Author Archives: Aniketana

ಕುವೆಂಪು ರಚಿತ ಮಕ್ಕಳ ನಾಟಕಗಳು


– ರೂಪ ಹಾಸನ


 

ಕುವೆಂಪು ಅವರು ಈ ನಾಡು ಕಂಡ ಶ್ರೇಷ್ಠ ಕವಿ ಹಾಗೂ ದಾರ್ಶನಿಕ. ಇಷ್ಟೇ10156079_609745305782339_685038433_n ಆಗಿದ್ದರೆ ಅವರನ್ನು ಇಂದಿಗೂ ನೆನಪಿಸಿಕೊಳ್ಳುವ ತುರ್ತು ಇರುತ್ತಿರಲಿಲ್ಲ. ಅವರು ಸಮಕಾಲೀನ ವಿಚಾರಗಳಿಗೆ ಸ್ಪಂದಿಸುತ್ತಿದ್ದ ರೀತಿ, ಅವರ ಸಾಮಾಜಿಕ ಕಾಳಜಿ, ಬದುಕಿನ ಹಕ್ಕಿನ ಬಗೆಗೆ ಇದ್ದ ಗೌರವ, ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ನೀಡಿದ ಮಹತ್ವ, ತುರ್ತು ಪರಿಸ್ಥಿತಿಯ ವಿರುದ್ಧ ಅವರು ವ್ಯಕ್ತ ಪಡಿಸಿದ ಆಕ್ರೋಶ….. ಹೀಗೆ ಅವರ ಇಡೀ ಬದುಕೇ ಇತರರಿಗೆ ಮಾದರಿಯಾಗಿರುವಂತದ್ದು. ಕುವೆಂಪು ಅವರ ವೈಚಾರಿಕತೆಗೆ ಇರುವ ಮುಖ್ಯ ಲಕ್ಷಣ ವೈಜ್ಞಾನಿಕ ದೃಷ್ಟಿಕೋನವಾದ್ದರಿಂದಲೇ ಅದು ಸಾರ್ವಕಾಲಿಕತೆಯನ್ನು ಪಡೆದಿದೆ. ಅವರು ಕಥೆ, ಕವಿತೆ, ಕಾದಂಬರಿ, ವಿಚಾರ ಸಾಹಿತ್ಯ, ನಾಟಕ ಅಷ್ಟೇ ಅಲ್ಲದೇ ಮಹಾಕಾವ್ಯವನ್ನು ಬರೆದಷ್ಟೇ ಪ್ರೀತಿಯಿಂದ ಮಕ್ಕಳ ಸಾಹಿತ್ಯ ಕೃಷಿಯನ್ನೂ ಮಾಡಿರುವುದು ಅವರ ಹೆಗ್ಗಳಿಕೆಯಾಗಿದೆ.

ಸಾಮಾನ್ಯವಾಗಿ ಹಿರಿಯರ ಸಾಹಿತ್ಯ-ಚರ್ಚೆ-ಸಂವಾದಗಳಲ್ಲಿ ಮಕ್ಕಳನ್ನು ಮರೆತೇ ಬಿಟ್ಟಿರುತ್ತೇವೆ. ಮಕ್ಕಳ ಸಾಹಿತ್ಯ ಇಂದಿಗೂ ಅತ್ಯಂತ ನಿರ್ಲಕ್ಷಿತ ಕ್ಷೇತ್ರವಾಗಿದೆ. ಹಾಗೇ ಮಕ್ಕಳ ಸಾಹಿತಿಯ ಬಗೆಗೂ ಸಮಾಜದಲ್ಲಿ ಒಂದು ಬಗೆಯ ಅವಜ್ಞೆ ಮನೆಮಾಡಿದೆ. ಹಿರಿಯರಿಗಾಗಿ ಸಾಹಿತ್ಯ ರಚಿಸುವ ಹೆಚ್ಚಿನ ಸಾಹಿತಿಗಳು ಮಕ್ಕಳಿಗಾಗಿ ಸಾಹಿತ್ಯ ರಚಿಸುವುದು ಕೀಳೆಂದು ಭಾವಿಸುತ್ತಾರೆ. ಆದರೆ ನವೋದಯ ಕಾಲದ ಹಲವು ಸಾಹಿತಿಗಳು ಹಿರಿಯರಿಗಾಗಿ ಸಾಹಿತ್ಯ ರಚಿಸುವ ಜೊತೆಗೇ ಮಕ್ಕಳ ಮೇಲಿನ ಪ್ರೀತಿಯಿಂದಲೂ ಕೃತಿಗಳನ್ನು ರಚಿಸಿದ್ದು ಮೆಚ್ಚಬೇಕಾದುದು. ಅದರಲ್ಲಿ ಕುವೆಂಪು ಅವರು ಕೂಡ ಒಬ್ಬರು.

ಮಕ್ಕಳ ಸಾಹಿತ್ಯಕ್ಕೆ ಕುವೆಂಪು ಅವರ ಕೊಡುಗೆ ಗಮನಾರ್ಹವಾದುದೆಂದೇ ಹೇಳಬೇಕು. ಅವರು ರಚಿಸಿದ ಮಕ್ಕಳ ನಾಟಕಗಳು ಎರಡೇ. 1926 ರಲ್ಲಿ ಬರೆದ ‘ಮೋಡಣ್ಣನ ತಮ್ಮ’. ಅದು ಇದುವರೆಗೆ ಆರು ಮುದ್ರಣಗಳನ್ನು ಕಂಡಿದೆ. 1930 ರಲ್ಲಿ ರಚಿಸಿದ ‘ನನ್ನ ಗೋಪಾಲ’ ನಾಟಕ ಏಳು ಮುದ್ರಣಗಳನ್ನು ಕಂಡಿದೆ. ಇದಲ್ಲದೇ ಇಂಗ್ಲೀಷ್ ಕವಿ ರಾಬರ್ಟ್ ಬ್ರೌನಿಂಗ್ ನ ‘ದಿ ಪೈಡ್ ಪೈಪರ್ ಆಫ್ ಹ್ಯಾಮಲಿನ್’ ಕವಿತೆಯ ಪ್ರೇರಣೆಯಿಂದ ರೂಪುಗೊಂಡ ‘ಬೊಮ್ಮನ ಹಳ್ಳಿಯ ಕಿಂದರಿ ಜೋಗಿ’ ಆರ್.ಕೆ.ಲಕ್ಷ್ಮಣ್ ಅವರ ಚಿತ್ರಗಳನ್ನೊಳಗೊಂಡು ರಚಿತವಾದ ಕಥನ ಕಾವ್ಯ ಹಾಗೂ ನೀಳ್ಗಾವ್ಯವಾಗಿದ್ದು, ಮಹಾರಾಜಾ ಕಾಲೇಜಿನ ಕರ್ನಾಟಕ ಸಂಘದ ಕಿರಿಯರ ಕಾಣಿಕೆಯಲ್ಲಿ 1928ರಲ್ಲಿ ಮೊದಲಿಗೆ ಪ್ರಕಟವಾಗಿ, ನಂತರದಲ್ಲಿ ಆರು ಮುದ್ರಣವನ್ನು ಕಂಡಿದೆ. ನನ್ನ ಮನೆ, ಮರಿ ವಿಜ್ಞಾನಿ, ಶಿಶು ಗೀತಾಂಜಲಿ, ಮೇಘಪುರ, ಬೆಳ್ಳಿ ಹಬ್ಬದ ಕಟ್ಟಿದ ಬಳ್ಳಿ ಎಂಬ ಶಿಶುಕಾವ್ಯ ಸಂಕಲನಗಳನ್ನು ಮಕ್ಕಳಿಗೆ ಕಾಣಿಕೆಯಾಗಿ ನೀಡಿರುವ ಕುವೆಂಪು ಅವರು, ಮೀನಾಕ್ಷಿ ಮನೆ ಮೇಷ್ಟ್ರು, ಒಂದು ಯಶಸ್ವೀ ಕಥೆ, ಸನ್ಯಾಸಿ, ಗುಪ್ತಧನ, ಧನ್ವಂತರಿ ಚಿಕಿತ್ಸೆ, ವೈರಾಗ್ಯದ ಮಹಿಮೆ, ನರಿಗಳಿಗೇಕೆ ಕೋಡಿಲ್ಲ ಎಂಬ ಕಥಾ ಸಂಕಲನಗಳನ್ನೂ ರಚಿಸಿದ್ದಾರೆ.

1926ರಲ್ಲಿ ರಚಿತವಾದ ಕುವೆಂಪು ಅವರ ಮೊದಲ ನಾಟಕ, ಹಾಗೂ ಮಕ್ಕಳ ಗೀತ ನಾಟಕವೂ ಆಗಿರುವ ‘ಮೋಡಣ್ಣನ ತಮ್ಮ’ ಮೋಡದ ಜೊತೆಗೆ modannana-tammaಆಡಲು ಬಯಸುವ ಕಿಟ್ಟು ಎಂಬ ಪುಟ್ಟ ಹುಡುಗನ ಕತೆಯಾಗಿದೆ. ಒಂಟಿಯಾಗಿರುವ ಕಿಟ್ಟುವಿಗೆ ಒಮ್ಮೆ ಇದ್ದಕ್ಕಿದ್ದಂತೆ ಆಕಾಶದಲ್ಲಿ ಒಂಟಿಯಾಗಿ ತೇಲುತ್ತಿರುವ ಮೋಡವನ್ನು ನೋಡಿ ತಾನೂ ಅದರ ಜೊತೆಗೆ ಆಕಾಶಕ್ಕೆ ಹಾರಿ ಬಿಡುವ ಮನಸಾಗುತ್ತದೆ. ಅವನು ‘ಓ ಮೋಡಣ್ಣ, ಓ ಮೋಡಣ್ಣ ನಾನೂ ಬರುವೆನು ಕೈ ನೀಡಣ್ಣ’ ಎಂದು ಬೇಡಿಕೊಳ್ಳುತ್ತಾನೆ. ಆದರೆ ಮೋಡಣ್ಣನಿಗೆ ಈ ಹುಡುಗನನ್ನು ತನ್ನೊಂದಿಗೆ ಕರೆದೊಯ್ಯುವ ಮನಸಿಲ್ಲ. ಹೀಗೆಂದೇ ‘ನಿನ್ನ ತಾಯಿ ಬೈಯ್ದಾಳು’ ಎಂಬ ನೆಪವೊಡ್ಡಿ ಹುಡುಗನಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಕಿಟ್ಟುವಿಗೆ ಎತ್ತರದಲ್ಲಿ ತೇಲುವ ಮೋಡ, ಅದರ ಆಟ, ಮಿಂಚನ್ನೇ ಬಳೆಯಾಗಿ ಧರಿಸಿರುವ, ಗುಡುಗಿನೊಂದಿಗೆ ಆಡುವ ಎತ್ತರೆತ್ತರದ ಬೆಟ್ಟಗಳನ್ನು ಏರುವ, ದೂರ ದೂರದ ಊರುಗಳನ್ನು ನೋಡುವ ಮೋಡದ ಬದುಕು ವಿಶಿಷ್ಟವಾದುದು ಎನ್ನಿಸಿಬಿಟ್ಟಿದೆ. ಅದಕ್ಕೆ ಮೋಡದೊಡನೆ ಹೋಗಲು ತುದಿಗಾಲಲ್ಲಿ ನಿಂತಿದ್ದಾನೆ. ಆದರೆ ಮೋಡ ಒಪ್ಪುತ್ತಿಲ್ಲ. ಹೀಗಾಗಿ ಕಿಟ್ಟು ಬೆಟ್ಟದ ಮೊರೆ ಹೋಗುತ್ತಾನೆ. ಇಡೀ ದಿನ ಬೆಟ್ಟದಲ್ಲೇ ಅಲೆವ ಕಿಟ್ಟುವಿಗೆ ಅದೂ ಒಬ್ಬ ಮಿತ್ರ. ಬೆಟ್ಟ ಕಿಟ್ಟುವಿನ ಪರವಾಗಿ ಮೋಡವನ್ನು ಬೇಡಿಕೊಳ್ಳುತ್ತದೆ. ಇಲ್ಲಿ ಕುವೆಂಪು ಅವರ ಕಲ್ಪನಾ ಶಕ್ತಿಯನ್ನು ಗಮನಿಸಬೇಕು.

ಶರಧಿಯ ನೀರನೆ ಹೊರುವಾ ನಿನಗೆ
ಕಿರಿಯವನಿವನತಿ ಭಾರವೆ, ಅಣ್ಣಾ?
ಸಿಡಿಲನು ಮಿಂಚನು ಆಳುವೆ ನೀನು
ಹುಡುಗನ ಆಳುವುದಸದಳವೇನು
ರೈತರ ನಿಂದೆಯ ಸೈರಿಪ ನೀನು
ತಾಯಿಯ ದೂರನು ಹೊಂದಿದರೇನು?

ಎನ್ನುತ್ತಾರೆ. ಆದರೆ ಮೋಡ ಇದಕ್ಕೂ ಜಗ್ಗುವುದಿಲ್ಲ. ಹತ್ತು ಕಡಲನ್ನ ಹೊತ್ತರೂ ಒಬ್ಬ ಹುಡುಗನನ್ನ ಹೊರಲಾರೆ. ರೈತರ ಗುಂಪೇ ಬೈಯ್ಯಬಹುದು, ಆದರೆ ತಾಯಿಯ ಶಾಪವನ್ನು ಸಹಿಸಲಾರೆ ಎನ್ನುತ್ತದೆ ಮೋಡ. ತಾಯಿಯ ಘನತೆಯನ್ನೂ ಈ ಮೂಲಕ ಕುವೆಂಪು ಅವರು ಸೂಕ್ಷ್ಮದಲ್ಲೇ ಎತ್ತಿ ಹಿಡಿಯುತ್ತಾರೆ. ಮತ್ತೆ ಮತ್ತೆ ಕಿಟ್ಟು ಮೋಡವನ್ನು ಬೇಡಿಕೊಳ್ಳುತ್ತಾನೆ. ಮೋಡದ ಮನೆಯಲ್ಲಿ ಉಳಿಯಲು ಕೊಡೆ, ಕಂಬಳಿ, ಹಾಸಿಗೆ, ಹೊದಿಕೆ ಎಲ್ಲವನ್ನೂ ತರುತ್ತೇನೆ ಒಂದೇ ದಿನ ಉಳಿದು ವಾಪಸ್ ಬಂದು ಬಿಡುತ್ತೇನೆ ಎನ್ನುತ್ತಾನೆ. ಮೋಡದಲ್ಲಿ ಹುಲಿ, ರಾಕ್ಷಸರು, ದೊಡ್ಡ ಊರುಗಳನ್ನು, ಕುರಿಗಳ ಹಿಂಡು, ಹೊಳೆ, ತೊರೆ, ಕಡಲು, ದಟ್ಟಡವಿಗಳನ್ನು ಕಾಣುತ್ತಿದ್ದೇನೆ ಎನ್ನುವ ಕಿಟ್ಟುವಿನ ಕಣ್ಣಿನ ಮೂಲಕ ಕುವೆಂಪು ಅವರು ಮಕ್ಕಳ ಮುಗ್ಧ ಕಾಲ್ಪನಿಕ ಹಾಗೂ ಭಾವುಕ ಜಗತ್ತನ್ನು ಕಟ್ಟಿಕೊಡುತ್ತಾರೆ. ನಂತರ ಕಿಟ್ಟು ಕಾಡನ್ನು ತನ್ನ ಪರವಾಗಿ ಮೋಡದ ಬಳಿ ಬೇಡಿಕೊಳ್ಳಲು ತಿಳಿಸುತ್ತಾನೆ. ಆದರೆ ಕಾಡಿಗೆ ಇಡೀ ಮನುಜ ಕುಲದ ಬಗ್ಗೆಯೇ ಅಸಹನೆ. ಮರಗಳನ್ನು ಕಡಿದು ಕಾಡನ್ನು ನಾಶಪಡಿಸುತ್ತಿರುವ, ಹೊಸ ಕಾಡನ್ನು ರೂಪಿಸಲು ಸಿದ್ಧವಿಲ್ಲದ ಮನುಷ್ಯರ ಸಂತತಿಯ ಕಿಟ್ಟುವನ್ನೂ ನಿನ್ನೊಂದಿಗೆ ಕರೆದೊಯ್ಯ ಬೇಡ ಎಂದು ಹೇಳುವ ಕಾಡಿನ ಮೂಲಕ, ಕಾಡಿನ ಮೂಕ ನೋವುಗಳ ಎಲ್ಲ ಮುಖಗಳನ್ನೂ ಕುವೆಂಪು ಅನಾವರಣಗೊಳಿಸುತ್ತಾ ಮಕ್ಕಳ ಮನಸಿನಲ್ಲಿ ಪ್ರಕೃತಿ ಪ್ರೀತಿಯನ್ನೂ ಮೂಡಿಸುವ ಪ್ರಯತ್ನ ಮಾಡುತ್ತಾರೆ.

ಪುರಾಣದಲ್ಲಿ ಚರ್ಚಿತವಾದ ಮೋಡದ ಕುರಿತ ವಿವರಗಳು, ಲೌಕಿಕ ಜಗತ್ತಿನ ವಿವರಗಳನ್ನು ಒಳಗೊಂಡಂತೆ, ಮೋಡದ ಬಾಯಿಂದ ಮಕ್ಕಳಿಗೆ ನೈತಿಕತೆಯ ಪಾಠವನ್ನು ಹೇಳಿಸುವುದನ್ನೂ ಇಲ್ಲಿ ಕಾಣುತ್ತೇವೆ. ಆದರ್ಶ ಪುರುಷರನ್ನೆಲ್ಲಾ ಕಿಟ್ಟುವಿಗೆ ಹೋಲಿಸಿ ಅವರಂತೆ ನೀನೂ ಆಗಬೇಕೆಂದು ಮೋಡ ಹಾರೈಸುತ್ತದೆ. ಅಷ್ಟರಲ್ಲಿ ಅವನ ತಾಯಿ ಕರೆಯುತ್ತಾಳೆ. ಮೋಡದ ಬಳಿ ಕಿಟ್ಟುವಿನ ಬೇಡಿಕೆಯೂ ಕರಗಿರುತ್ತದೆ. ಅವನು ಸಂತೋಷದಿಂದ ಮೋಡವನ್ನು ಬೀಳ್ಗೊಡುತ್ತಾನೆ ಎಂಬಲ್ಲಿಗೆ ನಾಟಕ ಮುಗಿಯುತ್ತದೆ. ನಾಟಕದ ಓದಿಗಿಂತ, ಅಭಿನಯದ ಮೂಲಕ ನಾಟಕ ಹೆಚ್ಚು ಸಮರ್ಥವೂ ಸಾರ್ಥಕವೂ ಆಗುವುದು ನಿಜ. ಅಲ್ಲಲ್ಲಿ ಕೆಲವು ಮುಖ್ಯ ತಿದ್ದುಪಡಿಯೊಂದಿಗೆ ಈ ‘ಮೋಡಣ್ಣನ ತಮ್ಮ’ ನಾಟಕದ ಕೆಲವು ಯಶಸ್ವಿ ರಂಗ ಪ್ರಯೋಗಗಳೂ ಆಗಿವೆ ಎಂದು ಕೇಳಿದ್ದೇನೆ.

ಇನ್ನು ಕುವೆಂಪು ಅವರ ಎರಡನೆಯ ಮಕ್ಕಳ ನಾಟಕ 1930 ರಲ್ಲಿ ರಚಿತವಾದ ‘ನನ್ನ ಗೋಪಾಲ’. nanna-gopalaಇದರಲ್ಲಿ ದೇವರು ಮಗುವಿನ ಮುಗ್ಧತೆಗೆ ಒಲಿಯುತ್ತಾನೆ, ಕರ್ಮಠರಿಗಲ್ಲ ಎಂಬ ಸಂದೇಶವಿದೆ. ಬಡ ವಿಧವೆ ತಾಯಿಯೊಡನೆ ಕಾಡಿನ ಅಂಚಿನಲ್ಲಿ ವಾಸಿಸುವ ಬಾಲಕ ಗೋಪಾಲ, ಶಾಲೆಗೆ ಕಾಡನ್ನು ದಾಟಿ ಹೋಗ ಬೇಕಾದ ಅನಿವಾರ್ಯತೆ ಇದೆ. ಶ್ರೀಮಂತರ ಮನೆಯ ಮಕ್ಕಳಿಗೆ ಕಾಡನ್ನು ದಾಟಿ ಹೋಗಲು ಆಳುಗಳು ಜೊತೆಗಿದ್ದಾರೆ. ಕೃಷ್ಣನಲ್ಲಿ ನಿಷ್ಕಲ್ಮಶ ಭಕ್ತಿ ಇರುವ ಗೋಪಾಲನ ತಾಯಿ ತನ್ನ ಮಗನ ಜವಾಬ್ದಾರಿಯನ್ನು ಅವನಿಗೇ ವಹಿಸಿ ನಿಶ್ಚಿಂತಳಾಗಿದ್ದಾಳೆ. ಕಾಡಿನಲ್ಲಿ ಹೆದರಿಕೆಯಾದಾಗಲೆಲ್ಲ ಬಾಲಕ ಗೋಪಾಲ, ತನ್ನ ಅಣ್ಣನೆಂದು ತಾಯಿ ಹೇಳಿಕೊಟ್ಟ ಕೃಷ್ಣನನ್ನೇ ಕರೆದು ತನ್ನ ಭಯವನ್ನು ಹಂತ ಹಂತವಾಗಿ ಮೀರುತ್ತಲೇ ಕೃಷ್ಣನೊಂದಿಗೆ ಆಪ್ತತೆ ಮೂಡಿಬಿಡುತ್ತದೆ. ತಾಯಿಗೂ ಇದನ್ನು ತಿಳಿದು ಅತ್ಯಂತ ನಿರಾಳತೆ. ಕುವೆಂಪು ಅವರು ಬಾಲ್ಯವನ್ನು ವಿಶೇಷ ದೃಷ್ಟಿಯಿಂದ ಇಲ್ಲಿ ವಿವರಿಸಿದ್ದಾರೆ. ಮಗುವಿನ ಮನಸ್ಸನ್ನು ಹೊಕ್ಕು ಅದರ ಮನಸ್ಸಿನಲ್ಲಿ ಇರುವ ಬಾಲ್ಯ ಸಹಜವಾದ ಕುತೂಹಲ, ತಳಮಳ, ಆತಂಕಗಳನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಕಾಡಿನಲ್ಲಿನ ಕೃಷ್ಣ ಹಾಗು ಗೋಪಾಲರ ಆತ್ಮೀಯ ಮಾತುಕತೆಗಳಲ್ಲಿ ಮಕ್ಕಳ ಮುಗ್ಧ ಲೋಕದ ಅನಾವರಣವಿದೆ. ಗೋಪಾಲನ ಕುತೂಹಲದ ಪ್ರಶ್ನೆಗಳು ಹಾಗೂ ಕೃಷ್ಣನ ಸಮಂಜಸ ಉತ್ತರಗಳಲ್ಲಿ ಲೋಕದ ಎಲ್ಲ ವ್ಯಾಪಾರಗಳೂ ಮಗುವಿನ ನಿರ್ಮಲ ಮನಸ್ಸಿನ ಒಳತೋಟಿಯನ್ನು ಹಿಡಿದೇ ಚಲಿಸುತ್ತವೆ. ಶಾಲೆಯ ಗುರುಗಳು ತಮ್ಮ ಮನೆಯಲ್ಲಿ ವಿಶೇಷ ಮಂಗಳ ಕಾರ್ಯ ನಡೆಯುವುದೆಂದು ಗುರುದಕ್ಷಿಣೆ ನೀಡಬೇಕೆಂದು ಶಿಷ್ಯರಲ್ಲಿ ಕೇಳಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಗೋಪಾಲನ ತಾಯಿ ತನ್ನ ಬಳಿ ಕೊಡಲು ಏನೂ ಇಲ್ಲವೆಂದು ಅಣ್ಣನೆಂದೇ ತಿಳಿದ ಬನದ ಕೃಷ್ಣನಲ್ಲೇ ಕಾಣಿಕೆ ಕೇಳೆಂದು ಹೇಳುತ್ತಾಳೆ. ಕೃಷ್ಣ ಒಂದು ಕುಡಿಕೆಯಲ್ಲಿ ಮೊಸರು ಕೊಟ್ಟು ಕಳಿಸುತ್ತಾನೆ. ಶ್ರೀಮಂತರ ಮನೆಯ ಮಕ್ಕಳೆಲ್ಲ ಬೆಲೆ ಬಾಳುವ ವಸ್ತುಗಳನ್ನು ಕಾಣಿಕೆಯಾಗಿ ತಂದಿದ್ದು, ಅವರೆಲ್ಲ ಗೋಪಾಲನ ಕುಡಿಕೆಯ ಮೊಸರನ್ನು ತಮಾಷೆಯಾಗಿ ಆಡಿಕೊಂಡು ನಗುವ ಚಿತ್ರಣವನ್ನು ಕುವೆಂಪು ಅವರು ಅತ್ಯಂತ ಸಹಜವಾಗಿ ಮಕ್ಕಳ ತುಂಟ ಮನಸಿನಾಳವನ್ನು ಅರಿತವರಂತೆ ಚಿತ್ರಿಸಿದ್ದಾರೆ.

ಕುಡಿಕೆಯ ಮೊಸರು ಪಾತ್ರೆಗೆ ಎಷ್ಟು ಸುರಿದರೂ ಮತ್ತೆ ಮತ್ತೆ ತುಂಬುವ ಕಾಲ್ಪನಿಕತೆಯನ್ನೂ ಮಕ್ಕಳ ಮನೋಲೋಕದ ಪರಿಧಿಗೆ ಹಿಗ್ಗಲಿಸಿ ಕಟ್ಟಿಕೊಡುವ ಕುವೆಂಪು ಅವರು ಗುರುಗಳ ಮೂಲಕ ಗೋಪಾಲನ ತಾಯಿಯ ಹಿರಿಮೆಯನ್ನು ಕುರಿತು ಹೇಳಿಸುತ್ತಾ ಇಡೀ ವಿಶ್ವದ ತಾಯಂದಿರ ಹೃದಯ ವೈಶಾಲ್ಯತೆಯನ್ನೇ ಕಟ್ಟಿಕೊಡುವ ಪ್ರಯತ್ನ ಮಾಡುತ್ತಾರೆ. ಕೊನೆಯ ಅಂಕದಲ್ಲಿ ಗೋಪಾಲ ಮತ್ತು ಗುರುಗಳೊಂದಿಗೆ ಅ ಅಕ್ಷಯ ಮೊಸರನ್ನು ಕೊಟ್ಟ ಬನದ ಕೃಷ್ಣನನ್ನು ನೋಡಲು ಎಲ್ಲ ಹುಡುಗರೂ ಹೋಗುತ್ತಾರೆ. ಗೋಪಾಲ ಎಷ್ಟು ಕರೆದರೂ ಕೃಷ್ಣ ಕಾಣಿಸದಿದ್ದಾಗ, ಅವನು ದರ್ಶನ ತೋರುವಂತೆ ಕೃಷ್ಣನಲ್ಲಿ ಕಣ್ಣು ತುಂಬಿ ಬೇಡಿಕೊಳ್ಳುತ್ತಾನೆ. ಕೊನೆಗೆ ಅವನ ದನಿಯಷ್ಟೇ ಕೇಳುತ್ತದೆ, ಅವನು ಪ್ರತ್ಯಕ್ಷನಾಗುವುದಿಲ್ಲ. ಈ ಮೂಲಕ ಗೋಪಾಲ ಮತ್ತು ಅವನ ತಾಯಿಯ ಪ್ರಾಮಾಣಿಕ ಭಕ್ತಿ ಮತ್ತು ಪ್ರೀತಿಗಳು ಗೆಲ್ಲುವುದನ್ನು ಕುವೆಂಪು ಅವರು ಮನೋಜ್ಞವಾಗಿ ಕಟ್ಟಿಕೊಡುತ್ತಾರೆ. ಹಾಗೇ ಈ ನಾಟಕ ಪುರಾಣ ಪ್ರತಿಮೆಯ ಪುನರ್ ಸೃಷ್ಟಿಯನ್ನು ಮಾಡುತ್ತಾ ಮನಸ್ಸಿನ ಅಂತರ್ ದೃಷ್ಟಿಯ ಕಡೆಗೆ ಒತ್ತು ಕೊಡುವುದನ್ನು ಕಾಣುತ್ತೇವೆ. ಈ ನಾಟಕವೂ ಯಶಸ್ವಿ ರಂಗ ಪ್ರಯೋಗವನ್ನು ಕಂಡು ಮಕ್ಕಳ ಮನಸನ್ನು ಗೆದ್ದಿದೆ.

‘ನನ್ನ ಗೋಪಾಲ’ ನಾಟಕವನ್ನು ಓದಿದ ಶ್ರೀ ಎ. ಆರ್, ಕೃಷ್ಣಶಾಸ್ತ್ರಿಗಳು ಕುವೆಂಪು ಅವರಿಗೆ ಬರೆದ ಪತ್ರದಲ್ಲಿ “ನಿಮ್ಮ ‘ನನ್ನ ಗೋಪಾಲ’ನಾಟಕ ಭಗವದ್ಗೀತೆ ಮತ್ತು ಭಾಗವತ ಎರಡರ ಸಾರಸರ್ವಸ್ವವನ್ನೂ ತನ್ನಲ್ಲಿ ಒಳಗೊಂಡಿರುವ ಒಂದು ಪುಟ್ಟ ಅನಘ್ರ್ಯ ರತ್ನ. ಕಣ್ಣೀರು ತುಂಬಿ ಅದನ್ನು ಓದಿದ್ದೇನೆ.” ಎನ್ನುತ್ತಾರೆ. ಬಹುಶಃ ಇದು ಕುವೆಂಪು ಅವರ ನಾಟಕಕ್ಕೆ ಸಿಕ್ಕ ಬಹು ದೊಡ್ಡ ಮೆಚ್ಚುಗೆ. ಆದರೆ ಈ ಎರಡೂ ಮಕ್ಕಳ ನಾಟಕದಲ್ಲಿ ಇರಲೇಬೇಕಾದ ರಂಜನೆ ಹಿಡಿದಿಡುವಂತಹ ಗುಣಕ್ಕಿಂತಾ ಹೆಚ್ಚಾಗಿ ಉಪದೇಶಾತ್ಮಕ, ಆದರ್ಶಮಯ ನೆಲೆಯಲ್ಲಿ ಚಿತ್ರಿತವಾಗಿದೆ. ಇಂದಿನ ಮಕ್ಕಳಿಗೆ 80-90 ವರ್ಷಗಳ ಹಿಂದೆ ರಚಿತವಾದ ಕುವೆಂಪು ಅವರ ಈ ನಾಟಕಗಳು ಹೇಗೆನ್ನಿಸುತ್ತದೆ ಎಂದು ತಿಳಿದುಕೊಳ್ಳಲೆಂದೇ ಈ ನಾಟಕಗಳನ್ನು ನಮ್ಮ ಮಕ್ಕಳ ಸಂಸ್ಥೆ ಪ್ರೇರಣಾ ವಿಕಾಸ ವೇದಿಕೆಯ ಸಾಹಿತ್ಯಾಸಕ್ತ ಮಕ್ಕಳಿಗೆ ಓದಲು ನೀಡಿದ್ದೆ. ಅವರು ಅದರ ಒಟ್ಟು ಕಥೆಯ ಸಾರಾಂಶವನ್ನು ಇಷ್ಟಪಟ್ಟರೂ ಅದರಲ್ಲಿ ತಮ್ಮನ್ನ ಕಾರ್ಟೂನು ಅಥವಾ ಮಕ್ಕಳ ಇತ್ತೀಚೆಗಿನ ನಾಟಕ ಹಾಗೂ ಮಕ್ಕಳ ಟಿವಿ ಶೋಗಳು ಹಿಡಿದಿಡುವಂತೆ ಹಿಡಿದಿಡಲ್ಲ ಎಂದು ಆರೋಪಿಸಿದರು. ಒಂದಿಷ್ಟು ನೀರಸವಾಗಿದೆ ಎಂಬ ಆಕ್ಷೇಪವನ್ನೂ ಮಾಡಿದರು. ಅದೂ 8 ರಿಂದ 10-12 ವರ್ಷದ ಮಕ್ಕಳಿಗಷ್ಟೇ ಇಂತಹ ಮುಗ್ಧ ಲೋಕದ ಕಥೆಗಳು ಇಷ್ಟವಾಗುತ್ತವೆಯೇ ಹೊರತು ಅದಕ್ಕಿಂತಾ ದೊಡ್ಡ ಮಕ್ಕಳಿಗೆ ಇಂತಹ ಭಾವುಕ ಕಥಾ ಹಂದರ ಹಿಡಿಸುವುದಿಲ್ಲ. ಆದರೆ ‘ಕಿಂದರಿ ಜೋಗಿ’ಯನ್ನು ಮಕ್ಕಳು ಬಹುವಾಗಿ ಮೆಚ್ಚಿಕೊಳ್ಳುತ್ತಾರೆ. ಈ ನೀಳ್ಗಾವ್ಯ ಸಶಕ್ತವಾಗಿ ಮಕ್ಕಳ ಮನಸ್ಸನ್ನು ಗೆಲ್ಲಲು ಸಫಲವಾಗಿದೆ ಎಂದೇ ಹೇಳಬೇಕು.

ಅವರ ‘ಬೊಮ್ಮನಹಳ್ಳಿಯ ಕಿಂದರಿ ಜೋಗಿ’ ಮಕ್ಕಳ ಕಥನಕಾವ್ಯವಾದರೂ ಅದು ತನ್ನ 7325e9bab174325596e65326641444341587343ನಾಟಕೀಯ ಗುಣಗಳಿಂದ ಅದ್ಭುತ ನಾಟಕವಾಗಿ ಮಾರ್ಪಟ್ಟಿದೆ. ಈ ಕಥೆಯ ಭಾಷೆಯ ಲಾಲಿತ್ಯ ಎಂಥಹಾ ಅರಸಿಕ ಮಗುವನ್ನೂ ಹಿಡಿದಿಡುವಷ್ಟು ಸಶಕ್ತವಾಗಿದೆ. ಕಿಂದರಿಜೋಗಿ ಈ ಹೊತ್ತಿಗೂ ಮಕ್ಕಳನ್ನು ಬೆರಗುಗೊಳಿಸುವ ಸಾಮರ್ಥ್ಯ ಹೊಂದಿದೆ. ಅದರ ಕಥಾ ಹಂದರ, ಸ್ವಾರಸ್ಯಕರ ನಿರೂಪಣೆ, ತಮಾಷೆಯ ಪ್ರಸಂಗಗಳು ಎಲ್ಲವೂ ಮನವನ್ನು ಸೆಳೆಯುತ್ತವೆ. ಇದು ವಿದೇಶಿ ಕಥೆಯ ರೂಪಾಂತರವಾದರೂ ನಮ್ಮ ಸಾಮಾಜಿಕ ಪರಿಸರದಲ್ಲಿಯೇ ಸಂಭವಿಸಿದಂತೆ, ಕನ್ನಡ ನಾಡಿನ ಮಣ್ಣಿನ ಹದವನ್ನು ತುಂಬಿ ಕುವೆಂಪು ಅವರ ಕಥನ ಸಾಮರ್ಥ್ಯದ ಮೂಲಕ ಪುನರ್ ಸೃಷ್ಟಿಯಾಗಿದೆ. ಇದು ಮೇಲ್ನೋಟಕ್ಕೆ ಮಕ್ಕಳ ನೀತಿ ಕಥೆಯಂತೆ ಕಂಡರೂ ಅದರೊಳಗೆ ಮಕ್ಕಳ ಮನೋಲೋಕವನ್ನು ವಿಸ್ತರಿಸುವ ಕಾಲ್ಪನಿಕ ಜಗತ್ತು ಅದ್ಭುತವಾಗಿ ಹೆಣೆದುಕೊಂಡಿದೆ.

ಕುವೆಂಪು ಅವರು ಈ ಕವಿತೆಯನ್ನು ಮೊದಲಿಗೆ ಶಿವಮೊಗ್ಗದ ಸಭೆಯೊಂದರಲ್ಲಿ ವಾಚಿಸಿದಾಗ ಪ್ರತಿ ನುಡಿಗೂ ದೀರ್ಘ ಕರತಾಡನದ ಪ್ರತಿಕ್ರಿಯೆ ದೊರಕಿತ್ತಂತೆ. ಮಕ್ಕಳಿಗೆ ಇಲಿಗಳ ದೊಡ್ಡ ಬಳಗದ ಕತೆ, ಅವುಗಳ ಅಸಾಧ್ಯ ಚೇಷ್ಟೆ ಖಂಡಿತಾ ರಂಜನೆಯ ಸಂಗತಿಯೇ. ಕಿನ್ನರಿಯ ನಾದಕ್ಕೆ ಇದ್ದಕ್ಕಿದ್ದ ಹಾಗೆ ಎಲ್ಲ ಅವನನ್ನು ಹಿಂಬಾಲಿಸುವುದು, ನೀರಲ್ಲಿ ಮುಳುಗಿ ಹೋಗುವುದು, ಹಾಗೇ ಮಕ್ಕಳೆಲ್ಲಾ ಹಿಂಬಾಲಿಸುವುದು, ಬೆಟ್ಟ ಬಾಯ್ದೆರೆದು ಅವರೆಲ್ಲಾ ಅದರೊಳಗೆ ಹೋಗಿಬಿಡುವುದು, ಅವಾಸ್ತವದ ಸಂಗತಿಗಳಾಗಿಯೂ ಬಾಲ ಮನಸ್ಸಿನ ಕುತೂಹಲವನ್ನು, ಅಚ್ಚರಿಯನ್ನು ಇಮ್ಮಡಿಗೊಳಿಸುತ್ತದೆ. ಹೀಗಾಗಿಯೇ ಮಕ್ಕಳಿಗೆ ಇದು ಹಿಡಿಸಿದೆ ಮತ್ತು ಮುದಗೊಳಿಸಿದೆ.

ಬಾಲ್ಯದ ಕುರಿತು, ಕಳೆದುಹೋದ ಆ ಸಮಯದ ಕುರಿತು ಮರಳಿ ಅದನ್ನು ಪ್ರಕೃತಿಯ ಮಡಿಲಲ್ಲಿ ಪಡೆಯುವ ಕುರಿತು ಕುವೆಂಪು ಅವರು ಹಲವು ನಾಟಕಗಳಲ್ಲಿ ಬರೆಯುತ್ತಾ ಬಾಲ್ಯದ ಕುರಿತ ತಮ್ಮ ಅತ್ಯಂತ ಸಂತಸದ ಸಂಗತಿಗಳನ್ನು ಅಭಿವ್ಯಕ್ತಿಗೊಳಿಸಿದ್ದಾರೆ. ಬಾಲ್ಯ ಒಂದು ಅಪರೂಪದ ಸಮಯ, ಮತ್ತೆಂದೂ ಸಿಗಲಾರದೇ ಹೋಗಿ ಬಿಡುತ್ತದೆ ಎಂಬ ಲಹರಿಯೊಂದಿಗೆ, ಬಾಲ್ಯವನ್ನು ದೈವೀಕವಾಗಿ ಕಾಣುವ ಕಣ್ಣು ನಮಗೆ ಕುವೆಂಪು ಅವರ ಎಲ್ಲ ಮಕ್ಕಳ ಸಾಹಿತ್ಯದಲ್ಲೂ ಸಿಗುತ್ತದೆ. ಬಾಲ್ಯವೆಲ್ಲ ಬದುಕಿನ ತಯಾರಿಗಾಗಿ ಸಿದ್ಧಗೊಳಿಸುವ ಹಂತವಾಗಿ ಕಾಣದೇ ಅದರಲ್ಲಿಯೂ ಒಂದು ಬಗೆಯ ಪರಿಪೂರ್ಣತೆಯನ್ನು ಕಾಣುವ ಬಗೆ ಇಲ್ಲೆಲ್ಲ ಗೋಚರಿಸುತ್ತದೆ.

ತಾಯಿ, ಮಗು ಮತ್ತು ಪ್ರಕೃತಿಯ ನಡುವಿನ ಸಂಬಂಧದ ಗಾಢತೆ ಹಾಗೂ ನಿಗೂಢತೆ ಪ್ರಕೃತಿ ಸಹಜವಾದರೂ ಅಪರೂಪದ ಭಾವಲೋಕಕ್ಕೆ ಕರೆದೊಯ್ಯುವ ಶಕ್ತಿ ಕುವೆಂಪು ಅವರಿಗಿದೆ. ಹೀಗೆಂದೇ ಅವರು ರಚಿಸಿದ ಮಕ್ಕಳ ಕಥೆ, ಕವಿತೆ, ನಾಟಕಗಳಲ್ಲೆಲ್ಲಾ ಈ ಬಗೆಯ ಭಾವ ಲೋಕವನ್ನು ಕಾಣುತ್ತೇವೆ. ಮಕ್ಕಳ ಮನೋರಂಗದ ಸಹಜವಾದ ಹರಿವು ಮತ್ತು ಪರಕಾಯ ಪ್ರವೇಶದ ಸಾಧ್ಯತೆಯನ್ನು ಅವರ ಇಂತಹ ಅಭಿವ್ಯಕ್ತಿಗಳಲ್ಲಿ ಕಾಣಬಹುದಾಗಿದೆ. ನೈಜವಾಗಿ ಎಲ್ಲ ಮಕ್ಕಳಲ್ಲಿ ಕಾಣುವ ಮನೋಲೋಕದ ಭಾವಲಹರಿಗಳು ಈ ಎರಡು ಮಕ್ಕಳ ನಾಟಕಗಳಲ್ಲೂ ಕೆಲಸ ಮಾಡಿದೆ. ಅವರ ಅನೇಕ ಮಕ್ಕಳ ಕಥೆಗಳಲ್ಲೂ ನಾಟಕೀಯ ಗುಣವಿರುವುದರಿಂದ ಅವೂ ಕೂಡ ಯಶಸ್ವಿಯಾಗಿ ನಾಟಕಗಳಾಗಿ ಪರಿವರ್ತನೆ ಹೊಂದಿ ಪ್ರದರ್ಶನಗೊಳ್ಳಲು ಸಾಧ್ಯವಾಗಿದೆ. ಆದರೆ ಮಕ್ಕಳ ರಂಗ ಸಾಧ್ಯತೆಗಳು ಇಂದಿಗೂ ಕೆಲವು ಪ್ರಮುಖ ಪಟ್ಟಣಗಳಿಗಷ್ಟೇ ಸೀಮಿತವಾಗಿರುವುದರಿಂದ, ಅವುಗಳನ್ನು ಹೊರತು ಪಡಿಸಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕುವೆಂಪು ಅವರ ನಾಟಕಗಳು ಸಾಹಿತ್ಯವಾಗಿಯಷ್ಟೇ ತಲುಪುವುದೂ ಅವರ ಕಲ್ಪನೆಯ ಪರಿಧಿಯನ್ನು ವಿಸ್ತರಿಸಲು ಇರುವ ಒಂದು ತೊಡಕು ಎಂದು ನಾನು ಭಾವಿಸುತ್ತೇನೆ.

ಕುವೆಂಪು ಅವರಿಗೆ ಮಕ್ಕಳ ಬಗೆಗಿದ್ದ ಅನನ್ಯ ಪ್ರೀತಿಯ ಹಾಗೂ ಅವನು ದೊಡ್ಡವನಾಗುತ್ತಾ ಹೋದಂತೆ ದುರ್ಗುಣಗಳು ಬೆಳೆಯುತ್ತಾ ಪಶುವಾಗುವ ವಿಪಯರ್ಯಾಸವನ್ನು ಕುರಿತು ರಚಿಸಿದ ಈ ಪುಟ್ಟ ಕವಿತೆಯನ್ನು ಓದಿ,

ದೊಡ್ಡವರೆಲ್ಲರ ಹೃದಯದಿ ಕಟ್ಟಿಹ
ತೊಟ್ಟಿಲ ಲೋಕದಲಿ
ನಿತ್ಯ ಕಿಶೋರತೆ ನಿದ್ರಿಸುತಿರುವುದು
ವಿಸ್ತೃತ ನಾಕದಲಿ
ಮಕ್ಕಳ ಸಂಗದೊಳೆಚ್ಚರಗೊಳ್ಳಲಿ
ಆನಂದದ ಆ ದಿವ್ಯ ಶಿಶು
ಹಾಡಲಿ ಕುಣಿಯಲಿ ಹಾರಲಿ ಏರಲಿ
ದಿವಿಜತ್ವಕೆ ಈ ಮನುಜ ಪಶು.

ಮನುಷ್ಯ ಮಗುವಾದರೆ ಅಥವಾ ಮಗುವಿನ ಮುಗ್ಧತೆ ಉಳಿಸಿಕೊಂಡರೆ ಸಾಕು ಅವನು ದೇವರಿಗೆ ಸಮಾನ ಎಂಬ ಕುವೆಂಪು ಅವರ ಕಲ್ಪನೆ ನಿಜಕ್ಕೂ ಇಂದಿನ ಕ್ಷುದ್ರಗೊಂಡ ಬದುಕಿಗೆ ಅತ್ಯಂತ ಅವಶ್ಯಕ ಎಂದು ಭಾವಿಸುವೆ.

ಬಾಡೂಟದ ಜೊತೆಗೆ ಗಾಂಧಿ ಜಯಂತಿ: ಬಿ.ಎಂ ಬಶೀರ್ ಅವರ ಲೇಖನಗಳ ಸಂಕಲನ


– ಡಾ.ಎಸ್.ಬಿ. ಜೋಗುರ


 

‘ಬಾಡೂಟದ ಜೊತೆಗೆ ಗಾಂಧಿ ಜಯಂತಿ’ ಇದು ಲಡಾಯಿ ಪ್ರಕಾಶನದವರು ಪ್ರಕಟಿಸಿರುವ ಬಿ.ಎಂ ಬಶೀರ್ ಅವರ ಬಿಡಿ ಲೇಖನಗಳ ಕೃತಿ. ಒಟ್ಟು 28 ಬೇರೆ ಬೇರೆ ವಿಷಯಗಳನ್ನಾಧರಿಸಿದ ಇಲ್ಲಿಯ ಲೇಖನಗಳು ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರದ ಸಹವಾಸದಲ್ಲಿ ಅದ್ದಿ ತೆಗೆದಂತಿವೆ. ಇಲ್ಲಿಯ ಜಾತಿ, ಧರ್ಮ, ಭಾಷೆ, ಆಹಾರ, ವೇಷ ಭೂಷಣ ಮುಂತಾದವುಗಳ ಪಲಕಿನೊಂದಿಗೆ, ಆಯಾ ಸಂದರ್ಭಕ್ಕೆ ತಕ್ಕ ಹಾಗೆ ಬರೆಯಿಸಿಕೊಂಡ ಬರಹಗಳಿವು. ಸಮಾಜವೊಂದರ ನಗ್ನತೆಯನ್ನು ನಿಚ್ಚಳವಾಗಿ ತೋರುವ ಶುಭ್ರವಾದ ಕನ್ನಡಿಯಂತೆ ಇಲ್ಲಿಯ ಬರಹಗಳು ಕೆಲಸ ಮಾಡುತ್ತವೆ. ಕೆಲ ಲೇಖನಗಳ ವಿಷಯ ಪುನರಾವರ್ತಿತ ಎಂದೆನಿಸಿದರೂ ಮನುಷ್ಯನ ಮರೆಗುಳಿತನದ ಎಚ್ಚರದ ಹಿನ್ನೆಲೆ ತಾನೇ ತಾನಾಗಿ ಈ ಬರಹಗಳಿಗೆ ಮೈಗೂಡಿಕೊಂಡಿದೆ. ಲೇಖಕರೇ ಖುದ್ದಾಗಿ ‘ಇಲ್ಲಿರುವ ಎಲ್ಲ ಲೇಖನಗಳು ಪತ್ರಿಕೆಗಳಿಗಾಗಿ ಬರೆದವುಗಳು. ಪತ್ರಿಕಾ ಬರಹಗಳಿಗಿರುವ ಎಲ್ಲ ಮಿತಿಗಳನ್ನು ಇಲ್ಲಿರುವ ಲೇಖನಗಳು ತನ್ನದಾಗಿಸಿಕೊಂಡಿವೆ’ ಎಂದು ಹೇಳಿರುವುದರಿಂದ ಮತ್ತೆ ಅವುಗಳ ಮಿತಿಯ ಪ್ರಸ್ತಾಪ ಅನಗತ್ಯವೆನಿಸುತ್ತದೆ.

ಅಬ್ಬೂ ಕಾಕಾನ ಗೂಡಂಗಡಿಯ ಚಾ ಮತ್ತು ಅಲ್ಲಿಯ ರಾಜಕೀಯ ಚರ್ಚೆಯೊಂದಿಗೆ ರೂಪಿತವಾದ ಅನೇಕuntitled ವ್ಯಕ್ತಿತ್ವಗಳ ಬಗೆಗಿನ ವಿವರಣೆಯೊಂದಿಗೆ ಆರಂಭವಾಗುವ ಲೇಖನ ಅದು ಗೂಡಂಗಡಿ ಕಂ ಕ್ಲಾಸ್ ರೂಂ ಆಗಿ ಕೆಲಸ ಮಾಡಿದ ಬಗೆಯನ್ನು ಲೇಖಕರು ವಿವರಿಸುತ್ತಾ ‘ಆ ಗೂಡಂಗಡಿಯಲ್ಲಿ ದೊರೆಯುತ್ತಿದ್ದ ನೀರು ದೋಸೆ, ಕಲ್ತಪ್ಪವನ್ನು ಮೀನು ಸಾರಿನೊಂದಿಗೆ ಬಡಿಸಿದರೆಂದರೆ..’ ಎನ್ನುತ್ತಲೇ ಓದುಗರ ನಾಲಿಗೆಯನ್ನೂ ನೀರಾಗಿಸುತ್ತಾರೆ. ‘ಯಕ್ಷರಂಗದ ರಾಕ್ಷಸ ವೇಷಗಳು’ ಎನ್ನುವ ಲೇಖನದಲ್ಲಿ ಅವರು ಯಕ್ಷಗಾನ ಕಲೆ ಕ್ರಮೇಣವಾಗಿ ಮೇಲಿನ ಸ್ತರಗಳ ಸ್ವತ್ತಾಗಿ ಅದು ವೈದಿಕೀಕರಣ ಮತ್ತು ಕೋಮುವಾದೀಕರಣಗೊಂಡ ಬಗ್ಗೆ ಖೇದವನ್ನು ವ್ಯಕ್ತಪಡಿಸುತ್ತಲೇ ಅದು ಕಮರ್ಷಿಯಲ್ ಆದ ಬಗ್ಗೆಯೂ ಬೇಸರಿಸುತ್ತಾರೆ. ಆದರೆ ‘ಕಮರ್ಷಿಯಲ್ ಆಗಿರುವುದು ಹಸಿವಿನ ಕಾರಣದಿಂದ ಆಗಿದ್ದರೆ ಅದನ್ನು ಯಾವ ಕಾರಣಕ್ಕೂ ಪ್ರಶ್ನಿಸುವಂತಿಲ್ಲ. ಕಲೆಗಿಂತ ದೊಡ್ಡ ಸತ್ಯ ಬದುಕು. ಆದರೆ ಎರಡನೆಯದನ್ನು ನಾವು ಪ್ರಶ್ನಿಸಲೇ ಬೇಕಾಗುತ್ತದೆ’ ಎನ್ನುವುದು ಲೇಖಕರ ಮನದಾಳದ ನೋವಿನ ಅಭಿಪ್ರಾಯವೂ ಹೌದು. ‘ಮೂತ್ರ ರಾಜಕೀಯ’ ಎನ್ನುವ ಲೇಖನದಲ್ಲಿ ದನದ ಮೂತ್ರವನ್ನು ಔಷಧಿಯಾಗಿ ಬಳಸುವ ಬಗ್ಗೆ ‘ವೈದ್ಯರ ಕೆಲಸವನ್ನು ರಾಜಕಾರಣಿಗಳು ಮಾಡುವಂತಿಲ್ಲ. ಔಷಧಿಗಳಿಗೆ, ವೈದ್ಯಕೀಯಕ್ಕೆ ಅದರದ್ದೇ ಆದ ಚೌಕಟ್ಟುಗಳಿವೆ, ನೀತಿ ಸಂಹಿತೆಗಳಿವೆ’ ಎನ್ನುವ ಲೇಖಕರು ಮೂತ್ರವನ್ನು ಔಷಧಿಗಾಗಿ ಬಳಸುವ ಒತ್ತಡ ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆಯನ್ನೂ ಎತ್ತುತ್ತಾರೆ.

ಕವಿತಾ ಲಂಕೇಶರ ‘ಅವ್ವ’ ಸಿನೇಮಾದ ಬಗ್ಗೆ ಬರೆಯುವಾಗ ಗಾಂಧಿಯಂಥಾ ಮಹಾನ್ ವ್ಯಕ್ತಿತ್ವದ ಅಂತರ್ಯದಲ್ಲಿ ಓರ್ವ ಹೆಣ್ಣಿದ್ದಳು. ಹಾಗಾಗಿಯೇ ಅವರ ಹೋರಾಟ ಗಂಗಾ ನದಿಯ ಹಾಗೆ ಉದ್ದಕ್ಕೂ ಹರಿಯಿತು ಎನ್ನುತ್ತಾರೆ. ‘ಅವ್ವ’ ಚಿತ್ರ ನಿರೀಕ್ಷೆಯ ಮಟ್ಟಕ್ಕೆ ಬಾರದೇ ಇದ್ದದ್ದು ಮತ್ತು ಆ ಪಾತ್ರಕ್ಕಾಗಿ ಆಯ್ಕೆಯಾದ ಶೃತಿ ಪಕ್ಕಾ ಲಂಕೆಶರ ‘ಅವ್ವ’ ಆಗದೇ ಇದ್ದದ್ದನ್ನು ವಿಮರ್ಶಾತ್ಮಕ ನೆಲೆಯಲ್ಲಿ ಗುರುತಿಸುತ್ತಾರೆ. ‘ಚಿತ್ರದುದ್ದಕ್ಕೂ ನಿರ್ದೇಶಕಿಯನ್ನು ಕಾಡಿದ ಲಂಕೇಶ್ ನೆರಳು. ಅದರಿಂದಾಗಿ ಅತ್ತ ಕವಿತಾರ ಚಿತ್ರವೂ ಆಗದೇ ಇತ್ತ ಲಂಕೆಶರ ಕಾದಂಬರಿಯೂ ಆಗದೇ ಪ್ರೇಕ್ಷಕರನ್ನು ನಡುಗಡಲಲ್ಲಿ ಕೈ ಬಿಟ್ಟು ಬಿಡುತ್ತದೆ’ ಎನ್ನುತಾರೆ. ಬ್ಯಾರಿ ಚಿತ್ರ ಮತ್ತು ಸಾರಾ ಅಬೂಬಕ್ಕರ್ ಕುರಿತು ಬರೆಯುವಾಗ ಅತ್ಯಂತ ಸಣ್ಣದಾದ ಪ್ರಾದೇಶಿಕ ಭಾಷೆಯೊಂದರ ಚಿತ್ರಕ್ಕೆ ಸ್ವರ್ಣ ಕಮಲ ದಕ್ಕಿದ್ದು ಸಾಮಾನ್ಯವಲ್ಲ. ‘ತನ್ನ ಇದ್ದ ಬಿದ್ದ ಶಕ್ತಿಯೊಂದಿಗೆ ಒಂದು ಸಣ್ಣ ಭಾಷೆ, ಸಂಸ್ಕೃತಿ, ಸಿನೇಮಾ ರೂಪ ಪಡೆದು ಹಿಂದಿ ಸೇರಿದಂತೆ ರಾಷ್ಟ್ರದ ಎಲ್ಲ ಭಾಷೆಗಳಿಗೆ ಸಡ್ಡು ಹೊಡೆದು ಸ್ವರ್ಣ ಕಮಲವನ್ನು ತನ್ನದಾಗಿಸುವುದು ಸಣ್ಣ ವಿಷಯ ಅಲ್ಲವೇ ಅಲ್ಲ. ಅದು ಈ ದೇಶದ ಬಹು ಸಂಸ್ಕೃತಿಯನ್ನು ನಾಶ ಮಾಡಿ ಏಕ ಸಂಸ್ಕೃತಿಯನ್ನು ಪ್ರತಿಸ್ಠಾಪನೆ ಮಾಡುವವರಿಗೆ ಹಾಕಿದ ಸವಾಲು’ ಎನ್ನುತ್ತಲೇ ತಾವು ಬ್ಯಾರಿ ಭಾಷೆಯನ್ನು ಮಾತನಾಡುವವರು ಎನ್ನುವ ಕಾರಣಕ್ಕಾಗಿಯೇ ಬಾಲ್ಯದಲ್ಲಿ ಅನುಭವಿಸಿದ ನೋವುಗಳನ್ನು ಬ್ಯಾರಿ ಭಾಷೆಯ ಚಿತ್ರವೊಂದರ ಗೆಲುವು ಮರೆಸಿದ್ದ ವಿಚಾರವನ್ನು ಪ್ರಸ್ತಾಪಿಸುತ್ತಾರೆ. ‘ಗೋರಿಗಳ ತೋಟದ ಕಾವಲುಗಾರರು’ ಎನ್ನುವ ಲೇಖನದಲ್ಲಿ ಸಾಹಿತಿಯೊಬ್ಬ ನಮ್ಮ ನಡುವಿನಿಂದ ನಿರ್ಗಮಿಸಿದಾಗ ಅವನನ್ನು ಆತ ಮಾಡಿಟ್ಟ ಆಸ್ತಿ ಅಂದರೆ ಮನೆ, ತೋಟ, ಮಣ್ಣು ಮಾಡಿದ ಸ್ಥಳದಲ್ಲಿ ಹುಡುಕುವದಲ್ಲ. ಹಾಗೆಯೇ ಅವರ ಗೋರಿಗಳ ಕಾವಲುಗಾರರಾಗುವುದರಲ್ಲೂ ಯಾವ ಪುರುಷಾರ್ಥವೂ ಇಲ್ಲ ಎನ್ನುವುದನ್ನು ಅತ್ಯಂತ ಮಾರ್ಮಿಕವಾಗಿ ಬಶೀರ್ ಪ್ರತಿಪಾದಿಸಿದ್ದಾರೆ. ‘ಕೋಳಿ ಅಂಕಕ್ಕೆ ಒಂದು ಸುತ್ತು’ ಎನ್ನುವ ಲೇಖನದಲ್ಲಿ ಕೋಳಿಗಳ ನಡುವಿನ ಕಾಳಗ ಹೇಗೆ ಮನುಷ್ಯನ ಮೇಲಿನ ಸೇಡಾಗಿ ರೂಪುಗೊಂಡಿರುತ್ತದೆ ಎನ್ನುವುದನ್ನು ಹೇಳುತ್ತಲೇ ‘ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನಿಗೆ ಥಳಿಸುವುದು ನಮಗೆ ರಂಜಿಸುತ್ತದೆ ಎಂದಾದರೆ ಗುಜರಾತ ಹತ್ಯಾಕಾಂಡವೂ ನಮ್ಮನ್ನು ರಂಜಿಸಬಲ್ಲದು’ ಎನ್ನುತ್ತಾರೆ. ‘ದಲಿತರು ‘ಸತ್ತ ದನ’ದ ವಾರಸುದಾರರಾಗಬೇಕೆ..?’ ಎನ್ನುವ ಲೇಖನದಲ್ಲಿ ಅವರನ್ನು ಮೇಲಿನ ಸ್ತರಗಳು ಪೂಸಿ ಹೊಡೆಯುತ್ತಲೇ ಮೋಸ ಮಾಡುವ ಕ್ರಮವನ್ನು ಒಂದು ನಿರಂತರವಾದ ಪ್ರಕ್ರಿಯೆಯಾಗಿ ಹೇಗೆ ಸಮಾಜ ಮತ್ತು ಸಂಸ್ಕೃತಿಯೊಂದರ ಭಾಗವೆಂಬಂತೆ ನಡೆಯಿಸಿಕೊಂಡು ಬರಲಾಗಿದೆ ಎನ್ನುವುದನ್ನು ‘ಅವರೂ ಅರ್ಚಕರಾಗಬಹುದು’ ಎನ್ನುವ ಹೇಳಿಕೆಯ ಅಪಾಯವನ್ನು ಮುಂದಿಟ್ಟುಕೊಂಡು ಚರ್ಚಿಸುತ್ತಾರೆ..

‘ನನ್ನ ತಂದೆಯನ್ನು ಯಾಕೆ ಕೊಂದೆ?’ ಎನ್ನುವ ಲೇಖನದಲ್ಲಿ ರಾಜೀವ ಗಾಂಧಿಯವರ ಮಗಳು ಪ್ರಿಯಾಂಕಾ ಜೈಲಿನಲ್ಲಿದ್ದ ನಳಿನಿಯನ್ನು ಕುರಿತು ಕೇಳಿದ ಪ್ರಶೆಯ ಹಿನ್ನಲೆಯಲ್ಲಿ ಹಲವು ಗಹನವಾದ ವಿಚಾರಗಳನ್ನು ವಿಶ್ಲೇಷಿಸಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ನಳಿನಿಯೂ ‘ನನ್ನ ತಂದೆಯನ್ನು ನೀವೆಲ್ಲಾ ಸೇರಿ ಯಾಕೆ ಕೊಂದಿರಿ..?’ ಎನ್ನುವ ಮರು ಪ್ರಶ್ನೆ ಹಾಕಿದ್ದರೆ ಬಹುಷ: ಪ್ರಿಯಾಂಕಾಳಲ್ಲಿಯೂ ನಳಿನಿಯ ಮೌನವೇ ಉತ್ತರವಾಗಿರುತ್ತಿತ್ತು ಎನ್ನುವುದು ಲೇಖಕರ ಅಭಿಪ್ರಾಯ. ಶ್ರೀಲಂಕಾದ ನಾಯಕ ಜಯವರ್ಧನೆ ಮತ್ತು ರಾಜೀವಗಾಂಧಿ ಬೆಂಗಳೂರಿನಲ್ಲಿ ಭೇಟಿ ಮಾಡಿದ ಆ ದಿನಗಳ ಬಗ್ಗೆ ಶ್ರೀಲಂಕಾದ ತಮಿಳು ಕವಿ ಚೇರನ್ ಅವರ ಕವಿತೆಯ ಕೆಲವು ಸಾಲುಗಳನ್ನು ಲೇಖಕರು ಬಳಸಿದ್ದಾರೆ.

‘ಕಪ್ಪುಗಳಲ್ಲಿ ಚಹಾ ದಿಢೀರನೇ ರಕ್ತವಾಗಿದ್ದನ್ನು ತಿಳಿಯದೇ
ಇಬ್ಬರೂ ನಾಯಕರು ಕುರುಡು ರಾಜಕೀಯದಲ್ಲಿ ಕಾಲ ಕಳೆದರು
ಮನುಷ್ಯ ಮೂಳೆಗಳು ಸುಂದರ ಚಮಚೆಗಳಾಗಿ
ತಲೆಬುರುಡೆಗಳು ತಟ್ಟೆಗಳಾಗಿ ರೂಪಾಂತರಗೊಂಡವು
ಊಟದ ಮೇಜಿನ ಮೇಲೆ
ದೂರದರ್ಶನ ಕಣ್ನುಗಳೆಲ್ಲಾ ಕುರುಡಾದವು
ನಾವಿಲ್ಲದೇ ನಡೆದ ಒಪ್ಪಂದ ಸಾವಿರಾರು ಜೀವಗಳ
ನುಂಗಿ ನೆತ್ತರಲ್ಲಿ ಬರೆದ ಚರಿತ್ರೆ’– ಚೇರನ್

‘ಅಳು ತರಿಸುವ ರಾಂಪನ ಜೋಕುಗಳು’ ಎನ್ನುವ ಬರಹ ರಾಮಪ್ಪಣ್ಣ ಎನ್ನುವ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಕೇಂದ್ರಿತವಾದ ಬರಹ. ಕೇವಲ 5 ರೂಪಾಯಿಗೆ ಹೊಟ್ಟೆ ತುಂಬ ಊಟ ಕೊಡುವ ಈ ಮನುಷ್ಯ ವಡ್ಡರ್ಸೆ ರಘುರಾಮ ಶೆಟ್ಟರ ಮುಂಗಾರಿಗೂ ಚೈತನ್ಯವಾಗಿದ್ದರು ಎನ್ನುವುದನ್ನು ತೀರಾ ಮನೋಜ್ಞವಾಗಿ ಬರೆದಿದ್ದಾರೆ. ‘ವಿವೇಕ್ ಶಾನಭಾಗ್ ಕಂಡ ಉದ್ಯಾನವೊಂದರ ಕನಸು’ ಎನ್ನುವ ಲೇಖನದಲ್ಲಿ ’ದೇಶ-ಕಾ’ ದಲ್ಲಿಯ ಅಚ್ಚುಕಟ್ಟುತನ ತನ್ನನ್ನು ಬೆರಗುಗೊಳಿಸಿತ್ತಾದರೂ ‘ಜಗತ್ತಿನ ಶ್ರೇಷ್ಟವಾದುದೆಲ್ಲಾ ತನ್ನಲ್ಲಿರಬೇಕೆಂಬ ಹಟ ಈ ಪತ್ರಿಕೆಯೊಳಗಿದೆ ಎನಿಸಿತು’ ಕ್ರಮೇಣವಾಗಿ ‘ಈ ಪತ್ರಿಕೆಗೆ ಒಂದು ಪ್ರತಿ ಆಲೋಚನೆಯನ್ನು ಸೃಷ್ಟಿಸುವುದು ಸಾಧ್ಯವಾಗುತ್ತಿಲ್ಲ ಎನ್ನುವುದು ಗೊತ್ತಾಗತೊಡಗಿತು’ ಎನ್ನುತ್ತಾರೆ. ‘ಬಾಡೂಟದ ಜೊತೆಗೆ ಗಾಂಧಿ ಜಯಂತಿ’ ಎನ್ನುವ ಪುಸ್ತಕದ ಶಿರ್ಷಿಕೆಯ ಲೇಖನದಲ್ಲಿ ಹೇಗೆ ಒಂದು ಧರ್ಮದ ಆಚರಣೆ ಇನ್ನೊಂದು ಧರ್ಮದವರ ಆಹಾರದ ಹಕ್ಕನ್ನು ಕಸಿಯುತ್ತದೆ ಎನ್ನುವುದನ್ನು ಲೇಖಕ ಹೀಗೆ ಹೆಳುತ್ತಾರೆ. “ಕೆಲ ವರ್ಷಗಳ ಹಿಂದೆ ಬಕ್ರೀದ್ ಮತ್ತು ಮಹಾವೀರ ಜಯಂತಿ ಜೊತೆ ಜೊತೆಯಾಗಿಯೇ ಬಂತು. ಆಗ ರಾಜ್ಯದ ಮೂರ್ಖ ಸರಕಾರ [ ಬಾಡೂಟವನ್ನು ಅತಿಯಾಗಿ ಪ್ರೀತಿಸುತ್ತಿದ್ದ ಜೆ.ಎಚ್.ಪಟೆಲರೇ ಆಗ ಮುಖ್ಯ ಮಂತ್ರಿಯಾಗಿದ್ದದ್ದು ದುರಂತ] ಮಹಾವೀರ ಜಯಂತಿ ದಿನ ಮಾಂಸ ಮಾರಾಟವನ್ನು ನಿಷೇಧಿಸಿತು. ಒಂದು ಧರ್ಮವನ್ನು ಗೌರವಿಸುವ ಹೆಸರಿನಲ್ಲಿ ಇನ್ನೊಂದು ಧರ್ಮದ ಮೌಲ್ಯವನ್ನು ಅವಮಾನಿಸಿತು” ಎನ್ನುವುದನ್ನು ವಸ್ತು ನಿಷ್ಟವಾಗಿ ದಾಖಲಿಸುತ್ತಾರೆ. ‘ಹುಲ್ಲು ಹುಲ್ಲು ತಿಂದು ರಾಕ್ಷಸರಾದವರು’ ಎನ್ನುವ ಇನ್ನೊಂದು ಲೇಖನದಲ್ಲಿ ಕವಿ ಎನ್ಕೆ ಹನುಮಂತಯ್ಯನವರ ’ಗೋವು ತಿಂದು ಗೋವಿನಂತಾದವನು’ ಎನ್ನುವ ಕವಿತೆಯ ಸಾಲುಗಳನ್ನು ಉಲ್ಲೇಖಿಸುತ್ತಾ ‘ಇತಿಹಾಸದುದ್ದಕ್ಕೂ ಗೋವು ತಿನ್ನದವರು ಗೋವು ತಿಂದವರ ಮೇಲೆ ದೌರ್ಜನ್ಯ ನಡೆಸಿದರೇ ಹೊರತು ಗೋವು ತಿಂದು ಬದುಕಿದವರು ಸಸ್ಯಾಹಾರಿಗಳ ಮೆಲೆ ಎರಗಿದ ಒಂದೇ ಒಂದು ಉದಾಹರಣೆಗಳಿಲ್ಲ’ ಎನ್ನುವ ಲೇಖಕರು ದೇವರು ಮತ್ತು ರಾಕ್ಷಸರ ನಡುವಿನ ಸಂಘರ್ಷ ಆರ್ಯ-ದ್ರಾವಿಡರ ಘರ್ಷಣೆಯೂ ಹೌದು ಎನ್ನುತ್ತಾರೆ. ‘ಜಾತಿಗೊಬ್ಬ ಕುಲಗುರು’, ‘ರಾವಣನನ್ನು ಸುಡುವುದು ಎಷ್ಟು ಸರಿ..?’ ‘ಎದೆಯ ಧ್ವನಿಯನ್ನು ಆಲಿಸೋಣ’ ಹೀಗೆ ಇಡೀ ಕೃತಿ ಸಾಮಾಜಿಕ ಅಸಮಾನತೆ, ಮೇಲಿನ ಸ್ತರಗಳ ಶೋಷಣೆ, ಉಪ ಸಂಸ್ಕೃತಿಗಳ ಮೇಲೆ ಪ್ರಧಾನ ಸಂಸ್ಕೃತಿಯ ಹಾವಳಿ, ದಂತಕತೆಗಳ ವೈಭವೀಕರಣದ ಮೂಲಕ ಸವಾರಿ ಮಾಡುವ ಕ್ರಮ ಮೊದಲಾದ ವಿಚಾರಗಳ ಜೊತೆಗೆ ವಸ್ತುನಿಷ್ಟ ಅಭಿಪ್ರಾಯಗಳೊಂದಿಗೆ ಓದುಗನನ್ನು ಮುಖಾಮುಖಿಯಾಗಿಸುತ್ತವೆ. ಒಂದು ಕೃತಿಯಿಂದ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುವ ಅಗತ್ಯವಿಲ್ಲ ಎಂದುಕೊಳ್ಳುತ್ತೇನೆ.

ಉರಿಯುವ ಬೆಂಕಿಗೆ ಮೈಯೆಲ್ಲಾ ಬಾಯಿ – ನಿಲ್ಲದ ನೆತ್ತರ ದಾಹ


-ಬಿ. ಶ್ರೀಪಾದ್ ಭಟ್


 

 

ನಮ್ಮ ದೇಶದ ಸೋಕಾಲ್ಡ್ ಮೀಡಿಯಾಗಳ ಅತ್ಯುತ್ಸಾಹದ ಮಾತನ್ನೇ ನಂಬುವುದಾದರೆ, ಅವರ ಸಮೀಕ್ಷೆಗಳನ್ನೇ ಅಂತಿಮ ಎನ್ನುವುದಾದರೆ ಇನ್ನು 2014ರ ಚುನಾವಣೆಯಲ್ಲಿ ನಮೋಗೆ ಮತಗಟ್ಟೆ ಕಾಯುತ್ತಿದೆ ಅಷ್ಟೇ. ಇನ್ನೇನು ಉಳಿದಿಲ್ಲ. ಮಾಧ್ಯಮಗಳು ಉತ್ಸಾಹದ ಎಲ್ಲೆ ಮೀರಿ ಆಗಲೇ ಆಗಸ್ಟ್ 15ರಂದು ನಮೋ ಕೆಂಪುಕೋಟೆಯಿಂದ ಏನು ಭಾಷಣ ಮಾಡಬಹುದು ಎಂದು ಚರ್ಚಿಸುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ತಮ್ಮ ಗೆಲುವಿಗಾಗಿ1 ರಣತಂತ್ರವನ್ನು ರೂಪಿಸುವುದು ಮಾಮೂಲಿ ವಿಚಾರ. ಆದರೆ ಇಂದು ಬಹುಪಾಲು ಮೀಡಿಯಾ ಅದರಲ್ಲೂ ದೃಶ್ಯ ಮಾಧ್ಯಮಗಳು ತಮ್ಮ ಪತ್ರಿಕಾ ಧರ್ಮವನ್ನೇ ಮರೆತು ಏಕಪಕ್ಷಿಯವಾಗಿ ನಮೋನ ಗೆಲುವಿಗಾಗಿ ರಣತಂತ್ರ ರೂಪಿಸುತ್ತಿವೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆಯಲ್ಪಡುವ ಮಾಧ್ಯಮಗಳು ಅದರ ಮೌಲ್ಯಗಳ ರಕ್ಷಣೆಗಾಗಿ ತನ್ನನ್ನು ತಾನು ಕಾವಲುಗಾರನಂತೆ ರೂಪಿಸಿಕೊಳ್ಳುವುದರ ಬದಲಾಗಿ ಇಂದು ತನ್ನ ನೀತಿಗಳನ್ನು ಅಪಮೌಲ್ಯೀಕರಣಗೊಳಿಸಿಕೊಂಡು ಅನೈತಿಕತೆಯನ್ನು ಮೆರೆಯುತ್ತಿರುವುದು ಮಾತ್ರ ಆಧುನಿಕ ಇಂಡಿಯಾದ ಕರಾಳ ಅಧ್ಯಾಯವೆಂದೇ ದಾಖಲಾಗಲಿದೆ. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ಯುದ್ಧಕ್ಕಿಂತ ಮೊದಲೇ ಸೋಲನ್ನೊಪ್ಪಿಕೊಂಡಂತೆ ವರ್ತಿಸುತ್ತಿದೆ. ಹೆಚ್ಚೂ ಕಡಿಮೆ ಮಕಾಡೆ ಮಲಗಿದಂತೆಯೇ ವರ್ತಿಸುತ್ತಿರುವ ಕಾಂಗ್ರೆಸ್ ಪಕ್ಷದ ನಕಾರಾತ್ಮಕ ನಡವಳಿಕೆ ಮಾತ್ರ ದಯನೀಯವಾಗಿದೆ. ಕಳೆದ ಒಂದು ದಶಕದುದ್ದಕ್ಕೂ ಪೊರೆದಿದ್ದ ಸೋನಿಯಾ ಗಾಂಧಿಯವರ silent ರಾಜಕಾರಣದ ಶೈಲಿಯ ಅಂತ್ಯ ಮೇಲ್ನೋಟಕ್ಕಂತೂ ಕಾಣುತ್ತಿದೆ. ಅದಕ್ಕೆ ಪ್ರತಿಯಾಗಿ ನಮೋ ಬ್ರಿಗ್ರೇಡ್ ನ rhetoric ಅಬ್ಬರದ ಶೈಲಿ ಇಂದು ದೇಶದಾದ್ಯಂತ ವ್ಯಾಪಿಸುತ್ತಿದೆ. ಸಂಘಪರಿವಾರದ ’ಏಕ್ ಧಕ್ಕ ಔರ್ ದೋ” ಮಾದರಿಯ ಮತೀಯವಾದದ ಪುಂಡಾಟಿಕೆಯ ದಿನಗಳು ಪ್ರಾಮುಖ್ಯತೆಗೆ ಮರಳುತ್ತಿವೆ.

ತಮ್ಮ ಲೇಖನವೊಂದರಲ್ಲಿ ಡಿ.ಆರ್.ನಾಗರಾಜ್ ಅವರು ಠಾಗೋರರ ಕುರಿತಾಗಿ “ಒಬ್ಬ ಸಾರ್ವಜನಿಕ ವ್ಯಕ್ತಿಗೆ ಸುತ್ತಲೂ ಜನತೆಯ ಕನ್ನಡಿ ಇರುತ್ತದೆ. ಆತ ಯಾವಾಗಲೂ ಅವರ ನಿರೀಕ್ಷೆಗೆ ತಕ್ಕಂತೆ ಇರಬೇಕು. ಠಾಗೋರರ ಕಷ್ಟ ಪ್ರಾರಂಭವಾದದ್ದು ಇಲ್ಲಿಯೇ. ಭಾಷೆ ಆತನಿಗೆ ಸಾರ್ವಜನಿಕ ದಂಧೆಯಾಗಿ ಮಾತ್ರ ಕಾಣತೊಡಗಿತು. ಎಂಥದೇ ಹೆಣ್ಣಿನ ಬಗ್ಗೆ ಬರೆದರೂ ಆಕೆ ಭಾರತ ಮಾತೆಯ ಹಾಗೆ ಕಾಣತೊಡಗಿದಳು. ಎಲ್ಲವೂ ಸಾರ್ವಜನಿಕವೇ ಆಗಿ ಬಯಲಿನಲ್ಲಿ ಬದುಕಿದ ಹಾಗೆ ಅನ್ನಿಸತೊಡಗಿತು” ಎಂದು ಬರೆಯುತ್ತಾರೆ. ಇದು ವಿಚಿತ್ರ. ಒಳ ಮನಸ್ಸು ಸೋಲೊಪ್ಪಿಕೊಂಡು ಬಾಹ್ಯ ವರ್ತನೆಯೇ ಮುಖವಾಡವಾಗಿ ಜನಪ್ರಿಯತೆ ಗಳಿಸುತ್ತಿರುವುದು ಇಂಡಿಯಾದ ಸಾರ್ವಜನಿಕ ಜೀವನ ಮರಳಿ ಊಳಿಗಮಾನ್ಯ ವ್ಯವಸ್ಥೆಗೆ ಮರಳುತ್ತಿರುವುದರ ಸೂಚನೆಯಂತೆ ಭಾಸವಾಗುತ್ತಿದೆ. ಇಂದು ಇಲ್ಲಿ ನೈತಿಕತೆ ಅತ್ಯಂತ ದುಬಾರಿ ವಸ್ತುವಾಗಿರುವುದರ ಫಲವಾಗಿ ಅಸಮಾನತೆ ಒಪ್ಪಿತ ಮೌಲ್ಯವಾಗಿ ಜಾರಿಗೊಂಡಿದೆ. ಘನತೆ ಕಳೆದುಕೊಳ್ಳುವುದು ಆತ್ಮವಂಚನೆಯ ದ್ಯೋತಕವಲ್ಲ. ಬದಲಾಗಿ ಅದು ಕತ್ತಲ ದಾರಿಯಲ್ಲಿ ಉಳಿದಿರುವ ಒಂದೇ ಒಂದು ಬೆಳಕಿನ ದಾರಿ. ಅದು ಅನಿವಾರ್ಯ ಎಂದು ನಂಬಿಸಲಾಗುತ್ತಿದೆ.

ಚಿಂತಕ ಹಸನ್ ಸುರೂರ್ ದ ಹಿಂದೂ ಪತ್ರಿಕೆ(10 ಮಾರ್ಚ 2014)ಯಲ್ಲಿ ಹೀಗೆ ಬರೆಯುತ್ತಾರೆ “ಕಳೆದ ವಾರ ದೃಶ್ಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುತ್ತಾ ಸಂಘ ಪರಿವಾರದ ಅರಣ್ ಜೇಟ್ಲಿ ’ನಿಜ, ಬಿಜೆಪಿಗೆ ಮುಸ್ಲಿಂ ತೊಂದರೆ ಇದೆ. ಆದರೆ ಇದು ಇಬ್ಬಗೆಯದಾಗಿದೆ. ಮೊದಲನೆಯದಾಗಿ ಅವರು ನಮ್ಮನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಎರಡನೆಯದಾಗಿ ನಾವು ಇದನ್ನು ಒಪ್ಪಿಕೊಳ್ಳಬೇಕಾಗಿದೆ. ಆದರೆ ಇಂದು ವಾತಾವರಣ ಬದಲಾಗಿದೆ’ ಎಂದು ಹೇಳಿದರು. ಇದಕ್ಕೂ ಕೆಲವು ದಿನಗಳ ಹಿಂದೆ ಬಿಜೆಪಿಯ ಅಧ್ಯಕ್ಷ ರಾಜನಾಥ ಸಿಂಗ್ ತಮ್ಮ ಭಾಷಣವೊಂದರಲ್ಲಿ ಮುಸ್ಲಿಮರಲ್ಲಿ ಕ್ಷಮೆ ಕೇಳುವಂತಹ ಧಾಟಿಯಲ್ಲಿ ಮಾತನಾಡಿ ಬಿಜೆಪಿಗೆ ಅವಕಾಶ ನೀಡಿ ಎಂದು ಕೇಳಿಕೊಂಡಿದ್ದರು. ಸಂಘ ಪರಿವಾರದ ಕಾರ್ಯತಂತ್ರವೇನೆಂದರೆ ತಾವಾಗಲೇ ಧಾರ್ಮಿಕ ಅಲ್ಪಸಂಖ್ಯಾತರಾದ ಸಿಖ್ಖರನ್ನು ಮತ್ತು ಕೆಲ ಕ್ರಿಶ್ಚಿಯನ್ನರನ್ನು ಗೆದ್ದಿದ್ದಾಗಿದೆ. ಇನ್ನು ಮುಸ್ಲಿಮರನ್ನು ಕೊಳ್ಳಬೇಕಾಗಿದೆ ಅಷ್ಟೇ. ಸೂಡೋ ಸೆಕ್ಯುಲರ್ ಗಳು ಹುಟ್ಟು ಹಾಕಿದ ‘ಕೋಮುವಾದದ’ ಬೋಗಿ ಮಾತ್ರ ಇದಕ್ಕೆ ಅಡ್ಡವಾಗಿದೆ. ಆದರೆ ಫ್ಯಾಸಿಸಂ ಶೈಲಿಯು ಪ್ರಚಾರಕ್ಕೆ ಬರುತ್ತಿರುವ ಇಂದಿನ ದಿನಗಳಲ್ಲಿ sense of alarmism ನ ಸ್ಥಿತಿಯಲ್ಲಿರುವ ಮುಸ್ಲಿಮರ ಈ ಭಯವನ್ನು ಉಪಯೋಗಿಸಿಕೊಂಡು ಈ ಕೋಮುವಾದದ ಬೋಗಿಯನ್ನು ಅಂಚಿಗೆ ತಳ್ಳಬಹುದೆಂಬ ವಿಶ್ವಾಸ ಬಿಜೆಪಿಯಲ್ಲಿದೆ. ಆದರೆ ವಾಸ್ತವದಲ್ಲಿ ಕೋಮುವಾದದ ಅಪಾಯವು ಕೇವಲ ಒಂದು ಬೋಗಿಯಲ್ಲ. ಇದಕ್ಕೆ ಆಧಾರಸಹಿತವಾದ ಸಾಕ್ಷಿಗಳಿವೆ. ದೇಶದೆಡೆಗೆ ಮುಸ್ಲಿಂರ ಬದ್ಧತೆಯನ್ನು ಇಂದಿಗೂ ಪ್ರಶ್ನಿಸುತ್ತಿರುವ ಸಂಘಪರಿವಾರದ ಬೆಂಕಿಯುಗುಳುವಿಕೆಯೇ ಇದಕ್ಕೆ ಪುರಾವೆ. ಹಾಗಿದ್ದರೆ ಅರುಣ್ ಜೇಟ್ಲಿ ‘ಹೇಳುವ ಮುಸ್ಲಿಮರು ಒಪ್ಪಿಕೊಳ್ಳಬೇಕು,ನಾವು ಅರ್ಥ ಮಾಡಿಕೊಳ್ಳಬೇಕು’ ಎನ್ನುವ ಮಾತುಗಳ ಅರ್ಥವೇನು ?”

ಮೇಲಿನ ಸಾಲುಗಳು ಏನನ್ನು ಹೇಳುತ್ತವೆ? ಫ್ಯಾಸಿಸಂ ಶಕ್ತಿ ವರ್ಧಿಸಿಕೊಳ್ಳುತಿರುವ ಇಂದಿನ ದಿನಗಳಲ್ಲಿ ತಮ್ಮ ಡಿಎನ್ಎನಲ್ಲಿಯೇ modi_bjp_conclaveಮುಸ್ಲಿಂ ದ್ವೇಷದ ಗುಣಗಳನ್ನು ತುಂಬಿಕೊಂಡಿರುವ ಸಂಘಪರಿವಾರದ ಎದುರು ಮುಸ್ಲಿಮರು ತಮ್ಮ ಘನತೆ ಕಳೆದುಕೊಳ್ಳುವುದು ಆತ್ಮವಂಚನೆಯ ದ್ಯೋತಕವಲ್ಲ. ಬದಲಾಗಿ ಅದು ಕತ್ತಲ ದಾರಿಯಲ್ಲಿ ಉಳಿದಿರುವ ಒಂದೇ ಒಂದು ಬೆಳಕಿನ ದಾರಿ ಎಂದು ಸಂಘ ಪರಿವಾರ ತಾಕೀತು ಮಾಡುತ್ತಿದೆಯಲ್ಲವೇ? ತನ್ನ ಫ್ಯಾಸಿಸಂ ಗುಣಗಳನ್ನು ಮತ್ತೆ ಮತ್ತೆ ಬಿಚ್ಚಿಡುತ್ತಿರುವ ನರೇಂದ್ರ ಮೋದಿ ಕಾಶ್ಮೀರದಲ್ಲಿ ಭಾಷಣ ಮಾಡುತ್ತ ಮತ್ತೊಮ್ಮೆ ತನ್ನ ನೆತ್ತರ ದಾಹವನ್ನು ತೋರಿಸಿದ್ದಾನೆ. ಹಿಂದೊಮ್ಮೆ ಮೇಡಂ ಮಾರಿಯಾ, ಮಿಯಾ ಮುಶ್ರಾಫ್, ಮೈಕೆಲ್ ಲಿಂಗ್ಡೋ ಎಂದು ಅಹಂಕಾರದಿಂದ ಮಾತನಾಡಿದ್ದ ಮೋದಿ ಅತ್ಯಂತ ಕ್ರೂರವಾದ ಭಾಷೆ ಬಳಸುತ್ತಾ ತನ್ನ ರಾಜಕೀಯ ಎದುರಾಳಿಗಳನ್ನು ಕುರಿತಾಗಿ “ಎಕೆ 47, ಎಕೆ ಅಂಟೊನಿ, ಎಕೆ 49” ಎಂದು ವ್ಯಂಗವಾಡಿದ್ದಾನೆ.ಆಧುನಿಕ ಭಾರತದ ಇತಿಹಾಸದಲ್ಲಿ ರಾಜಕೀಯ ನಾಯಕನೊಬ್ಬ ಇಷ್ಟೊಂದು ಕ್ರೌರ್ಯದ ಭಾಷೆಯಲ್ಲಿ ಮಾತನಾಡಿದ್ದು ಇದೇ ಮೊದಲು. ನೆತ್ತರ ದಾಹದ ಈ ಕ್ರೌರ್ಯ ಸಾರ್ವಜನಿಕ ಸಜ್ಜನಿಕೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸುತ್ತದೆ. ಇದನ್ನು ಆಳವಾಗಿ ವಿಶ್ಲೇಶಿಸದೆ ಅತ್ಯಂತ ಉತ್ಸಾಹದಿಂದ ಮುಖಪುಟದಲ್ಲಿ ಪ್ರಕಟಿಸಿರುವ ಮಾಧ್ಯಮಗಳು ಮೋದಿಯ ಈ ನೆತ್ತರ ಬೇಟೆಯ ಶೈಲಿಯನ್ನು ಮರೆತಂತಿವೆ. ಮತ್ತೊಮ್ಮೆ ನಾವು ಪಾಲಿಸಬೇಕಾದ ಧರ್ಮದ ಬಗ್ಗೆ ಗುಡುಗಿರುವ ಮೋದಿಯ ಹುಸಿ ಮುಖವಾಡ ಮತ್ತೆ ಮತ್ತೆ ಕಳಚಿಕೊಳ್ಳುತ್ತಿದೆ. ಆದರೆ ಪ್ರತಿ ಬಾರಿಯೂ ಕಳಚಿದ ಮುಖವಾಡವನ್ನು ಉತ್ಸಾಹದಿಂದ ಮರಳಿ ಮೋದಿಗೆ ತೊಡಿಸುತ್ತಿರುವುದು ಸಂಘ ಪರಿವಾರವಲ್ಲ. ಬದಲಾಗಿ ಆ ಕಾರ್ಯ ಮಾಡುತ್ತಿರುವುದು ಮಾಧ್ಯಮಗಳು. ಧರ್ಮ ಮತ್ತು ರಾಜಕಾರಣ ಮತ್ತೊಮ್ಮೆ ಪರಸ್ಪರ ಬೆರೆಯಲು ಮಾಧ್ಯಮಗಳು ಕೈ ಜೋಡಿಸುತ್ತಿವೆ .

ಇಂದು ಮೋದಿಗೆ ಮತ ಹಾಕುವುದು ದೇಶಪ್ರೇಮದ ದ್ಯೋತಕ ಎಂದು ಆರೆಸ್ಸೆಸ್ ಪ್ರಚಾರ ನಡೆಸುತ್ತಿದೆ. ಕಳೆದ ದಶಕದಲ್ಲಿ ಕುಂದಿದಂತಿದ್ದ ಆರೆಸ್ಸೆಸ್ ಇಂದು ಮತ್ತೆ ಗರಿಗೆದರಿ ನಿಂತುಕೊಂಡಿದೆ. ‘ಮಿಷನ್ 272’ ಎನ್ನುವ ಘೋಷಣೆಯೊಂದಿಗೆ ತನ್ನ ಸ್ವಯಂಸೇವಕರನ್ನು ದೇಶಾದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗಿಸಿದೆ. India272-banner-image-promotion-250x250ಪ್ರಸ್ತುತ ಚುನಾವಣೆಯಲ್ಲಿ ತಾನು ಬಿಜೆಪಿಯ ಸಾರಥಿಯ ಪಟ್ಟವನ್ನು ವಹಿಸಿಕೊಂಡಿರುವುದನ್ನು ಆರೆಸ್ಸೆಸ್ ಅಲ್ಲಗೆಳೆಯುತ್ತಿಲ್ಲ. ಅದು ಹಿಂದೂ ಮೇಲ್ಜಾತಿಯ ಓಟುಗಳೊಂದಿಗೆ ಇತರೆ ಹಿಂದುಳಿದ ವರ್ಗಗಳ ಮತಗಳಿಗೆ ಕೂಡಾ ಲಗ್ಗೆಯಿಟ್ಟಿದೆ. ಇದು ಆರೆಸ್ಸೆಸ್ ಸಂಘಟನೆಯ ಕೋಮುವಾದಿ ಇತಿಹಾಸದಲ್ಲಿಯೇ ಪ್ರಥಮ. ಬೆಲೆಯೇರಿಕೆ, ಭ್ರಷ್ಟಾಚಾರದ ನೆಲೆಯಲ್ಲಿ ಮೇಲ್ಜಾತಿಗಳ ಮತಗಳನ್ನು ಮತ್ತು ಮುಸ್ಲಿಂ ವಿರೋಧಿ ನೆಲೆಗಟ್ಟಿನಲ್ಲಿ ಇತರೇ ಹಿಂದುಳಿದ ವರ್ಗಗಳ ಮತಗಳನ್ನು ಬೇಟೆಯಾಡಲು ಆರೆಸ್ಸೆಸ್ ಕಾರ್ಯತಂತ್ರ ರೂಪಿಸಿದೆ. ಔಟ್ಲುಕ್ (17ಮಾರ್ಚ 2014) ಪತ್ರಿಕೆಯಲ್ಲಿ ವರದಿಯಾಗಿರುವಂತೆ ಡೆಲ್ಲಿ ಗದ್ದುಗೆಗಾಗಿ ಆರೆಸ್ಸೆಸ್ ನ ಹಿರಿಯ ನಾಯಕರೇ ಈ ಕಾರ್ಯತಂತ್ರದ ನೇತೃತ್ವ ವಹಿಸಿದ್ದಾರೆ. ಆರೆಸ್ಸೆಸ್ ಮುಖ್ಯಸ್ಥ ಭಾಗವತ್ ಉತ್ತರ ಪ್ರದೇಶ,ಮಧ್ಯಪ್ರದೇಶ ಮತ್ತು ರಾಜಸ್ತಾನದ ನೇತೃತ್ವ ವಹಿಸಿದ್ದರೆ, ಸುರೇಶ್ ಭೈಯ್ಯಾ ಗುಜರಾತ್ ಹಾಗೂ ಮಹಾರಾಷ್ಟ್ರ, ದತ್ತಾತ್ರೇಯ ಹೊಸಬಾಲೆ ಕರ್ನಾಟಕ ಮತ್ತು ಬಿಹಾರ್, ಕ್ರಷ್ಣಗೋಪಾಲ್ ಅಸ್ಸಾಂ, ಸುರೇಶ್ ಸೋನಿ ಛತ್ತೀಸ್ ಗಡದ ನೇತೃತ್ವ ವಹಿಸಿದ್ದಾರೆ. ಆರೆಸ್ಸೆಸ್ ಜೊತೆಗೆ ಅದರ ಅಂಗ ಸಂಸ್ಥೆಗಳಾದ ವಿ ಎಚ್ ಪಿ, ಎಬಿವಿಪಿ, ಭಾರತೀಯ ಕಿಸಾನ್ ಸಂಘ, ಸ್ವದೇಶಿ ಜಾಗರಣ ಮಂಚ್ ಮತ್ತು ಇನ್ನಿತರ ಗುಂಪುಗಳು ನಿರಂತರವಾಗಿ ಶ್ರಮಿಸುತ್ತಿವೆ. ಮೋದಿ ಅಭಿವೃದ್ಧಿ ಅಥವಾ ಭಯೋತ್ಪಾದನೆಯ ಕುರಿತಾಗಿ ಮಾತನಾಡುತ್ತಾನೆಂದರೆ ಅವೆಲ್ಲ ಹಿಂದುತ್ವದೊಂದಿಗೆ ನೇರವಾಗಿ ಸಂಪರ್ಕದಲ್ಲಿವೆಯೆಂದೇ ಅರ್ಥ. ಇವುಗಳ ಕುರಿತಾಗಿ ಮಾತನಾಡಿದರೆ ಹಿಂದುತ್ವದ ಅಜೆಂಡಾ ಜಾರಿಗೊಳಿಸುತ್ತಿದ್ದೇವೆ ಎಂದೇ ಅರ್ಥ. ಶಬ್ದಗಳು ಅದಲುಬದಲಾಗಿವೆ ಅಷ್ಟೇ ಎಂದು ಹಿರಿಯ ಆರೆಸಸ್ ನಾಯಕರು ಹೇಳಿದ್ದಾರೆ. ಇಂತಹ ತಂತ್ರದ ಭಾಗವಾಗಿಯೇ ಉಮಾಭಾರತಿ ಕಾಲಕಾಲಕ್ಕೆ ಗಂಗಾ ಬಚಾವ್ ಆಂದೋಲನದ ಮಂತ್ರ ಜಪಿಸುತ್ತಿರುತ್ತಾರೆ, ವಿ ಎಚ್ ಪಿ, ‘ಹಿಂದೂ ಜಾಗೋ’ ಮಂತ್ರವನ್ನು ಇನ್ನೂ ನಿಲ್ಲಿಸಿಲ್ಲ, ಹಿಂದೂ ರಕ್ಷಾ ದಳ ‘ಕಾಶ್ಮೀರ ಬಚಾವ್’ ಆಂದೋಲನ ಕಟ್ಟುತ್ತಿದೆ. ಜೊತೆಗೆ 2002ರ ಗುಜರಾತ್ ರಾಜ್ಯದಲ್ಲಿ ನಡೆದ ಹತ್ಯಾಕಾಂಡದ ಕುರಿತಾಗಿ ಯಾವ ಕಾರಣಕ್ಕೂ ಕ್ಷಮೆ ಕೇಳಬಾರದೆಂದು ಆರೆಸೆಸ್ ಮೋದಿ ಮತ್ತು ಬಿಜೆಪಿಗೆ ತಾಕೀತು ಮಾಡಿದೆ. ಕ್ಷಮಾಪಣೆ ಕೇಳಿದಲ್ಲಿ ಕಷ್ಟಪಟ್ಟು ಗಳಿಸಿದ ಗೆಲುವಿನ ವೇದಿಕೆಯನ್ನು ಕಳೆದುಕೊಳ್ಳುತ್ತೇವೆ ಎಂದು ಹೆದರಿಸಿದೆ ಎಂದು ಔಟ್ಲುಕ್ ಪತ್ರಿಕೆಯಲ್ಲಿ ವರದಿಯಾಗಿದೆ.

ಉತ್ರರ ಪ್ರದೇಶದ ಮುಜಫ್ಫರ್ ನಗರದ ಕೋಮು ಗಲಭೆ ಇಂಡಿಯಾದಲ್ಲಿ ಅಭಿವೃದ್ಧಿ-ಹಿಂದುತ್ವದ ರಾಜಕೀಯ ಭವಿಷ್ಯಕ್ಕೆ ನಾಂದಿ ಹಾಡಿದೆ09a671d9-189f-4b8a-893f-4833f370ce93HiRes ಎನ್ನುವ ಕ್ರೂರ ವ್ಯಂಗ್ಯ ಸತ್ಯವಾದರೆ ಅದು ದಶಕಗಳ ಕಾಲ ಪ್ರಜ್ಞಾವಂತರನ್ನು ಕಾಡಲಿದೆ. ಹಾಗಿದ್ದಲ್ಲಿ ಅಭಿವೃದ್ಧಿ-ಹಿಂದುತ್ವದ ಈ ಅಪಾಯಕಾರಿ ಕಾಂಬಿನೇಷನ್ ಎಲ್ಲಿ ಮುಟ್ಟುತ್ತದೆ ? ಸಂಘ ಪರಿವಾರದ ಹೊಸ ಮಂತ್ರವೇನೆಂದರೆ ‘ಎಲ್ಲರಿಗೂ ನ್ಯಾಯ, ಯಾರಿಗೂ ಓಲೈಕೆ ಇಲ್ಲ’. ಇದು ಇದೇ ರೀತಿಯಲ್ಲಿ ಜನಪ್ರಿಯಗೊಂಡರೆ ಸಾಚಾರ್ ಕಮಿಟಿಯಲ್ಲಿ ವರದಿಯಾದಂತಹ ಮುಸ್ಲಿಮರ ಒಟ್ಟಾರೆ ದುಸ್ಥಿತಿ, ಕುಲುಮೆಯಲ್ಲಿ ನಿರಂತರ ಬೇಯುವಿಕೆ, ಸಾಮಾಜಿಕ ಬಹಿಷ್ಕಾರದ ತೂಗುಗತ್ತಿ ಹಾಗೂ ಮೂರನೇ ದರ್ಜೆಯ ನಾಗರಿಕತೆ ಇನ್ನು ಮುಂದೆಯೂ ಮುಂದುವರೆಯಲಿದೆ. ಇದನ್ನು ಇಂದಿನ ಮುಸ್ಲಿಂ ಯುವಕರು ಅವಲೋಕಿಸಬೇಕಾಗಿದೆ. ’ಆಗಿದ್ದು ಆಗಿಹೋಗಿದೆ ನಾವು ಅಭಿವೃದ್ಧಿಯೊಂದಿಗೆ ಕೈಜೋಡಿಸೋಣ” ಎಂದು ಈ ಯುವಕರು ಬಿಜೆಪಿಯೊಂದಿಗೆ ಹೊರಟರೆ ಅವರು ತಲಪುವುದು ಮತ್ತಷ್ಟು ಕಗ್ಗತ್ತಲಿಗೆ. ಇದು ಆತ್ಮಹತ್ಯೆ ಎಂದು ಅರಿವಾಗುವಷ್ಟರಲ್ಲಿ ಹಳ್ಳಕ್ಕೆ ಬಿದ್ದಾಗಿರುತ್ತದೆ. ಏಕೆಂದರೆ ಇಂದಿನ ಫ್ಯಾಸಿಸಂ ಹಿನ್ನೆಲೆಯ sense of alarmism ನ ಸ್ಥಿತಿಯಲ್ಲಿ ಪ್ರತಿಯೊಬ್ಬ ಅಲ್ಪಸಂಖ್ಯಾತನಾದವನು ಪ್ರಬಲ ಬಹುಸಂಖ್ಯಾತ ಧರ್ಮೀಯರ ನೀತಿಗಳನ್ನು ಇದು ನನ್ನ ಮೌಲ್ಯಗಳು ಎಂದೇ ಅಪ್ಪಿಕೊಳ್ಳಬೇಕಾಗುತ್ತದೆ. ಇಂತಹ ಸಂದಿಗ್ಧತೆಯಲ್ಲಿ ಸಂಘ ಪರಿವಾರದ ಹಿಂದುತ್ವದಡಿಯಲ್ಲಿ ಇತರೆ ಹಿಂದುಳಿದ ವರ್ಗಗಳು ಮತ್ತು ದಲಿತರು ಒಂದಾಗಿ ಬಾಣಗಳಾಗಿ ಸಜ್ಜುಗೊಳ್ಳುತ್ತಾರೆ. ಪ್ರಬಲ ಜಾತಿಗಳು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಈ ಬಾಣಗಳನ್ನು ಮುಸ್ಲಿಮರ ವಿರುದ್ಧ ಪ್ರಯೋಗಿಸುತ್ತಿರುತ್ತದೆ. ಎಂಬತ್ತರ ದಶಕದಲ್ಲಿ ಬಿಹಾರನ ಭಾಗಲ್ಪುರದಲ್ಲಿ, ಮಹಾರಾಷ್ಟ್ರದ ಭಿವಂಡಿಯಲ್ಲಿ, 2002ರ ಗುಜರಾತ್ ಹತ್ಯಾಕಾಂಡದಲ್ಲಿ ಮೇಲಿನ ಬಾಣಗಳೇ ಸಂಪೂರ್ಣವಾಗಿ ಪ್ರಯೋಗಗೊಂಡಿದ್ದು. ಆಗಿನ್ನೂ ಫ್ಯಾಸಿಸಂ ಅಧಿಕಾರದ ಹತ್ತಿರಕ್ಕೂ ಸುಳಿದಿರಲಿಲ್ಲ. ಆದರೆ ಇಂದು? ಎಂಬತ್ತರ ದಶಕದ ಕೊನೆ ಭಾಗದಲ್ಲಿ ಮೀಸಲಾತಿ ವಿರೋಧಿ ಚಳುವಳಿಯ ನೇತೃತ್ವ ವಹಿಸಿದ್ದು ಆರೆಸ್ಸೆಸ್ ನ ಅಂಗಪಕ್ಷ ಎಬಿವಿಪಿ. ಮೇಲ್ನೋಟಕ್ಕೆ ಅದು ಹಿಂದುಳಿದ ವರ್ಗಗಳ ವಿರೋಧದಂತೆ ಕಂಡರೂ ಅವರ ಗುರಿ ದಲಿತರಾಗಿದ್ದರು. ಇವತ್ತು ಕೇರಳದ ಚುನಾವಣಾ ಪ್ರಚಾರದಲ್ಲಿ ಹಿಂದುಳಿದ ಜಾತಿಗಳ ಗುರು ಮತ್ತು ಸಮಾಜ ಸುಧಾರಕ ನಾರಾಯಣ ಗುರು ಅವರನ್ನು ಓಲೈಸುವ ಮೋದಿ ತಮಿಳುನಾಡಿನಲ್ಲಿ ದಲಿತ ಸಮುದಾಯದವರನ್ನು ಕೆರಳಿಸುತ್ತಿದ್ದಾನೆ. ತನ್ನ ಭಾಷಣಗಳಲ್ಲಿ ಮುಂದಿನ ದಶಕ ಹಿಂದುಳಿದ ವರ್ಗಗಳು ಮತ್ತು ದಲಿತರಿಗೆ ಸೇರಿದ್ದು ಎಂದು ಹಿಂದುತ್ವದ ಹೆಸರಿನಲ್ಲಿ ಮತ ಯಾಚಿಸುತ್ತಿದ್ದಾನೆ. ಮಹಾರಾಷ್ಟ್ರದಲ್ಲಿ ದಲಿತ ನಾಯಕ ರಾಮದಾಸ್ ಅಟವಳೆ ಮೋದಿಯ ತೆಕ್ಕೆಗೆ ಜಾರಿದ್ದಾಯಿತು. ಹಾಗೆಯೇ ಅಖಿಲ ಭಾರತ ದಲಿತ ನೌಕರರ ಒಕ್ಕೂಟದ ಅಧ್ಯಕ್ಷ ಉದಿತ್ ರಾಜ್ ಕಳೆದ ವಾರ ಬಿಜೆಪಿಗೆ ಸೇರಿಕೊಂಡಿದ್ದಾರೆ.

ಒಂದು ಕಾಲದ ಮಾತಾಗಿದ್ದ ಫ್ಯೂಡಲ್ ಹಿಂಸಾಚಾರ ಅತ್ಯಂತ ತ್ವರಿತಗತಿಯಲ್ಲಿ ಮರಳಿ ತನ್ನ ಹಕ್ಕು ಸ್ಥಾಪಿಸುತ್ತಿದೆ. ಬಿಹಾರದಂತಹ ರಾಜ್ಯದಲ್ಲಿ ಪ್ಯೂಡಲ್ ಪಡೆ ರಣವೀರ ಸೇನಾ ಮತ್ತೆ ತಲೆಯತ್ತಲಿದೆ. 27 ಮಾರ್ಚ 2014ರ ಹಿಂದೂ ಪತ್ರಿಕೆಯಲ್ಲಿ “ಬಿಹಾರದ ಬಟಾನಿ ತೋಲಾದಲ್ಲಿ ರಣವೀರ ಸೇನ ಪಡೆ ದಲಿತ ಹೆಣ್ಣು ಮಕ್ಕಳು ಮತ್ತು ಮಕ್ಕಳನ್ನು, ಹಿಂದುಳಿದ ಮುಸ್ಲಿಂರನ್ನು ಕೊಚ್ಚಿ ಹಾಕಿ ಹತ್ಯೆ ಮಾಡಿತ್ತು. ತೊಂಭತ್ತರ ದಶಕದಲ್ಲಿ ರಣವೀರ ಸೇನಾ ಪಡೆ ಬಿಜೆಪಿಯ ಎಲೆಕ್ಷನ್ ಕರಪತ್ರಗಳನ್ನು ಗ್ರಾಮಗಳಲ್ಲಿ ಹಂಚಿ ಬಿಜೆಪಿಗೆ ಮತ ಹಾಕಲು ಆದೇಶಿಸಿತು. 2012ರಲ್ಲಿ ಹತ್ಯೆಗೊಂಡ ಈ ರಣವೇರ ಸೇನೆಯ ಮುಖ್ಯಸ್ಥ ಭ್ರಹ್ಮೇಶ್ವರ ಸಿಂಗ್ ತಾನು ಬಾಲ್ಯದಿಂದಲೂ ಆರೆಸ್ಸೆಸ್ ಸ್ವಯಂಸೇವಕಾನಾಗಿದ್ದೆ ಎಂದು ಒಪ್ಪಿಕೊಂಡಿದ್ದ. ಆತ ಮೋದಿ ಪ್ರಧಾನಿ ಆಗುವ ಆಸೆ ಕಂಡಿದ್ದ. ಬಿಹಾರಿನ ಬಿಜೆಪಿ ನಾಯಕ ಗಿರಿರಾಜ ಸಿಂಗ್ ಈ ಭ್ರಹ್ಮೇಂದ್ರ ಸಿಂಗ್ ಅವರನ್ನು ಬಿಹಾರದ ಗಾಂಧಿ ಎಂದು ಕರೆದಿದ್ದ. ರಣವೀರ ಸೇನೆ ಪಡೆಯ ಪಠ್ಯಗಳು ಹೆಚ್ಚೂ ಕಡಿಮೆ ಆರೆಸ್ಸೆಸ್ ಸಿದ್ಧಾಂತಗಳು. ಗೋಹತ್ಯೆ ನಿಷೇಧ, 370 ಕಲಮನ್ನು ರದ್ದುಗೊಳಿಸುವುದು, ಸ್ಯೂಡೋ ಸೆಕ್ಯುಲರ್ ಗಳ ಹುಟ್ಟಡಗಿಸುವುದು ಇವುಗಳಲ್ಲಿ ಮುಖ್ಯವಾದವು” ಎಂದು ವರದಿಯಾಗಿದೆ.

ಇನ್ನು ಮಹಾರಾಷ್ಟ್ರದಲ್ಲಿ ಶಿವಸೇನಾ ಮತ್ತು ರಾಜಠಾಕ್ರೆಯnarendra ಎಂಎನ್ಎಸ್, ಕರ್ನಾಟಕದ ಶ್ರೀರಾಮ ಸೇನೆ ಮತ್ತು ಭಜರಂಗ ದಳ, ಉತ್ತರ ಪ್ರದೇಶದ ಟೋಟಲ್ ಶೂದ್ರ ಶಕ್ತಿಗಳು ಹಾಗೂ ಒಡಿಸ್ಸಾದ ಹಿಂದುತ್ವದ ಪಡೆಗಳು ಇವೇ ಮೊದಲಾದ ಹೊಸ ಫ್ಯಾಸಿಸಂ ಸಾಮ್ರಾಜ್ಯದಲ್ಲಿ ಗರಿಗೆದರುವ ಸಾಧ್ಯತೆಗಳು ಮುಂದೆ ನಡೆಯಲಿರುವ ರಕ್ತದ ಓಕಳಿಯ ಅಂದಾಜು ನೀಡುತ್ತವೆ. ಇವುಗಳ ನೆತ್ತರ ದಾಹ ಶುರುವಾದರೆ ನಿಲ್ಲಿಸಲು ಕಷ್ಟಸಾಧ್ಯ. ಮುಸ್ಲಿಮರ ಮಿತ್ರ ಅರ್ಥಾತ್ ಹಿಂದೂಗಳ ಶತ್ರು ಎಂದು ಆರೋಪಿಸಿ ಗಾಂಧಿಯನ್ನು ಕೊಂದಿದ್ದು ಇದೇ ಫ್ಯಾಸಿಸ್ಟ್ ಸಂಘ ಪರಿವಾರದ ಅಂಗ ಸಂಸ್ಥೆ ಹಿಂದೂ ಮಹಾಸಭಾದ ಘೋಡ್ಸೆ. ಅಂದರೆ ಪ್ರತಿಯೊಂದು ಆರೋಪಕ್ಕೂ ಈ ಸಂಘ ಪರಿವಾರ ಪರಿಹಾರ ಕಂಡುಕೊಳ್ಳುವುದು ನೆತ್ತರ ಹರಿಸುವುದರ ಮೂಲಕವೇ. ನಾಥುರಾಮ್ ಘೋಡ್ಸೆಯ ನೆತ್ತರ ದಾಹದ ಚಿಂತನೆಗಳು ಮರಳಿ ಗೂಡು ಕಟ್ಟುತ್ತಿವೆ. ಮೋದಿಯ ಬಾಯಲ್ಲಿ ಎಕೆ 47, ಎಕೆ ಅಂಟನಿ, ಎಕೆ 49 ಎಂದು ನೆತ್ತರ ದಾಹದ ಮಾತನ್ನು ಆಡಿಸಿದ್ದೂ ಇದೇ ಘೋಡ್ಸೆಯ ಚಿಂತನೆಗಳು. ‘ಒಂದು ದೇಶ, ಒಂದು ಭಾಷೆ, ಒಂದು ಜನಾಂಗ’ ಎನ್ನುವ ಮತೀಯವಾದಿ ರಾಷ್ಟ್ರೀಯತೆಯೂ ಸಹ ನೆತ್ತರ ದಾಹದೊಂದಿಗೆ ದಾಪುಗಾಲಿಡುತ್ತಲಿದೆ. ‘ವೈವಿಧ್ಯತೆಯಲ್ಲಿ ಏಕತೆ, ಬಹುತ್ವವೇ ಸಂವಿಧಾನದ ಆಶಯ, ಬಹುರೂಪತೆ ನಮ್ಮ ಹಕ್ಕು’ ಎನ್ನುವ ಧ್ವನಿಗಳನ್ನು ಅಡಗಿಸಲಾಗುತ್ತದೆ.

ನನಗಂತೂ ಇಡೀ ಮೀಡಿಯಾದ ಹೈಪ್ ಸುಳ್ಳಾಗುತ್ತದೆಂಬ ಭರವಸೆ ಇತ್ತೀಚೆಗೆ ಬಲವಾಗುತ್ತಿದೆ. ಏಕೆಂದರೆ ನಮ್ಮ ದೇಶದಲ್ಲಿ ಪ್ರತಿಯೊಬ್ಬ ನಮೋಗೆ ಪ್ರತಿಯಾಗಿ ಒಬ್ಬ ಕಬೀರನಿದ್ದಾನೆ. ಈ ನಮ್ಮ ಕಬೀರನಿರುವ ಸ್ಥಳದಲ್ಲಿ ನಮೋಗೆ ಸ್ಥಾನವೇ ಇಲ್ಲ.

ಜಾಗತೀಕರಣ ಮತ್ತು ಭಾರತದ ಸಿನಿಮಾ ಜಗತ್ತು


– ಡಾ.ಎಸ್.ಬಿ. ಜೋಗುರ


 

ಜಾಗತೀಕರಣವನ್ನು ಪ್ರೊ ಎಮ್. ನಂಜುಂಡಸ್ವಾಮಿಯವರು ವಿಶ್ವ ಮಾರುಕಟ್ಟೆಯ ಕೀಲಿ ಕೈ ಎಂದು ಕರೆದಿದ್ದರು. ಈ ಪ್ರಕ್ರಿಯೆಯ ವೇಗ ವಿಶ್ವದ ಆರ್ಥಿಕ ಚಟುವಟಿಕೆಗಳಿಗೆ ಚುರುಕು ನೀಡುವ ಜೊತೆ ಜೊತೆಯಲ್ಲಿಯೇ, ಸಣ್ಣ ತ್ರಾಣದ ಆರ್ಥಿಕ ಮೂಲಗಳು ಬತ್ತಿಹೋಗುವಂತೆ ಮಾಡಿರುವುದೂ ಇದೆ. ಇದು ಕೇವಲ ಆರ್ಥಿಕ ವಲಯಕ್ಕೆ ಮಾತ್ರ ಸೀಮಿತವಾಗಿದ್ದರೆ ಜಾಗತೀಕರಣವನ್ನು ಹೀಗೆ ವಿವಿಧ ನೆಲೆಗಳಲ್ಲಿ ಚರ್ಚಿಸುವ ಅಗತ್ಯವಿರುತ್ತಿರಲಿಲ್ಲ. ಜಾಗತೀಕರಣ ನಮ್ಮ ದೈನಂದಿನ ಬದುಕಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ಕೂಡಾ ತುಂಬಾ ಗಾಢವಾಗಿ ತಟ್ಟಿರುವುದರಿಂದಲೇ ಅದರ ಗುಣಾತ್ಮಕವಾದ ಪರಿಣಾಮಗಳನ್ನು ಕುರಿತು ಗಹನವಾಗಿ ಯೋಚಿಸಬೇಕಿದೆ.

ಸಮಾಜದ ಬಹುದೊಡ್ಡ ಸಮುದಾಯವನ್ನು ವ್ಯಾಪಕ ನೆಲೆಯಲ್ಲಿ ಪ್ರಭಾವಿಸುವ ಜನಪ್ರಿಯ ಮಾಧ್ಯಮ ಸಿನಿಮಾ. ಚಲನಚಿತ್ರ Desktopಮಾಧ್ಯಮ ಜನಸಮೂಹದ ಮೈ-ಮನಗಳ ಸುಳಿಯಲ್ಲಿ ಕುಳಿತು ಬದುಕಿನ ವಿಭಿನ್ನ ಸ್ತರಗಳಲ್ಲಿ ಬೇರೆ ಬೇರೆ ರೀತಿಯ ಪ್ರಭಾವವನ್ನು ಬೀರುತ್ತಿರುತ್ತದೆ. 1990 ರ ದಶಕದ ನಂತರ ಜಾಗತೀಕರಣದ ಪ್ರವೇಶದ ಬೆನ್ನಲ್ಲಿಯೇ ವಿಶ್ವದ ಬೇರೆ ಬೇರೆ ಭಾಷೆಯ ಚಲನಚಿತ್ರಗಳು ದೇಶದಲ್ಲಿ ವ್ಯಾಪಕವಾಗಿ ಬಿಡುಗಡೆಯಾದವು. ಅದಕ್ಕೂ ಮೊದಲು ಈ ಮಟ್ಟದ ವಿಸ್ತೃತತೆ ಪ್ರಾದೇಶಿಕ ಭಾಷೆಯ ಚಿತ್ರಗಳಿಗೆ ದೊರೆತದ್ದು ಅಪರೂಪ. 1997 ರ ಸಂದರ್ಭದಲ್ಲಿ ‘ಟೈಟಾನಿಕ್’ ಎನ್ನುವ ಸಿನಿಮಾ 1.8 ಬಿಲಿಯನ್ ಡಾಲರ್ ವ್ಯವಹಾರ ಮಾಡಲು ಸಾಧ್ಯವಾದದ್ದು ಈ ಜಾಗತೀಕರಣ ತೆರೆದಿಟ್ಟ ಮುಕ್ತ ಮಾರುಕಟ್ಟೆಯ ಅವಕಾಶಗಳಿಂದಲೇ. 2010 ರಲ್ಲಿ ತೆರೆಗೆ ಬಂದ ‘ಅವತಾರ್’ ಎನ್ನುವ ಇಂಗ್ಲಿಷ್ ಸಿನಿಮಾ 500 ಮಿಲಿಯನ್ ಡಾಲರ್ ವ್ಯವಹಾರ ಮಾಡುವಲ್ಲಿಯೂ ಈ ಜಾಗತೀಕರಣದ ಪಾತ್ರವಿದೆ. ಜಾಗತೀಕರಣ ಕೇವಲ ವ್ಯವಹಾರದಲ್ಲಿ ಗೆಲ್ಲುವ ಸೂತ್ರ ಮಾತ್ರವಾಗಿರದೇ ಸಹನಿರ್ಮಾಣಕ್ಕೂ ಅವಕಾಶ ಮಾಡಿಕೊಟ್ಟಿದೆ ಎಂದು ಟೈಲರ್ ಎನ್ನುವ ಚಿಂತಕರು ಹೇಳುತ್ತಾರೆ. ಮತ್ತೆ ಕೆಲವು ವಿಶ್ಲೇಷಕರು ಈ ಬಗೆಯ ಸಹ ನಿರ್ಮಾಣದ ನೆಲೆಯಲ್ಲಿ ಮೂಡಿ ಬರುವ ಚಲನಚಿತ್ರಗಳು ವಿಭಿನ್ನ ಸಂಸ್ಕೃತಿಯ ಪ್ರಸರಣಕ್ಕೆ ಕಾರಣವಾಗುವ ಜೊತೆಯಲ್ಲಿ ಹೈಬ್ರಿಡ್ ಸಂಸ್ಕೃತಿಯ ಹರಡುವಿಕೆಗೂ ಕಾರಣವಾಗಿವೆ ಎಂದಿದ್ದಾರೆ. ತೃತೀಯ ಜಗತ್ತಿನ ರಾಷ್ಟ್ರಗಳು ಸಿನಿಮಾ ಜಗತ್ತಿನಲ್ಲಿ ಸಲ್ಲುವಂತಾಗುವಲ್ಲಿಯೂ ಪರೋಕ್ಷವಾಗಿ ಜಾಗತೀಕರಣ ನೆರವಾಗಿದೆ. ಲ್ಯಾಟಿನ್ ಅಮೇರಿಕಾ ಮತ್ತು ಇರಾಕ್ ದಂತಹ ರಾಷ್ಟ್ರಗಳ ಸಿನಿಮಾಗಳ ಗುಣಮಟ್ಟ ಜಾಗತಿಕ ಮಟ್ಟದಲ್ಲಿ ಪರಿಚಯವಾಗುವಲ್ಲಿ ನೆರವಾದದ್ದು ಮುಕ್ತ ಮಾರುಕಟ್ಟೆಯ ಸೂತ್ರಗಳೇ. ಹೀಗೆ ಹೇಳುವಾಗ ಈ ಸಹನಿರ್ಮಾಣದ ಪರಿಕಲ್ಪನೆಯ ಭರಾಟೆಯಲ್ಲಿ ನಿರ್ದೇಶಕರ ಮೇಲಿನ ಸವಾರಿಯನ್ನೂ ಮರೆಯುವಂತಿಲ್ಲ. ಪರಿಣಾಮವಾಗಿ ಕೆಲ ಬಾರಿ ನಿರ್ದೇಶಕನ ನಿರೀಕ್ಷೆಯಂತೆ ಚಿತ್ರಗಳು ಮೂಡಿಬರದೇ ಸಹನಿರ್ಮಾಪಕರ ಅಣತಿಯಂತೆ ತಯಾರಾಗುತ್ತವೆ. ಹೀಗಾಗಿ ಅನೇಕ ಸಂಧರ್ಭಗಳಲ್ಲಿ ನಿರ್ದೇಶಕ  ಕೇವಲ ನೆಪ ಮಾತ್ರ ಎನ್ನುವಂಥಾ ಸ್ಥಿತಿ ನಿರ್ಮಾಣವಾಗಿದೆ.

ಹಾಗೆ ನೋಡಿದರೆ ಜಗತ್ತಿನಲ್ಲಿ ಅತಿ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸುವವರ ಸಾಲಲ್ಲಿ ಭಾರತ untitledಮೊದಲ ಸ್ಥಾನದಲ್ಲಿದೆ. ಸುಮಾರು 24 ಪ್ರಾದೇಶಿಕ ಭಾಷೆಗಳಲ್ಲಿ ಸಿನಿಮಾ ನಿರ್ಮಿಸುವ ಭಾರತೀಯರು ಆಯಾ ಪ್ರಾದೇಶಿಕ ಸಂಸ್ಕೃತಿ ಮತ್ತು ಪರಿಸರವನ್ನು ಆಧರಿಸಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಒಟ್ಟು ನಿರ್ಮಾಣದಲ್ಲಿ ಮೊದಲ ಸ್ಥಾನದಲ್ಲಿ ಹಿಂದಿ, ಎರಡನೆಯ ಸ್ಥಾನದಲ್ಲಿ ತೆಲುಗು, ಮೂರನೆಯ ಸ್ಥಾನದಲ್ಲಿ ತಮಿಳು ಸಿನಿಮಾಗಳಿವೆ. ನಮ್ಮಲ್ಲಿ ಮೊಟ್ಟ ಮೊದಲ ಸಿನಿಮಾ ನಿರ್ಮಾಣವಾಗಿರುವುದು 1913 ರಲ್ಲಿಯೇ. ಯಾವ ಯಾವ ರಾಷ್ಟ್ರಗಳು ಸಿನಿಮಾ ನಿರ್ಮಾಣದಲ್ಲಿ ಯಾವ ರೀತಿಯ ಶ್ರೇಣಿಯನ್ನು ಹೊಂದಿವೆ ಎನ್ನುವುದನ್ನು ಇಲ್ಲಿ ಕೊಟ್ಟಿರುವ ಪಟ್ಟಿಯಿಂದ ನಾವು ಗಮನಿಸಬಹುದಾಗಿದೆ. 2009 ರಲ್ಲಿ ಭಾರತದಲ್ಲಿ ಸುಮಾರು 1288 ಸಿನಿಮಾಗಳು ನಿರ್ಮಾಣವಾಗಿ ತೆರೆಗೆ ಬಂದಿವೆ. ಭಾರತವನ್ನು ಹೊರತು ಪಡಿಸಿದರೆ ಸಿನಿಮಾ ನಿರ್ಮಾಣದಲ್ಲಿ ಅಮೆರಿಕೆ ಎರಡನೆಯ ಸ್ಥಾನದಲ್ಲಿದೆ.

ಭಾರತ ಇಷ್ಟೊಂದು ಬೃಹತ್ ಸ್ವರೂಪದಲ್ಲಿ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದೆಯಾದರೂ ಇಲ್ಲಿ ಹೂಡಲಾಗುವ  ಬಂಡವಾಳದ  ಪ್ರಮಾಣ ಮಾತ್ರ ತೀರಾ ಕಡಿಮೆ. 2010 ರ ಸಂದರ್ಭದಲ್ಲಿ ದೇಶದ ಚಿತ್ರೋದ್ಯಮದಲ್ಲಿ ವಿನಿಯೋಗಿಸಲಾದ ಒಟ್ಟು ಮೊತ್ತ 195 ಮಿಲಿಯನ್ ಡಾಲರ್. ಅಮೆರಿಕಾ ಅದೇ ವರ್ಷ ತೊಡಗಿಸಿದ ಹಣ 13289 ಮಿಲಿಯನ್ ಡಾಲರ್. ಅಂದರೆ ಭಾರತದ ಸಿನಿಮಾ ನಿರ್ಮಾಣದಲ್ಲಿ ಹೂಡಲಾದ ಒಟ್ಟು ಹಣದ ಸುಮಾರು ಐದು ಪಟ್ಟು. ಇದು ಇಂಗ್ಲಿಷ ಸಿನೇಮಾಗಳು ಖರ್ಚು ಮಾಡುವ ರೀತಿ.

1990 ರ ನಂತರ ಮುಕ್ತ ಮಾರುಕಟ್ಟೆಯ ನೆಲೆಯಲ್ಲಿ ಆರಂಭವಾದ ಆರ್ಥಿಕ ವಿದ್ಯಮಾನಗಳು ಸಹ ನಿರ್ಮಾಣ ತತ್ವದ ಅಡಿಯಲ್ಲಿimages ಸಿನಿಮಾಗಳು ನಿರ್ಮಾಣಗೊಳ್ಳಲು ಕಾರಣವಾದವು. ಉದಾಹರಣೆಗೆ ಸ್ಟುಡಿಯೋ 18 ಬ್ಯಾನರ್ ಅಡಿಯಲ್ಲಿ ಹೊರಬತ್ತಿರುವ ಸಿನಿಮಾಗಳು. ಅಮೇರಿಕಾದ ‘ವೈಕಾಮ್’ ಮತ್ತು ಭಾರತದ ‘ನೆಟ್ ವರ್ಕ್  18′ ಇವೆರಡರ ಸಹಯೋಗದಲ್ಲಿ ಅನೇಕ ಸಿನಿಮಾಗಳು ನಿರ್ಮಾಣಗೊಂಡಿವೆ. ಆದರೆ ಜಾಗತೀಕರಣದ ಪ್ರವ್ರತ್ತಿಗಳು ಸಿನಿಮಾ ಕ್ಷೇತ್ರದಲ್ಲಿ ಹಲವು ಗಂಭೀರ ಸ್ವರೂಪದ ನೇತ್ಯಾತ್ಮಕ ಪರಿಣಾಮಗಳನ್ನೂ ಕೂಡಾ ಕಾರಣಿಸಿವೆ. ಭಾರತದಲ್ಲಿರುವ ಸಣ್ಣ ಪುಟ್ಟ ಸ್ಟುಡಿಯೋಗಳನ್ನು ಜಾಗತೀಕರಣ ಅಳಿವಿನಂಚಿಗೆ ತಂದು ನಿಲ್ಲಿಸಿದೆ. ಡಿಜಿಟಲ್ ಸಿನಿಮಾ ಬಂದ ಮೇಲೆ ಕಿಂಡಿಯಲ್ಲಿ ಮುಖವಿಟ್ಟು ಸಿನೇಮಾ ಮೂಡಿಸುವ ಲಕ್ಷಗಟ್ಟಲೆ ಆಪರೇಟರಗಳು ನಿರುದ್ಯೋಗಿಗಳಾಗಿದ್ದಾರೆ. ಜಾಗತೀಕರಣದ ಫಲವಾಗಿ ಅನೇಕ ಕಲಾವಿದರು, ತಂತ್ರಜ್ಞರು ಜಾಗತಿಕ ಮಟ್ಟದಲ್ಲಿ ಕಾರ್ಯ ಮಾಡುವುದು ಸಾಧ್ಯವಾಗಿದೆಯಾದರೂ ಅದು ಉದ್ಯೋಗದ ನಿರಂತರತೆಯಂತೂ ಅಲ್ಲ. ಜೊತೆಗೆ ಸಣ್ಣ ಸಣ್ಣ ಕಂಪೆನಿಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಮೂಲಕ ಉದ್ಯಮದಲ್ಲಿ ಏಕಸ್ವಾಮ್ಯವನ್ನು ಸ್ಥಾಪಿಸುವ ಪ್ರಯತ್ನಗಳೂ ಕೂಡಾ ನಡೆಯುತ್ತಿವೆ.’ಸೋನಿ’ ಯಂಥಾ ಬಹು ಜನಪ್ರಿಯ ವಿದೇಶಿ ಕಂಪೆನಿಯು ಚೆನೈ ಮೂಲದ  ‘ಇಮೇಜ್ ವರ್ಕ್ಸ್’ ಸಂಸ್ಥೆಯನ್ನು ನುಂಗಿ ಹಾಕಿತು. ಸಣ್ಣ ಮೀನುಗಳನ್ನು ತಿಂದು ದೊಡ್ದ ಮೀನುಗಳು ಬೆಳೆಯುವ, ಬದುಕುವ ಕ್ರಮ ವಿಕಾಸವಾದದ ಸೂತ್ರವಲ್ಲವೇ?

ಈಗೀಗ ಅನೇಕ ಅಂತರರಾಷ್ಟ್ರಿಯ ಕಂಪನಿಗಳು ಭಾರತೀಯ ಚಿತ್ರೋದ್ಯಮದಲ್ಲಿ ಹಣ ಹೂಡಲು ಉತ್ಸುಕವಾಗಿವೆ. ಕಾರಣ ಈಗಾಗಲೇ ಹಣ ಹೂಡಿ ಗೆದ್ದ ಹಲವು ಕಂಪನಿಗಳು ಅವರ ಕಣ್ಣೆದುರಲ್ಲಿ ಉದಾಹರಣೆಯಾಗಿ ಉಳಿದಿವೆ. 2007 ರ ಸಂದರ್ಭದಲ್ಲಿ ಸೋನಿ ಕಂಪನಿ ಸಂಜಯ ಲೀಲಾ ಬನ್ಸಾಲಿ ಜೊತೆಗೂಡಿ ‘ಸಾವರಿಯಾ’ ಎನ್ನುವ ಸಿನಿಮಾ ಒಂದನ್ನು ತಯಾರಿಸಿತು. ಚಿತ್ರ ತೋಪಾದರೂ ಹೂಡಿದ ಹಣಕ್ಕೆ ಮಾತ್ರ ತೊಂದರೆಯಾಗಲಿಲ್ಲ. ಆಗಲೇ ವಿದೇಶಿ ಕಂಪನಿಗಳಿಗೆ ಭಾರತದ ಚಿತ್ರೋದ್ಯಮದಲ್ಲಿ ಹಣ ಹೂಡುವ ಹವಣಿಕೆ ಆರಂಭವಾಯಿತು. ಮುಂದೆ ವಾರ್ನರ್ ಬ್ರದರ್ಸ್ ಹಾಗೂ ರಮೇಶ ಸಿಪ್ಪಿ ಜೊತೆಗೂಡಿ ‘ಚಾಂದನಿ ಚೌಕ್ ಟು ಚೈನಾ’ ಎನ್ನುವ ಸಿನಿಮಾ ತಯಾರಿಸಿದರು. ಬರೀ ಅಮೇರಿಕಾ ಒಂದರಲ್ಲಿಯೇ ಆ ಸಿನಿಮಾ 1 ಮಿಲಿಯನ್ ಡಾಲರ್ ಹಣ ಕಮಾಯಿಸಿತು. ಹೀಗೆ ಈ ಜಾಗತೀಕರಣ ವಿಶ್ವದ ಹೆಬ್ಬಾಗಿಲಾಗಿರುವುದರಿಂದ ಚಿತ್ರೋದ್ಯಮ ಈಗ ಎಲ್ಲ ಬಗೆಯಲ್ಲಿ ಕಲಸುಮೇಲೋಗರವಾಗಿಬಿಟ್ಟಿದೆ. ನಿರ್ದೇಶಕ ಭಾರತೀಯನಾಗಿದ್ದರೆ, ಸ್ಟಂಟ್ ಮನ್ ಇಂಗ್ಲೆಂಡ್ ಪ್ರಜೆ, ಮೇಕಪ್ ಮನ್ ಕೆನಡಾದವನು, ಮ್ಯುಜಿಕ್ ರಶ್ಯಾ ದೇಶದವ.  ಹೀಗೆ ಇವತ್ತು ಎಲ್ಲವೂ ಹೈಬ್ರಿಡ್ ಮಯ.

ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರೋದ್ಯಮದಲ್ಲಿ ಗಣನೀಯ ಬದಲಾವಣೆಗಳಾಗಿವೆ. ಪ್ರತಿಭೆ ಇರುವವರಿಗೆ ಸೀಮೆಗಳೇ ಇಲ್ಲ. ಅವರನ್ನು ಇಡೀ ಜಗತ್ತೇ ಕರೆಯುವಂತಾಗಿದೆ. ಭಾರತದ ಅನೇಕರು ವಿದೇಶಗಳ ಚಿತ್ರಗಳಲ್ಲಿ ಕೆಲಸ ಮಾಡಿದರೆ ಅಲ್ಲಿಯ ಕೆಲ ತಂತ್ರಜ್ಞರು ಕೂಡಾ ನಮ್ಮಲ್ಲಿ ಕೆಲಸ ಮಾಡುತ್ತಿದ್ದಾರೆ. ಡ್ಯಾನಿ ಫೈಸ್ ಎನ್ನುವ ಕಲಾವಿದ ಋತಿಕ್ ರೋಷನ್ ನಟಿಸಿರುವ ‘ಕೈಟ್’ ಸಿನೇಮಾಕ್ಕೆ ಸಾಹಸ ನಿರ್ದೇಶನ ಮಾಡಿದ. ಆ ಚಿತ್ರದ ನಟಿ ಬಾರ್ಬರಾ ಮೋರಿ ಕೂಡಾ ಈ ನೆಲದವಳಾಗಿರಲಿಲ್ಲ. ಅಕ್ಷಯಕುಮಾರ್ ನಟಿಸಿರುವ ‘ಸಿಂಗ್ ಇಜ್ ಕಿಂಗ್’ ಸಿನಿಮಾದ ಹಿನ್ನೆಲೆ ಸಂಗೀತಕ್ಕೆ ಸ್ನೂಪ್ ಡಾಗ್ ಎಂಬಾತ ಕೆಲಸ ಮಾಡಿದ್ದ. ರಜನಿಕಾಂತ್ ಅವರ ‘ರೋಬೋಟ್’ ಸಿನಿಮಾದ ಕೆಲ ಅದ್ಭುತವಾದ ಆನಿಮೇಶನ್ ದೃಶ್ಯಗಳನ್ನು ಇಂಗ್ಲಂಡನ ಸ್ಟನ್ ವಿನಸ್ಟನ್ ಸ್ಟುಡಿಯೋದಲ್ಲಿ ಶೂಟ್ ಮಾಡಲಾಯಿತು. ಆ ಸಿನಿಮಾಕ್ಕಾಗಿ ಸುಮಾರು 38 ಮಿಲಿಯನ್ ಡಾಲರ್ ಹಣವನ್ನು ಖರ್ಚು ಮಾಡಲಾಗಿತ್ತು. ನಮ್ಮವರೇ ಆದ ಎ.ಆರ್. ರೆಹಮಾನ್ ‘ಸ್ಲಮ್ ಡಾಗ್..’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುವ ಮೂಲಕ ಪ್ರಶಸ್ತಿ ಗೆದ್ದು ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಹೈದರಾಬಾದಲ್ಲಿರುವ ರಾಮೋಜಿರಾವ್ ಫಿಲ್ಮ್ ಸಿಟಿಯಂತೂ ಅನೇಕ ಇಂಗ್ಲೀಷ್ ಸಿನಿಮಾಗಳ ತಯಾರಿಕೆಯಲ್ಲೂ ಹೆಸರು ಮಾಡಿದೆ. ಹೀಗೆ ಅಲ್ಲಿಯ ಪ್ರತಿಭೆಗಳು ಇಲ್ಲಿ, ಇಲ್ಲಿಯ ಪ್ರತಿಭೆಗಳು ಅಲ್ಲಿ ಮಿಂಚುವಲ್ಲಿ ಈ ಜಾಗತೀಕರಣ ಪ್ರಕ್ರಿಯೆ ನೆರವಾಗಿದೆ.

ಮುಂಬರುವ ದಿನಗಳಲ್ಲಿ ಬಹುತೇಕವಾಗಿ ದೊಡ್ದ ಬಜೆಟ್ ನ ಸಿನಿಮಾಗಳು ವಿದೇಶಿ ಕಂಪನಿಗಳ ಸಹಯೋಗದಲ್ಲಿಯೇ ತಯಾರಾಗಿ ಬಿಡುಗಡೆಯಾಗಲಿವೆ. ambani+spielbergಆ ಮೂಲಕ ಹಾಲಿವುಡ್ ಮತ್ತು ಬಾಲಿವುಡ್ ನಡುವಿನ ಅಂತರ ಬಹುತೇಕ ಕಡಿಮೆಯಾಗಲಿವೆ. ಈಗಾಗಲೇ ಬಾಲಿವುಡ್ ಸಿನಿಮಾಗಳಲ್ಲಿ ಇದರ ಸೂಚನೆಗಳು ಕಾಣಸಿಗುತ್ತಿವೆ. ನವಂಬರ್ 2010 ರ ಸಂದರ್ಭದಲ್ಲಿ ಪ್ಯಾರಾಮೌಂಟ್ ಸ್ಟುಡಿಯೋದಲ್ಲಿ ಹಾಲಿವುಡ್-ಬಾಲಿವುಡ್ ನಡುವಿನ ಸಂಬಂಧಗಳ ವಿಸ್ತರಣೆಯ ನೆಲೆಯಲ್ಲಿ ಒಂದು ಹೊಸ ಮನ್ವಂತರ ಸಾಧ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ಒಪ್ಪಂದ ಒಂದಕ್ಕೆ ಸಹಿ ಹಾಕಲಾಗಿದೆ. ಅನೇಕ ವಿದೇಶಿ ಕಂಪನಿಗಳ ಸಹಯೋಗದೊಂದಿಗೆ ಕೈ ಜೋಡಿಸಲು ಅನಿಲ ಅಂಬಾನಿಯವರು ಮುಂದೆ ಬಂದಿರುವುದು ಹಳೆಯ ಸುದ್ದಿ. ಅದಾಗಲೇ ಡ್ರೀಮ್ ವರ್ಕ್ಸ್ ಜೊತೆ ಸೇರಿ ವರ್ಷಕ್ಕೆ 5-6 ಸಿನಿಮಾಗಳನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಲಾಗಿದೆ. ಆ ಕಾರಣಕ್ಕಾಗಿಯೇ ಅವರು 550 ಮಿಲಿಯನ್ ಡಾಲರ್ ಹಣವನ್ನು ತೊಡಗಿಸಿದ್ದಾರೆ. ಭವಿಷ್ಯದಲ್ಲಿ ಭಾರತೀಯ ಸಿನಿಮಾ ಕತೆಗಳು ವಿದೇಶಿಯರ ನಿರೀಕ್ಷೆಯನ್ನು ಗಮನದಲ್ಲಿರಿಸಿ ಹೊಸೆಯುವಂತಾದರೆ ಅಚ್ಚರಿ ಪಡಬೇಕಿಲ್ಲ. ಹಾಗೆಯೇ ಅನೇಕ ವಿದೇಶಿ ಕಂಪನಿಗಳು ಭಾರತದಲ್ಲಿ ಹೆಚ್ಚೆಚ್ಚು ಸಿನಿಮಾಗಳನ್ನು ಬಿಡುಗಡೆಗೊಳಿಸುವ, ಆ ಮೂಲಕ ಹಣ ಕಮಾಯಿಸುವ ಸನ್ನಾಹದಲ್ಲಿವೆ. ಚೈನಾದಂತಹ ರಾಷ್ಟ್ರ  ಒಂದು ವರ್ಷಕ್ಕೆ ಕೇವಲ 20 ರಷ್ಟು ವಿದೇಶಿ ಸಿನಿಮಾಗಳನ್ನು ಮಾತ್ರ ತನ್ನ ನೆಲದಲ್ಲಿ ಬಿಡುಗಡೆ ಮಾಡುತ್ತದೆ. ಆದರೆ ಭಾರತದಲ್ಲಿ ಮಾತ್ರ ಆ ಮಿತಿಯೇ ಇಲ್ಲ. ಹಾಗಾಗಿ ನಮ್ಮ ಸಿನಿಮಾಗಳ ಮೂಲಕ ತಮ್ಮ ಸಂಸ್ಕೃತಿಯನ್ನು ಪ್ರಸರಣ ಮಾಡುವ ಜೊತೆ ಜೊತೆಯಲ್ಲಿ ‘ಊಂಡೂ ಹೋದ ಕೊಂಡೂ ಹೋದ’ ಎನ್ನುವ ಸ್ಥಿತಿ ನಿರ್ಮಾಣವಾಗುವ ಸಂದರ್ಭದಲ್ಲಿ ನಾವಿದ್ದೇವೆ. ಇಲ್ಲಿ ನಮ್ಮ ಮುಂದೆ ಆಯ್ಕೆಗಳಿಲ್ಲ. ದಕ್ಕಿದ್ದನ್ನು ಸ್ವೀಕರಿಸುವುದಷ್ಟೇ ನಮಗಿರುವ ದಾರಿ.

ಚುನಾವಣೆ ಪತ್ರಕರ್ತರಿಗೆ ಸುಗ್ಗಿಯ ಕಾಲವೇ?


-ಇರ್ಷಾದ್


 

ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ1625744_654886284570859_1165903399_n ಜೋಷಿ ‘ಚುನಾವಣೆಯ ಸಂಧರ್ಭದಲ್ಲಿ ತಮ್ಮ ಬಗ್ಗೆ ಮೃದು ಧೋರಣೆ ತಾಳುವಂತೆ ಮಾಧ್ಯಮದವರನ್ನು ಓಲೈಸಲು’ ತಮ್ಮ ನೆಚ್ಚಿನ ಬಂಟ ಈರೇಶ ಅಂಚಟಗೇರಿ ಮೂಲಕ ಪತ್ರಕರ್ತರಿಗೆ ಸುಮಾರು 2000 ರೂಪಾಯಿ ಮೌಲ್ಯದ ಒಂದು ಟೈಟಾನ್ ಕಂಪನಿಯ ವಾಚ್ ಹಾಗೂ ಅಂದಾಜು 2000 ಬೆಲೆ ಬಾಳುವ ಸಿಯಾ ರಾಮ್ಸ್ ಮಿನಿಯೇಚರ್ ಕಂಪೆನಿಯ ಶರ್ಟ್ ಮತ್ತು ಪ್ಯಾಂಟ್ ಪೀಸ್ ಇರುವ ಬ್ಯಾಗ್ ನ್ನು ಧಾರವಾಡದ ಮಾಧ್ಯಮ ಕಚೇರಿಗಳಿಗೆ ತಲುಪಿಸಿರುವ ಕುರಿತು ಪ್ರಜಾವಾಣಿ (25 ಮಾರ್ಚ್ 2014 ) ಯಲ್ಲಿ ವರದಿ ಪ್ರಕಟವಾಗಿದೆ. ಆದರೆ ಪ್ರಜಾವಾಣಿಯ ಪ್ರತಿನಿಧಿ ಮನೋಜ್ ಕುಮಾರ್ ಗುದ್ದಿ ಅವುಗಳನ್ನು ಪಡೆಯದೇ ವಾಪಾಸು ಕಳುಹಿಸಿ ವ್ರತ್ತಿ ಧರ್ಮ ಮೆರೆದಿದ್ದಾರೆ. ಅದೇ ದಿನದ  ಪ್ರಜಾವಾಣಿ ಪತ್ರಿಕೆಯಲ್ಲಿ ಅಂತಹದ್ದೇ ಮತ್ತೊಂದು ಸುದ್ದಿ ಪ್ರಕಟವಾಗಿತ್ತು. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯಿಲಿ ವತಿಯಿಂದ ಮಾಧ್ಯಮ ಪ್ರತಿನಿಧಿಗಳಿಗೆ ರೆಸ್ಟೋರೆಂಟ್ ಒಂದರಲ್ಲಿ ಭರ್ಜರಿ ಔತಣ ಕೂಟ ಆಯೋಜಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಚುನಾವಣಾಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿದಾಗ ಔತಣ ಕೂಟಕ್ಕೆ ಆಗಮಿಸಿದ್ದ ಪತ್ರಕರ್ತರು ಹಾಗೂ ಆಯೋಜಕರು ಎದ್ದೂ ಬಿದ್ದು ಪರಾರಿಯಾಗಿದ್ದರು. ಕೆಲ ಪತ್ರಕರ್ತರು ಅರ್ಧಕ್ಕೇ ಊಟ ನಿಲ್ಲಿಸಿ ಕೈಯನ್ನೂ ತೊಳೆಯದೆ ಓಡಿಹೋಗಿದ್ದರಂತೆ!

paid-newsಈ ಎರಡೂ ಸುದ್ದಿಗಳು ಇಂದಿನ ಪತ್ರಿಕೋದ್ಯಮದ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ರಾಜಕಾರಣಿಗಳ ಆಮಿಷಗಳಿಗೆ ಬಲಿಯಾಗದೆ ತನ್ನ ವೃತ್ತಿ ಧರ್ಮವನ್ನುಪಾಲಿಸುವ ಪತ್ರಕರ್ತರು ಒಂದೆಡೆಯಾದರೆ, ಪ್ರೆಸ್ ಮೀಟ್ ಹೆಸರಿನಲ್ಲಿ ಗುಂಡು ತುಂಡು ಪಾರ್ಟಿಗಳಿಗೆ ಹೋಗಿ  ರಾಜಕಾರಣಿಗಳು ಕೊಡುವ ಉಡುಗೊರೆಗಳನ್ನು ಅಥವಾ ನೋಟಿನ ಕಂತೆಗಳನ್ನು ಸ್ವೀಕರಿಸಿ ತಮ್ಮನ್ನು ತಾವು ಮಾರಿಕೊಳ್ಳುವ ಪತ್ರಕರ್ತರು ಅನೇಕರಿದ್ದಾರೆ. ಪ್ರತಿ ನಿತ್ಯ ದಿನ ಪತ್ರಿಕೆಗಳ ಪುಟ ತಿರುಗಿಸಿದಾಗ, ಸುದ್ದಿ ವಾಹಿನಿಗಳ ಬ್ರೇಕಿಂಗ್ ನ್ಯೂಸ್ ಗಳನ್ನು ಗಮನಿಸಿದಾಗ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಸುದ್ದಿಗಳು ರಾರಾಜಿಸುತ್ತಲೇ  ಇರುತ್ತವೆ. ರಾಜಕೀಯ ಪಕ್ಷಗಳು ಮತ್ತು ಅವುಗಳ ಮುಖಂಡರು ಮತದಾರರನ್ನು ಓಲೈಕೆ ಮಾಡಲು ಹಂಚುವ ನೂರು, ಸಾವಿರ ರೂಪಾಯಿಗಳು ಕ್ಯಾಮರಾ ಕಣ್ಣಿನಲ್ಲಿ ಸೆರಯಾಗುತ್ತಿವೆ. ಅಕ್ರಮ ಹಣ ಸಾಗಾಟ, ಮತದಾರರಿಗೆ ಸೀರೆ ಹಂಚುವುದು, ಬಾಡೂಟ ನೀಡುವ ಸುದ್ದಿಗಳು ನಿರಂತರವಾಗಿ ಬರುತ್ತಲೇ ಇವೆ. ವಿಪರ್ಯಾಸವೆಂದರೆ ಇವುಗಳನೆಲ್ಲಾ ಸುದ್ದಿ ಮಾಡುವ ಪತ್ರಕರ್ತರಿಗೇ ರಾಜಕಾರಣಿಗಳು ಅಮಿಷವೊಡ್ಡುವ ಸುದ್ದಿಗಳು ಒಂದೆರಡು ಮಾಧ್ಯಮಗಳಲ್ಲಿ ಮಾತ್ರ ಸುದ್ದಿಯಾಗುತ್ತವೆ. ಇತರ ಮಾಧ್ಯಮಗಳಿಗೆ ಇದು ಸುದ್ದಿ ಎಂದು ಅನ್ನಿಸುವುದಿಲ್ಲ. ಹಿರಿಯ ಪತ್ರಕರ್ತರೊಬ್ಬರು ಹೀಗನ್ನುತ್ತಿದ್ದರು “ ಚುನಾವಣೆ ಬಂತ್ತೆಂದರೆ ಸಾಕು, ಕೆಲ ಪತ್ರಕರ್ತರಿಗಂತೂ ಇದು ಸುಗ್ಗಿಯ ಕಾಲ. ಚುನಾವಣೆಯ ಸಂದರ್ಭದಲ್ಲಿ ಅವರ ಪಾಲಿಗೆ ಉತ್ತಮ ಮಳೆ ಬೆಳೆ ಎರಡೂ ಆಗುತ್ತದೆ”.

ಪತ್ರಕರ್ತರಿಗೆ ಅಮಿಷಗಳನ್ನೊಡ್ಡಿ ತಮ್ಮ ಪರ ಸುದ್ದಿ ಮಾಡುವಂತೆ ನೋಡಿಕೊಳ್ಳುವುದು, ಅದಕ್ಕಾಗಿ ಅವರನ್ನುuntitled ಓಲೈಸಲು ದುಬಾರಿ ಗಿಫ್ಟ್ ಗಳನ್ನು ಕೊಡುವುದು, prajavaniprajavaniಗುಂಡು ತುಂಡು ಪಾರ್ಟಿಗಳನ್ನು ಏರ್ಪಡಿಸುವುದು, ಪ್ಯಾಕೇಜ್ ಗಳನ್ನು ನೀಡಿ ತಮ್ಮ ಪರ ಸುದ್ದಿ ಪ್ರಸಾರವಾಗುವಂತೆ ನೋಡಿಕೊಳ್ಳುವುದು, ಅದು ಸಾಧ್ಯವಾಗದಿದ್ದಲ್ಲಿ ಕನಿಷ್ಠ ಪಕ್ಷ ತನ್ನ ವಿರೋಧವಾಗಿ ಸುದ್ದಿ ಪ್ರಸಾರ ಆಗದಂತೆ ಪತ್ರಕರರ್ತರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನ ಇಂದು ನಿನ್ನೆಯದಲ್ಲ. ಕಳೆದ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಕಾರವಾರ- ಅಂಕೋಲ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸತೀಶ್ ಸೈಲ್ ನೀಡಿದ ದುಡ್ಡನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ವ್ಯತ್ಯಾಸ ಉಂಟಾಗಿ ಮಾತಿಗೆ ಮಾತು ಬೆಳೆದು ದೃಶ್ಯ ಮಾಧ್ಯಮದ ಕೆಲ ವರದಿಗಾರರು ಪರಸ್ಪರ ಹೊಡೆದಾಟ ನಡೆಸಿದ ಘಟನೆ ಕೂಡಾ ನಡೆದಿತ್ತು. ಹಾಸನದಲ್ಲಿ ಪತ್ರಕರ್ತರ ಸಂಘ ಪಕ್ಷವೊಂದರಿಂದ ಸುದ್ದಿ ಮಾಡಲು ಪ್ಯಾಕೇಜ್ ಪಡೆದ ಆರೋಪದ ಸುದ್ದಿ ಬಯಲಾಗಿ ಅದನ್ನು ಪ್ರಶ್ಮಿಸಿದ ದಿ ಹಿಂದೂ ಪತ್ರಿಕೆಯ ವರದಿಗಾರ ಸತೀಶ್ ಶಿಲೆ ಅವರನ್ನು ಸಂಘದಿಂದ ಹೊರಗಿಟ್ಟ ಪ್ರಕರಣ ಪತ್ರಕರ್ತರ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇವಿಷ್ಟೇ ಅಲ್ಲದೆ ಪತ್ರಕರ್ತರು ತಮ್ಮ ವೃತ್ತಿಗೆ ಅವಮಾನಕಾರಿಯಾಗಿ ನಡೆದ ಇಂಥಹ ಸಾಕಷ್ಟು ನಿದರ್ಶನಗಳಿವೆ.

ಚುನಾವಣಾ ಸಂದರ್ಭಗಳಲ್ಲಿ ರಾಜಕಾರಣಿಗಳ ಆಪ್ತ ಸಹಾಯಕರ ಬಳಿ ಒಂದು ಲಿಸ್ಟೇ ಇರುತ್ತದೆ. ಯಾವ ಪತ್ರಿಕೆಯ ಪತ್ರಕರ್ತನಿಗೆ ಎಷ್ಟು ಹಣ ನೀಡಿದ್ದೇವೆ, ಯಾವ ಟಿ.ವಿಯ ವರದಿಗಾರನಿಗೆ ಎಷ್ಟು ನೀಡಬೇಕು ಎಂಬುವುದನ್ನು ಆ ಪಟ್ಟಿಯಲ್ಲಿ ಬರೆದಿಡುತ್ತಾರೆ. ಕೆಲವರು ಇವರ ಅಮಿಷಕ್ಕೆ ಬಲಿಯಾದರೆ ಇನ್ನು ಕೆಲವರು ಅದನ್ನು ತಿರಸ್ಕರಿಸಿ ತಮ್ಮತನವನ್ನು ಉಳಿಸಿಕೊಳ್ಳುತ್ತಾರೆ. ಚುನಾವಣೆಗೆ ಸಂಬಂಧಿಸಿದಂತೆ ಸಂದರ್ಶನಗಳನ್ನು ಮಾಡಲು ರಾಜಕಾರಣಿಗಳ ಬಳಿ ಹೋದಾಗ ಕಾಫಿ ಕುಡಿಯೋದಕ್ಕೆ ಇರಲಿ ಎಂದು ಕಿಸೆಗೆ ಕೈಹಾಕಿ ಒಂದಿಷ್ಟು ಹಣವನ್ನು ನೀಡುವಂತಹ ಸಾಕಷ್ಟು ಮುಜುಗರದ ಪರಿಸ್ಥಿತಿ ಅನೇಕ ಪತ್ರಕರ್ತ ಮಿತ್ರರಿಗೆ ಎದುರಾಗಿದ್ದಿರಬಹುದು. ಇದಕ್ಕೆ ರಾಜಕಾರಣಿಗಳನ್ನು ಟೀಕಿಸುವುದಕ್ಕಿಂತ ಹೆಚ್ಚಾಗಿ ಅವರ ಈ ರೀತಿಯ ನಡವಳಿಕೆಗೆ ಕೆಲ ಪತ್ರಕರ್ತರೂ ಕಾರಣರಾಗಿರುತ್ತಾರೆ.

ಪತ್ರಕರ್ತರು ಮಾಡುತ್ತಿರುವ ಭ್ರಷ್ಟಾಚಾರವನ್ನು ಬಹಿರಂಗವಾಗಿ ಖಂಡಿಸಿದ ಸಾಕಷ್ಟು ಪತ್ರಕರ್ತರು ನಮ್ಮಲ್ಲಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯ ಸಂಧರ್ಭದಲ್ಲಿ ನೀಡುತ್ತಿದ್ದ ಉಡುಗೊರೆಯನ್ನು ತಿರಸ್ಕರಿಸುವುದರ ಜೊತೆಗೆ ಬಹಿರಂಗವಾಗಿ ಗಿಫ್ಟ್ ಕೊಡುವ ಸಂಸ್ಕೃತಿಯನ್ನು ವಿರೋಧಿಸಿದ ಪತ್ರಕರ್ತರಾದ ನವೀನ್ ಸೂರಿಂಜೆ, ಅನೀಶಾ ಸೇಟ್ ಹಾಗೂ ಅವರ ಸಂಗಡಿಗರು, ಚಿಕ್ಕಬಳ್ಳಾಪುರದಲ್ಲಿ ಚುನಾವಣಾ ವೇಳೆಯಲ್ಲಿ ಪತ್ರಕರ್ತರಿಗೆ ಔತಣ ಕೂಟ ಏರ್ಪಡಿಸಿದಕ್ಕೆ ಹೋಗದೇ ಇದ್ದದ್ದು ಮಾತ್ರವಲ್ಲದೆ ಔತಣ ಕೂಟದ ಮೇಲೆ ನಡೆದ ಚುನಾವಣಾಧಿಕಾರಿಗಳ ದಾಳಿಯನ್ನು ಸುದ್ದಿಯನ್ನಾಗಿ ಜನರ ಮುಂದಿಟ್ಟ ಪತ್ರಕರ್ತ ರಾಹುಲ್ ಬೆಳಗಲಿ (ಇತರ ಮಾಧ್ಯಮಗಳಲ್ಲಿ ಈ ಸುದ್ದಿ, ಸುದ್ದಿಯಾಗಿ ಪ್ರಕಟಗೊಂಡಿರುವುದು ನನ್ನ ಗಮನಕ್ಕಂತೂ ಬಂದಿಲ್ಲ), ಧಾರವಾಡದಲ್ಲಿ ಪ್ರಹ್ಲಾದ್ ಜೋಷಿ ಕೊಟ್ಟ ಉಡುಗೊರೆಯನ್ನು ವಾಪಾಸ್ ಮಾಡಿದ್ದಲ್ಲದೆ ಅದನ್ನು ಸುದ್ದಿ ಮಾಡುವುದರ ಮೂಲಕ ತನ್ನ ವಿರೋಧವನ್ನು ವ್ಯಕ್ತಪಡಿಸಿದ ಮನೋಜ್ ಕುಮಾರ್ ಗುದ್ದಿ ಮೊದಲಾದ ಅನೇಕ ಹಿರಿಯ ಹಾಗೂ ಯುವ ಪತ್ರಕರ್ತರು ನಮ್ಮ ಜೊತೆಗಿದ್ದಾರೆ. ಇಂಥಹ ಪತ್ರಕರ್ತರ ಅಗತ್ಯ ಹಾಗೂ ಅನಿವಾರ್ಯತೆ ಈ ಕ್ಷೇತ್ರಕ್ಕಿದೆ. ಕೆಲ ತಿಂಗಳ ಹಿಂದೆ ಹಿರಿಯ ಪತ್ರಕರ್ತರಾದ ಕೃಷ್ಣ ರಾಜ ಎಮ್. ಮಂಜುನಾಥ್ ಅವರು ಮಾಧ್ಯಮ ವಲಯದ ಭ್ರಷ್ಟರ ಬೆತ್ತಲು ಅಭಿಯಾನಯನ್ನು ತಮ್ಮ ವಾಹಿನಿಯಲ್ಲಿ ಪ್ರಸಾರ ಮಾಡಿದ್ದರು. ಆ ಸಂಧರ್ಭದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಪತ್ರಕರ್ತರು ನಡೆಸುತ್ತಿರುವ ಭ್ರಷ್ಟಾಚಾರಗಳ ಕುರಿತಾಗಿ ದೊಡ್ಡ ಮಟ್ಟದ ಚರ್ಚೆ ನಡೆದಿತ್ತು.

ಇದೀಗ ಮತ್ತೆ ಲೋಕಸಭಾ ಚುನಾವಣೆ ಬಂದಿದೆ. ಮತದಾರರನ್ನು ಓಲೈಸುವ ರೀತಿಯಲ್ಲಿಯೇ ಪತ್ರಕರ್ತರನ್ನು ಓಲೈಸುವ ಪ್ರಯತ್ನ ನಡೆಯುತ್ತಿದೆ. ಮತದಾರರ ಖರೀದಿಯನ್ನು ತಡೆಗಟ್ಟಲು ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತಿದೆ. ಆದರೆ ಪತ್ರಕರ್ತರ ಖರೀದಿಯು ಚುನಾವಣಾ ಅಧಿಕಾರಿಗಳ ಹದ್ದಿನ ಕಣ್ಣಿಗೆ ಬೀಳೋದೇ ಇಲ್ಲ. ಈ ನಿಟ್ಟಿನಲ್ಲಿ Election-Commission-Of-Indiaಚುನಾವಣಾ ಆಯೋಗ ಕೆಳಕಂಡಂತೆ  ಕೆಲವೊಂದು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇದು ನಮ್ಮ ಆಗ್ರಹವೂ ಆಗಿದೆ.

  • ರಾಜಕೀಯ ಸಭೆ ಸಮಾರಂಭಗಳ ಮೇಲೆ ತನ್ನ ಹದ್ದಿನ ಕಣ್ಣಿಟ್ಟ ರೀತಿಯಲ್ಲೇ ರಾಜಕಾರಣಿಗಳು ನಡೆಸುವ ಪತ್ರಿಕಾಗೋಷ್ಠಿಗಳ ಮೇಲೂ ನಿಗಾ ವಹಿಸಬೇಕಾಗಿದೆ. ಅದರ ಸಂಪೂರ್ಣ ಚಿತ್ರೀಕರಣ ನಡೆಸಬೇಕಾಗಿದೆ.
  • ಪತ್ರಿಕಾಗೋಷ್ಠಿಗೆ ವ್ಯಯಿಸುವ ಮೊತ್ತಕ್ಕೆ ಕಡಿವಾಣ ಹಾಕಬೇಕಾಗಿದೆ.
  • ಪತ್ರಿಕಾಗೋಷ್ಠಿಯ ಹೆಸರಲ್ಲಿ ರಾತ್ರಿ ವೇಳೆಯಲ್ಲಿ ನಡೆಯುವ ಗುಂಡು ತುಂಡು ಪಾರ್ಟಿಯ ಮೇಲೆ ನಿಗಾ ಇಡಬೇಕಾಗಿದೆ.
  • ಪತ್ರಕರ್ತರಿಗೆ ಹಣದ ಹಾಗೂ ಉಡುಗೊರೆಗಳ ಆಮಿಷ ನೀಡುವ ಜನಪ್ರತಿನಿಧಿಗಳು, ಅದನ್ನು ಪಡೆಯುವ ಪತ್ರಕರ್ತರ ವಿರುದ್ಧ ನೀತಿ ಸಂಹಿತೆಯ ಉಲ್ಲಂಘನೆಯ ಅಡಿಯಲ್ಲಿ ದೂರು ದಾಖಲಿಸಬೇಕು.

ಇವೆಲ್ಲದಕ್ಕಿಂತಲೂ ಮುಖ್ಯವಾಗಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗದ ಮೌಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪತ್ರಕರ್ತರ ಪಾತ್ರ ಬಹಳ ಪ್ರಮುಖವಾದುದು. ಆಯೋಗದ ನೀತಿ ಸಂಹಿತೆಗಿಂತ ಪತ್ರಕರ್ತರು ತಮಗೆ ತಾವೇ ನೀತಿಸಂಹಿತೆಯನ್ನು ಅಳವಡಿಸಿಕೊಳ್ಳಬೇಕು. ದೆಹಲಿ ಮಾಜಿ ಮುಖ್ಯಮಂತ್ರಿ ಆಮ್ ಆದ್ಮಿ ಮುಖಂಡ ಅರವಿಂದ್ ಕೇಜ್ರೀವಾಲ್ ಮಾಧ್ಯಮಗಳ ಕುರಿತಾಗಿ ಇತ್ತೀಚೆಗೆ ನೀಡಿದ ಹೇಳಿಕೆ ಎಲ್ಲಾ ಮಾಧ್ಯಮಗಳಲ್ಲಿ ಅತಿರೇಕ ಹಾಗೂ ಬೇಜಾವಾಬ್ದಾರಿಯುತ ಹೇಳಿಕೆ ಎಂದು ಟೀಕೆಗೆ ಕಾರಣವಾಗಿತ್ತು. ವಾಸ್ತವವಾಗಿ ಇಂದಿನ ಪತ್ರಿಕಾ ರಂಗದ ಹಾಗೂ ಕೆಲ ಪತ್ರಕರ್ತರ ಪರಿಸ್ಥಿತಿಯನ್ನು ಗಮನಿಸಿದಾಗ ಅವರ ಮಾತಿನ ಗಂಭೀರತೆಯನ್ನು ಸಾರಾಸಗಟವಾಗಿ ತಿರಸ್ಕರಿಸುವ ಹಾಗಿಲ್ಲ ಎಂಬುವುದು ನನ್ನ ಅಭಿಪ್ರಾಯ.