Tag Archives: ಪ್ರಜಾಪ್ರಭುತ್ವ

ಪ್ರಜಾಪ್ರಭುತ್ವ: ಆದರ್ಶ ಮತ್ತು ವೈರುಧ್ಯಗಳು


-ಡಾ. ಬಿ.ಎಲ್.ಶಂಕರ್  


ಪ್ರಜಾರಾಜ್ಯದ ಕನಸು ಮೊಳೆಕೆಯೊಡೆದಿದ್ದು ಕ್ರಾಂತಿಕಾರಿ, ಯುಗಪುರುಷ ಬಸವಣ್ಣನವರ ಜೀವಿತಕಾಲದಲ್ಲಿ; ಅನುಭವ ಮಂಟಪದಲ್ಲಿ 800 ವರ್ಷಗಳಷ್ಟು ಹಿಂದೆ, ಅದೂ ಕರ್ನಾಟಕದಲ್ಲಿ ಎಂಬುದು ನಮಗೆ ಹೆಗ್ಗಳಿಕೆಯ ವಿಚಾರ. ಕೂಡಲಸಂಗಮದ ಅನುಭವ ಮಂಟಪದಲ್ಲಿ ಆಗಿನ ಸಮಾಜದ ಅತ್ಯಂತ ಕೆಳಸ್ತರದ ಜನಸಾಮಾನ್ಯರೂ ಕೂಡ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಅಭಿಪ್ರಾಯ-ಅಹವಾಲುಗಳನ್ನು ವ್ಯಕ್ತಪಡಿಸುವ ಸಮಾನಾವಕಾಶವಿತ್ತೆಂಬುದು ಚರಿತ್ರೆಯಿಂದ ತಿಳಿದುಬರುವ ಸತ್ಯ. ಮೇಲ್ವರ್ಗದ ಸಂಪೂರ್ಣ ಶೋಷಣೆಗೆ ಒಳಗಾದವರು ಬಸವಣ್ಣನವರಿಗೆ ಸಮಾನವಾಗಿ ಕುಳಿತುಕೊಂಡು ವಿಚಾರಮಂಥನದಲ್ಲಿ ಭಾಗವಹಿಸಲು ಅವಕಾಶವಿದ್ದುದೇ ನಾವೀಗ ಅನುಭವಿಸಿಕೊಂಡು ಬರುತ್ತಿರುವ ಪ್ರಜಾಪ್ರಭುತ್ವ ಪದ್ಧತಿಯ ಅಡಿಗಲ್ಲು. ಇಂದು ಬಹುಚರ್ಚಿತವಾಗುತ್ತಿರುವ ಸಾಮಾಜಿಕ ನ್ಯಾಯ, ಸಮಾನ ಸ್ತ್ರೀಸ್ವಾತಂತ್ರ್ಯ, ಅಸ್ಪೃಶ್ಯತೆ ನಿವಾರಣೆ, ಸರ್ವರಿಗೂ ಸಮಾನಾವಕಾಶ… ಹೀಗೆ ಪ್ರತಿಯೊಂದಕ್ಕೂ ಅಡಿಪಾಯವನ್ನು, ಮೂಲಸತ್ವವನ್ನು ಎಂಟುನೂರು ವರ್ಷಗಳಷ್ಟು ಹಿಂದೆಯೇ ಬಸವಣ್ಣನವರು ಒದಗಿಸಿದ್ದರು.

ಶತಮಾನದಷ್ಟು ಹಿಂದೆಯೇ ಮೈಸೂರು ಸಂಸ್ಥಾನದ ಯದುವಂಶದ ಅರಸರಾದ ಶ್ರೀ ಜಯಚಾಮರಾಜೇಂದ್ರ ಒಡೆಯರು ಪ್ರಜಾ ಪರಿಷತ್ತನ್ನು ಸ್ಥಾಪಿಸಿ, ಆ ಮೂಲಕ ಜನಪ್ರತಿನಿಧಿಗಳಿಗೆ ಸಂಸ್ಥಾನದ ಕಾರ್ಯಚಟುವಟಿಕೆಗಳಲ್ಲಿ ನೇರಪಾಲ್ಗೊಳ್ಳುವಿಕೆಯ ಅವಕಾಶವನ್ನು ಕಲ್ಪಿಸಿಕೊಟ್ಟಿರುವ ಇತಿಹಾಸ ನಮ್ಮ ಕಣ್ಣಮುಂದಿದೆ. ಜಾಗತಿಕ ಇತಿಹಾಸದಲ್ಲಿ ಯಾವುದೇ ರಾಷ್ಟ್ರ ಕಂಡುಕೊಂಡ ಅತ್ಯಂತ ಯಶಸ್ವೀ ಆಡಳಿತ ಪ್ರಯೋಗವೆಂದರೆ ಅದು ಪ್ರಜಾಪ್ರಭುತ್ವ ಪದ್ಧತಿಯೆಂಬುದು ನಿಚ್ಚಳ. ಆದರೆ, ನಾವಿಂದು ಬಾಳಿ ಬದುಕುತ್ತಿರುವ ಸ್ವತಂತ್ರ ಭಾರತದಲ್ಲಿ ಶತಮಾನಗಳ ಕಾಲ ರೂಢಿಸಿಕೊಂಡು ಬಂದ ಈ ಎಲ್ಲಾ ಗುಣಧರ್ಮ, ವಿಶ್ವ ಭ್ರಾತೃತ್ವ ನಡವಳಿಕೆ ಮತ್ತು ಸಂದೇಶಗಳು ಎಲ್ಲಿ ಕಣ್ಮರೆಯಾಗಿವೆ? ಕೇವಲ ಬ್ರಿಟಿಷರ ದಾಸ್ಯದಿಂದ ಮಾತ್ರ ಬಿಡುಗಡೆಯಾಯಿತೇ? ಬೌದ್ಧಿಕವಾಗಿ ನಾವಿನ್ನೂ ಅದೇ ಪ್ರಭಾವದಲ್ಲಿದ್ದೇವೆಯೇ? ಈ ಹಿನ್ನೆಲೆಯಲ್ಲಿ ನಮ್ಮ ರಾಷ್ಟ್ರ ನಡೆದುಬಂದ ದಾರಿ, ನಮ್ಮ ಮುಂದಿರುವ ಸವಾಲುಗಳು – ಆಯ್ಕೆಗಳು, ಒಪ್ಪಿಕೊಂಡು ಬಂದಿರುವ ರಾಜಕೀಯ ಆದರ್ಶಗಳ ಮೇಲೆ ಕ್ಷಕಿರಣ ಬೀರಲು ಪ್ರಸ್ತುತ ಕಾಲಘಟ್ಟ ಬಹು ಪ್ರಸಕ್ತವಾದುದು.

ಪ್ರಜಾನಿರೀಕ್ಷೆ:

ನಾವಿಂದು ಬಹಳಷ್ಟು ನಿರೀಕ್ಷಿಸುತ್ತಿದ್ದೇವೆ. ಶತಮಾನಗಳಲ್ಲಿ ಕಂಡುಕೊಳ್ಳಲಾಗದ ಪರಿಹಾರಗಳು ನಮಗೀಗ ಬೇಕಿವೆ. ಅದೂ ಇದೀಗ ತಾನೇ 60 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಇಷ್ಟು ಅಲ್ಪಕಾಲದಲ್ಲಿ! ಇಷ್ಟು ಅಗಾಧ ಮತ್ತು ಕ್ಷಿಪ್ರ ಬಯಕೆ ಎಷ್ಟು ಸಮಂಜಸ? ಅವುಗಳ ಸಾಧ್ಯಾಸಾಧ್ಯತೆಗಳ ಬಗ್ಗೆಯಾದರೂ ಯೋಚಿಸಬೇಡವೇ? ಅಷ್ಟೂ ವ್ಯವಧಾನವಿಲ್ಲವಾಯಿತೇ? ಬದಲಾವಣೆ ಒಂದು ನಿರಂತರ ಪ್ರಕ್ರಿಯೆ ಎನ್ನುವ ಮೂಲಭೂತ ಸೂಕ್ಷ್ಮತೆಯನ್ನೇ ಮರೆತಿದ್ದೇವೆಯೇ? ಇವುಗಳ ಬಗೆಗೆ ವಿಚಾರವಿಮರ್ಶೆ ಮಾಡಬೇಕಾದ ಹೊಣೆಗಾರಿಕೆ ಯಾರ ಮೇಲಿದೆ? ಇದು ರಾಜಕಾರಣಿಗಳಿಗೆ ಮಾತ್ರ ಸಂಬಂಧಪಟ್ಟಿದೆಯೇ ಅಥವಾ ಯಾವುದೋ ಒಂದು ನಿರ್ದಿಷ್ಟ ವರ್ಗ-ಸಮೂಹಕ್ಕೆ ಮಾತ್ರ ಮೀಸಲೇ? ನಿರೀಕ್ಷಿತ ಬದಲಾವಣೆ, ಅಭಿವೃದ್ಧಿಗಳು ಏಕಮುಖವಾಗಿ ಸಾಧಿಸಲು ಸಾಧ್ಯವಿಲ್ಲ. ಸಮಾಜದ ಪ್ರತಿಹಂತದಲ್ಲಿಯೂ ಪರಸ್ಪರ ಸಹಕಾರ, ವಿಶ್ವಾಸ, ತೊಡಗಿಸಿಕೊಳ್ಳುವಿಕೆ ಅತಿ ಅವಶ್ಯ. ಸಾರ್ವತ್ರಿಕ ಪಾಲ್ಗೊಳ್ಳುವಿಕೆಗಾಗಿ ಮತದಾನ, ಅನಕ್ಷರತೆಯ ನಿವಾರಣೆ ಹಾಗೂ ಜ್ಞಾನವೃದ್ಧಿಯ ದಿಸೆಯಲ್ಲಿ ಶಿಕ್ಷಣ, ಲಿಂಗತಾರತಮ್ಯ ನಿವಾರಣೆಗಾಗಿ ಸ್ತ್ರೀಸಮಾನತೆ ಅವಶ್ಯವಿರುವ ಇಂದಿನ ಸಂದರ್ಭದಲ್ಲಿ ಬದಲಾವಣೆಯ ಹರಿಕಾರರಾಗಿ ಪರಿವರ್ತಿತರಾಗಬೇಕಾದವರು ಇಂದಿನ ಯುವಜನತೆ. ಯುವಮನಸ್ಸು, ಹಿರಿಯರ ಅನುಭವ ಮತ್ತು ಸ್ತ್ರೀ ಸಮೂಹದ ನಿಷ್ಠಾಪೂರ್ಣ ಪಾಲ್ಗೊಳ್ಳುವಿಕೆಯಿಂದ ನಿರೀಕ್ಷಿತ ಗುರಿ ಸಾಧನೆ ಕಷ್ಟವೇನಲ್ಲ.

ಆದ್ಯತೆ ಮತ್ತು ಬಾಧ್ಯತೆಗಳು

ಸಮಷ್ಠಿ ಚಿಂತನೆ :

ರಾಷ್ಟ್ರದ ಭವಿಷ್ಯವನ್ನು ರೂಪಿಸಬೇಕಿರುವ ಯುವವರ್ಗ ಇದ್ಯಾವ ವಿಚಾರಗಳ ಬಗ್ಗೆಯೂ ತಲೆಕಡಿಸಿಕೊಳ್ಳದೆ ಕೇವಲ ಲೌಕಿಕವಾಗಿ (materialistic) ಚಿಂತನೆ ನಡೆಸಿ, ಆರ್ಥಿಕ ಸ್ವಾವಲಂಬನೆಯೊಂದೇ ಜೀವಮಾನದ ಸಾಧನೆ ಎಂಬ ಮನೋಸ್ಥಿತಿಯಲ್ಲಿರುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಇವತ್ತಿನ ಶಿಕ್ಷಣ ವ್ಯವಸ್ಥೆಯ ಪಾಲೂ ಗಣನೀಯ. ಒಂದು ಒಳ್ಳೆಯ ಉದ್ಯೋಗವನ್ನು ಹೊಂದುವುದು, ಜಾತಿ ಮತ್ತು ಹಣದ ಬಲದಲ್ಲಿ ಅಲ್ಲದೆ ವಿದ್ಯೆಯ ಬಲದಲ್ಲಿ ಸಮಾಜದಲ್ಲಿ ದೊಡ್ಡ ಸ್ಥಾನವನ್ನು ಹೊಂದುವುದೇ ಯುವಸಮೂಹದ ಗುರಿಯೇ? ಇಂದಿನ ಜಾಗತಿಕ ವಿದ್ಯಮಾನ-ಪ್ರಾಶಸ್ತ್ಯಗಳ ಹಿನ್ನೆಲೆಯಲ್ಲಿ ಭಾರತದ ಕೊಡುಗೆಯನ್ನು ಇಡೀ ವಿಶ್ವವೇ ಎದುರುನೋಡುತ್ತಿದೆ. ಹಾಗಾಗಿ ನಮ್ಮ ಮುಂದಿರುವ ಸುವರ್ಣ ಅವಕಾಶಗಳ ಬಗ್ಗೆ ಯುವಜನಾಂಗವನ್ನು ಯೋಚನೆಗೆ ಹಚ್ಚತಕ್ಕ ಪ್ರಯತ್ನವಾಗಬೇಕು. ಪಠ್ಯಪುಸ್ತಕಗಳ ಜ್ಞಾನವಷ್ಟೇ ಅಲ್ಲದೇ, ಪ್ರಯೋಗಶೀಲ ಕಾರ್ಯಚಟುವಟಿಕೆಗಳ ಮೂಲಕವೂ ಅನುಭವ ನೀಡುವುದು ಶಿಕ್ಷಣ ಸಂಸ್ಥೆಗಳ ಆದ್ಯತೆಯಾಗಬೇಕು. ಸಮಾಜದ ಮಾರ್ಗದರ್ಶಕ ಸ್ಥಾನದಲ್ಲಿರುವ ಹಿರಿಯರು, ಸಂಸ್ಥೆಗಳು, ಚಿಂತಕರು ಈ ನಿಟ್ಟಿನಲ್ಲಿ ತಮ್ಮ ಬಾಧ್ಯತೆಯನ್ನೂ ಅರಿಯಬೇಕು.

ಮಾತೃಭಾಷೆ, ರಾಷ್ಟ್ರಭಾಷೆಯ ಜತೆಜತೆಗೆ ವಿಶ್ವಭಾಷೆಯನ್ನೂ ಸಮಾನವಾಗಿ ಕಾಣುವ, ಕಲಿಯುವ ಮತ್ತು ಗೌರವಿಸುವ ಛಾತಿಯನ್ನು ಇಂದಿನ ಮಕ್ಕಳು ಬೆಳೆಸಿಕೊಳ್ಳಬೇಕಿದೆ. ಭಾಷಾ ಮೇಲರಿಮೆ-ಕೀಳರಿಮೆಗಳಿಗೆ ಅವಕಾಶವಿರದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸರ್ಕಾರದ ಮತ್ತು ಸಮಾಜದ ಹಿರಿಯರ ಮೇಲಿದೆ. ಆದರೀಗ ಬದಲಾದ ಜಾಗತಿಕ ಸನ್ನಿವೇಶದಲ್ಲಿ ವಿಷಯವನ್ನು ಕಲಿಯುವುದಕ್ಕಿಂತ ಆಂಗ್ಲ ಭಾಷಾ ಕಲಿಕೆಯೇ ಆದ್ಯತೆಯಾಗಿದೆ. ಅಮೆರಿಕಾದ ಜೊತೆಗಾಗಲೀ, ಯುರೋಪ್ ದೇಶಗಳ ಜೊತೆಗಾಗಲೀ ಪೈಪೋಟಿ ನಡೆಸಲು ಭಾಷಾ ಕಲಿಕೆಯೊಂದೇ ದಾರಿಯೆನ್ನುವುದನ್ನು ಮನಗಂಡ ಕಮ್ಯೂನಿಸ್ಟ್ ರಾಷ್ಟ್ರವಾದ ಚೀನಾ, ಆಂಗ್ಲ ಭಾಷಾ ಕಲಿಕೆಯನ್ನು ಕಡ್ಡಾಯಗೊಳಿಸಿದೆ. ಇಂತಹ ಸನ್ನಿವೇಶದಲ್ಲಿ ನಮ್ಮ ದೇಶದಲ್ಲಿ ಈ ರೀತಿಯ ಭಾವನೆಗಳು, ವಿಚಾರಗಳು ಇರಬಾರದೆನ್ನುವ ನಿರೀಕ್ಷೆ ತಪ್ಪಾಗುತ್ತದೆ.

ರಾಜಕೀಯ ಆದರ್ಶ ಮತ್ತು ವೈರುಧ್ಯಗಳು :

ಭಾರತವು ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿರುವ ದೇಶ. ಪ್ರಜಾಪ್ರಭುತ್ವ ಮತ್ತು ಸಂಸದೀಯ ಪ್ರಜಾತಂತ್ರವ್ಯವಸ್ಥೆ (Parliamentary Democracy ) ಯನ್ನು ಒಪ್ಪಿಕೊಂಡ ನಂತರ, ಇದೇ ವ್ಯವಸ್ಥೆಯ ಬಹುಮುಖ್ಯ ಭಾಗವಾಗಿರುವ ಇಲ್ಲಿನ ರಾಜಕೀಯ ಪಕ್ಷಗಳ ಬಗ್ಗೆ, ರಾಜಕಾರಣಿಗಳ ಬಗ್ಗೆ ಚಿಂತನ-ಮಂಥನ ನಡೆಸಬೇಕಾದುದು ಅತ್ಯಂತ ಅವಶ್ಯಕ. ರಾಜಕಾರಣದಲ್ಲಿ ನೇರವಾಗಿ ಪಾಲ್ಗೊಂಡವರಿಗಷ್ಟೇ ಈ ಬದ್ಧತೆ ಸೀಮಿತವಲ್ಲ. ತಮ್ಮ ಪ್ರತಿನಿಧಿಗಳನ್ನಾಗಿ ಚುನಾಯಿಸಿದ ನಂತರ ಜನಪ್ರತಿನಿಧಿಗಳನ್ನು ನಿಯಮಿತವಾಗಿ ಒರೆಗಲ್ಲಿಗೆ ಹಚ್ಚುವ ಕಾರ್ಯವನ್ನೂ ಮಾಡಬೇಕಾದ ಬದ್ಧತೆಯನ್ನು ಮತದಾರರು ಹೊಂದಿದಾಗಲೇ ಪ್ರಯತ್ನ ಸಾರ್ಥಕವಾಗುವುದು. ಒಂದು ನಿರ್ದಿಷ್ಟ ಗುರಿ, ಚಳವಳಿಯ ಹಿನ್ನೆಲೆಯಿಂದ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುವವರಿಗೆ ಮತದಾರರ ಒಲವೇ ಇಲ್ಲದಾದಾಗ ಯಾವ ರೀತಿಯ ರಾಜಕಾರಣ ನಡೆಸಲು ಸಾಧ್ಯವಿದೆ? ಬಂದ ಮೂಲವೇ ಬೇರೆ, ಈಗಿರುವ ಮೂಲವೇ ಬೇರೆಯೆನ್ನುವ ಪರಿಸ್ಥಿತಿ ಉದ್ಭವಿಸಿದಲ್ಲಿ ಅಂಥ ಜನಪ್ರತಿನಿಧಿಗಳಿಂದ ಯಾವ ಗುಣಮಟ್ಟದ ಅಭಿವೃದ್ಧಿ, ಸಂಕಲ್ಪಶಕ್ತಿಯನ್ನು ಮತದಾರ ನಿರೀಕ್ಷಿಸಬಹುದು? ಹಾಗಾದರೆ ಈ ರೀತಿಯ ಸನ್ನಿವೇಶ ನಿರ್ಮಾಣದಲ್ಲಿ ಮತದಾರರ ನೇರ ಪಾತ್ರವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಮತದಾನ ಪ್ರಕ್ರಿಯೆ ಕೂಡ ಇದೀಗ ಒಂದು ಪ್ರಹಸನವಾಗಿ ಪರಿವರ್ತಿತವಾಗಿರುವುದು ಮತದಾರರ ಸಂಕಲ್ಪ ಶಕ್ತಿಯ ಕೊರತೆಯಿಂದಲೇ!

ಇನ್ನು ಮತಬ್ಯಾಂಕು ರಾಜಕಾರಣ. ಚುನಾವಣೆಯಲ್ಲಿ ಪಕ್ಷ ಮತ್ತು ಅಭ್ಯರ್ಥಿಯ ಕರ್ತೃತ್ವ ಶಕ್ತಿ, ಹಿನ್ನೆಲೆ ಮತ್ತು ಚಾರಿತ್ರ್ಯಗಳಷ್ಟೇ ಪರಿಗಣನೆಯಲ್ಲಿದ್ದಾಗ ಮತಬ್ಯಾಂಕು ರಾಜಕಾರಣಕ್ಕೆ ಅವಕಾಶವಿರಲಿಲ್ಲ. ಯಾವಾಗ ಜಾತಿ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಪ್ರಾಮುಖ್ಯತೆ ದೊರೆಯಿತೋ ಆ ಘಳಿಗೆಯಿಂದ ಇದು ಪಿಡುಗಾಗಿ ಪರಿಣಮಿಸಿದೆ. ಹಾಗಾದರೆ ಈ ಪಿಡುಗಿನ ಹಬ್ಬುವಿಕೆಯಲ್ಲಿ ಯಾರ ಪಾಲೆಷ್ಟು ಎಂಬುದರ ಅನ್ವೇಷಣೆಗೆ ಹೊರಟರೆ ಅದು ಹೊರಟಲ್ಲಿಗೇ ಬಂದು ನಿಲ್ಲುವ ಸಾಧ್ಯತೆಯೇ ಹೆಚ್ಚು! ಚುನಾವಣಾ ಸುಧಾರಣೆ ಆಗಬೇಕೆಂದಿದ್ದರೆ, ಮತಬ್ಯಾಂಕು ರಾಜಕಾರಣ ಆಗಬಾರದೆಂದಿದ್ದರೆ ಸಿದ್ಧಾಂತ ರಾಜಕಾರಣವಾಗಬೇಕು. ವ್ಯಕ್ತಿಗಿಂತ ಪಕ್ಷಕ್ಕೆ ಮತಹಾಕುವ ಸಂದರ್ಭ ಬಂದಾಗ ಮಾತ್ರ ಇದು ಸಾಧ್ಯ. ವ್ಯಕ್ತಿ ವಿಚಾರ ಬಂದಾಗ ಜಾತಿಗೆ ಪ್ರಾಶಸ್ತ್ಯ ಬರುತ್ತದೆ. ಪಕ್ಷವಿಚಾರ ಬಂದಾಗ ಜಾತಿವಿಚಾರ ಅಷ್ಟು ಪ್ರಾಮುಖ್ಯತೆ ಪಡೆಯುವುದಿಲ್ಲ. ಆದರೆ ಇಲ್ಲಿ, ಚುನಾವಣೆಯಲ್ಲಿ ಆರಿಸಿ ಬಂದ ನಂತರದ ವಿದ್ಯಮಾನಗಳಲ್ಲಿ ಪಕ್ಷದೊಳಗೆ ಜಾತಿ ಆಧಾರಿತ ಪ್ರಾಶಸ್ತ್ಯ ಬರುವ ಅಪಾಯವಿದೆ!

ಸಮಾಜವಾದಿ ಅಂತಲೇ ಹೆಸರನ್ನಿಟ್ಟುಕೊಂಡಿರುವ ರಾಜಕೀಯ ಪಕ್ಷಗಳು ಮಹಿಳಾ ಮೀಸಲಾತಿಗೆ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿರುವುದು ಒಂದು  ವಿರ್ಪಯಾಸ. ಮನುವಾದವನ್ನು ಪುರಸ್ಕರಿಸುತ್ತಾ ಬಂದಿರುವ, ಮಹಿಳೆಯರು ವೇದ-ಉಪನಿಷತ್ತುಗಳನ್ನು ಕೇಳಲೂಬಾರದೆನ್ನುವಷ್ಟರಮಟ್ಟಿಗೆ ಸಿದ್ಧಾಂತವನ್ನು ಪೋಷಿಸಿಕೊಂಡು ಬಂದಿರುವ ಪಕ್ಷವಿಂದು ಸಚೇತಕಾಜ್ಞೆ ಜಾರಿಮಾಡುವ ಮೂಲಕ ಮಹಿಳಾ ಮೀಸಲಾತಿಗೆ ಬೆಂಬಲ ವ್ಯಕ್ತಪಡಿಸುತ್ತಿದೆ! ಈ ಬದಲಾವಣೆಯನ್ನು ಯಾವ ರೀತಿಯಲ್ಲಿ ಅರ್ಥೈಸಬಹುದು? ಜನರ ಮುಂದೆ ಇದನ್ನು ಯಾವ ರೀತಿಯಲ್ಲಿ ಪ್ರಸ್ತುತಪಡಿಸಬಹುದು? ಇದೂ ಕೂಡ ಮತಬ್ಯಾಂಕು ರಾಜಕಾರಣದ ಮತ್ತೊಂದು ಮಗ್ಗುಲೆಂಬ ಅನಿಸಿಕೆ ಬರುವುದಿಲ್ಲವೇ? ಚುನಾವಣಾ ರಾಜಕೀಯಕ್ಕೆ ನಾವು ಒಂದು ಬಾರಿ ಪ್ರವೇಶ ಮಾಡಿದ ನಂತರ ಎಷ್ಟೋ ಸಂದರ್ಭಗಳಲ್ಲಿ ಬೇಕು-ಬೇಡಗಳ ಸಂಘರ್ಷ ಸಹಜ. ಇಂತಹ ಸನ್ನಿವೇಶಗಳಲ್ಲಿ ಬಹುಜನಾಭಿಪ್ರಾಯಕ್ಕೇ ಮನ್ನಣೆಯಿರಬೇಕಾದುದು ಸರಿ ತಾನೇ.

ನಾವೆಲ್ಲರೂ ಬಯಸುತ್ತಿರುವ ಸುಧಾರಣೆ ಎಲ್ಲಿಂದ ಪ್ರಾರಂಭವಾಗಬೇಕು? ಒಂದು ದೇಶದ ಇತಿಹಾಸದಲ್ಲಿ 60 ವರ್ಷಗಳ ಅವಧಿ ಬಹಳ ದೊಡ್ಡ ಸಮಯವೇನಲ್ಲ. ನಮ್ಮ ಜೀವಿತ ಕಾಲದಲ್ಲಿಯೇ ಎಲ್ಲವನ್ನೂ ಕಂಡೇ ಸಾಯಬೇಕೆನ್ನುವ ನಮ್ಮ ಸ್ವಾರ್ಥವೇ ಈ ಪ್ರಮಾಣದ ನಿರೀಕ್ಷೆಗೆ ಕಾರಣವೆನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ. ಸಹಸ್ರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಅಸಮಾನತೆ, ಶೋಷಣೆ ವಿರುದ್ಧ ಪ್ರಜಾಪ್ರಭುತ್ವದ ಮೂಲಕ ಈಗ ನಡೆಯುತ್ತಿರುವ ಪ್ರಯತ್ನ ಒಂದು ನಿರಂತರ ಪ್ರಕ್ರಿಯೆ (process) ಎನ್ನುವುದನ್ನು ನಾವು ಮನಗಾಣಬೇಕು. ಇಂತಹ ಪ್ರಕ್ರಿಯೆಯಲ್ಲಿ ಒಳಗೊಂಡಿರುವ ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳ ಪಾತ್ರ – ಪ್ರಾಮುಖ್ಯತೆಯ ಬಗ್ಗೆ  ವಿಮರ್ಶೆ ಅವಶ್ಯ. ಪ್ರಸಕ್ತ ರಾಜಕೀಯದಲ್ಲಿ ಕಾಣುತ್ತಿರುವ ಕುಟುಂಬ ರಾಜಕಾರಣ, ಜಾತಿ ರಾಜಕಾರಣ ರಾಷ್ಟ್ರೀಯ ಪಕ್ಷಗಳಲ್ಲಿ ಜಾಸ್ತಿಯೋ, ಇಲ್ಲ ಪ್ರಾದೇಶಿಕ ಪಕ್ಷಗಳಲ್ಲಿ ಜಾಸ್ತಿಯೋ? ಈ ದೇಶಕ್ಕೆ ರಾಷ್ಟ್ರೀಯ ಪಕ್ಷಗಳು ಸರಿಯೇ ಅಥವಾ ಪ್ರಾದೇಶಿಕ ಪಕ್ಷಗಳು ಸರಿಯೇ? ಮತಬ್ಯಾಂಕು ರಾಜಕಾರಣ ರಾಷ್ಟ್ರೀಯ ಪಕ್ಷಗಳಿಂದ ಜಾಸ್ತಿ ನಡೆಯುತ್ತಿದೆಯೇ ಅಥವಾ ಪ್ರಾದೇಶಿಕ ಪಕ್ಷಗಳು ಜಾಸ್ತಿ ಮಾಡುತ್ತಿವೆಯೇ? ಈ ಎಲ್ಲಾ ವಿಚಾರಗಳ ಬಗ್ಗೆ ಸಾಕಷ್ಟು ತೀವ್ರ ಮತ್ತು ವಿಸ್ರೃತ ಚರ್ಚೆ  ನಡೆಯಬೇಕಿದೆ. ಈ ರೀತಿಯ ಚರ್ಚೆಗಳು ಸಮಾಜ ಚಿಂತಕರೆಂದು ಕರೆಸಿಕೊಳ್ಳುವ ಅಭಿಪ್ರಾಯ ಸ್ವಾತಂತ್ರ್ಯದ ವಕ್ತಾರರಂತೆ  ವರ್ತಿಸುತ್ತಿರುವ ಬುದ್ಧಿಜೀವಿಗಳ ವರ್ತುಲದಲ್ಲಿ ಮಾತ್ರವೇ ಕೇಂದ್ರೀಕೃತಗೊಂಡಿರುವುದು ದುರದೃಷ್ಟಕರ. ರಾಜಕೀಯವನ್ನು, ರಾಜಕೀಯ ವ್ಯಕ್ತಿಗಳನ್ನು ಟೀಕೆ ಮಾಡುವುದೇ ತಮ್ಮ ಧ್ಯೇಯ ಎಂಬಂತೆ ನಡೆದುಕೊಳ್ಳುತ್ತಿರುವ ಈ ವರ್ಗದಿಂದ ಯುವಜನತೆ ಯಾವ ನೀತಿಪಾಠವನ್ನು ಕಲಿಯಬಹುದು?

ಉತ್ತಮ ಸಮಾಜ ನಿರ್ಮಾಣದಲ್ಲಿ ಅನುಕರಣೆಯ ಪಾತ್ರ ಬಹಳ ಮಹತ್ವದ್ದಾಗಿದೆ. ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ಯುವಶಕ್ತಿಯನ್ನು ಹೊಂದಿರುವ ನಮ್ಮ ದೇಶಕ್ಕಂತೂ ಅನುಕರಣೆ ನೀಡಬಹುದಾದ ಕೊಡುಗೆ ನಿರೀಕ್ಷೆಗೂ ಮೀರಿದ್ದಾಗಿದೆ. ಇಂತಹ ಸನ್ನಿವೇಶದಲ್ಲಿ, ರಾಷ್ಟ್ರಜೀವನದ ಇತ್ತೀಚಿನ ಘಟ್ಟದವರೆಗೂ ಕೋರ್ಟ್ ಗಳನ್ನು, ನ್ಯಾಯಾಧೀಶರನ್ನು ಒಂದು ಆದರ್ಶವನ್ನಾಗಿ ಪರಿಗಣಿಸಿದಂತಹ ಸಮಾಜ ನಮ್ಮದು. ಆದರೀಗ ಆ ಸ್ಥಿತಿ ನಮ್ಮ ದೇಶದಲ್ಲಿಲ್ಲ. ಅವರೂ ನಮ್ಮಂತೆಯೇ ಎನ್ನುವಷ್ಟರಮಟ್ಟಿಗೆ ಇಳಿಮುಖವಾಗಿದೆ ಆದರ್ಶ; ಅನುಕರಣೆ. ಅದೀಗ ಸಹಜವೂ ಕೂಡ. ಅವರುಗಳನ್ನು ಆಯ್ಕೆ ಮಾಡಿರುವವರು ಯಾರು? ನಮ್ಮ ಪ್ರಧಾನಮಂತ್ರಿ, ನಮ್ಮ ರಾಷ್ಟ್ರಪತಿ, ನಮ್ಮ ಮುಖ್ಯ ನ್ಯಾಯಾಧೀಶರು ಅವರೆಲ್ಲರೂ ನಮ್ಮ ಮಧ್ಯದಿಂದಲೇ ಬಂದವರು, ನಾವೇ ಆರಿಸಿದವರು. ನಾವೇ ಬದಲಾಗದಿದ್ದಲ್ಲಿ ಅವರುಗಳಿಂದ ಬದಲಾವಣೆಯನ್ನು ಹೇಗೆ ನಿರೀಕ್ಷಿಸಬಹುದು? ಅವರ ಸ್ಥಿತಿ ಇದ್ದುದರಲ್ಲಿ ಪರವಾಗಿಲ್ಲವೆಂದು ಅನಿಸುತ್ತಿದೆ. ಏಕೆಂದರೆ, ಅವರು ಟೀಕೆಗೆ ಒಳಪಡುವ ಸಂದರ್ಭಗಳು ಕಡಿಮೆ. ಟೀಕೆ ಮಾಡಿದರೆ ಕೋರ್ಟ್  ಉಲ್ಲಂಘನೆಯಾಗುತ್ತದೆಂಬ ಭಯವಿದೆ. ಆದರಿವತ್ತು ಮಾಹಿತಿ ಹಕ್ಕು ಕಾಯಿದೆಯ ದೆಸೆಯಿಂದ ಬಹುತೇಕ ವಿಷಯಗಳು ಸಾರ್ವಜನಿಕ ಚರ್ಚೆಗೆ ಒಳಪಡುತ್ತಿವೆ. ಚರ್ಚೆಗೊಳಪಡಬೇಕಾದ ವಿಷಯಗಳು ಸಂಪೂರ್ಣ ಖಾಸಗಿಯಾಗಿ ಉಳಿದಿಲ್ಲ. ಶುದ್ಧೀಕರಣದ ನಿಟ್ಟಿನಲ್ಲಿ ಈ ಪ್ರಕ್ರಿಯೆ ಆರಂಭವಾಗಿದೆ. ಒಂದು ನಿಟ್ಟಿಸಿರುಬಿಡುವಷ್ಟರಮಟ್ಟಿಗೆ!

ಯುಗಪುರುಷ ಬಸವಣ್ಣನವರಿಂದಾಗಲೀ ಅಥವಾ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮಠಮಾನ್ಯಗಳಿಂದಾಗಲೀ, ಒಂದೇ ಜಾತಿಯೊಳಗಿನ ಉಪಜಾತಿಗಳನ್ನು ಒಗ್ಗೂಡಿಸಲೂ ಸಾಧ್ಯವಾಗಿಲ್ಲ. ಯಾಕೆ? ಎಲ್ಲೆಡೆಯೂ ನಮ್ಮ ಅಸ್ತಿತ್ವ, ನಮ್ಮ ಸ್ವಾರ್ಥದ ಪ್ರಶ್ನೆ ಪ್ರಮುಖವಾಗುತ್ತಿದೆ. ಮೀಸಲಾತಿ – ಒಳಮೀಸಲಾತಿಯ ವಿಚಾರವಾಗಲೀ, ಮಹಿಳಾ ಸಬಲೀಕರಣವಾಗಲೀ ಎಲ್ಲಾ ಕಡೆಗಳಲ್ಲಿಯೂ ಅನೇಕ ಅನಾವಶ್ಯಕ ಗೊಂದಲಗಳು ಈಗಲೂ ಇವೆ! ಪ್ರಸ್ತುತ ಕಾಲಮಾನದ ಶಿಕ್ಷಣದ ಪ್ರಭಾವ ನಮ್ಮ ಚಿಂತನೆಯ ಮೇಲೆ ಯಾವ ಗುಣಾತ್ಮಕ ಪ್ರಭಾವ ಬೀರುವಲ್ಲಿ ಸಫಲವಾಗಿದೆ? ಅದಕ್ಕೆ ಬದಲಾಗಿ ಸಂಕುಚಿತ ಮನೋಭಾವನೆಯನ್ನು ಉದ್ದೀಪಿಸುವಲ್ಲಿ ಸಫಲವಾಗುತ್ತಿದೆ.

ಪ್ರಸ್ತುತ ರಾಜಕಾರಣದಲ್ಲಿ ಕಂಡುಬರುತ್ತಿರುವ ಯಜಮಾನ ಸಂಸ್ಕೃತಿಯೂ ಅಷ್ಟೇ. ವಿವಿಧ ಪ್ರಾಶಸ್ತ್ಯಗಳ ಹೆಸರಲ್ಲಿ ನಾವೀಗ ಯಜಮಾನರುಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದೇವೆ. ಆರ್ಥಿಕವಾಗಿ, ಸಾಮಾಜಿಕವಾಗಿ ಬಲಾಢ್ಯರನ್ನು ಸೃಷ್ಟಿಸುತ್ತಿದ್ದೇವೆ. ಜಾತಿ ಆಧಾರದಲ್ಲಿ ತುಳಿತಕ್ಕೊಳಗಾದವರಲ್ಲೂ ಇಂದು ಆರ್ಥಿಕವಾಗಿ ಸದೃಢರಾದವರೇ ತಮ್ಮ ಜಾತಿಯ ಆರ್ಥಿಕ ದುರ್ಬಲರ ಶೋಷಕರಾಗುತ್ತಿರುವುದು ಪರಿಸ್ಥಿತಿಯ ವಿಡಂಬನೆಯೇ? ತಮ್ಮ ಜೊತೆ ಅವರುಗಳನ್ನು ಗುರುತಿಸಬಾರದೆನ್ನುವಷ್ಟರಮಟ್ಟಿಗೆ ತುಳಿತ ಮುಂದುವರಿದಿದೆ. ಈ ಬೆಳವಣಿಗೆ ಯಾವ ಜಾತಿಯನ್ನೂ ಬಿಡದೆ ಒಂದು ಸಾರ್ವತ್ರಿಕ ಪಿಡುಗಾಗಿದೆ.

ಇವತ್ತು ಕರ್ನಾಟಕದಲ್ಲಿ ಯಾರು ಪರಿಶಿಷ್ಟ ಜಾತಿಗೆ ಸೇರಿದ್ದಾರೋ ಅವರು ಪಕ್ಕದ ರಾಜ್ಯಗಳಾದ ಆಂಧ್ರ, ಮಹಾರಾಷ್ಟ್ರದಲ್ಲಿ ಪರಿಶಿಷ್ಟರಲ್ಲ. ಪರಿಶಿಷ್ಟ ಜಾತಿ ಅನ್ನುವ ಸ್ವರೂಪವನ್ನೇ (concept) ದುರ್ಬಲಗೊಳಿಸಿ, ತಮ್ಮ ತಮ್ಮ ಅನುಕೂಲ ಸಿಂಧು ರಾಜಕಾರಣಕ್ಕೋಸ್ಕರ ಒಂದೊಂದೇ ಜಾತಿ-ವರ್ಗವನ್ನು ನಿರಂತರವಾಗಿ ಈ ಗುಂಪಿಗೆ ಸೇರಿಸುವ ಪ್ರಕ್ರಿಯೆ ನಡೆದಿದೆ; ನಡೆಯುತ್ತಿದೆ. ಹೀಗಾದಲ್ಲಿ ನಿಜವಾಗಿಯೂ ಸಮಾಜದ, ಸರಕಾರದ ಬೆಂಬಲ ದೊರೆಯಲೇಬೇಕಾದ ವರ್ಗಗಳು ಯಾವುವೆಂಬುದನ್ನು ನಿರ್ಧರಿಸುವುದಾದರೂ ಹೇಗೆ ಸಾಧ್ಯ?

ಕರ್ನಾಟಕದ ಪ್ರಸ್ತುತ ರಾಜಕಾರಣದಲ್ಲಿ ಜಾತಿ-ಮತ ವಹಿಸುವ ಪಾತ್ರಕ್ಕಿಂತ ಹೆಚ್ಚಾಗಿ ಹಣ ಅತಿ ದೊಡ್ಡ ಪಾತ್ರ ವಹಿಸುತ್ತಿದೆಯೆಂಬುದನ್ನು ನಾವೆಲ್ಲಾ ಕಾಣಬಹುದು. ಅಭ್ಯರ್ಥಿಗಳಿಗೆ ಗೆಲ್ಲುವ ಸಾಮರ್ಥ್ಯವೆಂದರೆ ಪ್ರಮುಖವಾಗಿ ಜಾತಿ ಮತ್ತು ಹಣದ ಬಲವೇ ಆಗಿರುವುದು ಇಂದಿನ ರಾಜಕೀಯದ ವೈಶಿಷ್ಟ್ಯ. ಇಂದಿನ ಎಲ್ಲಾ ಚಳವಳಿಗಳು, ವಿಚಾರಗಳು, ಸಂಘಟನೆಗಳನ್ನು ಹತ್ತಿಕ್ಕಲು ಬಳಕೆಯಾಗುತ್ತಿರುವಂಥಾದ್ದು ಹಣ. ಅದೂ ಅಕ್ರಮವಾಗಿ ಗಳಿಸಿರುವಂತಹ ಹಣ.

ಚಳವಳಿಗಳ ಪ್ರಸ್ತುತತೆ – ಸಾಫಲ್ಯತೆ ಮತ್ತು ಪ್ರಭಾವ :

ಚಳವಳಿಗಳು ನಮ್ಮ ಇಂದಿನ ರಾಜಕಾರಣದಲ್ಲಿ ಜನಸಮೂಹದ ಸಮಸ್ಯೆಗಳನ್ನು ಆಡಳಿತ ಯಂತ್ರದ ಗಮನಕ್ಕೆ ತರಲು ಉಳಿದಿರುವ ಏಕೈಕ ದಾರಿಯಾಗಿ ಉಳಿದಿದೆ! ಅಹವಾಲು ಸಲ್ಲಿಕೆ, ಮನವಿ ಪತ್ರಗಳಿಗೆ ಸರ್ಕಾರ ಕಿವಿಕೊಡುವ ಸಂದರ್ಭವೇ ಇಲ್ಲವೇನೋ ಎಂಬಷ್ಟರಮಟ್ಟಿಗೆ ಪ್ರಜಾಪ್ರಭುತ್ವ ದುರ್ಬಲವಾಗಿದೆ. ಚಳವಳಿಗಳಲ್ಲಿಯೂ ಕೂಡಾ ಸಾರ್ವಜನಿಕರ ಮತ್ತು ಸರ್ಕಾರದ ಆಸ್ತಿಪಾಸ್ತಿಗಳಿಗೆ ಸಾಕಷ್ಟು ಹಾನಿಯುಂಟಾದ ಮೇಲೆಯೇ ಸರ್ಕಾರ-ಜನಪ್ರತಿನಿಧಿಗಳು ಪ್ರಜೆಗಳೆಡೆಗೆ ಧಾವಿಸುವುದು ಪ್ರವೃತ್ತಿಯಾಗಿದೆ. ಚಳವಳಿಯ ಆರಂಭ ಕಾಲದಲ್ಲಿನ ಸರ್ಕಾರದ ನಿರ್ಲಕ್ಷ್ಯತೆಯೇ ಚಳವಳಿಕಾರರಿಗೆ ಅಸ್ತಿತ್ವದ ಸಾಧನವಾಗಿ ಪರಿಣಮಿಸಿದ ಘಟನೆಗಳು ನಮ್ಮ ಮುಂದೆ ಸಾಕಷ್ಟಿವೆ. ಈ ಬಗ್ಗೆ ಒಂದು ಅತ್ಯುತ್ತಮ ನಿದರ್ಶನ-ಸಣ್ಣ ಪ್ರಮಾಣದಲ್ಲಿ ಆರಂಭವಾದ ನಕ್ಸಲ್ ಚಳವಳಿಯ ಕಬಂಧ ಬಾಹುಗಳು ಇಂದು ರಾಷ್ಟ್ರವ್ಯಾಪಿ ಬೆಳೆದು ನಿಂತ ರೀತಿ!

ಚಳವಳಿಗಳ ದಾರಿ ತಪ್ಪಲು ಕಾರಣಗಳೇನು? ಸಮುದಾಯ ಕೇಂದ್ರಿತ ಸೂಕ್ಷ್ಮವಿಚಾರಗಳಲ್ಲಿ ಸಮಾಜದಲ್ಲಿ ಗಣ್ಯರೆಂದು ಪರಿಗಣಿಸಲ್ಪಟ್ಟಿರುವವರು ತಮ್ಮ ವೈಯಕ್ತಿಕ ಅಭಿಪ್ರಾಯ-ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಒಟ್ಟಾರೆ ಸಮಾಜದ ಮೇಲಾಗುವ ಲಾಭ-ನಷ್ಟಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಯಾವುದೋ ಒಂದು ಭೂಮಿ ಪರಭಾರೆ ಮಾಡುವ ವಿಚಾರದಲ್ಲಿ ವಿಶ್ವವಿದ್ಯಾಲಯಗಳು ಪ್ರತಿಭಟನೆ ಮಾಡಬೇಕೆಂದು ನಿರೀಕ್ಷೆ ಮಾಡುವುದು ಸರಿಯಲ್ಲ. ಪ್ರತಿಭಟನೆ ನಡೆಸಬೇಕಾದವರು ವಿಧಾನಸಭೆ-ವಿಧಾನಪರಿಷತ್ತು-ಸಂಸತ್ತಿನಲ್ಲಿರುವವರು; ಜನತೆಯಿಂದ ಚುನಾಯಿತರಾದವರು. ಈ ಬಗ್ಗೆ ಕೋರ್ಟ್ ಗಳೂ ಕೂಡಾ ಏನೂ ಮಾಡುವಂತಿಲ್ಲ. ಇನ್ನು ಉದಾರೀಕರಣ (liberalization), ಜಾಗತೀಕರಣ (globalization), ಖಾಸಗೀಕರಣ (Privatization) ಗಳಿಂದಾಗಿ ರಾಜಕೀಯ ಪಕ್ಷ, ಚಳವಳಿ, ಸಂಘಟನೆಗಳ ಮೇಲೆ ಯಾವ್ಯಾವ ರೀತಿಯ ಪರಿಣಾಮ ಆಗುತ್ತಿವೆ? ಯಾಕೆ ಆಗುತ್ತಿವೆ? ಚಳವಳಿಗಳ ಮೂಲಸ್ವರಪವನ್ನೇ ದಿಕ್ಕು ತಪ್ಪಿಸುವಷ್ಟರಮಟ್ಟಿಗೆ ಹೇಗೆ ಯಶಸ್ವಿಯಾಗುತ್ತಿವೆ? ಎಂಬಿತ್ಯಾದಿ ವಿಚಾರಗಳ ಮೇಲೆ ಕ್ಷಕಿರಣ ಬೀರುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಇವತ್ತು ಬಹುತೇಕ ರಾಜಕೀಯ ಪಕ್ಷಗಳ ಮೇಲೆ ಕೈಗಾರಿಕೋದ್ಯಮಿಗಳು ಪರೋಕ್ಷವಾಗಿ ಹೊಂದಿರುವ ನಿಯಂತ್ರಣ ಕೂಡ ನಾವೆಲ್ಲ  ಚರ್ಚೆಗೆ ತೆಗೆದುಕೊಳ್ಳಬಹುದಾದ ಪ್ರಮುಖ ಸಂಗತಿಯಾಗಿದೆ.

ಚಳವಳಿ ಅಂದಾಗ ಕೇವಲ ದಲಿತ ಚಳವಳಿ ಮಾತ್ರ ಅಲ್ಲ. ಕಾರ್ಮಿಕ ಚಳವಳಿ, ಮಹಿಳಾ ಚಳವಳಿ, ರೈತ ಚಳವಳಿ, ಭಾಷಾ ಚಳವಳಿ… ಇವೆಲ್ಲವೂ ಒಂದಕ್ಕೊಂದು ಪೂರಕವಾಗಿರಬೇಕೆಂದು ನಾವು ಬಯಸುತ್ತೇವೆ. ಆದರೆ ಹಾಗೆ ನಡೆಯುತ್ತಿಲ್ಲ. ವಿವಿಧ ಸಮುದಾಯಗಳ ಚಳವಳಿಗಳನ್ನು ಒಂದು ವಿಸ್ತೃತ; ಆದರೆ ನಿಖರವಾಗಿ ಗುರುತಿಸಲ್ಪಟ್ಟ ಕೆಲವು ನಿರ್ದಿಷ್ಟ ಕಾರ್ಯಸೂಚಿ ಯಡಿಯಲ್ಲಿ ಸಂಘಟಿಸಬೇಕು. ಎಲ್ಲ ಸಮಸ್ಯೆಗಳನ್ನು ನಾವೇ ಬಗೆಹರಿಸುತ್ತೇವೆ, ನಮ್ಮ ಜೀವಿತ ಕಾಲದಲ್ಲಿಯೇ ಬಗೆಹರಿಸುತ್ತೇವೆ, ನಮ್ಮ ಸಂಘಟನೆಯಿಂದಲೇ ಬಗೆಹರಿಸುತ್ತೇವೆ ಎಂಬ ಭ್ರಮೆಯಲ್ಲಿ ನಾವಿರಬಾರದು. ಎಲ್ಲಾ ಸಂಘಟನೆಗಳ ರೂಪುರೇಷೆ, ಆದ್ಯತೆಗಳು ನಿರಂತರವಾಗಿ ಸಮಯಕ್ಕನುಗುಣವಾಗಿ ಬದಲಾಗುತ್ತಲೇ ಇರುವುದನ್ನು ನಾವು ಗಮನಿಸುತ್ತಿದ್ದೇವೆ, ಹಾಗಾಗಿ ಚಳವಳಿಗಳ ಪೈಕಿ ಎಲ್ಲರೂ ಒಪ್ಪತಕ್ಕ ಸಾಮಾನ್ಯವಾದವುಗಳನ್ನು ಆಯ್ಕೆಮಾಡಿ, ಆದ್ಯತೆಯ ನೆಲೆಯಲ್ಲಿ ಪರಿಗಣಿಸಬೇಕು; ಆಗಲೇ ಪ್ರಜಾಪ್ರಭುತ್ವದ ತಳಹದಿಯಾದ ಜನದನಿಗೆ ಬೆಲೆ ಬರುವುದು.


ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು.

(ಚಿತ್ರಕೃಪೆ: ವಿಕಿಪೀಡಿಯ, ದಿ ಹಿಂದು)

ವೈಜ್ಞಾನಿಕ ಮನೋಭಾವ ಮತ್ತು ದೇಶದ ಮುನ್ನಡೆಯ ಸಂಬಂಧ

-ಆನಂದ ಪ್ರಸಾದ್

ವಿಜ್ಞಾನವು ಇಂದು ನಮ್ಮ ಜೀವನದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗಿದೆ. ನಮ್ಮ ಜೀವನಕ್ಕೆ ನೆಮ್ಮದಿಯನ್ನೂ, ಸಂತೋಷವನ್ನೂ, ಭದ್ರತೆಯನ್ನೂ ಕೊಡುವಲ್ಲಿ ವಿಜ್ಞಾನದ ಪಾತ್ರ ಮಹತ್ತರವಾದುದು. ಒಂದು ಕಾಲವಿತ್ತು, ಅದೂ ಹೆಚ್ಚು ಹಿಂದಿನದಲ್ಲ ಕೆಲವೇ ದಶಕಗಳ ಹಿಂದೆ ಜನ ಪ್ಲೇಗು, ಮಲೇರಿಯಾ, ಕ್ಷಯ, ರೇಬೀಸ್, ಕಾಲರಾ ಮೊದಲಾದ ರೋಗಗಳು ಬಂದರೆ ಸಾವನ್ನೇ ಎದುರು ನೋಡಬೇಕಾಗಿತ್ತು. ವಿಜ್ಞಾನವು ಇವುಗಳ ಕಾರಣಗಳನ್ನು ಪತ್ತೆ ಹಚ್ಚಿ ಅದಕ್ಕೆ ಸೂಕ್ತ ಔಷಧಿಗಳನ್ನು ಕಂಡು ಹಿಡಿದು ಬಡವ ಬಲ್ಲಿದ ಎಂಬ ಭೇದವಿಲ್ಲದೆ ಲಕ್ಷಾಂತರ ಅಮೂಲ್ಯ ಜೀವಗಳನ್ನು ಉಳಿಸಿದೆ, ಉಳಿಸುತ್ತಿದೆ. ಪರಂಪರೆ ಹಾಗೂ ಸಮುದಾಯದಿಂದ ಭಿನ್ನವಾಗಿ ಚಿಂತಿಸಿದ ಕಾರಣವೇ ವಿಜ್ಞಾನಿಗಳು ಇಂಥ ಮುನ್ನಡೆಯನ್ನು ಸಾಧಿಸಲು ಸಾಧ್ಯವಾಯಿತು. ಆದರೆ ಭಾರತದಲ್ಲಿ ಪರಂಪರೆ ಹಾಗೂ ಸಮುದಾಯದಿಂದ ಭಿನ್ನವಾಗಿ ಚಿಂತಿಸುವವರಿಗೆ ಸೂಕ್ತ ಪ್ರೋತ್ಸಾಹ ಇಲ್ಲ, ಬದಲಿಗೆ ಕಿರುಕುಳ ಸಿಕ್ಕುತ್ತದೆ. ಹೀಗಾಗಿ ಭಾರತವು ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನ ಹೊಂದಿದ್ದರೂ ವಿಶ್ವಖ್ಯಾತಿಯ ವಿಜ್ಞಾನಿಗಳನ್ನು ಬೆಳೆಸಲಿಲ್ಲ. ಲಕ್ಷಾಂತರ ಜೀವಗಳನ್ನು ಉಳಿಸಲು ಕಾರಣವಾದ ವಿಜ್ಞಾನಿಗಳನ್ನು ನಮ್ಮ ಯಾವ ಟಿವಿ ವಾಹಿನಿಗಳೂ ಕೊಂಡಾಡಿದ್ದು, ಹಾಡಿ ಹೊಗಳುವುದು ಬಿಡಿ, ಕನಿಷ್ಠ ಅವರ ಪರಿಚಯವನ್ನೂ ಮಾಡುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು ಕಾಣುವುದಿಲ್ಲ. ಆದರೆ ಪವಾಡ ಪುರುಷರನ್ನು ಮಾತ್ರ ಅಪಾರವಾಗಿ ಹಾಡಿ ಹೊಗಳುವುದನ್ನು ಕಾಣುತ್ತೇವೆ. ಜ್ಯೋತಿಷಿಗಳು, ವಾಸ್ತು ಎಂಬ ಹೆಸರಿನಲ್ಲಿ ಮೋಸ ಮಾಡುವ ಜನರಿಗೆ ನಮ್ಮ ಟಿವಿ ಮಾಧ್ಯಮದಲ್ಲಿ ಅಗ್ರ ಸ್ಥಾನ.

ಕೆಲವು ದಶಕಗಳ ಹಿಂದೆ ಒಂದು ಊರಿನಿಂದ ಇನ್ನೊಂದು ಊರಿಗೆ ಸಂಚರಿಸುವುದು ಹಲವಾರು ಗಂಟೆಗಳನ್ನು ಅಥವಾ ದಿನಗಳನ್ನೇ ತೆಗೆದುಕೊಳ್ಳುತ್ತಿತ್ತು ಹಾಗೂ ಭಾರೀ ಶ್ರಮದಾಯಕವಾಗಿತ್ತು. ಇಂದು ಒಂದು ಊರಿನಿಂದ ಇನ್ನೊಂದು ಊರಿಗೆ ಸುಲಭವಾಗಿ ಸಂಚರಿಸ ಬಹುದಾದರೆ ಅದಕ್ಕೆ ಕಾರಣ ವಿಜ್ಞಾನಿಗಳು ರೂಪಿಸಿದ ಆಧುನಿಕ ಮೋಟಾರು ವಾಹನಗಳು ಹಾಗೂ ತಂತ್ರಜ್ಞಾನಗಳು. ಈ ಯಾವ ತಂತ್ರಜ್ಞಾನವನ್ನೂ ರೂಪಿಸಿದವರು ನಮ್ಮ ದೇಶದವರಲ್ಲ. ನಮ್ಮ ದೇಶದಲ್ಲಿ ಏನಿದ್ದರೂ ಅದು ಪರದೇಶದಿಂದ ಆಮದು ಮಾಡಿಕೊಂಡ ತಂತ್ರಜ್ಞಾನ. ಇದಕ್ಕೆ ಕಾರಣ ಹೊಸ ತೆರನಾಗಿ ಯೋಚಿಸಲು ಅವಕಾಶ ಕೊಡದ ನಮ್ಮ ಬಾಗಿಲು ಮುಚ್ಚಿದ ಮಾನಸಿಕತೆ. ನಾವು ಎಲ್ಲವೂ ಶಾಸ್ತ್ರಗಳಲ್ಲಿ ಹೇಳಿದೆ ಎಂದು ಹೊಸದನ್ನು ಚಿಂತಿಸುವುದನ್ನೇ ಬಿಟ್ಟಿದ್ದೇವೆ. ನಮ್ಮ ಮಾನಸಿಕತೆ ಇನ್ನೂ ಹಲವು ಶತಮಾನಗಳ ಹಿಂದೆ ಇದೆ. ಇದರ ಪರಿಣಾಮವೇ ಇಂದು ನಾವು ಟಿವಿ ವಾಹಿನಿಗಳಲ್ಲಿ ನೋಡುತ್ತಿರುವ ಅವೈಜ್ಞಾನಿಕ ಚಿಂತನೆಗಳ ಮಹಾಪೂರ. ಇಂದು ಒಂದು ನಿಮಿಷದಲ್ಲಿ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಜನರನ್ನು ಸಂಪರ್ಕಿಸಲು ಸಾಧ್ಯ. ಅದಕ್ಕೆ ಕಾರಣವಾಗಿರುವುದು ಕೂಡ ವಿಜ್ಞಾನವೇ. ಯಾವುದೇ ಹಳ್ಳಿ ಮೂಲೆಯಲ್ಲಿದ್ದರೂ ಇಂದು ಸಾಮಾನ್ಯ ಮನುಷ್ಯನೂ ಡಿ.ಟಿ. ಹೆಚ್ ತಂತ್ರಜ್ಞಾನದ ಮೂಲಕ ಹತ್ತಾರು ಟಿವಿ ವಾಹಿನಿಗಳನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗಿರುವುದು ವಿಜ್ಞಾನದ ಕೊಡುಗೆಯಿಂದಲೇ. ಆದರೆ ಆ ತಂತ್ರಜ್ಞಾನ ಮಾತ್ರ ಜನತೆಯಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಬಳಕೆಯಾಗುತ್ತಿಲ್ಲ. ಇದು ಎಂಥಾ ವಿಪರ್ಯಾಸ! ನಮ್ಮ ಮನೋಭಾವ ಜಡ್ಡುಗಟ್ಟಿದೆ. ಹೀಗಾಗಿ ನಮ್ಮ ದೇಶ ಪ್ರಗತಿಶೀಲ ಚಿಂತನೆಯಲ್ಲಿ ಬಹಳ ಹಿಂದುಳಿದಿದೆ. ನಮ್ಮ ಜನ ಇನ್ನೂ ಆದಿವಾಸಿ ಮನೋಭಾವದಿಂದ ಹೊರಬಂದಿಲ್ಲ ಎಂಬುದು ನಮ್ಮ ಟಿವಿ ವಾಹಿನಿಗಳನ್ನು ಬೆಳಗ್ಗೆ 6 ರಿಂದ 10 ಘಂಟೆವರೆಗೆ ನೋಡಿದರೆ ಅರ್ಥವಾಗುತ್ತದೆ.

ಇಂದು ವಿಜ್ಞಾನದ ಬೆಳವಣಿಗೆಯಿಂದಾಗಿ ಆಹಾರ ಭದ್ರತೆ ಬಂದಿದೆ. ಬರಗಾಲ, ಪ್ರವಾಹ ಇತ್ಯಾದಿ ನೈಸರ್ಗಿಕ ವಿಕೋಪಗಳಿಂದ ಜನ ಆಹಾರ ಇಲ್ಲದೆ ಬಳಲುವ ಪರಿಸ್ಥಿತಿ ಸಂಪೂರ್ಣ ಮಾಯವಾಗಿದೆ. ಹಲವಾರು ಯಂತ್ರಗಳು ಬಂದಿರುವುದರಿಂದಾಗಿ ಮಾನವನ ದೈಹಿಕ ಶ್ರಮ ಎಷ್ಟೋ ಕಡಿಮೆಯಾಗಿದೆ. ಇದನ್ನೆಲ್ಲಾ ಸಾಧ್ಯವಾಗಿಸಿದ ವಿಜ್ಞಾನಕ್ಕೆ, ವಿಜ್ಞಾನಿಗಳಿಗೆ ನಾವು ಕೃತಜ್ಞರಾಗಿರಬೇಕು . ಆದರೆ ವಾಸ್ತವವಾಗಿ ವಿಜ್ಞಾನಕ್ಕೆ ಹಾಗೂ ವಿಜ್ಞಾನಿಗಳಿಗೆ ನಾವು ಕೃತಜ್ಞರಾಗಿರುವುದು ಕಂಡು ಬರುತ್ತಿಲ್ಲ. ನಮ್ಮ ಮಾಧ್ಯಮಗಳಲ್ಲೂ ವಿಜ್ಞಾನಕ್ಕೆ, ವಿಜ್ಞಾನಿಗಳಿಗೆ ಮನ್ನಣೆ ಅಷ್ಟಕ್ಕಷ್ಟೇ. ವೈಜ್ಞಾನಿಕ ಮನೋಭಾವವಂತೂ ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾಗಿದೆ.

ನಮ್ಮ ದೇಶದಲ್ಲಿ ಹೊಸ ಚಿಂತನೆಗಳಿಗೆ ಬರ ಇದೆ. ಹೀಗಾಗಿಯೇ ದೇಶದ ರಾಜಕೀಯ ರಂಗ ಮರಗಟ್ಟಿದೆ. ದೇಶದ ಶಾಸಕಾಂಗ ವ್ಯವಸ್ಥೆ ಹೊಸ ಜನೋಪಯೋಗಿ ಕಾನೂನುಗಳನ್ನು ರೂಪಿಸಲು ಬಹುತೇಕ ವಿಫಲವಾಗಿದೆ. ಕಾರ್ಯಾಂಗ ಜಡ್ಡುಗಟ್ಟಿದೆ. ನ್ಯಾಯಾಂಗವೂ ಭಾರೀ ವಿಳಂಬ ಗತಿಯಲ್ಲಿ ತೆವಳುತ್ತಿದೆ. ಇದಕ್ಕೆಲ್ಲ ಕಾರಣ ನಮ್ಮಲ್ಲಿ ಸುಧಾರಣೆಗಳನ್ನು ತರಬೇಕೆಂಬ ಚಿಂತನೆಯೇ ಇಲ್ಲದಿರುವುದು. ಕಾಲ ಕಾಲಕ್ಕೆ ದೇಶದ ಕಾನೂನುಗಳಲ್ಲಿ ಜನೋಪಯೋಗಿ ಸುಧಾರಣೆ ಮಾಡದೇ ಹೋದರೆ ಪ್ರಜಾಪ್ರಭುತ್ವ ಜಡ್ಡುಗಟ್ಟುತ್ತದೆ. ಇದನ್ನೆಲ್ಲಾ ಮಾಡಬೇಕಾದವರು ಯಾರು?  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದನ್ನೆಲ್ಲಾ ಮಾಡುವ ಸಾಮರ್ಥ್ಯ ಇರುವುದು ಶಾಸಕಾಂಗಕ್ಕೆ. ಆದರೆ ನಮ್ಮ ಶಾಸಕಾಂಗಕ್ಕೆ ಆಯ್ಕೆಯಾಗುವವರಲ್ಲಿ ವೈಜ್ಞಾನಿಕ ಮನೋಭಾವ ಇಲ್ಲವೇ ಇಲ್ಲವೆಂದರೂ ಸರಿ. ಹೀಗಾಗಿ ಎಲ್ಲೆಡೆಯೂ ಹೊಸ ಚಿಂತನೆಗಳ ಬರ ಇದೆ.

ದೇಶದ ಮಾಧ್ಯಮ ರಂಗವನ್ನು ನೋಡಿದರೆ ಇದೇ ಸ್ಥಿತಿ ಇದೆ. ಇಲ್ಲಿಯೂ ಮೂಢ ನಂಬಿಕೆಗಳ ಸವಾರಿ ಅವ್ಯಾಹತವಾಗಿ ನಡೆಯುತ್ತಿದೆ. ಮಾಧ್ಯಮಗಳನ್ನು ಮಾರುಕಟ್ಟೆ ಶಕ್ತಿಗಳು ನಿಯಂತ್ರಿಸುತ್ತಿರುವುದರಿಂದ ಇಲ್ಲಿ ಯಾವುದೇ ಹೊಸ ಚಿಂತನೆಗಳನ್ನು ನಿರೀಕ್ಷಿಸುವಂತಿಲ್ಲ. ಇಂಥ ಸಂದರ್ಭದಲ್ಲಿ ಏನಾದರೂ ಬದಲಾವಣೆ, ಹೊಸತನ ತರುವ ಸಾಮರ್ಥ್ಯ ಇರುವುದು ಬಂಡವಾಳಗಾರರಿಗೆ ಮಾತ್ರ. ಬಂಡವಾಳಗಾರರಿಗೆ ದೇಶದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕೆಂಬ ತುಡಿತ ಇದ್ದರೆ ಇಂದೂ ಕೂಡ ಮಾರುಕಟ್ಟೆ ಶಕ್ತಿಗಳನ್ನೂ ಮೀರಿ ಹೊಸ ಚಿಂತನೆಗಳಿಗೆ, ವೈಜ್ಞಾನಿಕ ಮನೋಭಾವಕ್ಕೆ ತಮ್ಮ ಮಾಧ್ಯಮಗಳಲ್ಲಿ ಒತ್ತು ಕೊಡಲು ಸಾಧ್ಯವಿದೆ. ತಮ್ಮ ಬೇರೆ ಉದ್ಯಮಗಳಲ್ಲಿ ಬರುವ ಅಪಾರ ಲಾಭದ ಒಂದಂಶವನ್ನು ಬಳಸಿ ಮಾಧ್ಯಮಗಳನ್ನು ನಡೆಸಲು ಸಾಧ್ಯವಿದೆ.

ಮಾಧ್ಯಮಗಳನ್ನು ನಡೆಸಲು ಜಾಹೀರಾತುಗಳನ್ನೇ, ಮಾರುಕಟ್ಟೆ ಶಕ್ತಿಗಳನ್ನೇ ಅವಲಂಬಿಸ ಬೇಕಾದ ಅಗತ್ಯವಿಲ್ಲ. ನಮ್ಮ ಭಾರೀ ಬಂಡವಾಳಗಾರರಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ದೇಶಭಕ್ತಿಯ ಕೊರತೆ ಇರುವುದರಿಂದಾಗಿ ಇಂಥ ಒಂದು ಚಿಂತನೆಯೇ ಅವರಲ್ಲಿ ಕಂಡುಬರುತ್ತಿಲ್ಲ. ನಮ್ಮ ಬಹುತೇಕ ಬಂಡವಾಳಗಾರರೂ ಕಂದಾಚಾರ, ಮೌಢ್ಯ, ಸಂಪ್ರದಾಯಗಳ ಸಂಕೋಲೆಯಲ್ಲಿ ಬಂಧಿಯಾಗಿದ್ದಾರೆ. ಇಲ್ಲದೆ ಹೋಗಿದ್ದರೆ, ಕೆಲವೇ ಕೆಲವು ಬಂಡವಾಳಗಾರರಾದರೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡಿದ್ದರೆ ಇಂದು ದೇಶದ ಸ್ಥಿತಿಯನ್ನೇ ಗಮನಾರ್ಹವಾಗಿ ಬದಲಾಯಿಸಲು ಸಾಧ್ಯವಾಗುತ್ತಿತ್ತು. ಜನರನ್ನು ಅತ್ಯಂತ ಪರಿಣಾಮಕಾರಿಯಾಗಿ ತಲುಪಲು ಇಂದು ಸಾಧ್ಯವಿರುವುದು ಟಿವಿ ಮಾಧ್ಯಮಕ್ಕೆ. ಈ ಮಾಧ್ಯಮವನ್ನು ಬಳಸಿಕೊಂಡೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜನಪರವಾಗಿ ಬದಲಾಯಿಸಿಕೊಳ್ಳಲು ಸಾಧ್ಯವಿದೆ. ಇದಕ್ಕೆ ಮಾಡಬೇಕಾಗಿರುವುದು ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸ. ಈ ಕೆಲಸ ವೈಯಕ್ತಿಕವಾಗಿ ಇಂದು ಮಾಡಲು ಸಾಧ್ಯವಿಲ್ಲ. ಏಕೆಂದರೆ ಜನರ ಸಂಘಟನೆ ಮಾಡಿಕೊಂಡು ಇಡೀ
ದೇಶದಲ್ಲಿ ಜಾಗೃತಿ ಮಾಡಬೇಕಾದರೆ ಜೀವವನ್ನೇ ತೇಯಬೇಕಾದೀತು. ತಮ್ಮ ಕುಟುಂಬ, ವೃತ್ತಿ ಬಿಟ್ಟು ಅದಕ್ಕೆ ಯಾರೂ ಸಿದ್ಧರಿರುವುದಿಲ್ಲ ಮತ್ತು ಅದು ಸಾಧ್ಯವೂ ಇಲ್ಲ. ಇದೇ ಕೆಲಸವನ್ನು ಟಿವಿ ಮಾಧ್ಯಮವು ಸುಲಭವಾಗಿ, ಏಕಕಾಲದಲ್ಲಿ ಮಾಡಲು ಸಾಧ್ಯವಿದೆ. ವೈಜ್ಞಾನಿಕ ಮನೋಭಾವ ಇರುವ ಕೆಲವು ಜನ ಬಂಡವಾಳಗಾರರು ತಮ್ಮ ಇತರ ಉದ್ಯಮಗಳ ಭಾರೀ ಲಾಭಾಂಶದ ಒಂದು ಅಂಶವನ್ನು ಜನಪರ, ದೇಶಪರ ಟಿವಿ ಮಾಧ್ಯಮವನ್ನು ಕಟ್ಟಲು ಬಳಸಿದರೆ ದೇಶದಲ್ಲಿ ಭಾರೀ ಬದಲಾವಣೆಯನ್ನೇ ತರಲು ಸಾಧ್ಯವಿದೆ.

ಇಂದು ನಮ್ಮ ದೇಶದಲ್ಲಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಇವುಗಳಲ್ಲಿ ಮಹತ್ತರ ಬದಲಾವಣೆ ಆಗಬೇಕಾದ ಅಗತ್ಯ ಇದೆ. ಶಾಸಕಾಂಗದಲ್ಲಿ ಮಹತ್ತರ ಬದಲಾವಣೆ ತರಬೇಕಾದರೆ ಇಂದು ದೇಶಭಕ್ತರ ಹೊಸ ರಾಷ್ಟ್ರೀಯ ಪಕ್ಷವನ್ನು ಕಟ್ಟಬೇಕಾದ ಅಗತ್ಯ ಇದೆ. ಆ ಪಕ್ಷವು ಚುನಾವಣೆಗಳಲ್ಲಿ ನಿಂತು ಗೆದ್ದು ಸರ್ಕಾರ ರೂಪಿಸಿ ಜನಪರವಾದ ಕಾನೂನುಗಳನ್ನು ರೂಪಿಸುವ ಮೂಲಕ ಕಾರ್ಯಾಂಗ ಹಾಗೂ ನ್ಯಾಯಾಂಗದಲ್ಲಿ ಮಹತ್ತರ ಬದಲಾವಣೆ ತರಲು ಸಾಧ್ಯವಿದೆ. ತನ್ಮೂಲಕ ಇಡೀ ರಾಷ್ಟ್ರದ ಸ್ಥಿತಿಯನ್ನು ಬದಲಾಯಿಸಲು ಪ್ರಜಾಸತ್ತಾತ್ಮಕವಾಗಿಯೇ ಸಾಧ್ಯವಿದೆ. ಹೊಸ ಪಕ್ಷವನ್ನು ರೂಪಿಸುವಾಗ ಅದರಲ್ಲಿ ಅತ್ಯಂತ ಸ್ಪಷ್ಟವಾದ ನಿಯಮಗಳನ್ನು ರೂಪಿಸಿದರೆ ರಾಜಕೀಯ ಪಕ್ಷ ಭ್ರಷ್ಟ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗುವುದನ್ನು ತಪ್ಪಿಸಲು ಸಾಧ್ಯವಿದೆ. ಉದಾಹರಣೆಗೆ ಪಕ್ಷದ ಅಧ್ಯಕ್ಷ ಸ್ಥಾನ ಚುನಾವಣೆಗಳ ಮೂಲಕವೇ ಅಯ್ಕೆಯಾಗಬೇಕು, ಪಕ್ಷದಲ್ಲಿ ವಂಶವಾಹಿ ಪ್ರಭುತ್ವಕ್ಕೆ ಅವಕಾಶವೇ ಇಲ್ಲದಂತೆ ನಿಯಮ ರೂಪಿಸುವುದು, ಚುನಾವಣೆಗಳಲ್ಲಿ ನಿಲ್ಲುವವರಿಗೆ ನಿರ್ದಿಷ್ಟ ಅರ್ಹತೆಯನ್ನು ನಿಗದಿ ಪಡಿಸುವುದು; ಭ್ರಷ್ಟರು, ಆಪಾದಿತರು, ಅಪರಾಧಿಗಳು ಚುನಾವಣೆಗಳಿಗೆ ಸ್ಪರ್ಧಿಸದಂತೆ ನಿಯಮ ರೂಪಿಸುವುದು; ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಇತರ ಮಂತ್ರಿಗಳ ಸ್ಥಾನಗಳಿಗೆ ಅರ್ಹತೆಯೊಂದನ್ನೇ ಆಧಾರವಾನ್ನಗಿಸುವುದು; ಪಕ್ಷದ ನೀತಿ ನಿಯಮ ಉಲ್ಲಂಘಿಸಿದವರನ್ನು ಹೊರಹಾಕಲು ನಿರ್ದಿಷ್ಟ ಮಾನದಂಡಗಳನ್ನು ರೂಪಿಸುವುದು, ಪಕ್ಷದೊಳಗೆ ಗುಂಪುಗಾರಿಕೆಗೆ ಅವಕಾಶವಾಗದಂತೆ ನಿಯಮ ರೂಪಿಸುವುದು ಮೊದಲಾದವುಗಳನ್ನು ಮಾಡಿದರೆ ರಾಜಕೀಯ ಪಕ್ಷ ಭ್ರಷ್ಟ ಹಾಗೂ ಜನವಿರೋಧಿಯಾಗುವುದನ್ನು ತಪ್ಪಿಸಬಹುದು. ಇದನ್ನು ಈಗ ಇರುವ ರಾಜಕೀಯ ಪಕ್ಷಗಳೂ ಮಾಡಬಹುದು.

ಒಂದು ಸ್ಪಷ್ಟವಾದ ಪರ್ಯಾಯ ಚಿಂತನೆಗಳ, ಜನಪರ ಸೈದ್ದಾಂತಿಕ ಧೋರಣೆಯ ರಾಷ್ಟ್ರೀಯ ಪಕ್ಷವು ರೂಪುಗೊಂಡರೆ ಅದರ ಪರವಾಗಿ ನಮ್ಮ ಟಿವಿ ವಾಹಿನಿಗಳು ನಿರಂತರವಾಗಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದರೆ ಅದು ಚುನಾವಣೆಗಳಲ್ಲಿ ಗೆಲ್ಲುವಂತೆ ಮಾಡುವುದು ಅಸಾಧ್ಯವೇನೂ ಅಲ್ಲ. ದೇಶದಾದ್ಯಂತ ಈಗ ಇರುವ ರಾಜಕೀಯ ಪಕ್ಷಗಳಿಂದ ರೋಸಿ ಹೋಗಿರುವ ಜನತೆ ಹೊಸತನಕ್ಕಾಗಿ ಹಂಬಲಿಸುತ್ತಿರುವುದು ಸಹಜವೇ ಆಗಿದೆ. ಜನ ಸ್ವಚ್ಛ, ಭ್ರಷ್ಟಾಚಾರ ರಹಿತ ಬದಲಾವಣೆಗಾಗಿ ಹಂಬಲಿಸುತ್ತಿರುವುದು ಅಣ್ಣಾ ಹಜಾರೆಯವರ ಹೋರಾಟದ ಸಮಯದಲ್ಲಿ ಕಂಡು ಬಂದಿದೆ. ಆದರೆ ಆ ಹೋರಾಟ ರಾಜಕೀಯಕರಣಗೊಂಡು ದುರ್ಬಲವಾಗಿದೆ. ಅಣ್ಣಾ ಹಜಾರೆ ಹಾಗೂ ಅವರ ತಂಡದಲ್ಲಿ ವೈಜ್ಞಾನಿಕ ಮನೋಭಾವದ ಕೊರತೆ ಇರುವುದೂ ಕಂಡು ಬಂದಿದೆ. ಇದೇ ತಂಡದಲ್ಲಿ ಸ್ಪಷ್ಟವಾದ ವೈಜ್ಞಾನಿಕ ಮನೋಭಾವ ಇದ್ದಿದ್ದರೆ ಇದು ಒಂದು ಪರ್ಯಾಯ ರಾಜಕೀಯ ಶಕ್ತಿಯನ್ನು ಬೆಳೆಸಲು ಸಾಧ್ಯವಾಗುತ್ತಿತ್ತು. ಈಗ ಹಜಾರೆಯವರ ಹೋರಾಟವನ್ನು ನೋಡುವುದಾದರೆ ಅದು ಒಂದು ರಾಜಕೀಯ ಪಕ್ಷದ ಪರವಾಗಿ ದೇಶದಲ್ಲಿ ಜನಾಭಿಪ್ರಾಯ ಹುಟ್ಟು ಹಾಕಲು ಬಳಕೆಯಾಗುತ್ತಿರುವುದು ಕಂಡು ಬರುತ್ತದೆ. ಹೀಗಾಗಿ ಅದು ದುರ್ಬಲವಾಗಿದೆ. ಈಗ ಹಜಾರೆಯವರು ಯಾವ ಪಕ್ಷದ ಪರವಾಗಿ ಹವಾ ಉಂಟು ಮಾಡಲು ಬಯಸುತ್ತಿದ್ದಾರೋ ಆ ಪಕ್ಷವು ಉಳಿದ ಪಕ್ಷಗಳಿಗಿಂತ ಭಿನ್ನವಾಗಿಲ್ಲ ಹಾಗೂ ಆ ಪಕ್ಷದಲ್ಲಿ ವೈಜ್ಞಾನಿಕ ಮನೋಭಾವಕ್ಕೆ ಸ್ಥಾನವೂ ಇಲ್ಲದಿರುವುದೂ ಕಂಡು ಬರುತ್ತದೆ.

ಸಾಮುದಾಯಿಕ ಹಾದಿಯಾಗಿ ಸಂಗೀತ

-ಭಾರತೀ ದೇವಿ. ಪಿ

ಸಂಗೀತ ಕುರಿತಾದ ಸಂಕಥನಗಳಲ್ಲಿ ನಾವು ಮತ್ತೆ ಮತ್ತೆ ‘ಸಂಗೀತ ಆತ್ಮದ ಭಾಷೆ, ಅದಕ್ಕೆ ಕಾಲ ದೇಶಗಳ ಹಂಗಿಲ್ಲ, ಅದರ ಭಾಷೆ ವಿಶ್ವಾತ್ಮಕವಾದುದು’ ಎಂಬ ಮಾತುಗಳನ್ನು ಕೇಳುತ್ತಿರುತ್ತೇವೆ. ಹೀಗೆ ದೇಶ ಭಾಷೆಗಳಾಚೆಗೆ ಎಲ್ಲರನ್ನು ತಲುಪುವ ವಿಶೇಷ ಗುಣ ಸಂಗೀತಕ್ಕಿದೆ, ಏಕೆಂದರೆ ಅದು ಭಾಷೆಯನ್ನು ಸಂಕೋಲೆಯಾಗಿ ಮಾಡಿಕೊಂಡಿಲ್ಲ. ಆದರೆ ತಾಂತ್ರಿಕವಾಗಿ ಸುಸಜ್ಜಿತವಾದ, ಶ್ರೇಷ್ಠ ಅಭಿರುಚಿ ತಮ್ಮದೆಂದುಕೊಂಡ ಕೇಳುಗರಿಂದ ತುಂಬಿಕೊಂಡಿರುವ ಸಭಾಂಗಣದಲ್ಲಿ ಕುಳಿತಾಗೆಲ್ಲ ಈಚೆಗೆ ವಿಚಿತ್ರ ಕಸಿವಿಸಿಯಾಗುತ್ತದೆ. ಇಂತಹ ವಿಶ್ವಾತ್ಮಕ ಭಾಷೆಯಾದ ಸಂಗೀತದ ಒಂದು ಪ್ರಭೇದವಾದ ‘ಶಾಸ್ತ್ರೀಯ’ ಎನಿಸಿಕೊಂಡಿರುವ ಸಂಗೀತ ಕೆಲವೇ ನಿರ್ದಿಷ್ಟ ಗುಂಪಿನ ಜನರ ಅಭಿರುಚಿಯ ಸಂಗತಿಯಾಗಷ್ಟೇ ಸೀಮಿತಗೊಳ್ಳುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತದೆ. ಹೀಗೆ ನನ್ನಲ್ಲಿ ಎದ್ದ ಹಲವು ಪ್ರಶ್ನೆ ಮತ್ತು ಆತಂಕಗಳನ್ನು ಅವಲೋಕಿಸುವ ಲೌಡ್ ಥಿಂಕಿಂಗ್‍ನ ರೂಪದಲ್ಲಿ ಇಲ್ಲಿನ ನನ್ನ ಅಭಿಪ್ರಾಯಗಳಿವೆ ಎಂಬುದನ್ನು ಮೊದಲಿಗೆ ಸ್ಪಷ್ಟಪಡಿಸುತ್ತೇನೆ.

ಕಲೆಯ ಹಾದಿ ಆತ್ಮಸಾಕ್ಷಾತ್ಕಾರದ ಹಾದಿ ಎಂದು ಭಾವಿಸಿಕೊಂಡಾಗ ಅದು ವೈಯಕ್ತಿಕ ಸಾಧನೆಯ ಪಥವಾಗುತ್ತದೆ. ತನ್ನ ಸಾಧನೆ, ಅದರ ಮೂಲಕ ಪಡೆಯುವ ಪಕ್ವತೆ, ಸಹೃದಯನೊಂದಿಗೆ ನಡೆಸುವ ಅನುಸಂಧಾನ ಇವು ಒಂದು ವಲಯದೊಳಗೆ ನಡೆಯುವಂಥವು. ಇದರಾಚೆಗೆ ಒಂದು ಸಾಮುದಾಯಿಕ ಆಯಾಮ ಸಂಗೀತ ಸೇರಿದಂತೆ ಲಲಿತಕಲೆಗಳಿಗೆ ಇದೆ. ಇದು ಸಂಸ್ಕಾರ, ರಂಜನೆ, ಭಕ್ತಿ, ಆತ್ಮ ನಿರೀಕ್ಷಣೆಯಾಚೆಗಿನ ಎಲ್ಲರೊಂದಿಗೆ ಒಂದಾಗಿ ತನ್ನನ್ನು ಗುರುತಿಸಿಕೊಳ್ಳುವ ಬಗೆ. ಆದರೆ ಶಾಸ್ತ್ರೀಯ ಸಂಗೀತದ ಇಂದಿನ ಬೆಳವಣಿಗೆಯನ್ನು ಕಂಡಾಗ ಅದು ವೈಯಕ್ತಿಕ ಸಾಧನೆಯ, ಶೋಧನೆಯ ದಾರಿಯಾಗಿ ಕಾಣುತ್ತಿದೆ. ಒಂದೇ ಬಗೆಯ ಶ್ರೋತೃಗಳು, ಸಂಘಟನೆ, ಪ್ರಸ್ತುತಿಯಲ್ಲಿ ಏಕರೂಪತೆ ಕಾಣುತ್ತಿದೆ. ಇವುಗಳು ಬಹುತ್ವದಿಂದ ದೂರವಾಗಿವೆ.

ವೈವಿಧ್ಯ ಮತ್ತು ಬಹುತ್ವ ಪ್ರಜಾಪ್ರಭುತ್ವದ ಸಂದರ್ಭದಲ್ಲಿ ಗಮನಾರ್ಹವಾದ ಮತ್ತು ಮುಖ್ಯವಾದ ಸಂಗತಿಗಳು. ಕೇವಲ ಹಾಡುವ ಬಗೆ, ಕೌಶಲಗಳಲ್ಲಿ ಮಾತ್ರ ವೈವಿಧ್ಯ ವ್ಯಕ್ತವಾದರೆ ಸಾಕೆ? ಕುಮಾರ ಗಂಧರ್ವರು ತತ್ವಪದಗಳೊಂದಿಗೆ ಮಾಡಿಕೊಂಡ ಅನುಸಂಧಾನ, ಹಿಂದೆ ಶಾಸ್ತ್ರೀಯ ಸಂಗೀತದೊಡನೆ ನಾಟ್ಯ ಸಂಗೀತದ ಅಂಶಗಳು ಬೆರೆತು ಪರಸ್ಪರ ಕೊಡುಕೊಳ್ಳುಗಳ ಮೂಲಕ ಶ್ರೀಮಂತಗೊಂಡ ಬಗೆ ಇವುಗಳಿಂದ ಕಲಿಯುವುದು ಸಾಕಷ್ಟಿದೆ. ವೈವಿಧ್ಯ ಮತ್ತು ಒಳಗೊಳ್ಳುವಿಕೆ ಶಾಸ್ತ್ರೀಯ ಸಂಗೀತದ ಕಸುವನ್ನು ಹೆಚ್ಚಿಸುತ್ತದೆ.

ಶಾಸ್ತ್ರೀಯ ಸಂಗೀತದ ಬೇರುಗಳಿರುವುದು ಸಮುದಾಯದಲ್ಲಿ. ಆದರೆ ಇಂದು ಅದು ಬೇರಿನಿಂದ ಸಾಕಷ್ಟು ದೂರ ಕ್ರಮಿಸಿದೆ. ತಂತ್ರಜ್ಞಾನದ ಬೆಂಬಲದೊಂದಿಗೆ ಹೊಸತನಕ್ಕೆ ಒಡ್ಡಿಕೊಂಡಿರುವ ಸಂಗೀತ ಮತ್ತೆ ಬೇರುಗಳೆಡೆಗೆ ಸಾಗದ ಹೊರತು ಶುಷ್ಕವಾಗಿಬಿಡುತ್ತದೆ. ಹಿಂದಿನ ಗಂಗೂಬಾಯಿಯವರಲ್ಲಾಗಲೀ, ಭೀಮಸೇನ ಜೋಶಿಯವರಲ್ಲಾಗಲೀ ಕಾಣುವ ಕಸುವು ಇಂದಿನ ಹಾಡುಗಾರರಲ್ಲಿ ಕಾಣಲಾಗುತ್ತಿಲ್ಲ ಎಂದು ಹೇಳುವಾಗ ನಮ್ಮ ಗಮನ ಸಾಗಬೇಕಾದುದು ಈ ಕಡೆಗೆ. ವಿಶಾಲವಾಗುವ, ಎತ್ತರಕ್ಕೇರುವ ಹುಮ್ಮಸ್ಸಿನಲ್ಲಿ ಆಳಕ್ಕಿಳಿಯುವ, ಬೇರುಗಳನ್ನು ತಡಕುವ ಹಾದಿ ಹಿನ್ನಡೆಯ ಹಾದಿಯಲ್ಲ; ಅದು ಜೀವರಸವನ್ನು ಮತ್ತೆ ಪಡೆಯುವ ಹಾದಿಯಾಗುತ್ತದೆ. ಹೀಗೆ ಮತ್ತೆ ಮತ್ತೆ ಅದು ಭೇಟಿ ನೀಡಬೇಕಾಗಿರುವುದು ಮರಳಿ ಸಮುದಾಯದ ಕಡೆಗೇ.

ಸಂಗೀತ ಹೃದಯದ ಭಾಷೆ ಎನ್ನುವುದು ಅದರ ನಿರೂಪಣೆಗೆ ಸಂಬಂಧಿಸಿದ ಸಂಗತಿ. ಹೃದಯದ ಭಾಷೆಗೆ ವಿಚಾರದ ಹಂಗಿಲ್ಲ ಎನ್ನುವುದೂ ನಿಜ. ಆದರೆ ಹೃದಯ ತಟ್ಟುವುದರಾಚೆಗೆ ನಮ್ಮ ಪ್ರಜ್ಞೆಯನ್ನು ತಟ್ಟಬಲ್ಲ ಗುಣ, ಶಕ್ತಿ ಸಂಗೀತಕ್ಕಿಲ್ಲವೇ? ಆದರೆ ಇಂದು ಸಂಗೀತ ಬಲ್ಲವರಲ್ಲಿ ಬಹುಪಾಲು ಜನ ಅದರ ವೈಚಾರಿಕ ಆಯಾಮದ ಕುರಿತು ಯೋಚಿಸಿದಂತಿಲ್ಲ. ಯಾವುದೇ ಸಾಮಾಜಿಕ ಸಂಗತಿಗಳ ಬಗೆಗೆ ಅವರ ದನಿ ಕೇಳುವುದಿಲ್ಲ. ಇಂದಿನ ರಿಯಾಲಿಟಿ ಶೋಗಳ, ಸಿನೆಮಾಗಳ ಜನಪ್ರಿಯ ಹಾಡುಗಾರರಿಂದ ಹಿಡಿದು ಶಾಸ್ತ್ರೀಯ ಸಂಗೀತಗಾರರವರೆಗೆ ಸಾಮಾಜಿಕ ಸಂಗತಿಗಳಿಗೆ ಸಂಗೀತಗಾರರು ಸ್ಪಂದಿಸಿದ್ದು ಕಡಿಮೆ. ಸಂಗೀತಕ್ಕಿರುವ ಸಾಮಾಜಿಕ ಆಯಾಮ ಸಹೃದಯರ ರಂಜನೆಗಷ್ಟೇ ಸೀಮಿತವೇ? ಅದರಾಚೆಗೆ ಸಮಾಜದೊಂದಿಗೆ ಸಂಗೀತಗಾರರು ಯಾವ ಬಗೆಯಲ್ಲಿ ಸ್ಪಂದಿಸಬಹುದು? ಸಂಗೀತ ಕಲಿಕೆ, ಕೇಳ್ಮೆ ಮತ್ತು ಪ್ರಸ್ತುತಿಯಲ್ಲಿ ಸಂಗೀತದ ಪ್ರಜಾಪ್ರಭುತ್ವೀಕರಣ ನಡೆಸಬಹುದಾದ ಬಗೆ ಯಾವುದು?

ಈ ಪ್ರಶ್ನೆಗಳೊಂದಿಗೆ ಹೊರಟಾಗ ಸಂಗೀತ ದೈವಿಕವಾದದ್ದು, ಅದು ಆತ್ಮದ ಭಾಷೆ ಎಂಬೆಲ್ಲ ಮಾತುಗಳನ್ನು ಮರುಪ್ರಶ್ನೆಗೊಳಪಡಿಸಬೇಕಾಗುತ್ತದೆ. ಸಂಗೀತ ಶ್ರೇಷ್ಠವಾದ ಕಲೆ ನಿಜ, ಅದಕ್ಕೆ ಅದರದೇ ಆದ ಸ್ಥಾನ, ಗೌರವ ಇದೆ. ಆದರೆ ಯಾವುದನ್ನೇ ಆಗಲಿ ಅದು ಉಳಿದವುಗಳಿಗಿಂತ ಶ್ರೇಷ್ಠ ಎನ್ನುವ ಮಾತು ಶ್ರೇಣೀಕರಣವನ್ನು ಪೋಷಿಸುವ ಮಾತಾಗುವಂತೆಯೇ ನಿಧಾನಕ್ಕೆ ಶ್ರೇಷ್ಠವೆನಿಸಿಕೊಂಡದ್ದರ ಬೇರನ್ನು ಶಿಥಿಲಗೊಳಿಸುವ ಬಗೆಯೂ ಆಗುತ್ತದೆ. ನಮ್ಮ ಶಾಸ್ತ್ರೀಯ ಪ್ರಭೇದಗಳು ಶ್ರೇಷ್ಠತೆಯ ಕಲ್ಪನೆ ಮತ್ತು ವ್ಯಸನದಿಂದ ಹೊರಬಂದ ಹೊರತು ಅವುಗಳಿಂದ ಹೊಸದೇನನ್ನೂ ನಿರೀಕ್ಷಿಸುವುದು ಸಾಧ್ಯವಾಗುವುದಿಲ್ಲ.

ಇಂದಿಗೂ ಶಾಸ್ತ್ರೀಯ, ಜನಪದ ಮತ್ತು ಜನಪ್ರಿಯ ಸಂಗೀತ ಇವುಗಳ ನಡುವೆ ಸ್ಪಷ್ಟ ಶ್ರೇಣೀಕರಣ ಮನೆ ಮಾಡಿರುವುದು ಕಾಣುತ್ತದೆ. ಯಾವುದೇ ಸಾಂಸ್ಕೃತಿಕ ಉತ್ಸವ ನಡೆಯಲಿ, ಇವುಗಳಿಗೆ ದೊರೆಯುವ ವೇದಿಕೆಗಳೇ ಬೇರೆ, ಇವುಗಳ ಕೇಳುಗ ವರ್ಗವೇ ಬೇರೆ. ಅವುಗಳ ನಡುವಣ ವೈಶಿಷ್ಟ್ಯವನ್ನು ಮೆಚ್ಚುತ್ತಲೇ ಒಂದು ಪ್ರಶ್ನೆಯನ್ನು ಹಾಕಿಕೊಳ್ಳಬೇಕಾಗಿದೆ. ಈ ಬಗೆಯ ‘ವಾಟರ್ ಟೈಟ್ ಕಂಪಾರ್ಟ್‍ಮೆಂಟ್ಸ್’ ಪರಸ್ಪರ ಪ್ರಭಾವ ಪಡೆಯುವುದರಿಂದ ನಮ್ಮನ್ನು ತಡೆಯುತ್ತದೆಯೇ? ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಜನರಿಗೆ ಬೇಕಾದಂತೆ ಹಾಡುವವರನ್ನು ಜನರನ್ನು ಓಲೈಸುವವರು ಎಂದು ಅಸಡ್ಡೆಯಿಂದ ಕಾಣುವವರಿದ್ದಾರೆ. ಕಟ್ಟುನಿಟ್ಟಾಗಿ ಪಾಠಾಂತರಕ್ಕೆ ಕಟ್ಟುಬಿದ್ದವರಿದ್ದಾರೆ. ಇವು ಸಂಗೀತವನ್ನು ಸದಾ ಒಂದು ಅಲ್ಪಸಂಖ್ಯಾತ ವರ್ಗದ ಚಟುವಟಿಕೆಯಾಗಿ ನಿರ್ದಿಷ್ಟಗೊಳಿಸುತ್ತದೆಯೇ? ಇದರಿಂದ ಸಂಗೀತ ಕ್ಷೇತ್ರ ಪಡೆಯುವುದೇನು ಮತ್ತು ಕಳೆದುಕೊಳ್ಳುವುದೇನು?

ಈ ಬಗ್ಗೆ ಇಂದು ಸಂಗೀತ ಕ್ಷೇತ್ರದಲ್ಲಿ ಮನೆಮಾಡಿರುವುದು ತುಂಬಾ ಸರಳೀಕೃತವಾದ ಗ್ರಹಿಕೆ. ಜನರನ್ನು ಮೆಚ್ಚಿಸಲು ಹೋದಾಗ ಸಂಗೀತ ಜಾಳುಜಾಳಾಗುತ್ತದೆ, ಜನಪ್ರಿಯತೆಗೆ ಮಾರುಹೋದ ಸಂಗೀತಗಾರ ತನ್ನ ಗಟ್ಟಿತನವನ್ನು ಕಳೆದುಕೊಳ್ಳುತ್ತಾನೆ ಎಂಬ ಭಾವನೆ. ಈ ತಿಳುವಳಿಕೆಯನ್ನು ಮರುಪರಿಶೀಲನೆಗೆ ಒಡ್ಡಬೇಕಾಗುತ್ತದೆ. ಶುದ್ಧ ಎಂಬುದು ಯಾವುದು? ಸಂಗೀತ ಹಿಂದೆಂದೋ ಇದ್ದಂತೆ ಇಂದು ಇಲ್ಲ. ಕಾಲಕ್ಕನುಗುಣವಾಗಿ ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ಬದಲಾವಣೆಗಳನ್ನು ಒಳಗು ಮಾಡಿಕೊಂಡಿದೆ. ಅಲ್ಲದೆ, ತಮ್ಮ ತನವನ್ನು ಬಿಟ್ಟುಕೊಡದೆಯೂ ಜನರನ್ನು ಸೆಳೆಯುವ ಅನ್ನುವುದಕ್ಕಿಂತ ಹೆಚ್ಚಾಗಿ ಒಳಗು ಮಾಡಿಕೊಳ್ಳುವ ಬಗೆಯಲ್ಲಿ ಸಂಗೀತದ ಪ್ರಸ್ತುತಿ ಸಾಧ್ಯವಿಲ್ಲವೇ? ಒಂದು ನಿರ್ದಿಷ್ಟ  ವರ್ಗಕ್ಕೆ ಸೀಮಿತವಾಗಿದ್ದಾಗ ಅದು ಬಹಳ ಮುಂದೆ ಹೋಗುವುದು ಕಷ್ಟವಾಗುತ್ತದೆ. ಕಾಲಕ್ಕನುಗುಣವಾಗಿ ಬದಲಾಗುವ ಬಗೆಯಲ್ಲಿ ಸಂಗೀತ ಹೆಚ್ಚು ಜನಮುಖಿಯಾಗಬೇಕು. ಇಂದಿನ ಸಂಗೀತದ ಕುರಿತು ಹಳಹಳಿಕೆಯ ಮಾತಾಡುವಾಗ ಈ ಸಂಗತಿ ನಮ್ಮ ದೃಷ್ಟಿಯಿಂದ ತಪ್ಪಿ ಹೋಗಬಾರದು. ಸಂಗೀತದ ಎಲ್ಲ ಪ್ರಭೇದಗಳ ಪ್ರಜಾಪ್ರಭುತ್ವೀಕರಣ ಸಮಾನತೆಯ ದೃಷ್ಟಿಯಿಂದ ಮಾತ್ರವಲ್ಲ, ಸಂಗೀತದ ಬೆಳವಣಿಗೆಯ ದೃಷ್ಟಿಯಿಂದಲೂ ಮುಖ್ಯವಾಗುತ್ತದೆ.

ನೀವು ಪದವೀಧರರೇ? ನಿಮ್ಮ ಜವಾಬ್ದಾರಿ ನಿರ್ವಹಿಸಿ…

ಸ್ನೇಹಿತರೆ,

ಇದನ್ನು ನಾನು ರಾಮಚಂದ್ರ ಗೌಡ ಎಂಬ ಮಾಜಿ ಸಚಿವರ ಪ್ರಸ್ತಾಪದೊಂದಿಗೆ ಆರಂಭಿಸುತ್ತೇನೆ. ಕಾಸಗಲ ಕುಂಕುಮ ಇಟ್ಟುಕೊಂಡೇ ಜನರಿಗೆ ಕಾಣಿಸುವ ಈ ಕುಂಕುಮಧಾರಿ ನಿಮಗೆ ಗೊತ್ತಿರಲೇಬೇಕು. ರೇಣುಕಾಚಾರ್ಯ ಎಂಬ ಹಾಲಿ ಮಂತ್ರಿ ಯಡ್ಡ್‌ಯೂರಪ್ಪನವರಿಗೆ ಜೊತೆಬಿಡದಂತೆ ಕಾಣಿಸಿಕೊಳ್ಳುತ್ತಿರುವುದಕ್ಕಿಂತ ಮೊದಲು ಯಡ್ಡ್‌ಯೂರಪ್ಪನವರ ಜೊತೆಗೆ ಸದಾ ಕಾಣಿಸುತ್ತಿದ್ದವರು ಇವರು. ಒಂದೂವರೆ ವರ್ಷದ ಹಿಂದಿನ ತನಕ ಬಿಜೆಪಿ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದವರು.

ಪ್ರತಿ ಸರ್ಕಾರ ಬಗ್ಗೆ ಜನರಿಗೆ ಅನ್ನಿಸುತ್ತಿರುತ್ತದೆ, ‘ಇದು ಇತಿಹಾಸದಲ್ಲಿಯೇ ಕೆಟ್ಟ ಸರ್ಕಾರ,’ ಎಂದು. ಆದರೆ ಈಗಿನ ಹಾಲಿ ಬಿಜೆಪಿ ಸರ್ಕಾರದ ಬಗ್ಗೆಯಂತೂ ಆ ಮಾತನ್ನು ಪೂರ್ವಾಗ್ರಹಗಳಿಲ್ಲದೇ ಹೇಳಬಹುದು. ಇದಕ್ಕಿಂತ ಕೆಟ್ಟ ಸರ್ಕಾರ ಹಿಂದೆಂದೂ ಬಂದಿರಲಿಲ್ಲ. ಒಂದು ಕಾಲದಲ್ಲಿ ಕರ್ನಾಟಕದಲ್ಲಿ ಅತಿ ಭ್ರಷ್ಟ ಮುಖ್ಯಮಂತ್ರಿ ಎನ್ನಿಸಿದ್ದ ಬಂಗಾರಪ್ಪನವರೇ ಅವರು ತೀರಿಕೊಳ್ಳುವ ಹೊತ್ತಿಗೆ ದೇವಮಾನವರಾಗಿ ಕಾಣಿಸುತ್ತಿದ್ದರು. ಅದಕ್ಕೆ ಕಾರಣ ಬಂಗಾರಪ್ಪ ಭ್ರಷ್ಟಾಚಾರಿಗಳಲ್ಲ ಎಂದು ರುಜುವಾತಾಯಿತು ಎಂದಲ್ಲ. ಈ ಬಿಜೆಪಿ ಸರ್ಕಾರದ ಮುಂದೆ ಹಿಂದಿನ ದರೋಡೆಕೋರರು ಭ್ರಷ್ಟರು ದುಷ್ಟರೆಲ್ಲ ಸಂತರಾಗಿ ಕಾಣಿಸುತ್ತಿದ್ದಾರೆ ಎಂದು ಹೇಳಿದರೆ ಅಷ್ಟೇ ಸಾಕು. ಉಳಿದದ್ದು ತಾನಾಗಿ ಅರ್ಥವಾಗಬೇಕು.

ಇಂತಹ ಬ್ರಹ್ಮಾಂಡ ಭ್ರಷ್ಟ ಸರ್ಕಾರದಲ್ಲೂ, ಅಪಮೌಲ್ಯ ಮತ್ತು ಅನೀತಿಗಳನ್ನೆ ಹಾಸು ಹೊದ್ದು ಉಸಿರಾಡುತ್ತಿರುವ ಈ ಸರ್ಕಾರದಲ್ಲೂ ಭ್ರಷ್ಟಾಚಾರದ ವಿಚಾರಕ್ಕೆ ಒಬ್ಬ ಮಂತ್ರಿಯ ರಾಜೀನಾಮೆ ಕೇಳಿ ಪಡೆಯಲಾಯಿತು. ಅಂದರೆ ಆ ಹಗರಣ ಇನ್ನೆಷ್ಟು ಸ್ಪಷ್ಟವಾಗಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಮೈಸೂರು ಮತ್ತು ಹಾಸನದ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸಿಬ್ಬಂದಿ ನೇಮಕಾತಿಯಲ್ಲಿ ನಡೆದ ಭ್ರಷ್ಟ ರೀತಿನೀತಿಗಳ, ನೌಕರಿ ಮಾರಾಟದ, ಹಗರಣ ಅದು. ಅದರ ರೂವಾರಿ ಈ ರಾಮಚಂದ್ರ ಗೌಡರು. ಬಿಜೆಪಿಯಂತಹ ಬಿಜೆಪಿಗೇ, ಯಡ್ಡ್‌ಯೂರಪ್ಪನಂತಹ ಯಡ್ಡ್‌ಯೂರಪ್ಪನವರಿಗೇ ಆ ಹಗರಣವನ್ನು, ರಾಮಚಂದ್ರ ಗೌಡರನ್ನು ಸಮರ್ಥಿಸಿಕೊಳ್ಳಲಾಗಲಿಲ್ಲ. ರಾಮಚಂದ್ರ ಗೌಡರ ರಾಜೀನಾಮೆಯನ್ನು ಬಲವಂತವಾಗಿ ಪಡೆಯಬೇಕಾಯಿತು. ಗೌಡರ ಸಚಿವ ಸ್ಥಾನ ಹೋಯಿತು. ಆದರೆ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಸಂಪುಟದರ್ಜೆಯ ಸ್ಥಾನಮಾನ ಸಿಕ್ಕಿತು. ಆ ಹಗರಣದ ಬಗ್ಗೆ ವಿಚಾರಣೆ ನಡೆಯಲಿಲ್ಲ. ಆರೋಪ ಸುಳ್ಳು ಎಂದು ಸಾಬೀತಾಗಲಿಲ್ಲ. ಸಚಿವ ಸ್ಥಾನ ಕಿತ್ತುಕೊಂಡು ಮತ್ತೊಂದು ಸಂಪುಟ ದರ್ಜೆ ಸ್ಥಾನಮಾನ ಕೊಟ್ಟದ್ದೇ ಶಿಕ್ಷೆ ಎಂದುಕೊಳ್ಳಬೇಕಾದ ಬುದ್ದಿವಂತಿಕೆ ಜನರದ್ದು. ಇನ್ನು, ಅವರ ಶಾಸಕ ಸ್ಥಾನಕ್ಕಂತೂ ಯಾವುದೇ ಸಮಸ್ಯೆಯಾಗಲಿಲ್ಲ.

ಅಂದ ಹಾಗೆ, ಈ ರಾಮಚಂದ್ರ ಗೌಡರು ಬೆಂಗಳೂರು ನಗರ ಮತ್ತು ಜಿಲ್ಲೆಯ ಪದವೀಧರರನ್ನು ಪ್ರತಿನಿಧಿಸುತ್ತಿರುವ ವಿಧಾನಪರಿಷತ್ ಶಾಸಕ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ನಮ್ಮ ಅಕ್ಷರಸ್ತ, ವಿದ್ಯಾವಂತ, ಘನತೆವೆತ್ತ, ಬುದ್ದಿವಂತ, ಜವಾಬ್ದಾರಿಯುತ ಪದವೀಧರರು ನೇರವಾಗಿ ಮತ್ತು ಪರೋಕ್ಷವಾಗಿ ಆಯ್ಕೆ ಮಾಡಿಕೊಂಡಿರುವ ತಮ್ಮ ಪ್ರತಿನಿಧಿ.

ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಪದವೀಧರರು ಒಮ್ಮೆ ತಲೆತಗ್ಗಿಸಿದರೆ ಅದು ಅವರ ಒಳ್ಳೆಯತನವನ್ನು ತೋರಿಸುತ್ತದೆ.

ಆದರೆ ತಲೆತಗ್ಗಿಸಿದವರು ಮತ್ತು ಇಂತಹ ಕೃತ್ಯದಲ್ಲಿ ಭಾಗಿಯಾಗಬಾರದು ಎಂದುಕೊಂಡವರಿಗೆ ಒಂದು ಅವಕಾಶ ಇನ್ನು ನಾಲ್ಕು ತಿಂಗಳಿನಲ್ಲಿ ಬರಲಿದೆ. ಇದೇ ರಾಮಚಂದ್ರ ಗೌಡರು ಬಿಜೆಪಿಯಿಂದ ಬೆಂಗಳೂರಿನ ಪದವೀಧರರಿಂದ ಪುನರಾಯ್ಕೆ ಅಗಲು ಹೊರಟಿದ್ದಾರೆ.

ನೀವು ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಪದವೀಧರರಾಗಿದ್ದರೆ ಬರಲಿರುವ ಪದವೀಧರ ಕ್ಷೇತ್ರದ ಚುನಾವಣೆಯ ಪ್ರಕ್ರಿಯೆಯಲ್ಲಿ ಜವಾಬ್ದಾರಿಯಿಂದ ಪಾಲ್ಗೊಳ್ಳಿ ಮತ್ತು ಮತ ಚಲಾಯಿಸಿ ಎಂದು ಆಗ್ರಹಿಸಿದರೆ ಅದು ಕಠಿಣವಾದ ಅಥವ ಅಹಂಕಾರದ ಆಗ್ರಹವಲ್ಲ ಎಂದು ಭಾವಿಸುತ್ತೇನೆ.

ಅಂದ ಹಾಗೆ, ಮಿಕ್ಕ ಪಕ್ಷಗಳ ಅಭ್ಯರ್ಥಿಗಳೂ ರಾಮಚಂದ್ರ ಗೌಡರಿಗಿಂತ ಉತ್ತಮರು ಎಂದೇನೂ ನಾನು ಹೇಳುವುದಿಲ್ಲ. ಆದರೆ ಅವರು ಹೊಸಬರೇ ಆಗಿರುತ್ತಾರೆ. ಕನಿಷ್ಟ “ಅನುಮಾನದ ಲಾಭ”ವಾದರೂ (Benefit of the Doubt) ಅವರಿಗೆ ಸಿಗಬೇಕು. ಮತ್ತು ನಿಲ್ಲಲಿರುವ ಅಭ್ಯರ್ಥಿಗಳಲ್ಲಿ ಇರುವುದರಲ್ಲೇ ಉತ್ತಮರನ್ನು ಆರಿಸುವ ಜವಾಬ್ದಾರಿ ನಮ್ಮದು. ಮತ್ತು ನಾವು ಈ ಭ್ರಷ್ಟರಿಗೆ ಮತ್ತು ಅಯೋಗ್ಯರಿಗೆ ವಿರುದ್ಧವಾಗಿ ಚಲಾಯಿಸುವ ಒಂದೊಂದು ಮತಕ್ಕೂ ಅವರಿಗೆ ಬೀಳುವ ಮತಕ್ಕಿಂತ ಹೆಚ್ಚಿನ ಮೌಲ್ಯ, ನೈತಿಕತೆ ಮತ್ತು ಪ್ರಾಮಾಣಿಕತೆ ಇರುತ್ತದೆ.

ಆದರೆ, ನೀವು ಪದವೀಧರರಾಗಿದ್ದರೂ ಮತ ಚಲಾಯಿಸಲು ಮೊದಲು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಅದು ಬಹಳ ಸುಲಭ. ಒಂದು ಅರ್ಜಿ ತುಂಬಬೇಕು. ಅದರಲ್ಲಿ ನಿಮ್ಮ ಹೆಸರು, ವಿಳಾಸ, ನಿಮ್ಮ ಪದವಿ ಮತ್ತು ಅದನ್ನು ಪಡೆದ ವರ್ಷ, ಇಷ್ಟೇ ತುಂಬಬೇಕಿರುವುದು. (ಅರ್ಜಿಯನ್ನು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.) ಇಷ್ಟು ತುಂಬಿದ ಅರ್ಜಿಯನ್ನು ನಿಮ್ಮ ಪದವಿ ಪ್ರಮಾಣ ಪತ್ರ ಮತ್ತು ನಿಮ್ಮ ವಿಳಾಸವನ್ನು ದೃಢೀಕರಿಸುವ ದಾಖಲೆಯ ಎರಡು ಪ್ರತಿಗಳೊಂದಿಗೆ (ವೋಟರ್ ಕಾರ್ಡ್/ರೇಷನ್ ಕಾರ್ಡ್/ವಿದ್ಯುತ್ ಅಥವ ಫೋನ್ ಬಿಲ್/ಬಾಡಿಗೆ ಕರಾರು ಪತ್ರ, ಇತ್ಯಾದಿಗಳಲ್ಲಿ ಯಾವುದಾದರೂ ಒಂದು) ಸಂಬಂಧಪಟ್ಟ ಸರ್ಕಾರಿ ಕಚೇರಿಯಲ್ಲಿ ಕೊಟ್ಟರೆ ಮುಗಿಯಿತು. ಇದು ಅಸಾಧ್ಯವೂ ಅಲ್ಲ. ಮಾಡದೆ ಸುಮ್ಮನಿದ್ದುಬಿಡುವಷ್ಟು ಅಪ್ರಾಮಾಣಿಕರೂ ಪಲಾಯನವಾದಿಗಳೂ ನೀವಲ್ಲ. ಅಲ್ಲವೇ?

ಮತ್ತು, ಇದು ಕೇವಲ ಬೆಂಗಳೂರಿನ ಪದವೀಧರರಿಗಷ್ಟೇ ಸೀಮಿತವಲ್ಲ. ರಾಜ್ಯದ ಎಲ್ಲಾ ಪದವೀಧರರಿಗೂ ಸಂಬಂಧಿಸಿದ್ದು. ಪ್ರತಿಯೊಬ್ಬ ಪದವೀಧರನಿಗೂ ಒಬ್ಬ ವಿಧಾನಪರಿಷತ್ ಶಾಸಕನನ್ನು ಆಯ್ಕೆ ಮಾಡಿಕೊಳ್ಳುವ ಒಂದು ವೋಟ್ ಇದೆ. ಹೆಸರು ನೊಂದಾಯಿಸಿ. ಚುನಾವಣೆಯ ದಿನ ಯೋಗ್ಯರಿಗೆ ಮತ ಚಲಾಯಿಸಿ. ಈ ಅಸಂಗತ ಸಮಯದಲ್ಲಿ, ಅಪ್ರಾಮಾಣಿಕತೆ, ಭ್ರಷ್ಟಾಚಾರ ತಾಂಡವನೃತ್ಯ ಮಾಡುತ್ತಿರುವ ಕರ್ನಾಟಕದ ಈ ಅಸಹಾಯಕ ಪರಿಸ್ಥಿತಿಯಲ್ಲಿ ಒಂದಷ್ಟು ಯೋಗ್ಯರನ್ನು ಪ್ರಾಮಾಣಿಕರನ್ನು ಶಾಸನಸಭೆಗೆ ಕಳುಹಿಸಿ. ಹಳ್ಳಿಯ ಜನ, ಸ್ಲಮ್ಮಿನ ಜನ, ಬಡವರು, ಜಾತಿವಾದಿಗಳು, ದುಡ್ಡಿಗೆ ಮತ್ತು ಜಾತಿಗೆ ಮರುಳಾಗಿ ವೋಟ್ ಮಾಡುತ್ತಾರೆ ಅನ್ನುತ್ತೀರಲ್ಲ, ಅವರ್‍ಯಾರಿಗೂ ಅವಕಾಶ ಇಲ್ಲದ ಈ ಚುನಾವಣೆಯಲ್ಲಿ ನೀವು ಹಾಗೆ ಅಲ್ಲ ಎಂದು ನಿರೂಪಿಸಿ. ಮಾರ್ಗದರ್ಶಕರಾಗಿ. ಮುಂದಾಳುಗಳಾಗಿ. ನೀವು ಪಡೆದ ಪದವಿಗೂ ಒಂದು ಘನತೆ ಇದೆ ಎಂದು ತೋರಿಸಿ.

ನೀವು ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಪದವೀಧರರಾದರೆ, ಈ ವೆಬ್‌ಸೈಟಿನಲ್ಲಿ ನಿಮ್ಮ ತುಂಬಿದ ಅರ್ಜಿ ಮತ್ತು ಸಲ್ಲಿಸಬೇಕಾದ ಸರ್ಕಾರಿ ಕಚೇರಿ ಮತ್ತು ವಿಳಾಸ ಎಲ್ಲವೂ ಸುಲಭವಾಗಿ ಲಭ್ಯವಿದೆ. ಅದನ್ನು ಬಳಸಿಕೊಳ್ಳಿ. ನಗರದ ಹೊರಗಿರುವವರಾದರೆ, ನಿಮ್ಮ ತಾಲ್ಲೂಕಿನ ತಹಸಿಲ್ದಾರ್ ಕಚೇರಿ ಅರ್ಜಿ ತಲುಪಿಸಬೇಕಾದ ಸ್ಥಳ ಎನ್ನಿಸುತ್ತದೆ. ನಿಮ್ಮ ತಹಸಿಲ್ದಾರ್ ಕಚೇರಿಗೆ ಫೋನ್ ಮಾಡಿ ತಿಳಿದುಕೊಳ್ಳಿ.  ಕೊನೆಯ ದಿನಾಂಕ ಎಂದೆಂದು ಯಾರೂ ಹೇಳುತ್ತಿಲ್ಲ. ಹಾಗಾಗಿ ಸಾಧ್ಯವಾದಷ್ಟು ಬೇಗ ಮಾಡಿ.

ಸ್ಪೈಡರ್‌ಮ್ಯಾನ್ ಸಿನೆಮಾದಲ್ಲಿ ಒಂದು ವಾಕ್ಯ ಬರುತ್ತದೆ: “With great power comes great responsibility.” ನಾವು ಪಡೆದುಕೊಳ್ಳುವ ಪದವಿಯೊಂದಿಗೆ ನಮಗೆ ಜವಾಬ್ದಾರಿಗಳೂ ಅವಕಾಶಗಳೂ ಅನುಕೂಲಗಳೂ ಬರುತ್ತವೆ. ಆ ಜವಾಬ್ದಾರಿಗಳನ್ನು ನಿಭಾಯಿಸಲು ನಾವು ಅನರ್ಹರು ಅಥವ ಆಗದವರು ಎಂದಾದರೆ ಆ ಪದವಿಗೂ ಅನುಕೂಲಗಳಿಗೂ ನಾವು ಅನರ್ಹರು. ಇನ್ನೊಬ್ಬರನ್ನು ದೂರುತ್ತ ಸಿನಿಕರಾಗುತ್ತ ಇರುವುದಕ್ಕಿಂತ ನಾವು ನಮ್ಮ ನಾಗರಿಕ ಜವಾಬ್ದಾರಿಗಳನ್ನು ನಿಭಾಯಿಸುತ್ತಿರೋಣ.

ಇಷ್ಟನ್ನು ಈ ಸಂದರ್ಭದಲ್ಲಿ ಕರ್ನಾಟಕದ ಪದವೀಧರರಿಂದ ಬಯಸುವುದು ತಪ್ಪೆಂದಾಗಲಿ ಅಪರಾಧವೆಂದಾಗಲಿ ನಾನು ಭಾವಿಸುತ್ತಿಲ್ಲ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

ತಲೆಕೆಟ್ಟವರಿಗೆ, ತಿರುಬೋಕಿಗಳಿಗೆ ಮಾದರಿಯಾಗಿರುವ ನಾಡು


– ಪರಶುರಾಮ ಕಲಾಲ್


 

ಅದೊಂದು ಪವಿತ್ರ ಸ್ಥಳ. ರಾಜ್ಯದ ನೀತಿ, ನಿಯಮಗಳನ್ನು ರೂಪಿಸುವ ಪ್ರಜಾಪ್ರಭುತ್ವದ ಅಧುನಿಕ ದೇವಾಲಯ. ಅಲ್ಲಿಗೆ ಶಾಸಕರಾಗಿ ತೆರಳುವವರು ಮೊದಲ ವಿಧಾನ ಸಭಾಂಗಣ ಪ್ರವೇಶಿಸುವಾಗ ಬಾಗಿಲಿಗೆ ಕೈ ಮುಗಿದು ಹೋಗುತ್ತಾರೆ. ಅವರ ಕಣ್ಣು ಮುಂದೆ ಕೆಂಗಲ್ ಹನುಮಂತಯ್ಯ, ಶಾಂತವೇರಿ ಗೋಪಾಲಗೌಡರು, ಕಡಿದಾಳ್ ಮಂಜಪ್ಪ, ನಿಜಲಿಂಗಪ್ಪ, ದೇವರಾಜ ಅರಸು ಮುಂತಾದ ಮಹನೀಯರು ನೆನಪಾಗುತ್ತಾರೆ ಕಣ್ಣು ಮಂಜಾಗುತ್ತದೆ.

ಈಗ ಕಣ್ಣು ಮಂಜಾಗುವ ಸಮಯ ನಮ್ಮದು. ಒಳಗೆ ಕುಳಿತವರು ಕಣ್ಣು ನೀಲಿಯಾಗಿ ಬಿಟ್ಟಿದೆ.

ಕಿಂಗ್ ಲಿಯರ್ ನಾಟಕದಲ್ಲಿ ಲಿಯರ್ ಮಹಾರಾಜ ಸಂಕಷ್ಟಕ್ಕೆ ಸಿಗುವ ಆಪಾಯ ಕಂಡು ಕೊಂಡ ಲಿಯರ್‌ನ ಆತ್ಮಸಾಕ್ಷಿಯಂತಿರುವ ಕೆಂಟ್ ಏನನ್ನೂ ಮಾಡಲಾಗದ ಸ್ಥಿತಿ ಮುಟ್ಟಿದಾಗ ಒಂದು ಮಾತು ಹೇಳುತ್ತಾನೆ. “ತಲೆಕೆಟ್ಟವರಿಗೆ, ತಿರುಬೋಕಿಗಳಿಗೆ ಮಾದರಿಯಾಗಿರುವ ಈ ನಾಡೇ ಇನ್ನೂ ನಮಗೆ ಮಾದರಿ.” ನಮ್ಮ ಸ್ಥಿತಿಯು ಹಾಗೇ ಆಗಿದೆ. ಮಾದರಿಗಳೇ ಇಲ್ಲ ಈಗ. ಯಾರನ್ನು ಮಾದರಿ ಎನ್ನುತ್ತೇವೆಯೋ ಅವರು ಮಾಯವಾಗುತ್ತಾರೆ. ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್‌ಗಳ ಕಾಲ ಅಲ್ಲವೇ ಇದು. ಶೂನ್ಯ ಅವರಿಸಿದಾಗ ಇವರೇ ನಾಯಕರಾಗಿ ಮಕ್ಕಳ ಮುಂದೆ ಕಾಣಿಸುತ್ತಾರೆ. ಎಲ್ಲವೂ ರೋಬ್‌ಮಯ.

*

ಅಲ್ಲಿ ಕಕ್ಕ ಮಾಡಬಾರದು ಅದು ಪವಿತ್ರ ಸ್ಥಳ ಎಂದಿರುತ್ತದೆ. ಅಲ್ಲಿ ಕಕ್ಕ ಮಾಡುತ್ತಾರೆ. ಅದು ಕಕ್ಕವೇ ಅಲ್ಲ ಎಂದು ವಾದಿಸುತ್ತಾರೆ. ಕಕ್ಕ ಹೌದು ಅಲ್ಲವೋ ಎಂದು ಪರೀಕ್ಷೆ ನಡೆಸಲು ಫೊರೆನಿಕ್ಸ್ ಲ್ಯಾಬ್‌ಗೆ ಕಳಿಸಿಕೊಡುತ್ತಾರೆ. ವಾಸನೆ ನೋಡಿದ ಯಾರೇ ಆದರೂ ಅದು ಕಕ್ಕ ಎಂದೇ ಹೇಳುತ್ತಾರೆ.

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕಲ್ಲ ಎಂದು ಮೂಗು ಮುಚ್ಚಿಕೊಂಡೆ ಹೇಳುತ್ತಾರಲ್ಲ ಏನನ್ನಬೇಕು ಇವರಿಗೆ. ನಾನು ಇವರಿಗೆ ಹೇಳುವುದು ಇಷ್ಟೇ, “ಸ್ವಲ್ಪ ತಿಂದು ನೋಡಿ ಬಿಡಿ, ಸ್ವಾಮಿ.”

*

ನಮ್ಮ ಸಂವಿಧಾನದಲ್ಲಿ ಶಾಸಕಾಂಗ ದೊಡ್ಡದು. ಶಾಸಕರಾಗಿ ಆಯ್ಕೆಯಾಗುವ ಜನ ಪ್ರತಿನಿಧಿಗಳು ಆಯಾ ಪಕ್ಷದ ಬಲಾಬಲಗಳ ಮೇಲೆ ಶಾಸಕಾಂಗದ ಸಭೆ ಸೇರಿ ನಾಯಕನನ್ನು ಆಯ್ಕೆ ಮಾಡುತ್ತದೆ. ಆಡಳಿತ ಪಕ್ಷಕ್ಕೆ ಸೇರಿದವರಾದರೆ ಆತ ಮುಖ್ಯಮಂತ್ರಿಯಾಗುತ್ತಾನೆ. ರಾಜ್ಯದ ಬೇರೆ ಬೇರೆ ಕ್ಷೇತ್ರಗಳ ಕುರಿತಂತೆ ಆಡಳಿತ ನಡೆಸಲು ತನ್ನ ವಿವೇಚನೆಯಂತೆ ಸಚಿವರನ್ನು ಆಯ್ಕೆ ಮಾಡುತ್ತಾನೆ. ಇಲ್ಲಿ ಮುಖ್ಯಮಂತ್ರಿಯಾಗಲಿ ಅಥವಾ ಸಚಿವರಾಗಲಿ ಎಲ್ಲರೂ ಮೂಲಭೂತವಾಗಿ ಶಾಸಕರೇ, ಶಾಸನ ಸಭೆಯ ಸದಸ್ಯರುಗಳೇ. ಶಾಸಕರಾದವರು ಹೆಚ್ಚುವರಿ ಕೆಲಸವಾಗಿ ಮುಖ್ಯಮಂತ್ರಿ, ಮಂತ್ರಿಯಾಗುತ್ತಾರೆ. ಶಾಸನ ಸಭೆಯಲ್ಲಿ ಅಗೌರವ ಸೂಚಿಸುವವರು ಯಾರೇ ಆಗಲಿ, ಅವರನ್ನು ಸದನದಿಂದ ಹೊರ ಹಾಕುವ, ಅಮಾನತ್ತು ಮಾಡುವ ಅಧಿಕಾರವನ್ನು ಸಭಾಪತಿ ಪಡೆದಿರುತ್ತಾರೆ. ಅವರು ಪಕ್ಷಾತೀತವಾಗಿ, ಸಂವಿಧಾನದ ಮೂಲ ಉದ್ದೇಶವನ್ನು ಕಾಪಾಡಲು ಪ್ರಮಾಣವಚನ ಪಡೆದುಕೊಂಡು ಎತ್ತರದ ಸ್ಥಾನ ಅಲಂಕರಿಸಿದವರು. ಶಾಸನ ಸಭೆಯಲ್ಲಿ ಯಾರೇ ಅಸಭ್ಯವಾಗಿ ವರ್ತಿಸಿದರೂ ಅವರ ಮೇಲೆ ಕ್ರಮ ಕೈಗೊಳ್ಳಲೇಬೇಕು. ಇಲ್ಲಿ ಪಕ್ಷದ ಹಿತಾಸಕ್ತಿ ನೋಡುವಂತಿಲ್ಲ.

ಸಚಿವರಾದವರು ಅಕ್ಷೇಪಾರ್ಹ ವಿಡಿಯೋ ವೀಕ್ಷಿಸಿದ್ದಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಹೆಚ್ಚುವರಿ ಕೆಲಸಗಳನ್ನು ಮಾಡುವುದನ್ನು ಕೈ ಬಿಟ್ಟಂತೆ ಆಗುತ್ತದೆ ಹೊರತು ಅದು ನೈತಿಕತೆ ಆಗುವುದಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ. ಸಚಿವ ಸ್ಥಾನಕ್ಕೆ ಕೊಟ್ಟಿದ್ದಾರಲ್ಲ ಎಂದು ವಾದಿಸುವುದು ಅನೈತಿಕವಾಗುತ್ತದೆ.

*

ಲಜ್ಜೆ, ನಾಚಿಕೆ ಕಳೆದುಕೊಂಡು ವಾದಿಸಲು ಆರಂಭಿಸಿದರೆ ಅಂತಹ ಲಜ್ಜೆಗೆಟ್ಟ, ನಾಚಿಕೆ ಕಳೆದುಕೊಂಡ ಸಮಾಜದಲ್ಲಿ ಜೀವಿಸುತ್ತಿರುವ ಬಗ್ಗೆ ವಾಕರಿಕೆ ಬರುತ್ತದೆ. ನಾನು ಮೊದಲೇ ಹೇಳಿದಂತೆ ಕೆಂಟ್ ಹೇಳುವ “ತಲೆಕೆಟ್ಟವರಿಗೆ, ತಿರುಬೋಕಿಗಳಿಗೆ ಮಾದರಿಯಾಗಿರುವ ಈ ನಾಡೇ ಇನ್ನೂ ನಮಗೆ ಮಾದರಿ,” ಮಾತು ನೆನಪಾಗುತ್ತದೆ.