Category Archives: ನವೀನ್ ಸೂರಿಂಜೆ

ಮಹಿಳಾ ಕೈದಿಗಳು ಮತ್ತು ಪಿರಿಯೆಡ್ಸ್

Naveen Soorinje


– ನವೀನ್ ಸೂರಿಂಜೆ


 

 

“ಪೊಲೀಸ್ ಠಾಣೆಗಳಲ್ಲಿ ನ್ಯಾಪ್ಕಿನ್ ಪ್ಯಾಡ್ ಒದಗಿಸಿ” ಎಂದು ಭಾರತೀಯ ವಿದ್ಯಾರ್ಥಿAngellica Aribam_1 ಒಕ್ಕೂಟದ ರಾಷ್ಟ್ರೀಯ ಕಾರ್ಯದರ್ಶಿ ಏಂಜಿಲಿಕಾರವರು ದೆಹಲಿ ಪೊಲೀಸರಿಗೆ ಬರೆದ ಪತ್ರ ಬಗ್ಗೆ ಚರ್ಚೆಯಾಗುತ್ತಿರುವ ದಿನಗಳಲ್ಲಿ ಜೈಲಿನಲ್ಲಿರುವ ಮಹಿಳಾ ಕೈದಿಗಳ ಅವಸ್ಥೆ ನೆನಪಿಗೆ ಬಂತು. ಸಾರ್ವಜನಿಕರ ಜೊತೆಗೆ ನಿತ್ಯ ವ್ಯವಹರಿಸುವ ಪೊಲೀಸ್ ಠಾಣೆಗಳಲ್ಲಿ ಇಂತಹ ಪರಿಸ್ಥಿತಿಯಾದರೆ ಹೊರ ಜಗತ್ತಿಗೇ ಸಂಪರ್ಕವಿಲ್ಲದ ಜೈಲುಗಳ ಸ್ಥಿತಿಯನ್ನೊಮ್ಮೆ ಊಹಿಸಿಕೊಳ್ಳಿ. ನಾನು ಮಂಗಳೂರು ಜೈಲಿನಲ್ಲಿ ನಾಲ್ಕುವರೆ ತಿಂಗಳು ಕಳೆಯಲು ಅವಕಾಶ ಸಿಕ್ಕಿದಾಗ ಮಹಿಳಾ ಕೈದಿಗಳು ಪಿರಿಯೆಡ್ಸ್ ಸಂದರ್ಭದಲ್ಲಿ ಅನುಭವಿಸುವ ನೋವು ಸಂಕಟಗಳ ಅರಿವಾಗಿ ದಂಗಾಗಿ ಹೋಗಿದ್ದೇನೆ. ಮಹಿಳೆಯೊಬ್ಬಳು ನನ್ನನ್ನೇ ಕೊಲೆ ಮಾಡಿದರೂ ಕೂಡ ಆಕೆಯನ್ನು ಕರ್ನಾಟಕದ ಜೈಲಿಗೆ ಹಾಕುವಂತಹ ಸ್ಥಿತಿ ಬರಬಾರದು ಎಂದು ಅಂದುಕೊಂಡರೂ ತಪ್ಪಿಲ್ಲ ಅನ್ನಿಸುತ್ತದೆ.

ಜೈಲುಗಳ ಮಹಿಳಾ ಬ್ಯಾರಕುಗಳ ಸ್ಥಿತಿ ಯಾರಿಗೂ ಬೇಡ. ಠಾಣೆಯಲ್ಲಿ ಎಂಟು ಗಂಟೆಗಳ ಕಾಲ ಪೊಲೀಸ್ ವಶದಲ್ಲಿದ್ದಾಗ ಎಂಜಲಿಕಾರವರಿಗೆ ನ್ಯಾಪ್ಕಿನ್ ಪ್ಯಾಡ್ ಸಿಗದೇ ಇದ್ದಾಗ ಅವರು ಅನುಭವಿಸಿದ ಸಂಕಟಕ್ಕೆ ಹೋಲಿಕೆನೇ ಮಾಡಲಾಗದಷ್ಟು ನರಕಯಾತನೆಯನ್ನು ಮಹಿಳಾ ಕೈದಿಗಳು ಇಂದು ಅನುಭವಿಸುತ್ತಿದ್ದಾರೆ. ಬೇರೆ ಯಾವ ಕಡೆಯಲ್ಲಾದರೂ ಯಾರನ್ನಾದರೂ ಸಂಪರ್ಕ ಮಾಡಬಹುದು. ಜೈಲಿನ ಮಹಿಳಾ ಬ್ಯಾರಕುಗಳ ಲೋಕವೇ ನಿಗೂಢವಾಗಿದ್ದು. ಇಲ್ಲಿ ವರ್ಷಗಟ್ಟಲೆ ಕೈದಿಗಳಾಗಿರುವ ಮಹಿಳೆಯರಿದ್ದಾರೆ. ಜೈಲು ಸೇರಿದ ನಂತರ ಒಂದೇ ಒಂದು ಬಾರಿಯೂ ಮನೆಯವರ ಮುಖ ನೋಡದ ಮಹಿಳೆಯರೂ ಇದ್ದಾರೆ. ಅವರ ಸ್ಥಿತಿ ಹೇಗಿರಬೇಡ ?

ಜೈಲಿನಲ್ಲಿದ್ದ ನನಗೆ ಅದೊಂದು ದಿನ ಜೈಲರ್ರಿಂದ ಕರೆ ಬಂದಿತ್ತು.Angellica Aribam ಜೈಲರನ್ನು ಭೇಟಿಯಾದಾಗ “ಮಹಿಳಾ ಕೈದಿಯೊಬ್ಬರು ನಿಮ್ಮನ್ನು ಭೇಟಿಯಾಗಬೇಕಂತೆ” ಎಂದರು. ಮಹಿಳಾ ಕೈದಿಗಳ ಭೇಟಿಗೆ ಅವಕಾಶವಿರುವ ಕೊಠಡಿಯಲ್ಲಿ ಆ ಮಹಿಳಾ ಕೈದಿಯನ್ನು ಭೇಟಿಯಾಗಿದ್ದೆ. ಆಕೆ ಸೇರಿದಂತೆ ಆಗ ಜೈಲಿನಲ್ಲಿದ್ದ 15 ಕ್ಕೂ ಅಧಿಕ ಮಹಿಳಾ ಕೈದಿಗಳ ತಮ್ಮ ದುಸ್ಥಿತಿಯನ್ನು ತೋಡಿಕೊಂಡರು. ಸೀಮಿತವಾಗಿರುವ ಬಟ್ಟೆಬರೆಗಳನ್ನು ಇಟ್ಟುಕೊಂಡು ಮಹಿಳೆಯೊಬ್ಬಳು ಬದುಕುವುದೇ ದುಸ್ಥರವಾಗಿರುವಾಗ ಪಿರಿಯೆಡ್ಸ್ ಸಮಯದಲ್ಲಿ ನ್ಯಾಪ್ಕಿನ್ ಇಲ್ಲವೆಂದರೆ ಹೇಗೆ? ಜೈಲಿಗೆ ನ್ಯಾಪ್ಕಿನ್ ಒದಗಿಸಲೆಂದೇ ಪ್ರತ್ಯೇಕ ಹಣದ ವ್ಯವಸ್ಥೆ ಇದೆ. ಆದರೆ, ಅದು ಅಧಿಕಾರಿಗಳ ಕಿಸೆ ಸೇರುತ್ತದೆ. ಪಿರಿಯೆಡ್ಸ್ ಸಂದರ್ಭದಲ್ಲಿ ಮಹಿಳೆಯ ಮಾನಸಿಕ ಸ್ಥಿತಿಯಲ್ಲೂ ಏರುಪೇರಾಗುತ್ತದೆ. ಪಿರಿಯೆಡ್ಸ್ ಸಮಯದಲ್ಲಿ ಮಹಿಳೆಯ ಸ್ವಚ್ಚವಾಗಿರುವ ಶೌಚಾಲಯ ಬಳಸಬೇಕು. ಇಲ್ಲದೇ ಇದ್ದಲ್ಲಿ ಆಕೆ ಹಲವು ರೋಗಗಳಿಗೆ ಈಡಾಗುತ್ತಾಳೆ. ಆದರೆ ಯಾವ ಮಹಿಳಾ ಬ್ಯಾರಕಿನಲ್ಲೂ ಯಾವುದೇ ಶೌಚಾಲಯಗಳು ಸ್ವಚ್ಚವಾಗಿಲ್ಲ.

ವಿಚಿತ್ರವೆಂದರೆ ಜೈಲಿನೊಳಗಿನ ಈ ಪರಿಪಾಟಲನ್ನು ಮಹಿಳಾ ಜೈಲರ್ ಗಳಿಗೆ ಹೇಳಿದರೂ ಪ್ರಯೋಜನವಾಗುವುದಿಲ್ಲ. ಒಂದು ಉಪ-ಕಾರಾಗೃಹದಲ್ಲಿ ಸಾಮಾನ್ಯವಾಗಿ ಒಂದು ಪುರುಷ ಜೈಲರ್, ಒಂದು ಮಹಿಳಾ ಜೈಲರ್ ಮತ್ತು ಒಬ್ಬ ಜೈಲ್ ಸೂಪರಿಂಡೆಂಟ್ ಇರುತ್ತಾರೆ. ಮಹಿಳಾ ಜೈಲರ್ ಎಂಬುದು ಮಹಿಳಾ ಬ್ಯಾರಕಿಗಷ್ಟೇ ಸೀಮಿತ ಆಗಿರೋದ್ರಿಂದ ಅವರ ಅಧಿಕಾರ ಅಷ್ಟಕ್ಕಷ್ಟೆ. ನೂರಾರು ಕೈದಿಗಳನ್ನು ಸಂಭಾಳಿಸುವ ಪುರುಷ ಜೈಲರುಗಳದ್ದೇ ಜೈಲುಗಳಲ್ಲಿ ಕಾರುಬಾರು ಇರುತ್ತದೆ. ಮಹಿಳಾ ಜೈಲರುಗಳು ನ್ಯಾಪ್ಕಿನ್ ಬಗ್ಗೆ ಪ್ರಸ್ತಾಪಿಸಿದ್ರೂ ಸುಪರಿಂಡೆಂಟ್ ಎದುರು ಸ್ವತಃ ಮುಜುಗರಕ್ಕೆ ಈಡಾಗಬೇಕಾಗುತ್ತದೆ.

ನನ್ನ ಬ್ಯಾರಕಿನಲ್ಲೇ ನಕ್ಸಲ್ ಆರೋಪ Women Jail inmatesಹೊತ್ತು ವಿಚಾರಣಾಧೀನ ಬಂಧನದಲ್ಲಿದ್ದ ಕೈದಿಯೊಬ್ಬರಿದ್ದರು. ಮಹಿಳಾ ಬ್ಯಾರಕಿನಲ್ಲಿ ನ್ಯಾಪ್ಕಿನ್ ಇಲ್ಲದಿರುವ ಬಗ್ಗೆ ನಾವಿಬ್ಬರೂ ಒಮ್ಮೆ ಜೈಲರನ್ನು ಭೇಟಿಯಾಗಿ ಕೇಳಿದ್ದೆವು. ಆತ ನಕ್ಕ ಶೈಲಿ ಇದೆಯಲ್ಲಾ, ಅದನ್ನು ನೆನೆಪಿಸಿಕೊಂಡಾಗ ಈಗಲೂ ಮೈ ಉರಿಯುತ್ತೆ. ನಂತರ ಜೈಲಿನೊಳಗೆ ವಿಚಾರಣಾಧೀನ ಮುಸ್ಲಿಂ ಬಂಧಿತರಿಗೆ ತೊಂದರೆಯಾದಾಗ ಜೈಲಿನಲ್ಲಿ ಪ್ರತಿಭಟನೆ ಮಾಡಿದ್ದೆವು. ಆಗ ಬೇಡಿಕೆ ಈಡೇರಿಕೆಯ ಬಗ್ಗೆ ಅಧಿಕಾರಿಗಳ ಜೊತೆ ಸಂಧಾನ ಸಭೆ ನಡೆಸಿದಾಗ, ನ್ಯಾಪ್ಕಿನ್ ವಿಚಾರವನ್ನು ಬೇಡಿಕೆಯ ಪಟ್ಟಿಯಲ್ಲಿ ಹಾಕಿದ್ದೆವು. ಸ್ವಲ್ಪ ದಿನ ನ್ಯಾಪ್ಕಿನ್ ಪೂರೈಕೆಯೂ ಆಯಿತು. ನಂತರ ನಿಂತು ಹೋಗಿದೆ.

ಜೈಲು ವ್ಯವಸ್ಥೆಯಲ್ಲೇ ತಪ್ಪುಗಳಿವೆ. ಇಲ್ಲಿ ಪುರುಷ ಕೈದಿಗಳು ಮತ್ತು ಮಹಿಳಾ ಕೈದಿಗಳ ಮಧ್ಯೆ ಆವರಣ ಗೋಡೆ ಹೊರತುಪಡಿಸಿದರೆ ಬೇರಾವ ಸರಕಾರಿ ಸೌಲಭ್ಯಗಳಲ್ಲೂ ವ್ಯತ್ಯಾಸವಿಲ್ಲ. ಹಾಗೆ ನೋಡಿದರೆ ಜೈಲಿಗೆ ಎಂದು ಬರುವ ಎಲ್ಲಾ ಅನುದಾನಗಳ ಪ್ರಯೋಜನಗಳು ಪುರುಷರ ಬ್ಯಾರಕಿಗೆ ಸಲ್ಲಿಕೆಯಾಗುತ್ತದೆ. ಗ್ರಂಥಾಲಯ, ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ಸರಕಾರಿ ಯೋಜನೆಗಳು ದೊಡ್ಡದಾಗಿ ಕಾಣುವ ಪುರುಷರ ಬ್ಯಾರಕುಗಳಿರುವ ಬ್ಲಾಕಿಗೆ ಹೋಗುತ್ತದೆ. ಉನ್ನತ ಅಧಿಕಾರಿಗಳು ಪರಿಶೀಲನೆಗೆ ಬರುವ ಸಂಧರ್ಭದಲ್ಲೂ ಕೇವಲ ಪುರುಷರ ಬ್ಯಾರಕುಗಳನ್ನಷ್ಟೇ ಪರಿಶೀಲನೆ ಮಾಡುತ್ತಾರೆ. ಯಾವತ್ತೋ ಒಮ್ಮೆ ಭೇಟಿ ನೀಡೋ ಮಾನವ ಹಕ್ಕು ಆಯೋಗದ ಅಧ್ಯಕ್ಷರು ಅಥವಾ ಸದಸ್ಯರು ಇಲ್ಲಿಯವರೆಗೂ ಮಹಿಳಾ ಬ್ಯಾರಕಿಗೆ ಭೇಟಿ ನೀಡಿದ್ದು ನನಗಂತೂ ಗೊತ್ತಿಲ್ಲ. ಉನ್ನತ ಅಧಿಕಾರಿಗಳು ಪರಿಶೀಲನೆಯ ವೇಳೆ ಗೋಡೆ, ಕಿಟಕಿ, ಬಾಗಿಲು, ಬೀಗ ಸರಿಯಿದೆಯೇ ಎಂದು ಪರಿಶೀಲನೆ ನಡೆಸುತ್ತಾರೆಯೇ ಹೊರತು ಮನುಷ್ಯ ಬದುಕಲು ಯೋಗ್ಯವಾದ ವಾತಾವರಣ ಇದೆಯೇ ಎಂಬ ಕಡೆ ಗಮನ ಕೊಡುವುದಿಲ್ಲ. ಇಂತಹ ಪರಿಸರದಲ್ಲಿ ಪಿರಿಯೆಡ್ಸ್ ಟೈಮಲ್ಲಿ ಮಹಿಳೆಯರ ಸ್ಥಿತಿ ಹೇಗಿರಬೇಡ ?

ಪುರುಷ ಬ್ಯಾರಕ್ ಇರೋ ಜೈಲು ಆವರಣದ ಒಳಗೆ ಜೈಲಿನ ಊಟ ಸಿದ್ದವಾಗುತ್ತದೆ. ಪುರುಷ ಕೈದಿಗಳಿಗೆJail ಹಂಚಿದ ನಂತರ ಮಹಿಳಾ ಕೈದಿಗಳಿಗೆ ಊಟ ನೀಡಲಾಗುತ್ತದೆ. ಊಟ ಕಳುಹಿಸುವುದರಿಂದ ಹಿಡಿದು ಪಿರಿಯೆಡ್ಸ್ ಸಮಯದಲ್ಲಿ ನ್ಯಾಪ್ಕಿನ್ ಕೊಡೋದ್ರ ತನಕ ಮಹಿಳಾ ಕೈದಿಗಳು ಶೋಷಣೆಗೆ ಒಳಗಾಗುತ್ತಿದ್ದಾರೆ. ಯಾವುದೇ ಜೈಲುಗಳಲ್ಲಿ ಹಾಸಿಗೆ ತಲೆದಿಂಬು ಬಳಸುವಂತಿಲ್ಲ. ನೆಲದ ಮೇಲೆ, ಚಾಪೆ ಅಥವಾ ಬೆಡ್ ಶೀಟ್ ಹಾಸಿ ಮಲಗಬೇಕು. ಹಾಸಿಗೆ ದಿಂಬು ಜೈಲಿನಲ್ಲಿ ಬಳಸಲು ಒಂದೋ ನ್ಯಾಯಾಲಯದ ಅನುಮತಿ ಬೇಕು ಅಥವಾ ಪ್ರಭಾವಶಾಲಿಯಾಗಿರಬೇಕು. ಜೈಲಿನಲ್ಲಿ ದಿನಗಟ್ಟಲೆ, ವರ್ಷಗಟ್ಟಲೆ ಇದ್ದಾಗ ಪಿರಿಯೆಡ್ಸ್ ಟೈಮಲ್ಲಿ ಕೇವಲ ನ್ಯಾಪ್ಕಿನ್ ಅಲಭ್ಯತೆ ಮಾತ್ರ ಸಮಸ್ಯೆ ಅಲ್ಲ. ಪಿರಿಯೆಡ್ಸ್ ಸಮಯದಲ್ಲಿ ಬಹಳಷ್ಟು ಮಹಿಳೆಯರಿಗೆ ತಲೆಯನ್ನು ಗೋಡೆಗೆ ಚಚ್ಚಬೇಕು ಅನ್ನುವಷ್ಟು ತಲೆ ಸಿಡಿತವಾಗುತ್ತದೆ. ಆಗ ಒರಗಿಕೊಳ್ಳಲು ದಿಂಬಿಲ್ಲದೆ ಗೋಡೆಗೆ ತಲೆ ಇಡಬೇಕಾಗುತ್ತದೆ. ಇನ್ನು ಕೆಲ ಮಹಿಳೆಯರಿಗೆ ಪಿರಿಯೆಡ್ಸ್ ಸಮಯದಲ್ಲಿ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಆ ಸಂಧರ್ಭದಲ್ಲೂ ನೆಲದ ಮೇಲೆಯೇ ಮಲಗಬೇಕು ಎನ್ನುವುದು ಅದ್ಯಾವ ಶಿಕ್ಷೆ? ಮನೆಯಲ್ಲಿ ಅಕ್ಕನೋ, ತಂಗಿಯೋ, ಹೆಂಡತಿಯೋ ಬೇಕಾದ ಸೌಲಭ್ಯಗಳು ಕೈಗೆಟುಕುವಂತಿದ್ದರೂ ಪಿರಿಯೆಡ್ಸ್ ಟೈಮಲ್ಲಿ ಅವರ ಕಷ್ಟ ನಮಗೆ ನೋಡೋಕಾಗಲ್ಲ. ಅಂತಹುದರಲ್ಲಿ ನಾಲ್ಕು ಗೋಡೆಗಳ ಮಧ್ಯೆ ತಮ್ಮವರ್ಯಾರು ಇಲ್ಲದೆ, ಕನಿಷ್ಠ ಶುಚಿಯಾದ ಶೌಚಾಲಯವೂ ಇಲ್ಲದೆ, ನ್ಯಾಪ್ಕಿನ್ ಬಿಡಿ ಕನಿಷ್ಠ ಬಳಸೋಕೆ ಬಟ್ಟೆಯೂ ಇಲ್ಲದೆ ಪಿರಿಯೆಡ್ಸ್ ಟೈಮಲ್ಲಿ ಬದುಕುವ ಮಹಿಳಾ ಕೈದಿಗಳ ಪಾಡು ಹೇಗಿರಬೇಕು ಎಂದು ನೆನೆಯುವಾಗ ಮೈ ಜುಂ ಎನಿಸುತ್ತದೆ.

ಏಂಜಿಲಿಕಾರವರು ದೆಹಲಿ ಪೊಲೀಸರಿಗೆ ಬರೆದ ಪತ್ರದ ವಿಚಾರ ಚರ್ಚೆಯ ಹೊತ್ತಿನಲ್ಲಿ ಇದೆಲ್ಲ ನೆನಪಿಗೆ ಬಂತು.

ವರ್ತಮಾನ ಬಳಗದ ಪುಟ್ಟ ಸಮಾಗಮ, ಎಸ್.ಆರ್.ಹಿರೇಮಠ್ ಮತ್ತು ಕಥಾಸ್ಪರ್ಧೆಯ ವಿಜೇತರೊಂದಿಗೆ…

ಆತ್ಮೀಯರೇ,

ಮೊನ್ನೆ ನಮ್ಮ ವರ್ತಮಾನ ಬಳಗವರು ಮತ್ತು ಕೆಲವು ಸ್ನೇಹಿತರು ಈ ಬಾರಿಯ (೨೦೧೪) ಗಾಂಧಿ ಜಯಂತಿ ಕಥಾಸ್ಪರ್ಧೆಯಲ್ಲಿ ಬಹುಮಾನಿತ ಕತೆಗಳನ್ನು ಬರೆದಿರುವ ಕೆಲವು ಕತೆಗಾರರೊಂದಿಗೆ ಊಟಕ್ಕೆಂದು ಸೇರಿದ್ದೆವು. ಕಥಾಸ್ಪರ್ಧೆಯ ಮೊದಲ ಮೂರು ಬಹುಮಾನಿತ ಕತೆಗಳನ್ನು ಬರೆದಿರುವ ಕತೆಗಾರರು ಮತ್ತು ಈ ಬಾರಿಯ ತೀರ್ಪುಗಾರರು ಅಂದು ಬೆಂಗಳೂರಿನಲ್ಲಿ ಇರುತ್ತಾರೆ ಎನ್ನುವ ಕಾರಣಕ್ಕೆ ಈ ಪುಟ್ಟ ಸಮಾಗಮ. ಹಾಗೆಯೇ, ನಮ್ಮ ರಾಜ್ಯದ ವರ್ಷದ ವ್ಯಕ್ತಿಯಾಗಿ ನಮ್ಮ ವರ್ತಮಾನ ಬಳಗ ಆಯ್ಕೆ ಮಾಡಿದ್ದ ಎಸ್.ಆರ್.ಹಿರೇಮಠರೂ ನೆನ್ನೆ ಬೆಂಗಳೂರಿನಲ್ಲಿ ಇದ್ದರು. ಸಾಧ್ಯವಾದರೆ ಅವರ ಜೊತೆ ಸ್ವಲ್ಪ ಸಮಯ ಕಳೆದು ನಮ್ಮ ಕತೆಗಾರರಿಗೆ ಅವರಿಂದಲೇ ಬಹುಮಾನ ವಿತರಣೆ ಮಾಡಿಸಬೇಕೆಂದು ಅಂದುಕೊಂಡಿದ್ದೆವು.

ಬೆಂಗಳೂರಿನ ಗಾಂಧಿನಗರದಲ್ಲಿರುವ ಬಸಂತ್ ರೆಸಿಡೆನ್ಸಿ ಹೋಟೆಲ್‌ನಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳದ ರೊಟ್ಟಿ ಊಟ ಸಿಗುತ್ತದೆ. ಅಲ್ಲಿ ಸೇರಿದ್ದೆವು. katha-sprade-2014-223x300ನಮ್ಮ ವರ್ತಮಾನ.ಕಾಮ್‌ನೊಂದಿಗೆ ಮೊದಲಿನಿಂದಲೂ ಬೆನ್ನೆಲುಬಾಗಿ ನಿಂತಿರುವ ನಾಲ್ಕೈದು ಜನ ಬೆಂಗಳೂರಿನ ಹೊರಗೆಯೇ ಇರುವುದರಿಂದ ಅವರು ಪಾಲ್ಗೊಳ್ಳಲಾಗಲಿಲ್ಲ ಮತ್ತು ನಗರದಲ್ಲಿಯೇ ಇರುವ ಇನ್ನೂ ಕೆಲವರು ಕಾರ್ಯಬಾಹುಳ್ಯದಿಂದಾಗಿ ಬರಲಾಗಲಿಲ್ಲ. ಬರಬೇಕಾಗಿದ್ದ ಈ ಬಾರಿಯ ತೀರ್ಪುಗಾರರಾಗಿದ್ದ ಎಸ್.ಗಂಗಾಧರಯ್ಯನವರೂ ಬರಲಾಗಿರಲಿಲ್ಲ. ಅವರನ್ನು ಬಿಟ್ಟರೆ ಒಟ್ಟಾರೆಯಾಗಿ ನಮ್ಮ ಬಳಗದ ಬಹುತೇಕರು ಹಾಜರಿದ್ದರು.

ಊಟದ ನಂತರ ಎಸ್.ಆರ್.ಹಿರೇಮಠರು ಹಾಜರಿದ್ದ ಕರೆಗಾರರಾದ ಟಿ.ಎಸ್.ವಿವೇಕಾನಂದ, ಟಿ.ಕೆ.ದಯಾನಂದ್, ಮತ್ತು ಎಚ್.ಎಸ್.ಅನುಪಮರಿಗೆ ಬಹುಮಾನಗಳನ್ನು ಕೊಟ್ಟರು. ಕಳೆದ ಬಾರಿಯ ತೀರ್ಪುಗಾರರಾಗಿದ್ದ ರಾಮಲಿಂಗಪ್ಪ ಟಿ.ಬೇಗೂರುರವರು ಈ ಸಂದರ್ಭದಲ್ಲಿ ಹಾಜರಿದ್ದು, ಬಹಳ ಆಪ್ತ ವಾತಾವರಣದಲ್ಲಿ, ಒಂದು ರೀತಿಯಲ್ಲಿ ಖಾಸಗಿಯಾಗಿ ಇದು ಮುಗಿಯಿತು.

ಈ ಪುಟ್ಟ ಸಮಾಗಮಕ್ಕೆ ಆಗಮಿಸಿದ್ದ ಎಸ್.ಆರ್.ಹಿರೇಮಠ್, ಡಾ.ರಾಮಲಿಂಗಪ್ಪ ಟಿ.ಬೇಗೂರು, ಟಿ.ಎಸ್.ವಿವೇಕಾನಂದ ಮತ್ತು ಕುಟುಂಬದವರು, ಟಿ.ಕೆ.ದಯಾನಂದ್, ಡಾ.ಎಚ್.ಎಸ್.ಅನುಪಮ, ಬಿ.ಶ್ರೀಪಾದ ಭಟ್, ಜಯಶಂಕರ ಹಲಗೂರು, ಆನಂದ ಯಾದವಾಡ ಮತ್ತು ಕುಟುಂಬದವರು, ರವಿ ಮತ್ತು ಕುಟುಂಬದವರು, ಈಶ್ವರ್ ಮತ್ತು ಕುಟುಂಬದವರು, ಫ್ರಭಾ ಎನ್. ಬೆಳವಂಗಲ, ನವೀನ್ ಸೂರಿಂಜೆ, ತೇಜ ಸಚಿನ್ ಪೂಜಾರಿ, ಡಾ. ಅಶೋಕ್ ಕೆ,ಆರ್., ಅನಂತ ನಾಯ್ಕ, ಶಾಂತಲಾ ದಾಮ್ಲೆ, ಪ್ರಶಾಂತ್ ಹುಲ್ಕೋಡು, ಚಂದ್ರಶೇಖರ ಬೆಳಗೆರೆ, ಬಸವರಾಜು, ಶ್ರೀಧರ್ ಪ್ರಭು, ನಿತಿನ್, ಬಸೂ ಸೂಳಿಬಾವಿ ಮತ್ತವರ ಸ್ನೇಹಿತರು- ಎಲ್ಲರಿಗೂ ವರ್ತಮಾನ ಬಳಗದಿಂದ ಧನ್ಯವಾದ ಮತ್ತು ಕೃತಜ್ಞತೆಗಳು.

ಮತ್ತೊಮ್ಮೆ ಬಂದ ಎಲ್ಲಾ ಸ್ನೇಹಿತರಿಗೂ ಬಳಗದ ಪರವಾಗಿ ಧನ್ಯವಾದಗಳು.

ನಮಸ್ಕಾರ,
ರವಿ
ವರ್ತಮಾನ ಬಳಗದ ಪರವಾಗಿ.

vartamana_spardhe_1

 

vartamana_spardhe_2

ಬುರ್ಖಾದೊಳಗಿನ ಅವಳ ಮೌನಕ್ಕೆ ಧ್ವನಿಯಾದಾಗ…


-ಇರ್ಷಾದ್


 

 

 

“ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಂಗಳೂರಿನಲ್ಲಿ  ’ಬಾಡೂಟದ ಜೊತೆಗೆ ಗಾಂಧೀ ಜಯಂತಿ’ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಮಾತನಾಡುತ್ತಾbasheer-book-release-dinesh-1 “ ಬುರ್ಖಾ ಬೇಕೋ ಬೇಡವೋ ಎಂದು 25 ರಿಂದ 30 ವರ್ಷದೊಳಗಿನ ಮುಸ್ಲಿಮ್ ಮಹಿಳೆಯರ ರಹಸ್ಯ ಮತದಾನ ಮಾಡಿದ್ದಲ್ಲಿ ಬಹುಸಂಖ್ಯಾತ ಮಹಿಳೆಯರು ಬುರ್ಖಾ ಬೇಡ ಎನ್ನಬಹುದು. ಪಾಪ ಬಹಿರಂಗವಾಗಿ ಅವರಿಗೆ ಬುರ್ಖಾವನ್ನು ವಿರೋಧಿಸಲು ಧೈರ್ಯವಿಲ್ಲದಿರಬಹುದು” ಅಂದಿದ್ದಾರೆ. ಅಮೀನ್ ಮಟ್ಟು ಅವರ ಈ ಮಾತುಗಳನ್ನು ದಿನಪತ್ರಿಕೆಗಳಲ್ಲಿ ಓದಿದಾಗ ನನ್ನ ಒಳ ಮನಸ್ಸಿನ ಮೂಲೆಯಲ್ಲಿ ಆಸೆಯೊಂದು ಚಿಗುರಿತು. ಬುರ್ಖಾ ಬೇಕೋ ಬೇಡವೋ ಎಂಬ ರಹಸ್ಯ ಮತದಾನದಲ್ಲಿ ನನ್ನ ಮತವನ್ನು ಹಾಕುವ ಹಂಬಲ ಮನದಲ್ಲಿ ಮೂಡಿತು. ತಕ್ಷಣ ಮನೆಯ ತೆರದಿದ್ದ ಕಪಾಟಿನ್ನು ನೋಡಿದಾಗ ಅಲ್ಲಿ ತೂಗು ಹಾಕಿದ್ದ ಕಪ್ಪು ಬಣ್ಣದ ಬುರ್ಖಾ ನನ್ನನ್ನೇ ದಿಟ್ಟಿಸುವಂತೆ ನನಗೆ ಭಾಸವಾಯಿತು. ಎರಡು ತಿಂಗಳ ಹಿಂದೆಯಷ್ಟೇ ಉಪವಾಸ ಹಿಡಿದು ಈದ್ ಉಲ್ ಫಿತರ್ ಹಬ್ಬ ಆಚರಿಸಿದ್ದೆವು. ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಹಬ್ಬಕ್ಕೆ ಮಂಗಳೂರಿನ ಪೇಟೆಗೆ ಹೊಸ ಬಟ್ಟೆ ಖರೀದಿ ಮಾಡಲು ಅಪ್ಪ ಅಮ್ಮನ ಜೊತೆ ಹೋಗಿದ್ದೆ. ನನ್ನ ತಮ್ಮನಿಗಿಂತ ಹೆಚ್ಚು ಬೆಳೆಬಾಳುವ ಸಲ್ವಾರ್ ನನಗೆ ಖರೀದಿಸಲು ಅಪ್ಪ ಅಮ್ಮ ಮುಂದಾದರು. ಅವರ ಪ್ರೀತಿಯ ಮಗಳು ಚೆನ್ನಾಗಿ ಕಾಣಬೇಕು, ಖುಷಿಯಾಗಿ ಇರಬೇಕು ಎಂಬ ಬಯಕೆ ಅವರದ್ದು. ನಾನು ಹೇಳಿದೆ ಅಮ್ಮಾ ನನಗೆ ಈ ಬೆಳೆಬಾಳುವ ಸಲ್ವಾರ್ ಗಿಂತ ಬೇರೆ ಬಣ್ಣದ ಬುರ್ಖಾ ಖರೀದಿಸಿ ಕೊಡು. ಈ ಸುಡು ಬಿಸಿಲಿಗೆ ಕಪ್ಪು ಬಣ್ಣದ ಬುರ್ಖಾ ತೊಟ್ಟು ಸಾಕಾಗಿದೆ. ಅಮ್ಮ ನನ್ನ ಮುಖವನ್ನು ನೋಡಿ ಒಮ್ಮ ನಕ್ಕು ಸುಮ್ಮನಾದರು. ಆಮ್ಮನ ಆ ನಗುವಿನಲ್ಲಿ ಎಲ್ಲ ಅರ್ಥವೂ ತುಂಬಿಕೊಂಡಿತ್ತು. ನಾನು ಸುಮ್ಮನಾದೆ.

ಮರುದಿನ ಮನೆಯಲ್ಲಿ ಹಬ್ಬ. ತನ್ನ ಸಹೋದರ ರಿಜ್ವಾನ್ ಗೆ ಸಂಭ್ರವೋ ಸಂಭ್ರಮ. ಹೊಸ ಬಟ್ಟೆ ತೊಟ್ಟು ಎಲ್ಲಾ ಗೆಳೆಯರಿಗೂ ತೋರಿಸಿ ಸ್ನೇಹಿತರ ಹೊಗಳಿಕೆಯಿಂದ ಗಾಳಿಯಲ್ಲಿ ಹಾರಾಡುತ್ತಿದ್ದ. burka-girlsಅಮ್ಮ ಅಪ್ಪ ಖರೀದಿಸಿ ಕೊಟ್ಟ ಸಲ್ವಾರನ್ನು ನಾನು ತೊಟ್ಟು ನನ್ನ ಸ್ನೇಹಿತೆಯರಿಗೆ ತೋರಿಸಿ ಅವನಷ್ಟೇ ಸಂಭ್ರಮ ಪಡಬೇಕು ಎಂದು ನನ್ನ ಮನಸ್ಸೂ ಹಂಬಲಿಸುತಿತ್ತು. ಅಯ್ಯೋ ಅದು ಸಾಧ್ಯಾನಾ? ಮನೆಯ ಹೊರಗಡೆ ಹಾಗೆಲ್ಲಾ ಕಾಲಿಡುವ ಹಾಗಿಲ್ಲ ನಾನು. ಒಂದು ವೇಳೆ ಕಾಲಿಡುವುದಾದರೆ ಮತ್ತದೇ ಹಳೇ ಕಪ್ಪು ಬುರ್ಖಾ ಧರಿಸಬೇಕು. ಸ್ನೇಹಿತೆಯ ಮನೆಗೆ ಹೋದರೂ ಅಲ್ಲೂ ನೆಂಟರು. ಅವರ ಮುಂದೆ ಬುರ್ಖಾ ತೆಗೆಯುವಂತಿಲ್ಲ. ಮನೆಯ ಒಳಗಿನ ಕೋಣೆಗೆ ಹೋಗಿ ಬುರ್ಖಾ ತೆಗೆದು ನಾನು ಧರಿಸಿದ ಹೊಸ ಬಟ್ಟೆಯನ್ನು ಸ್ನೇಹಿತೆಗೆ ತೋರಿಸಿ ಖುಷಿ ಪಡುವುದಕ್ಕಿಂದ ನನ್ನನ್ನು ನಾನೇ ಕನ್ನಡಿ ಮುಂದೆ ನಿಂತು ನೋಡಿ ಖುಷಿ ಪಟ್ಟೆ. ಇನ್ನೇನು ಮುಂದಿನ ತಿಂಗಳು ಕಾಲೇಜಿನಲ್ಲಿ ನಡೆಯಲಿರುವ ಕಾಲೇಜ್ ಡೇ ಕಾರ್ಯಕ್ರಮದಲ್ಲಾದರೂ ಈ ಹೊಸ ಬಟ್ಟೆ ಧರಿಸಿ ಖುಷಿ ಪಡಬೇಕು ಎಂದೆನಿಸಿ ಸುಮ್ಮನಾದೆ. ಆದರೆ ಕಾಲೇಜ್ ಡೇ ಕಾರ್ಯಕ್ರಮದಲ್ಲಿ ಮನೆಯಿಂದ ಹೊರಡುವಾಗಲೇ ಅಮ್ಮ ಅಪ್ಪನ ಎಚ್ಚರಿಕೆಯ ಸಂದೇಶ. ಮತ್ತೆ ಈ ಕಪ್ಪು ಬುರ್ಖಾ ವನ್ನು ದ್ವೇಷಿಸುವಂತಾಯಿತು. “ರಜಿಯಾ ಕಾಲೇಜಿನಲ್ಲಿ ಬುರ್ಖಾ ಇಲ್ಲದೆ ತಿರುಗಾಡಬೇಡ ಮತ್ತೆ ಯಾರಾದರೂ ನೋಡಿದರೆ ನಿಮ್ಮ ಮಗಳೇಕೆ ಹಿಂದೂ ಹುಡುಗಿಯರ ತರ ಎಂದು ನನ್ನನ್ನು ಬೈತಾರೆ” ಎಂದು ಎಚ್ಚರಿಸಿದರು ಅಪ್ಪ. ಕಾಲೇಜು ಡೇ ಗೆ ಬೇಡದ ಮನಸ್ಸಿನಲ್ಲಿ ಹಬ್ಬದ ಬೆಳೆಬಾಳುವ ಬಟ್ಟೆಯನ್ನು ಒಳಗೆ ಧರಿಸಿಕೊಂಡು ಅದರ ಮೇಲೆ ಕಪ್ಪು ಬುರ್ಖಾ ಧರಿಸಿಕೊಂಡು ಹೋದೆ. ಎಲ್ಲಾ ನನ್ನ ಇತರ ಧರ್ಮದ ಸ್ನೇಹಿತೆಯರು ಹೊಸ ಹೊಸ ಬಟ್ಟೆಯನ್ನು ಧರಿಸಿ ಅತ್ತಿತ್ತ ಓಡಾಡುತ್ತಿದ್ದರು. ನಾನು ಮಾತ್ರ ಕಪ್ಪು ಬುರ್ಖಾದಲ್ಲೇ ಬಂಧಿಯಾಗಿದ್ದೆ. ಅಬ್ಬಾ ಸಾಕು ಈ ಬುರ್ಖಾ ಸಹವಾಸ ಎಂದು ಬುರ್ಖಾ ತೆಗೆದು ಬಿಡಬೇಕು ಎನ್ನುವಷ್ಟರಲ್ಲಿ ನನ್ನಂತೆಯೇ ಆಸೆಯನ್ನು ಹತ್ತಿಕ್ಕಲಾರದೆ ಬುರ್ಖಾ ತೆಗೆದು ಇತರ ಹೆಣ್ಣುಮಕ್ಕಳ ಜೊತೆ ತಿರುಗಾಡುತ್ತಿದ್ದ ಆಯಿಷಾಳಿಗೆ ಜೀನ್ಸ್ ಪ್ಯಾಂಟ್ ಹಾಗೂ ಟೀ ಶರ್ಟ್ ತೊಟ್ಟು ಸ್ಟೈಲ್ ಆಗಿ ಬೈಕಲ್ಲಿ ಸುತ್ತಾಡುತ್ತಿರುವ ಮುಸ್ಲಿಮ್ ಹುಡುಗರು ಬೈಯುತ್ತಿದ್ದರು. “ಏನೇ ನೀನು ಮುಸ್ಲಿಮ್ ಅಲ್ವಾ? ಬುರ್ಖಾ ಹಾಕಲು ನಿನಗೇಕೆ ಸಂಕಟ” ಪಾಪ ಅವರ ಬೈಗುಳಕ್ಕೆ ಭಯಗೊಂಡ ಆಯಿಷಾ ಮತ್ತೆ ಬುರ್ಖಾ ತೊಟ್ಟು ನನ್ನ ಪಕ್ಕದಲ್ಲೇ ಕುಳಿತುಕೊಂಡಳು.

ಅಷ್ಟಕ್ಕೆ ನನಗೆ ದಿನೇಶ್ ಅಮೀನ್ ಮಟ್ಟು ಹೇಳಿದ ಮತ್ತೊಂದು ಮಾತು ನೆನಪಾಯಿತು. ಸಾಕಷ್ಟು ಮುಸ್ಲಿಮ್ ಸಿನಿಮಾ ನಟಿಯರು ಬುರ್ಖಾನೇ ಧರಿಸುವುದಿಲ್ಲ. taslima-nasreenಬಾಂಗ್ಲಾ ದೇಶದ ದಿಟ್ಟ ಮಹಿಳೆ ಶೇಖ್ ಹಸೀನಾ ಯಾವತ್ತೂ ಬುರ್ಖಾ ಧರಿಸಿಲ್ಲ, ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನೆಜೀರ್ ಬುಟ್ಟೂ ಬುರ್ಖಾ ಧರಸಲೇ ಇಲ್ಲ. ಹೌದಲ್ವಾ ಎಂದು ಯೋಚಿಸಲಾರಂಭಿಸಿದಾಗ ಬುರ್ಖಾ ಬೇಡ ಎಂದ ಇನ್ನು ಕೆಲವು ಮುಸ್ಲಿಮ್ ಮಹಿಳೆಯರು ನನ್ನ ಕಣ್ಣ ಮುಂದೆ ಸುಳಿದಾಡಲಾರಂಭಿಸಿದರು. ಮುಸ್ಲಿಮ್ ಪುರೋಹಿತಶಾಹಿ, ಮೂಲಭೂತವಾದ ಧಿಕ್ಕರಿಸಿದ ಸಾರಾ ಅಬೂಬಕ್ಕರ್, ತಸ್ಲೀಮಾ ನಸ್ರೀನಾ, ಶರೀಫಾ, ಜೊಹರಾ ನಿಸಾರ್ ಹೀಗೆ ಹತ್ತು ಹಲವು ಮಹಿಳೆಯರು ಬುರ್ಖಾ ಪದ್ದತಿಯ ವಿರುದ್ದ ಧ್ವನಿ ಎತ್ತಿದಕ್ಕಾಗಿ ಅವರು ಅನುಭವಿಸಿದ ನೋವುಗಳು, ಅವಮಾನಗಳು, ಅಡ್ಡಿ ಆತಂಕಗಳು ಹಾಗೆ ಕಣ್ಣ ಮುಂದೆ ಸುಳಿದಾಡಿದವು. ಈ ಸುಳಿದಾಟದಲ್ಲಿ ಸಾರಾ ಅಬೂಬಕ್ಕರ್ ಅವರ ’ಚಪ್ಪಲಿಗಳು’ ಪುಸ್ತಕದ ಪ್ರತಿಯೊಂದು ಪ್ಯಾರಾ ನೆನಪಾಗತೊಡಗಿತು. ಅದು ಭಯಾನಕ ಎಂದನಿಸಿತು. ಇದರ ನಡುವೆ ಬುರ್ಖಾ ಮಹಿಳೆಯನ್ನು ಅತ್ಯಾಚಾರದಂತಹಾ ದೌರ್ಜನ್ಯದಿಂದ ತಡೆಯುತ್ತದೆ ಎಂಬ ಪುರುಷ ಪ್ರಧಾನ ಸಮಾಜದ ಗರ್ವದ ಮಾತುಗಳು ನನ್ನನ್ನು ಇರಿಯತೊಡಗಿದವು. ಸ್ವಾಮೀ, ಅತ್ಯಾಚಾರಿಗೆ ಬುರ್ಖಾ ತೊಟ್ಟ ಹೆಣ್ಣಾದರೇನು? ಬುರ್ಖಾ ತೊಡದ ಹೆಣ್ಣಾದರೇನು? ಆತನ ಕಣ್ಣಿಗೆ ಎಲ್ಲ ಹೆಣ್ಣು ನಗ್ನವಾಗಿಯೇ ಕಾಣುತ್ತಾಳೆ. ಆ ಕಾರಣಕ್ಕಾಗಿ ನನಗೆ ಬುರ್ಖಾ ತೊಡಿಸಬೇಡಿ. ಬದಲಾಗಿ ಎಲ್ಲಾ ಸ್ತ್ರೀಯರಲ್ಲೂ ನಗ್ನತೆಯನ್ನು ಕಾಣುವ ಅವನ ಕಣ್ಣುಗಳಿಗೆ ಬುರ್ಖಾ ತೊಡಿಸಿ ಎಂದೆ. ಅದಕ್ಕೆ ಯಾರಲ್ಲೂ ಉತ್ತರವಿರಲಿಲ್ಲ. ಬಹುಷಃ ಬುರ್ಖಾದೊಳಗಿನ ನನ್ನ ಮಾತು ಅವರಿಗೆ ಕೇಳಿಸಿರಲಿಕ್ಕಿಲ್ಲ. ಮತ್ತೆ ನಾನು ಕಪ್ಪು ಬುರ್ಖಾವನ್ನು ದಿಟ್ಟಿಸಿ ನೋಡಿ ಸುಮ್ಮನಾದೆ.

ಆಯ್ಯೋ, ಬುರ್ಖಾ ಧರಿಸದಿದ್ದರೆ ನನ್ನನ್ನು ನೋಡುವ ದೃಷ್ಟಿಕೋನ ಒಂದಾದರೆ ಬುರ್ಖಾ ಧರಿಸಿದ ನನ್ನಂತಹಾ ಹೆಣ್ಣುಮಗಳನ್ನು ನೋಡುವ ದೃಷ್ಟಿಕೋನ ಬೇರೆಯದ್ದೇ. ಬುರ್ಖಾ sara abubakarತೊಟ್ಟು ಕಾಲೇಜಿಗೆ ಹೋದರೆ ಕಲವರು ನೋಡುವ ರೀತಿಯೇ ಬೇರೆ. ಪ್ರಚಂಚದ ಯಾವ ಮೂಲೆಯಲ್ಲಾದರೂ ಬಾಂಬ್ ಸ್ಟೋಟವಾದರೆ ಎಲ್ಲರ ಕಣ್ಣಿನ ನೋಟ ನನ್ನತ್ತ ಸುಳಿಯುತ್ತಿರುತ್ತದೆ. ಒಂದು ದಿನ ಕಾಲೇಜಿನ ಮೇಷ್ಟ್ರು ಇದ್ಯಾವುದಮ್ಮಾ ಹಳೆಯ ವೇಷ, ಕಾಲೇಜಿಗೆ ಬರುವಾಗ ಬುರ್ಖಾ ಧರಿಸಬೇಡ ಎಂದರು. ಈ ವಿಚಾರ ಮನೆಗೆ ಗೊತ್ತಾಗಿ, ಅಬ್ಬಾ ಮನೆಯಲ್ಲಿ ಕೊಲಾಹಲ ಎದ್ದುಬಿಟ್ಟಿತು. ದೂರದ ಪ್ರಾನ್ಸ್ ನಲ್ಲಿ ಬುರ್ಖಾ ಧರಿಸಲು ಅಲ್ಲಿಯ ಸರ್ಕಾರ ಅನುಮತಿ ನೀಡದಕ್ಕಾಗಿ ಅಲ್ಲಿಯ ಮುಸ್ಲಿಮ್ ವಿದ್ಯಾರ್ಥಿನಿಯರು ಕಾಲೇಜಿಗೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ. “ನೀನು ಅಷ್ಟೇ ಬುರ್ಖಾ ಹಾಕಿ ಕಾಲೇಜಿಗೆ ಹೋಗೋದು ಬೇಡವಾದರೆ ನೀನು ಶಿಕ್ಷಣ ಮುಂದುವರಿಸುವುದೇ ಬೇಡ” ಎಂದ ನನ್ನ ಸಹೋದರ ರಿಜ್ವಾನ್. ನನ್ನ ಅಸಹನೆ ಮೀರಿ ಹೋಗಿತ್ತು, ಲೋ, ರಿಜ್ವಾನ್ ಇಸ್ಲಾಮ್ ರಾಷ್ಟ್ರವಾದ ಸೌದಿ ಅರೇಬಿಯಾದಲ್ಲಿರುವ ಎಲ್ಲಾ ಧರ್ಮದ ಮಹಿಳೆಯರಿಗೂ ಕಡ್ಡಾಯ ಬುರ್ಖಾ ಧರಿಸಬೇಕೆಂದು ಅಲ್ಲಿಯ ಸರ್ಕಾರ ಆದೇಶ ಮಾಡಿರುವಾಗ ಪ್ರಾನ್ಸ್ ನಲ್ಲಿ ಬುರ್ಖಾ ನಿಶೇಧದ ಕುರಿತಾಗಿ ಮಾತನಾಡುವ ನೈತಿಕತೆ ನಿನಗೆಲ್ಲಿದೆ ಎಂದು. ಮತ್ತೆ ಕಪ್ಪು ಬುರ್ಖಾವನ್ನು ದಿಟ್ಟಿಸುತ್ತಾ ಸುಮ್ಮನಾದೆ.

ಇಲ್ಲ! ದಿನೇಶ್ ಅಮೀನ್ ಮಟ್ಟು ಅವರೇ, ನೀವು ರಹಸ್ಯ ಮತದಾನ ಮಾಡಿದರೂ ಮುಸ್ಲಿಮ್ ಮಹಿಳೆಯರು ಬುರ್ಖಾ ಬೇಡ ಅನ್ನೋದಿಲ್ಲ. ಯಾಕೆಂದರೆ ಅವರು greenಅದಕ್ಕೆ ಒಗ್ಗಿಕೊಂಡು ಹೋಗಿದ್ದಾರೆ. ಬುರ್ಖಾದೊಳಗೇ ಪ್ರಪಂಚವನ್ನು ನೋಡುವುದನ್ನು ಅವರು ಕಂಡುಕೊಂಡಿದ್ದಾರೆ. 7 ನೇ ತರಗತಿಗೆ ಕಾಲಿಡುತ್ತಿದ್ದಂತೆ ಅಮ್ಮಾ ನನಗೆ ಬುರ್ಖಾ ತೊಡಿಸು ಎಂದು ಮಗಳೇ ಒತ್ತಾಯಿಸುತ್ತಾಳೆ. ಸಮಾಜ, ಧರ್ಮ ಆ ಎಳೆ ಮನಸ್ಸನ್ನು ಆ ರೀತಿಯಲ್ಲಿ ಬದಲಾವಣೆ ಮಾಡಿದೆ. ಮನೆಯ ಮಗ ಧರ್ಮ ಮೀರಿ ಯಾವ ರೀತಿಯ ವಸ್ತ್ರನೂ ಧರಿಸಬಹುದು, ಆದರೆ ನಾನು ಮಾತ್ರ ಧರ್ಮದ ಇಂಚು ಇಂಚುಗಳನ್ನೂ ಪಾಲಿಸಬೇಕು. ಇದನ್ನು ಪ್ರಶ್ನಿಸಿದರೆ ಅಪ್ಪ ಪದೇ ಪದೇ ಧರ್ಮದ ಈ ಶ್ಲೋಕಗಳನ್ನು ನೆನಪಿಸುತ್ತಿರುತ್ತಾರೆ. “ನಿಮ್ಮಮನೆಗಳಲ್ಲೇ ಇದ್ದುಕೊಳ್ಳಿರಿ. ಗತಕಾಲದ ಅಜ್ಞಾನ ಕಾಲದಂತಹ ಸೌಂದರ್ಯ ಪ್ರದರ್ಶನ ಮಾಡುತ್ತಾ ತಿರುಗಾಡಬೇಡಿರಿ” ( ಪವಿತ್ರ ಕುರ್ ಆನ್ 33:33 ), “ಮಹಿಳೆ ಬುದ್ದಿ ಮತ್ತು ಧರ್ಮ ಎರಡೂ ವಿಧದಲ್ಲಿ ದುರ್ಬಲರಾಗಿರುತ್ತಾರೆ” ( ಬುಖಾರಿ ) “ನಿಮ್ಮ ಸ್ರೀಯರಿಂದ ಆಜ್ಞೋಲಂಘನೆಯ ಅಶಂಕೆ ನಿಮಗಿದ್ದರೆ ಅವರಿಗೆ ನೀವು ಉಪದೇಶ ನೀಡಿರಿ. ಮಲಗುವಲ್ಲಿಂದ ಅವರಿಂದ ದೂರವಿರಿ ಮತ್ತು ಅವರಿಗೆ ಹೊಡೆಯಿರಿ.” ಪವಿತ್ರ ಕುರ್ ಆನ್ ( 4:34 ). ಇವುಗಳನ್ನು ಅಪ್ಪನ ಬಾಯಿಂದ ಕೇಳುತ್ತಿದ್ದಂತೆ ನಾನು ಮತ್ತೆ ಸುಮ್ಮನಾದೆ. ನನ್ನಂತೆ ಲಕ್ಷಾಂತರ ಮಂದಿ ಹೀಗೆ ಮೌನಿಗಳಾಗಿದ್ದಾರೆ.

ನಾವೇ ಹೀಗಿರುವಾಗ, ದಿನೇಶ್ ಅಮೀನ್ ಮಟ್ಟು ನೀವ್ಯಾಕೆ ಸುಮ್ಮನೆ ನಿಷ್ಠುರರಾಗುತ್ತೀರಾ ಎಂದನಿಸುತ್ತದೆ. ಅದರ ಜೊತೆಗೆ ನನ್ನ ಮೌನಕ್ಕೆ ಧ್ವನಿಯಾದಿರಲ್ಲಾ ಎಂಬburkha sielence ಸಂತಸವೂ ಆಗುತ್ತಿದೆ. ಅಂದು ಕೆಟ್ಟ ಉದ್ದೇಶಕ್ಕಾಗಿ ಬುರ್ಖಾ ಬ್ಯಾನ್ ಮಾಡಲು ಹೊರಟ ಸಂಘಪರಿವಾರದ ನಿಲುವನ್ನು ನೀವು, ಮಂಗಳೂರಿನಲ್ಲಿ ನವೀನ್ ಸೂರಿಂಜೆ ಹಾಗೂ ಸಮಾನ ಮನಸ್ಕ ಪತ್ರಕರ್ತರು ವಿರೋಧಿಸಿದಾಗ ನಮ್ಮವರಿಗೆಲ್ಲಾ ನೀವು ನಮ್ಮೊಳಗಿನವರಾಗಿ ಕಂಡಿರಿ. ಆದರೆ ಇಂದು ಒಳ್ಳೆಯ ಉದ್ದೇಶಕ್ಕಾಗಿ ಮೌನಿಯಾಗಿರುವ ನನ್ನ ಮನದೊಳಗಿನ ಧ್ವನಿಗೆ ಧ್ವನಿಯಾಗುತ್ತಿರುವ ಕೆಲವೇ ಕೆಲವರಲ್ಲಿ ಒಂದು ಧ್ವನಿಯಾಗಿ ಸೇರಿಕೊಂಡ ನೀವು ನಮ್ಮವರಿಗೆಲ್ಲಾ ಇಸ್ಲಾಮ್ ವಿರೋಧಿಯಾಗಿ ಕಾಣುತ್ತಿದ್ದೀರಿ. ನೀವು ನಿಮ್ಮ ಧರ್ಮದ ಕಂದಾಚಾರ, ಪುರೋಹಿತಶಾಹಿ ವ್ಯವಸ್ಥೆ, ಕೋಮುವಾದ, ಮೂಲಭೂತವಾದದ ಬಗ್ಗೆ ಧ್ವನಿ ಎತ್ತಿದ್ದಾಗ ನಿಮ್ಮ ವಿರುದ್ಧ ಆ ವರ್ಗದ ಜನರು ಮುಗಿಬಿದ್ದಾಗ ನನ್ನ ಧರ್ಮದ ಮೂಲಭೂತವಾದಿಗಳು ನಿಮ್ಮನ್ನು ಜ್ಯಾತ್ಯಾತೀತ ಮನೋಭಾವದ ಉತ್ತಮ ವ್ಯಕ್ತಿಯಂತೆ ಕಂಡರು. ಆದರೆ ಇಂದು ನೀವು ನನ್ನ ಧರ್ಮದ ಬುರ್ಖಾ, ಮೂಲಭೂತವಾದದ ಕುರಿತಾಗಿ ಧ್ವನಿ ಎತ್ತಿದಕ್ಕಾಗಿ ಅಂದು ನಿಮ್ಮನ್ನು ಬೆಂಬಲಿಸಿದ ನನ್ನವರು ಇಂದು ನಿಮ್ಮ ಮೇಲೆ ಮುಗಿಬೀಳುತ್ತಿದ್ದಾರೆ. ಅದಕ್ಕಾಗಿ ನಾನು ಕ್ಷಮೆ ಕೋರುತ್ತೇನೆ. ನಿಮಗೆ ಬೆಂಬಲವನ್ನು ಸೂಚಿಸಲು ನನ್ನಂತಹಾ ಸಾವಿರಾರು ಧ್ವನಿಗಳು ನಿಮ್ಮೊಂದಿಗಿದೆ. ಆದರೆ ಏನು ಮಾಡೋಣ, ನನ್ನಂತಹಾ ಮಹಿಳೆಯರ ಮೌನಿ ಧ್ವನಿಗಳು ಯಾರಿಗೂ ಕೇಳಿಸುತಿಲ್ಲವಲ್ಲ”

ರೆಡ್ ಕಾರಿಡಾರಿನಲ್ಲಿ ಪ್ರಜಾಸತ್ತೆಯ ಹೂಗಳು

Naveen Soorinje


– ನವೀನ್ ಸೂರಿಂಜೆ


ದೇಶದ ಪ್ರಭುತ್ವ ಮತ್ತು 1947 ರ ಸ್ವಾತಂತ್ರ್ಯವನ್ನು ಒಪ್ಪದ ನಕ್ಸಲ್ ಬಾಧಿತ ಗ್ರಾಮ ಎಂದು ಸರಕಾರದಿಂದ ಗುರುತಿಸಲ್ಪಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕುತ್ಲೂರು ಗ್ರಾಮದ ಕಾಡಿನಲ್ಲಿ ಪ್ರಥಮ ಬಾರಿಗೆ ಸ್ವಾತಂತ್ರ್ಯೋತ್ಸವನ್ನು ಆಚರಿಸಲಾಗಿದೆ. ನಕ್ಸಲ್ ವಿರೋಧಿ ಪಡೆ ಪೊಲೀಸರ ಕೋವಿನ ನಳಿಗೆಯಂಚಿನಲ್ಲಿ ಬದುಕು ಸಾಗಿಸುತ್ತಿರುವ kuthloor-malekudiya-tribeಕುತ್ಲೂರಿಗೆ 47 ರ ಸ್ವಾತಂತ್ರ್ಯ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೂ ಕೆಂಪು ದ್ವಜಗಳು ಹಾರಾಡಿದ ನೆಲದಲ್ಲಿ ಆದಿವಾಸಿಗಳ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ನಕ್ಸಲ್ ಬೆಂಬಲಿಗನೆಂಬ ಆರೋಪದಲ್ಲಿ ಜೈಲು ಸೇರಿ ಬಿಡುಗಡೆಯಾಗಿರುವ ಪತ್ರಿಕೋದ್ಯಮದ ವಿದ್ಯಾರ್ಥಿ ವಿಠಲ ಮಲೆಕುಡಿಯನಿಂದಾಗಿ ಇಂದು ಕುತ್ಲೂರಿನಲ್ಲಿ ರಾಷ್ಟ್ರಧ್ವಜ ಹಾರುವಂತಾಗಿದೆ.

ಕುತ್ಲೂರಿನಲ್ಲಿ ರಾಷ್ಟ್ರಧ್ವಜ ಹಾರುವುದು ಎಂದರೆ ಸುಲಭದ ಮಾತಲ್ಲ. ನಾವು ಪೇಟೆಯ ಮೈದಾನದಲ್ಲೋ, ಗ್ರಾಮದ ಗದ್ದೆಯಲ್ಲೋ ಕಂಬ ನೆಟ್ಟು ಧ್ವಜ ಹಾರಿಸಿ ಸಿಹಿ ಹಂಚಿದಷ್ಟು ಸುಲಭದ ಮಾತಲ್ಲ. ಅದಕ್ಕೊಂದು ಸುಧೀರ್ಘವಾದ ಸದ್ದಿಲ್ಲದ ಹೋರಾಟವಿದೆ. ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮ ನಕ್ಸಲ್ ಪೀಡಿತ ಪ್ರದೇಶವೆಂದು ಸರಕಾರ ಘೋಷಣೆ ಮಾಡಿದೆ. ಒಂದು ಕಾಲದಲ್ಲಿ ನಕ್ಸಲ್ ಚಟುವಟಿಕೆ ಇದ್ದಿದ್ದನ್ನು ಅಲ್ಲಗಳೆಯುವಂತಿಲ್ಲ. ಕುತ್ಲೂರು ಗ್ರಾಮವನ್ನು ರಾಷ್ಟ್ರೀಯ ಉದ್ಯಾನವನವನ್ನಾಗಿ ಪರಿವರ್ತಿಸಿದಾಗ ಮತ್ತು ಕಾಡುತ್ಪತ್ತಿಯನ್ನು ಸಂಗ್ರಹಿಸಿ ಬದುಕು ಸಾಗಿಸುತ್ತಿದ್ದ ಮಲೆಕುಡಿಯ ಆದಿವಾಸಿಗಳ ಮೇಲೆ ಅರಣ್ಯ ಇಲಾಖೆಯ ದೌರ್ಜನ್ಯ ಹೆಚ್ಚಾದಾಗ ಇಲ್ಲಿನ ಯುವಕರು ನಕ್ಸಲ್ ಚಳುವಳಿಯತ್ತಾ ಆಕರ್ಷಿತರಾಗಿದ್ದುದು ಸುಳ್ಳಲ್ಲ. ಈ ಹಿನ್ನಲೆಯಲ್ಲಿ ಬಂದೂಕಿನ ಮೂಲಕ ಕ್ರಾಂತಿ ಮಾಡಬೇಕು ಮತ್ತು ಆದಿವಾಸಿಗಳಿಗೆ ನ್ಯಾಯ ಒದಗಿಸಬೇಕು ಎಂಬ ಉದ್ದೇಶದಿಂದ ನಕ್ಸಲ್ ಚಳುವಳಿ ಸೇರಿದ ಯುವಕರಲ್ಲಿ ದಿನಕರ್ ಎಂಬಾತ 2008 ರಲ್ಲಿ ಶೃಂಗೇರಿ ಬಳಿ ಪೊಲೀಸರ ಗುಂಡಿಗೆ ಬಲಿಯಾದ. ನಂತರ 2010 ರಲ್ಲಿ ಕುತ್ಲೂರಿನ ವಸಂತ ಪೊಲೀಸರ ಗುಂಡಿಗೆ ಹೆಣವಾದ. ಇದಾದ ನಂತರ ನಕ್ಸಲ್ ವಿರೋಧಿ ಪಡೆ ಪೊಲೀಸರು ಕುತ್ಲೂರಿನಲ್ಲಿ ಝುಂಡಾ ಊರಿದರು. ನಿತ್ಯ 500-600 ಪೊಲೀಸರು ಕುತ್ಲೂರಿನಲ್ಲಿ ಕೂಂಬಿಂಗ್ ನಡೆಸಲು ಶುರುವಿಟ್ಟುಕೊಂಡರು. ಆದಿವಾಸಿ ಯುವಕರು, ಮಹಿಳೆಯರು, ಮಕ್ಕಳ ಮೇಲೂ ಹಲ್ಲೆ ನಡೆಸಿದ್ದಲ್ಲದೆ ಮಾನಸಿಕವಾಗಿ ಪೀಡಿಸಿದರು. ಇದು ಇಲ್ಲಿನ ಆದಿವಾಸಿಗಳು ಪ್ರಭುತ್ವವನ್ನು ಮತ್ತಷ್ಟೂ ದ್ವೇಷಿಸಲು ಕಾರಣವಾಗಿ ನಕ್ಸಲ್ ಚಳುವಳಿಗೆ ಬೆಂಬಲ ನೀಡುವ ಮನಸ್ಥಿತಿ ಬೆಳೆಸಿತು.

ಕಾಡಿನಲ್ಲಿರುವ ಕುತ್ಲೂರು ಗ್ರಾಮದ ಆದಿವಾಸಿಗಳು ವಾರಕೊಮ್ಮೆ ತಾವು ಸಂಗ್ರಹಿಸಿದ ಕಾಡುತ್ಪತ್ತಿಯನ್ನು ಸಂತೆಯಲ್ಲಿ ಮಾರಿ, ಅಡುಗೆ Anti-Naxal-Forceಸಾಮಾನು ಕೊಂಡೊಯ್ಯಲು ಸಂತೆಗೆ ಬರುತ್ತಾರೆ. ಹೀಗೆ ವಾರಕ್ಕೊಮ್ಮೆ ಪೇಟೆಗೆ ಬರುವ ಮಲೆಕುಡಿಯರು ತಮ್ಮ ಮನೆಯ ಸದಸ್ಯರ ಸಂಖ್ಯೆಗಣುಗುಣವಾಗಿ ಪದಾರ್ಥಗಳನ್ನು ಖರೀದಿ ಮಾಡಬೇಕು. ಉದಾಹರಣೆಗೆ ಒಂದು ಕುಟುಂಬದಲ್ಲಿ ಮೂವರಿದ್ದರೆ ಮೂರು ಮೀನುಗಳನ್ನಷ್ಟೇ ಖರೀದಿ ಮಾಡಬೇಕು. ಎಂಟೋ ಹತ್ತೋ ಮೀನು ಖರೀದಿಸಿ ಮನೆಗೆ ಕೊಂಡೊಯ್ಯುವಂತಿಲ್ಲ. ಹಾಗೇನಾದರೂ ಕೊಂಡೊಯ್ದರೆ ಕಾಡಿನ ಮಧ್ಯೆ ಎಎನ್ಎಫ್ ಪೊಲೀಸರು ತಡೆದು ಪರಿಶೀಲನೆ ಮಾಡುವಾಗ ಸಿಕ್ಕಿಬಿದ್ದರೆ ಅಕ್ರಮವಾಗಿ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಾರೆ. “ಮೂರೇ ಜನ ಇದ್ದರೂ ಆರು ಜನರಿಗಾಗುವಷ್ಟು ಖರೀದಿ ಮಾಡಿದ್ದಿ ಎಂದರೆ ಅದು ನಕ್ಸಲರಿಗೆ ಪೂರೈಕೆ ಮಾಡುವ ಉದ್ದೇಶದಿಂದಲೇ ಇರಬೇಕು” ಎಂಬುದು ಪೊಲೀಸರ ವಾದವಾಗಿರುತ್ತದೆ. ಪೊಲೀಸರು ಮಾಡುವ ತನಿಖೆಯಾದರೂ ಎಂಥದ್ದು ? ಇದೇ ರೀತಿ ಕುಟುಂಬ ಸದಸ್ಯರ ಲೆಕ್ಕಕ್ಕಿಂತ ಜಾಸ್ತಿ ಖರೀದಿ ಮಾಡಿ ಕೊಂಡೊಯ್ಯುತ್ತಿದ್ದರು ಎಂಬ ಕಾರಣಕ್ಕಾಗಿ ಕುತ್ಲೂರಿನ ಪೂವಪ್ಪ ಮಲೆಕುಡಿಯನ್ನು ಬಂಧಿಸಿ ಮೂರು ದಿನ ಅಕ್ರಮ ಬಂಧನದಲ್ಲಿ ಇಟ್ಟುಕೊಂಡಿದ್ದರು. ನಂತರ ಪೂವಪ್ಪರನ್ನು ಮನೆಗೆ ಹೋಗೋ ದಾರಿಯಲ್ಲಿ ಬಿಟ್ಟಿದ್ದರು. ಈಗ ಪೂವಪ್ಪರಿಗೆ ನಡೆಯಲು ಮಾತ್ರ ಸಾಧ್ಯವಾಗುತ್ತದೆ. ಓಡಲು ಆಗೋದೆ ಇಲ್ಲ. ಪೂವಪ್ಪ ಓಡೋಕೆ ಸಾಧ್ಯವಾಗದ ರೀತಿಯಲ್ಲಿ ಮೊನಕಾಲಿಗೆ ಹೊಡೆದಿದ್ದರು.

ಕುತ್ಲೂರು ಗ್ರಾಮದಲ್ಲಿ 35 ಕುಟುಂಬಗಳು ವಾಸ ಮಾಡಿಕೊಂಡಿದ್ದವು. ಕುತ್ಲೂರನ್ನು ರಾಷ್ಟ್ರೀಯ ಉದ್ಯಾನವನ ಎಂದು ಘೋಷಿಸಿದ ನಂತರ ಸ್ವಯಂಪ್ರೇರಿತವಾಗಿ 14 10373489_336561873178407_7235343341327920427_nಕುಟುಂಬಗಳು ಒಕ್ಕಲೆದ್ದು ಹೋದವು. ಈಗ 21 ಕುಟುಂಬಗಳು ವಾಸ ಮಾಡುತ್ತಿವೆ. ಈ ಸ್ವಯಂಪ್ರೇರಿತ ಒಕ್ಕಲೇಳುವಿಕೆ ಎನ್ನುವುದು ತುಂಬಾನೇ ಸೂಪರ್ ಇದೆ. ಪಶ್ಚಿಮ ಘಟ್ಟದಲ್ಲಿ ಕೆಲವು ಎನ್ ಜಿ ಒ ಗಳು ಕಾರ್ಯಾಚರಣೆ ಮಾಡುತ್ತಿವೆ. ಹುಲಿ ಲೆಕ್ಕ ಮಾಡೋ ಎನ್ ಜಿ ಒ, ಹಾವು ಲೆಕ್ಕ ಮಾಡೋ ಎನ್ ಜಿ ಒ, ಚಿಟ್ಟೆ ಲೆಕ್ಕ ಮಾಡೋ ಎನ್ ಜಿ ಒ…. ಹೀಗೆ ಹಲವು ಎನ್ ಜಿ ಒ ಗಳು ಪಶ್ಚಿಮ ಘಟ್ಟ ಸಂರಕ್ಷಣೆಯ ಹೆಸರಲ್ಲಿ ವಿದೇಶಿ ಹಣದಲ್ಲಿ ಕೆಲಸ ಮಾಡುತ್ತಿದೆ. ಕಾಡಿನಂಚಿನಲ್ಲಿರುವ ಆದಿವಾಸಿಗಳು ಕಾಡು ಬೆಳೆಸುತ್ತಾರೆಯೇ ವಿನಃ ಕಾಡು ನಾಶ ಮಾಡುವುದಿಲ್ಲ ಎಂದು ಈ ಎನ್ ಜಿ ಒಗಳಿಗೆ ಗೊತ್ತಿದ್ದೂ ಆದಿವಾಸಿಗಳು ಕಾಡಿನಿಂದ ಒಕ್ಕಲೇಳಬೇಕು ಎಂದು ಈ ಎನ್ ಜಿ ಒ ಗಳು ಸರಕಾರದ ಜೊತೆ ಕೆಲಸ ಮಾಡುತ್ತದೆ. ಅದಕ್ಕಾಗಿ ಎಲ್ಲೆಲ್ಲೋ ಕಾಡಿನಿಂದ ಹೊರ ಬರೋ ಚಿರತೆ, ಹುಲಿ, ಕಾಳಿಂಗ ಸರ್ಪಗಳನ್ನು ಹಿಡಿದು ನೇರ ಕುತ್ಲೂರು ಆದಿವಾಸಿಗಳ ಮನೆ ಪರಿಸರದಲ್ಲಿ ಬಿಡಲು ಶುರು ಮಾಡಿದರು. ಇಲ್ಲಿಯವರೆಗೆ ಪಥ ಬಿಟ್ಟು ಸಂಚರಿಸದ ಹುಲಿ, ಚಿರತೆ, ಕಾಳಿಂಗ ಸರ್ಪಗಳು ಆದಿವಾಸಿಗಳ ಮನೆ ಪಕ್ಕ ಅಡ್ಡಾಡಲು ಶುರುವಿಟ್ಟುಕೊಂಡವು. ಮತ್ತೊಂದೆಡೆ ನಕ್ಸಲ್ ಕುಂಬಿಂಗ್ ಹೆಸರಲ್ಲಿ ನಿತ್ಯ ಆದಿವಾಸಿಗಳಿಗೆ ಕಿರುಕುಳ ನೀಡಲು ಶುರುವಿಟ್ಟುಕೊಂಡರು. ರಾತ್ರಿ ಹೊತ್ತು ಮನೆಗೆ ಬಂದೂಕುಧಾರಿ ನಕ್ಸಲರು ಬೇಟಿ ಕೊಡುವುದು. ಹಗಲೊತ್ತು ನಕ್ಸಲರನ್ನು ಮನೆಗೆ ಹುಡುಕಿಕೊಂಡು ಬರೋ ಶಸ್ತ್ರಾಸ್ತ್ರಧಾರಿ ಪೊಲೀಸರು. ಇದ್ಯಾವುದರ ಕಿರುಕುಳವೂ ಬೇಡ ಎಂದು ಸರಕಾರ ನೀಡಿದ್ದಷ್ಟು ಪರಿಹಾರ ತೆಗೆದುಕೊಂಡು ಹೊರಡಲು 14 ಕುಟುಂಬಗಳು ಸಿದ್ದವಾದವು. ಈ 14 ಕುಟುಂಬಗಳ ಪುನರ್ವಸತಿ ಮತ್ತು ಪರಿಹಾರ ನೀಡಿಕೆಗಾಗಿ ಅಂದಿನ ಜಿಲ್ಲಾಧಿಕಾರಿ ಪೊನ್ನುರಾಜು ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಈ ಸಭೆ ನಡವಳಿಕೆಗಳನ್ನು ಗಮನಿಸಿದರೆ ನಿಮಗೆ ಆಶ್ಚರ್ಯವಾಗಬಹುದು.

ಜಿಲ್ಲಾಧಿಕಾರಿಗಳ ಕೋರ್ಟು ಹಾಲ್ ನಲ್ಲಿ 14 ಕುಟುಂಬಗಳ ಸಭೆ ನಡೆಸಲಾಗಿತ್ತು. ಒಂದು ಬದಿಯಲ್ಲಿ ಮಲೆಕುಡಿಯ ಕುಟುಂಬದ ಪ್ರಮುಖರು, ಮತ್ತೊಂದೆಡೆ ಕಂದಾಯ, ಪಿಡಬ್ಲ್ಯೂಡಿ, ತೋಟಗಾರಿಕೆ, ಕೃಷಿ, ಅರಣ್ಯ ಮತ್ತಿತರ ಅಧಿಕಾರಿಗಳು. ಮಧ್ಯದಲ್ಲಿ ಜಿಲ್ಲಾಧಿಕಾರಿಗಳು. ಸರದಿ ಪ್ರಕಾರ ಒಂದೊಂದೇ ಮನೆಯ ಪರಿಹಾರ ಕಡತಗಳನ್ನು ಕ್ಲೀಯರ್ ಮಾಡಲಾಗುತ್ತದೆ. ಉದಾಹರಣೆಗೆ ಬಾಬು ಮಲೆಕುಡಿಯನ ( ಕಲ್ಪಿತ ಹೆಸರು,ಸಂಖ್ಯೆಯನ್ನು ಉದಾಹರಣೆಗಾಗಿ ನೀಡಲಾಗಿದೆ) ಆಸ್ತಿ ಸರ್ವೆ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸುತ್ತಾರೆ. ಕಂದಾಯ ಅಧಿಕಾರಿ ಎದ್ದು ನಿಂತು ಬಾಬು ಮಲೆಕುಡಿಯನಿಗೆ ಮೂರು ಎಕರೆ ಆಸ್ತಿಯ ಪಹಣಿ ಇದ್ದು, ಸರಕಾರಿ ಮೌಲ್ಯಮಾಪನ ಪ್ರಕಾರ ಎಷ್ಟೋ ಲಕ್ಷಗಳಾಗುತ್ತದೆ ಎಂದು ಮಾಹಿತಿ ನೀಡುತ್ತಾನೆ. ನಂತರ ಪಿಡಬ್ಲ್ಯೂಡಿ ಅಧಿಕಾರಿ ಎದ್ದು ನಿಂತು ಬಾಬು ಮಲೆಕುಡಿಯನ ಮನೆ ಕಟ್ಟಡದ ಸರ್ವೆ ಮಾಡಿದ್ದು ಸರ್ವೆ ಪ್ರಕಾರ 1 ಲಕ್ಷ ನೀಡಬಹುದು ಎನ್ನುತ್ತಾನೆ. ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಪ್ರಕಾರ ಮೂರು ಎಕರೆಯಲ್ಲಿ ಬೆಳೆದಿರುವ ವಿವಿಧ ತೋಟಗಾರಿಕೆ, ವಾಣಿಜ್ಯ, ಕೃಷಿ ಬೆಳೆಯ ಪ್ರಕಾರ 10 ಲಕ್ಷ ಪರಿಹಾರ ನೀಡಬೇಕಾಗುತ್ತದೆ ಎಂದು ವರದಿ ನೀಡುತ್ತಾನೆ. ನಂತರ ಅರಣ್ಯ ಇಲಾಖೆಯವರು ಬಾಬು ಮಲೆಕುಡಿಯ ಮನೆ ಪರಿಸರದ ತನ್ನದೇ ಪಹಣಿಯಲ್ಲಿ ಬೆಳೆದಿರುವ ವಾಣಿಜ್ಯ ಮರಗಳ ಮೌಲ್ಯ 10 ಲಕ್ಷ ಎಂದು ವರದಿ ಸಲ್ಲಿಸುತ್ತಾನೆ. ಒಟ್ಟು ಬಾಬು ಮಲೆಕುಡಿಯನ ಮೂರು ಎಕರೆ ಅಧಿಕೃತ ಆಸ್ತಿಗೆ ಸರಕಾರದ ಪ್ರಕಾರ 25 ಲಕ್ಷ ರೂಪಾಯಿ ಮೌಲ್ಯ ಬರುತ್ತದೆ ಎಂದಿಟ್ಟುಕೊಳ್ಳಿ. ಇದನ್ನು ಜಿಲ್ಲಾಧಿಕಾರಿ ಘೋಷಣೆ ಮಾಡಿ ಬಾಬು ಮಲೆಕುಡಿಯನಲ್ಲಿ ಕೇಳುತ್ತಾರೆ “ನಾವು ನಿನ್ನನ್ನು ಬಲವಂತದಿಂದ ಒಕ್ಕಲೆಬ್ಬಿಸುತ್ತಿಲ್ಲ. ನಿನ್ನ ಆಸ್ತಿಯನ್ನು ಸರ್ವೆ ಮಾಡಲಾಗಿ ನಿನ್ನ ಆಸ್ತಿಯ ಸರಕಾರಿ ಮೌಲ್ಯ 25 ಲಕ್ಷ ರೂಪಾಯಿಯಾಗಿರುತ್ತದೆ. ಆದರೆ ಸರಕಾರದ ಯೋಜನೆಯ ಪ್ರಕಾರ ಪ್ರತೀ ಕುಟುಂಬಕ್ಕೆ ಪುನರ್ವಸತಿ ಪರಿಹಾರವಾಗಿ ನಾವು 10 ಲಕ್ಷವನ್ನಷ್ಟೇ ನೀಡಬಹುದು. ನೀನು ಸಿದ್ದನಿದ್ದೀ ತಾನೆ ?” ಎಂದು ಪ್ರಶ್ನಿಸುತ್ತಾರೆ. ಬಾಬು ಮಲೆಕುಡಿಯ ಕಣ್ಣು ತುಂಬಿಕೊಂಡು ತಲೆ ಅಲ್ಲಾಡಿಸುತ್ತಾನೆ. ಆತನಿಗೆ ಎಂಟು ಲಕ್ಷ ರೂಪಾಯಿಗಳನ್ನು ನೀಡಿ ಒಕ್ಕಲೆಬ್ಬಿಸುತ್ತೆ. ಹೀಗಿತ್ತು ಸರಕಾರದ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಪುನರ್ವಸತಿ ಕಾರ್ಯ.

ಅನಕ್ಷರಸ್ಥರೇ ತುಂಬಿರುವ ಕುತ್ಲೂರಿನಲ್ಲಿ 35 ಕುಟುಂಬಗಳೂ ಈ ರೀತಿ ಕಾಡಿನಿಂದ ಹೊರಬರಲು ಸಿದ್ದರಿದ್ದರು. ಆದರೆ ಅದಕ್ಕೆ ತಡೆಯಾಗಿದ್ದು ವಿಠಲ ಮಲೆಕುಡಿಯ. Vittal Malekudiyaವಿಠಲ ಮಲೆಕುಡಿಯ ಯಾವಾಗ ಪಿಯುಸಿ ಪಾಸಾದನೋ ಆಗ ಜಿಲ್ಲಾಡಳಿತ, ಪೊಲೀಸ್ ಇಲಾಖೆ ತೋರಿಸಿದ ಹಾಳೆಗಳಿಗೆ ಸಹಿ ಹಾಕುವುದನ್ನು ಮಲೆಕುಡಿಯರು ನಿಲ್ಲಿಸಿಬಿಟ್ಟರು. ಅಷ್ಟರಲ್ಲಿ ವಿಠಲ ಮಲೆಕುಡಿಯನಿಗೆ ಮುನೀರ್ ಕಾಟಿಪಳ್ಳ ಪರಿಚಯವಾಯಿತು. ಮುನೀರ್ ಪರಿಚಯವಾದ ನಂತರ ವಿಠಲ ಮಲೆಕುಡಿಯ ಎಷ್ಟು ಬದಲಾದನೆಂದರೆ ಮಲೆಕುಡಿಯರು ಬೀದಿ ಹೋರಾಟವನ್ನು ಶುರು ಹಚ್ಚಿಕೊಂಡು 21 ಕುಟುಂಬಗಳನ್ನು ಉಳಿಸಲು ಹೋರಾಟ ನಡೆಸುವಲ್ಲಿಗೆ ಮುಟ್ಟಿದ. ಮುನೀರ್ ಕಾಟಿಪಳ್ಳ ಜೊತೆ ಸೇರಿ ಆತ ಅಷ್ಟೂ ಕುಟುಂಬಗಳಿಗೆ ಅರಣ್ಯ ಹಕ್ಕು ಕಾಯ್ದೆಯ ಅರಿವು ಮತ್ತು ರಾಷ್ಟ್ರೀಯ ಉದ್ಯಾನವನ ಘೋಷಣೆಯ ಹಿಂದೆ ಇರುವ ಮಾಫಿಯಾವನ್ನು ಮನದಟ್ಟು ಮಾಡುವಲ್ಲಿ ಸಫಲನಾದ. ಇವೆಲ್ಲಕ್ಕಿಂತ ಮುಖ್ಯವಾಗಿ ಸರಕಾರ, ಪೊಲೀಸರಿಗಿಂತ ನಕ್ಸಲ್ ವಾದ ಎಷ್ಟೊಂದು ಅಪಾಯಕಾರಿ ಎಂಬುದನ್ನು ವಿಠಲ ಮಲೆಕುಡಿಯ ಮತ್ತು ಮುನೀರ್ ಕಾಟಿಪಳ್ಳ ನಕ್ಸಲ್ ಪೀಡಿತ ಗ್ರಾಮಸ್ಥರಿಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾದ ಹಿನ್ನಲೆಯಲ್ಲಿ ನಕ್ಸಲ್ ಪೀಡಿತ ಗ್ರಾಮಸ್ಥರು ತಮ್ಮ ಗ್ರಾಮದ ಅಭಿವೃದ್ದಿಗೆ ನಕ್ಸಲರ ಹೋರಾಟವನ್ನು ನಿರೀಕ್ಷಿಸದೆ ಬೀದಿಗಿಳಿದರು. ಬೀದಿ ಹೋರಾಟದ ಮೂಲಕ ಪ್ರಜಾಸತ್ತಾತ್ಮಕವಾಗಿ ಹೋರಾಟ ಮಾಡಿ ಹಕ್ಕುಗಳನ್ನು ಗಿಟ್ಟಿಸಿಕೊಳ್ಳುವ ಮಟ್ಟಕ್ಕೆ ಬಂದರು.

ನಕ್ಸಲ್ ಚಳುವಳಿಯನ್ನು ಹತ್ತಿಕ್ಕಿದ್ದ ವಿಠಲ್ ಮಲೆಕುಡಿಯ ಮತ್ತು ಮುನೀರ್ ಕಾಟಿಪಳ್ಳರ ಚಳುವಳಿಗೆ ಸರಕಾರ ಪ್ರೋತ್ಸಾಹಿಸಬೇಕಾಗಿತ್ತು. ಆದರೆ ನಕ್ಸಲ್ ಚಳುವಳಿ ಕುತ್ಲೂರಿನಲ್ಲಿ ನಿಂತಿದೆ ಎಂಬುದು ಸರಕಾರಕ್ಕೆ ಇಷ್ಟವಿಲ್ಲದ ಸಂಗತಿಯಾಗಿತ್ತು. ನಕ್ಸಲ್ ಚಳುವಳಿಯನ್ನು ಹತ್ತಿಕ್ಕಲು ಸರಕಾರ ಕೋಟಿಗಟ್ಟಲೆ ಖರ್ಚು ಮಾಡುತ್ತಿದ್ದರೂ ಅವೆಲ್ಲಾ ನಾಟಕಗಳಷ್ಟೇ. ಕಾಡಿನಲ್ಲಿರುವ ಮಲೆಕುಡಿಯ ಆದಿವಾಸಿಗಳನ್ನು ಒಕ್ಕಲೆಬ್ಬಿಸಲು ಸರಕಾರ ನಕ್ಸಲ್ ಗುಮ್ಮನನ್ನು ಬಳಸುತ್ತಿದೆ. ಕಾಡಿನ ಮೂಲನಿವಾಸಿಗಳನ್ನು ಬಲವಂತವಾಗಿ ಒಕ್ಕಲೆಬ್ಬಿಸಬಾರದು ಎಂಬ ಸುಪ್ರಿಂ ಕೋರ್ಟು ಆದೇಶ ಹೊರಡಿಸಿದ್ದ ಹಿನ್ನಲೆಯಲ್ಲಿ ಸರಕಾರ ಈ ತಂತ್ರಗಾರಿಕೆಯ ಮೊರೆ ಹೋಗಿದೆ. ಕುತ್ಲೂರು ಗ್ರಾಮಸ್ಥರು ಹೊರಗಿನ ಸಮಾಜದೊಂದಿಗೆ ಗುರುತಿಸಿಕೊಂಡರೆ ಅವರನ್ನು ನಕ್ಸಲ್ ಬೆಂಬಲಿಗರೆಂದು ಹಣೆಪಟ್ಟಿ ಕಟ್ಟೋದು ಕಷ್ಟ. ನಕ್ಸಲ್ ಹಣೆಪಟ್ಟಿ ಕಟ್ಟಿ ಕಿರುಕುಳ ನೀಡದೇ ಇದ್ದರೆ ಒಕ್ಕಲೆಬ್ಬಿಸೋದಾದ್ರೂ ಹೇಗೆ ? ಆದರೆ ಈಗ ವಿಠಲ ಮಲೆಕುಡಿಯ, ಮುನೀರ್ ಕಾಟಿಪಳ್ಳ ಸಂಪರ್ಕದಿಂದಾಗಿ ಬಹಿರಂಗ ಹೋರಾಟದ ಸಂಪರ್ಕ ಪಡೆದುಕೊಂಡಿದ್ದಾರೆ. ಅದಕ್ಕಾಗಿ ಎರಡು ವರ್ಷದ ಹಿಂದೆ ಮಾರ್ಚ್​ 2 ರಂದು ವಿಠಲ ಮಲೆಕುಡಿಯ ಮತ್ತು ಆತನ ತಂದೆಯನ್ನು ಪೊಲೀಸರು ನಕ್ಸಲರೆಂದು ಬಂಧಿಸುತ್ತಾರೆ. ದೇಶದ್ರೋಹದ ಕಾಯ್ದೆಯಡಿ ವಿಠಲ್ ಜೈಲು ಸೇರುತ್ತಾನೆ. ಒಬ್ಬ ನಕ್ಸಲ್ ಎಂದು ಬಂಧಿತ ವ್ಯಕ್ತಿ ವಿಠಲ್ ‌ನಿಂದ ಪೊಲೀಸರು ವಶಪಡಿಸಿಕೊಂಡಿರುವ ವಸ್ತುಗಳೆಂದರೆ ಚಾಹ ಪುಡಿ, ಸಕ್ಕರೆ ಮತ್ತು ಆಟದ ಬೆನಾಕ್ಯೂಲರ್ ! ನಂತರ ಡಿವೈಎಫ್ಐ ಮತ್ತು ಎಡಪಂಥೀಯ ಸಂಘಟನೆಗಳು ವಿಠಲ್ ಮಲೆಕುಡಿಯ ಪರವಾಗಿ ದೊಡ್ಡದಾದ ಹೋರಾಟವೇ ನಡೆದಿರುವುದು ಈಗ ಇತಿಹಾಸ. ನಂತರ ವಿಠಲ್ ಮಲೆಕುಡಿಯ ಮತ್ತು ಆತನ ತಂದೆ ಜುಲೈ 5 ರಂದು ಬಿಡುಗಡೆಯಾಗುತ್ತಾರೆ. ಇದೊಂದು ದೊಡ್ಡ ಕಥೆ.

ಈಗ ವಿಠಲ ಮಲೆಕುಡಿಯ ಪತ್ರಿಕೋಧ್ಯಮ ಪದವಿಯನ್ನು ಪೂರ್ಣಗೊಳಿಸಿದ್ದಾನೆ. ಪ್ರಖ್ಯಾತ ಪತ್ರಿಕೆಯಲ್ಲಿ ಇಂಟರ್ನ್ ಶಿಪ್ ಮುಗಿಸಿದ್ದಾನೆ. ಅವೆಲ್ಲಕ್ಕಿಂತ ಮುಖ್ಯವಾಗಿ ನಾಲ್ಕು Vithal-malekudiyaತಿಂಗಳು ಜೈಲಿನ ಇಂಟರ್ನ್ ಶಿಪ್ ಮುಗಿಸಿದ್ದಾನೆ. ಎಲ್ಲಾ ಪತ್ರಕರ್ತರಿಗೂ ಜೈಲಿನಲ್ಲಿ ಇಂಟರ್ನ್ ಶಿಪ್ ಮಾಡೋ ಅವಕಾಶ ಸಿಗೋದಿಲ್ಲ. ಜೈಲಿನಲ್ಲಿ ಇಂಟರ್ನ್ ಶಿಪ್ ಮಾಡಿದ ಪತ್ರಕರ್ತ ಹೆಚ್ಚು ಹೆಚ್ಚು ಮಾನವ ಹಕ್ಕಿನ ಪರವಾಗಿ, ಜನಪರವಾಗಿ, ಬದುಕಿನ ಬಗ್ಗೆ, ವ್ಯವಸ್ಥೆಯ ಬಗ್ಗೆ ಬರೆಯಬಲ್ಲ ಎಂದು ನನ್ನ ಅನಿಸಿಕೆ. ಮೊನ್ನೆ ಆಗಸ್ಟ್ 15 ರಂದು ಪ್ರಥಮ ಬಾರಿಗೆ ದಟ್ಟ ಕಾಡಿನಲ್ಲಿ ವಾಸವಾಗಿರುವ ಮಲೆಕುಡಿಯ ಆದಿವಾಸಿಗಳು ವಿಠಲ ಮಲೆಕುಡಿಯನ ಪ್ರೇರಣೆಯಿಂದ ಸ್ವಾತಂತ್ರ್ಯೋತ್ಸವ ಆಚರಿಸಿಕೊಂಡರು. ನಕ್ಸಲರು ನಡೆದಾಡಿದ ಕಾಡಿನ ರೆಡ್ ಕಾರಿಡಾರಿನಲ್ಲಿ ರಾಷ್ಟ್ರಧ್ವಜದ ಹೂಗಳು ಬಿದ್ದಿದ್ದವು. ಅದು ಪ್ರಜಾಸತ್ತಾತ್ಮಕ ಹೋರಾಟದ ಹೂಗಳು.

ಕಬೀರ್ ಸಾವು ಮತ್ತು ಪ್ರಗತಿಪರರ ಮಾರ್ಗದರ್ಶನದ ಸರಕಾರ

Naveen Soorinje


– ನವೀನ್ ಸೂರಿಂಜೆ


 

ದನ ಸಾಗಾಟ ಮಾಡುತ್ತಿದ್ದ ಎಂಬ ಕಾರಣಕ್ಕಾಗಿ ನಕ್ಸಲ್ ನೆಪದಲ್ಲಿ ಪೊಲೀಸರು ಅಮಾಯಕ ಮುಸ್ಲಿಂ ಯುವಕನನ್ನು ಚಿಕ್ಕಮಗಳೂರಿನಲ್ಲಿ ಗುಂಡಿಕ್ಕಿ ಕೊಂದಿದ್ದಾರೆ. ಭಜರಂಗದಳ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಂತೆ ಈ ಘಟನೆ ಕಂಡು ಬರುತ್ತಿದ್ದು ಸಮಗ್ರ ತನಿಖೆಯಾಗಬೇಕಿದೆ. ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಭಜರಂಗದಳದ ಕೆಲಸವನ್ನು ಪೊಲೀಸರೇ ನಿರ್ವಹಿಸುತ್ತಿದ್ದು,  ಈ ರೀತಿಯ ಹಲವಾರು ಘಟನೆಗಳ ಕುರಿತಂತೆ ಅಮೂಲಾಗ್ರವಾದ ತನಿಖೆ ಆಗಬೇಕಿದೆ. ಆದರೆ ತನಿಖೆ ನಡೆಸಲು ಆಗ್ರಹಿಸಬೇಕಾದ ನಮ್ಮ ”ಸಾಕ್ಷಿ ಪ್ರಜ್ಞೆ”ಗಳು ಕಾಂಗ್ರೆಸ್ ಸರಕಾರಕ್ಕೆ ಬಹುಪರಾಕ್ ಕೂಗುವಲ್ಲಿ ನಿರತವಾಗಿವೆ.

ದನವನ್ನು ಅಧಿಕೃತವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆಗಟ್ಟಿದ ಹಿಂದುತ್ವವಾದಿ ಪೊಲೀಸರು ಕಬೀರ್ ನನ್ನು ಕೊಲೆ ಕಬೀರ್ಮಾಡಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಗುಂಡೇಟಿಗೆ ಒಳಗಾಗಿ ಕೊಲೆಯಾದ ಕಬೀರ್ ನ ಕುಟುಂಬ ವಂಶಪರಂಪರ್ಯವಾಗಿ ದನದ ವ್ಯಾಪಾರವನ್ನು ನಡೆಸುತ್ತಿದೆ. ಇವರ ಮೇಲೆ ಈವರೆಗೆ ದನ ಕಳ್ಳತನದ ಆರೋಪವಿಲ್ಲ. ಮೂಲತಃ  ಜೋಕಟ್ಟೆಯ ಕಬೀರ್ ಕುಟುಂಬ ಇತ್ತೀಚೆಗಷ್ಟೇ ಸುರತ್ಕಲ್ ಸಮೀಪದ ಕೃಷ್ಣಾಪುರಕ್ಕೆ ತಮ್ಮ ನಿವಾಸವನ್ನು ಸ್ಥಳಾಂತರಿಸಿತ್ತು. ಅಧಿಕೃತ ದನದ ವ್ಯಾಪಾರವನ್ನು ಮಾಡುತ್ತಿದ್ದ ಕಬೀರ್ ಚುನಾವಣೆಯ ನೀತಿ ಸಂಹಿತೆ ಘೋಷಣೆಯ ನಂತರ ದನದ ವ್ಯಾಪಾರಕ್ಕೆ ಹೋಗಿರಲಿಲ್ಲ. ಅದಕ್ಕೆ ಕಾರಣವೂ ಇದೆ. ಅಧಿಕೃತ ದನದ ವ್ಯಾಪಾರವಾದರೂ ಕೂಡಾ ಅಲ್ಲಲ್ಲಿ ಚೆಕ್ಕಿಂಗ್ ಮಾಡುವ ಪೊಲೀಸರಿಗೆ ಮಾಮೂಲು ಕೊಟ್ಟು ಲಾಭವೇನೂ ಉಳಿಯುವುದಿಲ್ಲ ಎಂಬ ಕಾರಣಕ್ಕೆ ದನದ ವ್ಯಾಪಾರಕ್ಕೆ ಹೋಗಿರಲಿಲ್ಲ. ನಿನ್ನೆ ಸಂಜೆಯವರೆಗೂ ಕೃಷ್ಣಾಪುರದಲ್ಲಿ ಕ್ರಿಕೆಟ್ ಆಡಿಕೊಂಡಿದ್ದ ಕಬೀರ್ ನಿನ್ನೆ ರಾತ್ರಿ ವ್ಯಾಪಾರಕ್ಕೆ ತೆರಳಿದ್ದ.

ತೀರ್ಥಹಳ್ಳಿಯಲ್ಲಿ ದನ ಖರೀದಿ ಮಾಡಿ, ಅಲ್ಲಿಂದ ಶ್ರಂಗೇರಿಗೆ ಬಂದ ಕಬೀರ್ ಇದ್ದಂತಹ ವ್ಯಾಪಾರಿ ತಂಡ ಶ್ರಂಗೇರಿಯಲ್ಲೂ ದನ ಖರೀದಿ ಮಾಡಿದೆ. ತೀರ್ಥ ಹಳ್ಳಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರಿಗೆ ಮಾಮೂಲು ನೀಡಿ ಚೀಟಿಯೊಂದನ್ನು ತೋರಿಸಿ ಶ್ರಂಗೇರಿಗೆ ಬಂದಿದ್ದಾರೆ. ಶ್ರಂಗೇರಿಯಲ್ಲೂ ಪೊಲೀಸರಿಗೆ ಮಾಮೂಲು ನೀಡಿ ಖರೀದಿಯ ಚೀಟಿ ತೋರಿಸಿ ಕಾರ್ಕಳ ಮಾರ್ಗವಾಗಿ ಬರುತ್ತಿದ್ದರು. ಆ ಸಂಧರ್ಭದಲ್ಲಿ ಮಾರ್ಗ ಮಧ್ಯೆ ಎಎನ್ಎಫ್ ಪೊಲೀಸರು ವಾಹನ ನಿಲ್ಲಿಸಿದ್ದಾರೆ. ವಾಹನ ನಿಲ್ಲಿಸಿದ ಕಬೀರ್ ತಂಡ ಎಎನ್ಎಫ್ ಪೊಲೀಸರಿಗೆ ಮಾಮೂಲು ನೀಡಲು ಇಳಿದಿದ್ದಾರೆ. ವಾಹನದಲ್ಲಿ ದನ ಇರುವುದನ್ನು ಗುರುತಿಸಿದ ಪೊಲೀಸನೊಬ್ಬ ಹಿಂಬದಿಯಲ್ಲಿ ಕುಳಿತಿದ್ದ ಕಬೀರನನ್ನು ಇಳಿಯುವಂತೆ ಸೂಚಿಸಿದ್ದಾನೆ. ಕಬೀರ ವಾಹನದಿಂದ ಇಳಿದ ತಕ್ಷಣ ಗುಂಡಿನ ಶಬ್ದ ಕೇಳಿದೆ. ಗುಂಡಿನ ಶಬ್ದ ಕೇಳಿ ಮೂವರು ಪರಾರಿಯಾಗಿದ್ದಾರೆ. ಒಬ್ಬ ಪೊಲೀಸ್ ವಶವಾಗಿದ್ದಾನೆ. ಕಬೀರ ಶವವಾಗಿದ್ದಾನೆ

ಭಜರಂಗದಳ-ಪೊಲೀಸ್ ಜಂಟಿ ಕಾರ್ಯಾಚರಣೆ ?

ಈ ಗುಂಡು ಹಾರಾಟ ಮತ್ತು ಕಬೀರ್ ಸಾವಿನ ಹಿಂದೆ ಹಿಂದುತ್ವವಾದಿ ಸಂಘಟನೆಗಳು ಮತ್ತು ಪೊಲೀಸರ ನಂಟಿನ ವಾಸನೆ ಬರುತ್ತಿದೆ. 10246275_688721334522490_5291328350701068876_nಎಎನ್ಎಫ್ ಸಿಬ್ಬಂದಿಗಳು ವಾಹನ ನಿಲ್ಲಿಸಲು ಹೇಳಿದಾಗ ವಾಹನ ನಿಲ್ಲಿಸಿಲ್ಲ ಎಂಬ ವಾದ ಪೊಲೀಸರದ್ದು. ಮೂವರು ತಪ್ಪಿಸಿಕೊಂಡಿದ್ದು ವಾಹನ ನಿಲ್ಲಿಸಿದ್ದರಿಂದಲೇ ಸಾಧ್ಯವಾಗಿದೆ. ವಾಹನ ನಿಂತ ನಂತರವೂ ಗುಂಡು ಹಾರಿಸುವ ಅಗತ್ಯ ಇರಲಿಲ್ಲ. ಪರಾರಿಯಾಗುತ್ತಿದ್ದ ಆರೋಪಿಗಳ ಬಳಿ ಬಂದೂಕುಗಳು ಕಂಡು ಬಂದಲ್ಲಿ ಗುಂಡು ಹಾರಿಸಿದ್ದನ್ನು ಸಮರ್ಥಿಸಬಹುದಿತ್ತು. ಆದರೆ ಇಂತಹ ಯಾವ ಸಮರ್ಥನೆಗಳಿಗೂ ಇಲ್ಲಿ ಅವಕಾಶವಿಲ್ಲ. ಪೊಲೀಸರು ತಪ್ಪು ಕಲ್ಪನೆಗೆ ಒಳಗಾಗಿ ಶೂಟ್ ಮಾಡಿದರು ಎಂದಿಟ್ಟುಕೊಂಡರೂ ನಂತರ ನಡೆದ ವಿದ್ಯಾಮಾನಗಳು ತೀರಾ ಅಮಾನವೀಯವಾದುದ್ದು.

ಮಾಡದ ತಪ್ಪಿಗೆ ಸಾವನ್ನಪ್ಪಿದ ಹರೆಯದ ಯುವಕ ಕಬೀರ್ ನ ಸಾವಿನಿಂದ ಕಂಗಟ್ಟ ಕುಟುಂಬಕ್ಕೆ ಅವನ ಶವವನ್ನು ಕೊಂಡೊಯ್ಯಲು ಭರಂಗದಳದವರು ಅಡ್ಡಿಪಡಿಸಿದರು. ಕನಿಷ್ಠ ಶವ ಕೊಂಡೊಯ್ಯಲು ಬಂದ ದುಃಖತಪ್ತ ಕಟುಂಬದವರು ಎನ್ನುವ ಕನಿಕರವೂ ಇಲ್ಲದೆ ಶ್ರಂಗೇರಿ ಶವಾಗಾರದಲ್ಲಿರುವ ಶವವನ್ನು ಕೊಂಡೊಯ್ಯಲು ಮಂಗಳೂರಿನಿಂದ ಹೊರಟ ಹೆತ್ತವರ ವಾಹನವನ್ನು ಪುಡಿ ಮಾಡಲಾಯಿತು. ಇವೆಲ್ಲವನ್ನೂ ನೋಡಿದಾಗ ಭಜರಂಗದಳದ ಅಜೆಂಡಾದ ಭಾಗವಾಗಿಯೇ ಶೂಟೌಟ್ ನಡೆದಿರುವಂತೆ ಕಾಣುತ್ತಿದೆ.

ಹೆಚ್ಚುತ್ತಿರುವ ಮುಸ್ಲಿಂ-ದಲಿತ-ಮಹಿಳೆಯರ ಮೇಲಿನ ದಾಳಿ

ಕಾಂಗ್ರೆಸ್ ಸರಕಾರ ಬಂದ ನಂತರ ಮುಸ್ಲೀಮರು, ದಲಿತರು ಮತ್ತು ಮಹಿಳೆಯರ ಮೇಲೆ ದಾಳಿಗಳು ಹೆಚ್ಚಾಗಿವೆ. ಅಂಕಿ ಅಂಶಗಳನ್ನು ಗಮನಿಸಿದರೆ ಬಿಜೆಪಿ ಸರಕಾರ ಅಸ್ತಿತ್ವದಲ್ಲಿ ಇದ್ದಾಗ ನಡೆದ ನೈತಿಕ ಪೊಲೀಸ್ ಗಿರಿಗಿಂತಲೂ ಅಧಿಕ ನೈತಿಕ ಪೊಲೀಸ್ ಗಿರಿಗಳು ಕಳೆದ ಒಂದು ವರ್ಷದಲ್ಲಿ ನಡೆದಿವೆ. ಅಲ್ಪಂಖ್ಯಾತರ ಮೇಲೆ ದಾಳಿಗಳು ನಡೆದಿವೆ. ಇಷ್ಟೆಲ್ಲಾ ಆದರೂ ಯಾವೊಬ್ಬ ಕಾಂಗ್ರೆಸ್ ಜನಪ್ರತಿನಿಧಿಯೂ ದನಿಯೆತ್ತುತ್ತಿಲ್ಲ. ಕೇಳಿದರೆ “ಕಾನೂನು ಅದರ ಕ್ರಮ ಕೈಗೊಳ್ಳುತ್ತದೆ. ನಾವು ಅದರಲ್ಲಿ ಕೈ ಹಾಕುವುದಿಲ್ಲ” ಎನ್ನುತ್ತಾರೆ. ಈ ಮಾತು ಕೇಳಲು ಅಂದವಾಗಿದ್ದರೂ ಅಮಾನವೀಯವಾಗಿದೆ. ಈ ರೀತಿಯ ದೌರ್ಜನ್ಯ ಮತ್ತು ಸಂವೇದನಾ ರಹಿತ ಜನಪ್ರತಿನಿಧಿಗಳನ್ನು ವಿರೋಧಿಸಿಯೇ ಜನರು ಕಾಂಗ್ರೆಸ್ ಗೆ ಮತ ಹಾಕಿದ್ದು ಎಂಬುದನ್ನು ಸರಕಾರ ಮರೆತಂತಿದೆ.

ಒಂದೆಡೆ ಹೆಚ್ಚುತ್ತಿರುವ ನೈತಿಕ ಪೊಲೀಸ್ ಗಿರಿ ಮತ್ತೊಂದೆಡೆ ಭಜರಂಗಿಗಳ ಕೆಲಸವನ್ನು ಮಾಡುತ್ತಿರುವ ಪೊಲೀಸರು. ಮಂಗಳೂರಿನ ಹಲವಾರು ಪ್ರಕರಣಗಳನ್ನು ಅವಲೋಕಿಸಿದಾಗ  ಇವರು ಪೊಲೀಸರೋ ಭಜರಂಗಿಗಳೋ ಎಂಬ ಅನುಮಾನ ಮೂಡುವಂತಿದೆ. ಜನವರಿ-ಫೆಬ್ರವರಿ- ಮಾರ್ಚ್ ಈ ಮೂರು ತಿಂಗಳಲ್ಲಿ 15ಕ್ಕೂ ಅಧಿಕ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಕರಾವಳಿಯಲ್ಲಿ ದಾಖಲಾಗಿದೆ. ಇನ್ನು ಪೊಲೀಸರು ಪ್ರಕರಣ ದಾಖಲಿಸದೆ ಪ್ರೇಮಿಗಳಿಗೇ ಎಚ್ಚರಿಕೆ ಕೊಟ್ಟು, ಭಜರಂಗಿಗಳಿಗೆ ಟೀ ಕೊಟ್ಟು ಕಳುಹಿಸಿದ ಉದಾಹರಣೆಗಳು ಅವೆಷ್ಟೋ ಇವೆ. ಇದಲ್ಲದೆ ನಿರಾತಂಕವಾಗಿ ನಡೆಯುತ್ತಿರುವ ದೇವದಾಸಿ ಪದ್ದತಿ, ಸಿಡಿ ಆಚರಣೆ, ದಲಿತ ದೌರ್ಜನ್ಯ ಪ್ರಕರಣಗಳು… ಇವೆಲ್ಲದರ ಮಧ್ಯೆ ಮುಸ್ಲೀಮರ ಮೇಲಿನ ದಾಳಿ.

ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದ ಸಂಧರ್ಭ ನಾನು ನೂರಾರು ನೈತಿಕ ಪೊಲೀಸ್ ಗಿರಿ, ಅಲ್ಪಸಂಖ್ಯಾತರ ಮೇಲಿನ ದಾಳಿ, ದಲಿತರ ಮೇಲಿನ ದಾಳಿಯನ್ನು ಸುದ್ದಿ ಮಾಡಿದ್ದೆ. artists-campainingಆ ಸಂಧರ್ಭದಲ್ಲಿ ಸುಮಾರು 45 ಜನ ಕೋಮುವಾದಿ ಕಾರ್ಯಕರ್ತರು ಮಂಗಳೂರು ಜೈಲಿನಲ್ಲಿದ್ದರು. ಕೆಲವರು ಒಂದು ವರ್ಷಕ್ಕಿಂತಲೂ ಅಧಿಕ ಜೈಲುವಾಸವನ್ನು ಅನುಭವಿಸಿದರು. ನೀವು ನಂಬಲೇ ಬೇಕು. ಈಗ ಇಷ್ಟೆಲ್ಲಾ ದಾಳಿಯಾಗುತ್ತಿದ್ದರೂ ಒಬ್ಬನೇ ಒಬ್ಬ ಕೋಮುವಾದಿ ಮಂಗಳೂರು ಜೈಲಿನಲ್ಲಿ ಇಲ್ಲ. ಇತ್ತೀಚೆಗೆ ನೈತಿಕ ಪೊಲೀಸ್ ಗಿರಿ ನಡೆಸಿದ, ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಿದ ಹಲವು ಕೋಮುವಾದಿಗಳ ಮೇಲೆ ಒಂದಕ್ಕಿಂತಹ ಅಧಿಕ ಕೊಲೆ ಪ್ರಕರಣಗಳಿವೆ. ಆದರೂ ಒಂದೋ ಬಂಧಿಸಿದ ಎರಡೇ ದಿನದಲ್ಲಿ ಜಾಮೀನು ದೊರೆಯುತ್ತದೆ. ಇಲ್ಲವೇ ಬಂಧನಕ್ಕೊಳಗಾಗುವ ಮೊದಲೇ ಜಾಮೀನು ದೊರೆಯುತ್ತದೆ. ಅಷ್ಟೊಂದು ಕಠಿಣ ಕ್ರಮಗಳನ್ನು ಕಾಂಗ್ರೆಸ್ ಸರಕಾರ ಕೈಗೊಂಡಿದೆ!!

”ಏನ್ ಸಾರ್ ನೀವು… ಆಡಳಿತಗಾರರ ಜೊತೆ ಸೇರ್ಕೊಂಡ್ರಲ್ಲಾ ” ಎಂದು ಕಾಂಗ್ರೆಸ್ ಸರಕಾರ ರಚನೆಯಾದ ಸಂಧರ್ಭ ಪ್ರಗತಿಪರರೊಬ್ಬರನ್ನು ಕೇಳಿದಾಗ ”ನೋಡ್ರಿ ಈ ಚಳುವಳಿಗಳನ್ನೇ ಮಾಡುತ್ತಾ ಕೂರುವುದಲ್ಲ. ಅವಕಾಶ ಸಿಕ್ಕಿದಾಗ ಆಡಳಿತಗಾರರ ಹತ್ತಿರ ಹೋಗಿ ವ್ಯವಸ್ಥೆಯನ್ನು ಸರಿ ಮಾಡುವ ಕೆಲಸ ಮಾಡಬೇಕು” ಎಂದಿದ್ದರು. ಈಗ ನಮ್ಮ ಬಹಳಷ್ಟು ಪ್ರಗತಿಪರರು ಆಡಳಿತಗಾರರ ಅಕ್ಕಪಕ್ಕ ಕಾಣಸಿಗುತ್ತಾರೆ. ಇದೇ ಧೈರ್ಯದಲ್ಲಿ ಪೊಲೀಸರು ಅಲ್ಪಸಂಖ್ಯಾತರು-ದಲಿತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಪ್ರೇಮಿಗಳ ಮೇಲೆ ದಾಳಿ ನಡೆಸಿದ ಭಜರಂಗಿಗಳಿಗೆ ಟೀ ಕೊಟ್ಟು ಕಳುಹಿಸುತ್ತಾರೆ. ಅದೇ ಪ್ರಗತಿಪರರ ಧೈರ್ಯದಲ್ಲಿ ಇಂದು ನಮ್ಮ ಕಬೀರನನ್ನು ಕೊಂದು ಹಾಕಿದ್ದಾರೆ.