Category Archives: ಆನಂದ ಪ್ರಸಾದ್

ಬಲಿಷ್ಠ ರಾಷ್ಟ್ರಗಳ ಸೇನಾ ಶಕ್ತಿಯ ಸನ್ನಿ

ಆನಂದ ಪ್ರಸಾದ್

ಪ್ರಪಂಚದಲ್ಲಿ ದೇಶದೇಶಗಳ ನಡುವೆ ಅಪನಂಬಿಕೆ ಹಾಗೂ ಆಕ್ರಮಣದ ಭೀತಿಯಿಂದಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಪಾರವಾದ ಹಣ ಮಿಲಿಟರಿಗಾಗಿ ವೆಚ್ಚವಾಗುತ್ತಿದೆ. 2010 ರಲ್ಲಿ ವಿಶ್ವದಾದ್ಯಂತ ಮಿಲಿಟರಿಗಾಗಿ ವ್ಯಯಿಸಿದ ಹಣದ ಒಟ್ಟು ಮೊತ್ತ 81 ಲಕ್ಷ ಕೋಟಿ ರೂಪಾಯಿಗಳು ಎಂದು ಅಂತರ್ಜಾಲ ಮಾಹಿತಿಯಿಂದ ತಿಳಿದುಬರುತ್ತದೆ. ಇದರಲ್ಲಿ ಸಿಂಹಪಾಲು ಅಂದರೆ 43% ಹಣ ಅಮೆರಿಕಾದ ಮಿಲಿಟರಿ ವೆಚ್ಚವಾದರೆ ನಂತರದ ಸ್ಥಾನದಲ್ಲಿ ಚೀನಾ (7.3%), ಬ್ರಿಟನ್ (3.7%), ಫ್ರಾನ್ಸ್ (3.6%), ರಷ್ಯಾ (3.6%) ಬರುತ್ತವೆ. ಒಂದು ನಾಗರೀಕ, ಮಾನವೀಯ ಹಾಗೂ ವಿವೇಕಯುತ ಸ್ಥಿತಿಯನ್ನು ನಮ್ಮ ಮಾನವ ಜನಾಂಗ ಇನ್ನೂ ತಲುಪಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಶ್ರೀಮಂತ ದೇಶಗಳೇ ತಮ್ಮ ರಕ್ಷಣೆಗಾಗಿ ಹೆಚ್ಚು ವೆಚ್ಚಮಾಡಬೇಕಾಗಿ ಬಂದಿರುವುದು ಅವರ ಶ್ರೀಮಂತಿಕೆಯನ್ನು ರಕ್ಷಿಸಿಕೊಳ್ಳಲಿಕ್ಕೆ ಆಗಿರಬಹುದು. ಮಿಲಿಟರಿಗಾಗಿ ಈ ರೀತಿ ಅಪಾರ ವ್ಯಯ ಮಾಡುವ ಬದಲು ಇದೇ ಹಣವನ್ನು ವಿಶ್ವದ ಎಲ್ಲೆಡೆ ವಿಕಾಸಕ್ಕೆ ಬಳಸಿದ್ದರೆ ಈ ಅಪನಂಬಿಕೆ ಕಡಿಮೆಯಾಗಿ ಎಲ್ಲರೂ ಸಮಾನ ಅಭಿವೃದ್ಧಿಯನ್ನು ಹೊಂದಲು ಸಾಧ್ಯವಿದೆ. ಇದಕ್ಕಾಗಿ ಅಂತರರಾಷ್ಟ್ರೀಯ ಒಪ್ಪಂದಗಳನ್ನು ಮಾಡಿಕೊಂಡು ಮಿಲಿಟರಿ ವೆಚ್ಚವನ್ನು ತಗ್ಗಿಸಿ ಅದೇ ಹಣವನ್ನು ಮಾನವ ಜನಾಂಗದ ವಿಕಾಸಕ್ಕೆ ಬಳಸಲು ಮುಂದಾಗುವ ವಿಶ್ವ ನಾಯಕತ್ವದ ಅಗತ್ಯವಿದೆ.

ಪ್ರಪಂಚದ ಎಲ್ಲ ದೇಶಗಳೂ ಈಗ ಇರುವ ಭೌಗೋಳಿಕ ಗಡಿಯ ಸ್ಥಿತಿಯನ್ನು ಒಪ್ಪಿಕೊಂಡು ಇದೇ ಸ್ಥಿತಿಯನ್ನು ಕಾಯ್ದುಕೊಳ್ಳಲು ಹಾಗೂ ಯಾವುದೇ ಒಂದು ದೇಶ ಇನ್ನೊಂದು ದೇಶದ ಮೇಲೆ ಆಕ್ರಮಣ ಮಾಡಲು ಸಾಧ್ಯವಾಗದಂತೆ ಅಂತರರಾಷ್ಟ್ರ್ರೀಯ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿದೆ. ಹೀಗೆ ಮಾಡುವುದರಿಂದ ಯಾವುದೇ ದೇಶ ಅದು ಸಣ್ಣದಿರಲಿ ದೊಡ್ಡದಿರಲಿ, ಶ್ರೀಮಂತ ಅಥವಾ ಬಡ ದೇಶವಿರಲಿ ಮಿಲಿಟರಿಗಾಗಿ ಅಪಾರ ವೆಚ್ಚ ಮಾಡದೆ ಅದೇ ಹಣವನ್ನು ತನ್ನ ನಾಗರೀಕರ ಅಭಿವೃದ್ಧಿಗೆ ಬಳಸಿಕೊಳ್ಳಲು ಸಾಧ್ಯವಾಗಬಹುದು. ಯಾವುದೇ ಒಂದು ದೇಶ ಒಪ್ಪಂದವನ್ನು ಉಲ್ಲಂಘಿಸಿ ಇನ್ನೊಂದು ದೇಶದ ಮೇಲೆ ಆಕ್ರಮಣ ಮಾಡಿದ್ದೇ ಆದಲ್ಲಿ ಆ ದೇಶವನ್ನು ಎಲ್ಲ ದೇಶಗಳೂ ಸೇರಿ ಸೋಲಿಸಿ ಇನ್ನೆಂದೂ ಆ ರೀತಿ ಆಕ್ರಮಣ ಮಾಡದಂತೆ ಮಾಡಲು ಸಾಧ್ಯವಿದೆ.

ಇದಕ್ಕಾಗಿ ಎಲ್ಲ ದೇಶಗಳ ಸೈನಿಕರನ್ನು ಒಳಗೊಂಡ ಒಂದು ಅಂತರರಾಷ್ಟ್ರೀಯ ಸೈನ್ಯದ ಸ್ಥಾಪನೆ ಮಾಡಬೇಕು ಹಾಗೂ ಇದರ ವೆಚ್ಚವನ್ನು ಎಲ್ಲ ದೇಶಗಳು ನಿಗದಿಪಡಿಸಿದ ರೀತಿಯಲ್ಲಿ ಪಾವತಿಸುವ ವ್ಯವಸ್ಥೆ ಮಾಡಬಹುದು. ಈ ವೆಚ್ಚ ಈಗ ಪ್ರತೀ ದೇಶವೂ ತನ್ನ ರಕ್ಷಣೆಗಾಗಿ ವ್ಯಯಿಸುತ್ತಿರುವ ವೆಚ್ಚದ 5% ಕ್ಕಿಂತ ಹೆಚ್ಚು ಬರಲಾರದು. ರಕ್ಷಣಾ ಸಾಮಗ್ರಿಗಳಾದ ಆಯುಧಗಳು, ಬಂದೂಕುಗಳು, ಟ್ಯಾಂಕ್, ಫಿರಂಗಿ, ಯುದ್ಧ ವಿಮಾನ, ಯುದ್ಧ ಹಡಗು, ಖಂಡಾಂತರ ಕ್ಷಿಪಣಿಗಳು, ಜಲಾಂತರ್ಗಾಮಿ ಇತ್ಯಾದಿಗಳ ಅಭಿವೃದ್ಧಿಯನ್ನು ಎಲ್ಲ ದೇಶಗಳೂ ಸ್ಥಗಿತಗೊಳಿಸಬೇಕು ಮತ್ತು ಇಂಥ ಉತ್ಪಾದನೆ ಅಂತರರಾಷ್ಟ್ರೀಯ ಸೈನ್ಯ ಮಾತ್ರ ಮಾಡುವಂತೆ ಒಪ್ಪಂದ ಮಾಡಿಕೊಳ್ಳಬೇಕು. ಇದರಿಂದ ಎಲ್ಲ ದೇಶಗಳೂ ರಕ್ಷಣಾ ಸಾಧನಗಳಿಗಾಗಿ ಅಪಾರ ಹಣ ವ್ಯಯಿಸುವುದನ್ನು ತಡೆದು ಆ ಹಣವನ್ನು ತನ್ನ ನಾಗರೀಕರ ಉನ್ನತಿಗೆ ಬಳಸಲು ಸಾಧ್ಯವಾಗುತ್ತದೆ. ಇಂಥ ಒಂದು ವ್ಯವಸ್ಥೆ ಅಸಾಧ್ಯ ಎಂದು ಅನಿಸಬಹುದು. ಆದರೆ ಇಂಥ ಚಿಂತನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದರೆ ಮುಂದೊಂದು ದಿನ ಇಂಥ ವ್ಯವಸ್ಥೆ ಸಾಕಾರವಾಗಲು ಸಾಧ್ಯವಿದೆ.

ನಮ್ಮ ದೇಶವನ್ನೇ ತೆಗೆದುಕೊಂಡರೆ ಬ್ರಿಟಿಷರು ಭಾರತಕ್ಕೆ ಬರುವ ಮೊದಲು ನಮ್ಮ ದೇಶದಲ್ಲಿ ನೂರಾರು ರಾಜರುಗಳು ಮತ್ತು ಪಾಳೇಯಗಾರರು ಆಗಾಗ ಯುದ್ಧ ಮಾಡುತ್ತಾ ಪ್ರತಿಯೊಬ್ಬ ರಾಜನೂ, ಪ್ರತಿಯೊಂದು ರಾಜ್ಯವೂ ತನ್ನದೇ ಆದ ಸೈನ್ಯ ಹಾಗೂ ಶಸ್ತ್ರಗಳನ್ನು ಹೊಂದಬೇಕಾಗಿತ್ತು. ಆಗ ಭಾರತದ ಎಲ್ಲ ರಾಜರುಗಳು ಒಂದೇ ಸೈನ್ಯ ಮತ್ತು ಒಂದೇ ಸರ್ಕಾರದಡಿ ಬರುವುದನ್ನು ಊಹಿಸಲೂ ಸಾಧ್ಯವಿರಲಿಲ್ಲ ಅಲ್ಲವೇ? ಆದರೆ ಇಂದು ಪ್ರಜಾಪ್ರಭುತ್ವ ಮತ್ತು ಸಂವಿಧಾನ ರೂಪಿಸುವ ಮೂಲಕ ಎಲ್ಲಾ ರಾಜರುಗಳು ಒಂದೇ ಕೇಂದ್ರೀಯ ಆಡಳಿತದಲ್ಲಿ ಬರಲು ಸಾಧ್ಯವಾಗಿ ಪ್ರತಿ ರಾಜ್ಯವೂ ಸೈನ್ಯ ಹೊಂದಿರಬೇಕಾದ ಅಗತ್ಯ ಸಂಪೂರ್ಣವಾಗಿ ಬದಲಾಗಿಲ್ಲವೇ? ಸಂವಿಧಾನವೆಂಬ ಒಂದು ಒಪ್ಪಂದದಡಿ ಬಂದ ಕಾರಣ ಎಲ್ಲಾ ರಾಜ್ಯಗಳೂ ಇನ್ನೊಂದು ರಾಜ್ಯದ ಆಕ್ರಮಣದ ಭೀತಿಯಿಲ್ಲದೆ ಶಾಂತಿಯಿಂದ ಇರಲು ಸಾಧ್ಯವಾಗಿದೆ. ಇದು ಕೆಲವು ಶತಮಾನಗಳ ಹಿಂದೆ ಸಾಧ್ಯವೇ ಇರಲಿಲ್ಲ. ಇದೇ ರೀತಿ ಅಂತರರಾಷ್ಟ್ರೀಯ ಪ್ರಯತ್ನಗಳಿಂದ ಅನ್ಯ ದೇಶಗಳ ಮೇಲೆ ಆಕ್ರಮಣ ನಿಷೇಧ ಒಪ್ಪಂದ ರೂಪಿಸಿ ಜಗತ್ತಿನ ಮಿಲಿಟರಿ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಿದೆ. ಮಾನವನು ನಾಗರಿಕತೆಯ ಮುಂದಿನ ಹಂತವನ್ನು ಏರಿದಾಗ ಇಂಥ ಸ್ಥಿತಿ ರೂಪುಗೊಳ್ಳಲು ಸಾಧ್ಯ.

ಒಂದು ಕುಟುಂಬವು ಇನ್ನೊಂದು ಕುಟುಂಬದ ಜಮೀನಿನ ಮೇಲೆ ಆಕ್ರಮಣ ಮಾಡಲು ಸಾಧ್ಯವಾಗದಂತೆ ನಮ್ಮಲ್ಲಿ ಕಾನೂನುಗಳು ಇದ್ದು ಯಾರೂ ಇನ್ನೊಬ್ಬರ ಜಮೀನಿನ ಮೇಲೆ ಆಕ್ರಮಣ ಮಾಡಿ ವಶಪಡಿಸಿಕೊಳ್ಳಲಾಗದ ವ್ಯವಸ್ಥೆ ನಮ್ಮಲ್ಲಿ ಇದೆ. ಇದರ ಉಲ್ಲಂಘನೆ ಆಗದಂತೆ ನ್ಯಾಯಾಲಯಗಳು, ಪೋಲೀಸು ವ್ಯವಸ್ಥೆ ಇರುವ ಕಾರಣ ನಾವು ಪ್ರತಿಯೊಂದು ಕುಟುಂಬವೂ ಬೇರೊಬ್ಬರ ಆಕ್ರಮಣಕ್ಕೆ ಒಳಗಾಗದೆ ಬದುಕಲು ಸಾಧ್ಯವಾಗಿದೆ. ಇದರಿಂದ ನಾವು ಪ್ರತಿಯೊಂದು ಕುಟುಂಬವೂ ರಕ್ಷಣೆಗಾಗಿ ಆಯುಧಗಳನ್ನು ಹೊಂದಬೇಕಾಗಿಲ್ಲದ ಮತ್ತು ಅದಕ್ಕಾಗಿ ವೆಚ್ಚ ಮಾಡಬೇಕಾಗಿಲ್ಲದ ಭದ್ರತೆಯನ್ನು ಪಡೆದಿದ್ದೇವೆ. ಇದು ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರಿಗೂ ಅನ್ವಯವಾಗುತ್ತದೆ. ಇದೇ ವ್ಯವಸ್ಥೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲೂ ತರಲು ಸಾಧ್ಯವಿದೆ. ಅದಕ್ಕಾಗಿ ಮಾನವ ಜನಾಂಗ ಇನ್ನಷ್ಟು ನಾಗರೀಕತೆಯಲ್ಲಿ ಬೆಳೆಯಬೇಕಾದ ಅಗತ್ಯವಿದೆ.

ಅಂತರರಾಷ್ಟ್ರೀಯ ಶಸ್ತ್ರ ಮಾರಾಟ ಮಾಡಿ ಬಹಳಷ್ಟು ಆದಾಯ ಮಾಡಿಕೊಳ್ಳುವ ಕೆಲವು ಶ್ರೀಮಂತ ದೇಶಗಳಿಗೆ ಇಂಥ ಯೋಚನೆಗಳು ಹಿಡಿಸಲಾರವು. ಅವುಗಳೇ ಇಂಥ ಆಲೋಚನೆಗಳಿಗೆ ಅಡ್ಡಿಯಾಗಬಹುದು. ಉದಾಹರಣೆಗೆ ಅಮೆರಿಕಾವು 2010 ರಲ್ಲಿ 8.5 ಲಕ್ಷ ಕೋಟಿ ರೂಪಾಯಿಗಳಷ್ಟು ಮೊತ್ತದ ಶಸ್ತ್ರಗಳನ್ನು (ಒಟ್ಟು ವಿಶ್ವ ಶಸ್ತ್ರ ವಹಿವಾಟಿನ 39%) ಬೇರೆ ದೇಶಗಳಿಗೆ ಮಾರಾಟ ಮಾಡಿ ಹಣಗಳಿಸಿದೆ. ಸುಮಾರು ಇದರ ಅರ್ಧದಷ್ಟು ಮೊತ್ತದ ಶಸ್ತ್ರಗಳನ್ನು ರಷ್ಯಾವು ಬೇರೆ ದೇಶಗಳಿಗೆ ಮಾರಾಟ ಮಾಡಿಗಳಿಸುತ್ತದೆ. ಶಸ್ತ್ರಾಸ್ತ್ರಗಳ ಮಾರಾಟ ಮಾಡಿ ಹಣಗಳಿಸುವ ದೇಶಗಳು ನಾಗರೀಕತೆಯ ವಿಕಾಸಕ್ಕೆ ದೊಡ್ಡ ಅಡ್ಡಿಯಾಗಿರುವಂತೆ ಕಾಣುತ್ತದೆ. ಶಸ್ತ್ರಾಸ್ತ್ರ ಮಾರಾಟದ ಮೇಲೆ ದೇಶದ ಅರ್ಥ ವ್ಯವಸ್ಥೆ ಅವಲಂಬಿತವಾಗದಂತೆ ಅಮೆರಿಕಾವು ಕ್ರಮಗಳನ್ನು ಕೈಗೊಂಡು ವಿಶ್ವದ ನಾಗರೀಕತೆಯ ವಿಕಾಸಕ್ಕೆ ಮುಂದೆ ಬರಬೇಕಾದ ಅಗತ್ಯ ಇದೆ. ಬಹುಶ: ಮಾನವ ನಾಗರೀಕತೆಯ ವಿಕಾಸಕ್ಕೆ ಅಮೆರಿಕಾವೇ ಬಹಳ ದೊಡ್ಡ ಅಡ್ಡಿಯಾಗಿರುವಂತೆ ಕಾಣುತ್ತದೆ.

ವಿಜ್ಞಾನದ ಬೆಳವಣಿಗೆ ಮತ್ತು ಸಂಶೋಧನೆಗಳು ಮುಂದಿನ ದಿನಗಳಲ್ಲಿ ಮಾನವ ನಾಗರೀಕತೆಯ ವಿಕಾಸಕ್ಕೆ ಮಹತ್ವದ ಕೊಡುಗೆನೀಡಲು ಸಾಧ್ಯವಿದೆ. ಹೇಗೆಂದರೆ ಈಗ ವಿಶ್ವದ ವ್ಯವಸ್ಥೆ ನಿಂತಿರುವುದು ಪೆಟ್ರೋಲಿಯಂ ತೈಲದ ಮೇಲೆ. ಪೆಟ್ರೋಲಿಯಂ ತೈಲ ಮುಗಿದ ನಂತರ ಪರ್ಯಾಯ ಇಂಧನ ಅಭಿವೃದ್ಧಿ ಆದಾಗ ಪ್ರತಿ ದೇಶವೂ ತನ್ನದೇ ಆದ ಇಂಧನವನ್ನು ಉತ್ಪಾದಿಸಲು ಸಾಧ್ಯವಾದಾಗ ವಿಶ್ವದ ದೇಶಗಳ ನಡುವೆ ಇರುವ ಪೆಟ್ರೋಲಿಯಂ ತೈಲಕ್ಕಾಗಿ ಮೇಲಾಟ ನಿಲ್ಲಬಹುದು. ಪೆಟ್ರೋಲಿಯಂ ತೈಲಕ್ಕಿಂಥ ಅಗ್ಗವಾಗಿ ಬೇರೆ ಇಂಧನ ಉತ್ಪಾದಿಸುವ ತಂತ್ರಜ್ಞಾನವನ್ನು ವಿಜ್ಞಾನ ರೂಪಿಸಿದರೆ ಮತ್ತು ಇದು ಎಲ್ಲಾ ರಾಷ್ಟ್ರಗಳಿಗೂ ಉತ್ಪಾದಿಸಲು ಸಾಧ್ಯವಾಗುವಂತೆ ಅದಾಗ (ಉದಾ: ಸೌರ ವಿದ್ಯುತ್, ನೀರಿನಿಂದ ಇಂಧನ ಕೋಶಗಳು ಕೆಲಸ ಮಾಡುವಂಥ ತಂತ್ರಜ್ಞಾನ ಇತ್ಯಾದಿ) ದೇಶ ದೇಶಗಳ ನಡುವೆ ಇರುವ ಅಪನಂಬಿಕೆ ಕಡಿಮೆಯಾಗಿ ಮತ್ತು ಎಲ್ಲಾ ದೇಶಗಳೂ ಶಕ್ತಿ ಸಮೃದ್ಧತೆಯನ್ನು ಸಾಧಿಸಿ ಹೊಸ ವಿಶ್ವ ವ್ಯವಸ್ಥೆ ಬರಲು ಸಾಧ್ಯ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂಥ ಚಿಂತನೆ ನಡೆಯಬೇಕಾದ ಅಗತ್ಯ ಇದೆ.

 

ಕಾಂಗ್ರೆಸ್ ಪಕ್ಷದಲ್ಲಿ ಚಿಂತನಶೀಲತೆಯ ಕೊರತೆ

– ಆನಂದ ಪ್ರಸಾದ್

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ನಾಯಕತ್ವ ಹಾಗೂ ಚಿಂತನೆಯ ಕೊರತೆಯಿಂದ ಬಳಲುತ್ತಿದೆ. ಪರಮ ಭ್ರಷ್ಟರನ್ನು ಜಾತಿಯ ಮುಖ ನೋಡಿ ಪಕ್ಷಕ್ಕೆ ಸೇರಿಸಿಕೊಳ್ಳುವ ಚಿಂತನೆ ನಡೆಯುತ್ತಿದೆ ಎಂಬ ಪರೋಕ್ಷ ಸುಳಿವುಗಳು ಇವೆ. ಇದರಿಂದ ಪಕ್ಷಕ್ಕೆ ಹಾನಿಯೇ ಹೊರತು ಲಾಭವಾಗಲು ಸಾಧ್ಯವಿಲ್ಲ. ಇದುವರೆಗೆ ಕರ್ನಾಟಕವು ಕಂಡು ಕೇಳರಿಯದ ಪರಮ ಭ್ರಷ್ಟ ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಅವರು ತಮ್ಮ ಮಾತೃ ಪಕ್ಷವನ್ನು ತೊರೆದರೆ ಮತ್ತು ತಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡರೆ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ಪಕ್ಷವು ಸಿದ್ಧವಿದೆ ಎಂಬ ಸುಳಿವನ್ನು ಕಾಂಗ್ರೆಸ್ಸಿನ ರಾಜ್ಯ ಅಧ್ಯಕ್ಷರು ಹೇಳಿರುವ ವರದಿಯಾಗಿದೆ. ತಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿದ ಕೂಡಲೇ ಭ್ರಷ್ಟರ ಭ್ರಷ್ಟಾಚಾರ ತೊಳೆದು ಹೋಗುತ್ತದೆಯೇ? ಇಂಥ ಸಮಯಸಾಧಕತನದ ಧೋರಣೆಗಳಿಂದ ಪಕ್ಷವು ಜನರ ವಿಶ್ವಾಸ ಗಳಿಸಲಾರದು ಮತ್ತು ಗಳಿಸಿದ ವಿಶ್ವಾಸವೂ ಕಳೆದುಹೋಗಬಹುದು. ಇದೇ ರೀತಿ ಅಕ್ರಮ ಗಣಿವೀರ ಹಾಗೂ ಈಗ ಜೈಲಿನಲ್ಲಿರುವ ದೇಶದ್ರೋಹಿ ಮಾಜಿ ಮಂತ್ರಿಯೊಬ್ಬರನ್ನು ಹಾಗೂ ಅವರ ಅಕ್ರಮ ಗಣಿ ಹಣದಿಂದ ಹೊಸ ಪಕ್ಷ ಕಟ್ಟಿದ ಇನ್ನೊಬ್ಬರನ್ನೂ ಕೂಡ ಸೇರಿಸಿಕೊಳ್ಳಲು ಹಿಂಜರಿಯದ ಮನೋಸ್ಥಿತಿ ಕಾಂಗ್ರೆಸಿನ ಕೆಲವರಲ್ಲಿ ಇರುವಂತೆ ಕಾಣುತ್ತದೆ. ಒಂದು ಶತಮಾನಕ್ಕಿಂತಲೂ ಹೆಚ್ಚು ಇತಿಹಾಸ ಇರುವ ಕಾಂಗ್ರೆಸ್ ಪಕ್ಷವು ಸೂಕ್ತ ಚಿಂತನೆ ಇಲ್ಲದೆ ಬಳಲುತ್ತಿರುವ ಕಾರಣ ಇಂಥ ವಿಕೃತ ಆಲೋಚನೆಗಳು ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಹುಟ್ಟಿಕೊಳ್ಳುತ್ತವೆ ಎನ್ನಲು ಅಡ್ಡಿಯಿಲ್ಲ. ಯಾರು ಮೊದಲಿನ ಸರ್ಕಾರದಲ್ಲಿ ಭಾಗಿಯಾಗಿ ಪರಮ ಭ್ರಷ್ಟಾಚಾರ ನಡೆಸಿ ಮತ್ತೆ ಚುನಾವಣೆಗೆ ಹೋಗುತ್ತಾರೋ ಅಂಥ ಸಂದರ್ಭದಲ್ಲಿ ಜನ ಅವರನ್ನು ತಿರಸ್ಕರಿಸುತ್ತಾರೆ ಎಂಬ ಮೂಲಭೂತ ಚಿಂತನೆಯೂ ಇಲ್ಲದ ಕಾಂಗ್ರೆಸ್ಸಿನ ಚಿಂತನೆಯ ದಿವಾಳಿಕೋರತನವೇ ಅದಕ್ಕೆ ಮುಳುವಾಗಬಹುದು.

ರಾಜ್ಯದಲ್ಲಿ ಇರುವ ಬಿಜೆಪಿ ಸರ್ಕಾರದ ದುರಾಡಳಿತ ಹಾಗೂ ಭ್ರಷ್ಟತೆಯಿಂದ ಜನ ರೋಸಿಹೋಗಿರುವ ಸಂದರ್ಭದಲ್ಲಿ ಉತ್ತಮ ಆಡಳಿತದ ಭರವಸೆಯನ್ನು ನೀಡುವಂಥ ನಾಯಕನ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಚುನಾವಣೆಗೆ ಹೋದರೆ ಗೆಲ್ಲುವ ಸಾಧ್ಯತೆ ಮುಂಬರುವ ಚುನಾವಣೆಗಳಲ್ಲಿ ಇದೆ. ಇದಕ್ಕಾಗಿ ಪರಮ ಭ್ರಷ್ಟರಿಗೂ, ಅಕ್ರಮ ಗಣಿಕಳ್ಳರಿಗೂ, ದೇಶದ್ರೋಹಿಗಳಿಗೂ ಜಾತಿ ಅಥವಾ ಹಣದ ಮುಖ ನೋಡಿ ಮಣೆ ಹಾಕಬೇಕಾದ ಅಗತ್ಯ ಇಲ್ಲ. ನಾಯಕತ್ವದ ಗುಣ ಎಲ್ಲರಲ್ಲೂ ಇರುವುದಿಲ್ಲ ಮತ್ತು ಅದು ಮೂಲಭೂತವಾಗಿ ಹುಟ್ಟಿನಿಂದಲೇ ಬರುವಂಥ ಒಂದು ಗುಣ. ಹೀಗಾಗಿಯೇ ನಾಯಕರನ್ನು ತರಬೇತಿ ಮಾಡಿ ರೂಪಿಸಲು ಆಗುವುದಿಲ್ಲ. ಹೀಗಾಗಿ ಇಂಥ ನಾಯಕತ್ವದ ಗುಣ ಯಾರಲ್ಲಿ ಇದೆಯೋ ಅದನ್ನು ಗುರುತಿಸಿ ಅವರಿಗೆ ನಿರ್ಣಯ ತೆಗೆದುಕೊಳ್ಳುವ ಅವಕಾಶ ಕೊಟ್ಟರೆ ಮತ್ತು ಜನರನ್ನು ತಮ್ಮತ್ತ ಆಕರ್ಷಿಸಿ ಸಂಘಟಿಸುವ ಹೊಣೆಗಾರಿಕೆ ಕೊಟ್ಟರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಏರಿ ಉತ್ತಮ ಆಡಳಿತ ನೀಡುವ ಸಾಧ್ಯತೆ ಇದೆ. ಪ್ರಸಕ್ತ ರಾಜ್ಯದಲ್ಲಿ ಅಂಥ ನಾಯಕತ್ವದ ಸಾಮರ್ಥ್ಯ ಇರುವ ಮುಂಚೂಣಿ ವ್ಯಕ್ತಿ ಎಂದರೆ ಸಿದ್ಧರಾಮಯ್ಯ. ಸಮಾಜವಾದಿ ಹಿನ್ನೆಯಿಂದ ಬಂದಿರುವ ಸಿದ್ಧರಾಮಯ್ಯ ಅಧಿಕಾರಿ ವರ್ಗವನ್ನು ಹದ್ದುಬಸ್ತಿನಲ್ಲಿಟ್ಟು ಉತ್ತಮ ಆಡಳಿತ ನೀಡಬಲ್ಲ ಹಾಗೂ ಅರ್ಥಿಕ ಶಿಸ್ತು ತರಬಲ್ಲ ನಾಯಕ. ಇಂಥ ವ್ಯಕ್ತಿಗೆ ನಾಯಕತ್ವದ ಸ್ಪಷ್ಟ ಭರವಸೆ ಸಿಗದಿರುವ ಅತಂತ್ರ ಸ್ಥಿತಿ ಇರುವ ಕಾರಣ ಸಿದ್ಧರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿ ತನ್ನನ್ನು ತಾನು ಪೂರ್ಣವಾಗಿ ಸಂಘಟನೆಯಲ್ಲಿ ತೊಡಗಿಕೊಂಡಿಲ್ಲದಂತೆ ಕಂಡು ಬರುತ್ತದೆ. ಅದೇ ರೀತಿ ಸಿದ್ಧರಾಮಯ್ಯನವರೂ ಒಂದು ಜಾತಿಗೆ ಸೀಮಿತವಾಗದೆ ಎಲ್ಲರನ್ನೂ ಜೊತೆಗೆ ಕೊಂಡೊಯ್ಯುವ ಮುತ್ಸದ್ಧಿತನ ತೋರಿದರೆ ರಾಜ್ಯಕ್ಕೆ ಉತ್ತಮ ನಾಯಕತ್ವ ನೀಡುವ ಎಲ್ಲ ಸಾಧ್ಯತೆಯೂ ಇದೆ.

ಚಿಂತನಶೀಲ ಗುಣ ಹಾಗೂ ನಾಯಕತ್ವದ ಗುಣ ಒಂದೇ ವ್ಯಕ್ತಿಯಲ್ಲಿ ಕಂಡುಬರುವುದು ಬಹಳ ಅಪರೂಪ. ಚಿಂತನಶೀಲ ಗುಣ ಇರುವ ಸಾಹಿತಿಗಳು, ವಿಜ್ಞಾನಿಗಳು, ಚಿಂತಕರು, ಪ್ರಾಧ್ಯಾಪಕರು ಮೊದಲಾದವರಲ್ಲಿ ನಾಯಕತ್ವದ ಗುಣ ಇರುವುದಿಲ್ಲ. ಅದೇ ರೀತಿ ನಾಯಕತ್ವದ ಗುಣ ಉಳ್ಳ ರಾಜಕಾರಣಿಗಳು, ಉದ್ಯಮಿಗಳು ಮೊದಲಾದವರಲ್ಲಿ ಸಮರ್ಪಕ ಚಿಂತನೆಯ ಅಭಾವ ಇರುತ್ತದೆ. ಇವೆರಡೂ ಗುಣಗಳು ಒಂದೇ ವ್ಯಕ್ತಿಯಲ್ಲಿ ಬಂದಂಥ ಸಂದರ್ಭದಲ್ಲಿ ಅವರು ಒಂದು ದೇಶ ಅಥವಾ ಜನಾಂಗವನ್ನು ಸರ್ವತೋಮುಖ ಹಾಗೂ ಸಮತೋಲಿತ ಅಭಿವೃದ್ಧಿಯೆಡೆಗೆ ಕೊಂಡೊಯ್ಯಬಲ್ಲರು. ಹೀಗಾಗಿ ನಾಯಕತ್ವದ ಗುಣ ಉಳ್ಳವರು ಚಿಂತನಶೀಲರಿಂದ ಸಲಹೆಗಳನ್ನು ಪಡೆದುಕೊಂಡು ಮುನ್ನಡೆಯುವುದು ಯಾವಾಗಲೂ ಆರೋಗ್ಯಕರ ಹಾಗೂ ಪ್ರಯೋಜನಕಾರಿ. ಇದರಿಂದ ದೇಶಕ್ಕೆ, ಮಾನವ ಜನಾಂಗಕ್ಕೆ ನಿಸ್ಸಂಶಯವಾಗಿ ಒಳಿತಾಗುತ್ತದೆ. ಈ ನಿಟ್ಟಿನಲ್ಲಿ ನೋಡಿದರೆ ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಚಿಂತನಶೀಲ ಗುಣ ಹಾಗೂ ನಾಯಕತ್ವದ ಗುಣ ಎರಡೂ ಇರುವ ನಾಯಕ ಸಿದ್ಧರಾಮಯ್ಯ ಎಂದರೆ ತಪ್ಪಾಗಲಾರದು. ಸಿದ್ಧರಾಮಯ್ಯನವರು ಮೂಲತಃ ಕಾಂಗ್ರೆಸ್ ನಾಯಕರಲ್ಲದಿದ್ದರೂ ಅವರ ಕೈಗೆ ಮುಂದಿನ ಚುನಾವಣೆಗಳನ್ನು ಮುನ್ನಡೆಸುವ ಜವಾಬ್ದಾರಿ ನೀಡಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿದರೆ ರಾಜ್ಯಕ್ಕೆ ಉತ್ತಮ ನಾಯಕತ್ವ ಸಿಗಲು ಸಾಧ್ಯ. ಕಾಂಗ್ರೆಸಿನಲ್ಲಿ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಪರಮೇಶ್ವರ್ ಮೊದಲಾದ ನಾಯಕರು ಇದ್ದರೂ ಸಿದ್ಧರಾಮಯ್ಯನವರಂತೆ ಜನರ ಮೇಲೆ ಪ್ರಭಾವ ಬೀರಬಲ್ಲ ವರ್ಚಸ್ಸು ಹೊಂದಿಲ್ಲ. ಇದನ್ನು ಉಳಿದ ನಾಯಕರು ಅರ್ಥ ಮಾಡಿಕೊಳ್ಳಬೇಕಾಗಿದೆ.

ಸರ್ವಾಧಿಕಾರಿ ಧೋರಣೆಯ ಸರ್ಕಾರ

-ಆನಂದ ಪ್ರಸಾದ್

ರಾಜ್ಯ ಬಿಜೆಪಿ ಸರ್ಕಾರಕ್ಕೆ ಸಂವಿಧಾನಬದ್ಧ ಆಡಳಿತದಲ್ಲಿ ನಂಬಿಕೆ ಇರುವಂತೆ ಕಾಣುವುದಿಲ್ಲ. ಲೋಕಾಯುಕ್ತರ ನೇಮಕ ಮಾಡದೆ ಹುದ್ದೆಯನ್ನು ಖಾಲಿ ಬಿಡಲಾಗಿದೆ. ಎರಡನೇ ಉಪಲೋಕಾಯುಕ್ತರಾಗಿ ನೇಮಕವಾದ ಚಂದ್ರಶೇಖರಯ್ಯ ಅವರ ನೇಮಕವನ್ನು ರಾಜ್ಯ ಹೈಕೋರ್ಟ್ ಅಸಿಂಧುಗೊಳಿಸಿದೆ. ತನ್ನ ಮೂಗಿನ ನೇರಕ್ಕೆ ಲೋಕಾಯುಕ್ತ ಕಾಯ್ದೆಯನ್ನು ಅನ್ವಯಿಸಿಕೊಂಡು ತನಗೆ ಬೇಕಾದವರನ್ನು ಲೋಕಾಯುಕ್ತ, ಉಪ ಲೋಕಾಯುಕ್ತರಾಗಿ ನೇಮಕ ಮಾಡುವ ಸರ್ಕಾರದ ಕ್ರಮ ಸಂವಿಧಾನ ವಿರೋಧಿಯಾಗಿದೆ ಹಾಗೂ ಸರ್ವಾಧಿಕಾರಿ ಧೋರಣೆಯ ಕ್ರಮವಾಗಿದೆ.

ಆಳುವ ಪಕ್ಷದವರಿಗೆ ಮಾತ್ರ ಒಪ್ಪಿಗೆಯಾಗುವ ಲೋಕಾಯುಕ್ತರ ನೇಮಕ ಮಾಡಿದರೆ ಆಡಳಿತ ಪಕ್ಷದ ಹಲವರು ಆರೋಪಿ ಸ್ಥಾನದಲ್ಲಿ ಲೋಕಾಯುಕ್ತರ ಮುಂದೆ ನಿಂತಿರುವಾಗ ನಿಷ್ಪಕ್ಷಪಾತ ತನಿಖೆ ಸಾಧ್ಯವಾಗುತ್ತದೆ ಎಂದು ಯಾರಾದರೂ ನಂಬಲು ಸಾಧ್ಯವೇ?. ತಾವು ಪ್ರಜಾಪ್ರಭುತ್ವ ಮಾದರಿಯ ಸರ್ಕಾರ ನಡೆಸುತ್ತಿದ್ದೇವೆ ಎಂಬ ವಿಷಯ ಆಡಳಿತ ಪಕ್ಷದವರಿಗೆ ಇರುವಂತೆ ಕಾಣುವುದಿಲ್ಲ. ಹೈಕೋರ್ಟ್ ನ್ಯಾಯಮೂರ್ತಿಗಳು ತಮ್ಮ ಜೊತೆ ಸಮಾಲೋಚಿಸದೆ ಉಪಲೋಕಾಯುಕ್ತರ ನೇಮಕ ಮಾಡಲಾಗಿದೆ ಎಂದು ಹೇಳಿದಾಗಲೇ ಉಪಲೋಕಾಯುಕ್ತರಾಗಿ ನೇಮಕಗೊಂಡ ಚಂದ್ರಶೇಖರಯ್ಯನವರು ಆ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿತ್ತು. ಆದರೆ ಅವರು ಒಬ್ಬ ಅಧಿಕಾರದಾಹೀ ರಾಜಕಾರಣಿಯಂತೆ ತಮ್ಮ ಸ್ಥಾನಕ್ಕೆ ಅಂಟಿ ಕುಳಿತದ್ದು ನ್ಯಾಯಾಧೀಶರಾಗಿ ಕೆಲಸ ಮಾಡಬೇಕಾದವರ ವಿಶ್ವಾಸಾರ್ಹತೆಯನ್ನು ಕಡಿಮೆ ಮಾಡುತ್ತದೆ. ನ್ಯಾಯಾಧೀಶರು ರಾಜಕಾರಣಿಗಳಂತೆ ವರ್ತಿಸಿದರೆ ದೇಶವನ್ನು ಭ್ರಷ್ಟಾಚಾರ ಹಾಗೂ ದುರಾಡಳಿತದಿಂದ ಯಾರು ರಕ್ಷಿಸಬೇಕು?.

ಉಪಲೋಕಾಯುಕ್ತರ ನೇಮಕವನ್ನು ಅಸಿಂಧುಗೊಳಿಸಿದ ರಾಜ್ಯ ಹೈಕೋರ್ಟಿನ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಲು ಮುಂದಾಗಿರುವುದು ಸಮಂಜಸವಾಗಿಲ್ಲ. ಹೀಗಾಗಿ ಈಗ ಸುಪ್ರೀಂಕೋರ್ಟು ಎಲ್ಲ ರಾಜ್ಯಗಳಲ್ಲಿ ಲೋಕಾಯುಕ್ತ ಹಾಗೂ ಉಪಲೋಕಾಯುಕ್ತರ ನೇಮಕದಲ್ಲಿ ಅನುಸರಿಸಬೇಕಾದ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ತೀರ್ಪು ನೀಡಬೇಕಾಗಿರುವುದು ದೇಶದ ಹಿತದೃಷ್ಟಿಯಿಂದ ಅಗತ್ಯ. ಇಲ್ಲದೆ ಹೋದರೆ ಆಡಳಿತ ಪಕ್ಷದವರು ತಮಗೆ ಅನುಕೂಲಕರವೆನಿಸುವ ವ್ಯಕ್ತಿಗಳನ್ನು ಲೋಕಾಯುಕ್ತ ಹಾಗೂ ಉಪಲೋಕಾಯುಕ್ತರಾಗಿ ನೇಮಿಸುವ ಸರ್ವಾಧಿಕಾರಿ ಧೋರಣೆಯನ್ನು ಮುಂದುವರಿಸುವುದರಲ್ಲಿ ಅನುಮಾನವಿಲ್ಲ.

ಹೀಗಾಗಿ ಈ ದೇಶದ ಬಗ್ಗೆ ಕಾಳಜಿ ಇರುವ ಹಿರಿಯ ವಕೀಲರು ಈ ವಿಚಾರವಾಗಿ ಸುಪ್ರೀಂಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕಲು ಮುಂದಾಗುವುದು ಅಗತ್ಯ ಹಾಗೂ ಈ ವಿಚಾರವಾಗಿ ಸುಪ್ರೀಂಕೋರ್ಟಿಗೆ ಮನವರಿಕೆ ಮಾಡಬೇಕಾದ ಅಗತ್ಯ ಇದೆ. ಲೋಕಾಯುಕ್ತ ಹಾಗೂ ಉಪಲೋಕಾಯುಕ್ತ ಹುದ್ದೆಗಳನ್ನು ನಿರ್ದಿಷ್ಟ ಅವಧಿಯ ಒಳಗೆ ತುಂಬಲೇಬೇಕು ಎಂಬ ನಿರ್ಬಂಧವನ್ನು ವಿಧಿಸಬೇಕಾದ ಅಗತ್ಯ ಇದೆ. ಹೀಗೆ ಮಾಡಿದರೆ ಅನಿರ್ದಿಷ್ಟ ಅವಧಿಗೆ ಈ ಹುದ್ದೆಗಳನ್ನು ಖಾಲಿ ಬಿಡುವ ನಿಲುವನ್ನು ತಪ್ಪಿಸಬಹುದು.

ರಾಜ್ಯ ಸರ್ಕಾರವು ಪೊಲೀಸ್ ಮಹಾನಿರ್ದೇಶಕರ ನೇಮಕದಲ್ಲೂ ತನಗೆ ಸಂವಿಧಾನಬದ್ಧ ಆಡಳಿತದಲ್ಲಿ ನಂಬಿಕೆ ಇಲ್ಲ ಎಂಬುದನ್ನು ಶಂಕರ ಬಿದರಿ ನೇಮಕ ಮಾಡಿ ತೋರಿಸಿದೆ. ಈ ವಿಚಾರದಲ್ಲೂ ಹೈಕೋರ್ಟ್ ಛೀಮಾರಿ ಹಾಕಿದೆ. ಆದರೂ ಅದರಿಂದ ಪಾಠ ಕಲಿಯದೇ ಈ ವಿಚಾರದಲ್ಲೂ ಸುಪ್ರೀಂ ಕೋರ್ಟಿಗೆ ಹೋಗುವುದಾಗಿ ತಿಳಿಸಿದೆ. ತಾನು ಮಾಡಿದ್ದೇ ಸರಿ ಮತ್ತು ತಾನು ಏನು ಮಾಡಿದರೂ ನಡೆಯಬೇಕು ಎಂಬ ಇಂಥ ಧೋರಣೆಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರುವವರು ತಳೆಯುವುದಿಲ್ಲ. ಇಂಥ ಧೋರಣೆ ರಾಜಪ್ರಭುತ್ವಕ್ಕೆ ಮಾತ್ರ ಹೊಂದುತ್ತದೆ. ರಾಜಪ್ರಭುತ್ವದಲ್ಲಿ ಸಂವಿಧಾನ ಎಂಬುದು ಇರುವುದಿಲ್ಲ ಮತ್ತು ನ್ಯಾಯಾಂಗ ಎಂಬುದೂ ಇರುವುದಿಲ್ಲ. ರಾಜನೇ ಅಲ್ಲಿ ನ್ಯಾಯಾಧೀಶನ ಕೆಲಸ ಮಾಡುತ್ತಾನೆ. ಬಿಜೆಪಿ ಸರ್ಕಾರ ರಾಜಪ್ರಭುತ್ವದ ಗುಂಗಿನಲ್ಲೇ ಇದೆ. ಹೀಗಾಗಿ ಅದಕ್ಕೆ ನ್ಯಾಯಾಲಯದ ಆದೇಶವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಎಲ್ಲ ವಿಷಯದಲ್ಲೂ ಮೇಲ್ಮನವಿ ಮಾಡಲು ಹೋಗುತ್ತಿದೆ. ಮೇಲ್ನೋಟಕ್ಕೆ ಯಾವುದು ನ್ಯಾಯ ಎಂಬುದು ಸಾಮಾನ್ಯ ಜನರಿಗೂ ಕಂಡು ಬರುವ ವಿಷಯದಲ್ಲಿ ಮೇಲ್ಮನವಿ ಸಲ್ಲಿಸಲು ಹೋಗುವುದು ವಿವೇಕವಲ್ಲ.

ತುಂಬಾ ದೀರ್ಘಕಾಲ ಲೋಕಾಯುಕ್ತ ಹುದ್ದೆಯನ್ನು ಖಾಲಿ ಬಿಟ್ಟಿದ್ದರೂ ರಾಜ್ಯದ ಮುಖ್ಯ ವಾಹಿನಿಯ ಮಾಧ್ಯಮಗಳು ಈ ಬಗ್ಗೆ ಚಕಾರ ಎತ್ತುತ್ತಾ ಇಲ್ಲ. ಹೀಗಾದರೆ ಮಾಧ್ಯಮಗಳು ಇರುವುದು ಏಕೆ ಎಂಬ ಪ್ರಶ್ನೆ ಏಳುವುದಿಲ್ಲವೇ? ಎಲ್ಲ ಮಾಧ್ಯಮಗಳೂ ಸೇರಿ ಈ ವಿಷಯದಲ್ಲಿ ಸರ್ಕಾರದ ಮೇಲೆ ನಿರಂತರ ಒತ್ತಡ ನಿರ್ಮಿಸಿದ್ದರೆ ಯಾವಾಗಲೋ ಲೋಕಾಯುಕ್ತರ ನೇಮಕ ಆಗುತ್ತಿತ್ತು. ರಾಜ್ಯದ ಮಾಧ್ಯಮಗಳು ಆಳುವ ಪಕ್ಷದ ಬಗ್ಗೆ ಮೃದು ಧೋರಣೆ ತಳೆಯಲು ಕಾರಣ ಏನು ಎಂಬ ಬಗ್ಗೆ ಜನ ಆಲೋಚಿಸಬೇಕಾದ ಅಗತ್ಯ ಇದೆ.

ನೈಸರ್ಗಿಕ ಸಂಪತ್ತಿನ ಉಪಯೋಗ ದೇಶದ ಅಭಿವೃದ್ಧಿಗೆ ಬಳಕೆಯಾಗಲಿ

-ಆನಂದ ಪ್ರಸಾದ್

ವಿವಿಧ ಲೋಹಗಳ ಅದಿರುಗಳು, ಕಲ್ಲಿದ್ದಲು, ನೈಸರ್ಗಿಕ ಅನಿಲ ಮೊದಲಾದವು ನಮ್ಮ ರಾಷ್ಟ್ರೀಯ ಸಂಪತ್ತುಗಳಾಗಿವೆ. ಅಕ್ರಮ ಹಾಗೂ ಸಕ್ರಮ ಗಣಿಗಾರಿಕೆಯ ಮೂಲಕ ಇವುಗಳನ್ನು ಕೆಲವೇ ಖಾಸಗಿ ವ್ಯಕ್ತಿಗಳು ಲೂಟಿ ಹೊಡೆಯುತ್ತಿದ್ದು. ಸರ್ಕಾರಕ್ಕೆ ಸೇರಬೇಕಾದ ಮತ್ತು ತನ್ಮೂಲಕ ಜನತೆಯ ಕಲ್ಯಾಣಕ್ಕೆ ಉಪಯೋಗಿಸಬೇಕಾಗಿದ್ದ ಅಪಾರ ಸಂಪತ್ತು ಖಾಸಗಿ ವ್ಯಕ್ತಿಗಳ ತಿಜೋರಿ ಸೇರಿ ಪರದೇಶಗಳಲ್ಲಿ ಕಪ್ಪು ಹಣವಾಗಿ ಸಂಗ್ರಹವಾಗಿದೆ.

ನಮ್ಮ ದೇಶದಲ್ಲಿ ಉದಾರೀಕರಣ ಹಾಗೂ ಜಾಗತೀಕರಣದ ನಂತರ ದೇಶದ ಖನಿಜ ಸಂಪತ್ತು ಸಕ್ರಮವಾಗಿಯೇ ಖಾಸಗಿ ವ್ಯಕ್ತಿಗಳ ತಿಜೋರಿ ಸೇರುತ್ತಿದೆ. ಒಬ್ಬ ವ್ಯಕ್ತಿ ಅಥವಾ ಕಂಪನಿ ಅದಿರನ್ನು ಅಗೆದು ಮಾರಿದಾಕ್ಷಣ ಅದರ ಬಹುಪಾಲು ಆ ವ್ಯಕ್ತಿಗೆ ಸೇರುವುದು ಎಷ್ಟರ ಮಟ್ಟಿಗೆ ಸಮಂಜಸ? ಉದಾಹರಣೆಗೆ ಕಬ್ಬಿಣದ ಅದಿರಿನ ರಾಯಧನ ಟನ್ನಿಗೆ ಮಾರುಕಟ್ಟೆ ಬೆಲೆಯ 10% ಇದೆ ಅಂದರೆ ಟನ್ನಿಗೆ ಮಾರುಕಟ್ಟೆ ಬೆಲೆ 5000 ರೂಪಾಯಿ ಇದ್ದರೆ 500 ರೂಪಾಯಿ ಸರ್ಕಾರಕ್ಕೆ ಪಾವತಿಸಿ ಉಳಿದ ಹಣ ಅದಿರನ್ನು ಅಗೆದು ಸಾಗಿಸಿದ ಕಂಪನಿಗೆ ಸೇರುತ್ತದೆ.

ಸಕ್ರಮ ಗಣಿಗಾರಿಕೆ ಕೂಡ ದೇಶದ ಸಂಪತ್ತನ್ನು ಬಳಸಿ ಕೆಲವೇ ಕೆಲವರು ಶ್ರೀಮಂತರಾಗಲು ಅವಕಾಶ ಮಾಡಿಕೊಡುವಂತೆ ಸರ್ಕಾರದ ನೀತಿ ಇದೆ. ಇದರ ಬದಲು ರಾಯಧನ ಟನ್ನಿಗೆ 50% ನಿಗದಿಪಡಿಸಿದರೆ ಸರ್ಕಾರಕ್ಕೆ ಸಾಕಷ್ಟು ಆದಾಯ ಬರಬಹುದು. ಭಾರತ ಪ್ರತಿ ವರ್ಷ 20 ಕೋಟಿ ಟನ್ನಿನಷ್ಟು ಕಬ್ಬಿಣದ ಅದಿರನ್ನು ಹೊರತೆಗೆದರೆ ಇದರ ಅರ್ಧದಷ್ಟನ್ನು ಅಂದರೆ 10 ಕೋಟಿ ಟನ್ನಿನಷ್ಟು ಬೇರೆ ದೇಶಗಳಿಗೆ ರಫ್ತು ಮಾಡುತ್ತದೆ. 20 ಕೋಟಿ ಟನ್ನಿಗೆ 10% ರಾಯಧನದಂತೆ ಸರ್ಕಾರಕ್ಕೆ ಈಗ ಸಂದಾಯವಾಗುವ ಹಣ 10,000 ಕೋಟಿ ರೂಪಾಯಿಗಳು ಮಾತ್ರ. ಇದು ಸಕ್ರಮವಾಗಿ ಗಣಿಗಾರಿಕೆ ಮಾಡಿದರೆ ಮಾತ್ರ.

ಅಕ್ರಮ ಗಣಿಗಾರಿಕೆಯೂ ದೊಡ್ಡ ಪ್ರಮಾಣದಲ್ಲಿ ನಡೆಯುವುದರಿಂದ ಸರ್ಕಾರಕ್ಕೆ ಇಷ್ಟೂ ಆದಾಯ ಬರಲಿಕ್ಕಿಲ್ಲ. ಇದರ ಬದಲು ಟನ್ನಿಗೆ 50% ರಾಯಧನ ನಿಗದಿ ಮಾಡಿದರೆ ಸರ್ಕಾರಕ್ಕೆ 50,000 ಕೋಟಿ ಆದಾಯ ಕಬ್ಬಿಣದ ಅದಿರಿನಿಂದಲೇ ಬರುತ್ತದೆ. ಈ ಆದಾಯವನ್ನು ರಸ್ತೆ, ನೀರಾವರಿ, ವಿದ್ಯುತ್ ಉತ್ಪಾದನೆ ಮೊದಲಾದ ಕ್ಷೇತ್ರಗಳಿಗೆ ಬಳಸಬಹುದು ಅಥವಾ ಸೋಲಾರ್ ವಿದ್ಯುತ್ ಉತ್ಪಾದನೆಗೆ ಸಬ್ಸಿಡಿಯ ರೂಪದಲ್ಲಿ ನೀಡಿ ಅಸಂಪ್ರದಾಯಿಕ ಇಂಧನ ಉತ್ಪಾದನೆಗೆ ಉತ್ತೇಜನ ನೀಡಬಹುದು ಅಥವಾ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಬಳಸಬಹುದು.

ಕೃಷಿಕರ ಜಮೀನಿನ ಬದಿಯಲ್ಲಿ ತೋಡು ಅಥವಾ ನದಿ ಹರಿಯುತ್ತಿದ್ದರೆ ಆ ನದಿಯ ಬದಿಯ ಜಾಗವನ್ನು ಪರಂಬೋಕು ಜಾಗ ಎಂದು ಹೇಳುತ್ತಾರೆ. ಪರಂಬೋಕು ಸರ್ಕಾರಕ್ಕೆ ಸೇರಿದ್ದು ಎಂದು ಪರಿಗಣಿಸಲ್ಪಡುತ್ತದೆ. ತೋಡು ಹಾಗೂ ನದಿಯ ಬದಿಯಲ್ಲಿ ಮರಗಳು ಬೆಳೆದು ನಿಂತಿರುತ್ತವೆ. ಈ ಮರಗಳು ಪ್ರವಾಹದ ಕಾರಣದಿಂದಾಗಿ ಹಾಗೂ ಮಣ್ಣಿನ ಸವೆತದಿಂದಾಗಿ ಬೇರುಗಳು ಸಡಿಲಗೊಂಡು ಆಗಾಗ ಬೀಳುತ್ತಿರುತ್ತವೆ. ಈ ಬಿದ್ದ ಮರವನ್ನೂ ಕೃಷಿಕನು ತನ್ನ ಮನೆ ಉಪಯೋಗಕ್ಕಾಗಿ ಅರಣ್ಯ ಇಲಾಖೆಯ ಕಾನೂನಿನ ಪ್ರಕಾರ ಬಳಸುವಂತಿಲ್ಲ. ಅದನ್ನು ಬಳಸಬೇಕಾದರೆ ಸರ್ಕಾರಕ್ಕೆ ಆ ಮರದ ಮಾರುಕಟ್ಟೆ ಮೌಲ್ಯವನ್ನು ಸಂಪೂರ್ಣವಾಗಿ ಪಾವತಿಸಿ ಉಪಯೋಗಿಸಬೇಕು. ಆ ಮರವು ಕೃಷಿಕನ ಜಮೀನಿನ ಬದಿಯಲ್ಲೇ ಇದ್ದರೂ, ಅದನ್ನು ಕೃಷಿಕನು ಕಳ್ಳಕಾಕರಿಂದ ರಕ್ಷಿಸಿದರೂ ಅವನಿಗೆ ಆ ಮರದ ಉಪಯೋಗದಲ್ಲಿ ಎಳ್ಳಷ್ಟೂ ರಿಯಾಯಿತಿ ಇಲ್ಲ. ಆ ಬಿದ್ದ ಮರವು ಮಳೆ ಗಾಳಿಗೆ ಹಾಳಾಗಿ ಹೋದರೂ ಅದನ್ನು ಕೃಷಿಕನ ಉಪಯೋಗಕ್ಕೆ ಕೊಡುವುದಿಲ್ಲ ಹಾಗೂ ಅರಣ್ಯ ಇಲಾಖೆಯವರು ಅದನ್ನು ತಾವೂ ಕೊಂಡು ಹೋಗುವುದಿಲ್ಲ. ಅದು ಅಲ್ಲೇ ಬಿದ್ದು ಗೆದ್ದಲು ಹಿಡಿದು ಹಾಳಾಗಿ ಹೋದರೂ ಸರಿ ಕೃಷಿಕನ ಉಪಯೋಗಕ್ಕೆ ಕೊಡುವುದಿಲ್ಲ ಎಂಬುದು ಅರಣ್ಯ ಇಲಾಖೆಯ ನಿಲುವು.

ಇದೇ ನಿಲುವನ್ನು ಕಬ್ಬಿಣದ ಅದಿರಿನ ಬಗೆಗಿನ ನಿಲುವಿನ ಜೊತೆ ಹೋಲಿಸಿ ನೋಡಿದರೆ ಅದಿರಿನ ವಹಿವಾಟಿನಲ್ಲಿ ಸರ್ಕಾರದ ಕಾನೂನಿನ ಪ್ರಕಾರವೇ (ಅಂದರೆ ಸಕ್ರಮ ಗಣಿಗಾರಿಕೆ ಮೂಲಕವೇ) ಎಸ್ಟೊಂದು ತಾರತಮ್ಯ ಇದೆ ಎಂಬುದು ಗೊತ್ತಾಗುತ್ತದೆ. ಅದಿರನ್ನು ಅಗೆದು ಸಾಗಿಸಿದ ವ್ಯಕ್ತಿ/ಕಂಪನಿಯು ಅದಿರಿನ ಮಾರುಕಟ್ಟೆ ಮೌಲ್ಯದ 10% ರಾಯಧನ ಸರ್ಕಾರಕ್ಕೆ ಸಲ್ಲಿಸಿದರೆ ಉಳಿದ ಲಾಭ ಆತನಿಗೇ ಸಿಗುತ್ತದೆ. ಕೃಷಿಕನ ಜೊತೆ ಸರ್ಕಾರ ಮರದ ವಿಷಯದಲ್ಲಿ ವರ್ತಿಸುವ ರೀತಿಗೂ ಒಬ್ಬ ಉದ್ಯಮಿಯ ವಿಚಾರದಲ್ಲಿ ಕಬ್ಬಿಣದ ಅದಿರಿನ ವಿಚಾರದಲ್ಲಿ ವರ್ತಿಸುವ ರೀತಿಗೂ ಎಷ್ಟು ಅಂತರ! ಎರಡೂ ಸರ್ಕಾರದ ಸೊತ್ತುಗಳೇ. ಇಂಥ ಕಾನೂನುಗಳನ್ನು ರಚಿಸಿದವರು ಬ್ರಿಟಿಷರಲ್ಲ ಬದಲಿಗೆ ನಮ್ಮ ಶಾಸಕರು ಹಾಗೂ ಸಂಸದರೇ.

ಕಬ್ಬಿಣದ ಅದಿರಿನ ವಿಚಾರದಲ್ಲಿ ಹಗಲು ದರೋಡೆಗೆ ಅವಕಾಶ ನೀಡಿದ ಈ ಕಾನೂನು ಸಕ್ರಮವಾಗಿಯೇ ದೇಶದ ಸಂಪತ್ತಿನ ಶೋಷಣೆಗೆ ಕಾರಣವಾಗಿದೆ. ಆದರೂ ಇದನ್ನು ಬದಲಿಸಿ ಕನಿಷ್ಠ 50% ರಾಯಧನವನ್ನಾದರೂ ಸರ್ಕಾರಕ್ಕೆ ಸಂದಾಯವಾಗುವಂತೆ ಕಾನೂನು ರೂಪಿಸಲು ನಮ್ಮ ಸರ್ಕಾರ ಯಾಕೆ ಮುಂದಾಗುವುದಿಲ್ಲ? ಈ ಬಗ್ಗೆ ಕಾನೂನು ರೂಪಿಸಲು ಯಾಕೆ ಯಾರೂ ಒತ್ತಾಯಿಸುವುದಿಲ್ಲ? ನಮ್ಮ ಮಾಧ್ಯಮಗಳು ಯಾಕೆ ಈ ವಿಷಯದಲ್ಲಿ ಕುರುಡು, ಮೂಕ ಹಾಗೂ ಕಿವುಡಾಗಿವೆ?

ಕಬ್ಬಿಣದ ಅದಿರು ಒಂದರ ಮೇಲೆಯೇ 50% ರಾಯಧನ ನಿಗದಿಪಡಿಸಿದರೆ ಸರ್ಕಾರಕ್ಕೆ ವಾರ್ಷಿಕವಾಗಿ (ದೇಶದಲ್ಲಿ) 50,000 ರೂಪಾಯಿ ಆದಾಯ ಬರುತ್ತದೆ. ಇದೇ ರೀತಿ ಕಲ್ಲಿದ್ದಲು, ನೈಸರ್ಗಿಕ ಅನಿಲ, ಬೇರೆ ಲೋಹಗಳ ಅದಿರುಗಳು ಇವುಗಳ ಮೇಲೆಯೂ ರಾಯಧನವನ್ನು 50% ನಿಗದಿ ಪಡಿಸಿದರೆ ಸರ್ಕಾರಕ್ಕೆ ಬಹಳಷ್ಟು ಆದಾಯ ಬರಬಹುದು. ಈಗ ಇವುಗಳ ಮೇಲೆ ಎಷ್ಟು ರಾಯಧನ ನಿಗದಿಯಾಗಿದೆ ಎಂಬ ಬಗ್ಗೆ ಮಾಹಿತಿ ಅಂತರ್ಜಾಲದಲ್ಲಿ ಸಿಗಲಿಲ್ಲ. ಇವುಗಳ ಮೇಲೆಯೂ ಕಬ್ಬಿಣದ ಅದಿರಿನ ರೀತಿಯಲ್ಲಿಯೇ ಬಹಳ ಕಡಿಮೆ ರಾಯಧನ ಇರುವ ಸಾಧ್ಯತೆ ಇದೆ. ಇದರಿಂದಾಗಿ ದೇಶದ ಸಂಪತ್ತನ್ನು ಕೆಲವೇ ಖಾಸಗಿ ವ್ಯಕ್ತಿಗಳು ನುಂಗಿ ಹಾಕುವ ಪರಿಸ್ಥಿತಿ ಇಂದು ದೇಶದಲ್ಲಿ ಇದೆ. ರಾಯಧನವನ್ನು 50% ಹೆಚ್ಚಿಸಿ ಈ ರೀತಿ ಬಂದ ಆದಾಯವನ್ನು ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಉಪಯೋಗಿಸಬಹುದು. ಇಂಥ ಕಾನೂನುಗಳನ್ನು ರೂಪಿಸಲು ನಮ್ಮ ಸಂಸತ್ತು ಹಾಗೂ ವಿಧಾನಸಭೆಗಳು ಮುಂದಾಗುವುದಿಲ್ಲ. ಇಂಥ ಕಾನೂನುಗಳನ್ನು ರೂಪಿಸುವಂತೆ ಜನತೆಯಿಂದ ಜನಪ್ರತಿನಿಧಿಗಳ ಮೇಲೆ ಒತ್ತಾಯ ಬರಬೇಕಾಗಿದೆ.

ಪ್ರಸಕ್ತ ಭಾರತದಲ್ಲಿ ರಾಷ್ಟ್ರೀಯ ನಾಯಕರ ಕೊರತೆ

-ಆನಂದ ಪ್ರಸಾದ್

ವರ್ತಮಾನ ಕಾಲದ ಭಾರತದ ರಾಜಕೀಯವನ್ನು ನೋಡಿದರೆ ರಾಷ್ಟ್ರೀಯ ನಾಯಕರಿಲ್ಲದೆ ದೇಶವು ಬಳಲುತ್ತಿದೆ. ಒಂದು ದೇಶವು ಅಭಿವೃದ್ಧಿಯಾಗಬೇಕಾದರೆ ದೂರದೃಷ್ಟಿಯುಳ್ಳ ರಾಷ್ಟ್ರೀಯ ನಾಯಕರು ಇರಬೇಕು. ದೇಶದ ಸಾಂಸ್ಕೃತಿಕ, ರಾಜಕೀಯ, ವೈಜ್ಞಾನಿಕ ಹಿನ್ನೆಲೆಯ ಅರಿವು ರಾಷ್ಟ್ರೀಯ ನಾಯಕರಿಗೆ ಇರಬೇಕು. ರಾಷ್ಟ್ರೀಯ ನಾಯಕರಿಗೆ ದೇಶದ ಜನತೆಯ ಜೊತೆ ನೇರ ಸಂಪರ್ಕ ಇರಬೇಕು. ಇಡೀ ದೇಶದಲ್ಲಿ ಆಗಾಗ ಪ್ರವಾಸ ಕೈಗೊಂಡು ಅಲ್ಲಿನ ಜನರ ಸಮಸ್ಯೆಗಳನ್ನು ಅರಿತು ಪರಿಹರಿಸುವ ಚಾಕಚಕ್ಯತೆ ಹಾಗೂ ಮನಸ್ಸು ಇರಬೇಕು. ಈ ಹಿನ್ನೆಲೆಯಲ್ಲಿ ನೋಡಿದರೆ ಇಂದು ಭಾರತದಲ್ಲಿ ರಾಷ್ಟ್ರೀಯ ನಾಯಕರು ಯಾವ ಪಕ್ಷದಲ್ಲಿಯೂ ಇರುವಂತೆ ಕಾಣುವುದಿಲ್ಲ. ಚುನಾವಣೆಯ ಸಮಯದಲ್ಲಿ ಮಾತ್ರ ನಾಯಕರು ಎನಿಸಿಕೊಂಡವರು ಪ್ರಚಾರಕ್ಕೆ ಬರುವುದನ್ನು ಬಿಟ್ಟರೆ ಉಳಿದ ಸಮಯದಲ್ಲಿ ಯಾವುದೇ ನಾಯಕರು ರಾಷ್ಟ್ರ ಸಂಚಾರ ಮಾಡುತ್ತಿರುವುದು ಕಂಡು ಬರುವುದಿಲ್ಲ. ಹೀಗಾಗಿ ಇಂದಿನ ನಮ್ಮ ರಾಷ್ಟ್ರೀಯ ಪಕ್ಷಗಳು ಎನಿಸಿಕೊಂಡ ಪಕ್ಷಗಳಿಗೂ ರಾಷ್ಟ್ರದ ಮೂಲಭೂತ ಸಮಸ್ಯೆಗಳ ಅರಿವು ಇಲ್ಲ ಮತ್ತು ನೆಲದ ಜೊತೆ ಸಂಪರ್ಕವೇ ಇಲ್ಲ. ಹೀಗಾಗಿ ಇಡೀ ದೇಶಕ್ಕೆ ನಾಯಕತ್ವ ನೀಡಬಲ್ಲ ಮುತ್ಸದ್ಧಿಗಳ ಕೊರತೆ ಇದೆ.

ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುತ್ತಿರುವ ಸೋನಿಯಾ ಗಾಂಧಿಯವರಿಗೆ ಜನರ ನೇರ ಸಂಪರ್ಕ ಇರುವಂತೆ ಕಾಣುವುದಿಲ್ಲ. ಭವಿಷ್ಯದ ನಾಯಕ ಎಂದು ಕಾಂಗ್ರೆಸ್ ಬಿಂಬಿಸುತ್ತಿರುವ ರಾಹುಲ್ ಗಾಂಧಿಗೂ ಜನತೆಯ ನೇರ ಸಂಪರ್ಕ ಇಲ್ಲ. ಹೀಗಾದರೆ ಒಂದು ರಾಷ್ಟ್ರೀಯ ಪಕ್ಷ ಬೆಳೆಯುವುದಾದರೂ ಹೇಗೆ? ದೇಶದ ಹಾಗೂ ರಾಜ್ಯದ ಆಗುಹೋಗುಗಳನ್ನು ತನ್ನ ಸುತ್ತ ಕಟ್ಟಿಕೊಂಡ ಒಂದಿಷ್ಟು ಮಂದಿಯ ಮೂಲಕವೇ ಅರಿಯುವ ವ್ಯವಸ್ಥೆ ಕಾಂಗ್ರೆಸ್ ಪಕ್ಷದಲ್ಲಿದೆ. ಹೀಗಾದಾಗ ನಿಜ ಸ್ಥಿತಿ ಏನೆಂದು ತಿಳಿಯುವ ಸಂಭವ ಕಡಿಮೆ. ತನ್ನ ಸುತ್ತ ಮುತ್ತ ಇರುವ ಮಂದಿ ಹೇಳಿದ್ದೇ ನಿಜ ಎಂಬ ಪರಿಸ್ಥಿತಿ ಇದರಿಂದ ರೂಪುಗೊಳ್ಳುತ್ತದೆ. ಪಕ್ಷದ ಅಧ್ಯಕ್ಷರಾಗಿರುವವರು ತಾನೇ ಸ್ವತಹ: ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಣಯ ತೆಗೆದುಕೊಳ್ಳದೆ ಹೋದರೆ ರಾಷ್ಟ್ರೀಯ ನಾಯಕತ್ವ ಬೆಳೆಯಲಾರದು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಆಗಾಗ ಬೇರೆ ಬೇರೆ ರಾಜ್ಯಗಳಿಗೆ ಭೇಟಿ ಕೊಟ್ಟು ಅಲ್ಲಿನ ಆಗುಹೋಗುಗಳನ್ನು ತಿಳಿಯುತ್ತಾ ಸ್ಥಳೀಯ ನಾಯಕರಿಗೆ ಸಲಹೆ ಸೂಚನೆ ಕೊಡುವುದು ಮತ್ತು ಪಡೆಯುವುದು ಮಾಡುವುದರಿಂದ ರಾಜ್ಯಗಳಲ್ಲಿ ಪಕ್ಷ ಬಲವರ್ಧನೆಗೊಳ್ಳಬಹುದು ಮತ್ತು ಹೀಗೆ ಮಾಡುವುದರಿಂದ ದೇಶದ ಎಲ್ಲೆಡೆ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಲು ಸಾಧ್ಯ. ಕಾಂಗ್ರೆಸ್ ಪಕ್ಷದ ವೆಬ್‍ಸೈಟ್ ನೋಡಿದರೆ ಅಲ್ಲಿಯೂ ಜನರ ಜೊತೆ ನೇರ ಸಂಪರ್ಕಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಜನರು ದೇಶದ ಯಾವುದೇ ಭಾಗದಿಂದಾದರೂ ತಮ್ಮ ಸಲಹೆ, ಸೂಚನೆ, ಸಮಸ್ಯೆಗಳನ್ನು ಪಕ್ಷಕ್ಕೆ ಹಾಗೂ ಪಕ್ಷದ ಅಧ್ಯಕ್ಷರಿಗೆ ತಿಳಿಸಲು ವ್ಯವಸ್ಥೆಯನ್ನು ಒಂದು ಉತ್ತಮ ಪಕ್ಷವು ಮಾಡಬೇಕು ಮತ್ತು ಜನರಿಂದ ಸಲಹೆ, ಸೂಚನೆಗಳನ್ನು ಆಹ್ವಾನಿಸಬೇಕು. ಹೀಗೆ ಮಾಡುವುದರಿಂದ ಪಕ್ಷದ ಬಗ್ಗೆ ಜನರಿಗೆ ಉತ್ತಮ ಅಭಿಪ್ರಾಯ ಬೆಳೆಯಲು ಸಾಧ್ಯ.

ಬಿಜೆಪಿ ಎಂಬ ಇನ್ನೊಂದು ರಾಷ್ಟ್ರೀಯ ಪಕ್ಷದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಇಲ್ಲಿಯೂ ಪಕ್ಷದ ಅಧ್ಯಕ್ಷರಿಗೆ ರಾಜ್ಯಗಳ ಜೊತೆ ನೇರ ಸಂಪರ್ಕ ಇಲ್ಲ. ಅದರ ವೆಬ್‍ಸೈಟ್‍ನಲ್ಲೂ ಜನರು ನೇರವಾಗಿ ಸಂಪರ್ಕಿಸುವ ವ್ಯವಸ್ಥೆ ಇಲ್ಲ. ಬಿಜೆಪಿಯಲ್ಲಿಯೂ ರಾಷ್ಟ್ರೀಯ ನಾಯಕರ ಅಭಾವ ಇದೆ. ಉಳಿದಂತೆ ಕೆಲವು ಪಕ್ಷಗಳು ರಾಷ್ಟ್ರೀಯ ಪಕ್ಷ ಎಂಬ ಹಣೆಪಟ್ಟಿ ಇದ್ದರೂ ಅವುಗಳ ಪ್ರಭಾವ ಪ್ರಾದೇಶಿಕ ಮಾತ್ರವೇ ಆಗಿದೆ. ಹೀಗಾಗಿ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಹೊರತುಪಡಿಸಿದರೆ ರಾಷ್ಟ್ರೀಯ ಪಕ್ಷಗಳು ಇಲ್ಲವೆಂದೇ ಹೇಳಬಹುದು. ಈ ಎರಡೂ ಪಕ್ಷಗಳ ನೀತಿಯೂ ಉದಾರೀಕರಣದ ನಂತರ ಒಂದೇ ಆಗಿದೆ ಎಂಬ ದೂರು ಇದೆ. ಹೀಗಾಗಿ ಇವುಗಳನ್ನು ಬಿಟ್ಟು ಇನ್ನೊಂದು ಪರ್ಯಾಯ ರಾಷ್ಟ್ರೀಯ ಪಕ್ಷ ಇಲ್ಲದಿರುವುದರಿಂದ ಜನರಿಗೆ ಆಯ್ಕೆಯೇ ಇಲ್ಲದಂತೆ ಆಗಿದೆ. ತೃತೀಯ ರಂಗ ಎಂದು ರೂಪುಗೊಳ್ಳಬಹುದಾದ ಒಂದು ರಂಗದಲ್ಲಿ ರಾಷ್ಟ್ರೀಯ ವರ್ಚಸ್ಸಿನ ನಾಯಕರು ಕಾಣಿಸುತ್ತಿಲ್ಲ. ಇರುವ ನಾಯಕರೆಲ್ಲರೂ ಪ್ರಾದೇಶಿಕ ರಾಜಕೀಯಕ್ಕೆ ಸೀಮಿತವಾಗಿರುವುದರಿಂದಾಗಿ ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಒಂದು ಸಾಮಾನ್ಯ ಪ್ರಣಾಳಿಕೆಯಡಿಯಲ್ಲಿ ಒಟ್ಟುಗೂಡಿಸಿ ಸಂಭಾಳಿಸಿಕೊಂಡು ಹೋಗುವುದು ಸಾಧ್ಯವಾಗದ ಒಂದು ಪರಿಸ್ಥಿತಿ ಇದೆ. ಇಂಥ ಸ್ಥಿತಿ ಇರುವುದರಿಂದಾಗಿ ದೇಶದ ಸರ್ವತೋಮುಖ ಅಭಿವೃದ್ಧಿ ಅಸಾಧ್ಯವಾಗಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವಾಗ ಬಹಳಷ್ಟು ರಾಷ್ಟ್ರೀಯ ನಾಯಕರು ರೂಪುಗೊಂಡಿದ್ದರು. ಗಾಂಧಿ, ನೆಹರೂ, ಪಟೇಲ್ ಮೊದಲಾದ ನಾಯಕರು ರಾಷ್ಟ್ರದಲ್ಲಿ ಆಗಾಗ ಪ್ರವಾಸ ಮಾಡುತ್ತಾ ಜನರ ಜೊತೆ ನೇರ ಸಂಪರ್ಕ ಇರಿಸಿಕೊಂಡ ಕಾರಣ ಇಡೀ ರಾಷ್ಟ್ರದಲ್ಲಿ ಅವರಿಗೆ ವರ್ಚಸ್ಸು ಇತ್ತು. ಇಂದು ಅಂಥ ರಾಷ್ಟ್ರೀಯ ನಾಯಕರು ಇಲ್ಲದೆ ಹೋಗಿರುವುದರಿಂದಾಗಿಯೇ ಪ್ರಾದೇಶಿಕ ಪಕ್ಷಗಳು ಬೆಳೆದು ರಾಷ್ಟ್ರೀಯ ಹಿತಾಸಕ್ತಿಗಳು ಮರೆಯಾಗಿ ಪ್ರಾದೇಶಿಕ ಹಿತಾಸಕ್ತಿಗಳು ತಾಂಡವವಾಡುತ್ತಿದ್ದು ದೇಶದಲ್ಲಿ ಪರ್ಯಾಯ ರಾಜಕೀಯ ವ್ಯವಸ್ಥೆಯೇ ರೂಪುಗೊಳ್ಳದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾದೇಶಿಕ ಪಕ್ಷಗಳು ತಮ್ಮ ಬೆಂಬಲ ವಾಪಾಸ್ ಪಡೆಯುವ ಬೆದರಿಕೆ ಹಾಕಿ ತಮ್ಮ ರಾಜ್ಯಕ್ಕೆ ಮಾತ್ರ ಅನುಕೂಲ ಮಾಡಿಕೊಂಡು ಉಳಿದ ರಾಜ್ಯಗಳನ್ನು ಕಡೆಗಣಿಸುವ ಪ್ರವೃತ್ತಿಯಿಂದಾಗಿ ಮೈತ್ರಿರಂಗದ ರಾಜಕೀಯ ದೇಶದಲ್ಲಿ ಅಸಮಾನತೆಯನ್ನು ಹುಟ್ಟು ಹಾಕಲು ಕಾರಣವಾಗಿದೆ. ಇಂಥ ಪ್ರವೃತ್ತಿ ರಾಷ್ಟ್ರ ಹಿತಕ್ಕೆ ಮಾರಕ ಎಂಬುದರಲ್ಲಿ ಸಂದೇಹವಿಲ್ಲ. ಇಂಥ ಪ್ರವೃತ್ತಿಯಿಂದ ಹೊರಬರಬೇಕಾದರೆ ರಾಷ್ಟ್ರೀಯ ಪಕ್ಷಗಳನ್ನು ಜನರು ಬೆಂಬಲಿಸಬೇಕಾದ ಅಗತ್ಯ ಇದೆ.

ಅಲ್ಲದೆ ದೇಶದಲ್ಲಿ ಈಗ ಇರುವ ಎರಡು ಪ್ರಧಾನ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ ಇನ್ನೂ ಒಂದು ರಾಷ್ಟ್ರವ್ಯಾಪಿ ಪಕ್ಷವನ್ನು ರೂಪಿಸಬೇಕಾದ ಅಗತ್ಯ ಇದೆ ಅಥವಾ ಈಗ ಇರುವ ಪ್ರಾದೇಶಿಕ ಪಕ್ಷಗಳು ಸ್ಪಷ್ಟವಾದ ಸೈದ್ದಾಂತಿಕ ಆಧಾರದಲ್ಲಿ ಒಂದು ರಾಷ್ಟ್ರೀಯ ರಂಗವನ್ನು ರಚಿಸಿಕೊಂಡು ಚುನಾವಣೆಗಳಲ್ಲಿ ಸಾಮಾನ್ಯ ಪ್ರಣಾಳಿಕೆಯಡಿಯಲ್ಲಿ ಒಟ್ಟಾಗಿ ಹೋರಾಡಿ ಒಂದು ರಾಷ್ಟ್ರೀಯ ಸರ್ಕಾರ ರೂಪಿಸುವ ಪರಿಸ್ಥಿತಿ ಬರುವಂತೆ ಮಾಡಬೇಕಾದ ಅಗತ್ಯ ಇದೆ. ಇಂಥ ರಾಷ್ಟ್ರೀಯ ರಂಗವನ್ನು ರಚಿಸುವಾಗಲೇ ಸಂಕುಚಿತ ಪ್ರಾದೇಶಿಕ ಬೇಡಿಕೆಗಳಿಗಾಗಿ ಬೆಂಬಲ ವಾಪಸ್ ಪಡೆಯಲು ಅವಕಾಶ ನೀಡದಂಥ ಒಂದು ಪ್ರಣಾಳಿಕೆಯನ್ನು ರಚಿಸಬೇಕಾಗುತ್ತದೆ ಮತ್ತು ಅದಕ್ಕೆ ಎಲ್ಲರೂ ಬದ್ಧರಾಗಿ ನಡೆದುಕೊಳ್ಳುವ ಲಿಖಿತ ದಾಖಲೆಯ ಭರವಸೆಯನ್ನು ಪಡೆದುಕೊಳ್ಳುವಂತೆ ಮಾಡಬೇಕಾದ ಅಗತ್ಯ ಇದೆ.

(ಚಿತ್ರಕೃಪೆ: ವಿಕಿಪೀಡಿಯ)