Category Archives: ರೂಪ ಹಾಸನ

ತಮ್ಮಂತೆ ಎಲ್ಲರೂ ಜಾತಿರೋಗಿಗಳಾಗಬೇಕೆಂದು ಬಯಸುವ ಜಾತಿ ಸಂಘಗಳು

– ರವಿ ಕೃಷ್ಣಾರೆಡ್ಡಿ

ಫೆಬ್ರವರಿ.24, 2013 ರಂದು ಹಾಸನದಲ್ಲಿ ಅಲ್ಲಿಯ ಜಾನಪದ ಪರಿಷತ್ತು “ಜಾನಪದ ಆಹಾರ ಮೇಳ” ಏರ್ಪಡಿಸಿದ್ದದ್ದು, ಅಲ್ಲಿ ಮಾಂಸಾಹಾರದ ತಿನಿಸುಗಳ ಮಾರಾಟಕ್ಕಿಟ್ಟದ್ದು, ಮತ್ತು ತದನಂತರದ ಕೆಲವು ವಾದವಿವಾದಗಳು ನಮ್ಮ ಓದುಗರಿಗೆ “ಲೇಖಕಿ ರೂಪಾ ಹಾಸನ ಅವರು ಜೈನ ಸಮಾಜದ ಕ್ಷಮೆ ಕೇಳಬೇಕಂತೆ!” ಲೇಖನದ ಮೂಲಕ ಗೊತ್ತಿರುವಂತಹುದೆ. ಒಂದು ಕೀಳುಮಟ್ಟದ ಅಪ್ರಪ್ರಚಾರ ಮತ್ತು ಅನೈತಿಕ ಪತ್ರಿಕೋದ್ಯಮಕ್ಕೆ ಮಾದರಿ ಈ ಘಟನೆಗಳು.

ಹಾಗೆಯೇ, ತಮಗೆ ಸಂಬಂಧಪಟ್ಟಿಲ್ಲದ ವಿಷಯಕ್ಕೆ ಸಂಬಂಧಿಸಿದಂತೆ, ಪ್ರತಿಕ್ರಿಯಿಸಿದ ಜಾತ್ಯತೀತ ಲೇಖಕಿ “ತಮ್ಮ ಜಾತಿ-ಮತದವಳು” ಎಂಬ ಒಂದೇ ಕಾರಣಕ್ಕೆ ಅವರ ಮೇಲೆ ಹಕ್ಕುಸ್ವಾಮ್ಯ ಮಾಡಹೊರಟ ಅಲ್ಲಿಯ ಜೈನ ಸಂಘದ ವರ್ತನೆ ಅಪ್ರಬುಧ್ಹತೆಯುಳ್ಳದ್ದು ಮತ್ತದು ಖಂಡನೀಯ. ಮಾಂಸಾಹಾರದ ಬಗ್ಗೆ ತಮ್ಮ ತಕರಾರುಗಳಿದ್ದರೆ ಅದಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಈ ಜೈನ ಸಂಘ ತನ್ನ ಅಭಿಪ್ರಾಯ ಪ್ರಕಟಿಸಬೇಕಿತ್ತೇ ಹೊರತು ಕೇವಲ ರೂಪ ಹಾಸನರ ಹೇಳಿಕೆಯನ್ನು ಖಂಡಿಸಿದ್ದು, ಆದಕ್ಕಾಗಿ ಖಂಡನಾ ನಿರ್ಣಯಗಳನ್ನು ಕೈಗೊಳ್ಳುವುದು, ಕ್ಷಮೆ ಕೇಳಿ, ವಿಷಾದ ವ್ಯಕ್ತಪಡಿಸಿ ಎನ್ನುವುದು ಆ ಸಂಘದಲ್ಲಿರುವ ಮತಾಂಧರ ಮನಸ್ಥಿತಿಯನ್ನು ತೋರಿಸುತ್ತದೆ.

ರೂಪ ಹಾಸನರು ಜೈನ ಸಂಘದ ಪದಾಧಿಕಾರಿಗಳೇ ಅಥವ ಜೈನ ಮತದ ಪ್ರತಿನಿಧಿಯೇ? ಅಲ್ಲವೇ ಅಲ್ಲ. ಹಾಗಾಗಿ, ಕೇವಲ ರೂಪ ಹಾಸನರ ಹೇಳಿಕೆ ಖಂಡಿಸಿ ನಿರ್ಣಯ ತೆಗೆದುಕೊಂಡ ಈ ಸಂಘ ತನ್ನ ವ್ಯಾಪ್ತಿಯನ್ನು ಮೀರಿದೆ ಮತ್ತು ಪಾಳೇಗಾರಿಕೆ ಮನೋಭಾವದಿಂದ, ಸಂಕುಚಿತ ಜಾತಿಪ್ರಜ್ಞೆಯಿಂದ ನರಳುತ್ತಿದೆ. ಹಾಗೆಯೇ, ತಾನೆಷ್ಟು ಪ್ರತಿಗಾಮಿ ಮತ್ತು ತಮ್ಮ ಪದಾಧಿಕಾರಿಗಳು ಎಷ್ಟು ದಡ್ಡರು, ಅವಿವೇಕಿಗಳು, ಎಂದು ಜಾಹೀರು ಪಡಿಸಿಕೊಂಡಿದೆ. ಈ ಜಾತಿ ಸಂಘಟನೆಗಳಲ್ಲಿ ಒಂದಿಷ್ಟಾದರೂ ಕಾಮನ್ ಸೆನ್ಸ್ ಇರುವವರು ಇರುವುದಿಲ್ಲವೇ? ಯಾರಾದರೂ ಇಂತಹ ನಿರ್ಣಯಗಳ ವಿರುದ್ಧ ಕೋರ್ಟಿಗೆ ಹೋಗಿ ಇವರ ಅಧಿಕಾರದ ಅಥವ ಅಜ್ಞಾನದ ಮಿತಿಯನ್ನು ತಿಳಿಯಪಡಿಸಬೇಕು.

ಹೀಗೆ ಜಾತ್ಯತೀತರ ಮೇಲೆಲ್ಲ ಅವರು ನಮ್ಮನಮ್ಮ ಜಾತಿಗೆ ಸೇರಿದವರು ಎಂದು ಭಾವಿಸಿಕೊಂಡು ಈ ಲೇಖಕರು-ಚಿಂತಕರು ನಮ್ಮಂತೆ ಕೀಳು ಜಾತಿಮನೋಭಾವನೆಯ ಕಾಯಿಲೆಗೆ ಒಳಗಾಗಿಲ್ಲ, ಅವರೂ ಈ ಕಾಯಿಲೆ ಹತ್ತಿಸಿಕೊಂಡು ಓಡಾಡಾಬೇಕು ಎಂದು ಜಾತಿ ಸಂಘಟನೆಗಳೆಲ್ಲ ಹೇಳಿಕೆ ಕೊಡುತ್ತ ಹೊರಟರೆ, ಅವರು ನಗೆಪಾಟಲಿಗೀಡಾಗುತ್ತಾರಷ್ಟೇ ಅಲ್ಲ, ಅವರೆಲ್ಲರ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಕೊಡಿಸುವ ಅಗತ್ಯವಿದೆ.

ಜೈನ ಸಂಘದ ಹೇಳಿಕೆಗೆ ರೂಪ ಹಾಸನರು ಪ್ರತಿಕ್ರಿಯಿಸಿ “ಜನಮಿತ್ರ”ಕ್ಕೆ ಪತ್ರ ಬರೆದಿದ್ದಾರೆ ಮತ್ತು ಅದು ಆ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಜೈನ ಸಂಘದ ನಿರ್ಣಯ, ಮತ್ತು “ಜನಮಿತ್ರ”ದಲ್ಲಿ ಪ್ರಕಟಗೊಂಡ ಪತ್ರಗಳು ಇಲ್ಲಿವೆ. ಪತ್ರಿಕೆಗಳ ಮತ್ತು ಸಂಘಟನೆಗಳ ಪ್ರತಿನಿಧಿಗಳು ಜವಾಬ್ದಾರಿಯಿಂದ ಮತ್ತು ಪ್ರಗತಿಪರ ಮನೋಭಾವದಿಂದ ಕಾರ್ಯನಿರ್ವಹಿಸಲಿ ಎಂದು ಆಶಿಸೋಣ.

jain-sangh-rupa-hassan
rupa-hassan-janamitra

ಶಿಕ್ಷಣ ಇಲಾಖೆಗೊಂದು ಆಕ್ಷೇಪಣಾ ಪತ್ರ…

ಸ್ನೇಹಿತರೆ,

ಪ್ರಾಥಮಿಕ ಶಿಕ್ಷಣದ ಕ್ಷೇತ್ರದಲ್ಲಿ ತಮ್ಮ “ಪ್ರೇರಣಾ” ಸಂಸ್ಥೆಯ ಮೂಲಕ ತೊಡಗಿಸಿಕೊಂಡು ಕೆಲಸ ಮಾಡುತ್ತ ಬಂದಿರುವ ರೂಪ ಹಾಸನರವರು ಸರ್ಕಾರಿ ಪ್ರಾಥಮಿಕ ಶಿಕ್ಷಣದ ಬಗ್ಗೆ ತಮ್ಮ ಲೇಖನಗಳ ಮೂಲಕ ಸರ್ಕಾರದ ಮತ್ತು ಪ್ರಜ್ಞಾವಂತರ ಗಮನ ಸೆಳೆಯುತ್ತ ಬಂದಿದ್ದಾರೆ. ಇದು ಅವರು ಕಳುಹಿಸಿರುವ ಮನವಿ ಪತ್ರ. ವರ್ತಮಾನದ ಓದುಗರಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದಿದವರು ಅನೇಕರಿದ್ದಾರೆ ಮತ್ತು ನಮ್ಮೆಲ್ಲರಿಗೂ ಸಮಾನ, ಉಚಿತ, ಮತ್ತು ಕಡ್ಡಾಯ ಶಿಕ್ಷಣದ ಬಗ್ಗೆ ಸ್ಪಷ್ಟ ನಿಲುವಿದೆ. ಈ ನಿಟ್ಟಿನಲ್ಲಿ ರೂಪ ಹಾಸನರವರು ನಮಗೆ ಕಳುಹಿಸಿರುವ ಈ ಮನವಿ ಪತ್ರವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಓದುಗರು ಇದರ ಬಗ್ಗೆ ಯೋಚಿಸಿ ನಿಮ್ಮ ಸ್ಪಷ್ಟ ಅಭಿಪ್ರಾಯವನ್ನು (ಅದು ಇಲ್ಲಿರುವುದಕ್ಕೆ ಸಹಮತವೇ ಆಗಿರಬೇಕೆಂದೇನೂ ಇಲ್ಲ) ಈ ಕೆಳಕಂಡ ಇಮೇಲ್ ವಿಳಾಸಕ್ಕೆ ತಲುಪಿಸಲು ಕೋರುತ್ತೇನೆ. ರವಿ ಕೃಷ್ಣಾರೆಡ್ಡಿ…

ಆತ್ಮೀಯರೇ,

ಹತ್ತು ಸಾವಿರದಸ್ಟು  ಸರ್ಕಾರಿ ಶಾಲೆ ಮುಚ್ಚುವಂತೆ ಪ್ರೊ. ಆರ್.ಗೋವಿಂದ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಇದೆ ಆಗಸ್ಟ್ 31 ಕೊನೆಯ ದಿನವಾಗಿದೆ. ಮಕ್ಕಳ ಶಿಕ್ಷಣ ಕುರಿತು ಆಸಕ್ತಿ ಇರುವ ನೀವು- ನಿಮ್ಮ ಮಿತ್ರರು ದಯಮಾಡಿ ಇಲ್ಲಿಗೆ ಮೇಲ್ ಮಾಡಿ. ಆಕ್ಷೇಪಣೆ ಸಲ್ಲಿಸಿ. ನಾನು ಕೆಳಕಂಡಂತೆ ಆಕ್ಷೇಪಣೆ ಸಲ್ಲಿಸಿರುವೆ. ನೀವು ಅವಶ್ಯವೆನಿಸಿದರೆ ಹೆಸರು ಬದಲು ಮಾಡಿ ಈ ಪತ್ರವನ್ನೇ ಬಳಸಿಕೊಳ್ಳಬಹುದು. cpi.edu.sgkar@kar.nic.in


ಸದಸ್ಯ ಕಾರ್ಯದರ್ಶಿಗಳು ಮತ್ತು ರಾಜ್ಯ ಯೋಜನಾ ನಿರ್ದೇಶಕರು,
ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ,
ನೃಪತುಂಗ ರಸ್ತೆ, ಕೆ.ಆರ್. ಸರ್ಕಲ್,
ಬೆಂಗಳೂರು,

-ಇವರಿಗೆ,

ಮಾನ್ಯರೆ,

ಶಾಲಾ ಶಿಕ್ಷಣದ ಸಂರಚನೆಯ ಉನ್ನತೀಕರಣ ಹಾಗೂ ಪುನರ್ ಸಂಘಟನೆ ಕುರಿತ ವರದಿಯು ಹಲವು ರೀತಿಯಲ್ಲಿ ಅವೈಜ್ಞಾನಿಕವಾಗಿದ್ದು, ಸರ್ಕಾರಿ ಶಾಲೆಗಳನ್ನು ಈಗಾಗಲೇ ಸಾವಿರ ಸಂಖ್ಯೆಯಲ್ಲಿ ಮುಚ್ಚಿದ್ದರಿಂದ ಶಿಕ್ಷಣ ಇಲಾಖೆಯ ಅಧಿಕೃತ ಶೈಕ್ಷಣಿಕ ವರದಿ 2010-11ರ ಪ್ರಕಾರ, ಶಾಲೆಯ ಹೊರಗಿದ್ದ 39841 ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. 2011-12ರ ಮೊನ್ನೆಯ ಜೂನ್ ವರದಿಯನ್ವಯ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ದ್ವಿಗುಣವಾಗಿ 68301ರಷ್ಟಾಗಿದೆ! ಇದರ ಜೊತೆಗೆ ಇನ್ನೂ ಅಂದಾಜು 10 ಸಾವಿರ ಶಾಲೆಗಳನ್ನು ಮುಚ್ಚಿದರೆ ಶಾಲೆಗಳಿಂದ ಹೊರಗುಳಿವ ಮಕ್ಕಳ ಸಂಖ್ಯೆ ಅಧಿಕವಾಗಿ ಅವರನ್ನು ಶಿಕ್ಷಣದಿಂದ ವಂಚಿಸಿದಂತಾಗುತ್ತದೆ. ಜೊತೆಗೆ, ಈಗಾಗಲೇ ಮಿತಿಮೀರಿರುವ ಖಾಸಗಿ ಶೈಕ್ಷಣಿಕ ವಲಯಕ್ಕೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಈ ಪ್ರಮಾಣದಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿಯುವುದಾದರೆ ಎಲ್ಲ ಮಕ್ಕಳಿಗೂ ’ಉಚಿತ’ ’ಕಡ್ಡಾಯ’ ಶಿಕ್ಷಣ ಎಂಬ ಮಾತಿಗೆ ಅರ್ಥವಿದೆಯೇ?

ಸರ್ಕಾರಿ ಶಾಲೆಯಲ್ಲಿ ಮಕ್ಕಳ ಪ್ರಮಾಣ ಕಡಿಮೆಯಾಗಲು ಜನನ ಪ್ರಮಾಣದಲ್ಲಿನ ಕುಸಿತವೇ ಕಾರಣವೆಂದು ಒತ್ತಿ ಹೇಳಿರುವ ವರದಿ, ರಾಜ್ಯಾದ್ಯಂತಾ ಲಂಗುಲಗಾಮಿಲ್ಲದಂತೆ ತೆರೆದುಕೊಂಡಿರುವ 3000 ಕ್ಕೂ ಹೆಚ್ಚಿನ ಅನಧಿಕೃತ ಖಾಸಗಿ ಶಾಲೆಗಳ ಬಗೆಗಾಗಲಿ, ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ರಾಜ್ಯದಲ್ಲಿ ಯಾವುದೇ ಸ್ಪಷ್ಟ ನೀತಿ ನಿಯಮಗಳು ಇಲ್ಲದ್ದರಿಂದ ಅರ್ಧದಷ್ಟು ಮಕ್ಕಳು ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವುದನ್ನಾಗಲಿ, ಸರ್ಕಾರಿ ಶಾಲೆಗಳು ಮೂಲ ಸೌಕರ್ಯವೂ ಇಲ್ಲದೇ ಸೊರಗಿರುವುದನ್ನಾಗಲಿ, 8000ಕ್ಕೂ ಅಧಿಕ ಶಿಕ್ಷಕರ ಹುದ್ದೆಗಳು ಭರ್ತಿಗಾಗಿ ಕಾದಿರುವುದನ್ನಾಗಲಿ ವರದಿಯಲ್ಲಿ ಎಲ್ಲಿಯೂ ಪ್ರಸ್ತಾಪಿಸಿಲ್ಲ. ಶಿಕ್ಷಣ ಹಕ್ಕು ಕಾಯ್ದೆಯನ್ನು ರಾಜ್ಯ ಸರ್ಕಾರ ಅಳವಡಿಸಿಕೊಂಡ ಈ ವರ್ಷವೇ ’ಉಚಿತ’ ’ಕಡ್ಡಾಯ’ ಶಿಕ್ಷಣದಿಂದ ಇಷ್ಟೊಂದು ಮಕ್ಕಳನ್ನು ದೂರಮಾಡುತ್ತಿರುವುದು ವಿಪರ್ಯಾಸ. ರಾಜ್ಯದ ಬಡ-ಗ್ರಾಮೀಣ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಈ ವರದಿ ಅವೈಜ್ಞಾನಿಕವೂ, ಮಾರಕವೂ ಆದುದಾಗಿರುವುದರಿಂದ, ಸರ್ಕಾರಿ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದೆಂದು ಈ ಮೂಲಕ ವಿನಂತಿಸುತ್ತೇನೆ. ಬದಲಿಗೆ ಸರ್ಕಾರಿ ಶಾಲೆಗಳನ್ನು ಬಲಪಡಿಸಲು, ಅನಧಿಕೃತ ಶಾಲೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು, ಖಾಸಗಿವಲಯದ ಪಾಲುದಾರಿಕೆ ಎಷ್ಟು ಪ್ರಮಾಣದಲ್ಲಿರಬೇಕು? ಯಾವ ಸ್ವರೂಪದಲ್ಲಿರಬೇಕು? ಅದರ ಮೇಲೆ ಸರ್ಕಾರದ ನಿಯಂತ್ರಣ ಹೇಗಿರಬೇಕು? ಈ ಕುರಿತು ತಕ್ಷಣದಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಿ ಕಾರ್ಯಪ್ರವರ್ತರಾಗಬೇಕೆಂದು ಕೇಳಿಕೊಳ್ಳುತ್ತೇನೆ.

ವಂದನೆಗಳೊಂದಿಗೆ,
ರೂಪ ಹಾಸನ
ಪ್ರೇರಣಾ
ಉತ್ತರ ಬಡಾವಣೆ,
ಹಾಸನ – 573201

ಉಚಿತ ಕಡ್ಡಾಯ ಶಿಕ್ಷಣಕ್ಕೆ ಎಳ್ಳುನೀರು?

– ರೂಪ ಹಾಸನ

ಅಳೆದುಸುರಿದು ಲೆಕ್ಕ ಹಾಕಿ ಅಂತೂ ಇಂತೂ ಈ ವರ್ಷ ಕರ್ನಾಟಕ ಸರ್ಕಾರ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವ ಭರವಸೆಯಲ್ಲಿ ಶಿಕ್ಷಣ ಹಕ್ಕು ಕಾಯ್ದೆಯನ್ನು ಅನುಷ್ಠಾನಗೊಳಿಸಿದೆ. ಇನ್ನೊಂದೆಡೆ ಕಡಿಮೆ ಮಕ್ಕಳಿರುವ ಮೂರು ಸಾವಿರಕ್ಕೂ ಹೆಚ್ಚಿನ ಸರ್ಕಾರಿ ಶಾಲೆಗಳನ್ನೂ ಭರದಿಂದ ಮುಚ್ಚಲು ಪ್ರಾರಂಭಿಸಿದೆ. ಆದರೆ ಈ ಪ್ರಕ್ರಿಯೆಯಿಂದ ಗ್ರಾಮೀಣ ಮಕ್ಕಳಿಗೆ ಆಗುತ್ತಿರುವ ಅನಾನುಕೂಲದ ಬಗೆ, ತಾನು ಗೊತ್ತಿದ್ದೂ ಮಾಡುತ್ತಿರುವ ನ್ಯಾಯಾಂಗ ನಿಂದನೆಯ ಕುರಿತು ಜಾಣ ಕುರುಡು ನಟಿಸುತ್ತಿದೆ. ಶಿಕ್ಷಣ ಹಕ್ಕು ಕಾಯ್ದೆಯನ್ವಯ ಪ್ರತಿ ಒಂದು ಕಿ.ಮಿ.ಗೆ ಕನಿಷ್ಠ ಒಂದು ಕಿರಿಯ ಪ್ರಾಥಮಿಕ ಶಾಲೆಯನ್ನು ಹಾಗೂ ಪ್ರತಿ ಮೂರು ಕಿ.ಮಿ.ಗೆ ಒಂದು ಹಿರಿಯ ಪ್ರಾಥಮಿಕ ಶಾಲೆಯನ್ನು ಉಳಿಸಿಕೊಳ್ಳುವುದಾಗಿ, ಹಾಗೂ ಅದಕ್ಕಿಂತಾ ದೂರವಾದಲ್ಲಿ ಮಕ್ಕಳಿಗೆ ಉಚಿತ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸುವುದಾಗಿ ಸರ್ಕಾರ ಹೈಕೋರ್ಟ್‌ಗೆ ವಾಗ್ದಾನ ನೀಡಿದೆ. ಆದರೆ ಹಾಗೆ ನಡೆದು ಕೊಳ್ಳುತ್ತಿಲ್ಲವೆಂಬುದು ವಾಸ್ತವ ಸತ್ಯ.

ಮುಚ್ಚಿದ ಶಾಲೆಯ ಮಕ್ಕಳನ್ನು ಹತ್ತಿರದ ಇನ್ನೊಂದು ಸರ್ಕಾರಿ ಶಾಲೆಗೆ ವಿಲೀನ ಮಾಡಲು ಈಗಾಗಲೇ ಆದೇಶ ನೀಡಲಾಗಿದೆ. ಆದರೆ ಹಳ್ಳಿಗಾಡಿನ ಪ್ರದೇಶಗಳಲ್ಲಿ ಶಾಲೆ ಮೊದಲೇ ಮಗುವಿನ ವಾಸಸ್ಥಾನದಿಂದ ದೂರವಿದ್ದು, ಅನೇಕ ಕಡೆಗಳಲ್ಲಿ ಸಾರಿಗೆ ವ್ಯವಸ್ಥೆಯೇ ಇಲ್ಲ. ಒಂದೋ, ಎರಡೋ ಬಸ್ ವ್ಯವಸ್ಥೆ ಇದ್ದರೂ ಶಾಲೆಯ ಸಮಯಕ್ಕೆ ಬರುವುದಿಲ್ಲ. ಅಲ್ಲಿ ಸರಕಾರ ಕೊಡಲು ಬಯಸುವ ಬಸ್ ಪಾಸ್ ಯಾವ ಉಪಯೋಗಕ್ಕೆ? ಖಾಸಗಿ ಬಾಡಿಗೆ ವಾಹನಗಳಲ್ಲಿಯಾದರೂ ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ತಯಾರಿದ್ದರೂ ಆ ವ್ಯವಸ್ಥೆಯೂ ಹೆಚ್ಚಿನ ಕಡೆಗಳಲ್ಲಿ ಇಲ್ಲ. ಸರ್ಕಾರ ಆಶ್ವಾಸನೆ ನೀಡಿದ್ದ ಸಾರಿಗೆ ಭತ್ಯೆಯಂತೂ ಇನ್ನೂ ಮಕ್ಕಳನ್ನು ತಲುಪಿಯೇ ಇಲ್ಲ.

ಹಾಸನ ತಾಲ್ಲೂಕಿನದೇ ಕೆಲವು ಉದಾಹರಣೆಯನ್ನು ನೋಡುವುದಾದರೆ ಈ ಶೈಕ್ಷಣಿಕ ವರ್ಷ ಪ್ರಾರಂಭವಾದ ನಂತರ ತಾಲ್ಲೂಕಿನಲ್ಲಿ 29 ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗಿದೆ. ಸಾಣೆಹಳ್ಳಿ ಕ್ಲಸ್ಟರ್‌ನ ಹಿರಿಯ ಪ್ರಥಮಿಕ ಶಾಲೆಯಲ್ಲಿ 6 ಮಕ್ಕಳಿರುವ ಕಾರಣಕ್ಕೆ ಶಾಲೆಯನ್ನು ನಾಲ್ಕು ಕಿ.ಮಿ ವ್ಯಾಪ್ತಿಯ ಕುಪ್ಪಳ್ಳಿ ಶಾಲೆಗೆ ವಿಲೀನ ಮಾಡಲಾಗಿದೆ. ಆದರೆ ಈ ಮಕ್ಕಳಿಗೆ ಪರ್ಯಾಯ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಅನಿವಾರ್ಯವಾಗಿ ಅವರು ಒಂದೂವರೆ ಕಿ.ಮಿ ದೂರದಲ್ಲಿರುವ ದೇವೇಗೌಡನಹಳ್ಳಿ[ಉಗನೆ]ಯಲ್ಲಿರುವ ಖಾಸಗಿ ಶಾಲೆಗೆ ದಾಖಲಾಗಿದ್ದಾರೆ. ಈಗ ಬಡ ಪೋಷಕರಿಗೆ ಜೀವನ ನಿರ್ವಹಣೆಯ ಜೊತೆಗೆ ಮಕ್ಕಳ ಶಿಕ್ಷಣದ ಜವಾಬ್ದಾರಿಯೂ ಹೆಗಲಿಗೇರಿ ಕಂಗಾಲಾಗಿದ್ದಾರೆ. ಹಾಗೇ ಗೇಕರವಳ್ಳಿಯ ಕಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಿ 2 ಕಿ.ಮಿ ದೂರದ ಕೆಂಚಟ್ಟಹಳ್ಳಿಗೆ ವಿಲೀನ ಮಾಡಲಾಗಿದೆ. ನಂಜೇದೇವರ ಕಾವಲಿನ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಿ 4 ಕಿ.ಮಿ ದೂರದ ಕಂದಲಿ ಶಾಲೆಗೆ ವಿಲೀನಗೊಳಿಸಲಾಗಿದೆ. ಇಲ್ಲಿನ ಮಕ್ಕಳು ತಮ್ಮದೇ ವೆಚ್ಚದಲ್ಲಿ ಶಾಲೆಗೆ ಬಸ್‌ನಲ್ಲಿ ಓಡಾಡುತ್ತಿದ್ದಾರೆ. ಶಿಕ್ಷಣ ಹಕ್ಕು ಕಾಯ್ದೆಯ ನಿಯಮವನ್ನು ಗಾಳಿಗೆ ತೂರಲಾಗಿದೆ.

2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ 1,11,000 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ! ಸ್ವಯಂಸೇವಾ ಸಂಸ್ಥೆ ’ನೆಲೆ’ ನಡೆಸಿದ ಸಮೀಕ್ಷೆಯ ಪ್ರಕಾರ ಬೆಂಗಳೂರೊಂದರಲ್ಲೇ ಬೀದಿ ಮಕ್ಕಳ ಸಂಖ್ಯೆ 40 ಸಾವಿರ ದಾಟಿದೆ! ಇದರಲ್ಲಿ ಹೆಚ್ಚಿನವರು ಹತ್ತು ವರ್ಷದ ಒಳಗಿನವರಾಗಿದ್ದು ಬಹುತೇಕರು ಚಿಂದಿ ಆಯುವುದರಲ್ಲಿ ಹಾಗೂ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. ಈ ಮಕ್ಕಳನ್ನೆಲ್ಲಾ ಕಡ್ಡಾಯವಾಗಿ ಶಾಲೆಗೆ ದಾಖಲಿಸುವ ಪ್ರಾಮಾಣಿಕ ಪ್ರಯತ್ನವನ್ನೇನಾದರೂ ಸರಕಾರ ಮಾಡಿದರೆ ಈಗ ಇರುವ ಶಾಲೆಗಳು ಸಾಲದೇ ಸಾವಿರಾರು ಹೊಸ ಶಾಲೆಗಳನ್ನು ತಾನೇ ತೆರೆಯಬೇಕಾಗುತ್ತದೆ!

ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತು ವಿಶೇಷ ಅಧ್ಯಯನ ನಡೆಸಿರುವ ’ಕೇಂದ್ರ ಸಂಪನ್ಮೂಲ ಸಚಿವಾಲಯ’ದ ಅಧಿಕಾರಿಗಳನ್ನು ಒಳಗೊಂಡ ಕಾರ್ಯತಂಡ ನೂರಕ್ಕೆ ನೂರರಷ್ಟು ಶಾಲಾ ದಾಖಲಾತಿ ಸಾಧ್ಯವಾಗಬೇಕಾದರೆ ದೇಶಾದ್ಯಂತ ಇನ್ನೂ ಸುಮಾರು 20 ಸಾವಿರ ಶಾಲೆಗಳನ್ನು, ಅದರಲ್ಲೂ ಕರ್ನಾಟಕದಲ್ಲೇ ಮುಂದಿನ ಐದು ವರ್ಷಗಳಲ್ಲಿ ಇನ್ನೂ 1241 ಸರ್ಕಾರಿ ಶಾಲೆಗಳನ್ನು ತೆರೆಯುವುದು ಅತ್ಯಂತ ಅವಶ್ಯಕವೆಂದು ಈ ವರ್ಷದ ಆರಂಭದಲ್ಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ನೀಡಿದೆ. ಹೀಗಿದ್ದೂ ರಾಜ್ಯ ಸರ್ಕಾರ ಈ ಶಿಪಾರಸ್ಸಿಗೆ ಕವಡೆ ಕಿಮ್ಮತ್ತನ್ನೂ ಕೊಟ್ಟಿಲ್ಲ. ಬದಲಾಗಿ ಇರುವ ಸಾವಿರಾರು ಶಾಲೆಗಳನ್ನು ಮುಚ್ಚಲು ಹೊರಟಿದೆ.

ಸರಕಾರಿ ಶಾಲೆಗಳನ್ನು ಹೀಗೆ ಮುಚ್ಚುತ್ತಾ ಹೋದರೆ ವಿಲೀನಗೊಂಡ ದೂರದ ಶಾಲೆಗಳಿಗೆ ಕಳಿಸಲಾಗದ, ಕಳಿಸಲು ಇಷ್ಟವಿಲ್ಲದ, ಕಳಿಸಲು ಸಮಸ್ಯೆಗಳಿರುವ ಪೋಷಕರು ಅನಿವಾರ್ಯವಾಗಿ ಹತ್ತಿರದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳಿಸುತ್ತಾರೆ ಅಥವಾ ಮಕ್ಕಳನ್ನು ಮನೆಯಲ್ಲೇ ಉಳಿಸಿಕೊಳ್ಳುತ್ತಾರೆ ಅಥವಾ ಇಂದು ಹಳ್ಳಿ ಹಳ್ಳಿಗಳಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಅಧಿಕೃತವೋ ಅಥವಾ ಅನಧಿಕೃತವೋ ಒಟ್ಟಿನಲ್ಲಿ ಖಾಸಗಿ ಶಾಲೆಗಳಿಗೆ ಸೇರುವ ಅಸಹಾಯಕ ಪರಿಸ್ಥಿತಿ ಉಂಟಾಗುತ್ತದೆ. ಈಗಾಗಲೇ ಸರ್ಕಾರಿ ಶಾಲೆ ಹಾಗೂ ಅಲ್ಲಿ ಓದುತ್ತಿರುವ ಮಕ್ಕಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಸಾವಿರದ ಲೆಕ್ಕದಲ್ಲಿ ಕಡಿಮೆಯಾಗುತ್ತಿರುವುದು ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಿಂದಲೇ ದೃಢಪಡುತ್ತದೆ. ಸರ್ಕಾರಿ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಖಾಸಗಿ ವಲಯವನ್ನು ಕದ್ದು ಮುಚ್ಚಿ ಬಲಗೊಳಿಸುತ್ತಾ ಬಂದಿರುವ ಸರ್ಕಾರದ ನೀತಿಯಿಂದಾಗಿ ಪ್ರಸ್ತುತ 46400 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 43.92 ಲಕ್ಷ ಮಕ್ಕಳು ಓದುತ್ತಿದ್ದರೆ, ಕೇವಲ 12,909ರಷ್ಟಿರುವ ಖಾಸಗಿ ಶಾಲೆಗಳಲ್ಲಿ 29.31 ಲಕ್ಷ ಮಕ್ಕಳು ಓದುತ್ತಿದ್ದಾರೆ! ಕಳೆದ ಎರಡು ವರ್ಷಗಳಲ್ಲಿ 3.37 ಲಕ್ಷ ಮಕ್ಕಳು ಸರಕಾರಿ ಶಾಲೆ ತೊರೆದಿದ್ದಾರೆ ಎಂದು ’ಇಂಡಿಯಾ ಗವರ್ನನ್ಸ ಇನ್ಸ್‌ಟಿಟ್ಯೂಟ್’ ಸರಕಾರಿ ಶಾಲೆಗಳಲ್ಲಿ ನಡೆಸಿದ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.

ದುರಂತವೆಂದರೆ ರಾಜ್ಯಾದ್ಯಂತ ಈಗಾಗಲೇ 3000 ಕ್ಕೂ ಅಧಿಕವಾಗಿರುವ ಅನಧಿಕೃತ ಶಾಲೆಗಳು ಹಾಗೂ ಅಲ್ಲಿ ಕಲಿಯುತ್ತಿರುವ ಮಕ್ಕಳ ಸಂಖ್ಯೆ ಕುರಿತು ಶಿಕ್ಷಣ ಇಲಾಖೆಯಲ್ಲಿ ಯಾವ ಮಾಹಿತಿಯೂ ಲಭ್ಯವಿಲ್ಲ. ಏಕೆಂದರೆ ಅವುಗಳ ಮೇಲೆ ಇಲಾಖೆಗೆ ಯಾವ ನಿಯಂತ್ರಣವೂ ಇಲ್ಲ! ಪ್ರತಿ ಶೈಕ್ಷಣಿಕ ವಷದ ಆರಂಭದಲ್ಲಿ “ಈ ಶಾಲೆಗಳೆಲ್ಲ ಅನಧಿಕೃತ….. ಇಲ್ಲಿಗೆ ಮಕ್ಕಳನ್ನು ಸೇರಿಸಬೇಡಿ…….” ಎಂದು ಅನಧಿಕೃತ ಶಾಲೆಗಳ ಪಟ್ಟಿಯನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡುವುದಷ್ಟೇ ಇಲಾಖೆಯ ಜವಾಬ್ದಾರಿ! ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರಕ್ಕೆ ಇಚ್ಚೆಯಿಲ್ಲ. ಬದಲಾಗಿ ಸರ್ಕಾರವೇ ಕುಮ್ಮಕ್ಕು ಕೊಟ್ಟಂತೆ ಕಾಣಿಸುತ್ತಿದೆ.

ಏಕೆಂದರೆ ಪ್ರತಿವರ್ಷ ಇಂತಹ ಅನಧಿಕೃತ ಖಾಸಗಿ ಶಾಲೆಗಳಿಂದ ಇಂತಿಷ್ಟು ಎಂದು ಎಂಜಲು ನೈವೇದ್ಯ ತಿಂದು ವರ್ಷಗಟ್ಟಲೆ ಇಂದ ಭ್ರಷ್ಟಗೊಂಡಿರುವ ಶೈಕ್ಷಣಿಕ ಆಡಳಿತಶಾಹಿ, ಜಾಣ ಮೌನ ವಹಿಸಿ ಕೊಬ್ಬಿಸುತ್ತಿದೆ. ಎಲ್ಲೆಂದರಲ್ಲಿ ಸರ್ಕಾರದ ಪರವಾನಗಿ ಪಡೆಯದೆ ತಲೆ ಎತ್ತುತ್ತಿರುವ ಈ ಅನಧಿಕೃತ ಖಾಸಗಿ ಶಾಲೆಗಳು ಮನಬಂದಂತೆ ವಂತಿಗೆ, ಶುಲ್ಕದ ಹೆಸರಿನಲ್ಲಿ ಹಣ ಹಿರಿದು, ಕಳಪೆ ಶಿಕ್ಷಣವನ್ನು ನೀಡುತ್ತ ಇಡೀ ಶಿಕ್ಷಣ ವ್ಯವಸ್ಥೆಗೇ ಗೆದ್ದಲು ಹಿಡಿಸಿದೆ. ಇಂತಹ ಅನಧಿಕೃತ ಶಾಲೆಗಳಿಗೆ ಯಾವುದೇ ಸರ್ಕಾರಿ ಶೈಕ್ಷಣಿಕ ನಿಯಮಗಳಿಲ್ಲದೇ, ಶಿಕ್ಷಣ ಹಕ್ಕು ಕಾಯ್ದೆ-ಮೀಸಲಾತಿಯ ಗೊಡವೆಯೂ ಇಲ್ಲದೇ, ಭಾಷಾ ನೀತಿಯ ತಲೆಬಿಸಿಯೂ ಇಲ್ಲದೇ ಶಿಕ್ಷಣವನ್ನು ಲಾಭದ ದಂಧೆಯನ್ನಾಗಿ ಮಾಡಿಕೊಂಡಿವೆ. ಇವುಗಳಿಗೆ ಮೂಗುದಾರ ಹಾಕಲಾಗದ ಸರ್ಕಾರ, ಈಗ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳನ್ನು ಮುಚ್ಚಿ ಅನಧಿಕೃತ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಬಲಿ ನೀಡುತ್ತಿದೆ. ಯಾರ ಯಾವ ನಿಯಂತ್ರಣವೂ ಇಲ್ಲದೇ ನಿರ್ಭಿಡೆಯಿಂದ ಬೆಳೆಯಲು ಅವಕಾಶಗಳಿರುವುದರಿಂದಲೇ ಇನ್ನು ಮುಂದೆ ಹಳ್ಳಿಗಳಲ್ಲಿ ಅನಧಿಕೃತ ಖಾಸಗಿ ಶಾಲೆಗಳು ಇನ್ನಷ್ಟು ಹೆಚ್ಚುವ ಆತಂಕವಿದೆ. ಸರ್ಕಾರಿ ಶಾಲೆಯ ಮಕ್ಕಳನ್ನು ಅನಿವಾರ್ಯವಾಗಿ ’ಉಚಿತ’ ಶಿಕ್ಷಣದಿಂದ ವಂಚಿಸಿ ಸರ್ಕಾರ ಅನಧಿಕೃತ ಖಾಸಗಿ ಶಾಲೆಗಳ ಬಾಯಿಗೆ ಆಹಾರವಾಗಿಸಿದೆ.

3000 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಂಡು “ಈ ಅನಧಿಕೃತ ಖಾಸಗಿ ಶಾಲೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ” ಎಂದು ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಮ್ಮ ಅಸಹಾಯಕತೆ ಪ್ರದರ್ಶಿಸುತ್ತಾರೆ! “ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಬಯಸುವವರಿಗೆ ದತ್ತು ನೀಡಲು ಸಿದ್ಧ” ಎಂದು ಆಹ್ವಾನ ನೀಡುತ್ತಾರೆ! ಇವರು ನಮ್ಮ ಶಿಕ್ಷಣ ಸಚಿವರು! ಇದು ಖಾಸಗಿಗೆ ತನ್ನನ್ನು ಬಿಕರಿಗಿಟ್ಟುಕೊಂಡು ಆತ್ಮಸಾಕ್ಷಿ ಇಲ್ಲದೇ ಸರ್ಕಾರ ನಡೆಸುವ ಪರಿ!

ನಿಜಕ್ಕೂ ಶಿಕ್ಷಣ ಕಾಯ್ದೆಯನ್ವಯ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವ ಮನಸು ಸರ್ಕಾರಕ್ಕಿದ್ದರೆ ತಕ್ಷಣವೇ ಕಳಪೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಅನಧಿಕೃತ ಖಾಸಗಿ ಶಾಲೆಗಳನ್ನು ಮುಟ್ಟುಗೋಲು ಹಾಕಿಕೊಂಡು, ಮುಂದೆ ಇಂತಹ ಶಾಲೆಗಳು ತಲೆ ಎತ್ತದಂತೆ ಪ್ರಬಲ ಶೈಕ್ಷಣಿಕ ಕಾಯ್ದೆಯೊಂದನ್ನು ರೂಪಿಸಬೇಕು. ಶಿಕ್ಷಣವನ್ನು ಖಾಸಗಿಯಾಗಿ ಹಣಕೊಟ್ಟು ಕೊಳ್ಳುವಂತಹ ಪರಿಸ್ಥಿತಿ ಯಾವುದೇ ಬಡ ಗ್ರಾಮೀಣ ಪೋಷಕರಿಗೆ ಬಂದೊದಗದಂತೆ ತಕ್ಷಣವೇ ಮುಚ್ಚಲ್ಪಟ್ಟ ಶಾಲೆಯ ಮಕ್ಕಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮೀಣ ಭಾರತ ಅದರಲ್ಲೂ ಹೆಣ್ಣುಮಕ್ಕಳು ಶಾಶ್ವತವಾಗಿ ಶಿಕ್ಷಣದಿಂದ ವಂಚಿತರಾಗದಂತೆ ಎಚ್ಚರ ವಹಿಸಬೇಕು. ಅದಕ್ಕಾಗಿ ಹಳ್ಳಿ ಹಳ್ಳಿಗಳಲ್ಲೂ ಲಂಗುಲಗಾಮಿಲ್ಲದೇ ಹುಟ್ಟಿಕೊಂಡಿರುವ-ಹುಟ್ಟಿ ಕೊಳ್ಳುತ್ತಿರುವ, ಅನಧಿಕೃತ ಖಾಸಗಿ ಶಾಲೆಗಳಿಗೆ ದಾಖಲಾಗದಂತೆ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು. ಶಿಕ್ಷಣ ಹಕ್ಕು ಕಾಯ್ದೆ ನಿಜವಾಗಿಯೂ ಜಾರಿಯಾಗಬೇಕೆಂದರೆ, ಶಾಲೆಯಿಂದ ಹೊರಗುಳಿದಿರುವ ಸಾವಿರಾರು ಮಕ್ಕಳನ್ನು ಶಾಲೆಗೆ ದಾಖಲಿಸಲು ಪರಿಣಾಮಕಾರಿ ಯೋಜನೆಗಳನ್ನು ರೂಪಿಸಬೇಕು. ಇದಾಗದಿದ್ದರೆ ’ಉಚಿತ’ ಮತ್ತು ’ಕಡ್ಡಾಯ’ ಶಿಕ್ಷಣ ಎಂಬ ಕಾಯ್ದೆಗೇ ಎಳ್ಳು ನೀರು ಬಿಟ್ಟಂತಾಗುತ್ತದೆ. ಹಾಗಾಗದಿರಲೆಂಬುದು ನಮ್ಮ ಹಾರೈಕೆ.

ಬಾಲಮಂದಿರಗಳು ಬಂದಿಖಾನೆಗಳಾದರೆ ಸಾಕೆ?

– ರೂಪ ಹಾಸನ

ಬಾಲಾಪರಾಧಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ 2500 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇರುವ ಕುರಿತು ಹೈಕೋರ್ಟ್‌ಗೆ ಅಧ್ಯಯನ ವರದಿಯೊಂದನ್ನು ಸಲ್ಲಿಸಿರುವುದು ಮೊನ್ನೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಇಂತಹ ಮಕ್ಕಳು ಅನುಭವಿಸುತ್ತಿರುವ ಹಿಂಸೆಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಬಂದಿರುವ ವರದಿಯ ಆಧಾರದ ಮೇಲೆ ಕೋರ್ಟ್ ಖುದ್ದಾಗಿ ದೂರು ದಾಖಲು ಮಾಡಿಕೊಂಡು, ಸರ್ಕಾರದ ವಿರುದ್ಧವಾಗಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ ನಡೆಸುತ್ತಿರುವುದು ನಿಜಕ್ಕೂ ಆಶಾದಾಯಕವಾದ ವಿಚಾರ.

ಮಕ್ಕಳು ಖಂಡಿತ ಸ್ವಯಂ ತಿಳಿವಳಿಕೆಯಿಂದಾಗಲಿ, ಉದ್ದೇಶಪೂರ್ವಕವಾಗಿಯಾಗಲಿ ಅಪರಾಧಗಳಲ್ಲಿ ತೊಡಗುವುದಿಲ್ಲ. ಮುಗ್ಧತೆ ಮತ್ತು ಅಸಹಾಯಕತೆಯಿಂದ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಬಲಿಪಶುಗಳಾಗುತ್ತಾರಷ್ಟೇ. ಹೆಚ್ಚಿನ ಸಂದರ್ಭಗಳಲ್ಲಿ ಹಿರಿಯರು ಮಕ್ಕಳ ಕೈಗಳಿಂದ ಅಪರಾಧಗಳನ್ನು ಮಾಡಿಸಿ ತಾವು ಕಾನೂನಿನ ಕೈಗಳಿಂದ ನುಣುಚಿಕೊಳ್ಳುವುದೂ ಉಂಟು. ಒಂದು ವೇಳೆ ಮಕ್ಕಳೇ ತಪ್ಪು ಮಾಡಿದ್ದರೂ ಅದಕ್ಕೆ ಅವರನ್ನು ಹಾಗೆ ರೂಪುಗೊಳಿಸುವುದು ನಮ್ಮ ಕಲುಷಿತವಾಗಿರುವ ವ್ಯವಸ್ಥೆ, ಮಕ್ಕಳ ಕಡೆಗೆ ನೀಡಲೇ ಬೇಕಾದಷ್ಟು ಪ್ರೀತಿ-ಗಮನ ಹಾಗೂ ಸಮಯವನ್ನು ನೀಡದಿರುವ ಪೋಷಕರ ಹೊಣೆಗೇಡಿತನವೂ ಕಾರಣವಾಗುತ್ತದೆ. ಹೀಗಾಗಿ ಅವರ ಮೇಲಿನ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸದೇ ನಿಧಾನಿಸುವುದರಿಂದ, ಆ ಮಕ್ಕಳನ್ನು ಈ ವಿಳಂಬ ಶಾಶ್ವತ ಅಪರಾಧಿಗಳನ್ನಾಗಿಸಿಬಿಡುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ವಿಳಂಬವೆಂದರೆ ಇಂಥ ಮಕ್ಕಳ ಅಮೂಲ್ಯ ಬದುಕಿನೊಂದಿಗೆ ಚೆಲ್ಲಾಟವಾಡಿದಂತೆಯೇ ಸರಿ.

18 ವರ್ಷದೊಳಗಿನ ಮಕ್ಕಳು ಮಾಡಿದ ಅಪರಾಧಗಳು ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬಾಲಾಪರಾಧಿಗಳ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೇ ಇರುವಾಗ ಅವರನ್ನು ಪೊಲೀಸ್ ಠಾಣೆಗಳಲ್ಲಿ ಇರಿಸಿಕೊಳ್ಳುವಂತಿಲ್ಲ. ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಬರುವ ಬಾಲಮಂದಿರಗಳಲ್ಲೇ ಬೇರೆ ಮಕ್ಕಳಿಂದ ಪ್ರತ್ಯೇಕವಾಗಿ ಈ ಬಾಲಾಪರಾಧಿಗಳನ್ನೂ ಇರಿಸುವ ವ್ಯವಸ್ಥೆ ಹೆಚ್ಚಿನ ಜಿಲ್ಲಾ ಕೇಂದ್ರಗಳಲ್ಲಿದೆ. ಇವು ಅನಧಿಕೃತ ಜೈಲುಗಳು. ಆದರೆ ಅಲ್ಲಿ ಅವರನ್ನು ಗಮನಿಸಲು, ರಕ್ಷಣೆ ನೀಡಲು, ತಪ್ಪಿಸಿಕೊಂಡು ಹೋಗದಂತೆ ನೋಡಿಕೊಳ್ಳಲು ಹೆಚ್ಚಿನ ಸಿಬ್ಬಂದಿಯಿಲ್ಲದೇ, ಕೆಲವೊಮ್ಮೆ ಮಕ್ಕಳೊಂದಿಗಿನ ದುರ್ವರ್ತನೆಯಿಂದಲೂ ಆ ಮಕ್ಕಳು ಬಾಲಮಂದಿರಗಳಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಲೇ ಇರುತ್ತಾರೆ. ಹೀಗೆ ಓಡಿಹೋಗುವ ಮಕ್ಕಳ ಪ್ರಮಾಣ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಆತಂಕಕಾರಿಯಾಗಿದೆ. ಹೀಗೆ ಓಡಿ ಹೋದವರು ಹೊಟ್ಟೆಹೊರೆಯಲು ಅನಿವಾರ್ಯವಾಗಿ ಮತ್ತೆ ಕಳ್ಳತನದಲ್ಲಿ ತೊಡಗಿ ವಾಪಸ್ಸು ಬಾಲಮಂದಿರಗಳಿಗೇ ಹಿಂದಿರುಗುತ್ತಾರೆ! ಹೆಚ್ಚಿನವರಿಗೆ ಬೇಲ್ ದೊರಕಿ ಬಿಡುಗಡೆ ಹೊಂದುತ್ತಾರಾದರೂ ಮತ್ತೆ ಹಿಂದಿರುಗಿ ಅದೇ ಪರಿಸರ, ಕೆಟ್ಟ ಸಹವಾಸಗಳಿಗೆ ಬಿದ್ದು ಅಪರಾಧಗಳಲ್ಲಿ ತೊಡಗಿಕೊಳ್ಳುತ್ತಾರೆ. ಇಂಥಹಾ ಬಾಲಾಪರಾಧಿಗಳು, ಬೆಳೆದಂತೆ ಮುಂದೆ ಇನ್ನೂ ಹೆಚ್ಚಿನ ಮತ್ತು ದೊಡ್ಡ ಅಪರಾಧಗಳಲ್ಲಿ ತೊಡಗಿಕೊಳ್ಳುವುದು ಅಸಹಜವೇನಲ್ಲ.

ಸದ್ಯಕ್ಕೆ ನಮ್ಮ ಬಾಲಮಂದಿರಗಳು ಬಾಲಾಪರಾಧಿಗಳನ್ನಲ್ಲದೇ ಬಹುಮುಖ್ಯವಾಗಿ ಅನಾಥ ಮಕ್ಕಳು, ಒಂಟಿ ಪೋಷಕರ-ಅಸಹಾಯಕರ ಮಕ್ಕಳು, ಅನೈತಿಕ ಚಟುವಟಿಕೆಯಲ್ಲಿ ಪಾಲ್ಗೊಂಡವರು, ವಿವಿಧ ಕಾರಣಗಳಿಂದ ಮನೆ ಬಿಟ್ಟು ಓಡಿ ಬಂದವರು, ಚಿಕ್ಕಪುಟ್ಟ ಕಳ್ಳತನಗಳಲ್ಲಿ ಭಾಗಿಯಾದವರನ್ನು ಒಳಗೊಂಡಿರುತ್ತದೆ. ಇವರಲ್ಲಿ ಹೆಚ್ಚಿನವರು ಅನಕ್ಷರಸ್ಥರು ಹಾಗೂ ಆರ್ಥಿಕವಾಗಿ ಹಿಂದುಳಿದವರ ಮಕ್ಕಳು. ಪ್ರಸ್ತುತ ಬಾಲಮಂದಿರಗಳು ’ಪರಿವರ್ತನೆ’ಯ ಕೇಂದ್ರಗಳಾಗಿಲ್ಲ. ಬದಲಿಗೆ ’ಬಂದಿಖಾನೆ’ಗಳಾಗಿ ಮತ್ತು ’ಗಂಜಿಕೇಂದ್ರ’ಗಳಾಗಿ ಮಾತ್ರ ಕಾರ್ಯನಿರ್ವಹಿಸುತ್ತಿವೆ! ಬಾಲಮಂದಿರದಲ್ಲಿ ಮಕ್ಕಳಿಗೆ ಕನಿಷ್ಟ ಊಟ, ವಸತಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಅವರು ಇಲ್ಲಿಂದ ತಪ್ಪಿಸಿಕೊಂಡು ಓಡಿಹೋಗದಂತೆ  ರಕ್ಷಿಸುವ ಕೆಲಸವನ್ನಷ್ಟೇ ಇವು ಮಾಡುತ್ತಿವೆ. ಕೆಲವು  ಕಡೆ ಅದನ್ನೂ ಸಮರ್ಪಕವಾಗಿ ಮಾಡುತ್ತಿಲ್ಲ.

ಆದರೆ ಇಂಥಹ ಮಕ್ಕಳ ಕುರಿತು ಸರ್ಕಾರಕ್ಕೆ ನಿಜಕ್ಕೂ ಕಾಳಜಿ ಇದ್ದರೆ ಬಾಲಮಂದಿರಗಳ ವ್ಯವಸ್ಥೆಯೇ ಆಮೂಲಾಗ್ರವಾಗಿ ಬದಲಾಗಬೇಕಿದೆ. ಬಾಲಮಂದಿರಗಳು ’ಮನಃ ಪರಿವರ್ತನಾ’ ಕೇಂದ್ರಗಳಾಗಿ ಕಾರ್ಯನಿರ್ವಹಿಸಬೇಕಿದೆ. ಬಾಲಾಪರಾಧಿಗಳು ಹಾಗೂ ಬಾಲಮಂದಿರದ ಮಕ್ಕಳೊಡನೆಯ ನಿಕಟ ಸಂಪರ್ಕದಿಂದ, ಸಾಮೂಹಿಕ ಹಾಗೂ ವೈಯಕ್ತಿಕ ಆಪ್ತ ಸಲಹೆಯ ಮೂಲಕ ಮನಃಶಾಸ್ತ್ರೀಯ ನೆಲೆಗಳಲ್ಲಿ ಅವರನ್ನು ಹಲವು ಪರೀಕ್ಷೆಗೊಳಪಡಿಸಿದಾಗ, ಕೆಲವು ಚಟುವಟಿಕೆಗಳಲ್ಲಿ ತೊಡಗಿಸಿದಾಗ ಅವರಲ್ಲಿ ಹೆಚ್ಚಿನ ಮಕ್ಕಳ ಮೂಲಭೂತ ಗುಣ-ಸ್ವಭಾವಗಳಲ್ಲಿ ಹಿಂಸೆ-ಕ್ರೌರ್ಯದ ಭಾವಗಳು ಇಲ್ಲದಿರುವುದು ಗೋಚರಿಸಿತು. ಜೊತೆಗೆ ಅವರಿರುವ ಈ ಸದ್ಯದ ಸ್ಥಿತಿಯ ಬಗೆಗೆ ಅವರಿಗೆ ತೀವ್ರ ಪಶ್ಚಾತ್ತಾಪ ಹಾಗೂ ಅಪರಾಧಿ ಭಾವವಿರುವುದು ತಿಳಿದು ಬಂತು. ಹೀಗಾಗಿ ಸಹವಾಸ ಹಾಗೂ ಪರಿಸರದ ಪ್ರಭಾವದಿಂದ ದಾರಿ ತಪ್ಪಿರುವ ಇಂತಹ ಬಹಳಷ್ಟು ಮಕ್ಕಳನ್ನು ಖಂಡಿತಾ ಸರಿ ದಾರಿಗೆ ತರಲು, ಉತ್ತಮ ನಾಗರಿಕರನ್ನಾಗಿ ರೂಪಿಸಲು ಸಾಧ್ಯವಿದೆ.

ಮುಖ್ಯವಾಗಿ ಇಂತಹ ಮಕ್ಕಳಿಗೆ ಹೆಚ್ಚಿನ ಪ್ರೀತಿ-ವಾತ್ಸಲ್ಯ, ವೈಯಕ್ತಿಕ ಗಮನ, ನಿರಂತರ ನೈತಿಕ ಶಿಕ್ಷಣ, ಆಪ್ತಸಲಹೆ, ಮನಸ್ಸನ್ನು ಶಾಂತ ಹಾಗೂ ಏಕಾಗ್ರಗೊಳಿಸಲು ವ್ಯಾಯಾಮ, ಯೋಗ, ಧ್ಯಾನದ ಪ್ರಯೋಗಗಳು ಆಗಬೇಕು. ಹೆಚ್ಚಿನ ಬಾಲಮಂದಿರಗಳಲ್ಲಿ ಗ್ರಂಥಾಲಯಗಳಿಲ್ಲ. ಕೆಲವೆಡೆ ಸಣ್ಣ ಪ್ರಮಾಣದ ಪುಸ್ತಕಗಳಿದ್ದರೂ ಅವುಗಳನ್ನು ಮಕ್ಕಳಿಗೆ ಓದಲು ಕೊಡುವ, ಓದಿದ್ದನ್ನು ಮನನ ಮಾಡಿಸುವ, ಇತರ ಮಕ್ಕಳೊಂದಿಗೆ ಹಂಚಿಕೊಳ್ಳಲು ಅನುವು ಮಾಡಿಕೊಡುವಂತಾ ಕೆಲಸಗಳು ಆಗುತ್ತಿಲ್ಲ. ಮೊದಲಿಗೆ ಇಲ್ಲಿ ಗ್ರಂಥಾಲಯಗಳನ್ನು ಹುಟ್ಟು ಹಾಕಿ ಮಕ್ಕಳಲ್ಲಿ ಓದುವ ಅಭಿರುಚಿಯನ್ನು ಬೆಳೆಸುವುದು ಅತ್ಯವಶ್ಯಕ. ಇಲ್ಲಿ ನಾಡಿನ ವಿವಿಧ ಕ್ಷೇತ್ರಗಳ ಧೀಮಂತರ ಜೀವನ ಚರಿತ್ರೆಗಳು, ಸಾಧನೆ ಮತ್ತು ಸಾಧಕರ ಕುರಿತು ಮಾಹಿತಿ, ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ, ಮಕ್ಕಳ ಕಲ್ಪನಾಶಕ್ತಿಯನ್ನು, ವಿವೇಚನೆ, ವಿವೇಕಗಳನ್ನು ಅರಳಿಸುವಂತಾ ಪುಸ್ತಕಗಳನ್ನು ದಾನಿಗಳಿಂದಲಾದರೂ ಸಂಗ್ರಹಿಸಿ ಮಕ್ಕಳಿಗೆ ಒದಗಿಸುವಂತಹ ಕೆಲಸಗಳು ತುರ್ತಾಗಿ ಆಗಬೇಕಿದೆ.

ಇದರ ಜೊತೆಗೆ ಮುಖ್ಯವಾಗಿ ಈ ಮಕ್ಕಳಲ್ಲಿ, ಹುಟ್ಟಿನಿಂದ ಸಹಜವಾಗಿ ಬಂದಿರಬಹುದಾದ ಸೃಜನಶೀಲ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಮತ್ತು ಅದನ್ನು ಮತ್ತಷ್ಟು ವೃದ್ಧಿಗೊಳಿಸಲು ತರಬೇತಿ ನೀಡುವಂತಾ ವ್ಯವಸ್ಥೆ ಆಗಬೇಕಿದೆ. ಆಸಕ್ತ ಮಕ್ಕಳಿಗೆ ಚಿತ್ರಕಲೆ, ಹಾಡು, ನೃತ್ಯ, ಅಭಿನಯ, ಆಟೋಟಗಳನ್ನು ಕಲಿಸುವಂತಾ ಗುಣಾತ್ಮಕ ಪ್ರಯೋಗಗಳನ್ನು ಮಾಡಿದರೆ, ಮಕ್ಕಳ ಮನಸ್ಸು ಆ ದಿಕ್ಕಿನೆಡೆಗೆ ಕೇಂದ್ರೀಕೃತಗೊಂಡು ಅನಾರೋಗ್ಯಕರ ಆಲೋಚನೆಗಳಿಗೆ ಅವಕಾಶಗಳು ಇಲ್ಲದಂತಾಗುತ್ತದೆ. ಬಾಲಾಪರಾಧಿಗಳು ಹಾಗೂ ಬಾಲಮಂದಿರದ ಮಕ್ಕಳನ್ನು ಸೃಜನಶೀಲ-ಕ್ರಿಯಾಶೀಲ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿದರೆ, ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡುವ ಸಾಧ್ಯತೆಯೂ ಇರುತ್ತದೆ.

ಇಂತಹ ಚಟುವಟಿಕೆಗಳನ್ನು ನಿರಂತರವಾಗಿ ಮತ್ತು ಸಮರೋಪಾದಿಯಲ್ಲಿ ಹಮ್ಮಿಕೊಳ್ಳುವ ಮೂಲಕ ಬಾಲಮಂದಿರಗಳ ಮಕ್ಕಳಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರಲು ಖಂಡಿತ ಸಾಧ್ಯವಿದೆ. ಇದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಬಾಲಮಂದಿರದ ಪರಿವೀಕ್ಷಕರು ಮತ್ತು ಸಿಬ್ಬಂದಿಗಳು ಒಂದಿಷ್ಟು ಶ್ರಮವಹಿಸಿದರೆ ಸಾಕು. ಇದರೊಂದಿಗೆ ಈಗಿರುವಂತೆ ಆ ಮಕ್ಕಳಿಗೆ ಯಾವಾಗಲಾದರೊಮ್ಮೆ ಕಾಟಾಚಾರದ ಕೌನ್ಸೆಲಿಂಗ್ ನೀಡುವ ಬದಲು, ದಿನನಿತ್ಯ ಆ ಮಕ್ಕಳೊಂದಿಗೇ ಇದ್ದು ವ್ಯಗ್ರಗೊಂಡ ಅವರ ಮನಸಿಗೆ ಸಾಂತ್ವನ ಹಾಗೂ ಆಪ್ತ ಸಲಹೆ ನೀಡುವ, ಅವರ ವ್ಯಕ್ತಿತ್ವ ನಿರ್ಮಾಣದ ಪ್ರತಿ ಹಂತದಲ್ಲಿ ಭಾಗಿಯಾಗುವಂತಹ ಆಪ್ತಸಮಾಲೋಚಕರನ್ನು ಪ್ರತಿ ಬಾಲಮಂದಿರಕ್ಕೆ ಒಬ್ಬರಂತೆ ಕಡ್ಡಾಯವಾಗಿ ನೇಮಿಸಿಕೊಳ್ಳಬೇಕು. ಜೊತೆಗೆ ಮಕ್ಕಳ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು, ವಿವಿಧ ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರಗಳಿಗೆ ಸಂಬಂಧಿಸಿದ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ಈ ಯೋಜನೆಯನ್ನು ಸಾಕಾರಗೊಳಿಸಬಹುದಾಗಿದೆ.

ಆ ಮಕ್ಕಳು ಸಕಾರಾತ್ಮಕವಾದ ದಾರಿಯನ್ನು ಆಯ್ದುಕೊಳ್ಳುವಂತೆ, ಅವರ ಬದುಕನ್ನು ರೂಪಿಸುವ ಹೊಣೆಗಾರಿಕೆ ಖಂಡಿತಾ ನಮ್ಮೆಲ್ಲರದೂ ಆಗಿದೆ. ಬಾಲಮಂದಿರಗಳು ಬಂದಿಖಾನೆಗಳಾಗದೇ, ದಿಕ್ಕುತಪ್ಪಿರುವ ಮಕ್ಕಳ ಆರೋಗ್ಯಪೂರ್ಣ ವ್ಯಕ್ತಿತ್ವ ನಿರ್ಮಾಣ ಕೇಂದ್ರಗಳಾಗುವತ್ತ ಸರ್ಕಾರ ಇನ್ನಾದರೂ ಗಮನಹರಿಸಬೇಕಾಗಿದೆ.

(ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನದ ವಿಸೃತ ರೂಪ)

ಶಿಕ್ಷಣ ಖಾಸಗಿಕರಣದ ಕರಾಳ ಮುಖಗಳು

– ರೂಪ ಹಾಸನ

ಸರ್ಕಾರಿ ಶಾಲೆಗಳನ್ನು ಮುಚ್ಚುವ ಆದೇಶವನ್ನು ವಿರೋಧಿಸಿ ರಾಜ್ಯದೆಲ್ಲೆಡೆಯಿಂದ ಪ್ರತಿರೋಧ ಬಂದುದನ್ನು ಗಮನಿಸಿದ ಸರ್ಕಾರ ಈಗ, ಶಾಲೆಗಳನ್ನು ಮುಚ್ಚುತ್ತಿಲ್ಲ, ಆದರೆ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಪಕ್ಕದ ಶಾಲೆಗಳಿಗೆ ವಿಲೀನಗೊಳಿಸುತ್ತಿದ್ದೇವಷ್ಟೇ ಎಂದು ನಾಜೂಕಾಗಿ ಜಾಣತನದ ಮಾತನಾಡುತ್ತಿದೆ. ಒಂದರೊಳಗೆ ಇನ್ನೊಂದು ಶಾಲೆ ಸೇರಿಕೊಂಡರೆ ಉಳಿದ ಇನ್ನೊಂದು ಶಾಲೆ ತಾನಾಗಿಯೇ ಮುಚ್ಚಿಕೊಳ್ಳುತ್ತದೆ ಎಂಬ ಸರಳ ಸತ್ಯವನ್ನೂ ಅರ್ಥ ಮಾಡಿಕೊಳ್ಳದಷ್ಟು ಜನ ಮೂರ್ಖರಲ್ಲ.

ಶೈಕ್ಷಣಿಕ ನಿಯಮಗಳನ್ನು ಪಾಲಿಸದ, ಅದನ್ನು ಲಾಭದ ವ್ಯಾಪಾರವಾಗಿ ಮಾಡಿಕೊಂಡಿರುವ ಖಾಸಗಿ ಶಾಲೆಗಳಿಗೆ ಎಗ್ಗಿಲ್ಲದೇ  ಪರವಾನಗಿ ನೀಡಿ, ಅನಧಿಕೃತವಾಗಿ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲು ಸರ್ಕಾರ ಎಲ್ಲ ರೀತಿಯಿಂದಲೂ ಅನುಕೂಲಕರ ವಾತಾವರಣ ನಿರ್ಮಾಣ ಮಾಡಿ, ಒಂದೆಡೆ ಖಾಸಗಿಯವರ ತೊಟ್ಟಿಲನ್ನು ತೂಗುತ್ತಾ, ಇನ್ನೊಂದೆಡೆ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಲ್ಲವೆಂದು, ಗ್ರಾಮೀಣ-ಬಡ ಮಕ್ಕಳನ್ನು ಚಿವುಟಿ ಅಳಿಸುವ ಪ್ರಯತ್ನವನ್ನು ಏಕಕಾಲಕ್ಕೆ ಮಾಡುತ್ತಿದೆ. ಇದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆವಷ್ಟೇ ಅಮಾನವೀಯ.

ಡಿಸ್ಟ್ರಿಕ್ಟ್ ಇನಫಾರ್ಮೇಶನ್ ಸಿಸ್ಟಮ್ ಫಾರ್ ಎಜುಕೇಷನ್ [ಡೈಸ್]ನ ಅಧ್ಯಯನವನ್ನು ಆಧರಿಸಿ ರೂಪುಗೊಳ್ಳುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ಅಂತರ್ಜಾಲ ತಾಣವನ್ನು ಕುತೂಹಲಕ್ಕಾಗಿ ಗಮನಿಸಿದರೆ ಸಾಕು ಗಾಬರಿಗೊಳಿಸುವಂತಹ ಹಲವಾರು ಅಂಕಿ-ಅಂಶಗಳು ಕಾಣಸಿಗುತ್ತವೆ. 2009-10ನೇ ಸಾಲಿನ ಅಧ್ಯಯನದಂತೆ 46288 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 54,45,484 ಮಕ್ಕಳು ಓದುತ್ತಿದ್ದರೆ, 11884 ಖಾಸಗಿ ಶಾಲೆಗಳಲ್ಲಿ 24,76,484 ಮಕ್ಕಳು ಓದುತ್ತಿದ್ದಾರೆ! ಇಲ್ಲಿ ಖಾಸಗಿ ಶಾಲೆಯ ಪ್ರಮಾಣ ಕಡಿಮೆ ಎಂದೆನಿಸಿದರೂ ಅಲ್ಲಿ ಓದುತ್ತಿರುವ ಮಕ್ಕಳ ಪ್ರಮಾಣ ಅತ್ಯಧಿಕವಾಗಿದೆ. ಇದಕ್ಕೆ ಕಾರಣ ಒಂದು ಖಾಸಗಿ ಶಾಲೆಗೆ ಅನುಮತಿ ಪಡೆದರೆ ಸಾಕು ಪ್ರತಿಯೊಂದು ತರಗತಿಯ 3-4 ವಿಭಾಗಗಳನ್ನಾದರೂ ಮಾಡಿ ತಮ್ಮ ಶಾಲಾ ಕಟ್ಟಡ ಮೀರುವಷ್ಟು ಮಿತಿಯಲ್ಲಿ ಮಕ್ಕಳನ್ನು ತುಂಬಿಕೊಳ್ಳಬಹುದು! ಜೊತೆಗೆ ವಂತಿಗೆ, ಶುಲ್ಕದ ಹೆಸರಿನಲ್ಲಿ ತಮ್ಮ ಖಜಾನೆಯನ್ನೂ ಭರ್ತಿ ಮಾಡಿಕೊಳ್ಳಬಹುದು. ಶಿಕ್ಷಣ ಸೇವೆಗಾಗಿ ಅಲ್ಲದೇ ಲಾಭಕ್ಕಾಗಿ ಆದಾಗ ಅದು ಭ್ರಷ್ಟತೆಯ ಇನ್ನೊಂದು ಕರಾಳ ಮುಖವಷ್ಟೇ. ಅದೇ ಸರ್ಕಾರಿ ಶಾಲೆಗಳಲ್ಲಾದರೆ ಪ್ರತಿ ತರಗತಿಗೆ ಒಂದು, ಅಪರೂಪಕ್ಕೆ ಎರಡು ವಿಭಾಗ. ಈಗ ಒಂದು ವಿಭಾಗಕ್ಕೇ ಮಕ್ಕಳಿಲ್ಲದೇ ಮುಚ್ಚುವ ಸ್ಥಿತಿ! ಹೀಗೆಂದೇ ಒಂದು ಸರ್ಕಾರಿ ಶಾಲೆಯಲ್ಲಿ ಸರಾಸರಿ 120 ಮಕ್ಕಳು ಓದುತ್ತಿದ್ದರೆ, ಒಂದು ಖಾಸಗಿ ಶಾಲೆಯಲ್ಲಿ ಸರಾಸರಿ 229 ಮಕ್ಕಳು ಓದುತ್ತಿದ್ದಾರೆ!

ಮಾನ್ಯ ಶಿಕ್ಷಣ ಸಚಿವರು ಹಳ್ಳಿಗಳಲ್ಲಿ ಮಕ್ಕಳಿಲ್ಲದಿರುವುದೇ ಸರ್ಕಾರಿ ಶಾಲೆಗಳು ಮುಚ್ಚಲು ಕಾರಣ ಎಂದು ಹೇಳುತ್ತಿದ್ದಾರೆ. ಆದರೆ 2007-08 ರ ಡೈಸ್‌ನ ಅಧ್ಯಯನದಂತೆ, ಗ್ರಾಮೀಣ ಪ್ರದೇಶದಲ್ಲಿರುವ 5724 ಖಾಸಗಿ ಶಾಲೆಗಳು, ಅಲ್ಲಿ ಕಲಿಯುತ್ತಿರುವ 7,37,017 ಮಕ್ಕಳು, ಎಲ್ಲಿಂದ ಬಂದರು? ಮಕ್ಕಳಿದ್ದರೂ ಅವರಿಗೆ ಉಚಿತ ಶಿಕ್ಷಣ ನೀಡುವ ಮನಸ್ಸು ಸರ್ಕಾರಕ್ಕಿಲ್ಲವಷ್ಟೇ.

ಪ್ರಾಥಮಿಕ ಹಂತದ ಗುಣಾತ್ಮಕ ಶಿಕ್ಷಣಕ್ಕೆ ವಿನಿಯೋಗಿಸುವ ಉದ್ದೇಶದಿಂದ 2004 ರಿಂದ ಆದಾಯ ತೆರಿಗೆಯಲ್ಲಿ ಶೇಕಡಾ 2 ರಷ್ಟು ಶಿಕ್ಷಣ ಕರವನ್ನು ವಿಧಿಸುತ್ತಿದ್ದು, ಇದರಿಂದ ಕೇಂದ್ರ ಸರ್ಕಾರಕ್ಕೆ ವರ್ಷಕ್ಕೆ 4000-5000 ಕೋಟಿ ಆದಾಯ ಲಭಿಸುತ್ತಿದೆ. ಇದರಿಂದ ಸಾರ್ವಜನಿಕ ಶಿಕ್ಷಣದ ಗುಣಮಟ್ಟ ಸುಧಾರಣೆಯ ಅನೇಕ ಯೋಜನೆಗಳಿಗಾಗಿ ರಾಜ್ಯ ಸರ್ಕಾರಗಳಿಗೆ ಕೋಟಿಗಟ್ಟಲೆ ಹಣ ವಿತರಣೆಯಾಗುತ್ತಿದೆ. ಇಷ್ಟೂ ಸಾಲದೇ ಇನ್ಫೋಸಿಸ್, ಇಸ್ಕಾನ್, ಜಿಂದಾಲ್, ಅಜೀಮ್ ಪ್ರೇಮ್ಜಿ ಫೌಂಡೇಶನ್ ಸೇರಿದಂತೆ ಇಪ್ಪತ್ತು ಖಾಸಗಿ ಸಂಸ್ಥೆ-ವ್ಯಕ್ತಿಗಳು ಕರ್ನಾಟಕದ ಸರ್ಕಾರಿ ಪ್ರಾಥಮಿಕ ಶಾಲೆಗಳ ಗುಣಮಟ್ಟ ಸುಧಾರಣೆಗೆ ಆರ್ಥಿಕವಾಗಿ ಕೈ ಜೋಡಿಸಿವೆ! ಈ ರೀತಿಯಲ್ಲಿ ಸರ್ಕಾರ, ಈಗಾಗಲೇ ಸರ್ಕಾರಿ ಶಾಲೆಗಳನ್ನೂ ಸದ್ದಿಲ್ಲದೇ ಖಾಸಗಿಯವರಿಗೆ ದತ್ತು ನೀಡಿ ಆಗಿದೆ!

ಪ್ರಾಥಮಿಕ ಶಿಕ್ಷಣಕ್ಕಾಗಿ 2010-11ನೇ ಸಾಲಿನ ಬಜೆಟ್‌ನಲ್ಲಿ 7700 ಕೋಟಿ, ಅಂದರೆ ಒಟ್ಟು ಬಜೆಟ್‌ನ ಶೇಕಡಾ 15 ರಷ್ಟು ಮೀಸಲಿರಿಸಲಾಗಿದೆ. ಇಷ್ಟೆಲ್ಲಾ ಆರ್ಥಿಕ ಸಬಲತೆ ಇದ್ದರೂ ಗುಣಾತ್ಮಕ ಶಿಕ್ಷಣವನ್ನು ತಾವೇಕೆ ಕೊಡಲಾಗುತ್ತಿಲ್ಲ? ಸರ್ಕಾರಿ ಶಾಲೆಗೆ ಮಕ್ಕಳೇಕೆ ಬರುತ್ತಿಲ್ಲ? ಎಂದು ಸರ್ಕಾರ ಪ್ರಾಮಾಣಿಕವಾಗಿ ಆತ್ಮಾವಲೋಕನ ಮಾಡಿಕೊಂಡರೆ ತನ್ನ ಖಾಸಗಿ ಹುಳುಕು ತನ್ನ ಮುಖಕ್ಕೇ ರಾಚುವಷ್ಟು ಸ್ಪಷ್ಟವಾದ ಉತ್ತರಗಳು ಹೊಳೆಯುತ್ತವೆ.

ಕಡ್ಡಾಯ ಮತ್ತು ಉಚಿತ ಶಿಕ್ಷಣದ ಉದಾತ್ತ ಆಶಯ ಹೊತ್ತ, ಕೇಂದ್ರ ಸರ್ಕಾರ 2009 ರಲ್ಲೇ ರೂಪಿಸಿದ  ಶಿಕ್ಷಣ ಹಕ್ಕು ಕಾಯ್ದೆ ಯನ್ನು ಜಾರಿಗೊಳಿಸಿದರೆ ರಾಜ್ಯದ 6-14 ವರ್ಷದವರೆಗಿನ ಪ್ರತಿಯೊಂದು ಮಗುವಿಗೆ ಉಚಿತ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿಯೇ ಆಗುತ್ತದೆ. ಈಗಾಗಲೇ ಶಿಕ್ಷಣ ಖಾಸಗಿಕರಣಕ್ಕೆ ಅನಧಿಕೃತವಾಗಿ ತನ್ನನ್ನೇ ದತ್ತು ನೀಡಿಕೊಂಡಿರುವ ರಾಜ್ಯ ಸರ್ಕಾರ ಈ ಕಾಯ್ದೆಯನ್ನು ಅಳವಡಿಸಿಕೊಳ್ಳುವುದಕ್ಕೇ ಮೀನಮೇಷ ಎಣಿಸುತ್ತಿದೆ. ಸಾರ್ವಜನಿಕರ-ತಜ್ಞರ ಚರ್ಚೆಗೆ ವಿಷಯವನ್ನಿಡದೇ ನಿರ್ದಾಕ್ಷಿಣ್ಯವಾಗಿ ನೂರಾರು ಶಾಲೆಗಳನ್ನು ಮುಚ್ಚುವ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಮೂಲಕ ಶಿಕ್ಷಣವನ್ನು ಖಾಸಗಿಯಾಗಿ ಕೊಳ್ಳಲಾಗದ ಗ್ರಾಮೀಣ, ತಳ ಸಮುದಾಯದ ಮಕ್ಕಳು ಶಾಶ್ವತವಾಗಿ ಶಿಕ್ಷಣದಿಂದ ವಂಚಿತರಾಗುವಂತೆ ಯೋಜನೆ ರೂಪಿಸುತ್ತಿದೆ.

2011ರ ಜನಗಣತಿಯಂತೆ ಈಗಲೂ ಇನ್ನೂ 1,08,542 ಮಕ್ಕಳು ಶಾಲೆಯಿಂದ ಹೊರಗೇ ಇದ್ದಾರೆ. ಅವರಿಗೂ ಕಡ್ಡಾಯ ಶಿಕ್ಷಣ ನೀಡುವಂತಾದರೆ ಇನ್ನೂ ನೂರಾರು ಶಾಲೆಗಳನ್ನು ಸರ್ಕಾರವೇ ಪ್ರಾರಂಭಿಸಬೇಕಿದೆ. ಗ್ರಾಮೀಣ ಪ್ರದೇಶದ ಶಾಲೆಗಳನ್ನು ಇದೇ ರೀತಿ ಮುಚ್ಚುತ್ತಾ ಹೋದರೆ ಶಾಲೆಯಿಂದ ಹೊರಗುಳಿಯುವ ಮಕ್ಕಳ ಪ್ರಮಾಣ ಮುಂದಿನ ವರ್ಷಗಳಲ್ಲಿ ಮತ್ತಷ್ಟು ಹೆಚ್ಚುತ್ತದೆ. ಮನೆ ಮುಂದಲ ಶಾಲೆಗಳಿಗೇ ಹೆಣ್ಣುಮಕ್ಕಳನ್ನು ಕಳಿಸಲು ಅನುಮಾನಿಸುವ ಗ್ರಾಮೀಣ ಪೋಷಕರು, ಶಾಲೆಗಳು ದೂರವಾದಷ್ಟೂ ಮಕ್ಕಳನ್ನು ಅದರಿಂದ ಇನ್ನಷ್ಟು ದೂರ ಉಳಿಸುತ್ತಾರೆ.

ಕಡಿಮೆ ಮಕ್ಕಳಿರುವ ಶಾಲೆಯ ಅಭಿವೃದ್ಧಿಯ ಹೊಣೆ ಹೊರುವವರಿಗೆ ಶಾಲೆಯನ್ನು ದತ್ತು ನೀಡಲು ಸರ್ಕಾರ ಸಿದ್ಧವಿದೆ ಎಂದು ಶಿಕ್ಷಣ ಸಚಿವರು ಹೊರಡಿಸಿರುವ ಫರ್ಮಾನು ನಾಚಿಕೆಗೇಡಿನದಾಗಿದೆ. ಸರ್ವಜನರ ಹಿತವನ್ನು ಬಯಸುವ ಮಾತೃಸ್ವರೂಪಿಯಾದ ಯಾವುದೇ ಸರ್ಕಾರ, ಮೂಲಭೂತ ಅವಶ್ಯಕತೆಗಳಾದ ಶಿಕ್ಷಣ, ಆರೋಗ್ಯ, ಆಹಾರ, ಉದ್ಯೋಗದ ಜವಾಬ್ದಾರಿಯನ್ನು ತಾನೇ ಹೊರಬೇಕೇ ಹೊರತು ಅದನ್ನು ಖಾಸಗಿಯವರಿಗೆ ದತ್ತು ನೀಡಿ, ತನ್ನ ನೈತಿಕಶಕ್ತಿಯನ್ನು ಮಾರಿಕೊಳ್ಳವುದಿಲ್ಲ!

ಸಾರ್ವಜನಿಕ ಶಿಕ್ಷಣದ ಬೇರುಗಳಿಗೆ ಹಿಡಿದಿರುವ ಖಾಸಗಿ ಗೆದ್ದಲನ್ನು ಕೊಡವಿ, ಬೇರುಗಳು ಗಟ್ಟಿಯಾಗುವಂತೆ ಶಿಕ್ಷಣ ವ್ಯವಸ್ಥೆಯನ್ನು ಗುಣಾತ್ಮಕವಾಗಿ ಮತ್ತು ಸಮಾನತೆಯ ಆಧಾರದ ಸಮಾನಶಾಲೆಗಳನ್ನು ಇನ್ನಾದರೂ ಸರ್ಕಾರ ಪುನರ್ ರೂಪಿಸಬೇಕಿದೆ. ಶಿಕ್ಷಣ ವ್ಯಾಪಾರಿಕರಣವಾಗದಂತೆ ಖಾಸಗಿವಲಯವನ್ನು ಹತ್ತಿಕ್ಕಿ, ಏಕರೂಪ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಆಗ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲದ ಸಮಸ್ಯೆ ಬರಲು ಸಾಧ್ಯವೇ ಇಲ್ಲ.