Category Archives: ರವಿ ಕೃಷ್ಣಾರೆಡ್ಡಿ

2012 – ಪಲ್ಲಟಗಳ ವರ್ಷದಲ್ಲಿ ವರ್ತಮಾನ…

 -ರವಿ ಕೃಷ್ಣಾರೆಡ್ಡಿ

ಕಳೆದ ವರ್ಷದ ಜಾಗತಿಕ ಮತ್ತು ರಾಷ್ಟ್ರ ಮಟ್ಟದ ವಿದ್ಯಮಾನಗಳ ಬಗ್ಗೆ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ದಿನೇಶ್ ಅಮಿನ್ ಮಟ್ಟುರವರು ಉತ್ತಮವಾಗಿ ಬರೆದು ವಿಶ್ಲೇಷಿಸಿದ್ದರು. ಓದದೇ ಇದ್ದವರು ದಯವಿಟ್ಟು ಅದನ್ನು ಓದಿ. ಅವರು 2011 ನ್ನು ಬೆಳಕಿನ ವರ್ಷ ಎನ್ನುತ್ತಾ, ಮನುಕುಲದ ಮುನ್ನಡೆಯ ಹಾದಿಗೆ ಬೆಳಕು ತೋರಿದ ಭರವಸೆಯ ವರ್ಷವೂ ಹೌದು ಎನ್ನುತ್ತಾರೆ. ಅದಕ್ಕೆ ಅನೇಕ ಉದಾಹರಣೆಗಳನ್ನು ಕೊಡುತ್ತಾರೆ.

ಕಳೆದ ವರ್ಷ ಪ್ರಪಂಚದ ಬೇರೆಬೇರೆ ಕಡೆ ಹೊತ್ತಿಕೊಂಡ ಪ್ರಜಾಪ್ರಭುತ್ವದ ಕಿಡಿಗಳು ಮತ್ತು ಜನಹೋರಾಟದ ಕಾರಣವಾಗಿಯೇ ಪತನಗೊಂಡ ಸರ್ವಾಧಿಕಾರಿ ಆಡಳಿತಗಳು ಒಬ್ಬ ಪ್ರಜಾಪ್ರಭುತ್ವ ಪ್ರೇಮಿಯಾಗಿ ನನಗೆ ಅತ್ಯಂತ ಖುಷಿ ಕೊಟ್ಟ ಸಂಗತಿಗಳು. ಈ ವರ್ಷವೂ ಅದು ಮುಂದುವರೆದು ಇಡೀ ಅರೇಬಿಯಾದಲ್ಲಿ, ರಷ್ಯದಲ್ಲಿ, ಬರ್ಮಾದಲ್ಲಿ, ಉತ್ತರ ಕೊರಿಯಾದಲ್ಲಿ, ಮಧ್ಯ-ದಕ್ಷಿಣ ಅಮೇರಿಕಾಗಳಲ್ಲಿ ಮತ್ತು ಎಲ್ಲೆಲ್ಲಿ ರಾಜಪ್ರಭುತ್ವ, ಹುಸಿಪ್ರಜಾಪ್ರಭುತ್ವ, ಸೇನಾಡಳಿತ, ಸರ್ವಾಧಿಕಾರಿಗಳ ಆಡಳಿತ ಇದೆಯೋ ಅಲ್ಲೆಲ್ಲಾ, ಅಲ್ಲಿಯ ಸ್ಥಳೀಯ ಜನರ ನೈಜ ಬೇಡಿಕೆ ಮತ್ತು ಹೋರಾಟವಾಗಿ ಪಸರಿಸಿ ಗಟ್ಟಿಯಾದ ಜನತಂತ್ರಗಳು ನೆಲೆಯೂರಲಿ ಎಂದು ಆಶಿಸುತ್ತೇನೆ.

ನಮ್ಮದೇ ದೇಶದಲ್ಲಿ ಮತ್ತು ಕರ್ನಾಟಕದಲ್ಲಿ ಕಳೆದ ವರ್ಷ ಬಹಳ ಮಹತ್ತರವಾದುದಾಗಿತ್ತು. ಜನ ತಮ್ಮ ನಾಗರಿಕ ಜವಾಬ್ದಾರಿಗಳಿಗೆ ಎಚ್ಚೆತ್ತುಕೊಳ್ಳುತ್ತಿದ್ದಾರೆ ಎನಿಸುತ್ತದೆ. ನಮ್ಮ ರಾಜ್ಯದ ಸ್ಥಿತಿ ನೋಡಿದರೆ ಅದು ಹುಸಿ ಅಂತಲೂ ಭಾಸವಾಗುತ್ತದೆ. ಅಯೋಗ್ಯ, ಅಪ್ರಬುದ್ದ, ಕಳ್ಳ, ವಂಚಕ, ಭ್ರಷ್ಟ ಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಜೈಲಿಗೆ ಹೋದದ್ದನ್ನು ನೋಡಿದರೆ ವ್ಯವಸ್ಥೆಯಲ್ಲಿ ಅಷ್ಟಿಷ್ಟು ನಂಬಿಕೆಯೂ ಹುಟ್ಟುತ್ತದೆ. ಮತ್ತೆ ಕೆಲವು ಘಟನೆಗಳನ್ನು ಗಮನಿಸಿದರೆ, ಅವೆಲ್ಲಾ ಮೇಲ್ನೋಟಕ್ಕೆ ಮಾತ್ರ ಎಂತಲೂ ಅನ್ನಿಸುತ್ತದೆ. ವಾಸ್ತವದಲ್ಲಿ ದುಷ್ಟರಿಗೆ ಎಂದೂ ಪ್ರಾಯಶ್ಚಿತ್ತವಾಗಲಿ, ಮನ:ಪರಿವರ್ತನೆಯಾಗಲಿ ಆಗುವುದಿಲ್ಲ ಎನ್ನುವ ಮಾತಿಗೆ ಸಾಕಷ್ಟು ಪುರಾವೆ ಸಿಗುತ್ತವೆ.

ವೈಯಕ್ತಿಕವಾಗಿ ನೋಡುವುದಾದರೆ ನನಗೆ ಕಳೆದ ವರ್ಷ ಅನೇಕ ಅನುಭವಗಳ, ಚಟುವಟಿಕೆಗಳ ವರ್ಷ. ಹತ್ತು ವರ್ಷಗಳ ನಂತರ ವರ್ಷಪೂರ್ತಿ (ನಡುವೆ ಒಂದು ತಿಂಗಳನ್ನು ಹೊರತುಪಡಿಸಿ) ದೇಶದಲ್ಲಿಯೇ ಉಳಿದ ವರ್ಷ. ಸುಮಾರು ಇಪ್ಪತ್ತು ಸಾವಿರ ಕಿಲೋಮೀಟರ್ ಸುತ್ತಿ, ಕರ್ನಾಟಕದ ಹಲವಾರು ಪ್ರದೇಶ, ಜನರನ್ನು ಕಂಡ ವರ್ಷ. ಕೆಲವರ ಬಗ್ಗೆ ಭರವಸೆ ಬೆಳೆಸಿಕೊಂಡ, ಮತ್ತು ಹಲವರ ಬಗ್ಗೆ ಭ್ರಮನಿರಸನಗೊಂಡ ವರ್ಷ. ಎಲ್ಲಕ್ಕಿಂತ ಮುಖ್ಯವಾಗಿ ವರ್ಷದ ಉತ್ತರಾರ್ಧದಲ್ಲಿ ಮಾತು-ಕೃತಿಯ ಭಾಗವಾಗಿ ವರ್ತಮಾನ.ಕಾಮ್ ಆರಂಭಿಸಿದ ಸಮಯ.

ಕನ್ನಡದಲ್ಲಿ ಈಗಾಗಲೆ ಅನೇಕ ವೆಬ್‌ಸೈಟುಗಳಿವೆ. ಆದರೆ ಸಾಮಾಜಿಕ-ರಾಜಕೀಯ-ಆರ್ಥಿಕ-ಮಾಧ್ಯಮ ವಿಚಾರಗಳನ್ನು ಇಟ್ಟುಕೊಂಡು, ಪರ್ಯಾಯ ಮಾಧ್ಯಮದ ಸಾಧ್ಯತೆಗಳ ಹುಡುಕಾಟದಲ್ಲಿ ನಾನು ಮತ್ತು ಒಂದಷ್ಟು ಜನ ಸಮಾನಮನಸ್ಕರು ಆರಂಭಿಸಿದ ನಮ್ಮ ವೆಬ್‍ಸೈಟ್ ಆ ದೃಷ್ಟಿಯಲ್ಲಿ ಕನ್ನಡಕ್ಕೆ ವಿಭಿನ್ನವಾದದ್ದು. ಇಲ್ಲಿಯವರೆಗೂ ನಾವು ಖರ್ಚು ಮಾಡಿದ್ದು ಬಹುಶಃ ಐದು ಸಾವಿರ ರೂಪಾಯಿಗಳಿಗಿಂತ ಕಡಿಮೆ, ಆದರೆ ಸಾಮೂಹಿಕವಾಗಿ ನಾವೆಲ್ಲ (ನಮ್ಮ ಬಳಗ ಮತ್ತು ಲೇಖಕರು) ಕೊಟ್ಟ ಸಮಯ ಮತ್ತು ಶ್ರಮ ಮಾತ್ರ ಹೆಚ್ಚಿದೆ. ವರ್ಷಾಂತ್ಯದಲ್ಲಿ ನಾನು ಅನಾರೋಗ್ಯಪೀಡಿತನಾಗಿದ್ದು ಮತ್ತು ಸ್ವಲ್ಪ ವಿಶ್ರಾಂತಿ ಬಯಸಿ ಓಡಾಟ ನಿಲ್ಲಿಸಿದ್ದರಿಂದ ಮತ್ತೂ ಒಂದಷ್ಟು ಬೆಳವಣಿಗೆ ಕಮ್ಮಿಯಾಯಿತು ಎನ್ನಬಹುದೇನೊ. ಆದರೆ, ನಮಗೆಲ್ಲ ಈ ಪ್ರಯತ್ನದ ಬಗ್ಗೆ ತೃಪ್ತಿ ಇದೆ. ಈ ವರ್ಷ ಸಮಯದ ಜೊತೆಗೆ ಸಮುದಾಯಿಕವಾಗಿ ಒಂದಷ್ಟು ಹಣ ಸಂಗ್ರಹಿಸಿ, ಅದನ್ನು ಹೂಡಿ, ವರ್ತಮಾನ.ಕಾಮ್ ಅನ್ನು ಹೆಚ್ಚುಹೆಚ್ಚು ಪ್ರಸ್ತುತ ಪಡಿಸುತ್ತ, ವಿಸ್ತಾರಗೊಳಿಸುತ್ತ, ಬೇರೆ ಆಯಾಮಗಳಿಗೂ ಹೊರಳಿಸಬೇಕು ಎನ್ನುವ ಯೋಜನೆ ನಮ್ಮದು.

ನನ್ನ ಪ್ರಕಾರ 2012 ಅನೇಕ ವಿಚಾರಗಳಿಗೆ ನಿರ್ಣಾಯಕವಾಗಲಿದೆ. ಈ ವರ್ಷವೂ ನಾವು ಜಾಗತಿಕವಾಗಿ ಅನೇಕ ಪಲ್ಲಟಗಳನ್ನು ಕಾಣಲಿದ್ದೇವೆ, ಅಮೆರಿಕ ಮತ್ತು ರಷ್ಯದಲ್ಲಿ ರಾಷ್ಟ್ರಾಧ್ಯಕ್ಷ ಚುನಾವಣೆಗಳು ನಡೆಯಲಿವೆ. ಒಬಾಮ ಎರಡನೆ ಅವಧಿಗೆ ಚುನಾಯಿತನಾಗುವುದು ಕಷ್ಟಸಾಧ್ಯವೇನಲ್ಲ-ಅನಿರೀಕ್ಷಿತ ಘಟನೆಗಳು ಜರುಗದೇ ಇದ್ದಲ್ಲಿ. ಆದರೆ ರಷ್ಯದಲ್ಲಿ ಪುಟಿನ್ ಬಗ್ಗೆ ಅದೇ ಮಾತನ್ನು ಹೇಳುವ ಹಾಗೆ ಇಲ್ಲ. ನನ್ನ ಸಹೋದ್ಯೋಗಿಯಾಗಿದ್ದ ಉಕ್ರೇನ್ ಮೂಲದ ಸ್ನೇಹಿತನ ಮಾತನ್ನು ನಂಬುವುದಾದರೆ ಅಲ್ಲಿಯ ಈಗಿನ ಪ್ರಧಾನಿ ವ್ಲಾಡಿಮಿರ್ ಪುಟಿನ್ ಕಳೆದ ಹತ್ತು-ಹನ್ನೆರಡು ವರ್ಷಗಳಿಂದ ಸರ್ವಾಧಿಕಾರಿ ರೀತಿಯ ಆಡಳಿತ ನಡೆಸಿರುವುದೇ ಅಲ್ಲದೆ ಭ್ರಷ್ಟ ಮಾರ್ಗಗಳಿಂದ ಬಿಲಿಯನ್ ಗಟ್ಟಲೆ ಮೌಲ್ಯದ ಸಾಮ್ರಾಜ್ಯವನ್ನೂ ಸ್ಥಾಪಿಸಿಕೊಂಡಿದ್ದಾನೆ. ಅಲ್ಲಿಯ ವಿರೋಧ ಪಕ್ಷಗಳು ಹೇಳುವ ಪ್ರಕಾರ ಆತ ಆ ದೇಶದ ಅತಿ ಶ್ರೀಮಂತ ವ್ಯಕ್ತಿ. ಅಲ್ಲಿ ನಿಜಕ್ಕೂ ಹೇಳಿಕೊಳ್ಳುವಂತಹ ಪ್ರಜಾಪ್ರಭುತ್ವ ಇಲ್ಲ. ಕಳೆದ ತಿಂಗಳು ಅಲ್ಲಿ ನಡೆದ ಸಂಸತ್ ಚುನಾವಣೆಗಳು ಮೋಸದಿಂದ ಕೂಡಿದ್ದವು. ಅಲ್ಲಿಯ ಈಗಿನ ಅಧ್ಯಕ್ಷ ಪುಟಿನ್‌ನ ಕೈಗೊಂಬೆ. ಈ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಪುಟಿನ್ ಮತ್ತೆ ಸ್ಪರ್ಧಿಸುತ್ತಿದ್ಡಾನೆ. ಅವನ ಸೋಲು-ಗೆಲುವು ಕೇವಲ ರಷ್ಯಕ್ಕಷ್ಟೇ ಅಲ್ಲ, ಜಾಗತಿಕವಾಗಿಯೂ, ನಮಗೂ, ಮುಖ್ಯವಾಗಲಿದೆ. ಯಾಕೆಂದರೆ, ಶಕ್ತಿ ಉತ್ಪಾದನೆಯಲ್ಲಿ ರಷ್ಯ ಪ್ರಪಂಚದ ಸೂಪರ್‌ಪವರ್ (energy superpower of the world). ತೈಲ ಉತ್ಪಾದನೆಯಲ್ಲಿ ಅದು ಸೌದಿ ಅರೇಬಿಯಾವನ್ನು ಹಿಂದಿಕ್ಕಿ ಮೂರು ವರ್ಷಗಳೇ ಆದವು. ಇವೆಲ್ಲವುಗಳಿಂದಾಗಿ, ಜಾಗತಿಕ ತಾಪಮಾನ ಕಾರಣಗಳಿಗಾಗಿ, ಸೌರ ಅಲೆಗಳು, ಹುಚ್ಚು ಪ್ರಳಯದ ಭೀತಿ, ಪ್ರವಾಹ ಮತ್ತು ಬರಗಾಲಗಳು, ಹೀಗೆ ಈ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚು ಘಟನಾವಳಿಗಳಿಂದ ಕೂಡಿರುತ್ತದೆ.

ಇನ್ನು ನಮ್ಮ ದೇಶದ ವಿಚಾರಕ್ಕೆ ಬಂದರೆ, ಉತ್ತರ ಪ್ರದೇಶದ ಜೊತೆಗೆ ಇನ್ನೂ ಐದು ರಾಜ್ಯದ ಚುನಾವಣೆಗಳು ನಡೆಯಲಿವೆ. ಲೋಕಪಾಲ್ ಮಸೂದೆ ಅಂಗೀಕಾರವಾಗಬಹುದು. ಅಣ್ಣಾ ತಂಡ ಅಥವ ಮತ್ತೊಂದು ನಾಗರಿಕರ ತಂಡ ಇದನ್ನು ಮೀರಿ ಚುನಾವಣಾ ಸುಧಾರಣೆಗಳಿಗಾಗಿ ಹೋರಾಡಬಹುದು. ದೇಶದಾದ್ಯಂತ ಇನ್ನಷ್ಟು ರಾಜಕಾರಣಿಗಳು ಜೈಲಿಗೆ ಹೋಗುವ ಸಾಧ್ಯತೆಗಳು ಈ ಭ್ರಷ್ಟಾಚಾರದ ಯುಗದಲ್ಲಿ ಹೆಚ್ಚೇ ಇದೆ. ಭ್ರಷ್ಟಾಚಾರ ಈ ವರ್ಷವೂ ಬಹುಮುಖ್ಯ ವಿಷಯವಾಗಿರುತ್ತದೆ. ಜಯಾ-ಮಾಯಾ-ಮಮತಾರಿಂದಾಗಿ, ಅಥವಾ ಕಾಂಗ್ರೆಸ್‌ನ ನಾಯಕರ ಅಹಂಕಾರದ ಫಲವಾಗಿ ರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆ ಬಂದರೆ ಅದೇನೂ ಅನಿರೀಕ್ಷಿತವಲ್ಲ. ಮಮತಾರ ಒಂದೇ ಕಾರಣದಿಂದ ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ಬಂಡವಾಳ ಹೂಡಿಕೆ ಮತ್ತು ಲೋಕಪಾಲ್ ಮಸೂದೆ ವಿಚಾರವಾಗಿ ಕಳೆದ ವರ್ಷದಲ್ಲಿ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಯಿತು. ಹಾಗಾಗಿ ಮನಮೋಹನ್ ಸಿಂಗ್, ಸುಷ್ಮಾ ಸ್ವರಾಜ್, ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯ ಮುಂದಿನ ವರ್ಷಗಳನ್ನು ನಿರ್ಧರಿಸುವ ವರ್ಷ ಇದು. ದೇಶದಲ್ಲಿ ಮತ್ತೆ ತೃತೀಯ ರಂಗ ಪ್ರಸ್ತುತವಾದರೆ ನನಗೇನೂ ಆಶ್ಚರ್ಯವಿಲ್ಲ. ಆದರೆ ಅದು ಕಾಂಗ್ರೆಸ್ ಅಥವ ಬಿಜೆಪಿಯ ಬೆಂಬಲ ಇಲ್ಲದೆ ಅಧಿಕಾರಕ್ಕೆ ಬರಲಾಗದು.

ಕರ್ನಾಟಕದಲ್ಲಿ ಈ ವರ್ಷವೂ ಒಂದಷ್ಟು ಹಾಲಿ ಮಂತ್ರಿಗಳು ಮತ್ತು ರಾಜಕಾರಣಿಗಳು ಭ್ರಷ್ಟಾಚಾರದ ಕಾರಣಕ್ಕೆ ಜೈಲಿಗೆ ಹೋಗುವ ಸಾಧ್ಯತೆಗಳಿವೆ. ಯಡಿಯೂರಪ್ಪನವರು ಯಾವುದೋ ಒಂದು ಕೇಸಿನಲ್ಲಾದರೂ ಅಪರಾಧಿ ಎಂದು ನ್ಯಾಯಾಲಯ ತೀರ್ಮಾನಿಸಿದರೂ ತೀರ್ಮಾನಿಸಿತು. ಅವರ ವಿರುದ್ಧ ಅಷ್ಟೊಂದು ಕೇಸುಗಳಿವೆ. ಲೋಕಾಯುಕ್ತ ನ್ಯಾಯಾಲಯದಲ್ಲಿರುವ ಮೊಕದ್ದಮೆಗಳ ಕಾರಣವಾಗಿ ಮತ್ತೂ ಒಂದಿಬ್ಬರು ಸಚಿವರು ರಾಜೀನಾಮೆ ಕೊಡಬೇಕಾಗಿ ಬರಬಹುದು. ನೋಡುತ್ತಿದ್ದರೆ ಈ ಸರ್ಕಾರ ಅದಕ್ಕೆ ಮುಂಚೆ ಬಿದ್ದರೂ ಬಿದ್ದೀತು. ಏನೇ ಆಗಲಿ ಈ ವರ್ಷದ ಅಂತ್ಯದ ಒಳಗೆ ಕರ್ನಾಟಕ ವಿಧಾನಸಭೆಗೆ ಮಧ್ಯಂತರ ಚುನಾವಣೆ ಆಗುತ್ತದೆ, ಇಲ್ಲದಿದ್ದರೆ ರಾಷ್ಟ್ರಪತಿ ಆಡಳಿತ ಬರುತ್ತದೆ. ಕರ್ನಾಟಕದ ಜನ ಏನು ಮಾಡುತ್ತಾರೆ ಎಂದು ಹೇಳುವುದು ಕಷ್ಟ. ಯಡ್ಡಯೂರಪ್ಪನವರು ಜೈಲಿನಿಂದ ಬಂದಾಗ ಜನ ವರ್ತಿಸಿದ ರೀತಿ, ಕಳೆದ ವರ್ಷ ಪ್ರತಿ ಉಪಚುನಾವಣೆಯಲ್ಲಿ ಮತ ಹಾಕಿದ ಪರಿ, ಮುಂದುವರೆದ ಜಾತಿ ಮತ್ತು ಹಣದ ಪ್ರಭಾವ, ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳಗಳ ಬಿಜೆಪಿಗಿಂತ ಭಿನ್ನವಾಗಿಲ್ಲದ ರಾಜಕಾರಣ, ಮತ್ತು ಅಲ್ಲಿಯವರಿಗಿಂತ ಬೇರೆ ರೀತಿ ಕಾಣಿಸುತ್ತಿಲ್ಲದ ಈ ಪಕ್ಷಗಳ ಶಾಸಕರು-ನಾಯಕರು, ಯಾವುದೂ ಏನನ್ನೂ ಬಿಟ್ಟುಕೊಡುತ್ತಿಲ್ಲ. ಆದರೆ ಈ ವರ್ಷದ ಅತಿವೃಷ್ಟಿ ಮತ್ತು ಅನಾವೃಷ್ಟಿ 2011 ಕ್ಕಿಂತ ಹೆಚ್ಚೇ ಇರುತ್ತದೆ. ರಾಜ್ಯಕ್ಕೆ ಬರಗಾಲ ಈಗಾಗಲೆ ಉತ್ತರದಲ್ಲಿ ಒಂದು ಕಾಲನ್ನು ಇಟ್ಟಿದೆ.

ಇವೆಲ್ಲವೂ ನಮ್ಮ ಜವಾಬ್ದಾರಿಗಳನ್ನು ಹೆಚ್ಚಿಸಬೇಕು. ನಾನು ಇತ್ತೀಚೆಗೆ ಸ್ನೇಹಿತರ ಜೊತೆ ಮಾತನಾಡುತ್ತಿದ್ದಾಗ ಒಂದು ಮಾತು ಹೇಳಿದ್ದೆ: ಚೆನ್ನಾಗಿರುವ ಒಂದು ಉತ್ತಮ ಎನ್ನಬಹುದಾದ ವ್ಯವಸ್ಥೆಯಲ್ಲಿ ನನಗೆ ಪಾತ್ರವಿಲ್ಲದಿದ್ದರೂ ಚಿಂತೆಯಿಲ್ಲ, ಆದರೆ ಕೆಟ್ಟದರ ಭಾಗವಾಗಿ ಮಾತ್ರ ಇರಲಾರೆ. ಬಹುಶಃ ನಮ್ಮ ಅನೇಕ ಸಮಾನಮನಸ್ಕರ ಯೋಚನೆಯೂ ಹೀಗೇ ಇರಬಹುದು. ನಾವು ಕೆಟ್ಟ ಸಂದರ್ಭವೊಂದರಲ್ಲಿ ಅಥವ ಸ್ಥಿತ್ಯಂತರದ ಸಂದರ್ಭದಲ್ಲಿ ಜೀವಿಸುತ್ತಿದ್ದೇವೆ. ನಮ್ಮ ತುಡಿತಗಳು, ಆಕ್ರೋಶಗಳು, ಚಟುವಟಿಕೆಗಳು ಕೆಟ್ಟದರ ವಿರುದ್ದ, ಮತ್ತು ಹಾಗೆ ಇರುವುದನ್ನು ಸರಿಪಡಿಸಿಕೊಳ್ಳುವ ಸುತ್ತಲೂ ಇವೆ. ಆದರೆ ಅದು ಮಾತಿನಲ್ಲಿ ಮುಗಿಯದೆ ಕೃತಿಗೆ ಇಳಿಯಬೇಕು. ಆ ನಿಟ್ಟಿನಲ್ಲಿ ಈ ವರ್ಷ ವರ್ತಮಾನ.ಕಾಮ್ ಮೂಲಕ ಅಥವ ನಮ್ಮ ಇತರೆ ಪ್ರಯತ್ನಗಳ ಮೂಲಕ ನಾವೆಲ್ಲಾ ಯತ್ನಿಸೋಣ. ನಮ್ಮ ಪ್ರಯತ್ನಕ್ಕೆ ಬೆಂಬಲ ಸೂಚಿಸಿರುವ, ಒಲವಿರುವ ಎಲ್ಲಾ ಮಿತ್ರರಲ್ಲಿ ಒಂದು ಮನವಿ: ಬೇಲಿಯ ಮೇಲೆ ಕುಳಿತಿರುವ ಮತ್ತು ಬೇಲಿಯ ಹೊರಗಿನಿಂದಲೇ ನಿಂತು ನೋಡುತ್ತಿರುವ ಸ್ನೇಹಿತರೇ, ದಯವಿಟ್ಟು ಒಳಬನ್ನಿ; ಪಾಲ್ಗೊಳ್ಳಿ. ಈ ಮೂಲಕ ನಮ್ಮ ಚಿಂತನೆಗಳನ್ನು, ಕ್ರಿಯೆಗಳನ್ನು, ಬದ್ಧತೆಗಳನ್ನು ಪಕ್ವಗೊಳಿಸಿಕೊಳ್ಳುತ್ತ, ಗಟ್ಟಿಗೊಳಿಸಿಕೊಳ್ಳುತ್ತ ಹೋಗೋಣ. ಹೋಗಲೇ ಬೇಕಾದಾಗ ಹೊರಹೋಗುವುದು ಇದ್ದೇ ಇರುತ್ತದೆ. ಈ ವರ್ಷ ಬಹಳ ಮುಖ್ಯವಾದ ವರ್ಷವಾಗುವ ಎಲ್ಲಾ ಸೂಚನೆಗಳೂ ಇವೆ. ಇಂತಹ ಸಂದರ್ಭದಲ್ಲಿ ದೇಶ ಮತ್ತು ಕಾಲ ನಮ್ಮ ಮಾತು ಮತ್ತು ಕೃತಿ ಎರಡನ್ನೂ ಕೇಳುತ್ತದೆ. ಅಲ್ಲವೇ?

(ಚಿತ್ರಕೃಪೆ: ವಿಕಿಪೀಡಿಯ)

KGF ಸಂತ್ರಸ್ತರಿಗೆ ತಲುಪಿದ ನೆರವು…

ಗೆಳೆಯರೆ,

ಕಳೆದ ಭಾನುವಾರ ಟಿ.ಕೆ. ದಯಾನಂದ್, ದಿನೇಶ್ ಕುಮಾರ್, ಮತ್ತು ಗೆಳೆಯರು KGFಗೆ ಹೋಗಿ ಸುಮಾರು 50 ಸಂತ್ರಸ್ತ ಕುಟುಂಬಗಳಿಗೆ ನೆರವನ್ನು ನೀಡಿ ಬಂದಿದ್ದಾರೆ. ಅದರ ವಿವರಗಳನ್ನು ಒಂದೆರಡು ದಿನದಲ್ಲಿ ಪ್ರಕಟಿಸಲಿದ್ದೇವೆ. ಹಾಗೆಯೇ, ರಸೀತಿಯನ್ನೂ ಸಹ. ದಿನೇಶ್ ಕುಮಾರ್‌ರವರು ಈಗ ತಾನೆ ಅಂದಿನ ಹಂಚಿಕೆ ಕಾರ್ಯದ ಕೆಲವು ಫೋಟೋಗಳನ್ನು ಕಳುಹಿಸಿದ್ದಾರೆ. ಅವರಿಗೆ ಮತ್ತು ಇದನ್ನು ಸಾಧ್ಯ ಮಾಡಿದ ಎಲ್ಲರಿಗೂ ಮತ್ತೊಮ್ಮೆ ವರ್ತಮಾನದ ಬಳಗದ ಪರವಾಗಿ ಧನ್ಯವಾದಗಳು.

ಅಂದಹಾಗೆ, ನಮಗೆ ಭಾನುವಾರದ ತನಕವೂ ನೆರವು ಹರಿದು ಬಂದಿತ್ತು. ಒಟ್ಟು ರೂ. 35000 ಹಣಸಂಗ್ರಹವಾಗಿದ್ದು, ಅದರ ಅಂತಿಮ ವಿವರ ಹೀಗಿದೆ: ವರ್ತಮಾನ ಬಳಗ – 5000,, ರಾಮಕೃಷ್ಣ ಎಂ – 10000, ಮಾನಸ ನಾಗರಾಜ್ – 500, ಅನಾಮಧೇಯ-1 – 1000, ಎಸ್. ವಿಜಯ – 1000, ಸ್ವರ್ಣ ಕುಮಾರ್ ಬಿ.ಎ. – 1500, ಬಿ. ಶ್ರೀಪಾದ ಭಟ್ – 2000, ಅನಾಮಧೇಯ-2 – 500, ಅಕ್ಷತಾ – 1000, ಸಂದೀಪ್/ರಾಘವೇಂದ್ರ ಸಿ.ವಿ. – 2000, ಪಿ.ರಂಗನಾಥ – 2000, ತ್ರಿವೇಣಿ ಟಿ.ಸಿ. – 1000, ಅವಿನಾಶ ಕನ್ನಮ್ಮನವರ – 500, ಸತೀಶ್ ಗೌಡ ಬಿ.ಎಚ್. (ಕ.ರ.ವೇ.) – 500, ಆರ್.ಕೆ.ಕೀರ್ತಿ (ಕ.ರ.ವೇ.) – 1000, ಬಿ. ಸಣ್ಣೀರಪ್ಪ (ಕ.ರ.ವೇ.) – 500, ಸಿ.ವಿ.ದೇವರಾಜ್ (ಕ.ರ.ವೇ.) – 1000, ನಂದಿನಿ ಎ.ಡಿ. – 500, ಶಿವಕುಮಾರ್ ದಂಡಿಗೆಹಳ್ಳಿ – 2000, ಕಾರ್ತಿಕ್ ಡಿ.ಪಿ. – 1500.










ಸಂತ್ರಸ್ತರಿಗೆ ಸಹಾಯ ಮಾಡುತ್ತಿರುವವರಿಗೆ ಧನ್ಯವಾದಗಳು…

-ರವಿ ಕೃಷ್ಣಾರೆಡ್ಡಿ

ಸ್ನೇಹಿತರೆ,

KGF ನ ಸಂತ್ರಸ್ತರಿಗಾಗಿ ನಾವು ಮಾಡಿಕೊಂಡ ಮನವಿಗೆ ಸ್ಪಂದಿಸಿ ಈಗಾಗಲೆ ಐದಾರು ಜನ ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ನಾವು ಮನವಿ ಪ್ರಕಟಿಸಿದ ಮೊದಲ ಎರಡು ದಿನ ಹಣಸಂದಾಯ ಮಾಡುವ ವಿಚಾರಕ್ಕೆ ಕೆಲವೊಂದು ಮಾಹಿತಿಗಳು ಅಪೂರ್ಣವಾಗಿದ್ದವು. ಈಗ ನೀವು ಯಾವುದೇ ರೀತಿ ಕಳುಹಿಸಬೇಕೆಂದರೂ (ಇಂಟರ್ನೆಟ್/ಎಟಿಎಮ್ ಟ್ರಾನ್ಸ್‌ಫರ್/ಚೆಕ್) ಸಂಪೂರ್ಣ ಮಾಹಿತಿ ಲಭ್ಯವಿದೆ.

ಇಲ್ಲಿಯವರೆಗೆ ಒಟ್ಟು ರೂ. 18,500 ಸಂಗ್ರಹವಾಗಿದೆ. ಇನ್ನೂ ಹಲವರು ಒಂದೆರಡು ದಿನದಲ್ಲಿಯೇ ಚೆಕ್ ಕಳುಹಿಸುವ, ಅಕೌಂಟಿಗೆ ಟ್ರಾನ್ಸ್‌ಫರ್ ಮಾಡುವ ಆಶ್ವಾಸನೆ ಇತ್ತಿದ್ದಾರೆ. ಸಹಾಯ ಮಾಡಬೇಕೆಂದಿರುವವರು ಆದಷ್ಟು ಬೇಗ ಮಾಡಿ. ಡಿಸೆಂಬರ್ 15ಕ್ಕೆ ಸಂಗ್ರಹವಾಗುವ ಒಟ್ಟು ಮೊತ್ತವನ್ನು ಪದಾರ್ಥರೂಪದಲ್ಲಿ ಸಂತ್ರಸ್ತರಿಗೆ ತಲುಪಿಸುವ ಕಾರ್ಯ ಆರಂಭಿಸಲು ಅನುಕೂಲವಾಗುತ್ತದೆ. ಸರಿಯಾದ ಅಥವ ಅತ್ಯಗತ್ಯವಾದ ಸಮಯದಲ್ಲಿ ಮಾಡುವ ಸಹಾಯವೇ ಅತ್ಯುತ್ತಮ ಸಹಾಯ. ಅದನ್ನು ಮತ್ತಷ್ಟು ನಿಧಾನಗೊಳಿಸುವುದು ಬೇಡ ಎನ್ನುವುದಷ್ಟೇ ನಮ್ಮ ಆಶಯ.

ಅಂದ ಹಾಗೆ, ಇಲ್ಲಿಯವರೆಗೆ ಹಣ ಸಂದಾಯ ಮಾಡಿರುವವರ ಮತ್ತು ಚೆಕ್ ಕಳುಹಿಸಿರುವವರ ವಿವರ ಹೀಗಿದೆ:

ವರ್ತಮಾನ ಬಳಗ  – 5000
ರಾಮಕೃಷ್ಣ ಎಂ. – 10000
ಮಾನಸ ನಾಗರಾಜ್ – 500
ಅನಾಮಧೇಯ-1 – 1000
ಎಸ್.ವಿಜಯ, ಮೈಸೂರು – 1000
ಸ್ವರ್ಣಕುಮಾರ್ ಬಿ.ಎ. – 1000

ಒಟ್ಟು: 18,500

ನನ್ನ ಭಯಾತಂಕಗಳು, ಮಡೆಸ್ನಾನ, ನಮ್ಮ ರಾಜಕಾರಣ…

-ರವಿ ಕೃಷ್ಣಾರೆಡ್ಡಿ

ಕಳೆದೆರಡು ವರ್ಷಗಳಿಂದ ನನಗಿರುವ ಭಯಾತಂಕಗಳೇ ಬೇರೆ. ಅವು ಬಹುಶಃ ನನ್ನ ಅನೇಕ ಸ್ನೇಹಿತರಿಗಿರುವ ಅಥವ ಇದ್ದಿರಬಹುದಾದ ಭಯಾತಂಕಗಳಿಗಿಂತ ಭಿನ್ನವಾದವು. ಹೆಚ್ಚುತ್ತಿರುವ ಜಾಗತಿಕ ತಾಪಮಾನವೆ ನನ್ನ ಭಯಾತಂಕಕ್ಕೆ ಮೂಲ ಕಾರಣ. ಏಳು ವರ್ಷದ ಮಗಳಿಗೆ ಮತ್ತು ಎರಡು ಮುಟ್ಟುತ್ತಿರುವ ಮಗನಿಗೆ ತಂದೆಯಾಗಿ ನನ್ನ ಆತಂಕ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ.

ಈ ಆತಂಕದ ಹಿನ್ನೆಲೆಯೆಲ್ಲಿಯೇ ನಾನು ಸಸ್ಯಾಹಾರಿಯಾಗಲು ತೀರ್ಮಾನಿಸಿದ್ದು. ಅಮೇರಿಕದಲ್ಲಿದ್ದಾಗ ಅದಕ್ಕೊಂದಿಷ್ಟು ಅರ್ಥವಿತ್ತು. ಆದರೆ ಅದಕ್ಕೆ ಇಲ್ಲಿ ಅಷ್ಟು ಘನವಾದ ಅರ್ಥವಿಲ್ಲ. ಆದರೂ ನಾನು ಸುಡುವ ಪೆಟ್ರೋಲು ಮತ್ತು ವಿದ್ಯುತ್‌ಗೆ ಮತ್ತು ಜಾಗತಿಕ ತಾಪಮಾನ ವೃದ್ಧಿಗೆ ನನ್ನ ಕೊಡುಗೆ ಇದ್ದಿರಬಹುದಾದ ಇತರ ವೈಯಕ್ತಿಕ ಕ್ರಿಯೆಗಳಿಗೆ ಪ್ಯಾಯಶ್ಚಿತ್ತವೆಂಬಂತೆ ಅದನ್ನು ನಡೆಸಿಕೊಂಡು ಬರುತ್ತಿದ್ದೇನೆ. ಇನ್ನು ಸ್ಥಳೀಯ ಆಹಾರ ಪದಾರ್ಥಗಳನ್ನೇ–ಕಾರ್ಬನ್ ಫೂಟ್‌ಪ್ರಿಂಟ್ ಆದಷ್ಟೂ ಕಮ್ಮಿ ಇರುವುದನ್ನೇ, ತಿನ್ನಬೇಕು ಎನ್ನುವ ಆಶಯ ಇನ್ನೂ ಆರಂಭಿಸಲೇ ಆಗಿಲ್ಲ.

ಈ ವರ್ಷದ ಏಪ್ರಿಲ್‌ನಲ್ಲಿ ಅಮೆರಿಕದಲ್ಲಿದ್ದಾಗ ಈ “Hot: Living Through the Next Fifty Years on Earth” ಎನ್ನುವ ಪುಸ್ತಕ ಅಮೆಜಾನ್.ಕಾಮ್‌ನಲ್ಲಿ ಕಣ್ಣಿಗೆ ಬಿದ್ದದ್ದು. ನನ್ನ ಮಗಳದೇ ವಯಸ್ಸಿನ ಮಗಳೊಬ್ಬಳ ತಂದೆಯಾಗಿರುವ ಅಮೇರಿಕನ್ ಪತ್ರಕರ್ತ ಮಾರ್ಕ್ ಹರ್ಟ್ಸ್‌ಗಾರ್ಡ್ ತನ್ನ ಮಗಳ ಮುಂದಿನ ದಿನಗಳು ಹೇಗಿರುತ್ತವೆ ಮತ್ತು ಅವಳು ಹೇಗೆ ಜೀವನ ಸಾಗಿಸಬೇಕಾದೀತು ಎನ್ನುವ ಬಗ್ಗೆ ಬರೆದಿರುವ ಪುಸ್ತಕ ಎನ್ನುವ ಬ್ಲರ್ಬ್ ಓದಿಯೇ ಅದನ್ನು ಕೊಂಡಿದ್ದೆ. ಈಗ ಅದನ್ನು ಓದಲು ಆರಂಭಿಸಿರುವೆ. ನನ್ನ ರಾಜ್ಯದ ಮತ್ತು ರಾಷ್ಟ್ರದ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಓದು ನನ್ನ ಭಯಾತಂಕಗಳನ್ನು ಇನ್ನಷ್ಟು ಹೆಚ್ಚಿಸುತ್ತಿದೆ.

ಈ  ಹಿನ್ನೆಲೆಯಲ್ಲಿ ನಾನು ಕಳೆದ ವಾರದಿಂದ ಚರ್ಚೆಯಾಗುತ್ತಿರುವ ಎಂಜಲು ಮಡೆಸ್ನಾನದ ಬಗ್ಗೆ ಟಿಪ್ಪಣಿ ಮಾಡಬಯಸುತ್ತೇನೆ. ಯಾರು ಯಾರ ಎಂಜಲೆಲೆಯ ಮೇಲೆ ಉರುಳಾಡಿದರೂ ಅದು ಅವಮಾನದ ಪ್ರಶ್ನೆಯೇ. ಬಾಹ್ಮಣೇತರರು ಉಂಡೆದ್ದ ಎಲೆಯ ಮೇಲೆ ಬ್ರಾಹ್ಮಣರು ಉರುಳಾಡಿದರೂ (ಅಂತಹ ಒಂದು ಸಾಧ್ಯತೆ ಭಾರತದಲ್ಲೆಲ್ಲೂ ಇದ್ದ ಹಾಗೆ ಇಲ್ಲ; ಅದು ಬೇರೆ ಪ್ರಶ್ನೆ.) ಅದು ಮನುಷ್ಯನ ಘನತೆಯೆ ಹಿನ್ನೆಲೆಯಲ್ಲಿ ಅಸಹ್ಯವೇ ಮತ್ತು ಅವಮಾನವೆ. ಇನ್ನು ಬ್ರಾಹ್ಮಣರು ತಿಂದು ಎಂಜಲು ಬಳಿದು ಬಿಟ್ಟ ಎಲೆಯ ಮೇಲೆ ಬ್ರಾಹ್ಮಣೇತರರು ಉರುಳಾಡುವುದರಲ್ಲಿ ಕೇವಲ ವ್ಯಕ್ತಿಗತ ಘನತೆಯ ಪ್ರಶ್ನೆ ಮಾತ್ರವಲ್ಲ, ಜಾತೀಯತೆಯ, ಅದು ಪೋಷಿಸಿಕೊಂಡು ಬಂದ ಅಸ್ಪೃಶ್ಯತೆಯ, ಅಸಮಾನತೆಯ, ಹಿಂದೂ ಸಮಾಜದ ತಾರತಮ್ಯಗಳ ಪ್ರಶ್ನೆಗಳೆಲ್ಲಾ ಅಡಗಿವೆ. ಇದನ್ನು ನಿಲ್ಲಿಸಬೇಕೆ ಬೇಡವೆ ಎನ್ನುವುದು ನನ್ನಂತಹವನಿಗೆ ಚರ್ಚಾಸ್ಪದ ಪ್ರಶ್ನೆಯೇ ಅಲ್ಲ. ಕೆಲವರು ಕಳೆದ ವರ್ಷ ತಮ್ಮ ಅಹಂಕಾರದಲ್ಲಿ ಇದನ್ನು ಕೂದಲು ಸೀಳುವ ಪ್ರಶ್ನೆ ಮಾಡಿಕೊಂಡಿದ್ದರು. ಉದ್ದಟರು ಮತ್ತು ಮೂರ್ಖರು. ಒಂದು ಅಸಹ್ಯ ಸಾಮೂಹಿಕ ಕ್ರಿಯೆಯನ್ನು ಬಹಿರಂಗವಾಗಿ ಯಾವುದೇ ಸಂಕೋಚ-ನಾಚಿಕೆಗಳಿಲ್ಲದೆ ಸಮರ್ಥಿಸಿಕೊಳ್ಳುವಷ್ಟು ನಮ್ಮ ಸಮಾಜ ಹಿನ್ನಡೆದಿದೆ ಎಂದರೆ ಏನು ಹೇಳುವುದು?

ಇಲ್ಲಿ ನಾಜೂಕಾಗಿ ಮಾತನಾಡುವವರೂ ಹಲವರಿದ್ದಾರೆ. ಪೇಜಾವರ ವಿಶ್ವೇಶ್ವರ ತೀರ್ಥರೆಂಬ ಪೂರ್ಣಾವಧಿ ಮತೀಯ ರಾಜಕೀಯ ಕಾರ್ಯಕರ್ತ ಮತ್ತು ಅಲ್ಪಾವಧಿ ಮಠಾಧೀಶರನ್ನು ಕೆಲವು ಟಿವಿ ಚಾನಲ್‌ಗಳು ಸಂದರ್ಶಿಸಿದವು. ಅವರು ಹೇಳಿದ್ದು, ’ಈ ವಿಷಯದ ಬಗ್ಗೆ ನಾನು ತಟಸ್ಥ’. ತಾನು ಅದರ ಪರವೂ ಇಲ್ಲ, ವಿರುದ್ಧವೂ ಇಲ್ಲ ಎನ್ನುವ ಇವರು ಯಾರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದಾರೆ? Status quo ಕಾಯ್ದುಕೊಳ್ಳಬೇಕು ಎನ್ನುವುದರಲ್ಲಿಯೇ ಎಂಜಲು ಮಡೆಸ್ನಾನದ ಪರವಾದ ಬಲವಾದ ನಿಲುವು ಇದೆ. ಅವರ ಇಡೀ ಮಾತಿನ ಅರ್ಥ ಅದೇ ಇತ್ತು. ತಾನು ತಟಸ್ಥ ಎಂದು ಹೇಳುವುದು ತಾನು ಎಂಜಲು ಮಡೆಸ್ನಾನದ ಪರ ಇದ್ದೇನೆ ಎನ್ನುವುದನ್ನು ಧ್ವನಿಸುತ್ತದೆ ಎಂದು ಗೊತ್ತಾಗದಷ್ಟು ಮುಗ್ಧ ಅಥವ ಮೂರ್ಖರೇ ಇವರು? ಯಾರಾದರೂ ಈ ವಿಷಯದ ಬಗ್ಗೆ ತಾನು ತಟಸ್ಥ, ನೋ ಕಾಮೆಂಟ್ಸ್ ಎಂದರೆಂದರೆ ಅವರು ಎಂಜಲು ಸ್ನಾನದ ಪರ ಇದ್ದಾರೆ ಎಂದೇ ಅರ್ಥ.

ಇನ್ನು ರಾಜಕಾರಣಿಗಳ ವಿಷಯ. ಇಂದು ಕರ್ನಾಟಕದ ಯಾವೊಬ್ಬ ಪ್ರಮುಖ ರಾಜಕಾರಣಿಯೂ ಇದರ ಬಗ್ಗೆ ಗಂಭೀರವಾಗಿ ಮಾತನಾಡುತ್ತಿಲ್ಲ. ಇದು ಕೇವಲ ಸಾಮಾಜಿಕ ಅಥವ ಮತಾಚರಣೆಯ ಪ್ರಶ್ನೆ ಅಲ್ಲ. ಇಂತಹ ಒಂದು ವಿಷಯದ ಬಗ್ಗೆ ತೆಗೆದುಕೊಳ್ಳುವ ನಿಲುವು ನಮ್ಮ ಭವಿಷ್ಯದ ನಿಲುವುಗಳನ್ನೂ ನಿರ್ದೇಶಿಸುತ್ತದೆ. ಈ ಇಡೀ ಚರ್ಚೆಯನ್ನು ಪ್ರಗತಿಪರ ಮತ್ತು ಉದಾರವಾದಿ ಹಿನ್ನೆಲೆಯಲ್ಲಿ ನೋಡಿ ರಾಜ್ಯದ ಜನತೆಯ ಮುಂದೆ ಹೇಗೆ ಇದು ಅಸಹ್ಯ ಮತ್ತು ಒಂದು ಕೆಟ್ಟ ಪರಂಪರೆಯೊಂದರ ಪಳೆಯುಳಿಕೆ, ಯಾಕಾಗಿ ಇದನ್ನು ನಿಲ್ಲಿಸಬೇಕು ಮತ್ತು ವಿರೋಧಿಸಬೇಕು, ಜನ ಮತ್ತು ಸರ್ಕಾರ ಈಗ ಮಾಡಬೇಕಿರುವುದು ಏನು ಎಂದು ಹೇಳಬಲ್ಲ ಒಬ್ಬನೇ ಒಬ್ಬ ರಾಜಕಾರಣಿ ನಮ್ಮ ಮಧ್ಯದಲ್ಲಿಲ್ಲ.

ಇದೇ ಈ ಹೊತ್ತಿನ ದೊಡ್ಡ ದುರಂತ.

ನಾವು ಅಧಿಕಾರ ರಾಜಕಾರಣಿಗಳನ್ನು ಬೆಳೆಸುತ್ತಿದ್ದೇವೆ. ಆದರೆ ನಮ್ಮ ವರ್ತಮಾನವನ್ನು ಸಹನೀಯಗೊಳಿಸಬಲ್ಲ ಮತ್ತು ನಮ್ಮ ಮತ್ತು ನಮ್ಮ ಮುಂದಿನ ತಲೆಮಾರಿಗೆ ಭವಿಷ್ಯವನ್ನು ಕಟ್ಟಿಕೊಡಬಲ್ಲ ಮುಂದಾಳುಗಳನ್ನು ಬೆಳೆಸುತ್ತಿಲ್ಲ. ನಾವು ಬೆಳೆಸುತ್ತಿರುವುದೆಲ್ಲ ಓಟಿನ ಮೇಲೆ ಗಮನವಿಟ್ಟುಕೊಂಡಿರುವ ಸ್ವಾರ್ಥಿಗಳನ್ನು, ಗಂಭೀರ ವಿಷಯದ ಬಗ್ಗೆ ಮಾತನಾಡಲು ಧೈರ್ಯ ಸಾಲದ ಹೆದರುಪುಕ್ಕಲರನ್ನು, ಇಲ್ಲವೆ ಇವು ಯಾವೊಂದೂ ಅರ್ಥವಾಗದ ಮೂರ್ಖರನ್ನು. ಇಂದು ಕರ್ನಾಟಕದಲ್ಲಿ ಯಾವೊಬ್ಬ ಪ್ರಮುಖ ರಾಜಕಾರಣಿಯೂ ಪ್ರಗತಿಪರ ವಿಚಾರದ ಬಗ್ಗೆ ಮಾತನಾಡುತ್ತಿಲ್ಲ ಎಂದರೆ ಅದಕ್ಕೆ ಎರಡು ಕಾರಣಗಳಿವೆ. ಒಂದು, ಈ ರಾಜಕಾರಣಿಗಳು ಇಂತಹುದರ ಬಗ್ಗೆ ಮಾತನಾಡಬಲ್ಲಷ್ಟು ಅರ್ಹತೆ ಪಡೆದಿಲ್ಲದಿರುವುದು, ಎರಡನೆಯದು, ಅರ್ಹತೆ ಇದ್ದರೂ ಅವರ ಮಾತನ್ನು ಸಾವಧಾನದಿಂದ ಕೇಳುವಂತಹ ಮತ್ತು ಪ್ರಶಂಸಿಸುವಂತಹ ವಾತಾವರಣವೆ ಇಲ್ಲಿ ಇಲ್ಲದಿರಬಹುದು. ಎರಡೂ ಒಳ್ಳೆಯ ಲಕ್ಷಣಗಳಲ್ಲ.

ನಮ್ಮ ಭವಿಷ್ಯದ ದಿನಗಳು ನಿಜಕ್ಕೂ ಕರಾಳವಾಗಲಿವೆ. ಕಳೆದ ಆರೇಳು ವರ್ಷದಿಂದ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಮಳೆ ಹೇಳಿಕೊಳ್ಳುವ ರೀತಿಯಲ್ಲಿ ಕೈಕೊಟ್ಟಿಲ್ಲ. ಆದರೆ ಇದೊಂದು ಚಕ್ರದ ರೀತಿ. ಎಲ್ ನೀನ್ಯೊ ಪರಿಣಾಮವಾಗಿ ಮುಂದಿನ ವರ್ಷಗಳಲ್ಲಿ ಮಳೆ ಕೈಕೊಡಲಿದೆ. ಇದನ್ನು ಹೇಳಲು ಕಾಲಜ್ಞಾನಿಯೇ ಬೇಕಿಲ್ಲ. ವಿಜ್ಞಾನ ಮತ್ತು ಕಳೆದ ಹಲವು ದಶಕಗಳ ಮಳೆಬೆಳೆಗಳ ಗಮನಿಕೆಯೇ ಸಾಕು. ಇದರ ಜೊತೆಗೆ ಊಹಿಸಲು ಸಾಧ್ಯವಾಗದಂತಹ ದಿನಗಳು ಜಾಗತಿಕ ತಾಪಮಾನ ಏರಿಕೆಯಿಂದ ನಮ್ಮದಾಗಲಿವೆ. ವಿಶೇಷವಾಗಿ ಮಳೆಯಾಶ್ರಿತ ಬಯಲುಸೀಮೆಯ ಜನರ ಸ್ಥಿತಿ ದುರ್ಭರವಾಗಲಿದೆ. ಪ್ಪ್ರತಿಯೊಂದು ಆಹಾರಪದಾರ್ಥಕ್ಕೂ ಕೈಚಾಚುವ ನಗರವಾಸಿಗಳ ಸ್ಥಿತಿಯೂ ಘೋರವಾಗಲಿದೆ. ಆ ದಿನಗಳ ಸವಾಲಿಗೆ ನಮ್ಮ ಇಂದಿನ ರಾಜಕಾರಣಿಗಳು ಸಿದ್ದರಿದ್ದಾರೆಯೇ? ಅಂದಿಗೆ ನಾಯಕತ್ವ ಕೊಡಬಲ್ಲ, ಸತ್ಯ ನುಡಿಯಬಲ್ಲ, ವಿಜ್ಞಾನ ಗಮನಿಸಬಲ್ಲ, ಸ್ವಾರ್ಥ ತೊರೆಯಬಲ್ಲವರಂತಹವರನ್ನು ನಾವು ನಮ್ಮ ಪ್ರತಿನಿಧಿಗಳನ್ನಾಗಿ ಆರಿಸಿಕೊಂಡಿದ್ದೇವೆಯೇ? ಅಥವ, ಅಂದಿನ ದಿನಗಳು ಬಯಸುವ ನಾಯಕತ್ವವನ್ನು ಸಾಧ್ಯವಾಗಿಸುವಂತಹ ಪೂರಕ ವಾತಾವರಣವನ್ನು ನಾವು ನಿರ್ಮಿಸುತ್ತಿದ್ದೇವೆಯೇ?

ಹೌದು ಎಂದು ಹೇಳಲು ನನಗೆ ಯಾವ ಸೂಚನೆ ಸಂಕೇತಗಳೂ ಕಾಣಿಸುತ್ತಿಲ್ಲ. ನಮ್ಮ ಸಮಾಜ ಆತ್ಮಹತ್ಯಾತ್ಮಕ ರೀತಿಯಲ್ಲಿಯೇ ವರ್ತಿಸುತ್ತಿದೆ.

ಈ ಹಿನ್ನೆಲೆಯಲ್ಲಿಯೇ, ನನ್ನೆಲ್ಲ ಸಾಮಾಜಿಕ ಜವಾಬ್ದಾರಿಗಳನ್ನು ಮರೆತು ಕೇವಲ ಒಬ್ಬ ತಂದೆಯಾಗಿ ಯೋಚಿಸಿದಾಗಲೆಲ್ಲ ನನ್ನ ಭಯಾತಂಕಗಳು ಹೆಚ್ಚುತ್ತಲೇ ಹೋಗುತ್ತವೆ. ಎಂಜಲು ಮಡೆಸ್ನಾನದಂತಹ ಸರಳ ವಿಷಯದ ಬಗ್ಗೆ ನಿಲುವು ತೆಗೆದುಕೊಳ್ಳಲಾಗದ ಸಮಾಜ ಮತ್ತು ಸರ್ಕಾರಗಳು ಇದಕ್ಕಿಂತ ಗಂಭೀರವಾದ ವಿಷಯಗಳ ಬಗ್ಗೆ ಏನೆಲ್ಲಾ ಮಾಡಬಹುದು? ಅವರು ಏನು ಮಾಡಿದರೂ ಅದು ಸರಿಯಾದ ಕ್ರಮ ಆಗಿರುವುದಿಲ್ಲ. ಯಾಕೆಂದರೆ ಹಾಗೆ ನಿರ್ಧಾರ ತೆಗೆದುಕೊಳ್ಳುವವರ್‍ಯಾರಿಗೂ ಅಂತಹ ವಿಷಯಗಳ ಬಗ್ಗೆ ಮೂಲಭೂತ ಜ್ಞಾನ ಇರುವುದೂ ಸಂದೇಹವೆ.

ಆದರೂ, ಈ ಎಲ್ಲಾ ಭಯಾತಂಕಗಳ ನಡುವೆಯೂ ನನಗಿರುವ ಏಕೈಕ ಧೈರ್ಯ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ. ಅದನ್ನು ನಾವು ಸ್ವಚ್ಚವಾಗಿ ಉಳಿಸಿಕೊಂಡರೆ ಭವಿಷ್ಯ ಎಂತಹ ಸವಾಲು ಒಡ್ಡಿದರೂ ಕೊನೆಗೆ ಒಂದು ನಾಗರೀಕತೆಯಾಗಿ ನಾವು ಉಳಿಯುತ್ತೇವೆ, ಗೆಲ್ಲುತ್ತೇವೆ.

ನಮ್ಮ ಮುಂದಿನ ದಿನಮಾನಗಳನ್ನು define ಮಾಡುವ ವಿದ್ಯಮಾನ ಒಂದಿದ್ದರೆ ಅದು ಜಾಗತಿಕ ತಾಪಮಾನ ಏರಿಕೆ ಮತ್ತು ಬದಲಾಗುವ ಹವಾಮಾನ. ಆ ಕಾರಣದಿಂದಾಗಿಯೇ ನಮ್ಮ “ವರ್ತಮಾನ.ಕಾಮ್”ನಲ್ಲಿ ಈ ವಿದ್ಯಮಾನದ ಕುರಿತಾಗಿ ನಿಯಮಿತವಾಗಿ ಚರ್ಚೆಯಾಗುವಂತೆ ನೋಡಿಕೊಳ್ಳುವ ಜರೂರು ಇದೆ ಎನ್ನಿಸುತ್ತಲೆ ಇದೆ. ಯಾರಾದರು ಓದುಗರು ಇದರ ಬಗ್ಗೆ ಗಮನ ಹರಿಸಿದ್ದರೆ ದಯವಿಟ್ಟು ಬರೆಯಿರಿ. ಇಲ್ಲವೆ, ಕರ್ನಾಟಕದಲ್ಲಿ ಅಂತಹವರ್ಯಾರಾದರೂ ಇದ್ದರೆ ತಿಳಿಸಿ, ಅವರ ಕೈಯ್ಯಲ್ಲಿ ಬರೆಸಲು ಪ್ರಯತ್ನಿಸೋಣ. ನಾನು ಆಗಲೇ ಹೇಳಿದಂತೆ ಬೇರೆಲ್ಲಾ ವಿಷಯಗಳಿಗಿಂತ ನಮ್ಮ ಮತ್ತು ನಮ್ಮ ಮಕ್ಕಳ ಭವಿಷ್ಯವನ್ನು ನಿರ್ಧರಿಸುವ, ಬದಲಾಯಿಸುವ ಸಂಗತಿ ಇದೇ ಎನ್ನುವುದು ನನ್ನ ಅಭಿಪ್ರಾಯ. ಅದಕ್ಕೆ ನಾವು ನಮ್ಮದೇ ನೆಲೆಯಲ್ಲಿ ರಾಜಕೀಯ-ಸಾಮಾಜಿಕ-ಆರ್ಥಿಕ ನೆಲೆಗಳಲ್ಲಿ ಸಿದ್ಧವಾಗುವುದು ಸೂಕ್ತ. ನಮ್ಮ ಭವಿಷ್ಯದ ಸವಾಲುಗಳನ್ನು ಎದುರಿಸಲು ಸೂಕ್ತವಾದಂತಹ ಪೂರಕವಾದ ರಾಜಕಿಯ ವ್ಯವಸ್ಥೆಯನ್ನು ಕಟ್ಟಿಕೊಳ್ಳಲು ನಾವು ವಿಫಲರಾದರೆ, ಒಂದು ನಾಗರೀಕತೆಯಾಗಿಯೂ ನಾವು ವಿಫಲರಾದಂತೆಯೆ.

ಅನಾರೋಗ್ಯ, ವರ್ತಮಾನ.ಕಾಮ್, ಕೈಜೋಡಿಸಬೇಕಾದ ಸಮಯ

ಸ್ನೇಹಿತರೆ,

ಕೆಲವೊಂದು ವಿಚಾರಗಳನ್ನು ಹೇಳಬೇಕಿದೆ. ಇದು “ವರ್ತಮಾನ.ಕಾಮ್”ಗೆ ಸಂಬಂಧಿಸಿದ್ದಾದ್ದರಿಂದ ಒಂದಷ್ಟು ವೈಯಕ್ತಿಕ ವಿಚಾರಗಳಿದ್ದರೂ ಇಲ್ಲಿ ಹೇಳುವುದು ಸೂಕ್ತ.

ಹೀಗಾಗುತ್ತದೆ ಎನ್ನುವ ಯಾವ ಕಲ್ಪನೆಯೂ ಇರಲಿಲ್ಲ. ದೈಹಿಕವಾಗಿ ಸಾಕಷ್ಟು ಗಟ್ಟಿಮುಟ್ಟಾಗಿದ್ದರೂ (ಅದು ಇಪ್ಪತ್ತರ ವಯಸ್ಸಿನ ತನಕ ಮಾಡಿದ ದೈಹಿಕ ದುಡಿಮೆಯ ಫಲ) ನನಗೆ ಕಳೆದ ಹತ್ತಾರು ವರ್ಷಗಳಿಂದ ಸಿಗರೇಟ್ ವಾಸನೆ, ಧೂಳು, ವಾಹನಗಳ ಹೊಗೆಯ ಮಾಲಿನ್ಯದ ಅಲರ್ಜಿ ಇತ್ತು. ಭಾರತಕ್ಕೆ ಬರುತ್ತಿದ್ದ ಪ್ರತಿಸಲವೂ ಇವುಗಳ ಕಾರಣದಿಂದ. ಮುಖ್ಯವಾಗಿ ಪ್ರಯಾಣ ಮತ್ತು ವಾಹನಗಳ ಹೊಗೆಯ ಮಾಲಿನ್ಯದಿಂದಾಗಿ ನೆಗಡಿ-ಕೆಮ್ಮು-ಜ್ವರ ಬರುತ್ತಿತ್ತು. ಸುಮಾರು ಒಂದು ವಾರ ಕಾಲದ ಅನಾರೋಗ್ಯ ಅದು. ಕಳೆದ ವರ್ಷ ವಾಪಸಾದಾಗಿನಿಂದ ಇದು ಎರಡು ತಿಂಗಳಿಗೊಮ್ಮೆ ಪುನರಾವರ್ತನೆ ಆಗುತ್ತಿದ್ದ ಕ್ರಿಯೆ. ಅದೆಷ್ಟು ಸಿಟ್ರಿಜಿನ್ ತಿಂದಿರುವೆನೊ ಲೆಕ್ಕವಿಲ್ಲ. ಇದರಿಂದೆಲ್ಲ ರೋಸಿ ಹೋಗಿ ಬೇಕೆಂತಲೆ ನನ್ನ ದೇಹವನ್ನು ಇನ್ನಷ್ಟು ಪರೀಕ್ಷೆಗೆ ಒಡ್ಡುತ್ತಿದ್ದೆ. ಪರಿಣಾಮವಾಗಿ ಒಂದು ತಿಂಗಳಿನಿಂದ ಆರೋಗ್ಯವಾಗಿದ್ದ ದಿನಗಳೇ ಇರಲಿಲ್ಲ.

ಈ ತಿಂಗಳಿನಲ್ಲಿ ಒಂದಷ್ಟು ಕಡೆ ಓಡಾಟವೂ ಆಗಿತ್ತು. ಬೀದರ್-ಹೈದರಾಬಾದ್-ಹಿರಿಯೂರು-ಮೈಸೂರು-ಕೋಲಾರ, ಹೀಗೆ ಸುತ್ತಾಟ ಈ ಅನಾರೋಗ್ಯದ ನಡುವೆಯೂ ಸಾಗಿತ್ತು. ನಾನಿರುವ ಬಿಟಿಎಂ ಲೇಔಟ್‌ನಲ್ಲಿರುವಷ್ಟು ಸೊಳ್ಳೆಗಳು ಇನ್ನೆಲ್ಲೂ ಇದ್ದ ಹಾಗಿಲ್ಲ. ಆ Aedes aegypti ಎನ್ನುವ ಸೊಳ್ಳೆ ಎಲ್ಲಿ ಯಾವಾಗ ಕಚ್ಚಿತೊ ಗೊತ್ತಿಲ್ಲ. ನನ್ನನ್ನು ಕಚ್ಚುವ ಮೊದಲು ಅದು ಕಚ್ಚಿದ್ದ ಮನುಷ್ಯನ ಗತಿ ಏನಾಗಿದೆಯೊ? ನನ್ನ ನಂತರ ಇನ್ನೆಷ್ಟು ಜನರನ್ನು ಕಚ್ಚಿದೆಯೊ? ಮೊದಲೆ ರೋಗ ನಿರೋಧಕ ಶಕ್ತಿ ಕಮ್ಮಿ ಇರುವ ನನ್ನ ದೇಹಕ್ಕೆ ಸೊಳ್ಳೆ ಕಡಿತದಿಂದಾದ ಡೆಂಗಿ ವೈರಸ್ ಅನ್ನು ನಿವಾರಿಸಿಕೊಳ್ಳಲಾಗಿಲ್ಲ. ಈ ಕಾಯಿಲೆಯ incubation ಅವಧಿ 3-14 ದಿನ ಎನ್ನುತ್ತಾರೆ.

ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ಯಡ್ಡಯೂರಪ್ಪ ಮತ್ತು ಸೋಮಣ್ಣನವರ ವಿರುದ್ಧ ಕೇಸು ದಾಖಲಿಸಿದ ಮಾರನೆ ದಿನ ಜ್ವರ ಕಾಣಿಸಿಕೊಂಡಿತು. 102 ರಿಂದ 104 ಫ್ಯಾರನ್‌ಹೀಟ್ ತನಕ ಜ್ವರ. ಯಾವ ಮಾತ್ರೆಗೂ ಕಮ್ಮಿ ಆಗುತ್ತಿರಲಿಲ್ಲ. ಎರಡು ದಿನದ ನಂತರ ಆಸ್ಪತ್ರೆಗೆ ದಾಖಲಾಗಿ ರಕ್ತಪರೀಕ್ಷೆ ನಡೆಸಿದ ನಂತರವೇ ಜ್ವರದ ಕಾರಣ ಗೊತ್ತಾಗಿದ್ದು. ಆ ಜ್ವರದಲ್ಲಿಯೇ 21/11/11ರ ಸೋಮವಾರದಂದು ನೇರವಾಗಿ ಆಸ್ಪತ್ರೆಯಿಂದ ಕೋರ್ಟಿಗೆ ಹೋಗಿದ್ದು. ಅಂದು ಹೋಗದೆ ಇದ್ದಿದ್ದರೆ ಕೇಸು ಮುಂದಕ್ಕೆ ಹೋಗಿ ಮತ್ತೆ ಏನಾಗುತ್ತಿತ್ತು ಎಂದು ಹೇಳುವುದು ಕಷ್ಟ. ಕೋರ್ಟಿನಿಂದ ಹೊರಗೆ ಬರುತ್ತಿದ್ದ ಹಾಗೆ ಅಲ್ಲಿಯತನಕ ಕಟ್ಟಿಕೊಂಡಿದ್ದ ಕಫ ವಾಂತಿಯಾಗಿ ಬಂತು. ಜ್ವರ ಇನ್ನಷ್ಟು ಏರಿತು. ಆದರೆ ಅಲ್ಲಿಗೆ ನನ್ನ ಬಹುಪಾಲು ಕೆಲಸ ಮುಗಿದಿತ್ತು. ಮಾರನೆ ದಿನ ನ್ಯಾಯಾಧೀಶರು ತನಿಖೆಗೆ ಆದೇಶಿಸಿದರು.

ಆ ಸಮಯದಲ್ಲಿ ಒಟ್ಟು ಆರು ದಿನ ಆಸ್ಪತ್ರೆಯಲ್ಲಿದ್ದೆ. ಬಹಳಷ್ಟು ಸ್ನೇಹಿತರಿಗೆ ಮತ್ತು ಹಿತೈಷಿಗಳಿಗೆ ಆಸ್ಪತ್ರೆಯಲ್ಲಿದ್ದ ವಿಷಯ ತಿಳಿದು ಗಾಬರಿ ಆಗಿದ್ದು ಸಹಜ. ಇದೇನು ಭಯದಿಂದ ಹುಟ್ಟಿಕೊಂಡ ಚಳಿಜ್ವರ ಇರಬಹುದೆ ಎಂದು ಒಂದಿಬ್ಬರು ಕೇಳಿದರು ಸಹ. ಮತ್ತೆ ಕೆಲವರು ಯಾರಾದರೂ ಧಾಳಿ ಮಾಡಿದರೇನೊ ಎಂದುಕೊಂಡರು. ಆದರೆ ಹಾಗೇನೂ ಆಗಿರಲಿಲ್ಲ. ಇನ್ನು ಬೆದರಿಕೆ ಕರೆಗಳು. ಮೊದಲ ದಿನ ಒಬ್ಬಾತ ಫೋನ್ ಮಾಡಿ ವಿಚಿತ್ರ ಪ್ರಶ್ನೆ ಕೇಳಿದ್ದ. ಆತ ಯಾವುದೊ ಪುಡಾರಿಯ ಚೇಲಾ ಇದ್ದ ಹಾಗೆ ಇದ್ದಾನೆ. ಏನೇನೊ ಹೆಸರು ಹೇಳಿದ. ನಂತರ ದಿನಗಳಲ್ಲಿ ಆಸ್ಪತ್ರೆಯಲ್ಲಿದ್ದ ಕಾರಣ ಮತ್ತು ಮಾತನಾಡಿ ಆಯಾಸ ಮಾಡಿಕೊಂಡರೆ ಜ್ವರ ಏರುತ್ತಿದ್ದ ಕಾರಣ ಅನೇಕ ಫೋನ್‌ ಕರೆಗಳನ್ನು ತೆಗೆದುಕೊಳ್ಳಲೇ ಇಲ್ಲ. ಹಾಗಾಗಿ ಯಾರು ಏತಕ್ಕೆ ಕರೆ ಮಾಡಿದ್ದರು ಎಂದು ಸಹ ಗೊತ್ತಿಲ್ಲ. ಹಾಗಾಗಿ ಬೆದರಿಕೆ ಕರೆಗಳ ಬಗ್ಗೆ ಹೌದು ಇಲ್ಲ ಎಂದು ಹೇಳುವುದು ಕಷ್ಟವೆ. ಆದರೆ ಡೆಂಗಿ ಜ್ವರಕ್ಕೂ ಇದ್ಯಾವುದಕ್ಕೂ ಯಾವುದೆ ಸಂಬಂಧ ಇರಲಿಲ್ಲ.

ಈ ಎಲ್ಲಾ ಸಮಯದಲ್ಲಿ ನಮ್ಮ ವರ್ತಮಾನದ ಬಳಗದ ಗೆಳೆಯರು ವೆಬ್‌ಸೈಟನ್ನು ಸಾಧ್ಯವಾದಷ್ಟು ಅಪ್‌ಡೇಟ್ ಮಾಡುತ್ತಲೇ ಇದ್ದರು. ಅವರಿಗೆ ಮತ್ತು ಅವರ ಬದ್ಧತೆಗೆ ಧನ್ಯವಾದಗಳು ಮತ್ತು ಕೃತಜ್ಞತೆಗಳು. ಅವರಿಲ್ಲದೆ ಹೋಗಿದ್ದರೆ ನಾನು ಆಸ್ಪತ್ರೆಗೂ ಸಹ ಬೇಗ ದಾಖಲಾಗುತ್ತಿರಲಿಲ್ಲ. ಅವರ ಕಾಳಜಿ ನನ್ನ ಸ್ಥಿತಿ ಇನ್ನಷ್ಟು ಹದಗೆಡುವುದನ್ನು ಕಾಲಕಾಲಕ್ಕೆ ನಿಲ್ಲಿಸಿದೆ.

ಜ್ವರ ಒಂದು ಬಿಟ್ಟರೆ ಮಿಕ್ಕ ಡೆಂಗಿ ಜ್ವರದ ಇತರೆ ಅನಾಹುತಕಾರಿ ಪರಿಣಾಮಗಳು ನನ್ನ ಮೇಲೆ ಆಗಲಿಲ್ಲ. ಪ್ಲೇಟ್‌ಲೆಟ್ಸ್ (ರಕ್ತಸ್ರಾವದ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡುವ ರಕ್ತಕಣಗಳು) ಮಾತ್ರ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತ ಹೋದವು. ಕೊನೆಗೆ ಐದು ಪೈಂಟ್ಸ್ ತರಿಸಿ Transfusion ಮಾಡಬೇಕಾಯಿತು. ಮಾರನೆ ದಿನದಿಂದ ಅವುಗಳ ಸಂಖ್ಯೆ ನಿಧಾನಕ್ಕೆ ಏರುತ್ತ ಹೋಯಿತು.

ಈಗ ಆಸ್ಪತ್ರೆಯಿಂದ ಮನೆಗೆ ಬಂದು ನಾಲ್ಕೈದು ದಿನವಾಗಿದೆ. ಆದರೂ ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ ಎನ್ನಿಸಿಲ್ಲ. ಮೊದಲ ಮೂರ್ನಾಲ್ಕು ದಿನವಂತೂ ತೀವ್ರ ತುರಿಕೆ. ಡಾಕ್ಟರ್ ಹೇಳುವ ಪ್ರಕಾರ ಅದು ನನಗೆ ಕೊಡಲ್ಪಟ್ಟ ರಕ್ತದ ಪ್ಲೇಟ್‍ಲೆಟ್‌ಗಳಿಂದಾದ ಅಲರ್ಜಿ. ಈಗ ಒಂದೆರಡು ದಿನಗಳಿಂದ ಮತ್ತೆ ನೆಗಡಿ, ಕೆಮ್ಮು, ಗಂಟಲುನೋವು ಆರಂಭವಾಗಿದೆ. ಬಹುಶಃ ಬೆಂಗಳೂರಿನ ಚಳಿಯಿಂದಾಗಿರಬಹುದು. ಸಂಪೂರ್ಣ ಎಂದು ಗುಣಮುಖನಾಗುತ್ತೇನೆ ಗೊತ್ತಿಲ್ಲ. ಹಿರಿಯ ಗೆಳೆಯರೊಬ್ಬರು ಹೇಳಿದ ಪ್ರಕಾರ ಅವರಿಗೆ ಡೆಂಗಿ ಜ್ವರ ಬಂದನಂತರ ಮಲೇರಿಯಾ ಬಂದಿತ್ತಂತೆ. ಈ ಜ್ವರ ಬಂದ ಎಲ್ಲರದೂ ಒಂದಲ್ಲ ಒಂದು ಕತೆ. ಯಾರಿಗೂ ಇದು ಜೀವನ ಸಹನೀಯಗೊಳಿಸಿಲ್ಲ. ದಯವಿಟ್ಟು ಸೊಳ್ಳೆಗಳಿಂದ ರಕ್ಷಿಸಿಕೊಳ್ಳಿ.

ಈ ಎಲ್ಲಾ ಕಾರಣಗಳಿಂದಾಗಿ “ವರ್ತಮಾನ” ಮತ್ತು ಅದಕ್ಕೆ ಸಂಬಂಧಪಟ್ಟ ಕಾರ್ಯಗಳು ಸ್ವಲ್ಪ ಕುಂಟಿತವಾಗಿವೆ. ಅನೇಕ ವಿಚಾರಗಳ ಬಗ್ಗೆ ಬರೆಯಬೇಕಿತ್ತು, ಬರೆಸಬೇಕಿತ್ತು. ದಾಖಲೆಗಳು ಸಿಗುತ್ತಲೆ ಇವೆ. ಈ ಮಧ್ಯೆಯೂ ಜಗದೀಶ್ ಕೊಪ್ಪ, ಶ್ರೀಪಾದ್ ಭಟ್, ಪರಶುರಾಮ್ ಕಲಾಲ್ ಮತ್ತು ಬಳಗದ ಸ್ನೇಹಿತರು ಗಂಭೀರ ವಿಚಾರಗಳನ್ನು ಚರ್ಚೆಗೆ ಒಡ್ಡುತ್ತಲೇ ಇದ್ದಾರೆ. ಮಿಕ್ಕ ಸ್ನೇಹಿತರೂ ಸಹ ಕೈಜೋಡಿಸಬೇಕಾದ ಸಂದರ್ಭ ಇದೇನೆ. ಅದೇ ಇಲ್ಲಿ ನಾನು ಹೇಳಬೇಕೆಂದುಕೊಂಡ ಮುಖ್ಯ ವಿಷಯ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ