯನ್ನು ನಿರೂಪಿಸಿತ್ತು. ಮಧ್ಯಾಹ್ನಕ್ಕೆ ಅಡುಗೆ ತಯಾರಿಸುತ್ತಿದ್ದ ಮೇಷ್ಟ್ರ artಹೆಂಡತಿ ಅಡುಗೆಮನೆಯ ಬಾಗಿಲ ತನಕ ಬಂದು ಇವರು ಪೆನ್ ಸ್ಟಾಂಡ್ ಎತ್ತಿಡುವುದನ್ನು ನೋಡಿ ಮತ್ತೆ ಗ್ಯಾಸ್ ಒಲೆಯ ಬಳಿಗೆ ಹೋದರು.

ಒಂದೆರಡು ನಿಮಿಷ ಬಿಟ್ಟು ಅಡುಗೆ ಮನೆ ಹೊಕ್ಕ ಮೇಷ್ಟ್ರು, “ತರಕಾರಿ ಹೆಚ್ಚಿ ಕೊಡ್ಲಾ?” ಎಂದು ವಿಚಾರಿಸಿದರೆ ಹೆಂಡತಿ, “ಬೇಡ” ಎಂದು ತನ್ನ ಕೆಲಸ ಮುಂದುವರಿಸಿದರು. ಮತ್ತೆ ತನ್ನ ಕೊಠಡಿಗೆ ಹೋದ ಮೇಷ್ಟ್ರು ತನ್ನ ಕಪಾಟಿನ ಒಳಕ್ಕೆ ಇಟ್ಟಿದ್ದ ಹಲವು ಪುಸ್ತಕಗಳಲ್ಲಿ ಒಂದನ್ನು ಆಯ್ದು ಓದಲು ಆರಂಬಿಸಿದರು. ಓದುತ್ತ ಓದುತ್ತಾ ಹಾಗೆ ನಿದ್ದೆ ಹೋದರು.

ಕುಕ್ಕರ್ ಸೀಟಿ ಹೊಡೆದಾಗ ಎಚ್ಚರಾದ ಮೇಷ್ಟ್ರು ಹೋಗಿ ಹೆಂಡತಿ ಬಳಿ, “ನಿನಗೋಸ್ಕರ ಹಪ್ಪಳ ಕಾಯಿಸಿಕೋ ಬೇಕಾದ್ರೆ,” ಎಂದರೆ ಹೆಂಡತಿ “ನನಗೆ ಈ ಸೆಖೆಗೆ ಗಂಜಿ ಊಟ ಮಾತ್ರ ಸಾಕು ಅಂತಾಗಿದೆ,” ಎಂದರು. ಅಲ್ಲೇ ಇದ್ದ ಡ್ರಮ್ಮಿನ ಒಳಗಿಂದ ಒಂದು ಲೋಟ ನೀರು  ಕುಡಿದು ಮೇಷ್ಟ್ರು, “ನನ್ನ ಲೇಖನ ತಲುಪಲೇ ಇಲ್ಲ ಅಂತಾ ಹೇಳ್ತಾರಲ್ಲಾ ಪ್ರತಿ ಸತಿ,” ಎಂದು ಸುಮಾರು ಹೊತ್ತಿನಿಂದ ಒಳಗೇ ಇಟ್ಟುಕೊಂಡಿದ್ದ ಕೊರಗನ್ನು ಹೊರ ಹಾಕಿದರು. “ನೀವು ಅಡ್ರೆಸ್ ಸರಿಯಾಗೇ ಬರ್ದಿದ್ರಾ?” ಎಂದು ಹೆಂಡತಿ ಕೇಳಿದಾಗ ಸಿಟ್ಟುಗೊಂಡ ಮೇಷ್ಟ್ರು, “ಏನು ನನಗೆ ಬರೆಯಲಿಕ್ಕೆ ಗೊತ್ತಿಲ್ಲವಾ?” ಎಂದು ಗುಡುಗಿ ರಭಸದಲ್ಲಿ ಅಡುಗೆಮನೆಯಿಂದ ಹೊರಹೋದರು.

ಕಪಾಟಿನ ಗಾಜಿಗಂಟಿ ಕೂತಿದ್ದ ಧೂಳನ್ನು ಒರೆಸುತ್ತಿದ್ದ ಮೇಷ್ಟ್ರನ್ನು ಅವರ ಹೆಂಡತಿ ಊಟಕ್ಕೆ ಕರೆದರು. ಕೈ ತೊಳೆದುಕೊಂಡು ಊಟಕ್ಕೆ ಕೂತ ಶ್ರೀನಿವಾಸ ಮೇಷ್ಟ್ರು, “ರಿನ್ಜೆನ್ ಫೋನ್ ಮಾಡಿದ್ಲಾ?” ಎಂದು ಹೆಂಡತಿಯನ್ನು ಕೇಳಿದರು. “ಹೌದು ಮಾಡಿದ್ಲು. ಬರ್ತಾಳನ್ತೆ ಈ ವಾರ,” ಎಂದು ಹೇಳುತ್ತಾ ಹೆಂಡತಿ ಗಂಜಿ ಬಳಸಿದರು.

ನಾಸ್ತಿಕರಾದ ಮೇಷ್ಟ್ರು ತಮ್ಮ ಮಗಳಿಗೆ ಬೌದ್ಧ ಹೆಸರಾದ ರಿನ್ಜೆನ್ ಅನ್ನು ಆಯ್ಕೆ ಮಾಡಿದ್ದರು. ರಿನ್ಜೆನ್ ಎಂದರೆ ಬೌಧಿಕ ಶಕ್ತಿ ಉಳ್ಳಾಕೆ ಎಂದು. ಆಕೆಯೂ ತನ್ನಂತೆ ಆಗಬೇಕು ಎಂಬುದು ಮೇಷ್ಟ್ರ ಆಸೆಯಾಗಿತ್ತು. ಬೌಧಿಕ ಮತ್ತು ವೈಚಾರಿಕವಾಗಿ ಇವರಂತೆ ಆದ ರಿನ್ಜೆನ್ ಸ್ವಭಾವದಲ್ಲಿ ಮಾತ್ರ ತನ್ನ ತಾಯಿಯಂತೆ ಮೃದು ಸ್ವಭಾವದವಳಾಗಿ ಬೆಳೆದಳು.

“ಈ ಬಾರಿ ನೀವೇ ಒಮ್ಮೆ ಮಾತಾಡಿ ಅವಳ ಹತ್ರ,” ಎಂದು ಹೆಂಡತಿ ಹೇಳಿದರೆ ಮೇಷ್ಟ್ರು “ಅವಳಿಷ್ಟ. ಹೆಚ್ಚು ಒತ್ತಾಯ ಮಾಡಬಾರದು,” ಎಂದರು.

“ಒತ್ತಾಯ ಮಾಡಬಾರದೇನೋ ಹೌದು, ಆದರೆ ಒಬ್ಬಳೇ ಇರೋದು ಅಂದ್ರೆ ಅದೂ ಕಷ್ಟ.”

“ಹೊಸ ಕಾಲ ಇದು. ಹೊಸ ಕಾಲದ ಹುಡುಗಿ ಅವಳು. ಏನೂ ಕಷ್ಟ ಆಗೋಲ್ಲ.”

“ಕಾಲ ಯಾವುದೇ ಆದರೂ ಮನುಷ್ಯ ಒಂಟಿಯಾಗಿ ಬದುಕಲಾರ.”

ಏನೂ ಉತ್ತರಿಸದೆ ಮೇಷ್ಟ್ರು ಊಟ ಮಾಡುತ್ತಾ ಹೋದರು. ಊಟ ಮುಗಿಸಿ ತಟ್ಟೆ ತೊಳೆದಿಟ್ಟು ಒಂದೆರಡು ಘಂಟೆ ನಿದ್ರಿಸಿದರು. ಇವರಿಗೆ ಎಚ್ಚರಾದಾಗ ಇವರ ಹೆಂಡತಿ ಇನ್ನೂ ಮಲಗಿಕೊಂಡೆ ಇದ್ದರು. ಅಡುಗೆ ಮನೆಗೆ ಹೋಗಿ ಎರಡು ಕಪ್ ಚಹಾ ತಯಾರಿಸಿದ ಮೇಷ್ಟ್ರು ಬಂದು ಹೆಂಡತಿಯನ್ನು, “ಘಂಟೆ ನಾಲ್ಕುವರೆಯಾಯಿತು” ಎಂದು ಎಬ್ಬಿಸಿ ಬಿಸಿ ಚಹಾ ಕೊಟ್ಟರು.

ತಾವು ಮತ್ತು ತಮ್ಮ ಹೆಂಡತಿ ಕುಡಿದ ಚಹದ ಲೋಟೆಯನ್ನು ಮೇಷ್ಟ್ರು ತೊಳೆಯುತ್ತಿರುವಾಗ ಮನೆಯ ಬಾಗಿಲು ಯಾರೋ ಬಡಿದರು. ಲೋಟಗಳನ್ನು ಇನ್ನೂ ಸಂಪೂರ್ಣವಾಗಿ ತೊಳೆದಿರದ ಕಾರಣ ಮೇಷ್ಟ್ರು ಅಲುಗಾಡಲಿಲ್ಲ. ಆದರೆ ಮೇಷ್ಟ್ರ ಕಿವಿ ಬಾಗಿಲ ಕಡೆ ಕೇಂದ್ರಗೊಂಡಿತ್ತು. ಹೆಂಡತಿ ಬಾಗಿಲು ತೆಗೆಯುವ ಸದ್ದು ಕೇಳಿದಾಗ ನೆಟ್ಟಗಿದ್ದ ಕಿವಿಯನ್ನು ಸ್ವಲ್ಪ ಸಡಿಲಗೊಳಿಸಿದ್ದರು.

“ಬಾ ಮಾರಾಯ…” ಎಂಬ ಹೆಂಡತಿಯ ಸ್ವರ ಕೇಳಿದ ಮೇಷ್ಟ್ರು ಬಹಳ ಕುತೂಹಲದಿಂದ ಬೇಗಬೇಗನೆ ಲೋಟೆ ತೊಳೆದಿಟ್ಟು ಹೊರಬಂದರು. ಅವರ ಹಳೆಯ ಶಿಷ್ಯನಾದ ಶ್ರೀಕರ್ ಬಂದಿದ್ದ.

ರಿನ್ಜೆನ್ ಸಹಪಾಟಿಯಾಗಿದ್ದ ಈತ ಶ್ರೀನಿವಾಸ್ ಮೇಷ್ಟ್ರ ಮೆಚ್ಚಿನ ಶಿಷ್ಯರಲ್ಲಿ ಒಬ್ಬ. ಮೊದಮೊದಲಿಗೆ ಮೇಷ್ಟ್ರನ್ನು ಶ್ರೀಕರ್ abstract-art-sheepಇಷ್ಟ ಪಡುತ್ತಿರಲಿಲ್ಲ ಮತ್ತು ಶ್ರೀಕರ್ ಎಂದರೆ ಮೇಷ್ಟರಿಗೂ ಅಷ್ಟಕ್ಕೇ ಅಷ್ಟೇ. ಆದರೆ ಶಾಲೆ ಮುಗಿದ ನಂತರ ಮೇಷ್ಟ್ರ ಪಾಠ ಅವರ ವೈಚಾರಿಕತೆ ಶ್ರೀಕರನಿಗೆ ಹೆಚ್ಹು ಅರ್ಥವಾಗಿ ಮೇಷ್ಟ್ರ ಅಭಿಮಾನಿಯಾಗಿದ್ದ. ಹೆಚ್ಚಿನ ವಿಧ್ಯಾಭ್ಯಾಸಕ್ಕೆ ಬೇರೆ ಊರಿಗೆ ಹೋಗಿದ್ದರೂ ರಜೆಯಲ್ಲಿ ಊರಿಗೆ ಬಂದಾಗ ತಪ್ಪದೆ ಮೇಷ್ಟ್ರನ್ನು ಭೇಟಿ ಆಗಿ, “ನೀವು ಆವಾಗ ಹೇಳಿದ ಮಾತು ಈಗ ಅರ್ಥ ಆಗ್ತಿದೆ,” ಎಂದು ಮೇಷ್ಟ್ರೊಂದಿಗೆ ಘಂಟೆಗಟ್ಟಲೆ ಮಾತನಾಡಿ ಹೋಗುತ್ತಿದ್ದ. ಮೊದಮೊದಲಿಗೆ ಈತನ್ನು ಎಲ್ಲಾ ಹುಡುಗರಂತೆ ಎಂದು ಭಾವಿಸಿದ್ದ ಮೇಷ್ಟ್ರು ಆಮೇಲೆ ಈತ ತನ್ನ ಪ್ರಭಾವಕ್ಕೆ ಒಳಗಾಗಿ ತಾನು ನಂಬಿದ್ದ ಸಿದ್ಧಾಂತಕ್ಕೆ ಬಾಗಿ ಅದರಲ್ಲೇ ಮಾಗಿದ ಕಾರಣ ತನ್ನ ಬಗ್ಗೆಯೂ ಹೆಮ್ಮೆ ಪಡುತ್ತಾ ಅವನನ್ನು ಮೆಚ್ಚಲಾರಂಭಿಸಿದ್ದರು.

“ಏನೋ ಮಾರಾಯ ಯಾವಾಗ ಬಂದಿ ಊರಿಗೆ?”

“ಎರಡು ವಾರ ಆಯ್ತು”

“ಸರಿ… ಎಲ್ಲಿರೋದು ಇವಾಗ?”

“ಅಹ್ಮೆದಾಬಾದಿನಲ್ಲಿ.”

“ಖುಷಿಯಲ್ಲಿ ಇದ್ದಿಯಲ್ವಾ?”

“ಹ್ಞೂ ಸಾರ್.”

ಹೀಗೆ ಮೇಷ್ಟ್ರು ಮತ್ತು ಶ್ರೀಕರ್ ಮಾತನಾಡುತ್ತಾ ಇರಬೇಕಾದರೆ ಮೇಷ್ಟ್ರ ಹೆಂಡತಿ, “ಚಹಾ ಕುಡಿತಿಯಾ ಇಲ್ಲ ಜ್ಯೂಸು ಮಾಡಲಾ?” ಎಂದು ವಿಚಾರಿಸಿದರು. “ಜ್ಯೂಸ್” ಎಂದ ಶ್ರೀಕರ್.

“ನಿಮ್ಮ ಆರೋಗ್ಯ ಸರಿ ಇಲ್ಲ ಅಂತ ಗೊತ್ತಾಯ್ತು…”

“ಪ್ರಿನ್ಸಿಪಾಲ ಆಗಾದಾಗಿನಿಂದ ಒತ್ತಡ ಜಾಸ್ತಿ ಆಗಿ ಕ್ರಮೇಣ ಹದಗೆಡುತ್ತಾ ಬಂತು ಮಾರಾಯ.”

“ಓಹ್… ನಿಮ್ಮ ರಿಟೈರ್ಮೆಂಟ್ ದಿನ ನಾನು ಬಂದು ಭೇಟಿ ಆಗಿದ್ದೆ ನಿಮ್ಮನ್ನು ಆಫೀಸಿನಲ್ಲಿ. ಆಗ ಹೇಳ್ತಾ ಇದ್ರಿ.”

“ಹೌದು ಮಾರಾಯ. ಆ ಗಣಪತಿ ಮೇಷ್ಟ್ರು ಎಷ್ಟು ಕಾಟ ಕೊಟ್ಟರು ಅಂದ್ರೆ. ಸಾಕು ಸಾಕಾಗಿ ಹೋಯಿತು.”

ಶ್ರೀನಿವಾಸ್ ಮೇಷ್ಟ್ರು ತರಗತಿಯಲ್ಲಿ ಅನಗತ್ಯವಾಗಿ ಪಠ್ಯೇತರ ವಿಷಯಗಳ ಕುರಿತು ಮಾತನಾಡಿ ಮಕ್ಕಳ ಮನಸ್ಸು ಹಾಳು ಮಾಡುತ್ತಾರೆ ಮತ್ತು ಅವರನ್ನು ಇನ್ಫ್ಲುಯೆನ್ಸ್ ಮಾಡಲು ಪ್ರಯತ್ನಿಸುತ್ತಾರೆ ಎಂಬುದು ಗಣಪತಿ ಮೇಷ್ಟ್ರ ವಾದವಾಗಿತ್ತು. ಅದರ ಕುರಿತು ಇತರೆ ಸಹೋದ್ಯೋಗಿಗಳ ಜೊತೆ ಅವರು ಹಲಾವಾರು ವರ್ಷಗಳಿಂದ ಮಾತನಾಡುತ್ತಲೇ ಬಂದಿದ್ದರು ಮತ್ತು ಹೆಚ್ಚಿನವರಿಗೆ ಗಣಪತಿ ಮೇಷ್ಟ್ರ ಮಾತು ಸರಿ ಅನ್ನಿಸುತ್ತಿತ್ತು.

“ಸೈದ್ಧಾಂತಿಕವಾಗಿ ಅವರಿಗೆ ನನ್ನ ಬಗ್ಗೆ ಭಿನ್ನಾಭಿಪ್ರಾಯ. ಆದರೆ ಅದನ್ನು ನೇರ ಹೇಳುತ್ತಿರಲಿಲ್ಲ. ಹಿಂದಿನಿಂದ ಪಿತೂರಿ ನಡೆಸುವುದು. ನನ್ನ ಕೆಲಸದ ಬಗ್ಗೆ ದೂರು ನೀಡಲು ಬಾರೀ ಪ್ರಯತ್ನ ನಡೆಸಿದರು. ಆದರೆ ಆಗಲಿಲ್ಲ. ನನಗೆ ಗೊತ್ತಿತ್ತು. ಅದಿಕ್ಕೆ ಉಪಪ್ರಾಂಶುಪಾಲ ಆಗ್ತಾ ಇದ್ದ ಹಾಗೆ ನನ್ನ ರಾಜಕೀಯ ಚಟುವಟಿಕೆ ಸ್ವಲ್ಪ ಕಡಿಮೆ ಮಾಡಿದೆ. ನನ್ನ ವಿರುದ್ಧ ಸಂಚು ಹೂಡುತ್ತಿದ್ದರು ಎಂಬುದು ಗೊತ್ತಿದ್ದೂ ನಾನು ಜಾಗ್ರತೆ ವಹಿಸದಿದ್ದರೆ ಹೇಗೆ?”

ಈ ಎಲ್ಲಾ ಮಾತುಗಳನ್ನೂ ತಮ್ಮ ರಿಟೈರ್ಮೆಂಟ್ ದಿನದಂದು ಮೇಷ್ಟ್ರು ಶ್ರೀಕರ್ ಬಳಿ ಹೇಳಿಕೊಂಡಿದ್ದರು. ಅವರು ಎಷ್ಟೋ ವಿಷಯಗಳನ್ನು ಹೀಗೆ ಮತ್ತೆ ಮತ್ತೆ ಹೇಳಿಕೊಳ್ಳುತ್ತಿದರೆ ಈತ ಅವರ ಮಾತು ಕೇಳೋರು ಯಾರು ಇಲ್ಲ ಇರಬೇಕು ಅಂತ ಅಂದುಕೊಂಡು ತುಟಿಕ್ಪಿಟಿಕ್ ಎನ್ನದೆ ಅವ್ರ ಮಾತನ್ನು ಕೇಳುತ್ತಿದ್ದ ಮತ್ತೆ ಮತ್ತೆ. ಅವರು ಅಲ್ಪವಿರಾಮ ನೀಡಿದಾಗ ಬೇರೆ ಯಾವುದೋ ವಿಷಯದ ಪ್ರಸ್ತಾಪ ಮಾಡಿ ಹೊಸ ಮಾತು ಆರಂಭಿಸುವ ಕಲೆ ಇವನಿಗೆ ಗೊತ್ತಿತ್ತು. ಆದರೆ ಯಾವ ವಿಷಯವನ್ನೂ ತಾನು ಮಾತನಾಡಬೇಕು ಅಂತ ಅಂದುಕೊಂಡಿರುವ ವಿಷಯಕ್ಕೆ ತಂದು ತಲುಪಿಸುವ ಕಲೆ ಮೇಷ್ತ್ರಿಗಿತ್ತು.

ಹೀಗೆ ಅದೇ ಗಣಪತಿ ಮೇಷ್ಟ್ರು ನಡೆಸಿದ ಸಂಚಿನ ಮಾತು ಮತ್ತು ಪ್ರಾಂಶುಪಾಲನಾಗಿದ್ದಾಗ ಇದ್ದ ಒತ್ತಡದ ಮಾತು ಮತ್ತೆ ಮೇಷ್ಟ್ರು ಆರಂಬಿಸಿದಾಗ ಅವರು ಬರವಣಿಗೆ ಕಡಿಮೆ ಗೊಳಿಸಿದ್ದು ಅದೇ ಸಮಯದಲ್ಲಿ ಅಲ್ಲವೆ ಎಂದು ಪ್ರಶ್ನಿಸಿದ ವಿಷಯ ಬದಲಿಸುವ ಪ್ರಯತ್ನದಲ್ಲಿ. ಆಗ ಮೇಷ್ಟ್ರು “ಹೌದು” ಎನ್ನುತ್ತಾ ತಾನು ಬರೆಯುತ್ತಿದ್ದ ನ್ಯಾಯಪರ ಮತ್ತು ಅನ್ಯಾಯದ ವಿರುದ್ಧದ ಬರವಣಿಗೆಯನ್ನು ಗಣಪತಿ ಮೇಷ್ಟ್ರು ಒಂದೆರಡು ಬಾರಿ ಮ್ಯಾನೇಜ್ಮೆಂಟ್ ಅವರಿಗೆ ಕಳುಹಿಸಿ ಇದು ದೇಶದ್ರೋಹಿ ಬರವಣಿಗೆ ಎಂದು ದೂರು ಸಲ್ಲಿಸಿ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಒತ್ತಡ ಹೇರಿದ್ದನ್ನು ನೆನಪಿಸಿಕೊಂಡು ಆ ಕಾರಣಕ್ಕಾಗಿಯೇ ತಾನು ಉಪಪ್ರಾಂಶುಪಾಲ ಆಗುತ್ತಿದ್ದಂತೆಯೇ ಮಕ್ಕಳನ್ನು ಆಲೋಚಿಸುವಂತೆ ಮಾಡುವುದೇ ದೊಡ್ಡ ಕ್ರಾಂತಿ ಎಂದು ಭಾವಿಸಿ ಅವರ ಕಡೆ ಹೆಚ್ಚು ಗಮನ ಹರಿಸಲು ಆರಂಬಿಸಲು ನಿರ್ಧರಿಸಿದ್ದನ್ನು ಹೇಳಿಕೊಂಡರು. ಆಮೇಲೆ ಒಂದರೆ ಕ್ಷಣ ಸುಮ್ಮನಾಗಿ, “ಆದರೆ ನನ್ನ ಅಭಿಪ್ರಾಯ ನನ್ನ ಸಿದ್ಧಾಂತ ಮಕ್ಕಳಿಗೂ ಬೇಡ ಆಗಿತ್ತು,” ಅಂದರು. ಆ ಮಾತು ಹೇಳುವಾಗ ಅವರ ಮುಖದಲ್ಲಿ ಒಂದು ನಗುವಿತ್ತು. ಅದು ತಮಗಿದ್ದ ನೋವನ್ನು ಮುಚ್ಚಿಡಲು ತುಟಿಗೆ ಅಂಟಿಸಿಕೊಂಡ ನಗು ಎಂದು ಶ್ರೀಕರನಿಗೆ ಗೊತ್ತಿತ್ತು.

“ಬೇರೆಯವರ ಬಗ್ಗೆ ಗೊತ್ತಿಲ್ಲ ಸರ್. ನನ್ನ ಬದುಕಿಗಂತೂ ತಿರುವು ಸಿಕ್ಕಿದ್ದು ನಿಮ್ಮ ಕ್ಲಾಸಿನಲ್ಲಿ ಕೂತ ಕಾರಣಕ್ಕೆಯೇ.”

“ಅದೇ ಮಾರಾಯ. ನಾನು ಪರೀಕ್ಷೆಗೆ ತಯಾರಿ ನಡೆಸುವ ಮೇಷ್ಟ್ರಲ್ಲ. ಬದುಕಿಗೆ ತಯಾರಿ ನಡೆಸುವ ಮೇಷ್ಟ್ರು. ಆದರೆ ಮಕ್ಕಳಿಗೆ ಪರೀಕ್ಷೆಗೆ ತಯಾರಿ ನಡೆಸುವವರೇ ಬೇಕು! ನಾನು ಕಲಿಸಲು ಆರಂಬಿಸಿದ ದಿನದಲ್ಲಿ ಮಕ್ಕಳು ಸ್ವಲ್ಪವಾದರೂ ಆಸಕ್ತಿ ತೋರಿಸುತ್ತಿದ್ದರು. ನಿಮ್ಮ ಸಮಯದಲ್ಲಿ ಇದ್ದ ವಿದ್ಯಾರ್ಥಿಗಳು ಮಾತ್ರ….” ಎಂದು ಅರೆಕ್ಷಣ ಮೌನ ಆದ ಮೇಷ್ಟ್ರು ಮಾತು ಮುಂದುವರಿಸುತ್ತಾ, “ಅವರ ತಪ್ಪಲ್ಲ ಬಿಡು. ಜಾಗತೀಕರಣದ ಸಂದರ್ಭದಲ್ಲಿ ಬೆಳೆದ ಮಕ್ಕಳು ನೀವೆಲ್ಲಾ…” ಎಂದರು ತಮಗೆ ತಾವೇ ಸಮಾಧಾನ ಹೇಳಿಕೊಳ್ಳುವ ರೀತಿಯಲ್ಲಿ.

ಅಷ್ಟುಹೊತ್ತಿಗೆ ಮೇಷ್ಟ್ರ ಹೆಂಡತಿ ಲಿಂಬೆ ಜ್ಯೂಸು ತೆಗೆದುಕೊಂಡು ಬಂದರು. “ಕುಡಿಬೇಡ. ಸ್ವಲ್ಪ ಇರು. ಸಕ್ಕರೆ ಹಾಕಲಿಲ್ಲ ಅದಿಕ್ಕೆ. art-1ತರುತ್ತೇನೆ ಈಗ,” ಎನ್ನುತ್ತಾ ಇವನಿಗೊಂದು ಗ್ಲಾಸ್ ಜ್ಯೂಸ್ ಮತ್ತೆ ಮೇಷ್ತ್ರಿಗೊಂದು ಗ್ಲಾಸ್ ಜ್ಯೂಸ್ ಕೊಟ್ಟರು. ತಕ್ಷಣ ಅಡುಗೆ ಮನೆಗೆ ಹೋಗಿ ಸಕ್ಕರೆಯ ಡಬ್ಬಿ ತೆಗೆದುಕೊಂಡು ಬಂದು, “ಎರಡು ಚಮಚ ಹಾಕ್ಲಾ?” ಎಂದು ಕೇಳಿದರೆ ಶ್ರೀಕರ್, “ಎರಡೂವರೆ ಹಾಕಿ,” ಎಂದ. ಎರಡೂವರೆ ಚಮಚ ಸಕ್ಕರೆ ಹಾಕಿ ಚಮಚವನ್ನು ಬಿಟ್ಟು ಹೋದರು. ಆ ಚಮಚದ ಸಹಾಯದಿಂದ ಶ್ರೀಕರ್ ಸಕ್ಕರೆ ಕರಗಿಸಿಕೊಳ್ಳುತ್ತಾ ಇರಲು ಸಕ್ಕರೆ ಡಬ್ಬಿ ಅಡುಗೆಮನೆಯಲ್ಲಿ ಇಟ್ಟು ಮೇಷ್ಟ್ರ ಹೆಂಡತಿ ವಾಪಸ್ ಬಂದರು.

“ನೀವು ಇನ್ನೂ ಸೆರ್ವಿಸಿನಲ್ಲಿ ಇದ್ದೀರಾ?” ಎಂದು ಮೇಷ್ಟ್ರ ಹೆಂಡತಿಯನ್ನು ಕೇಳಿದ ಶ್ರೀಕರ್.

“ಇಲ್ಲ. ಎರಡು ವರ್ಷ ಆಯ್ತು ರಿಟೈರ್ ಆಗಿ,” ಎಂದ ಮೇಷ್ಟ್ರ ಹೆಂಡತಿ “ನೀ ಜ್ಯೂಸ್ ಕುಡಿತಿರುವ ಗ್ಲಾಸ್ ನನ್ನ ಫೇರ್ವೆಲ್ ದಿನ ನನ್ನ ಸ್ಟೂಡೆಂಟ್ಸ್ ಕೊಟ್ಟಿದ್ದು,” ಎಂದು ಪ್ರಸನ್ನವದನರಾಗಿ ಹೇಳಿದರು.

ಹುಬ್ಬು ಹಾರಿಸಿ ಶ್ರೀಕರ್ “ಓಹ್” ಎನ್ನುವಾಗ ಮೇಷ್ಟ್ರು ಹೇಳಿದರು, “ದೊಡ್ಡ ಫೇರ್ವೆಲ್ ಕಾರ್ಯಕ್ರಮ ಮಾರಾಯ ಇವಳಿಗೆ! ನನಗೆ ಒಂದು ಫೇರ್ವೆಲ್ ಸಹ ಕೊಡಲಿಲ್ಲ ನಮ್ಮ ಶಾಲೆಯವರು! ಅಧಿಕಾರ ಹಸ್ತಾಂತರ ಮಾಡಿದ್ದು ಬಂದಿದ್ದು.” ಇದನ್ನು ಹೇಳುತ್ತಿದ್ದ ಮೇಷ್ಟ್ರು ಇದ್ದಕ್ಕಿದಂತೆ ತಮ್ಮ ಮಾತಿನ ವೇಗ ಬದಲಿಸಿ, “ಅಲ್ಲ, ನನಗೆ ಅದೆಲ್ಲ ಬೇಕಿಲ್ಲ. ಆದರೆ ಈ ಗಣಪತಿ ಮತ್ತು ಅವನ ಹಿಂಬಾಲಕರ ಅಲ್ಪತನ ನೋಡು” ಎಂದರು.

ಮೇಷ್ಟ್ರು ರಿಟೈರ್ ಆಗಿದ್ದ ದಿನ ಶ್ರೀಕರ್ ಅವರನ್ನು ಭೇಟಿ ಆದಾಗ ಮೇಷ್ಟ್ರು ಅವರಿಗೆ ಅವರ ಸಹೋದ್ಯೋಗಿಗಳು ಕಿರುಕುಳ ಕೊಟ್ಟಿದ್ದ ಕತೆಗಳನ್ನು ಹೇಳಿ, “ಸಧ್ಯ ಇವೆಲ್ಲಾ ಮುಗಿತು. ಇನ್ನು ಮೇಲೆ ನನ್ನ ಬರವಣಿಗೆ ಮುಂದುವರಿಸಬೇಕು. ಅಧ್ಯಯನ ಮತ್ತು ಬರವಣಿಗೆ ನನ್ನ ರಿಟೈರ್ಮೆಂಟ್ ಪ್ಲಾನ್,” ಎಂದಿದ್ದರು. ಅದನ್ನೇ ನೆನಪಿಸಿ ಶ್ರೀಕರ್ ಮೇಷ್ಟ್ರನ್ನು ಬರವಣಿಗೆ ಯಾಕೆ ಮಾಡುತ್ತಿಲ್ಲ ಎಂದು ಕೇಳಿದರೆ ಮೇಷ್ಟ್ರು ಹೇಳಿದರು, “ಸುಮಾರು ಲೇಖನ ಬರೆದು ಕಳಿಸಿದೆ. ಆದರೆ ತಲುಪಲೇ ಇಲ್ಲ ಅಂತಾರೆ ಪ್ರತಿ ಸತಿ.”

“ಸಾರ್, ಪೋಸ್ಟಲ್ ಸೆರ್ವಿಸ್ ಹದಗೆಟ್ಟಿದೆ. ಯಾವುದೋ ಎಲ್ಲೂ ಸರಿಯಾಗಿ ತಲುಪೋದೇ ಇಲ್ಲ. ನೀವು ಕಂಪ್ಯೂಟರ್ ಕಲಿಲ್ವಾ?”

“ಕಂಪ್ಯೂಟರ್ ಮೇಲೆ ಕೈಯಿಂದ ಬರೆದಷ್ಟೇ ವೇಗವಾಗಿ ಬರೆಯಲು ಆಗೋದಿಲ್ಲ. ಆಲೋಚನೆ ಫಾಸ್ಟ್ ಆಗಿ ಓಡ್ತಾ ಇರ್ತದೆ ಅದಕ್ಕೆ ಟೈಪಿಂಗ್ ಸ್ಪೀಡ್ ಮ್ಯಾಚ್ ಆಗೋಲ್ಲ. ಮತ್ತೆ ಕೈಯಿಂದ ಬರೆದೆ ಅಭ್ಯಾಸ ನೋಡು.”

“ಮತ್ತಿನೊಂದು ವಿಷ್ಯ ಇದೆ ಸಾರ್. ಈಗೀಗ ಪತ್ರಿಕೆಗಳಲ್ಲಿ ಡೆಸ್ಕ್ ಕೆಲಸಕ್ಕೆ ಬಂದಿರೋರೆಲ್ಲ ಹೊಸ ಹುಡುಗರು. ಅವರಿಗೆಲ್ಲ ಕೈಬರಹ ನೋಡಿ ಗೊತ್ತಿಲ್ಲ. ಅದನ್ನ ಓದಿ ಪ್ರೂಫ್ ನೋಡಿ ಟೈಪ್ ಮಾಡೋದೆಲ್ಲ ಆಗೋ ವಿಷ್ಯ ಅಲ್ಲ ಅವರಿಗೆ. ಅದಕ್ಕೊ ಕೆಲವೊಮ್ಮೆ ಲೇಖನ ತಲುಪಿಲ್ಲ ಅಂತ ಸುಳ್ಳೇ ಹೇಳ್ತಾರಂತೆ. ಇದನ್ನ ಪತ್ರಿಕೆಯೊಂದರಲ್ಲಿ ಕೆಲಸ ಮಾಡೋ ಒಬ್ಬ ಫ್ರೆಂಡ್ ಹೇಳಿದ್ದು ಸಾರ್ ನನಗೆ.”

“ಓಹ್, ಹೀಗೆಲ್ಲ ಇದೆಯಾ? ಅಲ್ಲ ಮಾರಾಯ ಒಂದು ಕಾಲದಲ್ಲಿ ಕೈಕಾಲು ಹಿಡಿತಾ ಇದ್ರೂ ನಂದು ಒಂದು ಲೇಖನ ಬರೆದು ಕೊಡಿ ಅಂತ. ಈಗ ಕಳಿಸಿದರೂ ತಲುಪಿಲ್ಲ ಅಂತ ಸುಳ್ಳು ಹೇಳೋ ಕಾಲ ಬಂತು,” ಎಂದು ಮೇಷ್ಟ್ರು ನಗಾಡಿದರು. ಶ್ರೀಕರ್ ಅವರ ನಗುವಿಗೆ ನಗುವಿನ ಸಾಥ್ ನೀಡಿದಾಗ ಮೇಷ್ಟ್ರು “ಒಂದು ನಿಮಿಷ” ಎಂದು ಒಳಗೆ ಹೋದರು.

ಶ್ರೀಕರ್ ತಾನು ಈ ವಿಷ್ಯ ಯಾಕಾದರೂ ಹೇಳಿದೆನೋ ಎಂದು ಅನಿಸತೊಡಗಿತು. ಆಗ ಮೇಷ್ಟ್ರ ಹೆಂಡತಿ ಸಣ್ಣಗಿನ ತಮ್ಮ ಸ್ವರವನ್ನು ಇನ್ನಷ್ಟು ಸಣ್ಣದಾಗಿಸಿ ಹೇಳಿದರು, “ತುಂಬಾ ನೋವು ಮಾಡಿಕೊಂಡಿದ್ದಾರೆ ಮಾರಾಯ. ಇವರಿಗೆ ಒಂದು ಕಾಲದಲ್ಲಿ ಇದ್ದ ಯಾವ ಫ್ರೆಂಡ್ಸ್ ಇವತ್ತು ಇಲ್ಲ. ಅವರ ತಪ್ಪು ಸಹ ಅಲ್ಲ ಬಿಡು. ಇವರು ಶಾಲೆ ಕೆಲಸಕ್ಕೆ ಅಂತ ಬೇರೆ ಎಲ್ಲದರಿಂದ ಹಿಂದೆ ಸರಿದರು ನೋಡು ಬಹುಷ್ಯ ಆಗ ಇವರ ಫ್ರೆಂಡ್ಸ್ ಎಲ್ಲ ಬೇರೆ ಟೀಂ ಕಟ್ಟಿಕೊಂಡು ಕೆಲಸ ಮುಂದುವರಿಸಿದರು. ಹೊಸ ಜನ ಸೇರಿಕೊಂಡರು. ಈಗ ಅವರ ಕೆಲಸ ಮತ್ತು ಹೊಸ ಟೀಂ ನಡುವೆ ಇವರ ನೆನಪಾಗುವುದಿಲ್ಲ. ಒಮ್ಮೆ ಇವರೇ ಹೋಗಿದ್ದರು. ಮೊದಲಿದ್ದಷ್ಟು ಜನ ಈಗ ಇಲ್ಲ ಅಂತಿದ್ರು. ಅಲ್ಲಿ ಇದು ಸರಿ ಇಲ್ಲ ಅದು ಸರಿ ಇಲ್ಲ ಹೀಗಲ್ಲ ಹಾಗಲ್ಲ ಅಂತೆಲ್ಲ ಹೇಳಿದ್ರು. ಚಳುವಳಿ ಅಂದ್ರೆ ನಾಲ್ಕಾರು ಚಟುವಟಿಕೆ ಅಲ್ಲ ಅಂತೆಲ್ಲ ಹೇಳಿದರಂತೆ. ಹೊಸ ಹುಡುಗರು ಇವರ ಮಾತು art-3ಯಾಕೆ ಕೇಳ್ತಾರೆ? ಅವರು ಮಾತು ಕೇಳಲಿಲ್ಲ ಅಂತ ಇವರಿಗೆ ಸಿಟ್ಟು. ಮತ್ತೆ ಹೋಗಲಿಲ್ಲ. ಅವರು ಸಹ ಕರೆಯಲಿಲ್ಲ. ಆದರೆ ನನಗೆ ಬೇಜಾರ್ ಆಗೋದು ಏನು ಗೊತ್ತ. ಹೊಸ ಹುಡುಗರು ಬಿಡು ಇವರ ಹಳೆ ದೋಸ್ತಿಗಳು ಸಹ ಇವರಿಗೆ ಆರೋಗ್ಯ ಕೆಟ್ಟಿದೆ ಅಂತ ಗೊತ್ತಾಗಿಯೂ ಒಂದು ಸತಿ ಮಾತನಾಡಿಸಲು ಬರಲಿಲ್ಲ. ಆಪರೇಷನ್ ಆಗಿದೆ ಅಂತ ಅವರಿಗೆಲ್ಲಾ ಗೊತ್ತು. ಆಪರೇಷನ್ ಆದಮೇಲೆ ಸರಿಯಾಗಿ ನಿಂತುಕೊಳ್ಳಲೂ ಆಗುದಿಲ್ಲ ಕೂತುಕೊಳ್ಳಲೂ ಆಗುದಿಲ್ಲ ಅಂತ ಸಹ ಗೊತ್ತು. ಆದರೂ ಯಾರು ಬರಲಿಲ್ಲ. ಪೇಟೆಯಲ್ಲಿ ನನಗೆಲ್ಲಾದರು ಸಿಕ್ಕರೆ ವಿಚಾರಿಸ್ತಾರೆ ಅಷ್ಟೇ. ಇವರಿಗಂತೂ ಅದು ತುಂಬಾನೇ ನೋವಾಗಿದೆ. ದಿನ ಹೇಳ್ತಾರೆ. ನಾನೇನು ಮಾಡೋದು ಮಾರಾಯ. ನೀನಾದ್ರು ಆಗೊಮ್ಮೆ ಈಗೊಮ್ಮೆ ಬಂದು ಹೋಗ್ತಾ ಇರು.”

ಮೇಷ್ಟ್ರ ಹೆಂಡತಿ ಇವನ್ನೆಲ್ಲ ಹೇಳಿ ಮುಗಿಸಿದ ಹೊತ್ತಿಗೆ ಸರಿಯಾಗಿ ಮೇಷ್ಟ್ರು ಒಳಗಿಂದ ಬಂದರು ಮೂಗಿಗೆ ನಶ್ಯ ಏರಿಸುತ್ತಾ, ಕಂಕುಳಿನಲ್ಲಿ ಒಂದು ಪುಸ್ತಕ ಇಟ್ಟುಕೊಂಡು. ಅವರು ಬರುತ್ತಿರುವ ಸೂಚನೆ ಸಿಕ್ಕಿದ ಮೇಷ್ಟ್ರ ಹೆಂಡತಿ ತಕ್ಷಣ ವಿಷಯ ಬದಲಾಯಿಸಿ “ರಿನ್ಜೆನ್ ಸಂಪರ್ಕದಲ್ಲಿ ಇದ್ದಾಳ?” ಎಂದು ವಿಚಾರಿಸಿದರು.

“ಕೆಲವೊಮ್ಮೆ ಫೇಸ್ಬುಕ್ ನಲ್ಲಿ ಚಾಟ್ ಮಾಡುತ್ತೇನೆ. ಇಲ್ಲದೆ ಇದ್ರೆ ಅವಳು ಏನಾದ್ರೂ ಫೋಟೋ ಹಾಕಿದಾಗ ನೋಡಿ ಗೊತ್ತಾಗುತ್ತೆ ಎಲ್ಲಿ ಹೋದಳು ಎಲ್ಲಿ ಬಂದ್ಲು ಅಂತ.”

“ಅದೇ ಅವಳು ಸಹ ಅವ್ರ ಮದ್ವೆ ಆಯ್ತು ಇವರಿಗೆ ಮಗುವಾಯ್ತು ಅಂತೆಲ್ಲ ಹೇಳ್ತಾ ಇರ್ತಾಳೆ. ಅವರು ಇನ್ನೂ ಟಚ್ನಲ್ಲಿ ಇದ್ದಾರ ಅಂತ ಕೇಳಿದ್ರೆ. ಇಲ್ಲ ಫೇಸ್ಬುಕ್ ಅಲ್ಲಿ ಫೋಟೋ ಹಾಕೊಂಡಿದ್ರು ಅಂತ ಹೇಳ್ತಾಳೆ. ಮಜಾ ಅನ್ಸೋತ್ತೆ ಕೇಳಿದ್ರೆ ಈ ಫೇಸ್ಬುಕ್ ವಿಚಾರ.”

ಆಗ ಮೇಷ್ಟ್ರು ತುಟಿ ಎರಡು ಮಾಡಿ, “ಅವಳಿಗೆ ಆ ನಿಮ್ಮ ಕ್ಲಾಸ್ಮೇಟ್ ಅಜಿಂಕ್ಯ ಮೋಸ ಮಾಡಿದ್ದಲ್ಲ ಮಾರಾಯ. ಇಷ್ಟ ಪಟ್ಟು ಮದುವೆ ಆಗಿದ್ದು ಇಬ್ಬರು. ಮದ್ವೆ ಆಗೋ ತನಕ ಎಲ್ಲ ಪ್ರೀತಿ ಪ್ರೇಮ. ಆಮೇಲೆ ಇವಳು ಹೆಂಡತಿ ತರ ಇರ್ಬೇಕು ಅಂತ ತಕರಾರು ಅವನದ್ದು. ಈಗ ಡೈವೋರ್ಸಿಗೆ ಅಪ್ಲೈ ಮಾಡಿದ್ದಾರೆ. ಮುಂದಿನ ತಿಂಗಳು ಬಿಡುಗಡೆ ಸಾಧ್ಯತೆ ಇದೆ.”

ಸುಮ್ಮನೆ ತಲೆ ಅಲುಗಾಡಿಸುತ್ತಿದ್ದ ಶ್ರೀಕರ್ “ಯಾರೋ ಫ್ರೆಂಡ್ಸ್ ಹೇಳಿ ಗೊತ್ತಾಯ್ತು ಅವರಿಬ್ಬರು ಈಗ ಒಟ್ಟಿಗೆ ಇಲ್ಲ ಅಂತ. ನಾನು ಮತ್ತೆ ಹೆಚ್ಚೇನೂ ಕೇಳಲು ಹೋಗಲಿಲ್ಲ,” ಎಂದ.

ಮೇಷ್ಟ್ರು ಏನೋ ಹೇಳುತ್ತಾರೆ ಎನ್ನುವಂತಿದ್ದಾಗ ಮೇಷ್ಟ್ರ ಹೆಂಡತಿ ನುಡಿದರು, “ಅಲ್ಲ ಮಾರಾಯ, ಇವಳಿಗಾದ್ರೆ ಬಿಡು ಅವನು ಸರಿಗಿರ್ಲಿಲ್ಲ. ಆದರೆ ನಿಮ್ಮ ಫ್ರೆಂಡ್ಸ್ ಅಲ್ಲೇ ಎಷ್ಟು ಜನರ ಡಿವೋರ್ಸ್ ಆಯ್ತು. ನಿಮ್ಮ ಜನರೇಶನ್ ಅವರಿಗೆ ಸಂಸಾರ ನಡೆಸೋದು ಗೊತ್ತಿಲ್ಲ. ಸಂಸಾರ ಅಂದ್ರೆ ಅಡ್ಜಸ್ಟ್ ಮಾಡಿಕೊಳ್ಳೋದು,” ಎಂದರು. ಆಗ ಮೇಷ್ಟ್ರು, “ಆಗದವರೊಂದಿಗೆ ಅಡ್ಜಸ್ಟ್ ಮಾಡಿಕೊಳ್ಳೋ ಅಗತ್ಯ ಇಲ್ಲ. ಒಂದು ರೀತಿಯಲ್ಲಿ ಇದು ಸರಿ,” ಎನ್ನುವಾಗ ಅವರ ಹೆಂಡತಿ, “ಏನು ಅಡ್ಜಸ್ಟ್ ಮಾಡಿಕೊಳ್ಳೋ ಅಗತ್ಯ ಇಲ್ಲ ಅಂದ್ರೆ? ನಿಮ್ಮೊಟ್ಟಿಗೆ ನಾನು ಅಡ್ಜಸ್ಟ್ ಮಾಡಿಕೊಂಡು ಇಷ್ಟು ವರ್ಷ ಇರಲಿಲ್ಲವ?” ಎಂದರು.

ಈ ಮಾತು ಕೇಳಿ ತುಸು ನಕ್ಕು ಮೇಷ್ಟ್ರು ಶ್ರೀಕರನನ್ನು ನೋಡುತ್ತಾ ಹೇಳಿದರು, “ಅದಂತೂ ಸತ್ಯ ನೋಡು. ನನ್ನನ್ನು ನನ್ನ ಹಟಮಾರಿತನವನ್ನು ಸಹಿಸಿ ಅನ್ನೋದಕ್ಕಿಂತ ಹೆಚ್ಚಾಗಿ ಅರ್ಥ ಮಾಡಿಕೊಂಡು ಬದುಕಿದ್ದಾಳೆ.”

“ನಿನಗೆ ಗೊತ್ತಿಲ್ಲ ಶ್ರೀಕರ್ ಇವರೊಂದಿಗೆ ಬಾಳುವುದು ಅಷ್ಟು ಸುಲಭ ಇರಲಿಲ್ಲ. ಆದರೂ ಬದುಕಿದೆ. abstract-painting-sexಅದೇನು ಹೆಗ್ಗಳಿಕೆಯ ಮಾತಲ್ಲ. ಮದುವೆ ಅಂತ ಆದ ಮೇಲೆ ಇರಬೇಕಪ್ಪ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಅಡ್ಜಸ್ಟ್ ಮಾಡಿಕೊಂಡು. ಆದರೆ ನಿಮ್ಮ ಜನರೇಶನ್ ಅವರಿಗೆ ಇದೆಲ್ಲ ಗೊತ್ತೇ ಇಲ್ಲ. ಅದಿಕ್ಕೆ ಮದುವೆ ಆದ ಮುಂದಿನ ತಿಂಗಳೇ ಬೇರೆ ಆಗ್ತಾರೆ,” ಎಂದ ಮೇಷ್ಟ್ರ ಹೆಂಡತಿ ಗೇರ್ ಬದಲಿಸಿ, “ನೀನು ಮದ್ವೆ ಆಗಬಹುದಲ್ಲ ಈಗ,” ಎಂದು ಹೇಳಿದರು.

ಏನು ಹೇಳಬೇಕೋ ತಿಳಿಯದೆ ಶ್ರೀಕರ್, “ಹಾಂ ಆಗಬಹುದೇನೋ,” ಎಂದು ತಕ್ಷಣ ಮೇಷ್ಟ್ರ ಕಡೆ ತಿರುಗಿ “ಯಾವ ಪುಸ್ತಕ ಸರ್ ಅದು,” ಎಂದು ಕೇಳಿದ.

“ಹೇಗೆ ಮಾತು ಬದಲಾಯಿಸ್ತಾನೆ ನೋಡು” ಎಂದು ನಗುತ್ತ ಹೇಳಿದ ಮೇಷ್ಟ್ರು ಶ್ರೀಕರ್ ಕೈಯಿಂದ ಗ್ಲಾಸ್ ತೆಗೆದುಕೊಂಡು ತನ್ನ ಕುರ್ಸಿಯ ಪಕ್ಕದಲ್ಲಿ ಇದ್ದ ಗ್ಲಾಸ್ ಒಟ್ಟು ಸೇರಿಸಿ ತನ್ನ ಹೆಂಡತಿ ಕೈಯ್ಗೆ ಕೊಟ್ಟರು. ಅವರು ಆ ಗ್ಲಾಸುಗಳನ್ನು ತೆಗೆದುಕೊಂಡು ಅಡುಗೆ ಮನೆಗೆ ನಡೆಯುತ್ತಿದ್ದರೆ ತನ್ನ ತೊಡೆ ಮೇಲೆ ಇಟ್ಟುಕೊಂಡಿದ್ದ ಪುಸ್ತಕ ಶ್ರೀಕರ್ ಕೈಗೆ ನೀಡುತ್ತಾ ಹೇಳಿದರು, “ಹೊಬ್ಸಬಾಂನ ಕೊನೆ ಪುಸ್ತಕ ಇದು. ಫ್ರಾಕ್ಚರ್ಡ್ ಟೈಮ್ಸ್ ಅಂತ,” ಎನ್ನುವಾಗ ಶ್ರೀಕರ್, “ಹಾಂ ಗೊತ್ತು ಇದರ ಬಗ್ಗೆ ಓದಿದೆ,” ಎಂದ.

“ಬೇಕಿದ್ರೆ ತೆಗೊಂಡು ಹೋಗು ನಾನು ಓದಿ ಆಯ್ತು.”

“ಇಲ್ಲ ಸಾರ್ ನಾನು ಕಿಂಡಲ್ ಅಲ್ಲಿ ಖರೀದಿಸಿದೆ.”

“ಓಹ್ ನಿನ್ನ ಹತ್ರನೋ ಬಂತಾ ಇದೆಲ್ಲ. ಈ ರಿನ್ಜೆನ್ ಹತ್ರ ಸಹ ಇದೆ. ಅವಳು ಕಾದಂಬರಿ ಎಲ್ಲ ಓದೋದು ಅದರಲ್ಲೇ ಇವಾಗ. ನನ್ನ ಲೈಬ್ರರಿಯಷ್ಟೇ ದೊಡ್ಡ ಕಲೆಕ್ಷನ್ ತನ್ನ ಬಳಿ ಇದೆ ಅದು ಮನೆ ಜಾಗ ತಿನ್ನೋದಿಲ್ಲ ಅಂತ ತಮಾಷೆ ಮಾಡ್ತಾಳೆ.”

“ಸರ್ ನಿಮ್ಮ ಲೈಬ್ರರಿ ಅಷ್ಟು ದೊಡ್ಡದಿರಲಿಕ್ಕಿಲ್ಲ ಅವಳ ಲೈಬ್ರರಿ” ಎಂದ ಶ್ರೀಕರ್ ನಗುತ್ತ.

“ಊರೂರು ಸುತ್ತಿ ಚಹಾ ಕಾಪಿ ಬಿಟ್ಟು ಖರೀದಿ ಮಾಡಿದ್ದು ಮಾರಾಯ ಅಷ್ಟೆಲ್ಲ ಪುಸ್ತಕ.”

“ಗೊತ್ತು ಸರ್. ಹೇಳಿದ್ರಿ ಆ ಕತೆ ಒಂದ್ಸತಿ.”

ಅಡುಗೆಮನೆಯಿಂದ ಹೊರಗೆ ಬಂಡ ಮೇಷ್ಟ್ರ ಹೆಂಡತಿ ಕೇಳಿದ್ರು, “ಅಲ್ಲ… ನಾನು ಕೇಳ್ತೇನೆ ಅಂತ ಬೇಸರ ಮಾಡ್ಕೋಬೇಡ. ಆದ್ರೆ ನಿಂಗೆ ಮದುವೆ ವಯಸ್ಸಾಗಿದೆ. ಯಾಕೆ ಮದುವೆ ಆಗಬಾರದು?”

“ಅವನು ಯಾರನ್ನೋ ನೋಡಿಕೊಂಡಿರಬೇಕು,” ಎಂದು ಹೆಂಡತಿಯನ್ನು ನೋಡುತ್ತಾ ಹೇಳಿದ ಮೇಷ್ಟ್ರು ಇವನ ಕಡೆ ಮುಖ ತಿರುಗಿಸಿ “ಮನೆಯವರಿಗೆ ಬೇಕಿದ್ರೆ ನಾನು ಮಾತಾಡ್ತೇನೆ ಮಾರಾಯ” ಎಂದರು.

“ಇಲ್ಲ ಸಾರ್. ನನಗೆ ಮದ್ವೆ ಸಂಸಾರ ಇದರ ಬಗ್ಗೆ ಎಲ್ಲ ನಂಬಿಕೆ ಇಲ್ಲ.”

“ನಂಬಿಕೆ? ಅದೆಂತ ದೇವರೋ ಇಲ್ಲ ಭೂತವೋ ನಂಬಲಿಕ್ಕೆ?” ಮೇಷ್ಟ್ರ ಹೆಂಡತಿ ಪ್ರಶ್ನೆ ಮಾಡಿದರು. ಸ್ವರ ಸ್ವಲ್ಪ ಖಡಕ್ ಆಗಿತ್ತು.

“ಅಲ್ಲ. ನಂಬಿಕೆ ಅಂದ್ರೆ ಅಂಥಾ ನಂಬಿಕೆ ಅಲ್ಲ,” ಎಂದು ಶ್ರೀಕರ್ ಹೇಳುತ್ತಿರುವಾಗ ಮೇಷ್ಟ್ರು ಮಧ್ಯಕ್ಕೆ ಮಾತನಾಡಿದರು, “ಗೊತ್ತಾಯ್ತು. ಲಿವ್-ಇನ್ ಅಂತಾರಲ್ಲ ಅದ್ರ ಮೇಲೆಯಾ ನಿನಗೆ ನಂಬಿಕೆ?”

“ಅದೇ ಬೆಸ್ಟ್ ಅಲ್ವಾ ಸರ್. ಹೆಚ್ಚ್ ಸ್ವತಂತ್ರ ಅಲ್ವಾ ಅದು,” ಎಂದು ಶ್ರೀಕರ್ ವಾದಿಸಿದ.

“ಒಪ್ತೇನೆ. ಆದರೆ ಯಾಕೋ ಒಪ್ಪಿಗೆ ಆಗ್ತಾ ಇಲ್ಲ,” ಎಂದರು ಮೇಷ್ಟ್ರು. ಮೇಷ್ಟ್ರ ಹೆಂಡತಿ ಸುಮ್ಮನೆ ಒಳಗೆ ನಡೆದರು.

“ಹಾಗಾದ್ರೆ ಯಾರದೋ ಜೊತೆಗಿದ್ದೀಯ ಇವಾಗ?” ಎಂದು ಮೇಷ್ಟ್ರು ಪ್ರಶ್ನೆ ಕೇಳಿದರೆ ಶ್ರೀಕರ್, “ಇಲ್ಲ ಸಾರ್. ಒಬ್ಬನೇ ಇರೋದು. ಆದರೆ ನನ್ನ ಅಭಿಪ್ರಾಯ ತಿಳಿಸಿದ್ದು ಅಷ್ಟೇ. ಹಾಗೆ ಇರಲಿಕ್ಕೆ ಶುರು ಮಾಡಿದ್ರೆ ಮನೆಯವರಿಗೆ ಏನು ಹೇಳೋದು ಅನ್ನೋದು ಸಮಸ್ಯೆ ಆಗೊತ್ತೆ ಆಮೇಲೆ,” ಹೇಳಿ ನಕ್ಕ. ಮೇಷ್ಟ್ರು ಸಹ ನಕ್ಕರು.

ಒಳಗಿಂದ ಹೊರ ಬಂದ ಮೇಷ್ಟ್ರ ಹೆಂಡತಿ ಊಟಕ್ಕೆ ನಿಲ್ಲು. ಅಡುಗೆ ಮಾಡುತ್ತೇನೆ ಎಂದರೆ ಶ್ರೀಕರ್ ನಿರಾಕರಿಸಿದ. ಮೇಷ್ಟ್ರು “ಒತ್ತಾಯ ಮಾಡಬೇಡ, ಅವನಿಗೇನು ಕೆಲಸ ಇದೆಯೋ ಏನೋ,” ಎಂದು ಹೆಂಡತಿಗೆ ಹೇಳಿದರು. ತಕ್ಷಣವೇ ಹೊರಡುವುದು ಉಚಿತ ಇಲ್ಲವಾದಲ್ಲಿ ಊಟಕ್ಕೆ ನಿಲ್ಲಬೇಕಾಗುತ್ತದೆ ಎಂದು ಶ್ರೀಕರ್, “ಹೊರಡುತ್ತೇನೆ” ಎಂದ.

“ಹೊರಡ್ತೀಯ?” ಕೇಳಿದರು ಮೇಷ್ಟ್ರ ಹೆಂಡತಿ.

“ಹೌದು. ಕೆಲವು ಫ್ರೆಂಡ್ಸ್ ಜೊತೆ ಊಟಕ್ಕೆ ಹೋಗೋ ಪ್ಲಾನ್ ಇದೆ.”

“ಸರಿ ಮಾರಾಯ ಹಾಗಿದ್ರೆ, ಹೋಗೋ ಮೊದಲು ಇನ್ನೊಮ್ಮೆ ಬಂದು ಹೋಗು” ಎಂದ ಮೇಷ್ಟ್ರು, “ಓದೋದು ಬರಿಯೋದು ಮಾಡ್ತಾ ಇರು,” ಎಂದರು.

“ಸರಿ” ಎಂದ ಶ್ರೀಕರ್, “ನೀವು ಕಂಪ್ಯೂಟರ್ ಕಲೀರಿ ಸಾರ್. ಆಗ ಖಂಡಿತ ಪ್ರಕಟ ಮಾಡ್ತಾರೆ. ನಾನು ಇಲ್ಲೇ ಊರಲ್ಲೇ ಇದಿದ್ದರೆ ನಿಮ್ಮ ಲೇಖನ ನಾನೇ ಟೈಪ್ ಮಾಡಿ ಕಳಿಸ್ತಿದ್ದೆ. ಹಾಗೆ ಯಾರಾದ್ರು ಸಿಗ್ತಾರ ನೋಡಿ.”

“ಬೇಡ ಮಾರಾಯ. ಯಾರಿಗೆ ಬೇಕಿದೆ ಈಗ ನನ್ನ ವಿಚಾರ ನನ್ನ ಅಭಿಪ್ರಾಯ ಎಲ್ಲ?”

ಶ್ರೀಕರನಿಗೆ ಏನು ಹೇಳಬೇಕೋ ತೋಚದೆ, “ಬರ್ತೇನೆ ಸರ್,” ಎಂದು ಹಿಂದೆ ನಿಂತಿದ್ದ ಮೇಷ್ಟ್ರ ಹೆಂಡತಿಯನ್ನು ನೋಡಿ, “ಬರ್ತೇನೆ ಮೇಡಂ” ಎಂದ. ಇಬ್ಬರು, “ಸರಿ ಹೋಗಿ ಬಾ” ಎಂದರು.

ಶ್ರೀಕರ್ ಹೋದ ಬೆನ್ನಿಗೆ ಮೇಷ್ಟ್ರ ಹೆಂಡತಿ ಅಡುಗೆಮನೆಗೆ ಹೋಗಿ ಅಡುಗೆ ಆರಂಬಿಸಿದರೆ ಮೇಷ್ಟ್ರು, “ಮ್ಯಾಚ್ ಇದೆ,” The_Totoal_Defeat_abstract_human_bodyಎಂದು ಎಂದು ಟಿ.ವಿ. ಹಾಕಿಕೊಂಡರು. ಸ್ವಲ್ಪ ಹೊತ್ತಿನಲ್ಲೇ ಅಡುಗೆ ಮನೆಗೆ ಬಂದು ಒಂದು ಲೋಟ ನೀರು ಕುಡಿಯುತ್ತಾ, “ದರಿದ್ರ ಐ.ಪಿ.ಎಲ್. ಆಟದ ಜೀವ ತೆಗೆದುಹಾಕಿದೆ,” ಎಂದರು. “ಆದರೂ ನೋಡ್ತೀರಲ್ಲ,” ಎಂದು ಹೆಂಡತಿ ಹೇಳಿದಾಗ, “ಏನ್ ಮಾಡ್ಲಿ. ಟೆಸ್ಟ್ ಆಟ ಕಡಿಮೆ ಆಗಿದೆ. ಇದನ್ನೇ ನೋಡ್ಬೇಕು ನನ್ನ ಚಪಲಕ್ಕೆ,” ಎಂದು ಅಡುಗೆ ಮನೆಯಿಂದ ಹೊರ ನಡೆದರು.

ಸುಮಾರು ಒಂದು ಗಂಟೆ ಬಳಿಕ ಹೆಂಡತಿ ಊಟಕ್ಕೆ ಕರೆದಾಗ ಬಂದು ಒಂದು ತುತ್ತು ಉಂಡು ಮಾತ್ರ ತೆಗೆದುಕೊಂಡು ಮೇಷ್ಟ್ರು ಬಟ್ಟೆ ಒಣಗಿಸುವ ಜಾಗದಲ್ಲಿ ನೇತುಹಾಕಿದ್ದ ಬಾಳೆಗೊನೆಯಿಂದ ಎರಡು ಹಣ್ಣು ಕೊಯ್ದು ಒಂದನ್ನು ಹೆಂಡತಿಗೆ ನೀಡಿ ತಾನೂ ಒಂದು ತಿಂದರು.

ಮೇಷ್ಟ್ರ ಹೆಂಡತಿ ಪಾತ್ರೆ ತೊಳೆದು ಮಲಗುವ ಕೋಣೆ ಸೇರುವ ಹೊತ್ತಿಗೆ ಮೇಷ್ಟ್ರು ಹಾಸಿಗೆ ಮೇಲೆ ಅಡ್ಡ ಬಿದ್ದಾಗಿತ್ತು. ಪಕ್ಕದಲ್ಲೇ ಮಲಗಿದ ಹೆಂಡತಿ ಹೇಳಿದರು, “ನಾನು ಕಂಪ್ಯೂಟರ್ ಕಲ್ತು ನಿಮ್ಮ ಲೇಖನ ಟೈಪ್ ಮಾಡಿ ಕಳಿಸಿದರೆ ಆಗಬಹುದೇನೋ. ನನಗೂ ಟೈಮ್ ಪಾಸ್ ಆಗೊತ್ತೆ. ಈ ವಾರ ರಿನ್ಜೆನ್ ಬಂದಾಗ ಅವಳ ಹತ್ರ ಕೇಳೋಣ ಕಡಿಮೆ ಕ್ರಯದ ಒಳ್ಳೆ ಕಂಪ್ಯೂಟರ್ ಯಾವುದು ಅಂತ.”

***

ಹಾಳು ಸುಡಗಾಡ ಬದುಕು : ಗಾಂಧಿ ಜಯಂತಿ ಕಥಾಸ್ಪರ್ಧೆ 2015 – ಬಹುಮಾನಿತ ಕಥೆ

– ಹನುಮಂತ ಹಾಲಿಗೇರಿ

ಈಗ ದನೇ ಅನ್ನದ ಕೂಡ ಬದನಿಕಾಯಿ ಚಟ್ನಿ ನಂಚ್ಕೊಂಡು ಊಟದ ಶಾಸ್ತ್ರ ಮುಗಿಸಿ ಕೋಲಿ ಮುಂದಿನ ಅಂಗಳದೊಳಗ ಪ್ಲ್ಯಾಸ್ಟಿಕ್ ತಟ್ ಹಾಸ್ಕೊಂಡು ಕಾಲುಚಾಚ್ಕೊಂಡು ಮಾತೆವ್ವ ಕುಂತಿದ್ಲು. ಆಕಿ ಸುಮ್ಮನ ಕುಂತಂಗ ಕಂಡ್ರೂ ಆಕಿ ದವಡೆಗಳು ಒಂದು ಸಂವನ ಮೆಲಕ್ಕ ಹಾಕುತಿದ್ವು. ಆಕಿ ಗಂಡ ದರಿಯ ಅಆಅಬ್ ಅಂತ ಡೆರಿಕಿ ಹೊಡಕೋತ ಮುಗಿಲ ಮ್ಯಾಲಿನ ಚಿಕ್ಕಿ ನೊಡಕೋತ ಅಂಗಾತ ಬಿದ್ದಕೊಂಡಿದ್ದ.

ಆಗಷ್ಟೆ ಕಂಬಳಿಯಂಥ ಕರಿ ಮುಗಿಲ ತುಂಬ ಚಿತ್ತಾರ ಮೂಡಿಸಿದ್ದ ಚಿಕ್ಕಿಗೊಳು ಮಿಣುಕುಮಿಣುಕಾಗಿ ಒಂದೊಂದೆ ಮಾಯವಾಗತೊಡಗಿದ್ದವು. ಚಂದಪ್ಪ ಇವನೌನ ಮಳಿ ಬರುವಂಗಾತು ಅನ್ಕೊಂಡು ಗೂಡು ಸೇರಿದ್ದ. ಗುಡುಲ್ ದಡುಲ್ ಎಂಬ ಗುಡುಗು, ಅದರ ಹಿಂದೆಯೇ ಒಮ್ಮೆಲೆ ನೂರು ಸಾವಿರ ಬಲ್ಬು ಬೆಳಗಿದಂಗಳ ಕೋಲ್ಮಿಂಚು…

‘ಆ..ಉ… ಉಉಂ, ಅಯ್ಯಯ್ಯ. ಎವ್ವಾ ಬೇ ಯಾಕೋ ಬೆನ್ನಿನ ನರಾ ಜಗ್ಗಾಕ ಹತ್ಯಾವು..’ ಮಗಳು ಸ್ಟೇಲ್ಲಾಳ ನರಳುವ ದ್ವನಿ ಆ ಮಳೆ ಗಾಳಿಯಲ್ಲಿ ಅಸ್ಪಷ್ಟವಾಗಿ ತೇಲಿ ಹೋಯ್ದಂತಾಯಿತು.

‘ಮಗಳ ಬ್ಯಾನಿ ತಿನ್ನಾಕ ಹತ್ತಿದಂಗ ಕಾಣತೈತಿ. ಏ ಯೇಸು ತಂದೆ, ಇನ್ನು ಸ್ವಲ್ಪ ಹೊತ್ತು ಮಳಿಗಾಳಿ ಶುರು ಮಾಡಬ್ಯಾಡೋ ಎಪ್ಪ’ ಮಾತೆವ್ವ ಮನದೊಳಗ ಬೇಡ್ಕೊಂಡ್ಲು. ‘ಹೋಗು, ಯಾವುದಾದ್ರೂ ಆಟೋ ಕರಕೊಂಡು ಬರೊಗು ದವಾಖಾನಿಗೆ ಹೋಗೂನು’  kt_shivaprasad-art-familyಮಾತೆವ್ವ ಒದರುತ್ತಲೇ ಮಗಳತ್ತ ದಾವಿಸಿದಳು.

ಆಟೋ ಇಲ್ಲವೆಂದು ವಾಪಸ್ ಬಂದ ಗಂಡನಿಗೆ ಶಪಿಸುತ್ತಾ ಗೇಟ್‍ವರೆಗೆ ಮಗಳನ್ನು ನಡೆಸಿಕೊಂಡು ಬಂದ ಮಾತೆವ್ವ ಸಿಕ್ಕ ಬೇಂದ್ರೆ ಬಸ್ ಹತ್ತಿಸಿಕೊಂಡು ಕೆಎಂಸಿ ಆಸ್ಪತ್ರೆಗೆ ಬಂದಿದ್ದಳು. ಮಗಳು ಹೆರಿಗೆ ವಾರ್ಡೊಳಗೆ ಹೋದ ಮೇಲೂ ಎಷ್ಟೋ ಹೊತ್ತಿನ ಮಟಾ ದರಿಯ ಕಾಯ್ದುಕೊಂಡು ಅಲ್ಲೆ ನಿಂತಿದ್ದ. ‘ಯಜ್ಜ ನಿಂದೆನು ಕೆಲಸ ಇಲ್ಲ. ನೀ ಹೊರಗ ಹೋಗು ಎಲ್ಲ ಸರಿ ಆಕೈತಿ’ ಅಂತ ಒಬ್ಬಾಕಿ ನರ್ಸ್ ಹೇಳಿದ್ದರಿಂದ ಮುದುಕಗ ಇರಿಸು ಮುರುಸಾತು. ನಿಧಾನಕ್ಕ ಕಾಲು ಎಳಕೊಂಡು ಆಸ್ಪತ್ರೆ ಗೇಟ್‍ಮಟಾ ಬಂದ. ಅಲ್ಲೊಂದು ಪಟ್ಟಿ ಅಂಗಡಿ ಮುಂದ ಲೈಟ್ ಉರಿತಿತ್ತು. ಅಲ್ಲಿ ಹೊಗಿ ಒಂದು ಬೀಡಿ ತುಗೊಂಡು ಅಲೆಅಲೆಯಗಿ ಹೊಗೆಬಿಟ್ಟ. ಮನಸ್ಸು ದೇಹ ಸ್ವಲ್ಪ ಹಗೂರ ಆದಂಗಾದ್ವು. ಮತ್ತೆ  ದವಾಖಾನಿ ಕಡೆಗೆ ಬರತೊಡಗಿದ. ಅಲ್ಲೊಂದು ಮುಚ್ಚಿದ ಬಾಗಿಲು ಬಿಲ್ಡಿಂಗ್ ಕಾಣಿಸಿತು. ಮಗಳು ಹೆರಿಗೆ ಇನ್ನು ಮೂರ್ನಾಲ್ಕು ತಾಸಾಗಬಹುದು ಅಂದುಕೊಂಡು ಮುಚ್ಚಿದ ಬಾಗಿಲ ಮುಂದೆ ಅಡ್ಡಾದ.

***

ಸರು ಬಿಟ್ಟು ಸರು ಹಣಿಯುವ ಮಳೆಯ ಜಿಟಿ ಜಿಟಿ. ಆಗಾಗ ಮುತ್ತಿಕ್ಕುವ ಸೊಳ್ಳೆಗಳಿಂದಾಗಿ ದರಿಯನಿಗೆ ನಿದ್ದಿ ಸುಳಿಯೊಲ್ಲದು. ಮೇಲಾಗಿ ನೆನಪುಗಳು ಸ್ಪರ್ಧೆಗೆ ಬಿದ್ದವವರಗತೆ ನಾ ಮುಂದು ತಾಮುಂದು ಎಂದು ಮುಕುರಿ ಪಟ ಬಿದ್ದಿದ್ದವು.

ಹಂಗ ನೋಡಿದ್ರ ಅವನ ಜನ್ಮನಾಮ ದೊರೆರಾಜ್. ಅಂವ ಮಾಡುತ್ತಿದ್ದ ವೃತ್ತಿಯ ಕಾರಣದಿಂದಲೋ, ಅವನ ಪೂರ್ತಿ ಹೆಸರನ್ನು ಕರೆಯುವುದು ತಮಗೆ ಅವಮಾನ ಎಂದುಕೊಂಡೋ ಮರ್ಯಾದಸ್ತ ಜನರು ಅವನ ಹೆಸರನ್ನು ತಮ್ಮ ಹುಬ್ಬಳಿಗೆ ಸುತ್ತಲಿನ ಆಡುಭಾಷೆಗೆ ಹೊಂದಿಸಿಕೊಂಡು ದರ್ಯಾ ಎಂದು, ಇನ್ನಷ್ಟು ಮುಂದೆ ಹೋಗಿ ದರಿದ್ರ ದರ್ಯಾ ಎಂದು ಕರೆತಿದ್ರು. ದರಿಯನ ಮೂರ್ನಾಲ್ಕು ತಲೆಮಾರುಗಳ ಹಿಂದಿನ ಪೂರ್ವಿಕರು ಆಂದ್ರ ಪ್ರದೇಶದ ಸುಡುಗಾಡು ಕಾಯುವ ಕಾಪಾಲಿಕ ಎಂಬ ಅದ್ಯಾವದೋ ಹೀನ ಬುಡಕಟ್ಟಿನವರು. ಅಲ್ಲಿ ಅದ್ಯಾವ ಕಾರಣಕ್ಕೋ ನೆಲೆ ಕಳೆದುಕೊಂಡು ಹುಬ್ಬಳ್ಳಿಗೆ ಬಂದು ಇಲ್ಲಿನ ಸುಡುಗಾಡುಗಟ್ಟೆಗಳಲ್ಲಿ ನೆಲೆ ನಿಂತಿದ್ದರು.

ಯಾರಾದ್ರೈ ಸತ್ತರೇ ಮಾತ್ರ ಇವರಿಗೆ ಹೊಟೆ ತುಂಬ ಊಟ. ಒಂದು ಕಡೆ ಹೆಣ ಬೇಯಿಸ್ತಾ ಇದ್ದರೆ ಇನ್ನೊಂದು ಕಡೆ ಹೆಣದ ಮೇಲಿನ ಅಕ್ಕಿಯನ್ನು ತಾಯಿ ಬೇಯಿಸೋದನ್ನೆ ನೋಡಿಕೊಂಡೆ ದರಿಯ ದೊಡ್ಡವನಾಗಿದ್ದ. ಒಮ್ಮೊಮ್ಮೆ ಜಾಸ್ತಿ ಚಿಲ್ಲರೆ ಕಾಸು ಸಿಕ್ಕರೆ ಅವತ್ತು ಅಪ್ಪ ಒಂದೆರಡು ಪಾಕೀಟು ಸೆರೆ ಮತ್ತು ಚಿಕ್ಕನ್ ಪೀಸು ತರ್ತಿದ್ದ.

ಒಂದೊಂದು ಸಲ ಬಾಳ ಇಚಿತ್ರ ಹೆಣ ಬರತಿದ್ವು. ಕಾಲ ಇದ್ದರ ಕೈ ಇರಲ್ಲ. ಎರಡು ಇದ್ದರ ತಲೆ ಇರ್ತಿರಲಿಲ್ಲ. ಒಮ್ಮೊಮ್ಮೆ ಎಲ್ಲವೂ ಇದ್ರು ಹೆಣ ಪೂರ್ತಿ ಕೊಳತು ಮುಟ್ಟಿದರ ಹರ್ಕೊಂಡು ಬರುವಂಗ ಇರ್ತಿತ್ತು. ಒಂದೊಂದು ಹೆಣ ಅಂತ್ರೂ ಕಿಂವು ರಕ್ತದಿಂದ ತುಂಬ್ಕೊಂಡು ಅಕರಾಳ ವಿಕರಾಳ ಆಗಿರುತಿದ್ವು. ಒಮ್ಮೊಮ್ಮೆ ಕೆಎಂಸಿಯಿಂದ ಪೊಲೀಸರಿಂದ ಫೋನ್ ಬರೋದು, ಅಲ್ಲಿಂದ ಕೊಯ್ದ ಪಂಚನಾಮೆ ಮಾಡಿದ ಹೆಣ ಸುಡಾಕ ಅಷ್ಟೋ ಇಷ್ಟು ದುಡ್ಡು ಕೊಡ್ತಿದ್ರು. ಎಷ್ಟೋ ಹೆಣಗಳಿಗೆ ವಾರಸುದಾರರೆ ಇರ್ತಿರಲಿಲ್ಲ. ಒಮ್ಮೊಮ್ಮೆ ತಿಂಗಳಾನುಗಟ್ಲೆ ಯಾರೂ ಸಾಯದೆ ಉಪವಾಸ ಇದ್ರ, ಒಮ್ಮೊಮ್ಮೆ ಎಕ್ಸಿಡೆಂಟ್ ಆದೋರು, ವಿಷ ಕುಡ್ದೋರು, ಉರ್ಲು ಹಾಕೊಂಡೋರ ಹತ್ತಾರು ಹೆಣ ಬರ್ತಿದ್ವು. abstract-art-sheepಆಗೆಲ್ಲ ಎಲ್ಲರಿಗೂ ಕೈ ತುಂಬ ಹೆಣ ಸುಡೋ ಕೆಲಸ. ಸುಗ್ಗಿಯೋ ಸುಗ್ಗಿ. ಪಾಪ ಎಷ್ಟೆಷ್ಟು ಸಣ್ಣ ಸಣ್ಣ ಮಕ್ಕಳೆಲ್ಲ ವಿಷ ಕುಡ್ದು ಉರ್ಲು ಹಾಕ್ಕೊಂಡು ಹೆಣ ಆಗಿ ಬಂದ್ರ ಅವುನ್ನ ಸುಡೋದು ಬಾಳ ಕಷ್ಟ ಆಕ್ತಿತ್ತು. ಗೆರೆ ಕೊರ್ದು ಚಿತ್ರ ಬಿಡಿಸಿ ಬಣ್ಣ ತುಂಬಿದ ಗೊಂಬಿಯಂಥೋರ ಮೈಗೆ ಬೆಂಕಿ ಹಾಕೋದಂದ್ರ ಹ್ಯಾಂಗ ಮನಸ್ಸು ಬರ್ತದ. ಆ ಮಕ್ಕಳನ್ನು ಆಡಿಸಿ ಬೆಳಿಸಿ ದೊಡ್ಡವರನ್ನಾಗಿ ಮಾಡಿದ ಹೆತ್ತೊಡಲುಗಳು ಅಳ್ಳೋದು ಕೇಳಿಸಿದ್ರಂತೂ ಕಳ್ಳ ಚುರಕ್ ಅಂತಿತ್ತು.

ಹೆಣ ಸುಡ್ತಾ ಸುಡ್ತಾನೆ ದೊರೆರಾಜ್‍ನ ರಟ್ಟೆ ಬಲ್ತಿದ್ವು. ಅವಂಗ ಹೆಣ್ಣು ನೋಡುವ ಜವಾಬ್ದಾರಿಯನ್ನ ಅಪ್ಪ ಶುರುವಿಟ್ಟುಕೊಂಡಿದ್ದ. ಹೆಣ ಸುಡೋನಿಗೆ ಮತ್ಯಾರು ಹೆಣ್ಣು ಕೊಡಬೇಕು, ಹೆಣ ಸುಡೋರ ಮಕ್ಕಳೆ ಆಗಬೇಕಲ್ವೆ? ಆಗಾಗ ತನ್ನ ಹಳೆಯ ಸಂಬಂಧಿಕರ ಮನೆಗೆ ಹೋದಾಗ ಬೇಕಂತ್ಲೆ ಮಾತಿನ ಮುಂದೆ ಮಗ ವಯಸ್ಸಿಗ ಬಂದ ವಿಷಯವನ್ನು ತರುತ್ತಿದ್ದ. ಅವನಂಗೆ ಹೆಣ ಸುಡೋರು ಹುಬ್ಬಳಿ ದಾರವಾಡ ಸೀಮಿ ಸುಡುಗಾಡದೊಳಗ ಸಿಗೂದಿಲ್ಲ ಅಂತ ಮೀಸಿ ತಿರುತ್ತಿದ್ದ. ಅಪ್ಪನ ಮಾತು ನಂಬಿ ಸುತ್ತಲಿನ ಸಣ್ಣ ಸಣ್ಣ ಪಟ್ಟಣಗಳ ಸುಡುಗಾಡುಗಳಲ್ಲಿ ಬೀಡು ಬಿಟ್ಟಿದ್ದ ಹೆಣ್ಣು ಹೆತ್ತವರು ಬಂದು ಹೋಗಿ ಮಾಡುವುದನ್ನು ಶುರುವಿಟ್ಟುಕೊಂಡಿದ್ದರು.

ರೈತರಿಗೆ ಜಮೀನು ಜಾನುವಾರು ಆಸ್ತಿ ಆದ್ರ, ಇವರಿಗೆ ಸುಡಗಾಡೇ ಆಸ್ತಿ ಇದ್ದಂಗ. ಹೆಣ್ಣು ಕೊಡಲಿಕ್ಕೆ ಬಂದವರೆಲ್ಲ ಸುಡುಗಾಡನ್ನು ಅಡ್ಡಾಡಿ ನೋಡತಿದ್ರು. ಸುಡುಗಾಡಿನ ವಿಸ್ತಾರ, ಸುಡುಗಾಡು ಸುತ್ತಲಿನ ವಾರ್ಡುಗಳ ಜನಸಂಖ್ಯೆ, ಅವರ ಶ್ರೀಮಂತಿಕೆ, ಅವರ ಚಟಾದಿಗಳು, ರೋಗ ರುಜಿನಗಳನ್ನು ಮನದಲ್ಲೆ ಲೆಕ್ಕ ಹಾಕಿಕೊಂಡು ತಮ್ಮ ಮಗಳನ್ನು ಇಲ್ಲಿಗೆ ಸೊಸೆಯಾಗಿ ಕಳಿಸಿದರೆ ಮಗಳು ಸುಖವಾಗಿ ಇರಬಹುದೆ ಎಂಬುದನ್ನು ಅಂದಾಜಿಸಿಕೊಂಡು ಮಾತುಕತೆಗೆ ಮುಂದಾಗುತ್ತಿದ್ದರು. ಐದಾರು ಮಾತುಕತೆಗಳು ಮುಂದುವರೆಯಲಿಲ್ಲವಾದರೂ ನಂತರದ ಸಂಬಂಧ ನಿಕ್ಕಿಯಾಗಿ ದೊರೆರಾಜನಿಗೆ ಮಾತೆವ್ವ ಜೊತೆಯಾಗಿ ಬಂದಿದ್ದಳು. ದೊರೆರಾಜ ದರ್ಯಾ ಆದ ಹಾಗೆ ಮೇರಿಮಾತಾ ಹೋಗಿ ಆ ನೆಲದ ನುಡಿಗನುಗುಣವಾಗಿ ಮಾತೆವ್ವ ಆಗಿದ್ದಳು. ವರ್ಷದಲ್ಲಿ ಮಗಳು ಸ್ಟೆಲ್ಲಾ ತೊಡೆ ಏರಿದ್ದಳು.

ಮಗಳು ವಯಸ್ಸಿಗೆ ಬಂದು ಆಕೆಯ ಮದುವೆ ಹ್ಯಾಂಗ ಮಾಡೋದು ಅಂತ ಮಾತೆವ್ವ ಚಿಂತಿಗೆ ಬಿದ್ದು ದರ್ಯಾನ ಜೀವ ತಿನ್ನುವ ಸಮಯದಲ್ಲೆ ಮುನ್ಸಿಪಾಲ್ಟಿಯ ಪೌರ ಕಾರ್ಮಿಕನೊಬ್ಬ ಸುಡುಗಾಡಿನ ಗೇಟಿನ ಮುಂದಿನ ರಸ್ತೆಯಲ್ಲಿ ದಿನಾಲೂ ಕಸ ಹೊಡೆಯಲು ಬಂದು ಇವಳನ್ನು ಬುಟ್ಟಿಗೆ ಹಾಕಿಕೊಂಡಿದ್ದರಿಂದ ಮಗಳ ಮದುವೆಯ ಚಿಂತೆ ದೂರಾಗಿತ್ತು.

***

ಯಾರೋ ಕೋಲಿಂದ ತಿವಿದಂಗಾಗಿ ದರೆಯಪ್ಪ ಗಾಬರಿಯಾಗಿ ಹೊದ್ದ ಲುಂಗಿಯಿಂದ ಮುಖ ಹೊರಗ್ಹಾಕಿ ನೋಡಿದರೆ ಪೊಲೀಸ್. ಸಡನ್ನಾಗಿ ಎದ್ದು ಕುಳಿತ.

‘ಹೆಣದ ಮನಿ ಮುಂದ ಮಲಕ್ಕೊಂಡಿಯಲ್ಲೋ ಹುಚ್ಚಗಿಚ್ಚ ಹಿಡದದನ ನಿನಗ. ವಾಚಮನ್ ಏನಾದ್ರೂ ನಿದ್ದೆಗಣ್ಣಾಗ ಬಂದು ಹೆಣ ಇಲ್ಯಾಕ ಬಾಗಲದಾಗ ಬಿದೈತಿ ಅಂತ ತಗ್ದು ಒಳಗ ಒಗ್ದ ಅಂದ್ರ ಏನು ಮಾಡ್ತಿ, ನಡಿ ನಡಿ ಅಕ್ಕಾಡಿ’ ಅಂದ. ದರ್ಯಾಮುಖ ಕಿವುಚುತ್ತಲೇ ಲುಂಗಿ ಸುಟಗೊಂಡು ಹೆರಿಗೆ ವಾರ್ಡ್ ಮುಂದ ಹೋಗಿ ಅಲ್ಲಿನ ಬೆಂಚ್ ಮೇಲೆ ಕುಂಡಿ ಊರಿದ.

ಮತ್ತೆ ಸುಡಿಗಾಡಿನದೆ ನೆನಪುಗಳು, ಇವನೌನ ಇವತ್ತೊಂದಿನ ಸುಡುಗಾಡು ಬಿಟ್ಟು ಬಂದಿನಿ, ಆದ್ರ ಅದು ನನ್ನ ಬಿಡೊಲ್ಲದು ಅಂತ ನಗಿ ಬಂತು. ಸುಡುಗಾಡಿಗೆ ಹೆಣ ತರುವವರೆಲ್ಲ ತಮ್ಮ ಮೃತ ಬಂಧುವನ್ನು ಯಾರನ್ನಾದರೂ ಹುಗಿದಲ್ಲಿ ಹುಗಿಬಾರದು, ಹೊಸ ಜಾಗಾನೇ ಬೇಕು ಎಂದು ಹಟ ಹಿಡಿಯುವವರನ್ನು ಕಂಡು ಅವನಿಗೆ ಸಿಕ್ಕಾಪಟ್ಟಿ ನಗುಬರತಿತ್ತು. ಪರಪಂಚದ ತುಂಬಾ ಜನಾನ ತುಂಬ್ಯಾರ, ಅವರಿಗೆಲ್ಲ ಹೊಸ ಜಾಗ ಹುಡುಕ್ಕೋತ ಹೊಂಟರ ಇಡಿ ಪರಪಂಚನೆ ಗೋರಿಗಳಿಂದ ತುಂಬಿಕೋತೈತಿ. ಇಂಥ ಸಣ್ಣ ವಿಚಾರ ಈ ಜನಕ್ಕ ಹೊಳಿದುಲ್ಲಲಾ ಅಂತ ಅನಕೋತ ’ಈ ಜಾಗ ಪ್ರೆಸ್ ಐತ್ರಿ ಸಾಹೆಬರ,’ ಅಂತ ಸುಳಸುಳ್ಳೆ ಹೇಳಿ ಕೆಲಸ ಶುರು ಮಾಡ್ತಿದ್ದ. ಆದ್ರ ಮಜಕೂರ ಅಂದ್ರ ಅಲ್ಲಿ ಇನ್ನು ಕೊಳಿಲಾರದ ಕೈ ಕಾಲಿನ ಎಲುಬುಗೊಳು ಸಿಕ್ಕು ದರಿಯನನ್ನು ಅಡಕತ್ತರ್ಯಾಗ ಸಿಲುಕಿಸುತ್ತಿದ್ದವು. ಕೆಲವರಂತೂ ತಾವು ಸಾಯುದಕಿಂತ ಮೊದಲ ಪಾಲಿಕೆಗೆ artಒಂದಿಷ್ಟು ದುಡ್ಡು ಕೊಟ್ಟು ನನ್ನ ಇಲ್ಲೆ ಹುಗಿಬೇಕು, ಹುಗಿದ ಮ್ಯಾಲ ಗೋರಿ ಕಟ್ಟಿ ಅದರ ಮೇಲೆ ತಮಗೆ ಬೇಕಾದ ದೇವರ ಚಿತ್ರವನ್ನು ಕೆತ್ತಬೇಕು ಅಂತ ಕಂಡಿಶನ್ ಹಾಕಿದ ಮ್ಯಾಲ ಸಾಯತಿದ್ರು. ಈ ಜಲಮು ಶಾಶ್ವತ ಅಲ್ಲ ಅಂತ ಗೊತ್ತಿದ್ದು ಇರೂಮಟ ಅದು ನಂದು ಇದು ನಂದು ಅಂತ ಬಡಿದಾಡೂ ಜನ, ತಾವು ಸತ್ತ ಮ್ಯಾಲೂ ತಮ್ಮ ಗೋರಿಗಾಗಿ ಬಡಿದಾಡತಾರಂದ್ರ….

ಎಲ್ಲ ಸುಡುಗಾಡದಾಗೂ ಗೋರಿ ಕಟ್ಟಿಸಿಗೋತ ಹೊಂಟಿದ್ದರಿಂದ ಪರಪಂಚದ ಸುಡುಗಾಡಗೊಳೆಲ್ಲ ಗೋರಿಗೊಳಿಂದ ತುಂಬಿ ಬಿಟ್ಟಾವು. ಅದಕ್ಕಂತ ಇತ್ತಿತ್ತಲಾಗ ಹೆಣ ಸುಡಾಕೂ ಒಂದು ಮಷಿನು ಕಂಡು ಹಿಡಿದಾರ.

ಮಷಿನ್ ಅಂದಕೂಡ್ಲೆ ದರ್ಯಾನ ತಲ್ಯಾಗ ಸೊಟ್ರಾಮ ಮತ್ತು ಅವನ ಸುಡುಗಾಡು ನೆನಪಾತು. ಇತ್ತೀಚೆಗಷ್ಟೆ ದರ್ಯಾ ಸೊಟ್ರಾಮನ ಸುಡುಗಾಡು ಹೊಕ್ಕು ಬಂದಿದ್ದ. ಹೋದ ಕೂಡ್ಲೆ ದಂಗಾಗಿ ಬಿಟ್ಟಿದ್ದ. ನಳದ ಮುಂದ ಕೊಡಪಾನ ಪಾಳೆಕ ಇಟ್ಟಂಗ ಐದಾರು ಹೆಣ ದಾರ್ಯಾಗ ಇಟ್ಟಿದ್ದರು. ಅದರಾಗ ಬಾಳಷ್ಟ ಹೆಣ ಮುದುಕುರವೆ ಆಗಿದ್ದರಿಂದ್ಲೋ ಏನೋ, ಆ ಹೆಣಗಳ ಸಂಬಂಧಿಕರು ಅಷ್ಟೆನೂ ದುಖಃ ಪಡದೆ ನಿರಾಳರಾದವರಂತೆ ಅಲ್ಲೆ ಬೆಂಚಿಕಲ್ಲಿಗೆ ಒರಗಿಕೊಂಡು ಅನು ತನು ಮಾತಾಡಕೋತ ಕುಂತಿದ್ರು. ಹೆಣದ ಬಾಯಲ್ಲಿ ನೊಣ ಹೋಗಿ ಬಂದರೂ ಅವರ್ಯಾರಿಗೂ ಖಬರಿರಲಿಲ್ಲ. ಮಧ್ಯಾಹ್ನದ ಮಟಾ ಮಾತ್ರ ರಜೆ ಹಾಕಿ ಸಂಸ್ಕಾರಕ್ಕೆಂದು ಬಂದಿದ್ದ ಹೆಣಗಳ ಕೆಲ ಸಂಬಂಧಿಕರ ಬೇಗ ಮುಗಿದುಬಿಟ್ಟರೆ ಸಾಕು. ಇಲ್ಲಂದ್ರ ರಜೆ ಮುಂದುವರೆಸಬೇಕಾಕೈತೋ ಅಂತ ದಿಗಿಲಿಗೆ ಬಿದ್ದಿದ್ದರು.

ಅಲ್ಲೆ ಇದ್ದ ಸೊಟ್ರಾಮ ಗುಟಕಾ ಜಗಿತಾ ಎತ್ತಲೋ ನೋಡಕೋತ ಕುಂತಿದ್ದ. ‘ಯಾಕೋ ರಾಮ್ಯಾ ಆರಾಮಿಲ್ಲೇನು, ಮುಖ ಒಂಥರಾ ಆಗೈತೆಲ್ಲ. ಯಾಕ ಕೆಲಸ ಶುರು ಹಚ್ಚಗೋಬೇಕಿಲ್ಲ. ಸುಡಗಾಡಕ್ಕ ಇಷ್ಟೊಂದು ಹೆಣ ಬಂದಾವು. ಏಳು ನಾನು ಕೈ ಜೋಡಿಸ್ತಿನಿ’ ಅಂತ ದರ್ಯಾ ಅವನ ಹತ್ತಿರಕ್ಕೆ ಸರಿದ.

ಇಷ್ಟ ಸಾಕಿತ್ತು, ಸೊಟ್ರಾಮನ ಕಣ್ಣು ತೇವಗೊಂಡವು. ‘ಆ ಹೆಣಗಳನ್ನು ದಫನ್ ಮಾಡೋದು ನನ್ನ ಕೆಲಸ ಅಲ್ಲೋ ಕಾಕಾ. ಅಲ್ಲೊಂದು ದೆವ್ವದಂತ ಮಷೀನ್ ಐತಿ, ಅದು ನನ್ನ ಕೆಲಸ ಕಸಕೊಂಡು ಕುಂತೈತಿ. ಹೊಟ್ಟಿ ತುಂಬ ಊಟ ಮಾಡಿ, ಎರಡ್ಮೂರು ತಿಂಗಳಾತೋ ಕಾಕಾ, ಮಷಿನ್ ಯಾವತ್ತೋ ಬಂದೈತೋ ಅವತ್ತಿಂದ ಮೈ ತುಂಬಾ ಕೆಲಸಾನು ಇಲ್ಲ, ಹೊಟ್ಟಿ ತುಂಬ ಊಟಾನೂ ಇಲ್ಲ. ಇಲ್ಲಿಂದ ಎಲ್ಯಾರ ದೂರ ಹೋಗಬೇಕು ಅಂತ ಅನಿಸತೈತಿ. ಆದ್ರ ಎಲ್ಲಿ ಹೋಗಬೇಕು, ಏನು ಮಾಡಬೇಕು ಅನ್ನೊದು ತಿಳಿವಲ್ಲದಂಗ ಆಗೇತಿ’ ಅಂತ ನೆಲಕ್ಕ ದೃಷ್ಟಿ ಚೆಲ್ಲಿದ.

ದರ್ಯಾಗ ಅವತ್ತು ದೊಡ್ಡ ವಿಚಿತ್ರ ನೋಡಿದಂಗಾತು. ‘ಕಲಿಕಾಲ ಬರತೈತಿ, ಹಡಿಯಾಕ ಮಷೀನು, ದಪನ್ ಮಾಡಾಕ ಮಷೀನು ಬರತಾವು. ತೂಗಿ ತಿಂದು ತಿಣುಕಿ ಹೇಲೋ ಕಾಲ ದೂರಿಲ್ಲ’ ಅಂತ ಬುಡಬುಡಿಕ್ಯಾ ಹೋದ ವರ್ಷ ಹೇಳಿದ್ದನ್ನೆ ದೇನಿಸಿಕೊತ ಕುಂತ.

ಅಷ್ಟರೊಳಗ ಕರೆಂಟ್ ಬಂದುವಂಥ ಯಾರೊ ಒಬ್ಬ ಒದರಿದ್ರು. ಹೆಣ ಮಷೀನ್ ಬಾಯಾಗ ಕೋಡೋದನ್ನ ನೋಡಾಕಂತ ದರ್ಯಾ ಎದ್ದು ಬಂದ. ಎಲ್ಲ ಪೂಜಾವಿಧಿ ಮೂಗಿದ ಮ್ಯಾಲ ಅಂಗಡಿ ಬಾಗಿಲದಂಥ ಷಟರ್ ಮ್ಯಾಲ ಎಳದು ಅದರೊಳಗ ಹೆಣ ತುರುಕತಿದ್ರು. ಮತ್ತ ಬಾಗಲು ಹಾಕಿ ಒಂದೈದು ನಿಮಿಷ ಬಿಟ್ಟು ಷೆಟರ್ ತೆಗದು ನೋಡಿದರ ಅಲ್ಲಿ ಹೆಣ ಮಂಗ ಮಾಯ. ಈಗಷ್ಟೆ ಹೆಣ ತಿಂದರೂ ಹಸಿವು ನೀಗದಂತಿದ್ದ ಅಲ್ಲಿನ ನಿಗಿ ನಿಗಿ ಕೆಂಡ ಬಾಯ್ದೆರೆದು ತನ್ನನ್ನೆ ಕರೆದಂತಾಗಿ ದರೆಪ್ಪ ಅಲ್ಲಿಂದ ಕಣ್ ಕಿತ್ತಿದ್ದ.

ಆ ಮಷೀನ್ ಪಕ್ಕವೇ ಪ್ಯಾಂಟು ಶರಟು ಹಾಕಿದ್ದ ಒಬ್ಬ ಹುಡುಗ ಆಪೀಸರ್ ದಿಮಾಕಿನಲ್ಲಿ ಬಟನ್ ಒತ್ತುವುದು ಆರ್ಸೂದು ಮಾಡ್ತಿದ್ದ. ಅಂವನನ್ನು ತೋರಿಸಿದ ಸೊಟ್ರಾಮ ‘ಮಷಿನು ನಡಿಸಾಕಂತ ಅವಂಗ ಸರಕಾರ ಪಂದ್ರ ಸಾವಿರ ಪಗಾರ ಕೊಡೋ ನೌಕರಿ ಕೊಟ್ಟೈತಿ. ಬಟನ್ ಚಾಲೂ ಮಾಡೂದು ಬಂದ್ ಮಾಡೂದು ಅಷ್ಟ ಅಂವನ ಕೆಲಸ. ಇವನೌನ ನಾವಿಲ್ಲಿ ಮೈ ನೂಸುವಂಗ ತೆಗ್ಗ ತೊಡೋದು, ಹೆಣ ಸುಡೊದು ಮಾಡಿದ್ರೂ ನಯ್ಯಾಪೈಸೆ ಕೊಡೂದಿಲ್ಲ.’ ಸೊಟ್ರಾಮ ಸುಡುವ ಬಿಸಲಲ್ಲಿ ಬೆವರಿಳಿಸಿಕೊಂಡು ಕೊತಕೊತ ಕುದಿಯುವ ತನ್ನ ನೋವು ತೋಡಿಕೊಂಡ. ಅವನಿಗೆ ಏನು ಹೇಳಬೇಕಂಬೂದು ಗೊತ್ತಾಗದ ದರ್ಯಾ ಸ್ವಲ್ಪ ಹೊತ್ತಿನ ಮ್ಯಾಲ ತನ್ನ ಸುಡುಗಾಡಿನ ದಾರಿ ಹಿಡಿದಿದ್ದ. ಈ  ಮಾಯಾವಿ ಮಷೀನು ತಮ್ಮ ಮಂದಿಯ ಬದುಕನ್ನೆ ನುಂಗುವುದಾದರೆ ಯಾಕಿದನ್ನು ಕಂಡು ಹಿಡಿದರೋ, ನಾವೇನು ಅನ್ಯಾಯ ಮಾಡಿದ್ದೇವೆಯೋ, ಎಂಥ ಕಾಲ ಬಂತು. ಮುಂದ ತುತ್ತಿಡಾಕೂ ಮಷೀನು, ಹಿಂದ ಕುಂಡಿ ತೊಳಿಯಾಕೂ ಮಷೀನು ಬಂದು ನಮ್ಮಂಥ ಬಡವರು ಬದುಕಾಕ ದಾರಿನೇ ಇಲ್ಲದಂಗಾತೋ ಅಂತ ಸೊಟ್ರಾಮನ ಬಡಬಡಿಕೆ ದರೆಪ್ಪನನ್ನು ಬೆನ್ನು ಬೀಡದೆ ಹಿಂಬಾಲಿಸಿ ಗೋಳು ಹೊಯ್ಕೊಳುತ್ತಿತ್ತು.

ಹಿಂಗ ನೆನಪುಗಳ ಜಾತ್ರೆ ನೆರೆದು ದಗ್ಗುದುಳಿಯುತ್ತಿರುವಾಗಲೇ ದರೆಪ್ಪ ಸುಸ್ತಾಗಿ ನಿದ್ದಿ ಉಡಿಯಾಗ ಬಿದ್ದಿದ್ದ.

***

ಬೆಳಗಿನ ಜಾವ ಯಾವಾಗಲೋ ದರ್ಯಾನನ್ನು ಎಬ್ಬಿಸಿಕೊಂಡು ಸಿಕ್ಕ ಆಟೋ ಹಿಡಿದುಕೊಂಡು ಸುಡುಗಾಡಿಗೆ ಕರೆದುಕೊಂಡು ಬಂದಿದ್ದಳು ಮಾತೆವ್ವ. ಮಳೆ ತಣ್ಣಗೆ ಹಣಿಯುತ್ತಲೆ ಇತ್ತು. ನಾಲ್ಕು ಗೋಡೆಯ ಮೇಲೆ ತಗಡಿನ ಶೀಟು ಹೊದಿಸಿರುವ ಒಂದು ಗೂಡಿನಲ್ಲಿಯೇ ಇವರ ವಂಶದ ಬಳ್ಳಿ ಚಿಗಿತು ಹಬ್ಬತೊಡಗಿ ಈ ಹಂತಕ್ಕೆ ಬಂದಿತ್ತು. ಆ ಗೂಡಿನಲ್ಲೆ ಈಗ ಸ್ಟೇಲ್ಲಾಳ ಬಾಣಂತನವಾಗಬೇಕು.

ಆ ಬೆಳಗ್ಗೆ ಮನೆಗೆ ಬಂದರೆ ಮನೆ ತುಂಬ ತಟ ತಟ, ಯಾವತ್ತೋ ಹೊದೆಸಿದ ತಗಡುಗಳು ಅಲ್ಲಲ್ಲಿ ತೂತು ಬಿದ್ದ ಸೋರುತ್ತಿದ್ದವು. ಬಾಗಿಲುಗಳಿಲ್ಲದ ಕಿಡಕಿಯಿಂದ ರಾಜೋರೋಷವಾಗಿ ಪ್ರವೇಶ ಮಾಡುತ್ತಿದ್ದ ಮಳೆಗಾಳಿಗೆ ಮಾತೆವ್ವ ಉಡಿಯಲ್ಲಿನ ಮಗು ಅವಚಿಕೊಂಡು ದಿಗಿಲಿಗೆ ಬಿದ್ದು ದರ್ಯಾನತ್ತ ನೋಡಿದಳು. ನಿದ್ದೆಯ ಮಂಪರಿನಲ್ಲಿದ್ದ ದರ್ಯಾ ಸಿಕ್ಕ ಹಾಸಿಗೆ ತುಗೊಂಡು ರುದ್ರಮಂಟಪದ ಕಡೆ ಹೊಂಟಬಿಟ್ಟಿದ್ದ.

‘ಎ ಮೂಳಾ, ಹಂಗ ಹೊಂಟೆಲ್ಲ, ಅಟು ಖಬರೈತಿಲ್ಲ ನಿಂಗ, ಮಗಳ ಹಸಿ ಮೈಯ್ಯಾಕಿ ಆದಾಳ ಅನ್ನೂದರ ಗೊತ್ತೈತಿಲ್ಲೋ. ಮನಿ ನೋಡಿದರ ಒಂದ ಸಂವನ ಸೋರತೈತಿ. ಹೋಗು. ಎನ್ ಮಾಡ್ತಿಯೋ ಗೊತ್ತಿಲ್ಲ, ಎಲ್ಲ ಕಿಡಕಿ ಬಂದ್ ಮಾಡಿ ಬಾ.’ ಅಂತ ಆದೇಶಿಸಿಬಿಟ್ಟಳು.

ಸುರಿಯುವ ಮಳೆಯೊಳಗ ರೇಗಾಡುತ್ತಲೇ ಹೊರಗೆ ಹೋದ ದರಿಯ ಕಿಡಕಿ ಹ್ಯಾಂಗ ಮುಚ್ಚೋದು ಅಂತ ಸ್ವಲ್ಪ ಹೊತ್ತು ವಿಚಾರ ಮಾಡ್ದ. ಏನೇನೋ ದೇನಕಿ ಹಾಕ್ಕೊಂಡು ಹುಡುಕಾಡಿದ. ಏನೂ ಸಿಗಲಿಲ್ಲ. ಅದೆ ಹೊತ್ತಲ್ಲಿ ಬಿದ್ದ ಕೋಲ್ಮಿಂಚಿನ ಬೆಳಕಲ್ಲಿ ಗೋರಿಗಳ ಮೇಲೆ ಹುಗಿಯಲಾಗಿದ್ದ ನಾಮಫಲಕಗಳು ಇವನನ್ನು ಕರದಂಗಾತು. ಜೀವವಿರುವ ಮನುಷ್ಯರಿಗಿಂತ ಸತ್ತ ಮನುಷ್ಯರೆ ಒಳ್ಳೆಯವರು ಎನ್ನುವ ಅವನು ನಂಬಿದ ಏಕೈಕ ತತ್ವ ಈ ಸಮಯದಲ್ಲಿ ಮತ್ತೆ ನೆನಪಿಗೆ ಬಂದು ಮನಸ್ಸು ಅರಳಿತು. ನೂರಾರು ವರ್ಷದ ಹಿಂದ ಗೊರಿಗಳೊಳಗ ಮಲ ಮುಂತಾದ ಸಜ್ಜನರು ‘ಬಾ ದರ್ಯಾ’ ಅಂತ ಕರೆದಂಗಾತು. ಈ ಹಿರಿಕರ ಶತಮಾನದ ಗೋರಿಗಳು ತಮ್ಮ ಮೈಮೇಲಿನ ಗಚ್ಚು ಸಿಮೆಂಟ್ ಉದುರಿ ಹೋಗಿ ಕೇವಲ ಮೂಲೆಗಲ್ಲು, ನಾಮಪಲಕಗಳ ಅಸ್ತಿಪಂಜರವನ್ನು ಮಾತ್ರ ಹೊದ್ದು ನಿಂತಿದ್ದವು. ಕೆಲವು ಗೋರಿಗಳ ನಾಮಪಲಕವೂ ಕಳಚಿ ಬಿದ್ದು, ಯಾವುದೂ ಶಾಶ್ವತವಲ್ಲ ಎಂಬ ಲೋಕ ನೀತಿಗೆ ಸಾಕ್ಷಿಯಾಗಿದ್ದವು.  ದರ್ಯಾ ತನಗೆ ಬೇಕಾದ ಆಕಾರದ ಐದಾರು ನಾಮಫಲಕಗಳನ್ನು ತಂದು ಗಾಳಿ ಮಳೆ ಪ್ರವೇಶಿಸದಂತೆ ಕೋಲಿಯ ಕಿಡಕಿಗಳಿಗೆ ಮುಚ್ಚಿದ.

ಒಳಗೆ ಮಗು ಕಿಲ ಕಿಲ ಅಂತ ನಗುತ್ತಿತ್ತು. ಹೆರಿಗೆ ಸುಸ್ತಿನಲ್ಲಿದ್ದ ಮಗಳು ನಿದ್ದೆ ಹೋಗಿದ್ದಳು. ಮಾತೆವ್ವ ಮಗಳು ಮೊಮ್ಮಗಳಿಗೆ ಮಳೆ ನೀರು ಸಿಡಿಯದಂತೆ ಹಗ್ಗದ ಮಂಚದ ಮೇಲೆ ಪ್ಲ್ಯಾಸ್ಟಿಕ್ ಹಾಳೆಯೊಂದನ್ನು ಕಟ್ಟುತ್ತಿದ್ದಳು. ಒಂದೆರಡು ಗೋಣಿ ಚೀಲಗಳನ್ನು ತೆಗೆದುಕೊಂಡ ದರ್ಯಾ ಮಲಗಲು ರುದ್ರಮಂಟಪದತ್ತ ಹೆಜ್ಜೆ ಹಾಕಿದ. ನಿದ್ರೆ ಕಣ್ತುಂಬುವವರೆಗೆ ನೆನಪುಗಳು ಅವನಿಗೆ ಮತ್ತೆ ಜೊತೆಯಾದವು.

ಮರುದಿನ ಬೆಳಗ್ಗೆ ಮಾತೆವ್ವ ಹಾಸಿಗೆ ಜಗ್ಗಿ ಎಬ್ಬಿಸಿದಾಗಲೇ ಅವನಿಗೆ ಎಚ್ಚರವಾದುದು. ‘ಒಂದು ಬದುಕು ಬರೂದೈತಿ. ಒಂದು ಕುಣಿ ರೆಡಿ ಮಾಡಬೇಕು, ಎದ್ದೇಳು.’ ಅಂತ ಹಾಸಿಗೆ ಜಗ್ಗತೊಡಗಿದಳು. ತಮ್ಮೊಡಲಿಗೆ ಅನ್ನ ಹಾಕುವ ಹೆಣಗಳನ್ನೆ ಬದುಕು ಎಂದು ಕರೆಯುವ ಕಾಯಕ ಜೋಡಿಯದು.

‘ಇನ್ನೊಂದು ತಾಸಿನ್ಯಾಗ ತರ್ತಾರಂತ ಜಲ್ದಿ ಎಳು’ ಅನಕೋತ ಅಂವ ಹೊಳ್ಳಿ ಮಕ್ಕೊಂಡು ಗಿಕ್ಕೊಂಡಾನು ಅಂತ ಅಂವನ ಕೌದಿಯನ್ನು ಬಗಲಲ್ಲಿ ಇಟ್ಟುಕೊಂಡೆ ಮಾತೆವ್ವ ಕೋಲಿ ಕಡೆ ನಡೆದಳು. ಅವಳ ಹಿಂದಿಂದ ಆಕಳಿಸಿಕೊತ ಹೊದ ದರಿಯ ಬಿಸಿ ಬಿಸಿ ಚಾ ಕುಡ್ದು ಮೊಮ್ಮಗಳಿಗೆ ಮುಖ ನೋಡಿ ನಿನ್ನ ದರ್ಶನದಿಂದ ಇವತ್ತು ಚಲೋತಂಗ ಚಿಲ್ಲರೆ ಬರಲೆವ್ವ ನಿಮ್ಮವ್ವಗ ಕೋಳಿ ಸಾರು ಮಾಡಿ ಹಾಕ್ತೆನಿ ಅನಕೋತ ಸಲಕಿ ಕೆಬ್ಬಣ ಪುಟ್ಟಿ ತುಗೊಂಡು ಹೊರ ನಡೆದ.

ಒಂದು ಮೂಲೇಲಿ ಜಾಗ ಗುರುತಿಸಿ ಹಡ್ಡಬೇಕಂದವನಿಗೆ ಏನೋ ನೆನಪಾಗಿ ಸುಡುಗಾಡಿನ ಗೇಟ್‍ಕಡೆ ನಡೆದ. ಸುಡುಗಾಡಿನ ತಿರುವಿನಲ್ಲಿದ್ದ ಸರೆ ಅಂಗಡಿಗೆ ಹೋಗಿ ಉದ್ರಿ ಹೇಳಿ ಒಂದು ಬಾಟಲಿ ಹೊಟ್ಟಿಗಿಳಿಸಿ ಬಂದು ಕುಣಿ ತೋಡತೊಡಗಿದ. ಸ್ವಲ್ಪ ಹೊತ್ತಿಗೆ ತನ್ನ ಸೆರಗನ್ನೆ ಸಿಂಬಿಯನ್ನಾಗಿ ಮಾಡಕೋತ ಮನಾತೆವ್ವನೂ ಬಂದೂ ಜೋಡಾದ್ಲು. ಇಂವ ಕ್ಷಣ ಕ್ಷಣಕ್ಕೂ ಕುಣಿಯೊಳಗ ಇಳಿಯುತ್ತಾ ಹೋದಂತೆ ಮಾತೆವ್ವಳೂ ಕುಣಿಯೊಳಗ ಇಳಿದ್ಲು. ಇಂವ ಸಲಕಿಗೆ ತುಂಬೋದು, ಮಾತೆವ್ವ ಬುಟ್ಟಿ ಹೊರಗ ಚೆಲ್ಲೋದು ಸೂರ್ಯ ಹೆಗಲ ಮೇಲೆ ಬರೂವರೆಗೂ….

***

ಕುಣ್ಯಾಗ ಹೆಣ ಇಟ್ಟ ಮಂದಿ ನಿರುಮ್ಮಳಾಗಿ ಮನೆ ಕಡೆ ಹೊರಡುವಾಗಲೇ ಅವರಿಗೆ ಆ ನಾಮಪಲಕಗಳು ಕಣ್ಣಿಗೆ ಬಿದ್ದು ಮುಂದಿನ ವೀಪರೀತಕ್ಕೆ ಕಾರಣವಾಗಿದ್ದವು. ಆ ಗುಂಪಿನಲ್ಲಿದ ಕಹಿರಸ (ಕರ್ನಾಟಕ ಹಿಂದೂ ರಕ್ಷಣಾ ಸಮಿತಿ) ಮುಖಂಡನೊಬ್ಬನ ಚುರುಕುಗಣ್ಣುಗಳಲ್ಲಿ ಕಿಡಕಿಗೆ ಆಸರಾಗಿ ಇಟ್ಟಿದ್ದ ಆ ನಾಮಫಲಕಗಳು ಪ್ರತಿಫಲಿಸಿ ಅವು ಕೆಂಪಾಗಲು ಕಾರಣವಾಗಿದ್ದವು. ‘ಅಯ್ಯೋ ನಮ್ಮ ಹಿರಿಕರು ಉಲ್ಟಾ ಪಲ್ಟಾ ಕುಂತಾರ, ಕರಿರಿ ಆ ಕಿರಿಸ್ತಾನ್ ಬೊಳಿ ಮಗನ್ನ’ ಅಂತ ಚೀರಾಡತೋಡಗಿದ್ದನ್ನು ನೋಡಿದ ಮಾತೆವ್ವ ಭಯದಿಂದ ಥರಗುಟ್ಟಿ ಒಳಗೆ ದನಿವಾರಿಸಿಕೊಳ್ಳುತ್ತಿದ್ದ ಗಂಡನನ್ನು ಕರೆದಳು. ದರ್ಯಾ ತೇಲಗಣ್ಣು ಮೇಲುಗಣ್ಣು ಹಾಕೋತ ಬಂದ ನಿಂತ.

‘ಮಗನ ಇಂವನ್ಯಾಕ ಇಲ್ಲಿ ಇಟಗೊಂಡಿದ್ದಿ, ಸೊಕ್ಕ ಮೈ ಏರಿತೇನ’
‘ಎಪ್ಪ ರಾತ್ರಿ ಮಳಿ ಬರತಿತ್ತ ಅದಕ್ಕ..’
‘ಅದಕ್ಕ ನಮ್ಮ ಹಿರಿಯಾರ ಬೇಕೇನೋ ಮಗನ ನಿನಗ.. ಯಾರನ್ನ ಕೇಳಿ ತೊಗೊಂಡಿ.’
‘ಎಪ್ಪ ಯಾರನ್ನೇನು ಕೇಳೋದು. ಹುಟ್ಟಿದಾಗಿಂದ ಇಲ್ಲಿ ಬದುಕೇನಿ, ಈ ಸುಡಗಾಡ ನನ್ನ ಮನಿ, ಇಲ್ಲಿ ಮಕ್ಕೊಂಡರಲ್ಲಾ, ಈ ಗೋರಿಗಳೊಳಗ, ಅವರು ನಮ್ಮ ದೇವರು.. ನನ್ನ ಮೊಮ್ಮಗಳ ಕಷ್ಟ ನೋಡಲಾರದ ಅವರ ನನಗ ಈ ಪಾಠಿಗಲ್ಲು ತೊಗೊಂಡು ಹೋಗು ಅಂದ್ರು, ಅಂದಕ್ಕ ತಂದ ಇಟಗೊನ್ನಿ.’

ಒಂದಿಷ್ಟು ಜನ ಕೊಳ್ಳೆಂದು ನಕ್ಕರು. ಆದ್ರ ಒಬ್ಬ ‘ಮಗನ್ನ ಸುಳ್ಳು ಹೇಳತಿ’ ಅಂತ ಗುಂಪಿನಲ್ಲಿದ್ದವನೊಬ್ಬ ಜಾಡಿಸಿ ಒದ್ದೆಬಿಟ್ಟ! ಇನ್ನೊಂದಿಷ್ಟು ಜನ ಬಿದ್ದವನ ತುಳಿಯಲು ಮುಂದೆ ಸರಿದರು.
ಗುಂಪಿನಲ್ಲಿದ್ದ ಹಿರಿಯನೊಬ್ಬ ಇದನ್ನೆಲ್ಲ ನೋಡಲಾರದೆ ‘ಏ ಒದಿಬ್ಯಾಡ್ರೋ ಅಟ್ರಾಸಿಟಿ ಕೇಸ್ ಹಾಕಿದ್ರ ಜಡಾ ಆಕೈತಿ’ ಅಂತ ಅವರನ್ನೆಲ್ಲ ಹಿಂದೆ ಸರಿಸಿದ.

ಕಹಿರಸ ಮುಖಂಡ ಇನ್ನು ಬುಸುಗುಡುತ್ತಲೇ ಇದ್ದ. ‘ಕಿರಿಸ್ತಾನ ಮಗನ್ನ ನಮ್ಮ ಸುಡುಗಾಡಿಂದ ಒದ್ದೋಡಿಸುವರೆಗೂ ನಮ್ಮ ಹಿರಿಕರ ಈ ಗೋಳು ತಪ್ಪುವಂಗಿಲ್ಲ. ಮೊದಲು ಇಂವನ ಮ್ಯಾಲೆ ಒಂದು ಕೇಸು ಜಡಿಯೋನು ಬರ್ಯೋ’ ಅಂತ ಒಂದಿಷ್ಟು ಗುಂಪು ಹೊಂಡಿಸಿಗೊಂಡು ಹೊರಟೇ ಬಿಟ್ಟ. ಹೋಗುವ ಮುನ್ನ ಸಾಕ್ಷಿಗಿರಲೆಂದು ತನ್ನ ಮೊಬೈಲ್‍ನಿಂದ ಉಲ್ಟಾ ಪಲ್ಟಾ ಇಟ್ಟಿದ್ದ ನಾಮಫಲಕಗಳ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದ.

ಅವನಿಗೆ ಕ್ರಿಶ್ಚಿಯನ್ ಅನುಯಾಯಿಗಳ ಮೇಲೆ, ಅದರಲ್ಲೂ ಯಾರ ಯಾರದೋ ಮಾತು ಕೇಳಿ ತಮ್ಮ ಧರ್ಮವನ್ನೆ ಮಾರಿಕೊಂಡವರ ಮೇಲೆ ಬಹಳ ಸಿಟ್ಟಿತ್ತು. ಭಾರತ ಹಿಂದೂಗಳ ದೇಶವೆಂದು ಆತ ಬಲವಾಗಿ ನಂಬಿದ್ದ. ಹೇಗಾದರೂ ಮಾಡಿ ಅನ್ಯ ಧರ್ಮದ ಕುನ್ನಿಗಳನ್ನ ಓಡಿಸೋಣ ಎಂದು ಆಗಾಗ ಸಭೆಗಳಲ್ಲಿ ಭಾಷಣ ಮಾಡುತ್ತಿದ್ದ. ಆತ ಬಹಳ ದಿನಗಳ ನಂತರ ಮಾತನ್ನು ಕೃತಿಗಿಳಿಸಲು ಸಿಕ್ಕ ಅವಕಾಶವನ್ನು ಮಿಸ್ ಮಾಡಿಕೊಳ್ಳಬಾರದೆಂಬ ಹುಮ್ಮಸ್ಸಿನಲ್ಲಿದ್ದ.

ಮುಸಲರ ಹುಡಗನೊಬ್ಬ ಹಿಂದೂ ಹುಡುಗಿಗೆ ಕಿಚಾಯಿಸಿದ್ದರ ಪ್ರಕರಣವೊಂದರ ಬಗ್ಗೆ ತಲೆಬಿಸಿ ಮಾಡಿಕೊಂಡ ಕುಂತಿದ್ದ ಪಿಎಸ್‍ಐ ಸೂರ್ಯರೆಡ್ಡಿ ಅವರು ಕಹಿರಸ ಸಂಘಟನೆಯವರು ತಂದ ದೂರನ್ನು ಆಲಿಸಿ ಮತ್ತಷ್ಟು ಗರಂ ಆಗಿದ್ದರು. ‘ಕೇವಲ ನಾಮಫಲಕಗಳ ಕಳುವು ಅಂಥ ಕೇಸು ಜಡಿದರೆ ಅದು ಸ್ಟ್ರಾಂಗ್ ಆಗೂದಿಲ್ಲ. ಸುಡಾಗಾಡಿನ್ಯಾಗ ಅಸ್ತಿಪಂಜರ, ಎಲುಬು, ಆಗಷ್ಟೆ ಹುಗಿದ ಹೆಣ ಮಾರ್ತಾನ ಅಂತ ಕೇಸ್ ಜಡಿರಿ. ಒಂದಷ್ಟು ವರ್ಷ ಕಂಬಿ ಎಣಿಸಲಿ ಮಗಾ’ ಅಂತ ತಮಗೆ ತಿಳಿದ ಕೆಲವು ಸೆಕ್ಷೆನ್‍ಗಳ ನಂಬರ್ ಹೇಳಿ ತಮ್ಮ ತಲೆಬಿಸಿಯನ್ನು ಸ್ವಲ್ಪಮಟ್ಟಿಗೆ ತಣ್ಣಗೆ ಮಾಡಿಕೊಂಡರು. ಜೊತೆಗೆ ಕಹಿರಸ ಸಂಘಟನೆ ಮುಖ್ಯಸ್ಥರಿಂದ ಶಹಬ್ಬಾಷಗಿರಿ ಸಿಕ್ಕು ಮತ್ತಷ್ಟು ಖುಷಿಗೊಂಡರು.

ಇಲ್ಲಿ ಕೇಸು ಜಡಿಯಲಾಗುತ್ತಿದ್ದರೆ ಅಲ್ಲಿ ರುದ್ರಮಂಟಪದೊಳಗೆ ನೆಮ್ಮದಿಯ ನಿದ್ದೆಯಲ್ಲಿದ್ದವನನ್ನು ಪೋಲೀಸ್ ಪೆದೆಗಳು ಎಳೆದು ತಂದರು. ಅಷ್ಟೊತ್ತಿಗಾಗಲೇ ಕಹಿರಸ ವೇದಿಕೆಯ ಸಮಾಜಸೇವಕರು ತಮಗೆ ಗೊತ್ತಿದ್ದ ಟಿವಿ ರೀಪೋರ್ಟ್‍ರ್‍ಗಳಿಗೆ ಪೋನಾಯಿಸಿ ಕರೆಸಿಕೊಂಡು ತಮ್ಮ ಸೇವೆಯನ್ನು ಸಾಧ್ಯಂತವಾಗಿ ವಿವರಿಸುವಲ್ಲಿ ತಲ್ಲೀನರಾಗಿದ್ದರು. ಅಲ್ಲಿಗೆ ಯಾವದೋ ಲೋಕದ ಪ್ರಾಣಿಯಂತೆ ಹಿಡಿದು ತರಲಾದ ದರ್ಯಾನನ್ನು ನೋಡಿದ ಟಿವಿ ವರದಿಗಾರರು ತಮ್ಮ ಕ್ಯಾಮರಾವನ್ನು ದರಿಯನತ್ತ ತಿರುಗಿಸಿದರು. ಕೇಸಿನ ತಳಬುಡವನ್ನು ಅರಿಯದ ದರಿಯ ಎಂದಿನಂತೆ ಹಲ್ಕಿರಿದು ಪೋಜು ಕೊಟ್ಟ. ಅವನನ್ನು ಸ್ಟೇಷನ್ನಿನಲ್ಲೆ ಇದ್ದ ಕಂಬಿಯೊಳಗೆ ನೂಕಿ ಕೀಲಿ ಜಡಿಯಲಾಯಿತು. ಇದ್ಯಾವುದರ ತಳಬುಡವೂ ಅರ್ಥವಾಗದ, ಅರ್ಥೈಸಿಕೊಳ್ಳಲು ಪ್ರಯತ್ನಿಸದ ದರಿಯ ಅಲ್ಲಿಯೆ ಟಾವೆಲ್ಲು ಚೆಲ್ಲಿ ಅಡ್ಡಾಗಿಬಿಟ್ಟ. ಬಹುಶಃ ಕುಡಿದದ್ದು ಇನ್ನು ಇಳಿಯದಿದ್ದುದರಿಂದ ಮತ್ತೆ ನೆನಪುಗಳ ಲೋಕದಲ್ಲಿ ವಿಹರಿಸಿ ನಿದ್ರೆಯ ಪಾತಳಿಗೆ ಬಿದ್ದು ನಿರಮ್ಮಳನಾದ.

ಇತ್ತ ಮಾದ್ಯಮಗಳಲ್ಲಿ ನೋಡಿ ಈ ಪ್ರಕರಣವನ್ನು ಗಂಭೀರವಾಗಿ ಕೆಲವು ದೇಶಭಕ್ತರು ದೇಶದ ರಕ್ಷಣೆಗಾಗಿ ಸಿಕ್ಕ ಅವಕಾಶವನ್ನು ಕಳೆದುಕೊಳ್ಳಬಾರದೆಂದು ನಿರ್ಧರಿಸಿ ಒಟ್ಟಾದರು. ತುರ್ತು ಸಭೆಗಳನ್ನು ನಡೆಸಿದರು. ಇದರ ಫಲವಾಗಿ ಮಾರನೆ ದಿನವೇ ಸುಡುಗಾಡಿನ ಮುಂದೆ ಬೃಹತ್ ಪ್ರತಿಭಟನಾ ಧರಣಿ ನಡೆಯಿತು. ಹೆಣ, ಅಸ್ತಿಪಂಜರ ಮಾರಾಟ ಮಾಡುವ, ಹಿಂದೂ ಗೋರಿಗಳನ್ನು ದ್ವಂಸಗೊಳಿಸಿ ಸಮಾಜದ ಕೋಮು ಸೌಹಾರ್ದವನ್ನು ಕೆಡಿಸುತ್ತಿರುವ ಕ್ರಿಶ್ಚಿಯನ್ ದೊರೆರಾಜ್‍ನ ಕುಟುಂಬವನ್ನು ಕೂಡಲೆ ಸ್ಮಶಾನದಿಂದ ಎತ್ತಂಗಡಿ ಮಾಡುವವರೆಗೂ ನಮ್ಮ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಹೋರಾಟಗಾರರು ಪಟ್ಟು ಹಿಡಿದರು. ಇದೆ ವೇಳೆ ಪ್ರತಿಭಟನಾಕಾರರಿಂದ ಮಾತೆವ್ವನ ಮನೆ ಮೇಲೆ ಕಲ್ಲುಗಳು ಬಿದ್ದವು. ಸುದ್ದಿ ತಿಳಿದ ಅಳಿಯ ಮುನ್ಸಿಪಾಲ್ಟಿ ನೌಕರ ಗಂಗರಾಜು ಎಲ್ಲಿದ್ದವನೋ ಓಡೋಡಿ ಬಂದು ತಾಬಡತೋಬಡ ತನ್ನ ಬಾಣಂತಿ ಹೆಂಡತಿ ಮತ್ತು ಅತ್ತೆ ಮಾತೆವ್ವನನ್ನು ತನ್ನ ತಗಡಿನ ಮನೆಗೆ ಸಾಗಿಸಿದ.

ಹೆಣಗಳ್ಳತನ ಘೋರವಾದ ಅಪರಾಧವೇ ಆದ್ದರಿಂದ ಮಾನ್ಯ ಗೌರವಾನ್ವಿತ ನ್ಯಾಯಮೂರ್ತಿಗಳು ದರಿಯನಿಗೆ 5 ವರ್ಷ ಸಜೆಯನ್ನು ವಿಧಿಸಿದರು.

***

5 ವರ್ಷಗಳಲ್ಲಿ ಏನೇನೆಲ್ಲ ಬದಲಾಗಿತ್ತು. ಅಳಿಯ ಗಂಗರಾಜು ತನ್ನ ಹೆಂಡತಿ ಮತ್ತು ಮಾತೆವ್ವನನ್ನು ತನ್ನ ಮನೆಯಲ್ಲೆ ಇಟ್ಟುಕೊಂಡು ಬಿಟ್ಟಿದ್ದ. ಸಂಸಾರ ಪೂರ್ತಿ ದರಿಯನೊಂದಿಗೆ ಸಣ್ಣಪುಟ್ಟದಕ್ಕೆಲ್ಲ ಜಗಳಾಡಿಕೊಂಡೆ ಕಳಿದಿದ್ದ ಮಾತೆವ್ವ ಅಳಿಯನ ಮನೆ ಸೇರಿದ ಮೇಲೆ ಯಾರೊಂದಿಗೂ ಮಾತನಾಡುವುದನ್ನು ಬಿಟ್ಟು ಗಂಡನ ನೆನಪಲ್ಲಿ ದಿನವೂ ಕುಸಿಯುತ್ತಾ ಹೋಗಿ ಒಂದಿನ ಮಣ್ಣಲ್ಲಿ ಸೇರಿಹೋದಳು.

ಐದು ವರ್ಷದ ನಂತರ ಬಿಡುಗಡೆಗೊಂಡ ದರಿಯಜ್ಜ ಸುಡುಗಾಡಿಗೆ ಬಂದರೆ ಅಲ್ಲೇನಿದೆ ಮಣ್ಣು? ದರಿಯನ ಕುಟುಂಬದ ಅರಮನೆಯಂತಿದ್ದ ಮುರುಕಲು ಮನೆಯನ್ನು ಯಾವತ್ತೋ ಬಿಳಿಸಲಾಗಿದೆ. ಒಂದಲ್ಲಾ ಎರಡು ವಿದ್ಯುತ್ ಶವಾಗಾರಗಳನ್ನು ಜೋಡಿಸಲಾಗಿದೆ. ಅವುಗಳನ್ನು ನಡೆಸಲು ಪ್ಯಾಂಟು ಶರಟಿನ ನೌಕರರು ಪಾಳಿಯಲ್ಲಿದ್ದ ಹೆಣಗಳನ್ನು ಕಬ್ಬು ನುರಿಸುವಂತೆ ನುರಿಸುತ್ತಿದ್ದಾರೆ.

ಗೇಟ್ ಒಳಗೆ ನುಸುಳಿದ ಈ ಅಜ್ಜನನ್ನು ಕಂಡು ರಾಂಗಾದ ಕಾವಲುಗಾರ ‘ಏಯ್ ಯಜ್ಜಾ ಯಾಕ ಒಳಗ ಬರ್ತಿ? ಇಲ್ಲಿ ಜೀವ ಇರಾಕಿಲೆ ಒಳಗ ಬರಾಕ ಆಗೂದಿಲ್ಲ ಹೋಗ್ಹೋಗ’ ಅಂದ.

‘ಹಂಗಲ್ಲೊ ತಮ್ಮ ನನ್ನ ಹೆಂಡತಿ ಮಕ್ಕಳು ಇಲ್ಲೆ ಅದಾರ. ನನ್ನ ಮನಿ ಇಲ್ಲೇ ಐತೋ’ ಅಂತ ದರಿಯಜ್ಜ ಏನೇನೊ ಬಡಬಡಿಸತೊಡಗಿದ. ಕಾವಲುಗಾರನಿಗೆ ನಗು ಬಂತು. ಹೀಗೆಂದುಕೊಂಡೆ ಬರುವ ಹುಚ್ಚರನ್ನು ಆತ ಈ ಹಿಂದೆಯೂ ನೋಡಿದ್ದ. ಬಹುಶಃ ಅಜ್ಜನ ಹೆಂಡತಿ ಮಕ್ಕಳು ಯಾವದೋ ದುರಂತದಾಗ ಸತ್ತ ಮ್ಯಾಲ ಅವರನ್ನ ಇಲ್ಲೆ ಮಣ್ಣು ಮಾಡಿರಬೇಕು. ಅವರ ಸಾವು ಅಜ್ಜಗ ಹುಚ್ಚ ಹಿಡಿಸೈತಿ, ಪಾಪ. ಅನ್ಕೊಂಡ ಕಾವಲುಗಾರನಿಗೆ ಆ ಕ್ಷಣದಲ್ಲಿ ಹಳ್ಳಿಯಲ್ಲಿರುವ ತನ್ನ ತಂದೆಯ ನೆನಪಾದ. ಆದರೂ ಆತ ಅಸಹಾಯಕ. ಅತ್ಲಾಗ ಹೋಗ ಯಜ್ಜಾ, ರಾತ್ರಿ ಬಾಳ ಆಗೇತಿ ಅಂತ ಗೇಟ್ ಹಾಕತೋಡಗಿದ. drought-kelly-stewart-sieckತನ್ನ ಶಕ್ತಿ ಮೀರಿ ಗೇಟ್‍ಒಳಗೆ ನುಸಳಲು ಪ್ರಯತ್ನಿಸಿದ ದರಿಯಜ್ಜ ಕೊನೆಗೂ ಅದು ಸಾಧ್ಯವಾಗದೆ ಗೇಟ್ ಹೊರಗೆ ಉಳಿದು ಮುಸಗುಡತೊಡಗಿದ.

ಇದಾದ 8 ದಿನಗಳವರೆಗೂ ಅಜ್ಜ ಗೇಟ್ ಪಕ್ಕದ ಗಿಡದ ನೆರಳಲ್ಲಿ ತಳ ಊರಿದ್ದ. ಗೇಟ್ ಸಪ್ಪಳವಾದಾಗೊಮ್ಮೆ ಗೇಟ್ ಹತ್ತಿರ ಕಾಲೆಳೆದುಕೊಂಡು ಬರುತ್ತಿದ್ದ. ಒಳಗೆ ನುಸಳಲು ಸಾಧ್ಯವಾಗದೆ ಸೋತು ಗಿಡದ ಬಡ್ಡಿಗೆ ಹಿಂತಿರುಗುತ್ತಿದ್ದ. ಬರಬರುತ್ತ ಗೇಟಿನ ಕಡೆ ಕೇವಲ ಮಲಗಿದಲ್ಲಿಂದಲೇ ದೃಷ್ಟಿ ಹಾಯಿಸುತ್ತಿದ್ದ. 9ನೆ ದಿನ ಅಪರಾಹ್ನ ನೊಣಗಳು ಅವನ ದೇಹದೊಳಗೆ ಹೋಗಿಬರುವುದನ್ನು ಮಾಡುವ ಮೂಲಕ ಅವನ ಜೀವ ಹೋಗಿದ್ದನ್ನು ಜಗತ್ತಿಗೆ ಸಾರಲು ಯತ್ನಿಸುತ್ತಿದ್ದವು. ಆದರೆ, ತನ್ನದೆಯಾದ ಜಂಜಡದೊಳಗೆ ಮುಳುಗಿದ್ದ ಈ ಜಗತ್ತು ಇದ್ಯಾವುದರ ಪರಿವೆಯಿಲ್ಲದೆ ಬೈಕು, ಕಾರುಗಳಲ್ಲಿ ಕುಳಿತು ಓಡುತ್ತಲೇ ಇತ್ತು. ಎಲ್ಲಿಗೆ ಮುಟ್ಟುತ್ತೋ?

***

ಕಾನ್ಶಿರಾಂ – ಕಲ್ಲಿದ್ದಲ ಕಗ್ಗತ್ತಲೆಯನ್ನು ಕೊಹಿನೂರೊಂದು ಕಳೆದ ಕಥೆ : ಭಾಗ-1


– ಶ್ರೀಧರ್ ಪ್ರಭು


ಪುಣ್ಯನಗರಿಯಲ್ಲೊಂದು ಒಪ್ಪಂದ

ಅವನು ವಿಶ್ವನಾಥ. ಅವನೇ ಜಗನ್ನಾಥ. ಆ ಲೋಕ ಈ ಲೋಕ ಸಮಸ್ತ ಲೋಕಗಳ ನಿಖಿಲ ಚರಾ ಚರಗಳಿಗೆಲ್ಲ ನಾಥ. ಇವೆಲ್ಲಾ ಲೋಕಗಳ ನಡುಮಧ್ಯದಲ್ಲಿದ್ದು ಸಮಸ್ತ ಲೋಕಗಳಿಗೂ ಬೆಳಕು ನೀಡುವ ನಗರಿ – ಕಾಶಿ – ಅವನ ರಾಜಧಾನಿ. ಇಂಥಹ ಪರಮ ಪವಿತ್ರ ಕಾಶಿಯ ಹೃದಯವೆಂದರೆ ಮದ ಮತ್ತು ಮೋಹವನ್ನು ಮರ್ದಿಸಿ ಮದನ ಮೋಹನನೆನಿಸಿಕೊಂಡಿದ್ದ ಮಾಳವೀಯರು. ಅಂಥಹ ಮಾಳವೀಯರಂಥಹ ಮಾಳವೀಯರಿಗೆ ಸಮಸ್ತ ವಿಶ್ವದ ಹಿಂದೂ ಸಮಾಜದ ಪರವಾಗಿ ಭರತ ಭೂಮಿಯ ಮಾಂಗಲ್ಯದಂತಿದ್ದ ಮಹಾತ್ಮರ ಆತ್ಮವನ್ನು ಪರಮಾತ್ಮನೊಂದಿಗೆ ಲೀನವಾಗದಂತೆ ತಡೆಯುವ ಮಹತ್ತರ ಜವಾಬ್ದಾರಿ.

ಈ ಪಾರಮಾರ್ಥಿಕ ಕರ್ತವ್ಯಕ್ಕೆ ಮುಹೂರ್ತ ನಿಗದಿಯಾಗಿದ್ದು ಪರಮ ಭಯಂಕರನಾದ ಯಮದೇವನಿಗೆ ಸ್ವಂತ ಅಣ್ಣನಾದ ಶನಿದೇವರು ಅಧಿಪತಿಯಾಗಿರುವ ಶನಿವಾರ. ಕೆಂಪು ಮುಸುಡಿಯ ಮ್ಲೇಚ್ಚರು ಇನ್ನು ಅವರ ದಾಸ್ಯ ಸುಖವನ್ನೇ ನೆಚ್ಚಿದ ನಮ್ಮವರು ೧೯೩೨ ರನೇಯದ್ದು ಎಂದು ಕರೆಯುವ ವರ್ಷದ ಒಂಬತ್ತನೇ ತಿಂಗಳು. ಈ ಪುಣ್ಯ ಕಾರ್ಯಕ್ಕೆ ನಿಗದಿಯಾದ ಸ್ಥಳವೂ ಪುರಾಣ ಪ್ರಸಿದ್ದ ಪೇಶ್ವೆಗಳು ಆಳಿದ ಪುಣ್ಯ ಪುರಿ ಪುಣೆ. ಕೊನೆಗೂ ಪುಣೆ ಆ ಮಹಾನ್ ಒಪ್ಪಂದಕ್ಕೆ ಸಾಕ್ಷಿಯಾಯಿತು. ಪುಣೆಯ ಪುಣ್ಯದಿಂದ ದೇವ ನಿರ್ಮಿತ ವರ್ಣಾಶ್ರಮ ಧರ್ಮ ಚಿರಕಾಲ ರಕ್ಷಿಸಲು ಮಹಾತ್ಮರು ತೊಟ್ಟ ಸಂಕಲ್ಪ ಸಾರ್ಥಕವಾಯಿತು.

ಇದೆಲ್ಲಾ ನಡೆದು ಬರೋಬ್ಬರಿ ಅರ್ಧ ಶತಮಾನ ಉರುಳಿತು. ಈಗ ಮ್ಲೇಚ್ಚರ ವರ್ಷ ೧೯೮೨. ಪುಣೆಯ ಪುಣ್ಯ ಒಪ್ಪಂದದ ದಿನವೇ, ಈ ಘೋರ ಕಲಿಯುಗದಲ್ಲಿ ದೆಹಲಿಯೆಂದು ಕರೆಯಲಾಗುವ ಇಂದ್ರಪ್ರಸ್ಥದ ಕರೋಲ್ ಬಾಗ್ ಎಂಬಲ್ಲಿ ಒಬ್ಬ ನಗಣ್ಯ ಅತಿಶೂದ್ರ ಚಮ್ಮಾರರ ವಂಶದ ವ್ಯಕ್ತಿಯೊಬ್ಬ ಅಂಗ್ರೇಜಿ ಭಾಷೆಯಲ್ಲಿ “ಚಮಚಾ ಯುಗ” ವೆಂಬ ಪುಸ್ತಕ ಬರೆದು ಪ್ರಕಟಿಸಿದ. ಕ್ಷರದ ಲವ ಮಾತ್ರವೂ ಸೋಕದಂತೆ ಯುಗ ಯುಗಾದಿಗಳಿಂದ ಅಕ್ಷರವನ್ನು ಅತ್ಯಂತ ಜೋಪಾನವಾಗಿ ರಕ್ಷಿಸಿಕೊಂಡು ಬಂದಿದ್ದ ಸಮುದಾಯವನ್ನು ನಾಚಿಸುವಂತೆ ಈ ನವ ಸಾಕ್ಷರ ಇಂಗ್ಲಿಷ್ ಪುಸ್ತಕವೊಂದನ್ನು ಬರೆದು ಬಿಟ್ಟಿದ್ದ! ಅದೂ ಏನೆಂದು? ನಮ್ಮ ಪುಣ್ಯಪುರಿಯ ಒಪ್ಪಂದದ ದಿನವೇ ಚಮಚಾಗಳಿಗೆ ಯುಗಾದಿಯೆಂದು. ಇದನ್ನು ಬರೆದದ್ದು ಚಮಚಾಗಳಿಗೋಸ್ಕರವಾದರೂ, ಅದನ್ನು ಓದಲು ಈ ಚಮಚಾಗಳು ತಮ್ಮನ್ನು ಹಿಡಿದಿದ್ದ ಕೈಗಳ ಅನುಮತಿ ಕೋರಿದವು; ಎಂದಿನಂತೆ ಅನುಮತಿ ನಿರಾಕರಣೆಯಾಯಿತು. ಕೈಗಳು ಮಾತ್ರ ಈ ಪುಸ್ತಕವನ್ನು ಚೆನ್ನಾಗಿ ಮಸ್ತಕಕ್ಕೆ ಇಳಿಸಿಕೊಂಡರು. ಅದರೂ ಈ ಚಮಚಾಗಳ ಹಣೆ ಬರಹ ಗೊತ್ತಿದ್ದ ಕಾರಣ ಕೈಗಳು ಸುಮ್ಮನೆ ಕಿಸಕ್ಕೆಂದು ಒಮ್ಮೆ ನಕ್ಕು ಸುಮ್ಮನಾದವು. ಉತ್ತರ ದೇಶದ ಕೈಗಳ ರಾಣಿಗೆ ಮಾತ್ರ ಅಪಾಯದ ಗ್ರಹಿಕೆಯಾಯಿತು. ಇನ್ನು ಕೈಗಳ ಶೋಭೆಯನ್ನು ನೂರ್ಮಡಿಗೊಳಿಸಿ ಕಂಗೊಳಿಸುತ್ತಿದ್ದ ಕಮಲಕ್ಕೆ ಮಾತ್ರ ಬೇಗ ಈ ಅಪಾಯದ ಅರಿವಾಗಿತ್ತು.

ಇದಾಗಿ ಹತ್ತು ವಸಂತಗಳು ಕಳೆದವು. ಅನೇಕ ವರ್ಷಗಳು ಕರದಲ್ಲೇ ಶೋಭಿಸಿದ ಕಮಲವು ಕರವನ್ನೇ ನುಂಗಿ ಹಾಕಿತ್ತು. ಇನ್ನೊಂದು ರೀತಿ ನೋಡಿದರೆ ಕರಕ್ಕೂ ಕಮಲಕ್ಕೂ ಸಂಪೂರ್ಣ ತಾದಾತ್ಮ್ಯ ಸಾಧ್ಯವಾಗಿತ್ತು. ಹೀಗಾಗಿಯೇ, ಪುಣ್ಯ ಪುರಿಯ ಒಪ್ಪಂದಕ್ಕೆ ಸಹಿ ಹಾಕುವಂತೆ ನಾವು ಮಣಿಸಿದ ಬಹುಜನ ಶುದ್ರಾತಿಶೂದ್ರರ ಮಹಾ ಪುರುಷ ಬಾಬಾ ಸಾಹೇಬರ ಪುಣ್ಯ ತಿಥಿಯಂದೇ ರಾಮ ಜನ್ಮ ಭೂಮಿಗೆ ಮುಕ್ತಿಯೆಂದು ಕರಕಮಲಗಳು ನಿಶ್ಚಯ ಮಾಡಿಯಾಗಿತ್ತು. ಇನ್ನು ಕರಕಮಲಗಳ ಸ್ವಯಂ ಸೇವೆ ಸ್ವೀಕರಿಸುವ ಅಧಿಪತಿಗಳ ಆಶೀರ್ವಾದದಿಂದ ‘ಕರ’ ಸೇವೆ ಸಾಂಗವಾಗಿ ನೆರವೇರಿ ದೇಶ ಶತಮಾನಗಳ ಅಪಮಾನದಿಂದ ಮುಕ್ತಿಹೊಂದಿತು. ರಾಮ ರಾಜ್ಯ ಸ್ಥಾಪನೆಗೆ ಕ್ಷಣ ಗಣನೆ ಶುರುವಾಯಿತು.

ಇದಾಗಿ ಕೆಲಕಾಲ ಸಂದು ಈಗ ೧೯೯೫ ನೆ ವರ್ಷದ ಮಧ್ಯ ಭಾಗ. ಪುರುಷರಲ್ಲಿ ಸರ್ವೋತ್ತಮ ಶ್ರೀರಾಮಚಂದ್ರನ ಅನುಜ ಲಕ್ಷ್ಮಣನು ಕಟ್ಟಿಸಿದ ಊರು ಲಖನೌನಲ್ಲಿ ಬಡ ಚಮ್ಮಾರನ ಮಗಳೊಬ್ಬಳು ತನ್ನ ಎಡಗಾಲ ಹೆಬ್ಬೆರಳನ್ನು ಅಕಾರಣವಾಗಿ ನೆಲಕ್ಕೆ ಸೋಕಿಸಿದಳು. ಆ ಸಪ್ಪಳವನ್ನು ಕೇಳಿಸಿಕೊಂಡ ಗಂಗೆಯಲ್ಲಿ ಮಿಂದೆದ್ದು ಬಂದ ವಿರ್ಪೋತ್ತಮ ದಿವಾನರಾದಿಯಾಗಿ ಸಮಸ್ತ ಅಧಿಕಾರಿ ಗಣ ನತಮಸ್ತಕವಾಗಿ, ವಿನೀತ ಭಾವದಿಂದ ಕೈಮುಗಿತು ನಿಂತು “ಏನಪ್ಪಣೆ” ಎಂದಿತು!

ಯಾವ ಅರ್ಯಾವರ್ತವು ಎರಡು ಸಾವಿರ ವರ್ಷಗಳ ಕಾಲ ಬುದ್ಧನನ್ನು ಧಿಕ್ಕರಿಸಿ ವೈದಿಕ ದಿಗ್ವಿಜಯಕ್ಕೆ ಸಾಕ್ಷಿಯಾಗಿತ್ತೋ, mayawati_kashiramಅದೇ ನಾಡು ಇಂದು, ಎರಡು ಸಾವಿರ ವರ್ಷಗಳು ಕಳೆದ ಮೇಲೆ, ನಲವತ್ತು ವರ್ಷದ ಪ್ರಾಯವನ್ನೂ ತಲುಪಿರದ ಬಡ ದಲಿತನ ಮಗಳೊಬ್ಬಳನ್ನು ತನ್ನ ಭಾಗ್ಯದ ಅಧಿನಾಯಕಿ ಎಂದು ಒಪ್ಪಿಕೊಳ್ಳುವ ಅನಿವಾರ್ಯಕ್ಕೆ ಬಂದು ನಿಂತಿತ್ತು!

ಕಾಶಿಯನ್ನು ಆಳಿದ್ದ ಮಾಳವೀಯರು, ಸ್ವರ್ಗದಲ್ಲೇ ಒಮ್ಮೆ ನರಳಿದರು. ಅವರು ೧೯೩೨ ರಲ್ಲಿ, ಮಹಾತ್ಮರ ಅಣತಿಯಂತೆ, ಸ್ಥಾಪಿಸಿದ ಚಮಚಾ ಯುಗ ಮತ್ತೆ ೧೯೯೨ ರಲ್ಲಿ ಸ್ಥಾಪನೆ ಯಾಗಲು ಹೊರಟಿದ್ದ ರಾಮನ ಯುಗ ಮುಗ್ಗರಿಸಿದವು!

ಆ ‘ಕಾಶಿ’ ಯ ಶಕ್ತಿ ಮತ್ತು ಈ ‘ರಾಮ’ನ ಬಲ, ಕಾನ್ಶಿರಾಂನೆಂಬ ಸಾಮಾನ್ಯರಲ್ಲಿನ ಅಸಾಮಾನ್ಯನ ಬಲದ ಮುಂದೆ kanshiramಮೊಣಕಾಲೂರಿ ಬಿಟ್ಟಿತ್ತು. ಬುದ್ಧನನ್ನು ಮತ್ತು ಧಮ್ಮವನ್ನು ಧಿಕ್ಕರಿಸಿ ಸ್ಥಾಪಿಸಿದ ದ್ವಿಜ ಸಾಮ್ರಾಜ್ಯದ ಧ್ವಜ ಅರ್ಧಕ್ಕೆ ಇಳಿದಿತ್ತು. ತಿಲಕ, ತಕ್ಕಡಿ ಮತ್ತು ತಲವಾರುಗಳ ದೈತ್ಯ ಶಕ್ತಿ ಮತ್ತು ಕುಯುಕ್ತಿಗಳು ಇವರ ದಲಿತ ಬಹುಜನ ಸಂಘಟನಾ ಶಕ್ತಿಯ ಮುಂದೆ ಹುಡಿಯಾಗಿ ಹೋದವು!

ಆದರೆ ಇದರ ರೂವಾರಿ, ಸಾಧಕ ಮತ್ತು ಸೂತ್ರಧಾರ ಮಾನ್ಯವರ ಇದಾವುದರಿಂದಲೂ ಅತಿ ಪುಳಕಗೊಳ್ಳದೆ ಸಂಪೂರ್ಣ ನಿರ್ಲಿಪ್ತ ಭಾವದಿಂದ ತಮ್ಮ ಸಂಘಟನೆಯ ಕೆಲಸದಲ್ಲಿ ತಲ್ಲೀನರಾಗಿದ್ದರು.

ಇಂದು ಯಾವುದೇ ನಿಲುವಿನ ರಾಜಕೀಯ ಚಿಂತಕ ಅಥವಾ ಕಾರ್ಯಕರ್ತ ಅಥವಾ ನಾಯಕನೊಬ್ಬ ಅಗತ್ಯವಾಗಿ ಓದಬೇಕಾದದ್ದೆಂದರೆ ಮಾನ್ಯವರರ ಜೀವನ ಚರಿತ್ರೆ. ಇದು ಭಾರತದ ಅತ್ಯಂತ ಸಂಘರ್ಷಮಯ ಮತ್ತು ರೋಚಕ ಅಧ್ಯಾಯಗಳಲ್ಲೊಂದು.

ಇದೆಲ್ಲಾ ಅತಿರಂಜಿತವಾದ ನಾಟಕೀಯ ಮತ್ತು ಪೌರಾಣಿಕ ಶೈಲಿಯಲ್ಲಿ ಹೇಳಲು ಕಾರಣವಿದೆ. ಕಾನ್ಶಿರಾಮ್ ಪ್ರವೇಶವಾಗುವವರೆಗೆ ಅಧುನಿಕ ಭಾರತದ ರಾಜಕೀಯ ಚರಿತ್ರೆಯು ಗಾಂಧಿ ಕೇಂದ್ರಿತವಾಗಿದ್ದು ಹಾಗೆಯೇ ಸಂಪೂರ್ಣವಾಗಿ ಹಿಂದೂ ಮೇಲ್ಜಾತಿಯ ಗಂಡಸಿನ ಮನಸ್ಥಿತಿಯಲ್ಲೇ ಅದ್ದಿ ಹೋಗಿತ್ತು. ಗಾಂಧಿ ಸ್ವಾತಂತ್ರ್ಯ ತಂದುಕೊಟ್ಟು ನಂತರದಲ್ಲಿ ಅಧಿಕಾರ ತ್ಯಾಗ ಮಾಡಿದ್ದನ್ನು ಹೀಗೆಯೇ ಒಂದು ದೈವೀ ಪವಾಡದಂತೆ ವರ್ಣಿಸಲಾಗುತ್ತಿತ್ತು. ನಂತರದಲ್ಲೂ ಸೋನಿಯಾ ಗಾಂಧಿಯವರ ಅಧಿಕಾರ ತ್ಯಾಗದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. kanshiram-mayawatiಅಂದು ಸಂಸತ್ ಭವನದಲ್ಲಿ ಅತಿ ಹೆಚ್ಚು ಕಣ್ಣೀರು ಸುರಿಸಿದ ಮಾಜಿ ಪತ್ರಕರ್ತೆ ಮತ್ತು ಅಂದಿನ ಸಂಸದೆಯೊಬ್ಬರು ನಾಳೆಯಿಂದ ದೇಶವೇ ಇರದೇನೋ ಎಂಬಂತೆ ಪ್ರಲಾಪಿಸಿದ್ದರು. ಆದರೆ ಶತ ಶತಮಾನಗಳಿಂದ ಅನ್ನ ಮತ್ತು ಅಕ್ಷರಕ್ಕೆ ಹಾತೊರೆದ ವರ್ಗಗಳ ವ್ಯಕ್ತಿಯೊಬ್ಬ ಮೊಟ್ಟ ಮೊದಲ ಬಾರಿಗೆ ವೈದಿಕ ಶೋಷಣೆಯ ಕೇಂದ್ರಸ್ಥಾನದ ಗರ್ಭಗುಡಿಯನ್ನು ನಿಯಂತ್ರಿಸುವ ಅವಕಾಶ ಸಿಕ್ಕಿದ್ದರೂ, ಅದನ್ನು ಒಬ್ಬ ದಲಿತ ಮಹಿಳೆಗೆ ಬಿಟ್ಟು ಕೊಟ್ಟ ಪವಾಡವನ್ನು ದೇಶವಿಂದು ಮರೆತೇ ಬಿಟ್ಟಿದೆ. ಒಟ್ಟಾರೆ, ಅಧುನಿಕ ಭಾರತದ ನೈಜ ಪವಾಡವೆಂದರೆ ಕಾನ್ಶಿರಾಂ.

ನಮ್ಮ ಗಾದೆಗಳು ಯಾರನ್ನೂ ನೇರವಾಗಿ ಬೈಯ್ಯುವುದಿಲ್ಲ. ‘ಎಲ್ಲಾ ರಾಜಕಾರಣಿಗಳೂ ಬ್ರಷ್ಟರು’ ಎನ್ನುವ ಬದಲು ಹಿಂದಿ ಗಾದೆಯೊಂದು “ಕಲ್ಲಿದ್ದಲಿನ ವ್ಯಾಪಾರ ಮಾಡುವವರ ಮುಖ ಒಮ್ಮೆಯಾದರೂ ಕಪ್ಪಾಗಲೇ ಬೇಕು” ಎನ್ನುತ್ತದೆ. ಭಾರತದ ರಾಜಕೀಯವೆಂದರೇನೇ ಒಂದು ದೊಡ್ಡ ಕತ್ತಲು ಕವಿದ ಕಲ್ಲಿದ್ದಲಿನ ಗಣಿ, ಕಾನ್ಶಿರಾಂ ಅದರ ಕತ್ತಲೆಯನ್ನು ಕೆಲಹೊತ್ತಿಗಾದರೂ ಕಳೆದ ಕೋಹಿನೂರ್. ಅವರ ಚಿಂತನೆಯನ್ನು ಒಪ್ಪದಿರುವ ಜನರು ಚಿಂತನೆಯ ಹೊಸ ಹೊಳಹನ್ನು ಒಪ್ಪದಿರುವುದಿಲ್ಲ.

ಕಾನ್ಶಿರಾಮರ ಮೂಸೆಯನ್ನು ಸೇರಿದ ಅನೇಕ ‘ಚಮಚಾ’ಗಳು ದೊಡ್ಡ ದೊಡ್ಡ ಹತ್ಯಾರುಗಳಾಗಿ ಹೊರಬಂದರು. ಇದಕ್ಕೂ ಮುಖ್ಯವಾಗಿ, ಅಂಬೇಡ್ಕರ್ ತೀರಿಹೋದ ಮೂರು ನಾಲ್ಕು ದಶಕಗಳ ಅವಧಿಯಲ್ಲಿಯೇ ಅದು ಬರೀ ಪುಸ್ತಕದ ಬದನೆಕಾಯಿಯಲ್ಲ Young_Ambedkarಬದಲಿಗೆ ಅಧಿಕಾರ ಸಾಧನೆಗೊಂದು ಕೈಪಿಡಿಯೆಂದು ಸಿದ್ಧವಾಯಿತು. ಯುಗ ಪ್ರವಾದಿಯೊಬ್ಬನ ಸಿದ್ಧಾಂತಕ್ಕೆ ಇಷ್ಟು ಬೇಗ ಮನ್ನಣೆ ಕೊಡಿಸಿದ ಮತ್ತೊಬ್ಬ ಪ್ರವಾದಿ ಕಾನ್ಶಿರಾಂ.

ಅಕ್ಟೋಬರ್ ಒಂಬತ್ತರಂದು ಕಾನ್ಶಿರಾಂ ನಮ್ಮನ್ನಗಲಿ ಹತ್ತಿರ ಹತ್ತಿರ ಒಂದು ದಶಕ; ಆದರೆ ಅವರ ಸಂದೇಶ ಮತ್ತು ಚಿಂತನೆ ಎಂದಿಗೂ ಚಿರಾಯು.

(ಮುಂದುವರೆಯುವುದು…)

ಗಾಂಧಿ ಜಯಂತಿ ಕಥಾಸ್ಪರ್ಧೆ 2015 : ತೀರ್ಪುಗಾರರ ಮಾತು

– ಭಾರತೀದೇವಿ.ಪಿ

  • ಮೊದಲ ಬಹುಮಾನ : “ಪಯಣ” – ಶಾಂತಿ.ಕೆ.ಎ
  • ಎರಡನೆಯ ಬಹುಮಾನ : “ಹಾಳು ಸುಡುಗಡ ಬದುಕು” – ಹನುಮಂತ ಹಾಲಿಗೇರಿ
  • ಮೂರನೆಯ ಬಹುಮಾನ : “ಮನ್ವಂತರ” – ಸಂವರ್ಥ ಸಾಹಿಲ್
  • ಪ್ರೋತ್ಸಾಹಕ ಬಹುಮಾನಗಳು :
    • ಪಾಕಿಸ್ಥಾನದಿಂದ ಪತ್ರ” – ಮಹಾಂತೇಶ್ ನವಲ್ಕಲ್
    • ಉಡುಗೊರೆ” – ಸ್ವಾಲಿಹ್ ತೋಡಾರ್

ವರ್ತಮಾನ ನಡೆಸುವ “ಗಾಂಧಿ ಜಯಂತಿ ಕಥಾ ಸ್ಪರ್ಧೆ”ಗೆ ಬಂದ ಒಟ್ಟು 23 ಕತೆಗಳನ್ನು ಓದುವಾಗ ನನಗೆ ತೀವ್ರವಾಗಿ ಕಾಡಿದ್ದು ಕತೆಗಳ ಕುರಿತಾದ ನಮ್ಮ ಪೂರ್ವಗ್ರಹೀತಗಳು ಯಾವ ಯಾವ ಬಗೆಯಲ್ಲಿ ನಮ್ಮ ಪ್ರಜ್ಞೆಯಲ್ಲಿ ಬೇರೂರಿಬಿಟ್ಟಿವೆ ಮತ್ತು ಆ ಜಾಡಿನಲ್ಲಿ ಕತೆಗಾರ ಹೇಗೆ ಸಿಕ್ಕಿ ಹಾಕಿಕೊಂಡಿದ್ದಾನೆ ಎಂಬ ಸಂಗತಿಗಳು. ಕಾರಂತ, ತೇಜಸ್ವಿ, ಕುಂ.ವೀ, ವೈದೇಹಿ ಮೊದಲಾದವರ ಕಥಾಹಂದರಗಳು ಸರಳೀಕರಣಗೊಂಡು ಇಲ್ಲಿನ ಹಲವು ಕತೆಗಳಲ್ಲಿ ಕಾಣಿಸಿಕೊಂಡಿವೆ.

ಅನುಭವಗಳ ದಟ್ಟತೆ ಇದ್ದ ಮಾತ್ರಕ್ಕೆ ಒಂದು ನೆರೇಷನ್ ಕತೆಯಾಗಿಬಿಡುತ್ತದೆಯೇ? ಕತೆಯೆಂದ ಕೂಡಲೇ ವರ್ತಮಾನಕ್ಕೆ ಮುಖಾಮುಖಿಯಾಗುವುದಕ್ಕಿಂತ ಹೆಚ್ಚಾಗಿ ಬಾಲ್ಯದ, ಗ್ರಾಮ್ಯ ಜಗತ್ತಿಗೆ ಉತ್ಸಾಹದಿಂದ ಹೊರಳುವುದನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ವಿಶಿಷ್ಟ ಸೊಗಡಿನ ಭಾಷೆಯಿದ್ದ ಮಾತ್ರಕ್ಕೆ ಕತೆ ಶ್ರೀಮಂತವಾಗಿಬಿಡುತ್ತದೆಯೇ? ಪೂರ್ವನಿರ್ಧರಿತ ವಿಷಯಗಳನ್ನು gandhi-katha-spardge-2015ತಿಳಿಯಪಡಿಸುವುದಕ್ಕೆ ಕತೆಯ ಹಂದರವನ್ನು ಹೆಣೆಯುವುದು ಕತೆಯ ಸಾಧ್ಯತೆಯನ್ನೇ ಕುಂಠಿತಗೊಳಿಸುವುದಿಲ್ಲವೇ? ಐಡಿಯಾಲಜಿಯನ್ನು ತಿಳಿಯಪಡಿಸುವುದಕ್ಕೆ ಹೆಣೆಯುವ ಕತೆಯ ಆವರಣ ಸೃಜನಶೀಲ ಬರಹದ ಸೀಮೆಗಳನ್ನು ನಿರ್ಬಂಧಿಸುವುದಿಲ್ಲವೇ?

ಹೀಗೆ ನೋಡಿದಾಗ ಕತೆಯ ಕಸುಬುಗಾರಿಕೆ ಸಿದ್ಧಿಸಿಕೊಂಡು ಪ್ರಜ್ಞಾಪೂರ್ವಕವಾಗಿ ಹೆಣೆದ ಕತೆಗಳಿಗಿಂತ ತುಸು ಒರಟು, ಹಸಿ ಎನಿಸಿದರೂ ಬದುಕಿನ ಅನಂತ ಸಾಧ್ಯತೆಗಳ ಕಿಟಕಿಯನ್ನು ತೆರೆದೇ ಇರಿಸಿಕೊಂಡ ಕತೆಗಳು ಆಪ್ತವಾಗುತ್ತವೆ. ಕತೆಯನ್ನು ಹೇಳುವ ಪ್ರಕ್ರಿಯೆಯಲ್ಲೇ ಕತೆ ಮತ್ತು ಕತೆಗಾರ ಜೊತೆಜೊತೆಗೇ ತಮಗೇ ಅರಿಯದ ಬದುಕಿನ ಅಜ್ಞಾತಗಳನ್ನು ತಟ್ಟುತ್ತಾ ಸಾಗುವ ಕ್ರಿಯೆ ಎಲ್ಲೆಲ್ಲಿ ಕಾಣುತ್ತದೋ ಅಂತಹ ಕತೆಗಳು ಓದುಗನಿಗೂ ಬದುಕಿನ ಸಂಕೀರ್ಣತೆಯ ದರ್ಶನ ಮಾಡಿಸುತ್ತವೆ. ಅವು ಪ್ರಾದೇಶಿಕತೆ, ವ್ಯಕ್ತಿ, ತತ್ವಗಳ ಮೇರೆ ಮೀರಿ ಎಲ್ಲರ ಕತೆಗಳೂ ಆಗಿಬಿಡುತ್ತವೆ. ಈ ದಿಕ್ಕಿನಲ್ಲಿ ಇಲ್ಲಿನ ಕೆಲವು ಕತೆಗಳು ಇವೆ.

ಸ್ಪರ್ಧೆಗೆ ಬಂದಿರುವ ಒಟ್ಟು 23 ಕತೆಗಳಲ್ಲಿ ಪ್ರಥಮ ಬಹುಮಾನ ಗಳಿಸಿದ ಕತೆ ಶಾಂತಿ.ಕೆ.ಎ ಅವರ ‘ಪಯಣ’. ಬದುಕಿನ ಸಂಕೀರ್ಣತೆ ಸಮಾಜದ ಸೀಮಿತ ನೈತಿಕ ಸೀಮೆಗಳನ್ನು ಮೀರಿದ್ದು. ಯಾವ ತೀರ್ಮಾನ, ಪಶ್ಚಾತ್ತಾಪ ಅಥವಾ ಹಲುಬುವಿಕೆಗಳಿಲ್ಲದೆ ಬದುಕಿನ ವರ್ತಮಾನವನ್ನು ತೀವ್ರವಾಗಿ ಅನುಭವಿಸುವ ಬಗೆ ಈ ಕತೆಯಲ್ಲಿ ಮೂಡಿದೆ. ಇದು ಒಂದು ಬಗೆಯ ಎಚ್ಚರದ ಕನಸು. ಇದನ್ನು ಕಥನವಾಗಿಸುವ ಪ್ರಕ್ರಿಯೆಯಲ್ಲಿ ಅವರ ಭಾಷಾ ಬಳಕೆಯ ಸೂಕ್ಷ್ಮತೆ ಮತ್ತು ಎಚ್ಚರ ವಿಶಿಷ್ಟವಾಗಿದೆ.

ಎರಡನೇ ಬಹುಮಾನ ಗಳಿಸಿದ ಹನುಮಂತ ಹಾಲಿಗೇರಿ ಅವರ ‘ಹಾಳು ಸುಡುಗಾಡ ಬದುಕು’ ಕತೆ ವಿವರಗಳ ಮೂಲಕ ಅನುಭವವನ್ನು ತೀವ್ರವಾಗಿ ಕಟ್ಟಿಕೊಡುತ್ತದೆ.  ಬದುಕು ಮತ್ತು ಧರ್ಮಗಳ ಅಸ್ತಿತ್ವದ ಹೊಯ್ದಾಟದಲ್ಲಿ ಹೆಣ ಸುಡುವ ಕಾಯಕ ನಡೆಸುವ ದರಿಯಜ್ಜನಂಥವರ ಬದುಕು ಚಿಂದಿಯಾಗುವುದನ್ನು ಕತೆ ಪರಿಣಾಮಕಾರಿಯಾಗಿ ಹೇಳುತ್ತದೆ. ಹೆಚ್ಚು ಸಂಕೀರ್ಣತೆಗೆ ವಾಲದೇ ದಟ್ಟ ವಿವರಗಳೇ ಈ ಕತೆಯ ಶಕ್ತಿಯಾಗಿದೆ.

ಮೂರನೇ ಬಹುಮಾನ ಗಳಿಸಿದ ಸಂವರ್ಥ ಸಾಹಿಲ್ ಅವರ ಕತೆ ‘ಮನ್ವಂತರ’ ಹಲವು ನೆಲೆಗಳಲ್ಲಿ ಬದುಕಿನ ಚಲನೆಯ ಗತಿಗೆ ಸೂಕ್ಷ್ಮವಾಗಿ ಪ್ರತಿಕ್ರಯಿಸುತ್ತದೆ. ಹಿಂದಿನ ತಲೆಮಾರಿನ ಜೀವ ಬದಲಾದ ಗತಿಗೆ ಸ್ಪಂದಿಸುತ್ತಾ, ಜೊತೆಗಿರುವವರ ಬಗ್ಗೆ ವಿಮರ್ಶಾತ್ಮಕವಾಗಿ ಇರುತ್ತಲೇ ಕೆಲವೊಂದು ವಿಚಾರಗಳಲ್ಲಿ ಹಳೆಯ ಜಾಡನ್ನು ಬಿಡದೆ ಒದ್ದಾಡುವ ಬಗೆಯನ್ನು ಸಂವರ್ಥ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಇವರ ಜೊತೆ ಇವರಂತೆಯೇ ಭಿನ್ನ ಭಿನ್ನ ಗತಿಯಲ್ಲಿ ಸ್ಥಿತ್ಯಂತರಗಳಿಗೆ ಒಡ್ಡಿಕೊಳ್ಳುವ ಹಿರಿಯ, ಯುವ ಜೀವಗಳಿವೆ. ಈ ತೊಳಲಾಟಗಳನ್ನು, ಚಲನೆಯನ್ನು ದಾಖಲಿಸುವಲ್ಲಿ ಭಾಷೆಯ ಬಳಕೆ ಇನ್ನಷ್ಟು ಸೂಕ್ಷ್ಮವಾಗಿದ್ದರೆ ಕತೆಗೆ ವಿಸ್ತಾರವಾದ ಆಯಾಮ ದೊರೆಯುತ್ತಿತ್ತು. ಪಾತ್ರಗಳ ಸರಳೀಕರಣವಾಗುವುದು ತಪ್ಪುತ್ತಿತ್ತು.

ಮಹಾಂತೇಶ ನವಲ್‍ಕಲ್ ಅವರ ‘ಪಾಕಿಸ್ತಾನದಿಂದ ಪತ್ರ’ ದೇಶ ಇಬ್ಭಾಗವಾದಾಗ ಮನಸ್ಸುಗಳೂ ಒಡೆಯುತ್ತಾ ಹೇಗೆ ಸಹಜ ಮನುಷ್ಯ ಸಂಬಂಧಗಳ ಬಗೆಗೂ ಸಂವೇದನೆ ಕಳೆದುಕೊಂಡಿವೆ ಎಂಬುದನ್ನು ಹೇಳುತ್ತದೆ. ಮನಮುಟ್ಟುವಂತೆ ಕತೆಯ ನಿರೂಪಣೆ ಇದ್ದರೂ ಅದು ಕಾಣದ ದಾರಿಗಳನ್ನು ತಡಕುವ ಯತ್ನ ಮಾಡುವುದಿಲ್ಲ.

ಸ್ವಾಲಿಹ್ ತೋಡಾರ್ ಅವರ ‘ಉಡುಗೊರೆ’ ಹೊಟ್ಟೆಪಾಡಿಗಾಗಿ ಪರದೇಶದಲ್ಲಿ ಏನೆಲ್ಲ ಪಾಡು ಪಡುವ ಪುಡಿಮೋನು ಅರಬ್ ದೇಶಗಳ ಆಂತರಿಕ ಸಂಘರ್ಷಗಳಿಂದ ಬದುಕುವ ದಾರಿ ಕಳೆದುಕೊಂಡು ಊರಲ್ಲೂ ನೆಲೆ ಕಾಣದೆ ನಲುಗುವ ಕತೆ. ಧರ್ಮ, ಸ್ವಾರ್ಥಗಳ ಮೇಲಾಟದಲ್ಲಿ ಪುಡಿಮೋನುವಿನಂತಹ ಬಡವರ ಬದುಕು ಮೂರಾಬಟ್ಟೆಯಾಗುವುದು, ಪುಡಿಮೋನು ಉಳ್ಳವರನ್ನು ಅನುಕರಿಸ ಹೋಗಿ ಕೈಲಿದ್ದ ಅಲ್ಪಸ್ವಲ್ಪವನ್ನೂ ಕಳೆದುಕೊಳ್ಳುವುದು ಇವೆಲ್ಲವೂ ಓದುವಾಗ ವಿಷಾದ ಮೂಡಿಸುತ್ತದೆ. ಈ ಕತೆ ಓದುವಾಗ ಹಲವು ಕತೆಗಳ ನೆರಳು ಕಾಣುವುದು ಸುಳ್ಳಲ್ಲ.

ಇವು ಒಬ್ಬ ಸಾಹಿತ್ಯದ ವಿದ್ಯಾರ್ಥಿಯಾಗಿ ಇಲ್ಲಿನ ಕತೆಗಳನ್ನು ಓದಿದಾಗ ನನಗನಿಸಿದ ಸಂಗತಿಗಳು. ಕತೆಗಳ ಬಗ್ಗೆ ಹಿಂದೆಂದಿಗಿಂತ ಹೆಚ್ಚು ತಲೆಕೆಡಿಸಿಕೊಳ್ಳಲು ಕಾರಣವಾದ ಹಾಗೂ ವಿಭಿನ್ನ ಅನುಭವಗಳಿಗೆ ಒಡ್ಡಿಕೊಳ್ಳುವ ಅವಕಾಶವನ್ನು ಕತೆಗಳ ಓದಿನ ಮೂಲಕ ನೀಡಿದ ಎಲ್ಲ ಕತೆಗಾರರಿಗೆ ನಾನು ಆಭಾರಿ.