Tag Archives: ಪ್ರಜಾಪ್ರಭುತ್ವ

ಸಿ.ಟಿ.ರವಿಯವರ ಮೇಲಿನ ಭೂಹಗರಣದ ಆರೋಪ ಮತ್ತು ಸಂಬಂಧಿಸಿದ ದಾಖಲೆಗಳು…


– ರವಿ ಕೃಷ್ಣಾರೆಡ್ಡಿ


ಬಹುಶಃ ಕರ್ನಾಟಕದ ಯಾವೊಬ್ಬ ಜನಪ್ರತಿನಿಧಿಯ ಬಗ್ಗೆಯೂ ನಾವು ಒಳ್ಳೆಯ ಅಭಿಪ್ರಾಯ ಇಟ್ಟುಕೊಳ್ಳಬಹುದಾದ ರೀತಿ ಕಾಣುತ್ತಿಲ್ಲ. ಇದೊಂದು ಅನ್ಯಾಯ, ಅನೀತಿ, ಸ್ವಚ್ಚಂದ ಭ್ರಷ್ಟಾಚಾರದ ಕಾಲ. ಭ್ರಷ್ಟರೇ ಭ್ರಷ್ಟಾಚಾರದ ಆರೋಪ ಹೊರಿಸುವುದೂ ಅಸಹಜವೇನಲ್ಲ. ಕೆಲವರು ಅತಿ ನಾಜೂಕಾಗಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರ ಮಾಡಿದರೆ ಮತ್ತೆ ಬಹುಪಾಲು ಜನ ರಾಜಾರೋಷವಾಗಿಯೇ ಮಾಡಿದ್ದಾರೆ.

ನನಗೆ ಇತ್ತೀಚಿನ ತನಕ ಒಬ್ಬ ಶಾಸಕರ ಬಗ್ಗೆ ಒಳ್ಳೆಯ ಅಭಿಪ್ರಾಯ ಇತ್ತು. ಆದರೆ ಇತ್ತೀಚೆಗೆ ಗೊತ್ತಾಗಿದ್ದು ಏನೆಂದರೆ, ಅಷ್ಟೇನೂ ಆಗರ್ಭ ಶ್ರೀಮಂತರಲ್ಲದ ಆ ಶಾಸಕರೂ ತಮ್ಮ ಮನೆಗೆ ಹಣಕಾಸಿನ ಕಷ್ಟ ಹೇಳಿಕೊಂಡು ಸಹಾಯ ಕೇಳಿಕೊಂಡು ಬರುವ ಜನರಿಗೆ ಹಣಕಾಸಿನ ನೆರವು ನೀಡುತ್ತಾರಂತೆ. ಎಲ್ಲಿಂದ ಬರುತ್ತದೆ ಆ ಹಣ? ಅದು ಅವರು ಬೆವರು ಸುರಿಸಿ ತಮ್ಮ ತೋಟದಲ್ಲಿ ದುಡಿದ ಹಣವಲ್ಲ. ಅವರ ಸಂಬಳದ ಹಣವೂ ಅಲ್ಲ. ಹಾಗಾದರೆ ಅವರ ಹಣದ ಮೂಲ ಭ್ರಷ್ಟಾಚಾರವಲ್ಲದೆ ಬೇರೇನು ಇರಬಹುದು?.

ಇನ್ನು ಬೇನಾಮಿತನ. ಈ ಜನಪ್ರತಿನಿಧಿಗಳು ಮತ್ತು ಭ್ರಷ್ಟ ಅಧಿಕಾರಿಗಳು ದಾಖಲೆಗಳಲ್ಲಿ ತಮ್ಮ ಹೆಸರು ಕಾಣಿಸದಂತೆ, ಬೇನಾಮಿಗಳ ಮೂಲಕ ಆಸ್ತಿ ಕೂಡಿಟ್ಟುಕೊಳ್ಳುವುದು ಲಾಗಾಯ್ತಿನಿಂದ ನಡೆದು ಬಂದಿರುವುದೆ. ನಮ್ಮಲ್ಲಿ ಒಂದು ಉತ್ತಮ ಇನ್ವೆಸ್ಟಿಗೇಟಿವ್ ಏಜನ್ಸಿ ಇಲ್ಲದಿರುವುದರಿಂದ ಈ ಅಧಿಕಾರ ದುರುಪಯೋಗ ಮತ್ತು ಬೇನಾಮಿ ಆಸ್ತಿ ಶೇಖರಣೆ ನಿರಂತರವಾಗಿ ನಡೆಯುತ್ತಲೇ ಇದೆ. ಲೋಕಾಯುಕ್ತ…. ಆ ಸಂಸ್ಥೆ ಮತ್ತು ಅದು ಸಲ್ಲಿಸುತ್ತಿರುವ ವರದಿಗಳು, ತೆಗೆದುಕೊಳ್ಳುತ್ತಿರುವ ಸಮಯ, ಮುಖ್ಯ ಲೋಕಾಯುಕ್ತರಿಲ್ಲದೆ ನಡೆಯುತ್ತಿರುವ ಅದರ ಕಾರ್ಯ, ನಿಧಾನಗತಿ… ಇಂದು ಅದರ ವಿಶ್ವಾಸಾರ್ಹತೆಯೆ ಪ್ರಶ್ನಾರ್ಹವಾಗಿದೆ.

ಈ ಹಿನ್ನೆಲೆಯಲ್ಲಿ ನೋಡಿದರೆ ಕರ್ನಾಟಕದ ಮುಂದಿನ ದಿನಗಳ ರಾಜಕೀಯ ನಾಯಕರಾಗಬಹುದಾದವರ ಮೇಲೆಯೂ ಒಳ್ಳೆಯ ಭರವಸೆ ಇಟ್ಟುಕೊಳ್ಳುವಂತಿಲ್ಲ. ಬಹಳಷ್ಟು ಜನ ರೌಡಿ, ಗೂಂಡಾಗಳಂತೆಯೇ ವರ್ತಿಸುತ್ತಾರೆ. ಅವರ ಕೋಮುವಾದದ ಸಿದ್ಧಾಂತ ಒತ್ತಟ್ಟಿಗಿದ್ದರೂ ಶಾಸಕ ಸಿ.ಟಿ.ರವಿಯಂತಹವರ ಬಗ್ಗೆ ಕನಿಷ್ಟ ಅವರ ಪ್ರಾಮಾಣಿಕತೆಯ ಬಗ್ಗೆಯಾದರೂ ನಂಬಿಕೆ ಇಟ್ಟುಕೊಳ್ಳಬಹುದಿತ್ತು. ಇಷ್ಟಕ್ಕೂ ಇವರಂತಹ ಕೋಮುವಾದಿಗಳು ಚುನಾವಣೆ ಗೆದ್ದಿದ್ದು ದುಡ್ಡಿನ ಬಲಕ್ಕಿಂತ ಹೆಚ್ಚಾಗಿ ಕೋಮುವಾದವನ್ನು, ಒಂದು ರೀತಿಯ ಅಪ್ರಾಮಾಣಿಕ ಹುಸಿರಾಷ್ಟ್ರೀಯತೆಯನ್ನು ಉದ್ದೀಪಿಸಿ. ಇವರು ಮಾತನಾಡುತ್ತಿದ್ದದ್ದು ಸ್ವಚ್ಚ, ಪ್ರಾಮಾಣಿಕ ಆಡಳಿತದ ಬಗ್ಗೆ. ದೇಶಭಕ್ತಿಯ ಬಗ್ಗೆ. ಅಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ. ಅದೊಂದು ನಿಸ್ವಾರ್ಥ ಧ್ಯೇಯದಂತೆ ಡಂಗೂರ ಸಾರುತ್ತಿದ್ದರು. ಆದರೆ, ಇವರಂತಹವರ ಬಗ್ಗೆಯೂ ದೂರುಗಳು, ಅಪವಾದಗಳು ಬರುತ್ತವೆ ಎಂದರೆ ಈಗ ಯಾವ ವಿಧಾನಸಭಾ ಶಾಸಕ ಭ್ರಷ್ಟನಲ್ಲ ಎಂದು ಕೇಳುವಂತಾಗಿದೆ. ಉತ್ತರ ಕಷ್ಟವೇನಲ್ಲ. ಅದು ಎರಡಂಕಿ ಮುಟ್ಟುತ್ತದೆ ಎಂದು ಅನ್ನಿಸುತ್ತದೆಯೆ? ಇಷ್ಟಕ್ಕೂ ಆ ಮಹಾತ್ಮರು ಯಾರು? ನನಗಂತೂ ಯಾರೂ ನೆನಪಾಗುತ್ತಿಲ್ಲ. ನಿಮಗೆ?

ಸಿ.ಟಿ. ರವಿಯವರ ಮೇಲಿರುವ ಅಧಿಕಾರ ದುರುಪಯೋಗ ಮತ್ತು ಸ್ವಜನಪಕ್ಷಪಾತದ ಆರೋಪದ ಕತೆ ಹೀಗಿದೆ:

ಶಾಸಕರಾಗಿರುವ ಕಾರಣಕ್ಕೆ ಸಿ.ಟಿ.ರವಿ ಚಿಕ್ಕಮಗಳೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರೂ ಹೌದು. ಆ ಕಾರಣ ಪ್ರಾಧಿಕಾರದ ನಿರ್ಧಾರಗಳಲ್ಲಿ ಅವರ ಪಾತ್ರ ದೊಡ್ಡದಿರುತ್ತದೆ. ಸುಮಾರು ಮೂರು ವರ್ಷಗಳ ಹಿಂದೆ ಚಿಕ್ಕಮಗಳೂರು ಹತ್ತಿರದಲ್ಲಿಯೇ ಹೊಸದೊಂದು ಬಡವಾಣೆ ನಿರ್ಮಾಣ ಮಾಡಲೆಂದು ಹಿರೇಮಗಳೂರು ಸುತ್ತಮುತ್ತ 40 ಎಕರೆ ಭೂಮಿಯನ್ನು ಪ್ರಾಧಿಕಾರ ಗುರುತಿಸಿತ್ತು. ನಂತರ ನಲವತ್ತು ಎಕರೆ ಭೂಮಿ ಈ ಯೋಜನೆಗೆ ಸಾಲದು ಎಂಬ ಕಾರಣಕ್ಕೆ ಬೇರೆ ಕಡೆ ಹೆಚ್ಚಿನ ಜಾಗವನ್ನು ಬಡಾವಣೆಗಾಗಿ ಗುರುತಿಸಿ, ಪ್ರಸ್ತುತ ಭೂಮಿಯನ್ನು ಯೋಜನೆಯಿಂದ ಕೈಬಿಟ್ಟಿತು.

ಯೋಜನೆ ಕೈ ಬಿಟ್ಟ ನಂತರ ಆ ಜಮೀನು ಮೂಲ ಮಾಲೀಕರ ಕೈಗೆ ಸೇರಬೇಕು. ಈ ನಲವತ್ತು ಎಕರೆ ಪ್ರದೇಶದಲ್ಲಿ 32 ಎಕರೆ ಮೂಲ ಮಾಲೀಕರಿಗೆ ಸೇರಿತು. ಉಳಿದ ಎಂಟು ಎಕರೆಗಳನ್ನು ‘ವಾಟರ್ ಪಾರ್ಕ್’ ಎಂಬ ಯೋಜನೆ ನೆಪದಲ್ಲಿ ಹಾಗೆ ಉಳಿಸಿಕೊಳ್ಳಲಾಯಿತು. ಹಿರೇಮಗಳೂರಿನ ಕೆರೆ ಸುತ್ತಲ ಭೂಮಿಯನ್ನು ಅಭಿವೃದ್ಧಿ ಪಡಿಸಿ ‘ವಾಟರ್ ಪಾರ್ಕ್’ ಮಾಡುವುದು ಪ್ರಾಧಿಕಾರದ ಉದ್ದೇಶ. ಪ್ರಸ್ತುತ ಕೆರೆ ನೀರಾವರಿ ಉದ್ದೇಶಕ್ಕೆ ಉಪಯೋಗವಾಗುತ್ತಿದ್ದುದು ಗೊತ್ತಿದ್ದೂ ಪ್ರಾಧಿಕಾರ ಈ ಯೋಜನೆಗೆ ಕೈ ಹಾಕಿತು.

ಈ ಮಧ್ಯೆ ಈ ಜಮೀನಿನ ಮೂಲ ಮಾಲಿಕರೊಬ್ಬರು ತಾವು ಜಮೀನನ್ನು ಮಾರಾಟ ಮಾಡಬೇಕಿದೆ, ದಯವಿಟ್ಟು ಅನುಮತಿ ಕೊಡಿ ಎಂದು ಪ್ರಾಧಿಕಾರದಿಂದ ‘ನಿರಪೇಕ್ಷಣ ಪತ್ರ’ ಕ್ಕಾಗಿ ಮೊರೆ ಇಟ್ಟರು. ಅರ್ಜಿದಾರರಿಗೆ ಪ್ರಾಧಿಕಾರ ಉತ್ತರಿಸಿ, ಪ್ರಸ್ತುತ ಜಮೀನನ್ನು ವಾಟರ್ ಪಾರ್ಕ್‌ಗಾಗಿ ಗುರುತಿಸಲಾಗಿರುವುದರಿಂದ ಮಾರಾಟ ಮಾಡಲು ಅನುಮತಿ ಕೊಡಲಾಗುವುದಿಲ್ಲ ಎಂದಿತು.

ಅದುವರೆವಿಗೂ ಪ್ರಾಧಿಕಾರ ಹಿರೇಮಗಳೂರು ಕೆರೆಯನ್ನು ಅಭಿವೃದ್ಧಿ ಪಡಿಸಲು ಕೆರೆಯ ಮೂಲ ವಾರಸುದಾರ ಇಲಾಖೆಯಾದ ಸಣ್ಣ ನೀರಾವರಿ ಇಲಾಖೆಯಿಂದ ಹಸ್ತಾಂತರ ಮಾಡಿಕೊಳ್ಳಲು ಆಗಲಿಲ್ಲ.  ಡಿಸೆಂಬರ್ 7, 2009 ರಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಪತ್ರ ಬರೆದು ಕೆರೆ ನೀರಾವರಿ ಉಪಯೋಗಕ್ಕೆ ಅಗತ್ಯವಾಗಿರುವುದರಿಂದ ಅದನ್ನು ಹಸ್ತಾಂತರ ಮಾಡಲು ಸಾಧ್ಯವಿಲ್ಲ ಎಂದರು.

ವಿಚಿತ್ರವೆಂದರೆ, ಇಲಾಖೆಯಿಂದ ಹೀಗೆ ಉತ್ತರ ಬರುವ ಮೂರು ತಿಂಗಳ ಮೊದಲೇ ಪ್ರಸ್ತುತ ಜಮೀನು ಮೂಲ ಮಾಲೀಕರ ಖಾತೆಗಳಿಂದ ಸಿ.ಡಿ ಅನಿಲ್ ಕುಮಾರ್ ಮತ್ತಿತರರ ಹೆಸರಿಗೆ ವರ್ಗಾವಣೆ ಆಗಿತ್ತು!

ಮೂಲ ಮಾಲಿಕರು ಮಾರಾಟ ಮಾಡಲು ಅನುಮತಿ ಕೇಳಿದಾಗ ವಾಟರ್ ಪಾರ್ಕ್ ಯೋಜನೆ ನೆಪದಲ್ಲಿ ಪ್ರಾಧಿಕಾರ ನಿರಾಕರಿಸಿತ್ತು. ಹಾಗಾದರೆ ಇದು ಸಿ.ಡಿ ಅನಿಲ್ ಕುಮಾರ್ ಮತ್ತಿತರರ ಹೆಸರಿಗೆ ರಿಜಿಸ್ಟರ್ ಆಗಿದ್ದಾದರೂ ಹೇಗೆ?

ಈ ಕತೆ ಇಲ್ಲಿಗೇ ನಿಲ್ಲುವುದಿಲ್ಲ. ಹೀಗೆ ಅನಿಲ್ ಕುಮಾರ್ ಹೆಸರಿಗೆ ಜಮೀನು ನೋಂದಣಿ ಆದ ಕೆಲವೇ ತಿಂಗಳಲ್ಲಿ ಅಂದರೆ ಜೂನ್ 2010 ರ ವೇಳೆಗೆ ಶಾಸಕರ ಪತ್ನಿಗೆ ಹತ್ತಿರದ ಸಂಬಂಧಿಕರಾದ ತೇಜಸ್ವಿನಿ ಸುದರ್ಶನ್ ಹೆಸರಿಗೆ ಜಮೀನು ವರ್ಗಾವಣೆ ಆಯಿತು. ನಂತರ ಅದೇ ಜಾಗದಲ್ಲಿ ಬಡಾವಣೆ ನಿರ್ಮಾಣಗೊಂಡಿದೆ. ಅಲ್ಲಿಯ ನಿವೇಶನಗಳು ಈಗ ಲಕ್ಷಾಂತರ ರೂ ಬೆಲೆ ಬಾಳುತ್ತಿವೆ.

ಚಿಕ್ಕಮಗಳೂರಿನ ಜೆಡಿಎಸ್ ಮುಖಂಡ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಸದಸ್ಯ ಎಸ್.ಎಲ್ ಭೋಜೇಗೌಡ ಈ ಪ್ರಕರಣದ ದಾಖಲೆಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿ ಇದೆಲ್ಲದರ ಹಿಂದೆ ಶಾಸಕರ ಸ್ವಜನ ಪಕ್ಷಪಾತ, ಧನದಾಹ ಎಲ್ಲವೂ ಇವೆ ಎಂದು ಆರೋಪಿಸಿದ್ದಾರೆ. ನೀರಾವರಿಗೆ ಉಪಯೋಗಕ್ಕಿರುವ ಕೆರೆಯನ್ನು ವಾಟರ್ ಪಾರ್ಕ್ ಯೋಜನೆಗೆ ಗುರುತಿಸಿದ್ದೇ ಒಂದು ಸಂಚು ಎನ್ನುವುದು ಅವರ ಆರೋಪ.

ಸರಕಾರ ಯಾವುದೇ ಕಾರಣಕ್ಕೂ ಆ ಕೆರೆಯನ್ನು ಯೋಜನೆಗೆ ಹಸ್ತಾಂತರ ಮಾಡುವುದಿಲ್ಲ ಎಂದು ಗೊತ್ತಿದ್ದೇ ಶಾಸಕರು ಆ ಯೋಜನೆಯನ್ನು ಪ್ರಸ್ತಾಪಿಸಿದರು. ಅದೇ ಕಾರಣಕ್ಕೆ ಸಣ್ಣ ನೀರಾವರಿ ಇಲಾಖೆ ಅನುಮತಿ ನಿರಾಕರಿಸುವ ಮೊದಲೇ ಶಾಸಕರ ಆಪ್ತರ ಹೆಸರಿಗೆ ನೋಂದಣಿಯಾಗಿದ್ದು ಈ ಸಂಚಿನ ಆರೋಪಕ್ಕೆ ಪುಷ್ಟಿ ಕೊಡುತ್ತದೆ. ನಂತರ ಮೂಲ ಮಾಲೀಕರಾದ ಬಡ ರೈತರನ್ನು ಹೆದರಿಸಿ, ಬೆದರಿಸಿ ಅಥವಾ ‘ಮನವೊಲಿಸಿ’ ಅವರಿಂದ ಜಮೀನಿನ ಮಾರಾಟ ಮಾಡಿಸಿದರು. ‘ಸರಕಾರ ಜಮೀನನ್ನು ಕೊಂಡರೆ ನಿಮಗೆ ಸಿಗುವುದು ಬಿಡಿಗಾಸು, ನಾವು ಜಾಸ್ತಿ ಕೊಡುತ್ತೇವೆ,’ ಎಂದು ಹೇಳಿ ರೈತರಿಂದ ಜಮೀನನ್ನು ಖರೀದಿಸಿರುವ ಸಾಧ್ಯತೆ ಇದೆ. ಅಭಿವೃದ್ಧಿ ಯೋಜನೆಗೆ ಗುರುತಿಸಲಾಗಿದ್ದ ಜಮೀನಿನ ನೋಂದಣಿ ಶಾಸಕರ ಪ್ರಭಾವದಿಂದ ಸಾಧ್ಯವಾಯಿತು ಎನ್ನುವುದು ಬೋಜೇಗೌಡರ ಇನ್ನೊಂದು ಆರೋಪ.

ಈ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಶಾಸಕರು, ಪ್ರಾಧಿಕಾರದ ಸದಸ್ಯರಾಗಿದ್ದ ಕಾರಣ ವಾಟರ್ ಪಾರ್ಕ್ ಯೋಜನೆಯನ್ನು ಪ್ರಸ್ತಾಪ ಮಾಡಲು ಸಾಧ್ಯವಾಯಿತು. ಆ ಮೂಲಕ ಆಯಕಟ್ಟಿನ ಜಾಗವನ್ನು ಗುರುತಿಸಲು ಸಹಕಾರಿಯಾಯಿತು. ನಂತರ ತಮ್ಮ ಪ್ರಭಾವ ಬಳಸಿ ಆ ಜಮೀನನ್ನು ತಮ್ಮ ಆಪ್ತರಿಗೆ ನಂತರ ನೆಂಟರಿಗೆ ವರ್ಗಾಯಿಸಿದರು.

ದಾಖಲೆಗಳ ಪ್ರಕಾರ ಜಮೀನು ಅವರ ಹೆಸರಿನಲ್ಲಿಲ್ಲ. ಆದರೆ ಎಲ್ಲಾ ಹಂತದಲ್ಲೂ ಅವರ ಪ್ರಭಾವ ಹೆಸರು ಮಾಡಿದೆ. ದಾಖಲೆಗಳನ್ನು ಮತ್ತು ಸಂಬಂಧಗಳನ್ನು ಅಕ್ಕಪಕ್ಕದಲ್ಲಿಟ್ಟುಕೊಂಡು ನೋಡಿದರೆ ಅಧಿಕಾರ ದುರುಪಯೋಗ ಎದ್ದು ಕಾಣಿಸುತ್ತದೆ. ಇದನ್ನೇ ಭೋಜೇಗೌಡರು ಹೇಳುತ್ತಿರುವುದು.

ಸಿ.ಡಿ.ಅನಿಲ್‌ಕುಮಾರ್ ಮತ್ತು ಸಿ.ಟಿ. ರವಿಯವರಿಗೆ ಇರುವ ಸ್ನೇಹ ಮತ್ತು ವ್ಯವಹಾರಿಕ ಸಂಬಂಧಗಳ ಬಗ್ಗೆ. ಅವರ ಮತ್ತು ಕೊನೆಯದಾಗಿ ರಿಜಿಸ್ಟರ್ ಮಾಡಿಸಿಕೊಂಡಿರುವ ಮತ್ತು ತೇಜಸ್ವಿನಿ ಸುದರ್ಶನ್‌ರ ಆದಾಯ ಮೂಲಗಳ ಬಗ್ಗೆ, ರಿಜಿಸ್ಟರ್ ಆದ ಸಂದರ್ಭದಲ್ಲಿ ಈ ಎಲ್ಲಾ ಪಾತ್ರಧಾರಿಗಳ ಫೋನ್ ಕರೆಗಳ ಬಗ್ಗೆ, ರಿಜಿಸ್ಟರ್ ಸಮಯದಲ್ಲಿ ಆಗಿರುವ ಲೋಪಗಳ ಬಗ್ಗೆ ದಾಖಲೆಗಳನ್ನು ಕ್ರೋಢೀಕರಿಸಿಕೊಂಡು ತನಿಖಾ ಸಂಸ್ಥೆಯೊಂದು ವಿಚಾರಣೆ ನಡೆಸಿದರೆ ಇದರ ಹಿಂದಿನ ಸತ್ಯ ದಾಖಲಾಗಬಹುದು.

ಆದರೆ…

ಮೊದಲೇ ಹೇಳಿದ ಹಾಗೆ ನಮ್ಮಲ್ಲಿ ಉತ್ತಮವಾದ ಸ್ವತಂತ್ರವಾದ, suo moto ಅಧಿಕಾರವಿರುವ ತನಿಖಾ ಸಂಸ್ಥೆಗಳಿಲ್ಲ. ಅಂತಹ ಸಂಸ್ಥೆಗಳನ್ನು ಸ್ಥಾಪಿಸಲು ಕಾನೂನು ರಚಿಸಬೇಕಾದವರೆ ಇಂದು ಅಪರಾಧಿಗಳಾಗಿ ಕಾಣಿಸುತ್ತಿದ್ದಾರೆ. ನ್ಯಾಯಾಲಯಗಳಿಗೆ ಜೈಲುಗಳಿಗೆ ಅಲೆಯುತ್ತಿದ್ದಾರೆ. ಇದು ಯಾರು ಮಾಡಿದ ತಪ್ಪು?

ಇವು ಮೇಲಿನ ಹಗರಣಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಲಭ್ಯವಿರುವ ದಾಖಲೆಗಳಲ್ಲಿ ಕೆಲವು ದಾಖಲೆ ಪತ್ರಗಳು.

 

 

 

ನ್ಯಾ.ಬನ್ನೂರುಮಠರ ವಿರುದ್ಧ ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನ ಪ್ರತಿ

ರಾಜ್ಯದ ಬಿಜೆಪಿ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ನಡೆಯುತ್ತಿರುವ ಲೋಕಾಯುಕ್ತ ನೇಮಕದ ವಿಚಾರ ಇನ್ನೂ ಬಗೆಹರಿದಿಲ್ಲ. ಈ ವಿಷಯ ಒಂದೊಂದು ದಿನಕ್ಕೆ ಒಂದೊಂದು ಬಣ್ಣ ಪಡೆದುಕೊಳ್ಳುತ್ತಿದೆ. ವಿರೋಧಪಕ್ಷಗಳಿಗೂ ಲೋಕಾಯುಕ್ತರ ನೇಮಕ ಬೇಕಿದ್ದಂತಿಲ್ಲ. ಇದ್ದಿದ್ದರೆ ಈ ರೀತಿ ದಿವ್ಯನಿರ್ಲಕ್ಷ್ಯದಲ್ಲಿ ಕಾಲಹರಣ ಮಾಡುತ್ತಿರಲಿಲ್ಲ. ರಾಜ್ಯದಲ್ಲಿನ ಪ್ರಜಾಸತ್ತೆಯ ಪ್ರಕ್ರಿಯೆ ಮತ್ತು ಅದರ ಗುಣಮಟ್ಟದ ಬಗ್ಗೆ ಯಾವೊಬ್ಬ ಜನಪ್ರತಿನಿಧಿಗೂ ಕಿಂಚಿತ್ ಕಾಳಜಿ ಇದ್ದಂತಿಲ್ಲ.

ಈ ಮಧ್ಯೆ, ಮುಖ್ಯಸ್ಥನಿಲ್ಲದೆ ಲೋಕಾಯುಕ್ತ ಸಂಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಅದಕ್ಕೆ ಸಲ್ಲಿಸಲಾಗುತ್ತಿರುವ ದೂರುಗಳೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂಬ ವರದಿಗಳು ಬರುತ್ತಿವೆ.

ರಾಜ್ಯಪಾಲರು “ಕೆಲವು ಕ್ರಿಮಿನಲ್ ಶಕ್ತಿಗಳು” ನ್ಯಾ.ಬನ್ನೂರುಮಠರೇ ಲೋಕಾಯುಕ್ತರಾಗಬೇಕೆಂದು ಹಠ ಹಿಡಿದಿದ್ದಾರೆ ಎನ್ನುತ್ತಿದ್ದಾರೆ ಮತ್ತು ಬನ್ನೂರುಮಠರನ್ನು ಒಪ್ಪಿಕೊಳ್ಳದೇ ಇರುವುದಕ್ಕೆ ನನ್ನ ಬಳಿ ಸಾಕಷ್ಟು ಕಾರಣಗಳಿವೆ ಎಂದಿದ್ದಾರೆ.

ನ್ಯಾ.ಬನ್ನೂರುಮಠರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡಬಾರದೆಂದು ಮೂರು ತಿಂಗಳಿಗೂ ಹಿಂದೆ ದಾವಣಗೆರೆ ಜಿಲ್ಲೆಯ ನಂದಿಗಾವಿ ಗ್ರಾಮದ ಹಲವು ನಾಗರಿಕರು ರಾಜ್ಯಪಾಲ ಹಂಸರಾಜ್ ಭಾರದ್ವಾಜ್‌ರಿಗೆ ಮನವಿ ಪತ್ರ ಸಲ್ಲಿಸಿದ್ದರು. ಇದು ಇಲ್ಲಿಯವರೆಗೂ ಎಲ್ಲಿಯೂ ಪ್ರಕಟವಾಗಿರಲಿಲ್ಲ. ನಮಗೆ ಈಗ ಆ ಪತ್ರದ ಪ್ರತಿ ಲಭ್ಯವಿದ್ದು ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.

ರವಿ ಕೃಷ್ಣಾರೆಡ್ಡಿ






ವರದಿಗಾರರ, ಸಂಪಾದಕರ ಮತ್ತು ಮಾಧ್ಯಮಸಂಸ್ಥೆಗಳ ಜೇಬು ಮತ್ತಷ್ಟು ದೊಡ್ಡದಾಗಲಿವೆ…


– ರವಿ ಕೃಷ್ಣಾರೆಡ್ಡಿ  


ಇಂದು ಭಾರತ ಜನತಂತ್ರಗೊಂಡ ದಿನದ ವಾರ್ಷಿಕಾಚರಣೆ.

ಬಹುಶಃ ನಾನು ಈ ನನ್ನ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಎಂದೂ ಇಷ್ಟೊಂದು ನಿರುತ್ಸಾಹಗೊಂಡಿರಲಿಲ್ಲ. ಅದರಲ್ಲೂ ಕರ್ನಾಟಕದ ರಾಜಕೀಯ ವ್ಯವಸ್ಥೆಯ ಬಗ್ಗೆ, ಇಲ್ಲಿನ ಮಾಧ್ಯಮಗಳ ಕಾರ್ಯವೈಖರಿ ಬಗ್ಗೆ, ಮತ್ತು ಜನ ತಮ್ಮ ಸುತ್ತಮುತ್ತ ನಡೆಯುತ್ತಿರುವ ಅನ್ಯಾಯ ಮತ್ತು ಅನೀತಿಗಳಿಗೆ ಪ್ರತಿಸ್ಪಂದಿಸುತ್ತಿರುವ ರೀತಿ ನೋಡಿ ನಿಜಕ್ಕೂ ವಾಕರಿಕೆ ಆಗುತ್ತಿದೆ.

ಇದಕ್ಕೆ ನಾನು ಕಳೆದ ಮೂರು ದಿನಗಳಿಂದ ಪಟ್ಟುಬಿಡದೆ ಕೂತು ಓದಿದ “All the President’s Men” ಪುಸ್ತಕ ಮತ್ತು ಇಂದು ಹರಡಿಕೊಂಡು ಕೂತಿರುವ ಶಾಸಕನೊಬ್ಬನ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ದಾಖಲೆಗಳೂ ಸ್ವಲ್ಪಮಟ್ಟಿಗೆ ಕಾರಣ ಇರಬಹುದು.

ಬಹುಶಃ ನಿಮಗೆ ಗೊತ್ತಿರಬಹುದು, ಅಮೆರಿಕದ ಇತಿಹಾಸದಲ್ಲಿ ರಾಜೀನಾಮೆ ನೀಡಿ ಹೊರನಡೆದ ಏಕೈಕ ರಾಷ್ಟ್ರಾಧ್ಯಕ್ಷ ರಿಚರ್ಡ್ ನಿಕ್ಸನ್. ಅಮೆರಿಕದ ರಾಜಕೀಯ ನಮ್ಮಷ್ಟು ಎಂದೂ ಗಬ್ಬೆದ್ದಿರಲಿಲ್ಲ. ಆದಷ್ಟೂ ನೀತಿ-ನಿಯಮಗಳನ್ನು ಪಾಲಿಸಿಕೊಂಡು ಬರುತ್ತಿರುವ ವ್ಯವಸ್ಥೆ ಅದು. ಅದಕ್ಕೆ ಕಾರಣ ಅಲ್ಲಿನ ರಾಜಕಾರಣಿಗಳಷ್ಟೇ ಅಲ್ಲ. ಅಲ್ಲಿಯ ಸರ್ಕಾರಿ ಅಧಿಕಾರಿಗಳು, ಪತ್ರಕರ್ತರು, ಚಿಂತಕರು, ಉತ್ತರದಾಯಿತ್ವವನ್ನು ಗಟ್ಟಿಯಾಗಿ ಅಪೇಕ್ಷಿಸುವ ಅಲ್ಲಿಯ ಜನಸಾಮಾನ್ಯರು. ಹೀಗೆ ಎಲ್ಲರೂ ಅಲ್ಲಿಯ ವ್ಯವಸ್ಥೆ ತಕ್ಕಷ್ಟು ಮಟ್ಟಿಗೆ ನ್ಯಾಯಯುತವಾಗಿಯೇ ಇರುವಂತೆ ನೋಡಿಕೊಂಡಿದ್ದಾರೆ. ಆದರೆ ಇಂತಹ ವ್ಯವಸ್ಥೆಯಲ್ಲಿಯೂ ನಿಕ್ಸನ್ ಮತ್ತು ಆತನ ಕೆಳಗೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳು ಅಮೇರಿಕದ ಮಟ್ಟಿಗೆ ಮಾಡಬಾರದಂತಹ ಅಪಚಾರ ಮಾಡಿದರು. ಅದು 1971-72ರ ಸಮಯ. ನಿಕ್ಸನ್‌ನ ಮರುಚುನಾವಣೆಗೆ ಸಿದ್ಧಮಾಡಿಕೊಳ್ಳುತ್ತಿದ್ದ ಆತನ ಗುಂಪು ತಮ್ಮ ವಿರೋಧಿ ಗುಂಪಿನ ಜನರ ಫೋನ್‌ಗಳನ್ನು ಕದ್ದಾಲಿಸಿದರು. ಅವರ ಮೇಲೆ ವ್ಯವಸ್ಥಿತ ಅಪಪ್ರಚಾರ ಮತ್ತು ಪಿತೂರಿಗಳನ್ನು ಮಾಡಿದರು. ಕೊನೆಗೆ ವಿರೋಧಪಕ್ಷದ ಕಚೇರಿಯಲ್ಲಿಯೇ ಕದ್ದಾಲಿಕೆ ಯಂತ್ರ ಅಳವಡಿಸಲು ಯತ್ನಿಸಿದರು. ಆ ಯತ್ನದಲ್ಲಿ ಇವರ ಜನ ತೊಡಗಿದ್ದಾಗ ಅಚಾನಕ್ ಆಗಿ ಸಿಕ್ಕಿಬಿದ್ದರು. ಅದೇ ವಾಟರ್‌ಗೇಟ್ ಪ್ರಕರಣ ಮತ್ತು ಹಗರಣ.

ಈ ಘಟನೆಯ ಹಿಂದೆ ಬಿದ್ದು ಆ ಇಡೀ ಪ್ರಕರಣವನ್ನು ಬೇಧಿಸುತ್ತಾ ಹೋಗಿದ್ದು ವುಡವರ್ಡ್ ಮತ್ತು ಬರ್ನ್‍ಸ್ಟೀನ್ ಎಂಬ ಇಬ್ಬರು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಪತ್ರಕರ್ತರು. ಆಗ ಅವರಿಬ್ಬರಿಗೂ ಮುವ್ವತ್ತರ ಆಸುಪಾಸು. ನಂತರದ ದಿನಗಳಲ್ಲಿ ಅಮೆರಿಕದ ಅನೇಕ ಪತ್ರಕರ್ತರು, ಟೈಮ್, ನ್ಯೂಸ್‌ವೀಕ್, ನ್ಯೂಯಾರ್ಕ್ ಟೈಮ್ಸ್, ಲಾಸ್ ಏಂಜಲೀಸ್ ಟೈಮ್ಸ್, .. ಹೀಗೆ ಹಲವು ಮಾಧ್ಯಮ ಸಂಸ್ಥೆಗಳು ಈ ಹಗರಣವನ್ನು ಬೇಧಿಸಲು ಯತ್ನಿಸುತ್ತವೆ. ಆದರೆ ವುಡವರ್ಡ್, ಬರ್ನ್‍ಸ್ಟೀನ್ ಮತ್ತು ವಾಷಿಂಗ್ಟನ್ ಪೋಸ್ಟ್‌ನ ಎಡಬಿಡದೆ ಸಾಗಿದ ಇನ್ವೆಸ್ಟಿಗೇಟಿವ್ ಜರ್ನಲಿಸಂ ಆ ಹಗರಣ ಬಯಲಾಗಲು ಪ್ರಮುಖ ಕಾರಣ. ತನ್ನ ಸಹಚರರು ಮಾಡುತ್ತಿದ್ದ ಕೆಲವು ಅಕ್ರಮ ಕೆಲಸಗಳು ನಿಕ್ಸನ್‌ಗೆ ಗೊತ್ತಿತ್ತು. ಅದನ್ನು ಮುಚ್ಚಿ ಹಾಕಲು ಮಾಡುತ್ತಿದ್ದ ಪ್ರಯತ್ನಗಳ ಬಗ್ಗೆಯೂ ಆತನಿಗೆ ಅರಿವಿತ್ತು. ಮತ್ತು ಆ ಇಡೀ ವಿದ್ಯಮಾನದಲ್ಲಿ ನಿಕ್ಸನ್ ಸುಳ್ಳು ಹೇಳುತ್ತ, ಆರೋಪಗಳನ್ನು ನಿರಾಕರಿಸುತ್ತ ಬಂದ. ಕೊನೆಗೆ ಎಲ್ಲವೂ ಬಯಲಾಗಿ ರಾಜೀನಾಮೆ ನೀಡಿ, ಆತನ ಉಪಾಧ್ಯಕ್ಷನೇ ಅಧ್ಯಕ್ಷನಾದ ಮೇಲೆ ಆತನಿಂದ ಕ್ಷಮಾದಾನ ಪಡೆದುಕೊಂಡು ಜೈಲುಪಾಲಾಗದೆ ಉಳಿದುಕೊಂಡ. (ಮತ್ತೂ ಒಂದಷ್ಟು ವಿವರಗಳಿಗೆ ನನ್ನ ಈ ಲೇಖನ ನೋಡಿ.)

ಈ ಪ್ರಕರಣ ಮತ್ತು ಅದನ್ನು ಬಯಲಿಗೆಳೆದ ರೀತಿ ನಮ್ಮ ಎಲ್ಲಾ ಪತ್ರಕರ್ತರಿಗೂ, ಅದರಲ್ಲೂ ವಿಶೇಷವಾಗಿ ರಾಜಕೀಯ ವರದಿಗಾರರಿಗೆ ಗೊತ್ತಿರಲೇಬೇಕು. ಈ ಪುಸ್ತಕ ಪತ್ರಕರ್ತರಿಗೆ ಪಠ್ಯವಾಗಬೇಕು. ಆದರೆ ಇತ್ತೀಚಿನ ಪತ್ರಕರ್ತರಿಗೆ ಇದು ಗೊತ್ತಿರುವ ಸಾಧ್ಯತೆಗಳು ಬಹಳ ಕಮ್ಮಿ ಎನ್ನಿಸುತ್ತದೆ. ನಾನು 2006ರಲ್ಲಿ ವಿಕ್ರಾಂತ ಕರ್ನಾಟಕ ಆರಂಭಿಸುವ ಮೊದಲು ಬೆಂಗಳೂರಿನಲ್ಲಿ ಕೆಲವು ಹಿರಿಯ ಪತ್ರಕರ್ತರು ಮತ್ತು ಸಂಪಾದಕರೊಡನೆ ಒಂದು ಸಂವಾದ ಏರ್ಪಡಿಸಿದ್ದೆ. ಅದಾದ ನಂತರ ಈ ಪುಸ್ತಕವನ್ನು ಆಧರಿಸಿ ತೆಗೆದಿರುವ ಅದೇ ಹೆಸರಿನ ಸಿನೆಮಾ ಪ್ರದರ್ಶನವನ್ನೂ ವ್ಯವಸ್ಥೆ ಮಾಡಿಸಿದ್ದೆ. ಅದನ್ನು ನೋಡಲು ಉಳಿದವರು ಹತ್ತು ಜನರೂ ಇರಲಿಲ್ಲ.

ಕರ್ನಾಟಕದಲ್ಲಿ ಇಂದು ಭ್ರಷ್ಟಾಚಾರ ಎನ್ನುವುದು, ಅದರಲ್ಲೂ ರಾಜಕಾರಣಿಗಳ ಅಧಿಕಾರ ದುರುಪಯೋಗ ಮತ್ತು ಅಕ್ರಮಗಳು, ಎಲ್ಲಾ ತರಹದ ಎಲ್ಲೆಗಳನ್ನೂ ಮೀರಿವೆ. ಇಂತಹ ಸಂದರ್ಭದಲ್ಲಿ ನಮ್ಮಲ್ಲಿ ಹತ್ತಾರು ಜನ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್‌ಗಳು, ಪ್ರಾಮಾಣಿಕ ವರದಿಗಾರರು ಹುಟ್ಟಿಕೊಳ್ಳಬೇಕಿತ್ತು. ಏನಾಗಿದೆ ಇಲ್ಲಿ?

ಇವತ್ತು ಬಯಲಾಗುತ್ತಿರುವ ಪ್ರಕರಣಗಳೂ ಸಹ ರಾಜಕೀಯ ವಿರೋಧಿಗಳು ಪತ್ರಿಕಾಲಯಗಳಿಗೆ ತಾವೇ ಖುದ್ದಾಗಿ ತಲುಪಿಸುತ್ತಿರುವ ದಾಖಲೆ ಮತ್ತು ಮಾಹಿತಿಗಳೇ ಹೊರತು ಪತ್ರಕರ್ತರು ತಮ್ಮ ಕಚೇರಿಯಿಂದ ಹೊರಗೆ ಹೋಗಿ ಮಾಹಿತಿ ಕಲೆಹಾಕುತ್ತಿಲ್ಲ. ಇಂತಹ ಸ್ವಚ್ಚಂದ ಭ್ರಷ್ಟಾಚಾರದ ಸಮಯದಲ್ಲಿ ಮತ್ತು ಮಾಹಿತಿ ಹಕ್ಕಿನ ಯುಗದಲ್ಲೂ ಪತ್ರಕರ್ತರು ಮತ್ತು ಅವರ ಸಂಪಾದಕರು ದಡ್ಡರಾಗಿದ್ದಾರೆ; ಸೋಮಾರಿಗಳಾಗಿದ್ದಾರೆ; ಭ್ರಷ್ಟರಾಗಿದ್ದಾರೆ; ಖದೀಮರಾಗಿದ್ದಾರೆ; ಪಕ್ಷಪಾತಿಗಳಾಗಿದ್ದಾರೆ; ಶ್ರೀಮಂತರಾಗಿದ್ದಾರೆ.

ಕಳೆದ ಮೂರ್ನಾಲ್ಕು ವರ್ಷದ ಹಗರಣಗಳನ್ನೇ ನೆನಪಿಸಿಕೊಳ್ಳಿ. ಒಂದೊಎರಡೊ ಬಿಟ್ಟರೆ ಮಿಕ್ಕೆಲ್ಲ ಹಗರಣ ಖಾಸಗಿ ಜನ ಕೋರ್ಟ್ ಮೆಟ್ಟಿಲು ಹತ್ತಿ ಜನರ ಮುಂದೆ ಇಟ್ಟದ್ದೇ ಹೊರತು ನಮ್ಮ ಪತ್ರಿಕೆಗಳು ಬಯಲಿಗೆಳೆದದ್ದು ಎಷ್ಟು?

ಈ ಮಧ್ಯೆ ಅಧಿಕಾರಸ್ಥರಿಂದ ಲಾಭ ಮಾಡಿಕೊಂಡ ಪತ್ರಕರ್ತರ ಮತ್ತು ಮಾಧ್ಯಮಸಂಸ್ಥೆಗಳ ಪಟ್ಟಿಯೇ ದೊಡ್ದದಿದೆ.

ಇನ್ನು ವರ್ಷ ಒಪ್ಪತ್ತಿನಲ್ಲಿ ಬರಲಿರುವ ಚುನಾವಣೆಗಳಲ್ಲಿ ಅದೇ ಭ್ರಷ್ಟ ಜನ ಚುನಾವಣೆಗೆ ನಿಲ್ಲಲಿದ್ದಾರೆ. ನಮ್ಮ ರಾಜಕೀಯ ವರದಿಗಾರರ, ಸಂಪಾದಕರ ಮತ್ತು ಮಾಧ್ಯಮಸಂಸ್ಥೆಗಳ ಜೇಬು ಮತ್ತಷ್ಟು ದೊಡ್ಡದಾಗಲಿವೆ.

ಇಂತಹ ಸ್ಥಿತಿಯಲ್ಲಿ ಗಣತಂತ್ರ ಎಲ್ಲಿದೆ?

ಚಂದ್ರೇಗೌಡರಿಗೆ ಕೆಲವು ಪ್ರಶ್ನೆಗಳು

ಡಾ. ಎನ್. ಜಗದೀಶ್ ಕೊಪ್ಪ

ಇದು ನಮ್ಮ ಸಾಮಾಜಿಕ ಅಥವಾ ರಾಜಕೀಯ ಅದಃಪತನವೆಂದರೂ ತಪ್ಪಾಗಲಾರದು. ಸಂಸದ ಹಾಗೂ ಕರ್ನಾಟಕ ಕಂಡ ಹಿರಿಯ ಮುತ್ಸದ್ದಿ ರಾಜಕಾರಣಿ ನಿನ್ನೆ ಮಂಗಳವಾರ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಟಿ ನಡೆಸಿ, ದೆಹಲಿಯ ತಿಲಕ್ ನಗರ ಪೋಲಿಸ್ ಠಾಣೆಯಲ್ಲಿ ರಾಜ್ಯಪಾಲ ಹಂಸರಾಜ್ ಭಾರಧ್ವಜ ಇವರ ವಿರುದ್ಧ ದೂರು ದಾಖಾಲಾಗಿರುವುದರಿಂದ ರಾಜಿನಾಮೆ ಕೊಡಬೇಕೆಂದು ಅಪ್ಪಣೆ ಹೊರಡಿಸಿದ್ದಾರೆ. ಅವರ ಮಾತು ನಿಜ. ನೈತಿಕ ಪ್ರಜ್ಙೆ ಇರುವ ಯಾವುದೇ ರಾಜಕಾರಣಿ ರಾಜಿನಾಮೆ ನೀಡಬೇಕು.

ಮಾನ್ಯ ಚಂದ್ರೇಗೌಡರು ಇಂತಹ ರಾಜಾಜ್ಞೆ ನೀಡುವ ಮುನ್ನ ತಾವು ಪ್ರತಿನಿಧಿಸುತ್ತಿರುವ ಭಾರತೀಯ ಜನತಾ ಪಕ್ಷದಲ್ಲಿ, ಆರೋಪ ಹೊತ್ತು ಜೈಲು ಪಾಲಾದವರ ಎಷ್ಟು ಮಂದಿಯ ಕೈಯಲ್ಲಿ ರಾಜಿನಾಮೆ ಕೊಡಿಸಿದ್ದಾರೆ ಅಥವಾ ಆರೋಪ ಹೊತ್ತವರ ಕೈಯಲ್ಲಿ ರಾಜಿನಾಮೆ ಕೊಡಿಸಿದ್ದಾರೆ ಎಂಬುದಕ್ಕೆ ಉತ್ತರಿಸಬೇಕು. ಈ ಸಂದರ್ಭದಲ್ಲಿ ಯಾವೊಬ್ಬ ಪತ್ರಕರ್ತ ಈ ಕುರಿತಂತೆ ಪ್ರಶ್ನಿಸಲಿಲ್ಲ. ಇದು ಈ ತಲೆಮಾರಿನ ಪತ್ರಕರ್ತರಿಗೆ ತಮ್ಮ ವೃತ್ತಿಯ ಬಗ್ಗೆ ಇರುವ ಅಜ್ಞಾನವೊ? ಅಥವಾ ಪ್ರಶ್ನೆ ಕೇಳಲು ಹಿಂಜರಿಕೆಯೋ? ನನಗೆ ಅರ್ಥವಾಗುತ್ತಿಲ್ಲ.

ತನ್ನ ಮೂರು ದಶಕಗಳ ರಾಜಕೀಯ ಜೀವನವನ್ನು ಕಾಂಗ್ರೆಸ್  ಪಕ್ಷದಲ್ಲಿ ಕಳೆದು ಶಾಸಕನಾಗಿ, ಸಂಸದನಾಗಿ, ವಿದಾನಸಭೆಯ ಒಳ್ಳೆಯ ಸ್ಪೀಕರ್ ಹೆಸರು ಮಾಡಿದ್ದ ಚಂದ್ರೇಗೌಡರು ರಾಜಕೀಯವಾಗಿ ಕಸದಬುಟ್ಟಿಗೆ ಸೇರಿದ ಸಂದರ್ಭದಲ್ಲಿ,, ಯಡಿಯೂರಪ್ಪ ಕರೆದು ಬೆಂಗಳೂರು ಉತ್ತರ ಪಾರ್ಲಿಮೆಂಟ್ ಕ್ಷೇತ್ರಕ್ಕೆ ಸೀಟು ಕೊಟ್ಟು ಗೆಲ್ಲಿಸಿದ ಮಾತ್ರಕ್ಕೆ ಈ ರೀತಿಯ ಬೌದ್ಧಿಕ ದಿವಾಳಿತನಕ್ಕೆ ಓಳಗಾಗಬಾರದಿತ್ತು.

ಕಳೆದ ಹತ್ತು ವರ್ಷದ ಹಿಂದಿನ ಮಾತು ಇದು. ಮಂಡ್ಯ ಜಿಲ್ಲೆಯ ಸ್ವಾತಂತ್ರೈ ಹೋರಾಟಗಾರ ಹಾಗೂ ಜಿಲ್ಲೆ ಹಿರಿಯ ಪತ್ರಕರ್ತ ಪಿ.ಎನ್. ಜವರಪ್ಪಗೌಡ ಹೆಸರಿನಲ್ಲಿ (ಕ್ರೀಡಾಪಟು ವಿಕಾಸ್ ಗೌಡರ ಅಜ್ಜ) ನಾವು ಗೆಳೆಯರು 10 ಸಾವಿರ ರೂ. ಗಳ ಪ್ರಶಸ್ತಿ ಸ್ಥಾಪಿಸಿದೆವು, ಮೊದಲ ವರ್ಷ ಹಿರಿಯ ಪತ್ರಕರ್ತ ಜಯಶೀಲರಾವ್ ಗೆ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಿದ್ದ  ಇದೇ ಚಂದ್ರೇಗೌಡ ಆಡಿದ ಮಾತುಗಳು ಇವು : “ಇವತ್ತಿನ ರಾಜಕಾರಣಿಗಳು ಮುಖವಾಡತೊಟ್ಟಿಕೊಂಡು ಬದುಕುತಿದ್ದಾರೆ.”

ಇವತ್ತಿನ ಚಂದ್ರೇಗೌಡರು ಯಾವ ಮುಖವಾಡ ತೊಟ್ಟು ಬದುಕುತಿದ್ದಾರೆ?

ಇನ್ನು ನಮ್ಮ ಮಠಾದೀಶರು ಯಡಿಯೂರಪ್ಪನ ವಿತರಿಸಿದ ಪ್ರಸಾದ ತಿಂದು ಈ ರೀತಿ ಬೀದಿಗೆ ಬೀಳಬಾರದಿತ್ತು. ಇವರೆಲ್ಲಾ ಒಮ್ಮೆ ಅಲ್ಲಮಪ್ರಭುವಿನ ಈ ವಚನ ಓದಿಕೊಳ್ಳುವುದು ಒಳಿತು.

ಮಠವೇಕೊ, ಪರ್ವತವೇಕೊ
ಜನವೇಕೊ, ನಿರ್ಜವೇಕೊ
ಚಿತ್ತ ಸಮಾಧಾನವುಳ್ಳ ಶರಣಂಗೆ
ಮತ್ತೆ ಹೊರಗಣ ಚಿಂತೆ, ಧ್ಯಾನ ಮೌನ
ಜಪ ತಪವೇಕೊ ತನ್ನ ತಾನರಿದ ಶರಣಂಗೆ ಗುಹೇಶ್ವರಾ

ಯಡ್ಡ್‌ಯೂರಪ್ಪ ಬಂಧನ – ವ್ಯವಸ್ಥೆ ಸುಧಾರಿಸುತ್ತಿರುವ ಭ್ರಮೆ ಬೇಡ

-ರವಿ ಕೃಷ್ಣಾ ರೆಡ್ಡಿ

ಒಂದೆರಡು ತಿಂಗಳ ಹಿಂದೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜನಾರ್ಧನ ರೆಡ್ಡಿ ವಿಚಾರಣಾಧೀನ ಕೈದಿಗಳಾಗಿ ಬಂಧಿತರಾಗಿದ್ದು, ಈಗ ಯಡ್ದ್‌ಯೂರಪ್ಪ ಮತ್ತು ಕೃಷ್ಣಯ್ಯ ಶೆಟ್ಟಿ ಬಂಧನಕ್ಕೊಳಗಾಗಿರುವುದು, ಇವು ಯಾವುವೂ ಅನಿರೀಕ್ಷಿತವಾಗಿಲ್ಲ. ಆದರೆ ಇದು ಇಷ್ಟು ತಡವಾಗಿ ಆಗುತ್ತಿರುವುದೇ ಒಂದು ಅವಮಾನ. ಇನ್ನೂ ಹತ್ತು-ಹಲವಾರು ಶಾಸಕರು/ಸಂಸದರು/ಸಚಿವರು/ಮಾಜಿ ಸಚಿವರು/ಮುಖ್ಯಮಂತ್ರಿಗಳೂ ಬಂಧನಕ್ಕೆ ಮತ್ತು ವಿಚಾರಣೆಗೊಳಪಡದೇ ಇರುವುದೇ ಸದ್ಯಕ್ಕೆ ಆತಂಕಕಾರಿ ವಿಷಯ. ಆ ಆತಂಕಗಳು ಬೇಗ ನಿವಾರಣೆಯಾಗಿ ಭ್ರಷ್ಟರೆಲ್ಲರಿಗೂ ಶಿಕ್ಷೆಯಾದರೆ ಮಾತ್ರ ಆ ಆತಂಕ ಕಮ್ಮಿಯಾಗಬಹುದು.

ಈ ಸಂದರ್ಭದಲ್ಲಿ ನಮ್ಮ ರಾಜಕೀಯ ವ್ಯವಸ್ಥೆ ಸರಿ ಹೋಗುತ್ತಿದೆ ಎಂಬ ಭ್ರಮೆಗಳನ್ನು ನಾವು ಇಟ್ಟುಕೊಳ್ಳುವುದು ಬೇಡ. ಇತ್ತೀಚೆಗೆ ಬಂಧನಕ್ಕೊಳಗಾಗುತ್ತಿರುವ ಯಾವ ರಾಜಕಾರಣಿಗೂ, ಆತನ ಮನೆಯವರಿಗೂ, ಆತನ ಹಿಂಬಾಲಕರಿಗೂ, ಇದೊಂದು ಅವಮಾನದ ಪ್ರಶ್ನೆ; ನಾವು ತಪ್ಪಿಮಾಡಿದೆವು; ಮುಂದಕ್ಕಾದರೂ ತಿದ್ದಿಕೊಳ್ಳಬೇಕು, ಎಂಬ ಭಾವನೆ ಹುಟ್ಟಿದೆ/ಹುಟ್ಟುತ್ತದೆ ಎಂಬ ಅವಾಸ್ತವಿಕೆ ಕಲ್ಪನೆಗಳನ್ನು ನಾವು ಇಟ್ಟುಕೊಳ್ಳಬಾರದು. ಇವೆಲ್ಲಾ ತಾತ್ಕಾಲಿಕ ರಾಜಕೀಯ ಅಥವ ವೈಯಕ್ತಿಕ ಬದುಕಿನ ಹಿನ್ನಡೆ ಎಂದು ಅವರು ಭಾವಿಸುತ್ತಿದ್ದಾರೆಯೇ ಹೊರತು ಬೇರೆ ರೀತಿ ಅವರ್ಯಾರೂ ಪರಿಭಾವಿಸುತ್ತಿಲ್ಲ.. ಬಹುಶಃ ಕರ್ನಾಟಕದ ಜನಸಾಮಾನ್ಯರೂ ಸಹ ಮೆರೆದವರ ಅಹಂಕಾರಕ್ಕೆ ಪೆಟ್ಟು ಬಿತ್ತು ಎಂದು ಬಾವಿಸುತ್ತಿದ್ದಾರೆಯೇ ಹೊರತು, ಇಡೀ ಸಮಾಜ ತನ್ನ ನಡೆಯನ್ನು ಬದಲಾಗಿಸಿಕೊಳ್ಳಬೇಕು, ಈ ಭ್ರಷ್ಟಾಚಾರ ಒಂದು ಕೆಟ್ಟ ಮೌಲ್ಯ ಮತ್ತು ಅದನ್ನು ತಾವೂ ಪ್ರತಿರೋಧಿಸಬೇಕು ಎಂಬ ತೀರ್ಮಾನಕ್ಕೆ/ಹಂತಕ್ಕೆ ಬಂದಿದೆ ಎಂದು ನನಗನ್ನಿಸುವುದಿಲ್ಲ. ಹಗಲುದರೋಡೆ ಕಮ್ಮಿಯಾಗಬಹುದು. ಆದರೆ ದರೋಡೆ ಕೆಟ್ಟದ್ದು ಎಂಬ ಮೌಲ್ಯ ಪುನ: ಮುಂಚೂಣಿಗೆ ಬಂದಿದೆ ಎನ್ನುವುದನ್ನು ನಾನು ಒಪ್ಪಲಾರೆ.

ಬಿಜೆಪಿಯ ನಡವಳಿಕೆಯನ್ನೇ ಗಮನಿಸಿ. ಆ ಪಕ್ಷದ ಮುಖಂಡರೆಲ್ಲ ಒಬ್ಬೊಬ್ಬರಾಗಿ ಬಂಧನಕ್ಕೊಳಗಾಗುತ್ತಿದ್ದು, ಆ ಬಂಧಿತರ ಮೇಲಿನ ಆರೋಪಗಳೆಲ್ಲ ಮೇಲ್ನೋಟಕ್ಕೆ ಸಾಬೀತಾಗುವಷ್ಟು ಸ್ಪಷ್ಟವಾಗಿ ಕಾಣಿಸುತ್ತಿದ್ದರೂ, ಆ ಪಕ್ಷದ ರಾಜ್ಯ ನಾಯಕತ್ವ ಈಗಲೂ ಅವರ ಪರ ವಹಿಸಿಯೇ ಮಾತನಾಡುತ್ತಿದೆ. ಐದಾರು ಶಾಸಕರು ಬಂಧಿತರ ಜೊತೆಗೆ ಜೈಲಿನ ಬಾಗಿಲಿನ ತನಕ ಹೋಗಿ ಬೀಳ್ಕೊಟ್ಟು ಬರುತ್ತಾರೆ. ಕೇಂದ್ರ ನಾಯಕತ್ವ ಅವರ ಪರ ನಿಲ್ಲುತ್ತೇವೆ ಎನ್ನುತ್ತದೆ. ದೇಶದ ಎರಡನೇ ದೊಡ್ಡ ಪಕ್ಷಕ್ಕೆ ತನ್ನ ಪಕ್ಷದಲ್ಲಿನ ಭ್ರಷ್ಟರನ್ನು disown ಮಾಡಬೇಕು ಎನ್ನುವ ಭಾವನೆಯೇ ಬರುತ್ತಿಲ್ಲ. ತನ್ನ ಪಕ್ಷದ ಸ್ಥಿತಿಯನ್ನೇ ಲೇವಡಿ ಮಾಡುವಂತಿದೆ ಅದ್ವಾನಿಯವರ ಇತ್ತೀಚಿನ ರಥಯಾತ್ರೆ.

ಇನ್ನು, ಲೋಕಾಯುಕ್ತರ ವರದಿಯನ್ನು ಒಪ್ಪಿಕೊಳ್ಳಲಾಗದ ಬಿಜೆಪಿ ಸರ್ಕಾರ ತಾಂತ್ರಿಕ ಕಾರಣಗಳ ಮೊರೆ ಹೋಗಿದೆ. ಇದು ದಾರಿ ತಪ್ಪಿಸುವ ಭ್ರಷ್ಟ ನಡವಳಿಕೆ. ಆದರೆ, ಸರ್ಕಾರದ ಈ ಭಂಡ ತೀರ್ಮಾನಕ್ಕೆ ಜನರ ಮತ್ತು ರಾಜಕಾರಣಿಗಳ ಪ್ರತಿಕ್ರಿಯೆ ನೋಡಿ. ಇಂದು ಈ ವಿಷಯದ ಬಗ್ಗೆ ಸಂತೋಷ ಹೆಗಡೆಯವರು ಮಾತನಾಡಿರುವುದು ಬಿಟ್ಟರೆ ಮಿಕ್ಕ ಯಾವ ಜನಪ್ರತಿನಿಧಿಗಳೂ, ನಾಗರಿಕ ಸಮಾಜದ ನಾಯಕರೂ, ಗಟ್ಟಿಯಾಗಿ ಮಾತನಾಡಿದ್ದು ಕಾಣಿಸುತ್ತಿಲ್ಲ. ಈ ವರದಿಯ ಮಂಜೂರಾತಿಗೆ ಆಗ್ರಹಿಸಿ ಜನಾಂದೋಲನ ರೂಪಿಸಬೇಕಿದ್ದ ಕಾಂಗ್ರೆಸ್‍ ತನ್ನ ಜವಾಬ್ದಾರಿಯನ್ನೇ ಮರೆತಿದೆ. ಇನ್ನು ಆ ಕೆಲಸ ಜೆಡಿಎಸ್ ಮಾಡಲಾರದು. ಮಿಕ್ಕವರೆಲ್ಲ ಕರ್ನಾಟಕದ ಮಟ್ಟಿಗೆ ನಗಣ್ಯ ಮತ್ತು ಅವರು ಸಶಕ್ತ ಜನಾಂದೋಲನ ರೂಪಿಸುವ ಸ್ಥಿತಿಯಲ್ಲಾಗಲಿ, ಜನ ಅದಕ್ಕೆ ಬೆಂಬಲಿಸುವ ಪರಿಸ್ಥಿತಿಯಾಗಲಿ ಕರ್ನಾಟಕದಲ್ಲಿಲ್ಲ.

ಇವೆಲ್ಲವನ್ನೂ ನೋಡಿದರೆ, ಯಡ್ಡ್‌ಯೂರಪ್ಪನವರ ಬಂಧನ ಈ ವ್ಯವಸ್ಥೆ ಸುಧಾರಿಸುತ್ತಿರುವ ಲಕ್ಷಣ ಎಂದೇನೂ ನನಗೆ ಅನ್ನಿಸುತ್ತಿಲ್ಲ. ಇದು ಕೆಲವೇ ಕೆಲವು ದಡ್ಡ ಅಥವ ಅಹಂಕಾರಿ ಭ್ರಷ್ಟರಿಗೆ ಆದ ಹಿನ್ನಡೆ ಅಷ್ಟೇ. ಇದು ಸಮಾಜದಲ್ಲಿನ ಭ್ರಷ್ಟಾಚಾರಕ್ಕೆ ಆದ ಹಿನ್ನಡೆ ಅಲ್ಲ.

ಇವತ್ತಿನ ವಿಷಯದ ಮಟ್ಟಿಗೆ ಹೇಳುವುದಾದರೆ, ಕೃಷ್ಣಯ್ಯ ಶೆಟ್ಟಿಯ ನಡವಳಿಕೆ ಮಾನಗೇಡಿಯದ್ದು. (ಇನ್ನು ಯಡ್ಡ್‌ಯೂರಪ್ಪನವರ ಇಂದಿನ ನಗುಮೊಗ ಬಹುಶ: ಆ ವ್ಯಕ್ತಿಗೆ ತಾನು ಚರಿತ್ರೆಯಲ್ಲಿ ದಾಖಲಾಗುತ್ತಿದ್ದೇನೆ ಎಂಬ ಹೆಮ್ಮೆಯಲ್ಲಿ ಇರುವ ಹಾಗೆ ತೋರುತ್ತಿತ್ತು. ಈ ವ್ಯಕ್ತಿಯ ಮಾನಸಿಕ ಸ್ಥಿತಿ ಖಂಡಿತವಾಗಿ ಸಹಜವಾಗಿದ್ದಂತಿಲ್ಲ.) ಕೃಷ್ಣ್ಯಯ್ಯ ಶೆಟ್ಟಿಗೆ ಯಾರೋ ತನಗೆ ವಂಚನೆ ಮಾಡಿದ ಹಾಗೆ ಎನ್ನಿಸಿರಬಹುದೇ ಹೊರತು ಅವರಿಗೆ ತಾನೊಬ್ಬ ಪ್ರಜಾಪ್ರತಿನಿಧಿಯಾಗುವ ಅರ್ಹತೆಯಿಲ್ಲ ಕ್ಷುದ್ರ ವಂಚಕ ಎಂಬ ತಿಳಿವಳಿಕೆಯೇ ಇದ್ದಂತಿಲ್ಲ. ಯಡ್ಡ್‌ಯೂರಪ್ಪನವರ ಸರ್ಕಾರದಲ್ಲಿ ಎಲ್ಲರಿಗಿಂತ ಮೊದಲು ಜೈಲು ಸೇರಬೇಕಾಗಿದ್ದರೆ ಅದು ಶೆಟ್ಟಿಯೇ ಆಗಿದ್ದರು. ಆದರೆ ನಮ್ಮ ಪೋಲಿಸ್-ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆಗಳು-ಕಾನೂನು-ವಿರೋಧ ಪಕ್ಷಗಳು, ಇವು ಯಾವುವೂ ಕೃಷ್ಣಯ್ಯ ಶೆಟ್ಟಿ ರಾಜೀನಾಮೆ ನೀಡಿದ ಕೇಸಿಗೆ ಸಂಬಂಧಿಸಿದಂತೆ ತಮ್ಮ ಕಾರ್ಯ ಸಂಪೂರ್ಣವಾಗಿ ನಿರ್ವಹಿಸಲೇ ಇಲ್ಲ. ಆಗಲೇ ಶೆಟ್ಟಿಯ ಬಂಧನವಾಗಿ ಶಿಕ್ಷೆಯಾಗಿದ್ದರೆ ಇವತ್ತಿನ ಈ ಮಹಾದ್ರೋಹಗಳು ಈ ಮಟ್ಟಿಗೆ ಬೆಳೆಯುತ್ತಿರಲಿಲ್ಲ. ಎಲ್ಲರಿಗಿಂತಲೂ ಮೊದಲು ಬಂಧನವಾಗಿ, ಶಿಕ್ಷೆಯೂ ಪಡೆಯಬೇಕಿದ್ದ ವ್ಯಕ್ತಿಯ ಆ ಹಗರಣ ಮರೆತುಹೋಗಿರುವುದೇ ಒಂದು ಅವಮಾನ. ಆ ಮನುಷ್ಯ ಅಂತಹುದರಲ್ಲೆಲ್ಲ ಬಚಾವಾಗಿ ಬಂದ ಭಂಡತನವೇ ನಮ್ಮ ರಾಜಕೀಯ ನಾಯಕರಿಗೆ ಇನ್ನೂ ಹೆಚ್ಚಿನ ಭಂಡರೂ ಭ್ರಷ್ಟರೂ ಆಗುವುದಕ್ಕೆ ಧೈರ್ಯ ಕೊಟ್ಟಿತು ಎನ್ನಿಸುತ್ತದೆ. ಆ ಹಗರಣದ ಬಗ್ಗೆ 2009ರಲ್ಲಿ ಬರೆದ ಈ ಲೇಖನ ಈಗಲೂ ಪ್ರಸ್ತುತ ಎಂದು ಇಲ್ಲಿ ಕೊಡುತ್ತಿದ್ದೇನೆ.

ಮಾರ್ಥಾ ಸ್ಟುವರ್ಟಳೂ, ಕೃಷ್ಣಯ್ಯ ಶೆಟ್ಟಿಯೂ…
[ವಿಕ್ರಾಂತ ಕರ್ನಾಟಕದ ಆಗಸ್ಟ್ 7, 2009ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ.]

ಕಳೆದ ಹತ್ತು ವರ್ಷಗಳಿಂದ ಕರ್ನಾಟಕ ಸರ್ಕಾರದ ಒಳಗೆ ಮತ್ತು ಅದರ ಸುತ್ತಮುತ್ತ ನಡೆದ ಹಗರಣಗಳನ್ನು ನೆನಪಿಸಿಕೊಳ್ಳಿ… ಹೇಗೆ ತಾನೆ ಅಷ್ಟು ಸುಲಭವಾಗಿ ನೆನಪಾದೀತು? ಇಲ್ಲ, ನಾನು Public memory is short ಎಂಬ ಗಾದೆಯ ಆಧಾರದ ಮೇಲೆ ನಿಮ್ಮನ್ನು ಚುಡಾಯಿಸುತ್ತಿಲ್ಲ. ನಿಜಕ್ಕೂ ನಮಗೆ ಗೊತ್ತಾದ, ಜನಮಾನಸಕ್ಕೆ ಗಂಭೀರ ಎನ್ನಿಸಿದಂತಹ, ಸರ್ಕಾರವೆ ಬೀಳುವಂತಹ ಹಗರಣಗಳು ನಡೆದದ್ದು ಕಮ್ಮಿಯೆ. ಛಾಪಾ ಕಾಗದದ ಹಗರಣ, ಅಕ್ಕಿ ಹಗರಣ,… ದೊಡ್ಡ ಹಗರಣಗಳನ್ನು ನೆನಪಿಸಿಕೊಳ್ಳುತ್ತ ನನ್ನ ನೆನಪೂ ಅಲ್ಲಿಗೇ ನಿಲ್ಲುತ್ತದೆ.

ಈಗ ಕಳೆದ ಹತ್ತೇ ವರ್ಷಗಳಲ್ಲಿ ಶ್ರೀಮಂತಿಕೆಯ ಅನೇಕ ಮಜಲುಗಳನ್ನು ದಾಟಿದ ಕರ್ನಾಟಕದ ರಾಜಕಾರಣಿಗಳ ವಿಚಾರಕ್ಕೆ ಬರೋಣ. ಇವತ್ತಿನ ಯಾವುದೆ ಪ್ರಸಿದ್ಧ ರಾಜಕಾರಣಿಯನ್ನು, ಶಾಸಕನನ್ನು, ಮಂತ್ರಿಯನ್ನು ತೆಗೆದುಕೊಂಡರೂ ಅವರು ತಾವು ರಾಜಕೀಯಕ್ಕೆ ಅಥವ ಅಧಿಕಾರಕ್ಕೆ ಬರುವ ಮೊದಲು ಇದ್ದ ಆರ್ಥಿಕ ಸ್ಥಿತಿಯಲ್ಲಿ ಇವತ್ತು ಇಲ್ಲ. ಇಲ್ಲಿ ಬೆರಳೆಣಿಕೆಯಷ್ಟು ಅಪವಾದಗಳಿರಬಹುದು. ಅವನ್ನು ಸದ್ಯದ ಚರ್ಚೆಯಲ್ಲಿ ಉಪೇಕ್ಷಿಸೋಣ. ಇವತ್ತು ಕನಿಷ್ಠ ಹತ್ತಿಪ್ಪತ್ತು ರಾಜಕಾರಣಿಗಳಾದರೂ ಒಬ್ಬೊಬ್ಬರೂ ಸಾವಿರ ಕೋಟಿಗಿಂತ ಬೆಲೆ ಬಾಳುತ್ತಾರೆ. ಒಂದಿಬ್ಬರು (ವ್ಯಕ್ತಿ ಅಥವ ಕುಟುಂಬಗಳು) ಡಾಲರ್ ಲೆಕ್ಕದಲ್ಲೂ ಬಿಲಿಯನೇರ್‌ಗಳಾಗಿರಬಹುದು (ಸುಮಾರು 5000 ಕೋಟಿ ರೂಪಾಯಿ.) ಇನ್ನು ರೂಪಾಯಿ ಬಿಲಿಯನೇರ್ (ಶತಕೋಟಿ) ಗಳಂತೂ ಸುಲಭವಾಗಿ ನೂರು ದಾಟಬಹುದು. ಇವರಲ್ಲಿ ಬಹುಪಾಲು ಜನ ಸಾಮಾನ್ಯ ಹಿನ್ನೆಲೆಯಿಂದ ಬಂದವರು. ಒಂದಷ್ಟು ಜನ ಆಗರ್ಭ ಶ್ರೀಮಂತರೂ ಇರಬಹುದು. ಆದರೆ ಅವರ ಉದ್ದಿಮೆ ಅಥವ ಆದಾಯಗಳು ನೂರಾರು ಕೋಟಿ ಮುಟ್ಟುವ ಹಾಗೇನೂ ಇದ್ದಿರಲಾರದು.

ಇಷ್ಟಾದರೂ, ಅದು ಹೇಗೆ ನಮ್ಮ ಹಾಲಿ-ಮಾಜಿ ಶಾಸಕರು, ಮಂತ್ರಿಗಳು, ಸಂಸದರು ಈ ಪರಿಯಲ್ಲಿ ಶ್ರೀಮಂತರಾದರು? ಆಗುತ್ತಿದ್ದಾರೆ? ಯಾವುದೊ ಸರ್ಕಾರಿ ಯೋಜನೆಯಲ್ಲಿ ಅಥವ ಇನ್ಯಾವುದೊ ಇಲಾಖೆಯಲ್ಲಿ ಜನರ ದುಡ್ಡಿಗೆ ಮೋಸ ಮಾಡಿದ್ದಾರೆ ಎಂದು ಹೇಳೋಣ ಎಂದರೆ, ಅಂತಹ ಹಗರಣಗಳೂ ಕಾಣಿಸುತ್ತಿಲ್ಲ. ಹಾಗಾದರೆ, ಇನ್ಯಾವ ಪವಾಡಗಳನ್ನು ಮಾಡಿ, ಜಾದೂ ಮಾಡಿ, ಇವರು ಇಷ್ಟು ಹಣ ಗಳಿಸಿದ್ದು, ಗಳಿಸುತ್ತಿರುವುದು?

ಮಾರ್ಥಾ ಸ್ಟುವರ್ಟ್ ಎನ್ನುವ ಅಮೆರಿಕನ್ ಮಹಿಳೆ ಇವತ್ತು ಸುಮಾರು 3000 ಕೋಟಿ ರೂಪಾಯಿಗೂ ಮೀರಿದ ಸಂಪತ್ತಿನ ಒಡತಿ. ಹಲವು ಪುಸ್ತಕಗಳನ್ನು ಬರೆದಿರುವ, ಟಿವಿಯಲ್ಲಿ ಟಾಕ್ ಷೋ ನಡೆಸುತ್ತಿದ್ದ, ಮ್ಯಾಗಝೀನ್ ಒಂದರ ಮತ್ತು ಹಲವಾರು ವ್ಯವಹಾರ-ಉದ್ದಿಮೆಗಳ ಒಡತಿಯೂ ಆಗಿರುವ ಈಕೆ ಅಮೆರಿಕದ ಪ್ರಸಿದ್ಧ ಹೆಂಗಸರಲ್ಲಿ ಒಬ್ಬಳು. ಫ್ಯಾಷನ್ ಉದ್ದಿಮೆಯಲ್ಲೂ ದೊಡ್ಡ ಹೆಸರು. 1999ರಲ್ಲಿ ಷೇರು ಮಾರುಕಟ್ಟೆಗೆ ಬಿಟ್ಟ ತನ್ನ ಕಂಪನಿಯ ಷೇರುಗಳ ಲೆಕ್ಕಾಚಾರದಲ್ಲಿ ರಾತ್ರೋರಾತ್ರಿ ಬಿಲಿಯನೇರ್ ಸಹ ಆಗಿದ್ದಳು. ಆದರೆ ನಾನು ಈಗ ಪ್ರಸ್ತಾಪಿಸಲಿರುವುದು ಆಕೆಯ ಸಾಧನೆ ಅಥವ ಯಶಸ್ಸುಗಳ ಕತೆಯನ್ನಲ್ಲ. ತನ್ನ ಯಶಸ್ಸಿನ ಉತ್ತುಂಗದಲ್ಲಿ, ಸಾವಿರಾರು ಕೋಟಿಗಳ ಒಡತಿಯಾಗಿದ್ದ ಸಮಯದಲ್ಲಿ, ಕೇವಲ 20 ಲಕ್ಷ ರೂಪಾಯಿಯ ನಷ್ಟ ಸರಿದೂಗಿಸಿಕೊಳ್ಳಲು ಆಕೆ ಒಂದು ತಪ್ಪು ಮಾಡಿದಳು. ಅದಕ್ಕಾಗಿ 2004 ರಲ್ಲಿ ಐದು ತಿಂಗಳು ಜೈಲಿನಲ್ಲಿದ್ದಳು. ಬಿಡುಗಡೆಯಾದ ನಂತರ ಮತ್ತೆ ಐದು ತಿಂಗಳು ತನ್ನದೆ ಮನೆಯಲ್ಲಿ ಗೃಹಬಂಧನದಲ್ಲಿದ್ದಳು ಮತ್ತು ಆ ಸಮಯದಲ್ಲಿ ಆಕೆಯ ಕಾಲಿಗೆ ಆಕೆ ಯಾವ ಸಮಯದಲ್ಲಿ ಎಲ್ಲಿ ಇದ್ದಾಳೆ ಎಂದು ಟ್ರ್ಯಾಕ್ ಮಾಡಬಲ್ಲ ಎಲೆಕ್ಟ್ರಾನಿಕ್ ತಾಯಿತವೊಂದನ್ನು ಕಟ್ಟಲಾಗಿತ್ತು. ಅದಾದ ನಂತರವೂ ಆಕೆ ಐದು ವರ್ಷಗಳ ಕಾಲ ಯಾವುದೆ ಕಂಪನಿಯ ಮುಖ್ಯಸ್ಥೆ ಆಗದಂತೆ ಅಥವ ಯಾವುದೆ ಕಂಪನಿಯ ನಿರ್ದೇಶಕ ಹುದ್ದೆ ಒಪ್ಪಿಕೊಳ್ಳಲಾಗದಂತೆ ನಿರ್ಬಂಧ ಹೇರಲಾಯಿತು. ಈಗಲೂ ಸುಮಾರು 3000 ಕೋಟಿ ರೂಪಾಯಿಗೂ ಮೀರಿದ ಆಸ್ತಿಯ ಒಡತಿಯಾಗಿರುವ ಈ ಪ್ರಸಿದ್ಧ ಮಹಿಳೆಗೆ ಕಳೆದ ವರ್ಷ ತಾನೆ ಬ್ರಿಟಿಷ್ ಸರ್ಕಾರ ತನ್ನ ದೇಶಕ್ಕೆ ವೀಸಾ ಸಹಾ ನಿರಾಕರಿಸಿತ್ತು.

ಇಷ್ಟಕ್ಕೂ ಆಕೆ ಮಾಡಿದ ತಪ್ಪಾದರೂ ಏನು?

ಷೇರು ಮಾರುಕಟ್ಟೆಯಲ್ಲಿರುವ ಸಾರ್ವಜನಿಕ ಕಂಪನಿಗಳು ತಮ್ಮ ಹಿರಿಯ ಅಧಿಕಾರಿಗಳಿಗೆ, ಮುಖ್ಯ ನೌಕರರಿಗೆ, ಮತ್ತು ನಿರ್ದೇಶಕ ಮಂಡಳಿಯ ನಿರ್ದೇಶಕರಿಗೆ ಕೇವಲ ಸಂಬಳವನ್ನಷ್ಟೆ ಅಲ್ಲದೆ ಬೋನಸ್ ರೀತಿಯಲ್ಲಿ ಒಂದಷ್ಟು ಷೇರುಗಳನ್ನೂ ನೀಡಿರುತ್ತದೆ. ಇದು ಸಾವಿರಗಳಿಂದ ಲಕ್ಷಗಳನ್ನು ದಾಟುತ್ತದೆ; ಅವರವರ ಯೋಗ್ಯತೆಯ ಮೇಲೆ. ತಮ್ಮದೇ ಕಂಪನಿಯ ಆ ಷೇರುಗಳನ್ನು ಕಂಪನಿಯ ಲಾಭನಷ್ಟದ ಬಗ್ಗೆ ಅರಿವಿರುವ ಹಿರಿಯ ಅಧಿಕಾರಿಗಳು ಮತ್ತು ನಿರ್ದೇಶಕರು ಯಾವಾಗಲೆಂದರೆ ಆಗ ಮಾರಾಟ ಮಾಡುವ ಹಾಗೆ ಇಲ್ಲ. ‘ಕಂಪನಿ ಈ ತ್ರೈಮಾಸಿಕದಲ್ಲಿ ಲಾಭ ಮಾಡಿದೆ, ಆ ವಿಚಾರ ಇನ್ನೂ ಹೊರಗಿನವರಿಗೆ ಗೊತ್ತಿಲ್ಲ, ಗೊತ್ತಾದ ನಂತರ ಷೇರುಗಳ ಬೆಲೆ ಮೇಲೆ ಹೋಗುತ್ತದೆ, ಲಾಭ ಮಾಡಿಕೊಳ್ಳಲು ಇದೇ ಸಮಯ, ಹಾಗಾಗಿ ಒಂದಷ್ಟು ಷೇರುಗಳನ್ನು ಈಗಿನ ಕಮ್ಮಿ ಬೆಲೆಗೆ ಕೊಂಡುಕೊಳ್ಳೋಣ,’ ಎಂದೆಲ್ಲ ಲೆಕ್ಕ ಹಾಕಿ ಅವರು ತಕ್ಷಣವೆ ಷೇರುಗಳನ್ನು ಕೊಳ್ಳುವ ಹಾಗೆ ಇಲ್ಲ. ಅದೇ ರೀತಿ ತಮ್ಮ ಕಂಪನಿ ನಷ್ಟದ ಹಾದಿಯಲ್ಲಿರುವ ಲಕ್ಷಣಗಳು ಗೊತ್ತ್ತಾದರೆ ಮತ್ತು ಅವರಿಗೆ ಗೊತ್ತಿರುವ ವಿಚಾರಗಳು ಬಹಿರಂಗವಾದ ಮೇಲೆ ಅವರ ಕಂಪನಿಯ ಷೇರಿನ ಬೆಲೆ ಇಳಿಯುತ್ತದೆ ಎನ್ನುವ ಸೂಕ್ಷ್ಮಗಳು ಗೊತ್ತಾದಾಗಲೂ ತಮ್ಮಲ್ಲಿರುವ ಷೇರುಗಳನ್ನು ಕೂಡಲೆ ಮಾರುವ ಹಾಗೂ ಇಲ್ಲ. ಅದು ಅನೈತಿಕ. ತಮ್ಮ ಸ್ಥಾನದ ಬಲದಿಂದ ತಮಗೆ ಗೊತ್ತಾದ ವಿಚಾರವೊಂದನ್ನು ತಮ್ಮ ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳುವ ಹೀನ, ಮೌಲ್ಯರಹಿತ, ಅನೈತಿಕ ನಡವಳಿಕೆ (Unethical) ಅದು. ಕಂಪನಿಯೊಂದರ ಷೇರುಗಳನ್ನು ಕೊಂಡುಕೊಂಡಿರುವ ಸಾರ್ವಜನಿಕರಿಗೆ ಎಸಗುವ ಮಹಾವಂಚನೆ. ಅದನ್ನು ಬ್ಯುಸಿನೆಸ್ ಪ್ರಪಂಚದ ಪರಿಭಾಷೆಯಲ್ಲಿ Insider Trading ಎನ್ನುತ್ತಾರೆ. ಯಾರಾದರೂ ಹಾಗೆ ಮಾಡಿದ್ದು ಸಾಬೀತಾದರೆ ಅದೊಂದು ಕ್ರಿಮಿನಲ್ ಅಪರಾಧ. ಅದಕ್ಕೆ ಜೈಲು ಶಿಕ್ಷೆಯೂ ಆಗುತ್ತದೆ.

ಮಾರ್ಥಾ ಸ್ಟುವರ್ಟ್ ಎಸಗಿದ ಅಪರಾಧವೂ ಅದೇನೆ. 2001ನೇ ಇಸವಿಯ ಸುಮಾರಿನಲ್ಲಿ ಇಮ್ಕ್ಲೋನ್ ಎನ್ನುವ ಕಂಪನಿಯ ಬೋರ್ಡಿನಲ್ಲಿ ಆಕೆ ನಿರ್ದೇಶಕಿ ಆಗಿದ್ದಳು. ಅದೊಂದು ದಿನದ ಮೀಟಿಂಗ್‌ನಲ್ಲಿ ಆ ಕಂಪನಿಯ ವೈದ್ಯಕೀಯ ಉತ್ಪನ್ನವೊಂದಕ್ಕೆ ಸರ್ಕಾರದ ಪರವಾನಗಿ ಸಿಕ್ಕಿಲ್ಲ ಎಂಬ ವಿಚಾರ ಆಕೆಗೂ ಸೇರಿದಂತೆ ಆ ಕಂಪನಿಯ ಮುಖ್ಯ ಮಂದಿಗೆಲ್ಲ ಗೊತ್ತಾಯಿತು. ಅದರಲ್ಲಿ ಒಂದಷ್ಟು ಜನ ಅಂದೇ ತಮ್ಮ ಷೇರುಗಳನ್ನು ಮಾರಿಕೊಂಡರು. ತನಗೆ ಆಗಬಹುದಾಗಿದ್ದ 45 ಸಾವಿರ ಡಾಲರ್‌ಗಳ ನಷ್ಟವನ್ನು ನಿವಾರಿಸಿಕೊಳ್ಳಲು ಸ್ವತಃ ಬಿಲಿಯನೇರ್ ಆಗಿದ್ದ ಮಾರ್ಥಾಳೂ ಆ ಕಂಪನಿಯ ತನ್ನ ಷೇರುಗಳನ್ನು ಮಾರಿಬಿಡಲು ಕೂಡಲೆ ತನ್ನ ಏಜೆಂಟನಿಗೆ ತಿಳಿಸಿದಳು. ಮಾರನೆಯ ದಿನ ಆ ಕಂಪನಿಯ ಉತ್ಪನ್ನಕ್ಕೆ ಪರವಾನಗಿ ಸಿಕ್ಕಿಲ್ಲದ ವಿಚಾರ ಬಹಿರಂಗವಾಯಿತು. ಒಂದೇ ದಿನದಲ್ಲಿ ಆ ಕಂಪನಿಯ ಷೇರುಗಳ ಬೇಲೆ ಶೇ.18 ರಷ್ಟು ಬಿದ್ದು ಹೋಯಿತು. ಅಂದಿನ ಹಿಂದಿನ ದಿನ ಕೆಲವು Insiders ತಮ್ಮ ಷೇರುಗಳನ್ನು ಮಾರಾಟ ಮಾಡಿರುವ ವಿಚಾರ ನಂತರದ ದಿನಗಳಲ್ಲಿ ಬಯಲಿಗೆ ಬಂತು. ಮಾರ್ಥಾ ಏನೇನೊ ನಾಟಕ ಆಡಿದಳು. ಆದರೆ ಕಾನೂನಿನಿಂದ ತಪ್ಪಿಸಿಕೊಳ್ಳಲು ಆಕೆಯಿಂದಾಗಲಿಲ್ಲ. ತನ್ನ ಆ ಅನೈತಿಕ ಕೃತ್ಯಕ್ಕೆ ಈಗಲೂ ಆಕೆ ಶಿಕ್ಷೆ ಅನುಭವಿಸುತ್ತಿದ್ದಾಳೆ. ದುಡ್ಡಿನ ವಿಚಾರದಲ್ಲಿ ಅದೊಂದು ಸಣ್ಣ ಮೊತ್ತದ ತಪ್ಪು. ಆದರೆ ಮೌಲ್ಯ, ನೀತಿ, ಮತ್ತು ನೈತಿಕತೆಯ ದೃಷ್ಟಿಯಿಂದ ಅದೊಂದು ಗಂಭೀರ ಅಪರಾಧ. ತಮ್ಮ ಸ್ಥಾನಬಲವನ್ನು ಸ್ವಂತಲಾಭಕ್ಕೆ ಬಳಸಿಕೊಳ್ಳುವ ಹೀನಾತಿಹೀನ ನಡವಳಿಕೆ. (ನಮ್ಮಲ್ಲಿ ಕೆಲವರಿಗೆ ಈ ಪದಬಳಕೆ ಮತ್ತು ಈ ಅಭಿಪ್ರಾಯ ಕಠೋರವೆಂದೂ, ಮಾರ್ಥಾ ಸ್ಟುವರ್ಟ್ ಮಾಡಿದ್ದು ಅಂತಹ ದೊಡ್ಡ ತಪ್ಪೇನೂ ಅಲ್ಲವೆಂದೂ ಅನ್ನಿಸಿದರೆ, ಹಾಗೆ ಅನ್ನಿಸುವುದು ಅಸಹಜ ಎಂದೇನೂ ನಾನು ಭಾವಿಸುವುದಿಲ್ಲ. ದುರದೃಷ್ಟಕರ ವಾತಾವರಣ ಇದು. ಅದಕ್ಕೆ ಕಾರಣಗಳನ್ನು ನ್ಯಾಯ-ಮೌಲ್ಯ-ನೈತಿಕತೆಯನ್ನು ನಮ್ಮಲ್ಲಿ ಪರಿಭಾವಿಸಿರಬಹುದಾದ ಮತ್ತು ಶಿಕ್ಷಣದ ಗುಣಮಟ್ಟದ ನೆಲೆಯಲ್ಲಿ ಗುರುತಿಸಬೇಕು.)

ಈಗ, ಮಾರ್ಥಾ ಸ್ಟುವರ್ಟ್‌ಳ ಹಗರಣವನ್ನು ಮೂಲವಾಗಿ ಇಟ್ಟುಕೊಂಡು ನಮ್ಮಲ್ಲಿ ಒಂದೆರಡು ವಾರದ ಹಿಂದೆ ತಾನೆ ಬಯಲಿಗೆ ಬಂದ ಕೃಷ್ಣಯ್ಯ ಶೆಟ್ಟಿ ಮತ್ತು ಶಿಡ್ಲಘಟ್ಟ ಭೂಹಗರಣವನ್ನು ವಿಶ್ಲೇಷಿಸೋಣ. ಸರ್ಕಾರದಲ್ಲಿ ಯಾವಯಾವ ಯೋಜನೆಗಳು ಯಾವಯಾವ ಸ್ಥಳದಲ್ಲಿ ಎಂತಹ ಸಮಯದಲ್ಲಿ ಅನುಷ್ಠಾನಕ್ಕೆ ಬರಲಿವೆ ಎನ್ನುವ ವಿಚಾರಗಳು ಕೆಲವು ಹಿರಿಯ ಅಧಿಕಾರಿಗಳಿಗೂ, ಮಂತ್ರಿಗಳಿಗೂ, ಮುಖ್ಯಮಂತ್ರಿಗಳಿಗೂ, ಅವರ ಹಿಂಬಾಲಕರಿಗೂ, ಮತ್ತು ಒಂದಷ್ಟು ಶಾಸಕರಿಗೂ ನಿಖರವಾಗಿ ಗೊತ್ತಾಗುತ್ತದೆ. ತಕ್ಷಣವೆ ಈ ಗುಂಪಿನಲ್ಲಿರುವ ಖದೀಮರು ಯೋಜನೆಯೊಂದು ಅನುಷ್ಠಾನಕ್ಕೆ ಬರಲಿರುವ ಸುತ್ತಮುತ್ತಲ ಸ್ಥಳವನ್ನು ತುಂಬ ಅಗ್ಗವಾಗಿ ರಾತ್ರೋರಾತ್ರಿ ತಮ್ಮ ಸಂಬಂಧಿಗಳ ಹೆಸರಿನಲ್ಲಿ, ಹಿಂಬಾಲಕರ ಹೆಸರಿನಲ್ಲಿ, ಬೇನಾಮಿ ಹೆಸರಿನಲ್ಲಿ, ಕೊಂಡುಕೊಂಡುಬಿಡುತ್ತಾರೆ. ನಂತರ ಅದೇ ಜಮೀನನ್ನು ತಮ್ಮದೆ ಸುಪರ್ದಿಯಲ್ಲಿರುವ ಸರ್ಕಾರಕ್ಕೆ ಅಸಹಜವಾದ ಬೆಲೆಗೆ, “ಮಾರುಕಟ್ಟೆ ಬೆಲೆ” ಎಂಬ ಹೆಸರಿನಲ್ಲಿ ಮಾರಿಬಿಡುತ್ತಾರೆ. ವಿಶ್ವವಿದ್ಯಾಲಯಗಳು, ವಿಮಾನ ನಿಲ್ದಾಣಗಳು, ಕೈಗಾರಿಕಾ ಪ್ರದೇಶಗಳು, ಗೃಹಮಂಡಳಿ ಭೂಸ್ವಾಧೀನಗಳ ಜಮೀನೆಲ್ಲ ಸ್ವಾಧೀನದ ಸಮಯಕ್ಕೆ ಈ ಖದೀಮ ಗುಂಪಿನವರದೇ ಆಗಿರುತ್ತದೆ. ಮತ್ತೆ ಎಷ್ಟೋ ಸಲ ಸರ್ಕಾರಿ ಯೋಜನೆಗಳು ಕಾರ್ಯರೂಪಕ್ಕೆ ಬರುವುದೆ ಕೆಲವು ಪಟ್ಟಭದ್ರರ ಜಮೀನು ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ಇರುವ ಕಾರಣದಿಂದ. ಶಿಡ್ಲಘಟ್ಟದಲ್ಲಾಗಿದ್ದೂ ಇದೆ. ಅಣ್ಣನ ಇಲಾಖೆಗೆ ಜಮೀನು ಬೇಕಾದ ವಿವರ ತಮ್ಮನಿಗೆ ತಿಳಿಸಲಾಯಿತು ಅಥವ ಗೊತ್ತಾಯಿತು. ಮಂತ್ರಿಯ ತಮ್ಮ ಸ್ವತಃ ತಾನೇ ಹೋಗಿ ವ್ಯಾಪಾರಕ್ಕೆ ನಿಂತರು. ರೈತನಿಂದ ಆರು ಕಾಸಿಗೆ ಕೊಂಡು ಅರವತ್ತು ಕಾಸಿಗೆ ಅಣ್ಣನ ಇಲಾಖೆಗೆ ಮಾರಿದರು. ನೈತಿಕತೆ ಮತ್ತು ಅಧಿಕಾರದುರುಪಯೋಗದ ಹಿನ್ನೆಲೆಯಿಂದ ಇದನ್ನು ನೀವು ಗಮನಿಸದೆ ಹೋದರೆ ಈ ಇಡೀ ಪ್ರಕರಣದಲ್ಲಿ ತಪ್ಪಾದರೂ ಎಲ್ಲಿದೆ?

ಇಂತಹ ಅನೈತಿಕ ಕೆಲಸಗಳನ್ನು ಮಾಡುವ Insiderಗಳನ್ನು ದಾಖಲೆಯ ಸಮೇತ ಕಂಡುಹಿಡಿಯುವಂತಹ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಜೊತೆಗೆ, ಇಂತಹ ಕೃತ್ಯಗಳು ಅನೈತಿಕ ಹಾಗೂ ಶಿಕ್ಷಿಸಲು ಅರ್ಹವಾದವು ಎಂದು ನಮ್ಮ ಬಹುಸಂಖ್ಯಾತ ಸಮಾಜ ಇನ್ನೂ ಭಾವಿಸಿಲ್ಲ. ಹಾಗಾಗಿ ಇಂತಹುದೆ ಹಗಲುದರೋಡೆಗಳು ಕಳೆದ ಹತ್ತಿಪ್ಪತ್ತು ವರ್ಷಗಳ “ಅಭಿವೃದ್ಧಿ ಶಕೆ”ಯಲ್ಲಿ ನಿರ್ಬಾಧಿತವಾಗಿ ನಡೆದುಕೊಂಡು ಬರುತ್ತಿವೆ. ಈ ಭೂವ್ಯವಹಾರಗಳು ಅಧಿಕಾರಸ್ಥರು ಅಕ್ರಮವಾಗಿ ಹಣ ಮಾಡುವ ಒಂದು ಮಾರ್ಗವಷ್ಟೆ. ತಮ್ಮ ಸ್ಥಾನಬಲವನ್ನು Unethical ಆಗಿ ಬಳಸಿಕೊಂಡು ಕಾನೂನಿನ ಕೈಗೆ ಸಿಕ್ಕಿಹಾಕಿಕೊಳ್ಳದೆ ದುಡ್ಡು ಮಾಡುವ ಅನೇಕ ಮಾರ್ಗಗಳು ಸರ್ಕಾರದ ಒಳಗೆ ಮತ್ತು ಹೊರಗೆ ಇವೆ. ಹಾಗಾಗಿಯೆ, ಸಿಕ್ಕಿಹಾಕಿಕೊಳ್ಳುವಂತಹ ಹಗರಣಗಳನ್ನು ಮಾಡದೆ ಇವತ್ತಿನ ನಮ್ಮ ರಾಜಕಾರಣಿಗಳು ತಮ್ಮ ಅಧಿಕಾರ ದುರುಪಯೋಗದ ಖದೀಮತನದಿಂದ ಕೋಟ್ಯಾಂತರ ದುಡ್ಡು ಮಾಡುತ್ತಲೆ ಇದ್ದಾರೆ. ಅದೇ ದುಡ್ಡಿನ ಬಲದಿಂದ ಪ್ರಜಾಪ್ರಭುತ್ವವನ್ನು ಮತ್ತು ಸಮಾಜದ ಮೌಲ್ಯಗಳನ್ನು ದುರ್ಬಲಗೊಳಿಸುತ್ತಲೆ ಹೋಗುತ್ತಿದ್ದಾರೆ.

ವಿಪರ್ಯಾಸವೇನೆಂದರೆ, ಇದನ್ನೆಲ್ಲ ಘಟ್ಟಿಸಿ ಕೇಳಬೇಕಾದ, ಜನತೆಯನ್ನು Educate ಮಾಡಬೇಕಾದ ವಿರೋಧಪಕ್ಷದವರೂ ಅದೇ ಮಾರ್ಗದಲ್ಲಿ ಸಾಗಿ ಬಂದಿದ್ದಾರೆ.

(ಚಿತ್ರಕೃಪೆ: ವಿಕಿಪೀಡಿಯ ಮತ್ತು ಶೋಭಾಕರಂದ್ಲಾಜೆ.ಕಾಮ್)