Category Archives: ನವೀನ್ ಸೂರಿಂಜೆ

ಪೋಲಿಸರೇ ಸಂತ್ರಸ್ತರಾಗುವ ಅಪಾಯ: ಎಡಪಂಥೀಯರ ಕೊಡುಗೆ

Naveen Soorinje


ನವೀನ್ ಸೂರಿಂಜೆ


 

ಅಸಂಖ್ಯ ಹೋರಾಟ, ಚಳುವಳಿಗಳನ್ನು ಕಂಡ ಕರ್ನಾಟಕದಲ್ಲಿ ಇದೀಗ ಪೋಲಿಸರ ಪ್ರತಿಭಟನೆ ದಿನೇದಿನೇ ಸುದ್ದಿಯಾಗುತ್ತಿದೆ. ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ನೇತೃತ್ವದಲ್ಲಿ ಹಲವು ತಳಹಂತದ ಪೋಲಿಸ್ ಸಿಬಂದಿಗಳು ವೇತನ ತಾರತಮ್ಯ, ಸಾಕಷ್ಟು ಸೌಲಭ್ಯಗಳು ಇಲ್ಲದಿರುವುದು, ರಜೆ ನಿರಾಕರಣೆ, ಮೇಲಾಧಿಕಾರಿಗಳ ಕಿರುಕುಳ ಹಾಗೂ ರಾಜಕೀಯ ಹಸ್ತಕ್ಷೇಪವನ್ನು ವಿರೋಧಿಸಿ ಇಂತಹ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ತಮ್ಮ ಅನ್ಯಾನ್ಯ ಬೇಡಿಕೆಗಳ ಈಡೇರಿಕೆಯ ವಿಚಾರವನ್ನು ಮುಂದಿಟ್ಟುಕೊಂಡು ಸಾವಿರಾರು ಪೊಲೀಸರು ಜೂನ್ 4 ರಂದು ಸಾಮೂಹಿಕ ರಜೆ ಹಾಕಲು ನಿರ್ಧರಿಸುವ ಮೂಲಕ ಸಂಘರ್ಷಾತ್ಮಕ ಹೋರಾಟದ ಮಾರ್ಗವನ್ನು ಹಿಡಿದಿದ್ದಾರೆ. ಅನ್ಯ ಸಂದರ್ಭಗಳಲ್ಲಿ ಪೋಲಿಸ್ ಇಲಾಖೆಯ ಮಟ್ಟದಲ್ಲೇ ಮಂಥನಕ್ಕೆ ಒಳಗಾಗಬಹುದಾಗಿದ್ದ, ಇತ್ಯರ್ಥವಾಗಬಹುದಾಗಿದ್ದ ಪೋಲಿಸರ ಪ್ರತಿಭಟನೆ ಮತ್ತು ಅವರ ಹಕ್ಕೊತ್ತಾಯದ ವಿಚಾರವು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ಹೊಸ ಆಯಾಮವನ್ನು ಪಡೆದುಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಕ್ರಿಯಾಶೀಲವಾಗಿರುವ ಯುವ ಕಾರ್ಯಕರ್ತರು ಹಾಗೂ ಲೇಖಕರು ಈ ವಿಚಾರದಲ್ಲಿ ಹೋರಾಟಕ್ಕೆ ಕಟಿಬದ್ಧವಾಗಿರುವ ಪೋಲಿಸರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ; ಸಹಾನುಭೂತಿ ಹಾಗೂ ಅನುಕಂಪವನ್ನು ಸೂಚಿಸುತ್ತಿದ್ದಾರೆ.

ಪೊಲೀಸರ ಹೆಸರಿನಲ್ಲಿ ನಡೆಯುವ ಪ್ರತಿಭಟನೆಗೆ ಇದೀಗ ದೊರಕುತ್ತಿರುವ ಅಭೂತಪೂರ್ವ ಬೆಂಬಲ ಹಲವು ಅನಪೇಕ್ಷಿತ ಪರಿಣಾಮಗಳಿಗೆ ಆಹ್ವಾನ ನೀಡುವ state-logoರೀತಿಯಲ್ಲಿ ಗೋಚರಿಸುತ್ತಿದೆ. ಯಜಮಾನ ಸ್ವರೂಪಿ ಪ್ರಭುತ್ವದ ಮೂರ್ತ ರೂಪವಾಗಿರುವ ಪೊಲೀಸರನ್ನೇ ಸಂತ್ರಸ್ತರನ್ನಾಗಿ ಬಿಂಬಿಸುವ ಪ್ರಯತ್ನ ಎಡಪಂಥೀಯ ಹೋರಾಟಗಾರರು ಮತ್ತು ಯುವ ಸಾಹಿತಿಗಳಿಂದ ನಡೆಯುತ್ತಿದೆ. ಇಂತಹ ಚಟುವಟಿಕೆಗಳು ಪರೋಕ್ಷವಾಗಿ ಪ್ರಭುತ್ವವನ್ನೇ ಸಂತ್ರಸ್ತರ ಸ್ಥಾನದಲ್ಲಿ ನಿಲ್ಲಿಸುವ ಅಪಾಯಕಾರಿ ಸಾಧ್ಯತೆಗಳನ್ನು ಹೊಂದಿವೆ. ಯುವ ಕಾರ್ಯಕರ್ತರ ಔದಾರ್ಯದ ಫಲವಾಗಿ ಇಂದು ಸಾಂಪ್ರದಾಯಿಕ ಶೋಷಿತ-ಶೋಷಕ ಸಮೀಕರಣದ ಸ್ವರೂಪವೇ ಒಮ್ಮೆಗೆ ಮಾರ್ಪಾಡಾದಂತೆ ಕಂಡುಬರುತ್ತಿದೆ.

ಅದಿರಲಿ. ಪೊಲೀಸರ ಬೇಡಿಕೆಗಳೇನು ಎಂಬುದರ ಬಗ್ಗೆ ಚರ್ಚಿಸೋಣಾ. ಸಾಮಾಜಿಕ ಜಾಲತಾಣದಲ್ಲಿ “ಪೊಲೀಸರ ಪರಿಸ್ಥಿತಿ ತೀರಾ ಹೀನಾಯವಾಗಿದೆ” ಎಂದು ಥರೇವಾರಿ ಬಿಂಬಿಸಲಾಗುತ್ತಿದೆ. ಅದರಲ್ಲೂ ಯುವ ಸಾಹಿತಿಗಳು ಮತ್ತು ಹೋರಾಟಗಾರರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, “ಪೊಲೀಸರೂ ನಮ್ಮಂತೆ ಮನುಷ್ಯರು!” ಎಂದು ಕೂಗಿ ಹೇಳುತ್ತಿದ್ದಾರೆ. ಆ ಮೂಲಕ ವ್ಯವಸ್ಥೆ ಪೊಲೀಸರನ್ನು ಕನಿಷ್ಠ ಮನುಷ್ಯರಂತೆ ನಡೆಸಿಕೊಳ್ಳುತ್ತಿಲ್ಲ ಎನ್ನುತ್ತಿದ್ದಾರೆ. ಇದನ್ನಂತೂ ಒಪ್ಪಲು ಅಸಾಧ್ಯ.

ಕೆಳ ಹಂತದ ಪೊಲೀಸರಿಗೆ ಸರಕಾರ ತೀರಾ ಕಡಿಮೆ ಸಂಬಳವನ್ನೇನೂ ನೀಡುತ್ತಿಲ್ಲ. ಕೇವಲ ಎಸ್ ಎಸ್ ಎಲ್ ಸಿ ಶಿಕ್ಷಣವನ್ನು ಹೊಂದಿದ ಪೊಲೀಸ್ ಸಿಬಂದಿಯೊಬ್ಬ ಕಾರ್ಯನಿರ್ವಹಿಸುವ ಜಿಲ್ಲೆಯ ವ್ಯಾಪ್ತಿಯಲ್ಲಿ ವಸತಿ ಸೌಲಭ್ಯದ ಜೊತೆಗೆ ವೇತನ ಪ್ರಾರಂಭವಾಗುವುದೇ 18 ಸಾವಿರ ರೂಪಾಯಿಗಳಿಂದ. ಸೈನ್ಯ ಹೊರತುಪಡಿಸಿ ಯಾವ ಸರಕಾರಿ ನೌಕರನಿಗೂ ಇಲ್ಲದ ಉಚಿತ ರೇಷನ್ ವ್ಯವಸ್ಥೆ ಪೊಲೀಸರಿಗಾಗಿ ಕರ್ನಾಟಕದಲ್ಲಿ ಜಾರಿಯಲ್ಲಿದೆ. ಪೊಲೀಸ್ ಸಿಬಂದಿಯೊಬ್ಬ ಕರ್ತವ್ಯದಲ್ಲಿ ಇದ್ದಾಗ ಸಾವನ್ನಪ್ಪಿದಲ್ಲಿ ಆತನ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲಾಗುತ್ತದೆ. ಈ ರೀತಿ ಬೇರೆ ಇಲಾಖೆಗಳಲ್ಲಿ ಇದ್ದರೂ ಅದಕ್ಕಾಗಿ ಅಲೆದಾಡಿಸಲಾಗುತ್ತದೆ. ಆದರೆ ಪೊಲೀಸ್ ಇಲಾಖೆಯಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯಲು ಸಲ್ಲಿಸಿದ ಒಂದೇ ಒಂದೇ ಅರ್ಜಿ ಇತ್ಯರ್ಥವಾಗದೆ ಬಾಕಿಯಾಗಿಲ್ಲ. ಒಂದು ವೇಳೆ ಪೊಲೀಸ್ ಪೇದೆಯೊಬ್ಬ ಕರ್ತವ್ಯ ನಿರ್ವಹಿಸುವ ಸಂದರ್ಭ ಮೃತನಾದಲ್ಲಿ ತಕ್ಷಣವೇ ಆತನ ಕುಟುಂಬಕ್ಕೆ 50 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಸಣ್ಣಪುಟ್ಟ ಗಾಯಗಳಾದಲ್ಲಿ 2 ಲಕ್ಷ ರೂಪಾಯಿಗಳನ್ನು ತಕ್ಷಣ ನೀಡಲಾಗುತ್ತದೆ. ಇನ್ನು ಪೊಲೀಸ್ ಸಿಬಂದಿಯೊಬ್ಬ ಯಾವುದೇ ಸಂದರ್ಭದಲ್ಲಿ ಅನಾರೋಗ್ಯಕ್ಕೀಡಾದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಸೌಲಭ್ಯ ಪಡೆಯುವ ವ್ಯವಸ್ಥೆ ಇದೆ. ಇಷ್ಟು ವ್ಯವಸ್ಥೆಗಳು ಬೇರಾವ ಇಲಾಖೆಯಲ್ಲೂ ಊಹಿಸಲೂ ಅಸಾಧ್ಯ. ಆದುದರಿಂದಲೇ ಈಗೀಗ ನಡೆಯುತ್ತಿರುವ ಪೋಲಿಸ್ ಪೇದೆ ನೇಮಕಾತಿ ಸಂದರ್ಭಗಳಲ್ಲಿ ಲಕ್ಷ ಲಕ್ಷ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಇದು ಮನುಷ್ಯನೊಬ್ಬನನ್ನು ನಡೆಸಿಕೊಳ್ಳುವ ರೀತಿಯಲ್ಲದೆ ಇನ್ನೇನು ಅನ್ನಬೇಕು?

ಇಷ್ಟೆಲ್ಲಾ ಸೌಲಭ್ಯಗಳು ಇದ್ದರೂ ಪೊಲೀಸರು ಪ್ರತಿಭಟಿಸೋದ್ಯಾಕೆ? ಕೇವಲ ರಜೆಯ ಕಾರಣಕ್ಕಾಗಿಯಂತೂ ಅಲ್ಲ. ಪೊಲೀಸ್ ಅಥವಾ ಸೈನ್ಯKSP Recruitment 2015 ಸೇರುವಾಗಲೇ ಅಲ್ಲಿನ ರಜಾ ಸೌಲಭ್ಯದ ಬಗ್ಗೆ ಅರಿವು ಇರುತ್ತದೆ. ಹಾಗೆಂದು ಸೈನಿಕರ ರೀತಿ ಪೊಲೀಸರಿಗೆ ರಜೆ ನೀಡುವುದೇ ಇಲ್ಲವೆಂದಲ್ಲ. ಕೆಲವೊಂದು ಕಠಿಣ ಮತ್ತು ಸಹಜ ನಿಯಮಗಳು ಇದ್ದೇ ಇರುತ್ತವೆ. ರಜೆಯಲ್ಲಿ ಅನಿಶ್ಚಿತತೆ ವಿಶೇಷವಾಗಿ ಪೋಲಿಸ್ ಮೊದಲಾದ ರಕ್ಷಣಾ ಪಡೆಗಳ, ಸುರಕ್ಷಾ ಸಂಸ್ಥೆಗಳ ಸೇವಾವೃತ್ತಿಯ ಅನಿವಾರ್ಯ ಲಕ್ಷಣ. ಅಷ್ಟಕ್ಕೂ ಪೋಲಿಸರಿಗೆ ರಜೆ ಇರಲೇಬೇಕು ಅನ್ನುವ ಕಾರಣಕ್ಕಾಗಿ ಈಗ ಅವರಿಗೆ ಬೆಂಬಲ ಕೊಡುವ ಪಕ್ಷಗಳು ಅಥವಾ ಸಾಮಾಜಿಕ ಕಾರ್ಯಕರ್ತರು ವಾರದ ರಜಾದಿನಗಳಲ್ಲಿಲಿ ಪ್ರತಿಭಟನೆ, ಆಂದೋಲನಗಳನ್ನು ಹಮ್ಮಿಕೊಳ್ಳುವುದಿಲ್ಲವೆಂಬ ನಿರ್ಧಾರವನ್ನು ಮಾಡುತ್ತಾರೆಯೇ ಎಂಬ ಪ್ರಶ್ನೆ ವ್ಯಂಗ್ಯವಾಗಿ ಕಂಡರೂ ಇಲ್ಲಿ ಪ್ರಸ್ತುತ. ಹಾಗೆಂದುಕೊಂಡು ಪೊಲೀಸರು ಪ್ರತಿಭಟಿಸಲೇ ಬಾರದೆಂದಲ್ಲ. ವೇತನ ತಾರತಮ್ಯ ಮತ್ತು ರಜೆಯ ಬಗ್ಗೆ ಈವೆರೆಗೂ ಒಂದೇ ಒಂದು ಮನವಿ ಪೊಲೀಸ್ ಇಲಾಖೆಗೆ ತಲುಪಿಲ್ಲ ಎಂಬುದು ಗೃಹ ಸಚಿವ ಡಾ ಜಿ ಪರಮೇಶ್ವರ್ ಇತ್ತಿಚೆಗೆ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಕನಿಷ್ಠ ಮನವಿಯನ್ನೂ ಮಾಡದೇ, ಇಲಾಖಾ ಮಟ್ಟದಲ್ಲೇ ಇರತಕ್ಕಂತಹ ಸಾಂಸ್ಥಿಕ ಮಾಧ್ಯಮಗಳನ್ನು ಬಳಸದೇ ಪೊಲೀಸ್ ಮ್ಯಾನುವಲ್ ನಲ್ಲಿ ಅವಕಾಶ ಇಲ್ಲದ, ಸಂವಿಧಾನ ವಿರೋಧಿಯಾಗಿ ಪೊಲೀಸರು ದಿಡೀರನೆ ಪ್ರತಿಭಟನೆ ನಡೆಸುತ್ತಿರೋದ್ಯಾಕೆ ಎಂಬುದರ ಬಗ್ಗೆ ಸಂಶಯಗಳು ಮೂಡಲಾರಂಭಿಸಿದೆ.

ಪೊಲೀಸರ ಪ್ರತಿಭಟನೆಗಿಂತಲೂ ಆತಂಕ ಸೃಷ್ಟಿಸಿರುವುದು ಪ್ರಜಾಸತ್ತಾತ್ಮಕ ಚಳುವಳಿಗಾರರು ಮತ್ತು ಯುವ ಸಾಹಿತಿಗಳ ಮಾತುಗಳು. “ಪೊಲೀಸರು ಹಲವು ಬಾರಿ ಜನಸಾಮಾನ್ಯರ ಮೇಲೆ ನಡೆಸುವ ಹಲ್ಲೆ ದೌರ್ಜನ್ಯಗಳಿಗೆ ಅವರ ಮೇಲಿರುವ ಒತ್ತಡಗಳೇ ಕಾರಣ….” ಈ ರೀತಿಯ ಅಭಿಪ್ರಾಯಗಳನ್ನು ತೇಲಿಸಲಾಗುತ್ತಿದೆ. ಇಂತಹ ವಾದಗಳು ತಮ್ಮ ಕುಟುಂಬದಿಂದ ದೂರ ಇರುವ ಸೈನಿಕರು ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಅತ್ಯಾಚಾರಗಳನ್ನು ನಡೆಸುವುದು ಸಹಜ ಎಂಬಷ್ಟೇ ಆಪಾಯಕಾರಿ.

ಕರ್ನಾಟಕ ಪೊಲೀಸರ ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳು ಒಂದೆರಡಲ್ಲ. ಈಗಲೂ ಪ್ರತೀ ಠಾಣೆಯ ಲಾಕಪ್ಪಿನಲ್ಲಿ ನೋಡಿದರೆpolice-brutality ಬರಿಮೈಯ್ಯಲ್ಲಿ, ಕೇವಲ ಚೆಡ್ಡಿ ಹಾಕಿಕೊಂಡು ಕುಳಿತಿರುವ ನ್ಯಾಯಾಂಗದ ಮುಂದೆ ಹಾಜರುಪಡಿಸದ ಆರೋಪಿಗಳು ಕಂಡುಬರುತ್ತಾರೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಿವಿಲ್ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ವ್ಯಾಪ್ತಿ ಮೀರಿ ಮನೆಯ ಯಜಮಾನನ್ನು ಬಂಧಿಸಿ ಆತನ ಮಗನ ಎದುರೇ ವಿವಸ್ತ್ರಗೊಳಿಸಿ, ಮರ್ಮಾಂಗಕ್ಕೆ ಸೂಜಿ ಹಾಕಿಸಿದ್ದು ಯಾವ ಮೇಲಾಧಿಕಾರಿಯಾಗಲೀ, ಐಪಿಎಸ್ ಅಧಿಕಾರಿಯಾಗಲೀ ಅಲ್ಲ. ದನದ ವ್ಯಾಪಾರ ಮಾಡುತ್ತಿದ್ದವರ ಜೊತೆ ಕೆಲಸ ಮಾಡುತ್ತಿದ್ದ ಕಬೀರ್ ನನ್ನು ಗುಂಡು ಹಾಕಿ ಸಾಯಿಸಿದ್ದು ಇದೇ ತಳ ಹಂತದ ಪೊಲೀಸ್ ಸಿಬಂದಿಗಳು. ಮೊನ್ನೆ ಮೊನ್ನೆ ಸಿಎಂ ಮನೆಗೆ ದೂರು ಕೊಡಲು ಬಂದ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ಠಾಣೆಯಲ್ಲಿ ದೌರ್ಜನ್ಯ ಎಸಗಿದ್ದು ಕುಮಾರಸ್ವಾಮಿ ಹೇಳುವಂತೆ ಸಿಎಂ ಸಿದ್ದರಾಮಯ್ಯ ಅಲ್ಲ; ಯಾವ ಮೇಲಾಧಿಕಾರಿಯ ಅಥವಾ ರಾಜಕಾರಣಿಯ ಕುಮ್ಮಕ್ಕೂ ಇಲ್ಲದ ಪೊಲೀಸ್ ಸಿಬಂದಿಗಳು! ಇಂತಹ ಸಾವಿರ ಸಾವಿರ ಪ್ರಕರಣಗಳು, ನಮ್ಮ ಮನೆಯ, ನೆರೆ ಮನೆಯ ವ್ಯಕ್ತಿಗಳಿಗಾದ ಅನ್ಯಾಯಗಳು ಕೇವಲ ಪೊಲೀಸ್ ಸಿಬಂದಿಗಳ ಅಮಾನವೀಯತೆಯಿಂದ ಕಾನೂನುಬಾಹಿರ ವರ್ತನೆಯಿಂದ ಆಗಿವೆಯೇ ಹೊರತು ಮೇಲಾಧಿಕಾರಿಗಳು ಮತ್ತು ರಾಜಕರಣಿಗಳ ಕುಮ್ಮಕ್ಕಿನಿಂದಲೋ ಅಥವಾ ವೇತನ ತಾರತಮ್ಯ, ರಜಾ ನಿರಾಕರಣೆಯಿಂದ ಅಲ್ಲ ಎಂಬುದಂತೂ ಸತ್ಯ.

ಹಾಗೆಯೇ ಈಗ ಪೊಲೀಸರ ಪ್ರತಿಭಟನೆಯನ್ನು ಬೆಂಬಲಿಸುವವರು ಎಡಪಂಥೀಯ ಹೋರಾಟಗಾರರು ಹೇಳುತ್ತಿರುವ “ನಾವು ಪ್ರತಿಭಟನೆ ಮಾಡುವ ಸಂದರ್ಭ ನಿಮ್ಮಿಂದ ಎಷ್ಟೇ ಹಲ್ಲೆಗೊಳಗಾದರೂ ನಿಮ್ಮ ಪ್ರತಿಭಟನೆಯನ್ನು ಬೆಂಬಲಿಸುತ್ತಿದ್ದೇವೆ” ಎಂಬ ಮಾತುಗಳೇ ಸಿನಿಕತನದ್ದು. ದಲಿತ ಅಥವಾ ಮುಸ್ಲೀಮನೊಬ್ಬ ತನ್ನ ಜಾತಿ ಧರ್ಮದ ಕಾರಣಕ್ಕಾಗಿಯೋ, ಕೇಳುವವರಿಲ್ಲ ಎನ್ನುವ ಕಾರಣಕ್ಕೋ ಲಾಕಪ್ಪಿನಲ್ಲಿ ಚಡ್ಡಿಯಲ್ಲಿ ಕುಳಿತು ಹಲ್ಲೆಗೊಳಗಾಗುವುದಕ್ಕೂ, ದಲಿತ ಮಹಿಳೆಯರು ವಿವಸ್ತ್ರಕ್ಕೊಳಗಾಗುವುದಕ್ಕೂ, ರಾಜಕೀಯ ಉದ್ದೇಶದ ಪ್ರತಿಭಟನೆಯ ಸಂದರ್ಭದ ಲಾಠಿಚಾರ್ಜ್ನ ಹಲ್ಲೆಗೂ ವ್ಯತ್ಯಾಸ ಇದೆ. ಕೇವಲ ಮುಸ್ಲೀಮರೆನ್ನುವ ಕಾರಣಕ್ಕೆ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಸಿಲುಕಿಸಲ್ಪಟ್ಟು ಹತ್ತು ವರ್ಷ ಜೈಲಿನಲ್ಲಿ ಕೊಳೆತು ಮೊನ್ನೆ ಮೊನ್ನೆಯಷ್ಟೇ ಬಿಡುಗಡೆಯಾದ ಒಂಬತ್ತು ದನಿಯಿಲ್ಲದ ನಿರಪರಾಧಿಗಳ ಜೈಲುವಾಸವೂ ರಾಜಕೀಯ ಪಕ್ಷಗಳು ಸಂಘಸಂಸ್ಥೆಗಳು ನಡೆಸುವ ಜೈಲ್ ಭರೋ ಆಂದೋಲನಗಳು ಏಕರೂಪದ್ದೇ? ಇದು ಸಮಸ್ಯೆಯನ್ನು ಸರಳೀಕರಿಸುವ ಪ್ರಯತ್ನವಲ್ಲವೇ?

ಅಷ್ಟಕ್ಕೂ ಪೊಲೀಸರ ಬೇಡಿಕೆಗಳ ಬಗ್ಗೆ ಯಾವ ಆಕ್ಷೇಪಗಳೂ ಇಲ್ಲ. ಸೌಲಭ್ಯಗಳನ್ನು ಹೊಂದಿರುವವರು ಮತ್ತಷ್ಟೂ ಸೌಲಭ್ಯಗಳು ಬೇಕು ಎನ್ನುವುದಕ್ಕೆ ಯಾರflowers in gun ಆಕ್ಷೇಪವೂ ಇಲ್ಲ. ಪೋಲಿಸರೇ ಖುದ್ದು ತಮಗೆ ಅದು ಬೇಕು ಇದು ಬೇಕು, ನಮ್ಮ ಸೇವಾಸ್ಥಿತಿ ಹಾಗಿರಬೇಕು ಹೀಗಿರಬೇಕು ಅನ್ನಲಿ. ಹಾಗೆಂದು ಜವಾಬ್ಧಾರಿಯುತ ರಾಜಕೀಯ ಪಕ್ಷಗಳು ಅಥವಾ ಸಾಮಾಜಿಕ ಕಾರ್ಯಕರ್ತರು “ಪೊಲೀಸರಿಗೆ ಮೂಲಭೂತ ಸೌಲಭ್ಯಗಳು ಇಲ್ಲದ ಕಾರಣಕ್ಕಾಗಿ ಅವರು ದೌರ್ಜನ್ಯ ಎಸಗುತ್ತಾರೆ” ಎಂಬಂತಹ ಮಾತುಗಳನ್ನು ಆಡುವುದು, “ಅವರೂ ಮನುಷ್ಯರೇ” ಎಂದು ಘೋಷಣೆ ಕೂಗುವುದು ಅನುಚಿತ. ಅವರ ಸದ್ಯದ ತುರ್ತು ಪೋಲಿಸ್ ವ್ಯವಸ್ಥೆಯನ್ನು ಹೆಚ್ಚು ಹೆಚ್ಚು ಮಾನವೀಯಗೊಳಿಸುವುದು ಹಾಗು ಅದನ್ನು ಪೂರ್ಣವಾಗಿ ಸಂವಿಧಾನ ಮತ್ತು ನೆಲದ ಕಾನೂನಿನ ಪರಿಧಿಗೆ ತರುವ ಕೆಲಸವಾಗಿದೆ. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಮಾರ್ಗದರ್ಶಿ ಸೂತ್ರಗಳನ್ನು ಅನುಷ್ಠಾನ ಮಾಡುವಂತೆ ಪೋಲಿಸ್ ಇಲಾಖೆ ಹಾಗೂ ಸರಕಾರಗಳನ್ನು ಒತ್ತಾಯಿಸುವ ಕಾರ್ಯವನ್ನು ನಾವು ಮೊದಲು ಮಾಡಬೇಕಾಗಿದೆ. ಮಾನವ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಮತ್ತು ರಾಷ್ಟೀಯ ಮಾನವ ಹಕ್ಕು ಆಯೋಗಗಳು ಸಲ್ಲಿಸಿದ ಶಿಫಾರಸ್ಸುಗಳ ಜಾರಿಗೆ ಒತ್ತಡ ಸೃಷ್ಟಿಸುವುದು ಎಡಪಂಥೀಯ ಹೋರಾಟಗಾರರ ಮೊದಲ ಕಾರ್ಯವಾಗಬೇಕೇ ಹೊರತು ಪೋಲಿಸರ ಆಂತರಿಕ ಪ್ರತಿಭಟನೆಗಳಲ್ಲಿ ಭಾಗಿಯಾಗುವುದಲ್ಲ.

ಕಾಶ್ಮೀರ ಪ್ರತ್ಯೇಕತಾವಾದ, ಪಾಕಿಸ್ತಾನ್ ಜಿಂದಾಬಾದ್ ಮತ್ತು ಸಂವಿಧಾನ

Naveen Soorinje


ನವೀನ್ ಸೂರಿಂಜೆ


 

 

ಒಂದು ವೇಳೆ ಜೆಎನ್ ಯು ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದೇ ಆದಲ್ಲಿ ಅದು ದೇಶದ್ರೋಹ ಆಗುತ್ತದೆಯೇ? ಅಷ್ಟಕ್ಕೂJNU ಪಾಕಿಸ್ತಾನವು ಭಾರತದ ಅಧಿಕೃತ ಶತ್ರು ರಾಷ್ಟ್ರ ಎಂದು ಭಾರತದ ಸಂವಿಧಾನವೇನೂ ದಾಖಲಿಸಿಲ್ಲ. ಅಂತಹ ಕಾನೂನುಗಳೂ ಇಲ್ಲ. ಪಾಕಿಸ್ತಾನದ ಜೊತೆ ನಮ್ಮ ಸಂಬಂಧ ಸಮಸ್ಯಾತ್ಮಕವಾಗಿದೆ ಎಂಬುದೇನೋ ನಿಜ. ಅಂದಮಾತ್ರಕ್ಕೆ ಆ ದೇಶ ಶಾಶ್ವತವಾಗಿ ನಮ್ಮ ಅಹಿತ ನೆರೆಹೊರೆಯಾಗಿಯೇ ಇರುತ್ತದೆ ಎಂದು ಕಲ್ಪಿಸಿಕೊಳ್ಳುವುದು ಕೇವಲ ಭ್ರಾಂತಿಯಾಗುತ್ತದೆ. ಸುಧಾರಣೆಗೆ ಅವಕಾಶಗಳು ಇದ್ದೇ ಇರುತ್ತವೆ. ಪ್ರಧಾನಿ ಮೋದಿಯವರು ಪಾಕ್ ನೇತಾರ ನವಾಜ್ ಶರೀಫರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಹಠಾತ್ತನೆ ಆ ದೇಶಕ್ಕೆ ಭೇಟಿ ನೀಡಿರುವುದು ಅಂತಹ ಸಹಜ ಭವಿಷ್ಯದ ಅಪೇಕ್ಷೆಯಿಂದಲೇ.

ಒಂದುವೇಳೆ ಸಧ್ಯೋಭವಿಷ್ಯದಲ್ಲಿ ಸಂಬಂಧಗಳು ಸುಧಾರಣೆಗೊಂಡು, ಸಹಜತೆ ನೆಲೆಸಿದಲ್ಲಿ ಮತ್ತು ಅಂತಹ ಸಂದರ್ಭದಲ್ಲಿ ಪಾಕ್ ಪರ ಘೋಷಣೆಗಳು ಕೂಗಲ್ಪಟ್ಟರೆ ಅವುಗಳ ಸ್ವೀಕರಣೆ ಹೇಗಿರುತ್ತದೆ? ನಮ್ಮಲ್ಲಿ ಅಮೇರಿಕಾ ಪರ, ಇಸ್ರೇಲ್ ಪರ ಅಥವಾ ಇಂಗ್ಲಂಡ್ ಪರ ಘೋಷಣೆ ಕೂಗಿದ್ದು ಎಂದಾದರೂ ದೇಶದ್ರೋಹವೆಂದು ಪರಿಗಣಿತವಾಗಿದ್ದಿದೆಯೇ? ಬೇರೆ ದೇಶಗಳ ಮಾನವ ಹಕ್ಕುಗಳಿಗೆ ಧಕ್ಕೆಯಾದಾಗ ಭಾರತ ಸೇರಿದಂತೆ ಯಾವುದೇ ರಾಷ್ಟ್ರವು ಸಂತ್ರಸ್ತ ದೇಶದ ಪರ ವಹಿಸುವುದು ವಾಡಿಕೆಯಲ್ಲವೇ? ಭಾರತ ಪಾಕಿಸ್ತಾನ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಾಸೀಂ ಅಕ್ರಮ್ ಅಥವಾ ಶಾಹಿದ್ ಅಫ್ರೀದಿ ಮಿಂಚುತಿದ್ದಾಗ ಅಭಿಮಾನದಿಂದ ಚಪ್ಪಾಳೆ ತಟ್ಟುವುದು, ಘೋಷಣೆ ಕೂಗುವುದು ಅಥವಾ ಕೇಕೆ ಹಾಕುವುದು ದೇಶದ್ರೋಹವಾಗುತ್ತದೆಯೇ? ಕೆಲ ದಿನಗಳ ಹಿಂದೆ ಭಾರತದ ಕ್ರಿಕೆಟಿಗ ವಿರಾಟ್ ಕೋಹ್ಲಿಯ ಪಾಕ್ ಅಭಿಮಾನಿಯೊಬ್ಬ ಅಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ, ಅಭಿಮಾನ ವ್ಯಕ್ತಪಡಿಸಿದ್ದಕ್ಕಾಗಿ ಪೋಲಿಸರಿಂದ ಬಂಧಿಸಲ್ಪಟ್ಟಿದ್ದಾನೆ ಎಂದು ವರದಿಯಾಗಿದೆ. ಇದು ಜೆ.ಎನ್.ಯು ಕ್ಯಾಂಪಸ್ಸಿನಲ್ಲಿ ನಮ್ಮ ಪೋಲೀಸರು ವರ್ತಿಸಿದ ರೀತಿ ಅಥವಾ ನಂತರದಲ್ಲಿ ಇಲ್ಲಿಯ ಬಲಪಂಥೀಯ ಸಂಘಟನೆಗಳು ಮತ್ತು ಅರ್ನಾಬ್ ಗೋಸ್ವಾಮಿ ಥರದ ಹೈಪರ್ ರಾಷ್ಟ್ರೀಯವಾದಿಗಳ ಅತಿರೇಕದ ವರ್ತನೆಗಳಿಗಿಂತ ಭಿನ್ನವಾಗಿದೆಯೇ? ಅಂದರೆ ಒಂದು ಘೋಷಣೆಗೆ ಕುಸಿದು ಬೀಳುವಷ್ಟು ದುರ್ಬಲವಾಗಿವೆಯೇ ಆಧುನಿಕ ರಾಷ್ಟ್ರಗಳು?

ಅಷ್ಟಕ್ಕೂ ಒಂದು ದೇಶದಲ್ಲಿ ಮತ್ತೊಂದು ದೇಶದ ಪರ ಘೋಷಣೆ ಕೂಗುವ ಕನಿಷ್ಠ ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಲ್ಲವೇ? ಯಾವುದೇ ದೇಶದKanhaiya-Kumar-JNU ಆಡಳಿತೆ ನಡೆಯುವುದು ಆ ನೆಲದ ಕಾನೂನಿಗೆ ಅನುಗುಣವಾಗಿಯೇ ಹೊರತು ಅಲ್ಲಿಯ ಯಾವುದೇ ಪುಂಡು ದೇಶಭಕ್ತರ ಅಥವಾ ಮೀಡಿಯಾ ಜಡ್ಜುಗಳ ಖಯಾಲಿಗೆ ಅನುಗುಣವಾಗಿ ಅಲ್ಲ. ಮಾನಹಾನಿ, ರಾಷ್ಟ್ರದ್ರೋಹ ಅಥವಾ ಭಾವನೆಗಳಿಗೆ ಘಾಸಿ ಮೊದಲಾದ ನೆಪಗಳ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಾಂವಿಂಧಾನಿಕ ಉಪಬಂಧಗಳನ್ನು ಮೀರಿ ಮಿತಿಗಳನ್ನು ಹೇರುವ ಪ್ರಯತ್ನಗಳು ನಮ್ಮ ದೇಶದಲ್ಲಿ ನಡೆಯುತ್ತಲೇ ಇವೆ. ಜೆ.ಎನ್.ಯು ಪ್ರಕರಣವೂ ಅಂತಹದ್ದೇ ಪ್ರಯತ್ನದ ಒಂದು ಭಾಗವಾಗಿದೆ. ದೇಶದ ಖ್ಯಾತ ಕಾನೂನು ತಜ್ಞ ಮತ್ತು ಮಾಜಿ ಅಟಾರ್ನಿ ಜನರಲ್ ಶ್ರೀ ಸೋಲಿ ಸೊರಾಬ್ಜಿಯವರು ಜೆ.ಎನ್.ಯು ಕ್ಯಾಂಪಸ್ಸಿನಲ್ಲ ಕೂಗಲ್ಪಟ್ಟ ಘೋಷಣೆಗಳು ಸಮಸ್ಯಾತ್ಮಕವಾಗಿದ್ದರೂ ಅವು ದೇಶದ್ರೋಹದ ಆಪಾದನೆಯ ಪರಿಧಿಯಲ್ಲಿ ಬರುವುದಿಲ್ಲ ಎಂಬುವುದಾಗಿ ಅಭಿಪ್ರಾಯಪಟ್ಟಿದ್ದಾರೆ. ಸುಪ್ರೀಂ ಕೋರ್ಟ್ ಕೇದಾರನಾಥ್ ಪ್ರಕರಣ (1962) ದಲ್ಲಿ ಸೆಕ್ಷನ್ ೧೨೪ ರ ಸಾಂವಿಧಾನಿಕ ಅನ್ವಯಿಕತೆಯನ್ನು ಸ್ಪಷ್ಟಪಡಿಸಿದೆ. ಅಲ್ಲಿಯ ತೀರ್ಪಿನಲ್ಲಿ, ಸರ್ವೋಚ್ಚ ನ್ಯಾಯಲಯವು ಸೆಡೀಶನ್ ವಿಧಿಯ ವ್ಯಾಪ್ತಿಯನ್ನು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆjnu-kanhaiya-kumar-arrest-protest ಮತ್ತು ಹಿಂಸೆಗೆ ಪ್ರಚೋದನೆ ನೀಡಬಲ್ಲ ಮಾತು ಅಥವಾ ಕೃತ್ಯಗಳಿಗೆ ಮಾತ್ರವೇ ಸೀಮಿತಗೊಳಿಸಿ ಆದೇಶ ಹೊರಡಿಸಿದೆ. ಅಂದರೆ, ಸೋರಾಬ್ಜಿಯವರು ಅಭಿಪ್ರಾಯ ಪಡುವಂತೆ, ಕೇವಲ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗುವುದು ನಾವೇ ಒಪ್ಪಿಕೊಂಡಿರತಕ್ಕಂತಹ ಕಾನೂನು ಕಟ್ಟಳೆಗಳ ಪ್ರಕಾರ ರಾಷ್ಟ್ರದ್ರೋಹ ಅಲ್ಲ. ಹೆಚ್ಚೆಂದರೆ ಅದು ಒಂದು ಗುಂಪಿಗೆ ಸಿಟ್ಟು ತರಬಹುದಾದ, ಅಸಮಾಧಾನ ಉಂಟುಮಾಡಬಹುದಾದ ಆದರೆ ಸಹಜವಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಒಂದು ಸ್ವರೂಪ ಅಷ್ಟೇ. ‘ನೋವುಂಟುಮಾಡುತ್ತದೆ’ ಎಂಬುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಯ ನಿರ್ಧಾರಕ್ಕೆ ಒಂದು ಮಾನದಂಡ ಅಗುವುದು ಸ್ಪಷ್ಟವಾಗಿ ಅಪ್ರಜಾಸತ್ತಾತ್ಮಕ. ದಕ್ಷಿಣ ಆಫ್ರಿಕಾದ ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರ ಹೇಳಿಕೆಯೊಂದನ್ನು ಘನವೆತ್ತ ಕಾನೂನು ಚಿಂತಕ ಫಾಲಿ ಎಸ್ ನಾರಿಮನ್ ಹೀಗೆ ಉಲ್ಲೇಖಿಸುತ್ತಾರೆ: “Speech is really free only when it hurts”.

ಪ್ರಜೆಗಳು ತಮ್ಮ ರಾಷ್ಟ್ರದ ವಿರುದ್ಧ ಘೋಷಣೆ ಕೂಗುವಂತಹ ಘಟನೆಗಳು, ಚಳುವಳಿಗಳು ವಿಶ್ವದಾದ್ಯಂತ ನಡೆಯುತ್ತಲೇ ಇವೆ. ಅದನ್ನು ಜಗತ್ತಿನ ನಾಗರಿಕ ರಾಷ್ಟ್ರಗಳು ಬಹಳ ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾ ಬಂದಿವೆ. ಅಂಥ ವರ್ತನೆಗಳನ್ನು ಅಭಿವ್ಯಕ್ತಿ ಸ್ವಾಂತಂತ್ರ್ಯದ ಭಾಗವಾಗಿಯೇ ಅವು ಪರಿಗಣಿಸುತ್ತಿವೆ. ಸ್ಕಾಟ್ಲಂಡ್ ಪ್ರಾಂತ್ಯದಲ್ಲಿ ಅದು ಬ್ರಿಟನ್ ದೇಶದಿಂದ ಪ್ರತ್ಯೇಕವಾಗುವ ದಿಕ್ಕಿನಲ್ಲಿ ಹೋರಾಟಗಳು ನಡೆಯುತ್ತಲೇ ಇವೆ. ಕೆನಾಡದಿಂದ ಕ್ಯೂಬೆಕ್, ಸ್ಪೇಯ್ನ್ ದೇಶದಿಂದ ಬಾಷ್ಕ್ ಪ್ರಾಂತ್ಯ ಬೇರೆಯಾಗಲು ಯತ್ನಿಸುತ್ತಿವೆ. ಇಂತಹ ಸಂದರ್ಭದಲ್ಲಿ ಆ ದೇಶಗಳು ವರ್ತಿಸುತ್ತಿರುವ ರೀತಿ ಭಾರತಕ್ಕೆ ಒಂದು ಮಾದರಿ. ಆ ದೇಶಗಳು ಸೆಡೀಷನ್ ವಿಧಿಯನ್ನು ನಮ್ಮಂತೆ ಸ್ವೇಚ್ಚೆಯಿಂದ ಬಳಸುತ್ತಿವೆಯೇ ಎಂಬುವುದನ್ನು ನಮ್ಮ ಮೀಡಿಯಾದ ಪ್ರಭೃತಿಗಳು,jnu-agitation ಬಲಪಂಥೀಯ ಸಂಘಟನೆಗಳು ನೋಡಬೇಕು. ಸ್ಕಾಟ್ಲೆಂಡ್ ಚಳುವಳಿಯ ಮಾದರಿಯಲ್ಲಿ, ನಮ್ಮ ದೇಶದಲ್ಲಿ ಕಾಶ್ಮೀರ ಪ್ರಾಂತ್ಯವು ಪ್ರತ್ಯೇಕವಾಗಬೇಕೆಂದು ಕೆಲವರು ಪ್ರತಿಪಾದಿಸುತ್ತಿದ್ದಾರೆ. ಅಂತಹ ಸಂಧರ್ಭದಲ್ಲಿ ಸ್ಕಾಟ್ಲಂಡಿನಲ್ಲಿ ಬ್ರಿಟನ್ ವಿರುದ್ಧ ಘೋಷಣೆಗಳು ಮೊಳಗಿದಂತೆ ಇಲ್ಲಿ ಭಾರತ ವಿರೋಧಿ ಕೂಗುಗಳು ಕೇಳಬಹುದು. ಮತ್ತು ಅದು ಪ್ರತ್ಯೇಕತಾ ಚಳುವಳಿಗಳ ಸಹಜ ಪ್ರವೃತ್ತಿಯೇ ಆಗಿರುತ್ತದೆ. ಪ್ರತ್ಯೇಕತೆಯ ಬೇಡಿಕೆಗಳನ್ನು, ಅಲ್ಲಿಯ ಜನರ ಆಶೋತ್ತರಗಳನ್ನು ನಾವು ವಸ್ತುನಿಷ್ಠ ನೆಲೆಯಲ್ಲಿ ನಾವು ಅನುಸಂಧಾನ ಮಾಡಬೇಕೇ ಹೊರತು ರಾಷ್ಟ್ರದ್ರೋಹದ ಪ್ರಕರಣಗಳಂತಹ ಕ್ಷುಲ್ಲಕ ವಿಧಾನಗಳಿಂದ ಅಲ್ಲ. ಅಂತಹ ಪ್ರಾಂತ್ಯದ ಸರ್ವತೋಮುಖ ಅಭಿವೃಧ್ಧಿಗೆ ನಾವು ಮಾಡಿರುವ, ಮಾಡುತ್ತಿರುವ ಅಥವಾ ಮಾಡಬಹುದಾದ ನಮ್ಮ ಪ್ರಯತ್ನಗಳು ಪ್ರತ್ಯೇಕತಾ ಬೇಡಿಕೆಗಳಿಗೆ ಉತ್ತರವಾಗಬೇಕು. ಅವಾಗಲೇ ಸ್ಕಾಟ್ಲಂಡ್ ನಲ್ಲಿ ನಡೆದ ಜನಮತಗಣನೆಯಲ್ಲಿ ಹೇಗೆ ಬಹು ಸಂಖ್ಯೆಯ ಸ್ಕಾಟಿಷ್ ಜನರು ಪ್ರತ್ಯೇಕತೆಯ ವಿರುದ್ಧ ಮತ ಹಾಕಿದರೋ ಅಂತಹ ಬೆಳವಣಿಗೆಗಳು ನಮ್ಮಲ್ಲೂ ನಡೆಯುತ್ತವೆ. ಆದರೆ ಕಾಶ್ಮೀರ ಪ್ರಾಂತ್ಯದ ಅಭಿವೃದ್ಧಿ ಹಾಗೂ ಅಲ್ಲಿಯ ಮಾನವ ಹಕ್ಕುಗಳ ರಕ್ಷಣೆಯ ವಿಚಾರದಲ್ಲಿ ಅಂತಹ ಕಲ್ಪನೆಗಳನ್ನು ಇಟ್ಟುಕೊಳ್ಳಬಹುದೇ?

ಸದ್ಯ, ‘ಜೆಎನ್ ಯು ವಿದ್ಯಾರ್ಥಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ, ಅಫ್ಜಲ್ ಪರ ಘೋಷಣೆ ಕೂಗಿಲ್ಲ’ ಎಂದು ಮಾನವ ಹಕ್ಕು ಕಾರ್ಯಕರ್ತರು, ಪ್ರಗತಿಪರರು ಮತ್ತು ಚಿಂತಕರು ವಾದಿಸುತ್ತಿದ್ದಾರೆ. ಅದಕ್ಕಾಗಿ ಬಂಧಿತ ವಿದ್ಯಾರ್ಥಿ ಸಂಘದ ನಾಯಕ ಕನ್ನಯ್ಯರ ಭಾಷಣವನ್ನು ಮತ್ತೆ ಮತ್ತೆ ಪ್ರಸ್ತುತಪಡಿಸಿ “ನೋಡಿ, ಇದರಲ್ಲಿ ದೇಶವಿರೋಧಿ ಘೋಷಣೆ ಏನಿದೆ? ಪಾಕ್ ಪರ ಘೋಷಣೆ ಇದರಲ್ಲಿ ಇಲ್ಲ. ಅಫ್ಜಲ್ ಗುರು ಬಗ್ಗೆ ಭಾಷಣದಲ್ಲಿ ಉಲ್ಲೇಖವೇ ಇಲ್ಲ” ಎಂಬಂತಹ ಮಾತುಗಳನ್ನು ಆಡುತ್ತಿದ್ದಾರೆ. ಇದು ಬಹಳ ಅಪಾಯಕಾರಿಯಾದ ವಾದ. ಅಂತಹ ಪ್ರತಿಪಾದನೆಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಯನ್ನು ಕುಗ್ಗಿಸುವ ಬಲಪಂಥೀಯರ ಪಿತೂರಿಗೆ ಇಂಬು ಕೊಟ್ಟಂತೆ. ಜೆ.ಎನ್.ಯು ಹೋರಾಟ ಬಲಪಂಥೀಯರನ್ನು ಹಿಮ್ಮೆಟ್ಟುವ ವಿಚಾರದಲ್ಲಿ ತಕ್ಕ ಮಟ್ಟಿಗೆABVP ಯಶಸ್ವಿಯಾಗಬಹುದು. ಆದರೆ ಪ್ರತ್ಯೇಕತೆಯ ಬಗ್ಗೆ ಅಥವಾ ಘೋಷಣೆಯಂತಹ ಕ್ಷುಲ್ಲಕ ವಿಚಾರಗಳಲ್ಲಿ ಬಲಪಂಥೀಯ ಸಂಘಟನೆಗಳು ನಿರ್ಣಯಿಸಿರುವ ಕುತ್ಸಿತ ಸ್ವರೂಪದ ರಾಷ್ಟ್ರೀಯತೆಯ ವ್ಯಾಖ್ಯಾನಗಳಿಗೆ ಮಾನ್ಯತೆ ದೊರತಂತೆ ಕಾಣುತ್ತದೆ. ಇದು ಆತಂಕದ ವಿಚಾರ. ನಾವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅದರ ಪೂರ್ಣ ಸಾಂವಿಧಾನಿಕ ನೆಲೆಯಲ್ಲಿ ಸಾಕ್ಷತ್ಕರಿಸುವ ದಿಶೆಯಲ್ಲಿ ಕಾರ್ಯಶೀಲರಾಗುವುದು ಅವಶ್ಯ. ಅದನ್ನು ಹರಣಮಾಡುವ, ಮಿತಿಗೊಳಿಸುವ ಪ್ರತಿಗಾಮಿಗಳ ಟ್ರ್ಯಾಪ್ ಗೆ ಬೀಳಲೇಬಾರದು. ಯಾವುದೇ ದೇಶದಲ್ಲಿ ಆ ದೇಶದ ಪ್ರಭುತ್ವ ಜೀವ ವಿರೋಧಿಯಾಗಿ ವರ್ತಿಸಿದಾಗ ಅದನ್ನು ಪ್ರಶ್ನಿಸುವ, ಅದರ ವಿರುದ್ಧ ಗಟ್ಟಿ ದ್ವನಿಯಲ್ಲಿ ಮಾತನಾಡುವ ಸ್ವಾತಂತ್ರ್ಯ ಇರಲೇಬೇಕು. ಕಾಶ್ಮೀರ ಸ್ವಾತಂತ್ರ್ಯವಾಗಬೇಕು ಎಂಬಂಥ ಅಹಿಸಾತ್ಮಕ ಘೋಷಣೆಗಳು ಅಥವಾ ಅಂತಹ ವಿಚಾರದ ಕುರಿತಾದ ಕಮ್ಮಟ, ಶಿಬಿರ ಹಾಗೂ ಚರ್ಚಾಕೂಟಗಳು ಕೂಡಾ ಸದ್ಯದ ಕಾನೂನುಗಳ ಪ್ರಕಾರ ದೇಶವಿರೋಧಿ ಆಗೋದಿಲ್ಲ. ಪ್ರಜಾಪ್ರಭುತ್ವದಲ್ಲಿ ಭಿನ್ನ ಮತೀಯರಿಗೆ ನಿರ್ಭೀತ ಅವಕಾಶ ಸಹಜವಾಗಿಯೇ ಇರುತ್ತದೆ. ಮುಕ್ತ ಸಮಾಜಗಳು ಅಹಿಂಸಾತ್ಮಕ ಪ್ರತ್ಯೇಕತಾವಾದಿಗಳನ್ನು ಜೈಲಿಗೆ ಹಾಕುವುದಿಲ್ಲ (Free societies do not jail non-violent secessionists) ಎಂದು ಖ್ಯಾತ ಅರ್ಥ ಶಾಸ್ತ್ರಜ್ಞ ಮತ್ತು ಚಿಂತಕ ಸ್ವಾಮಿನಾಥನ್ ಅಯ್ಯರ್ ಅಭಿಪ್ರಾಯ ಪಡುತ್ತಾರೆ. ಅಂತಹ ಮುಕ್ತ ಸಮಾಜದ ನಿರ್ಮಾಣಕ್ಕೆ ನಾವು ತುಡಿಯಬೇಕು. ಇಲ್ಲವಾದಲ್ಲಿ ಮುಂದೆ ಕಾಶ್ಮೀರದ ಬಗ್ಗೆ ಮಾತಾಡುವ ಪ್ರತಿಯೊಬ್ಬ ಚಿಂತಕನೂ ದೇಶದ್ರೋಹದ ಅಪಾದನೆಯ ಅಡಿಯಲ್ಲಿ, ಪ್ರಭುತ್ವದ ಕೈಯಲ್ಲಿ ಬಂಧಿಯಾಗುವ ಅಪಾಯವಿರುತ್ತದೆ. ಮತ್ತು ಅಂತಹ ಸಂದರ್ಭದಲ್ಲಿ ಇಂದಿನ ನಮ್ಮ ವರ್ತನೆ ವಿರೋಧಾಭಾಸವಾಗಿ ಅಂದು ನಮ್ಮನ್ನು ಭೂತದಂತೆ ಕಾಡುತ್ತದೆ.

 

ಉಮರ್ ಖಾಲಿದ್ ಭಾಷಣದ ಬರಹ ರೂಪ

Naveen Soorinje


-ಅನುವಾದ : ನವೀನ್ ಸೂರಿಂಜೆ


 

 

ಲಾಲ್ ಸಲಾಂ, ಲಾಲ್ ಸಲಾಂ, ವೀರ್ ಸೆಲ್ಯೂಟ್, ರೆಡ್ ಸೆಲ್ಯೂಟ್, ರೆಡ್ ಸೆಲ್ಯೂಟ್ ಟು ಕಾಮ್ರೇಡ್ ಎಂದು ವಿದ್ಯಾರ್ಥಿಗಳ ಭಾರೀ ಉದ್ಘೋಷದ ಜೊತೆ ದೇಶದ್ರೋಹಿ ಆರೋಪ ಹೊತ್ತ ಜೆ ಎನ್ ಯು ವಿದ್ಯಾರ್ಥಿ ಉಮ್ಮರ್ ಖಾಲಿದ್ ಮಾತನಾಡುತ್ತಿದ್ದಾರೆ. ಕೇಳಿ.

ಸ್ನೇಹಿತರೇ,

ನನ್ನ ಹೆಸರು ಉಮರ್ ಖಾಲಿದ್. ಆದರೆ ನಾನು ಭಯೋತ್ಪಾದಕ ಅಲ್ಲ.

ಮೊದಲನೆಯದಾಗಿ ಈ ಹೋರಾಟದಲ್ಲಿ ಭಾಗವಹಿಸಿದ ಮತ್ತು ವಿದ್ಯಾರ್ಥಿಗಳಾದ ನಮಗೆ ಬೆಂಬಲವನ್ನು ನೀಡಿದ ಪ್ರತಿಯೊಬ್ಬ ಜೆಎನ್ ಯು ಪ್ರಾಧ್ಯಾಪಕರಿಗೆ ಧನ್ಯವಾದ ಹೇಳ ಬಯಸುತ್ತೇನೆ. ಈ ಹೋರಾಟ ಕೇವಲ ನಮ್ಮ ನಾಲ್ಕೈದು ಜನರದ್ದಾಗಿರಲಿಲ್ಲ. ಈ ಹೋರಾಟ ನಮ್ಮೆಲ್ಲರ ಹೋರಾಟವಾಗಿದೆ. ಈ ಹೋರಾಟ ಕೇವಲ ಈ ಜೆಎನ್ ಯು ವಿಶ್ವವಿದ್ಯಾನಿಲಯದ ಹೋರಾಟ ಮಾತ್ರವೇ ಇಲ್ಲ, ಇದೊಂದು ದೇಶದ ಎಲ್ಲಾ ವಿಶ್ವವಿದ್ಯಾನಿಲಯಗಳ ಹೋರಾಟವಾಗಿದೆ. ಅಷ್ಟಕ್ಕೇ ಸೀಮಿತವಾಗದೆ ಇದು ಇಡೀಯ ಸಮಾಜದ ಹೋರಾಟವಾಗಿದೆ. ಮುಂದಿನ ಪೀಳಿಗೆಯ ಸಮಾಜ ಹೇಗಿರಬೇಕೆಂಬುದರ ಸೂಚಕ ಈ ಹೋರಾಟ.

ಗೆಳೆಯರೇ

ಈ ಕೆಲ ದಿನಗಳಲ್ಲಿ ನನ್ನ ಬಗ್ಗೆ ನನಗೇ ಗೊತ್ತಿಲ್ಲದ ಹಲವಾರು ವಿಷಯಗಳನ್ನು ತಿಳಿದುಕೊಂಡೆ. ನಾನು ಎರಡು ಬಾರಿ ಪಾಕಿಸ್ತಾನ ಹೋಗಿ ಬಂದಿದ್ದೇನೆ ಎಂದು ನನಗೇ ಇತ್ತಿಚೆಗೆೆ ತಿಳಿಯಿತು. ನನ್ನ ಬಳಿ ಪಾಸ್ ಪೋರ್ಟೇ ಇಲ್ಲ. ಹಾಗಿದ್ದರೂ ನಾನು ಪಾಕಿಸ್ತಾನ ಹೋಗಿ ಬಂದೆ ಎಂಬುದು ನನಗೇ ಆಶ್ಚರ್ಯ ತರುವ ವಿಚಾರ. ನನಗೆ ಆನಂತರ ಮತ್ತೊಂದು ವಿಚಾರವೂ ತಿಳಿಯಿತು. ನಾನು ಮಾಸ್ಟರ್ ಮೈಂಡ್ ಎಂದು. ಜೆಎನ್ ಯು ವಿದ್ಯಾರ್ಥಿಗಳೇ ವಂಡರಫುಲ್ ಮೈಂಡ್ ಇರುವವರು. ಅವರಲ್ಲೇ ನಾನು ಮಾಸ್ಟರ್ ಮೈಂಡ್. ಇದು ತುಂಬಾ ಚೆನ್ನಾಗಿದೆ. ನಾನು ಇಂತಹ ಕಾರ್ಯಕ್ರಮವನ್ನು ದೇಶದ 70 ರಿಂದ 80 ವಿಶ್ವವಿದ್ಯಾನಿಲಯಗಳಲ್ಲಿ ಆಯೋಜಿಸಲು ಪ್ಲ್ಯಾನ್ ಮಾಡಿದ್ದೆನಂತೆ. ನಿಜವಾಗಲೂ ನನ್ನ ಲೀಡರ್ ಶಿಫ್ ಇಷ್ಟೊಂದು ವಿಸ್ತಾರವಾಗಿ ಬೆಳೆದಿದ್ದು ನನಗೇ ಗೊತ್ತಿರಲಿಲ್ಲ. ಈ ಕಾರ್ಯಕ್ರಮ ಆಯೋಜಿಸಲು ನಾವು ನಾಲ್ಕೈದು ತಿಂಗಳು ತಯಾರಿ ಮಾಡಿದ್ದೆವಂತೆ. ಜೆಎನ್ ಯು ನಲ್ಲಿ ಒಂದೊಂದು ಕಾರ್ಯಕ್ರಮ ಸಂಘಟಿಸಲು ಐದು-ಹತ್ತು ತಿಂಗಳು ಪಡೆದುಕೊಂಡರೆ ಜೆಎನ್ ಯು ಕತೆ ಏನಾಗಬಹುದು? ಅದೂ ಇರಲಿ. ನಾನು ಕೆಲ ದಿನಗಳಿಂದ 800 ಕರೆಗಳನ್ನು ಮಾಡಿದ್ದೇನಂತೆ. ಈ ಮಾಧ್ಯಮಗಳಿಗೆ ಯಾವ ನಾಚಿಕೆಯೂ ಇಲ್ಲ. ಸುದ್ದಿ ಪ್ರಸಾರಕ್ಕೆ ಮುನ್ನ ದಾಖಲೆಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ. ಯಾವುದೇ ದಾಖಲೆಯಿಲ್ಲದೆ, ಸತ್ಯಾಂಶವಿಲ್ಲದ ಸುದ್ದಿಗಳನ್ನು ಮಾಡಿದ್ರು. ನನಗೆ ಜೈಶ್ ಎ ಮಹಮ್ಮದ್ ಸಂಘಟನೆಯ ಕೈವಾಡ ಇದೆ ಎಂದು ಹೇಳಿದ್ರು. ಅದಕ್ಕೂ ಯಾವುದೇ ದಾಖಲೆ ಇಲ್ಲ. ನನಗೆ ನಿಜಕ್ಕೂ ಆಗ ನಗು ಬಂದಿತ್ತು. ನಿಜವಾಗಿಯೂ ಆ ಸಂಧರ್ಭದಲ್ಲಿ ಜೈಶ್ ಎ ಮಹಮ್ಮದ್ ಸಂಘಟನೆಯವರು ಪ್ರತಿಭಟನೆ ಮಾಡಬೇಕಿತ್ತು. ನನ್ನಂತವನನ್ನು ಅವರ ಸಂಘಟನೆಯವನು ಎಂದು ಹೇಳಿದ್ದಕ್ಕಾದರೂ ಅವರು ಪ್ರತಿಭಟಿಸಬೇಕಿತ್ತು. ಕೊನೆಗೆ ಕೇಂದ್ರ ಸರಕಾರದ ಗುಪ್ತಚರ ಇಲಾಖೆಯೇ ಸ್ಪಷ್ಟಪಡಿಸಿ, ಜೈಶ್ ಎ ಮಹಮ್ಮದ್ ಸಂಘಟನೆಗೂ ಈ ಹೋರಾಟಕ್ಕೂ ಸಂಬಂಧ ಇಲ್ಲ ಎಂದು ಹೇಳಿದರೂ ಮಾಧ್ಯಮಗಳು ಕ್ಷಮೆ ಕೇಳಲಿಲ್ಲ. ಈ ಮೀಡಿಯಾಗಳು ನಮ್ಮನ್ನು ಮೂರ್ಖರನ್ನಾಗಿಸುತ್ತಿವೆ. ಮೀಡಿಯಾಗಳು ಪೂರ್ವನಿರ್ಧರಿತವಾಗಿ ನಮ್ಮನ್ನು ಮಿಡಿಯಾ ಟ್ರಯಲ್ ಗೆ ಒಳಪಡಿಸಿದ್ವು. ಯಾವ ನಾಚಿಕೆಯೂ ಇಲ್ಲದೆ ವರ್ತಿಸಿದ್ರು.

ಮಾಧ್ಯಮಗಳ ಈ ರೀತಿಯ ವರ್ತನೆ ಇದೇ ಮೊದಲಲ್ಲ. ಅವುಗಳು ಏನು ಮಾಡಿದ್ರೂ ನಡೀತದೆ ಅಂದುಕೊಂಡಿದ್ದಾರೆ. ಮುಸ್ಲೀಮರನ್ನು ಭಯೋತ್ಪಾದಕರನ್ನಾಗಿಯೂ, ಆದಿವಾಸಿಗಳನ್ನು ನಕ್ಸಲರನ್ನಾಗಿಯೂ ಚಿತ್ರಿಸಿ ಅವರಿಗೆ ಅಭ್ಯಾಸವಾಗಿ ಬಿಟ್ಟಿದೆ. ಆದರೆ ಈ ಬಾರಿ ನೀವು ತಪ್ಪು ಜನರಿಗೆ ತಗಳ್ಳಾಕ್ಕೊಂಡಿದ್ದೀರಿ. ನಾವು ಪ್ರತೀ ಚಾನೆಲ್ ಗಳು ನಮ್ಮ ಬಗ್ಗೆ ಮಾಡಿದ ಸುದ್ದಿಗೆ ವಿವರಣೆ ನೀಡುವಂತಹ ಸಂಧರ್ಭ ಸೃಷ್ಠಿ ಮಾಡುತ್ತೇವೆ.

ಈ ಪ್ರಕರಣ ಈ ರೀತಿ ಸುದ್ದಿಯಾದ ನಂತರ ನಂತರ ನನ್ನ ತಂಗಿ, ತಂದೆಗೆ ಬೆದರಿಕೆ ಒಡ್ಡಲಾಯ್ತು. ತಂಗಿಗೆ ಅತ್ಯಾಚಾರದ ಬೆದರಿಕೆ ಒಡ್ಡಲಾಯ್ತು. ಕೊಲೆ ಬೆದರಿಕೆಯನ್ನೂ ನೀಡಲಾಯ್ತು. ಈ ಜನಗಳು ಏನೂ ಮಾಡಲೂ ಹೇಸದವರು. ತಂಗಿಗೆ ಅತ್ಯಾಚಾರದ ಬೆದರಿಕೆ ನೀಡಿದ ಈ ದೇಶಪ್ರೇಮಿಗಳ ಕಂದಮಾಲ್ ಘಟನೆ ಆ ಸಂಧರ್ಭ ನನಗೆ ನೆನಪಿಗೆ ಬಂದಿತ್ತು. ನಿಮಗೂ ನೆನಪಿರಬಹುದು. ಕಂದಮಾಲ್ ನಲ್ಲಿ ಭಜರಂಗದಳದವರು ಕ್ರಿಶ್ಚಿಯನ್ ಸನ್ಯಾಸಿನಿ ಮೇಲೆ ಅತ್ಯಾಚಾರ ಮಾಡಿ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದರು. ಆದುದರಿಂದ ನನಗೆ ತಂಗಿಯ ಬಗ್ಗೆ ಆತಂಕ ಉಂಟಾಗಿತ್ತು. ಇವರು ಅತ್ಯಾಚಾರ ಮಾಡಿಯೂ ಭಾರತ ಮಾತೆಗೆ ಜೈ ಎನ್ನುವವರು. ಇಂತಹ ಮಾತೆ ನಮಗೆ ಬೇಕಾಗಿಲ್ಲ. ಇಂತಹ ಮಾತೆ ನಮ್ಮದಲ್ಲ.

ನನ್ನ ತಂದೆಯನ್ನು ಕೆಲವು ಮಾಧ್ಯಮಗಳು ಮಾತನಾಡಿಸಿದ್ವು. ಅದನ್ನು ಸಂದರ್ಶನ ಅನ್ನೋದಕ್ಕಿಂತ ಮಾಧ್ಯಮಗಳ ವಿಚಾರಣೆ ಅನ್ನಬಹುದು. ನಮ್ಮಲ್ಲಿ ಕೆಲವು ಪತ್ರಕರ್ತರಿದ್ದಾರೆ. ಟೈಮ್ಸ್ ನೌ ನಲ್ಲಿ ಒಬ್ಬ ಪತ್ರಕರ್ತ ಇದ್ದಾರೆ. ಅವರ ಹೆಸರು ಹೇಳಲು ನಾನು ಬಯಸೋದಿಲ್ಲ. ಈ ಪತ್ರಕರ್ತರಿಗೆಲ್ಲಾ ನಮ್ಮ ವಿಚಾರದಲ್ಲಿ ಇಷ್ಟೊಂದು ಕೋಪ ಯಾಕೆ ಎಲ್ಲಿಂದ ಬರುತ್ತದೆ ಎಂಬುದೇ ಗೊತ್ತಾಗ್ತಾ ಇಲ್ಲ. ಆ ರೀತಿಯಲ್ಲಿ ಮಾಧ್ಯಮಗಳ ಕೋರ್ಟ್ ನಡೆಸಿದ್ವು.

ಒಂದು ವಿಷಯವನ್ನು ನಾನಿಲ್ಲಿ ಹೇಳಲೇ ಬೇಕು. ಕಳೆದ ಆರು ವರ್ಷಗಳಿಂದ ಈ ಕ್ಯಾಂಪಸ್ಸಿನಲ್ಲಿ ವಿದ್ಯಾರ್ಥಿ ರಾಜಕಾರಣವನ್ನು ಮಾಡಿಕೊಂಡು ಬಂದಿದ್ದೇನೆ. ನಾನು ಇಲ್ಲಿಯವರೆಗೂ ನನ್ನನ್ನು ನಾನು ಮುಸ್ಲೀಮನೆಂದು ಅಂದುಕೊಂಡಿಲ್ಲ. ಈ ಸಮಾಜದಲ್ಲಿ ಮುಸ್ಲೀಮರು ಮಾತ್ರ ದಮನಕ್ಕೊಳಗಾಗ್ತಿಲ್ಲ. ಆದಿವಾಸಿಗಳು, ದಲಿತರು ಈ ಸಮಾಜದ ಶೋಷಿತರಾಗಿದ್ದಾರೆ. ನಾನು ಇವರೆಲ್ಲರ ಪರವಾಗಿ ಹೋರಾಟ ಮಾಡಿದ್ದೇನೆ. ದಲಿತರು, ಆದಿವಾಸಿಗಳು, ಶೋಷಿತರ ಪರವಾಗಿ ಮಾತನಾಡಿದಷ್ಟೇ ಶೋಷಿತ ಮುಸ್ಲೀಮರ ಪರವಾಗಿ ಮಾತನಾಡಿದ್ದೇನೆ. ಆದರೆ ಕಳೆದ ಹತ್ತು ದಿನಗಳಿಂದ ನಾನು ಮುಸ್ಲೀಂ ಎಂದು ನನಗೆ ಗೊತ್ತಾಯಿತು. ಈ ಮಾಧ್ಯಮಗಳಿಗೆ ನಾಚಿಕೆಯಾಗಬೇಕು.

ನಾನು ಪಾಕಿಸ್ತಾನಿ ಏಂಜೆಂಟ್ ಅಂತ ಹೇಳಿದ್ರು. ಈ ಸಂಧರ್ಭದಲ್ಲಿ ನನಗೆ ಒಂದು ಶಾಹಿರಿ ನೆನಪಾಗ್ತಿದೆ.

ಹಿಂದೂಸ್ತಾನವೂ ನನ್ನದೇ,
ಪಾಕಿಸ್ತಾನವೂ ನನ್ನದೇ….
ಹಿಂದೂಸ್ತಾನ ಪಾಕಿಸ್ತಾನದಲ್ಲಿ ಅಮೇರಿಕಾ ಟೆಂಟ್ ಹಾಕಲು ಬಯಸುತ್ತಿದೆ.
ನೀವೆಲ್ಲರೂ ಆ ಅಮೇರಿಕಾದ ಏಜೆಂಟರು.

ನಮ್ಮ ಸರಕಾರ ಕೂಡಾ ಅಮೇರಿಕಾದ ಏಜೆಂಟರಂತೆ ವರ್ತಿಸುತ್ತಿದೆ. ಮಲ್ಟಿ ನ್ಯಾಶನಲ್ ಕಂಪನಿಗಳಿಗೆ ಜನ ಪೂರೈಸೋ ಕೆಲಸವನ್ನು ಸರಕಾರ ಮಾಡುತ್ತಿದೆ. ಅದಕ್ಕಾಗಿ ಶಿಕ್ಷಣವನ್ನು ಸರಕಾರ ಮಾರಿದೆ. ಅದನ್ನು ಪ್ರಶ್ನಿಸಿದ್ರೆ ನಾವು ದೇಶದ್ರೋಹಿಗಳಾಗ್ತಿವೆ. ಈಗ ನಾವು ನೀವೆಲ್ಲಾ ದೇಶದ್ರೋಹಿಗಳು. ಜನರನ್ನು ಅಗಾಧವಾಗಿ ಪ್ರೀತಿಸುವ ನಾವುಗಳು ದೇಶದ್ರೋಹಿಗಳು. ನಮ್ಮ ಪ್ರೀತಿಗೆ ಗಡಿಗಳು ಇಲ್ಲ. ಈ ದೇಶ ಮಾತ್ರ ಅಲ್ಲ. ಇಡೀನ ಜಗತ್ತಿನ ಜನರನ್ನು ನಾವು ಪ್ರೀತಿಸುತ್ತೇವೆ. ನಾನು ಈ ನ್ಯಾಶನಿಲಿಸಂ ಅನ್ನು ನಂಬೋದಿಲ್ಲ. ಭಾರತದ ನ್ಯಾಶನಲಿಸಂ ಮಾತ್ರವಲ್ಲ. ಅಮೇರಿಕಾ ಸೇರಿದಂತೆ ಯಾವುದೇ ದೇಶದ ನ್ಯಾಶನಲಿಸಂ ಅನ್ನು ನಾನು ಒಪ್ಪೋದಿಲ್ಲ. ಇಡೀ ವಿಶ್ವವೇ ನಮ್ಮದು. ವಿಶ್ವದ ಎಲ್ಲರೂ ನಮ್ಮವರು.

ನಾವು ಈ ಜನರಿಗೆಲ್ಲಾ ಹೆದರಬೇಕಿಲ್ಲ. ಅವರ ಬಳಿ ಬಹುಮತ ಇರಬಹುದು. ಮೀಡಿಯಾಗಳೂ, ಪೊಲೀಸರೂ ಇರಬಹುದು. ಆದರೆ ಅವರು ಹೆದರುಪುಕ್ಕಲರು. ಅವರು ನಮ್ಮ ಜನರಿಗೆ ಹೆದರುತ್ತಾರೆ. ಆವರು ನಮ್ಮ ಹೋರಾಟಗಳಿಗೆ ಹೆದರುತ್ತಾರೆ. ಅದಕ್ಕಾಗಿಯೇ ನೀವು ಜನರ ಪರವಾಗಿ ಯೋಚಿಸಲು ಶುರು ಮಾಡಿದ್ರೆ ನಿಮ್ಮನ್ನು ದೇಶದ್ರೋಹಿ ಎನ್ನುವ ಮೂಲಕ ಹೆದರಿಸಲಾಗ್ತಿದೆ.

ನಮ್ಮ ಜನರಿಗೆ ಹೆದರಿಯೇ ಈ ಜನರು ಹಲವು ವಿಶ್ವವಿದ್ಯಾನಿಲಯಗಳಿಗೆ ತೆರಳಿ ಗಲಭೆ ಎಬ್ಬಿಸಲು ಯಶಸ್ವಿಯಾದ್ರು. ಆದರೆ ಈ ವಿದ್ವವಿದ್ಯಾಲಯಕ್ಕೆ ಮಾತ್ರ ತಪ್ಪಾಗಿ ಬಂದ್ರಿ. ಇಲ್ಲಿ ನಿಮ್ಮ ಆಟ ನಡೆಯಲ್ಲ.

ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ರೋಹಿತ್ ವೆಮೂಲ ಹತ್ಯೆಯಾಯ್ತು. ಬನರಾಸ್ ವಿಶ್ವವಿದ್ಯಾನಿಲಯದಲ್ಲಿ ಸಂದೀಪ್ ಪಾಂಡೆ ಮೇಲೆ ದೌರ್ಜನ್ಯವಾಯಿತು. ಅ ಸಂಧರ್ಭದಲ್ಲಿ ನಡೆದ ಪ್ರತೀ ಹೋರಾಟದಲ್ಲಿ ಜೆ ಎನ್ ಯು ವಿದ್ಯಾರ್ಥಿಗಳು ಹೆಗಲು ಕೊಟ್ಟು ಸಾಥ್ ನೀಡಿದ್ದೇವೆ. ಅದು ನಮ್ಮ ಜವಾಬ್ದಾರಿ ಕೂಡಾ. ನೀವೇನಾದ್ರೂ ಜೆಎನ್ ಯು ವನ್ನು ಮುಗಿಸುತ್ತೇವೆ ಎಂದು ಒಂದಿರೋದಾದ್ರೆ ಒಂದಂತೂ ತಿಳಿದುಕೊಳ್ಳಿ. ಈ ಹಿಂದೆಯೂ ಈ ರೀತಿ ಯೋಚನೆ ಇಟ್ಟುಕೊಂಡು ತುಂಬಾ ಜನ ಇಲ್ಲಿಗೆ ಬಂದಿದ್ದರು. ಅಂತಹ ಹಲವು ಪ್ರಯತ್ನಗಳಾಗಿತ್ತು. ಅದನ್ನು ಅಷ್ಟೇ ನಾಜೂಕಾಗಿ ನಾವು ನಿಭಾಯಿಸಿ ನಾವು ಗೆದ್ದಿದ್ದೇವೆ.

ಬಹುಶಃ ನೀವು ಇಂದಿರಾಗಾಂಧಿಯನ್ನು ಮರೆತಿದ್ದೀರಿ. ತುರ್ತು ಪರಿಸ್ಥಿತಿ ನಂತರ ಅವರು ಜೆ ಎನ್ ಯು ಕಡೆಗೆ ಬಂದಿದ್ದರು. ನಾವು ಅವರನ್ನು ಬರಲು ಬಿಟ್ಟಿರಲಿಲ್ಲ. ನಂತರ ನೀವು ಮನಮೋಹನ ಸಿಂಗ್ ರನ್ನೂ ಮರೆತಿದ್ದೀರಿ. ದೇಶವನ್ನು ಮಾರಾಟ ಮಾಡಲು ಹೊರಟ ಮನಮೋಹನ ಸಿಂಗ್ ಇಲ್ಲಿಗೆ ಬಂದಾಗ ಅವರಿಗೂ ಕಪ್ಪು ಬಾವುಟ ತೋರಿಸಿದ್ವಿ. ನಂತರ ಚಿದಂಬರಂ ಬಂದ್ರು. ಆಗ ಇಲ್ಲಿನ ವಿದ್ಯಾರ್ಥಿಗಳು ಚಿದಂಬರಂ ಅನ್ನು ಸ್ವಾಗತ ಮಾಡ್ತಾರೆ ಅಂದುಕೊಂಡಿದ್ರು. ಆದರೆ ಇಲ್ಲಿನ ವಿದ್ಯಾರ್ಥಿಗಳು ಯಾರ ಜೊತೆ ಇರ್ತೀವಿ ಎಂಬುದನ್ನು ತೋರಿಸಿಕೊಟ್ಟರು. ಇಲ್ಲಿನ ವಿದ್ಯಾರ್ಥಿಗಳು ಯಾವತ್ತೂ ಶೋಷಿತ ಜನರ ಜೊತೆ ಇರ್ತಾರೆ. ಈಗಿನ ಸರಕಾರ ನಾವು ಹೆದರುತ್ತೇವೆಯೋ ಎಂದು ಪರೀಕ್ಷೆ ಮಾಡುತ್ತಿದೆ. ನಾವು ಹೆದರುವುದಿಲ್ಲ. ನಾವು ಸಂಘರ್ಷ ಮಾಡುತ್ತೇವೆ.

ಗೆಳೆಯರೇ,

ನಾವು ಈ ಜನಗಳಿಗೆಲ್ಲಾ ಹೆದರುವ ಅಗತ್ಯವೇ ಇಲ್ಲ. ಈ ಕ್ಯಾಂಪಸ್ಸಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಎಂಬ ವಾನರ ಸೇನೆ ಇದೆ. ಇಲ್ಲೂ ಕೂಡಾ ಹೈದರಾಬಾದ್ ನ ದತ್ತಾತ್ರೆಯ ರೀತಿಯವರು ಇದ್ದಾರೆ. ಆದರೆ ಇಲ್ಲಿ ಮತ್ತೊಬ್ಬ ರೋಹಿತನನ್ನು ನಾವು ನಿಮ್ಮ ಕೈಗೆ ಕೊಡೋದಿಲ್ಲ ಎಂದು ಸ್ಪಷ್ಟಪಡಿಸುತ್ತೇವೆ. ನಾವು ಸಂಘರ್ಷಕ್ಕೆ ಸಿದ್ದರಿದ್ದೇವೆ. ರೋಹಿತನ ಸಾವಿಗೆ ಉತ್ತರ ಕೊಡಲು ಸಿದ್ದರಿದ್ದೇವೆ.

ಅವರಿಗೆ ಜನರ ಬಳಿ ಹೋಗಿ ಸಂಘಟನೆ ಮಾಡಲು ಆಗುವುದಿಲ್ಲ. ಅವರೇನಿದ್ದರೂ ಮಧ್ಯಮಗಳನ್ನು ಬಳಸಿಕೊಂಡು ದೇಶಪ್ರೇಮ ಉಕ್ಕುವಂತೆ ಮಾಡುತ್ತಾರೆ. ಅಷ್ಟೊಂದು ಮಾಧ್ಯಮಗಳನ್ನು ಬಳಸಿಯೂ ಅವರು ಸಾವಿರ ಜನ ಸೇರಿಸಲು ಕಷ್ಟಪಟ್ಟರು. ಆದರೆ ಇಲ್ಲಿ ನಮ್ಮವರು 15 ಸಾವಿರಕ್ಕೂ ಮಿಕ್ಕಿ ಜಮಾವಣೆಗೊಂಡರು. ಆದರೆ ಚೀ ನ್ಯೂಸ್ ಮಾತ್ರ ಸುಳ್ಳೇ ಸುದ್ದಿ ಪ್ರಸಾರ ಮಾಡ್ತು. ನಾಚಿಗೆ ಇಲ್ಲದೆ ಸುಳ್ಳು ಹೇಳ್ತಾರೆ ಈ ಜನಗಳು.

ಜೆ ಎನ್ ಯು ನಲ್ಲಿ ಅವರು ನಡೆಸಿದ ದೌರ್ಜನ್ಯಕಾರಿ ತಂತ್ರಗಾರಿಕೆಯನ್ನು ಬೇರೆಡೆಯಲ್ಲೂ ಯಶಸ್ವಿಯಾಗಿ ಮಾಡಿದ್ದಾರೆ. ಈ ರೀತಿಯ ತಂತ್ರಗಾರಿಕೆ ನಮ್ಮಲ್ಲಿ ನಡೆಯಲ್ಲ. ಇದೇ ರೀತಿಯ ದೌರ್ಜನ್ಯವನ್ನು ಹೋಂಡಾ ಕಾರ್ಮಿಕರ ಮೇಲೆ, ಸೋನಿ ಸೋರಿ ಆದಿವಾಸಿ ಮೇಲೆ ಪ್ರಯೋಗಿಸಿದ್ರು. ಇವೆಲ್ಲವನ್ನೂ ನೋಡಿದ್ರೆ ಇದು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಹೋರಾಟ ಮಾತ್ರವಲ್ಲ. ಈ ಹೋರಾಟವು ಇಡೀ ದೇಶದ ಹೋರಾಟವನ್ನು ಸಂಧಿಸಬೇಕು.

ಧನ್ಯವಾದಗಳು
ಇಂಕ್ವಿಲಾಬ್ ಜಿಂದಾಬಾದ್

ಸಂಘಪರಿವಾರದ ರಕ್ತಸಿಕ್ತ ಅಧ್ಯಾಯದಲ್ಲಿ ಬಿಲ್ಲವರ ಸರತಿಯಲ್ಲಿ ಬಂಟರು

Naveen Soorinje


– ನವೀನ್ ಸೂರಿಂಜೆ


 

 

ಜತೆಗೆ ಆಟವಾಡಿ ಬಂದ ಸಮೀಯುಲ್ಲಾನನ್ನು ಹಿಂದೂ ಕೋಮುವಾದಿಗಳಿಂದ ರಕ್ಷಿಸಲು ಹೊರಟ ಹರೀಶ್ ಪೂಜಾರಿ ಬಲಿಯಾಗಿದ್ದಾನೆ. ಹಿಂದುತ್ವ ಸಂಘಟನೆಯ ಪದಾಧಿಕಾರಿಯಾಗಿರೋ ಭುವಿತ್ ಶೆಟ್ಟಿ ಮತ್ತು ಅಚ್ಯುತ ಮುಂತಾದ ಏಳು ಮಂದಿಯ ತಂಡ ಹರೀಶ್ ಪೂಜಾರಿ ಕೊಲೆಯನ್ನೂ ಸಮೀಯುಲ್ಲಾನ ಕೊಲೆಯತ್ನವನ್ನೂ ಮಾಡಿದೆ ಎಂದು ಪೊಲೀಸರು ಕೇಸು ದಾಖಲಿಸಿ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಕೋಮುವಾದಿಗಳ ರಕ್ಕಸ ನಗೆಯ ಮಧ್ಯೆಯೂ ಹರೀಶ್ ಸಮೀಯುಲ್ಲಾನಂತಹ ಮಲಿನಗೊಳ್ಳದ ಮನಸ್ಸುಗಳು ಜಿಲ್ಲೆಯಲ್ಲಿದೆ ಎಂಬುದೇ ಸಮಾದಾನವಾಗಿದ್ದರೆ, ಆರ್.ಎಸ್.ಎಸ್ ಜಾತಿ ಲೆಕ್ಕಾಚಾರದಲ್ಲಿ ಕೋಮು ಕ್ರಿಮಿನಲ್ ಗಳನ್ನು ಸೃಷ್ಠಿಸುತ್ತಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ. ಈವರೆಗೂ ಹಿಂದುಳಿದ ಜಾತಿಗಳಾದ ಬಿಲ್ಲವರನ್ನು ಕೊಲೆಗಳಿಗೆ ಬಳಸುತ್ತಿದ್ದ ಆರ್.ಎಸ್.ಎಸ್ ಇದೀಗ ಬಲಿಷ್ಠ ಮತ್ತು ಬಲಿತ ಹಿಂದುಳಿದ ವರ್ಗವಾಗಿರುವ ಬಂಟರನ್ನೂ ಸಹ ಬಳಸಲು ಶುರು ಮಾಡಿದೆ. ಇದರ ಹಿಂದೆ ಆರ್.ಎಸ್.ಎಸ್ ನ ವ್ಯವಸ್ಥಿತ ಅಜೆಂಡಾ ಕೆಲಸ ಮಾಡಿದೆ. ಇದನ್ನು ತಡೆಯದೇ ಇದ್ದಲ್ಲಿ ಬಂಟರ ಸಮಾಜ ಮತ್ತು ಜಿಲ್ಲೆ ಮುಂಬರುವ ದಿನಗಳಲ್ಲಿ ಭಾರೀ ದಂಡ ತೆರಬೇಕಾಗುತ್ತದೆ.

ನಿನ್ನೆ ಮೊನ್ನೆಯವರೆಗೆ ಆರ್.ಎಸ್.ಎಸ್ ಬಿಲ್ಲವರನ್ನಷ್ಟೇ ಕೋಮುಗಲಭೆಗಳಿಗೆ ಬಳಕೆ ಮಾಡಿ ಜೈಲಿಗೆ ಕಳುಹಿಸುತ್ತಿತ್ತು.bhajarangadal  ಅಮ್ನೇಶಿಯಾ ಪಬ್ ನಲ್ಲಿ ಯುವತಿಯ ಮೇಲೆ ಶ್ರೀರಾಮಸೇನೆ ದಾಳಿ ನಡೆಸಿತು. ಬಂಧಿತ 25 ಆರೋಪಿಗಳಲ್ಲಿ ಎಲ್ಲರೂ ಹಿಂದುಳಿದ ವರ್ಗಗಳಿಗೆ ಸೇರಿದವರು. ಬಹುತೇಕ ಬಿಲ್ಲವರು. ನಂತರ ಹಲವಾರು ಕೋಮುಗಲಭೆಗಳು, ನೈತಿಕ ಪೊಲೀಸ್ ಗಿರಿಗಳು ನಡೆದವು. ದನ ಸಾಗಾಟಗಾರರ ಮೇಲೆ ಹಲ್ಲೆಗಳು ನಡೆದವು. ಆ ಹಲ್ಲೆಗಳಲ್ಲಿ ಕೋಮುಗಲಭೆಗಳಲ್ಲಿ ಒಂದೇ ಒಂದು ಜನಿವಾರಧಾರಿ ಆರೋಪಿ ಇರಲಿಲ್ಲ. ನಂತರ ಇಡೀ ರಾಷ್ಟ್ರವನ್ನು ಬೆಚ್ಚಿ ಬೀಳಿಸಿದ ಹೋಂ ಸ್ಟೇ ದಾಳಿಯಲ್ಲಿ ಹಿಂದೂ ಸಂಘಟನೆಯ 41 ಕಾರ್ಯಕರ್ತರನ್ನು ಬಂಧಿತರಾಗಿದ್ದರು. ಅದರಲ್ಲೂ ಸಹ ಬಹತೇಕ ಬಿಲ್ಲವರು ಮತ್ತು ಸಣ್ಣಪುಟ್ಟ ಜಾತಿಗಳವರು. ಈಗಲೂ ಮಂಗಳೂರು ಜೈಲಿನ ಬಿ ಬ್ಲಾಕ್ ನಲ್ಲಿ ಇರುವ ಕೋಮುಗಲಭೆಯ ಆರೋಪಿಗಳನ್ನು ಮಾತನಾಡಿಸಿದ್ರೆ ಅದರಲ್ಲಿ ಒಬ್ಬನೇ ಒಬ್ಬ ಜನಿವಾರಧಾರಿ ಇಲ್ಲ. ಎಲ್ಲರೂ ಹಿಂದುಳಿದ ವರ್ಗಗಳಿಗೇ ಸೇರಿದವರು. ಇನ್ನು ಕೋಮುಗಲಭೆಯಲ್ಲಿ ಸಾವನ್ನಪ್ಪಿದ ಹಿಂದತ್ವವಾದಿಗಳಲ್ಲೂ ಬಹುತೇಕ ಬಿಲ್ಲವರೇ ಆಗಿದ್ದಾರೆ. ಉದಯ ಪೂಜಾರಿ, ಜಗದೀಶ್ ಪೂಜಾರಿ, ಕ್ಯಾಂಡಲ್ ಸಂತು, ಪೊಳಲಿ ಅನಂತು, ಪ್ರಶಾಂತ್ ಪೂಜಾರಿ, ಹರೀಶ್ ಪೂಜಾರಿ, ಪ್ರೇಮ್ ಕೋಟ್ಯಾನ್, ಸುನೀಲ್ ಪೂಜಾರಿ, ಹೇಮಂತ್. ಹೀಗೆ ಬಿಲ್ಲವ ಹೆಸರುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. (ವಿಚಿತ್ರ ಎಂದರೆ ಕೋಮುವಾದಿಗಳ ವಿರುದ್ಧ ನಿಂತು ಸಾವನ್ನಪ್ಪಿದವರೂ ಕೂಡಾ ಬಿಲ್ಲವರೇ. ಹರೀಶ್ ಪೂಜಾರಿ, ಶ್ರೀನಿವಾಸ್ ಬಜಾಲ್, ಭಾಸ್ಕರ ಕುಂಬ್ಳೆ ಈ ರೀತಿ ಬಿಲ್ಲವರೇ ಕೋಮುವಾದಿಗಳಿಗೆ ಎದೆಯೊಡ್ಡಿ ಹುತಾತ್ಮರಾದವರು.) ಹೀಗೆ ಕೊಲೆ-ಕೊಲ್ಲು-ಕೊಲ್ಲಿಸು ಈ ಮೂರಕ್ಕೂ ಸಾಮಾಜಿಕವಾಗಿ ಹಿಂದುಳಿದ ಬಿಲ್ಲವರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಆರ್.ಎಸ್.ಎಸ್ ಇದೀಗ ಬಲಿಷ್ಠ ಮತ್ತು ಬಲಿತ ಹಿಂದುಳಿದ ವರ್ಗವಾಗಿರುವ ಬಂಟರನ್ನು ಬಳಸಿಕೊಳ್ಳಲು ತಂತ್ರಗಾರಿಕೆ ರೂಪಿಸಿದೆ. ಅದರ ಭಾಗವಾಗಿಯೇ ಹರೀಶ್ ಪೂಜಾರಿಯನ್ನು ಕೊಲೆ ಮಾಡಿ ಭುವಿತ್ ಶೆಟ್ಟಿ ಎಂಬ ಬಂಟರ ಹುಡುಗ ಜೈಲುಪಾಲಾಗಿದ್ದಾನೆ.

ಮಂಗಳೂರು ಕೋಮುವಾದದ ಜಗತ್ತಿನಲ್ಲಿ ಈಗ ಬಂಟರು ಫೀಲ್ಡಿಗಿಳಿದಿದ್ದಾರೆ. ಬಿಲ್ಲವರ ರಾಜಕೀಯ ಮುಗ್ದತೆಯನ್ನು ಬಳಸಿಕೊಂಡು ಮೇಲ್ವರ್ಗಗಳು ಬಲಿ ಪಡೆಯುತ್ತಿದ್ದವು. ಆರ್.ಎಸ್.ಎಸ್ ಮತ್ತು ಬಿಜೆಪಿಯಲ್ಲಿ ಬಿಲ್ಲವರಿಗೆ ನಾಯಕತ್ವ ಬೇಕಾಗಿಯೂ ಇರಲಿಲ್ಲ ಮತ್ತು ಅದನ್ನು ಕೊಡಲೂ ಇಲ್ಲ. ಕೇವಲ ಕಾಲಾಳುಗಳಾಗಿ ಸತ್ತರು ಮತ್ತು ಸಾಯಿಸಿ ಜೈಲು ಪಾಲಾದ್ರು. ಆದರೆ ಬಂಟರು ಹಾಗಲ್ಲ. ಸಾಮಾಜಿಕ ಸ್ಥಾನಮಾನಗಳ ಜೊತೆಗೇ ಕೋಮುವಾದಿಗಳ ಜೊತೆ ಸೇರುತ್ತಿದ್ದಾರೆ. ಮುಂಬೈ ಅಂಡರ್ ವಲ್ಡ್ ಪ್ರಾರಂಭವಾಗಿದ್ದೇ ಕರಾವಳಿಯ ಬಂಟರಿಂದ. ಹಾಗಂತ ಅದೇನೂ ಅವರಿಗೆ ಮುಜುಗರ ತರುವಂತಹ ವಿಚಾರವಲ್ಲ. ಬದಲಾಗಿ ಪ್ರತಿಷ್ಠೆಯ ವಿಷಯವಾಗಿತ್ತು. ದೇವಸ್ಥಾನ ಪುನರುಜ್ಜೀವನ, ಬ್ರಹ್ಮಕಲಶ, ನಾಗಮಂಡಲ, ಕೋಲ ನೇಮಗಳಲ್ಲಿ ಈ ಭೂಗತ ಜಗತ್ತಿನ ಶೆಟ್ರುಗಳಿಗೆ ವಿಶೇಷ ಗೌರವವಿದೆ.

 ***

ತೊಂಭತ್ತರ ದಶಕದ ಆರ್ಥಿಕ ಸುಧಾರಣೆಗಳ ಫಲವಾಗಿ ಕರಾವಳಿಯ ಜಾತೀಯ ಸಮೀಕರಣದಲ್ಲಿ ಹಲವು ಬಗೆಯ20090124pub4 ಚಲನೆಗಳು ಕಂಡುಬಂದವು. ಜ್ಞಾನ ಹಾಗೂ ಉದ್ಯೋಗ ಆಧಾರಿತ ಹೊಸ ಸಮಾಜೋ ಆರ್ಥಿಕ  ಸನ್ನಿವೇಶದಲ್ಲಿ ಸೃಷ್ಟಿಯಾದ ನೂತನ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಮೂಲತಃ ವ್ಯವಸಾಯದ ಜೊತೆಗೆ  ಪೂರಕವಾಗಿ ಮುಂಬಯಿ ಉದ್ಯೋಗದ ಸಂಪರ್ಕದ ಹಣವನ್ನು ಅವಲಂಬಿಸಿದ್ದ ಇಲ್ಲಿಯ ಬಂಟ ಮತ್ತು ಬಿಲ್ಲವ ಜಾತಿಗಳು ಸಾಕಷ್ಟು ಯಶಸ್ಸನ್ನು ಕಂಡವು. ಅಲ್ಲದೆ ಆ ಕಾಲಕ್ಕಾಗಲೇ ಭೂಸುಧಾರಣೆಗಳ ಫಲವಾಗಿ ಭೂಮಿಯನ್ನು ಆಧರಿಸಿದ್ದ ಆರ್ಥಿಕ ಸಂಬಂಧಗಳು ಕೂಡಾ ಬಹತೇಕ ಸಡಿಲವಾಗಿದ್ದವು.

ಅಂತೆಯೇ ಒಂದು ಕಡೆ ಆರ್ಥಿಕ ಸಂಬಂಧಗಳಲ್ಲಿ ಉಂಟಾದ ಬದಲಾವಣೆ ಇನ್ನೊಂದೆಡೆ ಮಧ್ಯಮ ವರ್ಗೀಯ ಉದ್ಯೋಗಗಳ ಪ್ರಸರಣ- ಇವೆರಡೂ ಸಹಜವಾಗಿಯೇ ಸಾಮಾಜಿಕ ಸ್ತರೀಕರಣದಲ್ಲಿ ಮತ್ತು ಸಂಬಂಧಗಳಲ್ಲಿ ಮಾರ್ಪಾಡುಗಳಿಗೆ ಬೇಡಿಕೆಯಿಟ್ಟವು. ಅಂದರೆ ಹೊಸದಾಗಿ ದೊರೆತ ಆರ್ಥಿಕ ಸ್ಥಿತಿವಂತಿಕೆಯ ದೆಸೆಯಿಂದ ಇಲ್ಲಿಯ ಹಿಂದುಳಿದ ಜಾತಿಗಳು ಸಾಮಾಜಿಕ ಶ್ರೇಣೀಕರಣದಲ್ಲಿ ಮೇಲ್ಮುಖ ಚಲನೆಯನ್ನು ಅಪೇಕ್ಷಿಸಿದವು. ಯಕ್ಷಗಾನ ಮೇಳಗಳಲ್ಲಿ ಭಾಗವಹಿಸುವ ಹಕ್ಕಿಗೆ ಬಿಲ್ಲವರು ಬೇಡಿಕೆಯಿಟ್ಟದ್ದು ಅಥವಾ ಕಟೀಲು ಮೊದಲಾದೆಡೆ ದೇವಾಲಯಗಳ ಮ್ಯಾನೇಜ್ ಮೆಂಟ್ ಗೆ ಸಂಬಂಧಪಟ್ಟಂತೆ ಕಂಡುಬಂದ ಸಂಘರ್ಷಗಳು ಮತ್ತು ಇತರೆ ಕೆಲವು ಬೆಳವಣಿಗೆಗಳು ಅಂತಹ ಪ್ರವೃತ್ತಿಗಳನ್ನು ಸಂಕೇತಿಸಿದ್ದವು.

ಆರ್ಥಿಕ ನೆಲೆಯಲ್ಲಿ ಬಲಗೊಳ್ಳುತ್ತಿದ್ದ ಕೆಳವರ್ಗಗಳ ಮಹತ್ವಾಕಾಂಕ್ಷೆಗಳು ಮತ್ತು ಹಕ್ಕೊತ್ತಾಯ ಸಾಮಾಜಿಕ ಶ್ರೇಣೀಕರಣದ ಪೀಠಭಾಗದಲ್ಲಿ ಸ್ಥಾಪಿಸಲ್ಪಟ್ಟಿದ್ದ ಜನಿವಾರಿಗಳಿಗೆ ಹೊಸ ಸವಾಲುಗಳನ್ನು ಸೃಷ್ಟಿಸಿದವು. ಆರಂಭದಲ್ಲಿ ಜೀರ್ಣೋದ್ಧಾರ, ನಾಗಮಂಡಲ ಅಥವಾ ಬ್ರಹ್ಮಕಲಶೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳ ನಾಯಕತ್ವವನ್ನ ಹೊಸ ಆರ್ಥಿಕ ವರ್ಗಗಳಾಗಿರೋ ಬಂಟರು ಮತ್ತು ಬಿಲ್ಲವರಿಗೆ ನೀಡುವ ಮೂಲಕ ಹೊಸ ಯುಗದ ಸವಾಲುಗಳನ್ನ ಎದುರಿಸುವ ಪ್ರಯತ್ನಗಳನ್ನ ಬ್ರಾಹ್ಮ,ಣರು ನಡೆಸಿದ್ದನ್ನ ನಾವು ನೋಡಿದ್ದೇವೆ.

ಹಾಗೇಯೇ ಆರ್ಥಿಕ ಸುಧಾರಣೆಯ ಫಲ ಮತ್ತು ಅದರ ಜೊತೆಯೇ ಸೃಷ್ಟಿಯಾದ ಅತೃಪ್ತಿ ರಾಜಕೀಯ ನೆಲೆಯಲ್ಲೂ ಸಂಚಲನವನ್ನ ಕಾಣಿಸಿದವು. ಚುನಾವಣಾ ರಾಜಕಾರಣದಲ್ಲಿ ಅವಶ್ಯವಿದ್ದ ಸಂಖ್ಯಾಬಲ ಮತ್ತು ಸಂಪನ್ಮೂಲ- ಇವೆರಡೂ ಕ್ರಮವಾಗಿ ಕರಾವಳಿಯ ಹಿಂದುಳಿದ ವರ್ಗವಾಗಿರೋ ಬಿಲ್ಲವ ಮತ್ತು ಬಂಟರಲ್ಲಿ ಇದ್ದವು. ಹೀಗಾಗಿ, ಅಂತಹ ವರ್ಗಗಳ ಒಳಗೊಳ್ಳುವಿಕೆ ಆರ್.ಎಸ್.ಎಸ್ ಗೆ ಅನಿವಾರ್ಯವಾಗಿತ್ತು. ಅದರ ಭಾಗವಾಗಿಯೇ ಯಕ್ಷಗಾನ, ನಾಗಮಂಡಲ, ಭ್ರಹ್ಮಕಲಶ, ಜಾತ್ರೆ, ನೇಮಗಳಲ್ಲಿ ಬಂಟ- ಬಿಲ್ಲವರಿಗೆ ಪುರೋಹಿತಶಾಹಿಗಳು ನಾಯಕತ್ವ ನೀಡಿದವು. ಇಂದೊಂದು ಜನಿವಾರಧಾರಿಗಳ ಮಲ್ಟಿ ಪ್ಲ್ಯಾನ್ ಆಗಿದೆ. ಇಂತಹ ಒಂದು ವಿಶಿಷ್ಟ ಸನ್ನಿವೇಶದಲ್ಲಿಯೇ ನಾವು ಹಿಂದೂಪರ ಸಂಘಟನೆಗಳ ಪ್ರಸರಣವನ್ನು ಕಾಣುವುದು. ಇದು ಒಂದು ನೆಲೆಯಲ್ಲಿ ಹೊಸಕಾಲದ ಹೊಸ ಒತ್ತಡಗಳಿಗೆ ಪುರೋಹಿತಶಾಹಿ ಪ್ರತಿಕೃಯಿಸಿದ ರೀತಿಯಾಗಿದ್ದರೆ ಇನ್ನೊಂದೆಡೆ ಜೀರ್ಣೋದ್ಧಾರಗಳಂತಹ ಮೊದಲ ಸುತ್ತಿನ ಕಾರ್ಯತಂತ್ರಗಳ ಮುಂದುವರಿಕೆಯೂ ಆಗಿದೆ.

ಹಿಂದುತ್ವ ಸಂಘಟನೆಯ ಕಾಲಾಳುಗಳ ಸಂಘಟನೆಯ ನಾಯಕತ್ವ ದೊರಕಿದ್ದು ಹೊಸಕಾಲದಲ್ಲಿ ಹೊಸ ಕಸವು ಪಡೆದುಕೊಂಡ ವರ್ಗಗಳಿಗೇ.Accused_Homestay_Attack ಪುರೋಹಿತಶಾಹಿಯ ಇಂತಹ ಕಾರ್ಯತಂತ್ರಗಳ ಇನ್ನೊಂದು ಅಂಶ ಹಿಂದುಳಿದ ಜಾತಿಗಳಿಗೆ ಸಮಾನ ಶತ್ರುವೊಂದನ್ನು ಸ್ಷಷ್ಟಪಡಿಸಿಕೊಟ್ಟದ್ದು. ಅದು ಮುಸ್ಲೀಮರು. ಹೀಗಾಗಿ ಕರಾವಳಿಯ ಕೆಳವರ್ಗಗಳಲ್ಲಿ ಹೊಸದಾಗಿ ಸೃಷ್ಟಿಯಾದ ಎನರ್ಜಿಗೆ, ಕ್ರೀಯಾಶೀಲಿತೆಗೆ ಒಂದು ವೇದಿಕೆ ನಿರ್ಮಿಸಿಕೊಡುವ ಮೂಲಕ ಪುರೋಹಿತಶಾಹಿ ಅವುಗಳ ಹಕ್ಕೊತ್ತಾಯದ ಬೇಡಿಕೆಗಳು ತನ್ನತ್ತವೇ ತಿರುಗಿ ತಾನು ಅನುಭವುಸುತಿದ್ದ ಪಂಕ್ತಿಭೇದಗಳಂತಹ ವಿಶೇಷ ಸಾಮಾಜಿಕ ಸ್ಥಾನಮಾನ, ಸೌಲಭ್ಯಗಳು ಸಾರ್ವತ್ರಿಕವಾಗಿ ಪ್ರಶ್ನೆಯಾಗುವುದರಿಂದ ಸ್ವಯಂ ರಕ್ಷಿಸಿಕೊಂಡಿದೆ. ಪಂಕ್ತಿಬೇದವನ್ನು, ದೇವಸ್ಥಾನದ ಸ್ಥಾನ ಮಾನವನ್ನು ಪ್ರಶ್ನೆ ಮಾಡಬೇಕಾಗಿದ್ದವರನ್ನೇ ಪುರೋಹಿತಶಾಹಿಗಳು ತನ್ನ ತೆಕ್ಕೆಯಲ್ಲಿ ಇರಿಸಿಕೊಂಡಿದ್ದಾರೆ.

ಉತ್ತರದಲ್ಲಿ ಹಿಂದುಳಿದ ವರ್ಗಗಳನ್ನ ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಪ್ರಕ್ರಿಯೆಯನ್ನ ನಾವು ಕಾಣುತ್ತೇವೆ. ಆದರೆ ಅಲ್ಲಿ ಅಂತಹ ಹೊಸ ಆರ್ಥಿಕತೆಯ ಸುಳಿವುಗಳು ಇಲ್ಲದಿರುವಂತದ್ದು ಮತ್ತು ಅಲ್ಲಿ ಚಲನೆ ಮುಖ್ಯವಾಗಿ ಮೀಸಲಾತಿ ಆಧರಿಸಿದ್ದು. ಹೀಗಾಗಿ ಅಲ್ಲಿನ ಹಿಂದುಳಿದ ಜಾತಿಗಳು ಮುಸ್ಲಿಮರನ್ನು ಮೀಸಲಾತಿಗೆ ಸಹಸ್ಪರ್ಧಿಗಳು ಮತ್ತು ಆ ಮೂಲಕ ಅವರು ತಮ್ಮ ಸೌಲಭ್ಯಗಳಿಗೆ ಸಂಚಕಾರ ಎನ್ನುವಂತೆ ಪರಿಗಣಿಸುವಲ್ಲಿ ಹಿಂದುತ್ವ ಪ್ರಾಜೆಕ್ಟ್ ಕಾರ್ಯನಿರ್ವಹಿಸಿದೆ. ಇತ್ತೀಚೆಗೆ ನಡೆದ ಬಿಹಾರದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಲಾಲು ಹಾಗೂ ನಿತೀಶ್ ಅವರನ್ನ ಕುರಿತಂತೆ “ಅವರು ದಲಿತ, ಮಹಾದಲಿತ ಹಾಗೂ ಹಿಂದುಳಿದ ವರ್ಗಗಳಿಂದ ಶೇಕಡಾ ಐದರಷ್ಟು ಮೀಸಲು ಕೋಟಾವನ್ನು ಕಿತ್ತುಕೊಂಡು ಇನ್ನೊಂದು ಸಮುದಾಯಕ್ಕೆ ಕೊಡಲು ಪಿತೂರಿ ಮಾಡುತ್ತಿದ್ದಾರೆ” ಎಂದು ನುಡಿದದ್ದು ಇದೇ ತಂತ್ರದ ಭಾಗವಾಗಿಯೇ.

ಕರಾವಳಿಯಲ್ಲಿ ಹಿಂದುತ್ವ ಸಂಘಟನೆಗಳ ಮೂಲಕ ಅಂತಹ ಒಂದು ಗೋಲ್ ಪೋಸ್ಟ್ ಅನ್ನು ಕೆಳವರ್ಗಗಳಿಗೆ ಬ್ರಾಹ್ಮಣಶಾಹಿ ಸಂಘಪರಿವಾರ ಒದಗಿಸಿಕೊಟ್ಟಿದೆ. ಪರಿವಾರದ ಕಾಲಾಳು ಸಂಘಟನೆಗಳಲ್ಲಿ ಹಿಂದುಳಿದ ಜಾತಿಗಳಿಗೆ ನಾಯಕತ್ವವನ್ನ ಕೊಡುವುದು ಮತ್ತು ಅದೇ ವೇಳೆಗೆ ಅವುಗಳ ದೃಷ್ಟಿ ತನ್ನ ವಿರುದ್ಧ ಬೀಳದಂತೆ ನೋಡಿಕೊಳ್ಳುವುದು- ಇವೆರಡೂ ಸ್ಪಷ್ಟವಾಗಿ ವ್ಯಾಖ್ಯಾನಿಸಲ್ಪಟ್ಟ ಹಾಗೂ ಸಂಕೀರ್ಣ ಸ್ವರೂಪದ ನಿಯಂತ್ರಣ ವ್ಯವಸ್ಥೆಯನ್ನ ಅಪೇಕ್ಷಿಸಿದವು. ಇವತ್ತು ಕಲ್ಲಡ್ಕ ಅನ್ನೋದು ಇಡೀ ಕರಾವಳಿಯ ಹೈಕಮಾಂಡ್ ಅನ್ನೋ ರೀತಿಯಲ್ಲಿ ಉದಯಿಸಿದ್ದು ಸಂಘಪರಿವಾರದ ಅಂತಹ ಪ್ರಯತ್ನಗಳು ಯಶಸ್ವಿಯಾಗಿರುವುದನ್ನ ಸಂಕೇತಿಸುತ್ತವೆ.

***

ಬಿಲ್ಲವರ ಸಮುದಾಯದಲ್ಲಿ ಆರ್.ಎಸ್.ಎಸ್ ನ ಯೂಸ್ ಅ್ಯಂಡ್ ತ್ರೋ ಗೆ ಬಲಿಯಾದುದರ ಬಗ್ಗೆ ಗಂಭಿರ ಚರ್ಚೆಗಳು ನಡೆಯುತ್ತಿದೆ. ಹಿಂದುತ್ವವಾದದಿಂದ ಬೀದಿಪಾಲಾದ ಬಿಲ್ಲವ ಕುಟುಂಬಗಳ ಉದಾಹರಣೆಯನ್ನು ಮುಂದಿಟ್ಟುಕೊಂಡು ಸಮುದಾಯದೊಳಗೇ ಜಾಗೃತಿ ಕಾರ್ಯ ಸ್ವಲ್ಪ ಮಟ್ಟಿಗೆ ಪ್ರಾರಂಭವೇನೋ ಆಗಿದೆ. ಅದರ ಅರಿವಿದ್ದೇ ಇದೀಗ ಆರ್ ಎಸ್ ಎಸ್ ಕಣ್ಣು ಬಂಟ ಸಮುದಾಯದತ್ತಾ ಬಿದ್ದಿದೆ. ಅಂಡರ್ ವಲ್ಡ್ ಅನ್ನು ಹತ್ತಿರದಿಂದ ನೋಡಿದ ಸಮುದಾಯವಾಗಿರೋ ಬಂಟ ಸಮುದಾಯದಲ್ಲಿ ರೌಡೀಸಂ ಎನ್ನುವುದೂ ಕೂಡಾ ಪ್ರತಿಷ್ಠೆಯ ವಿಚಾರವಾಗಿದೆ. ದೇವಸ್ಥಾನಗಳಲ್ಲಿ ಯಜಮಾನಿಕೆಯನ್ನು ಕೊಟ್ಟು ತಮ್ಮ ನೈವೇದ್ಯ ಬೇಯಿಸಿಕೊಂಡವರು ಇದೀಗ ತಮ್ಮ ದ್ವೇಷದ ರಾಜಕಾರಣಕ್ಕೂ ಬಂಟರನ್ನು ಬಳಸಿಕೊಳ್ಳಲು ಹವಣಿಸುತ್ತಿದ್ದಾರೆ. ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಸದೃಡವಾಗಿರುವ ಇಂತಹ ಸಮುದಾಯ ಕೋಮುವಾದಿಗಳಿಗೆ ಅಸ್ತ್ರವಾಗುತ್ತಿರೋದು ಬಂಟ ಸಮುದಾಯ ಮತ್ತು ಸಮಾಜಕ್ಕೆ ಅತ್ಯಂತ ಆತಂಕಕಾರಿ.

ಪಾತಕಿ ಗಣೇಶ್ ಶೆಟ್ಟಿಯೂ ಕರಾವಳಿಯ ಧರ್ಮ ರಕ್ಷಕರೂ

Naveen Soorinje


– ನವೀನ್ ಸೂರಿಂಜೆ


 

 

ಧರ್ಮ ದೇವರ ಹೆಸರಿನಲ್ಲಿ ರಕ್ತ ಹರಿಸೋ ನಾಯಕರ ಮಧ್ಯೆ ನಮಗೆ ಒಮ್ಮೊಮ್ಮೆ ಒಬ್ಬ ಭೂಗತ ಪಾತಕಿಯೂ ಮಾದರಿಯಾಗಬಲ್ಲ. Mangalore_Jail_Murderಜೈಲಿನಲ್ಲಿ ಮಾಡೂರು ಯೂಸೂಫ್ ಎಂಬ ಭೂಗತ ಪಾತಕಿಯನ್ನು ಹಿಂದೂ ಕಮ್ಯೂನಲ್ ಗೂಂಡಾಗಳಿಂದ ರಕ್ಷಣೆ ಮಾಡಲು ಧಾವಿಸಿ ಹತನಾದ ಗಣೇಶ್ ಶೆಟ್ಟಿ ಎಂಬ ಭೂಗತ ಪಾತಕಿಯಿಂದ ಧರ್ಮದ ಅಮಲು ತುಂಬಿಕೊಂಡವರು ಕಲಿಯಬೇಕಿರುವುದು ಬಹಳಷ್ಟಿದೆ.

1994 ರಲ್ಲಿ ಮಹೇಂದ್ರ ಪ್ರತಾಪ್ ಎಂಬ ಉದ್ಯಮಿಯನ್ನು ಹಫ್ತಾಕ್ಕಾಗಿ ಮುಂಬೈನಲ್ಲಿ ಕೊಲೆ ಮಾಡಿದ ಭೂಗತ ಪಾತಕಿ, ಶಾರ್ಪ್ ಶೂಟರ್ ಗಣೇಶ್ ಶೆಟ್ಟಿ ಮಂಗಳೂರಿನ ಪ್ರಕರಣವೊಂದಕ್ಕೆ ಸಂಬಂಧಿಸಿ ಮಂಗಳೂರು ಜೈಲಿನಲ್ಲಿದ್ದ. ಶ್ರೀಮಂತ ಕುಟುಂಬದಿಂದ ಬಂದ ಗಣೇಶ್ ಶೆಟ್ಟಿಗೆ ಮಂಗಳೂರಿನ ಪ್ರಕರಣಕ್ಕೆ ಜಾಮೀನು ದೊರೆತಿದ್ದರೂ ಮುಂಬೈ ಪ್ರಕರಣದ ನ್ಯಾಯಾಲಯದ ತಾಂತ್ರಿಕ ಅಡಚಣೆಯಿಂದ ಜೈಲಿನಲ್ಲೇ ಬಾಕಿಯಾಗಿದ್ದ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇನ್ನೊಂದು ಎರಡು ಮೂರು ದಿನಗಳಲ್ಲಿ ಆತ ಬಿಡುಗಡೆಯಾಗಬೇಕಿತ್ತು.

ಹಿಂದೂ ಕೋಮುವಾದಿಗಳ ರಾಕ್ಷಸೀ ಪ್ರವೃತ್ತಿಯನ್ನು ಬಯಲಿಗೆಳೆದಿದ್ದಕ್ಕಾಗಿ ಅಂದಿನ ಬಿಜೆಪಿ ಸರಕಾರ ನನ್ನನ್ನು ಜೈಲಿಗೆ ಹಾಕಿದ್ದ ದಿನಗಳಲ್ಲಿ ಗಣೇಶ್ ಶೆಟ್ಟಿ ಐದನೇ ಬ್ಯಾರಕಿನಲ್ಲಿದ್ದ. ಮಂಗಳೂರು ಜೈಲಿನಲ್ಲಿ ರಾಜ್ಯದ ಯಾವ ಜೈಲಿನಲ್ಲೂ ಇಲ್ಲದ ವಿಶೇಷ ವ್ಯವಸ್ಥೆಯೊಂದಿದೆ. ಜೈಲನ್ನು ಎ ಮತ್ತು ಬಿ ಬ್ಲಾಕುಗಳೆಂದು ವಿಂಗಡನೆ ಮಾಡಲಾಗಿದೆ. ಎ ಬ್ಲಾಕು ಮತ್ತು ಬಿ ಬ್ಲಾಕುಗಳ ಮಧ್ಯೆ ಸಂಪರ್ಕ ಮತ್ತು ಸಂವಹನ ಸಾಧ್ಯವೇ ಇಲ್ಲ ಎನ್ನುವ ರೀತಿಯ ವ್ಯವಸ್ಥೆ ಇದೆ. ಇಲ್ಲಿನ ವಿಶೇಷವೆಂದರೆ ಎ ಬ್ಲಾಕಿನಲ್ಲಿ ಮುಸ್ಲೀಮರೂ, ಬಿ ಬ್ಲಾಕಿನಲ್ಲಿ ಹಿಂದೂಗಳನ್ನು ಕೂಡಿ ಹಾಕಲಾಗುತ್ತದೆ. ಮಂಗಳೂರು ಜೈಲಿನಲ್ಲಿ ಕೋಮುಗಲಭೆಗಳ ಕೈದಿಗಳೇ ಜಾಸ್ತಿ ಇರೋದ್ರಿಂದ ಮತ್ತು ಮಂಗಳೂರಿಗರಲ್ಲಿ ಕೋಮುಭಾವನೆಯೂ ಜಾಸ್ತಿ ಇರೋದ್ರಿಂದ ಜೈಲಿನಲ್ಲಿ ಕೋಮುಗಲಭೆ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಹಿಂದೂ ಕೋಮುವಾದಿಗಳಿಂದ ಬೆದರಿಕೆ ಇದ್ದ ನನ್ನನ್ನು ಹಿಂದೂವಾಗಿದ್ದರೂ ಮುಸ್ಲೀಮರಿರುವ ಎ ಬ್ಲಾಕಿಗೆ ಸೇರಿಸಲಾಗಿತ್ತು.  ಅಲ್ಲಿ ಗಣೇಶ್ ಶೆಟ್ಟಿಯೂ ಇದ್ದ. ಜೊತೆಗೆ ಕಮ್ಯೂನಲ್ ಅಲ್ಲದೇ ಇರುವ ಕೆಲವೊಂದು ಹಿಂದೂ ಕೈದಿಗಳೂ ಎ ಬ್ಲಾಕಿನಲ್ಲಿ ಇದ್ದರು.

ಭೂಗತ ಪಾತಕಿ ಗಣೇಶ್ ಶೆಟ್ಟಿ ಬೆಳಿಗ್ಗೆ 5 ಗಂಟೆಗೆ ಎದ್ದು ಸುಮಾರು ಒಂದು ಗಂಟೆಗಳ ಕಾಲ ದೇವರ ಫೋಟೋದ ಎದುರು ಕುಳಿತು ದ್ಯಾನ ಮಾಡುತ್ತಿದ್ದ. ಆತ ಪೂಜೆ ಮಾಡುವ ಜಾಗ ನೋಡೋದೇ ಚಂದ. ಕಟೀಲು ದುರ್ಗಾಪರಮೇಶ್ವರಿ ಪರಮ ಭಕ್ತನಾಗಿದ್ದ ಆತ ದೇವರ ಫೋಟೋ ಕಾಣದಷ್ಟು ನಿತ್ಯ ಹೂ ಹಾಕುತ್ತಿದ್ದ. ಫೋಟೋದ ಎದುರು ಕೇಜಿಗಟ್ಟಲೆ ಹಣ್ಣು ಹಂಪಲುಗಳನ್ನು ಇಡುತ್ತಿದ್ದ. ಯಾರಿಗೂ ಕೆಟ್ಟದಾಗಿ ಬೈದಿರೋದನ್ನು ನಾನು ಜೈಲಿನಲ್ಲಿದ್ದ ನಾಲ್ಕುವರೆ ತಿಂಗಳು ಕಂಡಿದ್ದಿಲ್ಲ. ಜೈಲಿನಲ್ಲಿ ಇದ್ದಷ್ಟೂ ದಿನ ಗಣೇಶ ಶೆಟ್ಟಿ ಸಸ್ಯಹಾರಿಯಾಗಿದ್ದ. ದೇವರ ಹೆಸರಿನಲ್ಲಿ ಆತ ಮಾಂಸಾಹಾರವನ್ನೂ ತ್ಯಜಿಸಿದ್ದ. ದೇವರ ಹೆಸರಿನ ಯಾವುದೇ ಉಪವಾಸಗಳನ್ನೂ ತಪ್ಪಿಸುತ್ತಿರಲಿಲ್ಲ. ಒಬ್ಬ ಶಾರ್ಪ್ ಶೂಟರ್ ಭೂಗತ ಪಾತಕಿಯೊಬ್ಬ ಧರ್ಮ, ದೇವರನ್ನು ಈ ರೀತಿಯಲ್ಲಿ ಆರಾಧನೆ ಮಾಡುತ್ತಿದ್ದ ಎಂದರೆ ಆಶ್ಚರ್ಯವಾಗುತ್ತಿತ್ತು. ದೇವರ ಆರಾಧನೆಯನ್ನು ತಪ್ಪದೇ ಮಾಡುತ್ತಿದ್ದ ಆತ ಯಾವತ್ತೂ ಕೂಡಾ ಯಾವುದೇ ವಿಷಯಕ್ಕೆ ಕಮ್ಯೂನಲ್ ಆಗಿ ಪ್ರತಿಕ್ರಿಯೆ ನೀಡಿಲ್ಲ. ಅದೇ ರೀತಿ ಬಹುತೇಕ ಮುಸ್ಲೀಮರೇ ಜಾಸ್ತಿಯಿದ್ದ ಐದನೇ ಬ್ಯಾರಕಿನಲ್ಲಿ ಗಣೇಶ್ ಶೆಟ್ಟಿಯ ಪೂಜೆ ವೃತಗಳಿಗೆ ಯಾವ ತೊಂದರೆಯೂ ಆಗಿರಲಿಲ್ಲ.

ನಾನು ಜೈಲು ಸೇರಿದ ನಂತರದ ನಾಲ್ಕುವರೆ ತಿಂಗಳಿನಲ್ಲಿ ಹಲವು ಅಮಾಯಕ ಕೈದಿಗಳನ್ನು ನೋಡಿದ್ದೇನೆ. ಹಲವಾರು ಬಾರಿ ಪೊಲೀಸರುMangalore_Jail ಅನುಮಾನಾಸ್ಪದ ಪ್ರಕರಣ ಎಂಬ ನೆಲೆಯಲ್ಲಿ ಅಮಾಯಕ ಯುವಕರ ಬಂಧನ ಮಾಡುತ್ತಾರೆ. ಹೆಚ್ಚಾಗಿ ಮುಸ್ಲಿಂ ಯುವಕರು ಅಥವಾ ವೃದ್ದರನ್ನು ಪೊಲೀಸರು ಬಸ್ ನಿಲ್ದಾಣದಲ್ಲೋ, ರೈಲ್ವೇ ನಿಲ್ದಾಣದಲ್ಲೋ ಬಂಧನ ಮಾಡಿ ಅನುಮಾನಾಸ್ಪದ ಎಂಬ ಸೆಕ್ಷನ್ನಿನ ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ಹಾಕುತ್ತಾರೆ. ನ್ಯಾಯಾಲಯದಲ್ಲಿ ಎರಡು ಸಾವಿರವೋ, ಎರಡುವರೆ ಸಾವಿರವೋ ದಂಡ ಕಟ್ಟಿದರೆ ನ್ಯಾಯಾಲಯ ಬಿಡುಗಡೆ ಮಾಡುತ್ತದೆ. ದಂಡ ಕಟ್ಟಲು ಸಾಧ್ಯವಾಗದೇ ಇರೋರು ಜೈಲು ಸೇರುತ್ತಾರೆ. ಈ ಅನುಮಾನಾಸ್ಪದ ಬಂಧನ ಎನ್ನುವುದೇ ವಿಚಿತ್ರವಾಗಿರೋದು. ಯಾವುದೋ ಒಬ್ಬ ರೌಡಿಯ ಮೇಲೆ ಹಲ್ಲೆ ಹಲವು ಪ್ರಕರಣಗಳಿದ್ದು, ಆತ ಜಾಮೀನಿನ ಮೇಲೋ, ಖುಲಾಸೆಗೊಂಡೋ ಹೊರಗಿದ್ದು, ಅತ ಅನಗತ್ಯವಾಗಿ ತನ್ನದಲ್ಲದ ಪ್ರದೇಶದಲ್ಲಿ ಸುತ್ತಾಡುತ್ತಿದ್ದಾಗ ಪೊಲೀಸರು ವಿಚಾರಿಸಿದ ಸಂಧರ್ಭದಲ್ಲಿ ಆತ ಸೂಕ್ತ ರೀತಿಯ ಉತ್ತರ ನೀಡದೇ ಇದ್ದಾಗ ಆತನ ಮೇಲೆ ಅನುಮಾನಾಸ್ಪದ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬಹುದು. ಪೊಲೀಸರು ಅಪರಾಧ ಚಟುವಟಿಕೆಯನ್ನು ನಿಯಂತ್ರಿಸಲು ಕೆಲಸ ಮಾಡವ ನಿಟ್ಟಿನಲ್ಲಿ ಇದು ಸಹಕಾರಿ. ಆದರೆ ಪೊಲೀಸರು ಇದೇ ಕಾಯ್ದೆಯನ್ನು ಬಳಸಿಕೊಂಡು ಯಾರೋ ಅಬ್ಬೇಪಾರಿಗಳು, ಅನಾಥರು, ನಿಸ್ಸಾಹಯಕರನ್ನು ಈ ಕಾಯ್ದೆಯಡಿ ಬಂಧಿಸುತ್ತಾರೆ. ಅಪರಾಧ ಚಟುವಟಿಯನ್ನು ನಿಯಂತ್ರಿಸಲು ನಾವು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ದಾಖಲೆ ಮೂಲಕ ತೋರಿಸಲು ಪೊಲೀಸರು ಹಲವು ಬಾರಿ ಎಲ್ಲೋ ಬಸ್ ನಿಲ್ದಾಣದಲ್ಲಿ ಮಲಗಿದ್ದ ಅಮಾಯಕರನ್ನು ಬಂಧಿಸುತ್ತಾರೆ. ಇಂತಹ ಹಲವು ಯುವಕರನ್ನು ಸಾಮಾಜಿಕ ಕಾರ್ಯಕರ್ತರ ನೆರವು ಪಡೆದು ಜೈಲಿನಿಂದ ಬಿಡುಗಡೆ ಮಾಡಿಸಿದ್ದೆವು.  ಹಲವು ಸಂದರ್ಭದಲ್ಲಿ ಹಲವು ಯುವಕರನ್ನು ಬಿಡುಗಡೆ ಮಾಡಿಸುವಲ್ಲಿ ಗಣೇಶ್ ಶೆಟ್ಟಿ ಆಸಕ್ತಿ ವಹಿಸಿದ್ದ. ಜೊತೆಗೆ ಹಣಕಾಸಿನ ನೆರವನ್ನೂ ನೀಡಿದ್ದ.

ಧರ್ಮದ ಆಚರಣೆಗಳನ್ನು ಚಾಚೂ ತಪ್ಪದೆ ಆಚರಿಸೋ ವೃತ್ತಿಪರ ಪಾತಕಿಯೋರ್ವ ತನ್ನ ವೃತ್ತಿಯನ್ನು ಮೀರಿಯೂ ಮಾನವೀಯ ಗುಣಗಳನ್ನು ಬೆಳೆಸಿಕೊಳ್ತಾನೆ ಎಂದಾದರೆ ದನ ಕರುವನ್ನು ಪ್ರೀತಿಸುವವರಿಗೆ ಮನುಷ್ಯರನ್ನೇಕೆ ಪ್ರೀತಿಸಲಾಗಲ್ಲ ಎಂಬುದು ಯಕ್ಷ ಪ್ರಶ್ನೆ. ಧರ್ಮದ ಹೆಸರಿನಲ್ಲಿ ರಕ್ತ ಹರಿಸೋರು ವಿವೇಕಾನಂದರಂತವರನ್ನು ಅನುಸರಿಸೋಕೆ ಆಗದೇ ಇದ್ರ್ರೆ ಕನಿಷ್ಠ ಗಣೇಶ್ ಶೆಟ್ಟಿಯಂತಹ ಭೂಗತ ಪಾತಕಿಯ ಈ ಗುಣಗಳನ್ನಾದ್ರೂ ಅನುಸರಿಸಲಿ ಎಂಬುದಷ್ಟೇ ಆಶಯ.