Tag Archives: ಭ್ರಷ್ಟಾಚಾರದ ವಿರುದ್ಧ ಭಾರತ

ಭ್ರಷ್ಟಾಚಾರ ವಿರೋಧೀ ಹೋರಾಟ – ಉತ್ತರಿಸದೇ ಉಳಿದ ಪ್ರಶ್ನೆಗಳು

-ಸಂಜ್ಯೋತಿ ವಿ.ಕೆ.

ಅಣ್ಣಾ ಹಜಾರೆ, ಅವರ ಉಪವಾಸ ಸತ್ಯಾಗ್ರಹ, ಅವರ ತಂಡದ ಸದಸ್ಯರುಗಳ ತರಹೇವರಿ ಹೇಳಿಕೆಗಳು, ಕೇಂದ್ರ ಸರ್ಕಾರದ ಪ್ರತಿನಿಧಿಗಳ ಅಸಂಬದ್ಧ ಪ್ರತಿಕ್ರಿಯೆಗಳು ಇವೆಲ್ಲ “ಸ್ಫೋಟಕ  ಸುದ್ದಿ”ಗಳಾಗಿ ಎಲ್ಲಾ ದೃಶ್ಯ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ಹರಿದಾಡಿದ ನೆನಪುಗಳು ಕರಗುತ್ತಿರುವ ಈ ಗಳಿಗೆಯಲ್ಲಿ ಒಂದು ಪುನರಾವಲೋಕನ…

ಹಾಲಿ ಇರುವ ಕಾನೂನುಗಳನ್ನು ಪ್ರಾಮಾಣಿಕವಾಗಿ ಮತ್ತು ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸುವುದರ ಹೊರತಾಗಿಯೂ ಕೇಂದ್ರದ ಮಟ್ಟದಲ್ಲಿ ಭ್ರಷ್ಟಾಚಾರವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಲ್ಲ ಒಂದು ಪ್ರಬಲ ಮಸೂದೆಯ ಅಗತ್ಯವಂತೂ ಖಂಡಿತವಾಗಿಯೂ ಇದೆ. ಈ  ನಿಟ್ಟಿನಲ್ಲಿ ಜವಹರಲಾಲ ನೆಹರುರವರ ಕಾಲದಲ್ಲಿಯೇ ರಚಿತವಾಗಿ ಹಲವು ದಶಕಗಳಿಂದ ನೆನಗುದಿಗೆ ಬಿದ್ದಿದ್ದ ಲೋಕಪಾಲ ಮಸೂದೆ, ವಿವಿಧ ಕೇಂದ್ರ ಸರ್ಕಾರಗಳ ಕಾಲದಲ್ಲಿ ಇಣುಕಿ, ಹಣಕಿ ಮತ್ತೆ ಧೂಳು ತಿನ್ನುತ್ತಾ ಕುಳಿತಿತ್ತು. ಕಾಂಗ್ರೆಸ್ ನೇತ್ರತ್ವದ ಯು.ಪಿ.ಎ. ಸರ್ಕಾರ ತನ್ನ “ಕನಿಷ್ಟ ಸಾಮಾನ್ಯ ಕಾರ್ಯಸೂಚಿ”ಯಲ್ಲಿ (ಕಾಮನ್ ಮಿನಿಮಮ್ ಪ್ರೋಗ್ರಾಮ್) ಇದರ ಪ್ರಸ್ತಾಪ ಮಾಡಿತ್ತಾದರೂ, ಕಾಂಗ್ರೆಸ್ ಪಕ್ಷವೂ ಸೇರಿದಂತೆ ಯು.ಪಿ.ಎ.ನ ಯಾವುದೇ ಅಂಗ ಪಕ್ಷಗಳಿಗಾಗಲಿ, ಯು.ಪಿ.ಎ. ಸರ್ಕಾರದ ಭ್ರಷ್ಟಾಚಾರಗಳ ಬಗ್ಗೆ ದೊಡ್ಡ ದನಿಯಲ್ಲಿ ಗುಲ್ಲೆಬ್ಬಿಸುತ್ತಿರುವ ಆದರೆ ತನ್ನದೇ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಸಂಪೂರ್ಣ ಕುರುಡು, ಕಿವುಡು, ಮೂಕಾಗಿರುವ ಬಿ.ಜೆ.ಪಿ.ಗಾಗಲೀ ಒಂದು ಪ್ರಬಲವಾದ ಮಸೂದೆಯನ್ನು ಮಂಡಿಸುವ ಮನಸ್ಸಿಲ್ಲ ಎಂಬುದು ಸುಸ್ಪಷ್ಟ.

ಭ್ರಷ್ಟಾಚಾರವೆಂಬ ಆಕ್ಟೋಪಸ್ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳನೆಲ್ಲಾ ವ್ಯಾಪಿಸುತ್ತಾ ತನ್ನ ಬಾಹುಗಳನ್ನು ದಶದಿಕ್ಕುಗಳಲ್ಲೂ ಚಾಚಿ ಮೇರೆ ಮೀರಿ ಬೆಳೆಯುತ್ತಿರುವಾಗ ಅಣ್ಣಾ ಹಜಾರೆ ಎಂಬ ಪ್ರಾಮಾಣಿಕ ಮನುಷ್ಯನೊಬ್ಬ ಜನಲೋಕಪಾಲ ಮಸೂದೆಗಾಗಿ ಏಪ್ರಿಲ್‌ನಲ್ಲಿ ಮೊದಲ ಬಾರಿಗೆ ಉಪವಾಸ ಕೂತಾಗ, ಬೇಸತ್ತಿದ್ದ ಜನರಿಗೆ ಇದೊಂದು ಆಶಾಕಿರಣವಾಗಿ ಕಂಡಿತ್ತು. ದೊಡ್ಡ ಸಂಖ್ಯೆಯಲ್ಲಿ ಜನ ಬಹಿರಂಗವಾಗಿ ಸೇರಲಿಲ್ಲವಾದರೂ ಒಂದು ಅವ್ಯಕ್ತ ಸಹಮತ ಬಹುಪಾಲು ಜನರಲ್ಲಿ ಇದ್ದಂತೆ ಭಾಸವಾಗುತ್ತಿತ್ತು. ಕೇಂದ್ರ ಸರ್ಕಾರದ ಗ್ರಹಿಕೆ ಏನಿದ್ದಿತೋ, ಮಸೂದೆಯ ರೂಪುರೇಷೆಗಳನ್ನು ಚರ್ಚಿಸಲು ನಾಗರಿಕ ಸಮಾಜದ ಪ್ರತಿನಿಧಿಗಳನ್ನೊಳಗೊಂಡಂತೆ ಒಂದು ಜಂಟಿ ಸಮಿತಿಯನ್ನು ರಚಿಸುವ ಇಂಗಿತ ವ್ಯಕ್ತಪಡಿಸಿತು. ಅದಕ್ಕೆ ಒಪ್ಪಿದ ಅಣ್ಣಾ ಸಹಾ “ಸಮಿತಿಯ ವತಿಯಿಂದ ಉತ್ತಮ ಮಸೂದೆಯನ್ನು ಪ್ರಸ್ತುತ ಪಡಿಸುತ್ತೇವೆ. ಅದನ್ನು ಚರ್ಚಿಸಿ ಅಂಗೀಕಾರ ಮಾಡುವ ಅಧಿಕಾರ ಸಂಸತ್ತಿನದ್ದು” ಎಂದು ಮಾಧ್ಯಮಗಳ ಮುಂದೆ ಹೇಳಿದರು. ಅಲ್ಲಿಯವರಗೆ ಎಲ್ಲವೂ ಸುಸೂತ್ರವಾಗಿತ್ತು. ಆದರೆ ಅದರ ಮುಂದಿನ ಘಟ ನಾವಳಿಗಳು ನಾಡಿನ ಬಗ್ಗೆ ನಿಜವಾದ ಕಾಳಜಿ ಹೊಂದಿರುವವರಿಗೆ, ಸಂವಿಧಾನದ ಬಗ್ಗೆ ನಂಬಿಕೆಯಿಟ್ಟ ಪ್ರತಿಯೊಬ್ಬ ಪ್ರಜ್ಞಾವಂತನಿಗೆ ಗಾಬರಿ ಹುಟ್ಟಿಸುವಂತವು.

ಈ ಹಿನ್ನೆಲೆಯಲ್ಲಿ ಅಣ್ಣಾ ಪರ ಅಥವಾ ವಿರುದ್ಧ ಎಂಬ ಪೂರ್ವಾಗ್ರಹಗಳಿಗೆ ಸಿಲುಕದೆಯೇ ಇಡೀ ಪ್ರಕರಣವನ್ನು ವಿಶ್ಲೇಷಿಸುವಾಗ ಕೆಲವು ಪ್ರಶ್ನೆಗಳನ್ನು ಎತ್ತಲೇಬೇಕಿದೆ.

ಮೊದಲಿಗೆ – ‘ನಾಗರಿಕ ಸಮಾಜದ ಪ್ರತಿನಿಧಿಗಳು’ ಎಂಬ ಅಣ್ಣಾ ತಂಡದ ಆಯ್ಕೆಯ ಮಾನದಂಡಗಳೇನು? ದೇಶದ ವಿವಿಧ ಭಾಗಗಳ, ವರ್ಗಗಳ ಪ್ರಾತಿನಿಧ್ಯವಿಲ್ಲದೆ ಇದು ಕೇವಲ ‘ಅಣ್ಣಾ ತಂಡ’ವಾಯಿತೇ ಹೊರತು ನಿಜವಾದ ಸಮಾಜದ ಪ್ರತಿನಿಧಿಗಳ ತಂಡವಾಗಲಿಲ್ಲ. ‘ಇದು ಕೇವಲ ಆಕಸ್ಮಿಕ ಅಥವಾ ಇಂತಹ ಚರ್ಚೆಗಳಲ್ಲಿ ಹೋರಾಟದ ಮೂಲ ಉದ್ದೇಶವನ್ನು ಮುಕ್ಕಾಗಿಸುವುದು ಬೇಡ’ ಎನ್ನುವ ವಾದವನ್ನು ವಾದಕ್ಕಾಗಿಯಾದರೂ ಒಪ್ಪಿಬಿಡಬಹುದಿತ್ತು- ಸಾಮಾಜಿಕ ನ್ಯಾಯದ ಬಗೆಗಿನ ಅಣ್ಣಾರ ನಿಲುವು ಸಮರ್ಪಕವಾಗಿದ್ದಿದ್ದರೆ.

Sansad_Bhavan

Sansad_Bhavan

ಪತ್ರಕರ್ತ ಮುಕುಲ್ ಶರ್ಮ ಅವರು ರಾಳೇಗಾಂವ್ ಸಿದ್ಧಿಯಲ್ಲಿನ ಅಣ್ಣಾರ ಸುಧಾರಣಾ ಕ್ರಮಗಳಿಂದ ಪ್ರಭಾವಿತರಾಗಿದ್ದರೂ, ಅವರ ‘ಬ್ರಾಹ್ಮಣಿಕೆ’ಯ ಧೋರಣೆಯನ್ನೂ ಗುರುತಿಸುತ್ತಾರೆ.  ಅಣ್ಣಾ ತಂದಿರುವ ಜಲ ಸಂರಕ್ಷಣೆ ಮತ್ತು ಸಮರ್ಪಕ ಜಲ ನಿರ್ವಹಣೆ, ಅದರಿಂದ ಹೆಚ್ಚಿದ ಬೇಸಾಯಗಾರರ ಇಳುವರಿ ಮತ್ತು ಆದಾಯ, ಪಾನ ನಿಷೇಧ ಇವೆಲ್ಲಾ ನಿಜಕ್ಕೂ ಅನುಕರಣ ಯೋಗ್ಯ. ಆದರೆ ಜೊತೆಗೇ ದಲಿತರ ಆಹಾರ ಕ್ರಮಗಳ ಬಗೆಗಿನ ಅವರ ಋಣಾತ್ಮಕ ಧೋರಣೆ ಪ್ರಶ್ನಾರ್ಹ. ಅಂತೆಯೇ “ಪ್ರತೀ ಹಳ್ಳಿಯಲ್ಲಿ ಒಬ್ಬ ಚಮ್ಮಾರ, ಕಂಬಾರ, ಝಾಡಮಾಲಿ ಇರಲೇಬೇಕು ಮತ್ತು ಅವರೆಲ್ಲಾ ತಮ್ಮ ಪಾತ್ರ, ಕಸುಬಿನಂತೆ ದುಡಿಯಬೇಕು. ಇದೇ ರಾಳೇಗಾಂವ್ ಸಿದ್ಧಿಯ ಮಾದರಿ” ಎನ್ನುವ ಅಣ್ಣಾರ ಮನಸ್ಸತ್ವ ಇಂತಹ ವಾದವನ್ನು ಒಪ್ಪುವುದನ್ನು ಅಸಾಧ್ಯವಾಗಿಸುತ್ತದೆ. ಮೀಸಲಾತಿಯನ್ನು ವಿರೋಧಿಸುವವರು ಅಣ್ಣಾರ ಹೋರಾಟದೊಡನೆ ತಮ್ಮನ್ನು ಗುರುತಿಸಿಕೊಳ್ಳುವುದು ಕಾಕತಾಳೀಯವಲ್ಲ.

ಎರಡನೆಯದು – ಸರ್ಕಾರ ಪ್ರಸ್ತಾಪಿಸಿದ ಲೋಕಪಾಲ ಮಸೂದೆ ಕೇವಲ ಕಾಗದದ ಮೇಲೂ ಘರ್ಜಿಸಲಾರದಷ್ಟು ದುರ್ಬಲವೆಂಬುದು ನಿಜ. ಆದರೆ ಅಣ್ಣಾ ತಂಡ ರಚಿಸಿದ ಜನಲೋಕಪಾಲ ಮಸೂದೆ ಅದಕ್ಕೆ ಪರ್ಯಾಯವಾಗಬಲ್ಲುದೇ?

  1.  ‘ಜನಲೋಕಪಾಲವನ್ನು ಯಥಾವತ್ತಾಗಿ ಅಂಗೀಕರಿಸಿದರೂ ಭ್ರಷ್ಟಾಚಾರವನ್ನು ಸಂಪೂರ್ಣ ತೊಲಗಿಸಿಬಿಡಲು ಸಾಧ್ಯವಿಲ್ಲ’ ಎಂಬುದನ್ನು ಅದರ ಪರವಾಗಿರುವ ಪರಿಣಿತರೇ ಒಪ್ಪುತ್ತಾರೆ.
  2. ಸಂವಿಧಾನಬದ್ಧವಾಗಿ ಪ್ರಜೆಗಳಿಂದ ಆಯ್ಕೆಯಾದ ಪ್ರಜಾಪ್ರತಿನಿಧಿಗಳೆಲ್ಲರ ಮೇಲೆ (ನ್ಯಾಯಾಂಗವನ್ನೂ ಒಳಗೊಂಡಂತೆ!) ಒಂದು ಸರ್ವತಂತ್ರ ಸ್ವತಂತ್ರವಾದ ಸರ್ವಾಧಿಕಾರಿಯನ್ನು ಸ್ಥಾಪಿಸುವುದು ಪ್ರಜಾಪ್ರಭುತ್ವದ ಮೂಲತತ್ವಕ್ಕೇ ಅಪಾಯಕಾರಿಯಾದದ್ದಲ್ಲವೇ?
  3. ಭ್ರಷ್ಟಾಚಾರವೆಂಬುದು ಮನುಕುಲದ ಇತಿಹಾಸದಷ್ಟೇ ಹಳೆಯ ವಿಷಯವಾದರೂ ಅದರ ವ್ಯಾಪ್ತಿ ಮತ್ತು ಪ್ರಮಾಣ ಇಂದು ಹಿಂದೆಂದಿಗಿಂತಲೂ ಸಹಸ್ರಾರು ಪಟ್ಟು ಹೆಚ್ಚಿದ್ದು, ಜನಸಾಮಾನ್ಯರ  ಕಲ್ಪನೆಗೂ ಮೀರಿದ್ದಾಗಿದೆ. ಇದೇ ಭ್ರಷ್ಟ ಹಣ ಚುನಾವಣೆಗಳನ್ನು ಮತದ ಮಾರುಕಟ್ಟೆಯಾಗಿ ಪರಿವರ್ತಿಸುತ್ತಿದೆ; ನ್ಯಾಯಾಂಗವನ್ನೂ ಭ್ರಷ್ಟಗೊಳಿಸುತ್ತಾ ನ್ಯಾಯವನ್ನು ಬಿಕರಿಯ ವಸ್ತುವನ್ನಾಗಿಸುವ ಧಾಷ್ಟ್ರ್ಯ  ತೋರುತ್ತಿದೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಭಷ್ಟಾಚಾರಗಳೆಲ್ಲ ಇಂದು ಒಂದೇ ಸರಪಣಿಯ ಕೊಂಡಿಗಳಾಗಿದ್ದು, ಅದರ ಮೂಲವಿರುವುದು ಕಾರ್ಪೊರೇಟ್ ಲಾಬಿ, ಕಾರ್ಪೊರೇಟ್ ಭಷ್ಟಾಚಾರದಲ್ಲಿ. ಹೀಗಿರುವಾಗ ಜನಲೋಕಪಾಲ ಮಸೂದೆ ಕಾರ್ಪೊರೇಟ್ ವಲಯವನ್ನು ತನ್ನ ಪರಿಧಿಯಿಂದ ಸಂಪೂರ್ಣ ಹೊರಗಿಟ್ಟಿರುವುದು, ಕೇವಲ ರೋಗದ ಲಕ್ಷಣಗಳನಷ್ಟೇ ಉಪಚರಿಸುತ್ತಾ ಅದರ ಮೂಲವನ್ನು ಕಡೆಗಣಿಸುವ ಕಸರತ್ತಾಗಿದೆ. ಈ ಹಿನ್ನೆಲೆಯಲ್ಲಿಯೇ ಅನಿವಾರ್ಯವಾಗಿ ಅಣ್ಣಾ ತಂಡಕ್ಕೆ ಕಾರ್ಪೊರೇಟ್ ವಲಯದ ಮತ್ತು ಮೇಲ್ಮಧ್ಯಮ ವರ್ಗದ ಕಾರ್ಪೊರೇಟ್ ನೌಕರರ ಬೆಂಬಲವನ್ನು ಅನುಮಾನಿಸಬೇಕಿದೆ. ತನ್ನ ನೌಕರರಿಗೆ ತಮ್ಮದೇ ಸಂಘಟನೆ ರೂಪಿಸಿಕೊಳ್ಳುವ, ತನ್ನ ಹಕ್ಕುಗಳಿಗಾಗಿ ಪ್ರತಿಭಟಿಸುವ ಕನಿಷ್ಟ ಹಕ್ಕನ್ನೂ ಪ್ರತ್ಯಕ್ಷ/ಪರೋಕ್ಷವಾಗಿ ನಿರಾಕರಿಸುವ ಕಾರ್ಪೊರೇಟ್ ಕಂಪನಿಗಳು ಅಣ್ಣಾ ತಂಡದ ಹೋರಾಟವನ್ನು ಬೆಂಬಲಿಸುವ ಸಲುವಾಗಿ ತನ್ನ ನೌಕರರಿಗೆ ಬಿಡುವು ಮಾಡಿಕೊಟ್ಟು ಫ್ರೀಡಂ ಪಾರ್ಕ್‌ಗೆಗೆ ಕಳಿಸುವುದು ಅರಿಯಲಾಗದ ದೊಡ್ಡ ರಹಸ್ಯವೇನಲ್ಲ. ‘ಭ್ರಷ್ಟಾಚಾರ ವಿರುದ್ಧ ಭಾರತ’ ಹೋರಾಟಕ್ಕೆ ಲಕ್ಷಾಂತರ ರೂಪಾಯಿಗಳ ದೇಣಿಗೆ ನೀಡುತ್ತಿರುವುದು ಇಂತಹ ಹಲವಾರು ಕಾರ್ಪೊರೇಟ್ ಕಂಪನಿಗಳೇ.
  4. ಈ ಜನಲೋಕಪಾಲ ಮಸೂದೆ ಸರ್ಕಾರೇತರ ಸಂಸ್ಥೆ(ಎನ್.ಜಿ.ಓ.)ಗಳನ್ನೂ ತನ್ನ ವ್ಯಾಪ್ತಿಯಿಂದ ಹೊರಗಿಡಲು ಬಯಸುತ್ತದೆ. ಎಲ್ಲೋ ಕೆಲವು ಎನ್.ಜಿ.ಓ.ಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿವೆಯಾದರೂ ಇಂದಿನ ಮುಕ್ಕಾಲುವಾಸಿ ಎನ್.ಜಿ.ಓ.ಗಳು ದುಡ್ಡು ಮಾಡುವ ಸಲುವಾಗಿಯೇ ಹುಟ್ಟಿಕೊಳ್ಳುತ್ತವೆಂಬ ವಿಷಯ ಎಲ್ಲರಿಗೂ ತಿಳಿದಿರುವ ಒಂದು ತೆರೆದ ರಹಸ್ಯವಷ್ಟೆ. ಲಕ್ಷಾಂತರ, ಕೋಟ್ಯಾಂತರ ರೂಗಳನ್ನು ನಾನಾ ಮೂಲಗಳಿಂದ (ವಿದೇಶಿ ದೇಣಿಗೆಯೂ ಸೇರಿದಂತೆ) ಸಾರ್ವಜನಿಕ ಉದ್ದೇಶಗಳಿಗಾಗಿ ದೇಣಿಗೆಯಾಗಿ ಪಡೆವ ಈ ಸಂಸ್ಥೆಗಳಿಗೆ ಉತ್ತರದಾಯಿತ್ವವಿರಬೇಕಲ್ಲವೇ? ಎನ್.ಜಿ.ಓ.ಗಳ ಬಹುತೇಕ ದೇಣಿಗೆ ಕಾರ್ಪೊರೇಟ್ ಮೂಲಗಳಿಂದ ಬರುವುದು ಸಹಾ ಈ ಅಪವಿತ್ರ ವರ್ತುಲವನ್ನು ಹಿರಿದಾಗಿಸುತ್ತದೆ. ಅಣ್ಣಾ ತಂಡದ ಅರವಿಂದ ಕೇಜ್ರಿವಾಲ, ಕಿರಣ್ ಬೇಡಿ ತಮ್ಮದೇ ಎನ್.ಜಿ.ಓ.ಗಳನ್ನು ಹೊಂದಿರುವುದು ಮತ್ತು ಈ ತಂಡ ಎನ್.ಜಿ.ಓ.ಗಳನ್ನು ಜನಲೋಕಪಾಲದ ವ್ಯಾಪ್ತಿಗೆ ತರುವುದನ್ನು ವಿರೋಧಿಸುವುದು ಸಹಜವಾಗಿಯೇ ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ.
  5. ಕೋಟಗಟ್ಟಲೆ ಸಾರ್ವಜನಿಕ ಹಣವನ್ನು ಕೂಡಿಟ್ಟಿರುವ ಮತ್ತು ಅನೇಕ ರಾಜಕಾರಣಿಗಳ ಕಪ್ಪು ಹಣಕ್ಕೆ ದೇಸೀ ಸ್ವಿಸ್ ಬ್ಯಾಂಕ್‌ಗಳಾಗಿರುವ ಮಠಗಳು, ಧಾರ್ಮಿಕ ಕೇಂದ್ರಗಳ ಭ್ರಷ್ಟಾಚಾರದ  ಜನಲೋಕಪಾಲದ ಕಣ್ಣಿಗೇ ಕಾಣದಿರುವುದು ಹೇಗೆ?

ಮೂರನೆಯದಾಗಿ – ಒಂದು ಗಳಿಗೆಯ ಮಟ್ಟಿಗೆ ಈ ಎಲ್ಲಾ ದೂರುಗಳನ್ನೂ, ಅನುಮಾನಗಳನ್ನೂ ಪಕ್ಕಕ್ಕಿಟ್ಟು, ಈ ಇಡೀ ಹೋರಾಟ ನಿಜಕ್ಕೂ ಭ್ರಷ್ಟಾಚಾರದ ವಿರುದ್ಧವೆಂದೂ, ಇದರಿಂದ ಭ್ರಷ್ಟಾಚಾರವನ್ನು ಸಾಕಷ್ಟು ಮಟ್ಟಿಗೆ ನಿಗ್ರಹಿಸಬಹುದೆಂದೂ ನಂಬೋಣ. ಹಾಗಿದ್ದಾಗ್ಯೂ ಈ ಹೋರಾಟದ ರೀತಿ ನಮ್ಮದೇ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಲೇವಡಿ ಮಾಡುವಂತಿದ್ದುದನ್ನು ಒಪ್ಪಬಹುದೇ?

ಜಂಟಿ ಸಮಿತಿಯ ಮೂಲಕ ಜನದನಿಯನ್ನು ನೇರವಾಗಿ ಸಂಸತ್ತಿಗೆ ತಲುಪಿಸಬಹುದಾದ ಒಂದು ಅಪರೂಪದ ಅವಕಾಶ ಅಣ್ಣಾ ಹಜಾರೆಗೆ ದೊರೆತರೂ, ತಮ್ಮ ದೂರದೃಷ್ಟಿಯ ಕೊರತೆಯಿಂದ ಅವರು ಇದನ್ನು ತುಂಬಾ ಅಪ್ರಬುದ್ಧವಾಗಿ ನಿರ್ವಹಿಸಿದಂತೆ ಕಾಣುತ್ತದೆ.

ಸಮಿತಿಯಲ್ಲಿ ಸರ್ಕಾರ ಮತ್ತು ಅಣ್ಣಾ ತಂಡದ ನಡುವೆ ಸಮನ್ವಯ ಸಾಧ್ಯವಾಗದೇ ಹೋದಾಗ ತಾನೇ ಒಂದು ಕರಡು   ಮಸೂದೆ ರಚಿಸಲು ಮುಂದಾದ ಅಣ್ಣಾ ತಂಡ, ಅದನ್ನು ನಿಜವಾದ ಅರ್ಥದಲ್ಲಿ ಜನರ ಲೋಕಪಾಲ ಮಸೂದೆಯಾಗಿ ರೂಪಿಸುವಲ್ಲಿ ಸೋತಿತೆಂದೇ ಹೇಳಬೇಕು. ಇಡೀ ದೇಶಕ್ಕೆ ಸಂಬಂಧಿಸಿದ, ಅದರಲ್ಲೂ ಭ್ರಷ್ಟಾಚಾರದಂತಾ ಆಳ ಬೇರುಗಳುಳ್ಳ ವಿಷಯದಲ್ಲಿ ಮಸೂದೆ ರಚಿಸುವಾಗ ದೇಶದ ವಿವಿಧ ಭಾಗಗಳ ಜನರ, ಪರಿಣಿತರ ಜೊತೆಗೆ ಚರ್ಚಿಸಿ ಅದನ್ನು ರೂಪಿಸಬೇಕಿತ್ತು. ಅದನ್ನು ಜನರ ನಡುವೆ ಒಯ್ದು ಸಾರ್ವಜನಿಕ ಅರಿವು ಮೂಡಿಸುವ ಬಹಿರಂಗ ಚರ್ಚೆಗೆ ಒಡ್ಡಿ, ಒಂದು ಉತ್ತಮ ಮಸೂದೆಯನ್ನಾಗಿ ಬೆಳೆಸಬೇಕಿತ್ತು. ಅಂತಹ ಒಂದು ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಚರ್ಚೆಗೆ ಇಟ್ಟಾಗ ಅದಕ್ಕೊಂದು ಸಮಗ್ರತೆ ಬರುತ್ತಿತ್ತು. ಅದು ದೇಶದ ಒಟ್ಟೂ ಜನರ ಅಭಿಪ್ರಾಯ ಮಂಡನೆಯಾಗಿರುತ್ತದಾದ್ದರಿಂದ ಸಹಜವಾಗಿಯೇ ಸರ್ಕಾರಕ್ಕೆ ಅದನ್ನು ಅನುಮೋದಿಸುವ ಒತ್ತಡವೇರ್ಪಡುತಿತ್ತು. ಇಷ್ಟಾಗಿಯೂ ಒಂದು ಪ್ರಬಲ ಮಸೂದೆ ಅಂಗೀಕಾರವಾಗದೇ ಇದ್ದಿದ್ದರೆ ತಿದ್ದುಪಡಿಗಳ ಮೂಲಕ ಅದನ್ನು ಬಲಪಡಿಸಲು ತಂತಮ್ಮ ಕ್ಷೇತ್ರದ ಜನ ಪ್ರತಿನಿಧಿಗಳ ಮೇಲೆ ಜನರೇ ಒತ್ತಡ ಹೇರುವಂತಾ ಪ್ರಜಾಸತ್ತಾತ್ಮಕ ಮಾರ್ಗದ ಬಗ್ಗೆ ಯೋಚಿಸಬಹುದಿತ್ತು. ಆದರೆ ಅಣ್ಣಾ ತಂಡಕ್ಕೆ ಇದಾವುದಕ್ಕೂ ವ್ಯವಧಾನವೇ ಇದ್ದಂತೆ ತೋರಲಿಲ್ಲ.

ಆದರೆ ಇಂತಹ ಒಂದು ಮಹತ್ವದ ವಿಷಯ ಮತ್ತು ಹೋರಾಟವನ್ನು ಹೀಗೆ ಹಾದಿ ತಪ್ಪಿಸುವಲ್ಲಿ ಪ್ರಸ್ತುತ ಕೇಂದ್ರ ಸರ್ಕಾರದ ಧೋರಣೆಗಳು ಮತ್ತು ತಿಳಿಗೇಡಿತನ, ಎಲ್ಲ ರಾಜಕೀಯ ಪಕ್ಷಗಳ ಅನುಕೂಲಸಿಂಧು ರಾಜಕಾರಣ ಮತ್ತು ಅವಕಾಶವಾದಿ, ಬೇಜವಾಬ್ದಾರಿ ಮಾಧ್ಯಮಗಳ ಪಾತ್ರವೂ ಅಷ್ಟೇ ಇದೆ.

ಒಂದು ಪ್ರಬಲ ಭ್ರಷ್ಟಾಚಾರಿ ವಿರೋಧೀ ಮಸೂದೆ ತರುವ ವಿಷಯದಲ್ಲಿ ಅಪ್ರಾಮಾಣಿಕವಾದ ಕೇಂದ್ರ ಸರ್ಕಾರ, ತನ್ನ ನ್ನು ಶಾಂತಿಯುತವಾಗಿ ಆಗ್ರಹಿಸುವುದನ್ನೂ ಸಹಿಸದೆ ಉಪವಾಸ ಕೂರುವ ಮೊದಲೇ ಅಣ್ಣಾರನ್ನು ಬಂಧಿಸಿ ತನ್ನ ದಮನಕಾರಿ ಮನೋಭಾವ ಪ್ರದರ್ಶಿಸಿತು. ಶಾಂತಿಯುತವಾಗಿ ಬೇರೆ ಬೇರೆ ಹೋರಾಟಗಳಲ್ಲಿ ತೊಢಗಿಕೊಂಡಿದ್ದವರಿಗೂ ತಮ್ಮ ಯಾವ ಹೋರಾಟಗಳಿಗೂ ಯಾವುದೇ ಸರ್ಕಾರ ಸ್ಪಂದಿಸದೇ ಇರುವುದು ಒಂದು ರೀತಿಯ ಹತಾಶೆ ಮೂಡಲು ಕಾರಣವಾಗಿತ್ತು. ಅಂತಹ ಸಂದರ್ಭದಲ್ಲಿಯೇ ನಡೆದ ಈ ಘಟನೆ ಜನರನ್ನು ‘ನಾವು ಹೀಗಲ್ಲದೆ ಮತ್ತೇನು ಮಾಡಿ ರಾಜಕಾರಣಿಗಳಿಗೆ ಚುರುಕು ಮುಟ್ಟಿಸಲು ಸಾಧ್ಯ’ ಎಂಬ ಒಂದು ತಪ್ಪಾದ ಚಿಂತನಾ ಕ್ರಮಕ್ಕೆ ದೂಡಿತು. ಕಾಂಗ್ರೆಸ್ಸಿನ ಕಪಿಲ್ ಸಿಬಾಲ್, ಮನೀಶ್ ತಿವಾರಿಯಂತಹವರು ಬಾಲಿಶ ಹೇಳಿಕೆಗಳನ್ನು ನೀಡುವುದು, ಮತ್ತದನ್ನು ಹಿಂಪಡೆಯುವುದು ಇಂತಹ ಅಪ್ರಬುದ್ಧ ನಡವಳಿಕೆಗಳು ಜನರಲ್ಲಿ ಗೊಂದಲ ಹೆಚ್ಚಿಸಿತು.

Anna_Hazare

Anna_Hazare

ಕಾಂಗ್ರೆಸ್ ಜನಲೋಕಪಾಲದ ವಿರೋಧಿ ಎಂದು ಅಣ್ಣಾ ತಂಡ ಟೀಕಿಸುತ್ತಿದ್ದಾಗ ಕಾಂಗ್ರೆಸ್‌ನ ದಮನಕಾರಿ ನಿಲುವನ್ನು ಟೀಕಿಸುವ ನೆಪದಲ್ಲಿ ರಂಗಕ್ಕಿಳಿದ ಬಿ.ಜೆ.ಪಿ. ಜನರ ಭ್ರಷ್ಟಾಚಾರೀ ವಿರೋಧವನ್ನು ಕಾಂಗ್ರೆಸ್ ವಿರೋಧವನ್ನಾಗಿಸಿ ರಾಜಕೀಯ ಲಾಭ ಗಳಿಸುವ ಹುನ್ನಾರದಲ್ಲಿ ತೊಡಗಿತು. ಅಷ್ಟಕ್ಕೂ ಯು.ಪಿ.ಎ.ಗೆ ಲೋಕಸಭೆಯಲ್ಲಿ ಬಹುಮತವಿದ್ದರೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳಿಗೆ ಬಹುಮತವಿದೆ. ಆದರೆ ಜನಲೋಕಪಾಲದ ಬಗ್ಗೆ  ವಿರೋಧ ಪಕ್ಷಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸುವ ಕೆಲಸವನ್ನು ಅಣ್ಣಾ ತಂಡ ಮಾಡಲಿಲ್ಲ. ಕೊನೆಗೆ ಟಿ. ವಿ. ವಾಹಿನಿಯೊಂದು ಜನಲೋಕಪಾಲದ ಬಗ್ಗೆ ನಿಮ್ಮ ನಿಲುವೇನೆಂದು ಬಿ.ಜೆ.ಪಿ.ಯನ್ನು ಜಗ್ಗಿಸಿ ಕೇಳಿದಾಗ “ನಮಗೂ ಜನಲೋಕಪಾಲದ ಎಲ್ಲ ವಿಷಯಗಳ ಬಗ್ಗೆ ಸಂಪೂರ್ಣ ಒಪ್ಪಿಗೆಯಿಲ್ಲ” ಎಂದು ಹೇಳಿಯೂ ಹೇಳದ ಹಾಗೆ ನುಣಿಚಿಕೊಂಡಿದ್ದನ್ನ ಗಮನಿಸಬೇಕಿದೆ.

ಎಲ್ಲೋ ಕೆಲವು ಅಪವಾದಗಳನ್ನು ಹೊರತುಪಡಿಸಿ ಮಾಧ್ಯಮಗಳು ಈ ಇಡೀ ಪ್ರಸಂಗವನ್ನು ಕಾಂಗ್ರೆಸ್ ವರ್ಸಸ್ ಅಣ್ಣಾ ಎಂಬಂತೆ ಬಾಲಿಶವಾಗಿ ( ಅಥವಾ ಪ್ರಜ್ಙಾಪೂರ್ವಕವಾಗಿ) ಚಿತ್ರಿಸಿದವು. ತಮ್ಮ ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವ ಅಥವಾ ತಮ್ಮ ಕಾರ್ಪೊರೇಟ್ ದೊರೆಗಳ ಹಿತಕಾಯುವುದನ್ನೇ ಪರಮ ಕರ್ತವ್ಯವಾಗಿಸಿಕೊಂಡಿರುವ ಮಾಧ್ಯಮಗಳು ಈ ವಿಷಯದ ಬಗ್ಗೆ ಜನರನ್ನು ಆಳವಾದ ಚಿಂತನೆಗೆ ಹಚ್ಚುವ ಬದಲಿಗೆ, ದೇಶಭಕ್ತಿ ಎಂದರೆ ಭ್ರಷ್ಟಾಚಾರವನ್ನು ವಿರೋಧಿಸುವುದು; ಭ್ರಷ್ಟಾಚಾರವನ್ನು ವಿರೋಧಿಸುವುದೆಂದರೆ ಅಣ್ಣಾ ಟೊಪ್ಪಿ ತೊಟ್ಟು, ಮೇಣದ ಬತ್ತಿ ಹಿಡಿದು ಸಾಗುವುದು, ಎಂಬಂತ ತೆಳು ಚಿಂತನೆಗಳನ್ನೇ ಹಬ್ಬಿಸಿದವು.

ಇನ್ನು ಅಣ್ಣಾ ತಂಡ ಗಾಂಧೀಜಿಯವರ ಉಪವಾಸ ಸತ್ಯಾಗ್ರಹದಂತಹ ಅಹಿಂಸಾತ್ಮಕ ಅಸ್ತ್ರವನ್ನು ಅದರ ಪಾವಿತ್ರ್ಯತೆ, ಘನತೆಗಳ ಅರಿವೇ ಇಲ್ಲದೆ ಒಂದು ಬೆದರಿಕೆಯ ತಂತ್ರವಾಗಿ ಬಳಸುವುದು, ಚರ್ಚೆ, ಸಂವಾದಗಳ ಪ್ರಸ್ತುತತೆಯನ್ನೇ ಕಡೆಗಣಿಸಿ, ತಾನು ಪ್ರಸ್ತಾಪಿಸಿದ ಮಸೂದೆಯನ್ನೇ ಸಂಸತ್ತು ಅಂಗೀಕರಿಸಬೇಕಂದು ಆಗ್ರಹಿಸುವುದು, ಅದಕ್ಕೊಂದು ಗಡುವು ವಿಧಿಸಿ ಇಡೀ ಸಂಸತ್ತು ತನ್ನ ಅಣತಿಯಂತೆ ನಡೆಯಬೇಕೆಂದು ಸರ್ವಾಧಿಕಾರಿ ಧೋರಣೆ ತೋರುವುದು; ಇದೆಲ್ಲದರ ಒಟ್ಟಾರೆ ಪರಿಣಾಮ, ನಮ್ಮ ಸಂವಿಧಾನ, ಪ್ರಜಾಪ್ರಭುತ್ವದ ತತ್ವಗಳ ನಂಬಿಕೆಯ ತಳಪಾಯವನ್ನೇ ಅಲುಗಿಸುವ ಪ್ರಯತ್ನ. ಇದನ್ನು ಒಪ್ಪಿದರೆ ‘ಹೋರಾಟದ ಕಾರಣ ಒಳ್ಳೆಯದಿದ್ದರೆ ಆಯಿತು, ಮಾರ್ಗದ ಬಗ್ಗೆ ಚಿಂತಿಸಬೇಕಿಲ್ಲ’ ಎನ್ನುವಂತ ತಪ್ಪು ಸಂದೇಶ ರವಾನಿಸಿದಂತಲ್ಲವೇ?

ಹಾಗಾದರೆ ಭ್ರಷ್ಟಾಚಾರವನ್ನು ತೊಲಗಿಸುವುದಾದರೂ ಹೇಗೆ? ಇದು ಅಹೋರಾತ್ರಿ ಆಗಿಬಿಡುವ ಕೆಲಸವಲ್ಲ ಮತ್ತು ಸಿನಿಕರಾಗುವ ಅವಶ್ಯಕತೆಯೂ ಇಲ್ಲ. ಭ್ರಷ್ಟಾಚಾರದ ನಿರ್ಮೂಲನೆಗೆ ಒಂದು ಪ್ರಬಲ ಕಾನೂನು ರಚಿಸುವ ಜೊತೆಗೇ ಚುನಾವಣಾ ಸುಧಾರಣೆಯೂ ಆಗಬೇಕಾದ್ದು ಅವಶ್ಯ. ಅಲ್ಲದೆ ಜನ ಸಾಮಾನ್ಯರಲ್ಲಿ ಕಾನೂನಿನ ಅರಿವು ಮೂಡಿಸುವ ಕೆಲಸವೂ ಆಗಬೇಕಿದೆ. ಎಲ್ಲಕ್ಕಿಂತ ಮಿಗಿಲಾಗಿ “ಭ್ರಷ್ಟಾಚಾರ ಸಹಾ ಒಂದು ಮಿತಿಯಲ್ಲಿದ್ದರೆ ಒಂದು ಒಪ್ಪಿತ ಮೌಲ್ಯ” ಎಂಬ ಮನೋಭಾವ ಬದಲಾಗಬೇಕಾದುದು ಬಹು ಮುಖ್ಯ.

(ಚಿತ್ರಕೃಪೆ: ವಿಕಿಪೀಡಿಯ)

ಜನಪದ ಲೋಕದ ಭ್ರಷ್ಟಾಚಾರ ವಿರೋಧಿ ನಾಯಕರುಗಳು

ಡಾ. ಅರುಣ್ ಜೋಳದಕೂಡ್ಲಿಗಿ

ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ದ್ವನಿ ಎತ್ತಿದ್ದು, ಹಜಾರೆಯವರ ಹೋರಾಟದ ಹಿಂದಣ ಅಪಾಯಗಳನ್ನು ವಿದ್ವತ್ ಲೋಕ ವಿಮರ್ಶೆಗೆ ಒಡ್ಡಿದ್ದು, ಸರಕಾರ ಅವರ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿ ಈಗ ಕಾರ್ಯಪ್ರವೃತ್ತವಾಗಿರುವುದೂ,  ಎಲ್ಲವೂ ನಿಧಾನಕ್ಕೆ ನೆನಪಿನ ಪುಟ ಸೇರುತ್ತಿವೆ.

ನನಗೀಗ ಜನಪದ ಲೋಕದ ಅಣ್ಣಾ ಹಜಾರೆಗಳು ನೆನಪಾಗತೊಡಗಿದ್ದಾರೆ.ಅಂದರೆ ನಮ್ಮ ನಮ್ಮ ಹಳ್ಳಿಗಳಲ್ಲಿ, ನಮ್ಮ ನಡುವೆಯೇ ಇರುವ ಗ್ರಾಮೀಣ ಪ್ರದೇಶದ ಸಮಾನ್ಯ ಜನರು ಕೂಡ ಭ್ರಷ್ಟಾಚಾರವನ್ನು ವಿರೋಧಿಸಿ ತುಂಬಾ ಹಿಂದಿನಿಂದಲೂ ಹೋರಾಡುತ್ತಾ ಬಂದಿದ್ದಾರೆ. ಅವರುಗಳು ಭ್ರಷ್ಟಾಚಾರ ಎನ್ನುವ ದೊಡ್ಡ ಬ್ಯಾನರಿನಡಿ ಹೋರಾಡದಿದ್ದರೂ, ಲಂಚ ವಿರೋಧಿ ವ್ಯಕ್ತಿತ್ವವನ್ನಂತೂ ರೂಪಿಸಿಕೊಂಡವರು. ಆದರೆ ಅಂತವರನ್ನು ಬೆಂಬಲಿಸಿ ಎಷ್ಟು ಜನ ಹಿಂದೆ ನಿಂತರು ಎಂದು ಕೇಳಿಕೊಂಡರೆ ಅದು ಮಾತ್ರ ಶೂನ್ಯ.

ಹಳ್ಳಿ ಜನ ಅದೇನು ಭ್ರಷ್ಟಾಚಾರವನ್ನು ವಿರೋಧಿಸಿಯಾರು? ಎಂದು ಕೆಲವರು ಮೂಗಿಮುರಿಯುವ ಸಾಧ್ಯತೆಯಿದೆ.  ಅಥವಾ ಜಾನಪದ ಮತ್ತು ಭ್ರಷ್ಟಾಚಾರ ಎಂಬ ವಿಷಯವೊಂದನ್ನು ಕುರಿತು ಮಾತನಾಡಲು ಹೊರಟರೆ ಸಾಂಪ್ರದಾಯಿಕ ಜಾನಪದ ವಿದ್ವಾಂಸರು ಇದೇನು ತಲೆ ಕೆಟ್ಟ ಯೋಚನೆ ಎಂದು ತಳ್ಳಿ ಹಾಕುವ ಸಾಧ್ಯತೆಯೂ ಇದೆ. ಇವೆರಡನ್ನೂ ಗಮನದಲ್ಲಿಟ್ಟುಕೊಂಡು ನನ್ನ ಕೆಲವು ಯೋಚನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ.

ಹಳ್ಳಿ ಜನರ ಸಂಪರ್ಕಕ್ಕೆ ಬರುವ ಅಧಿಕಾರಿಗಳ ಸಮೂಹ ತೀರಾ ಚಿಕ್ಕದೇನಲ್ಲ. ವೃದ್ಧಾಪ್ಯ, ವಿಧವಾ ವೇತನ ಕೊಡುವ ಪೋಷ್ಟಮ್ಯಾನ್ ನಿಂದ ಇದು ಆರಂಭವಾಗುತ್ತದೆ. ಗ್ರಾಮ ಲೆಕ್ಕಾಧಿಕಾರಿ, ತಹಶೀಲ್ದಾರ ಕಛೇರಿ, ನೋಂದಣಿ ಇಲಾಖೆ, ರೈತ ಸಂಪರ್ಕ ಕೇಂದ್ರ, ಬ್ಯಾಂಕ್‌ಗಳು, ನೀರಾವರಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆ, ಆರೋಗ್ಯ ಇಲಾಖೆ, ಕೃಷಿ ಮಾರುಕಟ್ಟೆ, ಪೋಲಿಸ್ ಇಲಾಖೆ ಇನ್ನು ಮುಂತಾದ ಇಲಾಖೆಯ ಅಧಿಕಾರಿಗಳ ಜತೆ ಜನರು ಒಡನಾಡುವ ಪ್ರಸಂಗ ಬರುತ್ತದೆ. ನಾನಾ ಕಾರಣಗಳಿಗಾಗಿ ಈ ಇಲಾಖೆಯ ಅಧಿಕಾರಿಗಳು ರೈತರಲ್ಲಿ ಲಂಚ ಪಡೆದು ಅವರ ಕೆಲಸಗಳನ್ನು ಮಾಡಿಕೊಡುತ್ತಾರೆ. ಇದು ಈಚೆಗೆ ತೀರಾ ಸಾಮಾನ್ಯ ಸಂಗತಿ. ಕೆಲವರು ಈ ಅಧಿಕಾರಿಗಳನ್ನು ಎದುರು ಹಾಕಿಕೊಂಡರೆ ನಮ್ಮ ಕೆಲಸಗಳು ಆಗುವುದಿಲ್ಲ ಎಂದು ಹೆದರಿ ಸಾಲ  ಮಾಡಿಯಾದರೂ ಲಂಚ ಕೊಟ್ಟು ಕೆಲಸಗಳನ್ನು ಮಾಡಿಸಿಕೊಳ್ಳುವ ಒಂದು ವರ್ಗವಿದೆ. ಇಂತಹ ವರ್ಗದಿಂದಾಗಿಯೇ ಭ್ರಷ್ಟಾಚಾರ ತನ್ನ ಬಾಹುಗಳನ್ನು ಚಾಚಿಕೊಳ್ಳಲು ಅನುವಾಗುತ್ತದೆ.

ಇದಕ್ಕಿಂತ ಭಿನ್ನವಾದ ಇನ್ನೊಂದು ವರ್ಗವಿದೆ. ಅದು ಇಂತಹ ಅಧಿಕಾರಿಗಳ ಜತೆ ಲಂಚಕೊಡದಿರುವ ಬಗ್ಗೆ ಸೆಣಸಾಡುವ ವರ್ಗ. ಅವರ ಸಾಮಾನ್ಯ ತಿಳುವಳಿಕೆಯೆಂದರೆ ಸರಕಾರ ಸಂಬಳ ಕೊಡುವಾಗ ನಾವೇಕೆ ಅವರಿಗೆ ಹಣಕೊಡಬೇಕು ಎನ್ನುವುದು ಅವರ ವಾದ. ಅದೇನೆ ಆಗಲಿ ಒಂದು ಪೈಸೆಯನ್ನೂ ಲಂಚ ಕೊಡದೆ ಕೆಲಸ ಮಾಡಿಕೊಳ್ಳುವೆ ಎಂದು ಅಲೆದಲೆದು ಕೆಲಸ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅದಕ್ಕೂ ಜಗ್ಗದಿದ್ದಾಗ ಭಿನ್ನರೀತಿಯಲ್ಲಿ ಪ್ರತಿರೋಧ ಒಡ್ಡಿ ಅಧಿಕಾರಿಗಳಲ್ಲಿ ಭಯ ಹುಟ್ಟಿಸಿ ಕೆಲಸ ಮಾಡಿಸಿಕೊಳ್ಳುವುದೂ ಉಂಟು. ಇನ್ನೂ ಮುಂದುವರೆದು ಅವರದೇ ರೀತಿಯ ಹೋರಾಟವನ್ನೂ ಸಹ ಮಾಡುತ್ತಾರೆ. ಇಂತಹ ಹೋರಾಟಗಳು ಎಲ್ಲೂ ದಾಖಲಾಗುವುದಿಲ್ಲವಷ್ಟೆ. ಇವರುಗಳೆಲ್ಲಾ ನಮ್ಮ ನಮ್ಮ ಹಳ್ಳಿಗಳಲ್ಲೇ ನೆಲೆಸಿರುವ ಅಣ್ಣಾ ಹಜಾರೆಗಳು ಎಂದು ನನಗೀಗ ಅನ್ನಿಸತೊಡಗಿದೆ. ಹೀಗೆ ಸೆಣಸಾಡಿದ ಕೆಲವು ಕಥನಗಳು ಹೀಗಿವೆ.

ಕಥನ: ಒಂದು

ನಮ್ಮ ಊರಿನಲ್ಲಿ ಬರಮಜ್ಜಿ ಎನ್ನುವ ಅಜ್ಜಿ ಇದ್ದಾಳೆ. ಅವಳು ವೃದ್ಧಾಪ್ಯ ವೇತನ ಪಡೆಯುವಾಗ ಪೋಷ್ಟಮ್ಯಾನ್‌ಗೆ ಕಮಿಷನ್ ಕೊಡುತ್ತಿರಲಿಲ್ಲ. ಅಜ್ಜಿ ಕೇಳುವ ಪ್ರಶ್ನೆ ನಿನಗೆ ಸರಕಾರ ಸಂಬಳ ಕೊಡಲ್ಲೇನು, ಮತ್ಯಾಕ ನಾ ಕೊಡ್ಲಿ ಎನ್ನುವುದು. ಈ ಜಿದ್ದಿಗಾಗಿ ಪೋಷ್ಟಮ್ಯಾನ್ ನಾಲ್ಕು ತಿಂಗಳಾದರೂ ಸಂಬಳ ಕೊಡದಿದ್ದಾಗ ಅಜ್ಜಿ ಅಂಚೆ ಕಚೇರಿಗೆ ಹೋಗಿ ಕೇಳಿದಳು. ಆಗ ಪೋಷ್ಟಮಾಷ್ಟರ್ ನೀನು ಹಣ ಕೊಡಲು ಬಂದಾಗ ಇರಲಿಲ್ಲ ಎಂದು ಹಣ ವಾಪಸ್ ಕಳಿಸಲಾಗಿದೆ, ನೀನು ತಾಲೂಕು ಕಚೇರಿಗೆ ಹೋಗಿ ಮತ್ತೆ ಬಿಲ್ ಹಾಕಿಸಿಕೊಂಡು ಬಾ ಎಂದು ಹೇಳಿದ.

ಆಗ ಅಜ್ಜಿಗೆ ದಿಕ್ಕುತೋಚದೆ, ತಾಲೂಕು ಕಛೇರಿಗೆ ಅಲೆದಾಗ ಅಲ್ಲಿನ ಅಧಿಕಾರಿಗಳು ಅಜ್ಜಿಯನ್ನು ಲಂಚ ಕೇಳಿದರು. ಅಜ್ಜಿ ಅಲ್ಲಿಯೂ ಪೆಡಸಾಗಿಯೇ ಉತ್ತರಿಸಿತು. ಹೀಗಾಗಿ ಒಂದು ವಾರ ಅಜ್ಜಿಯನ್ನು ಅಲೆದಾಡಿಸಿದರು. ಅಜ್ಜಿಕೊನೆಗೆ ನಾನು ಸಾಯೋತನಕ ಈ ಕಚೇರಿ ಬಿಟ್ಟು ಹೋಗಲ್ಲ ಎಂದು ತಾಲೂಕು ಕಛೇರಿಯ ಮುಂದೆ ಕೂತಿತು. ಈ ಸುದ್ದಿ ಹೇಗೋ ತಹಶೀಲ್ದಾರರ ಕಿವಿಗೆ ಬಿದ್ದು, ಅವರೇ ಅಜ್ಜಿಯನ್ನು ಖುದ್ದಾಗಿ ವಿಚಾರಿಸಿ ಲಂಚ ಕೇಳಿದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ಅಜ್ಜಿಯ ವೇತನವನ್ನು ಬಿಡುಗಡೆಗೊಳಿಸಿದರು. ಆಗ ಪೋಷ್ಟಮ್ಯಾನ್ ಉದ್ದೇಶಪೂರ್ವಕವಾಗಿ ಅಜ್ಜಿಯ ವೇತನವನ್ನು ವಾಪಸ್ ಮರಳಿಸಿದ್ದಾರೆ ಎಂದು ತಿಳಿದು ತಹಶೀಲ್ದಾರ್ ಸಂಬಂದಿಸಿದ ಅಧಿಕಾರಿಗಳಿಂದ ಪೋಷ್ಟಮ್ಯಾನ್‌ನನ್ನು ತರಾಟೆಗೆ ತೆಗೆದುಕೊಳ್ಳುವಂತೆ ನೋಡಿಕೊಂಡರು. ಇದು ಮತ್ತೆ ಪುನರಾವರ್ತನೆ ಆಗಲಿಲ್ಲ.

ಕಥನ: ಎರಡು

ನಮ್ಮ ಭಾಗದಲ್ಲಿ ಬಿ.ಡ. ಗೌಡ ಎಂಬ ಗ್ರಾಮ ಲೆಕ್ಕಾಧಿಕಾರಿ ಇದ್ದ. ಈತನು ಹಣದಾಹಿ. ಜಾತಿ ಪ್ರಮಾಣ ಪತ್ರಕ್ಕೆ ಸಹಿ ಹಾಕಲು ಸಹಾ ಹಣ ಕೀಳುತ್ತಿದ್ದ. ಇದರಿಂದ ಜನ ಬೇಸತ್ತಿದ್ದರು. ಹಣಕ್ಕಾಗಿ ಅವರ ಹೊಲ ಇವರಿಗೆ, ಇವರ ಹೊಲ ಅವರಿಗೆ ಬದಲಾಯಿಸಿಬಿಡುವ ಮಟ್ಟಕ್ಕೂ ಇಳಿದಿದ್ದ. ಕರೆಮೂಗಜ್ಜ ಎಂಬ ಅಜ್ಜನಿದ್ದ. ಆತ ಕಡುಕೋಪಿಷ್ಟ. ತನ್ನ ಹೊಲದ ಪಹಣಿ ಕೊಡುವುದಾಗಿ ಬಿ.ಡ. ಗೌಡ ಅವರಲ್ಲಿ ಕೇಳಿದ. ಆತ ಎರಡು ಸಾವಿರ ಕೊಡುವುದಾಗಿ ಕೇಳಿದ್ದ. ಇದರಿಂದ ಕೆಂಡಾಮಂಡಲವಾದ ಮೂಗಜ್ಜ ನಾಳೆ ನಮ್ಮೂರಿಗೆ ಬನ್ನಿ ಕೊಡುತ್ತೇನೆಂದು ಹೇಳಿದನು.

ಮರುದಿನ ಗೌಡರು ಹಳ್ಳಿಗೆ ಬಂದರು. ಊರ ಮುಂದೆ ನೆರೆದ ಜನರ ಎದುರು ಮೂಗಜ್ಜ ಗೌಡರ ಬಳಿ ಬಂದು, ಗೌಡ್ರೆ ನನ್ನತ್ರ ಅಷ್ಟು ಹಣ ಇಲ್ಲ, ಮುಂದಿನ ತಿಂಗಳು ಕೊಡ್ತಿನಿ ಈಗ ಪಹಣಿ ಕೊಡ್ರಿ ಎಂದ. ಅದಕ್ಕೆ ಗೌಡ ಮುಂದಿನ ತಿಂಗಳೇ ಪಹಣಿ ಕೊಡುವೆ ಬಿಡು ಎಂದನು. ಇದರಿಂದ ಕೋಪಗೊಂಡ ಮೂಗಜ್ಜ ಕಾಲಲ್ಲಿ ಇರುವ ಚಪ್ಪಲಿಯನ್ನು ಕಿತ್ತು ಮುಖ ಮೋರೆ ನೋಡದಂತೆ ಹೊಡೆದೇ ಬಿಟ್ಟ. ಜನ ಮೂಗಜ್ಜನನ್ನು ಬಿಡಿಸುವ ಹೊತ್ತಿಗೆ ಗೌಡರು ಹಣ್ಣುಗಾಯಿ ನೀರುಗಾಯಿ ಆಗಿ ಮೂಗು ಬಾಯಿಯಲ್ಲಿ ರಕ್ತ ಸೋರುತ್ತಿತ್ತು. ಆತ ಪಟ್ಟಣಕ್ಕೆ ಹೋಗಿ ಮೂಗಜ್ಜನ ಮೇಲೆ ಪೋಲಿಸ್ ಕಂಪ್ಲೇಟ್ ಕೊಟ್ಟನು. ಇದನ್ನು ಇಡೀ ಊರಿಗೆ ಊರೇ  ಪೋಲಿಸ್ ಠಾಣೆ ಎದುರು ಧರಣಿ ಕೂತು, ಗೌಡರ ಬ್ರಷ್ಟಾಚಾರದ ವಿರುದ್ಧ ದ್ವನಿ ಎತ್ತಿದರು. ಇದರ ಪರಿಣಾಮ ಗೌಡರನ್ನು ಅಮಾನತ್ತಿನಲ್ಲಿಡಲಾಯಿತು. ಈ ಘಟನೆಯಿಂದಾಗಿ ಆ ಭಾಗದ ಗ್ರಾಮಲೆಕ್ಕಾಧಿಕಾರಿಗಳಿಗೆ ಒಂದು ಬಗೆಯ ಬಿಸಿ ತಟ್ಟಿದಂತಾಯಿತು.

ಕಥನ: ಮೂರು

ಕೂಡ್ಲಿಗಿ ತಾಲ್ಲೂಕು ಹಾರಕನಾಳಿನಲ್ಲಿ 1998ರಲ್ಲಿ ನಡೆದ ಒಂದು ಘಟನೆ. ಅಂದು ಊರಿಗೆ ಲೈನ್‌ಮ್ಯಾನ್‌ಗಳ ಗುಂಪೊಂದು ಬಂದಿತ್ತು (ಕೆ.ಇ.ಬಿ. ನೌಕರರು) ಬಾಕಿ ಉಳಿದ ಕರೆಂಟ್ (ಎಲೆಕ್ಟ್ರಿಕಲ್) ಬಿಲ್ಲುಗಳನ್ನು ವಸೂಲಿ ಮಾಡುವುದು ಆ ದಿನದ ಉದ್ದೇಶವಾಗಿತ್ತು. ಹಣಪಾವತಿ ಮಾಡದೆ ಬಾಕಿ ಇರುವ ಮನೆಗಳ ಕರೆಂಟ್ ಕನೆಕ್ಷನ್ ಕಟ್ ಮಾಡುತ್ತಿದ್ದರು.

ಹಾರಕನಾಳಿನ ಭರಮನಗೌಡರದು ಐದು ತಿಂಗಳ ಬಿಲ್ ಬಾಕಿ ಇತ್ತು. ಅವರು ‘ಈಗ ದುಡ್ಡು ಇಲ್ಲ ಬೆಳೆ ಬಂದಿಂದೆ ಕಟ್ತೀವಿ’ ಎಂದರು. ಕೆ.ಇ.ಬಿ. ನೌಕರನೊಬ್ಬ ‘ಆಯ್ತು ನಾವು ಆವಾಗ್ಲೆ ಕನೆಕ್ಷನ್ ಕೊಡ್ತೀವಿ’ ಎಂದು, ಲೈನ್ ಕಟ್ ಮಾಡಲು ಕರೆಂಟ್ ಕಂಬವನ್ನು ಹತ್ತಿದ. ಭರಮನ ಗೌಡರಿಗೆ ಸಿಟ್ಟು ಅವಮಾನ ಎರಡೂ ಆಗಿ ಕಲ್ಲು ಹಿಡಿದು ‘ಲೇ ಲೈನ್ ಬಂದ್ ಕಟ್ ಮಾಡು ಕಲ್ಲಿಲೇ ಹೊಡಿತೀನಿ… ಸೊಂಡೂರು ರಾಜರದು ಕೋಟಿಗಟ್ಟಲೆ ಕರೆಂಟ್ ಬಿಲ್ಲು ಬಾಕಿ ಐತಿ ಅದನ್ನು ವಸೂಲಿ ಮಾಡು ನೋಡ್ತೀನಿ… ಬಂದ್ ಬಿಟ್ಟ ನಮ್ಮಂತ ಬಡವರತ್ರ,’ ಎಂದು ಹೊಡೆಯಲು ಸಜ್ಜಾಗಿ ನಿಂತನು. ಕಂಬದ ಮೇಲಿನ ಲೈನ್ ಮ್ಯಾನ್ ಹೆದರಿ ಲೈನ್ ಕಟ್ ಮಾಡದೆ ಇಳಿದ. ಆತನ ಮುಖದಲ್ಲಿ ಅವಮಾನದ ಛಾಯೆಯಿತ್ತು. ಈ ಭಾಗದಲ್ಲಿ ಕೆಇಬಿ ಯವರು ಸಾಮಾನ್ಯವಾಗಿ ಕೇಳುವ ಮಾತು ಇದಾಗಿತ್ತು. ಈ ಪ್ರಶ್ನೆಗೆ ಇಲಾಖೆಯವರು ಉತ್ತರ ನೀಡಲು ಅಸಹಾಯಕರಾಗಿರುತ್ತಿದ್ದರು. ಆ ನಂತರ ಸಂಡೂರು ಘೋರ್ಪಡೆ ಅವರ ಕಾರ್ಖಾನೆಯ ಸುಮಾರು ಮೂರ್‍ನಾಲ್ಕು ಕೋಟಿಯಷ್ಟು ಬಾಕಿ ಹಣವನ್ನು ಸಿಕ್ ಇಂಡಸ್ಟ್ರಿ ಎಂದು ಸರಕಾರ ಮನ್ನ ಮಾಡಿತು.

ಅಂದು ಭರಮನಗೌಡರು ಘೋರ್ಪಡೆ ಕಂಪನಿ ವಿರುದ್ಧ ಎತ್ತಿದ ಪ್ರಶ್ನೆಯನ್ನು ಜನರು ದೊಡ್ಡದಾಗಿ ಕೂಗು ಹಾಕಿದ್ದರೆ, ಅದೊಂದು ದೊಡ್ಡ ಸಂಗತಿಯೇ ಆಗುತ್ತಿತ್ತು. ಆದರೆ ಪ್ರತಿರೋಧದ ಬಿಡಿ ಬಿಡಿ ದ್ವನಿಗಳು ಒಟ್ಟುಗೂಡಲಿಲ್ಲ.

ಕಥನ: ನಾಲ್ಕು

ಕೂಡ್ಲಿಗಿ ತಾಲೂಕಿನ ಒಂದು ಹಳ್ಳಿಯಲ್ಲಿ ಶಾರದಮ್ಮ ಎನ್ನುವ ನಡು ವಯಸ್ಸಿನ ಹೆಣ್ಣುಮಗಳಿದ್ದಾಳೆ. ಆಯಮ್ಮ ಯಾವುದೇ ಪ್ರಜಾಪ್ರತಿನಿಧಿಗಳು ಬಂದರೆ ಯಾವ ಮುಲಾಜನ್ನೂ ನೋಡದೆ, ನಮ್ಮೂರಿಗೆ ಏನು ಕೆಲಸ ಮಾಡ್ಸೀರಿ ತೋರಿಸ್ರಿ? ಜನರ ಹೊಟ್ಟಿ ಮೇಲೆ ಹೊಡ್ದು ತಮ್ಮ ಹೊಟ್ಟಿ ತುಂಬ್ಸಿಕೊಳ್ಳೋ ಜನ ನೀವು ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಳು. ಇದು ಆಯಮ್ಮ ತನ್ನ ಶಾಲಾ ದಿನಗಳಲ್ಲಿ ಪ್ರಜಾಪ್ರಭುತ್ವ ಮಾದರಿಯ ಬಗ್ಗೆ ಕಲಿತ ಪಾಠದಿಂದಾಗಿ ಬಂದ ತಿಳುವಳಿಕೆಯಾಗಿತ್ತು.

ಹಾಗಾಗಿ ಶಾರದಮ್ಮನ ಓಣಿಯಲ್ಲಿ ಗ್ರಾಮಪಂಚಾಯ್ತಿ ಸದಸ್ಯರು ಅಪ್ಪಿ ತಪ್ಪಿಯೂ ಸುಳಿಯುತ್ತಿರಲಿಲ್ಲ. ಇನ್ನು ಚುನಾವಣೆಯ ಸಮಯದಲ್ಲಿ ಶಾರದಮ್ಮ ಕೂಲಿಗೆ ಹೋಗದೆ, ಪ್ರಚಾರಕ್ಕೆ ಬರುವ ಸದ್ಯದ ಎಮ್ಮೆಲ್ಲೆಯನ್ನು ತರಾಟೆಗೆ ತೆಗೆದುಕೊಳ್ಳಲಿಕ್ಕಾಗಿಯೇ ಕಾದಿರುತ್ತಿದ್ದಳು. ಇನ್ನು ಯಾರೇ ಲಂಚ ಪಡೆಯುವ ಸುದ್ದಿ ತಿಳಿಯುತ್ತಲೂ ಅವರೊಂದಿಗೆ ತನ್ನದೇ ದಾಟಿಯಲ್ಲಿ ಜಗಳತೆಗೆದು ರಂಪಾಟ ಮಾಡುತ್ತಿದ್ದಳು. ಇದು ಸಿನಿಕತೆಯಂತೆ ಕಂಡರೂ ಶಾರದಮ್ಮನ ಒಳಗೆ ಒಂದು ನೈತಿಕವಾದ ಶಕ್ತಿ ಜಾಗೃತವಾಗುತ್ತಿದ್ದಂತೆ ಕಾಣುತ್ತದೆ. ಬರು ಬರುತ್ತಾ ಜನರು ಶಾರದಮ್ಮನ ಮಾತನ್ನು ಗೇಲಿ ಮಾಡಲು ಶುರು ಮಾಡಿದರು. ಇದರಿಂದ ಮನನೊಂದ ಶಾರದಮ್ಮ ಕಾಲನಂತರ ಮೌನಿಯೇ ಆದಳು. ಅಂದು ಶಾರದಮ್ಮನ ಜತೆ ಆ ಊರಿನವರು ದ್ವನಿ ಸೇರಿಸಿದ್ದರೆ ಆ ಹಳ್ಳಿಯೇ ಭ್ರಷ್ಟಾಚಾರ ವಿರೋಧಿ ಹಳ್ಳಿಯಾಗುವ ಸಾದ್ಯತೆಗಳೂ ಇದ್ದವು.

ಈ ಮೇಲಿನ ನಾಲ್ಕು ಕಥನಗಳು ಒಂದು ಮಾದರಿಯಷ್ಟೆ. ಇಂತಹ ನೂರಾರು ಕಥನಗಳನ್ನು ಆಯಾ ಭಾಗದಿಂದ ಸೇರಿಸುತ್ತಾ ಹೋಗಬಹುದು. ಆದರೆ ಅಂತಹ ಧೋರಣೆ ಇರುವವರನ್ನು ಹಾಸ್ಯಕ್ಕೆ ವಸ್ತುವಾಗಿಸಿಕೊಳ್ಳುವ ಘಟನೆಗಳೇ ಹೆಚ್ಚು. ಅಂದರೆ ತಲೆಕೆಟ್ಟವರೆಂದೂ, ಈ ಕಾಲದ ಜಾಯಮಾನ ತಿಳಿಯದ ಹಳೆ ಗಾಂಧಿ ಕಾಲದವರೆಂದು ಟೀಕಿಸಿ ಸುಮ್ಮನಾಗುತ್ತಾರೆ. ಇವರ ಅರ್ಥದಲ್ಲಿ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುವವ ಆಧುನಿಕ ಕಾಲಕ್ಕೆ ತೆರೆದುಕೊಂಡವನೆಂತಲೂ, ಅಂತವರು ಯಂಗ್ ಅಂತಲೂ ಆಗುತ್ತದೆ.

ಇಂದು ಅಣ್ಣಾ ಹಜಾರೆಗೆ ಬೆಂಬಲ ಸೂಚಿಸಿ ಘೆರಾವು ಮಾಡಿ ಕೂಗು ಹಾಕುವ ಅದೇ ಯುವಕರು ತಮ್ಮದೇ ಊರಿನ ಭ್ರಷ್ಟಾಚಾರಿ ವಿರೋಧಿಯೊಬ್ಬರನ್ನು ಬೆಂಬಲಿಸಿ, ತಮ್ಮ ತಮ್ಮ ವ್ಯಾಪ್ತಿಯಲ್ಲಿಯೇ ಭ್ರಷ್ಟಾಚಾರ ತೊಡೆದು ಹಾಕಲು, ಲಂಚ ವಿರೋಧಿ ಮನೋಭಾವ ಬೆಳೆಸಲು ಮುಂದಾಗುವುದಿಲ್ಲ. ಇದೊಂದು ಈ ಕಾಲದ ವಿಪರ್ಯಾಸ. ಹೀಗಾದಲ್ಲಿ ಇಡೀ ಭ್ರಷ್ಟಾಚಾರ ನಿರ್ಮೂಲನವಾಗುತ್ತದೆ ಎನ್ನುವುದು ನನ್ನ ನಿಲುವಲ್ಲ, ಆದರೆ ಬುಡಮಟ್ಟದಲ್ಲಿ ಒಂದು ಸಮಸ್ಯೆಯನ್ನು ಗುರುತಿಸುವಾಗ ಈ ಎಲ್ಲಾ ಅಂಶಗಳು ಮುಖ್ಯವಾಗುತ್ತದೆ ಎನ್ನುವುದಷ್ಟೆ ನನ್ನ ಆಶಯ.

ಈಗ ನಾವುಗಳು ದೂರ ಗುಡ್ಡದ ಹಜಾರೆಯವರನ್ನು ನುಣ್ಣಗೆಂಬತೆ ನೋಡುವ ಬದಲು, ಕಣ್ಣು ತೆರೆದು ನಮ್ಮ ನಮ್ಮ ಸುತ್ತಮುತ್ತಲ ಲಂಚ ವಿರೋಧಿ ಪ್ರಾಮಾಣಿಕ ವ್ಯಕ್ತಿತ್ವಗಳನ್ನು ಗುರುತಿಸಿ ಅಂತವರಿಗೆ ಬೆಂಬಲವಾಗಿ ನಿಲ್ಲುವ, ಅವರುಗಳ ಜತೆ ಸಹವರ್ತಿಗಳಾಗುವ ಅಗತ್ಯವಿದೆ. ಜಾನಪದ ಅಧ್ಯಯನಕಾರರೂ ಸಹ ಲಂಚ ವಿರೋಧಿ ಜನಪದ ನಾಯಕರುಗಳ ಬಗ್ಗೆ ಮಾಹಿತಿ ಕಲೆಹಾಕಿ ಅಧ್ಯಯನ ಮಾಡಿದರೆ ಹೊಸ ನೆಲೆಯೊಂದು ತೆರೆದುಕೊಳ್ಳುವ ಸಾದ್ಯತೆಯನ್ನು ತಳ್ಳಿಹಾಕುವಂತಿಲ್ಲ.

Deccan Herald - Mining Payments

ಮಾಧ್ಯಮ ಲೋಕ : ಒಡೆದ ಕನ್ನಡಿ

ಲೇಖಕಿ ಉಷಾ ಕಟ್ಟೇಮನೆ ಬ್ಲಾಗ್ ಲೋಕದಲ್ಲೂ ಸಕ್ರಿಯವಾಗಿ ಬರೆಯುತ್ತಾ ಬಂದಿರುವವರು. ಅವರು ನಮ್ಮ ದೇಶದ ಮಾಧ್ಯಮ ಲೋಕವನ್ನು ಇವತ್ತಿನ ’ಭ್ರಷ್ಟಾಚಾರದ ವಿರುದ್ಧ ಭಾರತ’ ಆಂದೋಳನದ ಹಿನ್ನೆಲೆಯಲ್ಲಿ ಚರ್ಚಿಸುತ್ತ ಕೆಲವೊಂದು ಗಂಭೀರ ವಿಷಯಗಳನ್ನು “ಮಾಧ್ಯಮ ಲೋಕ : ಒಡೆದ ಕನ್ನಡಿ” ಲೇಖನದಲ್ಲಿ ಎತ್ತಿದ್ದಾರೆ. ಆ ಲೇಖನದ ಕೊಂಡಿಯನ್ನು “ವರ್ತಮಾನ”ದೊಂದಿಗೆ ಹಂಚಿಕೊಳ್ಳುತ್ತ “ವರ್ತಮಾನ”ದ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಅವರಿಗೆ ಧನ್ಯವಾದಗಳು. ಅವರ ಪೂರ್ಣ ಲೇಖನ ಇಲ್ಲಿದೆ.

ಮಾಧ್ಯಮ ಲೋಕ : ಒಡೆದ ಕನ್ನಡಿ

ಉಷಾ ಕಟ್ಟೇಮನೆ

ಪ್ರತಿ ಮಂಗಳವಾರ ಬೆಳಿಗ್ಗೆ ಎಂಟು ಗಂಟೆಗೆ ನಾನು ಎಫ಼್ ಎಮ್ ರೈನ್ ಬೋ ದಲ್ಲಿ’ ಕರ್ತ-ಪತ್ರಕರ್ತ’ ಕಾರ್ಯಕ್ರಮವನ್ನು ಕೇಳುತ್ತೇನೆ. ಪತ್ರಿಕೋದ್ಯಮದಲ್ಲಿ ಅಪಾರ ಅನುಭವವನ್ನು ಪಡೆದಿಕೊಂಡಿರುವ ಖ್ಯಾತ ಪತ್ರಕರ್ತರನ್ನು ಸ್ಟುಡಿಯೋಕ್ಕೆ ಅಹ್ವಾನಿಸಿಅವರ ಸಾಧನೆಯನ್ನು ಶೋತೃಗಳಿಗೆ ಪರಿಚಯಿಸುವ ಸಂದರ್ಶನವನ್ನಾಧರಿಸಿದ ನೇರ ಪ್ರಸಾರದ ಕಾರ್ಯಕ್ರಮವಿದು. ಎಸ್ ಎಸ್ ಉಮೇಶ್ ನಡೆಸುವ ಈ ಕಾರ್ಯಕ್ರಮ ಈಗಾಗಲೇ ನೂರು ಎಪಿಸೋಡ್ ದಾಟಿದೆ. ಇಂದು ಅದರ ಅತಿಥಿಯಾಗಿದ್ದವರು ಹಿಂದು ಪತ್ರಿಕೆಯ ಬೆಂಗಳೂರಿನ ಸ್ಥಾನಿಕ ಸಂಪಾದಕರಾಗಿದ್ದ ಅರಕರೆ ಜಯರಾಮ್ .

ಅರಕರೆ ಜಯರಾಮ್ ಎಂದರೆ ಸದಾ ಸೂಟ್ ದಾರಿಯಾಗಿರುವ, ಗಂಭೀರ ವ್ಯಕ್ತಿತ್ವದ, ಗುಂಡು ಮುಖದ ವ್ಯಕ್ತಿಯೊಬ್ಬರು ನಮ್ಮ ಕಣ್ಣ ಮುಂದೆ ನಿಲ್ಲುತ್ತಾರೆ. ಪ್ರೆಸ್ ಕ್ಲಬ್ ನಲ್ಲಿ ಅಗೊಮ್ಮೆ-ಈಗೊಮ್ಮೆ ದೂರದಿಂದ ಅವರನ್ನು ನೋಡಿದ್ದೆ. ಅವರಿಗೆ ಅಸ್ಖಲಿತವಾಗಿ ಕನ್ನಡ ಮಾತಾಡಲು ಬರುತ್ತದೆಯೆಂದು ನನಗೆ ಗೊತ್ತೇ ಇರಲಿಲ್ಲ.

ಜಯರಾಮ್ ಅವರು ಸಮಕಾಲಿನ ಪತ್ರಿಕೊಧ್ಯಮದ ಬಗ್ಗೆ ಮಾತಾಡುತಾ, ಬೆಂಗಳೂರಲ್ಲಿ ಐವತ್ತಕ್ಕಿಂತಲೂ ಜಾಸ್ತಿ ಕಾಲೇಜುಗಳಲ್ಲಿ ಪತ್ರಿಕೋಧ್ಯಮವನ್ನು ಕಲಿಸುತ್ತಾರೆ.ಆದರೆ ಗುಣಮಟ್ಟದ ಉಪನ್ಯಾಸಕರಿಲ್ಲ, ಆಲ್ಲದೆ ಪತ್ರಕರ್ತನೊಬ್ಬ ಕ್ಲಾಸ್ ರೂಮ್ ನಲ್ಲಿ ರೂಪುಗೊಳ್ಳುವುದಿಲ್ಲ, ಎಂದು ಹೇಳುತ್ತಾ ಹಿಂದಿನ ತಲೆಮಾರಿನ ಪತ್ರಕರ್ತರಲ್ಲಿದ್ದ ಬದ್ಧತೆ ಮತ್ತು ವೃತ್ತಿಪರತೆಯ ಬಗ್ಗೆ ಅಧಿಕಾರಯುತವಾಗಿ ಮಾತಾಡತೊಡಗಿದರು.

ಟೀವಿ ಜರ್ನಲಿಸ್ಟ್ ಗಳ ಬಗ್ಗೆ ಮಾತಾಡುತ್ತಾ ಅವರೊಂದು ಮಾತು ಹೇಳಿದರು; ಟೀವಿ ಜರ್ನಲಿಸ್ಟ್ ಗಳು ಎಮಿನೆಂಟ್ ಅಲ್ಲ, ಅವರೆಲ್ಲಾ ಪ್ರಾಮಿನೆಂಟ್ ಗಳು, ಅಂತ. ನಿಜ, ಹಿಂದೆ ಪತ್ರಿಕೋಧ್ಯಮವೆಂಬುದು ಸೇವಾಕ್ಷೇತ್ರವಾಗಿತ್ತು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆ ಪತ್ರಿಕಾರಂಗವು ಕೂಡಾ ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವೆಂದು ಪರಿಗಣಿತವಾಗಿತ್ತು. ಸಮಾಜ ಸೇವೆಗೆ ಸಮೂಹ ಮಾಧ್ಯಮಗಳು ಪೂರಕವಾಗಿ ಕೆಲಸ ಮಾಡುತ್ತಿದ್ದವು. ಹಾಗಾಗಿ ಆದರ್ಶಗಳನ್ನಿಟ್ಟುಕೊಂಡ, ತತ್ವಬದ್ಧರಾದ ಯುವಕರು ನಾನಾ ಕ್ಷೇತ್ರಗಳಿಂದ ಪತ್ರಿಕಾರಂಗಕ್ಕೆ ಬರುತ್ತಿದ್ದರು.

ಆದರೆ ಇಂದು ಹಾಗಿಲ್ಲ. ಪತ್ರಿಕಾ ರಂಗ ಇವತ್ತು ಉದ್ಯಮ ಆಗಿದೆ. ಸಿನೇಮಾ, ಕ್ರೀಕೆಟ್ ನಂತೆ ಅದೊಂದು ಗ್ಲಾಮರ್ ಜಗತ್ತು. ಅಲ್ಲಿ ಹಣ ಮತ್ತು ಖ್ಯಾತಿ ಎರಡೂ ಇದೆ. ಹಾಗಾಗಿ ಅಲ್ಲಿ ಹಣ ಹಾಕಿ ದುಡ್ಡು ದುಡಿಯುವುದನ್ನು ಕರಗತ ಮಾಡಿಕೊಳ್ಳಲು ಹವಣಿಸುವವರ ದೊಡ್ಡ ವರ್ಗವೇ ಇದೆ. ರಿಯಲ್ ಎಸ್ಟೇಟ್ ಕುಳಗಳು ಸಿನೇಮಾರಂಗಕ್ಕೆ ಧಾಂಗುಡಿಯಿಟ್ಟ ಮೇಲೆ ಕನ್ನಡ ಸಿನೇಮಾ ಪ್ರಪಂಚ ಬದಲಾದ ಪರಿಯನ್ನೇ ಗಮನಿಸಿ. ಸುರೇಶ ಕಲ್ಮಾಡಿ ಒಬ್ಬ ಸಾಕಲ್ಲಾ; ಕ್ರೀಡಾ ಜಗತ್ತಿನಲ್ಲಿ ಹಣದ ಮೆರೆದಾಟದ ವೈಖರಿಯನ್ನು ತಿಳಿದುಕೊಳ್ಳಲು.

ಮಾಧ್ಯಮ ರಂಗಕ್ಕೆ ಬನ್ನಿ, ನೀರಾ ರಾಡಿಯಾ ಪ್ರಕರಣದಲ್ಲಿ ಶಾಮೀಲಾದರೆನ್ನಲಾದ ಬರ್ಕಾದತ್ತ, ವೀರಸಾಂಘ್ವಿ, ಪ್ರಭು ಚಾವ್ಲ ಮುಂತಾದವರೆಲ್ಲಾ ಈಗಲೂ ಸ್ವಲ್ಪವೂ ಪಾಪ ಪ್ರಜ್ನೆಯಿಲ್ಲದೆ ನ್ಯಾಯಾಧೀಶರ ಧಿಮಾಕಿನಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ.

ಸಾಂಸ್ಕೃತಿಕವಾಗಿ ಗುರುತಿಸಿಕೊಂಡಿರುವ ರಾಜಕಾರಣಿ ಬಿ.ಎಲ್. ಶಂಕರ್ ತಮ್ಮ ಮಾತುಗಳಲ್ಲಿ ಮತ್ತೆ ಮತ್ತೆ ಒತ್ತಿ ಹೇಳುತ್ತಾರೆ, ಕನ್ನಿಮೋಳಿ, ಎ. ರಾಜ ಮುಂತಾದವರೆಲ್ಲಾ ಆರೋಪ ಹೊತ್ತು ಜೈಲಿಗೆ ತಳ್ಳಲ್ಪಡುತ್ತಾರೆ. ಮಾಧ್ಯಮದವರಿಗೇಕೆ ವಿನಾಯಿತಿ? ನಿಜ, ತಪ್ಪು ಯಾರು ಮಾಡಿದರೂ ತಪ್ಪೇ. ನಮಗೆಲ್ಲರಿಗೂ ಇರುವುದು ಒಂದೇ ಸಂವಿಧಾನ ತಾನೇ?

ಈಗ ಕರ್ನಾಟಕವನ್ನೇ ನೋಡಿ. ಲೋಕಾಯುಕ್ತ ವರದಿ ಬಂದಿದೆ. ಯು.ವಿ.ಸಿಂಗ್ ವರಧಿಯಲ್ಲಿ ಸ್ಪಷ್ಟ ವಾಗಿ ಉಲ್ಲೇಖಿತವಾಗಿದೆ; ಕನ್ನಡದ ಕೆಲವೊಂದು ಪತ್ರಕರ್ತರು ಗಣಿಕಪ್ಪವನ್ನು ಪಡೆದಿದ್ದಾರೆಂದು.

ಗಣಿಗಾರಿಕೆಯಲ್ಲಿ ದಂತಕಥೆಯಾಗುತ್ತಿರುವ ರೆಡ್ಡಿ ಸಹೋದರರ ಗ್ಯಾಂಗ್ ವಿಷಯ ಬಿಟ್ಟುಬಿಡಿ. ಅವರು ವ್ಯಾಪಾರಿಗಳು. ’ವ್ಯಾಪಾರಂ ದ್ರೋಹ ಚಿಂತನಂ’ ಎಂಬ ಮಾತೇ ಇದೆಯಲ್ಲಾ. ದುಡ್ಡು ಬಾಚಿಕೊಳ್ಳುವುದೇ ವ್ಯಾಪಾರದ ಉದ್ದೇಶ. ಆದ್ರೆ ಪತ್ರಕರ್ತರ ಮುಖವಾಡಗಳನ್ನು ತೊಟ್ಟುಕೊಂಡು ಸಮಾಜಕ್ಕೆ ನೀತಿ ಪಾಠ ಹೇಳುವುದನ್ನು ಹಾಬಿಯನ್ನಾಗಿ ಇಟ್ಟುಕೊಂಡವರನ್ನು ಏನಂತ ಕರೆಯುವುದು?

ಕಳೆದವಾರ ಡೆಕ್ಕನ್ ಹೆರಾಲ್ಡ್ ಬಯಲು ಮಾಡಿದ ಗಣಿ ಕಪ್ಪ ಪಡೆದವರ ಹೆಸರುಗಳು ಒಂದು ಸಂಕೇತ ಮಾತ್ರ. ಮಧುಶ್ರೀಯಂಥ ನೂರಾರು ಕಂಪೆನಿಗಳಿವೆ ನೂರಾರು ’ಖಾರದ ಪುಡಿ ಮಹೇಶ’ರಿದ್ದಾರೆ. ಸಂಜಯ್ ಸರ್ ಗಳಿದ್ದಾರೆ, ಮೂರ್ತಿಗಳಿದ್ದಾರೆ. ಹಾಗೆಯೇ ನೂರಾರು ವಿ.ಭಟ್, ಆರ್.ಬಿ.ಗಳಿದ್ದಾರೆ.

ಪತ್ರಿಕೋದ್ಯಮವೆಂಬ ಗ್ಲಾಮರ್ ಲೋಕದಲ್ಲಿ ಮುಖವಾಡ ತೊಟ್ಟಿರುವ ಕೆಲವು ಪತ್ರಕರ್ತರ ಸ್ವವೈಭವೀಕರಣ, ಐಷಾರಾಮಿ ಬದುಕು ಹೇಗಿದೆಯೆಂದರೆ ನಿಜವಾದ ಪತ್ರಕರ್ತರೆಂದರೆ ಹೀಗೆಯೇ ಇರಬೇಕೆಂಬ ಭ್ರಮೆಯನ್ನು ಸಾರ್ವಜನಿಕರಲ್ಲಿ ಉಂಟುಮಾಡುವಂತೆ ಅವರ ನಡವಳಿಕೆಯಿರುತ್ತದೆ. ಅವರಲ್ಲಿ ಗಣಿ ಮಾಲೀಕರಿದ್ದಾರೆ; ರಿಯಲ್ ಎಸ್ಟೇಟ್ ಎಜೆಂಟರಿದ್ದಾರೆ; ಬ್ಲಾಕ್ ಮೇಲ್ ಮಾಡುವವರಿದ್ದಾರೆ; ಹಿಡನ್ ಅಜೆಂಡಗಳನ್ನಿಟ್ಟುಕೊಂಡಿರುವ ರಾಜಕೀಯ ಪಕ್ಷ ಪ್ರಾಯೋಜಿತರಿದ್ದಾರೆ. ರಾಜಕೀಯ ದಲ್ಲಾಳಿಗಳಿದ್ದಾರೆ. ಕಾರ್ಪೋರೇಟ್ ಕಂಪೆನಿಗಳ ಪಿ.ಅರ್.ಓ ಗಳಿದ್ದಾರೆ. ಜಾತೀಯ ವಕ್ತಾರರಿದ್ದಾರೆ. ಇವರ ಮೆರೆದಾಟದಲ್ಲಿ ಬಹುಸಂಖ್ಯಾತರಾಗಿರುವ ಪತ್ರಕರ್ತರ ಪ್ರಾಮಾಣಿಕತೆ, ಸಮಾಜಿಕ ಕಾಳಜಿ ಮಸುಕಾಗಿ ಕಾಣುತ್ತದೆ. ರಾಜಕಾರಣಿಗಳೆಲ್ಲಾ ಭ್ರಷ್ಟರು, ಸ್ವಾರ್ಥಿಗಳು ಎಂದು ಸಾರಸಗಟಾಗಿ ಅನುಮಾನದಿಂದ ನೋಡಿದಂತೆ ಪತ್ರಕರ್ತರೆಲ್ಲಾ ಎಂಜಲು ಕಾಸಿಗೆ ಕೈಯೊಡ್ಡುವವರು ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.

ಸಂಶಯವಂತೂ ಇದ್ದೇ ಇದೆ; ಗಣಿ ಲಾಬಿ ಮತ್ತು ಕಾರ್ಪೋರೇಟ್ ಜಗತ್ತು ಪತ್ರಿಕೋಧ್ಯಮವನ್ನು ನಿಯಂತ್ರಿಸುತ್ತದೆಯೆಂದು. ಕಳೆದ ಮೂರ್ನಾಲ್ಕು ವರ್ಷಗಳಿಂದ ಮಾಧ್ಯಮದ ಆದ್ಯತೆಗಳು ಬದಲಾಗಿರುವುದು ಸಾರ್ವಜನಿಕರ ಕಣ್ಣಿಗೂ ನಿಚ್ಚಳವಾಗಿ ಗೋಚರಿಸುತ್ತಿದೆ. ಇಲ್ಲವಾದರೆ ಕರ್ನಾಟಕದ ಮಟ್ಟಿಗೆ ಮೂರು ಪ್ರಮುಖ ವಿಷಯಗಳಾದ ಅಕ್ರಮ ಗಣಿಗಾರಿಕೆ, ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಇನ್ನೂ ಸಿಗದ ಪುನರ್ವಸತಿ, ರೈತರ ಕೃಷಿ ಭೂಮಿ ಸ್ವಾಧೀನ ಇವುಗಳಿಗೆ ಮಾಧ್ಯಮ ಲೋಕ ಸಶಕ್ತ ಧ್ವನಿಯಾಗಬೇಕಿತ್ತು. ಆದರೆ ಹಾಗಾಗಲಿಲ್ಲ. ಅವೆಲ್ಲಾ ವರಧಿಗಾರಿಕೆಯ ಮಟ್ಟದಲ್ಲಿ ಉಳಿದುಬಿಟ್ಟವು.

ಅಣ್ಣಾ ಹಜಾರೆಯವ ಬ್ರಷ್ಟಾಚಾರ ವಿರೋಧಿ ಹೋರಾಟದಲ್ಲೂ ಅಷ್ಟೇ. ಸುದ್ದಿಯನ್ನು ರೋಚಕವಾಗಿ, ರಂಜನೀಯವಾಗಿ, ಎಮೋಷನಲಾಗಿ ಕೊಡುತ್ತಿದೆ. ಕಾರ್ಪೋರೇಟ್ ಜಗತ್ತು ಪ್ರಜಾಪ್ರಭುತ್ವವನ್ನು ನಿಶ್ಯಕ್ತಗೊಳಿಸುತ್ತಿದೆಯೇನೋ ಎಂಬ ಸಂಶಯವೂ ಅವರನ್ನು ಕಾಡುವುದಿಲ್ಲ. ಆಡಳಿತ ಮಂಡಳಿಯಲ್ಲಿ ಬದ್ಧತೆಯಿಲ್ಲ. ಬದ್ಧತೆ ಕಾಣುತ್ತಿಲ್ಲ. ಬದ್ಧತೆಯಿರುತ್ತಿದ್ದರೆ ಬ್ರಷ್ಟಾಚಾರದ ಆಪಾದನೆ ಹೊತ್ತಿರುವ ಪತ್ರಕರ್ತರ ಮೇಲೆ ಮ್ಯಾನೇಜ್ ಮೆಂಟಿನವರು ಕ್ರಮ ಕೈಗೊಳ್ಳುತ್ತಿದ್ದರು. ದೃಶ್ಯ ಮಾಧ್ಯಮದ ಚರ್ಚೆಗಳಲ್ಲಿ ಭಾಗವಹಿಸುವವರಿಗೆಲ್ಲಾ ಗೊತ್ತಿದೆ, ತಾವು ಪರಸ್ಪರ ಕಳ್ಳರೆಂದು.

ಅಕ್ರಮ ಗಣಿಗಾರಿಕೆಯಿಂದ ದುಡ್ಡು ಸಂಪಾದನೆ ಮಾಡಿದವರು, ದುಡ್ಡು ಕೊಟ್ಟು ಎಂಪಿ ಸೀಟ್ ಖರೀದಿ ಮಾಡಿದವರು, ಸರಕಾರದ ಕೃಪಾಶ್ರಯದಿಂದ ಭೂಮಿ ಡಿನೋಟಿಪಿಕೇಶೆನ್ ಮಾಡಿಸಿಕೊಂಡವರು, ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ಪತ್ರಿಕೆ ನಡೆಸುತ್ತಿರುವವರು- ಇವರೆಲ್ಲಾ ಮಾಧ್ಯಮವನ್ನು ಅಸ್ತ್ರ-ಶಸ್ತ್ರಗಳಂತೆ ಬಳಸುತ್ತಿದ್ದಾರೆ. ಇಂತವರಿಂದ ಸಾಮಾಜಿಕ ಹೊಣೆಗಾರಿಕೆಯನ್ನು ನಿರೀಕ್ಷಿಸಲು ಸಾಧ್ಯವೇ? ಇವರಿಗೆಲ್ಲಾ ಪತ್ರಕರ್ತರು ಬೇಕಾಗಿಲ್ಲ, ದಲ್ಲಾಳಿಗಳು ಬೇಕಾಗಿದ್ದಾರೆ. ಹಾಗಾಗಿ ಈ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಯ ಗಂಧ ಗಾಳಿ ಇಲ್ಲದವರು ಕೂಡಾ ಪತ್ರಕರ್ತರಾಗುತ್ತಿದ್ದಾರೆ.

ದಲ್ಲಾಳಿಗಳು ಯಾವಾಗಲೂ ಅರ್ಥಿಕರಾಗಿ ಬಲಾಢ್ಯರಾಗುತ್ತಲೇ ಹೋಗುತ್ತಾರೆ. ಇಲ್ಲವಾದರೆ ಪತ್ರಕರ್ತನೊಬ್ಬ ನೂರಾರು ಕೋಟಿಯ ಒಡೆಯನಾಗಲು ಸಾಧ್ಯವೇ ಇಲ್ಲ. ದುಡ್ಡು ಎಲ್ಲಾ ದೌರ್ಭಲ್ಯಗಳನ್ನು, ಅವಲಕ್ಷಣಗಳನ್ನು ಮುಚ್ಚಿ ಹಾಕುತ್ತದೆ.

ಆದರೆ ಇದರಿಂದೆಲ್ಲಾ ಆಘಾತಕ್ಕೊಳಗಾಗುವವರು ಜನಸಾಮಾನ್ಯರು, ಅವರ ಮುಗ್ದ ಮನಸು. ಅವರ ನಂಬಿಕೆಯ ಜಗತ್ತು. ಅವರ ಬದುಕಿನ ಮಾದರಿಗಳು ಛಿದ್ರಗೊಳ್ಳುತ್ತಿದೆ. ಛಿದ್ರಗೊಂಡ ಕನ್ನಡಿಯಲ್ಲಿ ಪೂರ್ಣ ಬಿಂಬವನ್ನು ಕಾಣಲು ಸಾಧ್ಯವಿಲ್ಲ

Anna_Hazare

ಭ್ರಷ್ಟಾಚಾರ ವಿರೋಧಿ ಆಂದೋಳನ : ಹೊರಗಿನವರ ಹಸ್ತಕ್ಷೇಪ ಎಂಬ ಅಸಾಂದರ್ಭಿಕ ಭಯ

ಈಗಿನ ಭ್ರಷ್ಛಾಚಾರ ವಿರೋಧಿ ಆಂದೋಳನ ನಮ್ಮ ಸಮಾಜದಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಸರ್ಕಾರ ಮತ್ತು ಆಡಳಿತದಲ್ಲಿನ ಭ್ರಷ್ಟಾಚಾರದ ಬಗ್ಗೆಯೇ ಹೆಚ್ಚು ಮಾತನಾಡುತ್ತಿರುವುದು. ಮತ್ತು ಈ ಮೂಲಕ ಈ ಆಂದೋಳನ ಕೇಳಿದ್ದು ಒಂದು ಮಸೂದೆಯನ್ನು. ಆದರೆ ಈ ಪರಿಸ್ಥಿತಿಯ ಮತ್ತು ಸಮಸ್ಯೆಯ ಮೂಲ ಇರುವುದು ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಮತ್ತು ನಾವು ಆರಿಸಿಕೊಳ್ಳುತ್ತಿರುವ ಜನರ ಅರ್ಹತೆಯಲ್ಲಿ. ಹಾಗಾಗಿ ಇದು ಕೊನೆಗೂ ಮುಟ್ಟುವುದು ಆ ಬೇರಿಗೇ. ಅದನ್ನೇ ಅಣ್ಣಾ ಹಜಾರೆ ತಮ್ಮ ಉಪವಾಸವನ್ನು ಅಂತ್ಯಗೊಳಿಸುತ್ತ ಚುನಾವಣಾ ಸುಧಾರಣೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಈ ಕೆಳಗಿನ ಲೇಖನವನ್ನು ನಾನು ಬರೆದಿದ್ದು ಕಳೆದ ಜೂನ್ 15, 2011ರ ಸಮಯದಲ್ಲಿ. ಬಹುಶಃ ಅದೇ ವಾರದ ಒಂದು ದಿನ ಅದು “ವಿಜಯ ಕರ್ನಾಟಕ”ದಲ್ಲಿ ಪ್ರಕಟವಾಗಿತ್ತು. ಅಲ್ಲಿ ನಾನು ಅಂತಿಮವಾಗಿ ಹೇಳಬಯಸಿದ್ದು, ‘ನಮ್ಮ ರಾಜಕೀಯ ನಾಯಕರನ್ನು ಯೋಗ್ಯರಾಗುವ ಮತ್ತು ಪ್ರಾಮಾಣಿಕರಾಗುವ ರೀತಿಯಲ್ಲಿ ರೂಪಿಸುವುದೆ ಈ ಚಳವಳಿಯ ಪರೋಕ್ಷವಾದ ಆದರೆ ಬಹುಮುಖ್ಯವಾದ ಸಾಧನೆಯಾಗುತ್ತದೆ.’ ಅದು ಬಹುಶಃ ಒಂದಷ್ಟು ಮಟ್ಟಿಗೆ ನಿಜವಾಗುವ ಸಾಧ್ಯತೆಗಳು ಈಗಾಗಲೆ ಕಾಣಿಸುತ್ತಿವೆ. ಆ ಲೇಖನದ ಪೂರ್ಣಭಾಗ ಇದು:

ಭ್ರಷ್ಟಾಚಾರ ವಿರೋಧಿ ಆಂದೋಳನ : ಹೊರಗಿನವರ ಹಸ್ತಕ್ಷೇಪ ಎಂಬ ಅಸಾಂದರ್ಭಿಕ ಭಯ

ಇವತ್ತು ಭ್ರಷ್ಟಾಚಾರದ ಸುತ್ತ ಚಳವಳಿ ಮಟ್ಟದ ಕಾರ್ಯಕ್ರಮಗಳು ರೂಪುಗೊಳ್ಳುತ್ತಿವೆ. ಇದಕ್ಕೆ ಇತ್ತೀಚಿನ ದಿನಗಳ ಮುಖ್ಯ ಪ್ರೇರಣೆ ಎಂದರೆ ನಮ್ಮ ಜನಪ್ರತಿನಿಧಿಗಳು ಅನೈತಿಕ ಕಾರ್ಯಗಳಿಂದ ಭ್ರಷ್ಟಾಚಾರದ ಹಗರಣಗಳಲ್ಲಿ ತೊಡಗಿರುವುದು ಜನಕ್ಕೆ ಮಾಧ್ಯಮಗಳ ಮೂಲಕ ನೇರಾನೇರವಾಗಿ ಗೊತ್ತಾಗುತ್ತಿರುವುದು. ದೇಶದ ಜನಕ್ಕೆ ತಾವು ತಮ್ಮ ದೈನಂದಿನ ಕೆಲಸದಲ್ಲಿ ನಿತ್ಯ ಕಾಣುವ ಮತ್ತು ಅನುಭವಿಸುವ ಭ್ರಷ್ಟಾಚಾರಕ್ಕಿಂತ ಹೆಚ್ಚಾಗಿ ರಾಜಕಾರಣಿಗಳ ಭ್ರಷ್ಟಾಚಾರ ಮತ್ತು ಸಾರ್ವಜನಿಕ ಜೀವನದಲ್ಲಿನ ಅಧ:ಪತನ ಬಾಧಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಇಂದಿನ ಚಳವಳಿ ಒಂದು ಮಟ್ಟದ ಅಧಿಕೃತತೆ ಪಡೆದುಕೊಂಡಿರುವುದು ಸುಳ್ಳಲ್ಲ. ಹೀಗಾಗಿ ಶಾಸಕರು-ಸಂಸದರು ರಚಿಸಬೇಕಾದ, ಮಂಡಿಸಬೇಕಾದ ಕಾನೂನು-ಮಸೂದೆಗಳನ್ನು ಅವರಿಗಾಗಿ ಕಾಯದೆ ಈ ರಾಜಕೀಯೇತರ ಸಾಮಾಜಿಕ ನಾಯಕರೆ ರಚಿಸಲು ಮುಂದಾಗುತ್ತಿದ್ದಾರೆ. ಅವುಗಳ ಮಂಡನೆ ಮತ್ತು ಅಂಗೀಕಾರಕ್ಕೆ ಎಲ್ಲಾ ರೀತಿಯ ಒತ್ತಡಗಳನ್ನು ಹಾಕುತ್ತಿದ್ದಾರೆ. ಈ ಪರಿಸ್ಥಿತಿಗೆ ಭ್ರಷ್ಟಾಚಾರದಲ್ಲಿ ನಿರತರಾದ ಶಾಸಕರು, ಸಂಸದರು, ಅಧಿಕಾರರೂಢರಷ್ಟೇ ಕಾರಣರಾಗಿದ್ದರೆ ಮತ್ತು ಅವರ ಪ್ರಮಾಣ ಅಲ್ಪಪ್ರಮಾಣದಲ್ಲಿ ಇದ್ದಿದ್ದರೆ ಈ ಶಾಸನಸಭೆಯ ಹೊರಗಿನವರ ಮಧ್ಯಪ್ರವೇಶ ಪ್ರಜಾಪ್ರಭುತ್ವದಲ್ಲಿ ಗಂಭೀರ ವಿಷಯವೆ ಆಗಿರುತ್ತಿತ್ತು. ಆದರೆ ನಮ್ಮ ಇಂದಿನ ಬಹುಪಾಲು ಜನಪ್ರತಿನಿಧಿಗಳು ತಮ್ಮ ಮೂಲಭೂತ ಕರ್ತವ್ಯಗಳಾದ ಕಾನೂನು ರಚನೆ ಮತ್ತು ತಿದ್ದುಪಡಿ, ಮತ್ತು ಕಾನೂನಿನ ಅನುಷ್ಠಾನದ ಉಸ್ತುವಾರಿಯಲ್ಲಿ ಇಂದು ಸಂಪೂರ್ಣವಾಗಿ ವಿಫಲರಾಗಿದ್ದಾರೆ.

ಇದಕ್ಕೆ ನಿದರ್ಶನವಾಗಿ ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಳ್ಳಿ. ತೀರಾ ಇತ್ತೀಚಿನ ವಿಧಾನಮಂಡಲ ಅಧಿವೇಶನ ವಿರೋಧ ಪಕ್ಷಗಳ ಅನುಪಸ್ಥಿತಿಯಲ್ಲೇ ಜರುಗಿತು. ಇದರಿಂದಾಗಿ ವಿಧಾನಸಭಾ ಕಲಾಪವನ್ನು ಬಹಳ ದಿನ ನಡೆಸಲಾಗದೆ ತರಾತುರಿಯಲ್ಲಿ ಅಧಿವೇಶನವನ್ನು ಮೊಟಕುಗೊಳಿಸಿ ಮುಂದೂಡಲಾಯಿತು. ಆದರೆ ಮುಂದೂಡುವುದಕ್ಕೆ ಕೆಲವು ಗಂಟೆಗಳ ಮೊದಲು ಐದು ಮಸೂದೆಗಳನ್ನು ಯಾವುದೇ ಚರ್ಚೆ ಇಲ್ಲದೆಯೇ ಅಂಗೀಕರಿಸಲಾಯಿತು. ಶಾಸನಸಭೆಯಲ್ಲಿ ಮಂಡಿಸುವ ಮಸೂದೆಗಳ ಕುರಿತು ಶಾಸಕರಿರಲಿ, ತಮ್ಮ ಇಲಾಖೆಯ ಅಧಿಕಾರಿಗಳು ಸಿದ್ಧಪಡಿಸಿದ ಮಸೂದೆಗಳನ್ನು ಮಂಡಿಸುವ ಸಚಿವ ಮಹಾಶಯರಿಗೂ ಅವುಗಳ ಬಗ್ಗೆ ಕನಿಷ್ಠ ತಿಳಿವಳಿಕೆಯೂ ಇರುವುದು ಸಂಶಯಾಸ್ಪದ. ಇನ್ನು ಆ ಕಾನೂನುಗಳು ಯಾವ ರೀತಿ ಜನಪರವಾಗಿರಬಲ್ಲವು? ಅವುಗಳಲ್ಲಿ ಯಾರ ಹಿತಾಸಕ್ತಿಗಳು ಮೇಲುಗೈ ಸಾಧಿಸಿರಬಹುದು? ಇನ್ನು ಮೇಲುನೋಟಕ್ಕಾದರೂ ತಮ್ಮ ಭ್ರಷ್ಟ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವ ಕಾನೂನುಗಳ ಅನುಷ್ಠಾನದ ವಿಚಾರದಲ್ಲಿ ಯಾವ ಸ್ವಾರ್ಥಿಗಳು ತಾನೆ ಆಸಕ್ತಿ ತಾಳುತ್ತಾರೆ? ಇದು ಕೇವಲ ಕರ್ನಾಟಕದ್ದಷ್ಟೇ ಕತೆಯಲ್ಲ. ಭಾರತದ ಬಹುಪಾಲು ವಿಧಾನಸಭೆಗಳು ಮತ್ತು ಸಂಸತ್ತಿನಲ್ಲೂ ಇಂತಹುದೇ ಪರಿಸ್ಥಿತಿ ಇದೆ.

ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಾಗುವುದು ಪ್ರಬುದ್ಧವಾದ, ಪ್ರಬಲವಾದ ಕಾನೂನುಗಳಿಂದ ಮತ್ತು ಅವುಗಳ ಅನುಷ್ಠಾನದಿಂದ. ಹೊಸ ಕಾನೂನುಗಳ ರಚನೆ ಮಾಡುವುದು ಮತ್ತು ಈಗಾಗಲೇ ಇದ್ದಿರುವ ಕಾನೂನುಗಳಲ್ಲಿ ಇದ್ದಿರಬಹುದಾದ ಲೋಪದೋಷಗಳಿಗೆ ಸೂಕ್ತ ತಿದ್ದುಪಡಿ ಮಾಡುವುದು ಶಾಸಕರ-ಸಂಸದರ ಕರ್ತವ್ಯ. ಇಂದಿನ ಬಹುತೇಕ ಜನಪ್ರತಿನಿಧಿಗಳಿಗೆ ಈ ಕರ್ತವ್ಯದ ಅರಿವೇ ಇಲ್ಲ. ಅದಕ್ಕೆ ಬೇಕಾದ ಶೈಕ್ಷಣಿಕ ಅರ್ಹತೆಯೂ ಅವರಿಗಿಲ್ಲ. ವಿದ್ಯಾರ್ಹತೆಯ ಮಾತು ಒಂದೆಡೆ ಇರಲಿ; ನ್ಯಾಯಪರವಾಗಿರಬೇಕು, ನೀತಿಪರವಾಗಿರಬೇಕು ಎಂಬ ಮೂಲ ನೈತಿಕ ಪಾಠವೂ ಇಂದಿನ ಜನಪ್ರತಿನಿಧಿಗಳಿಗೆ ಇಲ್ಲ. ಅನೈತಿಕ ಮತ್ತು ಅಕ್ರಮ ಮಾರ್ಗಗಳಿಂದ ಹಣ ಮಾಡಿರುವವರೆ ಇಂದು ಚುನಾವಣೆಗಳಲ್ಲಿ ಹಣದ ಹೊಳೆ ಹರಿಸಿ ಬಹುಸಂಖ್ಯೆಯಲ್ಲಿ ಗೆದ್ದುಬರುತ್ತಿದ್ದಾರೆ. ಹೀಗಿರುವಾಗ ಇವರಿಂದ ಕಾಲಕಾಲಕ್ಕೆ ವ್ಯವಸ್ಥೆಯಲ್ಲಿನ ಭ್ರಷ್ಟತೆಯನ್ನು ತಡೆಗಟ್ಟುವಂತಹ ಕಾನೂನುಗಳನ್ನು ಅಪೇಕ್ಷಿಸುವುದು ಕಡುಮೂರ್ಖತನ. ಇವರು ಭ್ರಷ್ಟತೆಯಲ್ಲಿ ಪಾಲುದಾರರಷ್ಟೇ ಅಲ್ಲ, ಅದರ ಪೋಷಕರೂ ಕೂಡಾ ಹೌದು.

ಆದರೆ ಈ ನಾಡನ್ನು ಪ್ರೀತಿಸುವ, ಭಾರತದ ಜನಸಮುದಾಯ ನೈತಿಕತೆಯ ತಳಹದಿಯ ಮೇಲೆ ವಿಕಾಸಗೊಳ್ಳಬೇಕು ಮತ್ತು ಅದು ವಿಶ್ವದ ಸ್ವಾತಂತ್ರ್ಯಪ್ರೇಮಿಗಳಿಗೆ ಮತ್ತು ಪ್ರಜಾಪ್ರಭುತ್ವವಾದಿಗಳಿಗೆ ಆಶಾಕಿರಣವಾಗಿ ಆಸರೆಯಾಗಿ ಇರಬೇಕು ಎಂದು ಬಯಸುವ ಜನರೂ ಈ ದೇಶದಲ್ಲಿದ್ದಾರೆ. ನಮ್ಮ ಸಮಾಜ ತನ್ನ ಮೌಲ್ಯಗಳನ್ನು ಕಳೆದುಕೊಂಡು ಅಧ:ಪತನದತ್ತ ನಡೆಯುವಾಗಲೆಲ್ಲ ಇಂತಹವರು ಧ್ವನಿ ಎತ್ತುತ್ತಾರೆ. ಈಗ ಆಗುತ್ತಿರುವುದೂ ಅದೇ. ಇದರಲ್ಲಿ ಚಿತ್ತಶುದ್ಧಿಯಿಲ್ಲದ ಮತ್ತು ಈ ಚಳವಳಿಯಿಂದ ರಾಜಕೀಯ ಲಾಭ ಮಾಡಿಕೊಳ್ಳುವ ಆಸೆಯುಳ್ಳ ಸ್ವಾರ್ಥಿಗಳೂ ಹಲವರಿರಬಹುದು. ಆದರೆ ಈಗಿನ ಎಲ್ಲ ವಿರೋಧಕ್ಕೂ ಮತ್ತು ಚಳವಳಿಯ ಆರಂಭಕ್ಕೆ ಪ್ರೇರಕರಾದವರು ಮಾತ್ರ ಇಂದಿನ ಅಧ:ಪತನವನ್ನು ಕಾಣಬಲ್ಲವರು ಮತ್ತು ಅದರ ಸುತ್ತ ಜನಾಭಿಪ್ರಾಯವನ್ನು ರೂಪಿಸುವ ಇಚ್ಚೆಯುಳ್ಳವರು. ಈ ಹಿನ್ನೆಲೆಯಲ್ಲಿ ನಾಡಿನ ಜನತೆ ಇಂದಿನ ಭಷ್ಟಾಚಾರ ವಿರೋಧಿ ಆಂದೋಲನವನ್ನು ಅದರ ಸದುದ್ದೇಶಗಳಿಗಾದರೂ ಬೆಂಬಲಿಸಬೇಕಿದೆ.

ನಮ್ಮ ಈಗಿನ ಗಣರಾಜ್ಯ ವ್ಯವಸ್ಥೆಯನ್ನು ಹತ್ತಿರದಿಂದ ಮತ್ತು ಕಾಳಜಿಯಿಂದ ನೋಡಬಲ್ಲಂತಹ ಕೆಲವರು, ಈ ಚಳವಳಿ ನಮ್ಮ ಜನಪ್ರತಿನಿಧಿಗಳನ್ನು ಮತ್ತು ಪಾರ್ಲಿಮೆಂಟನ್ನು ನಿಷ್ಪ್ರಯೋಜಕಗೊಳಿಸಿ ಪ್ರಜಾಪ್ರಭುತ್ವಕ್ಕೆ ಕೇಡು ಮಾಡುತ್ತದೆ, ಎನ್ನುತ್ತಿದ್ದಾರೆ. ಜನಪ್ರತಿನಿಧಿಗಳಾಗಿ ಆಯ್ಕೆಯಾಗಿಲ್ಲದ ಸಾಮಾಜಿಕ ನಾಯಕರು ಸಂವಿಧಾನೇತರ ಶಕ್ತಿಗಳಾಗಿ ಹೊಮ್ಮುತ್ತಿದ್ದಾರೆ ಎನ್ನುತ್ತಿದ್ದಾರೆ. ಅವರ ಈ ಮಾತಲ್ಲಿ ಸತ್ಯಾಂಶವಿದೆ. ಆದರೆ ಇವತ್ತಿನ ವಾಸ್ತವ ಏನೆಂದರೆ, ಜನಪ್ರತಿನಿಧಿಗಳು ನಿಭಾಯಿಸಬೇಕಾದ ಜವಾಬ್ದಾರಿಗಳು ಈಗಾಗಲೇ ಸಂಪೂರ್ಣವಾಗಿ ಕುಸಿದುಹೋಗಿವೆ. ರಸ್ತೆಗಳಲ್ಲಿ ರಕ್ತ ಹರಿಯುತ್ತಿಲ್ಲ ಎನ್ನುವುದನ್ನು ಬಿಟ್ಟರೆ, ನಮ್ಮದು ಇಂದು ಮೌಲ್ಯಗಳಿಲ್ಲದ, ಕಾನೂನುಗಳಿಲ್ಲದ, ವ್ಯವಸ್ಥೆಯನ್ನು ಕೊಂಡುಕೊಳ್ಳಬಲ್ಲ ತಾಕತ್ತಿನವರ ಅವ್ಯವಸ್ಥಿತ ರಾಜಕೀಯ ಪರಿಸ್ಥಿತಿ. ಒಂದು ಕೋನದಿಂದ ಈ ಅವ್ಯವಸ್ಥಿತ ಅರಾಜಕ ಅಸ್ಥಿರತೆಯೂ ಒಂದು ರೀತಿಯ ಸ್ಥಿರ ವ್ಯವಸ್ಥೆಯಾಗಿ ಕಾಣಿಸುತ್ತದೆ ಅಷ್ಟೇ. ಅದು ಮರಳುಗಾಡಿನ ಮರೀಚಿಕೆ. ಹಾಗಾಗಿಯೇ ಈಗಿನ ಚಳವಳಿ, ಈಗ ಆಗಿರುವ ಪ್ರಜಾಪ್ರಭುತ್ವದ ಅವಹೇಳನ ಮತ್ತು ನಿರ್ವಿಯತೆಗಿಂತ ಇನ್ನೂ ಹೆಚ್ಚಿನ ನಿರ್ವಿಯತೆಯನ್ನೇನೂ ಉಂಟು ಮಾಡುವುದಿಲ್ಲ. ಮಾಡುವುದಿದ್ದರೆ ಅದು ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಪ್ರಜಾಪ್ರಭುತ್ವದ ಬೇರುಮಟ್ಟದ ಪಸರಿಸುವಿಕೆಗೆ ಸಹಾಯ ಮಾಡೀತೆ ಹೊರತು ಅದರ ದಮನಕ್ಕಲ್ಲ. ಈ ಬಗ್ಗೆ ಭಯ ಪಡುವುದಕ್ಕಿಂತ ನಮ್ಮ ರಾಜಕೀಯ ನಾಯಕರ ಕುತಂತ್ರ ಮತ್ತು ಅಯೋಗ್ಯತೆಯತ್ತ ನಮ್ಮ ಗಮನ ಇರಬೇಕು. ಅವರನ್ನು ಯೋಗ್ಯರಾಗುವ ಮತ್ತು ಪ್ರಾಮಾಣಿಕರಾಗುವ ರೀತಿಯಲ್ಲಿ ರೂಪಿಸುವುದೆ ಈ ಚಳವಳಿಯ ಪರೋಕ್ಷವಾದ ಆದರೆ ಬಹುಮುಖ್ಯವಾದ ಸಾಧನೆಯಾಗುತ್ತದೆ.

ಚಿತ್ರಕೃಪೆ: ವಿಕಿಪೀಡಿಯ

ರವಿ ಕೃಷ್ಣಾ ರೆಡ್ಡಿ

Anna_Hazare

ಅಣ್ಣಾ ಹಜಾರೆ ಹೋರಾಟ : ಇದರಿಂದ ಭ್ರಷ್ಟಾಚಾರ ನಿಲ್ಲುತ್ತದೆಯೇ?

ಪರಶುರಾಮ ಕಲಾಲ್

ಅಣ್ಣಾ ಅಂದರೆ ಇಂಡಿಯಾ ಎಂದು ನಾವೆಲ್ಲರೂ ತುಂಬಾ ಗೌರವಿಸಿದ್ದ ಕಿರಣ್ ಬೇಡಿ ಎಂಬ ಮಾಜಿ ಅಧಿಕಾರಿ ಭಾರತದ ಭಾವುಟ ಹಿಡಿದು ಕುಣಿದಾಡುವುದು. ಕೇಜ್ರಿವಾಲ ಎಂಬ ವ್ಯಕ್ತಿ ಥೇಟ್ ಸ್ವಯಂ ಸೇವಾ ಸಂಸ್ಥೆಯ ವಕ್ತಾರನಾಗಿ ಸರ್ಕಾರದ ವಿರುದ್ಧ ಕಿಡಿ ಕಾರುವುದು.

ಪ್ರತಿನಿತ್ಯ ರಸ್ತೆಯಲ್ಲಿ ಶಾಲಾ ಮಕ್ಕಳು, ಸಂಘ, ಸಂಸ್ಥೆಗಳು ಮೊಂಬತ್ತಿ ಹಿಡಿದು ಮೆರವಣಿಗೆ ತೆಗೆಯುವುದು ಜನ ಲೋಕ್‌ಪಾಲ್ ಮಸೂದೆಗೆ ಆಗ್ರಹಿಸುವುದು ನನಗೆ ತಮಾಷೆಯಾಗಿ ಕಾಣುತ್ತಿದೆ.
ಈ ಅಸಂಗತ ನಾಟಕವನ್ನು ನಾವು ದಿನ ನೋಡಬೇಕಲ್ಲ ಎಂಬ ಖೇದವೂ ಕಾಡುತ್ತದೆ.

Anna_Hazare

Anna_Hazare (Pic courtesy: wikipedia)

ಸುಮ್ಮನೆ ಹೇಳಿ ಬಿಡುತ್ತೇನೆ. ಎಲ್ಲಾ ಸಂಸದರು ಲೋಕಸಭೆಯಲ್ಲಿ ಒಮ್ಮತದಿಂದ ಒಪ್ಪಿ ಅಣ್ಣಾ ಹಜಾರೆ ತಂಡ ಪ್ರತಿಪಾದಿಸುವ ಜನ ಲೋಕ್‌ಪಾಲ್ ಮಸೂದೆಯನ್ನು ಜಾರಿಗೆ ತಂದು ಬಿಟ್ಟರು ಎಂದು ಕೊಳ್ಳೋಣ. ಭ್ರಷ್ಟಾಚಾರ ಮಾಡಿದ ಪ್ರಧಾನಿ ಅಥವಾ ಸುಪ್ರೀಂಕೋರ್ಟು ನ್ಯಾಯಮೂರ್ತಿ ಇವರನ್ನು ಈ ಲೋಕ್‌ಪಾಲ್ ಗಲ್ಲಿಗೆ ಹಾಕುತ್ತದೆ ಎಂದೇ ಭಾವಿಸೋಣ. ಇದರಿಂದ ಭ್ರಷ್ಟಾಚಾರ ನಿಲ್ಲುತ್ತದೆಯೇ? (ಇದು ಕಾರ್ಯಸಾಧುವಲ್ಲದ ಕಲ್ಪನೆ, ಆ ಮಾತು ಬೇರೆ.)

ನನ್ನ ಪ್ರಶ್ನೆ ಇಷ್ಟು? ಈ ದೇಶದಲ್ಲಿ ಸರ್ಕಾರಿ ನೌಕರರು ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರು ಸೇರಿ ಎಷ್ಟು? ನ್ಯಾಯಾಂಗ ಇಲಾಖೆಯ ನ್ಯಾಯಾಧೀಶರನ್ನು ಒಳಗೊಂಡ ನೌಕರರು ಎಷ್ಟು? ನಮ್ಮ ಎಲ್ಲಾ ರಾಷ್ಟ್ರೀಯ ಹಾಗೂ ಚೋಟಾ, ಮೋಟಾ ಪ್ರಾದೇಶಿಕ ಪಕ್ಷಗಳ ಜನ ಪ್ರತಿನಿಧಿಗಳ ಸಂಖ್ಯೆ ಎಷ್ಟು? ಇವರಲ್ಲಿ ಗ್ರಾ.ಪಂ.ಸದಸ್ಯರಿಂದ ಹಿಡಿದು, ಲೋಕಸಭೆ ಸದಸ್ಯರವರೆಗೆ ಈ ಎಲ್ಲರನ್ನೂ ಒಟ್ಟು ಸೇರಿಸಿದರೆ ಈ ದೇಶದ ಶೇ.2ರಷ್ಟು ಸಂಖ್ಯೆಯನ್ನು ಇದು ದಾಟುವುದಿಲ್ಲ. ಈ ಎರಡರಷ್ಟು ಸಂಖ್ಯೆಯ ಜನರನ್ನು ತೋರಿಸಿ, ಇಡೀ ರಾಷ್ಟ್ರದ ಜ್ವಲಂತ ಸಮಸ್ಯೆ ಇದೊಂದೆ ಎನ್ನುವಂತೆ ಬಿಂಬಿಸಿ ಹೋರಾಟ ಮಾಡುತ್ತಿರುವುದು ಏನನ್ನು ಸೂಚಿಸುತ್ತದೆ?

ಸುಮ್ಮನೆ ಲೋಕಾಯುಕ್ತರ ವರದಿಯನ್ನು ಪ್ರಸ್ತಾಪಿಸುತ್ತೇನೆ. ಈ ವರದಿ ಆಕ್ರಮ ಗಣಿಗಾರಿಕೆ, ರಾಷ್ಟ್ರದ ಅತ್ಯಮೂಲ್ಯ ಸಂಪನ್ಮೂಲವನ್ನು ಕೊಳ್ಳೆ ಹೊಡೆದು ರಫ್ತು ಮಾಡಿದ್ದು, ತೀವ್ರ ಭ್ರಷ್ಟಾಚಾರ ಎಲ್ಲವನ್ನೂ ಬಯಲು ಮಾಡಿದ್ದಾರೆ. ಸಂತೋಷ ಹೆಗಡೆಯವರು ಸರ್ಕಾರಕ್ಕೆ ಈ ಬಗ್ಗೆ ಶಿಫಾರಸ್ಸು ಮಾಡಿದ್ದು ನನಗೆ ಇಲ್ಲಿ ಮುಖ್ಯ ಅನ್ನಿಸುತ್ತದೆ. ಸರ್ಕಾರದ ತೆರಿಗೆ ವಂಚಿಸಿದ್ದರ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು, ಈ ಹಣವನ್ನು ಸರ್ಕಾರ ವಶ ಪಡೆಸಿಕೊಳ್ಳಬೇಕು. ಕಾನೂನು ಪ್ರಕಾರ ಇದಕ್ಕಿಂತಲೂ ಬೇರೇನೂ ಮಾಡಲು ಸಾಧ್ಯವಿದೆ ಪಾಪ ಸಂತೋಷ ಹೆಗಡೆಯವರಿಗೆ.

ಇಲ್ಲಿ ಯಡಿಯೂರಪ್ಪ, ಸೋಮಣ್ಣ, ರೆಡ್ಡಿ ಬ್ರದರ್ಸ್ ಇವರೆಲ್ಲಾ ತುಂಬಾ ಭ್ರಷ್ಟರು. ಇದನ್ನೆಲ್ಲಾ ಒಪ್ಪಿಕೊಳ್ಳೋಣ. ಅವರನ್ನು ಜನ ಕ್ಯಾಕರಿಸಿ ಛೀ, ಥೂ ಎಂದು ಉಗಿಯುತ್ತಾರೋ ಬಿಡುತ್ತಾರೋ ಅದನ್ನು ಮುಂದೆ ನೋಡೋಣ.

ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ಘೋಷಿಸಿ ಸತ್ಯ ಹರಿಶ್ಚಂದ್ರರೆಂದು ವೇದಿಕೆ ಮೇಲೆ ಕಂಗೊಳಿಸುವ ಕಾರ್ಪೋರೇಟ್ ಸಂಸ್ಥೆಗಳ ಭ್ರಷ್ಟಾಚಾರದ ಬಗ್ಗೆ ಯಾರು ಮಾತನಾಡಬೇಕು?

ಲೋಕಾಯುಕ್ತ ವರದಿಯಲ್ಲಿ ಉಲ್ಲೇಖವಾಗಿರುವ ಭಾಗವನ್ನು ಹೇಳುವ ಮೂಲಕ ನನ್ನ ಮಾತನ್ನು ವಿಸ್ತರಿಸುವೆ. ರಾಜ್ಯ ಸರ್ಕಾರದ ಒಡೆತನ ಇರುವ ಮೈಸೂರು ಮಿನರಲ್ಸ್ ಲಿ., ಕಂಪನಿ (ಎಂಎಂ.ಎಲ್.) ಜೊತೆ ಜಿಂದಾಲ್ ಉಕ್ಕು ಕಾರ್ಖಾನೆಯು ವಿಜಯನಗರ ಮಿನರಲ್ಸ್ ಪ್ರೈ. ಲಿ., (ವಿಎಂಪಿಲ್) ಎಂಬ ಹೆಸರಿನಲ್ಲಿ ಜಂಟಿಯಾಗಿ ಸಂಡೂರಿನ ಪ್ರದೇಶದಲ್ಲಿ ತಿಮ್ಮಪ್ಪನ ಗುಡಿ ಐರನ್ ಓರ್ ಕಂಪನಿ (ಟಿಐಓಎಂ) ಗಣಿಗಾರಿಕೆ ಆರಂಭಿಸಿತು. ಕರಾರಿನಲ್ಲಿ ಮೂರನೆ ವ್ಯಕ್ತಿಗೆ ಕಬ್ಬಿಣದ ಅದಿರು ಮಾರುವಂತಿಲ್ಲ ಎಂದಿದೆ. ಸೌಥ್ ವೆಸ್ಟ್ ಮೈನಿಂಗ್ ಲಿ., ಕಂಪನಿಯು 85,022 ಮೆಟ್ರಿಕ್  ಟನ್ ಕಬ್ಬಿಣದ ಅದಿರು ರಫ್ತು ಮಾಡಿದೆ. 2003-04ರಿಂದ 2004-05ರವರೆಗೆ 3,65,594 ಮೆಟ್ರಿಕ್ ಟನ್ ಕಬ್ಬಿಣದ ಅದಿರು ರಫ್ತು ಮಾಡಿದೆ.

ಜಿಂದಾಲ್ ಉಕ್ಕಿನ ಕಾರ್ಖಾನೆಯು ತನ್ನ ಅವಶ್ಯಕತೆಗೆ ಮೀರಿ ಕಬ್ಬಿಣದ ಅದಿರು ಖರೀದಿಸಿದೆ. ಮತ್ತು ಅದನ್ನು ಆಕ್ರಮವಾಗಿ ರಫ್ತು ಮಾಡಿದೆ. ತನ್ನ ಉಕ್ಕು ಉದ್ಯಮಕ್ಕೆ ಬೇಕಾಗಿದ್ದಕ್ಕಿಂತಲೂ 12,97,707 ಮೆಟ್ರಿಕ್ ಟನ್ ಕಬ್ಬಿಣದ ಅದಿರು ಖರೀದಿಸಿದೆ. ಆಕ್ರಮವಾಗಿ ಇದನ್ನು ರಫ್ತು ಮಾಡಿದೆ. ಒಂದು ಟನ್ ಕಬ್ಬಿಣದ ಅದಿರಿಗೆ 2500 ರೂ. ಎಂದು ಲೆಕ್ಕ ಹಾಕಿದರೂ ಇದರ ಮೌಲ್ಯವು 324,42,52,500 ರೂ. ಆಗುತ್ತದೆ.

ಈ ಕಾರ್ಪೋರೇಟ್ ಸಂಸ್ಥೆಯ ಗಣಿದಾಹ, ಭ್ರಷ್ಟಾಚಾರದ ಬಗ್ಗೆ ಯಾರು ಮಾತನಾಡಬೇಕು?

ತನ್ನ ಹೊಲಸು ಕೈಗಳನ್ನು ರಾಜಕಾರಣಿಗಳ ಬಿಳಿ ಬಟ್ಟೆಗೆ ಹಚ್ಚಿ, ಅವರ ಜೇಬು ಹೊಲಸು ಮಾಡಿ, ನೋಡಿ ಕಳ್ಳರು ಎಲ್ಲಿದ್ದಾರೆ ಎಂದು ಹೇಳುತ್ತಾ ಭಾರತದ ಭಾವುಟ ಹಿಡಿದು, ಮೊಂಬತ್ತಿ ಹಚ್ಚಿ ತಮ್ಮ ಕರಾಳ ಮುಖ ಬಚ್ಚಿಟ್ಟುಕೊಂಡು ದೇಶಭಕ್ತರಾಗಿ ಕಾಣುವ ಇವರ ಬಗ್ಗೆ ಜನ ಲೋಕ್‌ಪಾಲ್ ಮಸೂದೆಯಲ್ಲಿ ಉತ್ತರ ಇದೆಯಾ? ನನಗೆ ಗೊತ್ತು, ನಾನು ಹುತ್ತ ಹೊಡೆದಿದ್ದೇನೆ. ಪ್ರತಿಕ್ರಿಯೆಗಳು ಬರಲಿ, ನಂತರ ನನ್ನ ಸಂವಾದ ಮುಂದುವರೆಸುವೆ.