ಅದ್ಧೂರಿ ಮದುವೆಗೂ ಮುನ್ನ ಚಿಂತಿಸಿ

– ಬಿ.ಜಿ. ಗೋಪಾಲ ಕೃಷ್ಣ

ಒಂದು ಕ್ಷಣ ಏಕಾಂತದಲ್ಲಿ ಕುಳಿತು ಕಣ್ಣು ಮುಚ್ಚಿ ಯೋಚಿಸಿ ನೋಡಿ, ಮಾಸಿದ ಹರಕಲು ಬಟ್ಟೆ, ಕೆದರಿದ ಕೂದಲು, ಸ್ನಾನ ಕಂಡು ಅದೆಷ್ಟೋ ದಿನಗಳಾದ ದೇಹ, ಪಿಳಿಪಿಳಿ ಕಣ್ಣುಗಳು, ಮುಗ್ಧ ಮನಸ್ಸಿನ ಪುಟ್ಟ ಪುಟ್ಟ ಕೈ ಚಿಂದಿಯನ್ನು ಅರಸುತ್ತಾ ನಗರಸಭೆಯ ತೊಟ್ಟಿ ಸ್ಥಳಕ್ಕೆ ಬಂದಾಗ, ಅಲ್ಲಿ ನಾವು ಬಿಸಾಡಿದ ಅನ್ನ ಸಿಕ್ಕಾಗ, ಆ ಮುಗ್ಧ ಮನಸ್ಸಿನ ಸಂತೋಷಕ್ಕೆ ಆಕಾಶವೇ ಮೂರು ಗೇಣು! ಇಂತಹ ಸಮಾಜದಲ್ಲಿ ನಮಗೆ ಅದ್ಧೂರಿ ಮದುವೆ ಬೇಕೆ !?

ಅತಿವೃಷ್ಠಿ, ಅನಾವೃಷ್ಠಿಯಿಂದ ಬಳಲಿ ಬೆಂಡಾದ ರೈತಾಪಿವರ್ಗ, ಗುಳೆ ಹೋಗುತ್ತಿರುವ ಕೂಲಿ ಕಾರ್ಮಿಕ ಬಂಧುಗಳು, ಓದು ಬರಹ ಕಲಿತು ಸ್ವಉದ್ಯೋಗಕ್ಕಾಗಿ ಬಂಡವಾಳವಿಲ್ಲದೆ ಆಕಾಶ ನೋಡುತ್ತ ಕುಳಿತ ಯುವಕರು, ಬೆಳೆದು ನಿಂತ ಹೆಣ್ಣು ಮಕ್ಕಳಿಗೆ ಮದುವೆ ಮಾಡಲು ಸಾಧ್ಯವಾಗದೆ ತಲೆ ಮೇಲೆ ಕೈ ಹೊತ್ತು ಕುಳಿತಿರುವ ಬಡ ತಂದೆ ತಾಯಂದಿರು ಹೀಗೆ ಹತ್ತು ಹಲವು ಸಮಸ್ಯೆಗಳಿಂದ ನರಳುತ್ತಿರುವ ಭಾರತ ಮಾತೆಯ ಮಡಿಲಲ್ಲಿ, ನಿಮಗೆ ಅದ್ಧೂರಿ ಮದುವೆ ಬೇಕೆಂದೆನಿಸಿದರೆ, ಇದು ನಿಮ್ಮ ತಪ್ಪಲ್ಲ. ನಿಮ್ಮ ಅಂತಸ್ತಿನದು.

ಸಾಲದಲ್ಲಿ ಅದ್ಧೂರಿ ಮದುವೆಯಾಗಿ, ನಂತರ ಸಾಲ ತೀರಿಸಲು ಮಾನಸಿಕ, ಭೌತಿಕವಾಗಿ ಪಡಬಾರದ ಕಷ್ಟಪಡುತ್ತಾ ದಾಂಪತ್ಯದ ಮಧುರ ಕ್ಷಣಗಳನ್ನು ಕಳೆದು ಕೋಂಡವರು ನಮ್ಮೊಂದಿಗಿದ್ದಾರೆ. ಅಕ್ಕ ಅಥವಾ ತಂಗಿಯ ಮದುವೆಯ ಸಾಲ ತೀರಿಸಲು ತಮ್ಮ ಅಥವಾ ಅಣ್ಣನ ವಿದ್ಯಾಭ್ಯಾಸ ಮೊಟಕುಗೊಳಿಸಿರುವವರನ್ನು ನಾವು ನೋಡಿದ್ದೇವೆ.

ಒಂದು ಅಂದಾಜಿನ ಪ್ರಕಾರ ಮಧ್ಯಮ ವರ್ಗದವರ ಮದುವೆಗೆ 5 ರಿಂದ 15 ಲಕ್ಷ ರೂ ಬೇಕಾಗುತ್ತದೆ. expensive-wedding-banquetsಮಧ್ಯಮ ವರ್ಗದಿಂದ ಕೆಳಗಿರುವವರ ಮದುವೆ ಖರ್ಚು 1 ರಿಂದ 3 ಲಕ್ಷ ರೂ. ಅತಿ ಶ್ರೀಮಂತರ ಮದುವೆಯಲ್ಲಿ ಊಹೆಗೂ ನಿಲುಕದ ಆಡಂಬರದ ಅದ್ಧೂರಿತನ. ಕೋಟಿ ಕೋಟಿ ಹಣದ ಮಾರಣ ಹೋಮ. ಭಾರತ ಮೂಲದ ಉಕ್ಕಿನ ಉದ್ಯಮಿ ಮಿತ್ತಲ್ ತನ್ನ ಮಗಳ ಮದುವೆಗೆ ಮಾಡಿದ ಖರ್ಚು 600 ಲಕ್ಷ ಡಾಲರ್‌ಗಳು (ಆಗ ಸುಮಾರು 240 ಕೋಟಿ ರೂಪಾಯಿಗಳು). ಅದೂ ಕೇವಲ 1000 ( ಒಂದು ಸಾವಿರ) ಆಮಂತ್ರಿತರಿದ್ದ ವಿವಾಹ, 6 ದಿನಗಳ ಮದುವೆ. ಆಮಂತ್ರಣ ಪತ್ರಿಕೆ ಇದ್ದದು ಬೆಳ್ಳಿಯ ಡಬ್ಬಿಯಲ್ಲಿ. ಜೊತೆಯಲ್ಲಿ ವಿಮಾನದ ಟಿಕೇಟ್, ಸ್ಟಾರ್ ಹೋಟಲ್ ಒಂದರಲ್ಲಿ ವಾಸ್ತವ್ಯದ ಮುಂಗಡ ಟಿಕೇಟ್.

ನಮ್ಮ ದೇಶದ 15% ತರಕಾರಿ, ದವಸ ಧಾನ್ಯಗಳು ಮದುವೆ ಮುಂಜಿಗಳಿಗಾಗಿ ವಿನಿಯೋಗವಾಗುತ್ತಿದೆ. ಒಂದು ಅಂಕಿ ಅಂಶದ ಪ್ರಕಾರ ಭಾರತದಲ್ಲಿ ವರ್ಷಕ್ಕೆ 2 ಕೋಟಿ ಯುವಕ ಯುವತಿಯರ ಮದುವೆಗಳು ನೆಡೆಯುತ್ತವೆ. ಆ ಮದುವೆಗೆ ಖರ್ಚಾಗುವ ಮೊತ್ತ 2 ಲಕ್ಷ ಕೋಟಿ ರೂ ನಿಂದ 6 ಲಕ್ಷ ಕೋಟಿ ರೂಪಾಯಿಗಳು.

ವಿವಾಹಗಳಿಂದ ಬದುಕು ನೆಡೆಸುತ್ತಿರುವ ಕಂಪನಿಗಳು, ಕೇಟರರ್‌ಗಳು ಹೀಗೆ ಹಲವಾರು ಕುಟುಂಬಗಳು ಇದ್ದಾರೆ ನಿಜ. ಆದರೆ ಒಂದು ವರ್ಗದ ಸಮಾಜ ಮಾತ್ರ ಇದರಿಂದ ಬದುಕು ನಡೆಸಲು ಸಾಧ್ಯ. ಬಡವರ, ಹಸಿದವರ, ಜಮೀನಿದ್ದೂ ವ್ಯವಸಾಯ ಮಾಡಲಾಗದ ರೈತಾಪಿ ವರ್ಗದವರ ಕಣ್ಣೀರು ನಮಗ್ಯಾರಿಗೂ ಕಾಣಿಸುತ್ತಿಲ್ಲ.

ಹಸಿದ ಜನರಿರುವ 118 ರಾಷ್ಟ್ರ್ಟಗಳ ಸಾಲಿನಲ್ಲಿ 94 ನೇ ಸ್ಥಾನ ದಲ್ಲಿ ನಾವಿದ್ದೇವೆ. ಮದುವೆ, ಮುಂಜಿ, ಸಮಾರಂಭಗಳಲ್ಲಿ ಆಹಾರವನ್ನು ಅಪವ್ಯಯ ಮಾಡುವುದು ಶಿಕ್ಷಾರ್ಹ ಅಪರಾದ ಎಂದು ಆಹಾರ ಮಂತ್ರಿ ಕೆ.ವಿ. ಥಾಮಸ್ ಹೇಳಿದ್ದು ಸಮಂಜಸವಾಗೇ ಇದೆ.

‘ನನ್ನಲ್ಲಿ ಸಾಕಷ್ಟು ಹಣವಿದೆ, ಮದುವೆಯಾಗುವುದು ಒಂದೇ ಸಲ. ಆದುದರಿಂದ ಆಡಂಬರದ ಅದ್ಧೂರಿ ಮದುವೆಯಾಗಲು ಬಯಸುತ್ತೇನೆ’ ಎನ್ನುವುದಾದರೆ ಮತ್ತೊಮ್ಮೆ ಯೋಚಿಸಿ. ಮನಸ್ಸು ಬದಲಾಯಿಸಿ ಸರಳ ವಿವಾಹವಾಗಿ. ಉಳಿದ ಹಣವನ್ನು ನಿಮ್ಮದೇ ಉತ್ತಮ ಭವಿಷ್ಯಕ್ಕಾಗಿ ಕೂಡಿಡಿ ಅಥವಾ ನಿಮ್ಮದೇ ಹೆಸರಿನಲ್ಲಿ ಸಮಾಜದ ಸೇವೆಗಾಗಿ ಸದ್ವಿನಿಯೋಗ ಮಾಡಿ. ಬಡವರ, ದೀನ ದಲಿತರ ಕಣ್ಣೀರನ್ನು ಒರೆಸಲು ಸಹಾಯ ಮಾಡಿ. ಸರಳ ವಿವಾಹ ಮಾಡಲು ಇಷ್ಟವಿದ್ದರೂ, ಸಮಾಜಕ್ಕೆ ಅಂಜಿ ಸಾಧಿಸಲಾಗದವರಿಗೆ ನೀವು ಪ್ರೇರಕರಾಗಿ.

ಮದುವೆಯಾಗುವುದು ವಧು ಮತ್ತು ವರನ ಒಪ್ಪಿಗೆಯ ಮೇರೆಗಾದರೂ ಮದುವೆ ಎಲ್ಲಿ, ಯಾವಾಗ, ಹೇಗೆ ನೆಡೆಯಬೇಕು ಎಂಬುವುದು ಹಿರಿಯರು ನಿರ್ಧರಿಸುತ್ತಾರೆ. ಸಮಾಜ ಬದಲಾಗಿದೆ, ವಸ್ತುಸ್ಥಿತಿ ಬದಲಾಗಿದೆ. ಸಂದರ್ಭಕ್ಕನುಸಾರವಾಗಿ ನಿರ್ಧರಿಸುವ ಸಾಮರ್ಥ್ಯ ಮಕ್ಕಳನ್ನು ಹೆತ್ತವರಿಗಿರುವುದಿಲ್ಲವೆ? ಸ್ವಲ್ಪ ನಮ್ಮ ಕುರುಡು ಸಮಾಜದ ಅಂತಸ್ತನ್ನು ಕಡೆಗಣಿಸಿ ಯೋಚಿಸಿದರಾಯಿತು.

ಜ್ಯೋತಿಷ್ಯಕ್ಕೆ ಭವಿಷ್ಯ ಉಂಟೆ? ಅದು ವಿಜ್ಞಾನವೇ?

– ಬಿ.ಜಿ.ಗೋಪಾಲಕೃಷ್ಣ

ಹಿಂದಿನ ದಿನಗಳಲ್ಲಿ ಜ್ಯೋತಿಷ್ಯವನ್ನು ಕೇಳಿ ಅದರ ಫಲಾಫಲಗಳನ್ನು ಒರೆಹಚ್ಚಿ ನೋಡದೆ ಮರೆತು ಬಿಡುತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೇಳಿದ ಜ್ಯೋತಿಷ್ಯವನ್ನು ಕಾಲದ ಆಗುಹೋಗುಗಳೊಡನೆ ತಾಳೆಹಾಕಿ ನೋಡುವ ಪ್ರವೃತ್ತಿ ಬೆಳೆಯುತ್ತಿದೆ. ಈ ಪ್ರವೃತ್ತಿಯೇ ಮುಂದೊಂದು ದಿನ ಜ್ಯೋತಿಷ್ಯಕ್ಕೆ ಚ್ಯುತಿಯಾಗಲಿದೆ. ಜ್ಯೋತಿಷ್ಯ ನಿಜವಾಗಿಯೂ ವಿಜ್ಞಾನದ ರೀತಿ ಕರಾರುವಾಕಾಗಿದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲ್ಲಿಲ್ಲವೇನೊ.

ಜ್ಯೋತಿಷ್ಯ ಒಂದು ರೀತಿ ಕೆಟ್ಟು ನಿಂತ ಗಡಿಯಾರದಂತೆ. ಕೆಟ್ಟು ನಿಂತ ಗಡಿಯಾರವೂ ದಿನಕ್ಕೆರೆಡು ಬಾರಿ ಸರಿಯಾದ ಸಮಯ ತೋರುವಂತೆ. ಜ್ಯೋತಿಷಿಗಳು ಹೇಳಿದ ಭವಿಷ್ಯಗಳಲ್ಲಿ ಅಗೂಂದು ಈಗೂಂದು ಕಾಕತಾಳಿಯವೆಂಬಂತೆ ನಿಜವಾಗಿ ಬಿಡಬಹುದು. ಇದೇ ವಿಷಯ ಊರೆಲ್ಲಾ ಪ್ರಚಾರ ಪಡೆದು ಆ ಜ್ಯೋತಿಷಿಯೇ ಪ್ರಖ್ಯಾತಿ ಹೊಂದಿ ಅವಿದ್ಯಾವಂತ ಮುಗ್ಧ ಅಸಹಾಯಕರನ್ನು ಶೋಷಣೆಮಾಡಲು ಪ್ರಾರಂಬಿಸಿಯೇ ಬಿಡುತ್ತಾರೆ. ನಿಜ ಬಣ್ಣ ಬಯಲಾಗುವುದರೊಳಗೆ ಅವರ ಅಂತಸ್ತು ಬೇರೆಯದೇ ಆಗಿರುತ್ತದೆ.

ಜ್ಯೋತಿಷಿಗಳ ಪ್ರಕಾರ ಬ್ರಹ್ಮ ಬರೆದ ಹಣೆಬರಹidiotic-brahmanda ಬದಲಾಯಿಸಲು ಸಾಧ್ಯವಿಲ್ಲ. ಹಾಗಿದ್ದ ಮೇಲೆ ಜ್ಯೋತಿಷ್ಯವನ್ನೇಕೆ ಕೇಳಬೇಕು? ಜ್ಯೋತಿಷ್ಯ ಕೇಳಿ ಭಯದಿಂದ ಶಾಂತಿ, ಹೋಮ ಹವನಗನ್ನೇಕೆ ಮಾಡಿಸಬೇಕು? ಶಾಂತಿ, ಹೋಮ ಹವನಗಳಿಗೆ ಭವಿಷ್ಯವನ್ನು ಬದಲಾಯಿಸುವ ಶಕ್ತಿಯಿದೆಯೆ? ಅಥವಾ ಹೋಮ, ಹವನ ಯಾರನ್ನು ಸಂಪ್ರೀತಿಗೊಳಿಸುವ ಸಲುವಾಗಿ? ದೇವರು ನಮ್ಮನ್ನು ಅದು ಬೇಕು, ಇದು ಬೇಕೆಂದು ಕೇಳುವನೇ? ಜ್ಯೋತಿಷ್ಯ ದುರ್ಬಲ ಮನಸ್ಸುನ್ನು ಮತ್ತಷ್ಟು ದುರ್ಬಲಗೊಳಿಸಿ ಭಯವನ್ನು ಹೆಚ್ಚಿಸುತ್ತದೆಯೇ ಹೊರತು ಮತ್ತೇನನ್ನೂ ಮಾಡಲು ಸಾಧ್ಯವಿಲ್ಲಾ.

ಜ್ಯೋತಿಷ್ಯಶಾಸ್ತ್ರ ಗಣಿತದ ಲೆಕ್ಕಾಚಾರಗಳನ್ನು ಹೊಂದಿರುವ ವಿಜ್ಞಾನವೆಂದು ಪ್ರತಿಪಾದಿಸಲು ಸಾಧ್ಯವೇ? ಜ್ಯೋತಿಷ್ಯ ಶಾಸ್ತ್ರದಲ್ಲಿ ಗಣಿತವನ್ನು ಬಳಸಿದ ಮಾತ್ರಕ್ಕೆ ಅದು ವಿಜ್ಞಾನವಾಗುವುದಿಲ್ಲಾ. ವಿಜ್ಞಾನವೆಂದರೆ ಪಂಚೇಂದ್ರಿಯಗಳ ಅನುಭವಕ್ಕೆ ಬರುವಂತಿರಬೇಕು. ನಮ್ಮ ಅನುಭವಗಳನ್ನು ಬೇರೆಯವರ ಮುಂದೆ ಪ್ರಕಟಪಡಿಸಿ, ಅವರ ಅನುಭವಕ್ಕೂ ಬರುವಂತಿದ್ದು ನೂರಲ್ಲಾ ಸಾವಿರ ಬಾರಿ ಬೇರೆ ಬೇರೆಯವರು ಪ್ರಯತ್ನಿಸಿದರೂ ಒಂದೇ ಫಲಿತಾಂಶವಿರಬೇಕು. ಇದುವೇ ವಿಜ್ಞಾನ.

ಆದರೆ ಇಬ್ಬರು ಬೇರೆ ಬೇರೆ ಜ್ಯೋತಿಷಿಗಳು ಹೇಳುವ ಒಂದೇ ವ್ಯಕ್ತಿಯ ಜ್ಯೋತಿಷ್ಯದ ಫಲಾಫಲಗಳು ಬೇರೆ ಬೇರೆಯದೇ ಹಾದಿಯಲ್ಲಿರುತ್ತವೆ. ಅಂದ ಮೇಲೆ ಜ್ಯೋತಿಷ್ಯ ಶಾಸ್ತ್ರ ವಿಜ್ಞಾನದೊಂದಿಗೆ ತಳುಕು ಹಾಕಿಕೊಳ್ಳಲು ಪ್ರಯತ್ನಿಸುವುದೇಕೆ? ಅದೇ ಒಂದು ಸ್ವತಂತ್ರ ಶಾಸ್ತ್ರವಾಗಿ ಮುಂದುವರಿಯಬಾರದೇಕೆ? ಅಥವಾ ವಿಜ್ಞಾನವೇ ಅಂತಿಮ ಸತ್ಯವಾಗಿರುವುದರಿಂದಲೇ?

ವಿಜ್ಞಾನದಲ್ಲಿ ಅಂದುಕೊಂಡಿದ್ದು ಸಂಭವಿಸಿಯೇ ತೀರುತ್ತದೆಯೇ ಹೋರತು, 2012ರ ಪ್ರಳಯದ ರೀತಿ ಹೆದರಿ ಮುಂದೆ ಹೋಗುವುದಾಗಲೀ, ಸಂಭವಿಸದೇ ಇವುದಾಗಲೀ ಸಾಧ್ಯವಿಲ್ಲ. ವಿಜ್ಞಾನದ ಪ್ರಸಕ್ತ ಕಲ್ಪನೆಗೆ ನಿಲುಕದ ಅನೇಕ ನೈಸರ್ಗಿಕ ವಿಸ್ಮಯಗಳು ನೆಡೆಯುತ್ತಿವೆ, ಆದುದರಿಂದಲೇ ಪ್ರತಿದಿನ, ಪ್ರತಿಕ್ಷಣ ಸಂಶೋಧನೆಗಳು ನಡೆಯುತ್ತಿರುವುದು.

ತಮ್ಮ ಭವಿಷ್ಯವನ್ನೇ ತಿಳಿಯದ ಜ್ಯೋತಿಷಿಗಳು, ಅಸ್ತಿತ್ವದಲ್ಲಿ ಇರದವುಗಳನ್ನೆಲ್ಲಾ ಗಣನೆಗೆ ತೆಗೆದುಕೊಂಡು (ಉದಾಹರಣೆಗೆ ರಾಹು ಮತ್ತು ಕೇತು), jyotishaಕೆಲವನ್ನು ತಪ್ಪಾಗಿ ಗ್ರಹಿಸಿ (ನಕ್ಷತ್ರವಾದ ಸೂರ್ಯ ಮತ್ತು ಭೂವಿಯ ಉಪಗ್ರಹ ಚಂದ್ರನನ್ನು ಗ್ರಹಗಳೆಂದು ಪರಿಗಣಿಸಿ), ಗ್ರಹಗಳ ಚಲನೆಯನ್ನು ಲೆಕ್ಕಾಚಾರ ಮಾಡಿ, ಪ್ರಾಣಿಗಳ (ಮನುಷ್ಯ ಸಹ ಒಂದು ಪ್ರಾಣಿ) ಅಥವಾ ದೇಶದ ಭವಿಷ್ಯವನ್ನು ಹೇಳಲು ಸಾಧ್ಯವೇ? ಗ್ರಹಗತಿಗಳ ಅಧ್ಯಯನ ಕರಾರುವಾಕ್ಕಾಗಿ ಖಗೋಳ ವಿಧ್ಯಮಾನಗಳನ್ನು ತಿಳಿಸಬಹುದೇ ಹೋರತು. ಯಾವುದೇ ಪ್ರಾಣಿಯ ಭವಿಷ್ಯವನ್ನಲ್ಲ.

‘ಗುರು ಆ ಮನೆಗೆ ಬಂದರೆ, ಶುಕ್ರ ಈ ಮನೆಗೆ ಬಂದರೆ’ ಎಂಬ ಸಂಭವನೀಯತೆಗಳ ಮೇಲೆ ಭವಿಷ್ಯ ಹೇಳುವುದಾದರೆ. ನಿಮ್ಮ ಗ್ರಹಗತಿಗಳ ಲೆಕ್ಕಾಚಾರದಲ್ಲಿ ಮಾಡಿದ್ದೇನು? ನೀವೇ ಹೇಳಿದ ಭವಿಷ್ಯದ ಗತಿಯೇನು? ಹೇಳಿದ ಭವಿಷ್ಯ ತಪ್ಪಾದರೆ. ಪೂರ್ವಜನ್ಮದ ಕರ್ಮ ಸಿದ್ಧಾಂತದ ಹೆಚ್ಚುವರಿ ಇತಿಹಾಸ ಬೇರೆ. ಹಾಗಾದರೆ ಸ್ವರ್ಗ ಅಥವಾ ನರಕಗಳ ಪರಿಕಲ್ಪನೆಗಳು ನಮ್ಮ ಪೂರ್ವಜನ್ಮದ ಪಾಪವನ್ನು ತೊಳೆಯದೆ ಮಾಡಿದ್ದೇನನ್ನು?

ಜಾತಕ ಫಲ , ರಾಶಿ, ನಕ್ಷತ್ರ , ಹೆಸರುಬಲಗಳೆಲ್ಲವನ್ನು ನೋಡಿ ಸರಿಯಾದ ಮುಹರ್ತದಲ್ಲೇ ಮದುವೆಯಾದ ಪತಿಪತ್ನಿಯರು ಮನಸ್ತಾಪವಿಲ್ಲದೆ ಅಥವಾ ಸಮಸ್ಯೆಗಳಿಲ್ಲದೆ ಬದುಕಿ ಬಾಳಿದ್ದಾರೆಯೇ? ಸಂಸಾರವೆಂದ ಮೇಲೆ ವಿರಸ, ಮನಸ್ತಾಪ ಸಮಸ್ಯೆ ಸಾಮಾನ್ಯವೆಂದಾದರೆ ಜಾತಕ ನೊಡೇನು ಉಪಯೋಗ? ವಧು-ವರರ ಕುಟುಂಬಗಳ ನಡುವೆ ಒಪ್ಪಿಗೆಯಾದ ಮದುವೆಗೆ ವಧು-ವರರ ಗಣಕೂಟ ಕೂಡಿಬರಲಿಲ್ಲಾವಾದಲ್ಲಿ ಹೆಸರು ಬದಲಾಯಿಸಿ ಕೂಡಿಸಿದರೆ ಹಟ್ಟಿದ ನಕ್ಷತ್ರಗಳು ಬದಲಾಗುತ್ತವೆಯೇ?

ಜ್ಯೋತಿಷಿಗಳ ಭವಿಷ್ಯ ನಿಜವೇ ಆಗುವುದಾದರೆ, ನಮ್ಮ ದೇಶದ ಅವಘಡಗಳ ಭವಿಷ್ಯ ಈಗಲೇ ಹೇಳಿಬಿಡಿ! ಈ ವರ್ಷ ಏಲ್ಲೆಲ್ಲಿ ಸಾರಿಗೆ ಅಪಘಾತಗಳು ಸಂಭವಿಸುತ್ತವೆ? ಭೂಕಂಪವಾಗುವ ಸ್ಥಳಗಳಾವುವು? ಜ್ಯಾಲಾಮುಖಿಗಳು ಎಲ್ಲೆಲ್ಲಿ ಬಾಯ್ದೆರೆಯುತ್ತವೆ? ಯಾವ ಯಾವ ಪ್ರದೇಶಗಳಲ್ಲಿ ಬರಗಾಲ ಬರಲಿದೆ? ಸುನಾಮಿ ಅಪ್ಪಳಿಸಲಿರುವ ಕರಾವಳಿ ತೀರಗಳಾವುವು? ಎಂಬುದನ್ನು ಒಮ್ಮೆಲೇ ಹೇಳಿಬಿಡಿ.

ಸಾಧ್ಯವಾಗದಿದ್ದಲ್ಲಿ 2012ರ ಪ್ರಳಯದಂತೆ ಮುಗ್ಧ, ಬಡ ಜನರಲ್ಲಿ ಅಂಧಶ್ರದ್ಧೆಯನ್ನು ಬಿತ್ತಿ ಅವರ ಗೋಳಾಟದಲ್ಲಿ ನಿಮ್ಮ ಹೊಟ್ಟೆ ಹೊರೆಯಬೇಡಿ, ಪ್ಲೀಸ್.

ಕಾವೇರಿ ನದೀ ಕಣಿವೆಯ ಸಾಕ್ಷ್ಯಚಿತ್ರ

ಸ್ನೇಹಿತರೇ,

ನಿಮಗೆ ಕೇಸರಿ ಹರವೂರವರು ಗೊತ್ತೇ ಇರುತ್ತಾರೆ. ಅವರು ನಿರ್ದೇಶಿಸಿದ ಮೊದಲ ಚಲನಚಿತ್ರ “ಭೂಮಿಗೀತ” ಕ್ಕೆ 1998ರಲ್ಲಿ ಪರಿಸರ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಬಂದಿತ್ತು. ತದನಂತರದಲ್ಲಿ ಅವರು ಉತ್ತರ ಕನ್ನಡದಲ್ಲಿ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಬೃಹತ್ ಉಷ್ಣ ವಿದ್ಯುತ್ ಸ್ಥಾವರ ಅಲ್ಲಿಯ ಪರಿಸರಕ್ಕೆ ಹೇಗೆ ಮಾರಕ kesari-haravooಮತ್ತು ಆಘನಾಶಿನಿ ನದಿ ಸಮುದ್ರಕ್ಕೆ ಸೇರುವ ಕೊಲ್ಲಿ ಪ್ರದೇಶದ ಜನಜೀವನ ಹೇಗೆ ದುರ್ಗತಿ ಕಾಣುತ್ತದೆ ಎನ್ನುವುದರ ಕುರಿತು “ಅಘನಾಶಿನಿ ಮತ್ತದರ ಮಕ್ಕಳು” ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ಅದೇ ರೀತಿ ಸಕಲೇಶಪುರದ ಬಳಿಯ ಶಿರಾಡಿ ಘಟ್ಟ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಗುಂಡ್ಯ ಜಲವಿದ್ಯುತ್ ಸ್ಥಾವರದ ನಿರ್ಮಾಣದಿಂದ ಅಲ್ಲಿಯ ಪರಿಸರಕ್ಕೆ ಮತ್ತು ಜೈವಿಕ ವೈವಿಧ್ಯತೆಗೆ ಹೇಗೆ ಮಾರಕವಾಗುತ್ತದೆ ಎನ್ನುವುದರ ಕುರಿತು “ನಗರ ಮತ್ತು ನದೀಕಣಿವೆ” ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ಕೇಸರಿಯವರು ಕೇವಲ ಸಿನೆಮಾ ಮತ್ತು ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡವರಲ್ಲ. ಬಾಗೂರು-ನವಿಲೆ ಕಾಲುವೆ ನಿರ್ಮಾಣ ಉಂಟುಮಾಡಿದ್ದ ಸಾಮಾಜಿಕ ಸಮಸ್ಯೆಗಳು ಮತ್ತು ಪರಿಸರ ವಿನಾಶದ ಬಗ್ಗೆ ಅಲ್ಲಿಯ ರೈತರೊಡನೆ ಜೊತೆಗೂಡಿ ಕೆಲಸ ಮಾಡಿದ ಸಾಮಾಜಿಕ ಕಾರ್ಯಕರ್ತರೂ ಹೌದು.

ಈಗ ಇವರು ಕಾವೇರಿ ಕಣಿವೆ ಮತ್ತು ನದಿ ವ್ಯವಸ್ಥೆಯ ಕುರಿತು ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ಇದರ ನಿರ್ಮಾಣಕ್ಕೆ ಸಮಾನಮನಸ್ಕರ ಮತ್ತು ಸಮುದಾಯದ ಬೆಂಬಲ ಬೇಕಿದೆ. ಇಂತಹ ಚಟುವಟಿಕೆಗಳು ಆಗಬೇಕಿರುವುದೇ ಹಾಗೆ. ಒಂದು ಜವಾಬ್ದಾರಿಯುತ ಮತ್ತು ಪ್ರಬುದ್ಧ ಸಮಾಜದಲ್ಲಿ ಇಂತಹ ಯೋಜನೆಗಳಿಗೆ ಬೆಂಬಲ ಹರಿದುಬರಬೇಕು. ಕಾಳಜಿಯುಳ್ಳ ಮತ್ತು ಜಾಗೃತಿ ಮೂಡಿಸುವ ಕೆಲಸಗಳಲ್ಲಿ ನಮ್ಮೆಲ್ಲರ ಪಾಲೂ ಇರಬೇಕು. ಕೇಸರಿ ಹರವೂರವರು ಈ ಸಾಕ್ಷ್ಯಚಿತ್ರ ನಿರ್ಮಾಣ ಮತ್ತು ಪ್ರದರ್ಶನದ ಕಾರ್ಯಯೋಜನೆಯಲ್ಲಿ ಅಂತಹ ಅವಕಾಶ ಕಲ್ಪಿಸುತ್ತಿದ್ದಾರೆ. ಅದನ್ನು ಬೆಂಬಲಿಸುವವರಲ್ಲಿ ನಾವೂ ಒಬ್ಬರಾಗಬೇಕು.

ದಯವಿಟ್ಟು ಅವರು ಬರೆದಿರುವ ಕೆಳಗಿನ ಈ ಪುಟ್ಟ ಟಿಪ್ಪಣಿಯನ್ನು ಓದಿ, ಅವರ ವೆಬ್‌ಸೈಟ್‌ಗೆ ಭೇಟಿ ಕೊಟ್ಟು, ನಿಮ್ಮ ಕೈಲಾದಷ್ಟು ದೇಣಿಗೆ ಅಥವ ಪ್ರಾಯೋಜಕತ್ವ ನೀಡಿ. ನಾನು ವೈಯಕ್ತಿಕವಾಗಿ “Supporter : Rs. 5000+ / $100” ದೇಣಿಗೆ ನೀಡಿ ಬೆಂಬಲಿಸಿದ್ದೇನೆ. ನಮ್ಮ ವರ್ತಮಾನದ ಓದುಗ ಬಳಗ ಕನ್ನಡದಲ್ಲಿ ನಡೆಯುತ್ತಿರುವ ಇಂತಹ ಮೊದಲ ಸಮುದಾಯ ಬೆಂಬಲಿತ ಸಾಕ್ಷ್ಯಚಿತ್ರ ಮತ್ತು ಜಾಗೃತಿ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸುತ್ತದೆ ಎಂದು ಆಶಿಸುತ್ತೇನೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ


ಆತ್ಮೀಯರೇ,

ಕಾವೇರಿ ಕಣಿವೆ ಮತ್ತು ನದೀ ವ್ಯವಸ್ಥೆಯ ಸಾಮಾಜಿಕತೆ, ಆರ್ಥಿಕತೆ ಹಾಗೂ ಪರಿಸರದ ಪ್ರಸ್ತುತ ವಸ್ತುಸ್ಥಿತಿ ಮತ್ತು ಈ ನದೀ ವ್ಯವಸ್ಥೆಯು ದಿನೇ ದಿನೇ ಹೇಗೆ ಕ್ಷೀಣಿಸುತ್ತಿದೆ ಎನ್ನುವ ವಿಷಯಗಳನ್ನೊಳಗೊಂಡ ಪೂರ್ಣಪ್ರಮಾಣದ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸುವ ಸಲುವಾಗಿ ನಾನು ಈ ಎರಡು-ಮೂರು ವರ್ಷಗಳಿಂದ ತುಸು ಅಧ್ಯಯನ ನಿರತನಾಗಿರುವುದು ತಮಗೆ ತಿಳಿದೇ ಇದೆ. ಇದಕ್ಕಾಗಿ ಒಂದೆರಡು ರಿಸರ್ಚ್ ಸಂಸ್ಥೆಗಳು ಹಾಗೂ ಹಲವು ಅಧ್ಯಯನ ನಿರತರು ನನ್ನ ಬೆನ್ನ ಹಿಂದಿದ್ದಾರೆ.

ಈ ಸಾಕ್ಷ್ಯಚಿತ್ರವನ್ನು ನಿರ್ಮಿಸಿ, ಕಾವೇರೀ ಕಣಿವೆಯ ಉದ್ದಕ್ಕೂ, ಅಲ್ಲದೇ ಕಣಿವೆಯನ್ನು ಅವಲಂಬಿಸಿರುವ ಇತರ ಪ್ರದೇಶಗಳಿಗೂ ಕೊಂಡೊಯ್ದು ಕಡೇಪಕ್ಷ ಐದುನೂರು ಪ್ರದರ್ಶನಗಳನ್ನಾದರೂ ಉಚಿತವಾಗಿ ನಡೆಸಿ, ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕೆನ್ನುವ ಹಂಬಲ, ಯೋಜನೆ ನಮ್ಮದು.

ಈ ಕೆಲಸವು ಸಾಮಾಜಿಕ ದೇಣಿಗೆಯ ಮೂಲಕವೇ ಆಗಬೇಕೆನ್ನುವುದು ನಮ್ಮ ಆಶಯ. ದಕ್ಷಿಣ ಭಾರತದ ಜನ ಈ ಕಾರ್ಯದಲ್ಲಿ ತಮ್ಮ ಪಾಲು, ಜವಾಬ್ದಾರಿಯೂ ಇದೆ ಎಂದು ಮನಗಂಡು ದೇಣಿಗೆ ನೀಡುತ್ತಾರೆಂದು ನಾನು ನಂಬಿರುತ್ತೇನೆ. ಚಿತ್ರ ನಿರ್ಮಾಣ, ಚಿತ್ರದ ವಸ್ತುವಿಸ್ತಾರ, ಸಂಗ್ರಹವಾದ ದೇಣಿಗೆಯ ಹಣ ಮತ್ತು ಅದರ ಸಮರ್ಪಕ ಆಯವ್ಯಯ – ಈ ಮುಂತಾದ ವಿಷಯಗಳನ್ನು ಪರಾಮರ್ಶಿಸುವ ಸಲುವಾಗಿ ಸಾಮಾಜಿಕ ಘನತೆಯುಳ್ಳ ಪ್ರಾಮಾಣಿಕ, ಧೀಮಂತ ವ್ಯಕ್ತಿಗಳ ಒಂದು ಸಮಿತಿಯನ್ನು ರಚಿಸಲಾಗುತ್ತಿದೆ.

ಈ ಯೋಜನೆಗೆ ನಿಮ್ಮ ಪ್ರೋತ್ಸಾಹ ಅತ್ಯಗತ್ಯ. ಈ ಬಗ್ಗೆ ನಿಮ್ಮ ಗೆಳೆಯರಿಗೂ ತಿಳಿಸಿ. ನೀವು ದಯವಿಟ್ಟು www.kesariharvoo.com ಗೆ ಭೇಟಿ ನೀಡಿ, ಪ್ರೋತ್ಸಾಹಿಸಿ.

ನಿರೀಕ್ಷೆಯಲ್ಲಿ,
ತಮ್ಮ ವಿಶ್ವಾಸಿ,
ಕೇಸರಿ ಹರವೂ

ಮಹಿಳಾ ಸಬಲೀಕರಣದ ಅರ್ಥ ವ್ಯಾಪ್ತಿ

– ರೂಪ ಹಾಸನ

ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಸಬಲೀಕರಣದ ಮಾತು ಮತ್ತೆ ಮತ್ತೆ ಕೇಳಿಬರುತ್ತಿದೆ. 70ರ ದಶಕದಲ್ಲಿ ಸ್ತ್ರೀವಾದದ ಅಲೆ ಬೀಸತೊಡಗಿದಾಗ ಆರ್ಥಿಕ ಸ್ವಾತಂತ್ರ್ಯವೇ ಮಹಿಳಾ ಸಮಾನತೆಯ, ಸಬಲೀಕರಣದ ಪ್ರಮುಖ ಅಸ್ತ್ರ ಎಂಬಂತೆ ಬಿಂಬಿತವಾಗಿತ್ತು. ಆ ಕಾಲಕ್ಕೆ ಅದು ನಿಜವೂ ಆಗಿತ್ತು. ಅನಾದಿ ಕಾಲದಿಂದಲೇ ಹೆಣ್ಣು ಕೃಷಿ, ಹೈನುಗಾರಿಕೆ, ಗೃಹಕೃತ್ಯ, ಗುಡಿಕೈಗಾರಿಕೆಗಳಲ್ಲಿ ತೊಡಗಿಕೊಂಡು ಆರ್ಥಿಕ ಉತ್ಪಾದನೆಯಲ್ಲಿ ಸಹಾಯಕಿ ಎನ್ನುವ ರೀತಿ ಪಾಲ್ಗೊಳ್ಳುತ್ತಲೇ ಬಂದಿದ್ದಾಳೆ. ಆದರೆ ಅವಳ ಕೆಲಸವನ್ನು, ಶ್ರಮವನ್ನು ಸೇವೆ ಎಂಬ ಸೀಮಿತ ಚೌಕಟ್ಟಿಗೆ ಸಿಲುಕಿಸಿ ಅದನ್ನು ಆರ್ಥಿಕ ಮೌಲ್ಯದ ಲೆಕ್ಕಾಚಾರದಲ್ಲಿ ಗಣನೆಗೇ ತೆಗೆದುಕೊಳ್ಳದೇ ಇರುವಂತಾ ದುರಂತ ಇವತ್ತಿಗೂ ನಡೆದೇ ಇದೆ. ಹೀಗೆಂದೇ ಮೊನ್ನೆಯ ನಮ್ಮ ಜನಗಣತಿಯ ಲೆಕ್ಕಾಚಾರವೂ ಇಂತಹ ಮಹಿಳೆಯರನ್ನು ಅನುತ್ಪಾದಕರು ಎಂದು ಅಮಾನವೀಯವಾಗಿ women-empowermentವಿಂಗಡಿಸಿ ಪಕ್ಕಕ್ಕಿಟ್ಟುಬಿಡುತ್ತದೆ! ಆದರೆ ಅವರ ಸೇವೆ ಬೆಲೆಕಟ್ಟಲಾಗದಂತದ್ದು ಎಂಬುದೂ ಅಷ್ಟೇ ಮುಖ್ಯವಾದುದು. ಮಹಿಳೆಯರನ್ನು ಆರ್ಥಿಕ ಉತ್ಪಾದನೆಯಡಿ ಲೆಕ್ಕಹಾಕಲು ಸಾಧ್ಯವಾಗದುದಕ್ಕೆ ಮುಖ್ಯ ಕಾರಣ ಮಹಿಳೆಯರ ಆರ್ಥಿಕ ಚಟುವಟಿಕೆಯ ಪ್ರಾರಂಭ ಮತ್ತು ಗೃಹ ಕೆಲಸದ ಅಂತ್ಯ ಎಲ್ಲಿ ಎಂದು ವಿಂಗಡಿಸುವುದೇ ಸಾಧ್ಯ ಆಗದೇ ಇರುವಂಥದು. ಮಹಿಳೆ ಮಾಡುವಂತಾ ಮನೆಗೆಲಸ, ಮಕ್ಕಳ ಲಾಲನೆ-ಪಾಲನೆ, ಕುಟುಂಬ ನಿರ್ವಹಣೆ ಇತ್ಯಾದಿಗಳಿಗೆ ತಗುಲುವ ಶ್ರಮ ಮತ್ತು ಸಮಯಗಳು ಎಲ್ಲಿಯೂ, ಎಂದಿಗೂ ದಾಖಲಾಗುವುದೇ ಇಲ್ಲ. ಅದಕ್ಕೆ ಆರ್ಥಿಕ ಮೌಲ್ಯ, ಉತ್ಪಾದನಾ ಸಾಮರ್ಥ್ಯ ಇಲ್ಲದಿರುವುದೇ ಕಾರಣ ಎಂದು ಅರ್ಥಶಾಸ್ತ್ರ್ಞರು ಪ್ರತಿಪಾದಿಸುತ್ತಾರೆ. ಈ ಕಾರಣದಿಂದಾಗಿಯೇ ಹಲವು ಬಾರಿ ಮಹಿಳೆಯ ಬಹಳಷ್ಟು ಸಾಮರ್ಥ್ಯಗಳೂ ಪರಿಗಣನೆಗೇ ಬಾರದೇ ಹೋಗುತ್ತಿರುವುದು ದುರಂತವಲ್ಲವೇ?

ಸಬಲೀಕರಣವನ್ನು ನಾವು ಹಲವು ಬಾರಿ ನಗರ ಕೇಂದ್ರಿತವಾಗಿ ಮಾತ್ರ ಚರ್ಚಿಸುತ್ತಿರುತ್ತೇವೆ. ವಿದ್ಯೆ ಕಲಿತ, ಬಿಳಿ ಕಾಲರಿನ ಕೆಲಸದಲ್ಲಿ ತೊಡಗಿಕೊಂಡ, ನಯಗಾರಿಕೆಯ ತಿಳಿವಳಿಕೆ ಇರುವ ಮಹಿಳೆಯರು ಮಾತ್ರ ಸಬಲೆಯರು, ಮನೆವಾರ್ತೆ ನೋಡಿಕೊಳ್ಳುವ ಗೃಹಿಣಿಯರು, ಗ್ರಾಮೀಣ, ಕೃಷಿ ಹಾಗೂ ಅದನ್ನಾಧಾರಿತ ಕೆಲಸಗಳಲ್ಲಿ ತೊಡಗಿಕೊಂಡಿರುವ, ಕಚ್ಚಾ ಸಾಮರ್ಥ್ಯವನ್ನು ಹೊಂದಿರುವ ಅಸಂಘಟಿತ ವಲಯದ ಮಹಿಳೆಯರು ಸಬಲೆಯರಲ್ಲ ಎನ್ನುವ ಒಂದು ತಪ್ಪು ತಿಳಿವಳಿಕೆ ನಮ್ಮನ್ನಾವರಿಸಿರುತ್ತದೆ. ಆದರೆ ಎಷ್ಟೋ ಬಾರಿ ವಿದ್ಯೆ ಕಲಿತು, ಉದ್ಯೋಗಸ್ಥೆಯಾಗಿದ್ದರೂ ಸಮಯಾಭಾವದಿಂದ ತನ್ನ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವಿರದ ವಿದ್ಯಾವಂತ ಹೆಣ್ಣು ಮಕ್ಕಳ ಸಂಖ್ಯೆ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವುದೂ ಗಮನಾರ್ಹ.

ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಆರ್ಥಿಕ ಚಟುವಟಿಕೆಗಳನ್ನು ಅಳೆಯುವುದು ಮತ್ತು ಅದನ್ನು ವಿವಿಧ ರೀತಿಯಲ್ಲಿ ವರ್ಗೀಕರಿಸುವುದೇ ಕಷ್ಟದ ಕೆಲಸ. ಅದರಲ್ಲೂ ಅವರ ಕೆಲಸಗಳು ವೈವಿಧ್ಯಮಯವಾಗಿರುವುದರಿಂದ ಅದು ಇನ್ನೂ ಕ್ಲಿಷ್ಟ. ಅವರ ಕೆಲಸ ಪದೇ ಪದೇ ಬದಲಾಗುತ್ತಿರುತ್ತದೆ. ಅವರು ಉತ್ಪಾದಿಸಿದ ವಸ್ತುಗಳು ಮಾರುಕಟ್ಟೆಯನ್ನು ಪ್ರವೇಶಿಸುವುದೇ ಇಲ್ಲ. ಅಥವಾ ಕೆಲವು ಪ್ರಮಾಣದಲ್ಲಿ ಮಾತ್ರ ಮಾರುಕಟ್ಟೆಯನ್ನು ಪ್ರವೇಶಿಸುತ್ತದೆ. ಜೊತೆಗೆ ಅವರ ಉತ್ಪಾದನೆ ಕೆಲವು ಪ್ರಮುಖ ಉತ್ಪಾದನೆಗೆ ಪೂರಕವಾಗಿ ಮಾತ್ರ ಇರಬಹುದು. ಅಂದರೆ ಮಹಿಳೆಯರ ಶ್ರಮವನ್ನು ಇಲ್ಲೆಲ್ಲಾ ಸ್ವತಂತ್ರವಾಗಿ ಬೆಲೆ ಕಟ್ಟಲಾಗ್ತಾ ಇಲ್ಲ. ಈ ಎಲ್ಲ ಕಾರಣಗಳಿಂದ ಮಹಿಳೆಯರ ಆರ್ಥಿಕ ಪಾತ್ರವನ್ನು ನಿರ್ಧರಿಸುವಲ್ಲಿ ಈಗಿರುವಂತಾ ವ್ಯಾಖ್ಯೆ ಮತ್ತು ಮಾಹಿತಿ ಅಸಮರ್ಪಕವಾಗಿದೆ ಎಂಬುದು ಮುಖ್ಯವಾದ ಅಂಶವಾಗಿದೆ. ಈ ಕಾರಣಗಳಿಂದಾಗಿ ಸಬಲೀಕರಣದ ಅರ್ಥವ್ಯಾಪ್ತಿಯನ್ನು ಹಿಗ್ಗಿಸಬೇಕಾದ ಅವಶ್ಯಕತೆ ಹೆಚ್ಚಾಗಿದೆ.

ಸಬಲೀಕರಣದ ಭಾಗವಾಗಿ 20ನೇ ಶತಮಾನದಲ್ಲಿ ಅಧಿಕಾರವನ್ನೂ ಸೇರಿಸುತ್ತಾ ಬಂದಿದ್ದೇವೆ. ಅಂದರೆ ಆರ್ಥಿಕತೆ ಹಾಗೂ ಅಧಿಕಾರವನ್ನು ಸ್ವಾಧೀನಪಡಿಸಿಕೊಳ್ಳುವುದೇ ಮಹಿಳಾ ಸಬಲೀಕರಣದ ಗುರಿ ಎನ್ನುವ ಸೀಮಿತ ಅರ್ಥವನ್ನೇ ಇತ್ತೀಚೆಗೆ ಎತ್ತಿಹಿಡಿಯಲಾಗುತ್ತಾ ಇದೆ. woman-unchainedಆದರೆ ಹಣ ಹಾಗೂ ಅಧಿಕಾರವನ್ನು ಹೇಗಾದರೂ ಸರಿ ಸ್ವಾಧೀನಪಡಿಸಿಕೊಳ್ಳುವುದೇ ಮುಖ್ಯ ಎಂದಾದಾಗ ಅದರ ಮಾರ್ಗಗಳ ಕಡೆ ಹೆಚ್ಚಿನ ಗಮನ ಕೊಡದೆ, ಅದನ್ನು ಪಡೆದ ನಂತರ ಉಪಯೋಗಿಸುವ ವಿಧಾನ, ಕ್ರಮಗಳ ಅರಿವಿಲ್ಲದಾಗ ಬೇರೆಯವರು ಇಂತಹ ಹೆಣ್ಣುಮಕ್ಕಳ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತದೆ. ಅದಕ್ಕೆ ಹಲವಾರು ಉದಾಹರಣೆಗಳು ಇಂದು ನಮ್ಮ ಕಣ್ಣ ಮುಂದೆಯೇ ಇದೆ.

ಹೀಗೆಂದೇ ಸಬಲೀಕರಣ ಎನ್ನುವುದು ಹೊರಗಿನ ಐಹಿಕ ವಸ್ತುಗಳ ಸ್ವಾಧೀನ ಪಡಿಸಿಕೊಳ್ಳುವಿಕೆ ಮಾತ್ರವಾಗಿರದೇ ಮುಖ್ಯವಾಗಿ ಮಾನಸಿಕ, ಬೌದ್ಧಿಕ ಹಾಗೂ ಭೌತಿಕ ಗಟ್ಟಿತನದ, ಸಬಲತೆಯ ಸಂಕೇತವಾಗಿ ಮೂಡಿಬರಬೇಕು. ಮಹಿಳೆ ತಾನು ಒಳಗಾಗಬಹುದಾದ ಎಲ್ಲ ರೀತಿಯ ಶೋಷಣೆಗಳಿಂದ ಮುಕ್ತಳಾಗುವುದು, ಸಂತೋಷದಿಂದ, ಸಮಾಧಾನದಿಂದ ತಾನೂ ಒಬ್ಬ ವ್ಯಕ್ತಿ ಅದಕ್ಕೆ ಗೌರವ ದೊರಕಬೇಕು ಎಂಬ ಅರಿವಿನಿಂದ ಬದುಕುವುದೇ ಅವಳು ಸ್ವತಂತ್ರಳಾಗುವ, ಪುರುಷನಿಗೆ ಸಮಾನಳಾಗುವ, ಒಳಮುಖಗಳಿಂದ ಸಬಲಳಾಗುವ ಸಂಕೇತ. ಇವುಗಳನ್ನು ಪಡೆಯಲು ತನ್ನ ಅರಿವಿನ ಪರಿಧಿಯನ್ನು ಹಿಗ್ಗಿಸಿಕೊಳ್ಳಬೇಕಿರುವುದು ತುಂಬಾ ಮುಖ್ಯ. ಈ ಅರಿವು ಬರುವುದು ಶಿಕ್ಷಣದಿಂದ. ಶಿಕ್ಷಣ ಅಂದರೆ ತರಗತಿಯ ಓದು-ಬರಹ ಮಾತ್ರ ಅಲ್ಲ. ಅದು ಹೊರಗಿನ ಪ್ರಪಂಚದಲ್ಲಿ ದಿನನಿತ್ಯದ ವ್ಯಾವಹಾರಿಕ ಆಗು ಹೋಗಿಗೆ ಸಂಬಂಧಿಸಿದಂತೆ ಮುಖ್ಯವಾಗಿ ಪ್ರತಿಯೊಬ್ಬ ನಾಗರಿಕನೂ ತಿಳಿದಿರಲೇ ಬೇಕಾದಂತಾ ಮೂಲಭೂತ ತಿಳಿವಳಿಕೆಯನ್ನೂ ಒಳಗೊಂಡಿರುತ್ತದೆ. ಈ ತಿಳಿವಳಿಕೆ ಕಾನೂನಿಗೆ ಸಂಬಂಧಿಸಿದ್ದಾಗಿರಬಹುದು, ಆರೋಗ್ಯಕ್ಕೆ ಸಂಬಂಧಿಸಿದ್ದಾಗಿರಬಹುದು, ಕುಟುಂಬ ಯೋಜನೆಗೆ ಸಂಬಂಧಿಸಿದ್ದಾಗಿರಬಹುದು, ಗ್ರಾಮ ಹಾಗು ವೈಯಕ್ತಿಕ ಸ್ವಚ್ಛತೆಯನ್ನ ಒಳಗೊಂಡಿರಬಹುದು, ಬ್ಯಾಂಕ್ ವ್ಯವಹಾರ, ಸಾಲ ಸೌಲಭ್ಯ, ಸಂಚಾರಿ ನಿಯಮ, ಸರ್ಕಾರಿ ಯೋಜನೆಗಳು, ಅದರಿಂದ ದೊರಕುವ ಸೌಲಭ್ಯ, ಅನುಕೂಲಗಳು ಹೀಗೆ… ನಾಗರಿಕ ಬದುಕಿಗೆ ಸಂಬಂಧಿಸಿದಂತಾ ಎಲ್ಲದರ ಬಗ್ಗೆ ಮಹಿಳೆಯರು ಅರಿವನ್ನು ಮೂಡಿಸಿಕೊಳ್ಳುತ್ತಾ ಹೋದಾಗ ಮಾತ್ರ ಸಬಲೀಕರಣಕ್ಕೆ ನಿಜವಾದ ಅರ್ಥ ಬರುತ್ತದೆ. ಮಹಿಳೆಯ ಸರ್ವತೋಮುಖ ಸಬಲೀಕರಣವಾಗಬೇಕೆಂದರೆ ಮಹಿಳೆ ತಳಮಟ್ಟದಿಂದ ಉನ್ನತಮಟ್ಟದವರೆಗೆ ಸಾಮಾಜಿಕವಾಗಿ ಪಾಲ್ಗೊಳ್ಳಬೇಕು. ಹೀಗೆಂದೇ ಅಂತಹ ಸಾಧ್ಯತೆಗಳನ್ನು ವಿಸ್ತರಿಸುವ ಪ್ರಯತ್ನವೇ ಮಹಿಳಾ ಸಬಲೀಕರಣದೆಡೆಗಿನ ಮೊದಲ ಪ್ರಯತ್ನವೆನಿಸುತ್ತದೆ.

ಕನ್ನಡ ಶಾಲೆಗಳ ಅಳಿವು ಉಳಿವಿನ ಪ್ರಶ್ನೆ : ಒಂದು ಸಾಧ್ಯವಿರುವ ಆಲೋಚನೆ

– ನಾಗರಾಜ್ ಹರಪನಹಳ್ಳಿ, ಕಾರವಾರ

ಜೂನ್ 27 ರಂದು ಕಾರವಾರದ ಸಾವಂತವಾಡದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ಹೋಗಿದ್ದೆ. ಈ ಶಾಲೆ 1955 ರಲ್ಲಿ ಸ್ಥಾಪಿತವಾದದ್ದು. ಸಾವಾಂತವಾಡದ ನಿವಾಸಿಯೊಬ್ಬರು ಶಿಕ್ಷಣ ಇಲಾಖೆಗೆ 13 ಗುಂಟೆ ಜಾಗವನ್ನು ಶಾಲೆ ಸ್ಥಾಪಿಸಲು 58 ವರ್ಷಗಳ ಹಿಂದೆಯೇ ದಾನ ಮಾಡಿದ್ದರು. ಎಂಥ ಆದರ್ಶದ ಕಾಲ ನೋಡಿ ಅದು. ಇವತ್ತು ಒಂದಿಚು ಜಾಗವಿದ್ದರೆ ಅದನ್ನು ನಾವು ಬಿಡದೇ ಬೇಲಿಹಾಕಿಕೊಂಡು ಬಿಡುತ್ತೇವೆ. ಅದಿರಲಿ. kannada-schoolಈ ಕನ್ನಡ ಶಾಲೆ ನನ್ನನ್ನು ಆಕರ್ಷಿಸಿದ್ದಕ್ಕೆ ಒಂದು ಕಾರಣ ಇದೆ. ಅದೇನೆಂದರೆ ಈ ಶಾಲೆಯಲ್ಲಿರುವ 17 ಜನ ವಿದ್ಯಾರ್ಥಿಗಳಿಗೆ ಅಲ್ಲಿನ ಮೂರು ಜನ ಶಿಕ್ಷಕರು ತಮ್ಮ ವೇತನದ ಹಣ ಹಾಕಿ ಫಿಕ್ಸ ಡಿಪೋಜಿಟ್ ಮಾಡಿದ್ದರು. ಪ್ರತಿ ಮಗುವಿಗೆ ಪ್ರತಿ ತಿಂಗಳು 100 ರೂಪಾಯಿಯಂತೆ 8 ತಿಂಗಳ ಕಾಲ ಹಣ ಫಿಕ್ಸ ಇಡುವುದು. ಅಂದರೆ ಒಬ್ಬ ವಿದ್ಯಾರ್ಥಿ 1 ನೇ ತರಗತಿಗೆ ಪ್ರವೇಶ ಪಡೆದರೆ ಆತ ಏಳನೇ ತರಗತಿ ಮುಗಿಸಿದಾಗ ಆತನ ಖಾತೆಯಲ್ಲಿ ಬಡ್ಡಿ ಸಹಿತ 11,300 ರೂಪಾಯಿ ಜಮಾ ಆಗಿರುತ್ತದೆ. ಇದು ಆತನ ಮುಂದಿನ ವಿದ್ಯಾಭ್ಯಾಸಕ್ಕೆ ನೆರವಾಗುವ ಸದುದ್ದೇಶವೂ ಇದೆ. ಈ ಯೋಚನೆ ಶಿಕ್ಷಕರಿಗೆ ಯಾಕೆ ಬಂತು ಅಂತಾ ಅವರನ್ನೇ ಕೇಳಿದೆ. ಶಾಲೆಯನ್ನು ಉಳಿಸಿಕೊಳ್ಳಬೇಕು. ತಾವು ಉಳಿಯಬೇಕು ಎಂಬುದು ಶಿಕ್ಷಕರ ಉದ್ದೇಶ.

ಕನ್ನಡ ಶಾಲೆಯೊಂದನ್ನು ಉಳಿಸಬೇಕು. ಶಾಲೆಗೆ ಮಕ್ಕಳನ್ನು ಕರೆತರುವ ಉತ್ತಮ ಉದ್ದೇಶವೂ ಅಲ್ಲಿನ ಮೂರು ಜನ ಶಿಕ್ಷಕರದಾಗಿತ್ತು. ಅಲ್ಲಿನ ಶಿಕ್ಷಕರು ದಾನಿಗಳನ್ನು ಹಿಡಿದು ಅಲ್ಲಿನ ಮಕ್ಕಳಿಗೆ ಈಜು ತರಬೇತಿ, ಸಂಗೀತ ತರಬೇತಿ ಮತ್ತು ಇಂಗ್ಲೀಷ್ ಕೋಚಿಂಗ್ ಕೊಡಿಸಲು ಸಿದ್ಧತೆ ನಡೆಸಿದ್ದರು. 1 ರಿಂದ 7 ನೇ ತರಗತಿ ವರೆಗೆ ಇದ್ದದ್ದು 17 ಜನ ಮಕ್ಕಳು. ಆ ಶಾಲೆಯಲ್ಲಿ ಕಲಿಕಾ ಕೊಠಡಿಗಳಿವೆ. ಬಿಸಿಯೂಟಕ್ಕೆ ಕೋಣೆ ಇದೆ. ಆಟದ ಮೈದಾನವಿದೆ. ಟೀಚಿಂಗ್ ಏಡ್ ಇದೆ. ತಿರುವಿ ಹಾಕಲು ಪುಸ್ತಕಗಳು ಸಹ ಇವೆ. ಆದರೆ ಕೋಣೆ ತುಂಬುವಷ್ಟು ಮಕ್ಕಳಿಲ್ಲ !!

ಸಾವಾಂತವಾಡದಲ್ಲಿ ವಾಸಿಸುವ ಬಹುತೇಕರು ಹಿರಿಯರು. ಅವರ ಮಕ್ಕಳು, ಮೊಮ್ಮಕ್ಕಳು ಹೊರದೇಶ ಇಲ್ಲವೇ ಹೊರ ರಾಜ್ಯ (ಮುಂಬಯಿ, ಗೋವಾ) ದಲ್ಲಿ ನೆಲಸಿದ್ದಾರೆ. ಇರುವ ಶ್ರೀಮಂತರ ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಿದ್ದಾರೆ. ಕಾರವಾರಕ್ಕೆ ಕೂಲಿ ಮಾಡಲು ಬಂದ ಕಾರ್ಮಿಕರ ಮಕ್ಕಳು ಸಾವಾಂತವಾಡ ಸರಕಾರಿ ಶಾಲೆಯಲ್ಲಿದ್ದಾರೆ. ಅಲ್ಲಿರುವ ಎಲ್ಲಾ ಮಕ್ಕಳು ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ ಮಕ್ಕಳೇ ಆಗಿದ್ದರು. ಕಾರವಾರದ ಸಾವಾಂತವಾಡ ಶಾಲೆ ಬಿಡಿ. ನಗರದ ಕೆಎಚ್‌ಬಿ ಕಾಲೂನಿಯಲ್ಲಿರುವ ಸರ್ಕಾರಿ ಶಾಲೆ, ಬಜಾರ್ ಶಾಲೆ, ಕೋಡಿಬಾಗ ಕನ್ನಡ ಶಾಲೆ, ಸಾಯಿ ಕಟ್ಟಾ ಕನ್ನಡ ಶಾಲೆ, ಸದಾಶಿವಗಡ ಹೊರವಲಯದ ಸರ್ಕಾರಿ ಕನ್ನಡ ಶಾಲೆ ತಿರುಗಾಡಿದೆ. ಅಲ್ಲಿನ ಶಾಲೆಗಳ ಸ್ಥಿತಿ ಸಾವಾಂತವಾಡ ಸರ್ಕಾರಿ ಶಾಲೆಗಿಂತ ಭಿನ್ನವಾಗಿರಲಿಲ್ಲ. ಬಾಜಾರ್ ಶಾಲೆ, ಸೋನಾರವಾಡ ಶಾಲೆಯಲ್ಲಿ ಮಕ್ಕಳ ಸಂಖ್ಯೆ 70 ರಿಂದ 110 ರಷ್ಟಿತ್ತು. ಕಾರಣ ಈ ಶಾಲೆಗಳು ನಗರದ ಕೇಂದ್ರಭಾಗದಲ್ಲಿರುವುದು. ಇಲ್ಲಿರುವ ಮಕ್ಕಳು ಹೊರ ಜಿಲ್ಲೆಯ ಕೂಲಿ ಕಾರ್ಮಿಕರ ಮಕ್ಕಳೆ. ಕಾರವಾರ ಮೂಲದ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ 2 ರಷ್ಟು ಮಾತ್ರ. ಇನ್ನು ಜೊಯಿಡಾ, ಸಿದ್ದಾಪುರ, ಶಿರಸಿ, ಕಾರವಾರ ಕುಗ್ರಾಮಗಳ ಬಡವರ ಮಕ್ಕಳು ಸರ್ಕಾರಿ ಕನ್ನಡ ಶಾಲೆಗಳಲ್ಲಿ ಕಾಣಸಿಗುತ್ತಿದ್ದಾರೆ. ಈ ಕುಗ್ರಾಮದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 20 ಮೀರುವುದಿಲ್ಲ. ಹೀಗಿರುವಾಗ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವುದು ಹೇಗೆ? ಯೋಚಿಸಿದರೆ, ಇಚ್ಚಾ ಶಕ್ತಿ ಬಳಸಿದರೆ ದಾರಿ ಇದೆ.

ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಅನ್ನು ಒಂದು ಭಾಷೆಯಾಗಿ ಹೇಳಿಕೊಡಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ 8 ಶಾಲೆಗಳನ್ನು ಆಯ್ಕೆ ಮಾಡಿ 6 ನೇ ತರಗತಿಯಿಂದ ಆಂಗ್ಲಮಾಧ್ಯಮದ ಕಲಿಕೆ ಸಹ ಪ್ರಾರಂಭವಾಗಿದೆ. ಇಷ್ಟಾದರೂ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೆಳೆಯಲಾಗುತ್ತಿಲ್ಲ!! ಪೋಷಕರ ಮನಸ್ಥಿತಿ ಯಾಕೆ ಬದಲಾಗುತ್ತಿಲ್ಲ? ಯಾಕೆಂದರೆ ಮಕ್ಕಳ ಸಂಖ್ಯೆ ಎಷ್ಟೇ ಇರಲಿ. ಹಿರಿಯ ಪ್ರಾಥಮಿಕ ಶಾಲೆಗೆ 7 ಜನ ಶಿಕ್ಷಕರನ್ನು, ವಿಷಯವಾರು ಶಿಕ್ಷಕರನ್ನು ತುಂಬುವ ಕೆಲಸ ಸರ್ಕಾರದ ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ ಆಗಬೇಕು. ಸರ್ಕಾರಿ ಶಾಲೆ ಉಳಿಸುವ ಇಚ್ಚೆ ನಿಜಕ್ಕೂ ಶಿಕ್ಷಣ ಸಚಿವರಿಗೆ ಇದ್ದರೆ ಮಾರ್ಗಗಳು ಇವೆ. ಹೊಸದಾಗಿ ಖಾಸಗಿ ಶಾಲೆಗಳ ಪ್ರಾರಂಭಕ್ಕೆ ಅನುಮತಿ ನೀಡಬಾರದು. ಇಂಗ್ಲೀಷ್ ಮಾದ್ಯಮ ಇರಲಿ, ಕನ್ನಡ ಮಾದ್ಯಮ ಇರಲಿ ಖಾಸಗಿಯವರಿಗೆ ಇನ್ನು ಮುಂದೆ ಹೊಸದಾಗಿ ಶಾಲೆ ಪ್ರಾರಂಭಿಸಲು ಅನುಮತಿ ಬೇಡ. ಇದಕ್ಕೆ ವಿಧಾನಸಭೆಯಲ್ಲಿ ಶಾಸನ ರೂಪಿಸಲಿ. ಎಲ್ಲೇ ಬೇಕೆಂದರೂ ಸರ್ಕಾರವೇ ಶಾಲೆ ಪ್ರಾರಂಭಿಸಲಿ. ಇರುವ ಖಾಸಗಿ ಶಾಲೆಗಳು ಇರಲಿ. ಅವರ ಮೇಲೆ ಕೆಲ ನಿಯಮ ಹೇರಿ ಕಟ್ಟು ನಿಟ್ಟಾಗಿ ಜಾರಿಗೆ ತರುವಂತಾಗಬೇಕು. ಇದಕ್ಕೆ ಇಡೀ ಸಚಿವ ಸಂಪುಟ ಬದ್ಧವಾಗಿರಲಿ. ಯಾವುದೇ ಲಾಬಿಗೆ ಸರ್ಕಾರ ಮಣಿಯಬಾರದು.

– ಸರ್ಕಾರ ಇನ್ನೂ ಏನು ಮಾಡಬಹುದು………?

ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಗುಣಮಟ್ಟದ ಶಿಕ್ಷಕರನ್ನು, ಶಾಲೆಯ ಕ್ಯಾಂಪಸ್‍ನಲ್ಲಿ ವಿದ್ಯಾರ್ಥಿಗಳಿಗೆ govt-school-kidsಕೋಣೆಗಳನ್ನು ಒದಗಿಸಿದೆಯೇ ಎಂಬುದನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಿ. ಡೋನೇಶನ್ ಹಾವಳಿ ಮೇಲೆ ಸರ್ಕಾರ ಕಣ್ಣಿಡಬೇಕು. ಯಾವುದೇ ಒತ್ತಡಕ್ಕೆ ಮಣಿದು ಅಧಿಕಾರಿಗಳು ಖಾಸಗಿ ಸಂಸ್ಥೆಗಳ ಮೇಲೆ ಕ್ರಮಕೈಗೊಳ್ಳದಂತೆ ಸಚಿವರು ನಿಯಂತ್ರಿಸಬಾರದು. ಕಾರವಾರದ ಕೆಲ ಖಾಸಗಿ ಸಂಸ್ಥೆಗಳ ಶಿಕ್ಷಣ ವ್ಯವಸ್ಥೆ ನೋಡಿದರೆ ಅಚ್ಚರಿಯಾಗುತ್ತದೆ. ಪ್ರತಿ ಕ್ಲಾಸ್‌ಗೆ 3 ಡಿವಿಜನ್. ಪ್ರತಿ ಕೋಣೆಯಲ್ಲಿ 60 ರಿಂದ 80 ಮಕ್ಕಳು!! ಹೀಗಿರುವಾಗ ಗುಣಮಟ್ಟದ ಶಿಕ್ಷಣ ಹೇಗೆ ಸಾಧ್ಯ? 6 ರಿಂದ 8 ಸಾವಿರ ರೂಪಾಯಿ ಶುಲ್ಕ ನೀಡಿ, ಮಕ್ಕಳನ್ನು ಇಂಥ ದನದ ಕೊಟ್ಟಿಗೆಗಳಿಗೆ ಮಕ್ಕಳನ್ನು ಕಳುಹಿಸಬೇಕೇ? ಪೋಷಕರು ಎಲ್ಲಿ ತಪ್ಪಿದ್ದಾರೆ. ಶಿಕ್ಷಣ ಇಲಾಖೆ ಏನು ಮಾಡುತ್ತಿದೆ. ಇದನ್ನ ಸಚಿವರು ಗಮನಿಸಬೇಕು. ಸಚಿವರು ದಿನವೂ ಒಂದಿಲ್ಲೊಂದು ಸರ್ಕಾರಿ ಇಲ್ಲವೇ ಖಾಸಗಿ ಶಾಲೆಯಲ್ಲಿರಬೇಕು. ಹೋದಲ್ಲಿ ಬಂದಲ್ಲಿ ಸರ್ಕಾರಿ ಶಾಲೆಯಲ್ಲಿರುವ ಸೌಲಭ್ಯಗಳನ್ನು ಜನತೆಗೆ ವಿವರಿಸಬೇಕು. ಖಾಸಗಿ ಶಾಲೆಗೆ ಮಕ್ಕಳನ್ನು ಕಳುಹಿಸಬೇಡಿ ಎಂದು ಸಚಿವರು ಪ್ರತಿ ಗ್ರಾಮ, ನಗರಕ್ಕೆ ಹೋಗಿ, ಪಾದಯಾತ್ರೆ ಮಾಡಿ ಜನರ ಮನವೊಲಿಸಬೇಕು. ಆಗ ಸ್ವಲ್ಪ ಬದಲಾವಣೆ ಸಾಧ್ಯ.

– ಕ್ರಾಂತಿಕಾರಿ ನಿಯಮ ಅನುಷ್ಠಾನ ಮಾಡಿ ………

ಕನ್ನಡ ಮತ್ತು ಕನ್ನಡ ಶಾಲೆಗಳನ್ನು ಉಳಿಸಬೇಕು ಎಂಬ ಮನಸ್ಸಿದ್ದರೆ ಸರ್ಕಾರ ಹೀಗೆ ಮಾಡಬೇಕು. ರಾಜ್ಯದಲ್ಲಿನ ಎಲ್ಲಾ ಕಿರಿಯ ಪ್ರಾಥಮಿಕ ಸರ್ಕಾರಿ ಶಾಲೆಗಳಿಗೆ ಕನಿಷ್ಠ 5 ಜನ, ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕನಿಷ್ಠ 8 ಜನ ಶಿಕ್ಷಕರನ್ನ ನೇಮಿಸಿ. ಹೀಗೆ ನೇಮಿಸುವಾಗ ಮಕ್ಕಳ ಸಂಖ್ಯೆಯ ಅನುಪಾತ ನೋಡುವುದು ಬೇಡ. ಸರ್ಕಾರಕ್ಕೆ ಇದೇನು ಅಂತ ಹೊರೆಯಲ್ಲ. ಈ ವಿಷಯದಲ್ಲಿ ಐಎಎಸ್ ಅಧಿಕಾರಿಗಳ ಮಾತು ಕೇಳಬೇಡಿ. ಆರ್ಥಿಕ ಹೊರೆ ಎನಿಸಿದರೆ, ಐಎಎಸ್ ಮತ್ತು ಸೆಕ್ರೆರಿಟರಿಯೇಟ್‌ನಲ್ಲಿ ಕೆಲಸ ಮಾಡುವ ಹಿರಿಯ ಅಧಿಕಾರಿಗಳಿಗೆ ನೀಡುವ ಸೌಲಭ್ಯ ಸ್ವಲ್ಪ ಮಟ್ಟಿಗೆ ಕಡಿತ ಮಾಡಿದರೆ ಶಿಕ್ಷಕರಿಗೆ ನೀಡುವ ಸಂಬಳ ನಿಭಾಯಿಸಬಹುದು.

ಶಿಕ್ಷಕರ ಮಕ್ಕಳಷ್ಟೇ ಅಲ್ಲ, ಎಲ್ಲಾ ಸರ್ಕಾರಿ ನೌಕರರ ಮಕ್ಕಳಲ್ಲಿ ಒಂದು ಮಗುವನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಕಳುಹಿಸುವ ನಿಯಮ ರೂಪಿಸಿ. government_schoolಒಂದೇ ಮಗು ಇದ್ದ ನೌಕರ ಸರ್ಕಾರಿ ಶಾಲೆಗೆ ಮಗುವನ್ನು ಕಳುಹಿಸಲು ಬಯಸದಿದ್ದರೆ, ಆ ನೌಕರನ ಅಥವಾ ನೌಕರಳ ಒಂದು ಇನ್ ಕ್ರಿಮೆಂಟ್ (ವೇತನ ಬಡ್ತಿ) ಕಡಿತ ಮಾಡಿ. ಈ ವಿಷಯದಲ್ಲಿ ಸಾರ್ವಜನಿಕರು ತಮ್ಮ ಮಕ್ಕಳನ್ನು ಯಾವುದೇ ಶಾಲೆಗೆ ಕಳುಹಿಸಲು ಸ್ವತಂತ್ರರು. ಇನ್ನು ಖಾಸಗಿ ಸಂಸ್ಥೆಯವರು ಸಮಾಜ ಸೇವೆಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿರುವ ಕಾರಣ ಅವರು ಡೋನೇಶನ್ ಸ್ವೀಕರಿಸುವಲ್ಲಿ ಕಡಿವಾಣ ಮತ್ತು ಮಿತಿ ಇರಲಿ. ಶಾಲೆ ಕಟ್ಟಡ ಕಟ್ಟಿದ ನಂತರ ಮತ್ತೆ ಡೋನೇಶನ್ ವಸೂಲಿಯ ಅವಶ್ಯಕತೆಯನ್ನು ಸರ್ಕಾರ ಪ್ರಶ್ನಿಸಲಿ. ಖಾಸಗಿ ಶಿಕ್ಷಣ ಸಂಸ್ಥೆಗಳ ಶೋಷಣೆಗೆ ಒಂದು ಉದಾಹರಣೆ ಇಲ್ಲಿ ನೀಡುವುದಾದರೆ;
ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕೋಣೆಯೊಂದರ ಒಂದು ಡಿವಿಜನ್‌ನಿಂದ (60 ಮಕ್ಕಳಿಂದ) ಸಂಗ್ರಹಿಸುವ ದೇಣಿಗೆ ಹಣ 3 ಲಕ್ಷ ರೂಪಾಯಿ ಮೀರುತ್ತಿದೆ. ಎಲ್ಲಾ ತರಗತಿಯ, ಎಲ್ಲಾ ಮಕ್ಕಳಿಂದ (ಹಿರಿಯ ಪ್ರಾಥಮಿಕ ಶಾಲೆಯ 1 ರಿಂದ 7ನೇ ತರಗತಿ) ಸಂಗ್ರಹಿಸುವ ಫೀಜ್ ಮತ್ತು ಡೋನೇಶನ್ 50 ಲಕ್ಷ ರೂಪಾಯಿ ಅಜುಬಾಜು ಆಗಿರುತ್ತದೆ. ಅದೇ ಖಾಸಗಿ ಶಾಲೆಯ ಹಂಗಾಮಿ ಶಿಕ್ಷಕರಿಗೆ ತಿಂಗಳಿಗೆ ನೀಡುವ ಗೌರವಧನ 2 ರಿಂದ 3 ಸಾವಿರ ರೂಪಾಯಿ ಆಗಿರುತ್ತದೆ. ಖಾಸಗಿ ಸಂಸ್ಥೆಗಳ ಶೋಷಣೆ, ಸುಲಿಗೆ ತಡೆಯಬೇಕಾದರೆ ಸರ್ಕಾರ ಕೆಲ ಸಮಯ ಕಠಿಣವಾಗಿ ವರ್ತಿಸಿ, ಶಿಸ್ತು ಕಲಿಸಬೇಕಾಗುತ್ತದೆ. ಜನತೆಯಲ್ಲಿ ಅರಿವು ಮೂಡಿಸಬೇಕಾಗುತ್ತದೆ. ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಿದರೆ ಕೆಲ ವಿಶೇಷ ಸವಲತ್ತುಗಳನ್ನು ಘೋಷಿಸಬೇಕಾಗುತ್ತದೆ. ಹಾಗೆ ಶಿಕ್ಷಣ ಸಚಿವರು, ಸರ್ಕಾರ ಮಾಡಬೇಕಾದ ತುರ್ತು ಅಗತ್ಯತೆ ಈಗ ಇದೆ.

ಇಂಥ ಕ್ರಾಂತಿಕಾರಿ ಹೆಜ್ಜೆಗಳು ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಅನಿವಾರ್ಯವಾಗಿದೆ. ಸರ್ಕಾರಿ ವ್ಯವಸ್ಥೆಯನ್ನು ಬಲಗೊಳಿಸುತ್ತಲೇ ಖಾಸಗಿ ದೌರ್ಜನ್ಯವನ್ನು ಹತ್ತಿಕ್ಕಬೇಕು. ಶಿಕ್ಷಣದ ಪೂರ್ಣ ಸರ್ಕಾರೀಕರಣ ಅಸಾಧ್ಯ. ನಿಧಾನಕ್ಕೆ ಸರ್ಕಾರಿ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ರಾಜಕೀಯ ಇಚ್ಛಾಶಕ್ತಿಯೂ ಬೇಕು. ಕೇವಲ ಶಾಲಾ ಕಟ್ಟಡ, ಬಿಸಿಯೂಟ, ಸೈಕಲ್, ಪಠ್ಯಪುಸ್ತಕ, ಸಮವಸ್ತ್ರ ನೀಡಿ, ಶಾಲೆಗೆ ಶಿಕ್ಷಕರನ್ನೇ ನೀಡದಿರುವುದು, ಶಿಕ್ಷಕರ ನೇಮಕದಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸುವುದು ನೋಡಿದರೆ ಖಾಸಗಿಯವರ ಜೊತೆ ಶಿಕ್ಷಣ ಇಲಾಖೆ ಒಳಗೊಳಗೇ ಹೇಗೆ ಶಾಮೀಲಾಗಿದೆ ಎಂಬುದು ಎಂಥವರಿಗೂ ಅರ್ಥವಾಗುವಂತಹದ್ದು.

ಸರ್ಕಾರಕ್ಕೆ ಕನ್ನಡ ಶಾಲೆಗಳನ್ನು ಉಳಿಸುವ ಮನಸ್ಸಿದ್ದರೆ ಕ್ರಾಂತಿಕಾರಿ ಹೆಜ್ಜೆಗಳನ್ನು ಇಡುವುದು ಅನಿವಾರ್ಯ ಮತ್ತು ಅಗತ್ಯ ಕೂಡಾ. ಶಿಕ್ಷಕರ ಮಕ್ಕಳಷ್ಟೇ ಅಲ್ಲ, ಎಲ್ಲಾ ಸರ್ಕಾರಿ ನೌಕರರ ಮಕ್ಕಳು ಸರ್ಕಾರಿ ಶಾಲೆಗೆ ಕಳುಹಿಸುವಂತೆ ನಿಯಮ ರೂಪಿಸುವ ಜೊತೆಗೆ ಮಾನವೀಯ ಮುಖವನ್ನು ಸರ್ಕಾರ ಪ್ರದರ್ಶಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ವಿಷಯದಲ್ಲಿ ಕೆಲ ಸಂದರ್ಭಗಳಲ್ಲಿ ಕಠಿಣವಾಗಿ ಸಹ ವರ್ತಿಸಬೇಕು. ಈ ಧೈರ್ಯ ಪ್ರಾಥಮಿಕ ಶಿಕ್ಷಣ ಸಚಿವರಿಗೆ ಮತ್ತು ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಇದೆಯೇ?