Category Archives: ಚಿದಂಬರ ಬೈಕಂಪಾಡಿ

ಬಿಜೆಪಿಗೆ ಮೋದಿ ಅನಿವಾರ್ಯ ಸಾರಥಿ

– ಚಿದಂಬರ ಬೈಕಂಪಾಡಿ

ಬಿಜೆಪಿಯಲ್ಲೀಗ ಸಂಚಲನ. ನರೇಂದ್ರ ಮೋದಿ ಹೆಗಲಿಗೆ 2014ರ ಲೋಕಸಭಾ ಚುನಾವಣೆಯ ಭಾರ ಹೊರಿಸಿರುವುದರಿಂದ ಸಹಜವಾಗಿಯೇ ಮೋದಿ ಬೆಂಬಲಿಗರಿಗೆ ಅಮಿತೋತ್ಸಾಹ. ಮೋದಿಗೆ ಇಂಥ ಜವಾಬ್ದಾರಿ ನೀಡಿರುವುದಕ್ಕೆ ಬಿಜೆಪಿಯ ಉಕ್ಕಿನ ಮನುಷ್ಯ ಎಲ್.ಕೆ.ಅಡ್ವಾಣಿ ಪಾಳೆಯದಲ್ಲಿ ಮುಜುಗರ. ಈ ಎರಡೂ ರೀತಿಯ ಸಂಚಲನಗಳನ್ನು ಸಮಚಿತ್ತದಿಂದ ಬಿಜೆಪಿ ಅಭಿಮಾನಿಗಳು ಅನುಭವಿಸಬೇಕಾಗಿದೆ. ವ್ಯಕ್ತಿ ಮುಖ್ಯವಲ್ಲ ಎನ್ನುವುದು ಬಿಜೆಪಿಯ ತತ್ವ. ಆದರೆ ವ್ಯಕ್ತಿಯೂ ಮುಖ್ಯ ಎನ್ನುವುದು ಇತ್ತೀಚಿನ ಚುನಾವಣೆಗಳಲ್ಲಿ ಜನ ನೀಡಿರುವ ತೀರ್ಪಿನಲ್ಲಿ ಸ್ಪಷ್ಟ.

ಯಾರೇ ಕೂಗಾಡಿದರೂ ಬಿಜೆಪಿ ನರೇಂದ್ರ ಮೋದಿಯನ್ನು ಮುಂದಿಟ್ಟುಕೊಂಡೇ ಚುನಾವಣೆ ಎದುರಿಸುತ್ತೇವೆ ಎನ್ನುವ ಕಠಿಣ ನಿರ್ಧಾರಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಬಂದ ಹಿನ್ನೆಲೆಯಲ್ಲೇ ಗೋವಾದಲ್ಲಿ ಸಮಾಪನಗೊಂಡ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ 750px-BJP-flag.svg[1]ಎಲ್.ಕೆ.ಅಡ್ವಾಣಿಯವರ ಗೈರು ಹಾಜರಿಯಲ್ಲಿ ಮೋದಿಗೆ ಪಟ್ಟ ಕಟ್ಟಲಾಗಿದೆ. ಪಕ್ಷದ ಆಂತರಿಕ ವಲಯದಲ್ಲಿ ಮೋದಿಗೆ ಕೊಟ್ಟಿರುವ ಈ ಜವಾಬ್ದಾರಿ ಬಗ್ಗೆ ದ್ವಂದ್ವ ನಿಲುವುಗಳಿರುವುದನ್ನು ಯಾರೂ ನಿರಾಕರಿಸುವಂತಿಲ್ಲ. ಹಾಗೆಂದು ಬಿಜೆಪಿಗೆ ಮೋದಿಯನ್ನು ಬಿಟ್ಟರೆ ಅನ್ಯ ಮಾರ್ಗವಿಲ್ಲ. ಸಧ್ಯ ಬಿಜೆಪಿಯಲ್ಲಿ ರಾಷ್ಟ್ರಮಟ್ಟದಲ್ಲಿ ಹೆಚ್ಚು ಚಲಾವಣೆಯಲ್ಲಿರುವ ನಾಣ್ಯ ಮೋದಿ ಮಾತ್ರ ಎನ್ನುವುದನ್ನು ಯಾರೂ ನಿರಾಕರಿಸುವಂತಿಲ್ಲ.

ನರೇಂದ್ರ ಮೋದಿಯನ್ನು ಎರಡು ರೀತಿಯಲ್ಲಿ ನೋಡಬೇಕಾಗಿದೆ. ಮೋದಿ ಅವರ ನಿಲುವು ಪಕ್ಷದ ಹಿನ್ನೆಲೆಯಲ್ಲಿ ಮತ್ತು ಮೋದಿ ಅವರ ಕಾರ್ಯವೈಖರಿ ಸಾರ್ವಜನಿಕವಾಗಿ. ಈ ಎರಡನ್ನೂ ಸಮೀಕರಿಸುವಂತಿಲ್ಲ. ಎರಡೂ ಭಿನ್ನವಾದವು.

ಗೋಧ್ರಾ ಘಟನೆಯನ್ನು ಅವಲೋಕಿಸಿದಾಗ ನರೇಂದ್ರ ಮೋದಿ ಹೆಚ್ಚು ಜನರ ದ್ವೇಷಕ್ಕೆ ಗುರಿಯಾಗುತ್ತಾರೆ. ಅಲ್ಲಿ ಅವರ ಪಾತ್ರವನ್ನು ಜನ ಒಪ್ಪುವುದಿಲ್ಲ. ನರಮೇಧಕ್ಕೆ ಮೋದಿಯೇ ಕಾರಣ, ಅವರ ನಿಲುವುಗಳೇ ಕಾರಣವೆಂದು ಹೇಳುವ ಕಾರಣಕ್ಕೆ ಓರ್ವ ವಿಲನ್ ರೀತಿಯಲ್ಲಿ ಗುರುತಿಸಲಾಗುತ್ತದೆ. ಈ ಹಿನ್ನೆಲೆಯಿಂದಾಗಿಯೇ ಎನ್‌ಡಿಎ ಮೈತ್ರಿಯಲ್ಲಿ ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯೆಂದು ಒಪ್ಪುವುದಕ್ಕೆ ಅಲ್ಲಿರುವ ಮಿತ್ರ ಪಕ್ಷಗಳ ಮನಸ್ಸುಗಳು ಸಿದ್ಧವಿಲ್ಲ. ಇದು ನರೇಂದ್ರ ಮೋದಿಗೆ ರಾಷ್ಟ್ರಮಟ್ಟದಲ್ಲಿ ಬಲುದೊಡ್ಡ ಹಿನ್ನಡೆ. ಗೋಧ್ರಾ ಘಟನೆಯಲ್ಲದಿದ್ದರೆ ಎನ್ನುವುದು ಬೇರೆಯೇ ಮಾತು.

ಗುಜರಾತ್ ಅಭಿವೃದ್ಧಿ ಮತ್ತು ಮೋದಿಯ ನಡೆಗಳನ್ನು ಅವಲೋಕಿಸಿದಾಗ ಜನಕಲ್ಯಾಣವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಗುಜರಾತ್ ಭೂಕಂಪದಿಂದ ನಲುಗಿದ ಮೇಲೆ ನಿರಂತರವಾಗಿ ಮೋದಿಯ ಹೆಜ್ಜೆಗುರುತುಗಳು ಅಲ್ಲಿನ ಜನರ ಮನಸ್ಸಿನಲ್ಲಿ ಅಚ್ಚೊತ್ತಿವೆ. ಆ ಕಾರಣಕ್ಕಾಗಿ ಮೋದಿಯನ್ನು ಮೆಚ್ಚುತ್ತಾರೆ. ಒಂದು ರಾಜ್ಯದ ಅಭಿವೃದ್ಧಿಯನ್ನೇ ಆಧಾರವಾಗಿಟ್ಟುಕೊಂಡು ಒಂದು ದೇಶದ ಅಭಿವೃದ್ಧಿಯ ಬಗ್ಗೆ ಯೋಚಿಸಬಹುದು, ಆದರೆ ಅದು ಅನುಷ್ಠಾನಕ್ಕೆ ಅಷ್ಟು ಸುಲಭವಾಗಿ ಬರುತ್ತದೆಂದು ಹೇಳಲಾಗದು. ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡೇ ಮುನ್ನಡಿಯಿಡಬೇಕಾಗಿರುವುದರಿಂದ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಪ್ರಾದೇಶಿಕ ಸಮಸ್ಯೆಗಳನ್ನು ಒಳಗೊಂಡಿರುವುದರಿಂದ ಗುಜರಾತ್ ಮಾದರಿಯನ್ನು ಅಳವಡಿಸುವುದು ಸುಲಭಸಾಧ್ಯವಲ್ಲ. ಈ ಕಾರಣಕ್ಕಾಗಿ ಮೋದಿ ಅಭಿವೃದ್ಧಿ ಎನ್ನುವುದು ಸಮಗ್ರ ರಾಷ್ಟ್ರದ ಚಿಂತನೆ ಹೊರತು ಅದು ಅನುಷ್ಠಾನದ ಮಾದರಿಯಾಗುವುದಿಲ್ಲ. ಹೀಗೆ ಹೇಳಿದರೆ ಮೋದಿ ಬೆಂಬಲಿಗರು ಮೆಚ್ಚುವುದಿಲ್ಲ, ಆದರಿಂದ ಬಹಳ ಮಂದಿ ಮೋದಿಯನ್ನು ವಿಮರ್ಶಾತ್ಮಕವಾಗಿ ನೋಡದೆ ಭಾವನಾತ್ಮಕವಾಗಿ ಮೆಚ್ಚುತ್ತಾರೆ. ಇದು ಮೋದಿ ಅಭಿವೃದ್ಧಿ ಚಿಂತನೆಗೆ ಅದರಲ್ಲೂ ಅಖಂಡ ಭಾರತವನ್ನು ಗಮನದಲ್ಲಿಟ್ಟುಕೊಂಡು ನೋಡುವ ಬದಲು ಗುಜರಾತ್ ರಾಜ್ಯಕ್ಕೆ ಸೀಮಿತವಾಗುವಂತೆ ಮಾಡಲಾಗುತ್ತಿದೆ.

ನರೇಂದ್ರ ಮೋದಿಯನ್ನು ಬಿಜೆಪಿಯೇತರ ಪಕ್ಷಗಳು ವಿರೋಧಿಸುವುದಕ್ಕೆ ಹಲವು ಕಾರಣಗಳಿರುತ್ತವೆ. Narendra_Modiಆದರೆ ಬಿಜೆಪಿಯಲ್ಲೇ ಅವರನ್ನು ವಿರೋಧಿಸುವುದಕ್ಕೆ ಇರುವ ಕಾರಣಗಳು ಅತ್ಯಂತ ಅಪಾಯಕಾರಿ. ಬಿಜೆಪಿಯಲ್ಲಿ ಸಾಮೂಹಿಕವಾಗಿ ಮೋದಿ ನಾಯಕತ್ವವನ್ನು ಒಪ್ಪಿಕೊಳ್ಳುತ್ತಾರೆಂದರೆ ಅದು ಆತ್ಮವಂಚನೆಯಾಗುತ್ತದೆ. ಅಟಲ್ ಬಿಹಾರಿ ವಾಜಪೇಯಿ ಅವರನ್ನು ಹೊರತು ಪಡಿಸಿದರೆ ಬಿಜೆಪಿಯಲ್ಲೂ ಎಲ್ಲರೂ ಒಪ್ಪುವ ನಾಯಕರು ಖಂಡಿತಕ್ಕೂ ಇಲ್ಲ ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ. ಎಲ್.ಕೆ.ಅಡ್ವಾಣಿ ಅವರ ಹಿರಿತನಕ್ಕೆ, ಅವರ ಮುತ್ಸದ್ದಿತನಕ್ಕೆ ಗೌರವ ಸಿಗುತ್ತದೆ. ಆದರೆ ಅಲ್ಲೂ ಎಲ್ಲರೂ ಒಪ್ಪಿಕೊಳ್ಳುವುದಿಲ್ಲ. ಇದೇ ಸ್ಥಿತಿ ನರೇಂದ್ರ ಮೋದಿ ಅವರಿಗೂ.

2014 ರ ಲೋಕಸಭಾ ಚುನಾವಣೆಯನ್ನು ಎದುರಿಸಲು ಬಿಜೆಪಿ ತನ್ನ ಸಾರಥಿಯೆಂದು ನರೇಂದ್ರ ಮೋದಿಯನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಮೋದಿಯನ್ನು ಬಿಟ್ಟರೆ ಆ ಪಕ್ಷದೊಳಗೇ ಮೋದಿಯನ್ನು ಮೀರಿಸುವಷ್ಟು ಮತ್ತು ದೇಶದ ಮುಂದೆ ತಂದು ನಿಲ್ಲಿಸುವಷ್ಟರಮಟ್ಟಿಗೆ ವರ್ಚಸ್ಸಿರುವವರಿಲ್ಲ. ಇದು ಬಿಜೆಪಿಯ ಮುಂದಿರುವ ಬಹುದೊಡ್ಡ ಸವಾಲು. ಎಲ್.ಕೆ.ಅಡ್ವಾಣಿ ಅವರನ್ನು ಮತ್ತೊಂದು ಅವಧಿಗೆ ಮುಂಚೂಣಿಗೆ ತಂದು ಪ್ರಯೋಗ ಮಾಡುವುದಕ್ಕೆ ಆ ಪಕ್ಷದಲ್ಲಿರುವವರೇ ಸಿದ್ಧರಿಲ್ಲ. ಆದರೆ ಬಿಜೆಪಿ ಆತ್ಮಪೂರ್ವಕವಾಗಿ ಮತ್ತೊಂದು ಅವಕಾಶವನ್ನು ಅಡ್ವಾಣಿಗೆ ಕೊಡುವಷ್ಟು ಔದಾರ್ಯ ತೋರಿಸಿದ್ದರೆ ಅಡ್ವಾಣಿಯವರೂ ನಿರಾಕರಿಸುವಂಥ ಸನ್ಯಾಸಿ ಮನಸ್ಥಿತಿಯವರಲ್ಲ.

ಈಗ ಬಿಜೆಪಿ ಮಟ್ಟಿಗೆ ಯಾರು ಸಾರಥಿ ಎನ್ನುವುದು ಮುಗಿದ ಅಧ್ಯಾಯವಾದರೂ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವುದು ಆ ಪಕ್ಷದ ಮುಂದಿರುವ ದೊಡ್ಡ ಸವಾಲು, ಇದು ಕಾಂಗ್ರೆಸ್‌ಗೆ ಸಿಕ್ಕಿರುವ ಪ್ರಬಲ ಅಸ್ತ್ರವೂ ಹೌದು.

ಘನ ಹುದ್ದೆಗೆ ಘನತೆ ತರಬಲ್ಲ ಛಲಗಾರ ಕಾಗೋಡು

– ಚಿದಂಬರ ಬೈಕಂಪಾಡಿ

ಶಿವಮೊಗ್ಗ ಜಿಲ್ಲೆ ಸಮಾಜವಾದಿ ಸಿದ್ಧಾಂತದ ಸಮೃದ್ಧವಾದ ಮಣ್ಣು. ಈ ಮಣ್ಣಿನ ಕಾಗೋಡು ತಿಮ್ಮಪ್ಪ ಈಗ ವಿಧಾನಸಭೆಯ ೧೯ನೇ ಸಭಾಪತಿ. ಅತ್ಯಂತ ಸಜ್ಜನ ಮತ್ತು ನಿಜಕ್ಕೂ ತೂಕದ ವ್ಯಕ್ತಿತ್ವ. ಬಹುಮುಖ್ಯವಾಗಿ ಕಾಗೋಡು ತಿಮ್ಮಪ್ಪ ಯಾಕೆ ಇಷ್ಟವಾಗುತ್ತಾರೆಂದರೆ ತಾವು ನಂಬಿದ ತತ್ವ, Photo Captionಸಿದ್ಧಾಂತವನ್ನು ಅಧಿಕಾರಕ್ಕಾಗಿ ಮಾರಿಕೊಂಡವರಲ್ಲ, ಅಧಿಕಾರ ಬಂದಾಗ ಗಾಳಿಗೆ ತೂರಿದವರಲ್ಲ. ಅಧಿಕಾರವನ್ನು ತ್ಯಾಗಮಾಡಿದ್ದಾರೆ, ಆದರೆ ಮೌಲ್ಯಗಳನ್ನು ಇಂದಿಗೂ ಕಾಪಾಡಿಕೊಂಡು ಬಂದಿದ್ದಾರೆ. ಅಧಿಕಾರಕ್ಕಾಗಿ ತಮ್ಮ ನೆಲೆ, ಬೆಲೆಯನ್ನು ಕಳೆದುಕೊಂಡವರಲ್ಲ, ಅಧಿಕಾರಕ್ಕಾಗಿ ಒತ್ತೆಯಿಟ್ಟವರೂ ಅಲ್ಲ.

೧೯೩೨ ರ ಸೆಪ್ಟಂಬರ್ ೧೦ ರಂದು ಕಾಗೋಡು ಎಂಬ ಹಳ್ಳಿಯಲ್ಲಿ ಜನಿಸಿದ ತಿಮ್ಮಪ್ಪ ರಾಜಕೀಯದ ಹಳೆಬೇರು. ಮಾತಿನಲ್ಲಿ ಸೋಗಲಾಡಿತನವಿಲ್ಲ, ಕೃತಕತೆಯೂ ಇಲ್ಲ, ನಡೆನುಡಿಯಲ್ಲಿ ದೇಸೀತನವಿದೆ. ಛಲವಾದಿ ಕಾಗೋಡು ತಿಮ್ಮಪ್ಪ ಎನ್ನುವುದರಲ್ಲಿ ಅನುಮಾನಗಳಿಲ್ಲ. ಬಿ.ಕಾಂ, ಬಿ.ಎಲ್ ಪದವಿ ಪಡೆದು ೧೯೬೦ರಲ್ಲಿ ಸಾಗರದಲ್ಲಿ ವಕೀಲಿ ವೃತ್ತಿಗೆ ಇಳಿದವರು. ಸಮಾಜವಾದಿ ಪಕ್ಷದಿಂದ ೧೯೬೨ರಲ್ಲಿ ವಿಧಾನಸಭೆಗೆ ಸ್ಪರ್ಧೆ ಮಾಡಿದರಾದರೂ ಜಯ ಅವರದಾಗಲಿಲ್ಲ. ಮತ್ತೆ ೧೯೬೭ರಲ್ಲಿ ಸ್ಪರ್ಧೆ ಮಾಡಿದರಾದರೂ ಸೋಲಬೇಕಾಯಿತು. ಛಲಬಿಡದ ಈ ತ್ರಿವಿಕ್ರಮ ೧೯೭೨ರಲ್ಲಿ ಮತ್ತೆ ಕಣಕ್ಕಿಳಿದು ಗೆದ್ದು ವಿಧಾನಸಭೆ ಪ್ರವೇಶ ಮಾಡಿದರು. ಸುಮಾರು ಒಂದು ದಶಕ ಕಾಲ ವಿಧಾನಸಭೆ ಪ್ರವೇಶಕ್ಕೆ ತಿಣುಕಾಡಿದ ಕಾಗೋಡು ತಿಮ್ಮಪ್ಪ ಸೋಲಿನಿಂದ ಕಲಿತ ಪಾಠವನ್ನು ನಂತರದ ದಿನಗಳಲ್ಲಿ ಗೆಲ್ಲುವುದಕ್ಕೆ ಬಳಸಿದರು. ಅಂದು ಸೋಲಿಸಿದ್ದ ಜನರೇ ಮತ್ತೆ ಕೈಹಿಡಿದು ಅವರನ್ನು ಮುನ್ನಡೆಸಿದರು.

ದೇವರಾಜ ಅರಸು ಗರಡಿಯಲ್ಲಿ ಭೂಮಸೂದೆ ಶಾಸನ ರೂಪಿಸುವ ಸಮಿತಿಯ ಸದಸ್ಯರಾಗಿ ತಮ್ಮ ಹಳ್ಳಿಗಾಡಿನ ಜನರ ಬದುಕು-ಬವಣೆಯನ್ನು ಆಧಾರವಾಗಿಟ್ಟುಕೊಂಡು ಉಳುವವನೇ ಹೊಲದೊಡೆಯನನ್ನು ಮಾಡಲು ಕಾಗೋಡು ತಿಮ್ಮಪ್ಪ ಅವರ ಅಪಾರ ಬುದ್ಧಿಮತ್ತೆಯೂ ಇತ್ತು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಭೂಮಾಲೀಕರ ದಬ್ಬಾಳಿಕೆಯಿಂದ ಜರ್ಝರಿತವಾಗಿದ್ದ ರೈತರ ಬದುಕಿಗೆ ಆಸರೆಯಾದ ಅರಸು ಅವರ ಕಾರ್ಯತತ್ಪರತೆಯಲ್ಲಿ ಕಾಗೋಡು ಅವರ ಬಳುವಳುಯೂ ಇತ್ತು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಮಾಜವಾದಿ ಕಾಗೋಡು ತಿಮ್ಮಪ್ಪ ೧೯೮೦ರಲ್ಲಿ ಕಾಂಗ್ರೆಸ್ ಪಕ್ಷ ಸೇರಿ ತಮ್ಮ ರಾಜಕೀಯದ ಹೊಸ ಇನ್ನಿಂಗ್ಸ್ ಆರಂಭಿಸಿದರು. ಗುಂಡುರಾಯರ ಸಂಪುಟದಲ್ಲಿ ಆಹಾರ, ಅರಣ್ಯ ಖಾತೆ ನಿಭಾಯಿಸಿದರು. ರಾಜಕೀಯ ಒಂದು ವೃತ್ತಿಯಾಗಿ ಚಿಗುರೊಡೆಯುತ್ತಿದ್ದ ಆ ಕಾಲಘಟ್ಟದಲ್ಲಿ ಗುಂಡುರಾಯರು ಕಾಗೋಡು ಅವರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಅವಕಾಶವಿದ್ದರೂ ಕೈಚೆಲ್ಲಿದರು ಎನ್ನುವ ವ್ಯಾಖ್ಯೆ. ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಮಾಜ ಕಲ್ಯಾಣ ಖಾತೆ ಸಚಿವರಾಗಿ ಸಾಮಾಜಿಕ ನ್ಯಾಯ ಕೊಡುವ ನಿಟ್ಟಿನಲ್ಲಿ ಕಾಗೋಡು ತಿಮ್ಮಪ್ಪ ಅವರ ಪ್ರಾಮಾಣಿಕ ಪ್ರಯತ್ನವನ್ನು ಮರೆಯುವಂತಿಲ್ಲ. ಇಲಾಖೆಯಲ್ಲಿನ ಹೆಗ್ಗಣಗಳ ಮೇಲೆ ಹದ್ದಿನಕಣ್ಣಿಟ್ಟು ಕೆಲಸ ಮಾಡಿದವರು ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು.

ಸಮಾಜವಾದಿಯಾಗಿ ಗೋಪಾಲಗೌಡರು ಮಾಡಿದ ಕೆಲಸ ಇಂದಿನ ತಲೆಮಾರಿನವರಿಗೆ ಮಸುಕು ಮಸುಕಾಗಿ ಅರಿವಾಗಬಹುದು. ಸಮಾಜವಾದಿಯಾಗಿ ಎಸ್.ಬಂಗಾರಪ್ಪ ಬೇರೆ ಬೇರೆ ಆಯಾಮಗಳಲ್ಲಿ ಗುರುತಿಸಿಕೊಂಡು ರಾಜಕೀಯ ಸ್ಥಾನಮಾನ ಗಳಿಸಿದರಾದರೂ ಕಾಗೋಡು ತಿಮ್ಮಪ್ಪ ಮಾತ್ರ ಅಧಿಕಾರದ ಬೆನ್ನು ಹತ್ತಿ ಹೋಗದೆ ಸಮಾಜವಾದಿಗಳ ಮಧ್ಯೆ ಭಿನ್ನವಾಗಿಯೇ ಈಗಲೂ ಗುರುತಿಸಿಕೊಳ್ಳುತ್ತಾರೆ. ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಸಚಿವರಾಗಿ, ಮಂಡಳಿಯ ಅಧ್ಯಕ್ಷರಾಗಿ ಬೇರೆ ಹುದ್ದೆಗಳನ್ನು ನಿಭಾಯಿಸಿದ ಅನುಭವಿ. ಅವರ ಘನತೆ, ನ್ಯಾಯಪಾಲನೆ, ಮಾತಿನಲ್ಲಿರುವ ನಿಖರತೆ ಸಹಜವಾಗಿಯೇ ಸಭಾಪತಿ ಹುದ್ದೆಗೆ ಸೂಕ್ತ ಆಯ್ಕೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.

ಬಾಳಿಗ, ಕಂಠಿ, ಡಿ.ಬಿ.ಚಂದ್ರೇಗೌಡ, ಬಣಕಾರ್, ಎಸ್.ಎಂ.ಕೃಷ್ಣ, ರಮೇಶ್ ಕುಮಾರ್, ಹೀಗೆ ಸಭಾಪತಿ ಸ್ಥಾನಕ್ಕೆ ಘನತೆ ತಂದುಕೊಟ್ಟವರು. ಅವರು ಆ ಸ್ಥಾನದಲ್ಲಿ ಕುಳಿತು ನೀಡಿದ ರೂಲಿಂಗ್‌ಗಳು ಈಗಲೂ ಅವರನ್ನು ಸ್ಮರಿಸುವಂತೆ ಮಾಡಿವೆ. ಈ ಕಾರಣಕ್ಕೆ ಈಗ ಕಾಗೋಡು ತಿಮ್ಮಪ್ಪ ಅವರೂ ಕೂಡಾ ತಮಗಿರುವ ಅಪಾರ ಅನುಭವವನ್ನು ಈ ಹುದ್ದೆಯ ಮೂಲಕ ಅಭಿವ್ಯಕ್ತಿಸಲಿದ್ದಾರೆಂದು ನಿರೀಕ್ಷಿಸಬಹುದು. ಕಾಗೋಡು ಅವರಿಗಿರುವ ಸಾಮಾಜಿಕ ಕಾಳಜಿ, ನ್ಯಾಯಪಾಲನೆಯಲ್ಲಿ ಅವರಿಗಿರುವ ಶ್ರದ್ಧೆ-ನಂಬಿಕೆ ಅವರಿಂದ ಬಹಳಷ್ಟು ನಿರೀಕ್ಷೆ ಮಾಡುವಂತೆ ಮಾಡಿದೆ. ಸದಸ್ಯರ ಹಕ್ಕನ್ನು ಕಾಪಾಡುವುದು ಹೇಗೆಂದು ಸದನದ ಹಿರಿಯ ಸದಸ್ಯರಾದ ಕಾಗೋಡು ಅವರಿಗೆ ಬೇರೆ ಯಾರೂ ಪಾಠ ಮಾಡಬೇಕಾಗಿಲ್ಲ. ಯಾವುದೇ ಸಂದರ್ಭದಲ್ಲೂ ಸ್ಥಾನಕ್ಕೆ ಚ್ಯುತಿ ಬರದಂತೆ ಕಾರ್ಯನಿರ್ವಹಿಸುತ್ತಾರೆನ್ನುವುದಕ್ಕೆ ಅವರು ನಡೆದು ಬಂದಿರುವ ಹಾದಿಯೇ ಸಾಕ್ಷಿ.

ಸಿದ್ಧು ಆಡಳಿತಕ್ಕೆ ಯಾರ ಹೋಲಿಕೆ ಯಾಕೆ ?

– ಚಿದಂಬರ ಬೈಕಂಪಾಡಿ

ಸಿದ್ಧರಾಮಯ್ಯ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ರಾಜ್ಯದಲ್ಲಿ ಸಂಚಲನ ಉಂಟಾಗಿರುವುದಂತೂ ನಿಜ. ಮುಖ್ಯವಾಗಿ ಅವರು ಈ ಹುದ್ದೆಯನ್ನು ಏರುವುದೇ ಅನುಮಾನ ಎನ್ನುವಷ್ಟರ ಮಟ್ಟಿಗೆ ರಾಜಕೀಯ ಬೆಳವಣಿಗೆಗಳು ನಡೆದವು, ಆದರೆ ಅವೆಲ್ಲವೂ ಅನಿರೀಕ್ಷಿತವಾದವುಗಳಾಗಿದ್ದವು. ಸಾಮಾಜಿಕ ನ್ಯಾಯದ ಪ್ರತಿಪಾದನೆ ಮಾಡುತ್ತಲೇ ಬಂದ ವ್ಯಕ್ತಿಗೆ ಎದುರಾದ ಈ ಬೆಳವಣಿಗೆ ಅಸಹಜವೇನಲ್ಲ. ನಿರಾಕರಿಸುವ ಮನಸ್ಸುಗಳ ಮುಂದೆ ಹೇಳಿಕೊಳ್ಳುವುದು ವ್ಯರ್ಥ ಎನ್ನುವುದು ಇತಿಹಾಸ ಹೇಳಿಕೊಟ್ಟಿರುವ ಪಾಠವಾಗಿರುವುದರಿಂದ ಅತ್ಯಂತ ಸಹಜವಾಗಿಯೇ ಉದಾರಿಯಾಗಬಹುದೇನೋ ಎನ್ನುವ ಆಶಯದೊಂದಿಗೆ Siddaramaiahಮುಖ್ಯಮಂತ್ರಿ ಹುದ್ದೆಗೆ ಶೋಷಿತ ಸಮುದಾಯ ಧ್ವನಿ ಎತ್ತಿರುವುದು ನಾಳೆಯ ಬಗ್ಗೆ ಭರವಸೆ ಮೂಡಿಸುವಷ್ಟರಮಟ್ಟಿಗೆ ಸಾರ್ಥಕವಾಗಿದೆ.

ಪ್ರಧಾನ ಮಂತ್ರಿ ಹುದ್ದೆ ಕೂಡಾ ಶೋಷಿತ ಸಮುದಾಯಕ್ಕೆ ಎಂದೋ ಸಿಗಬೇಕಿತ್ತು, ಆದರೆ ಅದು ಸಿಕ್ಕಿಲ್ಲ ಎನ್ನುವುದನ್ನು ಹೇಗೆ ತಾನೇ ನಿರಾಕರಿಸಲು ಸಾಧ್ಯ?. ಜಗಜೀವನ್‌ರಾಮ್ ಒಂದಲ್ಲ ಒಂದು ದಿನ ಪ್ರಧಾನಿಯಾಗುತ್ತಾರೆಂದೇ ಶೋಷಿತ ಸಮುದಾಯದ ಜನ ಭಾವಿಸಿದ್ದರು ಹೊರತು ಹಕ್ಕೊತ್ತಾಯ ಮಾಡುವಷ್ಟರಮಟ್ಟಿಗೆ ಸಬಲರಾಗಿರಲಿಲ್ಲ ಎನ್ನುವುದಕ್ಕಿಂತಲೂ ಧ್ವನಿ ಎತ್ತುವ ಸಾಮರ್ಥ್ಯವೇ ಬಹುತೇಕ ಜನರಿಗೆ ಆಗ ಇರಲಿಲ್ಲ ಎನ್ನುವುದೇ ಹೆಚ್ಚು ಸೂಕ್ತ. ಬಿ.ರಾಚಯ್ಯ, ರಂಗನಾಥ್ ಅವರೂ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸುವಷ್ಟು ಸಾಮರ್ಥ್ಯಹೊಂದಿದ್ದರೂ ಅವಕಾಶ ಸಿಗಲಿಲ್ಲ. ಇವೆಲ್ಲವೂ ಇತಿಹಾಸದ ಪುಟ ತಿರುವಿದರೆ ಗೋಚರವಾಗುವ ವಾಸ್ತವ ಸಂಗತಿಗಳು.

ಸಿದ್ಧರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಸುಲಭವಾಗಿ ಆಯ್ಕೆಯಾಗಿಬಿಟ್ಟರು ಎನ್ನುವಂತೆ ಭಾಸವಾಯಿತಾದರೂ ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಹೈಕಮಾಂಡ್ ಇಷ್ಟೊಂದು ತ್ವರಿತವಾಗಿ ನಿರ್ಧಾರ ತೆಗೆದುಕೊಂಡದ್ದೇ ಅಚ್ಚರಿ. ಯಾಕೆಂದರೆ ಈ ಹಿಂದಿನ ಸಂದರ್ಭಗಳನ್ನು ಅವಲೋಕಿಸಿದರೆ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟುಕೊಡುವ ಒಂದು ಸಾಲಿನ ಸರ್ವಾನುಮತದ ನಿರ್ಣಯ ದೆಹಲಿ ತಲುಪಿ, ಅಲ್ಲಿ ಹೈಕಮಾಂಡ್ ಹಿರಿತಲೆಗಳು ಚರ್ಚಿಸಿ ಅಲ್ಲೂ ವಿಭಿನ್ನ ಅಭಿಪ್ರಾಯಗಳು ಮೂಡಿ ಅಲ್ಲಿ ಅಧ್ಯಕ್ಷರಿಗೆ ಅಧಿಕಾರ ಕೊಟ್ಟು ಕೈತೊಳೆದುಕೊಳ್ಳುವುದು. ಅಧ್ಯಕ್ಷರು ತಮ್ಮದೇ ಆದ ಮಾನದಂಡದ ಮೂಲಕ ಆಪ್ತರೊಂದಿಗೆ ಚರ್ಚಿಸಿ ಹೆಸರನ್ನು ಅಂತಿಮಗೊಳಿಸುವುದು ರೂಢಿ. ಇವೆಲ್ಲಕ್ಕೂ ಕನಿಷ್ಠ ಒಂದೆರಡು ದಿನವಾದರೂ ಬೇಕಿತ್ತು. ಆದರೆ ಸಿದ್ಧರಾಮಯ್ಯ ಅವರ ಆಯ್ಕೆ ಕಸರತ್ತು ಕೆಲವೇ ಗಂಟೆಗಳಲ್ಲಿ ಮುಗಿಯುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ, ಹೈಕಮಾಂಡ್ ಮಟ್ಟದಲ್ಲೂ ಬದಲಾವಣೆ ಗಾಳಿಯ ಅನಿವಾರ್ಯತೆಯ ಅರಿವಾಗಿದೆ ಎನ್ನುವಂತಾಯಿತು.

ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಪ್ರಮಾಣವಚನ ಸ್ವೀಕರಿಸುವುದು ಖಚಿತವಾದ ಮೇಲೆ ಅವರ ಅಭಿಮಾನಿಗಳು ಖುಷಿಪಟ್ಟರು ಸಹಜವಾಗಿಯೇ. siddaramaiah-cmಆದರೆ ಅಧಿಕಾರ ಪಡೆಯಲಾಗದ ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ.ಜಿ.ಪರಮೇಶ್ವರ್ ಅವರ ನಡೆಗಳನ್ನು ಪ್ರಶಂಸೆ ಮಾಡಲೇ ಬೇಕು. ಮಹತ್ವದ ಹುದ್ದೆಗೇರುವ ಅವಕಾಶ ಕೈತಪ್ಪಿದಾಗ ಅವರಿಬ್ಬರೂ ಆಂತರಿಕವಾಗಿ ಬಹಳ ನೊಂದುಕೊಂಡಿರುತ್ತಾರೆ ಎನ್ನುವುದರಲ್ಲಿ ಅನುಮಾನಗಳಿಲ್ಲ, ಆದರೆ ಹೈಕಮಾಂಡ್ ಆಯ್ಕೆ ವಿರುದ್ಧ ಧ್ವನಿ ಎತ್ತುವ ಅವಕಾಶವಿದ್ದರೂ ಧ್ವನಿ ಎತ್ತಲಿಲ್ಲ. ಕಂಠೀರವ ಕ್ರೀಡಾಂಗಣದಲ್ಲಿ ಸಿದ್ಧರಾಮಯ್ಯ ಪ್ರಮಾಣವಚನ ಸ್ವೀಕರಿಸುವ ಸಂದರ್ಭಕ್ಕೆ ಇಬ್ಬರೂ ನಾಯಕರು ಸಾಕ್ಷಿಗಳಾಗಿ ಹೊಸ ಸಂದೇಶ ರವಾನಿಸಿದರು, ಇದನ್ನು ಸಿದ್ಧರಾಮಯ್ಯ ಅವರೂ ಅರ್ಥಮಾಡಿಕೊಂಡಿರುತ್ತಾರೆ. ಯಾಕೆಂದರೆ ಇಂಥ ಸಮುದಾಯಗಳಿಗೆ ಧ್ವನಿಯಾಗಬೆಕು ಎನ್ನುವ ಆಶಯವನ್ನು ಅವರು ಪ್ರತಿಪಾದಿಸುತ್ತಲೇ ಬಂದವರಾಗಿರುವುದರಿಂದ.

ಸಿದ್ಧರಾಮಯ್ಯ ತಮ್ಮ ಸಂಪುಟ ರಚನೆ ಮಾಡುವಾಗ, ಖಾತೆಗಳನ್ನು ಹಂಚಿಕೆ ಮಾಡುವಾಗಲೂ ಏಕವ್ಯಕ್ತಿಯಾಗಿ ನಿರ್ಧಾರ ತೆಗೆದುಕೊಳ್ಳುವಂಥ ಮನಸ್ಸು ಮಾಡಿಲ್ಲ. ಹೈಕಮಾಂಡ್ ಹೆಗಲಿಗೆ ಆಯ್ಕೆಯ ಹೊಣೆ ಹೊರಿಸಿ ನಿರಾಳರಾದರು. ಈ ಸರ್ಕಾರದ ನಡೆಯಲ್ಲಿ ಅವರೂ ಭಾಗಿಗಳಾಗುವಂತೆ ಮಾಡಿದರು. ಬಹುತೇಕ ಸಿದ್ಧರಾಮಯ್ಯ ಹೈಕಮಾಂಡ್‌ಗೆ ಶರಣಾಗಿ ಶಸ್ತ್ರತ್ಯಾಗ ಮಾಡಿದಂತೆ ಅನೇಕರಿಗೆ ಕಂಡಿದ್ದರೆ ಅಚ್ಚರಿಪಡುವಂಥದ್ದೇನೂ ಇಲ್ಲ. ಯಾಕೆಂದರೆ ಅವರು ರಾಜಕೀಯದಲ್ಲಿ ಇಷ್ಟು ವರ್ಷಗಳ ಕಾಲ ನಡೆದುಕೊಂಡು ಬಂದ ರೀತಿಯೇ ಹಾಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಸಿದ್ಧರಾಮಯ್ಯ ಕೂಡಾ ತಮ್ಮನ್ನು ಬದಲಿಸಿಕೊಂಡಿದ್ದಾರೆಯೇ ಹೊರತು ಆಂತರಿಕವಾದ ಮನಸ್ಸನ್ನು ಬಿಟ್ಟುಕೊಟ್ಟಿಲ್ಲ ಬಿಟ್ಟುಕೊಡುವ ಮನಸ್ಥಿತಿಯವರೂ ಅಲ್ಲ ಎನ್ನುವುದು ಇಲ್ಲಿ ಮುಖ್ಯ.

ಸಿದ್ಧರಾಮಯ್ಯ ಅವರನ್ನು ದೇವರಾಜ ಅರಸು ಅವರಿಗೆ ಅನೇಕ ಮಂದಿ ಹೋಲಿಕೆ ಮಾಡಿದ್ದರು, ಭಾರೀ ಭರವಸೆಯ ಮಾತುಗಳನ್ನು ಆಡಿದ್ದರು. ಅವುಗಳಲ್ಲಿ ಹೆಚ್ಚಿನವು ಅವರನ್ನು ಮೆಚ್ಚಿಸುವುದಕ್ಕೇ ಹೊರತು ಸಿದ್ಧರಾಮಯ್ಯ ಅವರ ನಿಜವಾದ ಕಾಳಜಿಯನ್ನು ಗುರುತಿಸಿದಂಥವಲ್ಲ. Devaraj Arasಸಿದ್ಧರಾಮಯ್ಯ ಯಾರ ಪಡಿಯಚ್ಚೂ ಆಗುವುದಿಲ್ಲ, ಸಿದ್ಧರಾಮಯ್ಯ ಅವರದ್ದೇ ಆದ ಸ್ವಂತಿಕೆಯನ್ನು ಬೆಳೆಸಿಕೊಂಡೇ ರಾಜಕೀಯದಲ್ಲಿ ಬೆಳೆದು ಬಂದಿರುವುದರಿಂದ ಅವರ ಆಡಳಿತವೂ ಸಿದ್ಧರಾಮಯ್ಯ ಅವರ ಆಡಳಿತವೇ ಆಗಿರುತ್ತದೇ ಹೊರತು ಮತ್ತೊಬ್ಬರದ್ದಲ್ಲ.

ಸಿದ್ಧರಾಮಯ್ಯ ಅವರು ಕಾರ್ಯಕ್ರಮಗಳನ್ನು ಘೋಷಣೆ ಮಾಡಿಕೊಂಡು ಆತ್ಮ ತೃಪ್ತಿಪಡುವ ಜಾಯಮಾನದವರಂತೂ ಖಂಡಿತಾ ಅಲ್ಲ. ಅವರೇ ಚಿಂತಿಸಿ ಜಾರಿಗೆ ತರುವಂಥ ಕಾರ್ಯಕ್ರಮಗಳು ಅವರು ನಿರೀಕ್ಷೆಯಿಟ್ಟುಕೊಂಡ ವ್ಯಕ್ತಿಗೆ ತಲುಪುವಂತೆ ಮಾಡುವ, ಅಧಿಕಾರಿಗಳೇ ತಲುಪಿಸಿ ವರದಿ ಒಪ್ಪಿಸುವಂತೆ ಹೊಣೆಗಾರರನ್ನಾಗಿ ಮಾಡುವಂಥ ಸಾಮರ್ಥ್ಯ, ಜಾಣ್ಮೆ ಸಿದ್ಧರಾಮಯ್ಯ ಅವರಿಗಿದೆ. ಎಲ್ಲಿ ಸೋರಿಕೆಯಾಗುತ್ತದೆ ಎನ್ನುವುದನ್ನು ಗುರುತಿಸುವಷ್ಟು ಸ್ವಂತ ಬುದ್ಧಿಬಲವಿದೆ ಅವರಿಗೆ. ಒಂದು ರೂಪಾಯಿಗೆ ಅಕ್ಕಿ ವಿತರಣೆ, ಸಾಲ ಮನ್ನದಂಥ ಯಾರೂ ಅಷ್ಟು ಬೇಗ ನಿರೀಕ್ಷೆ ಮಾಡದಂಥ ಕಾರ್ಯಕ್ರಮಗಳನ್ನು ಏಕಾಂಗಿಯಾಗಿ ಮಾಡಿದ್ದು ಆತುರವಾಯಿತು ಎನ್ನುವ ಮಾತುಗಳು ಕೇಳಿಬಂದವು. ಆದರೆ ಅವರ ಈ ಘೋಷಣೆಯ ಹಿಂದೆ ಖಚಿತವಾಗಿ ಕೊರತೆಯನ್ನು ತುಂಬಿಸಿಕೊಳ್ಳುವ ಸ್ಪಷ್ಟ ದಾರಿಗಳನ್ನು ಗುರುತಿಸಿಕೊಂಡಿದ್ದಾರೆ. ಅಧಿಕಾರಿಗಳು ಗುರುತಿಸಿರದ ಹೊಸ ಕಾಲು ದಾರಿಗಳನ್ನು ಸಿದ್ಧರಾಮಯ್ಯ ಗುರುತಿಸಿದ್ದಾರೆ. ಬಹಳ ಮುಖ್ಯವಾಗಿ ಅಧಿಕಾರಿಗಳ ಸಭೆ ನಡೆಸಿದ ಸಂದರ್ಭದಲ್ಲಿ ಒಂದು ಸರ್ಕಾರದ ಯಶಸ್ಸಿನಲ್ಲಿ ಅಧಿಕಾರಿಗಳ ಪಾತ್ರ ಎಷ್ಟಿರುತ್ತದೆ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೆ ಈಗ ಅವರ ಮುಂದಿರುವ ಸವಾಲು ಕೂಡಾ ಅದೇ ಆಗಿದೆ. ತಮ್ಮ ಯೋಚನೆ, ಯೋಜನೆಗಳು ಸಾಕಾರಗೊಳ್ಳಲು ಎಂಥ ಅಧಿಕಾರಿಗಳನ್ನು ಸುತ್ತಲೂ ಇಟ್ಟುಕೊಳ್ಳಬೇಕು, ಯೋಜನೆಗಳನ್ನು ಮಾನಿಟರಿಂಗ್ ಮಾಡಲು ಯಾರು ಸಮರ್ಥರು ಎನ್ನುವುದನ್ನು ಗುರುತಿಸಿ ನಿಯೋಜಿಸಿದರೆ ಎಲ್ಲವೂ ಸುಗಮವಾಗುತ್ತದೆ.

ಜಾತಿ ಪ್ರೇಮ, ಅಧಿಕಾರದ ಆಸೆ, ಧನದಾಹ ಈ ಮೂರನ್ನೂ ಸಿದ್ಧರಾಮಯ್ಯ ನಿರಾಕರಿಸುತ್ತಾರೆ. ಅದಷ್ಟೇ ಸಾಲದು, ಅವರ ಸುತ್ತಲೂ ಅಂಥ ಮನಸ್ಥಿತಿಯ ಅಧಿಕಾರಿಗಳೇ ಇರಬೇಕು. ಸಿದ್ಧರಾಮಯ್ಯ ಅವರ ಬಗ್ಗೆ ಜನರಿಗೆ ಅಪಾರ ನಿರೀಕ್ಷೆ ಇರುವುದಕ್ಕೆ ಬಲವಾದ ಕಾರಣಗಳೂ ಕೂಡಾ ಇವೇ ಆಗಿವೆ.

ಸಿದ್ಧರಾಮಯ್ಯ ಅವರ ಸೈದ್ಧಾಂತಿಕ ನಿಲುವುಗಳನ್ನು ಕೆಣಕುವಂಥ ಪ್ರಯತ್ನಗಳು ನಿರಂತರವಾಗಿ ನಡೆಯಲಿವೆ. ಇದಕ್ಕೆ ಉದಾಹರಣೆ ಮಠ, ಮಂದಿರಗಳನ್ನು ಮುಜರಾಯಿ ಇಲಾಖೆಗೆ ತರುವ ಬಗೆಗಿನ ಚಿಂತನೆ. ಇದಕ್ಕೆ ಶತಶತಮಾನಗಳಿಂದ ಬೆಳೆದುಬಂದಿರುವ ಇತಿಹಾಸದ ದೊಡ್ಡ ನಡೆಯಿದೆ. ಸಿಕ್ಸರ್ ಬಾರಿಸಿದರೆ ಗೆಲ್ಲುವುದು ಸಾಧ್ಯವಿಲ್ಲ. ಗೆಲ್ಲಲು ಆರು ರನ್ನು ಅನಿವಾರ್ಯವಾದಾಗ ಒಂದೇ ಚೆಂಡು ಇದ್ದಾಗ ಸಿಕ್ಸರ್ ಬಾರಿಸದೇ ಗೆಲ್ಲುವುದು ಸಾಧ್ಯವಿಲ್ಲ. ಸಿದ್ಧರಾಮಯ್ಯ ಅವರಿಗೆ ಐದು ವರ್ಷಗಳ ಅವಕಾಶವಿದೆ. ಸಾಕಷ್ಟು ಹೋಮ್ ವರ್ಕ್ ಆಗಬೇಕಾಗುತ್ತದೆ, ನಿಧಾನವಾಗಿ ಯೋಚಿಸಿ. ಯಾಕೆಂದರೆ ಇದು ಸರ್ಕಾರದ ಮೊದಲ ಆದ್ಯತೆಯಲ್ಲ. ಅನ್ನ, ನೀರು, ಮನೆ ಎಲ್ಲರಿಗೂ ಸಿಗುವಂತೆ ಮಾಡುವುದು ಮುಖ್ಯ. ಸಾಧ್ಯವಾದರೆ ಈ ರಾಜ್ಯದಲ್ಲಿ ಅದೆಷ್ಟೋ ದೇವಾಲಯಗಳಲ್ಲಿ ದೇವರಿಗೆ ದೀಪ ಹಚ್ಚಲು ಬೇಕಾಗುವಷ್ಟು ಕಾಣಿಕೆ ಉತ್ಪತ್ತಿಯಾಗದ ದೇವಾಲಯಗಳಿವೆ. ಅಂಥ ದೇವಾಲಯಗಳಿಗೆ ದೀಪ ಉರಿಸಲು ಎಣ್ಣೆಗಾದರೂ ಮುಜರಾಯಿ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಿಸಿ. ಅಲ್ಲೂ ದೇವರ ಮೂರ್ತಿಗೆ ಬೆಳಕು ಬೀಳಲಿ. ಆ ಬೆಳಕಿನಲ್ಲಿ ಒಂದಷ್ಟು ಹೊಸ ವಿಚಾರಗಳು ಹೊತ್ತಿ ಉರಿಯಲಿ, ನಾಡಿಗೆ ಬೆಳಕಾಗಲಿ.

ಸಿದ್ಧರಾಮಯ್ಯ ಮತ್ತು ಜನರ ನಿರೀಕ್ಷೆ

-ಚಿದಂಬರ ಬೈಕಂಪಾಡಿ

ಸಹಜವಾಗಿಯೇ ನಾಡಿನ ಜನರ ಕುತೂಹಲ ನಿಯೋಜಿತ ಮುಖ್ಯಮಂತ್ರಿ ಸಿದ್ಧರಾಮಯ ಅವರತ್ತ ನೆಟ್ಟಿದೆ, ಇದೇ ಅವರ ವಿಶೇಷತೆ. ಭ್ರಷ್ಟಾಚಾರ, ಹಗರಣಗಳು, ಹಳಿತಪ್ಪಿದ ಅರ್ಥವ್ಯವಸ್ಥೆ, ಹಿಡಿತ ಕಳೆದುಕೊಂಡಿರುವ ಆಡಳಿತ, ನಿರುದ್ಯೋಗ, ಗಗನಕ್ಕೇರುತ್ತಿರುವ ಬೆಲೆ, ಕೃಷಿ ದಿನದಿನಂದ ದಿನಕ್ಕೆ ಕಳೆಕಳೆದುಕೊಳ್ಳುತ್ತಿರುವುದು, ಗ್ರಾಮೀಣ ಭಾಗದ ಜನರ ನೀರಿನ ಬವಣೆ, ವಿದ್ಯುತ್ ಸಮಸ್ಯೆ ಹೀಗೆ ನಾಡಿನ ಜನರನ್ನು ಚಿಂತೆಗೀಡುಮಾಡಿವೆ. ಹಾಗೆಂದು ಸಿದ್ಧರಾಮಯ್ಯ ಮ್ಯಾಜಿಕ್ ಮಾಡಿಬಿಡುತ್ತಾರೆ ಎನ್ನುವ ಅರ್ಥವಲ್ಲ. ಎಲ್ಲವನ್ನು ಹತೋಟಿಗೆ ತರುತ್ತಾರೆ ಎನ್ನುವ ಬಲವಾದ ನಿರೀಕ್ಷೆ, ಆಶಾವಾದ.

ಇಂಥ ನಿರೀಕ್ಷೆ ಇಟ್ಟುಕೊಳ್ಳಲು ಕಾರಣ ಅವರು ಕಳೆದ ನಾಲ್ಕು ದಶಕಗಳಿಂದ ರಾಜಕೀಯ ಜೀವನದಲ್ಲಿ ಇಟ್ಟಿರುವ ಹೆಜ್ಜೆಗಳು ಮತ್ತು ಸ್ವಾಭಿಮಾನ ಉಳಿಸಿಕೊಂಡು ಕೈಶುದ್ಧವಾಗಿಟ್ಟುಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವುದು. ಸಿದ್ಧರಾಮಯ್ಯ ಅವರಂಥ ವ್ಯಕ್ತಿಗೆ ಇಂಥ ಅವಕಾಶ ಒಂದು ಸವಾಲು. ಹಿಂದುಳಿದವರ ಮತ್ತು ಬಹುಸಂಖ್ಯಾತರ ಬದುಕಿನಲ್ಲಿ ಈಗಲೂ ದೇವರಾಜ ಅರಸು ನೆನಪಿನಲ್ಲಿ ಉಳಿದಿರುವುದಕ್ಕೆ ಕಾರಣಗಳು ಅನೇಕ. ಆಗಿನ ಕಾಲಘಟ್ಟವನ್ನು ಅವಲೋಕಿಸಿದರೆ ಈಗಿನ ಪರಿಸ್ಥಿತಿ ಮತ್ತು ರಾಜಕಾರಣದ ಮುಂದಿರುವ ಸವಾಲುಗಳು ತೀರಾ ಭಿನ್ನ. ಅರಸು ಅವರಿಗೆ ಈಗಿನ ಸವಾಲುಗಳಿರಲಿಲ್ಲ ಆದರೆ ರಾಜಕೀಯ ಒತ್ತಡಗಳಿದ್ದವು. ಅಸ್ಪ್ರಷ್ಯತೆ ಹಾಗೂ ಬಡತನ ತಾಂಡವವಾಡುತ್ತಿದ್ದವು. ರೈತ, ರೈತನ ಮಕ್ಕಳು ಧಣಿಯ ಮನೆಯಲ್ಲಿ ಜೀತ ಮಾಡುತ್ತಿದ್ದರು. ತಮ್ಮ ಬೆವರು ಸುರಿಸಿ ಭೂಮಾಲೀಕನ ಭೂಮಿಯನ್ನು ಉತ್ತು, ಬಿತ್ತಿದರೂ ತಾನು ಮಾತ್ರ ಕೃಷಿ ಕಾರ್ಮಿಕನಾಗಿದ್ದ. ಅಂಥವರ ಬದುಕಿಗೆ ಬೆಳಕು ನೀಡಿದವರು ಅರಸು. ಆಗ ಬಹುಷ ಈಗಿನ ಸಮಸ್ಯೆಗಳಿರುತ್ತಿದ್ದರೆ ಖಂಡಿತಕ್ಕೂ ಅರಸು ಅವುಗಳಿಗೆ ಪರಿಹಾರ ಸೂಚಿಸುವಷ್ಟು ಸಮರ್ಥರಿದ್ದರು. ಅಂಥ ಸಾಮರ್ಥ್ಯವನ್ನು ಸಿದ್ಧರಾಮಯ್ಯ ಅವರಲ್ಲಿ ಜನ ಹುಡುಕುವುದು ನಿಶ್ಚಿತಕ್ಕೂ ಅಪರಾಧವೆನಿಸುವುದಿಲ್ಲ. ಯಾಕೆಂದರೆ ಸಿದ್ಧರಾಮಯ್ಯ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುತ್ತಲೇ ರಾಜಕೀಯದಲ್ಲಿ ಬೆಳೆದವರು.

ಸಿದ್ಧರಾಮಯ್ಯ ಅವರಿಗಿರುವ ಕಾಳಜಿಯ ನೆಲೆಗಳನ್ನು ಗಮನಿಸುವುದಾದರೆ ಯಾವುದೇ ಬಲಿಷ್ಠ ರಾಜಕೀಯ ಹಿನ್ನೆಲೆಯಿಂದ ಬರದಿದ್ದ ಕಾರಣವೇ Siddaramaiahಅವರು ಈಗಲೂ ಜನರ ಜೊತೆ ಹೆಜ್ಜೆ ಹಾಕುತ್ತಿರುವುದು ಅನ್ನಿಸದಿರದು. ಒಂದು ವೇಳೆ ಅವರು ಬಲಿಷ್ಠ ರಾಜಕೀಯ ಹಿನ್ನೆಲೆ, ಬಲಾಢ್ಯ ಆರ್ಥಿಕ ಶಕ್ತಿಯ ಮೂಲದಿಂದ ಬಂದಿದ್ದರೆ ಅವರಿಂದ ಜನ ಓರ್ವ ಹೈಪ್ರೊಫೈಲ್ ರಾಜಕೀಯ ನೇತಾರರನ್ನು ಮಾತ್ರ ಕಾಣಲು ಸಾಧ್ಯವಾಗುತ್ತಿತ್ತು. ಆದರೆ ಅವರು ಹಳ್ಳಿಯಿಂದ ಪಟ್ಟಣಕ್ಕೆ ಬಂದವರು, ಹಳ್ಳಿ ಹೈಕಳ ಜೊತೆ ಬೆರೆತು ಬದುಕನ್ನು ಅರಳಿಸಿಕೊಂಡವರು, ಆದ್ದರಿಂದಲೇ ಅವರ ನಡೆ, ನುಡಿ, ಚಿಂತನೆಗಳು ಇನ್ನೂ ಹಳ್ಳಿಯ ಸೊಗಡಿನಿಂದ ಬೆರ್ಪಟ್ಟಿಲ್ಲ, ಬೇರ್ಪಡುವುದೂ ಬೇಡ. ಹಳ್ಳಿ ಮತ್ತು ಸಿದ್ಧರಾಮಯ್ಯ ಅವರ ನಡುವಿನ ಸಂಬಂಧ ತಾಯಿ ಮಗುವಿನ ಕರುಳು ಬಳ್ಳಿಯ ಸಂಬಂಧವಿದ್ದಂತೆ.

ಸಿದ್ಧರಾಮಯ್ಯ ಒಂದು ವೇಳೆ ರಾಜಕೀಯಕ್ಕೆ ಬರದೇ ಇರುತ್ತಿದ್ದರೆ ಓರ್ವ ನ್ಯಾಯವಾದಿಯಾಗಿ ಅಪಾರ ಸಂಪಾದನೆ ಮಾಡಿ ನಾಡಿನ ಜನರ ಕಣ್ಣಿಗೆ ಕಾಣಿಸಿಕೊಳ್ಳದ ಕೋಟ್ಯಾಂತರ ಮಂದಿಯಲ್ಲಿ ಒಬ್ಬರಾಗುತ್ತಿದ್ದರು. ಅವರು ರೈತ ನಾಯಕ ಪ್ರೊ.ನಂಜುಂಡಸ್ವಾಮಿಯವರ ಕಣ್ಣಿಗೆ ಬಿದ್ದು ಹೋರಾಟಗಳಲ್ಲಿ ತೊಡಗಿಸಿಕೊಂಡು ಜನರು ಬಯಸುವ ನಾಯಕನಾದರು. ಚುನಾವಣೆಯಲ್ಲಿ ಸ್ಪರ್ಧಿಸಲು ಠೇವಣಿ ಕಟ್ಟಲು ಹಣವಿಲ್ಲದ ಸಿದ್ಧರಾಮಯ್ಯ ಅವರನ್ನು ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿರುವವರು ಜನರು ಎನ್ನುವುದು ಸುಲಭ, ಆದರೆ ಅದರೊಂದಿಗೆ ಅವರು ಪಾಲಿಸಿಕೊಂಡು ಬಂದ ಸಿದ್ಧಾಂತಗಳ ಪಾಲೂ ಇದೆ ಎನ್ನುವುದನ್ನು ನಿರಾಕರಿಸುವಂತಿಲ್ಲ.

ಸಿದ್ಧರಾಮಯ್ಯ ಅವರ ರಾಜಕೀಯ ನಡೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಎಲ್ಲವನ್ನೂ ಸುಲಭವಾಗಿ ಮತ್ತು ಭಾವನಾತ್ಮಕವಾಗಿ ಅಪ್ಪಿಕೊಳ್ಳುವವರೂ ಅಲ್ಲ, ಪ್ರತಿಷ್ಠೆಗಾಗಿ ಎಲ್ಲವನ್ನೂ ನಿರಾಕರಿಸುವಂಥ ಮನಸ್ಥಿತಿಯವರೂ ಅಲ್ಲ. ಅಪ್ಪಿಕೊಳ್ಳುವ ಮತ್ತು ಸಕಾರಣ ಸಹಿತ ನಿರಾಕರಿಸುವ ಎರಡೂ ಗುಣಗಳು ಅವರಲ್ಲಿವೆ. ಅಧಿಕಾರಕ್ಕಾಗಿ ತಮ್ಮ ನಿಲುವುಗಳನ್ನು ಒತ್ತಯಿಡುವಂಥ ರಾಜಕೀಯ ಸ್ವಾರ್ಥಿಯಲ್ಲ ಎನ್ನುವುದನ್ನು ಬಹಳ ಮುಖ್ಯವಾಗಿ ಗಮನಿಸಬೇಕು.

ರಾಜಕೀಯವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮೇಲಕ್ಕೇರಲು ಪಟ್ಟಶ್ರಮ, ಅನುಭವಿಸಿದ ಯಾತನೆಯನ್ನು ಸಿದ್ಧರಾಮಯ್ಯ ಅವರೂ ಅನುಭವಿಸಿದ್ದಾರೆ. ಒಂದು ಕಾಲಘಟ್ಟದಲ್ಲಿ ಅತ್ಯಂತ ನಿಷ್ಠುರವಾದಿಯಾದ ದೇವೇಗೌಡರು ರಾಮಕೃಷ್ಣ ಹೆಗಡೆ ಅವರ ರಾಜಕೀಯ ಚಾಣಕ್ಷತೆಯಿಂದ ಭಾರೀ ಯಾತನೆ ಅನುಭವಿಸಿದರೂ ಮತ್ತೆ ಅವರನ್ನು ಮೆಟ್ಟಿ ನಿಲ್ಲಲು ರಾಜಿಮಾಡಿಕೊಂಡು ಹೆಗಡೆ ಕೈಹಿಡಿದರು. ಆನಂತರ ತಮ್ಮ ತಂತ್ರಗಾರಿಕೆಯಿಂದ ಹೆಗಡೆಯವರನ್ನು ರಾಜಕೀಯವಾಗಿ ಮಣಿಸಿ ಮೂಲೆಗುಂಪುಮಾಡಿದರು. ಹಾಗೆಯೇ ಸಿದ್ಧರಾಮಯ್ಯ ಅವರೂ ಕೂಡಾ ದೇವೇಗೌಡರಿಂದ ರಾಜಕೀಯವಾಗಿ ಹಿಂಸೆ ಅನುಭವಿಸಿದ್ದಾರೆ, ಅವಕಾಶ ಕಳೆದುಕೊಂಡಿದ್ದಾರೆ, ಆದರೆ ದೇವೇಗೌಡರಂತೆ ತಂತ್ರಗಾರಿಕೆ ಮಾಡಲು ಅವಕಾಶವಿದ್ದರೂ ಮಾಡದೆ ಜನತಾ ಮನೆಯಿಂದಲೇ ಹೊರನಡೆದರು. ಸಿದ್ಧರಾಮಯ್ಯ ಅವರು ಈಗಿನ ಈ ಸ್ಥಾನಕ್ಕೇರಲು ಪ್ರೊ.ನಂಜುಂಡಸ್ವಾಮಿ, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್ ಅವರ ಕೊಡುಗೆಯಿದೆ, ಅವರು ಕೊಟ್ಟ ಅವಕಾಶಗಳನ್ನು ನಿರಾಕರಿಸುವಂತಿಲ್ಲ. ಹಾಗೆಯೇ ದೇವೇಗೌಡರ ಜೊತೆ ಹೆಜ್ಜೆ ಹಾಕಿದ್ದರಿಂದಲೂ ಸಿದ್ಧರಾಮಯ್ಯ ಅವರಿಗೆ ಸಾಕಷ್ಟು ಅನುಭವ ಸಿಕ್ಕಿದೆ.

ಜನತಾ ದಳದಿಂದ ಹೊರನಡೆಯುವುದು ಖಚಿತವಾಗಿದ್ದರೂ ಸಿದ್ಧರಾಮಯ್ಯ ಕಾಂಗ್ರೆಸ್ ಸೇರಬೇಕೆಂದು ಜನರ ಒತ್ತಡವಿತ್ತೇ ಹೊರತು ಸಿದ್ಧರಾಮಯ್ಯ ಅವರಿಗೆ ವೈಯಕ್ತಿಕವಾಗಿ ಒಲವಿರಲಿಲ್ಲ. ಅದಕ್ಕೆ ಕಾರಣ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಂಸ್ಕೃತಿ. ಇಂದಿರಾ ಗಾಂಧಿ, ರಾಜೀವ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ನಡೆಗಳನ್ನು, ಪಕ್ಷದ ಒಳಗಿನ ಆಂತರಿಕ ಸ್ವಾತಂತ್ರ್ಯಗಳ ಸ್ಪಷ್ಟ ಅರಿವುದು ಸಿದ್ಧರಾಮಯ್ಯ ಅವರಿಗಿತ್ತು. ಆದರೆ ಸಿದ್ಧರಾಮಯ್ಯ ಅವರ ನಾಯಕತ್ವ, ಅವರ ಬದ್ಧತೆ, ಜನರಿಗಿರುವ ಸಿದ್ಧರಾಮಯ್ಯ ಅವರ ಮೇಲಿನ ಒಲವನ್ನು ಕಾಂಗ್ರೆಸ್ ನಾಯಕರು ಗುರುತಿಸಿದ್ದರು ಮತ್ತು ಸೋನಿಯಾ ಗಾಂಧಿ ಅವರೂ ಮನವರಿಕೆ ಮಾಡಿಕೊಂಡಿದ್ದರು.

ಒಬ್ಬ ಹಿಂದುಳಿದ ನಾಯಕ ರಾಜಕೀಯದಿಂದ ದೂರವಾಗುತ್ತಾನೆ, ತುಳಿತಕ್ಕೊಳಗಾಗಿ ನೇಪಥ್ಯಕ್ಕೆ ಸರಿಯುತ್ತಿದ್ದಾನೆ ಎನ್ನುವ ನೋವು ಅನುಭವಿಸಿದ ಎಚ್.ವಿಶ್ವನಾಥ್ ಸಿದ್ಧರಾಮಯ್ಯ ಅವರನ್ನು ಕಾಂಗ್ರೆಸ್ ಮನೆಗೆ ಕರೆತರಲು ಮಾಡಿದ ದೊಡ್ಡ ಮನಸ್ಸನ್ನು ಜನರು ಮೆಚ್ಚಲೇ ಬೇಕು. ತಮ್ಮನ್ನು ಹಿಂದಿಕ್ಕಿ ಬೆಳೆಯುವ ಸಾಮರ್ಥ್ಯ ಸಿದ್ಧರಾಮಯ್ಯ ಅವರಿಗಿದೆ ಎನ್ನುವ ಸ್ಪಷ್ಟ ಕಲ್ಪನೆಯಿದ್ದರೂ ವಿಶ್ವನಾಥ್ ತಳೆದ ನಿಲುವು ಇಂದು ಈ ನಾಡಿಗೆ ಓರ್ವ ಸಮರ್ಥ ನಾಯಕನ ಕೈಗೆ ಅಧಿಕಾರ ಸಿಗುವಂತಾಗಿದೆ.

ಸಿದ್ಧರಾಮಯ್ಯ ಅವರು ಗುಟ್ಟಾಗಿ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಸೇರಿಲ್ಲ. ಬಹುಷ ರಾಜಕೀಯ ಇತಿಹಾಸದಲ್ಲಿ ದೊಡ್ಡ ಮಟ್ಟದ ಸಾರ್ವಜನಿಕ ಸಭೆ ಮೂಲಕ ಕಾಂಗ್ರೆಸ್ ಸೇರಿದವರಲ್ಲಿ siddaramaiah_dharam_khargeಸಿದ್ಧರಾಮಯ್ಯ ಅವರೂ ವಿರಳರಲ್ಲಿ ವಿರಳರು. ಇದಕ್ಕೂ ಕಾರಣವಿದೆ. ಕಾಂಗ್ರೆಸ್ ಪಕ್ಷದಲ್ಲಿ ಇಂಥ ಸ್ವಾಗತ ತೀರಾ ಅಪರೂಪ ಎನ್ನುವುದು ಆ ಪಕ್ಷದ ಇತಿಹಾಸ ನೋಡಿದರೆ ಗೊತ್ತಾಗುತ್ತದೆ. ಚಿರಂಜೀವಿ ಕಾಂಗ್ರೆಸ್ ಸೇರಿದ ಸನ್ನಿವೇಶ ಮತ್ತು ಸಿದ್ಧರಾಮಯ್ಯ ಕಾಂಗ್ರೆಸ್ ಸೇರಿದ ಕ್ಷಣವನ್ನು ಕಣ್ಣಮುಂದಿಟ್ಟುನೋಡಿ. ಚಿರುಗೂ ಅಪಾರವಾದ ಬೆಂಬಲಿಗರಿದ್ದಾರೆ ಓರ್ವ ನಟನಾಗಿ. ಆದರೆ ಅವರು ಅತ್ಯಂತ ಸರಳವಾಗಿ ಕಾಂಗ್ರೆಸ್ ಸೇರಿದರು. ಬೆಂಗಳೂರಲ್ಲಿ ಐತಿಹಾಸಿಕ ಸಮಾವೇಶದಲ್ಲಿ ಸಿದ್ಧರಾಮಯ್ಯ ಅವರನ್ನು ಸ್ವತ: ಸೋನಿಯಾ ಗಾಂಧಿ ಪಕ್ಷಕ್ಕೆ ಬರಮಾಡಿಕೊಂಡರು. ಅಂದು ಸೋನಿಯಾ ಗಾಂಧಿ ಮಾಡಿದ್ದ ಭಾಷಣದಲ್ಲಿ ಸಿದ್ಧರಾಮಯ್ಯ ಅವರು ದೊಡ್ಡ ಶಕ್ತಿ, ಅವರ ಅಗತ್ಯ ಕಾಂಗ್ರೆಸ್ ಪಕ್ಷಕ್ಕೆ ಬೇಕಿತ್ತು, ಅವರಿಂದ ಕಾಂಗ್ರೆಸ್ ಬಲಗೊಳ್ಳುತ್ತದೆ ಎನ್ನುವ ವಿಶ್ವಾಸವಿದೆ ಎಂದಿದ್ದರು. ಅವರ ನಿರೀಕ್ಷೆ ಖಂಡಿತಕ್ಕೂ ಸುಳ್ಳಾಗಲಿಲ್ಲ.

ಹೀಗೆ ಸಿದ್ಧರಾಮಯ್ಯ ಅವರ ರಾಜಕೀಯ ನಡೆಗಳು, ಅವರು ಉಪಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ, ಸಾರಿಗೆ ಸಚಿವರಾಗಿ, ಪಶುಸಂಗೋಪನಾ ಸಚಿವರಾಗಿ ಕಾರ್ಯನಿವಹಿಸಿರುವುದು, ಇತ್ತೀಚಿನವರೆಗೂ ಪ್ರತಿಪಕ್ಷದ ನಾಯಕರಾಗಿ ಅಧಿಕಾರ ನಿಭಾಯಿಸಿದ ವೈಖರಿ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳುವಂತೆ ಮಾಡಿವೆ.

ಮುಖ್ಯಮಂತ್ರಿ ಹುದ್ದೆ ಸುಖದ ಸುಪ್ಪತ್ತಿಗೆಯಲ್ಲ, ಮುಳ್ಳಿನ ಹಾಸಿಗೆ ಎಂದು ಸಿದ್ಧರಾಮಯ್ಯ ಹೇಳಿರುವುದು ಹಾಗಾದರೆ ಇವರಿಗೆ ಯಾಕೆ ಬೇಕಿತ್ತು ಈ ಹುದ್ದೆ ಎಂದು ಕೇಳಲು ಅವಕಾಶವಿದೆ. ನೋವಿನಲ್ಲೂ ಸುಖವಿದೆ, ಆದರೆ ಆ ಸುಖವನ್ನು ಅನುಭವಿಸಲು ಬಯಸುವವರು ತೀರಾ ಕಡಿಮೆ. ನೋವಿರದ ಸುಖವೇ ಬೇಕು ಎನ್ನುವವರೇ ಹೆಚ್ಚು. ಈ ಜಗತ್ತಿನಲ್ಲಿ ಹೆರಿಗೆಯ ನೋವಿನಷ್ಟು ಯಾತನೆ ಬೇರೆ ಇರಲಾರದು, ಆದರೆ ಅಂಥ ನೋವನ್ನು ಸಹಿಸಿಕೊಂಡು ಮಗುವನ್ನು ಹೆರುವ ತಾಯಿ ತಾನು ನೋವು ಅನುಭವಿಸಿ ಹಡೆದ ಮಗುವನ್ನು ನೋಡಿ ಅನುಭವಿಸಿದ ನೋವನ್ನು ಮರೆತುಬಿಡುತ್ತಾಳೆ. ಒಂದು ದಿನವೂ ನಿನ್ನಿಂದಾಗಿ ನಾನು ನೋವು ಅನುಭವಿಸಿದೆ ಎನ್ನುವ ಆರೋಪ ಮಾಡುವುದಿಲ್ಲ. ಅಂಥ ಪರಿಕಲ್ಪನೆಯನ್ನು ಸಿದ್ಧರಾಮಯ್ಯ ಅವರ ಆಡಳಿತದಿಂದ ನಿರೀಕ್ಷೆ ಮಾಡಬಹುದು ಎನ್ನುವುದೇ ನಾಡಿನ ಜನರದ್ದಾಗಿದ್ದರೆ ಅಚ್ಚರಿಪಡಬೇಕಾಗಿಲ್ಲ.

ಸಿದ್ಧರಾಮಯ್ಯ ಅವರ ಹೆಗ್ಗುರುತು ಅವರ ನಂಬಿಕೆ ಮತ್ತು ಅವರು ಇಲ್ಲಿಯವರೆಗೆ ಪಾಲಿಸಿಕೊಂಡು ಬಂದಿರುವ ಸಿದ್ಧಾಂತಗಳು ನಿಜ. ಸಿದ್ಧರಾಮಯ್ಯ ಅವರಿಗಿರುವ ಬಹುಮುಖ್ಯ ದೌರ್ಬಲ್ಯ ಮುಂಗೋಪ ಮತ್ತು ನಿಷ್ಠುರ ಮಾತು. ಇವುಗಳಿಗೆ ಸ್ವಯಂ ನಿಯಂತ್ರಣ ಹಾಕಿಕೊಂಡರೆ ಅವರು ಅಂದುಕೊಂಡದ್ದನ್ನು ಸಾಧಿಸಲು, ಜನರ ನಿರೀಕ್ಷೆಗಳನ್ನು ನಿಜಗೊಳಿಸಲು ಸುಲಭವಾಗುತ್ತದೆ.

ಪಕ್ಷೇತರ ಶಕ್ತಿ ಕೇಂದ್ರ ಉಗಮ!

-ಚಿದಂಬರ ಬೈಕಂಪಾಡಿ

ಸಾಕಪ್ಪಾ ಸಾಕು, ಬೇಕಪ್ಪಾ ಬೇಕು ಎನ್ನುವ ಎರಡು ಭಿನ್ನ ಹಾಗೂ ಪರಸ್ಪರ ಸಮರ್ಥಿಸಿಕೊಳ್ಳುವ ಮತದಾರರ ಮನವೊಲಿಕೆಯ ಕಸರತ್ತನ್ನು ಮಾಧ್ಯಮಗಳಲ್ಲಿ ಗಮನಿಸಿರಬಹುದು. ಸಾಮಾನ್ಯ ಮತದಾರ ಯಾಕೆ ಸಾಕು, ಯಾಕೆ ಬೇಕು ಎನ್ನುವುದಕ್ಕಿಂತ ನೀವಿಬ್ಬರೂ ನಮಗೆ ಅನಿವಾರ್ಯವಲ್ಲ ಎನ್ನುವ ಸಂದೇಶ ನೀಡಿದರೆ ಹೇಗೆ ಎಂದು ಯೋಚಿಸುವುದು ಅಪರಾಧವೇ?1111111
ಒಂದು ರಾಜಕೀಯ ಪಕ್ಷ ಸಾಕು ಎನ್ನಲು, ಮತ್ತೊಂದು ಬೇಕು ಎನ್ನಲು  ಅವರದ್ದೇ ಆದ ಕಾರಣಗಳನ್ನು ಕೊಡಬಹುದು. ಇವರಿಬ್ಬರನ್ನೂ ನಿರಾಕರಿಸುವುದಕ್ಕೆ ಸಾಕಷ್ಟು ಕಾರಣಗಳಿವೆ. ನೀವೇ ಯಾಕೆ ಬೇಕು ? ಅವರೇ ಯಾಕೆ ಬೇಡ ? ಎನ್ನುವುದಕ್ಕಿಂತಲೂ ನೀವಿಬ್ಬರೂ ನಮಗೆ ಬೇಡದವರು ಎನ್ನುವುದೇ ಲೇಸು.
ಅಧಿಕಾರ ನಡೆಸುವ ಅವಕಾಶ ಕೊಟ್ಟರೂ ಜನರ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳದ ಪಕ್ಷ, ಪ್ರತಿಪಕ್ಷದ ಸಾಲಲ್ಲಿ ಕುಳಿತು ಆಡಳಿತ ನಡೆಸುವವರ ಮೇಲೆ ಕಣ್ಣಿಡಿ ಎನ್ನುವ ಅಧಿಕಾರ ಕೊಟ್ಟರೆ ಕಣ್ಣಿದ್ದೂ ಕುರುಡಾದ ಇಬ್ಬರೂ ಮತದಾರರ ಮಟ್ಟಿಗೆ ದೋಷಿಗಳು. ಒಂದು ಆಡಳಿತಾರೂಢ ಪಕ್ಷ ಎಷ್ಟರಮಟ್ಟಿಗೆ ವಿಫಲವಾಗಿದೆಯೋ ಅಷ್ಟೇ ವೈಫಲ್ಯದ ಹೊಣೆ ಪ್ರತಿಪಕ್ಷಕ್ಕೂ ಇದೆ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಜನರ ನಿರೀಕ್ಷೆಗೆ ತಕ್ಕಂತೆ ನಡೆದುಕೊಂಡಿಲ್ಲ. ಆದ್ದರಿಂದ ನಿಜಕ್ಕೂ ಈಗ ಅತಂತ್ರ ಮತದಾರ.
ಮಾಧ್ಯಮಗಳು ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಬೇರೆ ಆಯಾಮಗಳಿಂದ ಮಾಡಿವೆ. ಮತದಾರರ ನಾಡಿಮಿಡಿತವನ್ನು ಆಧಾರವಾಗಿಟ್ಟುಕೊಂಡು ಫಲಿತಾಂಶದ ಸಾಧ್ಯತೆಗಳ ಮೇಲೆ ಬೆಳಕು ಚೆಲ್ಲಿವೆ. ರಾಜಕೀಯ ಪಂಡಿತರು ವಿದ್ಯುನ್ಮಾನ ಮಾಧ್ಯಮಗಳ ಮುಂದೆ ಕುಳಿತು ಚರ್ಚೆ ಮಾಡಿದ್ದಾರೆ. ಅಂಕಣಕಾರರು ತಮ್ಮ ಅನುಭವದ ಮೂಸೆಯಿಂದ ಮತದಾರರ ಮನದಾಳವನ್ನು ಹೆಕ್ಕಿತೆಗೆದು ಹೇಳಿದ್ದಾರೆ. ಎಲ್ಲರ ಗಮನ ಪಕ್ಷಗಳು ಗಳಿಸುವ ಸ್ಥಾನಗಳು, ಯಾರಿಗೆ ಮುನ್ನಡೆ-ಹಿನ್ನಡೆ ಮತ್ತು ಯಾಕೆ ಎನ್ನುವ ಕುರಿತು ವಿಶ್ಲೇಷಣೆ ಕುರಿತೇ ಆಗಿದೆ. ಆದರೆ ಮಾಧ್ಯಮಗಳು ಅಷ್ಟೊಂದು ಗಂಭೀರವಾಗಿ ಅವಲೋಕಿಸದ ಪಕ್ಷೇತರರ ಸ್ಪರ್ಧೆಯನ್ನು ಗಂಭೀರವಾಗಿ ಗಮನಿಸಬೇಕಾದ ಅನಿವಾರ್ಯತೆ ಬಂದಿದೆ.
ಸಾಮಾನ್ಯವಾಗಿ ಪಕ್ಷೇತರರ ಪಾತ್ರ ಯಾರನ್ನು ಸೋಲಿಸುವುದು ಮತ್ತು ಯಾರಿಗೆ ಲಾಭ ಮಾಡಿಕೊಡುವುದು ಎನ್ನುವಷ್ಟಕ್ಕೆ ಸೀಮಿತವಾಗಿತ್ತು ಒಂದು ಕಾಲದಲ್ಲಿ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಅದಕ್ಕೆ 2008ರ ವಿಧಾನಸಭಾ ಚುನಾವಣೆಯಲ್ಲಿ ಆರಿಸಿ ಬಂದಿದ್ದ ಪಕ್ಷೇತರರು ನಿರ್ಣಾಯಕರಾಗುವಷ್ಟರ ಮಟ್ಟಿಗೆ ಬೆಳೆದುಬಿಟ್ಟರು. ಪಕ್ಷ ರಾಜಕಾರಣದಲ್ಲಿ ಪಕ್ಷೇತರರು ಒಂಥರಾ `ಲೆಕ್ಕಕ್ಕುಂಟು ಆಟಕ್ಕಿಲ್ಲ ಎನ್ನುವಂತಿದ್ದರು. ಬಿಜೆಪಿ ಸರಕಾರಕ್ಕೆ  ಜೀವತುಂಬಿದವರು ಇದೇ ಪಕ್ಷೇತರರು ಎನ್ನುವುದನ್ನು ನಿರಾಕರಿಸುವಂತಿಲ್ಲ. ಇಲ್ಲಿಂದ ಪಕ್ಷೇತರರಿಗೂ ರಾಜಕೀಯದಲ್ಲಿ ಮಹತ್ತರ ಪಾತ್ರನಿರ್ವಹಿಸುವುದು ಸಾಧ್ಯ ಎನ್ನುವಂತಾಗಿದೆ.
2013ರ  ವಿಧಾನಸಭಾ ಚುನಾವಣೆಯಲ್ಲಿ ಕಣದಲ್ಲಿರುವ ಪಕ್ಷೇತರರ ಸಂಖ್ಯೆಯನ್ನು ಗಮನಿಸಿದರೆ ರಾಜಕೀಯ ಪಂಡಿತರ ಲೆಕ್ಕಾಚಾರಗಳು ನಿಶ್ಚಿತಕ್ಕೂ ಉಲ್ಟಾಪಲ್ಟಿಯಾಗಲಿವೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಮೇಲೆ ಕಣ್ಣಾಡಿಸಿದರೆ ಒಂದು ಜಿಲ್ಲೆಯಲ್ಲಿ ಒಬ್ಬ ಪಕ್ಷೇತರ ಅಭ್ಯರ್ಥಿ ಖಂಡಿತಕ್ಕೂ ಗೆಲ್ಲುವಂಥ ಸಾಧ್ಯತೆಗಳು ಕಂಡುಬರುತ್ತಿವೆ. ಕೆಲವು ಜಿಲ್ಲೆಗಳಲ್ಲಿ ಎರಡರಿಂದ ಮೂರು ಮಂದಿ ಪಕ್ಷೇತರರು ಆರಿಸಿಬಂದರೂ ಅಚ್ಚರಿಯಿಲ್ಲ ಎನ್ನುವಂಥ ಸ್ಥಿತಿ ಗೋಚರಿಸುತ್ತಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಈ ಬಾರಿ ಪಕ್ಷೇತರರ ಹವಾ ಜೋರಾಗಿಯೇ ಇದೆ.
ಯಾಕೆ ಇಂಥ ವಾತಾವರಣ ನಿಮರ್ಾಣವಾಯಿತು ಎನ್ನುವುದಕ್ಕೆ ಕಾರಣಗಳು ಸುಲಭವಾಗಿ ಅರಿವಿಗೆ ಬರುತ್ತಿವೆ. ಪಕ್ಷಗಳು ಟಿಕೆಟ್ ಹಂಚಿಕೆಯಲ್ಲಿ ಮತದಾರರ ಒಲವಿದ್ದವರನ್ನು ಕಡೆಗಣಿಸಿರುವುದು, ಹಣ ಬಲದ ಮೂಲಕ ಟಿಕೆಟ್ ಗಿಟ್ಟಿಸಿಕೊಂಡಿರುವವರು, ಸ್ವಹಿತಾಸಕ್ತಿಗಾಗಿ ನಾಯಕರು ತಮ್ಮ ಪ್ರಭಾವ ಬೀರಿ ತಮಗೆ ಬೇಕಾದವರನ್ನು ಕಣಕ್ಕಿಳಿಸಿರುವುದು ಹೀಗೆ ಪಟ್ಟಿ ಮಾಡಬಹುದು. ಮತ್ತೆ ಮತ್ತೆ ಹಳೇ ಮುಖಗಳನ್ನೇ ಕಣಕ್ಕಿಳಿಸುವಂಥ ಕೆಟ್ಟ ಪ್ರಯೋಗಕ್ಕೆ ಎಲ್ಲಾ ರಾಜಕೀಯ ಪಕ್ಷಗಳೂ ಶರಣಾಗಿರುವುದು ಕೂಡಾ ಪಕ್ಷೇತರರ ಹಾದಿಯನ್ನು ಸುಗಮಗೊಳಿಸಿದಂತಿದೆ.
ಕಾಂಗ್ರೆಸ್ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವಷ್ಟು ಮಂದಿ ಗೆಲ್ಲುತ್ತಾರೆ ಎನ್ನುವ ವಿಶ್ವಾಸದಿಂದ ಬೀಗುತ್ತಿದೆ. ಅದಕ್ಕೆ ಮುಖ್ಯಕಾರಣ ಸ್ಥಳೀಯ ಸಂಸ್ಥೆಗಳಲ್ಲಿ ಅದು ಮಾಡಿದ ಸಾಧನೆ ಅಂದುಕೊಂಡಿರಬಹುದು. ವಾಸ್ತವ ಅದಲ್ಲ. ಬಿಜೆಪಿ ವಿಭಜನೆ, ಕೆಜೆಪಿ ಉದಯ ಕಾಂಗ್ರೆಸ್ ಪರ ಜನರು ವಾಲುವಂತೆ ಮಾಡಿತು. ಆದರೆ ಇದನ್ನು ಬಳಕೆ ಮಾಡುವಲ್ಲಿ ಕಾಂಗ್ರೆಸ್ ಮುಖಂಡರು ಸಂಪೂರ್ಣವಾಗಿ ವಿಫರಾದರು. ಮುಖ್ಯಮಂತ್ರಿ ಹುದ್ದೆಗೇರುವ ಕುರಿತೇ ಚಿಂತಿಸಿದರೇ ಹೊರತು  ಗೆಲ್ಲುವ ಅಭ್ಯರ್ಥಿಗಳನ್ನು ಗುರುತಿಸಿ ಕಣಕ್ಕಿಳಿಸುವ ಸಾಮೂಹಿಕ ಚಿಂತನೆ ಮಾಡಲಿಲ್ಲ. ಮೂರು-ನಾಲ್ಕು ಮಂದಿ ನಾಯಕರು ತಮ್ಮ ಅಧಿಕಾರದ ಆಸೆ ಈಡೇರಿಸಿಕೊಳ್ಳಲು ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಗಮನಹರಿಸಿದರು ಎನ್ನುವುದನ್ನು ನಿರಾಕರಿಸುವಂತಿಲ್ಲ. ಇದರಿಂದಾಗಿಯೇ ಸರಿ ಸುಮಾರು 20 ಸ್ಥಾನಗಳನ್ನು ಕಾಂಗ್ರೆಸ್ ಕಳೆದುಕೊಂಡಿದೆ.
ಬಿಜೆಪಿಗೆ ನಾಯಕತ್ವದ ಕೊರತೆ ಎದುರಾಗಿದೆ. ಬಿ.ಎಸ್.ಯಡಿಯೂರಪ್ಪ ಅವರಷ್ಟು ಗಟ್ಟಿಯಾಗಿ ನಾಯಕತ್ವ ಕೊಡುವಂಥ ಸಾಮರ್ಥ್ಯವನ್ನು ರೂಢಿಸಿಕೊಳ್ಳಲು ಹೈಕಮಾಂಡ್ ಅವಕಾಶವನ್ನೇ ಕೊಟ್ಟಿರಲಿಲ್ಲ. ನಾಯಕರೊಳಗಿನ ಗುಂಪುಗಾರಿಕೆಯಿಂದಾಗಿ ನಾಯಕತ್ವ ಮೂರು ನಾಲ್ಕು ಗುಂಪುಗಳಾಗಿ ಹಂಚಿಹೋಯಿತು. ಇದರ ಪೂರ್ಣ ಲಾಭ ಪಡೆದುಕೊಂಡಿರುವುದು ಕೆಜೆಪಿ. ಬಿಜೆಪಿ ಸೋತರೆ ಅದಕ್ಕೆ ಸಿಂಹಪಾಲು ಕೆಜೆಪಿಯ ಯಡಿಯೂರಪ್ಪ ಅವರ ವರ್ಚಸ್ಸೇ ಕಾರಣ ಹೊರತು ಅದು ಕಾಂಗ್ರೆಸ್ ಸಾಧನೆಯಲ್ಲ, ಕಾರಣವೂ ಅಲ್ಲ.
ಬಿಜೆಪಿಯನ್ನು ಮಂಡಿಯೂರುವಂತೆ ಮಾಡಿದರೆ ಕೆಜೆಪಿಗೇನು ಲಾಭ ಎನ್ನುವ ಪ್ರಶ್ನೆ ಎದುರಾದರೆ ಉತ್ತರ ಸುಲಭ. ಯಡಿಯೂರಪ್ಪ ಇಲ್ಲದ ಬಿಜೆಪಿಯ ಬಲ ಎಷ್ಟೆಂದು ಹೈಕಮಾಂಡ್ ಗೆ ತೋರಿಸುವುದೇ ಸಿಂಗಲ್ ಪಾಯಿಂಟ್ ಅಜೆಂಡಾ ಯಡಿಯೂರಪ್ಪ ಅವರಿಗೆ, ಅದು ಸಾಕಾರಗೊಳಿಸಿದ ಸಂತೃಪ್ತಿ ಸಿಗಬಹುದು.
ಜೆಡಿಎಸ್ ವಿಚಾರಕ್ಕೆ ಬಂದರೆ ಅದು ಸ್ವಂತ ಶಕ್ತಿಯಿಂದ ಅಧಿಕಾರಕ್ಕೇರುವಂಥ ಸ್ಥಿತಿ ಕರ್ನಾಟಕದಲ್ಲಿ ಖಂಡಿತಕ್ಕೂ ಇಲ್ಲ. ರಾಮಕೃಷ್ಣ ಹೆಗಡೆ ನಿರ್ಗಮಿಸಿದ ಕ್ಷಣದಿಂದಲೇ ರಾಜ್ಯದಲ್ಲಿ ಜೆಡಿಎಸ್ ಬಲ ಕುಗ್ಗಿತು. ಈಗಲೂ ಅದಕ್ಕಿರುವ ಶಕ್ತಿಯೆಂದರೆ ಯಾವುದೇ ಸರಕಾರ ಬಂದರೂ ನಿರ್ಣಾಯಕ ಪಾತ್ರ ನಿರ್ವಹಿಸುವಂಥ ಅನಿವಾರ್ಯವಾದ ಶಕ್ತಿ. ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವಷ್ಟರಮಟ್ಟಿಗೆ ಅದು ಸಾಮರ್ಥ್ಯ ಹೊಂದಿದೆ.
ಹಾಗಾದರೆ ಯಾರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎನ್ನುವ ಪ್ರಶ್ನೆ ಧುತ್ತನೆ ಎದುರಾಗುತ್ತದೆ. ಅತಂತ್ರ ಸ್ಥಿತಿ ನಿರ್ಮಾಣವಾದರೆ ಅಚ್ಚರಿಪಡಬೇಕಾಗಿಲ್ಲ. ಈಗಿನ ಲೆಕ್ಕಾಚಾರಗಳನ್ನು ಗಮನಿಸಿದರೆ ಕನಿಷ್ಠ 20 ರಿಂದ 25 ಸ್ಥಾನಗಳನ್ನು ಗೆಲ್ಲುವ ಪಕ್ಷೇತರರು ರಾಜ್ಯದಲ್ಲಿ ಸರಕಾರ ರಚನೆಗೆ ನಿರ್ಣಾಯಕರಾಗುವ ಸಾಧ್ಯತೆಗಳೇ ಹೆಚ್ಚು. ಹೀಗಾದಾಗ ಪಕ್ಷೇತರರ ಶಕ್ತಿಕೇಂದ್ರ ಕರ್ನಾಟಕದಲ್ಲಿ  ಉಗಮವಾಗಲಿದೆ. ಇದು ರಾಜಕೀಯದ ಮಹತ್ತರ ಬೆಳವಣಿಗೆಯಾಗಲಿದೆ, ಕರ್ನಾಟಕವೇ ಇಂಥ ಶಕ್ತಿ ಕೇಂದ್ರದ ಮೂಲಬೇರಾಗಲಿದೆ.