Category Archives: ಆರ್ಥಿಕ

ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಬಾಡಿಗೆ ಮನೆ ಖಾಲಿ ಇದೆ, ಆದರೆ ಅದು ‘ಎಲ್ಲರಿಗಲ್ಲ’!!

– ಜೀವಿ.

ಮನೆ ಖಾಲಿ ಇದೆ ಎಂಬ ಬೋರ್ಡ್ ಬೀದಿ ಬೀದಿಗಳಲ್ಲಿ ನೇತಾಡುತ್ತಿವೆ. ಆದರೆ ಆದರಲ್ಲಿ ಬಹುತೇಕ ಮನೆಗಳಲ್ಲಿ ವಾಸಿಸಲು ದಲಿತರು ಅನರ್ಹರು!

ಹೌದು, ಇದು ಕಟುಸತ್ಯ. ಆದರೆ ಸುಳ್ಳು, ಈ ಪರಿಸ್ಥಿತಿ ಈಗ ಇಲ್ಲ ಎಂದು ವಾದಿಸುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ನಾನೊಬ್ಬ ದಲಿತ ಎಂದು ಹೇಳಿಕೊಂಡು ಬಾಡಿಗೆ ಮನೆ ಪಡೆಯದು ಎಷ್ಟು ಕಷ್ಟ ಎಂಬುದು ಅನುಭವಿಸಿದವರಿಗೇ ಗೊತ್ತು. ’ಎಷ್ಟೇ ಒಳ್ಳೆಯವರಾದರೂ ಹೊಲೆ-ಮಾದಿಗರಿಗೆ ಮನೆ ಕೊಡುವುದಿಲ್ಲ’ ಎಂದು ಕಡ್ಡಿ ತುಂಡಾದಂತೆ ಮಾಲೀಕರು ಹೇಳಿದಾಗ ಕಣ್ಣಲ್ಲಿ ನೀರು ತುಂಬಿಕೊಂಡರೂ, ಅವರಿಗೆ ಗೊತ್ತಾಗದಂತೆ ತಲೆ ತಗ್ಗಿಸಿ ವಾಪಸ್ ಬರದೆ ಬೇರೆ ದಾರಿ ಇಲ್ಲ.

ಸ್ವತಃ ನಾನು ಕಂಡು ಅನುಭವಿಸಿದ ಉದಾಹರಣೆ ಇಲ್ಲಿದೆ. ನಾನಾಗ ದ್ವಿತೀಯ ವರ್ಷದ ಪದವಿ ಓದುತ್ತಿದ್ದೆ. ಹಾಸ್ಟೆಲ್‌ನಲ್ಲಿ ಹಾಸ್ಟೆಲ್ ಜೀವನದ ಏಳನೇ ವರ್ಷ. ನನ್ನ ಭಾವ ಸರ್ಕಾರಿ ಕಾಲೇಜಿನಲ್ಲಿ ಅಟೆಂಡರ್ ಆಗಿದ್ದಾರೆ. ಅಕ್ಕ ಮತ್ತು ಮೂರು ಮಕ್ಕಳು ಸೇರಿ ಐದು ಮಂದಿಯ ಕುಟುಂಬ. ರಿಂಗ್ ರಸ್ತೆ ಬಳಿಯ ಮನೆಯೊಂದರಲ್ಲಿ ಬಾಡಿಗೆ ಮನೆಯಲ್ಲಿದ್ದರು. ಆ ಮನೆಯ ಮಾಲೀಕರು OLYMPUS DIGITAL CAMERAಕೂಡ ದಲಿತರೇ ಆಗಿದ್ದರು. ಅಡುಗೆ ಮನೆ, ಬಚ್ಚಲು ಮತ್ತು ಟಾಯ್ಲೆಟ್ ಅಟ್ಯಾಚ್ ಇರುವ ಹಾಗು ಒಂದು ಬೆಡ್ ರೂಮ್ ಕೂಡ ಇರದ ಸಣ್ಣ ಮನೆ. ಮೂರ‌್ನಾಲ್ಕು ವರ್ಷದ ಅದೇ ಮನೆಯಲ್ಲಿ ಜೀವನ ಸಾಗಿತ್ತು. ಬಾಡಿಗೆ ಹೆಚ್ಚಳದ ವಿಚಾರಕ್ಕೆ ಮಾಲೀಕರ ನಡುವೆ ಸಣ್ಣದೊಂದು ಮನಸ್ತಾಪ ಏರ್ಪಟ್ಟಿತ್ತು.

ಹೆಚ್ಚು ಕಡಿಮೆ ನಾಲ್ಕು ವರ್ಷ ಆಗಿದ್ದರಿಂದ ಬೇರೆ ಮನೆ ಹುಡುಕುವ ಆಲೋಚನೆಯನ್ನು ಭಾವ ಮಾಡಿದ್ದರು. ಹುಡುಕಾಟ ಮುಂದುವರೆದಿತ್ತು, ಎಷ್ಟೋ ದಿನಗಳ ನಂತರ ಭಾವನ ಸ್ನೇಹಿತರೊಬ್ಬರು ಪಕ್ಕದ ಬಡಾವಣೆಯಲ್ಲಿ ಮನೆಯೊಂದನ್ನು ಹುಡುಕಿಕೊಟ್ಟರು. ನಾಲ್ಕು ಮನೆಗಳು ಸಾಲಾಗಿರುವ ಹೆಂಚಿನ ಮನೆ, ಅದರಲ್ಲಿ ಒಂದು ಮಾತ್ರ ಖಾಲಿ ಇತ್ತು. ಉಳಿದ ಮೂರು ಮನೆ ಭರ್ತಿಯಾಗಿದ್ದವು. ಒಂದರಲ್ಲಿ ಮನೆ ಮಾಲೀಕರು ಕೂಡ ವಾಸವಿದ್ದರು.

ಅಕ್ಕಳನ್ನು ಕರೆದೊಯ್ದು ಮನೆ ನೋಡಿಕೊಂಡ ಬಂದ ಭಾವ, ಒಪ್ಪಂದದ ಮಾತುಕತೆಗೆ ತಮ್ಮ ಸ್ನೇಹಿತನೊಂದಿಗೆ ತೆರಳಿದರು.
’ಜಾತಿ ವಿಚಾರ ಹೇಳಿದ್ದೀಯ’ ಎಂದು ಭಾವ ತನ್ನ ಸ್ನೇಹಿತನ ಕಿವಿಯಲ್ಲಿ ಕೇಳಿದರು. ’ಓನರ್ ತುಂಬಾ ಒಳ್ಳೆಯವರು ನನಗೆ ಸಾಕಷ್ಟು ವರ್ಷದಿಂದ ಗೊತ್ತಿರುವವವರು. ಜಾತಿಬೇಧ ಮಾಡುವ ಜನ ಅಲ್ಲ ನೀನು ಸುಮ್ಮನಿರು’ ಎಂದು ಭಾವನ ಸ್ನೇಹಿತ ಹೇಳಿದವರೇ ಮಾಸಿಕ ಬಾಡಿಗೆ ಫಿಕ್ಸ್ ಮಾಡಿಸಿ ಅಡ್ವಾನ್ಸ್ ಕೊಡಿಸಿದರು.

ನಂತರದ ಭಾನುವಾರ ಮನೆ ಶಿಫ್ಟ್ ಮಾಡುವ ದಿನ ನಿಗದಿಯಾಯಿತು. ಎರಡು ದಿನ ಮುನ್ನವೇ ಗಂಟು ಮೂಟೆ ಕಟ್ಟುವ ಕೆಲಸದಲ್ಲಿ ಅಕ್ಕ ನಿರತಳಾಗಿದ್ದಳು. ಭಾನುವಾರ ಬಂದೇ ಬಿಟ್ಟಿತು, ನಾನು ಕೂಡ ಮೂವರು ಸ್ನೇಹಿತರೊಂದಿಗೆ ಹೋಗಿದ್ದೆ.
ಸಾಮಾನು-ಸರಂಜಾಮುಗಳನ್ನು ಮೂಟೆ ಕಟ್ಟಿ ಗಾಡಿಯೊಂದರಲ್ಲಿ ತುಂಬಿಕೊಂಡು ಹೊಸ ಮನೆ ತಲುಪಿದೆವು. ಅಕ್ಕ ಸಡಗರದಿಂದ ಹೊಸ ಮನೆಯಲ್ಲಿ ಹಾಲು ಉಕ್ಕಿಸುವ ಪೂಜೆ ಮಾಡಲು ಸಜ್ಜಾದಳು. ನಾಲ್ಕು ಮನೆಗೆ ಒಂದೇ ಸಂಪಿನಿಂದ(ಟ್ಯಾಂಕ್) ನೀರು ಪಡೆಯಬೇಕಿತ್ತು. ನೀರು ತಂದು ಮನೆ ತೊಳೆದು, ಸಿಂಗಾರ ಮಾಡುವ ಕೆಲಸದಲ್ಲಿ ಅಕ್ಕ ಮತ್ತು ನಾನು ನಿರತರಾದೆವು.
ನೀರು ತರಲು ಹೋದ ಸಂದರ್ಭದಲ್ಲೇ ಅಕ್ಕನಿಗೆ ಪಕ್ಕದ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಮಹಿಳೆ ಪರಿಚ ಮಾಡಿಕೊಂಡರು. ’ಇದಕ್ಕೂ ಮೊದಲು ಎಲ್ಲಿ ವಾಸಿವಿದ್ದಿರಿ?, ನಿಮ್ಮ ಎಜಮಾನ್ರು ಕೆಲಸ ಏನು? ಎಂದು ಪ್ರಶ್ನೆ ಮಾಡಿದ ಆ ಮಹಿಳೆ, ಕೊನೆಯದಾಗಿ ಜಾತಿ ಕೇಳುವುದನ್ನು ಮರೆಯಲಿಲ್ಲ. ಎಲ್ಲವನ್ನು ನೇರವಾಗಿ ಉತ್ತರಿಸಿದ ಅಕ್ಕ, ಜಾತಿ ವಿಷಯ ಬಂದಾಗ ಕೊಂಚ ಮುಜುಗರದಿಂದ ಸಣ್ಣ ಧ್ವನಿಯಲ್ಲಿ ’ಎಸ್ಸಿ’ ಎಂದು ಉತ್ತರ ಕೊಟ್ಟಳು.

ಮನೆಯೊಳಗೆ ಬಂದೊಡನೆ ಭಾವನ ಬಳಿ ವಿಷಯ ಹೇಳಿದಳು. ’ನೀನೇನು ಸುಳ್ಳು ಹೇಳಿಲ್ಲ ತಾನೇ, ಒಂದು ಬಾರಿ ಜಾತಿ ಸುಳ್ಳು ಹೇಳಿದರೆ, ಅದನ್ನು ಮರೆಮಾಚಲು ನೂರು ಸುಳ್ಳು ಹೇಳಬೇಕಾಗುತ್ತದೆ’ ಎಂದು ಭಾವ ಎಚ್ಚರಿಸಿದರು. ಅದಕ್ಕೆ ಅಕ್ಕ, ಇಲ್ಲ ನಾನು ನಿಜ ಹೇಳಿದ್ದೀನಿ ಎಂದಳು.

ಅಕ್ಕ ಸ್ಟವ್ ಹಚ್ಚಿ, ಹಾಲು ಉಕ್ಕಿಸಿ ಸಕ್ಕರೆ ಬೆರೆಸಿ ಎಲ್ಲರಿಗು ಕೊಟ್ಟಳು. ಹಾಲು ಕುಡಿದ ನಂತರ ವಸ್ತುಗಳನ್ನು ಜೋಡಿಸಲು ನಾನು ಮrentತ್ತು ನನ್ನ ಸ್ನೇಹಿತರು ತಯಾರಾದೆವು. ಅಷ್ಟರಲ್ಲಿ ಮನೆಯ ಮಾಲೀಕರ ಪತ್ನಿ ಒಳ ಬಂದಳು.

ಸ್ವಲ್ಪ ತಡಿಯಪ್ಪ, ಚೀಲಗಳನ್ನು ಬಿಚ್ಚಬೇಡ ಎಂದು ಆಜ್ಞೆ ಮಾಡಿದರು. ನಾನು ಭಾವನ ಮುಖ ನೋಡಿದೆ. ’ಯಾಕೆ ಮೇಡಂ, ಏನಾಯ್ತು’ ಎಂದು ಭಾವ ಗೌರವದಿಂದಲೇ ಪ್ರಶ್ನೆ ಮಾಡಿದರು. ಅದಕ್ಕೆ ದರ್ಪದಿಂದ ಉತ್ತರ ನೀಡಿದ ಮನೆಯ ಮಾಲೀಕನ ಪತ್ನಿ, ’ನಿಮಗೆ ಈ ಮನೆ ಕೊಡಲ್ಲ, ಬೇರೆ ಮನೆ ನೋಡ್ಕೊಳ್ಳಿ, ನೀವು ಹೊಲೆರಂತೆ’ ಎಂದು ಮರು ಪ್ರಶ್ನೆ ಮಾಡಿದರು.
ಹೌದು, ಎಂದು ಉತ್ತರ ನೀಡಿ ಸಮಾಜಾಯಿಷಿ ನೀಡಲು ಭಾವ ಪ್ರಯತ್ನ ಮಾಡಿದರು. ಅದಕ್ಕೆ ಅವಕಾಶ ನೀಡದ ಆಕೆ ’ಅಲ್ಲರಿ ಮನೆ ಬಾಡಿಗೆಗೆ ಪಡೆಯುವ ಮುನ್ನ ಜಾತಿ ವಿಷಯ ಹೇಳಬೇಕು ಅಂತ ಗೊತ್ತಾಗಲ್ವ?, ಸುಳ್ಳು ಹೇಳಿಕೊಂಡು ಮನೆ ಸೇರಿಕೊಳ್ತೀರಲ್ಲ, ನಾಚಿಕೆ ಆಗಲ್ವಾ? ಎಂದು ಗಧರಿಸಿದರು. ಮಾಡಬಾರದ ಅಪರಾಧ ಮಾಡಿಬಿಟ್ಟಿದ್ದೇವೆ ಎಂಬಂತೆ ಬಾಯಿಗೆ ಬಂದಂತೆ ನಿಂದಿಸಿಬಿಟ್ಟಳು.

ಮನೆ ಮಾಲೀಕನ ಪತ್ನಿಯ ಈ ಆಕ್ರೋಶದಿಂದ ತತ್ತಿಸಿಸಿ ಹೋದ ಭಾವ ಅಪರಾಧಿಯಂತೆ ತಲೆ ತಗ್ಗಿಸಿದರು. ಅಕ್ಕನ ಕಣ್ಣಲ್ಲಿ ಅದಾಗಲೇ ನೀರು ಧಾರಾಕಾರವಾಗಿ ಹರಿದಿತ್ತು.
’ಮೊದಲೇ ಜಾತಿ ವಿಷಯ ಹೇಳಬೇಕು ತಾನೇ? ಈಗ ಕಣ್ಣೀರು ಹಾಕಿದರೆ ಪ್ರಯೋಜನವಿಲ್ಲ. ಬೇರೆ ಮನೆ ನೋಡಿಕೊಳ್ಳಿ, ಇಲ್ಲಿ ಜಾಗ ಇಲ್ಲ’ ಎಂದು ಮುಲಾಜಿಲ್ಲದೆ ಹೇಳಿ ಹೋದಳು. ಅಕ್ಕ ಬಿಕ್ಕಿ-ಬಿಕ್ಕಿ ಅಳಲಾರಂಭಿಸಿದಳು, ಆಗ ತಾನೆ ಹಾಲು ಕುಡಿದು ನಿಂತಿದ್ದ ನಾನು ಹಾಗು ನನ್ನ ಸ್ನೇಹಿತರ ಕಣ್ಣುಗಳಲ್ಲೂ ನೀರು ತುಂಬಿಕೊಂಡವು.

ಮುಂದೆ ಏನು ಮಾಡಬೇಕು ಎಂಬುದು ಗೊತ್ತಾಗಲಿಲ್ಲ. ಅಷ್ಟೆರಲ್ಲಿ ಆ ಮಹಿಳೆ ಮತ್ತೆ ಬಂದವಳೆ ಅಡ್ವಾನ್ಸ್ ಹಣ ವಾಪಸ್ ಕೊಟ್ಟಳು. ’ಮೇಡಂ ಯಜಮಾನ್ರು ಮನೆಲಿ ಇಲ್ವಾ’ ಎಂದು ಭಾವ ಕೇಳಿದರು, ’ಇದ್ದಾರೆ ಅವರೇ ಅಡ್ವಾನ್ಸ್ ವಾಪಸ್ ಕೊಟ್ಟಿರೊದು. ಅವರಿಗೆ ಹೇಳಲು ಮುಜುಗರವಂತೆ, ಅದಕ್ಕೆ ನಾನೇ ಹೇಳ್ತಿದ್ದೀನಿ. ಅವರ ಒಪ್ಪಿದರೂ, ನಾನು ಒಪ್ಪುವುದಿಲ್ಲ. ನಾಲ್ಕು ಮನೆಗೆ ಕುಡಿಯುವ ನೀರಿಗೆ ಒಂದೇ ಒಂದು ಟ್ಯಾಂಕ್ ಇದೆ. ನಿಮ್ಮ ಮನೆ ಬಿಂದಿಗೆ ಹಾಕಿ ನೀರು ಮಗೆದುಕೊಂಡ ಟ್ಯಾಂಕ್‌ನಲ್ಲೇ ನಾವೂ ನೀರು ತಗೊಳೊಕೆ ಆಗುತ್ತಾ?’ ಎಂದು ಪ್ರಶ್ನೆ ಮಾಡಿದರು. ಬಾಡಿಗೆ ಇರುವವರು ಕೂಡ ಒಪ್ಪುವುದಿಲ್ಲ. ಈಗಲೇ ಖಾಲಿ ಮಾಡಿ ಎಂದುಬಿಟ್ಟಳು.’ ಇದರಿಂದಾಗಿ ಮನೆಯ ಮಾಲೀಕರೊಂದಿಗೆ ಮಾತನಾಡಬಹುದು ಎಂದುಕೊಂಡಿದ್ದ ಭಾವನ ಭರವಸೆ ಇಂಗಿ ಹೋಯಿತು. ’ಒಂದು ವಾರ ಕಾಲಾವಕಾಶ ಕೊಡಿ ಬೇರೆ ಮನೆ ನೋಡಿಕೊಳ್ಳುತ್ತೇವೆ’ ಎಂದು ಭಾವ ಅಂಗಲಾಚಿದರು. ಆದಕ್ಕೂ ಸಮ್ಮತಿಸದ ಮಹಿಳೆ, ’ಈಗಲೇ ಜಾಗ ಖಾಲಿ ಮಾಡಬೇಕು’ ಎಂದು ಆಜ್ಞೆ ಮಾಡಿಬಿಟ್ಟಳು.

ಅಕ್ಕ ಜೋರಾಗಿಯೇ ಅಳುವುದಕ್ಕೆ ಶುರು ಮಾಡಿದಳು. ಅಳು ಬಂದರೂ ನುಂಗಿಕೊಂಡ ಭಾವ ಮತ್ತು ನಾನು ಸಮಾಧಾನಪಡಿಸಿದೆವು. ಈಗ ಖಾಲಿ ಮಾಡಿಕೊಂಡು ಬಂದಿರುವ ಮನೆಗೆ ಮತ್ತೆ ವಾಪಸ್ ಹೋಗುವುದು ಅಸಾಧ್ಯದ ಮಾತು. ಮುಂದೇನು ಮಾಡಬೇಕು ಎಂಬುದು ತಿಳಿಯಲಿಲ್ಲ. ಓನರ್ ತುಂಬಾ ಒಳ್ಳೆಯವರು ಎಂದು ಹೇಳಿದ್ದ ಸ್ನೇಹಿತನನ್ನು ನೆನೆದು ಭಾವ ಶಪಿಸಿದರು.

ಆ ತನಕ ಸುಮ್ಮನಿದ್ದ ನನ್ನ ಸ್ನೇಹಿತರು, ’ಅಕ್ಕ ಅಳೋದು ನಿಲ್ಲಿಸಿ, ಬೇರೆ ಮನೆ ಹುಡುಕೊಣ’ ಎಂದು ಸಮಾಧಾನ ಮಾಡಿದರು. ಭಾವನದೆ ಒಂದು ಸೈಕಲ್ ಇತ್ತು. ಅದನ್ನು ಹತ್ತಿ ಹಾಸ್ಟೆಲ್‌ಗೆ ಹೋದ ಸ್ನೇಹಿತನೊಬ್ಬ, ನಾಲ್ಕೈದು ಮಂದಿ ಗೆಳೆಯರಿಗೆ ನಡೆದ ವಿಷಯ ತಿಳಿಸಿದ. ಮತ್ತೆ ಐದು ಮಂದಿಯನ್ನು ಹಾಸ್ಟೆಲ್‌ನಿಂದ ಕರೆತಂದ.
ಎಲ್ಲರು ಬೀದಿ-ಬೀದಿ ಸುತ್ತಿ ಮನೆಗಾಗಿ ಹುಡುಕಾಟ ಶುರು ಮಾಡಿದೆವು. ಹೋಗುವ ಮುನ್ನ ಭಾವ ’ಜಾತಿ ವಿಷಯ ಮೊದಲೇ ಹೇಳಬೇಕು’ ಎಂದು ಸೂಚನೆ ನೀಡಿದ್ದರು.

ಸಂಜೆ 5 ಗಂಟೆಯಾದರೂ ಖಾಲಿ ಇರುವ ಒಂದು ಮನೆಯೂ ಸಿಗಲಿಲ್ಲ. ಎಲ್ಲರು ಒಬ್ಬೊಬ್ಬರಾಗಿ ವಾಪಸ್ ಬಂದು ನಿಂತಿವು. ಇನ್ನು ಒಂದಿಬ್ಬರು ಮಾತ್ರ ಬರಬೇಕಿತ್ತು. ಅವರು ಕೂಡ ಪೇಚು ಮೋರೆಯಲ್ಲೇ ಬಂದರು. ಅದರಲ್ಲೊಬ್ಬ ಪಕ್ಕದ ಬೀದಿಯಲ್ಲಿ ಹಾಳು ಮನೆಯಂತಿರುವ ಸಣ್ಣದೊಂದು ಶೆಡ್ ಇದೆ ಎಂದು ಹೇಳಿದ.

ನಾನು ಮತ್ತು ಉಳಿದ ಸ್ನೇಹಿತರು ಹೋಗಿ ನೋಡಿದೆವು. ನಾಲ್ಕೈದು ವರ್ಷದಿಂದ ಆ ಶೆಡ್‌ನಂತ ಮನೆಯಲ್ಲಿ ಯಾರು ವಾಸ ಮಾಡಿರಲಿಲ್ಲ. ಪಾಳು ಬಿದ್ದಂತೆ ಇತ್ತು. ಮನೆ ನೋಡಿದ ಭಾವ, ಬೇರೆ ದಾರಿ ಇಲ್ಲ. ಸದ್ಯಕ್ಕೆ ಇದೇ ಮನೆಯಲ್ಲಿ ಇರೋಣ ಎಂದು ನಿರ್ಧಾರ ಮಾಡಿದರು. ವಿಧಿ ಇಲ್ಲದೆ ಅಕ್ಕ ಕೂಡ ಇಪ್ಪಿಕೊಂಡಳು. ಮೇಲ್ಜಾತಿಯವರ ಕೊಟ್ಟಿಗೆಯಲ್ಲಿ ಉಂಡು-ಮಲಗಿ ಅಭ್ಯಾಸ ಇದ್ದ ಕಾರಣದಿಂದ ಈ ಮನೆಯಲ್ಲಿ ವಾಸ ಮಾಡುವುದು ಅಷ್ಟೇನು ಕಷ್ಟ ಎನ್ನಿಸಲಿಲ್ಲ.

ಓನರ್ ಜೊತೆ ಮಾತನಾಡಿದೆವು, ಯಾವ ಜಾತಿಗಾದ್ರು ಕೊಡುತ್ತೇವೆ. ಆದರೆ, ಆ ಮನೆ ವಾಸ ಮಾಡಲು ಯೋಗ್ಯವಾಗಿಲ್ಲ ಬೇಡ ಎಂದರು. ಆದರೂ ಪರವಾಗಿಲ್ಲ, ಸದ್ಯದ ಪರಿಸ್ಥಿತಿಯನ್ನು ಅವರಿಗೆ ವಿವರಿಸಿ ಮನವೊಲಿಸಿದೆವು. ಬೇರೆ ಮನೆ ಸಿಗುವ ತನಕ ಮಾತ್ರ ಇರುತ್ತೇವೆ, ಅವಕಾಶ ಮಾಡಿಕೊಡಿ ಎಂದು ಭಾವ ಮನವಿ ಮಾಡಿದರು.

’ಅಡ್ವಾನ್ಸ್ ಏನು ಬೇಡ, ಈ ಮನೆಯನ್ನು ಬಾಡಿಗೆಗೆ ಕೊಡುವ ಆಲೋಚನೆ ಇರಲಿಲ್ಲ. ಪಾಪ ತೊಂದರೆಲಿ ಇದ್ದೀರಿ ನಿಮಗೆ ಬೇರೆ ಮನೆ ಸಿಗುವ ತನಕ ಇಲ್ಲೇ ಇರಿ, ಒಂದಿಷ್ಟು ಬಾಡಿಗೆ ಅಂತ ಕೊಡಿ ಸಾಕು’ ಎಂದು ಮಾಲೀಕರು ಒಪ್ಪಿಗೆ ಸೂಚಿಸಿದರು. ಬೀದಿಯಲ್ಲಿ ಬಿದ್ದಿದ್ದಾಗ ಮನೆ ಕೊಟ್ಟ ಮಾಲೀಕರಿಗೆ ಎಲ್ಲರು ಕೃತಜ್ಞತೆ ಸಲ್ಲಿಸಿದೆವು. ಬಂದಿದ್ದ ಎಲ್ಲಾ ಸ್ನೇಹಿತರು ಸೇರಿ ಸಾಮಾನು-ಸರಂಜಾಮು ಹೊತ್ತು ತಂದೆವು. ಎಲ್ಲರು ಸೇರಿ ಪುಟ್ಟ ಮನೆಯನ್ನು ಕ್ಲೀನ್ ಮಾಡಿದೆವು. ಅಕ್ಕ ಮತ್ತೊಮ್ಮೆ ಹಾಲು ಉಕ್ಕಿಸುವ ಪೂಜೆ ಮಾಡಿದಳು. ಬಂದಿದ್ದ ಎಲ್ಲ ಸ್ನೇಹಿತರಿಗೂ ಪಾಯಿಸ ಮಾಡಿ ಊಟಕ್ಕೆ ಬಡಿಸಿದಳು.

ಕಷ್ಟದಲ್ಲಿ ಆಶ್ರಯ ನೀಡಿದ ಕಾರಣಕ್ಕೆ ಅದೇ ಮನೆಯಲ್ಲಿ ಸಾಕಷ್ಟು ದಿನ ಜೀವನ ಮಾಡಿದರು. ಈಗ ಮೊದಲೇ ಜಾತಿ ತಿಳಿಸಿ ಬೇರೊಂದು ಮನೆಯಲ್ಲಿ ವಾಸವಿದ್ದಾರೆ. ಮನೆ ಹುಡುಕುವ ಸಂದರ್ಭದಲ್ಲಿ ಆ ದಿನ ನೆನಪಿಗೆ ಬರೆದ ಉಳಿಯುವುದಿಲ್ಲ. ಹಾಗಿಯೇ ಮೊದಲು ಜಾತಿ ತಿಳಿಸಿ ಮಾಲೀಕರು ಒಪ್ಪಿದರೆ ಮಾತ್ರ ಮನೆ ಕೊಡಿ ಎಂದು ಕೇಳುವುದನ್ನು ನಾನು ಮರೆಯುವುದಿಲ್ಲ.

ದಲಿತರಿಗೆ ಮೇಲ್ಜಾತಿಯವರು ಮನೆ ಸಿಗುತ್ತಿಲ್ಲ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುವುದನ್ನೂ ಸಹಿಸದೆ ’ಹಾಗದರೆ ದಲಿತರೆಲ್ಲ ಈಗ ಬೀದಿಯಲ್ಲಿದ್ದಾರಯೇ?’ ಎಂದು ಪ್ರಶ್ನೆ ಕೇಳುವ ಜನ ಇದ್ದಾರೆ. ಈಗಲೂ ಪರಿಸ್ಥಿತಿ ಬದಲಾಗಿಲ್ಲ. ಎಸ್ಸಿ ಎಂಬ ಪದ ಕೇಳಿದ ಕೂಡಲೇ ಮುಖ ಸಿಂಡರಿಸಿಕೊಂಡು ನಮ್ಮನ್ನು ಅಪರಾಧಿಯಂತೆ ನೋಡುವ ಮನೆ ಮಾಲೀಕರು ಸಾಕಷ್ಟಿದ್ದಾರೆ. ಈಗ್ಗೆ ಆರು ತಿಂಗಳ ಹಿಂದೆ ನಾನು ಬಾಡಿಗೆ ಮನೆ ಬದಲಿಸುವ ಸಂದರ್ಭ ಬಂದಾಗ ಮೊದಲೆ ಜಾತಿ ಹೇಳಿದ ಕಾರಣಕ್ಕೆ ನಾಲ್ಕು ಮನೆಯ ಒಪ್ಪಂದ ಮುರಿದು ಹೋದವು. ಕೊನೆಗೂ ಸ್ವಜಾತಿಯವರದೇ ಮನೆಯಲ್ಲಿ ಬಾಡಿಗೆ ಇದ್ದೇನೆ. ಇದೇ ಕಾರಣಕ್ಕೆ ಹಲವರು ಜಾತಿ ಸುಳ್ಳು ಹೇಳಿಕೊಂಡು ಬಾಡಿಗೆ ಮನೆ ಪಡೆದು ಜೀವನ ನಡೆಸುತ್ತಿದ್ದಾರೆ. ನಿಜ ಜಾತಿ ಗೊತ್ತಾದ ನಂತರ ಮುಜುಗರ ಅನುಭವಿಸುತ್ತಿದ್ದಾರೆ. ಹಾಗಾಗಿ ದಲಿತರು ಬಾಡಿಗೆ ಮನೆ ಪಡೆಯುವುದು ಅಷ್ಟು ಸುಲಭವಲ್ಲ.

ಚಿತ್ರಗಳು: ಸಾಂದರ್ಭಿಕ

ಅನ್ನಕ್ಕಾಗಿ ರಾತ್ರಿಯಿಡೀ ಕಾದದ್ದು

– ಜೀವಿ

ದೋ.. ಎಂದು ಸುರಿಯುತ್ತಿದ್ದ ಮಳೆ, ಮಧ್ಯರಾತ್ರಿ ದಾಟಿದರೂ ಎದ್ದೇಳೋ ಬೂದಿ, ಕಾಳ, ಕರಿಯ, ಕುನಾರಿ ಎಂಬ ಸದ್ದು ಕೇಳಲಿಲ್ಲ. ಮಳೆ ಕಾರಣದಿಂದ ಊಟಕ್ಕೆ ಕರೆಯಲು ಯಾರು ಬರಲಾರರೇನೋ ಎಂದುಕೊಂಡು ಅತ್ತಿತ್ತ ಹೊರಳಾಡಿದೆ. ಮಳೆಯಾದರೂ ನಿಲ್ಲಬಾರದೆ ಎಂದು ಮನದಲ್ಲೆ ಶಪಿಸಿ
hunger04-061ಕೊಂಡು ಕಣ್ಮುಚ್ಚಿದೆ. ಆದರೂ ನಿದ್ರೆ ಹತ್ತಿರ ಸುಳಿಯಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಮಳೆ ಕಡಿಮೆಯಾಯಿತು. ಕೊನೆಗೂ ಬೆಳಗಿನ ಜಾವ ನಾಲ್ಕು ಗಂಟೆ ಹೊತ್ತಿಗೆ ಲೋ ಬೂದಿ ಎಂಬ ಧ್ವನಿ ಕೇಳಿ ಕತ್ತಲಲ್ಲೆ ಕಣ್ಣರಳಿತು. ಎರಡು ಬಾರಿ ಕೂಗಿದ ನಂತರ ಕೆಮ್ಮುತ್ತಾ ಏನು ಗೌಡ್ರೆ ಎಂದ ನನ್ನ ಎದುರಿನ ಮನೆಯಲ್ಲಿದ್ದ ಬೂದಿ ಜವರಪ್ಪ. ಎದ್ದು ಮಕ್ಕಳ ಕರ್ಕೊಂಡು ಊಟಕ್ಕೆ ಬನ್ರೋ, ಹೆಂಗಸ್ರಿಗೂ ಕುಕ್ಕೆ ತಗೊಂಡ್ ಬರೋಕೆ ಹೇಳು ಎಂದು ಹೇಳಿ ಹೋದ.(ಎಲ್ಲರ ಮನೆಗೆ ಖುದ್ದು ಬಾಗಿಲು ತಟ್ಟಿ ಕರೆಯಬೇಕೆಂದೇನು ಇರಲಿಲ್ಲ. ಕೇರಿಯಲ್ಲಿ ನಿಂತು ಒಂದಿಬ್ಬರಿಗೆ ವಿಷಯ ಮುಟ್ಟಿಸಿದ್ದರೆ ಸಾಕಿತ್ತು.) ಆತ ಹೋಗಿ ಐದಾರು ನಿಮಿಷ ಆದರೂ ನಿಶ್ಯಬ್ಧ ಮುಂದುವರಿಯಿತು. ಬೂದಿ ಜವರಪ್ಪ ಮತ್ತೆ ನಿದ್ರೆಗೆ ಹೋದನೇನೋ, ಎಲ್ಲರು ಮಲಗಿದ್ದಾರೆ, ಯಾರೂ ಊಟಕ್ಕೆ ಹೋಗಲಾರರೇನೋ ಎಂದುಕೊಂಡು ಮಲಗದ್ದಲ್ಲೆ ಚಟಪಟಿಸಿದೆ.

ನಂತರ ಮೂಲೆ ಮನೆಯಿಂದ ಲಕ್ಕಜ್ಜ ಕೈಯಲ್ಲೊಂದು ಊರುಗೋಲು ಹಿಡಿದು ಮಕ್ಕಳೊಂದಿಗೆ ಹೆಜ್ಜೆ ಹಾಕಿದ. ಅವನು ಕೋಲು ಊರಿ ಬರುತ್ತಿದ್ದ ಶಬ್ದ ಕೇಳಿ ಜೀವ ಬಂದಂತಾಯಿತು. 10 ನಿಮಿಷದಲ್ಲಿ ನಿಶ್ಯಬ್ಧ ಮಾಯವಾಯಿತು. ಹೆಂಗಸರು-ಗಂಡಸರು ಮತ್ತು ಮಕ್ಕಳು ಮಾತನಾಡುವ ಸದ್ದು ಹೆಚ್ಚಾಯಿತು. ಒಬ್ಬೊಬ್ಬರಾಗಿ ಎದ್ದು ಚೆಂಬು-ಲೋಟ ಹಿಡಿದು ಮನೆಯಿಂದ ಹೊರ ಬಂದರು. ಆವರೆಗೆ ನೀರವ ಮೌನ ಆವರಿಸಿದ್ದ ಕೇರಿಯಲ್ಲಿ ಮಕ್ಕಳು-ಮಹಿಳೆಯರ ಉತ್ಸಾಹದ ಸದ್ದು ಜೋರಾಯಿತು.

ಅನ್ನದ ಮೇಲಿನ ಆಸೆಗೆ ನನಗೆ ನಿದ್ರೆ ಬಂದಿಲ್ಲ ಎಂಬುದು ನನ್ನವ್ವನಿಗೂ ಗೊತ್ತಿತ್ತು. ದೀಪ ಹಚ್ಚಿ ಊಟಕ್ಕೆ ಹೋಗ್ತಿಯಾ ಮಗನೇ ಎಂದು ಮೆಲು ಧ್ವನಿಯಲ್ಲೆ ಕೇಳಿದಳು. ಹೂಂ ಎಂದವನೆ ಎದ್ದು ಹೊರಟೆ, ಪಕ್ಕದಲ್ಲೆ ಮಲಗಿದ್ದ ನನ್ನಕ್ಕ, ಅಣ್ಣ, ಅಪ್ಪ ಎಲ್ಲರು ಎದ್ದರು. ನಾನೊಬ್ಬನಿಗೆ ಮಾತ್ರ ನಿದ್ರೆ ಬಂದಿಲ್ಲ ಎಂದುಕೊಂಡಿದ್ದ ನನಗೆ ಇಡೀ ಕೇರಿಯ ಜನರಿಗೆ ನಿದ್ರೆ ಬಂದಿಲ್ಲ, ಅನ್ನಕ್ಕಾಗಿ ಕಾಯುತ್ತಿದ್ದಾರೆ ಎಂಬುದು ಅರ್ಥವಾಯಿತು. ಅವ್ವ ಕೂಡ ಬಿದಿರ ಕುಕ್ಕೆಗೆ ಬಿಳಿ ಪಂಚೆ ಹರುಕು ಹಾಸಿ, ಸಾಂಬಾರಿಗೊಂದು ಪಾತ್ರೆ, ಪಾಯ್ಸಕ್ಕೊಂದು ಪಾತ್ರೆ ಸಿದ್ದ ಮಾಡಿಕೊಂಡಳು. Streetchildrenಗಂಡಸರು ಮತ್ತು ಮಕ್ಕಳು ಮಾತ್ರ ಮೇಲ್ಜಾತಿಯ ಕೇರಿಯಲ್ಲಿ ಅಥವಾ ಕೊಟ್ಟಿಗೆಯಲ್ಲೀ ಊಟ ಮಾಡಲು ಅವಕಾಶ ಇತ್ತು. ಹೆಂಗಸರು ಅಲ್ಲಿ ಊಟ ಮಾಡುವಂತಿರಲಿಲ್ಲ. ಕುಕ್ಕೆಗೆ ಅವರು ಹಾಕಿಕೊಟ್ಟ ಊಟ ತಂದು ಮನೆಯಲ್ಲಿ ತಿನ್ನಬೇಕಿತ್ತು. ಅದಕ್ಕಾಗಿ ಅವ್ವ ಕುಕ್ಕೆ ಸಿದ್ದ ಮಾಡಿಕೊಂಡಳು. ಅದನ್ನು ಹೊತ್ತು ಸಂಭ್ರಮದಿಂದ ಹೊರಟು ಮೇಲ್ಜಾತಿಯ ಕೇರಿ ಸೇರಿದೆವು.

ಮೇಲ್ಜಾತಿಯ ಎಲ್ಲರೂ ಊಟ ಮಾಡಿದ ನಂತರ ಏನಾದರೂ ಉಳಿದರೆ ನಮ್ಮನ್ನು ಕರೆಯುವ ಪರಿಪಾಟಲಿತ್ತು. ಹೋಗಿ ಮದುವೆ ಮನೆಯ ಮುಂದೆ ನಿಂತ ನಮನ್ನು ಎಲ್ಲಿ ಊಟಕ್ಕೆ ಕೂರಿಸಬೇಕು ಎಂಬ ಚರ್ಚೆ ನಡೆಯಿತು. ಮಳೆ ಬಂದಿದ್ದರಿಂದ ಬೀದಿಯಲ್ಲಿ ಕೂತು ಊಟ ಮಾಡುವ ಅವಕಾಶ ಇರಲಿಲ್ಲ. ಸ್ವಜಾತಿಯವರೆಲ್ಲ ಮನೆಯ ಒಳಗೇ ಕೂತು ಊಟ ಮಾಡಿ ಹೋಗಿದ್ದರು. ಎಲ್ಲರ ಮನೆಯ ಕೊಟ್ಟಿಗೆಯಲ್ಲೂ ದನಕರುಗಳಿದ್ದವು. ಮದುವೆ ಮನೆಯವರ ಕೊಟ್ಟಿಗೆಯಲ್ಲಿ ಸಾಮಾನು ಸರಂಜಾಮು ತುಂಬಿದ್ದವು. ಅಕ್ಕ-ಪಕ್ಕದ ಯಾರೂ ದನಕರುಗಳನ್ನು ಆಚೆಗೆ ಕಟ್ಟಿ ಊಟಕ್ಕೆ ಅವಕಾಶ ಮಾಡಿಕೊಡಲು ಸಿದ್ದರಿರಲಿಲ್ಲ. ಊಟಕ್ಕೆಂದು ಕಾದು ನಿಂತವರಲ್ಲಿ ಲಕ್ಕಜ್ಜ ಹಾಗೆ ಕೈಗೆ ಕೊಡಿ ಸ್ವಾಮಿ ತಿನ್ಕೊಂಡು ಹೋಗ್ತಿವಿ ಎಂದ. ಅದನ್ನು ಒಪ್ಪದ ಮದುವೆ ಮನೆ ಯಜಮಾನ, ಹೇಗೋ ಮನವೊಲಿಸಿ ಒಂದು ಕೊಟ್ಟಿಗೆ ಖಾಲಿ ಮಾಡಿಸಿದ.

ಕೊಟ್ಟಿಗೆಯಲ್ಲಿ ಹುಲ್ಲು ಹಾಸಿಕೊಂಡು ಊಟಕ್ಕೆ ಕುಳಿತೆವು. ಅಳಿದುಳಿದ ಊಟಕ್ಕೆ ಬಂದಿದ್ದ ನಮಗೆ ಮದುವೆ ಮನೆ ಯಜಮಾನ, ಅನ್ನ-ಪಾಯ್ಸ ಎಲ್ಲಾ ಖಾಲಿ ಆಯ್ತು ಮುದ್ದೆ ಮಾತ್ರ ಇದೆ. ಹೊಟ್ಟೆ ತುಂಬ ಊಟ ಮಾಡಿ ಎಂದ. ನನನ್ನು ಸೇರಿ ಊಟಕ್ಕೆ ಬಂದಿದ್ದ ಮಕ್ಕಳಿಗೆ ಎದೆ ಜಲ್ ಎಂದಂತಾಯಿತು. ಲಕ್ಕಜ್ಜ ಮಕ್ಕಳಿಗಾದರೂ ಸಾಕಾಗುವಷ್ಟು ಇದೆಯಾ ನೋಡಿ ಸ್ವಾಮಿ ಎಂದು ದಯನೀಯವಾಗಿ ಕೇಳಿದ. ಅನ್ನ ಬಸಿದಿದ್ದ ಮಂಕ್ರಿ ಮತ್ತು ಪಾತ್ರೆ ತಳ ಎಲ್ಲವನ್ನು ಕೆರೆದು ಕೊನೆಗೂ ಒಂದಿಷ್ಟು ಅನ್ನ ತಂದ ಯಜಮಾನ. ನನ್ನನ್ನು ಸೇರಿ ಮಕ್ಕಳನ್ನು ಮಾತ್ರ ಗುರುತಿಸಿ ಕೋಸಂಬರಿ ಹಾಕುವಂತೆ ತಟ್ಟೆಗೆ ಅನ್ನ ಉದುರಿಸಿದ. ಕಡಿಮೆಯಾದರೂ ಚಿಂತೆಯಿಲ್ಲ ಅನ್ನದ ರುಚಿ ಅನುಭವಿಸಿದ ಸಮಾಧಾನವಾಯಿತು.

ಹಬ್ಬ-ಹರಿದಿನಗಳಲ್ಲಿ ಮಾತ್ರ ಸಿಗುತ್ತಿದ್ದ ಕಾರಣಕ್ಕೆ ಅನ್ನ ಅಂದು ಅಮೃತಕ್ಕೂ ಮಿಗಿಲಾದ ರುಚಿ ಹೊಂದಿತ್ತು. ಸಿಕ್ಕಿದ್ದೆ ಸೀರುಂಡೆ ಎಂದು ಉಂಡ ಎಲೆ ಎತ್ತಿಕೊಂಡು ಹೊರಟೆವು. ಅವ್ವ ಹಿಡಿದಿದ್ದ ಕುಕ್ಕೆಗೆ ಮುದ್ದೆ ಮತ್ತು ಸಾಂಬಾರ್ ಮಾತ್ರ ಗತಿಯಾಯಿತು. ಅದು ಗಂಡಿನ ಮದುವೆ ಆಗಿದ್ದರಿಂದ ರಾತ್ರಿ ಚಪ್ಪರದ ಊಟ ಮಾತ್ರ ಇತ್ತು. ಮದುವೆ ಊಟಕ್ಕೆ ಹೆಣ್ಣಿನ ಮನೆಗೆ ಹೋಗಬೇಕಿತ್ತು. ಆದರೆ ಅಲ್ಲಿಗೆ ಹೋಗುವ ಅವಕಾಶ ಇರಲಿಲ್ಲ.

ನನಗಾಗಿ ಕಾದಿದ್ದಳು ಅವ್ವ:

ಹೀಗೆ ಅನ್ನದೊಂದಿಗೆ ತಳುಕುಹಾಕಿಕೊಂಡಿರುವ ಅನೇಕ ಘಟನೆಗಳು ನನ್ನನ್ನು ಪದೇ ಪದೇ ಕಾಡುವುದುಂಟು. ಮನೆಯಲ್ಲಿ ಅನ್ನದ ಮಡಿಕೆ ಅಥವಾ ಪಾತ್ರೆ ಉಪಯೋಗಕ್ಕೆ ಬರುತ್ತಿದ್ದು ತಿಂಗಳಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ. ಹಾಗಾಗಿ ಮೇಲ್ಜಾತಿಯವರ ಕೃಷಿ ಜಮೀನಿಗೆ ಕೂಲಿ ಹೋದರೆ ಅವ್ವ ಮಧ್ಯಾಹ್ನದ ವೇಳೆಗೆ ಅಲ್ಲಿಗೆ ಬರುವಂತೆ ಹೇಳಿ ಹೋಗುವುದನ್ನು ಮರೆಯುತ್ತಿರಲಿಲ್ಲ.

ಅದೊಂದು ದಿನ ಅವ್ವ ಕೂಲಿಗೆ ಹೋಗುವ ಮುನ್ನ ಊರ ಸಮೀಪವೇ ಇರುವ ಗೌಡರ ಮನೆಯ ಹೊಲದ ಅಡ್ರೆಸ್ ಹೇಳಿದ್ದಳು. ಶಾಲೆಯಲ್ಲಿ ಊಟಕ್ಕೆ ಬಿಟ್ಟ ಕೂಡಲೇ ಓಡೋಡಿ ಹೋದೆ ಅಲ್ಲಿ ಅವ್ವ ಹಾಗೂ ಇನ್ನಾರು ಇರಲಿಲ್ಲ. ಆ ಹೊಲದಲ್ಲಿ ಕೆಲಸ ಮುಗಿದು ಊರಿನಿಂದ ಸುಮಾರು 2 ಕಿಮೀಯಷ್ಟು ದೂರವಿರುವ ಇನ್ನೊಂದು ಹೊಲದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಯಿತು.

ಅಲ್ಲಿ ಓಡಲು ಆರಂಭಿhunger-2ಸಿ ನಿಂತಿದ್ದು ಅವ್ವನ ಮುಂದೆಯೇ. ಆದಾಗಲೇ ಎಲ್ಲರೂ ಊಟ ಮುಗಿಸುವ ಹಂತಕ್ಕೆ ಬಂದಿದ್ದರು. ಆದರೆ ನನ್ನವ್ವ ಇನ್ನೂ ಮುದ್ದೆ ಮುಗಿಸದೆ ದಾರಿ ನೋಡುತ್ತಿದ್ದಳು. ಕೂಡಲೇ ಕೈ ತೊಳೆಯುವ ಗೋಜಿಗೂ ಹೋಗದೆ ಅವ್ವನ ತಟ್ಟೆಯಲ್ಲೇ ಊಟಕ್ಕೆ ಕುಳಿತೆ. ಊಟ ಮುಗಿದಿಲ್ಲ ಎಂಬ ಸಂತಸ ನನಗಾದರೆ, ಅವ್ವನ ಕಣ್ಣಲ್ಲಿ ನೀರು ತುಂಬಿಕೊಂಡಿದ್ದವು. ಅತ್ತ ಗಮನವನ್ನೂ ಹರಿಸದ ನಾನು ಅನ್ನ ಊಟ ಮಾಡುವ ಸಂಭ್ರಮದಲ್ಲಿದ್ದೆ. ಕೂಲಿಗೆ ಕರೆದಿದ್ದ ಮೇಲ್ಜಾತಿಯವರು ಕೂಡ ಅಕ್ಕಿ ಖರೀದಿ ಮಾಡಿ ತಂದು ತಿನ್ನಬೇಕಿತ್ತು. ಹಾಗಾಗಿ ಹೊಟ್ಟೆ ತುಂಬ ಮುದ್ದೆ, ಅದರ ಮೇಲೆ ಸ್ವಲ್ಪ ಅನ್ನ ಬಡಿಸುತ್ತಿದ್ದರು. ಎಲೆಗೆ ಹಾಕಿದ್ದ ಅನ್ನದಲ್ಲಿ ಒಂದು ಅಗುಳನ್ನು ಅವ್ವ ಮುಟ್ಟಲಿಲ್ಲ. ನನಗೆ ಅನ್ನ ಊಟ ಮಾಡಿಸಿದ ತೃಪ್ತಿ ಅವ್ವನಿಗಾಗಿತ್ತು. ಪರಮಾನಂದಿಂದ ಮತ್ತೆ ಶಾಲೆಯತ್ತ ಓಡಿದೆ.

ಸ್ವಾಮಿ ಮಾಸ್ಟರ್ ಕೊಟ್ಟ ಅನ್ನ:

ಸರ್ಕಾರಿ ಶಾಲೆಯಲ್ಲಿ ಈಗಿನಂತೆ ಬಿಸಿಯೂಟವಿರಲಿಲ್ಲ. ಸಮೀಪದ ಪಟ್ಟಣದಿಂದ ಬರುತ್ತಿದ್ದ ಸ್ವಾಮಿ ಮಾಸ್ಟರ್ ಟಿಫನ್ ಬಾಕ್ಸ್ನಲ್ಲಿ ಅನ್ನ ತಂದು ಮಧ್ಯಾಹ್ನದ ಊಟ ಮಾಡುತ್ತಿದ್ದರು. ಓದಿನಲ್ಲಿ ಸ್ವಲ್ಪ ಮುಂದಿರುವ ಹುಡುಗರೆಂದರೆ ಅವರಿಗೆ ಅಚ್ಚುಮೆಚ್ಚು. ನನಗೋ ಅವರ ಅನ್ನದ ಬಾಕ್ಸ್ ಎಂದರೆ ಅಚ್ಚುಮೆಚ್ಚು. ಮಧ್ಯಾಹ್ನ 1ಕ್ಕೆ ಊಟದ ಗಂಟೆ ಬಾರಿಸಿದ ಕೂಡಲೇ ಮನೆಗೋಗಿ ಬೆಳಗ್ಗೆಯೇ ಮಾಡಿಟ್ಟಿದ್ದ ಮುದ್ದೆಯಲ್ಲಿ ಅರ್ಧದಷ್ಟ ತಿಂದು ಹತ್ತೇ ನಿಮಿಷದಲ್ಲಿ ವಾಪಸ್ ಬರುತ್ತಿದೆ. ನಾನು ಬರುವಷ್ಟರಲ್ಲಿ ಸ್ವಾಮಿ ಮಾಸ್ಟರ್ ಬಾಕ್ಸ್ ಖಾಲಿಯಾಗದಿರಲಿ ಎಂದು ಊರ ದೇವರು ಬಸವಣ್ಣನಿಗೊಂದು ಕೈಮುಗಿದು ಹೋಗುತ್ತಿದ್ದೆ. ನನ್ನಂತೆ ಮೂರ್ನಾಲ್ಕು ಮಂದಿಗೆ ಆ ಬಾಕ್ಸ್ ಮೇಲೆ ಕಣ್ಣಿತ್ತು. ಅವರು ಊಟ ಮಾಡಿದ ಬಾಕ್ಸ್ ತೊಳೆದಿಡುವ ಪುಣ್ಯ ನಮ್ಮದಾದರೆ ಸಾಕು ಎಂದುಕೊಳ್ಳುತ್ತಿದ್ದೆವು. ಅವರು ಕೂಡ ಕೆಳ ಜಾತಿಯವರೇ ಆಗಿದ್ದರಿಂದ ಮೇಲ್ಜಾತಿ ಮಕ್ಕಳಿಗೆ ಅವರು ತಂದಿದ್ದ ಅನ್ನ ಕೊಡುವ ಸಾಹಸವನ್ನು ಅವರು ಮಾಡುತ್ತಿರಲಿಲ್ಲ. ಹಾಗಾಗಿ ಮೂರ್ನಾಲ್ಕು ಮಂದಿಗೆ ಅದರ ಅವಕಾಶ ಸಿಗುತ್ತಿತ್ತು.

ಮನೆಯಿಂದ ಬೇಗ ಬಂದವನೇ ಕೊಠಡಿಯೊಂದರಲ್ಲಿ ಊಟ ಮಾಡುತ್ತಿದ್ದ ಸ್ವಾಮಿ ಮಾಸ್ಟರ್ಗೆ ಕಾಣಿಸುವಂತೆ ಕಿಟಕಿಯ ಸಮೀಪ ಓಡಾಡುತ್ತಿದೆ. ಕಣ್ಣಿಗೆ ಕಂಡ ಕೂಡಲೇ ಒಳ ಕರೆದು ಬಾಕ್ಸ್ನಲ್ಲಿ ಸ್ವಲ್ಪ ಮಿಗಿಸಿದ್ದ ಅನ್ನ ಊಟ ಮಾಡಲು ಹೇಳುತ್ತಿದ್ದರು. ಊಟ ಮಾಡಿ ಬಾಕ್ಸ್ ತೊಳೆದಿಡುವುದು ಸಂತಸದ ಕ್ಷಣವಾಗುತ್ತಿತ್ತು. ಕೆಲವೊಮ್ಮೆ ನಾನು ಬರುವಷ್ಟರಲ್ಲಿ ಅವರ ಊಟ ಮುಗಿದು ಬೇರಾರೋ ಬಾಕ್ಸ್ ತೊಳೆಯುತ್ತಿದ್ದರು. ಅಂದು ನಿರಾಸೆಯೇ ಗತಿಯಾಗುತ್ತಿತ್ತು.

ಮೂರು ಮಡಿಕೆ:

‘ನಾಗಾ…. ಅವ್ವಾರ ಮನೇಲಿ ಮೂರು ಮಡಿಕೆ ಬಾರೋ…’ ಎಂದು ಊರಿಗೆಲ್ಲ ಕೇಳುವಂತೆ ಕೂಗುತ್ತಿದ್ದ ನನ್ನ ಗೆಳೆಯ ಮಹೇಶ. ಅವನ ತಮ್ಮ ನಾಗರಾಜನೋ ಎದ್ದು ಬಿದ್ದ ಓಡಿ ಹೋಗುತ್ತಿದ್ದ. ಆಗಾಗ ಹೀಗೆ ಕೂಗುತ್ತಿದ್ದ ಕಾರಣಕ್ಕೆ ಈವರೆಗೆ ಅವನಿಗೆ ‘ಮಡಿಕೆ’ ಎಂಬ ಅಡ್ಡ ಹೆಸರು ಅಂಟಿಕೊಂಡಿದೆ. ಮಹೇಶನ ಮೂರು ಮಡಿಕೆ ಸೂತ್ರದಲ್ಲಿ ದೊಡ್ಡದೊಂದು ಅನ್ನದ ಕಥೆಯಿದೆ. ಹಬ್ಬ-ಜಾತ್ರೆಯಲ್ಲಿ ಅನ್ನ ಕಾಣುತ್ತಿದ್ದ ಕಾಲದಲ್ಲಿ ಮನೆಯಲ್ಲಿ ಮೂರು ಮಡಿಕೆ ಬಿಸಿಯಾಗಿದ್ದರೆ ಅದು ನಮಗೆ ಸಂಭ್ರಮದ ದಿನ.

ಪ್ರತಿನಿತ್ಯ ಒಂದು ಮುದ್ದೆ ಮತ್ತೊಂದು ಸಾಂಬಾರ್ ಸೇರಿ ಎರಡು ಮಡಿಕೆ ಬಿಸಿಯಾಗುವುದು ಸಾಮಾನ್ಯ. ಆದರೆ ಮೂರನೇ ಮಡಿಕೆ ಬಿಸಿಯಾಗಿದ್ದರೆ ಅದು ಅನ್ನವೇ ಎಂಬುದು ಖಾತ್ರಿಯಾಗುತ್ತಿತ್ತು. ಮಡಿಕೆಗಳ ಮುಚ್ಚಳ ತೆಗೆದು ನೋಡುವುದು ತಡವಾಗುತ್ತದೆಂದು ಮಡಿಕೆಗಳನ್ನು ಹೊರಗಿನಿಂದಲೇ ಮುಟ್ಟಿ ಮನೆಯಲ್ಲಿ ಅನ್ನ ಇದೆಯೋ ಇಲ್ಲವೋ ಎಂಬುದನ್ನು ಖಾತ್ರಿ ಮಾಡಿಕೊಳ್ಳುತ್ತಿದ್ದ ಮಹೇಶ.

ನಮ್ಮ ಮನೆಯ ಎಡ ಭಾಗಕ್ಕೆ ಅವನ ಮನೆಯಾದರೆ, ಬಲಭಾಗಕ್ಕೆ ಅವರ ಅಜ್ಜಿಯ ಮನೆ ಇತ್ತು. india-poverty-hungerಎರಡು ಮನೆಯ ಮಧ್ಯದಲ್ಲಿ ನಮ್ಮ ಮನೆಯಿತ್ತು. ಸಾಮಾನ್ಯವಾಗಿ ಅಜ್ಜಿ ಮನೆಯಲ್ಲಿ ಹೆಚ್ಚು ಬಾರಿ ಮೂರು ಮಡಿಕೆ ಬಿಸಿಯಾಗಿರುತ್ತಿದ್ದವು. ಎಲ್ಲೋ ಆಟವಾಡುತ್ತಿದ್ದಾಗ ಊಟಕ್ಕೆ ಕರೆದರೆ ಕೂಡಲೇ ಓಡಿ ಬಂದು ಮಡಿಕೆಗಳನ್ನು ಮುಟ್ಟಿ ನೋಡುತ್ತಿದ್ದ. ಮೂರು ಮಡಿಕೆ ಬಿಸಿಯಾಗಿವೆ ಎಂಬುದು ಗೊತ್ತಾದ ಕೂಡಲೇ ಊರಿಗೆಲ್ಲ ಕೇಳುವಂತೆ ತಮ್ಮ ನಾಗರಾಜನನ್ನು ’ನಾಗಾ… ಅವ್ವಾರ ಮನೇಲಿ ಮೂರು ಮಡಿಕೆ ಬಾರೋ….’ ಎಂದು ಕೂಗುತ್ತಿದ್ದ. ನಾಗನೋ ಓಡಿ ಹೋಗಿ ಊಟಕ್ಕೆ ಕೂರುತ್ತಿದ್ದ. ಅದು ನನಗೆ ಅಜ್ಜಿ ಮನೆ ಅಲ್ಲದಿದ್ದರೂ, ಆಗೊಮ್ಮೆ ಈಗೊಮ್ಮೆ ಸ್ನೇಹಿತನೊಂದಿಗೆ ಅನ್ನ ಊಟ ಮಾಡುವ ಅವಕಾಶ ಸಿಗುತ್ತಿತ್ತು. ಈ ಕಾರಣಕ್ಕೆ ಮಹೇಶ ಇಂದಿಗೂ ‘ಮಡಿಕೆ’. ಇಂದಿಗೂ ಅವನ ಮೊಬೈಲ್ ನಂಬ ರ್ ನನ್ನ ಮೊಬೈಲ್ನಲ್ಲಿ ಮಡಿಕೆ ಎಂದೇ ಸೇವ್ ಆಗಿದೆ(ಆದರೆ ಇತ್ತೀಚೆಗಷ್ಟೆ ನಮ್ಮಿಂದ ದೂರವಾದ). ಅವನನ್ನು ಛೇಡಿಸಲು ಅಡ್ಡ ಹೆಸರಿಂದ ಕರೆಯುತ್ತಿದ್ದರೂ ಆ ಮೂರು ಮಡಿಕೆ ಸೂತ್ರದಲ್ಲಿ ಅನ್ನ ಮತ್ತು ಹಸಿವಿಗೆ ಇರುವ ಬೆಲೆ ಅರ್ಥವಾಗುತ್ತದೆ.

ಹಸಿವನ್ನೇ ಕಾಣದವರಿಗೆ, ಹುಟ್ಟಿನಿಂದಲೇ ಮನೆಯಲ್ಲಿ ನಿತ್ಯ ಮೂರು ಮಡಿಕೆ ಬಿಸಿ ಮಾಡಿಕೊಂಡು ಉಂಡವರಿಗೆ ಅನ್ನದ ಮಹತ್ವ ಅರ್ಥವಾಗುವುದು ಕಷ್ಟ. ವಾರಾನ್ನ ಉಂಡವರಿಗೆ ತಿಂಗಳುಗಟ್ಟಲೆ ಅನ್ನವನ್ನೇ ಕಾಣದವರ ನೋವು ಗೊತ್ತಾಗುವುದಿಲ್ಲ. ಇಲ್ಲಿಯ ನಾನು ಅನುಭವಿಸಿದ ಘಟನೆಗಳು ಕೇವಲ ಹತ್ತು-ಹದಿನೈದು ವರ್ಷ ಹಿಂದಿನವು. ಇಂದಿಗೂ ಬಡತನ ನಮ್ಮ ಊರಲ್ಲಿ ಹೆಚ್ಚು-ಕಮ್ಮಿ ಅಷ್ಟೇ ಇದೆ.

ಭೈರಪ್ಪ ಮತ್ತು ಅನ್ನಭಾಗ್ಯ : ಒಂದು ಹಿಡಿ ಅಕ್ಕಿಯ ಕಥೆ


– ಶ್ರೀಧರ್ ಪ್ರಭು


ಕಲ್ಕತ್ತೆಯ ಬೇಲೂರು ಮಠದ ನಿರ್ಮಾಣ ಕೊನೆಯ ಹಂತದಲ್ಲಿತ್ತು. ಅಲ್ಲಿ ಹೆಚ್ಚಿನ ಕಟ್ಟಡ ಕಾರ್ಮಿಕರೆಲ್ಲರೂ ಬಂಗಾಳ ಬಿಹಾರ ಗಡಿ ಭಾಗದ ಸಂಥಾಲ್ ಆದಿವಾಸಿಗಳು. ಎರಡು ತುತ್ತು ಅನ್ನ ಕೊಟ್ಟರೆ ಸಾಕು ಬಂಗಾಳದ ಹಳ್ಳಿಗಳಲ್ಲಿ ಕೃಷಿ ಕೂಲಿ ಕೆಲಸ ಮತ್ತು ನಗರ ಭಾಗಗಳಲ್ಲಿ ಕಟ್ಟಡ ನಿರ್ಮಾಣದ ಕೆಲಸಕ್ಕೆ ಸೇರಿಕೊಂಡು ಹಗಲು ರಾತ್ರಿ ಎನ್ನದೇ ದುಡಿಯುತ್ತಿದ್ದ ಈ ಕಷ್ಟ ಜೀವಿಗಳ ಮಧ್ಯೆ ತುಂಬು ಆತ್ಮೀಯತೆಯಿಂದ ಬೆರೆತು ಹೋಗುತ್ತಿದ್ದ ವಿವೇಕಾನಂದರಿಗೆ ಬಹು ಬೇಗ ಕ್ಷೀಣಿಸುತ್ತಿದ್ದ ತಮ್ಮ ಅರೋಗ್ಯದ ಪರಿವೆ ಎಲ್ಲವೂ ಮರೆಯುತ್ತಿತ್ತು. ಒಂದು ದಿನ ವಿವೇಕಾನಂದರು ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಒಬ್ಬ ಶಿಷ್ಯರಿಗೆ ಹೇಳುತ್ತಾರೆ ” ನನ್ನ ಕೊನೆಯ ಆಸೆ ಏನು ಗೊತ್ತೇ? Vivekanandaಯುರೋಪ್ ಮತ್ತು ಅಮೇರಿಕೆಯಲ್ಲಿ ಜರುಗುವ ನಮ್ಮ ವೇದಾಂತ ಕಾರ್ಯಕ್ರಮಗಳ ಸಂಪಾದನೆಯನ್ನು ಸಂಪೂರ್ಣವಾಗಿ ವ್ಯಯಿಸಿದರೂ ಚಿಂತೆಯಿಲ್ಲ, ಈ ನನ್ನ ಜನಕ್ಕೆ ದಿನವೂ ಹೊಟ್ಟೆ ತುಂಬಾ ಅನ್ನ ಬಡಿಸಬೇಕು. ಎಷ್ಟೊಂದು ಅನ್ನ ಗೊತ್ತೇ? ಈ ಅನ್ನಕ್ಕೆ ಬೇಕಿರುವ ಅಕ್ಕಿಯನ್ನು ಬಸಿದು ಚೆಲ್ಲಿದ ನೀರಿನಿಂದ ಗಂಗೆಯ ಮಡಿಲೆಲ್ಲವೂ ಬೆಳ್ಳಗಾಗಿ ಬಿಡಬೇಕು!”

ಇದೆಲ್ಲ ಕಳೆದು ಸುಮಾರು ನೂರಾ ಹದಿನೈದು ವರ್ಷಗಳು ಸಂದರೂ ಗಂಗೆ, ಯಮುನೆ, ತುಂಗೆ, ಭಾಗೀರತಿಗಳ ನೀರು ಇನ್ನೂ ಬೆಳ್ಳಗಾಗಿಲ್ಲ.

ಮೇ ೨೦೧೫ ರಲ್ಲಿ ವಿಶ್ವ ಸಂಸ್ಥೆಯ “ಆಹಾರ ಮತ್ತು ಕೃಷಿ ಸಂಘಟನೆ” (FAO) ಪ್ರಕಟಿಸಿದ “ವಿಶ್ವ ಆಹಾರ ಸುರಕ್ಷತಾ “ ವರದಿಯ ಪ್ರಕಾರ ಭಾರತದಲ್ಲಿ ಸುಮಾರು ೧೯೪.೬ ಮಿಲಿಯನ್ (ಹತ್ತೊಂಬತ್ತುವರೆ ಕೋಟಿ) ಜನ ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಕರ್ನಾಟಕದ ಪಾಲೂ ಸಾಕಷ್ಟಿದೆ.

೨೦೧೧ ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿನ “ವಿಮೋಚನಾ” ಸಂಘಟನೆಯ ಅಧ್ಯಕ್ಷರು ಅಂದಿನ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಕರ್ನಾಟಕದಲ್ಲಿ ಹಸಿವಿನಿಂದ ಬಳಲುತ್ತಿರುವ ಲಕ್ಷಾಂತರ ಮಕ್ಕಳ ಬಗ್ಗೆ india-poverty-hungerಒಂದು ಸವಿಸ್ತಾರವಾದ ಪತ್ರ ಬರೆದು ಕರ್ನಾಟಕದ ನ್ಯಾಯಾಂಗ ಈ ಬಗ್ಗೆ ಗಮನ ಹರಿಸಲು ಕೋರುತ್ತಾರೆ. ಮಾನ್ಯ ಉಚ್ಚ ನ್ಯಾಯಾಲಯವು ಈ ಪತ್ರವನ್ನೇ ಸಾರ್ವಜನಿಕ ಹಿತಾಸಕ್ತಿ ಮುಕದ್ದಮೆಯೆಂದು (W. P. No. 381571 / 2011) ದಾಖಲಿಸಿಕೊಂಡು, ಅಕ್ಟೋಬರ್ ೨೦೧೧ ರಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಒಂದು ವಿವರವಾದ ವರದಿ ನೀಡಲು ನಿರ್ದೇಶನ ನೀಡುತ್ತಾರೆ. ಆಗಸ್ಟ್ ೨೦೧೨ ರಲ್ಲಿ ಸೇವಾ ಪ್ರಾಧಿಕಾರ, ಕರ್ನಾಟಕದ ಮಾನ್ಯ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಎನ್. ಕೆ. ಪಾಟೀಲ್ ನೇತೃತ್ವದ ಸಮಿತಿ ರಚಿಸಿ ತನ್ನ ವರದಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿತು. ಈ ವರದಿಯಲ್ಲಿನ ಕೆಲವು ವಿವರಗಳನ್ನು ಗಮನಿಸಿ:

  1. ಪ್ರತಿ ಸಾವಿರ ಶಿಶುಗಳಲ್ಲಿ ಕರ್ನಾಟಕದಲ್ಲಿ ಆಹಾರ ಕೊರತೆಯಿಂದಾಗಿ ಒಂದು ವರ್ಷಕ್ಕೂ ಮಿಕ್ಕದ ೪೩ ಶಿಶುಗಳು ಅಸು ನೀಗುತ್ತವೆ.
  2. ಐದು ವರ್ಷಗಳ ಒಳಗಿನ ಪ್ರತಿ ಸಾವಿರ ಶಿಶುಗಳಲ್ಲಿ ಸುಮಾರು ೫೫ ಶಿಶುಗಳು ಆಹಾರ ಕೊರತೆಯಿಂದ ಸಾವನ್ನಪ್ಪುತ್ತವೆ.
  3. ೨೦೧೨ ರ ಅಂಕಿ ಅಂಶ ಗಳ ಪ್ರಕಾರ ICDS ಯೋಜನೆಯಲ್ಲಿ ಕರ್ನಾಟಕದಲ್ಲಿ ದಾಖಲಾದ ೩೫,೯೯, ೪೮೪ ಮಕ್ಕಳಲ್ಲಿ ಸುಮಾರು ೧೧,೩೯,೪೫೯ ಮಕ್ಕಳು ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ, ಸುಮಾರು ೬೩,೨೭೩ ಮಕ್ಕಳು ಅತ್ಯಂತ ಭೀಕರ ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ.
  4. ೨೦೧೨ ರಲ್ಲಿ ಸುಮಾರು ೧೬,೧೨,೧೬೩ ಮಕ್ಕಳಿಗೆ ICDS ಯೋಜನೆಯ ಲಾಭವೇ ದಕ್ಕುತ್ತಿಲ್ಲ. ಇವರಲ್ಲಿ ೨,೧೭,೮೮೯ ಮಕ್ಕಳು ಆಹಾರ ಕೊರತೆಯಿಂದ ಬಳಲುತ್ತಿದ್ದರೆ, ೨೧,೧೫೧ ಮಕ್ಕಳು ಅತ್ಯಂತ ಭೀಕರ ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ.

ಇದೆಲ್ಲ ನಾಲ್ಕು ವರ್ಷಗಳ ಹಿಂದಿನ ಕಥೆ. ಮತ್ತು ಇವೆಲ್ಲವೂ ಸರಕಾರಿ ಅಂಕಿ ಅಂಶಗಳಲ್ಲಿ ಹಿಡಿದಿಟ್ಟ ವಿವರಗಳು; ಇನ್ನು ಇಂದಿನ ಸತ್ಯಾಂಶ ಇನ್ನೆಷ್ಟು ಭೀಕರವೋ?

ನಮ್ಮ ಸಂವಿಧಾನದ ೩೯ (ಎಫ್ ) ವಿಧಿಯ ಪ್ರಕಾರ ಮಕ್ಕಳು ಆರೋಗ್ಯವಂತರಾಗಿ ಬದುಕಲು ಬೇಕಾದ ವಾತಾವರಣ ನಿರ್ಮಿಸುವ ಜವಾಬ್ದಾರಿ ಪ್ರಭುತ್ವಕ್ಕಿದೆ. ವಿಪರ್ಯಾಸವೆಂದರೆ, ನಲವತ್ತೇಳರ ಸ್ವಾತಂತ್ರ್ಯ ಬಂದು ಹತ್ತಿರ ಹತ್ತಿರ ಏಳು ದಶಕಗಳು ಸಂದ ನಂತರ ಸ್ವತಂತ್ರ ಭಾರತದಲ್ಲಿ ಜನಿಸಿದ ಒಂದು ಶಿಶುವಿಗೆ ಕನಿಷ್ಠ ಬದುಕಲು ಬೇಕಿರುವಷ್ಟು ಆಹಾರ ಕೊಡದಷ್ಟು ದಾರಿದ್ರ್ಯವಿರುವ ಸಮಾಜದಲ್ಲಿ ನಾವಿದ್ದೇವೆ. ೨೦೦೫ ಮತ್ತು ೨೦೧೩ ರ ಮಧ್ಯೆ FCI ಗೋದಾಮುಗಳಲ್ಲಿ ಸುಮಾರು 1.94 ಲಕ್ಷ ಮೆಟ್ರಿಕ್ ಟನ್ ಗಳಷ್ಟು (೧೯೪೦೦೦೦೦೦೦೦೦೦೦ ಕಿಲೊ) ಆಹಾರ ಸಾಮಗ್ರಿ ಮಣ್ಣು ಪಾಲಾಗಿದೆ. ಇದರ ಸಾವಿರದ ಒಂದು ಅಂಶ ಆಹಾರ ಶಿಶುಗಳ ಹಸಿದ ಹೊಟ್ಟೆ ಸೇರಿದ್ದರೆ ಎಷ್ಟು ಲಕ್ಷ ಮಕ್ಕಳನ್ನು ಬದುಕಿಸಬಹುದಿತ್ತೋ?

ಪ್ರಸಕ್ತದಲ್ಲಿ ಅನ್ನವನ್ನು ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಬಡವರಿಗೆ ಅಕ್ಕಿಕೊಡುವದರಿಂದ ಮೊದಲ್ಗೊಂಡು, Siddaramaiah-annyabhagyaಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವದನ್ನು ಕೂಡ ವಿರೋಧಿಸಲಾಗುತ್ತಿದೆ. ಒಂದು ಕಡೆ, ಭಾರತವನ್ನೇ ತಮ್ಮ ಮನೆ ಮಾಡಿಕೊಂಡು ಬಡವರ ಮಧ್ಯೆ ಗುಡಿಸಲು ಕಟ್ಟಿಕೊಂಡು ಬಡಜನರನ್ನು ಸಂಘಟಿಸುತ್ತಿರುವ ವಿಶ್ವ ಮಾನ್ಯ ಅರ್ಥ ಶಾಸ್ತ್ರಜ್ಞ್ಯ ಜೀನ್ ಡ್ರೀಜ್ ರಂಥವರು ಬಡವರ ಆಹಾರದ ಹಕ್ಕಿನ ಪರ ಧ್ವನಿ ಎತ್ತಿದ್ದಾರೆ. ಆದರೆ ಭಾರತವನ್ನು ‘ಮಾತೃಭೂಮಿ’ ಎನ್ನುವ “ಬುದ್ಧಿವಂತ” ಜಾತಿಗಳ ಸಾಹಿತಿಗಳು ಇದನ್ನು ವಿರೋಧಿಸಿದ್ದಾರೆ. ಮಾತು ಮಾತಿಗೆ ವೇದ ಉಪನಿಷತ್ತು ಉಲ್ಲೇಖಿಸಿ ಮಾತನಾಡುವವರು “ಅನ್ನಂ ಬ್ರಹ್ಮೇತಿ ವ್ಯಜಾನತ್” ಎಂಬ ತೈತ್ತಿರೀಯ ಉಪನಿಷತ್ತಿನ ವಾಕ್ಯವನ್ನು ಕೇವಲ ತಮ್ಮ ಚಿತ್ತ ಭಿತ್ತಿಯಲ್ಲಿ ಮೂಡಿಸಿಕೊಳ್ಳದೆ ಭಾವಕೋಶದಲ್ಲಿಳಿಸಿಕೊಂಡು ನೋಡಿದರೆ ಹಸಿವಿನ ಭೀಕರತೆ ಕಾಣಿಸೀತು. ಶಾಸ್ತ್ರಗಳನ್ನೇ ಶಸ್ತ್ರ ಮಾಡಿಕೊಂಡು ಸಮಾಜದ ಬಹುಜನರನ್ನು ಅಕ್ಷರದಿಂದ ವಂಚಿಸಿದ ಶಕ್ತಿಗಳೇ ಇಂದು ಬಡವರಿಗೆ ಅನ್ನದಿಂದ ವಂಚಿಸುವ ಹುನ್ನಾರದಲ್ಲಿ ಒಂದಾಗಿದ್ದಾರೆ.

ಮಧ್ಯಮವರ್ಗಕ್ಕೂ ಸಾಕಷ್ಟು ಗೊಂದಲಗಳಿವೆ. ಇಂದು ಸರಕಾರ ಸಬ್ಸಿಡಿ ಹಣ ನೀಡದಿದ್ದರೆ ಇಂದು ಪ್ರತಿ ಮನೆಗೂ ಒಂದೂವರೆ ಪಟ್ಟು ವಿದ್ಯುತ್ ಮತ್ತು ಅಡುಗೆ ಗ್ಯಾಸ್ ದರ ತೆರಬೇಕು. ಒಂದೇ ಒಂದು ವರ್ಷ ಸಬ್ಸಿಡಿ ನೀಡದಿದ್ದರೆ ದೇಶದ ಅರವತ್ತು ಶೇಕಡಾ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸತ್ತು ಹೋಗುತ್ತವೆ. IITಯ ವಿವೇಕಾನಂದ ಅಧ್ಯಯನ ಕೇಂದ್ರದಲ್ಲಿ ದೇಶಭಕ್ತಿ ಪ್ರದರ್ಶಿಸಿ ಬೇಜಾರಾದ ನಂತರ ನಂತರ ಅಮೇರಿಕ ಕೈ ಬೀಸಿ ಕರೆಯುತ್ತದೆ. ಮಧ್ಯಮ ವರ್ಗಕ್ಕೆ ಇವೆಲ್ಲವೂ ಪ್ರಕೃತಿ ಸಹಜ; ಆದರೆ ಬಡವರಿಗೆ ಅಕ್ಕಿ ಕೊಟ್ಟರೆ ಅದು ದೇಶ ದ್ರೋಹ!

ಹತ್ತಾರು ಸಾವಿರ ಕೋಟಿ ಕೈಗಾರಿಗಾ ಸಹಾಯ ಧನ ಮತ್ತು ಪುಗಸಟ್ಟೆ ಸರಕಾರಿ ಜಮೀನು ಪಡೆದು ಕೊಂಡು ಹತ್ತೂವರೆ ಸಾವಿರ ಕಾರ್ಮಿಕರನ್ನು ದುಡಿಸಿಕೊಂಡು ಕೇವಲ ಎರಡೂವರೆ ದಶಕಗಳಲ್ಲಿ ಹದಿನೇಳು ಸಾವಿರದ ಐನೂರು ಬಿಲಿಯನ್ ಡಾಲರ್ (ರೂಪಾಯಿ ಅಲ್ಲ ಅಮೆರಿಕನ್ ಡಾಲರ್, ಗಮನಿಸಿ) ಸಂಪತ್ತು ಸಂಗ್ರಹಿಸಿರುವ ಗೌತಮ್ ಅದಾನಿಯವರಿಗೇ ಸುಸ್ತಾಗಿಲ್ಲ, ಇನ್ನು ಸಾಕು ಎನಿಸಿಲ್ಲ; ಇನ್ನು ತಿಂಗಳಿಗೆ ಹತ್ತು-ಹದಿನೈದು ಕೆಜಿ ಅಕ್ಕಿ ಪಡೆದುಕೊಂಡ ಬಡವನಿಗೆ ಸೋಮಾರಿತನ ಬರುತ್ತದೆಯೇ?

ಇಂದು ಬಡವರ ಜೀವನಕ್ಕೆ ಅಕ್ಕಿ ಬಂದು ಅವರ ಪ್ರಾಥಮಿಕ ಅಗತ್ಯತೆಗಳಿಗೆ ಹರಸಾಹಸ ಮಾಡುವ ಪ್ರಮೇಯ ಕೊಂಚ ಮಟ್ಟಿಗೆ ತಗ್ಗಿದೆ. ಎರಡು ಮುಷ್ಟಿ ಅಕ್ಕಿಗೆ ಜೀತದಂತೆ ದುಡಿಸಿಕೊಳ್ಳುವವರ ಸೊಲ್ಲು ಸ್ವಲ್ಪ ಅಡಗಿದೆ. ಮನೆ ಕೆಲಸದವರಿಂದ ಮೊದಲ್ಗೊಂಡು ಕಟ್ಟಡ ಕಾರ್ಮಿಕರ ತನಕ ಅಸಂಖ್ಯ ಅಸಂಘಟಿತರಿಗೆ ಮಾನವ ಘನತೆಗೆ ಸಲ್ಲಬೇಕಾದ ವೇತನ ಕೊಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹೊಲದಲ್ಲಿ ದುಡಿಯುವ ಕೃಷಿ ಕಾರ್ಮಿಕ, ನಮ್ಮ ಕೊಳೆ ತೊಳೆಯುವ ಪೌರ ಕಾರ್ಮಿಕರಿಗೆ ಚಿಲ್ಲರೆ ಕಾಸು ಕೊಟ್ಟು ದುಡಿಸಿಕೊಳ್ಳುವ ಕಾಲ ಮರೆಯಾಗುತ್ತಿದೆ.

ಇಂದು ಯಾವುದೇ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಬುದ್ಧಿಶಕ್ತಿಯಿಂದ ಮತ್ತು ಶ್ರಮಶಕ್ತಿಯಿಂದ ಕೆಲಸ ಮಾಡುವ ಕಾರ್ಮಿಕರ ವೇತನಗಳಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಅದು ಇರಲೂ ಕೂಡದು. ನಿಜವಾಗಿ ನೋಡಿದರೆ ಶ್ರಮ ಶಕ್ತಿಯ ಕಾರ್ಮಿಕರಿಗೆ ಹೆಚ್ಚಿನ ಆಹಾರ ಮತ್ತು ಅರ್ಥಿಕ ಸುರಕ್ಷತೆಯ ಅಗತ್ಯವಿದೆ.

ನಿಮಗೆ ಗೊತ್ತಿರಲಿ, ಸಬ್ಸಿಡಿಯನ್ನು ಹಿಗ್ಗಾ ಮುಗ್ಗಾ ವಿರೋಧಿಸುವ ಅಮೇರಿಕ ವರ್ಷವೊಂದಕ್ಕೆ ತನ್ನ ಕೃಷಿ ಕ್ಷೇತ್ರಕ್ಕೆ ೨೦ ಬಿಲಿಯನ್ ಡಾಲರ್ ಗಳಷ್ಟು “ಸಹಾಯ ಧನ” ನೀಡುತ್ತದೆ. ಯೋಚಿಸಿ ನೋಡಿ, ಎಲ್ಲವನ್ನು ಮಾರುಕಟ್ಟೆಯೇ ನಿರ್ಧರಿಸಲಿ ಎಂದು ಬಗ್ಗೆ ಜಗತ್ತಿಗೆಲ್ಲ ಪಾಠ ಹೇಳುವ ಅಮೇರಿಕ ಯಾಕೆ ಸಹಾಯ ಧನ ಕೊಡಬೇಕು? ಯಾಕೆಂದರೆ ಜಾಗತಿಕ ಕೃಷಿ ಬಿಕ್ಕಟ್ಟು ಎಷ್ಟು ಭೀಕರವಾಗಿದೆಯೆಂದು ಎಲ್ಲರಿಗಿಂತ ಚೆನ್ನಾಗಿ ಅಮೆರಿಕೆಗೇ ಗೊತ್ತಿದೆ. ಬಂಡವಾಳ ಆಕರ್ಷಿಸುವ ನೆಪದಲ್ಲಿ ಇದ್ದ ಅರಣ್ಯ ಮತ್ತು ಕೃಷಿ ಭೂಮಿಯನ್ನು ಕಸಿಯುತ್ತಿರುವ ಸರಕಾರಗಳು ಕೃಷಿಯನ್ನು ಅಷ್ಟಿಷ್ಟು ಕೂಡ ಪೋಷಿಸದಿದ್ದರೆ ಇನ್ನು ಒಂದೆರಡು ದಶಕಗಳಲ್ಲೇ ಹೊಟ್ಟೆಗೆ ಸಿಮೆಂಟ್ ತಿನ್ನುವ ಪ್ರಮೇಯ ಬಂದೀತು. ಅಕ್ಕಿ ದವಸ ಧಾನ್ಯಗಳನ್ನು ವಿತರಿಸುವ ಅನಿವಾರ್ಯತೆ ಇದ್ದ ಕಡೆ ಅವುಗಳನ್ನು ಖರೀದಿಸುವ ಅನಿವಾರ್ಯತೆ ಕೂಡ ಇರುತ್ತದೆ. ಹಾಗೆಂದೇ, ರೈತರ ಬೆಳೆಗಳಿಗೆ ತಕ್ಕ ಬೆಲೆಯೂ ದಕ್ಕುತ್ತದೆ.

ಕಾಲೇಜ್ ಮತ್ತು ವಿಶ್ವ ವಿದ್ಯಾಲಯ ಪ್ರಾಧ್ಯಾಪಕರೂ ಸೇರಿದಂತೆ, ಇಂದು ಸಂಘಟಿತವಲಯದಲ್ಲಿರುವ ಕಾರ್ಮಿಕ ವರ್ಗ (ಮಧ್ಯಮ ವರ್ಗ), ಬ್ಯಾಂಕ್, ಸರಕಾರಿ ವಲಯ, ವಿಮಾ ನೌಕರರು ಇತ್ಯಾದಿ ESI, PF, PPF, ಪೆನ್ಷನ್ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. india-middle-classಆದಾಯ ತೆರಿಗೆ ಕಟ್ಟುವ ಈ ದೇಶದ ತೆರಿಗೆದಾರ ಈ ಸಾಮಾಜಿಕ ಸುರಕ್ಷಾ ಯೋಜನೆಗಳಿಗೆ ಯಾಕೆ ಹಣ ಕೊಡಬೇಕು? ಈ ಹಣವನ್ನು ಬಂಡವಾಳವಾಗಿ ವಿನಿಯೋಗಿಸಿದರೆ ಇನ್ನಷ್ಟು ಲಾಭ ಬರುವದಿಲ್ಲವೆ? ಈ ಪ್ರಶ್ನೆಗೆ ಮಧ್ಯಮ ವರ್ಗ ಉತ್ತರಿಸುವುದೇ?

ಅದು ಹೋಗಲಿ, ನಮ್ಮ ಖಾತೆಯ ಮಂತ್ರಿಗಳಿಗೆ ವಯಸ್ಸು ಜಾಸ್ತಿಯಾಯಿತು, ಅವರು ಸೂಟು ಬೂಟು ಧರಿಸಿ ಇಂಗ್ಲೀಷ್ ಮಾತಾಡುವುದಿಲ್ಲ ಹಾಗಾಗಿ ಅವರನ್ನು ಬದಲಾಯಿಸಿ ಎಂದು ಪಟ್ಟು ಹಿಡಿದ IT, ITES, BT, BPO ವಲಯ, ಸರಕಾರದ ಸಹಾಯಧನ ಪಡೆದು ಸಾಮಾನ್ಯ ವಾಣಿಜ್ಯ ಬಳಕೆಯ ವಿದ್ಯುತ್ ದರಕ್ಕಿಂತ ಶೇಕಡಾ ೨೫ ರಷ್ಟು ಕಡಿಮೆ ವಿದ್ಯುತ್ ದರ ಪಾವತಿ ಮಾಡುತ್ತಿದೆ ಎಂಬುದು ಎಷ್ಟು ಜನಕ್ಕೆ ಗೊತ್ತಿದೆ? ಈ ವಿನಾಯತಿ ಸುಮಾರು ಹದಿನೈದು ವರ್ಷಗಳಿಂದ ಜಾರಿಯಲ್ಲಿದೆ. ಈ ವಿನಾಯತಿ ಹಣವನ್ನು ವಿನಿಯೋಗಿಸಿದ್ದರೆ ಇಂದು ಕರ್ನಾಟಕದಲ್ಲಿ ಸಾವಿರ ಮೆಗಾವ್ಯಾಟ್ ವಿದ್ಯುತ್ ಸ್ಥಾವರ ಸ್ಥಾಪನೆಯಾಗುತ್ತಿರಲಿಲ್ಲವೇ? ಇದು ಪರವಾಗಿಲ್ಲ; ಆದರೆ ಅಕ್ಕಿ ಕೊಟ್ಟರೆ ಅದು ಅರ್ಥಿಕ ವಿಕೃತಿ? ಅಲ್ಲವೇ?

ಅನ್ನಭಾಗ್ಯವನ್ನು ವಿರೋಧಿಸುವವರಲ್ಲಿ ಬಹುತೇಕರು ಹೇಳುವುದು ಅಕ್ಕಿಯನ್ನು ಮಾರುಕಟ್ಟೆಯಲ್ಲಿ ಮಾರಲಾಗುತ್ತದೆ ಎಂದು. ಇಂದು ಕೈಗಾರಿಕಾ ಶೆಡ್ ಗಳು, ಸರಕಾರೀ ಬಂಗಲೆಗಳು, BDA ನಿವೇಶನಗಳು, ಬಿಟ್ಟರೆ, ಪ್ರಶಸ್ತಿ, ಬಿರುದು ಬಾವಲಿಗಳನ್ನೂ ಮಾರಿಕೊಂಡವರಿದ್ದಾರೆ. ಸರಕಾರಿ ಉದ್ಯೋಗದಲ್ಲಿದ್ದು ಕೊಂಡೇ ಖಾಸಗಿ ಕೆಲಸ ಮಾಡುವ ವೈದ್ಯರು, ಶಿಕ್ಷಕರು, ಯಾವುದಕ್ಕೂ ಬರವಿಲ್ಲ. ಅಸಮತೆಯ ತಳಹದಿಯ ಮೇಲೆ ನಿಂತಿರುವ ನಮ್ಮ ಸಮಾಜದಲ್ಲಿ ಅಂತಹ ವಿಕೃತಿಗಳು ಎಲ್ಲಾ ಹಂತಗಳಲ್ಲೂ, ಎಲ್ಲಾ ವರ್ಗ ವಿಭಾಗಗಳಲ್ಲೂ ಸಹಜವಾಗಿ ನುಸುಳಿವೆ. ಈ ವಿಕೃತಿಗಳನ್ನು ಖಂಡಿತ ತಡೆಯಬೇಕು; ಅಂತೆಯೇ, ಮೇಲಿನ ಸ್ಥರದಿಂದ ಮೊದಲ್ಗೊಂಡು ಈ ಪ್ರಯತ್ನವಾಗಬೇಕೇ ವಿನಃ ನಿರ್ಗತಿಕರಿಂದ ಅನ್ನ ಕಸಿಯುವ ಮೂಲಕ ಅಲ್ಲ. ಸರಕಾರೀ ಆಸ್ಪತ್ರೆಯಲ್ಲಿ ಭ್ರಷ್ಟಾಚಾರಕ್ಕೆ ಆಸ್ಪತ್ರೆಯನ್ನೇ ಮುಚ್ಚುವುದು ಹೇಗೆ ಮದ್ದಲ್ಲವೋ ಹಾಗೆಯೇ ಅನ್ನಭಾಗ್ಯದ ದುರುಪಯೋಗಕ್ಕೆ ಅನ್ನವನ್ನೇ ಕಸಿಯುವುದೂ ಮದ್ದಲ್ಲ.

ಇಂದು ಎಲ್ಲೆಂದರಲ್ಲಿ ತಲೆ ಎತ್ತಿರುವ ವಿಶೇಷ ವಿತ್ತ ವಲಯಗಳನ್ನು (SEZ) ನೋಡಿ. ಈ ವಲಯಗಳಿಗೆ ಭಾರತದ ಯಾವ ಕಾನೂನು ಕೂಡ ಅನ್ವಯಿಸುವುದಿಲ್ಲ. ನಿಜವಾಗಿ ನೋಡಿದರೆ ಕಾನೂನಿನ ಪ್ರಕಾರ SEZಗಳು ಭಾರತದ ಸ್ವಾಧೀನತೆಗೆ ಒಳಪಡುವುದಿಲ್ಲ. ಕರ್ನಾಟಕ ಒಂದರಲ್ಲೇ ಸುಮಾರು ಒಂದು ನೂರರಷ್ಟು SEZ ಗಳು ತಲೆ ಎತ್ತಿವೆ. ಇಂದು ಒಬ್ಬ ಸಾಮಾನ್ಯ ವಲಯದ ದೊಡ್ಡ ಕೈಗಾರಿಕೊದ್ಯಮಿಗೆ ಕನಸಲ್ಲೂ ದಕ್ಕದ ಸವಲತ್ತುಗಳು SEZ ವಲಯಕ್ಕೆ ದಕ್ಕಿವೆ. ತೆರಿಗೆ ವಿನಾಯತಿ, ಸ್ಟ್ಯಾಂಪ್ ಮೊತ್ತದ ವಿನಾಯತಿ, ವಿದ್ಯುತ್ ದರದಲ್ಲಿ ಕಡಿತ ಇತ್ಯಾದಿ ಸವಲತ್ತುಗಳು ದೊರೆಯುವ ಈ SEZ ಗಳ Streetchildrenಬಗ್ಗೆ ಯಾವ ಕೈಗಾರಿಕಾ ದಿಗ್ಗಜನೂ ಸೊಲ್ಲೆತ್ತುವುದಿಲ್ಲ. ಅವರ ಸಿಟ್ಟು ಏನಿದ್ದರೂ ಅಕ್ಕಿಯ ಮೇಲೆ.

ಅದು ಹೋಗಲಿ ನಿಮ್ಮ ಮನೆಯಲ್ಲಿ ಮೇಲೆ ಸೌರ ಶಕ್ತಿ ಚಾಲಿತ ಹೀಟರ್ ಅಳವಡಿಸಿದರೆ ಒಂದು ವಿದ್ಯುತ್ ಯೂನಿಟ್ ಗೆ ಐವತ್ತು ಪೈಸೆ ವಿನಾಯತಿಯಿದೆ. ಇದಕ್ಕೆ ಕೊಡುವ ಸಮರ್ಥನೆ ಏನು ಗೊತ್ತೇ ಅಷ್ಟರ ಮಟ್ಟಿಗೆ ಉಷ್ಣ ಸ್ಥಾವರದ ಕಲ್ಲಿದ್ದಲು ಉಳಿತಾಯ ಮತ್ತು ಇದು ಪರಸರ ಸ್ನೇಹಿ. ಅದೇ ಒಬ್ಬ ಬಡವ ತನ್ನ ಮನೆಯ ಭೂಸ ಇಲ್ಲವೇ ಸೆಗಣಿ ಶೇಖರಿಸಿ ನೀರು ಬಿಸಿ ಮಾಡಿದರೆ, ಇಲ್ಲಾ ತಣ್ಣೀರು ಸ್ನಾನ ಮಾಡಿದರೆ ಯಾವ ವಿದ್ಯುತ್ ವಿನಾಯತಿ ಇದೆ?

ಸಮಾಜದ ಹೆಚ್ಚಿನ ಸವಲತ್ತು ಸಹಾಯ ಧನಗಳು ಯಾವತ್ತೂ ಅಪಾತ್ರರಿಗೇ ಮೀಸಲು. ತಳವರ್ಗ ಸ್ವಲ್ಪ ಮಟ್ಟಿನ ತುಂಡು ತುಣುಕು ಏನಾದರೂ ಕೇಳಲು ಬಂದರೆ ಗದರಿ ಕಳಿಸುವ ವ್ಯವಸ್ಥೆ ನಮ್ಮದು.

ಒಂದು ಹಿಡಿ ಅಕ್ಕಿ, ಒಂದು ಮೊಟ್ಟೆ ತಿಂದು ಯಾವ ಬಡವನೂ ಕೈಗಾರಿಕಾ ಸಾಮ್ರಾಜ್ಯ ಕಟ್ಟುವುದಿಲ್ಲ. ಹಾಗೆಯೇ, ಸರಕಾರದ ಸೌಕರ್ಯ, ವಿನಾಯತಿ, ಸವಲತ್ತು ಪಡೆದು ನಡೆಸುವ ಯಾವ ಕೈಗಾರಿಕೆಗಳೂ ಬಡವರು ಒಂದು ಹೊತ್ತಿನ ಅನ್ನ ತಿಂದ ಮಾತ್ರಕ್ಕೆ ಸತ್ತು ಹೋಗುವುದಿಲ್ಲ. ಯಾರಿಗೆ ಏನೇ ಆಗಲಿ, ಯಾವ (ರಾಷ್ಟ್ರೀಯ) ಪ್ರಾಧ್ಯಾಪಕರ ಸಂಬಳ ಸವಲತ್ತಿಗೂ ಬಡವನ ಅಕ್ಕಿಯಿಂದ ಕತ್ತರಿ ಬೀಳುವುದಿಲ್ಲ.

ಒಂದು ಕೊನೆಯ ಮಾತು. ಕೈಗಾರಿಕೆಗಳು, ಉದ್ದಿಮೆದಾರರು, ರಾಜಕಾರಣಿಗಳು, ಅರ್ಥ ಶಾಸ್ತ್ರಜ್ಞರು ವ್ಯಕ್ತಪಡಿಸುತ್ತಿರುವ ವಿರೋಧವನ್ನು ಅರ್ಥೈಸಿಕೊಳ್ಳಬಹುದು. ಆದರೆ ಜೀವನದ ದಯನೀಯ ಮಜಲುಗಳನ್ನು ಕಂಡಿರುವ ಒಬ್ಬ ಸಾಹಿತಿBhyrappa ಅನ್ನ ವಿರೋಧಿಯಾದರೆ ತುಂಬಾ ಸಂಕಟವೆನಿಸುತ್ತದೆ. ಭೈರಪ್ಪನವರನ್ನು ಸೈದ್ಧಾಂತಿಕ ಕಾರಣಗಳಿಗಾಗಿ ವಿರೋಧಿಸುವವರೂ ಕೂಡ ಅವರ ಸಂಘರ್ಷಮಯ ಜೀವನವನ್ನು ಗೌರವಿಸುತ್ತಿದ್ದರು. ಆದರೆ ವಿಪರ್ಯಾಸವೆಂದರೆ, ಹಸಿವಿನ ಸಂಕಟವನ್ನು ಇನ್ನಿಲ್ಲದಂತೆ ಅನುಭವಿಸಿ, ಅವಿರ್ಭಾವಿಸಿ ಪಕ್ವವಾಗಬೇಕಿದ್ದ, ಹಸಿವಿನ ಕುರಿತು ಜಾಗೃತಿ ಮೂಡಿಸಿ ಹೋರಾಟ ನಿರೂಪಿಸುವದರಲ್ಲಿ ಮುಂಚೂಣಿಯಲ್ಲಿರ ಬೇಕಿದ್ದ ನಾಡಿನ ಹಿರಿಯ ಜೀವವೊಂದು ಅನ್ನವನ್ನು ವಿರೋಧಿಸುತ್ತಿರುವುದು ಅತ್ಯಂತ ಕ್ರೂರ ವಿಪರ್ಯಾಸ.

ಮಾರುಕಟ್ಟೆಯ ಮಂತ್ರವಾದಿಗಳ ಅಕ್ಷಮ್ಯ ಅನಾಚಾರಗಳ ಬಗ್ಗೆ ಸೊಲ್ಲೇ ಎತ್ತದ ಭೈರಪ್ಪನವರು, ತಮ್ಮ ಎಲ್ಲ ಬಾಣ ಬಿರುಸು ಗಳನ್ನೂ ಒಂದು ತುತ್ತು ಅನ್ನದ ಮೇಲೆ ಹೂಡುತ್ತಿದ್ದಾರೆ. ಶಾಸಕರ ಕುದುರೆ ವ್ಯಾಪಾರ, ರೆಸಾರ್ಟ್ ರಾಜಕೀಯ, ಗಣಿ ಅಟ್ಟಹಾಸಗಳಿಂದ ತುಂಬಿದ ಭ್ರಷ್ಟ ರಾಜಕೀಯ ವ್ಯವಸ್ಥೆಯನ್ನು ಕರ್ನಾಟಕದ ಜನ ಸಮುದಾಯ ಒಟ್ಟು ಗೂಡಿ ತಿರಸ್ಕರಿಸಿದಾಗ ಜನ ಸಮುದಾಯಕ್ಕೆ ನೇತೃತ್ವ ಕೊಡಲು ಬಾರದ ಈ ಜಾಗೃತಿ ಅನ್ನವನ್ನು ಹಂಚಲು ಹೊರಟಾಗ ಹೇಗೆ ಜಾಗೃತವಾಯಿತೋ ಅವರೇ ಹೇಳಬೇಕು.

ಮೋದಿ ಸರ್ಕಾರದ ಒಂದು ವರ್ಷದ ಆಡಳಿತ : ಸುಳ್ಳುಗಳ ವಿಜೃಂಭಣೆ ಮತ್ತು ’ಬಹುತ್ವ’, ’ಬಂಧುತ್ವ’ ತತ್ವಗಳ ನಾಶ

– ಬಿ. ಶ್ರೀಪಾದ ಭಟ್

[ಇಲ್ಲಿನ ಪರಾಮರ್ಶೆಯಲ್ಲಿ ಕಾಂಗ್ರೆಸ್ ಪರವಾದ ಯಾವುದೇ ಧೋರಣೆಗಳಿಲ್ಲ. ನಾನು ಕಾಂಗ್ರೆಸ್ ವಕ್ತಾರನೂ, ಬೆಂಬಲಿಗನೂ ಅಲ್ಲ. ಕಳೆದ ದಶಕಗಳಲ್ಲಿ ಕಾಂಗ್ರೆಸ್ ಮಾಡಲಾರದ್ದನ್ನು ಈ ಮೋದಿ ಸರ್ಕಾರ ಒಂದು ವರ್ಷದಲ್ಲಿ ಮಾಡಬೇಕೆನ್ನುವ ಹಠವೇಕೆ ಎನ್ನುವ ಆತ್ಮವಂಚನೆಯ, ವಿತಂಡವಾದದ ಪ್ರಶ್ನೆಗಳಿಗೆ ಉತ್ತರವೂ ಅಲ್ಲ. ಏಕೆಂದರೆ ಈ ಬಿಜೆಪಿ ಮತ್ತು ಮೋದಿಯ ಸರ್ವಾಧಿಕಾರದ, ಹಿಂದುತ್ವದ ವಿರುದ್ಧ ಮಾತನಾಡುವವರನ್ನೆಲ್ಲ ಕಾಂಗ್ರೆಸ್ ಎಂಜೆಂಟ್ ಎಂದು ಜರೆಯುವ ಕಾಮಾಲೆ ಮನಸ್ಸುಗಳಿಗೆ ಉತ್ತರಿಸುವ ಬಾಲಿಶತನದ ಅವಶ್ಯಕತೆ ಸಹ ಇಲ್ಲ. ಹಿಂದಿನ ಯುಪಿಎ ಸರ್ಕಾರದ ಜನ ಕಲ್ಯಾಣ ಯೋಜನೆಗಳನ್ನು ಹೈಜಾಕ್ ಮಾಡಿ ತಮ್ಮದೆಂದು ಸುಳ್ಳು ಹೇಳುತ್ತಿರುವ ಮೋದಿ ಸರ್ಕಾರದ ನಿಜಸ್ವರೂಪವನ್ನು ಬರೆಯಲು ಈ ಹೋಲಿಕೆಯನ್ನು ಮಾಡಲಾಗುತ್ತಿದೆ.]

ಕೇಂದ್ರದಲ್ಲಿ ಎನ್‌ಡಿಎ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ಬಿಜೆಪಿ ಪಕ್ಷದ ನಾಯಕರು,ಕೇಂದ್ರದ ಮಂತ್ರಿಗಳು modi_bjp_conclaveಮತ್ತು ಮಥುರಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಹೇಳಿದ ಸುಳ್ಳುಗಳ ಕೆಲವು ಸ್ಯಾಂಪಲ್:

ಸುಳ್ಳು : ಎನ್‌ಡಿಎ ಸರ್ಕಾರದ ಮುಖ್ಯ ಯೋಜನೆ ’ಸ್ವಚ್ಛ ಭಾರತ ಆಭಿಯಾನ್’.
ಸತ್ಯ : ಯುಪಿಎ ೨ ನೇ ಸರ್ಕಾರ ಜಾರಿಗೊಳಿಸಿದ್ದ ’ನಿರ್ಮಲ್ ಭಾರತ್ ಆಭಿಯಾನ್’ ಅನ್ನು ಹೆಸರು ಬದಲಿಸಿ ’ಸ್ವಚ್ಛ ಭಾರತ್ ಆಭಿಯಾನ್’ ಎಂದು ಕರೆಯಲಾಗಿದೆ.

ಸುಳ್ಳು : ಗ್ರಾಹಕರ ಖಾತೆಗೆ ನೇರವಾಗಿ ಹಣದ ವರ್ಗಾವಣೆ (Direct Transfer of Cash) ಯ ಯೋಜನೆಯು ಮೋದಿ ನೇತೃತ್ವದ ಸರ್ಕಾರದ ಯೋಜನೆ.
ಸತ್ಯ : ಯುಪಿಎ ೨ ಸರ್ಕಾರವು ೨1 ಅಕ್ಟೋಬರ್ ೨೦೧೨ರಂದು ರಾಜಸ್ತಾನದ ದುಡು ಗ್ರಾಮದಲ್ಲಿ ಆಗಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ’ನೇರವಾಗಿ ಹಣದ ವರ್ಗಾವಣೆ’ (Direct Transfer of Cash) ಯೋಜನೆಯನ್ನು ಉದ್ಘಾಟಿಸಿದರು. ಈ ಹಣದ ವರ್ಗಾವಣೆಯು ವೃದ್ಧರ ಪಿಂಚಣಿ, ಅರೋಗ್ಯದ ವಿಮೆ, ಉದ್ಯೋಗ ಖಾತ್ರಿ ಯೋಜನೆ ನರೇಗಾದಂದತಹ ಯೋಜನೆಗಳಿಗೆ ಅನುಕೂಲವಾಗುವಂತೆ ರೂಪಿಸಲಾಗಿತ್ತು.

ಸುಳ್ಳು : ಎನ್‌ಡಿಎ ಸರ್ಕಾರದ ಆಡಳಿತದ ಕಳೆದ ಒಂದು ವರ್ಷದ (೨೦೧೪-೧೫) ವಿದ್ಯುತ್ ಉತ್ಪಾದನೆಯು ಕಳೆದ ೩೦ ವರ್ಷಗಳ ವಿದ್ಯುತ್ ಉತ್ಪಾದನೆಗೆ ಸರಿಗಟ್ಟಿದೆ.
ಸತ್ಯ : ಜಗತ್ತಿನ ಇತಿಹಾಸದಲ್ಲಿಯೇ ಯಾವುದೇ ಸರ್ಕಾರವು ೩೦ ವರ್ಷಗಳ ವಿದ್ಯುತ್ ಉತ್ಪಾದನೆಯನ್ನು ಕೇವಲ ಒಂದು ವರ್ಷದಲ್ಲಿ ಸರಿಗಟ್ಟಲು ಸಾಧ್ಯವೇ? ಯಾವುದೇ ಬೇಜವಬ್ದಾರಿ ವ್ಯಕ್ತಿ, ಹೊಣೆಗಾರಿಕೆ ಇಲ್ಲದ ವ್ಯಕ್ತಿ ಇಂತಹ ಶತಮಾನದ ಸುಳ್ಳನ್ನು ನುಡಿಯಲು ಸಾಧ್ಯ. ಆದರೆ ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ತನ್ನ ಬೆನ್ನನ್ನು ತಟ್ಟಿಕೊಳ್ಳುವ ಆತ್ಮರತಿಯ ಪ್ರಲಾಪ ಫಲವಾಗಿ ಇಂತಹ ಅಸಂಬದ್ಧ ಮತ್ತು ಶತಮಾನದ ಸುಳ್ಳನ್ನು ಹೇಳಿದ್ದಾರೆ.

ಸುಳ್ಳು : ಪ್ರಾವಿಡೆಂಟ್ ಫಂಡ್‌ನ ಖಜಾನೆಯಲ್ಲಿ ಬಡ ಕಾರ್ಮಿಕರ ಸುಮಾರು ೨೭,೦೦೦ ಕೋಟಿ ಹಣ ಕೊಳೆಯುತ್ತಾ ಇತ್ತು. ಕಳೆದ ವರ್ಷ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು Unique Identity Number ನ ಮೂಲಕ ಕೆಲಸವನ್ನು ಬದಲಾಯಿಸಿದರೂ ಸಂಬಧಪಟ್ಟ ಹಣವನ್ನು ಯಾವುದೇ ಅಡೆತಡೆಯಿಲ್ಲದೆ ವರ್ಗಾಯಿಸುವ ಕಾನೂನನ್ನು ಜಾರಿಗೊಳಿಸಿತು.
ಸತ್ಯ : ಆಗಿನ ಯುಪಿಎ ೨ ಸರ್ಕಾರ ತನ್ನ ಅಧಿಕಾರದ ಕೊನೆಯ ದಿನಗಳಲ್ಲಿ, ೨೪ ಮಾರ್ಚ ೨೦೧೪ರಂದು, ನೌಕರರ ಪ್ರಾವಿಡೆಂಟ್ ಫಂಡ್ (EPFO) ಇಲಾಖೆಯು ಹೊಸದಾದ Universal Account Number ಅನ್ನು ಘೋಷಿಸಿ ಅದಕ್ಕೆ ಬಳಕೆದಾರರ ಕೈಪಿಡಿ ಅನ್ನು ನೀಡಿ ಜುಲೈ ೨೦೧೪ ರಿಂದ ಆನ್‌ಲೈನ್ ವರ್ಗಾವಣೆಯನ್ನು ಆರಂಭಿಸಿತು.

ಸುಳ್ಳು : ಎನ್‌ಡಿಎ ಸರ್ಕಾರವು ರಸ್ತೆಗಳನ್ನು ನಿರ್ಮಿಸುವಲ್ಲಿ ಪರಿಣಿತಿಯನ್ನು ಸಾಧಿಸಿದೆ. ಈ ವಲಯದಲ್ಲಿ ಯುಪಿಎ ಸಂಪೂರ್ಣವಾಗಿ ವಿಫಲವಾಗಿದೆ.
ಸತ್ಯ : ಹಣಕಾಸು ಮಂತ್ರಿ ಅರುಣ್ ಜೈಟ್ಲಿ ೨೦೧೫-೧೬ರ ಮುಂಗಡ ಪತ್ರದಲ್ಲಿ ’ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ’ ಅಡಿಯಲ್ಲಿ ರಸ್ತೆ ನಿರ್ಮಾಣಕ್ಕಾಗಿ ಮೀಸಲಿಟ್ಟಿರುವ ಹಣ ೧೪,೦೦೦ ಕೋಟಿ ರೂ.ಗಳು. ಆದರೆ ಈಗಾಗಲೇ ಚಾಲ್ತಿಯಲ್ಲಿರುವ ರಸ್ತೆಗಳ ನಿರ್ಮಾಣವನ್ನು Modi-selfieಪೂರ್ತಿಗೊಳಿಸಲು ರಾಜ್ಯ ಸರ್ಕಾರಗಳಿಗೆ ಸುಮಾರು ೫೭,೦೦೦ ಕೋಟಿ ಹಣ ಬೇಕೆಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಆದರೆ ಬಜೆಟ್‌ನಲ್ಲಿ ಮೀಸಲಿಟ್ಟ ಹಣ ಕೇವಲ ಕಾಲು ಭಾಗ ಮಾತ್ರ!!!

ಇತರೆ ಉದಾಹರಣೆಗಳು :

  • ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಮನಮೋಹನ್ ಸಿಂಗ್ ಅವರು 100% Finance Inclusion ಎನ್ನುವ ಯೋಜನೆಯನ್ನು ರೂಪಿಸಿ ಪ್ರತಿಯೊಬ್ಬ ನಾಗರಿಕನೂ ಬ್ಯಾಂಕ್ ಖಾತೆ ಹೊಂದಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿದ್ದರು. ಆದರೆ ಜುಲೈ.೨೦೧೪ರ ವೇಳೆಗೆ ಶೇಕಡಾ ೫೮ ರಷ್ಟನ್ನು ಮಾತ್ರ ಸಾಧಿಸಲಾಗಿತ್ತು. ೨೦೦೧ರಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ದೇಶದಲ್ಲಿ ೪೩.೯ ಕೋಟಿ ಬ್ಯಾಂಕ್ ಖಾತೆಗಳಿದ್ದವು. ೨೦೧೪ರಲ್ಲಿ ಯುಪಿಎ ಸರ್ಕಾರದ ಅಧಿಕಾರ ಕೊನೆಗೊಂಡಾಗ ದೇಶದಲ್ಲಿ ೭೭.೩೨ ಕೋಟಿಯಷ್ಟು ಬ್ಯಾಂಕ್ ಖಾತೆಗಳಿಗೆ ವೃದ್ಧಿಯಾಗಿತ್ತು ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಆದರೆ ನರೇಂದ್ರ ಮೋದಿ ‘ಜನಧನ ಯೋಜನೆ’ ಎನ್ನುವ ಹೆಸರಿನಲ್ಲಿ ಪ್ರತಿಯೊಬ್ಬ ನಾಗರಿಕನೂ ಬ್ಯಾಂಕ್ ಖಾತೆ ಹೊಂದಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಈ ಯೋಜನೆಯು ಯುಪಿಎ ಸರ್ಕಾರದ ಮುಂದುವರೆದ ಯೋಜನೆ ಅದೂ ಬದಲುಗೊಂಡ ಹೆಸರಿನಲ್ಲಿ.
  • ಯುಪಿಎ ಸರ್ಕಾರ ಆರಂಭಿಸಿದ Skill India ಯೋಜನೆಯು ಮೋದಿ ಸರ್ಕಾರದಲ್ಲಿ Skill Development Mission ಆಗಿ ನಾಮ ಬದಲಾವಣೆ ಹೊಂದಿದೆ.
  • ಯುಪಿಎ ಸರ್ಕಾರದ ‘Rajiv Gandhi Mission for Clean Ganga Yojana’ ಯೋಜನೆಯು ಮೋದಿ ಸರ್ಕಾರದಲ್ಲಿ ‘Namo Gange’ ಎನ್ನುವ ಹೆಸರಿನಲ್ಲಿ ನಾಮ ಬದಲಾವಣೆ ಆಗಿದೆ.
  • ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಉತ್ಪಾದನಾ ಸಾಮರ್ಥ್ಯದ ಹೆಚ್ಚಳವು ಶೇಕಡಾ ೫.೨% ರಷ್ಟಿದ್ದರೆ ಈ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಒಂದು ವರ್ಷದ ಅವಧಿಯಲ್ಲಿ ಅದು ಕೇವಲ ಶೇಕಡಾ ೨.೧% ರಷ್ಟು ಮಾತ್ರ.
  • ‘ಮೇಕ್ ಇನ್ ಇಂಡಿಯಾ’ದ ಸ್ಲೋಗನ್ ಅಡಿಯಲ್ಲಿ ಕಳೆದ ಒಂದು ವರ್ಷದ ಮೋದಿ ನೇತೃತ್ವದಲ್ಲಿ ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆ ೦.

ಯಾವುದೇ ಸಂದರ್ಭದಲ್ಲಿಯೂ ಅಧಿಕಾರದಲ್ಲಿರುವ ಪಕ್ಷವೊಂದು ಪರಾಭವಗೊಂಡು ಬದಲೀ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಾಗ ಸಹಜವಾಗಿಯೇ ಹಿಂದಿನ ಸರ್ಕಾರದ ಕೆಲವು ಜನಪ್ರಿಯ ಜನ ಕಲ್ಯಾಣ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗಲಾಗುತ್ತದೆ. ಇದು ಹೊಸದೇನಲ್ಲ. SwachhBharath_Modiಹೊಸ ಸರ್ಕಾರವು ತನ್ನ ಪಕ್ಷದ ಗೌರವಾನ್ವಿತ, ಜನಪ್ರಿಯ ನಾಯಕರ ಹೆಸರಿನಲ್ಲಿ ಈ ಯೋಜನೆಗಳನ್ನು ಮರು ನಾಮಕರಣ ಮಾಡುತ್ತದೆ. ಇದನ್ನು ಒಪ್ಪಿಕೊಳ್ಳಲಾಗದಿದ್ದರೂ ಸಹ ಹೊಸದೇನಲ್ಲ. ಆದರೆ ಈ ಸದರಿ ಮೋದಿ ಸರ್ಕಾರವು ಕಳೆದ ಯುಪಿಎ ಸರ್ಕಾರದ ಹತ್ತು ವರ್ಷಗಳ ಆಡಳಿತದ ಜನಕಲ್ಯಾಣ ಯೋಜನೆಗಳನ್ನು ಹೈಜಾಕ್ ಮಾಡಿ ನಾಮ ಬದಲೀಕರಣ ಮಾಡಿ ಅದು ತನ್ನ ಕಳೆದ ಒಂದು ವರ್ಷದ ಸಾಧನೆ ಎಂದು ಅಸಹ್ಯಕರವಾಗಿ ಪ್ರಚಾರ ಮಾಡಿಕೊಳ್ಳುತ್ತಿರುವುದು ಇತಿಹಾಸದಲ್ಲಿಯೇ ಪ್ರಥಮ. ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಇಂತಹ ಲಜ್ಜಗೇಡಿ, ಅಪ್ರಬುದ್ಧ ವರ್ತನೆಗಳಿಗೆ ಪರ್ಯಾಯ ಉದಾಹರಣೆಗಳೇ ಇಲ್ಲ. ಈ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಹಿಂದಿನ ಯುಪಿಎ ಸರ್ಕಾರದ ಕ್ಷಮತೆ ಏನು, ಅದರಲ್ಲಿ ಎಷ್ಟರಮಟ್ಟಿಗೆ ಯಶಸ್ಸು ಸಾಧಿಸಿದೆ ಎನ್ನುವ ಕನಿಷ್ಟ ರಾಜಕೀಯ ಪ್ರಶ್ನೆಗಳನ್ನು ಕೇಳುವ ಅವಕಾಶಗಳನ್ನು ಕೈಬಿಟ್ಟ ಈ ಮೋದಿ ಸರ್ಕಾರ ತನ್ನ ಸುಳ್ಳುಗಳನ್ನು ಪ್ರಚಾರ ಮಾಡಲು ಈ ಮೇಲಿನ ಹೈಜಾಕ್ ಮಾದರಿಯ ಕೆಳಮಟ್ಟದ ತಂತ್ರಗಳನ್ನು ಅನುಸರಿಸುತ್ತಿದೆ. ತನ್ನ ಹಿಂದಿನ ಸರ್ಕಾರದ ಜನ ಕಲ್ಯಾಣ ಯೋಜನೆಗಳನ್ನು ತನ್ನದೆಂದು ಹೇಳಿಕೊಂಡು ಇಂದು ಪ್ರಜ್ಞಾವಂತರ ಎದುರು ನಗೆಪಾಟಿಲಿಗೀಡಾಗಿರುವ ಈ ಮೋದಿಯವರಲ್ಲಿ ಆಧುನಿಕ ಪ್ರಜ್ಞೆಯ ಕೊರತೆ, ಪ್ರಜಾಪ್ರಭುತ್ವದ ಸ್ವರೂಪದ ಕುರಿತಾದ ಕನಿಷ್ಟ ತಿಳುವಳಿಕೆಗಳ ಕೊರತೆ ಮತ್ತು ಮುಖ್ಯವಾಗಿ ‘ಎಲ್ಲರ ವಿಕಾಸ ಎಲ್ಲರ ಜೊತೆಗೆ’ ಎನ್ನುವ ಸ್ಲೋಗನ್‌ನ ಆಶಯದ ಕುರಿತಾಗಿ ಇರುವ ದಿವ್ಯ ನಿರ್ಲಕ್ಷ ಇಂದು ಒಂದು ವರ್ಷದ ಈ ಎನ್‌ಡಿಎ ಸರ್ಕಾರವನ್ನು ಸಂಪೂರ್ಣವಾಗಿ ಹಳಿ ತಪ್ಪಿಸಿದೆ.

ಕಳೆದ ವರ್ಷದ ಲೋಕಸಭೆಯ ಚುನಾವಣೆಯಲ್ಲಿ ಕ್ಯಾಪಿಟಲಿಸ್ಟ್, ಮಧ್ಯಮವರ್ಗ, ಯುವ ಜನತೆ ಮೋದಿಯ ‘ಅಚ್ಛೇ ದಿನ್’ ಸ್ಲೋಗನ್ ಕುರಿತಾಗಿ ಮಾರುಹೋಗಿ ಸಂಪೂರ್ಣವಾಗಿ ನರೇಂದ್ರ ಮೋದಿಯನ್ನು ಬೆಂಬಲಿಸಿ ಅಧಿಕಾರದಲ್ಲಿ ಕೂಡಿಸಿದ್ದರು. ಇಲ್ಲಿನ ಪ್ರಜ್ಞಾವಂತರು ಲಿಬರಲ್ ಮೋದಿಯ ವ್ಯಕ್ತಿತ್ವದ ಕುರಿತಾಗಿ ಅನುಮಾನಗಳನ್ನು ಇಟ್ಟುಕೊಂಡೇ ಕಡೆಗೆ ಈ ದೇಶದ ಪ್ರಜಾಪ್ರಭುತ್ವ, ಸಾಮಾಜಿಕ, ಸಾಂಸ್ಕೃತಿಕ ವೈವಿದ್ಯತೆ ಮತ್ತು ಮುಖ್ಯವಾಗಿ ಸಂವಿಧಾನದ ಆಶಯಗಳು ಈ ಮೋದಿಯ ಅಹಂಕಾರದ ವ್ಯಕ್ತಿತ್ವವನ್ನು, ಸರ್ವಾಧಿಕಾರಿ ಗುಣಗಳನ್ನು ನಿಯಂತ್ರಿಸುತ್ತದೆ ಎಂದು ನಂಬಿದ್ದರು. ಆದರೆ ಒಂದು ವರ್ಷದ modi_amit_shahನಂತರ ದೇಶದ ಪ್ರಧಾನಮಂತ್ರಿಯಾಗಿ ಮೋದಿ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಯಾವುದೇ ಪಾಠಗಳನ್ನು ಕಲಿಯಲು ಸೋತಿದ್ದಾರೆ. ಅವರ ಸರ್ವಾಧಿಕಾರದ ವ್ಯಕ್ತಿತ್ವ, ಠೇಂಕಾರದ ನಡುವಳಿಕೆಗಳು ಮತ್ತಷ್ಟು ಬಲಗೊಂಡಿವೆ. ಮೋದಿಯ ನೇತೃತ್ವದಲ್ಲಿ ೨೦೦೨ರಲ್ಲಿ ಗುಜರಾತ್‌ನಲ್ಲಿ ನಡೆದ ಮುಸ್ಲಿಂ ಹತ್ಯಾಕಾಂಡದ ಪ್ರಶ್ನೆಗಳನ್ನೆತ್ತಿಕೊಂಡು ಹಿಂತಿರುಗಿ ನೋಡುವ ಪ್ರಮೇಯವೇ ಇಲ್ಲವೆನ್ನುವಷ್ಟರ ಮಟ್ಟಿಗೆ ಇಂದು ಮೋದಿ ಒಬ್ಬ ಸ್ವತಂತ್ರ, ಒತ್ತಡರಹಿತ, ಪಕ್ಷದ ಕಟ್ಟುಪಾಡುಗಳಿಲ್ಲದ ನಾಯಕನಾಗಿ ಬೆಳೆದು ನಿಂತಿದ್ದಾರೆ. ಇಂದು ಪ್ರಧಾನಮಂತ್ರಿ ಕಾರ್ಯಾಲಯವು ಅತ್ಯಂತ ಬಲಿಷ್ಟ ಮತ್ತು ಪ್ರಭಾವಶಾಲಿ ಮುಖ್ಯ ಕಛೇರಿಯಾಗಿದೆ

ಉದಾಹರಣೆಗೆ ಈ ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಂದು ವರ್ಷದ ಅವಧಿಯಲ್ಲಿ ತಾವು ಸದಸ್ಯರಾಗಿರುವ ಭಾರತದ ಸಂಸತ್ತಿನಲ್ಲಿ ಕೆಲವೇ ಗಂಟೆಗಳಷ್ಟು ಪಾಲ್ಗೊಂಡು ವಿದೇಶಿ ಸಂಸತ್ತುಗಳಲ್ಲಿ ಅಧಿಕ ಸಮಯದಲ್ಲಿ ಭಾಗವಹಿಸಿದ್ದಾರೆ.

ಸಂವಿಧಾನಬದ್ಧ ಸಂಸ್ಥೆಗಳಾದ ಮುಖ್ಯ ಮಾಹಿತಿ ಕಮಿಷನರ್ (CIC) ಗೆ ಕಳೆದ ಒಂಬತ್ತು ತಿಂಗಳುಗಳಿಂದ ಅಂದರೆ ಸೆಪ್ಪೆಂಬರ್ ೨೦೧೪ರಿಂದ ಮುಖ್ಯಸ್ಥರನ್ನು ನೇಮಿಸಿಲ್ಲ. ಇದೇ ಸಂಸ್ಥೆಯಲ್ಲಿ ೩ ಮಾಹಿತಿ ಕಮಿಷನರ್ ಹುದ್ದೆಗಳೂ ಖಾಲಿ ಇವೆ. ಭ್ರಷ್ಟಾಚಾರ ನಿಗ್ರಹಣ ಸಂಸ್ಥೆ ಮುಖ್ಯ ಜಾಗೃತ ಕಮಿಷನರ್ (CVC) ಗೆ ಕಳೆದ ಒಂಬತ್ತು ತಿಂಗಳುಗಳಿಂದ ಅಂದರೆ ಸೆಪ್ಪೆಂಬರ್ ೨೦೧೪ರಿಂದ ಮುಖ್ಯಸ್ಥರನ್ನು ನೇಮಿಸಿಲ್ಲ. ಈ ಸಂಸ್ಥೆಗಳಿಗೆ ಮುಖ್ಯಸ್ಥರನ್ನು ನೇಮಿಸಲು ಪ್ರಧಾನ ಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರನ್ನೊಳಗೊಂಡ ಸಮಿತಿಯ ಸಭೆಯನ್ನು ಕಳೆದ ಒಂದು ವರ್ಷದಲ್ಲಿ ಕೇವಲ ಎರಡು ಬಾರಿ ನಡೆಸಲಾಗಿದೆ, ಅದೂ ಔಪಚಾರಿಕವಾಗಿ. ಇದು ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ ಮೋದಿಯವರ ಜವಬ್ದಾರಿಯುತ ನಡೆಗಳ ಮಾದರಿ!!

ಫ್ರೊ. ಬಲವೇರ್ ಅರೋರರು, “ನೆಹ್ರೂವಿಯನ್ ಸಿದ್ಧಾಂತದ ಕಡೆಯ ಕಟ್ಟಡದಂತಿದ್ದ ‘ಯೋಜನಾ ಆಯೋಗ’ವನ್ನು ರದ್ದುಗೊಳಿಸಿ ಅದರ ಬದಲಿಗೆ ನೀತಿ ಆಯೋಗವನ್ನು ಸ್ಥಾಪಿಸಿ ಇತಿಹಾಸದ ತಪ್ಪುಗಳನ್ನು ಸರಿಪಡಿಸುವ ನಾಯಕನೆಂದು ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರು ಛಾಪುಗೊಳ್ಳಬೇಕೆಂದು Modiಬಯಸುವ ಈ ಮೋದಿ ತಾನು ಇತಿಹಾಸದ ಈ ತಪ್ಪುಗಳನ್ನು ಸರಿಪಡಿಸುವುದರ ಮೂಲಕ ಈ ದೇಶಕ್ಕೆ ಒಂದು ಘನತೆಯನ್ನು ತಂದುಕೊಡುತ್ತೇನೆ ಎಂದೇ ನಂಬಿದ್ದಾರೆ. ತಮ್ಮ ಭಾಷಣದಲ್ಲಿ ಸಹಕಾರಿ ಫೆಡರಲಿಸಂ ಕುರಿತಾಗಿ ಮಾತನಾಡಿರುವ ಮೋದಿಯವರಿಗೆ ಅದರ ಕುರಿತಾದ ಬದ್ಧತೆಗಳು ಸಹ ಇನ್ನೂ ಪ್ರಕಟಗೊಂಡಂತಿಲ್ಲ. ಆದರೆ ಅಧಿಕಾರ ಮತ್ತು ಜವಬ್ದಾರಿಗಳನ್ನು ಮೂರು ಸ್ತರಗಳಲ್ಲಿ ಹಂಚಿಕೊಳ್ಳುವುದು ಈ ರಾಜ್ಯಗಳ ಸಹಕಾರಿ ಫೆಡರಲಿಸಂನ ಮುಖ್ಯ ಲಕ್ಷಣಗಳಲ್ಲೊಂದು. ಇದರಲ್ಲಿ ಜನರ ಆದೇಶದ ಮೂಲಕ ಆಯ್ಕೆಯಾಗುವ ರಾಜ್ಯ ಸರ್ಕಾರಗಳ ಸಂವಿಧಾನಾತ್ಮಕ ಅಧಿಕಾರವನ್ನು ಗೌರವಿಸುವುದು ಅತ್ಯಂತ ಪ್ರಮುಖ ಸಹಕಾರಿ ಫೆಡರಲಿಸಂನ ತತ್ವಗಳಲ್ಲೊಂದು. ಅದರಲ್ಲೂ ವಿರೋಧ ಪಕ್ಷಗಳ ಸರ್ಕಾರಗಳು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೆ ಕೇಂದ್ರ ಸರ್ಕಾರವು ಮತ್ತಷ್ಟು ಜಾಗರೂಕತೆಯಿಂದ, ಈ ಸಹಕಾರಿ ಫೆಡರಲಿಸಂನ ನೀತಿಗೆ ಬದ್ಧವಾಗಿರಬೇಕಾಗುತ್ತದೆ. ಸಂಶಯಾತೀತರಾಗಿ ವರ್ತಿಸಬೇಕಾಗುತ್ತದೆ. ರಾಜ್ಯಗಳ ಈ ಸಹಕಾರಿ ಫೆಡರಲಿಸಂ ನೀತಿಯು ಕೇಂದ್ರವು ರಾಜ್ಯಗಳೊಂದಿಗೆ ಅಧಿಕಾರವನ್ನು ಹಂಚಿಕೊಳ್ಳುವ ರಾಜಕೀಯ ಇಚ್ಚಾಶಕ್ತಿಯನ್ನು ನಿರೀಕ್ಷಿಸುತ್ತದೆ” ಎಂದು ಬರೆಯುತ್ತಾರೆ.

ಪ್ರಜಾಪ್ರಭುತ್ವದ ಕುರಿತಾಗಿ, ರಾಜ್ಯಗಳ ಜೊತೆ ಸಹಕಾರಿ ಫೆಡರಲಿಸಂ ಕುರಿತಾಗಿ ನಿರರ್ಗಳವಾಗಿ ಮಾತನಾಡುವ ಬಿಜೆಪಿ ವಕ್ತಾರರು ಮತ್ತು ಮೋದಿ ಮೊನ್ನೆಯವರೆಗೂ ರಾಜ್ಯಗಳ ಸ್ವಾಯತ್ತತೆಯ ಪರವಾಗಿ ವಾದಿಸುತ್ತಿದ್ದರು. ರಾಜ್ಯಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದರ ಕುರಿತಂತೆ ಇವರಲ್ಲಿ ಒಮ್ಮತವಿದ್ದಂತಿತ್ತು. ಆದರೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಈ ಎಲ್ಲಾ ಗುಣಲಕ್ಷಣಗಳು ಕಣ್ಮರೆಯಾಗಿವೆ.

೨೦೧೪ರಲ್ಲಿ ದೆಹಲಿ ಚುನಾವಣೆಯಲ್ಲಿ ಬಹುಮತದಿಂದ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷವು ನಂತರದ ದಿನಗಳಲ್ಲಿ ಅನೇಕ ಬಿಕ್ಕಟ್ಟುಗಳಿಗೆ ಬಲಿಯಾಗಬೇಕಾಯ್ತು. ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರ ಜೊತೆ ಅಧಿಕಾರ ಹಂಚಿಕೆಯ ಕುರಿತಾಗಿ ಬೀದಿ ಕಾಳಗಕ್ಕೆ ಇಳಿದಿದ್ದಾರೆ. ಈ ಲೆಫ್ಟಿನೆಂಟ್ ಗವರ್ನರ್ ಜಂಗ್ ಅವರ ಅಧಿಕಾರಶಾಹಿ ಧೋರಣೆಗಳು, ತೀರ್ಮಾನಗಳು, ನೇಮಕಾತಿಗಳು ಅವರು ಕೇಂದ್ರದ ಏಜೆಂಟರಂತೆ ವರ್ತಿಸುತ್ತಿರುವುದಕ್ಕೆ ಸಾಕ್ಷಿಯಂತಿವೆ. ಆದರೆ ಈ ಎಲ್ಲಾ ಗೊಂದಲಗಳ ಮಧ್ಯೆ ಈ ತನ್ನ ವಿರೋಧ ಪಕ್ಷ ಆಮ್ ಆದ್ಮಿ ಪಕ್ಷ ಮತ್ತು ಗವರ್ನರ್ ನಡುವಿನ ದೆಹಲಿಯ ತಿಕ್ಕಾಟಕ್ಕೆ ಮಧ್ಯಪ್ರವೇಶಿಸಿದ ಕೇಂದ್ರ ಸರ್ಕಾರ ತನ್ನ ವಿವರಣೆಯನ್ನು ನೀಡುತ್ತಾ ಮೇ modi-kejriwal೨೧, ೨೦೧೫ರಂದು ಕೇಂದ್ರ ಗೃಹ ಇಲಾಖೆಯಿಂದ ಒಂದು ನೋಟಿಫಿಕೇಶನ್ ಪ್ರಕಟವಾಯಿತು. ಅದರ ಸಂಕ್ಷಿಪ್ತ ವಿವರಗಳು ಹೀಗಿವೆ: “ದೆಹಲಿಯ ಸೇವೆಗಳ ಜವಾಬ್ದಾರಿಯು ಲೆಫ್ಟಿನೆಂಟ್ ಗವರ್ನರ್ ಅವರ ಸುಪರ್ದಿಗೆ ಬರುತ್ತವೆ. Sub-clause (a) of clause (3) of Article 239AA ನಲ್ಲಿ ನಮೂದಿಸಿರುವ ರಾಜ್ಯಗಳ ಪಟ್ಟಿ ಮತ್ತು ಅದಕ್ಕೆ ಸಂಬಂಧಿಸಿದ ಸಂಗತಿಗಳು ಕೇಂದ್ರಾಡಳಿತ ರಾಜ್ಯಗಳಿಗೂ ಅನ್ವಯವಾಗುತ್ತವೆ. ರಾಷ್ಟ್ರದ ರಾಜಧಾನಿ ಪ್ರಾಂತವಾದ ದೆಹಲಿ ತನ್ನದೇ ಆದ ರಾಜ್ಯ ಮಟ್ಟದ ಸಾರ್ವಜನಿಕ ಸೇವಾ ವಲಯಗಳನ್ನು ಹೊಂದಿಲ್ಲ. ಎಲ್ಲಿ ಶಾಸಕಾಂಗದ ಅಧಿಕಾರವಿಲ್ಲವೋ ಅಲ್ಲಿ ಕಾರ್ಯಾಂಗದ ಅಧಿಕಾರವೂ ಇಲ್ಲವೆಂದು ಇಲ್ಲಿ ಸ್ಪಷ್ಟವಾಗುತ್ತದೆ. Entries 1, 2, & 18 ಅನುಸಾರ ರಾಜ್ಯಗಳ ಪಟ್ಟಿಯಲ್ಲಿ ಸಾರ್ವಜನಿಕ ಪ್ರಕಟಣೆ, ಪೋಲೀಸ್, ಭೂಮಿ ಮತ್ತು ಸೇವಾ ಕ್ಷೇತ್ರಗಳು ಕೇಂದ್ರಾಡಳಿತ ರಾಜ್ಯವಾದ ದೆಹಲಿಯ ಶಾಸಕಾಂಗದ ಅಧಿಕಾರದ ಪರಿಧಿಯೊಳಗೆ ಬರುವುದಿಲ್ಲ ಮತ್ತು ಈ ಕೇಂದ್ರಾಡಳಿತ ರಾಜ್ಯವಾದ ದೆಹಲಿಯ ಸರ್ಕಾರಕ್ಕೆ ಎಕ್ಸಿಕ್ಯೂಟಿವ್ ಅಧಿಕಾರಗಳು ಇರುವುದಿಲ್ಲ ಮತ್ತು ಈ ವಿಶೇಷ ಅಧಿಕಾರಗಳು ರಾಷ್ಟ್ರಪತಿ ಅಥವಾ ಅವರ ಪ್ರತಿನಿಧಿಯಾದ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಇರುತ್ತವೆ. ರಾಷ್ಟ್ರದ ರಾಜಧಾನಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಮುಂದಿನ ಸೂಚನೆಗಳು ದೊರಕುವವರೆಗೂ ಸಾರ್ವಜನಿಕ ಪ್ರಕಟಣೆಗಳು, ಸೇವಾ ಕ್ಷೇತ್ರ, ಪೋಲಿಸ್, ಮತ್ತು ಭೂಮಿಗೆ ಸಂಬಂಧಪಟ್ಟಂತೆ ಅವರು ತಮ್ಮ ಅಧಿಕಾರವನ್ನು ಬಳಸಿಕೊಳ್ಳಬಹುದು ಮತ್ತು ಕೇಂದ್ರ ಸರ್ಕಾರದ ಕರ್ತವ್ಯಗಳನ್ನು ನಿರ್ವಹಿಸಬಹುದು.”

ಕೇಂದ್ರ ಸರ್ಕಾರದ ಗೃಹ ಇಲಾಖೆಯ ಮೇಲಿನ ನೋಟಿಫಿಕೇಶನ್‌ನ ಉದ್ದೇಶ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಮುಖಾಂತರ ಚುನಾಯಿತ ಸರ್ಕಾರದ ಮೇಲೆ ಹಿಡಿತವನ್ನು ಸಾಧಿಸುವುದು. ಕೆಲವು ದಿನಗಳ ಹಿಂದೆ ಪಶ್ಚಿಮ ಬಂಗಾಲದಲ್ಲಿ ಮಾತನಾಡುತ್ತ ರಾಜ್ಯಗಳ ಸಹಕಾರಿ ಫೆಡರಲಿಸಂ ಅವಶ್ಯಕತೆಯ ಕುರಿತಾಗಿ ಮಾತನಾಡಿದ್ದ ಮೋದಿ ಇಂದು ದೆಹಲಿಯ ಕೇಜ್ರಿವಾಲ್ ಸರ್ಕಾರದ ಸಂವಿಧಾನಬದ್ಧ ಹಕ್ಕುಗಳನ್ನು ಕತ್ತರಿಸುತ್ತಿರುವುದು ಮೋದಿ ಸರ್ಕಾರದ ಸರ್ವಾಧಿಕಾರದ ನೀತಿಯಲ್ಲದೆ ಮತ್ತೇನಿಲ್ಲ.

ಆದರೆ ೨೬,ಮೇ,೨೦೧೫ ರಂದು ದೆಹಲಿ ಹೈಕೋರ್ಟ್, “ಲೆಫ್ಟಿನೆಂಟ್ ಗವರ್ನರ್ ಅವರು ಮಂತ್ರಿಮಂಡಲದ ಸಲಹೆ ಮತ್ತು ಸಹಕಾರದೊಂದಿಗೆ ಕಾರ್ಯ ನಿರ್ವಹಿಸಬೇಕು ಮತ್ತು ಜನರ ತೀರ್ಪನ್ನು ಲೆಫ್ಟಿನೆಂಟ್ ಗವರ್ನರ್ ಗೌರವಿಸಬೇಕು ಮತ್ತು ಶಾಸಕಾಂಗದ ಅಸೆಂಬ್ಲಿಯ ಪರಿಧಿಯೊಳಗೆ ಕಾರ್ಯ ನಿರ್ವಹಿಸಬೇಕು” ಎನ್ನುವ ಮಹತ್ವದ ತೀರ್ಪನ್ನು ನೀಡಿದೆ. ಹೈಕೋರ್ಟ್ ತೀರ್ಪಿನಿಂದ ಮುಖಭಂಗ ಅನುಭವಿಸಿರುವ ಕೇಂದ್ರ ಸರ್ಕಾರ ಹೈಕೋರ್ಟಿನ ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಆದರೆ ಸುಪ್ರೀಂ ಕೋರ್ಟ ಸಹ ಇದಕ್ಕೆ ಸ್ಟೇ ನೀಡಲು ನಿರಾಕರಿಸಿದೆ.

ಕೇವಲ ಲಾಭ ನಷ್ಟದ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಚುನಾಯಿತ ಆಮ್ ಆದ್ಮಿ ಪಕ್ಷದ ಅಧಿಕಾರವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. ಇಂದು ಆಮ್ ಆದ್ಮಿ ಪಕ್ಷ ಪಕ್ಷದ ಪ್ರಜಾಪ್ರಭುತ್ವದ ಹಕ್ಕುಗಳನ್ನು, ಸ್ವಾತಂತ್ರವನ್ನು ಮೊಟಕುಗೊಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ಸರ್ಕಾರದ ಈ ಸರ್ವಾಧಿಕಾರದ ಧೋರಣೆಗಳಿಗೆ ಮುಂದಿನ ದಿನಗಳಲ್ಲಿ ಇತರೇ ಪ್ರಾಂತೀಯ ಸರ್ಕಾರಗಳು ಬಲಿಯಾಗುವುದನ್ನು ನಾವು ಸಂದೇಹಿಸುವಂತಿಲ್ಲ.

ಚೆನ್ನೈನಲ್ಲಿರುವ ಐಐಟಿ-ಮದ್ರಾಸ್‌ನ ವಿದ್ಯಾರ್ಥಿ ಅಸೋಸಿಯೇಶನ್‌ನ ’ಅಂಬೇಡ್ಕರ್-ಪೆರಿಯಾರ್ ಸ್ಟಡಿ ಸರ್ಕಲ್’ ಅನ್ನು ನಿಷೇಧಗೊಳಿಸಿ ಅಲ್ಲಿನ ಆಡಳಿತ ಮಂಡಳಿ ನೋಟೀಸ್ ನೀಡಿದೆ. (ದ ಹಿಂದೂ, ಮೇ ೨೯,೨೦೧೫). ಇದಕ್ಕೆ ಈ ಆಡಳಿತ ಮಂಡಳಿ ನೀಡಿರುವ ಕಾರಣ ಯಾವುದೋ periyar-ambedkarಅನಾಮಧೇಯ ದೂರನ್ನು ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಗೆ ಸಲ್ಲಿಸಲಾಗಿದೆ. ಈ ದೂರಿನಲ್ಲಿ ’ಅಂಬೇಡ್ಕರ್-ಪೆರಿಯಾರ್ ಸ್ಟಡಿ ಸರ್ಕಲ್’ ಮೋದಿಯವರ ಆಡಳಿತವನ್ನು ಟೀಕಿಸುವಂತಹ ಕರಪತ್ರವನ್ನು ಹಂಚಿ ದ್ವೇಷದ ಭಾವನೆಯನ್ನು ಬಿತ್ತುತ್ತಿದ್ದಾರೆ ಎಂದು ಆರೋಪಿಸಲಾಗಿದೆ.’ಅದಕ್ಕಾಗಿ ಈ ನಿಷೇಧ. ಈ ನಿಷೇಧವನ್ನು ಮಾನವ ಸಂಪನ್ಮೂಲ ಇಲಾಖೆಯ ಮಂತ್ರಿ ಸ್ಮೃತಿ ಇರಾನಿ ಸಮರ್ಥಿಸಿಕೊಂಡಿದ್ದಾರೆ. ಆದರೆ ’ಅಂಬೇಡ್ಕರ್-ಪೆರಿಯಾರ್ ಸ್ಟಡಿ ಸರ್ಕಲ್‌’ನ ವತಿಯಿಂದ ಮೋದಿ ಸರ್ಕಾರದ ಅರ್ಥಿಕ ಮತ್ತು ಸಾಂಸ್ಕೃತಿಕ ನೀತಿಗಳನ್ನು ಟೀಕಿಸಲಾಗಿತ್ತು. ಎಲ್ಲಿಯೂ ವ್ಯಕ್ತಿಗತ ತೇಜೋವಧೆಗೆ ನಡೆದಿರಲಿಲ್ಲ. ಆದರೆ ಈ ವಿದ್ಯಾರ್ಥಿ ಒಕ್ಕೂಟವನ್ನು ನಿಷೇಧಿಸಲಾಗಿದೆ.’ಈ ಮೂಲಕ ’ಕೇಂದ್ರ ಸರ್ಕಾರದ ಮತ್ತು ಮೋದಿಯವರ ನೀತಿಗಳ ಕುರಿತು ಚರ್ಚಿಸುವವರನ್ನು, ಟೀಕಿಸುವವರನ್ನು ನಿಷೇಧಿಸುತ್ತೇವೆ’ ಎನ್ನುವ ಸರಳವಾದ ಆದರೆ ಬ್ರೂಟಲ್ ಆದ ಸಂದೇಶವನ್ನು ಭಾರತೀಯರಿಗೆ ರವಾನಿಸಿದ್ದಾರೆ. ಆದರೆ ಶತಮಾನಗಳ ಕಾಲದಿಂದಲೂ ವಿದ್ಯಾಲಯಗಳು, ವಿಶ್ವವಿದ್ಯಾಲಯಗಳು ರಾಜಕೀಯ, ಸಾಂಸ್ಕೃತಿ ಚರ್ಚೆ, ಸಂವಾದ, ಟೀಕೆಗಳಿಗೆ ವೇದಿಕೆಯಾಗಿದ್ದವು ಎನ್ನುವ ಸರಳ ಇತಿಹಾಸದ ಜ್ಞಾನ ಈ ಸ್ಮೃತಿ ಇರಾನಿಯವರಿಗೆ ಇಲ್ಲದಿರುವುದು ಈ ದೇಶದ ಶಿಕ್ಷಣ ರಂಗದ ಬುರೇ ದಿನ್‌ಗಳಿಗೆ ಸಾಕ್ಷಿ.

ಇದಕ್ಕೂ ಹಿಂದೆ ಜೂನ್ ೨೦೧೪ರಂದು ಕೇರಳದ ಗುರುವಾಯೂರಿನ ಕೃಷ್ಣ ಕಾಲೇಜಿನ ೯ ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು. ಈ ವಿದ್ಯಾರ್ಥಿಗಳು ಕ್ರಾಸ್‌ವರ್ಡ ಪದಬಂಧವನ್ನು ಬರೆಯುವ ಸಂದರ್ಭದಲ್ಲಿ ಮೋದಿಯವರನ್ನು ಹೀಗೆಳೆಯುವಂತಹ ಭಾಷೆ ಬಳಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಮೋದಿ ಸರ್ಕಾರ ಭಾರತೀಯರಿಗೆ ಭರವಸೆ ನೀಡಿದ್ದ ಅಚ್ಛೇ ದಿನ್‌ಗಳೆಂದರೆ ಈ ಮಾದರಿಯದ್ದೇ?? ಇದು ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಫ್ಯಾಸಿಸಂ ಧೋರಣೆಯ ಲೇಟೆಸ್ಟ್ ಉದಾಹರಣೆ.

ಯುವ ಕಾದಂಬರಿಕಾರ ಚಂದ್ರಹಾಸ್ ಚೌಧುರಿ ಅವರು “ಮೋದಿ ಜನಿಸಿದ ಸುಮಾರು ೧೯೫೦ರ ದಶಕದ ಸಾಂಪ್ರದಾಯಿಕ ಭಾರತವು ಪ್ರಜಾಪ್ರಭುತ್ವದ ಹಕ್ಕುಗಳು, ಸ್ವಾತಂತ್ರ ಮತ್ತು ಧಾರ್ಮಿಕ ಸ್ವಾತಂತ್ರದ ಪರಿಕಲ್ಪನೆಗಳಲ್ಲಿ ಇಂದಿನ ಭಾರತ ದೇಶದ ಸಂದರ್ಭದಲ್ಲಿ ಬಹು ದೂರ ಸಾಗಿ ಬಂದಿದೆ. ಇಂದಿನ ಯುವಜನತೆ ಅಂತರ್ಜಾತೀಯ ವಿವಾಹದ ಕಡೆಗೆ ಸಹಜವಾಗಿ ಒಲವು ತೋರಿಸುತ್ತಿದ್ದಾರೆ. ಗೇ ಹಕ್ಕುಗಳ ಪರವಾಗಿ ಹೋರಾಡುತ್ತಿದ್ದಾರೆ. ಮಹಿಳಾ ಸ್ವಾತಂತ್ರ ಮತ್ತು ವಿಮೋಚನೆಗಳ ಪರವಾಗಿ ಹೋರಾಡುತ್ತಿದ್ದಾರೆ. ಈ ಯುವಜನತೆಯ ಈ ನಡುವಳಿಕೆಗಳು ಮತ್ತು ಕ್ರಿಯಾಶೀಲತೆಯು ಮುಖ ಗಂಟಿಕ್ಕದೆ ಸಾರ್ವಜನಿಕವಾಗಿ ಮುಸ್ಲಿಂ ಹೆಸರನ್ನು ಹೇಳಲು ಅಸಮರ್ಥಗೊಂಡಿರುವ ಈ ಮೋದಿಯವರಿಗಿಂತ ತುಂಬಾ ಹೆಚ್ಚಿನ ಲಿಬರಲ್ ಆಗಿವೆ. ೪೦ ವರ್ಷಗಳಿಗಿಂತ ಕೆಳಗಿರುವ ಯುವ ಜನತೆ ಪೂರ್ವಗ್ರಹವಿಲ್ಲದೇ ಇತಿಹಾಸದಲ್ಲಿ ಸತ್ಯವನ್ನು ಹುಡುಕಾಡಲು ಬಯಸುತ್ತಿದ್ದರೆ ತನ್ನ ತಾರುಣ್ಯದ ದಿನಗಳಿಂದಲೂ ಹಿಂದೂ ಧರ್ಮದ ಪುನರುಜ್ಜೀವನದ ಅಜೆಂಡಾಗಳು ಮತ್ತು ಅದರ ಪಾವಿತ್ರತೆಯನ್ನು ಬೋಧಿಸುವ ಹಿಂದೂ ರಾಷ್ಟ್ರೀಯ ಚಳುವಳಿಗಳ ಚಿಂತನೆಗಳನ್ನು ಕಲಿತು, ಮೈಗೂಡಿಸಿಕೊಂಡಿರುವ ಈ ಮೋದಿ ಈ ಐಡಿಯಾಲಜಿಯ ಇತಿಹಾಸದ ಚಿಂತನೆಗಳ ಬಂದಿಯಾಗಿದ್ದಾರೆ ಮತ್ತು ಈ ಇತಿಹಾಸದ ಏಜೆಂಟರಾಗಿದ್ದಾರೆ. ಒಂದು ಸಾಂಪ್ರದಾಯಿಕ ಹಿಂದೂ ಬಡ ಕುಟುಂಬದಲ್ಲಿ ಜನಿಸಿದ ಮೋದಿ ಇಂದು ಅತ್ಯಂತ ಶಕ್ತಿಶಾಲಿ ನಾಯಕನಾಗಿದ್ದಾರೆ. ಆದರೆ ಇಂಡಿಯಾದ ವೈವಿಧ್ಯತೆಯನ್ನು ಒಪ್ಪಿಕೊಳ್ಳಲು ಅವರ ಮನಸ್ಸು ನಿರಾಕರಿಸುತ್ತದೆ. ಈ ಮೋದಿಯವರ ಪ್ರಧಾನ ಮಂತ್ರಿಯಾಗಿ ಒಂದು ವರ್ಷದ ಆಡಳಿತವನ್ನು ಅವಲೋಕಿಸಿದಾಗ ಇಂದಿನ ಸಂಕೀರ್ಣ ಮನಸ್ಥಿತಿಯ ಇಂಡಿಯಾಗೆ ಮೋದಿಯ ನಿಲುವುಗಳು ಮತ್ತು ಮನಸ್ಥಿತಿ ತುಂಬಾ ಹಳೆಯ ಕಾಲದ್ದು ಎಂದೆನಿಸುತ್ತದೆ. ೨೦೧೪ರಲ್ಲಿ ಯುವಜನತೆ ಸಮಗ್ರವಾಗಿ ಈ ಮೋದಿಯ ಪರ ಮತ ಚಲಾಯಿಸಿ ಅಧಿಕಾರ ತಂದುಕೊಟ್ಟರೆ ೨೦೧೯ರಲ್ಲಿ ಹೊಸದೊಂದು ಯುವಜನತೆಯ ಅಭೂತಪೂರ್ವ ಮೂವ್‌ಮೆಂಟ್‌ನ ಅಲೆ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸುತ್ತದೆ” ಎಂದು ವಿವರಿಸಿದ್ದಾರೆ.

“ಭಾರತದ ಪ್ರಜಾಪ್ರಭುತ್ವವು ತನ್ನ ಬಾಲ್ಯಾವಸ್ಥೆಯಿಂದ ಬೆಳೆದು ಮಾಗಬೇಕಾದರೆ “ಬಂಧುತ್ವ” (Fraternity) ಚಿಂತನೆಯನ್ನು ಬೆಳೆಸಿಕೊಳ್ಳಬೇಕು ಮತ್ತು ಬಂಧುತ್ವವು ಕೇಂದ್ರಸ್ಥಾನವನ್ನು ಅಲಂಕರಿಸಬೇಕು. ಒಳಗೊಳ್ಳುವಿಕೆ ಮತ್ತು ಬಹುತ್ವ ಚಿಂತನೆಗಳನ್ನು ಈ ಬಂಧುತ್ವ ಒಳಗೊಂಡಿರಬೇಕು” ಎಂದು ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ. ಆದರೆ ಈ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಕಳೆದ ಒಂದು ವರ್ಷದ ಆಡಳಿತದಲ್ಲಿ ‘ಬಹುಸಂಖ್ಯಾತ ತತ್ವ’ದ ಪ್ರಚಾರ ಮತ್ತು ‘ನ್ಯಾಯಾಂಗ’ ಹಾಗೂ ‘ಶಾಸಕಾಂಗ’ಗಳ ಪ್ರಸ್ತುತತೆಯನ್ನೇ ಅಸಿಂಧುಗೊಳಿಸುವ ನೀತಿಗಳ ಮೂಲಕ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ.

ಚಾಯ್ ಪೆ ಚರ್ಚಾ : ಸುಳ್ಳುಗಾರನ ಬಂಡವಾಳಶಾಹಿ ಆಡಳಿತದ ಒಂದು ವರ್ಷ

– ಬಿ. ಶ್ರೀಪಾದ ಭಟ್

ಪ್ರಧಾನ ಮಂತ್ರಿ ನರೇಂದ್ರ ಮೋದಿಯ ವ್ಯಕ್ತಿತ್ವವನ್ನು ಮತ್ತು ಅವರ ಸರ್ಕಾರ ಒಂದು ವರ್ಷ ತುಂಬಿದ್ದರ ಕುರಿತಾಗಿ ವಿವರಿಸುತ್ತಾ ಪತ್ರಕರ್ತ ನೀಲಂಜನ್ ಮುಖ್ಯೋಪಾಧ್ಯಾಯ್ ಅವರು “ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ರಚನೆಗಳೊಂದಿಗೆ ಕಾರ್ಯ ನಿರ್ವಹಿಸಲು ಮೋದಿ ಅಸಮರ್ಥರೆಂಬುದನ್ನು ಬಿಜೆಪಿ ಸರ್ಕಾರದ ಒಂದು ವರ್ಷದ ಆಡಳಿತವು ಸಾಕ್ಷೀಕರಿಸುತ್ತದೆ. ಮೋದಿಯು ಏಕವ್ಯಕ್ತಿ ಪ್ರದರ್ಶನದ ಮಾದರಿಗೆ ಹೊಂದಿಕೊಳ್ಳುತ್ತಾರೆ. Modiಒಬ್ಬ ವ್ಯಕ್ತಿ, ಏಕ ನಿಷ್ಠೆ, ಒಂದು ಸಂಸ್ಥೆ, ಏಕ ಸದನದ ಸಂಸತ್ತು; ಹೀಗೆ ಒಂದು ರೀತಿ ಏಕಮುಖಿ ಸಂಚಾರದಂತೆ. ಅಂದರೆ ಪರಸ್ಪರ ಸಂಭಾಷಣೆಯ ರೀತಿಯದಲ್ಲ, ಬದಲಾಗಿ ಸ್ವಗತ, ಆತ್ಮಗತ ಭಾಷಣದಂತೆ, ಮತ್ತು ನಿಜ, ಕಡ್ಡಾಯವಾಗಿ ಯಾವುದೇ ಪ್ರಶ್ನೆಗಳಿರುವುದಿಲ್ಲ” ಎಂದು ಬರೆಯುತ್ತಾರೆ.

ಸಮಾಜ ಶಾಸ್ತ್ರಜ್ಞ ನಿಸ್ಸಿಮ್ ಮನ್ನತುಕ್ಕರೆನ್ ಅವರು ಬರೆಯುತ್ತಾ, “ಒಂದು ವರ್ಷದ ಹಿಂದೆ ಮೋದಿ ಪ್ರಧಾನಿ ಆದಾಗ ಮೋದಿಯು ಇಂಡಿಯಾವನ್ನು ಬದಲಿಸುತ್ತಾರ? ಮನಮೋಹನ್ ಸಿಂಗ್ ಮಾಡಲಾಗದ್ದು ಇವರು ಮಾಡುತ್ತಾರ?ಮೋದಿಯು ಇಂಡಿಯಾವನ್ನು ಸೂಪೆರ್‌ಪವರ್ ಘಟ್ಟಕ್ಕೆ ಕೊಂಡೊಯ್ಯುತ್ತಾರ? ಎನ್ನುವ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಆದರೆ ಅತ್ಯಂತ ಮುಖ್ಯವಾದ ಮತ್ತು ಸೂಕ್ಷ್ಮವಾದ ವಿಚಾರವೇನೆಂದರೆ ಪ್ರಜಾಪ್ರಭುತ್ವದ ಆಶಯಗಳಿಗೆ ಮೇಲಿನ ಪ್ರಶ್ನೆಗಳು ಸಂಪೂರ್ಣವಾಗಿ ವಿರೋಧಾತ್ಮಕವಾಗಿವೆ. ಆದರೆ ಈ ವಿರೋಧಾತ್ಮಕ ಮನಸ್ಥಿತಿಯಿಂದ ಹೊರಬರಲು ಅಸಮರ್ಥವಾಗಿರುವುದೇ ಇಂಡಿಯಾ ರಾಜಕೀಯದ ಒಂದು ದೊಡ್ಡ ಬಿಕ್ಕಟ್ಟು. ಪ್ರಜೆಗಳ ಹಕ್ಕು ಮತ್ತು ಶಕ್ತಿಯನ್ನು ವ್ಯವಸ್ಥಿತವಾಗಿ ನಾಶಪಡಿಸುತ್ತ ಅವರನ್ನು ಪ್ರಭುತ್ವಕ್ಕೆ, ಆಡಳಿತಗಾರರಿಗೆ ಶರಣಾಗಿಸಲಾಗುತ್ತಿದೆ. ಇಲ್ಲಿ ಮೋದಿಯು ತನಗೆ ಅಧಿಕಾರವನ್ನು ತಂದುಕೊಟ್ಟ ವ್ಯವಸ್ಥೆಯಿಂದಲೇ ಬೇರ್ಪಟ್ಟ ಒಂದು ನೀರ್ಗುಳ್ಳೆಯಂತೆ. ನಾವು ನಾಯಕನನ್ನು ಈ ರೀತಿಯಾಗಿ ಉದ್ಧಾರಕನೆಂದು ಪರಿಭಾವಿಸುವುದು ಸರಿಯೆ ಎನ್ನುವ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳುತ್ತಾ ಹೋದಂತೆ ಪಾರ್ಲಿಮೆಂಟರಿ ವ್ಯವಸ್ಥೆಯನ್ನೇ ತಿರಸ್ಕರಿಸುವ ಮತ್ತು ಪ್ರಧಾನ ಮಂತ್ರಿಯು ತನ್ನ ಸಹೋದ್ಯೋಗಿಗಳಿಗಿಂತ ಮೊದಲಿಗ ಎನ್ನುವ ಧೋರಣೆಯನ್ನು ನಾವು ಎದುರಿಸಬೇಕಾಗುತ್ತದೆ. modi_bjp_conclaveಪ್ರಧಾನ ಮಂತ್ರಿಯೊಬ್ಬರನ್ನು ಶಕ್ತಿಶಾಲಿ ಸರ್ವಜ್ಞನೆಂಬುವ ತರ್ಕಕ್ಕೆ ಬಲಿಯಾಗಿಸುವ ಕೈಮೀರಿದ ಕ್ಯಾಬಿನೆಟ್ ಅನ್ನು ನಾವು ಮತ್ತೆಲ್ಲಿ ಕಾಣಲು ಸಾಧ್ಯ? ಪ್ರಧಾನ ಮಂತ್ರಿ ಮೋದಿಯ ಎದುರು ಶಾಲಾ ಮಕ್ಕಳಂತೆ ಕೈಕಟ್ಟಿ ನಿಂತುಕೊಂಡ ಅವರ ಕ್ಯಾಬಿನೆಟ್ ಮಂತ್ರಿಗಳ ಪ್ರಾರಂಭದ ದುರದೃಷ್ಟಕರ ದಿನಗಳಿಂದ ಮೊದಲುಗೊಂಡು ವಿದೇಶಾಂಗ ಸಚಿವೆಯ ಎಲ್ಲಾ ಅಧಿಕಾರ ಮತ್ತು ಜವಬ್ದಾರಿಗಳನ್ನು ಕತ್ತರಿಸಿ ಅವರ ರೆಕ್ಕೆಗಳನ್ನೇ ತುಂಡರಿಸುವ ಅತಿಕ್ರೌರ್ಯದ ಅಧಿಕಾರದ ಇಂದಿನ ದಿನಗಳವರೆಗಿನ ಒಂದು ವರ್ಷದ ಆಡಳಿತ ಇಂಡಿಯಾದ ಜಾಗತಿಕ ಶಕ್ತಿಯನ್ನು ಕೀಳುದರ್ಜೆಗೆ ಇಳಿಸಿದೆ. ಹಳೆಯ ಯುಪಿಎ ಸರ್ಕಾರದಲ್ಲಿ ಅದರ ಪ್ರಧಾನಿ ಮನಮೋಹನ್ ಸಿಂಗ್ ಮಾತ್ರ ಮೌನಿಯಾಗಿದ್ದರೆ ಇಂದಿನ ಮೋದಿ ಸರ್ಕಾರದಲ್ಲಿ ಇಡೀ ಕ್ಯಾಬಿನೆಟ್ ಮೌನಿಯಾಗಿದೆ. ಈ ಮೌನಗೊಂಡ ಕ್ಯಾಬಿನೆಟ್ ದೇಶವನ್ನು ’ಮನ್ ಕಿ ಬಾತ್’ ಎನ್ನುವ ಆತ್ಮರತಿಯ ಮೂಲಕ ಗಣರಾಜ್ಯವನ್ನು ಕಟ್ಟಬಹುದೆಂದು ಅಹಂಕಾರದಿಂದ ವರ್ತಿಸುತ್ತಿದೆ. ೧೩೦ ಕೋಟಿ ಜನರ ಭವಿಷ್ಯವನ್ನು ಕೇವಲ ಒಂದು ವ್ಯಕ್ತಿಯ ಕೈಗೆ ಕೊಡಲಾಗುವುದಿಲ್ಲ” ಎಂದು ವಿವರಿಸುತ್ತಾರೆ. ( ದ ಹಿಂದೂ,೨೨,೨೩, ೨೦೧೫)

ಪ್ರಧಾನ ಮಂತ್ರಿ ಮೋದಿಯ ಒಂದು ವರ್ಷದ ಆಡಳಿತದ ಸಾಧನೆಯೆಂದರೆ ಅದು ಸ್ವತಃ ‘ಮೋದಿಯ ಪುನಃಸೃಷ್ಟಿ, ಶೋಧನೆ ಮತ್ತು ಮಾರಾಟ’ ಎಂದು ಸೋಷಿಯಾಲಜಿಸ್ಟ್ ಶಿವ ವಿಶ್ವನಾಥನ್ ಹೇಳಿದ್ದಾರೆ.

೫೬ ಇಂಚಿನ ಎದೆಯ ಸರ್ಕಾರ್ ಅವರ ಆಡಳಿತಕ್ಕೆ ಒಂದು ವರ್ಷ ತುಂಬಿದೆಯಂತೆ. ಅರುಣ್ ಜೇಟ್ಲಿ ಮನೆಯಲ್ಲಿ ದೇಶದ ಪ್ರಮುಖ ಪತ್ರಕರ್ತರು, ಸಂಪಾದಕರ ಜೊತೆ ಏರ್ಪಡಿಸಿದ್ದ ಮಧ್ಯರಾತ್ರಿಯ ಔತಣಕೂಟದಲ್ಲಿ ೫೬ ಇಂಚಿನ ಎದೆಯ ಸರ್ಕಾರ್ ಭಾಗವಹಿಸಿದ್ದರು. modi_ambani_tata_kamathಈ ಸರ್ಕಾರ್ ಅವರ ಋಣ ತೀರಿಸಲೋ ಎಂಬಂತೆ ಇಂಡಿಯಾದ ಮಾಧ್ಯಮಗಳು ಪುಂಖಾನುಪುಂಖವಾಗಿ ಸಮೀಕ್ಷೆಗಳು, ಚರ್ಚೆಗಳನ್ನು ಮಾಡುತ್ತಿವೆ. ದೇಶದ ಪ್ರತಿಯೊಂದು ಸ್ಟುಡಿಯೋಗಳಲ್ಲಿ ಬಿಜೆಪಿ ವಕ್ತಾರರು, ಕೇಂದ್ರ ಮಂತ್ರಿಗಳ ದಂಡೇ ನೆರೆದಿರುವಂತೆ ವ್ಯವಸ್ಥಿತವಾಗಿ ಆಯೋಜಿಸಲಾಗಿದೆ. ಗೋಬೆಲ್ಸ್ ತಂತ್ರವನ್ನು ಬಳಸಿಕೊಂಡು ಸುಳ್ಳುಗಳನ್ನು ದಿನವಿಡೀ ಪ್ರಚಾರ ಮಾಡಲಾಗುತ್ತಿದೆ. ಇದಕ್ಕೆ ಮಾಧ್ಯಮಗಳೂ ತಮ್ಮ ಶಕ್ತಿ ಮೀರಿ ಶ್ರಮಿಸುತ್ತಿವೆ. ಸುಳ್ಳುಗಳ ಭಾರವನ್ನು ಹೊತ್ತುಕೊಂಡ, ಅತಿರಂಜಿತ ಅಂಕಿಅಂಶಗಳನ್ನು ಉತ್ಪಾದಿಸಿ ಮಾಧ್ಯಮಗಳಲ್ಲಿ ಪ್ರಕಟಿಸಲಾಗುತ್ತಿದೆ. ೫೬ ಇಂಚಿನ ಎದೆಯ ಸರ್ಕಾರ್ ’ಖುಷ್ ಹೋನೇ ಕೆ ಲಿಯೆ’ ಸಂಘ ಪರಿವಾರ ಮತ್ತು ಬಹುಪಾಲು ಮಾಧ್ಯಮಗಳು ಹಗಲಿರುಳು ಶ್ರಮಪಡುತ್ತಿದ್ದಾರೆ. ಈ ೫೬ ಇಂಚಿನ ಎದೆಯ ಸರ್ಕಾರ್ ಅವರ ವರ್ಣರಂಜಿತ ಫೋಟೋಗಳು, ಅಸದೃಶ್ಯವಾದ ಡ್ರೆಸ್‌ಗಳು, ಫ್ಲೆಕ್ಸ್ ಬೋರ್ಡಗಳು ಕೇವಲ ಇಂಡಿಯಾದಲ್ಲಿ ಮಾತ್ರವಲ್ಲ, ವಿಶ್ವದಾದ್ಯಾಂತ ರಾರಾಜಿಸಲಿವೆ. ಆಕಾಶ ಮತ್ತು ಭೂಮಿಯನ್ನು ಒಳಗೊಂಡಂತೆ ಎಲ್ಲವೂ ಮೋದಿಯ ಆಡಳಿತ ಫಲವಾಗಿ ಸೃಷ್ಟಿಯಾಗಿವೆ ಎನ್ನುವ ಜಾಹೀರಾತುಗಳು ದೇಶದಾದ್ಯಾಂತ ಕಂಗೊಳಿಸಲಿವೆ

ಕಳೆದ ೬೫ ವರ್ಷಗಳಿಂದ ಬೆಸೆದುಕೊಂಡಿದ್ದ ಇಂಡಿಯಾದ ಗಣರಾಜ್ಯ ಪ್ರಜಾಪ್ರಭುತ್ವ ವ್ಯವಸ್ಥೆಯ ಎಲ್ಲಾ ಎಳೆಗಳನ್ನು, ಬಂಧಗಳನ್ನು ಕಳೆದ ಒಂದು ವರ್ಷದಲ್ಲಿ ನಾಶಗೊಳಿಸಿ, ಕ್ಯಾಬಿನೆಟ್ ಅರ್ಥಾತ್ ಕೇಂದ್ರ ಮಂತ್ರಿಮಂಡಲವನ್ನೇ ಅದೃಶ್ಯಗೊಳಿಸಿ ಅಧಿಕಾರವನ್ನು ತನ್ನ ಬಳಿ ಕೇಂದ್ರೀಕರಿಸಿಕೊಂಡ ಈ ಮೋದಿ ಅವರ ಸರ್ವಾಧಿಕಾರಿಯ ವ್ಯಕ್ತಿತ್ವವನ್ನು ’ಮನ್ ಕಿ ಬಾತ್’ ಎಂದು ವೈಭವೀಕರಿಸಿ ದೇಶದೆಲ್ಲಡೆ ಹಂಚಲಾಗುತ್ತಿದೆ. ಮೊಟ್ಟ ಮೊದಲು ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಭಾವೋದ್ರೇಕದಿಂದ ಭಾಷಣ ಮಾಡಿದ ಮೋದಿಯವರ ನಂತರದ ಒಂದು ವರ್ಷದ ಆಡಳಿತದಲ್ಲಿ ರೈತರು ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟು ಅವರ ಭವಿಷ್ಯವನ್ನು ಮಾರಕ ಭೂ ಸ್ವಾಧೀನ ಮಸೂದೆ ೨೦೧೪ರಲ್ಲ್ಲಿ ಮಣ್ಣು ಮಾಡಲಾಗಿದೆ. ambani-modiಮೋದಿಯ ಕಾರ್ಪೋರೇಟ್ ಪರವಾದ ಆರ್ಥಿಕ ನೀತಿಗಳ ಅನುಸಾರ ಕೃಷಿ ಸಾಗುವಳಿಯೇ ಹಂತಹಂತವಾಗಿ ಕಣ್ಮರೆಯಾಗಲಿದೆ. ದೇಶದ ತೆರಿಗೆದಾರರ ಹಣವನ್ನು ಬಳಸಿಕೊಂಡು (ಕಳೆದ ೯ ತಿಂಗಳ ಪ್ರವಾಸದ ಖರ್ಚು ೩೧೭ ಕೋಟಿ) ದೂರ ಜಿಗಿತದ ಹರ್ಡಲ್ಸ್ ಓಟಗಾರನ ಹಾಗೆ ಒಂದು ವರ್ಷದಲ್ಲಿ ೧೮ ವಿದೇಶಗಳನ್ನು ಸುತ್ತಿದ ಈ ಮೋದಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಮಹಾರಾಷ್ಟ್ರ, ಪಂಜಾಬ್, ತೆಲಂಗಾಣ ರಾಜ್ಯಗಳ ಕಡೆ ಕಾಲಿಟ್ಟಿಲ್ಲ. ಉದ್ಯೋಗ ಖಾತ್ರಿ ಯೋಜನೆಯ ನರೇಗಾದಿಂದ ಮೊದಲುಗೊಂಡು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಒಳಗೊಂಡಂತೆ ಅನೇಕ ಜನಕಲ್ಯಾಣ ಯೋಜನೆಗಳಿಗೆ (Social Welfare Schemes) ಸಂಬಂದಿಸಿದ ಅನುದಾನವನ್ನು ಕ್ರಮೇಣ ಕಡಿತಗೊಳಿಸಿರುವುದು ಮೋದಿ ಸರ್ಕಾರದ ಮತ್ತೊಂದು ಕೊಡುಗೆ. ಬಂಡವಾಳಶಾಹಿಗಳಿಗಾಗಿಯೇ ಸರ್ಕಾರವನ್ನು ಸಜ್ಜುಗೊಳಿಸಿರುವ ಮುಕ್ತ ಮಾರುಕಟ್ಟೆಯ, ನವ ಉದಾರೀಕರಣದ ವ್ಯಾಮೋಹಿಯಾದ ಮೋದಿ ಯಾವುದೇ ಮಾದರಿಯ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಮಾನ್ಯ ಮಾಡುವುದಿಲ್ಲ. ಎಲ್ಲಾ ಬಡಜನರ ಪರವಾದ ಯೋಜನೆಗಳು ಮುಂದಿನ ನಾಲ್ಕು ವರ್ಷಗಳಲ್ಲಿ ಹಂತಹಂತವಾಗಿ ರದ್ದಾದರೆ ಆಶ್ಚರ್ಯವಿಲ್ಲ.

ವಿದೇಶದಿಂದ ಕಪ್ಪುಹಣವನ್ನು ಮರಳಿ ತರುವ, ತಪ್ಪಿತಸ್ಥರನ್ನು ಶಿಕ್ಷಿಸುವ ಛಾತಿ ಬೇಕೆಂದರೆ ನನ್ನಂತೆ ೫೬ ಇಂಚಿನ ಎದೆ ಬೇಕು ಎಂದು ಚುನಾವಣಾ ಭಾಷಣದಲ್ಲಿ ಹೇಳಿದ್ದ ಈ ಮೋದಿ ಕನಿಷ್ಠ ಒಂದಂಕಿಯ ಮೊತ್ತವನ್ನೂ ಭಾರತೀಯರಿಗೆ ತಂದು ತೋರಿಸದೆ, ಈ ಕಪ್ಪು ಹಣವನ್ನು ಮರಳಿ ತರುವ ಆಶಯಗಳನ್ನು “Money Laundering Bill” ನಲ್ಲಿ ಮಣ್ಣು ಮಾಡಲಾಗಿದೆ. ಸದರಿ ಮೋದಿ ಸರ್ಕಾರದ ಯಶಸ್ವೀ ಮಸೂದೆ ಎಂದೇ ಬಣ್ಣಿಸಲಾಗುವ ಕಲ್ಲಿದ್ದಲು ಮತ್ತು ಸ್ಪೆಕ್ಟ್ರಮ್ ಹರಾಜು ನೀತಿಗಳು ಮುಂದಿನ ದಿನಗಳಲ್ಲಿ ನೇರವಾಗಿಯೇ ಕಾರ್ಪೋರೇಟ್ ಕುಟುಂಬಗಳಿಗೆ Autonomous ನ ಮುಕ್ತ ಸ್ವಾತಂತ್ರವನ್ನು ತಂದುಕೊಡುತ್ತವೆ. ಒಮ್ಮೆ ಈ ಕಾರ್ಪೋರೇಟ್ ಶಕ್ತಿಗಳಿಗೆ ಯಾವುದೇ ಕಾನೂನಿನ ಕಟ್ಟುಪಾಡುಗಳಿಲ್ಲದ ಮುಕ್ತ ಸ್ವಾತಂತ್ರ ದೊರೆತರೆ ಕಲ್ಲಿದ್ದಲಿನ, ಸೇವಾ ವಲಯದ, ಸರಕುಗಳ ಬೆಲೆಗಳು ಊಹೆಗೆ ನಿಲುಕದಷ್ಟು ಏರಿಕೆಯಾಗುತ್ತವೆ. ಜನಸಾಮಾನ್ಯರ ಬದುಕು ದುರ್ಭರಗೊಳ್ಳತೊಡಗುತ್ತದೆ. ಅವರು ಅಂಚಿಗೆ ತಳ್ಳಲ್ಪಡುತ್ತಾರೆ. ಇದು ಈ ಮೋದಿಯ ಒಂದು ವರ್ಷದ ಆಡಳಿತದ ಫಲ.

ಸ್ವಾತಂತ್ರದ ನಂತರದ ಮೊದಲ ಸಂಸತ್ತಿನ ಅಧಿವೇಶನದಲ್ಲಿ (೧೯೪೯-೫೦) ಮಕ್ಕಳ ಶಿಕ್ಷಣ ಹಕ್ಕಿನ ಕುರಿತಾಗಿ ಚರ್ಚೆchild-labour ನಡೆದಾಗ ಅನೇಕ ಸಂಸದರು ಮಕ್ಕಳೆಲ್ಲಾ ಶಾಲೆಗೆ ಸೇರಿಕೊಂಡರೆ ನಮ್ಮ ಹೊಲ ಗದ್ದೆಗಳಲ್ಲಿ ಕೂಲಿ ಮಾಡುವವರು ಯಾರು ಎಂದು ಪ್ರಶ್ನಿಸಿದ್ದರು. ಅಗ ಇದನ್ನು ಬಹುಪಾಲು ಸಂಸದರು ವಿರೋಧಿಸಿ ೧೧ ವಯಸ್ಸಿನವರೆಗೂ ಶಿಕ್ಷಣವನ್ನು ಕಡ್ಡಾಯ ಮಾಡಬೇಕು ಎಂದು ಗೊತ್ತುವಳಿ ಮಂಡಿಸಿದರು. ಇದನ್ನು ಮಾರ್ಪಡಿಸಿದ ಅಂಬೇಡ್ಕರ್ ಅವರು ಮಕ್ಕಳು ಬಾಲಕಾರ್ಮಿಕರಾಗುವುದೇ ೧೧ನೇ ವಯಸ್ಸಿನ ಸಂದರ್ಭದಲ್ಲಿ. ಬದಲಿಗೆ ೧೪ನೇ ವಯಸ್ಸಿನವರೆಗೂ ಮಕ್ಕಳ ಶಿಕ್ಷಣ ಕಡ್ಡಾಯ ಮತ್ತು ಹಕ್ಕು ಎಂದು ಪ್ರತಿಪಾದಿಸಿದರು. ನಂತರ ಅದು ಅನುಮೋದನೆಗೊಂಡು ೧೪ನೇ ವಯಸ್ಸಿನವರೆಗೂ ಶಿಕ್ಷಣ ಕಡ್ಡಾಯ ಮತ್ತು ಮಕ್ಕಳ ಹಕ್ಕಾಗಿ ಪರಿಗಣಿತವಾಯಿತು. ಆದರೆ ೧೩ ಮೇ, ೨೦೧೫ ರಂದು ಪ್ರಧಾನ ಮಂತ್ರಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಬಾಲ ಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ೨೦೧೨ರ ಮಸೂದೆಗೆ ಮತ್ತಷ್ಟು ತಿದ್ದುಪಡಿಗಳನ್ನು ಅನುಮೋದಿಸಿದೆ. ಈ ಮೊದಲಿನ ಬಾಲ ಕಾರ್ಮಿಕ ಪದ್ಧತಿಗೆ ಇರುವ ನಿಷೇಧಕ್ಕೆ ತಿದ್ದುಪಡಿಗಳನ್ನು ಮಾಡಿ ಕೌಟುಂಬಿಕ ಕೆಲಸಗಳು, ಕೌಟುಂಬಿಕ ಉದ್ಯಮದಲ್ಲಿ, ಅಪಾಯಕಾರಿಯಲ್ಲದ ಹೊರಗುತ್ತಿಗೆ ಕೆಲಸಗಳಲ್ಲಿ ಬಾಲಕರನ್ನು ಕಾರ್ಮಿಕರಾಗಿ ಬಳಸಿಕೊಳ್ಳಬಹುದೆಂದು ವಿವರಿಸಿದೆ. ಇದಕ್ಕೆ ಈ ಮೋದಿ ಸಚಿವ ಸಂಪುಟ ಸಭೆ ಕೊಟ್ಟ ವಿವರಣೆ ’ಮಕ್ಕಳ ಕೌಶಲ್ಯವನ್ನು ಹೆಚ್ಚಿಸುವುದು!’ ಅಂದರೆ ಈ ಸದರಿ ಮೋದಿ ಸರ್ಕಾರಕ್ಕೆ ಮಕ್ಕಳಿಗೆ ಶಿಕ್ಷಣದ ಅವಶ್ಯಕತೆಗಿಂತಲೂ ಕೌಟುಂಬಿಕ, ಕುಶಲ ಕೆಲಸಗಳಲ್ಲಿ ಕೌಶಲ್ಯವನ್ನು ಹೆಚ್ಚಿಸುವುದು ಪ್ರಮುಖವಾಗಿದೆ. ಅಂದರೆ ಭಾರತದಂತಹ ಸಂಕೀರ್ಣ ಸಾಮಾಜಿಕ ವ್ಯವಸ್ಥೆಯಲ್ಲಿನ ಕೌಟುಂಬಿಕದ ಹಿನ್ನೆಲೆಯಲ್ಲಿ ಬಾಲಕಿಯರಿಗೆ ದಿನವಿಡೀ ಕೆಲಸಕ್ಕೆ ಕೊರತೆ ಇರುವುದಿಲ್ಲ. ಈ ಮೋದಿ ಸರ್ಕಾರದ ಮಸೂದೆ ಜಾರಿಗೊಂಡರೆ ಮುಖ್ಯವಾಗಿ ಬಾಲಕಿಯರು child-marriage-indiaಕೌಟುಂಬಿಕ ಕೆಲಸಗಳಿಗೆ ಸೀಮಿತಗೊಂಡು ಅವರ ಶಿಕ್ಷಣ ಮೊಟಕುಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಇದು ಗ್ರಾಮೀಣ ಭಾಗದ ಬಾಲಕರಿಗೂ ಅನ್ವಯಿಸುತ್ತದೆ. ಇಂಡಿಯಾದಂತಹ ಸಾಮಾಜಿಕ-ಆರ್ಥಿಕ ಸಂರಚನೆಯೇ ದುರ್ಬಲವಾಗಿರುವ ದೇಶದಲ್ಲಿ ಶಾಲೆಯಿಂದ ಹೊರಗುಳಿಯುವ ಮಕ್ಕಳ ಪ್ರಮಾಣವನ್ನು ಹೆಚ್ಚಾಗುತ್ತದೆ. ಇದು ಭಾರತದ ಮಕ್ಕಳಿಗೆ ತನ್ನ ಒಂದು ವರ್ಷದ ಆಡಳಿತ ಪೂರೈಸಿದ ಮೋದಿ ಸರ್ಕಾರದ ಪ್ರತಿಗಾಮಿ ನೀತಿಯ ಕೊಡುಗೆ

ಬಹುಸಂಖ್ಯಾತರ ಪ್ರಜಾಪ್ರಭುತ್ವದಲ್ಲಿ ಬಹುಸಂಖ್ಯಾತ ತತ್ವದ (Majoritarianism) ಪರವಾದ ಗುಣಗಳನ್ನು ಗೌಣಗೊಳಿಸಿಕೊಂಡು ಬಹುತ್ವದ, ಎಲ್ಲರನ್ನೂ ಒಳಗೊಳ್ಳುವಿಕೆಯ ಸಿದ್ಧಾಂತವನ್ನು ರೂಪಿಸಬೇಕಾದ ಅಗತ್ಯವಿರುತ್ತದೆ. ಆದರೆ ಮೋದಿ ಸ್ವತಃ ಒಬ್ಬ Authoritarian ವ್ಯಕ್ತಿತ್ವದ, Majoritarianism ತತ್ವದ ಪರವಾಗಿ ಅಪಾರವಾದ ಒಲವಿರುವ, ತನ್ನನ್ನು ಹಿಂದೂ ರಾಷ್ಟ್ರೀಯವಾದಿ ಎಂದು ಬಣ್ಣಿಸಿಕೊಂಡ ಪ್ರಧಾನಿ. ಆರೆಸ್ಸಸ್‌ನ ಕೇಂದ್ರ ಕಛೇರಿಯಲ್ಲಿ ರಾಜಕೀಯ ಫಿಲಾಸಫಿಯನ್ನು ನಿರ್ಧರಿಸುವ ಅಧಿಕಾರವನ್ನು ರೂಪಿಸಲಾಗಿದೆ. ಇದಕ್ಕೆ ಮೋದಿಯವರ ಅನುಮೋದನೆ ಇದೆ. ಆರೆಸ್ಸಸ್ ಹೆಡ್ ಕ್ವಾಟ್ರಸ್‌ನಲ್ಲಿ ರಾಜಕೀಯ, ಸಾಮಾಜಿಕ ತತ್ವ ಸಿದ್ದಾಂತಗಳು ರೆಕ್ಕೆ ಪಡೆದುಕೊಳ್ಳತೊಡಗಿದರೆ ಅಲ್ಲಿಗೆ ಈ ದೇಶದ ಜನರ ಸೆಕ್ಯುಲರಿಸಂ ಮತ್ತು ಸಾಮಾಜಿಕ ನ್ಯಾಯದ ಎಲ್ಲಾ ಆಶಯಗಳು ಮುಣ್ಣುಗೂಡಿದಂತೆ. ಕಳೆದ ಒಂದು ವರ್ಷದಲ್ಲಿ ಅಲ್ಪಸಂಖ್ಯಾತರ ದನಿಯನ್ನೇ ಒತ್ತಿ ಹಿಡಿಯಲಾಗಿದೆ. ಸಂಘ ಪರಿವಾರದ ಸದಸ್ಯರು, ಮೋದಿ ಮಂತ್ರಿಮಂಡಲದ ಮಂತ್ರಿಗಳು ಅಲ್ಪಸಂಖ್ಯಾತರ ವಿರುದ್ಧ ಕಳೆದ ವರ್ಷವಿಡೀ ಪ್ರಚೋದನಾತ್ಮಕವಾಗಿ ಹೇಳಿಕೆಗಳನ್ನು ಕೊಡುತ್ತ,ಬೆದರಿಸುತ್ತಾ ಅವರಿಗೆ ’ಹಿಂದೂ’ಸ್ತಾನದ ಮಹತ್ವವನ್ನು ಪ್ರತಿ ಕ್ಷಣಕ್ಕೂ ಮನವರಿಕೆ ಮಾಡಿಕೊಡಲಾಗುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ ಮೋದಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಸಂದರ್ಭದ ವಿಜಯೋತ್ಸವಕ್ಕಾಗಿ ಸಂಘ ಪರಿವಾರದ ಕಾರ್ಯಕರ್ತರು ದೆಹಲಿಯ ರಸ್ತೆಗಳಿಗೆ ಮುಸ್ಲಿಂ ರಾಜರು, ನಾಯಕರುಗಳ ಹೆಸರಿರುವ ಸಫ್ದರ್ ಹಶ್ಮಿ ಮಾರ್ಗ, ಫಿರೋಜ್ ಶಾ ರಸ್ತೆ, ಔರಂಗಜೇಬ್ ರಸ್ತೆ, ಅಕ್ಬರ್ ರಸ್ತೆಗಳ ನಾಮಫಲಕಗಳಿಗೆ ಕಪ್ಪು ಮಸಿಯನ್ನು ಬಳಿದಿದ್ದಾರೆ ಮತ್ತು ಇಂಡಿಯಾದಲ್ಲಿ ಇಸ್ಲಾಮೀಕರಣವನ್ನು ಸಹಿಸುವುದಿಲ್ಲ ಎನ್ನುವ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ

ಕಳೆದ ಒಂದು ವರ್ಷದಲ್ಲಿ ಗಾಂಧಿ ಹಂತಕ ನಾತುರಾಮ್ ಗೋಡ್ಸೆಯ ವೈಭವೀಕರಣ, ಕೇಂದ್ರ ಶಿಕ್ಷಣ ಇಲಾಖೆಯ ಕೇಸರೀಕರಣ, narender_modi_rssಚರ್ಚುಗಳ ಮೇಲೆ ದಾಳಿ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರನ್ನು ಮರಳಿ ಹಿಂದೂ ಧರ್ಮಕ್ಕೆ ಮತಾಂತರಗೊಳಿಸುವ ‘ಘರ್ ವಾಪಸಿ’ ಎನ್ನುವ ಮೂಲಭೂತವಾದಿ ಕಾರ್ಯಚಟುವಟಿಕೆಗಳು, ಲವ್ ಜಿಹಾದಿಯ ಹೆಸರಿನಲ್ಲಿ ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯ (ಮುಸ್ಲಿಂರನ್ನು ಮದುವೆಯಾಗುತ್ತಾರೆ ಎನ್ನುವ ಕಾರಣಕ್ಕೆ) ಗಳಂತಹ ಫ್ಯಾಸಿಸ್ಟ್ ಪ್ರವೃತ್ತಿಯ ವರ್ತನೆಗಳು, ಹಲ್ಲೆಗಳಿಂದಾಗಿ ಇಂಡಿಯಾದ ಸಾರ್ವಜನಿಕ ಬದುಕಿನ ಜೀವಪರವಾದ ಎಲ್ಲಾ ಸೆಲೆಗಳು ಮತ್ತು ಬಹುಸಂಸ್ಕೃತಿಯ ಜೀವನ ಶೈಲಿ ನಾಶಗೊಂಡಿದೆ.

ಕಡೆಗೆ ಕಳೆದ ಒಂದು ವರ್ಷದ ಹಿಂದೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸದರಿ ನರೇಂದ್ರ ಮೋದಿಯ ಚುನಾವಣಾ ಪ್ರಚಾರಕ್ಕೆ ದಾಖಲೆ ಹಣವನ್ನು ಖರ್ಚು ಮಾಡಲಾಗಿದೆ. ಇದರ ಸಂಪೂರ್ಣ ವೆಚ್ಚವನ್ನು ಇಂಡಿಯಾದ ಪ್ರಮುಖ ಕಾರ್ಪೋರೇಟ್ ಕುಟುಂಬಗಳು ವಹಿಸಿಕೊಂಡಿದ್ದವು. ಈ ಕಾರ್ಪೋರೇಟ್ ಹಣದಿಂದ ಚುನಾವಣೆಯನ್ನು ಜಯಿಸಿದ ಮೋದಿ ಇಂದು ಅದರ ಮೊತ್ತವನ್ನು ಬಡ್ಡಿ ಸಮೇತ ಪಾವತಿಸಬೇಕಾದಂತಹ ಪರಿಸ್ಥಿತಿಯಲ್ಲಿದ್ದಾರೆ. ಈ ಕಾರ್ಪೋರೇಟ್ ಕುಟುಂಬಗಳಿಗೆ ಋಣ ತೀರಿಸಲು “ಭೂಸ್ವಾಧೀನ ಮಸೂದೆ ೨೦೧೪” ನ್ನು ಹಠದಿಂದ ಸಂಸತ್ತಿನಲ್ಲಿ ಅಥವಾ ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲು ಮೋದಿ ಪಣತೊಟ್ಟಿದ್ದಾರೆ. ಮತ್ತೊಂದೆಡೆ ಆರೆಸ್ಸಸ್ ತನ್ನ ಹಿಂದೂ ರಾಷ್ಟ್ರೀಯತೆಯ ತತ್ವಗಳನ್ನು ಜಾರಿಗೊಳಿಸುವ ತವಕದಲ್ಲಿದೆ. ಈ ಧಾರ್ಮಿಕ ಮೂಲಭೂತವಾದ ಮತ್ತು ಕಾರ್ಪೋರೇಟ್ ಶಕ್ತಿಗಳ ದೌರ್ಜನ್ಯದ ನಡುವೆ ಇಂದು ಇಂಡಿಯಾದ ಜನ ಸಾಮಾನ್ಯರು ಧ್ವಂಸವಾಗುತ್ತಿದ್ದಾರೆ. ಇದು ಯಾವ ಬಗೆಯ “ಅಚ್ಚೇ ದಿನ್”?