Author Archives: admin

ಸರ್ಕಾರೇತರ ವಲಯಗಳಲ್ಲಿ ಸಾಮಾಜಿಕ ಪ್ರಾತಿನಿಧ್ಯ


– ಶ್ರೀಧರ್ ಪ್ರಭು


 

ಸುಮಾರು ವರ್ಷಗಳಿಂದ ಜನಪರ ಕಾಳಜಿಯ ಪತ್ರಕರ್ತ ಪಿ. ಸಾಯಿನಾಥ್ ತಮ್ಮ ಲೇಖನಗಳಲ್ಲಿ ನಮ್ಮ ದೇಶದ ಸರಕಾರಗಳು ಬೃಹತ್ ಉದ್ದಿಮೆಗಳಿಗೆ ನೀಡಿರುವ ಸಬ್ಸಿಡಿ ಹಣದ ಬಗ್ಗೆ ಬರೆಯುತ್ತಿದ್ದಾರೆ. ಜುಲೈ ೨೮, ೨೦೧೪ ರಲ್ಲಿ ಔಟ್ಲುಕ್ ಪತ್ರಿಕೆಗೆ ಬರೆದ ‘How Much Can We Forgo To India Inc?’ ಎಂಬ ತಮ್ಮ ಲೇಖನದಲ್ಲಿ ಒಂದು ಆಸಕ್ತಿಕರ ವಿಚಾರವನ್ನು ಸಾಯಿನಾಥ್ ಬರೆದರು:

ನಮ್ಮ ದೇಶದ ಉದ್ಯೋಗಪತಿಗಳಿಗೆ ಸರಕಾರ ಕೊಟ್ಟ ಸಬ್ಸಿಡಿ ಹಣ ಸರಾಸರಿ ಪ್ರತಿ ಒಂದು ಗಂಟೆಗೆ ಏಳು ಕೋಟಿ ರೂಪಾಯಿಗಳು, ಪ್ರತಿ ದಿನಕ್ಕೆ ೧೬೮ ರೂಪಾಯಿಗಳು ಹಾಗೆ ಒಟ್ಟಾರೆ ೨೦೧೩-೨೦೧೪ ರ ಅರ್ಥಿಕ ವರ್ಷದಲ್ಲಿ ನಮ್ಮ ದೇಶದ ಸರಕಾರ ಬಂಡವಾಳಶಾಹಿಗಳಿಗೆ ಒಟ್ಟಾರೆಯಾಗಿ ಕೊಟ್ಟ ನೇರ ಸಬ್ಸಿಡಿ ಮೊತ್ತ ರೂ.೫.೩೨ ಲಕ್ಷ ಕೋಟಿಗಳು (ರೂ. ೫,೩೨,೦೦೦,೦೦೦೦೦೦೦). ಈ ಮೊತ್ತವು ೨೦೧೦-೨೦೧೧ ರ ಅರ್ಥಿಕ ವರ್ಷದಲ್ಲಿ ರೂ. ೩.೭೩ ಲಕ್ಷ ಕೋಟಿ ರೂಪಾಯಿ (ರೂ. ೫,೩೨,೦೦೦,೦೦೦೦೦೦೦) ಆಗಿದ್ದಿತು. ಯು ಪಿ ಎ ಸರಕಾರ ಆಡಳಿತದಲ್ಲಿದ್ದ 2005-06 ರಿಂದ 2013-14 ವರೆಗಿನ ಅರ್ಥಿಕ ವರ್ಷಗಳಲ್ಲಿ ಒಟ್ಟಾರೆಯಾಗಿ ೩೬.೫ ಲಕ್ಷ ಕೋಟಿ ಗಳಷ್ಟು ಔದ್ಯಮಿಕ ಸಾಲ ಮನ್ನಾ ಮಾಡಲಾಗಿದೆ.

ನಮ್ಮ ದೇಶದಲ್ಲಿ ಔದ್ಯೋಗಿಕ ಪ್ರಗತಿ, ನಿರುದ್ಯೋಗ ನಿವಾರಣೆ ಇತ್ಯಾದಿ ಸಾಧ್ಯವಾಗಿದ್ದರೆ outlookindia-how-much-can-we-forgo-to-india-inc-psainathಉದ್ದಿಮೆಗಳಿಗೆ ಸಬ್ಸಿಡಿ ಕೊಡುವುದನ್ನು ಸಮರ್ಥಸಿಕೊಳ್ಳಲು ಸಾಧ್ಯವಿದೆ. ಆದರೆ ಇವ್ಯಾವೂ ಸಾಧ್ಯವಾಗಿಲ್ಲ. ೨೦೧೧-೧೪ ವರೆಗಿನ ಮೂರು ಅರ್ಥಿಕ ವರ್ಷಗಳಲ್ಲಿ ಸುಮಾರು ೧.೬೭ ಲಕ್ಷ ಕೋಟಿಗಳಷ್ಟು ಹಣವನ್ನು ಬಂಗಾರ ಬೆಳ್ಳಿಗಳ ಮೇಲಿನ ಕಸ್ಟಮ್ ಸುಂಕ ಮನ್ನಾ ರೂಪದಲ್ಲಿ ಕೊಡಲಾಗಿದೆ. ಬೆಳ್ಳಿ ಬಂಗಾರ ಕೊಳ್ಳಲು ಸಬ್ಸಿಡಿ ಕೊಟ್ಟರೆ ಉದ್ಯೋಗಗಳು ಹುಟ್ಟಿಕೊಳ್ಳುವುದಿಲ್ಲ. ಇದರಿಂದ ಬಂಡವಾಳಶಾಹಿಗಳ ಹೊಟ್ಟೆ ಮಾತ್ರ ತುಂಬುತ್ತದೆ.

ತಳ ಸಮುದಾಯಗಳ ಜಮೀನು ಮತ್ತು ಬದುಕು ಕಿತ್ತುಕೊಂಡು ಜನರು ದುಡಿದ ಹಣವನ್ನು ಅವ್ಯಾಹತವಾಗಿ ಭಿಕ್ಷೆರೂಪದಲ್ಲಿ ಸ್ವೀಕರಿಸುತ್ತಿರುವ ಕಾರ್ಪೊರೇಟ್ ವರ್ಗಕ್ಕೆ ಜನರಿಗೆ ಈವರೆಗೆ ಯಾವುದೇ ಪಾಪ ಪ್ರಜ್ಞೆ ಕಾಡಿಲ್ಲ. ಕಾರ್ಪೊರೇಟ್ ವಲಯಗಳಲ್ಲಿ ತಳ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಈವರೆಗೆ ಯಾವ ಸರಕಾರಗಳಿಗೂ ಎನ್ನಿಸಿಲ್ಲ. ಜನರ ಹಣವನ್ನು ಉದ್ದಿಮೆದಾರರಿಗೆ ಸಬ್ಸಿಡಿ ರೂಪದಲ್ಲಿ ಕೊಡುವಾಗ ಯಾವ ಹಂತದಲ್ಲಾದರೂ ಸರಿ ದುಡಿಯುವ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಯಾವ ಸರಕಾರಗಳಿಗೂ ಎನ್ನಿಸಲಿಲ್ಲ.

ಒಂದು ಉದ್ದಿಮೆಯ ಒಡೆತನ ಹೇಗೆ ನಿರ್ಧರಿತವಾಗುತ್ತದೆ? ಆ ಉದ್ದಿಮೆಯಲ್ಲಿ ಯಾರ ಹಣ ಹೆಚ್ಚು ಹೂಡಿಕೆಯಾಗಿದೆಯೋ ಅವರೇ ಅದರ ಮಾಲೀಕರು. ಯಾವ ರೀತಿಯಲ್ಲಿ ನೋಡಿದರೂ ನಮ್ಮ ಉದ್ದಿಮೆಗಳಲ್ಲಿ ಸರಕಾರದ ಮತ್ತು ಸರಕಾರಿ ವಲಯದ ಬ್ಯಾಂಕುಗಳ ಹಣವೇ ಹೂಡಿಕೆಯಾಗಿದೆ. ನಮ್ಮ ಮನೆಗಳಿಗೆ ಹಾಕಿಸಿಕೊಳ್ಳುವ ಸೌರ ವಿದ್ಯುತ್ ಯಂತ್ರಗಳನ್ನು ಅಳವಡಿಸಲು Industrial_Mangaloreಹತ್ತು ಸಾವಿರ ಸಾಲ ಕೊಡುವಾಗ ಕೂಡ ಈ ಬ್ಯಾಂಕುಗಳು ನೂರಾರು ಪುಟಗಳಷ್ಟು ಕಾಗದದ ಮೇಲೆ ಏನೇನೂ ಬರೆಸಿದುಕೊಂಡು ನಮ್ಮ ಸಹಿ ಹಾಕಿಸುತ್ತವೆ. ಕಣ್ಣ ಮುಚ್ಚಿ ಸಹಿ ಹಾಕುವುದು ಬಿಟ್ಟರೆ ನಮ್ಮ ಬಳಿ ಯಾವುದೇ ಅನ್ಯ ಮಾರ್ಗವಿರುವುದಿಲ್ಲ. ಉದ್ದಿಮೆದಾರರಿಗೆ ಇಷ್ಟೊಂದು ಷರತ್ತು ಕರಾರುಗಳನ್ನು ವಿಧಿಸುವ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಈ ಉದ್ದಿಮೆಗಳಲ್ಲಿ ತಳಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸುವ ಒಂದೇ ಒಂದು ಕರಾರು ವಿಧಿಸಿಲ್ಲ. ಪ್ರತಿ ಸಾಲ ಪತ್ರದಲ್ಲಿ ಒಂದೇ ಒಂದು ಇಂಥಹ ಕರಾರು ವಿಧಿಸಿದರೆ ಯಾವ ಸಾಲಗಾರ ಉದ್ದಿಮೆದಾರ ಅದನ್ನು ನಿರಾಕರಿಸಲು ಸಾಧ್ಯ? ಅದು ಹೋಗಲಿ ಪ್ರಾತಿನಿಧ್ಯ ಕಲ್ಪಿಸಿದರೆ ಬಡ್ಡಿ ದರದಲ್ಲಿ ವಿನಾಯತಿ ನೀಡುವ ಪ್ರಸ್ತಾವನೆ ಇದ್ದರೆ ಯಾವ ಉದ್ದಿಮೆದಾರ ಇಂದು ಪ್ರಾತಿನಿಧ್ಯ ಕಲ್ಪಿಸುವುದಿಲ್ಲ. ಒಬ್ಬ ಅಥವಾ ಕೆಲವೇ ದಲಿತ-ಹಿಂದುಳಿದ ಉದ್ದಿಮೆದಾರರಿಗೆ ನೇರ ಸಬ್ಸಿಡಿ ಕೊಡುವ ಬದಲು ಒಬ್ಬ ಉದ್ದಿಮೆದಾರ ಎಷ್ಟು ದಲಿತ- ಹಿಂದುಳಿದ ವರ್ಗದ ಕಾರ್ಮಿಕರನ್ನು ನೇಮಿಸಿಕೊಂಡಿದ್ದಾನೆ/ಳೆ ಎಂಬುದರ ಮೇಲೆ ಸಬ್ಸಿಡಿ ನಿರ್ಧಾರಿತವಾದರೆ ಹೆಚ್ಚು ಸೂಕ್ತ.

ಒಟ್ಟಿನಲ್ಲಿ ಸರಕಾರ ಮನಸ್ಸು ಮಾಡಿದರೆ ಯಾವುದೇ ಕಾನೂನು ಸರ್ಜರಿ ಅಗತ್ಯವಿಲ್ಲದೇ ಸೂಕ್ತ ಪ್ರಾತಿನಿಧ್ಯ ಸುಲಭ ಸಾಧ್ಯ. ಇದ್ದ ಕಾನೂನಿಗೆ ಸಣ್ಣ ಪುಟ್ಟ ಬದಲಾವಣೆ ಮಾಡಿದರೆ ಹೆಚ್ಚಿನದನ್ನು ಕೆಲವೇ ವರ್ಷಗಳಲ್ಲಿ ಸಾಧಿಸಬಹುದು. ಪ್ರಾತಿನಿಧಿಕವಾಗಿ ಕೆಲವು ಅಂಶಗಳನ್ನು ಇಲ್ಲಿ ಚರ್ಚಿಸೋಣ:

  • ಒಂದು ಕಂಪನಿ ಮತ್ತು ಒಂದು ಸಹಕಾರ ಸಂಘಕ್ಕೆ ಅತ್ಯಂತ ಹತ್ತಿರದ ‘ಸಂಬಂದಿ’ ಎಂದು ಹೇಳಬಹುದು. ಹಾಗಾಗಿ ಕಾರ್ಪೊರೇಟ್ ವಲಯದ ಪ್ರಾತಿನಿಧ್ಯದ ಸೂತ್ರವನ್ನು ಹೊಸದಾಗಿ ಹುಡುಕಿಕೊಳ್ಳುವ ಅಗತ್ಯವಿಲ್ಲ. ಸಹಕಾರ ಸಂಘಗಳಲ್ಲಿ ಕಲ್ಪಿಸಿದ ಮಹಿಳಾ ಮತ್ತು ದಲಿತ ಪ್ರಾತಿನಿಧ್ಯದ ಸೂತ್ರವನ್ನೇ ಕಂಪನಿಗಳಿಗೆ ವಿಸ್ತರಿಸಬಹುದು. ಸಹಕಾರ ಸಂಘಗಳಿಗೆ ಸಂಬಂದಿಸಿದ ಹೊಸ ಕಾನೂನನ್ನು ತಂದ ಸಂದರ್ಭದಲ್ಲಿ ಸಂವಿಧಾನದಲ್ಲಿ ಸೂಕ್ತ ಪರಿಷ್ಕರಣೆ ಮಾಡಲಾಯಿತು. ಇದೇ ಮಾದರಿಯನ್ನು ಕಂಪನಿವಲಯಕ್ಕೆ ವಿಸ್ತರಿಸುವುದು ಸುಲಭ ಸಾಧ್ಯ. ಹಾಗೆ ನೋಡಿದರೆ ಕಂಪನಿಗಳಿಗೆ ಹೋಲಿಸಿದರೆ ಸಾಮಾಜಿಕ ಮೇಲ್ವರ್ಗಗಳ ಹಿಡಿತದಲ್ಲಿರುವ ಸಹಕಾರ ಸಂಘಗಳಲ್ಲಿ ಪ್ರಾತಿನಿಧ್ಯ ಕಲ್ಪಿಸುವುದೇ ಅತ್ಯಂತ ಕಷ್ಟಕರವಾಗಿತ್ತು. ಇದು ಸಾಧ್ಯವಾದ ಮೇಲೆ ಕಂಪನಿಗಳಲ್ಲಿ ಪ್ರಾತಿನಿಧ್ಯ ಸುಲಬವಾಗಿ ಸಾಧಿಸಬಹುದು.
  • ೨೦೧೩ ರಲ್ಲಿ ಬಂದ ಹೊಸ ಕಂಪನಿ ಕಾಯಿದೆಯ ಪ್ರಕಾರ ಐನೂರು ಕೋಟಿಗಳಷ್ಟು ನಿವ್ವಳ ಸಂಪತ್ತಿರುವ (net worth) ಅಥವಾ ಒಂದು ಸಾವಿರ ಕೋಟಿಗಳಷ್ಟು ವಾರ್ಷಿಕ ವಹಿವಾಟಿರುವ (turnover) ಒಂದು ಕಂಪನಿ ತನ್ನ ಕಳೆದ ಮೂರು ವರ್ಷಗಳ ನಿವ್ವಳ ಆದಾಯದ ೨% ಮೊತ್ತವನ್ನು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಹೆಸರಿನಲ್ಲಿ ಖರ್ಚು ಮಾಡಲೇಬೇಕು. ಇದೇ ಕಾನೂನಿನಡಿಯಲ್ಲಿ ತಮ್ಮ ಕಂಪನಿಗಳಲ್ಲಿ ಎಲ್ಲ ಹಂತದಲ್ಲೂ, ಅದರಲ್ಲೂ ಉನ್ನತ ಹುದ್ದೆಗಳಲ್ಲಿ ಸೂಕ್ತ ಸಾಮಾಜಿಕ ಪ್ರಾತಿನಿಧ್ಯ ಕಲ್ಪಿಸಿದ ಕಂಪನಿಗಳಿಗೆ ಸಾಮಾಜಿಕ ಜವಾಬ್ದಾರಿಯಿಂದ ಸೂಕ್ತ ವಿನಾಯತಿ ಕಲ್ಪಿಸಿದರೆ ಅನೇಕ ಕಂಪನಿಗಳು ತಾವೇ ಮುಂದೆ ಬಂದು ಸೂಕ್ತ ಪ್ರಾತಿನಿಧ್ಯ ಕಲ್ಪಿಸಬಹುದು.
  • ನಮ್ಮ ದೇಶದ ಎಲ್ಲಾ ಬ್ಯಾಂಕುಗಳು ನಡೆಯುವದು ರಿಸರ್ವ್ ಬ್ಯಾಂಕ್ ನೀಡುವ ಪರವಾನಗಿಯ ಮೇಲೆ. ಹೀಗಾಗಿ ಬ್ಯಾಂಕುಗಳನ್ನು ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಬ್ಯಾಂಕುಗಳು ಎಂದು ವಿಂಗಡಣೆ ಮಾಡುವುದು ಅಸಮಂಜಸ. ೧೬-೧೨-೨೦೧೫ ರಲ್ಲಿ ಬಂದ ರಿಸರ್ವ್ ಬ್ಯಾಂಕ್ ಮತ್ತು ಜಯಂತಿಲಾಲ್ ಮಿಸ್ತ್ರಿ ಪ್ರಕರಣದಲ್ಲಿ ಖಾಸಗಿ ಬ್ಯಾಂಕುಗಳೂ ಸೇರಿದಂತೆ ಎಲ್ಲ ಬ್ಯಾಂಕುಗಳೂ ಸಾರ್ವಜನಿಕ ಪ್ರಾಧಿಕಾರಗಳಾಗಿದ್ದು (Public Authority) ಮಾಹಿತಿ ಹಕ್ಕು ಕಾಯಿದೆಯಡಿ ಸಾರ್ವಜನಿಕ ಹಿತಾಸಕ್ತಿ ಇರುವ ಯಾವುದೇ ಮಾಹಿತಿಯನ್ನು ಕೊಡಲೇಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಹೀಗಾಗಿ ಪ್ರಾತಿನಿಧ್ಯದ ಪ್ರಶ್ನೆ ಬಂದಾಗ ಎಲ್ಲ ಬ್ಯಾಂಕುಗಳನ್ನೂ ಸಮಾನವಾಗಿ ನೋಡಬೇಕಿದೆ.
  • ವಿದ್ಯುತ್ ಉತ್ಪಾದನೆ, ನೀರಾವರಿ, ವಿಮಾನ ನಿಲ್ದಾಣ ನಿರ್ಮಾಣ, ಹೆದ್ದಾರಿ ನಿರ್ಮಾಣ ಮತ್ತಿತರ ಮೂಲಭೂತ ಸೌಕರ್ಯ ಯೋಜನೆಗಳನ್ನು ಸಾರ್ವಜನಿಕ ಮತ್ತು ಖಾಸಗಿ ಸಹಯೋಗದ (Private Public Partnership – PPP) ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ನಿಜಕ್ಕೂ ನೋಡಿದರೆ ಖಾಸಗಿ ಸಹಭಾಗಿತ್ವ ಇಲ್ಲಿ ನಗಣ್ಯ. ಯೋಜನೆಗಳಿಗೆ ಬೇಕಾದ ಭೂಮಿಯನ್ನು ಸರಕಾರವೇ ಕೊಡಮಾಡುತ್ತದೆ. ಈ ಯೋಜನೆಗಳಲ್ಲಿ ಭೂಮಿಯೇ ೨೦%-೩೦% ಮೂಲ ಬಂಡವಾಳವೆಂದು ತೋರಿಸಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕು ಮತ್ತು ಹಣಕಾಸು ಸಂಸ್ಥೆ ಗಳಿಂದ ೭೦%-೮೦% ರಷ್ಟು ಸಾಲ ಪಡೆಯಲಾಗುತ್ತದೆ. ಅದರೊಂದಿಗೆ ಈ ಯೋಜನೆಗಳಿಗೆ ಕಡಿಮೆ ಬಡ್ಡಿ ದರದ ಸಾಲ, ತೆರಿಗೆ ವಿನಾಯತಿ ರೂಪದಲ್ಲಿ ಪರೋಕ್ಷ ಮತ್ತು ಪ್ರತ್ಯಕ್ಷ ರೂಪದಲ್ಲಿ ಸಾಕಷ್ಟು ಹಣಕಾಸಿನ ನೆರವು ನೀಡುತ್ತದೆ. ಅನೇಕ ಬಾರಿ ಈ ಯೋಜನೆಗಳಿಗೆ ಸರಕಾರವೇ ಮುಖ್ಯ ಗ್ರಾಹಕನಾಗಿ ಹೆಚ್ಚಿನ ಬೆಂಬಲ ಬೆಲೆ ಕೊಟ್ಟು ಸಿದ್ಧ ವಸ್ತುಗಳನ್ನು ಖರೀದಿ ಮಾಡುತ್ತದೆ. ಉದಾಹರಣೆಗೆ ನವೀಕೃತ ಮೂಲಗಳ ವಿದ್ಯುತ್ ಉತ್ಪಾದನೆ ಯೋಜನೆಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್ತನ್ನು ಸರಕಾರವೇ ತನ್ನ ಒಡೆತನದ ಕಂಪನಿಗಳ ಮೂಲಕ ಹೆಚ್ಚಿನ ಬೆಲೆಗೆ ಖರೀದಿಸುತ್ತದೆ, ಪವನ ವಿದ್ಯುತ್ ಮತ್ತು ಸೌರ ಶಕ್ತಿ ಯೋಜನೆಗಳಿಂದ ಉತ್ಪಾದನೆಯಾಗುವ ವಿದ್ಯುತ್ತಿಗೆ ಸಾಮಾನ್ಯವಾಗಿ ೩೦-೩೦% ಹೆಚ್ಚಿನ ದರ ನಿಗದಿಯಾಗಿರುತ್ತದೆ. ಇದನ್ನು ಸರಕಾರವೇ ತನ್ನ ಕಂಪನಿಗಳ ಮುಖೇನ ಖರೀದಿಸಿ ಯೋಜನೆಗಳಿಗೆ ೩೦ ವರ್ಷಗಳವರೆಗೆ ದರ ಖಾತರಿ ನೀಡುತ್ತದೆ. ಸರಕಾರಿ ಒಡೆತನದ ಸಂಸ್ಥೆಗಳೇ ಈ ಯೋಜನೆಗಳಿಗೆ ಬೇಕಾಗುವ ನಾನಾ ಪರವಾನಗಿಗಳನ್ನು ತೆಗೆಸಿಕೊಡುತ್ತವೆ. ಕಂದಾಯ ಇಲಾಖೆಯ ಸರಕಾರಿ ಭೂಮಿ ಅಥವಾ ಅರಣ್ಯ ಭೂಮಿಯನ್ನು ಉಪಯೋಗಿಸಿಕೊಂಡು ಇಷ್ಟೆಲ್ಲಾ ಸವಲತ್ತುಗಳನ್ನೂ ಪಡೆಯುವ ಈ ಸಂಸ್ಥೆಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ನಿರೂಪಿಸಿ ಉದ್ಯೋಗ ಮತ್ತು ಒಡೆತನಗಳಲ್ಲಿ ತಳ ಸಮುದಾಯಗಳು ಮತ್ತು ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸಿದ ಉದಾಹರಣೆಗಳೇ ಇಲ್ಲ.
  • ಸರಕಾರಿ ಮಾನ್ಯತೆ ಮತ್ತು ಅನುದಾನ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾತಿನಿಧ್ಯವನ್ನು ಜಾರಿಗೊಳಿಸಬೇಕಾದ ಅಗತ್ಯವಿದೆ. ಸಮಾನ ಶಿಕ್ಷಣವನ್ನು ಜಾರಿಗೊಳಿಸಿದ ಸರಕಾರ (ಕನಿಷ್ಟ ಕಾಗದದಲ್ಲಾದರೂ ಸರಿ) ಪ್ರಾತಿನಿಧ್ಯವನ್ನು ಜಾರಿಗೊಳಿಸದಿರುವುದಕ್ಕೆ ಯಾವ ಸಕಾರಣಗಳೂ ಇಲ್ಲ. ಪ್ರಾಥಮಿಕ ಶಿಕ್ಷಣ ಒಂದು ಮೂಲಭೂತ ಹಕ್ಕು ಎಂದಾದರೆ ಅದನ್ನು ಒದಗಿಸುವ ಜವಾಬ್ದಾರಿಯನ್ನು ಹೊತ್ತಿರುವ ವಿದ್ಯಾ ಸಂಸ್ಥೆಗಳು ಸರಕಾರದ ಕೆಲಸವನ್ನೇ ಮಾಡುತ್ತಿವೆ. ಅದಕ್ಕಾಗಿ ಸರಕಾರ ಅನುದಾನವನ್ನೂ ಕೊಡುತ್ತಿದೆ ಎಂದಾದರೆ ಅವು ಸರಕಾರದ ನಿಯಂತ್ರಣಕ್ಕೆ ಒಳಪಡಲೇಬೇಕಲ್ಲವೇ?
  • ನಮ್ಮ ದೇಶದ ಮೂರು ಔದ್ಯೋಗಿಕ ಸಂಘಟನೆಗಳಾದ ಸಿಐಐ, ಫಿಕ್ಕಿ ಮತ್ತು ಅಸ್ಹೊಚೆಮ್ ಗಳು ಪ್ರಾತಿನಿಧ್ಯದ ವಿಚಾರದಲ್ಲಿ ಸರಕಾರದ ಹಸ್ತಕ್ಷೇಪವನ್ನು ವಿರೋಧಿಸುತ್ತಲೇ ತಾವೇ ಸ್ವಯಂ ಪ್ರೇರಿತವಾಗಿ ದಲಿತ ಪ್ರಾತಿನಿಧ್ಯ ಕೊಡುವುದಾಗಿ ಹೇಳಿಕೊಂಡು ಮುಂದೆ ಬಂದಿವೆ. ಪ್ರಾತಿನಿಧ್ಯವನ್ನು ಕಲ್ಪಿಸಲು ತಾವೇ ಸ್ವಯಂ ಪ್ರೇರಿತ ನಿಯಮಗಳನ್ನು (Voluntary Code of Conduct) ಮಾಡಿಕೊಂಡಿರುವುದಾಗಿ ಘೋಷಿಸಿ ೨೦೧೪ ಡಿಸೆಂಬರನಲ್ಲಿ ಅವುಗಳೇ ಕೆಲವು ಅಂಕಿ ಅಂಶಗಳ ಪ್ರಕಟಿಸಿ ತಾವು ಕೈಗೊಂಡ ಕ್ರಮಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿವೆ. ಅವರೇ ಘೋಶಿಸಿಕೊಂಡಂತೆ ದೇಶದ ಮೂರೂ ಬೃಹತ್ ಸಂಘಟನೆಗಳು ಸೇರಿ ದೇಶದ ಎಂಟು ಜಿಲ್ಲೆಗಳನ್ನು ದತ್ತು ಪಡೆದಿವೆ. ೬೭೬ ಜಿಲ್ಲೆಗಳಿರುವ ಈ ಬೃಹತ್ ದೇಶದಲ್ಲಿ ಏಳೆಂಟು ಜಿಲ್ಲೆಗಳಲ್ಲಿ ಕೆಲಸ ಮಾಡಿದರೆ ಸಾಕೇ? ಇನ್ನು ಉದ್ದಿಮೆಗಳಿಗೆ ಸ್ವಯಂ ನಿಯಂತ್ರಣ ಸಾಧ್ಯವಾಗಿರುತ್ತಿದ್ದರೆ ನಮ್ಮ ದೇಶದಲ್ಲಿ ಕಾನೂನು ಕಟ್ಟಳೆಗಳು ಬೇಕಿತ್ತೇ? ಉದ್ದಿಮೆಗಳು ಸ್ವಯಂ ಪ್ರೇರಣೆಯಿಂದ ಸರಿಯಾದ ಸಮಯದಲ್ಲಿ ಕಾನೂನು ರೀತ್ಯಾ ತೆರಿಗೆ, ಸಾಲಪಾವತಿ ಮತ್ತು ವಿದ್ಯುತ್ ದರ ಕಟ್ಟಿದ್ದರೆ ನಮ್ಮ ದೇಶ ಇಂದು ಅಮೇರಿಕಾವನ್ನೂ ಮೀರಿಸುತ್ತಿತ್ತು. ಹೀಗಾಗಿ ಪ್ರಾತಿನಿಧ್ಯದ ವಿಚಾರದಲ್ಲಿ ಸ್ವಯಂ ನಿಯಂತ್ರಣದಿಂದ ಸಾರ್ವಜನಿಕ ನಿಯಂತ್ರಣಕ್ಕೆ ನಾವು ಸಾಗಬೇಕಿದೆ.
  • ಮಠಮಾನ್ಯಗಳಿಗೆ ಸಾಕಷ್ಟು ಸರಕಾರಿ ಅನುದಾನ ಸಂದಿದೆ. ಧರ್ಮಬೇದವಿಲ್ಲದೆ ಸರಕಾರದ ಹಣ / ಅನುದಾನ ಪಡೆಯುತ್ತಿರುವ ಎಲ್ಲ ಜಾತಿ ಧರ್ಮಗಳ ಮಠ- ಮದರಸ- ಇಗರ್ಜಿಗಳಲ್ಲಿ ಮತ್ತು ಮುಖ್ಯವಾಗಿ ಅವರು ನಡೆಸುತ್ತಿರುವ ಸಂಸ್ಥೆಗಳಲ್ಲಿ ಪ್ರಾತಿನಿಧ್ಯವನ್ನು ಕಲ್ಪಿಸಬೇಕಿದೆ. ಮಠಗಳನ್ನು ನಡೆಸುವುದು ಧಾರ್ಮಿಕ ಕಾರ್ಯ ಅದರಲ್ಲಿ ಸರಕಾರದ ಹಸ್ತಕ್ಷೇಪವಿರಬಾರದು ಎಂಬುದು ದಿಟ. ಆದರೆ ಮಠಮಾನ್ಯಗಳು ಲಾಭಕ್ಕಾಗಿ ನಡೆಸುವ ಸಂಸ್ಥೆಗಳನ್ನು ಇತರ ವಾಣಿಜ್ಯ ಸಂಸ್ಥೆಗಳ ಜೊತೆಯಲ್ಲಿಯೇ ಪರಿಗಣಿಸಬೇಕಾಗುತ್ತದೆ. ತಮ್ಮ ಧರ್ಮದ ಮೂಲ ಆಶಯ ಸಮಾನತೆ ಎಂದು ಸಾರುವ ಧಾರ್ಮಿಕ ಮುಖಂಡರು ಧಾರ್ಮಿಕ ಸಂಸ್ಥೆಗಳು ನಡೆಸುವ ವಾಣಿಜ್ಯ ಚಟುವಟಿಕೆಗಳಲ್ಲಿ ಪ್ರಾತಿನಿಧ್ಯವನ್ನು ಕಲ್ಪಿಸುವುದನ್ನು ಸ್ವಾಗತಿಸಬೇಕಿದೆ. ಸಾಚಾರ್ ಆಯೋಗದ ಶಿಫಾರಸ್ಸನ್ನು ಮೊದಲ್ಗೊಂಡು ಮುಸ್ಲಿಂ ಸಮುದಾಯದ ಸಂಸ್ಥೆಗಳಲ್ಲಿ ವರದಿಯಲ್ಲಿ ತಿಳಿಸಿರುವ ಅಶ್ರಫ್, ಅಜ್ಲಫ಼್ ಮತ್ತು ಅರ್ಜಲ್ ಸಮುದಾಯಗಳಿಗೆ ವಿಶೇಷ ಪ್ರಾತಿನಿಧ್ಯ ಕಲ್ಪಿಸುವ ಕುರಿತು ಮಾಡಿರುವ ಪ್ರಸ್ತಾವನೆಗಳನ್ನು ಮುಸ್ಲಿಂ ಸಮುದಾಯದ ನಡೆಸುತ್ತಿರುವ ಸಂಸ್ಥೆಗಳಲ್ಲೇ ಮೊದಲಿಗೆ ಜಾರಿಗೆ ತರಬೇಕಿದೆ. ಹಾಗೆಯೇ ದಲಿತ ಕ್ರೈಸ್ತರ ವಿಚಾರದಲ್ಲಿ ಕ್ರೈಸ್ತ ಧರ್ಮದ ಅಡಿಯಲ್ಲಿ ನಡೆಯುತ್ತಿರುವ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ ಕಲ್ಪಿಸುವ ನಿರ್ಧಾರ ತೆಗೆದುಕೊಳ್ಳಬೇಕಿದೆ.
  • ಇಂದು ಎಲ್ಲ ಕ್ಷೇತ್ರಗಳಿಗಿಂತ ಉನ್ನತ ನ್ಯಾಯಾಂಗದಲ್ಲಿ ಪ್ರಾತಿನಿಧ್ಯವನ್ನು ಕಲ್ಪಿಸುವುದು ಅತ್ಯಗತ್ಯವಾಗಿದೆ. ಇದರ ಸಂಬಂಧವಾಗಿ ಇದೇ ಲೇಖಕ ಬರೆದ “ನ್ಯಾಯಾಂಗದಲ್ಲಿ ದಲಿತ ಮತ್ತು ಹಿಂದುಳಿದವರ ಪ್ರಾತಿನಿಧ್ಯದ ಪ್ರಶ್ನೆ” ಎಂಬ ಲೇಖನದ ಕೆಲ ಅಂಶಗಳನ್ನು ಇಲ್ಲಿ ಗಮನಿಸಬಹುದು:

೧೯೫೦ ರಿಂದ ಇಂದಿನವರೆಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ನೇಮಕವಾದ ದಲಿತರ ಸಂಖ್ಯೆ ಕೇವಲ ನಾಲ್ಕು – ಎ. ವರದರಾಜನ್, ಬಿ. ಸಿ. ರಾಯ್, ಕೆ. ರಾಮಸ್ವಾಮಿ ಮತ್ತು ಕೆ. ಜಿ. ಬಾಲಕೃಷ್ಣನ್. ಕಳೆದ ಅರವೈತ್ತೈದು ವರ್ಷಗಳಲ್ಲಿ ಈ ದೇಶದ ದಲಿತರಲ್ಲಿ ನಾಲ್ಕು ಜನ ಮಾತ್ರ Supreme Courtಸುಪ್ರೀಂ ಕೋರ್ಟ್ ಲ್ಲಿ ಕೂರಲು ಲಾಯಕ್ಕದವರೇ?

ಹಾಗೆಯೆ, ಒಂದು ಅಂದಾಜಿನ ಪ್ರಕಾರ ಸುಪ್ರೀಂ ಕೋರ್ಟ್ ನ ಸುಮಾರು ೫೬% ರಷ್ಟು ನ್ಯಾಯಾಧೀಶರು ಬ್ರಾಹ್ಮಣರು. ಒಟ್ಟು ಹೈ ಕೋರ್ಟ್ ನ್ಯಾಯಾಧೀಶರಲ್ಲಿ ಕೂಡ ಬ್ರಾಹ್ಮಣರ ಅನುಪಾತ ೫೦% ನಷ್ಟು. ೨೦೦೯ ರ ಸುಮಾರಿಗೆ ಕೇಂದ್ರ ಗೃಹ ಇಲಾಖೆ ಸುಪ್ರೀಂ ಕೋರ್ಟ್ ಗೆ ಒಂದು ಮನವಿ ಸಲ್ಲಿಸಿ ನ್ಯಾಯಾಂಗದಲ್ಲಿ ದಲಿತರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲು ಮಾರ್ಗದರ್ಶಿ ಸೂತ್ರಗಳನ್ನು ನಿರೂಪಿಸಲು ಕೋರಿತು. ಆದರೆ ಈವರೆಗೂ ಸರ್ವೋಚ್ಚ ನ್ಯಾಯಾಲಯವೂ ಸೇರಿದಂತೆ ಯಾವುದೇ ಉಚ್ಚ ನ್ಯಾಯಾಲಯವೂ ಯಾವ ಸೂತ್ರ ಯಾ ನಿರ್ದೇಶನಗಳನ್ನೂ ಜಾರಿ ಮಾಡಲಿಲ್ಲ. ಕೇಶವಾನಂದ ಭಾರತಿ ಪ್ರಕರಣದಿಂದ ಮೊದಲ್ಗೊಂಡು ಅನೇಕ ತೀರ್ಮಾನಗಳಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ: ನ್ಯಾಯಾಂಗವೆಂದರೆ “ಪ್ರಭುತ್ವ” (State). ಪ್ರಭುತ್ವದ ಇನ್ನೆರಡು ಅಂಗಗಳಲ್ಲಿ ಮೀಸಲಾತಿ ಇರುವುದು ನಿಜವಾದರೆ ನ್ಯಾಯಾಂಗ ಇದಕ್ಕೆ ಹೊರತಾಗಿರಬೇಕೇ? ಇನ್ನು ನ್ಯಾಯಾಲಯಗಳ ಸಿಬ್ಬಂದಿಗಳ ನೇಮಕದಲ್ಲಿ ಮೀಸಲಾತಿ ಇದೆ. ಆದರೆ ನ್ಯಾಯಮೂರ್ತಿಗಳ ನೇಮಕದಲ್ಲಿ ಏಕಿಲ್ಲ? ರಾಷ್ಟ್ರೀಯ ನ್ಯಾಯಾಂಗ ಸೇವಾ ಆಯೋಗ ರಚಿಸಲು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಆಯೋಗ ರಚನೆಯಾದರೆ ಎಲ್ಲಿ ಮೀಸಲಾತಿ ಜಾರಿಮಾಡುವ ಪ್ರಮೇಯ ಬಂದೀತೋ ಎಂದು ಈವರೆಗೆ ಯಾವ ಸರಕಾರವೂ ನ್ಯಾಯಾಂಗ ಸೇವೆಗಳ ಆಯೋಗ ರಚನೆ ಮಾಡುವ ಸಾಹಸ ಮಾಡಿಲ್ಲ. ಕೊಲಿಜಿಯಂ ಪದ್ಧತಿ ರದ್ದಾಗಿ ಈ ಕುರಿತ ಪ್ರಕರಣ ಸುಪ್ರೀಂ ಕೋರ್ಟ್ ನ ಮುಂದಿದೆ. ಈ ಕೊಲಿಜಿಯಂ ಪದ್ಧತಿಯಡಿ ದಲಿತರಿಗೆ ಸೇರಿದಂತೆ ಅನೇಕ ಜನಪರ ಕಾಳಜಿಯ ನ್ಯಾಯಾಧೀಶರಿಗೆ ಹಿನ್ನಡೆಯಾಗಿದೆಯೆಂದು ಬಹುತೇಕ ಎಲ್ಲ ವಕೀಲರೂ ವಾದಿಸಿದ್ದಾರೆ.

ಯಾವುದೇ ರಾಜ್ಯ ಮತ್ತು ಕೇಂದ್ರ ಸರಕಾರಗಳು ತಮ್ಮನ್ನು ಪ್ರತಿನಿಧಿಸುವ ಅಟಾರ್ನಿ ಜನರಲ್, ಸಾಲಿಸಿಟರ್ ಜನರಲ್,ಅಡ್ವೋಕೇಟ್ ಜನರಲ್ ಹೋಗಲಿ ಸಾಮಾನ್ಯ ಸರಕಾರೀ ವಕೀಲರ ನೇಮಕಾತಿಗಳಲ್ಲಿ ಮೀಸಲಾತಿಯನ್ನು ಪಾಲಿಸಿಲ್ಲ. ಸರಕಾರದ ಯಾವ ಬ್ಯಾಂಕ್, ನಿಗಮ, ಮಂಡಳಿಗಳು ಕೂಡ ತಮ್ಮ ಪ್ಯಾನೆಲ್ ಗಳಲ್ಲಿ ಮೀಸಲಾತಿ ಹೋಗಲಿ ದಲಿತರ ಬಗ್ಗೆ ಕನಿಷ್ಠ ಪ್ರಾತಿನಿಧ್ಯದ ಬಗ್ಗೆ ಕೂಡ ಗಮನ ಹರಿಸಿಲ್ಲ. ಇಂಥ ನೇಮಕಾತಿಗಳಲ್ಲಿ ಮೀಸಲಾತಿ ಬಗ್ಗೆ ಯಾವುದೇ ಕಾನೂನು ಅಥವಾ ನಿಯಮಗಳು ಹೋಗಲಿ ಕನಿಷ್ಠ ನಿರ್ದೇಶನ ಸೂತ್ರಗಳು ಕೂಡ ಇಲ್ಲ. ಎಲ್ಲಾ ಸರಕಾರಗಳು ದಲಿತರ ಪರ ಮೊಸಳೆ ಕಣ್ಣೀರು ಹಾಕುವುದು ಎಲ್ಲರಿಗೂ ಗೊತ್ತಿರುವುದೇ. ಆದರೆ ಈವರೆಗೆ ದಲಿತರ ಪರವಾಗಿ ದಲಿತ ವಕೀಲರೇ ಧ್ವನಿ ಎತ್ತಿಲ್ಲ ಎಂದರೆ ಎಂಥ ಬೇಸರದ ವಿಷಯ. ವಕೀಲರ ಸಾರ್ವತ್ರಿಕ ಪ್ರಾತಿನಿಧ್ಯದ ಸಂಸ್ಥೆ ವಕೀಲರ ಪರಿಷತ್ತು (ಬಾರ್ ಕೌನ್ಸಿಲ್) ನಲ್ಲಿ ಕೂಡ ಯಾವ ಪ್ರಾತಿನಿಧ್ಯವಿಲ್ಲ. ಇಂದು ವಕೀಲರಾಗಿ ನೊಂದಣಿ ಬಾರ್ ಕೌನ್ಸಿಲ್ ಪರೀಕ್ಷೆ ತೇರ್ಗಡೆ ಕಡ್ಡಾಯ. ಆದರೆ ಈ ಪರೀಕ್ಷೆ ಗಳಲ್ಲಿ ಕೂಡ ಮೀಸಲಾತಿಯಿಲ್ಲ. ದಲಿತ ವಿದ್ಯಾರ್ಥಿಗಳಿಗೆ, ಹಿಂದುಳಿದ ವರ್ಗ ಹೋಗಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಕೂಡ ಕನಿಷ್ಠ ಶುಲ್ಕ ವಿನಾಯತಿ ಕೊಡುವ ಔದಾರ್ಯವನ್ನೂ ವಕೀಲರ ಪರಿಷತ್ತು ತೋರಿಲ್ಲ. ತನ್ನ ವೆಬ್ಸೈಟ್ ನಲ್ಲಿ ನಮೂದಿಸಿರುವ ಪ್ರಶ್ನಾವಳಿ (FAQ) ಗಳಲ್ಲಿ ವಕೀಲರ ಪರಿಷತ್ತು “ನಮ್ಮ ಪರೀಕ್ಷೆಗಳಲ್ಲಿ ದಲಿತ ವಿದ್ಯಾರ್ಥಿಗಳಿಗೆ ಯಾವುದೇ ವಿಶೇಷ ಸೌಲಭ್ಯಗಳಿಲ್ಲ” ಎಂದು ಘೋಷಿಸಿ ಕೊಂಡಿದೆ.

ವಿಪರ್ಯಾಸವೆಂದರೆ ವಕೀಲರ ಪರಿಷತ್ತಿನ ವೆಬ್ಸೈಟ್ ನಲ್ಲಿ ದೊಡ್ಡದೊಂದು ಅಂಬೇಡ್ಕರ್ ಪಟವಿದೆ! ದುರಂತವೆಂದರೆ ಇಂದು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ದಲಿತ ವಕೀಲರನ್ನು ಪ್ರತಿನಿಧಿಸುವ ಯಾವುದೇ ಸಂಘ ಸಂಸ್ಥೆಗಳಿಲ್ಲ. ಸಣ್ಣ ಪುಟ್ಟ ಕಾರ್ಖಾನೆಗಳಲ್ಲಿಯೂ ದಲಿತ ಕಾರ್ಮಿಕ ಸಂಘಟನೆಗಳನ್ನು ರಚಿಸಿಕೊಳ್ಳುವ ದಲಿತರು ಇಂದಿನವರೆಗೂ ವಕೀಲರ ಮಧ್ಯೆ ಸಂಘಟನೆ ಕಟ್ಟಿಲ್ಲ. ಸಂಘಟಿತರಾಗದವರೆಗೂ ದಲಿತರಿಗೆ ಮುಕ್ತಿಯಿಲ್ಲ ಎಂಬುದಕ್ಕೆ ಈ ಕ್ರೂರ ವಾಸ್ತವಗಳಿಗಿಂತಲೂ ಹೆಚ್ಚಿನ ಸಾಕ್ಷಿಗಳು ದಲಿತರಿಗೆ, ಅದರಲ್ಲೂ ಮುಖ್ಯವಾಗಿ ವಕೀಲರಿಗೆ ಬೇಕಿಲ್ಲ ಎಂದು ಕೊಳ್ಳೋಣ. ೨೦೧೧ ರಲ್ಲಿ ಸಂವಿಧಾನ ತಿದ್ದುಪಡಿ ತಂದು ಸಹಕಾರ ಸಂಘಗಳ ಕಾನೂನಿಗೆ ಸಮಗ್ರ ಸರ್ಜರಿ ಮಾಡಲಾಯಿತು. ಸಹಕಾರಿ ಸಂಘಗಳನ್ನು ರಚಿಸಿಕೊಳ್ಳುವುದು ಮೂಲಭೂತ ಕರ್ತವ್ಯವೆಂದು ಸಾರಲಾಯಿತು. ಜೊತೆಗೆ, ಸಹಕಾರ ಸಂಘಗಳಲ್ಲಿ ಸಾಮಾಜಿಕ ಮತ್ತು ಮಹಿಳಾ ಮೀಸಲಾತಿ ಜಾರಿಗೊಳಿಸಲಾಯಿತು. ಆದರೆ ವಕೀಲರ ಸಂಘಗಳಲ್ಲಿ ಈ ಮೀಸಲಾತಿ ಜಾರಿಯಾಗಿಲ್ಲ. ವಕೀಲರ ಸಂಘಗಳಿಗೆ ಸರಕಾರಗಳು ಸಾಕಷ್ಟು ಸಹಾಯ ಧನ ನೀಡಿವೆ. ಏಷ್ಯಾದಲ್ಲಿಯೇ ಅತೀ ದೊಡ್ಡದು ಎನ್ನಿಸಿಕೊಳ್ಳುವ ಬೆಂಗಳೂರು ವಕೀಲರ ಸಂಘದ ಬೈ ಲಾ ಗಳನ್ನು ಅನುಮೋದಿಸಿದ್ದು ಸ್ವತಃ ಸಹಕಾರ ಸಂಘಗಳ ಪ್ರಬಂಧಕರು. ಆದರೆ ಇಲ್ಲಿ ಮಹಿಳಾ, OBC ಮತ್ತು ದಲಿತ ಮೀಸಲಾತಿಯ ಪ್ರಶ್ನೆಯೇ ಇಲ್ಲ. ಈವರೆಗೆ ಯಾವ ದಲಿತರೂ ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳಾಗಿಲ್ಲ. ಈವರೆಗೆ ಯಾವ ದಲಿತರೂ ಹಿಂದುಳಿದವರು ಮತ್ತು ಮಹಿಳೆಯರು ಈ ಬಗ್ಗೆ ಪ್ರಶ್ನೆ ಮಾಡಿಲ್ಲ. ದಲಿತ, ಮಹಿಳಾ ಮತ್ತು ಹಿಂದುಳಿದ ವರ್ಗಗಳು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಮರ್ಪಕವಾಗಿ ಪ್ರನಿಧಿಸುತ್ತಿಲ್ಲ ಎಂಬುದು ಕೇವಲ ಈ ವರ್ಗ ವಿಭಾಗಗಳ ಪ್ರಶ್ನೆಯಲ್ಲ. ಇದು ನಮ್ಮ ಇಡೀ ಸಮಾಜದ ಆತ್ಮಸಾಕ್ಷಿಯನ್ನು ಕಾಡಬೇಕಿರುವ ಪ್ರಶ್ನೆ. ‘ದಲಿತರು ಎಲ್ಲರಿಗೂ ಸಮನಾಗಿ ಬದುಕುತ್ತಿದ್ದಾರೆ’, ‘ಜಾತಿ ವ್ಯವಸ್ಥೆ ಸತ್ತು ಹೋಗಿದೆ’ ಅಥವಾ ‘ಬರೀ ವರ್ಗವೊಂದೇ ಸತ್ಯ ಜಾತಿ ಮಿಥ್ಯ’ ಎಂದು ವಾದಿಸುವ ಸಿದ್ಧಾಂತಿಗಳು ನ್ಯಾಯಾಂಗದಲ್ಲಿ ಏಕೆ ಇಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಯೋಚಿಸುವರೆ?”

*******

ವಿಷಯದ ವ್ಯಾಪ್ತಿ ಅಗಾಧವಾಗಿರುವ ಕಾರಣ ಇಲ್ಲಿ ಕೆಲವೇ ಕೆಲವು ನಿದರ್ಶನಗಳನ್ನು ಚರ್ಚಿಸಲಾಗಿದೆ. ಇದು ಕೇವಲ ಚರ್ಚೆಗೆ ಅನುವಾಗುವ ರೀತಿಯಲ್ಲಿನ ಒಂದು ಪ್ರಾಥಮಿಕ ಪ್ರಯತ್ನ ಮಾತ್ರ. ಇಲ್ಲಿರುವ ಸಲಹೆಗಳು ಕಾರ್ಯಸಾಧುವೇ ಅಲ್ಲವೇ ಎಂಬುದು ವಿಸ್ತ್ರತ ಚರ್ಚೆಗೆ ಒಳಪಡಬೇಕಾದ ವಿಚಾರ.

ಸಾಮಾಜಿಕ ಪ್ರಾತಿನಿಧ್ಯದ ಜೊತೆಯಲ್ಲೇ ಚರ್ಚೆಗೆ ಒಳಪಡಬೇಕಾದ ವಿಚಾರ ಅನುಷ್ಥಾನದ್ದು. ಇಂದು ಸರಕಾರಿ ವಲಯದಲ್ಲೇ ಬ್ಯಾಕ್ ಲಾಗ್ ಸಮಸ್ಯೆ ಬೃಹತ್ತಾಗಿ ಬೆಳೆದು ನಿಂತಿರುವಾಗ ಸರ್ಕಾರೇತರ ವಲಯಗಳಲ್ಲಿ ಪ್ರಾತಿನಿಧ್ಯವನ್ನು ಸಮರ್ಪಕವಾಗಿ ಅನುಷ್ಥಾನಗೊಳಿಸಬಹುದೇ? ಸಮಸ್ಯೆಗಳು ಮತ್ತು ಸವಾಲುಗಳು ಸಾಕಷ್ಟಿವೆ. ಸರಕಾರೇತರ ವಲಯದಲ್ಲಿ ಅರ್ಥಿಕ ಹಿಂಜರಿತ, ಲಾಭ ಹೆಚ್ಚಿಸುವ ಒತ್ತಡಗಳು, ಉದ್ಯೋಗ ಕಳೆದುಕೊಳ್ಳುವ ಭಯ, ಅಸಂಘಟಿತ ಕಾರ್ಮಿಕರ ಶೋಷಣೆ ಅತ್ಯಂತ ಹೆಚ್ಚಾಗಿದೆ. ವಿಶೇಷ ವಿತ್ತ ವಲಯಗಳಿಗೆ ಮತ್ತು ಸಾಫ್ಟ್ವೇರ್ ಕಂಪನಿಗಳಿಗೆ ಕಾರ್ಮಿಕ ಕಾನೂನುಗಳೂ ಸೇರಿದಂತೆ ದೇಶದ ಕಲ್ಯಾಣದ ಸದುದ್ದೇಶವುಳ್ಳ ಅನೇಕ ಕಾನೂನುಗಳು (Welfare Legislation) ಅನ್ವಯಿಸುವುದೇ ಇಲ್ಲ. ಹೆಚ್ಚಿನ ಕಡೆಗಳಲ್ಲಿ ಯಾವುದೇ ಕಾರ್ಮಿಕ ಸಂಘಟನೆಗಳಿಗೆ ಅವಕಾಶವಿಲ್ಲ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲವರ್ಗಗಳಿಗೆ ಸೇರಿದವರಿಗೆ ಸಹ ಇನ್ನೂ ನ್ಯಾಯ ದೊರೆತಿಲ್ಲ. ಅದರಲ್ಲಿ ತಳ ಸಮುದಾಯಗಳ ಪ್ರಾತಿನಿಧ್ಯವನ್ನು ಅರಗಿಸಿಕೊಳ್ಳುವಷ್ಟು ನಮ್ಮ ಸಮಾಜ ಇನ್ನೂ ಬೆಳೆದಿಲ್ಲ ಎನ್ನುವುದು ಸತ್ಯವೇ.

ಆದರೆ ಸಣ್ಣ ಪುಟ್ಟ ವಿಚಾರಗಳಿಗೆ ಒಂದು ಆಯೋಗ ರಚಿಸುವ ಸರಕಾರಗಳು ಸರಕಾರೇತರ ವಲಯಗಳ ಪ್ರಾತಿನಿಧ್ಯದ ವಿಶ್ಲೇಷಣೆಗೆ ಯಾವುದೇ ಒಂದು ಆಯೋಗವನ್ನು ರಚಿಸದಿರುವುದು ವಿಷಾದನೀಯ. ರಾಜ್ಯ ಮತ್ತು ರಾಷ್ಟ್ರದ ಕಾನೂನು ಅಯೋಗಗಳೂ (Law Commissions) ಕೂಡ ಈ ಬಗ್ಗೆ ಕಣ್ಣು ಹರಿಸಿಲ್ಲ. ಸಧ್ಯದ ಸಂವಿಧಾನದ ಮತ್ತು ಕಾನೂನುಗಳ ಚೌಕಟ್ಟಿನಲ್ಲೇ ಅಥವಾ ಅವುಗಳನ್ನು ವಿಸ್ತರಿಸಿ ಪ್ರಾತಿನಿಧ್ಯವನ್ನು ಕಲ್ಪಿಸುವ ಪ್ರಯತ್ನ ಮುಂದಿನ ದಿನಗಳಲ್ಲಿ ಸಾಗಬೇಕಿದೆ.

ಇಂಥಹ ಒಂದು ಪ್ರಾಮಾಣಿಕ ಪ್ರಯತ್ನ ನಮ್ಮ ರಾಜ್ಯದ ‘ಅಹಿಂದ’ ಸರಕಾರದಿಂದಲೇ ಪ್ರಾರಂಭವಾದರೆ ತುಂಬಾ ಸಂತೋಷ.

“ಉಡುಗೊರೆ” : ಗಾಂಧಿ ಜಯಂತಿ ಕಥಾಸ್ಪರ್ಧೆ 2015 – ಬಹುಮಾನಿತ ಕಥೆ

– ಸ್ವಾಲಿಹ್ ತೋಡಾರ್

ಪ್ರೀತಿಯಲ್ಲಿ ಉಡುಗೊರೆಗೆ ಅಷ್ಟೊಂದು ಮಹತ್ವವಿದೆ ಎಂದು ಪೊಡಿಮೋನುವಿಗೆ ಎಂದೂ ತಿಳಿದಿರಲಿಲ್ಲ. “ಮದುವೆಯಾಗಿ ಎರಡು ವರ್ಷ ಮೀರುತ್ತಾ ಬಂತು. ಇದುವರೆಗೂ ನಾನು ಕೇಳದೆ ಏನನ್ನಾದರೂ ನನಗೋಸ್ಕರ ನೀವು ತಂದುಕೊಟ್ಟದ್ದಿದೆಯೇ? ನಿಮಗೆ ನನ್ನ ಮೇಲೆ ಪ್ರೀತಿಯೇ ಇಲ್ಲ”ಎಂದು ಸಕೀನ ಹುಸಿ ಮುನಿಸು ತೋರಿದಾಗ ಪೊಡಿಮೋನು ಏನೂ ಆಗದವನಂತೆ ಹಲ್ಕಿರಿಯುತ್ತಾ ನಿಂತಿದ್ದ. ಹೆಂಡತಿ ಹುಸಿ ಮುನಿಸು ತೋರುವಾಗಲೆಲ್ಲಾ ಹೀಗೆ ಹಲ್ಕಿರಿಯುವುದು ಪೊಡಿಮೋನುವಿನ ಒಂದು ಪಾರಂಪರಿಕ ರೋಗವಾಗಿತ್ತು. ಸಕೀನಾಳಿಗೆ ಇದೆಂದೂ ಇಷ್ಟವಾಗುತ್ತಿರಲಿಲ್ಲ. ಅವಳು ಅತ್ಯಂತ ಪ್ರೇಮದ ಮೂಡಿನಲ್ಲಿದ್ದಾಗಲೂ, “ನನಗೆ ನಿಮ್ಮ ನಗುವೆಂದರೆ ಒಂಚೂರು ಇಷ್ಟವಿಲ್ಲ, ಅದೇನು ಅಷ್ಟೊಂದು ಅಸಹ್ಯವಾಗಿ ಹಲ್ಕಿರಿಯುತ್ತೀರಿ” ಎನ್ನುತ್ತಿದ್ದಳು. ಪೊಡಿಮೋನುವಿಗೆ ಬೇಸರವಾಗುತಿತ್ತು. ಆದರೂ, ಆತ ತನ್ನ ಬೇಸರವನ್ನು ತೋರಿಸಿಕೊಳ್ಳದೆ, ಹೆಂಡತಿಯ ಮುಂಗುರುಳನ್ನು ನೇವರಿಸುತ್ತಾ, “ಅದು ತನಗೆ ತನ್ನ ಅಪ್ಪನಿಂದ ದೊರೆತ ಏಕೈಕ ಆಸ್ತಿಯೆಂದೂ, ತಾನು ಬೇಡವೆಂದರೂ ಅದು ತನ್ನನ್ನು ಬಿಡಲೊಲ್ಲದು ಎಂದೂ”ಪರಿತಪಿಸುತ್ತಿದ್ದನು. ಸಕೀನಾ, “ಸರಿ ಬಿಡಿ. ನಿಮ್ಮ ಆ ಏಕೈಕ ಆಸ್ತಿಯನ್ನು ಭದ್ರವಾಗಿ ಬ್ಯಾಂಕ್ ತಿಜೋರಿಯಲ್ಲಿಟ್ಟು ಬಿಡಿ. ಹೀಗೆ ಎಲ್ಲೆಂದರಲ್ಲಿ ಪ್ರದರ್ಶಿಸಬೇಡಿ, ಯಾರಾದರೂ ಕದ್ದೊಯ್ದಾರು”ಎಂದು ತಮಾಷೆ ಮಾಡುತ್ತಿದ್ದಳು.

ಆದರೆ, ಈ ದಿನ ತಾನು ಉಡುಗೊರೆಯ ವಿಷಯ ಹೇಳಿದಾಗಲೂ ಗಂಡ ಹಲ್ಕಿರಿಯುತ್ತಾ ನಿಂತಿರುವುದು affection-paintingಕಂಡು ಸಕೀನಾ ಸಿಡಿಮಿಡಿಗೊಂಡಳು. ಆತನ ನಗು ತನ್ನ ವ್ಯಕ್ತಿತ್ವವನ್ನು ಕನಿಷ್ಠಗೊಳಿಸುತ್ತಿದೆ ಎಂದು ಭಾವಿಸಿ ಅಪಮಾನಿತಳಾದ ಆಕೆ, ಪೋಡಿಮೋನನ್ನು ತನ್ನ ಕೋಣೆಯಿಂದ ಹೊರ ದಬ್ಬಿ ಬಾಗಿಲು ಹಾಕಿಕೊಂಡಳು. ಪೊಡಿಮೋನು ಇದೆಲ್ಲಾ ಒಂದೆರಡು ದಿನಕ್ಕೆ ಸರಿ ಹೋಗುತ್ತದೆಂದು ಕೊಂಡಿದ್ದ. ಆದ್ದರಿಂದ ಆತ ಹೆಂಡತಿಯನ್ನು ರಮಿಸಿ ಸಮಾಧಾನಿಸಲೂ ಹೋಗಿರಲಿಲ್ಲ. ಸುಮ್ಮನೆ ತಾನಾಯಿತು, ತನ್ನ ಕೆಲಸವಾಯಿತೆಂದು ರಾತ್ರಿಯಿಡೀ ಹೊರಗಡೆ ಸುತ್ತಾಡಿ ಹೆಂಡತಿಯ ನೆನಪಾದೊಡನೆ ಮನೆಗೆ ಬರುತ್ತಿದ್ದನು.

ಪೊಡಿಮೋನು ಊಟ ಮಾಡಿ ಎದ್ದು ಬರುವಷ್ಟರಲ್ಲಿ ಸಕೀನಾ ತನ್ನ ಕೋಣೆಗೆ ಒಳಗಿನಿಂದ ಚಿಲಕ ಹಾಕಿ ಮಲಗುತ್ತಿದ್ದಳು. ಪೊಡಿಮೋನು ಆ ತಡರಾತ್ರಿಯಲ್ಲಿ ಕೋಣೆಯ ಬಾಗಿಲು ಬಡಿಯುವ ಮನಸ್ಸೂ ಇಲ್ಲದವನಂತೆ ನೆಲ ಸಿಕ್ಕಲ್ಲಿ ಬಿದ್ದುಕೊಳ್ಳುತ್ತಿದ್ದ. ಪೊಡಿಮೋನು ಹತಾಶನಾಗುವಂತೆ ಸಕೀನಾ ಒಂದು ವಾರವಾದರೂ ತುಟಿ ಬಿಚ್ಚಲಿಲ್ಲ. ಅವನು ಮಾತನಾಡಲು ಪ್ರಯತ್ನಿಸಿದರೂ, ಆಕೆ ಮುಖ ತಿರುಗಿಸುತ್ತಿದ್ದಳು. “ಕೇವಲ ಒಂದು ಉಡುಗೊರೆಗಾಗಿ ಈಕೆ ಇಷ್ಟೆಲ್ಲಾ ಹಠ ಮಾಡುತ್ತಿದ್ದಾಳಲ್ಲಾ, ಎಂತಹ ದುಷ್ಟೆ ಈಕೆ”ಎನಿಸಿತು ಪೊಡಿಮೋನುವಿಗೆ. ಆತ ಪ್ರತಿನಿತ್ಯ ಬೆಳಗ್ಗೆ ಅಂಗಳದಲ್ಲಿ ನಿಂತು ಹೆಂಡತಿಗಾಗಿ ಕಾದು ಕಾದು ನಿರಾಶೆಯಿಂದ ಹೊರಡುತ್ತಿದ್ದ. ಮಾಡಲು ಏನೂ ಕೆಲಸವಿಲ್ಲದಿರುವುದರಿಂದ ಪೊಡಿಮೋನು ಮನೆಯಿಂದ ನೇರವಾಗಿ ಬಸ್ ನಿಲ್ದಾಣದತ್ತ ಸಾಗುತ್ತಿದ್ದ. ಸಂಜೆಯವರೆಗೂ ಅಲ್ಲೆಲ್ಲಾ ಗೊತ್ತುಗುರಿಯಿಲ್ಲದಂತೆ ಅದ್ದಾಡಿ ರಾತ್ರಿಯಾಗುತ್ತಿದ್ದಂತೆ ಬರಿಗೈ ದಾಸನಂತೆ ಹತಾಶೆಯ ಮುಖವೊತ್ತು ಮನೆಗೆ ಮರಳುತ್ತಿದ್ದನು.

ಪೊಡಿಮೋನು ಕೆಲಸ ಕಳೆದುಕೊಂಡು ಸೌದಿ ಅರೇಬಿಯಾದಿಂದ ಹಿಂದಿರುಗಿ ಇಂದಿಗೆ ಆರೇಳು ತಿಂಗಳು ಕಳೆದವು. ಹದಿನೈದು ವರ್ಷದ ಹಿಂದೆ ಆತ ಕೆಲಸ ಹುಡುಕಿಕೊಂಡು ತನ್ನ ಮಾವನೊಂದಿಗೆ ಸೌದಿ ಅರೇಬಿಯಾಕ್ಕೆ ಹೋಗಿದ್ದ. ಅಲ್ಲಿ ಅರಬಿಯ ಹತ್ತಾರು ಆಡುಗಳನ್ನು ಗುಡ್ಡದ ತನಕ ಅಟ್ಟಿಕೊಂಡು ಹೋಗಿ ಮೇಯಿಸಿ, ಅದು ಕಳ್ಳಕಾಕರ ಪಾಲಾಗದಂತೆ ಜೋಪಾನವಾಗಿ ನೋಡಿಕೊಂಡು, ಅದಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸಿ ಅಂತೂ ತನಗೂ, ತನ್ನ ಮನೆಯ ಖರ್ಚಿಗೂ ಸಾಕಾಗುವಷ್ಟು ಸಂಪಾದಿಸುತ್ತಿದ್ದನು. ಅಲ್ಲದೆ, ತನ್ನ ಇಬ್ಬರು ತಂಗಿಯಂದಿರ ಮದುವೆ ಖರ್ಚಿಗಾಗಿಯೂ ಇಂತಿಷ್ಟೆಂದು ಉಳಿಸುತ್ತಿದ್ದನು. ಮನೆಗೆ ಕರೆ ಮಾಡಿದಾಗಲೆಲ್ಲಾ ಆತನ ಅಮ್ಮ, “ನಿನಗೆ ಇಬ್ಬರು ತಂಗಿಯರಿದ್ದಾರೆ. ಅವರಿಗೆ ಮದುವೆ ವಯಸ್ಸಾಗುತ್ತಾ ಬಂತು, ದುಂದು ಮಾಡಬೇಡ” ಎಂದು ಪದೇ ಪದೇ ನೆನಪಿಸುತ್ತಾ ಆತ ಸಾಕಷ್ಟು ಜಾಗರೂಕನಾಗಿರುವಂತೆ ನೋಡಿಕೊಂಡಿದ್ದರು. ಅಂತೂ ಹತ್ತು ವರ್ಷ ಸೌದಿ ಅರೇಬಿಯಾದಲ್ಲಿ ದುಡಿದು ಕೂಡಿಟ್ಟ ಹಣದೊಂದಿಗೆ ಮರಳಿ ಬಂದಿದ್ದ ಪೊಡಿಮೋನು ತನ್ನ ಸಂಬಂಧಿಕರಿಗಾಗಿ ಸಾಕಷ್ಟು ಉಡುಗೊರೆಗಳನ್ನೂ ತಂದಿದ್ದನು. ಎಲ್ಲರಿಗೂ ಖುಷಿಯೋ ಖಷಿ. ಅಮ್ಮನಿಗೆ ಎರಡು ಜೊತೆ ಸೀರೆ, ಚಪ್ಪಲಿ, ಬುರ್ಖಾ, ತಂಗಿಯಂದಿರಿಗೆ ಚೂಡಿದಾರೆ ಪೀಸು, ಬುರ್ಖಾ, ವಾಚು, ತಲೆಸಿಂಗಾರ, ಚಿಕ್ಕಪ್ಪನಿಗೆ ಶರಟ್ಟು ಪೀಸು, ವಾಚು, ಸುಗಂಧದ ಬಾಟಲಿ, ಚಿಕ್ಕಮ್ಮನಿಗೆ ಎರಡು ಜೊತೆ ಚಪ್ಪಲಿ, ಸೀರೆ, ಮಾವನಿಗೆ ವಾಚು, ಅತ್ತೆಗೆ ಸೀರೆ, ಬುರ್ಖಾ ಹಾಗೂ ಕಂಡವರಿಗೆಲ್ಲಾ ಕೊಡಲು ಸಾಕಷ್ಟು ಚಾಕಲೇಟು..

ಪೊಡಿಮೋನು ಸಂಬಂಧಿಕರ ಮನೆಗೆ ಹೋಗುವಾಗ ಎಂದೂ ಬರಿಗೈಯಲ್ಲಿ ಹೋಗುತ್ತಿರಲಿಲ್ಲ. ಮಾರುಕಟ್ಟೆಯಿಂದ ಸಾಕಷ್ಟು ತಿಂಡಿತಿನಿಸುಗಳನ್ನು ಖರೀದಿಸಿ ಜೊತೆಗೆ ಕೊಂಡೊಯ್ಯುತ್ತಿದ್ದನು. ಅಷ್ಟೇ ಅಲ್ಲದೆ, ಪೊಡಿಮೋನು ಸಂಬಂಧಿಕರನ್ನೂ, oil-paintingಸ್ನೇಹಿತರನ್ನೂ ಪದೇ ಪದೇ ಮನೆಗೆ ಕರೆದು ಭರ್ಜರಿ ಬಿರ್ಂದ್ ನಡೆಸುತ್ತಿದ್ದನು. ಪೊಡಿಮೋನುವಿನ ದುಂದುವೆಚ್ಚ ಕಂಡು ಅವನ ಅಮ್ಮ, “ಇಷ್ಟೆಲ್ಲಾ ಹಣ ಯಾಕೆ ಪೋಳು ಮಾಡುತ್ತಿದ್ದೀಯಾ, ಕಷ್ಟಪಟ್ಟು ದುಡಿದದ್ದಲ್ಲವೇ? ಮುಂದಿನ ಜೀವನಕ್ಕೆ ಉಳಿಸಬೇಡವೇ”ಎಂದು ಬುದ್ಧಿ ಹೇಳುತ್ತಿದ್ದರು. ಪೊಡಿಮೋನು ನಗುತ್ತಾ, “ಉಮ್ಮಾ…ನಾವು ಯಾಕೆ ದುಡಿಯುತ್ತೇವೆ ಹೇಳು. ನೆಮ್ಮದಿಯಿಂದ ಬದುಕುವುದಕ್ಕೆ ತಾನೆ? ಇದ್ದಾಗ ಖರ್ಚು ಮಾಡಬೇಕು. ಖುಷಿ ಪಡಬೇಕು. ನಾಳೆ ನಾವು ಇರುತ್ತೇವಂತ ಏನು ಗ್ಯಾರಂಟಿ ಹೇಳು. ಹಣ ಖಾಲಿಯಾದರೆ, ಮತ್ತೆ ದುಡಿಯಬಹುದಲ್ಲವೇ?”ಎಂದೆಲ್ಲಾ ವೇದಾಂತಿಯ ಸಬೂಬು ನೀಡುತ್ತಿದ್ದನು. ಆದರೆ, ವಾಸ್ತವದಲ್ಲಿ ಅವನಿಗೆ ನಾಲ್ಕು ಜನರ ಮುಂದೆ ತನ್ನ ಅಂತಸ್ತನ್ನು ತೋರಿಸಿಕೊಳ್ಳಬೇಕೆಂಬ ಒಳ ಹಂಬಲವಿತ್ತು. ಅವನ ಮನಸ್ಸನ್ನು ಅರ್ಥ ಮಾಡಿಕೊಂಡಂತೆ ಅವನ ಅಮ್ಮ,“ಯಾವತ್ತೂ ಹೀಗೆ ಇರಲ್ಲಪ್ಪ…ಜೋಪಾನವಾಗಿರು”ಎಂದು ಎಚ್ಚರಿಸುತ್ತಿದ್ದರು.

ಆ ವರ್ಷವೇ ಪೊಡಿಮೋನು ಒಂದೆರಡು ವರ್ಷ ಅಂತರದ ತನ್ನ ಇಬ್ಬರು ತಂಗಿಯಂದಿರಿಗೂ ಮದುವೆ ಮಾಡಿ ಅವರನ್ನು ಗಂಡಂದಿರ ಮನೆಗೆ ಕಳುಹಿಸಿದ್ದ. ಇಷ್ಟೆಲ್ಲಾ ಮುಗಿಯುವಾಗ ಪೊಡಿಮೋನುವಿನ ಕೈಯಲ್ಲಿದ್ದ ನಾಕಾಸೂ ಮುಗಿದು, ಆತ ಮತ್ತೆ ಸೌದಿಗೆ ಹೊರಡ ಬೇಕಾಯಿತು. ಹೊರಡುವಾಗ ಮಾತ್ರ ಪೊಡಿಮೋನುವಿಗೆ ಯಾಕೋ ಎಂದಿಲ್ಲದ ವೇದನೆಯಾಯಿತು. ಈ ಹಿಂದೆ ಮೊದಲ ಬಾರಿ ಅವನು ಸೌದಿಗೆ ಹೊರಟು ನಿಂತಿದ್ದಾಗ ಕೊಂಚ ಭಯವಾಗಿತ್ತೇ ವಿನಾ ಈ ರೀತಿಯ ವೇದನೆಯಾಗಿರಲಿಲ್ಲ. ಆದರೆ, ಈಗ ಮಾತ್ರ ತಾಯಿ ನಾಡಿನಿಂದ ದೂರವಾಗಿ ಮತ್ತೆ ಆ ನರಕದಲ್ಲಿ ತಾನು ಇನ್ನೆಷ್ಟು ವರ್ಷ ಸಾಯಬೇಕೋ ಎಂದು ಆತನಿಗೆ ಯೋಚನೆಯಾಯಿತು. ಆದರೂ ಆತ, “ವರ್ಷ ಮೂವತ್ತಾಯಿತು ನಿನಗೂ ಒಂದು ಮದುವೆ ಗಿದುವೆ ಅನ್ನೋದು ಬೇಡವೆ?” ಎಂಬ ತಾಯಿಯ ಮಾತಿಗೆ ಪ್ರಭಾವಿತನಾದವನಂತೆ ಮತ್ತೆ ಹೊರಟು ನಿಂತಿದ್ದ. ಹೊರಡುವಾಗ ಅವನ ಮನಸ್ಸಿನಲ್ಲಿ -ಸೌದಿಯ ಆ ವಿಶಾಲ ಮರುಭೂಮಿ, ರಣ ಬಿಸಿಲು, ಬೇ ಬೇ ಎಂದು ತಾನು ಅಟ್ಟಿದತ್ತ ಓಡುತ್ತಿದ್ದ ಆ ನೂರಾರು ಆಡಿನ ಮರಿಗಳ ಮುಗ್ಧತೆ, ಅರಬಿಯ ಕ್ರೌರ್ಯ- ನಿಂತು ಗೊಂದಲಗೊಳಿಸಿದವು.

ಸೌದಿಯಲ್ಲಿ ಮತ್ತೆ ಎರಡು ವರ್ಷ ದುಡಿದು ಊರಿಗೆ ಮರಳಿದ್ದ ಪೊಡಿಮೋನು ಸಕೀನಾಳನ್ನು ಮದುವೆಯಾಗಿದ್ದನು. ಮನೆಯ ಸುತ್ತಲೂ, ಶಾಮಿಯಾನ ಕಟ್ಟಿಸಿ, ಜಗಮಗಿಸುವ ಚಿಕ್‌ಬುಕ್ ಏರಿಸಿ, ದಪ್‌ನವರನ್ನು ಕರೆಸಿ ಊರಿನ ಜನರ ನಡುವೆ ತನ್ನ ಮದುವೆ ಚಿರಾಯುವಾಗುವಂತೆ ನೋಡಿಕೊಂಡಿದ್ದನು. ಸಕೀನಾಳ ತಂದೆ ತನಗೆ ಶ್ರೀಮಂತ ಅಳಿಯನೇ ಸಿಕ್ಕಿದನೆಂದು ಖುಷಿಪಟ್ಟರು. ಹಣ ಇರುವುದು ಖರ್ಚು ಮಾಡುವುಕ್ಕೆ, ಅಲ್ಲದೆ, ಕನಿಷ್ಠ ಭರವಸೆಯೂ ಇಡಲಾಗದ ನಾಳೆಗಾಗಿ ಕೂಡಿಡುವುದಕ್ಕಲ್ಲ ಎಂಬಂತೆ ಪೊಡಿಮೋನು ತನ್ನ ಮದುವೆಗೆ ಬೇಕಾಬಿಟ್ಟಿ ಖರ್ಚು ಮಾಡಿದ್ದನು. ಬಿರಿಯಾನಿ ಬಾಯಿ ತುಂಬಾ ಚಪ್ಪರಿಸಿ ಹೊಗಳುತ್ತಿದ್ದ ಜನರನ್ನು ಕಂಡು ಪೊಡಿಮೋನು ಖುಷಿಪಡುತ್ತಿದ್ದನು. ಆ ಖುಷಿಯಲ್ಲೇ ಮದುವೆಯ ದಿನ ತಡರಾತ್ರಿಯವರೆಗೂ ಇದ್ದು ಹೊಟ್ಟೆ ತುಂಬಾ ತಿಂದುಂಡು ಹೋಗಿದ್ದ ಸ್ನೇಹಿತರಿಗಾಗಿಯೇ ಮರುದಿನ ಸ್ಪೆಷಲ್ ಪಾರ್ಟಿಯನ್ನೂ ಆಯೋಜಿಸಿದ್ದನು. ಪತ್ನಿಯ ಸಂಬಂಧಿಕರನ್ನು ಒತ್ತಾಯದಿಂದ ಮನೆಗೆ ಕರೆಸಿ ಮತ್ತೊಮ್ಮೆ ಧಾಂ ಧೂಂ ಪಾರ್ಟಿ ಮಾಡಿ ಎಲ್ಲರನ್ನೂ ಚಕಿತಗೊಳಿಸಿದ್ದನು.

ದಿನಗಳೆದಂತೆ ಸೌದಿಯಿಂದ ತಂದಿದ್ದ ಹಣವೆಲ್ಲಾ ಖಾಲಿಯಾಗಿ ಕೈ ಸುಟ್ಟುಕೊಂಡಿದ್ದ ಪೊಡಿಮೋನು ಮದುವೆಯ ಒಂದೆರಡು ತಿಂಗಳಿಗೇ ಜೇಬಿಗೆ ಕತ್ತರಿ ಬಿದ್ದವನಂತೆ ಒದ್ದಾಡತೊಡಗಿದನು. ಸೌದಿಗೆ ಮರಳಿದ ಮೇಲೆ ಹಿಂದಿರುಗಿಸುತ್ತೇನೆಂದು ಅವರಿವರಿಂದ ಸಾಲಸೋಲ ಮಾಡಿ ಒಂದೆರಡು ತಿಂಗಳನ್ನು ಅದು ಹೇಗೋ ಮುಂದೂಡಿದ್ದನು. ಆದರೆ, ಸಾಲಗಾರರ ಉಪಟಳ, ಮನೆಯ ಖರ್ಚು ದಿನದಿಂದ ದಿನಕ್ಕೆ suicide-paintingದುಪ್ಪಟ್ಟಾಗಿ ಪೊಡಿಮೋನುವಿನ ಮನಶ್ಶಾಂತಿಯೇ ಕಳೆದು ಹೋದವು. ಅಲ್ಲದೆ, ಅವನ ಅಮ್ಮ “ಈ ಕತ್ತಲ ಗುಹೆಯಂಥಾ ಮನೆಯಲ್ಲಿ ಇದ್ದೂ ಇದ್ದು ನಿನ್ನ ಹೆಂಡತಿಗೆ ಬೇಸರವಾಗಿರಬಹುದು ಎಲ್ಲಾದರೂ ಸುತ್ತಾಡಿಸಿಕೊಂಡು ಬಾ”ಎಂದೋ ಅಥವಾ “ಅವಳನ್ನು ನಿರಾಶೆ ಮಾಡಬೇಡ ಏನಾದರೂ ತೆಗೆದುಕೊಡು”ಎಂದೋ ಅಥವಾ “ಅವಳಿಗೆ ನಮ್ಮ ಕುಟುಂಬದ ಪರಿಚಯ ಆಗಲಿ, ನಿನ್ನ ಮಾವಂದಿರ ಮನೆಗೆ ಕರೆದುಕೊಂಡು ಹೋಗು. ಗಂಡ ಹೆಂಡತಿ ಹೀಗೆ ಮನೆಯೊಳಗೆ ಬೆಪ್ಪು ತಕ್ಕಡಿಗಳ ಹಾಗೆ ಕೂತಿದ್ದರೆ ಮನಸು ಬೆಸೆಯುವುದು ಹೇಗೆ?” ಹೇಳಿ ಪೀಡಿಸುತ್ತಿದ್ದರು. ಪೊಡಿಮೋನುವಿಗೆ ಇಂತಹ ಆಶೆಗಳಿರಲಿಲ್ಲವೆಂದಲ್ಲ. ಹೆಂಡತಿಯ ಜೊತೆಗೆ ಸುತ್ತಾಡುವುದನ್ನು ಅವನೂ ಬಯಸುತ್ತಿದ್ದನು. ಆದರೇನು ಮಾಡುವುದು? ಕನಸುಗಳು ದುಬಾರಿಯಾಗಿದ್ದ ಕಾಲದಲ್ಲಿ ಪೊಡಿಮೋನು ಬದುಕುತ್ತಿದ್ದನು. ಕಷ್ಟಕಾಲದಲ್ಲಿ ಬಡವರಿಗೆ ಶಕ್ತಿ ತುಂಬುವ ಕನಸುಗಳೇ ಕೆಲವೊಮ್ಮೆ ಒಲ್ಲದ ಸಮಯದಲ್ಲಿ ಹೆಗಲ ಮೇಲೆ ಕೂತು ಒಜ್ಜೆ ಎನಿಸತೊಡಗುತ್ತವೆ. ತಲೆ ಚಿಟ್ಟು ಹಿಡಿಸುತ್ತವೆ. ಹೀಗೆ ಒಜ್ಜೆಯಾದ ಕನಸುಗಳನ್ನು ನನಸು ಮಾಡುವ ದಾರಿಯೇ ಬಹಳ ಕಿರಿಕಿರಿಯದ್ದು ಎಂಬುದು ಪೊಡಿಮೋನುವಿಗೆ ತಿಳಿದಿತ್ತು. ಆದ್ದರಿಂದ ತನ್ನ ಅಮ್ಮನ ಉಪದೇಶಗಳಿಂದ, ಹೆಂಡತಿಯ ಆಶೆಗಣ್ಣಿನಿಂದ ತಪ್ಪಿಸಿಕೊಳ್ಳಲು ಮುಂಜಾನೆ ಆರು ಗಂಟೆಗೆ ಎದ್ದು ಹೊರಡುತ್ತಿದ್ದನು.

ಆದರೆ, ಅಮ್ಮನ ಉಪದೇಶ ನಿರಂತರವಾಗಿತ್ತು. ಬರಿಗೈದಾಸನಾಗಿದ್ದ ಪೊಡಿಮೋನು, ಅಮ್ಮ ತನ್ನನ್ನು ಬರ್ಬಾದ್ ಮಾಡುವ ದಾರಿ ಹುಡುಕುತ್ತಿದ್ದಾರೆ ಎಂದೇ ಕೋಪಾವಿಷ್ಠನಾಗುತ್ತಿದ್ದನು. ಹೀಗೆ ದಿನದಿಂದ ದಿನಕ್ಕೆ ಮನಸ್ಸಿನ ನೆಮ್ಮದಿ ಕೆಡಿಸಿಕೊಳ್ಳುತ್ತಿದ್ದ ಪೊಡಿಮೋನುವಿಗೆ ಬರಿಗೈಯಲ್ಲಿ ಊರಲ್ಲಿ ದಿನಗಳೆಯುವುದು ಸಾಧ್ಯವಿಲ್ಲವೆನಿಸಿತು. ಆದ್ದರಿಂದ ಮೂರು ತಿಂಗಳ ರಜೆ ಇನ್ನೂ ಬಾಕಿಯಿರುವಂತೆಯೇ ಅವನು ಮತ್ತೆ ಹೊರಟು ನಿಂತನು. ಪೊಡಿಮೋನುವಿಗೆ ಈಗ ಹಿಂದೆಂದಿಗಿಂತಲೂ ಹೆಚ್ಚು ವೇದನೆಯಾಯಿತು. ಮದುವೆಯಾಗಿ ಮೂರು ತಿಂಗಳಾಗಿತ್ತಷ್ಟೆ, ಕೆಲವು ತಿಂಗಳ ಹಿಂದೆ ಹೆಂಡತಿಯ ಜೊತೆಗಿನ ಸ್ವರ್ಗದ ಬದುಕನ್ನು ಆರಂಭಿಸಿದವನಿಗೆ ಈಗ ಇದ್ದಕ್ಕಿದ್ದಂತೆ ಅವೆಲ್ಲವನ್ನು ಬಿಟ್ಟು ನರಕಕ್ಕೆ ಹೊರಡುವುದು ಅಸಾಧ್ಯವೆನಿಸಿತು. ‘ತಾನು ಈ ನರಕಕ್ಕೆ ಹೋಗಲೇಬಾರದಿತ್ತು. ಒಮ್ಮೆ ದೀನಾರಿನ ರುಚಿ ಹತ್ತಿದವನಿಗೆ ಮತ್ತೆ ಊರಿನಲ್ಲಿ ದುಡಿದು ಬದುಕುವುದು ಸಾಧ್ಯವೇ ಇಲ್ಲ’ ಎಂದುಕೊಂಡ. ಜೊತೆಗೆ “ತಾನು ಅಷ್ಟೊಂದು ವೈಭೋಗದಿಂದ ಮದುವೆಯಾಗದೆ ಸರಳವಾಗಿ ಆಗಿದ್ದರೂ ಇನ್ನು ಮೂರು ತಿಂಗಳು ಊರಲ್ಲಿ ಕಳೆಯಬಹುದಾಗಿತ್ತು. ಹಾಳಾದ ಊರಿನವರನ್ನು ದಂಗುಬಡಿಸಲು ಹೋಗಿ ಕೈ ಸುಟ್ಟುಕೊಂಡೆ. ಒಟ್ಟಾರೆ ನನ್ನ ದುರ್ವಿಧಿ, ಅಲ್ಲದೆ ಏನು? ಎಷ್ಟು ಮಂದಿ ಈ ಊರಲ್ಲೇ ದುಡಿದು ತಂಗಿಯಂದಿರಿಗೆ ಮದುವೆ ಮಾಡಿ, ತಾವೂ ಮದುವೆಯಾಗಿ ಸುಖವಾಗಿ ಬದುಕುತ್ತಿದ್ದಾರೆ” ಎನಿಸಿ ಅವನ ಕಣ್ಣಲ್ಲಿ ನೀರು ನಿಂತವು. ಅವನಿಗೀಗ ಊರಿನಲ್ಲೇ ಇದ್ದು ಕೂಲಿನಾಲಿ ಮಾಡಿ ಬದುಕುತ್ತಿರುವ ದಟ್ಟ ದರಿದ್ರರೂ ಕೂಡ ತನಗಿಂತ ನೆಮ್ಮದಿಯ ಜೀವನ ಸಾಗಿಸುತ್ತಿರುವಂತೆ ಕಂಡು ಕರುಳು ಹಿಚುಕಿದಂತಾಯಿತು. “ಎಷ್ಟು ಸಂಬಳವಿದ್ದರೆ ಏನು, ಏಳು ಕಡಲು ದಾಟಿ, ವರ್ಷಾನು ಗಟ್ಟಲೆ ಬಂಧು ಬಳಗದ ಮುಖ ನೋಡಲೂ ಆಗದೆ ಅನ್ಯರಂತೆ ಆ ನಾಡಿನಲ್ಲಿ ಬದುಕುವುದಕ್ಕಿಂತ, ಇಲ್ಲಿ ಕೂಲಿನಾಲಿ ಮಾಡಿ ಗಂಜಿ ಕುಡಿದು ಬದುಕುವುದೇ ಮೇಲು. ಒಂದು ಕಷ್ಟಸುಖಕ್ಕೆಂದು ಅಲ್ಲಿ ಬಂಧುಗಳು ಇದ್ದಾರ? ಸತ್ತರೆ ತೆಗೆದು ದಫನ್ ಮಾಡುವವರು ಯಾರಾದರು ಇದ್ದಾರ? ಎಂಥಾ ಸೌದಿ ಎಂಥಾ ಸೌದಿ?” ಎಂಬ ಮೇಲ್ಮನೆಯ ಮೂಸಾಕನವರ ಮಾತು ವಿಮಾನ ಹತ್ತುವವರೆಗೂ ಪೊಡಿಮೋನುವಿನ ಕಿವಿಯಲ್ಲಿ ಗುಂಯ್‌ಗುಟ್ಟುತ್ತಿದ್ದವು.

ಆದರೆ, ಸೌದಿಗೆ ಮುಟ್ಟಿದ ಪೊಡಿಮೋನುವಿಗೆ ಅಲ್ಲ್ಲೊಂದು ಆಘಾತ ಕಾದಿತ್ತು. ಸೌದಿ ಅರೇಬಿಯಾದಲ್ಲಿ ಅದಾಗಲೇ ನಿತಾಖತ್ ಎಂಬ ಹೊಸ ಕಾನೂನೊಂದು ಜಾರಿಗೆ ಬಂದು, ಪರದೇಶದ ಲಕ್ಷೆಪಲಕ್ಷ ಜನರು ಕೆಲಸ ಕಳೆದುಕೊಂಡು ಅನಿವಾರ್ಯವಾಗಿ ಊರಿಗೆ ಮರಳಿದ್ದರು. ಊರಿಗೆ ಮರಳಲಾಗದೆ ಕದ್ದು ಮುಚ್ಚಿ ಅಲ್ಲಿ ಇಲ್ಲಿ ಓಡಾಡಿಕೊಂಡಿದ್ದ ಕೆಲವರು ಪೊಲೀಸರ ಕೈಗೆ ಸಿಕ್ಕು ಜೈಲುಪಾಲಾಗಿದ್ದರು.

ಪೊಡಿಮೋನು ತನ್ನ ಧಣಿಯ ಸಹಕಾರದಿಂದ ಅದು ಹೇಗೋ ಒಂದು ವರ್ಷ ಕದ್ದು ಮುಚ್ಚಿ ಕೆಲಸ ಮಾಡಿದ್ದ. ಆದರೆ, ಒಂದು ದಿನ ಅವನು ಯಾರದೋ ಚಿತಾವಣೆಯಿಂದ ಪೊಲೀಸರ ಕಣ್ಣಿಗೆ ಬಿದ್ದು, ಜೈಲು ಪಾಲಾದ. ಅರಬಿ ಆತನನ್ನು ಜೈಲಿನಿಂದ ಬಿಡಿಸಿ, “ಇನ್ನು ಮುಂದೆ ನಿನ್ನನ್ನು ಕಾಯುವುದು ನನ್ನಿಂದ ಸಾಧ್ಯವಿಲ್ಲ. ಪೊಲೀಸರು ಹಿಂದೆಂದಿಗಿಂತಲೂ ಚುರುಕಾಗಿದ್ದಾರೆ. ಅಕ್ಕಪಕ್ಕದ ಟ್ಯೂನಿಶೀಯಾ, ಈಜಿಪ್ಟ್, ಸಿರಿಯಾದಲ್ಲಿ ದಂಗೆಗಳಾಗಿವೆ. ಸೌದಿ ಅರೇಬಿಯಾದ ಯುವಕರೂ ಬುಸುಗುಟ್ಟಲು ಆರಂಭಿಸಿದ್ದಾರೆ. ಅವರಿಗೆಲ್ಲಾ ಉದ್ಯೋಗ ಕೊಟ್ಟು ಬಾಯಿ ಮುಚ್ಚಿಸುವ ಕೆಲಸವನ್ನು ಸುಲ್ತಾನರು ಮಾಡುತ್ತಿದ್ದಾರೆ. ಇನ್ನು ನೀನಿಲ್ಲಿ ಇರುವುದು ಕ್ಷೇಮವಲ್ಲ”ಎಂದು ಎಚ್ಚರಿಸಿ ಊರಿಗೆ ಹೋಗಲೇ ಬೇಕೆಂದು ಒತ್ತಾಯಿಸಿ ಕಳುಹಿಸಿದನು. ಆದರೆ, ಪೊಡಿಮೋನು ಅದುವರೆಗೂ ದುಡಿದ ಸಂಬಳ ನೀಡಿರಲಿಲ್ಲ. ಕೇಳಿದ್ದಕ್ಕೆ, “ನಿನ್ನ ಸಂಬಳವನ್ನೆಲ್ಲಾ ಜೈಲಿನ ಅಧಿಕಾರಿಗಳಿಗೆ ಕೊಡಬೇಕಾಯಿತು. ಇಲ್ಲಿಯ ಜೈಲಿನ ಬಗ್ಗೆ ನಿನಗೆ ಗೊತ್ತೇ ಇದೆಯಲ್ಲಾ? ಇದು ನಿಮ್ಮ ಊರಿನಂಥ ಜೈಲಲ್ಲ. ಇಲ್ಲಿ ನಿನ್ನ ಜೀವ ಉಳಿದದ್ದೇ ಹೆಚ್ಚು ಅನ್ನಬೇಕು. ಆದಷ್ಟು ಬೇಗ ಹೊರಡು ಇಲ್ಲಿಂದ. ಎಲ್ಲಾ ಸರಿಯಾದರೆ ನಾನೇ ಕರೆಸುತ್ತೇನೆ”ಎಂದನು.

ಪೊಡಿಮೋನು ಇಂಗುತಿಂದ ಮಂಗನಂತೆ ಅವನತ್ತ ನೋಡಿ ಹಲ್ಕಿರಿದು ಸುಮಾರು ಹೊತ್ತು ಕಾದನು. ಅರಬಿಯ ಮನಸ್ಸು ಕರಗಲೇ ಇಲ್ಲವಾದ್ದರಿಂದ ವಿಧಿಯಿಲ್ಲದೆ ಅವನು ಹಿಂದಿರುಗಿದನು. ಹಲ್ಕಿರುವುದಲ್ಲದೆ ಆತ ಬೇರೆ ಏನು ತಾನೆ ಮಾಡಬಲ್ಲ? ಆ ಶ್ರೀಮಂತ ಅರಬಿಯೊಂದಿಗೆ ಹುಲುಮಾನವನಾದ ಅವನು ಕಾದಾಡುವುದು ಸಾಧ್ಯವೇ? ಆದರೂ, ಅರಬಿಯ ಕಪಾಲಕ್ಕೊಂದೇಟು ಕೊಡದೇ ಬಂದದ್ದು ತಪ್ಪಾಯಿತೆಂದು ಪೊಡಿಮೋನು ವಿಮಾನದಲ್ಲಿ ಕೂತು ಒಂದು ರೀತಿಯ ಷಂಡ ಸಿಟ್ಟಿನಿಂದ ತನ್ನನ್ನು ತಾನೇ ಹಳಿದನು.

ಇದ್ದಕ್ಕಿದ್ದಂತೆ ಊರಿಗೆ ಬಂದಿದ್ದ ಪೊಡಿಮೋನನ್ನು ಕಂಡು ಸಕೀನಾ ಆನಂದ ತುಂದಿಲಳಾದಳು. ವರ್ಷದ ನಂತರ ಪ್ರೀತಿಯ ಗಂಡನನ್ನು ಎದುರುಗೊಳ್ಳುವುದೆಂದರೆ ಯಾವ ಹೆಂಡತಿಗೆ ತಾನೆ ಖುಷಿಯಾಗದು ಹೇಳಿ? ಬಾಡಿ ಹೋಗಿದ್ದ ಅವಳ ಒಡಲ ಬಳ್ಳಿಗಳು ಮತ್ತೆ ಜೀವ ತಾಳಿದವು. ಒಣಗಿದ ಗಂಟಲಲಿ ಮತ್ತೆ ಪಸೆ ತುಂಬಿ, ಮಾತುಗಳು ಕಲ್ಪನೆಯ ಅನಂತ ಆಕಾಶೆದೆಡೆಗೆ ರೆಕ್ಕೆ ಹಚ್ಚಿದವು. ಗಂಡ ಸೌದಿಗೆ ಹಿಂದಿರುಗಿದ ಮರುದಿನದಿಂದ ಮಾಸಿದ ಬಣ್ಣದ ಬಟ್ಟೆಗಳಲ್ಲಿ ಅತ್ತೆಯ ಒರಟು ಮಾತುಗಳ ನಡುವೆ ನೀರಸವಾಗಿ ಕಳೆಯುತ್ತಿದ್ದವಳು, ಈಗ ಮತ್ತೆ ಹೊಸ ಬಟ್ಟೆಗಳಲ್ಲಿ, ಹೊಸ ಕನಸುಗಳ ಜೀವಧರಿಸಿ ಕಂಗೊಳಿಸತೊಡಗಿದಳು.

ಆದರೆ, ಪಕ್ಕನೆ ಹೊಸತು ಹಳತಾಗಿ ಬಿಡುತ್ತವೆ. ಕನಸುಗಳು ಸಣ್ಣಪುಟ್ಟ ಗೀರುಗಾಯಗಳ ಒರಟು ಮೈಯಾಗುತ್ತವೆ. ಎಷ್ಟು ಸಣ್ಣ ಅವಧಿಯಲ್ಲಿ ಈ ಕನಸುಗಳು ಹುಟ್ಟುತ್ತವೆ, ಸಾಯುತ್ತವೆ. ಹೊಸತು ಹಳತಾಗುತ್ತವೆ. ಆದರೆ, ಹಳತು ಮಾತ್ರ ಸದಾ ಹಳತೇ ಆಗಿರುತ್ತವೆ, ಎಷ್ಟು ವರ್ಷ ಸಂದರೂ!

ಪೊಡಿಮೋನು ಬರಿಗೈಯಲ್ಲಿ ಹಿಂದಿರುಗಿದ್ದಾನೆಂದು ತಿಳಿದಾಗ ಸಕೀನಾಳಿಗೆ ತೀವ್ರ ನಿರಾಶೆಯಾಯಿತು. ಆದರೂ, ತನ್ನ ಗಂಡ ಸಂಕಟದಲ್ಲಿದ್ದಾನೆಂದೂ, ಈ ಸಂದರ್ಭದಲ್ಲಿ ಅಲ್ಲದ ಮಾತು ಆಡಿ ಮನಸ್ಸು ನೋವಿಸುವುದು ಸರಿಯಲ್ಲವೆಂದು ಸಕೀನಾ ಆತನನ್ನು ಸಮಾಧಾನಿಸಿದಳು. “ಇನ್ನು ಆ ನರಕಕ್ಕೆ ಹೋಗುವ ಯೋಚನೆ ಬಿಡಿ. ಇಲ್ಲೇ ಏನಾದರೂ ಕೆಲಸ ಮಾಡಿದರಾಯಿತು” ಇತ್ಯಾದಿ ಇತ್ಯಾದಿಯಾಗಿ ಪೊಡಿಮೋನುವಿನ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡುತ್ತಿದ್ದಳು. ಆದರೆ, ಪೊಡಿಮೋನು ಮಾತ್ರ ಹೆಚ್ಚಾಗಿ ಯಾವುದರಲ್ಲೂ ಆಸಕ್ತಿ ಇಲ್ಲದವನಂತೆ ಇದ್ದು ಬಿಡುತ್ತಿದ್ದನು. ತನ್ನದೆಲ್ಲವೂ ಮುಗಿಯಿತು ಎಂಬಂತೆ. ಕೆಲವೊಮ್ಮೆ ಆತ “ಇಲ್ಲಿ ತನಗೆ ಒಳ್ಳೆಯ ಸಂಬಳದ ಕೆಲಸ ಸಿಗುತ್ತಿದ್ದರೆ, ತಾನೇಕೆ ಸೌದಿಗೆ ಓಡುತ್ತಿದ್ದೆ, ಹೇಳು. ಇನ್ನು ಮುಂದೆ ನಮ್ಮದು ಅರೆ ಹೊಟ್ಟೆಯ ಬದುಕು”ಎಂದು abstract-painting-sexನಿಟ್ಟುಸಿರು ಬಿಡುತ್ತಿದ್ದನು. ಸೌದಿಯಿಂದ ಹಿಂದಿರುಗುವಾಗ ತಾನು ಯಾವುದೇ ಉಡುಗೊರೆ ತರಲಿಲ್ಲವೆಂದು ಸಂಬಂಧಿಕರ್‍ಯಾರು ತನ್ನನ್ನು ನೋಡಲು ಬರುತ್ತಿಲ್ಲವೆಂದು ಹೆಂಡತಿಯೊಂದಿಗೆ ಹಳಹಳಿಸುತ್ತಿದ್ದನು. ಆತನ ಹತಾಶೆಯ ದನಿ, ಹಳಹಳಿಕೆ ಸಕೀನಾಳಿಗೆ ಸಿಟ್ಟು ತರಿಸುತ್ತಿದ್ದವು. “ಈ ಗಂಡಸರಿಗೆ ಈ ಲೋಕದಲ್ಲಿ ಎಷ್ಟೊಂದು ಸಾಧ್ಯತೆಗಳಿವೆ. ಅವರ ವಿಶ್ವ ಎಷ್ಟು ವಿಶಾಲವಾದುದು, ಅನಂತವಾದುದು. ಆದರೂ, ಯಾಕಿಷ್ಟೊಂದು ಹತಾಶೆ, ಹಳಹಳಿಕೆ ಅವರ ಲೋಕದಲ್ಲಿ ತುಂಬಿಕೊಂಡಿವೆ? ಸೋಲುಗಳನ್ನು ಗಂಡಸಿನಷ್ಟು ಭಯಪಡುವವನೂ ಯಾರು ಇಲ್ಲ. ಅವನೊಬ್ಬ ಮಹಾ ಹೇಡಿ. ಹೆಣ್ಣಿಗೆ ಈ ಸಾಧ್ಯತೆಗಳಿದ್ದಿದ್ದರೆ…”ಎಂದು ಆಕೆ ತನ್ನಷ್ಟಕ್ಕೆ ಯೋಚಿಸುತ್ತಿದ್ದಳು. ಅವಳ ಸೀಮಿತ ಅನುಭವಕ್ಕೆ ಗಂಡಸಿನ ಈ ವಿಶಾಲ ಲೋಕ ಧರ್ಮ, ರಾಜಕೀಯ, ಬಡವ, ಶ್ರೀಮಂತ ಇತ್ಯಾದಿ ಯಾವುದ್ಯಾವುದೋ ಸಿಕ್ಕುಗಳಲ್ಲಿ ಸಿಕ್ಕಿಕೊಂಡು ರಿಪೇರಿಯಾಗದಷ್ಟು ಹಾಳಾಗಿವೆ ಎಂಬುದು ಮಾತ್ರ ಹೊಳೆಯುತ್ತಿರಲಿಲ್ಲ. ಅವಳಿಗೆ ಹೊಳೆಯುತ್ತಿದ್ದುದು ಒಂದೇ, “ಪದೇ ಪದೇ ದಿವ್ಯಾನುಭೂತಿ ಸೂಸುವ ತನ್ನ ಕಣ್ಣುಗಳಲ್ಲಿ ಪ್ರೇಮದ ಕಣ್ಣು ನೆಟ್ಟು, ಆಳಕ್ಕಿಳಿದು ಹುಡುಕಿದರೆ ಗಂಡಸಿನ ಯಾವ ಸಮಸ್ಯೆಗೂ ಪರಿಹಾರ ದೊರೆಯುತ್ತವೆ. ಆದರೆ, ಈ ಪೆದ್ದ ಗಂಡಸರಿಗೆ ಬದುಕಿನ ಕೆಸರುಗದ್ದೆಯಲ್ಲಿ ಓಡುವುದೇ ತಿಳಿದಿಲ್ಲ. ಕಂಬಳದೆತ್ತುಗಳ ಬುದ್ಧಿಯೂ ಇವರಿಗಿಲ್ಲ.”

ಸಾಲಗಾರರ ಉಪಟಳ ಸಹಿಸಲಾರದೆ ಪೊಡಿಮೋನು ಹೆಂಡತಿಯ ಮೈಮೇಲಿದ್ದ ಚಿನ್ನ ಮಾರಿದನು. ಅದರಿಂದ ಸಾಲಗಾರರ ಉಪಟಳವೂ ನಿಂತಿತೆನ್ನುವಾಗ ಸಕೀನಾ ಬರಿಮೈಯಲ್ಲಿ ಜನರಿಗೆ ಮುಖ ತೋರಿಸುವುದು ಇಷ್ಟವಿಲ್ಲದೆ ಮದುವೆಮುಂಜಿಗೆ ಹೋಗುವುದನ್ನೇ ನಿಲ್ಲಿಸಿದಳು. “ವೃಥಾ ಅವರಿವರ ನಡುವೆ ಕೀಳರಿಮೆ ಯಾಕೆ? ಅಲ್ಲದೆ, ಈ ಹೆಂಗಸರ ಕಣ್ಣುಗಳೇ ಸರಿಯಿಲ್ಲ, ಅವು ಸದಾ ಚಿನ್ನತುಂಬಿದ ಕತ್ತುಗಳನ್ನೇ ಹುಡುಕುತ್ತಿರುತ್ತವೆ. ಬರಿದಾದ ಕತ್ತುಗಳನ್ನು ಕಂಡರೆ ಅವುಗಳಿಗೆ ಖುಷಿ”ಎಂದು ಅವಳು ಸಬೂಬು ನೀಡುತ್ತಿದ್ದಳು. ತಾನು ಬರಿದಾದೆನೆಂಬ ನೋವು ಅವಳ ಮಾತುಗಳಲ್ಲಿ ಇಣುಕುತ್ತಿದ್ದಂತೆ ಪೊಡಿಮೋನುವಿಗೆ ತೋರಿ, ಅವನನ್ನು ಗಾಢ ಖಿನ್ನತೆ ಆವರಿಸಿದವು. “ಇವಳ ಮಾತುಗಳಲ್ಲಿರುವ ‘ತಾನು ಬರಿದಾದೆನೆಂಬ ನೋವು’ಯಾವುದಕ್ಕೆ ಸಂಬಂಧಿಸಿದ್ದು?” ಅವನು ಯೋಚಿಸುತ್ತಿದ್ದನು, “ಬರಿಯ ಚಿನ್ನಕ್ಕಾಗಿ ಆಗಿರಲಿಕ್ಕಿಲ್ಲ? ಹಾಗಾದರೆ ಇನ್ನೇನನ್ನು ಇವಳು ಕಳೆದುಕೊಂಡಿರಬಹುದು? ಕನಸನ್ನೇ? ಯಾವ ಕನಸನ್ನು? ತಾಯಿಯಾಗುವ ಕನಸನ್ನೇ? ಒಳ್ಳೆಯ ಬದುಕು ಸಾಗಿಸುವ ಕನಸನ್ನೇ? ಅವರಿವರ ನಡುವೆ ಮೆರೆಯುವ ಕನಸನ್ನೇ? ಅಥವಾ ಇವೆಲ್ಲವನ್ನು ಒಳಗೊಂಡಿರುವ ಮತ್ತೊಂದು ಕನಸನ್ನೇ?”

ದಿನಗಳು ಕಳೆದಂತೆ ಮನೆಯಲ್ಲಿ ಅಕ್ಕಿ ಮುಗಿಯುತ್ತಾ ಬಂದು ಗಂಜಿಗೂ ತತ್ವಾರವಾಯಿತು. ಯಾವುದೋ ದೊಡ್ಡ ಕೆಲಸಕ್ಕಾಗಿ ಕಾದು ಕುಳಿತಿದ್ದ ಪೊಡಿಮೋನು ಈಗ ಕೂಲಿ ಕೆಲಸಕ್ಕೆ ಹೋಗುವುದು ಅನಿವಾರ್ಯವಾಯಿತು. ಮೊದ ಮೊದಲು ಪೊಡಿಮೋನುವಿಗೆ ಕೂಲಿ ಕೆಲಸಕ್ಕೆ ಹೋಗುವುದು ಮುಜುಗುರದ ಸಂಗತಿಯಾಗಿತ್ತು. ಸೌದಿಯಲ್ಲಿ ಎಂಥಾ ದರಿದ್ರ ಕೆಲಸ ಮಾಡುತ್ತಿದ್ದರೂ, ಊರಿಗೆ ಮರಳುವಾಗ ಸುಗಂಧ ಪೂಸಿಕೊಂಡು, ದೊಡ್ಡ ಆಫೀಸರನಂತೆ ಬಂದಿಳಿದು ಊರಿನವರಲ್ಲಿ ವಿಚಿತ್ರ ಭ್ರಮೆಯುಟ್ಟಿಸುತ್ತಿದ್ದರಿಂದ ಸೌದಿಯಿಂದ ಆಗಮಿಸುತ್ತಿದ್ದ ಯಾರೂ ಊರಲ್ಲಿ ಕೂಲಿ ಕೆಲಸ ಮಾಡುವುದನ್ನು ಇಷ್ಟಪಡುತ್ತಿರಲಿಲ್ಲ. ಅದು ತಮ್ಮ ಘನತೆಗೆ ಕಡಿಮೆಯೆಂದೇ ಭಾವಿಸುತ್ತಿದ್ದರು. ಕೆಲವು ದಿನಗಳ ಮಟ್ಟಿಗೆ ಪೊಡಿಮೋನುವಿಗೂ ಅಂತಹದ್ದೇ ರೋಗ ಬಡಿದಿತ್ತು. ಆತ “ಸೌದಿಯಲ್ಲಿ ತಾನು ಅರಬಿಯ ದಿನಸಿ ಅಂಗಡಿಯ ಮ್ಯಾನೇಜರ್ ಆಗಿದ್ದೆನೆಂದೂ, ಅಲ್ಲಿಯ ಜನರಿಗೆ ತಾನೆಂದರೆ ತುಂಬಾ ಗೌರವವೆಂದೂ, ಆದರೆ, ಇಲ್ಲಿಯ ಜನರು ಕೊಳಕರೆಂದೂ, ಮನುಷ್ಯರ ಬಗ್ಗೆ, ಅವರ ದುಡಿಮೆಯ ಬಗ್ಗೆ ಇಲ್ಲಿ ಯಾರಿಗೂ ಗೌರವವಿಲ್ಲವೆಂದೂ, ಇಲ್ಲಿ ಒಂದು ದಿನಸಿ ಅಂಗಡಿಯ ಮ್ಯಾನೇಜರಾಗಬೇಕಾದರೆ, ಎಷ್ಟು ಕಲಿತ್ತಿದ್ದಾನೆಂಬುದೇ ಮುಖ್ಯವೆಂದೂ, ಆದರೆ, ಸೌದಿಯಲ್ಲಿ ಆತ ಎಷ್ಟು ಚುರುಕಾಗಿದ್ದಾನೆ ಮತ್ತು ಹೇಗೆ ದುಡಿಯುತ್ತಾನೆ ಎಂಬುದೇ ಮುಖ್ಯವೆಂದೂ, ಸೌದಿಯಲ್ಲಿ ಮ್ಯಾನೇಜರಾಗಿದ್ದ ತಾನು ಇಲ್ಲಿ ಕೂಲಿ ಕೆಲಸಕ್ಕೆ ಹೋಗುವುದು ಸಾಧ್ಯವೇ ಇಲ್ಲವೆಂದು” ಊರ ಕಟ್ಟೆಯಲ್ಲಿ ಕೂತು ಬಡಾಯಿ ಕೊಚ್ಚುತ್ತಿದ್ದನು.

“ಮತ್ತೆ ಸೌದಿ ಎಂದರೆ ಸುಮ್ಮನೆಯೇ? ಅದಕ್ಕೇ ಅಲ್ಲವೇ ಕೇರಳ, ಕರ್ನಾಟಕ, ಬಿಹಾರದಿಂದ ಯುವಕರೆಲ್ಲಾ ಸೌದಿಗೆ ಓಡುವುದು”ಎಂದು ಒಬ್ಬ ಮುದುಕ ಪೊಡಿಮೋನುವಿಗೆ ಸಾಥ್ ನೀಡುತ್ತಿದ್ದನು.

“ಇಲ್ಲಿ ಕಲಿತವರಿಗೆ ಮಾತ್ರ ಒಳ್ಳೆಯ ಸಂಬಳ, ಒಳ್ಳೆಯ ಬದುಕು, ಆದರೆ, ಸೌದಿಯಲ್ಲಿ ಹಾಗೋ? ಅಲ್ಲಿ ಕಲಿಯದವರೂ ಹೋಗಿ ಸಂಪಾದಿಸುವುದಿಲ್ಲವೇ? ಮುತ್ತುನೆಬಿ ಓಡಾಡಿದ ಸ್ಥಳವಲ್ಲವೇ ಅದು. ಬರ್ಕತ್ತಿನ ನಾಡು. ಪುಣ್ಯ ಮಾಡಿರಬೇಕು ಅಲ್ಲಿಗೆ ಹೋಗಲು” ಎಂದು ಇನ್ನೋರ್ವ ಮುದುಕ ಹೇಳುತ್ತಿದ್ದಂತೆ ಅಲ್ಲಿ ಮಾತಿನ ರಂಗೇರುತ್ತಿದ್ದವು.

ಆದರೆ, ಪೊಡಿಮೋನುವಿಗೆ ತನ್ನ ಇತರ ಅನುಭವಗಳನ್ನು ಹಂಚಿಕೊಳ್ಳುವ ತವಕ. ಎಲ್ಲರೂ ಗರಬಡಿಯುವಂತೆ ಆತ ಹೇಳುತ್ತಿದ್ದನು, “ಎಷ್ಟು ಹಣ ಸಂಪಾದಿಸಿದರೆ ಏನು? ನಮ್ಮಂತಹ ಬಡಪಾಯಿಗಳು ಗತ್ತಿನ ಅರಬಿಗಳ ನಡುವೆ ಬದುಕುವುದು ಸಾಧ್ಯವೇ? ತರಕಾರಿ ತರಲೆಂದು ಮಾರುಕಟ್ಟೆಗೆ ಹೋದರೆ ತಮ್ಮ ಮನೆಯ ಮಾಳಿಗೆಯ ಮೇಲೆ ನಿಂತು ಅರಬಿಯ ಮಕ್ಕಳು ಹಾಳಾದ ಟೊಮಟೋ ಎಸೆದು ಕೇಕೆ ಹಾಕಿ ನಗುತ್ತಾರೆ. ಒಮ್ಮೆ ಒಬ್ಬ ಪಾಕಿಸ್ತಾನಿ ಸಿಟ್ಟಿನಿಂದ ಆ ಮಕ್ಕಳಿಗೆ ಎರಡೇಟು ಬಾರಿಸಿದ್ದಕ್ಕೆ ‘ಅರಬಿಯ ಮಕ್ಕಳಿಗೆ ಹೊಡೆಯುತ್ತಿಯೇನೋ ಹಿಂದ್’ ಎಂದು ಜರೆದು ಆತನನ್ನು ಜೈಲಿಗಟ್ಟಿದರು. ಅರಬಿಗಳಿಗೆ ಪಾಕಿಸ್ತಾನಿಯರೂ, ಭಾರತೀಯರು ಎಲ್ಲರೂ ಹಿಂದೂಗಳೇ”

“ಇರಬಹುದು, ಇರಬಹುದು ಕೆಟ್ಟವರು ಎಲ್ಲಾ ಕಡೆಯೂ ಇರುತ್ತಾರಲ್ಲವೇ?” ಮುತ್ತುನೆಬಿಯ ನಾಡನ್ನು ದೂರಲು ಇಷ್ಟವಿಲ್ಲದೆ ಒಬ್ಬ ಹೇಳಿದ.

“ಈಗಿನ ಅರಬಿಗಳು ಹೆಣ್ಣು ಹೆಂಡ ಎಂದು ಬಾಯಿ ಬಿಡುವವರಂತೆ. ಅಲ್ಲಿಯ ಯುವಕರು ದುಡಿಯುವುದೇ ಇಲ್ಲವಂತೆ. ಅದಕ್ಕೆ ನಿತಾಖತ್ ಅಂತ ಕಾನೂನು ತಂದು ಹೊರಗಿನವರನ್ನೆಲ್ಲಾ ಓಡಿಸಿ, ಅಲ್ಲಿಯ ಯುವಕರಿಗೆ ಕೆಲಸ ಕೊಡುವ ಹುನ್ನಾರ ಮಾಡಿದ್ದಾರೆ ಸೌದಿಯ ದೊರೆಗಳು. ಆದರೆ, ಇದೆಲ್ಲಾ ನಡೆಯುವಂತಹದ್ದೇ? ಮನುಷ್ಯನ ಆದಿಮ ಆಲಸ್ಯಕ್ಕೆ ದುರ್ಗತಿ ಕಾಣಿಸುವುದು ಕಾಗದದ ತುಂಡಿನ ಮೇಲಿನ ಯಾಂತ್ರಿಕ ವಾಕ್ಯಗಳಿಗೆ ಸಾಧ್ಯವೆ?”

“ಒಟ್ಟಾರೆ ಸರಳ ಜೀವನದ ಇಸ್ಲಾಮಿಗೂ ಭೋಗಿಗಳಾದ ಅವರಿಗೂ ಸಂಬಂಧವೇ ಇಲ್ಲ ಅನ್ನಬೇಕು. ಇಲ್ಲದಿದ್ದರೆ, ಅಷ್ಟೆಲ್ಲಾ ಸಂಪತ್ತಿದ್ದೂ ಅಮೆರಿಕದ ಎದುರು ನಾಯಿಯಂತೆ ಬದುಕಬೇಕಿತ್ತೇ ಅವರಿಗೆ.”

ಹೀಗೆ ಮಾತು ಒಂದರಿಂದ ಇನ್ನೊಂದಕ್ಕೆ ಜಿಗಿಯುತ್ತಿದ್ದಂತೆ ಅನ್ಯಮನಸ್ಕನಾಗುತ್ತಿದ್ದ ಪೊಡಿಮೋನುವಿಗೆ ಇದ್ದಕ್ಕಿದ್ದಂತೆ ತಾನೊಬ್ಬ ನಿರುದ್ಯೋಗಿ ಎಂಬ ವಾಸ್ತವ ಹೊಳೆದು ಖಿನ್ನನಾಗಿ ಅಲ್ಲಿಂದ ಕಾಲ್ಕೀಳುತ್ತಿದ್ದನು.

ಪೊಡಿಮೋನು ಮನೆಗೆ ಬರುತ್ತಿದ್ದಂತೆ ಅವನ ಅಮ್ಮ ಬೀಡಿ ಸೂಪನ್ನು ಮಡಿಲಲ್ಲಿಟ್ಟುಕೊಂಡೇ “ತನ್ನ ಮಗನೊಬ್ಬ ಪೋಲಿ ಅಲೆಯುತ್ತಿದ್ದಾನೆಂದೂ, ತಾನು ಸಾಯಲು ಬಿದ್ದಿರುವ ಮುದುಕಿ ಬೀಡಿ ಕಟ್ಟಿ ಮನೆಯ ಖರ್ಚುವೆಚ್ಚ ನೋಡಿಕೊಳ್ಳಬೇಕೆಂದೂ, ಅಕ್ಕಪಕ್ಕದ ಮನೆಯ ಹುಡುಗರೆಲ್ಲಾ ಚೆನ್ನಾಗಿ ದುಡಿದು ತಮ್ಮ ತಮ್ಮ ಮನೆಗಳನ್ನು ಬೆಲೆಬಾಳುವ ಅತ್ಯಮೂಲ್ಯ ವಸ್ತುಗಳಿಂದ ತುಂಬಿಸಿದ್ದಾರೆಂದೂ, drought-kelly-stewart-sieckಆದರೆ, ನಾವಿನ್ನೂ ಒಂದು ಹಿಡಿ ಅಕ್ಕಿಗಾಗಿ ಪರದಾಡುತ್ತಿದ್ದೇವೆಂದೂ, ಇದಕ್ಕೆಲ್ಲಾ ಪೊಡಿಮೋನುವಿನ ದುರ್ಬುದ್ಧಿಯೇ ಕಾರಣವೆಂದೂ, ತನ್ನ ಸೊಸೆ ಗಂಡನನ್ನು ಪೋಲಿ ಅಳೆಯ ಬಿಟ್ಟಿದ್ದಾಳೆಂದೂ” ಹಳಿಯುತ್ತಿದ್ದರು. ಇದರಿಂದ ಸಕೀನಾಳಿಗೆ ಸಿಟ್ಟು ಬರುತಿತ್ತು. ಆಕೆ, ಗಂಡನ ಮೇಲೆ ಹರಿಹಾಯುತ್ತಿದ್ದಳು. “ನನ್ನ ಮಾವ ನನ್ನನ್ನು ಮದುವೆ ಮಾಡಿಕೊಡುವಂತೆ ಕೇಳಿದರೂ, ಅಪ್ಪ ಸೌದಿಯಲ್ಲಿ ದುಡಿಯುತ್ತಿದ್ದಾನೆಂದು ನಿಮಗೆ ನನ್ನನ್ನು ಮದುವೆ ಮಾಡಿಕೊಟ್ಟರೆಂದೂ, ನನ್ನ ದುರ್ವಿಧಿ ನಾನು ಈ ನರಕದಲ್ಲಿ ಬದುಕಬೇಕಾಯಿತೆಂದೂ, ಮಾವನೊಂದಿಗಿದ್ದಿದ್ದರೆ ಸುಖವಾಗಿ ರಾಣಿಯಂತೆ ಬದುಕುತ್ತಿದ್ದೆನೆಂದೂ” ಪೊಡಿಮೋನುವಿನ ಮನಶ್ಶಾಂತಿಯನ್ನೇ ಕೆಡಿಸುತ್ತಿದ್ದಳು. ಮನೆಯೊಳಗಿನ ಕಿರಿಕಿರಿ ತಾಳಲಾರದೆ ಪೊಡಿಮೋನು ಕೆಲಸಕ್ಕಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದನು.

ಆದರೆ, ದೊಡ್ಡ ಸಂಬಳದ ಕೆಲಸಕ್ಕೆ ಈ ಊರಲ್ಲಿ ಕಾಯುವುದು ವ್ಯರ್ಥವೆಂದು ಬಹಳ ಬೇಗನೆ ಅರಿತ ಪೊಡಿಮೋನು ಮೇಸ್ತ್ರಿ ಮೋನಾಕರ ಜೊತೆ ಕೈಯಾಳಾಗಿ ಕೂಲಿ ಕೆಲಸಕ್ಕೆ ಹೋಗತೊಡಗಿದನು. ಅದರಿಂದ ಸಿಗುತ್ತಿದ್ದ ದಿನಗೂಲಿ ಇನ್ನೂರೋ, ಮುನ್ನೂರೋ ರೂ.ವನ್ನು ತಂದು ತಾಯಿಯ ಸಿಡಿಮಿಡಿಯನ್ನೂ ಗಮನಿಸದವನಂತೆ ಹೆಂಡತಿಯ ಕೈಗೊಪ್ಪಿಸುತ್ತಿದ್ದನು. ಆದರೆ, ಈ ಕೂಲಿ ಕೆಲಸ ಶಾಶ್ವತವೇನಾಗಿರಲಿಲ್ಲ. ಒಂದೆರಡು ವಾರ ಕೆಲಸವಿದ್ದರೆ ಇನ್ನೆರಡು ವಾರ ಆತ ಕೆಲಸವಿಲ್ಲದೆ ಕಾಲಯಾಪನೆ ನಡೆಸುತ್ತಿದ್ದನು. ಕೆಲಸ ಸಿಕ್ಕರೆ ಭಾಗ್ಯ ಎಂಬಂತೆ ಕಾಯುತ್ತಾ ಪೊಡಿಮೋನು ಕೆಲಸವಿಲ್ಲದ ದಿನ ಬಸ್ ನಿಲ್ದಾಣದಲ್ಲಿ ಕೂತು ಕನಸು ಕಾಣುತ್ತಾ ಕಳೆಯುತ್ತಿದ್ದನು. ಅದು ಅವನಿಗೆ ಒಂದು ಅಭ್ಯಾಸವೇ ಆಗಿ ಹೋಗಿ, ತನ್ನ ಅರೆಹೊಟ್ಟೆಯ ಬದುಕನ್ನು ಆತ ಸಹಜವಾಗಿಯೇ ಸ್ವೀಕರಿಸತೊಡಗಿದ್ದನು. ಸೌದಿಯ ದೊಡ್ಡ ಸಂಬಳದ ಕನಸು ಈಗ ಅವನಿಗೆ ಬೀಳುತ್ತಲೂ ಇರಲಿಲ್ಲ. ಅಂತಹ ಕನಸಿನಿಂದ ನೆಮ್ಮದಿ ಹಾಳಾಗುತ್ತದೆಯೇ ವಿನಾ ಬೇರೇನೂ ಉಪಯೋಗವಿಲ್ಲವೆಂದು ಅವನು ತಿಳಿದಿದ್ದ. ಆದ್ದರಿಂದ ಈಗೀಗ ಅವನಿಗೆ ತನ್ನ ಅರೆಹೊಟ್ಟೆಯ ಬದುಕಿನಿಂದ ಹೆಚ್ಚಿನ ಬೇಸರವೇನೂ ಆಗುತ್ತಿರಲಿಲ್ಲ.

ಆದರೆ, ಕಳೆದ ಒಂದು ವಾರದಿಂದ ತನ್ನ ಹೆಂಡತಿ ಉಡುಗೊರೆಗಾಗಿ ಪಟ್ಟು ಹಿಡಿದು ಕೂತಿರುವುದು ಕಂಡು ಅವನು ರೋಸಿ ಹೋಗಿದ್ದ. ಅಷ್ಟಕ್ಕೂ ಉಡುಗೊರೆಗೂ ಪ್ರೀತಿಗೂ ಏನೂ ಸಂಬಂಧ? ಎಂದು ಪೊಡಿಮೋನು ತಲೆಚಿಟ್ಟು ಹಿಡಿಯುವವರೆಗೂ ಯೋಚಿಸಿದ. ಆದರೆ, ಆತನಿಗೆ ಏನೂ ಹೊಳೆಯಲಿಲ್ಲ. “ಇವಳು ನಿಜವಾಗಿಯೂ ಉಡುಗೊರೆಗಾಗಿ ಪಟ್ಟು ಹಿಡಿಯುತ್ತಿದ್ದಾಳೋ ಅಥವಾ ತನ್ನ ಹಲ್ಕಿರಿಯುವ ಚಟದಿಂದ ರೋಸಿ ಹೀಗಾಡುತ್ತಿದ್ದಾಳೋ” ಎಂದು ಪೊಡಿಮೋನುವಿಗೆ ಶಂಕೆಯೂ ಆಯಿತು. ಈ ಶಂಕೆಯೊಂದಿಗೆ ಅವನಿಗೆ ತನ್ನ ಅಪ್ಪನ ಮೇಲಿನ ಲಾಗಾಯ್ತಿನ ಸಿಟ್ಟು ಬಲವಾದವು. ಅಪ್ಪನೆಂದರೆ ಅವನಿಗೆ ಮೊದಲೇ ಸಿಟ್ಟಿತ್ತು. ಅಪ್ಪ ತೀರಿ ಹೋದ ದಿನ ಅವನ ಕಣ್ಣಲ್ಲಿ ಒಂದು ಹನಿ ನೀರೂ ಉದುರಿರಲಿಲ್ಲ. ಯಾಕೆ ತನಗೆ ಅಪ್ಪನ ಮೇಲೆ ಇಷ್ಟೊಂದು ಸಿಟ್ಟೋ? ಎಂದು ಅವನು ಎಷ್ಟೋ ಸಲ ಯೋಚಿಸಿದ್ದರೂ ಸರಿಯಾದ ಕಾರಣ ಹೊಳೆದಿರಲಿಲ್ಲ. ಬಹುಷಃ ಅಪ್ಪ ತನ್ನ ಹಲ್ಕಿರಿಯುವ ಚಟವನ್ನು ತನಗೆ ದಾಟಿಸಿ ಹೋದರೆಂಬ ಕಾರಣಕ್ಕೆ ತನಗೆ ಸಿಟ್ಟಿರಬೇಕೆಂದು ಅವನಿಗೆ ಈ ಕ್ಷಣ ಅನಿಸಿತು. ಹಾಗೆ ಅನಿಸುವಾಗ ಅವನಿಗೆ ತನ್ನ ಅಪ್ಪ ಕಂಟ್ರಾಕ್ಟರ್ ಮೋನಾಕರ ಮನೆಗೆ ಸಂಬಳಕ್ಕಾಗಿ ಹಲ್ಕಿರಿಯುತ್ತಾ ಹೋಗುತ್ತಿದ್ದುದೂ, ಮೋನಾಕ ಸಂಬಳ ಕೊಡದೆ ಸತಾಯಿಸಿ ಅಟ್ಟಿದಾಗಲೂ ಹಲ್ಕಿರಿಯುತ್ತಲೇ ಹಿಂದಿರುಗುತ್ತಿದ್ದುದೂ ಅವನ ನೆನಪಿಗೆ ಬಂದವು. ಪ್ರತಿ ತಿಂಗಳ ಒಂದನೇ ತಾರೀಖಿನಂದು ಹಲ್ಕಿರಿಯುತ್ತಾ ಸಾಗುತ್ತಿದ್ದ ಈ ಹಲ್ಕಟ್ ಯಾನವೂ ಅವನಲ್ಲಿ ವಿಪರೀತ ಕೀಳರಿಮೆಯನ್ನು ಹುಟ್ಟಿಸಿದ್ದವು. ಆ ದಿನ ಹಲ್ಕಿರಿಯುತ್ತಾ ಹೋಗುತ್ತಿದ್ದ ಅಪ್ಪನನ್ನು ಕಂಡು ಶಾಲೆಯ ಕಂಡಿಯ ಪಕ್ಕ ಗುಂಪುಗೂಡಿ ನಿಂತು ಗೆಳೆಯರು ಗೇಲಿ ಮಾಡುತ್ತಿದ್ದರು. ಸರಾಗ ರಕ್ತ ಚಲನೆ ಇಲ್ಲದ್ದರಿಂದಲೋ ಏನೋ? ಬಿಳುಪಾಗಿದ್ದ ಅಪ್ಪನ ಒಂದು ತುಟಿ ಆಕಾಶದಲ್ಲೂ, ಮತ್ತೊಂದು ಭೂಮಿಯಲ್ಲೂ ಒಂದಕ್ಕೊಂದು ಸಂಬಂಧವಿಲ್ಲದಂತೆ ನಿಶ್ಚಲವಾಗಿರುತ್ತಿದ್ದವು. ನಡುವೆ ಶುಭಾ ಬೀಡಿಯ ಘಾಟು ಹೊಗೆಯಿಂದ ಕರ್ರಗಾಗಿ ಅಡ್ಡಾದಿಡ್ಡಿ ಬೆಳೆದ ಆ ಹಲ್ಲುಗಳು! ಅವುಗಳ ನೆನಪು ಅವನಲ್ಲಿ ಈಗಲೂ ಭಯ ಹುಟ್ಟಿಸುತ್ತವೆ. ಅವುಗಳು ಭೂಮಿ ಆಕಾಶಗಳ ನಡುವೆ ತ್ರಿಶಂಕುವಿನಂತೆ ಜೋತು ಬಿದ್ದಿರುವ ತನ್ನ ಇಂದಿನ ಬದುಕಿನ ಭಯಾನಕ ರೂಪಕದಂತೆ ಅವನಿಗೆ ಕಾಣಿಸುತ್ತಿದ್ದರಿಂದಲೋ ಏನೋ? ಅವನು ಅವುಗಳಿಂದ ಕಳಚಿಕೊಳ್ಳಲು ಪ್ರಯತ್ನಿಸುತ್ತಿದ್ದನು.

ಕೆಲವು ಸಲ ಪೊಡಿಮೋನು ಒತ್ತಾಯಪೂರ್ವಕವಾಗಿ ಹಲ್ಕಿರಿಯುವ ಚಟದಿಂದ ದೂರವಿರಲು ಪ್ರಯತ್ನಿಸುತ್ತಿದ್ದುದೂ ಉಂಟು. ಆದರೆ, ವಿಚಿತ್ರವೆಂಬಂತೆ ಪೊಡಿಮೋನುವಿನ ಈ ಒತ್ತಾಯಪೂರ್ವಕ ಪ್ರಯತ್ನವೇ ಒಂದು ಚಟವಾಗಿ ಅವನ ವ್ಯಕ್ತಿತ್ವದಲ್ಲೇ ಒಂದು ಗಂಭೀರ ಬದಲಾವಣೆಯಾದವು. ಅವನು ಸದಾ ಸಿಟ್ಟು ಬಂದವನಂತೆ ಮುಖ ಊದಿಸಿಕೊಂಡೇ ಇರ ತೊಡಗಿದನು. ಆದ್ದರಿಂದ ಹೆಚ್ಚಾಗಿ ಮೌನಿಯಾಗಿರುತ್ತಿದ್ದನು. ಇದರ ಹೊರತಾಗಿಯೂ ಜನರೊಂದಿಗೆ ಸಹಜ ಮಾತುಕತೆಯ ಸಂದರ್ಭದಲ್ಲಿ ಅವನು ಅವನಿಗರಿವಿಲ್ಲದಂತೆಯೇ ಹಲ್ಕಿರಿಯುತ್ತಿದ್ದನು. ಉದಾಹರಣೆಗೆ ಯಾರಾದರು ತನ್ನನ್ನೋ ಅಥವಾ ತನ್ನ ತಂದೆಯನ್ನೋ ತಾಯಿಯನ್ನೋ ನಿಂದಿಸಿದಾಗ ಪೊಡಿಮೋನು ಎದುರು ನಿಂತವರಿಗೆ ಸಂಪೂರ್ಣ ವಶವಾದವನಂತೆ ಏನನ್ನೂ ಹೇಳಲಾಗದೆ ಸುಮ್ಮನೆ ಹಲ್ಕಿರಿಯುತ್ತಾ ನಿಂತು ಬಿಡುತ್ತಿದ್ದನು. ನಂತರ ಇದು ಅವನನ್ನು ‘ತಾನು ಅವನ ಮಾತಿಗೆ ಹಾಗೆ ಹಲ್ಕಿರಿಯ ಬಾರದಿತ್ತೆಂದೂ, ಸಮಾ ಎರಡು ಹಿಂದಿರುಗಿ ಕೊಡಬೇಕಿತ್ತೆಂದೂ’ ಬಾಧಿಸುತ್ತಿದ್ದವು. ಇಂತಹ ಯೋಚನೆಗಳು ಅವನಲ್ಲಿ ಇನ್ನಿಲ್ಲದ ಕೀಳರಿಮೆ ಹುಟ್ಟಿಸುತ್ತಿದ್ದವು. ಸೌದಿಯಿಂದ ಕೆಲಸ ಕಳೆದುಕೊಂಡು ಬಂದ ಮೇಲಂತೂ ಅವನ ಈ ರೋಗ ಹೆಚ್ಚುತ್ತಾ ಹೋದವು. ಈ ಊರು ತನ್ನನ್ನು ವಿನಾಕಾರಣ ಹಲ್ಕಿರಿಯುವಂತೆ ಮಾಡುತ್ತಿದೆ ಎಂದೂ, ಆದ್ದರಿಂದ ಇದೊಂದು ದರಿದ್ರ ಊರೆಂದೂ ಅವನು ಕೆಲವೊಮ್ಮೆ ಊರಿನ ಮೇಲೆ ರೋಷ ಕಾರುತ್ತಿದ್ದನು. ಬೊಂಬಾಯಿಗೋ, ಬೆಂಗಳೂರಿಗೋ ಓಡಿ ಬಿಡಬೇಕೆಂದೂ ಅವನಿಗೆ ಅನಿಸುತ್ತಿದ್ದವು. ಈ ಅನಿಸಿಕೆ ತೀವ್ರವಾದಂತೆ ಊರುಬಿಡಲೊಲ್ಲದ ಅವನ ಮನಸ್ಸು ಸೂಕ್ಷ್ಮವಾಗಿ, ಊರಿನಲ್ಲಿ ಎಲ್ಲಿ ನೋಡಿದರೂ ಅವನಿಗೆ ಹಲ್ಕಿರಿಯುವವರೇ ಕಾಣಿಸುತ್ತಿದ್ದರು. ಇದರಿಂದ ಅವನಿಗೆ ಗೊಂದಲವಾಗುತ್ತಿದ್ದರೂ, “ಇಡೀ ಊರೇ ಹಲ್ಕಿರಿಯುವ ರೋಗ ಹತ್ತಿಸಿಕೊಂಡಿರುವಾಗ ಯಕಃಶ್ಚಿತ್ ನಾನೇನು ತಾನೆ ಮಾಡಬಲ್ಲೆ?” ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದನು.

ಆದ್ದರಿಂದ ಪೊಡಿಮೋನು, ಸಕೀನಾ ತನ್ನ ಮೇಲೆ ಕೋಪಿಸಿಕೊಂಡಿರುವುದು ತನ್ನ ಈ ಹಲ್ಕಿರಿಯುವ ಚಟದಿಂದ ಬೇಸತ್ತೇ ವಿನಾ ಉಡುಗೊರೆಗಾಗಿಯಲ್ಲ ಎಂದು ಗಟ್ಟಿಯಾಗಿ ನಂಬಿದನು. ಈ ಗಟ್ಟಿ ನಂಬಿಕೆಯ ಜೊತೆಗೆ ಹಾಗಾದರೆ ಈ ಊರಿನ ಎಲ್ಲಾ ಹೆಂಗಸರೂ ತಮ್ಮ ಗಂಡಂದಿರ ಜೊತೆ ಮುನಿಸಿಕೊಂಡಿರಬೇಕಲ್ಲ? ಎಂಬ ಪ್ರಶ್ನೆಯೂ ಅವನನ್ನು ಕಾಡಿದವು. ಆ ಪ್ರಶ್ನೆಯ ಬಿಸಿಯಿಂದ ತಪ್ಪಿಸಿಕೊಳ್ಳಲೆಂಬಂತೆ ಅವನು ‘ಗಂಡಂದಿರ ಜೊತೆಗೆ ಮುನಿಸಿಕೊಳ್ಳುವುದು ಹೆಂಗಸರಿಗೆ ಒಂದು ಪಾರಂಪರಿಕ ರೋಗ’ ಎಂದುಕೊಂಡನು.

ಆದರೂ, ಅವನಿಗೆ ತನ್ನ ಹೆಂಡತಿಗೆ ಏನಾದರು ಉಡುಗೊರೆ ಕೊಟ್ಟು ರಮಿಸಬೇಕೆಂದೂ, ಈ ಒಂದು ದಿನ ಅವಳು ತನ್ನೊಂದಿಗೆ ಮಾತನಾಡಿದರೆ ತನ್ನ ಇದುವರೆಗಿನ ಸಂಕಷ್ಟವೆಲ್ಲಾ ಕಳೆದು ಹೋಗುತ್ತದೆಂದೂ ತೀವ್ರವಾಗಿ ಅನಿಸಿದ್ದಂತೂ ಸುಳ್ಳಲ್ಲ. ಹಾಗೆ ಅನಿಸುತ್ತಿದ್ದಂತೆ, “ಉಡುಗೊರೆಗೂ ಪ್ರೀತಿಗೂ ಸಂಬಂಧವಿದೆ. ಅಂತರಂಗದ ಅಮೂರ್ತ ಪ್ರೀತಿಯನ್ನು ಭೌತ ವಸ್ತುವಿನ ಮೂಲಕ ವ್ಯಕ್ತಪಡಿಸುವುದು ಅಪ್ಯಾಯಮಾನವಾದುದೆಂದೂ, ಅದರಷ್ಟು ರೋಮಾಂಚನಕಾರಿಯಾದುದು ಬೇರೆ ಇಲ್ಲ”ವೆಂದು ಪೊಡಿಮೋನು ಮೊದಲ ಬಾರಿ ಅರ್ಥಮಾಡಿಕೊಂಡನು. ಆದ್ದರಿಂದ ತನ್ನ ಹೆಂಡತಿ ಉಡುಗೊರೆಗಾಗಿ ಒಂದು ವಾರಗಳ ಕಾಲ ಸಿಟ್ಟು ಮಾಡಿಕೊಂಡು ಮಾತು ಬಿಟ್ಟಿರುವುದು ಅಸಹಜವೇನಲ್ಲ ಎನಿಸಿತು ಅವನಿಗೆ. “ಪ್ರೀತಿಗಾಗಿ ಅವಳು ಇಷ್ಟೂ ಮಾಡದಿದ್ದರೆ ಹೇಗೆ? ಅವಳೂ ಮನುಷ್ಯಳೇ ತಾನೆ” ಎಂದು ಯೋಚಿಸುತ್ತಲೇ ಪೊಡಿಮೋನುವಿಗೆ ಅಂದು ಹೆಂಡತಿಯ ಮೇಲೆ ಎಂದಿಲ್ಲದ ಪ್ರೀತಿಯುಕ್ಕಿತು. ಆದರೆ, ಅತ್ಯಂತ ದುಃಖದ ಸಂಗತಿ ಎಂದರೆ, ಆ ದಿನ ಅವನ ಕಿಸೆಯಲ್ಲಿ ಐದು ಪೈಸೆಯೂ ಇರಲಿಲ್ಲ.

ಪೊಡಿಮೋನು ಪರಿಚಯವಿದ್ದವರ ಜೊತೆಗೆಲ್ಲಾ ತನಗೆ ಅರ್ಜೆಂಟಾಗಿ ಐನೂರು ರೂ.ಬೇಕೆಂದೂ, ತಾನೂ ಒಂದೆರಡು ವಾರದಲ್ಲಿ ಹಿಂದಿರುಗಿಸುತ್ತೇನೆಂದೂ ಅಂಗಲಾಚಿದನು. ಆದರೆ, ಅವನಿಗೆ ಯಾರಿಂದಲೂ ಹಣ ಸಿಗಲಿಲ್ಲ. ಅವನ ಗೆಳೆಯರಲ್ಲಿ ಹೆಚ್ಚಿನವರು ಪೊಡಿಮೋನುವಿಗೆ ಹಣ ಕೊಡುವ ಸ್ಥಿತಿಯಲ್ಲೇ ಇರಲಿಲ್ಲ. ಆದರೆ, ಕೊಂಚ ಸ್ಥಿತಿವಂತರಾಗಿದ್ದವರು, ಕೆಲಸವಿಲ್ಲದೆ ವಾರದ ಮೂರು ದಿನ ಪೋಲಿ ಅಳೆವ ಪೊಡಿಮೋನು ಹಣ ಹಿಂದಿರುಗಿಸಲಾರನೆಂದು ಭಯದಿಂದ ಕೊಡಲೊಪ್ಪಲಿಲ್ಲ. ಕೊನೆಯ ಪ್ರಯತ್ನವೆಂಬಂತೆ ಪೊಡಿಮೋನು ತನ್ನ ಮನೆಗೆ ಹಿಂದಿರುಗಿ ಅಮ್ಮನೊಂದಿಗೆ ಎಂದಿಲ್ಲದ ಪ್ರೀತಿ ವಾತ್ಸಲ್ಯವನ್ನು ನಟಿಸಿ ಕೇಳಿದನು. ಐಶಮ್ಮಾದರಿಗೆ ಮಗನ ಮೇಲೆ ಕನಿಕರart-2 ಮೂಡಿದರೂ, ಬಹಳ ಪ್ರಯತ್ನಪೂರ್ವಕವಾಗಿ “ತನ್ನ ಬಳಿ ಐದು ಪೈಸೆಯೂ ಇಲ್ಲ, ಇದ್ದರೂ ಕೊಡುವುದಿಲ್ಲ, ಮದುವೆಯಾದ ನಂತರ ನೀನು ಎಂದಾದರೂ ನಿನಗಿರಲಿ ಇದೋ ಅಮ್ಮ ಎಂದು ಒಂದು ಪೈಸೆಯಾದರೂ ಕೊಟ್ಟಿದ್ದಿದೆಯಾ? ಈಗ ನಾನೇಕೆ ನಿನಗೆ ಹಣ ಕೊಡಲಿ?” ಎಂದು ಖಡಾಖಂಡಿತವಾಗಿ ಹೇಳಿದರು. ಪೊಡಿಮೋನು ಒಂದು ಅಕ್ಷರವೂ ಮಾತನಾಡದೆ ನಿರಾಶಿತನಾಗಿ ಅಲ್ಲಿಂದ ಮರಳಿದ.

ಆ ರಾತ್ರಿಯಿಡೀ ಪೊಡಿಮೋನು ಮಲಗಲಿಲ್ಲ. ತನ್ನ ಅಮ್ಮನೊಂದಿಗೆ ಆಕೆಯ ತಮ್ಮಂದಿರು ಅಪರೂಪಕ್ಕೊಮ್ಮೆ ಕೊಡುತ್ತಿದ್ದ ಹಣ ಇದೆ ಎಂದೂ ಅದನ್ನು ಹೇಗಾದರು ಮಾಡಿ ಕದಿಯಬೇಕೆಂದು ಅರೆಗಣ್ಣಲ್ಲೇ ಯೋಚಿಸುತ್ತಿದ್ದನು. ಮಧ್ಯರಾತ್ರಿಯಾಗುತ್ತಿದ್ದಂತೆ ಅವನ ನಿರ್ಧಾರ ಕಠಿಣವಾಗಿ ಎದ್ದು ಕೂತ. ಅಮ್ಮ ಹಣವನ್ನು ಎಲ್ಲಿ ಅಡಗಿಸಿಡುತ್ತಿದ್ದರೆಂದು ಪೊಡಿಮೋನುವಿಗೆ ತಿಳಿದಿತ್ತು. ಬಾಯಿಕತ್ತರಿಸಿದ ಆ ದೊಡ್ಡ ಕ್ಯಾನಿನೊಳಗಡೆ ಕತ್ತಿನ ಮಟ್ಟ ಅಕ್ಕಿಯನ್ನು ತುಂಬಿಸಿ, ನಂತರ ಆಳದವರೆಗೂ ಗುಳಿ ತೋಡಿ ಅಮ್ಮ ಅಲ್ಲಿ ತನ್ನ ಹಣದ ಪರ್ಸನ್ನು ಇಟ್ಟು ಅಕ್ಕಿಯಿಂದ ಮುಚ್ಚಿ ಹಾಕುತ್ತಿದ್ದರೆಂಬುದು ಪೊಡಿಮೋನು ಅದು ಹೇಗೋ ಕಂಡು ಹಿಡಿದಿದ್ದ. ಆ ರಾತ್ರಿ ಪೊಡಿಮೋನು ಕಳ್ಳನಂತೆ ಎದ್ದು, ಕ್ಯಾನನ್ನು ಒಕ್ಕಿ, ಪರ್ಸ್ ತೆಗೆದು ಎಣಿಸುತ್ತಾನೆ, ಮೂರು ಸಾವಿರಕ್ಕೂ ಮಿಕ್ಕಿ ಹಣವಿದೆ! ಪೊಡಿಮೋನುವಿಗೆ ಈ ಅಮ್ಮ ಎಂಥಾ ಖಂಜೂಸು ಎನಿಸಿತು. ಆದರೂ, ಆತ ತನಗೆ ಬೇಕಾಗಿರುವ ಐನೂರು ರೂ.ಮಾತ್ರ ತೆಗೆದು ಉಳಿದದ್ದು ಹಾಗೆಯೇ ಅಕ್ಕಿಯ ನಡುವೆ ಹೂತಿಟ್ಟು ಹಾಸಿಗೆಗೆ ಮರಳಿದನು.

ಮರುದಿನ ಪೊಡಿಮೋನು ಬಸ್‌ನಿಲ್ದಾಣದಲ್ಲಿ ಕೂತು ಸಕೀನಾಳಿಗೆ ಏನು ಉಡುಗೊರೆ ಕೊಡುವುದೆಂದು ಸಾಕಷ್ಟು ಬಾರಿ ಯೋಚಿಸಿದ. ಸೀರೆ? ಚೂಡಿದಾರ? ಚಿನ್ನ? ಇತ್ಯಾದಿ ಯೋಚನೆಗಳು ಬಂದರೂ ಈ ಐನೂರು ರೂ.ಗೆ ಅವೆಲ್ಲಾ ಸಿಗುವುದಿಲ್ಲವೆಂದು ಅವನಿಗೆ ತಿಳಿದಿತ್ತು. ಆದ್ದರಿಂದ ಅವನು ಮತ್ತೂ ಮತ್ತೂ ಯೋಚಿಸುತ್ತಲೇ ಕೂತ. ಇದ್ದಕ್ಕಿದ್ದಂತೆ ಅವನಿಗೆ ಎರಡು ಜೊತೆ ಚಪ್ಪಲಿ ತೆಗೆದುಕೊಟ್ಟರೆ ಹೇಗೆ ಎನಿಸಿತು. ನಾನೂರಕ್ಕೆ ಒಂದು ಜೊತೆ ಚಪ್ಪಲಿಯಂತೂ ಸಿಗುತ್ತದೆ, ನೂರು ರೂ.ವನ್ನು ಹೇಗೂ ತನ್ನ ಬಳಿ ಉಳಿಸಿಕೊಳ್ಳಬಹುದು ಎಂಬ ಯೋಚನೆ ಬಂದೊಡನೇ ಅವನು ಖುಷಿಯಿಂದ ಎದ್ದು ನಿಂತನು.

ಆದರೆ, ಅಷ್ಟರಲ್ಲಿ ಅವನಿಗೆ ತನ್ನ ಹಿಂದೆ ಯಾರೋ ಏನನ್ನೋ ಎಳೆದಂತಾಗಿ ಗಾಬರಿಯಾದವು. ದೂರದಲ್ಲಿ ಒಬ್ಬ ಹುಡುಗ ಆವೇಗದಿಂದ ಓಡುತ್ತಿರುವುದು ಕಾಣಿಸಿತು. ಪೊಡಿಮೋನು ಅನುಮಾನದಿಂದ ತನ್ನ ಕಿಸೆಯತ್ತ ನೋಡಿದನು. ಅರೆ..! ಅಲ್ಲಿದ್ದ ಐನೂರು ರೂ.ಮಂಗಮಾಯ! ಪೊಡಿಮೋನುವಿಗೆ ಒಂದು ಕ್ಷಣ ಏನೂ ಅರ್ಥವಾಗಲಿಲ್ಲ. ಗರಬಡಿದು ನಿಂತುಬಿಟ್ಟನು. ನಂತರ ಇದ್ದಕ್ಕಿದ್ದಂತೆ ಎಚ್ಚರಗೊಂಡವನಂತೆ ‘ಕಳ್ಳ, ಕಳ್ಳ….’ ಎಂದು ಬೊಬ್ಬೆ ಹೊಡೆದು ಸುತ್ತಲ ಜನರನ್ನು ಕರೆದನು. ಜನರೆಲ್ಲಾ ಗುಂಪು ಗೂಡಿದರು. ಕೆಲವು ಯುವಕರು ಓಡುತ್ತಿದ್ದ ಹುಡುಗನ ಬೆನ್ನಟ್ಟಿ ಹಿಡಿದು ತಂದರು. ಇನ್ನೂ ಮೀಸೆ ಮೂಡದ ಹದಿನೈದು, ಹದಿನಾರರ ಮಾಸಿದ ಬಟ್ಟೆಯ, ತುಂಡು ಚಪ್ಪಲಿಯ ಹುಡುಗ! ಏದುಸಿರು ಬಿಡುತ್ತಿದ್ದ. ಕೈಕಾಲು ಭೀತಿಯಿಂದ ನಡುಗುತ್ತಿದ್ದವು. ಯುವಕರು ಆತನ ಜುಟ್ಟು ಹಿಡಿದು ತಾರಾಮಾರ ಬಡಿದರು. ಯಾರೋ ಕೆಲವು ಹಿರಿಯರು ಸಾಕು ಎಂದಾಗ ನಿಲ್ಲಿಸಿ ‘ತೆಗಿಯೋ ಹಣ’ ಎಂದು ದಬಾಯಿಸಿದರು. ಹುಡುಗ ಕಣ್ಣೀರು ಹಾಕಿದ. ಪೊಡಿಮೋನುವಿಗೆ ವಿಪರೀತ ಸಿಟ್ಟು ಬಂತು, ಮುನ್ನುಗ್ಗಿ ಆ ಹುಡುಗನ ಕಪಾಲಕ್ಕೊಂದು ಏಟು ಕೊಟ್ಟ. ಯುವಕರು, “ನೀವು ಅತ್ತ ಸರಿಯಿರಿ ನಾವು ನೋಡಿಕೊಳ್ಳುತ್ತೇವೆ” ಎಂದು ಪೊಡಿಮೋನನ್ನು ದೂರ ತಳ್ಳಿದರು. ನಂತರ ಹುಡುಗನತ್ತ ತಿರುಗಿ, “ಹಣ ತೆಗಿಯಿತಿಯೋ ಇಲ್ಲವೋ ಬೋಳಿ…..” artಎಂದು ಕೈಯೆತ್ತಿದಾಗ ಹುಡುಗ ಭಯದಿಂದ ತತ್ತರಿಸಿ ಹರಿದ ಪ್ಯಾಂಟಿನ ಕಿಸೆಯಿಂದ ಐನೂರು ರೂ.ತೆಗೆದು ಅವರ ಮುಂದಿಟ್ಟನು. ಯುವಕರು ಅದನ್ನು ಪೊಡಿಮೋನುವಿಗೆ ದಾಟಿಸಿದರು. ಪೊಡಿಮೋನು ಹಣವನ್ನು ಎಣಿಸಿ, ಒಂದು ಕ್ಷಣ ಯೋಚಿಸಿ ಒಂದು ಸುಳ್ಳು ಹೇಳಬೇಕೆಂದು ತೀರ್ಮಾನಿಸಿದನು. ಅವನಿಗೆ ಇನ್ನಷ್ಟು ಹಣ ಹೊಂದಿಸಬೇಕೆಂಬ ಆಸೆಯೇನೂ ಇರಲಿಲ್ಲ. ಆದರೆ, ಗತಿಗೆಟ್ಟ ತನ್ನಿಂದ ಹಣ ಕಸಿದುಕೊಂಡ ಈ ಹುಡುಗನಿಗೆ ಸರಿಯಾದ ಪಾಠ ಕಲಿಸಬೇಕೆಂಬ ಆಸೆಯಾಗಿ, “ಇದು ಬರೀ ಐನೂರು ಇದೆಯಲ್ಲಾ, ಇನ್ನೂ ಐನೂರು ಆಗಬೇಕಿತಲ್ಲಾ…!” ಎಂದು ಬಾಂಬ್ ಸಿಡಿಸಿದನು. ಈಗ ಹುಡುಗ ನಿಜಕ್ಕೂ ಗಾಬರಿ ಬಿದ್ದ. ಜನರ ದೃಷ್ಟಿ ತನ್ನತ್ತ ಬಿದ್ದೊಡನೇ, “ಇಲ್ಲ ಇಲ್ಲ, ಸುಳ್ಳು” ಎಂದೇನೋ ಗೋಗರೆದನು. ಆತನ ದನಿ ಗೊಗ್ಗರು ಗೊಗ್ಗರಾಗಿತ್ತು. ಯುವಕರು ಅವನ ದೇಹವನ್ನಿಡೀ ಒಂದೊಂದು ಕೈಗೆ ಹರಿದು ಹಂಚಿ ಜಾಲಾಡಿದರು. ಅಲ್ಲಿ ನಯಾಪೈಸೆಯೂ ದೊರೆಯದಾಗ ಅನುಮಾನದಿಂದ ಪೊಡಿಮೋನುವಿನತ್ತ ದುರುಗುಟ್ಟಿದರು. ಪೊಡಿಮೋನುವಿನ ಎದೆ ಧಸಕ್ಕೆಂದಿತು. ಆತ ತಾನು ಹೇಳುತ್ತಿರುವುದು ನಿಜವೆಂದ. ಆದರೆ, ಅಲ್ಲಿ ಅವನು ಸಾಲ ಕೇಳಿದ ಕೆಲವರು ಇದ್ದದ್ದರಿಂದ ಅವರು ಅವನನ್ನು ಇನ್ನಷ್ಟು ಅನುಮಾನಿಸಿ ನೋಡಿದರು. ನಿನ್ನೆ ಐನೂರು ರೂ. ಸಾಲ ಕೇಳಿದವನ ಬಳಿ ಇಂದು ಸಾವಿರ ರೂ. ಹೇಗೆ ಬಂತೆಂದು ತಲೆಕೆಡಿಸಿಕೊಂಡರು.

ದೂರದಲ್ಲಿ ಪೊಡಿಮೋನುವಿನ ತಾಯಿ ಓಡೋಡಿ ಬರುತ್ತಿದ್ದಳು. ಯಾರೋ ಒಬ್ಬ ಅತ್ತ ತಿರುಗಿದವನು ಎಲ್ಲರಿಗೂ ಹೇಳಿದ. ಎಲ್ಲರೂ ಅತ್ತ ತಿರುಗಿದರು. ಆಕೆ ಒಂದು ರೀತಿಯ ಆವೇಶದಿಂದಿದ್ದಳು. ಸಿಟ್ಟಿನಿಂದ ಬುಸುಗುಡುತ್ತಿದ್ದಳು. ಜನರ ಗುಂಪಿನ ನಡುವೆ ಬಂದವಳೇ ಸುತ್ತಲ ಜನರಿಗೆ ಮುಖಮಾಡಿ ನಿಂತು ಏದುಸಿರು ಬಿಡುತ್ತಾ, “ಈತನನ್ನು ನಂಬಬೇಡಿ, ಈ ಹಂಕು ತಾನು ಸತ್ತ ಮೇಲೆ ಸಮಾಧಿ ಕಟ್ಟುವುದಕ್ಕಾಗಿ ಕೂಡಿಟ್ಟಿದ್ದ ಹಣದಿಂದ ಐನೂರು ರೂ. ಕದ್ದಿರುವುದಲ್ಲದೆ, ಈಗ ಬೀದಿಯಲ್ಲಿ ನಿಂತು ತನ್ನ ಮತ್ತು ತನ್ನ ಕುಟುಂಬದ ಮಾನ ಮರ್ಯಾದೆ ಹರಾಜು ಹಾಕುತ್ತಿದ್ದಾನೆ’ ಎಂದು ಕೂಗಿದಳು. ಪೊಡಿಮೋನು ಅವಮಾನ ತಾಳಲಾರದೆ “ಸುಳ್ಳು ಸುಳ್ಳು..” ಎಂದು ಕಿರುಚಿದ. ಆದರೆ, ಯಾರೂ ಆತನನ್ನು ನಂಬಲಿಲ್ಲ. ಪೊಡಿಮೋನುವಿಗೆ ಅಳು ಬಂದವು. ಆತನ ನಿಸ್ತೇಜ ಕಣ್ಣಿನಿಂದ ಬಳ ಬಳನೆ ನೀರು ಸುರಿದವು. ಆ ಕ್ಷಣ ಪೊಡಿಮೋನುವಿಗೆ ತಾನೆಂಥ ದುಷ್ಟ ಸಂಕೋಲೆಯೊಳಗೆ ಸಿಕ್ಕಿಹಾಕಿಕೊಂಡಿದ್ದೇನೆಂದು ಅನಿಸಿತು. ತನ್ನ ಬಗ್ಗೆಯೇ ಅಸಹ್ಯ ಮೂಡಿತು. ಆದರೂ, ಅವನು ತನ್ನೆಲ್ಲಾ ದುಃಖವನ್ನು ಅದುಮಿಡಲು ಪ್ರಯತ್ನಿಸಿದ. ಆತನಿಗೀಗ ಹುಡುಗನ ನೆನಪಾದವು. ಆತನ ಹ್ಯಾಪೆ ಮೋರೆ ಕಂಡು ಕನಿಕರ ಮೂಡಿದವು. ಈ ಹುಡುಗನೂ ತನ್ನಂತೆ ದುಷ್ಟ ಸಂಕೋಲೆಯೊಳಗೆ ಸಿಕ್ಕಿಹಾಕಿಕೊಂಡಿದ್ದಾನೆ ಎನಿಸಿ, ಈ ಸಂಕೋಲೆಯಿಂದ ಆತನನ್ನೂ ಪಾರು ಮಾಡುವ art-1ಹೊಣೆಗಾರಿಕೆ ತನ್ನದು ಎಂದುಕೊಂಡ. ಅಷ್ಟರಲ್ಲಿ ಒಬ್ಬ ಯುವಕ ಪೊಡಿಮೋನುವಿನ ಬಳಿ ಬಂದು ನಿಂತು, “ಥೂ..ನಾಯಿ” ಎಂದು ಮುಖಕ್ಕೆ ಉಗಿದ. ಪೊಡಿಮೋನುವಿಗೆ ಸಿಟ್ಟು ತಡೆಯಲಾಗಲಿಲ್ಲ. ಆತ ಆ ಯುವಕನ ಎದೆಗೆ ಕಾಲಿನಿಂದ ಒದ್ದು, ನೆಲಕ್ಕೆ ಬೀಳಿಸಿದ. ಯುವಕ ಅನಿರೀಕ್ಷಿತವಾಗಿ ಬಿದ್ದ ಒಡೆತದಿಂದ ಚೇತರಿಸಿಕೊಳ್ಳಲಾಗದವನಂತೆ ನೆಲಕ್ಕೆ ಬಿದ್ದು ಹೊರಳಾಡಿದ. ಆತ ಹೊರಳಾಡಿದ ಜಾಗದಿಂದ ಧೂಳುಗಳೆದ್ದು ಆ ಇಡೀ ಪರಿಸರವೇ ಅಯೋಮಯವಾದವು. ಪೊಡಿಮೋನು ತಡಮಾಡಲಿಲ್ಲ. ತಬ್ಬಿಬ್ಬಾಗಿದ್ದ ಜನರು ವಾಸ್ತವಕ್ಕೆ ಮರಳುವ ಮೊದಲೇ ಇಲ್ಲಿಂದ ತಪ್ಪಿಸಿಕೊಳ್ಳಬೇಕೆಂದು ನಿರ್ಧರಿಸಿ, ದೂರದಲ್ಲಿ ಹ್ಯಾಪೆ ಮೋರೆ ಹಾಕಿ ನಿಂತಿದ್ದ ಹುಡುಗನ ಕೈಯಿಡಿದೆಳೆದು ನೆಲಕ್ಕೆ ಬಿದ್ದಿದ್ದ ಯುವಕನ ಎದೆ ತುಳಿದುಕೊಂಡೇ ಓಡಿದ. ಹುಡುಗ ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಪೊಡಿಮೋನು ಅವನನ್ನು ಬಹುದೂರಕ್ಕೆ ಒಯ್ದಿದ್ದ.

ತಮ್ಮ ಸುತ್ತಲೂ ಅನಿರೀಕ್ಷಿತವಾಗಿ ಜರುಗಿದ ಘಟನೆಯಿಂದ ತಬ್ಬಿಬ್ಬಾಗಿದ್ದ ಜನರೆಲ್ಲಾ ಆ ಇಬ್ಬರನ್ನೂ ಅಟ್ಟಿಸಿಕೊಂಡು ಓಡಿದರು. ಅವರ ಕಾಲುಗಳು ಬಲವಾಗಿ ತುಳಿದು ಹಿಂದಕ್ಕೆ ಬಿಟ್ಟು ಹೋದ ನೆಲದಿಂದ ದಟ್ಟ ಧೂಳುಗಳೆದ್ದು ಇಡೀ ಊರೇ ಅಸ್ಪಷ್ಟ, ಗೊಂದಲದಲ್ಲಿ ಸಿಕ್ಕಿಹಾಕಿಕೊಂಡವು. ದೂರದಲ್ಲಿ ನಿಂತು ನೋಡುತ್ತಿದ್ದವರಿಗೆ ಏನಾಗುತ್ತಿದೆ ಎಂದು ತಿಳಿಯದಂತೆ ಧೂಳು ಓಡುತ್ತಿದ್ದವರನ್ನೂ, ಓಡಿಸಿಕೊಂಡು ಹೋಗುತ್ತಿದ್ದವರನ್ನೂ ತನ್ನ ಕೋಟೆಯೊಳಗೆ ಮುಚ್ಚಿ ಹಾಕಿತ್ತು.

ಪ್ರತಿ ಸವಾಲಿಗೂ ಸಿದ್ಧ ಉತ್ತರ – ಬುದ್ಧ-ಚಾಣಕ್ಯರ ಬಿಹಾರ


– ಶ್ರೀಧರ್ ಪ್ರಭು


ಪರಿಹಾರವೇ ಇಲ್ಲವೇನೋ ಎಂಬಂಥ ಪ್ರಶ್ನೆಗಳನ್ನು ಸವಾಲಾಗಿ ಸ್ವೀಕರಿಸಿ ಇತಿಹಾಸದುದ್ದಕ್ಕೂ ದಿಟ್ಟ ಮತ್ತು ಸರ್ವಕಾಲಿಕ ಪರಿಹಾರ ನೀಡಿದ ನಾಡು ಬಿಹಾರ. ಸಿದ್ಧಾರ್ಥ ಗೌತಮನನ್ನು ಬುದ್ಧನನ್ನಾಗಿ, ಚಂಡ ಅಶೋಕನನ್ನು ದೇವನಾಂಪ್ರಿಯನನ್ನಾಗಿ, ಜಯಪ್ರಕಾಶರನ್ನು ಲೋಕನಾಯಕನನ್ನಾGautama-Buddhaಗಿ ಮಾಡಿ ಸಮಸ್ತ ನಾಡಿಗೆ ಬೆಳಕು ನೀಡಿದ ನಾಡು ಬಿಹಾರ.  ಆರ್ಯಭಟ, ಕೌಟಿಲ್ಯ, ಚಂದ್ರಗುಪ್ತ ಮೌರ್ಯ, ಗುರು ಗೋವಿಂದ ಸಿಂಹ ಹೀಗೆ ಸಾವಿರ ಸಾವಿರ ರತ್ನಗಳ ಖನಿ ಬಿಹಾರ. ನಳಂದದ (ನಳಂದಾ ಎಂದರೆ ಕೊನೆಯಿಲ್ಲದೆ ಮಾಡುವ ದಾನ) ವಿಶ್ವವಿದ್ಯಾಲಯದಿಂದ ಮೊದಲ್ಗೊಂಡು ಶಿಕ್ಷಣದ ಉತ್ತುಂಗವನ್ನು ಸಾಧಿಸಿದವರ, ಬೌದ್ಧ ಧರ್ಮವನ್ನು ಪ್ರಪಂಚಕ್ಕೆ ಮುಟ್ಟಿಸಿದವರ ಬಿಹಾರ ಅತ್ಯಂತ ಜಾಗೃತ ಭೂಮಿ. ನಮ್ಮ ದೇಶದ ಪ್ರತಿ ಹತ್ತು ಐಎಎಸ್ ಅಧಿಕಾರಿಗಳಲ್ಲಿ ಒಬ್ಬರು ಬಿಹಾರದವರು. ಅನೇಕ ಪ್ರತಿಭಾವಂತ ವಿಜ್ಞಾನಿಗಳು, ರಾಜಕೀಯ ವಿಶ್ಲೇಷಕರು, ವಿಜ್ಞಾನಿಗಳನ್ನು ಕೊಡುಗೆ ನೀಡಿದ ಬಿಹಾರ ಇಂದು ತನ್ನ ಮುಂದಿದ್ದ ಬಹುದೊಡ್ಡ ಸವಾಲಿಗೆ ತನ್ನದೇ ಛಾತಿ ಮೆರೆದು ಉತ್ತರಿಸಿದೆ.

ಬಿಹಾರ್ ರಾಜಕಾರಣದ ಹಿನ್ನೋಟ

ಹಲವು ಸಾಮಾಜಿಕ, ರಾಜಕೀಯ ಚಳುವಳಿಗಳಿಗೆ ಮಡಿಲಾಗಿದ್ದ ಬಿಹಾರವನ್ನು ಸ್ವಾತಂತ್ರ್ಯಾ ನಂತರ ನಾನಾ ಕಾರಣಗಳಿಗಾಗಿ ನಿರ್ಲಕ್ಷಿಸಲಾಯಿತು. ಭಾರತದ ಮೊದಲ ರಾಷ್ಟ್ರಪತಿಗಳು ಬಿಹಾರದವರೇ ಅದರೂ, ರಾಜಕೀಯ ಇಚ್ಛಾ ಶಕ್ತಿ ಮತ್ತು ಒಂದು ನಿರ್ದಿಷ್ಟ ಗೊತ್ತು ಗುರಿಯಿಲ್ಲದ ನೀತಿಗಳಿಂದಾಗಿ ಬಿಹಾರವನ್ನು ಸಂಪೂರ್ಣವಾಗಿ ಕೊನೆಗಾಣಿಸಲಾಯಿತು.

ಹಾಗೆ ನೋಡಿದರೆ ನೆಹರೂ ಸಂಪುಟದಲ್ಲಿ ಬಿಹಾರಕ್ಕ ಎರಡೇ ಸ್ಥಾನ ಸಿಕ್ಕಿದ್ದು. ಒಬ್ಬರು ಸಂಸದೀಯjp-jayaprakash-narayan ವ್ಯವಹಾರಗಳ ಖಾತೆ ಸಚಿವ ಸತ್ಯನಾರಾಯಣ ಸಿನ್ಹಾ ಇನ್ನೊಬ್ಬರು ಕಾರ್ಮಿಕ ಸಚಿವ ಬಾಬು ಜಗಜೀವನ ರಾಮ. ಬೌದ್ಧಿಕ ವಲಯಗಳಲ್ಲಿ ಬಿಹಾರ ಅಪಾರ ಸಾಧನೆ ಮೆರೆದಿತ್ತು. ಜಗಜೀವನ್ ರಾಮ್ ಇನ್ನೊಬ್ಬ ಬಿಹಾರದ ನಾಯಕ ಅನುಗ್ರಹ ನಾರಾಯಣ ಸಿನ್ಹಾ ಜೊತೆಗೆ ೧೯೪೭ ರಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಗೆ ಹೋಗಿ ಉಪನ್ಯಾಸ ನೀಡಿ ಬಂದಿದ್ದರು. ಹೀಗೆ ಬಿಹಾರದ ಪ್ರಭಾವಳಿ ಸಾಕಷ್ಟಿದ್ದರೂ, ಸಾಮಾಜಿಕ ಅಸಮಾನತೆಯ ನಿರ್ಮೂಲನೆಗೆ ಒತ್ತು ಸಿಗದ ಕಾರಣ ಬಿಹಾರದ ದಲಿತ ಮತ್ತು ಹಿಂದುಳಿದವರ ಬದುಕು ಒಂದು ದೊಡ್ಡ ಕಾರಾಗೃಹದಲ್ಲಿ ಬಂಧಿತ ಕೈದಿಗೂ ಕೀಳಾಗಿತ್ತು. ಇಡೀ ಬಿಹಾರವೇ ಒಂದು ಜೀತದ ಮನೆಯಾಗಿತ್ತು. ಬಿ ಪಿ ಮಂಡಲ್ (ಮಂಡಲ ಆಯೋಗದ ಕರ್ತ) ಕೆಲ ಸಮಯ ಮುಖ್ಯ ಮಂತ್ರಿಯಾದದ್ದು ಬಿಟ್ಟರೆ ದಲಿತ ಮತ್ತು ಹಿಂದುಳಿದವರಿಗೆ ಇಲ್ಲಿ ಅಧಿಕಾರವೇ ಸಿಗಲಿಲ್ಲ.

ಆದರೆ ೧೯೭೦ ರಲ್ಲಿ ಮೊದಲ ಬಾರಿಗೆ ಅಂದಿನ ಸಮಾಜವಾದಿ ಪಕ್ಷ  ಅಧಿಕಾರಕ್ಕೆ ಬಂದು ಕರ್ಪೂರಿ ಠಾಕುರ್ ಮುಖ್ಯ ಮಂತ್ರಿಯಾದರು. ಹೆಸರಿಗೆ ಮಾತ್ರ ಠಾಕುರ್ ಆಗಿದ್ದ ಇವರು ನೈಜ ಅರ್ಥದಲ್ಲಿ ಬಿಹಾರದ ತಳಸಮುದಾಯಕ್ಕೆ ನಾಯಕತ್ವ ನೀಡಿದರು. ಲಾಲು ಪ್ರಸಾದ್, ನಿತೀಶ್, ಪಾಸ್ವಾನ್ ಸೇರಿದಂತೆ ಇಂದಿನ ಬಿಹಾರದ ಬಹುತೇಕ ದಲಿತ ಮತ್ತು ಹಿಂದುಳಿದವರ ನಾಯಕರನ್ನು ಬೆಳೆಸಿದರು. ಬಿಹಾರವನ್ನು ಮೇಲ್ಜಾತಿಗಳ ಹಿಡಿತದಿಂದ ಮುಕ್ತಿಗೊಳಿಸಿದ  ಮೊದಲ ಕೀರ್ತಿ ಸಲ್ಲಬೇಕಾದದ್ದು ಜನನಾಯಕರಾದ ಕರ್ಪೂರಿಯವರಿಗೆ.

ಅವರ ಸಮಾಜವಾದಿ ಗರಡಿಯಲ್ಲಿ ಬೆಳೆದ ನಾಯಕತ್ವ ೧೯೭೫ ರಲ್ಲಿ ಹೇರಿದ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿತು. devegowda-vpsingh-chandrashekar-gujralತುರ್ತು ಪರಿಸ್ಥಿತಿಯ ವಿರೋಧಿಸಿ ಕಟ್ಟಿದ ಚಳುವಳಿಯ ಕಾವಿನಲ್ಲಿ ನೆಂದ ಬಿಹಾರದ ಜನಮಾನಸ ಮತ್ತೆ ಕರ್ಪೂರಿ ಯವರನ್ನು ನಾಯಕನನ್ನಾಗಿ ಆರಿಸಿತು. ಆದರೆ ನಂತರದಲ್ಲಿ ಬಂದ ಕಾಂಗ್ರೆಸ್ ಪಕ್ಷ ೧೯೯೦ ರ ವರೆಗೂ  ಅಧಿಕಾರದಲ್ಲಿತ್ತು. ಜಗನ್ನಾಥ ಮಿಶ್ರಾ ಸರಕಾರದ ಆಡಳಿತದಿಂದ ಬೇಸತ್ತು ಹೋಗಿದ್ದ ಜನತೆ ಅಂದಿನ ಯುವ ನಾಯಕ ಲಾಲೂ ಪ್ರಸಾದರನ್ನು ಸಿಂಹಾಸನದ ಮೇಲೆ ಕೂರಿಸಿತು. ಬಾಬರಿ ಮಸೀದಿ ಕೆಡವುವ ಆಂದೋಲನದಲ್ಲಿ ಮಗ್ನವಾಗಿದ್ದವರು ಕೋಮು ದಳ್ಳುರಿ ಅಂಟಿಸಿ ಬಿಟ್ಟಿದ್ದರೂ ಅದರ ಬೇಗುದಿಯಿಂದ ಬಿಹಾರ ಬಚಾವಾಗಿತ್ತು.

ಇಂದಿಗೆ ಇಪ್ಪತ್ತೈದು ವರ್ಷಗಳ ಹಿಂದೆ ಅಡ್ವಾಣಿಯವರ ರಥಯಾತ್ರೆಯನ್ನು ತಡೆದ ಲಾಲೂ ಪ್ರಸಾದ್ ಇಂದು ಬಿಹಾರದ ಜನತೆಯ ಮಧ್ಯೆ ಮತ್ತೆ ಕಿಂಗ್ ಮೇಕರ್ ಆಗಿ ಪ್ರಸ್ತುತರಾಗಿದ್ದಾರೆ. ಬಿಹಾರದ ಚುನಾವಣಾ ಫಲಿತಾಂಶ ಬಂದ ಮೇಲೆ ನಿತೀಶ್ ಗೆಲುವಿಗೆ ಕಾರಣವಾದ ಅನೇಕಾನೇಕ ಅಂಶಗಳನ್ನು ಪ್ರಸ್ತಾಪಿಸಲಾಗುತ್ತಿದೆ. ಕೆಲ ಪ್ರಮುಖ ಮಾಧ್ಯಮಗಳು ಇಡೀ ಚುನಾವಣೆಯ ಯಶಸ್ಸಿಗೆ ಪ್ರಶಾಂತ್ ಕಿಶೋರ್ ಎಂಬ ಮೋದಿಯವರ ಆಪ್ತ ವಲಯದ ಚುನಾವಣಾ ತಂತ್ರ ನಿಪುಣ ಕಾರಣ ಎಂದು ಹೊಗಳಿವೆ. ಕೆಲವರು ಜಾತಿ ಸಮೀಕರಣದ ಕಾರಣ ನೀಡಿ ಇದು ಜಾತಿ ಲೆಕ್ಕಾಚಾರಗಳ ಮೇಲಿನ ಗೆಲುವು ಎಂದಿದ್ದಾರೆ.

ಒಂದು ಚುನಾವಣೆಯ ಯಶಸ್ಸು ಒಬ್ಬ ವ್ಯಕ್ತಿ ಅಥವಾ ಬರಿ ಜಾತಿ ಲೆಕ್ಕಾಚಾರಗಳ ಮೊತ್ತವಾಗಿ  ನೋಡದೇ ಬಿಹಾರದ ಜನಸಾಮಾನ್ಯ ಇಷ್ಟೊಂದು ಸ್ಪಷ್ಟ ಬಹುಮತ ನೀಡಲು ಕಾರಣವಾದ ಬಹು ಮುಖ್ಯ ಆದರೆ ಮುಖ್ಯವಾಹಿನಿಯಲ್ಲಿ ಚರ್ಚೆಯಾಗದ ಅಂಶಗಳನ್ನು ನಾವು ಗಮನಿಸಬೇಕಿದೆ.

ಲಾಲೂ ಎಂಬ ಮಾಂತ್ರಿಕ

ನಮ್ಮ ಚಡ್ಡಿ ಚತುರರು ಇಂಗ್ಲೀಷ್ ಬರದ ಗಾವಂಟಿ ಗಮಾರ ಎಂದು ಬಿಂಬಿಸುವ ಲಾಲೂ ಪ್ರಸಾದ್ ಎಂಬ lalu-sharad-biharಅದ್ಭುತ ಶಕ್ತಿ ಈ ಗೆಲುವಿನ ರೂವಾರಿ ಮೊದಲ ಕಾರಣ. ಲೋಕಸಭಾ ಚುನಾವಣೆಯಲ್ಲಿಯೇ ಪಾಸ್ವಾನ್ ಎಂಬ ದಲಿತ ನಾಯಕ ಬಿಜೆಪಿ ಬುಟ್ಟಿಗೆ ಬಿದ್ದಿದ್ದರು. ನಂತರದಲ್ಲಿ ಮಾಂಝಿಯವರನ್ನು ಓಲೈಸಿ ಮಹದಲಿತರನ್ನು ಸೆಳೆಯುವ ಪ್ರಯತ್ನವಾಯಿತು. ದಲಿತರ ಅಲ್ಪ ಸ್ವಲ್ಪ ಮತ ಪಡೆಯಬಲ್ಲ ಸಮರ್ಥ್ಯವಿದ್ದ ಬಿಎಸ್ಪಿ ಮತ್ತು ಎಡ ಪಕ್ಷಗಳು ಈ ಚುನಾವಣೆಗಳು ಶುರುವಾಗುವ ಮೊದಲೇ ತಾವು ಸ್ವಾತಂತ್ರ್ಯ ವಾಗಿ ಹೋರಾಟ ಮಾಡುವುದಾಗಿ ಘೋಷಿಸಿ ಬಿಟ್ಟಿದ್ದವು. ಲಾಲೂ ಅವರ ಸಮೀಪವರ್ತಿ ಪಪ್ಪು ಯಾದವರನ್ನು ಕೂಡ ಬಿಜೆಪಿ ಸೆಳೆದುಬಿಟ್ಟಿತ್ತು. ಹೀಗೆ ದಲಿತ ಮತ್ತು ಯಾದವ ಮತದಾರದ ಮಧ್ಯೆ ಬಿಜೆಪಿ ಬೇರೂರಲು ಸಾಕಷ್ಟು ಪ್ರಯತ್ನ ಮಾಡಿ ತಕ್ಕ ಮಟ್ಟಿಗೆ ಸಫಲವಾಯಿತು. ಇವ್ಯಾವುದನ್ನೂ ಲಕ್ಷಿಸದ ಲಾಲೂ ಬಿಹಾರದ ಅಸಲಿ ಸಂಘಟನಾ ಸಾಮರ್ಥ್ಯ ಮೆರೆದರು. ಬಿಹಾರದ ಹೃದಯವನ್ನು ಬಲ್ಲ ಲಾಲೂ ತಮ್ಮ ಸಂಪೂರ್ಣ ಶಕ್ತಿಯನ್ನು ಪಣಕ್ಕೆ ಒಡ್ಡಿ ಪರಿಹರಿಸಲು ಸಾಧ್ಯವೇ ಇಲ್ಲದ ಸವಾಲುಗಳನ್ನು ಸ್ವೀಕರಿಸಿದರು. ನಿತೀಶ್ ರನ್ನು  ಮುಖ್ಯಮಂತ್ರಿ ಎಂದು ಬಿಂಬಿಸಿ ಕಾಂಗ್ರೆಸ್ ಪಕ್ಷದ ಸಮರ್ಥನೆಯನ್ನೂ ಪಡೆದರು. ಸೋನಿಯಾ ಮತ್ತು ರಾಹುಲ್ರನ್ನು ಎಷ್ಟು ಬೇಕೋ ಅಷ್ಟೇ ಪ್ರಯೋಗಿಸಿದ ಲಾಲೂ ಸಂಪೂರ್ಣವಾಗಿ ಚುನಾವಣೆಯನ್ನು ಬೇರುಮಟ್ಟದ ಸಂಘಟನೆಯ ಭಾರ ಹೊತ್ತರು. ಅಪ್ರತಿಮ ವಾಗ್ಮಿ ಮತ್ತು ಮನಸೆಳೆಯುವ ಮಾತುಗಳಿಗೆ ಹೆಸರಾದ ಲಾಲೂ ಚುನಾವಣೆಯ ಮೊದಲು ಮತ್ತು ನಂತರದಲ್ಲಿ ನಡೆದ ಯಾವುದೇ ಭಾಷಣ ಮತ್ತು ಪತ್ರಿಕಾಗೋಷ್ಠಿಗಳಲ್ಲಿ  ನಿತೀಶ್ ತಮ್ಮ ಜೊತೆಗಿದ್ದರೆ ಮೊದಲ ಪ್ರಾಶಸ್ತ್ಯ ನಿತೀಶ್ ಗೇ ನೀಡಿದರು. ಸೀಟು ಹೊಂದಾಣಿಕೆಯಲ್ಲಿ ನಿತೀಶ್ ಮತ್ತು ಲಾಲೂ ತಾದಾತ್ಮ್ಯ ಅನುಕರಣೀಯ ವಾಗಿತ್ತು. ಸಣ್ಣ ಪುಟ್ಟ ಸ್ಥಳೀಯ ಗಲಾಟೆಗಳನ್ನು ಸಮರ್ಥವಾಗಿ ಲಾಲೂ ನಿಭಾಯಿಸಿದರು.

ನಿತೀಶ್ ಎಂಬ ಮೌನ ಸಾಧಕ

ಎರಡನೇ ಬಹು ಮುಖ್ಯ ಅಂಶ ನಿತೀಶ್ ಆಡಳಿತಾವಧಿಯಲ್ಲಿನ ಅವರ ಅದ್ಭುತ ಸಾಧನೆ. ಎಲೆಕ್ಟ್ರಿಕಲ್ ಎಂಜಿನೀರಿಂಗ್ ಪದವೀಧರ ನಿತೀಶ್ ಭಾರತೀಯ ತಾಂತ್ರಿಕ ಸೇವೆಯಲಿದ್ದು ನಂತರ ರಾಜಕೀಯಕ್ಕೆ ಹೊರಳಿದವರು. ನಿತೀಶ್ ಅತ್ಯಧ್ಭುತ lalu_nitishಪ್ರತಿಭಾವಂತ ಆಡಳಿತಗಾರ. ೨೦೦೯ ರಲ್ಲಿ ಲೋಕಪಾಲದ ಸುದ್ದಿಯೇ ಇಲ್ಲದಾಗ ಅತ್ಯಂತ ಪುರೋಗಾಮಿ ಬಿಹಾರ ವಿಶೇಷ ನ್ಯಾಯಾಲಯಗಳ ಕಾಯಿದೆ, ೨೦೦೯ ನ್ನು ಜಾರಿಗೆ ತಂದು ಸದ್ದಿಲ್ಲದೇ ಬ್ರಷ್ಟಾಚಾರವನ್ನು ಮಟ್ಟ ಹಾಕಿದರು. ಬ್ರಷ್ಟ ಅಧಿಕಾರಿಗಳ ಮನೆಗಳನ್ನು ಜಪ್ತಿ ಮಾಡಿ ಶಾಲೆ, ಆಸ್ಪತ್ರೆ, ಗ್ರಂಥಾಲಯ ಮತ್ತು ಸಮುದಾಯ ಭವನಗಳನ್ನಾಗಿ ಪರಿವರ್ತಿಸಿಬಿಟ್ಟರು. ಬಿಹಾರ ಅರ್ಥಿಕ ಪ್ರಗತಿಯ ಹೊಸ ಮೈಲುಗಲ್ಲು ಮೀಟಿತು. ನಿತೀಶ್ ಹಳ್ಳಿ ಹಳ್ಳಿ ಗಳಲ್ಲಿ ಹೆಣ್ಣುಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಿ  ಶಾಲೆ ಮತ್ತು ಉದ್ಯೋಗ ಪಸರಿಸಿದರು. ಹೆಣ್ಣು ಮಕ್ಕಳಿಗೆ ಉಚಿತ ಸಮವಸ್ತ್ರ, ಸೈಕಲ್ ಮತ್ತು ವಿದ್ಯಾರ್ಥಿ ವೇತನ ಜಾರಿ ಮಾಡಿದರು. ಮಧ್ಯಾಹ್ನದ ಊಟ ಯೋಜನೆ ಅತ್ಯಂತ ಸಮರ್ಪಕವಾಗಿ ಜಾರಿ ಮಾಡಿದರು. ಆರು ಗಂಟೆಯ ಮೇಲೆ ಹೆಣ್ಣುಮಕ್ಕಳು ಹೋಗಲಿ ಗಂಡಸರೇ ಮನೆಯಿಂದ ಹೊರಬರುವ ಪ್ರಮೇಯವಿರಲಿಲ್ಲ. ಕೆಲವೇ ತಿಂಗಳುಗಳಲ್ಲಿ ನಿತೀಶ್ ಈ ಚಿತ್ರಣ ಬದಲಿಸಿಬಿಟ್ಟರು. ಕಾನೂನು ಸುವ್ಯವಸ್ಥೆ ಸ್ಥಾಪನೆಯಾದ ನಂತರದಲ್ಲಿ ಬಿಹಾರದ ಅತ್ಯಂತ ಪ್ರಭಾವಿ ಮತ್ತು ಪ್ರತಿಭಾನ್ವಿತ ವರ್ಗ ಭಾರತದ ಮತ್ತು ಪ್ರಪಂಚದ ಬೇರೆ ಬೇರೆ ಭಾಗಗಳಿಂದ ಬಂದು ಬಿಹಾರದಲ್ಲಿ ನೆಲೆಸಿ ಉದ್ಯೋಗ ಮತ್ತು ವ್ಯಾಪಾರ ಕೈಗೊಂಡರು. ೨೦೧೩ ರಲ್ಲಿ ವಾಣಿಜ್ಯ ಸಂಸ್ಥೆ ಬಿಹಾರ ಮತ್ತು ಗುಜರಾತ್ ಮಧ್ಯೆ ಹೋಲಿಕೆ ಮಾಡಿ ಒಂದು ವರದಿ ಮಾಡಿತು. ಈ ವರದಿಯ ಪ್ರಕಾರ ಗುಜರಾತ್ ಖಾಸಗಿ ವಲಯಕ್ಕೆ ಮಣೆ ಹಾಕಿ ಬಂಡವಾಳ ಹೂಡಿಸಿ ಲಾಭ ಮಾಡಿಸಿದ್ದರೆ, ಬಿಹಾರದಲ್ಲಿ ಸರಕಾರವೇ ಅಗತ್ಯ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿ ಲಾಭ ಜನರಿಗೇ ದಕ್ಕುವಂತೆ ಮಾಡಿತ್ತು. ಬಡವರ ಹೊಟ್ಟೆ ಮೇಲೆ ಹೊಡೆದು ಭೂಮಿ ವಶಪಡಿಸಿಕೊಳ್ಳದೇ, ಯಾವುದೇ ಅಬ್ಬರದ ಪ್ರಚಾರ ವಿಲ್ಲದೆ, ಸೇಡು ದ್ವೇಷದ ರಾಜಕಾರಣ ಮಾಡದೇ ನಿತೀಶ್ ಅತ್ಯಧ್ಭುತವನ್ನು ಸಾಧಿಸಿ ತೋರಿಸಿದ್ದರು. ಲಾಲೂ ಬಗ್ಗೆ ಅಲ್ಲಲ್ಲಿ ಅಸಮಾಧಾನವಿದ್ದ ಮೇಲ್ವರ್ಗ ಕೂಡ ನಿತೀಶ್ ಎಂದರೆ ಗೌರವಿಸುತ್ತಿತ್ತು. ಮೋದಿಯವರು ನಿತೀಶ್ರ ಕುರಿತು ವಯಕ್ತಿಕ ಟೀಕೆ ಮಾಡಿದಾಗ ನಿತೀಶ್ ಆಡಳಿತದ ಸಮಬಾಳ್ವೆಯ ಮಹತಿ ಅರಿತಿದ್ದ ಈ ವರ್ಗ ತನ್ನ ಸೇಡು ತೀರಿಸಿಕೊಂಡಿತು.

ಕೇಂದ್ರದ ಕುರಿತ ಹತಾಶೆ    

ಮೂರನೆಯ ಕಾರಣ,  ಬಿಹಾರದ ಜನತೆಗೆ ಮೋದಿ ಆಡಳಿತದ ಕುರಿತು ಆದ ತೀವ್ರ ಹತಾಶೆ. ಲೋಕಸಭಾ ಚುನಾವಣೆಯಲ್ಲಿ ನಲವತ್ತರಲ್ಲಿ ಮೂವತ್ತೊಂದು ಸ್ಥಾನ ಗೆದ್ದ ಬಿಜೆಪಿಯಿಂದ ಜನತೆಗೆ ಅಪಾರ ನಿರೀಕ್ಷೆಗಳಿದ್ದವು. ಬಿಹಾರ ಆರ್ಯಭಟನ ನಾಡು ಇಲ್ಲಿಯ ಜನಸಾಮಾನ್ಯರೂ ಗಣಿತದಲ್ಲಿ ಮಹಾ ಪ್ರಕಾಂಡರು! ಮೋದಿಯವರ ಲೋಕ ಸಭಾ ಚುನಾವಣೆಯಲ್ಲಿ ಆಶ್ವಾಸನೆ ನೀಡಿದ ಪ್ಯಾಕೇಜ್ ನ ಒಂದೊಂದು ರೂಪಾಯಿಯ ಲೆಕ್ಕವನ್ನೂ ಬಾಯಲ್ಲೇ ಹೇಳುವಷ್ಟು ಬುದ್ಧಿವಂತರು. ಇವರ ನಿರೀಕ್ಷೆಗಳು ಸಂಪೂರ್ಣ bihar-modi-nitishಸುಳ್ಳಾಗಿ ಜನಜೀವನ ಇನ್ನಷ್ಟು ದುರ್ಭರವಾದಾಗ ಮೋದಿಯವರ ಮೂವತ್ತೈದು ಸಭೆಗಳ ಸೇಡುಭರಿತ ವಯಕ್ತಿಕ ಟೀಕೆಭರಿತ ಭಾಷಣಗಳು ಜನತೆಗೆ ಕರ್ಕಶ ಶಬ್ದದಂತೆ ಕೇಳಿಸಿದವು.

ನಿತೀಶ್ ಲಾಲೂ ಜೋಡಿಯ ಬಿಹಾರದ ಗೆಲುವಿಗೆ ದೀರ್ಘಕಾಲೀನ ಐತಿಹಾಸಿಕ ಕಾರಣಗಳಿವೆ. ಬರಿ ಪ್ರಚಾರ ವೈಖರಿ, ಸೇಡಿನ ಭಾಷಣ, ಒಬ್ಬ ವ್ಯಕ್ತಿಯ ಚಾತುರ್ಯ ಯಾವ ಚುನಾವಣೆಯನ್ನು ಗೆಲ್ಲಿಸಲೂ ಸಾಧ್ಯವಾಗದು.

ಕೋಮು ಭಾವನೆಗಳ ತಿರಸ್ಕಾರ

ಇನ್ನೊಂದು ಕಾರಣ ಬಿಹಾರದ ಮತದಾರ MIM ನಂಥಹ ಮುಸ್ಲಿಂ ಮೂಲಭೂತವಾದಿ ಪಕ್ಷಗಳ ಬಗ್ಗೆ ಸ್ಪಷ್ಟತೆ ಮೆರೆದದ್ದು. ನಿತೀಶರ ಒಂದು ಕಾಲದ ಬಿಜೆಪಿ ಮೈತ್ರಿಯನ್ನು ಮುಂದಿಟ್ಟು ಮುಸ್ಲಿಮರಿಗೆ ತಮ್ಮದೇ ಜನಾಂಗದ ನಾಯಕತ್ವದ ನೆಲೆ ಬೇಕು ಎಂದು ಪ್ರಚಾರ ಮಾಡಿ ಒಂದು ಒಕ್ಕೂಟದ ಭಾಗವಾಗಿ ಸ್ಪರ್ಧಿಸಿದ ಪಪ್ಪು ಮತ್ತು ಒವೈಸಿಗಳು ಗಾಳಿಯಲ್ಲಿ ತೂರಿಹೊಗಿದ್ದಾರೆ. ಮಹಾರಾಷ್ಟ್ರದಲ್ಲಾದಂತೆ ಮುಸ್ಲಿಂ ಮೂಲಭೂತವಾದಿ ಪಕ್ಷ MIM ಗೆ ಯಾವ ಬೆಂಬಲವೂ ಸಿಕ್ಕಿಲ್ಲ. ‘ಅತಿಂ ಸರ್ವತ್ರ ವರ್ಜಯೇತ್’ bjp-bihar-election-amitshahಎಂಬಂತೆ ಹಿಂದೂ ಮತ್ತು ಮುಸ್ಲಿಂ ಕೋಮುವಾದಕ್ಕೆ ಬಲಿಯಾಗದೇ ಬಿಹಾರದ ಜನತೆ ತಮ್ಮ ಬೌದ್ಧಿಕ ಮತ್ತು ನೈತಿಕ ಬಲ ಪ್ರದರ್ಶಿಸಿದ್ದಾರೆ. ತಮ್ಮ ವೋಟು ಒಡೆಯಲು ಮಾಡಿದ ಸಂಚನ್ನು ಮತದಾರರು ತುಂಬಾ ಸರಿಯಾಗಿ ಗ್ರಹಿಸಿದರು. ಗೋವನ್ನು ಬಳಸಿ ಸಮಾಜವನ್ನು ಕೋಮು ಆಧಾರದ ಮೇಲೆ ಒಡೆಯುವ ಎಷ್ಟೇ ಪ್ರಯತ್ನ ಮಾಡಿದರೂ ಜನತೆ ಅದಕ್ಕೆ ಸೊಪ್ಪು ಹಾಕಲಿಲ್ಲ.

ಶರದ್ ಯಾದವ್ ಎಂಬ ಮುತ್ಸದ್ದಿ

ಇನ್ನೊಂದು ಮುಖ್ಯ ಕಾರಣ ರಾಷ್ಟ್ರ ಮಟ್ಟದಲ್ಲಿ ಮೀಡಿಯಾ ಮತ್ತು ಬುದ್ಧಿಜೀವಿಗಳನ್ನು ತಮ್ಮೊಂದಿಗೆ ಸೆಳೆಯಲು ಸಮರ್ಥರಾದ ಜೆಡಿಯು ಅಧ್ಯಕ್ಷರಾದ ಶರದ್ ಯಾದವ್. ಇವರು ಇಂಜಿನಿಯರಿಂಗ್ ಪದವಿಯಲ್ಲಿ ಸ್ವರ್ಣ ಪದಕ ಪಡೆದ ಪ್ರತಿಭಾವಂತ. ಇವರ ನಿರೀಕ್ಷೆ ಎಷ್ಟು ನಿಖರವಾಗಿತ್ತೆಂದರೆ ಚುನಾವಣಾ ಫಲಿತಾಂಶ ಬರುವ ಕೆಲವೇ ದಿನಗಳ ಮೊದಲು ಶರದ್ ಯಾದವ್ ತಮಗೆ ೧೫೦ ಸ್ಥಾನಗಳು ಖಚಿತ ಎಂದು ನುಡಿದಿದ್ದರು. ನಿತೀಶ ಗಿಂತ ಸಾಕಷ್ಟು ಹಿರಿಯರೂ ಆದ ಇವರು ನಿತೀಶ್ ನೇತೃತ್ವವನ್ನು ಶರತ್ತಿಲ್ಲದೇ ಒಪ್ಪಿ ಒಬ್ಬ ನೈಜ ಮುತ್ಸದ್ದಿಯಂತೆ ಕಾರ್ಯ ನಿರ್ವಹಿಸಿ ಪಕ್ಷದ ಅಧ್ಯಕ್ಷರ ಸ್ಥಾನಕ್ಕೆ ಗೌರವ ತಂದು ಕೊಟ್ಟರು.

ಮಮತೆಯ ಕರೆಯೋಲೆ

ಒಂದು ಚಿಕ್ಕ ಆದರೆ ಕಡೆಗಣಿಸಲು ಆಗದ ಅಂಶವೆಂದರೆ, ಮಮತಾ ಬ್ಯಾನರ್ಜಿ ಬಿಹಾರದ swabhimaan-rally_sonia-nitish-laluಜನತೆಗೆ ಮಹಗಠ ಬಂಧನದ ಪರ ನಿಲ್ಲಲು ಕರೆ ಕೊಟ್ಟರು. ಸೀಮಂಚಲವೆಂದು ಕರೆಯಲ್ಪಡುವ ಪುರ್ನಿಯ, ಕಟಿಹಾರ್, ಕಿಷೆನ್ ಗಂಜ್, ಅರಾರಿಯ, ಮಿಥಿಲ ಪ್ರಾಂತ ಗಳಲ್ಲಿ ಸಾಕಸ್ಟು ಸಂಖ್ಯೆಯಲ್ಲಿರುವ ಬಂಗಾಳಿಗಳು ಲಾಲೂ ನಿತೀಶ್ ಪರ ನಿಂತರು. ಜಾತ್ಯತೀತ ವೋಟಿನ ವಿಭಜನೆಯಾಗದಂತೆ ತಡೆಯುವಲ್ಲಿ  ಕೆಜ್ರಿವಾಲ್ ಮತ್ತು ಮಮತಾ ಬೆಂಬಲ ರಾಷ್ಟ್ರೀಯ ವಾಗಿಯೂ ಮಹತ್ತರವಾಗಿತ್ತು. ಬಿಹಾರದ ಚುನಾವಣಾ ರಂಗ ಸಮಾನ ಮನಸ್ಕರನ್ನು ಒಂದು ಮಾಡಿತು.

ಕಾಂಗ್ರೆಸ್ ಪುನರುಜ್ಜೀವನ

ಕಾಂಗ್ರೆಸ್ ಪ್ರಚಾರವನ್ನು ಸಾಕಷ್ಟು ಕಡಿಮೆ ಗೊಳಿಸಿದ ಬಿಹಾರದ ಸ್ಥಳೀಯ ನಾಯಕತ್ವ ಅನಗತ್ಯ ಗೊಂದಲಗಳನ್ನು ನಿವಾರಿಸಿತು. ರಾಹುಲ್ ಭಾಷಣದ ಟೀಕೆ, ಸೋನಿಯಾರ ಭಾಷೆಯ ಕುರಿತು ಅನಗತ್ಯ ವಿವಾದ ಇತ್ಯಾದಿ ಇಲ್ಲಿ ಕಾಣಸಿಗಲೇ ಇಲ್ಲ. ಕಾಂಗ್ರೆಸ್ ಈ ಚುನಾವಣೆಯಲ್ಲಿ ಮರುಜೀವ ಪಡೆದಿದೆ. ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ವೋಟು ಸಿಗದೇ ಹೋಗಬಹುದು ಆದರೆ ಕಾಂಗ್ರೆಸ್ಸಗೆ ಅಲ್ಲಿ ಬಹು ದೊಡ್ಡ ಸಂಘಟನೆಯಿದೆ. ಇದರ ಸಂಪೂರ್ಣ ಲಾಭ ಈ ಬಾರಿ ದಕ್ಕಿದೆ.

ಪ್ಯಾಕೇಜ್ ಮರೆಯದಿರಲಿ

ಇನ್ನೊಂದು ಮಾತು. ಜನರು ತಮ್ಮ ನಾಯಕರ ಗುಣಾವಗುಣಗಳನ್ನು ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಾರೆ. ಒಂದು ಕಡೆ ತುಂಬಾ ನಿರೀಕ್ಷೆ ಇಟ್ಟುಕೊಂಡ ಒಬ್ಬ ಪ್ರಧಾನ ಮಂತ್ರಿಯವರು ರಾಜಕೀಯ ವಿರೋಧಿಗಳ ಕುಟುಂಬ, ಮಕ್ಕಳು ಇತ್ಯಾದಿಗಳ ಕುರಿತು ಟೀಕೆ ಮಾಡುತ್ತಿದ್ದಾರೆ, ಒಬ್ಬ ನೈಜ ಮುತ್ಸದ್ದಿಯ ಮಾದರಿಯಲ್ಲಿ ಯಾವುದಕ್ಕೂ ತೀಕ್ಷ್ಣವಾಗಿ ಮತ್ತು ವಯಕ್ತಿಕ ಮಟ್ಟಕ್ಕಿಳಿದು ಪ್ರತಿಕ್ರಯಿಸದ ಲಾಲೂ-ನಿತೀಶರನ್ನೂ ಮೌನವಾಗಿ ತುಲನೆ ಮಾಡುತ್ತಿತ್ತು. ಜನತೆಯ ತೀರ್ಮಾನ ಈಗ ದೇಶದ ಮುಂದಿದೆ. ತಮ್ಮ ಒಂದು ಕಾಲದ ಬಲಗೈ modi-in-biharಬಂಟ ಪಪ್ಪು ಯಾದವ್ ಮತ್ತವರ ಹೆಂಡತಿಯ ತಮ್ಮ ಸುಭಾಷ್ ಯಾದವ್ ಇದೇ ಸೆಪ್ಟೆಂಬರ್ ತಿಂಗಳಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತ, ‘ಲಾಲು ಸುಮ್ಮನೇ ವೋಟು ಒಡೆಯಲು ಕಣದಲ್ಲಿದ್ದಾರೆ; ಗೆಲವು ಖಂಡಿತಾ ನಮ್ಮದೇ ಎಂದಾಗ’, ಲಾಲೂ ಅವರಿಗೆ ಸೊಪ್ಪು ಕೂಡ ಹಾಕಲಿಲ್ಲ. ಮೋದಿಯವರು ಅತಿಯಾಗಿ ಕೆಣಕಿದಾಗ ಮಾತ್ರ ಲಾಲೂ ಮೋದಿಯವರಿಗೆ ತಾಕತ್ತಿದ್ದರೆ ತಮ್ಮೊಂದಿಗೆ ಇಂಗ್ಲಿಷ್ ಸಂವಾದಕ್ಕೆ ಬರಲಿ ಎಂದು ಸವಾಲು ಹಾಕಿದರು. ಈ ಸವಾಲನ್ನು ಮೋದಿಯವರು ಸ್ವೀಕರಿಸುವ ಔದಾರ್ಯ ತೋರಲಿಲ್ಲವೇಕೋ?

ಬಿಹಾರದ ಗೆಲುವು ಮೈಮರೆಸಬಾರದು. ಜನತೆಯ ಹೆದರಿಕೆ ಬರುವಷ್ಟು ಅಪಾರ ಪ್ರಮಾಣದ ನಿರೀಕ್ಷೆ ನೋಡಿದರೆ ನಿತೀಶ್ ರ ಜವಾಬ್ದಾರಿ ಎಷ್ಟು ದೊಡ್ಡದು ಎಂದು ಗೋಚರವಾಗುತ್ತದೆ.

ಹಾಗೆಯೇ, ನಿತೀಶರನ್ನು ಒಬ್ಬ ವೈರಿಯಂತೆ ಕಾಣದೇ ಈ ದೇಶದ ಪ್ರಧಾನಿಗಳು ತಾವು ಆಶ್ವಾಸನೆ ನೀಡಿದಂತೆ ಬಿಹಾರದ ಜನತೆಗೆ ಒಂದೂ ಕಾಲು ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜನ್ನು ಕೊಟ್ಟು ಒಬ್ಬ ನೈಜ ಮುತ್ಸದ್ದಿಯಂತೆ ನಡೆದುಕೊಳ್ಳಬೇಕು.

ಲಾಲೂ ಅವರೊಂದಿಗೆ ಇಂಗ್ಲಿಷ್ ಸಂವಾದದ ಸವಾಲು ಮರೆತರೂ ಪರವಾಗಿಲ್ಲ ಮೂವತ್ತೊಂದು ಸಂಸದರನ್ನು ತಮಗೆ ಕೊಟ್ಟ ಬಿಹಾರದ ಅಭಿವೃದ್ಧಿಯ ಪ್ಯಾಕೇಜ್ ಮಾತ್ರ ಮರೆಯಬಾರದು.

ಬುದ್ಧ ನಕ್ಕ ನಾಡು ಬಿಹಾರ ಹೌದಾದರೂ, ಮಾತಿಗೆ ತಪ್ಪಿದರೆ, ಪಾಟಲಿಪುತ್ರದ ಚಾಣಕ್ಯನ ಮಾದರಿ ಸೇಡು ತೀರಿಸದೆ ಸುಮ್ಮನಿರುವ ಜಾಯಮಾನದ್ದಲ್ಲ!

ಪಾಕಿಸ್ತಾನದಿಂದ ಬಂದ ಪತ್ರ : ಗಾಂಧಿ ಜಯಂತಿ ಕಥಾಸ್ಪರ್ಧೆ 2015 – ಬಹುಮಾನಿತ ಕಥೆ

– ಮಹಾಂತೇಶ್ ನವಲ್ಕಲ್

ಕಾಶ್ಮೀರದ ಝೇಲಂ ನದಿಯ ಅನತಿ ದೂರದಲ್ಲಿನ ಈ ರಾತ್ರಿ ಎಂದಿನಂತೆ ಇರಲಿಲ. ಅಲ್ಲಿಯ ತೋಟಗಳ ಪ್ಲಮ್ ಪೀಚು ಹಣ್ಣುಗಳು ಕೊಳೆತು ಮೆಲ್ಲಗೆ ಮಧ್ಯವಾಗಿ ಆ ಗಂಧಗಾಳಿಯನ್ನು ಪರಿಸರದ ತುಂಬಾ ಹರಡಿದ್ದವು.ಆತನ ಮನಸ್ಸು 11ನೇ ಶತಮಾನದ ಕಾಶ್ಮೀರದ ಕವಿ ಕಲ್ಹಣ ಮತ್ತು ಆತನ ಗ್ರಂಥ “ರಾಜತರಂಗಿಣಿ” ಬಗ್ಗೆ ಯೊಚಿಸುತ್ತಿತ್ತು. ಅತನ ಈ ಕಾವ್ಯ ತನ್ನನ್ನು ದೇಶದ್ರೋಹದ ಅಪವಾದನೆಗೆ ತಳ್ಳುತ್ತದೆ ಎಂದುಕೊಂಡಿರಲಿಲ್ಲ.

ದೂರದ ಕಲ್ಬುರ್ಗಿಯಿಂದ ಬಂದ ಇವನಿಗೆ ಪಂಜಾಬಿನ ವಾಘ ಗಡಿ, ಜಮ್ಮುವಿನ ದೇಶ ವಿಭಾಂತರ ನಿಯಂತ್ರಣ ಮತ್ತು ಕಾಶ್ಮೀರದ ಈಗ ಇರುವ ಮಿಲಟರಿ ಕ್ಯಾಂಪ್ ಹೀಗೆ ತಿರಗಿಣಿಯಂತೆ ತಿರುಗಿ ತಿರುಗಿ ಬಂದುದ್ದು ಒಂದು ಕಡೆಯಾದರೆ, ದೇಶದ್ರೋಹದ ಅಪವಾದನೆಯ ದೀವಿಟಿಗೆಗೆ ಮುಖಕೊಟ್ಟು ಓಡಾಡುವದು ಮತ್ತೊಂದು ಕಡೆ. ಈ ಆರು ತಿಂಗಳ ನರಕ ಸದೃಶ ಕಾಲವನ್ನು ಹೇಗೆ ಕಳೆದೆನೆಂಬುವದೆ ಒಂದು ಪವಾಡ. ಇಲ್ಲಿಂದ ಊರಿಗೆ ಹೋಗುವ ಹಾಗಿಲ್ಲ. ಊರಿಗೆ ದೂರವುಳಿಯಿತು, ಜಮ್ಮುವಿನ ಗಡಿ ದಾಟುವಂತಿಲ್ಲ. ಇಲ್ಲಿ ವಿಚಾರಣೆ ಇದೆ ಮಾತುಗಳಿವೆ ಸಾಂತ್ವನಗಳಿವೆ, ಆದರೆ ಅಲ್ಲಿ ಅಂದರೆ ಪಾಕಿಸ್ತಾನದಲ್ಲಿ ಏನಿದೆ? ವಿಚಾರಣೆ ಎಂದರೆ ಸಾವಿನ ಮನೆಯ ಅಂಗಳಕ್ಕೆ ಒಯ್ಯುವದು ಎಂದರ್ಥ. ಅವನೆ ಹೇಳುತ್ತಿದ್ದ, ಮಗನೆ ನನ್ನ ತಾತ ತೆಗೆದುಕೊಂಡ ತಪ್ಪು ನಿರ್ದಾರಗಳಲ್ಲಿ ನಾವು ಭಾರತಬಿಟ್ಟು ಹೋಗಿದ್ದು ಒಂದು. abstract-art-sheepಅಲ್ಲಿರುವ ಶಾಂತಿ ನೆಮ್ಮದಿ ಇಲ್ಲಿ ಇರಲು ಸಾಧ್ಯವಿಲ್ಲ. ಭಾರತ ಎಂಥಹ ಸುಂದರ ದೇಶ ಎಂದು ವಾಘ ಗಡಿಯ ತನ್ನ ದೇಶಕ್ಕೂ ಸೇರದ ಅವನ ದೇಶಕ್ಕೂ ಸೇರದ ಭೂಮಿಯಲ್ಲಿ ನಿಂತು ಹೇಳುತ್ತಿದ್ದಾಗಲೆ ಪಾಕಿಸ್ತಾನದ ಬಾರ್ಡರ್ ಸೆಕ್ಯೂರಿಟಿ ಆಧಿಕಾರಿ ರೇಂಜರ್ ಎಂದು ಕರೆಯಿಸಿ ಕೊಳ್ಳುವ ಆ ದಾಂಡಿಗ ಚಾಚನ ಮುಖಕ್ಕೆ ರಪ್ಪಂತ ಗುದ್ದಿದ್ದ. ಇಂಥಹ ಗುದ್ದಿಕೆಗಳು ಬಹು ಸಹಜವೆಂಬಂತೆ ಜೀರ್ಣಿಸಿಕೊಂಡು ಅಂದಿನ ಕೆಲಸ ಕಾರ್ಯಗಳಲ್ಲಿ ಭಾಗವಹಿಸಿದ್ದನಲ್ಲ ಚಾಚ.

ಎಂಥಹ ನಾಟಕ ಎಂಥಹ ಉನ್ಮತ್ತ ಉಮೇದಿ, ವಾಘ ಗಡಿಯಲ್ಲಿ ಪರೇಡಿನ ನೆಪದಲ್ಲಿ ಕಾಲನ್ನು ಅವನ ಮುಖಕ್ಕೆ ಬಲತ್ಕಾರವಾಗಿ ಒಯ್ಯುವ ಉನ್ಮಾದ ಅವನದು. ಅದೆ ತೆರನಾದ ಇಂಥಹದೆ ಇವನ ಮುಖಕ್ಕೆ ಅವನು, ಅಣುಕು ಚಪ್ಪಾಳೆ ತಟ್ಟುವವರೆಲ್ಲ ಎರಡು ದೇಶದ ದೇಶಭಕ್ತರು. ಕೋತಿಕುಣಿತದಾಟಕ್ಕೆ ಚಪ್ಪಾಳೆ ಚಪ್ಪಾಳೆ ಚಪ್ಪಾಳೆ. ಭಾರತ ಎಂಥ ಚಂದದ ದೇಶ ಎಂದು ಮೇಲೆ ಹೇಳಿದ ಮಾತು ದೂರದ ಬೆಟ್ಟದ ಮಾತೋ ಇರಬಹುದು. ಅಲ್ಲಿಯ ಪ್ರಮಾಣ ದೊಡ್ಡದಾಗಿದ್ದರೆ ಇಲ್ಲಿಯದು ಅಲ್ಪ ಪ್ರಮಾಣವಾಗಿರಬಹುದು. ಆದರೆ ಚಾಚನ ಮಗಳು ಅಕ್ಕ ರಜಿಯಾ ಅವಳು ಚಾಚನಮೇಲೆ ಸಂಪೂರ್ಣ ಅವಲಂಬಿತಳಾಗಿದ್ದಳಲ್ಲ, ಈಗ ಅವಳ ಬದುಕು? ಆಕೆಯ ಆ ಏಳು ಮಕ್ಕಳು? ಕೊನೆಯ ಮಗು ನೂರ್ ಇನ್ನೂ ಒಂದು ವರ್ಷದ ಒಳಗಿನವನು. ಅದು ಅಲ್ಲದೆ ಅವಳಿಗೆ ಗರ್ಭಾಶಯದ ಕ್ಯಾನ್ಸರ್ ಎಂಬ ಮಹಾ ರೋಗ. ಈತನ ತಲೆದಂಡವಾದರೆ ಅವರನ್ನು ನೋಡಿಕೊಳ್ಳುವವರು ಯಾರು. ಇದಕ್ಕೆಲ್ಲ ಕಾರಣಪುರುಷ ತಾನಾದೆನೆ? ಮನಸ್ಸು ಮುದಡಿಕೊಂಡಿತ್ತು. ಈದಿನ ರಜೆಯ ದಿನವಾದುದ್ದರಿಂದ ಶುಭಾಂಕರ ಹೇಳಿದ್ದ . ಖುರೇಶಿಯವರ ಸೇಬಿನ ತೋಟಕ್ಕೆ ಹೋಗೋಣ ಅವರು ಬಹಳ ದಿನದಿಂದಲೂ ಕರೆಯುತ್ತಿದ್ದಾರೆ. ಆದರೆ ಈಗ ಸೇಬು ಬಿಡುವ ಕಾಲವಲ್ಲ, ಇವನಿಗೂ ಹೋಗಬೇಕೆಂದು ಅನ್ನಿಸಿದರೂ ಹೋಗಲಿಲ್ಲ. ಏಕೆಂದರೆ ಅವನ ಜೊತೆ ಜೋಯ್ ಸಹ ಹೋಗುವವನಿದ್ದಾನೆಂದು ಗೊತ್ತಾದ ತಕ್ಷಣವೆ ತಾನು ಹೋಗುವದು ತರವಲ್ಲ ಎಂದುಕೊಂಡ.

ಹಿಮ ಜುಮುರು ಮಳೆಯಂತೆ ಸುರಿಯುತ್ತಿತ್ತು. ತಣ್ಣನೆಯ ಈ ನಾಡಿನಲ್ಲಿ ತಮ್ಮಂತವರು ಯಾವಾಗಲೂ artಬೆಂಕಿಯುಗುಳುವ ಬಂದೂಕುಗಳನ್ನು ಹೆಗಲಿಗೇರಿಸಿಕೊಂಡು ಅಡ್ಡಾಡುವ ವೈಪರಿತಯಕ್ಕೆ ಬೆರಗಾಗಿತ್ತು ಮನ. ಆದರೆ ಈಗ ವಿಚಾರಣೆ ಎದರಿಸುವ ಸಮಯದಲ್ಲಿ ಬಂದೂಕು ಮುಟ್ಟುವ ಕರ್ಮ ಇಲ್ಲ. ಅವರ ಜೊತೆ ಇರಬಹುದು ನಗಬಹುದು ವಾಸಿಸಬಹುದು ಆದರೆ ಇಂದು ತನಗೆ ಡಾರ್ಮೆನ್ಸಿ ಪಿರಿಯಡ್. ವಿಚಾರಣೆ ವಿಚಾರಣೆ ವಿಚಾರಣೆ ಇಲ್ಲಿಯ ಕೋರ್ಟು ಸಹ ಮಿಲಟರಿಯ ದರ್ಪದಿಂದ ಹೊರತಾಗಿಲ್ಲ ಎನ್ನಿಸಿತು ಅವನಿಗೆ. ಎಂಥಹ ವಿಚಾರಣೆ ಅದು, ಕೈಕಟ್ಟಿಕೊಳ್ಳುವಂತಿಲ್ಲ ಸೀದಾ ನಿಲ್ಲುವಂತಿಲ್ಲ ಮೈಮರೆತು ನಿಲ್ಲುವಂತಿಲ್ಲ. ಕಲಾತ್ಮಕ ಸಿನೆಮಾದಂತಹ ಮಾತುಗಳು ಆಗೊಂದೊ ಈಗೊಂದು.

‘ನಮ್ಮ ದೇಶದ ರಕ್ಷಣ ವ್ಯವಸ್ತೆಯ ಮಾಹಿತಿ ಆ ದೇಶಕ್ಕೆ ರವಾನಿಸಿದ ಅಪಾದನೆ ನಿನ್ನ ಮೇಲಿದೆ”.

ತನ್ನ ಕ್ಯಾಂಪಿನಲ್ಲೆ ಎಷ್ಟು ಜನರಿರುತ್ತಾರೆ ಎನ್ನುವ ಸತ್ಯ ತನಗಿನ್ನು ಗೊತ್ತಿಲ್ಲದೆ ಇರುವಾಗ ಅಂತಹದ್ದು ನಾನು ಹೇಗೆ ಮಾಡಲಿ.

ಆ ವಿರೋಧಿ ರಾಷ್ಟದ ಸೈನಿಕನಿಗೂ ನಿನಗೂ ಏನು ಸಂಬಂಧ? ವಿಚಿತ್ರವೆನ್ನಿಸುತ್ತಿದೆ ಈ ಪ್ರಶ್ನೆ. ಅದೆ ವಾಘ ಗಡಿಯಲ್ಲಿ ಸಿಹಿ ಹಂಚಿದ್ದು ಭಾಯಿ ಭಾಯಿ ಎಂದದ್ದು ಎಲ್ಲವೂ ನಾಟಕವೇ.? ದಿನಾಲು ಮಾತಾಡುವದರ ಹಿಂದಿನ ಮುಖವಾಡಗಳು ಯಾಕೆ? ಅವನಲ್ಲಿ ತನ್ನಲ್ಲಿ ಮೂಡಿದ್ದು ವಿರೋಧವಾಗಲಿ ಅಥವಾ ಅಗಮ್ಯ ದೇಶಪ್ರೇಮದ ಹಿನ್ನಲೆಯ ಪೂರ್ವಾಗ್ರಹದ ಭಾವನೆಗಳಲ್ಲ. ಸಹಜ ಮನುಷ್ಯ ಮನುಷ್ಯರಲ್ಲಿ ಒಡಮೂಡಿದ ಭಾವಗಳು ಅವು. ಅಲ್ಲಿ ನಾನು ಭಾರತೀಯನಲ್ಲ, ಅವನು ಪಾಕಿಯಲ್ಲ. ನಾವು ಕೇವಲ ಸಾಮಾನ್ಯ ಮನುಷ್ಯರು ಮಾತ್ರ.

“ಸರ್ ಅಲ್ಲಿದ್ದವ ಸೈನಿಕ ಮಾತ್ರ ಉಗ್ರಗಾಮಿಯಲ್ಲ ಸೈನಿಕನಿಗೂ ಉಗ್ರಗಾಮಿಗೂ ಬಹಾಳ ವ್ಯತ್ಯಾಸವಿದೆ.” ಅಷ್ಟಕ್ಕೂ ನಾನು ಮಾತಾಡಿದ್ದು ಸೈನಿಕನ ಜೊತೆ ಮಾತ್ರ.

“ನಮಗೆ ತಿಳುವಳಿಕೆ ಹೇಳಲು ಬರಬೇಡ ಅಲ್ಲಿ ಇರುವವರೆಲ್ಲ ಉಗ್ರಗಾಮಿಗಳೆ. ಅವರಾರು ಸೈನಿಕರಲ್ಲ. ಇರಲಿ ಅತನಿಗೂ ನಿನಗೂ ಎನು ಸಂಬಂಧ ಹೇಳು.” ಏನು ಹೇಳುವದು ಸರ್ ಆತ ನನ್ನ ಚಾಚಾ. ಚಾಚಾನೆಂದರೆ ನಿಮ್ಮಪ್ಪನ ತಮ್ಮನೆ? ಇರಬಹುದು ಸಂಬಂಧಗಳ ಹೆಜ್ಜೆಗಳನ್ನು ನೀರಿನಲ್ಲಿ ಹುಡುಕಬಾರದು. ಅಜ್ಜಿ ಹೇಳುತ್ತಿದ್ದಳು ತಮ್ಮ ವಂಶದವನೊಬ್ಬನು ಕಲಬುರ್ಗಿಗೆ ಬಂದೇನವಾಜ ದರ್ಗಾ ನೋಡಲು ಬಂದ ದೆಹಲಿಯ ಸೂಫಿಯ ಒಬ್ಬನ ಪ್ರಭಾವಕ್ಕೆ ಒಳಗಾಗಿ ದೆಹಲಿಗೆ ಹೋದನಂತೆ, ಅದೇ ವಂಶದವರು ಮುಂದೆ ದೇಶ ವಿಭಜನೆಯಾದಾಗ ಪಾಕಿಸ್ತಾನಕ್ಕೆ ಹೋದರಂತೆ ಈಗಲೂ ಅವರ ಹೆಸರಿನ ಮುಂದೆ ನಿಷ್ಟಿ ಹೆಸರಿದೆ ಎಂದು ಅದು ನೆನಪಾಗಿ ಮಾತಾಡಲು ಬಾಯ್ತೆರೆದಾಗಲೆ ಆ ಮಿಲಿಟರಿ ಅಧಿಕಾರಿ “ಒಹೊಹೋ ಇದು ಧರ್ಮವನ್ನು ಮೀರಿದ ಜಾಲವಿರಬಹುದು. ಇಲ್ಲ ಆತನ ಹೆಸರು ಬಂದೇನವಾಜ. ಅದು ತನ್ನ ಊರಿಗೆ ಸಂಬಂಧಪಟ್ಟಿದ್ದು. ಇನ್ನೊಂದು ಆತನ ಮುಂದೆ ಇರುವ ಮನೆತನದ ಹೆಸರು ನಿಷ್ಟಿಯೆಂಬುದು.” ನನ್ನ ಮನೆತನಕ್ಕೆ ಸಂಬಂಧಪಟ್ಟದ್ದು ಎಂದು ಹೇಳಲು ಸಾಧ್ಯವಾಗಿದ್ದು ಮಾತ್ರ ಇಷ್ಟು.

“ಬದ್ಮಾಶ್ ದೇಶದ್ರೋಹಿಗಳೇ ನಮ್ಮ ಸರ್ಕಾರಗಳಿದ್ದರೆ ನಿಮ್ಮನ್ನು ಇಲ್ಲವಾಗಿಸಲು ಕಾರಣವೇ ಇರುತ್ತಿರಲಿಲ್ಲ.” ಆತನ ಆಸ್ಪೋಟಕ ಧ್ವನಿಗೆ ಬೆಚ್ಚಗೆ ಬೆರಗಾಗಿದ್ದ ಇವನು.

“ಮುಂಬೈ ಘಟನೆಯಲ್ಲಿ ನೀನು ಎಲ್ಲಿದ್ದೆ?”

“ಬಾಲಕನಾಗಿದ್ದೆ.”

ಅದು ಅಲ್ಲದೆ ಮುಂಬೈ ನೋಡಿದ್ದು ಕಡಿಮೆಯೆ ಅನ್ನುವಾಗಲೆ ಆ ಹಿನ್ನಲೆಯೂ ಪತ್ತೆ ಹಚ್ಚಬೇಕು ಎಂದು ವಿಚಾರಣೆ ಮುಗಿಸಿದ್ದರು. ಮತ್ತೆ ಪಾಕಿಸ್ತಾನದ ಯೋಚನೆ ಅವನಿಗೆ ಅಲ್ಲಿ ಹೀಗೂ ಇರಲು ಸಾಧ್ಯವಿಲ್ಲದೆ ಇರಬಹುದು. ಏನು ಏಕೆ ಹೇಗೆ ಏಲ್ಲಿ ಪ್ರಶ್ನೆಗಳು ಮುಗಿದ ನಂತರ ಶಿರಶ್ಚೇದನವೇ ಇರಬಹುದು. ಪಾಪ ಚಾಚ ಮಾಡಿದ ತಪ್ಪು ಯಾವುದು? ಗೆದ್ದಲು ತಿಂದ ಪರ್ಶಿಯನ್ ಭಾಷೆಯ ’ರಾಜ ತರಂಗಿಣಿ’ಯನ್ನು ತನಗೆ ಕೊಟ್ಟಿದ್ದು. ಅದೇ ದೇಶದ್ರೋಹವಾಯಿತಲ್ಲ. ಅಕ್ಬರ್ ಕಾಶ್ಮೀರದ ರಾಜನಿಗೆ ಹೇಳಿ ಅದನ್ನು ಪರ್ಶಿಯನ್ ಭಾಷೆಗೆ ಅನುವಾದಿಸಿದನಂತೆ. ಅದೇ ಪ್ರತಿ ಇದು. ಇಂದು ಇಲ್ಲಿ ತನಗೆ ಹಾಗು ಅಲ್ಲಿ ಚಾಚನಿಗೆ ದೇಶದ್ರೋಹದ ಪಟ್ಟ ಕಟ್ಟಿದೆ.

ಹಿಮವರ್ಷ ತನ್ನ ಶ್ವಾಸ ನಿಶ್ವಾಸದ ಮುಖಾಂತರ ಇಡೀ ದೇಹವನ್ನು ಸೇರಿದ್ದರೂ ಉಸಿರು ಮಾತ್ರ ಬೆಚ್ಚಗಿನ ಹಬೆಯನ್ನು ಉಗುಳುತ್ತಿತ್ತು. ಈ ಆರು ತಿಂಗಳು ಸಂಬಳವನ್ನು ತಡೆದಿದ್ದಾರೆ, ಈಗ ಶುಭಾಂಕರನ ಮೇಲೆಯೇ ತಾನು ಅವಲಂಬಿತನಾಗಿದ್ದೇನೆ. ತನ್ನ ತಾಯಿಗೂ ಹಣಕಳಿಸಬೇಕು. ಎಲ್ಲಿಂದ ಕಳಿಸಬೇಕು?

ಕ್ಯಾಂಪಿನಿಂದ ಅನತಿ ದೂರದಲ್ಲಿದ್ದ ರಾತ್ರಿಯ ಪಾರ್ಟಿಯಲ್ಲಿ ನಡೆದ ಘಟನೆಗಳು ಅವು ಕಪ್ಪು ಅಲ್ಲ ಬಿಳಪು ಅಲ್ಲ ಎನ್ನುವಂತೆ ಇದ್ದವು. ಕಪ್ಪಾದರೆ ದೇಶ ದ್ರೋಹಿಯಾಗುತ್ತಿದ್ದೆ. ಬಿಳುಪಿನದಾಗಿದ್ದರೆ ದೇಶಭಕ್ತನಾಗಿರುತ್ತಿದ್ದೆ. ಆದರೆ ಅಲ್ಲಿ ನಡೆದ ಘಟನೆಗಳು ತನ್ನನ್ನು ಒಬ್ಬ ಭಫೂನನ್ನಾಗಿ ಮಾಡಿದವಲ್ಲ? ಆ ಮೂಲಕ ರಾಷ್ಟ್ರದ್ರೋಹದ ಅಪವಾದನೆಗಳು ಹೀಗೆಯೇ ಜರಗಿದವಲ್ಲ? ನಗಬೇಕೆಂದರೆ ನಗಲು ಆಗುತ್ತಿಲ್ಲ ಅಳಬೇಕೆಂದರೆ ಅಳಲು ಆಗುತ್ತಿಲ್ಲ. ಹಾಗೆಯೇ ಟೆಂಟಿನಲ್ಲಿ ಮುದರಿ ಮಲಗಿದ. ದೂರದಲ್ಲಿ ಎಲ್ಲೋ ತಾತ್ಕಾಲಿಕ ಹಿಮ art-3ನಿರೋಧಕ ಟೆಂಟಿನ ಕೆಳಗೆ ನಾಲ್ಕು ಕಡೆ ಉರಿಯುತ್ತಿದ್ದ ಅಗ್ಗಿಶ್ಟಿಕೆಯ ಮಧ್ಯ ಬೇಯುತ್ತಿರುವವು ಎರಡು ಕೋಳಿಗಳು ಮತ್ತು ಎರಡು ನಾಯಿಗಳು. ಕೋಳಿಗಳು ಬಂಗಾರವರ್ಣದಿಂದ ಜ್ವಾಲೆಯ ಜೊತೆ ಇನ್ನೂ ತೇಜೋಪುಂಜವಾಗಿ ಬೆಳಗಿದರೆ ನಾಯಿಗಳು ಪಾಳು ಬಿದ್ದು ಅವಶೇಷವಾಗಿರುವ ಗುಡಿಯ ಮಧ್ಯದಲ್ಲಿರುವ ಶಿವಲಿಂಗದಂತೆ ಕಪ್ಪು ಕಪ್ಪಾಗಿ ಹೊಳೆಯುತ್ತಿದ್ದವು.

ಮಣಿಪುರದ ಜೋಯ್ ಸಿಂಗ್ ಅಗ್ಗಿಷ್ಠೆಕೆಯ ಮಧ್ಯ ಜೋತುಬಿದ್ದ ನಾಯಿಮಾಂಸದ ತುಣುಕುಗಳನ್ನು ಒಂದೋದೆ ಎಸಳುಗಳಾಗಿ ಬಿಡಿಸಿ ತಿನ್ನುತ್ತ ಜೋರಾಗಿ ಕೂಗಿದ. ’ಬದ್ಮಾಶ್ ನಿನ್ನ ಚಾಚನನ್ನು ನಾನೇ ಕೊಂದೆ. ಆ ದಿನ ನುಸಳಿಕೋರರು ಅವನ ಸಹಾಯದಿಂದಲೇ ತಂತಿ ಹಾರಿ ಬರುತ್ತಿರುವಾಗಲೆ ನನ್ನ ಬುಲ್ಲೆಟುಗಳು ನುಸಳಿಕೋರರ ಜೊತೆ ನಿನ್ನ ಚಾಚನನ್ನು ಸುಟ್ಟು ಚಿಂದಿ ಮಾಡಿದ್ದವು. ಅವನ ರಕ್ತಮಾಂಸ ಮಜ್ಜೆಗಳೆಲ್ಲವೂ ನನ್ನ ಮೇಲೆ ಮಸ್ತಕಾಭಿಷೇಕ ಮಾಡಿದಂತೆ ಸಿಡದಿದ್ದವು. ಒಂದು ವೇಳೆ ನೀನು ಹೀಗೆ ಚಿಂತಾಕ್ರಾಂತನಾಗುತ್ತಿ ಎಂದಾದರೆ ನನ್ನ ಮೇಲೆ ಬಿದ್ದಿದ್ದ ಮಾಂಸ ಮಜ್ಜೆಗಳನ್ನು ನಿನಗೆ ಕೊಡುತ್ತಿದ್ದೆ, ನೀನು ಅವುಗಳನ್ನು ಒಂದು ಮಡಿಕೆಯಲ್ಲಿ ಹಾಕಿ ಝೇಲಂ ನದಿಗೆ ಬಿಟ್ಟು ಶ್ರಾಧ್ಧ ಮಾಡಬಹುದಿತ್ತು.’ ಎಂಥಹ ಉಡಾಫೆ ಮಾತು.

ಮತ್ತೆ ರಮ್ ಓಡ್ಕಾಗಳ ಬುರುಡೆ ಬಿಚ್ಚುತ್ತ ಜೋಯ್,’ಬಾ ಬಾ ನಿನಗೆ ನಾಯಿ ಬಿರ್ಯಾನಿ ತಿನ್ನಿಸುತ್ತೇನೆ’ ಎಂದು ಕೂಗಿದ. ಅವನ ಜೊತೆ ಮಿಜೋರಾಮ್‌ನ ವಿಲಿಯಂ , ಮೇಘಾಲಯದ ಡೆಂಗ್, ಬಂಗಾಲದ ಶುಭಾಂಕರ್ ಎಲ್ಲರೂ ಇದ್ದರಲ್ಲ. ಜೋಯ್ ಇನ್ನೂ ಮಾತಾಡಿದ್ದು ಹಾಡಿದ್ದು ಆ ಹುಳಿಮಿಶ್ರಿತ ಸೇಬು, ಪ್ಲಮ್ ಪೀಚುಗಳ ಮದ್ಯ ಒಂದಾಗಿತ್ತು.

ನಮ್ಮಲ್ಲಿ ಓಬ್ಬನಿದ್ದಾನೆ ದೇಶದ್ರೋಹಿ
ಅವನು ಪಾಕಿಸ್ತಾನಿಯೊಬ್ಬನ ಸ್ನೇಹಿ
ಇವನಿಗೆ ಅವನದೇ ಚಿಂತೆ
ಅವನನ್ನು ಮಾಡಿದ್ದೇನೆ ಹರಿದ ಪಂಚೆ
ಇವನಿಗೆ ಅವನಾಗುತ್ತಾನೆ ಚಾಚಾ
ನಮ್ಮ ದೇಶಕ್ಕೆ ಇವನೆಷ್ಠು ಸಾಚ
ಕೊಲ್ಲುತ್ತೇನೆ ಇವನನ್ನು ಅವನಂತೆ
ಇದು ಒಂದು ಹುಚ್ಚರ ಸಂತೆ

ಎನ್ನುವ ಹಾಡು ಬೆಟ್ಟ ಗುಡ್ಡಗಳ ಮಧ್ಯ ಒಂದಾಗಿ ಪ್ರತಿಧ್ವನಿಸುತ್ತಿತ್ತು, ನೀರ್ಗಲ್ಲುಗಳು ಉರಳುತ್ತಿದೆಯೋ ಎನ್ನುವಂತೆ ಪ್ರತಿಧ್ವನಿ ಪದೆ ಪದೆ ಹಾಡುತ್ತಿತ್ತು. ದೂರದ ಬೆಟ್ಟಗಳು ರಜತಾದ್ರಿಯಂತೆ ಆ ಬೆಳ್ದಿಂಗಳಲ್ಲಿ ಹೊಳೆಯುತ್ತಿದ್ದವು. ಇದೆಲ್ಲ ನೆಡೆದಾಗ ತಾನು ಅಲ್ಲಿ ಇರಲಿಲ್ಲ ಕೂಡ. ತಾನು ಇದ್ದುದ್ದು ಅದೇ ಡೇರೆಯಲ್ಲಿಯೇ ಕಾಲು ಮಡಚಿಕೊಂಡು ಮಲಗಿದವನಿಗೆ ಅವರು ಹಾಡುಗಳ ಮೂಲಕ ಆಹ್ವಾನಿಸುವ ಉದ್ರೇಕಕಾರಿ ಆಹ್ವಾನ ಅಸಹ್ಯ ಮತ್ತು ಭಯ ಹುಟ್ಟಿಸಿತ್ತು. ಈ ಊರು ಕರ್ಪ್ಯೂ ಘೋಷಿಸಿಕೊಂಡು ನೇಣಿಗೇರಿದ್ದರೆ, ಸುತ್ತಮುತ್ತ ಹಳ್ಳಿಗಳು ಶಾಂತ ಸ್ಥಿತಿಯಲ್ಲಿ ಮಲಗಿದ್ದವು. ತಾನು ನಿರ್ಲಿಪ್ತನಾಗಿ ದೂರ ಉಳಿದರೂ ಅವರು ಕೇಳುವವರೆ ಅಲ್ಲ ಎಂದು ತನಗೂ ಗೊತ್ತು, ಹಾಡು ಹೇಳಿ ಹೇಳಿ ಅವರ ಗಂಟಲು ಶೋಷಣೆಯಯಿತೊ ಮೆಲಕು ನೋಯಿತೊ, ನೇರವಾಗಿ ತನ್ನನ್ನು ಕರೆಯಲು ದಾಂಗುಡಿ ಇಟ್ಟರು. ಅರೆ ಶರಣ ಬಾರೋ….. ಶರಣ್ ಬಾರೋ…..ಎನ್ನುವ ಒಕ್ಕರಲಿನ ದ್ವನಿಗಳುಮತ್ತೆ ಬಾರಲೋ ಬಾರಲೋ ಎನ್ನುವ ಘೋಷಗಳು ಒಂದೆರಡು ದ್ವನಿಗಳು ಮಾತ್ರ ಶರಣಕುಮಾರ್ ನಿಷ್ಟಿ ಬನ್ನಿ ಹೊರಗೆ ಎನ್ನುತ್ತಿದ್ದವು. ಬರುವದೋ ಬೇಡವೋ ಬಾಗವಹಿಸುವದೋ ಬೇಡವೋ? ಏಕೆಂದರೆ ಈ ವಿಕ್ಷಿಪ್ತ ಜೋಯ್ ತನ್ನನ್ನು ಮುಕ್ಕಿ ಮುಕ್ಕಿ ತಿನ್ನುವದರಲ್ಲಿ ಸಂದೇಹವಿಲ್ಲ. ಇಷ್ಟಕ್ಕು ಆ ಆಹ್ವಾನಿಸುತ್ತಿರುವ ದ್ವನಿಗಳು ಆಪೇಕ್ಷಣೀಯವೋ ಅಥವಾ ಅವಮಾನದ ಹಾದಿಗೆ ತಳ್ಳುವಂತಹವೋ? ಆದರೂ ಹೋಗಲೆ ಬೇಕಾಗಿತ್ತು. ತಾನು ಸಂಘ ಜೀವಿಯಲ್ಲವೆ. ಅವರಿಲ್ಲದೆ ಬದುಕಲು ಸಾಧ್ಯವೇ ಇಲ್ಲ. ಅಲ್ಲಿ ತನ್ನನ್ನು ಪ್ರೀತಿಸುವ ಶುಭಾಂಕರ ಇದ್ದನಲ್ಲ. ದೂರದ ಬೆಟ್ಟದ ಆ ಧಡಲ್ ಬಡಲ್ ಶಬ್ದಗಳು ನೀರ್ಗಲ್ಲುಗಳವೇ ಇರಬಹುದು. ಹೊರಗೆ ಹೋಗಲೇಬೇಕಾಗಿತ್ತು.

ಹೊರಬಂದ. ಅವರ ಚೀರಾಟ ಮುಗಿಲು ಮುಟ್ಟಿತ್ತು. ’ಶರಣ್ ಮಹಾರಾಜಕಿ ಜೈ ಬೋಲೊ ಶರಣ್ ಮಹಾರಾಜಕಿ ಜೈ ದೇಶದ್ರೋಹಿ ಶರಣ್ ಮಹಾರಾಜ ಕಿ ಜೈ.’

ಪಾಕಿಸ್ತಾನಿಯ ಜೊತೆ ಮಾತಾಡುವದು ಅಪರಾಧವಾದರೆ ಅವರನ್ನು ಕೊಲ್ಲುವದು ಧರ್ಮ. ಅಲ್ಲಿಯೂ ಅಷ್ಟೆ ಕೊಲೆಯಾದ ವ್ಯಕ್ತಿಗಳ ತಲೆ ಎಣಿಸಿ ಹೇಳಿದರೆ ಬಹುಮಾನ ಮೆಡಲ್ಲುಗಳುಗಳು. ಇನ್ನೂ ಕ್ರೂರವಾಗಿ ಕೊಂದರೆ ಆತ ದೇಶ ಭಕ್ತ. ಕೊಲೆಗಡುಕರಿಗೆ ಪುರಸ್ಕಾರ ಸಿಗುವದು ಇಲ್ಲಿಯೇ ಇರಬಹುದು. ತನ್ನ ತಾಯಿಯ ಊರು ಆಳಂದದ ಖಜೂರಿಯಲ್ಲಿ ಕನಿಷ್ಟ ವರ್ಷಕ್ಕೆ ಎರಡು ಹೆಣ ಬೀಳುತ್ತವೆ. ಆ ಎರಡು ಹೆಣಗಳ ಸಲುವಾಗಿ ವರ್ಷದವರೆಗೂ ಸಂಪೂರ್ಣ ಸೂತಕದ ಛಾಯೆ ಆ ಊರಲ್ಲಿ. ಆದರೆ ಇಲ್ಲಿ ಎಲ್ಲವೂ ವಿಲೋಮ ಸ್ಥಿತಿ. ವಿಜಯೋತ್ಸವ, ಸಾವಿನ ಮನೆಯಲ್ಲಿ ಸಂಭ್ರಮ ಪಡುವ ಗಳಿಗೆ ಇದು ಒಂದೇ ಇರಬಹುದು. ಎಂದು ಏನೇನೋ ಯೋಚನೆಗಳು, ಬೋಲೋ ಶರಣ ಮಹಾರಾಜಕಿ ಜೈ.

ಟೆಂಟಿನಿಂದ ಹೊರಬರಲೇಬೇಕಾಗಿತ್ತು ಇಲ್ಲದಿದ್ದರೆ ಜೋಯ್ ನ ಗುಂಪು ಸುಮ್ಮನಿರಬೇಕಲ್ಲ. ಹೊರಬಂದ ತಕ್ಷಣವೇ ಹೋ ಹೋ ಶರಣ್ ಆಯೇ….. ಶರಣ್ ಆಯೇ…….ಆಗಿಂದಾಗಲೇ ದೂರದ ಕಂಟಿಯಲ್ಲಿದ್ದ ಅದೊಂದು ಸೇಬಿನ ಮರದ ದಿನ್ನೆಯನ್ನು ಉರಳಿಸಿಕೊಂಡು ಬಂದು ಅಲ್ಲಿ ನೆಡಲಾಯಿತು. ಅದರ ಮೇಲೆ ತನ್ನನ್ನು ಬಲಾತ್ಕಾರವಾಗಿ ಕೂಡಿಸಲಾಯಿತು. ಶರಣ್ ಗೆ ಈಗ ಸನ್ಮಾನ ಕಾರ್ಯಕ್ರಮ ಎಂದು ಹೇಳಲಾಯಿತು. ಕಾರ್ಯಕ್ರಮಕ್ಕೆ ಮುಂಚಿತವಾಗಿ ಮಾತಾಡಬೇಕಲ್ಲ. ಪ್ರಾಸ್ತಾವಿಕ ಅದು ಮಾತಾಡುವವರು ಮತ್ಯಾರು? ಅದೇ ಜೋಯ್‍ಸಿಂಗ್. ಇಂದು ಬಹಳ ಸಂತೋಷದ ದಿನ. ಏಕೆಂದರೆ ನನ್ನ ಸ್ನೇಹಿತರೊಬ್ಬರು ಬಹುವಾಗಿ ಒಂದು ಮಹತ್ಕಾರ್ಯವನ್ನು ಮಾಡಿದ್ದಾರೆ. oil-paintingಅವರನ್ನು ಈ ದೆಸೆಯಿಂದ ಹೇಗೆ ಸನ್ಮಾನಿಸಬೇಕು ತಿಳಿಯುತ್ತಿಲ್ಲ. ಆದರೂ ಅವರಿಗೆ ಸನ್ಮಾನಿಸಿ “ನಿಶಾನಿ ಏ ಪಾಕಿಸ್ತಾನ” ಕೊಟ್ಟು ಗೌರವಿಸಲಾಗುವದು ಏಕೆಂದರೆ ಅವರು ಪಾಕಿಸ್ಥಾನಕ್ಕೆ ಬೇಕಾದ ವ್ಯಕ್ತಿ ಎಂದು ಹೇಳಿದ. ಎಲ್ಲರೂ ಚಪ್ಪಾಳೆ ತಟ್ಟಿದರು ನಗುತ್ತಲೆ ಓಹೋ….. ಎಂದು ಸಂಭ್ರಮಿಸಿದರು. ಒಂದು ತಟ್ಟೆಯಲ್ಲಿ ಫರ್ನಗಿಡದ ಎಲೆಗಳಿಂದ ಮಾಡಿದ ಹಾರ ಮತ್ತು ಪೀಚ್ ಹೂಗಳ ಗುಚ್ಚ ಮತ್ತು ಅದರ ಜೊತೆ ನಾಯಿಯ ಎಲಬುಗಳನ್ನು ಆ ತಟ್ಟೆಯಲ್ಲಿ ಇಟ್ಟು ತನಗೆ ಕೊಡಮಾಡಿದರು . ರಭಸವಾಗಿ ನುಗ್ಗುವ ಗಾಳಿಗೆ ಸಣ್ಣ ಸಣ್ಣ ಹಿಮಹಳ್ಳುಗಳು ಟೆಂಟಿನೊಳಗೆ ನುಗ್ಗುತ್ತಿದ್ದವು. ಸನ್ಮಾನಕ್ಕೆ ಪ್ರತಿಯಾಗಿ ತಾನು ಮಾತಾಡಲೇಬೇಕು ಎಂದು ಎಲ್ಲರು ಪಟ್ಟು ಹಿಡದಿದ್ದರು ಏನು ಮಾತಾಡಬೇಕು? ಮಾತಾಡಲು ಏನಿದೆ ದೇಶದ್ರೋಹಿಯ ಬಾಯಿಂದ ಯಾವ ಮಾತು ಕೇಳಲಿದ್ದಿರಿ ಎನ್ನಬೇಕು ಎಂದುಕೊಂಡ. ಆದರೆ ಮಾತಾಡಲೇಬೇಕು ಎಂದು ಶುಭಾಂಕರನೊಡಗೂಡಿ ಎಲ್ಲರೂ ಒತ್ತಾಯಿಸಿದಾಗ ಮಾತಾಡಬೇಕೆನಿಸಿದರೂ ಮಾತಾಡಲಿಲ್ಲ. ಹಾಡಾದರು ಹೇಳು ಎಂದು ಎಲ್ಲರೂ ಒತ್ತಾಯಿಸುವವರೆ ಹಾಡು ಹಾಡಲು ತಾನೇನು ಗಾಯಕನಲ್ಲ. ಆದರೂ ಅವರು ಕೇಳುವುದಿಲ್ಲ ಕೂಡ ಹಾಡು ಶುರು ಮಾಡಿದ.

ಬಾ ಬಾ ಗಿಳಿಯೇ ಬಣ್ಣದ ಗಿಳಿಯೇ
ಹಸಿರು ಮೂಗಿನ ಚಂದದ ಗಿಳಿಯೇ
ಹಣ್ಣನು ಕೊಡುವೆನು ಬಾ ಬಾ ಬಾ

ಒಂದು ಪಲ್ಲವಿ ಮುಗಿದಾಕ್ಷಣವೇ ಜೋಯ್ ಜೋರಾಗಿ ಹಾಡಲು ಆರಂಭ ಮಾಡಿದ.

ಬಾಯ್ ಬಾಯ್ ಗಳಿಯೇ
ಬಾಣದ ಗಳಿಯೇ ಚಾಚಾ ಗಳಿಯೇ ಶರಣಗಳಿಯೇ ಚಾಚ ಶರಣ್ ಗಳಿಯಾ ಶರಣ್ ಚಾಚಾ ಶರಣ .. ಹಾಸ್ರ ಶರಣ ಹಣ ಶರಣ್ ಎಂದು ಕನ್ನಡ ಪದ್ಯವನ್ನು ಅಪಭ್ರಂಷಗೊಳಿಸಿ ಹಾಡಿದ ಆ ಪರ್ವತ ಶ್ರೇಣಿಗಳೆಲ್ಲವೂ ಆಮೇಲೆ ತಾವೆ ಹಾಡಲು ಶುರು ಮಾಡಿದವು . ಚಾಚಾ ಶರಣ್ ಗಳಿಯಾ ಶರಣ್ ಚಾಚಾ ಶರಣ ಗಳಿಯಾ ಶರಣ್…

ನಾನ್‍ಸೆನ್ಸ, ಬನ್ನಿ ಅಲ್ಲಿ ದಿಗ್ವಿಜಯ್ ಸಿಂಗ್ ನ ಹೆಣ ಬಿದ್ದಿದೆ. ನೀವು ಇಲ್ಲಿ ಕುಡಿದು ತಿಂದು ಮೋಜು ಮಾಡುತ್ತಿರುವಿರಿ ಇದು. ನಿಮಗೆ ನಾಚಿಕೆ ಆಗುವದಿಲ್ಲವೆ. ಕರೆದವನು ಸಾಮನ್ಯನಲ್ಲ ಸೈನ್ಯದ ಮೇಜರ್. ದಿಗ್ವಿಜಯ ಎಂದರೆ ಅಪ್ರತಿಮ ಧೈರ್ಯವಂತ. ಕಳೆದ ತಿಂಗಳು ಆರು ಉಗ್ರರನ್ನು ಕೊಂದ ಭೂಪಾಲದ ಹುಡುಗ. ಸಾಯುವ ಮುಂಚೆಯೂ ಇಬ್ಬರು ಉಗ್ರರನ್ನು ಕೊಂದಿದ್ದ. ಆತನ ಗ್ರೆನೈಡ್ ದಾಳಿಗೆ ಅವರು ಸುಟ್ಟು ಕರಕಲಾಗಿದ್ದರು.

ಎಲ್ಲರೂ ಗಾಬರಿಯಾಗಿದ್ದರು.

ಶರಣ್ ಕೈಯ್ಯಲ್ಲಿದ್ದ ಹೂವು ತುರಾಯಿ ನೋಡಿದ ಮೇಜರ್ ಸಾಹೆಬರಿಗೆ ಏನು ಅನ್ನಿಸಿತೋ ಏನೋ. ಅದನ್ನು ಜೋರಾಗಿ ಆಕಾಶಾಭಿಮುಖವಾಗಿ ತೂರಿದರು ಕಾಲನ್ನು ಭೂಮಿಗೆ ಜೋರಾಗಿ ಒದ್ದರು ದೇಶದ್ರೋಹಿಗಳೆ ಎಂದು ಕಿರುಚಿ ಆ ಹುಡಗನನ್ನು ನೋಡಿ ಕಲಿಯಿರಿ ಆ ಹುಡುಗನ ಧೈರ್ಯ ಸಾಹಸ ದೆಶದ್ರೋಹಿಗಳಿಗೆ ಒಂದು ಪಾಟವಾಗಬೇಕು ಎಂದು ಸಿಟ್ಟಿನಿಂದಲೆ ಮೂವ್ ಟು ಫೀಲ್ಡ ಎಂದು ಎಲ್ಲರನ್ನು ಕರೆದುಕೊಂಡು ಹೋದರು.ಆ ಒಂದು ವಾರ ದಿಗ್ವಿಜಯನ ನೆನಪಲ್ಲೆ ಹೋಯಿತು. ಅದರ ಜೊತೆ ತಾನು ಅನಾಥನಂತೆ ಈ ದೇಶಕ್ಕೆ ಸಂಬಂಧವಿಲ್ಲದ ಒಬ್ಬವನಾಗಿ ಆ ಢೇರೆಯಲ್ಲೆ ಕಾಲಕಳೆದನಲ್ಲ? ಎಲ್ಲಕ್ಕಿಂತಲೂ ತನ್ನನ್ನು ಬಹುವಾಗಿ ಭಾದಿಸಿದ್ದು ಕಾಡಿದ್ದು ತನ್ನನ್ನು ಇಂದಿಗೂ ಭಾಧಿಸುತ್ತಿರುವದು ಜೋಯ್‍ನ ಆಗಿನ ವರ್ತನೆ ಆತಟ್ಟೆಯಲ್ಲಿ ಇಟ್ಟು ನಾಯಿಎಲಬುಗಳನ್ನು ಕೊಟ್ಟಿದ್ದು ತಮಾಶೆಗಾಗಿ ಇರಬಹುದು, ಆದರೆ ಆತನ ಹಿಂದಿನ ಮಾತು ಮರೆಯಲು ಹೇಗೆ ಸಾಧ್ಯ ಅವನೇ ಯಾವಾಗಲೂ ಹೇಳುತ್ತಿದ್ದ ನಮ್ಮ ಗುಡ್ಡಗಾಡುಗಳ ರಾಜ್ಯಗಳಲ್ಲಿ ದ್ರೋಹಿಗಳಿಗೆ ನಾಯಿ ಎಲಬುಗಳನ್ನು ಉಡುಗರೆಯಾಗಿ ಕೊಡುತ್ತಾರೆ ಅದು ಒಂದು ರೀತಿಯ ಎಚ್ಚರಿಕೆಯಾಗಿಯೂ ಇರಬಹುದು. ಈ ಮಾತು ರಾತ್ರಿಯ ನಿದ್ರೆಯನ್ನು ಕಸಿಯುತ್ತದೆ. ಜೊಯ್ ನ ಮಾತುಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಶುಭಾಂಕರ ಹೇಳಿದರೂ ಕೂಡ ಆಂತರ್ಯದಲ್ಲಿರುವ ಆ ಸಂಶಯದ ವಾಸನೆ? ಯೋಚಿಸುತ್ತ ಯೋಚಿಚುಸುತ್ತ ನನ್ನ ಮನಸ್ಸು ಅದೇ ಆಗುತ್ತದೆ. ರಜಿಯಾ ತನಗಾಗಿ ಕಳುಹಿಸಿದ ಪತ್ರದಲ್ಲಿ ಅವಳು ಏನೆಂದು ಬರೆಯತ್ತಿದ್ದಳು. ಅದೆ ಕಣ್ಣಿಗೆ ಕಾಣದ ಎಂದೂ ಭೇಟಿಯಾಗಲಾಗದ ತಮ್ಮ ಶರಣ್ ಅಂತೆಲೋ ನನ್ನ ಅಜ್ಞಾತ ತಮ್ಮನೆಂತಲೋ ಹೌದಲ್ಲವೋ? ಏನೇನೋ ಯೋಚನೆಗಳು.

ಎಂಟು ದಿನಕ್ಕೊಮ್ಮೆ ಸೈನಿಕ ಕೋರ್ಟಿನ ಕಟ್ಟಳೆಗಳು, ತರಹೇವಾರಿ ಪ್ರಶ್ನೆಗಳು, ತನಗೇ ಅಸಂಭದ್ಧವೋ ಅವರಿಗೆ ಸಂಬದ್ದವೋ ತಿಳಿಯದು. ಅಂದು ಮಂಜುಮುಸುಕಿ ಶ್ರೀನಗರವೆಲ್ಲ ಮಂಜಿನಿಂದಾವೃತ್ತವಾಗಿತ್ತು. ಅವರು ಇಂದು ಬಹಳ ಮರ್ಯಾದೆಯಿಂದಲೇ ಮಾತಾಡಿಸಿದರು. ಕೆಲ ಎಚ್ಚರಿಕೆಯನ್ನು ಕೊಟ್ಟರು, ಬೇರೆದೇಶದ ಸೈನಿಕನ ಜೊತೆ ನನ್ನ ವರ್ತನೆ ಹೇಗೆ ಇರಬೇಕೆಂದು ಹೇಳಿದರು. ಈ ಬಡತನದಲ್ಲಿ ತಾಯಿಯ ಜವಬ್ದಾರಿಯನ್ನು ಹೇಗೆ ನಿಭಾಯಿಸಬೇಕೆಂದು ಮಾತಿನಿಂದಲೇ ಜಂಕಿಸಿದರು. ಇದಕ್ಕೆ ಪೂರಕವಾಗಿ ಚಾಚಾನ ಜೊತೆ ನಮ್ಮ ಕೆಲ ಸೈನಿಕರು ಕೆಲಸಮಾಡಿದ್ದರಲ್ಲ ವಾಘಗಡಿಯಲ್ಲಿ? ಆತನ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಘನ ನ್ಯಾಯಾಧೀಶರು ಒಂದು ಲಿಖಿತ ಹಿಮ್ಮಾಯಿತಿಯನ್ನು ಓದಿದರು. ಬಂದೇನವಾಜ ನಿಷ್ಟಿ ಎನ್ನುವ ಈತನಿಗೆ ಏನನ್ನಬೇಕೋ ತಿಳಿಯದು. ಬಹುಶ ಸಂತ ಮಹಾತ್ಮ ಎನ್ನುವ ಶಬ್ದಗಳು ಸೂಕ್ತ ಎನ್ನಿಸುತ್ತವೆ ಅಂಥಹ ಅದಮ್ಯ ಕಾಳಜಿ ಇರುವ ಶಾಂತಮೂರ್ತಿ, ಇನ್ನೂ ಇವನ ಬಗ್ಗೆ ಏನು ಹೇಳಲಿ ಪ್ರೀತಿಯ ಸಂಕೇತವಾದ ಅದಮ್ಯ ಜೀವ ಇವನು, ಇದನ್ನು ಬರೆದಿದ್ದು ಜೋಯ್ ಸಿಂಗ್. ಕಣ್ಣೀರು ಭೂಮಿ ಸೇರಿದ್ದವು.

ಮರುದಿನ ಮತ್ತೆ ಅದೆ ಲೆಫ್ಟ್ ರೈಟ್, ಸೈನ್ಯದ ಪೋಷಾಕುಗಳು, ಇದರ ಜೊತೆ ಆರು ತಿಂಗಳ ಸಂಬಳಕ್ಕೆ ಅರ್ಜಿ ಹಾಕುವ ಕೆಲಸ ಅಮ್ಮನಿಗೆ ಶುಭಾಂಕರನಿಂದ ಮತ್ತಷ್ಟು ಹಣ ಕಳುಹಿಸುವ ಕೆಲಸ, ಇದರ ಜೊತೆ ಲೆಟರ್ ಟ್ರೇನಲ್ಲಿ ತನ್ನದೊಂದು ಪತ್ರ ಆಗಲೇ ಒಡೆದಾಗಿತ್ತು. ಅದು ಪಾಕಿಸ್ತಾನದಿಂದ ಬಂದ ಪತ್ರ. ಪತ್ರ ತೆರೆದ. ಬಿಳಿಯ ದ್ರಾವಣದಿಂದ ಅದರಲ್ಲಿರು ಅಕ್ಷರಗಳನ್ನು ಕೆಡೆಸಲಾಗಿತ್ತು, ಪತ್ರದ ಮೇಲ್ಬಾಗ ಹೆಬ್ಬಟ್ಟಿನ ಗುರುತು. ಇದು ಮಾಡಿದ್ದು ಯಾರು ನಮ್ಮ ಸೈನ್ಯವೇ? ಅಲ್ಲಿಯ ಸೈನ್ಯವೇ ಆದರೂ ಆ ಹೆಬ್ಬಟ್ಟಿನ ಕರಿ ಗುರಿತು ಅಲ್ಲಿ ಯಾರೋ ಸತ್ತಿದ್ದನ್ನು ಹೇಳುತ್ತಿತ್ತು. ಸತ್ತವರು ಯಾರು ಎಂದು ಮನ ಪ್ರಶ್ನಿಸುತ್ತಿತ್ತು. ಎಂಥಹ ಯೋಚನೆಗಳು ಅವು ಮೆದಳು ಬಳ್ಳಿಗಳೆಲ್ಲ ದಣದಿದ್ದವು, ಅರಗಿನ ಕೊರಡಿಗೆ ತೀವ್ರವಾಗಿ ತಾಗುವ ಬೆಂಕಿಯಂತೆ ನಿದ್ರೆ ಎಂಬುದು ತಗಲಿಕೊಂಡಿತಲ್ಲ.

ಜನನಾಯಕರೇ, ಸೆನ್ಸಾರ್ ಮಾಡಿ ಮಾತನಾಡಿ


– ಡಾ.ಎಸ್.ಬಿ. ಜೋಗುರ


ನುಡಿದರೆ ಮುತ್ತಿನ ಹಾರದಂತಿರಬೇಕು.. ಎನ್ನುವ ಶರಣರ ವಾಣಿ ಆ ಮಾತು ಹೌದು..ಹೌದು ಎಂದು ಲಿಂಗ ಮೆಚ್ಚುವಂತಿರಬೇಕು ಎನ್ನುತ್ತದೆ. ಕೊನೆಗೂ ಇಲ್ಲಿ ಲಿಂಗ ಎನ್ನುವುದು ನಮ್ಮ ಮನ:ಸಾಕ್ಷಿ ಎಂದರ್ಥ. ಮಾತು ಮನುಷ್ಯನ ಮನಸಿನ ಕನ್ನಡಿ, ವ್ಯಕ್ತಿತ್ವದ ಭಾಗ.ಹೀಗಿರುವಾಗ ಮನಸೊಪ್ಪದ ಮಾತನಾಡಿ ಪರಿತಪಿಸುವ ಅಗತ್ಯವಾದರೂ ಏನಿದೆ..? ಮಾತನಾಡುವವರಲ್ಲಿ ಮೂರು ಪ್ರಬೇಧಗಳಿವೆ ಒಂದನೆಯದು ಬರೀ ಮಾತನಾಡುತ್ತಾ ಹೋಗುವದು ಅದರ ಅಡ್ಡ ಪರಿಣಾಮ, ಉದ್ದ ಪರಿಣಾಮಗಳ ಬಗ್ಗೆ ಇವರು ಕಿಂಚಿತ್ತೂ ತಲೆ ಕೆಡಿಸಿಕೊಳ್ಳದವರು. ಎರಡನೆಯವರು ಮೊದಲು ಮಾತನಾಡಿ ಆಮೇಲೆ ಅಯ್ಯೋ ಹಾಗೆ ಮಾತನಾಡಬಾರದಿತ್ತು ಎಂದು ಕರಬುವವರು. ಮೂರನೇಯವರು ಮಾತನಾಡುವ ಮುನ್ನ ಒಂದೆರಡು ಬಾರಿ ಯೋಚಿಸಿ ಈ ಮಾತಿನ ಪರಿಣಾಮ ಏನಾಗಬಹುದು ಎಂದು ಲೆಕ್ಕಿಸಿ ಮಾತನಾಡುವವರು. ಈ ಮೂರೂ ಪ್ರಬೇಧಗಳಲ್ಲಿ ಮೂರನೇಯದು ಅತ್ಯುತ್ತಮವಾದುದು. ಅಲ್ಲಿ ತಕ್ಕ ಮಟ್ಟ್ತಿಗೆ ನೀವಾಡುವ ಮಾತು ನಿಮ್ಮಿಂದಲೇ ಸೆನ್ಸಾರ್ ಆಗಿ ಹೊರಬರುತ್ತದೆ.

ನಮ್ಮನ್ನಾಳುವ ಜನನಾಯಕರು ಗ್ರಾಮ ಪಂಚಾಯತದ ವ್ಯಾಪ್ತಿಯಿಂದ ಹಿಡಿದು ರಾಷ್ಟ್ರಪತಿಗಳ ವರೆಗೆ ಮಾತನಾಡುವಾಗ ಹತ್ತಾರು ಬಾರಿ ಯೋಚಿಸಿ ಮಾತನಾಡಬೇಕು. ಯಾಕೆಂದರೆ ಅವರೆಲ್ಲಾ ಜನರ ಪ್ರತಿನಿಧಿಗಳು ಅವರಾಡುವ ಮಾತುಗಳು ಪಾಲಿಶ್ ಆಗಿಯೇ ಹೊರಬರಬೇಕು. ಮನಸಿಗೆ ಬಂದಂತೆ ಮಾತನಾಡುವದಲ್ಲ. ಇತ್ತೀಚಿನ ದಿನಗಳಲ್ಲಿ ನಮ್ಮ ಜನನಾಯಕರು ಮಾತನಾಡುವಾಗ ಕಿವಿ ಮುಚ್ಚಿಕೊಳ್ಳುವುದೇ ಒಳಿತು ಎನ್ನುವ ಭಾವನೆ ಬರತೊದಗಿದೆ. ಅದಕ್ಕಿಂತಲೂ ದೊಡ್ದ ವಿಷಾದವೆಂದರೆ ಅವರು ಮಾಧ್ಯಮ ಎದುರಲ್ಲಿ ಮಾತನಾಡುವಾಗಲೂ ನಾಲಿಗೆಗೆ ಲಗಾಮಿರುವದಿಲ್ಲ ಎನ್ನುವುದು. ನಮ್ಮ ಖಾಸಗಿ ಮತ್ತು ಸಾರ್ವಜನಿಕ ವಲಯಗಳ ಅಂತರವೂ ನಮ್ಮ ಜನನಾಯಕರಿಗೆ ತಿಳಿಯದಾಯಿತೆ..? ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎನ್ನುವ ಮಾತಿದೆ. ಮಾತಾಡುವ ಮುನ್ನ ಹತ್ತಾರು ಬಾರಿ ಸಾರಾಸಾರ ಯೋಚಿಸಿ ಬಾಯಿ ತೆಗೆಯಬೇಕು. ಪಶ್ಚಿಮದ ರಾಷ್ಟ್ರಗಳಲ್ಲಿ ಒಬ್ಬ ಜನನಾಯಕ ಮಾಧ್ಯಮದೆದುರು ಹೋಗಬೇಕಾದರೆ ಒಂದು ಶಿಸ್ತುಬದ್ಧವಾದ ತಾಲೀಮನ್ನು ಮಾಡಿ ಆಮೇಲೆ ಬಯಲಾಗುತ್ತಾನೆ. ನಮ್ಮಲ್ಲಿ ಹಾಗಿಲ್ಲ. ಮನಸಿಗೆ ಬಂದಂತೆ ಮಾತನಾಡಿ ತನ್ನ ಕುಬ್ಜತನವನ್ನು ಪ್ರದರ್ಶನ ಮಾಡುವ ಜೊತೆಗೆ ಅವನನ್ನು ಆಯ್ಕೆ ಮಾಡಿದವರು ಪಶ್ಚಾತ್ತಾಪ ಪಡುವಂತೆ ಮಾಡುವ ಮೂಲಕ ಬಯಲಾಗುತ್ತಾನೆ.ಹಣ, ಅಧಿಕಾರ, ಜಾತಿ, ಇಂಥವುಗಳ ಮದದಿಂದಲೂ ನಮ್ಮ ಜನನಾಯಕರ ಮಾತುಗಳು ವಕ್ರವಾಗುವದಿದೆ. ಹಿಂದೆ ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಅವರು ಮಾತನಾಡುವ ರೀತಿ ಯಾರನ್ನೂ ನೋಯಿಸುತ್ತಿರಲಿಲ್ಲ ಬದಲಾಗಿ ನಗಿಸುವಂತಿರುತ್ತಿತ್ತು. ಹಾಗಂತ ಹೇಳುವದನ್ನು ಹೇಳದೇ ಅವರು ಬಿಡುತ್ತಿರಲಿಲ್ಲ. ನನಗಿನ್ನೂ ನೆನಪಿದೆ ಬೆಂಗಳೂರಿನಲ್ಲಿ ಸೌಂದರ್ಯ ಸ್ಪರ್ಧೆಯನ್ನು ನಡೆಯಿಸುವ ಸಂದರ್ಭದಲ್ಲಿ ವಿರೋಧ ಪಕ್ಷಗಳಿಗೆ ’ನಾನಂತೂ ಅದಕ್ಕೆ ಅವಕಾಶ ಕೊಡುವೆ ನೋಡುವವರು ನೋಡಲಿ ನೋಡದಿರುವವರು ಕಣ್ಣು ಮುಚ್ಚಿ ಕೊಳ್ಳಲಿ’ ಎಂದಿದ್ದರು. ಸದನದಲ್ಲಿಯೂ ಇಂಥಾ ಅನೇಕ ಮಾತುಗಳನ್ನು ತೇಲಿ ಬಿಟ್ಟು ಇಡೀ ಸದನವನ್ನೇ ನಗೆಗಡಲಲ್ಲಿ ತೇಲಿ ಬಿಡುತ್ತಿದ್ದರು. ಈಗ ಪರಿಸ್ಥಿತಿ ಎಷ್ಟು ಅತಿರೇಕಕ್ಕೆ ಹೋಗಿದೆ ಎಂದರೆ ಸದನದಲ್ಲಿ ಏನು ನಡೆಯಬಾರದೋ ಅವೆಲ್ಲವನ್ನೂ ನಮ್ಮ ಜನನಾಯಕರು ನಡೆಸಿ ಆಯಿತು. ಅವುಗಳಿಗಿಂತಲೂ ಅಗ್ಗವಾದದ್ದು ಏನೂ ಉಳಿದಿಲ್ಲ.

ನಮ್ಮ ಜನನಾಯಕರ ಮಾತು ಕೇಳಿದರೆ ಅವು ತೀರಾ ಖಾಸಗಿ ಸಂದರ್ಭದಲ್ಲಿ ಆಡಬೇಕಾದಂತವುಗಳು. ಹಾಗಿರುವಾಗಲೂ ಅವರು ಹಿಂಡು ಹಿಂಡಾಗಿರುವ ಮಾಧ್ಯಮದವರ ಎದುರು ಅತ್ಯಂತ ಅಸಹ್ಯವಾಗಿ ಮಾತನಾಡುವದನ್ನು ನೋಡಿದರೆ ಒಬ್ಬ ತೀರಾ ಜನಸಾಮಾನ್ಯನೂ ಅವರಿಗಿಂತಲೂ ತಾನು ನೂರು ಪಾಲು ಮೇಲು ಎನ್ನುವ ಸಮಾಧಾನ ಪಡುವಂತಿದೆ. ಕೈ ಕತ್ತರಿಸುವೆ, ರುಂಡ ಚಂಡಾಡುವೆ, ಒಂದು ಕೂದಲೂ ಅಲ್ಲಾಡಿಸಲಾಗಲ್ಲ, ತಾಕತ್ತಿದ್ದರೆ ಬಾ, ಇಂಥಾ ಮಾತುಗಳು ನಮ್ಮ ಜನನಾಯಕರ ಬಾಯಿಂದ ಬರಬಹುದೆ..? ಇಲ್ಲಿ ಯಾವುದೋ ಒಂದು ಪಕ್ಶವನ್ನು ಕುರಿತು ನಾನು ಹೇಳುತ್ತಿಲ್ಲ. ಎಲ್ಲ ಪಕ್ಷಗಳಲ್ಲೂ ಹೀಗೆ ಅಸಹ್ಯವಾಗಿ ಮಾತನಾಡುವವರು ಇದ್ದೇ ಇದ್ದಾರೆ. ಅವರು ತಮ್ಮ ನಾಲಿಗೆಯನ್ನು ಪಾಲಿಶ್ ಮಾಡದೇ ಸಾರ್ವಜನಿಕ ವಲಯದಲ್ಲಿ ಹರಿ ಬಿಡಬಾರದು.yeddy-eshwarappa ನಿಮ್ಮ ಮುಂದಿರುವ ಪೀಳಿಗೆಗೆ ಮಹತ್ತರವಾದುದದನ್ನು ನೀವು ಕೊಡುಗೆಯಾಗಿ ನೀಡಬೇಕೇ ಹೊರತು ಇಂಥದ್ದನ್ನಲ್ಲ. ಇಂಥವರನ್ನು ಗಮನದಲ್ಲಿಟ್ಟುಕೊಂಡೇ ಮಾತು ಬೆಳ್ಳಿ ಮೌನ ಬಂಗಾರ ಎಂದಿರುವದಿದೆ. ನಾವು ನಮ್ಮ ಮೊಬೈಲ್ ಲ್ಲಿ ರಿಂಗ ಟೋನ್ ಯಾವುದನ್ನು ಇಟ್ಟುಕೊಂಡಿದ್ದೇವೆ ಎನ್ನುವದರ ಆಧಾರದ ಮೇಲೆಯೇ ನಮ್ಮ ವ್ಯಕ್ತಿತ್ವವನ್ನು ಅಳೆಯಬಹುದು ಎನ್ನುವ ಮಾತಿನಂತೆ ನಾವಾಡುವ ಮಾತು, ವರ್ತನೆ ನಮ್ಮ ವ್ಯಕ್ತಿತ್ವದಿಂದ ಅದು ಹೇಗೆ ಭಿನ್ನವಾಗಲು ಸಾಧ್ಯ..? ಜನ ಪ್ರತಿನಿಧಿಗಳು ಯಾವುದೇ ಪಕ್ಷದವರಾಗಿರಲಿ ನಿಮ್ಮ ಮಾತುಗಳು ನಮ್ಮ ಮುಂದಿನ ಪೀಳಿಗೆಗೆ ಅನುಕರಣೀಯವಾಗಿರಬೇಕು. ಅಧಿಕಾರವಿದೆ ಮತ್ತು ಬಾಯಿ ಇದೆ ಎನ್ನುವ ಕಾರಣಕ್ಕೆ ಏನೇನೋ ಮಾತಾಡಬಾರದು. ಒಂದು ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ನಿಮ್ಮ ಮಾತುಗಳ ಪಾತ್ರ ಅಗಾಧವದುದು. ಮಾತು ಮನೆ ಕೆಡಿಸುವ ಬಗ್ಗೆ ನೀವು ತಿಳಿದಿರುವಿರಿ. ಈಗ ನಾವು ಜಾಗತೀಕರಣದ ಸಂದರ್ಭದಲ್ಲಿದ್ದೇವೆ. ನಮ್ಮ ಮಾತುಗಳು ರಾಜ್ಯ ಮತ್ತು ರಾಷ್ಟ್ರವನ್ನು ಕೆಡಿಸುವಲ್ಲಿಯೂ ಕಾರಣವಾಗಿ ಕೆಲಸ ಮಾಡಬಹುದು. ಮಾಧ್ಯಮಗಳ ಎದುರಲ್ಲಿ ಮಾತನಡುವಾಗ ನಿಮ್ಮ ಮಾತುಗಳು ಫ಼ಿಲ್ಟರ್ ಆಗದಿದ್ದರೆ ಅದು ಇಡೀ ರಾಜ್ಯವನ್ನು ನಾಚಿಸುವಂತಾಗುತ್ತದೆ. ಹಿಂಸಾತ್ಮಕವಾದ ಹೇಳಿಕೆಗಳನ್ನು, ಪುಂಡಾಟಿಕೆಯನ್ನು, ಭಂಡತನವನ್ನು ಎಂದೂ ನಮ್ಮ ಜನನಾಯಕರು ಪ್ರದರ್ಶಿಸಬಾರದು. ಟೀಕೆಯನ್ನು ಮಾಡುವಾಗ ನಮ್ಮ ಮನಸು ಸ್ಥಿತಪ್ರಜ್ಞೆಯಲ್ಲಿದ್ದರೆ ಬಳಸುವ ಭಾಷೆಯಲ್ಲಿಯೂ ಸ್ವಚ್ಚತೆಯಿರುತ್ತದೆ. ಬಾಯಿ ತೆಗೆದರೆ ಸಾಕು, ಕೊಳಕುತನದ ಪ್ರದರ್ಶನವಾಗುವಂತಿದ್ದರೆ ಅಂಥಾ ಬಾಯಿಯನ್ನು ತೆಗೆಯುವದಕ್ಕಿಂತಲೂ ತೆಗೆಯದಿರುವಾಗಲೇ ಹೆಚ್ಚು ಗೌರವ ಸಾಧ್ಯ. ಟಿ.ವಿ ವೀಕ್ಷಕರು ಇವತ್ತು ಯಾವ ಪಕ್ಷದ ಯಾವ ರಾಜಕಾರಣಿ ಕೊಳಕು ಮಾತನ್ನಾಡಿದ್ದಾನೆ ಎನ್ನುವದನ್ನು ನೊಡಲೆಂದೇ ಕುಳಿತುಕೊಳ್ಳುವ ಅಪ ಸಂಸ್ಕೃತಿಯನ್ನು ರೂಪಿಸುವ ವಕ್ತಾರರಾಗಬೇಡಿ. ಮಾತಿನಲ್ಲಿ ಮೋಡಿಯಿರಲಿ.. ಟೀಕೆಯಲ್ಲಿಯೂ ವಿನಯವಿರಲಿ. ನೀವೆಲ್ಲಾ ನಮ್ಮ ಜನನಾಯಕರು ರಾಜ್ಯದ ಜನತೆಗೆ ನೀವು ಮಾತಿನಲ್ಲಾದರೂ ಮಾದರಿಯಾಗುವುದು ಬೇಡವೇ..ನಿಮ್ಮಿಂದ ಯಾವ ಮಹತ್ತರ ಕೆಲಸಗಳನ್ನು ಮಾಡಲಾಗದಿದ್ದರೂ ಒಳ್ಳೆಯ ಮಾತುಗಳನ್ನಾಡುವುದಾದರೂ ಸಾಧ್ಯವಿದೆ. ಇನ್ನು ಮುಂದಾದರೂ ಸಾರ್ವಜನಿಕ ವೇದಿಕೆಗಳಲ್ಲಿ ಅಸಹ್ಯವಾದ ಮಾತು ಮತ್ತು ವರ್ತನೆಗಳನ್ನು ಅನಾವರಣಗೊಳಿಸದಿರಿ. ನೀವೇ ಖುದ್ದಾಗಿ ಸೆನ್ಸಾರ್ ಮಾಡಿ ಮಾತನಾಡುವ ಗುಣ ಬೆಳೆಸಿಕೊಳ್ಳಿ.