Category Archives: ರಾಜಕೀಯ

ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ದೆಹಲಿಯಲ್ಲಿ ಮೌಲ್ಯಾಧಾರಿತ ರಾಜಕೀಯದ ಸತ್ವಪರೀಕ್ಷೆ

– ಆನಂದ ಪ್ರಸಾದ್

ದೆಹಲಿಯಲ್ಲಿ ಡಿಸೆಂಬರ್ 4 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮೌಲ್ಯಾಧಾರಿತ ರಾಜಕೀಯಕ್ಕಾಗಿ ಜನ್ಮ ತಳೆದ ಆಮ್ ಆದ್ಮಿ ಪಕ್ಷವು ಮೊದಲನೆಯ ಬಾರಿಗೆ ಎಲ್ಲಾ 70 ವಿಧಾನಸಭಾ ಸ್ಥಾನಗಳಿಗೂ ಸ್ಪರ್ಧಿಸುತ್ತಿದೆ. ಬಲಿಷ್ಠ ಲೋಕಪಾಲ್ ಮಸೂದೆಯ ಜಾರಿಗೆ ಆಂದೋಲನ ನಡೆಸಿದ ಅಣ್ಣಾ ಅವರ ಹೋರಾಟದ ತಂಡದಲ್ಲಿ ಪ್ರಧಾನ ಆಧಾರಸ್ಥಂಭವಾಗಿದ್ದ ಕೇಜ್ರಿವಾಲ್, ಪ್ರಶಾಂತ್ ಭೂಷಣ್ AAP-manifesto-PTIಮೊದಲಾದವರು ಅಂದೋಲನದ ಮೂಲಕ ನಡೆಸಿದ ಭ್ರಷ್ಟಾಚಾರ ವಿರೋಧಿ ಹೋರಾಟ ಗುರಿ ತಲುಪಲು ವಿಫಲವಾದಾಗ ಹಾಗೂ ಸರ್ಕಾರವು ಹೋರಾಟಕ್ಕೆ ಸಮರ್ಪಕವಾಗಿ ಸ್ಪಂದಿಸದೇ ಇರುವ ಕಾರಣ ರಾಜಕೀಯ ಹೋರಾಟದ ನಿರ್ಧಾರ ತೆಗೆದುಕೊಂಡು ಆಮ್ ಆದ್ಮಿ ಪಕ್ಷವನ್ನು ಕಟ್ಟಿದ್ದು ಅದು ಈಗ ಪ್ರಥಮ ಹೆಜ್ಜೆಯಾಗಿ ದೆಹಲಿಯಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದೆ. ಈ ಪಕ್ಷವು ಬಹಳ ದೊಡ್ಡ ಕ್ರಾಂತಿಕಾರಿ ಹೆಜ್ಜೆಯಾಗಿ ಜನರಿಂದಲೇ ಚುನಾವಣೆಗೆ ಸ್ಪರ್ಧಿಸಲು ಬೇಕಾಗುವ ಹಣವನ್ನು ಪಾರದರ್ಶಕವಾಗಿ ಪಡೆದುಕೊಂಡಿದೆ. ಚುನಾವಣಾ ವೆಚ್ಚ ಹಾಗೂ ಪಕ್ಷ ಕಟ್ಟುವ ವೆಚ್ಚವಾಗಿ 20 ಕೋಟಿ ರೂಪಾಯಿಗಳನ್ನು ಜನರ ದೇಣಿಗೆಯಿಂದಲೇ ಸಂಗ್ರಹಿಸುವ ಗುರಿಯನ್ನು ಪಕ್ಷ ಹಾಕಿಕೊಂಡಿತ್ತು. ಈ ಗುರಿಯನ್ನು ಪಕ್ಷವು ತಲುಪಿದ್ದು ಇದೀಗ ಪಕ್ಷವು ಹಣಸಂಗ್ರಹವನ್ನು ನಿಲ್ಲಿಸಿದೆ. ಪಕ್ಷವು ಪಡೆದ ಹಣದಲ್ಲಿ 14 ಕೋಟಿ ರೂಪಾಯಿ ಭಾರತದ ವಿವಿಧ ಭಾಗಗಳ ಜನರು ನೀಡಿದ್ದರೆ 2.17 ಕೋಟಿ ರೂಪಾಯಿ ಅಮೇರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು, ಹಾಂಗ್‌ಕಾಂಗ್ ಅನಿವಾಸಿ ಭಾರತೀಯರು 1. 1 4 ಕೋಟಿ, ಯುನೈಟೆಡ್ ಅರಬ್ ಎಮಿರೇಟ್ಸ್ ಅನಿವಾಸಿ ಭಾರತೀಯರು 62 ಲಕ್ಷ, ಸಿಂಗಾಪುರದ ಅನಿವಾಸಿ ಭಾರತೀಯರು 58 ಲಕ್ಷ, ಇಂಗ್ಲೆಂಡ್ ಅನಿವಾಸಿ ಭಾರತೀಯರು 38 ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿದ್ದು ಈ ಎಲ್ಲ ವಿವರಗಳನ್ನೂ ಪಕ್ಷದ ವೆಬ್ ಸೈಟಿನಲ್ಲಿ ಸಾರ್ವಜನಿಕರು ವೀಕ್ಷಿಸಬಹುದು. ಇದು ಭಾರತದಲ್ಲಿ ಇದುವರೆಗೆ ನಡೆದ ಅತ್ಯಂತ ಪಾರದರ್ಶಕವಾದ ಪಕ್ಷಕ್ಕೆ ನಿಧಿ ಜನರಿಂದಲೇ ಪಡೆದಿರುವ ನೈತಿಕ ರಾಜಕೀಯದ ಹೆಜ್ಜೆಯಾಗಿದೆ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಸಮಾಜವಾದಿ ಶಾಂತವೇರಿ ಗೋಪಾಲಗೌಡರಿಗೆ ಚುನಾವಣೆಗೆ ಸ್ಪರ್ಧಿಸಲು ಜನರೇ ಹಣ ನೀಡಿದ್ದರು. ಹೀಗಾಗಿಯೇ ಅವರು ಜನರ ಪರವಾಗಿ ವಿಧಾನಸಭೆಯಲ್ಲಿ ಪ್ರಬಲವಾಗಿ ಮತ್ತು ಜನಪರವಾಗಿ ಹೋರಾಡಲು ಸಾಧ್ಯವಾಯಿತು. kejriwal_aap_pti_rallyಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಜನರ ಪಾಲುದಾರಿಕೆ ಅತಿ ಮುಖ್ಯ. ಜನರಿಂದಲೇ ಯಾವುದೇ ಅನೈತಿಕ ಶರತ್ತುಗಳಿಲ್ಲದೆ ಒಂದು ಪಕ್ಷವು ಹಣ ಪಡೆದು ಸ್ಪರ್ಧಿಸಿ ಗೆದ್ದಾಗ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸುಧಾರಿಸಲು ಬೇಕಾದ ಆನೆಬಲ ಸಿಗುತ್ತದೆ. ಬಂಡವಾಳಶಾಹಿಗಳಿಂದ ಗುಪ್ತ ಶರತ್ತುಗಳಿಗೆ ಮಣಿದು ಪಡೆದ ಹಣ , ವಿವಿಧ ಲಾಬಿಗಳ ಮೂಲಕ ರಾಜಕೀಯ ನಾಯಕರು ಪಡೆದ ಹಣ (ಉದಾಹರಣೆಗೆ ಅಬಕಾರಿ ಲಾಬಿ, ಗ್ರಾನೈಟ್ ಲಾಬಿ, ಅಕ್ರಮ ಗಣಿ ಲಾಬಿ, ಕ್ಯಾಪಿಟೇಶನ್ ಲಾಬಿ, ಸಕ್ಕರೆ ಕಾರ್ಖಾನೆಗಳ ಲಾಬಿ ಇತ್ಯಾದಿ) , ಅಧಿಕಾರಿಗಳು ಜನರಿಂದ ಲಂಚವಾಗಿ ಸುಲಿದ ಹಣದಲ್ಲಿ ರಾಜಕೀಯ ನಾಯಕರು ಪಾಲು ಪಡೆದು ಪಕ್ಷದ ವೆಚ್ಚ ಭರಿಸುವ ಹಣ ಮೊದಲಾದ ಅನೈತಿಕ ಮಾರ್ಗಗಳಿಂದ ಪಡೆದ ಹಣದ ಮೂಲಕ ರಾಜಕೀಯ ನಡೆಸುವ ಪಕ್ಷಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಯ ಸುಧಾರಣೆ ಸಾಧ್ಯವಾಗುವುದಿಲ್ಲ. ಹೀಗಾಗಿ ಕೇಜ್ರಿವಾಲ್ ಅವರ ನೇತೃತ್ವದ ಆಮ್ ಆದ್ಮಿ ಪಕ್ಷವು ನೈತಿಕ ಹಾಗೂ ಮೌಲ್ಯಾಧಾರಿತ ರಾಜಕೀಯದೆಡೆಗೆ ಇಟ್ಟಿರುವ ಈ ಹೆಜ್ಜೆ ಅತ್ಯಂತ ಮಹತ್ವಪೂರ್ಣವಾಗಿದ್ದು ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಹಳಷ್ಟು ಮೇಲ್ಮಟ್ಟಕ್ಕೆ ಎತ್ತುವ ಸಂಭವ ಸ್ಪಷ್ಟವಾಗಿ ಕಂಡುಬರುತ್ತದೆ.

ದೆಹಲಿ ವಿಧಾನಸಭಾ ಚುನಾವಣೆಗಳ ವಿವಿಧ ಚುನಾವಣಾಪೂರ್ವ ಸಮೀಕ್ಷೆಗಳು ವಿವಿಧ ರೀತಿಯ ಫಲಿತಾಂಶವನ್ನು ನೀಡಿವೆ. ಆಮ್ ಆದ್ಮಿ ಪಕ್ಷವು ಸಿಸ್ರೋ ಅಸೋಸಿಯೇಟ್ಸ್ ಜೊತೆಗೂಡಿ ಸೆಪ್ಟೆಂಬರಿನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ Arvind_Kejriwal_party_launchಆಮ್ ಆದ್ಮಿ ಪಕ್ಷವು 32% ಮತಗಳನ್ನು ಪಡೆಯುವ ಸಾಧ್ಯತೆಯನ್ನು ಹೇಳಿದೆ. ಸಿಎನ್ನೆನ್-ಐಬಿಎನ್, ದ ವೀಕ್ ಪತ್ರಿಕೆ, ಸಿಎಸ್ಡಿಎಸ್ ಜಂಟಿಯಾಗಿ ಅಕ್ಟೋಬರಿನಲ್ಲಿ ಕೈಗೊಂಡ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷ 28% ಮತ ಪಡೆಯುವ ಸಂಭವ ಇದೆ. ಹಿಂದೂಸ್ತಾನ್ ಟೈಮ್ಸ್ – ಸಿ ಫೋರ್ ಸೆಪ್ಟೆಂಬರಿನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷವು 20% ಮತಗಳನ್ನು ಪಡೆಯುವ ಸಂಭವವಿದೆ. ಇಂಡಿಯಾ ಟಿವಿ – ಸಿ ವೋಟರ್ – ಟೈಮ್ಸ್ ನೌ ಸೆಪ್ಟೆಂಬರಿನಲ್ಲಿ ನಡೆಸಿದ ಜಂಟಿ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷವು 16% ಮತಗಳನ್ನು ಪಡೆಯುವ ಸಂಭವವಿದೆ. ಎಬಿಪಿ ನ್ಯೂಸ್ – ಏಸಿ ನೀಲ್ಸನ್ ಜಂಟಿಯಾಗಿ ಸೆಪ್ಟೆಂಬರಿನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷ 15% ಮತಗಳನ್ನು ಪಡೆಯಬಹುದು ಎಂದು ಹೇಳಲಾಗಿದೆ. ಇವುಗಳಲ್ಲಿ ಆಮ್ ಆದ್ಮಿ ಪಕ್ಷ -ಸಿಸ್ರೋ ಅಸೋಸಿಯೇಟ್ಸ್ ಜೊತೆಗೂಡಿ ನಡೆಸಿದ ಸಮೀಕ್ಷೆ ಹೆಚ್ಚು ವ್ಯಾಪಕ ಹಾಗೂ ವೈಜ್ಞಾನಿಕ ಸಮೀಕ್ಷೆಯಾಗಿದ್ದು ಖ್ಯಾತ ಚುನಾವಣಾ ವಿಶ್ಲೇಷಕ ಹಾಗೂ ಪಕ್ಷದ ಪ್ರಮುಖ ನೇತಾರರೂ ಆದ ಯೋಗೇಂದ್ರ ಯಾದವ್ ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರು ನಡೆಸಿದ ಸಮೀಕ್ಷೆಯ ಸಂಪೂರ್ಣ ವಿವರವು ಆಮ್ ಆದ್ಮಿ ಪಕ್ಷದ ವೆಬ್ ಸೈಟಿನಲ್ಲಿ ಸಾರ್ವಜನಿಕರಿಗೆ ನೋಡಲು ಲಭ್ಯವಿದೆ. ಇವುಗಳಲ್ಲಿ ಕಡಿಮೆ ಪ್ರತಿಶತ ಮತ ಗಳಿಸಬಹುದಾದ 15% ಅನ್ನು ತೆಗೆದುಕೊಂಡರೂ ಪ್ರಥಮವಾಗಿ ಸ್ಪರ್ಧಿಸುತ್ತಿರುವ ಆಮ್ ಆದ್ಮಿ ಪಕ್ಷದ ಸಾಧನೆ ಉತ್ತಮವಾಗಿ ಮೂಡಿಬರುವ ಸಂಭವ ಇದೆ. ಆಮ್ ಆದ್ಮಿ ಪಕ್ಷವು ಗೆಲ್ಲಬಹುದಾದ ವಿಧಾನಸಭಾ ಸಂಖ್ಯೆಯ ಲೆಕ್ಕದಲ್ಲಿ ಹೇಳುವುದಾದರೆ ಇಂಡಿಯಾ ಟುಡೇ- ಒಆರ್ಜಿ ನವೆಂಬರಿನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ 6 ವಿಧಾನಸಭಾ ಸ್ಥಾನಗಳಲ್ಲಿ ಗೆಲ್ಲಬಹುದು. ಇಂಡಿಯಾ ಟಿವಿ – ಸಿ ವೋಟರ್ – ಟೈಮ್ಸ್ ನೌ ಸೆಪ್ಟೆಂಬರಿನಲ್ಲಿ ನಡೆಸಿದ ಜಂಟಿ ಸಮೀಕ್ಷೆ ಪ್ರಕಾರ ಪಕ್ಷವು 7 ಸ್ಥಾನಗಳನ್ನು ಗೆಲ್ಲಬಹುದು. ಇಂಡಿಯಾ ಟಿವಿ – ಸಿ ವೋಟರ್ – ಟೈಮ್ಸ್ ನೌ ಸೆಪ್ಟೆಂಬರಿನಲ್ಲಿ ನಡೆಸಿದ ಜಂಟಿ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷವು 7ರಿಂದ 12 ಸ್ಥಾನ ಗೆಲ್ಲಬಹುದು. ಎಬಿಪಿ ನ್ಯೂಸ್ – ಏಸಿ ನೀಲ್ಸನ್ ಜಂಟಿಯಾಗಿ ಸೆಪ್ಟೆಂಬರಿನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷ 18 ಸ್ಥಾನ ಗೆಲ್ಲಬಹುದು. ಸಿಎನ್ನೆನ್-ಐಬಿಎನ್, ದ ವೀಕ್ ಪತ್ರಿಕೆ, ಸಿಎಸ್ಡಿಎಸ್ ಜಂಟಿಯಾಗಿ ಅಕ್ಟೋಬರಿನಲ್ಲಿ ಕೈಗೊಂಡ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷ 19ರಿಂದ 25 ಸ್ಥಾನ ಗೆಲ್ಲಬಹುದು. ಟೈಮ್ಸ್ ನೌ – ಸಿ ವೋಟರ್ ನವೆಂಬರಿನಲ್ಲಿ ಕೈಗೊಂಡ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷವು 18 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಆಮ್ ಆದ್ಮಿ-ಸಿಸ್ರೋ ಅಸೋಸಿಯೇಟ್ಸ್ ಕೈಗೊಂಡ ಸಮೀಕ್ಷೆಯಲ್ಲಿ ಆಮ್ ಆದ್ಮಿ ಪಕ್ಷವು ಗೆಲ್ಲಬಹುದಾದ ಸ್ಥಾನಗಳ ಸಂಖ್ಯೆಯನ್ನು ವೆಬ್‌ಸೈಟಿನಲ್ಲಿ ನಮೂದಿಸಿಲ್ಲ.

ಆಮ್ ಆದ್ಮಿ ಎಷ್ಟೇ ಮತ ಪ್ರತಿಶತ ಹಾಗೂ ಸ್ಥಾನಗಳನ್ನು ಪಡೆದರೂ ಅದು ಪ್ರಥಮವಾಗಿ ಸ್ಪರ್ಧಿಸುತ್ತಿರುವ ಕಾರಣ ಅದು ಉತ್ತಮ ಸಾಧನೆಯೇ ಆಗುತ್ತದೆ. ಅದರಲ್ಲೂ ಮುಖ್ಯವಾಗಿ ಬಿಜೆಪಿ ಪಕ್ಷದ ನರೇಂದ್ರ ಮೋದಿಯ ಒಂದೊಂದು ರ್‍ಯಾಲಿಗೆ ಖರ್ಚು ಮಾಡುವ 15-20 ಕೋಟಿ ರೂಪಾಯಿ ಹಣದಲ್ಲಿ ಆಮ್ ಆದ್ಮಿ ಪಕ್ಷವು ಇಡೀ ದೆಹಲಿ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತಿದೆ ಎಂಬುದು ಬಹಳ ಮುಖ್ಯ ಅಂಶ. anna-kejriwalಅಣ್ಣಾ ಅವರಿಂದ ಬೇರ್ಪಟ್ಟು ಕೇಜ್ರೀವಾಲ್ ರಾಜಕೀಯ ಪಕ್ಷ ಸ್ಥಾಪಿಸುವ ನಿರ್ಧಾರ ತೆಗೆದುಕೊಂಡ ನಂತರ ಕೇಜ್ರೀವಾಲರನ್ನಾಗಲೀ, ಅವರ ನೂತನ ಪಕ್ಷವನ್ನಾಗಲೀ, ಅದು ಎತ್ತಿ ಹಿಡಿಯಲು ಹೊರಟಿರುವ ಸಾರ್ವಕಾಲಿಕ ಮೌಲ್ಯಗಳನ್ನಾಗಲೀ ಮಾಧ್ಯಮಗಳು ಕಡೆಗಣಿಸಿರುವ ಪರಿಸ್ಥಿತಿಯಲ್ಲಿ ಆಮ್ ಆದ್ಮಿ ಪಕ್ಷವು 6 ಸ್ಥಾನಗಳನ್ನು ಪಡೆದರೂ ಉತ್ತಮ ಸಾಧನೆಯೇ ಆಗುತ್ತದೆ. ತಮ್ಮ ಹಾದಿಗಳು ಬೇರ್ಪಟ್ಟ ನಂತರ ಅಣ್ಣಾ ಹಜಾರೆಯವರು ಕೂಡ ಆಮ್ ಆದ್ಮಿ ಪಕ್ಷದ ಬಗ್ಗೆ ಹಾಗೂ ಕೇಜ್ರೀವಾಲಾರ ಬಗ್ಗೆ ಅತ್ಯಂತ ಕಠಿಣವಾಗಿ ವರ್ತಿಸುತ್ತಿರುವುದು ಕಂಡುಬರುತ್ತಿದ್ದು ಇದರಿಂದ ಅಣ್ಣಾ ಹಜಾರೆಯವರು ಸಣ್ಣವರಾಗುತ್ತಿದ್ದಾರೆ. ಇಂಥ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಕೇಜ್ರೀವಾಲ್ ಹಾಗೂ ಸಂಗಡಿಗರು ಪಕ್ಷ ಕಟ್ಟಲು, ಚುನಾವಣೆಗೆ ಸ್ಪರ್ಧಿಸಲು ಅತ್ಯಂತ ಕಠಿಣ ಪರಿಶ್ರಮ ಪಡುತ್ತಿರುವುದು ಶ್ಲಾಘನೀಯ. ನಮ್ಮ ದೇಶದ ರಾಜಕೀಯಕ್ಕೆ ಇಂದು ಇಂಥ ಪ್ರತಿಭಾವಂತರ ಅಗತ್ಯ ಇದೆ. ಬಿಜೆಪಿಯ ಸುಷ್ಮಾ ಸ್ವರಾಜ್ ಅವರು ಆಮ್ ಆದ್ಮಿ ಪಕ್ಷದ ಹೆಸರನ್ನು ಅಮೀರ್ ಆದ್ಮಿ ಪಾರ್ಟಿ (ಶ್ರೀಮಂತ ಜನರ ಪಕ್ಷ) ಎಂದು ಬದಲಿಸುವುದು ಒಳ್ಳೆಯದು ಎಂದು ಹೇಳಿದ್ದಾರೆ. ಇದಕ್ಕೆ ಕಾರಣ ಆಮ್ ಆದ್ಮಿ ಪಕ್ಷದ ಕೆಲವು ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವಿವರಗಳಲ್ಲಿ ತಮ್ಮ ನಿಜವಾದ ವಿವರಗಳನ್ನು ನೀಡಿದ್ದು ಇರಬಹುದು. ಉಳಿದ ಪಕ್ಷಗಳ ಅಭ್ಯರ್ಥಿಗಳಂತೆ ಸುಳ್ಳು ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಅವರು ನೀಡಿರಲಾರರು. ಹೀಗಾಗಿ ಪಕ್ಷದಲ್ಲಿ ಕೆಲವರು ಕೋಟ್ಯಾಧೀಶರೆಂದು ಕಂಡು ಬರಬಹುದು. ಕೋಟ್ಯಾಧೀಶರಿಗೆ ಜೀವನೋಪಾಯಕ್ಕೆ ಬೇಕಾದ ಗಟ್ಟಿಯಾದ ಆದಾಯ ಮೂಲ ಇರುವ ಕಾರಣ ಅವರು ಚುನಾವಣೆಗೆ ಸ್ಪರ್ಧಿಸುವುದು ಒಳ್ಳೆಯದೇ, ಆದರೆ ಅವರು ತಮ್ಮ ಶಾಸಕ ಸ್ಥಾನವನ್ನು ತಮ್ಮ ಉದ್ಯಮ ಅಥವಾ ಆಸ್ತಿಪಾಸ್ತಿ ಬೆಳೆಸಿಕೊಳ್ಳಲು ಬಳಸಬಾರದು ಅಷ್ಟೇ. ಜೀವನೋಪಾಯಕ್ಕೆ ದಿನನಿತ್ಯ ದುಡಿದೇ ಹಣ ಗಳಿಸಬೇಕಾದವರು ಚುನಾವಣೆಗೆ ಸ್ಪರ್ಧಿಸುವುದು ಕಷ್ಟವೇ. ಹೀಗಾಗಿ ಜನತೆಗೆ ಹಾಗೂ ದೇಶಕ್ಕೆ ಸೇವೆ ಸಲ್ಲಿಸಬೇಕು ಎಂಬ ಮನೋಭಾವ ಇರುವ ಶ್ರೀಮಂತರು ಚುನಾವಣೆಗೆ ಸ್ಪರ್ಧಿಸುವುದನ್ನು ಸ್ವಾಗತಿಸಬೇಕು. ಇದನ್ನು ವ್ಯಂಗ್ಯ ಮಾಡಬೇಕಾದ ಅಗತ್ಯ ಇಲ್ಲ ಎಂದು ಸುಷ್ಮಾ ಸ್ವರಾಜ್ ಅವರಂಥ ನಾಯಕರಿಗೆ ಹೇಳಬೇಕಾಗಿದೆ.

ಆಮ್ ಆದ್ಮಿ ಪಕ್ಷವು ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಂದ ಹೆಚ್ಚೆಂದರೆ ಐದಾರು ಕೋಟಿ ರೂಪಾಯಿಗಳ ದೇಣಿಗೆ ಪಡೆದಿರಬಹುದು, ಅದೂ ಪಾರದರ್ಶಕವಾಗಿ, ಅದನ್ನು ಅದು ತನ್ನ ವೆಬ್‌ಸೈಟಿನಲ್ಲಿ ಸ್ಪಷ್ಟವಾಗಿ ತೋರಿಸಿದೆ. AAP-websiteಆಮ್ ಆದ್ಮಿ ಪಕ್ಷದ ವ್ಯವಹಾರಗಳು ತೆರೆದ ಪುಸ್ತಕದಂತೆ ಇರುವಾಗ ಅದು ಪಡೆದ ಅನಿವಾಸಿ ಭಾರತೀಯರ ಹಣದ ಬಗ್ಗೆ ತನಿಖೆ ನಡೆಸುವುದು ನಿಜಕ್ಕೂ ದೊಡ್ಡ ಕುಚೋದ್ಯ. ಇಂಥ ವಿಷಯಗಳ ಬಗ್ಗೆ ಪ್ರತಿಪಕ್ಷಗಳು ಸುಮ್ಮನೆ ತಗಾದೆ ತೆಗೆಯುವುದು ನೀಚತನವಲ್ಲದೆ ಮತ್ತೇನೂ ಅಲ್ಲ ಎನ್ನದೆ ವಿಧಿಯಿಲ್ಲ. ಇತ್ತೀಚೆಗೆ ಅಣ್ಣಾ ಹಜಾರೆಯವರನ್ನು ಕೇಜ್ರೀವಾಲ್ ವಿರುದ್ಧ ಎತ್ತಿ ಕಟ್ಟಲು ಕೆಲವು ಸ್ಥಾಪಿತ ಹಿತಾಸಕ್ತಿಗಳು ಪ್ರಯತ್ನಿಸುತ್ತಿರುವಂತೆ ಕಂಡುಬರುತ್ತದೆ. ಮುಖ್ಯವಾಗಿ ಅಣ್ಣಾ ಹೆಸರನ್ನು ಕೇಜ್ರಿವಾಲ್ ಚುನಾವಣೆಗೆ ಹಾಗೂ ಪಕ್ಷ ಕಟ್ಟಲು ಬಳಸುತ್ತಿದ್ದಾರೆ ಎಂದು, ಅಣ್ಣಾ ಹಜಾರೆ ಹೋರಾಟದ ಸಮಯದಲ್ಲಿ ಸಂಗ್ರಹವಾದ ಹಣವನ್ನು ಕೇಜ್ರೀವಾಲ್ ಚುನಾವಣೆಗೆ ಬಳಸುತ್ತಿದ್ದಾರೆ ಎಂದು ಅಪಪ್ರಚಾರ ಮಾಡುವುದು ಇತ್ಯಾದಿ ಅಪಪ್ರಚಾರವೂ ನಡೆಯುತ್ತಿದೆ ಮತ್ತು ಇದಕ್ಕೆ ಕೇಜ್ರಿವಾಲ್ ಪಕ್ಷದ ವೆಬ್ ಸೈಟಿನಲ್ಲಿ ಹಾಗೂ ಪತ್ರಿಕಾಗೋಷ್ಠಿ ನಡೆಸಿ ಇಂಥ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉತ್ತಮವಾಗಬೇಕಾದರೆ, ಆರೋಗ್ಯಕರವಾಗಿ ಬೆಳೆಯಬೇಕಾದರೆ ಆಮ್ ಆದ್ಮಿ ಪಕ್ಷವನ್ನು ಹಾಗೂ ಅದು ಎತ್ತಿ ಹಿಡಿಯುತ್ತಿರುವ ಮೌಲ್ಯಗಳನ್ನು ಗೆಲ್ಲಿಸುವುದು ಅಗತ್ಯ. ಹೀಗಾಗಿ ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷವು ಗೆದ್ದು ಸರ್ಕಾರ ರಚಿಸುವ ಸಾಮರ್ಥ್ಯ ಪಡೆದರೆ ಭಾರತದ ರಾಜಕೀಯದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲು ಅದು ಕಾರಣವಾಗಬಹುದು. ಅಲ್ಲಿ ಅದು ಗೆಲುವನ್ನು ಸಾಧಿಸಿದರೆ ಆ ಪಕ್ಷವನ್ನು ಮತ್ತು ಅದು ಪ್ರತಿನಿಧಿಸುವ ಮೌಲ್ಯಾಧಾರಿತ ರಾಜಕೀಯವನ್ನು ದೇಶಾದ್ಯಂತ ಬೆಳೆಸಲು, ವಿಸ್ತರಿಸಲು ಪ್ರೋತ್ಸಾಹ ದೊರೆಯಲಿರುವುದು ಖಚಿತ. ಹೀಗಾಗಿ ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷವನ್ನು ಗೆಲ್ಲಿಸುವಂತೆ ದೇಶದ ಪ್ರಖ್ಯಾತ ಚಿಂತಕರು, ವಿಜ್ಞಾನಿಗಳು, ಸಮಾಜ ಸುಧಾರಕರು, ಸಮಾಜ ಸೇವಕರು, ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಜನರನ್ನು ಪ್ರೋತ್ಸಾಹಿಸುವುದು ಇಂದಿನ ಅಗತ್ಯ.

ಸಾಮಾಜಿಕ ಜಾಲತಾಣಗಳಲ್ಲಿ ಕೋಮುವಾದಿಗಳೇ ತುಂಬಿದ್ದಾರೆಯೆ?


– ರವಿ ಕೃಷ್ಣಾರೆಡ್ದಿ


 

ಹಾಸನದಲ್ಲಿ ಕಳೆದ ವಾರಾಂತ್ಯ ನಡೆದ “ನಾವು ನಮ್ಮಲ್ಲಿ”ಯ “ಅಭಿವ್ಯಕ್ತಿ ಕರ್ನಾಟಕ” ಕಾರ್ಯಕ್ರಮದಲ್ಲಿ ನಮ್ಮ ವರ್ತಮಾನ.ಕಾಮ್ ಬಳಗದ ಲೇಖಕರಲ್ಲೊಬ್ಬರಾದ ತೇಜ ಸಚಿನ್ ಪೂಜಾರಿಯವರು “ಅಭಿವ್ಯಕ್ತಿಯ ಬಹುರೂಪಿ ನೆಲೆ ಮತ್ತು ಅಭಿವ್ಯಕ್ತಿಯ ಆತಂಕಗಳು” ಗೋಷ್ಠಿಯಲ್ಲಿ “ಸಾಮಾಜಿಕ ಜಾಲತಾಣ” ವಿಷಯವಾಗಿ ತಮ್ಮ ಅಭಿಪ್ರಾಯ ಮಂಡಿಸಿದರು. sachin-teja-poojariಅವರ ಮಾತಿನ ನಂತರ ನಡೆದ ಸಂವಾದದಲ್ಲಿ ಅಲ್ಲಿ ಭಾಗವಹಿಸಿದ್ದ ಹಲವು ಸ್ನೇಹಿತರು “ಇವತ್ತಿನ ಸಾಮಾಜಿಕ ಜಾಲತಾಣಗಳಲ್ಲಿ ಅಸಹನೆಯನ್ನೇ ತುಂಬಿಕೊಂಡಿರುವ ಕೋಮುವಾದಿ ಚಿಂತನೆಯ ಜನರೇ ತುಂಬಿಕೊಂಡಿದ್ದಾರೆ. ನಾವು ಅವರಿಗೆ ಅಪಥ್ಯವಾದದ್ದೇನಾದರೂ ಬರೆದರೆ ಹಾಗೆಯೇ ಮುಗಿದು ಬೀಳುತ್ತಾರೆ. ನಮ್ಮಂತಹ ವಿಚಾರಧಾರೆಯ ಜನರ ಅಭಿಪ್ರಾಯಗಳಿಗೆ ಅಸಹ್ಯಕಾರಿಯಾಗಿ ವಾಗ್ದಾಳಿ ಮಾಡುತ್ತಾರೆ,” ಎಂದು ಆತಂಕದಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇವರ ಅಭಿಪ್ರಾಯಕ್ಕೆ ನಾನು ನನ್ನ ಅನುಭವದ ಹಿನ್ನೆಲೆಯಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆ ಕನ್ನಡದ ಅಂತರ್ಜಾಲ ಜಗತ್ತು ಹೇಗಿತ್ತು ಮತ್ತು ಈಗ ಹೇಗಿದೆ ಎಂದು ಮಾತನಾಡುತ್ತ 2008 ರಲ್ಲಿ ನಾನು ನನ್ನ “ಅಮೆರಿಕದಿಂದ ರವಿ” ಬ್ಲಾಗಿನಲ್ಲಿ ಬರೆದಿದ್ದ “ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ…” ಲೇಖನವನ್ನು ನೆನಪಿಸಿ ಮಾತನಾಡಿದೆ.

ಇಂದು ಕನ್ನಡದ ಅಂತರ್ಜಾಲ ಜಗತ್ತು ಒಂದಷ್ಟು ಮಟ್ಟಿಗಾದರೂ ನಿಜ ಕರ್ನಾಟಕವನ್ನು ಪ್ರತಿನಿಧಿಸುತ್ತದೆ. ಆದರೆ ಐದಾರು ವರ್ಷಗಳ ಹಿಂದಿನ ತನಕವೂ ಹಾಗೆ ಇರಲಿಲ್ಲ. ಸುಮಾರು 2007 ರ ನಂತರ ಈ ವಾತಾವರಣ ಬದಲಾಗುತ್ತ ಹೋಯಿತು. ಆ ಸಂದರ್ಭದಲ್ಲಿ ಅದನ್ನು ಗಮನಿಸಿ ಈ ಸ್ಥಿತ್ಯಂತರವನ್ನು ದಾಖಲಿಸಬೇಕು ಎಂದು ನಾನು ಈ ಲೇಖನ ಬರೆದಿದ್ದೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಕೋಮುವಾದಿ ಮತ್ತು ಜಾತಿವಾದಿಗಳಲ್ಲದ ಅನೇಕ ಪ್ರಗತಿಪರರು ಇಂದು ಅಂತರ್ಜಾಲದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಅವರು ಒಬ್ಬಂಟಿಗಳಲ್ಲ. ಬಹುಸಂಖ್ಯಾತರಲ್ಲದಿರಬಹುದು, ಆದರೆ ಕನ್ನಡ ಅಂತರ್ಜಾಲ ಲೋಕದಲ್ಲಿ ಹೆಚ್ಚಿಗೆ ಬರೆಯುತ್ತಿರುವವರು ಮತ್ತು ಸಕ್ರಿಯರಾಗಿರುವವರು ಅವರೇ. ಫೇಸ್‌ಬುಕ್‌ನಲ್ಲಿ ಅವರು ಕಾಮೆಂಟ್ ಹಾಕುವುದೊ, ಚರ್ಚೆ-ಸಂವಾದ ಮಾಡುವುದೋ, ಕಮ್ಮಿ ಇರಬಹುದು. ಆದರೆ ನಿಜವಾದ ಕಂಟೆಟ್ ಏರಿಸುತ್ತಿರುವವರಲ್ಲಿ ಅವರು ಮುಂಚೂಣಿಯಲ್ಲಿಯೇ ಇದ್ದಾರೆ.

ಹಾಗಾಗಿ, ನಮ್ಮ ಪ್ರಗತಿಪರ, ಜಾತ್ಯತೀತ, ಪ್ರಜಾಪ್ರಭುತ್ವವಾದಿ ಯುವಮಿತ್ರರಿಗೆ ನಾನು ಹೇಳುವುದೇನೆಂದರೆ, ಕಾಲ ಬದಲಾಗಿದೆ. ಜೋರು ಅಥವ ಒರಟು ಅಥವ ಅಸಹ್ಯ ಮಾತುಗಳಿಗೆ ಬೇಸರಿಸಿಕೊಂಡು ಇಲ್ಲಿ ಅವರೇ ಇದ್ದಾರೆ ಎಂದುಕೊಳ್ಳುವುದು ಬೇಡ. ಇನ್ನಷ್ಟು ಎಚ್ಚರಿಕೆಯಿಂದ, ಸಂಯಮದಿಂದ, ಸಕ್ರಿಯವಾಗಿ, ಪ್ರಾಮಾಣಿಕವಾಗಿ ನಿಮ್ಮ ಚಟುವಟಿಕೆಗಳನ್ನು ಮುಂದುವರೆಸುತ್ತ ಹೋಗಿ. ನೀವು ಒಬ್ಬಂಟಿಗಳಲ್ಲ. ಹಾಗೆಯೇ, ನೀವು ಬಹುಸಂಖ್ಯಾತರಾಗುವ ಸಮಯ ಬಂದಾಗ ಇಂದು ನೀವು ಯಾರನ್ನು ವಿಮರ್ಶಿಸುತ್ತಿದ್ದೀರೋ ಅವರಂತೆಯೇ ಅಹಂಕಾರ ಮತ್ತು ಅಸಹನೆ ಬೆಳೆಸಿಕೊಳ್ಳದೆ ವಿವೇಕ ಮತ್ತು ಸಜ್ಜನಿಕೆಯಿಂದ ವರ್ತಿಸಿ. ಮನುಷ್ಯ ಹಲವು ಎಡರುತೊಡರುಗಳ ನಡುವೆಯೂ ಪ್ರತಿದಿನವೂ ಒಳ್ಳೆಯ ದಿನಗಳನ್ನು ಕಟ್ಟಿಕೊಳ್ಳುವುದರತ್ತ ನಡೆಯುತ್ತಿದ್ದಾನೆ. ಭವಿಷ್ಯ ನಾವು ಕಟ್ಟಿಕೊಳ್ಳುವ ರೀತಿಯಲ್ಲಿರುತ್ತದೆ.

ಅಕ್ಟೋಬರ್ 6, 2008 ರಲ್ಲಿ ಬರೆದಿದ್ದ ಆ ಲೇಖನವನ್ನು ಪೂರಕ ಓದಿಗೆ ಇಲ್ಲಿ ಒದಗಿಸಲಾಗುತ್ತಿದೆ.

ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ…

ಇಂತಹದೊಂದು ವಿಶ್ವಾಸ ನನಗೆ ಮೊದಲಿನಿಂದಲೂ ಇತ್ತು. ಆರ್ಥಿಕ ಅಭಿವೃದ್ಧಿ ಕೊನೆಗೂ ತಳವರ್ಗಗಳನ್ನೂ, ಗ್ರಾಮಾಂತರವನ್ನೂ ಮುಟ್ಟುತ್ತದೆ ಮತ್ತು ಅದು ಕಾಲಾಂತರದಲ್ಲಿ ಅಂತರ್ಜಾಲದಲ್ಲೂ ಪ್ರತಿಬಿಂಬಿಸುತ್ತದೆ ಎನ್ನುವುದೇ ಆ ವಿಶ್ವಾಸ.

ನಾನು ಬರೆಯಲಾರಂಭಿಸಿದ್ದು 2003 ರಲ್ಲಿ. ಆಗ ನನ್ನಂತಹ ವಿದೇಶದಲ್ಲಿದ್ದವನಿಗೆ ಕನ್ನಡದಲ್ಲಿ ಏನಾದರೂ ಬರೆದರೆ ಪ್ರಕಟಿಸುವ ಅವಕಾಶ ಇದ್ದದ್ದು ದಟ್ಸ್‌ಕನ್ನಡ ವೆಬ್‌ಸೈಟಿನಲ್ಲಿ. ಶಾಮಸುಂದರ್ ಮತ್ತವರ ಬಳಗ ನನ್ನಂತಹ ಅನೇಕ ಭಿನ್ನ ವೈಚಾರಿಕ ಹಿನ್ನೆಲೆ ಇರುವವರಿಗೆಲ್ಲ ವೇದಿಕೆ ಕೊಟ್ಟಿದ್ದರು. ಬಹುಶಃ, ಸಂವಾದಕ್ಕೆ ಆಸ್ಪದವಿದ್ದ ಮೊದಲ ಕನ್ನಡ ತಾಣ ಅದು.

ಅಷ್ಟಿದ್ದರೂ, ಕನ್ನಡ ಅಂತರ್ಜಾಲ ಪ್ರಪಂಚದಲ್ಲಿ ಮೊದಲಿನಿಂದಲೂ ಬಹುಸಂಖ್ಯಾತರಾಗಿದ್ದವರು ಕೋಮುವಾದಿಗಳು (ಜಾತಿವಾದಿಗಳೂ ಇದರಲ್ಲೆ ಬರುತ್ತಾರೆ) ಮತ್ತು ತಮ್ಮ ಗತಕಾಲದ ಹಿರಿಮೆಯ ಬಗ್ಗೆ (!) ನಾಸ್ಟಾಲ್ಜಿಕ್ ಆಗಿ ಬರೆಯುವ, ಅಂತಹುದನ್ನೆ ಓದುವವರು. ನಾನು ಬರೆಯಲು ಆರಂಭಿಸಿದ ದಿನಗಳಲ್ಲಂತೂ ಇದು ಎದ್ದು ಕಾಣುವ ಹಾಗೆ ಇತ್ತು. ಸಂಸ್ಕೃತಿ, ದೇಶ, ಜಾತಿ, ಮತ, ಮುಂತಾದವುಗಳ ಪರ ಭಾವಾವೇಶದಿಂದ ಬರೆಯುವವರೆ ಅಂತರ್ಜಾಲದಲ್ಲಿ ತುಂಬಿದ್ದ ಸಮಯ ಅದು. ಆ ಸಮಯದಲ್ಲಿ ಇವುಗಳಿಗೆ ಭಿನ್ನವಾಗಿ (ಸಂಕುಚಿತ ಭಾವನೆಗಳನ್ನು ವಿಮರ್ಶಿಸಿ) ಬರೆಯುವವರು ಬೆರಳೆಣಿಕೆ ಮಂದಿ ಮಾತ್ರ ಇದ್ದರು. ಈ “ಜನಪ್ರಿಯ ಸಿದ್ಧಮಾದರಿ”ಗಳಿಗಿಂತ ಬೇರೆಯದಾಗಿ ಬರೆಯಲಾರಂಭಿಸಿದ್ದ ನನಗೆ ಆ ಸಮಯದಲ್ಲಿ ಸಮಾನಮನಸ್ಕರು ಬಹಳ ಕಮ್ಮಿ ಇದ್ದರು. (ಆದರೆ, ಕನ್ನಡ ಬರಹಲೋಕ ಹಾಗೆ ಇರಲಿಲ್ಲ. ಅಲ್ಲಿ ನಡೆಯುತ್ತಿದ್ದ ಚಿಂತನೆಗಳಿಗೂ ಮತ್ತು ಅಂತರ್ಜಾಲದಲ್ಲಿನ ಕನ್ನಡಲೋಕಕ್ಕೂ ಅಪಾರವಾದ ವ್ಯತ್ಯಾಸಗಳಿದ್ದವು. ಕನ್ನಡ ಅಂತರ್ಜಾಲ ಲೋಕ ಕನ್ನಡದ ಚಿಂತನಾಲೋಕದ ಪ್ರತಿಬಿಂಬ ಆಗಿರಲಿಲ್ಲ ಆಗ.)

ಆಗೆಲ್ಲ ನನ್ನಲ್ಲಿ, ಈ ಪರಿಸ್ಥಿತಿ ಯಾವಾಗ ಬದಲಾಗುತ್ತದೆ, ಕನ್ನಡದ ಅಂತರ್ಜಾಲವೂ ನಿಜವಾದ ಕನ್ನಡ-ಪ್ರಪಂಚವನ್ನು ಪ್ರತಿಬಿಂಬಿಸುವುದು ಯಾವಾಗ ಎನ್ನುವ ಪ್ರಶ್ನೆಗಳು ಹುಟ್ಟುತ್ತಿದ್ದವು. ಆ ಪ್ರಶ್ನೆಗಳಿಗೆ ಮೇಲೆ ಹೇಳಿದ ವಿಶ್ವಾಸ ಉತ್ತರವಾಗುತ್ತಿತ್ತು. ಈ ಆರ್ಥಿಕ ಪ್ರಗತಿ ಕೊನೆಗೆ ಎಲ್ಲಾ ವರ್ಗಗಳಿಗೂ ಒಂದಲ್ಲ ಒಂದು ರೀತಿಯಲ್ಲಿ ಇಳಿಯಲೇಬೇಕು (ಇಲ್ಲಿ ನೋಡಿ), ಒಟ್ಟಾರೆ ಅದು ನಿಧಾನವಾಗಿ ಎಲ್ಲರನ್ನೂ ಮೇಲಕ್ಕೆತ್ತುತ್ತದೆ (ಇಲ್ಲಿ ನೋಡಿ), ಆಗ ಅದು ಅಂತರ್ಜಾಲದಲ್ಲೂ ಪ್ರತಿಬಿಂಬಿತವಾಗುತ್ತದೆ, ಎನ್ನುವ ಆಶಾವಾದ ಅದು.

ಬಹುಶಃ ಒಂದು-ಎರಡು ವರ್ಷಗಳಿಂದ ನನ್ನ ಆಶಾವಾದ ವಾಸ್ತವವಾಗುತ್ತಿರುವುದನ್ನು ನೋಡುತ್ತಿದ್ದೇನೆ. ನಾಲ್ಕೈದು ವರ್ಷಗಳ ಹಿಂದೆ ಬೆಂಗಳೂರಿನ ಬಹುತೇಕ ಕನ್ನಡ ಸಾಹಿತಿಗಳಿಗೆ (ಅದರಲ್ಲೂ ಪ್ರಗತಿಪರರೆಂದುಕೊಳ್ಳುವವರಿಗೆ) ’ಇಂಟರ್‍ನೆಟ್ ನೋಡುವುದಿಲ್ಲ, ಇಮೇಲ್ ಗೊತ್ತಿಲ್ಲ,’ ಎನ್ನುವುದು ಬಹಳ ಹೆಮ್ಮೆಯ ವಿಷಯವಾದಂತಿತ್ತು. ತಾವು ಬಡವರ, ದುರ್ಬಲರ, ದಲಿತರ, ಹಿಂದುಳಿದವರ ಪರ ಇದ್ದೇವೆ ಎಂದು ತೋರಿಸಿಕೊಳ್ಳಲು ತಮಗೆ ತಾವೆ ಮಾಡಿಕೊಳ್ಳುವ ಆತ್ಮದ್ರೋಹದಂತೆ ನನಗದು ಕಾಣಿಸುತ್ತಿತ್ತು. ಆದರೆ ಯಾವಾಗ ಕಂಪ್ಯೂಟರ್‌ಗಳು ಮತ್ತು ಇಂಟರ್‌ನೆಟ್ affordable ಆಗುತ್ತಾ ಬಂತು, ಅವರಿಗೂ ಇದರಿಂದ ಆಚೆ ಉಳಿಯಲಾಗಲಿಲ್ಲ, ಆಗುತ್ತಿಲ್ಲ. ಅದರಲ್ಲೂ ವಿಭಿನ್ನ ಹಿನ್ನೆಲೆಯ ಯುವಕರು ಶಿಕ್ಷಣ ಮತ್ತು ನೌಕರಿಯ ಸಾಧ್ಯತೆಗಳಿಂದಾಗಿ ದಿನವೂ ಕಂಪ್ಯೂಟರ್‌ನೊಂದಿಗೇ ಕೆಲಸ ಮಾಡುವಂತಹ ಪರಿಸ್ಥಿತಿ ಉಂಟಾದುದರಿಂದ ಒಂದು ಬಹುದೊಡ್ಡ, ಬಹುಸಂಖ್ಯಾತ ಜನಸಮೂಹವೆ ಇವತ್ತು ಕಂಪ್ಯೂಟರ್‌ಗೆ ತೆರೆದುಕೊಂಡಿದೆ. ಕಳೆದ ಎರಡು ವರ್ಷಗಳಲ್ಲಿ ಕನ್ನಡ ವೆಬ್‌ಲೋಕ ಬದಲಾಗಿರುವ ಪರಿಸ್ಥಿತಿಯನ್ನು ಅವಲೋಕಿಸಿದರೆ ಸಾಕು, ಇದು ಸ್ಪಷ್ಟವಾಗಿ ಕಾಣಿಸುತ್ತದೆ.

ಯಾವಾಗ ಬ್ಲಾಗುಗಳನ್ನು ಮಾಡಿಕೊಳ್ಳುವುದು ಮುಕ್ತವೂ, ಉಚಿತವೂ, ಸುಲಭವೂ ಆಯಿತೊ ಅಲ್ಲಿಂದೀಚೆಗೆ ನಾನಾ ಹಿನ್ನೆಲೆಯ ಜನ ಕನ್ನಡ ಅಂತರ್ಜಾಲ ಲೋಕಕ್ಕೆ ಅಡಿಯಿಟ್ಟಿದ್ದಾರೆ. ಮೊದಮೊದಲು ಇಲ್ಲಿಯೂ ಕೋಮುವಾದ ಅಥವ ಮತೀಯ ಬಲಪಂಥೀಯತೆಗೆ ಹತ್ತಿರ ಇರುವವರೆ ಹೆಚ್ಚಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಇದ್ದಕ್ಕಿದ್ದಂತೆ ಬದಲಾಗುತ್ತಿದೆ. ನಿಜವಾದ ಕನ್ನಡ ಪ್ರಪಂಚ ಅಂತರ್ಜಾಲದಲ್ಲೂ ಪ್ರತಿಬಿಂಬಿತವಾಗುತ್ತಿದೆ.

ಇದಕ್ಕೆ ಪೂರಕವಾಗಿ ಕೆಲವು ಬ್ಲಾಗುಗಳನ್ನು, ವೆಬ್‌ಸೈಟುಗಳನ್ನು ಉದಾಹರಿಸುತ್ತೇನೆ. ಅಬ್ದುಲ್ ರಷೀದರ “ಕೆಂಡಸಂಪಿಗೆ” ಕನ್ನಡದ ಅಂತರ್ಜಾಲ ಲೋಕಕ್ಕೆ ಪರಿಚಯ ಇಲ್ಲದಿದ್ದವರನ್ನೆಲ್ಲ (ಆದರೆ ಕನ್ನಡದ ಅತಿ ಪ್ರಮುಖ ಬರಹಗಾರರು) ಪರಿಚಯಿಸುತ್ತಿದೆ. ಕುಂ.ವೀ. ಕೆಂಡಸಂಪಿಗೆಗೆಂದೇ ಅಂಕಣ ಬರೆಯುತ್ತಿದ್ದಾರೆ. ಅನಂತಮೂರ್ತಿಯವರೂ ಸಹ. ಇನ್ನು ಸ್ವತಃ ಅಬ್ದುಲ್ ರಷೀದ್, ದೇವನೂರು ಮಹಾದೇವ, ಮೊಗಳ್ಳಿ ಗಣೇಶ್‌ರ ಕತೆ-ಕಾದಂಬರಿಗಳೂ ಪ್ರಕಟವಾಗುತ್ತಿವೆ. ಕವಿ-ಪತ್ರಕರ್ತ ಜಿ.ಎನ್. ಮೋಹನ್ ನಡೆಸುತ್ತಾರೆ ಎನ್ನಲಾದ (ಎಲ್ಲೋ ಓದಿದ್ದು, ಅಧಿಕೃತವಾಗಿ ನನಗೆ ಗೊತ್ತಿಲ್ಲ) “ಅವಧಿ” ಬ್ಲಾಗಿನಲ್ಲೂ ಇಂತಹುದನ್ನೆ ನಾವು ನೋಡುತ್ತೇವೆ. ಡಾ. ನಟರಾಜ್ ಹುಳಿಯಾರ್ ಅಂತರ್ಜಾಲದ ಓದುಗರಿಗೆ ಪರಿಚಯವಾಗಿದ್ದು ಇದೇ ಬ್ಲಾಗಿನಿಂದ.

ಇನ್ನು ಸಂಪದದ ಬಗ್ಗೆ. ಯು.ಆರ್. ಅನಂತಮೂರ್ತಿಯವರ ಋಜುವಾತು ಬ್ಲಾಗಿನಿಂದ ಹಿಡಿದು, ಉದಯವಾಣಿಯ ಇಸ್ಮಾಯಿಲ್‌ರ “ಬರೆವ ಬದುಕಿನ ತಲ್ಲಣ“, ಡಿ.ಎಸ್. ನಾಗಭೂಷಣರ “ನಾಗ ಸಂಪದ“, ಡಾ. ಕಕ್ಕಿಲಾಯರ “ಆರೋಗ್ಯ ಸಂಪದ“, ಇನ್ನೂ ಹಲವಾರು ಬರಹಗಾರರಿಂದ ವೈವಿಧ್ಯಗೊಳ್ಳುತ್ತಿರುವ ತಾಣ, ಸಂಪದ.

ಇವೆಲ್ಲದರ ನಡುವೆ, “ಪಂಚ-ಪಾಂಡವ”ರಿಂದ ನಡೆಸಲ್ಪಡುತ್ತದೆ ಎಂದು ಹೇಳಿಕೊಳ್ಳುವ ಇತ್ತೀಚಿನ “ಸುದ್ದಿ ಮಾತು“, ದಿನೇಶ್ ಕುಮಾರ್‌ರ “ದೇಸಿ ಮಾತು“, ಮಂಜುನಾಥ ಸ್ವಾಮಿಯವರ “ಹಳ್ಳಿ ಕನ್ನಡ“, ಇತ್ಯಾದಿ ಬ್ಲಾಗುಗಳು ಕೋಮುವಾದ ಮತ್ತು ಸಾಮಾಜಿಕ ಅಸಮಾನತೆಗಳ ವಿರುದ್ಧ ಮಾತನಾಡುವವರು ಅಂತರ್ಜಾಲದಲ್ಲಿ ಜಾಸ್ತಿಯಾಗುತ್ತಿರುವುದಕ್ಕೆ ನಿದರ್ಶನಗಳು. ಕೇವಲ ಎರಡು-ಮೂರು ವರ್ಷಗಳ ಹಿಂದೆ ಇಂತಹ ಕನ್ನಡ ಬರಹಗಳು ಮತ್ತು ಅಭಿಪ್ರಾಯಗಳು ಅಪರೂಪವಾಗಿದ್ದದ್ದನ್ನು ಸದ್ಯದ ಸ್ಥಿತಿಗೆ ಹೋಲಿಸಿಕೊಂಡರೆ ಬದಲಾವಣೆಯ ವೇಗವನ್ನೂ, Digital divide ಕುಗ್ಗಿದ್ದನ್ನೂ ಊಹಿಸಬಹುದು.

ನನ್ನ ಹಿಂದಿನ “ಗಾಂಧೀಜಿಯ ಹಂತಕ-ಪಡೆ ವಿಶ್ರಮಿಸುವುದಿಲ್ಲ. ಭಾರತವೂ…” ಲೇಖನದಲ್ಲಿ ಬರೆದಂತೆ, ಆಧುನಿಕ ಶಿಕ್ಷಣ, ಪ್ರಜಾಪ್ರಭುತ್ವ ಮತ್ತು ಇತ್ತೀಚಿನ ಆರ್ಥಿಕ ಬೆಳವಣಿಗೆ ನಮ್ಮ ನೆಲದ ಅನೇಕ ಸಮಸ್ಯೆಗಳನ್ನು ಇಲ್ಲವಾಗಿಸುತ್ತಿದೆ. ಬದಲಾಗುತ್ತಿರುವ ಕನ್ನಡ ಅಂತರ್ಜಾಲ ಲೋಕ ಮತ್ತು ಆ ಬದಲಾವಣೆಗಳ ಮೂಲಕಾರಣ ಅದಕ್ಕೆ ಒಂದಷ್ಟು ಸಮರ್ಥನೆ (ನಮ್ಮ ಪರಿಧಿಯಲ್ಲಿ) ಒದಗಿಸುತ್ತದೆ.

ಆದರೆ, ಸದ್ಯದ ಜಾಗತಿಕ ಅರ್ಥವ್ಯವಸ್ಥೆಯಲ್ಲಿನ ಅಲ್ಲೋಲಕಲ್ಲೋಲಗಳು ಈ ಪ್ರಗತಿಯ ದೀರ್ಘಕಾಲೀನತೆಯ ಬಗ್ಗೆಯೇ ಒಂದಷ್ಟು ಸಂಶಯಗಳನ್ನು ಹುಟ್ಟಿಸಲಾರಂಭಿಸಿದೆ. ನಮ್ಮ ಐಟಿ-ಕೇಂದ್ರಿತ ನೌಕರಿಗಳಲ್ಲಿರುವ ಯುವಜನಾಂಗ ನೌಕರಿ ಕಳೆದುಕೊಳ್ಳಲು ಆರಂಭಿಸಿದಾಗ (ಅದರ ಬಗ್ಗೆ ಮುಂದಿನ ಲೇಖನದಲ್ಲಿ ಬರೆಯುತ್ತೇನೆ), ಅಥವ ಐಟಿ ನೌಕರಿಗಳು ಸುಲಭವಾಗಿ ಸಿಗದೆ ಹೋದಾಗ ಸಹ, ಈ ಡಿಜಿಟಲ್ ಡಿವೈಡ್ ಹೀಗೆಯೆ ಕುಗ್ಗಲಿ ಎನ್ನುವ ಆಶಾಭಾವನೆ ನನ್ನದು.

(ಇತ್ತೀಚಿನ ದಿನಗಳಲ್ಲಿ ಬದಲಾದ ಪರಿಸ್ಥಿತಿಯ ಬಗ್ಗೆ ಬರೆದಿದ್ದರಿಂದ, ಆರೇಳು ವರ್ಷಗಳ ಹಿಂದೆಯೆ ಪರ್ಯಾಯ ಧ್ವನಿಯಾಗಿ ಮೂಡಿಬಂದ ಕನ್ನಡಸಾಹಿತ್ಯ.ಕಾಮ್‌ನ ಬಗ್ಗೆ ಬರೆಯಲು ಹೋಗಿಲ್ಲ. ಅದಕ್ಕೆ ಕನ್ನಡ ಅಂತರ್ಜಾಲ ಲೋಕದಲ್ಲಿ ಅದರದೆ ಆದ ಸ್ಥಾನ ಮತ್ತು ಇತಿಹಾಸವಿದೆ. ಬದಲಾಗುತ್ತಿರುವ ಸ್ಥಿತಿಯನ್ನು ಗುರುತಿಸುವುದಕ್ಕಾಗಿ ಮತ್ತು ದಾಖಲು ಮಾಡುವುದಕ್ಕಾಗಿ ಈ ಲೇಖನ ಬರೆದಿದ್ದೇನೆ.)

ಮೌಢ್ಯವನ್ನು ಪ್ರೀತಿಸುವ ಹರಕತ್ತಾದರೂ ಏನು..?


– ಡಾ.ಎಸ್.ಬಿ. ಜೋಗುರ


 

ಮೌಢ್ಯತೆಯ ವಿಷಯವಾಗಿ ಮತ್ತು ಅದರ ಬಗೆಗಿನ ಮಸೂದೆಯ ಮಂಡನೆಯ ಬಗೆಗೆ ಕಂಡಾಪಟ್ಟೆ ಚರ್ಚೆಯಾಗುತ್ತಿರುವ ನಡುವೆಯೇ ನುಸುಳಿರುವ ಕೆಲ ಹುಸಿ ವಿಚಾರವಾದಿಗಳು ಮೌಢ್ಯವನ್ನು ಬೇಕೂ ಬೇಕು.. ಬೇಡ ಬೇಡ.. ಎನ್ನುವಂತೆ ಚರ್ಚಿಸುವ ಮತ್ತು ಖುದ್ದಾಗಿ ಮೌಢ್ಯದ ಅಖಾಡದಲ್ಲಿದ್ದರೂ ನೆಪ ಮಾತ್ರಕ್ಕೆ ಇತರರ ಮೌಢ್ಯವನ್ನು ಕೆಣಕುವ, yellamma-neem-leaves-devadasiಪ್ರಶ್ನಿಸುವ ಗುಣುವುಳ್ಳವರು ತಮ್ಮ ದಿನಚರಿಯನ್ನು ಹಾಸಿಗೆಯಲ್ಲಿ ಕುಳಿತು, ಅಂಗೈ ಉಜ್ಜಿ ಕಣ್ಣಿಗಾನಿಸಿ ಯಾವುದೋ ಒಂದು ಮಂತ್ರವನ್ನು ಗುನುಗಿ ಘನವಂತರಾಗುವ ಪ್ರಭೃತಿಗಳು ಕೂಡಾ ಮೌಢ್ಯದ ವಿರೋಧವಾಗಿ ಸೊಲ್ಲೆತ್ತುತ್ತಿವೆ. ಅಯ್ಯಾ ಸ್ವಾಮಿ.., ನಿಮ್ಮ ದಿನಚರಿಯೇ ಹೀಗಿದೆಯಲ್ಲಾ..? ಎಂದರೆ ನಂಬುಗೆಯೇ ಬೇರೆ.. ಮೌಢ್ಯತೆಯೇ ಬೇರೆ. ನಂಬುಗೆಯಿಂದ ತಮಗೆ ಅಗಾಧವಾದ ಪ್ರಯೋಜನಗಳಾಗಿವೆ, ಆದರೆ ಮೌಢ್ಯದಿಂದಲ್ಲ ಎಂದು ಕೂದಲಲ್ಲಿ ತೂತು ಕೊರೆಯುವ ಕಸರತ್ತನ್ನು ತೋರುತ್ತಾರೆ. ಸದ್ಯ ಮೌಢ್ಯತೆ ಎನ್ನುವುದು ನಂಬುಗೆ ಮತ್ತು ಅಪನಂಬುಗೆಯನ್ನು ತೆಕ್ಕೆಗೆ ಹಾಕಿಕೊಳ್ಳದೇ ಸ್ಪಷ್ಟವಾಗಿ ಮೌಢ್ಯ ಎಂದೆನಿಸುವ ಆಚರಣೆಗಳನ್ನು ಕೈ ಬಿಡುವ ತುರ್ತಿನ ಬಗ್ಗೆ ಮಾತ್ರ ಯೋಚಿಸಬೇಕು.

ತೀರಾ ಹಿಂದುಳಿದ ಆದಿವಾಸಿ ನೆಲೆಗಳಲ್ಲಿ ಶಿಕ್ಷಣದ ಕೊರತೆ ಮತ್ತು ಅಜ್ಞಾನದ ಹಿನ್ನೆಲೆಯಲ್ಲಿ ಅಸಂಬದ್ಧವಾದ ಆಚರಣೆಗಳನ್ನು ಆ ಸಮುದಾಯದ ಜನ ತಮ್ಮ ಬದುಕಿನ ಅನೌಪಚಾರಿಕ ನಿಯಂತ್ರಣದ ಮಾರ್ಗ ಮತ್ತು ಕಟ್ಟಳೆಗಳಾಗಿ ಅನುಸರಿಸುತ್ತಾ ಬಂದರು. ಅತ್ಯಂತ ಅತಾರ್ಕಿಕವಾದ ಮತ್ತು ಯಾವುದೇ ಬಗೆಯ ತಳಬುಡವಿಲ್ಲದ ಅಂಧ ಆಚರಣೆಗಳನ್ನು ಅವರು ಮುಂದುವರೆಸಿದರು. ಉದಾಹರಣೆಗಾಗಿ ನಾಗಾ ಆದಿವಾಸಿಗಳಲ್ಲಿ ಮಾನವನ ತಲೆ ಬುರುಡೆಗಳನ್ನು ಹೆಚ್ಚು ಸಂಗ್ರಹಿಸಿದಾತನೇ ಆ ತಾಂಡಾದ ನಾಯಕ. ಹಾಗೆಯೇ ಓಂಗೇ ಆದಿವಾಸಿಗಳಲ್ಲಿ ಶವಗಳನ್ನು ಮನೆಯಲ್ಲಿಯೇ ಹೂಳುವ ಕ್ರಮವಿದೆ. ಅದಕ್ಕೆ ಕಾರಣ ಕೇಳಿದರೆ ಅದು ಅವರ ಪೂರ್ವಜರ ಆತ್ಮ ತಮ್ಮನ್ನು ಗಂಡಾಂತರಗಳಿಂದ ಕಾಯುತ್ತದೆ ಎಂದು ಹೇಳುವದಿದೆ. donkeys_wedding_rainsಇನ್ನು ಕೆಲ ಆದಿವಾಸಿಗಳು ಇಂದಿಗೂ ರೋಗ ರುಜಿನಗಳಿಗೆ ಒಳಗಾದವನನ್ನು ತಮ್ಮ ಕುಲದೇವರ ಮೂರ್ತಿಯ ಎದುರು ಮಲಗಿಸಿ ಅಸಂಬದ್ಧವಾದ ಕ್ರಿಯೆಗಳನ್ನು ಮಾಡುತ್ತಾರೆ. ಅವುಗಳಲ್ಲಿ ಕಾದ ಕಬ್ಬಿಣದ ಬರೆ ಎಳೆಯುವುದೂ ಒಂದು.

ಇದೆಲ್ಲಾ ಆದಿವಾಸಿಗಳಿಗೆ ಸೀಮಿತವಾಗಿದ್ದರೆ ಇಲ್ಲಿ ಆ ಬಗ್ಗೆ ಚರ್ಚೆಯೇ ಇರುತ್ತಿರಲಿಲ್ಲ. ಭಯಂಕರ ವಿಜ್ಞಾನಿಯೊಬ್ಬ ರಾಕೆಟ್ ಹಾರಿ ಬಿಡುವಾಗ ಅದನ್ನು ಪೂಜಿಸುವ, ಯಜ್ಞ ಮಾಡುವ ಕ್ರಮ ಆತನ ಅಜ್ಞಾನ ಮತ್ತು ಅನಕ್ಷರತೆಯ ಪರಿಣಾಮದಿಂದಾಗಿ ಮಾತ್ರ ಎಂದು ಯಾರೂ ಹೇಳಲಾರರು. ಅಂದರೆ ಅವನಿಗೆ ಅದರಲ್ಲಿಯ ಪೊಳ್ಳುತನದ ಬಗೆಗೂ ತಿಳುವಳಿಕೆಯಿದೆ ಎಂದರ್ಥ. ಹೊಸದಾಗಿ ಮನೆಗೆ ತಂದ ವಾಹನದ ಗಾಲಿಯ ಕೆಳಗಡೆ ಜಬ್ಬಿ ಹೋಗುವ ಲಿಂಬು ಹಣ್ಣಿನ ಮೂಲಕ ಸಮಾಧಾನ ಪಡುವ ಮನ:ಸ್ಥಿತಿಗೆ ರಸ್ತೆಯ ನಿಯಮಗಳು ಮತ್ತು ಡ್ರೈವಿಂಗ್ ಮಾಡುವ ಕ್ರಮಬದ್ಧತೆಯ ಬಗ್ಗೆ ತಿಳಿದಿರುವುದು ಮುಖ್ಯವಲ್ಲವೇ..? ಈ ಮೂಢನಂಬುಗೆಗಳ ಆದಿವಾಸೀಕರಣ ತಿಳಿಯದೇ ಆದದ್ದಂತೂ ಅಲ್ಲ. ಮೌಢ್ಯ ಕೆಲವರ ಪಾಲಿನ ಅಸಡ್ದೆಯಾದರೆ ಹಲವರ ಪಾಲಿನ ಜೀವನ ಮೂಲ. ಅಂಥಾ ಜೀವನಮೂಲವಾದ ಮಾರ್ಗವನ್ನು ನಿಷೇಧಿಸಿದರೆ ಅದನ್ನೆ ತಿಂದುಂಡು ಉಸಿರಾಡುತ್ತಾ ತಿರುಗುವವರ ಕತೆಯೇನಾಗಬೇಡ..?

ನೆರೆಯ ಮಹಾರಾಷ್ಟ್ರದಲ್ಲಿ ವಿಚಾರವಾದಿ ದಾಬೋಲಕರ್ ಹತ್ಯೆಯಾಯ್ತು. ಆದರೆ ಅವನ ವೈಚಾರಿಕತೆಯನ್ನು ಹತ್ಯೆ ಮಾಡುವ ಸಾಮರ್ಥ್ಯ ಯಾವ ಅತ್ಯಾಧುನಿಕ ಆಯುಧಕ್ಕೂ ಇರಲಿಲ್ಲ. ಹೀಗಾಗಿಯೇ ಕೊನೆಗೂ ಆತ ಬಯಸಿದ್ದ ಮೂಢನಂಬಿಕೆಯ ಬಗೆಗಿನ ಮಸೂದೆ ಕ್ಯಾಬಿನೆಟ್‌ನಲ್ಲಿ ಮಂಡನೆಯಾಗಿ ಕೆಂದ್ರ ಸರಕಾರದ ಸ್ವೀಕೃತಿಗಾಗಿ ಕಾಯುತ್ತಿದೆ. ಹಾಗೆ ನೋಡಿದರೆ ಮಹಾರಾಷ್ಟ್ರ ಕ್ಯಾಬಿನೆಟ್ ಒಪ್ಪಿಕೊಂಡ ಈ ಮಸೂದೆ black-magic-indiaಇಡೀ ದೇಶದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಲ್ಲಿಯೇ ಮೊದಲು ಎನಿಸುತ್ತದೆ. ಮಹಾರಾಷ್ಟ್ರದ ಮಾದರಿಯಲ್ಲಿ ನಮ್ಮಲ್ಲೂ ಅದನ್ನು ಜಾರಿಗೊಳಿಸುವ ಸಾಧ್ಯತೆಗಳಿವೆ.

ಇನ್ನು ಯಾವುದೇ ಒಂದು ಮಸೂದೆ ಪಾಸಾಗಿ, ಶಾಸನವಾಗಿ ಜಾರಿಗೆ ಬಂದರೆ ಅಲ್ಲಿಗೆ ಮುಗಿಯಲಿಲ್ಲ. ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಅನೇಕ ಬಗೆಯ ಶಾಸನಗಳಿವೆ. ಬಾಲ್ಯ ವಿವಾಹವಾಗಿರಬಹುದು, ವರದಕ್ಷಿಣೆ ಇರಬಹುದು, ಭ್ರೂಣ ಲಿಂಗ ಪತ್ತೆ ಗೆ ಸಂಬಂಧಿಸಿದ ಶಾಸನ, ಮಹಿಳೆಗೆ ಆಸ್ತಿ ಹಕ್ಕಿನ ಕಾಯ್ದೆ, ಮುಂತಾದವುಗಳು ಇರುವಾಗಲೂ ಗಂಟೆಗೊಂದು ವರದಕ್ಷಿಣೆಯ ಸಾವುಗಳಿವೆ, ಅರ್ಧ ಗಂಟೆಗೆ ಒಂದು ಅತ್ಯಾಚಾರದ ಪ್ರಕರಣಗಳಿವೆ. ಹೀಗೆ ಕಾನೂನು ಜಾರಿಯಾದರೆ ಅಲ್ಲಿಗೆ ಮುಗಿಯಿತು, ಆ ಸಮಸ್ಯೆಯ ಇತಿಶ್ರೀ ಹಾಡಿದಂತೆಯೇ ಎಂದು ಭಾವಿಸುವ ಅವಶ್ಯಕತೆಯಿಲ್ಲ. ಜನ ಜಾಗೃತಿ ಮತ್ತು ದಾಬೋಲ್ಕರ್ ಹುಟ್ಟು ಹಾಕಿರುವ ಅಂಧಶ್ರದ್ಧಾ ನಿರ್ಮೂಲನ ಕೇಂದ್ರದಂತಹ ಘಟಕಗಳನ್ನು ದೇಶದ ಉದ್ದಗಲಕ್ಕೂ ಸ್ಥಾಪಿಸುವ, ಕಾರ್ಯನಿರ್ವಹಿಸುವ ಅಗತ್ಯತೆಯಿದೆ. ಅಂದಾಗ ಮಾತ್ರ ಈ ಬಗೆಯ ಮಸೂದೆಗಳಿಗೆ ಒಂದು ಸತ್ತೆ ಸಾಧ್ಯವಾಗುತ್ತದೆ ಇಲ್ಲದಿದ್ದರೆ ಅನೇಕ ಶಾಸನಗಳ ಹಾಗೆ ಇದೂ ಒಂದು ಶಾಸನವಾಗಿ ಸಾಂದರ್ಭಿಕವಾಗಿ ಉಲ್ಲೇಖಿಸಿ ಹೇಳಬಹುದಾದ ಕಲಮಾಗಿ ಉಳಿಯುವ ಸಾಧ್ಯತೆಯಿದೆ.

ಮಹಾರಾಷ್ಟ್ರದಲ್ಲಿ ಮಂಡಿಸಿರುವ ಮಸೂದೆಯಲ್ಲಿ ಈ ಕೆಳಗಿನ ಕೆಲವು ಪ್ರಮುಖ ಸಂಗತಿಗಳಿಗೆ ಸಂಬಂಧಿಸಿ ತೀರಾ ಒತ್ತುಕೊಡಲಾಗಿದೆ ನಮ್ಮ ದೇಶದ ಸಂದರ್ಭದಲ್ಲಿ ಈ ಕೆಲವು ಸಂಗತಿಗಳೇ ಸಾಮಾಜಿಕ ರೋಗಗ್ರಸ್ಥ ಅಂಶಗಳಾಗುವ ಅಪಾಯಗಳಿವೆ. ಇವುಗಳ ನಿಷೇಧವೇ ಮಹಾರಾಷ್ಟ್ರದ ಕರಡಿನಲ್ಲಿ ಮುಖ್ಯವಾಗಿವೆ.

  • ಬಾನಾಮತಿಯನ್ನು ನಿಷೇಧಿಸುವುದು
  • ಅತಿಮಾನುಷ ಶಕ್ತಿಯ ಸಾಧನೆಗಾಗಿ ತಂತ್ರ ಮಂತ್ರ ಮಾಡುವುದು
  • ದೆವ್ವ ಪಿಶಾಚಿಯನ್ನು ಓಡಿಸುವದಾಗಿ ಹೇಳಿ ಬೂದಿ, ತಾಯತ, ಲಿಂಬು ಹಣ್ನನ್ನು ಮಂತ್ರಿಸಿ ಕೊಡುವುದು
  • ಅಗಾಧವಾದ ಅತಿಮಾನುಷ ಶಕ್ತಿಯ ಸಾಧನೆಯ ಬಗ್ಗೆ ಜಾಹೀರಾತು
  • ದೇವರ ಹೆಸರಲ್ಲಿ ವಂಚಿಸುವುದು, ಪುನರ್ಜನ್ಮದ ಬಗ್ಗೆ ಹೇಳಿ ಹೆದರಿಸುವುದು.
  • ದೈವೀ ಶಕ್ತಿ ಅಥವಾ ದುಷ್ಟ ಶಕ್ತಿಯ ಮೇಲೆ ಸಾಧನೆಯ ಬಗೆಗೆ ಬೊಗಳೆ ಬಿಡುವುದು
  • ಮಾನಸಿಕ ಅಸ್ವಸ್ಥರನ್ನು ಪಿಶಾಚಿ ಪೀಡಿತರು ಎಂದು ಹಿಂಸಿಸುವುದು
  • ಅಘೋರಿ ಪದ್ಧತಿಯ ಅನುಸರಣೆ
  • ಮಾಟ ಮಂತ್ರದ ಹೆಸರಲ್ಲಿ ಜನರಲ್ಲಿ ಭೀತಿ ಹುಟ್ಟಿಸುವುದು
  • ಗಂಡು ಸಂತಾನಕ್ಕಾಗಿ ಗೋಪಾಲ ಸಂತಾನ ವಿಧಿ ಯಾಗ ಮಾಡುವುದು
  • ವೈದ್ಯಕೀಯ ಚಿಕಿತ್ಸೆಯ ಬದಲಾಗಿ ಅಘೋರಿ ಪದ್ಧತಿಯನ್ನು ಅನುಸರಿಸುವುದು
  • ಮಂತ್ರದ ಹರಳು, ತಾಯತ, ಬೂದಿ, ಬ್ರೆಸ್ಲೆಟ್ ಗಳನ್ನು ಮಾರುವುದು
  • ಹಾವು ಕಡಿತ ಮತ್ತು ನಾಯಿ ಕಡಿತದ ಚಿಕಿತ್ಸೆಗೆ ಮಾಟ ಮಂತ್ರ ಹಾಕುವುದು
  • ಸಂತಾನ ಫ಼ಲಿತತೆಗಾಗಿ ವೈದ್ಯ ವಿಜ್ಞಾನಕ್ಕೆ ಸವಾಲು ಹಾಕುವುದು

ಈ ಮೇಲಿನ ಯಾವುದೇ ಸಂಗತಿಗಳು ಅವನ್ನು ಅನುಸರಿಸುವ ಅಂದರೆ ಈ ಬಗೆಯ ಚಟುವಟಿಕೆಗಳಲ್ಲಿ ತೊಡಗಿ superstitionsಭಯವನ್ನೇ ಮಾರಾಟ ಮಾಡಿ ಬದುಕುವವರಿಗೆ ಪ್ರಯೋಜನವಿದೆಯೇ ಹೊರತು ಜನಸಾಮಾನ್ಯನಿಗಂತೂ ಇಲ್ಲ. ಈ ಎಲ್ಲ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಮೌಢ್ಯತೆಯ ವಿರೋಧಿ ಮಸೂದೆಯನ್ನು ಒಪ್ಪಿಕೊಳ್ಳುವದರಿಂದ ಅಹಿತಕರವಾದುದನ್ನು ಬಿಟ್ಟು ನಾವು ಬೇರೆ ಏನನ್ನೂ ಕಳೆದುಕೊಳ್ಳುವುದಿಲ್ಲ. ಮಹಾರಾಷ್ಟ್ರದ ಮಾದರಿಯಲ್ಲಿಯೇ, ಬೇಕಾದರೆ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಮೌಢ್ಯ ವಿರೋಧಿ ಮಸೂದೆಯನ್ನು ಜಾರಿಗೊಳಿಸಬೇಕಿದೆ. ಇದು ಯಾವಾಗಲೋ ಆಗಬೇಕಿದ್ದ ಕೆಲಸ ತಡವಾಗಿಯಾದರೂ ಆಗುತ್ತಿದೆಯಲ್ಲ..! ಎಂದು ಸಮಾಧಾನ ಪಡಬೇಕಿದೆ. ಮೌಢ್ಯವನ್ನು ಪ್ರೀತಿಸುವ, ಒಪ್ಪುವ ಹರಕತ್ತು ಬಹುತೇಕರಿಗಂತೂ ಇರಲಿಕ್ಕಿಲ್ಲ.

ಮೂಢನಂಬಿಕೆ ಪ್ರತಿಬಂಧಕ ಮಸೂದೆ – ಆತಂಕದಲ್ಲಿ ಮೌಢ್ಯದ ಫಲಾನುಭವಿಗಳು

– ಬಿ.ಜಿ.ಗೋಪಾಲಕೃಷ್ಣ ಹಾಸನ

ಮಾನವನ ನಾಗರಿಕತೆಯ ಪ್ರಾರಂಭದ ಹಂತವನ್ನು ಆದಿಸಮತಾ ಸಮಾಜ ಎಂದು ಕರೆಯಬಹುದು. ಆ ಒಂದು ಕಾಲಘಟ್ಟದಲ್ಲಿ ಯಾವುದೇ ಆಧಿಕಾರ, ಅಂತಸ್ತು, ಜಾತಿ ಮತ್ತು ಲಿಂಗ ಭೇದಗಳ ತಾರತಮ್ಯ ಇಲ್ಲದೆ ಮಾನವರೆಲ್ಲರೂ ಸಮಾನ ಮನಸ್ಕ, ದ್ವೇಷ ಅಸೂಯೆ ರಹಿತ ನಿಷ್ಕಳಂಕ ಪರಿಪೂರ್ಣ ವ್ಯಕ್ತಿತ್ವದವರಾಗಿದ್ದರು. ಅಂದು ಮುಂದಿನ ದಿನಗಳಿಗೆ ಕೂಡಿಡುವ ಕ್ರಮವಾಗಲಿ, ಕೊಳ್ಳುಬಾಕ ಸಂಸ್ಕೃತಿಗಳ ಪರಿಕಲ್ಪನೆಗಳಾಗಲಿ ಇರಲಿಲ್ಲ.

ತದನಂತರದ ಕಾಲಘಟ್ಟದ ಬೆಳವಣಿಗೆಯೇ ಪಾಳೇಗಾರಿಕೆ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಇಡೀ ಸಮಾಜವೇ ದುಡಿಯುವವರ ವರ್ಗ ಮತ್ತು ದುಡಿಸಿಕೋಳ್ಳುವವರ ವರ್ಗ ಎಂದು ಎರಡು ಭಾಗಗಳಾಗಿ ವಿಂಗಡಣೆಯಾದ ಕಾಲವದು. made-snanaದುಡಿಯುವ ವರ್ಗ ಸಂಖ್ಯೆಯಲ್ಲಿ ಬಹುಸಂಖ್ಯೆಯಲ್ಲಿದ್ದು, ಭೌತಿಕವಾಗಿ ಸಶಕ್ತರಾಗಿದ್ದರೂ ಭೌದ್ಧಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ಸಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಾದರು. ಆದರೆ ದುಡಿಸಿಕೋಳ್ಳುವ ವರ್ಗ ಇದಕ್ಕೆ ತದ್ವಿರುದ್ದ. ಸಂಖ್ಯೆಯಲ್ಲಿ ಕಡಿಮೆ ಇದ್ದು ಭೌತಿಕವಾಗಿ ಅಶಕ್ತರಾಗಿರದಿದ್ದರೂ ಭೌದ್ಧಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ಸಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರೆದವರಾದರು.

ಇದೇ ಪರಿಸ್ಥಿತಿಯನ್ನು ಮುಂದುವರೆಸುವುದು ದುಡಿಸಿಕೊಳ್ಳುವ ವರ್ಗಕ್ಕೆ ಅನಿವಾರ್ಯವಾಗಿತ್ತು. ಪ್ರಕೃತಿಯನ್ನೇ ದೇವರೆಂದು ಪೂಜಿಸುತಿದ್ದ ಆ ಸಂದರ್ಭದ ಜನಮಾನಸದಲ್ಲಿ ಭೇದಭಾವಗಳ ವಿಷಬೀಜ ಬಿತ್ತಲು ಜಾತಿ, ಧರ್ಮ ಮತ್ತು ದೇವರುಗಳನ್ನು ಸೃಷ್ಟಿಸಿ ಅಸ್ತ್ರಗಳನ್ನಾಗಿ ಬಳಸಿ ತಮ್ಮ ತಮ್ಮುಗಳಲ್ಲೇ ಭೇದಭಾವಗಳ ಜೊತೆ ಜೊತೆಯಲ್ಲಿ ದ್ವೇಶ, ತಾರತಮ್ಯ ಅಸ್ಪೃಶ್ಯತೆ ಬೆಳೆಸಿದುದರಿಂದ, ಮೇಲ್ವರ್ಗದವರೆಂದು ಬಿಂಬಿತರಾದ ದುಡಿಸಿಕೊಳ್ಳುವ ವರ್ಗದ ಹಾದಿ ಸುಗಮವಾಯಿತು.

ಆದರೆ ಕಾಲಾನಂತರ ದುಡಿಯುವ ವರ್ಗದಲ್ಲೂ ಹಂತಹಂತವಾಗಿ ಪ್ರಜ್ಞೆಮೂಡಲು, ಆ ಪ್ರಜ್ಞೆಯನ್ನು ನಿರ್ಲಿಪ್ತಗೂಳಿಸಲು ಪೂರ್ವಜನ್ಮ, ಪುನರ್‌ಜನ್ಮ , ಕರ್ಮಸಿದ್ದಾಂತಗಳಂತಹ ಹೊಸ ಹೊಸ ಸಿದ್ಧಾಂತಗಳನ್ನು ಪ್ರಕಟಿಸಲೇಬೇಕಾಯಿತು. ಆ ಸಿದ್ಧಾಂತಗಳನ್ನು ಸಾಕ್ಷಾತ್ ಸೃಷ್ಟಿಕರ್ತನ ಸಂದೇಶಗಳೆಂದು, ಅವನ ಬಾಯಿಂದಲೇ ಹೇಳುತ್ತಿರುವಂತೆ ಪ್ರಚುರ ಪಡಿಸಿದರು. ಈ ಕರ್ಮಸಿದ್ಧಾಂತಗಳಿಕೆ ಪೂರಕವಾಗಿ ಮೂಡಿಬಂದವುಗಳೇ ಮೂಢನಂಬಿಕೆಗಳು. ನಂಬಿದವರ ಕತ್ತುಕುಯ್ಯಲು ಸಹಜವಾಗೇ ಮೂಢನಂಬಿಕೆಗಳಂತಹ ನಯವಂಚಕ ಅಸ್ತ್ರಗಳಿಗಿಂತ ಮತ್ತಾವುದು ಪ್ರಬಲ ಅಸ್ತ್ರವಾಗಲಾರದು.

ಹಿಂದುಳಿದವರಲ್ಲೂ ಪ್ರಜ್ಞೆಮೂಡಿ ಆರ್ಥಿಕವಾಗಿ ಸಬಲನಾದರೆ ನಮ್ಮ ಮನೆಯ ಕಕ್ಕಸ್ಸನ್ನು ನೂರು ರೂಪಾಯಿ ಕೂಲಿಗೆ ಸ್ವಚ್ಚಗೊಳಿಸಿಯಾನೇ? Manual_scavanging1[1]ಆಥವಾ ಶಿಕ್ಷಣ ಕಲಿತ ಆರ್ಥಿಕವಾಗಿ ಸಬಲನಾದ ಪ್ರಜ್ಞಾವಂತರು ಹತ್ತರಷ್ಟು ಕೂಲಿ ಕೊಟ್ಟರೂ ಕಕ್ಕಸ್ಸು ಸ್ವಚ್ಚಗೊಳಿಸುವ ಕೆಲಸ ಮಾಡಿಯಾರೇನು? ಆ ಸಂದರ್ಭಗಳಲ್ಲಿ ತಾವುಗಳೇ ಕಾರ್ಯಪ್ರವೃತ್ತರಾಗ ಬೇಕಾಗುತ್ತದೆ ಎಂಬ ಸರಳ ಸಮೀಕರಣ ತಿಳಿಯದೇ ಅವರುಗಳಿಗೇ. ಸಮಾಜದಲ್ಲಿ ಮೌಢ್ಯತೆ, ಆಂಧಾನುಕರಣೆ, ಅಂಧಶ್ರದ್ಧೆ, ಮೂಢನಂಬಿಕೆಗಳಿರುವವರೆಗೆ ತಮ್ಮುಗಳ ಶ್ರಮರಹಿತ ಬದುಕಿಗೇನು ಅಡ್ಡಿಯಿಲ್ಲ ಎಂಬ ಸರಳ ವಸ್ತು ಸ್ಥಿತಿಯನ್ನು ತಳಿಯದಷ್ಟು ಮುಟ್ಠಾಳರೇ ಈ ಮೌಢ್ಯದ ಫಲಾನುಭವಿಗಳುಸ.

ಪ್ರಸ್ತುತ ಅಂಧಶ್ರದ್ದೆಗಳು ಮನುಷ್ಯನ ಹುಟ್ಟಿನಿಂದ ಪ್ರಾರಂಭಗೊಂಡು, ಜೀವಿತ ಅವಧಿಯಲ್ಲಿ ಜೊತೆ ಜೊತೆಯಲ್ಲೇ ಪರಾವಲಂಬಿಗಳಂತೆ ರಕ್ತವನ್ನು ಹೀರಿ ಬದುಕುತ್ತಾ, ನಮ್ಮ ಸಾವಿಗೆ ಮೊದಲೇ ಇತರರಿಗೂ ರಕ್ತ ಬೀಜಾಸುರನಂತೆ ದ್ವಿಗುಣಗೊಳ್ಳುತ್ತಾ ಇತರ ಮನುಜ ದೇಹಗಳನ್ನು ಮಾತ್ರ (ಇತರೆ ಪ್ರಾಣಿಗಳನ್ನು ದೇಹಗಳನ್ನು ಪ್ರವೇಶಿಸದೆ) ಪ್ರವೇಶಿಸಿ ವಾಸಮಾಡಲು ಪ್ರಾರಂಭಿಸುತ್ತವೆ, ಮೇಲ್ವರ್ಗದವರು ನೀರು ಗೊಬ್ಬರ ಹಾಕಿ ಪೋಷಿಸಲು ಮುಂದಾಗುತ್ತಾರೆ.

ಈ ಭೂಮಿಯ ಮೇಲೆ ವಾಸಿಸುವು ಪ್ರತಿಯೂಂದು ಜೀವಿಯೂ ಸಮಾನ ಎನ್ನುವುದಾದರೆ. ಬುದ್ದಿವಂತ ಜೀವಿಯಾಗಿರುವ ಮನುಷ್ಯನೇಕೆ ಮೌಢ್ಯತೆಯ ಅಂಧಕಾರದಲ್ಲಿ ತನ್ನನ್ನೇ ತಾನು ಬಂಧಿಸಿಕೊಂಡು ತೋಳಲಾಡುತ್ತಾನೆ ಅಥವ ಬೇರೆಯವರ ತೋಳಲಾಟದಲ್ಲಿ ತನ್ನ ಹೋಟ್ಟೆ ತುಂಬಿಸಿ ಕೊಳ್ಳುತ್ತಾನೆ.

ಮೂಢನಂಭಿಕೆಗಳ ಪ್ರಕಾರ ಮತ್ತು ಆಯಾಮಗಳನ್ನು ತಿಳಿಯುವುದೇ ಕಷ್ಟ ಸಾಧ್ಯವಾಗಿದೆ. ಮನುಜನ ಜೀವಿತ ಅವಧಿಯ ಪ್ರತಿ ಹಂತದಲ್ಲೂ ಹಾಸುಹೊಕ್ಕಾಗಿವೆ. ಅಂಧಶ್ರದ್ದೆಗೆ ಹೆಚ್ಚು ಬಲಿಯಾಗುವರು ಈ ಸಮಾಜದ ಅರ್ಧ ಭಾಗವೇ ಆಗಿರುವ ಮಹಿಳೆಯರು. KPN photoಅವಳು ಶಿಕ್ಷಣ ಪಡೆಯುವುದೆ ಒಂದು ಅಪವಾದ. ಅವಳು ಮನೆಯಿಂದ ಹೊರ ಹೋಗಕೂಡುದು. ಅವಳು ಮುಟ್ಟಾದಾಗ ಮತ್ತು ಬಾಣಂತನವಾದಾಗ ಊರ ಹೊರಗೆ ಪಶುಗಳಂತೆ ಇರಿಸುವುದು, ಬಾಲ್ಯ ವಿವಾಹದಂತಹ ಶಿಕ್ಷೆ ಇವಳೆಗೇ ಹೆಚ್ಚು. ಊರಿಗೆ ಕಷ್ಟ ಬಂದರೆ ಇವಳದೇ ಬಲಿ ಬೇಕು. ಸತಿ ಪದ್ಧತಿ, ದೇವರ ಹೆಸರಿನಲ್ಲಿ ಬೆತ್ತಲೆ ಸೇವೆ. ವರದಕ್ಷಣೆ ನೆಪದಲ್ಲಿ ಜೀವಂತ ಸುಡುವುದು, ಹೆಣ್ಣು ಮಗುವಿನ ಹುಟ್ಟಿಗೆ ತಾಯಿಯೇ ಕಾರಣ ಎಂಬ ಅಪವಾದ, ತಾನು ಅನುಭವಿಸಿದ ಕಷ್ಟಗಳನ್ನು ನನ್ನ ಹೆಣ್ಣು ಮಗು ಅನುಭವಿಸಬಾರದೆಂದು ತನ್ನ ಕರುಳಕುಡಿಯು ಭ್ರ್ರೂಣ ಹಂತದಲ್ಲಿರುವಾಗಲೇ ಹತ್ಯೆಗೆ ಸಹಕರಿಸಬೇಕಾದ ಅನಿವಾರ್ಯತೆ. ದೇವಸ್ಥಾನಗಳಿಗೆ ಪ್ರವೇಶದ ನಿರಾಕರಣೆ. ಒಂದೇ ಎರಡೇ ಇದು ಹೆಣ್ಣಾಗಿ ಹುಟ್ಟಿದ್ದಕ್ಕೆ ಈ ಸಮಾಜದ ಕೊಡಿಗೆ.

ಅಂಧಶ್ರದ್ಧೆಗಳಿಂದ ಮಾನಸಿಕವಾಗಿ ನೋವನ್ನು ಅನುಭವಿಸುತ್ತಿರುವ ದಲಿತರ ಸ್ಥಿತಿ ಹೇಳತೀರದು. ಅಸ್ಪೃಶತೆ, ಅವರುಗಳಿಗೇ ಒಂದು ಕೇರಿ, ದೇಸ್ಥಾನಗಳಿಗೆ ಪ್ರವೇಶವಿಲ್ಲ, ಜಮೀನಿನ ಒಡತನವಿಲ್ಲ, ಮೇಲ್ವರ್ಗದವರು ಹೇಳಿದಾಗ ಪ್ರತಿಫಲ ಅಪೇಕ್ಷಿಸದೆ ಅವರುಗಳ ಮನೆಯಲ್ಲಿ ಬಂದು ದುಡಿಯಬೇಕು ಕೊಟ್ಟಷ್ಟು ಕೂಲಿ ಪಡೆದು ತೊಲಗಬೇಕು. ಒಟ್ಟಿನಲ್ಲಿ ಸ್ವತಂತ್ರದ ಬದುಕೆ ಇಲ್ಲದೆ ಬದುಕು ಅವರದು.

ಮಡೆಸ್ನಾನದ ಮುಂದುವರೆದ ಭಾಗವಾಗಿ ಎಡೆಸ್ನಾನ, ಗುಪ್ತವಾಗಿ ಬೆತ್ತಲೆ ಸೇವೆಯ ಮುಂದುವರೆದ ಭಾಗವಾಗಿ ಮೈಗೆ ಸೊಪ್ಪು ಕಟ್ಟಿಕೊಳ್ಳುವುದು. ದೇವದಾಸಿ ಪದ್ದತಿ, ಪಾದಪೂಜೆಗಳು, ಪಾಪ ಪರಿಹಾರಕ್ಕೆ ಅಥವಾ ಶಾಂತಿಗಾಗಿ ಪೂಜೆಗಳು, ಕ್ಷುದ್ರ ಶಕ್ತಿಗಳನ್ನು yellamma-neem-leaves-devadasiಒಲಿಸಿಕೊಳ್ಳಲು ನರಬಲಿ, ಪ್ರಾಣಿಬಲಿ, ಮನೆಗಳಲ್ಲಿ ಶೌಚಾಲಯಗಳನ್ನು ಹೊಂದದೇ ಇರುವುದು. ತೆರೆಮರೆಯಲ್ಲಿ ಹುಣ್ಣಿಮೆಯ ದಿನ ಸವದತ್ತಿಯಲ್ಲಿ ಮುತ್ತು ಕಟ್ಟುವುದು. ಶಾಂತಿ ಹೋಮ ಹವನಗಳನ್ನು ಮಾಡಿಸುವುದು. ಪಂಕ್ತಿ ಭೇದ, ಅಜಲು ಪದ್ದತಿ. ಉಳ್ಳವರು ತಮ್ಮ ಆನಾಚಾರಗಳ ವಿರುದ್ದ ಧ್ವನಿ ಎತ್ತಿದವರನ್ನು ಭಾನಾಮತಿ ಮಾಡುತ್ತಿದ್ದಾರೆಂದು ಆಪಾದಿಸಿ ಜೀವಂತ ಸುಡುವುದು. ನಿಧಿ ತೆಗೆಯಲು ಮಕ್ಕಳನ್ನು ಬಲಿ ಕೂಡುವುದು. ಶ್ರೀಮಂತ ಪುರುಷರು ಚಿಕ್ಕವರೊಂದಿಗೆ ಸಂಭೋಗ ಮಾಡಿದರೆ ಹರೆಯ ಹೆಚ್ಚುತ್ತದೆಯಂದು ಮತ್ತು ಗುಪ್ತರೋಗಗಳು ವಾಸಿಯಾಗುತ್ತವೆಯಂದು, ಹೀಗೆ ಹೇಳುತ್ತಾ ಹೊದರೆ ಮಾಹಾನ್ ಗ್ರಂಥಗಳನ್ನೇ ರಚಿಸಬಹುದು.

ಮೂಲಭೂತವಾದಿಗಳು, ಪುರೋಹಿತಶಾಹಿಗಳು, ಅವಕಾಶವಾದಿ ಪಾಳೇಗಾರಿಕೆ ವ್ಯವಸ್ಥೆಯ ನಾಯಕರುಗಳು, ಬಂಡವಾಳಶಾಹಿಗಳು, ಜಾತಿ ಮತ್ತು ಧರ್ಮಗಳ ಹೆಸರಿನಲ್ಲಿ ರಾಜಕೀಯ ನಡೆಸುವವರು, ಜನರ ನಂಬಿಕೆಯ ಹೆಸರಿನಲ್ಲಿ ಪ್ರಜ್ಞಾಪೂರ್ವಕವಾಗಿಯೇ ಮೌಢ್ಯತೆಯನ್ನು ಪೋಷಿಸಿಕೊಂಡು ಬರುತ್ತಿದ್ದಾರೆ. ಅವರುಗಳ ಅಸ್ತಿತ್ವದ ಪ್ರಶ್ನೆ. ಸೈದ್ದಾಂತಿಕ ಸಿದ್ಧಾಂತ, ನೈತಿಕತೆ , ಸಾಮಾಜಿಕ ಪ್ರಜ್ಞೆ, ಸಾಮಾಜಿಕ ಕಳಕಳಿ ಇಲ್ಲದವರುಗಳಿಗೆ ಅಂಧಶ್ರದ್ದೆಗಳೆ ಮೂಲಾಧಾರ. ಇವರುಗಳ ಅಭಿವೃದ್ದಿ ಅಂಧಶ್ರದ್ಧೆಯ ಅಭಿವೃದ್ದಿಯ ಮೇಲೆ ಅವಲಂಬಿತವಾಗಿರುತ್ತವೆ. ಅವರುಗಳಿಗೆ ಮೂಢನಂಬಿಕೆ ಪ್ರತಿಬಂಧಕ ಮಸೂದೆ ಅಘಾತಕಾರಿ ಮತ್ತು ಅತಂಕದ ಮಸೂದೆಯಾಗಿದೆ.

ಭಯೋತ್ಪಾದಕಿ ಆಯಿಶಾ ಬಾನು !? ಸುದ್ದಿಯ ಇನ್ನೊಂದು ಮುಖ

– ನಸೂ 

ಅಯಿಶಾ ಬಾನು. ಮಂಗಳೂರಿನ ಈ ಹೆಣ್ಣು ಮಗಳು ಇಡೀ ದೇಶದಲ್ಲಿ ಈಗ ಸುದ್ದಿಯಲ್ಲಿರುವ ಹೆಣ್ಣು. ಭಯೋತ್ಪಾದಕರಿಗೆ ಹಣ ಪೂರೈಕೆ ಮಾಡಿ ನರೇಂದ್ರ ಮೋದಿಯ ಹೂಂಕಾರ್ ರ್‍ಯಾಲಿಗೆ ಬಾಂಬಿರಿಸಲು ಸಹಕರಿಸಿದ ಆರೋಪ ಹೊತ್ತು ಜೈಲು ಸೇರಿದ ಮಹಿಳೆ. Aysha-Banuಲವ್ ಜೆಹಾದ್‌ನ ಭಾಗವಾಗಿ ಮುಸ್ಲಿಂ ಯುವಕನೊಬ್ಬ ಈಕೆಯನ್ನು ಮದುವೆಯಾಗಿ ಭಯೋತ್ಪಾದನಾ ಕೃತ್ಯಗಳಿಗೆ ಬಳಸಿದ್ದ ಎಂಬುದು ಸಂಘಪರಿವಾರಿಗಳ ಆರೋಪ. ಆದರೆ ಈ ಆಯಿಶಾ ಬಾನು ಜೆಹಾದಿ ಅಲ್ಲವೇ ಅಲ್ಲ. ಆಕೆ ತನ್ನ ಮತ್ತು ಮಕ್ಕಳ ಹೊಟ್ಟೆಗಾಗಿ ತನ್ನ ಬದುಕಿನುದ್ದಕ್ಕೂ “ಜೆಹಾದಿ” ನಡೆಸಿದ ಓರ್ವ ತಾಯಿ.

ಸರಿಸುಮಾರು 5 ವರ್ಷಗಳ ಹಿಂದಿನ ಮಾತು. ಡಿವೈಎಫ್‌ಐ ಜಿಲ್ಲಾಧ್ಯಕ್ಷ, ಗೆಳೆಯ ಮುನೀರ್ ಕಾಟಿಪಳ್ಳ ಮತ್ತು ’ದ ಹಿಂದೂ’ ಪತ್ರಿಕೆಯ ಸುದೀಪ್ತೋ ಮೊಂಡಲ್ ಜೊತೆ ನಾನು ಮಂಗಳೂರು ವಿಶೇಷ ಆರ್ಥಿಕ ವಲಯ ಯೋಜನೆಯ ನಿರ್ವಸಿತ ಕಾಲನಿಗೆ ಬೇಟಿ ನೀಡಿ ಸಮಸ್ಯೆಗಳ ಪರಿಶೀಲನೆ ನಡೆಸುತ್ತಿದ್ದೆವು. ಅಲ್ಲಿಂದ ಮರಳಿ ವಾಪಾಸ್ಸಾಗುವ ಸಂದರ್ಭ ಮುನೀರ್ ಕಾಟಿಪಳ್ಳ “ಹಿಂದೂ ಯುವತಿಯೊಬ್ಬಳು ಮತಾಂತರಗೊಂಡು ಪಡುತ್ತಿರುವ ಕಷ್ಟದ” ಬಗ್ಗೆ ವಿವರಗಳನ್ನು ನೀಡುತ್ತಿದ್ದರು. ಸಂಘಪರಿವಾರದ ಮಂದಿ “ಲವ್ ಜೆಹಾದ್” ಬಗ್ಗೆ ಆಂದೋಲನ ಶುರುವಿಟ್ಟುಕೊಂಡಿದ್ದ ದಿನಗಳವು. ಹಿಂದೂ ಯುವತಿಯೊಬ್ಬಳು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಜೀವನ ನಡೆಸುತ್ತಿರುವ ಬಗ್ಗೆ ನಮಗೂ ಕುತೂಹಲಗಳಿದ್ದವು.Muneer Katipalla ಎಸ್‌ಇಝಡ್ ನಿರ್ವಸಿತ ಕಾಲನಿಯಿಂದ ಕೆಲವೇ ಕಿಮಿ ದೂರದಲ್ಲಿ ಹಿಂದೂ ಮತಾಂತರಿ ಯುವತಿಯ ಮನೆಯೂ ಇದ್ದಿದ್ದರಿಂದ ಅವಳ ಮನೆಗೆ ತೆರಳಿ ಮಾತಿಗೆ ಶುರುವಿಟ್ಟುಕೊಂಡೆವು.

ಆಕೆಯ ಹೆಸರು ಆಶಾ. ಕೊಡಗಿನ ವಿರಾಜಪೇಟೆ ತಾಲೂಕಿನ ದೇವಣಗೇರಿ ಗ್ರಾಮದವಳು. ದಲಿತ ಕುಟುಂಬಕ್ಕೆ ಸೇರಿದ ಆಶಾ 1995 ರಲ್ಲಿ ಮಂಗಳೂರಿನ ಬಜಪೆ ನಿವಾಸಿ ಜುಬೇರ್ ಮಹಮ್ಮದ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಆಶಾಳು ವಿರಾಜಪೇಟೆಯಲ್ಲಿ ಪಿಯುಸಿ ಪೂರೈಸಿ ಮಡಿಕೇರಿಯಲ್ಲಿ ಪದವಿ ಓದುತ್ತಿದ್ದಳು. ಈ ಸಂದರ್ಭ ಮಡಿಕೇರಿಯಲ್ಲಿ ಟ್ಯಾಕ್ಸಿ ಚಾಲಕನಾಗಿದ್ದ ಮಂಗಳೂರಿನ ಜುಬೇರ್ ಮಹಮ್ಮದ್ ಪರಿಚಯವಾಗಿ ಪ್ರೀತಿ ಅಂಕುರಿಸಿತ್ತು. ಆದರೆ ಎರಡೂ ಮನೆಯವರಿಗೂ ಮದುವೆ ಇಷ್ಟವಿರಲಿಲ್ಲ. ಜುಬೇರ್ ತಂದೆ ಬೀಡಿ ಕಾಂಟ್ರಾಕ್ಟರ್ ಆಗಿದ್ದರು. ತಕ್ಕಮಟ್ಟಿಗೆ ಸಿರಿವಂತರಾಗಿದ್ದರು. ಆಶಾ ಮನೆಯವರು ಅಂತರ್‌ಮತೀಯ ಮದುವೆಗೆ ಸಿದ್ದವಿರಲಿಲ್ಲ. ಈ ಸಂದರ್ಭ ಇಬ್ಬರೂ ತಮ್ಮ ಮನೆಯವರನ್ನು ಧಿಕ್ಕರಿಸಿ ಮದುವೆಯಾಗಿದ್ದರು.

ಪ್ರೀತಿ ಪ್ರೇಮ ಪ್ರಕರಣಗಳಲ್ಲಿ ಸಹಜವಾಗಿ ಪುರುಷನ ಧರ್ಮಕ್ಕೆ ಮಹಿಳೆ ಮತಾಂತರವಾಗುವುದು ಪುರುಷ ಪ್ರಧಾನ ಸಮಾಜದಲ್ಲಿರುವ ರೂಢಿ. ಅದರಂತೆ ಆಶಾಳನ್ನು ಇಸ್ಲಾಂಗೆ ಮತಾಂತರಗೊಳಿಸಿ ಆಯಿಶಾ ಬಾನು ಎಂದು ಮರುನಾಮಕರಣಗೊಳಿಸಲಾಯಿತು. ಸ್ನೇಹಿತರ ಸಹಕಾರದೊಂದಿಗೆ ಇಸ್ಲಾಂ ಪದ್ದತಿಯಂತೆ ಮದುವೆಯೂ ನಡೆಯಿತು. ನಂತರ ಜುಬೇರ್ ತನ್ನ ಪತ್ನಿ ಆಶಾಳನ್ನು ಮಂಗಳೂರಿನ ಬಜಪೆಗೆ ಕರೆದುಕೊಂಡು ಬಂದು ಬಾಡಿಗೆಗೆ ಮನೆ ಪಡೆದು ಸಂಸಾರ ಶುರುವಿಟ್ಟುಕೊಂಡ. ಆರಂಭದ ಮೂರು ನಾಲ್ಕು ವರ್ಷ ಅವರದ್ದು ಸುಖೀ ದಾಂಪತ್ಯ. ಈ ಮಧ್ಯೆ ಜುಬೇರ್‌ಗೆ ತಂದೆ ತಾಯಿಯ ಜೊತೆ ರಾಜಿಯಾಯಿತು. ತಂದೆ ತಾಯಿಯ ಮನೆಗೆ ಜುಬೇರ್ ನಿತ್ಯ ಹಾಜರಿ ಹಾಕತೊಡಗಿದ. ತನ್ನ ಹಿಂದೂ ಸೊಸೆ ಇಸ್ಲಾಂಗೆ ಮತಾಂತರ ಹೊಂದಿದ್ದರೂ ಆಕೆಯನ್ನು ಜುಬೇರ್ ತಂದೆ ತಾಯಿಗಳು ಸ್ವೀಕರಿಸಲು ಸುತರಾಂ ಸಿದ್ದರಿರಲಿಲ್ಲ. “ನೀನು ನಾನು ನೋಡಿದ ಮುಸ್ಲಿಂ ಹುಡುಗಿಯನ್ನೇ ಮದುವೆಯಾಗಬೇಕು” ಎಂದು ಜುಬೇರ್‌ಗೆ ಆತನ ತಂದೆ ತಾಯಿ ಒತ್ತಡ ಹೇರ ತೊಡಗಿದರು. ಕೊನೆಗೂ ಈ ಒತ್ತಡಕ್ಕೆ ಮಣಿದ ಜುಬೇರ್ ತಂದೆ ತಾಯಿ ನೋಡಿದ್ದ ಮುಸ್ಲಿಂ ಯುವತಿಯನ್ನೇ ಇನ್ನೊಂದು ಮದುವೆಯಾದ. ಆಕೆ ಜುಬೇರ್‌ನ ತಂದೆ ತಾಯಿಯ ಮುದ್ದಿನ ಸೊಸೆಯಾಗಿ ಅವರ ಜೊತೆಯೇ ಇರತೊಡಗಿದಳು.

ಇತ್ತ ಬಾಡಿಗೆ ಮನೆಯಲ್ಲಿದ್ದ ಆಶಾ ಯಾನೆ ಆಯಿಶಾಬಾನು ಒಂದು ಮಗುವಿನ ತಾಯಿಯಾಗಿದ್ದಳು. ತನ್ನ ಗಂಡನ ಎರಡನೇ ವಿವಾಹವನ್ನು ಅಸಹಾಯಕಳಾಗಿ ಸಹಿಸಿಕೊಂಡು ಗಂಡನೊಂದಿಗೆ ಹೊಂದಾಣಿಕೆಯಲ್ಲಿ ಸಂಸಾರ ನಡೆಸುತ್ತಿದ್ದಳು. ಈ ಮಧ್ಯೆ ಜುಬೇರ್ ಎರಡೂ ಕುಟುಂಬಗಳನ್ನು ನಿರ್ವಹಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ. ಆಯಿಶಾ ಬಾನು ಎರಡನೇ ಮಗುವಿನ ತಾಯಿಯಾದಳು. saudi-arabiaತನ್ನ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಜುಬೇರ್ ಸೌದೀ ಅರೇಬಿಯಾಕ್ಕೆ ಹೊರಟು ನಿಂತ. ಆ ಸಂದರ್ಭದಲ್ಲಿ ಸೌದಿಗೆ ಹೋಗುವ ಖರ್ಚು ನಿಭಾಯಿಸಲು ಆಯಿಶಾ ಬಾನು ತನ್ನಲ್ಲಿದ್ದ ಅಲ್ಪಸ್ವಲ್ಪ ಚಿನ್ನವನ್ನು ಮಾರಾಟ ಮಾಡಿ ಗಂಡನ ಕೈಗಿತ್ತಳು. ಜುಬೇರನು ಆಯಿಶಾ ಬಾನು ನೀಡಿದ ಹಣದಲ್ಲೇ ಸೌದಿಗೆ ತೆರಳಿದ.

ಸೌದಿಯಲ್ಲಿ ಉದ್ಯೋಗ ಶುರುವಿಟ್ಟುಕೊಂಡ ಜುಬೇರ್ ಕಾಲಕ್ರಮೇಣ ಆಯಿಶಾ ಬಾನುವಿನ ಸಂಪರ್ಕ ಕಡಿತಗೊಳಿಸತೊಡಗಿದ. ಆಯಿಶಾಳನ್ನು ಮರೆತುಬಿಡಬೇಕು ಎನ್ನುವ ತನ್ನ ತಂದೆ ತಾಯಿಯ ಒತ್ತಡಕ್ಕೆ ಆತ ನಿಧಾನವಾಗಿ ಪ್ರತಿಕ್ರಿಯಿಸತೊಡಗಿದ. ಬಜಪೆಯ ಬಾಡಿಗೆಯಲ್ಲಿ ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗಿದ್ದ ಆಯಿಶಾ ಬಾನು ಈಗ ಪೂರ್ಣ ಕಂಗಾಲಾಗಿದ್ದಳು. ಒಂದೆಡೆ ತನ್ನ ಹುಟ್ಟೂರು, ಧರ್ಮ, ತಂದೆ ತಾಯಿ, ಕುಟುಂಬವನ್ನು ತನ್ನ ಪ್ರೀತಿಗಾಗಿ ತೊರೆದು ಬಂದಿದ್ದಳು. ಈಗ ಅತ್ತಲೂ ಸಲ್ಲದೆ ಇತ್ತಲೂ ಸಲ್ಲದೆ ಪರದಾಡಲಾರಂಬಿಸಿದಳು. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಇಬ್ಬರು ಪುಟ್ಟ ಮಕ್ಕಳಿಗೆ ದಿನದ ತುತ್ತು ತಿನ್ನಿಸುವುದೂ ಕಷ್ಟವಾಗತೊಡಗಿತು. ಗಂಡ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಗಂಡನ ಮನೆಯ ಬಳಿ ಹೋದರೆ ಗೇಟಿನ ಒಳಗೆ ಪ್ರವೇಶವಿರಲಿಲ್ಲ. ಅಕ್ಷರಶಃ ಬೀದಿಪಾಲಾದ ಆಯಿಶಾ ಇಬ್ಬರು ಮಕ್ಕಳೊಂದಿಗೆ ಹೇಗಾದರೂ ಬದುಕಬೇಕು ಎಂದು ಹಠಕ್ಕೆ ಬಿದ್ದಿದ್ದಳು.

ಇಬ್ಬರು ಪುಟ್ಟ ಮಕ್ಕಳ ಹೊಟ್ಟೆಗೆ ತುತ್ತಿಲ್ಲದೆ ಹೊಟ್ಟೆ ಬೆನ್ನಿಗಂಟಲಾರಂಭಿಸಿದಾಗ ಅಲ್ಲಿದ್ದ ಕೆಲ ಕಾಳಜಿಯ ಮನಸ್ಸುಗಳು ಆಯಿಶಾ ಬಾನುವಿಗೆ ಅಷ್ಟೋ ಇಷ್ಟೋ ಸಹಾಯಕ್ಕೆ ಧಾವಿಸಿದವು. ಬಜಪೆಯ ಬಾಡಿಗೆ ಮನೆಗೆ ಬಾಡಿಗೆ ನೀಡಲು ಸಾಧ್ಯವಾಗದೆ ಆಕೆಯನ್ನು ಬಾಡಿಗೆ ಮನೆಯಿಂದ ಹೊರದಬ್ಬಲಾಯಿತು. ಕೆಲವರ ಸಹಕಾರ ಪಡೆದುಕೊಂಡ ಆಯಿಶಾ ಬಾನು ತೀರಾ ಕಡಿಮೆ ಬಾಡಿಗೆಯ ಮನೆಯಂತಿರುವ ಪುಟ್ಟ ಗುಡಿಸಲಿಗೆ ಸ್ಥಳಾಂತರಗೊಂಡಳು. ಈ ಗುಡಿಸಲು ಸುರತ್ಕಲ್ ಸಮೀಪದ ಕುಳಾಯಿ ಎಂಬ ಪ್ರದೇಶ ರಸ್ತೆ ಬದಿಯಲ್ಲಿತ್ತು.

ಸುರತ್ಕಲ್‌ನ ಕುಳಾಯಿ ಪ್ರದೇಶ ಮತೀಯ ಶಕ್ತಿಗಳ ಕೇಂದ್ರ. ಈ ಭಾಗದಲ್ಲಿ ಮುಸ್ಲಿಂ ಹುಡುಗಿಯರು ಹೊರಗಡೆ ಕೆಲಸಕ್ಕೆ ಹೋಗುವುದನ್ನು ಈ ಮತೀಯವಾದಿಗಳು ಸಹಿಸುತ್ತಿರಲಿಲ್ಲ. ಒಂದೆಡೆ ಈಕೆ ಹಿಂದೂ ಎಂದು ಮನೆಯೊಳಗೆ ಸೇರಿಸದ ಅತ್ತೆ ಮಾವ. ಮತ್ತೊಂದೆಡೆ ಈಕೆ ಮುಸ್ಲಿಂ ಎಂದು ಮುಸ್ಲಿಂ ಕಟ್ಟುಪಾಡುಗಳನ್ನು ಈಕೆಯ ಮೇಲೆ ಹೇರಿ ಅನ್ನ ಕಸಿದುಕೊಳ್ಳುತ್ತಿದ್ದ ಮತೀಯವಾದಿ ಜನ. ಮತಾಂತರಗೊಂಡ ಹಿಂದೂ ಯುವತಿ ಎಂದು ಹಿಂದೂ ಮತೀಯವಾದಿಗಳ ಕಾಕದೃಷ್ಠಿಯಿಂದ ತಪ್ಪಿಸಿಕೊಳ್ಳಲು ನಿತ್ಯ ಹೆಣಗಾಟ. ಒಟ್ಟು ಈ ಆಯಿಶಾ ಭಾನುವಿಗೆ ಉರಿಯುವ ಒಲೆಯ ಮೇಲಿದ್ದ ಬಾಣಲೆಯಲ್ಲಿ ಬದುಕು ನಿರ್ವಹಿಸುವ ಸ್ಥಿತಿಯಾಗಿತ್ತು. ಕೊನೆಗೂ ಆಕೆ ತನ್ನ ಪುಟ್ಟ ಮಕ್ಕಳ ಹೊಟ್ಟೆ ತುಂಬಿಸಲು ಕೆಲಸ ಮಾಡಲು ನಿರ್ಧರಿಸಿದಳು. ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಇಸ್ಪಿಟ್ ಎಲೆಗಳ ಪ್ಯಾಕಿಂಗ್ ಫ್ಯಾಕ್ಟರಿಗೆ ತೆರಳಿ, ತಾನು ಮನೆಯಲ್ಲೇ ಪ್ಯಾಕಿಂಗ್ ಮಾಡಿ ನೀಡುವುದಾಗಿ ಕೆಲಸ ಕುದುರಿಸಿಕೊಂಡಳು. ಇಸ್ಪಿಟ್ ಎಲೆಗಳನ್ನು ಮನೆಗೆ ತಂದು ಪ್ಯಾಕ್ ಮಾಡಿ ನೀಡಿ ಸಂಬಳ ಪಡೆದು ಮಕ್ಕಳನ್ನು ಸಾಕತೊಡಗಿದಳು. ಅದು ಇಬ್ಬರು ಮಕ್ಕಳ ಒಂದೊತ್ತಿನ ಊಟಕ್ಕೂ ಸಾಲುತ್ತಿರಲಿಲ್ಲ. ತೀರಾ ಕಡಿಮೆ ಬಾಡಿಗೆಯಾದರೂ ಬಾಡಿಗೆ ಕೊಡುವುದು ದೊಡ್ಡ ಸಾಹಸವಾಗತೊಡಗಿತ್ತು.

ಬಜಪೆಯ ಕೆಲವು ಸಹೃದಯೀ ಮುಸ್ಲಿಂ ಯುವಕರು ಆಗಾಗ ಅಕ್ಕಿ ಬೇಳೆ, ಸಕ್ಕರೆ ಕೊಟ್ಟು ಮಕ್ಕಳು ಉಪವಾಸ ಬೀಳುವುದನ್ನು ತಪ್ಪಿಸುತ್ತಿದ್ದರು. muslim-womanಈ ಮುಸ್ಲಿಂ ಯುವಕರು ಒಂಟಿಯಾಗಿದ್ದ “ಮುಸ್ಲಿಂ” ಮಹಿಳೆಯ ಮನೆಗೆ ಅಕ್ಕಿ ಬೇಳೆ ಹೊತ್ತುಕೊಂಡು ಬರುವುದು ಮುಸ್ಲಿಂ ಧರ್ಮ ರಕ್ಷಕ ಸಂಘಟನೆಗಳಿಗೆ ಕಣ್ಣು ಕೆಂಪಾಗುವಂತೆ ಮಾಡಿತ್ತು. ಅದೊಂದು ದಿನ ಅವರು ಆಯಿಶಾ ಬಾನುವಿನ ಮನೆಗೆ ನುಗ್ಗಿ ಆಕೆಯ ಮೇಲೆ ಹಲ್ಲೆ ನಡೆಸಿದ್ದರು. ಪರಪುರಷರ ಜೊತೆ ಮಾತನಾಡಬಾರದು ಮತ್ತು ಪರಪುರಷರಿಂದ ಏನನ್ನೂ ಪಡೆದುಕೊಳ್ಳಬಾರದು ಎಂದು ಮುಸ್ಲಿಂ ಧರ್ಮ ರಕ್ಷಕರು ಫರ್ಮಾನು ಹೊರಡಿಸಿ ಹೊರಟಿದ್ದರು.

ಮುಸ್ಲಿಂ ಧರ್ಮರಕ್ಷಕರ ಈ ಕಾರ್‍ಯಾಚರಣೆ ಕುಳಾಯಿ ಪ್ರದೇಶದಲ್ಲಿದ್ದ ಜಾತ್ಯಾತೀತ ಮನೋಭಾವನೆಯ ಹಿಂದೂ-ಮುಸ್ಲಿಂ ಯುವಕರನ್ನು ಕೆರಳಿಸಿತ್ತು. ಆಯಿಶಾ ಬಾನುವಿನ ಮೇಲೆ ಹಲ್ಲೆ ನಡೆಸಿದ ಮುಸ್ಲಿಂ ನೈತಿಕ ಪೋಲೀಸರ ಮೇಲೆ ಏರಿ ಹೋದರು. ನಂತರ ಈ ಯುವಕರು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳರನ್ನು ಸಂಪರ್ಕಿಸಿ ಆಕೆಗೆ ಸಹಾಯ ಮಾಡುವಂತೆ ಕೇಳಿದರು. ಇದಿಷ್ಟೂ ಸಂಗತಿಯನ್ನು ಆಶಾ ಯಾನೆ ಆಯಿಶಾ ಬಾನು ಕಣ್ಣೀರು ಹಾಕುತ್ತಾ ನಮ್ಮ ಮುಂದೆ ಹೇಳಿದಳು.

ನಾವು ಅಸಹಾಯಕರಾಗಿದ್ದೆವು. ಮಹಿಳೆ ಮತ್ತು ಮಗು ಧರ್ಮದ ಸುಳಿಗೆ ಸಿಲುಕಿ ನರಳಾಡುತ್ತಿರುವುದನ್ನು ನೋಡಿಯೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದೆವು. ಮುನೀರ್ ಕಾಟಿಪಳ್ಳ ಮಾತ್ರ ದೈರ್ಯ ತೆಗೆದುಕೊಂಡು “ನೀನೇನೂ ಹೆದರಬೇಡ. ನಿನಗೆ ಏನೇ ತೊಂದರೆ ಆದರೂ ಫೋನ್ ಮಾಡು. ನಿನ್ನ ಗಂಡ ವಿದೇಶದಿಂದ ಬರುವ ದಿನಾಂಕ ಗೊತ್ತಾದರೆ ತಿಳಿಸು. ಅದಕ್ಕೂ ಮೊದಲು ನಿನ್ನ ಅತ್ತೆ ಮತ್ತು ಮಾವನನ್ನು ಭೇಟಿಯಾಗಲು ಯತ್ನಿಸುತ್ತೇನೆ” ಎಂದು ಆಕೆಗೆ ಧೈರ್ಯ ನೀಡಿದರು. “ನೀನು ಮರಳಿ ನಿನ್ನ ತಂದೆ ತಾಯಿಯ ಮನೆಗೆ ಹೋಗುವುದಾದರೂ ಅದಕ್ಕೂ ವ್ಯವಸ್ಥೆ ಮಾಡಲು ಸಿದ್ದರಿದ್ದೇವೆ. ಒಟ್ಟು ನಿನ್ನ ಮತ್ತು ಮಕ್ಕಳ ಬದುಕು ಮುಖ್ಯವೇ ಹೊರತು ಧರ್ಮಗಳಲ್ಲ” ಎಂದು ಹೇಳಿದಾಗಲೂ ಆಕೆ ಮರಳಿ ತಂದೆ ತಾಯಿಯನ್ನು ಸೇರಲು ಧೈರ್ಯ ತೋರಲಿಲ್ಲ.

ನಾವು ಭೇಟಿ ನೀಡಿದ ಒಂದೆರಡು ತಿಂಗಳಲ್ಲಿ ಆಯಿಶಾ ಬಾನು ಮುನೀರ್ ಕಾಟಿಪಳ್ಳಗೆ ದೂರವಾಣಿ ಕರೆ ಮಾಡಿದ್ದಳು. ಮುಸ್ಲಿಂ ಮತೀಯವಾದಿಗಳು ಬಾಡಿಗೆ ಮನೆ ಮಾಲೀಕನಿಗೆ ಒತ್ತಡ ಹಾಕಿ ಆಯಿಶಾ ಬಾನುವನ್ನು ಮನೆಯಿಂದ ಹೊರ ಹಾಕಿಸಿದ್ದರು. ಬಾಡಿಗೆ ಮನೆ ಮಾಲೀಕನೂ ಮುಸ್ಲೀಮನಾಗಿದ್ದರಿಂದ ಆತ ಧರ್ಮ ರಕ್ಷಕರಿಗೆ ಹೆದರಿ ಅವರ ಆಜ್ಞೆಯನ್ನು ಪಾಲಿಸಿದ್ದ. ಒರ್ವ ಮಹಿಳೆ ತನ್ನಿಬ್ಬರು ಮಕ್ಕಳ ಜೊತೆ ಬೀದಿ ಪಾಲಾಗಿದ್ದಳು.

ಆಕೆಯನ್ನು ಡಿವೈಎಫ್‌ಐ ಜಿಲ್ಲಾ ಕಚೇರಿ “ವಿಕಾಸ” ಕ್ಕೆ ಕರೆಸಿಕೊಂಡ ಮುನೀರ್ ಆಕೆಗೆ ವಸತಿ ವ್ಯವಸ್ಥೆ ಮಾಡುವ ಸಲುವಾಗಿ ತನ್ನ ಸಂಘಟನೆಯ ಕಾರ್‍ಯಕರ್ತರ ಬಳಿ ಸಮಾಲೋಚನೆ ನಡೆಸಿ ಕೂಳೂರಿನ ಪಂಜಿಮೊಗೇರಿನಲ್ಲಿ ಬಾಡಿಗೆ ಮನೆಯನ್ನು ಕೊಡಿಸಿದರು. ಪಂಜಿಮೊಗೆರು ಪ್ರದೇಶ ಕಮ್ಯೂನಿಷ್ಠರ ಭದ್ರ ಕೋಟೆ. ಇಲ್ಲಿನ ವಾರ್ಡ್ ಕಾರ್ಪೋರೇಟರ್ ಕೂಡ ಸಿಪಿಐಎಂನಿಂದ ಆಯ್ಕೆಗೊಂಡವರು. ಪಂಜಿಮೊಗರಿನಲ್ಲಿ ಯಾವುದೇ ಕೋಮುವಾದಿಗಳ ಆಟ ನಡೆಯುವುದಿಲ್ಲ ಎಂಬ ಕಾರಣಕ್ಕಾಗಿ ಆಯಿಶಾ ಬಾನು ಎರಡೂ ಕೋಮುವಾದಿಗಳಿಂದ ಸೇಫ್ ಆಗಿದ್ದಳು.

ಇಷ್ಟೆಲ್ಲಾ ಆಗುವಾಗ ಆಯಿಶಾಳ ಎರಡೂ ಮಕ್ಕಳು ಶಾಲೆಗೆ ಹೋಗುವ ಮಟ್ಟಕ್ಕೆ ಬೆಳೆದು ನಿಂತಿದ್ದರು. ಸಿಪಿಐಎಂ ಮತ್ತು ಡಿವೈಎಫ್‌ಐ ಕಾರ್‍ಯಕರ್ತರ ನೆರವಿನಲ್ಲಿ ಇಬ್ಬರು ಮಕ್ಕಳನ್ನು ಕೂಡಾ ಒಳ್ಳೆಯ ವಿದ್ಯಾಭ್ಯಾಸ ಸಿಗಲೆಂಬ ಕಾರಣಕ್ಕಾಗಿ ಖಾಸಗಿ ಶಾಲೆಗೆ ಸೇರಿಸಿದರು. ಖಾಸಗಿ ಶಾಲೆಯ ಫೀಸು ಕಟ್ಟುವ ಕೊನೆಯ ದಿನಾಂಕ ಸಮೀಪಿಸುತ್ತಿತ್ತು. ಈ ಸಂಧರ್ಭ ಡಿವೈಎಫ್‌ಐ ಮುಖಂಡ (ಈಗ ಕಾರ್ಪೋರೇಟರ್) ದಯಾನಂದ ಶೆಟ್ಟಿಯವರನ್ನು ಆಯಿಶಾ ಸಂಪರ್ಕಿಸಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಳು. “ಗಂಡ ವಿದೇಶದಿಂದ ಊರಿಗೆ ಬಂದು ಹದಿನೈದು ದಿನಗಳಾಗಿದ್ದು ತನ್ನನ್ನು ಸಂಪರ್ಕಿಸಿಲ್ಲ” ಎಂದೂ ದಯಾನಂದ ಶೆಟ್ಟಿಯವರಲ್ಲಿ ದೂರಿಕೊಂಡಳು. ದಯಾನಂದ ಶೆಟ್ಟರು ಇದನ್ನು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಗಮನಕ್ಕೆ ತಂದರು.

ಮುನೀರ್ ಕಾಟಿಪಳ್ಳರವರು ಬಜಪೆಯ ಸ್ಥಳೀಯ ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಜೊತೆಗೂಡಿ ನೇರ ಆಯಿಶಾಳ ಪತಿ ಜುಬೇರ್ ಮನೆಗೆ ತೆರಳಿದರು. ಜುಬೇರ್ ಮಹಮ್ಮದ್ ಮನೆಯಲ್ಲಿರಲಿಲ್ಲ. ಆತನನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಮುನೀರ್ ಕಾಟಿಪಳ್ಳ “ಆಯಿಶಾ ಬಾನು ನಿನ್ನನ್ನು ನಂಬಿಕೊಂಡು ಜಾತಿ, ಧರ್ಮ, ತಂದೆ ತಾಯಿಯನ್ನು ಬಿಟ್ಟು ಬಂದಿದ್ದಾಳೆ. ಆಕೆ ಈಗ ಮರಳಿ ತವರಿಗೆ ಹೋಗುವುದು ಅಷ್ಟು ಸುಲಭವಲ್ಲ. ಆದುದರಿಂದ ಅವಳ ಬದುಕಿಗೊಂದು ವ್ಯವಸ್ಥೆಯಾಗಬೇಕು” ಎಂದು ವಿನಂತಿಸಿದರು. ಆದರೆ ಆತ ಈ ಬಗ್ಗೆ ಬೇಜವಾಬ್ದಾರಿಯಿಂದ ವರ್ತಿಸಿ ದೂರವಾಣಿ ಕರೆಯನ್ನು ಕಡಿತಗೊಳಿಸಿದಾಗ ಮನೆಯಲ್ಲಿದ್ದ ಜುಬೇರ್‌ನ ಕುಟುಂಬಸ್ಥರಿಗೆ ಎಚ್ಚರಿಕೆ ನೀಡಲಾಯಿತು. “ಆಯಿಶಾಳ ಇಡೀ ಬದುಕಿನ ಜವಾಬ್ದಾರಿ ಜುಬೇರ್‌ನದ್ದು. ಅದೆಲ್ಲಾ ಮತ್ತೆ ಚರ್ಚೆ ಮಾಡುವ. ಎಲ್ಲಕ್ಕಿಂತ ಮೊದಲು ನಾಳೆ ಬೆಳಿಗ್ಗೆ 10 ಗಂಟೆಯ ಒಳಗಾಗಿ ಆಕೆಯ ಪಂಜಿಮೊಗರಿನ ಮನೆಗೆ ತೆರಳಿ ಆಕೆಯ ಮಕ್ಕಳ ಸ್ಕೂಲ್ ಫೀಸ್ ಮತ್ತು ಮನೆ ಬಾಡಿಗೆ ನೀಡಬೇಕು. ಇಲ್ಲದೇ ಇದ್ದರೆ ಸಂಘಟನೆಯ ವತಿಯಿಂದ ನಿಮ್ಮ ಮನೆಯ ಎದುರು ಧರಣಿ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಲಾಯಿತು.

ಮಂಗಳೂರಿನಲ್ಲಿ ಡಿವೈಎಫ್‌ಐ ಹೋರಾಟದ ಹಿನ್ನಲೆ ಮತ್ತು ಶೋಷಣೆಗೊಳಗಾದ ವ್ಯಕ್ತಿಗಳ ಪರವಾಗಿ ನಡೆಸುತ್ತಿರುವ ನಿರಂತರ ಹೋರಾಟದ ಬಗ್ಗೆ ತಿಳಿದುಕೊಂಡ ಜುಬೇರ್ ಮಹಮ್ಮದ್ ಮರುದಿನ ಬೆಳಿಗ್ಗೆ 7 ಗಂಟೆಗೇನೇ ನೇರವಾಗಿ ತನ್ನ ಮೊದಲ ಪತ್ನಿ ಆಯೀಶಾಳ ಮನೆಗೆ ಭೇಟಿ ನೀಡಿ ಅವಳ ಜೊತೆ ಒಂದಿಷ್ಟು ಹೊತ್ತು ಪ್ರೀತಿಯಿಂದ ಕಳೆದಿದ್ದ. ನಂತರ ಹತ್ತು ಗಂಟೆಯ ವೇಳೆಗೆ ಮಕ್ಕಳನ್ನು ಆಯಿಶಾಳ ಜೊತೆ ಶಾಲೆಗೆ ಕರೆದುಕೊಂಡು ಹೋಗಿ ಬಾಕಿ ಉಳಿಸಿದ್ದ ಸ್ಕೂಲ್ ಫೀಸ್‌ಗಳನ್ನು ಪಾವತಿಸಿ ಅಲ್ಲಿಂದ ಆಯಿಶಾಳನ್ನು ಮಂಗಳೂರು ನಗರಕ್ಕೆ ಕರೆದೊಯ್ದು ಬಟ್ಟೆ ಬರೆ, ಮಕ್ಕಳ ಆಟಿಕೆ, ಮನೆ ಸಾಮಾಗ್ರಿ ಖರೀಸಿದ್ದ. ಕಷ್ಟ ಮತ್ತು ನೋವಿನಿಂದ ಕಂಗಾಲಾಗಿದ್ದ ಆಯಿಶಾ ಬಾನುವಿಗೆ ಇದು ಕನಸೆಂಬಂತೆ ಕಂಡಿರಬಹುದು. ಆದೇನೇ ಆದರೂ ಆಯಿಶಾ ಬಾನು ಕಷ್ಟದ ಜೀವನ ಮುಗಿದು ಪ್ರೀತಿ ಪ್ರೇಮದ ಎರಡನೇ ಭಾಗ ಆರಂಭವಾಯಿತೆಂದುಕೊಂಡಳು.

ಬೀಡಿ ಕಾಂಟ್ರಾಕ್ಟರ್ ಆಗಿದ್ದ ಜುಬೇರ್ ತಂದೆ ಇದೇ ಸಂದರ್ಭದಲ್ಲಿ ಸಾವನ್ನಪ್ಪಿದ್ದರು. ಮಂಗಳೂರು ನಗರ ಮತ್ತು ಬಜಪೆಯಲ್ಲಿ ಉತ್ತಮ ಆದಾಯ ತರುತ್ತಿದ್ದ ಬೀಡಿ ಬ್ರಾಂಚುಗಳನ್ನು ಹೊಂದಿದ್ದ ಜುಬೇರ್ ತಂದೆಯ ಅಕಾಲಿಕ ಮರಣದ ನಂತರ ಬೀಡಿ ಬ್ರಾಂಚುಗಳನ್ನು ಮುಚ್ಚುವಂತಿರಲಿಲ್ಲ. beedi-workerಸೌದಿಗೆ ಹೋಗುವುದನ್ನು ರದ್ದುಪಡಿಸಿದ ಜುಬೇರ್ ಬೀಡಿ ಬ್ರಾಂಚಿನ ಉಸ್ತುವಾರಿ ವಹಿಸಿಕೊಂಡ. ಆಯಿಶಾ ಬಾನು ಜೊತೆಗೆನೇ ಸಂಸಾರ ಹೂಡಿಕೊಂಡ ಜುಬೇರ್, ಪತ್ನಿ ಆಯಿಶಾಳನ್ನೂ ಕೂಡಾ ಬೀಡಿ ಬ್ರಾಂಚಿನ ವ್ಯಾಪಾರದಲ್ಲಿ ತೊಡಗಿಸಿಕೊಂಡ. ಎರಡನೇ ಪತ್ನಿಯ ಮನೆಗೆ ಆಗೊಮ್ಮೆ ಈಗೊಮ್ಮೆ ಹೋಗಿ ಬರುತ್ತಿದ್ದ ಜುಬೇರ್ ಈ ಬಾರಿ ಎರಡೂ ಸಂಸಾರಗಳನ್ನು ನಿಭಾಯಿಸುವುದರಲ್ಲಿ ಯಶಸ್ವಿಯಾದಂತೆ ಕಂಡು ಬಂದ. ಎರಡು ಮೂರು ವರ್ಷ ಆಯಿಶಾ ಮತ್ತು ಜುಬೇರ್ ಸುಖೀ ಸಂಸಾರ. ವರ್ಷದ ಹಿಂದೆ ಗರ್ಭಿಣಿಯಾಗಿದ್ದ ಆಯಿಶಾಳಿಗೆ ನಾಲ್ಕು ತಿಂಗಳ ಹಿಂದೆ ಪುಟ್ಟ ಮಗುವೊಂದರ ಜನನವಾಗಿತ್ತು.

ಕಳೆದ ಒಂದು ವರ್ಷದಿಂದ ಆಯಿಶಾ ಮತ್ತು ಜುಬೇರ್ ಸಂಸಾರದಲ್ಲಿ ದಿಡೀರ್ ಬದಲಾವಣೆಗಳು ಕಾಣಲಾರಂಭಿಸಿದವು. ಬೀಡಿ ಕಾಂಟ್ರಾಕ್ಟರ್ ಆಗಿದ್ದ ಜುಬೇದ್‌ಗೆ ಎರಡೂ ಕುಟುಂಬ ನಿರ್ವಹಿಸಲು ತಕ್ಕಮಟ್ಟಿನ ಆರ್ಥಿಕತೆ ಇತ್ತು. ನಾವೂ ಎಲ್ಲರಂತೆ ಬದುಕಬೇಕು. ಕಾರು, ಸ್ವಂತ ಮನೆ ಹೊಂದಬೇಕು ಎಂಬ ಆಸೆ ಎಲ್ಲರಂತೆ ಜುಬೇರ್ ಮತ್ತು ಆಯಿಶಾ ದಂಪತಿಗಳಲ್ಲೂ ಇತ್ತು. ಹೇಗೋ ಹುಂಡಿ ವ್ಯವಹಾರ ಶುರುವಿಟ್ಟುಕೊಂಡ ಜುಬೇರ್ ಚಿಲ್ಲರೆ ಹಣ ಸಂಪಾದನೆಗೆ ತೊಡಗಿಕೊಂಡ. ಹವಾಲ ವ್ಯವಹಾರವನ್ನು ಮಂಗಳೂರಿನಲ್ಲಿ ಹುಂಡಿ ವ್ಯವಹಾರ ಎನ್ನುತ್ತಾರೆ. ಇದು ಕಾನೂನಿನ ಪ್ರಕಾರ ಕಾನೂನು ಬಾಹಿರವಾದರೂ ಗಲ್ಫ್ ರಾಷ್ಟ್ರಗಳಲ್ಲಿನ ಉದ್ಯೋಗವನ್ನೇ ನೆಚ್ಚಿಕೊಂಡಿರುವ ಮಂಗಳೂರಿನ ಮುಸ್ಲಿಂ ಸಮುದಾಯದಲ್ಲಿ ಹವಾಲ ವ್ಯವಹಾರ ತಪ್ಪು ಅನ್ನಿಸೋದೇ ಇಲ್ಲ. ಸೌದಿ ಆರೇಬಿಯಾ, ದುಬೈಗಳಲ್ಲಿ ಕೂಲಿ ಕೆಲಸ ಮಾಡುವ ಮಂಗಳೂರಿನ ಯುವಕರು ಅಷ್ಟೋ ಇಷ್ಟೋ ಸಂಪಾದಿಸಿದ್ದನ್ನು ಕಾನೂನು ರೀತಿಯಲ್ಲಿ ಮಂಗಳೂರಿನ ಹೆತ್ತವರಿಗೆ ಕಳುಹಿಸಿದರೆ ಕಳುಹಿಸಿದ ಹಣದ ಅರ್ಧದಷ್ಟು ಮಾತ್ರ ಹೆತ್ತವರ ಕೈಸೇರುತ್ತದೆ. ಪ್ರಾಮಾಣಿಕವಾಗಿ ದುಡಿದ ಹಣವನ್ನು ಈ ಪರಿ ತೆರಿಗೆಗಳನ್ನು ತಪ್ಪಿಸಲು ಹವಾಲಾ ಮೂಲಕ ಮಂಗಳೂರಿಗೆ ಹಣ ರವಾನೆ ಮಾಡುತ್ತಾರೆ. ಇದೇ ವ್ಯವಹಾರ ಶುರುವಿಟ್ಟುಕೊಂಡ ಜುಬೇರ್ ಮತ್ತು ಆಯಿಶಾ ಹವಾಲಾದಲ್ಲಿ ಬಂದ ಕಮಿಷನ್ ಹಣದಲ್ಲಿ ಒಂದು ಪುಟ್ಟ ಮನೆ ಖರೀದಿ ಮಾಡುತ್ತಾರೆ. ಬೀಡಿ ಬ್ರಾಂಚು ವ್ಯವಹಾರ, ಸುತ್ತಾಡಲೆಂದು ಕಾರು ಖರೀದಿಸುತ್ತಾರೆ. ಒಟ್ಟು ಆಯಿಶಾ ಮತ್ತು ಜುಬೇರ್ ಕಷ್ಟದ ದಿನಗಳು ಮುಗಿದು ತಕ್ಕಮಟ್ಟಿಗೆ ಐಶಾರಾಮಿಯಾಗಿಯೇ ಬದುಕಲಾರಂಭಿಸುತ್ತಾರೆ. ಆದರೆ ಕಮಿಷನ್ ಆಸೆಗಾಗಿ ತಾನು ಮಾಡುತ್ತಿದ್ದ ಹವಾಲಾ ದುಡ್ಡು ಯಾರೆಲ್ಲರ ಕೈ ದಾಟುತ್ತಿದೆ ಎಂಬುದು ಆಯಿಶಾಳಿಗಾಗಲೀ, ಜುಬೇರ್‌ಗಾಗಲೀ ಗೊತ್ತಿರಲಿಲ್ಲ.

ಬಿಹಾರದ ಪಾಟ್ನಾದಲ್ಲಿ ನರೇಂದ್ರ ಮೋದಿ ನಡೆಸಿದ್ದ ಹೂಂಕಾರ್ ರ್‍ಯಾಲಿಯಲ್ಲಿ ನಡೆದ patnablast_hunkar_rallyಸರಣಿ ಸ್ಪೋಟದ ಆರೋಪಿಗಳಿಗೆ ಹಣ ಸರಬರಾಜು ಮಾಡಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಆಯಿಶಾ ಮತ್ತು ಆಕೆಯ ಪತಿ ಜುಬೇರ್‌ರನ್ನು ತಮ್ಮ ನಾಲ್ಕು ತಿಂಗಳ ಪುಟ್ಟ ಮಗುವಿನ ಜೊತೆ ಅರೆಸ್ಟ್ ಮಾಡಿದ್ದಾರೆ ಎಂಬುದು ಸುದ್ದಿ. ಆದರೆ ಪೊಲೀಸರು ಈ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಬಿಹಾರದಲ್ಲಿ ಹವಾಲ ಹಣದ ಸಂಬಂಧ ನಾಲ್ಕು ಮಂದಿಯನ್ನು ಬಂಧಿಸಿದ್ದು, ಅವರ ಅಕೌಂಟ್‌ಗಳಿಗೆ ಆಯಿಶಾ 2 ಕೋಟಿ ಜಮೆ ಮಾಡಿದ್ದಾಳೆ. ಆಯಿಶಾಳ ಪತಿ ಜುಬೇರ್ ಎಕೌಂಟ್‌ನಿಂದ 5 ಕೋಟಿ ವ್ಯವಹಾರವಾಗಿದೆ ಎಂಬುದಷ್ಟೇ ಬಿಹಾರ ಪೊಲೀಸ್ ಇನ್ಸ್‌ಸ್ಪೆಕ್ಟರ್ ರಾಜ್ ಕಿಶೋರ್ ಹೇಳುತ್ತಾರೆ. ಆದರೆ ಯಾವ ಅಧಿಕಾರಿಯೂ ದೃಢೀಕರಿಸದೆ ಮಾಧ್ಯಮಗಳಲ್ಲಿ “ಆಯಿಶಾ ಭಯೋತ್ಪಾದಕಿ” ಎಂಬ ಸುದ್ದಿ ಹರಡಿದ್ದು ಹೇಗೆ ಎಂಬುದು ಮಾಧ್ಯಮಗಳಿಗೇ ಗೊತ್ತಿಲ್ಲ! ಆಯಿಶಾಳನ್ನು ಬಂಧಿಸಲು ಬಿಹಾರದಿಂದ ಇನ್ಸ್‌ಸ್ಪೆಕ್ಟರ್ ರಾಜ್ ಕಿಶೋರ್ ಮತ್ತು ಓರ್ವ ಕಾನ್ಸ್‌ಸ್ಟೇಬಲ್ ಮಾತ್ರ ಮಂಗಳೂರಿಗೆ ಬಂದಿದ್ದರು. ಒಂದು ಸರಳ ವಿಚಾರವೆಂದರೆ ದೇಶದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಹಣ ಸರಬರಾಜು ಮಾಡಿದ ಅತೀ ಮುಖ್ಯ ಆರೋಪಿಯನ್ನು ಬಂಧಿಸಲು ಇಬ್ಬರು ಸಿವಿಲ್ ಪೊಲೀಸರು ಮಾತ್ರ ಬರುತ್ತಾರೆ ಎಂಬುದೇ ಆಶ್ಚರ್‍ಯಕರ. ಎನ್‌ಐಎ, ಎಟಿಎಸ್, ಐಬಿ ಮಟ್ಟದಲ್ಲಿ ನಡೆಯಬೇಕಾಗಿದ್ದ ಕಾರ್‍ಯಾಚರಣೆಯನ್ನು ಒಬ್ಬನೇ ಒಬ್ಬ ಇನ್ಸ್‌ಸ್ಪೆಕ್ಟರ್ ಮಾಡುತ್ತಾರೆ ಎಂದರೇ ಇಡೀ ಸುದ್ದಿಯ ಬಗ್ಗೆ ಅನುಮಾನಗಳಿವೆ. ಅಂತೂ ಇಂತೂ ಮಕ್ಕಳ ಹೊಟ್ಟೆ ತುಂಬಿಸಲು ಪ್ರತೀ ಗಳಿಗೇನೂ ಹರಸಾಹಸ ಪಡುತ್ತಿದ್ದ ತಾಯಿಯೊಬ್ಬಳು ಭಯೋತ್ಪಾದಕಿ ಎಂದು ಬಂಧನದಲ್ಲಿರುವ ಹಿನ್ನೆಲೆಯಲ್ಲಿ ಘಟನೆಯ ಸತ್ಯಾಸತ್ಯತೆಯನ್ನು ವಿಶ್ಲೇಷಿಸಬೇಕಿದೆ.