Category Archives: ತೇಜ ಸಚಿನ್ ಪೂಜಾರಿ

ವಿರೋಧದ ನೆಲೆಗಳು ಮುಸ್ಲಿಮ್ ಮೂಲಭೂತವಾದಕ್ಕೆ ಪ್ರತಿಯಾಗಿ ನಿರ್ಮಾಣಗೊಂಡಿವೆಯೇ?

– ತೇಜ ಸಚಿನ್ ಪೂಜಾರಿ

ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ಮಂಗಳೂರಿನ ಮುಸ್ಲಿಮ್ ಲೇಖಕರ ಸಂಘದ ಕಾರ್‍ಯಕ್ರಮದಲ್ಲಿ teja-sachin-poojaryಭಾಗವಹಿಸಿದ ಹಿನ್ನೆಲೆಯಲ್ಲಿ ನವೀನ್ ಸೂರಿಂಜೆ ಹಾಗೂ ಇರ್ಷಾದ್ ಅವರು ಸಹಜವಾದ ಹಲವು ಪ್ರಶ್ನೆಗಳನ್ನು ವರ್ತಮಾನದ ವೇದಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ. ಅದಕ್ಕೆ ಸಾಕಷ್ಟೂ ಪ್ರತಿಕಿಯೆಗಳೂ ವ್ಯಕ್ತವಾಗಿವೆ. ಚರ್ಚೆಯೂ ನಡೆಯುತ್ತಿದೆ. (ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ.) ಆದರೆ “ಜಾಸ್ತಿ ಎಳೆದರೆ ಮೂಲ ಉದ್ದೇಶವೇ ಮರೆಯಾಗುವ ಸಾಧ್ಯತೆ ಇರುತ್ತದೆ” ಎಂಬ ಆತಂಕ ವ್ಯಕ್ತಪಡಿಸುತ್ತಲೇ ಅಕ್ಷತಾ ಹುಂಚದಕಟ್ಟೆ ಬರೆದ ಲೇಖನ ಮುಂದಕ್ಕೆ ಎಳೆಯಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ.

ಮಟ್ಟು ಅವರು ಪ್ರಸ್ತುತ ಕಾರ್‍ಯಕ್ರಮದಲ್ಲಿ ಭಾಗವಹಿಸಿದ್ದರ ಕುರಿತು ನವೀನ್ ವ್ಯಕ್ತಪಡಿಸಿದ್ದ ಆತಂಕಗಳನ್ನು ಅವರ ವೈಯಕ್ತಿಕ ಅಸಮಧಾನವೆಂಬಂತೆ ಅಕ್ಷತಾ ಹುಂಚದಕಟ್ಟೆ ಗ್ರಹಿಸಿದ್ದಾರೆ. ಅದು ತಪ್ಪು. ನವೀನ್ ಅಥವಾ ಇರ್ಷಾದ್ ಅಭಿವ್ಯಕ್ತಿಸಿದ ವಿಚಾರಗಳು ಕೇವಲ ಅವರದ್ದಷ್ಟೇ ಅಲ್ಲ; ಕೋಮುವಾದ ಹಾಗೂ ಮೂಲಭೂತವಾದದಂತಹ ಸಮಸ್ಯಗಳಿಗೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತಿರುವ ಕರಾವಳಿಯ ಹಲವು ಯುವ ಸಾಮಾಜಿಕ ಕಾರ್‍ಯಕರ್ತರ ಅಭಿಪ್ರಾಯವೂ ಆಗಿದೆ. ಸಮೂಹದ ಯೋಚನೆಗೆ ನವೀನ್ ಧ್ವನಿಯಾಗಿದ್ದಾರೆ ಆಷ್ಟೇ. ಹಾಗಿದ್ದೂ ನವೀನ್ ಒಬ್ಬರನ್ನೇ ಕಟಕಟೆಯಲ್ಲಿ ನಿಲ್ಲಿಸುವುದು ಬೌದ್ಧಿಕ ಅಪರಾಧ.

ಅಕ್ಷತಾ ಹುಂಚದಕಟ್ಟೆ ಅವರು ಮುಂದುವರಿದು, “ಒಬ್ರಿಗೆ ಸಾಕು ನಾನು ಹೇಳಿದ್ದೆಲ್ಲಾ ಹೇಳಿಯಾಗಿದೆ ಅನಿಸಿದರೆnaveen-shetty ಅದಕ್ಕೂ ಅವಕಾಶವಿರಬೇಕು ಮತ್ತು ಇನ್ನೊಬ್ರಿಗೆ ನಾನು ಹೇಳುವುದೇನೋ ಉಳಿದಿದೆ ಅನ್ನಿಸಿದರೆ ಅದಕ್ಕೂ ಅವಕಾಶವಿರಬೇಕು” ಅಂದಿದ್ದಾರೆ. ಹೇಳುವ ಹಾಗೂ ಹೇಳದಿರುವ ಸ್ವಾತಂತ್ರ್ಯ ಖಂಡಿತಾ ಎಲ್ಲರಿಗೂ ಅದೆ. ಆದರೆ ಅಕ್ಷತಾ ಹುಂಚದಕಟ್ಟೆ ಅವರ ವಿಚಾರ, ಮಾತು ಅಥವಾ ಮೌನದ ಅಭಿವ್ಯಕ್ತಿಗಳಿಗೆ ಪ್ರತಿಕ್ರಿಯಿಸುವ ಸ್ವಾತಂತ್ರ್ಯವನ್ನೇ ಪ್ರಶ್ನಿಸುವಂತಿದೆ. ನುಡಿದಾತ ಅಥವಾ ನುಡಿಯಲಿರುವಾತ ಬಯಸುತ್ತಾನೋ ಇಲ್ಲವೋ (ಅಥವಾ ಭಾಗಿಯಾಗುತ್ತಾನೋ ಇಲ್ಲವೋ) ಆತನ ಮಾತುಗಳು ಮುಂದಿನ ಚರ್ಚೆಗಳಿಗೆ ದಾರಿ ಮಾಡಿಕೊಡುತ್ತವೆ. ಅದು ಅನಿವಾರ್ಯ ಕೂಡಾ. ಇಲ್ಲದೆ ಹೋದಲಿ, ಕೃತಿಯೊಂದನ್ನು ರಚಿಸಿ “ನಾನು ಹೇಳಿದ್ದೆಲ್ಲಾ ಹೇಳಿಯಾಗಿದೆ”’ ಎಂಬಂತೆ ಸಮ್ಮನಿದ್ದು ಬಿಡುವ ಭೈರಪ್ಪ ಅವರನ್ನೇ ಮತ್ತೆ ಮತ್ತೆ ಎಳೆತಂದು ಅವರು ಎಂದೋ ’ಹೇಳಿಯಾದ’, (ಕವಲೋ ಅವರಣವೋ) ಮಾತುಗಳನ್ನೇ ಮತ್ತೆ ಮತ್ತೆ ಕೆದಕಿ ಚರ್ಚಿಸುವುದಾದರೂ ಯಾತಕ್ಕೆ? ಸಮೂಹದಲ್ಲಿ ನುಡಿ ಹಾಗೂ ನಡೆ ಇವೆರಡೂ ಕ್ರಿಯೆಗಳು ತಮಗೆ ಎದುರಾಗುವ ಅಷ್ಟೂ ಪ್ರತಿಕ್ರಿಯೆಗಳಿಗೆ ಗೌರವ ಸಲ್ಲಿಸುವುದು ಅ ಸಮೂಹದ ಆರೋಗ್ಯ ಹಾಗೂ ಜೀವಂತಿಕೆಗೆ ಅತ್ಯಂತ ಮೂಲಭೂತವಾಗಿರುತ್ತದೆ. ಚರ್ಚೆಯಲ್ಲಿ ಮಟ್ಟು ಅವರು ಭಾಗವಹಿಸುತ್ತಾರೋ ಇಲ್ಲವೋ ಇಲ್ಲಿ ಅದು ಅಪ್ರಸ್ತುತ. ಚರ್ಚೆ ಮಟ್ಟು ಸರ್ ಹಾಗೂ ನವೀನ್ ಇಬ್ಬರನ್ನೂ ಮೀರಿ ಬೆಳೆಯಬೇಕು. ಬೆಳೆಯುತ್ತದೆ ಕೂಡಾ.Mohammad Irshad

ನವೀನ್ ಪ್ರಸ್ತಾಪಿಸಿದ ವಿಚಾರ ಮಟ್ಟು ಅವರು ಮುಸ್ಲೀಮ್ ಲೇಖಕರ ಸಂಘದ ಕಾರ್‍ಯಕ್ರಮದಲ್ಲಿ ಭಾಗವಹಿಸಿದ್ದು ಸರಿಯೋ ತಪ್ಪೋ ಎಂಬ ತಕ್ಕಡಿ ನಿರ್ಣಯಕ್ಕೆ ಸೀಮಿತವಾದದ್ದಲ್ಲ. ಅದು ಕೋಮುವಾದ ಹಾಗೂ ಮೂಲಭೂತವಾದದಂತಹ ವಿಚಾರಗಳಲ್ಲಿ ಬೌದ್ಧಿಕ ವರ್ಗ ತೋರುತ್ತಿರುವ ನಡವಳಿಕೆಗೆ ಸಂಬಂದಿಸಿದ್ದಾಗಿದೆ. ಅಲ್ಲಿ ಕಂಡುಬರುತ್ತಿರುವ ತರತಮ ಪ್ರಜ್ಞೆಯ ಕುರಿತಾದದ್ದಾಗಿದೆ.

ಮೂಲಭೂತವಾದ ಹಾಗೂ ಕೋಮುವಾದ ಇಂದಿನ ಬಹುದೊಡ್ಡ ಸವಾಲು. ಧರ್ಮಗಳನ್ನಾಶ್ರಯಿಸಿ ಬೆಳೆಯುತ್ತಿರುವ ಮೂಲಭೂತವಾದ ಒಂದೆಡೆ ಅನ್ಯ ಕೋಮಿನ ಜೊತೆಗೆ ಹಿಂಸಾರೂಪದ ಬೀದಿ ಸಂಘರ್ಷಗಳಿಗೆ, ಇನ್ನೊಂದೆಡೆ ಆಂತರಿಕ ನೆಲೆಯಲ್ಲಿ ಧರ್ಮದೊಳಗೇ ಇರುವಂತಹ ದುರ್ಬಲರ ಪೀಡನೆಗೆ ಕಾರಣವಾಗಿದೆ. ಹಿಂದೂ ಹಾಗೂ ಮುಸ್ಲಿಮ್ ಇವೆರಡೂ ಧಾರ್ಮಿಕ ಗುಂಪುಗಳಲ್ಲಿ ಇಂತಹ ಮೂಲಭೂತವಾದಿ ಪ್ರವೃತ್ತಿಗಳು ಪ್ರಧಾನವಾಗಿ ಕಾಣಿಸಿಕೊಳ್ಳುತ್ತಿವೆ. ಕರಾವಳಿ ತೀರದಲ್ಲಂತೂ ಅದರ ವಿರಾಟ್ ರೂಪದ ಪ್ರದರ್ಶನ ಗಳಿಗೆಲೆಕ್ಕದಲ್ಲಿ ನಡೆಯುತ್ತಿದೆ. ಆಯಾ ಧರ್ಮಗಳಲ್ಲಿರುವ ನಿರ್ದಿಷ್ಟ ಗುಂಪುಗಳು ತಮ್ಮ ತಮ್ಮ ಮತಗಳಲ್ಲಿ ಮೂಲಭೂತವಾದಿ ಚಳವಳಿಗಳನ್ನು ಮುನ್ನಡೆಸುತ್ತಿರುವ ವಿಚಾರ ತೀರಾ ದುರ್ಬೀನು ಹಾಕಿಯೇ ನೋಡಬೇಕಾದ ಸತ್ಯವಲ್ಲ. ಅವುಗಳ ರಹಸ್ಯ ಕಾರ್ಯಸೂಚಿಗಳೂ ಕೂಡಾ ಅಷ್ಟೇ ಸ್ಪಷ್ಟ.

ಆದಾಗ್ಯೂ ಅಂತಹ ಮೂಲಭೂತವಾದೀ ಚಳವಳಿಯನ್ನು ಎದುರಿಸುವ, ಅದನ್ನು ಪ್ರಸರಿಸುತ್ತಿರುವ ಗುಂಪುಗಳನ್ನುdinesh-amin-mattu-2 ವಿರೋಧಿಸುವ ಕ್ರಮದಲ್ಲಿ ಮಾತ್ರವೇ ಬಹಳ ಸಮಸ್ಯೆಗಳಿವೆ. ಹಿಂದೂ ಮೂಲಭೂತವಾದದ ಜೊತೆಗೆ ನಿಂತು ಮುಸ್ಲಿಮ್ ಮೂಲಭೂತವಾದವನ್ನು ಖಂಡಿಸುವುದು ಎಷ್ಟರಮಟ್ಟಿಗೆ ಅಸಂಗತವೋ ಮುಸ್ಲಿಮ್ ಮೂಲಭೂತವಾದೀ ವೇದಿಕೆಯಲ್ಲಿ ಆಸೀನರಾಗಿ ಹಿಂದೂ ಕೋಮುವಾದವನ್ನು ಟೀಕಿಸುವುದು ಕೂಡಾ ಅಷ್ಟೇ ಅಸಹಜ. ಒಂದರ ಜೊತೆಗಿನ ಸಾಹಚರ್ಯ ಇನ್ನೊಂದರ ಕಡೆಗಿನ ಟೀಕೆಯನ್ನು ಅಪಮೌಲ್ಯಗೊಳಿಸುತ್ತದೆ. ಆದರೆ ದುರಾದೃಷ್ಟವಶಾತ್ ಇಂತಹ ಬೇಜವಾಬ್ದಾರಿ ನಡವಳಿಕೆಗಳು ನಮ್ಮ ಪ್ರಗತಿಪರ ವರ್ಗದಲ್ಲಿ ಥರೇವಾರಿ ಕಾಣಿಸಿಕೊಳ್ಳುತ್ತಿವೆ. ನವೀನ್ ಅಥವಾ ಇರ್ಷಾದ್ ಪ್ರತಿನಿಧಿಸುವ ಆತಂಕ ಇದೇ ಆಗಿದೆ.

ಹಿಂದೂ ಮೂಲಭೂತವಾದವನ್ನು ತಿರಸ್ಕರಿಸಲು ಬೌದ್ಧಿಕ ವಲಯ ಸ್ಪಷ್ಟವಾದ ಒಂದು ವೇದಿಕೆಯನ್ನು ಈಗಾಗಲೇ ಸಿದ್ಧಗೊಳಿಸಿದೆ. ಅದರ ಅಷ್ಟೂ ಆಯಾಮಗಳನ್ನು ಗುರುತಿಸಿ ಅದಕ್ಕೆ ಸೈದ್ಧಾಂತಿಕ ವಿರೋಧದ ನೆಲೆಗಳನ್ನು ಗಟ್ಟಿಗೊಳಿಸಿದೆ. ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಆಚರಣೆ ಹೀಗೇ ಎಲ್ಲೆಲ್ಲಿ ಮೂಲಭೂತವಾದದ ಸುಳಿವು ಕಾಣಿಸಿಕೊಳ್ಳುತ್ತಿದೆಯೋ ಅಲ್ಲೆಲ್ಲಾ ಅದನ್ನು ಖಂಡಿಸುವ ಕ್ರಿಯೆಗಳು akshatha-hunchadakatteಅಟೋಮ್ಯಾಟಿಕ್ ಅನ್ನಿಸುವಂತೆ ನಡೆಯುತ್ತಿವೆ. ’ಸಂಘ ಪರಿವಾರ’ ಪರಿಕಲ್ಪನೆಯ ಅಡಿಯಲ್ಲಿ ಹಿಂದೂ ಮೂಲಭೂತವಾದವನ್ನು ಸಮಗ್ರವಾಗಿ ಹಿಡಿದಿಡುವ, ಅದಕ್ಕೆ ಪ್ರತಿಕ್ರಿಯಿಸುವ ನೆಲೆಯನ್ನು ಬುದ್ಧಿಜೀವಿ ವರ್ಗ ಸಾಧಿಸಿದೆ. ಇದು ತುರ್ತು ಅನಿವಾರ್ಯವಾಗಿದ್ದ ಬೆಳವಣಿಗೆ. ಅದರಲ್ಲಿ ನಮ್ಮ ಪ್ರಗತಿಪರ ಗುಂಪುಗಳು ಯಶಸ್ಸು ಕಂಡಿವೆ.

ಆದರೆ ಇಂತಹದ್ದೇ ವಿರೋಧದ ನೆಲೆಗಳು ಮುಸ್ಲಿಮ್ ಮೂಲಭೂತವಾದಕ್ಕೆ ಪ್ರತಿಯಾಗಿ ನಿರ್ಮಾಣಗೊಂಡಿದೆಯೇ? ಸಮಸ್ಯೆ ಇರುವುದು ಇಲ್ಲೇ. ನಮ್ಮ ಬೌದ್ಧಿಕ ವರ್ಗ ಮುಸ್ಲಿಮ್ ಸಮುದಾಯದಲ್ಲಿ ಮೂಲಭೂತದದ ಬೀಜಗಳನ್ನು ಬಿತ್ತುತ್ತಿರುವ ಗುಂಪುಗಳು ಅಥವಾ ಸಂಘಟನೆಗಳ ಬಗ್ಗೆ ಸ್ಪಷ್ಟತೆಯನ್ನು ಇನ್ನೂ ಹೊಂದಿಲ್ಲ. ಅದು ಮುಸ್ಲಿಮ್ ಮೂಲಭೂತವಾದವನ್ನು ಪರಸ್ಪರ ತಿಳಿಯದ ಯಾರೋ ವ್ಯಕ್ತಿಗಳು ಅಥವಾ ಅದೆಲ್ಲಿಂದಲೋ ಬಂದ ಅಲೆಯೊಂದು ಸೃಷ್ಟಿಸಿದ ವಿದ್ಯಮಾನವೆಂಬಂತೆ ಗ್ರಹಿಸುತ್ತಿದೆ. ಹೀಗಾಗಿ ಮೂಲಭೂತವಾದದ ಪ್ರಸರಣಕ್ಕೆ ಸಂಘಟನೆಗಳ ಮಟ್ಟದಲ್ಲಿ ನಡೆಯುತ್ತಿರುವ ವ್ಯವಸ್ಥಿತವಾದ ಪಿತೂರಿಗಳನ್ನು ಒಪ್ಪುವ ಮನಸ್ಥಿತಿಯಲ್ಲಿ ಅದು ಇಲ್ಲ.

ಸಾಮಾನ್ಯವಾಗಿ ಸಾಂಪ್ರದಾಯಿಕ ಸ್ವರೂಪದ ಸಮಾಜಗಳಲ್ಲಿ ಅಲ್ಪಸಂಖ್ಯಾತ ಗುಂಪುಗಳ ಮೂಲಭೂತ ಆಚರಣೆಗಳಿಗೆಯೇ ಹಲವು ಅಡ್ಡಿಗಳಿರುತ್ತವೆ. ಇನ್ನೊಂದು ಸಾಂಸ್ಕೃತಿಕ ಅಸ್ಮಿತೆಯ ಬಗೆಗಿನ ಅರಿವಿನ ಕೊರತೆ ಅಥವಾ ಪುರೋಗಾಮಿ ಆಧುನಿಕ ವಿಚಾರಧಾರೆಗಳ ಪ್ರಸರಣದ ಕೊರತೆ ಅಂತಹ ಅಡ್ಡಿಗಳನ್ನು ಸೃಷ್ಟಿಸುತ್ತವೆ. ಇಂತಹ ಸನ್ನಿವೇಶದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಸಾಧನೆಯ ನಿಟ್ಟಿನಲ್ಲಿ ಆಯಾ ಸಮಾಜದ ಪ್ರಗತಿಪರ ವರ್ಗಗಳು ಅಲ್ಪಸಂಖ್ಯಾತ ಸಮುದಾಯಗಳೊಳಗಿನ ಗುಂಪುಗಳ ಜೊತೆಗೆ ನಿಲ್ಲುವುದು ಅವಶ್ಯವಾಗಿರುತ್ತದೆ. ಹಾಗೇ ಬೆಂಬಲ ಪಡೆದುಕೊಳ್ಳುವ ಗುಂಪುಗಳು ಬಹುಮಟ್ಟಿಗೆ ಸಂಪ್ರದಾಯ ಶರಣ ವರ್ಗಗಳೇ ಆಗಿರುತ್ತವೆ. jamate-mangaloreಬೌದ್ಧಿಕ ವರ್ಗದ ನೆಲೆಯಲ್ಲಿ ಇದು ಆರಂಭಿಕ ಸ್ವರೂಪದ ಕ್ರಿಯಾಶೀಲತೆಯಾಗಿರುತ್ತದೆ. ಹಾಗೆಯೇ ತರುವಾಯದ ಹಂತದಲ್ಲಿ ಸಮಾಜದ ಬುದ್ಧಿಜೀವಿ ವಲಯ ಅಲ್ಪಸಂಖ್ಯಾತ ಸಮುದಾಯಗಳ ಪ್ರಗತಿಪರ ಗುಂಪುಗಳ ಜೊತೆಗೆ ಗುರುತಿಸಿಕೊಳ್ಳುವುದು ಅದರ ಆರಂಭಿಕ ಸ್ವರೂಪದ ಕ್ರಿಯಾಶೀಲತೆಯ ತಾತ್ವಿಕ ಮುಂದುವರಿಕೆಯಾಗಿರುತ್ತದೆ. ಇಲ್ಲದೆ ಹೋದಲ್ಲಿ ಆರಂಭದಲ್ಲಿ ಬೆಂಬಲ ಪಡೆದುಕೊಳ್ಳುವ ಸಂಪ್ರದಾಯ ಶರಣ ಗುಂಪುಗಳು ಕ್ರಮೇಣ ಒಳಗೂ ಹೊರಗೂ ಘಾತಕವಾಗಿ ಬೆಳೆಯುತ್ತವೆ.

ಆದರೆ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಂಬಂದಿಸಿದಂತೆ ಅಂತಹ ಎರಡನೆಯ ಹಂತದ ಕ್ರಿಯಾಶೀಲತೆಯು ನಮ್ಮ ಬೌದ್ಧಿಕ ವಲಯದಲ್ಲಿ ಸಹಜವಾಗಿ ಕಾಣಿಸಿಕೊಳ್ಳುತ್ತಿದೆಯೇ? ಇಲ್ಲ ಅನ್ನುವುದೇ ನಮ್ಮ ಸಾಮಾಜಿಕ ಸಂದರ್ಭದ ದೊಡ್ಡ ದುರ್ದೈವ. ಹೀಗಾಗಿ ಮುಸ್ಲಿಮ್ ಮೂಲಭೂತವಾದೀ ಗುಂಪುಗಳ ಜೊತೆಗೆ ಅದು ಮತ್ತೆ ಮತ್ತೆ ಅಸೋಸಿಯೇಟ್ ಆಗುತ್ತಿದೆ. ಒಂದು ಗುಂಪಿನ ಮೂಲಭೂತವಾದವನ್ನು ಅಪ್ಪಿಕೊಂಡು ಇನ್ನೊಂದು ಗುಂಪಿನ ಮೂಲಭೂತವಾದವನ್ನು ರಿಜೆಕ್ಟ್ ಮಾಡುವ ಅತಿರೇಕದ ನಡೆಗಳನ್ನು ಅದು ಅನುಸರಿಸುತ್ತಿದೆ.

ಇಂತಹ ದ್ವಂಧ್ವ ನಿಲುವುಗಳು ತಳಮಟ್ಟದಲ್ಲಿ ಕ್ರಿಯಾಶೀಲವಾಗಿರುವ ಕಾರ್ಯಕರ್ತರನ್ನು ಇಕ್ಕಟ್ಟಿಗೆ ಸಿಲುಕಿಸುತ್ತವೆ. ಬಹುಸಂಖ್ಯಾತ ಸಮಾಜದ ಮೂಲಭೂತವಾದವನ್ನು ಶ್ರೀಸಾಮಾನ್ಯರ ಮಟ್ಟದಲ್ಲಿ ಎದುರಿಸಲು ಪ್ರಯತ್ನಿಸುವ ಅವರು ಜನರ ನಡುವೆ ವಿಶ್ವಾಸದ ಕೊರತೆಯನ್ನು ಅನುಭವಿಸುತ್ತಾರೆ. ಹೀಗೆ, ವಿಚಾರವಾದಿ, ಪ್ರಗತಿಪರ, ಸೆಕ್ಯುಲರಿಸ್ಟ್ ಅಥವಾ ಬುದ್ಧಿಜೀವಿ ಮೊದಲಾದ ಐಡೆಂಟಿಟಿಗಳು ಗೌರವ ಕಳೆದುಕೊಳ್ಳುವಲ್ಲಿ, ಮುಲಭೂತವಾದದ ಸ್ಥಾನದಲ್ಲಿ ಅವುಗಳೇ ಟೀಕೆಗಳಿಗೆ ಗುರಿಯಾಗುತ್ತಿರುವುದರಲ್ಲಿ ಇತರೆ ಅಂಶಗಳ ಜೊತೆಗೆ ನಮ್ಮ ಬೌದ್ಧಿಕ ವಲಯದ ಪಾತ್ರವೂ ಇದೆ.

ನವೀನ್ ಹಾಗೂ ಅವರ ಸಂಗಾತಿಗಳು ಪ್ರಸ್ತಾಪಿಸುತ್ತಿರುವ ವಿಚಾರ, ಎದುರಿಸುತ್ತಿರುವ ಸಮಸ್ಯೆ ಇದೇ ಆಗಿದೆ. ಮೂಲಭೂತವಾದದಲ್ಲಿ ಒಳ್ಳೆಯ ಅಥವಾ ಕೆಟ್ಟ ಮೂಲಭೂತವಾದಗಳು, ಅಪಾಯಕಾರಿ ಅಥವಾ ನಿರುಪದ್ರವಿ, ಜಸ್ಟಿಫೈಡ್ ಅಥವಾ ಅನ್ ಜಸ್ಟಿಫೈಡ್ ಮೂಲಭೂತವಾದಗಳು ಹೀಗೆ ವಿಂಗಡನೆ ಮಾಡುವಂತದ್ದು ನಿಜಕ್ಕೂ ಅಘಾತಕಾರಿ ಬೆಳವಣಿಗೆ. ಅಷ್ಟೂ ಮೂಲಭೂತವಾದಿ ಚಳುವಳಿಗಳನ್ನು ಏಕಪ್ರಕಾರದ ಅಸ್ಖಲಿತ ತತ್ವ ನಿಷ್ಠೆಯಿಂದ ಎದುರಿಸಬೇಕಾಗಿದೆ. ಇದು ಸದ್ಯದ ಅನಿವಾರ್ಯತೆ ಕೂಡಾ.

ಮೋದಿ ಹಾಗೂ ಕೇಜ್ರಿವಾಲ್ : ಕೆಲವು ವಿಚಾರಗಳು

– ತೇಜ ಸಚಿನ್ ಪೂಜಾರಿ

ಮಹಾಚುನಾವಣೆ ಸಮೀಪಿಸುತ್ತಿರುವಂತೆಯೇ ಭಾರತದ ರಾಜಕೀಯ ನಕ್ಷೆಯಲ್ಲಿ ಹೊಸ ತಲ್ಲಣಗಳು ಸೃಷ್ಠಿಯಾಗುತ್ತಿವೆ. ಸಾಲು ಸಾಲು ಭೃಷ್ಠಾಚಾರ ಪ್ರಕರಣಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷದ ಜನಪ್ರಿಯತೆ ದಿನೇ ದಿನೇ ಪಾತಾಳಕ್ಕಿಳಿಯುತ್ತಿದ್ದರೆ ಬಿಜೆಪಿ ಮೋದಿ ಮಾಯೆಯಿಂದ ಹೊಸ ಕಸುವು ಪಡೆದುಕೊಳ್ಳುತ್ತಿದೆ. ಇವೆರಡರ ನಡುವಣದ ಚುನಾವಣಾ ಸ್ಪರ್ಧೆ ತೀವ್ರತೆಯನ್ನು ಪಡೆಯುತ್ತಿರುವ ಬಿರುಸಿನ ಸಂಧರ್ಭದಲ್ಲೇ ಆಮ್ ಆದ್ಮಿ ಪಕ್ಷದ ಉದಯವಾಗಿದೆ. kejriwal-modiಆಪ್ ದೆಹಲಿಯಲ್ಲಿ ಪಡೆದ ಅನೀರಿಕ್ಷಿತ ಜಯ, ತದನಂತರದಲ್ಲಿ ಅದರ ಚಟುವಟಿಕೆಗಳ ಸ್ವರೂಪ ಮತ್ತು ಭಾರತದ ರಾಜಕೀಯ ಪಡಸಾಲೆಯಲ್ಲಿ ಅದು ಪಡೆದುಕೊಳ್ಳುತ್ತಿರುವ ಬೆಂಬಲ ಸಹಜವಾಗಿಯೇ ಕುತೂಹಲವನ್ನು ಸೃಷ್ಠಿಸಿದೆ.

ಮೋದಿ ಹಾಗೂ ಕೇಜ್ರಿವಾಲ್ ಸದ್ಯದ ಅಷ್ಟೂ ರಾಜಕೀಯ ಚರ್ಚೆಗಳ ಪ್ರಧಾನ ಆಕರ್ಷಣೆಯಾಗಿದ್ದಾರೆ. ಕಾಂಗ್ರೆಸ್ ಆಡಳಿತೆಯ ಚಾರಿತ್ರಿಕ ವೈಫಲ್ಯ ಇವರೀರ್ವರ ಉತ್ಥಾನಕ್ಕೆ ಭರ್ಜರಿ ವೇದಿಕೆ ಒದಗಿಸಿದೆ. ಇವರಿಬ್ಬರ ಏಳಿಗೆಯ ಕುರಿತಂತೆ ಹಲವು ಸಾಮಾನ್ಯೀಕೃತ ವಿಶ್ಲೇಷಣೆಗಳು ರಾಜಕೀಯ ಜಿಜ್ಞಾಸೆಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಕೋಮುವಾದ ಹಾಗೂ ಭ್ರಷ್ಟಾಚಾರ ಕ್ರಮವಾಗಿ ಮೋದಿ ಮತ್ತು ಕೇಜ್ರಿವಾಲ್ ಅವರ ಬಗೆಗಿನ ಚರ್ಚೆಯ ಬಹು ಜನಪ್ರಿಯ ನೆಲೆಗಳಾಗಿವೆ. ಆದರೆ ಇವರಿಬ್ಬರು ಪ್ರತಿನಿಧಿಸುವ ವಿದ್ಯಮಾನಗಳ ಹುಟ್ಟು ಮತ್ತು ಯಶಸ್ವಿ ಮುನ್ನಡೆಯ ಪ್ರಕ್ರಿಯೆಯನ್ನು ಸ್ಥೂಲವಾದ ಚೌಕಟ್ಟಿನಲ್ಲಿ ವಿಶ್ಲೇಷಿಸುವುದು ಅಗತ್ಯವಾಗಿದೆ.

***

ವರ್ತಮಾನದ ಭಾರತ ಕಳೆದೆರಡು ದಶಕಗಳ ಪೂರ್ವದ ದೇಶಕ್ಕಿಂತ ಬಹಳ ಭಿನ್ನವಾಗಿದೆ. ಆ ಬದಲಾವಣೆಯ ಹಿಂದಿರುವಂತದ್ದು ತೊಂಭತ್ತರ ದಶಕದ ಆರ್ಥಿಕ ಸುಧಾರಣೆಗಳು. ಅವು ಸ್ವತಂತ್ರ ಭಾರತದ ಆರ್ಥಿಕ ಪರಂಪರೆಯಲ್ಲಿ ಹೊಸ ರಹದಾರಿಯನ್ನು ಸೃಷ್ಟಿಸಿದ್ದು ನಮಗೆಲ್ಲಾ ತಿಳಿದಿದೆ. ಆರ್ಥಿಕ ಸುಧಾರಣೆಗಳ ಮೂರ್ತರೂಪದ ಫಲಶ್ರುತಿಗಳು ಕಳೆದ ದಶಕದಿಂದೀಚೆಗೆ ಭಾರತದ ಆರ್ಥಿಕ ನಡಾವಳಿಯಲ್ಲಿ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿವೆ. ಒಟ್ಟು ದೇಶಿಯ ಉತ್ಪನ್ನದ ವೃದ್ಧಿ ದರದಲ್ಲಿ ಹೆಚ್ಚಳ, ಕಾರ್ಪೋರೇಟ್ ವಲಯದ ಸಂವರ್ಧನೆ, ಹಿನ್ನೆಲೆಗೆ ಸರಿಯುತ್ತಿರುವ ಕೃಷಿ ವಲಯ, ಸೇವಾ ಕ್ಷೇತ್ರದ ಅಭೂತಪೂರ್ವ ಮುನ್ನಡೆ, ವಿಸ್ತಾರ ಪಡೆದುಕೊಳ್ಳುತ್ತಿರುವ ನಗರೀಕರಣ, ಉದ್ಯೋಗ ಸೃಷ್ಟಿಯಲ್ಲಿ ವೃದ್ಧಿ ಹಾಗೂ ವೈವಿಧ್ಯತೆ ಇವೇ ಮೊದಲಾದ ಬೆಳವಣಿಗೆಗಳು ದೇಶದಲ್ಲಿ ಹೊಸದಾದ ಆರ್ಥಿಕ ಸಂರಚನೆ ಬಲಗೊಳ್ಳುತ್ತಿರುವುದನ್ನು ಸೂಚಿಸುತ್ತಿವೆ.

ಆರ್ಥಿಕ ಸುಧಾರಣೆಗಳು ಮತ್ತು ಅದರ ಪರಿಣಾಮಗಳು ಹಲವು ನೆಲೆಗಳಲ್ಲಿ ಭಾರತದ ಜನಜೀವನವನ್ನು ಪ್ರಭಾವಿಸುತ್ತಿವೆ. ಅರ್ಥಿಕ ತಜ್ಞರು ಸ್ವಾತಂತ್ರ್ಯೋತ್ತರ ಭಾರತದ ಆರ್ಥಿಕತೆಯ ಸ್ವರೂಪವನ್ನು ವಿಶ್ಲೇಷಿಸಲು ಆನೆಯ ರೂಪಕ ಬಳಸುತ್ತಿದ್ದರು. ಆನೆ ಗಾತ್ರದಲ್ಲಷ್ಟೇ ಬೃಹತ್ತಾದ ಆದರೆ ನಿಧಾನಗತಿಯಲ್ಲಿ ಚಲಿಸುವ ಮತ್ತು ವೈಬ್ರೆಂಟ್ ಅಲ್ಲದ ಅರ್ಥವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ. ಆದರೆ ಇಪ್ಪತ್ತೊಂದನೆಯ ಶತಮಾನದ ಮೊದಲ ದಶಕದ ಅಂತ್ಯದ ವೇಳೆಗೆ ಭಾರತದ ಆರ್ಥಿಕ ಸಂರಚನೆಯನ್ನು ಕುರಿತಾದ ಸಾಹಿತ್ಯದಲ್ಲಿ ಆನೆಯ ರೂಪಕದ ಸ್ಥಾನದಲ್ಲಿ ವ್ಯಾಘ್ರ ಪ್ರತಿಷ್ಠಾಪನೆಯಾಗಿದೆ. ಹುಲಿ ನಾಗಾಲೋಟದ ವೇಗವನ್ನಷ್ಟೇ ಪ್ರತಿನಿಧಿಸುವುದಲ್ಲದೆ ಆನೆಯ ಸಸ್ಯಹಾರತ್ವಕ್ಕೆ ಪ್ರತಿಯಾಗಿ ಎದುರಾಳಿಯನ್ನು ಮಣಿಸಿ ತನ್ನ ತಾನು ಸ್ಥಾಪಿಸಿಕೊಳ್ಳುವ ಕಿಲ್ಲರ್ ಇನ್‌ಸ್ಟಿಂಕ್ಟ್ ಅನ್ನೂ ಸಂಕೇತಿಸುತ್ತದೆ. ಹೀಗೆ ಆದಾಯದಲ್ಲಿ ಹೆಚ್ಚಳ ಅಥವಾ india-middle-classಆಯ್ಕೆಗಳಲ್ಲಿ ವೈವಿಧ್ಯತೆ ಮೊದಲಾದ ಭೌತಿಕ ಬದಲಾವಣೆಗಳು ಮಾತ್ರವಲ್ಲದೇ ವ್ಯಕ್ತಿ ಹಾಗೂ ಸಮಾಜದ ಮನೋಧರ್ಮದಲ್ಲೂ ಹಲವು ಚಲನಶೀಲ ಅಂಶಗಳು ಕಾಣಿಸಿಕೊಳ್ಳುತಿವೆ. ಒಂದೆಡೆ ಅಷ್ಟೂ ಬೆಳವಣಿಗೆಗಳು ವ್ಯಕ್ತಿಯನ್ನು ಬಲಪಡಿಸಿವೆ. ಸಹಜವಾಗಿಯೇ ವ್ಯಕ್ತಿಯ ಅಸ್ತಿತ್ವದ ನಿರ್ಧಾರಕ ಅಂಶಗಳಾದ ಆತನ ಅವಶ್ಯಕತೆ, ನಿರೀಕ್ಷೆ ಮತ್ತು ಬೇಡಿಕೆಗಳಲ್ಲಿ ಸ್ಥಿತ್ಯಂತರ ಸ್ವರೂಪಿ ಬದಲಾವಣೆಗಳು ಕಂಡುಬರುತ್ತಿವೆ. ಜೊತೆಗೆ ಆತನನ್ನು ಸಾಮಾಜಿಕವಾಗಿ ಕ್ರಿಯಾಶೀಲವಾಗಿಸುವ ಸಂವಹನದ ಮಾಧ್ಯಮಗಳು ಕೂಡಾ ಕ್ರಾಂತಿಕಾರಿ ನೆಲೆಯಲ್ಲಿ ಸುಧಾರಣೆ ಕಂಡಿವೆ. ಇವಿಷ್ಟೂ ಸಂಗತಿಗಳು ವ್ಯವಸ್ಥೆಯ ಜೊತೆಗೆ ವ್ಯಕ್ತಿಯ ಅನುಸಂಧಾನದ ಸ್ವರೂಪವನ್ನು ನಿರ್ಧರಿಸುವ ಮಹತ್ವದ ಅಂಶಗಳು ಎಂಬ ವಿಚಾರ ಇಲ್ಲಿ ಉಲ್ಲೇಖನೀಯ. ಹೀಗೆ ಆರ್ಥಿಕ ಸುಧಾರಣೆಗಳ ಫಲವಾಗಿ ವ್ಯಕ್ತಿಯ ಅಸ್ತಿತ್ವ ಹಾಗೂ ಬೌದ್ಧಿಕತೆಯಲ್ಲಿ ಅಭೂತಪೂರ್ವ ಪಲ್ಲಟಗಳು ದಾಖಲಾಗಿವೆ. ಆದರೆ ವ್ಯವಸ್ಥೆ ಮಾತ್ರವೇ ಅದರ ಜೊತೆಗೆ ವ್ಯವಹರಿಸುವ ವ್ಯಕ್ತಿಯ ಚಲನೆಗೆ ಪೂರಕವಾಗಿ ಬದಲಾಗದೆ ಇನ್ನೂ ಅದೇ ಸಂಪ್ರದಾಯಿಕ ಸ್ವರೂಪದಲ್ಲೇ ಉಳಿದುಕೊಂಡಿದೆ. ಇದು ಒಂದೆಡೆ ವಿಶ್ವಾಸಾರ್ಹತೆಯ ಕೊರತೆ ಇನ್ನೊಂದೆಡೆ ಹಿತಾಸಕ್ತಿಗಳ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.

ಸಮಾಜದಲ್ಲಿ ಸ್ಥಿತ್ಯಂತರಕ್ಕೆ ಕಾರಣವಾಗುವ ಆರ್ಥಿಕ ಸಂಬಂಧಗಳೂ ಕೂಡಾ ಸುಧಾರಣೋತ್ತರ ಯುಗದಲ್ಲಿ ಮಾರ್ಪಾಡಿಗೆ ಒಳಗಾಗಿವೆ. ಸಾಂಪ್ರದಾಯಿಕ ಬಂಡವಾಳವಾದದ ಚೌಕಟ್ಟಿನಲ್ಲೇ ಆದರೆ ಫ್ಯಾಕ್ಟರಿ ಸಿಸ್ಟಂಗಿಂತ ಭಿನ್ನ ನೆಲೆಯ ಸೇವಾ ಶರ್ತಗಳು ಹಾಗೂ ಪರಿಸ್ಥಿತಿಗಳುಳ್ಳ, ಒತ್ತಡ ಸೃಷ್ಟಿಗೆ ಅವಕಾಶವೇ ಇಲ್ಲದಂತಹ ಮತ್ತು ಅನಿವಾರ್ಯವೂ ಅಲ್ಲವೆಂಬಂತೆ ಮೇಲುನೋಟಕ್ಕೆ ಅನ್ನಿಸುವ ಆರ್ಥಿಕ ಸಂಬಂಧಗಳು ಸ್ಟ್ಯಾಟೆಸ್ಕೋ ಸ್ವರೂಪಿ ವಾತಾವರಣದ ನಿರ್ಮಾಣಕ್ಕೆ ಕಾರಣವಾಗಿದೆ. ಉದ್ಯೋಗದ ಶರ್ತಗಳು ಹಾಗೂ ಸೌಲಭ್ಯಗಳಿಗೆ ಸಂಬಂಧಿಸಿದ ಚರ್ಚೆಗಳನ್ನು ಕಾರ್ಪೋರೇಷನ್ ನೇರವಾಗಿ ಉದ್ಯೋಗಿಯ ಜತೆಗೇ ನಡೆಸುವುದರಿಂದ ಯೂನಿಯನ್‌ಗಳಂತಹ ಸಾಮೂಹಿಕ ಚಟುವಟಿಗಳಿಗೆ ಅವಕಾಶಗಳು ಕೂಡಾ ಅಲ್ಲಿ ಇರುವುದಿಲ್ಲ. ಹೀಗಾಗಿ ಅಂತಹ ಒಂದು ಸಂಚಿತ ಎನರ್ಜಿ ರಾಜಕಾರಣ ವ್ಯವಸ್ಥೆಯ ಕಡೆಗೆ ನಿರ್ದೇಶಿತವಾಗಿದೆ.

ಆರ್ಥಿಕ ಸುಧಾರಣೆಗಳು ಕಾರಣಿಸಿದ ಅಷ್ಟೂ ಬದಲಾವಣೆಗಳು ಬಹುಮಟ್ಟಿಗೆ ನಗರಗಳಿಗಷ್ಟೆ ಸೀಮಿವಾಗಿದೆ. ಆದ್ದರಿಂದಲೇ ಮೋದಿ ಆಥವಾ ಕೇಜ್ರಿವಾಲ್ ಪ್ರತಿನಿಧಿಸುವ ವಿದ್ಯಮಾನಗಳು ಬಹುತೇಕ ನಗರಗಳಿಗೆ ಸೀಮಿತವಾಗಿವೆ. ಹೀಗಾಗಿ ವಿವಿಧ ನೆಲೆಯ ಹಲವು ಸುಧಾರಣೆಗಳಿಗೆ ಒತ್ತಾಯಿಸುತ್ತಿರುವ ಕೇಜ್ರಿವಾಲ್ ಅವರಲ್ಲಿ ಕೂಡಾ ಜಾತಿಪದ್ಧತಿಯಂತಹ ಸಾಮಾಜಿಕ ವಾಸ್ತವಗಳು ಮತ್ತು ಗ್ರಾಮೀಣ ಭಾರತದ ಇತರೆ ಸಮಸ್ಯೆಗಳ ಕುರಿತಂತೆ ಯಾವುದೇ ಪ್ರಗತಿಪರ ನಿಲುವುಗಳು ಕಾಣಿಸುವುದಿಲ್ಲ.

ಆರ್ಥಿಕ ಸುಧಾರಣೆಗಳು ಮಧ್ಯಮ ವರ್ಗದ ಸ್ವರೂಪದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗಿವೆ. ಅವು ಮಧ್ಯಮ ವರ್ಗದ ಗಾತ್ರವನ್ನು ಬಹುವಾಗಿ ವಿಸ್ತರಿಸಿದ್ದು ಮಾತ್ರವಲ್ಲದೆ ಅದಕ್ಕೆ ಹೊಸ ಕಸುವನ್ನೂ ನೀಡಿದೆ. ಸಾಕ್ಷರತೆ ಹಾಗೂ ತಕ್ಕ ಮಟ್ಟಿನ ಆರ್ಥಿಕ ದೃಢತೆ ಇವೆರಡನ್ನೂ ಸಾಧಿಸಿರುವ ಮಧ್ಯಮ ವರ್ಗ middleclass-indiaತನ್ನ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ರಾಜಕೀಯವಾಗಿ ಕ್ರಿಯಾಶೀಲವಾಗುವ ಪ್ರಯತ್ನಗಳನ್ನು ನಡೆಸುತ್ತಲೇ ಇದೆ. ಸಾಂಪ್ರದಾಯಿಕ ರಾಜಕೀಯ ವ್ಯವಸ್ಥೆಯ ಜೊತೆ ಮುಖಾಮುಖಿಯಾಗುತ್ತಾ ಅಲ್ಲಿಯ ಉತ್ತರದಾಯಿತ್ವದ ಕೊರತೆ, ವಿಳಂಬ ಧೋರಣೆ ಹಾಗೂ ಅದಕ್ಷತೆಯ ಪ್ರವೃತ್ತಿಗಳು ತನ್ನ ನಿರೀಕ್ಷೆಗಳ ಸಾಧನೆಗೆ ಅಡ್ಡಿಯಾಗುತ್ತಿವೆ ಎಂದು ಮನಗಾಣುತ್ತಿದೆ. ಅದು ವ್ಯವಸ್ಥೆಯ ಲೋಪದೋಷಗಳು ಮಾತ್ರವಲ್ಲದೆ ಸಾಂಪ್ರದಾಯಿಕ ಸ್ವರೂಪದ ಸರಕಾರಿ ಕಾರ್‍ಯತಂತ್ರಗಳು ಮತ್ತು ನೀತಿ ರೂಪಣಾ ವ್ಯವಸ್ಥೆಗಳನ್ನು ಕೂಡಾ ಸಂಶಯದಿಂದಲೇ ನೋಡುತ್ತಿದೆ. ಪಾರ್ಲಿಮೆಂಟ್ ಮೊದಲಾದ ಶಾಸನೆ ಸಭೆಗಳ ನಿಂದನೆ ಅಥವಾ ಬಡವರಿಗೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸುವ ಸರಕಾರದ ಕಾರ್‍ಯಕ್ರಮಗಳಿಗೆ ಒದಗಿ ಬರುತ್ತಿರುವ ಟೀಕೆಗಳು ಇಂತಹದ್ದೇ ಪೃವೃತ್ತಿಗಳನ್ನು ಸಂಕೇತಿಸುತ್ತಿವೆ. ಹೀಗಾಗಿಯೇ ಮಧ್ಯಮ ಮರ್ಗ ತನ್ನ ತೆರಿಗೆಯ ಹಣ ಒಂದೋ ಭ್ರಷ್ಟ ವ್ಯವಸ್ಥೆಯ ಬಕಾಸುರ ಹಸಿವಿಗೆ ಇಲ್ಲವೆ ಅನ್ನ ವಿದ್ಯುತ್ ಮೊದಲಾದ ಆರ್ಥಿಕಾಂಶಗಳನ್ನೇ ಉಚಿತವಾಗಿ ನೀಡುವ ಪ್ರಭುತ್ವದ ಅನಾಹುತಕಾರಿ ಔದಾರ್ಯದಲ್ಲಿ ಪೋಲಾಗುತ್ತಿದೆ ಎಂದು ತಿಳಿಯುತ್ತಿದೆ. ಪ್ರಸ್ತುತ ಆಡಳಿತಾತ್ಮಕ ವ್ಯವಸ್ಥೆಯ ಅಸಂವೇದನಾಶಿಲತೆ ಮಧ್ಯಮ ವರ್ಗದ ಅಸಹನೆಯನ್ನು ಇನ್ನಷ್ಟು ಹೆಚ್ಚಿಸಿದೆ. ಅದು ವ್ಯವಸ್ಥೆಯ ನಡೆಗಳನ್ನು ಅನುಮಾನಿಸುತ್ತಲೇ ತುರ್ತು ಸುಧಾರಣೆಗಳಿಗೆ ನಿರಂತರ ಬೇಡಿಕೆಗಳನ್ನು ಸಲ್ಲಿಸುತ್ತಿದೆ. ಹೀಗಾಗಿ ಬದಲಾವಣೆಯೆಡೆಗೆ ಚಡಪಡಿಕೆ ಮತ್ತು ಅತಿಯಾದ ವಿಚಕ್ಷಣೆಯ ಗುಣಗಳು ಅದರ ದೈನಿಕ ನಡವಳಿಕೆಯಲ್ಲಿ ನುಸುಳಿಕೊಂಡಿವೆ. ಸಹಜವಾಗಿಯೇ ಅಂತಹದ್ದೇ ಗುಣಾಂಶಗಳ ಮೂರ್ತರೂಪ, ವಿಜಿಲೆನ್ಸಿಯನ್ನೇ ಗೀಳಿನಂತೆ ಅನುಸರಿಸುವ ಕೊಂಚ ಅಶಾಂತ ಅನ್ನಿಸುವಂತಹ ವ್ಯಕ್ತಿತ್ವವುಳ್ಳ ಹಠವಾದಿ ಕೇಜ್ರಿವಾಲ್ ಅದಕ್ಕೆ ಬಹಳ ಆಪ್ತವಾಗಿ ಗೋಚರಿಸುತ್ತಿದ್ದಾರೆ. ತನ್ನದೇ ಪಾತ್ರದ ಪರಕಾಯ ಪ್ರವೇಶ ಮಾಡಿರುವಂತೆ ಕೇಜ್ರಿವಾಲ್ ಮಧ್ಯಮ ವರ್ಗಕ್ಕೆ ಕಾಣಿಸಿಕೊಳ್ಳುತ್ತಿದ್ದಾರೆ.

ಆದರೆ ತನ್ನ ಅಸ್ತಿತ್ವ ಹಾಗೂ ಸಮೃಧ್ದಿ ಇವೆರಡೂ ಇದೇ ವ್ಯವಸ್ಥೆಯ ಕೊಡುಗೆಗಳಾದ್ದರಿಂದ ಅದನ್ನು ಮುರಿದು ಹೊಸದನ್ನು ಕಟ್ಟುವ ಉಮೇದು ಮಧ್ಯಮ ವರ್ಗದಲ್ಲಿ ಇಲ್ಲ. ಹೀಗಾಗಿ ಇರುವ ವ್ಯವಸ್ಥಯಲ್ಲೆ ಕಾಸ್ಮೆಟಿಕ್ ಅನ್ನಿಸುವಂತಹ ಬದಲಾವಣೆಗಳನ್ನು ತಂದು ಅದನ್ನು ತನ್ನ ಅನುಕೂಲತೆಗೆ ತಕ್ಕಂತೆ ಪುನರ್ ರೂಪಿಸುವ ನೆಲೆಗಳನ್ನು ಮಧ್ಯಮ ವರ್ಗ ಹುಡುಕುತ್ತಿದೆ. ಆದರೆ ವ್ಯಕ್ತಿ ಮತ್ತು ವ್ಯವಸ್ಥೆಯ ನಡುವೆ ಸ್ಪಷ್ಟವಾದ ಪ್ರತ್ಯೇಕಿಸುವ ಗೆರೆಗಳನ್ನು ಅದು ಹಾಕಿರುವುದರಿಂದ ಕೇವಲ ವ್ಯವಸ್ಥೆಯಲ್ಲಷ್ಟೇ ಲೋಪಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿಯೇ ಅತ್ಯಾಚಾರ ಅಥವಾ ಭ್ರಷ್ಟಾಚಾರದಂತಹ ಸಂಕೀರ್ಣ ಸಮಸ್ಯೆಗಳಿಗೆ ಕೂಡಾ 800px-India-Against-Corruption-logo_svgಮರಣದಂಡನೆ ಅಥವಾ ಜನಲೋಕಪಾಲವೇ ಮೊದಲಾದ ಕ್ವಿಕ್ ಫಿಕ್ಸ್ ಅನ್ನಿಸುವಂತಹ ವ್ಯವಸ್ಥಾತ್ಮಕ ಮಾರ್ಪಾಡುಗಳಿಗೆ ಒತ್ತಡ ಸೃಷ್ಟಿಯಾಗುತ್ತಿದೆ. ಭ್ರಷ್ಟಾಚಾರ ಇಲ್ಲವೇ ಅತ್ಯಚಾರದಂತಹ ಪಿಡುಗುಗಳ ಹಿನ್ನೆಲೆಯಲ್ಲಿರುವಂತದ್ದು ವ್ಯಕ್ತಿಯ ನ್ಯಾಯಯುತವಲ್ಲದ ನಡವಳಿಕೆಗಳು ಎಂಬ ಸತ್ಯ ಮರೆಯಾಗುತ್ತಿದೆ. ಸಿಸ್ಟಮಿಕ್ ಸ್ವರೂಪದ ಬದಲಾವಣೆಗಳ ತಲಾಶೆಯಲ್ಲಿರುವಾಗಲೇ ಅದಕ್ಕೆ ಸುಧಾರಣೋತ್ತರ ಕಾಲಘಟ್ಟದಲ್ಲಿ ಚಾಲ್ತಿಗೆ ಬಂದಿರುವ ಕಾರ್ಪೋರೇಟ್ ಶೈಲಿಯ ನಿರ್ವಹಣೆ ಅಪ್ಯಾಯಮಾನವಾಗಿ ಕಾಣುತ್ತಿದೆ. ಅಲ್ಲಿರುವ ಯಾಂತ್ರಿಕ ಅನ್ನಿಸುವಂತಹ ದಕ್ಷತೆ, ವೇಗ, ಅಚ್ಚುಕಟ್ಟು ಹಾಗೂ ಉತ್ತರದಾಯಿತ್ವ ಗುಣಗಳು ಮಧ್ಯಮ ವರ್ಗವನ್ನು ಆಕರ್ಷಿಸುತ್ತಿವೆ. ಸರಕಾರಿ ವ್ಯವಸ್ಥೆಯ ಸಂರಚನೆಯಲ್ಲೂ ಕಾರ್ಪೋರೇಟ್ ಮಾದರಿಯ ಅಳವಡಿಕೆ ತತ್‌ಕ್ಷಣದ ಜರೂರತ್ತು ಎಂದು ಅದು ಭಾವಿಸಿದೆ. ಇಂತಹ ಸನ್ನಿವೇಶದಲ್ಲೇ ಅದಕ್ಕೆ ಓರ್ವ ಪರಿಪಕ್ವ ಸಿಇಓ ರೂಪದಲ್ಲಿ ಮೋದಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ಧಾರ ಹಾಗೂ ಪ್ರಕ್ರಿಯೆಗಳ ವಿಳಂಬ ಹಾಗೂ ಅದಕ್ಷತೆಗೆ ಕಾರಣ ಎಂಬಂತೆ ಬಿಂಬಿಸಲಾಗುತ್ತಿರುವ ಶಾಸನಸಭೆಗಳು, ಮಂತ್ರಿಮಂಡಲ, ಸಮಿತಿಗಳು ಅಥವಾ ಆಯೋಗಗಳು ಪ್ರತಿನಿಧಿಸುವ ಚರ್ಚೆ ಹಾಗೂ ಸಂವಾದಗಳು – ಇವ್ಯಾವುವೂ ಮೋದಿ ಮಾದರಿಯಲ್ಲಿ ಕಾಣಿಸಿಕೊಳ್ಳದೆ ಕೇವಲ ಏಕವ್ಯಕ್ತಿ ಪ್ರದರ್ಶನವಷ್ಟೇ ನಡೆಯುತ್ತಿರುವುದರಿಂದ ಮತ್ತು ಕಾರ್ಯದಕ್ಷತೆಯ ನೆಲೆಯಲ್ಲಿ ತಕ್ಕಮಟ್ಟಿಗೆ ಯಶಸ್ವಿಯೂ ಆಗಿರುವುದರಿಂದ ಬ್ರ್ಯಾಂಡ್ ಮೋದಿ ಇನ್ನಷ್ಟು ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. “ಕಾರ್ಪೋರೇಷನ್‌ಗಳು ಟೊಟಾಲಿಟೇರಿಯನ್ (ಸರ್ವಾಧಿಕಾರಿ) ವ್ಯವಸ್ಥೆ ಇದ್ದ ಹಾಗೆ. ಅಲ್ಲಿರುವಂತೆ ವ್ಯವಸ್ಥೆಯ ಮೇಲ್ತುದಿಯಲ್ಲಿ ಸ್ಥಾಪಿತರಾಗಿರುವ ನಿರ್ದೇಶಕ ಮಂಡಳಿ ಆದೇಶಗಳನ್ನು ನೀಡುತ್ತದೆ. ಪ್ರತಿಯೊಬ್ಬರೂ ಅದನ್ನು ಶಿರಸಾ ಪಾಲಿಸುತ್ತಾರೆ.” ಎಂಬ ನೋಮ್ ಚಾಮ್ಸ್‌ಕಿಯವರ ಮಾತುಗಳು ಇಲ್ಲಿ ಉಲ್ಲೇಖನೀಯ.

ಮಧ್ಯಮ ವರ್ಗದ ಕ್ರೀಯಾಶೀಲತೆಗೆ ನೆಲೆ ವೇದಿಕೆ ಒದಗಿಸಿರುವಂತದ್ದು ಸಾಮಾಜಿಕ ಮಾಧ್ಯಮಗಳು. modi-kejriwalಮೋದಿ ಹಾಗೂ ಕೇಜ್ರಿವಾಲ್ ಇಬ್ಬರೂ ಸೋಶಿಯಲ್ ಮೀಡಿಯಾದ ಸೃಷ್ಟಿ. ಟ್ವಿಟ್ಟರ್, ಫೇಸ್‌ಬುಕ್ ಮೊದಲಾದ ಜಾಲತಾಣಗಳನ್ನು ಬುದ್ಧಿವಂತಿಕೆಯಿಂದ ಪ್ರಪಗಾಂಡ ಸ್ವರೂಪದಲ್ಲಿ ಬಳಸಿ ಮೋದಿ ತನ್ನ ಅಹಂಗೆ ಒಂದು ಜನಪ್ರಿಯ ನೆಲೆಯನ್ನು ದಕ್ಕಿಸಿಕೊಂಡಿದ್ದಾರೆ. ಅಲ್ಲದೆ ಮತಗಳಿಕೆ ಅಥವಾ ಜನಪ್ರಿಯತೆಯ ನೆಲೆಯನ್ನು ದೊಡ್ಡ ಮಟ್ಟದಲ್ಲಿ ಲಿಮಿಟ್ ಮಾಡಬಲ್ಲ ತನ್ನ ಕೋಮುವಾದಿ ಪ್ರಭಾವಳಿಯನ್ನು ಮರೆಮಾಚಿ ಸ್ವೀಕರಣೆಯ ನೆಲೆಯನ್ನು ಇನ್ನಷ್ಟು ವಿಸ್ತರಿಸಬಲ್ಲ ಅಭಿವೃದ್ಧಿಯ ಪೋಷಾಕನ್ನು ಉಡುವ ಪ್ರಯತ್ನದಲ್ಲಿ ಮೋದಿಗೆ ಸಾಥ್ ನೀಡಿದ್ದು ಇದೇ ಸೋಶಿಯಲ್ ಮೀಡಿಯಾ. ಕೇಜ್ರಿವಾಲ್ ಭ್ರಷ್ಟಾಚಾರದಂತಹ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಆಫ್‌ಲೈನ್ ಜಗತ್ತಿನಲ್ಲಿ ಜನರನ್ನು ಒಟ್ಟುಗೂಡಿಸುವ ತಂತ್ರವಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡಿದ್ದು ನಮಗೆಲ್ಲಾ ತಿಳಿದಿದೆ. ಇವತ್ತು ಜಾಗತಿಕ ವಿದ್ಯಮಾನವೆಂಬಂತೆ ಬಿಂಬಿತವಾಗಿರುವ ಟ್ವಿಟ್ಟರ್ ಕ್ರಾಂತಿ ಮತ್ತು ಅದು ಸಾಧಿಸಿದ ಫ್ಲಾಶ್ ಮಾಬ್ ತರಹದ ಜನಾಂದೋಲನ- ಇವೆರಡರ ಆರಂಭಿಕ ಮಾದರಿಗಳು ಭಾರತದಲ್ಲಿ ಕಾಣಿಸಿಕೊಂಡದ್ದು ಕೇಜ್ರಿವಾಲ್ ಸಂಘಟಿಸಿದ್ದ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ. ಮಾತ್ರವಲ್ಲದೆ ಇನಸ್ಟಂಟ್ ಅನ್ನಿಸುವಂತಹ ಜನಮತಗಣನೆಗೂ ಕೇಜ್ರಿವಾಲ್ ಸಾಮಾಜಿಕ ಮಾಧ್ಯಮಗಳನ್ನೇ ಅವಲಂಬಿಸಿದ್ದಾರೆ. ಹೀಗೆ ಮೋದಿ ಹಾಗೂ ಕೇಜ್ರಿವಾಲ್ ಅವರುಗಳ ಯಶಸ್ಸಿನಲ್ಲಿ ಸೋಶಿಯಲ್ ಮೀಡಿಯಾದ ಪಾಲು ದೊಡ್ಡದಿದೆ. ಆನ್‌ಲೈನ್ ಜಗತ್ತಿನಲ್ಲಿ ಮಧ್ಯಮ ವರ್ಗದ ವ್ಯಾಪಕ ಉಪಸ್ಥಿತಿ ಇವರಿಬ್ಬರ ಆಟ ಮೇಲಾಟಗಳಿಗೆ ಭರ್ಜರಿ ವೇದಿಕೆಯನ್ನು ಒದಗಿಸಿದೆ.

***

ಸ್ವಾತಂತ್ರ್ಯ ಹೋರಾಟದಲ್ಲಿ ಹಠಾತ್ ಎಂಬಂತೆ ಗೋಚರಿಸುವ ಮಹಾತ್ಮ ಗಾಂಧೀಜಿಯ ಏಳಿಗೆಯನ್ನು ವಿಶ್ಲೇಷಿಸುತ್ತಾ ಇತಿಹಾಸಕಾರ ಸುಮಿತ್ ಸರ್ಕಾರ್ ರೂಮರ್‍ಸ್‌ಗಳ ಪಾತ್ರವನ್ನು ವಿಶೇಷವಾಗಿ ಗುರುತಿಸುತ್ತಾರೆ. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ವಿರುದ್ಧದ ತಾರತಮ್ಯಗಳನ್ನು ಪ್ರತಿಭಟಿಸಿ ಗಾಂಧಿ ಸಂಘಟಿಸಿದ್ದ ಹೋರಾಟಗಳು ಭಾರತದಲ್ಲೂ ಪ್ರಚಾರ ಪಡೆದಿದ್ದವು. ಬಹುಮಟ್ಟಿಗೆ ಅಸಾಕ್ಷರ ಸಮಾಜವಾಗಿದ್ದ ಇಲ್ಲಿ ಅದು ಹಲವೆಡೆ ರೂಮರ್‍ಸ್‌ಗಳ ಸ್ವರೂಪವನ್ನು ಪಡೆಯಲಾರಂಬಿಸಿತ್ತು. 200px-MKGandhi[1]ಜೊತೆಗೆ ಭಾರತಕ್ಕೆ ವಾಪಾಸು ಬಂದ ಆರಂಭಿಕ ವರ್ಷಗಳಲ್ಲಿ ಅವರು ಮುನ್ನಡೆಸಿದ್ದ ಸ್ಥಳೀಯ ಮಟ್ಟದ ಜನಾಂದೋಲನಗಳ ಮಾಹಿತಿಗಳು ಕೂಡಾ ಶ್ರೀಸಾಮಾನ್ಯರ ನಡುವೆ ಹರಿದಾಡುತಿದ್ದವು. ಹೀಗಾಗಿ ಮೊದಲೇ ಬ್ರಿಟಿಷ್ ಅಧಿಕಾರಿಗಳು, ಮಧ್ಯವರ್ತಿಗಳು ಹಾಗೂ ಜಮಿನ್ಧಾರಿ ವರ್ಗಗಳ ದೌರ್ಜನ್ಯದಿಂದ ನಲುಗಿದ್ದ ದುರ್ಬಲ ಜನಸಂಖ್ಯೆಗೆ ಗಾಂಧೀಜಿ ಅವತಾರ ಪುರುಷರಂತೆ ಕಾಣಿಸಿಕೊಳ್ಳುತ್ತಾರೆ. ಗಾಂಧಿ ಕೈಯಲ್ಲಿ ಮಂತ್ರದಂಡವನ್ನು ಕಾಣುತ್ತಾರೆ. ವೈಸರಾಯ್ ರೀಡಿಂಗ್ ಇಂಗ್ಲೆಂಡ್‌ನಲ್ಲಿದ್ದ ರಾಜ್ಯಾಂಗ ಕಾರ್‍ಯದರ್ಶಿಗೆ ಬರೆದ ಪತ್ರದಲ್ಲಿ ರೈತರು ಗಾಂಧೀಜಿ ತಮ್ಮನ್ನು ಜಮೀನ್ಧಾರರ ದೌರ್ಜನ್ಯದಿಂದ ಪಾರು ಮಾಡುತ್ತಾರೆ; ಕೃಷಿ ಕಾರ್ಮಿಕರು ಗಾಂಧಿ ತಮಗೆ ಹಿಡುವಳಿಗಳನ್ನು ದೊರಕಿಸಿಕೊಡುತ್ತಾರೆ ಎಂಬಂತೆ ನಂಬತೊಡಗಿದ್ದ ವಿಚಾರಗಳನ್ನು ಪ್ರಸ್ತಾಪಿಸುತ್ತಾರೆ.

ಇಂತಹ ರೂಮರ್‍ಸ್‌ಗಳು ಆರಂಭಿಕ ಹಂತದಲ್ಲಿ ನಾಯಕತ್ವದ ಯಶಸ್ಸಿಗೆ ಅನಿವಾರ್ಯವಾದ ಸ್ವೀಕರಣೆಯ ನೆಲೆಯನ್ನು ದಯಪಾಲಿಸುತ್ತವೆ. ಮೋದಿ ಮತ್ತು ಅವರ ತಂಡ ವ್ಯವಸ್ಥಿತವಾಗಿ ನಡೆಸುವ ಪ್ರಚಾರ, ಪ್ರಸರಿಸುತ್ತಿರುವ ಗಾಳಿಸುದ್ದಿಗಳು ಅಥವಾ ಅವರನ್ನು ಅಸಾಮಾನ್ಯವೆಂಬಂತೆ ಬಿಂಬಿಸುವ ಪ್ರಯತ್ನಗಳು ಇಲ್ಲಿ ಉಲ್ಲೇಖನೀಯ. ರೂಮರ್‍ಸ್‌ಗಳಿಗೆ ಒಂದು ಸಾಂಸ್ಥಿಕ ರೂಪ ನೀಡಿ ಅದನ್ನು ಚುನಾವಣಾ ತಂತ್ರವಾಗಿ ಬಳಸುವ ಪ್ರಯತ್ನಗಳನ್ನು ನಾವಿಂದು ಕಾಣುತ್ತಿದ್ದೇವೆ. ಸಾಮಾಜಿಕ ಮಾಧ್ಯಮಗಳ ಪ್ರಸರಣ ರೂಮರ್‍ಸ್‌ಗಳಿಗೆ ವೈರಲ್ ಸ್ವರೂಪ ನೀಡಿದೆ. ಹೋಲಿಕೆಯಲ್ಲಿ ಬಹು ಮಟ್ಟಿಗೆ ದಕ್ಷಿಣ ಭಾರತದ ರಾಜ್ಯಗಳಿಗೆ ಸಮಾನವಾದ ಆರ್ಥಿಕ ನೆಲೆಗಟ್ಟನ್ನು ಹೊಂದಿರುವ ಗುಜರಾತ್ ರಾಜ್ಯದ ಕುರಿತಂತೆ ಆನ್‌ಲೈನ್ ಮಾಧ್ಯಮಗಳಲ್ಲಿ ತೇಲಿ ಬಿಡಲಾಗುತ್ತಿರುವ ಗಾಳಿಸುದ್ದಿಗಳು ದೊಡ್ಡ ಪ್ರಮಾಣದಲ್ಲಿ ಶೋತೃಗಳನ್ನು ಪಡೆಯುತ್ತಿವೆ. ಮೋದಿಯ ಕುರಿತಾದ ಅಷ್ಟೂ ರೂಮರ್‍ಸ್‌ಗಳು ಮತದಾರ ಬಯಸುವ ವ್ಯಕ್ತಿತ್ವವನ್ನು ಅವರಿಗೆ ಕಟ್ಟಿಕೊಡುವ ನೆಲೆಯಲ್ಲಿಯೇ ಸೃಷ್ಟಿಯಾಗಿವೆ . “ಸಂಕಷ್ಟದಲ್ಲಿರುವ ಸಹಸ್ರ ಸಹಸ್ರ ಜನರನ್ನು ರಕ್ಷಿಸುವ ಅಪತ್ಬಾಂಧವ, ಭ್ರಷ್ಟ ರಾಜಕಾರಣಿಗಳ ಸದೆಬಡಿಯಲು ಸಿದ್ದನಾಗಿರುವ ದುಷ್ಟ ಭಕ್ಷಕ, ಕೊಚ್ಚೆಯಾಗಿದ್ದ ಸಬರಮತಿಯನ್ನು ಸುರಗಂಗೆಯಾಗಿಸಿದ ಭಗೀರಥ. ವಿಶ್ವದ ದೊಡ್ಡಣ್ಣ ಆಮೇರಿಕಾದ ಅಧ್ಯಕ್ಷರ ಗಮವನ್ನೇ ಸೆಳೆಯಬಲ್ಲ ಸರ್ವಾದರಣೀಯ ವ್ಯಕ್ತಿತ್ವ”. ಹೀಗೆ ರೂಮರ್‍ಸ್‌ಗಳು ಮೋದಿಯ ಸುತ್ತ ಅಸಾಮಾನ್ಯ ವೀರತ್ವದ ಪ್ರಭಾವಳಿಯನ್ನು ಕಟ್ಟಿವೆ.

ಇಂತಹ ರೂಮರ್‍ಸ್‌ಗಳ ಯಶಸ್ವಿ ಪ್ರಸರಣಕ್ಕೆ ಪೂರಕವಾದ ಸನ್ನಿವೇಶಗಳು ವರ್ತಮಾನದಲ್ಲಿ ಸೃಷ್ಠಿಯಾಗಿವೆ. ಒಂದೆಡೆ ಪ್ರಸ್ತುತ ರಾಜಕೀಯ ವ್ಯವಸ್ಥೆಯ ದಯನೀಯ ವೈಫಲ್ಯ. ಇನ್ನೊಂದೆಡೆ ಜಾಗತಿಕ ಆರ್ಥಿಕ ಬಿಕ್ಕಟ್ಟು ಕಾರಣಿಸಿರುವ ಆತಂಕ. ಹೀಗೆ ದುರಾಡಳಿತ, ಭ್ರಷ್ಟಾಚಾರ, ಹಣದುಬ್ಬರ ಹಾಗೂ ಉದ್ಯೋಗ ಕಡಿತದ ಕಾಕ್‌ಟೈಲ್ ವ್ಯವಸ್ಥೆಯಲ್ಲಿ ಇನ್ನಷ್ಟು ಅಸ್ಥಿರತೆಗೆ ಕಾರಣವಾಗಿವೆ. ಆಸುರಕ್ಷಿತ ಭಾವನೆಗಳನ್ನು ಉದ್ದೀಪನಗೊಳಿಸುವ ಇಂತಹ ಸನ್ನಿವೇಶಗಳು ಸಹಜವಾಗಿಯೇ ರೂಮರ್‍ಸ್‌ಗಳಿಗೆ ಅಗತ್ಯ ಆಡಿಯನ್ಸ್ ಅನ್ನು ಒದಗಿಸುತ್ತವೆ.

ಹಾಗೆಯೇ ಭಾರತೀಯ ಸಾಂಸ್ಕೃತಿಕ ಮನೋಭೂಮಿಕೆಯೂ ಕೂಡಾ ಮೋದಿ ಕುರಿತಾದ ಗಾಳಿಸುದ್ದಿಗಳ ವ್ಯಾಪಕ ಸ್ವೀಕರಣೆಗೆ ಅವಕಾಶ ಮಾಡಿಕೊಟ್ಟಿದೆ. ವ್ಯಕ್ತಿತ್ವ ನಿರ್ಮಾಣ ಇಲ್ಲಿಯ ಪರಂಪರೆಯ ಮಹತ್ವದ ಗುಣ. ನಮ್ಮ ಸಮಾಜ ಹಾಗೂ ಮನೋಧರ್ಮ ಬಹುಮಟ್ಟಿಗೆ ನಾಯಕ ಕೇಂದ್ರಿತ. ಇಲ್ಲಿ ದುಷ್ಟ ದಮನ ಹಾಗೂ ಶಿಷ್ಟ ರಕ್ಷಣೆಗೆ ಒಬ್ಬ ಸಾಂಸ್ಕೃತಿಕ ನಾಯಕನಿರುತ್ತಾನೆ. ಧರ್ಮ ಸಂಸ್ಥಾಪನೆಗೆ ಆತನೇ ಮತ್ತೆ ಮತ್ತೆ ಅವತಾರವೆತ್ತಿ ಬರುತ್ತಾನೆ. ಇವತ್ತೂ ಕೂಡಾ ಸರ್ವ ಸಂಕಷ್ಟಗಳಿಂದ ನಮ್ಮನ್ನು ಪಾರುಮಾಡಬಲ್ಲ ಕಲ್ಕಿ ಅಥವಾ ಮೈತ್ರೇಯನ ಬರುವಿಕೆಗಾಗಿ ಕಾಯುತ್ತಿರು ಆಸ್ತಿಕ ಮನಸ್ಸುಗಳಿವೆ. ಹಾಗೆಯೇ ಕಲ್ಪನೆಯ ಇನ್ನೊಂದು ಸ್ವರೂಪವನ್ನು ಪ್ರತಿನಿಧಿಸುವ ಸೆಲ್ಯುಲಾಯ್ಡ್ ಜಗದ ನಾಯಕ್, ಅನ್ನಿಯನ್ ಅಥವಾ ಸೂಪರ್ ಮೊದಲಾದವುಗಳು ಕೇವಲ ಮಧ್ಯಮ ವರ್ಗದ ಫ್ಯಾಂಟಸಿಯಷ್ಟೇ ಅಲ್ಲ ಮುಗ್ಧ ನಿರೀಕ್ಷೆಯೂ ಆಗಿರುತ್ತದೆ. ಇಂತಹ ಸಾಂಸ್ಕೃತಿಕ ಸಂರಚನೆಯಲ್ಲಿ ಅಧಃಪತನದ ಸೂಚನೆಗಳು ಸಹಜವಾಗಿಯೇ ಸರ್ವರನ್ನೂ ಸಂಕಷ್ಟದಿಂದ ಪಾರುಮಾಡಬಲ್ಲ ವ್ಯಕ್ತಿತ್ವವೊಂದರ ತಲಾಶೆಯಲ್ಲಿ ತೊಡಗುವಂತೆ ಜನರನ್ನು ಪ್ರೇರೇಪಿಸುತ್ತದೆ. ಇಲ್ಲಿ ರೂಮರ್‍ಸ್‌ಗಳು ಕಟ್ಟಿಕೊಟ್ಟಂತಹ ಪ್ರಭಾವಳಿಯ ನೆರವಿನಿಂದ ಮೋದಿ ಸಾಂಸ್ಕೃತಿಕ ಅವಶ್ಯಕತೆಯಂತೆ ಕಾಣಿಸಿಕೊಳ್ಳುತ್ತಾರೆ. ಗಾಳಿಸುದ್ದಿಗಳು ಮತ್ತದೇ ನಾಮಸ್ಮರಣೆಯ ಸ್ವರೂಪವನ್ನು ಪಡೆದುಕೊಳ್ಳುತ್ತವೆ.

***

ಹೋರಾಟ ಮಾನವ ನಾಗರೀಕತೆಗೆ ಮೂಲಭೂತವಾದ ಅಂಶವಾಗಿದೆ. ಚಳುವಳಿಗಳು ಹೋರಾಟದ ಸಾಮೂಹಿಕ ಆಯಾಮವನ್ನು ಪ್ರತಿನಿಧಿಸುತ್ತವೆ. ರಾಜ್ಯಶಾಸ್ತ್ರೀಯ ನೆಲೆಯಲ್ಲಿ ವಿಶ್ಲೇಷಿಸಿದಾಗ ಚಳುವಳಿಗಳು ಒಂದೋ ನಾಯಕ ಕೇಂದ್ರಿತವಾಗಿರುತ್ತದೆ ಇಲ್ಲವೇ ಪರಿಪೂರ್ಣ ನೆಲೆಯಲ್ಲಿ ಜನಾಂದೋಲನವಾಗಿರುತ್ತದೆ. ಅರಬ್ ಜಗತ್ತಿನಲ್ಲಿ ಇಂದು ನಡೆಯುತ್ತಿರುವ ಅಷ್ಟೂ ಹೋರಾಟಗಳು ಜನಾನುರಾಗಿಯಾಗಿರುವಂತದ್ದು. ಬೆನ್ ಆಲಿ, ಹೋಸ್ನಿ ಮುಬಾರಕ್, ಗದ್ದಾಫಿ ಮೊದಲಾದ ಸರ್ವಾಧಿಕಾರಿಗಳನ್ನು ಪದಚ್ಯುತಗೊಳಿಸಿದ ಕ್ರಾಂತಿಗಳಲ್ಲಿ ಯಾವುದೇ ಸಾರ್ವತ್ರಿಕ ಸ್ವರೂಪದ ನಾಯಕತ್ವವನ್ನು ಗುರುತಿಸುವುದು ಅಸಾಧ್ಯ. ಒಂದು ಸಮಾನ ಉದ್ಧೇಶದ ಸಾಧನೆಗೆ ಬದ್ಧರಾಗಿ ಸ್ವಯಂ ಪ್ರೇರಿತರಾಗಿ ಜನರು ತಮ್ಮನ್ನು ತಾವೇ ಚಳುವಳಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಅಂತಹ ಚಳುವಳಿಗಳಲ್ಲಿ ಮುನ್ನಡೆಸಲ್ಪಡುವ ಆಂದೋಲನಗಳಲ್ಲಿ ಕಾಣುವಂತಹ ನಿರ್ದೇಶನದ ಅಂಶಗಳು ಪ್ರಭಾವಿಯಾಗಿ ಇರುವುದಿಲ್ಲ. ಜನ ಕ್ರಾಂತಿಗಳಲ್ಲಿ ಅದರ ಸ್ಥಾನವನ್ನು ಸಂವಹನವು ಪಡೆದಿರುತ್ತದೆ. ಪರಿಪೂರ್ಣ ಸ್ವರೂಪದ ಜನಾಂದೋಲನಗಳಲ್ಲಿ ಅತಿರೇಕದ ನಡವಳಿಕೆಗಳು ಸಹಜವಾಗಿರುತ್ತದೆ.

ಜನಾಂದೋಲನಗಳಿಗೆ ಹೋಲಿಸಿದಲ್ಲಿ ನಾಯಕ ಕೇಂದ್ರಿತ ಚಳುವಳಿಗಳು ಸಮಾಜದ ಸ್ಥಾಪಿತ ಹಿತಾಸಕ್ತಿಗಳಿಗೆ ಹೆಚ್ಚು ಸಹನೀಯವಾಗಿರುತ್ತದೆ. ಯಾಕೆಂದರೆ ನಾಯಕತ್ವ ಆಧಾರಿತ ಹೋರಾಟ ಬಹುಮಟ್ಟಿಗೆ ನಿಯಂತ್ರಿತ ಸ್ವರೂಪದ ಪ್ರತಿರೋಧವನ್ನು ಪ್ರತಿನಿಧಿಸುತ್ತದೆ. ಅಲ್ಲಿ ಜನರ ಆಕ್ರೋಶ ಕಟ್ಟೆಯೊಡೆದು ಜನಕ್ರಾಂತಿಗೆ (Mass Action) ಕಾರಣವಾಗುವುದಿಲ್ಲ. ನಾಯಕ ಚಳುವಳಿಯ ಪ್ರತಿ ಹೆಜ್ಜೆ ಹಾಗೂ ಎಲ್ಲೆಯನ್ನು ನಿರ್ಧರಿಸುತ್ತಾನೆ. ಜೊತೆಗೆ ಅಲ್ಲಿ ಸಂವಾದ ಅಥವಾ ಹೊಂದಾಣಿಕೆಯ ಕ್ರಿಯೆಗಳಿಗೆ ನಾಯಕನ ರೂಪದಲ್ಲಿ ಒಂದು ವಿಂಡೋ ಇರುತ್ತದೆ. ಇಂತಹ ಚಳುವಳಿಗಳನ್ನು ಬಂಡವಾಳಶಾಹಿ ವ್ಯವಸ್ಥೆ ಸಹಿಸುತ್ತದೆ. ಗಾಂಧಿ ಮುನ್ನಡೆಸಿದ ಸ್ವಾತಂತ್ರ್ಯ ಹೋರಾಟ ಪರಿಪೂರ್ಣ ನೆಲೆಯಲ್ಲಿ ಒಂದು ನಿಯಂತ್ರಿತ ಆಂದೋಲನ. ವಸಾಹತುಶಾಹಿ ವಿರುಧ್ಧದ ಜನತೆಯ ರೋಷ ರ್‍ಯಾಡಿಕಲ್ ಸ್ವರೂಪವನ್ನು ಪಡೆದು ಆ ಕೃತ್ರಿಮ ವ್ಯವಸ್ಥೆಯ ಜೊತೆ ಕೈಜೋಡಿಸಿದ್ದ ಬಂಡವಾಳಶಾಹಿ ಹಾಗೂ ಜಮೀನ್ದಾರಿ ವರ್ಗಗಳ ಮೂಲೋತ್ಪಾಟನೆಗೆ ಕಾರಣವಾಗಬಹದಾದಂತಹ ಅತಿರೇಕದ ಸನ್ನಿವೇಶಗಳು ಗಾಂಧಿಯ ಉಪಸ್ಥಿತಿಯಲ್ಲಿ ಸಾಧ್ಯವಿರಲಿಲ್ಲ. ಹೀಗಾಗಿಯೆ ದೊಡ್ಡ ಸಂಖ್ಯೆಯಲ್ಲಿ ಬಂಡವಾಳಶಾಹಿಗಳು ಗಾಂಧಿ ನೇತೃತ್ವದ ಸ್ವಾತಂತ್ರ್ಯ ಹೋರಾಟವನ್ನು ಬೆಂಬಲಿಸಿದ್ದರು. ಕೇಜ್ರಿವಾಲ್ ನೇತೃತ್ವದ ಆಪ್ ಆಂದೋಲನ ಕೂಡಾ ಅಂತಹದ್ದೇ ಪೃವೃತ್ತಿಗಳನ್ನು ಪ್ರತಿನಿಧಿಸುತ್ತದೆ. ಇಲ್ಲಿ ಒಬ್ಬ ನಾಯಕನನ್ನು ಸಂಭಾಳಿಸಿದಲ್ಲಿ ಇಡೀ ಚಳುವಳಿಯನ್ನೇ ನಿಯಂತ್ರಿಸಿದಂತೆ. ಅವನ ದೌರ್ಬಲ್ಯಗಳೇ ಇಡೀ ಚಳುವಳಿಯ ದೌರ್ಬಲ್ಯಗಳೂ ಆಗಿರುತ್ತವೆ. ಹೀಗಾಗಿ ಬಲಿಷ್ಠ ವ್ಯವಸ್ಥೆಗೆ ಅದನ್ನು ನಿರ್ವಹಿಸುವ ಸಾಕಷ್ಟು ಅವಕಾಶಗಳು ಸಿಗುತ್ತವೆ.

ಆಪ್ ಚಳುವಳಿ ಅದಾನಿ ಅಂಬಾನಿಯರನ್ನು ಪ್ರಶ್ನಿಸುತ್ತಿದೆಯಾದರೂ ಪರೋಕ್ಷವಾಗಿ ಅದು ಭ್ರಷ್ಟಾಚಾರದ ವಿರುದ್ಧ ಜನತೆಯ ರೋಷದ ಅಭಿವ್ಯಕ್ತಿಗೆ ಸುರಕ್ಷಿತ ಅನ್ನಬಹುದಾದ ಔಟ್‌ಲೆಟ್ ಒಂದನ್ನು ಒದಗಿಸಿ ಅದೇ ಅದಾನಿ ಅಂಬಾನಿಯರನ್ನು ಉಳಿಸುತ್ತಿದೆ. ಇತ್ತೀಚೆಗೆ ನಾವು ಕಾಣುತ್ತಿರುವ ಅಷ್ಟೂ ಭ್ರಷ್ಟಾಚಾರ ಪ್ರಕರಣಗಳಲ್ಲಿ modi_ambani_tata_kamathಫಲಾನುಭವಿಯ ಸ್ಥಾನದಲ್ಲಿ ನಿಂತಿರುವಂತದ್ದು ಬಂಡವಾಳಶಾಹಿ ಕಾರ್ಪೋರೇಟ್ ವ್ಯವಸ್ಥೆ. ಆದರೆ ಎಲ್ಲೂ ಕೂಡಾ ದೈತ್ಯ ಕಾರ್ಪೋರೇಟ್ ಸಂಸ್ಥಾನಗಳ ವಿರುದ್ದ ಪ್ರತಿಭಟನೆಗಳು ಚಳುವಳಿ ಸ್ವರೂಪದಲ್ಲಿ ನಡೆಯುತ್ತಿಲ್ಲ. ಯಾಕೆಂದರೆ ಕೇಜ್ರಿವಾಲ್ ಹಾಗೂ ಅಣ್ಣಾ ಹಜಾರೆ ನೇತೃತ್ವದ ಆಂದೋಲನಗಳು ಭ್ರಷ್ಟಾಚಾರದ ಅಷ್ಟೂ ಹೊಣೆಗಾರಿಕೆಯನ್ನು ವ್ಯವಸ್ಥೆಯ ಕಡೆಗೆ ತಿರುಗಿಸಿವೆ. ಹೀಗಾಗಿ ರಾಡಿಯ ಟೇಪುಗಳಂತಹ ಪ್ರಕರಣಗಳು ರಾಜಕೀಯ ವ್ಯವಸ್ಥೆ ಹಾಗೂ ಕಾರ್ಪೋರೇಟ್ ಜಗತ್ತಿನ ನಡುವಣದ ಅನೈತಿಕ ಕೂಡಾಟದ ಮಾಹಿತಿಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರೂ ಕೂಡಾ ರಾಜಕಾರಣವಷ್ಟೇ ಜನತೆಯ ಆಕ್ರೋಶದ ಅಭಿವ್ಯಕಿಗೆ ಮತೆ ಮತ್ತೆ ಗುರಿಯಾಗುತ್ತಿದೆ.

***

ಆರಂಭದಲ್ಲೇ ತಿಳಿಸಿದಂತೆ ಮೋದಿ ಹಾಗೂ ಕೇಜ್ರಿವಾಲ್ ದೊಡ್ಡ ಮಟ್ಟದಲ್ಲಿ ದೇಶದ ಗಮನ ಸೆಳೆಯುತ್ತಿದ್ದಾರೆ. ಇಬ್ಬರ ಏಳಿಗೆಯ ಹಿಂದೆ ಕಾಣುವಂತದ್ದು ಬಹುತೇಕ ಒಂದೇ ಅನ್ನಿಸುವಂತಹ ಸನ್ನಿವೇಶಗಳು. ಕೇಜ್ರಿವಾಲ್ ಮಧ್ಯಮವರ್ಗದ ಪ್ರತಿನಿಧಿಯಂತೆ ಕಂಡರೆ ಮೋದಿ ಅದರ ನಿರೀಕ್ಷೆಯಂತೆ ಕಾಣುತ್ತಿದ್ದಾರೆ. ಆದರೆ ಇವರೀರ್ವರ ವೈಶಿಷ್ಟ್ಯ ಇರುವಂತದ್ದು ಪರಸ್ಪರ ವೈರುಧ್ಯಗಳಲ್ಲಿ. ಮೋದಿಯ ಸರ್ವಾಧಿಕಾರತ್ವ ಮತ್ತು ದ್ವೇಷದ ಚರ್ಯೆಗಳು ಕೇಜ್ರಿವಾಲ್ ಅವರಲ್ಲಿ ಕಂಡುಬರುವುದಿಲ್ಲ್ಲ. ಅಲ್ಲದೆ ಓರ್ವ ಡೆಮಾಕ್ರಟ್ ಆಗಿಯೂ ಕೇಜ್ರಿವಾಲ್ ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ಪೋರೇಟ್ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುತ್ತಿರುವ ಅಂಕೆ ಮೀರಿದ ಭೂಸ್ವಾಧೀನ ಅಥವಾ ಔದ್ಯಮಿಕ ನೆಲೆಯಲ್ಲಿ ನಡೆಯುವ ಪ್ರಾಕೃತಿಕ ಸಂಪನ್ಮೂಲಗಳ ಹಂಚಿಕೆ ಮೊದಲಾದ ಸಂಕೀರ್ಣ ವಿಚಾರಗಳ ಕುರಿತಂತೆ ಸ್ಪಷ್ಟವಾದ ಯಾವುದೇ ಸೈದ್ಧಾಂತಿಕ ನೆಲೆಗಳನ್ನು ಹೊಂದಿಲ್ಲವಾದರೂ ಬಂಡವಾಳಶಾಹಿಗಳ ಅಕ್ರಮಗಳ ವಿರುದ್ಧ ದನಿಯೆತ್ತುವ ಧೈರ್ಯವನ್ನು ತೋರುತಿದ್ದಾರೆ. ಕಾಂಗ್ರೆಸ್ ಹಾಗೂ ಮೋದಿಯ aravind-kejriwalಬಿಜೆಪಿ ಇವೆರಡೂ ಪಕ್ಷಗಳೂ ಕೃತ್ರಿಮ ಬಂಡವಾಳವಾದದ ಪ್ರತ್ಯಕ್ಷ ಪೋಷಕರ ಸ್ಥಾನದಲ್ಲಿ ನಿಂತಿರುವುದು ಇಲ್ಲಿ ಉಲ್ಲೇಖನೀಯ. ಹೀಗಾಗಿ ಅತ್ತ ಕಾಂಗ್ರೆಸ್ ಭ್ರಷ್ಟಾಚಾರವನ್ನು ಒಪ್ಪಲಾಗದ ಇತ್ತ ಮೋದಿಯ ಸಂಕುಚಿತ ರಾಜಕಾರಣವನ್ನು ರಿಜೆಕ್ಟ್ ಮಾಡುವ ಹಾಗೂ ತೃತೀಯ ರಂಗದ ಬಗ್ಗೆ ವಿಶ್ವಾಸವಿಲ್ಲದ ದೊಡ್ಡ ಯುವ ಸಮೂಹ ಕೇಜ್ರಿವಾಲ್ ಅವರನ್ನು ಬೆಂಬಲಿಸುತ್ತಿದೆ. ಸಹಜವಾಗಿಯೇ ಕಾಂಗ್ರೆಸ್ ಪ್ರತಿನಿಧಿಸುವ ಏನ್ಷಿಯನ್ ಅನ್ನಿಸುವ ವಂಶಪಾರಂಪರ್ಯ ರಾಜಕಾರಣ ಮತ್ತು ಮೋದಿಯ ಅಥೋರಿಟೇರಿಯನ್ ಆಡಳಿತ- ಇವುಗಳು ಕಾರಣಿಸಿರುವ ಉಸಿರುಗಟ್ಟಿಸುವ ವಾತಾವರಣದಲ್ಲಿ ಅನಿವಾರ್ಯವಾಗಿದ್ದ ಒಂದು ಸ್ಪೇಸ್ ಅನ್ನು ಕೇಜ್ರಿವಾಲ್ ಅವರ ಅರಾಜಕತೆ ಒದಗಿಸಿದೆ.

ಜನ ನುಡಿ, ನುಡಿಸಿರಿ, ವರ್ತಮಾನ.ಕಾಮ್


– ರವಿ ಕೃಷ್ಣಾರೆಡ್ಡಿ


 

ಕಳೆದ ವಾರ ಮಂಗಳೂರಿನಲ್ಲಿ ನಡೆದ “ಜನ ನುಡಿ” ಕಾರ್ಯಕ್ರಮಕ್ಕೆ ಮೊದಲೇ ಒಂದು ವಿಸ್ತೃತವಾದ ಲೇಖನವನ್ನು, ಮುಖ್ಯವಾಗಿ ಪ್ರಗತಿಪರ ಎಂದು ಭಾವಿಸುವ ಯುವಮಿತ್ರರನ್ನು ಗಮನದಲ್ಲಿಟ್ಟುಕೊಂಡು ಬರೆಯಬೇಕೆಂದು ತೀರ್ಮಾನಿಸಿದ್ದೆ. ಆದರೆ, ದೆಹಲಿ ಚುನಾವಣೆಯ ಫಲಿತಾಂಶದ ನಂತರ ನನಗೆ ಸ್ವಲ್ಪ ಬಿಡುವಿಲ್ಲದೆ ಹೋಯಿತು. ಅದೇ ಸಮಯದಲ್ಲಿ ಸರ್ಕಾರಿ ನೇಮಕಾತಿಯಲ್ಲಿ ಕೆಪಿಎಸ್‌ಸಿಯ ಕರ್ಮಕಾಂಡದ ಬಗ್ಗೆ ಸಿಐಡಿ ವರದಿ ಕೈಗೆ ಸಿಕ್ಕ ಪರಿಣಾಮವಾಗಿ ಅದರ ಕುರಿತೂ ಒಂದಷ್ಟು ಕೆಲಸಗಳಾದವು. western-ghats-as-seen-from-BLR-Karwar-trainಮತ್ತೆ ಸಕಲೇಶಪುರದಿಂದ ಮಂಗಳೂರಿಗೆ ಪಶ್ಚಿಮಘಟ್ಟಗಳ ಮಧ್ಯೆ ಹಾದು ಹೋಗುವ ರೈಲಿನಲ್ಲಿ ಹೋಗುವ ಕಾರಣಕ್ಕಾಗಿ ನಾನು ಮತ್ತು ನಮ್ಮ ಬಳಗದ ಶ್ರೀಪಾದ ಭಟ್ಟರು ಒಂದು ದಿನ ಮೊದಲೇ ಬೆಂಗಳೂರು ಬಿಟ್ಟಿದ್ದೆವು. ಮೂರು ದಿನದ ನಂತರ ಬೆಂಗಳೂರಿಗೆ ಬಂದಂದಿನಿಂದ ಲೋಕಸತ್ತಾ ಪಕ್ಷದ ಮೂಲಕ ಕೆಪಿಎಸ್‌ಸಿ ಹಗರಣದ ಬಗ್ಗೆ ಹಮ್ಮಿಕೊಂಡ ಚಟುವಟಿಕೆಗಳ ಕಾರಣವಾಗಿ ಏನನ್ನೂ ಬರೆಯಲು ಬಿಡುವಿಲ್ಲದೆ ಹೋಗಿತ್ತು. ಇದೇ ಕಾರಣವಾಗಿ ನೆನ್ನೆ ನಡೆದ ಪ್ರತಿಭಟನೆಯಲ್ಲಿ ಮೊದಲಬಾರಿಗೆ ಬಂಧನಕ್ಕೊಳಪಟ್ಟು ಸಂಜೆ ಆರರ ತನಕ ಆಡುಗೋಡಿಯ ಪೋಲಿಸ್ ಗ್ರೌಂಡ್ಸ್‌ನ ಶೆಡ್‌ನಲ್ಲಿ ಇರಬೇಕಾಯಿತು. ಇದೆಲ್ಲದರ ಮಧ್ಯೆ ಮುಂದಕ್ಕೆ ಹಾಕಲಾಗದ ವೈಯಕ್ತಿಕ ಕಾರ್ಯಕ್ರಮವೊಂದು ಇಂದು.

ಕಳೆದ ಎರಡು-ಮೂರು ದಿನಗಳಿಂದ ಮೂಡಬಿದ್ರೆಯಲ್ಲಿ “ಆಳ್ವಾಸ್ ನುಡಿಸಿರಿ” ಮತ್ತು “ಆಳ್ವಾಸ್ ವಿರಾಸತ್” ವಿಜೃಂಭಣೆಯಿಂದ ನಡೆಯುತ್ತಿದೆ. ಈ ಕಾರ್ಯಕ್ರಮದ ಬಗ್ಗೆ ಇರಬಹುದಾದ ಸಂಶಯಗಳು ಮತ್ತು ಆರೋಪಗಳು ಮೊದಲ ಬಾರಿಗೆ ರಾಜ್ಯದ ಜನರ ಗಮನಕ್ಕೆ ವಿಸ್ತೃತವಾಗಿ ಬಂದದ್ದು ಕಳೆದ ವರ್ಷ ನವೀನ್ ಸೂರಿಂಜೆ ನಮ್ಮ ವರ್ತಮಾನ.ಕಾಮ್‌ನಲ್ಲಿ “ಆಳ್ವಾಸ್ ನುಡಿಸಿರಿಗೆ ಅನಂತಮೂರ್ತಿ ಹೋಗುವುದು ಯುಕ್ತವೇ?” ಲೇಖನ ಬರೆದಾಗ. ಆ ಸಮಯದಲ್ಲಿ ಈ ವೇದಿಕೆಯಲ್ಲಿ nudisiri-ananthamurthyಅದು ಬಹಳ ಗಂಭೀರ ಚರ್ಚೆಗೆ ಒಳಪಟ್ಟಿತು ಮತ್ತು ಅದಕ್ಕೆ ತಾತ್ವಿಕ ಮಟ್ಟದಲ್ಲಿ ವಿರೋಧ ಮತ್ತು ವಿಮರ್ಶೆ ಆರಂಭವಾಯಿತು. ಧನಂಜಯ ಕುಂಬ್ಳೆ ಎನ್ನುವವರು ಸೂರಿಂಜೆಯವರ ಲೇಖನವನ್ನು ವಿಮರ್ಶಿಸಿ “ಆಳ್ವಾಸ್, ನುಡಿಸಿರಿ, ಅನಂತಮೂರ್ತಿ ಲೇಖನ : ಋಣಾತ್ಮಕ ಮತ್ತು ಪೂರ್ವಾಗ್ರಹಪೀಡಿತ” ಲೇಖನ ಬರೆದರು. ಅದಕ್ಕೆ ಉತ್ತರಿಸಿ ಸೂರಿಂಜೆ “ಆಳ್ವ ಮತ್ತು ನುಡಿಸಿರಿ ಸಮರ್ಥಕರ ಲೇಖನ ಪಕ್ಷಪಾತಪೀಡಿತ ಮತ್ತು ಅಸಾಂದರ್ಭಿಕ ಸುಳ್ಳುಗಳ ಕಂತೆ…” ಎಂಬ ಇನ್ನೊಂದು ಲೇಖನ ಬರೆದರು. ತೇಜ ಸಚಿನ್ ಪೂಜಾರಿ ಎಂಬ ಮಂಗಳೂರಿನ ಯುವಕ ಇದೇ ವಿಷಯದ ಮೇಲೆ ಅದ್ಭುತವೆನ್ನಿಸುವಂತಹ “ಅನಂತಮೂರ್ತಿ, ಆಳ್ವಾಸ್, ಹಾಗೂ ಅಸೋಸಿಯೇಶನ್” ಲೇಖನ ಬರೆದ. (ಅದಾದ ಮೇಲೆ ನಾಲ್ಕೈದು ಲೇಖನಗಳನ್ನು ಬರೆದ ತೇಜ ಸಚಿನ್ ಪೂಜಾರಿ, ಕೆಲಸವೊಂದು ಸಿಕ್ಕಿ ಬೆಂಗಳೂರಿಗೆ ಬಂದ ತಕ್ಷಣ ನಾಪತ್ತೆಯಾಗಿದ್ದಾರೆ. ಸಾಧ್ಯವಾದರೆ ಯಾರಾದರೂ ಹುಡುಕಿಕೊಡಬೇಕಾಗಿ ಮನವಿ!!)

ಮೂಡಬಿದ್ರೆಯ “ನುಡಿಸಿರಿ” ಎನ್ನುವುದನ್ನು ಅದರ ಆರಂಭದ ದಿನಗಳಲ್ಲಿ ಕೆಲವು ಮಂಗಳೂರಿನ ಲೇಖಕರು ಮತ್ತು ಪತ್ರಕರ್ತರು “ಕುಡಿಸಿರಿ” ಎಂದು ತಮಾಷೆ ಮಾಡುತ್ತಿದ್ದರು ಎಂದು ಹೊರಗಿನ ಜನರಿಗೆ ಗೊತ್ತಾಗಿದ್ದೇ ವರ್ಷದ ಹಿಂದೆ ಅದು ವರ್ತಮಾನ.ಕಾಮ್‌ನಲ್ಲಿ ಚರ್ಚೆಗೊಳಗಾದಾಗ.

ಅಂದಹಾಗೆ, ನುಡಿಸಿರಿಯ ಬೆಂಬಲಿಗರ ಹೇಳಿಕೊಳ್ಳುವ ಹಾಗೆ “ಆಳ್ವಾಸ್ ನುಡಿಸಿರಿ” ಹುಟ್ಟಿದ್ದೇ ಒಂದು ರೀತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ “ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ”ಕ್ಕೆ ಪರ್ಯಾಯವಾಗಿ.alvas-nudisiri-2 ಆಳ್ವಾಸ್‌ನ ಮೋಹನ ಆಳ್ವರು ದಶಕದ ಹಿಂದೆ ಮೂಡಬಿದ್ರೆಯಲ್ಲಿ ನಡೆದ “ಕನ್ನಡ ಸಾಹಿತ್ಯ ಸಮ್ಮೇಳನ”ದ ಸ್ಥಳೀಯ ಉಸ್ತುವಾರಿ ಹೊತ್ತಿದ್ದರು. ಅವರ ಪ್ರಕಾರ ಬಹಳ ಅದ್ಭುತವಾಗಿ ಅದನ್ನು ನಡೆಸಿಕೊಟ್ಟರು. ಆದರೆ ಆ ಅನುಭವ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿರುವ ಅಶಿಸ್ತು ಅವರಿಗೆ ಬೇಸರ ಮೂಡಿಸಿತು. ಹಾಗಾಗಿ ಅಂತಹ ಒಂದು ಕಾರ್ಯಕ್ರಮವನ್ನು ಹೇಗೆ “ಅಚ್ಚುಕಟ್ಟಾಗಿ” ಮಾಡುವುದು ಎನ್ನುವುದನ್ನು ತೋರಿಸುವುದಕ್ಕಾಗಿಯೇ “ಆಳ್ವಾಸ್ ನುಡಿಸಿರಿ”ಯನ್ನು ಸಾಹಿತ್ಯ ಪರಿಷತ್ತಿನ ಜನರ “ಸಾಹಿತ್ಯ ಸಮ್ಮೇಳನ”ಕ್ಕೆ ಪರ್ಯಾಯವಾಗಿ ಆರಂಭಿಸಲಾಯಿತು. ಈ ವಿಚಾರವನ್ನು “ಜನ ನುಡಿ” ಕಾರ್ಯಕ್ರಮ “ನುಡಿ ಸಿರಿ”ಗೆ ಪರ್ಯಾಯ ಎಂಬ ಮಾತು ಬಂದಾಕ್ಷಣ “ಜನ ನುಡಿ”ಯನ್ನು ವಿರೋಧಿಸಲು ಆರಂಭಿಸಿದವರು ಗಮನಿಸಬೇಕು. ತನ್ನೆಲ್ಲಾ ಸಮಯಪ್ರಜ್ಞೆಯ ಅಭಾವ, ಗೊಂದಲ, ಇತ್ಯಾದಿಗಳ ನಡುವೆ ಸಾಹಿತ್ಯ ಪರಿಷತ್ತಿನ “ಕನ್ನಡ ಸಾಹಿತ್ಯ ಸಮ್ಮೇಳನ” ಜನರದ್ದು. ನಾಡಿನ ಎಲ್ಲರಿಗೂ ಸೇರಿದ್ದು. kannada-sahithya-sammelanaಯಾವೊಬ್ಬ ವ್ಯಕ್ತಿಯ ಮೇಲೂ ಅವಲಂಬಿತವಲ್ಲ. ಏಳೆಂಟು ದಶಕಗಳಿಂದ ನಿರಂತರವಾಗಿ ನಡೆದುಬರುತ್ತಿದೆ. ತನ್ನೆಲ್ಲಾ ಇತಿಮಿತಿಗಳ ನಡುವೆಯೂ ಅದು ನಾಡಿನ ಪ್ರಜಾಸತ್ತಾತ್ಮಕ ಆಶಯಗಳನ್ನು ಎತ್ತಿಹಿಡಿಯುತ್ತ ಬರುತ್ತಿದೆ.

ಆದರೆ, “ಆಳ್ವಾಸ್ ನುಡಿಸಿರಿ” ಎನ್ನುವುದು ಸಂಪೂರ್ಣವಾಗಿ “one man show”. ಮೋಹನ ಆಳ್ವರ ಅನೇಕ ಹಿಂಬಾಲಕರು ಅವರ ನಾಯಕತ್ವದಲ್ಲಿ ಅದನ್ನು ನಡೆಸಿಕೊಡುತ್ತಾರೆ. ಬಹುಶಃ ಆ ಕಾರ್ಯಕ್ರಮದಲ್ಲಿ “ಮುಂಡಾಸು” ಧರಿಸುವುದು, ಅಧ್ಯಕ್ಷರನ್ನು ಹುಡುಗರ ಹೆಗಲ ಮೇಲೆ “ಅಡ್ಡ ಪಲ್ಲಕ್ಕಿ” ಹೊರೆಸಿ ಮೆರವಣಿಗೆ ಮಾಡುವುದು, ಇತ್ಯಾದಿ ಕೆಲವು ವಿಚಾರಗಳು ಹೇಗೆ “ಪ್ರಜಾಪ್ರಭುತ್ವ ವಿರೋಧಿ ಆಶಯ”ಗಳನ್ನು ಹೊಂದಿದೆ ಎನ್ನುವುದು ಅನೇಕರಿಗೆ ಬಹಳ ಬೇಗ ಹೊಳೆಯುವುದಿಲ್ಲ. ಸ್ಥಳೀಯ ಮೇಲ್ಜಾತಿಗಳ ಕೆಲವು ಪಾಳೇಗಾರಿಕೆ ಮತ್ತು ಪುರೋಹಿತಶಾಹಿ ಅಂಶಗಳು ಇಲ್ಲಿ ಸ್ವಲ್ಪವೂ ಹಿಂಜರಿಕೆಯಿಲ್ಲದೆ ಹೇಗೆ ಅಲ್ಲಿಯ ಎಲ್ಲರಿಗೂ ಒಪ್ಪಿತವೆಂಬಂತೆ ಮುನ್ನೆಲೆಗೆ ಬರುತ್ತವೆ ಎನ್ನುವುದನ್ನು ಸ್ಥಳೀಯ ಸೂಕ್ಷ್ಮಜ್ಞರು ಮಾತ್ರವೇ ಹೇಳಬಲ್ಲರು. ಯಾವುದಾದರೂ ಊರಿನಲ್ಲಿಯ ಸ್ಥಳೀಯ ಜನತೆ ಅಲ್ಲಿ ಒಂದು ಸುಂದರ ಸಾಂಸ್ಕೃತಿಕ ಮತ್ತು ಸಾಹಿತ್ಯಕ ವಾತಾವರಣ ರೂಪಿಸಿಕೊಳ್ಳುವುದರ ಬಗ್ಗೆ ನಾವೆಲ್ಲ ಸಂತಸ ಪಡಬೇಕು ಮತ್ತು ಅದು ಇತರ ಕಡೆಗೂ ಹರಡುವಂತೆ ಆಶಿಸಬೇಕು. ಆದರೆ, alva-veerendra-heggadeಮೂಡಬಿದ್ರೆಯಲ್ಲಿ ಆಗುತ್ತಿರುವ ಕಾರ್ಯಕ್ರಮ ಇನ್ನೊಂದು ಕಡೆ ನಕಲು ಅಥವ ಪುನರಾವರ್ತನೆ ಆಗಲು ಸಾಧ್ಯವಾಗದಂತಹ ಕಾರ್ಯಕ್ರಮ. ಇದು ಒಬ್ಬ ಮನುಷ್ಯನ ದುಡ್ಡು ಮತ್ತು ನಿಲುವು-ಒಲವುಗಳ ಮೇಲೆ ಆಗುವ ಕಾರ್ಯಕ್ರಮವೇ ಹೊರತು ಹಲವಾರು ಜನರ ಅಭೀಪ್ಸೆ ಮತ್ತು ಸಾಮೂಹಿಕ-ಸಾಮುದಾಯಿಕ ಪಾಳ್ಗೊಳ್ಳುವಿಕೆಯಿಂದ ಅಲ್ಲ.

ಮತ್ತೊಂದು, ತಾನು ಎಂಬತ್ತು ಕೋಟಿ ಸಾಲದಲ್ಲಿದ್ದೇನೆ ಎಂದು ಮೋಹನ ಆಳ್ವರು ಅಲವತ್ತುಕೊಂಡಿರುವುದು ಇಂದೂ ಸಹ ಕೆಲವು ಪತ್ರಿಕೆಗಳಲ್ಲಿ ಬಂದಿದೆ. ಅವರು “ನುಡಿಸಿರಿ” ಕಾರ್ಯಕ್ರಮ ಮಾಡಿ ಈ ಸಾಲ ಹೊತ್ತುಕೊಂಡಿದ್ಡಾರೊ ಅಥವ ತಮ್ಮ ಶಿಕ್ಷಣ ಸಂಸ್ಥೆಯ ಕಾರಣಕ್ಕಾಗಿಯೊ ಗೊತ್ತಾಗಿಲ್ಲ. ಮತ್ತು ಈ ಪರಿ ಸಾಲದಲ್ಲಿರುವಾಗಲೂ ಹತ್ತಿಪ್ಪತ್ತು ಕೋಟಿಗಳ ವೆಚ್ಚದಲ್ಲಿ ನುಡಿಸಿರಿ ನಡೆಸುವುದಾದರೂ ಏಕೆ? ಸಾಲವನ್ನು ಮುಂದಿನ ದಿನಗಳಲ್ಲಿ ಹೇಗೆ ಭರಿಸಲಿದ್ದಾರೆ? ಅವರು ಈ ಸಾಲದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುತ್ತಿರುವುದರಿಂದ ಒಂದು ಪ್ರಶ್ನೆಯನ್ನು ಸಾರ್ವಜನಿಕರೂ ಅವರಿಗೆ ಕೇಳಬಹುದು ಮತ್ತು ಪ್ರಾಮಾಣಿಕವಾದ ಉತ್ತರವನ್ನು ನಿರೀಕ್ಷಿಸಬಹುದು: “ಈ ವರ್ಷದ ನುಡಿಸಿರಿ ಮತ್ತು ವಿರಾಸತ್ ಕಾರ್ಯಕ್ರಮಕ್ಕೆ ಆಗುವ ಖರ್ಚೆಷ್ಟು, ಯಾವ ಬಾಬತ್ತಿಗೆ ಎಷ್ಟೆಷ್ಟು, ಇದಕ್ಕಾಗಿ ಸಂಗ್ರಹಿಸಿದ ಹಣವೆಷ್ಟು, vijaykarnataka-mohan-alva-22122013ಮತ್ತು ಆ ಹಣದ ಮೂಲ ಯಾವುದು?” ತಮ್ಮ ಊರುಗಳಲ್ಲಿಯೂ ಇಂತಹ ಕಾರ್ಯಕ್ರಮ ಮಾಡಬೇಕೆಂದು ಬಯಸುವವರಿಗೂ ಈ ಮಾಹಿತಿ ಸ್ವಲ್ಪ ಸಹಾಯ ಮಾಡುತ್ತದೆ.

ಈ ಸಾಲಿನ ಅಧ್ಯಕ್ಷರು ಕರಾವಳಿಯವರೇ ಆದ ವಿವೇಕ ರೈ. ಸಜ್ಜನ ಎಂದು ಹೆಸರು ಗಳಿಸಿದ ವಿದ್ವಾಂಸರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿ ಅವಧಿ ಇನ್ನೂ ಒಂದು ವರ್ಷ ಇರುವಾಗಲೇ ಅಲ್ಲಿಯ ರಾಜಕೀಯ ಮತ್ತು ಭ್ರಷ್ಟತೆಗೆ ರೋಸಿಹೋಗಿ (!?) ದೂರದ ಜರ್ಮನಿಗೆ ವರ್ಷಕ್ಕೆ ಹತ್ತಿಪ್ಪತ್ತು ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವಂತಹ ಯಾವುದೇ ಅಧಿಕಾರ ಮತ್ತು ಠೇಂಕಾರಗಳಿಲ್ಲದ ಕೆಲಸಕ್ಕೆ ಹೊರಟವರು. ಇಂತಹ ಗುಣದ ವಿವೇಕ ರೈರವರು ಕಳೆದ ವರ್ಷ ನವೀನ್ ಸೂರಿಂಜೆ ಬರೆದ “ಆಳ್ವಾಸ್ ನುಡಿಸಿರಿಗೆ ಅನಂತಮೂರ್ತಿ ಹೋಗುವುದು ಯುಕ್ತವೇ?” ಲೇಖನವನ್ನು ಬಹುವಾಗಿ ಮೆಚ್ಚಿಕೊಂಡು ಸ್ವತಃ ಜರ್ಮನಿಯಿಂದಲೇ ಸೂರಿಂಜೆಯವರಿಗೆ ಕರೆಮಾಡಿ ಅಭಿನಂದಿಸಿದವರು. ಅಷ್ಟೇ ಸಾಲದೆಂಬಂತೆ ಸೂರಿಂಜೆಯವರ ಫೇಸ್‌ಬುಕ್ ಖಾತೆಗೆ ದೀರ್ಘ ಪತ್ರವನ್ನೂ ಬರೆದಿದ್ದವರು. ಈ ವರ್ಷ ಯಾವೊಂದೂ ಹಿಂಜರಿಕೆ ಇಲ್ಲದೆ ಮತ್ತು ತಾವು ಹಿಂದೆ ಹೊಂದಿದ್ದ ನಿಲುವಿಗೆ ಸ್ಪಷ್ಟೀಕರಣ ನೀಡದೆ “ಆಳ್ವಾಸ್ ನುಡಿಸಿರಿ”ಗೆ ಸಮ್ಮೇಳನಾಧ್ಯಕ್ಷರಾಗಿದ್ದಾರೆ. ಕನ್ನಡ ಅಂತರ್ಜಾಲದಲ್ಲಿ ರೈರವರು ಸಕ್ರಿಯರೂ ಆಗಿದ್ದಾರೆ. ಅವರಿಗೆ ಬಹುಶಃ ವರ್ತಮಾನ.ಕಾಮ್ ಬಗ್ಗೆಯೂ ತಿಳಿದಿರಬಹುದು. ಹ್ಮೂ, ತಿಳಿದಿರದೇ ಏನು? ಇಲ್ಲಿ ಪ್ರಕಟವಾದ ಸೂರಿಂಜೆಯವರ ಲೇಖನಕ್ಕೇ ಅಲ್ಲವೇ ಅವರು ಆ ಲೇಖಕರೊಂದಿಗೆ ಪ್ರತಿಕ್ರಿಯೆ ಹಂಚಿಕೊಂಡಿದ್ದು. ಹಾಗಾಗಿ ತಾವು ಹಿಂದೆ ಹೇಳಿದ್ದೇನು ಮತ್ತು ತಮ್ಮ ಇಂದಿನ ನಿಲುವೇನು ಎನ್ನುವುದರ ಬಗ್ಗೆ ಅವರು ವರ್ತಮಾನ.ಕಾಮ್‌ಗೆ ಅಥವ ನವೀನ್ ಸೂರಿಂಜೆಯವರಿಗೆ ಒಂದು ಸ್ಪಷ್ಟೀಕರಣ ನೀಡಬೇಕೆಂದು ಬಯಸುವುದು ಅಸೌಜನ್ಯವಲ್ಲ ಎಂದು ನಾನು ಭಾವಿಸುತ್ತೇನೆ.

ಇನ್ನು “ಆಳ್ವಾಸ್ ನುಡಿಸಿರಿ”ಯ ಮೊದಲ ಅಧ್ಯಕ್ಷರಾಗಿದ್ದ ಬರಗೂರು ರಾಮಚಂದ್ರಪ್ಪನವರು alva-nudisiri-baraguru-mohan-alva-veerendra-heggade-vivek-raiಈ ವರ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದ ಬಗ್ಗೆ ಖಾರದ (ತುಸು ಹೆಚ್ಚೇ ಖಾರದ) “ಬರಗೂರು ಸನ್ಮಾನದ ಶಾಲಿನಲ್ಲಿ ಮೆತ್ತಿಕೊಂಡಿದ್ದ ರಕ್ತದ ಕಲೆಗಳು” ಲೇಖನವನ್ನು ಮಂಗಳೂರಿನ ಜೀವನ್ ಎನ್ನುವವರು ಬರೆದಿದ್ದಾರೆ. ಬರಗೂರರು ಈ ವರ್ಷದ ಸಮ್ಮೇಳನದಲ್ಲಿ ಅರ್ಧಕ್ಕೇ ಹಿಂದಿರುಗಿರುವುದೂ ಅದರಲ್ಲಿದೆ.

ಕಳೆದ ಶನಿವಾರ (14-12-13) ಮಂಗಳೂರಿನಲ್ಲಿ “ಜನ ನುಡಿ” ಆರಂಭವಾದ ದಿನದಂದೆ ಪ್ರಜಾವಾಣಿಯಲ್ಲಿ ನಾಗತಿಹಳ್ಳಿ ಚಂದ್ರಶೇಖರರ ಅಂಕಣ ಪ್ರಕಟವಾಗಿತ್ತು. ಇತ್ತೀಚಿನ ದಿನಗಳಲ್ಲಿ ಅಂಕಣ ಲೇಖನಗಳನ್ನು ಹುಮ್ಮಸ್ಸಿನಿಂದ ಓದದ ನಾನೂ ತಪ್ಪದೇ ಕಣ್ಣಾಡಿಸುವ ಕೆಲವೇ ಅಂಕಣಗಳಲ್ಲಿ ನಾಗತಿಹಳ್ಳಿಯವರದೂ ಒಂದು. ಅದನ್ನು ಈ ಬಾರಿ ಅವರು ಆಳ್ವರ ನುಡಿಸಿರಿ ಬಗ್ಗೆ ಮೀಸಲಿಟ್ಟಿದ್ದು ಮತ್ತು ಹಿಂದೆ ಅವರು ಅಲ್ಲಿ ಮಾಡಿದ್ದ ಭಾಷಣವನ್ನು ಅಚ್ಚುಹಾಕಿದ್ದು ನಿಜಕ್ಕೂ ಚೆನ್ನಾಗಿರಲಿಲ್ಲ. ಅದು ಅವರದಾಗಲಿ, ಅವರ ಅಂಕಣದ್ದಾಗಲಿ, ಘನತೆ ಹೆಚ್ಚಿಸುವ ಲೇಖನವಾಗಿರಲಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಅದೇ ಅಥವ ಅದಕ್ಕಿಂತ ತೀಕ್ಷ್ಣವಾದ ಅಭಿಪ್ರಾಯ ಹಲವು ಗೆಳೆಯರು ಹಂಚಿಕೊಂಡರು.

ನಮ್ಮ ಬಹುತೇಕ ಸಾಹಿತಿಗಳಿಗೆ ವೇದಿಕೆ-ಭಾಷಣ ಎಂದರೆ ಪ್ರಿಯವೇ. ಅದರಲ್ಲೂ ಕೆಲವರಿಗೆ ಸನ್ಮಾನ ಎಂದರೆ ಇನ್ನೂ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಫ್ಲೈಟ್‌ನಲ್ಲಿ, ಟ್ರೈನ್‌ನಲ್ಲಿ, ಕಾರಿನಲ್ಲಿ ಕರೆಸಿಕೊಳ್ಳುತ್ತಾರೆ ಎಂದರೆ ಇನ್ನೂ ಪ್ರೀತಿ. ಅಲ್ಲಿ ಎಣ್ಣೆ ಸಿಗುತ್ತದೆ ಎಂದರೆ ಕೇಳಲೇ ಬೇಡಿ. (ಆಳ್ವಾಸ್‌ನ ಕಾರ್ಯಕ್ರಮಕ್ಕೆ ಹೋಗಿದ್ದ ಅತಿಥಿಯೊಬ್ಬರ ಕೊಠಡಿಗೆ ಆಯೋಜಕ ಸಮಿತಿಯಲ್ಲೊಬ್ಬರು ಮದ್ಯದ ಬಾಟಲಿ ಕೊಂಡೊಯ್ದು ಕೊಟ್ಟಿದ್ದರು ಮತ್ತು ಆ ಬಗ್ಗೆ ಅತಿಥಿಗಳು ಬಹಳ ಪ್ರೀತಿಯಿಂದ ತಮ್ಮ ಲೇಖನವೊಂದರಲ್ಲಿ ಸ್ಮರಿಸಿದ್ದರು ಎಂದು ಯಾರೋ ಒಬ್ಬರು ಹೇಳುತ್ತಿದ್ದರು.) ಪಾಪ ಮೋಹನ ಆಳ್ವರು ಸಾಲಸೋಲ ಮಾಡಿ ಈ ಪರಿಯ ಆತಿಥ್ಯ ಕೊಡುವಾಗ ತೆಗೆದುಕೊಳ್ಳುವವರು ಯೋಚಿಸಿ ತೆಗೆದುಕೊಳ್ಳಬೇಕು. ಆದರೆ, ಸನ್ಮಾನ ಮತ್ತು ಬಿರುದಿನ ಪ್ರಶ್ನೆ ಬಂದಾಗ ನಮ್ಮ ಸಾಹಿತಿಗಳಿಗೆ ದೇಶ-ಕಾಲದ ಪರಿವೆ ಇಲ್ಲದಂತಾಗಿಬಿಡುವುದು ಅವರ ತಪ್ಪಲ್ಲ. ಬಹಳಷ್ಟು ಸಲ ಅದು ವಯೋಮಾನದ ತಪ್ಪು. ನವೀನ್ ಸೂರಿಂಜೆಯವರ ಲೇಖನದಲ್ಲಿ ಪ್ರಸ್ತಾಪವಾದಂತೆ “ಜಮೀನ್ದಾರರ ಮನೆಯ ಜಿಲೇಬಿ ಎಂದರೆ ಎಲ್ಲರಿಗೂ ಇಷ್ಟ”. ಸ್ವಹಿತಾಸಕ್ತ ಸಾಹಿತಿಗಳಿಗಂತೂ ತುಸು ಹೆಚ್ಚೇ ಇಷ್ಟ.

ಗಂಭೀರವಾಗಿ ಹೇಳಬಹುದಾದರೆ, ಒಬ್ಬರು ತಮ್ಮ ವೈಯಕ್ತಿಕ ಹಣ ಮತ್ತು ಅಂತಸ್ತಿನಿಂದ ಇಂತಹ ಕಾರ್ಯಕ್ರಮ ಮಾಡಿದರೆ ಅದರಲ್ಲಿ ಭಾಗವಹಿಸುವುದರ ಬಗ್ಗೆ ಎಲ್ಲರೂ ಸ್ವಲ್ಪ ಗಂಭೀರವಾಗಿ ಯೋಚಿಸಬೇಕು. (ಯಾಕೆ ಎಂದು ವಿವರಿಸಬೇಕು ಎಂದು ಇಲ್ಲಿ ಯಾರಾದರೂ ಓದುಗರು ಬಯಸಿದರೆ ಬಹುಶಃ ಅವರಿಗೆ ವಿವರಿಸಿದರೂ ಅರ್ಥವಾಗದು. ಅದಕ್ಕಾಗಿ ಅದನ್ನು ಅಲ್ಲಿಗೇ ಬಿಡುತ್ತೇನೆ.)

ಈಗ “ಜನ ನುಡಿ” ಕಾರ್ಯಕ್ರಮಕ್ಕೆ ಬರುತ್ತೇನೆ. “ಆಳ್ವಾಸ್ ನುಡಿಸಿರಿ”ಯನ್ನು ಆಳ್ವರ ಆಳದಲ್ಲಿರುವ ಮತೀಯ ತಾತ್ವಿಕತೆ ಮತ್ತು ತುಷ್ಟೀಕರಣವನ್ನು ಹಾಗೂ ಅದನ್ನು ತಮ್ಮ ಶಿಕ್ಷಣ ಸಂಸ್ಥೆಯ ಮಾರ್ಕೆಟಿಂಗ್ ತಂತ್ರವಾಗಿಯೂ ಬಳಸುತ್ತಾರೆ abhimata-page1ಎಂದು ಪ್ರಾಮಾಣಿಕವಾಗಿ ನಂಬಿರುವ ಮಂಗಳೂರಿನ ಅನೇಕ ಯುವಮಿತ್ರರು ಕಳೆದ ಒಂದು ವರ್ಷದಲ್ಲಿ ಆದ ಚರ್ಚೆಗಳ ಮೂಲಕ ಗಟ್ಟಿಯಾಗಿ ರೂಪುಗೊಂಡ ಅಭಿಪ್ರಾಯದ ಹಿನ್ನೆಲೆಯಲ್ಲಿ “ಅಭಿಮತ ಮಂಗಳೂರು” ವೇದಿಕೆಯ ಮೂಲಕ “ಜನ ನುಡಿ” ಕಾರ್ಯಕ್ರಮ ಆಯೋಜಿಸಿದ್ದರು. ಮುನೀರ್ ಕಾಟಿಪಳ್ಳ, ನವೀನ್ ಸೂರಿಂಜೆ, ಹೊನ್ನಾವರದ ಡಾ.ಎಚ್.ಎಸ್.ಅನುಪಮ ಸೇರಿದಂತೆ ಅನೇಕರ ಶ್ರಮ ಮತ್ತು ಕಾಳಜಿ ಈ ಕಾರ್ಯಕ್ರಮದ ಆಯೋಜನೆಯಲ್ಲಿತ್ತು. ನಾಡಿನ ಮೂಲೆಮೂಲೆಗಳಿಂದ ಬಂದಿದ್ದ ಸುಮಾರು 400-500 ಜನ ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅನೇಕರ ನೈತಿಕ ಬೆಂಬಲ ಮಾತ್ರವಲ್ಲದೆ ಬಹುಶಃ ನೂರಕ್ಕೂ ಹೆಚ್ಚು ಜನ ಸ್ವಯಂಇಚ್ಛೆಯಿಂದ ಕಾರ್ಯಕ್ರಮದ ಖರ್ಚುವೆಚ್ಚಗಳನ್ನು ನೋಡಿಕೊಂಡರು. ಯಾರು ಯಾರಿಗಾಗಿಯೂ ಸಾಲ ಮಾಡಿಕೊಳ್ಳಲಿಲ್ಲ. ಪ್ರತಿಷ್ಟೆ ಮೆರೆಸಲಿಲ್ಲ. ಯಾವುದೇ ರೀತಿಯ ಶುಲ್ಕವಿಲ್ಲದ ಮತ್ತು ಮೊದಲೇ ನೊಂದಾಯಿಸಬೇಕಾದ ಜರೂರತ್ತಿಲ್ಲದ ಈ ಕಾರ್ಯಕ್ರಮಕ್ಕೆ ಹೊರ ಊರುಗಳಿಂದ ಬಂದಿದ್ದವರಿಗೆ ಉಚಿತವಾಗಿ ಯಾವೊಂದೂ ತೊಂದರೆ ಇಲ್ಲದಂತೆ ಉಚಿತವಾಗಿ ಊಟ ಮತ್ತು ವಸತಿ ಸೌಕರ್ಯವನ್ನು ಕಾಟಿಪಳ್ಳ ಮತ್ತು ಗೆಳೆಯರು ಕಲ್ಪಿಸಿದ್ದರು. ಅಲ್ಲಿ ಬಂದು ಮಾತನಾಡಿದ ಬಹುತೇಕರು ಒಂದು ಪೈಸೆಯನ್ನೂ ತೆಗೆದುಕೊಳ್ಳದೆ ಪ್ರೀತಿಯಿಂದ ಭಾಷಣ ಮಾಡಿ, ಬೆರೆತು, ಮಾತನಾಡಿ ಹೋದರು. ಅಲ್ಲಿ abhimatha-mangalooru-jananudi-2ಭಯ-ಭಕ್ತಿ ಇರಲಿಲ್ಲ. ಹಾಗೆಯೇ ಪಂಕ್ತಿಭೇದಕ್ಕೆ ಹೆಸರಾದ ಅವಿಭಜಿತ ಮಂಗಳೂರು ಜಿಲ್ಲೆಯಲ್ಲಿಯೇ ಇದು ನಡೆದರೂ, ಕೇವಲ ಸಸ್ಯಾಹಾರ ಮಾತ್ರವಲ್ಲದೆ ಮೀನು ಮತ್ತು ಕೋಳಿ ಮಾಂಸದ ಪದಾರ್ಥಗಳಿದ್ದರೂ ಅಲ್ಲಿ ಯಾವುದೇ ಪಂಕ್ತಿಭೇದವಿರಲಿಲ್ಲ. ಯಾರೊಬ್ಬರೂ ಇನ್ನೊಬ್ಬರ ಊಟಾಹಾರದ ವಿಚಾರದ ಬಗ್ಗೆ ಅಸಹ್ಯ ಪಡಲಿಲ್ಲ. ಬದಲಿಗೆ ಪ್ರೀತಿ, ವಿಶ್ವಾಸ, ಪ್ರಾಮಾಣಿಕ ವಿಮರ್ಶೆಗಳು ಅಲ್ಲಿದ್ದವು. ಕಾಳಜಿ ಇತ್ತು. ಆಶಾವಾದವಿತ್ತು. ಉತ್ಸಾಹವಿತ್ತು. ನೈತಿಕತೆ ಇತ್ತು. ಒಬ್ಬರನ್ನೊಬ್ಬರು ಬೌದ್ಧಿಕವಾಗಿ ಬೆಳೆಸುವ ವಾತಾವರಣವಿತ್ತು. ಏನಿಲ್ಲದಿದ್ದರೂ “ಜನ ನುಡಿ”ಯಲ್ಲಿ ಪ್ರಜಾಸತ್ತಾತ್ಮಕ ಆಶಯವಿದೆ ಮತ್ತು ಅದರ ಆಯೋಜಕರಿಗೆ ಯಾರೊಬ್ಬರನ್ನೂ ಮೆರೆಸುವ ಅಥವ ಬಳಸಿಕೊಳ್ಳುವ ಉಮೇದಿದ್ದಂತಿಲ್ಲ. ಈಗ ಸಂಘಟಕರ ಮುಂದಿರುವ ದೊಡ್ಡ ಸವಾಲು ಅದನ್ನು ಮುಂದಿನ ವರ್ಷಗಳಲ್ಲಿ ಮುಂದುವರೆಸುವುದು ಮತ್ತು ಇನ್ನೂ ಚೆನ್ನಾಗಿ ಮಾಡುವುದು.

ಹಾಗೆಂದು ಇಲ್ಲಿ ಕುಂದುಕೊರತೆಗಳೇ ಇರಲಿಲ್ಲ ಎಂತಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲವೇ ಇಲ್ಲ ಎನ್ನುವ ರೀತಿ ಇದ್ದವು. ಗೋಷ್ಟಿಗಳಲ್ಲಿಯ ಬಹುತೇಕ ಎಲ್ಲಾ ಭಾಷಣಗಳೂ ಏಕಮುಖಿಯಾಗಿದ್ದವು. ಪ್ರತಿಕ್ರಿಯೆ ನೀಡುವುದು ಎನ್ನುವುದು ನಾಮಕಾಸ್ತೆಯಾಗಿ ಎಲ್ಲರೂ ವಿಷಯಮಂಡಕರಾಗುವ ವಾತಾವರಣ ಸೃಷ್ಟಿಸಲಾಗಿತ್ತು. abhimatha-mangalooru-jananudiಒಂದೊಂದು ಗೋಷ್ಟಿಯಲ್ಲಿ ಎಂಟೊಂಭ‌ತ್ತು ಭಾಷಣಕಾರರು. (ಮತ್ತು ಕೆಲವು ಭಾಷಣಕಾರರ ಅಗತ್ಯ ಇದ್ದಂತಿರಲಿಲ್ಲ.) ಸಭಿಕರು ಭಾಷಣ ಮಾಡಿದವರೊಂದಿಗೆ ವೇದಿಕೆಯಲ್ಲಿ ಸಂವಾದದಲ್ಲಿ ಪಾಳ್ಗೊಳ್ಳುವ ಅವಕಾಶವೇ ಇರಲಿಲ್ಲ. ಮಾತನಾಡಿದವರು ಬಹುತೇಕ ಒಂದೇ ತರಹದ ಜನ. ಅಂದರೆ, ಬಹುತೇಕರು ಲೇಖಕರು, ಅಧ್ಯಾಪಕರು, ಮತ್ತು ಪತ್ರಕರ್ತರು. ಒಂದೆರಡು ಗೋಷ್ಟಿಗಳಲ್ಲಿ ಚಳವಳಿಯಲ್ಲಿ ತೊಡಗಿಸಿಕೊಂಡವರಿದ್ದರು. ಸಾಹಿತಿ-ಪತ್ರಕರ್ತರನ್ನು ಹೊರತುಪಡಿಸಿ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಕೆಲವೇ ಕೆಲವು ಮಂದಿ ಹಾಗೂ ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ಇಪ್ಟಾ ಜೊತೆ ಸ್ಥಳೀಯ ಹಾಡುಗಾರರು (ಸೌಜನ್ಯಾ ಘಟನೆ ಕುರಿತು ಹಾಡಿದವರು) ಇದ್ದರು. ಬರಹ – ಪತ್ರಕರ್ತ ಹಾಗೂ ಕೆಲ ಹೋರಾಟಗಾರರಲ್ಲದೆ ಬೇರೆ ಯಾರೂ ಇರಲಿಲ್ಲ ಎನ್ನುವುದು ಸತ್ಯ. ಆದರೆ ನನ್ನ ಪ್ರಶ್ನೆ ಈ ವೇದಿಕೆಗೆ ಸೂಕ್ತವಾಗಬಲ್ಲ – ಸಂವೇದನಾಶೀಲ ನಟ-ನಟಿಯರು, ಧಾರಾವಾಹಿ-ಸಿನೆಮಾ ನಿರ್ದೇಶಕರು, ಮುಖ್ಯವಾಹಿನಿಯ ಟಿ.ವಿ. ಪತ್ರಕರ್ತರು ಇದ್ದಾರಾ? ಬರವಣಿಗೆ ಒಂದೇ ಅಭಿವ್ಯಕ್ತಿಯ ಮಾದರಿ ಅಲ್ಲ ಮತ್ತು ಅದರ ಆಚೆಗೂ ವಿಶಾಲ ಜನಸಮೂಹವನ್ನು ಪ್ರಭಾವಿಸುವ ಮತ್ತು ಪ್ರಚೋದಿಸುವ ಪ್ರಬಲ ಮಾಧ್ಯಮ ವಿಭಾಗಗಳಿವೆ ಎನ್ನುವುದನ್ನು ಆಯೋಜಕರು ಮರೆಯಬಾರದು. ಅಲ್ಲಿಗೆ ಬಂದಿರುವವರು ಇಂತಹ ಬೇರೆಬೇರೆ ಮಾಧ್ಯಮಗಳೊಂದಿಗೆ ಅನುಸಂಧಾನ ಮಾಡುವುದಾಗಲಿ, ಅಲ್ಲಿಗೆ ಹೋಗುವುದರ ಬಗ್ಗೆ ಆಗಲಿ ಕೆಲವು ಮಾತುಕತೆ ಚರ್ಚೆ ಯೋಜನೆಗಳು ಆಗಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಒಂದು ಮೂರು-ನಾಲ್ಕು ಗಂಟೆಗಳ ಕಾಲದ ಮುಕ್ತ ಚರ್ಚೆ ಇರಬೇಕಿತ್ತು. ಅಲ್ಲಿ ಮುಂದಿನ ನಡಾವಳಿ ಮತ್ತು ಯೋಜನೆಗಳ ಬಗ್ಗೆ ಅಭಿಪ್ರಾಯಕ್ಕೆ ಬರಬೇಕಿತ್ತು. ಪ್ರತಿಕ್ರಿಯಾತ್ಮಕವಾಗಿಯಷ್ಟೇ ಅಲ್ಲದ ಸೃಜನಶೀಲವಾಗಿ ಕಾರ್ಯಪ್ರವೃತ್ತರಾಗುವ ಮತ್ತು ಒಟ್ಟಾಗಿ ಕೆಲಸ ಮಾಡುವ ಬಗೆಗಳ ಹುಡುಕಾಟ ಇರಬೇಕಿತ್ತು. ಇದು ಮುಂದಿನ ವರ್ಷದಲ್ಲಾದರೂ ಆಗಬೇಕು.

ಇಂತಹ ಸಭೆಗಳಲ್ಲಿ ಮಾತನಾಡುವವರಿಗೆ ಸಲಹೆ ಅಥವ ಕೋರಿಕೆ ಅಂದರೂ ಆದೀತು. ಎಡಪಂಥೀಯ–ಅದರಲ್ಲೂ ಕಮ್ಯುನಿಸ್ಟ್ ವಿಚಾರಧಾರೆಯ ಚಿಂತನೆಗಳ–ಚಿಂತಕ ಮಹಾಶಯರು “ಕೋಮುವಾದ” ಮತ್ತು “ಬಂಡವಾಳಶಾಹಿ” ಎಂಬ ಎರಡು ಪದಗಳ ಬಳಕೆಯನ್ನು ಕಮ್ಮಿ ಮಾಡಿ ವಿಷಯ ಮಂಡಿಸಲು ಪ್ರಯತ್ನಿಸಬೇಕು. ರೇಜಿಗೆ ಹುಟ್ಟಿಸುವಷ್ಟು ಸಲ ಅದನ್ನು ಬಳಸುತ್ತಾರೆ. ಹಾಗೆಯೇ ಮಹಾತ್ಮ ಗಾಂಧಿಯ ನಾಡಿನ ಇತ್ತೀಚಿನ ರಾಜಕೀಯ ವ್ಯಕ್ತಿಯೊಬ್ಬರ ಹೆಸರನ್ನೂ ಸಹ ತಮ್ಮ ಭಾಷಣಗಳಲ್ಲಿ ಅನಗತ್ಯವಾಗಿ ಮತ್ತು ವಿಪರೀತವಾಗಿ ಉಲ್ಲೇಖಿಸದ ಹಾಗೆ ಸ್ವಯಂನಿಯಂತ್ರಣ ಹೇರಿಕೊಳ್ಳಬೇಕು. ವಿಷಯ ಮತ್ತು ಹೆಸರುಗಳ ಪುನರಾವರ್ತನೆ ಎರಡು ದಿನಗಳ ಕಾರ್ಯಕ್ರಮದಲ್ಲಿ ಆಗುವುದು ಅಸಹನೀಯ. ನಮ್ಮ ಪರಂಪರೆಯಲ್ಲಿ ಇದ್ದಿರಬಹುದಾದ ಉನ್ನತ ವ್ಯಕ್ತಿ ಮತ್ತು ವಿಚಾರಗಳನ್ನು ಪ್ರಸ್ತಾಪಿಸುತ್ತ ಸಮಕಾಲೀನ ಸಂದರ್ಭದ ಕೆಟ್ಟದ್ದರ ಬಗ್ಗೆ ಮಾತನಾಡುವುದು ಹೇಗೆ ಎನ್ನುವುದನ್ನು ಸಮಾಜದ ಬಗ್ಗೆ ಕಾಳಜಿಯುಳ್ಳ ಜನ ಕಲಿಯಬೇಕಿದೆ. ಇಲ್ಲದಿದ್ದರೆ ನಮ್ಮ ಭಾಷಣಗಳು ಕೇವಲ ವೈಯಕ್ತಿಕ ರಾಗ-ದ್ವೇಷಗಳ ಅಭಿವ್ಯಕ್ತಿಯಾಗುತ್ತದೆ.

“ಜನ ನುಡಿ”ಗೆ ಮತ್ತು ತಿಂಗಳ ಹಿಂದೆ ಹಾಸನದಲ್ಲಿ ನಡೆದ “ನಾವು-ನಮ್ಮಲ್ಲಿ” ಕಾರ್ಯಕ್ರಮಕ್ಕೆ ಹೋಗಿಬಂದ ನಂತರ ವರ್ತಮಾನ.ಕಾಮ್‌ನ ಪ್ರಸ್ತುತತೆ ಮತ್ತು ಅಗತ್ಯದ ಬಗ್ಗೆ ನನಗೆ ಯಾವ ಸಂಶಯಗಳೂ ಇಲ್ಲ. New-Logo1-01-022.jpgವರ್ತಮಾನ.ಕಾಮ್ ಯಾವುದೇ ಒಬ್ಬ ವ್ಯಕ್ತಿಯದ್ದಲ್ಲ. ನಮ್ಮಲ್ಲಿ ಬರೆದಿರುವ ನೂರಾರು ಜನ ಲೇಖಕರು ಸೇರಿ ಕಟ್ಟಿರುವ ವೇದಿಕೆ ಇದು. ಒಬ್ಬಿಬ್ಬರದೇ ಆಗಿದ್ದರೆ ಒಂದು ಬ್ಲಾಗ್ ಸಾಕಿತ್ತು. ಆದರೆ ಇದು ಒಂದು ರೀತಿಯಲ್ಲಿ ಸಾಮೂಹಿಕ ಜವಾಬ್ದಾರಿಯ, ಸಾಮೂಹಿಕ ಪ್ರಯತ್ನದ ಫಲ. ನಾವು ಹಾಕಿಕೊಂಡಿರುವ ಆಶಯಗಳಿಗೆ ತಕ್ಕನಾಗಿ ನಡೆಯುವ ತನಕ ಇದು ಮುಂದುವರೆಯುತ್ತದೆ. ಅದಾಗದ ದಿನ ನಿಲ್ಲುತ್ತದೆ.

ಅಂದಹಾಗೆ, ಇತ್ತೀಚಿನ ದಿನಗಳಲ್ಲಿಯ ನನ್ನ ಕಾರ್ಯದೊತ್ತಡದ ಕಾರಣಕ್ಕಾಗಿ ಇಲ್ಲಿ ಕೆಲವೊಂದು ನಿಯಮಗಳು ನಮಗೆ ಗೊತ್ತಿಲ್ಲದೆ ಮುರಿದಿವೆ. ಬೇರೆ ಕಡೆ, ಅದರಲ್ಲೂ ಬೇರೆ ವೆಬ್‌ಸೈಟ್-ಬ್ಲಾಗುಗಳಲ್ಲಿ ಈಗಾಗಲೆ ಪ್ರಕಟವಾಗಿರುವ ಲೇಖನಗಳನ್ನು courtesy-announcementಇಲ್ಲಿ ಪ್ರಕಟಿಸುವುದಿಲ್ಲ ಎನ್ನುವುದು. ಕೆಲವು ಉತ್ಸಾಹಿ ಲೇಖಕರು ಇತರೆ ಕಡೆಗಳಿಗೂ ಕಳುಹಿಸಿ ನಮಗೂ ಕಳುಹಿಸಿರುವಂತಹ ಸಂದರ್ಭದಲ್ಲಿ ಸರಿಯಾಗಿ ಪರಿಶೀಲಿಸದೆ ಇಲ್ಲಿ ಪ್ರಕಟಿಸಿಬಿಟ್ಟಿದ್ದೇವೆ. ವರ್ತಮಾನ.ಕಾಮ್‌ಗೆ ತನ್ನದೇ ಆದ ಐಡೆಂಟಿಟಿ ಇದೆ. ನಮ್ಮಲ್ಲಿ ಪ್ರಕಟವಾಗುವ ಲೇಖನಗಳನ್ನು ಇಲ್ಲಿ ಓದುವುದಕ್ಕಿಂತ ಹೆಚ್ಚಾಗಿ ರಾಜ್ಯದ ಅನೇಕ ಕಡೆ ಮರುಮುದ್ರಿಸುವ ಸ್ಥಳೀಯ ಪತ್ರಿಕೆಗಳಲ್ಲಿ ಜನ ಓದುತ್ತಾರೆ. ಹಾಗಾಗಿ ನಮ್ಮಲ್ಲಿ ಪ್ರಕಟವಾಗುವ ಲೇಖನಗಳಿಗೆ ಒಂದು ಶಿಸ್ತಿಲ್ಲದೆ ಹೋದರೆ ಕಷ್ಟ. ಲೇಖಕರು ಇದನ್ನು ಗಮನಿಸಿ ಸಹಕರಿಸಬೇಕೆಂದು ಕೋರುತ್ತೇನೆ.

ಹಾಗೆಯೇ, ನಮ್ಮಲ್ಲಿ ಪ್ರಕಟವಾದ ಲೇಖನಗಳನ್ನು ಕನ್ನಡದ ಇತರೆ ಕೆಲವು ವೆಬ್‌ಸೈಟ್ ಮತ್ತು ಬ್ಲಾಗುಗಳವರು ಮರುಪ್ರಕಟಿಸುತ್ತಾರೆ. ನಾವು ಈಗಾಗಲೆ ಹೇಳಿರುವ ಹಾಗೆ ಲೇಖನದ ಹಕ್ಕುಗಳು ಲೇಖಕರದು. ಇತರೆ ಕಡೆ ಪ್ರಕಟಿಸುವವರಲ್ಲಿ ಕೆಲವರು ಕೃಪೆ ವರ್ತಮಾನ.ಕಾಮ್ ಎಂದೋ, ಅಥವ ನೇರವಾಗಿ ಇಲ್ಲಿಯ ಲಿಂಕ್ ಅನ್ನೋ ಕೊಡುತ್ತಾರೆ. ಹಾಗೆ ಮಾಡದವರು ದಯವಿಟ್ಟು ಕೃಪೆ ಎಂದು ಇನ್ನು ಮುಂದಾದರೂ ಸೂಚಿಸಿ ಸ್ಪಷ್ಟವಾಗಿ ಇಂಗ್ಲಿಷಿನಲ್ಲಿ www.vartamaana.com ಎಂದು ಕೊಟ್ಟರೆ ಉತ್ತಮ. ಹೀಗಾದಲ್ಲಿ ಮಾತ್ರ ವರ್ತಮಾನ.ಕಾಮ್‌ನ ಓದುಗರೂ ಹೆಚ್ಚುತ್ತಾರೆ, ಹೆಚ್ಚುಹೆಚ್ಚು ಲೇಖಕರೂ ಬರೆಯುತ್ತಾರೆ, ನಮ್ಮ ಸಮಕಾಲೀನ ಸಂದರ್ಭದ ವಿಷಯಗಳೂ ಸಶಕ್ತವಾಗಿ ಚರ್ಚೆಗೊಳಪಡುತ್ತವೆ, ಮತ್ತು ಅದು ಕ್ರಿಯಾಶೀಲತೆಯೆಡೆಗೆ ನಮ್ಮ ಲೇಖಕರನ್ನು ಮತ್ತು ಓದುಗರನ್ನು ಒಯ್ಯುತ್ತದೆ. ಹಾಗಾಗಿ ದಯವಿಟ್ಟು ಎಲ್ಲರೂ ಸಹಕರಿಸಬೇಕೆಂದು ಮತ್ತೊಮ್ಮೆ ಕೋರುತ್ತೇನೆ.

ಮಂಗಳೂರಿನಲ್ಲಿ “ನುಡಿಸಿರಿ”ಗೆ ಪರ್ಯಾಯವಾಗಿ “ಜನ ನುಡಿ”

ಸ್ನೇಹಿತರೇ,

ಪ್ರತಿವರ್ಷ ಮಂಗಳೂರು ಜಿಲ್ಲೆಯ ಮೂಡಬಿದ್ರೆಯಲ್ಲಿ ಮೋಹನ್‌ ಆಳ್ವ ಎನ್ನುವ ಉದ್ಯಮಿಯ ಶಿಕ್ಷಣ ಸಂಸ್ಥೆಯಲ್ಲಿ “ನುಡಿಸಿರಿ” ಎನ್ನುವ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ನಡೆಯುತ್ತದೆ. ಈ ಉತ್ಸವದ ಹಿನ್ನೆಲೆ ಮತ್ತು ಅದರ ನೈಜ ಉದ್ದೇಶದ ಬಗೆ ನಾಡಿನ ಕೆಲವು ಜನರಿಗೆ ಕೆಲವು ಸಂಶಯಗಳಿವೆ. ಕಳೆದ ವರ್ಷ ನಾಡಿನ ಹಿರಿಯ ಸಾಹಿತಿ ಅನಂತಮೂರ್ತಿಯವರು ಈ “ನುಡಿಸಿರಿ” ಕಾರ್ಯಕ್ರಮದ ಉದ್ಘಾಟಕರು ಎಂದು ಘೋಷಣೆಯಾದ ಸಂದರ್ಭದಲ್ಲಿ ಮಂಗಳೂರಿನ ಪತ್ರಕರ್ತ ನವೀನ್ ಸೂರಿಂಜೆಯವರು ವರ್ತಮಾನ.ಕಾಮ್‌ನಲ್ಲಿ “ಆಳ್ವಾಸ್ ನುಡಿಸಿರಿಗೆ ಅನಂತಮೂರ್ತಿಯವರು ಹೋಗುವುದು ಯುಕ್ತವೇ” ಎಂಬ ಲೇಖನ ಬರೆದಿದ್ದರು. ಅದರ ಹಿನ್ನೆಲೆಯಲ್ಲಿ ಇದೇ ವೇದಿಕೆಯಲ್ಲಿ ಕೆಲವು ಚರ್ಚೆಗಳು ಆಗಿದ್ದವು.

ಈ ವರ್ಷದ ನುಡಿಸಿರಿಗೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಉದ್ಘಾಟಕರಾಗಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ವಿವೇಕ ರೈ‌ರವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಂದಹಾಗೆ, ಈ ಕಾರ್ಯಕ್ರಮದ ಅಧ್ಯಕ್ಷರನ್ನು ಅಡ್ಡಪಲ್ಲಕ್ಕಿಯಲ್ಲಿ ಆ ಶಿಕ್ಷಣಸಂಸ್ಥೆಯ ವಿದ್ಯಾರ್ಥಿಗಳು ಹೊರುತ್ತಾರೆ. Alvas-Nudisiri-2010ಈ ಬಾರಿ ವಿವೇಕ ರೈರವರೂ ಸಹ ಆ ಅಡ್ದಪಲ್ಲಕ್ಕಿಯಲ್ಲಿ ಕುಳಿತು ಅಲ್ಲಿಯ ವಿದ್ಯಾರ್ಥಿಗಳಿಂದ ಹೊರೆಸಿಕೊಂಡು, ಮೆರವಣಿಗೆ ಮಾಡಿಸಿಕೊಂಡು, ತದನಂತರ ತಮ್ಮ ಆಶೀರ್ವಚನ ಅಥವ ಪ್ರವಚನ ನೀಡಲಿದ್ದಾರೆ ಎನ್ನಿಸುತ್ತದೆ. ನಾಡಿನಲ್ಲಿ ಅಡ್ದಪಲ್ಲಕ್ಕಿ ಉತ್ಸವಗಳ ಬಗ್ಗೆ ಚರ್ಚೆಗಳಾಗುತ್ತಿರುವ ಸಂದರ್ಭದಲ್ಲಿ ಸಹಜವಾಗಿಯೇ ಇದನ್ನು ಕೆಲವರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಆಳ್ವಾಸ್ ನುಡಿಸಿರಿಯನ್ನು ಮತ್ತು ಅದರ ಹಿಂದೆ ಇದ್ದಿರಬಹುದಾದ ಹುನ್ನಾರಗಳನ್ನು ಅರಿತಿರುವ ಮಂಗಳೂರಿನ ಕೆಲವು ಲೇಖಕರು ಮತ್ತು ಸಾಮಾಜಿಕ ಕಾರ್ಯಕರ್ತರು ನಾಡಿನ ಹಲವು ಪ್ರಗತಿಪರ ಮನಸ್ಸುಗಳು ಮತ್ತು ಗುಂಪುಗಳೊಡನೆ ಸೇರಿ ಆಳ್ವಾಸ್ ನುಡಿಸಿರಿಗೆ ಪರ್ಯಾಯವಾಗಿ ಎರಡು ದಿನಗಳ ಸಾಹಿತ್ಯ ಸಮ್ಮೇಳನವೊಂದನ್ನು ಇದೇ ಶನಿವಾರ ಮತ್ತು ಭಾನುವಾರ ಆಯೋಜಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ವರ್ತಮಾನ.ಕಾಮ್ ಬಳಗ ನೈತಿಕ ಬೆಂಬಲ ಕೊಡುತ್ತಿದೆ ಮತ್ತು ವರ್ತಮಾನದ ಓದುಗರಿಗೂ ಈ ಮೂಲಕ ಆಹ್ವಾನಿಸಲಾಗುತ್ತಿದೆ. ನಮ್ಮ ಬಳಗದ ಹಲವು ಲೇಖಕರು ಮತ್ತು ಮಿತ್ರರೂ ಅಲ್ಲಿ ಬರಲಿದ್ದಾರೆ. ನೀವುಗಳೂ ಸಹ ದಯವಿಟ್ಟು ಬಂದು, ಭಾಗವಹಿಸಿ. ಕಾರ್ಯಕ್ರಮಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಶನಿವಾರದ ರಾತ್ರಿ ವಸತಿ ಸೌಕರ್ಯ ಇರುತ್ತದೆ, ಮತ್ತು ಎರಡೂ ದಿನ ತಿಂಡಿ-ಊಟದ ವ್ಯವಸ್ಥೆ ಇರುತ್ತದೆ.

ಈ ಕಾರ್ಯಕ್ರಮದ ಬಗ್ಗೆ ನಿರ್ವಾಹಕರು ಹಂಚಿಕೊಂಡಿರುವ ಅಭಿಪ್ರಾಯ ಮತ್ತು ಕಾರ್ಯಕ್ರಮದ ವಿವರಗಳನ್ನು ಕೆಳಗೆ ಕೊಡಲಾಗಿದೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ, ವರ್ತಮಾನ.ಕಾಮ್

ಆತ್ಮೀಯರೆ,

ವರ್ತಮಾನದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುವವರಿಗೆ ಒಂದು ವಿಷಯ ಸ್ಪಷ್ಟವಾಗುತ್ತದೆ: ಮೂಲಭೂತವಾದ ಹಾಗೂ ಬಂಡವಾಳವಾದ ಈ ಎರಡೂ ಸಾಹಿತ್ಯ-ಸಂಸ್ಕೃತಿಗಳ ಮುಖವಾಡ ತೊಟ್ಟು ಜನಪರವೆಂದು ಬಿಂಬಿಸಿಕೊಳ್ಳುತ್ತ ತಮ್ಮ ಕಾರ್ಯಯೋಜನೆಗಳಿಗೆ ಮನ್ನಣೆ ಪಡೆಯುತ್ತಲಿರುವುದು; ಅಷ್ಟೇ ಅಲ್ಲ, ಜನಸಾಮಾನ್ಯರ ದೈನಂದಿನ ಬದುಕಿನೊಳಗೂ ಮಾರುಕಟ್ಟೆ ಮತ್ತು ಧಾರ್ಮಿಕ ಹಿತಾಸಕ್ತಿ ಅನಾರೋಗ್ಯಕರ ಪೈಪೋಟಿ ಹಾಗೂ ಅಸಹನೆ ಹುಟ್ಟುಹಾಕುತ್ತಿರುವುದು. ಸೂಕ್ಷ್ಮಜ್ಞನಾಗುಳಿದು ವ್ಯವಸ್ಥೆಯ ಲೋಪದೋಷಗಳನ್ನೆತ್ತಿ ತೋರಿಸಬೇಕಾದ ಸಾಹಿತಿ-ಕಲಾವಿದ-ಸಂಘಟನೆಯ ವ್ಯಕ್ತಿಗಳು ಇಂಥವರ ಮಾರುವೇಷದ ಮರ್ಮ ಅರ್ಥಮಾಡಿಕೊಳ್ಳದೇ ಅದರ ಭಾಗವಾಗುತ್ತಿದ್ದಾರೆ. ತಿಳಿದೋ, ತಿಳಿಯದೆಯೋ ಈ ವರ್ತುಲದ ಸಹಭಾಗಿಗಳಾಗುತ್ತಿದ್ದಾರೆ. ಈ ಬೆಳವಣಿಗೆಯಿಂದ ಭವಿಷ್ಯದ ದಿಕ್ಸೂಚಿಯಾಗಬೇಕಾದ ಸಾಹಿತಿ-ಕಲಾವಿದರು ಸಾಹಿತ್ಯ ಮತ್ತು ಸಂಸ್ಕೃತಿಯ ಮಹಾಪೋಷಕರ ಋಣಭಾರ ಮತ್ತು ಆಮಿಷಕ್ಕೊಳಗಾಗಿ ಆತ್ಮವಂಚನೆ ಮಾಡಿಕೊಳ್ಳುವ ಅಪಾಯವಿದೆ. ಇದು ಯುವ ಪೀಳಿಗೆಯದ ದಿಕ್ಕು ತಪ್ಪಿಸುವ, ಗೊಂದಲಗೊಳಿಸುವ ಅಪಾಯ ದಟ್ಟವಾಗಿದೆ.

ಹೀಗಿರುತ್ತ ಸಮಾನ ಮನಸ್ಕರು ಒಂದೆಡೆ ಸೇರಿ, ಜನರಿಂದಲೇ ಹಣ ಸಂಗ್ರಹಿಸಿ, ಜನಪರವಾದ ಚಿಂತನೆಗಳನ್ನು ನಡೆಸಿ ಆ ಮೂಲಕ ಪರ್ಯಾಯ ಮಾದರಿಯೊಂದನ್ನು ರೂಪಿಸುವ ಅಗತ್ಯ ಬಹಳವಾಗಿದೆ.

ಈ ಹಿನ್ನೆಲೆಯೊಂದಿಗೆ, ‘ಅಭಿಮತ, ಮಂಗಳೂರು’ ಎಂಬ ವೇದಿಕೆ ರೂಪುಗೊಂಡಿದ್ದು ಡಿ. 14, 15 ರಂದು ಮಂಗಳೂರಿನಲ್ಲಿ ‘ಜನ ನುಡಿ’ ಸಮಾವೇಶವನ್ನು ನಡೆಸಲು ಯೋಜಿಸಲಾಗಿದೆ. ಸಮಾನ ಮನಸ್ಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸಿದ್ಧವಾದ ಕಾರ್ಯಕ್ರಮದ ವಿವರಗಳು ಹೀಗಿವೆ:

abhimata-page1
abhimata-page1
abhimata-page1
abhimata-page1
abhimata-page1
ಬನ್ನಿ, ಗೆಳೆಯರೊಂದಿಗೆ.

ನಿಮ್ಮ ಸಹಭಾಗಿತ್ವದ ನಿರೀಕ್ಷೆಯಲ್ಲಿ..
– ಅಭಿಮತ, ಮಂಗಳೂರು

ಸಾಮಾಜಿಕ ಜಾಲತಾಣಗಳಲ್ಲಿ ಕೋಮುವಾದಿಗಳೇ ತುಂಬಿದ್ದಾರೆಯೆ?


– ರವಿ ಕೃಷ್ಣಾರೆಡ್ದಿ


 

ಹಾಸನದಲ್ಲಿ ಕಳೆದ ವಾರಾಂತ್ಯ ನಡೆದ “ನಾವು ನಮ್ಮಲ್ಲಿ”ಯ “ಅಭಿವ್ಯಕ್ತಿ ಕರ್ನಾಟಕ” ಕಾರ್ಯಕ್ರಮದಲ್ಲಿ ನಮ್ಮ ವರ್ತಮಾನ.ಕಾಮ್ ಬಳಗದ ಲೇಖಕರಲ್ಲೊಬ್ಬರಾದ ತೇಜ ಸಚಿನ್ ಪೂಜಾರಿಯವರು “ಅಭಿವ್ಯಕ್ತಿಯ ಬಹುರೂಪಿ ನೆಲೆ ಮತ್ತು ಅಭಿವ್ಯಕ್ತಿಯ ಆತಂಕಗಳು” ಗೋಷ್ಠಿಯಲ್ಲಿ “ಸಾಮಾಜಿಕ ಜಾಲತಾಣ” ವಿಷಯವಾಗಿ ತಮ್ಮ ಅಭಿಪ್ರಾಯ ಮಂಡಿಸಿದರು. sachin-teja-poojariಅವರ ಮಾತಿನ ನಂತರ ನಡೆದ ಸಂವಾದದಲ್ಲಿ ಅಲ್ಲಿ ಭಾಗವಹಿಸಿದ್ದ ಹಲವು ಸ್ನೇಹಿತರು “ಇವತ್ತಿನ ಸಾಮಾಜಿಕ ಜಾಲತಾಣಗಳಲ್ಲಿ ಅಸಹನೆಯನ್ನೇ ತುಂಬಿಕೊಂಡಿರುವ ಕೋಮುವಾದಿ ಚಿಂತನೆಯ ಜನರೇ ತುಂಬಿಕೊಂಡಿದ್ದಾರೆ. ನಾವು ಅವರಿಗೆ ಅಪಥ್ಯವಾದದ್ದೇನಾದರೂ ಬರೆದರೆ ಹಾಗೆಯೇ ಮುಗಿದು ಬೀಳುತ್ತಾರೆ. ನಮ್ಮಂತಹ ವಿಚಾರಧಾರೆಯ ಜನರ ಅಭಿಪ್ರಾಯಗಳಿಗೆ ಅಸಹ್ಯಕಾರಿಯಾಗಿ ವಾಗ್ದಾಳಿ ಮಾಡುತ್ತಾರೆ,” ಎಂದು ಆತಂಕದಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇವರ ಅಭಿಪ್ರಾಯಕ್ಕೆ ನಾನು ನನ್ನ ಅನುಭವದ ಹಿನ್ನೆಲೆಯಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆ ಕನ್ನಡದ ಅಂತರ್ಜಾಲ ಜಗತ್ತು ಹೇಗಿತ್ತು ಮತ್ತು ಈಗ ಹೇಗಿದೆ ಎಂದು ಮಾತನಾಡುತ್ತ 2008 ರಲ್ಲಿ ನಾನು ನನ್ನ “ಅಮೆರಿಕದಿಂದ ರವಿ” ಬ್ಲಾಗಿನಲ್ಲಿ ಬರೆದಿದ್ದ “ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ…” ಲೇಖನವನ್ನು ನೆನಪಿಸಿ ಮಾತನಾಡಿದೆ.

ಇಂದು ಕನ್ನಡದ ಅಂತರ್ಜಾಲ ಜಗತ್ತು ಒಂದಷ್ಟು ಮಟ್ಟಿಗಾದರೂ ನಿಜ ಕರ್ನಾಟಕವನ್ನು ಪ್ರತಿನಿಧಿಸುತ್ತದೆ. ಆದರೆ ಐದಾರು ವರ್ಷಗಳ ಹಿಂದಿನ ತನಕವೂ ಹಾಗೆ ಇರಲಿಲ್ಲ. ಸುಮಾರು 2007 ರ ನಂತರ ಈ ವಾತಾವರಣ ಬದಲಾಗುತ್ತ ಹೋಯಿತು. ಆ ಸಂದರ್ಭದಲ್ಲಿ ಅದನ್ನು ಗಮನಿಸಿ ಈ ಸ್ಥಿತ್ಯಂತರವನ್ನು ದಾಖಲಿಸಬೇಕು ಎಂದು ನಾನು ಈ ಲೇಖನ ಬರೆದಿದ್ದೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಕೋಮುವಾದಿ ಮತ್ತು ಜಾತಿವಾದಿಗಳಲ್ಲದ ಅನೇಕ ಪ್ರಗತಿಪರರು ಇಂದು ಅಂತರ್ಜಾಲದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಅವರು ಒಬ್ಬಂಟಿಗಳಲ್ಲ. ಬಹುಸಂಖ್ಯಾತರಲ್ಲದಿರಬಹುದು, ಆದರೆ ಕನ್ನಡ ಅಂತರ್ಜಾಲ ಲೋಕದಲ್ಲಿ ಹೆಚ್ಚಿಗೆ ಬರೆಯುತ್ತಿರುವವರು ಮತ್ತು ಸಕ್ರಿಯರಾಗಿರುವವರು ಅವರೇ. ಫೇಸ್‌ಬುಕ್‌ನಲ್ಲಿ ಅವರು ಕಾಮೆಂಟ್ ಹಾಕುವುದೊ, ಚರ್ಚೆ-ಸಂವಾದ ಮಾಡುವುದೋ, ಕಮ್ಮಿ ಇರಬಹುದು. ಆದರೆ ನಿಜವಾದ ಕಂಟೆಟ್ ಏರಿಸುತ್ತಿರುವವರಲ್ಲಿ ಅವರು ಮುಂಚೂಣಿಯಲ್ಲಿಯೇ ಇದ್ದಾರೆ.

ಹಾಗಾಗಿ, ನಮ್ಮ ಪ್ರಗತಿಪರ, ಜಾತ್ಯತೀತ, ಪ್ರಜಾಪ್ರಭುತ್ವವಾದಿ ಯುವಮಿತ್ರರಿಗೆ ನಾನು ಹೇಳುವುದೇನೆಂದರೆ, ಕಾಲ ಬದಲಾಗಿದೆ. ಜೋರು ಅಥವ ಒರಟು ಅಥವ ಅಸಹ್ಯ ಮಾತುಗಳಿಗೆ ಬೇಸರಿಸಿಕೊಂಡು ಇಲ್ಲಿ ಅವರೇ ಇದ್ದಾರೆ ಎಂದುಕೊಳ್ಳುವುದು ಬೇಡ. ಇನ್ನಷ್ಟು ಎಚ್ಚರಿಕೆಯಿಂದ, ಸಂಯಮದಿಂದ, ಸಕ್ರಿಯವಾಗಿ, ಪ್ರಾಮಾಣಿಕವಾಗಿ ನಿಮ್ಮ ಚಟುವಟಿಕೆಗಳನ್ನು ಮುಂದುವರೆಸುತ್ತ ಹೋಗಿ. ನೀವು ಒಬ್ಬಂಟಿಗಳಲ್ಲ. ಹಾಗೆಯೇ, ನೀವು ಬಹುಸಂಖ್ಯಾತರಾಗುವ ಸಮಯ ಬಂದಾಗ ಇಂದು ನೀವು ಯಾರನ್ನು ವಿಮರ್ಶಿಸುತ್ತಿದ್ದೀರೋ ಅವರಂತೆಯೇ ಅಹಂಕಾರ ಮತ್ತು ಅಸಹನೆ ಬೆಳೆಸಿಕೊಳ್ಳದೆ ವಿವೇಕ ಮತ್ತು ಸಜ್ಜನಿಕೆಯಿಂದ ವರ್ತಿಸಿ. ಮನುಷ್ಯ ಹಲವು ಎಡರುತೊಡರುಗಳ ನಡುವೆಯೂ ಪ್ರತಿದಿನವೂ ಒಳ್ಳೆಯ ದಿನಗಳನ್ನು ಕಟ್ಟಿಕೊಳ್ಳುವುದರತ್ತ ನಡೆಯುತ್ತಿದ್ದಾನೆ. ಭವಿಷ್ಯ ನಾವು ಕಟ್ಟಿಕೊಳ್ಳುವ ರೀತಿಯಲ್ಲಿರುತ್ತದೆ.

ಅಕ್ಟೋಬರ್ 6, 2008 ರಲ್ಲಿ ಬರೆದಿದ್ದ ಆ ಲೇಖನವನ್ನು ಪೂರಕ ಓದಿಗೆ ಇಲ್ಲಿ ಒದಗಿಸಲಾಗುತ್ತಿದೆ.

ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ…

ಇಂತಹದೊಂದು ವಿಶ್ವಾಸ ನನಗೆ ಮೊದಲಿನಿಂದಲೂ ಇತ್ತು. ಆರ್ಥಿಕ ಅಭಿವೃದ್ಧಿ ಕೊನೆಗೂ ತಳವರ್ಗಗಳನ್ನೂ, ಗ್ರಾಮಾಂತರವನ್ನೂ ಮುಟ್ಟುತ್ತದೆ ಮತ್ತು ಅದು ಕಾಲಾಂತರದಲ್ಲಿ ಅಂತರ್ಜಾಲದಲ್ಲೂ ಪ್ರತಿಬಿಂಬಿಸುತ್ತದೆ ಎನ್ನುವುದೇ ಆ ವಿಶ್ವಾಸ.

ನಾನು ಬರೆಯಲಾರಂಭಿಸಿದ್ದು 2003 ರಲ್ಲಿ. ಆಗ ನನ್ನಂತಹ ವಿದೇಶದಲ್ಲಿದ್ದವನಿಗೆ ಕನ್ನಡದಲ್ಲಿ ಏನಾದರೂ ಬರೆದರೆ ಪ್ರಕಟಿಸುವ ಅವಕಾಶ ಇದ್ದದ್ದು ದಟ್ಸ್‌ಕನ್ನಡ ವೆಬ್‌ಸೈಟಿನಲ್ಲಿ. ಶಾಮಸುಂದರ್ ಮತ್ತವರ ಬಳಗ ನನ್ನಂತಹ ಅನೇಕ ಭಿನ್ನ ವೈಚಾರಿಕ ಹಿನ್ನೆಲೆ ಇರುವವರಿಗೆಲ್ಲ ವೇದಿಕೆ ಕೊಟ್ಟಿದ್ದರು. ಬಹುಶಃ, ಸಂವಾದಕ್ಕೆ ಆಸ್ಪದವಿದ್ದ ಮೊದಲ ಕನ್ನಡ ತಾಣ ಅದು.

ಅಷ್ಟಿದ್ದರೂ, ಕನ್ನಡ ಅಂತರ್ಜಾಲ ಪ್ರಪಂಚದಲ್ಲಿ ಮೊದಲಿನಿಂದಲೂ ಬಹುಸಂಖ್ಯಾತರಾಗಿದ್ದವರು ಕೋಮುವಾದಿಗಳು (ಜಾತಿವಾದಿಗಳೂ ಇದರಲ್ಲೆ ಬರುತ್ತಾರೆ) ಮತ್ತು ತಮ್ಮ ಗತಕಾಲದ ಹಿರಿಮೆಯ ಬಗ್ಗೆ (!) ನಾಸ್ಟಾಲ್ಜಿಕ್ ಆಗಿ ಬರೆಯುವ, ಅಂತಹುದನ್ನೆ ಓದುವವರು. ನಾನು ಬರೆಯಲು ಆರಂಭಿಸಿದ ದಿನಗಳಲ್ಲಂತೂ ಇದು ಎದ್ದು ಕಾಣುವ ಹಾಗೆ ಇತ್ತು. ಸಂಸ್ಕೃತಿ, ದೇಶ, ಜಾತಿ, ಮತ, ಮುಂತಾದವುಗಳ ಪರ ಭಾವಾವೇಶದಿಂದ ಬರೆಯುವವರೆ ಅಂತರ್ಜಾಲದಲ್ಲಿ ತುಂಬಿದ್ದ ಸಮಯ ಅದು. ಆ ಸಮಯದಲ್ಲಿ ಇವುಗಳಿಗೆ ಭಿನ್ನವಾಗಿ (ಸಂಕುಚಿತ ಭಾವನೆಗಳನ್ನು ವಿಮರ್ಶಿಸಿ) ಬರೆಯುವವರು ಬೆರಳೆಣಿಕೆ ಮಂದಿ ಮಾತ್ರ ಇದ್ದರು. ಈ “ಜನಪ್ರಿಯ ಸಿದ್ಧಮಾದರಿ”ಗಳಿಗಿಂತ ಬೇರೆಯದಾಗಿ ಬರೆಯಲಾರಂಭಿಸಿದ್ದ ನನಗೆ ಆ ಸಮಯದಲ್ಲಿ ಸಮಾನಮನಸ್ಕರು ಬಹಳ ಕಮ್ಮಿ ಇದ್ದರು. (ಆದರೆ, ಕನ್ನಡ ಬರಹಲೋಕ ಹಾಗೆ ಇರಲಿಲ್ಲ. ಅಲ್ಲಿ ನಡೆಯುತ್ತಿದ್ದ ಚಿಂತನೆಗಳಿಗೂ ಮತ್ತು ಅಂತರ್ಜಾಲದಲ್ಲಿನ ಕನ್ನಡಲೋಕಕ್ಕೂ ಅಪಾರವಾದ ವ್ಯತ್ಯಾಸಗಳಿದ್ದವು. ಕನ್ನಡ ಅಂತರ್ಜಾಲ ಲೋಕ ಕನ್ನಡದ ಚಿಂತನಾಲೋಕದ ಪ್ರತಿಬಿಂಬ ಆಗಿರಲಿಲ್ಲ ಆಗ.)

ಆಗೆಲ್ಲ ನನ್ನಲ್ಲಿ, ಈ ಪರಿಸ್ಥಿತಿ ಯಾವಾಗ ಬದಲಾಗುತ್ತದೆ, ಕನ್ನಡದ ಅಂತರ್ಜಾಲವೂ ನಿಜವಾದ ಕನ್ನಡ-ಪ್ರಪಂಚವನ್ನು ಪ್ರತಿಬಿಂಬಿಸುವುದು ಯಾವಾಗ ಎನ್ನುವ ಪ್ರಶ್ನೆಗಳು ಹುಟ್ಟುತ್ತಿದ್ದವು. ಆ ಪ್ರಶ್ನೆಗಳಿಗೆ ಮೇಲೆ ಹೇಳಿದ ವಿಶ್ವಾಸ ಉತ್ತರವಾಗುತ್ತಿತ್ತು. ಈ ಆರ್ಥಿಕ ಪ್ರಗತಿ ಕೊನೆಗೆ ಎಲ್ಲಾ ವರ್ಗಗಳಿಗೂ ಒಂದಲ್ಲ ಒಂದು ರೀತಿಯಲ್ಲಿ ಇಳಿಯಲೇಬೇಕು (ಇಲ್ಲಿ ನೋಡಿ), ಒಟ್ಟಾರೆ ಅದು ನಿಧಾನವಾಗಿ ಎಲ್ಲರನ್ನೂ ಮೇಲಕ್ಕೆತ್ತುತ್ತದೆ (ಇಲ್ಲಿ ನೋಡಿ), ಆಗ ಅದು ಅಂತರ್ಜಾಲದಲ್ಲೂ ಪ್ರತಿಬಿಂಬಿತವಾಗುತ್ತದೆ, ಎನ್ನುವ ಆಶಾವಾದ ಅದು.

ಬಹುಶಃ ಒಂದು-ಎರಡು ವರ್ಷಗಳಿಂದ ನನ್ನ ಆಶಾವಾದ ವಾಸ್ತವವಾಗುತ್ತಿರುವುದನ್ನು ನೋಡುತ್ತಿದ್ದೇನೆ. ನಾಲ್ಕೈದು ವರ್ಷಗಳ ಹಿಂದೆ ಬೆಂಗಳೂರಿನ ಬಹುತೇಕ ಕನ್ನಡ ಸಾಹಿತಿಗಳಿಗೆ (ಅದರಲ್ಲೂ ಪ್ರಗತಿಪರರೆಂದುಕೊಳ್ಳುವವರಿಗೆ) ’ಇಂಟರ್‍ನೆಟ್ ನೋಡುವುದಿಲ್ಲ, ಇಮೇಲ್ ಗೊತ್ತಿಲ್ಲ,’ ಎನ್ನುವುದು ಬಹಳ ಹೆಮ್ಮೆಯ ವಿಷಯವಾದಂತಿತ್ತು. ತಾವು ಬಡವರ, ದುರ್ಬಲರ, ದಲಿತರ, ಹಿಂದುಳಿದವರ ಪರ ಇದ್ದೇವೆ ಎಂದು ತೋರಿಸಿಕೊಳ್ಳಲು ತಮಗೆ ತಾವೆ ಮಾಡಿಕೊಳ್ಳುವ ಆತ್ಮದ್ರೋಹದಂತೆ ನನಗದು ಕಾಣಿಸುತ್ತಿತ್ತು. ಆದರೆ ಯಾವಾಗ ಕಂಪ್ಯೂಟರ್‌ಗಳು ಮತ್ತು ಇಂಟರ್‌ನೆಟ್ affordable ಆಗುತ್ತಾ ಬಂತು, ಅವರಿಗೂ ಇದರಿಂದ ಆಚೆ ಉಳಿಯಲಾಗಲಿಲ್ಲ, ಆಗುತ್ತಿಲ್ಲ. ಅದರಲ್ಲೂ ವಿಭಿನ್ನ ಹಿನ್ನೆಲೆಯ ಯುವಕರು ಶಿಕ್ಷಣ ಮತ್ತು ನೌಕರಿಯ ಸಾಧ್ಯತೆಗಳಿಂದಾಗಿ ದಿನವೂ ಕಂಪ್ಯೂಟರ್‌ನೊಂದಿಗೇ ಕೆಲಸ ಮಾಡುವಂತಹ ಪರಿಸ್ಥಿತಿ ಉಂಟಾದುದರಿಂದ ಒಂದು ಬಹುದೊಡ್ಡ, ಬಹುಸಂಖ್ಯಾತ ಜನಸಮೂಹವೆ ಇವತ್ತು ಕಂಪ್ಯೂಟರ್‌ಗೆ ತೆರೆದುಕೊಂಡಿದೆ. ಕಳೆದ ಎರಡು ವರ್ಷಗಳಲ್ಲಿ ಕನ್ನಡ ವೆಬ್‌ಲೋಕ ಬದಲಾಗಿರುವ ಪರಿಸ್ಥಿತಿಯನ್ನು ಅವಲೋಕಿಸಿದರೆ ಸಾಕು, ಇದು ಸ್ಪಷ್ಟವಾಗಿ ಕಾಣಿಸುತ್ತದೆ.

ಯಾವಾಗ ಬ್ಲಾಗುಗಳನ್ನು ಮಾಡಿಕೊಳ್ಳುವುದು ಮುಕ್ತವೂ, ಉಚಿತವೂ, ಸುಲಭವೂ ಆಯಿತೊ ಅಲ್ಲಿಂದೀಚೆಗೆ ನಾನಾ ಹಿನ್ನೆಲೆಯ ಜನ ಕನ್ನಡ ಅಂತರ್ಜಾಲ ಲೋಕಕ್ಕೆ ಅಡಿಯಿಟ್ಟಿದ್ದಾರೆ. ಮೊದಮೊದಲು ಇಲ್ಲಿಯೂ ಕೋಮುವಾದ ಅಥವ ಮತೀಯ ಬಲಪಂಥೀಯತೆಗೆ ಹತ್ತಿರ ಇರುವವರೆ ಹೆಚ್ಚಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಇದ್ದಕ್ಕಿದ್ದಂತೆ ಬದಲಾಗುತ್ತಿದೆ. ನಿಜವಾದ ಕನ್ನಡ ಪ್ರಪಂಚ ಅಂತರ್ಜಾಲದಲ್ಲೂ ಪ್ರತಿಬಿಂಬಿತವಾಗುತ್ತಿದೆ.

ಇದಕ್ಕೆ ಪೂರಕವಾಗಿ ಕೆಲವು ಬ್ಲಾಗುಗಳನ್ನು, ವೆಬ್‌ಸೈಟುಗಳನ್ನು ಉದಾಹರಿಸುತ್ತೇನೆ. ಅಬ್ದುಲ್ ರಷೀದರ “ಕೆಂಡಸಂಪಿಗೆ” ಕನ್ನಡದ ಅಂತರ್ಜಾಲ ಲೋಕಕ್ಕೆ ಪರಿಚಯ ಇಲ್ಲದಿದ್ದವರನ್ನೆಲ್ಲ (ಆದರೆ ಕನ್ನಡದ ಅತಿ ಪ್ರಮುಖ ಬರಹಗಾರರು) ಪರಿಚಯಿಸುತ್ತಿದೆ. ಕುಂ.ವೀ. ಕೆಂಡಸಂಪಿಗೆಗೆಂದೇ ಅಂಕಣ ಬರೆಯುತ್ತಿದ್ದಾರೆ. ಅನಂತಮೂರ್ತಿಯವರೂ ಸಹ. ಇನ್ನು ಸ್ವತಃ ಅಬ್ದುಲ್ ರಷೀದ್, ದೇವನೂರು ಮಹಾದೇವ, ಮೊಗಳ್ಳಿ ಗಣೇಶ್‌ರ ಕತೆ-ಕಾದಂಬರಿಗಳೂ ಪ್ರಕಟವಾಗುತ್ತಿವೆ. ಕವಿ-ಪತ್ರಕರ್ತ ಜಿ.ಎನ್. ಮೋಹನ್ ನಡೆಸುತ್ತಾರೆ ಎನ್ನಲಾದ (ಎಲ್ಲೋ ಓದಿದ್ದು, ಅಧಿಕೃತವಾಗಿ ನನಗೆ ಗೊತ್ತಿಲ್ಲ) “ಅವಧಿ” ಬ್ಲಾಗಿನಲ್ಲೂ ಇಂತಹುದನ್ನೆ ನಾವು ನೋಡುತ್ತೇವೆ. ಡಾ. ನಟರಾಜ್ ಹುಳಿಯಾರ್ ಅಂತರ್ಜಾಲದ ಓದುಗರಿಗೆ ಪರಿಚಯವಾಗಿದ್ದು ಇದೇ ಬ್ಲಾಗಿನಿಂದ.

ಇನ್ನು ಸಂಪದದ ಬಗ್ಗೆ. ಯು.ಆರ್. ಅನಂತಮೂರ್ತಿಯವರ ಋಜುವಾತು ಬ್ಲಾಗಿನಿಂದ ಹಿಡಿದು, ಉದಯವಾಣಿಯ ಇಸ್ಮಾಯಿಲ್‌ರ “ಬರೆವ ಬದುಕಿನ ತಲ್ಲಣ“, ಡಿ.ಎಸ್. ನಾಗಭೂಷಣರ “ನಾಗ ಸಂಪದ“, ಡಾ. ಕಕ್ಕಿಲಾಯರ “ಆರೋಗ್ಯ ಸಂಪದ“, ಇನ್ನೂ ಹಲವಾರು ಬರಹಗಾರರಿಂದ ವೈವಿಧ್ಯಗೊಳ್ಳುತ್ತಿರುವ ತಾಣ, ಸಂಪದ.

ಇವೆಲ್ಲದರ ನಡುವೆ, “ಪಂಚ-ಪಾಂಡವ”ರಿಂದ ನಡೆಸಲ್ಪಡುತ್ತದೆ ಎಂದು ಹೇಳಿಕೊಳ್ಳುವ ಇತ್ತೀಚಿನ “ಸುದ್ದಿ ಮಾತು“, ದಿನೇಶ್ ಕುಮಾರ್‌ರ “ದೇಸಿ ಮಾತು“, ಮಂಜುನಾಥ ಸ್ವಾಮಿಯವರ “ಹಳ್ಳಿ ಕನ್ನಡ“, ಇತ್ಯಾದಿ ಬ್ಲಾಗುಗಳು ಕೋಮುವಾದ ಮತ್ತು ಸಾಮಾಜಿಕ ಅಸಮಾನತೆಗಳ ವಿರುದ್ಧ ಮಾತನಾಡುವವರು ಅಂತರ್ಜಾಲದಲ್ಲಿ ಜಾಸ್ತಿಯಾಗುತ್ತಿರುವುದಕ್ಕೆ ನಿದರ್ಶನಗಳು. ಕೇವಲ ಎರಡು-ಮೂರು ವರ್ಷಗಳ ಹಿಂದೆ ಇಂತಹ ಕನ್ನಡ ಬರಹಗಳು ಮತ್ತು ಅಭಿಪ್ರಾಯಗಳು ಅಪರೂಪವಾಗಿದ್ದದ್ದನ್ನು ಸದ್ಯದ ಸ್ಥಿತಿಗೆ ಹೋಲಿಸಿಕೊಂಡರೆ ಬದಲಾವಣೆಯ ವೇಗವನ್ನೂ, Digital divide ಕುಗ್ಗಿದ್ದನ್ನೂ ಊಹಿಸಬಹುದು.

ನನ್ನ ಹಿಂದಿನ “ಗಾಂಧೀಜಿಯ ಹಂತಕ-ಪಡೆ ವಿಶ್ರಮಿಸುವುದಿಲ್ಲ. ಭಾರತವೂ…” ಲೇಖನದಲ್ಲಿ ಬರೆದಂತೆ, ಆಧುನಿಕ ಶಿಕ್ಷಣ, ಪ್ರಜಾಪ್ರಭುತ್ವ ಮತ್ತು ಇತ್ತೀಚಿನ ಆರ್ಥಿಕ ಬೆಳವಣಿಗೆ ನಮ್ಮ ನೆಲದ ಅನೇಕ ಸಮಸ್ಯೆಗಳನ್ನು ಇಲ್ಲವಾಗಿಸುತ್ತಿದೆ. ಬದಲಾಗುತ್ತಿರುವ ಕನ್ನಡ ಅಂತರ್ಜಾಲ ಲೋಕ ಮತ್ತು ಆ ಬದಲಾವಣೆಗಳ ಮೂಲಕಾರಣ ಅದಕ್ಕೆ ಒಂದಷ್ಟು ಸಮರ್ಥನೆ (ನಮ್ಮ ಪರಿಧಿಯಲ್ಲಿ) ಒದಗಿಸುತ್ತದೆ.

ಆದರೆ, ಸದ್ಯದ ಜಾಗತಿಕ ಅರ್ಥವ್ಯವಸ್ಥೆಯಲ್ಲಿನ ಅಲ್ಲೋಲಕಲ್ಲೋಲಗಳು ಈ ಪ್ರಗತಿಯ ದೀರ್ಘಕಾಲೀನತೆಯ ಬಗ್ಗೆಯೇ ಒಂದಷ್ಟು ಸಂಶಯಗಳನ್ನು ಹುಟ್ಟಿಸಲಾರಂಭಿಸಿದೆ. ನಮ್ಮ ಐಟಿ-ಕೇಂದ್ರಿತ ನೌಕರಿಗಳಲ್ಲಿರುವ ಯುವಜನಾಂಗ ನೌಕರಿ ಕಳೆದುಕೊಳ್ಳಲು ಆರಂಭಿಸಿದಾಗ (ಅದರ ಬಗ್ಗೆ ಮುಂದಿನ ಲೇಖನದಲ್ಲಿ ಬರೆಯುತ್ತೇನೆ), ಅಥವ ಐಟಿ ನೌಕರಿಗಳು ಸುಲಭವಾಗಿ ಸಿಗದೆ ಹೋದಾಗ ಸಹ, ಈ ಡಿಜಿಟಲ್ ಡಿವೈಡ್ ಹೀಗೆಯೆ ಕುಗ್ಗಲಿ ಎನ್ನುವ ಆಶಾಭಾವನೆ ನನ್ನದು.

(ಇತ್ತೀಚಿನ ದಿನಗಳಲ್ಲಿ ಬದಲಾದ ಪರಿಸ್ಥಿತಿಯ ಬಗ್ಗೆ ಬರೆದಿದ್ದರಿಂದ, ಆರೇಳು ವರ್ಷಗಳ ಹಿಂದೆಯೆ ಪರ್ಯಾಯ ಧ್ವನಿಯಾಗಿ ಮೂಡಿಬಂದ ಕನ್ನಡಸಾಹಿತ್ಯ.ಕಾಮ್‌ನ ಬಗ್ಗೆ ಬರೆಯಲು ಹೋಗಿಲ್ಲ. ಅದಕ್ಕೆ ಕನ್ನಡ ಅಂತರ್ಜಾಲ ಲೋಕದಲ್ಲಿ ಅದರದೆ ಆದ ಸ್ಥಾನ ಮತ್ತು ಇತಿಹಾಸವಿದೆ. ಬದಲಾಗುತ್ತಿರುವ ಸ್ಥಿತಿಯನ್ನು ಗುರುತಿಸುವುದಕ್ಕಾಗಿ ಮತ್ತು ದಾಖಲು ಮಾಡುವುದಕ್ಕಾಗಿ ಈ ಲೇಖನ ಬರೆದಿದ್ದೇನೆ.)