Category Archives: ಆನಂದ ಪ್ರಸಾದ್

ವರ್ಷವಿಡೀ ದಿನದ 24 ಗಂಟೆಯೂ ತೆರೆದಿರುವ ಮಹಾ ಜ್ಞಾನಭಂಡಾರ

-ಆನಂದ ಪ್ರಸಾದ್

ಪ್ರಪಂಚದ ಯಾವುದೇ ಭಾಗದಲ್ಲಿ ಲಭ್ಯವಿರುವ ಅಮೋಘ ಜ್ಞಾನಸಂಪತ್ತನ್ನು ಬೆರಳ ತುದಿಯಲ್ಲಿ ಕೆಲವೇ ಸೆಕೆಂಡಿನಲ್ಲಿ ತೋರಿಸುವ ವಿಜ್ಞಾನದ ಅದ್ಭುತ ಪವಾಡ ಅಂತರ್ಜಾಲ ಎಂಬುದರಲ್ಲಿ ಸಂದೇಹವಿಲ್ಲ. ಪ್ರಪಂಚದಾದ್ಯಂತ ಲಭ್ಯವಿರುವ ಈ ಜ್ಞಾನ ಸಂಪತ್ತು ಎಲ್ಲ ಜನತೆಗೂ ಉಚಿತವಾಗಿ ಲಭ್ಯವಾಗುವಂತೆ ಮಾಡಿದ ವಿಜ್ಞಾನದ ದಿನಗಳಲ್ಲಿ ಬದುಕುವ ಸೌಭಾಗ್ಯ ನಮ್ಮದು. ಕೆಲವೇ ದಶಕಗಳ ಹಿಂದೆ ಯಾವ ಕೊಟ್ಯಾಧಿಪತಿಗೂ ಲಭ್ಯವಿಲ್ಲದ ಈ ಭಾಗ್ಯ ಇಂದು ಸಾಮಾನ್ಯ ಜನತೆಗೆ ಲಭ್ಯವಾಗುವಂತೆ ವಿಜ್ಞಾನ ಹಾಗೂ ತಂತ್ರಜ್ಞಾನ ಮಾಡಿರುವುದು ನಮ್ಮ ಕಾಲದ ಮಹಾ ವಿಸ್ಮಯ. ನಾವು ಇಂದು ಯಾವುದೇ ವಿಷಯದ ಮೇಲೆ ಹುಡುಕಿದರೂ ಅಗಾಧ ಜ್ಞಾನ ಮಾಹಿತಿ ಕುಳಿತಲ್ಲಿಗೆ ತಲುಪಿಸುವ ಸಾಮರ್ಥ್ಯ ಅಂತರ್ಜಾಲದ್ದಾಗಿದೆ.  ಗ್ರಂಥಾಲಯಗಳಿಗಾದರೆ ಕಾಲಮಿತಿ ಇದೆ, ಅಲ್ಲಿ ನಮಗೆ ಬೇಕಾದ ಮಾಹಿತಿಯನ್ನು, ಪುಸ್ತಕಗಳನ್ನು ಹುಡುಕುವುದು ತುಂಬಾ ಪ್ರಯಾಸದ ಕೆಲಸ. ಆದರೆ ಇಂದು ಅಂತರ್ಜಾಲದಿಂದಾಗಿ ಯಾವ ಮಾಹಿತಿಯೂ ಬೇಕಾದರೆ ದಿನವಿಡೀ ಲಭ್ಯ. ಇದಕ್ಕೆ ಯಾವುದೇ ಸಮಯ ಮಿತಿ ಇಲ್ಲ. ಹುಡುಕಲು ಯಾವುದೇ ಪ್ರಯಾಸವಿಲ್ಲ.

ಪ್ರಪಂಚಂದ ಯಾವುದೇ ದೇಶದಲ್ಲಿ ಕುಳಿತು ನಮ್ಮ ಭಾಷೆಯ ಪತ್ರಿಕೆ ಓದಬಹುದು, ನಮ್ಮ ಭಾಷೆಯ ಸಂಗೀತ ಕೇಳಬಹುದು.  ಟಿವಿ ಮಾಧ್ಯಮದಲ್ಲಾದರೆ ಅವರು ಏನು ಪ್ರಸಾರ ಮಾಡುತ್ತಾರೋ ಅದನ್ನು ನಾವು ನೋಡಬೇಕು.  ಅಂತರ್ಜಾಲದಲ್ಲಾದರೆ ನಮಗೆ ಬೇಕಾದ ದೃಶ್ಯಗಳನ್ನು ಹುಡುಕಿ ನಾವೇ ನೋಡಬಹುದು, ನಮಗೆ ಬೇಕಾದ ಸಂಗೀತವನ್ನು ನಾವೇ ಯೂಟ್ಯೂಬಿನಲ್ಲಿ ಅಥವಾ ಅಂಥದೇ ಜಾಲ ತಾಣದಲ್ಲಿ ಉಚಿತವಾಗಿ ಕೇಳಬಹುದು, ನಮ್ಮ ಗಣಕ ಯಂತ್ರಕ್ಕೆ ಬೇಕಾದ ಉತ್ತಮ ಗೀತೆಗಳನ್ನು ಇಳಿಸಿಕೊಂಡು ಸಂಗ್ರಹಿಸಿ ಇಡಬಹುದು. ನಮ್ಮ ದೃಶ್ಯಾವಳಿಗಳನ್ನು ನಾವೇ ಅಂತರ್ಜಾಲಕ್ಕೆ  ಹಾಕಿ ಎಲ್ಲರೂ ನೋಡುವಂತೆ ಮಾಡಬಹುದು.  ಪ್ರಪಂಚದಾದ್ಯಂತ ಸಮಾನ ಮನಸ್ಕರನ್ನು, ಸಮಾನ ಅಭಿರುಚಿ, ಆಸಕ್ತಿ ಇರುವ ವ್ಯಕ್ತಿಗಳನ್ನು ಹುಡುಕಿ ವಿಚಾರ ವಿನಿಮಯ ಮಾಡಬಹುದು.  ಪ್ರಪಂಚದಾದ್ಯಂತ ಕೆಲವೇ ಕ್ಷಣಗಳಲ್ಲಿ ವೀಡಿಯೊ ಸಂವಾದ ನಡೆಸಬಹುದು.

ವಿಕಿಪೀಡಿಯದಂಥ ಉಚಿತ ಮಾಹಿತಿ ಭಂಡಾರ ಎಲ್ಲರಿಗೂ ಲಭ್ಯವಾಗುವಂತೆ ಮಾಡಿದ ಮಹನೀಯರು ಅಭಿನಂದನಾರ್ಹರು.  ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಮೊದಲಾದ ಕ್ಷೇತ್ರಗಳ ಸಾಮಾನ್ಯ ಗ್ರಂಥಾಲಯಗಳಲ್ಲಿ ಸಿಗದ ಅಗಾಧ ಮಾಹಿತಿ ಇಂದು ಅಂತರ್ಜಾಲದಿಂದಾಗಿ ಎಲ್ಲರಿಗೂ ಲಭ್ಯ.  ಯಾವುದೇ ರೋಗದ ಬಗ್ಗೆ, ಔಷಧಿಗಳ ಬಗ್ಗೆ ಇಂದು ಕ್ಷಣಾರ್ಧದಲ್ಲಿ ಅಂತರ್ಜಾಲದಲ್ಲಿ ಮಾಹಿತಿ ಲಭ್ಯ.  ಅಂತರ್ಜಾಲದ ಸಂಪರ್ಕದ ಮೂಲಕವೇ ಇಂದು ಬ್ಯಾಂಕುಗಳ ಎಟಿಎಂಗಳು ಕೆಲಸ ಮಾಡುತ್ತಿದ್ದು ದೇಶದ ಯಾವುದೇ ಭಾಗದಿಂದಲೂ ನಮ್ಮ ಬ್ಯಾಂಕ್ ಅಕೌಂಟಿನಲ್ಲಿರುವ ಹಣವನ್ನು ದಿನದ ಯಾವುದೇ ಸಮಯದಲ್ಲಾದರೂ ತೆಗೆಯುವ ಸೌಲಭ್ಯ ದೊರಕಿದೆ.  ಮೊದಲಾದರೆ ಬ್ಯಾಂಕಿನ ವೇಳೆಯಲ್ಲಿ ಮಾತ್ರ ಅದೂ ನಮ್ಮ ಅಕೌಂಟ್ ಇರುವ ಬ್ಯಾಂಕ್ ಶಾಖೆಯಲ್ಲಿ ಮಾತ್ರ ನಿಮಿಷಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಹಣ ಪಡೆಯಬೇಕಾಗಿತ್ತು.

ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್ ಮೂಲಕ ಅಂಗಡಿಗಳಲ್ಲಿ ಹಣ ಪಾವತಿಸಬಹುದು ಅದೂ ಕೂಡ ಅಂತರ್ಜಾಲದ ಮೂಲಕವೇ ಕೆಲಸ ಮಾಡುವುದು.  ಈಗ ಅಂತರ್ಜಾಲ ಸಂಪರ್ಕ ಇರುವ ಮೊಬೈಲ್ ಫೋನಿನಿಂದಲೂ ಹಣ ವರ್ಗಾವಣೆ ಮಾಡಬಹುದು.  ಇ-ಮೇಲ್ ಮೂಲಕ ವಿಶ್ವದ ಯಾವುದೇ ಭಾಗದಿಂದ ಯಾವುದೇ ಭಾಗಕ್ಕೆ ಎಷ್ಟು ಮಂದಿಗೆ ಬೇಕಾದರೂ ಕ್ಷಣಾರ್ಧದಲ್ಲಿ ಪತ್ರಗಳನ್ನು ಉಚಿತವಾಗಿ ಕಳುಹಿಸಬಹುದು. ಪತ್ರದ ಜೊತೆ ವೀಡಿಯೊ, ಫೋಟೋ ಇನ್ನಿತರ ಮಾಹಿತಿಯನ್ನೂ ಉಚಿತವಾಗಿ ಕಳುಹಿಸಬಹುದು. ಇದು ಕೂಡ ಸಾಧ್ಯವಾಗಿರುವುದು ಅಂತರ್ಜಾಲದಿಂದಲೇ. ಇಂದು ಅಂತರ್ಜಾಲದಲ್ಲಿ ಸಾವಿರಾರು ಬ್ಲಾಗುಗಳು ಹಾಗೂ ವೆಬ್‍ಸೈಟುಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತಿವೆ.  ಸಾಂಪ್ರದಾಯಿಕ ಪತ್ರಿಕೆ, ಟಿವಿ ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲು ಹಿಂಜರಿಯುತ್ತಿರುವಾಗ ಅಂತರ್ಜಾಲವು ಅಂತರ್ಜಾಲ ಸಂಪರ್ಕ ಹೊಂದಿರುವ ಪ್ರತಿ ಜನಸಾಮಾನ್ಯನಿಗೂ ತನ್ನ ಭಾವನೆಗಳನ್ನು, ಅನಿಸಿಕೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ಮಾಡಿಕೊಟ್ಟಿದೆ.

ಮುಂದೆ ಅಂತರ್ಜಾಲ ಹಾಗೂ ಗಣಕ ಯಂತ್ರದ ಬಳಕೆ ಹೆಚ್ಚಿದಂತೆ ಅಂತರ್ಜಾಲವು ಪ್ರಮುಖ ಮಾಧ್ಯಮವಾಗಿ ಮೂಡಿಬರಬಹುದು.  ಇಂಥ ಅಂತರ್ಜಾಲವನ್ನು ಸಂಶೋಧಿಸಿದ್ದು ಟಿಮ್ ಬರ್ನರ್ಸ್ ಲೀ ಎಂಬ ಬ್ರಿಟಿಷ್ ಮೂಲದ ವಿಜ್ಞಾನಿ.  ಲೀ ತನ್ನ ಸಂಶೋಧನೆಗೆ ಪೇಟೆಂಟ್ ಪಡೆದಿಲ್ಲ ಹಾಗೂ ಇದನ್ನು ಬಳಸಲು, ಅಭಿವೃದ್ದಿಪಡಿಸಲು ಮುಕ್ತವಾಗಿರಿಸಿದ್ದಾರೆ.  ತನ್ನ ಸಂಶೋಧನೆಗೆ ಪೇಟೆಂಟ್ ಪಡೆದಿದ್ದರೆ ಇಂದು ಲೀ ಕೊಟ್ಯಾಧಿಪತಿಯಾಗಬಹುದಿತ್ತು.  ಓರ್ವ ನಿಜವಾದ ವಿಜ್ಞಾನಿ ಹಾಗೂ ಬುದ್ಧಿಜೀವಿ ತನ್ನ ಸಂಶೋಧನೆಗಳನ್ನು ವ್ಯಾಪಾರಕ್ಕೆ ಇಡುವುದಿಲ್ಲ ಹಾಗೂ ಮಾನವಕುಲದ ಉದ್ಧಾರಕ್ಕೆ ತನ್ನ ಸಂಶೋಧನೆಯನ್ನು ಧಾರೆಯೆರೆಯುತ್ತಾನೆ.  ಇದಕ್ಕೆ ಬರ್ನರ್ಸ್ ಲೀ ಉತ್ತಮ ನಿದರ್ಶನ.

ವಂಶವಾಹಿ ಪ್ರಜಾಪ್ರಭುತ್ವ – ಕಾರಣಗಳು ಮತ್ತು ಪರಿಹಾರ

-ಆನಂದ ಪ್ರಸಾದ್

ಭಾರತದಲ್ಲಿ ಸ್ವಾತಂತ್ರ್ಯದ ನಂತರ ವಂಶವಾಹಿ ಪ್ರಜಾಪ್ರಭುತ್ವ ಬೆಳೆದು ನಿಂತಿದೆ. ಆರಂಭದಲ್ಲಿ ಇದು ಕಾಂಗ್ರೆಸ್ ಪಕ್ಷಕ್ಕೆ ಸೀಮಿತವಾಗಿತ್ತು. ನಂತರ ಇದು ಎಲ್ಲ ರಾಜಕೀಯ ಪಕ್ಷಗಳಲ್ಲೂ ಬೆಳೆದಿದ್ದು ಹಿಂದಿದ್ದ ರಾಜರ ಆಳ್ವಿಕೆಯನ್ನೇ ಹೋಲುತ್ತಿದೆ. ನೆಪಮಾತ್ರಕ್ಕೆ ಐದು ವರ್ಷಗಳಿಗೊಮ್ಮೆ (ಅಥವಾ ಅವಧಿಪೂರ್ವ) ಚುನಾವಣೆಗಳು ನಡೆಯುತ್ತಿದ್ದರೂ ಹೆಚ್ಚಿನ ಬದಲಾವಣೆ ಏನೂ ಕಂಡು ಬರುತ್ತಿಲ್ಲ. ತಮಿಳುನಾಡಿನಲ್ಲಿ ಜಯಲಲಿತಾ ಮತ್ತು ಕರುಣಾನಿಧಿ ಕುಟುಂಬ, ಕರ್ನಾಟಕದಲ್ಲಿ ದೇವೇಗೌಡ ಕುಟುಂಬ, ಆಂಧ್ರದಲ್ಲಿ ಚಂದ್ರಬಾಬು ನಾಯ್ಡು, ಒರಿಸ್ಸಾದಲ್ಲಿ ನವೀನ ಪಾಟ್ನಾಯಕ್, ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶದಲ್ಲಿ ಮಾಯಾವತಿ ಮತ್ತು ಮುಲಾಯಂ ಸಿಂಗ್, ಕಾಶ್ಮೀರದಲ್ಲಿ ಫಾರೂಕ್ ಅಬ್ದುಲ್ಲ, ಮಹಾರಾಷ್ಟ್ರದಲ್ಲಿ ಶರದ್ ಪವಾರ್, ಬಾಳ್ ಠಾಕ್ರೆ, ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಹೀಗೆ ವ್ಯಕ್ತಿ ಕೇಂದ್ರಿತ ಅಥವಾ ಕುಟುಂಬ ಕೇಂದ್ರಿತ ಪಕ್ಷಗಳು ಬೆಳೆದು ನಿಂತಿವೆ. ಕುಟುಂಬ ಅಥವಾ ವ್ಯಕ್ತಿ ಕೇಂದ್ರಿತ ನೆಲೆಯನ್ನು ಮೀರಿ ಏಕೆ ಭಾರತದಲ್ಲಿ ರಾಜಕೀಯ ಪಕ್ಷಗಳು ಯಶಸ್ವಿಯಾಗುತ್ತಿಲ್ಲ, ಇದಕ್ಕೆ ಏನು ಕಾರಣ ಎಂಬ ಬಗ್ಗೆ ಭಾರತದಲ್ಲಿ ಚಿಂತನೆ ನಡೆಯುತ್ತಿಲ್ಲ.

ಪ್ರಜಾಪ್ರಭುತ್ವದ ಯಶಸ್ಸಿಗೆ ಮತ್ತು ಬೆಳವಣಿಗೆಗೆ ಸೈದ್ದಾಂತಿಕ ನೆಲೆಯಲ್ಲಿ ಪಕ್ಷಗಳು ಸಂಘಟಿತವಾಗಬೇಕು. ಎಲ್ಲ ಪಕ್ಷಗಳು ಸೈದ್ಧಾಂತಿಕ ನೆಲೆಯಲ್ಲಿ ತಮ್ಮ ಪಕ್ಷಗಳು ರೂಪುಗೊಂಡಿವೆ ಎಂದು ಹೇಳುತ್ತಿದ್ದರೂ ಆಂತರಿಕ ಪ್ರಜಾಪ್ರಭುತ್ವವನ್ನು ತಮ್ಮ ಪಕ್ಷಗಳಲ್ಲಿ ಅಳವಡಿಸಿಕೊಂಡಿಲ್ಲ. ಕೆಲವು ಪಕ್ಷಗಳಲ್ಲಿ ಕಾಟಾಚಾರಕ್ಕಾಗಿ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ನಡೆದರೂ ಒಬ್ಬ ವ್ಯಕ್ತಿಯೇ ಅಥವಾ ಒಂದು ಕುಟುಂಬದ ಸದಸ್ಯರು ಮಾತ್ರವೇ ಅಧ್ಯಕ್ಷರಾಗಿ ಆಯ್ಕೆಯಾಗುವುದು ಭಾರತದ ರಾಜಕೀಯ ಪಕ್ಷಗಳ ದೌರ್ಬಲ್ಯ. ಇದಕ್ಕೆ ಆ ಕುಟುಂಬದ ಸದಸ್ಯರೇ ಕಾರಣ ಎಂದು ಹೇಳುವಂತಿಲ್ಲ. ಇದಕ್ಕೆ ಒಟ್ಟು ಭಾರತೀಯರ ಮನಸ್ಥಿತಿಯೇ ಕಾರಣ ಎನಿಸುತ್ತದೆ.

ಭಾರತೀಯ ರಾಜಕಾರಣಿಗಳಲ್ಲಿ ಅಧಿಕಾರದ ಲಾಲಸೆ ಹಾಗೂ ಗುಂಪುಗಾರಿಕೆ ತುಂಬಿಕೊಂಡಿರುವುದು ಇದಕ್ಕೆ ಕಾರಣವೆನಿಸುತ್ತದೆ. ಒಂದು ಕುಟುಂಬದ ವ್ಯಕ್ತಿ ಅಧ್ಯಕ್ಷನಾಗಿರದ ಪಕ್ಷದಲ್ಲಿ ಆ ಪಕ್ಷವು ಚೂರು ಚೂರಾಗುವುದು ಭಾರತದ ರಾಜಕಾರಣದ ದುರಂತ. ಉದಾಹರಣೆಗೆ ಸೋನಿಯಾ ಗಾಂಧಿ, ರಾಜೀವ ಗಾಂಧಿ ನಿಧನದ ನಂತರ ರಾಜಕೀಯಕ್ಕೆ ಕೆಲ ವರ್ಷಗಳು ಬಂದಿರಲಿಲ್ಲ. ನೆಹರೂ ಕುಟುಂಬದ ಸದಸ್ಯರ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವು ಚೂರು ಚೂರಾಗುವ ಭೀತಿ ಉಂಟಾಗಿತ್ತು ಮತ್ತು ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದಿರದ ಪಕ್ಷದಲ್ಲಿ ಕಾಂಗ್ರೆಸ್ ಪಕ್ಷವು ಒಂದಾಗಿ ಇರುತ್ತಿರಲಿಲ್ಲ. ನೆಹರೂ ಕುಟುಂಬದ ಸದಸ್ಯ ನಾಯಕ ಸ್ಥಾನದಲ್ಲಿದ್ದರೆ ಮಾತ್ರ ಕಾಂಗ್ರೆಸ್ ಒಟ್ಟಾಗಿ ಉಳಿಯುತ್ತದೆ ಇಲ್ಲದೆ ಹೋದ ಪಕ್ಷದಲ್ಲಿ, ಪಕ್ಷದಲ್ಲಿ ಆಂತರಿಕ ಕಚ್ಚಾಟ ತಾರಕಕ್ಕೇರಿ ಚೂರು ಚೂರಾಗುವ ಪರಿಸ್ಥಿತಿ ಇದೆ. ಇದಕ್ಕೆ ನಮ್ಮ ರಾಜಕಾರಣಿಗಳ ಅಧಿಕಾರದಾಹವೇ ಕಾರಣ.

ಇದೇ ಪರಿಸ್ಥಿತಿ ಇಂದು ಭಾರತೀಯ ಜನತಾ ಪಕ್ಷದಲ್ಲೂ ಇದೆ. ಅಲ್ಲಿ ಯಜಮಾನಿಕೆಯ ಸ್ಥಾನವನ್ನು ಸಂಘ ಪರಿವಾರ ಎಂಬ ಸಂವಿಧಾನಬಾಹಿರ ಶಕ್ತಿ ಪಡೆದುಕೊಂಡಿದೆ. ಸಂಘವು ತೇಪೆ ಹಾಕುತ್ತಿರುವ ಕಾರಣ ಬಿಜೆಪಿ ಎಂಬ ಪಕ್ಷವು ಒಂದಾಗಿ ಉಳಿದಿದೆ ಇಲ್ಲದೆ ಹೋದರೆ ಅದು ಕೂಡ ಚೂರು ಚೂರಾಗಿ ಹೋಗುತ್ತದೆ. ಇನ್ನು ಉಳಿದ ಪ್ರಾದೇಶಿಕ ಪಕ್ಷಗಳ ಸ್ಥಿತಿಯೂ ಅಷ್ಟೇ. ಅಲ್ಲಿಯೂ ಒಂದು ಕುಟುಂಬದ ಕೈಯಲ್ಲಿ ಇರುವ ಪಕ್ಷ ಒಂದಾಗಿ ಉಳಿದಿದೆ ಮತ್ತು ಆ ಕುಟುಂಬಕ್ಕೆ ತಗ್ಗಿ ಬಗ್ಗಿ ನಡೆಯುವ ವ್ಯಕ್ತಿಗಳಿಗೆ ಮಾತ್ರ ಮಣೆ. ಇದಕ್ಕೆ ಅಪವಾದವಾಗಿ ಇರುವುದು ಇಂದು ಎಡ ಪಕ್ಷಗಳು ಮಾತ್ರ. ಆದರೆ ಎಡ ಪಕ್ಷಗಳಿಗೆ ಬಂಗಾಲ, ಕೇರಳ ಹೊರತುಪಡಿಸಿದರೆ ಹೆಚ್ಚಿನ ಅಸ್ತಿತ್ವ ಇಲ್ಲ. ಕಾಂಗ್ರೆಸ್ಸೇತರ ಪಕ್ಷವಾಗಿ ಅಧಿಕಾರ ಹಿಡಿದ ಜನತಾ ಪಕ್ಷವು ಅಧಿಕಾರದ ಕಚ್ಚಾಟದಿಂದಾಗಿಯೇ ಚೂರುಚೂರಾಗಿದೆ. ಸ್ವಾತಂತ್ರ್ಯ ದೊರೆತು ಆರು ದಶಕಗಳು ಸಂದರೂ ನಮ್ಮ ರಾಜಕಾರಣಿಗಳಿಗೆ ಒಂದಾಗಿ ದೇಶದ ಹಿತಕ್ಕಾಗಿ ಕೆಲಸ ಮಾಡುವ ಮನೋಭಾವ ಇಲ್ಲ.

ರಾಜಕೀಯಕ್ಕೆ ಬರುವವರಿಗೆ ಪ್ರಜಾಪ್ರಭುತ್ವದ ಮೂಲಭೂತ ಆಶಯಗಳು ಅರ್ಥವಾಗದೆ ಇರುವುದು ಮತ್ತು ಸಂವಿಧಾನದ ಆಶೋತ್ತರಗಳ ಬಗ್ಗೆ ತಿಳುವಳಿಕೆ ಇಲ್ಲದಿರುವುದು ಕಂಡು ಬರುತ್ತದೆ. ಸೈದ್ಧಾಂತಿಕ ನೆಲೆಯಲ್ಲಿ ರಾಜಕೀಯ ಪಕ್ಷಗಳನ್ನು ರೂಪಿಸಿ ಗಟ್ಟಿಯಾಗಿ ಸೈದ್ದಾಂತಿಕ ದೃಢತೆಯನ್ನು ಕಾಪಾಡಿಕೊಂಡು ಬರದಿರುವುದೆ ಇಂಥ ಪರಿಸ್ಥಿತಿಗೆ ಕಾರಣ. ಸೈದ್ಧಾಂತಿಕ ನೆಲೆಯಲ್ಲಿ ಒಂದುಗೂಡಿ ಕೆಲಸ ಮಾಡುವುದು ಭಾರತೀಯ ರಾಜಕಾರಣಿಗಳಿಗೆ ಗೊತ್ತೇ ಇಲ್ಲ. ಅದು ಗೊತ್ತಿದ್ದರೆ ಅಧಿಕಾರಕ್ಕಾಗಿ ಕಚ್ಚಾಡುವ, ಪಕ್ಷವನ್ನೇ ಚೂರು ಚೂರು ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಪರಿಹಾರವಾದರೂ ಏನು? ಪಕ್ಷಕ್ಕೆ ವ್ಯಕ್ತಿಗಳನ್ನು ಸೇರಿಸಿಕೊಳ್ಳುವಾಗ ಪಕ್ಷದ ಸಿದ್ಧಾಂತವನ್ನು ವಿವರಿಸಿ ಸಿದ್ಧಾಂತವನ್ನು ಮೀರಿದರೆ ಪಕ್ಷದಿಂದ ಹೊರಹಾಕುವ ಸ್ಪಷ್ಟ ಧೋರಣೆಗಳನ್ನು ರಾಜಕೀಯ ಪಕ್ಷಗಳು ಹೊಂದಿದರೆ ಇಂಥ ಪರಿಸ್ಥಿತಿಯನ್ನು ಬಹುತೇಕ ತಡೆಯಬಹುದು. ಹೀಗೆ ಮಾಡಬೇಕಾದರೆ ರಾಜಕೀಯ ಪಕ್ಷಗಳಿಗೆ ಸ್ಪಷ್ಟವಾದ ಸಿದ್ಧಾಂತ ಇರಬೇಕಾಗುತ್ತದೆ. ಈಗ ಇರುವ ಯಾವ ರಾಜಕೀಯ ಪಕ್ಷಗಳಿಗೂ (ಎಡ ಪಕ್ಷಗಳನ್ನು ಹೊರತು ಪಡಿಸಿ) ಸ್ಪಷ್ಟ ಸಿದ್ಧಾಂತವೇ ಇಲ್ಲದಿರುವುದು ಭಾರತದ ಸಮಕಾಲೀನ ರಾಜಕೀಯದ ದುರಂತ. ಅಧಿಕಾರಕ್ಕಾಗಿ ಸಿದ್ಧಾಂತಗಳನ್ನು ಬಲಿಕೊಡುವ ರಾಜಕೀಯ ಪಕ್ಷಗಳೇ ಇರುವಾಗ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆಯುವುದಾದರೂ ಹೇಗೆ?

ಭಾರತದ ರಾಜಕೀಯಕ್ಕೆ ತೃತೀಯ ರಂಗವೊಂದರ ಅವಶ್ಯಕತೆ ಇದೆಯೇ ಎಂದರೆ ಅಂಥ ಒಂದು ಅವಶ್ಯಕತೆ ಇದೆ ಎನಿಸುತ್ತದೆ. ಆದರೆ ಅಂಥ ತೃತೀಯ ರಂಗವೊಂದು ಸ್ಪಷ್ಟವಾದ ಸೈದ್ಧಾಂತಿಕ ಧೋರಣೆ ಹೊಂದಿರಬೇಕು ಮತ್ತು ಎಲ್ಲರಿಗೂ ಒಪ್ಪಿಗೆಯಾಗುವ ಒಂದು ದೀರ್ಘಕಾಲೀನ ಪ್ರಣಾಳಿಕೆ ಹೊಂದಿರಬೇಕು. ಹಾಗಿರದೆ ಬರಿಯ ಅಧಿಕಾರಕ್ಕಾಗಿ ರೂಪುಗೊಳ್ಳುವ ತೃತೀಯ ರಂಗ ಯಶಸ್ವಿಯಾಗುವುದಿಲ್ಲ ಮತ್ತು ಹೆಚ್ಚು ಸಮಯ ಬಾಳುವುದಿಲ್ಲ. ತೃತೀಯ ರಂಗದಲ್ಲಿ ಒಟ್ಟುಗೂಡುವ ಪಕ್ಷಗಳಿಗೆ ದೀರ್ಘಕಾಲೀನ ಸೈದ್ದಾಂತಿಕ ಬದ್ಧತೆ ಇಲ್ಲದೆ ಹೋಗುವುದು, ಅಧಿಕಾರಕ್ಕಾಗಿ ಸಿದ್ಧಾಂತವನ್ನೂ ಮೀರಿ ತಮಗೆ ಒಪ್ಪಿಗೆಯಾಗದ ಸಿದ್ಧಾಂತದ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವ ಅವಕಾಶವಾದಿ ಪ್ರವೃತ್ತಿ ತೋರುವುದೇ ಸಂಭಾವ್ಯ ತೃತೀಯ ರಂಗದ ಪಕ್ಷಗಳ ದೊಡ್ಡ ದೌರ್ಬಲ್ಯವಾಗಿದೆ. ಅವು ಆ ದೌರ್ಬಲ್ಯವನ್ನು ಮೀರಿ ನಿಂತರೆ ಅಂಥ ಒಂದು ತೃತೀಯ ರಂಗ ರೂಪುಗೊಳ್ಳಬಹುದು, ತನ್ನ ಅವಧಿಪೂರ್ಣ ಆಡಳಿತ ನೀಡಲು ಸಾಧ್ಯ. ದ್ವಿಪಕ್ಷೀಯ ಆಡಳಿತಕ್ಕಿಂತ ಇನ್ನೂ ಒಂದು ಪರ್ಯಾಯ ಇರುವುದು ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಏಕೆಂದರೆ ದ್ವಿಪಕ್ಷೀಯ ವ್ಯವಸ್ಥೆ ಇದ್ದರೆ ಹೇಗಿದ್ದರೂ ಆಡಳಿತ ವಿರೋಧಿ ಅಲೆಯಿಂದ ಮುಂದಿನ ಸಾರಿ ತನಗೆ ಆಡಳಿತ ಸಿಗುತ್ತದೆ ಎಂಬ ನಿರ್ಲಕ್ಷ್ಯ ರಾಜಕೀಯ ಪಕ್ಷಗಳಲ್ಲಿ ಬೆಳೆಯುತ್ತದೆ ಮತ್ತು ತಮ್ಮನ್ನು ಬಿಟ್ಟರೆ ಬೇರೆ ಗತಿಯಿಲ್ಲ ಎಂಬ ಅಹಂಕಾರವೂ ಬೆಳೆಯುತ್ತದೆ. ತ್ರಿಪಕ್ಷೀಯ ವ್ಯವಸ್ಥೆ ಇದ್ದರೆ ರಾಜಕೀಯ ಪಕ್ಷಗಳು ಸ್ವಲ್ಪ ಎಚ್ಚರಿಕೆಯಿಂದ ಇರಲು ಸಾಧ್ಯ.

ಸದ್ಯದ ಭಾರತೀಯ ರಾಜಕೀಯವನ್ನು ಅವಲೋಕಿಸಿದರೆ ಆರೋಗ್ಯಕರ ಸೈದ್ದಾಂತಿಕ ನೆಲೆಗಟ್ಟಿನ ರಾಜಕೀಯ ಸ್ವಾತಂತ್ರ್ಯ ನಂತರದ ಆರು ದಶಕಗಳಲ್ಲಿ ಬೆಳೆಸುವಲ್ಲಿ ನಾವು ವಿಫಲರಾಗಿದ್ದೇವೆ. ಇಂಥ ಒಂದು ಆರೋಗ್ಯಕರ ಸೈದ್ದಾಂತಿಕ ರಾಜಕೀಯ ಜಾಗೃತಿ ಬೆಳೆಯಲು ಇನ್ನು ಎಷ್ಟು ದಶಕಗಳು ಅಥವಾ ಶತಮಾನಗಳು ಬೇಕೋ ಊಹಿಸಲಾಗುವುದಿಲ್ಲ. ಭಾರತೀಯರು  ಜಡ   ಪ್ರವೃತ್ತಿಯವರಾಗಿರುವುದರಿಂದ ಮತ್ತು ಇಲ್ಲಿ ಯಾವುದೇ ಹೊಸ ಚಿಂತನೆಗಳಿಗೆ ಸ್ಥಾನ ಇಲ್ಲದಿರುವುದರಿಂದ ಯಾವುದೇ ಕ್ಷೇತ್ರದಲ್ಲೂ ಹೊಸತನ ತರುವುದು ಬಹಳ ಕಷ್ಟವಾಗಿದೆ. ಹೀಗಾಗಿ ಉಳಿದ ಕ್ಷೇತ್ರಗಳಂತೆ ರಾಜಕೀಯ ಕ್ಷೇತ್ರದಲ್ಲೂ ವಂಶವಾಹಿ ಪ್ರಜಾಪ್ರಭುತ್ವದಿಂದ ನಿಜವಾದ ಪ್ರಜಾಪ್ರಭುತ್ವದೆಡೆಗೆ ನಮ್ಮ ದೇಶ ಯಾವಾಗ ಪರಿವರ್ತನೆಯಾಗುವುದೋ ಹೇಳಲಾಗದು. ಅಲ್ಲಿಯವರೆಗೆ ವಂಶವಾಹಿ ಪ್ರಜಾಪ್ರಭುತ್ವದಲ್ಲೇ ಹೊಸತನ ತರಲು ಸಾಧ್ಯವಿದೆ.

ಆಧುನಿಕ ವೈಜ್ಞಾನಿಕ ಚಿಂತನೆಯವರು ಈಗಿರುವ ವಂಶವಾಹಿ ಪ್ರಜಾಪ್ರಭುತ್ವ ಕುಟುಂಬಗಳಲ್ಲೇ ರೂಪುಗೊಂಡರೆ ಅಂಥ ಸಾಧ್ಯತೆ ಇದೆ. ಈಗಿರುವ ವಂಶವಾಹಿ ಪ್ರಜಾಪ್ರಭುತ್ವದಲ್ಲೇ ಹೊಸ ಚಿಂತನೆಗಳನ್ನು ತರಲು ಸಾಕಷ್ಟು ಅವಕಾಶ ಇದೆ ಏಕೆಂದರೆ ಪಕ್ಷಗಳಲ್ಲಿ ಕುಟುಂಬದ ವ್ಯಕ್ತಿಗಳಲ್ಲೇ ಅಧಿಕಾರ ಕೇಂದ್ರೀಕೃತವಾಗಿರುವುದರಿಂದ ಅವರು ತೆಗೆದುಕೊಳ್ಳುವ ಪ್ರಗತಿಪರ ನಿರ್ಧಾರಗಳಿಗೆ ಪಕ್ಷದೊಳಗೆ ಅಷ್ಟಾಗಿ ವಿರೋಧ ಬರುವ ಸಾಧ್ಯತೆ ಇಲ್ಲ. ಹೀಗಿದ್ದರೂ ಪ್ರಗತಿಪರ ನಿರ್ಧಾರಗಳನ್ನು ತೆಗೆದುಕೊಳ್ಳಲು ಕುಟುಂಬ ಪ್ರಭುತ್ವಗಳಿಗೆ ಸಾಧ್ಯವಾಗದೆ ಇರಲು ಅವರಲ್ಲಿ ರಾಜಕೀಯ ಚಿಂತನೆ ಹಾಗೂ ವ್ಯಾಪಕ ಓದಿನ ಕೊರತೆ ಇರುವುದೇ ಕಾರಣ. ವಂಶವಾಹಿ ಪ್ರಭುತ್ವ ಇರುವ ಕುಟುಂಬಗಳ ಹೊಸ ತಲೆಮಾರುಗಳು ಹೆಚ್ಚು ಹೆಚ್ಚು ಪ್ರಗತಿಶೀಲ ಚಿಂತನೆ ಅಳವಡಿಸಿಕೊಳ್ಳಲು ವ್ಯಾಪಕ ಅಧ್ಯಯನದ ಅವಶ್ಯಕತೆ ಇದೆ ಹಾಗೂ ದೇಶದ ಪರ್ಯಟನೆ ಮಾಡಿ ಹೆಚ್ಚಿನ ತಿಳುವಳಿಕೆ ಪಡೆದುಕೊಳ್ಳಬೇಕಾದ ಅವಶ್ಯಕತೆ ಇದೆ. ಇದು ವಂಶವಾಹಿ ಪ್ರಭುತ್ವದ ಹೊಸ ತಲೆಮಾರಿಗೆ ಅಸಾಧ್ಯವೇನೂ ಅಲ್ಲ.

ಗೋಹತ್ಯಾ ನಿಷೇಧ ಕಾನೂನು ಹಾಗೂ ವೋಟ್ ಬ್ಯಾಂಕ್ ರಾಜಕೀಯ

-ಆನಂದ ಪ್ರಸಾದ್

ಗೋವನ್ನು ಪವಿತ್ರವೆಂದೂ, ಗೋವಿನಲ್ಲಿ 33 ಕೋಟಿ ದೇವತೆಗಳು ನೆಲೆಸಿದ್ದಾರೆಂದೂ ಹೇಳಿ ಹಿಂದೂಗಳಲ್ಲಿ ಒಗ್ಗಟ್ಟು ತರಲು ಗೋವಿನ ವಿಷಯವನ್ನು ಹಿಂದುತ್ವವಾದಿಗಳು ಬಳಸುತ್ತಾ ಬಂದಿದ್ದಾರೆ. ಹೀಗಾಗಿ ಗೋಹತ್ಯೆ ನಿಷೇಧ ಕಾನೂನು ತರುವುದು ಒಂದು ದೊಡ್ಡ ರಾಷ್ಟ್ರಸೇವೆ ಹಾಗೂ ಹಿಂದೂಗಳ ಕಲ್ಯಾಣದ ಮಹತ್ವದ ಹೆಜ್ಜೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಗೋಹತ್ಯಾ ಕಾಯಿದೆಗೆ ತಿದ್ದುಪಡಿ ತಂದು ವಯಸ್ಸಾದ ದನಗಳು, ಕೃಷಿಕರಿಗೆ ಸಾಕಲಾಗದ ಗಂಡು ಕರುಗಳು ಇವುಗಳನ್ನು ಹತ್ಯೆಯ ಉದ್ದೇಶಕ್ಕೆ ಮಾರಲಾಗದಂತೆ ಮಾಡಲು ಹೊರಟಿರುವ ಬಿಜೆಪಿ ಸರ್ಕಾರದ ನೀತಿಯಿಂದ ರೈತರಿಗೆ ಹೊರೆಯಾಗಲಿದೆ. ಬಿಜೆಪಿ ಸರ್ಕಾರ ತರಲು ಹೊರಟಿರುವ ತಿದ್ದುಪಡಿ ಕಾನೂನಾದರೆ ಕೃಷಿಕರು ವಯಸ್ಸಾದ ದನಗಳನ್ನು ಹಾಗೂ ಗಂಡು ಕರುಗಳನ್ನು ಸಾಕಬೇಕು ಇಲ್ಲವೇ ಇವುಗಳನ್ನು ಗೋ ಆಶ್ರಮಕ್ಕೆ ಸೇರಿಸಬೇಕು ಹಾಗೂ ಅದರ ಸಾಗಣೆ ವೆಚ್ಚ, ಅದನ್ನು ಸಾಕುವ ವೆಚ್ಚವನ್ನು ರೈತರೇ ಭರಿಸಬೇಕೆಂದು ಹೇಳಲಾಗುತ್ತಿದೆ.

ಇಂಥ ಕಾನೂನು ಬಂದರೆ ರೈತರು ತಮ್ಮ ವಯಸ್ಸಾದ ದನಗಳನ್ನು ಹಾಗೂ ಗಂಡು ಕರುಗಳನ್ನು ರಸ್ತೆಯಲ್ಲಿ ಬಿಟ್ಟು ಬರುವ ಪ್ರವೃತ್ತಿ ಬೆಳೆದರೂ ಅಚ್ಚರಿ ಇಲ್ಲ. ಇಂಥ ದನಗಳು ಕಂಡ ಕಂಡವರ ಗದ್ದೆ, ತೋಟಗಳಿಗೆ ನುಗ್ಗಿ ದೊಡ್ಡ ತೊಂದರೆಯೂ ಉಂಟಾಗಬಹುದು. ಈ ಕಾನೂನು ಜಾರಿಯಾದರೆ ಹೈನುಗಾರಿಕೆಯ ವೆಚ್ಚ ಹೆಚ್ಚಲಿದ್ದು ಹಾಲಿನ ದರ ಇನ್ನಷ್ಟು ಹೆಚ್ಚಾಗಬಹುದು. ಏಕೆಂದರೆ ಈ ಕಾನೂನು ಜಾರಿಯಾದರೆ ಕರು ಹಾಕದ ವಯಸ್ಸಾದ ದನಗಳು ಹಾಗೂ ಕೃಷಿಕರು ಸಾಕಲು ಅಸಾಧ್ಯವಾದ ಗಂಡು ಕರುಗಳನ್ನು ಅವು ಸಾಯುವವರೆಗೆ ಒಂದೋ ಕೃಷಿಕರು ಅಥವಾ ಗೋ ಆಶ್ರಮದವರು ಸಾಕಬೇಕಿರುವುದರಿಂದ ಮೇವಿಗೆ ಬೇಡಿಕೆ ಹೆಚ್ಚಿ ಮೇವಿನ ಬೆಲೆ ಹೆಚ್ಚಳವಾಗುತ್ತದೆ. ಮೇವಿನ ಬೆಲೆ ಹೆಚ್ಚಿದಂತೆ ಹಾಲಿನ ಬೆಲೆ ಹೆಚ್ಚಲೇಬೇಕು. ಇಲ್ಲದಿದ್ದರೆ ರೈತರು ಹೈನುಗಾರಿಕೆಯನ್ನು ಮುಂದುವರಿಸುವುದು ಸಾಧ್ಯವಿಲ್ಲ. ಈಗ ಕೃಷಿಕರು ಹೈನುಗಾರಿಕೆಯಲ್ಲಿ ವರ್ಷಕ್ಕೊಂದು ಕರುವನ್ನು ಪಡೆಯುತ್ತಿರುವುದರಿಂದ ಇವುಗಳನ್ನು ಸಾಯುವವರೆಗೆ ಸಾಕಲೇಬೇಕಿರುವುದರಿಂದ ದನಕರುಗಳ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳ ಆಗಬಹುದು. ಈ ಹೆಚ್ಚಳದ ಪರಿಣಾಮ ಹಾಲಿನ ಎಲ್ಲ ಬಳಕೆದಾರರ ಮೇಲೆ ಬೀಳಲಿದೆ ಹಾಗೂ ಹಾಲಿನ ಬೆಲೆ ಹೆಚ್ಚಳವನ್ನು ಎಲ್ಲರೂ ಭರಿಸಲೇಬೇಕಾಗುತ್ತದೆ. ಇದು ಹಿಂದೂ ವೋಟ್ ಬ್ಯಾಂಕ್ ರಾಜಕೀಯಕ್ಕೆ ಎಲ್ಲ ಹಿಂದೂಗಳೂ ತೆರಬೇಕಾದ ಬೆಲೆಯಾಗಿದೆ.

ಈಗ ದೇಶದಲ್ಲಿ ಗೋಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ ಹಾಗೂ ಇದು ಹೀಗೆ ಮುಂದುವರಿದರೆ ದನಗಳ ಸಂತತಿ ವಿನಾಶವಾಗಲಿದೆ ಎಂಬ ಗುಲ್ಲನ್ನು ಹಿಂದುತ್ವವಾದಿಗಳು ಎಬ್ಬಿಸಿದ್ದಾರೆ. ಈ ವಿಷಯದಲ್ಲಿ ಎಳ್ಳಷ್ಟೂ ಹುರುಳಿಲ್ಲ. ದನಗಳು ಎಲ್ಲಿಯವರೆಗೆ ಹಾಲು ಕೊಡುತ್ತಿರುತ್ತವೆಯೋ ಅಲ್ಲಿಯವರೆಗೆ ಅವನ್ನು ಯಾವ ಕೃಷಿಕರೂ ಹತ್ಯೆಗಾಗಿ ಮಾರುವುದಿಲ್ಲ. ದನಗಳು ವಯಸ್ಸಾದ ನಂತರವಷ್ಟೇ ಅವನ್ನು ಸಾಕಲಾರದೆ ಕೃಷಿಕರು ಮಾರುತ್ತಾರೆ. ಹೀಗಾಗಿ ದನಗಳ ಸಂತತಿ ವಿನಾಶವಾಗುವ ಅಪಾಯ ಇಲ್ಲವೇ ಇಲ್ಲ. ಈಗ ಆಧುನಿಕ ವಿಧಾನಗಳಿಂದ ವರ್ಷಕ್ಕೊಂದು ಕರುವನ್ನು ಪಡೆಯುತ್ತಿರುವುದರಿಂದ ದನಗಳ ಸಂಖ್ಯೆ ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಿರುವ ಸಾಧ್ಯತೆ ಇಲ್ಲ. ಗೋಹತ್ಯೆ ನಿಷೇಧ ಎಂಬುದು ರಾಜಕೀಯದ ಹಿಂದೂ ವೋಟ್ ಬ್ಯಾಂಕ್ ಅವಶ್ಯಕತೆಯೇ ಹೊರತು ದನಗಳ ಸಂತತಿ ಉಳಿಸುವ ಉದ್ದೇಶದಿಂದ ರೂಪುಗೊಂಡಿರುವುದು ಖಂಡಿತ ಅಲ್ಲ. ಇದು ವೋಟ್ ಬ್ಯಾಂಕ್ ವಿಷಯವಾದುದರಿಂದ ಇದನ್ನು ವಿರೋಧಿಸಲು ಯಾವುದೇ ರಾಜಕೀಯ ಪಕ್ಷವೂ ಹಿಂಜರಿಯುವ ಸನ್ನಿವೇಶ ನಿರ್ಮಾಣವಾಗಿದೆ. ಅಂಥ ಸನ್ನಿವೇಶವನ್ನು ಹಿಂದುತ್ವವಾದಿಗಳು ರೂಪಿಸಿದ್ದು ಇದರ ಹೊರೆಯನ್ನು ಹಿಂದೂ ರೈತರೇ ಹೊರುವಂತೆ ಮಾಡಿರುವುದು ವಿಪರ್ಯಾಸ.

ಹಿಂದೂ ಧರ್ಮದಲ್ಲಿರುವ ಮೇಲು ಕೀಳು ಎಂಬ ತಾರತಮ್ಯವನ್ನು ಹಾಗೇ ಉಳಿಸಿಕೊಂಡು ಎಲ್ಲ ಹಿಂದೂಗಳಲ್ಲೂ ಒಗ್ಗಟ್ಟನ್ನು ರೂಪಿಸಲು ಮತ್ತು ಆ ಒಗ್ಗಟ್ಟೇ ವೋಟ್ ಬ್ಯಾಂಕ್ ಆಗಿ ರೂಪುಗೊಳ್ಳಲು ಹಿಂದುತ್ವವಾದಿಗಳು, ಪ್ರತಿಗಾಮಿಗಳು ಬಳಸುವ ಈ ಚಾಣಾಕ್ಷ್ಯ ಉಪಾಯದ ಅರಿವು ಹಿಂದೂಗಳಲ್ಲಿ ಬಹುತೇಕರಿಗೆ ಇಲ್ಲ ಅಥವಾ ಇದ್ದರೂ ದನಕ್ಕೆ ದೇವರ ಸ್ಥಾನವನ್ನು ಆರೋಪಿಸಿರುವುದರಿಂದ ಅಂಥ ಚಿಂತನೆಗಳೂ ಅವರಿಗೆ ಒಪ್ಪಿಗೆಯಾಗುವುದಿಲ್ಲ. ಹೀಗಾಗಿ ಗೋ ಹತ್ಯೆ ನಿಷೇಧ, ಮತಾಂತರ ಹೆಸರಿನಲ್ಲಿ ಬೇರೆ ಧರ್ಮಗಳ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ಮಾಡುವಂತೆ ಯೋಜನೆ ರೂಪಿಸುವುದು ಹಿಂದೂ ವೋಟ್ ಬ್ಯಾಂಕ್ ರಾಜಕೀಯವಾಗಿರುವುದರಿಂದ ಕೆಲವು ಪ್ರದೇಶಗಳಲ್ಲಿ ಹಿಂದುತ್ವವಾದಿಗಳು ನಿರಂತರವಾಗಿ ಚುನಾವಣೆಗಳಲ್ಲಿ ಗೆಲ್ಲಲು ಕಾರಣವಾಗಿದೆ. ಇದಕ್ಕೆ ಹಿಂದುಗಳಲ್ಲಿ ಇರುವ ಅರಿವಿನ ಕೊರತೆಯೇ ಕಾರಣವಾಗಿದೆ. ಇದನ್ನು ಹಿಂದೂಗಳಿಗೆ ತಿಳಿಸಿ ಹೇಳುವ ಪ್ರಯತ್ನ ಮಾಧ್ಯಮಗಳಿಂದ ನಡೆಯುತ್ತಿಲ್ಲ.

ಗೋವಿನ ಮೂತ್ರ ಸರ್ವರೋಗ ಪರಿಹಾರಕ ಎಂಬ ಮೂಢನಂಬಿಕೆಯನ್ನೂ ಇದರ ಜೊತೆಗೆ ಭಿತ್ತಿ ಬೆಳೆಯಲಾಗುತ್ತಿದೆ. ಗೋ ಮೂತ್ರ ಕುಡಿಯುವುದರಿಂದ ಕ್ಯಾನ್ಸರಿನಂಥ ಮಾರಕ ಕಾಯಿಲೆಯನ್ನೂ ಗುಣಪಡಿಸಬಹುದು ಎಂದು ಪ್ರಚಾರ ಮಾಡಲಾಗುತ್ತಿದೆ. ಇದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಹಾಗಿದ್ದರೂ ಇಂಥ ಪ್ರಚಾರಕ್ಕೆ ಮರುಳಾಗುವ ಹಿಂದೂಗಳಿಗೆ ಕೊರತೆಯಿಲ್ಲ. ಇದನ್ನೆಲ್ಲಾ ನೋಡುವಾಗ ಬಹುತೇಕ ಹಿಂದೂಗಳ ಮೆದುಳಿನಲ್ಲಿ ಯೋಚನೆ ಮಾಡುವ ಭಾಗ ಸರಿಯಾಗಿ ಬೆಳವಣಿಗೆ ಆಗಿಲ್ಲವೆನೋ ಎಂಬ ಅನುಮಾನ ಮೂಡುತ್ತದೆ. ನಾವು ಯಾವ ಅಂಗವನ್ನು ಹೆಚ್ಚು ಉಪಯೋಗ ಮಾಡುತ್ತೇವೆಯೋ ಆ ಅಂಗ ಬೆಳವಣಿಗೆಯಾಗುವುದು ನಿಸರ್ಗ ನಿಯಮ. ನಿಸರ್ಗದಲ್ಲಿ ಸಾವಿರಾರು ವರ್ಷಗಳ ಹಿಂದೆ ನಾಲ್ಕು ಕಾಲಿನಲ್ಲಿ ನಡೆಯುತ್ತಿದ್ದ ಪ್ರಾಣಿಗಳು ಎರಡು ಕಾಲಿನಲ್ಲಿ ನಡೆಯಲು ಶುರು ಮಾಡಿ ಇನ್ನುಳಿದ ಎರಡು ಕಾಲುಗಳನ್ನು ಬೇರೆ ಕೆಲಸಗಳಿಗೆ ತೊಡಗಿಸಿದ್ದು ವಾನರ ಪ್ರಾಣಿಯ ಉಗಮಕ್ಕೆ ಕಾರಣವಾಯಿತು. ಈ ವಾನರ ಪ್ರಾಣಿಯೇ ವಿಕಾಸವಾಗಿ ಇಂದಿನ ಮಾನವನಾಗಿದ್ದಾನೆ. ಇದು ಒಂದು ಅಂಗದ ಬೆಳವಣಿಗೆಗೆ ಅದನ್ನು ಹೆಚ್ಚು ಹೆಚ್ಚು ಉಪಯೋಗ ಮಾಡುವುದರ ಮಹತ್ವವನ್ನು ಹೇಳುತ್ತದೆ. ಪಾಶ್ಚಾತ್ಯರು ಮೆದುಳನ್ನು ಹೆಚ್ಚು ಹೆಚ್ಚು ಬಳಸಿ ಹೊಸ ಹೊಸ ಅವಿಷ್ಕಾರಗಳನ್ನು ಮಾಡಿ ಮುಂದುವರಿಯುತ್ತಿದ್ದಾರೆ ನಾವು ಮಾತ್ರ ಹಿಂದುತ್ವದ ಹೆಸರಿನಲ್ಲಿ ಯೋಚನೆ ಮಾಡುವುದನ್ನೇ ನಿಲ್ಲಿಸಿ ಹಿಂದೂಗಳ ಮೆದುಳು ಹೊಸ ಅನ್ವೇಷಣೆಗಳನ್ನು, ಹೊಸ ಚಿಂತನೆಗಳನ್ನು ಮಾಡಲಾರದ ಜಡ್ಡುಗಟ್ಟಿದ ಸ್ಥಿತಿಗೆ ತಲುಪಿರುವಂತೆ ಕಾಣುತ್ತದೆ.

(ಚಿತ್ರಕೃಪೆ: ವಿಕಿಪೀಡಿಯ)

ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಧರ್ಮದ ಸವಾರಿ – ಮತದಾರರು ಎಚ್ಚೆತ್ತುಕೊಳ್ಳಬೇಕು

-ಆನಂದ ಪ್ರಸಾದ್

ಕರ್ನಾಟಕ ಕಂಡ ಮುಖ್ಯ ಮಂತ್ರಿಗಳ ಪೈಕಿ ಯಡಿಯೂರಪ್ಪನವರು ಅತ್ಯಂತ ಭ್ರಷ್ಟ, ಸ್ವಜನ ಪಕ್ಷಪಾತಿ ಹಾಗೂ ನಿರ್ಲಜ್ಜ ಮುಖ್ಯಮಂತ್ರಿಯೆಂದು ಹೇಳಲು ಹೆಚ್ಚಿನ ಪಾಂಡಿತ್ಯವೇನೂ ಬೇಕಾಗಿಲ್ಲ ಎನಿಸುತ್ತದೆ. ಈವರೆಗೆ ಈ ರೀತಿ ರಾಜ್ಯದಲ್ಲಿ ಮುಖ್ಯಮಂತ್ರಿಯೊಬ್ಬರ ಮೇಲೆ ಪ್ರಕರಣಗಳು ದಾಖಲಾಗಿ ಜೈಲಿಗೆ ಹೋದ ಉದಾಹರಣೆ ಇಲ್ಲ. ಹೀಗಿದ್ದರೂ ಯಡಿಯೂರಪ್ಪನವರು ಮಹಾ ನಾಯಕ ಎಂದು ರಾಜ್ಯದ ಲಿಂಗಾಯತ ಮಠಾಧೀಶರು ಅವರನ್ನು ಬೆಂಬಲಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವ ವಿದ್ಯಮಾನವಾಗಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದದ್ದು ಯಡಿಯೂರಪ್ಪ ಎಂಬ ಮಾತು ಪದೇ ಪದೇ ಕೇಳಿ ಬರುತ್ತಿದೆ. ಆದರೆ ವಾಸ್ತವವಾಗಿ ಯಡಿಯೂರಪ್ಪ ಬಿಜೆಪಿಯನ್ನು ಅಧಿಕಾರಕ್ಕೆ ತಂದದ್ದು ಅನ್ನುವುದಕ್ಕಿಂತ, ರಾಜ್ಯದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿದ್ದ ಜನತಾ ಪರಿವಾರದ ಒಡಕು ಬಿಜೆಪಿಯನ್ನು ಅಧಿಕಾರಕ್ಕೆ ತಂದಿರುವುದು ಎಂಬುದು ಹೆಚ್ಚು ಸೂಕ್ತವಾಗುತ್ತದೆ. ಇಲ್ಲಿ ಜನತಾ ಪರಿವಾರ ಒಡೆಯದೆ ಗಟ್ಟಿಯಾಗಿದ್ದಿದ್ದರೆ ಬಿಜೆಪಿ ಅಧಿಕಾರಕ್ಕೆ ಏರಲು ಸಾಧ್ಯವೇ ಇರಲಿಲ್ಲ. ಈ ನಿಟ್ಟಿನಲ್ಲಿ ದೇವೇಗೌಡರು ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪರೋಕ್ಷವಾಗಿ ಕೊಡುಗೆಯನ್ನು ನೀಡಿದ್ದಾರೆ ಎಂದೇ ಹೇಳಬೇಕಾಗುತ್ತದೆ.

ಯಡಿಯೂರಪ್ಪ ಅವರು ಕರ್ನಾಟಕ ಈವರೆಗೆ ಕಂಡ ಅತ್ಯಂತ ಮೂಢನಂಬಿಕೆಯ ಮುಖ್ಯಮಂತ್ರಿಯಾಗಿಯೂ ಕಂಡು ಬರುತ್ತಾರೆ. ದೇಶದ ಹಲವಾರು ದೇವಸ್ಥಾನಗಳಿಗೆ ಎಡತಾಕಿದ ಇನ್ನೊಬ್ಬ ಮುಖ್ಯಮಂತ್ರಿಯನ್ನು ಕರ್ನಾಟಕ ಕಂಡಿಲ್ಲ. ‘ಯಜ್ಞ, ಯಾಗ, ಮಾಟ ಮಂತ್ರ’ಗಳ ಮೊರೆಹೋದ ಇನ್ನೊಬ್ಬ ಮುಖ್ಯಮಂತ್ರಿಯನ್ನೂ ಕರ್ನಾಟಕ ಕಂಡಿಲ್ಲ. ಇಷ್ಟೆಲ್ಲಾ ದೈವ ಭಕ್ತಿ ಇರುವ, ಸ್ವಾಮೀಜಿಗಳ ಮುದ್ದಿನ ಕೂಸಾದ ಯಡಿಯೂರಪ್ಪನವರನ್ನು ಅವರ ಧರ್ಮ ಶ್ರದ್ದೆ, ದೈವ ಭಕ್ತಿ ಅಡ್ಡ ದಾರಿಯಲ್ಲಿ ನಡೆಯದಂತೆ ತಡೆಯಲಿಲ್ಲ. ಹೀಗಾದರೆ ಧರ್ಮ ಶ್ರದ್ಧೆ, ಮಹಾನ್ ದೈವಭಕ್ತಿಯ ಸಾಧನೆಯಾದರೂ ಏನು ಎಂಬ ಪ್ರಶ್ನೆ ಏಳುತ್ತದೆ. ಕರ್ನಾಟಕಕ್ಕೆ ವಿಶ್ವಾದ್ಯಂತ ಕೆಟ್ಟ ಹೆಸರು ತಂದ ಯಡಿಯೂರಪ್ಪನವರು ಸದಾ ವಿರೋಧ ಪಕ್ಷಗಳನ್ನು ದೂರುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದರು. ಪದೇ ಪದೇ ವಿರೋಧ ಪಕ್ಷಗಳು ಆಡಳಿತ ನಡೆಸಲು ಬಿಡಲಿಲ್ಲ ಎಂಬುದು ಅವರ ಅತ್ಯಂತ ಬಾಲಿಶ ಹೇಳಿಕೆಯಾಗಿತ್ತು. ಆಡಳಿತ ಪಕ್ಷದ ಬಳಿ ಎಲ್ಲ ಸಂಪನ್ಮೂಲ, ಅಧಿಕಾರಿ ವರ್ಗ, ಅಧಿಕಾರ ಇರುವಾಗ ವಿರೋಧ ಪಕ್ಷಗಳು ಅಭಿವೃದ್ಧಿ ಕೆಲಸ ಮಾಡಲು ಬಿಡಲಿಲ್ಲ ಎಂಬುದು ಅತ್ಯಂತ ಹಾಸ್ಯಾಸ್ಪದವಾಗಿ ಕಾಣುತ್ತದೆ. ಈವರೆಗಿನ ಕರ್ನಾಟಕದ ಇತಿಹಾಸದಲ್ಲಿ ನೋಡಿದರೆ ಯಾವ ಮುಖ್ಯಮಂತ್ರಿಯೂ ಇಂಥ ಬಾಲಿಶ ಹೇಳಿಕೆಗಳನ್ನು ನೀಡುತ್ತಿರಲಿಲ್ಲ.

ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸಾಕಷ್ಟು ಬಲಿದಾನ ಹಾಗೂ ಹೋರಾಟಗಳ ಫಲವಾಗಿ ಲಭಿಸಿರುವುದು. ಹೀಗಾಗಿ ನಮ್ಮ ಮತದಾರರು ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ವಾಮೀಜಿಗಳ ಅವಲಂಬಿತ ಪಾಳೆಗಾರಿಕೆ ವ್ಯವಸ್ಥೆಯಾಗಲು ಬಿಡಬಾರದು. ಜಾತಿ ನೋಡಿ ಮತ್ತು ಸ್ವಾಮೀಜಿಗಳ ಸೂಚನೆಯಂತೆ ಮತ ಹಾಕುವ ಪ್ರವೃತ್ತಿ ಬೆಳೆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗುತ್ತದೆ. ಹೀಗಾಗಿ ನಮ್ಮ ಮತದಾರರು ಸ್ವಾಮೀಜಿಗಳ ಗುಲಾಮರಾಗದೆ ಸ್ವಾತಂತ್ರ್ಯ ಮನೋಭಾವದಿಂದ ಮತ ಹಾಕುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಹಾಗಾದಾಗ ಸ್ವಾಮೀಜಿಗಳನ್ನು ಒಲಿಸಿ ಭ್ರಷ್ಟರು ಅಧಿಕಾರಕ್ಕೆ ಏರಲು ಹವಣಿಸುವುದು ನಿಲ್ಲಬಹುದು. ಇತ್ತೀಚೆಗಿನ ವರ್ಷಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಹರಿಸುವ ರೀತಿಯಲ್ಲಿ ಸ್ವಾಮೀಜಿಗಳ ಗುಂಪು ಕರ್ನಾಟಕದ ರಾಜಕೀಯ ವ್ಯವಸ್ಥೆಯಲ್ಲಿ ತಲೆ ಹಾಕುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಸ್ವಾಮೀಜಿಗಳು ರಾಜಕೀಯ ವ್ಯವಸ್ಥೆಯನ್ನು ನಿರ್ಧರಿಸುವುದಾದರೆ ಚುನಾವಣೆಗಳನ್ನು ನಡೆಸುವ ಅಗತ್ಯವೇ ಇಲ್ಲ.

ಯಡಿಯೂರಪ್ಪನವರು ಅಪರೇಷನ್ ಕಮಲ ಎಂಬ ಅತ್ಯಂತ ಲಜ್ಚೆಗೇಡಿ ಕೆಲಸವನ್ನು ಮಾಡಿದಾಗ ಯಾವುದೇ ಸ್ವಾಮೀಜಿಗಳು ಅದನ್ನು ಖಂಡಿಸಲಿಲ್ಲ. ಬಹುತೇಕ ಕರ್ನಾಟಕದ ಮಾಧ್ಯಮಗಳೂ ಅದನ್ನು ಖಂಡಿಸಿ ಜನಜಾಗೃತಿ ಮಾಡಿದ್ದು ಕಾಣಲಿಲ್ಲ. ಹೀಗಾಗಿಯೇ ಯಡಿಯೂರಪ್ಪನವರಿಗೆ ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ಯೋಚನೆ ಬಂದಿರಬೇಕು. ಅದಕ್ಕೆ ಸರಿಯಾಗಿ ಮತದಾರರೂ ಭ್ರಷ್ಟರಾಗಿ ಅಪರೇಷನ್ ಕಮಲಕ್ಕೆ ಒಳಗಾದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಲೇ ಬಂದರು. ಹೀಗಾಗಿ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಚುನಾವಣೆಗಳು ಎಂಬುದು ಒಂದು ಅಣಕವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಎಚ್ಚರಿಸಲು ಕರ್ನಾಟಕದ ಮಾಧ್ಯಮಗಳು ಮುಂದಾಗಲಿಲ್ಲ. ಇದರ ದುಷ್ಫಲ ಇಂದು ನಾವು ಕಾಣುತ್ತಿದ್ದೇವೆ.

ಯಡಿಯೂರಪ್ಪನವರಿಗೆ ಸಾಹಿತ್ಯಿಕ, ಸಾಂಸ್ಕೃತಿಕ ಅಭಿರುಚಿಗಳೂ ಇರುವಂತೆ ಕಾಣುವುದಿಲ್ಲ. ಒಬ್ಬ ಉತ್ತಮ ನಾಯಕನು ಬಹಳಷ್ಟು ಓದಿಕೊಂಡಿರುತ್ತಾನೆ. ಹೀಗಾಗಿ ಅವನಲ್ಲಿ ಚಿಂತನಶಕ್ತಿ ಬೆಳೆದಿರುತ್ತದೆ. ಇಂಥ ನಾಯಕನು ಎಂಥ ಸಂದರ್ಭಗಳಲ್ಲೂ ಭ್ರಷ್ಟನಾಗುವುದಿಲ್ಲ. ಯಡಿಯೂರಪ್ಪನವರಲ್ಲಿ ಕಾಣುವುದು ಹಳ್ಳಿಯ ಗೌಡಿಕೆಯ ಠೇ೦ಕಾರ, ಸೇಡು ತೀರಿಸಿಕೊಳ್ಳಬೇಕೆಂಬ ತವಕ ಹಾಗೂ ಇನ್ನಷ್ಟು ಮತ್ತಷ್ಟು ಸಂಪತ್ತು ಕೂಡಿ ಹಾಕಬೇಕೆಂಬ ದುರಾಶೆ. ಇದರಿಂದಾಗಿಯೇ ಅಧಿಕಾರ ದೊರಕಿದಾಗ ಅದನ್ನು ಜನಕಲ್ಯಾಣಕ್ಕಾಗಿ ಬಳಸದೆ ತನ್ನ ಪರಿವಾರದ ಸಂಪತ್ತು ಬೆಳೆಸಲು ಬಳಸಿಕೊಂಡರು. ತನ್ನ ಸುತ್ತಮುತ್ತ ಹೊಗಳುಭಟರ ಪಡೆಯನ್ನು ಕಟ್ಟಿಕೊಂಡು ವಾಸ್ತವದಿಂದ ವಿಮುಖರಾದರು. ಕರ್ನಾಟಕದ ಪತ್ರಕರ್ತರನ್ನೂ ಭ್ರಷ್ಟಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ತಮ್ಮ ಪರವಾಗಿ ಬರೆಯಲು ಮತ್ತು ವರದಿ ಮಾಡಲು ಪತ್ರಕರ್ತರಿಗೆ ಅವರು ಸಾಕಷ್ಟು ಆಮಿಷಗಳನ್ನು ಒಡ್ಡಿ ವಿಮರ್ಶೆಯೇ ಬರದಂತೆ ನೋಡಿಕೊಂಡರು. ಇದರ ಪರಿಣಾಮ ಏನೆಂದರೆ ತಪ್ಪು ದಾರಿಯಲ್ಲಿ ಹೋಗುತ್ತಿದ್ದರೂ ಎಚ್ಚರಿಸದ ಮಾಧ್ಯಮಗಳು ಇನ್ನಷ್ಟು ತಪ್ಪು ದಾರಿಯಲ್ಲಿ ಹೋಗಲು ಅವರನ್ನು ಪ್ರೇರೇಪಿಸಿತು. ಮಾಧ್ಯಮಗಳನ್ನು ಭ್ರಷ್ಟಗೊಳಿಸುವುದು ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಸರ್ವಾಧಿಕಾರಿ ಪ್ರವೃತ್ತಿಯನ್ನು ಬೆಳೆಸಲು ಕಾರಣವಾಗುತ್ತದೆ. ಕರ್ನಾಟಕದಲ್ಲಿ ಆದದ್ದೂ ಅದೇ. ಹೀಗಾಗಿ ಮಾಧ್ಯಮಗಳನ್ನು ಒಬ್ಬ ಉತ್ತಮ ನಾಯಕ ಎಂದೂ ಭ್ರಷ್ಟಗೊಳಿಸಲು ಹೋಗುವುದಿಲ್ಲ.

ವೈಜ್ಞಾನಿಕ ಮನೋಭಾವ ಮತ್ತು ದೇಶದ ಮುನ್ನಡೆಯ ಸಂಬಂಧ

-ಆನಂದ ಪ್ರಸಾದ್

ವಿಜ್ಞಾನವು ಇಂದು ನಮ್ಮ ಜೀವನದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗಿದೆ. ನಮ್ಮ ಜೀವನಕ್ಕೆ ನೆಮ್ಮದಿಯನ್ನೂ, ಸಂತೋಷವನ್ನೂ, ಭದ್ರತೆಯನ್ನೂ ಕೊಡುವಲ್ಲಿ ವಿಜ್ಞಾನದ ಪಾತ್ರ ಮಹತ್ತರವಾದುದು. ಒಂದು ಕಾಲವಿತ್ತು, ಅದೂ ಹೆಚ್ಚು ಹಿಂದಿನದಲ್ಲ ಕೆಲವೇ ದಶಕಗಳ ಹಿಂದೆ ಜನ ಪ್ಲೇಗು, ಮಲೇರಿಯಾ, ಕ್ಷಯ, ರೇಬೀಸ್, ಕಾಲರಾ ಮೊದಲಾದ ರೋಗಗಳು ಬಂದರೆ ಸಾವನ್ನೇ ಎದುರು ನೋಡಬೇಕಾಗಿತ್ತು. ವಿಜ್ಞಾನವು ಇವುಗಳ ಕಾರಣಗಳನ್ನು ಪತ್ತೆ ಹಚ್ಚಿ ಅದಕ್ಕೆ ಸೂಕ್ತ ಔಷಧಿಗಳನ್ನು ಕಂಡು ಹಿಡಿದು ಬಡವ ಬಲ್ಲಿದ ಎಂಬ ಭೇದವಿಲ್ಲದೆ ಲಕ್ಷಾಂತರ ಅಮೂಲ್ಯ ಜೀವಗಳನ್ನು ಉಳಿಸಿದೆ, ಉಳಿಸುತ್ತಿದೆ. ಪರಂಪರೆ ಹಾಗೂ ಸಮುದಾಯದಿಂದ ಭಿನ್ನವಾಗಿ ಚಿಂತಿಸಿದ ಕಾರಣವೇ ವಿಜ್ಞಾನಿಗಳು ಇಂಥ ಮುನ್ನಡೆಯನ್ನು ಸಾಧಿಸಲು ಸಾಧ್ಯವಾಯಿತು. ಆದರೆ ಭಾರತದಲ್ಲಿ ಪರಂಪರೆ ಹಾಗೂ ಸಮುದಾಯದಿಂದ ಭಿನ್ನವಾಗಿ ಚಿಂತಿಸುವವರಿಗೆ ಸೂಕ್ತ ಪ್ರೋತ್ಸಾಹ ಇಲ್ಲ, ಬದಲಿಗೆ ಕಿರುಕುಳ ಸಿಕ್ಕುತ್ತದೆ. ಹೀಗಾಗಿ ಭಾರತವು ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನ ಹೊಂದಿದ್ದರೂ ವಿಶ್ವಖ್ಯಾತಿಯ ವಿಜ್ಞಾನಿಗಳನ್ನು ಬೆಳೆಸಲಿಲ್ಲ. ಲಕ್ಷಾಂತರ ಜೀವಗಳನ್ನು ಉಳಿಸಲು ಕಾರಣವಾದ ವಿಜ್ಞಾನಿಗಳನ್ನು ನಮ್ಮ ಯಾವ ಟಿವಿ ವಾಹಿನಿಗಳೂ ಕೊಂಡಾಡಿದ್ದು, ಹಾಡಿ ಹೊಗಳುವುದು ಬಿಡಿ, ಕನಿಷ್ಠ ಅವರ ಪರಿಚಯವನ್ನೂ ಮಾಡುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು ಕಾಣುವುದಿಲ್ಲ. ಆದರೆ ಪವಾಡ ಪುರುಷರನ್ನು ಮಾತ್ರ ಅಪಾರವಾಗಿ ಹಾಡಿ ಹೊಗಳುವುದನ್ನು ಕಾಣುತ್ತೇವೆ. ಜ್ಯೋತಿಷಿಗಳು, ವಾಸ್ತು ಎಂಬ ಹೆಸರಿನಲ್ಲಿ ಮೋಸ ಮಾಡುವ ಜನರಿಗೆ ನಮ್ಮ ಟಿವಿ ಮಾಧ್ಯಮದಲ್ಲಿ ಅಗ್ರ ಸ್ಥಾನ.

ಕೆಲವು ದಶಕಗಳ ಹಿಂದೆ ಒಂದು ಊರಿನಿಂದ ಇನ್ನೊಂದು ಊರಿಗೆ ಸಂಚರಿಸುವುದು ಹಲವಾರು ಗಂಟೆಗಳನ್ನು ಅಥವಾ ದಿನಗಳನ್ನೇ ತೆಗೆದುಕೊಳ್ಳುತ್ತಿತ್ತು ಹಾಗೂ ಭಾರೀ ಶ್ರಮದಾಯಕವಾಗಿತ್ತು. ಇಂದು ಒಂದು ಊರಿನಿಂದ ಇನ್ನೊಂದು ಊರಿಗೆ ಸುಲಭವಾಗಿ ಸಂಚರಿಸ ಬಹುದಾದರೆ ಅದಕ್ಕೆ ಕಾರಣ ವಿಜ್ಞಾನಿಗಳು ರೂಪಿಸಿದ ಆಧುನಿಕ ಮೋಟಾರು ವಾಹನಗಳು ಹಾಗೂ ತಂತ್ರಜ್ಞಾನಗಳು. ಈ ಯಾವ ತಂತ್ರಜ್ಞಾನವನ್ನೂ ರೂಪಿಸಿದವರು ನಮ್ಮ ದೇಶದವರಲ್ಲ. ನಮ್ಮ ದೇಶದಲ್ಲಿ ಏನಿದ್ದರೂ ಅದು ಪರದೇಶದಿಂದ ಆಮದು ಮಾಡಿಕೊಂಡ ತಂತ್ರಜ್ಞಾನ. ಇದಕ್ಕೆ ಕಾರಣ ಹೊಸ ತೆರನಾಗಿ ಯೋಚಿಸಲು ಅವಕಾಶ ಕೊಡದ ನಮ್ಮ ಬಾಗಿಲು ಮುಚ್ಚಿದ ಮಾನಸಿಕತೆ. ನಾವು ಎಲ್ಲವೂ ಶಾಸ್ತ್ರಗಳಲ್ಲಿ ಹೇಳಿದೆ ಎಂದು ಹೊಸದನ್ನು ಚಿಂತಿಸುವುದನ್ನೇ ಬಿಟ್ಟಿದ್ದೇವೆ. ನಮ್ಮ ಮಾನಸಿಕತೆ ಇನ್ನೂ ಹಲವು ಶತಮಾನಗಳ ಹಿಂದೆ ಇದೆ. ಇದರ ಪರಿಣಾಮವೇ ಇಂದು ನಾವು ಟಿವಿ ವಾಹಿನಿಗಳಲ್ಲಿ ನೋಡುತ್ತಿರುವ ಅವೈಜ್ಞಾನಿಕ ಚಿಂತನೆಗಳ ಮಹಾಪೂರ. ಇಂದು ಒಂದು ನಿಮಿಷದಲ್ಲಿ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಜನರನ್ನು ಸಂಪರ್ಕಿಸಲು ಸಾಧ್ಯ. ಅದಕ್ಕೆ ಕಾರಣವಾಗಿರುವುದು ಕೂಡ ವಿಜ್ಞಾನವೇ. ಯಾವುದೇ ಹಳ್ಳಿ ಮೂಲೆಯಲ್ಲಿದ್ದರೂ ಇಂದು ಸಾಮಾನ್ಯ ಮನುಷ್ಯನೂ ಡಿ.ಟಿ. ಹೆಚ್ ತಂತ್ರಜ್ಞಾನದ ಮೂಲಕ ಹತ್ತಾರು ಟಿವಿ ವಾಹಿನಿಗಳನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗಿರುವುದು ವಿಜ್ಞಾನದ ಕೊಡುಗೆಯಿಂದಲೇ. ಆದರೆ ಆ ತಂತ್ರಜ್ಞಾನ ಮಾತ್ರ ಜನತೆಯಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಬಳಕೆಯಾಗುತ್ತಿಲ್ಲ. ಇದು ಎಂಥಾ ವಿಪರ್ಯಾಸ! ನಮ್ಮ ಮನೋಭಾವ ಜಡ್ಡುಗಟ್ಟಿದೆ. ಹೀಗಾಗಿ ನಮ್ಮ ದೇಶ ಪ್ರಗತಿಶೀಲ ಚಿಂತನೆಯಲ್ಲಿ ಬಹಳ ಹಿಂದುಳಿದಿದೆ. ನಮ್ಮ ಜನ ಇನ್ನೂ ಆದಿವಾಸಿ ಮನೋಭಾವದಿಂದ ಹೊರಬಂದಿಲ್ಲ ಎಂಬುದು ನಮ್ಮ ಟಿವಿ ವಾಹಿನಿಗಳನ್ನು ಬೆಳಗ್ಗೆ 6 ರಿಂದ 10 ಘಂಟೆವರೆಗೆ ನೋಡಿದರೆ ಅರ್ಥವಾಗುತ್ತದೆ.

ಇಂದು ವಿಜ್ಞಾನದ ಬೆಳವಣಿಗೆಯಿಂದಾಗಿ ಆಹಾರ ಭದ್ರತೆ ಬಂದಿದೆ. ಬರಗಾಲ, ಪ್ರವಾಹ ಇತ್ಯಾದಿ ನೈಸರ್ಗಿಕ ವಿಕೋಪಗಳಿಂದ ಜನ ಆಹಾರ ಇಲ್ಲದೆ ಬಳಲುವ ಪರಿಸ್ಥಿತಿ ಸಂಪೂರ್ಣ ಮಾಯವಾಗಿದೆ. ಹಲವಾರು ಯಂತ್ರಗಳು ಬಂದಿರುವುದರಿಂದಾಗಿ ಮಾನವನ ದೈಹಿಕ ಶ್ರಮ ಎಷ್ಟೋ ಕಡಿಮೆಯಾಗಿದೆ. ಇದನ್ನೆಲ್ಲಾ ಸಾಧ್ಯವಾಗಿಸಿದ ವಿಜ್ಞಾನಕ್ಕೆ, ವಿಜ್ಞಾನಿಗಳಿಗೆ ನಾವು ಕೃತಜ್ಞರಾಗಿರಬೇಕು . ಆದರೆ ವಾಸ್ತವವಾಗಿ ವಿಜ್ಞಾನಕ್ಕೆ ಹಾಗೂ ವಿಜ್ಞಾನಿಗಳಿಗೆ ನಾವು ಕೃತಜ್ಞರಾಗಿರುವುದು ಕಂಡು ಬರುತ್ತಿಲ್ಲ. ನಮ್ಮ ಮಾಧ್ಯಮಗಳಲ್ಲೂ ವಿಜ್ಞಾನಕ್ಕೆ, ವಿಜ್ಞಾನಿಗಳಿಗೆ ಮನ್ನಣೆ ಅಷ್ಟಕ್ಕಷ್ಟೇ. ವೈಜ್ಞಾನಿಕ ಮನೋಭಾವವಂತೂ ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾಗಿದೆ.

ನಮ್ಮ ದೇಶದಲ್ಲಿ ಹೊಸ ಚಿಂತನೆಗಳಿಗೆ ಬರ ಇದೆ. ಹೀಗಾಗಿಯೇ ದೇಶದ ರಾಜಕೀಯ ರಂಗ ಮರಗಟ್ಟಿದೆ. ದೇಶದ ಶಾಸಕಾಂಗ ವ್ಯವಸ್ಥೆ ಹೊಸ ಜನೋಪಯೋಗಿ ಕಾನೂನುಗಳನ್ನು ರೂಪಿಸಲು ಬಹುತೇಕ ವಿಫಲವಾಗಿದೆ. ಕಾರ್ಯಾಂಗ ಜಡ್ಡುಗಟ್ಟಿದೆ. ನ್ಯಾಯಾಂಗವೂ ಭಾರೀ ವಿಳಂಬ ಗತಿಯಲ್ಲಿ ತೆವಳುತ್ತಿದೆ. ಇದಕ್ಕೆಲ್ಲ ಕಾರಣ ನಮ್ಮಲ್ಲಿ ಸುಧಾರಣೆಗಳನ್ನು ತರಬೇಕೆಂಬ ಚಿಂತನೆಯೇ ಇಲ್ಲದಿರುವುದು. ಕಾಲ ಕಾಲಕ್ಕೆ ದೇಶದ ಕಾನೂನುಗಳಲ್ಲಿ ಜನೋಪಯೋಗಿ ಸುಧಾರಣೆ ಮಾಡದೇ ಹೋದರೆ ಪ್ರಜಾಪ್ರಭುತ್ವ ಜಡ್ಡುಗಟ್ಟುತ್ತದೆ. ಇದನ್ನೆಲ್ಲಾ ಮಾಡಬೇಕಾದವರು ಯಾರು?  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದನ್ನೆಲ್ಲಾ ಮಾಡುವ ಸಾಮರ್ಥ್ಯ ಇರುವುದು ಶಾಸಕಾಂಗಕ್ಕೆ. ಆದರೆ ನಮ್ಮ ಶಾಸಕಾಂಗಕ್ಕೆ ಆಯ್ಕೆಯಾಗುವವರಲ್ಲಿ ವೈಜ್ಞಾನಿಕ ಮನೋಭಾವ ಇಲ್ಲವೇ ಇಲ್ಲವೆಂದರೂ ಸರಿ. ಹೀಗಾಗಿ ಎಲ್ಲೆಡೆಯೂ ಹೊಸ ಚಿಂತನೆಗಳ ಬರ ಇದೆ.

ದೇಶದ ಮಾಧ್ಯಮ ರಂಗವನ್ನು ನೋಡಿದರೆ ಇದೇ ಸ್ಥಿತಿ ಇದೆ. ಇಲ್ಲಿಯೂ ಮೂಢ ನಂಬಿಕೆಗಳ ಸವಾರಿ ಅವ್ಯಾಹತವಾಗಿ ನಡೆಯುತ್ತಿದೆ. ಮಾಧ್ಯಮಗಳನ್ನು ಮಾರುಕಟ್ಟೆ ಶಕ್ತಿಗಳು ನಿಯಂತ್ರಿಸುತ್ತಿರುವುದರಿಂದ ಇಲ್ಲಿ ಯಾವುದೇ ಹೊಸ ಚಿಂತನೆಗಳನ್ನು ನಿರೀಕ್ಷಿಸುವಂತಿಲ್ಲ. ಇಂಥ ಸಂದರ್ಭದಲ್ಲಿ ಏನಾದರೂ ಬದಲಾವಣೆ, ಹೊಸತನ ತರುವ ಸಾಮರ್ಥ್ಯ ಇರುವುದು ಬಂಡವಾಳಗಾರರಿಗೆ ಮಾತ್ರ. ಬಂಡವಾಳಗಾರರಿಗೆ ದೇಶದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕೆಂಬ ತುಡಿತ ಇದ್ದರೆ ಇಂದೂ ಕೂಡ ಮಾರುಕಟ್ಟೆ ಶಕ್ತಿಗಳನ್ನೂ ಮೀರಿ ಹೊಸ ಚಿಂತನೆಗಳಿಗೆ, ವೈಜ್ಞಾನಿಕ ಮನೋಭಾವಕ್ಕೆ ತಮ್ಮ ಮಾಧ್ಯಮಗಳಲ್ಲಿ ಒತ್ತು ಕೊಡಲು ಸಾಧ್ಯವಿದೆ. ತಮ್ಮ ಬೇರೆ ಉದ್ಯಮಗಳಲ್ಲಿ ಬರುವ ಅಪಾರ ಲಾಭದ ಒಂದಂಶವನ್ನು ಬಳಸಿ ಮಾಧ್ಯಮಗಳನ್ನು ನಡೆಸಲು ಸಾಧ್ಯವಿದೆ.

ಮಾಧ್ಯಮಗಳನ್ನು ನಡೆಸಲು ಜಾಹೀರಾತುಗಳನ್ನೇ, ಮಾರುಕಟ್ಟೆ ಶಕ್ತಿಗಳನ್ನೇ ಅವಲಂಬಿಸ ಬೇಕಾದ ಅಗತ್ಯವಿಲ್ಲ. ನಮ್ಮ ಭಾರೀ ಬಂಡವಾಳಗಾರರಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ದೇಶಭಕ್ತಿಯ ಕೊರತೆ ಇರುವುದರಿಂದಾಗಿ ಇಂಥ ಒಂದು ಚಿಂತನೆಯೇ ಅವರಲ್ಲಿ ಕಂಡುಬರುತ್ತಿಲ್ಲ. ನಮ್ಮ ಬಹುತೇಕ ಬಂಡವಾಳಗಾರರೂ ಕಂದಾಚಾರ, ಮೌಢ್ಯ, ಸಂಪ್ರದಾಯಗಳ ಸಂಕೋಲೆಯಲ್ಲಿ ಬಂಧಿಯಾಗಿದ್ದಾರೆ. ಇಲ್ಲದೆ ಹೋಗಿದ್ದರೆ, ಕೆಲವೇ ಕೆಲವು ಬಂಡವಾಳಗಾರರಾದರೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡಿದ್ದರೆ ಇಂದು ದೇಶದ ಸ್ಥಿತಿಯನ್ನೇ ಗಮನಾರ್ಹವಾಗಿ ಬದಲಾಯಿಸಲು ಸಾಧ್ಯವಾಗುತ್ತಿತ್ತು. ಜನರನ್ನು ಅತ್ಯಂತ ಪರಿಣಾಮಕಾರಿಯಾಗಿ ತಲುಪಲು ಇಂದು ಸಾಧ್ಯವಿರುವುದು ಟಿವಿ ಮಾಧ್ಯಮಕ್ಕೆ. ಈ ಮಾಧ್ಯಮವನ್ನು ಬಳಸಿಕೊಂಡೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜನಪರವಾಗಿ ಬದಲಾಯಿಸಿಕೊಳ್ಳಲು ಸಾಧ್ಯವಿದೆ. ಇದಕ್ಕೆ ಮಾಡಬೇಕಾಗಿರುವುದು ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸ. ಈ ಕೆಲಸ ವೈಯಕ್ತಿಕವಾಗಿ ಇಂದು ಮಾಡಲು ಸಾಧ್ಯವಿಲ್ಲ. ಏಕೆಂದರೆ ಜನರ ಸಂಘಟನೆ ಮಾಡಿಕೊಂಡು ಇಡೀ
ದೇಶದಲ್ಲಿ ಜಾಗೃತಿ ಮಾಡಬೇಕಾದರೆ ಜೀವವನ್ನೇ ತೇಯಬೇಕಾದೀತು. ತಮ್ಮ ಕುಟುಂಬ, ವೃತ್ತಿ ಬಿಟ್ಟು ಅದಕ್ಕೆ ಯಾರೂ ಸಿದ್ಧರಿರುವುದಿಲ್ಲ ಮತ್ತು ಅದು ಸಾಧ್ಯವೂ ಇಲ್ಲ. ಇದೇ ಕೆಲಸವನ್ನು ಟಿವಿ ಮಾಧ್ಯಮವು ಸುಲಭವಾಗಿ, ಏಕಕಾಲದಲ್ಲಿ ಮಾಡಲು ಸಾಧ್ಯವಿದೆ. ವೈಜ್ಞಾನಿಕ ಮನೋಭಾವ ಇರುವ ಕೆಲವು ಜನ ಬಂಡವಾಳಗಾರರು ತಮ್ಮ ಇತರ ಉದ್ಯಮಗಳ ಭಾರೀ ಲಾಭಾಂಶದ ಒಂದು ಅಂಶವನ್ನು ಜನಪರ, ದೇಶಪರ ಟಿವಿ ಮಾಧ್ಯಮವನ್ನು ಕಟ್ಟಲು ಬಳಸಿದರೆ ದೇಶದಲ್ಲಿ ಭಾರೀ ಬದಲಾವಣೆಯನ್ನೇ ತರಲು ಸಾಧ್ಯವಿದೆ.

ಇಂದು ನಮ್ಮ ದೇಶದಲ್ಲಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಇವುಗಳಲ್ಲಿ ಮಹತ್ತರ ಬದಲಾವಣೆ ಆಗಬೇಕಾದ ಅಗತ್ಯ ಇದೆ. ಶಾಸಕಾಂಗದಲ್ಲಿ ಮಹತ್ತರ ಬದಲಾವಣೆ ತರಬೇಕಾದರೆ ಇಂದು ದೇಶಭಕ್ತರ ಹೊಸ ರಾಷ್ಟ್ರೀಯ ಪಕ್ಷವನ್ನು ಕಟ್ಟಬೇಕಾದ ಅಗತ್ಯ ಇದೆ. ಆ ಪಕ್ಷವು ಚುನಾವಣೆಗಳಲ್ಲಿ ನಿಂತು ಗೆದ್ದು ಸರ್ಕಾರ ರೂಪಿಸಿ ಜನಪರವಾದ ಕಾನೂನುಗಳನ್ನು ರೂಪಿಸುವ ಮೂಲಕ ಕಾರ್ಯಾಂಗ ಹಾಗೂ ನ್ಯಾಯಾಂಗದಲ್ಲಿ ಮಹತ್ತರ ಬದಲಾವಣೆ ತರಲು ಸಾಧ್ಯವಿದೆ. ತನ್ಮೂಲಕ ಇಡೀ ರಾಷ್ಟ್ರದ ಸ್ಥಿತಿಯನ್ನು ಬದಲಾಯಿಸಲು ಪ್ರಜಾಸತ್ತಾತ್ಮಕವಾಗಿಯೇ ಸಾಧ್ಯವಿದೆ. ಹೊಸ ಪಕ್ಷವನ್ನು ರೂಪಿಸುವಾಗ ಅದರಲ್ಲಿ ಅತ್ಯಂತ ಸ್ಪಷ್ಟವಾದ ನಿಯಮಗಳನ್ನು ರೂಪಿಸಿದರೆ ರಾಜಕೀಯ ಪಕ್ಷ ಭ್ರಷ್ಟ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗುವುದನ್ನು ತಪ್ಪಿಸಲು ಸಾಧ್ಯವಿದೆ. ಉದಾಹರಣೆಗೆ ಪಕ್ಷದ ಅಧ್ಯಕ್ಷ ಸ್ಥಾನ ಚುನಾವಣೆಗಳ ಮೂಲಕವೇ ಅಯ್ಕೆಯಾಗಬೇಕು, ಪಕ್ಷದಲ್ಲಿ ವಂಶವಾಹಿ ಪ್ರಭುತ್ವಕ್ಕೆ ಅವಕಾಶವೇ ಇಲ್ಲದಂತೆ ನಿಯಮ ರೂಪಿಸುವುದು, ಚುನಾವಣೆಗಳಲ್ಲಿ ನಿಲ್ಲುವವರಿಗೆ ನಿರ್ದಿಷ್ಟ ಅರ್ಹತೆಯನ್ನು ನಿಗದಿ ಪಡಿಸುವುದು; ಭ್ರಷ್ಟರು, ಆಪಾದಿತರು, ಅಪರಾಧಿಗಳು ಚುನಾವಣೆಗಳಿಗೆ ಸ್ಪರ್ಧಿಸದಂತೆ ನಿಯಮ ರೂಪಿಸುವುದು; ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಇತರ ಮಂತ್ರಿಗಳ ಸ್ಥಾನಗಳಿಗೆ ಅರ್ಹತೆಯೊಂದನ್ನೇ ಆಧಾರವಾನ್ನಗಿಸುವುದು; ಪಕ್ಷದ ನೀತಿ ನಿಯಮ ಉಲ್ಲಂಘಿಸಿದವರನ್ನು ಹೊರಹಾಕಲು ನಿರ್ದಿಷ್ಟ ಮಾನದಂಡಗಳನ್ನು ರೂಪಿಸುವುದು, ಪಕ್ಷದೊಳಗೆ ಗುಂಪುಗಾರಿಕೆಗೆ ಅವಕಾಶವಾಗದಂತೆ ನಿಯಮ ರೂಪಿಸುವುದು ಮೊದಲಾದವುಗಳನ್ನು ಮಾಡಿದರೆ ರಾಜಕೀಯ ಪಕ್ಷ ಭ್ರಷ್ಟ ಹಾಗೂ ಜನವಿರೋಧಿಯಾಗುವುದನ್ನು ತಪ್ಪಿಸಬಹುದು. ಇದನ್ನು ಈಗ ಇರುವ ರಾಜಕೀಯ ಪಕ್ಷಗಳೂ ಮಾಡಬಹುದು.

ಒಂದು ಸ್ಪಷ್ಟವಾದ ಪರ್ಯಾಯ ಚಿಂತನೆಗಳ, ಜನಪರ ಸೈದ್ದಾಂತಿಕ ಧೋರಣೆಯ ರಾಷ್ಟ್ರೀಯ ಪಕ್ಷವು ರೂಪುಗೊಂಡರೆ ಅದರ ಪರವಾಗಿ ನಮ್ಮ ಟಿವಿ ವಾಹಿನಿಗಳು ನಿರಂತರವಾಗಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದರೆ ಅದು ಚುನಾವಣೆಗಳಲ್ಲಿ ಗೆಲ್ಲುವಂತೆ ಮಾಡುವುದು ಅಸಾಧ್ಯವೇನೂ ಅಲ್ಲ. ದೇಶದಾದ್ಯಂತ ಈಗ ಇರುವ ರಾಜಕೀಯ ಪಕ್ಷಗಳಿಂದ ರೋಸಿ ಹೋಗಿರುವ ಜನತೆ ಹೊಸತನಕ್ಕಾಗಿ ಹಂಬಲಿಸುತ್ತಿರುವುದು ಸಹಜವೇ ಆಗಿದೆ. ಜನ ಸ್ವಚ್ಛ, ಭ್ರಷ್ಟಾಚಾರ ರಹಿತ ಬದಲಾವಣೆಗಾಗಿ ಹಂಬಲಿಸುತ್ತಿರುವುದು ಅಣ್ಣಾ ಹಜಾರೆಯವರ ಹೋರಾಟದ ಸಮಯದಲ್ಲಿ ಕಂಡು ಬಂದಿದೆ. ಆದರೆ ಆ ಹೋರಾಟ ರಾಜಕೀಯಕರಣಗೊಂಡು ದುರ್ಬಲವಾಗಿದೆ. ಅಣ್ಣಾ ಹಜಾರೆ ಹಾಗೂ ಅವರ ತಂಡದಲ್ಲಿ ವೈಜ್ಞಾನಿಕ ಮನೋಭಾವದ ಕೊರತೆ ಇರುವುದೂ ಕಂಡು ಬಂದಿದೆ. ಇದೇ ತಂಡದಲ್ಲಿ ಸ್ಪಷ್ಟವಾದ ವೈಜ್ಞಾನಿಕ ಮನೋಭಾವ ಇದ್ದಿದ್ದರೆ ಇದು ಒಂದು ಪರ್ಯಾಯ ರಾಜಕೀಯ ಶಕ್ತಿಯನ್ನು ಬೆಳೆಸಲು ಸಾಧ್ಯವಾಗುತ್ತಿತ್ತು. ಈಗ ಹಜಾರೆಯವರ ಹೋರಾಟವನ್ನು ನೋಡುವುದಾದರೆ ಅದು ಒಂದು ರಾಜಕೀಯ ಪಕ್ಷದ ಪರವಾಗಿ ದೇಶದಲ್ಲಿ ಜನಾಭಿಪ್ರಾಯ ಹುಟ್ಟು ಹಾಕಲು ಬಳಕೆಯಾಗುತ್ತಿರುವುದು ಕಂಡು ಬರುತ್ತದೆ. ಹೀಗಾಗಿ ಅದು ದುರ್ಬಲವಾಗಿದೆ. ಈಗ ಹಜಾರೆಯವರು ಯಾವ ಪಕ್ಷದ ಪರವಾಗಿ ಹವಾ ಉಂಟು ಮಾಡಲು ಬಯಸುತ್ತಿದ್ದಾರೋ ಆ ಪಕ್ಷವು ಉಳಿದ ಪಕ್ಷಗಳಿಗಿಂತ ಭಿನ್ನವಾಗಿಲ್ಲ ಹಾಗೂ ಆ ಪಕ್ಷದಲ್ಲಿ ವೈಜ್ಞಾನಿಕ ಮನೋಭಾವಕ್ಕೆ ಸ್ಥಾನವೂ ಇಲ್ಲದಿರುವುದೂ ಕಂಡು ಬರುತ್ತದೆ.