Author Archives: editor

Elephant Corridor…ಎಂಬ ಆನೆ ದಾರಿ

-ಪ್ರಸಾದ್ ರಕ್ಷಿದಿ

ಕಾಡಾನೆಗಳಿಂದ ಧಾಳಿಗೊಳಗಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆ.  ಪ್ರತಿನಿತ್ಯವೆಂಬಂತೆ ಪತ್ರಿಕೆಗಳಲ್ಲಿ ಆನೆಗಳಿಂದ ಗಾಯಗೊಂಡಿರುವವರ, ಸತ್ತುಹೋದವರ ವರದಿಗಳು ಬರುತ್ತಿವೆ. ಕರ್ನಾಟಕದ ದಕ್ಷಿಣ ಒಳನಾಡಿನ ಪ್ರದೇಶಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಅನೇಕ ಪ್ರದೇಶಗಳು ಆನೆಗಳ ಉಪಟಳದಿಂದ ತೊಂದರೆಗೆ ಒಳಗಾಗಿವೆ. ಹಾಸನ ಜಿಲ್ಲೆಯೊಂದರಲ್ಲೇ ಇದುವರೆಗೆ ಆನೆಗಳಿಂದ ಹತರಾದವರ ಸಂಖ್ಯೆ ಮೂವತ್ತನ್ನು ದಾಟಿದೆ. ಆದರೆ ನಗರ ಪ್ರದೇಶಕ್ಕೆ ಆನೆಗಳು ಬಂದು ದಾಂಧಲೆ ಮಾಡಿದಾಗ ನಮ್ಮ ಮಾಧ್ಯಮಗಳಲ್ಲಿ ಸಿಕ್ಕುವ ವ್ಯಾಪಕ ಪ್ರಚಾರ ಮಾತ್ರ ರೈತರು ಕೂಲಿ ಕಾರ್ಮಿಕರು ಸತ್ತಾಗಲಾಗಲೀ, ರೈತರ ಬೆಳೆ ನಾಶವಾದಾಗಲಾಗಲೀ ಸಿಕ್ಕುವುದಿಲ್ಲ. ಮಾಮೂಲಿನಂತೆ ಜನರು ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲೆ ಆಕ್ರೋಶ ತೋರುತ್ತಾರೆ. ಅವರೂ ಕೂಡಾ ತೇಪೆ ಹಚ್ಚಿದಂತೆ ಆ ಆನೆಯನ್ನು ಬೆದರಿಸಿಯೋ ಅರಿವಳಿಕೆ ನೀಡಿಯೋ ಇನ್ನೊಂದೆಡೆ ಸಾಗಹಾಕಿ ಸಧ್ಯದ ಮಟ್ಟಿಗೆ ಬಚಾವಾದೆವೆಂದು ಸುಮ್ಮನಾಗುತ್ತಾರೆ.

ಕೇವಲ ಇಪ್ಪತ್ತು ವರ್ಷಗಳ ಹಿಂದಿನ ವಿದ್ಯಮಾನಗಳನ್ನು ಗಮನಿಸಿದರೆ ಆನೆದಾಳಿಯೆಂಬ ವಿಚಾರವೇ ಕಂಡುಬರುವುದಿಲ್ಲ. ಅಪರೂಪಕ್ಕೊಮ್ಮೆ ಆನೆಗಳು ದಾರಿತಪ್ಪಿ ಬಂದಾಗಲೋ ಇಲ್ಲವೇ ಮದವೇರಿದ ಆನೆಗಳು ಮಾಡಿದ ಹಾವಳಿಯೋ ಬಿಟ್ಟರೆ ಈ ರೀತಿ ವ್ಯಾಪಕವಾಗಿ ಮತ್ತು ನಿರಂತರವಾಗಿ ಆನೆಗಳು ಜನವಸತಿಗಳತ್ತ ಬಂದುದೇ ಇಲ್ಲ. ಇದೀಗ ಹತ್ತು ವರ್ಷಗಳಿಂದ ಆನೆಗಳ ಉಪಟಳ ಪ್ರಾರಂಭವಾಯಿತು.

ನಮ್ಮ ತಾಲ್ಲೂಕಿನಲ್ಲಿ ಆನೆಗಳಿಂದ ತೊಂದರೆ ಅನುಭವಿಸಿದ ಇಬ್ಬರು ರೈತರ ಮಾತುಗಳೊಂದಿಗೆ ಮುಂದಿನ ವಿಚಾರವನ್ನು ವಿವರಿಸುತ್ತೇನೆ. ಒಬ್ಬರು ಹಿರಿಯ ರೈತರು-ವಿದ್ಯಾವಂತರು, ಒಂದು ಕಾಲೇಜಿನ ಪ್ರಾಂಶುಪಾಲರೂ ಆಗಿದ್ದವರು. ಅವರ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಲಕ್ಷಾಂತರ ರೂಪಾಯಿ ಬೆಲೆಬಾಳುವ ಬಾಳೆಬೆಳೆಯನ್ನು ನಾಶಮಾಡಿದ್ದವು, ಕಾಫಿ ತೋಟವೂ ಹಾನಿಗೊಳಗಾಗಿತ್ತು ಯಂತ್ರೋಪಕರಣಗಳು ಜಖಂಗೊಂಡಿದ್ದವು. ಆ ಸಂದರ್ಭದಲ್ಲಿ ನಾನೊಮ್ಮೆ ಅವರನ್ನು ಭೇಟಿಯಾಗಿದ್ದೆ. ಅವರಿಗುಂಟಾದ ನಷ್ಟದ ಬಗ್ಗೆ ಮಾತನಾಡುತ್ತ, ಸರ್ಕಾರದಿಂದ ಏನಾದರೂ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದೀರಾ ಎಂದು ಅವರನ್ನು ಕೇಳಿದೆ. ಅದಕ್ಕವರು ಅದೆಲ್ಲ ಸರಿ ಆದರೆ ಏನು ಮಾಡೋದು ಅವರು (ಆನೆಗಳು) ನಮಗಿಂತ ಸಾವಿರಾರು ವರ್ಷ ಮೊದಲೇ ಭೂಮಿಗೆ ಬಂದವರು.  ಅವರ ಜಾಗದಲ್ಲಿ ನಾವು ಬಂದು ಕೂತಿದ್ದೀವಿ, ತಪ್ಪು ನಮ್ಮದೇ ಅನುಭವಿಸಬೇಕು ಎಂದರು.

ಇನ್ನೊಂದು ಘಟನೆ ಇತ್ತೀಚಿನದ್ದು. ಆನೆ ಧಾಳಿಯಿಂದ ರೈತರೊಬ್ಬರು ಮೃತಪಟ್ಟಿದ್ದರು. ಮೃತ ದೇಹದ ಪಕ್ಕದಲ್ಲಿ ಕುಳಿತಿದ್ದ ಅವರ ಮಗ ನಾವು ಗಣಪತೀನ ಇಷ್ಟೊಂದು ಪೂಜೆ ಮಾಡ್ತೀವಿ ಏನನ್ಯಾಯ ಮಾಡ್ದ ಅಂತ ಗಣಪತಿ ನಮ್ಮಪ್ಪನ್ನ ಕರ್ಕೊಂಡು ಹೋದ… ಎಂದು ಬಂದವರೆಲ್ಲರ ಮುಂದೆ ಹೇಳುತ್ತ ರೋಧಿಸುತ್ತಿದ್ದ.

ಮೊದಲನೆಯವರದು ಸಂಪೂರ್ಣ ಅರಿವಿನೊಂದಿಗೆ ಬಂದಂತಹ  ಪ್ರತಿಕ್ರಿಯೆಯಾದರೆ, ಎರಡನೆಯವರದ್ದು ಮುಗ್ಧ ಭಾವುಕ ಅಳಲು. ಆದರೆ ಗಮನಿಸಬೇಕಾದ ಅಂಶವೆಂದರೆ, ಇಷ್ಟೆಲ್ಲ ಅನುಭವಿಸಿದ ಮೇಲೂ ಇಬ್ಬರಲ್ಲೂ ಆನೆಗಳ ಬಗ್ಗೆ ಸಿಟ್ಟಾಗಲೀ ದ್ವೇಷವಾಗಲೀ ಇಲ್ಲದಿರುವುದು.

ಇದು ನಮ್ಮ ರೈತರ ಸಾಮಾನ್ಯ ಮನೋಧರ್ಮವನ್ನು ತೋರಿಸುತ್ತದೆ. ಕೆಲವರು ದುಷ್ಕರ್ಮಿಗಳೋ, ದಂತ ಚೋರರೋ ಆನೆಗಳನ್ನು ಕೊಂದಿದ್ದಾರಲ್ಲದೆ, ರೈತರು ಆನೆಗಳನ್ನು ಕೊಂದಿರುವ ಪ್ರಕರಣಗಳು ಬಹಳ ಕಡಿಮೆ. ಇದಕ್ಕೆ ಸ್ವಲ್ಪ ಮಟ್ಟಿಗೆ ಧಾರ್ಮಿಕ ಭಾವನೆಗಳು ಮತ್ತು ಹಾಗೂ ಕಾನೂನಿನ ಭಯ ಕಾರಣವಾಗಿದೆ. ( ಕಾನೂನಿನ ಭಯವಿದ್ದಾಗಲೂ ಆಹಾರಕ್ಕೆ ಬಳಸುವ ಕಾಡು ಪ್ರಾಣಿಗಳ ಬೇಟೆ ಇಂದಿಗೂ ನಡೆದೇ ಇದೆ) ಆದರೆ ರೈತರು ಆನೆಗಳನ್ನು ಕೊಲ್ಲದಿರಲು ಅದೊಂದೇ ಕಾರಣವಲ್ಲ.

ಈ ರೀತಿ ಉಪಟಳ ನೀಡುವ ಆನೆಗಳಲ್ಲಿ ಎರಡು ವಿಧವಾದ ಆನೆಗಳಿವೆ. ಮೊದಲನೆಯವು ಹೆಚ್ಚು ತೊಂದರೆ ಕೊಡುವ, ಮತ್ತು ಯಾವಾಗಲೂ ಜನವಸತಿಗಳ ಪಕ್ಕದಲ್ಲೇ ಇರುವ ಆನೆಗಳ ಗುಂಪಿಗೆ ಸೇರಿದವುಗಳು. ಇವು ಬಯಲು ಸೀಮೆಗೂ ಧಾಳಿ ಮಾಡುತ್ತವೆ. ಹಗಲೆಲ್ಲ ಹತ್ತಿರದಲ್ಲಿರುವ ಕಾಡಿನಲ್ಲಿ ಆಶ್ರಯ ಪಡೆಯುತ್ತವೆ. ಇವುಗಳನ್ನು ಪುಂಡಾನೆಗಳೆಂದು ಕರೆಯತ್ತಾರೆ. ಇವು ಸತತವಾಗಿ ಹಳ್ಳಿಗಳತ್ತ ಬಂದು, ಸುಲಭದಲ್ಲಿ ಸಿಗುವ ಬೆಳೆಗಳನ್ನು ತಿಂದು ಬದುಕುವುದನ್ನು ಕಲಿತುಬಿಟ್ಟಿವೆ. ಕಾಡಿನಲ್ಲಿ ಅಲೆದು ಆಹಾರ ಸಂಪಾದಿಸುವುದನ್ನು ಸಂಪೂರ್ಣವಾಗಿ ಮರೆತುಬಿಟ್ಟಿರುವ ಈ ಆನೆಗಳು ತುಂಬಾ ಅಪಾಯಕಾರಿಯಾಗಿವೆ. (ಸಾಮಾನ್ಯವಾಗಿ ಒಂದು ಕಾಡಾನೆ ತನ್ನ ಆಹಾರಕ್ಕಾಗಿ ಅರಣ್ಯದಲ್ಲಿ ದಿನವೊಂದಕ್ಕೆ ಹತ್ತು ಹದಿನೈದು ಕಿ.ಮೀಗಳಷ್ಟು ಸಂಚರಿಸುತ್ತದೆ), ಹಾಸನ-ಕೊಡಗಿನ ಗಡಿ ಭಾಗಗಳಲ್ಲಿ, ಹೇಮಾವತಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಆನೆಗಳು ಈ ಬಗೆಯವು. ಇವು ಸಾಮಾನ್ಯವಾಗಿ ರಾತ್ರಿ ವೇಳೆ ಬೆಳೆ ನಾಶಮಾಡಿ ತಿಂದು ಬೆಳಗಿನ ಜಾವ ತಮ್ಮ ಅಡಗುತಾಣ ಸೇರುತ್ತವೆ. ಮುಂಜಾನೆ ಸ್ವಸ್ಥಾನ ಸೇರುವ ತವಕದಲ್ಲಿರುವಾಗ ಅಡ್ಡ ಸಿಕ್ಕಿದ ಪ್ರಾಣಿ ಅಥವಾ ಮನುಷ್ಯರ ಮೇಲೆ ಧಾಳಿ ನಡೆಸುತ್ತವೆ. ಯಂತ್ರೋಪಕರಣಗಳನ್ನೂ ಹಾಳುಗೆಡವುತ್ತವೆ. ಆ ಹೊತ್ತಿನಲ್ಲಿ ಹೊಲಗಳತ್ತ ಹೊರಟ ರೈತ ಕಾರ್ಮಿಕರೇ ಹೆಚ್ಚಾಗಿ ಇಂಥ ಆನೆಗಳಿಂದ ಧಾಳಿಗೊಳಗಾಗಿದ್ದಾರೆ. ಇವುಗಳನ್ನು ಮತ್ತೆ ಕಾಡಿಗೆ ಅಟ್ಟಿದರೂ ಅವು ಹೋಗಲಾರವು. ಆದ್ದರಿಂದ ಈ ಆನೆಗಳನ್ನು ಹಿಡಿದು, ಸಾಧ್ಯವಾದರೆ ಪಳಗಿಸುವುದು-ಇಲ್ಲವೇ ಆನೆಧಾಮಗಳನ್ನು ನಿರ್ಮಿಸಿ ಅಲ್ಲಿಗೆ ಸಾಗಿಸುವುದೊಂದೇ ಪರಿಹಾರದ ದಾರಿ.

ಎರಡನೆ ವಿಧದ ಆನೆಗಳು ಈ ರೀತಿಯವಲ್ಲ. ದಟ್ಟ ಅರಣ್ಯಗಳಿಂದ ಹೊರಬಂದು ಹೊಟ್ಟೆ ತುಂಬಿಸಿಕೊಂಡು ಹಿಂದಿರುಗುವ ಈ ಆನೆಗಳಿಗೆ ಬಾಳೆ- ಬೈನೆಗಳಂತಹ ಸಸ್ಯಗಳೇ ಸುಲಭದ ತುತ್ತು. ಇವುಗಳು ಇತರೆ ಬೆಳೆಗಳನ್ನು ನಾಶ ಮಾಡುವುದು ಕಡಿಮೆ.  ಹೆಚ್ಚಿನ ಸಂದರ್ಭಗಳಲ್ಲಿ ಇವು ದಾರಿತಪ್ಪಿಬರುವ ಆನೆಗಳು. ಸಾಮಾನ್ಯ ಪರಿಸ್ಥಿತಿಯಲ್ಲಿ ಇಂತಹ ಆನೆಗಳು ನೇರವಾಗಿ ಮನುಷ್ಯನನ್ನೇ ಗುರಿಯಾಗಿಸಿ ದಾಳಿ ಮಾಡುವುದಿಲ್ಲ. ಕೆಲವು ಬಾರಿ ಇವುಗಳನ್ನು ಓಡಿಸಲೆಂದು ಮಾಡಿದ ಗಲಾಟೆಯಿಂದ ಸಿಟ್ಟಿಗೆದ್ದು ಅಥವಾ ಇವುಗಳನ್ನು ಗಾಯಗೊಳಿಸಿದ ಸಂದರ್ಭಗಳಲ್ಲಿ  ರೊಚ್ಚಿಗೆದ್ದು ದಾಳಿ ಮಾಡಿವೆ. ಈ ರೀತಿಯ ಆನೆಗಳು ಅನೇಕ ವರ್ಷಗಳಿಂದಲೂ  ಅರಣ್ಯದ ಅಂಚಿನ ಹಳ್ಳಿಗಳಿಗೆ ಬಂದು ಹೋಗುವುದು ಮಾಮೂಲಾದ ಸಂಗತಿಯಾಗಿತ್ತು. ಸಾಮಾನ್ಯವಾಗಿ ಮಲೆನಾಡಿನ ಜನ  ಈ ರೀತಿಯ ಆನೆಯೊಂದೇ ಅಲ್ಲ ಅನೇಕ ಕಾಡುಪ್ರಾಣಿಗಳ ಜೊತೆಗೂ ಸಹಬಾಳ್ವೆಯನ್ನು ಸಾಧಿಸಿಕೊಂಡಿದ್ದರು. ಇಂದು ರಕ್ಷಿತಾರಣ್ಯವಾಗಿರುವ ಸಕಲೇಶಪುರ, ಮೂಡಿಗೆರೆ, ಸೋಮವಾರಪೇಟೆ ತಾಲ್ಲೂಕುಗಳ ದಟ್ಟಅರಣ್ಯ ಪ್ರದೇಶದ ಭಾಗಗಳಲ್ಲಿ ಕೂಡಾ ಜನವಸತಿಗಳಿದ್ದವು. ಈ ಪ್ರದೇಶಗಳ ಚಂದ್ರಮಂಡಲ, ಮಣಿಭಿತ್ತಿ, ಅರಮನೆಗದ್ದೆ, ಕಬ್ಬಿನಾಲೆ, ಇಟ್ಟಿಗೆ ಗೂಡು, ಎಂಬ ಹೆಸರಿನ ಸ್ಥಳಗಳಿಗೆ ಹೋಗಿ ನೋಡಿದರೆ ಅಥವಾ ಇಂದುಕೂಡಾ ಜನವಸತಿಯಿರುವ ಮಂಜನಹಳ್ಳ, ಕುಮಾರಳ್ಳಿ, ಹೊಡಚಳ್ಳಿ, ಅತ್ತಿಹಳ್ಳಿ, ಜಗಾಟ ಮುಂತಾದ ಪ್ರದೇಶಗಳ ಜನರನ್ನು ಭೇಟಿಮಾಡಿದರೆ ಈ ವಿಷಯ ತಿಳಿಯತ್ತದೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಆನೆಗಳು ಮಾತ್ರವಲ್ಲ ಎಲ್ಲ ಕಾಡು ಪ್ರಾಣಿಗಳ ಬದುಕಿನ ವಿನ್ಯಾಸವೇ ಕಲಕಿಹೋಗಿದೆ. ಘಟ್ಟಪ್ರದೇಶಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳು. ಮನುಷ್ಯನನ್ನೂ ಬದಲಿಸಿಬಿಟ್ಟಿವೆ.  ಅರಣ್ಯದ ನಡುವೆ ಸಾಗಿಹೋಗುತ್ತಿರುವ, ನಾಗರಿಕತೆಯ ರಕ್ತನಾಳವಾಗಿರುವ ರೈಲ್ವೇ ಹಳಿಗಳ ಮೇಲೆ ಹಗಲೂ ರಾತ್ರಿ ಗೂಡ್ಸ್ ರೈಲುಗಳು ಆರ್ಭಟಿಸುತ್ತಿವೆ. ಘಟ್ಟ ಪ್ರದೇಶವನ್ನು ಸೀಳಿಕೊಂಡು ಸಾಗಿರುವ ಹೆದ್ದಾರಿಗಳಲ್ಲಿ ಸಾವಿರಗಳ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ಇದೀಗ ಹಲವು ಜಲವಿದ್ಯುತ್ ಯೋಜನೆಗಳು ದಟ್ಟ ಅರಣ್ಯದ ನಡುವೆಯೇ ಬಂದು ಕುಳಿತಿವೆ. ಅವುಗಳಿಗಾಗಿ ರಸ್ತೆ ಮಾಡಲು, ಸುರಂಗ ಕೊರೆಯಲು ದಿನವಿಡೀ ಬಂಡೆಗಳನ್ನು ಸಿಡಿಸುತ್ತಿದ್ದಾರೆ. ಅದರ ಸದ್ದಿಗೆ ವನ್ಯಜೀವಿಗಳೆಲ್ಲ ದಿಕ್ಕಾಪಾಲಾಗಿ ಹೋಗಿವೆ.  ಪರಂಪರಾಗತ ಆನೆದಾರಿಗಳು ತುಂಡರಿಸಿಹೋಗಿವೆ.

ಆನೆ ನಡೆದದ್ದೇ ದಾರಿ ಎಂಬ ಗಾದೆ ಮಾತಿದೆ. ಅದು ಆನೆಯ ಶಕ್ತಿ ಸಾಮಥ್ರ್ಯಗಳನ್ನು ಪರಿಚಯಿಸಲು ಹೇಳುವ ಮಾತು. ಆನೆಗಳು ಯಾವತ್ತೂ ಶಿಸ್ತಿನಿಂದ, ಶತಮಾನಗಳಷ್ಟು ಕಾಲದಿಂದ ಪಶ್ಚಿಮಘಟ್ಟಗಳಲ್ಲಿ ಸಂಚರಿಸುತ್ತಾ ತಾವಾಗಿಯೇ ನಿರ್ಮಿಸಿಕೊಂಡಿರುವ  ಮಾರ್ಗಗಳಲ್ಲಿ ಮಾತ್ರ ಸಂಚರಿಸಲು ಬಯಸುತ್ತವೆ. ಇವುಗಳನ್ನೇ ‘ಆನೆದಾರಿ’ಗಳೆನ್ನುವುದು. ಆದರೆ ಮನುಷ್ಯನೇ ಅವುಗಳ ದಾರಿಯಲ್ಲಿ ಅಡ್ಡ ನಿಂತಿದ್ದಾನೆ. ಆದ್ದರಿಂದಲೇ ತಮ್ಮ ನೆಲೆಯಿಂದ ಕದಲಿ ಹೋಗಿರುವ ಆನೆಗಳು ಮಾತ್ರವಲ್ಲ ಅನೇಕ ಕಾಡು ಪ್ರಾಣಿಗಳು ಸಹ ಇಂದು ಎಲ್ಲೆಂದರಲ್ಲಿ ಜನವಸತಿಗಳತ್ತ ನುಗ್ಗಿ ಬರುತ್ತಿವೆ.

ಈ ಎಲ್ಲ ಅನಾಹುತಗಳು ನಡೆಯುತ್ತಿರುವಾಗ ಸುಮ್ಮನಿದ್ದ ಸರ್ಕಾರಗಳು, ಇತ್ತೀಚಿನ ದಿನಗಳಲ್ಲಿ ಪರಿಸರನಾಶ ಮತ್ತು ಆನೆಗಳ ಉಪಟಳಗಳ ಬಗ್ಗೆ ವ್ಯಾಪಕವಾದ ಪ್ರಚಾರ ಮತ್ತು ಜನರಿಂದ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಕಂಡುಬರುತ್ತಿರುವುದರಿಂದ ಎಚ್ಚೆತ್ತುಕೊಂಡಂತೆ ಮಾತನಾಡುತ್ತಿವೆ. ಕೇಂದ್ರ-ರಾಜ್ಯ ಸರ್ಕಾರಗಳು ಪರಸ್ಪರ ದೂಷಣೆ ಮಾಡುತ್ತ ತಮ್ಮ ಜವಾಬ್ದಾರಿಯನ್ನು ಇನ್ನೊಬ್ಬರ ಮೇಲೆ ಹೊರಿಸುತ್ತಾ ಕಾಲಹರಣ ಮಾಡಿ ಇದೀಗ ಆನೆದಾರಿಯನ್ನು ನಿರ್ಮಿಸುವ ಯೋಜನೆಯನ್ನು ಜನರ ಮುಂದಿಡುತ್ತಿವೆ. ಆನೆಗಳು ಪರಂಪರಾಗತವಾಗಿ ಬಳಸುತ್ತಿರುವ ಹಲವಾರು ‘ಆನೆದಾರಿ’ಗಳನ್ನು ಮತ್ತೆ ಆನೆಗಳಿಗೆ ಮುಕ್ತಗೊಳಿಸುವ ಮಾತನ್ನು ಯಾವ ಸರ್ಕಾರವೂ ಆಡುತ್ತಿಲ್ಲ. ಬದಲಿಗೆ  elephant corridor ಗಳನ್ನು ‘ನಿರ್ಮಿಸುವ’ ಮಾತನಾಡುತ್ತಿವೆ. ವಿದ್ಯುತ್ ಕೊರತೆಯಿಂದ ತತ್ತರಿಸುತ್ತಿರುವ ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ದೂರಿದರೆ, ಕೇಂದ್ರ ಸಚಿವರೊಬ್ಬರು ರಾಜ್ಯದ ವಿದ್ಯುತ್ ಸಮಸ್ಯೆಗೆ ರಾಜ್ಯ ಸರ್ಕಾರವೇ ಹೊಣೆ, ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ ಅರುವತ್ತು ಕಡತಗಳಿಗೆ ರಾಜ್ಯ ಸಕಾರ ಇನ್ನೂ ಅನುಮತಿ ನೀಡದಿರುವುದರಿಂದ ವಿದ್ಯುತ್ ಉತ್ಪಾದನೆಯ ಪ್ರಗತಿ ಕುಂಠಿತವಾಗಿದೆ ಎನ್ನುತ್ತಾರೆ. ಈಗ ಅನುಮತಿ ಸಿಕ್ಕಿರುವ ಕಂಪೆನಿಗಳು ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಘಟ್ಟಪ್ರದೇಶವನ್ನು ಹಾಳುಗೆಡವಿರುವುದರ ಬಗ್ಗೆ, ಮತ್ತು ಆ ಅರುವತ್ತು ಯೋಜನೆಗಳೂ ಮತ್ತದೇ ದಟ್ಟಅರಣ್ಯ ಪ್ರದೇಶದಲ್ಲಿ ಬರುತ್ತದೆಂಬ ವಿಚಾರದ ಬಗ್ಗೆ, ಜಾಣ ಕಿವುಡುತನ ತೋರುತ್ತಾರೆ.

ಕೆಲವು ದಿನಗಳ ಹಿಂದೆ ರಾಜ್ಯದ ಸಚಿವರೊಬ್ಬರು ಆನೆಗಳಿಂದ ತೊಂದರೆಗೊಳಗಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಸಾಕಷ್ಟು ವಿವರವಾಗಿಯೇ ಮಾಹಿತಿಗಳನ್ನು ಸಂಗ್ರಹಿಸಿದರು. ಅವರೆದುರಿನಲ್ಲೇ ಆನೆಗಳು ಕೂಲಿಕಾರ್ಮಿಕರನ್ನು ಅಟ್ಟಿಸಿಕೊಂಡು ಬಂದ ಘಟನೆಯೂ ನಡೆಯಿತು. ಮತ್ತದೇ ಆನೆದಾರಿ ನಿರ್ಮಾಣ ಭರವಸೆಯನ್ನು ನೀಡಿ ಸಚಿವರು ವಾಪಸ್ಸಾದರು.

ಇವರೆಲ್ಲ ನಿರ್ಮಾಣ ಮಾಡಲು ಬಯಸುವ ಆನೆದಾರಿ  ಅವುಗಳ ಪರಂಪರಾಗತ ಮಾರ್ಗದಲ್ಲಿ ಇಲ್ಲ, ಬದಲಿಗೆ ಇವರು ಹೇಳುವಂತೆ ಆನೆದಾರಿಗಳಲ್ಲಿ ಕೃಷಿ ಮಾಡಿಕೊಂಡಿರುವ  ರೈತರನ್ನೆಲ್ಲ ಪರಿಹಾರ ನೀಡಿ ಸ್ಥಳಾಂತರಿಸಿ ಮಾಡಲಿರುವ ಹೊಸ ಆನೆದಾರಿಗಳಿವು. ಆದರೆ ಹೆಚ್ಚಿನ ಹಳೆಯ ಆನೆ ದಾರಿಗಳಲ್ಲಿ ಯಾರೂ ಕೃಷಿ ಮಾಡಿಕೊಂಡಿಲ್ಲ. ಕೃಷಿಕರು ನೆಲೆಸಿದ್ದ ಒಂದೆರಡು ಆನೆದಾರಿಗಳಲ್ಲಿ ಕೂಡಾ ಆನೆಗಳು ಉಪಟಳ ಕೊಟ್ಟದ್ದಿಲ್ಲ. ಸಾಮಾನ್ಯವಾಗಿ  ವರ್ಷಕ್ಕೆರಡು ಬಾರಿ ಅವು ಅಲ್ಲಿ ಹಾದು ಹೋಗುತ್ತಿದ್ದವು. ಆಗೆಲ್ಲ ಒಂದೆರಡು ಬಾಳೆಯನ್ನೋ ಬೈನೆಯನ್ನೋ ಮುರಿದು ತಿಂದಿರುತ್ತಿದ್ದವು. ಆನೆ ಬಂದು ಹೋದದ್ದೇ ಮಹಾಪ್ರಸಾದವೆಂದು ರೈತರು ನಂಬಿ ನಡೆದು ಸಹಬಾಳ್ವೆ ಸಾಧಿಸಿದ್ದರು. ಆದರೆ ಈಗ ಅಭಿವೃದ್ದಿಯ ಹೆಸರಿನಲ್ಲಿ ನಾಶ ಮಾಡಿದ ಆನೆದಾರಿಗಳಿಗೆ ಬದಲಾಗಿ ಇನ್ನೆಲ್ಲೋ ದಾರಿ ನಿರ್ಮಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಇದು ಆನೆ ದಾರಿ ನಿರ್ಮಿಸುತ್ತೇವೆಂದು ಅರಣ್ಯದ ಅಂಚಿನಲ್ಲಿರುವ ಕೃಷಿಕರನ್ನು ಹೊರದಬ್ಬಿ ಮತ್ತಷ್ಟು ಅಭಿವೃದ್ಧಿ ಗಾಗಿ ಜಲವಿದ್ಯುತ್ ಕಂಪೆನಿಗಳಿಗೆ ಭೂಮಿನೀಡುವ ಹುನ್ನಾರದ ಭಾಗವಷ್ಟೇ ಆಗಿದೆ.

ಆನೆ ದಾರಿಗಾಗಿ ತಮ್ಮ ಜಮೀನನ್ನು ಬಿಟ್ಟುಕೊಡಲು ಅನೇಕ ರೈತರು ಸಿದ್ಧರಿದ್ದಾರೆಂದು ಸ್ಥಳ ಪರಿಶೀಲನೆ ನಡೆಸಿದ ರಾಜ್ಯದ ಸಚಿವರು ಹೇಳಿಕೆಯಿತ್ತರು. ಆನೆ ದಾರಿಯೇನು ವಿದ್ಯುತ್ ಯೋಜನೆಯಿರಲಿ, ಗಣಿಗಾರಿಕೆಯಿರಲಿ, ಯಾವುದೇ ಉದ್ಯಮಕ್ಕಾದರೂ ಸರಿ ದೇಶದ ಪ್ರಗತಿಯನ್ನು ಬಯಸುವ ಆಭಿವೃಧ್ಧಿಪರ ರೈತರು ತಮ್ಮ ಜಮೀನನ್ನು ಬಿಟ್ಟು ಕೊಡಲು ತಯಾರಿದ್ದಾರೆಂಬ ಹೇಳಿಕೆಯನ್ನು ಆಧಿಕಾರದಲ್ಲಿರುವ ಪ್ರತಿಯೊಂದು ಸರ್ಕಾರವೂ (ಪಕ್ಷಬೇಧವಿಲ್ಲದೆ) ನೀಡುತ್ತಲೇ ಇರುತ್ತವೆ. ರೈತರು ತಮ್ಮ ಕಣ್ಣೆದುರೇ ಇರುವ ದುರಂತವನ್ನು ತಿಳಿದೂ ಈ ನಿಧರ್ಾರಕ್ಕೆ ಬರಲು ಅನೇಕ ಕಾರಣಗಳಿವೆ. ಇದು ವ್ಯಾಪಾರೀ ಸಂಸ್ಕೃತಿಯ ಕೊಡುಗೆಯಾದ ಜಾಗತಿಕ ವಿದ್ಯಮಾನ. ಆದರೆ ಈ ವಿಚಾರವನ್ನು ಆನೆದಾರಿ ನಿರ್ಮಾಣದ ಯೋಜನೆಯ ಪ್ರಸ್ತಾಪವಾಗುತ್ತಿರುವ ಘಟ್ಟ ಪ್ರದೇಶಕ್ಕೆ ಮಾತ್ರ ಸೀಮಿತ ಗೊಳಿಸಿ ಹೇಳುವುದಾದರೆ, ಮುಖ್ಯವಾಗಿ ಅಲ್ಲಿನ ಕೃಷಿಕರು ಹಲವು ರೀತಿಗಳಿಂದ ಬಳಲಿಹೋಗಿದ್ದಾರೆ.  ಯಾವ ಕೃಷಿಯೂ ನಿರಂತರ ಲಾಭದಾಯಕವಲ್ಲದೆ ಕೃಷಿಕ ಸಾಲದಲ್ಲಿ ಮುಳುಗಿದ್ದಾನೆ. ಎಲ್ಲ ಸರ್ಕಾರಗಳು ಮೂಗಿಗೆ ತುಪ್ಪ ಸವರಿದಂತೆ ನೀಡಿದ ಯಾವುದೇ ‘ಪ್ಯಾಕೇಜ್’ ಅವನಿಗೆ ಭರವಸೆಯನ್ನು ತುಂಬಿಲ್ಲ. ಈಗಾಗಲೇ ಹಣದ ಅವಶ್ಯಕತೆಗಳಿಗಾಗಿಯೋ ಇನ್ನಾವುದೇ ಕಾರಣಕ್ಕೋ ತನ್ನಜಮೀನಿನಲ್ಲಿದ್ದ ಅಲ್ಪಸ್ವಲ್ಪ ಮರಗಳನ್ನು ಮಾರಾಟಮಾಡಿ, ಆ ಜಮೀನು ಕೂಡಾ ಭೂಸವಕಳಿಯಿಂದ ಬರಡಾಗಿದೆ. ಆ ಕಾರಣದಿಂದ ವರ್ಷಕ್ಕೆ ನೂರೈವತ್ತರಿಂದ ಇನ್ನೂರು ಇಂಚುಗಳಷ್ಟು ಮಳೆಯಾಗುವ ಘಟ್ಟ ಪ್ರದೇಶದ ಈ ಭಾಗದಲ್ಲಿರುವ ರೈತ ಇಲ್ಲಿನ ಪಾರಂಪರಿಕ ಬೆಳೆಗಳನ್ನೂ ಬೆಳೆಯಲಾರದ ಸ್ಥಿತಿ ತಲಪಿದ್ದಾನೆ. ಆನೆಯೊಂದೇ ಅಲ್ಲ ಇತರ ಕಾಡು ಪ್ರಾಣಿಗಳೂ ಊರೊಳಗೆ ಬರಲಾರಂಭಿಸಿವೆ. ಇವೆಲ್ಲದರ ಜೊತೆ ಕೂಲಿಕಾರ್ಮಿಕರು ಸಿಗದಿರುವುದರಿಂದ ಕೃಷಿಕ ಇನ್ನಷ್ಟು ಸೋತು ಹೋಗಿದ್ದಾನೆ.  ಘಟ್ಟಪ್ರದೇಶದ ದುರ್ಗಮ ನೆಲೆಯಲ್ಲಿರುವ ತನ್ನ ಜಮೀನನ್ನು ಮಾರಾಟ ಮಾಡಿ ಹೋಗೋಣವೆಂದರೆ, ಜಮೀನನ್ನು ಕೊಳ್ಳುವವರಿಲ್ಲದೆ ನಿರಾಶನಾಗಿ ಕುಳಿತಿದ್ದಾನೆ. ಇಂತಹ ಸಂದರ್ಭದಲ್ಲಿ ಅಲ್ಲಿಗೆ ಬರುವ ಯಾವುದೇ ಯೋಜನೆ ಅವನಿಗೆ ಹೊಸ ಆಸೆಗಳನ್ನು ತರುತ್ತದೆ.  ಹೇಗೂ ಮಾರಲು ಅಸಾಧ್ಯವಾಗಿರುವ ತನ್ನ ಜಮೀನಿಗೆ ಒಳ್ಳೆಯ ಪರಿಹಾರಧನ ದೊರಕಿ ತಾನು ಇಲ್ಲಿಂದ ಮುಕ್ತಿ ಪಡೆಯಬಹುದು, (ಪ್ರತೀ ಬಾರಿಯೂ ಈ ಯೋಜನೆಗಳ ವಿಚಾರ ಜನಾಭಿಪ್ರಾಯ ಸಂಗ್ರಹ ಸಭೆಗಳಲ್ಲಿ ಮತ್ತು ಇನ್ನಿತರ ಮಾಧ್ಯಮಗಳಲ್ಲಿ ಇವರು ತಮ್ಮ ಅಸಹಾಯಕತೆ ಮತ್ತು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ) ಇವರಲ್ಲಿ ಕೆಲವರ ಮಕ್ಕಳು ವಿದ್ಯಾಬ್ಯಾಸ ಮುಗಿಸಿ ಉದ್ಯೋಗ ಹಿಡಿದು, ಈಗಾಗಲೇ ಇಲ್ಲಿಂದ ದೂರವಾಗಿದ್ದಾರೆ. ಹೇಗಾದರೂ ಇಲ್ಲಿಂದ ಬಿಡುಗಡೆ ದೊರೆಯಲಿ ಎಂಬ ಹತಾಶ ಸ್ಥಿತಿಯಲ್ಲಿ, ಈ ಎಲ್ಲ ಪರಿಸರ ನಾಶದ ಯೋಜನೆಗಳನ್ನು ಪ್ರಬಲವಾಗಿ ಸಮರ್ಥಿಸುತ್ತಿರುವ ಇವರ ದೌರ್ಭಾಗ್ಯವನ್ನು ಅರ್ಥಮಾಡಿಕೊಂಡು, ಅವರಿಗೆ ಅತ್ಯಂತ ಹೆಚ್ಚಿನ ಪರಿಹಾರವನ್ನು ಕೊಟ್ಟು ಅವರು ಬೇರೆಡೆಗೆ ಹೋಗಲು ಅನುವು ಮಾಡಿಕೊಡಬೇಕು. ದೊಡ್ಡ ಕೈಗಾರಿಕೆಗಳಿಗೆ ಹಾಗೂ ಐ.ಟಿ.-ಬಿ.ಟಿ ಕಂಪೆನಿಗಳಿಗೆ ಸರ್ಕಾರಗಳು ಕೊಡುತ್ತಿರುವ ರಿಯಾಯಿತಿಗಳ ಮುಂದೆ ಈ ಮೊತ್ತ ನಗಣ್ಯವಾದುದು ಉದಾಹರಣೆಗೆ ಗುಂಡ್ಯ ಜಲವಿದ್ಯುತ್ ಯೋಜನೆಯಲ್ಲಿ ಸ್ಥಳಾಂತರಿಸ ಬೇಕಾಗಿರುವ ಎಲ್ಲ ಜನರಿಗೆ ಕೊಡಬೇಕಾದ ಪರಿಹಾರದ ಮೊತ್ತ ಕೆಲವು ಕೋಟಿ ರೂಪಾಯಿಗಳು ಮಾತ್ರ. ಇದೀಗ ಆನೆ ದಾರಿ ನಿರ್ಮಾಣಕ್ಕೆಂದು ಇವರು ನೀಡುತ್ತೇವೆಂದು ಹೇಳುತ್ತಿರುವ ಮೊತ್ತವೂ ಅಷ್ಟೇ ಸಣ್ಣದು.

ಇನ್ನು ಇಲ್ಲಿರುವ ಕೂಲಿ ಕಾರ್ಮಿಕರಾದರೂ ಅಷ್ಟೆ ಹೆಚ್ಚಿನವರು ಅಧಿಕ ಕೂಲಿದೊರೆಯುವ ಇತರ ಪ್ರದೇಶಗಳಿಗೋ ನಗರಗಳಿಗೋ ಹೋಗಿದ್ದಾರೆ. ಹೊಸ ಯೋಜನೆಗಳೇನಾದರೂ ಬಂದರೆ ಇನ್ನೂ ಉತ್ತಮ ಕೂಲಿದೊರೆಯುವ ನಿರೀಕ್ಷೆಯಲ್ಲಿ ಇವರಿದ್ದರೆ, ಸಣ್ಣ ಪುಟ್ಟ ವ್ಯಾಪಾರಿಗಳು ಟೀ ಅಂಗಡಿಗಳವರು ಇದೇ ಮನಸ್ಥಿತಿಯಲ್ಲಿದ್ದಾರೆ. ಇವರೆಲ್ಲ ಯಾವುದೇ ದೂರಗಾಮೀ ಪರಿಣಾಮಗಳ ಬಗ್ಗೆ ಯೋಚಿಸದೆ, ತಮ್ಮ ಬದುಕು ಉತ್ತಮಗೊಂಡೀತೆಂಬ ಮನುಷ್ಯ ಸಹಜ ಆಸೆಯಿಂದ ಈ ಯೋಜನೆಗಳನ್ನು ಸ್ವಾಗತಿಸುತ್ತ ಕುಳಿತಿದ್ದಾರೆ.

ಮಕ್ಕಳಿಗೆ ನಾನಾ ಕಾರಣಗಳಿಂದ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಲಾಗದ, ಅಥವಾ ಇನ್ನಿತರ ಯಾವುದೇ ಕಸುಬನ್ನು ಅರಿಯದ ರೈತರೂ ಇದ್ದಾರೆ. ಇವರಿಗೆ ತಾವು ಜಮೀನನ್ನು ಕೊಟ್ಟು ಇಲ್ಲಿಂದ ಹೊರನಡೆದರೆ ಮುಂದೆ ಗತಿಯೇನೆಂಬ ಆತಂಕವೂ ಇದೆ. ಅವರಲ್ಲಿ ಕೆಲವರು ಇಲ್ಲಿನ ಜಮೀನನ್ನು ಕೊಟ್ಟು ಹೋಗಲು ನಿರಾಕರಿಸುತ್ತಿದ್ದಾರೆ. ಅಥವಾ ಬೇರೆಕಡೆಯಲ್ಲಿ ಬದಲಿಯಾಗಿ ಉತ್ತಮ ಜಮೀನು ಸಿಕ್ಕಿದರೆ ಮಾತ್ರ ಇಲ್ಲಿಂದ ಹೊರಡುವ ಯೋಚನೆಯಲ್ಲಿದ್ದಾರೆ. ಆದರೆ ಇದುವರೆಗಿನ ಯಾವುದೇ ಸರ್ಕಾರವೂ ಈರೀತಿ ಸ್ಥಳಾಂತರಗೊಂಡ ರೈತರಿಗೆ ಸಮರ್ಪಕವಾಗಿ ಜಮೀನು ನೀಡಿದ ಉದಾಹರಣೆಗಳಿಲ್ಲ. ಜಮೀನಿಗೆ ಬದಲಾಗಿ ನೀಡುವ ಪರಿಹಾರದ ಹಣ ರೈತನ ಕೈ ಸೇರಿದೊಡನೆ ಖರ್ಚಾಗಿ ಹೋಗಲು ನೂರೆಂಟು ದಾರಿಗಳಿವೆ. ಒಂದು ವೇಳೆ ರೈತರು ವಿವೇಕಶಾಲಿಗಳಾಗಿ ಜಮೀನು ಕೊಳ್ಳಲು ಹುಡುಕಾಡಿದರೂ ಆ ವೇಳೆಗೆ ಇವರು ಕೊಳ್ಳಬಯಸುವ ಜಮೀನಿನ ಬೆಲೆ ಹಲವುಪಟ್ಟು ಏರಿರುತ್ತದೆ.

ಈಗಾಗಲೇ ಸಾಕಷ್ಟು ಸಮಯ ಕಳೆದು ಹೋಗಿದೆ. ನಮ್ಮ ‘ಅಭಿವೃದ್ಧಿ ಯೋಜನೆ’ ಗಳ ಪರಿಣಾಮವಾಗಿ ಅಂಡಲೆಯುತ್ತಿರುವ ಆನೆಗಳು ಹೀಗೇ ಉಳಿದರೆ ಪುಂಡಾನೆಗಳಾಗಿ ಪರಿವರ್ತನೆಯಾಗುವ ಅಪಾಯವಂತೂ ಇದ್ದೇ ಇದೆ. ಆದರೆ ಈಗ ಸರ್ಕಾರ ಆನೆದಾರಿ ನಿರ್ಮಿಸುತ್ತೇನೆಂದು ಹೇಳುತ್ತಾ ಅರಣ್ಯದ ಅಂಚಿನಲ್ಲಿರುವ ನೂರಾರು ಕೃಷಿಕರ ಜಮೀನನ್ನು ವಶಪಡಿಸಿಕೊಳ್ಳುವ ಮಾತನಾಡುತ್ತಿದೆ. ಇವರಲ್ಲೂ ಸರಿಯಾದ ದಾಖಲೆಗಳಿರುವವರು, ಇಲ್ಲದವರು, ಒತ್ತುವರಿದಾರರು. ಎಲ್ಲರೂ ಇದ್ದಾರೆ. ಅರಣ್ಯ ಭೂಮಿಯಾಗಲೀ ಕಂದಾಯ ಭೂಮಿಯಾಗಲೀ ಒತ್ತುವರಿಯಾಗಿ ಕೃಷಿಗೊಳಪಟ್ಟಿರುವ ವಿದ್ಯಮಾನ ನಾಲ್ಕೈದು ದಶಕಗಳಿಂದ ನಡೆದೇ ಇದೆ. (ಒತ್ತುವರಿ ಸರಿಯೆಂದು ನನ್ನ ವಾದವಲ್ಲ, ತನ್ನ ಜಮೀನನ್ನು ಕಾಯ್ದುಕೊಳ್ಳುವುದು ಯಾವುದೇ ಸರ್ಕಾರದ ಕರ್ತವ್ಯ ಕೂಡಾ) ಆದರೆ ಆಗ ಇರದಿದ್ದ ಆನೆಗಳ ಹಾವಳಿ ಈಗೇಕೆ ಉಲ್ಬಣವಾಗಿದೆಯೆಂಬ ಸರಳ ಸತ್ಯ, ಯಾರಿಗಾದರೂ ತಿಳಿಯುವಂತಹದ್ದೇ ಆಗಿದೆ. ಇಷ್ಟೆಲ್ಲ ಸಮಸ್ಯೆಗಳಿಗೆ, ಅನಾಹುತಗಳಿಗೆ ಸೇರ್ಪಡೆಯಾಗಿ, ಮಲೆನಾಡಿನಲ್ಲಿ ವ್ಯಾಪಕವಾಗಿ ತಲೆಯತ್ತಿರುವ, ರೆಸಾರ್ಟು, ಹೋಂ-ಸ್ಟೇಗಳು ನೀಡುತ್ತಿರುವ ಕೊಡುಗೆಯೂ ಸ್ವಲ್ಪಮಟ್ಟಿಗೆ ಇದೆ. ಇವುಗಳಿಂದಾಗಿ ಅರಣ್ಯ ಪ್ರದೇಶಗಳೊಳಗೆ ವ್ಯಾಪಕ ಜನಸಂಚಾರ, ವಾಹನಸಂಚಾರ ಹೆಚ್ಚಿರುವುದು ಮಾತ್ರವಲ್ಲ,  ಕೆಲವೊಮ್ಮೆ ಮೋಟಾರ್ ರ್‍ಯಾಲಿಗಳು ಕೂಡಾ ಈ ಪ್ರದೇಶದಲ್ಲಿ ನಡೆಯುತ್ತವೆ. ಇವೂ ಕೂಡಾ ವನ್ಯಜೀವಿಗಳಿಗೆ ತೊಂದರೆಯನ್ನುಂಟುಮಾಡಿವೆ.

ಸರ್ಕಾರ ತುರ್ತಾಗಿ ಪುಂಡಾನೆಗಳಿಗಾಗಿ ಶ್ರೀಲಂಕಾದ ಮಾದರಿಯಲ್ಲಿ ಆನೆಧಾಮವನ್ನು ನಿರ್ಮಿಸಬೇಕು. ಇವು ಸೀಮಿತ ಪ್ರದೇಶದಲ್ಲಿ ಆನೆಗಳಿಗೆ ಆಹಾರಸಹಿತ ನೀಡುವ ಆಶ್ರಯತಾಣಗಳಾಗಿರುತ್ತವೆ. ಇನ್ನುಳಿದ ಆನೆಗಳಿಗಾಗಿ ನಾವು ಏನನ್ನೂ ಮಾಡಬೇಕಾಗಿಲ್ಲ. ನಮ್ಮ ಆಭಿವೃದ್ಧಿ ಕಾರ್ಯಗಳನ್ನೆಲ್ಲ ಪಶ್ಚಿಮ ಘಟ್ಟದ ಅರಣ್ಯ ಪದೇಶದಿಂದ ಶಾಶ್ವತವಾಗಿ ದೂರಮಾಡಿ ಆನೆಗಳು ಮತ್ತು ಇನ್ನಿತರ ಪ್ರಾಣಿಗಳಿಗೆ ಬದುಕಲು ಬಿಡುವುದೊಂದೇ ಪರಿಹಾರ. ಇದರೊಂದಿಗೆ ಸ್ವಇಚ್ಛೆಯಿಂದ ಅಲ್ಲಿಂದ ತೆರಳಲು ಬಯಸುವವರಿಗೆ (ಅನೇಕ ವರ್ಷಗಳಿಂದ ಅಲ್ಲಿ ನೆಲೆಸಿರುವ ಭೂರಹಿತ ಕೃಷಿಕಾರ್ಮಿಕರೂ ಸೇರಿದಂತೆ) ಉತ್ತಮ ಪರಿಹಾರ ನೀಡಿ ಸ್ಥಳಾಂತರಿಸಬೇಕು. ಆದರೆ ಸರ್ಕಾರಗಳು ಅಲ್ಲಿನ ಯಾವುದೇ ವಿದ್ಯುತ್ ಯೋಜನೆಯನ್ನಾಗಲಿ, ಇನ್ನಿತರ ಕಾಮಗಾರಿಗಳನ್ನಾಗಲೀ ನಿಲ್ಲಿಸುವ ಮಾತನಾಡುತ್ತಿಲ್ಲ. ಒಂದೊಮ್ಮೆ ಆನೆದಾರಿಯ ನೆಪದಲ್ಲಿ ಸರ್ಕಾರ ರೈತರ ಜಮೀನನ್ನು ವಶಪಡಿಸಿಕೊಂಡರೆ ಆ ನೆಲವೂ ಕೂಡಾ ಈ ಯೋಜನೆಗಳ ಪಾಲಾಗುವ ಅನುಮಾನ ಕಂಡುಬರುತ್ತಿದೆ. ಇದರಿಂದಾಗಿಯೇ ಕೆಲವು ‘ಅಭಿವೃದ್ಧಿಪರ’ ಹಿತಾಸಕ್ತಿಗಳು ಪಶ್ಚಿಮ ಘಟ್ಟ ಪ್ರದೇಶವನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ವಿರೋಧಿಸುತ್ತಿರುವುದು. ನಮ್ಮ ಶಾಸಕಾಂಗ ಮತ್ತು ನಮ್ಮ ನೀತಿ ನಿರೂಪಕರುಗಳು ಸರಿದಾರಿಗೆ ಬರುವ ತನಕ ಆನೆದಾರಿಯ ಸಮಸ್ಯೆಗೆ ಉತ್ತರ ದೊರೆಯಲಾರದು.

ಕೊನೆಗೂ ಪರಿಸರಾಸಕ್ತರ, ರೈತರ, ಹೋರಾಟಕ್ಕೆ ಸಣ್ಣ ಜಯವೊಂದು ದೊರೆತ ಸುದ್ದಿ ಬಂದಿದೆ. ಜನರ ಒತ್ತಡಕ್ಕೆ ಮಣಿದು ಘಟ್ಟಪ್ರದೇಶದಲ್ಲಿ ಅನಾಹುತ ನಡೆಸಿದ್ದ ಜಲವಿದ್ಯುತ್ ಕಂಪೆನಿಯೊಂದರ ಕೆಲಸವನ್ನು ಸ್ಥಗಿತಗೊಳಿಸಿ ಸರ್ಕಾರ ಆದೇಶ ನೀಡಿದೆ (ಅದಕ್ಕೆ ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಂಡಿಲ್ಲ). ಹಾಗೇ ಪುಂಡಾನೆಗಳನ್ನು ಹಿಡಿದು ದೂರದ ಮಧ್ಯಪ್ರದೇಶಕ್ಕೆ ಸಾಗಿಸುವಂತಹ ಅವೈಜ್ಞಾನಿಕ ಕ್ರಮವನ್ನು ಕೂಡಾ ತಜ್ಞರ ಮಾತಿಗೆ ಮಣಿದು ಹಿಂತೆಗೆದುಕೊಂಡು ಕಾವೇರಿನದಿಯ ಪಕ್ಕದಲ್ಲೇ ಆಶ್ರಯತಾಣ ನಿರ್ಮಿಸಲು ಮುಂದಾಗಿದೆ.

ಬೆಕ್ಕಿಗೆ ಗಂಟೆ ಕಟ್ಟುವ ಕೆಲಸವನ್ನು ಇಲಿಗಳೇ ಮಾಡಬೇಕು. ಬೇರೆ ದಾರಿ….. ನಮಗೂ ಇಲ್ಲ-ಆನೆಗಳಿಗೂ ಇಲ್ಲ.

ಫೋಟೋ ಕೃಪೆ: sheldrickwildlifetrust.org

ನ್ಯಾ.ಕಟ್ಜು ಅವರ ಮಾತಿನಲ್ಲಿ ಟೀಕಿಸುವಂತಹ ಕಟುವಾದ್ದೇನಿದೆ?

– ಲೋಕವಿರೊಧಿ

ಪ್ರೆಸ್ ಕೌನ್ಸಿಲ್ ಅಧ್ಯಕ್ಷ ನ್ಯಾ.ಮಾರ್ಕಂಡೇಯ ಕಾಟ್ಜು ಅವರ ಇಂದಿನ ಮಾಧ್ಯಮ ಕುರಿತ ಅಭಿಪ್ರಾಯಗಳು ಸಂಚಲವನ ಉಂಟುಮಾಡಿವೆ. ರಾಷ್ಟ್ರಮಟ್ಟದ ಪತ್ರಕರ್ತ ಸಂಘಟನೆಗಳು ಕಟ್ಜು ಅವರನ್ನು ತೀವ್ರವಾಗಿ ಟೀಕಿಸುತ್ತಿದ್ದರೆ, ಮತ್ತೊಂದು ವರ್ಗದಿಂದ ಅವರ ಮಾತುಗಳಿಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.

ಚುರುಮುರಿ ಬ್ಲಾಗ್ ಆನ್ ಲೈನ್ ಪೋಲ್ ನಲ್ಲಿ ಸಂಗ್ರಹಿಸಿರುವ ಅಭಿಪ್ರಾಯಗಳನ್ನು ಗಮನಿಸಿದರೆ (ಸೋಮವಾರ ರಾತ್ರಿ 10ರವರೆಗೆ) ಪ್ರತಿಕ್ರಿಯಿಸಿದವರ ಪೈಕಿ ಶೇ. 75 ರಷ್ಟು ಮಂದಿ ನ್ಯಾ.ಕಟ್ಜು ಅವರ ಅಭಿಪ್ರಾಯಗಳಿಗೆ ಸಂಪೂರ್ಣ ಸಮ್ಮತಿ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ವಿರೋಧ ವ್ಯಕ್ತಪಡಿಸಿದವರು ಕೇವಲ 6.08 ರಷ್ಟು ಮಾತ್ರ. ಉಳಿದಂತೆ ಭಾಗಶಃ ಒಪ್ಪುವವರು ಶೇ.15.88 ಮತ್ತು ಭಾಗಶಃ ಒಪ್ಪದಿರುವವರು 3.04 ರಷ್ಟು.  ಚುರುಮುರಿಯ ಓದುಗರಲ್ಲಿ ಬಹುತೇಕರು ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಹಾಗೂ ಮಾಧ್ಯಮದ ಬಗ್ಗೆ ಆಸಕ್ತಿ ಉಳ್ಳವರು. ಹಾಗಾಗಿ ಆ ಬ್ಲಾಗ್ ನಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳನ್ನು ಗಂಭೀರವಾಗಿಯೇ ಪರಿಗಣಿಸಬೇಕಾಗುತ್ತದೆ.

ಸಿಎನ್ಎನ್ ಐಬಿನ್ ಶುಕ್ರವಾರ ಪ್ರಸಾರ ಮಾಡಿದ ಲಾಸ್ಟ್ ವರ್ಡ್ ಕಾರ್ಯಕ್ರಮದಲ್ಲಿ ದಿ ಹಿಂದೂ ಪತ್ರಿಕೆ ಎಡಿಟರ್ ಇನ್ ಚೀಫ್ ಎನ್. ರಾಮ್ ಕೂಡಾ ನ್ಯಾ.ಕಟ್ಜು ಅವರ ಬಹುತೇಕ ಅಭಿಪ್ರಾಯಗಳಿಗೆ ಸಹಮತ ವ್ಯಕ್ತಪಡಿಸಿದರು. ಬಹುತೇಕರಲ್ಲಿ ಸುಪ್ತವಾಗಿದ್ದ ಅಥವಾ ವೈಯಕ್ತಿಕ ನೆಲೆಯಲ್ಲಿಯೇ ಚರ್ಚೆಗೆ ಒಳಗಾಗಿರಬಹುದಾದ ಅಭಿಪ್ರಾಯಗಳು ಪ್ರೆಸ್ ಕೌನ್ಸಿಲ್ ಅಧ್ಯಕ್ಷರ ಸಂದರ್ಶನದ ಕಾರಣ ಮುಖ್ಯವಾಹಿನಿಗೆ ಬಂದಿವೆ.

ನ್ಯಾ.ಕಟ್ಜು ಅವರ ಅಭಿಪ್ರಾಯಗಳನ್ನು ಟೀಕಿಸುವ ಸಂಪಾದಕರ ಗಿಲ್ಡ್ ಮತ್ತಿತರ ಸಂಘಟನೆಗಳು ಅವರು (ನ್ಯಾ.ಕಟ್ಜು) ಎತ್ತಿರುವ ಬಹುಮುಖ್ಯ ಆರೋಪ ರೂಪದ ಪ್ರಶ್ನೆಗಳನ್ನು ಎದುರಿಸಲೇ ಇಲ್ಲ. ನ್ಯಾಯಮೂರ್ತಿಯವರು ಮಾಡಿರುವ ಬಹುಮುಖ್ಯ ಮೂರು ಅಂಶಗಳು – ಮಾಧ್ಯಮ ಜನವಿರೋಧಿ, ಜನರಲ್ಲಿ ಕೋಮು ಭಾವನೆಗಳನ್ನು ಕೆರಳಿಸಿ ಸಮುದಾಯವನ್ನು ವಿಭಜಿಸುತ್ತದೆ ಮತ್ತು ಅನೇಕ ಪತ್ರಕರ್ತರ ಬೌದ್ಧಿಕ ಮಟ್ಟ ತೀರಾ ಸಾಮಾನ್ಯ.

1. ಮಾಧ್ಯಮ ಜನವಿರೋಧಿ:
ಎಲ್ಲಾ ಚಾನೆಲ್ ಗಳು, ಎಲ್ಲಾ ಸುದ್ದಿ ಸಂಸ್ಥೆಗಳು ಜನವಿರೋಧಿ ಎಂದು ಅವರು ಹೇಳಿಲ್ಲ. ‘ಬಹುತೇಕ’ ಎನ್ನುವ ಪದ ಬಳಸಿದ್ದಾರೆ. ಜನರ ನಿಜ ಸಮಸ್ಯೆಗಳನ್ನು ನಿರ್ಲಕ್ಷಿಸಿ, ಕ್ರಿಕೆಟ್ ಆಟಗಾರರನ್ನು, ಸಿನಿಮಾ ತಾರೆಯರನ್ನು ವಿಜೃಂಭಿಸುವ ಕೆಲಸ ಮಾಡುತ್ತಿಲ್ಲವೇ? ಐಶ್ವರ್ಯ ರೈಗೆ ಹುಟ್ಟುವ ಮಗು/ಮಕ್ಕಳ ಬಗ್ಗೆ ಬಿತ್ತರವಾದಷ್ಟು ವರದಿಗಳು, ಗ್ರಾಮೀಣ ಭಾರತದಲ್ಲಿನ ಆರೋಗ್ಯ ವ್ಯವಸ್ಥೆ ಬಗ್ಗೆ ವರದಿಗಳು ಪ್ರಕಟಗೊಂಡಿಲ್ಲ. ಐಶ್ವರ್ಯ ರೈ ನ ಮುಗುಳ್ನಗು ನೋಡಿಕೊಂಡು, ಹಳ್ಳಿಗಳಲ್ಲಿ ಸೂಕ್ತ ವ್ಯವಸ್ಥೆಯಿಲ್ಲದೆ ಮಗುವಿಗೆ ಜನ್ಮ ನೀಡುವಾಗಲೇ ಪ್ರಾಣ ಕಳೆದುಕೊಳ್ಳುವ ಹೆಣ್ಣು ಮಕ್ಕಳ ದುಃಖ ಮರೆಯಬೇಕೆ? ಹಾಗಾದರೆ, ನ್ಯಾ.ಕಟ್ಜು ಅವರ ಅಭಿಪ್ರಾಯದಲ್ಲಿ ತಪ್ಪೇನಿದೆ?

2. ಕೋಮು ಭಾವನೆ ಬಿತ್ತನೆ:
ಭಾರತದ ಯಾವುದೇ ಭಾಗದಲ್ಲಿ ಬಾಂಬ್ ದಾಳಿ ನಡೆದ ಕೆಲವೇ ಗಂಟೆಗಳ ನಂತರ ಮಾಧ್ಯಮ ಕಚೇರಿಗಳಿಗೆ ಈ-ಮೇಲ್ ಬರುತ್ತದೆ. ಈ-ಮೇಲ್ ಆಧರಿಸಿ ಸುದ್ದಿ ಸಂಸ್ಥೆಗಳು ಬಾಂಬ್ ದಾಳಿಯ ಹಿಂದೆ ಯಾರಿದ್ದಾರೆ ಎಂದು ಘೋಷಿಸಿಬಿಡುತ್ತದೆ. ಹಾಗೆ ತೇಲಿ ಬರುವ ಯಾವುದೇ ಒಂದು ಸಂಘಟನೆಯ ಹೆಸರು ಮೇಲ್ನೋಟಕ್ಕೆ ಮುಸ್ಲಿಂ ಸಂಘಟನೆ ಎಂದು ಹೇಳಲು ಯಾರಿಗೂ ಕಷ್ಟವಲ್ಲ. ಹೀಗೆ ಇಲ್ಲಿ ನಡೆಯುವ ಬಾಂಬ್ ದಾಳಿಗಳಿಗೆ ಮುಸ್ಲಿಂ ಸಂಘಟನೆಯೊಂದು ಹೊಣೆ ಎಂಬಂತೆ ಮಾಧ್ಯಮಗಳು ಯಾವುದೇ ಅಧಿಕೃತತೆ ಇಲ್ಲದ ಈ-ಮೇಲ್ ಆಧರಿಸಿ ಬಿಂಬಿಸುತ್ತಿರುವುದು ಸುಳ್ಳೇ? ಹಾಗಾದರೆ, ನ್ಯಾ.ಕಟ್ಜು ಮಾತುಗಳಲ್ಲಿ ತಪ್ಪು ಹುಡುಕುವ ಪ್ರಯತ್ನವೇಕೆ?

3. ಮೂಢ, ಅಂಧ ಆಚರಣೆಗಳಿಗೆ ಮಹತ್ವ:
ನ್ಯಾ.ಕಾಟ್ಜು ಅವರು ಮಾಡಿರುವ ಮತ್ತೊಂದು ಗಂಭೀರ ಆರೋಪ ಮೂಢ ಆಚರಣೆಗಳಿಗೆ ಮಾಧ್ಯಮ ಅನಗತ್ಯ ಮಹತ್ವ ನೀಡುತ್ತಿದೆ. ಇದನ್ನಂತೂ ಯಾರೂ ಸುಳ್ಳು ಎಂದು ಸಾಧ್ಯವಿಲ್ಲ. ಬಹುತೇಕ ಚಾನೆಲ್ ಗಳ ಬೆಳಗಿನ ಕೆಲ ಗಂಟೆಗಳು ಜ್ಯೋತಿಷಿಗಳಿಗೆ ಮೀಸಲು. ತಲೆ ಬುಡ ಇಲ್ಲದ ಶಾಸ್ತ್ರ ಹೇಳುತ್ತಾ ನೋಡುಗರನ್ನು ದಿಕ್ಕು ತಪ್ಪಿಸುತ್ತಾರೆ ಅವರು. ನ್ಯಾ.ಕಾಟ್ಜು ಅವರು ಹೇಳೋದು, ಆಧುನಿಕ ಪ್ರಜಾಪ್ರಭುತ್ವದತ್ತ ಸಾಗುತ್ತಿರುವ ಭಾರತದ ಮಾಧ್ಯಮ ನಡೆದುಕೊಳ್ಳಬೇಕಾದ ರೀತಿ ಇದಲ್ಲ ಎನ್ನುವುದು ನ್ಯಾಯಮೂರ್ತಿಯವರ ವಾದ.

4. ಅನೇಕ ಪತ್ರಕರ್ತರ ತಿಳವಳಿಕೆ ತೀರ ಕಡಿಮೆ.
ಇದು ಚರ್ಚಾಸ್ಪದ ವಿಚಾರ. ಮಾಧ್ಯಮದಲ್ಲಿ ಬಿತ್ತರವಾಗುವ ಕಾರ್ಯಕ್ರಮಗಳು ಹಾಗೂ ಮಾಧ್ಯಮ ಮಂದಿ ಮಂಡಿಸುವ ಅಭಿಪ್ರಾಯದ, ವಿಷಯವನ್ನು ವಿಶ್ಲೇಷಿಸುವ ವಿಧಾನ – ಹೀಗೆ ಕೆಲವು ಸಂಗತಿಗಳ ಆಧಾರದ ಮೇಲೆ ನ್ಯಾ.ಕಟ್ಜು ಅವರು ಮಾಧ್ಯಮ ಕ್ಷೇತ್ರದಲ್ಲಿರುವ ಅನೇಕರಿಗೆ ಆರ್ಥಿಕ ಸಿದ್ಧಾಂತ, ರಾಜ್ಯಶಾಸ್ತ್ರ..ಹೀಗೆ ಯಾವ ವಿಚಾರದಲ್ಲೂ ನಿಪುಣರಲ್ಲ. ಇದೇ ಹೊತ್ತಿನಲ್ಲಿ ಅವರು ಮಾಧ್ಯಮ ಕ್ಷೇತ್ರದ ಎಲ್ಲರೂ ಹೀಗೆ ಎಂದು ಹೇಳಲಿಲ್ಲ. ಬದಲಿಗೆ ಕೆಲವರು ಅತ್ಯಂತ ಪ್ರಾಜ್ಞರು ಇದ್ದಾರೆ ಎಂದರು. ಜೊತೆಗೆ ಗ್ರಾಮೀಣ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿರುವ ಪಿ.ಸಾಯಿನಾಥ್ ರವರ ಹೆಸರನ್ನೂ ಉಲ್ಲೇಖಿಸಿದರು. ಆದರೆ ನ್ಯಾ.ಕಟ್ಜು ಅವರನ್ನು ಟೀಕಿಸುತ್ತಿರುವ ಬಹುತೇಕರು ಈ ಅಂಶವನ್ನು ಗಮನಿಸಲೇ ಇಲ್ಲ.

5. ಮಾಧ್ಯಮದ ಅತಿರೇಕದ ವರ್ತನೆ ನಿಯಂತ್ರಣಕ್ಕೆ ವಿಶೇಷ ಅಧಿಕಾರ:
ಕನ್ನಡದಲ್ಲಿಯೇ ಅನೇಕ ಟ್ಯಾಬ್ಲಾಯ್ಡ್ ಗಳಿವೆ. ಅನೇಕ ಬಾರಿ ಯಾವುದೇ ಸೂಕ್ತ ಆಧಾರ ಇಲ್ಲದೆ ಆರೋಪ ಮಾಡಿ ಮಾನಹಾನಿ ಪ್ರಕರಣಗಳಿವೆ. ಅಷ್ಟೇ ಅಲ್ಲ ಇತ್ತೀಚೆಗೆ ಚಾನೆಲ್ ಗಳು ಕೆಲವೊಮ್ಮೆ ಇದೇ ಧಾಟಿಯಲ್ಲಿ ವರ್ತಿಸುತ್ತಿವೆ. ಟಿಆರ್‌ಪಿಗಾಗಿ ಅಸಂಬದ್ಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ಇತ್ತೀಚೆಗೆ ಕನ್ನಡದ ಒಂದು ಸುದ್ದಿ ವಾಹಿನಿ ಲಕ್ಷ್ಮೀ ಹೆಸರಿನ ಪತ್ನಿಯನ್ನು ಹೊಂದಿರುವ ಗಂಡಂದಿರಿಗೆಲ್ಲಾ ಗಂಡಾಂತರ ತಪ್ಪಿದಲ್ಲ ಎಂದು ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿತು. ಇದು ಒಂದು ಉದಾಹರಣೆ ಅಷ್ಟೆ. ಇಂತಹ ನೂರಾರು ಉದಾಹರಣೆ ನೀಡಬಹುದು. ಇಂತಹ ಭಾನಗಡಿಗಳನ್ನು ಮಾಡಿದಾಗ ಮಾಧ್ಯಮದ ಕಿವಿ ಹಿಂಡುವುದು ಯಾರು?

ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ಎಚ್ಚರಿಕೆ ನೀಡುವುದರ ಹೊರತಾಗಿ ಬೇರೆ ಅಧಿಕಾರ ಇಲ್ಲ. ಆ ಕಾರಣ ‘ವಿಶೇಷ ಸಂದರ್ಭದಲ್ಲಿ’ ಮಾತ್ರ ಬಳಸಲು ಕೆಲ ಅಧಿಕಾರಗಳು ಬೇಕು ಎಂದು ಕೇಂದ್ರ ಸರಕಾರವನ್ನು ಕೇಳುವ ಇರಾದೆ ನ್ಯಾ.ಕಟ್ಜು ಅವರದು.  ಈ ಸಂದರ್ಭ ಸೃಷ್ಟಿಯಾಗಲು ತಮ್ಮ ಜವಾಬ್ದಾರಿ ಮರೆತ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರೇ ಕಾರಣ. ಮಾಧ್ಯಮ ಸಂಸ್ಥೆಗಳು ಸ್ವಯಂ ನಿಯಂತ್ರಣ ಹೇರಿಕೊಳ್ಳದೇ ಇರುವಾಗ ಪ್ರಭುತ್ವ ಅಂತಹದೊಂದು ಪ್ರಯತ್ನಕ್ಕೆ ಕೈ ಹಾಕುವ ಪ್ರಯತ್ನ ಮಾಡುತ್ತಿದೆ. ಟಿಆರ್‌ಪಿಗಾಗಿ ತಲೆಕೆಟ್ಟ ಜ್ಯೋತಿಷಿಗಳನ್ನು ಕರೆತಂದು ಸ್ಟುಡಿಯೋದಲ್ಲಿ ಅಸಹ್ಯಗಳನ್ನು ಸೃಷ್ಟಿಸುತ್ತಿರುವಾಗ, ಅಪರಾಧದ ವರದಿಗಳಲ್ಲಿ ಮಹಿಳೆಯರನ್ನು ಹೀಗಳೆಯುವ ಭಾಷೆ ಬಳಸುತ್ತಿರುವಾಗ, ಕೋಮುಭಾವನೆ ಕೆರಳಿಸಿ ರಾಜಕೀಯ ಪಕ್ಷಗಳ ಏಜೆಂಟರಂತೆ ಚಾನೆಲ್ ಗಳು ವರ್ತಿಸುತ್ತಿರುವಾಗ… ನಿಯಂತ್ರಣ ಬೇಕು ಎನಿಸುವುದಿಲ್ಲವೆ? ನ್ಯಾ.ಕಟ್ಜು ಇದೇ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಸರಕಾರದ ನಿಯಂತ್ರಣ ಅಪಾಯಕಾರಿ ಎನ್ನುವುದರಲ್ಲಿ ಸಂಶಯವಿಲ್ಲ. ಹಾಗಾದರೆ, ಈಗಲಾದರೂ ಮಾಧ್ಯಮ ಕೇಂದ್ರ ನೇತಾರರು ತಮ್ಮ ಜವಾಬ್ದಾರಿ ಅರ್ಥ ಮಾಡಿಕೊಂಡು ಸಂಯಮ ಕಳೆದುಕೊಳ್ಳದೆ ಕಾರ್ಯಕ್ರಮ ಬಿತ್ತರ ಮಾಡುವ ನಿಟ್ಟಿನಲ್ಲಿ ಒಂದಿಷ್ಟು ಕ್ರಮ ಕೈಗೊಳ್ಳುತ್ತಾರೆ ಎಂದು ನಂಬೋಣವೆ?

ಚಿತ್ರ ಕೃಪೆ: ಸಿಎನ್ಎನ್ ಐಬಿಎನ್.

ದುರಾಡಳಿತದ ಲಾಭ ಪಡೆದವರು

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ದುರಾಡಳಿತದ ಲಾಭ ಪಡೆದುಕೊಂಡವರ ಪೈಕಿ ಮಾಧ್ಯಮ ಸಂಸ್ಥೆಗಳೂ ಇವೆ ಎನ್ನುವುದು ಇದೀಗ ಬಯಲಾಗುತ್ತಿದೆ. ವಾರ್ತಾ ಇಲಾಖೆ ಅನುಸರಿಸಬೇಕಾದ ಕಾನೂನನ್ನು ಉಲ್ಲಂಘಿಸಿ ಹೊಸ ದಿಗಂತ ಎಂಬ ಆರ್ ಎಸ್ ಎಸ್ ಪತ್ರಿಕೆಗೆ ಸಾಕಷ್ಟು ಜಾಹೀರಾತು ನೀಡಿದೆ. ಕೇವಲ ಆರು ತಿಂಗಳಲ್ಲಿ ಒಂದು ಕೋಟಿ ಮೊತ್ತದಷ್ಟು ಜಾಹೀರಾತನ್ನು ಆ ಪತ್ರಿಕೆಗೆ ಸರಕಾರ ನೀಡಿದೆ.

ಅನೇಕರು ಗಮನಿಸಿರಬಹುದು ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬಂದ ನಂತರವಷ್ಟೇ ಹೊಸ ದಿಗಂತ ಹೊಸ ರೂಪ ಪಡೆಯಿತು. ಹೊಸಬರನ್ನು ಸೇರಿಸಿಕೊಂಡು, ಹೊಸ ಹೊಸ ಆವೃತ್ತಿಗಳನ್ನು ಆರಂಭಿಸಿತು. ಬಿಜೆಪಿ ಆಪ್ತ ವಲಯದಲ್ಲಿ ಇದು ‘ನಮ್ಮದೇ ಪತ್ರಿಕೆ’ ಎನ್ನುವಷ್ಟರ ಮಟ್ಟಿಗೆ ಪತ್ರಿಕೆ ಪ್ರಚಾರ ಪಡೆಯಿತು.

ಸರಕಾರ ಕಡಿಮೆ ದುಡ್ಡಿನಲ್ಲಿ ಈ ಪತ್ರಿಕೆಗೆ ಕೈಗಾರಿಕಾ ಶೆಡ್ ಗಳನ್ನು ಮಂಜೂರು ಮಾಡಿದ್ದೂ ಈಗ ಗೋಪ್ಯವಾಗಿ ಉಳಿದಿಲ್ಲ. ಬಹುಶಃ ಇದೇ ಕಾರಣಕ್ಕೆ ಹೊಸ ದಿಗಂತ ಯಡಿಯೂರಪ್ಪನವರ ಬಂಧನವನ್ನು ಮುಖ್ಯ ಸುದ್ದಿಯಾಗಿ ಪ್ರಕಟಿಸಲು ಹಿಂಜರಿದಿತ್ತು.

ತೆಹಲ್ಕಾ ಪತ್ರಿಕೆ ಈ ಬಗ್ಗೆ ಮತ್ತಷ್ಟು ವಿವರಗಳನ್ನೊಳಗೊಂಡ ವರದಿಯನ್ನು ಪ್ರಕಟಿಸಿದೆ. ಹೊಸ ದಿಗಂತದ ಪ್ರಮುಖ ಪತ್ರಕರ್ತರೊಬ್ಬರು ಅಂದಿನ ಮುಖ್ಯಮಂತ್ರಿಯಿಂದ ಮನೆ ಮಂಜೂರು ಮಾಡಿಸಿಕೊಂಡು ಅವರಿಂದಲೇ ಆ ಮನೆಗೆ ಹಣ ಕಟ್ಟಿಸಿದ್ದರು ಎಂದೂ ತೆಹಲ್ಕಾ ವರದಿ ಹೇಳುತ್ತದೆ. ನೀವೂ ಓದಿ.

ಭೂ ಸ್ವಾಧೀನ ವಿರೋಧಿ ಸಮಾವೇಶ

-ಅರುಣ್ ಜೋಳದಕೂಡ್ಲಿಗಿ

ಅಕ್ಟೋಬರ್ 17 ರಂದು ಗದಗಿನಲ್ಲಿ ರಾಜ್ಯಮಟ್ಟದ ಭೂಸ್ವಾಧೀನ ವಿರೋಧಿ ಸಮಾವೇಶ ನಡೆಯಿತು. ಇಂದು ಜಾತಿವಾದಿ,ಕೋಮುವಾದಿ ಬೆಂಬಲಿತ ಸಮಾವೇಶಗಳು ನಡೆವ ಹೊತ್ತಲ್ಲಿ ಇಂತಹದ್ದೊಂದು ಸಮಾವೇಶ ಸಾಂಸ್ಕೃತಿಕವಾಗಿ ಮಹತ್ವದ ಸಂಗತಿ. ಒಂದೆಡೆ ಭೂ ಕಬಳಿಕೆಯ ಆರೋಪ ಹೊತ್ತು ಆಳುವವರು ಜೈಲು ಸೇರಿದ್ದಾರೆ. ಕೆಲವರು ಸರದಿಯಲ್ಲಿದ್ದಾರೆ. ಇನ್ನೊಂದೆಡೆ ಹೋರಾಟ ಕೂಗು ಕೆಲಸಕ್ಕೆ ಬಾರದ್ದು ಎಂದು ಸಿನಿಕರಾದ ಜನ ಮೌನವಾಗಿದ್ದಾರೆ. ಮತ್ತೊಂದೆಡೆ ಜನಪರವಾದ ಪ್ರಾಮಾಣಿಕ ಕೆಲ ಮನಸ್ಸುಗಳು ಒಂದೆಡೆ ಸೇರಿ ಭೂ ಸ್ವಾದೀನವನ್ನು ವಿರೋಧಿಸುತ್ತಿದ್ದಾರೆ. ಇವು ಕರ್ನಾಟಕವನ್ನು ಅರ್ಥ ಮಾಡಿಕೊಳ್ಳಬಹುದಾದ ವೈರುಧ್ಯದ ಚಿತ್ರಗಳು.

ಪೋಸ್ಕೋದಂತಹ ದೈತ್ಯ ಕಂಪನಿ ಬಾಲ ಮುದುರಿಕೊಂಡು ಹಿಂದೆ ಸರಿವಂತೆ ಎಚ್ಚರಿಕೆ ನೀಡಿದ ನೆಲದಲ್ಲಿಯೇ ಈ ಸಮಾವೇಶ ನಡೆದದ್ದು ಅರ್ಥಪೂರ್ಣ. ಇದನ್ನು ಕರ್ನಾಟಕದಾದ್ಯಂತ ವಿಸ್ತರಿಸಬೇಕಿದೆ. ಪ್ರಭುತ್ವವನ್ನು ಹಾಡಿ ಹೊಗಳುವ ಸ್ವಾಮೀಜಿಗಳ ಪೈಕಿ, ಗದಗದ ತೋಂಟದ ಸಿದ್ದಲಿಂಗ ಸ್ವಾಮಿಗಳು ಭಿನ್ನವಾಗಿ ನಿಲ್ಲುತ್ತಾರೆ. ಸ್ವಾಮೀಜಿಗಳು ರೈತಪರವಾಗಿ ಪ್ರಭುತ್ವದ ಕಿವಿಹಿಂಡುವ ಗುಣ ಪಡೆದರೆ ಆಗಬಹುದಾದ ಪರಿಣಾಮಕ್ಕೆ ಇವರು ಸಾಕ್ಷಿಯಾಗಿದ್ದಾರೆ. ಅವರು ಮಾತನಾಡುತ್ತಾ ಹೊಲ ಕೆಲವರಿಗೆ ಸೇರಿದ್ದರೆ ಈ ನೆಲ ಎಲ್ಲರಿಗೂ ಸೇರಿದ್ದು. ಹಾಗಾಗಿ ನಾವು ನೆಲದ ಬಗ್ಗೆ ಮಾತನಾಡುತ್ತಿದ್ದೇವೆ, ನೆಲವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ ಎಂದು ಇಡೀ ಸಮಾವೇಶದ ಆಶಯವನ್ನು ತಾತ್ವಿಕವಾಗಿ ಮಂಡಿಸಿದರು.

ಈ ಸಮಾವೇಶವನ್ನು ಉದ್ಘಾಟನೆ ಮಾಡಿದ್ದು ಹಿರಿಯ ಸ್ವಂತಂತ್ರ್ಯ ಹೋರಾಟಗಾರರಾದ ಹೆಚ್.ಎಸ್. ದೊರೆಸ್ವಾಮಿಯವರು. ಅನ್ನಕೊಡುವ ರೈತರ ಭೂಮಿಯನ್ನು ಕಸಿಯುವುದು ಕೆಚ್ಚಲನ್ನೇ ಕೊಯ್ಯುವಂತಹ ಹೇಯ ಕೃತ್ಯ ಇದನ್ನು ತಡೆಯಬೇಕೆಂಬ ಆತಂಕ ವ್ಯಕ್ತಪಡಿಸಿ, ಸಮಾವೇಶದ ಘೋಷಣಾ ಪತ್ರವನ್ನು ಬಿಡುಗಡೆ ಮಾಡಿದರು. ಸಿದ್ದನಗೌಡ ಪಾಟೀಲರು ಜಾಗತೀಕರಣದಿಂದಾಗಿ ಭೂಕೇಂದ್ರೀಕರಣವಾಗುತ್ತಿದೆ, ಸರಕಾರದಿಂದ ಅಧಿಕೃತವಾಗಿ, ಖಾಸಗಿಯವರಿಂದ ಅನಧಿಕೃತವಾಗಿ ಭೂ ಒತ್ತುವರಿಗಳು ನಡೆಯುತ್ತಲೇ ಇವೆ. ಇಂತಹ ಒತ್ತುವರಿಗಳನ್ನು ಪ್ರಜ್ಞಾವಂತರೆಲ್ಲಾ ವಿರೋಧಿಸಬೇಕಿದೆ ಎಂದರು. ಮಾವಳ್ಳಿ ಶಂಕರ್, ಬಾಬಾಗೌಡ ಪಾಟೀಲ್, ಮಾರುತಿ ಮಾನ್ಪಡೆ, ಶೌಕತ್ ಆಲಿ ಆಲೂರು, ರುದ್ರಮುನಿ ಆರದಗೆರೆ ಮುಂತಾದವರು ಸಮಾವೇಶದ ಆಶಯಗಳನ್ನು ಬೇರೆ ಬೇರೆ ನೆಲೆಯಲ್ಲಿ ವಿವರಿಸಿದರು.

ರಹಮತ್ ತರೀಕರೆಯವರು ಜನಸಮುದಾಯ ಯಾವುದನ್ನು ವಿರೋಧಿಸಬೇಕೆಂದು ಸಮಾವೇಶ ಮಾಡುತ್ತಿದ್ದೇವೆಯೋ ಯಾವುದು ಬೇಕು ಎಂದು ಕೂಡ ಹಕ್ಕೋತ್ತಾಯದಂತೆ ಕೇಳಬೇಕಾಗಿದೆ, ಹಲವು ಚಳವಳಿಗಳ ಏಕೀಕರಣವಾಗಬೇಕಿದೆ ಎಂದರು. ಟಿ. ಆರ್. ಚಂದ್ರಶೇಖರ್ ಅವರು ಗದಗ ಜಿಲ್ಲೆಯ ಅಭಿವೃದ್ಧಿಯ ಸಾದ್ಯತೆಗಳ ಬಗ್ಗೆ ತುಂಬಾ ವಾಸ್ತವವಾಗಿ ಮಾತನಾಡಿದರು. ಕೇಂದ್ರದ ಭೂ ಸ್ವಾಧೀನ ಮಸೂದೆ ಮತ್ತು ರೈತರ ಹಿತಾಸಕ್ತಿ ಕುರಿತಂತೆ ಕೆ.ಪಿ. ಸುರೇಶ್ ಅವರು ವ್ಯಂಗ್ಯಬರಿತ ವಿಷಾಧವನ್ನು ವ್ಯಕ್ತಪಡಿಸಿದರು. ಕೃಷಿ ವಲಯ: ಜಾಗತಿಕ ಬಂಡವಾಳದ ಹರವಿನ ನೆಲೆಗಳು ಕುರಿತಂತೆ ಶಿವಸುಂದರ್ ಕಟುವಾದ ಸತ್ಯಗಳನ್ನು ಬಯಲಿಗೆಳೆದರು. ಜಿ. ರಾಮಕೃಷ್ಣ ಅವರು ಕನರ್ಾಟಕದ ಸದ್ಯದ ನಡೆಯ ಬಗ್ಗೆ ವಿಮಶರ್ಾತ್ಮಕವಾಗಿ ಚಚರ್ಿಸಿದರು. ಹೀಗೆ ಇಡೀ ಸಮಾವೇಶ ವರ್ತಮಾನ ಮತ್ತು ಭವಿಷ್ಯದಲ್ಲಿ ರೈತಸಮುದಾಯ ಎದುರಿಸಬೇಕಾದ ಬಿಕ್ಕಟ್ಟುಗಳು ಮತ್ತು ಅವುಗಳನ್ನು ಬಿಡಿಸಿಕೊಳ್ಳಲು ಇರಬಹುದಾದ ದಾರಿಗಳನ್ನು ಕುರಿತಂತೆ ಒಂದು ಗಂಭೀರ ಚರ್ಚೆ ಸಾದ್ಯವಾಯಿತು.

ಈ ಸಮಾವೇಶದಲ್ಲಿ ರೈತ ಸಮುದಾಯ, ರೈತಪರ ಜನ ಹೆಚ್ಚಾಗಿಯೇ ಸೇರಿದ್ದರು. ವೆಂಕಟೇಶಯ್ಯ, ಇಪ್ಟಾ, ಸಮುದಾಯ ತಂಡಗಳ ಹೋರಾಟದ ಹಾಡುಗಳು ಈ ಸಮಾವೇಶದ ಆಶಯವನ್ನು ವಿಸ್ತರಿಸುವಂತಹ ಶಕ್ತಿ ಪಡೆದಿದ್ದವು. ಮುತ್ತು ಹಾಳಕೇರಿ, ಹು.ಬಾ. ವಡ್ಡಟ್ಟಿ ಅವರಿಂದ ಪೋಸ್ಕೋ ಹೋರಾಟದ ಛಾಯಚಿತ್ರ ಮತ್ತು ಪತ್ರಿಕಾ ವರದಿಗಳ ಪ್ರದರ್ಶನ ಸಮಾವೇಶದ ಪರಿಣಾಮವನ್ನು ಹೆಚ್ಚಿಸುವಂತಿದ್ದವು. ಅಂತೆಯೇ ಭೀಮೇಶ ತಂಡದಿಂದ `ಭೂಮಿ ಕೊಡುವ ಮಾತಾಯಿತು’ ನಾಟಕ ಸದ್ಯದ ರೈತರ ಸ್ಥಿತಿಗೆ ಕನ್ನಡಿ ಹಿಡಿಯುವಂತಿತ್ತು.

ಈ ಸಮಾವೇಶ ಹಲವು ಸಂಘಟನೆಗಳ ಫಲ. ಹೀಗೆ ಒಂದು ಸಮಾನ ಉದ್ದೇಶ ಸಾಧನೆಗಾಗಿ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಂದು ಕೂಗಿಗೆ ತಮ್ಮ ದ್ವನಿ ಸೇರಿಸುವ ಅಗತ್ಯವಿದೆ. ಹಲವು ಸಂಘಟನೆಗಳ ಏಕೀಕರಣಕ್ಕೆ ಕಾರಣವಾದ ಗದಗದ ಭೂ ಸ್ವಾಧೀನ ವಿರೋಧಿ ಸಂಗ್ರಾಮ ಸಮಿತಿಯವರನ್ನು ಈ ಸಂದರ್ಭದಲ್ಲಿ ನೆನೆಯಬಹುದು. ಎಲ್ಲರನ್ನೂ ಒಂದೆಡೆ ಸೇರಿಸುವುದರಲ್ಲಿ ಬಸವರಾಜ ಸೂಳಿಬಾವಿ ಅವರ ಶ್ರಮ ಹೆಚ್ಚಿನದು. ಹೀಗೆ ಕರ್ನಾಟಕದಾದ್ಯಾಂತ ಈ ಸಮಾವೇಶವನ್ನು ವಿಸ್ತರಿಸುವ ಮತ್ತು ಆ ಮೂಲಕ ರೈತರಲ್ಲಿ ಒಂದು ಬಗೆಯ ಹೊಸ ಸಂಚಲನವನ್ನು ಉಂಟುಮಾಡುವ ಅಗತ್ಯವಿದೆ. ಇದಕ್ಕೆ ಆಯಾ ಭಾಗದ ಪ್ರಜ್ಞಾವಂತ ಜನ ಕೈ ಜೋಡಿಸಬೇಕಾಗಿದೆ. ಇದು ಸದ್ಯದ ಕರ್ನಾಟಕದಲ್ಲಿ ಆಗಲೇಬೇಕಾದ ಕೆಲಸಗಳಲ್ಲಿ ಪ್ರಮುಖವಾದುದು.

ಮಂಗಳೂರಲ್ಲಿ ಪುಣ್ಯವನಿತೆಯರ ಚಂಡಿಕಾಯಾಗ

– ಚಿದಂಬರ ಬೈಕಂಪಾಡಿ

ಸಾಮಾಜಿಕ ಅನಿಷ್ಠಗಳನ್ನು ಬುಡಸಹಿತ ಕಿತ್ತೊಗೆಯಬೇಕು ಎನ್ನುವ ಭಾಷಣ, ಘೋಷಣೆಗಳನ್ನು ಕೇಳುತ್ತೇವೆ, ಆದರೆ ಇಂಥವುಗಳ ಬುಡಕ್ಕೆ ಕೈ ಹಾಕಲು ಹೆದರುತ್ತೇವೆ. ಯಾಕೆಂದರೆ ಮತ್ತೆ ನಮ್ಮನ್ನು ಕಾಡುವುದು ಸಮಾಜ. ನಾವು ಇಂಥ ಸುಧಾರಣೆಗಳ ಜಾಡುಹಿಡಿದು ಹೋದರೆ ಸಮಾಜ ನಮ್ಮನ್ನು ಒಪ್ಪುತ್ತದೆಯೇ? ನಮ್ಮ ಹೆಂಡತಿ-ಮಕ್ಕಳು, ಬಂಧು-ಬಳಗ ಎಲ್ಲವೂ ನೆನಪಾಗುತ್ತದೆ. ಆದರೆ ಆಚರಣೆಗಳ ಹೆಸರಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಅನಾಚಾರ ನಮ್ಮನ್ನು ಕಾಡುವುದಿಲ್ಲ.

ಒಂದು ಕಾಲದಲ್ಲಿ ಅಸ್ತ್ವಿತ್ವಕ್ಕೆ ತಂದ ಆಚರಣೆಗಳನ್ನು ಕಾಲಾನುಕ್ರಮದಲ್ಲಿ ತಿದ್ದುಪಡಿಗಳೊಂದಿಗೆ ಆಚರಿಸಲು ನಮ್ಮ ಮನಸ್ಸುಗಳನ್ನು ಹದಗೊಳಿಸಿಕೊಳ್ಳುತ್ತೇವೆ. ಯಾಕೆಂದರೆ ಅವುಗಳಿಂದ ನಮಗೆ ಎಲ್ಲೋ ಒಂದುಕಡೆ ಸಮಸ್ಯೆ ಆಗುತ್ತಿದೆ ಎನ್ನುವ ಒಳಅರಿನಿನ ಕಾರಣಕ್ಕೆ. ಆದರೆ ನಾವು ಶತಮಾನಗಳ ಹಿಂದಿನ ಸಂದರ್ಭದಲ್ಲಿ ಹಿರಿಯರು ಮಾಡಿದಂಥ ಕೆಲವು ಸಂಪ್ರದಾಯ ಅಥವಾ ಆಚರಣೆಗಳನ್ನು ಪರಿಷ್ಕರಿಸದೆ ಅವುಗಳನ್ನು ಹಾಗೆಯೇ ಅಥವಾ ಹಿಂದಿಗಿಂತಲೂ ಹೆಚ್ಚು ಬದ್ಧತೆಯಿಂದ ಕಾಪಾಡಿಕೊಂಡು ಬರುತ್ತೇವೆ. ಯಾಕೆಂದರೆ ಅವುಗಳ ಬಗ್ಗೆ ಈಗಲೂ ಇರುವ ಬಲವಾದ ನಂಬಿಕೆಯಿಂದ.

ಪತಿಕಳೆದುಕೊಂಡ ವನಿತೆಯನ್ನು ನಾವು ಮನೆಯಲ್ಲಿ ಹೇಗೆ ನಡೆಸಿಕೊಳ್ಳುತ್ತೇವೆ? ಸಮಾಜ ಅಂಥವರ ಬಗೆ ಹೇಗೆ ಪ್ರತಿಕ್ರಿಯೆಸುತ್ತದೆ ಎನ್ನುವುದನ್ನು ಚೆನ್ನಾಗಿ ಬಲ್ಲೆವು. ಆದರೆ ಪತಿಕೊಂಡು ಆಕೆ ಅನುಭವಿಸುವ ಯಾತನೆಗಿಂತಲೂ ದಿನವೂ ಆಕೆ ಸಂಪ್ರದಾಯ, ಆಚರಣೆಗಳ ಹೆಸರಲ್ಲಿ ಅನುಭವಿಸುವ ಯಾತನೆ ಅಮಾನವೀಯವಾದುದು. ಯಾಕೆಂದರೆ ಆಕೆ ಹೂ ಮುಡಿಯುವಂತಿಲ್ಲ, ಬಳೆ ತೊಡುವಂತಿಲ್ಲ, ಹಣೆಗೆ ಕುಂಕುಮ ಧರಿಸುವಂತಿಲ್ಲ ಇತ್ಯಾದಿ.. ಇತ್ಯಾದಿ ಹಲವು ಸಲ್ಲದುಗಳದ್ದೇ ಕಾರುಬಾರು.

ಅತ್ಯಂತ ಸೂಕ್ಷ್ಮವಾಗಿ ಸಮಾಜ ಇಂಥ ವನಿತೆಯರನ್ನು, ಅವರ ಯಾತನೆ, ಕಣ್ಣೀರನ್ನು ಗಮನಿಸಿದರೆ ಏನಾದೀತು?. ಆಕಾಶವೇ ಧರೆಗಿಳಿದು ಅನಾಹುತವಾದೀತೇ?, ಅಥವಾ ಬರಗಾಲ, ಅನಾವೃಷ್ಟಿ-ಅತಿವೃಷ್ಟಿ, ಪ್ರಳಯ ಉಂಟಾದೀತೇ?.

ಇರಬಹುದೇನೋ ಗೊತ್ತಿಲ್ಲ. ಆದರೆ ಮಂಗಳೂರಲ್ಲಿ ಸಮಾಜ ಸುಧಾರಣೆಯ ನಿಟ್ಟಿನಲ್ಲಿ ಶತಮಾನಗಳ ಹಿಂದ ಬ್ರಹ್ಮ ಶ್ರೀ ನಾರಾಯಣಗುರುಗಳು ಸ್ಥಾಪಿಸಿದಂಥ ಕುದ್ರೋಳಿ ಗೋಕರ್ಣನಾಥನ ಸನ್ನಿಧಿಯಲ್ಲಿ ಪತಿಕಳೆದುಕೊಂಡ ವನಿತೆಯರ ಬದುಕಿನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಕಳೆದ ನವರಾತ್ರಿಯ ಸಂದರ್ಭದಲ್ಲಿ ಪತಿಕಳೆದುಕೊಂಡ ವನಿತೆಯರು ಬಳೆ ತೊಟ್ಟು, ಹೂಮುಡಿದು, ಕುಂಕುಮ ಧರಿಸಿ ಗೋಕರ್ಣನಾಥನ ರಥ ಎಳೆದಿದ್ದರು.

ಈ ಕಾರ್ಯಕ್ರಮದ ಕುರಿತು ಅನೇಕ ಬುದ್ಧಿಜೀವಿಗಳು, ಸಾಂಸ್ಕೃತಿಕ ಜಗತ್ತಿನ ಪ್ರಮುಖರು, ಅಕ್ಷರ ಸಂಸ್ಕೃತಿಯನ್ನು ಆವಾಹಿಸಿಕೊಂಡವರು, ಸಾಮಾನ್ಯರು ಹೀಗೆ ವಿಭಿನ್ನ ನೆಲೆಯವರು ತಮ್ಮ ತಮ್ಮ ವಾದಸರಣಿಯನ್ನು ಮಂಡಿಸಿ ಜಗತ್ತಿನ ಕಣ್ಣು ತೆರೆಸಿದರು. ಅದರ ಮುಂದುವರಿದ ಭಾಗಕ್ಕೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ನಾಂದಿಯಾಗಿದೆ.

ಸಾಮಾನ್ಯವಾಗಿ ಯಾಗ, ಪೂಜೆ ನಡೆಯುವಾಗ ಮನೆಯ ಯಜಮಾನ, ಮುತ್ತೈದೆಯರು ಮಾತ್ರ ಭಾಗವಹಿಸಬೇಕು. ಪತಿಕಳೆದುಕೊಂಡವರು ಯಾಗಕ್ಕೆ ಕುಳಿತುಕೊಳ್ಳುವಂತಿಲ್ಲ. ಬಾಗಿಲ ಮರೆಯಲ್ಲಿ ನಿಂತು ಕಣ್ತುಂಬಿಕೊಳ್ಳಬಹುದು, ಆದರೆ ಇದು ಯಾಗದಲ್ಲಿ ಭಾಗವಹಿಸಿದವರ ಕಣ್ಣಿಗೆ ಬೀಳಬಾರದು ಇತ್ಯಾದಿ…ಇತ್ಯಾದಿ ಕಟ್ಟುಪಾಡುಗಳು.

ಆದರೆ ಕುದ್ರೋಳಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ಚಂಡಿಕಾ ಯಾಗ ಆಯೋಜಿಸಲಾಗಿತ್ತು. ಪತಿಕಳೆದುಕೊಂಡವರಿಗಷ್ಟೇ ಯಾಗಕ್ಕೆ ಕುಳಿತುಕೊಳ್ಳುವ ಅವಕಾಶವಿತ್ತು. ಮುಡಿಯಲು ಹೂವು, ಧರಿಸಲು ಸೀರೆ, ಹಣೆಗಿಡಲು ಕುಂಕುಮವನ್ನು ಕ್ಷೇತ್ರದ ವತಿಯಿಂದ ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿಯವರು ಕೊಡಿಸಿದರು. ಪತಿ ಕಳೆದುಕೊಂಡ ಐನೂರಕ್ಕೂ ಹೆಚ್ಚು ಮಂದಿ ಸ್ವಪ್ರೇರಣೆಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು (ಲಾರಿ, ಕಾರು, ಜೀಪಿನಲ್ಲಿ ಕರೆದುತಂದವರಲ್ಲ ಖಂಡಿತಕ್ಕೂ)ಬಂದಿದ್ದರು.

ಯಾಗದ ಪೂಣರ್ಾಹುತಿ ಮುಗಿದಮೇಲೆ ಸುಮಂಗಲೆಯರಾದ ಮಾಲತಿ ಜನಾರ್ಧನ ಪೂಜಾರಿ, ಕಲ್ಪನಾ ಸಾಯಿರಾಂ,ಲಲಿತಾ ರಾಮಯ್ಯ, ಶಶಿಕಲಾ ಹರಿಕೃಷ್ಣ ಬಂಟ್ವಾಳ್ ಮತ್ತು ಪುಷ್ಪಲತಾ ಜಿ.ಸುವರ್ಣ ಅವರು ನೆರೆದ ಸಹಸ್ರಾರು ಮಂದಿಯ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ಹೀಗೆ-`ನಾವು ನಮ್ಮ ಪತಿಯ ನಿಧನದ ನಂತರವೂ ಕರಿಮಣಿ ಸರ ಧರಿಸುತ್ತೇವೆ, ಹೂಮುಡಿಯುತ್ತೇವೆ, ಬಳೆತೊಡುತ್ತೇವೆ’.ಈ ಕ್ಷಣ ಪತಿಕಳೆದುಕೊಂಡ ವನಿತೆಯರ ಕಣ್ಣಾಲಿಗಳು ತುಂಬಿಬಂದದ್ದಂತೂ ನಿಜ. ಆನಂತರ ಈ ವನಿತೆಯರು ಕೈಮುಗಿದು ಬೆಳ್ಳಿ ರಥವನ್ನು ದೇವಸ್ಥಾನದ ಸುತ್ತಲೂ ಎಳೆದು ಸಂತಸಪಟ್ಟರು.

ಇದಿಷ್ಟು ಕುದ್ರೋಳಿ ಕ್ಷೇತ್ರದಲ್ಲಿ ಕಂಡುಬಂದ ಸಂಗತಿಗಳು. ಹೌದು ಜನಾರ್ಧನ ಪೂಜಾರಿಯವರು ಸಾಲಮೇಳದ ಮೂಲಕ ಲಕ್ಷಾಂತರ ಮಂದಿಗೆ ಸಾಲಕೊಡಿಸಿ ಸಾಲಮೇಳದ ಪೂಜಾರಿಯೆನಿಸಿಕೊಂಡರು. ಅವರ ನಂತರ ಯಾರೂ ಹೀಗೆ ಸಾಲ ಮೇಳ ಮಾಡಲಿಲ್ಲ. ಹಾಗೆಂದು ಈಗ ಕುದ್ರೋಳಿ ಕ್ಷೇತ್ರದಲ್ಲಿ ಮಾತ್ರವಲ್ಲಾ ನಾಡಿನ ಯಾವುದೇ ಮೂಲೆಯಲ್ಲಿ ಮಠಮಂದಿರಗಳು ಮಾಡಬೇಕಾದ ಕೆಲಸವನ್ನು ಪೂಜಾರಿ ಮಾಡಿಸುತ್ತಿದ್ದಾರೆ, ಅವರೇ ಹೇಳಿದ ಮಾತು ಸಂತೃಪ್ತಿ ಪಡುತ್ತಿದ್ದೇನೆ. ಇದು ಇತರ ಕಡೆಗಳಿಗೂ ವಿಸ್ತರಣೆಯಾಗಬೇಕು.

ಹಾಗಾದರೆ ಇಂಥ ಸಾಧ್ಯತೆಗಳನ್ನು ಸಮಾಜ ಒಪ್ಪುತ್ತದೆಯಲ್ಲವೇ?. ಸಾಮಾನ್ಯವಾಗಿ ಮೈಲಿಗೆಯಾದರೆ ದೇವರು ಮುನಿಸಿಕೊಳ್ಳುತ್ತಾರೆ, ಮುನಿಯುತ್ತಾರೆ ಎನ್ನುವ ಬಲವಾದ ನಂಬಿಕೆಯಿರುವ ಭೂಮಿಯಲ್ಲಿದ್ದೇವೆ. ಪತಿಕಳೆದುಕೊಂಡಾಕೆ ಅಮಂಗಳೆ ಎನ್ನುವುದಾದರೆ ಅದು ಮೈಲಿಗೆ ಎಂದೇ ಅರ್ಥವಲ್ಲವೇ?, ಹಾಗಾದರೆ ಬೆಳ್ಳಿಯ ರಥ ದೇವಸ್ಥಾನದ ಸುತ್ತಲೂ ಸರಾಗವಾಗಿ ಚಲಿಸಿದ್ದನ್ನು ನೋಡಿದರೆ ಗೋಕರ್ಣನಾಥನೂ ಇಂಥ ಸುಧಾರಣೆಯನ್ನು ಒಪ್ಪಿದ್ದಾನೆ ಅಂದುಕೊಳ್ಳಬಹುದೇ? ಯಾಕೆಂದರೆ ಈಗಲೂ ಇರುವ ನಂಬಿಕೆ ರಥದ ಹಗ್ಗವನ್ನು ಇಂಥವರೇ ಮೊದಲು ಮುಟ್ಟಬೇಕು, ಅಂಥವರೇ ಮೊದಲು ಪ್ರಸಾದ ಸ್ವೀಕರಿಸಬೇಕು, ಇಂಥ ಸಮುದಾಯದವರು ರಥದ ಹಗ್ಗ ಮುಟ್ಟಿದರೆ ಮಾತ್ರ ರಥ ಮುಂದಕ್ಕೆ ಚಲಿಸುತ್ತದೆ ಇತ್ಯಾದಿ…ಇತ್ಯಾದಿ ನಂಬಿಕೆಗಳಿಯಲ್ಲಾ?

ಮನಸ್ಸು ಮೈಲಿಗೆಯಾಗಬಾರದು ಬಹುಷ: ಕುದ್ರೋಳಿ ಗೋಕರ್ಣನಾಥನಿಗೆ. ಆದ್ದರಿಂದಲೇ ಸುಸೂತ್ರವಾಗಿ ಚಂಡಿಕಾ ಯಾಗ ನಡೆದಿದೆ, ಅದೂ ಪತಿಕಳೆದುಕೊಂಡ
ವನಿತೆಯರಿಂದ. ಬೆಳ್ಳಿ ರಥ ಯಾವ ಆತಂಕವೂ ಇಲ್ಲದೆ ಚಲಿಸಿದೆ. ಅಮಂಗಳೆ ಪತಿಕಳೆದುಕೊಂಡವಳು ಅಂತಾದರೆ ಇದೆಲ್ಲಾ ಸಾಧ್ಯವಾಗುತ್ತಿತ್ತೇ ?.

ಏನೇ ಇರಲಿ ಪತಿಕಳೆದುಕೊಂಡ ವನಿತೆಯರನ್ನು ನೋಡುವ ದೃಷ್ಟಿಕೋನದಲ್ಲಿ ಬದಲಾವಣೆಯ ಅಗತ್ಯವಿದೆ ಅನ್ನಿಸುತ್ತಿದೆ. ಪತಿಕಳೆದುಕೊಂಡ ವನಿತೆಯರು ಅನುಭವಿಸುವ ಯಾತನೆಯ ಮೇಲೆ ಬೆಳಕು ಹರಿಯಬೇಕಾಗಿದೆ. ಸಿನಿಮಾ, ಟಿವಿ ಸೀರಿಯಲ್ಗಳು ತಮ್ಮ ಹೊಸ ನೆಲೆ ಕಂಡುಕೊಳ್ಳಲು ಅನುವಾಗುತ್ತಿದೆ ಅನ್ನಿಸುತ್ತಿದೆ.