Category Archives: ಅರುಣ್ ಜೋಳದಕೂಡ್ಲಿಗಿ

ಭೂಪಾಲ್ ದುರಂತದ ವಾಸ್ತವ ಮತ್ತು ವರ್ತಮಾನ

-ಅರುಣ್ ಜೋಳದಕೂಡ್ಲಿಗಿ

ಇಂದು ಭೂಪಾಲ್ ದುರಂತದ ದಿನ. ಈ ದುರಂತದ ಕಾರಣಕರ್ತರಿಗೆ 2010 ರಲ್ಲಿ ಬಂದ ನ್ಯಾಯಾಲಯದ ತೀರ್ಪು ಮತ್ತು ಅದರ ಹಿಂದಣ ಹುನ್ನಾರವನ್ನು ನಾವಿಂದು ನೆನೆಯಬೇಕಿದೆ. ಇದು ಅಮೇರಿಕಾ ಜಗತ್ತನ್ನು ತನ್ನ ತಾಳಕ್ಕೆ ತಕ್ಕಂತೆ ಆಡಿಸುವ ಆಟದ ಮುಖವಾಗಿಯೂ ಕಾಣುತ್ತದೆ.

ಜಗತ್ತು ಕಂಡ ಭೀಕರ ಭೂಪಾಲ್ ಕೈಗಾರಿಕಾ ದುರಂತ ಸಂಭವಿಸಿ ಇಲ್ಲಿಗೆ 28 ವರ್ಷಗಳು ಸಂಭವಿಸಿದವು. 1984 ಡಿಸೆಂಬರ್ 2-3 ರಲ್ಲಿ ನಡೆದ ಭೂಪಾಲ್ ಅನಿಲ ದುರಂತ ಅಂದು ಜಗತ್ತನ್ನೇ ತಲ್ಲಣಗೊಳಿಸಿತ್ತು. 25 ಸಾವಿರಕ್ಕೂ ಹೆಚ್ಚು ಜೀವಗಳು ಉಸಿರು ನಿಲ್ಲಿಸಿದ್ದವು. ಅದು ಎಲ್ಲರ ಉಸಿರು ಕಟ್ಟಿಸಿತ್ತು. ಈಗಲೂ ಈ ದುರಂತವನ್ನು ನೆನಪಿಸಿಕೊಂಡರೆ ಮಾನವೀಯತೆ ಇರುವ ಯಾರಿಗಾದರೂ ಉಸಿರು ಕಟ್ಟುತ್ತದೆ. ಇದರ ಪರಿಣಾಮವನ್ನು ಈಗ ಹುಟ್ಟುವ ಮಕ್ಕಳೂ ಸಹ ಅನುಭವಿಸುತ್ತಿದ್ದಾರೆ.

ಈ ದುರಂತಕ್ಕೆ ಸಂಬಂದಿಸಿದ ತೀರ್ಪು 26 ವರ್ಷಗಳ ನಂತರ ಒಂದು ವರ್ಷದ ಹಿಂದಷ್ಟೆ ಹೊರ ಬಿದ್ದಿತು. ಈ ತೀರ್ಪು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತು. ದುರಂತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಭಾರತ ಘಟಕದ ಮಾಜಿ ಅಧ್ಯಕ್ಷ ಕೇಶುಭ್ ಮಹಿಂದ್ರಾ ಅವರನ್ನು ಸೇರಿ ಎಂಟು ಮಂದಿ ಆರೋಪಿಗಳಿಗೆ ಸ್ಥಳೀಯ ನ್ಯಾಯಾಲಯ ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು.

ವೀರಪ್ಪ ಮೊಯಿಲಿ ಮೊದಲಾದ ಕಾನೂನು ತಜ್ಞರು ಈ ತೀರ್ಪನ್ನು ನ್ಯಾಯದ ಸಮಾಧಿ ಎಂದು ಟೀಕಿಸಿದ್ದರು. ಸಂತ್ರಸ್ಥರ ಕುಟುಂಬದವರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಆಕ್ರೋಶಭರಿತರಾಗಿ ನ್ಯಾಯಾಲಯಗಳ ಮುಂದೆ ಪ್ರತಿಭಟನೆ ನಡೆಸಿದರು. ಇದನ್ನು ಪ್ರಶ್ನಿಸಿ ಹೈಕೋರ್ಟಿಗೂ ಮೊರೆ ಹೋಗಿದ್ದಾರೆ. ಭೂಪಾಲ ಅನಿಲ ದುರಂತದ ಸಂತ್ರಸ್ತರು ನ್ಯಾಯಕ್ಕಾಗಿ ಈಗಲೂ ಕಾಯುತ್ತಿದ್ದಾರೆ. 2011 ಜೂನ್‌ನಲ್ಲಿ ಬಂದ ತೀರ್ಪಿನ ಹಿಂದೆ ಅದೆಷ್ಟೋ ಅಮೆರಿಕ ಪ್ರಾಯೋಜಿತ ಎನ್.ಜಿ.ಒ. ವರದಿಗಳ ಪರೋಕ್ಷ ಬೆಂಬಲವಿದೆ. ಅಂತಹ ಒಂದು ವರದಿಯು ಮಂಡನೆಯಾದ ಅನುಭವದ ಕೆಲವು ಟಿಪ್ಪಣಿಗಳಿವು.

2004 ರಲ್ಲಿ ಭೂಪಾಲ್ ಅನಿಲ ದುರಂತ ನಡೆದು 20 ವರ್ಷಗಳಾಗಿದ್ದವು. ಇದರ ನೆನಪಿಗಾಗಿ ಒಂದು ಎನ್.ಜಿ.ಒ. ಸತತ ಹತ್ತು ವರ್ಷಗಳ ಕಾಲ ಸಂಶೋಧನೆ ನಡೆಸಿ ಸಿದ್ದಪಡಿಸಿದ ಒಂದು ವರದಿಯನ್ನು 2005 ರಲ್ಲಿ ಬಿಡುಗಡೆ ಮಾಡಿತು. ಆ ಕಾರ್ಯಕ್ರಮಕ್ಕೆ ಕರ್ನಾಟಕದ ಎನ್.ಜಿ.ಒ.ಗಳ ಕೆಲವು ಸದಸ್ಯರು, ಕೆಲವು ಆಸಕ್ತರು ಭೂಪಾಲ್ ಗೆ ತೆರಳಿದ್ದರು. ನಾನಾಗ ಹಂಪಿ ವಿವಿಯಲ್ಲಿ ಎಂ.ಎ. ಓದುತ್ತಿದ್ದೆ. ಇದರಲ್ಲಿ ಮರಿಯಮ್ಮನಹಳ್ಳಿಯ ಕನ್ನಡ ಉಪನ್ಯಾಸಕ ಸೋಮೇಶ್, ಗೆಳೆಯ ಚಂದ್ರಪ್ಪ ಸೊಬಟಿ ಮತ್ತು ನನ್ನನ್ನು ಒಳಗೊಂಡಂತೆ ಮೂರು ಜನ ಭೂಪಾಲ್‌ಗೆ ತೆರಳಿದ್ದೆವು. ಹೈದರಾಬಾದ್ ಕರ್ನಾಟಕದ ಮಹಿಳೆಯರ ಅಭಿವೃದ್ದಿಗಾಗಿ ಕೆಲಸಮಾಡುತ್ತೇವೆ ಎಂದು ಹೇಳಿಕೊಳ್ಳುವ ಸಖಿ ಎನ್ನುವ ಎನ್.ಜಿ.ಒ.ದ ಸಂಯೋಜಕಿಯಾದ ಡಾ. ಭಾಗ್ಯಲಕ್ಷ್ಮಿಯವರು ನಮ್ಮನ್ನು ಕಳುಹಿಸಿಕೊಟ್ಟಿದ್ದರು. ನಾವು ಆ ಎನ್.ಜಿ.ಒ.ದಲ್ಲಿ ಕೆಲಸ ಮಾಡದಿದ್ದರೂ ಆಸಕ್ತರಾಗಿ ಭಾಗವಹಿಸಲು ಹೋಗಿದ್ದೆವು. ಅದಕ್ಕಿಂತ ಮುಖ್ಯವಾಗಿ ಉಚಿತವಾಗಿ  ಭೂಪಾಲ್‌ಗೆ ಹೋಗುವ ಅವಕಾಶವೊಂದು ಸಿಕ್ಕ ಸಂಭ್ರಮದಲ್ಲಿ ಹೋಗಿದ್ದೆವು ಎನ್ನುವುದೇ ಸರಿ.

ಇದೊಂದು ಅಂತರಾಷ್ಟ್ರೀಯ ಸೆಮಿನಾರ್. ಬೇರೆ ಬೇರೆ ದೇಶದಿಂದ ಅನೇಕ ಪರಿಸರ ತಜ್ಞರು, ವಕೀಲರು, ಡಾಕ್ಟರುಗಳು, ಕೆಲವು ಸ್ಥಳೀಯ ನಾಯಕರು, ಭಾರತದ ಬೇರೆ ಬೇರೆ ರಾಜ್ಯಗಳಿಂದ ಎನ್.ಜಿ.ಒ.ಗಳ ಪ್ರತಿನಿಧಿಗಳು ಭೂಪಾಲ್‌ಗೆ ಬಂದಿದ್ದರು. ಈ ಸೆಮಿನಾರ್‌ಗೆ ಧನ ಸಹಾಯ ಮಾಡಿದ್ದು ಅಮೆರಿಕಾ ದೇಶ. ಇಲ್ಲಿ ಭಾಗವಹಿಸಿದ ಹಲವು ತಜ್ಞರಲ್ಲಿ ಅಮೆರಿಕಾದವರೂ ಇದ್ದರು. ಯಾವ ದೇಶವು ಅನಿಲ ದುರಂತಕ್ಕೆ ಕಾರಣವಾಗಿತ್ತೋ ಅದೇ ದೇಶ ಈ ದುರಂತದ ಬಗ್ಗೆ ಅಧ್ಯಯನ ಮಾಡಲು ಅಪಾರ ಹಣ ವ್ಯಯ ಮಾಡಿತ್ತು. ಇದರ ಮರ್ಮ ಏನೆಂದು ನನಗಾಗ ಅರ್ಥವಾಗಿರಲಿಲ್ಲ.

ಈ ಸೆಮಿನಾರಿನಲ್ಲಿ ಅಳಿದುಳಿದ ಸಂತ್ರಸ್ಥರು, ದುರಂತದಲ್ಲಿ ಸಾವಿಗೀಡಾದವರ ಕುಟುಂಬದವರು ಮತ್ತು ಮುನ್ಸಿಪಾಲ್ ಕಾರ್ಪೋರೇಷನ್‌ನಲ್ಲಿ ವಾಸಿತ ಜನರು ಭಾಗವಸಿದ್ದರು. ಈ ಸೆಮಿನಾರ್ ಹಾಲ್‌ನ ಎದುರು ಐವತ್ತಕ್ಕೂ ಹೆಚ್ಚಿನ ಗಾಲಿ ಕುರ್ಚಿಗಳ ಸೈಕಲ್ ನಿಂತಿದ್ದವು. ಇವು ಭೂಪಾಲ್ ದುರಂತದ ಮೂಕ ಸಾಕ್ಷಿಗಳೇನೋ ಎನ್ನುವಂತಿತ್ತು. ಕಾರಣ ಅನಿಲ ದುರಂತದ ಪರಿಣಾಮವಾಗಿ ಅಂಗವಿಕಲರಾದವರ ತಳ್ಳು ಗಾಡಿಗಳವು. ಅಂತೆಯೇ ಅನೇಕ ಕುರುಡರೂ, ದೀರ್ಘಕಾಲೀನ ರೋಗ ಪೀಡಿತರಾದ ಜನರೂ ಆ ಸೆಮಿನಾರಿನಲ್ಲಿ ಕೂತು, ಇಂಗ್ಲೀಷಿನಲ್ಲಿ ಮಂಡನೆಯಾಗುತ್ತಿದ್ದ ಸಂಶೋಧನ ವರದಿಯನ್ನು ಅರ್ಥವಾಗದಿದ್ದರೂ ಸುಮ್ಮನೆ ಕೇಳುತ್ತಿದ್ದರು.

ಇದೊಂದು ವ್ಯವಸ್ಥೆಯ ವೈರುಧ್ಯದಂತೆ ಕಾಣುತ್ತಿತ್ತು. ನಂತರ ಈ ಭಾಷಣದ ಅನುವಾದವನ್ನು ರೇಡಿಯೋ ಅಲೆಗಳ ಮೂಲಕ ಪ್ರಸಾರ ಮಾಡಲಾಯಿತು. ಅದನ್ನು ಕೇಳಲು ಎಲ್ಲರಿಗೂ ಒಂದೊಂದು ಪುಟ್ಟ ರೇಡಿಯೋಗಳನ್ನು ಇಯರ್ ಫೋನ್‌ಗಳನ್ನು ವಿತರಿಸಲಾಯಿತು. ಮಂಡನೆಯಾಗುತ್ತಿರುವ ವಿಷಯಕ್ಕೂ ಆ ಅನುವಾದಕ್ಕೂ ಸಂಬಂಧವೇ ಇಲ್ಲ ಎನ್ನುವಂತಹ ಕೆಟ್ಟ ಅನುವಾದವನ್ನು ಜನರು ಕೇಳುತ್ತಾ ಕೂತರು. ಕೂತವರ ಗಮನವೆಲ್ಲಾ ಸೆಮಿನಾರಿನಲ್ಲಿ ಹಂಚಲಾಗುತ್ತಿದ್ದ ತಿಂಡಿ, ಟಿ, ಊಟದ ಕಡೆಗೇ ಇತ್ತು. ಕಾರಣ ದೈನಂದಿನ ಕಷ್ಟಗಳನ್ನು ಮರೆತು ಒಂದೆರಡು ದಿನ ಹೊಟ್ಟೆತುಂಬಾ ಒಳ್ಳೆಯ ಊಟ ಮಾಡಬಹುದು, ಒಂದಿಷ್ಟು ಹಣ ಸಿಗುತ್ತದೆಯೆಂಬ ಅನಿವಾರ್ಯತೆಯಿಂದ ಜನರು ಅಲ್ಲಿಗೆ ಬಂದಿದ್ದರು. ಆದರೆ ಆ ಎನ್.ಜಿ.ಒ. ಈ ವರದಿಯನ್ನು ಸಿದ್ದಪಡಿಸಲು ಅನಿಲ ದುರಂತದ ಸಂತ್ರಸ್ಥರೇ ಸಹಕಾರ ನೀಡಿದ್ದಾರೆಂದೂ, ಈ ವರದಿಯ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯವಿದೆಯೆಂದೂ ಹೇಳುವಲ್ಲಿ ಹೆಮ್ಮೆ ಪಡುತ್ತಿತ್ತು.

ಇಲ್ಲಿ ಮಂಡನೆಯಾದ ವರದಿಯು ಒಳಗೊಂಡ ವಿಷಯದ ಸಂಕ್ಷಿಪ್ತ ವಿವರ ಹೀಗಿದ್ದವು: ಇಡೀ ವರದಿಯು ಭೊಪಾಲ್ ಅನಿಲ ದುರಂತದ ನಂತರದ ಬೆಳವಣಿಗೆಯನ್ನು ಗಮನಹರಿಸಿತ್ತು. ಅಮೆರಿಕಾವು ಪರಿಹಾರವನ್ನು ನೀಡಿದ್ದು, ಭೂಪಾಲ್‌ನಲ್ಲಿ ಆ ಪರಿಹಾರ ನಿಧಿಯ ದುರ್ಬಳಕೆಯಾದದ್ದನ್ನು ಅಂಕಿ ಅಂಶಗಳ ಸಮೇತ ವಿವರಿಸಲಾಯಿತು. ಇಲ್ಲಿನ ಆರೋಗ್ಯ ಇಲಾಖೆಯ ಬೇಜವಬ್ದಾರಿ ನಡವಳಿಕೆಯಿಂದಾಗಿ ಜನರು ಈಗಲೂ ಅದರ ಪರಿಣಾಮವನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ಎತ್ತಿ ತೋರಿಸುತ್ತಿತ್ತು. ಈ ಅಪರಾಧವನ್ನು ಮಾಡಿದವರನ್ನು ಗುರುತಿಸಿ ಶಿಕ್ಷಿಸುವಂತೆಯೂ ಸೂಚಿಸಲಾಗಿತ್ತು. ಇದು ಮಧ್ಯಪ್ರದೇಶ ಸರಕಾರದ ವೈಫಲ್ಯವನ್ನು ಬಿಂಬಿಸುವಂತಿತ್ತು. ಆ ಕಾರಣವನ್ನು ಮುಂದು ಮಾಡಿ ಇಡೀ ದುರಂತಕ್ಕೆ ಕಾರಣವಾದ ಅಮೆರಿಕಾವನ್ನು ತಪ್ಪಿತಸ್ಥ ಭಾವನೆಯಿಂದ ದೂರ ಮಾಡುವ ಸೂಕ್ಷ್ಮಗಳು ಇದ್ದವು. ಇದೊಂದು ಆಕಸ್ಮಿಕವಾಗಿ ಘಟಿಸಿದ ಘಟನೆಯೆಂತಲೂ ಇದಕ್ಕಾಗಿ ಅಮೆರಿಕಾ ದೇಶವು ಸಾಕಷ್ಟು ಅನುಕಂಪವನ್ನು ವ್ಯಕ್ತಪಡಿಸಿದೆಯೆಂತಲೂ, ಅದಕ್ಕೆ ಪೂರಕವಾಗಿ ಸಾಕಷ್ಟು ಪರಿಹಾರವನ್ನು ನೀಡಿದೆಯೆಂತಲೂ ಈ ವರದಿಯಲ್ಲಿ ಬಿಂಬಿತವಾಗಿದ್ದವು. ಒಟ್ಟು ಭೂಪಾಲ್ ಅನಿಲ ದುಂರಂತದಲ್ಲಿ ಭಾರತದ್ದೇ ತಪ್ಪಿದೆ ಎನ್ನುವುದನ್ನು ಅಂಕಿ ಅಂಶಗಳ ಮೂಲಕ ಸಾಬೀತು ಪಡಿಸುವಂತಿತ್ತು. ಈ ತಿಳುವಳಿಕೆಯನ್ನು ಜನರಲ್ಲಿ ಬಿತ್ತಲು ಈ ಎನ್.ಜಿ.ಒ. ಹತ್ತು ವರ್ಷಗಳ ಕಾಲ ಈ ಭಾಗದಲ್ಲಿ ಕೆಲಸ ಮಾಡಿತ್ತು. ಅದು ಅಲ್ಲಿನ ಕೆಲ ಜನರಲ್ಲಿ ಬಲವಾಗಿ ಬೇರೂರಿಸುವಲ್ಲಿ ಸಫಲವೂ ಆಗಿತ್ತು. ಬಹುಶಃ ಅಂತಹ ವರದಿಗಳ ಬೆಂಬಲದಿಂದಾಗಿಯೇ ಭೂಪಾಲ್ ದುರಂತಕ್ಕೆ ಕಾರಣವಾದವರಿಗೆ ಶಿಕ್ಷೆಯ ಪ್ರಮಾಣ ಕಡಿಮೆಯಾಗಿರಲಿಕ್ಕೆ ಸಾದ್ಯವಿದೆ.

ಅನಿಲ ದುರಂತಕ್ಕೆ ಬಲಿಯಾದವರ ಪರವಾಗಿ ಸತ್ಯು ಎಂಬುವವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು. ಅವರು ವೃತ್ತಿಯಲ್ಲಿ ಎಂಜಿನಿಯರ್ ಆದರೂ ಸಮಾಜ ಸೇವೆಗೆ ತಮ್ಮನ್ನು ಒಪ್ಪಿಸಿಕೊಂಡವರಾಗಿದ್ದರು. ಅವರು ಈ ವರದಿಯನ್ನು ತಾತ್ವಿಕವಾಗಿ ವಿರೋಧಿಸಿದರು. ಈ ವರದಿಯು ಅನಿಲ ದುರಂತದ ಸಮಸ್ಯೆಯ ಗಂಭೀರತೆಯನ್ನು ಲಘುವಾಗಿಸುತ್ತದೆ, ಇದು ಮುಂದೆ ನ್ಯಾಯಾಲಯದ ತೀರ್ಪಿನ ವೇಳೆಯಲ್ಲಿ ಈ ವರದಿಯನ್ನು ಸಾಕ್ಷ್ಯ ಎಂದು ಪರಿಗಣಿಸಿದರೆ ಇದಕ್ಕೆ ಕಾರಣವಾದವರಿಗೆ ಶಿಕ್ಷೆಯ ಪ್ರಮಾಣ ಕಡಿಮೆಯಾಗುತ್ತದೆ ಎಂದು ನುಡಿದಿದ್ದರು. ಆದರೆ ಇಡೀ ಸೆಮಿನಾರಿನಲ್ಲಿ ಅವರ ಅಭಿಪ್ರಾಯವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಯಿತು. ಸೆಮಿನಾರಿಗಾಗಿ ಐವತ್ತು ಲಕ್ಷಕ್ಕೂ ಹೆಚ್ಚು ಖರ್ಚಾಗಿರಬಹುದು. ಏಕೆಂದರೆ ಸೆಮಿನಾರಿಗೆ ಬಂದವರಿಗೆ ರಾಜಾತಿಥ್ಯವನ್ನು ನೀಡಲಾಗಿತ್ತು. ಸೆಮಿನಾರ್ ಮುಗಿದ ನಂತರ ಅನಿಲ ದುರಂತವಾದ ಮುನ್ಸಿಪಾಲ್ ಕಾರ್ಪೋರೇಷನ್‌ನ ವಾರ್ಡಗಳ ಭಾಗಕ್ಕೆ ನಮ್ಮನ್ನು ಕರೆದೊಯ್ದಿದ್ದರು. ಅದು ಅತ್ಯಂತ ದಾರಿದ್ರ್ಯ ಬಡತನ ತಾಂಡವಾಡುತ್ತಿದ್ದ ಒಂದು ಸ್ಲಮ್‌ನಂತಿತ್ತು. ದೈಹಿಕ ಅಂಗವೈಕಲ್ಯದ ಲಕ್ಷಣಗಳು ಕಾಣುವ ಜನರೇ ಬಹುವಾಗಿ ಕಾಣಿಸಿಕೊಂಡರು.

ಅಲ್ಲಿನ ಮಕ್ಕಳೆಲ್ಲಾ ತಮ್ಮನ್ನು ನೋಡಲು ಬಂದವರ ಹತ್ತಿರ ಹಸಿದ ಮುಖಹೊತ್ತು ಬಂದರು. ಸೆಮಿನಾರ್ ಆಯೋಜಕರು ಅವರಿಗೆ ಬಿಸ್ಕತ್ತು ಮುಂತಾದ ತಿಂಡಿ ಪದಾರ್ಥಗಳನ್ನು ನೀಡಿದರು. ನಮಗೆ ಆ ಏರಿಯಾದಲ್ಲಿ ಸುತ್ತಾಡಿ ಜನರನ್ನು ಮಾತನಾಡಿಸಬೇಕೆಂಬ ಆಸೆ ಇದ್ದರೂ ಸೆಮಿನಾರ್ ಆಯೋಜಕರು ಅದಕ್ಕೆ ಅವಕಾಶ ಕೊಡಲಿಲ್ಲ. ಪ್ರವೇಶ ನಿಷಿದ್ಧವಾದ ಯೂನಿಯನ್ ಕಾರ್ಬೈಡ್ ಫ್ಯಾಕ್ಟರಿಯ ಕಾಂಪೊಂಡಿನೊಳಗೆ ಯಥೇಚ್ಚ ಕುರುಚಲು ಗಿಡಗಳು ಬೆಳೆದು ಸ್ಮಶಾನದಂತೆ ಗೋಚರಿಸುತ್ತಿತ್ತು. ಅನಿಲ ದುರಂತದ ನೆನಪನ್ನು ತರುವ ಸ್ಮಾರಕವೊಂದರ ಕಲಾಕೃತಿ ಮುಗಿಲ ಕಡೆ ಮುಖ ಮಾಡಿ ರೋಧಿಸುತ್ತಿತ್ತು. ಅತ್ಯಂತ ಯಶಸ್ವಿಯಾಗಿ ಸೆಮಿನಾರ್ ನಡೆದುದಕ್ಕೆ ರಾತ್ರಿ ಎನ್.ಜಿ.ಒ. ಸಂಯೋಜಕರುಗಳು ಪಾರ್ಟಿಯನ್ನು ಆಯೋಜಿಸಿದ್ದರು. ಕೆಲವರು ಕುಡಿದ ಮತ್ತಿನಲ್ಲಿ ಅನಿಲ ದುರಂತದಿಂದ ಮಡಿದವರನ್ನು ನೆನೆದು ಅಳುತ್ತಿರುವ ದೃಶ್ಯಗಳು ಮಸುಕು ಮಸುಕಾಗಿ ಕಾಣುತ್ತಿದ್ದವು. ಈಗ ಮಂಡನೆಯಾದ ನ್ಯಾಯಾಲಯದ ತೀರ್ಪಿನ ಹಿಂದೆ ಈ ವರದಿಯ ಪರೋಕ್ಷ ಪ್ರಭಾವ ಇರುವ ಸಾಧ್ಯತೆ ಇದೆ. ಆಗ ಸಂಸ್ಥೆಯ ಸಂಯೋಜಕರುಗಳು ಬಹುಶಃ ಈ ತೀರ್ಪನ್ನು ವಿಜಯದ ಸಂಕೇತವನ್ನಾಗಿ ಆಚರಿಸಿರಬಹುದೇನೋ?

ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿಯೂ ಕಾರ್ಯ ನಿರ್ವಹಿಸುತ್ತಿರುವ ಕೆಲವು ಎನ್.ಜಿ.ಒ. ಅಧ್ಯಯನಗಳ ಹಿನ್ನೆಲೆಯನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.

ದಲಿತ ಶೋಷಣೆಯ ಅಪಮಾನಕರ ಚಿತ್ರಗಳು

– ಅರುಣ್ ಜೋಳದಕೂಡ್ಲಿಗಿ

ರಾಜಕಾರಣದ ಸುದ್ದಿಯ ಗದ್ದಲದ ಕಾಲ್ತುಳಿತದಲ್ಲಿ ಕೆಲವು ದಲಿತ ಶೋಷಣೆಯ ಚಿತ್ರಗಳು ಮಸುಕಾಗುತ್ತವೆ. ಅವುಗಳು ಸ್ಥಳೀಯ ಸುದ್ದಿಯ ಕಾಲಮ್ಮಿನಲ್ಲಿ ಮುಚ್ಚಿಹೋಗುವ ಮೊದಲು, ಆ ಪುಟಗಳನ್ನು ತೆರೆದಿಡುವ ಅಗತ್ಯವಿದೆ. ಅಂತಹ ಮೂರು ಚಿತ್ರಗಳು ಹೀಗಿವೆ:

ಶೋಷಣೆ-1

ಹಾವೇರಿಯಿಂದ 8 ಕಿಲೋಮೀಟರ್ ದೂರದ ದೇವಿಹೊಸೂರು ಗ್ರಾಮದ ದಲಿತರಾದ ಗುಡ್ಡಪ್ಪ ಬಾಸೂರ, ಗಂಗವ್ವ ಕಾಳಿ ಅವರ ಕುಟುಂಬಕ್ಕೆ ಊರು ಬಹಿಷ್ಕಾರ ಹಾಕಿದೆ. ಕಾರಣ ಫೆಬ್ರವರಿಯಲ್ಲಿ ಗ್ರಾಮಪಂಚಾಯತಿ ಆಡಳಿತದಿಂದ ರಸ್ತೆ ನಿರ್ಮಾಣ ನಡೆಸಿತ್ತು. ಈ ಸಂದರ್ಭದಲ್ಲಿ ಗುಡ್ಡಪ್ಪ ಚಲವಾದಿ ಎರಡೂ ಬದಿಯಲ್ಲಿ ಸಮಾನವಾಗಿ ಭೂಮಿ ಪಡೆದು ರಸ್ತೆ ಮಾಡಿ ಎಂದು ಕೇಳಿಕೊಂಡಿದ್ದರು. ಇದಕ್ಕೆ ಊರಿನ ಸವರ್ಣೀಯರು ಕೋಪಗೊಂಡು ರಾತ್ರೋರಾತ್ರಿ ಗುಡ್ಡಪ್ಪನ ಮನೆ ಮುಂದಿನ ಹತ್ತಕ್ಕೂ ಹೆಚ್ಚಿನ ತೆಂಗು, ತೇಗ, ಚಿಕ್ಕು ಗಿಡಮರಗಳನ್ನು ಜೆ.ಸಿ .ಬಿ. ಯಿಂದ ಕಿತ್ತಿದ್ದಾರೆ. ಇದನ್ನು ವಿರೋಧಿಸಿದ ಗುದ್ಲೆಪ್ಪನ ಮೇಲೆ ಹಲ್ಲೆ ನಡೆಸಿದ್ದಾರೆ. ಅದೀಗ ತಾರಕ್ಕೇರಿದೆ.

ಗುದ್ಲೆಪ್ಪನ ಈಗಿರುವ ಮನೆಯ ಜಾಗದಲ್ಲಿ ಮನೆಯೇ ಇಲ್ಲ ಎಂದು ಗ್ರಾಮಪಂಚಾಯ್ತಿ ನೋಟೀಸ್ ನೀಡಿದೆ. ಮನೆಗೆ ನೀರಿನ ಸಂಪರ್ಕವನ್ನು ನಿಲ್ಲಿಸಲಾಗಿದೆ. ಸತತ ಮೂರು ತಿಂಗಳು ನೀರಿಲ್ಲದಂತೆ ನೋಡಿಕೊಳ್ಳಲಾಗಿದೆ. ಕ್ಷೌರ ಮಾಡುವಂತಿಲ್ಲ, ಕೂಲಿಗೆ ಕರೆಯುವಂತಿಲ್ಲ ಮುಂತಾಗಿ ಊರವರಿಗೆ ತಾಕೀತು ಹಾಕಿದ್ದಾರೆ. ಈ ಬಗ್ಗೆ ಕೇಸ್ ದಾಖಲಿಸಲು ಪಿ.ಎಸ್.ಐ ಸಹಕರಿಸಿಲ್ಲ, ಬದಲಾಗಿ ಇವರನ್ನೆ ಬೆದರಿಸಿದ್ದಾಗಿ ಪಕ್ಕೀರವ್ವ ಅಳುಕಿನಿಂದಲೇ ಹೇಳಿದರು. ಇದು ಮಾದ್ಯಮಗಳಲ್ಲಿ ಸುದ್ದಿಯಾದ ನಂತರ ಎ.ಸಿ, ಡಿ.ಸಿ ಭೇಟಿ ನೀಡಿ ಪರಿಸ್ಥಿತಿಯನ್ನು ಸದ್ಯಕ್ಕೆ ಸುಧಾರಿಸಿದ್ದಾರೆ.

ಆದರೂ ಮುಸುಕಿನ ಗುದ್ದಾಟ ಮುಂದುವರಿದಿದೆ. ಬೈಗುಳ ನಿಂದನೆ ಇನ್ನೂ ನಡೆದಿದೆ, ಸರ್ಕಾರದೋರು ಎಷ್ಟು ದಿನ ನಿಮಿಗೆ ರಕ್ಷಣಿ ಕೋಡ್ತಾರ ನೋಡೋಣು ಎನ್ನುವಂತಹ ಬೆದರಿಕೆಯ ಮಾತುಗಳು ನಿಂತಿಲ್ಲ. ’ಬಾಳ ಕಷ್ಟ ಐತಿ ಸಾರ್ ಬದುಕೋದು’ ಎಂದು ಗುದ್ಲೆಪ್ಪ ಆತಂಕದಿಂದ ನನ್ನೊಂದಿಗೆ ಮಾತನಾಡಿದರು. ಅವರ ಕುಟುಂಬ ಈಗ ಭಯಭೀತವಾಗಿ ಅಲ್ಲಿ ಜೀವನ ನಡೆಸಿದೆ.

ಶೋಷಣೆ-2

ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಬೈರಮಡ್ಡಿಯ ದಲಿತರಿಗೆ ಅಲ್ಲಿನ ಬಹುಸಂಖ್ಯಾತ ಸವರ್ಣೀಯರು ಬಹಿಷ್ಕಾರ ಹಾಕಿದ್ದಾರೆ. ದಲಿತರೊಂದಿಗೆ ಮಾತನಾಡುವಂತಿಲ್ಲ, ಕೂಲಿ ಕೆಲಸಕ್ಕೆ ಕರೆಯುವಂತಿಲ್ಲ, ಕಿರಾಣಿ ಅಂಗಡಿಯವರು ದಲಿತರೊಂದಿಗೆ ವ್ಯವಹರಿಸುವಂತಿಲ್ಲ, ಜಿನ್ನಿನಲ್ಲಿ ಕಾಳನ್ನು ಹಿಟ್ಟು ಮಾಡುವಂತಿಲ್ಲ, ಆಟೋದವರು ಹತ್ತಿಸಿಕೊಳ್ಳುವಂತಿಲ್ಲ ಎನ್ನುವ ವಿಧಿಯಿದೆ. ಇದನ್ನು ಮೀರಿದವರಿಗೆ 5000 ದಂಡ ವಿಧಿಸುವ ಬೆದರಿಕೆ ಇದೆ.

ತಿಂಗಳ ಹಿಂದೆ ಎರಡು ಕೋಮಿನ ಯುವಕರ ಮದ್ಯೆ ಜಗಳ ನಡೆದು, ದಲಿತ ಯುವಕನ ಕೈ ಮುರಿದಿತ್ತು. ಆ ಹೊತ್ತಿಗೆ ಬಹುಸಂಖ್ಯಾತ ಕೋಮಿನವರು ದೂರು ದಾಖಲಾಗದಂತೆ ಪ್ರಭಾವ ಬೀರಿದ್ದರು. ಹಾಗಾಗಿ ಎರಡು ಕೋಮಿನ ಮುಖಂಡರ ನಡುವೆ ಘರ್ಷಣೆ ಏರ್ಪಟ್ಟಿತ್ತು. ಹೀಗಿರುವಾಗ, ಗ್ರಾಮದ ಯಲ್ಲಮ್ಮ ದೇವಿ ಜಾತ್ರೆಯಲ್ಲಿ ಅಡ್ಲಿಗಿ ತುಂಬಲು ಸವರ್ಣೀಯರು ದಲಿತರನ್ನು ಕರೆದಿದ್ದಾರೆ. ಆದರೆ ದಲಿತರು ನಾವು ಇನ್ನುಮುಂದೆ ಅಡ್ಲಗಿ ತುಂಬಲು ಬರುವುದಿಲ್ಲ ಎಂದಿದ್ದಾರೆ. ಈ ಕಾರಣಕ್ಕೆ ಬಹಿಷ್ಕಾರ ಹಾಕಲಾಗಿದೆ.

ಬೈರಮಡ್ಡಿಯ ದಲಿತ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿದಾಗ ಈಗಲೂ ಬಹಿಷ್ಕಾರ ಮುಂದುವರೆದಿರುವ ಬಗ್ಗೆ ತಿಳಿಸಿದರು. ಡಿ.ವೈ.ಎಸ್.ಪಿ ಭೇಟಿ ನೀಡಿದ್ದು ಬಿಟ್ಟರೆ, ಜಿಲ್ಲಾಧಿಕಾರಿಗಳಾಗಲಿ, ತಹಶಿಲ್ದಾರರಾಗಲಿ ಊರಿಗೆ ಭೇಟಿ ನೀಡಿಲ್ಲ. ಈಗ ಪೋಲಿಸಿನವರ ಕಾವಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರ ಮೇಲೆ ಕೇಸಿದ್ದರೂ ಪೊಲೀಸ್ ಇಲಾಖೆ ಈತನಕ ಯಾವುದೇ ಕ್ರಮ ಜರುಗಿಸಿಲ್ಲವೆಂದು ತಿಳಿಯಿತು.

ಶೋಷಣೆ-3

ಜೀತ ಮುಕ್ತ ಕುಟುಂಬ ಪುನಃ ಜೀತಕ್ಕಿರುವ ಘಟನೆ ಗುಡಿಬಂಡೆ ತಾಲೂಕು ತಿರುಮಣಿ ಗ್ರಾಮ ಪಂಚಾಯತಿಗೆ ಸೇರಿದ ಬೋಗೆನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಕದಿರಪ್ಪ ಕುಟುಂಬದವರು ಕಳೆದ ವರ್ಷ ಚಿಕ್ಕಬಳ್ಳಾಪುರ ತಾಲೂಕು ಹೊಸಹುಡ್ಯ ಗ್ರಾಮದ ಸ್ಥಿತಿವಂತರೊಬ್ಬರಿಂದ 20 ಸಾವಿರ ಸಾಲ ಮಾಡಿದ್ದರು. ಅದರ ಬಡ್ಡಿ ತೀರಿಸಲು ಕುಟುಂಬದ ಒಂಬತ್ತು ಜನ ಜೀತದಾಳಾಗಿ ಆ ಮನೆಯಲ್ಲಿ ದುಡಿಯುತ್ತಿದ್ದರು. ಇದನ್ನು ಗುರುತಿಸಿ ಜೀತ ವಿಮುಕ್ತ ಕರ್ನಾಟಕ ಸಂಘಟನೆ ಮತ್ತು ಎ.ಸಿ ಅವರು ಈ ಕುಟುಂಬವನ್ನು ಜೀತ ಮುಕ್ತಗೊಳಿಸಿ ಒಂದು ಸಾವಿರ ಪರಿಹಾರ ಧನ ನೀಡಿದ್ದರು.

ಆನಂತರ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತಿ, ಜಿಲ್ಲಾ ಆಡಳಿತ ಈ ಜೀತ ಮುಕ್ತರಿಗೆ ಪುನರ್ ವಸತಿ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದ ಕಾರಣ ಆರು ತಿಂಗಳಿನಿಂದ ಗ್ರಾಮ ತೊರೆದು ಮತ್ತೆ ಜೀತದಾಳುಗಳಾಗಿ ಈ ಕುಟುಂಬ ಜೀವನ ನಡೆಸುತ್ತಿದೆ. ಇವರು ಮತ್ತೆ ಜೀತಪದ್ದತಿಗೆ ಮರಳಲು ಮುಖ್ಯವಾಗಿ ತಾಲೂಕು, ಜಿಲ್ಲಾಡಳಿತದ ನಿರ್ಲಕ್ಷವೇ ಕಾರಣವಾಗಿದೆ. ಈ ಭಾಗದ ಜೀ.ವಿ.ಕ ಸಂಘಟನೆಯ ಬೀಚಗಾನಹಳ್ಳಿಯ ನಾರಾಯಣಸ್ವಾಮಿ ಅವರನ್ನು ಭೇಟಿ ಮಾಡಿ ಮಾತನಾಡಿದಾಗ ಗುಡಿಬಂಡೆ, ಬಾಗೆಪಲ್ಲಿ ಒಳಗೊಂಡಂತೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯಲ್ಲಿ ಈಗಲೂ ಜೀತ ಪದ್ದತಿ ಇರುವ ಬಗ್ಗೆ ಮಾಹಿತಿ ನೀಡಿದರು. ಇದನ್ನು ಕೇಳಿ ಆತಂಕವಾಯಿತು.

ಇದೇ ಹೊತ್ತಿಗೆ ಸುದ್ದಿಯಾಗದ ಹಲವು ದಲಿತ ಶೋಷಣೆಯ ಘಟನೆಗಳು ನಡೆದಿರಬಹುದು. ಆದರೆ ಮೇಲಿನವು ಮಾದ್ಯಮಗಳಲ್ಲಿ ಸುದ್ದಿಯಾದಂತವು. ಸುದ್ದಿಯಾದರೂ ದಲಿತರಿಗೆ ನ್ಯಾಯ ಸಿಗದೆ ಭಯದ ವಾತಾವರಣ ಮುಂದುವರಿದಿದೆ. ಇದನ್ನು ನೋಡಿದರೆ ದಲಿತ ಶೋಷಣೆಯ ಸ್ವರೂಪದ ಅರಿವಾಗುತ್ತದೆ. ಮುಖ್ಯವಾಗಿ ಊರಿನ ಬಹುಸಂಖ್ಯಾತರು ಅಲ್ಲಿನ ಪೊಲೀಸ್ ಇಲಾಖೆಯ ಮೇಲೆ ಪ್ರಭಾವ ಬೀರಿ ದಲಿತರ ಕೇಸು ದಾಖಲಾಗದಂತೆ ನೋಡಿಕೊಳ್ಳುತ್ತಿದ್ದಾರೆ.

ನಗರಕ್ಕೆ ಸಂಪರ್ಕ ಕಲ್ಪಿಸುವ ಟೆಂಪೋಗಳಲ್ಲಿ ದಲಿತರನ್ನು ಹತ್ತಿಸಿಕೊಳ್ಳದೆ ತಾತ್ಕಾಲಿಕವಾಗಿ ನಗರದ ಸಂಪರ್ಕವನ್ನೂ ತಪ್ಪಿಸಲಾಗುತ್ತಿದೆ. ಕುಡಿವ ನೀರನ್ನು ನಿಷೇದಿಸಲಾಗುತ್ತಿದೆ. ಸ್ಥಳೀಯ ಗ್ರಾಮ ಪಂಚಾಯತಿಯಲ್ಲಿಯೂ ದಲಿತರ ಹತ್ತಿಕ್ಕುವ ರಾಜಕಾರಣ ನಡೆಯುತ್ತಿದೆ. ಇವುಗಳೆಲ್ಲಾ ನಿರಂತರವಾಗಿ ನಡೆಯುತ್ತಲೇ ಇವೆ.

***

ಈ ಮೇಲಿನ ಘಟನೆಗಳಿಗೆ ಸಂಬಂಧಿಸಿದ ರಾಜ್ಯಮಟ್ಟದ ಅಧಿಕಾರಿ ವರ್ಗ ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರು ದಲಿತರ ಕೇಸುಗಳು ದಾಖಲು ಮಾಡಿಕೊಳ್ಳವ ಮತ್ತು ಮಾಡಿಕೊಳ್ಳದಿರುವ ಬಗ್ಗೆ ಕಠಿಣ ಕ್ರಮಗಳನ್ನು ಜರುಗಿಸುವ ಅಗತ್ಯವಿದೆ. ದಲಿತ, ದಲಿತಪರ ಸಂಘಟನೆಗಳು ಈ ಘಟನೆಗಳ ವಿರುದ್ಧ ರಾಜ್ಯವ್ಯಾಪಿ ಧ್ವನಿ ಎತ್ತಬೇಕಾಗಿದೆ.

ಕಾರ್ಮಿಕರ ದ್ವನಿಯಾಗಬಲ್ಲ “ಲೇಬರ್ ಲೈನ್” ಪತ್ರಿಕೆ

-ಅರುಣ್ ಜೋಳದಕೂಡ್ಲಿಗಿ

ಈಚೆಗೆ ಕಾರ್ಮಿಕ ಪರ ಚಟುವಟಿಕೆಗಳು ಮುಖ್ಯವೆನ್ನಿಸುವಂತೆ ಕಾಣುತ್ತಿಲ್ಲ. ಕಾರಣ ಕಾರ್ಮಿಕರ ಸಮಸ್ಯೆಗಳು ಬಗೆಹರಿದು ಸುಖಿಗಳಾಗಿದ್ದಾರೆಂದಲ್ಲ, ಬದಲಿಗೆ ಕಾರ್ಮಿಕರು ದೊಡ್ಡ ದ್ವನಿ ಎತ್ತದಂತೆ ವ್ಯವಸ್ಥೆ ಕಟ್ಟಿಹಾಕಿದೆಯಷ್ಟೆ. ಈ ಮಧ್ಯೆಯೇ ಕಾರ್ಮಿಕರ ಪರ ಕಾಳಜಿ ಇಟ್ಟುಕೊಂಡು ಹೋರಾಟ, ಪ್ರತಿಭಟನೆಗಳನ್ನು ಸದ್ದಿಲ್ಲದೆ ಮಾಡುವ ಕೆಲವಾದರೂ ಪ್ರಾಮಾಣಿಕರು  ನಮ್ಮ ನಡುವೆ ಇದ್ದಾರೆ. ಅಂತಹ ಕೆಲವರ ಪ್ರಯತ್ನವೇ “ಲೇಬರ್ ಲೈನ್” ಎನ್ನುವ ಪತ್ರಿಕೆ.

ಜಾತಿಗೊಂದು ಜಾತಿವಾದಿ ಪತ್ರಿಕೆಗಳು ಹುಟ್ಟುತ್ತಿರುವ ಈ ಕಾಲದಲ್ಲಿ ಜಾತಿಯಾಚೆ ದುಡಿವ ವರ್ಗವನ್ನು ಆಧರಿಸಿ ಪತ್ರಿಕೆ ಮಾಡಿರುವುದು ಆಶಾದಾಯಕ ಬೆಳವಣಿಗೆ. ಹಿರಿಯ ನ್ಯಾಯವಾದಿಗಳಾದ ಮುರುಳೀಧರ್ ಅವರ ಗೌರವ ಸಂಪಾದಕತ್ವದಲ್ಲಿ, ಎ.ಆರ್.ಎಂ. ಇಸ್ಮಾಯಿಲ್ ಅವರ ಪ್ರಧಾನ ಸಂಪಾದಕತ್ವದಲ್ಲಿ ಪತ್ರಿಕೆ ಸಿದ್ದವಾಗುತ್ತಿದೆ. ಬಿ.ಪೀರ್‍‌ಭಾಷಾ, ಜಿ.ಎಂ.ಗುರುಬಸವರಾಜ, ಪರುಶುರಾಮ ಕಲಾಲ್, ಮತ್ತೀಹಳ್ಳಿ ಬಸವರಾಜ್ ರ ಸಂಪಾದಕ ಮಂಡಳಿ ಈ ಪತ್ರಿಕೆಯ ಬೆನ್ನಿಗಿದೆ.

ಪ್ರತೀ ಸಂಚಿಕೆಗೆ ಕಾರ್ಮಿಕರ ಒಂದು ವರ್ಗವನ್ನು ಆಧರಿಸಿ ರೂಪಿಸುವ ಯೋಜನೆ ಇದೆ. ಅಕ್ಟೋಬರ್ ಮೊದಲ ಸಂಚಿಕೆಯನ್ನು ಕಟ್ಟಡ ಕಾರ್ಮಿಕರನ್ನು ಆಧರಿಸಿ ಸಿದ್ದಗೊಳಿಸಲಾಗಿದೆ. ಇಲ್ಲಿ ಕಾರ್ಮಿಕರಿಗೆ ಕಾನೂನಿನ ಅರಿವು, ಕಾರ್ಮಿಕ ಹೋರಾಟಗಾರರ ಮಾತುಕತೆ, ಕಾರ್ಮಿಕ ಜಾಗೃತಿಯ ವೈಚಾರಿಕ ಬರಹಗಳನ್ನು ಸದ್ಯ ಈ ಪತ್ರಿಕೆ ಒಳಗೊಂಡಿದೆ.

ಇದು ಬಳ್ಳಾರಿಯ ಲೇಬರ್ ರಿಸೋರ್ಸ್ ಸೆಂಟರ್ ನಿಂದ ಪ್ರಕಟವಾಗುತ್ತಿದೆ. ಈ ಪತ್ರಿಕೆ ಇನ್ನಷ್ಟು ವ್ಯಾಪಕತೆಯನ್ನು ಹೆಚ್ಚಿಸಿಕೊಂಡು, ಶ್ರಮಿಕ ಲೋಕದ ಸಂಗತಿಗಳನ್ನು, ಕಾರ್ಮಿಕರ ಆತ್ಮಕಥಾನಕದ ಭಾಗಗಳನ್ನು ಒಳಗೊಳ್ಳಬೇಕಿದೆ. ಇದು ಕೇವಲ ಕಾರ್ಮಿಕ ವರ್ಗದ ಕೂಗು ಮಾತ್ರವಾಗದೆ, ಶಕ್ತಿಯಾಗುವಂತೆ ಇದನ್ನು ರೂಪಿಸಲು ಅವಕಾಶಗಳಿವೆ. ಅಂತಹ ಸಾದ್ಯತೆಯೆಡೆಗೆ ಲೇಬರ್ ಲೈನ್ ಸಾಗಲೆಂದು ಹಾರೈಸೋಣ.

ಆಸಕ್ತರು,
ಲೇಬರ್ ಲೈನ್ ಕನ್ನಡ ಮಾಸಿಕ, ಮೇಲ್ಮಹಡಿ, ಸಪ್ತಗಿರಿ ಕಾಂಪ್ಲೆಕ್ಸ್, ಕೆ.ಸಿ.ರಸ್ತೆ, ಬಳ್ಳಾರಿ-583101, ದೂರವಾಣಿ: 08392-271090, labourlinekannada@gmail.com
ವಿಳಾಸಕ್ಕೆ ಸಂಪರ್ಕಿಸಬಹುದು.

ಭೂ ಸ್ವಾಧೀನ ವಿರೋಧಿ ಸಮಾವೇಶ

-ಅರುಣ್ ಜೋಳದಕೂಡ್ಲಿಗಿ

ಅಕ್ಟೋಬರ್ 17 ರಂದು ಗದಗಿನಲ್ಲಿ ರಾಜ್ಯಮಟ್ಟದ ಭೂಸ್ವಾಧೀನ ವಿರೋಧಿ ಸಮಾವೇಶ ನಡೆಯಿತು. ಇಂದು ಜಾತಿವಾದಿ,ಕೋಮುವಾದಿ ಬೆಂಬಲಿತ ಸಮಾವೇಶಗಳು ನಡೆವ ಹೊತ್ತಲ್ಲಿ ಇಂತಹದ್ದೊಂದು ಸಮಾವೇಶ ಸಾಂಸ್ಕೃತಿಕವಾಗಿ ಮಹತ್ವದ ಸಂಗತಿ. ಒಂದೆಡೆ ಭೂ ಕಬಳಿಕೆಯ ಆರೋಪ ಹೊತ್ತು ಆಳುವವರು ಜೈಲು ಸೇರಿದ್ದಾರೆ. ಕೆಲವರು ಸರದಿಯಲ್ಲಿದ್ದಾರೆ. ಇನ್ನೊಂದೆಡೆ ಹೋರಾಟ ಕೂಗು ಕೆಲಸಕ್ಕೆ ಬಾರದ್ದು ಎಂದು ಸಿನಿಕರಾದ ಜನ ಮೌನವಾಗಿದ್ದಾರೆ. ಮತ್ತೊಂದೆಡೆ ಜನಪರವಾದ ಪ್ರಾಮಾಣಿಕ ಕೆಲ ಮನಸ್ಸುಗಳು ಒಂದೆಡೆ ಸೇರಿ ಭೂ ಸ್ವಾದೀನವನ್ನು ವಿರೋಧಿಸುತ್ತಿದ್ದಾರೆ. ಇವು ಕರ್ನಾಟಕವನ್ನು ಅರ್ಥ ಮಾಡಿಕೊಳ್ಳಬಹುದಾದ ವೈರುಧ್ಯದ ಚಿತ್ರಗಳು.

ಪೋಸ್ಕೋದಂತಹ ದೈತ್ಯ ಕಂಪನಿ ಬಾಲ ಮುದುರಿಕೊಂಡು ಹಿಂದೆ ಸರಿವಂತೆ ಎಚ್ಚರಿಕೆ ನೀಡಿದ ನೆಲದಲ್ಲಿಯೇ ಈ ಸಮಾವೇಶ ನಡೆದದ್ದು ಅರ್ಥಪೂರ್ಣ. ಇದನ್ನು ಕರ್ನಾಟಕದಾದ್ಯಂತ ವಿಸ್ತರಿಸಬೇಕಿದೆ. ಪ್ರಭುತ್ವವನ್ನು ಹಾಡಿ ಹೊಗಳುವ ಸ್ವಾಮೀಜಿಗಳ ಪೈಕಿ, ಗದಗದ ತೋಂಟದ ಸಿದ್ದಲಿಂಗ ಸ್ವಾಮಿಗಳು ಭಿನ್ನವಾಗಿ ನಿಲ್ಲುತ್ತಾರೆ. ಸ್ವಾಮೀಜಿಗಳು ರೈತಪರವಾಗಿ ಪ್ರಭುತ್ವದ ಕಿವಿಹಿಂಡುವ ಗುಣ ಪಡೆದರೆ ಆಗಬಹುದಾದ ಪರಿಣಾಮಕ್ಕೆ ಇವರು ಸಾಕ್ಷಿಯಾಗಿದ್ದಾರೆ. ಅವರು ಮಾತನಾಡುತ್ತಾ ಹೊಲ ಕೆಲವರಿಗೆ ಸೇರಿದ್ದರೆ ಈ ನೆಲ ಎಲ್ಲರಿಗೂ ಸೇರಿದ್ದು. ಹಾಗಾಗಿ ನಾವು ನೆಲದ ಬಗ್ಗೆ ಮಾತನಾಡುತ್ತಿದ್ದೇವೆ, ನೆಲವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ ಎಂದು ಇಡೀ ಸಮಾವೇಶದ ಆಶಯವನ್ನು ತಾತ್ವಿಕವಾಗಿ ಮಂಡಿಸಿದರು.

ಈ ಸಮಾವೇಶವನ್ನು ಉದ್ಘಾಟನೆ ಮಾಡಿದ್ದು ಹಿರಿಯ ಸ್ವಂತಂತ್ರ್ಯ ಹೋರಾಟಗಾರರಾದ ಹೆಚ್.ಎಸ್. ದೊರೆಸ್ವಾಮಿಯವರು. ಅನ್ನಕೊಡುವ ರೈತರ ಭೂಮಿಯನ್ನು ಕಸಿಯುವುದು ಕೆಚ್ಚಲನ್ನೇ ಕೊಯ್ಯುವಂತಹ ಹೇಯ ಕೃತ್ಯ ಇದನ್ನು ತಡೆಯಬೇಕೆಂಬ ಆತಂಕ ವ್ಯಕ್ತಪಡಿಸಿ, ಸಮಾವೇಶದ ಘೋಷಣಾ ಪತ್ರವನ್ನು ಬಿಡುಗಡೆ ಮಾಡಿದರು. ಸಿದ್ದನಗೌಡ ಪಾಟೀಲರು ಜಾಗತೀಕರಣದಿಂದಾಗಿ ಭೂಕೇಂದ್ರೀಕರಣವಾಗುತ್ತಿದೆ, ಸರಕಾರದಿಂದ ಅಧಿಕೃತವಾಗಿ, ಖಾಸಗಿಯವರಿಂದ ಅನಧಿಕೃತವಾಗಿ ಭೂ ಒತ್ತುವರಿಗಳು ನಡೆಯುತ್ತಲೇ ಇವೆ. ಇಂತಹ ಒತ್ತುವರಿಗಳನ್ನು ಪ್ರಜ್ಞಾವಂತರೆಲ್ಲಾ ವಿರೋಧಿಸಬೇಕಿದೆ ಎಂದರು. ಮಾವಳ್ಳಿ ಶಂಕರ್, ಬಾಬಾಗೌಡ ಪಾಟೀಲ್, ಮಾರುತಿ ಮಾನ್ಪಡೆ, ಶೌಕತ್ ಆಲಿ ಆಲೂರು, ರುದ್ರಮುನಿ ಆರದಗೆರೆ ಮುಂತಾದವರು ಸಮಾವೇಶದ ಆಶಯಗಳನ್ನು ಬೇರೆ ಬೇರೆ ನೆಲೆಯಲ್ಲಿ ವಿವರಿಸಿದರು.

ರಹಮತ್ ತರೀಕರೆಯವರು ಜನಸಮುದಾಯ ಯಾವುದನ್ನು ವಿರೋಧಿಸಬೇಕೆಂದು ಸಮಾವೇಶ ಮಾಡುತ್ತಿದ್ದೇವೆಯೋ ಯಾವುದು ಬೇಕು ಎಂದು ಕೂಡ ಹಕ್ಕೋತ್ತಾಯದಂತೆ ಕೇಳಬೇಕಾಗಿದೆ, ಹಲವು ಚಳವಳಿಗಳ ಏಕೀಕರಣವಾಗಬೇಕಿದೆ ಎಂದರು. ಟಿ. ಆರ್. ಚಂದ್ರಶೇಖರ್ ಅವರು ಗದಗ ಜಿಲ್ಲೆಯ ಅಭಿವೃದ್ಧಿಯ ಸಾದ್ಯತೆಗಳ ಬಗ್ಗೆ ತುಂಬಾ ವಾಸ್ತವವಾಗಿ ಮಾತನಾಡಿದರು. ಕೇಂದ್ರದ ಭೂ ಸ್ವಾಧೀನ ಮಸೂದೆ ಮತ್ತು ರೈತರ ಹಿತಾಸಕ್ತಿ ಕುರಿತಂತೆ ಕೆ.ಪಿ. ಸುರೇಶ್ ಅವರು ವ್ಯಂಗ್ಯಬರಿತ ವಿಷಾಧವನ್ನು ವ್ಯಕ್ತಪಡಿಸಿದರು. ಕೃಷಿ ವಲಯ: ಜಾಗತಿಕ ಬಂಡವಾಳದ ಹರವಿನ ನೆಲೆಗಳು ಕುರಿತಂತೆ ಶಿವಸುಂದರ್ ಕಟುವಾದ ಸತ್ಯಗಳನ್ನು ಬಯಲಿಗೆಳೆದರು. ಜಿ. ರಾಮಕೃಷ್ಣ ಅವರು ಕನರ್ಾಟಕದ ಸದ್ಯದ ನಡೆಯ ಬಗ್ಗೆ ವಿಮಶರ್ಾತ್ಮಕವಾಗಿ ಚಚರ್ಿಸಿದರು. ಹೀಗೆ ಇಡೀ ಸಮಾವೇಶ ವರ್ತಮಾನ ಮತ್ತು ಭವಿಷ್ಯದಲ್ಲಿ ರೈತಸಮುದಾಯ ಎದುರಿಸಬೇಕಾದ ಬಿಕ್ಕಟ್ಟುಗಳು ಮತ್ತು ಅವುಗಳನ್ನು ಬಿಡಿಸಿಕೊಳ್ಳಲು ಇರಬಹುದಾದ ದಾರಿಗಳನ್ನು ಕುರಿತಂತೆ ಒಂದು ಗಂಭೀರ ಚರ್ಚೆ ಸಾದ್ಯವಾಯಿತು.

ಈ ಸಮಾವೇಶದಲ್ಲಿ ರೈತ ಸಮುದಾಯ, ರೈತಪರ ಜನ ಹೆಚ್ಚಾಗಿಯೇ ಸೇರಿದ್ದರು. ವೆಂಕಟೇಶಯ್ಯ, ಇಪ್ಟಾ, ಸಮುದಾಯ ತಂಡಗಳ ಹೋರಾಟದ ಹಾಡುಗಳು ಈ ಸಮಾವೇಶದ ಆಶಯವನ್ನು ವಿಸ್ತರಿಸುವಂತಹ ಶಕ್ತಿ ಪಡೆದಿದ್ದವು. ಮುತ್ತು ಹಾಳಕೇರಿ, ಹು.ಬಾ. ವಡ್ಡಟ್ಟಿ ಅವರಿಂದ ಪೋಸ್ಕೋ ಹೋರಾಟದ ಛಾಯಚಿತ್ರ ಮತ್ತು ಪತ್ರಿಕಾ ವರದಿಗಳ ಪ್ರದರ್ಶನ ಸಮಾವೇಶದ ಪರಿಣಾಮವನ್ನು ಹೆಚ್ಚಿಸುವಂತಿದ್ದವು. ಅಂತೆಯೇ ಭೀಮೇಶ ತಂಡದಿಂದ `ಭೂಮಿ ಕೊಡುವ ಮಾತಾಯಿತು’ ನಾಟಕ ಸದ್ಯದ ರೈತರ ಸ್ಥಿತಿಗೆ ಕನ್ನಡಿ ಹಿಡಿಯುವಂತಿತ್ತು.

ಈ ಸಮಾವೇಶ ಹಲವು ಸಂಘಟನೆಗಳ ಫಲ. ಹೀಗೆ ಒಂದು ಸಮಾನ ಉದ್ದೇಶ ಸಾಧನೆಗಾಗಿ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಂದು ಕೂಗಿಗೆ ತಮ್ಮ ದ್ವನಿ ಸೇರಿಸುವ ಅಗತ್ಯವಿದೆ. ಹಲವು ಸಂಘಟನೆಗಳ ಏಕೀಕರಣಕ್ಕೆ ಕಾರಣವಾದ ಗದಗದ ಭೂ ಸ್ವಾಧೀನ ವಿರೋಧಿ ಸಂಗ್ರಾಮ ಸಮಿತಿಯವರನ್ನು ಈ ಸಂದರ್ಭದಲ್ಲಿ ನೆನೆಯಬಹುದು. ಎಲ್ಲರನ್ನೂ ಒಂದೆಡೆ ಸೇರಿಸುವುದರಲ್ಲಿ ಬಸವರಾಜ ಸೂಳಿಬಾವಿ ಅವರ ಶ್ರಮ ಹೆಚ್ಚಿನದು. ಹೀಗೆ ಕರ್ನಾಟಕದಾದ್ಯಾಂತ ಈ ಸಮಾವೇಶವನ್ನು ವಿಸ್ತರಿಸುವ ಮತ್ತು ಆ ಮೂಲಕ ರೈತರಲ್ಲಿ ಒಂದು ಬಗೆಯ ಹೊಸ ಸಂಚಲನವನ್ನು ಉಂಟುಮಾಡುವ ಅಗತ್ಯವಿದೆ. ಇದಕ್ಕೆ ಆಯಾ ಭಾಗದ ಪ್ರಜ್ಞಾವಂತ ಜನ ಕೈ ಜೋಡಿಸಬೇಕಾಗಿದೆ. ಇದು ಸದ್ಯದ ಕರ್ನಾಟಕದಲ್ಲಿ ಆಗಲೇಬೇಕಾದ ಕೆಲಸಗಳಲ್ಲಿ ಪ್ರಮುಖವಾದುದು.

ಜನಪದ ವೈದ್ಯ: ಸದ್ಯ ಮತ್ತು ಮುಂದುವರಿಕೆಯ ನೆಲೆ

* ಡಾ. ಅರುಣ್ ಜೋಳದಕೂಡ್ಲಿಗಿ

ಚಳ್ಳಕೆರೆಯಲ್ಲಿ ಶ್ರೀದೇವಿ ಮೂಳೆ ಚಿಕಿತ್ಸಾಲಯವಿದೆ. ಅದು ಐದಾರು ಜನ ಇಕ್ಕಟ್ಟಿನಲ್ಲಿ ಕೂರಬಹುದಾದಷ್ಟು ಪುಟ್ಟದೊಂದು ರೂಮು. ಅಲ್ಲಿ ಮೂಳೆನೋವು, ಉಳುಕು, ಸೊಂಟನೋವು, ನರಸಮಸ್ಯೆ ಮುಂತಾದವುಗಳಿಂದ ಬಾದಿತರಾದ ರೋಗಿಗಳು ಸದಾ ಕಿಕ್ಕಿರಿದಿರುತ್ತಾರೆ. 34 ವರ್ಷದ ಯುವ ನಾಟಿ  ವೈದ್ಯ ಎನ್.ಲಕ್ಷ್ಮಣ್ ಅವರು ಮೂಳೆಗೆ ಸಂಬಂದಿಸಿದ ನೋವುಗಳಿಗೆ ಇಲ್ಲಿ ಚಿಕಿತ್ಸೆ ನೀಡುತ್ತಿರುತ್ತಾರೆ. ಅತ್ಯಾಧುನಿಕ ಆಸ್ಪತ್ರೆಗಳಲ್ಲಿ ಬಗೆಹರಿಯದ ಮೂಳೆ ಸಮಸ್ಯೆಗಳನ್ನು ಲಕ್ಷ್ಮಣ್ ವಾಸಿ ಮಾಡಿದ್ದಾರೆಂಬುದು ಆತನ ಬಗೆಗಿನ ಜನಾಭಿಪ್ರಾಯ. ಈ ವಿಷಯವಾಗಿ ಲಕ್ಷ್ಮಣ್ ಅವರೊಂದಿಗೆ ಮಾತನಾಡಿದಾಗ, ಆತನ ಮಾತು ಮತ್ತು ಅನುಭವದಿಂದ ಜನಪದ ವೈದ್ಯಕ್ಕೆ ಹೇಗೆ ಮರುಜೀವ ನೀಡಬಹುದು ಎನ್ನುವ ಬಗ್ಗೆ ಒಳನೋಟಗಳು ಹೊಳೆದವು.

ಲಕ್ಷ್ಮಣ್ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಪರುಷರಾಮಪುರದ ಹತ್ತಿರದ ಪಿ. ಮಹದೇವಪುರದವರು. ಇವರ ಅಜ್ಜ, ಅಪ್ಪ ಸಹ ಮೂಳೆಗೆ ಸಂಬಂಧಿಸಿದ ಜನಪದ ವೈದ್ಯವನ್ನು ಮಾಡುತ್ತಿದ್ದರಂತೆ, ಲಕ್ಷ್ಮಣ್ ಪಿಯುಸಿ ಪೇಲಾಗಿ ಉದ್ಯೋಗ ಅರಸಿ ಬೆಂಗಳೂರಿಗೆ ಹೋದರಂತೆ, ಅಲ್ಲಿ ಆಕಸ್ಮಿಕವಾಗಿ ಅಪಘಾತವೊಂದರಲ್ಲಿ ಕಾಲುಮುರಿದುಕೊಂಡು ಮತ್ತೆ ತನ್ನ ಸ್ವಂತ ಊರಿಗೆ ಮರಳಬೇಕಾಯಿತು. ಇಲ್ಲಿ ತನ್ನ ತಂದೆಯಿಂದ ಮೂಳೆ ಮುರಿತಕ್ಕೆ ಚಿಕಿತ್ಸೆ ಪಡೆದು ಗುಣಮುಖವಾಗುವ ಹೊತ್ತಿಗೆ ನಾನೆ ಯಾಕೆ ಅಪ್ಪನ ವಿದ್ಯೆಯನ್ನು ಕಲಿಯಬಾರದು ಅನ್ನಿಸಿದೆ. ಆಗ ಅಪ್ಪನ ಜತೆ ತಾನು ಮೂಳೆ ಚಿಕಿತ್ಸೆ ಮಾಡುವ ನಾಟಿ ವೈದ್ಯದ ವಿಧಾನಗಳನ್ನು ಕಲಿತಿದ್ದಾನೆ. ನಂತರ ಲಕ್ಷ್ಮಣ್ ಸ್ವತಃ ಮೂಳೆ ಸಂಬಂಧಿ ನೋವುಗಳಿಗೆ ಚಿಕಿತ್ಸೆ ನೀಡಲು ಶುರು ಮಾಡಿದ್ದಾರೆ.

ಪಿಯುಸಿ ಓದಿದ ಲಕ್ಷ್ಮಣ್ ತಂದೆಯಿಂದ ಕಲಿತದ್ದನ್ನಷ್ಟೆ ಅಲ್ಲದೆ, ಮೂಳೆ ನರಕ್ಕೆ ಸಂಬಂದಿಸಿದ ಪುಸ್ತಕಗಳನ್ನು ಓದಿ ತಿಳಿದಿದ್ದಾರೆ, ನಂತರ ಮೂಳೆತಜ್ಞ ನರತಜ್ಞ ಡಾಕ್ಟರುಗಳನ್ನು ಸಂಪಕರ್ಿಸಿ ಈ ಬಗ್ಗೆ ವೈಜ್ಞಾನಿಕವಾಗಿಯೂ ತಿಳಿದುಕೊಂಡಿದ್ದಾರೆ. ಅಂತೆಯೇ ಆಯುವರ್ೇದದ ಚಿಕಿತ್ಸೆಯ ಮಾದರಿಗಳನ್ನೂ ಕಲಿತಿದ್ದಾರೆ. ಹೀಗೆ ಮೂಳೆ ಸಂಬಂಧಿಯಾದ ಹಲವು ಬಗೆಯ ತಿಳುವಳಿಕೆ ಪಡೆದು ನಾಟಿ ವೈದ್ಯದಲ್ಲಿ ತನ್ನದೇ ಆದ ಒಂದು ವಿಶಿಷ್ಠ ವಿಧಾನವನ್ನು ರೂಪಿಸಿಕೊಂಡಿದ್ದಾರೆ. ತನ್ನ ತಾತ, ತಂದೆಯವರ ವೈದ್ಯದ ವ್ಯಾಪ್ತಿಯನ್ನು ಅಗಾಧವಾಗಿ ವಿಸ್ತರಿಸಿದ್ದಾರೆ. ಅಂತೆಯೇ ಜನಪದ ವೈದ್ಯದ ಬಗ್ಗೆ ಜನರಲ್ಲಿ ಹೊಸ ವಿಶ್ವಾಸವನ್ನು ಮೂಡಿಸಿದ್ದಾರೆ.

ಹದಿಮೂರು ವರ್ಷದಿಂದ ಚಳ್ಳಕೆರೆಯಲ್ಲಿ ಚಿಕಿತ್ಸೆ ಮಾಡುತ್ತಿದ್ದು, ಈತನಕ ಸುಮಾರು ಇಪ್ಪತ್ತೈದು  ಸಾವಿರಕ್ಕಿಂತ ಹೆಚ್ಚು ಜನರಿಗೆ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಿದ್ದಾರೆ. ಇದು ಲಕ್ಷ್ಮಣ್ ಅವರ ಕಿರಿ ವಯಸ್ಸಿನ ಹಿರಿಯ ಸಾಧನೆ. ಆತ ಜನಸಾಮಾನ್ಯರಿಗೆ ಮೂಳೆ ನರಗಳ ಬಗ್ಗೆ ಸರಳವಾಗಿ ವಿವರಿಸಿ, ಆ ಕುರಿತು ಜಾಗೃತಿ ಮೂಡಿಸುತ್ತಾನೆ. ಈತನ ಬಳಿಗೆ ಬರುವ ರೋಗಿಗಳು ಬಹುಪಾಲು ಬಡವರು ರೈತರು ಹಳ್ಳಿಗರು. ಹಾಗಾಗಿ ಇವರು ಚಿಕಿತ್ಸೆಗೆ ಪಡೆವ ಹಣ ಕೂಡ ಜನಸಾಮಾನ್ಯರಿಗೆ ನಿಲುಕುವ ಕಡಿಮೆ ಮೊತ್ತ. ಯಾವುದೇ ಆಥರ್ೋಪೆಡಿಕ್ಸ ಡಾಕ್ಟರಿಗಿಂತ ಕಡಿಮೆ ಇಲ್ಲ ಎನ್ನುವಂತಿರುವ ಲಕ್ಷ್ಮಣ್ ಹಮ್ಮು ಬಿಮ್ಮುಗಳಿಲ್ಲದ ಸರಳ ವ್ಯಕ್ತಿ. ತನ್ನಿಂದ ಈ ರೋಗಕ್ಕೆ ಚಿಕಿತ್ಸೆ ಕೊಡಲು ಸಾದ್ಯವಿಲ್ಲ ಎಂತಾದರೆ, ಉಪಯುಕ್ತ ಮಾರ್ಗದರ್ಶನ ಮಾಡುತ್ತಾರೆ. ಇದನ್ನೆಲ್ಲಾ ನೋಡಿದರೆ ಲಕ್ಷ್ಮಣ್ ಜನಪದ ವೈದ್ಯವನ್ನು ಅರ್ಥಪೂರ್ಣವಾಗಿ ಮುಂದುವರಿಸುತ್ತಿದ್ದಾರೆ ಅನ್ನಿಸುತ್ತದೆ.

ಕನರ್ಾಟಕದ ಗ್ರಾಮೀಣ ಭಾಗದಲ್ಲಿ ಈಗಲೂ ಈ ತರಹದ ಸಾವಿರಾರು ಜನಪದ ವೈದ್ಯರಿದ್ದಾರೆ. ಅವರು ತಮ್ಮ ಸುತ್ತಮುತ್ತ ಸಿಗುವ ಗಿಡಮೂಲಿಕೆಗಳನ್ನು ಬಳಸಿ ಚಿಕಿತ್ಸೆ ಮಾಡುತ್ತಾರೆ. ಇಂದಿನ ಆಧುನಿಕ ವೈದ್ಯದ ಪ್ರಭಾವದಿಂದಾಗಿ ಜನಪದ ವೈದ್ಯರಲ್ಲಿ ನಂಬಿಕೆ ಕಡಿಮೆಯಾಗಿದೆ. ಚಿಕಿತ್ಸೆ ಪಡೆಯುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಹಿಂದೆ ನಾಟಿ ವೈದ್ಯವನ್ನು ಮಾಡುತ್ತಿದ್ದವರು ಈಗ ಕೈಬಿಟ್ಟಿದ್ದಾರೆ. ವಂಶಪಾರಂಪರ್ಯ ಮುಂದುವರಿಕೆ ಸಹ ಕುಂಟಿತವಾಗುತ್ತಿದೆ. ಕಾರಣ ಹೊಸ ತಲೆಮಾರು ತನ್ನ ತಾತ ಮುತ್ತಾತರಿಂದ ಬಂದ ವೈದ್ಯವನ್ನು ಮುಂದುವರಿಸಲು ಆಸಕ್ತಿ ತೋರದಾಗಿದ್ದಾರೆ. ಇದರಿಂದ ಗ್ರಾಮೀಣ ಭಾಗದ ರೈತರು, ಹಳ್ಳಿಗರು, ಬಡವರಿಗೆ ತೊಂದರೆಯಾಗಿದೆ. ಕಾರಣ ಇಂದು ಆಧುನಿಕ ವೈದ್ಯವನ್ನು ಕಲಿತವರು ಹಳ್ಳಿಗಳಿಗೆ ಹೋಗಿ ಚಿಕಿತ್ಸೆ ಕೊಡುವ ಮನಸ್ಸು ಮಾಡುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಕೆಲಸಮಾಡಬೇಕಾಗಿರುವ ದಾದಿಯರೇ(ನರ್ಸಗಳು) ನಗರಗಳಲ್ಲಿ ಮನೆ ಮಾಡಿಕೊಂಡು ಹಳ್ಳಿಗಳಿಗೆ ವಿಮುಖರಾಗಿದ್ದಾರೆ. ಬಹುಪಾಲು ಸರಕಾರಿ ಆಸ್ಪತ್ರೆಗಳು ಸ್ವತಃ ರೋಗಿಗಳಂತೆ ನರಳುತ್ತಿವೆ. ಇನ್ನು ನಗರದ ದೊಡ್ಡ ದೊಡ್ಡ ಆಸ್ಪತ್ರೆಗಳು ವಿಧಿಸುವ ಚಿಕಿತ್ಸೆಯ ದುಬಾರಿ ಮೊತ್ತವನ್ನು ಹಳ್ಳಿಗರಿಗೆ ಭರಿಸಲು ಸಾದ್ಯವಾಗುತ್ತಿಲ್ಲ. ಇದನ್ನು ನೋಡಿದರೆ ಇಂದು ಜನಪದ ವೈದ್ಯಕ್ಕೆ ಮರುಜೀವ ನೀಡುವ ಅಗತ್ಯವಿದೆ.

ಜನಪದ ವೈದ್ಯವನ್ನು ಇರುವಂತೆಯೆ ಮುಂದುವರೆಸುವುದು ಕಷ್ಟ. ಹಾಗಾಗಿ ನಾಟಿ ವೈದ್ಯದಲ್ಲಿ ಕೆಲವು ಅವಶ್ಯ ಮಾಪರ್ಾಡುಗಳನ್ನು ತರಬೇಕಿದೆ. ಈ ವೈದ್ಯದೊಂದಿಗೆ ಬೆರೆತ ಮೂಡನಂಬಿಕೆಗಳನ್ನು ಬಿಡಿಸಬೇಕಿದೆ. ದೈವಗಳೊಂದಿಗೆ ಲಗತ್ತಾಗಿರುವ  ನಂಬಿಕೆಯನ್ನು ಕಡಿಮೆ ಮಾಡಬೇಕಿದೆ. ನಾಟಿವೈದ್ಯರನ್ನು ಗುರುತಿಸಿ ಅವರಿಗೆ ವೈದ್ಯಕೀಯದ ಪ್ರಾಥಮಿಕ ತಿಳುವಳಿಕೆಯನ್ನು ನೀಡಬೇಕು. ಈ ಮೂಲಕ ಅವರ ವೈದ್ಯದಲ್ಲಿ ಕೆಲವು ಬದಲಾವಣೆಗೆ ಮಾರ್ಗದರ್ಶನ ಮಾಡಬೇಕು. ಅನುಭವಿ ನಾಟಿ ವೈದ್ಯರ ಮೂಲಕ ಗ್ರಾಮೀಣ ಭಾಗದ ಯುವಕರಿಗೆ ಕಮ್ಮಟಗಳನ್ನು ಮಾಡಿ, ಯುವಕರಲ್ಲಿ  ಜನಪದ ವೈದ್ಯದ ಬಗ್ಗೆ ಆಸಕ್ತಿ ಮೂಡಿಸುವಂತಾಗಬೇಕಿದೆ. ಮುಖ್ಯವಾಗಿ ನಾಟಿ ವೈದ್ಯದಲ್ಲಿ ಮತ್ತೆ ನಂಬಿಕೆ ಹುಟ್ಟುವ ರೀತಿಯಲ್ಲಿ ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸಬೇಕು.

ಕನರ್ಾಟಕ ಜಾನಪದ ಅಕಾಡೆಮಿ ಇಂತಹ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಿದೆ. ಸದ್ಯವೆ ಕಾರ್ಯ ಆರಂಭಿಸಲಿರುವ ಜಾನಪದ ವಿಶ್ವವಿದ್ಯಾಲಯ ಜನಪದ ವೈದ್ಯಕ್ಕೆ ಪ್ರತ್ಯೇಕ ವಿಭಾಗ ತೆರೆದು, ಜನಪದ ವೈದ್ಯರನ್ನು ತಯಾರು ಮಾಡಿ ಅಂತವರು ಗ್ರಾಮೀಣ ಭಾಗದಲ್ಲಿ ಕೆಲಸ ನಿರ್ವಹಿಸುವಂತೆ ಪ್ರೇರೇಪಿಸಬೇಕಿದೆ. ನಾಟಿ ವೈದ್ಯ ಪದ್ದತಿಯ ಪರಿಣಿತರನ್ನು `ಜನಪದ ವೈದ್ಯ’ ಎಂಬ ಅಧಿಕೃತ ಸಟರ್ಿಪಿಕೇಟ್ ನೀಡಿ  ಅವರುಗಳು ಚಿಕಿತ್ಸಾ ಕೇಂದ್ರಗಳನ್ನು ನಡೆಸಲು ಅನುವಾಗುವಂತೆ ವ್ಯವಸ್ಥೆ ಮಾಡುವ ಅಗತ್ಯವಿದೆ. ಜನಪದ ವೈದ್ಯರನ್ನು ನಕಲಿ ವೈದ್ಯರೆಂದು ಅಪರಾದಿ ಸ್ಥಾನದಲ್ಲಿ ನಿಲ್ಲಿಸಬಲ್ಲ ಕಾನೂನುಗಳಿಗೂ ತಕ್ಕ ಬದಲಾವಣೆಯನ್ನು ತರುವ ಅಗತ್ಯವಿದೆ.