Category Archives: ಆರ್ಥಿಕ

ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಮಕ್ಕಳನ್ನು ದುಡಿಸುವುದು ದೇಶಕ್ಕೆ ಹೆಮ್ಮೆಯೋ? ನಾಚಿಕೆಗೇಡೋ?


– ರೂಪ ಹಾಸನ


ಈ ದೇಶದ ಮಕ್ಕಳು ಅತ್ಯಂತ ದುರದೃಷ್ಟವಂತರೆಂದು ಅನಿಸತೊಡಗಿದೆ. ಮಕ್ಕಳು ಅಸಹಾಯಕರು, ಮುಗ್ಧರು ಆಗಿರುವುದರಿಂದ, ಅವರು ತಮ್ಮ ಭವಿಷ್ಯವನ್ನು ತಾವೇ ಸ್ವತಃ ರೂಪಿಸಿಕೊಳ್ಳಲು ಸಾಧ್ಯವಿಲ್ಲದ್ದರಿಂದ ಸರ್ಕಾರ, ಸಮಾಜಗಳು ಮಕ್ಕಳ ಒಳಿತು-ಕೆಡುಕುಗಳ ಕುರಿತು ಅತ್ಯಂತ ಎಚ್ಚರಿಕೆಯಿಂದ ಕಾನೂನು-ನೀತಿಗಳನ್ನು ರೂಪಿಸಬೇಕು. ಆದರೆ…. ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಅನುಮೋದಿಸಿರುವ ಬಾಲ ಕಾರ್ಮಿಕ [ನಿಷೇಧ ಹಾಗೂ ನಿಯಂತ್ರಣ] ತಿದ್ದುಪಡಿ ಮಸೂದೆ ೨೦೧೨ಕ್ಕೆ ಮತ್ತಷ್ಟು ತಿದ್ದುಪಡಿ ತರುವ ಮೂಲಕ ಮಕ್ಕಳನ್ನು ಶೋಷಿಸಲು ಕೆಂಪುಹಾಸು ಹಾಸಿಕೊಟ್ಟಂತಾಗಿದೆ. ಪ್ರತಿ ಜೂನ್ ೧೨ರಂದು “ಬಾಲ ಕಾರ್ಮಿಕ ಪದ್ಧತಿ ವಿರೋಧಿ” ದಿನಾಚರಣೆ ಆಚರಿಸುತ್ತಾ ಬರಲಾಗಿದೆ. ಮಸೂದೆಯ ತಿದ್ದುಪಡಿ ಈ ದಿನಾಚರಣೆಗಾಗಿ ಸರ್ಕಾರ ಮುಂಗಡವಾಗಿ ಕೊಟ್ಟ ಉಡುಗೊರೆಯೇchild-labour ಎಂದು ಪ್ರಶ್ನಿಸಿಕೊಳ್ಳುವಂತಾಗಿದೆ.

ಈಗಾಗಲೇ ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಬಾಲಕಾರ್ಮಿಕರನ್ನು ಹೊಂದಿರುವ ದೇಶವೆಂಬ ಕುಖ್ಯಾತಿಗೊಳಗಾಗಿದೆ. ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗದ ಪ್ರಕಾರ ದೇಶದಲ್ಲಿ sಸದ್ಯ ಒಟ್ಟು ೮.೨೨ ದಶಲಕ್ಷ ಬಾಲಕಾರ್ಮಿಕರಿದ್ದಾರೆ. ಇದರಿಂದ ಹೊರಬರಲು ಬಾಲಕಾರ್ಮಿಕ ಕಾಯ್ದೆಯನ್ನು ಮತ್ತಷ್ಟು ಕಠಿಣಗೊಳಿಸಬೇಕು ಮತ್ತು ಅನುಷ್ಠಾನದ ಕ್ರಮಗಳನ್ನು ತೀವ್ರಗೊಳಿಸಬೇಕಲ್ಲವೇ? ಅದು ಬಿಟ್ಟು ೧೪ವರ್ಷದೊಳಗಿನ ಮಕ್ಕಳು ಶಾಲೆ ಬಿಟ್ಟ ನಂತರ ಮತ್ತು ರಜೆಯಲ್ಲಿ ಶ್ರಮದಾಯಕವಲ್ಲದ, ಕಠಿಣವಲ್ಲದ ‘ಕೆಲವು’ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು ಎಂಬ ತಿದ್ದುಪಡಿಯೇ ಮಕ್ಕಳ ಆರೋಗ್ಯಕರ ಬದುಕಿನ ಹಿತದೃಷ್ಟಿಯಿಂದ ಅಮಾನವೀಯವಾದುದಾಗಿದೆ.

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ೧೯೮೯ರಲ್ಲಿ ಅಂಗೀಕಾರವಾಯ್ತು. ಅದಕ್ಕೀಗ ೨೫ ವರ್ಷ! ಅದರಂತೆ ಪ್ರತಿ ಮಗುವಿಗೆ ಅತ್ಯುತ್ತಮ ಗುಣಮಟ್ಟದ ಪೌಷ್ಟಿಕತೆ, ಆರೋಗ್ಯ, ಉತ್ತಮ ಜೀವನ ಶೈಲಿ, ಶಿಕ್ಷಣ, ಆರೈಕೆ ಒದಗಿಸುವುದು, ಎಲ್ಲಾ ರೀತಿಯ ಶೋಷಣೆ, ದುರ್ಬಳಕೆ, ಅಪಮಾನಕಾರಿಯಾಗಿ ನಡೆಸಿಕೊಳ್ಳುವುದರಿಂದ ಮತ್ತು ಲೈಂಗಿಕ ದೌರ್ಜನ್ಯದಿಂದ ರಕ್ಷಣೆಗಳ ಹಕ್ಕು ನೀಡುವುದು ಪ್ರತಿ ಸರ್ಕಾರ ಮತ್ತು ಸಮಾಜದ ಕರ್ತವ್ಯವಾಗಿದೆ. ಇದರೊಂದಿಗೆ ಮಕ್ಕಳಿಗೆ ಅವಶ್ಯಕ ವಿಶ್ರಾಂತಿ, ಬಿಡುವು, ಮನರಂಜನೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸುವ ಹಕ್ಕೂ ಇರಬೇಕೆಂದು ಅಂಗೀಕಾರವಾಗಿದೆ. ಹೀಗಿರುವಾಗ ಮಕ್ಕಳು ತಮ್ಮ ಬಿಡುವಿನ ವೇಳೆಯಲ್ಲಿ ದುಡಿಯುವಂತೆ ಮಾಡುವುದು ಮಕ್ಕಳ ಹಕ್ಕಿನ ಉಲ್ಲಂಘನೆಯಲ್ಲವೇ? ಮಕ್ಕಳಿಗೆ ಅವರ ಹಕ್ಕನ್ನೂ ಸಮರ್ಪಕವಾಗಿ ನೀಡದೇ ಈಗ ಮಸೂದೆಗೆ ತಿದ್ದುಪಡಿ ಮಾಡುವ ಮೂಲಕ ಕೇಂದ್ರ ಸರ್ಕಾರ ಬಡ ಮಕ್ಕಳ ಬದುಕನ್ನು ಇನ್ನಷ್ಟು ಶೋಚನೀಯಗೊಳಿಸುತ್ತಿರುವುದು ದುರಂತ.

ಕೆಲಸ ಮಾಡಲು ಭಾರತದಲ್ಲಿ ಹೆಚ್ಚಿನ ಜನಸಂಖ್ಯೆ ಇದ್ದಾಗ್ಯೂ ಮಕ್ಕಳನ್ನೇ ದುಡಿಮೆಗೆ ಬಳಸಿಕೊಳ್ಳುತ್ತಿರುವುದರ ಹಿಂದೆ ಅನೇಕ ಹುನ್ನಾರಗಳು ಕೆಲಸ ಮಾಡುತ್ತವೆ. ಮಕ್ಕಳಿಂದ ಅತ್ಯಂತ ಕಡಿಮೆ ಕೂಲಿಗೆ ಹೆಚ್ಚು ಕೆಲಸ ಪಡೆಯಬಹುದು. ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. ಮಕ್ಕಳು ಅಸಹಾಯಕರು ಮತ್ತು ಮುಗ್ಧರು ಆಗಿರುವುದರಿಂದ ಪ್ರಶ್ನಿಸುವುದಿಲ್ಲ, ಸಂಘಟಿತರಾಗುವುದಿಲ್ಲ, ಹಕ್ಕುಗಳ ಉಲ್ಲಂಘನೆಯನ್ನು ವಿರೋಧಿಸುವುದಿಲ್ಲ, ಮುಷ್ಕರ ಹೂಡುವುದಿಲ್ಲ, ತಕರಾರು, ಚೌಕಾಶಿ ಮಾಡುವುದಿಲ್ಲ ಹೀಗಾಗಿ ಮಕ್ಕಳಿಂದ ದುಡಿಸಿಕೊಳ್ಳುವುದು ಉದ್ದಿಮೆದಾರರಿಗೆ ಎಲ್ಲ ರೀತಿಯಲ್ಲೂ ಲಾಭದಾಯಕ. ಎಲ್ಲಕ್ಕಿಂಥಾ ಕ್ರೌರ್ಯವೆಂದರೆ ಮಕ್ಕಳನ್ನು ವೇಶ್ಯಾವಾಟಿಕೆಗಾಗಿ ದುಡಿಸಿಕೊಳ್ಳುವುದು. ಮಕ್ಕಳು ಮಾರಕ ಲೈಂಗಿಕ ರೋಗರಹಿತರು ಮತ್ತು ಸುಲಭವಾಗಿ ಈ ದಂಧೆಗೆ ಪಳಗಿಸಬಹುದೆಂಬ ಕಾರಣಕ್ಕೇ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ಮತ್ತು ಸಮಾಜಘಾತುಕ ಕೆಲಸಗಳಲ್ಲಿ ಬಳಸಿಕೊಳ್ಳಲಾಗುತ್ತಿರುವುದುchildlabours ಮಕ್ಕಳ ಪಾಲಿನ ದುರದೃಷ್ಟವಲ್ಲದೇ ಬೇರಿನ್ನೇನು?

ಮಾರುಕಟ್ಟೆ ಕೇಂದ್ರಿತ ಜಾಗತೀಕರಣ ಇಂದು ಹೆಚ್ಚು ಕೆಲಸಗಳನ್ನು ಸೃಷ್ಟಿಸುತ್ತಿದೆ. ಅದಕ್ಕೆ ಕಡಿಮೆ ವೇತನಕ್ಕೆ ಹೆಚ್ಚು ಕೆಲಸ ಮಾಡುವ ಮಕ್ಕಳು ವರದಾನವಾಗಿ ಕಾಣುತ್ತಿದ್ದಾರೆ. ಮಾಲ್‌ಗಳಲ್ಲಿ, ಡಾಬಾ-ಹೋಟೆಲ್‌ಗಳಲ್ಲಿ, ಸಿದ್ಧ ಆಹಾರ ಪ್ಯಾಕಿಂಗ್ ಕೆಲಸಗಳಲ್ಲಿ, ಅಂಗಡಿಗಳಲ್ಲಿ ಇವರಿಗೆ ಬೇಡಿಕೆ ಹೆಚ್ಚುತ್ತಿದೆ. ಮನರಂಜನಾ ಕ್ಷೇತ್ರ ದೇಶದ ಪ್ರಮುಖ ಆದಾಯ ಸೃಷ್ಟಿಸುವ ಘಟಕವಾಗಿರುವುದರಿಂದ ಅಲ್ಲಿಯೂ ಸರಕಾಗಿ ಮಕ್ಕಳನ್ನು ಬಳಸಿಕೊಳ್ಳುವ ಉದ್ದೇಶವೂ ಈ ತಿದ್ದುಪಡಿಗಿದೆ. ಚೈನಾ ದೇಶದ ಮಾದರಿಯೂ ಕೇಂದ್ರ ಸರ್ಕಾರಕ್ಕೆ ಪ್ರಭಾವ ಬೀರಿರಬಹುದು. ಅಲ್ಲಿ “ಎಜುಕೇಷನಲ್ ಲೇಬರ್” ಎಂಬ ನೀತಿ ಜಾರಿಯಲ್ಲಿದೆ. ಶಾಲೆಯಲ್ಲಿ ಪಾರಂಪರಿಕ ವೃತ್ತಿ ಮತ್ತು ಕೃಷಿ ಚಟುವಟಿಕೆಯ ಶಾಲಾ ಅವಧಿಗಳಿರುತ್ತವೆ. ಆದರೆ ಈ ಮೂಲಕ ಅಲ್ಲಿ ಶಾಲೆಗಳು ಮಕ್ಕಳನ್ನು ಹೆಚ್ಚಿನ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು, ಮಕ್ಕಳನ್ನು ಮಾಲ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿರುವುದು ಮತ್ತು ಕ್ರೀಡೆಯ ಹೆಸರಿನಲ್ಲಿ ಅಲ್ಲಿ ಮಕ್ಕಳಿಗೆ ವಿಪರೀತದ ಒತ್ತಡಗಳನ್ನು ಹೇರುತ್ತಿರುವುದೂ ದಾಖಲಾಗಿದೆ. ಕಡಿಮೆ ಆದಾಯದ ಬಡ ಕುಟುಂಬಗಳು ಮಾತ್ರ ಮಕ್ಕಳನ್ನು ದುಡಿಯಲು ಕಳಿಸುತ್ತವೆ ಎಂಬುದು ನಮಗೆ ನೆನಪಿರಬೇಕು. ಈ ರಿಯಾಯಿತಿಯನ್ನು ನೀಡುವ ಮೂಲಕ ಬಡ ಕುಟುಂಬಗಳಿಗೆ ಹೆಚ್ಚಿನ ದುಡಿಮೆಗೆ ಅವಕಾಶ ಕಲ್ಪಿಸುವ ನೆವದಲ್ಲಿ ಆ ಕುಟುಂಬಗಳ ಮಕ್ಕಳನ್ನು ಶಾಶ್ವತವಾಗಿ ಶ್ರಮದ ಕೆಲಸ ಮಾಡುವ ಜೀತದಾಳುಗಳಾಗಿ ಪರಿವರ್ತಿಸುವ ಹುನ್ನಾರವಷ್ಟೇ ಕಾಣುತ್ತಿದೆ. ಅದಕ್ಕೆಂದೇ ದಿಢೀರನೆ ಮಸೂದೆಯಲ್ಲಿ ತಿದ್ದುಪಡಿಗೆ ಸರ್ಕಾರ ಮುಂದಾಗಿದೆಯೇ ಎಂಬ ಅನುಮಾನ ಕಾಡುತ್ತಿದೆ.

ಮಕ್ಕಳ ಕೆಲಸಕ್ಕೂ, ಶಾಲೆಯಿಂದ ಮಕ್ಕಳು ಹೊರಗುಳಿಯುವ ಪ್ರಮಾಣದ ಹೆಚ್ಚಳಕ್ಕೂ ಅವಿನಾಭಾವ ಸಂಬಂಧವಿದೆ. ಶಿಕ್ಷಣ ಹಕ್ಕು ಕಾಯ್ದೆ ೨೦೦೯ರನ್ವಯ ೬-೧೪ವರ್ಷದವರೆಗಿನ ಮಕ್ಕಳಿಗೆ ಶಿಕ್ಷಣ ಕಡ್ಡಾಯ. ಆದರೆ ರಾಷ್ಟ್ರೀಯ ಮಾದರಿ ಸಮೀಕ್ಷೆ ೨೦೧೪ರ ವರದಿಯಂತೆ children-of-Indiaರಾಜ್ಯದ ಗ್ರಾಮೀಣ ಭಾಗದಲ್ಲಿ ೫-೧೪ವರ್ಷದೊಳಗಿನ ಪ್ರತಿ ೧೦೦೦ ಮಕ್ಕಳಿಗೆ ೩೦ ಮಕ್ಕಳು ಹಾಗೂ ನಗರಪ್ರದೇಶದಲ್ಲಿ ೧೦೦೦ಕ್ಕೆ ೬ ಮಕ್ಕಳು ಬಾಲಕಾರ್ಮಿಕರಾಗುತ್ತಿದ್ದಾರೆ. ಇದು ದೇಶಕ್ಕೆ ಹೆಮ್ಮೆಯ ಸಂಗತಿಯೋ? ನಾಚಿಕೆಗೇಡಿನದೋ? ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಲಿ. ಮಕ್ಕಳ ದೇಹ ಭರಿಸುವುದಕ್ಕಿಂತಾ ಹೆಚ್ಚಿನ ಶ್ರಮ, ದುಡಿಮೆಯನ್ನು ಅವರ ಮೇಲೆ ಹೇರುವ ಮೂಲಕ ಅವರ ದೇಹ ಮತ್ತು ಬುದ್ಧಿಯ ಮೇಲೆ ಒತ್ತಡ ಹೇರಿದಂತಾಗಿ ಶಾಶ್ವತ ಮಾನಸಿಕ ಕ್ಷೆಭೆಗೆ ಅವರು ಒಳಗಾಗುತ್ತಾರೆ. ದುಡಿಯುವ ಮಕ್ಕಳು ತಮ್ಮ ಅಮೂಲ್ಯ ಬಾಲ್ಯ ಕಳೆದುಕೊಳ್ಳುವುದರೊಂದಿಗೆ, ಅನಾರೋಗ್ಯಕ್ಕೆ ಒಳಗಾಗುವುದು, ಪಠ್ಯದ ಕಡೆಗೆ ಗಮನಹರಿಸಲಾಗದಿರುವುದು, ಕ್ರಮೇಣ ಕೆಲಸದ ಸಮಯ ಮತ್ತು ಒತ್ತಡ ಹೆಚ್ಚಾಗಿ ಶಾಲೆ ಬಿಡುವ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತದೆ. ಬಾಲ್ಯಾವಸ್ಥೆಯ ಪ್ರತಿಯೊಂದು ಕೊರತೆ ಮಕ್ಕಳ ವ್ಯಕ್ತಿತ್ವವನ್ನು ಮುಕ್ಕಾಗಿಸುತ್ತದೆ ಎನ್ನುತ್ತಾರೆ ಮನೋವೈದ್ಯರು. ಬಡ ಪೋಷಕರೇ ಮಕ್ಕಳು ಶಾಲೆ ಬಿಟ್ಟು ದುಡಿಯುವುದನ್ನು ಪ್ರೋತ್ಸಾಹಿಸುತ್ತಿದ್ದಾರೆ. ಅವರಿಗೆ ಯಾವ ಶಿಕ್ಷೆಯ ಭಯವೂ ಇಲ್ಲವೆಂದಾದರೆ ಈ ದೇಶದಲ್ಲಿ ಮಕ್ಕಳನ್ನು ಇನ್ನು ದೇವರೇ ಕಾಪಾಡಬೇಕು!

ಭಾರತದಂತಹಾ ಸಂಕೀರ್ಣ ಆರ್ಥಿಕ -ಸಾಮಾಜಿಕ ಪರಿಸ್ಥಿತಿ ಇರುವ ದೇಶದಲ್ಲಿ ಕೃಷಿ, ಸೂಕ್ಷ್ಮ ಗುಡಿಕೈಗಾರಿಕೆ ಇತ್ಯಾದಿ ಕೆಲಸಗಳನ್ನು ಬಾಲ್ಯದಿಂದಲೇ ಕಲಿಯುವುದು ಅನಿವಾರ್ಯವೆಂಬ ಸಬೂಬನ್ನು ಸರ್ಕಾರ ಹೇಳುತ್ತಿದೆ. ಆದರೆ ಇಂತಹಾ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಕೆಳವರ್ಗಗಳ ಮಕ್ಕಳೇ ಎಂಬುದು ಗಮನಾರ್ಹವಾದುದು. ಈ ನೆವದಲ್ಲಿ ಶಿಕ್ಷಣದ ಕಡೆಗೆ ಅವರಿಗೆ ಸರಿಯಾಗಿ ಗಮನಹರಿಸಲಾಗದೇ ಪರಂಪರಾಗತ ವೃತ್ತಿಯಲ್ಲೇ ತಮ್ಮ government_schoolಬದುಕು ಕಂಡು ಕೊಳ್ಳಲು ಹೆಣಗುತ್ತಾರೆ. ಇಂತಹಾ ಮತ್ತು ಬಿಳಿಕಾಲರಿನ ವೃತ್ತಿಯ ಮಧ್ಯೆ ಇರುವ ಆದಾಯದ ಅಗಾಧ ಕಂದರದಿಂದಾಗಿ ಬಡವರು ಬಡವರಾಗಿಯೇ ಉಳಿಯಬೇಕಾದ ಪರಿಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ. ವೃತ್ತಿ ನೈಪುಣ್ಯತೆ ಕಲಿಸುವ ನೆವದಲ್ಲಿ ಬಾಲ ದುಡಿಮೆಯನ್ನು ಪ್ರೋತ್ಸಾಹಿಸುವ ಸರ್ಕಾರದ ಈ ನೀತಿ, ಸನಾತನ ಸಂಸ್ಕೃತಿಯ ಪರವಾದ ಸರ್ಕಾರದ ಕುಸಂಸ್ಕೃತಿಯ ದ್ಯೋತಕವಷ್ಟೇ ಆಗಿದೆ.

ಅನಕ್ಷರತೆ, ಬಡತನ, ದುಶ್ಚಟಗಳು, ಜಾತಿ-ವರ್ಗ ತಾರತಮ್ಯ, ಗ್ರಾಮಗಳಲ್ಲಿ ಕೆಲಸವಿಲ್ಲದೇ ಪೋಷಕರ ವಲಸೆ ಬಾಲಕಾರ್ಮಿಕತೆಗೆ ಪ್ರಮುಖ ಕಾರಣವಾಗಿದೆ. ಹೀಗಾಗಿ ರೋಗ ಲಕ್ಷಣಕ್ಕೆ ಮದ್ದು ನೀಡುವುದಕ್ಕಿಂತಾ ಈ ಮೂಲ ರೋಗಕ್ಕೆ ಮದ್ದು ನೀಡಬೇಕು. ಈ ಸಮಸ್ಯೆಗಳಿಂದ ಬಡ ಜನರನ್ನು ಬಿಡಿಸಲು ಆಡಳಿತ ಯಂತ್ರ ಒಗ್ಗೂಡಿ ಶ್ರಮಿಸಬೇಕು. ಜೊತೆಗೆ ಪ್ರತಿ ಮಗುವಿಗೂ ಕಡ್ಡಾಯ ಶಿಕ್ಷಣ ಜಾರಿಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮೊದಲಿಗೆ ಮಗು ಕೇಂದ್ರಿತ ಚಿಂತನೆಯಿಂದ ದೇಶದ ಅಭಿವೃದ್ಧಿ ಮಾನದಂಡಗಳನ್ನೂ ಕಾನೂನನ್ನೂ ನೀತಿಗಳನ್ನೂ ನಮ್ಮ ಸರ್ಕಾರಗಳು ಪುನರ್ ರೂಪಿಸಿಕೊಳ್ಳಬೇಕು. ಸಮಾಜ ತನ್ನ ಅವಶ್ಯಕತೆಗೆ ಬಾಲ ದುಡಿಮೆಯನ್ನು ಮುಂದುವರೆಸದಂತೆ ಜಾಗೃತಿ ಮತ್ತು ಕಟ್ಟುನಿಟ್ಟಿನ ಕಾನೂನು ಅನುಷ್ಠಾನವಾಗಬೇಕಿದೆ. ಕನಿಷ್ಠ ೧೪ ವರ್ಷದವರೆಗಾದರೂ ಮಕ್ಕಳು ತಮ್ಮ ಬಾಲ್ಯವನ್ನು ಮುಕ್ತವಾಗಿ ಅನುಭವಿಸಲು ಬಿಡದಂತಹಾ ಯಾವುದೇ ಕಾನೂನು ಮತ್ತು ಸಾಮಾಜಿಕ ವ್ಯವಸ್ಥೆ ಅಮಾನವೀಯವಾದಂತದ್ದು.

ಆತಂಕವಾಗುತ್ತಿರುವುದು ದುಡಿಯುತ್ತಿದ್ದವರು ಸೋಮಾರಿಗಳಾಗುತ್ತಿದ್ದಾರೆಂದೋ? ಸೋಮಾರಿಗಳಾಗಿದ್ದವರು ದುಡಿಯಬೇಕಾಗಿದೆಯೆಂದೋ?!

– ಸರ್ಜಾಶಂಕರ್ ಹರಳಿಮಠ

ಈಗ ಎಲ್ಲ ಕಡೆ ಒಂದೇ ದೂರು ಕೆಲಸಗಾರರು ಸಿಗುತ್ತಿಲ್ಲ ಎಂಬುದು. ಈ ಮಾತಿನೊಂದಿಗೆ ಅವರು ಇನ್ನೊಂದು ಮಾತನ್ನೂ ಸೇರಿಸುವುದನ್ನು ಮರೆಯುವುದಿಲ್ಲ. ಅದೆಂದರೆ “ದಿನಕ್ಕೆ ೫೦೦ ರೂಪಾಯಿ ಕೊಟ್ಟರೂ..”

ಸರ್ಕಾರ ಅನ್ನಭಾಗ್ಯ ಯೋಜನೆಯಡಿ ರೂಪಾಯಿಗೊಂದರಂತೆ ೩೦ ಕೆ.ಜಿ ಅಕ್ಕಿ ಕೊಡುತ್ತಿರುವುದೂ ಟೀಕೆಗೆ ಒಳಗಾಗಿದೆ. (ಈಗ ಒಬ್ಬರಿಗೆ ೫ ಕೆಜಿ ಅಕ್ಕಿ ಉಚಿತ ಯೋಜನೆ) ಕೆಲವು ಸಾಹಿತಿಗಳೂ ಇದಕ್ಕೆ ದನಿಗೂಡಿಸಿದ್ದಾರೆ. ಸರ್ಕಾರ ಜನರನ್ನು ಪುಕ್ಕಟೆ ಅಕ್ಕಿ ಕೊಟ್ಟು ಸೋಮಾರಿಗಳನ್ನಾಗಿ india-poverty-hungerಮಾಡುತ್ತಿದೆ ಎನ್ನುವುದು ಇವರೆಲ್ಲರ ಆಕ್ಷೇಪ.

ಕೆಲಸಗಾರರು ಸಿಗುತ್ತಿಲ್ಲ, ಸರ್ಕಾರ ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ ಎಂಬ ಈ ಟೀಕೆಗಳಲ್ಲಿ ಸತ್ಯದ ಅಂಶಗಳಿವೆ. ಆದರೆ ಇದಕ್ಕೆ ಬೇರೆ ಆಯಾಮಗಳೂ ಇವೆ ಎಂಬುದು ಚಿಂತಿಸಬೇಕಾದ ಸಂಗತಿ.

ನಮ್ಮ ಶಿಕ್ಷಣವೇ ದೈಹಿಕ ದುಡಿಮೆಯಿಂದ ನಮ್ಮನ್ನು ವಿಮುಖರನ್ನಾಗಿ ಮಾಡಿದೆಯೇ ಎಂಬುದನ್ನು ಪರೀಕ್ಷಿಸಬೇಕು. ಉನ್ನತ ಶಿಕ್ಷಣ ಪಡೆದ ರೈತರ ಮಕ್ಕಳು ಹಳ್ಳಿಯಲ್ಲಿ ಉಳಿದರೂ ತಮ್ಮ ತಂದೆ ತಾಯಿಗಳಂತೆ ಗದ್ದೆ ತೋಟಗಳಲ್ಲಿ ದುಡಿಯಲಾರದವರಾಗಿದ್ದಾರೆ. ಹಿಂದೆ ಈ ರೈತರ ಮನೆಗಳಲ್ಲಿ ದುಡಿಯುತ್ತಿದ್ದ ಕೂಲಿಕಾರರ ಮಕ್ಕಳು ಶಿಕ್ಷಣ ಪಡೆದು ಉದ್ಯೋಗಕ್ಕಾಗಿ ನಗರದತ್ತ ತೆರಳಿದ್ದಾರೆ. ಇವರು ನಗರದತ್ತ ಉದ್ಯೋಗಕ್ಕೆ ತೆರಳಿರುವುದು ಕೇವಲ ದುಡಿಮೆಗೆ ಮಾತ್ರವಲ್ಲ ಎಂಬುದು ಮುಖ್ಯವಾದ ಸಂಗತಿ.

ಒಂದು ನಗರದ ಕಾರ್ಖಾನೆಯಲ್ಲಿ ಕೆಲಸ ಮಾಡುವುದಕ್ಕೂ, ಹಳ್ಳಿಯಲ್ಲಿ ದೊಡ್ಡ ಭೂಮಾಲೀಕರ ಬಳಿ ಕೂಲಿ ಕೆಲಸ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಕಾರ್ಖಾನೆಯಲ್ಲಿ ಕೆಲಸಗಾರ ಮತ್ತು ಮಾಲೀಕನ ನಡುವಿನ ಸಂಬಂಧ ಕೆಲಸಗಾರ ಮತ್ತು ಮಾಲೀಕನ ಸಂಬಂಧಷ್ಟಕ್ಕೆ ಸೀಮಿತವಾಗಿರುತ್ತದೆ. ಆದರೆ ಹಳ್ಳಿಯಲ್ಲಿ ಕೂಲಿ ಕೆಲಸದೊಂದಿಗೆ ಜಾತಿಯ ಅವಮಾನ, ಅಸ್ಪೃಶ್ಯತೆ ಎಲ್ಲವೂ ಬಿಡಿಸಲಾಗದಂತೆ ತಳುಕು ಹಾಕಿಕೊಂಡಿರುತ್ತವೆ. Gadag Farmersಶಿಕ್ಷಣ ಇದನ್ನೆಲ್ಲ ಯುವ ತಲೆಮಾರಿನ ಅರಿವಿಗೆ ತರುತ್ತಿರುತ್ತದೆ. ಇದರಿಂದ ಬಿಡುಗಡೆ ಪಡೆಯಲೂ ಕೃಷಿಕೆಲಸ ಬಿಟ್ಟು ನಗರದತ್ತ ಹೋಗುವವವರ ಸಂಖ್ಯೆ ಅಧಿಕ. ಇದನ್ನು ಅರಿತಿರುವ ಹಳ್ಳಿಯ ಭೂಮಾಲೀಕರು ಇತ್ತೀಚೆಗೆ ಕೂಲಿ ದರವನ್ನು ಏರಿಸಿದ್ದಾರೆ. ಜಾತಿಯನ್ನು ಮೀರಿ ವ್ಯಕ್ತಿಗೌರವವನ್ನು ಕೊಡುವ ಅನಿವಾರ್ಯತೆಗೂ ಒಳಗಾಗಿದ್ದಾರೆ. ಹಾಗೆಂದು ಲಗಾಯ್ತಿನಿಂದ ಉತ್ತಮ ಸಂಬಳವನ್ನು ಕೊಟ್ಟು ಕೆಲಸಗಾರರನ್ನು ತಮ್ಮ ಮನೆಯ ಸದಸ್ಯರಂತೆ ಪ್ರೀತಿಯಿಂದ ಕಾಣುವ ಭೂಮಾಲೀಕರು ಇಲ್ಲವೆಂದಲ್ಲ. ಆದರೆ ಅಂಥಹವರು ತುಂಬ ವಿರಳ.

ಜೀವನಕ್ಕೆ ಅಕ್ಕಿ ಒಂದು ಸಿಕ್ಕರೆ ಸಾಕೆ? ನಾವೆಲ್ಲರೂ ಕೇವಲ ಅಕ್ಕಿಗಾಗಿ ದುಡಿಯುತ್ತಿದ್ದೇವೆಯೇ? ಒಂದು ವೇಳೆ ನಮಗೂ ೩೦ ಕೆಜಿ ಅಕ್ಕಿ ಉಚಿತವಾಗಿ ಸಿಕ್ಕರೆ ನಾವೂ ಬೇರೆ ಕೆಲಸ ಮಾಡದೆ ಸೋಮಾರಿಗಳಾಗಿ ಮನೆಯಲ್ಲೇ ಕುಳಿತುಕೊಳ್ಳುತ್ತೇವೆಯೇ? ಅನ್ನ ಮಾತ್ರ ನಮ್ಮ ಅಗತ್ಯವಾದರೆ ೧ ರಿಂದ ೩ ದಿನದ ದುಡಿಮೆಯ ಆದಾಯದಲ್ಲಿಯೇ ತಿಂಗಳಿಗಾಗುವಷ್ಟು ನಾವು ಗಳಿಸಬಲ್ಲೆವು? ಮತ್ಯಾಕೆ ನಾವು ತಿಂಗಳು ಪೂರ್ತಿ ದುಡಿಯುತ್ತಿದ್ದೇವೆ?

ಮೂರೋತ್ತಿನ ಊಟ ಮಾತ್ರ ಜನರ ಅಗತ್ಯವಲ್ಲ. ನಮ್ಮದೇ ಒಂದು ಚಿಕ್ಕ ಮನೆ ಕಟ್ಟಿಕೊಳ್ಳಬೇಕು. ಮನೆ ಕಟ್ಟಿಕೊಳ್ಳಲು ಒಂದು ನಿವೇಶನ ಬೇಕು. ಮಕ್ಕಳಿಗೆ ಒಂದು ಒಳ್ಳೆಯ ಶಾಲೆಯಲ್ಲಿ ಶಿಕ್ಷಣ ಕೊಡಿಸಬೇಕು. ಮಕ್ಕಳಿಗೆ ಮದುವೆ ಮಾಡಬೇಕು.. ನಮಗೆಲ್ಲ ಗೊತ್ತು, ಇವೆಲ್ಲಾ ನಮ್ಮ ನಮ್ಮ ಸಣ್ಣ ಕನಸುಗಳಾದರೂ ಇದನ್ನು ಸಾಕಾರಗೊಳಿಸಿಕೊಳ್ಳಲು ಜೀವನಪರ್ಯಂತ ದುಡಿಯಬೇಕು ಎಂಬುದು. ಮಧ್ಯಮವರ್ಗದ ಬಹುತೇಕರಿಗೆ ಸೈಟು ಕೊಳ್ಳುವುದು, ಮನೆ ಕಟ್ಟುವುದು ಅವರ ಜೀವನಪರ್ಯಂತ ಸಾಕಾರವಾಗದ ಕನಸು.

ಮಧ್ಯಮವರ್ಗದ ನಮ್ಮೆಲ್ಲರ ಕನಸುಗಳು ಕೂಲಿಕಾರ್ಮಿಕರಿಗೆ ಇರುವುದಿಲ್ಲವೆಂದೂ, ಅವರು ೩೦ ಕೆ.ಜಿ ಪುಕ್ಕಟೆ ಅಕ್ಕಿ ಪಡೆದು ಸೋಮಾರಿಗಳಾಗಿ ಇರುತ್ತಾರೆ ಎಂದು ಹೇಗೆ ಭಾವಿಸುವುದು?

ಸಮಾಜ ದುಡಿಯುವ ಜನರನ್ನು ಸದಾ ದುಡಿಯುವವರನ್ನಾಗಿಯೇ ನೋಡುತ್ತದೆ. ಆ ವರ್ಗ ದುಡಿಯುವುದರಲ್ಲಿ ಏರುಪೇರಾದಲ್ಲಿ ನಮಗೆ ತಳಮಳ ಶುರುವಾಗುತ್ತದೆ. ಅವರು ಸೋಮಾರಿಗಳಾಗುತ್ತಿದ್ದಾರೆ ಎಂದು ದೂರುತ್ತೇವೆ. ಸರ್ಕಾರ ಅವರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ ಎಂದು ಟೀಕಿಸುತ್ತೇವೆ. ಅದು ಸರಿ, ಆದರೆ ಅವರು ಹತ್ತಾರು ತಲೆಮಾರುಗಳಿಂದ ದುಡಿಯುತ್ತಲೇ ಇದ್ದಾರೆ, ಇದರಿಂದ ಅವರಿಗೆ ಸಿಕ್ಕ ಲಾಭವೇನು? ಇನ್ನೂ ಏಕೆ ಅವರು ಗುಡಿಸಲುಗಳಲ್ಲಿಯೇ ಇದ್ದಾರೆ? ಈ ಬಗ್ಗೆ ಎಂದೂ ಚಿಂತಿಸದ ನಾವು ಈಗ ಅವರು ಸೋಮಾರಿಗಳಾಗುತ್ತಿದ್ದಾರೆ ಎಂದು ಆತಂಕ ಪಡುತ್ತಿದ್ದೇವೆ. ‘ಮನುಷ್ಯ ಸೋಮಾರಿಯಾದರೆ ಆತನ ಕುಟುಂಬ ನಾಶವಾಗುತ್ತದೆ’ ಇತ್ಯಾದಿಯಾಗಿ ದುಡಿಯುವ ಕುಟುಂಬಗಳ ಬಗ್ಗೆ ನಾವು ಕಾಳಜಿ ತೋರುತ್ತಿದ್ದೇವೆ. ಇದು ದುಡಿಸಿಕೊಳ್ಳುವವರ ಅಷಾಢಭೂತಿತನ. ನಿಜವಾಗಿ ನಮ್ಮ ಆತಂಕವಿರುವುದು ಈವರೆಗೂ ಬಿಡುವಿಲ್ಲದೆ ದುಡಿಯುತ್ತಿದ್ದವರು ಸೋಮಾರಿಗಳಾಗುತ್ತಿದ್ದಾರೆ ಎಂಬುದಲ್ಲ, ದುಡಿಯುವವರಿಲ್ಲದೆ ನಾವೀಗ ಮೈಬಗ್ಗಿಸಿ ದುಡಿಯಬೇಕಾಗಿದೆಯಲ್ಲ ಎಂಬುದು!

‘ಸರ್ಕಾರ ಜನರನ್ನು ಪುಕ್ಕಟೆ ಅಕ್ಕಿ ಕೊಟ್ಟು ಸೋಮಾರಿಗಳನ್ನಾಗಿ ಮಾಡುತ್ತಿದೆ’ ಎಂಬ ಟೀಕೆ ದುಡಿಸಿಕೊಳ್ಳುವವರಿಂದ Siddaramaiah-annyabhagyaಬರುವುದು ಅಚ್ಚರಿಯ ಸಂಗತಿಯಲ್ಲ. ಆದರೆ ಇಂತಹ ಟೀಕೆಗಳನ್ನು ಸಮರ್ಥಿಸುವ ಸಾಹಿತಿಗಳಿಗಾದರೂ ಕ್ಷಣಕಾಲ ಇದರ ಇನ್ನಿತರ ಆಯಾಮಗಳನ್ನು ಅರಿಯುವಂತಾಗಬೇಕು. ಏಕೆಂದರೆ ಹೊರನೋಟಕ್ಕೆ ಇದು ಸರ್ಕಾರದ ಬಗೆಗಿನ ಟೀಕೆಯಂತೆ ಕಂಡರೂ ಇದು ದುಡಿಯುವ ವರ್ಗದ ಸ್ವಾಭಿಮಾನ ಮತ್ತು ಘನತೆಯನ್ನೇ ಪ್ರಶ್ನಿಸುತ್ತಿದೆ.

ಮೋದಿ ಸರ್ಕಾರ ಬಂದು ಒಂದು ವರ್ಷ, ಬದಲಾವಣೆ ನಾಸ್ತಿ


-ಆನಂದ ಪ್ರಸಾದ್


ಅಬ್ಬರದ ಕಾರ್ಪೋರೇಟ್ ಬೆಂಬಲದ ಚುನಾವಣಾ ಪ್ರಚಾರದ ಮೂಲಕ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಸ್ವಂತ ಬಲದಿಂದ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಒಂದು ವರ್ಷ ಸಮೀಪಿಸುತ್ತಿದೆ. ಮೋದಿ ಬಂದು ಏನಾದರೂ ಬದಲಾವಣೆ ಆಗಿದೆಯಾ ಎಂದು ನೋಡಿದರೆ ಗಮನಾರ್ಹ ಬದಲಾವಣೆ ಕಂಡುಬರುವುದಿಲ್ಲ. ಪರಿಸ್ಥಿತಿ ಹಿಂದಿನ ಸರ್ಕಾರದ ಅವಧಿಗೂ ಇಂದಿನ ಸರ್ಕಾರದ ವ್ಯತ್ಯಾಸವೇನೂ ಇಲ್ಲ. ಲಂಚ ಕೊಡದೆ ಕೆಲಸ ಮೊದಲೂ ಆಗುತ್ತಿರಲಿಲ್ಲ, Modi-selfieಈಗಲೂ ಆಗುವುದಿಲ್ಲ ಎಂಬುದು ಶ್ರೀಸಾಮಾನ್ಯನ ಅನುಭವ. ಅತ್ಯಾಚಾರಗಳು ಹಿಂದೆ ನಡೆಯುತ್ತಿದ್ದಂತೆ ಈಗಲೂ ನಡೆಯುತ್ತಿವೆ. ಬಿಜೆಪಿ ಸರ್ಕಾರ ಬಂದರೆ ಅತ್ಯಾಚಾರ ನಡೆಯದೆ ದೇಶ ರಾಮರಾಜ್ಯವಾಗುತ್ತದೆ ಎಂದು ಪ್ರಚಾರ ಮಾಡಿದರೂ ಇಂದು ಕೂಡ ಹಿಂದಿನಂತೆಯೇ ಅತ್ಯಾಚಾರಗಳು ನಡೆಯುತ್ತಿವೆ. ಬಿಜೆಪಿ ಸರ್ಕಾರ ಬಂದರೆ ಕಪ್ಪು ಹಣ ವಿದೇಶಗಳಿಂದ ತಂದು ದೇಶದಲ್ಲಿ ಸುಭಿಕ್ಷ ಉಂಟುಮಾಡುತ್ತೇವೆ ಎಂದು ಹೇಳಿದವರು ಈಗ ಆ ಬಗ್ಗೆ ಚಕಾರ ಕೂಡ ಎತ್ತುವುದಿಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ತಪ್ಪು ಅರ್ಥಿಕ ನೀತಿಗಳಿಂದ ರೂಪಾಯಿ ವಿರುದ್ಧ ಡಾಲರ್ ಬೆಲೆ ಹೆಚ್ಚಳ ಆಗಿ ದೇಶ ಸಂಕಷ್ಟ ಎದುರಿಸಿದೆ ಎಂದು ಪ್ರಚಾರ ಮಾಡಿದವರು ಈಗ ಆ ಬಗ್ಗೆ ಮಾತನ್ನೇ ಆಡುವುದಿಲ್ಲ. ಈಗಲೂ ರೂಪಾಯಿ ವಿರುದ್ಧ ಡಾಲರ್ ವಿನಿಮಯ ದರ ಹಿಂದಿದ್ದ ಮಟ್ಟಕ್ಕಿಂತ ಈ ಒಂದು ವರ್ಷದ ಅವಧಿಯಲ್ಲಿ ಕಡಿಮೆಯೇನೂ ಆಗಲಿಲ್ಲ. ಹಾಗಾದರೆ ಸರ್ಕಾರ ಬದಲಿ ಜನಸಾಮಾನ್ಯನಿಗೆ ಏನು ಪ್ರಯೋಜನ ಆಗಿದೆ ಎಂದರೆ ಯಾವುದೇ ಪ್ರಯೋಜನ ಆಗಿಲ್ಲ ಎಂಬುದೇ ಉತ್ತರ.

ಹಿಂದಿನ ಸರ್ಕಾರಗಳು ಗ್ರಾಮೀಣ ಪ್ರದೇಶಗಳನ್ನು ತೀರ ನಿರ್ಲಕ್ಷಿಸಿರಲಿಲ್ಲ. ಈಗಿನ ಬಿಜೆಪಿ ಸರ್ಕಾರ ಗ್ರಾಮೀಣ ಮೂಲಭೂತ ಸೌಕರ್ಯ ಹೆಚ್ಚಿಸುವತ್ತ ಯಾವುದೇ ಗಮನ ಹರಿಸಿಲ್ಲ. ಅದು ಕೇವಲ ಭಾರತ ಎಂದರೆ ನಗರದಲ್ಲಿ ಮಾತ್ರ ಇದೆ ಎಂದು ಭಾವಿಸಿದೆ. ಸ್ಮಾರ್ಟ್ ಸಿಟಿಗಳನ್ನು ಕಟ್ಟುವ ಮಾತನ್ನು ಆಡುತ್ತಿದೆಯೇ ಹೊರತು ಗ್ರಾಮೀಣ ಭಾರತದ ಮೂಲಭೂತ ಸೌಕರ್ಯಗಳ ವೃದ್ಧಿಗೆ ಯಾವುದೇ ಗಮನ ನೀಡುತ್ತಿಲ್ಲ. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಇದ್ದದ್ದಕ್ಕಿಂಥ ಗ್ರಾಮೀಣ ಅಂತರ್ಜಾಲ ಲಭ್ಯತೆಯಲ್ಲಿ ಯಾವುದೇ ಸುಧಾರಣೆ ಆಗಿಲ್ಲ. ಭಾರತದ ಹಳ್ಳಿಗಳಲ್ಲಿ 3ಜಿ ಮೊಬೈಲ್ ಅಂತರ್ಜಾಲ ಇಂದಿಗೂ ಲಭ್ಯವಿಲ್ಲ. 2010ರಲ್ಲಿಯೇ 3ಜಿ ತರಂಗಾಂತರ ಹರಾಜು ನಡೆದು ನಾಲ್ಕೈದು ವರ್ಷಗಳಾದರೂ ಭಾರತದ ಹಳ್ಳಿಗಳಿಗೆ 3ಜಿ ಮೊಬೈಲ್ ಅಂತರ್ಜಾಲ ತಲುಪಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂಬುದು ಎಂಥ ನಾಚಿಕೆಗೇಡು. ಅಂತರ್ಜಾಲ ಎಂಬುದು ಇಂದು ಮಾಹಿತಿ ಹಾಗೂ ಪ್ರಗತಿಯ ವಾಹಕವಾಗಿದೆ. ಹೀಗಾಗಿ ಅಂತರ್ಜಾಲ ಲಭ್ಯವಿಲ್ಲದ ಹಳ್ಳಿಗಳು ಪ್ರಗತಿಯಲ್ಲಿ ಹಿಂದೆ ಬೀಳುತ್ತಿವೆ. ಹಲವು ದೇಶಗಳು ಉಪಗ್ರಹ ಆಧಾರಿತ ಬ್ರಾಡ್ ಬ್ಯಾಂಡ್ ಅಂತರ್ಜಾಲವನ್ನು ಡಿಟಿಎಚ್ ಮಾದರಿಯಲ್ಲಿಯೇ ಗ್ರಾಹಕರಿಗೆ ಒದಗಿಸುವ ವ್ಯವಸ್ಥೆಯನ್ನು ಮಾಡಿವೆ. ಆದರೆ ನಮ್ಮ ದೇಶವು ಮಂಗಳನ ಅಂಗಳಕ್ಕೆ ಉಪಗ್ರಹಗಳನ್ನು ಹಾರಿಬಿಡುತ್ತಿದೆ. ಅದೇ ವೇಳೆಗೆ ಶೇಕಡಾ 50ಕ್ಕಿಂತಲೂ ಹೆಚ್ಚು ಜನ ವಾಸಿಸುವ ಗ್ರಾಮೀಣ ಪ್ರದೇಶಗಳಿಗೆ ಉತ್ತಮ ಬ್ರಾಡ್ ಬ್ಯಾಂಡ್ ಅಂತರ್ಜಾಲ ವ್ಯವಸ್ಥೆ ಲಭ್ಯವಾಗಿಸುವಲ್ಲಿ ಸೋತಿದೆ. ನಮ್ಮ ನೀತಿ ನಿರೂಪಕರಿಗೆ, ವಿಜ್ಞಾನಿಗಳಿಗೆ, ಆಡಳಿತಗಾರರಿಗೆ ಹಾಗೂ ಪ್ರಧಾನ ವಾಹಿನಿಯ ಮಾಧ್ಯಮಗಳಿಗೆ ಯಾವುದಕ್ಕೆ ಆದ್ಯತೆ ಕೊಡಬೇಕು ಎಂಬ ಮೂಲಭೂತ ಜ್ಞಾನವೂ ಇಲ್ಲ ಎಂಬುದನ್ನು ಇದು ಎತ್ತಿ ತೋರಿಸುತ್ತದೆ. ಇದು ನಾಚಿಕೆಗೇಡು. ಡಿಜಿಟಲ್ ಇಂಡಿಯಾ ಎಂದು ಮಾತಿನಲ್ಲಿ ಅರಮನೆ ಕಟ್ಟುವ ಮೋದಿ ನೇತೃತ್ವದ ಸರ್ಕಾರ ಬಂದರೂ ಈ ದಿಶೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಆದ ಪ್ರಗತಿ ಒಂದು ದೊಡ್ಡ ಶೂನ್ಯ ಬಿಟ್ಟರೆ ಮತ್ತೇನೂ ಇಲ್ಲ.

ಮೋದಿ ಅಧಿಕಾರಕ್ಕೆ ಬರುವ ಮುನ್ನ ಪಾಕಿಸ್ತಾನದ ಜೊತೆಗೆ ಸಂಘರ್ಷದ ಮಾತನ್ನು ಆಡುತ್ತಿದ್ದರು ಹಾಗೂ ಸಂಘ ಪರಿವಾರದವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಪಾಕಿಸ್ತಾನದ ಜೊತೆ ಮಾತುಕತೆ ಆಡುವುದನ್ನು ವಿರೋಧಿಸುತ್ತಿದ್ದರು. ಈಗ ಅಧಿಕಾರಕ್ಕೆ ಬಂದ ನಂತರ ಇವರೆಲ್ಲರ ಬಾಯಿ ಬಂದಾಗಿದೆ.SwachhBharath_Modi ಈಗ ಪಾಕಿಸ್ತಾನ ಏನೇ ತಂಟೆ ಮಾಡಿದರೂ ಯುದ್ಧದ ಮಾತನ್ನು ಆಡುತ್ತಿಲ್ಲ. ಇದು ಇವರಲ್ಲಿ ಸಮಚಿತ್ತದ ಮನೋಭಾವ ಇಲ್ಲ ಎಂಬುದನ್ನು ತೋರಿಸುತ್ತದೆ. ಮೋದಿ ಅಧಿಕಾರಕ್ಕೆ ಬಂದ ನಂತರ ದೇಶವಿದೇಶಗಳಲ್ಲಿ ಮೋದಿಭಜನೆ ಅವ್ಯಾಹತವಾಗಿ ಸಾಗಿದೆ. ಮೋದಿಯವರ ಸ್ವಚ್ಛಭಾರತ ಅಭಿಯಾನ ನಡೆಯುತ್ತಿದ್ದರೂ ದೇಶವು ಹಿಂದಿದ್ದಕ್ಕಿಂಥ ಇಂದು ಹೆಚ್ಚು ಸ್ವಚ್ಛವಾಗಿರುವುದು ಕಂಡುಬರುವುದಿಲ್ಲ. ಸ್ವಚ್ಛಭಾರತದ ತಿಳುವಳಿಕೆ ಮೂಡಿಸುವಲ್ಲಿ ಸರ್ಕಾರ ಭಾರೀ ಪ್ರಚಾರ ನಡೆಸುತ್ತಿದ್ದರೂ ಅದರ ಪ್ರಯೋಜನ ಮಾತ್ರ ಕಾಣುತ್ತಿಲ್ಲ. ಏಕೆಂದರೆ ಸ್ವಚ್ಛ ಭಾರತಕ್ಕೆ ಬೇಕಾದ ವ್ಯವಸ್ಥೆಯನ್ನು ರೂಪಿಸುವಲ್ಲಿ ಸರ್ಕಾರ ಗಮನ ಹರಿಸಿಲ್ಲ. ಉದಾಹರಣೆಗೆ ಇಂದು ಪ್ಲಾಸ್ಟಿಕ್ ಬಳಕೆ ಎಲ್ಲ ಕ್ಷೇತ್ರಗಳಲ್ಲಿಯೂ ವ್ಯಾಪಿಸಿದೆ. ಹೀಗಾಗಿ ಪ್ಲಾಸ್ಟಿಕ್ ಕಸದ ಉತ್ಪತ್ತಿ ಹಳ್ಳಿ, ಪಟ್ಟಣ, ನಗರ ಎನ್ನದೆ ಎಲ್ಲೆಡೆ ನಡೆಯುತ್ತಿದೆ. ಇಂಥ ಪ್ಲಾಸ್ಟಿಕ್ ಅನ್ನು ಬಳಸಿ ಇದನ್ನೇ ಇಂಧನವನ್ನಾಗಿ ರೂಪಿಸುವ ತಂತ್ರಜ್ಞಾನ ಕೈಗೆಟಕುವ ದರದಲ್ಲಿ ದೇಶೀಯವಾಗಿ ಅಭಿವೃದ್ಧಿಗೊಳಿಸುವಲ್ಲಿ ಸರ್ಕಾರವಾಗಲಿ, ಮಾಧ್ಯಮಗಳಾಗಲಿ, ಇಂಜಿನಿಯರಿಂಗ್ ಕಾಲೇಜುಗಳಾಗಲಿ ಗಮನ ಹರಿಸಿಲ್ಲ. ಕೆಲವು ಇಂಜಿನಿಯರಿಂಗ್ ಕಾಲೇಜುಗಳು ಇಂಥ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದರೂ ಸರ್ಕಾರ ಅದನ್ನು ಜನಪ್ರಿಯಗೊಳಿಸುವಲ್ಲಿ ಗಮನವನ್ನೇ ಹರಿಸಿಲ್ಲ ಹಾಗೂ ಅದು ಜನರಿಗೆ ತಲುಪುವಂತೆ ನೋಡಿಕೊಂಡಿಲ್ಲ. ಪ್ರತಿ ಗ್ರಾಮಪಂಚಾಯತುಗಳಲ್ಲಿ ಪ್ಲಾಸ್ಟಿಕ್ ಕಸವನ್ನು ಬಳಸಿ ಇಂಧನ ತಯಾರಿಸುವ ಯಂತ್ರಗಳನ್ನು ಸ್ಥಾಪಿಸಿದರೆ ದೇಶದ ಬಹುತೇಕ ಪ್ಲಾಸ್ಟಿಕ್ ಕಸದ ನಿರ್ಮೂಲನೆ ಸಾಧ್ಯ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು ಅಷ್ಟೇ. ಅದು ಕೇಂದ್ರದ ಅಬ್ಬರದ ಪ್ರಚಾರದ ಮೋದಿ ಸರ್ಕಾರದಲ್ಲೂ ಕಾಣಿಸುತ್ತಿಲ್ಲ, ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿಯೂ ಕಾಣಿಸುತ್ತಿಲ್ಲ. ಕಸವನ್ನು ಎಲ್ಲೆಂದರಲ್ಲಿ ಹಾಕುವುದು ಭಾರತೀಯರ ಮೂಲಭೂತ ಗುಣವೂ ಆಗಿದೆ. ಇದು ಭಾರತೀಯರ ರಕ್ತದಲ್ಲೇ ಬಂದ ಮೂಢನಂಬಿಕೆಗಳಂತೆ ಒಂದು ನಿವಾರಿಸಲಾರದ ರೋಗವಾಗಿರುವಂತೆ ಕಂಡುಬರುತ್ತದೆ. ಇಂದು ಕೊಳ್ಳುಬಾಕ ಸಂಸ್ಕೃತಿಯನ್ನು ಕೈಗಾರೀಕರಣ ಹಾಗೂ ನಗರೀಕರಣ, ಮಾಧ್ಯಮಗಳ ಅಬ್ಬರದ ಜಾಹೀರಾತುಗಳು ಹೆಚ್ಚಿಸುತ್ತಿರುವ ಕಾರಣ ಪ್ಲಾಸ್ಟಿಕ್ ಬಳಕೆ ಎಲ್ಲ ಕ್ಷೇತ್ರಗಳಲ್ಲಿಯೂ ಆವರಿಸಿದೆ. ಪ್ಲಾಸ್ಟಿಕ್ ನಿಷೇಧಿಸುವುದು ಇದಕ್ಕೆ ಪರಿಹಾರ ಅಲ್ಲವೇ ಅಲ್ಲ.

ಮೋದಿ ಸರ್ಕಾರ ಬಂದ ನಂತರ ಕಾಕತಾಳೀಯವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಇಂಧನ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂತು. ಹೀಗಾಗಿ ಹಣದುಬ್ಬರ ಸ್ವಲ್ಪ ನಿಯಂತ್ರಣಕ್ಕೆ ಬಂದದ್ದೇ ಹೊರತು ಇದರಲ್ಲಿ ಮೋದಿ ಸರ್ಕಾರದ ಸಾಧನೆ ಏನೂ ಇಲ್ಲ. ಒಂದು ವೇಳೆ ಪೆಟ್ರೋಲಿಯಂ ಇಂಧನ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆಯಾಗದೇ ಇದ್ದಿದ್ದರೆ ದೇಶದಲ್ಲಿ ನಾಗರಕ ಅತೃಪ್ತಿ ಹೆಚ್ಚುತ್ತಿತ್ತು ಹಾಗೂ ಹಣದುಬ್ಬರವೂ ನಿಯಂತ್ರಣಕ್ಕೆ ಸಿಗದೇ ಜನರ ಬದುಕು ಇನ್ನಷ್ಟು ದುಸ್ತರವಾಗುತ್ತಿತ್ತು. ಮೋದಿ ಸರ್ಕಾರ ಗ್ರಾಮೀಣ ಭಾರತದ ಅಭಿವೃದ್ಧಿಗೆ ಯಾವುದೇ ಯೋಜನೆಗಳನ್ನೂ ರೂಪಿಸಿಲ್ಲ. ಅದರ ಗಮನ ನಗರ ಭಾರತದ ಅಭಿವೃದ್ಧಿ ಮಾತ್ರ.  ಇದೊಂದು ಪಾಶ್ಚಾತ್ಯ ದೇಶಗಳ ಅಂಧಾನುಕರಣೆಯೇ ಹೊರತು ಮತ್ತೇನೂ ಅಲ್ಲ.  ಹಿಂದೆ ನೆಹರೂರವರನ್ನು ಪಾಶ್ಚಾತ್ಯ ನಾಗರಿಕತೆಯ ಆರಾಧಕ ಹಾಗೂ ಪಾಶ್ಚಾತ್ಯ ಕೈಗಾರಿಕೀಕರಣದ ಅಂಧಾನುಯಾಯಿ ಎಂದು ಹಂಗಿಸುತ್ತಿದ್ದ ಸಂಘ ಪರಿವಾರವು ಈಗ ಮೋದಿ ಅದೇ ಪಾಶ್ಚಾತ್ಯ ಕೈಗಾರಿಕೀಕರಣ, ನಗರೀಕರಣವನ್ನು ಸರ್ವಶ್ರೇಷ್ಠ ಮಾದರಿ ಎಂದು ಅಂಧಾನುಕರಣೆ ಮಾಡುತ್ತಿರುವಾಗ ಬಾಯಿ ಮುಚ್ಚಿ ಕುಳಿತಿರುವುದು ವಿಪರ್ಯಾಸ. ಹಳ್ಳಿಗಳಿಂದ ನಗರದತ್ತ ಜನರ ವಲಸೆ ತಡೆಯಲು ಮೋದಿ ಸರ್ಕಾರ ಯಾವುದೇ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ. ಜನ ಹಳ್ಳಿಗಳಲ್ಲಿ ಆರೋಗ್ಯಕರ ಪರಿಸರದಲ್ಲಿ ಬದುಕುವ ಸಾಧ್ಯತೆ ಇರುವಾಗಲೂ ನಗರಗಳೆಡೆಗೆ ವಲಸೆ ಬರುತ್ತಿದ್ದಾರೆ. ಉದ್ಯೋಗ ಇಲ್ಲದೆ ಮಾತ್ರ ಜನ ವಲಸೆ ಬರುತ್ತಿರುವುದು ಅಲ್ಲ. ಇಂದು ಗ್ರಾಮೀಣ ಭಾಗದಲ್ಲಿ ಬೇಕಾದಷ್ಟು ಜಮೀನು ಇರುವವರೂ ನಗರ ಜೀವನದ ಮೋಹಕ್ಕೆ ಒಳಗಾಗಿ ವಲಸೆ ಹೋಗುತ್ತಿದ್ದಾರೆ. ಜನರ ಮಾನಸಿಕತೆ ಇದಕ್ಕೆ ಕಾರಣ. ಇದನ್ನು ಬದಲಾಯಿಸುವ ನಿಟ್ಟಿನಲ್ಲಿ ಸ್ವದೇಶೀ ಸಂಸ್ಕೃತಿಯ ಬಗ್ಗೆ ಬೊಬ್ಬೆ ಹೊಡೆಯುವ ಸಂಘ ಪರಿವಾರದ ಗರಡಿಯಲ್ಲಿ ಬೆಳೆದಿರುವ ಮೋದಿ ಯಾವುದೇ ಕ್ರಮಗಳನ್ನೂ ಕೈಗೊಳ್ಳದೆ ಇರುವುದು ಶೋಚನೀಯವಲ್ಲದೆ ಮತ್ತೇನು?

ಭ್ರಷ್ಟಾಚಾರದ ಬಗ್ಗೆ ಲೋಕಸಭಾ ಚುನಾವಣೆಗೂ ಮೊದಲು ಭಾರೀ ಬೊಬ್ಬೆ ಹಾಕುತ್ತಿದ್ದ ಮೋದಿ ಈಗ ಅಧಿಕಾರಕ್ಕೆ ಬಂಡ ನಂತರ ಸಿಬಿಐ ಎಂಬ ತನಿಖಾ ಸಂಸ್ಥೆಯನ್ನು ರಾಜಕೀಯಮುಕ್ತ ಗೊಳಿಸಿ ಸ್ವತಂತ್ರ ಸಂಸ್ಥೆಯನ್ನಾಗಿ ಮಾಡಲು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ವಿಚಿತ್ರವಾಗಿದೆ. ಸಿಬಿಐ modi-kejriwalಎಂದರೆ ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಎಂದು ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿಗರು ಈಗ ಅವರದೇ ಸರ್ಕಾರ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿರುವಾಗ ಏಕೆ ಅದನ್ನು ರಾಜಕೀಯಮುಕ್ತಗೊಳಿಸಿ ಸ್ವಾಯತ್ತ ಸಂಸ್ಥೆಯನ್ನಾಗಿ ಮಾಡುವುದಿಲ್ಲ?  ಚುನಾವಣೆಗೂ ಮೊದಲು ಭ್ರಷ್ಟಾಚಾರದ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತಿದ್ದ ಮೋದಿ ಈಗ ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಪಾಲ್ ವ್ಯವಸ್ಥೆಯನ್ನು ಏಕೆ ಶೀಘ್ರವಾಗಿ ತರುತ್ತಿಲ್ಲ? ಭಾರತದಲ್ಲಿ ಏಕೆ ಎಲ್ಲ ಪಕ್ಷಗಳೂ ಅಧಿಕಾರಕ್ಕೆ ಬಂದ ನಂತರ ಮೊದಲು ತಾವೇ ಬೊಬ್ಬೆ ಹೊಡೆಯುತ್ತಿದ್ದ ವಿಷಯದ ಬಗ್ಗೆ ಮೌನವಾಗುತ್ತಿವೆ? ದೆಹಲಿಯಲ್ಲಿ ಭಾರೀ ಭ್ರಷ್ಟಾಚಾರ ವಿರೋಧಿ ಹೋರಾಟದ ಫೋಸು ನೀಡಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷವೂ ಈಗ ಬಲಿಷ್ಠ ಲೋಕಾಯುಕ್ತ ವ್ಯವಸ್ಥೆ ತರುವ ಬಗ್ಗೆ ಮಾತೇ ಆಡುತ್ತಿಲ್ಲ. ಹಾಗಾದರೆ ಇವರ ಹೋರಾಟ ಎಲ್ಲ ಅಧಿಕಾರದ ಗದ್ದುಗೆ ಏರಲು ಮಾತ್ರ ಎಂದಾಯಿತೇ? ಪ್ರತಿಭಾವಂತರಿಂದ ಹಾಗೂ ಸಾಂಪ್ರದಾಯಿಕ ರಾಜಕೀಯಕ್ಕೆ ಹೊರತಾದ ಹಿನ್ನೆಲೆಯಿಂದ ಬಂದ ಕೇಜ್ರಿವಾಲ್ ಹಾಗೂ ಸಂಗಡಿಗರೂ ಉಳಿದ ರಾಜಕಾರಣಿಗಳಂತೆ ಆದರೆ ಜನ ಯಾರನ್ನು ನಂಬಬೇಕು? ಪ್ರತಿಭಾವಂತರೂ, ಯೋಚಿಸಬಲ್ಲ ಸಾಮರ್ಥ್ಯ ಉಳ್ಳವರೂ ಹೀಗೆ ಮಾಡಿದರೆ ಬದಲಾವಣೆ ತರುವುದು ಹೇಗೆ ಸಾಧ್ಯ? ಭಾರತದಲ್ಲಿ ಮಾತ್ರ ಏಕೆ ಹೀಗಾಗುತ್ತಿದೆ ಎಂಬುದು ಯೋಚಿಸಬೇಕಾದ ವಿಚಾರ.
ಭಾರತದಲ್ಲಿ ಇಂದು ಪ್ರತಿಭಾವಂತರು ಹಣ ಮಾಡಿ ಐಶಾರಾಮದ ಜೀವನ ಕಳೆಯುವುದರಲ್ಲಿಯೇ ಜೀವನದ ಸಾರ್ಥಕ್ಯ ಕಾಣುತ್ತಿದ್ದಾರೆ. ಒಟ್ಟೂ ಸಮಾಜವೂ ಇದೇ ದಿಕ್ಕಿನಲ್ಲಿಯೇ ಯೋಚಿಸುತ್ತಿದೆ. ನಾಯಕತ್ವದ ಗುಣ ಉಳ್ಳವರು ಇನ್ನಷ್ಟು ಮತ್ತಷ್ಟು ಹಣ ಮಾಡುವುದರಲ್ಲಿ, ಭೌತಿಕ ಸಂಪತ್ತು ಕೂಡಿಹಾಕುವುದರಲ್ಲಿ ಮೈಮರೆತಿದ್ದಾರೆ. ದೇಶದಲ್ಲಿ ಬಿಸಿನೆಸ್ ಮ್ಯಾನೇಜ್ಮೆಂಟ್ ಸಂಸ್ಥೆಗಳನ್ನು ಕಟ್ಟಿದಂತೆ ರಾಜಕೀಯ ನಾಯಕತ್ವ ರೂಪಿಸುವ ಸಂಸ್ಥೆಗಳನ್ನು ಕಟ್ಟಬೇಕಾದ ಅಗತ್ಯ ಇದೆ. ನಮ್ಮ ದೇಶದಲ್ಲಿ ಇಂಥ ಸಂಸ್ಥೆಗಳೇ ಇಲ್ಲ. ಇದರ ಪರಿಣಾಮವೇ ನಮ್ಮಲ್ಲಿ ಪ್ರತಿಭಾವಂತ ಹಾಗೂ ಸಮತೂಕದ, ಸಮಚಿತ್ತದ, ಮುಂದಾಲೋಚನೆ ಇರುವ ನಾಯಕರ ಕೊರತೆ ಇಂದು ಕಂಡುಬರುತ್ತಿರುವುದು. ದೇಶದ ಪ್ರತಿಭಾವಂತರು, ಮಾಧ್ಯಮಗಳು ಇಂದು ಈ ಬಗ್ಗೆ ಯೋಚಿಸಬೇಕಾದ ಅಗತ್ಯ ಇದೆ.

ಅರುಣ್ ಶೌರಿಯವರ ಸುಳ್ಳು ದೇವರುಗಳು ಮತ್ತವರ ನೈಜ ನಿಂದಾ ಭಕ್ತಿ


– ಶ್ರೀಧರ್ ಪ್ರಭು


ರಾಮ ರಾಮ…

ವರ್ಷ ೨೦೦೨. ಸಿಪಿಎಂನ ವಕೀಲರ ಸಂಘಟನೆ AILU ಕೇರಳದ ಕೊಚ್ಚಿಯಲ್ಲಿ ಅಖಿಲ ಭಾರತ ವಕೀಲರ ಸಮಾವೇಶವನ್ನು ಆಯೋಜಿಸಿತ್ತು. ವೇದಿಕೆಯ ಮೇಲಿದ್ದ ಪಶ್ಚಿಮ ಬಂಗಾಳ ವಿಧಾನಸಭೆಯ ಸ್ಪೀಕರ್ ಹಶಿಮ್ ಅಬ್ದುಲ್ ಹಲಿಂ, ಕಲ್ಕತ್ತಾ ಮುಖ್ಯ ನ್ಯಾಯಾಲಯದ ಅಡ್ವೋಕೇಟ್ ಜನರಲ್ ನರೋ ನಾರಾಯಣ ಗೂಪ್ತು ಮತ್ತು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ವಕೀಲರೆಲ್ಲ ಒಬ್ಬ ವ್ಯಕ್ತಿಯ ಆಗಮನವನ್ನು ಕಾತರದಿಂದ ಎದುರು ನೋಡುತ್ತಿದ್ದರು. ಯಾರು ಗೊತ್ತೇ ಆ ವ್ಯಕ್ತಿ? ರಾಮ ಜೇಠ್ಮಲಾನಿ!

ಆ ದಿನಗಳಲ್ಲಿ, ವಾಜಪೇಯಿ ಸರಕಾರ, ಅದಕ್ಕಿಂತ ಜಾಸ್ತಿ, ವಾಜಪೇಯಿಯವರನ್ನು ಕಂಡರೆ ಉರಿದು ಬೀಳುತ್ತಿದ್ದ ಜೇಠ್ಮಲಾನಿಯನ್ನು ಕರೆಸಿ ಅಂದಿನ ಕೇಂದ್ರ ಸರಕಾರಕ್ಕೆ ಮುಜುಗರ ಉಂಟು ಮಾಡಿಸುವ ಆಲೋಚನೆ ಇರಬೇಕು ಸಂಘಟಕರಿಗೆ. ಸಭಾ ಮರ್ಯಾದೆ, ಔಪಚಾರಿಕತೆ, ಸ್ವಾಗತ, ಪರಿಚಯ ಇದ್ಯಾವುದರ ಗೋಜಿಲ್ಲದೆ ಸೀದಾ ಮೈಕಾಸುರನೆಡೆ ನುಗ್ಗಿದ ಈ ಜೇಠ್ಮಲಾನಿ ಉಸಿರೂ ತೆಗೆದುಕೊಳ್ಳದೆ ಸುಮಾರು ಸುಮಾರು ನಲವತ್ತೈದು ನಿಮಿಷ ಮಾತನಾಡಿದರು. ಇದರಲ್ಲಿ ನಲವತ್ತುನಾಲ್ಕು ನಿಮಿಷ ಕೇರಳ ಮತ್ತು ಪಶ್ಚಿಮ ಬಂಗಾಳದ ಎಡ ಸರಕಾರಗಳನ್ನು ಬೈದದ್ದು. mod-shourieಇನ್ನೊಂದು ನಿಮಿಷ ಭಾರತ-ಚೈನಾ ಯುದ್ಧ ಯುದ್ಧ, ೧೯೪೨ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಕಮ್ಯುನಿಸ್ಟರ ಪಾತ್ರ ಇತ್ಯಾದಿ ಮಾತಾಡಿದ್ದು. ವಕೀಲರ ಸಮಸ್ಯೆಗಳು, ಸಂಘಟನೆ ಇತ್ಯಾದಿಗಳ ಪ್ರಸ್ತಾಪವೇ ಇಲ್ಲ. ಸಂಘಟಕರಿಗೆ ‘ಕೈ ತೋರಿಸಿ ಅವಲಕ್ಷಣ’… ಅಷ್ಟೇಕೆ, ಇರಲಾರದೆ ಇರುವೆ ಬಿಟ್ಟುಕೊಂಡ ಅನುಭವ!

ಇತ್ತೀಚಿಗೆ ಈ ಅರುಣ್ ಶೌರಿ ಮೋದಿ ಸರಕಾರವನ್ನು ಮೂದಲಿಸಿದಾಗ ಇದೆಲ್ಲ ನೆನಪಾಯಿತು. ಶೌರಿಯವರ ‘ಉರಿ’ ನೋಡಿ ಕೆಲವರಿಗೆ ಇವರನ್ನು ಮುಖ್ಯ ಅತಿಥಿಯಾಗಿ ಯಾವುದಾದರು ಪ್ರಗತಿಪರರ ಕಾರ್ಯಕ್ರಮಗಳಿಗೆ ಕರೆಯಿಸುವ ಖಯಾಲಿ ಏನಾದರು ಬಂದಿದ್ದರೆ ಈ ಮೇಲಿನ “ರಾಮಾಯಣ” ದ ಪ್ರಸಂಗ ಗಮನಿಸುವುದೊಳಿತು.

ಜಾನಾಮಿ ಧರ್ಮಂ…

ಒಂದು ಪಕ್ಷ ಈ ಉಮಾ ಭಾರತಿ, ಸಾಕ್ಷಿ ಮಹಾರಾಜನಂಥವರು ಬದಲಾಗಬಹುದು ಆದರೆ ಶೌರಿಯಂಥವರು ಎಂದಿಗೂ ಬದಲಾಗುವುದಿಲ್ಲ. ಶೌರಿ ತರಹದವರು “ಜಾನಾಮಿ ಧರ್ಮಂ ನಚಮೆ ಪ್ರವೃತ್ತ:” (ಸರಿಯಾದ ಮಾರ್ಗ ಯಾವುದೆಂದು ಗೊತ್ತು – ಅದರಲ್ಲಿ ಪ್ರವೃತ್ತನಾಗಲಾರೆ) ಎನ್ನುವ ಸಿದ್ಧಾಂತದವರು.

ಶೌರಿ ನೈಜ ಅರ್ಥದಲ್ಲಿ ಬಲಪಂಥೀಯ. ಸಂಘ ಪರಿವಾರದಲ್ಲಿ ಹಲವರು ಬಲಪಂಥದ ರಾಜಕೀಯ ಅಥವಾ ಧಾರ್ಮಿಕ ಆಯಾಮವನ್ನು ಸೀಮಿತವಾಗಿ ಅನುಸರಿಸುತ್ತಾರೆ; ಅರ್ಥಿಕ ವಿಚಾರಗಳಲ್ಲಿ ಸ್ವಲ್ಪ ಮಟ್ಟಿಗೆ (ಅವರದ್ದೇ ಢೊಂಗಿ ಮಾದರಿಯದ್ದೆ ಇರಲಿ) ಸಮಾಜವಾದವನ್ನು ಒಪ್ಪುತ್ತಾರೆ. ಆದರೆ ಶೌರಿ ಹಾಗಲ್ಲ. ಆತ ಎಲ್ಲ ಸ್ವರೂಪ ಆಯಾಮಗಳಲ್ಲಿ ಬಲಪಂಥವನ್ನು ತಬ್ಬುವ ಸಿದ್ಧಾಂತದ ಪ್ರತಿಪಾದಕ. ಸಂವಿಧಾನದ ಎಲ್ಲ ಆಶಯಗಳಿಗೂ ಸಂಪೂರ್ಣವಾಗಿ ವಿರೋಧಿಸುವವನನ್ನು ನೀವು ನೋಡಬೇಕಿದ್ದರೆ ಅದು ಶೌರಿಯೇ. ಅಂಬೇಡ್ಕರ್ ರಿಂದ ಮೊದಲ್ಗೊಂಡು ಎಡಪಂಥೀಯ ಇತಿಹಾಸಕಾರರು, ಕ್ರೈಸ್ತರು, ಮುಸಲ್ಮಾನರು, ಎಲ್ಲ ಬಹುಜನರನ್ನೂ ತುಳಿಯಲು ಸೈದ್ಧಾಂತಿಕ ತಳಹದಿ ತಯಾರಾಗುವುದು ಈ ಶೌರಿಯ ಫ್ಯಾಕ್ಟರಿಯಲ್ಲಿ. ಅಮೇರಿಕ ಪ್ರೇರಿತ ಅರ್ಥಿಕ ಮುಕ್ತ ಮಾರುಕಟ್ಟೆ ವಿಚಾರಧಾರೆಯನ್ನು ನಮ್ಮ ದೇಶದಲ್ಲಿ ಅತ್ಯಂತ ಪ್ರಭಲವಾಗಿ ಪ್ರತಿಪಾದಿಸಿದ್ದು ಶೌರಿ. ಎಲ್ಲವನ್ನೂ ಮಾರುಕಟ್ಟೆಯೇ ನಿರ್ಧರಿಸಬೇಕು ಎಂಬ ಸಿದ್ಧಾಂತ ಪ್ರತಿಪಾದನೆಯ ಭಾಗವಾಗಿಯೇ ಶೌರಿ ಎಡ ಮತ್ತು ಸಮಾಜವಾದಿ ಸಿದ್ಧಾಂತಗಳನ್ನು ವಿರೋಧಿಸುವುದು. ಅಂಬೇಡ್ಕರ್ ರನ್ನು ವಿರೋಧಿಸದಿದ್ದರೆ ಸಾಮಾಜಿಕ ಸಮಾನತೆ ಯನ್ನು ಹೇಗೆ ತುಳಿಯುವುದು? ಭಾರತದಲ್ಲಿ ನೈಜ ಅರ್ಥದಲ್ಲಿ ಬಲಪಂಥದ ಮಗ್ಗುಲು ಮುರಿದದ್ದು ಅಂಬೇಡ್ಕರ್. ಬೇರೆ ಯಾರನ್ನು ಎದುರಿಸಬೇಕಿದ್ದರೂ ಸೈ ಎನ್ನುವ ಸಂಘಿ ಪಡೆ ಅಂಬೇಡ್ಕರ್ ಮುಂದೆ ಮೊಣಕಾಲೂರುತ್ತದೆ. ಆದ್ದರಿಂದ ಅಂಬೇಡ್ಕರರ ಚಾರಿತ್ರ್ಯ ವಧೆ ಮಾಡುವ ಉದ್ದೇಶದಿಂದ ಶೌರಿ “Worshiping False Gods” ಬರೆದದ್ದು. ಹೀಗೆ ಶೌರಿ ತುಂಬಾ ಆಸಕ್ತಿ, ಪರಿಶ್ರಮ, ಅಧ್ಯಯನ ಪೂರ್ಣವಾಗಿ ಬಲಪಂಥದ ಸರ್ವ ಆಯಾಮ ಮತ್ತು ಮಜಲುಗಳ ಬೆನ್ನಿಗೆ ನಿಲ್ಲುವವರು.

ಅಯೋಧ್ಯ ಕಾಂಡ

೧೯೯೦ರ ಸುಮಾರಿಗೆ ಬಿಜೆಪಿ ಮೇಲ್ಜಾತಿಯ ಮಧ್ಯಮ ಮತ್ತು ಮೇಲ್ವರ್ಗದ ಜನಮಾನಸದೊಳಗೆ ಸಂಪೂರ್ಣವಾಗಿ ಹೊಕ್ಕು ಆಗಿತ್ತು. ಆದರೆ ಅಲ್ಲಲ್ಲಿ ಅಪಸ್ವರಗಳು ಇದ್ದೇ ಇದ್ದವು. ರಾಮ ಮಂದಿರ ಬೇಕು, ಸರಿ; ಆದರೆ, ಮಸೀದಿ ಕೆಡವುವುದು, ಜನರನ್ನು ಕೊಲ್ಲುವುದು ಇತ್ಯಾದಿ ಬೇಡ ಎನ್ನುವ ಒಂದು ವರ್ಗವಿತ್ತು. ಹಾಗೆಯೇ ದೇಶದ ಬಹುದೊಡ್ಡ ಬುದ್ಧಿಜೀವಿ ವರ್ಗ ಸಂಘ ಪರಿವಾರದ ಕೋಮುವಾದವನ್ನು ವಿರೋಧಿಸುತ್ತಿತ್ತು. ಆ ಸಮಯದಲ್ಲಿ ಸಂಘ ಪರಿವಾರಕ್ಕೆ ನೆನಪಾಗಿದ್ದು ಅರುಣ ಶೌರಿ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ABVP) ಮುಖಾಂತರ ದೇಶದಾದ್ಯಂತ “Arun Shourie Speaks on Ayodhya” ಎಂಬ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಶೌರಿ, ಜಗದೀಶ ಕಾರಂತ, ಅನಂತ ಕುಮಾರ ಹೆಗಡೆಯವರಂತೆ ಬೆಂಕಿ ಕಾರಲಿಲ್ಲ; ತುಂಬಾ ವ್ಯವಧಾನದಿಂದ ಯಾರಿಗೂ ಗೊತ್ತಾಗದಂತೆ ಊಟದಲ್ಲಿ ನುಣ್ಣನೆ ಗಾಜಿನ ಪುಡಿ ಬೆರೆಸಿ ಬಿಟ್ಟರು. ಇಂದು ಜಗದೀಶ ಕಾರಂತ, ಅನಂತ ಕುಮಾರರ ಭಾಷಣಗಳನ್ನ ಜನ ಮರೆತಿದ್ದಾರೆ; ಆದರೆ ಅಂದು ಶೌರಿ ಬೆರೆಸಿದ ‘ನುಣ್ಣನೆ ಗಾಜಿನ ಪುಡಿ’ ಸಮಾಜದ ಸಣ್ಣ ಕರುಳನ್ನೇ ಕತ್ತರಿಸಿ ಹಾಕಿದೆ. ಹೀಗಾಗಿ ‘ಅನ್ಯ’ ಕೋಮಿನೊಂದಿಗೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಜೀರ್ಣಿಸಿಕೊಳ್ಳುವ ವ್ಯವಧಾನ ನಮ್ಮಲ್ಲಿ ಉಳಿದಿಲ್ಲ.

ಸುಳ್ಳು ದೇವರುಗಳ ಸತ್ಯ

ನಿಜ ಹೇಳಬೇಕೆಂದರೆ, ಶೌರಿಗೆ ಮೋದಿಯವರ ನೀತಿಗಳ ಬಗ್ಗೆ ಯಾವ ಘನಂದಾರಿ ಭಿನ್ನಾಭಿಪ್ರಾಯಗಳೂ ಇದ್ದಂತೆ ಇಲ್ಲ. ಹಾಗೆಂದು ಕೇವಲ ಮಿನಿಸ್ಟರ್ ಗಿರಿಗಾಗಿ, ಈ ಶೌರಿ ಹುಚ್ಚೆದ್ದು ಕುಣಿಯುವ ಜನವೂ ಅಲ್ಲ. ಇಂದು ಶೌರಿಗೆ ಬೇಕಾಗಿರುವುದು ಮನ್ನಣೆ; ಸಾಂಕೇತಿಕ ವಾಗಿಯಾದರೂ ಸರಿ, ಬೇಕಿರುವುದು ಅಧಿಕಾರ ಕೇಂದ್ರದ ಒಳಗಿನ ಒಂದು ವೇದಿಕೆ. ಜತೆಗೆ ತಮ್ಮನ್ನು ಬಳಸಿ ಬಿಸಾಡಿದ ವೇದನೆ ಶೌರಿಯಂಥವರಲ್ಲಿದೆ.

ಆದರೆ, ಇಂದು ಮೋದಿಯವರಿಗೆ ವಿಚಾರವಾದಿಗಳು ಎಂದರೆ ತುಂಬಾ ಅಲರ್ಜಿ. ಯೋಚಿಸಿ ರಾಜಕಾರಣ ಮಾಡುವ ಯಾರೇ ಆಗಲಿ, shourie-modiಕೆಲವೊಮ್ಮೆ ಪರಿಣಾಮ ಲೆಕ್ಕಿಸದೆ ಮನಸ್ಸಿನಲ್ಲಿದ್ದದ್ದು ಹೇಳಿ ಬಿಡುತ್ತಾರೆ. ವ್ಯಕ್ತಿ ಪೂಜೆ ಮಾಡುವುದಿಲ್ಲ; ಹೀಗಾಗಿ, ವಿಚಾರವಾದಿಗಳನ್ನು ಪಳಗಿಸುವುದು ಸುಲಭವಲ್ಲ. ಇನ್ನು ಇವರ ಮೀಡಿಯಾ ಸಖ್ಯದಿಂದಾಗಿ ಇವರ ವಿಚಾರಗಳು ಬೇಗ ಜನರನ್ನು ತಲುಪುತ್ತವೆ. ಇವೆಲ್ಲವೂ ಮೋದಿಯವರ ಬೃಹತ್ ಉದ್ಯಮ ಪ್ರೇರಿತ ವ್ಯಕ್ತಿ ಕೇಂದ್ರಿತ ರಾಜಕಾರಣಕ್ಕೆ ದೊಡ್ಡ ಅಡ್ಡಿ. ಹೀಗೆಂದೇ, ಶೌರಿ ತರಹದವರನ್ನು ಕೇವಲ ಬಳಸಿಕೊಳ್ಳಲಾಗುತ್ತದೆಯೇ ಹೊರತು ಅಧಿಕಾರ ಕೊಟ್ಟು ಶಕ್ತಿ ಕೇಂದ್ರದ ಒಳಗೆ ಬಿಟ್ಟುಕೊಳ್ಳಲಾಗುವುದಿಲ್ಲ.

ಅದೇನೇ ಆದರೂ ಶೌರಿಯೇ ತಮ್ಮ ವರ್ಗ ಮತ್ತು ಜಾತಿಯ ಹಿತಾಸಕ್ತಿ ಗಳನ್ನು ಕಾಪಾಡುವ ನೈಜ ಸಾಮರ್ಥ್ಯ ಉಳ್ಳವರು ಎಂಬುದು ಖಂಡಿತವಾಗಿ ಬಲಪಂಥೀಯರಿಗೆ ಗೊತ್ತಿದೆ. ಇನ್ನು ಶೌರಿಯ ಭಿನ್ನಾಭಿಪ್ರಾಯಗಳು ಕೂಡ ಕ್ಷಣಿಕ. ಒಟ್ಟಾರೆ, ಶೌರಿಯವರ ಭಕ್ತಿ ಎಂಥದ್ದೆಂದರೆ, ಅವರು ಪೂಜಿಸುವ ದೇವರುಗಳೇ ಸುಳ್ಳಾದರೂ ಅವರ ಭಕ್ತಿ ಸುಳ್ಳಾಗದು. ಇನ್ನು ಈ ಸುಳ್ಳು ದೇವರುಗಳ ಮಹಿಮೆ ಎಂಥಹದ್ದೆಂದರೆ ಈ ಭಕ್ತನ ನಿಂದಾ ಭಕ್ತಿಯ ಮುಂದೆ ಎಂತೆಂತಹ ನೈಜ ಭಕ್ತರ ದಾಸ್ಯ ಭಕ್ತಿಯೂ ಲೆಕ್ಕಕ್ಕಿಲ್ಲ.

ಜಾತಿ ಗಣತಿಯ ವಿವಾದದ ಧೂಳು ಝಾಡಿಸುತ್ತಾ…..

– ದಿನೇಶ್ ಅಮಿನ್ ಮಟ್ಟು

ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಆರ್ಥಿಕ ಸಮೀಕ್ಷೆಗೆ ಸಂಬಂಧಿಸಿದ ಕೆಲವು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದ ನಾನು ಮಾತನಾಡಲು ಮಾಡಿಕೊಂಡ ಟಿಪ್ಪಣಿಗಳು ಇವು. ಈ ಸಮೀಕ್ಷೆ ಬಗ್ಗೆ ಸದುದ್ದೇಶ ಮತ್ತು ದುರುದ್ದೇಶದಿಂದ ಎತ್ತಿರುವ ಕೆಲವು ಪ್ರಶ್ನೆಗಳಿಗಾದರೂ ಉತ್ತರಿಸಲು ಇದು ನೆರವಾಗಬಹುದುdinesh-aminmattu.

1. ಜಾತಿ ಗಣತಿಗೆ ಅವಕಾಶ ಇದೆಯೇ?
ಮೊದಲನೆಯದಾಗಿ, ಸಾಮಾಜಿಕ ನ್ಯಾಯದ ಹೋರಾಟದ ಭಾಗವಾದ ಜಾತಿ ಆಧರಿತ ಮೀಸಲಾತಿ ಮತ್ತು ಜಾತಿ ಗುರುತಿಸಲು ನೆರವಾಗುವ ಜಾತಿಗಣತಿಗೆ ಸಂಬಂಧಿಸಿದ ಸರ್ಕಾರದ ನಿರ್ಧಾರಗಳ ಹಿಂದೆ ನಿರ್ಣಾಯಕ ಪಾತ್ರವನ್ನು ವಹಿಸುತ್ತಾ ಬಂದಿರುವುದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಹಾಗೂ ಈ ಮೂರು ಕಂಬಗಳ ಮೇಲೆ ನಿಂತಿರುವ ಸಂವಿಧಾನ.

ಜಾತಿ, ವರ್ಣ, ಧರ್ಮ, ಲಿಂಗ, ಹುಟ್ಟಿದ ಸ್ಥಳ ಮತ್ತು ವಾಸಸ್ಥಾನಗಳನ್ನು ಮೀರಿ ಭಾರತೀಯರೆಲ್ಲರೂ ಸಮಾನರು ಎಂದು ಸಾರಿರುವ ಸಂವಿಧಾನವೇ ನಾಲ್ಕು ವರ್ಗಗಳಿಗೆ ನಿರ್ದಿಷ್ಟ ಕಾರಣಗಳಿಗಾಗಿ ‘ಸಮಾನತೆ’ಯಿಂದ ವಿನಾಯಿತಿಯನ್ನು ನೀಡಿದೆ. ಈ ನಾಲ್ಕು ವರ್ಗಗಳು ಯಾವುದು? ಮತ್ತು ಅವುಗಳ ಮುನ್ನಡೆಗೆ ಏನು ಮಾಡಬೇಕೆಂಬುದನ್ನು ಸಂವಿಧಾನದ 15 (3), 15 (4) 16 (4) ಮತತು 46ನೇ ಪರಿಚ್ಛೇದ ಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಸಂವಿಧಾನದ 15(3)ನೇ ಪರಿಚ್ಛೇದದ ಪ್ರಕಾರ ಜಾತಿ ಧರ್ಮಗಳ ತಾರತಮ್ಯ ಮಾಡದೆ ಮಹಿಳೆ ಮತ್ತು ಮಕ್ಕಳಿಗಾಗಿ ವಿಶೇಷ ಸವಲತ್ತುಗಳನ್ನು ನೀಡಬಹುದಾಗಿದೆ. ಪರಿಚ್ಛೇದ 15 (4)ರ ಪ್ರಕಾರ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮುನ್ನ
ಡೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಪರಿಚ್ಛೇದ 16 (4) ರ ಪ್ರಕಾರ ಸರ್ಕಾರಿ ಇಲಾಖೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಪಡೆಯದಿರುವ ಹಿಂದುಳಿದ ವರ್ಗಗಳಿಗೆ ನೇಮಕಾತಿಯಲ್ಲಿ ಆದ್ಯತೆ ಕಲ್ಪಿಸಬಹುದಾಗಿದೆ. ದುರ್ಬಲ ವರ್ಗಗಳಿಗೆ ಮುಖ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳ ರಕ್ಷಣೆಗೆ ವಿಶೇಷ ಗಮನ ನೀಡುವುದರ ಜತೆಗೆ ಸಾಮಾಜಿಕ ನ್ಯಾಯ ಮತ್ತು ಎಲ್ಲ ಬಗೆಯ ಶೋಷಣೆಗಳಿಂದ ಅವರನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕೆಂದು ಸಂವಿಧಾನದ 46ನೇ ಪರಿಚ್ಛೇದ ಹೇಳಿದೆ.

ಈಗಿನ ಮೀಸಲಾತಿಗೆ ಆಧಾರವಾಗಿರುವ ಆಯೋಗಗಳ ಜಾತಿ ಗಣತಿಯ ವೈಜ್ಞಾನಿಕತೆಯನ್ನು ನಿರಂತರವಾಗಿ ಸುಪ್ರೀಂಕೋರ್ಟ್ ಪ್ರಶ್ನಿಸುತ್ತಾ ಬಂದಿದೆ. ಮಂಡಲ್ ವರದಿ ಅನುಷ್ಠಾನವನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆಯಿಂದ, ಯುಪಿಎ ಸರ್ಕಾರ ನೀಡಿದ ಉನ್ನತ ಶಿಕ್ಷಣದಲ್ಲಿನ ಮೀಸಲಾತಿ ವಿರುದ್ಧದ ಅರ್ಜಿಯ ವಿಚಾರಣೆ ವರೆಗೆ ಎಲ್ಲ ಪ್ರಕರಣಗಳಲ್ಲಿಯೂ ಸುಪ್ರೀಂ ಕೋರ್ಟ್ ಮೀಸಲಾತಿಗೆ ಆಧಾರವಾಗಿರುವ ಜಾತಿ ಮಾಹಿತಿಯನ್ನು ಪ್ರಶ್ನಿಸಿದೆ.

‘ವೈಜ್ಞಾನಿಕವಾಗಿ ಸಂಗ್ರಹಿಸಿರುವ ಜಾತಿ ಗಣತಿ ಬೇಕು ಮತ್ತು ಹಿಂದುಳಿದ ವರ್ಗಗಳ ಗುಂಪಿಗೆ ಯಾವ ಜಾತಿಯ ಸೇರ್ಪಡೆಯಾಗಬೇಕು, ಬೇರ್ಪಡೆಯಾಗಬೇಕು ಎನ್ನುವುದನ್ನು ತೀರ್ಮಾನಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಾಶ್ವತ ಹಿಂದುಳಿದ ಆಯೋಗಗಳನ್ನು ರಚಿಸಬೇಕು’ ಎಂದು ಸುಪ್ರೀಂ ಕೋರ್ಟ್ ಇಂದಿರಾ ಸಾಹ್ನಿ ಪ್ರಕರಣದಲ್ಲಿ (ಮಂಡಲ್ ವರದಿ ಪ್ರಕರಣ) 23 ವರ್ಷಗಳ ಹಿಂದೆ ನೀಡಿದ್ದ ತೀರ್ಪಿನಲ್ಲಿ ಹೇಳಿತ್ತು.

ಜಾತಿ ಗಣತಿ ಯಾಕೆ ಬೇಕು?
ಸಂವಿಧಾನ ವಿಶೇಷವಾಗಿ ಗುರುತಿಸಿರುವ ವರ್ಗಗಳ ಪೈಕಿ ಮಹಿಳೆ, ಮಕ್ಕಳು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನಸಂಖ್ಯೆಯ ಲೆಕ್ಕ ಹತ್ತುವರ್ಷಗಳಿಗೊಮ್ಮೆ ನಡೆಯುವ ಜನಗಣತಿಯಲ್ಲಿ ಸಿಗುತ್ತದೆ. ಆದರೆ ಸಂವಿಧಾನ ಹೇಳಿರುವ ಹಿಂದುಳಿದ ವರ್ಗಗಳು ಯಾವುದು? ಅದರ ರೂಪ,ಗಾತ್ರ, ಸ್ಥಿತಿಗತಿ ಏನು? ಜನಗಣತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಹೊರತುಪಡಿಸಿ ಹಿಂದೂ ಧರ್ಮಕ್ಕೆ ಸೇರಿರುವ ಉಳಿದೆಲ್ಲ ಜಾತಿಗಳನ್ನು ‘ಹಿಂದೂ’ ಹೆಸರಿನಡಿಯಲ್ಲಿಯೇ ಸೇರಿಸಲಾಗುತ್ತದೆ. ಆದರೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಹಿಂದುಳಿದ ಜಾತಿಗಳಿಗೆ ಪ್ರ‍ತ್ಯೇಕವಾದ ಮೀಸಲಾತಿ ಕಲ್ಪಿಸಲಾಗಿದೆ, ಯೋಜನೆಗಳನ್ನು ರೂಪಿಸಲಾಗಿದೆ. ಇದಕ್ಕೆ ಅರ್ಹ ಫಲಾನುಭವಿಗಳನ್ನು ಗುರುತಿಸುವುದು ಹೇಗೆ? ಜಾತಿ ಗಣತಿ ಅಲ್ಲದೆ ಬೇರೆ ಮಾರ್ಗ ಇದೆಯೇ?

ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಯೋಜನೆಗಳು ಜಾತಿ ಆಧಾರಿತವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕುರುಬ,ನೇಕಾರ,ಈಡಿಗ, ಕ್ಷೌರಿಕ, ಮುಸ್ಲಿಮ್, ಕ್ರಿಶ್ಚಿಯನ್ ಹೀಗೆ ವಿವಿಧ ಬಗೆಯ ಜಾತಿ ಮತ್ತು ಧರ್ಮ ನಿರ್ದಿಷ್ಠ ಯೋಜನೆಗಳನ್ನು ಎಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸುತ್ತಾ ಬಂದಿವೆ.
ಒಂದೊಂದು ಜನವರ್ಗದ ಸಮಸ್ಯೆಗಳು ಒಂದೊಂದು ಬಗೆಯವು. ಪರಿಶಿಷ್ಟ ಜಾತಿ ಜನರ ಪಾಲಿಗೆ ಅಸ್ಪೃಶ್ಯತೆ ಎನ್ನುವುದೇ ದೊಡ್ಡ ಸಮಸ್ಯೆಯಾದರೆ, ಪರಿಶಿಷ್ಟ ಪಂಗಡಕ್ಕೆ ಅಸ್ಪೃಶ್ಯತೆಗಿಂತಲೂ ಪ್ರತ್ಯೇಕತೆ ಮತ್ತು ನಿರ್ಲಕ್ಷ್ಯದ ಸಮಸ್ಯೆ. ಹಿಂದುಳಿದ ಜಾತಿ ಜನರ ಸಮಸ್ಯೆ ಅಸ್ಪೃಶ್ಯತೆ ಅಲ್ಲ ಅವಕಾಶ ಮತ್ತು ಪ್ರಾತಿನಿಧ್ಯದ ಸಮಸ್ಯೆ. ಅಲ್ಪಸಂಖ್ಯಾತರನ್ನು ಭೀತಿಗೀಡುಮಾಡಿರುವುದು ಕೋ
ಮುವಾದ. ಮಹಿಳೆಯರ ಪಾಲಿಗೆ ಲಿಂಗತಾರತಮ್ಯವೇ ದೊಡ್ಡ ಸಮಸ್ಯೆ.

ನೇಕಾರರಿಗೆ ಕೈಮಗ್ಗದ ಸುಧಾರಣೆಗೆ ಪ್ಯಾಕೇಜ್ ಬೇಕು, ಮಡಿವಾಳರಿಗೆ ದೋಬಿಘಾಟ್ ನಿರ್ಮಾಣವಾಗಬೇಕು. ಕ್ಷೌರಿಕರಿಗೆ ಸಲೂನ್ ಗಳನ್ನು ತೆರೆಯಲು ಆರ್ಥಿಕ ನೆರವು ಬೇಕು, ಕುರುಬರಿಗೆ ಕುರಿಸಾಕಾಣಿಕೆಗೆ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಮೀನುಗಾರರಲ್ಲಿ ಮೀನುಗಾರಿಕೆಯ ಸಮಸ್ಯೆಗಳಿವೆ. ಜಾತಿವಾರು ಆರ್ಥಿಕ-ಶೈಕ್ಷಣಿಕ ಸಮೀಕ್ಷೆಯ ಮೂಲಕ ಪಡೆಯುವ ಮಾಹಿತಿ ಇಲ್ಲದೆ ಇವರ ಸಮಸ್ಯೆಗಳನ್ನು ಬಗೆಹರಿಸುವುದು ಹೇಗೆ, ಇವರ ಬೇಡಿಕೆಗಳನ್ನು ಈಡೇರಿಸುವುದು ಹೇಗೆ?

ಇವರನ್ನೆಲ್ಲ ಒಂದೇ ಗುಂಪು ಮಾಡಿ ಇವರೆಲ್ಲರೂ ಶೋಷಿತರು, ಅವಕಾಶ ವಂಚಿತರು ಎನ್ನುವ ವರ್ಗದಡಿಯಲ್ಲಿ ಕೂಡಿಹಾಕಿ ರಾಷ್ಟ್ರಮಟ್ಟದ ಒಂದು ಸಾಮಾನ್ಯ ಯೋಜನೆಯ ಮೂಲಕ ಇವರ ಅಭಿವೃದ್ಧಿ ಮಾಡಲು ಸಾಧ್ಯ ಇಲ್ಲ. ಅರಮನೆ ಮೈದಾನದಲ್ಲಿ ಶೋಷಿತರೆಲ್ಲರ ಸಭೆ ಕರೆದು ಸಮಸ್ಯೆಗಳನ್ನೆಲ್ಲ ಚರ್ಚಿಸಲು ಸಾಧ್ಯ ಇಲ್ಲ. ಇಲ್ಲದೆ ಇದ್ದರೆ ಹಿಂದೂ, ಮುಸ್ಲಿಮ್, ದಲಿತ ಸಮಾವೇಶ ನಡೆಸಿಯೂ ಈ ವರ್ಗಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದು. ಯಾಕೆಂದರೆ ಇಲ್ಲಿರುವುದು ಜಾತಿನಿರ್ದಿಷ್ಟ ಸಮಸ್ಯೆಗಳು.

ಆದರೆ ಸ್ವತಂತ್ರ ಭಾರತದಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಮಗ್ರ ಸ್ವರೂಪದ ಜಾತಿಗಣತಿ ನಡೆದೇ ಇಲ್ಲವಾದ ಕಾರಣ ಧರ್ಮ ಮತ್ತು ಜಾತಿ ನಿರ್ದಿಷ್ಟವಾದ ಎಲ್ಲ ಜನಕಲ್ಯಾಣ ಕಾರ್ಯಕ್ರಮಗಳು ವಿಶ್ವಾಸಾರ್ಹ ಅಲ್ಲದ ತಪ್ಪುಗಳಿಂದ ಕೂಡಿದ ಜಾತಿ ಮಾಹಿತಿಯ ಆಧಾರದಲ್ಲಿ ಅನುಷ್ಠಾನಗೊಂಡು ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ.

ಸಾಚಾರ್ ವರದಿ ಜಾರಿಯಾಗುವ ಮೊದಲು ಮುಸ್ಲಿಮರು ರಾಜಕೀಯ ಓಲೈಕೆಯಿಂದಾಗಿ ಮಿತಿಮೀರಿ ಬೆಳೆದುಬಿಟ್ಟಿದ್ದಾರೆ. ಸರ್ಕಾರದ ಬಜೆಟ್ ಹಣದ ಬಹುಪಾಲು ಮುಸ್ಲಿಮರ ಪಾಲಾಗುತ್ತಿದೆ ಎನ್ನುವ ಅಪಪ್ರಚಾರ ವ್ಯಾಪಕವಾಗಿ ನಡೆದಿತ್ತು. ಆದರೆ ಮುಸ್ಲಿಮರ ಸಾಮಾಜಿಕ-ಆರ್ಥಿಕ-ಶೈಕ್ಷಣಿಕೆ ಸಮೀಕ್ಷೆ ನಡೆಸಿದ ಸಾಚಾರ್ ಸಮಿತಿ ಬಯಲುಗೊಳಿಸಿದ ಸತ್ಯವೇ ಬೇರೆ. ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಸ್ಲಿಮರು ದಲಿತರಿಗಿಂತಲೂ ನಿಕೃಷ್ಟ ಸ್ಥಿತಿಯಲ್ಲಿದ್ದಾರೆ ಎಂದು ಸಾಚಾರ ವರದಿ ಹೇಳಿತ್ತು.

ಜಾತಿ ಗಣತಿಯಿಂದ ಜಾತೀಯತೆ ಹೆಚ್ಚಾಗುವುದಿಲ್ಲವೇ?

1931ರಿಂದ ಇಲ್ಲಿಯ ವರೆಗೆ ಜಾತಿ ಗಣತಿ ನಡೆದೇ ಇಲ್ಲ. ಹಾಗಿದ್ದರೆ ಜಾತಿ ನಾಶವಾಗಬೇಕಿತ್ತಲ್ಲವೇ? ಯಾಕೆ ಅದು ಹೆಚ್ಚಾಯಿತು? ಕಳೆದ 65 ವರ್ಷಗಳಿಂದ ಹಿಂದು,ಮುಸ್ಲಿಮ್,ಕ್ರಿಶ್ಚಿಯನ್ ಬೌದ್ಧ ,ಜೈನ ಹೀಗೆ ಧರ್ಮಗಣತಿ ಅರ್ಥಾತ್ ಕೋಮುಗಣತಿ ನಡೆಯುತ್ತಿದೆ. ದೇಶವನ್ನು ತಲ್ಲಣಕ್ಕೀಡು ಮಾಡುತ್ತಿರುವ ಕೋಮುವಾದಕ್ಕೆ ಈ ಧರ್ಮ ಇಲ್ಲವೆ ಕೋಮು ಗಣತಿ ಕಾರಣವೆಂದು ಹೇಳಬಹುದೇ?

ಕಳೆದ 60 ವರ್ಷಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಗಣತಿ ನಡೆಯುತ್ತಿದೆ. ಇದರಿಂದಾಗಿ ದಲಿತರಲ್ಲಿ ಜಾತೀಯತೆ ಹೆಚ್ಚಾಗಿ ಅದರಿಂದಾಗಿ ದಲಿತರ ಶೋಷಣೆ ಮತ್ತು ದೌರ್ಜನ್ಯ ನಡೆಯುತ್ತಿದೆ ಎಂದು ಹೇಳಬಹುದೇ? ಮುಸ್ಲಿಮರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯನ್ನು ತೆರೆದಿಟ್ಟ ಸಾಚಾರ್ ವರದಿಯಿಂದಾಗಿ ಮುಸ್ಲಿಮರಲ್ಲಿ ಕೋಮುವಾದ ಬೆಳೆಯಿತೆಂದು ಹೇಳಬಹುದೇ?

ಜಾತಿ ಬೇಡ ಎನ್ನುವುದು ಒಂದು ಪುರೋಗಾಮಿ ನಿಲುವು, ಜಾತಿ ಇಲ್ಲ ಎನ್ನುವುದು ಆತ್ಮವಂಚನೆ. ನಮ್ಮದು ಆತ್ಮವಂಚಕ ಸಮಾಜ. ಇಲ್ಲಿ ಜಾತಿ ಇದೆ ಎನ್ನುವುದನ್ನು ಒಪ್ಪಿಕೊಳ್ರಯ್ಯಾ ಎನ್ನುವವರನ್ನು ಜಾತಿವಾದಿಗಳೆಂದು ಗೇಲಿಮಾಡಲಾಗುತ್ತಿದ್ದೆ. ಅಯ್ಯೋ ಎಲ್ಲಿದೆ ಜಾತಿ ಎಂದು ಉಡಾಫೆಯ ದನಿಯಲ್ಲಿ ಮಾತನಾಡುತ್ತಾ ಒಳಗಡೆ ಜಾತಿ ಎನ್ನುವ ರೋಗವನ್ನು ಕಟ್ಟಿಕೊಂಡಿರುವವರನ್ನು ಜಾತ್ಯತೀತರೆಂದು ಬಣ್ಣಿಸಲಾಗುತ್ತದೆ.

ಜಾತಿ ಮತ್ತು ಜಾತೀಯತೆ ಮೊದಲಿನಿಂದಲೂ ಇತ್ತು. ಆದರೆ ಈ ಪಟ್ಟಭದ್ರ ಜಾತಿಯನ್ನು ಯಾರೂ ಪ್ರಶ್ನಿಸದೆ ಇದಕ್ಕೆ ಶರಣಾಗಿ ಒಪ್ಪಿಕೊಂಡಿದ್ದಾಗ ಯಾರಿಗೂ ಜಾತಿ ಕಾಣಿಸುತ್ತಿರಲಿಲ್ಲ. ಜಾತಿಯಿಂದ ನೊಂದವರು ನೋವುಣ್ಣುತ್ತಿರುವವರು ಅದನ್ನು ಪ್ರಶ್ನಿಸಿದ ಕೂಡಲೇ ಜಾತಿ ಕಾಣಿಸತೊಡಗಿದೆ. ಪ್ರಶ್ನಿಸುತ್ತಿರುವವರು ಜಾತಿವಾದಿಗಳಾಗಿ ಕಾಣಿಸತೊಡಗಿದ್ದಾರೆ.

ಜಾತಿ ಎಂದರೆ ಏನು? ಎಲ್ಲಿಂದ ಬಂತು? ಹೇಗೆ ಹುಟ್ಟಿಕೊಂಡಿತು ಎನ್ನುವುದರ ಬಗ್ಗೆ ಹಲವಾರು ವ್ಯಾಖ್ಯಾನಗಳಿವೆ. ಇವುಗಳಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಪಾದಿಸಿದ ಸಿದ್ಧಾಂತ ಮಹತ್ವದ್ದು. ಅವರ ಪ್ರಕಾರ ಜಾತಿ ಎನ್ನುವುದು ತಲೆಮರೆಸಿಕೊಂಡ ವರ್ಗ.

‘ಜಾತಿ ಪ್ರಶ್ನಾತೀತವೂ ಅಲ್ಲ, ದೋಷಾತೀತವೂ ಅಲ್ಲ. ಜಾತಿ ಕೂಡಾ ತನ್ನ ಒಡಲಲ್ಲಿ ವರ್ಗವನ್ನು ಬೆಚ್ಚಗೆ ಕಾಯ್ದುಕೊಂಡು ಬರುತ್ತದೆ.ತನ್ನ ಶ್ರಮ ಮತ್ತು ಪ್ರಯತ್ನದ ಮೂಲಕ ಒಂದು ವರ್ಗದಿಂದ ಮತ್ತೊಂದು ವರ್ಗಕ್ಕೆ ಏರುವ ಮತ್ತು ಇಳಿಯುವ ಸಾಧ್ಯತೆಯನ್ನು ನಿರಾಕರಿಸುವುದೇ ಜಾತಿಯ ಉದ್ದೇಶ ಎಂದು ಅಂಬೇಡ್ಕರ್ ಅಭಿಪ್ರಾಯಪಡುತ್ತಾರೆ.

ಇದರಿಂದಾಗಿ ಒಬ್ಬ ಕ್ಷೌರಿಕ, ನೇಕಾರ,ಕುರುಬ, ಈಡಿಗ ತನ್ನ ಜಾತಿ ಕಸುಬನ್ನು ತೊರೆದು ಬೇರೆ ವೃತ್ತಿ ಮಾಡಿದರೂ ಆತನನ್ನು ಆತ ಹುಟ್ಟಿದ ಜಾತಿಯಿಂದಲೇ ನೋಡಲಾಗುತ್ತದೆ. ಜಾತಿ ಅವನ ಚರ್ಮಕ್ಕೆ ಅಂಟಿರುತ್ತದೆ. ಅದೇ ರೀತಿ ಒಬ್ಬ ಮೇಲ್ಜಾತಿಯವ ಬ್ಯೂಟಿಪಾರ್ಲರ್, ಬಾರ್ ಎಂಡ್ ರೆಸ್ಟೋರೆಂಟ್ ಇಟ್ಟುಕೊಂಡರೂ ಅವರು ಜಾತಿಯ ಶ್ರೇಣಿಯಿಂದ ಕೆಳಗಿಳಿಯುವುದಿಲ್ಲ.

ಜಾತಿ ಎನ್ನವುದು ಒಂದು ರಾಜಕೀಯ ಪಕ್ಷ ಇಲ್ಲವೇ ಯುವಕ ಸಂಘ ಅಲ್ಲ. ಜಾತಿವ್ಯವಸ್ಥೆಯ ಸದಸ್ಯತ್ವ ಮುಕ್ತವಾಗಿಲ್ಲ. ಹುಟ್ಟಿನ ಆಧಾರದಲ್ಲಿ ಜಾತಿಯ ಸದಸ್ಯತ್ವ ನಿರ್ಧಾರವಾಗುತ್ತದೆ. ಅದರ ಸದಸ್ಯರಾದವರು ಅದರಿಂದ ಬಿಡುಗಡೆ ಪಡೆಯುವ ಹಾಗಿಲ್ಲ.

ಜಾತಿಯ ಮುಖ್ಯ ಲಕ್ಷಣವೇ ತಾರತಮ್ಯ. ಪ್ರತಿಯೊಂದು ಜಾತಿಗೂ ಒಂದು ಶ್ರೇಣಿ ಇದೆ. ಈ ಶ್ರೇಣಿಕೃತ ವ್ಯವಸ್ಥೆಯೇ ಜಾತಿ. ಎಲ್ಲರೂ ಎಲ್ಲರನ್ನು ಮುಟ್ಟಲಾಗದ, ಜತೆಯಲ್ಲಿ ಕೂತು ಊಟ ಮಾಡಲಾಗದ ಎಲ್ಲರೂ ಎಲ್ಲ ಉದ್ಯೋಗ ಮಾಡಲಾಗದ, ಎಲ್ಲರೂ ಎಲ್ಲ ಮನೆಯನ್ನು ಪ್ರವೇಶಿಸಲಾಗದ ವ್ಯವಸ್ಥೆಯೇ ಜಾತಿ. ನಿರ್ದಿಷ್ಟ ಜಾತಿಯಲ್ಲಿ ಹುಟ್ಟಿದ ಕಾರಣಕ್ಕೆ ಒಬ್ಬ ಉತ್ತಮನಾಗುತ್ತಾನೆ, ಇನ್ನೊಬ್ಬ ಅಧಮನಾಗುತ್ತಾನೆ. ಹಿಂದಿನ ಕಾಲದಲ್ಲಿ ಜಾತಿ ಎನ್ನುವುದು ಶ್ರೇಣಿಕೃತ ವ್ಯವಸ್ಥೆಗಷ್ಟೇ ಕಾರಣವಾಗಿದ್ದರೆ ಈಗ ಅದು ಸಾರ್ವಜನಿಕ ಮತ್ತು ಖಾಸಗಿ ಸವಲತ್ತುಗಳನ್ನು ಹಂಚುವ ವಿತರಣಾ ವ್ಯವಸ್ಥೆಯಾಗಿದೆ.

ಜಾತಿ ಗಣತಿಯಿಂದ ಜಾತಿ ನಾಶ ಸಾಧ್ಯವೇ?
ಸಂಪೂರ್ಣ ಸಾಧ್ಯ ಇಲ್ಲದೆ ಇದ್ದರೂ ಜಾತಿ ನಾಶದ ಹಾದಿಯಲ್ಲಿ ಇದೊಂದು ಉತ್ತಮ ಪ್ರಯತ್ನ ಎಂದು ಹೇಳಬಹುದು. ಇದೊಂದು ವಿಚಿತ್ರವಾದ ವಾದವೆಂದು ಮೇಲ್ನೋಟಕ್ಕೆ ಅನಿಸಬಹುದು. ಜಾತಿಯ ಎರಡು ಅನಿಷ್ಠ ಲಕ್ಷಣಗಳೆಂದರೆ ಅಸ್ಪೃಶ್ಯತೆ ಮತ್ತು ಅಸಮಾನತೆ. ಅಸ್ಪೃಶ್ಯತೆ ಆಚರಣೆಯನ್ನು ಕಾನೂನಿನ ಮೂಲಕ ನಿಷೇಧಿಸಲಾಗಿದೆ. ಅಂತಿಮವಾಗಿ ಈ ಮಾನವ ವಿರೋಧಿ ನಡವಳಿಕೆ ಕೂಡಾ ಮನುಷ್ಯನ ಮನಪರಿರ್ತನೆಯಿಂದ ಆಗುವಂತಹದ್ದು. ಇಲ್ಲದೆ ಹೋದರೆ ಈಗಿನಂತೆ ಗೋಚರ ಅಸ್ಪೃಶ್ಯತೆ ಕಡಿಮೆಯಾಗಿ, ಅಗೋಚರ ಅ
ಸ್ಪೃಶ್ಯತೆ ಹೆಚ್ಚಾಗುತ್ತದೆ.

ಜಾತಿಯ ಇನ್ನೊಂದು ಅನಿಷ್ಠ ಲಕ್ಷಣವಾದ ಅಸಮಾನತೆಯನ್ನು ಆರ್ಥಿಕ ಸಬಲೀಕರಣದ ಮೂಲಕ ನಿವಾರಿಸಲು ಸಾಧ್ಯ. ಇದರಿಂದ ಜಾತಿ ಸಂಪೂರ್ಣವಾಗಿ ನಾಶವಾಗದೆ ಇದ್ದರೂ ಅದರ ಪರಿಣಾಮ ಮತ್ತು ಪ್ರಭಾವ ಕಡಿಮೆಯಾಗಬಹುದು.

ಉದಾಹರಣೆಗೆ, ಹಳ್ಳಿಯಲ್ಲಿರುವ ಒಬ್ಬ ಸಾಮಾನ್ಯ ದಲಿತ ಮತ್ತು ಐಎ ಎಸ್-ಐಪಿಎಸ್ ದಲಿತನನ್ನು ಒಂದೇ ದೃಷ್ಟಿಕೋನದಲ್ಲಿ ಸಮಾಜ ನೋಡುವುದಿಲ್ಲ.ಐಎಎಸ್-ಐಪಿಎಸ್ ದಲಿತ ಅಧಿಕಾರಿಯನ್ನು ಯಾವುದೇ ಮುಜುಗರ ಇಲ್ಲದೆ ಬ್ರಾಹ್ಮಣರು ಸೇರಿದಂತೆ ಮೇಲ್ಜಾತಿ ಹೆಣ್ಣುಮಕ್ಕಳು ಮದುವೆಯಾಗಿಬಿಡುತ್ತಾರೆ. (ಉದಾಹರಣೆಯ ಅಗತ್ಯ ಇಲ್ಲ ಎಂದೆನಿಸುತ್ತದೆ). ಆದರೆ ಹಳ್ಳಿಯಲ್ಲಿರುವ ಒಬ್ಬ ಬಡ ದಲಿತ ಯುವಕ ಮೇಲ್ಜಾತಿಯ ಯುವತಿಯನ್ನು ಪ್ರೀತಿಸಿ ಮದುವೆಯಾದರೂ ಆತನನ್ನು ಸಾಯಿಸಿಬಿಡುತ್ತಾರೆ. (ಇದಕ್ಕೂ ಉದಾಹರಣೆ ಬೇಡ ಎಂದೆನಿಸುತ್ತದೆ).

ಬಡತನ ಮತ್ತು ಶ್ರೀಮಂತಿಕೆಗೆ ಜಾತಿ ಇಲ್ಲ ಎನ್ನುವುದು ಎಷ್ಟು ನಿಜವೋ, ಶ್ರೀಮಂತಿಕೆ ಮತ್ತು ಬಡತನಕ್ಕೆ ಜಾತಿ ಕೂಡಾ ಕಾರಣ ಎನ್ನುವುದು ಅಷ್ಟೇ ನಿಜ. ಬಿಪಿಎಲ್ ವರ್ಗಕ್ಕೆ ಸೇರಿರುವ ಕುಟುಂಬಗಳ ಸಮೀಕ್ಷೆ ನಡೆಸಿದರೆ ಅವರಲ್ಲಿ ಬಹುಸಂಖ್ಯೆಯಲ್ಲಿ ದಲಿತ,ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರುವ ಕುಟುಂಬಗಳೇ ಹೆಚ್ಚಿರುವುದನ್ನು ಕಾಣಬಹುದು.

ಜಾತಿ ವ್ಯವಸ್ಥೆಯನ್ನು ಯಾರು ನಾಶ ಮಾಡಬೇಕು? ಜಾತಿಯಿಂದಾಗಿ ಅನ್ಯಾಯ, ಅವಮಾನ,ಹಿಂಸೆ, ಉಪವಾಸ ಅನುಭವಿಸಿದವರೋ ಇಲ್ಲವೇ ಜಾತಿಯ ಬಲದಿಂದ ಶ್ರಮ ಇಲ್ಲದ ಆದಾಯ, ಅರ್ಹತೆ ಇಲ್ಲದೆ ಸ್ಥಾನಮಾನ, ಮತ್ತು ಜನಬೆಂಬಲ ಇಲ್ಲದ ಅಧಿಕಾರ ಪಡೆದವರೋ? ಜಾತಿಯನ್ನು ಯಾರಾದರೂ ಅಪರಾಧ ಎಂದು ಪರಿಗಣಿಸುವುದಾದರೆ ಅದನ್ನು ತೊಡೆದುಹಾಕುವ ಪ್ರಯತ್ನವನ್ನುಮೊದಲು ಜಾತಿಯ ಅಪರಾಧಿಗಳು ಮಾಡಬೇಕೇ ಹೊರತು ಜಾತಿ ವ್ಯವಸ್ಥೆಗೆ ಬಲಿಯಾದವರಲ್ಲ.ಜಾತೀಯತೆಗೆ ಬಲಿಯಾದವರು ಜಾತಿ ಬಿಡುತ್ತೇನೆ ಎಂದರೂ ಜಾತಿ ಅವರನ್ನು ಬಿಡುವುದಿಲ್ಲ, ಕಳೆದುಕೊಂಡವರು ತ್ಯಾಗ ಮಾಡಲಿಕ್ಕಾಗುವುದಿಲ್ಲ ಪಡೆದುಕೊಂಡವರು ಮಾಡಬೇಕು.

ಜಾತೀಯತೆ ಅಳಿಯುವುದು ಜಾತಿ ಕುರುಡಿನಿಂದಲ್ಲ, ಕಣ್ತೆರೆದು ಅದಕ್ಕೆ ಮುಖಾಮುಖಿಯಾಗುವ ಮೂಲಕ. ಜಾತಿಯನ್ನು ಕಣ್ಣುಬಿಟ್ಟು, ಭಯಬಿಟ್ಟು ,ಎದೆಗೆ ಕಿವಿಕೊಟ್ಟು ಎದುರಿಸಬೇಕು. ತಿಳಿದುಕೊಳ್ಳಬೇಕು. ಇದನ್ನು ಮಾಡುತ್ತಲೇ ಅದರ ನಾಶಕ್ಕೆ ಪ್ರಯತ್ನ ಮಾಡಬೇಕು.ಜಾತಿ ಎನ್ನುವುದು ಒಂದು ರೋಗ. ರೋಗಕ್ಕೆ ಚಿಕಿತ್ಸೆ ನೀಡಬೇಕಾದರೆ ಮೊದಲು ರೋಗಿ ರೋಗ ಇದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಅದೇ ರೀತಿ ಜಾತಿರೋಗವನ್ನು ಸಮಾಜ ಒಪ್ಪಿಕೊಳ್ಳಬೇಕು. ಮೀಸಲಾತಿ ಎನ್ನುವುದು ಔಷಧಿಯಾದರೆ ಜಾತಿ ಗಣತಿ ಎಂದರೆ ರೋಗ ನಿದಾನ, ಡಯಗ್ನಾಸಿಸ್. ಮೇಲ್ಜಾತಿ ಮನಸ್ಸುಗಳು ಮೇಲರಿಮೆಯ ಶ್ರೇಷ್ಟತೆಯ ವ್ಯಸನದಿಂದ ಮುಕ್ತರಾಗಬೇಕು, ಅದೇ ರೀತಿ ತಳಸಮುದಾಯದ ಮನಸ್ಸುಗಳು ಕೀಳರಿಮೆಯ ದೈನೇಸಿ ಭಾವದಿಂದ ಬಿಡುಗಡೆ ಹೊಂದಬೇಕು.

ಜಾತಿ ಗಣತಿಯಿಂದ ಮೀಸಲಾತಿಯ ಬೇಡಿಕೆ ಹೆಚ್ಚಾಗುವುದೇ?
ಖಂಡಿತ ಹೆಚ್ಚಾಗುವುದಿಲ್ಲ. ಮೀಸಲಾತಿಗೆ ಅರ್ಹವಾದ ಜಾತಿಗಳು ತಿಪ್ಪರಲಾಗ ಹಾಕಿದರೂ ಒಟ್ಟು ಮೀಸಲಾತಿಯ ಪ್ರಮಾಣ ಶೇಕಡಾ 50 ಅನ್ನು ಮೀರಿಲ್ಲ. ಹಾಗೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿಬಿಟ್ಟಿದೆ. ಆದರೆ ಜಾತಿಗಣತಿಯಿಂದ ಮೀಸಲಾತಿಯ ದುರುಪಯೋಗವನ್ನು ತಡೆಯಬಹುದಾಗಿದೆ. ಇದರ ಉದ್ದೇಶ ಮೀಸಲಾತಿಯನ್ನು ವಿಸ್ತರಿಸುವುದಲ್ಲ, ಮೀಸಲಾತಿಯ ದುರುಪಯೋಗವನ್ನು ತಡೆದು ಅದರ ಲಾಭ ಅರ್ಹರಿಗೆ ತಲುಪುವಂತೆ ಮಾಡುವುದು.

ಮೀಸಲಾತಿ ದುರುಪಯೋಗದ ಹಲವಾರು ಪ್ರಕರಣಗಳು ಇತ್ತೀಚೆಗೆ ವ್ಯಾಪಕವಾಗಿ ಚರ್ಚೆಗೀಡಾಗಿವೆ. 2009ರ ಅಕ್ಟೋಬರ್ 27ರಂದು ಹಿಂದಿನ ಬಿಜೆಪಿ ಸರ್ಕಾರ ವೀರಶೈವ/ಲಿಂಗಾಯತ ಉಪಜಾತಿಗಳಾದ ಕುಡುಒಕ್ಕಲ, ಲಾಳಗೊಂಡ, ಹೂಗಾರ, ಆದಿಬಣಜಿಗ, ಬಣಗಾರ, ಗಾಣಿಗ, ನಗರ್ತ, ವೀರಶೈವ ಜಂಗ, ವೀರಶೈವ ಬೇಡುವ ಜಂಗಮ, ಶಿವಚಾರ ನಗರ್ತ, ಆದಿವೀರಶೈವ, ವೀರಶೈವ ಪಂಚಮಸಾಲಿ, ಕುರುಹಿನಶೆಟ್ಟಿ/ನೇಕಾರ/ಜಾಡ, ವೀರಶೈವ ಸಿಂಪಿ, ರೆಡ್ಡಿ ,ಸಾದರ, ಆರಾಧ್ಯ, ಗುರುವ/ಗುರವ ಈ 19 ಉಪಜಾತಿಗಳನ್ನು ಪ್ರವರ್ಗ -3 (ಬಿ) ಪಟ್ಟಿಗೆ ಸೇರಿಸಿತು.

3(ಬಿ)ಯಲ್ಲಿ ಕ್ರಿಶ್ಚಿಯನ್, ಜೈನ (ದಿಗಂಬರ), ಮರಾಠ ಜಾತಿಗಳಲ್ಲದೆ ಲಿಂಗಾಯತ ಉಪಜಾತಿಗಳಾದ ಹೆಳವ, ಅಂಬಿಗ,ಬೋಯಿ, ಗಂಗಾಮತ, ಸುಣಗಾರ, ಅಗಸ, ಮಡಿವಾಳ, ಕುಂಬಾರ,ಕುರುಬ, ಭಜಂತ್ರಿ, ಭಂಡಾರಿ, ಹಡಪದ,ನಾಯಿಂದ, ಅಕ್ಕಸಾಲಿ, ಬಡಿಗೇರ, ಕಮ್ಮಾರ, ಪಾಂಚಾಳ, ಮೇದಾರ,ಉಪ್ಪಾರ, ಗೌಳಿ ಮೊದಲಾದ ಜಾತಿಗಳಿವೆ. ಇದಕ್ಕೆ ವಿರೋಧ ವ್ಯಕ್ತವಾದ ಕಾರಣ ಯಾವುದೇ ಕಾರಣವನ್ನು ನೀಡದೆ ಸರ್ಕಾರ ತನ್ನ ಆದೇಶವನ್ನು ಹಿಂದಕ್ಕೆ ಪಡೆಯಿತು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿರುವ ‘ಬುಡ್ಗಜಂಗಮ’ ಎಂಬ ಅಲೆಮಾರಿ ಜಾತಿಯ ಹೆಸರಿನಲ್ಲಿ ‘ಬೇಡುವ ಜಂಗಮ’ರು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ.

ರಾಜ್ಯದಲ್ಲಿ ಈಗಿರುವ ಮೀಸಲಾತಿ ನೀತಿ ಪ್ರಕಾರ ಹಿಂದುಳಿದ ಜಾತಿಗಳಿಗೆ ಶೇಕಡಾ 32ರಷ್ಟು ಮೀಸಲಾತಿ ಇದೆ. ಈ ಹಿಂದುಳಿದ ಜಾತಿಗಳಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಉಪಜಾತಿಗಳೂ ಇವೆ ಎನ್ನುವುದು ಗಮನಾರ್ಹ. ಹಿಂದೂಗಳಲ್ಲಿರುವ ಅನೇಕ ಜಾತಿಗಳು ಲಿಂಗಾಯತ ಉಪಜಾತಿಗಳಲ್ಲಿವೆ. ಆದರೆ ಲಿಂಗಾಯತರಲ್ಲಿರುವ ಈ ಹಿಂದುಳಿದ ಉಪಜಾತಿಗಳಿಗೆ ಹಿಂದೂಗಳಲ್ಲಿರುವ ಉಪಜಾತಿಗಳಿಗೆ ಇರುವ ಪ್ರಮಾಣದ ಮೀಸಲಾತಿ ಇಲ್ಲ.

ಪ್ರವರ್ಗ 2(ಎ)ಯಲ್ಲಿ ಹಿಂದೂ ಧರ್ಮಕ್ಕೆ ಸೇರಿರುವ 103 ಉಪಜಾತಿಗಳಿಗೆ ಶೇಕಡಾ 15ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಆದರೆ ಲಿಂಗಾಯತರಲ್ಲಿರುವ ಇದೇ ಜಾತಿಗಳಿಗೆ ಪ್ರವರ್ಗ 3(ಬಿ)ಯಲ್ಲಿ ಶೇಕಡಾ ಐದರಷ್ಟು ಮೀಸಲಾತಿ ಮಾತ್ರ ಇದೆ. ಜಾತಿ ಗಣತಿನಡೆಯಬೇಕಾಗಿರುವುದು ಮೀಸಲಾತಿ ಹೆಚ್ಚಳಕ್ಕಲ್ಲ, ಅದರ ದುರುಪಯೋಗವನ್ನು ತಡೆಯಲು ಎನ್ನುವುದು ಗಮನಾರ್ಹ.

ಜಾತಿ ಗಣತಿ ಕೋಮುವಾದಿಗಳಿಗೆ ನೆರವಾಗಬಹುದೇ?
ಜಾತಿ ಗಣತಿ ಎನ್ನುವುದು ಆರ್ ಎಸ್ ಎಸ್‍ ನ ಹಿಂದೂ ರಾಷ್ಟ್ರ ಸ್ಥಾಪನೆಯ ಪ್ರಯತ್ನಕ್ಕೆ ನೆರವಾಗಬಹುದು ಎಂದು ಕೆಲವರು ಕಳವಳ ವ್ಯಕ್ತಪಡಿಸುತ್ತಾರೆ. ನಮ್ಮ ತಥಾಕಥಿತ ಹಿಂದೂ ರಾಷ್ಟ್ರವಾದಿಗಳು ಜಾತಿಯ ಪ್ರಶ್ನೆ ಎದುರಾದಾಗ ಓಡಿಹೋಗುತ್ತಾರೆ. ಯಾಕೆಂದರೆ ಜಾತಿಯ ಜತೆ ಎದುರಾಗುವ ಅಸ್ಪೃಶ್ಯತೆ, ಅಸಮಾನತೆ, ಪಂಕ್ತಿಭೇದ, ಮೂಡನಂಬಿಕೆ, ಕಂದಾಚಾರಗಳ ಪ್ರಶ್ನೆಗಳಿಗೆ ಅವರಲ್ಲಿ ಉತ್ತರ ಇಲ್ಲ. ಇದಕ್ಕಾಗಿ ಅವರು ಜಾತಿಯ ಹುಣ್ಣನ್ನು ಒಳಗೆ ಕೊಳೆಯಲು ಬಿಟ್ಟು ಮೇಲೆ ಧರ್ಮದ ಮುಲಾಮು ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಜಾತಿ ಗಣತಿ ನಡೆದರೆ ಈ ಹಿಂದೂಗಳಲ್ಲಿ ಕಳೆದುಕೊಂಡವರು ಯಾರು? ಪಡೆದುಕೊಂಡವರು ಯಾರು? ಎಂಬ ಲೆಕ್ಕ ಸಿಕ್ಕಿದರೆ ಬಯಲಾಗುವುದು ಯಾರ ಮುಖಗಳು ಎನ್ನುವುದನ್ನು ಬಿಡಿಸಿ ಹೇಳಬೇಕೇ?

ಜಾತಿ ಗಣತಿಯಿಂದ ಏನು ಲಾಭ?
ಈಗಾಗಲೇ ಹೇಳಿದ ಹಾಗೆ ಸರ್ಕಾರಿ ಸೌಲಭ್ಯಗಳ ಸದ್ಬಳಕೆ ಮತ್ತು ಮೀಸಲಾತಿ ದುರುಪಯೋಗ ತಡೆಯುವ ಜತೆಗೆ ಈಗಿನ ಸರ್ಕಾರಿ ಮೀಸಲಾತಿಗಿಂತ ಆಚೆಗೆ ನೋಡಲು ಈ ಜಾತಿ ಗಣತಿ ನೆರವಾಗಬಹುದು. ಜಾತಿ ಗಣತಿ ನಡೆದರೆ ಪ್ರತಿಯೊಬ್ಬರ ಉದ್ಯೋಗದ ವಿವರ ಕೂಡಾ ಲಭ್ಯ ಇರುವುದರಿಂದ ಖಾಸಗಿ ಕ್ಷೇತ್ರಗಳಲ್ಲಿರುವ ಉದ್ಯೋಗಿಗಳ ಜಾತಿ-ಧರ್ಮದ ಬಹುಮುಖ್ಯ ಮಾಹಿತಿ ಲಭ್ಯವಾಗುತ್ತದೆ. ಇಲ್ಲಿಯ ವರೆಗೆ ಖಾಸಗಿ ಕಂಪೆನಿಗಳು ಈ ಮಾಹಿತಿಯನ್ನು ಒದಗಿಸಲು ನಿರಾಕರಿಸುತ್ತಾ ಬಂದಿವೆ.

ಸರ್ಕಾರ ಬಹುತೇಕ ತನ್ನ ಸೇವೆಗಳನ್ನು ಖಾಸಗಿಕರಣಗೊಳಿಸಿರುವುದರಿಂದ ಸರ್ಕಾರಿ ಉದ್ಯೋಗಗಳ ಸಂಖ್ಯೆ ಕ್ಷೀಣಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ಮೀಸಲಾತಿಯನ್ನು ಖಾಸಗಿ ಕ್ಷೇತ್ರಕ್ಕೆ ವಿಸ್ತರಿಸದೆ ನಿರುದ್ಯೋಗ ನಿವಾರಣೆ, ಉದ್ಯೋಗದ ಸಮಾನ ಅವಕಾಶ ಸಾಧ್ಯ ಇಲ್ಲ.

ಖಾಸಗಿ ಎನ್ನುವುದು ಎಷ್ಟು ಖಾಸಗಿ ಎನ್ನುವ ಪ್ರಶ್ನೆಯನ್ನು ಕೂಡಾ ನಾವು ಕೇಳಬೇಕಾಗಿದೆ. ಸರ್ಕಾರ ನೀಡುವ ಅಗ್ಗದ ದರದಲ್ಲಿ ಭೂಮಿ, ಕಡಿಮೆ ಬಡ್ಡಿದರದಲ್ಲಿ ಸಾಲ, ಟ್ಯಾಕ್ಸ್ ಹಾಲಿಡೇ, ವಿದ್ಯುತ್, ನೀರು, ತೆರಿಗೆ ವಿನಾಯಿತಿ, ಸಬ್ಸಿಡಿ ಬೆಂಬಲ ಇಲ್ಲದೆ ಖಾಸಗಿ ಕ್ಷೇತ್ರದ ಬಂಡವಾಳ ಬೆಳೆಯಲು ಸಾಧ್ಯವೇ ಇಲ್ಲ.
ಈ ಖಾಸಗಿ ಕಂಪೆನಿಗಳಲ್ಲಿ ಷೇರುಗಳಲ್ಲಿ ತಮ್ಮ ಅಲ್ಪ ಉಳಿತಾಯವನ್ನು ಹೂಡುತ್ತಿರುವವರು ಸಾಮಾನ್ಯ ಜನರು. ಹರ್ಷದ್ ಮೆಹ್ತಾನ ವಂಚನೆಯಿಂದ, ಸತ್ಯ ಕಂಪ್ಯೂಟರ್ ನ ಮೋಸಕ್ಕೆ ಬಲಿಯಾದವರು ಅದರ ಷೇರುಗಳನ್ನು ಖರೀದಿಸಿದ್ದ ಸಾಮಾನ್ಯ ಜನ.

ಭಾರತದಲ್ಲಿ ಮೀಸಲಾತಿ ಸರ್ಕಾರಿ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದರೆ ಅನೇಕ ದೇಶಗಳಲ್ಲಿ ಉದಾಹರಣೆಗೆ ಅಮೆರಿಕಾ, ಉತ್ತರ ಐರ್ಲಾಂಡ್, ದಕ್ಷಿಣ ಆಫ್ರಿಕಾ, ಮಲೇಷಿಯಾ ಮೊದಲಾದ ದೇಶಗಳಲ್ಲಿ ಮೀಸಲಾತಿಯಂತಹ ದೃಡ ಸಂಕಲ್ಪ (Affirmative Action) ನೀತಿಗಳು ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಜಾರಿಯಲ್ಲಿವೆ.

ಸರ್ಕಾರದ ವಿವಿಧ ಸವಲತ್ತುಗಳನ್ನು ಅನುಭವಿಸುವ ಸಾರ್ವಜನಿಕ ಹಣಕಾಸು ಸಂಸ್ಥೆಗಳಿಂದ ಸಾಲಪಡೆಯುವ ಎಲ್ಲ ಕೈಗಾರಿಕೆಗಳು, ವಸತಿ, ಶಿಕ್ಷಣ, ರಾಜಕೀಯ ಪಕ್ಷಗಳು ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲಿ Affirmative Action ಜಾರಿಯಲ್ಲಿದೆ. ಇದು ಕೇವಲ ಔಪಚಾರಿಕ ಮಟ್ಟದಲ್ಲಿ ಉಳಿಯದೆ ಇವುಗಳ ಚಾಲನೆ ಮತ್ತು ಕಾರ್ಯಗತಕ್ಕೆ ಸಂಬಂದಪಟ್ಟ ಕಾನೂನುಗಳು ಮತ್ತು ಸಂಸ್ಥೆಗಳಿರುವುದನ್ನು ಕಾಣಬಹುದು.
ಅಮೆರಿಕಾದಲ್ಲಿ Equal Opportunity (employment) Laws , Equal Employment Opportunity Commission, ದಕ್ಷಿಣ ಆಫ್ರಿಕಾದಲ್ಲಿ The Promotion of Equality and Prevention of Unfair Discrimination Act 2000 ನೆದರ್ ಲ್ಯಾಂಡಿನಲ್ಲಿ ‍‍‍Fair Employment Act ಗಳಿವೆ.

ಜಾತಿ ಸಮೀಕ್ಷೆಯಿಂದ ಮೇಲ್ಜಾತಿಯವರಿಗೆ ಏನು ಲಾಭ?
ಮೊದಲನೆಯದಾಗಿ ಈಗ ನಡೆಯುತ್ತಿರುವ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಬಳಕೆಯಲ್ಲಿ ಜಾತಿ ಗಣತಿ ಎಂದು ಹೇಳಿದರೂ ಇದಕ್ಕೆ ಅಷ್ಟು ಸೀಮಿತವಾದ ಅರ್ಥ ಇಲ್ಲ. ಇದು ರಾಜ್ಯದಲ್ಲಿರುವ ಒಟ್ಟು ಜನಸಂಖ್ಯೆಯ, ಎಲ್ಲ ಜಾತಿ-ಧರ್ಮಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ.
ಸಾಮಾನ್ಯವಾಗಿ ಮೀಸಲಾತಿಯ ಬಗ್ಗೆ ಚರ್ಚೆ ನಡೆದಾಗೆಲ್ಲ ಮೇಲ್ಜಾತಿಯವರಲ್ಲಿ ಬಡವರಿಲ್ಲವೇ ಎಂಬ ಪ್ರಶ್ನೆ ತೂರಿ ಬರುತ್ತದೆ. ಈ ಪ್ರಶ್ನೆ ಬಹಳ ಪ್ರಸ್ತುತವಾದುದು ಕೂಡಾ. ಖಂಡಿತ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರಲ್ಲಿ ಮಾತ್ರವಲ್ಲ, ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರಲ್ಲಿಯೂ ಬಡವರಿದ್ದಾರೆ. ಆದರೆ ಈ ಬಗ್ಗೆ ಸರ್ಕಾರದಲ್ಲಿ ಯಾವ ಮಾಹಿತಿಯೂ ಇಲ್ಲ.

ಈಗಿನ ಆರ್ಥಿಕ-ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಂಡಾಗ ದಲಿತ-ಹಿಂದುಳಿದ-ಅಲ್ಪಸಂಖ್ಯಾತರಲ್ಲಿರುವ ಬಡವರ ಸಂಖ್ಯೆ ಮಾತ್ರವಲ್ಲ, ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರಲ್ಲಿನ ಬಡವರ ಸಂಖ್ಯೆ ಮತ್ತು ಅವರ ಸ್ಥಿತಿಗತಿಯ ಮಾಹಿತಿ ಲಭ್ಯವಾಗುತ್ತದೆ. ಅದರ ಆಧಾರದಲ್ಲಿ ಮೇಲ್ಜಾತಿಗಳಲ್ಲಿರುವ ಬಡವರ ಅಭಿವೃದ್ಧಿಗಾಗಿಯೂ ಕಾರ್ಯಕ್ರಮಗಳನ್ನು ರೂಪಿಸುವಂತೆ ಒತ್ತಡ ಹೇರಲು ಸಾಧ್ಯವಿದೆ.